ಷಟ್‌ಸ್ಥಲ : ಪರಿಕಲ್ಪನೆ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಪ್ರಾಸ್ತಾವಿಕ :

ಷಟ್‌ಸ್ಥಲ ಅಧ್ಯಯನಶೀಲವಲ್ಲ. ಅದು ಅನುಷ್ಠೇಯವಾದುದು. ಆಚಾರ ವಿಚಾರಗಳ ಸಮನ್ವಯದಲ್ಲಿ ಆಚರಣೆಗೆ ಅನುಕೂಲವಾದುದು. ಷಟ್‌ಸ್ಥಲವು ಸಂಸಾರಿಕ ಜೀವನದಲ್ಲಿ ಭಕ್ತಿ (ಪ್ರೇಮ) ಯನ್ನು, ನಿಶ್ಯಕ್ತ ಜೀವನದಲ್ಲಿ ನಿಜ ಶಕ್ತಿಯನ್ನು, ನಿಷ್ಕ್ರಿಯ ಬದುಕಿನಲ್ಲಿ ಸತ್ಕ್ರಿಯೆಯನ್ನು, ಆಲಸ್ಯದ ಬಾಳಿಗೆ ಸ್ವಾವಲಂಬನೆಯನ್ನು, ಅಜ್ಞತನದ ಬದುಕಿಗೆ ಸುಜ್ಞತೆಯನ್ನು ಅಧ್ಯಾತ್ಮದ ಸಾಧನೆಯಲ್ಲಿ ಸ್ವಾನುಭವವನ್ನು, ಸಾಮರಸ್ಯವನ್ನು ಅನುಗ್ರಹಿಸಬಲ್ಲದು. ಈ ಷಟ್‌ಸ್ಥಲ ಸಾಧನೆಯಿಂದ ದೇಹೇಂದ್ರಿಯಗಳು, ಮನ ಪ್ರಾಣಗಳು, ಭಾವ ಜೀವಗಳು ವಿಕಾಸ ಹೊಂದುತ್ತವೆ. ಮಲಿನತೆಯನ್ನು ಮಾಣಿಸಿ ಮೌಲ್ಯವುಳ್ಳವುಗಳಾಗುತ್ತವೆ. ಆಚಾರ ವಿಚಾರಗಳಿಂದ, ಶ್ರದ್ಧೆ-ನಿಷ್ಠೆ-ಅವಧಾನ-ಅನುಭವ-ಆನಂದ-ಅವಿರಳತೆಯನ್ನು ಪಡೆದು ಘನಮನ ಸಂಪನ್ನತೆಯನ್ನು ಸಂಪಾದಿಸಿಕೊಳ್ಳಲು ಸಾಧ್ಯ. ಇದು ಜೀವನ ಸಿದ್ಧಾಂತವೂ ಅಹುದು. ವೀರಶೈವ ಧರ್ಮದ ಸಾಧನ ಪಥವೂ ಅಹುದು.

ವೀರಶೈವ ಧರ್ಮವು ವಿಶಿಷ್ಟವಾದುದಲ್ಲದೆ, ಅನಾದಿ ಸಂಸಿದ್ಧವಾದುದು. ಜಾಗತಿಕ ಧರ್ಮಗಳಲ್ಲಿ ವಿಶ್ವಮಾನ್ಯ ವೈಚಾರಿಕ ಮೌಲ್ಯಗಳನ್ನು ಹೊಂದಿದೆ. ಜಾಗತಿಕ ಬಹುತೇಕ ಧರ್ಮಗಳು ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಟ್ಟಿಗೆ ಪ್ರಯತ್ನಿಸಿದರೆ : ವೀರಶೈವವು ನಿತ್ಯದಲ್ಲಿ ಪರಮಾತ್ಮ (ಲಿಂಗ) ನೊಡನೆ ಸಾಲೋಕ್ಯ- ಸಾಮೀಪ್ಯ-ಸಾರೂಪ್ಯ-ಸಾಯುಜ್ಯಗಳೆಂಬ ಚತುರ್ವಿಧ ಮುಕ್ತಿಗಳನ್ನು ಅನುಭವಿಸುವ ಮಹಾನ್ ಧರ್ಮ; ಕೇವಲ ಅನುಭವಿಸುವದಲ್ಲ, ಅನುಭವದಲ್ಲಿ ಆನಂದ ಪಡೆದು ಸಾಮರಸ್ಯವನ್ನು ಹೊಂದುವ ಸಾಧ್ಯತೆಯುಳ್ಳುದು. ಆನಂದದ ಅನುಭೂತಿಯಲ್ಲಿ ಸಾಮರಸ್ಯದ ಸೊಂಪಿದೆ, ಕಂಪಿದೆ, ಪೆಂಪಿದೆ.

ವೀರಶೈವವು ವ್ಯಾವಹಾರಿಕ-ಸಾಮಾಜಿಕ ವ್ಯವಸ್ಥೆಯೊಂದಿಗೆ ಧಾರ್ಮಿಕ ವ್ಯವಸ್ಥೆಯಲ್ಲಿ ರೂಪಗೊಂಡಿದೆ. ವೀರಶೈವ ಸಿದ್ಧಾಂತದಲ್ಲಿ ಧರ್ಮ-ಸಂಸ್ಕೃತಿ-ಆಚಾರ-ವಿಚಾರ-ಸಾಧನೆ-ಸಿದ್ಧಿಗಳ ಸಮ್ಮಿಲನವಿದೆ. ಯಾವುದನ್ನು ಈ ದರ್ಶನ ಪ್ರತಿಪಾದಿಸುವದೋ ಅದನ್ನು ಆಚರಿಸಲು ಅವಕಾಶವಿದೆ, ಆಚರಿಸಿದಂತೆ ಅಳವಡಿಸಿಕೊಳ್ಳುವ ಯೋಗ್ಯತೆಯಿದೆ. ವೀರಶೈವವು ಪ್ರಾಯೋಗಿಕ ಸಿದ್ಧಾಂತವೆನಿಸಿದೆ. ಇದು ವ್ಯಕ್ತಿನಿಷ್ಠವಲ್ಲ, ಆತ್ಮನಿಷ್ಟವಾದುದು. ತತ್ತ್ವಗಳನ್ನು ಅರಿತು ಆಚರಿಸಿ ತತ್ತ್ವ ರೂಪಿಯಾಗುವ ವೈಶಿಷ್ಟ್ಯ ಇಲ್ಲಿದೆ. ಅಂತೆಯೇ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ಸೂತ್ರವನ್ನು ಪ್ರತಿಪಾದಿಸಿದ್ದಾರೆ.

ನಾಸ್ತಿಕ ದರ್ಶನಗಳಾದ ಜೈನ ಬೌದ್ಧರು ವೇದಾಗಮಗಳನ್ನು ಅಪೌರುಷೇಯವೆಂದು ಅವುಗಳ ಬಗೆಗೆ ಅಶ್ರದ್ಧೆ ಬೆಳಸಿದರಲ್ಲದೆ, ಶೂನ್ಯವಾದವನ್ನು ಪ್ರಾಸ್ತಾಪಿಸಿದ್ದರಿಂದ, ದೈವವನ್ನು ಪರಂಪರೆಯಾಗಿ ನಂಬಿದ ಭಾರತೀಯರಿಗೆ ಈ ಧರ್ಮದಲ್ಲಿ ನಿರಾಸಕ್ತಿ ಬೆಳೆಯಿತು. ನಿರ್ಬಲರಾದರು. ದೈವಭಕ್ತಿ-ಶಕ್ತಿ ಶೂನ್ಯರಾದರು. ಮುಂದೆ ಶಂಕರಾಚಾರ್ಯರು ಬ್ರಹ್ಮಸತ್ಯವನ್ನು ಸ್ಥಾಪಿಸಿ ಆತ್ಮಬಲವನ್ನೇನೋ ತುಂಬಿದರೂ ಜೊತೆಗೆ ಜಗನ್ಯಿಥ್ಯವೆಂದು ಸಂಸಾರದ ಅಸಾರತೆಯನ್ನು ಸಾರಿದರು. ಇದರಿಂದ ಜನರಲ್ಲಿ ಕರ್ತವ್ಯಚ್ಯುತಿ ತಲೆದೋರಿತು. ಆದರೆ ವೀರಶೈವ ಧರ್ಮವು ಶ್ರದ್ಧೆಯನ್ನೇ ಮೂಲವಾಗಿರಿಸಿ, ಸಂಸಾರದ ಅಸಾರತೆಯನ್ನು ಬದಿಗಿರಿಸಿ, ಸ್ವಾವಲಂಬನೆಯ ಮಾರ್ಗವನ್ನು ಕಲಿಸಿ ಲಿಂಗಾಂಗ ಸಾಮರಸ್ಯದ ಉನ್ನತ ಸ್ಥಿತಿಯನ್ನು ಗುಪ್ತವಾಗಿ ಸಾಧಿಸಲು ಕಲಿಸಿತು. ಈ ದಿಶೆಯಲ್ಲಿ ತತ್ವತ್ರಯಗಳು ಮಹತ್ವಪೂರ್ಣವಾಗಿವೆ. ಜೀವನ ಸಿದ್ಧಾಂತವನ್ನು ತಿಳಿಸುವ ಈ ತತ್ವತ್ರಯಗಳು ವಾಸ್ತವಿಕ ಸತ್ಯವನ್ನು ಬೋಧಿಸುವ ಅಧ್ಯಾತ್ಮಿಕ ಸಾಧನಗಳಷ್ಟೇ ಅಲ್ಲ, ನಿರಂತರ ಬಾಳಿ ಬದುಕುವ ಸಹಜ- ಸುಲಭ ಮಾರ್ಗಗಳೂ ಆಗಿವೆ.   

ವಾಸ್ತವಿಕ ಸ್ಥಿತಿಯನ್ನರಿಯದೆ ಅಷ್ಟಾವರಣ ಹಾಗೂ ಪಂಚಾಚಾರಗಳು ವೀರಶೈವ ಸಾಧಕನಿಗೆ ಲಿಂಗಾಂಗ ಸಾಮರಸ್ಯದ ಸಿದ್ಧಿಯಾಗಲು ನೇರವಾಗಿ ಕಾರಣವಾಗದೇ ಪರಂಪರಾ ಕಾರಣಗಳಾಗಿವೆಯೆನ್ನುವುದು ಸರಿಯಲ್ಲ. ಅಷ್ಟಾವರಣ- ಪಂಚಾಚಾರಗಳ ಪರಿಯಿಲ್ಲದೆ ಕೇವಲ ಷಟ್‌ಸ್ಥಲಕ್ಕೆ ಬೆಲೆಯಿಲ್ಲವೆನ ಬೇಕು. ಅಷ್ಟಾವರಣವು ಜೀವನದ ಅವಿಭಾಜ್ಯ ಅಂಗ. ದೇಹ ರಚನೆಗೆ ಅಷ್ಟ ತತ್ವಗಳು ಅವಶ್ಯ ಮತ್ತು ದೇಹ ಪೋಷಣೆಗೂ ಅಷ್ಟ ತತ್ವಗಳು ನಿತ್ಯಬೇಕು. ನಮ್ಮವರು ಈ ಬ್ರಹ್ಮಾಂಡಗತ ತತ್ವಗಳಿಗೆ ಸಂಸ್ಕಾರ ನೀಡಿದ್ದೆ ಅಷ್ಟಾವರಣದ ಪರಿಕಲ್ಪನೆಯಾದರೆ, ಜೀವಾತ್ಮನಿಗೆ ಪಂಚಪ್ರಾಣಗಳೂ ಮುಖ್ಯ. ಹಾಗೆ ವೀರಶೈವನಿಗೆ ಪಂಚಾಚಾರಗಳು ಪ್ರಾಣದಂತೆ ಮುಖ್ಯ ಗುರಿಗಳಾಗಿವೆ, ಧ್ಯೇಯವೂ ಅಹುದೆನ್ನುವುದು ಸತ್ಯ. ಶಿವಪೂಜೆಗೆ ಕುಳಿತು ವಾಮಕರದಲ್ಲಿ ಲಿಂಗವನ್ನು ಪೂಜಿಸುವ ಸಾಧಕ ಸದ್ಭಕ್ತನ ಸ್ವರೂಪವೇ ವಾಮಕರಪೀಠದಲ್ಲಿ ಭಸ್ಮದಿಂದ ಬರೆಯುವ ಪಂಚಕೋನದ ಉದ್ಧರಣೆಯಾಗಿರುವದು. ಇದು ಸ್ವಸ್ವರೂಪ. ಪಂಚಕೋನದ ಮೇಲಿನ ಭಾಗ ಶಿರಸ್ಸು, ಕೆಳಗಿನ ಎಡಬಲದ ಕೋನಗಳೆರಡು ಭುಜಗಳು, ಅದರ ಕೆಳಗಿನ ಎರಡು ಕೋನಗಳು ತೊಡೆಗಳು, ಮಧ್ಯದ ಆರನೆಯ ಭಾಗವು ಹೃದಯವೆನಿಸುವದು. ಈ ಆರರ ಕಲ್ಪನೆ ಷಟ್‌ಸ್ಥಲಕ್ಕೆ ನಾಂದಿಯಾಗಿದೆ. ಈ ತೆರನಾಗಿ ತತ್ತ್ವತ್ರಯಗಳು ಒಂದಕ್ಕೊಂದು ಅವಿನಾಭಾವ ಸಂಬಂಧವುಳ್ಳವುಗಳು. ಗುರುವಿಲ್ಲದೆ ತತ್ವ ತಿಳಿಯದು, ಅವನಿಲ್ಲದೆ ಲಿಂಗ ಲಭಿಸದು. ಲಿಂಗದ ಪ್ರಾಣ ಜಂಗಮ, ಈ ಮೂವರು ವೀರಶೈವರಿಗೆ ಪೂಜ್ಯರು, ಆರಾಧ್ಯರು. ಪೂಜ್ಯ ವಸ್ತುಗಳನ್ನು ಪೂಜಿಸುವ ಸಾಧನಗಳು ಭಸ್ಮ-ರುದ್ರಾಕ್ಷಿ ಮಂತ್ರಗಳು, ಪೂಜೆಯ ಪ್ರತ್ಯಕ್ಷಫಲ ಪಾದೋದಕ- ಪ್ರಸಾದಗಳು ವೀರಶೈವ ದರ್ಶನದಲ್ಲಿ ದೇಹ-ಪ್ರಾಣ-ಆತ್ಮರ ವಿಕಾಸವೆ ತತ್ತ್ವತ್ರಯಗಳ ಪರಿಕಲ್ಪನೆಯಾಗಿದೆ. ಆದ್ದರಿಂದ ಇವು ಅಭಿನ್ನ, ಅವಿಭಾಜ್ಯ

 ಲಿಂಗಧಾರಣವಾಗದೆ ಲಿಂಗಾಚಾರ ಅಳವಡದು, ಲಿಂಗವಿಲ್ಲದೆ ಏಕೇಶ್ವರ ಪೂಜೆಯಾಗಲಿ, ಧಾರ್ಮಿಕ ಸ್ವಾತಂತ್ರ್ಯ ವಾಗಲಿ ಲಭಿಸುವದಿಲ್ಲ. ಲಿಂಗಧಾರಿಯಾದ ಬಳಿಕ ಸಚ್ಛಾರಿತ್ರ್ಯವನ್ನು, ವ್ಯಕ್ತಿತ್ವ ವಿಕಸನವನ್ನು ರೂಪಿಸಿಕೊಳ್ಳಲೇಬೇಕು. ಲಿಂಗವನ್ನು ಪೂಜಿಸುವ ಕೈ ಯಾರನ್ನು ಬೇಡುವಂತಿಲ್ಲ. ಕಾಯಕ ಮಾಡಲೇಬೇಕು. ಕಾಯಕದೊಂದಿಗೆ ದಾಸೋಹಿಯಾಗುವದು ಸದಾಚಾರದ ಉದ್ದೇಶ. ಮೂರನೆಯ ಶಿವಾಚಾರವು ಸಹೋದರತೆಯನ್ನು, ಸಮಾನತೆಯನ್ನು ಭಾವೈಕ್ಯತೆಯನ್ನು ಬಿಂಬಿಸುವದು. ಗಣಾಚಾರವು ಧರ್ಮನಿಷ್ಠೆ, ತನ್ನ ತತ್ವಗಳ ಸಂರಕ್ಷಣೆಯ ಹೊಣೆಯನ್ನು ಬದ್ಧತೆಯನ್ನು ಕಲಿಸುವದು. ಕೊನೆಯ ಭೃತ್ಯಾಚಾರವು ವ್ಯಕ್ತಿ ಗೌರವವನ್ನು ತಿಳಿಸುವದು. ಕಿಂಕರತ್ವವವನ್ನು ಕಲಿಸುವದು. ವ್ಯಕ್ತಿ ಗೌರವದಿಂದ  ಸಮಾಜದಲ್ಲಿ ಸಾಮರಸ್ಯ ಬೆಳೆಯುವದು. ಹೀಗೆ ಪಂಚಾಚಾರಗಳು ವೀರಶೈವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಮರ್ಥವಾಗಿರುವಾಗ ಇವು ನೇರ ಕಾರಣವಾಗದೆ ಪರಂಪರಾ ಕಾರಣವೆನ್ನುವ ವಿಚಾರವನ್ನು  ಪರಿಹರಿಸುವದು. ಆಂತರಿಕ ಸಾಧನೆಗೆ ಬಾಹ್ಯ ಆಚರಣೆ ಅವಶ್ಯ.

 ಷಟ್‌ಸ್ಥಲದ ಪರಿಕಲ್ಪನೆ :

 ಷಟ್‌ಸ್ಥಲದ ಪರಿಕಲ್ಪನೆ ಪಂಚಸೂತ್ರ ಲಿಂಗದ ಪರಿಕಲ್ಪನೆಯೊಂದಿಗಿದೆ. ಲಿಂಗವು ಪ್ರಣವದ ಸ್ವರೂಪವೂ ಆಗಿರುವದು.  ಪ್ರಣವವು ತಾರಕ-ದಂಡಕ ಕುಂಡಲ-ಅರ್ಧಚಂದ್ರ-ದರ್ಪಣ ಜ್ಯೋತಿಗಳೆಂಬ ಆರವಯವವುಳ್ಳಂತೆ, ವೃತ್ತ-ಕಟಿ-ವರ್ತುಳ-ನಾಳ-ಗೋಮುಖ-ಪೀಠವೆಂಬ ಆರು ಲಕ್ಷಣವುಳ್ಳದು ಲಿಂಗವು ಮತ್ತು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ-ಅಖಂಡ ಸ್ವರೂಪನು, ಪರಶಿವನು. ವೀರಶೈವ ಸಿದ್ದಾಂತದಂತೆ ತತ್ತ್ವವಿಕಾಸ ಕ್ರಮದಲ್ಲಿ ಸಹಜ-ನಿರಾಲಂಬ ನಿರಮಯ (ನಿರ್ಮಲ) ನಿಷ್ಕಲ-ನಿರ೦ಜನ-ನಿರವಯಗಳೆಂಬ ತತ್ವಗಳನ್ನು ಪ್ರತಿಪಾದಿಸಿರುವರು. ಸರ್ವಜ್ಞತ್ವ -ನಿತ್ಯತೃಪ್ತತ್ವ – ಅನಾದಿ ಬೋಧಕ ಶಕ್ತಿ, ಸ್ವತಂತ್ರ ಶಕ್ತಿ, ಆಲುಪ್ತ ಶಕ್ತಿ, ಅನಂತಶಕ್ತಿಗಳೆಂಬ ಷಟ್‌ಶಕ್ತಿ ಸಂಪನ್ನನು, ಪರಶಿವನು. ಕರ್ತೃ-ಕರ್ಮ-ಮೂರ್ತ-ಅಮೂರ್ತ-ಶಿವ-ಮಹಾಸಾದಾಖ್ಯಗಳೆಂಬ ಆರು ಸಾದಾಖ್ಯಗಳ ಮೂಲಕ ಪರಶಿವತತ್ವ ಗೋಚರವಾಗುವದು. ಈ ತೆರನಾಗಿ ಷಟ್‌ಸ್ಥಲದ ಪರಿಕಲ್ಪನೆ ರೂಪುಗೊಂಡಿರಲು ಸಾಕು. ಷಟ್‌ಸ್ಥಲವು ತಾತ್ವಿಕವಾಗಿ ಸೈದ್ಧಾಂತಿಕವಾಗಿ ವೈಚಾರಿಕವಾಗಿ ವೈಶಿಷ್ಟ್ಯಪೂರ್ಣವಾಗಿ ಪರಿಕಲ್ಪಿತ ವಾದುದು. ಅಂತೆಯೇ ಈ ಷಟ್‌ಸ್ಥಲದ ಘನತೆಯನ್ನು ಡಾ.ಜ.ಚ.ನಿ. ಯವರು ಮಾರ್ಮಿಕವಾಗಿ ಜೀವನ ಸಿದ್ಧಾಂತ’ ದಲ್ಲಿ ನಿರೂಪಿಸಿರುವರು. ದೇಹೇಂದ್ರಿಯಗಳು, ಮನ-ಪ್ರಾಣಗಳು, ಭಾವ-ಜೀವಗಳು ನುಲಗಬಾರದು. ನೋಯಬಾರದು, ಮಲೆಯಬಾರದು, ಮಲಿನವಾಗಬಾರದು, ಮೌಲ್ಯವುಳ್ಳವುಗಳು ಆಗಬೇಕು, ಮೆರಗುಳ್ಳವುಗಳಾಗಬೇಕು. ಆಚಾರ-ವಿಚಾರವುಳ್ಳವುಗಳೂ ಶ್ರದ್ಧೆ-ನಿಷ್ಠೆ- ಅವಧಾನ ಅನುಭವ-ಆನಂದ-ಅವಿರಳತೆಯುಳ್ಳವುಗಳೂ, ಅಧ್ಯಾತ್ಮಿಕ ಘನತೆಯುಳ್ಳವುಗಳೂ ಆಗಿರಬೇಕೆಂಬುದೆ ಈ ಕೃತಿಯ ಕಲಾದೃಷ್ಟಿ. ಸಕಲೇಂದ್ರಿಯ ಪ್ರಭುತ್ವ ಬರಬೇಕು. ಆತ್ಮ ತತ್ವ ಅಳವಡಬೇಕು. ಅಂತಃಕರಣಗಳಲ್ಲಿ ಮಹಾಂತತೆ ಮೂಡಬೇಕು ಎಂಬುದೇ ಷಟ್‌ಸ್ಥಲ ಸಿದ್ಧಾಂತ ತತ್ವ. ಸತ್ಯ-ತತ್ವ ಷಡಂಗಗಳಲ್ಲಿಯೂ ಷಡ್ಲಿಂಗ (ದೃಕ್ರಿಯಾ ಚೈತನ್ಯ) ಗಳ ಸಂಪೂರ್ಣ ಲೀಲಾ ವಿಲಾಸ ಸಮನಿಸಬೇಕೆಂಬುದೇ ಷಟ್‌ಸ್ಥಲದ ಧ್ಯೇಯ. ಜಡಕರ್ಮ ಜೀವನವು ಕಳಚಿ ಮೂಢ ಜೀವನವು ಹಳಚಿ ಜೀವಕಳಾ ಜೀವನವು ಒಡಮೂಡಬೇಕು. ಸಕಲ ಕ್ರಿಯಾ ಕಲಾಪಗಳು ನಂದನವನವಾಗಬೇಕು. ಸಮ್ಯಗ್‌ಜ್ಞಾನ ಜ್ಯೋತಿರ್ಮಂಡಲವಾಗಬೇಕುʼ’ ಎಂಬುದೇ ಷಟ್‌ಸ್ಥಲ ರಹಸ್ಯವೆಂದು ಷಟ್‌ಸ್ಥಲದ ಮರ್ಮವನ್ನು ಬಿತ್ತರಿಸಿರುವರು.

 ಷಟ್‌ಸ್ಥಲದ ಪ್ರತಿಪಾದನೆ ಹನ್ನೆರಡನೆಯ ಶತಮಾನದಿಂದ ಪ್ರಾರಂಭವಾಯಿತೆನ್ನುವರು. ಆದರೆ ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು ಶ್ರೀಗುರು ವಾದಾತನು ಸಕಲಾಗಮಂಗಳ ಹೃದಯವನರಿದು ಆಚರಿಸಲು ಮತ್ತು ಬೋಧಿಸಲು ನಿರೂಪಿಸಿದ್ದುಂಟು. ಈ ಮಹಾನುಭಾವರು ಹನ್ನೆರಡನೆಯ ಶತಮಾನದಲ್ಲಿ ಷಟ್‌ಸ್ಥಲವನ್ನು ವ್ಯವಸ್ಥಿತವಾಗಿ ಶರಣ ಸಮುದಾಯಕ್ಕೆ ತಿಳಿಸಿದ ಕಾರಣ ಅವರು “ಷಟ್‌ಸ್ಥಲ ಚಕ್ರವರ್ತಿ’ ಗಳೆನ್ನಿಸಿದ್ದು ಪ್ರಸಿದ್ಧ. ಪರಶಿವನು ಮಕುಟಾಗಮದ ಕ್ರಿಯಾಪಾದದ ದ್ವಿತೀಯ ಪಟಲದಲ್ಲಿ-

“ಷಟ್‌ಸ್ಥಲೋಕ್ತ ವಿಧಾನೇನ ಮಹಾಪೂಜಾಂ ಸಮಾಚರೇತ್‌” (೨/೪೧) ಇಷ್ಟಲಿಂಗ ಪೂಜೆಯನ್ನು ಷಟ್‌ಸ್ಥಲ ಕ್ರಮದಲ್ಲಿ ತಿಳಿಸಿದ ವಿಧಾನದಂತೆ ಆಚರಿಸಬೇಕೆಂದು ಹೇಳಿ, ಭಕ್ತಾದಿ ಸ್ಥಲಗಳಲ್ಲಿ ಮಾಡಬೇಕಾದ ಕ್ರಮವನ್ನು ತಿಳಿಸುತ್ತ, ಭಕ್ತಾದಿ ಸ್ಥಲಗಳಲ್ಲಿ ಆಚರಿಸುವ ಅರ್ಪಣ ಕ್ರಮವನ್ನು ಸಹ ನಿರೂಪಿಸಿರುವನು.  ಶರಣ ಸಾಹಿತಿಗಳಾದ ಡಾ. ಹೆಚ್. ತಿಪ್ಪೇರುದ್ರಸ್ವಾಮಿಯವರು “ವಾತುಲಾಗಮದ ಉತ್ತರ ಭಾಗದಲ್ಲಿರುವ ತಂತ್ರೋತ್ತರ ಪ್ರದೀಪವೆಂಬ ಹೆಸರಿನ ಶಿವಸಿದ್ಧಾಂತ ತಂತ್ರದಲ್ಲಿ ಈಶ್ವರನು ಪಾರ್ವತಿಗೆ ಷಟ್‌ಸ್ಥಲ ನಿರ್ಣಯವನ್ನು ನಿರೂಪಿಸಿರುವದಾಗಿ ಹೇಳುತ್ತಾರೆ. ಇದನ್ನು ನೋಡಿದರೆ ಬಹುಶಃ ವಚನಕಾರರಿಗಿಂತ ಮೊದಲೇ ಷಟ್‌ಸ್ಥಲ ಸಿದ್ಧಾಂತ ಉಗಮಗೊಂಡು ಆಗಮಾದಿಗಳಲ್ಲಿ ಬೆಳೆಯುತ್ತಾ ಬರುತ್ತಿದ್ದಿತೆಂದು ಹೇಳಬಹುದು. ಬಸವಾದಿ ಶರಣರ ಕಾಲಕ್ಕೆ ಅದು ಪರಿಪೂರ್ಣತೆಯನ್ನು ಪಡೆಯಿತು. ಕೇವಲ ಸಿದ್ಧಾಂತವಾಗಿ ಉಳಿಯದೇ ಶರಣರ ಉಜ್ವಲ ಸಾಧನೆಯಿಂದ ಜೀವಂತ ಶಕ್ತಿಯಾಗಿ ಪರಿಣಮಿಸಿತು.” ಎಂದು ತಮ್ಮ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿರುವುದು ಯಥೋಚಿತವಾಗಿದೆ.

ಬಸವಾದಿ ಶಿವಶರಣರು ವಿಶೇಷವಾಗಿ ಚನ್ನಬಸವಣ್ಣನವರು ಆಗಮ ಪ್ರತಿಪಾದಿತ ಸಿದ್ಧಾಂತವನ್ನು ಜನ ಭಾಷೆಯಲ್ಲಿ ಜನತೆಗೆ ತಿಳಿಯುವಂತೆ ಕನ್ನಡ ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದರು. ತತ್ವ ನಿರೂಪಣೆಯೊಂದಿಗೆ ಷಟ್‌ಸ್ಥಲದ ಆಚರಣೆಯನ್ನು ಕ್ರಮಗೊಳಿಸಿದರು.

ಈ ಷಟ್‌ಸ್ಥಲ ಸಾಧನವು ಜೀವನ ಸಿದ್ದಾಂತವೆನಿಸಿದಂತೆ ವ್ಯಾವಹಾರಿಕ ಬದುಕಿನಲ್ಲೂ ಜೀವಾತ್ಮನು ಕೈಕೊಳ್ಳುವ ಪ್ರತಿಯೊಂದು ಕಾರ್ಯಗಳಲ್ಲಿ ಆರು ಹಂತಗಳು ಕಾಣಿಸಿಕೊಳ್ಳುತ್ತವೆ. ೧) ಮೊದಲು ಯಾವುದೊಂದು ಕೆಲಸವನ್ನು ಬಯಸಿ ಮಾಡಹತ್ತುತ್ತಾನೆ. ೨) ಕೆಲಸ ಮಾಡಿ ಫಲವನ್ನು ಪಡೆಯುತ್ತಾನೆ. ೩) ಪಡೆದುದನ್ನು ಸಂತಸದಿಂದ ಭೋಗಿಸುವನು 9) ಭೋಗಿಸಿದುದನ್ನು ಜೀರ್ಣಿಸಿಕೊಂಡು ಪ್ರಾಣವಾಗಿಸಿಕೊಳ್ಳುವನು ೫) ಪ್ರಾಣವಾಗಿಸಿಕೊಂಡುದುದಕ್ಕೆ ಶರಣಾಗುವನು ೬) ಶರಣಾದುದಕ್ಕೆ ಅದರೊಡಗೂಡುವನು.

 ಉದಾಹರಣೆಗೆ ಮಾವಿನ ಹಣ್ಣನ್ನು ತಿನ್ನಬಯಸುವದು ಬಯಸಿದುದನ್ನು ಪ್ರಯತ್ನಿಸಿ ಪಡೆಯುವದು, ಪಡೆದ ಹಣ್ಣನ್ನು ತಿನ್ನುವದು, ತಿಂದುದನ್ನು ರಕ್ತವನ್ನಾಗಿ ಪ್ರಾಣವಾಗಿಸಿಕೊಳ್ಳುವದು. ಅದರ ಆನಂದವನ್ನು ಅನುಭವಿಸುವದು. ಆ ಆನಂದದಲ್ಲಿ ಸಮರಸಗೊಳ್ಳುವದು. ಅರ್ಥಾತ್ ದೊರೆತ ಫಲವನ್ನು ಪಡೆದು ಸಂತೃಪ್ತಿಯನ್ನು ಹೊಂದುವದು. ಈ ತೆರನಾಗಿ ಪ್ರತಿಯೊಂದು ಜೀವನ ಕ್ರಿಯೆಯಲ್ಲಿ ಆರು ತೆರನಾಗುವಿಕೆಯು ಕಾಣಬರುವದರಿಂದ ಷಟ್‌ಸ್ಥಲವು ಜೀವನ ಸಿದ್ದಾಂತವೆಂಬುದು ಸ್ಪಷ್ಟವಾಗುತ್ತದೆ. ನಾಗಲಿಂಗದ ಪುಷ್ಪಗಳನ್ನು ಪರೀಕ್ಷಿಸಿದರೆ ಎಲ್ಲ ಹೂಗಳು ಆರಾರು ದಳಗಳುಳ್ಳುದಾಗಿ ಕಾಣ ಬಂದಿತು. ಷಟ್‌ಸ್ಥಲವು ವೀರಶೈವ ಪಾರಿಭಾಷಿಕ ಪದ. ತಾತ್ವಿಕ ಹಿನ್ನೆಲೆಯುಳ್ಳುದು ತಾತ್ವಿಕವಾಗಿರುವಂತೆ, ವೈಜ್ಞಾನಿಕವೂ ವ್ಯಾವಹಾರಿಕವೂ ಆಗಿದೆ.

 ಸ್ಥಲದ ವ್ಯಾಖ್ಯಾನ :

ವೈಜ್ಞಾನಿಕವಾಗಿ ಸೃಷ್ಟಿಯ ವಿಸ್ತಾರದ ವಿಚಾರದಲ್ಲಿ ‘’ಮಹಾಸ್ಪೋಟ’’ ಸಿದ್ಧಾಂತವನ್ನು ವಿವರಿಸುತ್ತಾರೆ. ಅದಕ್ಕೆ ಬಿಗ್ ಬ್ಯಾಂಗ್ ಥೇರಿ’ ಎನ್ನುವರು. ವೀರಶೈವರು ಪ್ರಕೃತಿಯ ಪ್ರಾದುರ್ಭಾವವನ್ನು ಪ್ರಣವದಿಂದ ನಿರೂಪಿಸಿರುವರು. ಪ್ರಣವದ ನಾದಬಿಂದು ಕಲೆಗಳ ವಿಸ್ತಾರದಲ್ಲಿ ಸೃಷ್ಟಿಯು ಮೈದೋರಿದೆ. ನಾದ- ಬಿಂದು-ಕಲೆಗಳಿಂದ ನಕಾರಾದಿ ಪ್ರಣವಾಕ್ಷರಗಳು ಉದಿಸುವವು. ಈ ವಿಚಾರವಾಗಿ ಜಂಗಮ ಪುಂಗವರಾದ ಶ್ರೀ ಅಲ್ಲಮಪ್ರಭು ದೇವರ ವಚನ ಇಂತಿದೆ.

ಆದಿ ಅನಾದಿ ಇಲ್ಲದಂದು ಹಮ್ಮು ಬಿಮ್ಮುಗಳಿಲ್ಲದಂದು

ಸುರಾಳ-ನಿರಾಳವಿಲ್ಲದಂದು, ಶೂನ್ಯ-ನಿಶೂನ್ಯವಿಲ್ಲದಂದು,

ಸಚಾರಚರವೆಲ್ಲ ರಚನೆಗೆ ಬಾರದಂದು

ಗುಹೇಶ್ವರನೊಬ್ಬನೆ ಇದ್ದೆಯಲ್ಲ ಇಲ್ಲದಂತೆ

 ಜಗತ್ ಸೃಷ್ಟಿಯ ಮುನ್ನ ಸೃಷ್ಟಿಕರ್ತ ಹೇಗಿದ್ದನೆಂಬುದನ್ನು ವಿವೇಚಿಸಿದ್ದರೆ : ಇಂಥ ನಿಃಕಲ ಅಥವಾ ನಿಶ್ಶೂನ್ಯದಿಂದಲೇ ಮಹಾಲಿಂಗ ಆವಿರ್ಭಾವವಾಗುವುದು. ಅದರಿಂದಲೇ ಜಗದುತ್ಪತ್ತಿಯಾಗುವುದೆಂದೂ   ತತ್ವಗಳ ವಿಸ್ತಾರವಾಗುವದೆನ್ನುವ ತೋಂಟದ ಸಿದ್ಧಲಿಂಗೇಶ್ವರರು-

ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತು

ಆ ಚಿತ್ತಿನಿಂದ ಕಾರ ಉಕಾರ ಮಕಾರಗಳೆಂಬ ಅಕ್ಷರತ್ರಯಂಗಳಾದವು

ಅಕಾರವೇ ನಾದ, ಉಕಾರವೇ ಬಂದು, ಮಕಾರವೆ ಕಳೆ

ಇಂತೀ ತ್ರಿವಿಧಕ್ಕೆ ತಾಯಿ ಒತ್ತು

ಇಂತಿ ನಾಲ್ಕು ಒಂದಾದಲ್ಲಿ ಓಂಕಾರವೆಂಬ ಪ್ರಣವದುತ್ಪತ್ತಿಯಾಯಿತ್ತು

ಆ ಓಂಕಾರವೆಂಬ ಪ್ರಣವೇ

ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ

ಮಹಾಲಿಂಗ ನೋಡಾ. ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ

ಎಂದು ನಿರೂಪಿಸಿರುವರು. ಆ ಓಂಕಾರ ಪ್ರಣವವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಮಹಾಲಿಂಗವೆನಿಸುವದು. ಅದುವೆ ಷಟ್‌ಸ್ಥಲದ ‘ಸ್ಥಲ’ ಶಬ್ದಕ್ಕೆ ವಾಚ್ಯವೆನಿಸುವದು.

 ‘ಸ್ಥಲ’ ವೆಂದರೆ ಶಬ್ದಕೋಶವು(ನಾ) ೧. ನೆಲ, ಭೂಮಿ, ೨. ಸ್ಥಲ ೩. ಜಮೀನು ಹೊಲ ೪, ಗ್ರಂಥದ ಒಂದು ಭಾಗ, ಪರಿಚ್ಛೇದ

 ೫. ಮೆಟ್ಟಿಲು, ಹಂತ, ಎಂದು ಅರ್ಥೈಸಿದೆ. ಈ ಅರ್ಥಗಳು ವ್ಯಾವಹಾರಿಕವಾಗಿವೆ. ಆದರೆ ವೀರಶೈವ ಧಾರ್ಮಿಕ ಪರಂಪರೆಯಲ್ಲಿ ಸ್ಥಲ ಶಬ್ದಕ್ಕೆ ಮೇಲಿನ ಅರ್ಥಗಳು ಅನ್ವಯಿಸುವುದಿಲ್ಲ. ಇಲ್ಲಿ ‘ಸ್ಥಲ’ ಪದದ ಅರ್ಥ ಭಿನ್ನವಾಗಿದೆ. ಸ್ಥಲ ಶಬ್ದದ ಪಾರಿಭಾಷಿಕತೆಯನ್ನು ಶಾಸ್ತ್ರಕಾರರು-

ಏಕಮೇವ ಪರಂ ಬ್ರಹ್ಮ ಸಚ್ಚಿದಾನಂದ ಲಕ್ಷಣಂ |

ಶಿವತತ್ತ್ವಂ ಶಿವಾಚಾರ್ಯಃ  ಸ್ಥಲಮಿತ್ಯಾಹುರಾದರಾತ್ ||

ಸರ್ವೇಷಾಂ ಸ್ಥಾನಭೂತತ್ವಾಲ್ಲಯಭೂತತ್ವತಸ್ತತಃ |

ತ್ವಾನಾಂ ಮಹದಾದೀನಾಂ ಸ್ಥಲ ಮಿತ್ಯಭಿದೀಯತೇ

ಎಂದು ವಿಸ್ತರವಾಗಿ ನಿರೂಪಿಸಿದ್ದಾರೆ. ಜಗತ್ತಿನಲ್ಲಿ ʼʼಏಕಮೇವಾದ್ವಿತೀಯಂ ಬ್ರಹ್ಮʼʼ ವೆಂಬ ಶ್ರುತಿ ಪ್ರಮಾಣದಂತೆ ತನ್ನಂತೆ ಅನ್ಯವಿಲ್ಲದುದು, ತಾನೊಂದೇ ಒಂದಾದುದು, ಅದುವೆ ಪರಬ್ರಹ್ಮವೆನಿಸಿದೆ. ಸತ್-ಚಿತ್-ಆನಂದ ಸ್ವರೂಪ ಲಕ್ಷಣದಿಂದ ಕೂಡಿದೆ. ಇದನ್ನೇ ನಮ್ಮವರು ಶಿವತತ್ತ್ವವೆಂದು ಗುರುತಿಸಿದರು. ಇದುವೆ ಪರಮಶಿವತತ್ವವೂ ಅಹುದು. ಇದನ್ನೆ ‘ಸ್ಥಲʼ ವೆಂದೂ ಹೇಳುವರು. ಆ ಶಿವತತ್ತ್ವವು ಮಹತ್ ತತ್ವವೇ ಆದಿಯಾದ ಸಕಲ ತತ್ವಗಳಿಗೆ ಆಧಾರಭೂತ (ಆಶ್ರಯಭೂತ) ವೂ ಲಯಭೂತವೂ ಆಗಿರುವದರಿಂದ ಸ್ಥಲವೆಂದು ಕರೆಯಲ್ಪಟ್ಟಿತು. ಒಟ್ಟಿನಲ್ಲಿ ಈ ಜಗತ್ತು ಮೊದಲು ಸ್ಥಿತಿಯನ್ನು ನಂತರದಲ್ಲಿ ಲಯವನ್ನು ಯಾವ ತತ್ವದಲ್ಲಿ ಹೊಂದುವುದೋ ಅದೇ ಸ್ಥಲವೆಂದು ಹೇಳಲ್ಪಡುವದು’. ಈ ವಿಚಾರದಲ್ಲಿ ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ-

ಏಕಏವ ಶಿವಸಾಕ್ಷಾಚ್ಛಿದಾನಂದಮಯೋ ವಿಭುಃ

ನಿರ್ವಿಕಲ್ಪೊ ನಿರಾಕಾರೋ ನಿರ್ಗುಣೋ ನಿಷ್ಟ್ರಪಂಚಕಃ

ಶಿವನೆಂದರೆ ಕೈಲಾಸಪತಿ ಎಂದು ವೀರಶೈವರು ಹೇಳುವದಿಲ್ಲ. ಇವನು ಪಾರ್ವತಿ ಪತಿಯೂ ಅಲ್ಲ. ಪೌರಾಣಿಕ ಶಿವನ ಸಂಬಂಧ ಇಲ್ಲಿಲ್ಲ. ಏಕೇಶ್ವರ ಅರ್ಥಾತ್ ಸರ್ವೇಶ್ವರನಾದವನು ಪರಶಿವನು. ಅವನೇ ಅದ್ವಿತೀಯನು. ಅವನಂತೆ ಬೇರಾರು ಇಲ್ಲದವನು, ಶಾಸ್ತ್ರಕಾರರು ಪ್ರತಿಪಾದಿಸಿದಂತೆ ಪರಶಿವನು ಸ್ವಗತ ಸಜಾತೀಯ- ವಿಜಾತಿಯಗಳೆಂಬ ಮೂರು ಭೇದಗಳಿಂದ ದೂರಾದವನು. ಸ್ವಗತವೆಂದರೆ ತನ್ನಲ್ಲಿಯದು. ಮಾನವನ ಶರೀರದಲ್ಲಿರುವ ಕೈ ಕಾಲು-ಬಾಯಿ-ಮೂಗು ಮುಂತಾದ ಅವಯವಗಳು ಒಂದರಂತೆ ಇನ್ನೊಂದಿಲ್ಲ. ಎಲ್ಲವೂ ಭಿನ್ನವಾಗಿವೆ. ಹಾಗೆ ಗಿಡಮರಗಳಲ್ಲಿ, ಪ್ರಾಣಿಗಳಲ್ಲಿ ಭೇದವನ್ನು ಗುರುತಿಸಬಹುದು. ಇನ್ನು ಎರಡನೆಯದು ಸಜಾತೀಯ ಭೇದ, ರಾಮ-ಲಕ್ಷ್ಮಣರು ಸಹೋದರರಾದರೂ ಇಬ್ಬರಲ್ಲಿ ಭಿನ್ನತೆಯಿರುತ್ತದೆ. ಗಿಡ ಮರಗಳು ಸಜಾತೀಯವಾದರೂ ಬೇರೆ ಬೇರೆಯಾಗಿ ಕಾಣಬರುತ್ತವೆ. ವಿಜಾತೀಯವೆಂದರೆ ಬೇರೆ ಬೇರೆ ಜಾತಿಗಳು, ಮಾನವರದು ಒಂದು ಜಾತಿಯಾದರೆ ಪ್ರಾಣಿಗಳದು ಮತ್ತೊಂದು ಜಾತಿ, ಹಾಗೆ ಪಕ್ಷಿಗಳದು ಅನ್ಯ ಜಾತಿ, ಇವು ಪರಸ್ಪರ ವಿಜಾತಿಯವೆನಿಸುತ್ತವೆ. ಇವು ಮೂರು ಜಾತಿಗಳು ಪರಶಿವನಲ್ಲಿ ಕಾಣುವದಿಲ್ಲ. ಅವನು ನಿರಾಕಾರನಾದ್ದರಿಂದ ಅವಯವಾದಿಗಳಿಲ್ಲ, ಅದಕ್ಕಾಗಿ ಸ್ವಗತ ಭೇದವಿಲ್ಲ. ಅವನಿಗೆ ಸಮನಾದವ ಮತ್ತೊಬ್ಬನಿಲ್ಲವಾದ್ದರಿಂದ ಸಜಾತೀಯ ಭೇದವೂ ಇಲ್ಲ. ಆತ ಅದ್ವಿತೀಯನು. ವಿಜಾತೀಯ ಭೇದವೂ ಇಲ್ಲಿ ಬರುವುದಿಲ್ಲ. ಶಿವನು ಸಚ್ಚಿದಾನಂದ ಸ್ವರೂಪನಾಗಿರುವ ದರಿಂದಲೇ ‘ಪ್ರಭು’ ಎನಿಸುತ್ತಾನೆ. ವಿಭುವೆಂದರೆ ವ್ಯಾಪಕನಾದವನು. ಸರ್ವಾಂತರ್ಯಾಮಿ ಪರಶಿವನು. ಪ್ರಪಂಚಕ್ಕೆ ಅವಕಾಶವಿತ್ತುದು ಆಕಾಶವಾದರೆ, ಈ ಆಕಾಶಕ್ಕೂ ಅವಕಾಶಕೊಟ್ಟ ಪರಮಾತ್ಮನು ಮಹಾವ್ಯಾಪಕನು. ಅವನಿಗೆ ಮತ್ತಾವುದೂ ಅವಕಾಶ ಕೊಟ್ಟಿಲ್ಲ. ಅವನೇ ಸಕಲಕೆಲ್ಲ ವ್ಯಾಪಕನಾದ ಕಾರಣ ಅವನು ವಿಭುವೆನಿಸಿದ್ದಾನೆ. ನಿರಾಕಾರ ಪರಶಿವನ ಅಸ್ತಿತ್ವವನ್ನು ಮನ್ನಿಸುವುದಾದರೆ ಅವನು ಕಾಣುವದಿಲ್ಲವೇಕೆ ? ಎಂಬ ಪ್ರಶ್ನೆ ಸಹಜವಾದುದು. ನಿರಾಕಾರವೆಂದರೆ ಆಕಾರವಿಲ್ಲದವನು. ಅವಯವವುಳ್ಳವನಿಗೆ ಸಾಕಾರವೆನ್ನುವರು. ಅವಯವಗಳು ಸಹಜ ಬರುವುದಿಲ್ಲ. ಇವು ಜನ್ಯವಾದವುಗಳು.  ತಾಯಿಯ ಗರ್ಭದಲ್ಲಿಯೇ ಅವಯವಗಳು ಮೂಡಿ ಬರುತ್ತವೆ. ಪರಮಾತ್ಮನು ಜನಿಸುವದಿಲ್ಲವಾದುದರಿಂದ ಅವನಿಗೆ ಅವಯವವಿಲ್ಲ. ಆತ ನಿರಾಕಾರ, ಆತನು ಜನಿ(ಹುಟ್ಟಿ)ಗೆ ಒಳಗಾಗಿದ್ದರೆ, ಒಂದು ದಿನ ಮರಣವನ್ನು ಹೊಂದಬೇಕಾಗುತ್ತಿತ್ತು ಜನಿಮೃತಿಗಳಿಗೆ ಹೊರಗಾದವನು. ಅವನು ಅವಿನಾಶಿಯಾಗಿದ್ದಾನೆ. ಸಾವಯವಿ ಸಾಕಾರ ವ್ಯಕ್ತಿಯಲ್ಲಿ ಸೌಂದರ್ಯವೂ ಇರಬಹುದು. ಕುರೂಪವೂ ಇರಬಹುದು. ಶಿವನು ನಿರವಯವಿ, ನಿರಾಕಾರನು. ಆದರೆ ಅವನು ಕೇವಲ ಸೌಂದರ್ಯಭರಿತನು.ʼʼ ಸತ್ಯಂ ಶಿವಂ ಸುಂದರಂʼ’ ಎಂದು ವೇದವು ವರ್ಣಿಸಿದೆ. ನಿರಾಕಾರ ಪರಶಿವನ ಅನುಪಮ ಸೌಂದರ್ಯಕ್ಕೆ ಆತ್ಮಜ್ಞಾನಿಗಳು ಮಾರು ಹೋಗುತ್ತಾರೆ. ಆತ್ಮ ಸೌಂದರ್ಯವೇ ಮುಖ್ಯವಾಗಿರುವದು. ವೀರವೀರಾಗಿಣಿ ಅಕ್ಕಮಹಾದೇವಿಯು ವರಿಸಿದ ಪತಿಯ ವರ್ಣನೆ ಹೀಗಿದೆ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವಂಗೆ ನಾನೊಲಿದೆ

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ

ಚಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ

ಭವವಿಲ್ಲದ ಭಯವಿಲ್ಲದ ನಿರ್ಭಯ ಚಲುವಂಗೊಲಿದೆ ನಾನು

ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು

ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ

ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ

ಹೀಗೆ ನಿರಾಕಾರದ ಚಲುವ ಚನ್ನಿಗ ಚನ್ನಮಲ್ಲಿಕಾರ್ಜುನನಿಗೆ ಮಾರು ಹೋದವಳು ಅಕ್ಕಮಹಾದೇವಿ. ಸಾಮಾನ್ಯವಾಗಿ ರೂಪಿದ್ದರೆ ಕೆಡಕುಂಟು, ತೊಡಕುಂಟು, ಕೊನೆಗೆ ಸಾವುಂಟು. ಆದರೆ ಈ ಚನ್ನಿಗ ಚಲುವ ರೂಪಿಲ್ಲದ ರೂಪವಂತ, ಕುರುಹಿಲ್ಲದ ಕಲಾವಂತ, ಆ ವೀರವಿರಾಗಿಣಿ ಮಹದೇವಿ ಅಕ್ಕನ ಮನವನ್ನು ಸೂರೆಗೊಂಡಿದ್ದಾನೆ, ಪರಶಿವ, ಕೊನೆಗೆ ಅವಳಿಗೆ ಭವದ ಭಯವಿಲ್ಲ; ಆತನು ನಿರ್ಭಯ ಚೆಲುವನು, ಸೀಮೆಯಿಲ್ಲದ ನಿಸ್ಸೀಮನು. ಲೌಕಿಕದಲ್ಲಿ ರೂಪಿನ ಚಿಲುವು ಚರ್ಮ ಚಕ್ಷುಗಳಿಗೆ ಮಾತ್ರ ಗೋಚರವಾಗುತ್ತದೆ. ಈ ಪರಶಿವನು ಕೇವಲ ಜ್ಞಾನ ನೇತ್ರಕ್ಕೆ ಅನುಭಾವ ಭಕ್ತಿಗೆ ಮಾತ್ರ ವೇದ್ಯವಾಗುವನು. ಶಿವನು ನಿರ್ಗುಣನೂ ಆಗಿರುವದರಿಂದ ಸದ್ಗುಣ ಶೀಲರಿಗೆ ತೋರವನು.

 ವೀರಶೈವ ದಾರ್ಶನಿಕ ಸಿದ್ಧಾಂತದಲ್ಲಿ ಪ್ರತಿಪಾದಿಸಲ್ಪಡುವ ‘ಸ್ಥಲ’ ಪದವು ಪರಶಿವ ವಾಚ್ಯವಾಗಿರುವಂತೆ ಅವನು ಶಕ್ತಿ ವಿಶಿಷ್ಟನೆಂಬುದನ್ನು ವಿವರಿಸಲಾಗಿದೆ. ಪರಶಿವನಿಗೂ ಶಕ್ತಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕಾಗಿ ‘ನ ಶಿವೇನ  ವಿನಾಶಕ್ತಿರ್ನಶಕ್ತಿ ರಹಿತಃ ಶಿವಃʼʼ ಶಿವನನ್ನು ಹೊರತುಪಡಿಸಿ ಶಕ್ತಿ ಇಲ್ಲ. ಶಕ್ತಿಯನ್ನು ಬೇರ್ಪಡಿಸಿ ಶಿವನಿಲ್ಲ. ಶಿವನಲ್ಲಿಯ ಶಕ್ತಿಯನ್ನು ಬೇರೆ ಮಾಡಿದರೆ ಶವನೆನಿಸುವನು. ವೀರಶೈವ ಸಿದ್ಧಾಂತವು ಶಕ್ತಿವಿಶಿಷ್ಟಾದ್ವೈ ತ” ವೆನಿಸಿದೆ. ಶಕ್ತಿವಿಶಿಷ್ಟನಾದ ಪರಶಿವನು ಲೀಲೆಗಾಗಿ ʼʼಏಕೋಹಂ ಬಹುಸ್ಯಾಂ ಪ್ರಜಾಯೇಯ” ಎಂಬ ಉಪನಿಷನ್ಮಂತ್ರದಂತೆ ತಾನೊಬ್ಬನೇ ಇರುವದು ಸರಿಯಲ್ಲ ; ನಾನು ಬಹಳ ವಿಸ್ತಾರವಾಗಬೇಕೆಂಬ ಸಂಕಲ್ಪ ಮಾಡಲಾಗಿ ಉಪಾಸ್ಯ ಮತ್ತು ಉಪಾಸಕ ಭೇದದಿಂದ ಲಿಂಗ ಹಾಗೂ ಅಂಗವೆಂದು ಎರಡು ತೆರನಾಗುವದು. ಇಲ್ಲಿ ಲಿಂಗವು ಉಪಾಸ್ಯವಾದರೆ, ಅಂಗವು ಉಪಾಸಕವೆನಿಸುವದು. ಉಪಾಸ್ಯವೆಂದರೆ ಪೂಜ್ಯ ವಸ್ತು, ಉಪಾಸಕನೆಂದಾದರೆ ಪೂಜ್ಯ ವಸ್ತುವನ್ನು ಪೂಜಿಸುವವನು. ಈ ವಿಚಾರವನ್ನು ಸಿದ್ಧಲಿಂಗ ಯತಿಗಳು ವಿಸ್ತಾರವಾಗಿ ತಮ್ಮ ವಚನದಲ್ಲಿ ವಿವರಿಸಿರುವರು.

ಷಟ್ ಸ್ಥಲದ ವಿಕಾಸ :

ಆ ನಿಃಕಲ ಶಿವತತ್ವ ತಾನೊಂದೆ

ತನ್ನ ಶಕ್ತಿಯ ಚಲನೆ ಮಾತ್ರದಿಂದ

ಒಂದೆರಡಾಯಿತು ನೋಡಾ.

ಅದರೊಳಗೆ ಒಂದು ಲಿಂಗಸ್ಥಲ ಮತ್ತೊಂದು ಅಂಗಸ್ಥಲ

ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕವೆಂದು

ವರ್ತಿಸುತ್ತಿಹುದು ನೋಡಾ.

ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು

ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು

ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.

ಶಕ್ತಿಯೇ ಪ್ರವೃತ್ತಿಯೆನಿಸಿತ್ತು

ಭಕ್ತಿಯೇ ನಿವೃತ್ತಿಯೆನಿಸಿತ್ತು

ಶಕ್ತಿ-ಭಕ್ತಿಯೆಂದೆರೆಡು ಪ್ರಕಾರವಾಯಿತ್ತು ಶಿವನ ಶಕ್ತಿ

ಲಿಂಗವಾರು ತೆರನಾಯಿತು, ಅಂಗವಾರು ತೆರನಾಯಿತ್ತು

ಶಕ್ತಿಯಾರು ತೆರನಾಗಿತ್ತು, ಭಕ್ತಿಯಾರು ತೆರನಾಗಿತ್ತು

ಅದು ಹೇಂಗೆಂದಡೆ

 ಮೊದಲಲ್ಲಿ ಲಿಂಗ ಮೂರು ತೆರನಾಗಿತ್ತು

ಅದು ಹೇಂಗೆಂದಡೆ

 ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು

ಮೂರು ತೆರನಾಗಿತ್ತು

ಅಂಗವೂ ಮೂರು ತೆರನಾಯಿತ್ತು, ಅದು ಹೇಂಗೆಂದಡೆ

ಯೋಗಾಂಗವೆಂದು, ಭೋಗಾಂಗವೆಂದು, ತ್ಯಾಗಾಂಗವೆಂದು

ಅಂಗವು ಮೂರು ತೆರನಾಯಿತು

ಈ ತೆರನಾಗಿ ಷಟ್‌ಸ್ಥಲದ ವಿಕಾಸವು ವಿಸ್ತಾರವಾದುದನ್ನು ಅವಲೋಕಿಸಬಹುದು. ಪರಶಿವ ಲೀಲಾವಿಲಾಸಕ್ಕಾಗಿ ಉಪಾಸ್ಯ ಲಿಂಗವೆಂದು ಉಪಾಸಕ ಅಂಗವೆಂದು ಎರಡಾಯಿತು. ಎರಡಾದುದು ಮೂರು ಮೂರು ತೆರನಾಗುವದು. ಪ್ರತಿಯೊಬ್ಬ ಮಾನವನಿಗೆ ದೇಹವು ಸ್ಥೂಲ, ಸೂಕ್ಷ್ಮ, ಕಾರಣವೆಂದು ಮೂರರ ಅನುಭವವಾಗುವದು. ಕಾಣುವ ಶರೀರವೆ ಸ್ಥೂಲವು ನಿದ್ರಾವಸ್ಥೆಯಲ್ಲಿ ವ್ಯಕ್ತವಾಗುವದೇ ಸೂಕ್ಷ್ಮ ಶರೀರ, ಸುಷುಪ್ತ್ಯಾವಸ್ಥೆಯಲ್ಲಿ ಗೋಚರವಾಗುವದೇ ಕಾರಣ ಶರೀರ. ಮೂರು ಶರೀರಗಳಲ್ಲಿ ಅಂಟಿಕೊಂಡ ಕಾರ್ಮಿಕ ಮಲ, ಮಾಯಾಮಲ, ಆಣವ ಮಲಗಳೆಂಬ ಮೂರು ದೋಷಗಳು ಮೂರು ಶರೀರದಲ್ಲಿ ಮನೆ ಮಾಡಿರುವುದನ್ನು ಸದ್ಗುರುನಾಥನು ಮೂರು ದೀಕ್ಷೆಗಳಿಂದ ಪರಿಹರಿಸಿದಾಗ ಜೀವಾತ್ಮನು ಅಂಗನೆನಿಸುವನು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರ ಭೋಗಾಂಗವೆನಿಸುವದು. ಕಾರಣ ಶರೀರವು ಯೋಗಾಂಗವೆನಿಸುವದು. ಈ ಮೂರು ಅಂಗಗಳಿಗೆ ಕ್ರಮವಾಗಿ ಇಷ್ಟಲಿಂಗ-ಪ್ರಾಣಲಿಂಗ- ಭಾವಲಿಂಗಗಳನ್ನು ಗುರು ಕರುಣಿಸುತ್ತಾನೆ. ಮೂರಂಗಗಳು ಎರಡೆರಡು ಭಾಗವಾಗಿ ಭಕ್ತ ಮಹೇಶ-ಪ್ರಸಾದಿ-ಪ್ರಾಣಲಿಂಗಿ- ಶರಣ-ಐಕ್ಯವೆಂದು ಆರಾದರೆ, ಮೂರು ಲಿಂಗಗಳು ಆಚಾರಲಿಂಗ- ಗುರುಲಿಂಗ-ಶಿವಲಿಂಗ- ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗಗಳೆ೦ದು ಆರು ತೆರನಾಗುವದೇ ಷಟ್‌ಸ್ಥಲದ ವಿಕಾಸವಾಗುವುದು. ಇದರಂತೆ ಲಿಂಗಗತ ಕಲೆ ಹಾಗೂ ಶಕ್ತಿಯು ನಿವೃತ್ತಿ ಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆಗಳೆಂದು ಆರು ಕಲೆಗಳೆನಿಸುವವು. ಶಕ್ತಿಯು- ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ-ಚಿಚ್ಛಕ್ತಿಗಳೆಂದು ಆರು ತೆರನಾಗುವದು. ಅದರಂತೆ ಅಂಗಗತ ಭಕ್ತಿಯು ಶ್ರದ್ಧಾ-ನಿಷ್ಠಾ ಅವಧಾನ-ಅನುಭವ-ಆನಂದ ಸಮರಸವೆಂದು ಷದ್ವಿಧವಾಗುವದು.

 ವೀರಶೈವ ಸಿದ್ಧಾಂತವು ಪ್ರಾಯೋಗಿಕ ದರ್ಶನ’ ವೆಂಬ ವಿಚಾರವನ್ನು ಈ ಮೊದಲು ನಿರೂಪಿಸಲಾಗಿದೆ. ಮಹಾಲಿಂಗದಿಂದ ಆಚಾರ ಲಿಂಗದ ವಿಕಾಸವನ್ನು ಯೋಗಾಂಗದಿಂದ ತ್ಯಾಗಾಂಗ ವಿಚಾರವನ್ನು ಮಾಡುವದು ಪ್ರವೃತ್ತಿ ಮಾರ್ಗವೆನಿಸಿದರೆ ಭಕ್ತನು ನಿವೃತ್ತಿ ಕಲೆಯುಳ್ಳ ಕ್ರಿಯಾಶಕ್ತಿಯುಕ್ತ ಆಚಾರ ಲಿಂಗವನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಮಾರ್ಗವು ನಿವೃತ್ತಿ ಪಥವೆನಿಸುವದು. ಷಟ್‌ಸ್ಥಲವು ಹಂತ ಹಂತವಾಗಿ ಸೋಪಾನಗಳನ್ನು ಹತ್ತುವದೇ ಆಗಿದೆ. ಭಕ್ತಾದಿ ಸ್ಥಲಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಗೆವುದೇ ಷಟ್‌ಸ್ಥಲ ಸಾಧನವೆನಿಸುವದು. ಪ್ರವೃತ್ತಿಯಿಂದ ನಿವೃತ್ತಿಯತ್ತ ಸಾಗುವುದೇ ಷಟ್‌ಸ್ಥಲದ ಮಣಿಹ. ಅಷ್ಟೇ ಅಲ್ಲ ಸಾಧನೆಯಿಂದ ಸಾಮರಸ್ಯವನ್ನು ಸಾಧಿಸುತ್ತಾ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ತಾನಾಗುವುದು ಷಟ್‌ಸ್ಥಲದ ಮುಖ್ಯ ಧ್ಯೇಯ.

೧. ಭಕ್ತಸ್ಥ

ಪರಶಿವನ ಷಟ್‌ಶಕ್ತಿಗಳ ಸಂಕೋಚದಿಂದ ಜೀವಿಗಳಾಗಿ ಪರಿಣಮಿಸಿದರೆ; ಆ ಷಟ್‌ಶಕ್ತಿಗಳ ವಿಕಾಸವೇ ಷಟ್‌ಸ್ಥಲದ ಸಾಧನೆ. ಪರಮಾತ್ಮನ ಶಕ್ತಿ ಸಂಕೋಚತನವುಳ್ಳ ಜೀವಾತ್ಮನು ಷಟ್‌ಶಕ್ತಿಗಳ ಆವಿಷ್ಕಾರ ಮಾಡಿಕೊಳ್ಳುತ್ತಾ ಸಾಧನೆಯನ್ನು ಪ್ರಾರಂಭಿಸುವನು. ಈ ಜೀವಾತ್ಮನು ಶ್ರೀಗುರು ಕೃಪೆಯಿಂದ ಇಷ್ಟಲಿಂಗವನ್ನು ಪಡೆದಾಗ ಪ್ರಾಣಸ್ವರೂಪವೆನಿಸಿದ ಪಂಚಾಚಾರಗಳು ಮುಹೂರ್ತಗೊಳ್ಳುವವು. ಇಷ್ಟಲಿಂಗ ಧಾರಣೆಯಿಂದ ಲಿಂಗಾಚಾರವು ಅಳವಡುವುದು. ಲಿಂಗಾಚಾರಿಯಾದ ಭಕ್ತನು ಸದಾಚಾರಗಳನ್ನು ತಪ್ಪದೆ ಆಚರಿಸಬೇಕು. ಸಾಮಾನ್ಯವಾಗಿ ಯಾವುದೊಂದು ಕಾರ್ಯಪ್ರವೃತ್ತನಾಗುವ ಮಾನವನ ಉದ್ದೇಶ ಸಂತೃಪ್ತಿಯನ್ನು ಪಡೆಯುವುದೇ ಆಗಿರುವಂತೆ; ಸಾಗರದಿಂದ ಆವಿಯಾಗಿ ಬೇರ್ಪಟ್ಟ ನೀರಿನ ಹನಿಯು ಪುನಃ ಸಾಗರ ಸೇರುವವರೆಗೆ ಸಮಾಧಾನವಿಲ್ಲದೆ ಚಂಚಲವಾಗಿರುತ್ತದೆ. ಆವಿಯಾಗಿ ಮೇಲೆ ಹೋಗಿ ಮೋಡವಾದರೂ ಅದಕ್ಕೆ ಸಮಾಧಾನವಿರುವುದಿಲ್ಲ. ಇತ್ತಿಂದತ್ತ ಅತ್ತಿಂದಿತ್ತ ಸಂಚರಿಸುತ್ತಲೇ ಇರುವದು. ಗುಡುಗುಡಿಸಿ ಅರ್ಭಟಿಸುವದು ಮಳೆಯ ಹನಿಯಾಗಿ ಭೂಮಿಯತ್ತ ಧಾವಿಸುವಾಗ ಮತ್ತಷ್ಟು ತೀವ್ರತೆಯಿರುತ್ತದೆ. ಆ ತೀವ್ರತೆ ಮುಂದುವರೆದು ಹಳ್ಳಕೊಳ್ಳವಾಗಿ ನದಿಯ ಮೂಲಕ ಸಾಗರ ಸೇರಿ ಶಾಂತಿಯನ್ನು ಹೊಂದುವದು. ನಿರಂತರ ಚಲನಶೀಲವಾದ ನೀರು ಸ್ವಚ್ಛವಾಗಿರುವಂತೆ ಸಾಧನ ಶೀಲನಾದ ಸದ್ಭಕ್ತನು ಅತ್ಯಂತ ಶುದ್ಧನೂ ಪವಿತ್ರನೂ ಆಗಿ ಪರಿಣಮಿಸುವನು.

 ಷಟ್‌ಸ್ಥಲದಲ್ಲಿ ಪ್ರಥಮ ಸ್ಥಲವೇ ಭಕ್ತಸ್ಥಲ. ಇದು ತ್ಯಾಗಾಂಗದ ಪ್ರಥಮ ಹಂತವೆನಿಸಿದೆ. ತ್ಯಾಗಾಂಗದಲ್ಲಿ ಭಕ್ತಸ್ಥಲ ಮತ್ತು ಮಹೇಶ್ವರ ಸ್ಥಲಗಳೆಂದು ವಿಭಾಗವಾಗಿವೆ. ಆದಯ್ಯ ಶರಣನು “ತನುಗುಣವಳಿದಲ್ಲಿ ತ್ಯಾಗಾಂಗ” ಎಂದು ತ್ಯಾಗಾಂಗದ ವ್ಯಾಖ್ಯಾನ ಮಾಡಿರುವನು. ತನುವಿನಲ್ಲಿ ಅನಂತ ಗುಣಗಳು-ದುರ್ಗುಣಗಳು ಸಂಭವಿಸುತ್ತವೆ.

 ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು “ಕರಣಹಸಿಗೆ’ ಯಲ್ಲಿ ತನುವಿನಲ್ಲಿ ಉದ್ಭವಿಸುವ ಅಷ್ಟಮದಗಳನ್ನು, ಸಪ್ತವ್ಯಸನಗಳನ್ನು, ಷಡೂರ್ಮಿಗಳನ್ನು, ಅರಿಷಡ್ ವೈರಿಗಳನ್ನು, ಷಡ್‌ ಭ್ರಮೆಗಳನ್ನು ಷದ್ಭಾವ ವಿಕಾರಗಳನ್ನು, ತ್ರಿದೋಷಗಳನ್ನು, ಸದ್ಭಾವ-ದುರ್ಭಾವತ್ರಯ ಇತ್ಯಾದಿ ವಿಷಯಗಳನ್ನು ವಿವರಿಸಿರುವರು. ಇವೆಲ್ಲವುಗಳಿಗೆ ಮೂಲವಾದುದು ಅಹಂಭಾವ, ತಾನಲ್ಲದ್ದನ್ನು ತಾನೆಂದು ಭಾವಿಸಿ ಅಭಿಮಾನ ಪಡುವ ಚಿತ್ತವೃತ್ತಿಗೆ ಅಹಂಕಾರವೆನ್ನುವರು. ಕುಲ-ಛಲ ಧನ-ರೂಪ-ಯೌವನ- ವಿದ್ಯೆ-ರಾಜ್ಯ-ತಪಸ್ಸುಗಳೆಂಬ ಅಷ್ಟಮದಗಳು, ಮದವೆಂದರೆ ಮತ್ತು, ಅಮಲು, ಸೊಕ್ಕು, ಗರ್ವವೆಂದು ಕೋಶಕಾರರು ತಿಳಿಸಿರುವರು. ನಾವು ಉತ್ತಮ ಕುಲದಲ್ಲಿ ಜನಿಸಿದವರೆಂಬುದು, ಉಳಿದವರು ನಮಗೆ ಸರಿಯಲ್ಲವೆ೦ಬ ಭಾವವೇ ಮದ, ಛಲವೆ೦ದರೆ ಹಟ, ಯಾವುದೇ ವಿಷಯದಲ್ಲಾದರೂ ನನ್ನದೇ ಮೇಲೆಂಬ ಹಟವೇ ಛಲ ಮದ, ಶ್ರೀಮಂತಿಕೆ ಹೆಚ್ಚಾದಾಗ ಧನಮದ ಆವರಿಸುವದು. ನನ್ನ ರೂಪ ಲಾವಣ್ಯಕ್ಕೆ ಯಾರೂ ಸರಿಯಿಲ್ಲವೆಂಬುದು ರೂಪಮದ, ವಯಸ್ಸಿಗೆ ಬಂದವನಲ್ಲಿ ಯೌವನಮದ ಸಹಜವಾಗುವದು. ನನ್ನ ಪಾಂಡಿತ್ಯಕ್ಕೆ ಬೇರಾರೂ ಸಮಾನರಲ್ಲವೆಂಬುದು ವಿದ್ಯಾಮದ, ಇಂದಿನ ದಿನಮಾನಗಳಲ್ಲಿ ಪ್ರಜಾಪ್ರಾತಿನಿಧ್ಯದ ಅಧಿಕಾರವೇ ರಾಜ್ಯಮದ, ಸನ್ಯಾಸಿಗಳಿಗೆ ತಪಸ್ಸು, ಅನುಷ್ಠಾನದ ಮದ ಆವರಿಸುವದು.  ಅಭಕ್ಷ್ಯಭಕ್ಷಣ, ಅಪೇಯಪಾನ ಜೂಜಾಟ, ವೇಶ್ಯಾಗಮನ, – ಕಠೋರ ಮಾತನಾಡುವದು, , ಬೇಟೆಯಾಡುವದು, ಕಳವು ಮಾಡುವದು, ಇವೆಲ್ಲವೂ ತನುವಿನಿಂದಲೇ ನಡೆಯುತ್ತವೆ. ಹಸಿವು, ನೀರಡಿಕೆ, ದುಃಖ, ವ್ಯಾಮೋಹ, ಮುಪ್ಪು- ಮರಣಗಳೆ ದೇಹಕ್ಕೆ ಆವರಿಸುವ ತೆರೆಗಳು. ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳು ಅನಿಮಿತ್ತವಾಗಿ ತನುವಿನಲ್ಲಿ ಉದ್ಭವಿಸುವ ವೈರಿಗಳು, ಜಾತಿ-ವರ್ಣ- ಆಶ್ರಮ-ಕುಲ-ಗೋತ್ರ-ನಾಮಗಳೆಂಬ ಆರು ವಿಕಾರಗಳಿಂದ ತನು ಕೂಡಿದೆ. ತಾಯಿ ಹೊಟ್ಟೆಯಲ್ಲಿ ಗರ್ಭವುಂಟಾಗುವದು, ಗರ್ಭಾವಾಸದಿಂದ ಹೊರ ಬರುವದು, ಕ್ರಮೇಣ ಪರಿಣಾಮ ಹೊಂದುವದು, ಬಹಳವಾಗಿ ಬೆಳೆಯುವದು, ಮುಪ್ಪಿನಿಂದ ಕುಸಿಯುವದು, ಕೊನೆಗೆ ಸಾಯುವದು. ಅವಿದ್ಯೆ-ಅಸ್ಮಿತೆ- ರಾಗ-ದ್ವೇಷ-ಅಭಿನಿವೇಶಗಳೆಂಬ ಪಂಚಕ್ಲೇಶಗಳಿಂದ ಕೂಡಿದೆ. ಸತ್ವ-ರಜ-ತಮಸ್ಸಗಳೆಂಬ ಗುಣತ್ರಯಗಳಿವೆ. ಈ ಮೂರು ಗುಣಗಳಿಂದ ಮೂರಹಂಕಾರಗಳುಂಟಾಗುತ್ತವೆ. ಅಧ್ಯಾತ್ಮಿಕ-ಆದಿಭೌತಿಕ, ಆದಿದೈವಿಕಗಳೆಂಬ ತಾಪತ್ರಯಗಳು ಬರುತ್ತವೆ. ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ ಮೂರವಸ್ಥೆಗಳು ಜರುಗುತ್ತವೆ. ಶರೀರವು ವಾತ-ಪಿತ್ತ-ಶ್ಲೇಷಗಳೆಂಬ ಅನೇಕ ರೋಗಗಳಿಗೆ ತುತ್ತಾಗುವದು. ಸದ್ಭಾವನೆಗಳು- ದುರ್ಭಾವನೆಗಳು ಶರೀರದಲ್ಲಿ ಕಾಣಬರುತ್ತವೆ. ಹೀಗೆ ಅನೇಕ ಗುಣಗಳಿಗೆ ಆಕರವಾಗಿರುವ ದೇಹದ ಗುಣಗಳನ್ನು ಭಕ್ತನಾದವನು ಕಳೆದುಕೊಳ್ಳಬೇಕಾಗುವದು. ಸ್ಪಟಿಕದ ಘಟದಂತೆ ಒಳಹೊರಗೂ ಶುದ್ಧನಾದರೆ ಮಾತ್ರ ಭಕ್ತತನ ಬರುವದು. ಬಸವಣ್ಣನವರು-

 ಒಳಗೆ ಕುಟಿಲ, ಹೊರಗೆ ವಿನಯವಾಗಿ

 ಭಕ್ತರೆನಿಸಿಕೊಂಡವರ ಬಲ್ಲನೊಲ್ಲನಯ್ಯಾ ಲಿಂಗವು,

ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯಾ,

ಒಳಹೊರಗೊಂದಾಗದವರಿಗೆ

ಅಳಿಯಾಶೆದೋರಿ ಬೀಸಾಡುವನವರ

ಜಗದೀಶ ಕೂಡಲಸಂಗಮದೇವಾ

ಎಂಬುದಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿರುವರು. ಭಕ್ತನಾದವನು ಒಳಹೊರಗೆ ಶುದ್ಧನಾಗಿರಬೇಕು. ಬಾಹ್ಯದಲ್ಲಿ ವಿನಯವ೦ತಿಕೆ ತೋರಿ ಅಂತರಂಗದಲ್ಲಿ ಕುಟಿಲ ಕುಹಕತನ ದುರ್ವ್ಯಸನಗಳನ್ನಿರಿಸಿಕೊಂಡರೆ ಭಕ್ತನೆನಿಸುವದಿಲ್ಲ. ಎಲ್ಲವನ್ನು ಬಲ್ಲ ಲಿಂಗತಂದೆಯು ಇಂಥವನಿಗೆ ಕೃಪೆ ತೋರುವುದಿಲ್ಲ. ಇವರು ಸನ್ಮಾರ್ಗಕ್ಕೆ ಸಲ್ಲುವುದೂ ಇಲ್ಲ. ಭಕ್ತನು ಒಳಗೂ ಹೊರಗೂ ಒಂದಾಗಬೇಕು. ಇಲ್ಲದಿದ್ದರೆ ಲೌಕಿಕ ಆಶಾಪಾಶದಲ್ಲಿ ಮುಳುಗಿಸಿ ಶಿವನು ಭವ ಬಂಧನಕ್ಕೆ ನೂಕುವನು. ಶಿವಾನುಭವಿ ಮೈಲಾರ ಬಸವಲಿಂಗ ಶರಣರು ಸೂತ್ರ ಬದ್ಧವಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿದ್ದಾರೆ.

ಗುರುಸೇವಾ ಭೃತ್ಯತ್ವ-ಚಿರಲಿಂಗದೇಕತ್ವ

ವರಸತ್ಕಾಯಕ ಉರೆ ದಾಸೋಹವೆ ಭಕ್ತ-

ನಿರವೆಂದ ಗುರುವೆ ಕೃಪೆಯಾಗು

ಭಕ್ತನ ಹೊರಬಾಳು ಇಲ್ಲಿದೆ. ಭಕ್ತನು ಗುರುಸೇವೆ, ಕಿಂಕರ ಭಾವನೆ, ಗುರು-ಲಿಂಗ- ಜಂಗಮರಲ್ಲಿ ಅಭಿನ್ನತೆ, ಕಾಯಕ ನಿಷ್ಠೆ ಮತ್ತು ದಾಸೋಹಂಭಾವಗಳನ್ನು ಮೈಗೂಡಿಸಿಕೊಳ್ಳಬೇಕಾಗುವದು. ಭಕ್ತನು ಕಾಯಕ ನಿಷ್ಠನಾಗಿ ದಾಸೋಹಂಭಾವಿಯಾಗಬೇಕು. ಕಾಯಕವಿಲ್ಲದ ಕೈಯಿಂದ ಲಿಂಗವನ್ನು ಪೂಜಿಸಲು ಯೋಗ್ಯವಾಗುವದಿಲ್ಲ. ಅಂತೆಯೇ ಬಸವ ಮಹಾನುಭಾವರು ಇನ್ನೊಂದಡೆ

ಮಾಡುವ ನೀಡುವ ಭಕ್ತನ ಕಂಡಡೆ

ನಿಧಿನಿಧಾನವ ಕಂಡಂತಾಯಿತ್ತು

ಪಾದೋದಕ-ಪ್ರಸಾದ ಜೀವಿಯ ಕಂಡಡೆ

ಹೋದ ಪ್ರಾಣ ಬಂದಂತಾಯಿತ್ತು

ಎಂದು ಭಕ್ತನ ಕರ್ತವ್ಯ ಕರ್ಮವನ್ನು ಚನ್ನಾಗಿ ನಿರೂಪಿಸಿರುವರು. ಕಾಯಕ ಮಾಡುತ್ತಾ ದಾಸೋಹ ಗೈಯುವುದೆ ಭಕ್ತತನಕ್ಕೆ ಭೂಷಣವೆಂತಲೂ, ಆತನೇ ಸಮಾಜದಲ್ಲಿ ನಿಧಿ-ವಿಧಾನ, ಗುರುಲಿಂಗ ಜಂಗಮರ ಪಾದೋದಕ ಪ್ರಸಾದಕ್ಕಾಗಿ ಭಕ್ತನು ಸದಾ ಬಯಸುವಂತಾಗಬೇಕು.

ಷಟ್‌ಸ್ಥಲದಲ್ಲಿ ಮೊದಲನೆಯ ಮೆಟ್ಟಿಲು ಭಕ್ತಸ್ಥಲ, ಎಲ್ಲ ಸ್ಥಲಗಳಿಗೆ ಅದುವೇ ಆಧಾರಭೂತವಾದುದು. ಷಟ್‌ಸ್ಥಲವು ಕೇವಲ ತಾತ್ವಿಕ ಬೋಧನೆಯನ್ನಷ್ಟೇ ಕಲ್ಪಿಸುವದಿಲ್ಲ, ಭೌತಿಕದಲ್ಲಿ ಬಾಳುವ ಕಲೆಯನ್ನು ಸಹ ತಿಳಿಸುತ್ತದೆ. ಭಕ್ತನಿಗೆ ಆಚಾರ ಲಿಂಗವೇ ಆರಾಧ್ಯ ವಸ್ತು, ಶ್ರದ್ಧಾಭಕ್ತಿಯೇ ಮೂಲ ದ್ರವ್ಯವಾಗಬೇಕು. ಭಕ್ತಸ್ಥಲದಲ್ಲಿ ದ್ವೈತಾದ್ವೈ ತವಿದೆ. ಆತ್ಮ-ಪರಮಾತ್ಮರ ದರ್ಶನವಿದೆ. ಪೂಜ್ಯ-ಪೂಜಕ ಭಾವವಿದೆ. ಶಕ್ತಿ-ಭಕ್ತಿಗಳ ಸಮ್ಮಿಲನವಿದೆ. ಸಾಧನೆ-ಸಿದ್ಧಿಗೆ ಅವಕಾಶವಿದೆ. ಕ್ರಿಯಾಶಕ್ತಿ ಜಾಗ್ರತವಾಗಿ ನಿವೃತ್ತಿ

ಕಲೆಯುಳ್ಳ ಆಚಾರ ಲಿಂಗವನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಬೇಕು. ಮೇಲೆ ವಿವರಿಸಿದ ಕಾಯಗುಣಗಳಳಿದು ಶಿವಗುಣಗಳು ಮೈಗೂಡಬೇಕು, ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂಬ ಭಾವ ಗಟ್ಟಿಗೊಳ್ಳಬೇಕು.

 ಕಂಡಭಕ್ತರಿಗೆ ಕೈಮುಗಿವಾತನೇ ಭಕ್ತ

ಮೃದು ವಚನವೇ ಸಕಲ ಜಪಂಗಳಯ್ಯಾ

ಮೃದು ವಚನವೇ ಸಕಲ ತಪಂಗಳಯ್ಯಾ

ಸದುವಿನಯವೇ ಸದಾಶಿವನ ಒಲುಮೆಯಯ್ಯಾ

ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ

ಲಿಂಗ ಧರಿಸಿದ ಭಕ್ತನು ಅಂಗದ ಮೇಲೆ ಲಿಂಗವುಳ್ಳ ಭಕ್ತರನ್ನು ಕಂಡರೆ ಕೈಮುಗಿಯಬೇಕು. ಬಡವ ಶ್ರೀಮಂತನೆನ್ನದೆ ವ್ಯಕ್ತಿ ಗೌರವ ನೀಡುವದೇ ಭೃತ್ಯಾಚಾರ, ಮೃದು ವಚನಗಳಿಂದ ಮಾತನಾಡುವದೆ ಜಪ-ತಪವೆನಿಸುವದು, ಸದುವಿನಯವೇ ಸದಾಶಿವನ ಕೃಪೆಗೆ ಕಾರಣವಾಗುವದು. ಹೀಗೆ ಸಾಧಕನು ಭಕ್ತಸ್ಥಲವನ್ನು ಆಚಾರನಿಷ್ಠನಾಗಿ ಶ್ರದ್ಧೆಯಿಂದ ಕಾಯಕ-ದಾಸೋಹದಲ್ಲಿ ತೊಡಗಿಸಿಕೊಳ್ಳಬೇಕು.

೨. ಮಾಹೇಶ್ವರ ಸ್ಥಲ

ಶ್ರದ್ಧಾಭಕ್ತಿಯುಳ್ಳ ಭಕ್ತನು ಆಚಾರ ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರಿಂದ ಮಾಹೇಶ್ವರ ಸ್ಥಲವನ್ನು ಪ್ರವೇಶಿಸುವನು. ಇದು ಷಟ್‌ಸ್ಥಲದ ಎರಡನೇ ಹಂತ. ನೆಲತತ್ತ್ವಾಂಗನಾದ ಭಕ್ತನು ಭೂಮಿಯ ಸಹನಶೀಲತೆ, ತಾಳ್ಮೆ, ಕಿಂಕರತ್ವ ಗುಣಗಳನ್ನು ಸಂಪಾದಿಸಿಕೊಂಡಂತೆ; ಜಂಗಮವಾದ ಮಹೇಶ್ವರನು ನೀರಿನಂತೆ ಪರಿಶುದ್ಧತೆಯನ್ನು ಮತ್ತು ಸಚ್ಛಾರಿತ್ರ್ಯವನ್ನು ತನ್ನದಾಗಿಸಿಕೊಳ್ಳಬೇಕಾಗುವದು. ಇಲ್ಲಿ ಸದಾಚಾರ ಸುವಿಚಾರಗಳು ಪ್ರಾಮುಖ್ಯವಾಗುವವು. ಇದರಿಂದ ಸದ್ಭಕ್ತನಲ್ಲಿ ವ್ಯಕ್ತಿತ್ವ ವಿಕಸನವಾಗುವದು. ವ್ಯಕ್ತಿತ್ವದ ಹಿರಿಮೆ-ಗರಿಮೆಗಳನ್ನು ಬೆಳೆಸಿಕೊಳ್ಳುತ್ತ ಗುರುಲಿಂಗದ ಆರಾಧಕನಾಗಬೇಕಾಗುವದು.

 ಷಟ್‌ಸ್ಥಲ ಸಿದ್ಧಾಂತದಲ್ಲಿ ವಿಶೇಷವಾಗಿ ಭಕ್ತಿಯೇ ಜೀವಾಳವೆನಿಸುತ್ತದೆ. ಷಟ್‌ಸ್ಥಲಾತ್ಮಕ ಭಕ್ತಿಯ ವಿಕಾಸವಾಗುವದರಿಂದ ಭಕ್ತನಲ್ಲಿ ಶಕ್ತಿಯ ಸಂಚಯವಾಗುವದು. ಸ್ಥಲಪದ ವಾಚ್ಯನಾದ ಪರಶಿವನು ಸ್ವವಿಮರ್ಶಾರೂಪ ಶಕ್ತಿ ವಿಶಿಷ್ಟವಾಗಿ ಸ್ವಲೀಲೆಯಿಂದ ಶಿವ+ಶಕ್ತಿಗಳೆಂದು ಎರಡಾದಂತೆ, ಶಿವನು ಲಿಂಗ ಅಂಗವೆಂದು ಎರಡಾದುದನ್ನು ಅವಲೋಕಿಸಲಾಗಿದೆ. ಅದರಂತೆ ಶಕ್ತಿಯೂ ಶಕ್ತಿ ಭಕ್ತಿಗಳೆಂದು ಎರಡಾಗುವದು. ಶಿವನೊಡನೆ ತಾದಾತ್ಮ ಸಂಬಂಧವುಳ್ಳ ಶಿವನ ಸಹಧರ್ಮಿಣಿ ಶಕ್ತಿಯು ಭಕ್ತನ ಹಿತಕ್ಕಾಗಿ ಲಿಂಗಸ್ಥಲವನ್ನಾಶ್ರಯಿಸಿ, ಕಲೆಯೆನಿಸಿದರೆ ಅಂಗಸ್ಥಲವನ್ನಾಶ್ರಯಿಸಿ ಭಕ್ತಿಯೆನಿಸುವದು. ಷಟ್‌ಸ್ಥಲ ಮಾರ್ಗದಲ್ಲಿ ಭಕ್ತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಸಾಹಿತ್ಯದಲ್ಲಿ ಸ್ಥಾಯಿಭಾವಗಳಿಗೆ ಪ್ರಾಮುಖ್ಯತೆಯಿದ್ದಂತೆ ಷಟ್‌ಸ್ಥಲದ ಸ್ಥಾಯಿಭಾವವೇ ಭಕ್ತಿಯು. ಷಟ್‌ಸ್ಥಲ ಸೋಪಾನಗಳನ್ನು ಮೇಲೇರಿಸುವ ಆಧಾರ ಸ್ಥಂಭವೇ ಭಕ್ತಿ, ಈ ಭಕ್ತಿ ಶಕ್ತಿಯು ಸಂಸಾರದ ತೊಡಕಿನ ಬಂಧನಗಳನ್ನು ನಾಶಗೊಳಿಸುವದು. ಅಜ್ಞಾನ ಕತ್ತಲೆಯನ್ನು ಹೊಡೆದೊಡಿಸುವದು. ಭಕ್ತಿ ಮಾರ್ಗವು ಪುರಾತನವಾದುದು. ನಾರದ ಮುನಿಯು ಭಕ್ತಿಯನ್ನು ಕುರಿತು “ಭಲ್ತಿಃ  ಸಾ ಪ್ರೇಮ ರೂಪಾʼʼ ಪ್ರೇಮರೂಪವಾದುದೇ ಭಕ್ತಿ ಅರ್ಥಾತ್ ಪ್ರೇಮವೇ ಭಕ್ತಿಯು. ಪ್ರೇಮವೇ ಸಂಬಂಧವನ್ನು ಕಲ್ಪಿಸುತ್ತದೆ. ಸಂಬಂಧವು ಎರಡು ತೆರನಾಗಿದೆ. ಒಂದು ರಕ್ತಗತವಾದುದು. ಇದು ಸ್ವಾರ್ಥಪರವಾದುದು. ಇನ್ನೊಂದು ಭಾವ ಸಂಬಂಧ. ಇದು ಆತ್ಮೀಯವಾದುದು. ರಕ್ತಸಂಬಂಧದಲ್ಲಿ ತಂದೆ-ತಾಯಿ-ಅಕ್ಕ-ತಮ್ಮ-ಅಣ್ಣ-ತಂಗಿ-ಅತ್ತೆ-ಮಾವ-ಮೈದುನ ಇತ್ಯಾದಿ ರಕ್ತ ಸಂಬಂಧವು ಶಾರೀರಿಕ ಸಂಬಂಧವಾದರೆ, ದೇವ-ಭಕ್ತ, ಗುರು-ಶಿಷ್ಯ-ಸ್ನೇಹಿತ-ಇವೆಲ್ಲವೂ ಭಾವ ಸಂಬಂಧಗಳು, ಭಕ್ತ ಭಗವಂತರ ನಡುವೆ ಭಕ್ತಿಯು ಅತ್ಯಂತ ಆತ್ಮೀಯ ಭಾವವನ್ನು ಉಂಟು ಮಾಡುವದು. ಶ್ರವಣ

ಕೀರ್ತನಾದಿ ನವವಿಧ ಭಕ್ತಿಗಳಾದಂತೆ ಷಡ್ವಿಧ ಭಕ್ತಿಯು ವಿಶಿಷ್ಟವಾದುದು. ಲಿಂಗದ ಹೊರತು ಬೇರಾವ ದೇವರಿಲ್ಲವೆಂದು ಶ್ರದ್ಧೆಯು ನಿಷ್ಟೆಯು ಕರಿಗೊಳ್ಳುವದು. ಮಾಹೇಶ್ವರನಿಗೆ ನಿಷ್ಟಾಭಕ್ತೆಯೆ ಸ್ಥಾಯಿಭಾವ. ಈ ಸ್ಥಲದ ವ್ಯಾಖ್ಯಾನವನ್ನು ಮೈಲಾರ ಬಸವಲಿಂಗ ಶರಣರು-

ಗುರು ಲಿಂಗ ನಿಷ್ಠೆಯಿಂ |

ಪರದೈವ ಮೊದಲಾದ

ದುರಿತ ಪಂಚಕವು –

ನಿರಸನವಾಗೆ ಮಾಹೇಶ್ವರನೆಂದ ಗುರುವೆ ಕೃಪೆಯಾಗು

ಎಂಬುದಾಗಿ ಸೂತ್ರಬದ್ಧವಾಗಿ ಮಾಡಿರುವರು. ಆಚಾರ ಲಿಂಗದಲ್ಲಿ ಶ್ರದ್ಧೆಯು ಬೆಳೆದರೆ ಗುರುಲಿಂಗದಲ್ಲಿ ನಿಷ್ಠಾಭಕ್ತಿಯು ದೃಢವಾಗಬೇಕು. ಇಷ್ಟಲಿಂಗವನ್ನಲ್ಲದೆ ಅನ್ಯ ದೈವಗಳ ಆಸಕ್ತಿಯನ್ನು ಸಂಪೂರ್ಣವಾಗಿ ತೊರೆಯಬೇಕು. ಅಂದರೆ ಲಿಂಗನಿಷ್ಠೆಯು ಕರಿಗೊಳ್ಳುವದು. ಪರಸ್ತ್ರೀಯರಲ್ಲಿ ರತಿ, ಪರನಿಂದೆ, ಪ್ರಾಣಿಗಳ ಹಿಂಸೆ, ಪರದ್ರವ್ಯಾಪೇಕ್ಷೆ ಮತ್ತು ತನಗಿಂತ ಭಿನ್ನವಾಗಿ ದೇವರಿದ್ದಾನೆಂಬ ಈ ಐದು ಪಾತಕಗಳನ್ನು ಸಂಪೂರ್ಣವಾಗಿ ಮನಸ್ಸಿನಿಂದ ದೂರ ತಳ್ಳಬೇಕು. ಪಂಚಪಾತಕಗಳಿಂದ ಮುಕ್ತನಾದ ಮಾಹೇಶ್ವರನ ಜೀವನ ಪರಿಶುದ್ಧವಾಗುವದು. ತೋಂಟದ ಸಿದ್ಧಲಿಂಗರು ಈ ಸ್ಥಲದ ಮರ್ಮವನ್ನು ಕೆಳಗಿನಂತೆ ವಿವರಿಸಿರುವರು.

ಅನೃತ, ಅನಾಚಾರ, ಅನ್ಯ ಹಿಂಸೆ,

ಪರಧನ, ಪರಸ್ತ್ರೀ, ಪರನಿಂದೆ ಇವ ಬಿಟ್ಟು

ಲಿಂಗನಿಷ್ಠೆಯಿಂದ ಶುದ್ಧಾತ್ಮನಾಗಿರಬಲ್ಲಡೆ

ಮಾಹೇಶ್ವರ ಸ್ಥಲವೆಂಬೆನಯ್ಯಾ

ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ

ಇದೇ ರೀತಿ ಮಹಾಜ್ಞಾನಿ ಚನ್ನಬಸವಣ್ಣನವರು ಹಾಗೂ ವೈರಾಗ್ಯನಿಧಿ ಮಹಾದೇವಿಯಕ್ಕನವರೂ ಮಾಹೇಶ್ವರ ಬಗೆಯನ್ನು ಬಣ್ಣಿಸಿರುವರು.

ಶಿವನ ಇಚ್ಛಾ ಶಕ್ತಿಯ ಸಂಕೋಚತನದಿಂದ ಜೀವನಲ್ಲಿ ಆಣವಮಲವೆನಿಸಿದರೆ, ಜ್ಞಾನಶಕ್ತಿಯ ಸ೦ಕೋಚತನದಿಂದ ಮಾಯಾಮಲ ಆವರಿಸುವದು. ಕ್ರಿಯಾಶಕ್ತಿಯ ಸಂಕೋಚತನದಿಂದ ಕಾರ್ಮಿಕ ಮಲವು ಅಂಟಿಕೊಳ್ಳುವದು. ಶಿವದೀಕ್ಷೆಯ ಕಾಲದಲ್ಲಿ ಶ್ರೀಗುರು ಶಿಷ್ಯನ ಮಲತ್ರಯಗಳನ್ನು ಉಪದೇಶದಿಂದ ಕಳೆದುಕೊಳ್ಳಲು ಬೋಧಿಸುವರು. ಕ್ರಿಯಾಶಕ್ತಿ, ಜ್ಞಾನಶಕ್ತಿಗಳನ್ನು ಜಾಗೃತಗೊಳಿಸಿ ಕೊಳ್ಳುವದು ಸಾಧಕನ ಸಾಧನೆಯಾಗಬೇಕು. ಕ್ರಿಯಾಶೀಲನಾಗಿ ಪ್ರವೃತ್ತಿ ಪಥದಿಂದ ನಿವೃತ್ತಿ ಕಲೆಯತ್ತ ಮುನ್ನಡೆಯುವದೆ ಷಟ್‌ಸ್ಥಲದ ಮಾರ್ಗ.

 ರಕ್ತ ಸಂಬಂಧಿಗಳಾದ ಬಂಧುಗಳು ವಿಶೇಷ ಸಂದರ್ಭಗಳಲ್ಲಿ ಬಂದುಂಡು ಹೋಗುವರಲ್ಲದೆ ಭವ ಬಂಧನವನ್ನು ಕಳೆಯಲಾರರು. ಆದರೆ ದೇವ ಸಂಬಂಧದಿಂದ ಬಂಧನವನ್ನು ಬಿಡಿಸಿಕೊಳ್ಳಬಹುದು. ವಸ್ತುತಃ ಜೀವ ಪರಮಾತ್ಮರ ಸಂಬಂಧವು ಪರಮಾರ್ಥತಃ ಅಭಿನ್ನವಾದುದೂ ಜೀವನಿಗೆ ಶಕ್ತಿಗಳ ಸಂಕೋಚತನದಿಂದ ಅಜ್ಞಾನ ಮತ್ತು ಮಲತ್ರಯಗಳು ಅಂಟಿಕೊಂಡ ಕಾರಣ ವಾಸ್ತವಿಕ ಸತ್ಯವನ್ನು ಮರೆತು ಹೋಗಿರುತ್ತಾನೆ. ಸುಜ್ಞಾನದಿಂದ ಮಲತ್ರಯಗಳನ್ನು ನಿವಾರಿಸಿಕೊಂಡು ದೇವನೊಡನೆ ಘನಿಷ್ಠ ಸಂಬಂಧವನ್ನು ಬೆಳೆಸಿಕೊಳ್ಳುವದೇ ಮಾಹೇಶ್ವರನ ಮಣಿಹ. ಇಷ್ಟಲಿಂಗವೇ ತನ್ನ ಸರ್ವಸ್ವವೆಂದರಿತು ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರೊಂದಿಗೆ ಸಚ್ಚಾರಿತ್ರ್ಯವನ್ನು ಸಂಪಾದಿಸಿಕೊಂಡರೆ ಗರಿಮೆ ಹೆಚ್ಚುವದು. ಲೌಕಿಕದಲ್ಲಿ ದೈಹಿಕ ಸಂಬಂಧಗಳು ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಂಡರೆ ಅಧ್ಯಾತ್ಮಿಕವಾಗಿ ಮಾಹೇಶ್ವರನಲ್ಲಿ ಅನ್ನೋನ್ಯ ಆತ್ಮೀಯ ಸಂಬಂಧ ಬೆಳೆಯುವದು. ಅದು ಶಾಶ್ವತವೆನಿಸುವದು. ಲೌಕಿಕರು ಯಾಂತ್ರಿಕ ಜೀವನ ನಡೆಸಿ ಸಂಬಂಧಗಳಲ್ಲಿ ಏರಿಳಿತವಾಗಿ ದುಃಖಿಗಳಾಗುವರು. ಇಲ್ಲಿ ಹಾಗಲ್ಲ, ಪವಿತ್ರ ಭಾವನೆಗಳು ಬೆಳೆದು ನಿತ್ಯ ಸಂಬಂಧವನ್ನು ಪಡೆಯುವನು. ಎಲ್ಲರೂ ನನ್ನವರೆಂಬ ಭಾವನೆ ಬೆಳೆಯುವದು. ದೇವನೆ ಸರ್ವಸ್ವವೆಂಬ ಭಾವದಿಂದ ನಡೆದು ತನ್ನ ನಿಷ್ಠೆಯನ್ನು ಗಟ್ಟಿಗೊಳಿಸಿಕೊಳ್ಳುವನು. ಸ್ವಾಧಿಷ್ಠಾನ ಚಕ್ರದಲ್ಲಿ ಗುರುಲಿಂಗವನ್ನು ಜಿಹ್ವಾ ಮುಖದಲ್ಲಿ ಸುಬುದ್ಧಿ ಹಸ್ತದಿಂದ ಶ್ರದ್ಧಾ ಭಕ್ತಿಯಿಂದ ಅರ್ಚಿಸುವವನೆ ಮಾಹೇಶ್ವರನು.

೩. ಪ್ರಸಾದಿಸ್ಥಲ

ಭಕ್ತ-ಮಾಹೇಶ್ವರ ಸ್ಥಲಗಳೆರಡೂ ಒಂದುಗೂಡಿ ತ್ಯಾಗಾಂಗವೆನಿಸಿದರೆ, ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳೆರಡು ಭೋಗಾಂಗದ ಭಾಗಗಳು. ಸ್ಥೂಲ ತನುವಿಗೆ ತ್ಯಾಗಾಂಗವೆಂತಲೂ, ಸೂಕ್ಷ್ಮ ತನುವಿಗೆ ಭೋಗಾಂಗವೆಂದುದು ವೀರಶೈವ ಪರಿಭಾಷೆ, ಭಕ್ತನದು ನೆಲತತ್ವ, ಮಾಹೇಶ್ವರನದು ಜಲತತ್ವ, ನೆಲತತ್ತ್ವದ ಸ್ಥೂಲ ಶರೀರದಲ್ಲಿ ಕಾಣಿಸುವ ಅಸ್ಥಿ-ಮಾಂಸ-ಚರ್ಮ-ನಾಡಿ ಮತ್ತು ರೋಮಗಳ ಪರಿಶುದ್ಧಿಯನ್ನು ಭಕ್ತನು ಸದಾಚಾರ-ಸತ್ಕ್ರಿಯೆಗಳಿಂದ ಸಾಧಿಸಿದರೆ; ಜಲತತ್ತ್ವದಿಂದಾಗುವ ರಸ-ರಕ್ತ ಮೂತ್ರ-ಸ್ವೇದ ಮತ್ತು ಶುಕ್ಲಗಳು ಮಾಹೇಶ್ವರ ಸ್ಥಲದಲ್ಲಿ ಶುದ್ಧವಾಗುತ್ತವೆ. ಸಾಮಾನ್ಯ ವೀರಶೈವನು ಜಂಗಮದೇವನಿಂದ ಅನುಗ್ರಹ ಪಡೆದು ವಿಶೇಷ ವೀರಶೈವನೆನಿಸುವನು. ವಸ್ತುತಃ ಚಿನ್ಮಯಾನುಗ್ರಹದಿಂದ ಷಟ್‌ಸ್ಥಲಾಧಿಕಾರವು ಪ್ರಾಪ್ತವಾಗುವದು. ಜಂಗಮಾನುಗ್ರಹ ಹೊಂದುವದರಿಂದ ಸ್ಥೂಲಕಾಯವು ಪ್ರಸಾದಕಾಯವೆನಿಸುವದು. ಪ್ರಸಾದಕಾಯನಾಗುವದರಿಂದ ತ್ಯಾಗಾಂಗ ಶುದ್ಧಿಯಾಗುವದು. ಇದಕ್ಕೆ ಭಕ್ತ ಮಾಹೇಶ್ವರ ಸ್ಥಲದ ಆಚರಣೆ ಅತ್ಯವಶ್ಯವಾದುದು. ಇದರಿಂದ ಪ್ರಸಾದಿ ಸ್ಥಲವು ಪ್ರಸಾದಕಾಯನಾಗಲು ಸಹಕಾರವಾಗುವದು.

 ಸತ್ಕ್ರಿಯಾಚರಣೆಗಳಿಂದ ಪ್ರತಿಯೊಬ್ಬ ವ್ಯಕ್ತಿಯು ಕಾರ್ಯಶೀಲನಾಗುವನು. ಕರ್ತವ್ಯ ದಕ್ಷತೆಯನ್ನು ಪಡೆಯುವನು. ಈ ಸಾಧಕನು ಕ್ರಿಯಾಶಕ್ತಿಯೊಡನೆ ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಂಡು ನಿವೃತ್ತಿ ಪಥದಲ್ಲಿ ಮುನ್ನಡೆದು ಪ್ರತಿಷ್ಠಾ ಕಲೆಯನ್ನು ತನ್ನದನ್ನಾಗಿಸಿಕೊಳ್ಳುವನು. ಹೀಗೆ ಷಟ್‌ಸ್ಥಲ ಸಿದ್ಧಾಂತವು ಮೆರಗು ಪಡೆಯುವದು. ಕ್ರಿಯಾಶಕ್ತಿ-ಜ್ಞಾನಶಕ್ತಿಗಳ ಸಮ್ಮಿಲನದಿಂದ ಇಚ್ಛಾಶಕ್ತಿಯು ಸಫಲವಾಗುವದು. ಕ್ರಿಯೆ ಮತ್ತು ಜ್ಞಾನಗಳು ಮೈಗೂಡಿದಾಗ ಅಂಥ ಸಾಧಕನ ಇಚ್ಛೆಗಳೆಲ್ಲ ಕೈಗೂಡುವವು. ಅವೆರಡು ಶಕ್ತಿಗಳು ಜಾಗ್ರತವಾಗದಿದ್ದರೆ ಅವನಲ್ಲಿಯ ಇಚ್ಛಾ ಶಕ್ತಿಯು ಬರಿ ಕನಸಿನಂತಾಗುವದು. ಇಚ್ಛಾಶಕ್ತಿಯಲ್ಲಿ ಸಂಕಲ್ಪ ಸಿದ್ಧಿಯು ಮೈದೋರುವದು. ಅದಕ್ಕಾಗಿ ವೀರಶೈವರು ಕ್ರಿಯಾ-ಜ್ಞಾನಗಳನ್ನು ಸಮಸಮುಚ್ಚಯದಿಂದ ಅಳವಡಿಸಿಕೊಂಡಿರುವರು. ಅವಿರಳ ಜ್ಞಾನಿ ಚನ್ನಬಸವಣ್ಣನವರು ಕ್ರಿಯಾ-ಜ್ಞಾನಗಳ ವಿವರಣೆಯನ್ನು ತಿಳಿಯುವಂತೆ ವಚನಿಸಿರುವರು.

ಕ್ರಿಯೆಯೆ ಜ್ಞಾನ, ಆ ಜ್ಞಾನವೇ ಕ್ರಿಯೆ

ಜ್ಞಾನವೆಂದಡೆ ತಿಳಿಯುವದು

ಕ್ರಿಯೆಯೆಂದಡೆ ತಿಳಿದಂತೆ ಮಾಡುವದು

ಪರಸ್ತ್ರೀಯ ಭೋಗಿಸಬಾರದೆಂಬುದೇ ಜ್ಞಾನ

ಅದರಂತೆ ಆಚರಿಸುವದೇ ಕ್ರಿಯೆ

ಅರಿತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ

ಕೂಡಲ ಚನ್ನಸಂಗಮದೇವ

ಜ್ಞಾನ ಕ್ರಿಯೆಗಳು ಸಮನ್ವಯಗೊಳ್ಳುವದರಿಂದ ವ್ಯಕ್ತಿತ್ವ ವಿಕಸನವಾಗುವದು. ಮುಖ್ಯವಾಗಿ ಕ್ರಿಯೆ ಜರುಗಬೇಕಾದರೂ ಜ್ಞಾನ ಬೇಕು. ಜ್ಞಾನ ಲಭಿಸಲು ಕ್ರಿಯೆಯನ್ನು ಮಾಡಬೇಕಾಗುವದು. ಯಾವುದೇ ನಿಷೇಧಿತ ಕಾರ್ಯವನ್ನು ಮಾಡಬಾರದೆಂಬ ಜ್ಞಾನದಂತೆ ನಡೆದರೆ ಆ ಕ್ರಿಯೆಗೆ ಅರ್ಥ ಬರುವದು. ತಿಳಿದು ತಪ್ಪು ಮಾಡುವದರಿಂದ ಅಜ್ಞಾನವು ಆವರಿಸುವದು.

 ಮಾಹೇಶ್ವರ ಸ್ಥಲದಲ್ಲಿ ನಿಷ್ಠೆಯು ಗಟ್ಟಿಗೊಳ್ಳಬೇಕು. “ನಿಶ್ಚಯೇನ ತಿಷ್ಠತೀತಿ ನಿಷ್ಠಾ” ನಿಶ್ಚಯವಾಗಿ ನಿಲ್ಲುವ ಜ್ಞಾನ ನಿಷ್ಠೆಯೆನಿಸುವದು. ಅಚಲವಾದ ಭಕ್ತಿಭಾವವೇ ನಿಷ್ಠೆಯಾಗುವದು. ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯನ್ನಾಗಿ ನಿಶ್ಚಯಿಸಿದ್ದಳು. ಯಶೋಧೆಯು ಕೃಷ್ಣನನ್ನೇ ತನ್ನ ಮಗನೆಂದು ದೃಢವಾಗಿ ನಂಬಿದ್ದಳು. ತುಳಿಸಿದಾಸನೂ ಅವನನ್ನೇ ತನ್ನ ಪುತ್ರನೆಂದು ವಾತ್ಸಲ್ಯದಿಂದ ಆರಾಧಿಸಿದನು. ಹೀಗೆ ಅನೇಕರು ಪರಮಾತ್ಮನಲ್ಲಿ ನಿಷ್ಠಾಭಕ್ತಿಯಿಂದ ಆರಾಧಿಸಿದಂತೆ ಮಾಹೇಶ್ವರನು ಗುರುಲಿಂಗವನ್ನು ನಿಷ್ಠಾಭಕ್ತಿಯಿಂದ ಅರ್ಚಿಸಿದರೂ ಪ್ರಸಾದಿ ಸ್ಥಲದಲ್ಲಿ ಅವಧಾನವಿರಬೇಕಾಗುವದು. ಅವಧಾನವೆಂದರೆ ಜಾಗ್ರತೆ, ಎಚ್ಚರ, ಯಾವುದೊಂದು ಕಾಯಕವನ್ನು ಶ್ರದ್ಧೆಯಿಂದ ಪ್ರಾರಂಭಿಸಿ ನಿಷ್ಠೆಯಿಂದ ಮುಂದುವರೆಸಿ ಬಹಳ ಜನರು ಅವಧಾನವನ್ನು ಕಳೆದುಕೊಳ್ಳುವದರಿಂದ ಆ ಕಾಯಕ ಯಶಸ್ವಿಯಾಗುವದಿಲ್ಲ. ಲಾಭಕ್ಕಿಂತ ಹಾನಿಯೇ ಆಗುವದು.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ

ಇದ್ದರೇನು ಶಿವ ಶಿವಾ ಹೋದಡೇನೊ

ಕೂಡಲ ಸಂಗಮದೇವಯ್ಯ

ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ

ಇಲ್ಲಿ ಬಸವಣ್ಣನವರು ನಿಷ್ಠಾಭಕ್ತಿಯನ್ನು ವಿಶ್ಲೇಷಿಸಿರುವರು. ಗೊಡ್ಡಾಕಳಿಗೆ ದೊಡ್ಡದಾದ ಕರುವ ಬಿಟ್ಟರೆ ಯಾವ ಪ್ರಯೋಜನವಾಗುವದಿಲ್ಲ, ಚನ್ನಬಸವಣ್ಣನವರು

ಭಕ್ತಿಗೆ ಅನುಭಾವವೆ ಬೀಜ ಕಾಣಿರೋ

ಭಕ್ತಿಗೆ ಅನುಭಾವವೆ ಆಚಾರ ಕಾಣಿರೋ

ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು

ಷಡ್ವಿಧ ಭಕ್ತಿಯಲ್ಲಿ ಅನುಭಾವವೇ ಬೀಜ, ಅದುವೆ ಆಚಾರವಾಗಬೇಕೆಂದೂ ಅನುಭಾವವಿಲ್ಲದವನ ಭಕ್ತಿಯಲ್ಲಿ ಹೊಯ್ದಾಟವಿರುವದೆಂದು ಎಚ್ಚರಿಸಿರುವರು. ಈ ಹೊಯ್ದಾಟ ನಿಲ್ಲಬೇಕಾದರೆ ಅವಧಾನ ಅವಶ್ಯ ಬೇಕಾಗುವದು.

 ಈ ಅವಧಾನದಿಂದಲೇ ಭಕ್ತನ ಮನಸ್ಸು ಪ್ರಸನ್ನವಾಗುವದು. ಪ್ರಸನ್ನ ಮನಸ್ಸಿನಲ್ಲಿ ಯಾವ ಚಿಂತೆಗಳು ಕಾಡುವದಿಲ್ಲ. ಅವನ ಮನಸ್ಸು ನಿರ್ಮಲವಾಗಿರುತ್ತದೆ. ನಿರ್ಮಲ ಮನಸ್ಸಿದ್ದರೆ ಮಾತ್ರ ಪ್ರಸನ್ನತೆಯಿರುವದು. ಇದುವೆ ಪ್ರಸಾದಿಯ ಪ್ರಬುದ್ಧತೆ, ತಪ್ಪು ಮಾಡುವವನ ಮನಸ್ಸು ಕಳವಳದಿಂದಲೇ ಇರುವದು. ಅವನಿಗೆ ಚಿಂತೆಯು ಸದಾ ಕಾಡುತ್ತಿರುತ್ತದೆ. ಮೈಲಾರ ಬಸವಲಿಂಗ ಶರಣರು-

ರೂಪು ರುಚಿ ತೃಪ್ತಿಯ ನಿರ್ಲೇಪ ತ್ರೈಲಿಂಗಕ್ಕೆ

ಅರ್ಪಿಸಲು ತಾನೇ ದೀಪ್ತ ಪ್ರಸಾದಿಯೆಂ

ದಾ ಪರಮಗುರುವೇ ಕೃಪೆಯಾಗು

ಎಂದು ಪ್ರಸಾದಿಯ ಲಕ್ಷಣವನ್ನು ನಿರೂಪಿಸಿರುವರು. ಪ್ರಸಾದಿಸ್ಥಲ ಮೂರನೆಯದು. ಇವನು ಶಿವಲಿಂಗ ಪೂಜಕನು ಶಿವಲಿಂಗವು ನೇತೇಂದ್ರಿಯದಲ್ಲಿದೆ. ಈ ಲಿಂಗವು ಇಚ್ಛಾಶಕ್ತಿ ವಿದ್ಯಾಕಲೆಯಿಂದ ಕೂಡಿದೆ. ಪ್ರಸಾದಿಯು ಸದಾ ಸಾವಧಾನದಿಂದ ಶಿವನಿಚ್ಛೆಯಿಂದ ದೊರೆತುದನ್ನು ನಿರಹಂಕಾರ ಹಸ್ತದಲ್ಲಿ ರೂಪು ಪದಾರ್ಥಗಳನ್ನು ಸುರೂಪು ಪ್ರಸಾದಗೊಳಿಸಿ ಶಿವಲಿಂಗಕ್ಕೆ ಅರ್ಪಿಸಿ ಭೋಗಿಸಬೇಕು. ಈ ಸ್ಥಲವು ಭೋಗಾಂಗದ ಅಂಗವೆಂದಿದೆ. ಕರಣೇಂದ್ರಿಯಗಳಿಗೆ ಪ್ರೇರಕವಾದ ಮನಸ್ಸಿನಲ್ಲಿ ದೃಢತೆ ಹೆಚ್ಚಾಗಿ ಶಾಂತನೂ ಸಾವಧಾನವುಳ್ಳವನಾಗುವದೇ ಪ್ರಸಾದಿಯ ಮುಖ್ಯ ಕರ್ತವ್ಯವಾಗಿದೆ. ಹೊಯ್ದಾಟವುಳ್ಳ ಮನಸ್ಸನ್ನು ನಿಶ್ಚಲಗೊಳಿಸಿ ಪ್ರಾಕೃತಿಕ ಭೋಗ ಭವದ ಬೀಜವೆಂದರಿದು ಶಿವಾರ್ಪಿತಭೋಗವನ್ನು ಪಡೆಯುವದರಿಂದ ಭವದ ಬೀಜವನ್ನೇ ಹುರಿದು ಹಾಕುವ ಶಕ್ತಿ ಪ್ರಸಾದಿಯಲ್ಲಿ ಗಟ್ಟಿಗೊಳ್ಳುವದು.

೪. ಪ್ರಾಣಲಿಂಗಿ ಸ್ಥಲ

ಭಕ್ತ-ಮಹೇಶ-ಪ್ರಸಾದಿ ಈ ಮೂರು ಸ್ಥಲಗಳನ್ನು ಪೂರ್ವಯೋಗವೆಂದೂ ಪ್ರಾಣಲಿಂಗಿ- ಶರಣ ಐಕ್ಯ ಸ್ಥಲಗಳನ್ನು ಉತ್ತರಯೋಗವೆಂದು ಶಿವಾನುಭವಿಗಳು ನಿರೂಪಿಸಿರುವರು. ಪ್ರಸಾದಿ ಸ್ಥಲದಲ್ಲಿ ಪ್ರಾಣಲಿಂಗಾರ್ಚನೆ ಪ್ರಾರಂಭವಾಗಿ ಪ್ರಾಣಲಿಂಗಿಸ್ಥಲದಲ್ಲಿ ಅದು ಪೂರ್ಣವಾಗುವದು. ಪ್ರಸಾದಿಯು ಅಗ್ನ್ಯಾಂಗನಾದರೆ, ಪ್ರಾಣಲಿಂಗಿಯು ವಾಯ್ವಂಗನೆನಿಸುವನು. ಪ್ರಾಣಲಿಂಗಿಯು ವಾಯು ತತ್ವದ ಜಂಗಮ ಲಿಂಗವನ್ನು ಆರಾಧಿಸಿ ವಾಯುಮಯ ಪ್ರಾಣವು ಲಿಂಗಸ್ವರೂಪವೆನಿಸುವುದೇ ಪ್ರಾಣಲಿಂಗಿಯ ಪ್ರಾಮುಖ್ಯತೆಯೆನ್ನಬೇಕು. ಬಯಸಿ ಬಂದ ಅಂಗ ಭೋಗವನ್ನು ತ್ಯಜಿಸಿ, ಬಯಸದೆ ಬಂದ ಪ್ರಸಾದವನ್ನು ಲಿಂಗಭೋಗೋಪಭೋಗಿಯಾಗಿಸುವದರಿಂದ ಪ್ರಸಾದ ಕಾಯನಾಗುವನು. ಪ್ರಸಾದ ಕಾಯನಾದ ಪ್ರಸಾದಿಯು ಕ್ರಿಯಾ- ಜ್ಞಾನ-ಇಚ್ಛಾ ಶಕ್ತಿಗಳ ಸಹಾಯದಿಂದ ಆದಿಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡು ಸಾವಧಾನತೆಯಿಂದ ಅನುಭವ ಪಡೆಯುವಲ್ಲಿಯೇ ಪ್ರಕಾಶಕಾಯ ಮೈಗೂಡುವದು ಪ್ರಕಾಶಕಾಯವೆಂದರೆ ಜ್ಞಾನ, ಜ್ಞಾನವೇ ಬೆಳಕು. ಪ್ರಾಣಲಿಂಗದ ಪೂಜೆ ನಡೆಯುವಲ್ಲಿ ಜ್ಞಾನವೇ ಮುಖ್ಯವಾಗುವದು.

 ಮಾನವನು ಅನ್ನ ನೀರಿಲ್ಲದೆ ಬದುಕಬಹುದು ಆದರೆ ಪ್ರಾಣವಾಯುವಿಲ್ಲದೆ ಬದುಕಲು ಆಗದು. ಪ್ರಾಣವಾಯು ಎಲ್ಲರಿಗೂ ಅವಶ್ಯ. ಪ್ರಾಣಿಗಳಿಗೆ, ಗಿಡ-ಮರ ಬಳ್ಳಿಗಳಿಗೆ ಪ್ರಾಣವಾಯು ಬೇಕೇಬೇಕು. ಜೀವನಕ್ಕೆ ಜೀವಾಳವಾದುದು ಪ್ರಾಣ ಜೀವನದ ಅಮೃತವದು, ಆಯುಷ್ಯವದು. ಅರಸವೆಂದೂ ಅನುಭವಿಗಳು ವರ್ಣಿಸಿರುವಲ್ಲಿ ಔಚಿತ್ಯವಿದೆ. ಪ್ರಾಣವು ಮಾನವನಿಗೆ ಹೇಗೆ ಜೀವಾಳವೋ ಹಾಗೆ ಪ್ರಾಣಲಿಂಗಿಗೆ ಪ್ರಾಣಲಿಂಗವು ಮುಖ್ಯವಾಗಬೇಕು. ಲಿಂಗವೇ ಪ್ರಾಣವಾಗಬೇಕು. ಎಲ್ಲವೂ ಲಿಂಗಮಯವಾಗಬೇಕು.

ವಸ್ತುತಃ ವಾಯು ಒಂದೇಯಾಗಿದ್ದರೂ ವಿಭಿನ್ನ ಸ್ಥಾನ ಹಾಗೂ ಕೆಲಸಗಳಿಂದ ಐದು ತೆರನಾಗುವದು. ಹೃದಯದಲ್ಲಿ ಪ್ರಾಣವಾಯುವೆನಿಸಿದರೆ ಮೂಲಾಧಾರದಲ್ಲಿ ಅಪಾನವಾಯುವೆನಿಸುವದು, ನಾಭಿಯಲ್ಲಿ ಸಮಾನವಾಯು, ಕಂಠದಲ್ಲಿ ಉದಾನವಾಯು, ವ್ಯಾನವಾಯು ದೇಹದ ತುಂಬೆಲ್ಲ ಹರಡಿಕೊಂಡಿರುತ್ತದೆ. ಪ್ರಾಣವಾಯು ಹೃದಯದಲ್ಲಿದ್ದುಕೊಂಡು ಮೂಗಿನ ಮೂಲಕ ಶ್ವಾಸೋಚ್ವಾಸಗಳನ್ನು ನಡೆಸುವದು. ಈ ವಾಯುವಿನ ಮೂಲಕವೇ ಶರೀರವು ಚೈತನ್ಯಯುತವಾಗಿರುವದು. ಅಪಾನವಾಯು ಮಲಮೂತ್ರಗಳನ್ನು ಹೊರಹಾಕುವ ಕಾರ್ಯವನ್ನು ಮಾಡುವದು. ನಾಭಿಯಲ್ಲಿರುವ ಸಮಾನವಾಯು ಮಾನವನು ಉಣ್ಣುವ ಅನ್ನದ ರಸದಿಂದಾದ ರಕ್ತವನ್ನು ಎಲ್ಲ ಅವಯವಗಳಿಗೆ ಸಮನಾಗಿ ಹಂಚುತ್ತದೆ. ಉದಾನವಾಯು ಕಂಠಸ್ಥಾನದಲ್ಲಿದ್ದು ಸೀನು, ಡೇಕರಿಕೆ ಮುಂತಾದ ಕ್ರಿಯೆಗಳಿಂದ ದೂಷಿತ ಅಂಶವನ್ನು ಹೊರಹಾಕುತ್ತದೆ. ವ್ಯಾನವಾಯು ಶರೀರದ ನರನಾಡಿಗಳಲ್ಲಿ ಸಂಚರಿಸಿ ರಕ್ತ ಸಂಚಾರವನ್ನು ಸಮನಾಗಿ ಮಾಡಿಸುವದು. ಈ ವಾಯು ವಿಕಾರಗೊಂಡರೆ ಸಂಧಿವಾತ ಅರ್ಧಾಂಗವಾಯುವಿಗೆ ಕಾರಣವಾಗುವದು. ಈ ಎಲ್ಲ ವಿಚಾರಗಳನ್ನು ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ಚನ್ನಾಗಿ ನಿರೂಪಿಸಿರುವರು. ಪ್ರಾಣಾಯಾಮದಿಂದ ಪ್ರಾಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ಪ್ರಾಣಾಯಾಮದಿಂದ ಅಪಾಯವೂ ಸಂಭವಿಸುವದೆಂದು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯಲ್ಲಿ ಅಷ್ಟಾಂಗ ಯೋಗದ ನಿರಸನಮಾಡಿ ಪ್ರಾಣಲಿಂಗದ ಆರಾಧನೆಯನ್ನು ಮಾನಸಿಕವಾಗಿ ಸಾಧಿಸಬೇಕೆಂದು ಪ್ರತಿಪಾದಿಸಿರುವರು. ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಾಣಲಿಂಗದ ಆಂತರಿಕ ಅರ್ಚನೆಯ ವಿಧಿಯನ್ನು ತಿಳಿಸಿರುವರು. ಕ್ಷಮಾ ಗುಣವೇ ಅಭಿಷೇಕ ಜಲ, ವಿವೇಕವೆ ವಸ್ತ್ರ, ಸತ್ಯವೆ ಆಭರಣ, ವೈರಾಗ್ಯವೆ ಪುಷ್ಪಮಾಲಿಕೆ, ಸಮಾಧಿ ಸಂಪತ್ತೆ ದಂಡ, ನಿರಹಂಕಾರವೇ ಅಕ್ಷತೆ, ಶ್ರದ್ಧೆಯ ಧೂಪ, ಮಹಾಜ್ಞಾನವೇ ಜಗತ್ತನ್ನು ಬೆಳಗುವ ದೀಪ, ಭ್ರಾಂತಿರಾಹಿತ್ಯವೇ ನೈವೇದ್ಯ, ಮೌನವೇ ಘಂಟಾನಾದ, ನಿರ್ವಿಷಯವೇ ತಾಂಬೂಲ, ವಿಷಯ ಭ್ರಾಂತಿ ಇಲ್ಲದಿರುವಿಕೆಯೇ ಪ್ರದಕ್ಷಿಣೆ, ಬುದ್ಧಿ ಭಾವಗಳ ತಾದಾತ್ಮ್ಯ ಭಾವವೇ ನಮಸ್ಕಾರ. ಹೀಗೆ ಆಂತರಿಕವಾದ ಉಪಚಾರಗಳಿಂದ ಮನೋ ಹಸ್ತದಲ್ಲಿ ಪ್ರಾಣಲಿಂಗದ ಅರ್ಚನೆಯನ್ನು ಪ್ರಾಣಲಿಂಗಿಯು ಮೊದಲು ಸಾಧಿಸಬೇಕು. ಇಂಥ ಉತ್ಕೃಷ್ಟ ಗುಣಗಳಿಂದ ಮಾತ್ರ ಪ್ರಾಣಲಿಂಗದ ಪೂಜೆಯು ಪ್ರಾಪ್ತವಾಗುವದು. ಪ್ರಾಣಲಿಂಗಿಯ ಸ್ವರೂಪ ಚಿತ್ರಣವನ್ನು ಸ್ವತಂತ್ರ ಸಿದ್ಧಲಿಂಗರ ವಚನದಲ್ಲಿ ನೋಡಬಹುದು.

ಲಿಂಗದಲ್ಲಿ ಪ್ರಾಣವ ನಿಲಿಸಿ ಪ್ರಾಣದಲ್ಲಿ ಲಿಂಗವ ನಿಲ್ಲಿಸಿ

ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು.

ಈ ಲಿಂಗ ಸರ್ವಕರಣಂಗಳ ವೇಧಿಸಿ

 ಕರಣಂಗಳು ಲಿಂಗ ಕಿರಣಂಗಳಾದ ಕಾರಣ

 ಒಳಗೆ ಕರತಳಾಮಳಕದಂತೆ

ಲಿಂಗ ನೆಲೆಗೊಂಡಿತ್ತಾಗಿ ಹೊರಗೆನೆಂದರಿಯೆನು

 ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ನೀವು ಪ್ರಾಣಲಿಂಗವಾಗಿ

ಅಲ್ಲಮಪ್ರಭುದೇವರು ಸಹ ಪ್ರಾಣಲಿಂಗ ಸಾಧನೆಯಿಂದ ಮನ ಉನ್ಮನಗೊಂಡು ಅಮೃತವನ್ನು ಪಡೆಯುವುದಾಗಿ ಹೇಳಿರುವರು.

 ವ್ಯಾವಹಾರಿಕ ಬದುಕಿನಲ್ಲಿ ಅನೇಕರು ವಿಭಿನ್ನ ವಸ್ತುಗಳಲ್ಲಿ ತಮ್ಮ ಪ್ರಾಣವನ್ನಿರಿಸಿ ಕೊಂಡಿರವದನ್ನು ಕಾಣುತ್ತೇವೆ. ಆಯಾ ವಸ್ತುಗಳು ಅವರಿಂದ ದೂರವಾದರೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಂದರ್ಭಗಳನ್ನು ಸಹ ನೋಡುತ್ತೇವೆ. ಉದಾಹರಣೆಗಾಗಿ ಕೆಲವರು ಹೆಂಡತಿಯಲ್ಲಿ ಪ್ರಾಣವಿರಿಸಿದಂತೆ, ಹಲವರು ಮಕ್ಕಳಲ್ಲಿ ಪ್ರಾಣವನ್ನಿರಿಸುತ್ತಾರೆ. ಮತ್ತಿತರರು ತಂದೆ-ತಾಯಿಗಳಲ್ಲಿ ಪ್ರಾಣವನ್ನು ಕೇಂದ್ರೀಕರಿಸಿರುತ್ತಾರೆ. ಅದರಂತೆ ಬಸವ ಮಹಾನುಭಾವರು ಜಂಗಮನನ್ನೆ ತಮ್ಮ ಪ್ರಾಣವೆಂದು ಭಾವಿಸಿದ್ದು, ಜಂಗಮಮೂರುತಿ ಮಹಾಮನೆಗೆ ಬಂದು ಮರಳಿ ಹೋದ ಸಂದರ್ಭದಲ್ಲಿ ಪ್ರಾಣವನ್ನೇ ಕಳೆದುಕೊಂಡ ಸಂಗತಿಯಿದೆ. ಹಾಗೆ ಪ್ರಾಣಲಿಂಗಿಯು ತನ್ನ ಪ್ರಾಣಲಿಂಗವನ್ನೆ ಸರ್ವಸ್ವವೆಂದರಿದು ಅನುಸಂಧಾನ ಮಾಡಬೇಕು. ಪ್ರಾಣಲಿಂಗಿಯು ಅನಾಹತ ಚಕ್ರದ ಜಂಗಮಲಿಂಗವನ್ನು ತ್ವಗಿಂದ್ರಿಯ ಮುಖದಲ್ಲಿ ಅನುಭವ ಭಕ್ತಿಯಿಂದ ಸುಮನೋಹಸ್ತದಿಂದ ಆರಾಧಿಸಿ ಅನುಭವವನ್ನು ಪಡೆಯುವನು.

೫. ಶರಣ ಸ್ಥಲ

 ಕಾರಣಶರೀರವೆನಿಸಿದ ಯೋಗಾಂಗದಲ್ಲಿ ಶರಣಸ್ಥಲ ಹಾಗೂ ಐಕ್ಯಸ್ಥಲಗಳು ಬಂದಿವೆ. ತ್ಯಾಗಾ೦ಗದಿಂದ ಲಿಂಗಭೋಗ ಪಡೆದು ಶಿವಯೋಗ ಸಿದ್ದಿಯನ್ನು ಹೊಂದಲು ಶರಣನು ಅರ್ಹನಾಗುವನು. ವಿಶುದ್ಧಿಚಕ್ರದ ಪ್ರಸಾದಲಿಂಗದ ಆರಾಧಕನು ಶರಣನು, ಭಕ್ತನು ನೆಲತತ್ವವನ್ನು ಪ್ರತಿನಿಧಿಸಿದರೆ, ಶರಣನು  ಆಕಾಶತತ್ವದ ಪ್ರತಿನಿಧಿಯೆನಿಸುವನು. ಭಕ್ತನ ಬಾಳು ಬದುಕಿಗೂ ಶರಣನ ಬಾಳು ಬೆಳಕಿಗೂ ಅದೆಷ್ಟು ಅಂತರ ಮತ್ತೊಂದು ಬಗೆಯಲ್ಲಿ ಅದೆಷ್ಟು ಹತ್ತಿರ. ನೆಲ- ಮುಗಿಲುಗಳಂತೆ ಹತ್ತಿರ. ಆತ್ಮನಿಗೆ ಶರಣನು ಅತ್ಯಂತ ಸಮೀಪದವನಾದ ಕಾರಣವೇ ಯೋಗಾಂಗ ಕಾಯನು. ಶಿವಯೋಗ ಸಿದ್ಧನೆನಿಸುವನು.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿ ಆಚಾರಲಿಂಗದ ಅರ್ಚಕನಾದರೆ, ಶರಣನು ಮೀರಿದ ಕ್ರಿಯಾಶೀಲನು. ಪರಾಶಕ್ತಿಸಮನ್ವಿತ ಪ್ರಸಾದಲಿಂಗದ ಪೂಜಕನು. ಸದಾ ಪ್ರಸನ್ನಚಿತ್ತನೆನಿಸುವನು. ಪ್ರಸಾದಲಿಂಗವು ಶಾಂತ್ಯತೀತ ಕಲಾಪೂರ್ಣವಾದುದು. ಅದಕ್ಕಾಗಿ ಶರಣನ ಜೀವನವು ಪರಿಪೂರ್ಣ ಜೀವನ. ಭಕ್ತ ಸಹಜ ದಾನಿಯಾದರೆ, ಶರಣನು ಸುಯ್ದಾನಿ, ಸುಯ್ದಾನವೆಂದರೆ ಎಚ್ಚರ ಹಾಗೂ ತೃಪ್ತಿ. ಅದು ಸಂತೃಪ್ತಿ, ಅದಕ್ಕಾಗಿ ಆತನು ಪರಿಪೂರ್ಣ ಜೀವಿ. ಪರಿಪೂರ್ಣ ಬದುಕುಳ್ಳವನು. ಸದಾ ಆನಂದಭರಿತನು, ಸವೆಯದ ಸಾಕೆನಿಸದ ಮತ್ತೊಂದನ್ನು ಬಯಸದ ಲಿಂಗಾನಂದದಲ್ಲಿ ಲೋಲಾಡುವನು ಶರಣನು.

ವೀರಶೈವ ಸಿದ್ಧಾಂತದಲ್ಲಿ ವಿಚಾರಿಸಲಾಗಿ ನೆಲತತ್ವದ ಭಕ್ತನಿಗೂ ಆಕಾಶತತ್ವದ ಶರಣನಿಗೂ ಒಂದು ರೀತಿಯ ಮಹದಂತರ ಕಂಡರೂ ಷಟ್‌ಸ್ಥಲ ಸಾಧಕನು ಯಾವುದೇ ಸ್ಥಲದಲ್ಲಿದ್ದರೂ ಭಕ್ತಸ್ಥಲಕ್ಕೆ ಬರಲೇ ಬೇಕಾಗುವದು. ಆಧಾರವನ್ನು ಆಶ್ರಯಿಸಿಯೇ ಆಕಾಶಕ್ಕೇರುವುದು ನಿವೃತ್ತಿ. ಆಕಾಶವಾದರೂ ನೆಲದ ನೆಲೆಯನ್ನು ಬಿಟ್ಟಿಲ್ಲ. ಭಕ್ತನು ನೆಲತತ್ವದ ಗಂಧ ಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸುತ್ತಿದ್ದರೆ; ಶರಣನು ಪಂಚತತ್ವಗಳ ಪಂಚ ಪ್ರಸಾದಗಳನ್ನು ಪ್ರಸಾದಲಿಂಗಕ್ಕೆ ಸಮರ್ಪಿಸುವನು. ಶರಣನ ಜೀವನವು ಆಗಸದಂತೆ ಎತ್ತರವಾದುದು, ಬಿತ್ತರವಾದುದು. ಆಕಾಶಕ್ಕೆ ಬಯಲು ಎಂಬ ಉಪನಾಮವಿರುವಂತೆ ಶರಣನು ಪ್ರಾಪಂಚಿಕ ವ್ಯವಹಾರ- ವ್ಯಾಮೋಹಗಳಿಂದ ಮುಕ್ತನಾಗಿ ಬಟ್ಟಬಯಲನ್ನು ಮುಟ್ಟಲು ಸಿದ್ಧನಾದವನು. ಆತನು ನಿತ್ಯ ನಿರ್ಮಲನೂ ಆಗಿದ್ದಾನೆ. ಶರಣನು ಸಕಲ ಜೀವಿಗಳ ಲೇಸ ಬಯಸುವವನು ವಿಶ್ವಪ್ರೇಮ ಅವನಲ್ಲಿ ಮೈಗೂಡಿರುತ್ತದೆ.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿದ ಆಚಾರಲಿಂಗದ ಅರ್ಚಕನಾದರೆ, ಶರಣನು ಕ್ರಿಯಾ-ಜ್ಞಾನ-ಇಚ್ಛಾ-ಆದಿ-ಪರಾಶಕ್ತಿಗಳು ಮೈಗೂಡಿದ ಪ್ರಸಾದಲಿಂಗದ  ಅರ್ಚಕನೆನಿಸುವನು.  ಡಾ.ಜ.ಚ.ನಿ.ಯವರು ಜೀವನ ಸಿದ್ಧಾಂತದಲ್ಲಿ ಶರಣಸ್ಥಲದ ಬಗೆಗೆ “ಆತ್ಮಾನುಭವವನ್ನು ಆತ್ಮಾನಂದವನ್ನು ಪಡೆದವನು ಅಚ್ಚಶರಣ. ಪಂಚಭೂತಗಳಿಂದ ಪಂಚಕೋಶಗಳಲ್ಲಿ ಉಂಟಾದ ಪ್ರಾಕೃತಿಕ ಶಕ್ತಿ ಸಾಮರ್ಥ್ಯಗಳನ್ನು ಯುಕ್ತಿ-ವಿಚಾರಗಳನ್ನು ಭಕ್ತಿಯಿಂದ ಮಾರ್ಪಡಿಸಿ ಆತ್ಮಾನಂದಕ್ಕೆ ಸಾಮರಸ್ಯಕ್ಕೆ ಅವನ್ನು ಅಣಿಮಾಡಿಕೊಂಡ ಅನುಭಾವಿ.  ವಿಶಾಲ ಮನೋಭಾವವನ್ನು  ಬೆಳೆಸಿಕೊಂಡ ವಿಮರ್ಶಾ ಶಕ್ತಿಸಂಪನ್ನ, ಚಿತ್ತ-ಬುದ್ಧಿ-ಪ್ರಾಣ- ಮನ-ಹಮ್ಮುಗಳಲ್ಲಿರುವ ದೋಷಗಳನ್ನುದೂರಮಾಡಿ ಶಿವಜ್ಞಾನದ ಶುಭ್ರ ಪ್ರಕಾಶದಲ್ಲಿ ಪರಮ ಪ್ರಸನ್ನತೆಯನ್ನು ನಿರ್ದೇಶ ನಿಷ್ಪತ್ತಿಗಳನ್ನು ಪಡೆದ ಪ್ರಗತಿಶೀಲ.  ಮಹಾನಂದವನ್ನು ಮಹಾಪ್ರಕಾಶವನ್ನು ಪಡೆದ ಪೂರ್ಣ ಜೀವಿ.  ಮರ್ತ್ಯಲೋಕದ ಮಣಿಹವನ್ನೆಲ್ಲ ಮಾಡಿ ಮುಗಿಸಿದ ತುಂಬು ಬಾಳು ಶರಣನದು. ವಿಯತ್ತಕ್ಕಿಂತಲೂ ವಿಶೇಷವಾದ ವಿಶಾಲ ಮನೋಭಾವವನ್ನು ವಿಕಾಸಗೊಳಿಸಿಕೊಂಡು ಪ್ರಕಾಶಪಡಿಸಿದ ಪೂರ್ಣಜೀವಿ ಶರಣ” ಎಂದು ಶರಣನ ಮಹತ್ವವನ್ನು ಅನುಭವಪೂರ್ಣವಾಗಿ ಪ್ರತಿಪಾದಿಸಿರುವರು.

ಶರಣನು ಪ್ರಾಕೃತನಲ್ಲ; ಅಪ್ರಾಕೃತನು. ಪ್ರಾಕೃತಿಕ ಜಡತ್ವವನ್ನು ಮೀರಿದವನು. ಅದಕ್ಕಾಗಿ ಅವನು ಬಯಲಮೂರ್ತಿಯು. ಆತನ ವಿದ್ಯಾಬುದ್ಧಿಯಿಂದ ಬ್ರಹ್ಮಾದಿಗಳು ಉದಿಸಿದರೆಂದು ಚನ್ನಬಸವಣ್ಣನವರು ವಚನಿಸಿದ್ದುಂಟು. ಶರಣ ಪದದ ಅರ್ಥ= ರಕ್ಷಣೆ, ರಕ್ಷಕ, ಮನೆ, ಮೊರೆ, ಕಾಪಾಡುವವನು ಎಂದಿದೆ. ಆದರೆ  ಷಟ್‌ಸ್ಥಲಾಂತರ್ಗತ ಶರಣ ಪದ ವಿಶಿಷ್ಟವಾದುದು. ಲಿಂಗಪತಿಗೆ ಶರಣ ಹೊಕ್ಕವನೆ ಶರಣ, ಇಂಥ ಪದವನ್ನು ಸಾಮಾನ್ಯರಿಗೂ ಬಳಸಿ ಇಂದು ಅತಿವ್ಯಾಪ್ತಿಗೊಳಿಸುತ್ತಿರುವದು ಉಚಿತವಲ್ಲ. ಶರಣ ತತ್ವಕ್ಕೆ ಅಪಚಾರ ಮಾಡಿದಂತಾಗುವದು. ಶರಣನು ಆನಂದಭಕ್ತಿಯುಳ್ಳವನಾಗಿ ತಾನೆ ಸತಿಯಾಗಿ ಲಿಂಗ ಪತಿಯನ್ನು ವರಸಿದವನು. ಪರಾಶಕ್ತಿಯುಕ್ತ ಶಾಂತ್ಯತೀತ ಕಲಾಪೂರ್ಣ ಪ್ರಸಾದಲಿಂಗವನ್ನು ಶ್ರೋತ್ರ ಮುಖದಲ್ಲಿ ಸುಜ್ಞಾನ ಹಸ್ತದಿಂದ ಸುಶಬ್ದ ಪ್ರಸಾದವನ್ನು ಅರ್ಪಿಸಿ ಧನ್ಯನಾದವನು. ಈತನ ಇರುವನ್ನು ಅಲ್ಲಮಪ್ರಭುಗಳು-

ಹರಿವ ನದಿಗೆ ಮೈಯಲ್ಲ ಕಾಲು,

ಉರಿವ ಅಗ್ನಿಗೆ ಮೈಯಲ್ಲ ನಾಲಿಗೆ,

ಬೀಸುವ ಗಾಳಿಗೆ ಮೈಯಲ್ಲ ಕೈ(ಮುಖ),

ಗುಹೇಶ್ವರ ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯಾ

ಎಂಬುದಾಗಿ ಶರಣನ ಸರ್ವಾರ್ಪಣ ಭಾವವನ್ನು ನಿರೂಪಿಸಿರುವರು. ಶರಣನ ಅರ್ಚನ, ಅರ್ಪಣ ಅನುಭಾವ ಕ್ರಿಯೆಗಳನ್ನು ಮನಂಬುಗುವಂತೆ ವಿವರಿಸಿರುವರು. ಶರಣನು ಸರ್ವಾಂಗ ಲಿಂಗಮಯನು.

೬. ಐಕ್ಯ ಸ್ಥಲ

ಐಕ್ಯಸ್ಥಲ ಷಟ್‌ಸ್ಥಲದಲ್ಲಿ ಕೊನೆಯದು. ಯೋಗಾಂಗದಲ್ಲಿ ಎರಡನೆಯದು. ಐಕ್ಯನಿಗೆ ಆತ್ಮನೆ ಅಂಗ, ಆತ್ಮಾಂಗನಾದ ಐಕ್ಯನು ಚಿಚ್ಛಕ್ತಿ-ಶಾಂತ್ಯತೀತೋತ್ತರ ಕಲೆಯುಳ್ಳ ಮಹಾಲಿಂಗದೊಡನೆ ಸಮರಸವಾಗುವ ಸಾಮರ್ಥ್ಯವನ್ನು ಸಾಧಿಸುವವನು. ಡಾ|| ಜ.ಚ.ನಿ.ಯವರು ಐಕ್ಯಸ್ಥಲದ ವಿವರಣೆಯನ್ನು ಮನನೀಯವಾಗಿ ನೀಡಿದ್ದಾರೆ- ʼʼಆತ್ಮ ಬೇರಿಲ್ಲ, ದೂರಿಲ್ಲ. ಆತ್ಮ ತಾನೇ; ತನ್ನನ್ನು ಅರಿತಿಲ್ಲ. ಅನುಭವ ಪಡೆದಿಲ್ಲ. ತನ್ನರಿವಿಗಿಂತ ಬೇರಿಲ್ಲ ಭಾಗ್ಯ. ತನ್ನೊಳಗೆ ತಾನಿರುವದಕ್ಕಿಂತ ಬೇರಿಲ್ಲ ಸೌಖ್ಯ ತನ್ನ ಗಳಿಕೆಯೇ ಗಳಿಕೆ. ಆ ಗಳಿಕೆಯಿಂದ ಮನೆ ತುಂಬುವುದಿಲ್ಲ. ಮನ ತುಂಬುತ್ತದೆ. ಅಂತೆಯೇ ‘ಶೂನ್ಯ” ಸಂಪಾದನವೆಂದರು. ಮನದುಂಬುವುದೆಂದರೆ ಮನವರಿಕೆಯಾಗುವಿಕೆ. ಮತ್ತು ಮಹದನುಭವವುಂಟಾಗುವಿಕೆ, ಆತ್ಮ ವಿಕಾಸ ವಾಗುವಿಕೆ, ಸರ್ವಾತ್ಮಭಾವದಿಂದ ಸತ್ಯದತ್ತ ಸಾಗುವಿಕೆ, ಪೂರ್ಣಖಂಡಭಾವವನ್ನು ತೋರುವಿಕೆ, ಕ್ರಿಯಾಘನತೆಯನ್ನು ಜ್ಞಾನಪೂರ್ಣತೆಯನ್ನು ಸಂಪಾದಿಸುವಿಕೆ, ಸಮದರ್ಶಿಯಾಗಿ ಬಾಳುವಿಕೆ. ಇವು ಐಕ್ಯನ ಸಾಧನೆ ಸಿದ್ಧಿಯೆನಿಸುವವು.”

ಷಟ್‌ಸ್ಥಲವು ಶ್ರದ್ಧಾಭಕ್ತಿಯಿಂದ ಪ್ರಾರಂಭವಾಗಿ ಅದು ಘಟ್ಟಗೊಂಡಾಗ ನಿಷ್ಠೆಯಾಗಿ ಪರಿಣಮಿಸುವದು. ನಿಷ್ಠೆಯು ಮೂಢನಂಬಿಕೆಯಿಂದ ಕೂಡದೆ ಕ್ರಿಯಾ-ಜ್ಞಾನಶಕ್ತಿಗಳ ಸಮನ್ವಯದಲ್ಲಿ ಸಾವಧಾನತೆ ಸಾಧಿಸುವುದರಿಂದ ಅನುಭವ ಅಳವಡುವದು. ಅನುಭವದಲ್ಲಿ ಅಮೃತತ್ವವಿರುವಂತೆ ಆನಂದವುಂಟು. ಅದು ಕೇವಲಾನಂದವಾಗದೆ ಅಮಿತಾನಂದವೆನಿಸುವದು.  ಆನಂದ ಲಭಿಸುತ್ತಿದ್ದ ಹಾಗೆ ಲಿಂಗಾಂಗ ಸಾಮರಸ್ಯ ಲಭಿಸುವದೆ ಐಕ್ಯನ ಸಾಧನೆ.

ಶರಣ ಸ್ಥಲವನ್ನು ದಾಟಿದ ಐಕ್ಯನು ಆತ್ಮಲಿಂಗವೆನಿಸುವನು. ಅವನು ಚಿಚ್ಛಕ್ತಿಯುಕ್ತ ಶಾಂತ್ಯತೀತೋತ್ತರ ಕಲಾಪೂರ್ಣ ಮಹಾಲಿಂಗವನ್ನು ಸದ್ಭಾವ ಹಸ್ತದಿಂದ ಆಜ್ಞಾಚಕ್ರದಲ್ಲಿ ಹೃದಯಮುಖವಾಗಿ ಸಂದರ್ಶಿಸುವನು. ತೃಪ್ತಿ ಪದಾರ್ಥಗಳನ್ನು ಸುತೃಪ್ತಿ ಪ್ರಸಾದವಾಗಿಸಿ ಮಹಾಲಿಂಗಕ್ಕೆ ಸಮಿರ್ಪಿಸಿ ಅಮಿತಾನಂದದಿಂದ ಸಮರಸ ಭಕ್ತಿಯಲ್ಲಿ ತೇಲಾಡುವನು.  ಶರಣನು ತನ್ನೆಲ್ಲ ವ್ಯಾವಹಾರಿಕ ಬದುಕನ್ನು ಹಾಗೂ ಅಧ್ಯಾತ್ಮಿಕ ಬದುಕನ್ನು ಭಗವಂತನಿಗೆ ಸಮರ್ಪಿಸಿದ ಕಾರಣ ಶಿವನೇ ಆತನ ಯೋಗಕ್ಷೇಮವನ್ನು ನೋಡುತ್ತಾನೆ. ಅದಕ್ಕಾಗಿ ಶರಣನಿಗೆ ಯಾವುದೇ ಅಡ್ಡಿ ಆತಂಕಗಳು ಬರುವದಿಲ್ಲ. ಆತನು ನಿತ್ಯಾನಂದವನ್ನೇ ಪಡೆಯುವನು. ವ್ಯಾವಹಾರಿಕ ಸುಖಕ್ಕೂ ಆತ್ಮಾನಂದಕ್ಕೂ ಮಹದಂತರವಿದೆ. ಬಾಹ್ಯ ಸುಖ ಕ್ಷಣಿಕ, ಆತ್ಮಾನಂದ ನಿತ್ಯ ಸುಖ. ಶರಣನು ಬಾಹ್ಯ ವಿಷಯಗಳಲ್ಲಿ ಅನಾಸಕ್ತವಾಗಿ ಆತ್ಮಸುಖವನ್ನು ಅನುಭವಿಸುತ್ತ ಐಕ್ಯಸ್ಥಿತಿಯಲ್ಲಿ ಸಮರಸವನ್ನು ಸಾಧಿಸುವನು. ಪರಶಿವನ ಷಟ್‌ಶಕ್ತಿಗಳೆಲ್ಲ ಜಾಗ್ರತಗೊಂಡು ಶರಣನಲ್ಲಿ ಪ್ರತ್ಯಕ್ಷವಾಗುವವು. ಶಿವಯೋಗ ಸಾಧನೆಯಿಂದ ಕಾಮಾದಿ ಅನಿಮಿತ್ತ ವೈರಿಗಳು ಹಸಿವು ತೃಷೆಗಳೆಂಬ ಷಡೂರ್ಮಿಗಳು ಮಾಯವಾಗಿ ಲಿಂಗದ ಬಾಹ್ಯ ಉಪಚಾರಗಳೂ ಇಲ್ಲವಾಗುವವು. ಹಿಮ ಕರಗಿ ನೀರಾಗುವಂತೆ ಕರ್ಪುರ ಕರಗಿ ಬೆಂಕಿಯಾಗುವಂತೆ ಐಕ್ಯನು ಮಹಾಲಿಂಗದಲ್ಲಿ ಒಂದಾಗುವನು. ಮಹಾಲಿಂಗವೇ ತಾನಾಗುವನು.

 ಶರಣ ನಿದ್ರೆಗೈದಡೆ ಜಪಕಾಣಿರೊ

 ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ

 ಶರಣ ನಡೆದುದೆ ಪಾವನ ಕಾಣಿರೊ

 ಶರಣ ನುಡಿದುದೆ ಶಿವತತ್ವ ಕಾಣಿರೂ

 ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೋ

 ಬಸವಣ್ಣನವರ ಸಂದೇಶದಂತೆ ಶರಣನ ಕಾಯವು ಕೈಲಾಸವಾಗುವದು. ಆತನ ನಡೆ-ನುಡಿಗಳು ಪಾವನ, ಅವನೇ ಶಿವತತ್ವ, ಆತನು ಸದಾ ಜಾಗ್ರತನು, ಆತ ನಿದ್ದೆ ಮಾಡಿದನೆಂದರೆ ಜಪವನ್ನೇ ಮಾಡುವನು. ಜಾಗ್ರತನೆಂದಡೆ ಶಿವರಾತ್ರಿಯ ಸಂಕೀರ್ತನವಿದ್ದಂತಾಗುವದು. ಶರಣನು ಪರಮಾತ್ಮ ಸ್ವರೂಪನೇ ಆಗುವನು. ವಸ್ತುತಃ ಹಾಲು-ನೀರುಗಳು ವಿಭಿನ್ನ ಗುಣಧರ್ಮಗಳನ್ನು ಹೊಂದಿದ್ದರೂ ಅವೆರಡನ್ನು ಬೇರ್ಪಡಿಸಲಾಗದು. ಆದರೆ ಒಂದಾದಾಗ ಹಂಸಪಕ್ಷಿ ಬೇರ್ಪಡಿಸುತ್ತದೆಂಬ ವದಂತಿಯಿದೆ. ಆದರೆ ಬೆಂಕಿಯ ಮೇಲಿಟ್ಟರೆ ನೀರು ಸುಟ್ಟು ಹೋಗುತ್ತದೆ. ಹಾಲು ಗಟ್ಟಿಯಾಗುತ್ತ ಹೋಗುತ್ತದೆ. ಹಾಲು ಹಾಲಿನಲ್ಲಿ ಬೆರತಂತೆ ಶರಣನು ಮಹಾಲಿಂಗದಲ್ಲಿ ಒಂದಾಗಿ ಪರಮಾತ್ಮನಲ್ಲಿ ಬೇರಿಲ್ಲದಂತೆ ಸಮರಸ ಹೊಂದುವನು. ಶಿವಶಕ್ತಿಗಳನ್ನು ಸಂಪಾದಿಸಿ ಪರಶಿವನಲ್ಲಿ ಒಂದಾಗುವದೇ ಐಕ್ಯನ ಮಹಾಮಣಿಹ ವೆನಿಸುವದು.

ಉಪಸಂಹಾರ

ಷಟ್‌ಸ್ಥಲ ಸಿದ್ಧಾಂತಕ್ಕೆ ಅಷ್ಟಾವರಣ-ಪಂಚಾಚಾರಗಳು ಪೂರಕವಾದವುಗಳು. ಅಂಗ-ಪ್ರಾಣಗಳು ಗಟ್ಟಿಯಾದರೆ ಆತ್ಮಚೈತನ್ಯವು ಸಶಕ್ತವಾಗುವದು. ಧಾರ್ಮಿಕ ಸ್ವಾತಂತ್ರ್ಯ, ಸಚ್ಚಾರಿತ್ರ್ಯ ದಿಂದ ವ್ಯಕ್ತಿತ್ವ ವಿಕಾಸಗೊಂಡು ಗುರಿಸಾಧನೆಯ ಮಾರ್ಗ ಸುಸೂತ್ರವೆನಿಸುವದು. ವೀರಶೈವ ಸಿದ್ಧಾಂತದಲ್ಲಿ ತತ್ವಗಳ ಅವತರಣ ಜೀವಾತ್ಮನ ಕಲ್ಯಾಣಕ್ಕಾಗಿದೆಯೆಂಬುದನ್ನು ನಂಬಬೇಕು. ಈ ಶ್ರದ್ಧೆಯು ಸಮರಸಕ್ಕೆ ಕಾರಣವಾಗುವದು. ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯೇ ಷಟ್‌ಸ್ಥಲದ ವಿಕಾಸ ಮಾರ್ಗ. ಇದು ಕೇವಲ ಪರಿಕಲ್ಪನೆಯಲ್ಲ, ಅನುಷೇಯವಾದುದು. ಅದಕ್ಕಾಗಿ ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ.

ಷಟ್‌ಸ್ಥಲದಲ್ಲಿ ಅವತರಣ ಕ್ರಿಯೆಗೆ ಪ್ರವೃತ್ತಿ ಮಾರ್ಗವೆಂದರೆ, ಆರೋಹಣ ಪ್ರಕ್ರಿಯೆಗೆ ನಿವೃತ್ತಿ ಪಥವೆನ್ನುವರು. ನಿವೃತ್ತಿ ಕಲೆಯನ್ನು ಗ್ರಹಿಸಿದ ಆಚಾರಲಿಂಗದ ಅನುಸಂಧಾನದಿಂದ ಕ್ರಿಯಾಶೀಲತೆ ಪ್ರಾರಂಭವಾಗಿ ಮೀರಿದಾಚರಣೆಯತ್ತ ಸಾಗುವದೇ ಶರಣನ ಮಹಾಮಣಿಹವೆನ್ನಬೇಕು.

ಕೊನೆ ಟಿಪ್ಪಣಿಗಳು

೧. ಷಟ್‌ಸ್ಥಲ ಚಿಂತನ-ಲೇ. ಡಾ. ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪ್ರಕಾಶಕರು, ಕಾರಂಜಿಮಠ ಪ್ರಕಾಶನ,  ಬೆಳಗಾವಿ, ೨೦೦೩,

೨. ಜೀವನ ಸಿದ್ಧಾಂತ-ಭಕ್ತ ಸಂಪುಟ-ಡಾ. ಜ.ಚ.ನಿ. ಪುಟ ೪ ಮೊದಲ ಮಾತು

೩.  ಚನ್ನಬಸವಣ್ಣನವರ ವಚನಗಳು- ಸಂ. ಡಾ. ಆರ್. ಸಿ. ಹಿರೇಮಠ ವ-೬೩೩,

೪.  ವಚನಗಳಲ್ಲಿ ವೀರಶೈವ ಧರ್ಮ-ಲೇ. ಎಚ್. ತಿಪ್ಪೇರುದ್ರಸ್ವಾಮಿ

೫.   ಅಲ್ಲಮಪ್ರಭು ದೇವರ ವಚನಗಳು ಸಂ. ಆರ್. ಸಿ. ಹಿರೇಮಠ

೬.   ಷಟ್‌ಸ್ಥಲ ಜ್ಞಾನಸಾರಾಮೃತ-ವ-೩೩

೭.   ಶಿವಾನುಭವ ಸೂತ್ರಂ-ಮೊಗ್ಗೆಯ ಮಾಯಿದೇವರು ೨-೩

೮.   ಸಿದ್ಧಾಂತ ಶಿಖಾಮಣಿ-೫-೩೪.

೯.   ಶಿವಶರಣೆಯರ ವಚನಗಳು ಸಂ.ಆರ್‌.ಸಿ.ಹಿ. ವ-೨೫೦.

೧೦.  ಷಟ್‌ಸ್ಥಲ ಜ್ಞಾನ ಸಾರಾಮೃತ – ವಚನ ೩೯.

೧೧.  ಆದಯ್ಯ ಶರಣನ ವಚನಗಳು

೧೨.   ಬಸವಣ್ಣನವರ ವಚನಗಳು  ವ-೯೬

೧೩.   ಗುರುಕರುಣ ತ್ರಿವಿಧಿ ಪದ್ಯ  -೨೨೬

೧೪.   ಬಸವಣ್ಣನವರ ವಚನಗಳು – ವ-೭೫೮.

೧೫.   ಬಸವಣ್ಣನವರ ವಚನಗಳು.

೧೬.   ನಾರದ ಭಕ್ತಿಸ್ತೋತ್ರ-೧

೧೭.   ಗುರುಕರಣ ತ್ರಿವಿಧಿ   ೨೨೭

೧೮.   ಷಟ್‌ಸ್ಥಲ ಜ್ಞಾನ ಸಾರಾಮೃತ- ವ-೨೬೪.

೧೯.   ಚನ್ನಬಸವಣ್ಣನವರ ವಚನಗಳು – ಸಂ. ಆರ್.ಸಿ.ಹಿ. ವ-೧೦೮೭.

೨೦.   ಬಸವಣ್ಣನವರ ವಚನಗಳು – ಸಂ.ಆರ್.ಸಿ.ಹಿ, ವ-೧೦೯.

೨೧.   ಚ.ಬ. ವಚನಗಳು – ೮೧೬.

೨೨.   ಗುರುಕರುಣ ತ್ರಿವಿಧಿ – ಪದ್ಯ – ೨೨೮.

೨೩.   ಸ್ವತಂತ್ರ ಸಿದ್ಧಲಿಂಗೇಶ್ವರ ವಚನ

೨೪.    ಜೀವನ ಸಿದ್ಧಾಂತ-ಶರಣಸ್ಥಲ-ಡಾ. ಜ.ಚ.ನಿ.

೨೫.   ಅಲ್ಲಮಪ್ರಭುದೇವರ ವಚನಗಳು ವ-೧೨೬೫

೨೬.   ಜೀವನ ಸಿದ್ಧಾಂತ-ಐಕ್ಯಸ್ಥಲ.

೨೭.   ಬಸವಣ್ಣನವರ ವಚನಗಳು ವ-೮೭೨,

Related Posts