ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಆಧಾರಚಕ್ರ – ಮೂರ್ತಿಬ್ರಹ್ಮ (ಆಚಾರಲಿಂಗ)
ತೋರ್ತಿರ್ಪಾಧಾರದಾ | ವರ್ತಿ ಗುದ ಮಂದಿರದ
ಮೂರ್ತಿ ಬ್ರಹ್ಮವನು-ಅರ್ಥಿಯಿಂ ಕರಕಿತ್ತ
ಕೀರ್ತಿಮಯ ಗುರುವೆ ಕೃಪೆಯಾಗು ||೯೧)
ಇದು ಒಂಭತ್ತನೆಯ ಆಧಾರಚಕ್ರ ಇದರ ವಿವರ ಇಂತಿದೆ-
ಗುದಸ್ಥಾನದಲ್ಲಿ ಆಧಾರಚಕ್ರ ಪೃಥ್ವಿಯೆಂಬ ಮಹಾಭೂತ
ಆ ಭೂತ ಪೀತವರ್ಣ ಚತುಷ್ಕೋಣ ಚೌದಳಪದ್ಮ
ಸುವರ್ಣವರ್ಣ ಆ ದಳದಲ್ಲಿ ವ, ಶ, ಷ, ಸ, ಎಂಬ ನಾಲ್ಕಕ್ಷರ
ಆ ಕರ್ಣಿಕಾಮಧ್ಯದಲ್ಲಿ ನಕಾರವೆಂಬ ಬೀಜಾಕ್ಷರ
ಆ ನಕಾರ ಪೀತವರ್ಣ ಅದು ಪೆಣ್ದುಂಬಿಯನಾದ
–ರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ
ಅಲ್ಲಿ ಆಚಾರಲಿಂಗ, ಅದಕ್ಕೆ ಪೀತವರ್ಣವನುಳ್ಳ ಸದ್ಯೋಜಾತಮುಖ
ನಿವೃತ್ತಿ ಕಲಾಪರ್ಯಾಯ ನಾಮವನುಳ್ಳ ಕ್ರಿಯಾಶಕ್ತಿ
ಆ ಶಕ್ತಿ ಪೀತವರ್ಣ, ಅಲ್ಲಿ ಕರ್ಮಸಾದಾಖ್ಯ
ಪರ ಎಂಬ ಸಂಜ್ಞೆ, ಪೂರ್ವದಿಕ್ಕು
ಅಲ್ಲಿ ಋಗ್ವದವನುಚ್ಚರಿಸುತ್ತ ಸುಚಿತ್ತವೆಂಬ ಹಸ್ತದಿಂದ
ಸುಗಂಧ ದ್ರವ್ಯವನು ಘ್ರಾಣವೆಂಬ ಮುಖಕ್ಕೆ
ಶ್ರದ್ಧಾಭಕ್ತಿಯಿಂದ ಅರ್ಪಿಸುವಳಾ ಶಕ್ತಿ
ಬ್ರಹ್ಮಪೂಜಾರಿ ಶಕ್ತಿ ಡಾಕಿನಿ ಬ್ರಹ್ಮ (ಭವ) ನಧಿದೇವತೆ
ಇಂತಿವೆಲ್ಲನ್ನು ಮಾತೃಸ್ಥಾನವಾಗಿಹುದು ನಕಾರವೆಂಬ ಬೀಜಾಕ್ಷರ
ಅದು ಪ್ರಣವದ ತಾರಕಾಕೃತಿಯಲ್ಲಿಹುದು
ಓಂ ಓಂ ಓಂ ನಾಂ ನಾಂ ನಾಂ ಎಂಬ ಬ್ರಹ್ಮನಾದ
ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು ಇದು ಭಕ್ತಸ್ಥಲವು.
ಆಧಾರ ಚಕ್ರವು ಗುದೇಂದ್ರಿಯದ ಸ್ಥಾನದಲ್ಲಿದ್ದು ನಾಲ್ಕುದಳದ ಪದ್ಮವಾಗಿದೆ. ಇಲ್ಲಿರುವ ಬ್ರಹ್ಮನು ಮೂರ್ತಿಬ್ರಹ್ಮನು ಸದ್ಗುರುವು ಈ ಮೂರ್ತಿ ಬ್ರಹ್ಮವನ್ನು ತನ್ನ ಶಿಷ್ಯನ ಕರದಿಷ್ಟ ಲಿಂಗದಲ್ಲಿ ಆಚಾರಲಿಂಗವನ್ನಾಗಿಸಿ ಪ್ರೀತಿಯಿಂದ ಕರುಣಿಸುತ್ತಾನೆ. ನವಬ್ರಹ್ಮರನ್ನೂ ಕರದಿಷ್ಟಲಿಂಗದಲ್ಲಿ ಅಳವಡಿಸಿದ ಮಹಾಶ್ರೇಯಸ್ಸು ಗುರುವಿನದು. ಅದುಕಾರಣವೇ ಶ್ರೀಗುರುವು ಕೀರ್ತಿಮಯನಾಗಿದ್ದಾನೆ.
ಘ್ರಾಣೇಂದ್ರಿಯವು ಪೃಥ್ವಿತತ್ತ್ವದಿಂದಾದಂತೆ ಗುದಸ್ಥಾನವು ಪಂಚೀಕೃತ ಪೃಥ್ವಿಯ ಅರ್ಧಸ್ವರೂಪವುಳ್ಳುದಾಗಿದೆ. ಅಂದರೆ ಗುದೇಂದ್ರಿಯದಲ್ಲಿ ಪೃಥ್ವಿಯ ತತ್ತ್ವವು ಅತ್ಯಧಿಕವಾಗಿ ಕಾಣುವದು. ಈ ಇಂದ್ರಿಯದಲ್ಲಿಯೂ ಗಂಧ ಪದಾರ್ಥವು ವಿಶೇಷವಾಗಿದೆ. ಅನಾಚಾರದಿಂದ ಗುದವು ದುರ್ಗಂಧವನ್ನು ವ್ಯಕ್ತಗೊಳಿಸುವದು. ಗುದಸ್ಥಾನದ ಕಾರ್ಯವು ಮಲವಿಸರ್ಜನ. ಇಲ್ಲಿ ಅಪಾನವಾಯು ಮತ್ತು ಧನಂಜಯ ವಾಯುಗಳು ವಾಸಿಸುತ್ತವೆ. ಮಲವಿಸರ್ಜನ ಕಾರ್ಯವು ಯಥೋಚಿತವಾಗಿ ನಡೆದರೆ ದೇಹಿಗೆ ಆನಂದವೆನಿಸುವದು. ಅದು ಆರೋಗ್ಯಕ್ಕೆ ಮೂಲವಾದ ಕ್ರಿಯೆ. ದೇಹದ ಇರುವಿಕೆಗೆ ಆಧಾರವಾದುದು. ಗುದೇಂದ್ರಿಯ. ಇಲ್ಲಿರುವದು ಆಧಾರಚಕ್ರ. ಇವುಗಳು ತಾತ್ವಿಕವಾಗಿ ಒಂದಕ್ಕೊಂದು ಸಂಬಂಧ ಹೊಂದಿವೆ. ಕಾರಣ ಶಿವಕವಿಯು ಗುದೇಂದ್ರಿಯವು ಆಧಾರದ ತೊತ್ತು ಎಂದು ಬಣ್ಣಿಸಿ ಆಧಾರ ಚಕ್ರಕ್ಕೆ ಗುದವೇ ಮಂದಿರವೆಂತಲೂ ಹೇಳಿದ್ದಾನೆ. ಇಂಥ ಗುದಮಂದಿರದ ಆಧಾರಚಕ್ರದಲ್ಲಿಯ ಮೂರ್ತಿಬ್ರಹ್ಮವನ್ನು ಇಷ್ಟಲಿಂಗದಲ್ಲಿ ಆಚಾರಲಿಂಗವನ್ನಾಗಿ ಪರಿಭಾವಿಸಬೇಕು. ಸುಗಂಧಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸಬೇಕು. ಆ ಲಿಂಗವನ್ನು ಸಾವಧಾನ ದಿಂದ ಅರಾಧಿಸಿ ಆನಂದಿಸಬೇಕು.
ನವಚಕ್ರ ಹಾಗೂ ನವಬ್ರಹ್ಮರ ; ಉಪಸಂಹಾರ
ನವ ಚಕ್ರದೊಳಗಿರ್ದ| ನವ ಬ್ರಹ್ಮವನು ತೆಗೆದು
ಶಿವಲಿಂಗ ವಿಗ್ರ-ಹವ ಮಾಡಿ ಕರುಣಿಸಿದ
ಸುವಿವೇಕಿ ಗುರುವೆ ಕೃಪೆಯಾಗು ||೯೨||
ಶಿವಕವಿಯು ಪ್ರವೃತ್ತಿ ಕ್ರಮದಿಂದ ನವಚಕ್ರಗಳಲ್ಲಿ ನವಬ್ರಹ್ಮರನ್ನು ನಿರೂಪಿಸಿ, ಇಲ್ಲಿ ಉಪಸಂಹಾರ ಮಾಡುತ್ತಾನೆ. ಶ್ರೀಗುರು
೧ ಪಶ್ಚಿಮಚಕ್ರ ೨. ಶಿಖಾಚಕ್ರ ೧. ಬ್ರಹ್ಮರಂದ್ರ (ಸಹಸ್ರದಳ) ೪. ಆಜ್ಞಾಚಕ್ರ ೫. ವಿಶುದ್ಧಿಚಕ್ರ ೬. ಅನಾಹತ ಚಕ್ರ * ಮಣಿಪೂರಕ ಚಕ್ರ ೮. ಸ್ವಾಧಿಷ್ಠಾನಚಕ್ರ ೯. ಆಧಾರಚಕ್ರವೆಂಬ ಈ ನವಚಕ್ರಗಳಲ್ಲಿ ಕ್ರಮವಾಗಿ ೧. ನಿರಂಜನ (ಸರ್ವಶೂನ್ಯ) ಬ್ರಹ್ಮ
೨. ನಿಃಶೂನ್ಯ ಬ್ರಹ್ಮ ೩. ನಿಷ್ಕಳ ಬ್ರಹ್ಮ ೪. ನಿಸ್ಸಿಮಬ್ರಹ್ಮ ೫. ವಿಜ್ಞಾನಬ್ರಹ್ಮ೬. ಆನಂದಬ್ರಹ್ಮ ೭. ಸತ್ಕಲೆಯ ಬ್ರಹ್ಮ
೮. ಪಿಂಡಬ್ರಹ್ಮ ೯. ಮೂರ್ತಿಬ್ರಹ್ಮರೆಂಬ ನವಬ್ರಹ್ಮರನ್ನು ತನ್ನ ಸುವಿವೇಕದಿಂದ ಶಿಷ್ಯನ ವರರತ್ನವೆನಿಸಿದ ಕರಕಮಲದಲ್ಲಿ ಶೋಭಿಸುವ ಇಷ್ಟಲಿಂಗದಲ್ಲಿ ೧. ಭಾವಲಿಂಗ ೨. ಪ್ರಾಣಲಿಂಗ ೩. ಇಷ್ಟಲಿಂಗ ೪. ಮಹಾಲಿಂಗ ೫. ಪ್ರಸಾದ ಲಿಂಗ ೬. ಜಂಗಮಲಿಂಗ ೬. ಶಿವಲಿಂಗ ೮. ಗುರುಲಿಂಗ ೯. ಆಚಾರಲಿಂಗಗಳೆಂಬ ನವಶಿವಲಿಂಗ ಮೂರ್ತಿಗಳನ್ನು ಮೂರ್ತಗೊಳಿಸುತ್ತಾನೆ. ಮಹಾಜ್ಞಾನಿಯಾದ ಸದ್ಗುರುವು ಸಾಮಾನ್ಯನಲ್ಲ. ಇವನು ಪರಮಗುರುವು. ಗುರುವಿನ ಗುರು ನಿರಾಭಾರಿಗಳು. ಆತನ ಕೃಪೆಯಿಂದಲೆ ಅಂತರಂಗದ ನವಚಕ್ರಗಳಲ್ಲಿಯ ನವಬ್ರಹ್ಮರು ಕರಕಮಲದಲ್ಲಿ ಕಾಣಿಸಿಕೊಂಡರು. ಇಷ್ಟಲಿಂಗ ಚಿಕ್ಕದಾದರೂ ಅದರ ಕೀರ್ತಿ ಬಹುದೊಡ್ಡದು. ಈ ಲಿಂಗ ಹೊರಗಿನಂತೆ ಕೇವಲ ಸ್ಥೂಲವಲ್ಲ. ಮಸ್ತಕದಲ್ಲಿಯ ಚಿಚ್ಛೈ ತನ್ಯವು ಈ ಇಷ್ಟಲಿಂಗದಲ್ಲಿ ಚುಳುಕಾಗಿದೆ. ಬೆಳಕಾಗಿದೆ ; ಆಂತರಂಗದ ಅಮೂರ್ತರಾದ ನವಬ್ರಹ್ಮರು ಇಷ್ಟಲಿಂಗದಲ್ಲಿ ಮೂರ್ತ ಗೊಂಡು ಇಷ್ಟಾರ್ಥಫಲವನ್ನೀಯುವ ಕಾಮಧೇನು ಕಲ್ಪವೃಕ್ಷಗಳಂತೆ ಮೆರೆದಿದ್ದಾರೆ.
ಈ ನವಚಕ್ರಗಳ ವಿಷಯವನ್ನು ನಿಜಗುಣಾರ್ಯರು ಸಂಗ್ರಹರೂಪದಲ್ಲಿ ತಮ್ಮ “ವಿವೇಕಚಿಂತಾಮಣಿ’ಯ ದ್ವಿತೀಯ ಪರಿಚ್ಛೇದ (ಪುಟ ೧೩೪)ದಲ್ಲಿ ಪ್ರತಿಪಾದಿಸಿದ್ದಾರೆ. ಇಲ್ಲಿ ನಿವೃತ್ತಿಕ್ರಮ ನೆಲೆನಿಂತಿದೆ.
“ಮತ್ತಮಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಆಗ್ನೇಯವೆಂಬ ಷಟ್ಚಕ್ರಂಗಳುಂ ಕ್ರಮದಿಂದವಕೆ ದೇಹಮಧ್ಯ (ಗುದ) ಲಿಂಗ, (ಗುಹ್ಯ) ನಾಭಿ, ಹೃದಯ, ಕಂಠ, ಭೂಮಧ್ಯವೆಂಬಾರು ಸ್ಥಾನಂಗಳುಂ ಚತುರಸ್ರ, ಅರ್ಧಚಂದ್ರಾಕಾರ, ತ್ರಿಕೋಣ, ಷಟ್ಕೋಣ, ವೃತ್ತ, ವಿಚಿತ್ರ ಮಾದಾರಾಕಾರಂಗಳುಂ ಪೃಥಿವ್ಯಾದಿ ಮಾನಸಾಂತಮಾದಾರು ಭೂತಂಗಳುಂ, ಪೀತ, ಶ್ವೇತ, ರಕ್ತ, ನೀಲ, ಸ್ಫಟಿಕ, ಮಾಣಿಕ್ಯವೆಂಬಾರು ವರ್ಣಂಗಳಂ, ಚತುರ್ದಳ, ಷಡ್ದಳ, ದಶದಳ, ಪೋಡಶದಳ, ದ್ವಿದಳಂಗಳುಳ್ಳಾರು ಕಮಲಂಗಳುಂ, ವಾದಿಸಾಂತ, ಬಾದಿಲಾಂತ, ಡಾದಿಫಾಂತ,ಕಾದಿಠಾಂತ, ಆದಿವಿಸರ್ಗಾಂತ, ಹಕಾರ ಕ್ಷಕಾರಂಗಳೆಂಬಾರು ವರ್ಗದಳಾಕ್ಷರಂಗಳುಂ ನಕಾರಾದಿ ಪ್ರಣವಾಂತಮಾದಾರು ಕರ್ಣಿಕಾಕ್ಷರಂಗಳುಂ, ಬ್ರಹ್ಮಾದಿ ಜೀವಾತ್ಮಾಂತಮಾದಾರು ಅಧಿದೇವತೆಗಳುಂ, ಮತ್ತೆ ಬ್ರಹ್ಮಚಕ್ರ, ಶಿಖಾಚಕ್ರ, ಪಶ್ಚಿಮಚಕ್ರವೆಂಬ ಚಕ್ರತ್ರಯಂಗಳುಂ ಕ್ರಮದಿಂದವಕ್ಕೆ ಮಸ್ತಕ ಶಿಖಿ, ಶಿಖಾಂತವೆಂಬ ಸ್ಥಾನತ್ರಯಂಗಳುಂ ಸಹಸ್ರದಳ ತ್ರಿದಳ, ಏಕದಳ ಪದ್ಮತ್ರಯಂಗಳುಂ ಜ್ಯೋತಿರ್ವರ್ಣ, ಮಹಾಜ್ಯೋತಿರ್ವರ್ಣ, ಅಪ್ರದರ್ಶವರ್ಣ, ಎಂಬ ವರ್ಣ ತ್ರಯಂಗಳುಂ, ಅಕ್ಷರಾತ್ಮಕನಾದ ಅನಕ್ಷರಾತ್ಮಕನಾದ, ನಿಃಶಬ್ದಮೆಂಬ ನಾದ ತ್ರಯಂಗಳುಂ ಅಂತರಾತ್ಮ ಪರಮಾತ್ಮ, ಪರಬ್ರಹ್ಮವೆಂದು ಅಧಿದೇವತಾ ತ್ರಯಂಗಳುಂʼʼ
ಎಂದು ನವಚಕ್ರಗಳನ್ನು ಅವುಗಳ ವಿವರವನ್ನು ಸಂಗ್ರಹರೂಪವಾಗಿ ಬೋಧಿಸಿದ್ದಾರೆ. ಇಲ್ಲಿಯವರೆಗೆ ಹಿಂದಿನ ತ್ರಿಪದಿಗಳಲ್ಲಿ ಪ್ರತ್ಯೇಕವಾಗಿ ತಿಳಿದುಕೊಂಡ ಪ್ರವೃತ್ತಿ ಕ್ರಮದ ನವಚಕ್ರಗಳನ್ನು ನಿವೃತ್ತಿ ಕ್ರಮದಲ್ಲಿ ಅರಿಯಲು ಅನುಕೂಲವಾಗಿದೆ.
ಶಿವಪೂಜಾ ಸಮಯದಲ್ಲಿ ಸ್ತೋತ್ರ (ಧ್ಯಾನ) ರೂಪವಾಗಿ ಷಟ್ಚಕ್ರಗಳನ್ನು ತಿಳಿದುಕೊಳ್ಳಲು ಕೆಳಗಿನ ಶ್ಲೋಕವು ಅತ್ಯಂತ ಸುಂದರವಾಗಿದೆ.
ಆಧಾರ ಲಿಂಗನಾಭೌ ಹೃದಯ-ಸರಸಿಜೇ ತಾಲು ಮೂಲೇ ಲಲಾಟೇ
ದ್ವೇ ಪತ್ರೇ ಷೋಡಶಾರೇ ದ್ವಾದಶ-ದಳದಳೇ ದ್ವಾದಶಾರ್ಧೇ– ಚತುಷ್ಕೇ
ವಾಸಾಂತೇ ಬಾದಿಲಾಂತೇ ಡಫ ಕಠಸಹಿತೇ ಕಂಠ ಮೂಲೇ ಸ್ವರಾಢ್ಯೇ
ಹಂ ಕ್ಷಂ ತತ್ತ್ವಾರ್ಥಯುಕ್ತಂ ಸಕಲದಳಗತಂ ವರ್ಣರೂಪಂ ನಮಾಮಿ
ಇದರಿಂದ ಚಕ್ರಗಳನ್ನು ಅವುಗಳ ಸ್ಥಾನ-ದಳ ಹಾಗೂ ಅಕ್ಷರ ರೂಪಾದ ಪರಶಿವನನ್ನು ಸ್ತುತಿಸಲು ಮತ್ತು ಸ್ಮರಣೆಯಲ್ಲಿಡಲು ಸಹಾಯವಾಗುವದು.
ಇಂಥ ಅಗಮ್ಯ, ಅಗೋಚರ, ಅನುಪಮವಾದ ನವಚಕ್ರಗಳ ನವಲಿಂಗಗಳನ್ನು ತಿಳುಹಿ ಕರಕಮಲದಲ್ಲಿ ತಂದಿರಿಸುವ ಸುವಿವೇಕಿಯಾದ ಸದ್ಗುರುವೆ ! ಎನ್ನ ಮೇಲೆ ಅನವರತ ಕರುಣಾಮೃತವನ್ನು ಸಿಂಚಿಸಿ ನವಲಿಂಗಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿಯನ್ನಿತ್ತು ಕಾಪಾಡು.
ಅಷ್ಟಾಂಗಯೋಗ ನಿರಸನ
೧. ಯಮ ನಿರಸನ
ಯಮಯೋಗ ಪಾಪದಾ | ಕ್ರಮವೆಂದು ತೊಲಗಿಸುತ
ಸುಮನ ಸತ್ಕ್ರಿಯಾ–ಕ್ರಮದ ಲಿಂಗವನಿತ್ತ
ವಿಮಲ ಶ್ರೀಗುರುವೆ ಕೃಪೆಯಾಗು ||೯೩||
ಬ್ರಹ್ಮಾಂಡಗತನಾದ ಪರಶಿವನು ಪಿಂಡಾಂಡದಲ್ಲಿಯೂ ವ್ಯಾಪಿಸಿಕೊಂಡಿದ್ದಾನೆ. ಆ ಪಿಂಡಾಂಡರೂಪ ಶರೀರದ ಅಂತರಂಗದ ಪರವಸ್ತುವನ್ನು ಸದ್ಗುರುವು ತನ್ನ ಶಿವಯೋಗ ಶಕ್ತಿಯಿಂದ ಶಿಷ್ಯನ ಕರಕಮಲಕ್ಕೆ ಇಷ್ಟಲಿಂಗವನ್ನಾಗಿ ಕರುಣಿಸುತ್ತಾನೆ. ಶಿಷ್ಯನು ಶ್ರೀಗುರುವಿನಿಂದ ಆಯತ (ಬರಮಾಡಿ) ಮಾಡಿಕೊಂಡ ಇಷ್ಟಲಿಂಗವನ್ನು ಸ್ವಾಯತ (ಸ್ವಸ್ವರೂಪವನ್ನಾಗಿ) ಗೊಳಿಸಿಕೊಂಡು ಸನ್ನಿಹಿತ (ಸಮರಸ) ಮಾಡಿಕೊಳ್ಳುವದು ಅವಶ್ಯ. ಈ ಸಮರಸ ಅಥವಾ ಮಿಲನ (ಯೋಗ)ಕ್ಕೆ ಶಿವಯೋಗವೆಂದು ಕರೆಯುವರು. ಅಂಗ-ಲಿಂಗಗಳ ಯೋಗವು ಶಿವಯೋಗದಿಂದ ಸಾಧ್ಯವಾಗುವದು.
ಅಧ್ಯಾತ್ಮ ಪಥದಲ್ಲಿ ಮುನ್ನಡೆಯಲಿಚ್ಛಿಸುವ ಜೀವನು ಶಿವನೊಡನೆ ಬೆರೆಯುವದೇ ಅವನ ಧ್ಯೇಯವಾಗಿರುವದು. ಅದಕ್ಕಾಗಿ ದರ್ಶನ ಶಾಸ್ತ್ರಗಳು ಜೀವ-ಶಿವರ ಜೀವಾತ್ಮ-ಪರಮಾತ್ಮರ ಅಥವಾ ಜೀವಬ್ರಹ್ಮರ ಸಂಗಮವಾಗುವ ಪರಿಗೇನೆ ಯೋಗ ವೆ೦ದೂ ಯೋಗಮಾರ್ಗವೆಂತಲೂ ಕರೆದಿವೆ. ಯೋಗ ಮಾರ್ಗಗಳು ವಿಭಿನ್ನವಾಗಿವೆ. ಇಂಥ ಯೋಗಗಳು ಸುಲಭಸಾಧ್ಯವಲ್ಲವೆಂದರಿತ ಶಿವಕವಿಯು ಕೇವಲ ಯೋಗ ಕಡುಕಷ್ಟಕರವಾದುದೆಂದು ಕ್ರಮವಾಗಿ ಖಂಡಿಸುತ್ತಾನೆ. ಶಿವಯೋಗವನ್ನು ಸಾಧಿಸುವ ಸುಲಭತೆಯನ್ನು ಸಿದ್ಧಿಸಿ ತೋರಿಸುತ್ತಾನೆ.
ಯೋಗ ವಿಚಾರವು ಬಹುಪುರಾತನಕಾಲದಿಂದಲೂ ಬೆಳೆದು ಬಂದಿದೆ. ಜೀವಾತ್ಮಾ-ಪರಮಾತ್ಮಾ ಇವರು ಬೆರೆಯುವ ಸಾಧನಕ್ಕೆ ಯೋಗವೆಂದು ಹೆಸರು. ಪರಮಾತ್ಮನ ದರ್ಶನವನ್ನು ಮಾಡಹೊರಟ ಅನೇಕ ಶಾಸ್ತ್ರಗಳು ವಾದ-ವಿವಾದಗಳ ತೊಳಲಾಟದಲ್ಲಿ ಮುಮುಕ್ಷುವನ್ನು ಕಂಗೆಡಿಸಿದವು. ಆದರೆ ಈ ಯೋಗ ದರ್ಶನವು ಮೋಕ್ಷೋಪಾಯಕ್ಕೆ ಸರ್ವೋತ್ತಮ ಸಾಧನಾಯಿತು. ಅಂತೆಯೇ ಯೋಗದ ವಿಚಾರವು ನಾಸ್ತಿಕವಾದಿಗಳೆನಿಸಿದ ಬೌದ್ಧ, ಜೈನ ಮತಗ್ರಂಥಗಳಲ್ಲಿಯೂ ಕಂಡು ಬರುವದು. ಇನ್ನುಳಿದ ದರ್ಶನಗಳಲ್ಲಿಯಂತೂ ಯೋಗದ ವಿಚಾರ ಧಾರಾಳವಾಗಿ ತಿಳಿದು ಬರುತ್ತದೆ. ಕೆಲವರು ಯೋಗದರ್ಶನವನ್ನು ಪತಂಜಲಿ ಮಹರ್ಷಿಯು ಸೃಜಿಸಿದನೆಂದು ಪ್ರತಿಪಾದಿಸುತ್ತಾರೆ. ಪಂಡಿತರ ವಿಚಾರದಂತೆ ಈ ಮುನಿಯು ಯೋಗ ಶಾಸ್ತ್ರದ ಪ್ರವರ್ತಕನಾಗದೇ ಪ್ರಚಾರಕ ಅಥವಾ ಸಂಶೋಧಕನಾಗಿದ್ದಾನೆ. ಅವನು ಯೋಗದ ಅನುಶಾಸನಗೊಳಿಸಿದನು. ಅರ್ಥಾತ್ ಕ್ರಮಬದ್ಧವಾಗಿ ಉಪದೇಶಿಸಿದನು. ಪತಂಜಲಿ ಮಹರ್ಷಿಯು ತನ್ನ ಯೋಗದರ್ಶನದಲ್ಲಿ ೧೯೫ ಸೂತ್ರಗಳನ್ನು ರಚಿಸಿ ಅವುಗಳಲ್ಲಿ
ಸಮಾಧಿಪಾದ, ಸಾಧನಪಾದ, ವಿಭೂತಿಪಾದ, ಕೈವಲ್ಯಪಾದವೆಂದು ನಾಲ್ಕು ಭಾಗಗಳನ್ನು ಮಾಡಿದನು.
ಯೋಗವು ಸಮಾಧಿರೂಪವಾದ ‘ಯುಜ್ ಸಮಾಧೌ” ಎಂಬ ಧಾತುವಿನಿಂದ ಉತ್ಪನ್ನವಾಗಿದ್ದು ಸಮಾಧಿಗೆ ಮೂಲವಾದ ಚಿತ್ತವನ್ನು (ಚಿತ್ತ-ವೃತ್ತಿಗಳನ್ನು) ನಿಗ್ರಹಿಸುವದೇ ಯೋಗವೆಂದು ಪತಂಜಲಿಮುನಿಯು ವ್ಯಾಖ್ಯಾನ ಮಾಡಿದನು
“ಯೋಗಶ್ಚಿತ್ತ ವೃತ್ತಿನಿರೋಧಃ’ | ೧-೨ |
ಅಂತಃಕರಣ ವೃತ್ತಿಗಳನ್ನು ಸಂಪೂರ್ಣವಾಗಿ ನಿಗ್ರಹಿಸುವದೇ ಯೋಗವೆನಿಸುವದು. ಮನಸ್ಸೇ ಬಂಧ ಮತ್ತು ಮೋಕ್ಷಕ್ಕೆ ಕಾರಣವಾಗಿದ್ದರಿಂದ ಮನೋನಿಗ್ರಹವು ಮೋಕ್ಷಕ್ಕೆ ಮೂಲಸಾಧನವಾಗಿದೆ. ಅದಕ್ಕಾಗಿ ಮುನಿಯು ಮೊದಲನೆಯ ಸಮಾಧಿ ಪಾದದಲ್ಲಿ ಚಿತ್ತವೃತ್ತಿಗಳ ವರ್ಣನೆ ಮಾಡಿ ಎರಡನೆಯ ಸಾಧನಪಾದದಲ್ಲಿ ಕ್ರಿಯಾ ಯೋಗವನ್ನು ಸಾಧನೆಗಳ ಮುಂಖಾತರ ಹೇಳುತ್ತಾನೆ .ಅಷ್ಟಾಂಗಗಳಲ್ಲಿ ಪಂಚಾಂಗಗಳ ವಿವರ ಈ ಕ್ರಿಯಾಪಾದದಲ್ಲಿ ಬರುತ್ತದೆ. ಮೂರನೆಯ ವಿಭೂತಿಪಾದದಲ್ಲಿ ಧಾರಣ ಧ್ಯಾನ ಸಮಾಧಿಗಳ ಸ್ವರೂಪವನ್ನು ಮತ್ತು ಸಾಧನೆಯ ನಂತರ ಜೀವನು ಪಡೆಯುವ ವಿಭೂತಿತ್ವ (ಫಲ)ವನ್ನು ತಿಳಿಸಿದ್ದಾನೆ. ಮೋಕ್ಷರೂಪ ಸಮಾಧಿಯ ಸ್ವರೂಪವನ್ನು ಕೊನೆಯ ಪಾದವಾದ ಕೈವಲ್ಯ ಪಾದದಲ್ಲಿ ನಿರೂಪಿಸಿದ್ದಾನೆ. ಮೋಕ್ಷರೂಪ ಸಮಾಧಿಯು ಇಬ್ಬಗೆಯಾಗಿದೆ. ಮೊದಲು ಧ್ಯಾತಾ-ಧ್ಯಾನ ಮಾಡುವ ವ್ಯಕ್ತಿ, ದ್ಯೇಯ = ಧ್ಯಾನ ಗಮ್ಯವಾದ ಪರವಸ್ತು, ಧ್ಯಾನ-ಧ್ಯಾನಮಾಡುವ ಕ್ರಿಯೆಗಳೆಲ್ಲ ಅಡಗಿ ಕೇವಲ ಧ್ಯೇಯದ ಅರಿವು ಸಂಪ್ರಜ್ಞಾತ ಸಮಾಧಿಯಲ್ಲಿ ವ್ಯಕ್ತವಾಗುವದು. ಅಸಂಪ್ರಜ್ಞಾತ
ಸಮಾಧಿಯಲ್ಲಿ ಧ್ಯೇಯವೇ ತಾನಾಗುವನು. ಯಾವುದರ ಅರಿವೂ ಇಲ್ಲಿ ನಿಲ್ಲುವದಿಲ್ಲ. ಇದುವೆ ಯೋಗದ ಸಾಧ್ಯ ಅಥವಾ ಯೋಗ ಸಾಧನೆಯ ಫಲವಾಗಿದೆ.
ಎರಡನೆಯ ಪಾದದಲ್ಲಿ ಬರುವ ಅಷ್ಟಾಂಗಗಳ ವಿವರವನ್ನೇ ಇಲ್ಲಿ ಶಿವಕವಿಯು ಒಂದೊಂದಾಗಿ ವಿವೇಚಿಸುತ್ತಾನೆ.
“ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-
ಧಾರಣ-ಧ್ಯಾನ-ಸಮಾಧಯೋಽಷ್ಟಾವಂಗಾನಿ” ||೨-೨೯ ||
೧. ಯಮ ೨. ನಿಯಮ ೩. ಆಸನ ೪. ಪ್ರಾಣಾಯಾಮ ೫, ಪ್ರತ್ಯಾಹಾರ ೬. ಧಾರಣ ೭ ಧ್ಯಾನ ೮. ಸಮಾಧಿಗಳೆಂದು ಯೋಗಸಾಧನೆಯ ಎಂಟು ಅಂಗಗಳನ್ನು ಯೋಗ ಸೂತ್ರದಲ್ಲಿ ಪ್ರತಿಪಾದಿಸಿದ್ದಾರೆ. ಇವು ಶರೀರ ಮನಸ್ಸು ಹಾಗೂ ಇಂದ್ರಿಯಗಳ
ಶುದ್ಧಿಗಾಗಿ ಹೇಳಿದ ಸಾಧನೆಗಳು. ಇವುಗಳು ಸುಲಭ-ಸಾಧ್ಯವಾದವುಗಳಲ್ಲ. ಅತ್ಯಂತ ಕಠಿಣತರವಾಗಿವೆ. ಅದಕ್ಕಾಗಿ ಶಿವಾದ್ವೈತಿ (ವೀರಶೈವರು)ಗಳು ಕಷ್ಟಸಾಧ್ಯವಾದ ಅಷ್ಟಾಂಗಗಳನ್ನು ಶಿವಯೋಗದಲ್ಲಿಯೇ ಸುಲಭವಾಗಿ ಅಳವಡಿಸಿಕೊಂಡಿದ್ದಾರೆ. ಇದೇ ವಿಚಾರವು ಈ ಪ್ರಕರಣದಲ್ಲಿ ಪ್ರತಿಪಾದಿತವಾಗಿದೆ. ಪ್ರಸ್ತುತ ತ್ರಿಪದಿಯಲ್ಲಿಯಮಾಂಗದ ವಿವರ ಬಂದಿದೆ.
ಅಷ್ಟಾಂಗಗಳಲ್ಲಿ ಮೊದಲನೆಯ ಅಂಗ ‘ಯಮ’, ಯಮವೆಂದರೆ ನಿಯಂತ್ರಿಸುವದು, ನಿಗ್ರಹಿಸುವದು, ಹತ್ತಿಕ್ಕುವದು, ಈ ಅರ್ಥ ಕೊಡುವ ‘ಯಮ್’ ೧ನೇ ಗಣ ಧಾತುವಿನಿಂದ ಯಮಶಬ್ದವು ಸಿದ್ಧವಾಗಿದೆ. ‘ಯಮ’ ಶಬ್ದಕ್ಕೆ ನಾನಾರ್ಥಗಳಿವೆ. ‘ಯಮ’ ವೆಂದಾಕ್ಷಣ ಭಯಂಕರನಾದ ಯಮಧರ್ಮನ ಅರ್ಥವೂ ಗೋಚರಿಸುತ್ತದೆ. ಮುಖ್ಯವಾಗಿ ಇಲ್ಲಿ ಯಮವೆಂದರೆ ಆತ್ಮ ಸಂಯಮನ ಅಥವಾ ಬಹಿರಿಂದ್ರಿಯಗಳನ್ನು ನಿಗ್ರಹಿಸುವದು. ಈ ಯಮವು
ಅಹಿಂಸಾ-ಸತ್ಯಾಸ್ತೇಯ-ಬ್ರಹ್ಮಚರ್ಯಾುಪರಿಗ್ರಹಾ ಯಮಾಃ ||
ಅಹಿಂಸಾವೃತ, ಸತ್ಯ ಪರಿಪಾಲನೆ, ಅಸ್ತೇಯ ಸಾಧನೆ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂದು ಐದು ತೆರನಾಗುತ್ತದೆ. ತನು-ಮನ-ವಚನದಿಂದ ಪರರನ್ನು ನೋಯಿಸದೇ ವಿನಯದಿಂದಿರುವದು ಅಹಿಂಸೆಯು. ಮನ-ವಚನಗಳು ಯಥಾರ್ಥ ವಾಗಿರುವದೇ ಸತ್ಯವೆನಿಸುವದು. ತ್ರಿಕರಣಗಳಿಂದಲೂ ಪರದ್ರವ್ಯವನ್ನು ಕದಿಯದಿರುವದು ಅಥವಾ ಆಶಿಸದಿರುವದು ಆಸ್ತೇಯವೆನಿಸುವದು. ವೀರ್ಯವನ್ನು ರಕ್ಷಿಸುವದು ಬ್ರಹ್ಮಚರ್ಯ (ಗುಪ್ತೋಂದ್ರಿಯ ಸಂಯಮನ) ಅಥವಾ ವನಿತೆಯರ ವಿಲಾಸವನ್ನು ಕಂಡು, ಕೇಳಿದಲ್ಲಿ ಆ ಸ್ತ್ರೀಯಳನ್ನು ಮನೋವಾಕ್ಕಾಯಗಳಿಂದ ತಾಯಿಯೆಂದು ಅನುಭವಿಸುವದೇ ಬ್ರಹ್ಮಚರ್ಯವು. ತನ್ನ ಅವಶ್ಯಕತೆಗಿಂತ ಹೆಚ್ಚಾಗಿ ಧನ-ಧಾನ್ಯಾದಿ ವಿಷಯಗಳನ್ನು ಸಂಗ್ರಹಿಸದಿರುವದು ಹಾಗೂ ರಕ್ಷಿಸಿ ಇಡದಿರುವದು ಅಪರಿಗ್ರಹ ವೆನಿಸುವದು. ಈ ಎಲ್ಲ ಯಮಾಂಗಗಳನ್ನು ಆಚರಿಸುವಲ್ಲಿ ಭಯಾನಕತೆ, ಭಯಂಕರತೆಯೆನಿಸದಿರದು.
ಈ ಯಮದ ವಿಚಾರವನ್ನು ”ಶಿವಯೋಗಪ್ರದೀಪಿಕೆ’ ಯಲ್ಲಿ
ಆಹಾರ ನಿದ್ರೇಂದ್ರಿಯ ದೇಹ ಸರ್ವ
ವ್ಯಾಪಾರ ಶೀತಾತಪಸಂಜ್ಞಕಾನಾಂ |
ಜಯಶ್ಚ ಶಾಂತಿಶ್ಚ ಭವೇದ್ಯಮಾಂಗಃ
ಶನೈಃಶನೈಃ ಸಾಧಯಿತುಂ ಸಯೋಗ್ಯಃ | ೪/೪ |
ಭಕ್ಷ್ಯ-ಭೋಜ್ಯಾದಿ ಷಡ್ಚಿಧಾಹಾರ, ತಮೋಗುಣಾತ್ಮಕ ನಿದ್ರೆ, ಶ್ರೋತ್ರಾದಿ ಜ್ಞಾನೇಂದ್ರಿಯಗಳು, ದೇಹದ ಕರ್ಮರೂಪ ವಾಗಾದಿ ಕರ್ಮೇಂದ್ರಿಯಗಳ ಸಮಸ್ತ ವ್ಯಾಪಾರದಿಂದಾಗುವ ಶೀತ-ಉಷ್ಣ ಅಂದರೆ ಸುಖ-ದುಃಖಗಳನ್ನು ಗೆಲ್ಲುವ ಯೋಗ್ಯತೆ ಮತ್ತು ಅದರಿಂದ ಶಾಂತಿ ದೊರೆಯುವದೇ ಯಮವೆನಿಸುವದು. ಇದನ್ನು ಸಾವಕಾಶವಾಗಿ ಸಾಧಿಸಬೇಕೆಂದು ತಿಳಿಸಿದ್ದಾರೆ.
ಈ ಯಮಸಾಧನೆಯಿಂದ ತನು-ಮನ-ಮಾತುಗಳಿಂದ ಇತರರನ್ನು ನೋಯಿಸದಂತಿರುವ ದಯಾಗುಣ ಬೆಳೆಯುವದು. ಹಿಂಸಾಭಾವ ದೂರವಾಗುವದು. ಮನ ಮಾತುಗಳ ಯಥಾರ್ಥವಾಗುವದರಿಂದ ವಾಕ್ (ವಾಣಿ) ಪರಿಶುದ್ಧವಾಗುವದಲ್ಲದೆ ವಾಕ್ಸಿದ್ಧಿಯೂ ಸಾಧ್ಯವಾಗುವದು. ಅಸ್ತೇಯ ಸಾಧನೆಯಿಂದ ಸ್ವಾರ್ಥಪರತೆ ದೂರಾಗುವದು. ತನ್ನಂತೆ ಇತರರನ್ನು ಕಾಣುವ ಮನೋಭಾವ ಬೆಳೆಯುವದು. ಬ್ರಹ್ಮಚರ್ಯ ಪಾಲನೆಯಿಂದ “ಮಾತೃವತ್ ಪರದಾರೇಷು” ಇತರ ಸ್ತ್ರೀಯರಲ್ಲಿ ತನ್ನ ತಾಯಿಯೆಂಬ ಭಾವ ಬಲಗೊಳ್ಳುವದು. ಶಕ್ತಿಯುತನೂ, ಆತ್ಮಶಕ್ತಿ ಸಂಪನ್ನನೂ ಆಗುವನು. ಅಪರಿಗ್ರಹದಿಂದ ಆಶೆಯು ದೂರವಾಗಿ ವೈರಾಗ್ಯವು ವ್ಯಕ್ತವಾಗುವದು. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ರೂಪಾದ ಯಮ ಸಾಧನೆಯು ಸರ್ವರಿಗೂ ಅತ್ಯುತ್ತಮವಾದುದು. ಆದರೆ ಅದರ ಅನುಷ್ಠಾನವು ಅತ್ಯಂತ ಶ್ರಮದಾಯಕವೂ, ಕಷ್ಟಸಾಧ್ಯವೂ ಆಗಿದೆ. ಪ್ರತ್ಯಕ್ಷ ವಿಷಯಗಳನ್ನು ಗ್ರಹಿಸುವ ಬಹಿರಿಂದ್ರಿಯಗಳನ್ನು ನಿಗ್ರಹಿಸುವದು ಸುಲಭವಲ್ಲ.
೪೪ನೆಯ, ಕಾಮನ ವಿಷಯಕವಾದ ತ್ರಿಪದಿಯಲ್ಲಿ ವಿವರಿಸಿದಂತೆ ಬಹಿರ್ಮುಖಗಳಾದ ಇಂದ್ರಿಯಗಳನ್ನು ಸ್ಥಿಮಿತದಲ್ಲಿರಿಸುವಲ್ಲಿ ಸುಕೃತವೇ ಬೇಕು. ಗುರುಕೃಪೆ ಅವಶ್ಯಬೇಕು. ಮನೋವಿಜ್ಞಾನಿಗಳಾಗಲ್ಲಿ, ಶರಣರಾಗಲಿ ಇಂದ್ರಿಯ ನಿಗ್ರಹವನ್ನು ಮನ್ನಿಸುವದಿಲ್ಲ. ಇಂದ್ರಿಯ ನಿಗ್ರಹವ ಮಾಡಿದರೆ ದೋಷಂಗಳೇ ಉಂಟಾಗುವದಲ್ಲದೆ ಶಾಂತಿ ಸಿಗುವದಿಲ್ಲ. ಯಮದ ಅರ್ಥ ಭಯಂಕರತೆಯನ್ನು ಸೂಚಿಸುತ್ತದೆಂದಮೇಲೆ ಅವುಗಳನ್ನೇ ಪರಿಪಾಲಿಸುವದು ಕಷ್ಟ ಸಾಧ್ಯವೇ ಸರಿ. ಅದನ್ನರಿತ ಶರಣರು ಯಮಯೋಗದ ಕ್ರಮವನ್ನು ಬದಿಗಿರಿಸಿ ಇಂದ್ರಿಯಗಳನ್ನು ಪರಿವರ್ತಿಸುವ ಪರಿಪಕ್ವಗೊಳಿಸುವ ಅರ್ಥಾತ್ ಉದಾತ್ತೀಕರಿಸುವ ವಿನೂತನ ತತ್ತ್ವವನ್ನು ಮನನ ಮಾಡಿಕೊಂಡರು. ಭಕ್ತಿ-ಜ್ಞಾನ ಕ್ರಿಯೆಗಳಿಂದ ಮನವನ್ನು ಸುಮನವನ್ನಾಗಿಸುವ ಗುರು ಕರುಣಿಸಿದ ಇಷ್ಟಲಿಂಗಾರಾಧನೆಯಲ್ಲಿ ತೊಡಗಿಸಿದರು. ಲೀನಗೊಳಿಸಲು ಹಚ್ಚಿದರು. ಬಹಿರಿಂದ್ರಿಯಗಳನ್ನು ಲಿಂಗಪೂಜೆಯ ಸಾಧನ ಸಾಮಗ್ರಿಗಳಲ್ಲಿ ವಿನಿಯೋಗಿಸಿದರು.
ಯಾವುದಕ್ಕಾದರೂ ಬಂಧನ ಮಾಡಿದರೆ ಅದು ವಿಮೋಚನೆಗಾಗಿ ಆತುರ ಪಡುವದು ಸ್ವಾಭಾವಿಕ. ಇದು ಪ್ರಕೃತಿ ನಿಯಮ. ಸಹಜದಲ್ಲಿ ಸುಜ್ಞಾನ ಯುಕ್ತ ಕ್ರಿಯೆಗಳಿಂದ ಅಗಾಧವಾದ ಪರಿಣಾಮ ತೋರಿಬರುವುದು. ಇಂದ್ರಿಯಗಳಿಗೆ ಗೋಚರಿಸುವ ವಿಷಯಗಳು ಶಿವನಸೊತ್ತು. ತನಗೆ ಬಂದುದರಲ್ಲಿ ತಾನು ತೃಪ್ತನಾಗಿರಬೇಕೆಂಬ ಮನೋಭಾವ, ಶಿವಮಯಾತ್ಮಕವಾದ ಪ್ರಪಂಚದಲ್ಲಿ ಯಾವುದೇ ಜೀವಿಗೆ ನೋವು ಮಾಡಿದರೆ ಶಿವನಿಗೇನೇ ಆಗುವದೆಂಬ ವಿಚಾರ ಸರಣಿ: ಮತ್ತು ಮಾಡುವ-ನುಡಿಯುವ ಕ್ರಿಯೆಗಳು ಲಿಂಗಮೆಚ್ಚಬೇಕೆಂಬುವ ಅನುಭವಿಗಳ ಉಕ್ತಿ; ಲಿಂಗಪೂಜೆಯನ್ನು ಮಾಡಲು ಬೇಕಾದ ಜಲ ಹೂವು ಪತ್ರಿಗಳನ್ನು ತರುವಾಗಲು ಅವುಗಳನ್ನು ವಿನಂತಿಸಿ ಅನುಮತಿ ಕೋರಿಕೊಳ್ಳುವ ವಿಧಾನ, ಲಿಂಗದ ಪ್ರಾಣನಾದ ಜಂಗಮತೃಪ್ತಿಗೆ ಬೇಕಾದ ಪ್ರಸಾದವನ್ನು ಸ್ವತಃ (ದುಡಿದು) ಕಾಯಕ ಮಾಡಿ ದಾಸೋಹ ಮಾಡಬೇಕೆಂಬುವ ವಿಶಾಲ ತಳಹದಿಯುಳ್ಳ ಶಿವಭಕ್ತನಿಗೆ ಯಮದ ಅವಶ್ಯಕತೆಯಿಲ್ಲ. ಅವನು ಆಚರಿಸುವ ಪ್ರತಿಯೊಂದು ಕ್ರಿಯೆಗಳು ಸತ್ಕ್ರಿಯೆಗಳು; ಲಿಂಗ ಕ್ರಿಯೆಗಳು. ಆದ್ದರಿಂದ ಮನಸ್ಸು ಸುಮನವಾಗುತ್ತದೆ. ಭಾವ ಪರಿಶುದ್ಧವಾಗುವದು. ಯಮಾಚರಣೆಯು ಸಹಜವಾಗುವದು. ಮತ್ತು ಯಮಾಂಗಗಳನ್ನು ಪಾಲಿಸದಿದ್ದರೆ ಪಾಪವೆಂಬ ಭೀತಿ ಬಯಲಾಗುವದು. ಓ ಮಲರಹಿತನೆನಿಸಿದ ಪರಮ ಗುರುವೆ ! ನನ್ನ ತ್ರಿಮಲಗಳನ್ನು ನಾಶ ಮಾಡಿದವನೆ ! ಎನ್ನ ಕ್ರಿಯೆಗಳೆಲ್ಲ ಸತಕ್ರಿಯೆಗಳಾಗುವಂತೆ ಕರುಣಿಸು.
ನಿಯಮಾಂಗ ನಿರಸನ
ನಿಯಮಯೋಗವೆ ಭವದಾ | ಲಯವೆಂದು ತೊಲಗಿಸುತ
ಸ್ವಯಲಿಂಗ ಪೂಜೆಯ….ನಿಯಮವನು ಕರುಣಿಸಿದ
ಭಯಹರ್ತ ಗುರುವೆ ಕೃಪೆಯಾಗು ||೯೪ ||
ಅಷ್ಟಾಂಗ ಯೋಗದ ಎರಡನೆ ಅಂಗ ನಿಯಮ. ಈ ನಿಯಮವೂ ಐದು ತೆರನಾಗಿದೆ. ಯೋಗ ದರ್ಶನದಲ್ಲಿ
”ಶೌಚ-ಸಂತೋಷ-ತಪಃ-ಸ್ವಾಧ್ಯಾಯೇಶ್ವರ-
ಪ್ರಣಿಧಾನಾನಿ ನಿಯಮಾಃ” ||೨-೩೨ ||
ನಿಯಮಗಳಲ್ಲಿ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನಗಳೆಂಬ ಐದು ಭಾಗಗಳು. ಯಮವು ಬಹಿರಿಂದ್ರಿಯ ನಿಗ್ರಹ ಸಾಧನವಾದರೆ ನಿಯಮವು ಅಂತರಿಂದ್ರಿಯ ನಿಗ್ರಹವಾಗಿದೆ. ಅಂತರಂಗಶುದ್ಧಿಗಾಗಿ ಹೇಳಿದ ವಿಧಾನಂಗಳೇ ನಿಯಮಂಗಳು. ಮಣ್ಣು ನೀರಿನಿಂದಾಗುವ ಶುದ್ಧತೆಯೆ ಬಾಹ್ಯ ಶೌಚವು. ಭಾವಶುದ್ಧಿಯಿಂದಾಗುವದು ಅಂತಃಶೌಚವು. ಮನೆಯನ್ನು ಒಳಹೊರಗೂ ಸ್ವಚ್ಛವಾಗಿರಿಸುವಂತೆ ಶಿವನ ವಾಸಸ್ಥಾನವಾದ ದೇಹ ದೇವಾಲಯಗಳನ್ನು ಒಳಹೊರಗೂ ಪವಿತ್ರಗೊಳಿಸುವ ಸಾಧನೆಯೇ ಶೌಚ ವೆನಿಸುವದು. ತನ್ನ ಉದ್ಯೋಗ (ಕಾಯಕ) ದಿಂದ ಬಂದುದರಲ್ಲಿ ತೃಪ್ತನಾಗಿರುವದೇ ಸಂತೋಷವು, ದೊರೆತುದಕ್ಕಿಂತ ಹೆಚ್ಚಿನ ಆಸೆ ಮಾಡದಿರುವದೂ ಸಂತೋಷವೇ. ತಪಸ್ಸೆಂದರೆ ಚಾಂದ್ರಾಯಣಾದಿ ಕಠಿಣ ವ್ರತಗಳಿಂದ ತನ್ನ ಶರೀರೇಂದ್ರಿಯಗಳನ್ನು ನಿಗ್ರಹಿಸುವದು; ಶೀತೋಷ್ಣ, ಸುಖ- ದುಃಖ, ಹಸಿವು-ನೀರಡಿಕೆ ಮೊದಲಾದ ದ್ವಂದ್ವಗಳನ್ನು ತಡೆಯುವದೂ ತಪವು. ಆರಾಧ್ಯದೇವತೆಯ ಮಂತ್ರವನ್ನು ಜಪಿಸುವದು; ಮೋಕ್ಷದಾಯಕ ಶಾಸ್ತ್ರಗಳ ಅಭ್ಯಾಸ ಮಾಡುವದು ಸ್ವಾಧ್ಯಾಯವೆನಿಸುವದು. ಗುರುಗಳಲ್ಲಿ, ದೇವರಲ್ಲಿ ಸರ್ವ ಕರ್ಮಗಳನ್ನು ಅರ್ಪಣಮಾಡುವ ಬುದ್ಧಿ ಅರ್ಥಾತ್ ಸಮರ್ಪಣ ಭಾವವೇ ಈಶ್ವರ ಪ್ರಣಿಧಾನವೆನಿಸುವದು. ಹೀಗೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನಗಳಿಂದ ಕೂಡಿದುದೇ ನಿಯಮವು, ನಿಜಗುಣ ಶಿವಯೋಗಿಗಳು ತಮ್ಮ “ಪಾರಮಾರ್ಥ ಪ್ರಕಾಶಿಕೆ’ ಯಲ್ಲಿ
ಶ್ರೀ ಗುರುವಿನಲ್ಲಿ ಭಕ್ತಿಯು, ಷಡಧ್ವಾತೀತವಾಗಿ ಸ್ವಪರ
ಪ್ರಕಾಶದಿಂ ನಿಜಮುಕ್ತಿ ಸ್ಥಾನಮಾನದ ಪರಮಪದದಲ್ಲಿ ಪ್ರೀತಿಯು
ಜನಸಂಗಕ್ಕೆ ದೂರವಾಗಿಹ ತನುವು. (ಇದು ಶೌಚವು)
ಅಪ್ರಯತ್ನವಾಗಿ ಅನಿಚ್ಛಾಪ್ರಾರಬ್ಧದಿಂ ಬಂದ ಯಥಾಲಾಭ
ಸಂತೋಷವು ಬಾಧಾರಹಿತವಾಗಿ ಮನೋರಮ್ಯವಾದೇಕಾಂ
ತಾಶ್ರಯದಲ್ಲಿಯ ತಾತ್ಪರ್ಯವು, ಮನಮಂ ಬಹಿರ್ಮುಖ
ವಾಗಲೀಯದಿಹುದು, ವಿಚಿತ್ರ ವಿಷಯಂಗಳಲ್ಲಿಯ ವಿರತಿಯು
ಎಂಬಿವೆಲ್ಲುಂ ನಿಯಮವೆಂಬಂಗಮಕ್ಕುಂ
ಎಂದು ನಿಯಮದ ವಾಖ್ಯೆಯನ್ನು ಮಾಡಿರುವರು. ಇದಕ್ಕೂ ಸರಳವಾಗಿ ದ್ವಿತೀಯ ಪರಿಚ್ಛೇದದಲ್ಲಿ ನಿಯಮವನ್ನು ಹತ್ತು ತೆರನಾಗಿ ವಿಂಗಡಿಸಿರುವರು
ಬಳಿಕ ಭೋಗ್ಯ ವಸ್ತುಗಳ ಲಬ್ದಿ-ನಾಶಂಗಳಲ್ಲಿ ಸಮಾನ
ಬುದ್ದಿಯೆನಿಪ ಸಂತೋಷವು. ಶಿವಾಗಮೋಕ್ತಂಗಳಾದ ವಿಧಿನಿಷೇಧಂ
ಗಳಿಂ ಪುಣ್ಯಪಾಪಂಗಳಪ್ಪವೆಂಬ ವಿಶ್ವಾಸವು, ತನಗಾಚಾರ್ಯೋ
ಪದೇಶದಿಂದಾದ ಸತ್ಕೃತ್ಯದೇಕತೆಯು, ಯೋಗಾರ್ಥಮಾಗಿ
ದೇಹಶೋಷಣರೂಪ ತಪವು. ಮೇಣು ನಾನಾರು ಮೋಕ್ಷವೆಂ
ತಪ್ಪುದೆಂಬಿವು ಮೊದಲಾದಲೋಚನರೂಪ (ಸ್ವಾಧ್ಯಾಯ ತಪವು)
ಭಸ್ಮನಿಷ್ಠತ್ವಾದಿ ವ್ರತವು. ಧ್ಯಾನಸ್ತೋತ್ರಾಭಿಷೇಕತ್ವಾದಿಗಳಿಂ
ದೀಶ್ವರಾರ್ಚನವು ಮಾನಸೋಪಾಂಶು ವಾಚಕಂಗಳಿಂ ಪ್ರಣವ
ಪಂಚಾಕ್ಷರಾದಿ ಮಂತ್ರಜಪವು. ಲೋಕವಿರುದ ಶಾಸ್ತ್ರವಿರುದ್ಧ
ಮಾದ ಮಾರ್ಗಂಗಳಲ್ಲಿ ಮನವೆರಗದಿಹುದು. ಯೋಗಶಾಸ್ತ್ರಂ
ಗಳಂ ಕೇಳುವುದು ಸತ್ಪ್ರಾತ್ರದಾನವು ಎಂಬ ಹತ್ತು ನಿಯಮಂ
ಗಳಕ್ಕುಂ (೨೯ನೇ ಪುಟ)
ಮೊದಲಿನ ಐದರ ಭಾವವು ಈ ಹತ್ತು ನಿಯಮಗಳಲ್ಲಿ ಬಂದಿದೆ. ಆದರೆ ಇವುಗಳಲ್ಲಿ ಕೆಲವು ಶಿವಾದೈತ ಸಿದ್ಧಾಂತಕ್ಕೂ ಸಮನ್ವಯಗೊಂಡಿವೆ. ಯೋಗ ದರ್ಶನಕಾರರು ಹೇಳುವ ನಿಯಮಗಳು ಕಠಿಣತರವಾಗಿವೆ. ಪುಣ್ಯ ಸಂಗ್ರಹಕ್ಕಾಗಿ ಮಾಡುವ ಶೌಚ-ತಪಾದಿಗಳು ಪುನರ್ಜನ್ಮಕ್ಕೆ ಕಾರಣವಾಗಿವೆ. ಚಾಂದ್ರಾಯಣ ವೃತದಲ್ಲಿ ಪ್ರತಿಪದೆಯಿಂದ ಒಂದೊಂದು ತುತ್ತು ಪ್ರಸಾದವನ್ನು ಹೆಚ್ಚಿಸಿ ಸ್ವೀಕರಿಸುತ್ತ ಹೋಗಿ, ಪುನಃ ಹುಣ್ಣಿಮೆಯಿಂದ ಚಂದ್ರ ಕುಂದಿದಂತೆ ಒಂದೊಂದು ತುತ್ತನ್ನು ಕಡಿಮೆ ಮಾಡುವರು. ಹೀಗೆ ಕಾಯವನ್ನು ಶೋಷಿಸಿದರೆ ಶಿವಕೊಟ್ಟ ಪ್ರಸಾದ ಭೋಗ ತಪ್ಪಿಹೋಗಿವದು. ಅಲ್ಲದೆ ಕೂಡಲ ಸಂಗನನ್ನು ಒಲಿಸಲು ಬಂದ ಪ್ರಸಾದಕಾಯ ಕಂದಿ ಹೋಗುವದೆಂದು ಶರಣರು ಸಾರಿದ್ದಾರೆ.
ಧರ್ಮ ಸಾಧನೆಗೆ ಮೂಲವಾದ ಶರೀರವು ಕೃಶವಾಗಿ ಪೂರ್ಣಜ್ಞಾನವನ್ನು ಸಂಪಾದಿಸದೇ ಭವಕ್ಕೆ ಪುನಃ ಪುನಃ ಬರಬೇಕಾಗುವದು.
ಅದು ಕಾರಣ ಶರಣನಿಗೆ (ಶಿಷ್ಯನಿಗೆ) ಗುರುವು ಶರೀರೇಂದ್ರಿಯಗಳನ್ನು ಶೋಷಿಸುವ ನಿಯಮವನ್ನು ಕಡೆಗಣಿಸಿ ಸ್ವಯಲಿಂಗ ಪೂಜಾ ನಿಯಮಗಳನ್ನು ನಿರೂಪಿಸುತ್ತಾನೆ. ಆಯತ ಮಾಡಿಕೊಂಡ ಲಿಂಗವು ಸ್ವಯವಾಗುವ (ಸ್ವಾಯತ) ಸಾಧನವೇ ಲಿಂಗಾರ್ಚನೆ. ಆದರೆ ದೇಹೇಂದ್ರಿಯಾದಿಗಳನ್ನು ಶೋಷಿಸುವ ನಿಯಮ ಪಾಲಕನಿಗೆ ಪರಿಪೂರ್ಣ ಸಂತೋಷಸಿಕ್ಕದು. ವಿಷಯಾದಿಗಳನ್ನು ನೋಡಿದ ಮನದಲ್ಲಿ ಕಾಮನೆ ಬರುವುದು ಸಹಜ. ಇದನ್ನು ಲಿಂಗಪೂಜಕನು ಲಿಂಗೋಪಭೋಗಿ (ಲಿಂಗಭೋಗೋಪಭೋಗಿ) ಯಾಗಿ ಉದಾತ್ತೀಕರಿಸಿಕೊಂಡು ಸದಾ ಸಂತೋಷಿಯಾಗುವನು.
ಗುರುಮುಖದಿಂದ ಬಾರದ, ಸ್ವಾನುಭಾವದಲ್ಲಿ ಅಳವಡದ ಜಪಾದಿಗಳು, ವಾದ-ವಿವಾದದಿಂದ ಕೂಡಿದ ಮೋಕ್ಷ (ಅದ್ವೈತ) ಗ್ರಂಥಗಳ ಸ್ವಾಧ್ಯಾಯವು ಶಿವಾನುಭವದಂತೆ ತೃಪ್ತಿಯನ್ನು ಕೊಡಲಾರದು. ಗುರು-ದೇವರಲ್ಲಿ ಅರ್ಪಿಸುವ ಈಶ್ವರಪ್ರಣಿಧಾನಕ್ಕಿಂತ ಗುರು-ಲಿಂಗ-ಜಂಗಮಕ್ಕರ್ಪಿಸುವ ತ್ರಿವಿಧ ದಾಸೋಹವು ಮಿಗಿಲಾಗಿದೆ. ತನು-ಮನ-ಧನಗಳ ಸಮರ್ಪಣೆಯಾಗಿ ಭೃತ್ಯಾಚಾರವು ಅಳವಡುತ್ತದೆ. ಭೃತ್ಯಾಚಾರವನ್ನು ಕಲಿಸಿ ಸ್ವಯಲಿಂಗ ಪೂಜೆಯ ನಿಯಮವನ್ನು ಕರುಣಿಸುವ ಗುರುವು ಭವ-ಭಯವನ್ನು ಹರಣ ಮಾಡುವನು. ಗುರು, ಲಿಂಗ, ಜಂಗಮ ಭಕ್ತನಾದವನಿಗೆ ಭವ-ಭಯವಿಲ್ಲ. ಮರಣವೇ ಮಹಾನವಮಿಯಾದ ಮೇಲೆ ಭಯವೆಂಬುದೇ ಇರುವದಿಲ್ಲ. ನಿಷ್ಕಾಮಕರ್ಮವೆನಿಸಿದ ಲಿಂಗಾರ್ಚನೆಯು ಭವ (ಪುನರ್ಜನ್ಮ) ವನ್ನು ನೀಗುತ್ತದೆ.
ಇಲ್ಲಿ ಶಿವಕವಿಯು ಪ್ರಯೋಗಿಸಿದ ”ಸ್ವಯಲಿಂಗಪೂಜೆ” ಪದವು ಅತ್ಯಂತ ಅರ್ಥಪೂರ್ಣವೂ ತಾತ್ವಿಕವೂ ಆಗಿದೆ. ಇಷ್ಟಲಿಂಗವು ಸ್ವಯಲಿಂಗವೆನಿಸಿದೆ. ಇದು ಅಂಗನಿಗೆ ಭಿನ್ನವಾದುದಲ್ಲ, ಅಂಗನ ಸ್ವಸ್ವರೂಪವೇ ಇಷ್ಟಲಿಂಗವಾಗಿರುತ್ತದೆ. ತನ್ನ ಚಿತ್ಕಳೆಯೇ ಲಿಂಗವಾಗಿ ಬಂದಿದೆ. ತನಗಿಂದ ಅನ್ಯವಾದುದಲ್ಲ. ತಾನೇ ಲಿಂಗ, ಅದುವೇ ತಾನು. ಮತ್ತು
*”ಮುನ್ನನಾದಿಯ ಪರಾತ್ಪರ ನಿರಂಜನ ಶರಣ
ತನ್ನ ಹೃತ್ಕಮಲದ ಪರಂಜ್ಯೋತಿ ಲಿಂಗವನು
ಭಿನ್ನವಿಲ್ಲದೆ ವಾಮಕರಕಂಜದೊಳ್ ಪಿಡಿದು ತನ್ನ ತಾನರ್ಚಿಸುತಿಹ” ||
ನೆಂದು- ಸ್ವಯಲಿಂಗಪೂಜೆಯ ಅರ್ಥವನ್ನು ಸ್ಪಷ್ಟವಾಗಿ ಈ ಕವಿಯು ಬೇರೆಡೆ ತಿಳಿಸಿದ್ದಾನೆ. ಹಿಂದೆ ಪ್ರತಿಪಾದಿಸಿದ ಗುರುಕರುಣೆಯ ವಿವರದಿಂದಲೂ ಈ ಮಾತು ಯಥಾರ್ಥವಾಗಿ ವೇದ್ಯವಾಗದೇ ಇರದು.
ಇಷ್ಟಲಿಂಗ ಪೂಜೆಯಲ್ಲಿ ಪೂಜ್ಯಪೂಜಕ ಭಾವವಿರುವದಿಲ್ಲ.ʼʼ ರುದ್ರೋ ಭೂತ್ವಾ ರುದ್ರಂ ಯಜೇತ್ʼʼ ಶಿವನಾಗಿ ಶಿವನನ್ನು ಪೂಜಿಸಬೇಕೆಂದೇ ಶ್ರುತಿ ಸಾರುತ್ತಿದೆ. ಲಿಂಗಭಕ್ತನು ಸ್ವಸ್ವರೂಪದ ಅನುಸಂಧಾನ ಮಾಡುತ್ತಾನೆ. ಆದರೆ ಸ್ಥಾವರಲಿಂಗ ಪೂಜಕನ ಪರಿ ಬೇರೆ. ಲಿಂಗ ಬೇರೆ-ತಾನು ಬೇರೆಂದು ಆರಾಧಿಸುತ್ತಾನೆ. ಇಲ್ಲಿ ಸ್ಥಾವರ ಲಿಂಗವು ಉಪಾಸ್ಯವಾದರೆ ತಾನು ಉಪಾಸಕನೆನಿಸುವನು. ಇದು ಇದಿರಿಟ್ಟು ಮಾಡುವ ಪೂಜೆಯಾಗುವದು. ಈ ದೇವರು ದೇವಾಲಯದಲ್ಲಿಯೇ ಲಭ್ಯವಾಗುತ್ತಿದ್ದರೆ ಇಷ್ಟಲಿಂಗವು ಸದಾ ಶರೀರವನ್ನು ಹೊಂದಿಕೊಂಡಿರುತ್ತದೆ. ಸ್ಥಾವರ ಲಿಂಗವನ್ನು ಸ್ವತಃ ಅರ್ಚಿಸುವ ಅವಕಾಶ ಕಡಿಮೆ. ಪೂಜಾರಿಯು ಮಧ್ಯಸ್ಥನಾಗುವನು. ಅಲ್ಲಿ ಮನದಣಿಯುವಂತೆ ಪೂಜೆಗೈಯುವ ಪರಿಸರವಿಲ್ಲ. ಇಷ್ಟಲಿಂಗವನ್ನು ತನಗಾನಂದನಾಗುವ ವರೆಗೂ ತನ್ನಾಲಯದಲ್ಲಿ ಪೂಜಿಸಬಹುದು. ಗುರೂಪದಿಷ್ಟ ಷಡಕ್ಷರ ಮಂತ್ರಾನುಷ್ಠಾನವು ಲಿಂಗಭಕ್ತನನ್ನು ಲಿಂಗವನ್ನಾಗಿಸುತ್ತದೆ. ಲಿಂಗ ಪೂಜಿಸುವಲ್ಲಿ ಸ್ವಾನುಭಾವವು ಓತಪ್ರೋತವಾಗಿರುತ್ತದೆ. ಗುರುವಿಗೆ ತನುವಿನ ಸೇವೆಯನ್ನು ಲಿಂಗದಲ್ಲಿ ಮನವನ್ನು ಜಂಗಮನಿಗೆ ಧನವನ್ನು ಅರ್ಪಿಸುವ ಭಕ್ತನಲ್ಲಿ ವಿಷಯವಾಸನೆಯು ಅಳಿಯುತ್ತ ಹೋಗುತ್ತದೆ. ಅಂದ ಮೇಲೆ ನಿಯಮ ಯೋಗವನ್ನು ಸಾಧಿಸಿ ಪುನಃ ಪುನಃ ಹುಟ್ಟಿ ಬರುವದಕ್ಕಿಂತ ನಿತ್ಯಮುಕ್ತನನ್ನಾಗಿಸುವ ಸ್ವಯಲಿಂಗ ಪೂಜೆಯ ನಿಯಮ ಅಸದೃಶವಾದುದು. ಅಮೋಘವಾದುದು. ಓ ಸದ್ಗುರುವೆ ! ಭವಭಯಹರನೆ ! ಸ್ವಯಲಿಂಗ ಪೂಜೆಯ ನಿಯಮವು ಚೆನ್ನಾಗಿ ಎನ್ನಲ್ಲಿ ಅಳವಡು ವಂತೆ ಕರುಣಿಸಿ ಕಾಪಾಡು.
೩. ಆಸನದ ಆಯಾಸ
ಆಸನದ ಯೋಗದ | ಭ್ಯಾಸವಾಯಸವೆಂದು
ಓಸರಿಸಿ ಕರಕಂ – ಜಾಸನ ಲಿಂಗವಿತ್ತು
ಲ್ಲಾಸ ಶ್ರೀ ಗುರುವೆ ಕೃಪೆಯಾಗು ॥ ೯೫ ||
ಯೋಗದ ಮೂರನೆಯ ಅಂಗ ಆಸನವು. “ಸ್ಥಿರ-ಸುಖಮಾಸನಮ್” ಸ್ಥಿರವಾಗಿ ಹಾಗೂ ಸುಖವಾಗಿ ಮಂಡಿಸುವ ಶಕ್ತಿಯನ್ನು ಪಡೆಯುವದಕ್ಕೇನೆ ಆಸನವೆಂದು ಯೋಗಶಾಸ್ತ್ರ ಪ್ರತಿಪಾದಿಸಿದೆ. ಹಠಯೋಗ ಸಾಧನೆಯಲ್ಲಿ ಆಸನದ ಸ್ಥಾನವು ಬಹುಮುಖ್ಯವಾಗಿದೆ. ದೈಹಿಕ ಆರೋಗ್ಯ ಹಾಗೂ ಮಾನಸಿಕ ಶಾಂತಿಗಾಗಿ ಈ ಆಸನಗಳು ಅವಶ್ಯ. ಆಯಾಸ ಮಾಡಬಲ್ಲ ಆಸನಗಳಿಂದ ಲಾಭವಾಗುವದಿಲ್ಲ. ದೈಹಿಕ ಶ್ರಮ ಜೀವಿಗಳಿಗೆ ಆಸನಗಳ ಅಗತ್ಯವಿರದಿದ್ದರೂ ಬುದ್ದಿ ಜೀವಿಗಳಿಗೆ ಆಸನಗಳು
ಬೇಕು. ಟಿ. ಕೃಷ್ಣಮಾಚಾರ್ಯರು-ತಮ್ಮʼʼ ಯೋಗಾಸನ‘ ಗ್ರಂಥದಲ್ಲಿ ಆಸನವು ಶರೀರ ಮಾಂಸ, ಮನಸ್ಸು ಇವುಗಳನ್ನು ಆಯಾ ವಯಸ್ಸಿಗೆ ತಕ್ಕಂತೆ ಸಮತೂಕ ಕ್ರಿಯಾಶಕ್ತಿಗಳೊಂದಿಗೆ ವೃದ್ಧಿಪಡಿಸಿ ಆಯುರ್ವೃದಿ, ರೋಗನಿವಾರಣೆ ಮತ್ತು ಮನಸ್ಸಿನ ಸ್ಥೈರ್ಯ, ಸೂಕ್ಷ್ಮವಸ್ತುತ್ತ್ಚ ಗ್ರಾಹಕ ಶಕ್ತಿಗಳೊಂದಿಗೆ ಆತ್ಮಾನಾತ್ಮ ವಿವೇಕವನ್ನು ಕೊಡುವ ಕಲ್ಪವೃಕ್ಷದಂತಿರುತ್ತೆ’ ಎಂದು ಆಸನದ ಮಹತ್ವವನ್ನು ಬಿತ್ತರಿಸಿದ್ದಾರೆ.
ಶಾರೀರಿಕ ತಾಲೀಮು ಮಾಡುವವನ ಶರೀರವು ಘಟ್ಟಿಯಾಗಿ ಜಟ್ಟಿಯೆನಿಸ ಬಹುದು, ಆದರೆ ಅವನ ಬುದ್ದಿ ಬೆಳವಣಿಗೆಯು ಆಗುವದಿಲ್ಲ. ಆಸನದಿಂದ ಶರೀರಕ್ಕೆ ಬೇಕಾದಷ್ಟೇ ಕೊಬ್ಬು ಉಳಿದು ಹೆಚ್ಚಿನ ಬೊಜ್ಜು ಬೆಳೆಯಲು ಅವಕಾಶ ಬರುವದಿಲ್ಲ. ಅದರಿಂದ ದೈಹಿಕ ಉತ್ಸಾಹವೂ ಬುದ್ದಿಯ ತೀಕ್ಷತೆಯೂ ಬೆಳೆಯುವದು. ಶ್ವಾಸೋಚ್ಛ್ವಾಸದಗತಿ ಸಮನಾಗುವದು. ಸರಳವಾದ ವ್ಯಾಯಾಮವು ಶರೀರಕ್ಕೆ ಬೇಕೇಬೇಕು. ʼʼ ದಿನಾಲು ತಪ್ಪದೆ ನಿಯಮಿತ ವ್ಯಾಯಾಮವನ್ನು ತಕ್ಕೊಂಡರೆ ತನುಮನಗಳೆರಡೂ ಸುದೃಢವೂ ಸುಂದರವೂ, ಶಾಂತವೂ, ಪ್ರಸನ್ನವೂ ಮತ್ತು ರೋಗ ರಹಿತವೂ ಆಗುವವು. ಮತ್ತು ನಿದ್ದೆಯಾದರೂ ಚೆನ್ನಾಗಿ ಹತ್ತುವದು‘ ಎಂದು ಸ್ವಾಮಿ ಶಿವಾನಂದರು ತಮ್ಮʼʼ ಬ್ರಹ್ಮಚರ್ಯವೇ ಜೀವನ, ವೀರನಾಶವೇ ಮೃತ್ಯುʼ’ ಎಂಬ ಗ್ರಂಥದಲ್ಲಿ ಸರಳ ವ್ಯಾಯಾಮ ಹಾಗೂ ಆಸನದಿಂದಾಗುವ ಸ್ವಾನುಭಾವದ ಸುಧೆಯನ್ನು ಸುರಿಸಿದ್ದಾರೆ. ಕಾಮಾತುರವಾದ ಮನವೂ ವ್ಯಾಯಾಮ ಅಥವಾ ಆಸನಗಳಿಂದ ಹಿಡಿತದಲ್ಲಿ ಉಳಿಯುವದೆಂದೂ ತಿಳಿಸಿದ್ದಾರೆ.
ಆಸನಗಳ ಸಾಧನೆಯಿಂದ ಆಂತರಿಕ ರೋಗಗಳೂ ಸಹ ಹೇಳ ಹೆಸರಿಲ್ಲದಂತಾಗುತ್ತವೆ. ಪ್ರತಿನಿತ್ಯ ಕೆಲವು ಮುಖ್ಯವಾದ ಹಾಗೂ ಸುಲಭವಾದ ಶೀರ್ಷಾಸನ, ಮಯೂರಾಸನ, ಪಶ್ಚಿಮತಾನಾಸನ, ಸಿದ್ಧಾಸನ, ಪದ್ಮಾಸನ ಮೊದಲಾದವು ಗಳನ್ನಾದರೂ ತಪ್ಪದೇ ಹಾಕುವದರಿಂದ ಶರೀರಕ್ಕೆ ಬಹಳಷ್ಟು ಲಾಭವಾಗುವದು. ಶೀರ್ಷಾನದಿಂದ ತಲೆನೋವು ದೂರಾಗುವದಲ್ಲದೆ ಕಣ್ಣಿನ ಶಕ್ತಿ ಬೆಳೆಯುವದು. ಸರ್ವಾಂಗಾಸನದಿಂದ ಹೊಟ್ಟೆಯಲ್ಲಿ ಆಹಾರ ವ್ಯತ್ಯಾಸದಿಂದಾಗುವ ಸಾಮಾನ್ಯ ನೋವು ಬರುವದಿಲ್ಲ. ಮಲಬದ್ಧತೆ ಹೋಗುವದಲ್ಲದೆ ಹೊಟ್ಟೆ ತೆಳ್ಳಗಾಗುವದು. ಬೆನ್ನಿನ ಹುರಿ ಗಟ್ಟಿಗೊಳ್ಳುವದು. ಮಯೂರಾಸನದಿಂದ ಯಕೃತ್ ಸಶಕ್ತವಾಗುವದು. ಕೈಗಳಲ್ಲಿ ಬಲಬರುವದು. ಬೆನ್ನು ಹುರಿಯ ಜಡತೆ ದೂರವಾಗುವದು. ಪಶ್ಚಿಮತಾನಾಸನ ದಿಂದ ಹೊಟ್ಟೆಯ ಎಲ್ಲಾ ಬಗೆಯ ರೋಗಗಳು ಮಾಯವಾಗುವವು. ಹಠಯೋಗ ಸಾಧನೆಯಲ್ಲಿ ಅನೇಕ ಆಸನಗಳನ್ನು ಹೇಳಿದ್ದಾರೆ. ಅವುಗಳಲ್ಲಿ ೮೪ ಆಸನಗಳನ್ನು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆಯ್ಕೆ ಮಾಡಿದ್ದರು. ಇವುಗಳಲ್ಲಿ ಮೇಲಿನವು ಪ್ರಮುಖವಾದವುಗಳು. ಇನ್ನು ಕೆಲವು ಆಸನಗಳು ಬಹು ಕಠಿಣವಾಗಿವೆ. ಅವುಗಳನ್ನು ಹಾಕುವದರಿಂದ ಶರೀರಕ್ಕೆ ಆಯಾಸವೂ ಆಗುವದು. ಇವುಗಳನ್ನು ಗುರುಮುಖದಿಂದ ಅರಿತು ಆಚರಿಸಬೇಕು. ಅಂದರೆ ಶರೀರದ ಎಲ್ಲಾ ಅವಯವಗಳಿಗೆ ವ್ಯಾಯಾಮವೆನಿಸುವದು
ಶಿವಯೋಗ ಮಂದಿರದಲ್ಲಿ ಇಂದಿಗೂ ಸಾಧಕರು ಯೋಗಾಸನಗಳನ್ನು ತಪ್ಪದೆ ಹಾಕುತ್ತಾರೆ. ಇಲ್ಲಿ ಆಸನಗಳ ಜೊತೆಗೆ ಮುದ್ರೆಗಳನ್ನು ದೃಷ್ಟಿಗಳನ್ನು ಸಹ ಅನುಸರಿಸುತ್ತಾರೆ. ಈ ಪರಂಪರೆ ಬೇರೆಡೆ ಕಾಣ ಬರುವದಿಲ್ಲ. ದೃಷ್ಟಿ ಹಾಗೂ ಮುದ್ರೆಗಳು ಅತ್ಯಂತ ಉಪಯುಕ್ತವಾಗಿವೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟು ಲಿಂ, ಸಖರಾಯ ಪಟ್ಟಣದ (ಗಿರಿಯಾಪೂರ) ಸದಾಶಿವಾಚಾರ್ಯರು ‘ಯೋಗಾ ಸನಗಳು’ ಎಂಬ ಗ್ರಂಥದಲ್ಲಿ ವಿವೇಚಿಸಿದ್ದಾರೆ. ಪ್ರಾಮಾಣಿಕವಾಗಿ ಸಂಗ್ರಹಿಸಿದ್ದಾರೆ.
ಸಾಮಾನ್ಯವಾದ ಆಸನಗಳನ್ನು ಸ್ತ್ರೀಪುರುಷರಿಬ್ಬರೂ ಅಭ್ಯಾಸಮಾಡಿ ಆರೋಗ್ಯ ಪಡೆಯಬಹುದು.
ಯೋಗಾಸನಗಳು ಶರೀರಕ್ಕೆ ಉಪಯುಕ್ತವಾದ ಮೇಲೆ ಅವುಗಳ ನಿರಾಕರಣೆ ಏಕೆಂಬ ವಿಚಾರ ಬರುತ್ತದೆ. ಶಿವಕವಿಯು ಪ್ರಸ್ತುತ ತ್ರಿಪದಿಯಲ್ಲಿ ಆಸನದ ಅಭ್ಯಾಸ ಆಯಾಸಕರವೆಂದು ಏಕೈಕ ದೃಷ್ಟಿಯಿಂದ ಮಾತ್ರ ವಿವರಿಸಿದ್ದಾನೆ. ಶರೀರದ ಬಲವರ್ಧನೆಗಾಗಿಯೇ ಆಸನಾಭ್ಯಾಸವಾದರೆ ಪ್ರಯೋಜನವಿಲ್ಲವೆಂಬುದು ಆತನ ಅಭಿಪ್ರಾಯ. ಕಾಯಬಲಿತರೆ ಮಾಯೆ ಬಲಿವುದೆಂಬ ಭಯವೂ ಇದೆ. ಕಠಿಣವಾದ ಆಸನಗಳಿಂದ ಶರೀರವನ್ನು ದಣಿಸುವದು ಬೇಡ. ಶಿವಪೂಜೆಯಲ್ಲಿಯೇ ಆಸನ
ಯೋಗವು ಸಹಜವಾಗಿ ಘಟಿಸುತ್ತದೆಂದ ಮೇಲೆ ಪ್ರತ್ಯೇಕವಾದ ಆಸನದ ಅಭ್ಯಾಸ ಅವಶ್ಯವಿಲ್ಲ. ಆಸನಗಳಲ್ಲಿ ಬರುವ ಷಟ್ಕರ್ಮಗಳನ್ನು ಬಹು ಆಯಾಸದಿಂದಲೇ ಸಾಧಿಸಬೇಕಾಗುತ್ತದೆ.
ಶಿವಪೂಜೆಗೆ ಕುಳಿತುಕೊಳ್ಳಲು ಸುಖಾಸನ, ಸಿದ್ಧಾಸನ, ಪದ್ಮಾಸನ, ಸ್ವಸ್ತಿ ಕಾಸನಗಳಾದರೆ ಸಾಕು. ಇವುಗಳಲ್ಲಿ ಒಂದನ್ನು ಹಾಕಿ ಲಿಂಗ ನಿರೀಕ್ಷಣೆ (ದೃಷ್ಟಿ)ಯೇ ಮುಖ್ಯ ಸಾಧನವಾಗಿರುವದರಿಂದಲೂ ಶಿವಮಂತ್ರ ಧ್ಯಾನದಿಂದಲೂ ಅದೆಷ್ಟೋ ಸಮಯ ಸುಖವಾಗಿ ಕುಳಿತುಕೊಳ್ಳಬಹುದು. ಲಿಂಗಯೋಗವು ಆಸನದಿಂದಾಗುವ ಆಯಾಸಕ್ಕೆ ಕಾರಣವಾಗುವದಿಲ್ಲ. ಸಿದ್ಧಾಸನ ಹಾಕಿ ಕುಳಿತುಕೊಂಡರೆ ಪೂಜಿಸುವವನಿಗೆ ಮೂಲವ್ಯಾಧಿಯು ಬರುವದಿಲ್ಲವೆಂಬುದು ಅನುಭವದ ಮಾತು. ಕಾರಣ ಆಯಾಸವಾಗುವ ಆಸನಗಳನ್ನು ಬದಿಗಿರಿಸಿ ಲಿಂಗಾರ್ಚನೆಗೆ ಅವಶ್ಯವಾದ ಆಸನವನ್ನು ಹಾಕಿ ಗುರುಕರುಣಿಸಿದ ಇಷ್ಟ, ಪ್ರಾಣ, ಭಾವಲಿಂಗಗಳನ್ನು ಪೂಜಿಸಬೇಕು.
ಉಪಯುಕ್ತವಾದ ಆಸನಗಳನ್ನು ಸಿದ್ಧಿಸಿ ನಿತ್ಯೋಲ್ಲಾಸಿಯಾದ, ಸತತೋತ್ಸಾಹಿ ಯಾದ ಗುರುವು ಶಿಷ್ಯನ ಕರಕಮಲವನ್ನೇ ಲಿಂಗತಂದೆಗೆ ಆಸನವನ್ನಾಗಿ ಪವಿತ್ರ ಗೊಳಿಸಿರುತ್ತಾನೆ. ಲಿಂಗಪೂಜಕನು ಆಸನವುಳ್ಳವನಾದರೆ ಅವನ ಹಸ್ತವೇ ಲಿಂಗ ದೇವನಿಗೆ ಆಸನವಾಗುತ್ತದೆ. ಲಿಂಗಪೂಜಾ ಸಮಯದಲ್ಲಾಚರಿಸುವ ಆಸನವು ಶರೀರಕ್ಕೆ ಕಂಪನ, ಭಯ ಮೊದಲಾದ ಆಯಾಸವನ್ನು ಹುಟ್ಟಿಸುವದಿಲ್ಲ. ದೇಹಕ್ಕೆ ಯಾವ ಬಾಧೆಯೂ ಆಗುವದಿಲ್ಲ. ಇಲ್ಲಿ ಗುರುವು ಸ್ವತಃ ತಾನು ಈ ಲಿಂಗ ಯೋಗದ
ಆಸನದ ಅನುಭವವನ್ನು ಅನುಭವಿಸಿ ಹೇಳುತ್ತಿರುವದರಿಂದಲೇ ಅವನು ಉಲ್ಲಸಿತ ನಾಗಿರುತ್ತಾನೆಂಬುದನ್ನು ಶಿವಕವಿಯು ಸ್ಪಷ್ಟಿಕರಿಸಿದ್ದಾನೆ.