General

ಡಾ. ಬಸವರಾಜ ಜಗಜಂಪಿ

(ಸಾಹಿತಿ ಬಸವರಾಜ ಜಗಜಂಪಿ ಅವರು 1950 ಮೇ 25ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಕಲ್ಲಪ್ಪನವರ, ತಾಯಿ ಈರವ್ವ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರರು. ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ,ಪ್ರಸ್ತುತ ಗ್ರಂಥಾಲಯ ಆಡಳಿತ ನಿರ್ದೇಶಕರಾಗಿ ಕೆ.ಎಲ್.ಇ. ಮಹಾವಿದ್ಯಾಲಯ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಚನ ಸಾಹಿತ್ಯ, ಜನಪದ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಪ್ರಮುಖ ಕೃತಿಗಳೆಂದರೆ ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯಗಳು, ಬಸವಪ್ರಭಪ್ಪನವರು ಹಂಪಣ್ಣವರ, ಮಲ್ಲಿಕಾರ್ಜುನ ದರ್ಶನ, ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮಿಜಿ, ಕವಿ ಸಿದ್ದೇನಂಜೇಶ, ಕೆ.ಎಲ್.ಇ. ಸೊಸೈಟಿ, ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಬೆಳಗಲಿ ಬಯಲ ಸಿರಿ, ರಸಾಯನ, ಸ್ಪಂದನ, ಶ್ರೀಗುರು, ಬಸವಪ್ರಸಾದ ಮುಂತಾದವು.)

ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಿ, ಸರ್ವಸಮಾನತೆಯನ್ನು ಮೆರೆದು, ಮನುಕುಲವನ್ನೇ ಪ್ರೀತಿಸುತ್ತ, ಪ್ರತಿಯೊಬ್ಬ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸುತ್ತ, ತನ್ನ ವಿಶಿಷ್ಟ ಗುಣಗಳಿಂದ ಲಿಂಗಾಯತಧರ್ಮ ವಿಶ್ವವೆನಿಸಿದೆ. ಲಿಂಗಾಯತಧರ್ಮ ಸಮಾಜ-ಸಾಹಿತ್ಯ-ಸಂಸ್ಕೃತಿಗಳು ಗಮನಾರ್ಹ ಸ್ಥಾನ ಪಡೆಯುವಲ್ಲಿ ಹಲವಾರು ಪುಣ್ಯಪುರುಷರ ಅನನ್ಯ ದುಡಿಮೆಯೇ ಕಾರಣವಾಗಿದೆ. ಬಸವಾದಿ ಪ್ರಮಥರ ಬಳಿವಿಡಿದು ಬಂದ ನೂರೊಂದು ವಿರಕ್ತರು, ಶಿವಯೋಗಿಗಳು, ಆಚಾರ ಪುರುಷರು ಹಾಗೂ ಆಧುನಿಕ ಕಾಲದ ಮಹಾಪುರುಷರು, ಸರ್ವಾಂಗ ಪರಿಪೂರ್ಣ ಲಿಂಗಾಯತ ಸಮಾಜ ನಿರ್ಮಾಣಕ್ಕೆ ಹೆಣಗಿದ್ದು ಇಂದು ಇತಿಹಾಸ.

ಆದರೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮ ಸಮಾಜಗಳಿಗೆ ಒಂದು ಸಂಧಿಕಾಲ ಪ್ರಾಪ್ತವಾಗಿತ್ತು. ಪರಂಪರಾಗತ ಸಮಾಜದ ಸಾಮಾಜಿಕ, ಧಾರ್ಮಿಕ ರೀತಿನೀತಿಗಳು, ಕಟ್ಟುಪಾಡುಗಳು ಕಾಲಪ್ರಭಾವದಿಂದ ಶಿಥಿಲಗೊಂಡಿದ್ದವು. ಪಂಚಾಚಾರಗಳ ಪರಿಚಯವಿಲ್ಲದೆ, ಅಷ್ಟಾವರಣಗಳ ಅರಿವಿಲ್ಲದೆ, ಷಟ್‌ಸ್ಥಲಗಳ ಜ್ಞಾನವಿಲ್ಲದೆ ಲಿಂಗಾಯತ ಸಮಾಜ ಅಂಧಕಾರದಲ್ಲಿ ತೊಳಲಾಡುತ್ತಿತ್ತು. ಲಿಂಗಾಯತಕ್ಕೆಯೇ ಒಂದರ್ಥದಲ್ಲಿ ಅದು ಗ್ಲಾನಿಯ ಸಮಯ. ವ್ಯಾಪಾರ-ಉದ್ದಿಮೆಗಳು ಲಿಂಗಾಯತರ ಕೈಬಿಟ್ಟು; ಸಾಹಸಶೀಲ ಮನೋಭಾವದ ಪರಕೀಯರ ಕೈಸೇರಲಾರಂಭಿಸಿದವು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಹಾಗೂ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು.

ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.

ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು  ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.

ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ -ಲಿಂಗಾಯತರೆಲ್ಲರಿಗೂ  ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಪುಟ್ಟಗ್ರಾಮ ಜೋಯಿಸರ ಹರಳಳ್ಳಿ, ಶೀಲಸಂಪತ್ತಿನ ತವರೂರೆನಿಸಿತ್ತು. ಅಲ್ಲಿನ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳು ಅತ್ಯಂತ ಸುಶೀಲರು, ಶಿವಪೂಜಾನಿಷ್ಠರು. ಊರಲ್ಲಿನ ಮಕ್ಕಳಿನ ಅಕ್ಷರಾಭ್ಯಾಸ ಮಾಡಿಸುತ್ತಿದ್ದರಾದರೂ ಅವರು ತುಂಬ ದರಿದ್ರಾವಸ್ಥೆಯಲ್ಲಿದ್ದರು. ತಮಗೆ ಹುಟ್ಟಿದ ಮೊದಲ ಗಂಡು ಮಗು, ಶಿವಬಸಯ್ಯನ ಲಾಲನೆ ಪಾಲನೆಗಳಲ್ಲಿ ಅವರು ಸಂತಸದಿಂದ ದಿನಗಳೆಯುತ್ತಿದ್ದ ಸಂದರ್ಭ.ಸಾದ್ವಿ ಶಿರೋಮಣಿ ನೀಲಮ್ಮನ ಕನಸಿನಲ್ಲಿ ಕಾಣಿಸಿಕೊಂಡ ಜಂಗಮರೊಬ್ಬರು ಸುಗಂಧಭರಿತ ಸುಂದರ ಪುಷ್ಪವೊಂದನ್ನು ಆಶೀರ್ವದಿಸಿ, ‘ಅಮ್ಮಾ ನಮಗೋರ್ವ ಪುತ್ರನನ್ನು ಕೊಡು’ ಎಂದರು. ಅದನ್ನು ಕೇಳಿ ಶಿವಭಕ್ತ ನೀಲಮ್ಮ; ‘ತಮ್ಮ ಅನುಗ್ರಹದಿಂದ ಇನ್ನೊಬ್ಬ ಮಗ ಹುಟ್ಟಿದರೆ ಅವನನ್ನು ತಮಗೆ ಅಗತ್ಯವಾಗಿ ನೀಡುವೆನು’ ಎನ್ನುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು.

ಲಿಂಗದಳ್ಳಿ ನೀಲಮ್ಮನವರ ತವರೂರು. ಅದರ ಪಕ್ಕದ ನಂದಿಹಳ್ಳಿಯಲ್ಲಿ ಬಸವೇಶ್ವರನ ಜಾತ್ರೆ ನಡೆದಿತ್ತು. ಜನನೋಪಚಾರಕ್ಕೆಂದು ತವರಿಗೆ ಹೋಗಿದ್ದ ನೀಲಮ್ಮ, ನಂದಿಹಳ್ಳಿ ಬಸವಣ್ಣನ ಜಾತ್ರೆಗೆ ಹೋದಳು. ಜನಸಾಗರದ ‘ಹರಹರ ಮಹಾದೇವ’ ಎಂಬ ಜಯಘೋಷದ ಮಧ್ಯೆ ನಂದೀಶನ ತೇರು ಸಾಗಿತ್ತು. ಕೂಡಿದ ಭಕ್ತರು ರಥದ ಶಿಖರದತ್ತ ಉತ್ತತ್ತಿ-ಬಾಳೆಹಣ್ಣುಗಳನ್ನು ತೂರುತ್ತಿದ್ದ ಹೊತ್ತಿನಲ್ಲಿ ಶಿಖರಕ್ಕೆ ಬಡಿದ ಉತ್ತತ್ತಿಯೊಂದು ನೀಲಮ್ಮನ ಉಡಿಯಲ್ಲೇ ಬಂದು ಬಿದ್ದಿತು. ಅದರಿಂದ ಪುಳುಕಿತಳಾದ ಸಾದ್ವಿ ನೀಲಮ್ಮ, ಪ್ರಸಾದೋಪಾದಿ ಪ್ರಾಪ್ತವಾದ ಉತ್ತತ್ತಿಯನ್ನು ಜೋಪಾನವಾಗಿಟ್ಟುಕೊಂಡು ಸಂತಸದಿಂದ ಮನೆಗೆ ತೆರಳಿ, ಸ್ನಾನ ಪೂಜೆಗಳನ್ನು ಪೂರೈಸಿ ಶಿವಧ್ಯಾನ ಮಾಡುತ್ತ ಅದನ್ನು ಭಕ್ತಿಯಿಂದ ಸ್ವೀಕರಿಸಿದಳು. ನವಮಾಸ ತುಂಬುತ್ತಲೇ ಶಾಲಿವಾಹನ ಶಕೆ ೧೭೮೮ನೆಯ ಪ್ರಭವ ಸಂವತ್ಸರದ ಬ್ರಾಹೀ ಮುಹೂರ್ತದಲ್ಲಿ ಕಾರಣಿಕ ಪುತ್ರರತ್ನವೊಂದನ್ನು ಪಡೆದಳು.

ಶಿಶುವಿಗೆ ಲಿಂಗಧಾರಣೆಯ ಸಿದ್ಧತೆ ನಡೆದಿತ್ತು. ಸಂಭ್ರಮದಿಂದ ಓಡಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕರೆದ ವೃದ್ಧ ಜಂಗಮರು, ‘ಪುತ್ರೋತ್ಸವವನ್ನು ಸಿಹಿ ಹಂಚಿ ಆಚರಿಸಬೇಕು’ ಎನ್ನುತ್ತಾರೆ. ಆಗ ಅವಳು ಏನೂ ಮಾಡದೆ ದೇವರು ಬಡವರಿಗೆ ಸಾಕೆನಿಸುವಷ್ಟು ಮಕ್ಕಳನ್ನು ಕೊಡುತ್ತಿರುವಾಗ, ಸಿಹಿ ಹಂಚಿ ದಾನ ಧರ್ಮ ಮಾಡಿದರೆ ಇನ್ನಷ್ಟು ಧಾರಾಳವಾಗಿ ಕೊಡಬಹುದು’ ಎಂದು ನಗುತ್ತಾಳೆ. ‘ಮಕ್ಕಳು ಅಷ್ಟು ಬೇಸರವಾಗಿದ್ದರೆ ನಮಗೆ ಕೊಟ್ಟು ಬಿಡಿರಿ’ ಎಂದ ಜಂಗಮರ ಮಾತಿಗೆ ಅವಳು

‘ಅಗತ್ಯವಾಗಿ ತೆಗೆದುಕೊಂಡು ಹೋಗಿರಿ’ ಎಂದು ಹಾಸ್ಯವಾಡುವಳು. ‘ಹಾಗೆಯೇ ಆಗಲಿ’ ಎಂದು ಜಂಗಯ್ಯ ಹೊರಟುಹೋದರು. 

ಮಗು ಹುಟ್ಟಿ ಐದಾರು ದಿನಗಳಾದರೂ ಮೊಲೆಹಾಲನ್ನೂ ಕುಡಿಯದೆ, ಎಲ್ಲರನ್ನೂ ಚಿಂತೆಗೀಡು ಮಾಡಿತು. ಸದ್ಭಕ್ತಿ ಸದಾಚಾರ ಸಂಪನ್ನಳೂ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವಳೂ ಆದ ನೀಲಮ್ಮ, ಭವಹರ ಭಸ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆಂದು ಅರಿತವಳು ಶಿಶುವನ್ನು ಚೆನ್ನಾಗಿ ಎರೆದು, ಎರಡೂ ಹೊತ್ತು ಭಸ್ಮವನ್ನು ಧರಿಸುತ್ತಿದ್ದಂತೆಯೇ ಕ್ರಮೇಣವಾಗಿ ಶಿಶು ಮೊಲೆಯುಣ್ಣಲು ಪ್ರಾರಂಭಿಸಿತು. ‘ಹಾಲಯ್ಯ’ ಎಂಬ ಅನ್ವರ್ಥಕ ಹೆಸರನ್ನು ಹೊಂದಿದ ಹಾಲಿನಂಥ ಮಧುರ ಗುಣದ ಬಾಲಕ. ಆರು ವರ್ಷ ತುಂಬುತ್ತಲೆ ಹರಳಳ್ಳಿಯ ಗಾವ. ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ತೊಡಗಿದನು. ಹಾಲಯ್ಯನ ಅಜ್ಜ, ಶತಾಯುಷಿ  ಕೊಟ್ಟೂರಪ್ಪಯ್ಯ ನವರದೂ ಕಲಿಸುವ ಕಾಯಕವಾಗಿತ್ತು. ಹಾಲಯ್ಯನಿಗೆ ಅಜ್ಜನಿಂದ ವಿಶೇಷ ಅಭ್ಯಾಸದ ಸೌಲಭ್ಯ ಸಿಕ್ಕಿತು. ಎಂಟು ವರುಷದ ಹಾಲಯ್ಯ ಲಿಂಗದೀಕ್ಷೆಯನ್ನು ಪಡೆದನು.

ಹತ್ತು ಹನ್ನೆರಡು ಜನರಿಂದ ಕೂಡಿದ ದೊಡ್ಡ ಕುಟುಂಬದ ಉದರ ನಿರ್ವಹಣೆ, ಇಬ್ಬರು ಮೂವರ ಭಿಕ್ಷೆಯಿಂದಲೇ ಸಾಗುತ್ತಿತ್ತು. ತಂದೆ ಬಸವಯ್ಯ ಅಕಾಲದಲ್ಲೇ ಲಿಂಗೈಕ್ಯರಾದ ಕಾರಣ ಭಿಕ್ಷೆ ಮಾಡುವುದು ಹಾಲಯ್ಯನಿಗೂ ಅನಿವಾರ ವಾಯಿತು. ದಂಡ ಜೋಳಿಗೆಗಳನ್ನು ಹಿಡಿದು ಸಮೀಪದ ಹಳ್ಳಿಗೆ ಭಿಕ್ಷೆ ಹೋದ ಸಂದರ್ಭ, ಹಾಲಯ್ಯನ ಜೀವನದಲ್ಲಿ ಮಹತ್ವದ ತಿರುವನ್ನು ತಂದಿತು. ‘ಏನು ಅಯ್ಯಪ್ಪ! ಭಿಕ್ಷೆ ಬೇಡಾಕ ಮುದುಕ ಆಗೀಯೇನು? ಇನ್ನೂ ಹೀಗೆ ಎಷ್ಟು ದಿನ ಬೇಡುವುದಪ್ಪ? ವಯಸ್ಸು ಸಣ್ಣದು, ಕಲಿಯುವ ಅವಕಾಶವಿದೆ, ಕಲಿತು ವಿದ್ಯಾವಂತನಾಗಿ ಸಮಾಜದ ಋಣ ತೀರಿಸು’ ಎಂದು ಒಬ್ಬ ಹಿರಿಯರು ಹಾಲಯ್ಯನನ್ನು ಕುರಿತು ಮನೋವೇಧಕ ಮಾತುಗಳನ್ನಾಡಿದರು. ಹಿರಿಯರ ಕಳಕಳಿಯ ಮಾತು, ಮುಗ್ಧ ಮನದ ಹಾಲಯ್ಯನಿಗೆ ಚಿಂತೆಗೆ ಬದಲು ಚಿಂತನೆಗೆ ಹಚ್ಚಿತು. ಭಿಕ್ಷೆ ಬೇಡುವುದಕ್ಕೂ ಅಂದೇ ಕೊನೆಯಾಯ್ತು ಹೀಗೆ ಅಪರಿಚಿತ ಹಿರಿಯರಾಡಿದ ಮಾತು, ಸಮಾಜದ ಋಣದಿಂದ ವಿಮುಕ್ತರಾಗಲು ಪ್ರೇರಣೆ ನೀಡಿತು.

ಊರಲ್ಲಿ ಶಾಲೆಯಿರುವುದು ಕೇವಲ ಮೂರನೆಯ ವರ್ಗದ ವರೆಗೆ ಮಾತ್ರ. ಜ್ಞಾನದ ತೃಷೆಯಿದ್ದರೂ ಬೇರೆ ಊರಿಗೆ ಹೋಗಿ ಕಲಿಯುವ ಸಾಮರ್ಥ್ಯವಿಲ್ಲ. ಇದೇ ಚಿಂತೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗಲಿಲ್ಲ. ಮನೆಯವರ ಒತ್ತಾಯಕ್ಕೆ ಭಿಕ್ಷೆ ಬೇಡಲು ಹೋದರೂ ಬಂದದ್ದು ಮಾತ್ರ ಖಾಲಿ ಜೋಳಿಗೆಯೊಂದಿಗಷ್ಟೇ, ಏನು ಮಾಡಲೂ ತೋಚದೆ ಅಣ್ಣನ ಮಾತಿನಂತೆ ಬಟ್ಟೆ ತೊಳೆಯಲು ಊರ ಹೊರಗಿನ ಬಾವಿಗೆ ಹೊರಟ ಹಾಲಯ್ಯ, ವಿದ್ಯೆಯನ್ನು ಕಲಿಯದೆ ಮರ್ಯಾದೆ ಇಲ್ಲ’ ಎಂಬ ನಿರ್ಧಾರಕ್ಕೆ ಬಂದು, ತೊಳೆದ ಬಟ್ಟೆಯ ಗಂಟನ್ನು ಮನೆಗೆ ಮುಟ್ಟಿಸುವಂತೆ ಒಬ್ಬನ ಕೈಲಿ ಕೊಟ್ಟು, ದಿಟದ ಬಟ್ಟೆಯನ್ನು ಹಿಡಿದು, ದೇವರಗುಡ್ಡದ ಪಕ್ಕದಲ್ಲಿರುವ ಕಜ್ಜರಿ ಎಂಬ ಗ್ರಾಮಕ್ಕೆ ಬಂದನು. ಕಜ್ಜರಿಯ ಶಾಲೆಯಂತೆಯೇ ಅಲ್ಲಿನ ಮಹಾದೇವ ಪಂತ ಜೋಗಳೇಕರ ಎಂಬ ಶಿಕ್ಷಕರೂ ತುಂಬ ಪ್ರಸಿದ್ಧರಾದವರು. ಅದೇ ಶಾಲೆಯಲ್ಲಿ ಓದಬೇಕೆಂಬ ಅದಮ್ಯ ಹಂಬಲದ ಹಾಲಯ್ಯ ಒಂದು ಗಿಡದಡಿ ಕುಳಿತು ಬಿಟ್ಟ, ದಿವ್ಯತೇಜದ ಅವನನ್ನು ನೋಡಿದ ಆ ಗ್ರಾಮದ ಹಿರೇಮಠ ರಾಚಯ್ಯನವರು ಸಹಾನುಭೂತಿಯ  ಮಾತುಗಳನ್ನಾಡಿ ಪ್ರೀತಿಯಿಂದ ಮಠಕ್ಕೆ ಕರೆತಂದು ಉಪಚರಿಸಿ, ಶಾಲೆಗೆ ಸೇರಿಸಿದರು.

ಜಾಣ ವಿದ್ಯಾರ್ಥಿಯಾಗಿದ್ದ ಹಾಲಯ್ಯ, ಶ್ರೀ ಜೋಗಳೇಕರ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಓದತೊಡಗಿದನು. ಮುಲ್ಕಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ, ಪರೀಕ್ಷೆಗೆ ಕೂಡ್ರಲು ಸಹಪಾಠಿ ಅಸುಂಡಿ ಶಿವನಗೌಡನೊಡನೆ ನಡೆದುಕೊಂಡೇ ಧಾರವಾಡಕ್ಕೆ ಹೋದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಶಿವಸಂಕಲ್ಪವೇ ಹಾಗಿರಲು ಮಾಡುವುದೇನು?

 ಲೌಕಿಕದಿಂದ ಎರವಾಗುತ್ತ ಅಧ್ಯಾತ್ಮದತ್ತ ಮನವನ್ನು ತಿರುಗಿಸಲು ಯೋಗ್ಯ ಸಂದರ್ಭ ಪ್ರಾಪ್ತವಾಯ್ತು. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ಹೊಣೆ ಅವರ ಮೇಲಿತ್ತು. ಶಿವಶರಣರ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ನಿಜಗುಣರ ಷಟ್‌ಶಾಸ್ತ್ರಗಳ ಪ್ರಚಾರವಿದ್ದ ಕಾಲವದು. ತಾಯಿಯ ತವರೂರು ಲಿಂಗದಳ್ಳಿಯ ಸಮಾಳದೆ ಬಸವಯ್ಯನವರು ನಿಜಗುಣರ ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ್ದರು. ಅವರೊಂದಿಗೆ ಅಭ್ಯಾಸಕ್ಕೆ ತೊಡಗಿದ ಹಾಲಯ್ಯನವರ ಅಧ್ಯಾತ್ಮದ ಹಂಬಲಕ್ಕೆ ಕೈವಲ್ಯ ಪದ್ಧತಿಯ ವಿಶೇಷ ಬೆಂಬಲವೂ ದೊರೆಯಿತು.

ಕಲಿಕೆಯೊಂದಿಗೆ ಗಳಿಕೆಯೂ ನಡೆಯಬೇಕು. ತಾವು ತಮ್ಮ ಜೀವನ ನಿರ್ವಹಣೆಯ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸದಂತಿರಬೇಕು. ತಾವೊಬ್ಬರು ವಿದ್ಯಾವಂತರಾದರೆ ಸಾಲದು. ಊರಿನ ಮಕ್ಕಳೂ ಓದಬೇಕು ಎಂಬ ಆಲೋಚನೆಯಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡತೊಡಗಿದರು. ಶಾಸ್ತ್ರಚಿಂತನೆಯಿಂದ ಪಡೆದ ವೇದಾಂತ ಜ್ಞಾನವನ್ನು ಜನತೆಗೆ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಸಾಲಿಮಠದ ಅಜ್ಜನವರ ಕಾಯಕವನ್ನು ಮುಂದುವರಿಸಿದರು.

ಆಗಲೆ ಅವರಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡವು. ತಾಯಿ ನೀಲಮ್ಮನಿಗೂ ಮುಪ್ಪು ಆವರಿಸತೊಡಗಿತ್ತು. ಮಗನ ಮದುವೆ ಮಾಡಿ ಜವಾಬ್ದಾರಿ ಯಿಂದ ಮುಕ್ತಳಾಗಬೇಕೆಂದು, ಒಂದು ದಿನ ಹಾಲಯ್ಯನನ್ನು ಕಂಡ ನೀಲಮ್ಮನವರು, ನಿನಗೋಸ್ಕರ ಕನೈಯನ್ನು ಗೊತ್ತು ಮಾಡಿದ್ದೇನೆ, ವಿವಾಹ ಮಾಡಿಕೊಂಡು ನನ್ನನ್ನು ಜೋಪಾನ ಮಾಡು’ ಎನ್ನುತ್ತಾಳೆ. ಆಗ ಅವರು ಒಂದು ವರ್ಷದ ಅವಧಿಯನ್ನು ಪಡೆದು, ಅಧ್ಯಾಪನದೊಂದಿಗೆ ಅಧ್ಯಾತ್ಮ ಚಿಂತನೆಯನ್ನೂ ಮುಂದುವರಿಸಿದರು. ನೋಡು ನೋಡುವುದರಲ್ಲಿ ಮೂರು ವರುಷ ಕಳೆದವು. ಈ ಸಂಸಾರ ತುಂಬ ಮೋಹಕ, ಆಕರ್ಷಕ. ಆದರೆ ಅಷ್ಟೇ ನಿಸ್ಸಾರವೂ ಹೌದು. ಅದನ್ನರಿತ ಹಾಲಯ್ಯನವರು ಬ್ರಹ್ಮಚರದ ಕಠಿಣ ವ್ರತವನ್ನು ಕೈಕೊಂಡರು. ಹೆಣ್ಣು-ಹೊನ್ನು ಮಣ್ಣುಗಳ ಮೋಹ-ಮಾಯೆಗಳಿಂದ ದೂರವಿದ್ದು, ಜಿತೇಂದ್ರಿಯರಾಗಿ, ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ತಿಳಿದು, ಹಗಲಿರುಳು ಸಮಾಜ ಕಲ್ಯಾಣಕ್ಕಾಗಿ ದುಡಿಯುವ ನಿರ್ಧಾರ ತಾಳಿದರು.

ಒಂದು ಕ್ಷಣ ಮಾತ್ರದಲ್ಲಿ ಭೌತಿಕ ಭೂತವನ್ನು ಹಿಡಿಸಬಲ್ಲ ಹೆಣ್ಣಿನ ಮಾಯೆ ಅದ್ಭುತ. ಅಂತೆಯೇ “ನಾಣು ಲಗ್ನವಾಗಲಾರೆ, ಸಂಸಾರ ಮಗ್ನನಾಗಲಾರೆ’ ಎಂದು ಶಮೆ-ದಮೆಗಳು ಗಟ್ಟಿಗೊಂಡ ಹಾಲಯ್ಯ ದೃಢನಿರ್ಧಾರ ಮಾಡಿದರು; ಉಕ್ತಿ ಬರುತ್ತಿರುವ ಯೌವ್ವನವನ್ನು ಕಠಿಣ ವೈರಾಗ್ಯಕ್ಕೆ ತೊಡಗಿಸಿದರು. ತಮ್ಮ ಬಳಿ ಬಂದ ತಾಯಿಯನ್ನು ನಿರಾಶೆ ಮಾಡಲು ಸಾಧ್ಯವಾಗದೆ ‘ಅಮ್ಮಾ! ಎಲ್ಲರಂತೆ ನನ್ನನ್ನು ಹೆತ್ತು ಹೊತ್ತು ರಕ್ಷಿಸಿರುವಿ. ನಿನ್ನ ಋಣ ದೊಡ್ಡದು. ನಿನ್ನ ಬಯಕೆಯನ್ನು ಪೂರೈಸುವ ಶಕ್ತಿ ನನ್ನಲ್ಲಿಲ್ಲ. ಸಂಸಾರದ ಆಶೆ ನನಗಿಲ್ಲ. ಕ್ಷಣಿಕವಾದ ಈ ಎಲ್ಲ  ಭೋಗ ಲಾಲಸೆಗಳನ್ನು ಧಿಕ್ಕರಿಸಿ, ಅನಿರ್ವಚನೀಯವು, ಶಾಂತಿದಾಯಕವೂ ಸರ್ವದಾ ಆನಂದಮಯವೂ ಆದ ಪರಮಾತ್ಮನ ಸಾನಿಧ್ಯವನ್ನು ಹೊಂದುವ ಅಪೇಕ್ಷೆಯುಳ್ಳವನಿಗೆ ವಿಷಯವೆಂಬ ವಿಷವನ್ನು ಕುಡಿಸಬೇಡ’ ಎಂದು ತುಂಬು ಸೌಜನ್ಯದಿಂದಲೇ ಒಲಿಸಿದರು. ತಾಯಿಯ ಋಣವನ್ನು ಅಷ್ಟು ಸುಲಭವಾಗಿ ತೀರಿಸುವುದು ಸಾಧ್ಯವಿಲ್ಲವೆಂದ ಅವರು, ಮೂರು ವರುಷಗಳಲ್ಲಿ ಗಳಿಸಿದ ಮುನ್ನೂರು ರೂಪಾಯಿಗಳನ್ನು ತಾಯಿಗೆ ಅರ್ಪಿಸಿ, ಮಾತೃಋಣದಿಂದ ಮುಕ್ತರಾದರು. ಸಮಾಜ ಸೇವೆಯನ್ನು ಕೈಕೊಂಡು, ಪವಿತ್ರ ಧೈಯವನ್ನು ಹೊಂದಿ ಸಾಗಿರುವ ತಮ್ಮ ಮಾರ್ಗದಲ್ಲಿ ಅಡ್ಡಿ ಒಡ್ಡದೆ ಸಂತೋಷದಿಂದ ಆಶೀರ್ವದಿಸಿ ಬೀಳ್ಕೊಡುವಂತೆ ಪ್ರಾರ್ಥಿಸಿ, ಅಂದೇ ತಾಯಿ-ಮಕ್ಕಳ ಸಂಬಂಧಕ್ಕೆ ತಿಲಾಂಜಲಿಯನ್ನಿತ್ತರು; ಹೆಣ್ಣನದ ವ್ಯಾಮೋಹವನ್ನೂ ಅಳಿದರು.

ಆರು ಶಾಸ್ತ್ರಗಳನ್ನು ಬಲ್ಲ, ಜ್ಞಾನಿಗಳಾದ ಹುಬ್ಬಳ್ಳಿಯ ಸಿದ್ಧಾರೂಢರಲ್ಲಿ ವೇದಾಂತದ ಆಳವಾದ ಅಧ್ಯಯನವನ್ನು ನಡೆಸಿದ ಹಾಲಯ್ಯನವರು, ಸುವಿಚಾರದಿಂದ ಸ್ವಾನುಭವದಿಂದ ಚಿಂತನೆಗೈದರು. ಸತ್ಯ ಸಿದ್ಧಾಂತವನ್ನರಿಯಲು ಎಮ್ಮಿಗನೂರಿನ ಜಡೆಯಸಿದ್ದರಲ್ಲಿಗೆ ಹೋಗಿ, ತಮ್ಮ ಸ್ವಾಗತಕ್ಕೆ ಮೊದಲೇ ಸಿದ್ಧತೆ ನಡೆಸಿದ ಅವರನ್ನು ವಿಚಕ್ಷಣ ಮತಿಯಿಂದ ಪರೀಕ್ಷಿಸಿ, ಅವರಿಂದಲೇ ‘ಶಿವಯೋಗಿ ‘ಎಂಬ ಅಭಿದಾನವನ್ನೂ ಹೊಂದಿದರು.

 ತಾಯಿಯೆದುರು ಪ್ರತಿಜ್ಞೆಗೈದುದನ್ನು ಪರೀಕ್ಷಿಸಲೆಂಬಂತೆ ಹುಬ್ಬಳ್ಳಿಯಲ್ಲಿ ಘಟನೆಯೊಂದು ನಡೆಯಿತು. ಹಾಲಯ್ಯನವರ ಪರಿಪೂರ್ಣ ವಿರತಿ ತಾಳಲು ಅದೊಂದೇ ಘಟನೆ ಸಾಕಾಯಿತು. ಒಂದು ದಿನ ಹಾಲಯ್ಯನವರು ಭಿಕ್ಷಾನ್ನಕ್ಕಾಗಿ ಸಂಚರಿಸುತ್ತ ಒಂದು ಮನೆಗೆ ಬಂದರು. ಒಬ್ಬಳೇ ಇದ್ದ ಯುವತಿ. ಹಾಲಯ್ಯನವರ ತೇಜಃಪುಂಜ ರೂಪಕ್ಕೆ ಮನಸೋತು, ಜೋಳಿಗೆಯನ್ನು ಗಟ್ಟಿಯಾಗಿ ಹಿಡಿದು, ಬಲವಾಗಿ ಎಳೆದು ಮನೆಯೊಳಗೆ ಆಹ್ವಾನಿಸಿದಳು. ಅದರಿಂದ ತೀವ್ರವಾಗಿ ಜಿಗುಪ್ಸೆಗೊಂಡ ವೀರವಿರಾಗಿ ಹಾಲಯ್ಯನವರು ಜೋಳಿಗೆಯನ್ನು ಅವಳ ಕೈಯಲ್ಲೇ ಬಿಟ್ಟು, ಇನ್ನೆಂದೂ ಆ ಪಾಪಿ ಹೆಂಗಸನ್ನು ನೋಡಬಾರದೆಂದು ಆತುರಾತುರವಾಗಿ ಹಿಂದಕ್ಕೆ ಬಂದರು. ‘ತಿನದೆ ಕೊಲ್ಲದು  ಹು ಮಾತ್ರದೆ ಕೊಲ್ವುದು’ ಎಂಬ ಅಧ್ಯಾತ್ಮ ಗುರುವಿನ ನೈಜಜ್ಞಾನ ಪಡೆಯುವ ಹಂಬಲ ಹೆಚ್ಚಿತು. ಶಂಭುಲಿಂಗ ಬೆಟ್ಟದಲ್ಲಿ ಉಗ್ರತಪಗೈದು, ನಿಜಗುಣರನ್ನು ಸಾಕ್ಷಾತ್ಕರಿಸಿಕೊಂಡು, ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು ಅದೇ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ಆಗಮಿಸಿದರು. ಜ್ಞಾನಪಿಪಾಸುಗಳಾದ ಹಾಲಯ್ಯನವರು ಸಿದ್ಧಾರೂಢರ ಆಣತಿಯಂತೆ ಬಸವಲಿಂಗ  ಸ್ವಾಮಿಗಳೊಂದಿಗೆ ಚರ್ಚಿಸುತ್ತ  ಅವರ ಘನವ್ಯಕ್ತಿತ್ವಕ್ಕೆ ಮನಸೋತರು.ಬಯಸದ ಸದ್ಗುರು ತಾವಾಗಿಯೇ ದೊರೆತುದಕ್ಕೆ ಸಂತುಷ್ಟಗೊಂಡರು. ಅವರನ್ನೇ ಪರಮಗುರುವೆಂದರು.  , ಆಚಾರದ ಅರಕೆಯನ್ನು ತುಂಬಿಕೊಳ್ಳುವುದಕ್ಕಾಗಿ ಶ್ರೀಗುರುವಿನ ಅಪಣೆಯಂತೆ ಶಂಭುಲಿಂಗ ಬೆಟ್ಟದಲ್ಲಿ ನೆಲೆನಿಂತು, ನಿಜಗುಣರ ಆರು ಶಾಸ್ತ್ರಗಳನ್ನು ನಿಷ್ಠೆಯಿಂದ ಅಭ್ಯಸಿಸಿ ‘ಹಾಲಯ್ಯ  ದೇಶಿಕರೆನಿಸಿದರು.

ಬಸವಲಿಂಗ ಸ್ವಾಮಿಗಳ ಕೇವಲ ಶಿಷ್ಯರಾಗಿ ನಿಜಗುಣರ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡ ಹಾಲಯ್ಯದೇಶಿಕರು ಹಳ್ಳಿಹಳ್ಳಿಗೆ ಹೋಗಿ ಅನುಭವ ಸಾರವನ್ನು ಬೋಧಿಸಿದರು. ಅವರ ಪ್ರಭಾವಯುತವಾದ ವಾಣಿಗೆ ಹಾಗೂ ನಿರೂಪಣೆಯ ವಿಧಾನಗಳಿಗೆ ಪಾಮರರೂ ಆಕರ್ಷಿತರಾದರು. ಬಸವಲಿಂಗ ಶ್ರೀಗಳ ಆದೇಶದಂತೆ ಗುರುವಿರಕ್ತರ ಸಂಬಂಧ ಸುಧಾರಣೆಗೆ ಹಾಲಯ್ಯದೇಶಿಕರು ನಿಷ್ಠೆಯಿಂದ ಪ್ರಯತ್ನಿಸಿದರು. ಹೀಗೆ ಯಳಂದೂರಿನ ಬಸವಲಿಂಗ ಸ್ವಾಮಿಗಳ ಸಂಕಲ್ಪವನ್ನು ಶ್ರದ್ಧೆ-ನಿಷ್ಠೆಗಳಿಂದ ಪೂರೈಸಿ ಗುರುಋಣಮುಕ್ತರಾದರು. ಗುರುಗಳೊಂದಿಗೆ ಸಂಚಾರ ಕೈಗೊಂಡರು. ಅಕಸ್ಮಾತ್ತಾಗಿ ಶ್ರೀಗಳ ದೇಹಸ್ಥಿತಿ ಕೆಟ್ಟು, ಅಣ್ಣಿಗೇರಿಯಲ್ಲಿ ಅವರು ಲಿಂಗದಲ್ಲಿ ಬೆರೆದ ಮೇಲೆ ತಾಯನಗಲಿದ ಶಿಶುವಿನಂತಾದ ಹಾಲಯ್ಯ ದೇಶಿಕರು, ಆತ್ಮಶಾಂತಿ ಪಡೆಯಲು ಸೊರಬದ ಸಪ್ತಕಾವ್ಯದ ಗುರುಬಸವಾರ್ಯರ ಗದ್ದುಗೆಯಲ್ಲಿ ಅನುಷ್ಠಾನಗೈದರು.

ಧಾರವಾಡ ಜಿಲ್ಲೆಯ ಹಾನಗಲ್ಲಿನ ವಿರಕ್ತ, ಲಿಂಗಾಯತ ಮಠಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅದರ ಪೀಠಾಧಿಪತಿಗಳಾದ ಶ್ರೀ ಫಕೀರ ಮಹಾಸ್ವಾಮಿಗಳಿಗೆ ತುಂಬ ವಯಸ್ಸಾಗಿತ್ತು. ಅವರು ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ್ದರು. ಅದೇ ಸಂದರ್ಭದಲ್ಲಿ ಹಾಲಯ್ಯ ದೇಶಿಕರು ಮಳಗದ್ದಿಯ ಶ್ರೀ ಕೆಂಡಪ್ಪಗೌಡರೆಂಬ ಹಿರಿಯರ ದೃಷ್ಟಿಗೆ ಬಿದ್ದರು. ಅವರ ವಿವೇಕ, ಆಚಾರನಿಷ್ಠೆ, ಸದ್ಬೋಧಶಕ್ತಿ, ದಿವ್ಯತೇಜ, ಹರಳು ಗೊಳ್ಳುತ್ತಿರುವ ವೈರಾಗ್ಯ ಮೊದಲಾದ ಸಲ್ಲಕ್ಷಣಗಳನ್ನು ಕಂಡು ಕೆಂಡಪ್ಪಗೌಡರಿಗೆ ಸಂತೋಷವಾಯಿತಷ್ಟೇ ಅಲ್ಲ, ಹಾನಗಲ್ಲ ಮಠಕ್ಕೆ ಸುಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿದುದಕ್ಕೆ ಸಮಾಧಾನವೂ ಆಯಿತು.

ಮೂರು ವರುಷ ಮೌನವ್ರತ-ಅನುಷ್ಠಾನಗಳನ್ನು ಕೈಕೊಳ್ಳುವ ಸಂಕಲ್ಪಕೈಕೊಂಡ ಹಾಲಯ್ಯನವರು ಕೆಂಡಪ್ಪಗೌಡರ ಸೂಚನೆಯಂತೆ ಶ್ರೀ ಫಕೀರ ಮಹಾ ಸ್ವಾಮಿಗಳನ್ನು ಕಾಣಗಲು ಹಾನಗಲ್ಲಿಗೆ ಹೋದರು. ಸಮಾಜ ಸೇವೆಯನ್ನು ಮಾಡಬೇಕೆಂಬ ತಮ್ಮ ಪ್ರಬಲ ಹಂಬಲವನ್ನು ಸ್ವಾಮಿಗಳೆದುರು ಅರಿಕೆ ಮಾಡಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಆಗ ಫಕೀರೇಶರು ‘ತಮ್ಮಾ, ಒಂದು ಸ್ಥಾನದ ಅಧಿಕಾರಿಯಾಗುವ ವರೆಗೆ ಬೋಧನಾಧಿಕಾರ ಬರಲಾರದು. ಹಾಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆಯದು. ಅಂತೆಯೇ ಹಾನಗಲ್ಲ ಪೀಠಕ್ಕೆ ಅಧಿಕಾರಿಯಾಗು’ ಎಂದರು. ಅದಕ್ಕೆ ಅಲ್ಲಿ ಸೇರಿದ ಭಕ್ತ ಸಮೂಹವೂ ಒಪ್ಪಿ, ಹಾಲಯ್ಯನವರಲ್ಲಿ ಒತ್ತಾಯದ ಅರಿಕೆ ಮಾಡಿಕೊಳ್ಳಲು, ಅವರೂ ಆಗಲೆಂದು ಸಮ್ಮತಿಸಿದರು. ಅದು ಹಾನಗಲ್ಲ ಪೀಠದ ಸೌಭಾಗ್ಯವೆನ್ನಬೇಕು.

ಮಠಾಧಿಕಾರವನ್ನು ಅವರೆಂದೂ  ಬಯಸಿದವರಲ್ಲ. ಅದು ತಾನಾಗಿಯೇ ಹುಡುಕಿಕೊಂಡು ಬಂದುದು. ಅಂತೆಯೇ, ಫಕೀರ ಮಹಾಸ್ವಾಮಿಗಳ ಸೇವೆ, ದಾಸೋಹದ ವ್ಯವಸ್ಥೆ, ಸಂಚಾರ, ಜನಜಾಗೃತಿ-ಹೀಗೆ ಎಲ್ಲವನ್ನೂ ಹಾಲಯ್ಯ ನಿಷ್ಠೆಯಿಂದ ಮಾಡತೊಡಗಿದರು. ಒಮ್ಮೆ ಅವರು ಭಕ್ತರ  ಬಯಕೆಯಂತೆ ಮಲಸೀಮೆಯತ್ತ ಹೋದಾಗ ಫಕೀರಸ್ವಾಮಿಗಳ ಆರೋಗ್ಯ ತುಂಬ ವಿಷಮಿಸಿತು. ಅಕಸ್ಮಾತ್ತಾಗಿ ಹಾನಗಲ್ಲಿಗೆ ದಯಮಾಡಿಸಿದ ಮಹಾಮಹಿಮರೂ ಸವದತ್ತಿ ಶ್ರೀ ಕಲ್ಮಠದ ಅಧಿಪತಿಗಳೂ ಆದ ಬಿದರಿಯ ಕುಮಾರ ಮಹಾಸ್ವಾಮಿಗಳಿಗೆ ವಿಷಯ ತಿಳಿಸಿ, ಶ್ರೀಮಠಕ್ಕೆ ಹಾಲಯ್ಯನವರನ್ನು ಪಟ್ಟಾಧಿಕಾರಿಗಳನ್ನಾಗಿಸುವ ಗುರುತರ ಹೊಣೆಯನ್ನು ಹೊರಿಸಿ ಫಕೀರಸ್ವಾಮಿಗಳು ಲಿಂಗೈಕ್ಯರಾದರು.

ಮಲೆನಾಡ ಸೀಮೆಯಿಂದ ಹಾಲಯ್ಯ ದೇಶಿಕರನ್ನು ಕರೆಸಿ, ಸಮಸ್ತ ಸದ್ಭಕ್ತರ ಸಮಕ್ಷಮದಲ್ಲಿ ಅನ್ನಸಂತರ್ಪಣೆ ಮಾಡಿಸಿ, ಅವರನ್ನು ‘ಸದಾಶಿವ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ಫಕೀರಸ್ವಾಮಿಗಳ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಬಿದರಿ ಕುಮಾರ ಶಿವಯೋಗಿಗಳಂಥ ಮಹಾತಪಸ್ವಿಗಳ ಮಂತ್ರಹಸ್ತದಿಂದ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮಿಗಳು ಶ್ರೀಮಠದ ಜೀರ್ಣೋದ್ಧಾರಕ್ಕಾಗಲಿ, ಹೊಲ ಗದ್ದೆಗಳ ಸುಧಾರಣೆಗಾಗಲಿ ಚಿಂತಿಸದೆ, ಅತ್ಯಂತ ಅಧೋಗತಿಗಿಳಿದಿದ್ದ ಲಿಂಗಾಯತ ಸಮಾಜದ ಪುನರುದ್ಧಾರದ ಗಂಭೀರ ಚಿಂತನೆಗೆ ತೊಡಗಿದರು. ಪ್ರಾಚೀನ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದ ಲಿಂಗಾಯತ ಧರ್ಮ-ಸಮಾಜಗಳ ದುರವಸ್ಥೆಯನ್ನು ಕಂಡು ಕಳವಳಗೊಂಡರು. ಧರ್ಮ-ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷಾಭ್ಯಾಸದ ಅಗತ್ಯವನ್ನರಿತು, ಕನ್ನಡ ನಾಡಿನ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿದರು. ಪರಿವ್ರಾಜಕರಾಗಿ ಹಾನಗಲ್ಲ ಪರಿಸರದ ಹಳ್ಳಿಗಳಗನ್ನು ಸುತ್ತಿದ ಶ್ರೀಗಳು ಜನಜೀವನವನ್ನು ನಿಕಟದಿಂದ ನೋಡಿದರು. ಸಮಾಜವನ್ನು ಅರ್ಥಪೂರ್ಣವಾಗಿ ಅಭ್ಯಸಿಸಿದರು. ಧರ್ಮಜಾಗೃತಿಯ ಕಾರ್ಯವನ್ನು ಕೈಕೊಂಡರು. ಲಿಂಗವಿಲ್ಲದ ಭವಿಗಳಿಗೆ ಸದ್ಬೋಧೆಯನ್ನು ನೀಡಿದರು. ಲಿಂಗಾಯತ ಧರ್ಮ, ಸಂಸ್ಕೃತಿ, ಸಾಹಿತ್ಯಗಳನ್ನು ಪೂಜ್ಯರು ಚೆನ್ನಾಗಿ ಅರಿತಿದ್ದರಷ್ಟೇ ಅಲ್ಲ, ಧರ್ಮ ತತ್ವಗಳನ್ನು ಕೂಡ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದರು.

 ಶ್ರೀಗಳ ದೂರದರ್ಶಿತ್ವ ತುಂಬ  ವಿಲಕ್ಷಣವಾದುದು. ಅಂದಿನ ಲಿಂಗಾಯತ ಸಮಾಜದಲ್ಲಿ ವಿದ್ಯಾವಂತರು ತುಂಬ ವಿರಳರಾಗಿದ್ದರು. ಹಳ್ಳಿಗಳಲ್ಲಿನ ನಮ್ಮ ಸಮಾಜ ಬಾಂಧವರಂತೂ ದುರಭ್ಯಾಸಗಳಿಗೆ ದಾಸರಾಗಿ, ಕಾಯಕವನ್ನು ಕೈಬಿಟ್ಟು ಸೋಮಾರಿಗಳಾಗಿದ್ದರು. ಅದನ್ನು ಕಂಡು ಮರುಗಿದ ಶ್ರೀಗಳು ಹಳ್ಳಿಗಳಿಂದಲೇ ಸುಧಾರಣೆಯ ಕಾರ್ಯವನ್ನು ಆರಂಭಿಸಿದರು. ಬಲವಾದ ಸಂಘಟನೆಯಿಂದ ಮಾತ್ರ  ಸಮಾಜದ ಉದ್ಧಾರ ಸಾಧ್ಯವೆಂಬುದನ್ನು ತಿಳಿದು, ಪ್ರಸ್ತುತ ಮಹತ್ಕಾರ್ಯದ ಸಾಧನೆಗೆ ಸಮಾನ ಮನಸ್ಕರನ್ನು ಕಲೆಹಾಕುವ ತುರ್ತು ಅಗತ್ಯವನ್ನು ಅರಿತರು. ಲಿಂಗಾಯತ ಸಮಾಜದಲ್ಲಿ ನವಚೈತನ್ಯವನ್ನು ತುಂಬಿ ಒಕ್ಕಟ್ಟನ್ನುಂಟು ಮಾಡಿ, ಆತ್ಮಗೌರವವನ್ನು  ಕಾಯ್ದುಕೊಳ್ಳಲು ಸಮರ್ಥ ಸಾಧನವೊಂದನ್ನು ಕಲ್ಪಿಸಬೇಕಾಗಿತ್ತು. ಅಂತೆಯೇ, ಇದ್ದ ಕೆಲವೇ ಕೆಲವು ಸುಶಿಕ್ಷಿತರನ್ನು ಕರೆಸಿ ಸಭೆ ಸೇರಿಸಿ, ಸಮಾಜ  ಸುಧಾರಣೆಯಾಗಬೇಕಾದರೆ ಶಿಕ್ಷಣದ ಅಗತ್ಯವಿದೆ, ಅದಕ್ಕೂ ಮೊದಲು ನಾವು ಸಂಘಟಿತರಾಗಬೇಕು. ಅದಕ್ಕಾಗಿ ನಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು . ಲಿಂಗಾಯತ ಸಮಾಜದ ಶ್ರೀಮಂತರನ್ನು ಗಣ್ಯರನ್ನು ಪ್ರತಿಭಾವಂತರನ್ನು ಬರಮಾಡಿಕೊಂಡು ಅವರೊಂದಿಗೆ ಆಲೋಚನೆ ನಡೆಸಿದರು. ೧೯೦೪ರಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜ ಬಾಂಧವರೆಲ್ಲ ಒಂದಾಗಿ ಮಹಾಸಭೆಯ ಸಕ್ರಿಯ ಸದಸ್ಯರಾದರು. ಸಮಾಜದಲ್ಲಿ ವಿಲಕ್ಷಣ ಜೀವಂತಿಕೆ ಮೂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಾಯತರು ಮೆಲ್ಲನೆ ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸತೊಡಗಿದರು

. ಶ್ರೀಗಳು ನಡೆಸಿದ ಪ್ರಯತ್ನದ ಫಲವಾಗಿ ಜನರಲ್ಲಿ ವಿಶ್ವಾಸ ಮೂಡಿತಷ್ಟೇ ಅಲ್ಲ, ನಿರೀಕ್ಷೆಗೆ ಮೀರಿ ಧನಸಂಚಯವಾಯಿತು. ವಿದ್ಯಾಪ್ರಸಾರದೊಂದಿಗೆ ಧರ್ಮ ಗ್ರಂಥಗಳ ಪಟಕಣೆಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಿದ್ಯಾವಂತರನ್ನೂ ಪಂಡಿತರನ್ನೂ ಕವಿ-ಕಲೆಗಾರ-ಸಂಗೀತಗಾರರನ್ನೂ ಪೋಷೊಸಲಾಯಿತು.

ತತ್ವಾಧಿಕ್ಯ ಹಾಗೂ ತಪೋಬಲದ ಆಧಾರದ ಮೇಲೆ ರಚಿತವಾದ ಧರ್ಮಕ್ಕೆ ಶಾಶ್ವತತೆ ಇದೆಯೆಂಬುದನ್ನರಿತು, ಬಸವಾದಿ ಪ್ರಮಥರಿಂದ ಪ್ರಚುರಗೊಂಡ ಲಿಂಗಾಯತ ಧರ್ಮಕ್ಕೆ ಚಿರಕಾಲ ಬಾಳುವ ಶಕ್ತಿಸಾಮರ್ಥ್ಯಗಳಿವೆಯೆಂಬುದನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಇನ್ನೂ ಹೆಚ್ಚಿನ ಕಾಂತಿಯನ್ನೀಯಬೇಕೆಂಬ ಸಂಕಲ್ಪ ತಾಳಿದರು. ಯೋಗವಿದ್ಯಾನ್ವೇಷಕರೂ ಪರಮ ವೈರಾಗ್ಯ ಶಾಲಿಗಳೂ ಮಹಾಮಹಿಮರೂ ಆದ ಬಾಗಲಕೋಟೆಯ ಮಲ್ಲಣಾರ್ಯರ ಸೂಚನೆಯಂತೆ ಹಾಗೂ ಯಳಂದೂರ ಬಸವಲಿಂಗ ಯತಿಗಳ ಸತ್ಸಂಕಲ್ಪದಂತೆ ಯೋಗ್ಯ ಧಾರ್ಮಿಕ ಗುರುಗಳನ್ನೂ ಆಚಾರನಿಷ್ಠ ಶಿವಾನುಭವಿಗಳನ್ನೂ ತರಬೇತಿಗೊಳಿಸುವ ಬೃಹತ್ ಯೋಗ ಸಂಸ್ಥೆಯನ್ನು ನಿರ್ಮಿಸುವ ಹೊಣೆಹೊತ್ತ ಶ್ರೀಗಳು ಬಾಗಲಕೋಟೆಯಲ್ಲಿ ೧೯೦೮ರಲ್ಲಿ ನಾಲ್ಕನೆಯ ವೀರಶೈವ ಮಹಾಸಭೆಯನ್ನು ಏರ್ಪಡಿಸಿದರು. ಇಳಕಲ್ಲಿನ ಮಹಾತ್ವಸ್ವಿ ಮಹಾಂತ ಸ್ವಾಮಿಗಳು ತೋರಿದ ಸ್ಥಾನದಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಮೂರೇ ಮೂರು ವಾರಗಳಲ್ಲಿ ಇಳಕಲ್ಲ ಶ್ರೀಗಳಿಂದ ಶಿವಯೋಗಮಂದಿರದ ಸ್ಥಳಕ್ಕೆ ಲಿಂಗಮುದ್ರೆ ಬಿದ್ದಿತು. ಕೇವಲ ಏಳು ಜನ ಸಾಧಕ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಯೊಂದಿಗೆ ಅಧ್ಯಾತ್ಮ ಉನ್ನತಿ ಸಾಧಿಸುವ ವಿದ್ಯೆ ನೀಡುವ ಏರ್ಪಾಡಾಯಿತು. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರಗಳೆರಡೂ ಕುಮಾರೇಶರ ಎರಡು ಕಣ್ಣುಗಳೆನಿಸಿದವು.

ಸಮಾಜದ ಬಗೆಗೆ ಪೂಜ್ಯರಿಗಿದ್ದ ಪ್ರೇಮ ಉಜ್ವಲವಾದುದು. ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ಪ್ರಗತಿಪರ ಜೀವಿಯೆನಿಸಿದ ಮಾನವನ ಸರ್ವಾಂಗೀಣ ವಿಕಾಸವು ಸಮಾಜವನ್ನೇ ಅವಲಂಬಿಸಿದೆ. ಅಂತೆಯೇ ಶ್ರೀಗಳು ಸದಾವಕಾಲ ಸಮಾಜದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ‘ಎದ್ದರೆ ಸಮಾಜ, ಕುಳಿತರೆ ಸಮಾಜ’ ಎನ್ನುವಂತೆ ಯಾವಾಗಲೂ ‘ಸಮಾಜ ಸಮಾಜ’ ಎಂದು ಸಮಾಜದ ಉತ್ಕರ್ಷಕ್ಕಾಗಿ ಅವರು ಟೊಂಕಕಟ್ಟಿ ನಿಂತರು. ನಾವು ಸಾಧಿಸುವ ಸಾಮಾಜಿಕ ಪ್ರಗತಿಯೇ ದೇಶದ ಬೆಳವಣಿಗೆಯ ಅಡಿಗಲ್ಲು. ನೀತಿಯುತ ಸಮಾಜದ ನಿರ್ಮಾಣದಿಂದ ರಾಜಕೀಯಕ್ಕೂ ಭದ್ರವಾದ ಹಿನ್ನೆಲೆಯೊದಗುತ್ತದೆ. ಮಾನವನ ಪ್ರಕೃತಿಯ ರಹಸ್ಯ ಅಡಗಿರುವುದೇ ಸಾಮಾಜಿಕ ಜೀವನದಲ್ಲಿ ಎಂದು ತಿಳಿಸಿದರು. ಏರ್ಪಡಿಸಿದ ಶಿವಾನುಭವ ಗೋಷ್ಠಿಗಳಲ್ಲಿ ಆಡಿದ ಮಾತುಗಳಲ್ಲಿ, ನೀಡಿದ ಉಪನ್ಯಾಸಗಳಲ್ಲಿ, ನಡೆಸಿದ ಸಹಜ ಸಮಾಲೋಚನೆಯಲ್ಲಿ ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗೆಗೆ ಶ್ರೀಗಳು ನಡೆಸಿದ ಚಿಂತನೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮಾಜವೇ ಪೂಜ್ಯರ ಬೆಂಬಲವಾಗಿ ನಿಂತಿತು. ಅಂತೆಯೇ ಅವರು ಸಮಾಜದ ಸ್ವಾಮಿಗಳಾಗಿ ಆದರ್ಶ ಮಾರ್ಗದರ್ಶಕರೆನಿಸಿದರು. ‘ಸಮಾಜ ಸೇವೆಗೆ ಮತ್ತೊಮ್ಮೆ ಹುಟ್ಟಿ ಬರುತ್ತೇವೆ’ ಎಂದು ಹೇಳಿದ ಮಹಾತ್ಮರವರು.

ʼಸರಳ ಜೀವನ-ಉದಾತ್ತ ಚಿಂತನ’ ಎಂಬ ಸೂಕ್ತಿಯನ್ನರಿತು, ಅದನ್ನು ಅಚ್ಚುಕಟ್ಟಾಗಿ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಮಹಂತರವರು. ಅವರೆ೦ದೂ ಪಲ್ಲಕ್ಕಿಯನ್ನೇರಿದವರಲ್ಲ. ಸಿಂಹಾಸನದ ಮೇಲೆ ವಿರಾಜಮಾನರಾದವರಲ್ಲ. ಏನಿದ್ದರೂ ಅವರು ಭಕ್ತರ ಹೃದಯದಲ್ಲಿ ಭದ್ರವಾದ ಸ್ಥಾನ ಪಡೆದವರು. ಬರಿ ವಿದ್ವತ್ತು-ಬುದ್ಧಿವಂತಿಕೆಗಳಿಂದಷ್ಟೇ ಅಲ್ಲ,  ಅನುಪಮ ತ್ಯಾಗ ಮತ್ತು ಸೇವಾ ಭಾವನೆಗಳಿಂದ ಅವರು ನಿಷ್ಕಾಮ ಸೇವೆಗೈದರು. ಮಠಕ್ಕಾಗಿ ಸಂಗ್ರಹಗೊಂಡ ಧನಧಾನ್ಯಗಳನ್ನು ಬರಗಾಲ ಪೀಡಿತರಿಗೆ, ರೋಗಿಗಳಿಗೆ ವಿನಯೋಗಿಸಿದ ತ್ಯಾಗಿಗಳವರು.

ಇಂದು ನಮ್ಮ ಸಮಾಜ ಶೈಕ್ಷಣಿಕಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾಧಿಸುವಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪರಿಶ್ರಮ ಗಮನಾರ್ಹ ವಾಗಿದೆ. ಇಂದಿನ ಸುಶಿಕ್ಷಿತ ಲಿಂಗಾಯತ ಬಾಂಧವರು, ಮಹಾತಪಸ್ವಿ ಕುಮಾರೇಶರು ನಿರ್ದೇಶಿಸಿದ ದಾರಿಯಲ್ಲಿ ಸಾಗಿ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಸಮಾಜದ ಕಲ್ಯಾಣ ಸಾಧ್ಯ.

ಪೂಜ್ಯ ಕುಮಾರೇಶರು ಋಣದ ಬಗೆಗೆ ಮಾಡಿಕೊಂಡಿದ್ದ ಪರಿಕಲ್ಪನೆಯೇ ಅದ್ಭುತವಾದುದು. ಋಣದ ಕಲ್ಪನೆ- ಪರಿಕಲ್ಪನೆಗಳಿಲ್ಲದೆ, ಯಾವುದೇ ಗೊತ್ತುಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವಜನಾಂಗವನ್ನು ಕಂಡರೆ ಕನಿಕರ ಪಡಬೇಕಾಗುತ್ತದೆ. ಯಾವ ಜವಾಬ್ದಾರಿಯೂ ಇಲ್ಲದ ಇಂದಿನ ಯುವಕರಿಗೆ ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ. ತಮ್ಮ ತುಂಬು ತಾರುಣ್ಯದಲ್ಲಿಯೇ ಎಲ್ಲ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸತೊಡಗಿದ್ದ ಕುಮಾರೇಶರ ಋಣಮುಕ್ತ ಬದುಕು, ಯುವಕರಿಗೆ ಅನುಕರಣೀಯ ಆದರ್ಶ; ವಿರಕ್ತರಿಗೆ ಆದರ್ಶ ಮಾರ್ಗದರ್ಶಿ, ತಾಯಿ-ತಂದೆ-ಗುರು-ಧರ್ಮ-ಸಮಾಜಗಳ ಋಣವನ್ನು ಅರಿತು, ಅರ್ಥಪೂರ್ಣವಾಗಿ ತೀರಿಸಿದ ಕುಮಾರೇಶರ ರೀತಿಯಂತೂ ಹೊಸಪೀಳಿಗೆಯ ನವಯುವಕರಿಗೆ ವಿಶೇಷ ಮಾದರಿ, ಒಬ್ಬರ ಋಣದಾಗ ಇರಬಾರದು,  ಋಣಗೇಡಿಯಾಗಿ ಹೋಗಬಾರದು’ ಎಂಬ ಜನಪದರ ಮಾತು ಕೂಡ ಋಣವಿಮುಕ್ತಿಯ ಸಂದೇಶವನ್ನೇ ನೀಡುತ್ತದೆ:

೧೮೬೭ರಿಂದ ೧೯೩೦ರ ವರೆಗೆ ಅರವತ್ತೂರು ವರ್ಷ, ಸಾರ್ಥಕ ಬದುಕನ್ನು ಬದುಕಿ, ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು’ ಎಂಬಂತೆ ಶಿವಯೋಗಿಗಳಾಗಿ, ಕಾಯಕಯೋಗಿಗಳಾಗಿ, ಸಮಾಜದ ಉದ್ಧಾರಕ್ಕಾಗಿ ದಣಿವರಿಯದೆ ದುಡಿದು, ತಮ್ಮ ಬದುಕನ್ನೇ ಸಮಾಜಕ್ಕಾಗಿ ಮುಡಿಪಿಟ್ಟು ಸಮಾಜ ಸಂಜೀವಿ’ ಯೆನಿಸಿದರು. ಅನ್ವರ್ಥಕವಾಗಿಯೂ, ಸಾರ್ಥಕವಾಗಿಯೂ ಋಣಮುಕ್ತರೆನಿಸಿದರು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪರಮ ಕಟಯೊಳಗಿರ್ದ | ಗುರುಲಿಂಗದೊಳಗೆ ಮಾ-

ಕ್ಷರವೆ ಮೊದಲಾದವರವರ ಷಡಕ್ಷರ ಮಂತ್ರ

ವೊರೆದ ಶ್ರೀಗುರುವೆ ಕೃಪೆಯಾಗು     I ೧೨೧ |

ಲಿಂಗದ ಎರಡನೆಯ ಅವಯವ ಕಟಿ, ಇದು ಪರಮವೆನಿಸಿದೆ. ಅರ್ಥಾತ್ ಶ್ರೇಷ್ಠವೆನಿಸಿದೆ. ಕಟಿಭಾಗವು ಸಣ್ಣಾಗಿರುವದರಿಂದ ಅಂದವಾಗಿ ಕಾಣುವದು. ಮೃಗ ರಾಜವೆನಿಸಿದ ಸಿಂಹದ ನಡುವು ಸಾಮಾನ್ಯವಾಗಿ ಸಣ್ಣದಾಗಿರುತ್ತದೆ. ಕುಲವಧುವಿನ ಕಟಿಭಾಗವೂ ಸಣ್ಣದಾಗಿರುವದೆಂಬ ವರ್ಣನೆಯು ಕಾವ್ಯಗಳಲ್ಲಿ ಕಾಣ ಸಿಕ್ಕುವದು. ಶಕ್ತಿ ಸೂಚಕವಾದ ಲಿಂಗ ಪೀಠದ ಮಧ್ಯಭಾಗವೂ ಚಿಕ್ಕದಾಗಿರುವಲ್ಲಿ ವಿಶೇಷತೆಯಿದೆ. ಲೋಕ ವ್ಯವಹಾರಕ್ಕೆ ಯಥೋಚಿತವೆನಿಸಿದೆ.

ಕ್ರಿಯಾಲಿಂಗವೆನಿಸಿದ ಇಷ್ಟಲಿಂಗದ ಎರಡನೆಯ ಲಿಂಗವೇ ಗುರುಲಿಂಗವೆನಿಸಿದೆ. ಈ ಗುರುಲಿಂಗವು ಕಟಿಭಾಗದಲ್ಲಿದೆ. ಗುರುಲಿಂಗದಲ್ಲಿ ‘ಮಃ’ ಪ್ರಣವವಿದೆ. ಇಲ್ಲಿ ಮಾಕ್ಷರ (ಮಕಾರ) ವೆ ಮೊದಲಾಗಿ ಷಡಕ್ಷರ ಮಂತ್ರವು ಅಡಕವಾಗಿದೆ. ಅಂದರೆ ಈ ಗುರುಲಿಂಗ ಷಟ್‌ಸ್ಥಲದಲ್ಲಿ “ಮಃ” ಪ್ರಣವದ ಶ್ರೇಷ್ಠ ಷಡಕ್ಷರ ಮಂತ್ರದ ಇರುವು ಗುಪ್ತವಾಗಿರುತ್ತದೆಂದು ಗುರುವು ಪ್ರಿಯ ಶಿಷ್ಯನಿಗೆ ಲಿಂಗಸ್ಥಾನದಲ್ಲಿಯ ಮಂತ್ರರೂಪವನ್ನು ಬೋಧಿಸುತ್ತಾನೆ. ಮಕಾರ ಮಂತ್ರದ ಸ್ತೋತ್ರ ಕೆಳಗಿನಂತಿದೆ-

ಮಂದಾಕಿನಿ-ಸಲಿಲ-ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ-ಮಹೇಶ್ವರಾಯ |

ಮಂದಾರಪುಷ್ಪ-ಬಹುಪುಷ್ಪ-ಸುಪೂಜಿತಾಯ

ಸ್ಮೈ ಮಕಾರಾಯ ನಮಃ ಶಿವಾಯ (೨) (ಬ್ರಹತ್ ಸ್ತೋತ್ರ ರತ್ನಾಕರ)

ಶ್ರೀರುದ್ರಯಾಮಲ ತಂತ್ರದಲ್ಲಿ ‘ಮ’ಕಾರ ಮಂತ್ರದ ಮಹಿಮೆ

ಮಹಾದೇವಂ ಮಹಾತ್ಮಾನಂ

ಮಹಾಧ್ಯಾನಪರಾಯಣಮ್ |

ಮಹಾಪಾಪಹರಂ ದೇವಂ

ಮಕಾರಾಯ ನಮೋ ನಮಃ (೨)

ಎಂದಿದೆ. ಮಕಾರವು ಮಹಾಧ್ಯಾನ ಪರಾಯಣ ಮಹಾದೇವನ ಸ್ವರೂಪದ್ದಾಗಿದೆ. ಪಾಪನಾಶಕವಾದ ಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲದಲ್ಲಿ ಅವಶ್ಯ ನುತಿಸಬಹುದು.

ಅವಿರಳದ ವರ್ತುಳದ | ಶಿವಲಿಂಗದೊಳು ಶಿಕಾ-

ರವೇ ಮೊದಲಾಗಿರ್ದ – ತವೆ ಷಣ್ಮಂತ್ರವ ತೋ-

ರ್ದವಿರಳ ಗುರುವೆ ಕೃಪೆಯಾಗು     | ೧೨೨||

ಲಿಂಗ ಪೀಠದ ಮೇಲಿನ ಸುತ್ತಳತೆಯೇ ವರ್ತುಳವು. ಇದು ಅವಿರತವಾದುದು. ವಿರಾಮವಿಲ್ಲದೆ ದುಂಡಾದ ಪೂರ್ಣಗೊಂಡ ರೇಖೆಯೇ (ಪರಿಘವೆ) ವರ್ತುಳವು. ಇಲ್ಲಿ ಶಿವಲಿಂಗದ ವಾಸ. ಶಿವಲಿಂಗಕ್ಕೆ ‘ಶಿ’ ಕಾರ ಪ್ರಣವಾಕ್ಷರ ಸಂಬಂಧವಿರುವದು. ಹೀಗೆ ‘ಶಿ’ ಕಾರ ಷಣ್ಮಂತ್ರವನ್ನು ಜ್ಞಾನನಿಬಿಡವಾದ (ಅವಿರಳನೆನಿಸಿದ) ಗುರುನಾಥನು  ತೋರಿಸಿ ರಕ್ಷಿಸುತ್ತಾನೆ. ಇದು ಸದ್ಗುರುವಿನ ಕರ್ತವ್ಯ.

 ‘ಶಿ’ ಕಾರದಲ್ಲಿಯ ‘ಇ’ಕಾರವೇ ಶಕ್ತಿಯು. ʼʼಇಕಾರಃ ಶಕ್ತಿರುಕ್ತಾʼ’ ಎಂದು ಶಾಸ್ತ್ರಕಾರರು ನಿರ್ವಚಿಸಿದ್ದಾರೆ. ವೃತ್ತ, ಕಟಿ, ವರ್ತುಳದಿಂದ ಕೂಡಿದ ಪೀಠವೇ ಲಿಂಗದ ಆಧಾರ ಸ್ಥಾನವಾಗಿದೆ. ಪೂರ್ಣತೆಯನ್ನು ಪಡೆದ ವಸ್ತುವಿನಲ್ಲಿ ಶಕ್ತಿಯ ಆವಿರ್ಭಾವವಾಗುವಂತೆ ಈ ವರ್ತುಳದಲ್ಲಿ ಶಿಕಾರ ಪ್ರಣವವು ಶಕ್ತಿಯ ವೈಶಿಷ್ಟ್ಯತೆ ಯನ್ನು ಸೂಚಿಸುತ್ತದೆ. ಇಂಥ ಶಿಕಾರ ಪ್ರಣವಕ್ಕೆ ಜಗದ್ಗುರು ಶಂಕರಾಚಾರ್ಯರು ವಂದಿಸಿದ್ದಾರೆ.

 ಶಿವಾಯ ಗೌರೀವದನಾಬ್ಜ-ವೃಂದ-

ಸೂರ್ಯಾಯ ದಕ್ಷಾಧ್ವರ ನಾಶಕಾಯ  |

ಶ್ರೀ ನೀಲಕಂಠಾಯ ವೃಷಭ ಧ್ವಜಾಯ

 ಸ್ಮೈ ಶಿಕಾರಾಯ ನಮಃ ಶಿವಾಯ

ಪಾರ್ವತಿಯ ಮುಖಕಮಲವನ್ನು ಅರಳಿಸುವಲ್ಲಿ ಸೂರ್ಯಸದೃಶನಾದ, ದಕ್ಷನ ಯಜ್ಞವನ್ನು ನಾಶಮಾಡಿದ, ವಿಷವನ್ನು ಧರಿಸಿ ನೀಲಕಂಠನೆನಿಸಿದ, ವೃಷಭ ವಾಹನನೆನಿಸಿದ ಶಿವನಿಗೆ ಹಾಗೂ ಶಿವನ ಸ್ವರೂಪವೆನಿಸಿದ ಶಿಕಾರ ಪ್ರಣವಕ್ಕೆ ನಮಸ್ಕಾರವು. ಇದರಂತೆ ಶಿವಷಡಕ್ಷರ ಸ್ತೋತ್ರದಲ್ಲಿ ‘ಶಿ’ ಕಾರ ಮಂತ್ರದ ವರ್ಣನೆ ಕೆಳಗಿನಂತಿದೆ.

ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹಕಾರಕಂ |

ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ” ||

ಮಂಗಲಕರನೂ, ಶಾಂತನೂ, ಜಗದೊಡೆಯೆನಿಸಿ ಲೋಕಕ್ಕೆ ಅನುಗ್ರಹಿಸ ತಕ್ಕವನೂ, ನಿತ್ಯನೂ, ಆದ ಶಿವ ಪದದ ಏಕಾಕ್ಷರವೆನಿಸಿದ ‘ಶಿ’ ಕಾರ ಪ್ರಣವಕ್ಕೆ ಅನಂತ ವಂದನೆಗಳು.

*

ಇಂತು ಗೋಮುಖದೊಳಗಿ | ಪ್ಪಂಥ ಜಂಗಮ ಲಿಂಗ

ಮಂತ್ರ ವಾಕಾರ-ಮುಂತಾದ ಷಣ್ಮಂತ್ರ

ಮಂ ತೋರ್ದ ಗುರುವೆ ಕೃಪೆಯಾಗು   || ೧೨೩ ||

ಇನ್ನು ಕ್ರಮಪ್ರಾಪ್ತವಾದ ಸ್ಥಾನ ಗೋಮುಖವು. ಎಲ್ಲ ಅವಯವಗಳಲ್ಲಿ ಮುಖ ಮುಖ್ಯವಾಗಿರುವಂತೆ ಲಿಂಗಕ್ಕೆ ಗೋಮುಖವು ಸುಂದರ ಅವಯವವಾಗಿದೆ. ಗೋಮುಖಕ್ಕೆ ಜಲಹರಿಯೆಂತಲೂ ಕರೆಯುತ್ತಾರೆ. ಸ್ಥಾವರಲಿಂಗದ ಮೇಲೆ ಅಭಿಷೇಕ ಮಾಡಿದ ಅಭಿಷೇಕವು ಜಲಹರಿಯ ಮುಖಾಂತರವೇ ಹರಿದು ಹೋಗುವದು. ಇಷ್ಟಲಿಂಗದ ಮೇಲೆ ಅಭಿಷೇಕ ಮಾಡಿದರೂ ಜಲಹರಿಯ ಭಾಗದ ಮೂಲಕವೇ ಹೋಗುವದು. ಶಿವನ ಎಡಭಾಗದಲ್ಲಿ ಶಕ್ತಿಯು ಇರುವಂತೆ ಈ ಗೋಮುಖವು ಲಿಂಗದ ಎಡಭಾಗದಲ್ಲಿ ಇರುವದು.

ಈ ಗೋಮುಖದಲ್ಲಿ ಜಂಗಮಲಿಂಗವಿರುತ್ತದೆ. ಅಂತೆಯೇ ಲಿಂಗಕ್ಕರ್ಪಿಸಿದ ಅಭಿಷೇಕಾದಿಗಳು ಗೋಮುಖದಲ್ಲಿ ಸಮರ್ಪಿತಗೊಳ್ಳುವವು. ಜಂಗಮಲಿಂಗಕ್ಕೆ ‘ವಾ’ ಕಾರ ಪ್ರಣವವು ಸಂಬಂಧಗೊಳ್ಳುವದು. ಈ ಜಂಗಮ ಲಿಂಗದಲ್ಲಿ ‘ವಾ’ ಕಾರ

ಮುಖ್ಯವಾದ ಷಣ್ಮಂತ್ರವು ನೆಲೆಗೊಂಡಿರುತ್ತದೆ. ಗುರುದೇವನು ಈ ಗೋಮುಖದಲ್ಲಿ ‘ವಾ’ ಕಾರ ಮಂತ್ರವನ್ನು ಸಂಬಂಧಗೊಳಿಸಿ ಲಿಂಗವನ್ನು ಶಕ್ತಿಯುಕ್ತವನ್ನಾಗಿ ಕರುಣಿಸುತ್ತಾನೆ. ಇಲ್ಲಿ ಲಿಂಗದ ಮುಖವೇ ಜಂಗಮವಾಗಿರುವ ಅನ್ಯೋನ್ಯ ಸಂಬಂಧವೂ

ವ್ಯಕ್ತವಾಗುವದು.

ವಶಿಷ್ಠ ಕಂಭೋದ್ಭವ ಗೌತಮಾರ್ಯ

ಮುನೀಂದ್ರ ದೇವಾರ್ಚಿತ ಶೇಖರಾಯ |

ಚಂದ್ರಾರ್ಕ ವೈಶ್ವಾನರ ಲೋಚನಾಯ

ಸ್ಮೈ ವಕಾರಾಯ ನಮಃ ಶಿವಾಯ (೪) ||

ಎಂದು ಶಂಕರ ಭಗವತ್ಪಾದರು ‘ವಾ’ ಕಾರ ಪ್ರಣವವನ್ನು ನುತಿಸಿದರೆ  ಶಿವಷಡಕ್ಷರ ಸ್ತೋತ್ರದಲ್ಲಿ

ವಾಹನಂ ಋಷಭೋ ಯಸ್ಯ

ವಾಸುಕಿಃ ಕಂಠಭೂಷಣಮ್ |

ವಾಮೇ ಶಕ್ತಿಧರಂ ದೇವಂ

ವ ಕಾರಾಯ ನಮೋ ನಮಃ ||

ಯಾವಾತನಿಗೆ ಋಷಭವು ವಾಹನವೋ, ಸರ್ಪವು ಕಂಠಾಭರಣವೋ, ವಾಮಭಾಗದಲ್ಲಿ ಶಕ್ತಿಸಮೇತನೋ ಅಂಥ ವಾಕಾರ ಮಂತ್ರ ಮೂರ್ತಿಗೆ ನಮಸ್ಕಾರವು.

ನಾದನಾಳದ ಸುಪ್ರ | ಸಾದ ಲಿಂಗದೊಳು ನಿ

ರ್ಭೇದವಹ ಯಕಾ ರಾದಿ ಷಣ್ಮಂತ್ರಗಳ

ಬೋಧಿಸಿದ ಗುರುವೆ ಕೃಪೆಯಾಗು   || ೧೨೪ ||

ಲಿಂಗದ ಐದನೆಯ ಅವಯವ ನಾಳ, ಇದು ನಾದ ರೂಪಾಗಿದೆ. ನಾದವು ಕಳಾಲಿಂಗ ಸ್ವರೂಪವು. ಲಿಂಗಪೀಠದ ಮಧ್ಯ ತಗ್ಗು ಪ್ರದೇಶವೇ ನಾಳವು; ಅಥವಾ ರಂಧ್ರವು. ಪೀಠರಂಧ್ರದ ಸ್ಥಾನವೇ ಲಿಂಗಕ್ಕೆ ಆಶ್ರಯಸ್ಥಾನ. ಈ ನಾದಮಯ (ಕಳಾಮಯ) ನಾಳದಲ್ಲಿರುವದು ಪ್ರಸಾದಲಿಂಗವು. ಅದರೊಳು ಭೇದವಳಿದ ‘ಯ’ ಕಾರ ಪ್ರಣವಾಕ್ಷರವುಂಟು. ಇಲ್ಲಿ ನಾಳಕ್ಕೂ ಮತ್ತು ಅದರೊಳಡಗಿದ ಚಿತ್ಪೀಠವಾದ ಲಿಂಗಕ್ಕೂ ಅಭೇದವಿರುತ್ತದೆ. ಪೀಠ ಹಾಗೂ ಚಿತ್ಪೀಠಗಳೆರಡೂ ಭಿನ್ನವಾಗಿ ಕಂಡರೂ ಶಕ್ತಿವಿಶಿಷ್ಟಾದ್ವೈತ ತತ್ತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ.

ಪ್ರಸಾದ ಲಿಂಗಕ್ಕೆ ಮುಖ್ಯವಾದ ‘ಯ’ ಕಾರಾದಿ ಬೀಜಾಕ್ಷರವುಳ್ಳ ಷಣ್ಮಂತ್ರವು ಅಲ್ಲಿ ಸಂಬಂಧವಾಗುತ್ತದೆ. ಎಂದು ಮುಂತಾಗಿ ಬೋಧಿಸುವನು ಗುರುದೇವನು. ಪಂಚಾಕ್ಷರಿಯ ಅಂತಿಮ ಪ್ರಣವದ ವರ್ಣನೆಯನ್ನು ಶಂಕರಾಚಾರ್ಯರು ಹೀಗೆ ನುತಿಸಿದ್ದಾರೆ.

ಯಕ್ಷಸ್ವರೂಪಾಯ ಜಟಾಧರಾಯ

ಪಿನಾಕ ಹಸ್ತಾಯ ಸನಾತನಾಯ |

ದಿವ್ಯಾಯ ದೇವಾಯ ದಿಗಂಬರಾಯ

ಸ್ಮೈಯ’ ಕಾರಾಯ ನಮಃ ಶಿವಾಯ (೫)

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿದೌ

ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ (೬)

ಪುಣ್ಯಪ್ರದವಾದ ಪಂಚಾಕ್ಷರ ಮಹಾಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲಕ್ಕೆ ಪಠಿಸುವವನು ಶಿವಲೋಕವನ್ನು ಹೊಂದಿ ಶಿವನೊಡನೆ ಆನಂದದಿಂದಿರುವ ಸೌಭಾಗ್ಯವನ್ನು ಪಡೆಯುವನು. ಶಿವಷಡಕ್ಷರ ಸ್ತೋತ್ರದಲ್ಲಿ ಯಕಾರ ಪ್ರಣವದ ಸ್ತುತಿ ಕೆಳಗಿನಂತಿದೆ.

ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪೀ ಮಹೇಶ್ವರಃ

ಯೋ ಗುರುಃ ಸರ್ವ ದೇವಾನಾಂ ಯಕಾರಾಯ ನಮೋ ನಮಃ

ಬಹು ಮೇಲು ಪೀಠದಾ | ಮಹಲಿಂಗದೊಳಗೆ ತಾ

ನಿಹ ಓಂಕಾರಾದಿ ಸಹಜ ಷಣ್ಮಂತ್ರವನ-

ರುಹಿದೆಯೈ ಗುರುವೆ ಕೃಪೆಯಾಗು   | ೧೨೫ |

ಲಿಂಗಷಟ್‌ಸ್ಥಲದಲ್ಲಿ ಬಹು ಮೇಲಾದುದು ಚಿತ್ಪೀಠವು . ಚಿಚ್ಛಕ್ತಿಮಯ ವಾದುದೇ ಚಿತ್ಪೀಠವೆನಿಸುವದು. ಚಿಚ್ಛಕ್ತಿಭರಿತನಾದ ಐಕ್ಯನು ಮಹಾಲಿಂಗದಲ್ಲಿ ಸಮರಸನಾಗಿರುವಂತೆ, ಚಿತ್ಪೀಠದಲ್ಲಿರುವುದು ಮಹಾಲಿಂಗವು. ಈ ಮಹಾಲಿಂಗದಲ್ಲಿ ಮಹವಾದುದು (ಶ್ರೇಷ್ಠವಾದುದು) ಓಂಕಾರ ಪ್ರಣವವು. ಇದು ಸಹಜವೆನಿಸಿದೆ. ಯಾಕಂದರೆ ಓಂಕಾರವು ಷಣ್ಮಂತ್ರವನ್ನು ಸಂಪೂರ್ಣವಾಗಿ ಹುದುಗಿಸಿಕೊಂಡಿದೆ. ಓಂಕಾರದಿಂದಲೇ ಪಂಚ ಪ್ರಾಣಗಳು ಪ್ರಕಟಗೊಳ್ಳುವದರಿಂದ ಸಹಜ ಷಣ್ಮಂತ್ರವೆನಿಸುವದು. ಇಂಥ ಓಂಕಾರದ ಚಿಂತನ ಸಮರಸವಾದ ಚೇತನವಾಗಿದೆ. ಷಡಕ್ಷರ ಸ್ತೋತ್ರದಲ್ಲಿ-

ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |

ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||

ಬಿಂದು ಸಹಿತವಾದ ಓಂಕಾರವನ್ನು ಯೋಗಿಗಳು ಹೃದಯದಲ್ಲಿ ಸದಾಕಾಲವೂ ಧ್ಯಾನಿಸುತ್ತಾರೆ. ಈ ಓಂಕಾರವು ಕಾಮ (ಬಯಸಿದ್ದ)ವನ್ನು ಮೋಕ್ಷವನ್ನುಕೊಡುವಂಥಹ ದಾಗಿದೆ. ʼʼಶಿವತತ್ತ್ವ ರತ್ನಾಕರ’ದ ಪ್ರಥಮ ಕಲ್ಲೋಲದ ಐದನೆಯ ತರಂಗದಲ್ಲಿ

ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಃ ಸ್ವರಾಃ |

ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ||

ಪ್ರಣವೋ ಹಿ ಪರಂ ಬ್ರಹ್ಮ ಪ್ರಣವಃ ಪರಮಂ ಪದಮ್ |

ತಸ್ಮಾದುಚ್ಚಾರಣಾತ್ ಸಮ್ಯಕ್ ಪ್ರಣವಸ್ಯ ಶಿವಾತ್ಮನಃ |

ಪಾತಕಾನಿ ವಿನಶ್ಯಂತಿ ಹೃದಿಧ್ಯಾತೇ ಪರೇ ಶಿವೇ |

ವೇದಗಳು, ಸ್ವರಗಳು ಓಂಕಾರದಿಂದ ಪ್ರಾದುರ್ಭವಿಸಿವೆ. ತ್ರೈಲೋಕದ ಸಕಲ ಸಚರಾಚರ ಪ್ರಾಣಿಗಳಿಗೂ ಓಂಕಾರವೇ ಆಶ್ರಯವಾಗಿದೆ. ಇಂಥ ಓಂಕಾರ ಪ್ರಣವವು ಪರಬ್ರಹ್ಮವೂ, ಪರಮಪದವೂ ಆಗಿದೆ. ಆದ್ದರಿಂದ ಶಿವನ ಆತ್ಮವೇ ಓಂಕಾರ ಪ್ರಣವವು. ಇದನ್ನು ಧ್ಯಾನಪೂರ್ವಕ ಜಪಿಸುವದರಿಂದ ಸಕಲ ಪಾತಕಗಳು ನಾಶವಾಗುತ್ತವೆ. ಎಂದು ಓಂಕಾರದ ಅಪಾರ ಮಹಿಮೆಯನ್ನು ಬಣ್ಣಿಸಿದ್ದಾರೆ. ಇಂಥ ಓಂಕಾರದ ಉಪದೇಶವನ್ನು ಕರುಣಿಸುವ ಗುರುನಾಥನು ಕೃತಕೃತ್ಯನು. ಉಪದೇಶ ಪಡೆಯುವ ಶಿಷ್ಯನೂ ಧನ್ಯನು.

ಚಿತ್ಪೀಠದ ಮಹಾಲಿಂಗ ಮತ್ತು ಓಂಕಾರ ಪ್ರಣವವು ಒಂದಾಗಿದೆ. ಅಂತೆಯೇ ಓಂಕಾರದಲ್ಲಿ ಪಂಚಪ್ರಣವಗಳು ಕೂಡಿಕೊಂಡಿವೆ. ಮತ್ತು ಮಹಾಲಿಂಗದ ಸುನಾಮವೇ ಷಣ್ಮಂತ್ರವು. ಆದ್ದರಿಂದ ಅದು ಸಾರ್ಥಕವಾಗಿದೆ.

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 5

ಜ.ಚ.ನಿ

ಊಟ ಮಾಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿ ಅವರದಾಗಿರಲಿಲ್ಲ, ಅವರ ಅಜ್ಜಂದಿರವರ ಕಾಯಕಕ್ಕೆ ಕೈ ಹಾಕಿದರು. ಅದೇ ಲಿಂಗದಹಳ್ಳಿಯಲ್ಲಿಯೇ ಒಂದು ಸ್ವತಂತ್ರ ಪ್ರಾಥಮಿಕ ಶಾಲೆಯನ್ನು ಪ್ರಾರಂಭ ಮಾಡಿದರು. ಅನೇಕ ಬಾಲಕರು

ಕೂಡಿದರು. ವಿದ್ಯಾಶಿಕ್ಷಣವು ಆರಂಭವಾಯಿತು.

ಇಷ್ಟರಿಂದಲೆ ಅವರ ಮನಸ್ಸು ತೃಪ್ತಿಯಾಗಲಿಲ್ಲ. ತಮ್ಮ ಆತ್ಮಶಿಕ್ಷಣವೂ ಆಗಬೇಕೆಂದು ಆಲೋಚಿಸಿದರು. ಅದಕ್ಕೆ ತಕ್ಕಂತೆ ಅದೇ ಊರಿನಲ್ಲಿ ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯನವರೆಂಬುವರಿದ್ದರು. ಅವರಲ್ಲಿಗೆ ಹೋಗಿ ತಮ್ಮ ಕೋರಿಕೆಯನ್ನು ಅರಿಕೆ ಮಾಡಿದರು. ಅವರು ಸಂತೋಷದಿಂದ ಒಪ್ಪಿದರು. ಅದರಿಂದಾಗಿ ಅವರಲ್ಲಿ ಕನ್ನಡ ಕಾವ್ಯಗಳನ್ನು, ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ನೋಡಲಾರಂಭಿಸಿದರು.

ವೇದಾಂತದ ರುಚಿ ಅವರ ಮನಸ್ಸಿಗೆ ಹಿಡಿಯಿತು. ಸಿದ್ಧಾಂತದ ಅರಿವು ಅವರ ಕಣ್ಣನ್ನು ತೆರೆಯಿಸಿತು. ಇಷ್ಟ-ಪ್ರಾಣ-ಭಾವಲಿಂಗಗಳ ಬಣ್ಣನೆಯ ‘ಕೈವಲ್ಯ ಪದ್ಧತಿಯ ಪದ್ಯಗಳು ಅವರ ಬಾಳನ್ನು ಭಾವರಾಜ್ಯಕ್ಕೇರಿಸಿದವು. ಭಕ್ತಿಪಂಥಕ್ಕೆ ಹಚ್ಚಿತು. ಲಿಂಗಪೂಜೆಯಲ್ಲಿ ಅವರಿಗೆ ಅಮಿತವಾದ ಪ್ರೇಮ ಹುಟ್ಟಿತು. ಒಮ್ಮೊಮ್ಮೆ ಆ ಪೂಜಾ ವೈಭವದಲ್ಲಿ ಆನಂದಪರವಶತೆಯಲ್ಲಿ ಬೆರೆದು ಬಾಹ್ಯವ ಮರೆದು ಶಾಲೆಗೆ ಹೋಗುವುದನ್ನೇ ಮರೆಯುತ್ತಿದ್ದರು, ವೇಳೆಯನ್ನೇ ಮೀರುತ್ತಿದ್ದರು. ನಿಜಗುಣರ ಗ್ರಂಥಗಳ ಅಭ್ಯಾಸದಲ್ಲಿ ಅವರಿಗೆ ದಿನೇ ದಿನೇ ಅಭಿರುಚಿ ಹೆಚ್ಚಿತು. ಆ ಓದಿನ ಮುಂದೆ ಅವರಿಗೆ ಮತ್ತೊಂದು ಬೇಕಾಗದಾಯಿತು. ಇದರಿಂದಾಗಿ ಮೆಲ್ಲಮೆಲ್ಲನೆ ಅವರ ಮನಸ್ಸು ವೈರಾಗ್ಯದ ಒಂದೊಂದೆ ಹಂತಗಳನ್ನು ಏರಹತ್ತಿತು. ಬರಬರುತ್ತ ಸಂಸಾರದ ಕಹಿರಸವು ಅವರ ಅನುಭವಕ್ಕೆ ಬರಹತ್ತಿತು. ದಿನೇ ದಿನೇ ಶರೀರದ ಅಸಾರತೆ ಅಶಾಶ್ವತತೆ ಅವರಿಗೆ ವೇದ್ಯವಾಗತೊಡಗಿತು.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ನಯ-ವಿನಯ ಸಂಪನ್ನನಾದ ವ್ಯಕ್ತಿ ಸಹಜವಾಗಿ ಎಲ್ಲರ ಗಮನ ಸೆಳೆಯುತ್ತಾನೆ. ಜನರ ಪ್ರೀತಿ-ವಿಶ್ವಾಸಗಳಿಗೂ ಪಾತ್ರನಾಗುತ್ತಾನೆ. ಸಮಾಜದಲ್ಲಿ ಸದ್ಗುಣಶೀಲನೆನಿಸಿ ಬಾಳುತ್ತಾನೆ. ಬಾಳು ಬೆಳಗುತ್ತಾನೆ. ವ್ಯಕ್ತಿಯಲ್ಲಿರುವ ಧನ, ಯೌವ್ವನ, ಅಧಿಕಾರ, ವಿದ್ಯೆ ಮೊದಲಾದವುಗಳಿಗೆ ಬೆಲೆ ಬರುವುದು ಆ ವ್ಯಕ್ತಿಯ ನಯ-ವಿನಯ ಹಾಗು ಸರಸ ಸಜ್ಜನಿಕೆಗಳಿಂದ. ಈ ಕಾರಣಕ್ಕಾಗಿಯೇ ‘ವಿದ್ಯಾ ವಿನಯೇನ ಶೋಭತೆ” ಎಂದು ಹೇಳಿರುವುದು.

ದ್ವೇಷಾಸೂಯೆಗಳಿಲ್ಲದ, ಮೋಸ ವಂಚನೆಗಳಿಲ್ಲದ, ಪರಿಶುದ್ಧ ಹೃದಯದ ಸಂಯಮಶೀಲ ವ್ಯಕ್ತಿಗಳಲ್ಲಿ ನಯ-ವಿನಯಗಳು ಮನೆ ಮಾಡಿಕೊಂಡಿರುತ್ತವೆ. ನಯವಿನಯದಿಂದ ಸಜ್ಜನಿಕೆ, ಸಜ್ಜನಿಕೆಯಿಂದ ಮೃದು ವಚನಗಳು ಲಭ್ಯವಾಗುತ್ತವೆ. ಈ ಮೃದು ವಚನಗಳ ಸಕಲ ಜಪತಪಂಗಳು. ಸರ್ವಾರ್ಪಣ ಮನೋಭಾವದಿಂದ ಜನಸೇವೆ ಮಾಡುವ ಮೃದು ವಚನದ ಸದ್ಗುಣಶೀಲರಲ್ಲಿ ವಿನಯಗುಣ ಭಗವಂತನ ಒಲವನ್ನು ಗಳಿಸುವ ಸಾಧನವಾಗಿರುತ್ತದೆ. ಸದುವಿನಯವೇ ಸದಾಶಿವನ ಒಲುಮೆಯಯ್ಯ ಎಂಬ ಬಸವವಾಣಿ ಈ ಮಾತಿಗೊಂದು ನಿದರ್ಶನ.

ವಿದ್ಯಾರ್ಜನೆಯ ಸಂದರ್ಭದಲ್ಲಿ ಸದ್ವಿನಯ ಸದಾಚಾರಗಳು ಅತ್ಯವಶ್ಯವಾಗಿದ್ದರೂ ಆ ವಿದ್ಯೆಯೇ ವ್ಯಕ್ತಿಯನ್ನು ನಯವಿನಯ ಸಂಪನ್ನನಾಗಿಸುತ್ತದೆ.

 ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್

ಪಾತ್ರತ್ವಾತ್ ಧನಮಾಮ್ನೋತಿ ಧನಾದ್ಧರ್ಮಃ ತತಃ ಸುಖಮ್

 ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ಗೌರವಾದರಗಳನ್ನು ಪಡೆದ ವ್ಯಕ್ತಿ ಶ್ರೀಮಂತನಾಗುತ್ತಾನೆ. ತನ್ನಲ್ಲಿರುವ ಧನದಿಂದ ಧರ್ಮಕಾರ್ಯಗಳನ್ನು ನೆರವೇರಿಸುತ್ತ ಸುದೀರ್ಘ ಕಾಲ ಸುಖಿಯಾಗಿ ಬಾಳುತ್ತಾನೆ ಎಂದು ಸುಭಾಷಿತವೊಂದು ಹೇಳುತ್ತದೆ. ಕಾರಣ ಸದಾ ಗರ್ವದಿಂದ ಬೀಗದೆ ನಮ್ರರಾಗಿ ಬಾಗುವುದೇ ವಿಹಿತ.

 ಚೀನ ದೇಶದ ಅತ್ಯಂತ ವೃದ್ಧನಾದ ಸಂತನೊಬ್ಬ ತನ್ನೆಲ್ಲ ಭಕ್ತರನ್ನು ಶಿಷ್ಯರನ್ನು ಕರೆದು ‘ನನ್ನ ಬಾಯಿಯಲ್ಲಿ ಏನಿದೆ? ಎಷ್ಟು ಹಲ್ಲುಗಳಿವೆ? ಹೇಳಿರಿ’ ಎಂದು ಬಾಯಿತೆರೆದು ತೋರಿಸಿದ. ಬಾಯಿಯಲ್ಲಿ ಇಣುಕಿ ನೋಡಿದ ಎಲ್ಲರೂ ‘ಹಲ್ಲುಗಳೆಲ್ಲ ಬಿದ್ದುಹೋಗಿವೆ ಒಂದೂ ಉಳಿದಿಲ್ಲ’ ಎನ್ನುತ್ತಾರೆ. ನಾಲಿಗೆಯಾದರೂ ಇದೆಯಲ್ಲವೇ? ಎಂದು ಸಂತನು ಮರುಪ್ರಶ್ನಿಸುತ್ತಾನೆ. ಎಲ್ಲರೂ ‘ಇದೆ’ ಎನ್ನುತ್ತಾರೆ. ಆಗ ಸಂತನು ‘ನೋಡಿ! ನಾಲಿಗೆಯಾದರೂ ಜನ್ಮದಾರಬ್ದದಿಂದಲೇ ಇದೆ. ಹಲ್ಲುಗಳು ನಂತರ ಬಂದವುಗಳು, ನಂತರ ಹೋಗಬೇಕಾಗಿತ್ತು. ಹಲ್ಲುಗಳೇ ಮೊದಲು ಹೋಗಲು ಕಾರಣವೇನು?’ ಶಿಷ್ಯರೆಲ್ಲರೂ ಕಾರಣವೇನೆಂದು ತಿಳಿಯದೆ ‘ಗೊತ್ತಿಲ್ಲ’ ಎಂದು ಹೇಳಿದರು. ಆಗ ಸಂತನು ನಿಧಾನವಾಗಿ ಇದನ್ನೇ ಹೇಳಲು ನಿಮ್ಮನ್ನೆಲ್ಲ ಕರೆದಿರುವೆ. ನೋಡಿ! ನಾಲಿಗೆ ಈವರೆಗೂ ಇರಲು ಕಾರಣವೆಂದರೆ ಅದರ ಮೃದುತ್ವ ಹಲ್ಲುಗಳು ನಂತರ ಬಂದು ಮೊದಲು ಹೋಗಲು ಕಾರಣ ಅದರ ಕಠಿಣತೆ(ಬಿರುಸುತನ) ಹಾಗು ಕಠಿಣತೆಯ ಬಗ್ಗೆ ಅವುಗಳಿಗಿರುವ ಅಭಿಮಾನವೇ ಕಾರಣ. ಆದ್ದರಿಂದ ನನ್ನ ಪ್ರೀತಿಯ ಶಿಷ್ಯರೇ! ಸುದೀರ್ಘ ಕಾಲ ಬದುಕುವುದಾದರೆ ನಮ್ರರಾಗಿರಿ, ವಿನಯಶಾಲಿಗಳಾಗಿರಿ, ಅಹಂಕಾರ, ಅಭಿಮಾನದಿಂದ ಮುಕ್ತರಾಗಿರಿ ಎಂದು ಉಪದೇಶಿಸುತ್ತಾನೆ.

 ನಯ-ವಿನಯ ನಮ್ಮ ಹೃದಯ ಶ್ರೀಮಂತಿಕೆಯ ಪ್ರತೀಕ. ಅದು ಏತ ತಲೆ ಬಾಗಿದಂತೆ. ಇಕ್ಕುಳ ಕೈ ಮುಗಿದಂತೆ, ಕೃತ್ರಿಮವಾಗಿರದೆ ಗೊನೆಬಿಟ್ಟ ಬಾಳೆಯಂತೆ ನೈಜವಾಗಿರಬೇಕು. ಆಗ ಬದುಕು ಸುಂದರವಾಗುತ್ತದೆ; ಬಂಧುರವಾಗುತ್ತದೆ.

ವರದಿ ನಿರೂಪಕರು.

ಪೂಜ್ಯ ಶಿವಬಸವ ದೇವರು ಧಾರವಾಡ

ಪೂಜ್ಯ ಅಡವೀಶ ದೇವರು ತಾರಿಹಾಳ

ಪೂಜ್ಯ ಆನಂದ ದೇವರು ಹುಣಶ್ಯಾಳ (ಚಿತ್ರಗಳ ಸಂಗ್ರಹ)

 

(ಸುಮಾರು ೪೦ ಸಾಧಕರು ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದವರು ಅನೇಕ ಮಠಗಳಿಗೆ ಉತ್ತರಾಧಿಕಾರಿಗಳಾದವರು, ಹಾಗೂ ಪಟ್ಟಾಧಿಕಾರಿಗಳಾದವರು  ಎಲ್ಲರೂ ಸೇರಿಕೊಂಡು 5 ದಿವಸ ಶಿವಯೋಗ  ಮಂದಿರದಲ್ಲಿ ಇದ್ದುಕೊಂಡು ಗೋಶಾಲೆ ಸ್ವಚ್ಛತೆ ,ಎಲ್ಲ ಗೋಡೆಗಳಿಗೂ ಬಣ್ಣ ಹಚ್ಚುದ ಕೆಲಸ, ನದಿಯ ಪಕ್ಕದಲ್ಲಿರುವ ಸ್ವಚ್ಛತೆ, ಭಸ್ಮ ತಯಾರಿಸುವ ಕಟ್ಟಡದ ಸ್ವಚ್ಛತೆ , ಬಣ್ಣ ಹಚ್ಚುವ ಕೆಲಸ ಜೊತೆಗೆ ಗುರು ಕುಮಾರೇಶ್ವರ ಗದ್ದುಗೆ ಸ್ವಚ್ಛತೆ ಮತ್ತು  ವಾಟರ್ ಫ್ರೆಶರ್‌ ಮಶಿನ್ ಕೊಡುಗೆಯ ಸೇವೆ ಮಾಡಿದ ಯುವ ಯತಿಗಳ ಸೇವೆ ಅನನ್ಯವಾದುದು.

”ಶ್ರೀಕುಮಾರ ತರಂಗಿಣಿ” ಬ್ಲಾಗ್‌ ವರದಿ ರೂಪದಲ್ಲಿ ಪ್ರಕಟಿಸಲು ಹಲವು ಬಾರಿ ಕೇಳಿಕೊಂಡರೂ ಬಹಳ ಸಂಕೋಚಪಟ್ಟುಕೊಂಡ ಯುವಯತಿಗಳ ಪ್ರಚಾರಪ್ರಿಯವಲ್ಲದ ಅನುಪಮ ಸೇವೆ ಮುಂದಿನ ತಲೆಮಾರಿನ ಯುವ ಯತಿಗಳಿಗೆ ದಿಕ್ಸೂಚಿಯಾಗಲೆಂಬ ಒಂದೇ ಒಂದು ಆಶಯದೊಂದಿಗೆ ಒತ್ತಾಯಪೂರ್ವಕ ಈ ವರದಿಯನ್ನು ಸಿದ್ದಪಡಿಸಲಾಗಿದೆ.

ಈ ಸೇವೆಯ ಉದ್ದೇಶವೇನು ಎಂದು ಕೇಳಿದಾಗ ,ಸಾಧಕರ ಈ ಪ್ರಾಮಾಣಿಕ ಮತ್ತು ಪ್ರಾಂಜಲ ಅಂತರಾಳದ ನುಡಿಗಳು ಹೀಗೆ ವ್ಯಕ್ತವಾಗಿವೆ

“ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಸಂಪಾದಕ-”ಶ್ರೀಕುಮಾರ ತರಂಗಿಣಿ” ಬ್ಲಾಗ್‌)

ಸಮಾಜ ಸೇವಾ ದೀಕ್ಷೆ ತೊಟ್ಟಿರುವ ಅಧ್ಯಾತ್ಮ  ಸಾಧಕರಿಗೆ ಒಂದು ಸೇವಾ  ಕಲ್ಪನೆ ಮೂಡಿತು.ಅದು ಎಲ್ಲ ಸಾಧಕರ  ಮನಸ್ಸಿನಲ್ಲಿ  ವಿಚಾರವಾಗಿ ತೋರಿದಾಗ ಅದನ್ನು ಎಲ್ಲ ಮರೀದೇವರುಗಳು ಮನಸಾ ಪೂರ್ವಕವಾಗಿ ಒಪ್ಪಿಕೊಂಡರು. ಆ ಸೇವಾ ತೃಪ್ತಿ ಕಾಯಕವೇ ಪರಮಪೂಜ್ಯ ಶ್ರೀ ಹಾನಗಲ್ಲ ಗುರು ಕುಮಾರೇಶನ ಶಿವಯೋಗ ತಾಣ  ಶಿವಯೋಗ ಮಂದಿರ. ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪ ದಿನಗಳವರೆಗೆ ಸೇವೆ ಮಾಡುವುದಾಗಿ  ನಿರ್ಣಯ ಮಾಡಲಾಯತು.

ಗುರು ಕುಮಾರ ಶಿವಯೋಗಿಗಳು   ಪರಿಸರ ಪ್ರೇಮಿಗಳು ಹಾಗೂ  ಕೃಷಿ ಆಸಕ್ತಿ  ಪ್ರೇರಣಾದಾಯಕರು, ತತ್ ಕಾರಣ ಎಲ್ಲ ಸಾಧಕರು 2022 ರ ಆಷಾಢ ಮಾಸದಲ್ಲಿ  ಶಿವಯೋಗ ಮಂದಿರದಲ್ಲಿ ಸುಮಾರು ಒಂದು ಸಾವಿರ (1000) ಸಸಿ ನೆಡುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು. ಸಸಿಗಳನ್ನ ನೆಟ್ಟೆವು.

ಅದೇ ರೀತಿಯಾಗಿ ಈ ವರ್ಷದ 2023 ರ ಆಷಾಢ ಮಾಸದ ಸೇವಾ ಕೈಂಕರ್ಯ.

ಶ್ರೀ ಶಿವಯೋಗ ಮಂದಿರದಲ್ಲಿ ಶತಮಾನದ ಹಿಂದೆ ಸ್ಥಾಪಿಸಿದ.ಸುಮಾರು 500ಕ್ಕೂ ಹೆಚ್ಚು ದೇಶಿ ಹಸುಗಳನ್ನು  ಪಾಲನೆ ಮಾಡಿರುವ  ಗೋಶಾಲೆ ಅಲ್ಲಿನ ಪ್ರಕೃತಿ  ವೈಭವಕ್ಕೆ ಸಾಕ್ಷಿಯಾಗಿದೆ .

ಆ ಗೋಶಾಲೆ ಸ್ವಚ್ಛಗೊಳಿಸುವುದು ಮೊದಲ ಸೇವಾ ಕಾಯಕವಾಯಿತು. ಜೊತೆಗೆ ಎಲ್ಲ ಗೋಶಾಲೆಗಳ ಗೋಡೆಗಳಿಗೆ ಹಾಗೂ ಕಂಬಗಳಿಗೆ ಬಣ್ಣ ಲೇಪನ ಮಾಡುವ  ಕೆಲಸವನ್ನು ಸ್ವತಃ ಎಲ್ಲ ಸಾಧಕರೇ ಮಾಡಿದರು. ಅದೊಂದು  ಸಾಧಕರ ಆತ್ಮ ತೃಪ್ತಿ ಸೇವೆ ಎಂದಿನಿಸಿತ್ತು.

ಹಸುಗಳಿಂದ ದೊರೆತ ಪವಿತ್ರ ಗೋಮಯದಿಂದ (ಸಗಣಿ)  ತಯಾರಾಗುವ ಶುದ್ಧ ಭಸ್ಮ ತಯಾರಿಕಾ ಕೇಂದ್ರವನ್ನು ನಾವು ಶಿವಯೋಗ ಮಂದಿರದಲ್ಲಿ ನೋಡಬಹುದು. ಆ ಭಸ್ಮ ತಯಾರಿಕ ಕೇಂದ್ರ ಕಟ್ಟಡದ  ಗೋಡೆಗಳಿಗೂ ಬಣ್ಣ ಲೇಪನ ಮಾಡುವ ಸೇವೆ ನಮ್ಮ ಸಾಧಕರಾದ್ದಾಗಿತ್ತು.

ಶಿವಯೋಗ ಮಂದಿರದಲ್ಲಿ ಉಳಿದ ಎಲ್ಲ ಕೆಲಸಗಳನ್ನು ಮಾಡುವುದಾಗಿ ನಿರ್ಣಯಿಸಿದೆವು.

ಸೇವಾ ಕಾರ್ಯಕ್ಕೆ ಬೇಕಾದ ಎಲ್ಲ ಹೊಸ ಸಾಮಗ್ರಿಗಳನ್ನು ಸಾಧಕರು  ನೀಡಿರುವಂತಹ ಹಣದಿಂದ ಕೊಂಡು ತರಲಾಯಿತು.

ಎಲ್ಲ ಸಾಧಕರು ತಮ್ಮ ವಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಒಂದು ವಾರ ಶಿವಯೋಗಮಂದಿರದಲ್ಲಿ ಇದ್ದುಕೊಂಡು ಸೇವೆ ಮಾಡುವುದು ಎಂದು ನಿರ್ಣಯಿಸಿ ಸೇವೆ ಸಲ್ಲಿಸಿದರು.

ಸಾಧಕರ ಸೇವೆಯ ಹಿನ್ನಲೆ

ಹಿಂದಿನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಸೇವೆ ಮಾಡುವುದು ಒಂದು ಪ್ರತಿತಿ ಇದೆ ಸೇವೆ ಎಂದರೆ ಪೂಜಿಸು ಎಂದರ್ಥ ಪೂಜಿಸು ಎಂದರೆ ಗಂಧ ಅಕ್ಷತೆ ದೂಪದೀಪಾರತಿಗಳಿಂದ ಪೂಜಿಸುವದಷ್ಟೇ ಅಲ್ಲ..

ತಂದೆ ತಾಯಿಯನ್ನು ಮಕ್ಕಳಂತೆ ಉಪಚರಿಸುವುದು, ಭಕ್ತಿಯಿಂದ ಗುರು ಸೇವೆ ಮಾಡುವುದು ಮತ್ತು ಮೂಕ ಪ್ರಾಣಿಗಳನ್ನು ಉಪಚರಿಸುವುದು  ಒಂದು ಪುಣ್ಯದ ಕೆಲಸವೇ.

ರಾಮಾಯಣದಲ್ಲಿ ರಾಮನ ಅಜ್ಜ ದಿಲೀಪ ಮಹಾರಾಜನು ಕೂಡ ಗೋಸೇವೆಯನ್ನು ಮಾಡಿ ಸದ್ಗತಿ ಹೊಂದಿದ್ದನ್ನು ನೋಡಬಹುದು. ಸೇವೆ ಮಾಡುವುದು ಎಂದರೆ ಏನನ್ನು ಅಪೇಕ್ಷೆ ಪಡದೆ ನಿಸ್ವಾರ್ಥವಾಗಿ ಉಪಚರಿಸುವುದೇ ಸೇವೆ.ಸೇವೆ  ಮಾಡುವುದರಿಂದ ತನುಮನ ಶುದ್ಧಗೊಳ್ಳುವವು.

ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಕುಮಾರೇಶ್ವರ ಸೇವೆಯು ಪುಣ್ಯ ಪವಿತ್ರವಾದದ್ದು. ಶ್ರೀ ಶಿವಯೋಗ ಮಂದಿರಕ್ಕೆ ಸುಮಾರು 40  ಸಾಧಕರು ಸೇವೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದರು ಸೇವೆ ಮಾಡಲು ಬಂದಿರುವ ಸಾಧಕರಲ್ಲಿ ಸೇವೆಯ ಉತ್ಸಾಹ, ಸಂತೋಷ  ಎದ್ದು ಕಾಣುತ್ತಿತ್ತು.

ಲಿಂ.ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಕನಸಿನ ಶ್ರೀ ಮದ್ವಿರಶೈವ ಶಿವಯೋಗ ಮಂದಿರ 1909 ರಲ್ಲಿ ನಾಡಿನ ಹಲವು ಮಹಾತ್ಮರ ಸಾಕ್ಷಿ ಸಾನಿಧ್ಯದಲ್ಲಿ ಶಿವಯೋಗಿಗಳ ಅಮೃತ ಹಸ್ತದಿಂದ ಸ್ಥಾಪಿಸಲಾಯಿತು.

ಶಿವಯೋಗ ಮಂದಿರದ ಗೋಶಾಲೆ ಮತ್ತು ಪೂಜ್ಯ ಯಳಂದೂರು ಬಸವಲಿಂಗ ಮಹಾಶಿವಯೋಗಿಗಳ ಗೋಶಾಲೆ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡೆವು,ಗೋವುಗಳನ್ನು ಕಾಳಜಿಯಿಂದ,ಪ್ರೀತಿಯಿಂದ ಮುದ್ದಿಸುವುದು ಸಾಧಕರಾದಂತಹ ನಮಗೆಲ್ಲ ಒಂದು ಸವಿನೆನಪು. ಗೋಶಾಲೆಯ ಗೋವುಗಳು ಮೇಯಲು ಹೊರಗಡೆ ಹೋದಮೇಲೆ ಗೋಶಾಲೆಯಲ್ಲಿರುವಂತಹ ಸಗಣಿಯನ್ನು ಒಂದು ಕಡೆ ಗೂಡಿಸಿ ಅದನ್ನು ಭಸ್ಮ ತಯಾರಿಕಾ ಕೇಂದ್ರಕ್ಕೆ ಕಳಿಸಿಕೊಟ್ಟೆವು ತದನಂತರ ಸಾಧಕರಿಂದ ಕೊಡುಗೆಯಾಗಿ ತೆಗೆದುಕೊಂಡು ಬಂದಿರುವಂತಹ ಸುಮಾರು 48000 ರೂ ವೆಚ್ಚದ ಫ್ರೆಶರ್ ಕ್ಲಿನಿಂಗ ಮಷೀನ್ ಮೂಲಕ ಗಟ್ಟಿಯಾದಂತಹ ಸಗಣಿ ಮತ್ತು ಗೋಶಾಲೆಯನ್ನು ಶುಚಿಗೋಳಸಿ ಔಷದ ಉಪಕರಣಗಳಿಂದ ಗೋಶಾಲೆಯಲ್ಲಿ ಹುಳಗಳು ಆಗದಂತೆ ಗೋಶಾಲೆಯನ್ನು ಶುಚಿ ಗೊಳಿಸಿದೆವು.

  ಕುಮಾರೇಶ್ವರ ಶ್ರೀ ಗದ್ದುಗೆಯ ಗೋಡೆಗಳು ಹಾಗೂ ಸದಾಶಿವ ಮಹಾಸ್ವಾಮಿಗಳ ಗದ್ದುಗೆಯ ಭವನದ ಶಿಲಾಮಂಟಪವನ್ನು ಸ್ವಚ್ಛಗೊಳಿಸಿದೆವು. ಕಲ್ಲುಗಳಿಗೆ ಅಂಟಿಕೊಂಡಿರುವಂತಹ ಕಪ್ಪು ಕಲೆ ಮತ್ತು ಪಾಚಿಯನ್ನು ಸ್ವಚ್ಛಗೊಳಿಸಿದೆವು.

ವಿಶೇಷವಾಗಿ ಎಲ್ಲ ಸಾಧಕರು ತಮ್ಮ ಶ್ರೀ ಮಠಗಳ ಗ್ರಾಮದಿಂದ ಭಕ್ತಜನರನ್ನು ಕರೆದುಕೊಂಡು ಬಂದು ಒಂದು ಪೂರ್ಣ ದಿನದ ಸೇವೆಯನ್ನು ಭಕ್ತರಿಂದ ಸೇವೆ ಸಲ್ಲಿಸಲಾಯಿತು.

ತೋಟಗಳ ಸ್ವಚ್ಛತೆ ನದಿ ದಡದಲ್ಲಿ ಬಿದ್ದಿರುವ ಹೂಳು ತೆಗಿಸುವ ಸೇವೆ,ಗೋಶಾಲೆ ಗೋಡೆಗಳಿಗೆ ಬಣ್ಣ ಲೇಪಿಸುವ ಕೆಲಸ ಇನ್ನಿತರ  ಕೆಲಸಗಳನ್ನ  ಭಕ್ತರು ಶ್ರದ್ಧೆಯಿಂದ, ಭಕ್ತಿಯಿಂದ  ಮಾಡಿದರು.

ಭಕ್ತರ ಒಂದು ದಿನದ ಕುಮಾರೇಶ್ವರ ಸೇವೆಯು ಬಹಳ ಭಕ್ತಿ ಭಾವದಿಂದ ನೆರವೇರಿತು.

ಸೇವಾರ್ಥಿಗಳಿಗೆ  ಶಿವಯೋಗ ಮಂದಿರ ವತಿಯಿಂದ ಭಸ್ಮ ರುದ್ರಾಕ್ಷಿ ಹಾಗೂ ಕುಮಾರೇಶ್ವರ ಭಾವಚಿತ್ರವನ್ನು ಆಶೀರ್ವಾದ ರೂಪದಲ್ಲಿ ನೀಡಲಾಯಿತು.

ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷರಾದ ಹಾವೇರಿಯ ಪೂಜ್ಯ ಸದಾಶಿವ ಸ್ವಾಮಿಗಳವರ ಪರವಾನಿಗೆ ಪಡೆದು ಎಲ್ಲ ಸೇವೆ ಸಲ್ಲಿಸಲಾಯಿತು.

 ಶಿವಯೋಗ ಮಂದಿರದ   ಮಡಿಲಿನಲ್ಲಿ ಬೆಳೆದಂತಹ ನಮಗೆಲ್ಲ ಶ್ರೀ  ಕುಮಾರ ಶಿವಯೋಗಿಗಳ ಶಿವಯೋಗತಾಣದ  ಸೇವೆ ಮಾಡುವುದೇ  ಪುಣ್ಯ.ನಮ್ಮ ಜೀವನವೇ ಧನ್ಯ.

ಕುಮಾರೇಶನ ಸೇವೆ ನಮ್ಮ ಬದುಕಿನುದ್ದಕ್ಕೂ  ಮಾಡಿದರು ಸಾಕೇನಿಸದು.ಕುಮಾರೇಶನ ಸೇವೆ ಅದು ಸಾಮಾಜದ ಸೇವೆ ಅದು ಸ್ವಾಮಿ ಸಂಕುಲದ ಏಳಿಗೆ.ಸಮಾಜ ಸೇವಾ ದೀಕ್ಷಾ ತೊಟ್ಟಿರುವ ನಮಗೆ  ಕುಮಾರೇಶನೆ ದಾರಿ ದೀಪ.

ಶಿವಯೋಗ ಮಂದಿರದಲ್ಲಿ ಪ್ರತಿ ನಿತ್ಯ ಮಾಡುವ ಸೇವಾ ಕಾಯಕದಲ್ಲಿ ಒಂದು ವಾರ ನಾವು ಸೇವಾ ಕಾಯಕಕ್ಕೆ ಸಾಕ್ಷಿ  ಆದೆವು

ಗುರುಮಾರೇಶ್ವರ ವಾಣಿ:

ಸ್ವಾಮಿ ಎಂದರೆ.. ಒಡೆಯನಲ್ಲ ಸಮಾಜದ ನಿಷ್ಠಾವಂತ ಸೇವಕ…

ಇಡೀ ಸಮಾಜಕ್ಕೆ  ಗುರುಕುಮಾರೇಶ್ವರ ಸಮಾಜ ಶಕ್ತಿ

🌹 ಸಾಧಕರ ಸಮಾಜ ಸೇವಾ ಸಂಕಲ್ಪ ಯಾತ್ರ🌹

ಲೇಖಕ: ಶ್ರೀಕಂಠ.ಚೌಕೀಮಠ

ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

೨೦೦೭ರಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ಬಸವಣ್ಣನವರ ಕುರಿತು ಒಂದು ವಿವಾದಾತ್ಮಕ ಪುಸ್ತಕ “ಆನುದೇವಾ ಹೊರಗಣದವನು” ಪ್ರಕಟಣೆಯ ವಿರುದ್ದ ಹೋರಾಟದಲ್ಲಿ ಭಾಗಿಯಾಗಿದ್ದೆ. ನಾನು ಬರೆದ ಒಂದು ಲೇಖನ “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಲೇಖನದಲ್ಲಿ ನಾನು ತೋಡಿಕೊಂಡ ಅಳಲು ಮತ್ತು ಬಹಿರಂಗದ ಅಕ್ರೋಶಗಳನ್ನು  ಓದಿದವರೆಲ್ಲ ಆ ಲೇಖನದ ಪರ-ವಿರೋದದ ನಿಲುವು ವ್ಯಕ್ತಪಡಿಸಿ ಪ್ರತಿಕ್ರಿಯಿಸಿದರು .ಆ ಸಂದರ್ಭದಲ್ಲಿ ಬಸವಸಮಿತಿಯ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಶ್ರೀಕಲ್ಯಾಣಶೆಟ್ಟರು ನನಗೆ ದೂರವಾಣಿ ಕರೆಮಾಡಿ ನನ್ನ ಲೇಖನಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿ ನನ್ನ ಪೂರ್ವಾಪೂರ್ವಗಳನ್ನು ವಿಚಾರಿಸಿದರು.ಮಾತಿನ ಮಧ್ಯದಲ್ಲಿ ನಾನು ಬಾಗಲಕೋಟ ತಾಲೂಕಿನ ಹಳ್ಳೂರು ಗ್ರಾಮದವನು ಎಂದು ಹೇಳಿದಾಗ ಅವರು ತಕ್ಷಣ ಗುರುಲಿಂಗಯ್ಯಾ ಚೌಕೀಮಠ ನಿಮಗೇನಾಬೇಕು ಅಂದರು.ಆಶ್ಚರ್ಯಗೊಂಡೆ, ನಾನು ಅವರ ಮಗ ಎಂದು ಹೇಳಿದಕೂಡಲೇ ಬಹಳ ಸಂತೋಷಪಟ್ಟರು ಅವರಿಬ್ಬರೂ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದವರು ಮತ್ತು ಇಬ್ಬರೂ ಹಾಕಿ ಮತ್ತು ಫೂಟ್ಬಾಲ್‌ ಕ್ರೀಡೆಗಳನ್ನು ಕೂಡಿ ಆಡಿದವರಾಗಿದ್ದರು. ಅವರಿಬ್ಬರ ನಡುವೆ ದೂರವಾಣಿ ಸಂಪರ್ಕವನ್ನು ಮಾಡಿಕೊಟ್ಟಾಗ ತಾಸಿಗೂ ಹೆಚ್ಚು ಮಾತನಾಡಿಕೊಂಡಿದ್ದು ಮತ್ತು ಅವರೀರ್ವರ ಬಾಲ್ಯ ಜೀವನವನ್ನು ಮೆಲಕು ಹಾಕಿದ್ದು ನನ್ನ ಕಣ್ಣೆದುರು ಈಗಲೂ ಹಚ್ಚ ಹಸಿರಾಗಿದೆ.

ಈ ಪರಿಚಯದ ನಂತರ ಶ್ರೀಕಲ್ಯಾಣಶೆಟ್ಟರು ನನಗೆ ಬಹಳ ಆತ್ಮೀಯರಾದರು ಮತ್ತು ನಾನು ಕಂಡಾಗಲೆಲ್ಲ ನನ್ನನ್ನು ಅತ್ಯಂತ ಅಂತಃಕರುಣದಿಂದ ಮತ್ತು ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದ ಎದರು ಅವ್ಯಾಹತವಾಗಿ ವಿವಾದಿತ ಪುಸ್ತಕದ ವಿರುದ್ಧದ ಪ್ರತಿಭಟನೆಯಲ್ಲಿ ಯಾವಾಗಲೂ ತಮ್ಮ ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದರು.ಒಂದು ದಿನ ನನ್ನನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ವಿವಾದಿತ ಪುಸ್ತಕ ಕುರಿತಾದ ಚರ್ಚೆಗೆ ಕರೆದೊಯ್ದಿದ್ದರು. ಆ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕ.ಸಾ.ಪ ಅಂದಿನ ಅಧ್ಯಕ್ಷರೂ ಹಾಗು ಬಂಡಾಯ ಸಾಹಿತಿಗಳಾದ ಶ್ರೀ.ಚಂಪಾ (ಡಾ. ಚಂದ್ರಶೇಖರ ಪಾಟೀಲ) ಅವರು ಮಾತಿನಮಧ್ಯದಲ್ಲಿ ನಾನು ಬರೆದ ವಿಜಯಕರ್ನಾಟಕ ಪತ್ರಿಕೆಯ ಲೇಖನವನ್ನು ಉಲ್ಲೇಖಿಸಿ ಟೀಕೆಮಾಡಿದರು, ಯಾವನೋ ಒಬ್ಬ ಒಂದು ಲೇಖನ ಬರೆದು ಪತ್ರಿಕೆಯಲ್ಲಿ ಬರೆದರೆ ಅದನ್ನು ಸಮಾಜದ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವದಿಲ್ಲ.ಅಂತಹ ಲೇಖನಗಳನ್ನು ಕಸದತೊಟ್ಟಿಗೆ ಬೀಸಾಕಬೇಕು ಎಂದು ವೀರಾವೇಷದಿಂದ ಮಾತನಾಡತೊಡಗಿದರು. ಶ್ರೀಕಲ್ಯಾಣಶೆಟ್ಟರು ತಕ್ಷಣ ಎದ್ದು ನಿಂತು ಚಂಪಾ ಮಾತಿಗೆ ಪ್ರತಿರೋಧವ್ಯಕ್ತಪಡಿಸಿ “ಆ ಲೇಖನಾ ಬರದ ಹುಡುಗ ನನ್ನ ಜೊತಿ ಕುಂತಾನ,ಚರ್ಚೆ ಮಾಡೂದಿದ್ರ ಆರೋಗ್ಯಪೂರ್ಣ ಚರ್ಚಾ ಮಾಡ್ರಿ,ಇಲ್ಲದಿದ್ರ ನಿಲ್ಲಿಸಿರಿ” ಅಂದರು ಅವರು ಹಾಗೆ ಅಂದದ್ದೇ ತಡ ಚರ್ಚೆಯಲ್ಲಿ ಭಾಗವಹಿಸಿದ ಬಸವದಳದ ಶ್ರೀ ದಯಾನಂದಸ್ವಾಮಿಗಳು ವೇದಿಕೆಯತ್ತ ನುಗ್ಗಿ ಕಾಗದಗಳನ್ನು ಹರಿದು ಚಂಪಾ ಅವರ ಮೇಲೆ ತೂರಿ ಪ್ರತಿಭಟಿಸಿದರು.ಸಭೆ ನಿಂತು ಗದ್ದಲ ಶುರುವಾಯಿತು. ತಳ್ಳಾಟ ಮತ್ತು ನೂಕಾಟಗಳ ಸುದ್ದಿತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಚಾಮರಾಜಪೇಟೆಯ ಪೋಲಿಸರು ಗದ್ದಲ ನಿಲ್ಲಿಸಲು ಕ್ರಮಕೈಗೊಂಡರು.ನಿವೃತ್‌ ಪೋಲಿಸ್‌ ವರಿಷ್ಠಾಧಿಕಾರಿಗಳಾಗಿದ್ದ ಶ್ರೀಕಲ್ಯಾಣಶೆಟ್ಟರು ಪೋಲಿಸ್‌ ಜೀಪಿನಲ್ಲಿ ನನ್ನನ್ನು ವಸಂತನಗರದ ತಮ್ಮ ಮನೆಗೆ ಕರೆದೊಯ್ದರು.

ಅನೀರಿಕ್ಷಿತ ಗದ್ದಲಕ್ಕೆ ನಾನು ಬಳಲಿಕೊಂಡಿದ್ದೆ, ಶ್ರೀಕಲ್ಯಾಣಶೆಟ್ಟರು ನನಗೆ ಧೈರ್ಯತುಂಬಿ ಮುಖ ತೊಳಿಸಿ ವಿಭೂತಿ ಹಚ್ಚಿಕೊಳ್ಳಲು ನನ್ನನ್ನು ತಮ್ಮ ದೇವರಕೋಣೆಗೆ ಕರೆದೊಯ್ದರು. ದೇವರಕೋಣೆಯಲ್ಲಿ  ಅವರು ನಿತ್ಯಪೂಜಿಸುತ್ತಿದ್ದ ನನ್ನ ಆರಾಧ್ಯದೈವ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ ನನ್ನ ಗಮನ ಸೆಳೆಯಿತು.ಅಲ್ಲಿಯವರೆಗೆ ನಾನು ನೋಡಿದ ಗುರುಗಳ ಚಿತ್ರಗಳು ವಿವಿದ ಕಲಾವಿದರು ಚಿತ್ರಿಸಿದ ಚಿತ್ರಗಳಾಗಿದ್ದವು.ಆದರೆ ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಗುರುಗಳ ಭಾವಚಿತ್ರ ವಿಭಿನ್ನವಾಗಿತ್ತು ಮತ್ತು ನೈಜವಾಗಿತ್ತು.ನೋಡಿದಷ್ಟೂ ಮತ್ತೆ ನೋಡಿಸಿಕೊಳ್ಳುವ ಚಿತ್ರವನ್ನು ಕಣ್ತುಂಬಿಸಿಕೊಂಡು ಚಿತ್ರದ ವಿಶೇಷತೆಯ ಕುರಿತು ಶ್ರೀಕಲ್ಯಾಣಶೆಟ್ಟರಲ್ಲಿ ಪ್ರಶ್ನಿಸಿದೆ.

(ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ)

 ಅಲ್ಲಿಯವರೆಗೆ ಆತಂಕಕ್ಕೆ ಒಳಗಾಗಿದ್ದ ನನ್ನನ್ನು ಸಂತೈಸಿದ್ದ ಶ್ರೀಕಲ್ಯಾಣಶೆಟ್ಟರು ನನ್ನ ಪ್ರಶ್ನೆಗೆ ಭಾವೊದ್ವೇಗಕ್ಕೊಳಗಾದರು.ಅವರ ಕಣ್ಣಂಚುಗಳು ಮಿಂಚತೊಡಗಿದವು. “೧೯೨೭ ರಲ್ಲಿ ನಾನು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ನನ್ನನ್ನು ನನ್ನ ತಂದೆ ಶ್ರೀ ಸಿದ್ದರಾಮಪ್ಪ ಮಮದಾಪೂರ ಅವರು ನನ್ನೂರು ಬದಾಮಿಯ ಶಾಖಾ ಶಿವಯೋಗಮಂದಿರಕ್ಕೆ ದಯಮಾಡಿಸಿದ್ದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ, ಹಸುಗೂಸು ನನ್ನನ್ನು ಪೂಜ್ಯ ಕುಮಾರ ಶಿವಯೋಗಿಗಳು ಎತ್ತಿಕೊಂಡು ಅವರ ಲಿಂಗದಹಸ್ತವನ್ನು ನನ್ನ ಮಸ್ತಕದ ಮೇಲಿಟ್ಟು ಆಶಿರ್ವದಿಸಿದ್ದನ್ನು ನನ್ನ ತಂದೆ ಯಾವಗಲೂ ಹೇಳುತ್ತಿದ್ದರು” ಎಂದು ಹೇಳುತ್ತ ತಮ್ಮ ಎರಡೂ ಕೈಗಳನ್ನು ಕೂಡಿಸಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು. ಕೈಮುಗಿದ ಅವರ ಎರಡೂ ಹಸ್ತಗಳನ್ನು ನನ್ನ ಹಣೆಗೆ ಹಚ್ಚಿಕೊಂಡೆ !. ಕಾರುಣಿಕ ಯುಗಪುರುಷ,ಸಮಾಜ ಸಂಜೀವಿನಿಯಾದ,ವಿಭೂತಿಪುರುಷರ ಪರುಷಹಸ್ತದ ಸ್ಪರ್ಷಆಶೀರ್ವಾದದವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರು ಭಾಗ್ಯಶಾಲಿಗಳೂ,ಪುಣ್ಯವಂತರೂ ಆಗಿದ್ದರು.

ದೆಹಲಿಯ ನಿವೃತ್‌ ಹಿರಿಯ ಕಮಾಂಡ್ಯಂಟ.(ಸಿ.ಆರ್.ಪಿ.ಎಫ್.)‌ , ಮಾಜಿ ಗ್ರುಪ್‌ ಕಮಾಂಡರ್.ಎನ್.ಎಸ್.ಜಿ.(ಬ್ಲ್ಯಾಕ್‌ ಕ್ಯಾಟ್ಸ) ಹಾಗು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತ್ವರಿತ ನ್ಯಾಯಾಲಯದ ನಿವೃತ್‌ ನಾಯಾಧೀಶರಾದ

ಶ್ರೀ.ಬಿ,ಎಸ್.ಕಲ್ಲೂರ ಅವರು ವರ್ಣಿಸಿದಂತೆ “ಶ್ರೀಕಲ್ಯಾಣಶೆಟ್ಟರದು ಕಟ್ಟುಮಸ್ತಾದ ಶರೀರದ ಆಕರ್ಷಕ ವ್ಯಕಿತ್ವವುಳ್ಳವರಾಗಿದ್ದವರು ೧೯೫೦ರ ದಶಕದಲ್ಲಿ ಅವರ ತಂದೆಯವರಾದ ಶ್ರೀ ಎಸ್.ಜಿ.ಕಲ್ಲೂರ ಅವರು ಬೆಳಗಾವಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡ್ ಆಗಿದ್ದ ಸಂಧರ್ಭದಲ್ಲಿ ಬಾಂಬೆ ಪೋಲಿಸ್‌ ಇಲಾಖೆಯಲ್ಲಿ ಸಬ್‌ ಇನೆಸ್ಪೆಕ್ಟರ್‌ ಆಗಿದ್ದ ಶ್ರೀಕಲ್ಯಾಣಶೆಟ್ಟರು,ಶ್ರೀ ನಾಗನೂರ ಮತ್ತು ಶ್ರೀ ಹಸಬಿಯವರು ಶ್ರೀ.ಬಿ,ಎಸ್.ಕಲ್ಲೂರ ಅವರ ಮನೆಗೆ ಬರುತ್ತಿದ್ದರಂತೆ ಶ್ರೀ ಕಲ್ಲೂರ ಅವರು ಶ್ರೀಕಲ್ಯಾಣಶೆಟ್ಟರನ್ನು “ಕಾಕಾ” ಎಂದು ಸಂಬೋಧಿಸುತ್ತಿದ್ದನ್ನು,ಹಾಗು ಶ್ರೀಕಲ್ಯಾಣಶೆಟ್ಟರು ಕಲ್ಲೂರು ಅವರಿಗೆ ವ್ಯಾಯಾಮಗಳ ಬಗ್ಗೆ ಸಲಹೆ ಕೊಡುತ್ತಿದ್ದನ್ನು ಶ್ರೀ ಕಲ್ಲೂರು ಅವರು ತುಂಬ ಆತ್ಮೀಯವಾಗಿ  ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಶ್ರೀಕಲ್ಯಾಣಶೆಟ್ಟರು ಧರಿಸುತ್ತಿದ್ದ ಪೋಲಿಸ್‌ ಹ್ಯಾಟ್‌ ಆಕರ್ಷಕವಾಗಿಯೂ ಮತ್ತು ಬೇರೆಯವರಿಗಿಂತ ಭಿನ್ನವಾಗಿಯೂ ಇರುತ್ತಿತ್ತು ಎಂದು ಜ್ಷಾಪಿಸಿಕೊಳ್ಳುತ್ತಾರೆ.

ರಾಷ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದಿದ್ದ ಶ್ರೀಕಲ್ಯಾಣಶೆಟ್ಟರು ಬಾಂಬೆ ಪೋಲಿಸ್‌ ಇಲಾಖೆ,ಮೈಸೂರು ಪೋಲಿಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಪೊಲೀಸ್ ತರಬೇತಿ ಕೇಂದ್ರ ಕೆ.ಎಸ್.ಪಿ.ಟಿ.ಎಸ್, ಚನ್ನಪಟ್ಟಣದ ಪ್ರಾಂಶುಪಾಲರಾಗಿ,ಆಯ್.ಪಿ.ಎಸ್.‌ ಭಡ್ತಿ ಪಡೆದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿಗಳಾಗಿ ೧೯೮೫ ರಲ್ಲಿ ನಿವೃತ್ತಿ ಹೊಂದಿದರು.

ಕರ್ನಾಟಕದ ರಾಜ್ಯ ಸರಕಾರದ  ದಕ್ಷ ಆದಿಕಾರಿಗಳಾಗಿ ಸೇವೆಸಲ್ಲಿಸಿದ ನಂತರ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಕಲ್ಯಾಣಶೆಟ್ಟರು ೯೬ ವರ್ಷಗಳ ತುಂಬು ಜೀವನ ನಡೆಸಿ ೦೧ ಮಾರ್ಚ ೨೦೨೩ ರಂದು ಲಿಂಗೈಕ್ಯರಾಗುವ ಸಂಧರ್ಭವನ್ನು ನೆನಪಿಸಿಕೊಂಡ ಅವರ ಪುತ್ರ ಶ್ರೀ ಅಶೋಕ ಅವರು ಹೇಳಿದ್ದು ವಿಶೇಷ ವಾಗಿತ್ತು.

ಶ್ರೀಕಲ್ಯಾಣಶೆಟ್ಟರ ಧರ್ಮಪತ್ನಿಯವರು ಫೆ.೨೮, ೨೦೨೩ರಂದು ಲಿಂಗದೊಳಗಾದರಂತೆ ,ಅವರ ಅಂತ್ಯಕ್ರಿಯೆ ಸಂಧರ್ಭದಲ್ಲಿ ಶ್ರೀಕಲ್ಯಾಣಶೆಟ್ಟರು ನಿರ್ಲಿಪ್ತ ಭಾವವನ್ನು ಹೊಂದಿದ್ದರಂತೆ, “ಹೋದರಾ ?” ಎಂಬ ಒಂದೇ ಒಂದು ವಾಕ್ಯವನ್ನು ಹೇಳಿ ತಮ್ಮ ದೈನಿಂದಿನ ಚಟುವಟಿಕೆಯಲ್ಲಿದ್ದು ದಿ.೦೧ ಮಾರ್ಚ ೨೦೨೩ ರಂದು ಪುಣ್ಯದ ಸಾವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರನ್ನು ನಾನು ಕೊನೆಯದಾಗಿ ಮಾತನಾಡಿಸಿದ್ದು ೨೦೨೨ ಅಗಸ್ಟ ತಿಂಗಳಲ್ಲಿ. ನಾನು ಅವರನ್ನು ಭೇಟಿಯಾಗಬೇಕಿತ್ತು, ಆಗಲಿಲ್ಲ.

ಶ್ರೀಕಲ್ಯಾಣಶೆಟ್ಟರ ವಿವಾಹ ವಾರ್ಷಿಕೋತ್ಸವದ ವಜ್ರ ಮಹೋತ್ಸವದ ಚಿತ್ರ

“ ಅವರ ಧರ್ಮಪತ್ನಿಯ ಅಗಲಿಕೆಯಿಂದ ಸರ್‌ ಅವರು  ಮಾನಸಿಕವಾಗಿ ನೊಂದುಕೊಂಡಿದ್ದರೇ ?” ಎಂದು ಕೇಳಿದೆ.        ಶ್ರೀ ಅಶೋಕ ಅವರು ತುಂಬ ಮಾರ್ಮಿಕವಾದ ಉತ್ತರ ಕೊಟ್ಟರು “ ಧೀರ್ಘ ಇನ್ನಿಂಗ್ಸ ಆಡಿದ ಆಟಗಾರರಲ್ಲೊಬ್ಬ ಔಟಾದಾಗ, ಜೊತೆಯಾಟಗಾರನೂ ಫೆವಿಲಿಯನ್ನಗೆ ಹೋದಂತೆ “ , “ ನಮ್ಮ ತಂದೆ ಎಂದೂ ಮಾನಸಿಕವಾಗಿ ಕುಗ್ಗಿದವರಲ್ಲ ಅಂತಿಮ ಕ್ಷಣದವರೆಗೂ ಸದೃಡವಾಗಿದ್ದವರು” ಈ ಮಾತುಗಳನ್ನು ಕೇಳುತ್ತ ಆಕರ್ಷಕ ತೇಜಸ್ಸಿನಿಂದ ಕೂಡಿದ ಮಂದಸ್ಮಿತ ಅಂತಃಕರಣದ ಶ್ರೀಕಲ್ಯಾಣಶೆಟ್ಟರ ವ್ಯಕ್ತಿತ್ವ ಜೊತೆಗೆ  ಅಂದು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಆ ಹಸ್ತಗಳು ನನ್ನ ಕಣ್ಣೆದರು ಬಂದುನಿಂತವು.

ನಮ್ಮ ಸಂಬಂಧಗಳು, ಪೂರ್ವಜನ್ಮದ ಸಂಬಂಧಗಳೆಂಬ ಭಾವನೆ ನನ್ನಲ್ಲಿ ಮೂಡಿತು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ತರಳ ಕೇಳು ಮಾ | ಕ್ಷರವೆ ಮೂರೊಂದಾದ

ವರ ಮೂಲ ಪ್ರಣವದಿರವೆ ಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೬||

ಲಿಂಗವು ಪೂಜ್ಯವಸ್ತುವೆಂಬುದನ್ನು ಸಿದ್ಧಮಾಡುತ್ತ ಅದು ಮೂಲ ಪ್ರಣವ ರೂಪವೆಂದು ಪ್ರತಿಪಾದಿಸುತ್ತಾನೆ.

ಸದ್ಗುರುನಾಥನ ಬೋಧೆಯು ಜೀವನ ವಿಕಾಸದಾಯಕವೂ ಮೋಕ್ಷಪ್ರದಾಯಕವೂ ಆಗಿದೆ. ಆತನು ಶಿಷ್ಯನಲ್ಲಿ ಅತ್ಯಂತ ಕರುಣಾಮಯಿಯಾಗಿ ಪ್ರೀತಿಯ ಪುತ್ರನೆಂದು ಮೈದಡವಿ ತತ್ತ್ವದ ತಿರುಳನ್ನು ತುತ್ತುಮಾಡಿ ಉಣಿಸುವ ಸನ್ನಿವೇಶ ರೋಮಾಂಚನಕಾರಿಯಾದುದು. ವಾತ್ಸಲ್ಯದಿಂದ ಶಿಷ್ಯನ ಚಿತ್ತವೃತ್ತಿಗಳು ಗುರು ವಚನದತ್ತ ಕೇಂದ್ರೀಕೃತವಾದರೆ ಅನುಭವದ ವಿಷಯ ಸುಲಭವಾಗುವದು. ಗುರುವಾದವನು ತನ್ನ ಶಿಷ್ಯವೃಂದಕ್ಕೆ ದಯಾಸಾಗರನೆನಿಸಬೇಕೆಂಬುದು ಇಲ್ಲಿ ಸೂಚಿತ ವಾಗುತ್ತದೆ. ಅಂತೆಯೇ ಗುರುವು ತರಳ ! ಕೇಳು, ಈ ನಿನ್ನ ಲಿಂಗವು ಓಂಕಾರದಿರವು. ಓಂಕಾರವು ಮೂಲ ಪ್ರಣವವಾಗಿದೆ. ಈ ಓಂಕಾರದಲ್ಲಿ ಅ, ಉ, ಮ,’ ಗಳೆಂಬ ಮೂರಕ್ಷರಗಳಿವೆ. ಈ ಮೂರೊಂದಾದುದೇ ಮೂಲಪ್ರಣವೆನಿಸುವದು.

ಚನ್ನಬಸವಣ್ಣನವರು ಕರಣಹಸಿಗೆಯ ಪ್ರಾರಂಭವನ್ನು ಪ್ರಣವದುತ್ಪತ್ತಿಯಿಂದಲೇ ಪ್ರಾರಂಭಿಸುತ್ತದೆ .

ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರ ಇವು

ಮೂರು ಬೀಜಾಕ್ಷರ, ಅಕಾರವೇ ನಾದ, ಉಕಾರವೆ ಬಿಂದು,

ಮಕಾರವೆ ಕಳೆ, ಮತ್ತಂ ಆಕಾರವೆ ರುದ್ರ, ಉಕಾರವೆ ಈಶ್ವರ,

ಮಕಾರವೆ ಸದಾಶಿವ. ಇಂತೀ ಅಕಾರ, ಉಕಾರ, ಮಕಾರಕ್ಕೆ

 ನಾದ ಬಿಂದು ಕಳೆಯೇ ಆಧಾರ, ಆ ನಾದ ಬಿಂದು ಕಳಗೆ

ಪ್ರಕೃತಿಯೆ ಆಧಾರ, ಆ ಪ್ರಕೃತಿಗೆ ಪ್ರಾಣವೆ ಆಧಾರ.

 ಆ ಪ್ರಾಣಕ್ಕೆ ಲಿಂಗವೆ ಆಧಾರ, ‘ಅ’ ಎಂದಡೆ ಅನಾಹತ,

ಉ’ ಎಂದಡೆ ನಾದ ಉಳಿಯತ್ತು, ‘ಮ’ ಎಂಬಲ್ಲಿ

 ಬಿಂದು ಬಂದು ಕೂಡಲು ಶಿವಶಕ್ತಿಯಾಗುತ್ತಂ

ಇಂತಹ ಓಂಕಾರವಾಯಿತ್ತು

ಮುಂದುವರೆದು

 “ಓಂಕಾರಾತ್ಪ್ರಭವಾ ವೇದಾ ಓಂಕಾರಾತ್ಪ್ರಭವಃ ಸ್ವರಃ |

 ಓಂಕಾರಾತ್ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।”

 ಎಂದು ಓಂಕಾರದ ಹಸಿಗೆಯನ್ನು ಮಾಡಿರುವರು. ಓಂಕಾರದಲ್ಲಿ ಶಿವಶಕ್ತಿಯರ ಸಮ್ಮಿಲನವಿದೆ. ಲಿಂಗದಲ್ಲಿ ಅಡಿಪೀಠವೆ ಶಕ್ತಿ ಮುಡಿ ಲಿಂಗವೇ ಶಿವನೆನಿಸಿದ್ದಾನೆ. ಓಂಕಾರದಿಂದಲೇ ವೇದಗಳು, ಸ್ವರಗಳು, ಅಷ್ಟೇ ಅಲ್ಲದೆ ಸಕಲ ಸಚರಾಚರ ಜಗವೆಲ್ಲವೂ ಉತ್ಪನ್ನವಾಗಿದೆ. ಲಿಂಗದ ಲಕ್ಷಣವೂ ಇದೇ ಅರ್ಥವನ್ನು ಒಳಗೊಂಡಿರುವುದಾಗಿ ಈಗಾಗಲೇ ಅರಿತಿದ್ದೇವೆ. ಲಿಂಗ ಮತ್ತು ಪ್ರಣವಕ್ಕೆ ಅಭೇದವಿದೆ. ಕೆಳದಿ ಬಸವಪ್ಪ ನಾಯಕ ವಿರಚಿತ ‘ಶಿವತತ್ತ್ವರತ್ನಾಕರ” ದಲ್ಲಿ-“

“ಓಂಕಾರ ಏವ ಲಿಂಗಂ ಸ್ಯಾತ್ ಸರ್ವಕಾರಣಕಾರಣಮ್ |

ಓಮಿತಿ ಬ್ರಹ್ಮ ಪರಮಂ ಲಿಂಗಾಕಾರಂ ಮಹೇಶ್ವರಮ್॥ ೧-೫-೭ ||

“ಸರ್ವಕಾರಣಕ್ಕೆ ಕಾರಣವಾದ ಓಂಕಾರವೇ ಲಿಂಗವು. ಅದುವೇ ಪರಬ್ರಹ್ಮ ಅದುವೇ ಲಿಂಗಾಕಾರದ ಮಹೇಶ್ವರ” ವೆಂದು ಪ್ರತಿಪಾದಿತವಾಗಿದೆ.

ಈ ರೀತಿಯಾಗಿ ಪ್ರಣವರೂಪವು ಈ ಇಷ್ಟಲಿಂಗವು; ಆದುದರಿಂದ ಇದು ಮಂತ್ರಮೂರ್ತಿಯೆನಿಸಿದೆ, ಅದನ್ನು ಪೂಜಿಸಿ ನೀನೂ ಮಂತ್ರಮಯನೂ ಲಿಂಗ ರೂಪನೂ ಆಗೆಂದು ಬೋಧಿಸಿದ ಗುರುವೆ ! ಲಿಂಗರೂಪವನ್ನು ಕರುಣಿಸು.

ತಾರಕ ಕೃತಿ ಮೊದಲಾ | ದಾರು ಕೃತಿಗಳೆ ಲಿಂಗ

 ದಾರು ಸ್ಥಾನದೊಳು-ಆರು ಪ್ರಣವದ ಕೃತಿಯ

ತೋರಿಸಿದೆ ಗುರುವೆ ಕೃಪೆಯಾಗು     ||೧೧೭||

ಪ್ರಣವರೂಪವೇ ಇಷ್ಟಲಿಂಗವೆಂದು ತಿಳಿಸಿ ಪ್ರಣವದ ಸ್ವರೂಪವೇನೆಂಬುದನ್ನು ನಿರೂಪಿಸುತ್ತಾನೆ.

 ಪ್ರಣವವು ಆರು ಆಕೃತಿಗಳಿಂದ ಮೂರ್ತಿಮತ್ತಾಗಿದೆ. ೧. ತಾರಕ ೨. ದಂಡಕ ೩. ಕುಂಡಲ ೪, ಅರ್ಧಚಂದ್ರ ೫ ದರ್ಪಣ ೬. ಜ್ಯೋತಿ ಎಂಬಿವು ಪ್ರಣವದ ಆರಾಕೃತಿಗಳು. ಪ್ರಣವದ ಶಿರಸ್ಸೇ ತಾರಕಾಕೃತಿ, ಪ್ರಣವದ ಕೊರಳು ದಂಡಾಕೃತಿ; ಅದರ ಕೆಳಗಡೆಯ ಮುಡಿಯೇ ಕುಂಡಲಾಕೃತಿ, ಎರಡನೆಯ ಮುಡಿ ಅರ್ಧ ಚಂದ್ರಾಕೃತಿ; ಮಗ್ಗಲದ ಬಿಂದುವೇ ದರ್ಪಣಾಕೃತಿ; ಪ್ರಣವದ ಮೇಲ್ಗಡೆಯ ಕುಡಿಯೇ ಜ್ಯೋತಿರಾಕೃತಿಯು

ತಾರಕ-ದಂಡಕೋಭಯಾಕೃತಿಗಳಿಗೆ ಕ್ರಮದಿಂದ ನಕಾರ-ಮಕಾರಗಳು (ಪ್ರಣವದ ಬೀಜಾಕ್ಷರಗಳು). ಇವೆರಡಕ್ಕೂ ಅ’ಕಾರ ನಾದ ಪ್ರಣವದ ಸಂಬಂಧ ವಾಗುತ್ತದೆ. ಕುಂಡಲ-ಅರ್ಧಚಂದ್ರೋಭಯಾಕೃತಿಗಳಿಗೆ ಕ್ರಮದಿಂದ ಶಿಕಾರ ವಾಕಾರ ಪ್ರಣವಗಳು. ಇವೆರಡಕ್ಕೂ ‘ಉ’ಕಾರ ಬಿಂದು ಪ್ರಣವದ ಸಂಬಂಧವಿದೆ. ಇನ್ನು ದರ್ಪಣ ಮತ್ತು ಜ್ಯೋತಿರುಭಯಾಕೃತಿಗಳಿಗೆ ಕ್ರಮದಿಂದ ಯಕಾರ ಓಂಕಾರ ಪ್ರಣವಗಳು ಇವೆರಡಕ್ಕೂ ‘ಮ” ಕಾರ ಕಲಾ ಪ್ರಣವದ ಸಂಬಂಧವುಂಟು.

 ಪ್ರಥಮಂ ತಾರಕರೂಪಂ ದ್ವಿತೀಯಂ ದಂಡ ಉಚ್ಯತೇ |

ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಮ್‌ ||

ಪಂಚಮಂ ಬಿಂದು ಸಂಯುಕ್ತಂ ಪ್ರಣವಂ ಪಂಚಬ್ರಹ್ಮರಾಟ್||

 ಆರಾಕೃತಿಗಳಿಗೆ ಆರು (ಬೀಜಾಕ್ಷರ ಅಥವಾ) ಪ್ರಣವದ ಸಂಬಂಧವನ್ನು ಶಿವತತ್ತ್ವ ರತ್ನಾಕರದಲ್ಲಿ

 ನಕಾರ ಸ್ತಾರಕಸ್ಥಾನಂ ಮಕಾರೋ ದಂಡಮುಚ್ಯತೇ ।

ಶಿಕಾರಃ ಕುಂಡಲಾಕಾರೋ ವಾಕಾರಾಶ್ಚಾರ್ಧಚಂದ್ರಕಃ ||

ಯಕಾರೋ ಬಿಂದುರೂಪೋ ಯಮೋಂಕಾರಃ ಪಂಚವರ್ಣಕಃ ||        ||೧-೫-೨೦||

ಎಂದು ವಿವರಿಸಿದ್ದಾರೆ.

ಶಿ. ಶಿ. ಬಸವನಾಳರು ಸಂಪಾದಿಸಿದ ಈ ಗುರುಕರುಣ ತ್ರಿವಿಧಿಯಲ್ಲಿ ತಾರಕಾ ಕೃತಿ’ ಎಂಬ ಪಾಠಾಂತರವಿದೆ. ಆಕೃತಿಯೆಂದರೆ ಆಕಾರ; ಕೃತಿಯೆಂದರೆ ಕ್ರಿಯೆಯೆನಿಸುವದು. ಲಿಂಗದಲ್ಲಿ ನಾಮರೂಪವೂ ಇದೆ. ಕ್ರಿಯೆಯೂ ಸಮನ್ವಯ ಗೊಂಡಿದೆ. ಓಂಕಾರದಲ್ಲಿ  ನಾಮ-ರೂಪ-ಕ್ರಿಯೆಗಳಿರುವಂತೆ ಇಷ್ಟಲಿಂಗದಲ್ಲಿಯೂ ಅವುಗಳು ವ್ಯಾಪಿಸಿವೆ. ನಾಮ-ರೂಪ-ಕ್ರಿಯಾತ್ಮಕವಾದ ಈ ಲಿಂಗವು ಸಕಲ ವೆನಿಸಿದೆ. ನಾಮ-ರೂಪ-ಕ್ರಿಯಾ ಶೂನ್ಯವಾದುದು ನಿಷ್ಕಲವೆನಿಸುವದು. ತೋರುವ ಜಗತ್ತು ಈ ಮೂರರಿಂದಲೇ ಆವರಿಸಿಕೊಂಡಿದೆ. ಜಗದಲ್ಲಿ ಕಾಣಿಸಿಕೊಂಡ ನಾಮ- ರೂಪ-ಕ್ರಿಯಾತ್ಮಕನಾದ ಅಂಗನಿಗೆ ಈ ಲಿಂಗವೂ ನಾಮರೂಪಾತ್ಮಕವೆಂದು ಗುರು ನಾಥನು ತತ್ತ್ವದ ತಿರುಳನ್ನು ತಿಳಿಸಿದ್ದಾನೆ.  

 ಸಕಲಕ್ಕೂ ಕಾರಣವೆನಿಸಿದ ಓಂಕಾರವೇ ಲಿಂಗವಾಗಿರುವಂತೆ; ಸಮಸ್ತ ಕಾರ್ಯಗಳಿಗೆ ನಾಯಕನೆನಿಸಿದ ವಿನಾಯಕ ಅಥವಾ ಗಣಪತಿಯ ಆಕಾರವಾದರೂ ಓಂಕಾರ ಮಯವಾಗಿದೆ. ಓಂಕಾರದ ಆ ಆರು ಆಕೃತಿಗಳಿಂದಲೇ ಗಣಪತಿಯ ಆಕಾರದ ಕಲ್ಪನೆಯು ಸ್ಪಷ್ಟವಾಗುವದು. ಗಣೇಶನ ಪೌರಾಣಿಕ ಕಥಾನಕಗಳು ರೋಚಕ ವಾಗಿರಬಹುದು. ತಾತ್ವಿಕ ವಿಚಾರದಲ್ಲಿ ಪ್ರಣವ ಸ್ವರೂಪವು ಪ್ರಕಟವಾಗುವದು. ಕುಂಡಲ ಮತ್ತು ಅರ್ಧಚಂದ್ರಾಕೃತಿಗಳೇ ವಿನಾಯಕನ ಎರಡು ಹುಬ್ಬುಗಳಾದರೆ  ತಾರಕ-ದಂಡಕಾಕೃತಿಗಳು ಸೊಂಡಿಲೆನಿಸಿದೆ. ಮುಖಮಂಡಲವೇ ದರ್ಪಣ,  ಏಕದಂತವೇ ಜ್ಯೋತಿರಾಕೃತಿಯು.  ಆದ್ದರಿಂದಲೇ ವೈದಿಕ ಕಾರ್ಯಗಳಲ್ಲಿ, ವಿದ್ಯಾ ರಂಭಾದಿ ಕೆಲಸಗಳಲ್ಲಿಯೂ ವಿಘ್ನವಿನಾಶವಾಗಲೆಂದು ಓಂಕಾರ ರೂಪಿ ವಿನಾಯಕನ ಪೂಜೆಯಾಗುತ್ತದೆ. ಓಂಕಾರದ ಗೌರವವಾದರೂ ಗಣಪತಿಯ ರೂಪದಲ್ಲಿ ಸ್ವೀಕರಿಸಲು ಸಾಧ್ಯವಾಗಿದೆಯೆಂದು ಹೇಳಬಹುದು.

ದೇವನಾಗರಿ ಲಿಪಿಯ ಓಂಕಾರಕ್ಕೂ (ದ್ರಾವಿಡ) ಕನ್ನಡ ಲಿಪಿಯ ಓಂಕಾರಕ್ಕೂ ವ್ಯತ್ಯಾಸವಿಲ್ಲ. ದೇವನಾಗರಿ ಲಿಪಿಯ ಓಂಕಾರವನ್ನು ತಿರುವಿದ (ಹೊರಳಿಸಿದ) ರೂಪವೇ ಗಣಪತಿಯ ರೂಪಾಗಿದೆ. ಒಟ್ಟಿನಲ್ಲಿ ಆರು ಕೃತಿಗಳು ಅದರಲ್ಲಿಯೂ ಇವೆ. ಆರಾಕೃತಿಗಳುಳ್ಳದೇ ಪ್ರಣವವು. ಪ್ರಣವದಿರವೇ ಈ ಲಿಂಗವು. ಇದರರ್ಥವನ್ನು ತಿಳಿಸಿ ಪ್ರತ್ಯಕ್ಷ ತೋರಿಸಿ ರಕ್ಷಿಸಿದವನು ಶ್ರೀಗುರುನಾಥನು. ಮಹಾಜ್ಞಾನಿಯಾದ ಕುಮಾರ ಷಣ್ಮುಖನಿಗೆ ಶಿವನು ಓಂಕಾರದ ಅರ್ಥವನ್ನು ಅದೆಷ್ಟೋ ದಿನಗಳವರೆಗೆ ಹೇಳಿದನೆಂಬುದು ಪೌರಾಣಿಕ ಸತ್ಯಕಥೆಯಾಗಿದೆ. ಓಂಕಾರದ ಮಹತ್ವವು ಮಹತ್ತರವಾದುದು. ಈ ಪ್ರಣವ ಮಂತ್ರವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನವೇ ಲಿಂಗ, ಲಿಂಗವೇ ಪ್ರಣವವು.

 ಓ ಪರಮ ಗುರುವೇ ! ಮಂತ್ರ ಮೂರುತಿಯೇ ನಿರಂಜನ ಪ್ರಭುವೇ | ಪ್ರಣವರೂಪ ಲಿಂಗವನ್ನು ಅನುಸಂಧಾನ ಮಾಡಿ ತತ್ಸ್ವರೂಪಿಯಾಗುವ ಸೌಭಾಗ್ಯ ವನ್ನು ಕರುಣಿಸಿ ಕಾಪಾಡು.

ವೃತ್ತಕಟಿ  ವರ್ತುಳವು | ಮತ್ತೆ ಗೋಮುಖ ನಾಳ

ಚಿತ್ಪೀಠವಾರು ಗೊತ್ತತೋರಿಸಿ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು     || ೧೧೮ ॥

ಪ್ರಣವದ ಆರಾಕೃತಿಗಳಿಂದ ಕೂಡಿ ನಾಮ-ರೂಪ ಕ್ರಿಯಾತ್ಮಕವಾದ ಲಿಂಗವು ಆರು ಸ್ಥಲವುಳ್ಳದಾಗಿದೆ. ಅರ್ಥಾತ್ ಷಡವಯವವನ್ನು ಹೊಂದಿದೆಯೆಂಬುದನ್ನು ವಿವರಿಸುತ್ತ ಆ ಆರುಸ್ಥಲಗಳಲ್ಲಿ ಆರಕ್ಷರಗಳನ್ನು ಸಂಬಂಧಿಸಿ ತೋರಿಸುತ್ತಾನೆ ಶಿವ

ಕವಿಯು. ೧) ವೃತ್ತ,  ೨) ಕಟಿ,  ೩) ವರ್ತುಳ,  ೪) ಗೋಮುಖ,  ೫) ನಾಳ,  ೬) ಚಿತ್ಪೀಠ ಇವು ಆರು ಲಿಂಗದ ಅವಯವಗಳು. ಅಂಗನು ಆರಾದಂತೆ ಲಿಂಗವೂ ಆರಾಗಿದೆ. ಆರು ಸ್ಥಲ (ಅವಯವ) ಗಳನ್ನು ಪಡೆದಿದೆ. ಲಿಂಗ ಷಟ್‌ಸ್ಥಲಗಳಲ್ಲಿ ಮಂತ್ರ ಷಡಕ್ಷರ ಆವರಿಸಿಕೊಂಡಿದೆ. ಮಂತ್ರರೂಪವೇ ಲಿಂಗವೆಂಬುದಾಗಿ ಸದ್ಗುರುನಾಥನು ಶಿಷ್ಯನಿಗೆ ಬೋಧಿಸುತ್ತಾನೆ. ಮಂತ್ರರೂಪವಾದ ಲಿಂಗಾರ್ಚನೆಯಿಂದ ಮಂತ್ರಮಯನಾಗ ಬೇಕೆಂಬುದೇ ಗುರುವಿನ ಉಪದೇಶ.

 ಹಿಂದೆ ತಿಳಿಸಿದ ಲಿಂಗದ ಪಂಚಸೂತ್ರಗಳೂ ಈ ಲಿಂಗ ಷಟ್‌ಸ್ಥಲದಲ್ಲಿ ವ್ಯಕ್ತವಾಗುತ್ತದೆ. ವೃತ್ತವೆಂದರೆ ಕೆಳಗಿನ  ಸುತ್ತಳತೆ ಅಥವಾ ಪರಿಘವೆನ್ನಬಹುದು.  ವೃತ್ತವು  ಪೂರ್ಣತೆಯ ಕುರುಹಾಗಿದೆ. ಕಟಿಯೆಂದರೆ ಲಿಂಗದ ನಡುವು. ಕೆಳಗಿನ ವೃತ್ತ ಮತ್ತು ಮೇಲಿನ ವರ್ತುಳದ ನಡುವಿನ ಸಣ್ಣ ಭಾಗವು. ಮೂರನೆಯದು ಮೇಲಿನ ವರ್ತುಳವು. ಪೀಠವೆನಿಸಿದ ಈ ಕೆಳಭಾಗದಲ್ಲಿ ಲಿಂಗವನ್ನಿಡುವ ರಂಧ್ರವು ನಾಳವೆನಿಸುವದು. ಪೀಠದ ನಾಳದಲ್ಲಿದ್ದ ಪ್ರಕಾಶಮಯವಾದ ಬಾಣರೂಪ ಲಿಂಗವೇ ಚಿತ್ಪೀಠವಾಗಿದೆ. ಈ ರೀತಿಯಾಗಿ ಲಿಂಗದಲ್ಲಿಯ ಆರು ಸ್ಥಲಗಳನ್ನು ಗುರುವರನು ದೀಕ್ಷಾ ಸಮಯದಲ್ಲಿ ವಿವರಿಸಿ ಲಿಂಗವನ್ನು ಕರುಣಿಸುತ್ತಾನೆ. ಅಂಗದಲ್ಲಿ ಷಟ್ ಚಕ್ರಗಳನ್ನು ತಿಳಿಸಿ ಷಡ್ಲಿಂಗಗಳ ಮರ್ಮವನ್ನು ಬೋಧಿಸಿದಂತೆ ಇನ್ನು ಲಿಂಗಗಳ ಷಟ್‌ಸ್ಥಲಗಳಲ್ಲಿ ಮಂತ್ರರಹಸ್ಯವನ್ನು ತಿಳಿಸುವ ಮಾತನ್ನು ಮುಂದಿನ ತ್ರಿಪದಿಯಲ್ಲಿ ಪ್ರತಿಪಾದಿಸುತ್ತಾನೆ.

ಬಾಲ ಬಾರೆಂದೆನ್ನ | ಕೈಲಿ ಲಿಂಗವ ಕೊಟ್ಟು

ಈ ಲಿಂಗದೊಳಗೆ-ಮೂಲ ಷಣ್ಮಂತ್ರವನು

ಕೀಲಿಸಿದ ಗುರುವೆ ಕೃಪೆಯಾಗು       ||೧೧೯ ||

ಕರುಣಾಮಯನೂ, ಜ್ಞಾನಸಾಗರನೂ, ವೈರಾಗ್ಯಪರನೂ ಆದ ಸದ್ಗುರುವಿನ ಸನ್ನಿಧಿಯಲ್ಲಿ ವಯೋಮಾನದಿಂದ ಹಿರಿಯನಾದರೂ ಶಿಷ್ಯನು ಬಾಲಕನೇ.  ಜ್ಞಾನ-ವೈರಾಗ್ಯಗಳ ತುಲನೆಯಿಂದ ಸಣ್ಣವನೇ ಸರಿ.  ಕಿಂಕರತ್ವವನ್ನು ವಹಿಸಿದರೆ ಮಾತ್ರ ಗುರುವಿನಿಂದ ಜ್ಞಾನಕಿರಣ ಹರಿದು ಬರುತ್ತದೆ. ಕೀಳಿಂಗಲ್ಲದೆ ಹಯನ ಕರಯದೆಂದುʼʼ ಅಣ್ಣನವರು ಅನುಭವದ ಅಮೃತವನ್ನೇ ಸುರಿದಿರುವರು. ಶಿಷ್ಯನ ಸದಾಚರಣೆ ಗುರುನಾಥನಿಗೆ ತೃಪ್ತಿಯನ್ನೀಡಬೇಕು. ಆಗ ಗುರುವರನು ಸದಯಾಂತಃ ಕರಣದಿಂದ ಶಿಷ್ಯನನ್ನು ಕಂದನಂತೆ, ಹೇ ಬಾಲ ! ಬಾ ನನ್ನ ಹತ್ತಿರಕೆ; ಬಾಳ ಬಾ; ನಿಜವಾದ ಬಾಳು ಈ ನಿನ್ನ ಕೈಯಲ್ಲಿತ್ತ ಇಷ್ಟಲಿಂಗದಲ್ಲಿದೆ.  ಈ ಲಿಂಗವೇ ಜೀವನ ಸಾಗರವನ್ನು ದಾಟಿಸುವ ದಿವ್ಯಸಾಧನ.  ಲಿಂಗದ ಜ್ಞಾನವೇ ಜೀವನದ ಜೀವಾಳ.  ಕ್ರಿಯಾದಿ ದೀಕ್ಷೆಗಳಿಂದ ನಿನ್ನ ಸ್ಥೂಲ-ಸೂಕ್ಷ್ಮ-ಕಾರಣ ಶರೀರವು ಪವಿತ್ರಗೊಂಡು ಮಂತ್ರಮಯವಾಗಿರುವಂತೆ ಈ ಲಿಂಗದಲ್ಲಿಯೂ ಮೂಲಮಂತ್ರವನ್ನು ಕೀಲಿಸಿರುವೆ.

ಇದೂ ಮಂತ್ರಮಯವಾಗಿದೆ. ನಿತ್ಯ ಲಿಂಗಾರ್ಚನೆ, ಲಿಂಗಾರ್ಪಣ, ಲಿಂಗಾನುಭವಗಳಿಂದ ಶಿವಯೋಗದ ಅಥವಾ ಲಿಂಗಾಂಗಯೋಗದ ಅನುಸಂಧಾನ (ಸಾಕ್ಷಾತ್ಕಾರ) ನಡೆಯಬೇಕು. ಮಹಾನುಭಾವಿಗಳು ಅನುಸರಿಸಿದ ಅನುವಿದಾಗಿದೆ” ಎಂದು ಮುಂತಾಗಿ ಬೋಧಿಸಿ ಕೃಪೆಗೆಯುತ್ತಾನೆ.

ಶಿಲ್ಪಿಯು ಅದೆಷ್ಟು ಸುಂದರವಾಗಿ ಕಲಾಮಯವಾದ ಲಿಂಗವನ್ನು ತಯಾರಿಸ ಬಹುದು. ಆದರೆ ಅದು ಲಿಂಗಾಕಾರದ ಮೂರ್ತಿಯಾದೀತೇ ವಿನಾ ಲಿಂಗವೆನಿಸುವದಿಲ್ಲ . ಗುರುಕರಕಮಲ ಸ್ಪರ್ಶದಿಂದಲ್ಲದೆ ಅದರಲ್ಲಿ ಲಿಂಗಗುಣವು ಮೈದೋರುವ ದಿಲ್ಲ. ಶಿಲಾಭಾವವು ಸರಿಯುವದಿಲ್ಲ.  ಅದುಕಾರಣವೇ ಮಾರಾಟಕ್ಕಿಕ್ಕಿದ ಲಿಂಗವನ್ನು ಧರಿಸುವದರಿಂದ ಲಿಂಗ ಕಳೆಯು ಸಮನಿಸುವದಿಲ್ಲ. ಇಂಥ ಲಿಂಗವನ್ನು ಕಟ್ಟಿಕೊಳ್ಳಲೇ ಬಾರದು. ಅದರಿಂದ ಯಾವ ಪ್ರಯೋಜನವಾಗುವದಿಲ್ಲ. ಇವೆಲ್ಲ ದೋಷಗಳನ್ನು ದೂರೀಕರಿಸುವದಕ್ಕಾಗಿ ಗುರುನಾಥನು ಲಿಂಗದ ಮೇಲೆ ಷಡವಯವಗಳಲ್ಲಿ ಷಣ್ಮಂತ್ರಾಕ್ಷರಗಳನ್ನು ಕೀಲಿಸುತ್ತಾನೆ. ಮಂತ್ರಾಕ್ಷರ ಸಂಸ್ಕಾರದಿಂದ ಮಂತ್ರಾಕ್ಷರನ್ಯಾಸ ದಿಂದ ಶಿಲಾಭಾವದ ಲಿಂಗವು ಮಂತ್ರಮಯವಾಗುವದರಲ್ಲಿ ಯಾವ ಸಂದೇಹವಿಲ್ಲ.

ಚಾರುವೃತ್ತದೊಳಿರ್ಪಾ | ಚಾರಲಿಂಗದೊಳಗೆ ನ

ಕಾರ ಮೊದಲಾದ – ಆರು ಪ್ರಣವದ ನೆಲೆಯ

ತೋರಿಸಿದ ಗುರುವೆ ಕೃಪೆಯಾಗು    ೧೨೦ |

ಶರಣಕವಿಯು ಲಿಂಗದ ಒಂದೊಂದು ಸ್ಥಲದಲ್ಲಿ ಒಂದೊಂದು ಮಂತ್ರಾಕ್ಷರಗಳ ಸಂಬಂಧವನ್ನು ತೋರಿಸುತ್ತ ಹೋಗುತ್ತಾನೆ.

ವೃತ್ತ ಸ್ಥಾನವು ಚಾರುತರವಾದುದು. ಯಾಕಂದರೆ ವೃತ್ತವು ಗೋಲಾಕಾರ ವಾಗಿರುವದು.  ದುಂಡಾಗಿರುವದರಿಂದ ಪರಿಪೂರ್ಣವಾಗಿ ಶೋಭಿಸುತ್ತದೆ.  ಅಂತೆಯೇ ಶಿವಕವಿಯು ವೃತ್ತಕ್ಕೆ ಚಾರು ಪದವನ್ನು ವಿಶೇಷಣವಾಗಿ ಬಳಸಿದ್ದಾನೆ. ಅಲ್ಲದೆ ಪೂರ್ಣವಾದ ಪರಿಘದಲ್ಲಿ ಸಕಲವೂ ಸೇರಿದೆಯೆಂಬ ಭಾವವೂ ವ್ಯಕ್ತವಾಗುವದು. ಈ ವೃತ್ತ ಸ್ಥಾನದಲ್ಲಿರುವ ಲಿಂಗ ಆಚಾರಲಿಂಗವೆನಿಸಿದೆ. ವೃತ್ತವು ಎಲ್ಲ ಸ್ಥಲಗಳಿಗೆ ಆಧಾರವಾಗಿರುವಂತೆ ಆಚಾರಲಿಂಗವು ಎಲ್ಲ ಲಿಂಗಗಳಿಗೆ ಆಶ್ರಯವಾಗಿದೆ.

ಈ ಆಚಾರಲಿಂಗದಲ್ಲಿ ನಕಾರ ಪ್ರಣವ ಪ್ರಕಾಶಮಾನವಾಗಿದೆ. ಇಲ್ಲಿ ‘ನ ʼಕಾರ ಮುಖ್ಯವಾಗಿದ್ದು ಅದರಲ್ಲಿ ಉಳಿದೈದು ಪ್ರಣವಗಳು ಸುಪ್ತವಾಗಿವೆ. ವೃತ್ತ ಪೂರ್ಣವಾಗಿರುವಂತೆ ಆಚಾರವು ಪರಿಪಕ್ವಗೊಂಡರೆ ಮಾತ್ರ ಆಚಾರಲಿಂಗದ ಅರಿವು ಆಗುವದು. ಆ ಮಂತ್ರದ ನೆಲೆ ಸ್ಥಿರವಾಗುವದು.

ಶಿವ ಪಂಚಾಕ್ಷರ ಸ್ತೋತ್ರದಲ್ಲಿ ಶಂಕರಾಚಾರ್ಯರು ‘ನ ʼಕಾಲ ಮಂತ್ರಾಕ್ಷರದ ವರ್ಣನೆಯನ್ನು –

ನಾಗೇಂದ್ರ-ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ |

ನಿತ್ಯಾಯ ಶುದ್ಧಾಯ ದಿಗಂಬರಾಯ

ಸ್ಮೈ ನಕಾರಾಯ ನಮಃ ಶಿವಾಯ

ಎಂದು ಸುಂದರವಾಗಿ, ಮಾರ್ಮಿಕವಾಗಿ ಹಾಡಿರುವರು. ಇದರಂತೆ ಶ್ರೀರುದ್ರಯಾಮಲತಂತ್ರದಲ್ಲಿ ಉಮಾಮಹೇಶ್ವರ ಸಂವಾದಲ್ಲಿಯೂ ಷಡಕ್ಷರ ಸ್ತೋತ್ರವು ಅರ್ಥ ಪೂರ್ಣವಾಗಿದೆ-

“ನಮಂತಿ ಋಷಯೋ ದೇವಾಃ ನಮಂತ್ಯಪ್ಸರಸಾಂಗನಾಃ |

ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ” ||

ಮಹಾಮಂತ್ರಕ್ಕೆ ಮಣಿಯದವರಾರು ? ಸಕಲರೂ ಶಿರ ಬಾಗಿಸಲೇಬೇಕಾಗುವದು.

ಜ.ಚ.ನಿ

ಮನೆಯು ಜನಗಳಿಂದ ತುಂಬಿತ್ತು. ಧನಧಾನ್ಯಗಳಿಂದ ಬರಿದಾಗಿತ್ತು. ತಾತ ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ ಮುಂತಾಗಿ ಮನೆಯಲ್ಲಿ ಹತ್ತು ಹನ್ನೆರಡು ಜನರಿದ್ದರು. ಸಂಪಾದನೆ ಯಾವ ಬಗೆಯಲ್ಲಿಯು ಇರಲಿಲ್ಲ. ಅಜ್ಜಂದಿರು ಓದಿಸುತ್ತಿದ್ದ ಸ್ವತಂತ್ರ ಶಾಲೆಯ ಫಲವಾಗಿ ಜನಗಳಿಂದ ವರ್ಷಕ್ಕೊಮ್ಮೆ ಬರುತ್ತಿದ್ದ ಅಲ್ಪಸ್ವಲ್ಪ ಪ್ರಾಪ್ತಿ.  ಅದೇತಕ್ಕೂ ಸಾಲುತ್ತಿರಲಿಲ್ಲ. ಪ್ರತಿನಿತ್ಯ ಭಿಕ್ಷೆಯ ಮಾಡದೆ ವಿಧಿಯಿರಲಿಲ್ಲ. ಈ ಮಧ್ಯೆ ತಂದೆಯವರು ಹಠಾತ್ತಾಗಿ ಶಿವಾಧೀನರಾದದ್ದು ಒಂದು ತುಂಬಿಬಾರದ ಕೊರತೆ. ಕೆಲಸ

ಮಾಡುವವರ ಸಂಖ್ಯೆ ಕಡಿಮೆಯಾಯಿತು. ೧೦೫ ವರ್ಷ ವಯಸ್ಸಿನ ತಾತಂದಿರು ಸಹ ಹಸುವಿಗೆ ಹುಲ್ಲನ್ನು ಕೊಯ್ದು ಇಲ್ಲವೆ ಕೆತ್ತಿ ತರುವ ಕಾಯಕ ಮಾಡಬೇಕಾಯಿತು. ಅಣ್ಣಂದಿರಾದ ಶಿವಬಸವಯ್ಯನವರು ಒಬ್ಬರೆ ತರುವ ಭಿಕ್ಷೆಯಿಂದ ಚರಿತಾರ್ಥ ಸಾಗದಂತಾಯಿತು. ಸದಾಶಿವಯ್ಯನವರು ಭಿಕ್ಷಕ್ಕೆ ಹೋಗುವ ಸರದಿ ಬಂದಿತು. ಹೋಗದಿದ್ದರೆ ವಿಧಿಯಿಲ್ಲದೆ ಹೋಯಿತು. ಒಪ್ಪೋತಿನ ಶಾಲೆಗೆ ತಿಲಾಂಜಲಿ ಬಿಡಬೇಕಾಯಿತು; ಬಿಟ್ಟಾಯಿತು. ಒಪ್ಪತ್ತಿನ ಓದು ಅವರ ಮನಸ್ಸಿಗೆ ತೃಪ್ತಿತರಲಿಲ್ಲ. ಅದೇ ಅವರಿಗೊಂದು ಚಿಂತೆಯಾಗಿತ್ತು; ಚಿತ್ತಚಪಲತೆಯಾಗಿತ್ತು.

ಒಂದು ದಿನ ಬೆಳಗಿನ ಜಾವ. ಎಂದಿನಂತೆ ಎದ್ದು ಮುಖ ತೊಳೆದು ವಿಭೂತಿ ಧಾರಣೆ ಮಾಡಿಕೊಂಡು ಒಂದು ಹಳ್ಳಿಗೆ ಸದಾಶಿವಯ್ಯನವರು ಭಿಕ್ಷಕ್ಕೆ ಹೋದರು. ನಾಲ್ಕಾರು ಮನೆ ಭಿಕ್ಷವಾಯಿತು. ಮತ್ತೊಂದು ಮನೆಯೊಳಕ್ಕೆ ಹೋಗಲು ಮುಂದುವರಿದರು. ಅಷ್ಟರಲ್ಲಿ ಅದೇ ಮನೆಯ ಕಟ್ಟೆಯ ಮೇಲಿದ್ದ ಮುದುಕನೊಬ್ಬನು, ‘ಏನ ಅಯ್ಯಪ್ಪ, ಭಿಕ್ಷೆ ಬೇಡಲು ನೀನೇನು ಮುದುಕನೆ ? ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗ, ಈಗಲೇ ಈ ತಿರುಪೆಗೆ ನಿಂತರೆ ಹೇಗೆ ? ಇನ್ನೂ ನೀನು ಎಷ್ಟು ದಿನ ಬದುಕಬೇಕಾಗಿದೆ ? ಎಷ್ಟು ಜನ ಮಕ್ಕಳು ಮರಿಗಳನ್ನು ಹೆತ್ತು ಸಾಕಬೇಕಾಗಿದೆ ? ಭಿಕ್ಷಾನ್ನದಿಂದಲೇ ಇದೆಲ್ಲ ಹೇಗೆ ಸಾಧ್ಯ ? ವಿದ್ಯೆ ಕಲಿತು ಬುದ್ಧಿವಂತನಾಗದೆ ಸೋಮಾರಿಯಾಗಿ ‘ಭಿಕ್ಷಾಂ ದೇಹಿ’ ಎಂದು ಭಿಕ಼್ಷೆ ಬೇಡುವುದೆ ? ಇನ್ನೊಬ್ಬರಿಗೆ ಹೊರೆಯಾಗಿ ಬಾಳುವುದೊಂದು ಬಾಳೆ ? ಬದುಕುವುದೊಂದು ಬದುಕೆ ? ನೀನು ಜನಿಸದಿದ್ದರೆ ಜಗತ್ತು ಹಾಳಾಗುತಿತ್ತೆ? ಎಂದು ಮುಂತಾಗಿ ಬುದ್ಧಿವಾದ ಬೈಗಳ ಸುರಿಸಿದನು. ಸದಾಶಿವಯ್ಯನವರ ಮೃದುವಾದ ಮನಸ್ಸಿನ ಮೇಲೆ ಆ ಮೊನಚಾದ ಮಾತುಗಳು ಚೆನ್ನಾಗಿ ನಾಟಿದವು. ತಾಳ್ಮೆಗೆಟ್ಟರು. ಅಲ್ಲಿಂದ ಮುಂದಿನ ಮನೆಗೆ ಭಿಕ್ಷಕ್ಕೆ ಹೋಗುವ ಮನಸ್ಸು ಉಳಿಯಲಿಲ್ಲ. ಮೊದಲೆ ವಿದ್ಯಾರ್ಜನೆಗಾಗಿ ತವಕಿಸುತ್ತಿದ್ದ ಮನಸ್ಸು ಮತ್ತಿಷ್ಟು ತವಕಗೊಂಡಿತು. ಹೇಗಾದರೂ ಮಾಡಿ ವಿದ್ಯಾರ್ಜನೆ ಮಾಡಬೇಕೆಂದು ಗಟ್ಟಿಗೊಂಡಿತು. ಹಾಗೆಯೇ ಊರಿಗೆ ಹಿಂದಿರುಗಿದರು. ಬರುತ್ತ ಆ ಮುದುಕನು ಆಡಿದ ಮಾತುಗಳನ್ನು ನೆನೆದು ದುಃಖ ಉಕ್ಕಿತು, ಕಣ್ಣೀರು ಮುನ್ನೀರಾಗಿ ಹರಿಯತೊಡಗಿತು. ಸಮಾಧಾನ ಮಾಡುವರಾರು ? ದಾರಿಯುದ್ದಕ್ಕು ಅತ್ತು ಅತ್ತು ಹೃದಯ ಭಾರವಾಯಿತು. ಬುದ್ಧಿಸಿಮಿತವಿಲ್ಲದಾಯಿತು. ಮನಸಿನ ಮೇಲೆ ಮೂಡಿದ ಮಾತಿನ ಗಾಯ ಮಾಣಲಿಲ್ಲ. ದುಃಖದ ಭರದಲ್ಲಿ ದಾರಿ ಸಾಗಲಿಲ್ಲ. ದಟ್ಟಡಿಯಿಟ್ಟು ನಡೆದಿದ್ದನು. ಹೊತ್ತು ಹೆಚ್ಚಾದರೂ ಅವನಿಗೇನು ಕಾಣಲಿಲ್ಲ. ಚಿಂತೆ ಶೋಕಗಳಲ್ಲಿ ಹೊತ್ತುಗೊತ್ತುಗಳಿಗೆ ಸ್ಥಾನವೆಲ್ಲಿ ? ಅಷ್ಟರಲ್ಲಿ ಊರು ಹತ್ತಿರಕ್ಕೆ ಬಂದಿತು. ಬೆಚ್ಚಿನೋಡಿ ಕಣ್ಣೀರು ಒರಸಿಕೊಂಡು ಬಾಗಿಲ ಬಳಿಗೆ ಬಂದನು. ತಂಗಿಯು ತಂಬಿಗೆಯಲ್ಲಿ ತಂದ ನೀರಿನಿಂದ ಕಾಲುತೊಳೆದು ಒಳಗೆ ಹೋದನು. ಅಕ್ಕನು ಓಡಿ ಬಂದು ಜೋಳಿಗೆಯನ್ನು ನೋಡಿದಳು. ದಿನಕ್ಕಿಂತಲು ಹಿಟ್ಟು ತೀರ ತುಸು ಇದ್ದಿತು. ಅವ್ವಾ, ತಮ್ಮನಿಂದು ಹಿಟ್ಟು ತುಸು ತಂದಿದ್ದಾನೆ ಎಂದು ಕೂಗಿ ಹೇಳಿದಳು. ಆ ಮಾತು ಕೇಳಿ ಅಲ್ಲಿಯೇ ಇದ್ದ ಅಣ್ಣನು, ಅಂಗಡಿಗೆ ಹಾಕಿ ಫಲಾರ (ಫಲಾಹಾರ) ತಿಂದಿರಬೇಕು ಎಂದು ದೂರು ಹೇಳಿದನು.

ತಾಯಿ ನೀಲಾಂಬೆ ಜಳಕ ಮಾಡಿ ಮಡಿಯುಟ್ಟು ಅಡುಗೆಯ ಮನೆಯ ತನ್ನ  ಕೆಲಸದಲ್ಲಿ ತೊಡಗಿದ್ದಳು. ಮಕ್ಕಳ ಮಾತುಗಳ ಕೇಳಿ ಮನಸ್ಸು ತಾಳದೆ ಬಂದು ನೋಡಿದಳು. ಅವರು ಹೇಳಿದಂತೆ ನಿಜವಾಗಿಯೂ ಎಂದಿಗಿಂತ ತೀರ ಕಡಿಮೆಯಾಗಿತ್ತು. ಮಗನ ಮೇಲೆ ತಾಯಿಗೆ ತುಂಬಾ ಮಮತೆಯಿತ್ತಾದರು ಸಂಸಾರ ನಿರ್ವಹಣ ದೃಷ್ಟಿಯಿಂದ ತುಂಬ ಸಿಟ್ಟಿಗೆದ್ದಳು; ಸಾವಿರಾಡಿದಳು. ಗಾಯದ ಮೇಲೆ ಕಾಯ್ದ ಕಂಬಿಯ ಕೀಸಿದಂತಾಯಿತು. ಮೊದಲೆ ಮುದುಕನ ಬಿರಿನುಡಿಗಳಿಂದ ಬೆಂದ ಹೃದಯ ಮತ್ತಿಷ್ಟೂ ನೊಂದಿತು.  ಅಕ್ಕನ ಚಾಡಿ, ಅಣ್ಣನ ಅಪವಾದ, ಅವ್ವನ ಆರ್ಭಟ ಯಾವುದನ್ನು ಸಹಿಸಬೇಕು. ಏನೆಂದು ಸಮಾಧಾನ ಹೇಳಬೇಕು. ಹೇಳಬೇಕೆಂದಿದ್ದರೆ ಬೇಕಾದಷ್ಟಿತ್ತು. ಹೇಳುವ ಮನಸ್ಸು ಮಾಡಲಿಲ್ಲ. ಇದಿರಾಡಲು ಇವನಿಗೆ ಇಷ್ಟವಿಲ್ಲದೆ ಹೋಯಿತು. ಕಷ್ಟವೊದಗಿದಷ್ಟು ಅವನ ಮನ ಪುಟಕ್ಕಿಟ್ಟ ಚಿನ್ನದಂತೆ ಚೊಕ್ಕಟವಾಗ ತೊಡಗಿತ್ತು. ಅಲ್ಲದೆ ಬಾಗಿಲ ಬಳಿ ತಂಗಿ ನೀರು ತಂದು ಕೊಟ್ಟಾಗ ಅವನು ಬರಿ ಕಾಲುಗಳನ್ನೇ ತೊಳೆದಿರಲಿಲ್ಲ. ಜೊತೆಗೆ ಕಾಮಕ್ರೋಧಗಳನ್ನು ತೊಳೆದಿದ್ದನು. ತೊಡೆದು ಹಾಕಿದ್ದನು. ಅದರಿಂದ ಅವನ ಮುಚ್ಚಿದ ತುಟಿ ಎರಡಾಗಲಿಲ್ಲ. ಊಟದ ಆಶೆ ಉಳಿಯಲಿಲ್ಲ. ಏನೂ ತೋಚದಾಯಿತು. ಯಾವುದೂ ಬೇಡವಾಯಿತು. ಸಹಿಸದ ಸಂಕಟದಿಂದ ಮರುಮಾತಾಡದೆ ಮನೆಯ ಒಂದು ಮೂಲೆಯಲ್ಲಿ ಹೋಗಿ ಕುಳಿತನು.ಅವನು ಕುಳಿತರೂ ಅವನ ಮನಸ್ಸು ಸುಮ್ಮನಾಗಲಿಲ್ಲ. ಅದು ಚಿಂತೆಗೊಳಗಾಯಿತು. ಇನ್ನು ನಾನು ಇಲ್ಲಿ ಇರುವುದರಿಂದ, ಹೀಗೆ ಕಾಲಕಳೆವುದರಿಂದ ಯಾವ ಪ್ರಯೋಜನವಿಲ್ಲ. ಮಾನಮರ್ಯಾದೆ ಮತ್ತೂ ಇಲ್ಲ. ಎಲ್ಲಿಗಾದರೂ ಹೋಗಿ ಯಾರ ಆಶ್ರಯವನ್ನಾದರೂ ಬೇಡಿ ಓದಿಕೊಳ್ಳಬೇಕು. ಆದರೆ ಎಲ್ಲಿಗೆ ಹೋಗುವುದು ? ಯಾರನಾಶ್ರಯಿಸುವುದು ? ಎಂದು ಎಷ್ಟೋ ಬಗೆಯಾಗಿ ಯೋಚಿಸತೊಡಗಿತ್ತು. ಅಷ್ಟರಲ್ಲಿ ಅಣ್ಣನ ಕೂಗು. ಹೀಗೆ ಸುಮ್ಮನೆ ಮೂಲೆ ಹಿಡಿದು ಕುಳಿತರೇನು ? ಮನೆಗೆಲಸ ಮಾಡುವರಾರು ? ದನದ ಮನೆ ಕಸಗೂಡಿಸಿಲ್ಲ. ಮೈಲಿಗೆಯ ಬಟ್ಟೆಗಳ ತೊಳೆದಿಲ್ಲ. ಇವುಗಳಲ್ಲಿ ಯಾವುದನ್ನಾದರೂ ಮಾಡ ಏಳು ! ಎನ್ನಲು ಸದಾಶಿವಯ್ಯನು ಬಟ್ಟೆ ತೊಳೆವುದನ್ನೇ ಒಪ್ಪಿಕೊಂಡು ಬಟ್ಟೆಗಳೊಡನೆ ಬಾವಿಯಿದ್ದಲ್ಲಿಗೆ ಬಂದು ಬಟ್ಟೆಗಳನ್ನು ಹಸನಾಗಿ ತೊಳೆದನು. ಆದರೆ ಮರಳಿ ಮನೆಗೆ ಹೋಗಲು ಮನಸ್ಸಿಲ್ಲ. ಬಡತನದ ಬಾಳಿನಲ್ಲಿ ಇಷ್ಟು ದಿನ ತಮ್ಮ ಮನಸ್ಸಿಗೆ ವಿರೋಧವಾಗಿ ಅದೆಷ್ಟೋ ತಗ್ಗಿ ನಡೆದನು; ಅದೆಷ್ಟೋ ಕುಗ್ಗಿ ನಡೆದನು. ಇನ್ನು ಹಾಗೆ ಇರಲು ಸಾಧ್ಯವಿರಲಿಲ್ಲ. ವಿದ್ಯಾಭ್ಯಾಸದ ಕಡೆಗೆ ಅವನ ಮನಸ್ಸು ತೀವ್ರವಾಗಿ ಹರಿಯಿತು. ಬೆಳಗಿನಿಂದ ಊಟವಿಲ್ಲದಿದ್ದರು ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ. ಬಟ್ಟೆಗಳನ್ನು ಮನೆಗೆ ಕಳಿಸುವ ಬಗೆ ಹೇಗೆ ? ಎಂದು ಯೋಚಿಸುತ್ತಿರುವಾಗ ನೆರೆಮನೆಯವರೊಬ್ಬರು ನೀರಿಗೆಂದು ಅಲ್ಲಿಗೆ ಬಂದರು. ಅವರನ್ನು ನೋಡಿ ಮನ ಹಿಗ್ಗಿತು. ಉಂಡಷ್ಟು ಸಂತಸವಾಯಿತು. ಮನೆಯಲ್ಲಿ ಕೊಡಹೇಳಿ ತೊಳೆದ ಬಟ್ಟೆಗಳನ್ನು ಅವರ ಕೈಯಲ್ಲಿ ಕೊಟ್ಟನು. ನನ್ನನ್ನು ಕೇಳಿದರೆ ಹಳ್ಳಿಗೆ ಹೋದನೆಂದು ಹೇಳಿ ಎಂದು ತಿಳಿಸಿದನು. ಹಾಗೆಯೇ ಹೊರಟುಬಿಟ್ಟನು. ಸ್ವಲ್ಪ ದೂರ ಹೋದಮೇಲೆ ಹಸಿದಿದ್ದರೂ ಹಂಗಿಲ್ಲದೆ ನಿಟ್ಟೋಟದಿಂದ ಓಡಿದನು. ಏಕೆಂದರೆ ಯಾರಾದರು ಬಂದು ಹಿಂದಕ್ಕೆ ಕರೆದೊಯ್ದಾರೆಂಬ ಭಯ ಅವನಿಗೆ. ಅದರಿಂದಾಗಿ ಬೇಗ ಅವನು ಕಜ್ಜರಿ ಗ್ರಾಮವನ್ನು ಸೇರಿದನು; ಕೊಂಚ ಮನ ಸೈರಣೆಗೊಂಡಿತು.

 ಆಗ ಆ ಊರಿನಲ್ಲಿ ಶಾಲೆ ಉತ್ತಮ ರೀತಿಯಲ್ಲಿದ್ದು ಹೆಸರುವಾಸಿಯಾಗಿತ್ತು. ಅದರಿಂದ ಅಲ್ಲಿ ತನ್ನ ಹೆಚ್ಚಿನ ಅಭ್ಯಾಸ ಆಗುತ್ತದೆಂದು ಆಲೋಚಿಸಿ ಅಲ್ಲಿಗೆ ಬಂದಾಯಿತು. ಆದರೆ ಅವನ ಬಳಿ ಬಿಡಿಗಾಸು ಸಹ ಇರಲಿಲ್ಲ. ಅಷ್ಟು ಅಕಿಂಚನನಾಗಿದ್ದನು. ಆಶ್ರಯದ ಮಾತು ಮುಂದೆ ಬಂದಿತು. ಊರಿನಲ್ಲಿ ಯಾರ ಪರಿಚಯವೂ ಇರಲಿಲ್ಲ. ಎಲ್ಲಿ ಯಾರ ಮನೆಗೆ ಹೋಗಿ ಕೇಳುವುದು ? ಸಾಧ್ಯವಾಗದೆ ಹೋಯಿತು. ಹಾಗೆಯೇ ಅದೇ ಊರಿನ ಅರಳಿಕಟ್ಟೆಯ ಮೇಲೆ ಕುಳಿತು ಬಿಟ್ಟನು. ಬೆಳಗಿನಿಂದ ಊಟವಿಲ್ಲ. ಮೈಮೇಲೆ ಸರಿಯಾದ ಬಟ್ಟೆಯಿಲ್ಲ. ಇತ್ತಹಸಿವಿನ ಬಾಧೆ, ಅತ್ತ ಮನಸ್ಸಿನ ವೇಧೆ, ಎರಡನ್ನೂ ಸಹಿಸದೆ ಹೋದನು. ಕಣ್ಣುಗಳಲ್ಲಿ ನೀರೂರಿತು. ಭವಿಷ್ಯತ್ತಿನ ಕಾರ್ಗತ್ತಲೆಯ ಕಪ್ಪುಕಲೆ ಕಂದಿದ ಮುಖದ ಮೇಲೆ ನೆಲೆ ನಿಂತಿತು. ಆ ಸಮಯಕ್ಕೆ ಅದೇ ಊರಿನ ಹಿರಿಯಮಠದ ರಾಚಯ್ಯನವರೆಂಬುವರು ಅಲ್ಲಿಗೆ ಆಕಸ್ಮಿಕವಾಗಿ ಬಂದರು. ಅರಳಿಕಟ್ಟೆಯಲ್ಲಿ ಕುಳಿತು ಅಳುತ್ತಿರುವ ಅಣುಗನ ಮೇಲೆ ಅವರ ದೃಷ್ಟಿ ಹರಿಯಿತು. ಪಡುವ ಅವಸ್ಥೆಯನ್ನು ನೋಡಿ ಆದ್ಯಂತವನ್ನು ಕೇಳಿ ಮನಮರುಗಿ, ಕರಳುಕರಗಿ ಮಠಕ್ಕೆ ಕರೆದೊಯ್ದರು. ಹಸಿದ ಹೊಟ್ಟೆಗೆ ಊಟ ದೊರೆಯಿತು. ಓದಲು ಊರಿನವರಿಂದ ಸಹಾಯ  ಮಾಡಿಸಿಕೊಡುವೆನೆಂಬ ಅಭಯವೂ ಅವರಿಂದ ದೋರೆಯಿತು.  ಕೇಳಿ ಮನಸ್ಸಿಗೆ ನೆಮ್ಮದಿಯಾಯಿತು. ಆ ದಿನ ಸುಖವಾಗಿ ನಿದ್ದೆ ಹೋದನು.

 ಮರುದಿನ ರಾಚಯ್ಯನವರು ಮಾತುಕೊಟ್ಟಂತೆ ಊರಿನಲ್ಲಿ ಹೋಗಿ ಇದ್ದ ಸಂಗತಿಯನ್ನು ಜನರಿಗೆ ಹೇಳಿ ವಿದ್ಯಾಸಹಾಯವೆಂದು ಕೇಳಿ ಹಣ ಶೇಖರಿಸಿದರು. ಬಂದ ಹಣದಲ್ಲಿ ಬಟ್ಟೆ ಓದುವ ಪುಸ್ತಕ ಹಲಗೆ ಬಳಪ ಮುಂತಾದ ಸಾಮಾನುಗಳನ್ನು ತಂದು ಸದಾಶಿವಯ್ಯನವರಿಗೆ ಕೊಟ್ಟು ಶಾಲೆಗೆ ಸೇರಿಸಿದರು. ಅವನ ಧೈರ್ಯದ ಸಾಹಸಕ್ಕೆ ಇಂದು ದಾರಿ ಸಿಕ್ಕಿತು. ಮುಖದ ಮೇಲೆ ಕೃತಜ್ಞತೆಯ ಚಿನ್ಹೆ ಚಿಮ್ಮಿತು. ಸದಾಶಿವಯ್ಯನವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅನಿರೀಕ್ಷಿತವಾದ ಈ ಸಹಾಯದಿಂದ ಅವರ ಓದುವ ಉತ್ಸಾಹ ಇಮ್ಮಡಿ ಮುಮ್ಮಡಿಯಾಗಿ ಹೆಮ್ಮಿತು. ಮನಸಿಟ್ಟು ಮತಿಗೊಟ್ಟು ಓದತೊಡಗಿದರು. ಒಂದರಗಳಿಗೆಯನ್ನು ಸಹ ವ್ಯರ್ಥ ಕಳೆಯುತ್ತಿರಲಿಲ್ಲ. ಪಾಠಬರುವವರಿವಿಗೂ ಊಟ ಮಾಡುತ್ತಿರಲಿಲ್ಲ. ಆಟವಾಡುತ್ತಿರಲಿಲ್ಲ. ನೆರವನ್ನು ನಿರರ್ಥಕಮಾಡಿಕೊಳ್ಳಲಿಲ್ಲ. ತನ್ನ ಓದಾಯ್ತು. ತಾನಾಯ್ತು. ಈ ರೀತಿ ಒಮ್ಮನದಿಂದ ಓದಿ ಕೆಲವು ದಿನಗಳಲ್ಲಿಯೆ ಶಾಲೆಯ ಜಾಣ ವಿದ್ಯಾರ್ಥಿಯಾದರು. ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸದ್ಗುಣಗಳಿಂದ ಮಠದವರಿಗೆ ಮುದ್ದು ಹುಡುಗರಾದರು.

 ಈ ಬಗೆಯಾಗಿ ನಾಲ್ಕು ವರ್ಷ ಓದಿದರು. ಏಳನೆಯ ವರ್ಗದ ಅಭ್ಯಾಸವೂ ಕೊನೆಗಂಡಿತು. ಉತ್ತಮವಾಗಿ ಕೊನೆಗಂಡಿತು. ಈ ವರ್ಗದ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎಂದು ಹೆಸರು. ಇದು ಜಿಲ್ಲೆಯ ಕೇಂದ್ರಸ್ಥಳದಲ್ಲಿಯೇ ಜರುಗುತ್ತಿತ್ತು. ಅಲ್ಲಿಗೆ ಹೋಗಿ ಪರೀಕ್ಷೆಗೆ ಕುಳಿತುಕೊಳ್ಳಲು ಸದಾಶಿವಯ್ಯನವರು ಮನಸ್ಸು ಮಾಡಿದರು. ಶಿಕ್ಷಕರ ಅನುಮತಿಯನ್ನು ಪಡೆದರು. ಅಸುಂಡಿ ಶಿವನಗೌಡನೆಂಬ ಸಹಾಧ್ಯಾಯಿಯೊಡನೆ ಕಾಲುನಡಿಗೆಯಿಂದ ಧಾರವಾಡಕ್ಕೆ ಬಂದರು. ಪರೀಕ್ಷೆ ಕಟ್ಟಿ ಆಯಿತು, ಕೊಟ್ಟು ಆಯಿತು. ಆದರೇನು ? ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಉದ್ದೇಶವೆ ಬೇರೆಯಾಯಿತು. ಆದದ್ದೆ ಬೇರೆಯಾಯಿತು. ಮಹಾತ್ಮರ ಚರಿತ್ರೆಯೆ ಮರ್ತ್ಯಕ್ಕೆ ವಿಲಕ್ಷಣವಾದುದು, ಮನುಷ್ಯರಿಗೆ ಮೀರಿದುದು ಎಂಬುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ ಎಲ್ಲರಿಗಿಂತಲು ಬುದ್ಧಿವಂತರಾದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿರುವುದೆಂದರೇನು ? ಮನೋನಿಶ್ಚಯಕ್ಕೆ ವಿಪರೀತವಾದ ಫಲಿತಾಂಶ ಸಿಕ್ಕುವುದೆಂದರೇನು ?

 ಸದಾಶಿವಯ್ಯನವರ ಮನಸ್ಸು ಇದರಿಂದಾಗಿ ವಿಶೇಷ ವ್ಯಥೆಗೊಳಗಾಯಿತು. ಕಜ್ಜರಿಯಲ್ಲಿ ಯಾರಿಗೂ ಮುಖ ತೋರದೆ ಮರೆಯಲ್ಲಿಯೇ ಇದ್ದು ಹೋದರು. ಅನ್ನದ ಆಶೆ ಹರಿದರು. ಆನೆಯೆತ್ತರದ ಆಲೋಚನೆಗಳಿಗೆ ಆಗರವಾದರು. ಸ್ನೇಹಿತರು ಶಿಕ್ಷಕರು ಏನೇನೋ ಸಮಾಧಾನ ಹೇಳಿದರು. ಆದರೆ ಒಂದೂ ಪ್ರಯೋಜನ ವಾಗಲಿಲ್ಲ. ಮರಳಿ ಪ್ರಯತ್ನ ಮಾಡಿನೋಡೆಂದರು.ಮನಸ್ಸು   ಮಾಡಲಿಲ್ಲ. ಪೂರ್ತಿ ಮನಃಪರಿವರ್ತನವಾಗಿ ಹೋಗಿತ್ತು. ಎಲ್ಲರ ಹೇಳಿಕೆಗಳಿಗೂ ಅವರ ಆಲೋಚನೆಗೂ ನೆಲಮುಗಿಲ ಅಂತರವಾಯಿತು. ಒಂದಕ್ಕೊಂದು ಮೇಳೆಸುವ ಬಗೆ ಹೇಗೆ ? ಸಾಧ್ಯವಾಗಲಿಲ್ಲ. ಇನ್ನು ಅಲ್ಲಿರಲು ಅವರ ಮನಸ್ಸು ಒಪ್ಪಲಿಲ್ಲ. ಹಾಗೆಯೇ ಹೊರಟು ಅವರ ತಾಯಿಯ ತವರು ಮನೆಯಿದ್ದ ಲಿಂಗದಹಳ್ಳಿಗೆ ಬಂದರು. ತಾಯಿಯ ತವರುಮನೆಯಲ್ಲಿ ನಿಂತರು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ಇಂದ್ರಿಯಗಳು ಮತ್ತು ಅಂತಃಕರಣಗಳ ಮೂಲಕ ನಾವು ಪಡೆಯುವ ಜ್ಞಾನಕ್ಕೆ ಅನುಭವ ಎಂದು ಸ್ಥೂಲವಾಗಿ ಹೇಳುತ್ತೇವೆ. ಬದುಕಿನಲ್ಲಿ ನಾವು ಹೊಂದುವ ಅನೇಕ ರೀತಿಯ ಅನುಭವಗಳು ವಸ್ತುವಿನ ಪ್ರತ್ಯಕ್ಷ ಸಂಪರ್ಕ ಹಾಗು ಸುಖ-ದುಃಖ, ನೋವು-ನಲಿವು, ಹುಟ್ಟು-ಸಾವು ಮುಂತಾದವುಗಳ ಅನಿವಾರ್ಯತೆಯಿಂದ ಬಂದಂತಹವುಗಳು. ಆಗ ನಾವು ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಅನುಭವಗಳೆಲ್ಲ ಲೌಕಿಕವಾದವು. ಆದರೆ ಅನುಭಾವ ಇವುಗಳಿಂದ ಭಿನ್ನವಾದ ಒಂದು ವಿಶಿಷ್ಟ ಅನುಭವ, ಅದು ಪಾರಲೌಕಿಕವಾದುದು. ಅದು ಆತ್ಮವಿದ್ಯೆ. ತಾನಾರೆಂಬುದನ್ನು ತೋರುವ ವಿದ್ಯೆ. ನಮ್ಮ ಬುದ್ಧಿ, ಇಂದ್ರಿಯಗಳು, ತರ್ಕ ಹಾಗೂ ಪ್ರಯೋಗ ಪರೀಕ್ಷೆಗಳಿಗೆ ಅತೀತವಾಗಿರುವ ದೈವೀಶಕ್ತಿಯನ್ನು ಕುರಿತು ಚಿಂತಿಸುವುದು, ಆ ದೈವೀಶಕ್ತಿಯೇ ಪರಮಸತ್ಯ ಎಂದು ನಂಬುವುದು ಹಾಗು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅನುಭಾವ.

 ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಹಿತಂ ಮುಖಂ

 ತತ್ವಂ ಪೂಷನ್ನಪಾವೃಣು ಸತ್ಯ ಧರ್ಮಾಯ ದೃಷ್ಟಯೇ

 ಪರಮಸತ್ಯವು ತೇಜೋಮಯವಾದ ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಇಂಥ ಪರಮಸತ್ಯದ ಸಾಕ್ಷಾತ್ಕಾರಕ್ಕಾಗಿ ಸತ್ಯಧರ್ಮಗಳನ್ನು ಅಳವಡಿಸಿಕೊಂಡ ಸಾಧಕನ ದೃಷ್ಟಿ ಅಂತರ್ಮುಖವಾಗಬೇಕಾಗುತ್ತದೆ. ಆಗ ತನು ಮನ ಭಾವ ನಷ್ಟವಾಗಿ ವಿಶ್ವಾತ್ಮನೇ ತಾನಾಗುವ ಅನುಭಾವ ಸಿದ್ಧಿಸುತ್ತದೆ. ಅನುಭಾವ ಒಂದು ರೀತಿಯಲ್ಲಿ ಪರಮಸತ್ಯದ ಅರಿವನ್ನು ಮಾಡಿಕೊಡುವ ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ಅದು ಮಾತು, ಮನಸ್ಸುಗಳನ್ನು ಮೀರಿದ ವೈಯಕ್ತಿಕ ಅನುಭವ. ಅದರ ತೀವ್ರತೆ ಪ್ರಖರತೆಯನ್ನಳೆಯಲು ಭಾಷೆ ಅಸಮರ್ಥವಾಗುವುದರಿಂದ ಅದು ಅವರ್ಣನೀಯ ಹಾಗೆಯೇ ಅನಿರ್ವಚನೀಯ. ಅಂತೆಯೇ ಶರಣರು ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ’ ಎಂದು ಹೇಳಿರುವುದು.

 ಸಮುದ್ರದ ಆಳವನ್ನು ಅಳೆಯಲು ಹೋದ ಉಪ್ಪಿನ ಬೊಂಬೆಯೊಂದು ಸಮುದ್ರದಲ್ಲಿ ಮುಳುಗಿದಾಗ ಕರಗಿಹೋಯಿತಂತೆ. ಸಮುದ್ರದ ಆಳವನ್ನು ವಿವರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಪರಮಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅನುಭಾವಿಯು ತನ್ನ ಯಾವ ಅನುಭವದ ಬಗ್ಗೆಯೂ ಹೇಳಲಾರ. ಆ ಅನುಭವ ಅತ್ಯಂತ ಶುದ್ಧ ಅನುಭವ. ಅದೇ ಅನುಭಾವ. ಅನುಭಾವದಲ್ಲಿ ದೊರೆವ ಆನಂದವೇ ನಿಜವಾದ ಆನಂದ, ಪರಮಾನಂದ. ಅದು ಸ್ವಯಂವೇದ್ಯ ಇಂಥ ಪರಮಾನಂದವನ್ನು ಅನುಭವಿಸುವ ಅನುಭಾವಿ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದೆಂದರೆ ಕುರುಡನಿಗೆ ಬಣ್ಣವನ್ನು ಕುರಿತು ಬೋಧಿಸಿದಂತೆ ನಿರರ್ಥಕ. ಆದರೆ ಅನುಭಾವಿಗಳ ಸಂಗ, ಸಾನ್ನಿಧ್ಯ ನಮಗೆ ಸುಖ, ಶಾಂತಿ ಸಮಾಧಾನ ಹಾಗು ನೆಮ್ಮದಿಯನ್ನುಂಟು ಮಾಡುತ್ತದೆ. ಅನುಭಾವಿಗಳು ವಿಶ್ವಕುಟುಂಬಿಗಳಾಗಿರುತ್ತಾರೆ. ಮಾನವ ಕಲ್ಯಾಣವೇ ಅವರ ಜೀವನ ಗುರಿಯಾಗಿರುತ್ತದೆ.

ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ.

ಸ್ವಾನುಭಾವದ ನೆಲೆಯ ನಾನೇನು ಬಲ್ಲೆನೈ

ನೀನೇ ಒಳವೊಕ್ಕು ಏನ ನುಡಿಸಿದೊಡನೆ

ನಾ ನುಡಿವೆ ಗುರುವೇ ಕೃಪೆಯಾಗು.||

ಶಿಲೆಯ ತೆಪ್ಪವ ನೇರಿ ಜಲವ ದಾಟುವೆನೆಂಬ

ಬಲು ಮೂಡತನವ ತೊಳಗಿಸುತ ನೀಎನ್ನ

ಸಲಹು ಶ್ರೀ ಗುರುವೇ ಕೃಪೆಯಾಗು.||

ಕನ್ನಡ ನಾಡಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ್ದು 12 ನೇಯ ಶತಮಾನದ ಶರಣರು, ಮಾನವ ಕುಲವು ಸರಿಸಮಾನವಾಗಿ ಮೇಲು-ಕೀಳು, ಜಾತಿ, ಕುಲ, ವರ್ಣದಿಂದ ಬೇರ್ಪಡಿಸಿ  ಬದುಕಲು ಪ್ರಯತ್ನವನ್ನು ಪಟ್ಟವರು, ಅವರಿಗೆ ಮುಂದಿನವರು ತಮ್ಮ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಶರಣನಾಗಿ ಮಹಾದೇವನೊಂದಿಗೆ ಇರಬೇಕು ಸರ್ವರು ಬಂದುತ್ವದಿಂದ ಇರಬೇಕೆಂಬ ಮಹಾದಾಸೆ, ಅದುವೇ ಶರಣ ಜೀವನ. ಶಿವಾನುಭವಿಗಳ ಜೀವನ ಹೇಗಿರಬೇಕೆಂದು ಬದುಕಿ ತೋರಿಸಿ ಕೊಟ್ಟವರಾಗಿದ್ದಾರೆ, ಅವರ ನೆರಳಿನಲ್ಲಿಯೇ 15 ನೇಯ ಶತಮಾನದಲ್ಲಿ ತೋಂಟದ ಶ್ರೀ ಸಿದ್ಧಲಿಂಗ ಶಿವಯೋಗಿಗಳು “ಷಟಸ್ಥಲ ಜ್ಞಾನಸಾರಾಮೃತ”ವನ್ನು ರಚಿಸಿ ತಮ್ಮ ಶಿಷ್ಯ ಸಂಪತ್ತನ್ನು ಸಂಪಾದಿಸಿ ದೇಶ ಸಂಚಾರ ಮಾಡಿ ಹಲವು ಕಡೆಗಳಲ್ಲಿ ಹಲವು ಜನರನ್ನು ಶಿವಾನುಭವಿಗಳನ್ನು ಹುಟ್ಟು ಹಾಕಿದರು, ನಂತರದಲ್ಲಿ  ಶ್ರೀ ನಿಜಗುಣ ಶಿವಯೋಗಿಗಳು, ಶ್ರೀ ಸರ್ಪಭೂಷಣ ಶಿವಯೋಗಿಗಳು, ಶ್ರೀ ಮುಪ್ಪಿನ ಷಡಕ್ಷರಿಗಳು, ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳು, ಶ್ರೀ ಘನಮಠದಾರ್ಯರು ಕೇವಲ ಭಕ್ತಿಯ ಭಾವದಿಂದ ಹಾಡುಗಬ್ಬ ಪದಗಳನ್ನು‌ ರಚಿಸಲಿಲ್ಲಾ, ಏನೋ ಬರೆಯಬೇಕು ಎಂದು ಬರೆದವುಗಲ್ಲಾ, ತತ್ವ, ಶಾಸ್ತ್ರ, ಆಚಾರ, ಸಿದ್ದಾಂತವನ್ನು ತಾವು ಸಂಪೂರ್ಣವಾಗಿ ಅಳವಡಿಸಿಕೊಂಡು ಇನ್ನಿತರರಿಗೆ ಅಧಿಕಾರ ವಾಣಿಯಿಂದ ಪ್ರತಿಪಾದಿಸಿದ್ದಾರೆ, ಅದೇ ಸಾಲಿನಲ್ಲಿ ಮೈಲಾರ ಬಸವಲಿಂಗ ಶರಣರು ಬರುವರು.

ಶಿವ ಭಕ್ತರಾದ ಬಸವಪ್ಪ ಒಬ್ಬ ವ್ಯಾಪಾರಿ ಶರಣನಾದ ಶ್ರೀ ಬಸವಲಿಂಗ ಶರಣರು ತಾವು ನಿಜಜೀವನದಲ್ಲಿ ನಡೆಸಿದ ಆಚರಣೆ, ಗುರುಗಳ ಮುಖಾಂತರ ತಿಳಿದುಕೊಂಡಿದ್ದಾ ವೀರಶೈವ ಸಿದ್ಧಾಂತ ತತ್ವವನ್ನು,

1) ಷಟಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ.

2) ಗುರು ಕರುಣ ತ್ರವಿಧಿ.

3) ಶಿವಾನುಭವ ದರ್ಪಣ.

4) ಲಿಂಗ ಪೂಜಾ ವಿಧಾನ ಎಂಬ ಗ್ರಂಥಗಳನ್ನು ಸ್ವತಃ ರಚನೆಯಾಗಿದ್ದು ಗುರುವಿನ ಕರುಣೆಯಿಂದ.

ಜನಸಾಮಾನ್ಯರ ನಡೆನುಡಿಯಲ್ಲಿ ವೀರಶೈವ ಸಿದ್ಧಾಂತ ತತ್ವವನ್ನು ಮೂಡಿಸಿಕೊಳ್ಳುವ ದಿವ್ಯ ದರ್ಶನ ನೀಡಿದವರು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳು. ಅಷ್ಟಾವರಣ, ಪಂಚಾಚಾರ, ಷಟಸ್ಥಲ, ಶಿವಾನುಭವ ಸಾರಾಮೃತವನ್ನು ಸ್ವತಃ ನಡೆಸುವುದರ ಮೂಲಕ ಉಪದೇಶವನ್ನು ನೀಡಿದವರಾಗಿದ್ದಾರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ. ನೋಡುಗರ ಕಣ್ಣು ಸೆಳೆಯುವ ಸ್ಥಾನ, ತುಂಗಭದ್ರೆಯು ತುಂಬಿ ಹರಿಯುವ ಮೂಲಕ ಅಲ್ಲಿನ ಪ್ರಕೃತಿಯನ್ನು ಸುಮಧುರವಾಗಿಸಿ ತನ್ನಲ್ಲಿಯೇ ಗುರುಗಳನ್ನು ಕರೆಯಿಸಿಕೊಂಡಿದ್ದಾಳೆಇಲ್ಲಿ ತಪೋನಿಷ್ಟರು ನಡೆದಾಡಿದ ಸ್ಥಾನ, ಶ್ರೀ ಚೆನ್ನವೀರ ಶಿವಯೋಗಿಗಳು ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಹಲವು ಸಾಧಕರಿಗೆ ಮಾರ್ಗದರ್ಶನ ಉಪದೇಶವನ್ನು ಮಾಡಿದವರುಹೊಳಲಿನ ಲಿಂಗಪ್ಪ ಶರಣರು, ಬನ್ನಿಮಟ್ಟಿಯ ಚೆನ್ನಪ್ಪ ಶರಣರು, ಮೈಸೂರು ಪ್ರಾಂತ್ಯದ ಶಿವಬಸವ ಸ್ವಾಮಿಗಳು, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು, ಇನ್ನೂ ಹಲವು ಸಾಧಕರು ಇಲ್ಲಿಯೇ ತಮ್ಮ ತಪವನ್ನು ಆಚರಿಸಿ ವಿದ್ಯೆಗೈದಿದ್ದಾರೆ. ಆ ದಿವ್ಯ ಜ್ಯೋತಿ ಪ್ರಕಾಶದಲ್ಲಿ ಬೆಳಗಿದವರು ಅಗ್ರಗಣ್ಯರಲ್ಲಿ ಒಬ್ಬರಾದವರು ಮೈಲಾರದ ಬಸವಲಿಂಗ ಶರಣರು.

ಬಸವಲಿಂಗ ಶರಣರ ಜೊತೆ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿಗಳು ಕ್ರಿ. ಶ. 1810-1830 ಇದ್ದು ಸಹಪಾಠಿ ಆಗಿ ಅವರಿಂದಲೇ ಶಾಸ್ರ್ತಾಭ್ಯಾಸವನ್ನು ಮಾಡಿದ್ದರಿಂದ ಚಿಂತಕರು ಹೇಳುವ ಪ್ರಕಾರ ಅವರದ್ದು 18 ನೇಯ ಶತಮಾನದ ಕಡೆಯ ಭಾಗದಲ್ಲಿ ಕ್ರಿ. ಶ. 1780-1800 ಇದ್ದವರು ಎಂದು ತಿಳಿಯಬಹುದಾಗಿದೆ. 

ಇವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಡಿನ ಹೆಸರಾಂತ ಮೈಲಾರ ಗ್ರಾಮದವರು, ಮೈಲಾರ ಎಂದೊಡನೆ ನಮ್ಮ ನೆನಪಿಗೆ ಬರುವುದು ಮೈಲಾರಲಿಂಗೇಶ್ವರ, ಈ ದೇವಸ್ಥಾನಕ್ಕೆ ಹೋಗುವ ಎಡಗಡೆ, ದೇವಸ್ಥಾನದ ಹತ್ತಿರವೇ ಬಸವಪ್ಪನ (ಬಸವಲಿಂಗ ಶರಣರು) ಮನೆ ಇದೆ, ಇವರು  ವ್ಯಾಪಾರ ಕಾಯಕವನ್ನು ಮಾಡುತ್ತಿದ್ದ ಮನೆತನದಲ್ಲಿ ಜನಿಸಿದವರು, ಇವರ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಕಂಡು ಬಂದಿಲ್ಲಾ, ತಾತ್ವಿಕವಾಗಿ ಅಧ್ಯಾತ್ಮದ ಹಾದಿಯಲ್ಲಿ ಬರುವ ಸಾಧಕನು ಗುರುಕರಣೆಯನ್ನು ಪಡೆದು ಮಾಂಸಮಯ ಶರೀರವನ್ನು ಮಂತ್ರಮಯ ಶರೀರವನ್ನು ಮಾಡಿಕೊಂಡು ಗುರುಸಂಬಂಧವನ್ನು ಇಟ್ಟುಕೊಳ್ಳುವುದರಿಂದ ತಂದೆ ತಾಯಿಯ ಹೆಸರನ್ನು ಮುನ್ನೆಲೆಗೆ ತೋಚದೇ ಗುರುವಿನ ಹೆಸರನ್ನು ತೋರುವುದೇ ರೂಡಿಯಲ್ಲಿದೆ, ಅದೇ ಮಾರ್ಗದಲ್ಲಿ ಬಸವಪ್ಪನು ತನ್ನ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಹೇಳದೇ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಅನುಗ್ರಹವನ್ನು ಪಡೆದು ಅವರ ಅಂಕಿತದಲ್ಲಿಯೇ ತನ್ನ ಕೃತಿಯನ್ನು ರಚಿಸಿದ್ದಾರೆ.

ಬಸವಪ್ಪನು ಯಾರಲ್ಲಿ ವಿದ್ಯೆಯನ್ನು ಕಲಿತಿದ್ದಾರೆ ಎಂಬುದು ತಿಳಿಯುವುದಿಲ್ಲ, ಅವರು ಕನ್ನಡದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದರು, ಅವರ ಹತ್ತಿರಕ್ಕೆ ಬರುವ ವ್ಯಾಪಾರಿಗೆ ಬೇಕಾದ ವಸ್ತುಗಳನ್ನು ಯೋಗ್ಯವಾದ ಬೆಲೆಗೆ ಮಾರಾಟಮಾಡುವವರಾಗಿದ್ದರು, ಅವರು ಸಮಯವನ್ನು ಕೊಟ್ಟರೇ ಅವರ ಕಷ್ಟ ಸುಖವನ್ನು ವಿಚಾರಿಸಿ ತಕ್ಕ ನೀತಿ ಧರ್ಮವನ್ನು ಹೇಳಿ ಧೈರ್ಯವನ್ನು ಹೇಳಿಕೊಡುವ ಜನಾನುರಾಗಿಯಾಗಿದ್ದರು, ಇವರು ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರುಜನರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕಿಂತ ಅವರು ಮಾತಿನಲ್ಲಿ ಬರುವ ತತ್ವ, ನೀತಿ, ಧರ್ಮದ ತತ್ವವನ್ನು, ಧರ್ಮದ ಸಿದ್ದಾಂತವನ್ನು ಕೊಂಡುಕೊಂಡು ಹೋಗಲು ಬಂದವರೇ ಹೆಚ್ಚು.

ಬಸವಪ್ಪನವರು ಯಾರಿಗೂ ವ್ಯಾಪಾರದಲ್ಲಿ ಮೋಸ ವಂಚನೆಯನ್ನು ಮಾಡಿದವರಲ್ಲಾ, ಯಾವುದೇ ಆಸೆ ಆಕಾಂಕ್ಷೆಗಳು ಸಾಸಿವೆಯಷ್ಟು ಇದ್ದಿಲ್ಲಾ, ಅವರು ಎಲ್ಲವನ್ನೂ ಹೊಂದಿದ್ದರು ಗುರು ಲಿಂಗ ಜಂಗಮರ ದಾಸೋಹಿಯಾಗಿದ್ದಾಕೊಂಡು ಬಸವಪ್ಪನು ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಚಿನ್ಮಯ ದೀಕ್ಷೆಯನ್ನು ಪಡೆದು ಬಸವಲಿಂಗ ಶರಣರು ಎಂದಾಗುವರು, ಮನೆಯಿಂದ ಕಿಲೋಮೀಟರ್ ದೂರದಲ್ಲಿದ್ದರೂ ಮನಕ್ಕೆ ಹತ್ತಿರದಲ್ಲಿದ್ದ ಲಿಂಗನಾಯಕನಹಳ್ಳಿಗೆ ಬಂದು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಸಾಮೀಪ್ಯದಲ್ಲಿಯೇ ಹೆಚ್ಚು ಕಾಲ ಇರತೊಡಗಿದರು, ಅವರ ಸಾನಿಧ್ಯದಲ್ಲಿ ಹಲವಾರು ಸಾಧಕರು ಮೊದಲೇ ಇದ್ದವರು ಅವರ ಜೊತೆ ಶಾಸ್ತ್ರ ಚಿಂತನವನ್ನು ಮಾಡುತ್ತಿದ್ದರು, ಖಾವಿದಾರರಿಗೆ  “ನೀವು ಖಾವಿ ಲಾಂಛನದಾರಿಗಳು ನೀವು ಎಷ್ಟು ವೀರಶೈವ ಶಾಸ್ರ್ತಾಭ್ಯಾಸವನ್ನು ಮಾಡಿದ್ದೀರಿ? ನೀವು ಎಷ್ಟು ವೇದಾಂತವನ್ನು ತಿಳಿದಿದ್ದೀರಿ? ಶಿವಾನುಭವವನ್ನು ಎಷ್ಟು ಓದಿದ್ದೀರಿ?” ಎಂದು ಕೇಳಿದಾಗ ಅವರುಗಳು ಉತ್ತಮವಾದ ಉತ್ತರವನ್ನು ಕೊಟ್ಟರೆ ಸರಿ ಇಲ್ಲ ಅಂದರೆ “ಏಕೆ ನೀವು ಜನರನ್ನು ಮೋಸಗೊಳಿಸುವಿರಿ? ಭಕ್ತರ ವಿತ್ತಾಪಹರಣವನ್ನು ಏಕೆ ಮಾಡುವಿರಿ? ಭಕ್ತರೇನೊ ಗುರುಗಳು ಎಂದು ಭಕ್ತಿಯಿಂದ ಬರುವರು ಅವರಿಗೆ ಏಕೆ ಮೋಸವನ್ನು ಮಾಡುವಿರಿ?” ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರು ಹಾದಿಯಲ್ಲಿ ತಪ್ಪಿದಾಗ ತಿದ್ದಿ ಅವರನ್ನು ಚೆನ್ನವೀರೇಶನ ಸೇವೆಯಲ್ಲಿರಿಸಿ ಅವರಿಗೆ ವೀರಶೈವ ಸಿದ್ದಾಂತವನ್ನು, ಶಿವಾನುಭವ, ಷಟಸ್ಥಲ ಸಿದ್ಧಾಂತವನ್ನು ತಿಳಿಸಿ ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪ್ರಬುದ್ಧರಾದಾಗ ಅವರುಗಳಿಗೆ ನಮಸ್ಕರಿಸುವರು, ಹೀಗೆ ಬಸವಲಿಂಗರು ಅಗ್ರಗಣ್ಯರಾಗಿ ಹೆಸರುವಾಸಿ ಆಗುವರು.

ಆದರಿಂದ ಆ ಪ್ರದೇಶವು ವೀರಶೈವರ ಪ್ರಮುಖ ಸ್ಥಾನದಲ್ಲಿ ಒಂದಾಗಿ ಅನೇಕ ಗ್ರಾಮಗಳಲ್ಲಿ ವೀರಶೈವತತ್ವವು ಅಚ್ಚಳಿಯದೆ ಉಳಿದಿದೆ.

ಒಮ್ಮೆ ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ತಮ್ಮ ಮಠಕ್ಕೆ ಯೋಗ್ಯ ಮರಿಯನ್ನು  ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಶ್ರೀ ಮೈಲಾರದ ಬಸವಲಿಂಗ ಶರಣರು ಒಬ್ಬ ದೇವರಿಗೆ ವಿರೋಧ ಮಾಡುವರು ಈ ಮರಿದೇವರು ಮುಕ್ಕಾಗಿದ್ದಾರೆ ಇವರಿಗೆ ಸ್ವಾಮಿಯಾಗಲು ಅರ್ಹರಲ್ಲ ಎಂದು ಕ್ಯಾತೆಮಾಡುವರು, (ಒಮ್ಮೆ ಗುರುಗಳು ಹಾಗೂ ಶಿಷ್ಯರು ದೇಶ ಸಂಚಾರಕ್ಕೆ ಕೈಗೊಂಡಿದ್ದರು ಎಲ್ಲಿಯೋ ಇದ್ದ ನರಿಯು ಬಂದು ಒಬ್ಬ ಮರಿದೇವರ ಕಾಲಿಗೆ ಬಾಯಿ ಹಾಕಿರುತ್ತೆ ಆ ನೋವಿನಿಂದ ಆ ದೇವರು ಚೀರುವರು ಆಗ ಅಲ್ಲಿಯೇ ಇದ್ದ ಗುರುಗಳು “ಅದು ನಮ್ಮ ವಸ್ತು ಬಿಡು”ಎಂದ ಕೂಡಲೇ ಆ ನರಿ ಬಿಟ್ಟು ಹೋಗುತ್ತೆ ಅವರನ್ನೇ ಶ್ರೀ ಚೆನ್ನವೀರ ಶಿವಯೋಗಿಗಳು ಮಠಕ್ಕೆ ಉತ್ತರಾಧಿಕಾರಗಳಾಗಿ ನೇಮಿಸುತ್ತಿದ್ದರು). ಆಗ ಗುರುಗಳು ಏನಪ್ಪಾ ಬಸಪ್ಪ ನೀನು ನಿಜವಾದ ತತ್ವವನ್ನು ಬಲ್ಲಿಲ್ಲವೇ  ಶರಣರು ಹೇಳಿರುವ ಮಾತು ನೆನಪಿಲ್ಲವೇಎಂದು –

ಶ್ರೀಗುರು ಕರುಣಿಸಿ, ಅಂಗದ ಮೇಲೆ ಲಿಂಗವ ಧರಿಸಿದ ಕಾರಣ, ಸರ್ವಾಂಗವು ಲಿಂಗವಾಯಿತ್ತು. ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ, ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣ ಸರ್ವಾಂಗಲಿಂಗಿಯಾದನು.

ಸರ್ವಾಂಗ ಲಿಂಗಿಯಾದ ಇವರು ಅರ್ಹರಲ್ಲಾ ಎನ್ನುವೆ ಎಷ್ಟು ಸರಿ ಎಂದು ಕೋಪದಿಂದ “ನೀನು ಬಸಪ್ಪ ಅಲ್ಲಾ ಮುಶಪ್ಪ ಎಂದು ಬೈಯುತ್ತಾರೆ. ಹರ ಮುನಿದರೆ ಗುರು ಕಾಯುವನುಎಂಬ ಉಕ್ತಿಯಂತೆ. ಇಲ್ಲಿ ಗುರುಗಳು ಕೋಪದಿಂದ ಬೈದರು ಕೂಡ ಅವರು ಗುರುತಾಯಿಯಾಗಿ ನಮ್ಮೆಲ್ಲರನ್ನೂ ಸಲಹುವರು, ಮಗನು ತಪ್ಪು ಮಾಡಿದಾಗ ತಾಯಿ ಅವನನ್ನು ಏನೆಲ್ಲಾ ಬೈದರು ಅದೇ ಮಗನು ಹೊರಗೆ ಹೋಗುವಾಗ ಅವನು ಎಡವಿ ಬಿದ್ದು ಅವನ ರಕ್ತ ಕಂಡರೆ ಸಾಕು ಎಂಥಹ ಕಠೋರ ತಾಯಿಯಾದರು ಅವನನ್ನು ಮುದ್ದು ಮಾಡಿ ಅವನ ನೋವು ತನ್ನ ನೋವು ಎಂದು ಪ್ರೀತಿಯನ್ನು ಹಂಚಿಕೊಳ್ಳುವಳು ಅದೇ ರೀತಿ ಇಲ್ಲಿ ಶಿಷ್ಯನನ್ನು ಬೈದರು ಅವನ ತಪ್ಪುಗಳನ್ನು ಮನ್ನಿಸುವವರು ಒಬ್ಬ ಗುರುಗಳು. ಶಿಷ್ಯನಿಂದ ಸಮಾಜದಲ್ಲಿನ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು (ಲಾಭ-ನಷ್ಪ, ನೋವು-ನಲಿವು, ) ವಿಕ್ಷಿಸಿ ತಾನು ಅದರಲ್ಲಿ ಬಾಗಿಯಾಗುವವರು ನಿಜವಾದ ಗುರುಗಳು.

ಪುರಾಣ, ಇತಿಹಾಸದಲ್ಲಿ ಶಿಷ್ಯರುಗಳ ಉದ್ದಾರಕ್ಕೆ ಏನೆಲ್ಲಾ ತ್ಯಾಗವನ್ನು ಗುರುವಾದವನು ಮಾಡಿದ್ದಾನೆ ಎಂಬ ಉದಾಹರಣೆಗಳು ಬಹಳ, ಒಬ್ಬ ಬೇಟೆಯಾಡುವ ಹುಡುಗ ಎಂದು ಭೇಟಿಯಾಗದೇ ಇರುವ ಗುರುವನ್ನು ದೂರದಿಂದಲೇ ಅವನು ತನ್ನ ಶಿಷ್ಯರಿಗೆ ವಿದ್ಯೆಯನ್ನು ಕಲಿಸುವುದನ್ನು ನೋಡಿ ನಾನು ಇದೇ ರೀತಿ ಬಿಲ್ವಿದ್ಯೆಯನ್ನು ಇನ್ನಷ್ಟು ಕಲಿಯಬೇಕೆಂದುಕೊಂಡಿದ್ದನು ಏಕಲವ್ಯ, ಅವನು ದ್ರೋಣಾಚಾರ್ಯರನ್ನೇ ಗುರುಗಳನ್ನಾಗಿ ಸ್ವೀಕಾರ ಮಾಡಿ ಅವರ  ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ತಾನು ಗುರುವಿನ ಮುಂದೆ ವಿದ್ಯೆಯನ್ನು ಕಲಿಯಬೇಕು ಎಂದು ಅದರ ಮೂಲಕವೇ ತಾನು ಬಿಲ್ವಿದ್ಯೆಯನ್ನು, ಶಬ್ದವೇಧಿ ವಿದ್ಯೆಯನ್ನು ಕಲಿತವನು ಏಕಲವ್ಯ, ಅವನು ಬಿಟ್ಟ ಬಿಲ್ಲು ನೀರು ಕುಡಿಯುವ ಶ್ವಾನಕ್ಕೆ ಬೀಳುತ್ತೆ ಅದನ್ನು ನೋಡಿದ ದ್ರೋಣಾಚಾರ್ಯರ ಶಿಷ್ಯರು (ರಾಜಕುಮಾರರು) ಗುರುಗಳ ಬಳಿ ಬಂದು ನಡೆದ ಘಟನೆ ತಿಳಿಸಿ ಬಿಲ್ಲನ್ನು ಬಿಟ್ಟವನು ಯಾರು ಎಂದು ಕಂಡುಹಿಡಿದು, ಅವರೆಲ್ಲರೂ ಯಾರು ನೀನು? ನೀನು ಈ ವಿದ್ಯೆಯನ್ನು ಯಾರಿಂದ ಕಲಿತೇ? ನಿನ್ನ ವಿದ್ಯಾ ಗುರುಗಳು ಯಾರು? ‘ ಎಂದು ಕೇಳಿದಾಗ, ಏಕಲವ್ಯನು ತಾನು ದ್ರೋಣಾಚಾರ್ಯರಿಂದ ಈ ವಿದ್ಯೆಯನ್ನು ಕಲಿತೆ, ದ್ರೋಣಾಚಾರ್ಯರೇ ನನ್ನ ಗುರುಗಳು ಎಂದು ವಾದಮಾಡುವನು, ತಾನು ಯಾವ ವಿದ್ಯೆಯನ್ನು ಇವನಿಗೆ ಹೇಳಿಲ್ಲಾ,ಇವನಾರೂ ಎಂಬುದೇ ಗೊತ್ತಿರಲಿಲ್ಲ, ಆದರೂ ನನ್ನ ಹೆಸರನ್ನು ಹೇಳುತ್ತಿದ್ದಾನೆ, ಎಂದು ವಿಚಾರಿಸಿ, ಭವಿಷ್ಯದ ದೃಷ್ಟಿಯಿಂದ ಧರ್ಮದ ಉಳಿವಿಗಾಗಿ, ದ್ರೋಣಾಚಾರ್ಯರು ತನ್ನ ಉತ್ತಮ ಶಿಷ್ಯನಾದ ಅರ್ಜುನನಿಗೆ ಏಕಲವ್ಯನಿಂದ ಭವಿಷ್ಯದಲ್ಲಿ ಕಾಣುವ ತೊಂದರೆ ಆಗಬಾರದು ಎಂದು. ಅವನಿಂದ ಗುರುಕಾಣಿಕೆಯನ್ನು ಅವನ ಬಲಗೈಯ ಹೆಬ್ಬೆರಳು ಕೇಳುವರು, ಇಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಕೇಳಿದ ಕಾಣಿಕೆ ಭೇಧ ಭಾವದ,ಸ್ವಾರ್ಥ ಉದ್ದೇಶಗಳ ಸಂಕೇತವಾದರೆ, ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ಬಸವಲಿಂಗರ ಮೇಲಿನ ಸಿಟ್ಟು ಗುರುತಾಯಿಯಂತೆ, ಅವನಿಂದ ಧರ್ಮಕ್ಕೆ ಲಾಭದಿಂದಲೇ ಶಿಕ್ಷಕೊಟ್ಟಿದ್ದು ಅದರಿಂದಲೇ ಬಸವಲಿಂಗ ಶರಣರು ಗುರುಕರುಣ ತ್ರಿವಿಧಿಯನ್ನು ರಚಿಸಿದ್ದು, ನಮ್ಮಿಂದ ಏನಾದರೂ ಕೆಲಸವಾಗಬೇಕಾದರೆ ಅದಕ್ಕೆ ಕಾರ್ಯ,ಕಾರಣ, ಸದ್ಭಾವ ಇದ್ದೆ ಇರುತ್ತದೆ, ಬಸವಲಿಂಗರ ಕೃತಿಗಳು ಸದ್ಭಾವದಿಂದಲೇ ರಚನೆಯಾದದ್ದು.

ಗುರುಗಳ ಆಜ್ಞೆಯಂತೆ ದಿನಗಳೆದಂತೆ ದಿನಗಳೆದಂತೆ ಬಸವಲಿಂಗ ಮುಖವು ಮುಶ್ಯದ ಹಾಗೆ (ಆ ಭಾಗದಲ್ಲಿ ಕಪ್ಪು ಬಣ್ಣದ ಮುಂಭಾಗಕ್ಕೆ ಮುಶ್ಯ ಎಂದು ಕರೆಯುವರು) ಕಪ್ಪು ಮುಖದ ಮಂಗನ ಹಾಗೆ ಬದಲಾಗುತ್ತೆ ಹೋಗುತ್ತೆ ಅದರ ತಪ್ಪಿಗಾಗಿ ವೀರಶೈವ ಧರ್ಮದ ಸಂಪೂರ್ಣ ತತ್ವವನ್ನು ಹೇಳುತ್ತಾ ಶಿಕ್ಷೆಯ ನಿವಾರಣೆಗೆ, ಗುರುವಿನ ಕರುಣೆಯನ್ನು ಪಡೆಯುವ ಸಲುವಾಗಿ ರಚಿಸಿದ್ದೆ – ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ). ಬಸವಲಿಂಗ ಶರಣರು ತಮ್ಮ ಅಮೋಘವಾದ ಜ್ಞಾನಬಂಡಾರದಿಂದ, ವಿದ್ವತ್ತು, ತೌಲನಿಕ, ಅನುಭವ ಸಂಪತ್ತಿನಿಂದ ಜ್ಞಾನದ ಹನಿಯನ್ನು ಉದಯಿಸಿ, ಏಕ ಕಾಲಕ್ಕೆ 333 ತ್ರಿಪದಿಯನ್ನು ರಚಿಸಿದರು. ಇದರಲ್ಲಿ ಸಮಗ್ರ ವೀರಶೈವ ಲಿಂಗಾಯತ ದಾರ್ಶನಿಕ ಸಿದ್ಧಾಂತವು ಒಳಗೊಂಡಿದೆ, ಅಷ್ಟಾವರಣ ಪಂಚಾಚಾರ ಷಟಸ್ಥಲ ಪ್ರಾಮುಖ್ಯತೆ ಇದರಲ್ಲಿ ಅಡಕವಾಗಿದೆ, ಒಂದಕ್ಕೊಂದು ಆಚರಣೆಗೆ ಹೇಗೆ ಸಮನ್ವಯಗೊಳ್ಳುತ್ತವೆ ಎಂಬುದನ್ನು ಈ ಎರಡು ಸಾಲಿನಲ್ಲಿಯೇ ಬಿತ್ತಿದ್ದಾರೆ, ಈ ತ್ರಿಪದಿಯಲ್ಲಿ ಪ್ರಯೋಗಿಸಲ್ಪಟ್ಟಾ ಯಾವ ಶಬ್ದವೂ ಅನಾವಶ್ಯಕವಾಗಿ ಪ್ರಯೋಗಿಸಿಲ್ಲಾ ಎಲ್ಲವೂ ಅರ್ಥಪೂರ್ಣವಾಗಿ ತನ್ನ ಸಿದ್ಧಾಂತವನ್ನು ತಿಳಿಸುತ್ತವೆ. ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಅದರಿಂದಲೇ  ಹೆಮ್ಮರವಾಗಿ ಬೆಳೆಯುವ ಹಾಗೆ ಈ ಚಿಕ್ಕ ತ್ರಿವಿಧಿಯನ್ನು ಅಖಂಡ ಸಿದ್ಧಾಂತವೇ ಅಡಕವಾಗಿದೆ.

ಗುರು ಕರುಣ ತ್ರಿವಿಧಿಯಲ್ಲಿ ಮೂರು ಮೂರು ಸಾಲಿನ 333 ತ್ರಿಪದಿಯ ಕೊನೆಯಲ್ಲಿ ಶ್ರೀ ಗುರುವೇ ಕೃಪೆಯಾಗು‘, ಎಂದು ಮುಕ್ತಾಯಗೊಳ್ಳುವುದರಿಂದ ಇದು ಕೇವಲ ಶ್ರೀಗುರು ಪ್ರಾರ್ಥನಾ ತ್ರಿಪಧಿಯಂದು ತಿಳಿಯುವರು ಅದರಲ್ಲಿ ವೀರಶೈವ ತತ್ವಸಿದ್ದಾಂತವನ್ನೊಳಗೊಂಡಿದೆ, ಮೇಲು ನೋಟಕ್ಕೆ ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ) ಅಷ್ಟಾವರಣ ಪ್ರತಿಪಾದಿಸುವ ಕೃತಿ ಎಂದು ಕಂಡರು ಒಳಹೊಕ್ಕು ನೋಡಿದಾಗ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ಆಚರಣೆಗೆ ಪೂರಕವಾಗಿ ಸಮನ್ವಯಗೊಂಡಿರುವ ಮಾರ್ಗ, ಅಂಗ, ಪ್ರಾಣ, ಆತ್ಮಗಳಾದ ಅಷ್ಟಾವರಣ ಪಂಚಾಚಾರ ಷಟಸ್ಥಲಗಳು ಬಿಟ್ಟಿರಲಾರದಷ್ಟು ಜೀವರಸ ಒಂದೇ ಅದೇ ಲಿಂಗಾಂಗ ಸಾಮರಸ್ಯವೀರಶೈವರ ಕೊನೆಯಗುರಿಯೇ ಲಿಂಗಾಂಗ ಸಾಮರಸ್ಯವನ್ನು ಪಡೆಯುವುದು, ಅಂಗನು ಲಿಂಗದಲ್ಲಿ ಬೆರೆತು ಲಿಂಗಾಂಗ ಸಾಮರಸ್ಯ ಪಡೆಯುವನು, ಇದೆ ಕೊನೆಯ ಅನುಭವ ಅಥವಾ ಈ ಅನುಭವವೇ ಕೊನೆಯದುಒಮ್ಮೆ ಉಂಟಾದ ಪರಶಿವನ ಅನುಭವವು ಕೊನೆಯ ತನಕ ಇಟ್ಟುಕೊಂಡು ಜೀವಿಸುವವನೇ ಶಿವಾನುಭವಿ ಎನ್ನಲಾಗುತ್ತದೆ, ವೀರಶೈವನ ಚರಮಗುರಿಯಾದ ಶಿವಾನುಭಾವ ಹಾಗೂ ಲಿಂಗಾಂಗ ಸಾಮರಸ್ಯವನ್ನು ಪಡೆಯಲು ಅಷ್ಟಾವರಣ ಪಂಚಾಚಾರದೊಂದಿಗೆ ಷಟಸ್ಥಲಾಚರಣೆಯೇ ಸರಿಯಾದ ಮಾರ್ಗವೆಂದು ಬಸವಲಿಂಗರ (ವೀರಶೈವರ) ನಂಬಿಗೆ ಇದನ್ನೇ ಬಸವಲಿಂಗ ಶರಣರು ತಮ್ಮ ಕೃತಿಗಳಲ್ಲಿ ಬಹಳ ವಿವರಗಳನ್ನು ಕೊಟ್ಟು  ವಿಸ್ತಾರವಾಗಿ ವಿಧವಿಧವಾಗಿ ಪ್ರತಿಪಾಸಿದ್ದಾರೆ. ಇದನ್ನೇ ತ್ರಿವಿಧಿಗಳು ಒಳಗೊಂಡಿರಬೇಕು ಒಂದನ್ನು ಬಿಟ್ಟು ಇನ್ನೊಂದು ಇದ್ದರೆ ಅದು ಚರಮಗುರಿಗೆ ಹೊರಗಾಗುತ್ತೇ, ಮೂರು ಕೂಡಿಯೇ ನಡೆಯಬೇಕು, ಯಾವಾಗಲೂ ಕೂಡಿಯೇ ಇರಬೇಕು ಅದರಲ್ಲಿ ದ್ವೈತದೃಷ್ಟಿಇರಬಾರದು ಶಿವಾದ್ವೈತದೃಷ್ಟಿರಬೇಕು, ಖಂಡದೃಷ್ಟಿಅಲ್ಲಾ ಅಖಂಡ ದೃಷ್ಟಿ, ಪರಿಪೂರ್ಣ ದೃಷ್ಟಿ. ಈ ಶಿವಾದ್ವೈತ ದೃಷ್ಟಿಗಳು ವೀರಶೈವ ಸಿದ್ಧಾಂತ ಸಂಸ್ಕೃತಿಯ ಪ್ರಧಾನಲಕ್ಷಣವೆಂದು ಅರಿತು ಶ್ರೀ ಮೈಲಾರ ಬಸವಲಿಂಗ ಶರಣರು ಅಷ್ಟಾವರಣಗಳಲ್ಲಿ ಪ್ರಥಮದಲ್ಲಿ ಬರುವ ಗುರುವನ್ನು ಶ್ರೀ ಗುರುವೇ ಕೃಪೆಯಾಗು‘ , ‘ಶ್ರೀ ಗುರುವೇ ಕೃಪೆಯಾಗುಎಂದು ಪ್ರಾರ್ಥಿಸುತ್ತಾ, ಷಡಚಕ್ರಗಳ ವಿವರಣೆಎಲ್ಲಾ ಯೋಗಗಳಲ್ಲಿ ಶಿವಯೋಗವೇ ಮಿಗಿಲು, ಅಷ್ಟಾವರಣಗಳಾದ ಗುರು, ಲಿಂಗ, ಜಂಗಮರ ಲಕ್ಷಣವನ್ನು, ಮಹಿಮೆಯನ್ನು, ವಿಭೂತಿ ರುದ್ರಾಕ್ಷಿಗಳನ್ನು ಯಾವ ರೀತಿ ಧರಿಸಬೇಕು, ಎಲ್ಲೆಲ್ಲಿ ಧರಿಸಬೇಕು, ಮಂತ್ರದ ವಿಶೇಷತೆ ಅದರಲ್ಲಿ ಯಾವ ಮಂತ್ರ ವೀರಶೈವರು  ಜಪಿಸಬೇಕು, ಹೇಗೆ ಇರಬೇಕು ಎಂಬುದನ್ನುಪಾದೋದಕ, ಪ್ರಸಾದಗಳಲ್ಲಿನ ವಿಧಗಳು, ಅದರ ಮಹತ್ವವನ್ನು, ಅಣಿಮಾಧಿಸಿದ್ದಿಗಳ  ವಿಶೇಷವಾಗಿ ವಿವರಣೆಯನ್ನು ನೀಡುತ್ತಾ ವೀರಶೈವ ಸಿದ್ದಾಂತವನ್ನೆ ಅತೀ ಕಡಿಮೆ ಅಕ್ಷರಗಳನ್ನು ವಿವರಿಸಿದ್ದಾರೆ,

ನಿರಾಭಾರಿ ಗುರುವನ್ನು ಸ್ತುತಿಗೈದು ಸಾಬಾರಿ ಗುರುವಿನ ಸ್ವರೂಪ, ಮಹತ್ವ, ಅವನ ಅವಶ್ಯಕತೆ ಏನಿದೆ ಎಂದು ತಿಳಿಸಿದ್ದಾರೆ, ಗುರು ಕೃಪೆಯು ಆಗಬೇಕಾದರೆ ಗುರು ದೀಕ್ಷೆ ಪಡೆದು ಲೌಕಿಕ ತಂದೆ ತಾಯಿಯವರಾದ, ಬಂದು ಬಳಗವನ್ನು ತ್ಯಜಿಸಿ ಎಲ್ಲವನು ಗುರುವಿನಲ್ಲಿಯೇ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ, ಸದ್ಗುರುವೇ ಸರ್ವಸ್ವ ಎಂದು ಅವನನ್ನೇ ಆರಾದಿಸಿದಾಗ ಅವನು ಕೃಪೆಯು ಆಗುತ್ತದೆ ಎಂದು ತಿಳಿಸಿದ್ದಾರೆ. ಶಿಷ್ಯನ ಲಕ್ಷಣ ಹೇಗೆ ಗುರುವಿನಲ್ಲಿ ವರ್ತಿಸಬೇಕು, ಗುರುವಾದವನ ಲಕ್ಷಣ ಅವನ ಸ್ವರೂಪ ಗುರು ಶಿಷ್ಯರ ಸಂಬಂಧವನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ, ಈ ಮಾನವ ಜೀವಿಯೂ ಹುಟ್ಟಿ ಎಡರು ಕಂಟಕಗಳಿಂದ ಸುಖಾಸುಮ್ಮನೆ ವ್ಯರ್ಥವಾಗಿ ಹೋಗುವುದನ್ನು, ಆಸೆಯಿಂದ ಮಾಯೆ ಬಂದು ಮಾಯೆಯ ಉಪಟಳಕ್ಕೆ ಈ ಶರೀರ ಹೋಗುವುದನ್ನು, ಪಂಚಭೂತಗಳ ಭಯವನ್ನು ಪಂಚಿಕರಣದಿಂದಲೇ ಶರೀರ ಆದದ್ದು, ಪಂಚಭೂತಮಯವಾದ ಶರೀರದ ಇಂದ್ರಿಯಗಳನ್ನು, ದೇಹವಿಕಾರದ ಅರಿವನ್ನು ಮಾರ್ಮಿಕವಾಗಿ ನುಡಿದಿದ್ದಾರೆ, ಅಷ್ಟಮಧಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವುದು ಗಾಳಿಗೆ ಇಕ್ಕಿದ ಸೋಡರು, ಜ್ಞಾನೇಂದ್ರಿಯಗಳ  ಪರಿಚಯವನ್ನು ಮಾಡುವಾಗ ಕೆಲವೊಂದು ತೀರ್ಥಕ್ಷೇತ್ರ ದರ್ಶನವನ್ನು ಮಾಡಿಸುವುದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು, ಅಂತಃಕರಣ ಚತುಷ್ಟಯಗುಣತ್ರಯವನ್ನು ನೀಡಿದ್ದಾರೆ, ಸಂಸಾರ ಬಂಧನದಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ, ಸಂಸಾರಹೇಯ ಸ್ಥಲದ ತ್ರಿಪದಿಯನ್ನುವೀರಶೈವ ಸಿದ್ಧಾಂತ ತಿಳಿಸುವ ತ್ರಿಪದಿಗಳನ್ನು ಅದೆಷ್ಟೋ ಒಳಹೊಕ್ಕು ನೋಡಿದರು ಸಮುದ್ರದ ಆಳದಂತೆ ಕಾಣುತ್ತದೆ,

ಶ್ರೀ ಗುರುವೇ ಸತ್ಕ್ರಿಯೆಯಾಗರವೇ ಸುಜ್ಞಾನ

ಸಾಗರವೇ ಎನ್ನ ಮತಿಗೆ ಮಂಗಳವನಿತ್ತು

ರಾಗದಿಂ ಬೇಗ ಕೃಪೆಯಾಗು

       ಎಂದು ಗುರುಕೃಪೆಯನ್ನು ಬೇಡುತ್ತಾ .

ನೀನೊಲಿದಡೆ ಕೊರಡು ಕೊನರುವುದಯ್ಯಾ, ನೀನೊಲಿದಡೆ ಬರಡು ಹಯನಹುದಯ್ಯಾ, ನೀನೊಲಿದಡೆ ವಿಷವೆಲ್ಲ ಅಮತವಹುದಯ್ಯಾ, ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ.

       ದೇವನೊಲಿದರೆ  ಕಣ್ಣು ಇರಲಾರದವನಿಗೆ ಕಣ್ಣು ಬರುವಹಾಗೆ, ಕಿವಿಕೇಳಲಾರದವನಿಗೆ ಕಿವಿ ಕೇಳುವಹಾಗೆ, ವಿಷವೆಲ್ಲಾ ಅಮೃತ ಆಗುವಹಾಗೆ, ಆಸಾಧ್ಯವು ಸಾಧ್ಯವಾಗುವವು ಎನ್ನುವ ಬಸವವಾಣಿಯ ತಾತ್ಪರ್ಯವನ್ನೆ ಬಸವಲಿಂಗ ಶರಣರು ಚಿತ್ರಿಸಿದ್ದಾರೆ –

ಕೊರಡು ಕೊನರುವುದು ಬಲುಬರಡು ಹಯನಾಗುವುದು

ಕುರುಡಂಗೆ ಕಣ್ಣು ಬಹುದು ನಿನ್ನೊಲುಮೆ

ಎಂದರಿದೆನೈ ಗುರುವೇ ಕೃಪೆಯಾಗು.

ಮಾನಸವು ವಚನ ಸಂಧಾನವಾಗಿರ್ಪ ಮ

ಹಾನುಭಾವದ ಸುಜ್ಞಾನ ಮಂತ್ರದ ನಿಜವೇ

ನೀನೆಂದ  ಗುರುವೇ ಕೃಪೆಯಾಗು,

ಗುರು ಲಿಂಗ ಚರತೀರ್ಥ ಚಿರಶೇಷ ಭಸಿತಾಕ್ಷಿ

ವರಮಣಿಮಂತ್ರಾಷ್ಟವರಣ ನಿನ್ನಂಗವೆಂ

ದೊರದ ಶ್ರೀ ಗುರುವೇ ಕೃಪೆಯಾಗು

ಎನ್ನುತ್ತಾ

ಎಲ್ಲವನ್ನು ಒಳಗೊಂಡಿರುವ ಮದ್ಗುರುವೆ,

ನೀನು ಅಷ್ಟಾವರಣವೇ ಅಂಗವೆಂದು

ಹೇಳಿಕೊಟ್ಟ ಗುರುವೇ ಕೃಪೆಯಾಗು.

ಬಸವ ಬಾರೆಂದನೆಗೆ ಅಸಮಲಿಂಗವೆ ನೀನೆಂ

ದುಸುರಿದಬಳಿಕ ಬಸವಲಿಂಗನೆ ಎಂದು

ಪೆಸರಿಟ್ಟಾ ಗುರುವೇ ಕೃಪೆಯಾಗು

ಬಸವಪ್ಪ ಇದ್ದವಾ ನಾನು ನಿನ್ನ ಕೃಪಾದೃಷ್ಠಿಯಿಂದ ನೀನು ನನ್ನನ್ನು ಬಸವಲಿಂಗವೆಂದು ಹೆಸರನ್ನು ಇಟ್ಟಾ ಗುರುವೇ ಕೃಪೆಮಾಡು ಎಂದು ಬಿನ್ನವಿಸಿಕೊಂಡು,

ವೀರಶೈವರ ಪಂಚಾಚಾರ ಷಟಸ್ಥಲ ಮಾರ್ಗೋ

ದ್ದಾರ ನಿಜ‌ಸುಖದ ಸಾರ ನಡೆ ನುಡಿ ಚೆನ್ನ

ವೀರ ಮದ್ಗುರುವೆ ಕೃಪೆಯಾಗು.

ಎನ್ನುತ್ತಾ ಸಮಾಪ್ತಿಮಾಡುವರು.

ಬಾಹ್ಯಾರಚನೆಯ ಅಷ್ಟಾವರಣಗಿಂತ ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವವನಿಗೆ  ಶೂನ್ಯಸಂಪಾದನೆ ಆಗುವುದು ಎಂದು ಸಮರೋಪಗೊಳಿಸುವರು, ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಕೃಪೆಯಿಂದ ಶರಣನಾಗಿ ಗುರುಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೊಳಿಸುವುದರ ಮೂಲಕ ಗುರು ಕರುಣ ತ್ರಿವಿಧಿಯಲ್ಲಿ ಕ್ರಮಬದ್ಧವಾದ ವೀರಶೈವ ಸಿದ್ಧಾಂತ ತತ್ವವನ್ನು  ಪ್ರತಿಪಾದಿಸಿದ್ದಾರೆ, ಶೂನ್ಯ ಸಂಪಾದನೆಯನ್ನು ಮಾಡಿಕೊಳ್ಳುವ ಸಾಧಕರಿಗೆ ಸ್ವಾನುಭಾವದಿಂದ ನಡೆಯುವವನಿಗೆ ಅತ್ಯುತ್ತಮ ಸಾಧನವಾಗಬಹುದಾಗಿದೆ.

ಶರಣನು ಗುರು ಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತ ಶಾಸ್ತ್ರವನ್ನು ಹೊತ್ತು ಸರಳವಾಗಿ ಪರಿಚಯಿಸುವ ಒಂದು ಗ್ರಂಥವಾಗಿದೆ, ತ್ರಿಪದಿಗಳನ್ನು ಬರೆದು ಸರ್ವಜ್ಞನು ತಾನು ವಚನಗಳನ್ನು ರಚಿಸಿ ಸಮಾಜದ ಎಲ್ಲಾ ಅಂಕುಡೊಂಕು, ತತ್ವ, ನೀತಿ ಧರ್ಮವನ್ನು ಹೇಳಿದ ಹಾಗೆ  ಶರಣರು ರಚಿಸಿದ ಮೂರು ಮೂರು ಸಾಲಿನ ಪದಗಳಿಂದ ಜೋಡಿಸಿ ಧರ್ಮತತ್ವವನ್ನು ನಡೆನುಡಿಯನ್ನು‌ ಏಕಿಕರಿಸಿಕೊಂಡು ಅವರು ತ್ರಿಪದಿಗಳನ್ನು ರಚಿಸಿದ್ದಾರೆ, ತ್ರಿವಿಧ ಎಂದರೆ ಮೂರು ವಿಧ ಎಂದರ್ಥ, ಇದರಲ್ಲಿ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ವಿವರಣೆಯೊಂದಿಗೆ ಹೇಳಲ್ಪಟ್ಟಿದೆ, ಸಾಹಿತ್ಯದಲ್ಲಿ ತ್ರಿಪದಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದವುಗಳಾಗಿವೆ, 12ನೇಯ ಶತಮಾನದಲ್ಲಿ ಕೆಲವು ಶರಣ ಶರಣಿಯರು ತ್ರಿಪದಿಯಲ್ಲಿ ತಮ್ಮ ವಿಚಾರ ತತ್ವವನ್ನು ಹೇಳಿದ್ದಾರೆ, ಜಾನಪದ ಸಾಹಿತ್ಯವು, ಸರ್ವಜ್ಞನ ವಚನಗಳು ಹೀಗೆ ಹಲವು ಕವಿಗಳು ತ್ರಿಪದಿಯನ್ನು ರಚಿಸಿದ್ದಾರೆ ಮೈಲಾರದ ಬಸವಲಿಂಗ ಶರಣರು ಗುರು ಕರುಣ ತ್ರಿವಿದಿಯನ್ನು ರಚಿಸಿ ತತ್ವ ವಿಚಾರವನ್ನು ಮಂಡಿಸಿಕೊಟ್ಟು ಗುರುವಿನ ತಕ್ಕ ಶಿಷ್ಯನಾಗಿ ಗುರು ಸ್ತೋತ್ರ, ಗುರು ಮಹತ್ವವನ್ನು ತಿಳಿಸಿ ವೀರಶೈವ ಧರ್ಮದ ತತ್ವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ತಿಳಿಸಿ, ಪಾರಾಯಣ ರೂಪದಲ್ಲಿ ಕೃತಿಯನ್ನು ರಚಿಸಿದ್ದಾರೆ.