ನಾನು ಕಂಡ ಕುಮಾರ ಯೋಗಿ

ಜ.ಚ.ನಿ

೧೯೨೪ ಇದ್ದಿರಬೇಕು. ನವಿಲುಗುಂದ ತಾಲೂಕು ಅಣ್ಣಿಗೆರೆಯ  ತೋಂಟದಾರ್ಯರ ಶಾಖಾಮಠ. ಒಂದು ದಿನ ಮುಂಜಾವು. ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು. ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತಮಾಡಿತ್ತು. ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು. ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು. ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು. ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ. ಅದು ಯೋಗ ಠೀವಿ, ಆರ್ಜವ ದೇಹ ಅಜಾನುಬಾಹು, ವಿಶಾಲವಾದ ಹಣೆ, ಎವೆಯಿಕ್ಕದ ಕಣ್ಣು, ಜಗತ್ತನ್ನೇ ಜರಿದಿದ್ದರು. ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು. ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು. ಯೋಗ ಬಲ್ಲಿದರಾಗಿದ್ದರೂ ಯೋಗದ ಏಳ್ಗೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು. ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿ ಆಸೇಚನವಾಗಿತ್ತು. ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು. ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ

ಸತ್ಕರ್ಮ-ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು. ನಿಷ್ಕಾಮಿಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ

ಕೌಶಲ್ಯವಿತ್ತು. ವಿರಕ್ತಶಿಖಾಮಣಿಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು. ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ-ಪ್ರಯೋಗಗಳ ಸಂಭ್ರಮ ಸೂರೆಗೊಂಡಿತ್ತು. ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು. ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು. ಬರಿ ದಯೆ-ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು. ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು.  ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ. ಅವರೆ ನಾ ಕಂಡ ಕಾರಣಿಕ ಕುಮಾರ

ಯೋಗಿಗಳು. ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನ್ನು ನೀಡಿ, ಜ್ಞಾನಬೆಳಗನು ಹರಡಿ, ಜಗಚ್ಛಕ್ಷುವಿನಂತೆ ಜಗಜಗಿಸಿದ್ದರು. ಅಂದು ಆ ಬಿಂಬವ ಕಂಡೆ.

ಕಂಡೆನ್ನ ಕಂಗಳು ಧನ್ಯವಾದವು. ಜನ್ಮ ಸಾರ್ಥಕವಾಯಿತು. ಇದಕ್ಕೆ ಮೂಲಕಾರಣರು ಅಡ್ನೂರಿನ ಶ್ರೀಮಂತ ಮಲ್ಲಿಕಾರ್ಜುನಗೌಡರು. ಇವರನ್ನಿಲ್ಲಿ ನೆನೆಯದಿದ್ದರೆ ಲೋಪವಾದೀತು, ಲೌಕಿಕ ವಿರೋಧವಾದೀತು!

ಇಂದು ಅದೇ ಆ ಮಹಾಕಾರಣಿಕ ಕುಮಾರ ಯೋಗಿಯ ಐತಿಹಾಸಿಕ ಭಾವಚಿತ್ರವನ್ನು ಬಲ್ಲಂತೆ ಚಿತ್ರಿಸಿ ಕಾಣುವ ಭಾಗ್ಯವು ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಸತ್ಪ್ರೇರಣೆಯಿಂದ ಮತ್ತೆ ಒದಗಿ ಬಂದಿದೆ; ಒಂದುಗೂಡಿನಿಂತಿದೆ. ಇದಕ್ಕಾಗಿ ಶ್ರೀ ಸದಾಶಿವ ಶಿವಾಚಾರ್ಯರಲ್ಲಿ ಧನ್ಯವಾದಗಳು.

 ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು, ಬೇಸರ ಬಾರದು.

ನಿಮ್ಮ ನೋಟವನಂತ ಸುಖ

 ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ

 ಕುಮಾರ ಯೋಗೀಶ್ವರ ನಿಮ್ಮ ನೋಡಿ

 ನೋಡಿ ಮನದಲ್ಲಿ

 ರತಿಹುಟ್ಟಿ ನಿಮಿರ್ದವೆನ್ನ ಕಂಗಳು

 ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ, ನಟ್ಟ ನೋಟದಿಂದ ನೋಡಿ, ನಲಿಯಲು ಮುಂದುವರಿಯಲಾಗಿದೆ, ಉಲಿಯಲು ಮೊದಲು ಮಾಡಲಾಗಿದೆ.

Related Posts