General

ಜ.ಚ.ನಿ

ಮನೆಯು ಜನಗಳಿಂದ ತುಂಬಿತ್ತು. ಧನಧಾನ್ಯಗಳಿಂದ ಬರಿದಾಗಿತ್ತು. ತಾತ ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ ಮುಂತಾಗಿ ಮನೆಯಲ್ಲಿ ಹತ್ತು ಹನ್ನೆರಡು ಜನರಿದ್ದರು. ಸಂಪಾದನೆ ಯಾವ ಬಗೆಯಲ್ಲಿಯು ಇರಲಿಲ್ಲ. ಅಜ್ಜಂದಿರು ಓದಿಸುತ್ತಿದ್ದ ಸ್ವತಂತ್ರ ಶಾಲೆಯ ಫಲವಾಗಿ ಜನಗಳಿಂದ ವರ್ಷಕ್ಕೊಮ್ಮೆ ಬರುತ್ತಿದ್ದ ಅಲ್ಪಸ್ವಲ್ಪ ಪ್ರಾಪ್ತಿ.  ಅದೇತಕ್ಕೂ ಸಾಲುತ್ತಿರಲಿಲ್ಲ. ಪ್ರತಿನಿತ್ಯ ಭಿಕ್ಷೆಯ ಮಾಡದೆ ವಿಧಿಯಿರಲಿಲ್ಲ. ಈ ಮಧ್ಯೆ ತಂದೆಯವರು ಹಠಾತ್ತಾಗಿ ಶಿವಾಧೀನರಾದದ್ದು ಒಂದು ತುಂಬಿಬಾರದ ಕೊರತೆ. ಕೆಲಸ

ಮಾಡುವವರ ಸಂಖ್ಯೆ ಕಡಿಮೆಯಾಯಿತು. ೧೦೫ ವರ್ಷ ವಯಸ್ಸಿನ ತಾತಂದಿರು ಸಹ ಹಸುವಿಗೆ ಹುಲ್ಲನ್ನು ಕೊಯ್ದು ಇಲ್ಲವೆ ಕೆತ್ತಿ ತರುವ ಕಾಯಕ ಮಾಡಬೇಕಾಯಿತು. ಅಣ್ಣಂದಿರಾದ ಶಿವಬಸವಯ್ಯನವರು ಒಬ್ಬರೆ ತರುವ ಭಿಕ್ಷೆಯಿಂದ ಚರಿತಾರ್ಥ ಸಾಗದಂತಾಯಿತು. ಸದಾಶಿವಯ್ಯನವರು ಭಿಕ್ಷಕ್ಕೆ ಹೋಗುವ ಸರದಿ ಬಂದಿತು. ಹೋಗದಿದ್ದರೆ ವಿಧಿಯಿಲ್ಲದೆ ಹೋಯಿತು. ಒಪ್ಪೋತಿನ ಶಾಲೆಗೆ ತಿಲಾಂಜಲಿ ಬಿಡಬೇಕಾಯಿತು; ಬಿಟ್ಟಾಯಿತು. ಒಪ್ಪತ್ತಿನ ಓದು ಅವರ ಮನಸ್ಸಿಗೆ ತೃಪ್ತಿತರಲಿಲ್ಲ. ಅದೇ ಅವರಿಗೊಂದು ಚಿಂತೆಯಾಗಿತ್ತು; ಚಿತ್ತಚಪಲತೆಯಾಗಿತ್ತು.

ಒಂದು ದಿನ ಬೆಳಗಿನ ಜಾವ. ಎಂದಿನಂತೆ ಎದ್ದು ಮುಖ ತೊಳೆದು ವಿಭೂತಿ ಧಾರಣೆ ಮಾಡಿಕೊಂಡು ಒಂದು ಹಳ್ಳಿಗೆ ಸದಾಶಿವಯ್ಯನವರು ಭಿಕ್ಷಕ್ಕೆ ಹೋದರು. ನಾಲ್ಕಾರು ಮನೆ ಭಿಕ್ಷವಾಯಿತು. ಮತ್ತೊಂದು ಮನೆಯೊಳಕ್ಕೆ ಹೋಗಲು ಮುಂದುವರಿದರು. ಅಷ್ಟರಲ್ಲಿ ಅದೇ ಮನೆಯ ಕಟ್ಟೆಯ ಮೇಲಿದ್ದ ಮುದುಕನೊಬ್ಬನು, ‘ಏನ ಅಯ್ಯಪ್ಪ, ಭಿಕ್ಷೆ ಬೇಡಲು ನೀನೇನು ಮುದುಕನೆ ? ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗ, ಈಗಲೇ ಈ ತಿರುಪೆಗೆ ನಿಂತರೆ ಹೇಗೆ ? ಇನ್ನೂ ನೀನು ಎಷ್ಟು ದಿನ ಬದುಕಬೇಕಾಗಿದೆ ? ಎಷ್ಟು ಜನ ಮಕ್ಕಳು ಮರಿಗಳನ್ನು ಹೆತ್ತು ಸಾಕಬೇಕಾಗಿದೆ ? ಭಿಕ್ಷಾನ್ನದಿಂದಲೇ ಇದೆಲ್ಲ ಹೇಗೆ ಸಾಧ್ಯ ? ವಿದ್ಯೆ ಕಲಿತು ಬುದ್ಧಿವಂತನಾಗದೆ ಸೋಮಾರಿಯಾಗಿ ‘ಭಿಕ್ಷಾಂ ದೇಹಿ’ ಎಂದು ಭಿಕ಼್ಷೆ ಬೇಡುವುದೆ ? ಇನ್ನೊಬ್ಬರಿಗೆ ಹೊರೆಯಾಗಿ ಬಾಳುವುದೊಂದು ಬಾಳೆ ? ಬದುಕುವುದೊಂದು ಬದುಕೆ ? ನೀನು ಜನಿಸದಿದ್ದರೆ ಜಗತ್ತು ಹಾಳಾಗುತಿತ್ತೆ? ಎಂದು ಮುಂತಾಗಿ ಬುದ್ಧಿವಾದ ಬೈಗಳ ಸುರಿಸಿದನು. ಸದಾಶಿವಯ್ಯನವರ ಮೃದುವಾದ ಮನಸ್ಸಿನ ಮೇಲೆ ಆ ಮೊನಚಾದ ಮಾತುಗಳು ಚೆನ್ನಾಗಿ ನಾಟಿದವು. ತಾಳ್ಮೆಗೆಟ್ಟರು. ಅಲ್ಲಿಂದ ಮುಂದಿನ ಮನೆಗೆ ಭಿಕ್ಷಕ್ಕೆ ಹೋಗುವ ಮನಸ್ಸು ಉಳಿಯಲಿಲ್ಲ. ಮೊದಲೆ ವಿದ್ಯಾರ್ಜನೆಗಾಗಿ ತವಕಿಸುತ್ತಿದ್ದ ಮನಸ್ಸು ಮತ್ತಿಷ್ಟು ತವಕಗೊಂಡಿತು. ಹೇಗಾದರೂ ಮಾಡಿ ವಿದ್ಯಾರ್ಜನೆ ಮಾಡಬೇಕೆಂದು ಗಟ್ಟಿಗೊಂಡಿತು. ಹಾಗೆಯೇ ಊರಿಗೆ ಹಿಂದಿರುಗಿದರು. ಬರುತ್ತ ಆ ಮುದುಕನು ಆಡಿದ ಮಾತುಗಳನ್ನು ನೆನೆದು ದುಃಖ ಉಕ್ಕಿತು, ಕಣ್ಣೀರು ಮುನ್ನೀರಾಗಿ ಹರಿಯತೊಡಗಿತು. ಸಮಾಧಾನ ಮಾಡುವರಾರು ? ದಾರಿಯುದ್ದಕ್ಕು ಅತ್ತು ಅತ್ತು ಹೃದಯ ಭಾರವಾಯಿತು. ಬುದ್ಧಿಸಿಮಿತವಿಲ್ಲದಾಯಿತು. ಮನಸಿನ ಮೇಲೆ ಮೂಡಿದ ಮಾತಿನ ಗಾಯ ಮಾಣಲಿಲ್ಲ. ದುಃಖದ ಭರದಲ್ಲಿ ದಾರಿ ಸಾಗಲಿಲ್ಲ. ದಟ್ಟಡಿಯಿಟ್ಟು ನಡೆದಿದ್ದನು. ಹೊತ್ತು ಹೆಚ್ಚಾದರೂ ಅವನಿಗೇನು ಕಾಣಲಿಲ್ಲ. ಚಿಂತೆ ಶೋಕಗಳಲ್ಲಿ ಹೊತ್ತುಗೊತ್ತುಗಳಿಗೆ ಸ್ಥಾನವೆಲ್ಲಿ ? ಅಷ್ಟರಲ್ಲಿ ಊರು ಹತ್ತಿರಕ್ಕೆ ಬಂದಿತು. ಬೆಚ್ಚಿನೋಡಿ ಕಣ್ಣೀರು ಒರಸಿಕೊಂಡು ಬಾಗಿಲ ಬಳಿಗೆ ಬಂದನು. ತಂಗಿಯು ತಂಬಿಗೆಯಲ್ಲಿ ತಂದ ನೀರಿನಿಂದ ಕಾಲುತೊಳೆದು ಒಳಗೆ ಹೋದನು. ಅಕ್ಕನು ಓಡಿ ಬಂದು ಜೋಳಿಗೆಯನ್ನು ನೋಡಿದಳು. ದಿನಕ್ಕಿಂತಲು ಹಿಟ್ಟು ತೀರ ತುಸು ಇದ್ದಿತು. ಅವ್ವಾ, ತಮ್ಮನಿಂದು ಹಿಟ್ಟು ತುಸು ತಂದಿದ್ದಾನೆ ಎಂದು ಕೂಗಿ ಹೇಳಿದಳು. ಆ ಮಾತು ಕೇಳಿ ಅಲ್ಲಿಯೇ ಇದ್ದ ಅಣ್ಣನು, ಅಂಗಡಿಗೆ ಹಾಕಿ ಫಲಾರ (ಫಲಾಹಾರ) ತಿಂದಿರಬೇಕು ಎಂದು ದೂರು ಹೇಳಿದನು.

ತಾಯಿ ನೀಲಾಂಬೆ ಜಳಕ ಮಾಡಿ ಮಡಿಯುಟ್ಟು ಅಡುಗೆಯ ಮನೆಯ ತನ್ನ  ಕೆಲಸದಲ್ಲಿ ತೊಡಗಿದ್ದಳು. ಮಕ್ಕಳ ಮಾತುಗಳ ಕೇಳಿ ಮನಸ್ಸು ತಾಳದೆ ಬಂದು ನೋಡಿದಳು. ಅವರು ಹೇಳಿದಂತೆ ನಿಜವಾಗಿಯೂ ಎಂದಿಗಿಂತ ತೀರ ಕಡಿಮೆಯಾಗಿತ್ತು. ಮಗನ ಮೇಲೆ ತಾಯಿಗೆ ತುಂಬಾ ಮಮತೆಯಿತ್ತಾದರು ಸಂಸಾರ ನಿರ್ವಹಣ ದೃಷ್ಟಿಯಿಂದ ತುಂಬ ಸಿಟ್ಟಿಗೆದ್ದಳು; ಸಾವಿರಾಡಿದಳು. ಗಾಯದ ಮೇಲೆ ಕಾಯ್ದ ಕಂಬಿಯ ಕೀಸಿದಂತಾಯಿತು. ಮೊದಲೆ ಮುದುಕನ ಬಿರಿನುಡಿಗಳಿಂದ ಬೆಂದ ಹೃದಯ ಮತ್ತಿಷ್ಟೂ ನೊಂದಿತು.  ಅಕ್ಕನ ಚಾಡಿ, ಅಣ್ಣನ ಅಪವಾದ, ಅವ್ವನ ಆರ್ಭಟ ಯಾವುದನ್ನು ಸಹಿಸಬೇಕು. ಏನೆಂದು ಸಮಾಧಾನ ಹೇಳಬೇಕು. ಹೇಳಬೇಕೆಂದಿದ್ದರೆ ಬೇಕಾದಷ್ಟಿತ್ತು. ಹೇಳುವ ಮನಸ್ಸು ಮಾಡಲಿಲ್ಲ. ಇದಿರಾಡಲು ಇವನಿಗೆ ಇಷ್ಟವಿಲ್ಲದೆ ಹೋಯಿತು. ಕಷ್ಟವೊದಗಿದಷ್ಟು ಅವನ ಮನ ಪುಟಕ್ಕಿಟ್ಟ ಚಿನ್ನದಂತೆ ಚೊಕ್ಕಟವಾಗ ತೊಡಗಿತ್ತು. ಅಲ್ಲದೆ ಬಾಗಿಲ ಬಳಿ ತಂಗಿ ನೀರು ತಂದು ಕೊಟ್ಟಾಗ ಅವನು ಬರಿ ಕಾಲುಗಳನ್ನೇ ತೊಳೆದಿರಲಿಲ್ಲ. ಜೊತೆಗೆ ಕಾಮಕ್ರೋಧಗಳನ್ನು ತೊಳೆದಿದ್ದನು. ತೊಡೆದು ಹಾಕಿದ್ದನು. ಅದರಿಂದ ಅವನ ಮುಚ್ಚಿದ ತುಟಿ ಎರಡಾಗಲಿಲ್ಲ. ಊಟದ ಆಶೆ ಉಳಿಯಲಿಲ್ಲ. ಏನೂ ತೋಚದಾಯಿತು. ಯಾವುದೂ ಬೇಡವಾಯಿತು. ಸಹಿಸದ ಸಂಕಟದಿಂದ ಮರುಮಾತಾಡದೆ ಮನೆಯ ಒಂದು ಮೂಲೆಯಲ್ಲಿ ಹೋಗಿ ಕುಳಿತನು.ಅವನು ಕುಳಿತರೂ ಅವನ ಮನಸ್ಸು ಸುಮ್ಮನಾಗಲಿಲ್ಲ. ಅದು ಚಿಂತೆಗೊಳಗಾಯಿತು. ಇನ್ನು ನಾನು ಇಲ್ಲಿ ಇರುವುದರಿಂದ, ಹೀಗೆ ಕಾಲಕಳೆವುದರಿಂದ ಯಾವ ಪ್ರಯೋಜನವಿಲ್ಲ. ಮಾನಮರ್ಯಾದೆ ಮತ್ತೂ ಇಲ್ಲ. ಎಲ್ಲಿಗಾದರೂ ಹೋಗಿ ಯಾರ ಆಶ್ರಯವನ್ನಾದರೂ ಬೇಡಿ ಓದಿಕೊಳ್ಳಬೇಕು. ಆದರೆ ಎಲ್ಲಿಗೆ ಹೋಗುವುದು ? ಯಾರನಾಶ್ರಯಿಸುವುದು ? ಎಂದು ಎಷ್ಟೋ ಬಗೆಯಾಗಿ ಯೋಚಿಸತೊಡಗಿತ್ತು. ಅಷ್ಟರಲ್ಲಿ ಅಣ್ಣನ ಕೂಗು. ಹೀಗೆ ಸುಮ್ಮನೆ ಮೂಲೆ ಹಿಡಿದು ಕುಳಿತರೇನು ? ಮನೆಗೆಲಸ ಮಾಡುವರಾರು ? ದನದ ಮನೆ ಕಸಗೂಡಿಸಿಲ್ಲ. ಮೈಲಿಗೆಯ ಬಟ್ಟೆಗಳ ತೊಳೆದಿಲ್ಲ. ಇವುಗಳಲ್ಲಿ ಯಾವುದನ್ನಾದರೂ ಮಾಡ ಏಳು ! ಎನ್ನಲು ಸದಾಶಿವಯ್ಯನು ಬಟ್ಟೆ ತೊಳೆವುದನ್ನೇ ಒಪ್ಪಿಕೊಂಡು ಬಟ್ಟೆಗಳೊಡನೆ ಬಾವಿಯಿದ್ದಲ್ಲಿಗೆ ಬಂದು ಬಟ್ಟೆಗಳನ್ನು ಹಸನಾಗಿ ತೊಳೆದನು. ಆದರೆ ಮರಳಿ ಮನೆಗೆ ಹೋಗಲು ಮನಸ್ಸಿಲ್ಲ. ಬಡತನದ ಬಾಳಿನಲ್ಲಿ ಇಷ್ಟು ದಿನ ತಮ್ಮ ಮನಸ್ಸಿಗೆ ವಿರೋಧವಾಗಿ ಅದೆಷ್ಟೋ ತಗ್ಗಿ ನಡೆದನು; ಅದೆಷ್ಟೋ ಕುಗ್ಗಿ ನಡೆದನು. ಇನ್ನು ಹಾಗೆ ಇರಲು ಸಾಧ್ಯವಿರಲಿಲ್ಲ. ವಿದ್ಯಾಭ್ಯಾಸದ ಕಡೆಗೆ ಅವನ ಮನಸ್ಸು ತೀವ್ರವಾಗಿ ಹರಿಯಿತು. ಬೆಳಗಿನಿಂದ ಊಟವಿಲ್ಲದಿದ್ದರು ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ. ಬಟ್ಟೆಗಳನ್ನು ಮನೆಗೆ ಕಳಿಸುವ ಬಗೆ ಹೇಗೆ ? ಎಂದು ಯೋಚಿಸುತ್ತಿರುವಾಗ ನೆರೆಮನೆಯವರೊಬ್ಬರು ನೀರಿಗೆಂದು ಅಲ್ಲಿಗೆ ಬಂದರು. ಅವರನ್ನು ನೋಡಿ ಮನ ಹಿಗ್ಗಿತು. ಉಂಡಷ್ಟು ಸಂತಸವಾಯಿತು. ಮನೆಯಲ್ಲಿ ಕೊಡಹೇಳಿ ತೊಳೆದ ಬಟ್ಟೆಗಳನ್ನು ಅವರ ಕೈಯಲ್ಲಿ ಕೊಟ್ಟನು. ನನ್ನನ್ನು ಕೇಳಿದರೆ ಹಳ್ಳಿಗೆ ಹೋದನೆಂದು ಹೇಳಿ ಎಂದು ತಿಳಿಸಿದನು. ಹಾಗೆಯೇ ಹೊರಟುಬಿಟ್ಟನು. ಸ್ವಲ್ಪ ದೂರ ಹೋದಮೇಲೆ ಹಸಿದಿದ್ದರೂ ಹಂಗಿಲ್ಲದೆ ನಿಟ್ಟೋಟದಿಂದ ಓಡಿದನು. ಏಕೆಂದರೆ ಯಾರಾದರು ಬಂದು ಹಿಂದಕ್ಕೆ ಕರೆದೊಯ್ದಾರೆಂಬ ಭಯ ಅವನಿಗೆ. ಅದರಿಂದಾಗಿ ಬೇಗ ಅವನು ಕಜ್ಜರಿ ಗ್ರಾಮವನ್ನು ಸೇರಿದನು; ಕೊಂಚ ಮನ ಸೈರಣೆಗೊಂಡಿತು.

 ಆಗ ಆ ಊರಿನಲ್ಲಿ ಶಾಲೆ ಉತ್ತಮ ರೀತಿಯಲ್ಲಿದ್ದು ಹೆಸರುವಾಸಿಯಾಗಿತ್ತು. ಅದರಿಂದ ಅಲ್ಲಿ ತನ್ನ ಹೆಚ್ಚಿನ ಅಭ್ಯಾಸ ಆಗುತ್ತದೆಂದು ಆಲೋಚಿಸಿ ಅಲ್ಲಿಗೆ ಬಂದಾಯಿತು. ಆದರೆ ಅವನ ಬಳಿ ಬಿಡಿಗಾಸು ಸಹ ಇರಲಿಲ್ಲ. ಅಷ್ಟು ಅಕಿಂಚನನಾಗಿದ್ದನು. ಆಶ್ರಯದ ಮಾತು ಮುಂದೆ ಬಂದಿತು. ಊರಿನಲ್ಲಿ ಯಾರ ಪರಿಚಯವೂ ಇರಲಿಲ್ಲ. ಎಲ್ಲಿ ಯಾರ ಮನೆಗೆ ಹೋಗಿ ಕೇಳುವುದು ? ಸಾಧ್ಯವಾಗದೆ ಹೋಯಿತು. ಹಾಗೆಯೇ ಅದೇ ಊರಿನ ಅರಳಿಕಟ್ಟೆಯ ಮೇಲೆ ಕುಳಿತು ಬಿಟ್ಟನು. ಬೆಳಗಿನಿಂದ ಊಟವಿಲ್ಲ. ಮೈಮೇಲೆ ಸರಿಯಾದ ಬಟ್ಟೆಯಿಲ್ಲ. ಇತ್ತಹಸಿವಿನ ಬಾಧೆ, ಅತ್ತ ಮನಸ್ಸಿನ ವೇಧೆ, ಎರಡನ್ನೂ ಸಹಿಸದೆ ಹೋದನು. ಕಣ್ಣುಗಳಲ್ಲಿ ನೀರೂರಿತು. ಭವಿಷ್ಯತ್ತಿನ ಕಾರ್ಗತ್ತಲೆಯ ಕಪ್ಪುಕಲೆ ಕಂದಿದ ಮುಖದ ಮೇಲೆ ನೆಲೆ ನಿಂತಿತು. ಆ ಸಮಯಕ್ಕೆ ಅದೇ ಊರಿನ ಹಿರಿಯಮಠದ ರಾಚಯ್ಯನವರೆಂಬುವರು ಅಲ್ಲಿಗೆ ಆಕಸ್ಮಿಕವಾಗಿ ಬಂದರು. ಅರಳಿಕಟ್ಟೆಯಲ್ಲಿ ಕುಳಿತು ಅಳುತ್ತಿರುವ ಅಣುಗನ ಮೇಲೆ ಅವರ ದೃಷ್ಟಿ ಹರಿಯಿತು. ಪಡುವ ಅವಸ್ಥೆಯನ್ನು ನೋಡಿ ಆದ್ಯಂತವನ್ನು ಕೇಳಿ ಮನಮರುಗಿ, ಕರಳುಕರಗಿ ಮಠಕ್ಕೆ ಕರೆದೊಯ್ದರು. ಹಸಿದ ಹೊಟ್ಟೆಗೆ ಊಟ ದೊರೆಯಿತು. ಓದಲು ಊರಿನವರಿಂದ ಸಹಾಯ  ಮಾಡಿಸಿಕೊಡುವೆನೆಂಬ ಅಭಯವೂ ಅವರಿಂದ ದೋರೆಯಿತು.  ಕೇಳಿ ಮನಸ್ಸಿಗೆ ನೆಮ್ಮದಿಯಾಯಿತು. ಆ ದಿನ ಸುಖವಾಗಿ ನಿದ್ದೆ ಹೋದನು.

 ಮರುದಿನ ರಾಚಯ್ಯನವರು ಮಾತುಕೊಟ್ಟಂತೆ ಊರಿನಲ್ಲಿ ಹೋಗಿ ಇದ್ದ ಸಂಗತಿಯನ್ನು ಜನರಿಗೆ ಹೇಳಿ ವಿದ್ಯಾಸಹಾಯವೆಂದು ಕೇಳಿ ಹಣ ಶೇಖರಿಸಿದರು. ಬಂದ ಹಣದಲ್ಲಿ ಬಟ್ಟೆ ಓದುವ ಪುಸ್ತಕ ಹಲಗೆ ಬಳಪ ಮುಂತಾದ ಸಾಮಾನುಗಳನ್ನು ತಂದು ಸದಾಶಿವಯ್ಯನವರಿಗೆ ಕೊಟ್ಟು ಶಾಲೆಗೆ ಸೇರಿಸಿದರು. ಅವನ ಧೈರ್ಯದ ಸಾಹಸಕ್ಕೆ ಇಂದು ದಾರಿ ಸಿಕ್ಕಿತು. ಮುಖದ ಮೇಲೆ ಕೃತಜ್ಞತೆಯ ಚಿನ್ಹೆ ಚಿಮ್ಮಿತು. ಸದಾಶಿವಯ್ಯನವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅನಿರೀಕ್ಷಿತವಾದ ಈ ಸಹಾಯದಿಂದ ಅವರ ಓದುವ ಉತ್ಸಾಹ ಇಮ್ಮಡಿ ಮುಮ್ಮಡಿಯಾಗಿ ಹೆಮ್ಮಿತು. ಮನಸಿಟ್ಟು ಮತಿಗೊಟ್ಟು ಓದತೊಡಗಿದರು. ಒಂದರಗಳಿಗೆಯನ್ನು ಸಹ ವ್ಯರ್ಥ ಕಳೆಯುತ್ತಿರಲಿಲ್ಲ. ಪಾಠಬರುವವರಿವಿಗೂ ಊಟ ಮಾಡುತ್ತಿರಲಿಲ್ಲ. ಆಟವಾಡುತ್ತಿರಲಿಲ್ಲ. ನೆರವನ್ನು ನಿರರ್ಥಕಮಾಡಿಕೊಳ್ಳಲಿಲ್ಲ. ತನ್ನ ಓದಾಯ್ತು. ತಾನಾಯ್ತು. ಈ ರೀತಿ ಒಮ್ಮನದಿಂದ ಓದಿ ಕೆಲವು ದಿನಗಳಲ್ಲಿಯೆ ಶಾಲೆಯ ಜಾಣ ವಿದ್ಯಾರ್ಥಿಯಾದರು. ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸದ್ಗುಣಗಳಿಂದ ಮಠದವರಿಗೆ ಮುದ್ದು ಹುಡುಗರಾದರು.

 ಈ ಬಗೆಯಾಗಿ ನಾಲ್ಕು ವರ್ಷ ಓದಿದರು. ಏಳನೆಯ ವರ್ಗದ ಅಭ್ಯಾಸವೂ ಕೊನೆಗಂಡಿತು. ಉತ್ತಮವಾಗಿ ಕೊನೆಗಂಡಿತು. ಈ ವರ್ಗದ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎಂದು ಹೆಸರು. ಇದು ಜಿಲ್ಲೆಯ ಕೇಂದ್ರಸ್ಥಳದಲ್ಲಿಯೇ ಜರುಗುತ್ತಿತ್ತು. ಅಲ್ಲಿಗೆ ಹೋಗಿ ಪರೀಕ್ಷೆಗೆ ಕುಳಿತುಕೊಳ್ಳಲು ಸದಾಶಿವಯ್ಯನವರು ಮನಸ್ಸು ಮಾಡಿದರು. ಶಿಕ್ಷಕರ ಅನುಮತಿಯನ್ನು ಪಡೆದರು. ಅಸುಂಡಿ ಶಿವನಗೌಡನೆಂಬ ಸಹಾಧ್ಯಾಯಿಯೊಡನೆ ಕಾಲುನಡಿಗೆಯಿಂದ ಧಾರವಾಡಕ್ಕೆ ಬಂದರು. ಪರೀಕ್ಷೆ ಕಟ್ಟಿ ಆಯಿತು, ಕೊಟ್ಟು ಆಯಿತು. ಆದರೇನು ? ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಉದ್ದೇಶವೆ ಬೇರೆಯಾಯಿತು. ಆದದ್ದೆ ಬೇರೆಯಾಯಿತು. ಮಹಾತ್ಮರ ಚರಿತ್ರೆಯೆ ಮರ್ತ್ಯಕ್ಕೆ ವಿಲಕ್ಷಣವಾದುದು, ಮನುಷ್ಯರಿಗೆ ಮೀರಿದುದು ಎಂಬುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ ಎಲ್ಲರಿಗಿಂತಲು ಬುದ್ಧಿವಂತರಾದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿರುವುದೆಂದರೇನು ? ಮನೋನಿಶ್ಚಯಕ್ಕೆ ವಿಪರೀತವಾದ ಫಲಿತಾಂಶ ಸಿಕ್ಕುವುದೆಂದರೇನು ?

 ಸದಾಶಿವಯ್ಯನವರ ಮನಸ್ಸು ಇದರಿಂದಾಗಿ ವಿಶೇಷ ವ್ಯಥೆಗೊಳಗಾಯಿತು. ಕಜ್ಜರಿಯಲ್ಲಿ ಯಾರಿಗೂ ಮುಖ ತೋರದೆ ಮರೆಯಲ್ಲಿಯೇ ಇದ್ದು ಹೋದರು. ಅನ್ನದ ಆಶೆ ಹರಿದರು. ಆನೆಯೆತ್ತರದ ಆಲೋಚನೆಗಳಿಗೆ ಆಗರವಾದರು. ಸ್ನೇಹಿತರು ಶಿಕ್ಷಕರು ಏನೇನೋ ಸಮಾಧಾನ ಹೇಳಿದರು. ಆದರೆ ಒಂದೂ ಪ್ರಯೋಜನ ವಾಗಲಿಲ್ಲ. ಮರಳಿ ಪ್ರಯತ್ನ ಮಾಡಿನೋಡೆಂದರು.ಮನಸ್ಸು   ಮಾಡಲಿಲ್ಲ. ಪೂರ್ತಿ ಮನಃಪರಿವರ್ತನವಾಗಿ ಹೋಗಿತ್ತು. ಎಲ್ಲರ ಹೇಳಿಕೆಗಳಿಗೂ ಅವರ ಆಲೋಚನೆಗೂ ನೆಲಮುಗಿಲ ಅಂತರವಾಯಿತು. ಒಂದಕ್ಕೊಂದು ಮೇಳೆಸುವ ಬಗೆ ಹೇಗೆ ? ಸಾಧ್ಯವಾಗಲಿಲ್ಲ. ಇನ್ನು ಅಲ್ಲಿರಲು ಅವರ ಮನಸ್ಸು ಒಪ್ಪಲಿಲ್ಲ. ಹಾಗೆಯೇ ಹೊರಟು ಅವರ ತಾಯಿಯ ತವರು ಮನೆಯಿದ್ದ ಲಿಂಗದಹಳ್ಳಿಗೆ ಬಂದರು. ತಾಯಿಯ ತವರುಮನೆಯಲ್ಲಿ ನಿಂತರು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ಇಂದ್ರಿಯಗಳು ಮತ್ತು ಅಂತಃಕರಣಗಳ ಮೂಲಕ ನಾವು ಪಡೆಯುವ ಜ್ಞಾನಕ್ಕೆ ಅನುಭವ ಎಂದು ಸ್ಥೂಲವಾಗಿ ಹೇಳುತ್ತೇವೆ. ಬದುಕಿನಲ್ಲಿ ನಾವು ಹೊಂದುವ ಅನೇಕ ರೀತಿಯ ಅನುಭವಗಳು ವಸ್ತುವಿನ ಪ್ರತ್ಯಕ್ಷ ಸಂಪರ್ಕ ಹಾಗು ಸುಖ-ದುಃಖ, ನೋವು-ನಲಿವು, ಹುಟ್ಟು-ಸಾವು ಮುಂತಾದವುಗಳ ಅನಿವಾರ್ಯತೆಯಿಂದ ಬಂದಂತಹವುಗಳು. ಆಗ ನಾವು ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಅನುಭವಗಳೆಲ್ಲ ಲೌಕಿಕವಾದವು. ಆದರೆ ಅನುಭಾವ ಇವುಗಳಿಂದ ಭಿನ್ನವಾದ ಒಂದು ವಿಶಿಷ್ಟ ಅನುಭವ, ಅದು ಪಾರಲೌಕಿಕವಾದುದು. ಅದು ಆತ್ಮವಿದ್ಯೆ. ತಾನಾರೆಂಬುದನ್ನು ತೋರುವ ವಿದ್ಯೆ. ನಮ್ಮ ಬುದ್ಧಿ, ಇಂದ್ರಿಯಗಳು, ತರ್ಕ ಹಾಗೂ ಪ್ರಯೋಗ ಪರೀಕ್ಷೆಗಳಿಗೆ ಅತೀತವಾಗಿರುವ ದೈವೀಶಕ್ತಿಯನ್ನು ಕುರಿತು ಚಿಂತಿಸುವುದು, ಆ ದೈವೀಶಕ್ತಿಯೇ ಪರಮಸತ್ಯ ಎಂದು ನಂಬುವುದು ಹಾಗು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅನುಭಾವ.

 ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಹಿತಂ ಮುಖಂ

 ತತ್ವಂ ಪೂಷನ್ನಪಾವೃಣು ಸತ್ಯ ಧರ್ಮಾಯ ದೃಷ್ಟಯೇ

 ಪರಮಸತ್ಯವು ತೇಜೋಮಯವಾದ ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಇಂಥ ಪರಮಸತ್ಯದ ಸಾಕ್ಷಾತ್ಕಾರಕ್ಕಾಗಿ ಸತ್ಯಧರ್ಮಗಳನ್ನು ಅಳವಡಿಸಿಕೊಂಡ ಸಾಧಕನ ದೃಷ್ಟಿ ಅಂತರ್ಮುಖವಾಗಬೇಕಾಗುತ್ತದೆ. ಆಗ ತನು ಮನ ಭಾವ ನಷ್ಟವಾಗಿ ವಿಶ್ವಾತ್ಮನೇ ತಾನಾಗುವ ಅನುಭಾವ ಸಿದ್ಧಿಸುತ್ತದೆ. ಅನುಭಾವ ಒಂದು ರೀತಿಯಲ್ಲಿ ಪರಮಸತ್ಯದ ಅರಿವನ್ನು ಮಾಡಿಕೊಡುವ ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ಅದು ಮಾತು, ಮನಸ್ಸುಗಳನ್ನು ಮೀರಿದ ವೈಯಕ್ತಿಕ ಅನುಭವ. ಅದರ ತೀವ್ರತೆ ಪ್ರಖರತೆಯನ್ನಳೆಯಲು ಭಾಷೆ ಅಸಮರ್ಥವಾಗುವುದರಿಂದ ಅದು ಅವರ್ಣನೀಯ ಹಾಗೆಯೇ ಅನಿರ್ವಚನೀಯ. ಅಂತೆಯೇ ಶರಣರು ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ’ ಎಂದು ಹೇಳಿರುವುದು.

 ಸಮುದ್ರದ ಆಳವನ್ನು ಅಳೆಯಲು ಹೋದ ಉಪ್ಪಿನ ಬೊಂಬೆಯೊಂದು ಸಮುದ್ರದಲ್ಲಿ ಮುಳುಗಿದಾಗ ಕರಗಿಹೋಯಿತಂತೆ. ಸಮುದ್ರದ ಆಳವನ್ನು ವಿವರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಪರಮಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅನುಭಾವಿಯು ತನ್ನ ಯಾವ ಅನುಭವದ ಬಗ್ಗೆಯೂ ಹೇಳಲಾರ. ಆ ಅನುಭವ ಅತ್ಯಂತ ಶುದ್ಧ ಅನುಭವ. ಅದೇ ಅನುಭಾವ. ಅನುಭಾವದಲ್ಲಿ ದೊರೆವ ಆನಂದವೇ ನಿಜವಾದ ಆನಂದ, ಪರಮಾನಂದ. ಅದು ಸ್ವಯಂವೇದ್ಯ ಇಂಥ ಪರಮಾನಂದವನ್ನು ಅನುಭವಿಸುವ ಅನುಭಾವಿ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದೆಂದರೆ ಕುರುಡನಿಗೆ ಬಣ್ಣವನ್ನು ಕುರಿತು ಬೋಧಿಸಿದಂತೆ ನಿರರ್ಥಕ. ಆದರೆ ಅನುಭಾವಿಗಳ ಸಂಗ, ಸಾನ್ನಿಧ್ಯ ನಮಗೆ ಸುಖ, ಶಾಂತಿ ಸಮಾಧಾನ ಹಾಗು ನೆಮ್ಮದಿಯನ್ನುಂಟು ಮಾಡುತ್ತದೆ. ಅನುಭಾವಿಗಳು ವಿಶ್ವಕುಟುಂಬಿಗಳಾಗಿರುತ್ತಾರೆ. ಮಾನವ ಕಲ್ಯಾಣವೇ ಅವರ ಜೀವನ ಗುರಿಯಾಗಿರುತ್ತದೆ.

ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ.

ಸ್ವಾನುಭಾವದ ನೆಲೆಯ ನಾನೇನು ಬಲ್ಲೆನೈ

ನೀನೇ ಒಳವೊಕ್ಕು ಏನ ನುಡಿಸಿದೊಡನೆ

ನಾ ನುಡಿವೆ ಗುರುವೇ ಕೃಪೆಯಾಗು.||

ಶಿಲೆಯ ತೆಪ್ಪವ ನೇರಿ ಜಲವ ದಾಟುವೆನೆಂಬ

ಬಲು ಮೂಡತನವ ತೊಳಗಿಸುತ ನೀಎನ್ನ

ಸಲಹು ಶ್ರೀ ಗುರುವೇ ಕೃಪೆಯಾಗು.||

ಕನ್ನಡ ನಾಡಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ್ದು 12 ನೇಯ ಶತಮಾನದ ಶರಣರು, ಮಾನವ ಕುಲವು ಸರಿಸಮಾನವಾಗಿ ಮೇಲು-ಕೀಳು, ಜಾತಿ, ಕುಲ, ವರ್ಣದಿಂದ ಬೇರ್ಪಡಿಸಿ  ಬದುಕಲು ಪ್ರಯತ್ನವನ್ನು ಪಟ್ಟವರು, ಅವರಿಗೆ ಮುಂದಿನವರು ತಮ್ಮ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಶರಣನಾಗಿ ಮಹಾದೇವನೊಂದಿಗೆ ಇರಬೇಕು ಸರ್ವರು ಬಂದುತ್ವದಿಂದ ಇರಬೇಕೆಂಬ ಮಹಾದಾಸೆ, ಅದುವೇ ಶರಣ ಜೀವನ. ಶಿವಾನುಭವಿಗಳ ಜೀವನ ಹೇಗಿರಬೇಕೆಂದು ಬದುಕಿ ತೋರಿಸಿ ಕೊಟ್ಟವರಾಗಿದ್ದಾರೆ, ಅವರ ನೆರಳಿನಲ್ಲಿಯೇ 15 ನೇಯ ಶತಮಾನದಲ್ಲಿ ತೋಂಟದ ಶ್ರೀ ಸಿದ್ಧಲಿಂಗ ಶಿವಯೋಗಿಗಳು “ಷಟಸ್ಥಲ ಜ್ಞಾನಸಾರಾಮೃತ”ವನ್ನು ರಚಿಸಿ ತಮ್ಮ ಶಿಷ್ಯ ಸಂಪತ್ತನ್ನು ಸಂಪಾದಿಸಿ ದೇಶ ಸಂಚಾರ ಮಾಡಿ ಹಲವು ಕಡೆಗಳಲ್ಲಿ ಹಲವು ಜನರನ್ನು ಶಿವಾನುಭವಿಗಳನ್ನು ಹುಟ್ಟು ಹಾಕಿದರು, ನಂತರದಲ್ಲಿ  ಶ್ರೀ ನಿಜಗುಣ ಶಿವಯೋಗಿಗಳು, ಶ್ರೀ ಸರ್ಪಭೂಷಣ ಶಿವಯೋಗಿಗಳು, ಶ್ರೀ ಮುಪ್ಪಿನ ಷಡಕ್ಷರಿಗಳು, ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳು, ಶ್ರೀ ಘನಮಠದಾರ್ಯರು ಕೇವಲ ಭಕ್ತಿಯ ಭಾವದಿಂದ ಹಾಡುಗಬ್ಬ ಪದಗಳನ್ನು‌ ರಚಿಸಲಿಲ್ಲಾ, ಏನೋ ಬರೆಯಬೇಕು ಎಂದು ಬರೆದವುಗಲ್ಲಾ, ತತ್ವ, ಶಾಸ್ತ್ರ, ಆಚಾರ, ಸಿದ್ದಾಂತವನ್ನು ತಾವು ಸಂಪೂರ್ಣವಾಗಿ ಅಳವಡಿಸಿಕೊಂಡು ಇನ್ನಿತರರಿಗೆ ಅಧಿಕಾರ ವಾಣಿಯಿಂದ ಪ್ರತಿಪಾದಿಸಿದ್ದಾರೆ, ಅದೇ ಸಾಲಿನಲ್ಲಿ ಮೈಲಾರ ಬಸವಲಿಂಗ ಶರಣರು ಬರುವರು.

ಶಿವ ಭಕ್ತರಾದ ಬಸವಪ್ಪ ಒಬ್ಬ ವ್ಯಾಪಾರಿ ಶರಣನಾದ ಶ್ರೀ ಬಸವಲಿಂಗ ಶರಣರು ತಾವು ನಿಜಜೀವನದಲ್ಲಿ ನಡೆಸಿದ ಆಚರಣೆ, ಗುರುಗಳ ಮುಖಾಂತರ ತಿಳಿದುಕೊಂಡಿದ್ದಾ ವೀರಶೈವ ಸಿದ್ಧಾಂತ ತತ್ವವನ್ನು,

1) ಷಟಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ.

2) ಗುರು ಕರುಣ ತ್ರವಿಧಿ.

3) ಶಿವಾನುಭವ ದರ್ಪಣ.

4) ಲಿಂಗ ಪೂಜಾ ವಿಧಾನ ಎಂಬ ಗ್ರಂಥಗಳನ್ನು ಸ್ವತಃ ರಚನೆಯಾಗಿದ್ದು ಗುರುವಿನ ಕರುಣೆಯಿಂದ.

ಜನಸಾಮಾನ್ಯರ ನಡೆನುಡಿಯಲ್ಲಿ ವೀರಶೈವ ಸಿದ್ಧಾಂತ ತತ್ವವನ್ನು ಮೂಡಿಸಿಕೊಳ್ಳುವ ದಿವ್ಯ ದರ್ಶನ ನೀಡಿದವರು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳು. ಅಷ್ಟಾವರಣ, ಪಂಚಾಚಾರ, ಷಟಸ್ಥಲ, ಶಿವಾನುಭವ ಸಾರಾಮೃತವನ್ನು ಸ್ವತಃ ನಡೆಸುವುದರ ಮೂಲಕ ಉಪದೇಶವನ್ನು ನೀಡಿದವರಾಗಿದ್ದಾರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ. ನೋಡುಗರ ಕಣ್ಣು ಸೆಳೆಯುವ ಸ್ಥಾನ, ತುಂಗಭದ್ರೆಯು ತುಂಬಿ ಹರಿಯುವ ಮೂಲಕ ಅಲ್ಲಿನ ಪ್ರಕೃತಿಯನ್ನು ಸುಮಧುರವಾಗಿಸಿ ತನ್ನಲ್ಲಿಯೇ ಗುರುಗಳನ್ನು ಕರೆಯಿಸಿಕೊಂಡಿದ್ದಾಳೆಇಲ್ಲಿ ತಪೋನಿಷ್ಟರು ನಡೆದಾಡಿದ ಸ್ಥಾನ, ಶ್ರೀ ಚೆನ್ನವೀರ ಶಿವಯೋಗಿಗಳು ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಹಲವು ಸಾಧಕರಿಗೆ ಮಾರ್ಗದರ್ಶನ ಉಪದೇಶವನ್ನು ಮಾಡಿದವರುಹೊಳಲಿನ ಲಿಂಗಪ್ಪ ಶರಣರು, ಬನ್ನಿಮಟ್ಟಿಯ ಚೆನ್ನಪ್ಪ ಶರಣರು, ಮೈಸೂರು ಪ್ರಾಂತ್ಯದ ಶಿವಬಸವ ಸ್ವಾಮಿಗಳು, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು, ಇನ್ನೂ ಹಲವು ಸಾಧಕರು ಇಲ್ಲಿಯೇ ತಮ್ಮ ತಪವನ್ನು ಆಚರಿಸಿ ವಿದ್ಯೆಗೈದಿದ್ದಾರೆ. ಆ ದಿವ್ಯ ಜ್ಯೋತಿ ಪ್ರಕಾಶದಲ್ಲಿ ಬೆಳಗಿದವರು ಅಗ್ರಗಣ್ಯರಲ್ಲಿ ಒಬ್ಬರಾದವರು ಮೈಲಾರದ ಬಸವಲಿಂಗ ಶರಣರು.

ಬಸವಲಿಂಗ ಶರಣರ ಜೊತೆ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿಗಳು ಕ್ರಿ. ಶ. 1810-1830 ಇದ್ದು ಸಹಪಾಠಿ ಆಗಿ ಅವರಿಂದಲೇ ಶಾಸ್ರ್ತಾಭ್ಯಾಸವನ್ನು ಮಾಡಿದ್ದರಿಂದ ಚಿಂತಕರು ಹೇಳುವ ಪ್ರಕಾರ ಅವರದ್ದು 18 ನೇಯ ಶತಮಾನದ ಕಡೆಯ ಭಾಗದಲ್ಲಿ ಕ್ರಿ. ಶ. 1780-1800 ಇದ್ದವರು ಎಂದು ತಿಳಿಯಬಹುದಾಗಿದೆ. 

ಇವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಡಿನ ಹೆಸರಾಂತ ಮೈಲಾರ ಗ್ರಾಮದವರು, ಮೈಲಾರ ಎಂದೊಡನೆ ನಮ್ಮ ನೆನಪಿಗೆ ಬರುವುದು ಮೈಲಾರಲಿಂಗೇಶ್ವರ, ಈ ದೇವಸ್ಥಾನಕ್ಕೆ ಹೋಗುವ ಎಡಗಡೆ, ದೇವಸ್ಥಾನದ ಹತ್ತಿರವೇ ಬಸವಪ್ಪನ (ಬಸವಲಿಂಗ ಶರಣರು) ಮನೆ ಇದೆ, ಇವರು  ವ್ಯಾಪಾರ ಕಾಯಕವನ್ನು ಮಾಡುತ್ತಿದ್ದ ಮನೆತನದಲ್ಲಿ ಜನಿಸಿದವರು, ಇವರ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಕಂಡು ಬಂದಿಲ್ಲಾ, ತಾತ್ವಿಕವಾಗಿ ಅಧ್ಯಾತ್ಮದ ಹಾದಿಯಲ್ಲಿ ಬರುವ ಸಾಧಕನು ಗುರುಕರಣೆಯನ್ನು ಪಡೆದು ಮಾಂಸಮಯ ಶರೀರವನ್ನು ಮಂತ್ರಮಯ ಶರೀರವನ್ನು ಮಾಡಿಕೊಂಡು ಗುರುಸಂಬಂಧವನ್ನು ಇಟ್ಟುಕೊಳ್ಳುವುದರಿಂದ ತಂದೆ ತಾಯಿಯ ಹೆಸರನ್ನು ಮುನ್ನೆಲೆಗೆ ತೋಚದೇ ಗುರುವಿನ ಹೆಸರನ್ನು ತೋರುವುದೇ ರೂಡಿಯಲ್ಲಿದೆ, ಅದೇ ಮಾರ್ಗದಲ್ಲಿ ಬಸವಪ್ಪನು ತನ್ನ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಹೇಳದೇ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಅನುಗ್ರಹವನ್ನು ಪಡೆದು ಅವರ ಅಂಕಿತದಲ್ಲಿಯೇ ತನ್ನ ಕೃತಿಯನ್ನು ರಚಿಸಿದ್ದಾರೆ.

ಬಸವಪ್ಪನು ಯಾರಲ್ಲಿ ವಿದ್ಯೆಯನ್ನು ಕಲಿತಿದ್ದಾರೆ ಎಂಬುದು ತಿಳಿಯುವುದಿಲ್ಲ, ಅವರು ಕನ್ನಡದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದರು, ಅವರ ಹತ್ತಿರಕ್ಕೆ ಬರುವ ವ್ಯಾಪಾರಿಗೆ ಬೇಕಾದ ವಸ್ತುಗಳನ್ನು ಯೋಗ್ಯವಾದ ಬೆಲೆಗೆ ಮಾರಾಟಮಾಡುವವರಾಗಿದ್ದರು, ಅವರು ಸಮಯವನ್ನು ಕೊಟ್ಟರೇ ಅವರ ಕಷ್ಟ ಸುಖವನ್ನು ವಿಚಾರಿಸಿ ತಕ್ಕ ನೀತಿ ಧರ್ಮವನ್ನು ಹೇಳಿ ಧೈರ್ಯವನ್ನು ಹೇಳಿಕೊಡುವ ಜನಾನುರಾಗಿಯಾಗಿದ್ದರು, ಇವರು ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರುಜನರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕಿಂತ ಅವರು ಮಾತಿನಲ್ಲಿ ಬರುವ ತತ್ವ, ನೀತಿ, ಧರ್ಮದ ತತ್ವವನ್ನು, ಧರ್ಮದ ಸಿದ್ದಾಂತವನ್ನು ಕೊಂಡುಕೊಂಡು ಹೋಗಲು ಬಂದವರೇ ಹೆಚ್ಚು.

ಬಸವಪ್ಪನವರು ಯಾರಿಗೂ ವ್ಯಾಪಾರದಲ್ಲಿ ಮೋಸ ವಂಚನೆಯನ್ನು ಮಾಡಿದವರಲ್ಲಾ, ಯಾವುದೇ ಆಸೆ ಆಕಾಂಕ್ಷೆಗಳು ಸಾಸಿವೆಯಷ್ಟು ಇದ್ದಿಲ್ಲಾ, ಅವರು ಎಲ್ಲವನ್ನೂ ಹೊಂದಿದ್ದರು ಗುರು ಲಿಂಗ ಜಂಗಮರ ದಾಸೋಹಿಯಾಗಿದ್ದಾಕೊಂಡು ಬಸವಪ್ಪನು ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಚಿನ್ಮಯ ದೀಕ್ಷೆಯನ್ನು ಪಡೆದು ಬಸವಲಿಂಗ ಶರಣರು ಎಂದಾಗುವರು, ಮನೆಯಿಂದ ಕಿಲೋಮೀಟರ್ ದೂರದಲ್ಲಿದ್ದರೂ ಮನಕ್ಕೆ ಹತ್ತಿರದಲ್ಲಿದ್ದ ಲಿಂಗನಾಯಕನಹಳ್ಳಿಗೆ ಬಂದು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಸಾಮೀಪ್ಯದಲ್ಲಿಯೇ ಹೆಚ್ಚು ಕಾಲ ಇರತೊಡಗಿದರು, ಅವರ ಸಾನಿಧ್ಯದಲ್ಲಿ ಹಲವಾರು ಸಾಧಕರು ಮೊದಲೇ ಇದ್ದವರು ಅವರ ಜೊತೆ ಶಾಸ್ತ್ರ ಚಿಂತನವನ್ನು ಮಾಡುತ್ತಿದ್ದರು, ಖಾವಿದಾರರಿಗೆ  “ನೀವು ಖಾವಿ ಲಾಂಛನದಾರಿಗಳು ನೀವು ಎಷ್ಟು ವೀರಶೈವ ಶಾಸ್ರ್ತಾಭ್ಯಾಸವನ್ನು ಮಾಡಿದ್ದೀರಿ? ನೀವು ಎಷ್ಟು ವೇದಾಂತವನ್ನು ತಿಳಿದಿದ್ದೀರಿ? ಶಿವಾನುಭವವನ್ನು ಎಷ್ಟು ಓದಿದ್ದೀರಿ?” ಎಂದು ಕೇಳಿದಾಗ ಅವರುಗಳು ಉತ್ತಮವಾದ ಉತ್ತರವನ್ನು ಕೊಟ್ಟರೆ ಸರಿ ಇಲ್ಲ ಅಂದರೆ “ಏಕೆ ನೀವು ಜನರನ್ನು ಮೋಸಗೊಳಿಸುವಿರಿ? ಭಕ್ತರ ವಿತ್ತಾಪಹರಣವನ್ನು ಏಕೆ ಮಾಡುವಿರಿ? ಭಕ್ತರೇನೊ ಗುರುಗಳು ಎಂದು ಭಕ್ತಿಯಿಂದ ಬರುವರು ಅವರಿಗೆ ಏಕೆ ಮೋಸವನ್ನು ಮಾಡುವಿರಿ?” ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರು ಹಾದಿಯಲ್ಲಿ ತಪ್ಪಿದಾಗ ತಿದ್ದಿ ಅವರನ್ನು ಚೆನ್ನವೀರೇಶನ ಸೇವೆಯಲ್ಲಿರಿಸಿ ಅವರಿಗೆ ವೀರಶೈವ ಸಿದ್ದಾಂತವನ್ನು, ಶಿವಾನುಭವ, ಷಟಸ್ಥಲ ಸಿದ್ಧಾಂತವನ್ನು ತಿಳಿಸಿ ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪ್ರಬುದ್ಧರಾದಾಗ ಅವರುಗಳಿಗೆ ನಮಸ್ಕರಿಸುವರು, ಹೀಗೆ ಬಸವಲಿಂಗರು ಅಗ್ರಗಣ್ಯರಾಗಿ ಹೆಸರುವಾಸಿ ಆಗುವರು.

ಆದರಿಂದ ಆ ಪ್ರದೇಶವು ವೀರಶೈವರ ಪ್ರಮುಖ ಸ್ಥಾನದಲ್ಲಿ ಒಂದಾಗಿ ಅನೇಕ ಗ್ರಾಮಗಳಲ್ಲಿ ವೀರಶೈವತತ್ವವು ಅಚ್ಚಳಿಯದೆ ಉಳಿದಿದೆ.

ಒಮ್ಮೆ ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ತಮ್ಮ ಮಠಕ್ಕೆ ಯೋಗ್ಯ ಮರಿಯನ್ನು  ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಶ್ರೀ ಮೈಲಾರದ ಬಸವಲಿಂಗ ಶರಣರು ಒಬ್ಬ ದೇವರಿಗೆ ವಿರೋಧ ಮಾಡುವರು ಈ ಮರಿದೇವರು ಮುಕ್ಕಾಗಿದ್ದಾರೆ ಇವರಿಗೆ ಸ್ವಾಮಿಯಾಗಲು ಅರ್ಹರಲ್ಲ ಎಂದು ಕ್ಯಾತೆಮಾಡುವರು, (ಒಮ್ಮೆ ಗುರುಗಳು ಹಾಗೂ ಶಿಷ್ಯರು ದೇಶ ಸಂಚಾರಕ್ಕೆ ಕೈಗೊಂಡಿದ್ದರು ಎಲ್ಲಿಯೋ ಇದ್ದ ನರಿಯು ಬಂದು ಒಬ್ಬ ಮರಿದೇವರ ಕಾಲಿಗೆ ಬಾಯಿ ಹಾಕಿರುತ್ತೆ ಆ ನೋವಿನಿಂದ ಆ ದೇವರು ಚೀರುವರು ಆಗ ಅಲ್ಲಿಯೇ ಇದ್ದ ಗುರುಗಳು “ಅದು ನಮ್ಮ ವಸ್ತು ಬಿಡು”ಎಂದ ಕೂಡಲೇ ಆ ನರಿ ಬಿಟ್ಟು ಹೋಗುತ್ತೆ ಅವರನ್ನೇ ಶ್ರೀ ಚೆನ್ನವೀರ ಶಿವಯೋಗಿಗಳು ಮಠಕ್ಕೆ ಉತ್ತರಾಧಿಕಾರಗಳಾಗಿ ನೇಮಿಸುತ್ತಿದ್ದರು). ಆಗ ಗುರುಗಳು ಏನಪ್ಪಾ ಬಸಪ್ಪ ನೀನು ನಿಜವಾದ ತತ್ವವನ್ನು ಬಲ್ಲಿಲ್ಲವೇ  ಶರಣರು ಹೇಳಿರುವ ಮಾತು ನೆನಪಿಲ್ಲವೇಎಂದು –

ಶ್ರೀಗುರು ಕರುಣಿಸಿ, ಅಂಗದ ಮೇಲೆ ಲಿಂಗವ ಧರಿಸಿದ ಕಾರಣ, ಸರ್ವಾಂಗವು ಲಿಂಗವಾಯಿತ್ತು. ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ, ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣ ಸರ್ವಾಂಗಲಿಂಗಿಯಾದನು.

ಸರ್ವಾಂಗ ಲಿಂಗಿಯಾದ ಇವರು ಅರ್ಹರಲ್ಲಾ ಎನ್ನುವೆ ಎಷ್ಟು ಸರಿ ಎಂದು ಕೋಪದಿಂದ “ನೀನು ಬಸಪ್ಪ ಅಲ್ಲಾ ಮುಶಪ್ಪ ಎಂದು ಬೈಯುತ್ತಾರೆ. ಹರ ಮುನಿದರೆ ಗುರು ಕಾಯುವನುಎಂಬ ಉಕ್ತಿಯಂತೆ. ಇಲ್ಲಿ ಗುರುಗಳು ಕೋಪದಿಂದ ಬೈದರು ಕೂಡ ಅವರು ಗುರುತಾಯಿಯಾಗಿ ನಮ್ಮೆಲ್ಲರನ್ನೂ ಸಲಹುವರು, ಮಗನು ತಪ್ಪು ಮಾಡಿದಾಗ ತಾಯಿ ಅವನನ್ನು ಏನೆಲ್ಲಾ ಬೈದರು ಅದೇ ಮಗನು ಹೊರಗೆ ಹೋಗುವಾಗ ಅವನು ಎಡವಿ ಬಿದ್ದು ಅವನ ರಕ್ತ ಕಂಡರೆ ಸಾಕು ಎಂಥಹ ಕಠೋರ ತಾಯಿಯಾದರು ಅವನನ್ನು ಮುದ್ದು ಮಾಡಿ ಅವನ ನೋವು ತನ್ನ ನೋವು ಎಂದು ಪ್ರೀತಿಯನ್ನು ಹಂಚಿಕೊಳ್ಳುವಳು ಅದೇ ರೀತಿ ಇಲ್ಲಿ ಶಿಷ್ಯನನ್ನು ಬೈದರು ಅವನ ತಪ್ಪುಗಳನ್ನು ಮನ್ನಿಸುವವರು ಒಬ್ಬ ಗುರುಗಳು. ಶಿಷ್ಯನಿಂದ ಸಮಾಜದಲ್ಲಿನ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು (ಲಾಭ-ನಷ್ಪ, ನೋವು-ನಲಿವು, ) ವಿಕ್ಷಿಸಿ ತಾನು ಅದರಲ್ಲಿ ಬಾಗಿಯಾಗುವವರು ನಿಜವಾದ ಗುರುಗಳು.

ಪುರಾಣ, ಇತಿಹಾಸದಲ್ಲಿ ಶಿಷ್ಯರುಗಳ ಉದ್ದಾರಕ್ಕೆ ಏನೆಲ್ಲಾ ತ್ಯಾಗವನ್ನು ಗುರುವಾದವನು ಮಾಡಿದ್ದಾನೆ ಎಂಬ ಉದಾಹರಣೆಗಳು ಬಹಳ, ಒಬ್ಬ ಬೇಟೆಯಾಡುವ ಹುಡುಗ ಎಂದು ಭೇಟಿಯಾಗದೇ ಇರುವ ಗುರುವನ್ನು ದೂರದಿಂದಲೇ ಅವನು ತನ್ನ ಶಿಷ್ಯರಿಗೆ ವಿದ್ಯೆಯನ್ನು ಕಲಿಸುವುದನ್ನು ನೋಡಿ ನಾನು ಇದೇ ರೀತಿ ಬಿಲ್ವಿದ್ಯೆಯನ್ನು ಇನ್ನಷ್ಟು ಕಲಿಯಬೇಕೆಂದುಕೊಂಡಿದ್ದನು ಏಕಲವ್ಯ, ಅವನು ದ್ರೋಣಾಚಾರ್ಯರನ್ನೇ ಗುರುಗಳನ್ನಾಗಿ ಸ್ವೀಕಾರ ಮಾಡಿ ಅವರ  ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ತಾನು ಗುರುವಿನ ಮುಂದೆ ವಿದ್ಯೆಯನ್ನು ಕಲಿಯಬೇಕು ಎಂದು ಅದರ ಮೂಲಕವೇ ತಾನು ಬಿಲ್ವಿದ್ಯೆಯನ್ನು, ಶಬ್ದವೇಧಿ ವಿದ್ಯೆಯನ್ನು ಕಲಿತವನು ಏಕಲವ್ಯ, ಅವನು ಬಿಟ್ಟ ಬಿಲ್ಲು ನೀರು ಕುಡಿಯುವ ಶ್ವಾನಕ್ಕೆ ಬೀಳುತ್ತೆ ಅದನ್ನು ನೋಡಿದ ದ್ರೋಣಾಚಾರ್ಯರ ಶಿಷ್ಯರು (ರಾಜಕುಮಾರರು) ಗುರುಗಳ ಬಳಿ ಬಂದು ನಡೆದ ಘಟನೆ ತಿಳಿಸಿ ಬಿಲ್ಲನ್ನು ಬಿಟ್ಟವನು ಯಾರು ಎಂದು ಕಂಡುಹಿಡಿದು, ಅವರೆಲ್ಲರೂ ಯಾರು ನೀನು? ನೀನು ಈ ವಿದ್ಯೆಯನ್ನು ಯಾರಿಂದ ಕಲಿತೇ? ನಿನ್ನ ವಿದ್ಯಾ ಗುರುಗಳು ಯಾರು? ‘ ಎಂದು ಕೇಳಿದಾಗ, ಏಕಲವ್ಯನು ತಾನು ದ್ರೋಣಾಚಾರ್ಯರಿಂದ ಈ ವಿದ್ಯೆಯನ್ನು ಕಲಿತೆ, ದ್ರೋಣಾಚಾರ್ಯರೇ ನನ್ನ ಗುರುಗಳು ಎಂದು ವಾದಮಾಡುವನು, ತಾನು ಯಾವ ವಿದ್ಯೆಯನ್ನು ಇವನಿಗೆ ಹೇಳಿಲ್ಲಾ,ಇವನಾರೂ ಎಂಬುದೇ ಗೊತ್ತಿರಲಿಲ್ಲ, ಆದರೂ ನನ್ನ ಹೆಸರನ್ನು ಹೇಳುತ್ತಿದ್ದಾನೆ, ಎಂದು ವಿಚಾರಿಸಿ, ಭವಿಷ್ಯದ ದೃಷ್ಟಿಯಿಂದ ಧರ್ಮದ ಉಳಿವಿಗಾಗಿ, ದ್ರೋಣಾಚಾರ್ಯರು ತನ್ನ ಉತ್ತಮ ಶಿಷ್ಯನಾದ ಅರ್ಜುನನಿಗೆ ಏಕಲವ್ಯನಿಂದ ಭವಿಷ್ಯದಲ್ಲಿ ಕಾಣುವ ತೊಂದರೆ ಆಗಬಾರದು ಎಂದು. ಅವನಿಂದ ಗುರುಕಾಣಿಕೆಯನ್ನು ಅವನ ಬಲಗೈಯ ಹೆಬ್ಬೆರಳು ಕೇಳುವರು, ಇಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಕೇಳಿದ ಕಾಣಿಕೆ ಭೇಧ ಭಾವದ,ಸ್ವಾರ್ಥ ಉದ್ದೇಶಗಳ ಸಂಕೇತವಾದರೆ, ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ಬಸವಲಿಂಗರ ಮೇಲಿನ ಸಿಟ್ಟು ಗುರುತಾಯಿಯಂತೆ, ಅವನಿಂದ ಧರ್ಮಕ್ಕೆ ಲಾಭದಿಂದಲೇ ಶಿಕ್ಷಕೊಟ್ಟಿದ್ದು ಅದರಿಂದಲೇ ಬಸವಲಿಂಗ ಶರಣರು ಗುರುಕರುಣ ತ್ರಿವಿಧಿಯನ್ನು ರಚಿಸಿದ್ದು, ನಮ್ಮಿಂದ ಏನಾದರೂ ಕೆಲಸವಾಗಬೇಕಾದರೆ ಅದಕ್ಕೆ ಕಾರ್ಯ,ಕಾರಣ, ಸದ್ಭಾವ ಇದ್ದೆ ಇರುತ್ತದೆ, ಬಸವಲಿಂಗರ ಕೃತಿಗಳು ಸದ್ಭಾವದಿಂದಲೇ ರಚನೆಯಾದದ್ದು.

ಗುರುಗಳ ಆಜ್ಞೆಯಂತೆ ದಿನಗಳೆದಂತೆ ದಿನಗಳೆದಂತೆ ಬಸವಲಿಂಗ ಮುಖವು ಮುಶ್ಯದ ಹಾಗೆ (ಆ ಭಾಗದಲ್ಲಿ ಕಪ್ಪು ಬಣ್ಣದ ಮುಂಭಾಗಕ್ಕೆ ಮುಶ್ಯ ಎಂದು ಕರೆಯುವರು) ಕಪ್ಪು ಮುಖದ ಮಂಗನ ಹಾಗೆ ಬದಲಾಗುತ್ತೆ ಹೋಗುತ್ತೆ ಅದರ ತಪ್ಪಿಗಾಗಿ ವೀರಶೈವ ಧರ್ಮದ ಸಂಪೂರ್ಣ ತತ್ವವನ್ನು ಹೇಳುತ್ತಾ ಶಿಕ್ಷೆಯ ನಿವಾರಣೆಗೆ, ಗುರುವಿನ ಕರುಣೆಯನ್ನು ಪಡೆಯುವ ಸಲುವಾಗಿ ರಚಿಸಿದ್ದೆ – ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ). ಬಸವಲಿಂಗ ಶರಣರು ತಮ್ಮ ಅಮೋಘವಾದ ಜ್ಞಾನಬಂಡಾರದಿಂದ, ವಿದ್ವತ್ತು, ತೌಲನಿಕ, ಅನುಭವ ಸಂಪತ್ತಿನಿಂದ ಜ್ಞಾನದ ಹನಿಯನ್ನು ಉದಯಿಸಿ, ಏಕ ಕಾಲಕ್ಕೆ 333 ತ್ರಿಪದಿಯನ್ನು ರಚಿಸಿದರು. ಇದರಲ್ಲಿ ಸಮಗ್ರ ವೀರಶೈವ ಲಿಂಗಾಯತ ದಾರ್ಶನಿಕ ಸಿದ್ಧಾಂತವು ಒಳಗೊಂಡಿದೆ, ಅಷ್ಟಾವರಣ ಪಂಚಾಚಾರ ಷಟಸ್ಥಲ ಪ್ರಾಮುಖ್ಯತೆ ಇದರಲ್ಲಿ ಅಡಕವಾಗಿದೆ, ಒಂದಕ್ಕೊಂದು ಆಚರಣೆಗೆ ಹೇಗೆ ಸಮನ್ವಯಗೊಳ್ಳುತ್ತವೆ ಎಂಬುದನ್ನು ಈ ಎರಡು ಸಾಲಿನಲ್ಲಿಯೇ ಬಿತ್ತಿದ್ದಾರೆ, ಈ ತ್ರಿಪದಿಯಲ್ಲಿ ಪ್ರಯೋಗಿಸಲ್ಪಟ್ಟಾ ಯಾವ ಶಬ್ದವೂ ಅನಾವಶ್ಯಕವಾಗಿ ಪ್ರಯೋಗಿಸಿಲ್ಲಾ ಎಲ್ಲವೂ ಅರ್ಥಪೂರ್ಣವಾಗಿ ತನ್ನ ಸಿದ್ಧಾಂತವನ್ನು ತಿಳಿಸುತ್ತವೆ. ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಅದರಿಂದಲೇ  ಹೆಮ್ಮರವಾಗಿ ಬೆಳೆಯುವ ಹಾಗೆ ಈ ಚಿಕ್ಕ ತ್ರಿವಿಧಿಯನ್ನು ಅಖಂಡ ಸಿದ್ಧಾಂತವೇ ಅಡಕವಾಗಿದೆ.

ಗುರು ಕರುಣ ತ್ರಿವಿಧಿಯಲ್ಲಿ ಮೂರು ಮೂರು ಸಾಲಿನ 333 ತ್ರಿಪದಿಯ ಕೊನೆಯಲ್ಲಿ ಶ್ರೀ ಗುರುವೇ ಕೃಪೆಯಾಗು‘, ಎಂದು ಮುಕ್ತಾಯಗೊಳ್ಳುವುದರಿಂದ ಇದು ಕೇವಲ ಶ್ರೀಗುರು ಪ್ರಾರ್ಥನಾ ತ್ರಿಪಧಿಯಂದು ತಿಳಿಯುವರು ಅದರಲ್ಲಿ ವೀರಶೈವ ತತ್ವಸಿದ್ದಾಂತವನ್ನೊಳಗೊಂಡಿದೆ, ಮೇಲು ನೋಟಕ್ಕೆ ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ) ಅಷ್ಟಾವರಣ ಪ್ರತಿಪಾದಿಸುವ ಕೃತಿ ಎಂದು ಕಂಡರು ಒಳಹೊಕ್ಕು ನೋಡಿದಾಗ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ಆಚರಣೆಗೆ ಪೂರಕವಾಗಿ ಸಮನ್ವಯಗೊಂಡಿರುವ ಮಾರ್ಗ, ಅಂಗ, ಪ್ರಾಣ, ಆತ್ಮಗಳಾದ ಅಷ್ಟಾವರಣ ಪಂಚಾಚಾರ ಷಟಸ್ಥಲಗಳು ಬಿಟ್ಟಿರಲಾರದಷ್ಟು ಜೀವರಸ ಒಂದೇ ಅದೇ ಲಿಂಗಾಂಗ ಸಾಮರಸ್ಯವೀರಶೈವರ ಕೊನೆಯಗುರಿಯೇ ಲಿಂಗಾಂಗ ಸಾಮರಸ್ಯವನ್ನು ಪಡೆಯುವುದು, ಅಂಗನು ಲಿಂಗದಲ್ಲಿ ಬೆರೆತು ಲಿಂಗಾಂಗ ಸಾಮರಸ್ಯ ಪಡೆಯುವನು, ಇದೆ ಕೊನೆಯ ಅನುಭವ ಅಥವಾ ಈ ಅನುಭವವೇ ಕೊನೆಯದುಒಮ್ಮೆ ಉಂಟಾದ ಪರಶಿವನ ಅನುಭವವು ಕೊನೆಯ ತನಕ ಇಟ್ಟುಕೊಂಡು ಜೀವಿಸುವವನೇ ಶಿವಾನುಭವಿ ಎನ್ನಲಾಗುತ್ತದೆ, ವೀರಶೈವನ ಚರಮಗುರಿಯಾದ ಶಿವಾನುಭಾವ ಹಾಗೂ ಲಿಂಗಾಂಗ ಸಾಮರಸ್ಯವನ್ನು ಪಡೆಯಲು ಅಷ್ಟಾವರಣ ಪಂಚಾಚಾರದೊಂದಿಗೆ ಷಟಸ್ಥಲಾಚರಣೆಯೇ ಸರಿಯಾದ ಮಾರ್ಗವೆಂದು ಬಸವಲಿಂಗರ (ವೀರಶೈವರ) ನಂಬಿಗೆ ಇದನ್ನೇ ಬಸವಲಿಂಗ ಶರಣರು ತಮ್ಮ ಕೃತಿಗಳಲ್ಲಿ ಬಹಳ ವಿವರಗಳನ್ನು ಕೊಟ್ಟು  ವಿಸ್ತಾರವಾಗಿ ವಿಧವಿಧವಾಗಿ ಪ್ರತಿಪಾಸಿದ್ದಾರೆ. ಇದನ್ನೇ ತ್ರಿವಿಧಿಗಳು ಒಳಗೊಂಡಿರಬೇಕು ಒಂದನ್ನು ಬಿಟ್ಟು ಇನ್ನೊಂದು ಇದ್ದರೆ ಅದು ಚರಮಗುರಿಗೆ ಹೊರಗಾಗುತ್ತೇ, ಮೂರು ಕೂಡಿಯೇ ನಡೆಯಬೇಕು, ಯಾವಾಗಲೂ ಕೂಡಿಯೇ ಇರಬೇಕು ಅದರಲ್ಲಿ ದ್ವೈತದೃಷ್ಟಿಇರಬಾರದು ಶಿವಾದ್ವೈತದೃಷ್ಟಿರಬೇಕು, ಖಂಡದೃಷ್ಟಿಅಲ್ಲಾ ಅಖಂಡ ದೃಷ್ಟಿ, ಪರಿಪೂರ್ಣ ದೃಷ್ಟಿ. ಈ ಶಿವಾದ್ವೈತ ದೃಷ್ಟಿಗಳು ವೀರಶೈವ ಸಿದ್ಧಾಂತ ಸಂಸ್ಕೃತಿಯ ಪ್ರಧಾನಲಕ್ಷಣವೆಂದು ಅರಿತು ಶ್ರೀ ಮೈಲಾರ ಬಸವಲಿಂಗ ಶರಣರು ಅಷ್ಟಾವರಣಗಳಲ್ಲಿ ಪ್ರಥಮದಲ್ಲಿ ಬರುವ ಗುರುವನ್ನು ಶ್ರೀ ಗುರುವೇ ಕೃಪೆಯಾಗು‘ , ‘ಶ್ರೀ ಗುರುವೇ ಕೃಪೆಯಾಗುಎಂದು ಪ್ರಾರ್ಥಿಸುತ್ತಾ, ಷಡಚಕ್ರಗಳ ವಿವರಣೆಎಲ್ಲಾ ಯೋಗಗಳಲ್ಲಿ ಶಿವಯೋಗವೇ ಮಿಗಿಲು, ಅಷ್ಟಾವರಣಗಳಾದ ಗುರು, ಲಿಂಗ, ಜಂಗಮರ ಲಕ್ಷಣವನ್ನು, ಮಹಿಮೆಯನ್ನು, ವಿಭೂತಿ ರುದ್ರಾಕ್ಷಿಗಳನ್ನು ಯಾವ ರೀತಿ ಧರಿಸಬೇಕು, ಎಲ್ಲೆಲ್ಲಿ ಧರಿಸಬೇಕು, ಮಂತ್ರದ ವಿಶೇಷತೆ ಅದರಲ್ಲಿ ಯಾವ ಮಂತ್ರ ವೀರಶೈವರು  ಜಪಿಸಬೇಕು, ಹೇಗೆ ಇರಬೇಕು ಎಂಬುದನ್ನುಪಾದೋದಕ, ಪ್ರಸಾದಗಳಲ್ಲಿನ ವಿಧಗಳು, ಅದರ ಮಹತ್ವವನ್ನು, ಅಣಿಮಾಧಿಸಿದ್ದಿಗಳ  ವಿಶೇಷವಾಗಿ ವಿವರಣೆಯನ್ನು ನೀಡುತ್ತಾ ವೀರಶೈವ ಸಿದ್ದಾಂತವನ್ನೆ ಅತೀ ಕಡಿಮೆ ಅಕ್ಷರಗಳನ್ನು ವಿವರಿಸಿದ್ದಾರೆ,

ನಿರಾಭಾರಿ ಗುರುವನ್ನು ಸ್ತುತಿಗೈದು ಸಾಬಾರಿ ಗುರುವಿನ ಸ್ವರೂಪ, ಮಹತ್ವ, ಅವನ ಅವಶ್ಯಕತೆ ಏನಿದೆ ಎಂದು ತಿಳಿಸಿದ್ದಾರೆ, ಗುರು ಕೃಪೆಯು ಆಗಬೇಕಾದರೆ ಗುರು ದೀಕ್ಷೆ ಪಡೆದು ಲೌಕಿಕ ತಂದೆ ತಾಯಿಯವರಾದ, ಬಂದು ಬಳಗವನ್ನು ತ್ಯಜಿಸಿ ಎಲ್ಲವನು ಗುರುವಿನಲ್ಲಿಯೇ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ, ಸದ್ಗುರುವೇ ಸರ್ವಸ್ವ ಎಂದು ಅವನನ್ನೇ ಆರಾದಿಸಿದಾಗ ಅವನು ಕೃಪೆಯು ಆಗುತ್ತದೆ ಎಂದು ತಿಳಿಸಿದ್ದಾರೆ. ಶಿಷ್ಯನ ಲಕ್ಷಣ ಹೇಗೆ ಗುರುವಿನಲ್ಲಿ ವರ್ತಿಸಬೇಕು, ಗುರುವಾದವನ ಲಕ್ಷಣ ಅವನ ಸ್ವರೂಪ ಗುರು ಶಿಷ್ಯರ ಸಂಬಂಧವನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ, ಈ ಮಾನವ ಜೀವಿಯೂ ಹುಟ್ಟಿ ಎಡರು ಕಂಟಕಗಳಿಂದ ಸುಖಾಸುಮ್ಮನೆ ವ್ಯರ್ಥವಾಗಿ ಹೋಗುವುದನ್ನು, ಆಸೆಯಿಂದ ಮಾಯೆ ಬಂದು ಮಾಯೆಯ ಉಪಟಳಕ್ಕೆ ಈ ಶರೀರ ಹೋಗುವುದನ್ನು, ಪಂಚಭೂತಗಳ ಭಯವನ್ನು ಪಂಚಿಕರಣದಿಂದಲೇ ಶರೀರ ಆದದ್ದು, ಪಂಚಭೂತಮಯವಾದ ಶರೀರದ ಇಂದ್ರಿಯಗಳನ್ನು, ದೇಹವಿಕಾರದ ಅರಿವನ್ನು ಮಾರ್ಮಿಕವಾಗಿ ನುಡಿದಿದ್ದಾರೆ, ಅಷ್ಟಮಧಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವುದು ಗಾಳಿಗೆ ಇಕ್ಕಿದ ಸೋಡರು, ಜ್ಞಾನೇಂದ್ರಿಯಗಳ  ಪರಿಚಯವನ್ನು ಮಾಡುವಾಗ ಕೆಲವೊಂದು ತೀರ್ಥಕ್ಷೇತ್ರ ದರ್ಶನವನ್ನು ಮಾಡಿಸುವುದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು, ಅಂತಃಕರಣ ಚತುಷ್ಟಯಗುಣತ್ರಯವನ್ನು ನೀಡಿದ್ದಾರೆ, ಸಂಸಾರ ಬಂಧನದಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ, ಸಂಸಾರಹೇಯ ಸ್ಥಲದ ತ್ರಿಪದಿಯನ್ನುವೀರಶೈವ ಸಿದ್ಧಾಂತ ತಿಳಿಸುವ ತ್ರಿಪದಿಗಳನ್ನು ಅದೆಷ್ಟೋ ಒಳಹೊಕ್ಕು ನೋಡಿದರು ಸಮುದ್ರದ ಆಳದಂತೆ ಕಾಣುತ್ತದೆ,

ಶ್ರೀ ಗುರುವೇ ಸತ್ಕ್ರಿಯೆಯಾಗರವೇ ಸುಜ್ಞಾನ

ಸಾಗರವೇ ಎನ್ನ ಮತಿಗೆ ಮಂಗಳವನಿತ್ತು

ರಾಗದಿಂ ಬೇಗ ಕೃಪೆಯಾಗು

       ಎಂದು ಗುರುಕೃಪೆಯನ್ನು ಬೇಡುತ್ತಾ .

ನೀನೊಲಿದಡೆ ಕೊರಡು ಕೊನರುವುದಯ್ಯಾ, ನೀನೊಲಿದಡೆ ಬರಡು ಹಯನಹುದಯ್ಯಾ, ನೀನೊಲಿದಡೆ ವಿಷವೆಲ್ಲ ಅಮತವಹುದಯ್ಯಾ, ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ.

       ದೇವನೊಲಿದರೆ  ಕಣ್ಣು ಇರಲಾರದವನಿಗೆ ಕಣ್ಣು ಬರುವಹಾಗೆ, ಕಿವಿಕೇಳಲಾರದವನಿಗೆ ಕಿವಿ ಕೇಳುವಹಾಗೆ, ವಿಷವೆಲ್ಲಾ ಅಮೃತ ಆಗುವಹಾಗೆ, ಆಸಾಧ್ಯವು ಸಾಧ್ಯವಾಗುವವು ಎನ್ನುವ ಬಸವವಾಣಿಯ ತಾತ್ಪರ್ಯವನ್ನೆ ಬಸವಲಿಂಗ ಶರಣರು ಚಿತ್ರಿಸಿದ್ದಾರೆ –

ಕೊರಡು ಕೊನರುವುದು ಬಲುಬರಡು ಹಯನಾಗುವುದು

ಕುರುಡಂಗೆ ಕಣ್ಣು ಬಹುದು ನಿನ್ನೊಲುಮೆ

ಎಂದರಿದೆನೈ ಗುರುವೇ ಕೃಪೆಯಾಗು.

ಮಾನಸವು ವಚನ ಸಂಧಾನವಾಗಿರ್ಪ ಮ

ಹಾನುಭಾವದ ಸುಜ್ಞಾನ ಮಂತ್ರದ ನಿಜವೇ

ನೀನೆಂದ  ಗುರುವೇ ಕೃಪೆಯಾಗು,

ಗುರು ಲಿಂಗ ಚರತೀರ್ಥ ಚಿರಶೇಷ ಭಸಿತಾಕ್ಷಿ

ವರಮಣಿಮಂತ್ರಾಷ್ಟವರಣ ನಿನ್ನಂಗವೆಂ

ದೊರದ ಶ್ರೀ ಗುರುವೇ ಕೃಪೆಯಾಗು

ಎನ್ನುತ್ತಾ

ಎಲ್ಲವನ್ನು ಒಳಗೊಂಡಿರುವ ಮದ್ಗುರುವೆ,

ನೀನು ಅಷ್ಟಾವರಣವೇ ಅಂಗವೆಂದು

ಹೇಳಿಕೊಟ್ಟ ಗುರುವೇ ಕೃಪೆಯಾಗು.

ಬಸವ ಬಾರೆಂದನೆಗೆ ಅಸಮಲಿಂಗವೆ ನೀನೆಂ

ದುಸುರಿದಬಳಿಕ ಬಸವಲಿಂಗನೆ ಎಂದು

ಪೆಸರಿಟ್ಟಾ ಗುರುವೇ ಕೃಪೆಯಾಗು

ಬಸವಪ್ಪ ಇದ್ದವಾ ನಾನು ನಿನ್ನ ಕೃಪಾದೃಷ್ಠಿಯಿಂದ ನೀನು ನನ್ನನ್ನು ಬಸವಲಿಂಗವೆಂದು ಹೆಸರನ್ನು ಇಟ್ಟಾ ಗುರುವೇ ಕೃಪೆಮಾಡು ಎಂದು ಬಿನ್ನವಿಸಿಕೊಂಡು,

ವೀರಶೈವರ ಪಂಚಾಚಾರ ಷಟಸ್ಥಲ ಮಾರ್ಗೋ

ದ್ದಾರ ನಿಜ‌ಸುಖದ ಸಾರ ನಡೆ ನುಡಿ ಚೆನ್ನ

ವೀರ ಮದ್ಗುರುವೆ ಕೃಪೆಯಾಗು.

ಎನ್ನುತ್ತಾ ಸಮಾಪ್ತಿಮಾಡುವರು.

ಬಾಹ್ಯಾರಚನೆಯ ಅಷ್ಟಾವರಣಗಿಂತ ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವವನಿಗೆ  ಶೂನ್ಯಸಂಪಾದನೆ ಆಗುವುದು ಎಂದು ಸಮರೋಪಗೊಳಿಸುವರು, ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಕೃಪೆಯಿಂದ ಶರಣನಾಗಿ ಗುರುಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೊಳಿಸುವುದರ ಮೂಲಕ ಗುರು ಕರುಣ ತ್ರಿವಿಧಿಯಲ್ಲಿ ಕ್ರಮಬದ್ಧವಾದ ವೀರಶೈವ ಸಿದ್ಧಾಂತ ತತ್ವವನ್ನು  ಪ್ರತಿಪಾದಿಸಿದ್ದಾರೆ, ಶೂನ್ಯ ಸಂಪಾದನೆಯನ್ನು ಮಾಡಿಕೊಳ್ಳುವ ಸಾಧಕರಿಗೆ ಸ್ವಾನುಭಾವದಿಂದ ನಡೆಯುವವನಿಗೆ ಅತ್ಯುತ್ತಮ ಸಾಧನವಾಗಬಹುದಾಗಿದೆ.

ಶರಣನು ಗುರು ಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತ ಶಾಸ್ತ್ರವನ್ನು ಹೊತ್ತು ಸರಳವಾಗಿ ಪರಿಚಯಿಸುವ ಒಂದು ಗ್ರಂಥವಾಗಿದೆ, ತ್ರಿಪದಿಗಳನ್ನು ಬರೆದು ಸರ್ವಜ್ಞನು ತಾನು ವಚನಗಳನ್ನು ರಚಿಸಿ ಸಮಾಜದ ಎಲ್ಲಾ ಅಂಕುಡೊಂಕು, ತತ್ವ, ನೀತಿ ಧರ್ಮವನ್ನು ಹೇಳಿದ ಹಾಗೆ  ಶರಣರು ರಚಿಸಿದ ಮೂರು ಮೂರು ಸಾಲಿನ ಪದಗಳಿಂದ ಜೋಡಿಸಿ ಧರ್ಮತತ್ವವನ್ನು ನಡೆನುಡಿಯನ್ನು‌ ಏಕಿಕರಿಸಿಕೊಂಡು ಅವರು ತ್ರಿಪದಿಗಳನ್ನು ರಚಿಸಿದ್ದಾರೆ, ತ್ರಿವಿಧ ಎಂದರೆ ಮೂರು ವಿಧ ಎಂದರ್ಥ, ಇದರಲ್ಲಿ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ವಿವರಣೆಯೊಂದಿಗೆ ಹೇಳಲ್ಪಟ್ಟಿದೆ, ಸಾಹಿತ್ಯದಲ್ಲಿ ತ್ರಿಪದಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದವುಗಳಾಗಿವೆ, 12ನೇಯ ಶತಮಾನದಲ್ಲಿ ಕೆಲವು ಶರಣ ಶರಣಿಯರು ತ್ರಿಪದಿಯಲ್ಲಿ ತಮ್ಮ ವಿಚಾರ ತತ್ವವನ್ನು ಹೇಳಿದ್ದಾರೆ, ಜಾನಪದ ಸಾಹಿತ್ಯವು, ಸರ್ವಜ್ಞನ ವಚನಗಳು ಹೀಗೆ ಹಲವು ಕವಿಗಳು ತ್ರಿಪದಿಯನ್ನು ರಚಿಸಿದ್ದಾರೆ ಮೈಲಾರದ ಬಸವಲಿಂಗ ಶರಣರು ಗುರು ಕರುಣ ತ್ರಿವಿದಿಯನ್ನು ರಚಿಸಿ ತತ್ವ ವಿಚಾರವನ್ನು ಮಂಡಿಸಿಕೊಟ್ಟು ಗುರುವಿನ ತಕ್ಕ ಶಿಷ್ಯನಾಗಿ ಗುರು ಸ್ತೋತ್ರ, ಗುರು ಮಹತ್ವವನ್ನು ತಿಳಿಸಿ ವೀರಶೈವ ಧರ್ಮದ ತತ್ವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ತಿಳಿಸಿ, ಪಾರಾಯಣ ರೂಪದಲ್ಲಿ ಕೃತಿಯನ್ನು ರಚಿಸಿದ್ದಾರೆ.

-ಜಿ. ಎಸ್. ಶಿವರುದ್ರಪ್ಪ

ದೇವಸ್ಥಾನಗಳು ಭಾರತೀಯರ ಸಾಮಾಜಿಕ-ಧಾರ್ಮಿಕ-ಅಧ್ಯಾತ್ಮಿಕ ಜೀವನದ ಕೇಂದ್ರವಾಗುತ್ತ, ಶತಶತಮಾನಗಳಿಂದ ವಿವಿಧ ಧರ್ಮಗಳವರ ಸಾಮುದಾಯಿಕ ಬದುಕನ್ನು ನಿಯಂತ್ರಿಸುವ ಹಾಗೂ ರೂಪಿಸುವ ಸತ್ವಗಳಂತೆ ವರ್ತಿಸಿವೆ. ಜತೆಗೆ, ಕಾವ್ಯ, ಚಿತ್ರ, ಶಿಲ್ಪ, ಸಂಗೀತ, ನೃತ್ಯ ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ನೆಲೆಯೂ ಆಗುತ್ತ ಸಂಸ್ಕೃತಿಯ ಸಂವರ್ಧನೆಯಲ್ಲಿ ಇವುಗಳು ವಹಿಸುತ್ತ ಬಂದಿರುವ ಪಾತ್ರವು ಗಣನೀಯವಾದದ್ದು. ಪ್ರಾಚೀನ ಕರ್ನಾಟಕದಲ್ಲಂತೂ ಇವುಗಳ ನಿಯೋಗವು ಬಹುಮುಖವಾದದ್ದು. ಕೆಲವು ವೇಳೆ ಯತಿಗಳ ಹಾಗೂ ಧರ್ಮ ಗುರುಗಳ ಮಠಗಳಾಗಿ ದ್ದವು. ಜನರ ಧಾರ್ಮಿಕ ಅನನ್ಯಕತೆಯ ಅರವಟ್ಟಿಗೆಗಳಾಗಿದ್ದವು. ಸಮಾಜದ ಸಂಸತ್ತಿನ ಸಂಚಯನ ಹಾಗೂ ವಿತರಣೆಯ ಭಾಂಡಾರಗಳಾಗಿದ್ದವು; ನ್ಯಾಯಾಲಯಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು . ವಿವಿಧ ಕಲಾ ಚಟುವಟಿಕೆಗಳ ಆಶ್ರಯ ಸ್ಥಾನವಾಗಿ

ದ್ದವು: ಬಹುಜನಕ್ಕೆ ಉದ್ಯೋಗವನ್ನು ಕಲ್ಪಿಸುವ ಸಾಧನಗಳೂ ಆಗಿದ್ದವು. ಇಂಥ ಮಹತ್ವದ ‘ಸಂಸ್ಥೆ’ಗಳನ್ನು, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ಪ್ರಕರ್ಷಗೊಂಡ “ವೀರಶೈವ’ವೆಂಬ ಸಾಮಾಜಿಕ-ಧಾರ್ಮಿಕ ಚಳುವಳಿ ಯೊಂದು ಮೊಟ್ಟ ಮೊದಲನೆ ಬಾರಿಗೆ ನಿರಾಕರಿಸಿತೆಂಬುದು ಅತ್ಯಂತ ಮಹತ್ವದ ಹಾಗೂ ಆಶ್ಚರ್ಯದ ಒಂದು ಘಟನೆಯಾಗಿದೆ. ಪರಂಪರಾಗತವಾಗಿ ಜನರ ಬದುಕಿನೊಂದಿಗೆ ಬೆಸೆದುಕೊಂಡು ಬಂದ ದೇವಸ್ಥಾನವೆಂಬ ಸಂಸ್ಥೆಯನ್ನು, ನಿಜವಾದ ದೈವ ಭಕ್ತರೂ, ಧರ್ಮಶ್ರದ್ಧೆಯುಳ್ಳವರೂ ಆದ ಈ ಶಿವಶರಣರು ಮೊಟ್ಟ ಮೊದಲು ವೈಚಾರಿಕ ಚಿಕಿತ್ಸೆಗೆ ಒಳಪಡಿಸಿ ಅದನ್ನು ಅಧ್ಯಾತ್ಮಿಕ ನೆಲೆಯಲ್ಲಿ ಪುನರ್‌ ವ್ಯಾಖ್ಯಾನಿಸಿದ ರೀತಿ, ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಒಂದು ದಿಟ್ಟ ಹೆಜ್ಜೆಯಾಗಿದೆ. ಒಂದು ರೀತಿಯ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಒಂದು ದಿಟ್ಟ ಹೆಜ್ಜೆಯಾಗಿದೆ. ಒಂದು ರೀತಿಯಲ್ಲಿ ಇದು ಮೇಲು ನೋಟಕ್ಕೆ ದೇವರನ್ನು ಧರ್ಮವನ್ನು ಒಪ್ಪಿಕೊಂಡು ‘ದೇವಸ್ಥಾನ’ವನ್ನು ನಿರಾಕರಿಸುವ ನಿಲುವಿನಂತೆ ತೋರಿದರೂ, ಮೂಲತಃ ‘ದೇವಾಲಯ’ದ ಕಲ್ಪನೆಯನ್ನೆ ಈ ಶರಣ ಧರ್ಮ, ತಾನು ಕಟ್ಟಿದ ಹೊಸ ಧರ್ಮದ ತಾತ್ವಿಕ ನೆಲೆಯಲ್ಲಿ ಪುನಾರಚನೆಗೊಳಿಸಿದ

ಕ್ರಮ ಅತ್ಯಂತ ವೈಚಾರಿಕವಾದುದಾಗಿದೆ ಹಾಗೂ ಅದರ ಸಾಮಾಜಿಕ ಕ್ರಾಂತಿಯ ಆಶಯಕ್ಕೆ ಉಚಿತವಾದುದಾಗಿದೆ.

ಹಾಗೆ ನೋಡಿದರೆ ವಚನಕಾರರಿಗೆ ಹಿನ್ನೆಲೆಯಾದ ಭಾರತೀಯ ಶೈವ ಧರ್ಮವಾಗಲಿ ಅವರಿಗೆ ಮನೋಧರ್ಮದಲ್ಲಿ ಹತ್ತಿರವಾದ ತಮಿಳುನಾಡಿನ ಅರವತ್ತು ಮೂವರು ಪುರಾತನರ ನಿಲುವಾಗಲೀ ದೇವಸ್ಥಾನ ಕೇಂದ್ರಿತವಾದದ್ದು. ವಚನಕಾರರು ಅತ್ಯಂತ ಗೌರವದಿಂದ ಸ್ಮರಿಸುವ ತಮಿಳುನಾಡಿನ ಈ ಶಿವಭಕ್ತರು ಮುಖ್ಯವಾಗಿ ಸ್ಥಾವರ ಲಿಂಗದ ಆರಾಧಕರು. ಹೀಗಾಗಿ ಅವರ ಭಕ್ತ ಜೀವನಕ್ಕೆ ದೇವಸ್ಥಾನಗಳು ಅನಿವಾರ್ಯ ವಾದವುಗಳು – ಆದರೆ ವಚನಕಾರರು ಅಥವಾ ಶಿವಶರಣರು, ದೇವರನ್ನೂ, ಭಕ್ತಿ ಯನ್ನೂ ಒಪ್ಪಿಕೊಂಡು, ದೇವಸ್ಥಾನವನ್ನು ನಿರಾಕರಿಸಿದ್ದು ಯಾಕೆ? ಅದಕ್ಕೆ ಮುಖ್ಯವಾದ ಕಾರಣ, ಈಗಾಗಲೆ ಎಲ್ಲರೂ ಬಲ್ಲಂತ, ವೀರಶೈವವು ದೇವರ ಕಲ್ಪನೆಯನ್ನು ದೇವಸ್ಥಾನದಿಂದ ಮನುಷ್ಯನ ಶರೀರಕ್ಕೆ ಸ್ಥಾವರಲಿಂಗದಿಂದ ಇಷ್ಟಲಿಂಗಕ್ಕೆ ಸ್ಥಳಾಂತರಗೊಳಿಸಿದ್ದೇ ಆಗಿದೆ. ಇದು ನಿಜಕ್ಕೂ ಮಹತ್ವದ ಬದಲಾವಣೆಯೇ, ದೇವರು ಎಲ್ಲೆಲ್ಲಿಯ ಇದ್ದಾನೆ. ಆತ ಸರ್ವಾಂತರ್ಯಾಮಿ ಎಂಬ ಭಾವನೆಗೆ, ದೇವರು ದೇವಸ್ಥಾನದಲ್ಲಿ  ಇದ್ದಾನೆ ಎಂದು ತಿಳಿಯುವ ಹಾಗೂ ನಡೆದುಕೊಳ್ಳುವ ಕ್ರಮ ಒಂದು ವಿರೋಧಾಭಾಸ ದಂತೆ ತೋರಿರಬೇಕು. ಆದರೆ ಕೊಂಚ ವಿಚಾರಮಾಡಿ ನೋಡಿದರೆ, ದೇವರು ಎಲ್ಲೆಲ್ಲಿಯೂ ಇದ್ದಾನೆ ಎಂಬ ಭಾವನೆಗೆ, ದೇವಸ್ಥಾನಗಳ ಅಸ್ತಿತ್ವ ಯಾವ ರೀತಿಯಲ್ಲಿಯ ಅಸಂಬದ್ಧವಾಗುವುದಿಲ್ಲ. ಯಾಕೆಂದರೆ ಎಲ್ಲೆಲ್ಲಿಯೂ ಇರುವ ದೇವರು ದೇವಸ್ಥಾನದಲ್ಲಿಯೂ ಇದ್ದಾನೆ ಎಂದು ತರ್ಕಿಸಲು ಸಾಧ್ಯ. ಆದರೆ ‘ದೇವರು ಎಲ್ಲೆಲ್ಲಿಯೂ ಇದ್ದಾನೆ’ ಎಂಬ ಕಲ್ಪನೆ ಅಮೂರ್ತವಾದದ್ದು, ದೇವರು ದೇವಸ್ಥಾನದಲ್ಲಿಯೂ ಇದ್ದಾನೆ ಎಂಬ ಕಲ್ಪನೆ ಮೂರ್ತಿವಾದದ್ದು, ದೇವರ ಅಮೂರ್ತಿವಾದ ಕಲ್ಪನೆ ಎಲ್ಲರಿಗೂ ಅನುಭವಕ್ಕೆ ಸುಲಭ ಸಾಧ್ಯವಲ್ಲದ ಕಾರಣ, ಸಾಮಾನ್ಯ ಬಹುಸಂಖ್ಯಾತರಿಗೆ ದೇವಸ್ಥಾನ ಅತ್ಯಂತ ಅಗತ್ಯವಾದವುಗಳು-ಅವರ ಧರ್ಮ ಶ್ರದ್ಧೆಗೆ, ನಿಜವಾದ ಅನುಭಾವಿಗಳು ದೇವರನ್ನು ಮೂರ್ತಿದಲ್ಲಿ ಎಂತೋ, ಹಾಗೆಯೇ ಅಮೂರ್ತದಲ್ಲೂ ಅನುಭವಿಸಬಲ್ಲರು. ಅವರ ಪಾಲಿಗೆ ದೇವರ ಆಕಾರ ಎಷ್ಟು ಸತ್ಯವೋ, ಅದರ ನಿರಾಕಾರವೂ ಅಷ್ಟೇ ಸತ್ಯ. ಇದನ್ನು ವಚನಕಾರರು ಬಲ್ಲರು. ಆದರೆ ಎಲ್ಲರೂ ಮೂರ್ತಾಮೂರ್ತಗಳ ನೆಲೆಯಲ್ಲಿ ಸಂಚರಿಸಬಲ್ಲ ಅನುಭಾವಿಗಳಲ್ಲ. ಕೇವಲ ಭಕ್ತಿಯ ನೆಲೆಯಲ್ಲಿ ಬದುಕುವ ಬಹುಸಂಖ್ಯಾತ ಭಕ್ತ ಜನರ ಪಾಲಿಗೆ, ತಮಗೆ ಇಷ್ಟ’ವಾದ ದೈವದ ಆಕಾರದಲ್ಲಿ ಪೂಜಿಸಲು ದೇವಸ್ಥಾನ ವೆಂಬ ಒಂದು ನೆಲೆ ಬೇಕೆ ಬೇಕು. ಆದರೆ ವಚನಕಾರರು ಮಾಡಿದ್ದೆಂದರೆ, ಬಹುಸಂಖ್ಯಾತರ ಭಕ್ತಿಗೆ, ಅದುವರೆಗೂ ಆಲಂಬನದ ನೆಲೆಯಾಗಿದ್ದ ದೇವಸ್ಥಾನವನ್ನು, ನಿರಾಕರಿಸಿ, ದೇವರ ಹಾಗೂ ದೇವಸ್ಥಾನದ ಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿದ್ದಲ್ಲದೆ, ಅದನ್ನು ಒಪ್ಪಿಕೊಳ್ಳುವಂತಹ ಒಂದು ಮನಃಸ್ಥಿತಿಯನ್ನೂ ನಿರ್ಮಾಣ ಮಾಡಿದ್ದು.  

ವೀರಶೈವದ ‘ದೇವರ ಕಲ್ಪನೆ’ ಮೂಲತಃ ಪರಂಪರಾಗತವಾದ ‘ದೇವರ’ ಕಲ್ಪನೆಯಿಂದ ಭಿನ್ನವಾದದ್ದು. ಒಂದೆಡೆ ಪುರಾಣೋಕ್ತವಾದ ಶಿವನ ಮೂರ್ತಿ ಪೂಜೆ ಮತ್ತು ಶಿವನ ಸಂಕೇತವಾದ ಲಿಂಗ (ಸ್ಥಾನಕಲಿಂಗ) ಪೂಜೆ-ಈ ಎರಡು ರೂಪ ಗಳನ್ನು ದೇವಸ್ಥಾನ ಸಮೇತ ನಿರಾಕರಿಸಿ, ದೇವತ್ವ ಕಲ್ಪನೆಯ ಸಾಂಕೇತಿಕ ರೂಪವಾಗಿ ಇಷ್ಟಲಿಂಗವನ್ನು ಸ್ವೀಕರಿಸಿ ತಮ್ಮ ಕೊರಳಲ್ಲಿ ಕಟ್ಟಿಕೊಂಡರು . ಈ ಅರ್ಥದಲ್ಲಿ ಇಷ್ಟಲಿಂಗ, ರೂಪವೂ ಅಲ್ಲ, ಅರೂಪವೂ ಅಲ್ಲ. ಅದರ ಬದಲು ಅದು ನಿರಾಕಾರಕ್ಕೆ ಅತ್ಯಂತ ಸಮೀಪವಾದ ಒಂದು ಸಂಕೇತ ಮಾತ್ರ. ಹೀಗೆ ದೇವರ ಕಲ್ಪನೆಯನ್ನು ದೇವಾಲಯದಿಂದ ಮತ್ತು ಅದರ ಪೌರಾಣಿಕ ಹಿನ್ನೆಲೆಗಳಿಂದ ಬಿಡಿಸಿ ಮನುಷ್ಯನ  ಶರೀರಕ್ಕೆ ಸ್ಥಳಾಂತರ ಮಾಡುವುದರ ಮೂಲಕ ಮನುಷ್ಯನ ಶರೀರವನ್ನೇ ದೇವಸ್ಥಾನ ವನ್ನಾಗಿ ಮಾಡಿದ್ದಲ್ಲದೆ ಆ ಕಾರಣದಿಂದ ಮನುಷ್ಯತ್ವಕ್ಕೆ ಒಂದು ಘನತೆ-ಗೌರವವನ್ನು ವಚನಕಾರರು ತಂದುಕೊಟ್ಟರೆಂಬುದು ತೀರ ಮಹತ್ವದ ಸಂಗತಿಯಾಗಿದೆ.

ದೇಹವೇ ದೇವಾಲಯವೆಂಬ ಕಲ್ಪನೆಯನ್ನು ಹಾಗೂ ಇಷ್ಟಲಿಂಗ ನಿಷ್ಠೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ವಚನಕಾರರು, ದೇವಸ್ಥಾನಗಳನ್ನೂ, ಅದಕ್ಕೆ ಸಂಬಂಧಿಸಿದ ವಿವಿಧ ವಿಧಿಗಳನ್ನೂ, ಆಚರಣೆಗಳನ್ನೂ, ಅತ್ಯಂತ ತೀವ್ರವಾಗಿ ನಿರಾಕರಿಸಿದ್ದರ ಹಿಂದೆ  ಇರುವ ಉದ್ದೇಶಗಳೂ ಹಾಗೂ ಅದರ ಪರಿಣಾಮಗಳೂ ಬಹುಮುಖವಾದವುಗಳಾಗಿವೆ. ಮೊದಲನೆಯದಾಗಿ ಕರ್ನಾಟಕದ ಅಂದಿನ ಪರಿಸರದಲ್ಲಿ ಹಲವು ಧಾರ್ಮಿಕ ಸೆಳೆತಗಳೂ, ಬಹುದೇವತಾರಾಧನೆಯ ಪದ್ಧತಿಗಳೂ, ಸಾಮಾಜಿಕವಾದ ತರತಮಗಳೂ, ಜನರ ಬದುಕನ್ನು ಒಂದು ರೀತಿಯಲ್ಲಿ ವಿಘಟನೆಗೆ ಒಳಗೂಡಿಸಿದ ಸಂಗತಿಗಳಾಗಿದ್ದವು. ಹೀಗೆ ವಿಘಟನೆಗೊಂಡ ಬದುಕನ್ನೂ ಹಾಗೂ ಮನಃಸ್ಥಿತಿಯನ್ನು ಒಂದು ಸಂಘಟನೆಯ ಕೇಂದ್ರಕ್ಕೆ ತರುವ ಪ್ರಯತ್ನದಲ್ಲಿ ಬಹುದೇವತಾರಾಧನೆಯನ್ನೂ,

ಹಾಗೂ ದೇವಸ್ಥಾನಗಳನ್ನೂ ನಿರಾಕರಿಸುವುದು ಹೊಸ ಶರಣ ಧರ್ಮದ ಅವಶ್ಯಕತೆಯಾಗಿತ್ತು. ಆದಕಾರಣ ವಚನಕಾರರು ‘ಹಾಳುಮೊರಡಿಗಳಲ್ಲಿ, ಊರದಾರಿಗಳಲ್ಲಿ ಕೆರೆ ಬಾವಿ ಹೊಗಿದು ಮರಂಗಳಲ್ಲಿ, ಗ್ರಾಮ ಮಧ್ಯಗಳಲ್ಲಿ, ಚಾಸಧ ಪಟ್ಟಣ ಪ್ರದೇಶಗಳಲ್ಲಿ  ಹಿರಿಯಾಲದ ಮರದಲ್ಲಿ ಮನೆಯಮಾಡಿ’ (ವ ೫೫ ಬಸವಣ್ಣ ) ಜನರ ನಂಬಿಕೆಗಳನ್ನು ಹಿಡಿದು ಪೂಜೆಗೊಳ್ಳುತಿದ್ದ ಬಹು ಸಂಖ್ಯಾತ ಕ್ಷುದ್ರ ದೇವತೆಗಳನ್ನು “ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ” (ವ ೫೬೧ ಬಸವನಾಳ) ಎಂದು ಪೂಜಿಸುವ ಪ್ರವೃತ್ತಿಗಳನ್ನೂ, ಆಗಲೇ ನೆಲೆನಿಂತ ದೇವಾಲಯಗಳಿಗೆ ದಾನ-ದತ್ತಿಗಳನ್ನು ಬಿಡುವ, ಹೊಸ ದೇವಸ್ಥಾನಗಳನ್ನು ಕಟ್ಟಿಸಿ ಲಿಂಗ ಪ್ರತಿಷ್ಠೆ ಮಾಡಿಸುವ ʼಉಳ್ಳವರʼ ಧಾರ್ಮಿಕ ಕಾರ್ಯಗಳನ್ನು ಖಂಡಿಸಿ ಸಮಾಜದ ಮನಸ್ಸನ್ನು ‘ಏಕದೈವ’ ಕೇಂದ್ರಕ್ಕೆ ತಂದ್ದದೆಂಬುದು, ಸಾಮಾಜಿಕವಾಗಿ ಕೂಡಾ ಮಾತ್ರವಲ್ಲ ಧಾರ್ಮಿಕವಾಗಿಯೂ ಸಂಘಟನೆ’ಯ ದೃಷ್ಟಿಯಿಂದ ಬಹುಮುಖ್ಯವಾದ ಹೆಜ್ಜೆಯಾಗಿದೆ ಮತ್ತು ಏಕದೈವವಾದ ಶಿವ.. ಇಷ್ಟಲಿಂಗ’ ರೂಪದಿಂದ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೆ ಇದ್ದಾನೆ ಮತ್ತು ಆ ಮೂಲಕ ತನ್ನ ದೇಹವೇ ದೇಗುಲವಾಗಿದೆ. ಈ ರೀತಿ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡ ತಾವೆಲ್ಲರೂ ವರ್ಣವರ್ಗಗಳ ತರತಮವಿಲ್ಲದೆ ಅಧ್ಯಾತ್ಮಿಕವಾಗಿ ಸಮಾನರು…ಎಂಬ ಧರ್ಮಶ್ರದ್ಧೆ ಹಾಗೂ ಸಮಾನತೆಯ ಭಾವನೆಯನ್ನು ಮತ್ತು ಆತ್ಮಪ್ರತ್ಯಯವನ್ನು ಮೂಡಿಸಿದ್ದು ದೇವಾಲಯ ನಿರಾಕರಣೆಯ ನಿಲುವಿನ ಪರಿಣಾಮವಾಗಿದೆ. ದೇವಾಲಯ ನಿರಾಕರಣೆಯಿಂದ ಇಷ್ಟಲಿಂಗದ ನಿಷ್ಠೆಯನ್ನು ದೃಢಗೊಳಿಸುವ ಈ ವಿಧಾನದಿಂದ, ಭಕ್ತನಿಗೂ ದೇವರಿಗೂ ದೇವಾಲಯದ ಕಾರಣದಿಂದ ನಡುವೆ ಸ್ಥಾಪಿತವಾದ ‘ಪೂಜಾರಿ’ಯ ಮಾಧ್ಯಮನನ್ನು ನಿರಾಕರಿಸಿ, ಭಕ್ತಿ ಎನ್ನುವುದು ಭಕ್ತ ಹಾಗೂ ಭಗವಂತನ ನಡುವಣ ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನ- ಎನ್ನುವ ಭಾವನೆಯನ್ನು ಪ್ರತಿಪಾದಿಸುತ್ತದೆ.

 ಎರಡನೆಯದಾಗಿ, ಶರಣ ಧರ್ಮದ ಪರಿಸರದಲ್ಲಿ ಆಗಲೇ ನೆಲೆನಿಂತ ದೇವಾಲಯ ಸಂಸ್ಕೃತಿ ಮುಖ್ಯವಾಗಿ ʼಉಳ್ಳವರ’ ಹಾಗೂ ಉಚ್ಚವರ್ಗದವರ ಸ್ವತ್ತಾಗಿದ್ದು ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡ ಅವರನ್ನು ಶೋಷಣೆಗೆ ಗುರಿಪಡಿಸುವ ಸಾಧನವಾಗಿತ್ತು. ಅದಕ್ಕೂ ಮಿಗಿಲಾಗಿ ಸಮಾಜದ ಕೆಳವರ್ಗದ ಬಹು ಸಂಖ್ಯಾತರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಲಾಗಿತ್ತು. ವಚನಕಾರರು ಈ ಪ್ರವೃತ್ತಿಯನ್ನು ‘ದೇವಾಲಯ ನಿರಾಕರಣೆ’ಯ ಮೂಲಕ ಪ್ರತಿಭಟಿಸಿದ ಕ್ರಮ ತೀರಾ ವಿಶಿಷ್ಟವಾಗಿದೆ. ಈ ಹೊತ್ತು ಕೆಲವರಿಗೆ ಅನ್ನಿಸಬಹುದು ಹೀಗೆ ದೇವಾಲಯವನ್ನು ನಿರಾಕರಣೆ ಮಾಡದೆ ವಚನಕಾರರು, ಸಂಘಟಿತವಾಗಿ ದೇವಾಲಯ ಪ್ರವೇಶವನ್ನೆ ಒಂದ ಚಳುವಳಿಯನ್ನಾಗಿ ಮಾಡಿಕೊಂಡು ಅದರ ಮೂಲ ಒಂದು ಸಾಮಾಜಿಕ  ಕ್ರಾಂತಿಯನ್ನೆ ಮಾಡಬಹುದಾಗಿತ್ತಿಲ್ಲ ಎಂದು.  ಆದರೆ ಕೊಂಚ ವಿಚಾರ ಮಾಡಿ ನೋಡಿದರೆ, ದೇವಾಲಯ ಪ್ರವೇಶಕ್ಕೆ ಚಳುವಳಿ ಮಾಡುವುದಕ್ಕಿಂತ, ದೇವಾಲಯವನ್ನು ನಿರಾಕರಿಸುವುದು ಹೆಚ್ಚು ದಿಟ್ಟತನದ ಹಾಗೂ ವೈಚಾರಿಕ ನಿಲುವಿನ ಕ್ರಾಂತಿಯಾಗಿದೆ ಮತ್ತು ಈ ಹೊತ್ತಿಗೂ ಇದು ಅತ್ಯಂತ ಪ್ರಸ್ತುತವಾದ ಸಂಗತಿಯಾಗಿದೆ. ಯಾಕೆಂದರೆ ದೇವಾಲಯ  ಪ್ರವೇಶಕ್ಕೆ ಹೊಡೆದಾಡಿ ಪ್ರವೇಶ ಗಿಟ್ಟಿಸುವುದರಿಂದಾಗುವ ಪರಿಣಾಮಗಳಿಗಿಂತ, ದೇವಸ್ಥಾನವನ್ನೇ ನಿರಾಕರಿಸುವುದರಿಂದ ಆಗುವ ಪರಿಣಾಮಗಳು ತೀರಾ ವ್ಯಾಪಕವೂ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಕವೂ ಆಗಿವೆ ಮತ್ತು ಆಗುತ್ತಿವೆ ಎಂಬುದನ್ನು ಗುರುತಿಸಿ ಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಿಂದ ನೋಡಿದರೆ ‘ದೇವಸ್ಥಾನ ನಿರಾಕರಣೆ’ ಮುಖ್ಯವಾಗಿ ಪುರೋಹಿತ ಷಾಹೀ ಪ್ರವೃತ್ತಿಗೆ ಹಾಗೂ ಅಧಿಕಾರ ಷಾಹೀ ವ್ಯವಸ್ಥೆಗೆ ತೋರಿದ ಮೊದಲ ಪ್ರತಿಕ್ರಿಯೆಗಳಾಗಿವೆ. ಹಾಗೆ ನೋಡಿದರೆ ಈ ದೇಶದ ಚರಿತ್ರೆಯಲ್ಲಿ ಪುರೋಹಿತರು ಮತ್ತು ಅಧಿಕಾರಷಾಹಿಗಳನ್ನು ಬೇರ್ಪಡಿಸಿ ನೋಡುವುದು ಕಷ್ಟ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳೂ, ಒಂದೇ ಖಡ್ಗದ ಎರಡು ಭಾಯಿಗಳೊ ಎಂದು ಹೇಳಬಹುದು. ದೇವಸ್ಥಾನ ಮಠ ಹಾಗೂ ಅರಮನೆಗಳು ಇರವುಗಳ ಕೇಂದ್ರಗಳು. ವಾಸ್ತವವಾಗಿ ದೇವಾಲಯಗಳು ಅಭಿವೃದ್ಧಿ ಹೊಂದಿದ್ದು ಬ್ರಾಹ್ಮಣ ಕ್ಷತ್ರಿಯ, ಪುರೋಹಿತಷಾಹಿ ಹಾಗೂ ರಾಜರ ಪರಸ್ಪರ ಸಹಕಾರ ಸಹಯೋಗಗಳಿಂದ ಮತ್ತು ಈ ವರ್ಗದವರ ರುಚಿ ಅಭಿರುಚಿಗಳೇ ದೇವಾಲಯಗಳ ವ್ಯವಸ್ಥೆಯನ್ನೂ ರಚನೆಯನ್ನೂ ನಿಯಂತ್ರಿಸಿದವುಗಳು. ದೇವಾಲಯಗಳ ಪ್ರತಿಮಾ ವಿಧಾನವು ಮಧ್ಯ ಕಾಲೀನ ರಾಜರ ಅರಮನೆಗಳ ಜೀವನ ವಿಧಾನದ ಮಾದರಿಗಳ ಮೇಲೆ ರೂಪುಗೊಂಡದ್ದಾಗಿದೆ. ದಕ್ಷಿಣ ಭಾರತದ ಹಲವು ದೇವಾಲಯಗಳಂತೂ ಅವುಗಳ ವಿಸ್ತಾರ ವೈಭವಗಳಲ್ಲಿ ಆರಮನೆಗಳನ್ನು ನೆನಪಿಗೆ ತರುವಂತಿವೆ. ದೇವಾಲಯದ ಗೋಪುರವು ರಾಜತ್ವದ ಶಕ್ತಿಯ ಪ್ರತೀಕವಾಗಿದೆ. ದೇವಾಸ್ಥಾನಗಳು ಒಂದು ರೀತಿಯಲ್ಲಿ ನಾಟ್ಯಶಾಲೆಗಳಂತೆ ಭಾಸವಾಗುತ್ತವೆ. ದೇವತಾ ವಿಗ್ರಹಗಳೂ ಹಾರ-ಕಿರೀಟಕುಂಡಲಾದಿ ರಾಜೋಚಿತ ವೇಷಭೂಷಣಗಳಿಂದ ರಾಜಿಸುತ್ತವೆ. ದೇವಸ್ಥಾನಗಳ ಶಿಲ್ಪಗಳೂ, ರಾಜರ ವಿರಾಮದ ವೇಳೆಯ ಚಟುವಟಿಕೆಗಳಾದ, ಗಾಯನ, ನರ್ತನ, ಮಲ್ಲಯುದ್ಧ, ಕುದುರೆ ಸವಾರಿ, ಶೃಂಗಾರ- ಇತ್ಯಾದಿಗಳನ್ನು ಬಿಂಬಿಸುತ್ತವೆ. ಈ ಎಲ್ಲವೂ ದೇವಸ್ಥಾನಗಳು ಹೇಗೆ ಆಳುವ ವರ್ಗದ ಅಭಿರುಚಿಯಿಂದ ನಿಯಂತ್ರಿತವಾಗಿವೆ ಎಂಬುದನ್ನು ಸೂಚಿಸುತ್ತವೆ. ಇದು ದೇವಸ್ಥಾನದ ಒಂದು ಮುಖವಾದರೆ, ಅದರ ಇನ್ನೊಂದು ಮುಖ ಅದರ ಒಳಗಿನ ವ್ಯವಸ್ಥೆಗೆ ಸಂಬಂಧಪಟ್ಟದ್ದು, ಇದರ ಸಂಪೂರ್ಣ ನಿಯಂತ್ರಣ ಪುರೋಹಿತಷಾಹಿಯದು. ಅದರಲ್ಲಿಯೂ ಮುಖ್ಯವಾಗಿ ಬ್ರಾಹ್ಮಣವರ್ಗದ್ದು, ಅರ್ಚನೆ ಉತ್ಸವ-ದಾನ-ದಕ್ಷಿಣೆ-ವ್ರತ-ಸೀಮ ಇತ್ಯಾದಿಗಳ ಹೆಸರಿನಲ್ಲಿ ಜನರ ಧರ್ಮ ಶ್ರದ್ಧೆಯ ಉಪಯೋಗಗಳನ್ನು ಬಲ್ಲವರು ಇವರು. ಇವರ ಜತೆಗೆ “ಉಳ್ಳವರು’ ಹಣ ಉಳ್ಳ ಶ್ರೀಮಂತರು, ದೇವಾಲಯಾದಿ ನಿರ್ಮಾಣ ಕಾರ್ಯಗಳನ್ನು ಒಂದು ಪುಣ್ಯ ಕರ್ಮವೆಂದುಭಾವಿಸಿದವರು. ದೇವಸ್ಥಾನಗಳಿಗೆ ದಾನ-ದತ್ತಿಗಳನ್ನು ಬಿಟ್ಟು ಶಾಸನಗಳನ್ನು ಬರೆಯಿಸಿದವರು. (ಈ ಪಟ್ಟಿಗೆ ರಾಜರೂ ಸೇರುತ್ತಾರೆ. ತಮ್ಮ ಸಂಪತ್ತಿನ ಒಂದಷ್ಟು ಭಾಗ ದೇವಕಾರ್ಯಕ್ಕೆ ವಿನಿಯೋಗವಾಗಲಿ ಎಂಬ ಶ್ರದ್ಧೆಯುಳ್ಳವರು ಮತ್ತು ತಮ್ಮ ಸಂಪತ್ತಿನ ಗಳಿಕೆಯ ಪಾಪ ಪ್ರಜ್ಞೆಯನ್ನು ಈ ಪುಣ್ಯ ಕಾರ್ಯಗಳ ಮೂಲಕ ತೊಳೆದುಕೊಳ್ಳಲು ಬಯಸುವವರು. ಈ ಎಲ್ಲ ಕಾರಣಗಳಿಂದ ವಚನ ಚಳುವಳಿಗೆ ಹಿನ್ನೆಲೆಯಾದ ಅಂದಿನ ಕರ್ನಾಟಕದ ಪರಿಸರದಲ್ಲಿ ಲಕುಲೀಶ ಪಾಶುಪತ ಸಂಪ್ರದಾಯದ ಶೈವರಿಂದ ಬಹುಸಂಖ್ಯೆಯ ದೇವಾಲಯಗಳು ನಿರ್ಮಾಣಗೊಂಡಿದ್ದವು. “ಮಧ್ಯಕಾಲೀನ ಯುಗದ ದಕ್ಷಿಣದ ತಪ್ಪಲಿನ ಭೂಮಿಯಲ್ಲಿ ದೇವ ಮಂದಿರಗಳ ನಿರ್ಮಾಣಕ್ಕೆ ಉಕ್ಕುಬಂದ ಕಾಲ, ಐದರಿಂದ ಏಳನೆಯ ಶತಮಾನಗಳ ಅವಧಿಯಲ್ಲಿ ಬಾದಾಮಿಯ ಚಾಳುಕ್ಯರು ತಮ್ಮರಾಜಧಾನಿಯಾದ ಐಹೊಳೆ ಒಂದರಲ್ಲಿಯೇ ಎಪ್ಪತ್ತರಷ್ಟು ದೇವಾಲಯಗಳನ್ನು ಕಟ್ಟಿಸಿದ್ದಾರೆ. ಎರಡನೆಯ ಚಾಳುಕ್ಯ ವಿಕ್ರಮಾದಿತ್ಯನು ಎಂಟನೆಯ ಶತಮಾನದಲ್ಲಿ ಈಗಿನ ವಿಜಾಪುರ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ತನ್ನ ರಾಜ ವೈಭವವನ್ನು ವ್ಯಕ್ತಪಡಿಸುವುದಕ್ಕೆ ಮೂರು ಬೃಹದ್ ದೇವಸ್ಥಾನಗಳನ್ನು ಕಟ್ಟಿಸಿದನು…….ಕ್ರಿ. ಶ. ೧೧೫೦ ರಿಂದ ೧೩೫೦ರ ವರೆಗಿನ ಎರಡುನೂರು ವರ್ಷಗಳಲ್ಲಿ ಶೈವರು ಏನಿಲ್ಲೆಂದರೂ ನಾನೂರು ಐವತ್ತು ಶಿವದೇವಾಲಯಗಳನ್ನೂ, ವೈಷ್ಣವರು ಒಂದುನೂರು ದೇವಾಲಯಗಳನ್ನೂ, ಕಟ್ಟಿರುವುದು ಆ ಕಾಲದಲ್ಲಿ ದೇವ ಮಂದಿರಗಳ ನಿರ್ಮಾಣ ಕಾರ್ಯದಲ್ಲಿ ಧರ್ಮಗಳು ಸ್ಪರ್ಧೆಯ ದ್ಯೋತಕಗಳಾಗಿವೆ. ಇಂಥ ಪರಿಸರದಲ್ಲಿ ದೇವಾಲಯಗಳನ್ನು ನಿರಾಕರಿಸುವುದರ ಮೂಲಕ ಸೂಕ್ಷ್ಮವಾಗಿ ರಾಜಷಾಹಿಯನ್ನೂ, ಸ್ಪಷ್ಟವಾಗಿ ಪುರೋಹಿತಷಾಹಿಯನ್ನೂ ವಿರೋಧಿಸಿದ ಶರಣ ಧರ್ಮದ ವೈಚಾರಿಕತೆಯನ್ನೂ ಕ್ರಿಯಾಶೀಲತೆಯನ್ನೂ ಅರ್ಥಮಾಡಿಕೊಳ್ಳಬಹುದು.

 ಹಾಗೆ ನೋಡಿದರೆ ಶರಣರ ದೇವಾಲಯ ವಿರೋಧ ದೇವಸ್ಥಾನಗಳನ್ನು ಕುರಿತ ಅಗೌರವದಿಂದ ಹುಟ್ಟಿಕೊಂಡ ಕ್ರಿಯೆ ಅಲ್ಲ. ವಾಸ್ತವವಾಗಿ ಈ ಶರಣ ಚಳುವಳಿಯ ಮುಖ್ಯ ವಚನಕಾರರು ಒಂದಲ್ಲ ಒಂದು ರೀತಿಯಲ್ಲಿ ದೇವಾಲಯಗೋತ್ರ’ಕ್ಕೆ ಸೇರಿ ದವರೇ. ಅವರವರ ಅಂಕಿತಗಳಂತೂ ಸ್ಪಷ್ಟವಾಗಿ ಸ್ಥಾವರ ಲಿಂಗದ ದೇವಸ್ಥಾನಗಳನ್ನು ಸೂಚಿಸುತ್ತವೆ. ಬಸವಣ್ಣನವರ ಅಂಕಿತವಾದ ‘ಕೂಡಲಸಂಗಮದೇವ’ ಈ ಹೊತ್ತಿಗೂ ಇರುವ ಕೂಡಲಸಂಗಮದ ದೇವಸ್ಥಾನವನ್ನು, ಅಕ್ಕಮಹಾದೇವಿ ಹಾಗೂ ಸಿದ್ಧರಾಮನ ಅಂಕಿತಗಳು ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನವನ್ನೂ, ಅಲ್ಲಮಪ್ರಭುವಿನ ʼಗುಹೇಶ್ವರ’ ಎನ್ನುವುದು ಬಳ್ಳಿಗಾವೆಯಗೂಗೇಶ್ವರ ದೇವಾಲಯವನ್ನೂ ಹೀಗೆ ಇನ್ನೂ ಕೆಲವು ವಚನಕಾರರ ಅಂಕಿತಗಳು ಅವರವರು ಬಂದ ಪರಿಸರದ ದೇವಾಲಯಗಳನ್ನು ಬೆರಳಿಟ್ಟು ತೋರಿಸುತ್ತವೆ. ಈ ಶರಣರಲ್ಲಿ, ಮುಖ್ಯವಾಗಿ ಸಿದ್ಧರಾಮನು ದೇವಾಲಯ ನಿರ್ಮಾಣದ ವಿಚಾರದಲ್ಲಿ ವಿಶೇಷವಾದ ಕಾಳಜಿ ವಹಿಸಿದವನು. ಅವನ ಲೋಕಕಲ್ಯಾಣ ರೂಪವಾದ ಸಾಧನೆಯಲ್ಲಿ ಕೆರೆ ಬಾವಿ ದೇವಾಲಯಗಳ ನಿರ್ಮಾಣವೂ ಸೇರುತ್ತದೆ. ಈ ಕೆಲವು ಶರಣರ .ಅಂಕಿತಗಳ ನಡುವೆ, ಅಲ್ಲಮಪ್ರಭುವಿನ ಅಂಕಿತ ಈ ಗುಗ್ಗೇಶ್ವರನನ್ನು ಸೂಚಿಸಿದರೂ, ‘ಗುಹೇಶ್ವರ’ ಎಂಬ ಬಳ್ಳಿಗಾವೆಯ ಅಂಕಿತವು ದೇವಾಲಯ ಸಂಸ್ಕೃತಿಯ ಇತಿಹಾಸದಲ್ಲಿ ದೇವಾಲಯ ರಚನೆಗಳ ಪೂರ್ವಾವಸ್ಥೆಯಾದ ‘ಗುಹೆ’ ಯನ್ನು ಅಥವಾ ಗುಹಾಲಯ ಶಿಲ್ಪಗಳ ಪರಂಪರೆಯನ್ನು ಸೂಚಿಸುವಂತೆ ತೋರುತ್ತದೆ. ಯಾಕೆಂದರೆ “ದೇವಸ್ಥಾನಗಳ ಬೆಳವಣಿಗೆಯ ಚರಿತ್ರೆಯಲ್ಲಿ ಗುಹಾಲಯಗಳ ನಿರ್ಮಿತಿಯ ಅತ್ಯಂತ ಪ್ರಾಚೀನವಾದದ್ದು. ಭಾರತೀಯ ವಾಸ್ತುಶಿಲ್ಪದ ಸುಮಾರು ಒಂದು ಸಾವಿರ ವರ್ಷಗಳ ಕಾಲಮಾನದಲ್ಲಿ ನಿಜವಾದ ಸ್ಮಾರಕಗಳೆಂದರೆ ಗುಹಾಲಯಗಳೇ. ಭಾರತದ ದೇವಾಲಯ ಶಿಲ್ಪಕ್ಕೆ ಇದು ವಿಶಿಷ್ಟವಾದ ಲಕ್ಷಣವಾಗಿದೆ.  ಕ್ರಿ. ಪೂ. ೩ನೆ ಶತಮಾನದಿಂದ ಕ್ರಿ.ಶ, ೧೦ನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡ ಗುಹಾಲಯಗಳ ಸಂಖ್ಯೆ ಒಂದು ಸಾವಿರದ ಇನ್ನೂರಕ್ಕೂ ಮಿಗಿಲಾಗಿವೆ.  ಉಪನಿಷತ್ತುಗಳಲ್ಲಾಗಲೀ ಧರ್ಮಶಾಸ್ತ್ರಗಳಲ್ಲಾಗಲಿ ದೇವಸ್ಥಾನಗಳ ವಿಷಯವು ಪ್ರಸ್ತಾಪಿತವಾದಂತೆ ತೋರುವುದಿಲ್ಲ. ಆಗ ಅರಣ್ಯದ ಏಕಾಂತಕ್ಕೆ ಸರಿದು ಗುರುವಿನ ಮಾರ್ಗದರ್ಶನದಲ್ಲಿ ಸಾಧಕನು ಜಿಜ್ಞಾ ಸೆಗೆ ತೊಡಗುವುದು ಮುಖ್ಯವಾಗಿತ್ತು. “ದಟ್ಟವಾದ ಕಾಡಿನ ಕತ್ತಲೆಯನ್ನು ಪ್ರವೇಶಿಸುವಸಾಧಕನ ಕ್ರಿಯೆ; ಅಂತರಂಗವನ್ನು ಧ್ಯಾನದ ಮೂಲಕ ಪ್ರವೇಶಿಸುವುದರ ಸಂಕೇತವಾಗಿದೆ. ಮುಂದಿನ ಹಂತವಾದ ಗುಹಾಲಯಗಳು ಈ ಸಂಕೇತದ ಸಮರ್ಥನೆಯಾಗಿವೆ. ಜೈನ, ಬೌದ್ಧ ಹಿಂದೂ ಗುಹಾಲಯಗಳೂ ಏಕಾಂತಕ್ಕೆ ಹಿಂದಿರುಗುವ ಸಾಧಕನ ಮನಃಸ್ಥಿತಿಯ ಹಳಹಳಿಕೆ ಯನ್ನು ಸೂಚಿಸುತ್ತವೆ,” ಸಾಧುಸನ್ಯಾಸಿಗಳಿಗೆ ಹಾಗೂ ಅಧ್ಯಾತ್ಮಸಾಧಕರಿಗೆ ಮತ್ತು ಅದೇ ಬಗೆಯ ಪ್ರವೃತ್ತಿಯವರಿಗೆ ಗುಹೆಗಳು ಏಕಾಂತದ ಧ್ಯಾನಕ್ಕೆ ಅನುಕೂಲವಾದ ನೆಲೆಗಳಾಗಿದ್ದುದೇನೋ ನಿಜ ಆದರೆ ಭಕ್ತರಿಗೆ ದೇವಸ್ಥಾನಗಳು ಬೇಕಾದವು, ಯಾವಾಗ ಶಿವ, ವಿಷ್ಣು, ರಾಮ, ಕೃಷ್ಣ ಪಂಥಗಳು ವ್ಯಾಪಕವಾದುವೋ ಆಗ ಮತ್ತು ಭಕ್ತ ಪಂಥದ ಪ್ರಭಾವದಿಂದ, ದೇವಾಲಯಗಳ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಿತೆಂದು ತೋರುತ್ತದೆ. ಹೀಗಾಗಿ ದೇವಾಲಯ ನಿರ್ಮಿತಿ ಒಂದು ಪರಂಪರೆಯಾಗಿ ರೂಪುಗೊಂಡಿತು . ಅಲ್ಲಮನ ಅಂಕಿತವಾದ ‘ಗುಹೇಶ್ವರ’ ಎನ್ನುವುದು, ದೇವಾಲಯ ನಿರ್ಮಿತಿಯ ಪ್ರಾಚೀನ ರೂಪವನ್ನು ಸೂಚಿಸಿದರೆ, ಇತರ ಕೆಲವು ವಚನಕಾರರ ಅಂಕಿತಗಳು ದೇವಾಲಯಗಳನ್ನು ಸೂಚಿಸುತ್ತವೆ ಮತ್ತು ಎಲ್ಲ ವಚನಕಾರರ ಧೋರಣೆ ಮತ್ತೆ ದೇವಾಲಯವನ್ನು ನಿರಾಕರಿಸುವ ಹಾಗೂ ಮೀರುವ ನೆಲೆಯನ್ನು ನಿರ್ದೇಶಿಸುತ್ತವೆ. ಹಾಗೆ ನಿರಾಕರಿಸುವ ಮತ್ತು ಮೀರುವ ಮನಃಸ್ಥಿತಿಯ ಮೂಲಕ, ವಚನಕಾರರು ದೇವಾಲಯದ ಪ್ರಾಚೀನ ಮಾದರಿಗೆ, ಅಂದರೆ ‘ದೇಹವೇ ದೇವಾಲಯ’ ಎಂಬ ಕಲ್ಪನೆಗೆ ಹಿಂದಿರುಗುತ್ತಾರೆ. ಈ ಪ್ರಾಚೀನ ಮಾದರಿ, ದೇವಸ್ಥಾನಗಳ ಎಲ್ಲ ಬಗೆಯ ʼಮೂರ್ತಿʼ ರೂಪಗಳಿಗೂ ಬಹುಶಃ ಮೊದಲನೆಯದು.

ದೇವಾಲಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಮಾಜದ ಮನಸ್ಸಿಗೆ, ದೇವಾಲಯದ ನಿರಾಕರಣೆಯಿಂದ ಉಂಟಾಗುವ ಶೂನ್ಯವನ್ನು ತುಂಬಲು ‘ದೇಹವೇ ದೇವಾಲಯ’ ಎಂಬ  ಪರ್ಯಾಯವನ್ನು ವಚನಕಾರರು ಸೂಚಿಸಿದರಷ್ಟೆ? ಹಾಗೆ ನೋಡಿದರೆ, ಈ ಸೂಚನೆಯೂ ಹೊಸದೇನಲ್ಲ. ‘ದೇಹೋ ಜೀವಾಲಯಃ ಪ್ರೋಕ್ತಃ ಜೀವೋ ಜೀವಃ ಸನಾತನಃ” ಎಂಬ ಉಕ್ತಿಯೊಂದಿದೆ. ಇದು ಎಷ್ಟು ಪ್ರಾಚೀನವೋ, ತಿಳಿಯದು. ಆದರೂ ಅದು ಕೇವಲ ಒಂದು ಕಲ್ಪನೆಯೋ, ಆಶಯವೋ ಆಗಿದೆಯೇ ಹೊರತು ಶಿವಶರಣರಲ್ಲಿಯಂತ ಒಂದು ಪ್ರಾಯೋಗಿಕ ತಾತ್ವಿಕ ನಿಲುವಾಗಿ ಎಂದಾದರೂ ಅನುಭೂತವಾಗಿತ್ತೆಂದು ಹೇಳಲು ಬಾರದು. ಆದರೆ ಭಾರತೀಯ ವಾಸ್ತುಶಿಲ್ಪದ ಪ್ರಕಾರ ದೇಹಕ್ಕೂ ದೇವಾಲಯಕ್ಕೂ ಇರುವ ಸಂಬಂಧ ಅತ್ಯಂತ ಅರ್ಥಪೂರ್ಣವಾದುದಾಗಿದೆ. ಸಾಮಾನ್ಯವಾಗಿ ಭಾರತೀಯದೇವಸ್ಥಾನಗಳು ಮನುಷ್ಯ ಶರೀರದ ನೀಲನಕ್ಷೆಯನ್ನೇ ಅವಲಂಬಿಸಿ ರಚಿತವಾಗಿವೆ. ಗುಡಿಯನ್ನು ಕಟ್ಟುವ ಮೊದಲು ‘ಗರ್ಭ’ವಿನ್ಯಾಸ’ ಎಂಬ ವಿಧಿಯನ್ನು, ನೆರವೇರಿಸುವುದರ ಮೂಲಕ, ದೇವಸ್ಥಾನವು, ಭ್ರೂಣದಿಂದ ಶರೀರವು ರೂಪುತಾಳುವಂತೆ ಏಳುವುದೆಂದು ಕಲ್ಪಿಸಿಕೊಳ್ಳಲಾಗಿದೆ ಮತ್ತು ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯ ಶರೀರದ ಇತರ ಅವಯವಗಳೊಂದಿಗೆ ಸಮೀಕರಿಸಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ, ದೇವಾಲಯದ ಎರಡೂ ಬದಿಗಳನ್ನು ಹಸ್ತ ಅಥವಾ ಪಾರ್ಶ್ವವೆಂದೂ ಕಂಬಗಳನ್ನು ಪಾದಗಳೆಂದೂ, ಗೋಪುರವನ್ನು ಶಿಖರ ಅಥವಾ ಶಿರಸ್ಸೆಂದೂ, ಮೂರ್ತಿಯನ್ನು ಒಳಗೊಳ್ಳುವ ಭಾಗಕ್ಕೆ ಗರ್ಭಗುಡಿಯಂದೂ ಹೇಳಲಾಗಿದೆ. ಹೀಗೆ ಮೂಲತಃ ದೇವಸ್ಥಾನವೇ ಮನುಷ್ಯ ಶರೀರ, ಮನುಷ್ಯ ಶರೀರವ ದೇವಸ್ಥಾನ ಎಂಬ ಸಮೀಕರಣವೊಂದು ಸಾಧಿತವಾಗಿದೆ. ಬಸವಣ್ಣನವರ ಸುಪ್ರಸಿದ್ಧವಾದ

 ಉಳ್ಳವರು ಶಿವಾಲಯ ಮಾಡುವರಯ್ಯ

 ನಾನೇನ ಮಾಡುವ ಬಡವನಯ್ಯ

 ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರವೆ ಹೊನ್ನ ಕಳಸವಯ್ಯ

ಕೂಡಲ ಸಂಗಮದೇವ ಕೇಳಯ್ಯ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

 ಎಂಬ ವಚನ, ಈಗ ಉಲ್ಲೇಖಿಸಿದ ವಾಸ್ತುಶಾಸ್ತ್ರದ ನೆನಪನ್ನು ತರುವುದಲ್ಲದೆ, ಶರಣರ ದೇವಾಲಯದ ಪರಿಕಲ್ಪನೆಯನ್ನು ಕುರಿತ ಅತ್ಯುತ್ತಮ ವ್ಯಾಖ್ಯಾನವೂ ಆಗಿದೆ. ಉಳ್ಳವರು ಮಾಡುವ ದೇವಸ್ಥಾನದೊಂದಿಗೆ ಬಸವನಾದ ತಾನು ಮಾಡುವ ದೇವಸ್ಥಾನವನ್ನು ಮುಖಾಮುಖಿಯಾಗಿರಿಸಿ, ಹೇಗೆ ಒಂದು ಕಾಲಕ್ಕೆ ಸಾಂಸ್ಕೃತಿಕವಾಗಿ ಅರ್ಥಪೂರ್ಣವಾಗಿದ್ದ ದೇವಾಲಯ, ಈಗ ಅರ್ಥವನ್ನು ಕಳೆದುಕೊಂಡು `ಸ್ಥಾವರ’ವಾಗಿದೆ ಎಂಬುದನ್ನು ಸೂಚಿಸುತ್ತ, ಮತ್ತೆ ಪರ್ಯಯವಾಗಿ ‘ದೇಹವೇ ದೇಗುಲ’ವೆಂಬ ‘ಜಂಗಮ’ ಅಥವಾ ಚಲನಶೀಲ ಸ್ಥಿತಿಗೆ ಹಿಂದಿರುಗುವ ಆಶಯವನ್ನು ಅಭಿವ್ಯಕ್ತಪಡಿಸುವ ಕ್ರಮ ಅನನ್ಯವಾಗಿದೆ. ಈ ವಚನ ಮುಖ್ಯವಾಗಿ ಪ್ರತಿಪಾದಿಸುವುದು ಶಿವಾಲಯವನ್ನು ಮಾಡುವ ಕ್ರಿಯೆಯನ್ನಲ್ಲ, ವ್ಯಕ್ತಿ ತಾನೇ ಶಿವಾಲಯ “ಆಗುವ” ಕ್ರಿಯೆಯನ್ನು .

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಈ ಲಿಂಗದೊಡಲೊಳಗೆ | ಮೂಲೋಕವಡಗಿಹುದು

ಮೂಲೋಕದೊಳಗೆ – ಈ ಲಿಂಗ ಸಂಚರವ

ಪಾಲಿಸಿದೆ ಗುರುವೆ ಕೃಪೆಯಾಗು     ||೧೧೧ ||

ಲಿಂಗಾಂಗಯೋಗವನ್ನು ವಿವರಿಸಿ ಆ ಲಿಂಗದ ಆದ್ಯಂತವನ್ನು ಅರುಹುತ್ತಾನೆ. ಗುರುಕರುಣಿಸಿದ ಲಿಂಗವು ಶಿಷ್ಯನ  ಚಿತ್ಕಳೆಯೆಂಬುದನ್ನು ತಿಳಿದಿದ್ದೇವೆ. ಚಿತ್ಕಳೆಯೇ ಚುಳುಕಾಗಿ ಕರಕಮಲಕ್ಕೆ ಬಂದ ಇಷ್ಟಲಿಂಗ ಚಿಕ್ಕದಲ್ಲ.  ಆಲದ ಬೀಜವು ಅತಿಚಿಕ್ಕದಾಗಿದ್ದರೂ ಅದರಲ್ಲಡಗಿದ ಮರದ ಧರ್ಮ ವ್ಯಾಪಕವಾಗಿದೆ. ಸಣ್ಣ ಬೀಜದಿಂದಲೇ ಬೃಹತ್ತಾದ ಗಿಡವು ಪ್ರಾದುರ್ಭವಿಸುತ್ತದೆ. ಅದರಂತೆ ಈ ಲಿಂಗದೊಡಲೊಳಗೆ  ಸ್ವರ್ಗ ಮರ್ತ್ಯ-ಪಾತಾಳವೆಂಬ ಮೂರು ಲೋಕಂಗಳು ಅಡಗಿದ್ದಾವೆ. ಲಿಂಗದಲ್ಲಿ ತ್ರಿಲೋಕಗಳ ವ್ಯಾಪಕತೆಯಿರುವಂತೆ ಮೂರು ಲೋಕಂಗಳಲ್ಲಿ ಲಿಂಗದ ಸಂಚಾರ (ವ್ಯಾಪಕತೆ) ಪಸರಿಸಿದೆ. ಲಿಂಗವಿಲ್ಲದ ಸ್ಥಾನವೇ ಇಲ್ಲ. ಈ ಮಾತನ್ನು ಸರ್ವಜ್ಞನು ಸುಂದರವಾಗಿ ಹಾಡಿದ್ದಾನೆ.

ಲಿಂಗಕ್ಕೆ ಕಡೆಯಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?

ಲಿಂಗದೊಳು ಜಗವು ಅಡಗಿಹುದು, ಲಿಂಗವನು

ಹಿಂಗಿದವರುಂಟೆ ಸರ್ವಜ್ಞ

ಲಿಂಗಕ್ಕೆ ಕಡೆ-ಮೊದಲಿಲ್ಲ, ಲಿಂಗವು ಸರ್ವತ್ರ ವ್ಯಾಪಿಸಿದೆ. ಅದುಕಾರಣ ಇದನ್ನು ಸಕಲರೂ ಗೌರವಿಸಲೇಬೇಕಾಗುವದು.

ವೀರಶೈವ ಚಿಂತಾಮಣಿಕಾರರು-

ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ |

ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯತೇ ||

ʼʼಲಿಂಗ ಮಧ್ಯದಲ್ಲಿ ಮೂರು ಲೋಕದ ಸಚರಾಚರ ಜಗತ್ತು ಅಡಕವಾಗಿದ್ದು ಆ ಲಿಂಗಕ್ಕಿಂತ ಭಿನ್ನವಾದ ವಸ್ತು ಯಾವುದೂ ಇಲ್ಲ, ಇಂಥ ಲಿಂಗಪೂಜೆ ಅವಶ್ಯ” ವೆಂದು ಪ್ರತಿಪಾದಿಸಿದ್ದಾರೆ.

ಲಿಂಗದಲ್ಲಿ ಸಕಲವೂ ವ್ಯಾಪಿಸಿದೆ. ಲಿಂಗವು ಕರದ ವರರತ್ನ. ಅಂತೆಯೇ-

ಏಕೇನ ವಿಜ್ಞಾತೇನ ಸರ್ವ೦ ವಿಜ್ಞಾತಂ ಭವತಿ | ತದ್ಬ್ರಹ್ಮ||ʼʼ

ಪರಾತ್ಪರವೆನಿಸಿದ ಏಕಮೇವ ವಸ್ತುವಿನ ಸಾಕ್ಷಾತ್ಕಾರದಿಂದ ಸಕಲ ವಸ್ತುಗಳ ಜ್ಞಾನ-ವಿಜ್ಞಾನಗಳು ತಿಳಿಯುವವು. ಅದುವೇ ಬ್ರಹ್ಮ (ಪರಬ್ರಹ್ಮ) ಎಂದು ಉದ್ಧಾಲಕ ಮುನಿಯು ದ್ವಾದಶವರ್ಷ ಅಧ್ಯಯನ ಮಾಡಿ ಮರಳಿದ, ಅಭಿಮಾನಿಯೆನಿಸಿದ. (ಪುತ್ರ) ಶ್ವೇತ ಕೇತುವಿಗೆ ತಿಳಿಯಪಡಿಸಿದಂತೆ ಈ ಲಿಂಗದ ವಿಜ್ಞಾನವನ್ನು ಅವಗತ ಮಾಡಿಕೊಂಡ ಭಕ್ತನು ಯಾವುದರ ಗೊಂದಲಕ್ಕೆ ಅವಕಾಶವೀಯುವುದಿಲ್ಲ. ಆ ಕರದಿಷ್ಟ ಲಿಂಗದಲ್ಲಿಯೇ ಸಕಲ ಸೌಭಾಗ್ಯ ಸನ್ನಿಹಿತವಾಗಿರುತ್ತದೆ.

 ಆನು ಕಾಮಿಸುತಿಪ್ಪ ಸಾಲೋಕ್ಯವಿದೆ.

 ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ.

ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,

ಎನ್ನ ಧ್ಯಾನದ ಜಪ-ತಪದಿಂದಲೇ ಸಿದ್ಧಿಯಪ್ಪ ಮಹಾಸಿದ್ಧಿಯಿದೆ,

ಆನೇನ ಇಚ್ಛೈಸುವ ಎಲ್ಲವೂ ಇದೆ ನೋಡಾ !

ಶ್ರೀಗುರು ಕಾರುಣ್ಯದಿಂದ ಮಹಾವಸ್ತು

ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ !

ಇನ್ನು ಬಯಲಭ್ರಮೆಯೊಳಗೆ ಹೊಗಿಸದಿರಯ್ಯಾ

ನಿಮ್ಮ ಬೇಡಿಕೊಂಬೆನು ನಿಮಗೆ ಎನ್ನಾಣೆ

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ

ಚತುರ್ವಿಧ ಮುಕ್ತಿಗಳು ಚತುರ್ವಿಧ ಪುರುಷಾರ್ಥಗಳು, ಶಿವಭಕ್ತರು ಬಯಸುವ ಸಕಲ ಪಡಿಪದಾರ್ಥಗಳು ಸಂಕಲ್ಪಗಳು ಕರದಿಷ್ಟಲಿಂಗದ ಧ್ಯಾನ ತಪಾದಿಗಳಿಂದ ಸುಲಭವಾಗಿ ಸಿದ್ಧಿಸುತ್ತವೆಂದ ಬಳಿಕ ಬಯಲು ಭ್ರಮೆಯಲ್ಲಿ ಮನ ಚಲಿಸದಂತಿರಿಸೆಂದು ಆಣೆಯಿಟ್ಟು ಬೇಡಿದ ಉರಿಲಿಂಗ ಪೆದ್ದಣ್ಣನ ಮಾತು ಮನನೀಯ ವಾಗಿದೆ.

ಈಶಾವಾಸ್ಯೋಪನಿಷತ್ತು ಲಿಂಗದ ಪರಿಪೂರ್ಣತೆಯನ್ನು ಉದ್ಘೋಶಿಸಿದೆ

ಓಂ ಪೂರ್ಣಮದಃ ಪೂರ್ಣಮಿದಂ

ಪೂರ್ಣಾತ್ ಪೂರ್ಣಮುದಚ್ಯತೇ ।

ಪೂರ್ಣಸ್ಯ ಪೂರ್ಣಮಾದಾಯ

ಪೂರ್ಣಮೇವಾವ ಶಿಷ್ಯತೇ ।।

ಓಂಕಾರರೂಪದ ಮಹಾಲಿಂಗವು ಪೂರ್ಣವಾಗಿದೆ. ಅದರಿಂದಾದ ಈ ಜಗವೂ ಪರಿಪೂರ್ಣವೇ ಆಗಿದೆ. ಪೂರ್ಣದಲ್ಲಿ ಪೂರ್ಣವನ್ನು ಬೆರೆತರೆ ಪೂರ್ಣವೇ ತಾನೇ ಉಳಿಯುವಂತೆ ಮಹಾಲಿಂಗ ಹಾಗೂ ಇಷ್ಟಲಿಂಗಕ್ಕೂ ಅಂತರವಿಲ್ಲ, ಆಚಾರಾದಿ ಲಿಂಗಗಳ ಆರಾಧನೆಯಿಂದ ಮಹಾಲಿಂಗದಲ್ಲಿ ಕೂಡಿ ಮಹಾಲಿಂಗವೇ ತಾನಾದ ಶರಣನು ಪೂರ್ಣನೆನಿಸುವನು.

 ಜಗತ್ತಿನಲ್ಲಿ ಕಾಣಬರುವ ಲಿಂಗಗಳಿಂದ ಈ ಲಿಂಗ ತತ್ತ್ವದ ವ್ಯಾಪಕತೆ ವೇದ್ಯವಾಗುವದು. ಕಾಶಿಯ ಶ್ರೀಬಾಬು ಶಿವಪ್ರಸಾದರು- “ಪೃಥ್ವಿ ಪ್ರದಕ್ಷಿಣೆ’ ಎಂಬ ಗ್ರಂಥದಲ್ಲಿ – ಮಿಸರದೇಶದಲ್ಲಿ ”ಅಸಿರಿಸ್” ಮತ್ತು ‘ಆಯಿಸಿಸ್” ಎಂಬ ಲಿಂಗವನ್ನೂ, ಗ್ರೀಸ್ ದೇಶದಲ್ಲಿ ಬೆಸಕ್’ ಮತ್ತು ‘ಪಿಯಸಸ್’ ಎಂಬ ಲಿಂಗವನ್ನೂ, ಸ್ಕಾಟಲೆಂಡದ ಗ್ಲಾಸಗೋ ಪಟ್ಟಣದಲ್ಲಿ ಸುವರ್ಣವಿಶಿಷ್ಟ ಲಿಂಗವನ್ನೂ, ಆಸ್ಟ್ರಿಯಾ, ಹಂಗೇರಿಯಲ್ಲಿ ತಂತ್ರಿಸ್ಟಕ ಎಂಬ ಲಿಂಗವನ್ನು, ಅಸೀರಿಯಾ ದೇಶದ ಬಿಲಸನಗರದಲ್ಲಿ ಮುನ್ನೂರು ಘನಹಸ್ತ ಪ್ರಮಾಣವುಳ್ಳ ಮಹಾಲಿಂಗವನ್ನೂ, ಅರಬಸ್ತಾನದಲ್ಲಿ ‘ಸಗೆ ಅನಬದ್’ ಅಂದರೆ ಮಕ್ಕೇಶ್ವರ ಲಿಂಗ (ಇದಕ್ಕೆ ಮುಸಲ್ಮಾನರು ಶ್ರದ್ಧಾಪೂರ್ವಕ ಚುಂಬನ ಕೊಡುತ್ತಾರೆ). ವನ್ನೂ, ಇರಾಣದಲ್ಲಿ ಜ್ವಾಲಾಮಯ ಲಿಂಗವನ್ನೂ, ಪೆರುದೇಶದಲ್ಲಿ ‘ಪಾರ್ಥಿವೇಶ್ವರ” ಲಿಂಗವನ್ನೂ, ಅಮೇರಿಕೆಯ ಪೆಂಬ್ರುಕೋ ಪಟ್ಟಣದಲ್ಲಿ “ದ್ವಿಮುಖ” ಲಿಂಗವನ್ನೂ, ಅಮೇರಿಕೆಯ ಟೆನ್ನಿ ಪಟ್ಟಣದಲ್ಲಿ ಘನಲಿಂಗವನ್ನೂ, ಇಂದಿಗೂ ಆ ಭಾಗದ ಜನರು ಪೂಜಿಸುತ್ತಿದ್ದಾರೆ” ಎಂದು ಲಿಂಗಪೂಜೆಯ ವಿಶ್ವವ್ಯಾಪಕತೆಯನ್ನು ವಿವರಿಸಿದ್ದಾರೆ.

 ಉತ್ತರ ಪ್ರದೇಶದ ಗೋರಖಪುರದಿಂದ ಪ್ರಕಟವಾಗುವ ‘ಕಲ್ಯಾಣ’ ಮಾಸ ಪತ್ರಿಕೆಯ ‘ಶ್ರೀ ಶಿವಾಂಕ” ವೆಂಬ ವಿಶೇಷಾಂಕವನ್ನು ಸನ್ ೧೯೩೩ ರಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಲಿಂಗತತ್ತ್ವದ ಪುರಾತನತೆಯನ್ನು ಮತ್ತು ವಿಶ್ವವ್ಯಾಪಕತೆಯನ್ನು ಅವಲೋಕಿಸಬಹುದು. ಭಾರತೀಯ ಇತಿಹಾಸಕಾರರು ಮತ್ತು ಪುರಾತತ್ತ್ವ ಸಂಶೋಧಕರು ಸಂಗ್ರಹಿಸಿದ ಸಿಂಧೂ ನದಿಯ ಹರಪ್ಪಾ ಮತ್ತು ಮೆಹಂಜೋದಾರದ ಅವಶೇಷಗಳಲ್ಲಿ ಉಪಲಬ್ಧವಾದ ಲಿಂಗಗಳಿಂದ ಲಿಂಗ ಸಂಸ್ಕೃತಿಯ ೪-೫ ಸಾವಿರ ವರುಷ ಪೂರ್ವದ್ದೆಂದು ತಿಳಿದು ಬರುತ್ತದೆ.

ಮೇಲಿನ ಇತಿಹಾಸ ಸ್ಥಾವರ ಲಿಂಗಕ್ಕೆ ಸೀಮಿತವಾದುದು. ಸಿಂಧೂ ಸಂಸ್ಕೃತಿ ಯಲ್ಲಿ ಮಾತ್ರ ಇಷ್ಟಲಿಂಗದ ಅವಶೇಷ ಸಿಕ್ಕುತ್ತದೆ. ಬೃಹತ್ತಾದ, ಹಾಗೂ ಸ್ಥಾವರತ್ವವನ್ನು ಹೊಂದಿದ ಲಿಂಗವನ್ನು ಅಧ್ಯಾತ್ಮಿಕವಾಗಿ ಇಷ್ಟಲಿಂಗವನ್ನಾಗಿ ಅಳವಡಿಸಿಕೊಡುವ ಸದ್ಗುರುವು ಸಾಮಾನ್ಯನಲ್ಲ.  ಅಂತರಂಗದ ಅರುಹಿನ ಕುರುಹೆನಿಸಿದ ಕರದಿಷ್ಟ ಲಿಂಗವನ್ನು ಶರೀರದಿಂದ ಅಗಲದಂತಿರಿಸಬೇಕು. ಅಂದರೆ ಸದಾ ಲಿಂಗದೇವನ ಸಹವಾಸದಲ್ಲಿ ಲಿಂಗಗುಣಗಳು ಮೈಗೂಡುತ್ತವೆ.

ಇಷ್ಟ-ಪ್ರಾಣ-ಭಾವಲಿಂಗಗಳನ್ನು ಸತ್ಕ್ರಿಯಾ-ಸುಜ್ಞಾನ ಪೂರ್ವಕ ಸಂಪೂಜಿಸಿ ಸ್ಥೂಲ-ಸೂಕ್ಷ್ಮ-ಕಾರಣವೆಂಬ ಶರೀರತ್ರಯ ರೂಪ ತ್ರಿವಿಧ ಲೋಕದಲ್ಲಿಯೂ ಆ ಲಿಂಗಗಳು ವ್ಯಾಪಿಸುವಂತೆ ಮಾಡಿಕೊಳ್ಳಬೇಕು. ಅರ್ಥಾತ್, ತ್ರಿವಿಧ ತನುಗಳಿಗೆ ಸಂಬಂಧಿಸಿದ ತ್ರಿವಿಧ ಲಿಂಗಗಳ ಅನುಸಂಧಾನವನ್ನು ಸಾಧಿಸಿ ಲಿಂಗಸ್ವರೂಪನೇ ತಾನಾಗಬೇಕು. ಇದುವೇ ಶ್ರೀಗುರುವಿನ ಕೃಪೆಯ ಸತ್ಪಲವೆನಿಸುವದು.

ಆದಿ ಪೀಠವೆ ಗುರು ಮೇ | ಲಾದ ಪೀಠವೆ ಲಿಂಗ ಅ-

ನಾದಿ ಗೋಮುಖವೆ-ಮೋದ ಜಂಗಮವೆಂದು

ಭೋಧಿಸಿದ ಗುರುವೆ ಕೃಪೆಯಾಗು      || ೧೧೨ ॥

ಪರಶಿವನ ಸಾಕ್ಷಾತ್ ಸ್ವರೂಪವೇ ಲಿಂಗವಾಗಿರವುದೆಂಬುದನ್ನು ಅರಿತಾಯಿತು. ಪರಶಿವನು ನಿಷ್ಕಲನು; ನಿರ್ಗುಣನು. ಲಿಂಗದಲ್ಲಿ ಸಕಲ ನಿಷ್ಕಲತೆಯಿದೆ. ಸಗುಣ ನಿರ್ಗುಣತ್ವವಿದೆ. ಶಿವನು ಭಕ್ತೋದ್ಧಾರಕ್ಕಾಗಿ ತ್ರಿವಿಧ ರೂಪವನ್ನು ಧರಿಸಿದ್ದಾನೆ. ಗುರು-ಲಿಂಗ-ಜಂಗಮರೇ ತ್ರಿಮೂರ್ತಿಗಳು. ವೀರಶೈವರಿಗೆ ಇವು ಪರಮ ಪೂಜನೀಯ ವಸ್ತುಗಳು. ಇವರನ್ನು ಬಿಟ್ಟು ಬೇರೆ ಪೂಜ್ಯರಿಲ್ಲ ವೀರಶೈವರಿಗೆ ಅದು ಕಾರಣ ತನ್ನಂಗೈಯಲ್ಲಿ ಕಾಣುವ ಲಿಂಗದಲ್ಲಿಯೂ ಗುರು-ಜಂಗಮರ ಸ್ವರೂಪವು ಸುಪ್ತವಾಗಿರುತ್ತದೆ.

 “ಸಚ್ಛಿದಾನಂದಂ ಬ್ರಹ್ಮ’ ” ಸತ್ ಚಿತ್ ಆನಂದವೇ ಬ್ರಹ್ಮವೆಂಬ ಶೃತಿ ವಾಕ್ಯದಂತೆ ಲಿಂಗದ ಆದಿ ಪೀಠವು ಅಂದರೆ ಲಿಂಗದ ಕೆಳಗಿನ ಭಾಗವು ಸತ್ ಸ್ವರೂಪನಾದ ಗುರು ರೂಪವಾಗಿದೆ. ಅರ್ಥಾತ್ ಗುರುವು ಲಿಂಗವನ್ನು ಸೃಷ್ಟಿಸುವವನು. ಗುರು ಲಿಂಗಕ್ಕೆ

ಆಧಾರನಾಗಿದ್ದಾನೆ. (ಲಿಂಗದ) ಮೇಲಿರುವ ಬಾಣವು ಅಥವಾ ಲಿಂಗವು ಚಿತ್ ಸ್ವರೂಪವಾಗಿದೆ. ಅನಾದಿ ಗೋಮುಖವು ಆನಂದದಾಯಕನಾದ ಜಂಗಮ ಸ್ವರೂಪವೆನಿಸಿದೆಯೆಂದು ಗುರುವರನು ಬೋಧಿಸುತ್ತಾನೆ.   

ಈ ಕೃತಿಕರ್ತರ ಸಮಕಾಲೀನರೂ, ಶರಣ ಸಹೋದ್ಯೋಗಿಗಳೂ ಚನ್ನ ವೀರೇಶ್ವರ ಯತಿಗಳ ಪರಮ ಶಿಷ್ಯರೂ ಆದ ಬನ್ನಿಮಟ್ಟಿ ಚನ್ನಪ್ಪನವರು ತಮ್ಮ’ಶಿವಾನುಭವ ದೀಪಿಕೆ” ಯಲ್ಲಿ ಇದೇ ಅರ್ಥವನ್ನು,

ಲಿಂಗದಡಿ ಪೀಠ ಶ್ರೀಗುರು |

ಲಿಂಗದ ಮೇಲೂರ್ಧ್ವಪೀಠ ಚಿದ್ಘನಲಿಂಗ ||

ಲಿಂಗದ ಗೋಮುಖ ಜಂಗಮ |

ಲಿಂಗವೆ ಕೂಡಲ ಸಂಗಂ ಬಸವ ಪ್ರಭುವೆ || ೨೮೯ |

ಎಂದು ಪುಷ್ಟಿಕರಿಸುವಂತೆ ಬಣ್ಣಿಸಿರುತ್ತಾರೆ.

ಗುರು-ಜಂಗಮರ ಸಾನಿಧ್ಯವಿಲ್ಲದ ಸಮಯಕ್ಕೆ ಕೇವಲ ಕರದಿಷ್ಟಲಿಂಗವನ್ನು ಪೂಜಿಸಿದರೂ ತ್ರಿವಿಧ ಪೂಜ್ಯರ ಪೂಜೆ ಪೂರೈಸಿದಂತಾಗುವದು. ಈ ತ್ರಿವಿಧ ಪೂಜ್ಯ ವಸ್ತುಗಳು ಅವಿಭಾಜ್ಯ ಅಂಗಗಳು. ಇವು ಒಂದಕ್ಕೊಂದು ಆಶ್ರಯಿಸಿವೆ. ಅದು ಕಾರಣ ಈ ಬೋಧೆಯನ್ನು ಮನದಲ್ಲಿ ಅಳವಡಿಸಿಕೊಂಡು ತ್ರಿವಿಧ ಪೂಜ್ಯ ವಸ್ತುಗಳ ಪೂಜೆ ಮಾಡಿದ ಆನಂದವನ್ನು ಹೊಂದಬೇಕು. ಅಂದರೆ ಮಾತ್ರ ಗುರುಬೋಧೆ ಯಥಾರ್ಥ ವಾಗುವದು

ಅಡಿಯ ಪೀಠವೆ ಇಷ್ಟ | ಮುಡಿಯ ಪೀಠವೆ ಪ್ರಾಣ

ನಡುವಣ ಗೋಮುಖ-ದೃಢ ಭಾವ ಲಿಂಗವೆಂ-

ದೊಡನುಸಿರ್ದ ಗುರುವೆ ಕೃಪೆಯಾಗು     II ೧೧೩ II

ಲಿಂಗದ ಅಡಿಯು ಪೀಠವು, (ಕೆಳಭಾಗ) ಇದು ಲಿಂಗಕ್ಕೆ ಪಾದವಾಗಿದೆ. ಲಿಂಗದ ಪಾದವು ಕ್ರಿಯಾಸ್ವರೂಪವು. ಲಿಂಗದ ಮೇಲಿನ ಪೀಠವು ಮುಡಿಯು ಅಂದರೆ ಮಸ್ತಕವು. ಇದು ಜ್ಞಾನದ ಸಂಕೇತವು. ಜ್ಞಾನವು ಮಸ್ತಕದಲ್ಲಿರುವದು ಸರ್ವರಿಗೂ ಅರಿತ ವಿಷಯ. ಜ್ಞಾನ ಕ್ರಿಯೆಗಳ ವ್ಯಾಖ್ಯಾನದಲ್ಲಿ ಪಾದಕ್ಕೆ ಕ್ರಿಯೆಯ ಉಪಮೆಯನ್ನು ಜ್ಞಾನಕ್ಕೆ ಮುಡಿಯ ಮಾತನ್ನು ಮಹಾನುಭಾವಿಗಳು ಮಾರ್ನುಡಿದಿದ್ದಾರೆ. ಕ್ರಿಯೆಗೆ ಜ್ಞಾನವೇ ಪ್ರಾಣವು. ಪ್ರಾಣವಿಲ್ಲದ ಶರೀರ ಶವವಾಗುವಂತೆ; ಜ್ಞಾನಶೂನ್ಯವಾದ ಕ್ರಿಯೆಯು ಜಡವಾಗುತ್ತದೆ. ಕ್ರಿಯಾ-ಜ್ಞಾನಗಳ ಸಮನ್ವಯದಲ್ಲಿ ಭಾವ ಅಥವಾ ಅನುಭಾವ ಅನುಗೂಡುತ್ತದೆ. ಆದ್ದರಿಂದ ಅಡಿಪೀಠ  ಇಷ್ಟಲಿಂಗವಾದರೆ ಮುಡಿಪೀಠ ಪ್ರಾಣಲಿಂಗವಾಗುತ್ತದೆ. ನಡುವಿನ ಗೋಮುಖವು ದೃಢತರವಾದ ಭಾವ ಲಿಂಗವಾಗಿ ಪರಿಣಮಿಸುವದು.

ಕ್ರಿಯಾ ಜ್ಞಾನಗಳ ಸಮ-ಸಮುಚ್ಚಯದಲ್ಲಿ ಅನುಭಾವ ಬೆಳೆಯುವದು. ಈ ರೀತಿಯಾಗಿ ಕರದಿಷ್ಟಲಿಂಗದಲ್ಲಿ ಪ್ರಾಣ-ಭಾವಲಿಂಗಗಳು ಸೇರಿ ತ್ರಿವಿಧ ಬಗೆಯಾಗಿದ್ದ ಪರಿಯನ್ನು ಶ್ರೀಗುರುವರನು ಉಸುರುತ್ತಾನೆ. ಕ್ರಿಯಾಜ್ಞಾನಗಳು ಸಂಬಂಧವಾಗಿ ಆಚರಣೆಯಲ್ಲಿ ಅಳವಟ್ಟರೆ ಭಾವಬಲಿಯುವದು. ಭಾವ ದೃಢವಾದರೆ ಆ ಕ್ರಿಯಾಲಿಂಗ (ಇಷ್ಟಲಿಂಗ) ಹಾಗೂ ಜ್ಞಾನ (ಪ್ರಾಣ) ಲಿಂಗಗಳು ಭಾವ ಲಿಂಗದಲ್ಲಿ ಒಂದುಗೂಡುವವು. ಅದು ಕಾರಣವೇ ಶಿವಕವಿಯು ಭಾವಕ್ಕೆ ದೃಢ ಭಾವವೆಂದು ಸ್ಪಷ್ಟಪಡಿಸಿರುವನು. “ಭಾವದಲ್ಲಿ ಬ್ರಹ್ಮವೆಂಬ ಮಾತನ್ನು ಅನುಭಾವಿಗಳೂ ಹೇಳಿದ್ದುಂಟು. “ಯಥಾ ಭಾವಸ್ತಥಾ ಸಿದ್ಧಿರ್ಭವತಿ”, ಶುದ್ಧಭಾವದಂತೆ ಸಿದ್ಧಿಯು ಸಂಭವಿಸುವದೆಂದು ಜ್ಞಾನಿಗಳೂ ಪ್ರತಿಪಾದಿಸಿರುವರು.

 ಮೂಢ ಮನುಷ್ಯನ ಭಾವದಲ್ಲಿ ದೃಢತೆಯಿರುತ್ತದೆ. ಗುರುವಾಕ್ಯದಲ್ಲಿ ಶ್ರದ್ಧೆ- ವಿಶ್ವಾಸಗಳು ಘಟ್ಟಿಗೊಂಡಿರುತ್ತವೆ. ಅಂತೆಯೇ ಮುಗ್ಧ ಭಕ್ತನು ಕಲ್ಲನ್ನೂ ದೇವನನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ವಿಪುಲವಾಗಿವೆ. ಹಾಲುಮತದ ಗೊಲ್ಲಾಳನು ಕುರಿಯ ಹಿಕ್ಕಿಯಲ್ಲಿ ಶಿವಲಿಂಗವನ್ನು ಕಂಡನು. ಬೇಡರ ಕಣ್ಣಪ್ಪನ ದೃಢ ಭಾವಕ್ಕೆ ಶಿವನು ದೃಢತರ ಪದವಿಯನ್ನಿತ್ತನು. ಅರವತ್ತುಮೂರು ಪುರಾತನರ ಚರಿತ್ರೆಗಳಲ್ಲಿ ಭಾವದೃಢತೆಯೂ ಮತ್ತು ಆತ್ಮಸಮರ್ಪಣೆಯೂ ಪ್ರಮುಖವಾಗಿದೆ. ಭಾವಜೀವಿಯು ಆನಂದಮಯನಾಗಿರುತ್ತಾನೆ. ವಿಮರ್ಶಕನ ಭಾವದಲ್ಲಿ ದೃಢತೆಯಿರುವದಿಲ್ಲ. ಅವನಲ್ಲಿ ಪ್ರತಿಯೊಂದನ್ನು ಪರೀಕ್ಷಿಸುವ ಚಿಕಿತ್ಸಕ ಬುದ್ಧಿ-ಭಾವಗಳು ನೆಲಸಿರುತ್ತವೆ.

 ಶರಣರು ಕೇವಲ ಭಾವ ಜೀವಿಗಳಲ್ಲ, ಕೇವಲ ಜ್ಞಾನಿಗಳಲ್ಲ. ಕರ್ಮಠರೂ ಅವರಲ್ಲ, ಅವರು ಕ್ರಿಯಾ-ಜ್ಞಾನಗಳ ಸಮ್ಮಿಲನದಲ್ಲಿ ಸಮರಸಾನಂದದ ಸವಿಯುಂಡರು ಸಂತಸಪಟ್ಟರು. ಇದುವೇ ಲಿಂಗಾನುಸಂಧಾನದ ಅರಿವು, ಅನುಭಾವದ ಕುರುಹು.

 ಇಂಥ ಕ್ರಿಯಾ-ಜ್ಞಾನ-ಭಾವಗಳ ಮುಪ್ಪುರಿಯೇ ಈ ದೃಷ್ಟಿಲಿಂಗವೆಂದು ಬೋಧಿಸಿದ ಸದ್ಗುರುವೆ ! ಅದರಂತಜ್ಞಾನಸವಿಯನ್ನು ಸವಿಯುವ ಸೌಭಾಗ್ಯವನ್ನು ಸಮನಿಸು.

ಮೊದಲ ಪೀಠವೆ ಸ್ವಯ | ತುದಿಯ ಪೀಠವೆ ಚರ ಮ-

ಧ್ಯದ ಗೋಮುಖ ಪರತತ್ತ್ವ ಜಂಗಮವು ಎಂ

ಬುದ ಪೇಳ್ದ ಗುರುವೆ ಕೃಪೆಯಾಗು     ||೧೪  ||

ಲಿಂಗವು ಇಷ್ಟ-ಪ್ರಾಣ-ಭಾವವೆಂದು ತ್ರಿವಿಧವಾಗಿರುವಂತೆ ಲಿಂಗದ ಹರಣ ವಾದ ಜಂಗಮವೂ ಮೂಬಗೆಯಾಗಿದೆ. ಜಂಗಮದಲ್ಲಿ ಸ್ವಯಜಂಗಮನೆಂತಲೂ ಚರಜಂಗಮನೆಂತಲೂ, ಪರಜಂಗಮನೆಂತಲೂ, ಮೂರು ವಿಧ. ಈ ಮೂವರ ಸ್ವಸ್ವರೂಪ ಲಕ್ಷಣವನ್ನು ಶಿವಕವಿಯು ಮುಂದೆ ಜಂಗಮತತ್ತ್ವವನ್ನು ಪ್ರತಿಪಾದಿಸುವ ಅವಸರದಲ್ಲಿ ವರ್ಣಿಸಿದ್ದಾನೆ. ಲಿಂಗಪೂಜೆಯ ಫಲ ಜಂಗಮನ ಸಾಕ್ಷಾತ್ಕಾರ; ಹಾಗೂ ಪಾದೋದಕ-ಪ್ರಸಾದಗಳು.

  ಸಾಮಾನ್ಯವಾಗಿ ಯಾವುದೊಂದು ವಸ್ತುವಿನ ಯಥಾರ್ಥ ಸ್ವರೂಪವನ್ನು ಅರಿಯುವಾಗ ಆದ್ಯಂತಗಳನ್ನು ಅವಲೋಕಿಸುತ್ತೇವೆ. ಕೆಳಗೆ ಮತ್ತು ಮೇಲೆ ನೋಡುತ್ತೇವೆ. ಅದರೊಳಗಿನ ಗುಣವನ್ನು ಪರೀಕ್ಷಿಸಬೇಕಾಗುವದು. ಕಾರಣ ಪೃಥ್ವಿಯಲ್ಲಿ ಸ್ಥೂಲವಾಗಿ ವ್ಯಾಪಿಸಿರುವದನ್ನು ನೋಡುತ್ತೇವೆ. ಆ ಮೇಲೆ ಅದು ಏನೆಂಬುದನ್ನು ವಿಚಾರಿಸಲು ಮೇಲೆ ನೋಡುತ್ತೇವೆ. ಉದಾಹರಣೆಗಾಗಿ ಒಂದು ವನವನ್ನು ಪ್ರವೇಶಿಸುತ್ತ ಗಿಡಗಳ ಬೊಡ್ಡೆಗಳನ್ನು ಕಾಣುತ್ತೇವೆ. ಇದು ಯಾವ ಮರವೆಂಬ ವಿಚಾರ ಸುಳಿಯುತ್ತಲೇ ಮೇಲೆ ಅವಲೋಕಿಸಿ ಅರ್ಥೈಸಿಕೊಳ್ಳುತ್ತೇವೆ. ಇನ್ನು ಮಧ್ಯಭಾಗವು ಎರಡನ್ನು ಸಮನ್ವಯಗೊಳಿಸುವದು. ಹಾಗೆ, ಲಿಂಗದಲ್ಲಿ ಮೊದಲ ಪೀಠವು ಸ್ಥಾಯಿಯಾಗಿ (ಮೇಲಿನ ಬಾಣಕ್ಕೆ ಆಧಾರವಾಗಿ) ರುವದರಿಂದ ಅದು ಸ್ವಯ ಜಂಗಮವೆನಿಸುವದು. ಲಿಂಗಭಕ್ತನು ಲಿಂಗಪೂಜೆಯಲ್ಲಿ ತನ್ನ ದೃಷ್ಟಿ ಮನಗಳನ್ನು ಲಿಂಗದ ತುದಿಯ ಮೇಲಿರಿಸುವದರಿಂದ ಅದು ಚರಜಂಗಮವೆನಿಸುವದು. ಯಾಕಂದರೆ ಲಿಂಗದಲ್ಲಿ ದೃಷ್ಟಿ-ಮನಗಳು ಸಂಚಲನೆಗೊಳ್ಳುತ್ತಿರುವದರಿಂದ ಅದು ಚರಜಂಗಮವಾಗಿದೆ. ಮೊದಲ ಭಾಗ ಹಾಗೂ ತುದಿಗಳ ಅವಲೋಕನಯಲ್ಲಿ ಮಧ್ಯದ ಗೋಮುಖವು. ಮೇಲಿನವೆರಡೂ ಕ್ರಿಯೆಗಳಿಗೆ ಸಮನ್ವಯಗೊಂಡು ಪರವಾಗಿರುವುದರಿಂದ ಅದು ಪರಜಂಗಮವೆನಿಸುವದು. ಪರಜಂಗಮನು ಸ್ವಯ ಚರಜಂಗಮತ್ವದ ಕ್ರಿಯೆಗಳನ್ನು ಆಚರಿಸಿ ಮುಕ್ತನೆನಿಸುವನು. ತನ್ನ ಲಿಂಗಾನಂದದಲ್ಲಿಯೇ ತಲ್ಲೀನನಾಗಿರುವನು. ಅದು ಕಾರಣ ಪರತರವಾದ ಈ ಇಷ್ಟಲಿಂಗದಲ್ಲಿ ಲಿಂಗದ ಪ್ರಾಣವೆನಿಸಿದ ಜಂಗಮವು ಸ್ವಯ-ಚರ-ಪರವೆಂದು ಮೂಬಗೆಯಾಗಿ ಅಡಕವಾಗಿದೆಯೆಂಬ ತತ್ತ್ವವನ್ನು ಗುರುನಾಥನು ತಿಳಿಸಿಕೊಡುತ್ತಾನೆ.

ಗುರು-ಲಿಂಗ-ಜಂಗಮವು | ವರಭಾವ ಪ್ರಾಣೇಷ್ಟ

ಸ್ಥಿರ-ಚರ-ಪರ ಮೂರು-ಕರದಿಷ್ಟಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೫ ||

ಬಸವಲಿಂಗ ಶರಣರು ಶ್ರೇಷ್ಠದಾರ್ಶನಿಕರು, ಹಾಗೂ ಅನುಭಾವಿ ಕವಿಗಳು. ಅಂತೆಯೇ ಶಿವಾನುಭವವನ್ನು ತಿಳಿಯಲಿಚ್ಛಿಸುವ ಜಿಜ್ಞಾಸುವಿಗೆ ಪ್ರತಿಯೊಂದು ವಿಷಯವನ್ನು ಹಿಂಜಿ-ಹಿಂಜುವ ಜೊತೆಗೆ ಸಿಂಹಾವಲೋಕನವನ್ನು ಆಗಾಗ್ಗೆ ಮಾಡಿಸುತ್ತಾರೆ. ವನರಾಜನಾದ ಸಿಂಹವು ತಾನು ನಿಂತಲ್ಲಿಂದಲೇ ಹಿಂದಿನದನ್ನು ಮುಂದಿನದನ್ನೂ ಅವಲೋಕಿಸುತ್ತದೆ. ಧೀರನಾದವನು ಹಿಂದೆ ಅನುಭವಿಸಿದ ಅನುಭವವನ್ನು ಮೆಲುಕು ಹಾಕುತ್ತ ಮುಂದೆ ಸಾಧಿಸಬೇಕಾದುದನ್ನು ಆಲೋಚಿ ಸುತ್ತಾನೆ. ಹಿಂದಿನ ಅನುಭವವನ್ನು ಸಿಂಹಾವಲೋಕನಗೈಯುತ್ತಾನೆ. ಮೇಲಿನ ಕ್ಲಾಸಿಗೆ ಮುಂದು ವರೆಯುವ ವಿದ್ಯಾರ್ಥಿಯು ಹಿಂದಿನ ಅಭ್ಯಾಸವನ್ನು ಅವಲೋಕಿಸುತ್ತಿರ ಬೇಕು. ಬುನಾದಿ ಭದ್ರವಾಗಿದ್ದರೆ ಭವನವು ಭದ್ರವಾಗುವದು. ಕಾರಣ ಸಾಧಕನು ಮುಂದುವರಿಯಲು ಹಿಂದಿನ ಸತ್ಕ್ರಿಯೆಗಳನ್ನು ಬಿಡದಂತೆ ಆಚರಿಸುತ್ತಿರಬೇಕು. ಮತ್ತು ಪೂರ್ವದ ಶಾಸ್ತ್ರ ಶ್ರವಣವನ್ನು (ಹಿಂದಿನ ಪ್ರಕ್ರಿಯೆಯನ್ನು ಮನದಲ್ಲಿಟ್ಟುಕೊಂಡರೆ ಮುಂದಣ ಅನುಭವವು ಗಮ್ಯವಾಗುವದು.

 ಶಿವಕವಿಯು ಆಗಾಗ್ಗೆ ಹಿಂದೆ ಹೇಳಿದ ವಿಷಯವನ್ನು ಅಲ್ಲಲ್ಲಿ ಸಮಾಹಾರ ಮಾಡುತ್ತಾನೆ. ಲಿಂಗದಲ್ಲಿ ಗುರು-ಲಿಂಗ-ಜಂಗಮವೆಂಬ ತ್ರಿವಿಧ ಪೂಜ್ಯವಸ್ತುಗಳು ವ್ಯಾಪಿಸಿರುವಂತೆ ಭಾವಲಿಂಗ-ಪ್ರಾಣಲಿಂಗ ಇಷ್ಟಲಿಂಗಗಳು ಒಂದಕ್ಕೊಂದು ಹೊಂದಿಕೊಂಡಿವೆ. ಜೊತೆಗೆ ಲಿಂಗದ ಚಿತ್ಕಳೆಯೆನಿಸಿದ ಸ್ವಯಜಂಗಮ, ಚರಜಂಗಮ, ಪರಜಂಗಮದ ಭಾವ ಭರಿತವಾಗಿದೆ.

 ಬ್ರಹ್ಮಾಂಡಗಳ ಮಹಾಲಿಂಗದಲ್ಲಿ ಹುದುಗಿಕೊಂಡಿದ್ದ ಶಕ್ತಿ ಚಿತ್ಕಳಾರೂಪ ಕರದಿಷ್ಟ ಲಿಂಗದಲ್ಲಿ ಅಡಗಿದೆ. ಲಿಂಗದೊಳಗೆ ಎಲ್ಲವೂ ಅಡಗಿದ್ದು ಸಕಲರಲ್ಲಿ ಲಿಂಗದ ವ್ಯಾಪಕತೆಯಿರುವಂತೆ, ಇಷ್ಟಲಿಂಗದಲ್ಲಿ ಶಿಷ್ಯನ ಸಕಲ ಚೈತನ್ಯವು ಹುದುಗಿಕೊಂಡು ಶಿಷ್ಯನಲ್ಲಿ ಪರಿಪೂರ್ಣವಾಗಿ ಲಿಂಗದ ಚೇತನ ಪಸರಿಸಿಕೊಂಡಿರುತ್ತದೆ. ಇಂಥ ಲಿಂಗದಲ್ಲಿ ಪೂಜ್ಯ ವಸ್ತುಗಳ ಸಮಾವೇಶ ಸಮನಿಸಿದೆ. ಯಾಕೆಂದರೆ ಪರಾತ್ಪರ ಪರವಸ್ತುವೇ ಸಕಲನೆನಿಸಿ ಗುರುವಾಗಿ ಲಿಂಗವನ್ನೀಯುತ್ತಾನೆ. ಅರುಹಿನ ಕುರುಹಾಗಿ ಚಿಚ್ಚೈತನ್ಯವೆನಿಸಿದ ಲಿಂಗವು ಪೂಜೆಗೊಳ್ಳುತ್ತದೆ. ಲಿಂಗಕ್ಕೇನೆ ಚೇತನವೆನಿಸಿದ ಜಂಗಮನ ಕೃಪೆಯೂ ಅತ್ಯವಶ್ಯ. ಆದುದರಿಂದ ಲಿಂಗದಲ್ಲಿ ತ್ರಿವಿಧ ವಸ್ತುಗಳ ಅಭಿನ್ನತೆಯಿದೆ. ಲಿಂಗಭಕ್ತನು ಈ ತ್ರಿವಿಧ ಪೂಜ್ಯರನ್ನು ಭಿನ್ನವಾಗಿ ಕಾಣಬಾರದು. ಅದರಲ್ಲೂ ಲಿಂಗದ ಚೈತನ್ಯನೆನಿಸಿದ ಜಂಗಮನ ತ್ರಿವಿಧ ರೂಪಗಳನ್ನೂ ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಇಂಥ ಅಪ್ರತಿಮ ಸ್ವರೂಪದ ಲಿಂಗವು ಅಸದೃಶವಾದುದು. ಅನುಪಮವಾದುದು.

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3

ಜ.ಚ.ನಿ

ಹಿನ್ನೆಲೆ

ಸುಮಾರು ಎಂಬತ್ತು ಅಥವಾ ನೂರು ವರ್ಷಗಳ ಹಿಂದೆ ವೀರಶೈವ ಸಮಾಜವು ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ಪಕ್ಕಾಗಿತ್ತು. ನಾಡಿಕ್ರಿಯೆಗಳು ನಿಲ್ಲುತ್ತ ಬಂದಿದ್ದವು. ಸಮಾಜವು ಶೈವಸಂಪ್ರದಾಯಕ್ಕೆ ಕಟ್ಟುಬಿದ್ದಿತ್ತು. ಒಂದೆಡೆಗೆ

ನಿರಾಚಾರಗಳು ಇನ್ನೊಂದೆಡೆಗೆ ಅನಾಚಾರಗಳು ಹೆಚ್ಚಿಹೋಗಿದ್ದವು. ಅತ್ಯಾಚಾರಗಳು ಅತಿಯಾಗಿದ್ದವು. ಗುರುಗಳು ತಮ್ಮ ಗೊತ್ತುಗುರಿಗಳನ್ನು ಮರೆತಿದ್ದರು. ಲಿಂಗಗಳು ಅಂಗಗಳಿಂದ ಅಗಲಿ ಮನೆಯ ಜಗುಲಿಗಳ ಏರಿದ್ದವು. ಪಂಚಸೂತ್ರದ ಮಾತು

ಸೂತಕವಾಗಿತ್ತು. ಪವಿತ್ರ ಶಿಲೆಯ ಬದಲು ಅಪವಿತ್ರ ಮಣ್ಣು ಮಟ್ಟೆಯ ಶಿಲೆಯು ಸಾಕ್ಷಿಯಾಗಿತ್ತು. ಜಂಗಮರು ತತ್ವಹೀನರಾಗಿ ತುತ್ತಿಗಾಗಿ ಅಲೆಯುತ್ತಿದ್ದರು. ಭಸ್ಮ ಭಸ್ಮವಾಗಿತ್ತು. ಮಣ್ಣು ಮಟ್ಟೆಗಳಿಂದ ಸಿಕ್ಕ ಬೂದಿ ಬೆರಣಿಗಳಿಂದ ಭಸ್ಮಗಳು ಸಿದ್ಧವಾಗುತ್ತಿದ್ದವು. ರುದ್ರಾಕ್ಷಿಗಳ ಧರಿಸುವುದೊಂದೆಡೆಗಿರಲಿ, ಕಂಡವರೆ ಇರಲಿಲ್ಲ. ಮಠಮಾನ್ಯಗಳಲ್ಲಿಯೆ ಕಾಣುವುದು ಅಪರೂಪವಾಗಿತ್ತು. ಮಂತ್ರೋಚ್ಛಾರಣೆ ಮಾಯವಾಗಿತ್ತು. ಸಂಸಾರ ಚಿಂತೆ ಮಿತಿಮೀರಿತ್ತು. ಎಲ್ಲಿಯೊ ಯಾರಾದರು ಕೆಲವರು

ಮಂತ್ರ ಜಪ ಮಾಡುತ್ತಿದ್ದರೆ ಅವರಿಗೆ ಅದರ ಅರ್ಥವೇನು, ಮರ್ಮವೇನು, ಹೇಗೆ  ಜಪಿಸಬೇಕು ಎಂಬುದೇ ತಿಳಿದಿರಲಿಲ್ಲ. ಪಾದೋದಕ ವಿಧಿ-ವಿಧಾನಗಳನ್ನು ಅರಿತವರಿರಲಿಲ್ಲ. ಪ್ರಸಾದ ಪ್ರಭಾವ ಕುಂದಿತ್ತು. ಪಂಚಾಚಾರಗಳ ಪ್ರಾಣ ತ್ರಾಣಗಳ ಸುಳಿವಿರಲಿಲ್ಲ.

 ಭಕ್ತರು ಶ್ರದ್ಧೆಗೆ ಮಹೇಶ್ವರರು ನಿಷ್ಠೆಗೆ ಪ್ರಸಾದಿಗಳು ಅವಧಾನಕ್ಕೆ ತಿಲಾಂಜಲಿಯ ಬಿಟ್ಟಿದ್ದರು. ಪ್ರಾಣಲಿಂಗಿಗಳಿಗೆ ಆನಂದದ ಸೊಗಸು ಸೋಂಕಿರಲಿಲ್ಲ. ಶರಣರಿಗೆ ಅನುಭಾವದ ಗಂಧವೇ ಗೊತ್ತಿರಲಿಲ್ಲ. ಐಕ್ಯರು ಅಲ್ಲಲ್ಲಿ ಒಬ್ಬೊಬ್ಬರು ಮಿಣುಗುತ್ತಿದ್ದರು. ಆದರೆ ಸಮಾಜದ ಸಾಮರಸ್ಯ ಅವರಿಗಿರಲಿಲ್ಲ. ಇದ್ದರೂ ಸಾಮಾಜಿಕ ಕುಂದುಕೊರತೆಗಳನ್ನು ಪೂರೈಸುವ ಕ್ರಿಯಾಶಕ್ತಿ ಅವರಲ್ಲಿರಲಿಲ್ಲ. ಜ್ಞಾನಪ್ರಚಾರವಿರಲಿಲ್ಲ. ಹೀಗೆ ಸಮಾಜವು ಅಜ್ಞಾನಾಂಧಕಾರದಲ್ಲಿ ಮುಳುಗಿತ್ತು. ನೀತಿ ರೀತಿಗಳ ಶ್ವಾಸೋಚ್ಛ್ವಸಗಳು ನಿಲ್ಲುತ್ತ ಬಂದಿದ್ದವು. ತೀರ ನಿಶ್ಯಕ್ತಿಯೊದಗಿತ್ತು. ಜಡವಾಗಿತ್ತು. ಜಂಜಾಟಕ್ಕಿಕ್ಕಿತ್ತು.

ಆ ಸಮಯದಲ್ಲಿ ವೈದ್ಯಭಾನುವಿನ ಉದಯವಾಯಿತು. ಅಂಧಕಾರ ಹರಿಯಿತು, ಭವರೋಗ ಅಳಿಯಿತು. ಆಚಾರ ವಿಚಾರ ಚಿಕಿತ್ಸೆಯಿಂದ ಉಸಿರು ಉತ್ತಮ ರೀತಿಯಲ್ಲಿ ಆಡತೊಡಗಿತು. ವರ್ಷವರ್ಷಕ್ಕು ಶಕ್ತಿ ಮೈಗೂಡಿ ಬರಹತ್ತಿತು. ಹೊಸರಕ್ತ ಧಮನಿಗಳಲ್ಲಿ ಹರಿಯತೊಡಗಿತು. ಸು. ೩೦-೩೫ ವರ್ಷಗಳಲ್ಲಿ ಸಮಾಜವು ಸಶಕ್ತವಾಗಿ ಸರ್ವಾಂಗ ಸುಂದರವಾಯಿತು. ಹಾಗಾದಲ್ಲಿ ಅಂತಹ ಅಮೋಘವಾದ ಶಕ್ತಿಗೆ ಕಾರಣರಾರು ಎನ್ನುವಿರಾ ? ಅವರೇ ಕಾರಣಿಕ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು. ಅವರು ಮೂಡಿಬಂದುದನ್ನು ಮಾಡಿ ನೆರವೇರಿಸಿದ ಮಣಿಹಗಳಾವವೆಂಬುದನ್ನು ತಿಳಿಯಲಪೇಕ್ಷಿಸುವಿರಾ ? ಹಾಗಾದರೆ ಬನ್ನಿ ! ಕೇಳಬನ್ನಿ !!

 ಕರ್ನಾಟಕ ಕೇಂದ್ರವಾದ ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿರುವ ‘ಜೋಯಿಸರ ಹರಳಳ್ಳಿ’ ಎಂಬುದೊಂದು ಸಣ್ಣ ಗ್ರಾಮ, ಗ್ರಾಮ ಸಣ್ಣದಾದರೂ ಅದರ ಧಾಮ ಇಂದು ಹಿರಿಯದು. ಆ ಗ್ರಾಮದಲ್ಲಿ ದೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳಿದ್ದರು. ಅವರು ತಮ್ಮ ನಡೆನುಡಿಗಳಿಂದ ನಾಮ ನೇಮಗಳಿಂದ ಹನ್ನೆರಡನೆಯ ಶತಮಾನದಲ್ಲಿದ್ದ ಕಲ್ಯಾಣದ ಬಸವ ನೀಲಾಂಬಿಕೆಯರ ನೆನಪನ್ನು ತರುವಂತಿದ್ದರು.

 ನಿಜವಾಗಿಯು ತಾಯಿ ನೀಲಮ್ಮನು ನೀಲಾಂಬಿಕೆಯ ಸದೃಶಳು. ಗುಣಗಳಲ್ಲಿ ಗುಂಜಿಯಷ್ಟು ವ್ಯತ್ಯಾಸವಿಲ್ಲ. ಬಸವಯ್ಯನವರ ಭಾಗ್ಯದ ತವರು, ಬಾಳಿನ ಭವನ, ತಾಯಿ ನೀಲಮ್ಮನು ಬಸವಯ್ಯನವರಿಗೆ ಅನುರೂಪಳಾದ ಗೃಹಿಣಿ. ಪರಮ ಪತಿವ್ರತೆ; ಪತಿಯ ಪ್ರಾಣ ದೇವತೆ, ಶಾಂತಿ ಸಂಪನ್ನೆ, ಲಿಂಗಾರ್ಚನಾಸಕ್ತಿ, ಶ್ರಮಿಸುವ ಜೀವಿ, ಸಮತಾಭಾವಿ.

ಮನೆಯ ಕುಂದುಕೊರತೆಗಳನ್ನು ಆಚೆ ನೆರೆಯವರಿಗೆ ಚಾಚೂ ಹೇಳುತ್ತಿರಲಿಲ್ಲ. ನೆರೆ ಮನೆಗಳಿಗೆ ಸ್ವೈರವಾಗಿ ಸುಳಿಯುತ್ತಿರಲಿಲ್ಲ. ಮನೆಯ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ. ಕುಂದು ಕೊರತೆ ಕಷ್ಟಕಾರ್ಪಣ್ಯಗಳ ಈ ಸಂಸಾರ ಸಾಗರ ವಿಷವನ್ನು ಕಾರಿದರೂ ಕಷ್ಟ, ನುಂಗಿದರೂ ಕಷ್ಟ, ಕಾರಿದರೆ ಮನೆತನದ ಮರ್ಯಾದೆಗೆ ಭಂಗ, ನುಂಗಿದರೆ ಮನಃಶಾಂತಿಗೆ ಭಂಗ, ಇದನರಿದು ತಾಯಿ ನೀಲಮ್ಮನವರು ಈ ನಂಜನ್ನು ಕಕ್ಕದೆ ಕುಡಿಯದೆ ಕಂಠದಲ್ಲಿಯೇ ಇರಿಸಿಕೊಂಡು ನಿಜಕ್ಕೂ ನೀಲಕಂಠಯರಾಗಿದ್ದರು. ನೀಲಕಂಧರನು ಜೀವನದಲ್ಲಿ ಒಮ್ಮೆ ವಿಷಪಾನ ಮಾಡಿ ಜಗತ್ತಿಗೆ ವರ್ಷಕ್ಕೊಂದು ಸಲ ಯುಗಾದಿ ಬರುವಂತೆ ಮಾಡಿದ್ದರೆ ತಾಯಿ ನೀಲಮ್ಮನವರು ತಮ್ಮ ಬಾಳಿನಲ್ಲಿ ನಿತ್ಯ ನಂಜುಂಡು ದಿನದಿನವೂ ಹೊಸಹಬ್ಬದ ಉಲ್ಲಾಸ ಉಣ್ಣುವಂತೆ ಮಾಡುತ್ತಿದ್ದರು. ಹೊಸ ಹೊಸ ಜೀವನ ಕಾಣುವಂತೆ ಮಾಡುತ್ತಿದ್ದರು. ಅವರು ಈ ಭಾಗ್ಯವಿಲ್ಲದ ಬಾಳಿಗೆ ಬಂದು ರುದ್ರಾಣಿಯಾಗಿದ್ದಂತೆ ತಮ್ಮ ಷಡ್ಗುಣೈಶ್ವರ್ಯಗಳಿಂದ ಇಂದ್ರಾಣಿಯೂ ಆಗಿದ್ದರು. ಅದರಿಂದ ಆ ಬಡತನದ ಬಾಳಿಗೆ ನೀಲಮ್ಮನವರು ಒಂದು ನೀಲರತ್ನ; ಬಡತನದ ಆ ಕಾಳಿರುಳಿಗೆ ಒಂದು ನೀಲಾಂಜನ ; ಬಾಳುರಿಯ ಉಪಶಾಂತಿಗೆ ಅವರೊಂದು ನೀಲಾಚಲ, ಬೋಳಾದ ಈ ಬಾಳಬನಕ್ಕೆ ಅವರೊಂದು ನೀಲೋತ್ಪಲ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ. ಅವರೇ ಆ ಬಾಳಿನ ಸಂಪತ್ತು; ಸರ್ವಸ್ವ.

 ಹೀಗೆ ಸಂಸಾರದ ಸರ್ವತೋಮುಖವಾದ ರಥ ಚಾಲನೆಗೆ ಹೆಗಲಿಕ್ಕಿ ಹೊಣೆ ಹೊತ್ತು ಪತಿಗೆ ಹಿಂದಡಿಯಿಡದೆ ಆ ಮಾತಾಯಿ ಮುನ್ನಡೆಯುತ್ತಿದ್ದಳು; ಮುನ್ನಿರೀಕ್ಷಣೆ ಮಾಡುತ್ತಿದ್ದಳು. ಆದರೂ ಬಡತನದ ಬಾಗಿಲನ್ನು ದಾಟಲು ಶಕ್ಯವಾಗಿರಲಿಲ್ಲ. ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿಯಿಂದ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿ ಅವೆರಡು ಕೂಡಿ ಬಾಳಿದವು.

 ಹೀಗೆ ಕೆಲವು ಕಾಲ ಕಳೆದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ.ಶ. ೧೮೬೭ ಪ್ರಭವ ಸಂವತ್ಸರದಲ್ಲಿ ಶ್ರೀ  ಹಾನಗಲ್ಲ ಕುಮಾರ ಪ್ರಭುಗಳು ಜನ್ಮತೊಟ್ಟರು. ವಿರಕ್ತರತ್ನ ಅವತರಿಸಿತು. ಯೋಗಿಚಂದ್ರ ಮೂಡಿತು.     ಸಮಾಜಸೂರ್ಯೋದಯವಾಯಿತು.

ಮುಂದೆ ಕುಮಾರ ಸ್ವಾಮಿಯಾಗಲಿರುವ ಈ ಕುವರನು ಸ್ವಾಮಿ ವಿವೇಕಾನಂದರಿಗೆ ಮೂರು ನಾಲ್ಕು ವರ್ಷ ಚಿಕ್ಕವನು. ಸಮಾಜದ ನಾಡಿನ ವಿವೇಕಾನಂದನಂತಿದ್ದನು. ಅದೇ ನಿಲುವು. ಅದೇ ತೇಜಸ್ಸು, ಆದರೂ ಆ ವೀರವೃತ್ತಿಯಿರಲಿಲ್ಲ; ಸಾಧು

ಸಂಪತ್ತಿಯಿತ್ತು. ಆ ಕಿಡಿನುಡಿಗಳಿಲ್ಲದಿದ್ದರು ವಿಚಾರ ಪರಿಪೂರ್ಣ ಉದಾತ್ತ ಉಪದೇಶದಿಂದ ಜನಾಂಗವನ್ನು ಚೇತರಿಸಿಕೊಳ್ಳುವಂತೆ ಮಾಡುವ ಚೈತನ್ಯವಿತ್ತು. ಹೊಸಕಾರ್ಯಕ್ಷೇತ್ರಕ್ಕೆ ಹೆಜ್ಜೆಯಿಕ್ಕುವಂತೆ ಮಾಡುವ ಅಪ್ರತಿಮ ಪ್ರತಿಭೆಯಿತ್ತು.

ಧೈಯವೊಂದೇ ಕ್ಷೇತ್ರ ಚಿಕ್ಕದು. ಮಾರ್ಗವೊಂದೇ ಪರಿಣಾಮ ಫಲಿತಾಂಶಗಳು ಬೇರೆ. ಕಾಲವೊಂದೇ ಪ್ರಾಂತ ಬೇರೆ, ಅದು ಭಾರತದ ಬೆಳಕು. ಇದು ಕನ್ನಡದ ಕಾಂತಿ, ಇಂತಹ ಕಾರಣಿಕ ಶಿಶುವನ್ನು ಹೆತ್ತತಾಯಿತಂದೆಗಳು ಎಂತಹ ಪುಣ್ಯಶಾಲಿಗಳು !

ಇಂತಹ ಕಾರಣಿಕ ಪುರುಷನನ್ನು ಪಡೆದ ನಾಡು ಸಮಾಜಗಳು ಎಂತಹ ಭಾಗ್ಯಶಾಲಿಗಳು !!

 ಈ ಕಾರಣಿಕ ಶಿಶುವಿನ ಉದಂತ ಉದಯದ ಕಾರಣಗಳಲ್ಲಿ ಹೇಳದೆ ಬಿಡುವಂತಿಲ್ಲ. ಒಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮನವರು ಪವಡಿಸಿ ನಿದ್ದೆಹೋಗಿದ್ದಾರೆ. ಆ ಸಮಯದಲ್ಲಿ ಒಂದು ಸ್ವಪ್ನ ಬಿದ್ದಿದೆ. ಜಂಗಮ ವೇಷಧಾರಿಯಾದ ಒಬ್ಬ ತಾಪಸಿಯು ದರ್ಶನ ಕೊಟ್ಟಿದ್ದಾನೆ. ಜಂಗಮ ಭಕ್ತಿಯಾದ ನೀಲಮ್ಮ ತಾಯಿಯು ನಯಭಯದಿಂದ ನಮಿಸಿದ್ದಾಳೆ. ತಾಪಸಿಯು ತನ್ನ ಕೈಯಲ್ಲಿದ್ದ ಸುರಸುಮವನ್ನು ಆಶೀರ್ವದಿಸಿ ಜಗನ್ಮಾತೆ, ನಾವು ಆಶೀರ್ವದಿಸಿದ ಕುಸುಮಕ್ಕೆ ಬದಲು ನಮಗೊಬ್ಬ ಸುಕುಮಾರನನ್ನು ಕೊಡು. ಇದೇ ನಾವು ನಿನ್ನಲ್ಲಿ ಬೇಡಬಂದ ಭಿಕ್ಷೆ ಎಂದು ಹೇಳಲು, ಅದಕ್ಕೆ ತಾಯಿಗಳು ಆಗಲಿ ಮಹಾತ್ಮ ತಮ್ಮ ಆಶೀರ್ವಾದದಿಂದ ಇನ್ನೊಬ್ಬ ಮಗನು ಹುಟ್ಟುವ ಭಾಗ್ಯವೊದಗಿದಲ್ಲಿ ಅಗತ್ಯವಾಗಿ ಅರ್ಪಿಸುತ್ತೇನೆಂದು ಮಾತುಕೊಟ್ಟಳಂತೆ | ಬಂದು ಬೇಡಿದ ತಾಪಸಿಯು ಯಾರನ್ನುವಿರಾ ? ಸಮಾಜದ ಜನತಾ ಜನಾರ್ದನನೇ ಆ ವೇಷದಲ್ಲಿ ಬಂದು ಬೇಡಿದನೆಂಬುದೇ ನೂರು ಪಾಲಿಗೂ ನಿಜ. ಕುಮಾರನು ಮುಂದೆ ಸಮಾಜ ಕುಮಾರನಾಗಿ ಬಾಳಲಿಲ್ಲವೆ ? ಇದಕ್ಕಿಂತಲು ಬೇರೆ ನಿದರ್ಶನ ಬೇಕೆ ?

 ಇನ್ನೊಂದು ದಿನ ತವರೂರಾದ ಲಿಂಗದಹಳ್ಳಿಯ ಬಳಿಯಲ್ಲಿರುವ ನಂದೀಹಳ್ಳಿಯಲ್ಲಿ ಜರುಗುವ ಬಸವೇಶ್ವರನ ಯಾತ್ರೆಗೆ ನೀಲಮ್ಮನವರು ಹೋಗಿದ್ದರು. ನಂದೀಶ್ವರನ ರಥೋತ್ಸವ ನಡೆಯುತ್ತಿತ್ತು. ಅಲಂಕರಿಸಿದ ಆ ತೇರನ್ನು ನೋಡಿ ನಲಿಯಲು ಅದರ ಬಳಿಗೆ ನೀಲಮ್ಮನವರು ನಿಂತಿದ್ದರು. ಯಾರೋ ತೂರಿದ ಖರ್ಜೂರವೊಂದು ಅನಿರೀಕ್ಷಿತವಾಗಿ ನೀಲಮ್ಮ ತಾಯಿಯ ಉಡಿಯ ಮಡಿಕೆಯಲ್ಲಿ ಬಂದು ಬಿತ್ತು. ಅದನ್ನು ಕಂಡು ಭಕ್ತಿಭರಿತರಾದ ತಾಯಿಯವರು ಇದೂ ಒಂದು ದೇವರ ಕರುಣೆಯೆಂದು ಕೈಗೆ ತೆಗೆದುಕೊಂಡು ಕಣ್ಣುಗಳಿಗೊತ್ತಿಕೊಂಡು ಮನೆಗೆ ಕೊಂಡೊಯ್ದರು. ಸ್ನಾನ ಶಿವಪೂಜೆಗಳನ್ನು ಆಗು ಮಾಡಿಕೊಂಡು ತಂದ ಪ್ರಸಾದವನ್ನು ಪ್ರಸನ್ನಚಿತ್ತದಿಂದ ಲಿಂಗಕ್ಕರ್ಪಿಸಿ ಸ್ವೀಕರಿಸಿದರು. ಅದರ ಫಲವಾಗಿ ಗರ್ಭಧಾರಣೆಯಾಗಿ ನವಮಾಸ ತುಂಬಿ ಕಾರಣಿಕ ಕುಮಾರನು ಜನಿಸಿದನು. ಮಕ್ಕಳಿಲ್ಲದೆ ಮರಗುತ್ತಿದ್ದ ಮಾದಲಾಂಬಿಕೆಗೆ ಬಾಗೇವಾಡಿಯ ದೇವಸ್ಥಾನದಲ್ಲಿರುವ ಬಸವೇಶ್ವರನ ಪುಷ್ಪಫಲಾನುಗ್ರಹದಿಂದ ದ್ವಿತೀಯ ಶಂಭು ಬಸವೇಶ್ವರನು ಜನಿಸಿದಂತೆ ನಮ್ಮ ಕಥಾನಾಯಕನು ಸಹ ಬಸವೇಶ್ವರ ಫಲಾನುಗ್ರಹದಿಂದಲೇ ಜನಿಸಿದ್ದು ಮತ್ತೊಂದು ಉದಂತ ಉದಯದ ಕುರುಹು.

ದಿನವಾವುದೋ ತಿಳಿಯದು ಒಂದು ದಿನ ಬ್ರಾಹ್ಮಿಮುಹೂರ್ತ, ಮಗು ಜನಿಸಿದೆ. ಮನೆಯವರಿಗೆಲ್ಲ ಆನಂದ. ಮನೆಯನ್ನು ಸಾರಣೆ ಕಾರಣೆಗಳಿಂದ ಶುದ್ಧಗೊಳಿಸಿದ್ದಾರೆ. ರಂಗವಲ್ಲಿ ತಳಿರುತೋರಣಗಳಿಂದ ಅಲಂಕರಿಸಿದ್ದಾರೆ. ಜನ್ಮಲಿಂಗಧಾರಣೆಗೆಂದು ಜಂಗಮರೊಬ್ಬರನ್ನು ಕರೆಯಲು ಹೋಗಿದ್ದರು. ಅಷ್ಟರಲ್ಲಿ ಒಬ್ಬ ಮುದುಕ ಮಹೇಶ್ವರರು ಭಿಕ್ಷಕ್ಕಾಗಿ ಮನೆಗೆ ಬಂದರು. ಕೆಲಸ ಮಾಡಲು ಬಂದಿದ್ದ ಒಬ್ಬ ಮುದುಕಿಯು ಸ್ವಾಮಿ ! ಮನೆಯಲ್ಲಿ ಹೆತ್ತಿರುವರು. ಈ ದಿನ ಭಿಕ್ಷೆ ನೀಡುವಂತಿಲ್ಲ, ಮತ್ತೊಂದು ಮನೆಗೆ ಹೋಗಿರಿ ಎಂದು ಹೇಳಿದಳು. ಅಮ್ಮಾ, ಏನು ಹೆತ್ತಿರುವರು ? ಗಂಡುಕೂಸನ್ನು, ಹಾಗಾದಮೇಲೆ ನೀನೇಕಮ್ಮ ಹೀಗೆ ಹೇಳುತ್ತೀಯೆ ! ಸುತನು ಜನಿಸಿದರೆ ಸಂತೋಷವಲ್ಲವೆ? ಸಕ್ಕರೆ ಹಂಚುವುದಿಲ್ಲವೆ? ದೀನದರಿದ್ರರಿಗೆ ದಾನ ಮಾಡುವುದಿಲ್ಲವೆ? ಹೀಗೆ ಲೋಕರೂಢಿಯಿದ್ದು ನೀನು ಒಂದು ಹಿಡಿ ಕಾಳು ನೀಡುವದಿಲ್ಲೆಂದು ಹೇಳುವುದು ಧರ್ಮವೇ? ಸ್ವಾಮಿ, ನೀವು ಹೇಳುವುದೆಲ್ಲ ಸರಿಯೆ. ಆದರದು ಶ್ರೀಮಂತರ ಮಾತು. ನಮ್ಮಂತಹ ಬಡವರು ಎಲ್ಲಿಂದ ಮಾಡಬೇಕು? ಮೊದಲೆ ನಮಗೆ ಮಕ್ಕಳು ಹುಟ್ಟುವುದು ಹೆಚ್ಚು. ದಾನಧರ್ಮ ಮಾಡಿದರೆ ಮತ್ತಷ್ಟು ಹುಟ್ಟ ಬಹುದಲ್ಲವೆ? ಎಂದು ನಗೆ ನುಡಿದಳು. ಅಮ್ಮಾ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಈಗ ಹುಟ್ಟಿದ ಮಗುವನ್ನು ನಮಗೆ ಕೊಟ್ಟುಬಿಡಿರಿ. ಸ್ವಾಮಿ, ಯಾರು ಬೇಡೆನ್ನುವರು? ಅಗತ್ಯವಾಗಿ ತಗೆದುಕೊಂಡು ಹೋಗಿರಿ, ಸಾಕುವ ಸಾಮರ್ಥ್ಯ ನಿಮಗಿದ್ದರೆ ಎಂದು ನಗೆಮಾತಿನಿಂದ ನುಡಿದಳು. ಆಗ ಮಹೇಶ್ವರನು ಹರ್ಷಚಿತ್ತನಾಗಿ ಹೊರಟು ಹೋದನು. ತಾಯಿಯ ಕನಸಿಗೆ ಬಂದು ಹೋಗಿದ್ದ ಆ ಜನತಾಜನಾರ್ದನನೆ ಮರಳಿ ಮಹೇಶ್ವರನ ರೂಪದಲ್ಲಿ ಬಂದು ಸಮಾಜದ ಶಿಶುವನ್ನು ಸಮಾಜಕ್ಕೆ ಕೊಡುವಂತೆ ಜಾಗ್ರತಾವಸ್ಥೆಯಲ್ಲಿ ಮಾತು ತೆಗೆದುಕೊಂಡು ಮರಳಿದನು. ಇದೂ ಒಂದು ಉದಂತ ಉದಯದ ಚಿನ್ಹೆಯಲ್ಲವೆ ?

ಆಮೇಲೆ ಜಂಗಮರೊಬ್ಬರು ಬಂದು ಜನ್ಮಲಿಂಗಧಾರಣೆಯನ್ನು ಮಾಡಿ ಹೋಗುವರು. ಮೂರಾರು ದಿನಗಳು ಕಳೆದ ನಂತರ ಇದ್ದಕ್ಕಿದ್ದಂತೆ ಮಗು ಹಾಲು ಕುಡಿಯದೆ ಹೋಯಿತು. ತಾಯಿಗೆ ದಿಗಲಾಯಿತು. ಮನೆಯವರಿಗೆ ಭಯವಾಯಿತು. ಎಲ್ಲರು ಮಮ್ಮಲ ಮರುಗಿದರು. ಏನಾಗಿದೆಯೋ ಎಂದು ಯಾರಾರನ್ನೋ ಕರೆಯಿಸಿ ತೋರಿಸಿದರು. ಒಬ್ಬೊಬ್ಬರು ಒಂದೊಂದು ಉಪಾಯವನ್ನು ಹೇಳಹತ್ತಿದರು. ‘ಹಾಲಯ್ಯ’ ಎಂದು ಹೆಸರಿಟ್ಟು ನೋಡಿದರು. ಇದುವೆ ಹುಟ್ಟುಹೆಸರಾಯಿತು. ಏನಾದರೂ ಹಸುಮಗು ಹಾಲು ಕುಡಿಯಲಿಲ್ಲ. ಆಗ ಅವರಲ್ಲಿ ಒಬ್ಬರು ಗ್ರಾಮದೇವತೆಯ ಅಂಗಾರವನ್ನು ತಂದು ಹಚ್ಚಬೇಕೆಂದರು. ಆ ಮಾತು ಮಾತೆಯಾದ ನೀಲಮ್ಮನವರ ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿ ಶ್ರೀಗುರುವಿನಿಂದ ಶುದ್ಧವಾದ ಭಸಿತವನ್ನು ತಂದು ಹಣೆಗೆ ಧರಿಸಿದರು. ಆ ಕೂಡಲೇ ಮಗುವು ಮೊಲೆಯುಂಡಿತು. ಸರ್ವರು ಸಂತೋಷಭರಿತರಾದರು. ಕಂದನ ಉಜ್ವಲಂತ ಉತ್ಕ್ರಮಣ ಜೀವನಕ್ಕೆ ಬೀಜಾವಾಪವಿದು.

ದಿನದಿನಕ್ಕೆ ಮಗುವಿಗೆ ಬಲಬಂದಿತು. ಮೈಕೈ ತುಂಬಿಬಂದವು. ಶುಕ್ಲಪಕ್ಷದ ಚಂದ್ರನಂತೆ ಬೆಳೆದನು. ನಗೆ ಬೆಳದಿಂಗಳ ಬೀರಿದನು. ಹನ್ನೊಂದನೆಯ ದಿನ ‘ಸದಾಶಿವ’ನೆಂದು ಹೆಸರಿಟ್ಟರು. ನೆರೆಯವರ ನೇಹದ ಶಿಶುವಾಗಿ ಮನೆಯವರ ಮುದ್ದುಮಗನಾಗಿ ದಿನಗಳೆದನು. ಎಲ್ಲರಿಗೂ ಹಾಲಿನಂತೆ ಹರ್ಷಪ್ರದನಾಗಿ ಅಂಬೆಗಾಲಿನಿಂದ ಆಟವಾಡಿದನು. ಆಡಿಸುವವರ ತೊಡೆಯ ಶಿಶುವಾಗಿ, ಮುದ್ದಿಸುವವರ ಮುಂಗೈಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಬೆಳೆದನು. ತೊದಲ್ನುಡಿಗಳ ಕೇಳಿ ಆನಂದಿಸಿದರು. ನಗೆಮೊಗವ ಕಂಡು ನಲಿದರು. ಮೊಗದ ತೇಜವ ನೋಡಿ ಹರುಷಿಸಿದರು. ಮೃದುತನುವ ಮುಟ್ಟಿ ಸುಖಪಟ್ಟರು. ಹೀಗೆ ಸಕಲರ ಸಂತಸದ ಕೇಂದ್ರವಾಗಿ ಬೆಳೆದು ವರುಷದವನಾದನು.

ಸದಾಶಿವನಿಗೆ ಯಾವ ಆಟಗಳ ಮೇಲೆ ಪ್ರೇಮವಿಲ್ಲದಿದ್ದರು ಗೋಲಿಯಾಟ (ಗುಂಡಿನಾಟ)ದಲ್ಲಿ ಗಮನವಿತ್ತು. ಗುರಿಯಿಟ್ಟು ಹೊಡೆದರೆ ಎಷ್ಟು ದೂರದಲ್ಲಿದ್ದರೂ ತಪ್ಪುತ್ತಿರಲಿಲ್ಲ. ಗುಂಡಿನಾಟದಲ್ಲಿ ಆತನನ್ನು ಸೋಲಿಸುವ ಹುಡುಗರೆ ಇರಲಿಲ್ಲ. ಹೀಗಾಗಿ ಸದಾಶಿವನ ದೃಷ್ಟಿಯೋಗ ಈ ಆಟದಿಂದಲೇ ಪ್ರಾರಂಭವಾಯಿತು. ಸದಾಶಿವನ ಮೆಚ್ಚುಗೆಯ ಮತ್ತೊಂದಾಟವೆಂದರೆ ದೊಂಬರಾಟ, ದೊಂಬರೆಲ್ಲಿ ಬಂದಾಡಿದರು. ಅಲ್ಲಿಗೆ ಹೋಗಿ ನೋಡುತ್ತಿದ್ದನು. ಅವರ ಮೈಕುಣಿತಗಳನ್ನು ಅಂತರದಲ್ಲಿ ಹಗ್ಗದ ಮೇಲೆ ಮಧ್ಯಬಿಂದುವಿನ ತೂಕವಿಡಿದು ಕೆಳಕ್ಕೆ ಬೀಳದಂತೆ ನಡೆವುದನ್ನು ನೋಡಿ ಅಚ್ಚರಿಪಡುತ್ತಿದ್ದನು. ಅದರ ಫಲವಾಗಿ ಹಠಯೋಗದತ್ತ ಆತನ ಮನಸ್ಸು ವಾಲಿತು.

ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ಕಲಿತ ದೃಷ್ಟಿಯೋಗವನ್ನು ಅಲ್ಲಿಗೆ ಕೈ ಬಿಡದೆ ಕೊನೆಯವರೆವಿಗೂ ಸಾಧಿಸಿ ಅದರ ಪರಿಪೂರ್ಣ ಸಿದ್ಧಿಯನ್ನು ಸಫಲತೆಯನ್ನು ಪಡೆದರು. ‘ದೃಷ್ಟಿಶುದ್ಧಿ’ ಎಂಬ ಪ್ರಕರಣದಲ್ಲಿ ಈ ವಿಷಯವನ್ನು ಓದಿ ತಿಳಿಯಬಲ್ಲಿರಿ. ಗೋಲಿಯಾಟದ ಮೇಲೆ ಶ್ರೀಗಳವರಿಗೆ ಕೊನೆಯವರೆಗೂ ಮೆಚ್ಚುಗೆಯಿತ್ತು.

ದೊಂಬರಾಟಗಳನ್ನು ನೋಡಿದ ಫಲವಾಗಿ ಹಠಯೋಗ ಉದ್ಧಾರವಾಯಿತು. ಆ ವಿಷಯದಲ್ಲಿ ಶಿವಯೋಗಮಂದಿರವೆ ಸಾಕ್ಷಿ. ಸಾಧಕರೆ ಪರಮ ಸಾಕ್ಷಿ. ಶಿವಯೋಗಮಂದಿರದಲ್ಲಿಯೂ ಸಹ ದೊಂಬರಾಟ ಬಂದರೆ ಬಿಡದೆ ಕರೆಯಿಸಿ ಆಡಿಸಿ ವಟುಗಳಿಗೆ ಸಾಧಕರಿಗೆ ತೋರಿಸುತ್ತಿದ್ದರು. ಪರಸ್ಪರ ಇರುವ ಆಸನ ವ್ಯತ್ಯಾಸ ಭಾವ ವ್ಯತ್ಯಾಸ ಫಲ ವ್ಯತ್ಯಾಸಗಳನ್ನು ವಿವರಿಸಿ ಹೇಳುತ್ತಿದ್ದರು.   ಹೀಗೆ ಚಿಕ್ಕವಯಸ್ಸಿನ ಆಟಗಳಲ್ಲಿಯೂ ಸಹ ಅವರ ನೋಟ ಹಿರಿದಾಗಿತ್ತು.

ಈ ಆರನೆಯ ವಯಸ್ಸಿನಲ್ಲಿಯೇ ಒಳ್ಳೆಯ ದಿನದಲ್ಲಿ ಅಕ್ಷರಾಭ್ಯಾಸಕ್ಕೆ ಆರಂಭವಾಯಿತು. ಊರಿನಲ್ಲಿ ಬೇರೆ ಶಾಲೆಯಿರಲಿಲ್ಲ. ಸದಾಶಿವನ ಅಜ್ಜಂದಿರಾದ ಶ್ರೀ ಕೊಟ್ರಪ್ಪಯ್ಯನವರೇ ಒಂದು ಸ್ವತಂತ್ರಶಾಲೆ (ಗಾವಠೀಶಾಲೆ) ಯನ್ನು ತೆರೆದಿದ್ದರು. ಅದರಲ್ಲಿಯೆ ಓದಿಗೆ ಮೊದಲಾಯಿತು. ಸದಾಶಿವನು ಕುಶಲಮತಿಯಾಗಿದ್ದನು. ಅಕ್ಷರಾಭ್ಯಾಸವನ್ನು ಆದಷ್ಟು ಬೇಗ ಮುಗಿಸಿ ಶ್ರೇಣಿಗೆ ಸೇರಿದನು. ವರ್ಗದಲ್ಲಿಯೂ ಮೊದಲಿನವನಾಗಿಯೇ ಇರುತ್ತಿದ್ದನು. ಎಲ್ಲರಿಗಿಂತಲೂ ಹೆಚ್ಚಾಗಿಯೇ ಅಂಕಗಳನ್ನು ಪಡೆಯುತ್ತಿದ್ದನು. ಪ್ರತಿವರ್ಷವೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದನು. ಹೀಗೆ ಮೂರು ನಾಲ್ಕು ವರುಷ ಅಬಾಧಿತವಾಗಿ ಓದು ಮುಂದುವರೆಯಿತು. ಆಮೇಲೆ ಎರಡು ಹೊತ್ತು ಶಾಲೆಗೆ ಹೋಗಿ ಓದಲು ಆತಂಕವೊದಗಿತು. ಮನೆಯ ಬಡತನ, ಬಾಳಿನ ಬವಣೆ ಅದಕ್ಕೆ ಕಾರಣವಾಯಿತು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

‘ನಿಯಮ’ ಶಬ್ದದ ತದ್ಭವ ರೂಪ ನೇಮ. ವ್ರತ ಕಟ್ಟಳೆ, ಧರ್ಮಾಚರಣೆಗಳ ಅರ್ಥದಲ್ಲಿ ನೇಮ ಶಬ್ದದ ಬಳಕೆಯನ್ನು ಕಾಣುತ್ತೇವೆ. ನಿತ್ಯ ಪಾಲಿಸುವ ಮತ್ತು ಕಾಲಬದ್ಧ ನೇಮಗಳಿಗೆ ನಿತ್ಯ ನೇಮ ಅಥವಾ ನೇಮನಿತ್ಯ ಎನ್ನುವರು. ನೇಮ- ನಿತ್ಯಗಳ ಪಾಲನೆಯ ಉದ್ದೇಶ ದೈವದಲ್ಲಿರುವ ನಮ್ಮ ಶ್ರದ್ಧೆಯನ್ನು ಗಟ್ಟಿಗೊಳಿಸುವುದು. ಹಾಗೆಯೇ ಆಶೆ-ಆಮಿಷಗಳನ್ನು ತೊರೆದು ಮನಸ್ಸನ್ನು ಪರಿಶುದ್ಧಗೊಳಿಸುವುದು. ಆದರೆ ಬದುಕಿನಲ್ಲಿ ಸುಖ ಶಾಂತಿಗಳನ್ನು ಪಡೆಯುವುದಕ್ಕಾಗಿಯೇ ಅನೇಕರು ನೇಮಾದಿಗಳನ್ನು ಪಾಲಿಸುವುದುಂಟು. ವ್ಯಕ್ತಿಯ ಅಧ್ಯಾತ್ಮಿಕ ಬದುಕಿಗೆ ಪೂರಕವಾಗಬೇಕಿದ್ದ ನೇಮನಿತ್ಯಗಳು ಕ್ಷಣಿಕ ಫಲಾಪೇಕ್ಷೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಅದರಲ್ಲೂ ಕೆಲವರ ವ್ರತ ನೇಮಗಳಿಗೆ ಯಾವುದೇ ನಿಶ್ಚಿತ ಉದ್ದೇಶವಿರುವುದಿಲ್ಲ. ಅಲ್ಲಿರುವುದು

ಇನ್ನೊಬ್ಬರ ಅನುಕರಣೆ ಮಾತ್ರ.

 ನೋಡಿ ನೋಡಿ ಮಾಡುವ ನೇಮ, ತನು ಉದ್ದೇಶವಾಗಿ ಮಾಡುವ ನೇಮ, ಗುರುಪಥ ಮೀರಿ ಮಾಡುವ ನೇಮ ಶಿವಾರ್ಪಿತವಾಗಲಾರವು. ಪರಮಾರ್ಥ ಸಾಧನೆಗಾಗಿ ಗುರುವಿನ ಮಾರ್ಗದರ್ಶನದಂತೆ ನೇಮ ನಿತ್ಯಗಳನ್ನು ಪಾಲಿಸಬೇಕು. ತನ್ನ ಲಿಂಗ (ದೇವರಿಗೆ)ಕ್ಕೆ ಮಾಡುವ ನಿತ್ಯ ನೇಮಗಳನ್ನು ತಾನೇ ಮಾಡಬೇಕೆಂಬುದು ಬಸವಣ್ಣನವರ ಸ್ಪಷ್ಟ ಆದೇಶ.

 ಮನದಲ್ಲಿ ನಿಷ್ಠೆ ಇಲ್ಲದೆ ಹಾಲು, ಕಡಲೆ, ನೀರು, ಪುಷ್ಪಾದಿಗಳ ನೇಮ ಹಿಡಿದವರು ಕ್ರಮವಾಗಿ ಬೆಕ್ಕು, ಕುದುರೆ, ಕಪ್ಪೆ, ತುಂಬಿಯಾಗಿ ಹುಟ್ಟುವರೆಂದು ಒಂದೆಡೆ ಅಲ್ಲಮಪ್ರಭು ವಿಡಂಬಿಸಿದ್ದಾನೆ. ಇಂಥ ನೇಮಗಳು ನಿರರ್ಥಕ. ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ನೇಮ, ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯ ಒಪ್ಪಿಸುವುದೇ ನೇಮ. ಅಂದರೆ ಇದ್ದುದರಲ್ಲಿ ತೃಪ್ತಿ ಹೊಂದುವ, ವಂಚನೆ ಇಲ್ಲದೆ ಹಂಚಿ ಉಣ್ಣುವ, ನಡೆ ನುಡಿ ಪರಿಶುದ್ಧವಾಗಿಟ್ಟುಕೊಳ್ಳುವ ಮತ್ತು ದುಡಿಮೆಯ ಫಲವನ್ನು ಶರಣರಿಗೊಪ್ಪಿಸಿ ದಾಸೋಹಂಭಾವದಿಂದ ಬದುಕುವ ನೇಮಗಳೆ ನಿಜವಾದ ನೇಮಗಳು.  ಅವು ದೇವರಿಗೆ ಒಪ್ಪಿತವಾದ ನೇಮಗಳು.

 ಶಿವರಾತ್ರಿ, ಏಕಾದಶಿ, ಸಂಕಷ್ಟಿಗಳಲ್ಲಿ ಮಾಡುವ ಉಪವಾಸಾದಿ ನೇಮಗಳು ಅರ್ಥವನ್ನು ಕಳೆದುಕೊಂಡು ಆಹಾರ ಬದಲಾವಣೆಗೆ ಸೀಮಿತಗೊಂಡಿವೆ. ಶ್ರಾವಣ ಶುಕ್ರವಾರಗಳ ಲಕ್ಷ್ಮಿ ಪೂಜೆ, ಮಾರ್ಗಶಿರ ಗುರುವಾರಗಳ ಗೌರಿಪೂಜೆಗಳಲ್ಲಿ ಭಕ್ತಿ, ಶ್ರದ್ಧೆಗಳಿಗಿಂತ ವಿಶೇಷಾಲಂಕಾರ ಮತ್ತು ಆಭರಣ ಪ್ರದರ್ಶನಗಳಿಗೆ ಅಗ್ರಸ್ಥಾನ. ವಾಸ್ತುಶಾಂತಿ ಹಾಗು ಗೃಹಶಾಂತಿಗಳಲ್ಲಿ ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ಹೋಮಹವನಗಳಿಂದ ಪವಿತ್ರ ಪ್ರಸಾದದ ಕೇಡು. ಇದಲ್ಲದೆ ಕೆಲವು ವಿಶಿಷ್ಟ ಪದಾರ್ಥಗಳನ್ನು ತಿನ್ನದಿರುವುದು, ಕ್ಷೌರ ಮಾಡಿಕೊಳ್ಳದಿರುವುದು, ಮೌನದಿಂದಿರುವುದು ಮುಂತಾದ ನೇಮಾದಿಗಳನ್ನು ಪಾಲಿಸುವವರೂ ಉಂಟು. ಆದರೆ ಶುದ್ಧ ಮನಸ್ಸಿನಿಂದ ದೈವವನ್ನು ನೆನೆದವರಿಗೆ ಇಂಥ ಯಾವ ನೇಮನಿತ್ಯಗಳ ಅವಶ್ಯಕತೆ ಇರದು. ಒಟ್ಟಾರೆ

ನೇಮ ನಿತ್ಯಗಳು ನಮ್ಮ ದುರ್ವ್ಯಸನ ದುರಾಚಾರಗಳಿಗೆ ಕಡಿವಾಣದಂತಿರಬೇಕು. ಹಾಗೆಯೇ ಅಧ್ಯಾತ್ಮಿಕ ಪ್ರಗತಿಗೆ, ಅಂತರಂಗ-ಬಹಿರಂಗ ಶುದ್ಧಿಗೆ ಪೂರಕವಾಗಿರಬೇಕು ಎಂಬುದೇ ಮುಖ್ಯ.

 

ಲೇಖಕರು: ಚಿಂದೋಡಿ ಬಂಗಾರೇಶ

ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು

ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು.

“ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ”

ನಿಷ್ಠೆಯಿಂದ ಲಿಂಗವ ಪೂಜಿಸಿ

ಮತ್ತೊಂದು ಪಥವನರಿಯದ ಶರಣರು

ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ !

ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು,

ಕೂಡಲಸಂಗಮದೇವಾ, ನಿಮ್ಮ ಶರಣರು.

ಹೀಗೆ ಭಕ್ತಿ ಜ್ಞಾನ ಸ್ವರೂಪರಾದ ಶ್ರೀ ಕುಮಾರ ಶಿವಯೋಗಿಗಳು ಬಸವಾದಿ ಪ್ರಮಥರ ತತ್ವಗಳನ್ನು ಬೆಳಸಲು ಶರಣ ಧರ್ಮವನ್ನು ಪುನರ್ಸ್ಥಾಪಿಸಲೆಂದೇ ಜನಿಸಿ ,ಶರಣರಿಗೆ ಸರಿದೊರೆಯಾಗಿ ದೀನರಿಗೆ ದಯಾಮೂರ್ತಿಯಾಗಿ ,ಗುರುಗಳಿಗೆ ಪರಮ ಗುರುವಾಗಿ ಭಕ್ತಿ ಸ್ವಾತಂತ್ರ್ಯ ಕರುಣಿಸಿದರು..ಬತ್ತಿದ ಮನಸುಗಳಿಗೆ ಭಕ್ತಿಯ ಸೇವೆಯ ಮಳೆಯನ್ನೇ ಸುರಿಸಿದರು.ಕರುಣಾಮಯ ಶ್ರೀಕುಮಾರೇಶ.

ಕುಮಾರೇಶರ, ಬಾಲ್ಯ- ಬೆಳವಣಿಗೆ- ಸಾಧನೆ- ಹಾನಗಲ್ಲ ಮಠಕ್ಕೆ ಬಂದು  ಅವರ ಸಮಾಜ ಸೇವೆಯ ವೈಭವತೆ,ಎಲ್ಲರು ಬಲ್ಲರು “ಘಟದಿಂದ ಮಠ ಬೆಳೆಯಬೇಕು .ಮಠದಿಂದ ಘಟ ಬೆಳೆಯಬಾರದು” ಇದು ಅವರ ಧ್ಯೇಯ,ಘೋಷ. ಅದರಂತೆ ನಡೆದರು.ನುಡಿದಂತೆ ನಡೆದರು.

ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತರ ಸಮುದಾಯವನ್ನು ಕನ್ನಡನಾಡಿನಾದಯಂತ ಸಂಚರಿಸಿ ಸಮಾಜದ ಹಿರಿಯಶಕ್ತಿಗಳೆನ್ನೆಲ್ಲಾ ಒಂದು ಗೂಡಿಸಿ ಸಮಾಜ ಸಿದ್ದಾಂತ ಉಳಿವಿಗಾಗಿ ,ಜೊಯಿಸರಹರಳಹಳ್ಳಿಯ ಯೋಗಿ,ಜೋಳಿಗೆ ಹಿಡಿದು ಭಿಕ್ಷೆಬೇಡಿ ಸಮಾಜದ ಸರ್ವಶಕ್ತಿಯನ್ನು ಒಂದೇ ನೆಲೆಯಲ್ಲಿ ಸಾಕಾರಗೊಳಿಸಿದ ಸಾಕ್ಷಿ ಸೌಧವೇ ಅಖಿಲಭಾರತ ವೀರಶೈವಮಹಾಸಭೆಯ ಸ್ಥಾಪನೆಯ ರೂವಾರಿ ಶ್ರೀಕುಮಾರೇಶರು, ಇಂದು ನಮಗೆಲ್ಲ ಹೆಮ್ಮೆಯ ಹೆಮ್ಮರವಾಗಿ ನಿಂತಿದೆ.

ಅವರ ಆಸೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆ ಸೇರಿದ ಆಭವ್ಯ ದೃಶ್ಯವ ನೋಡಿ ಆನಂದಿತರಾಗಿ ಅದರ ನಿರ್ಮಾಣ ರೂವಾರಿಗಳಾದ ಸಮಾಜದ ಗಣ್ಯಾತಿ ಗಣ್ಯರನ್ನು ಅಂದು ನೋಡಿ ಬಸವಣ್ಣನವರ ಒಂದು ವಚನ ನೆನಪಿಸಿಕೊಂಡರಂತೆ.

“ಕಣ್‌ ಗಳ ನೋಟ ಹೃದಯದ ಜ್ಞಾನ

ಮನದಲ್ಲಿ ಮಾತಅಡುತಿರ್ದಯ್ಯ

ಜೇನು ಮಳೆಗಳು ಕರೆದವು

ಅಮೃತದ ಕಳೆಗಳು ಸುರಇದವು

ಕೂಡಲಸಂಗಮ ದೇವನೆಂಬ

ಸಾಗರದೊಳಡುತಿದ್ದನಯ್ಯ

ಕೂಡಲಸಂಗಮದೇವ.

ಎಂದು ಆನಂದಿರಾದವರಂತೆ ಅದರಂತೆ ಸಮಾಜದ ಇನ್ನೋದು ಮುಖ,ಕಾಯಕ -ದಾಸೋಹ ಸಾಧನೆಗೆ ತರಬೇತಿ ಕನ್ನಡ ವಚನ ಸಾಹಿತ್ಯ ಸಂಸ್ಕೃತಿ ಬೆಳಗಲು ಸ್ಥಾಪಿಸಿದ ಶಿವಯೋಗಮಂದಿರ ಸಂಗೀತ ಲೋಕಕ್ಕೆ ಧೃವತಾರೆಗಳಾದ ಪಂಚಾಕ್ಷರ ಗವಾಯಿಗಳು ,ಪುಟ್ಟರಾಜ ಗವಾಯಿಗಳನ್ನು ಸಮಾಜಕ್ಕೇ ಅಲ್ಲ ದೇಶ-ವಿದೇಶಕ್ಕೆ ಸಂಗೀತ ಸಾಧನೆಯ ಸುಧೆಯನ್ನು ಹರಿಸಿದ ಹರಿಕಾರರು ಇವರು ಶ್ರೀಕುಮಾರ ಶಿವಯೋಗಿಗಳು.

ಆ ಮಹನಿಯರನ್ನು ಎಷ್ಟು ನೆನೆದರು ಸಾಲದು ,ಎಷ್ಟು ಪೂಜಿಸಿದರೂ ಸಾಲದು.ಅವರ ನಿಸ್ವಾರ್ಥ ಸೇವೆಯನ್ನು ನೂರರಲ್ಲಿ ಒಬ್ಬರಾದರು ಅನುಸರಿಸಿದರೆ,ನಡೆದರೆ ಅದೇ ಅವರಿಗೆ ನೀಡುವ ಭಕ್ತಿ ಕಾಣಿಕೆ.

ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ

ನಿಮ್ಮಾಣೆ! ನಿಮ್ಮ ಪುರಾತರಾಣೆ.

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,

ಕೂಡಲಸಂಗಮದೇವಾ.

ಎಂಬ ವಚನದ ಅಕ್ಷರ ಅಕ್ಷರ ಪಾಲಿಸಿದರು.ಮೈಮೇಲೆ ವಸ್ತ್ರ ಹರಿದಿದ್ದರೂ,ತಾವೇ ಹೊಲೆದುಕೊಂಡು,ಮರೆ ಮಾಡಿಕೊಂಡು ,ಸಮಾಜ-ಸಮಾಜ ಸಮಾಜವೆಂದೇ  ಶಿವಯೋಗಮಂದಿರದಲ್ಲಿ ಮಹಾಲಿಂಗದೊಳು ಐಕ್ಯವಾದ ಅವರ ಜೀವಾತ್ಮ ಸಕಲರಿಗೆ ಸಂಜೀವಿನಿಯಾಗಿರುವುದು. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿದರು.ಒಂದು ಸಭೆಗೂ ಅಧ್ಯಕ್ಷರಾಗದ ನಿಷ್ಕಾಮ ಸಂತರು.ಕುರುಬ ತಂದ ಹಾಲನ್ನು ಶಿವನಿಗರ್ಪಿಸಿ ಸಮಾನತೆಯ ಸಾಕ್ಷಿಭೂತರಾದರು.ಅವರ ಆಸೆಯೊಂದೆ “ ದುಡಿ-ಸುಖ ಪಡಿ”,ಕಾಯಕ ಮಾಡದೇ ಒಂದಗಳ ಅನ್ನವ ಸೇವಿಸಬಾರದು.ಕಾಯಕ-ದಾಸೋಹ-ವಿದ್ಯೆ-ಧರ್ಮ-ಶೃದ್ಧೆ-ಪರೋಪಕಾರದ ಮನಸ್ಥಿತಿಯನ್ನೇ ಬೇಳಗಿಸಿಕೊಳ್ಳಬೇಕೆಂಬ ಸಂದೇಶ ಸಾರಿದ ಜಂಗಮರ ಜಂಗಮ,ಮಹಾ ಜಂಗಮ.

ಅವರಾತ್ಮಕ್ಕೊಂದು ಶರಣು ಶರಣಾರ್ಥಿಗಳು

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಹಲವು ಯೋಗವ ಮಾಡಿ | ಫಲವೇನು ಮಗನೆ ಎಂ-

ದೊಲಿದು ಲಿಂಗಾಂಗ-ಸುಲಭಯೋಗವನೊಡನೆ

ಕಲಿಸಿದಾ ಗುರುವೆ ಕೃಪೆಯಾಗು     I ೧೦ II

 ಯೋಗಮಾರ್ಗದ ವಿಚಾರಕ್ಕೆ ವಿರಾಮವಿತ್ತು ಅವುಗಳಿಗಿಂತಲೂ ಮಿಗಿಲಾದ ಲಿಂಗಾಂಗಯೋಗದ ಸುಲಭತೆಯನ್ನು ಮತ್ತು ಸಾರ್ಥಕತೆಯನ್ನು ಸರಳವಾಗಿ ಸಾರುತ್ತಾನೆ ಶಿವಕವಿಯು.  

ಯೋಗ ಮಾರ್ಗದಲ್ಲಿ ಮಂತ್ರ, ಲಯ, ಹಠ, ರಾಜಯೋಗಳು ಮುಖ್ಯವಾದ ನಾಲ್ಕು ಯೋಗಗಳಾದರೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಯೋಗಗಳು ಹಲವಾರು ಇವೆ. ಗೀತೆಯಲ್ಲಿ ಪ್ರತಿಯೊಂದು ಅಧ್ಯಾಯದ ಒಂದೊಂದು ವಿಷಯವೂ ಒಂದೊಂದು ಯೋಗವೆಂಬುದಾಗಿಯೇ ಪ್ರತಿಪಾದಿತವಾಗಿದೆ. ಮುಖ್ಯವಾಗಿ ಸಾಂಖ್ಯ ಯೋಗ, ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಜ್ಞಾನ-ವಿಜ್ಞಾನ ಯೋಗ, ರಾಜವಿದ್ಯಾ-ರಾಜಗುಹ್ಯಯೋಗ, ವಿಭೂತಿಯೋಗ, ಭಕ್ತಿಯೋಗ ಮೊದ ಲಾದವುಗಳು ವಿವರಿಸಲ್ಪಟ್ಟಿವೆ. ಸ್ವಾಮಿ ವಿವೇಕಾನಂದರು ಕರ್ಮಯೋಗ, ಜ್ಞಾನ ಯೋಗ, ರಾಜಯೋಗ, ಭಕ್ತಿಯೋಗಗಳನ್ನು ವಿಶ್ಲೇಷಿಸಿದ್ದಾರೆ. ಇವೆಲ್ಲ ಹಲವಾರು ಯೋಗಗಳನ್ನು ಸಾಧನೆ ಮಾಡಿದರೆ ಏಕೈಕ ಫಲವು ಸಿಕ್ಕಬಹುದು. ಆದರೆ ಸಂಪೂರ್ಣ ಫಲ ಸಿಕ್ಕಲಾರದೆಂಬ ಅಭಿಪ್ರಾಯ ಈ ಕೃತಿಕರ್ತರದು. ಅಲ್ಲದೆ ಶರಣ ಸಿದ್ಧಾಂತವೂ ಇದನ್ನೇ ಅನುಮೋದಿಸಿದೆ.

ಹರಭಕ್ತನಾದ ಹರದ ಶರಣನು ತನ್ನ ಸ್ವಾನುಭಾವವನ್ನು ವಿವರಿಸುತ್ತ ಅಷ್ಟಾಂಗ ಯೋಗಗಳಿಗಿಂತ ತಾಂತ್ರಿಕ ಮುದ್ರೆಗಳಿಗಿಂತ ಈ ಲಿಂಗಾಂಗ ಯೋಗದ ಸಹಜತೆಯನ್ನು ತಾತ್ವಿಕತೆನ್ನು ಬಿತ್ತರಿಸುತ್ತಾನೆ. ಕರುಣಾಳು ಗುರುರಾಯನು ಒಲುಮೆಯಿಂದ ಎನಗೆ ಲಿಂಗಾಂಗ ಯೋಗವನ್ನು ಬೋಧಿಸಿದನು. ಇದು ಸುಲಭ ಹಾಗೂ ಸಹಜ ಯೋಗವು. ಎಲ್ಲ ಯೋಗಗಳಲ್ಲಿ ರಾಜಯೋಗವು ಮಿಗಿಲೆನಿಸಿದರೆ  ಅವೆಲ್ಲವುಗಳಿಗೂ ರಾರಾಜಿಸುವ ಈ ಲಿಂಗಯೋಗ, ಅಥವಾ ಶಿವಯೋಗವಾಗಿದೆ. ಇದರಲ್ಲಿ ಎಲ್ಲ ಯೋಗಗಳ ಸಾರ ಅಡಕವಾಗಿದೆ. ಅಂತೆಯೇ ಶಿವಯೋಗವನ್ನು ಯೋಗರಾಜವೆಂದು ಬಣ್ಣಿಸಿದ್ದಾರೆ.  

ಒಂದೊಂದು ಪದಾರ್ಥಗಳಲ್ಲಿ ಒಂದೊಂದು ಗುಣವಿರುವಂತೆ ಒಂದೊಂದು ಯೋಗ ಸಾಧನೆಯಿಂದ ಏಕೈಕ ಫಲ ಲಭ್ಯವಾಗಬಹುದು. ಅನೇಕ ಸಾರವತ್ತಾದ ವಸ್ತುಗಳಿಂದ ತಯಾರಿಸಿದ ‘ಸಾರು’ (ಸಾಂಬಾರ) ವನ್ನು ಊಟದ ಕೊನಗೆ ಸುರಿದು

ಸಂತೃಪ್ತರಾಗುತ್ತಾರೆ. ಹಾಗೇ ಈ ಶಿವಯೋಗದಲ್ಲಿ ಮಂತ್ರಾದಿ ನಾಲ್ಕು ಯೋಗಗಳು, ಕರ್ಮ, ಭಕ್ತಿ, ಜ್ಞಾನ ಯೋಗಗಳು ಮುಪ್ಪುರಿಗೊಂಡು ಶೋಭಿಸುವ ಶಿವಯೋಗವು ಶಿವಭಕ್ತನನ್ನು ಮುಕ್ತನನ್ನಾಗಿಸುವದು. ಶಿವಯೋಗ ಸಾಧಿಸಿದ ಮೇಲೆ ಪುನರ್ಜನ್ಮವಿಲ್ಲ ಕರ್ಮದ ತೊಡಕಿಲ್ಲ. ಭವ-ಬಂಧನದ ಸೋಂಕಿಲ್ಲ.

ಶಿವಲಿಂಗಭಕ್ತನು ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿ, ಅವಧಾನಭಕ್ತಿ, ಅನುಭವಭಕ್ತಿ, ಆನಂದಭಕ್ತಿ, ಸಮರಸಭಕ್ತಿಗಳನ್ನು ಮೈಗೂಡಿಸಿಕೊಳ್ಳುತ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರು ಸ್ಥಲಗಳಲ್ಲಿ ನಿಲ್ಲುತ್ತ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗಗಳನ್ನು ಆರಾಧಿಸುತ್ತ ಅವುಗಳಲ್ಲಿ ಬೆರೆಯುವನು. ಗಂಧ, ರಸ, ರೂಪ, ಸ್ಪರ್ಶ ಶಬ್ದ ಹಾಗೂ ಇವುಗಳಿಂದ ದೊರೆಯುವ ತೃಪ್ತಿಯೆಂಬ ಪದಾರ್ಥಗಳನ್ನು ಸುಚಿತ್ತ, ಸುಬುದ್ದಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವಗಳೆಂಬ ಹಸ್ತದಿಂದ ಸುಗಂಧ, ಸುರಸ, ಸುರೂಪ, ಸುಸ್ಪರ್ಶ, ಸುಶಬ್ದ, ಸಂತೃಪ್ತಿಗಳೆಂಬ ಪ್ರಸಾದಗಳನ್ನಾಗಿ

ಉದಾತ್ತೀಕರಿಸಿ ಕೊಂಡು ಆಯಾ ಲಿಂಗ ಮುಖಕ್ಕೆ ಸಮರ್ಪಿಸಿ ಪರಮಾನಂದದಲ್ಲಿ ಲೀನನಾಗಿ ಲೋಲಾಡುವನು. ಇದಲ್ಲದೆ ಲಿಂಗಗತ ಶಕ್ತಿಗಳನ್ನು, ಪ್ರಣವಗಳನ್ನು ಕಲೆಗಳನ್ನು ಸಾದಾಖ್ಯಗಳನ್ನು, ಅಧಿದೇವತೆಗಳನ್ನು ಮತ್ತು ಲಕ್ಷಣಗಳನ್ನು ಅಳವಡಿಸಿ

ಕೊಳ್ಳುವನು. ನೂರೊಂದು ಸ್ಥಲವನ್ನರಿತು ಇನ್ನೂರಾ ಹದಿನಾರು (೨೧೬) ಸಕೀಲುಗಳಲ್ಲಿ ಆಚರಿಸುವನು. ಇಂಥ ಅಸದೃಶವಾದ ಆತ್ಮವಿಜ್ಞಾನಿಯಾಗಿ ಶಿವಯೋಗಿಯೆನಿಸುವನು.

 ಪರಮ ಗುರುವು ಹರಸುವ ಈ ಸರಳವಾದ ಶಿವಯೋಗದಲ್ಲಿ ಯಮಾ ದ್ಯಷ್ಟಾಂಗ ಯೋಗಗಳೂ, ಕ್ರಿಯಾ-ಜ್ಞಾನ-ಭಕ್ತಿ ಸಮನ್ವಯವೂ ಹಾಸುಹೊಕ್ಕಾಗಿದೆ. ಅದು ಕಾರಣ ಈ ಲಿಂಗಾಂಗ ಯೋಗಕ್ಕೆ ಇತರ ಯೋಗಗಳು ಸರಿಬಾರವು.

ಓ ನಿರಂಜನ ನಿರಾಭಾರಿ ಗುರುವೆ ! ಇಂಥ ಸುಲಭ ಸಹಜವಾದ ಲಿಂಗಾಂಗ ಯೋಗವನ್ನು ಮೈಗೂಡಿಸಿಕೊಳ್ಳುವ ಅನುವನ್ನು ಆಚರಿಸಿ ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿ ಕಾಪಾಡು. ನಿನ್ನ ಕೃಪೆಯಿಲ್ಲದೆ, ಮಾರ್ಗದರ್ಶನವಿಲ್ಲದೆ ಈ ಶಿವಯೋಗ ಅರಿವಿಗೆ ಬರಲಾರದು.

ಈ ಲಿಂಗ ನಿನ್ನಂಗ | ಕಾಲಿಂಗನವಾಗಲ್ಕೆ

ನೀ ಲಿಂಗ ನಿನ್ನ-ಮೈಲಿಂಗವೆಂದೆನ್ನೊಳ್

ಕೀಲಿಸಿದ ಗುರುವೆ ಕೃಪೆಯಾಗು     ||೧೦೭||

 ಲಿಂಗಾಂಗಯೋಗದ ಮಹತ್ವವನ್ನು ಪುನಃ ಪುನಃ ವರ್ಣಿಸಿದ್ದಾನೆ. ಶಿವಕವಿಯು. ಗುರುಕರುಣಿಸುವ ಇಷ್ಟಲಿಂಗ ಪ್ರತ್ಯಕ್ಷ ಕಾಣುವದು. ಈ ಲಿಂಗವು ಶಿಷ್ಯನಂಗವನ್ನು ಆಲಿಂಗಿಸುತ್ತಲೇ ಅಂಗವನ್ನು ಲಿಂಗಮಯವನ್ನಾಗಿಸುವದು. ಒಳಗಿರುವ ಚೈತನ್ಯವು

ಗುರು-ಲಿಂಗ-ಜಂಗಮ ಕೃಪೆಯಿಂದ ಹೊರಗೆ, ವ್ಯಾಪಿಸಿ ಒಳಹೊರಗು ಬೆಳಗುವದು. ಲಿಂಗಚೈತನ್ಯವು ಜಾಗೃತಗೊಂಡು ಅಜ್ಞಾನ-ದುರ್ಭಾವನೆಗಳನ್ನು ದೂರಗೊಳಿಸುವದು. ಸೂರ್ಯನ ಸನ್ನಿಧಿಯಲ್ಲಿ ಕತ್ತಲಿರಲು ಸಾಧ್ಯವೆ ! ಶ್ರೀಗುರುವು ಶಿಷ್ಯನ ಮಸ್ತಕದ ಚಿಚೈತನ್ಯವನ್ನು ತನ್ನ ಭಾವದಲ್ಲಿ ಭಾವಿಸಿ  ಆತನ ಹೃದಯ ಕಮಲವನ್ನು ಅರಳಿಸಿ ಮಹಾಲಿಂಗವನ್ನು ಕರಕಮಲದಲ್ಲಿ ಕಾಣಿಸು ವಂತೆ ಕರುಣಿಸುವಾಗ ತನು-ಮನ-ಭಾವಗಳನ್ನು ಹಿಂದೆ ವಿವರಿಸಿದಂತೆ ಸಂಸ್ಕರಿಸಿ ಪರಿಶುದ್ಧಗೊಳಿಸುವನು “ಲಿಂಗವನ್ನು ಧರಿಸಿಕೊಂಡ ನೀನು ಸದಾ ಶುದ್ಧ’ ನೆಂದು ಬೋಧಿಸುವನು. ಸಂಚಿತ-ಪ್ರಾರಬ್ಧ-ಆಗಾಮಿಕರ್ಮಗಳಿಂದ ಮುಕ್ತನನ್ನಾಗಿಸುವನು. ತ್ರಿಮಲಗಳ ನಾಶ ಮಾಡುವನು. ಅಗ್ನಿಯನ್ನು ಆವರಿಸಿದ (ಸಂಪರ್ಕಿಸಿದ) ಕಟ್ಟಿಗೆಯು ಅಗ್ನಿಯೇ ಆಗುವಂತೆ; ಲಿಂಗವನ್ನು ಧರಿಸಿದವನು ಲಿಂಗಮಯನೇ ಆಗುವನು. ಆಗಮದಲ್ಲಿ ಉಕ್ತವಾದ ಉತ್ತಮ ಉದಾಹರಣೆ ಉದಾಹರಿಸಲು ಯೋಗ್ಯವಾಗಿದೆ. ಈ ಮಾತನ್ನು ಶ್ರೀಪತಿಪಂಡಿತರು ಶ್ರೀಕರಭಾಷ್ಯದಲ್ಲಿ ಒತ್ತಿ ಹೇಳಿದ್ದಾರೆ-

“ಮಾನವಃ ಶಿವಯೋಗೇನ ಶಿವೋ ಭವತಿ ನಾನ್ಯಥಾ |

ಭ್ರಮಮರಚಿಂತಾಯಾಂ ಕೀಟೋಪಿ ಭ್ರಮರಾಯತೇ”

ಮನೆಗಳಲ್ಲಿ ಇದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಆದರೆ ಆ ವಿಷಯವನ್ನು ಅನುಭವದಲ್ಲಿ ತಂದುಕೊಳ್ಳುವದಿಲ್ಲ, ಕುಡೀಕುಕಾರವೆಂಬ ಭ್ರಮರವು ಬಾಯಲ್ಲಿ ಮಣ್ಣನ್ನು ತಂದು ಬಾಗಿಲು ಕಿಡಿಕಿಗಳ ಸಂಧಿಯಲ್ಲಿ ಮನೆಮಾಡುತ್ತದೆ. ಅದರಲ್ಲಿ ಸಣ್ಣ

ಕೀಡೆಯನ್ನು ತಂದು ತನ್ನ ಭಾವವನ್ನು ನಿತ್ಯವೂ ಭಾವಿಸುತ್ತದೆ. (ತುಂಬುತ್ತದೆ) ಕ್ರಮೇಣ ಕೆಲವು ದಿನಗಳಲ್ಲಿ ಕ್ರೀಡೆಯೂ ಆ ಭ್ರಮರದಂತಾಗುವದು. ಅಂದಮೇಲೆ ಮಾನವನು ಶಿವಲಿಂಗದ ಸಂಪರ್ಕದಿಂದ ಶಿವಮಯನಾಗುವದರಲ್ಲಿ ಯಾವ ಸಂದೇಹವಿಲ್ಲ. ಶಿವನು ತನ್ನ ಸೃಷ್ಟಿಯಲ್ಲಿ ಅನಂತ ಉಪದೇಶವನ್ನು ತುಂಬಿರಿಸಿದ್ದಾನೆ. ಅದನ್ನು ತಿಳಿದುಕೊಳ್ಳುವ ಅಂತರ್ದೃಷ್ಟಿಯು ನಮ್ಮಲ್ಲಿ ಬೆಳೆದು ಬಂದರೆ ನಾವು ನಿಜವಾಗಿಯೂ ಸುಜ್ಞಾನಿಗಳಾಗುತ್ತೇವೆ. ಅರಿವನ್ನು ಕುರುಹನ್ನಾಗಿ ಕರುಣಿಸಿ

ಇಂಥ ಅಂರ್ತದರ್ಶನ ಮಾಡಿಸುವವನೇ ಗುರುವು. ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡರೆ ಅರಿವುಳ್ಳವನನ್ನಾಗಿಸುವನು. ಲಿಂಗವೇ ತಾನಾಗುವದರಲ್ಲಿ ಯಾವ ನ್ಯೂನತೆಯೂ ಇರದು.

 ಓ ಗುರುವೆ ! ಲಿಂಗವನ್ನು ಕರುಣಿಸಿ ಲಿಂಗ ಗುಣಗಳನ್ನು ಎನ್ನಂಗದಲ್ಲಿ ಕೀಲಿಸಿ ಲಿಂಗಮಯನನ್ನಾಗಿ ಮಾಡಿದ ನಿನಗೆ ನಾನು ಚಿರಋಣಿ, ನಿನ್ನ ಋಣ ಎಂದೆಂದಿಗೂ ತೀರದು.  ಮನುಷ್ಯನಾಗಿ ಬಾಳಿ ಬದುಕಿದ ಮೇಲೆ ಮಾತೃಋಣ, ಪಿತೃಋಣ, ಸಮಾಜ

ಋಣಗಳನ್ನು ತೀರಿಸಲೇಬೇಕು. ಅವರವರ ಉಪಕೃತಿಯನ್ನು ಸ್ಮರಿಸಿ ತಕ್ಕ ಕರ್ತವ್ಯ ನಿಷ್ಠನಾದರೆ ಆ ಋಣಗಳು ತೀರಿದಂತಾಗುವವು.

ಈ ಲಿಂಗವೆ ಸತ್ಕ್ರಿ| ಮೂಲ ಸಮ್ಯಕ್ ಜ್ಞಾನ

ದಾಲಯ ನೀ ತ್ರೈ-ಕಾಲ ಪೂಜಿಪುದೆಂದು

ಪಾಲಿಸಿದ ಗುರುವೆ ಕೃಪೆಯಾಗು         | ೧೦೮ |

ಲಿಂಗಭಕ್ತನು ಸರ್ವಾಂಗಲಿಂಗಮಯನಾಗಲು ಲಿಂಗಪೂಜೆಯೇ ಸಾಧನವು. ಲಿಂಗಪೂಜೆಯೇ ಶಿವಯೋಗವು, ಬಾಲಲೀಲಾ ಮಹಾಂತೇಶ್ವರ ಪುರಾಣದಲ್ಲಿ ಕವಿರತ್ನ ಚನ್ನಕವಿಗಳು-

ಶಿವಪೂಜೆಯೇ ಮುಖ್ಯ ಶಿವಯೋಗಮೆನಿಸುವದು |

ಶಿವಪೂಜೆಯಿಲ್ಲದಗೆ ಮುಕ್ತಿ ಘಟಿಸದು ಮತ್ತೆ ʼ’|

ಶಿವಪೂಜೆಗೆಣೆಯುಂಟೆ ಮೂಜಗದೊಳು‘ʼ (ನಾಲ್ಕನೆಯ ಸಂಧಿ)

ಶಿವಪೂಜೆಯೇ ಮುಖ್ಯ ಶಿವಯೋಗವೆಂತಲೂ ಅದಿಲ್ಲದೆ ಮುಕ್ತಿ ದೊರಕದೆಂದೂ ಆ ಶಿವಯೋಗದ ಮಹತ್ವವನ್ನು ತಿಳಿಸಿದ್ದಾರೆ. ಈ ಶಿವಯೋಗದಲ್ಲಿ ಸತ್ಕ್ರಿಯೆಗಳು ಸಮ್ಯಕ್ ಜ್ಞಾನವು ಸಮನ್ವಯವಾಗಿರುತ್ತವೆ. ಅಂತೆಯೇ ಶಿವಯೋಗವು ಜ್ಞಾನ ಕ್ರಿಯೆಗಳ ಸಮನ್ವಯ ಮಾರ್ಗವಾಗಿದೆ. ಇಂಥ ಶಿವಯೋಗವನ್ನು ಸಾಧಿಸುವ ಮೂಲವೇ ಲಿಂಗವು.  ಅದುಕಾರಣ ಈ ಲಿಂಗವು ಸತ್ಕ್ರಿಯಾ ಮೂಲವೂ, ಸಮ್ಯಕ್ ಜ್ಞಾನಕ್ಕೆ ಆಲಯವೂ ಆಗಿದೆ. ಲಿಂಗವಿಲ್ಲದೆ ಮಾಡುವ ಕ್ರಿಯೆಗಳು ಜಡಕರ್ಮಗಳಾಗುತ್ತವೆ. ಜ್ಞಾನಪರಿಪೂರ್ಣವಾಗುವದಿಲ್ಲ. ಗುರುಕರಜಾತನಾದ ಮೇಲೆಯೇ ಲಿಂಗಕ್ರಿಯೆಗಳು ಲಿಂಗಜ್ಞಾನವು ಸಮನಿಸುತ್ತವೆ. ಲಿಂಗವು ಸಮರಸದ ಸ್ರೋತವೆನಿಸುವದು.

ಲಿಂಗಪೂಜೆಯಲ್ಲಿ ಸಮ್ಯಕ್ ಜ್ಞಾನವುಳ್ಳವನಾಗಿ ಸತ್ಕ್ರಿಯೆಗಳನ್ನು ಮಾಡುತ್ತಿರುವದರಿಂದ ಕರ್ಮವು ಜಡವಾಗಲಿ, ಬಂಧನಕಾರಿಯಾಗಲಿ ಆಗುವದಿಲ್ಲ. ಇಲ್ಲಿ ಯಾವ ಫಲಾಪೇಕ್ಷೆಯಾಗಲಿ ಇರುವದಿಲ್ಲ. ಆದರೂ ಅಷ್ಟಾವರಣದ ಪ್ರತ್ಯಕ್ಷ ಫಲಗಳೆನಿಸಿದ ಪಾದೋದಕ-ಪ್ರಸಾದಗಳು ಕೈ ಮೇಲೆಯೇ ದೊರೆಯುವವು. ಭಗವದ್ಗೀತೆಯಲ್ಲಿಯೂ ಯಾವುದೇ ಕರ್ಮವನ್ನು ಕರ್ತವ್ಯ ದೃಷ್ಟಿಯಿಂದ ಮಾಡು, ಆದರೆ ಅ ಫಲದಲ್ಲಿ ಮಾತ್ರ ನಿನಗೆ ಅಧಿಕಾರವಿಲ್ಲವೆಂದು ತಿಳಿಸಿದೆ. ಆದರೆ ನಮ್ಮ ಶರಣ ಸಿದ್ಧಾಂತವು

 ʼʼಕೂಡಲ ಸಂಗಮದೇವರನ್ನು ಪೂಜಿಸಿದ ಫಲ ಕೈಮೇಲೆʼ’

 ಎಂದು ಬಣ್ಣಿಸಿದೆ. ಗುರುವು ಶಿಷ್ಯನ ಅಂಗದಲ್ಲಿ ಕೀಲಿಸಿದ ಲಿಂಗ ಕಲೆಗಳನ್ನು ಅರುವಿನಲ್ಲಿ ತರುವದೇ ಸತ್ಕ್ರಿಯೆಯಾಗುವದು. ಈ ಕಾರ್ಯ ಶಿವಪೂಜೆಯಲ್ಲಿ ಸಾಂಗವಾಗುವದು. ಆಗಬೇಕು. ಅಂತೆಯೇ ಗುರುವು ಈ ನಿನ್ನ ಲಿಂಗವು ಸತ್ಕ್ರಿಯಾ ಜ್ಞಾನಗಳ ಸ್ವರೂಪವಾಗಿದೆ. ಅದನ್ನು ನೀನು ಪೂಜಿಸಿ ಲಿಂಗವೇ ನೀನಾಗೆಂದು ಉಪದೇಶಿಸಿದ್ದಾನೆ. ಗುರೂಪದೇಶವನ್ನು ಅನುಸಂಧಾನ ಮಾಡಿಕೊಳ್ಳುವದೇ ಶಿವಯೋಗವು.

ʼ’ಜ್ಞಾನಂ ಶಿವಮಯಂ, ಭಕ್ತಿಃ ಶೈವೀ, ಧ್ಯಾನಂ ಶಿವಾತ್ಮಕಂ |

ಶಿವವ್ರತಂ ಶಿವಾರ್ಚೇತಿ ಶಿವಯೋಗೋ ಹಿ ಪಂಚಧಾ ||

ಶಿವಯೋಗವು ಶಿವಜ್ಞಾನ ಶಿವಭಕ್ತಿ, ಶಿವಧ್ಯಾನ, ಶಿವವ್ರತ, ಶಿವಾರ್ಚನ ಎಂದು ಐದು ತೆರನಾಗುತ್ತದೆ. ಸದ್ಗುರು ಕೃಪೆಯಿಂದ ಇಷ್ಟಲಿಂಗದ ಸ್ವರೂಪ ಜ್ಞಾನವು ಅಳವಡವದು. ಲಿಂಗಜ್ಞಾನವಿಲ್ಲದೆ ಭಕ್ತಿಧ್ಯಾನಾದಿಗಳು ಸಾಧ್ಯವಾಗುವದಿಲ್ಲ. ಗುರು ಕರುಣೆಯಿಂದ ಶಿವಜ್ಞಾನೋದಯವಾಗುವದು. ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮಚಕ್ರಗತ ಮಹಾಚೈತನ್ಯವನ್ನು ಕರದಿಷ್ಟ ಲಿಂಗವನ್ನಾಗಿ ಕಂಡು ಶಿಷ್ಯನು ಭಯ ಕ೦ಪಿತನಾಗುವದೇ ಭಕ್ತಿಯ ಬೀಜವು ಮೈದೋರುವದು. ಚಿಚ್ಚೈತನವೇ ಪ್ರತ್ಯಕ್ಷವಾದ ಮೇಲೆ ತನ್ಮಯತೆಯುಂಟಾಗುವದೇ ಧ್ಯಾನಕ್ಕೆ ಮೂಲವಾಗುವದು. ಇಂಥ ಪರವಸ್ತುವೇ ಲಿಂಗವೆಂದರಿದ ಬಳಿಕ ಎಲ್ಲವೂ ಶಿವಮಯವೆಂತಲೂ ಶಿವಲಿಂಗಕ್ಕಿಂತ ಭಿನ್ನ ದೇವರಿಲ್ಲವೆಂಬ ದೃಢ ನಿಶ್ಚಯವೇ ಶಿವವೃತವಾಗುವದು. ಶಿವವ್ರತಿಯಾದ ಲಿಂಗಭಕ್ತನು ಗುರು ಪೇಳಿದಂತೆ ಇಷ್ಟಲಿಂಗವನ್ನು ಪೂಜಿಸಿ ಪೂರ್ಣಲಿಂಗನಾಗುವದೇ ಶಿವಾರ್ಚನೆ. ಈ ಐದು ಸತ್ಕ್ರಿಯೆಗಳ ಸಾಕ್ಷತ್ಕಾರವೇ ಶಿವಯೋಗವಾಗಿರುವದು.  

ಅಷ್ಟಾವರಣ ಸಂಪನ್ನನೂ ಪಂಚಾಚಾರ ಪರಾಣಯನೂ ಆದ ಸದ್ಭಕ್ತನು ಮೆಲ್ಲ ಮೆಲ್ಲನೆ ಷಟ್‌ಸ್ಥಲಗಳನ್ನು ಮೈಗೂಡಿಸಿಕೊಳ್ಳುತ್ತ ಐಕ್ಯನೆನಿಸಿ ಮಹಾಲಿಂಗ ದೊಡನೆ ಮಹವ ಸಾಧಿಸುವದೇ ಷಟ್‌ಸ್ಥಲ ಸಿದ್ಧಾಂತದ ಶಿವಪೂಜೆಯು. ಶಿವಪೂಜೆಯಲ್ಲಿ ಮಾಡುವ ಪ್ರತಿಯೊಂದು ವಿಧಾನಗಳು ಸತ್ಕ್ರಿಯೆಗಳೆನಿಸಿವೆ. ಅವುಗಳ ಅರಿವು ಸಮ್ಯಕ್ ಜ್ಞಾನವಾಗಿದೆ. ಈ ಶಿವಾದ್ವೈತ ಸಿದ್ಧಾಂತ (ಶರಣತತ್ತ್ವ) ದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ವೈಜ್ಞಾನಿಕತೆ, ತಾತ್ವಿಕತೆ ಮನೆಮಾಡಿಕೊಂಡಿವೆ. ಪರಿಶುದ್ಧಗೊಂಡ ಅಂಗತ್ರಯದಲ್ಲಿ ಲಿಂಗತ್ರಯವನ್ನು ಒಂದುಗೂಡಿಸುತ್ತಾ ಹೋಗ ಬೇಕಾಗುವದು. ಇಷ್ಟಲಿಂಗಾರ್ಚನೆಯು ಜೀವನದ ಅಮೃತ ಸಮಯವೆನಿಸಿದೆ. ಅಂತೆಯೇ ಕೇವಲ ಹದಿನಾರು ವರ್ಷ ವಯೋಮಿತಿಯುಳ್ಳ ಮಾರ್ಕಂಡೇಯನು ಸ್ಥಾವರಲಿಂಗವನ್ನು ಪೂಜಿಸಿ ಚಿರಂಜೀವಿಯಾದನು. ಅದಕ್ಕಿಂತಲೂ ಮಿಗಿಲಾದ ಶಿವಪೂಜೆಯ ಪರಿಯನ್ನು ಅರಿತು ಆಚರಿಸುವ ಸಮ್ಯಕ್ ಜ್ಞಾನವುಳ್ಳವನಾಗುವದು ಅತಿಮುಖ್ಯ.

ಶಿವಪೂಜೆಗೈಯ್ಯುವ ಪರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶಿವಪೂಜೆ (ಶಿವಯೋಗವು)ಯು ಸತ್ಕ್ರಿಯಾ ಸಮ್ಯಕ್ ಜ್ಞಾನಗಳ ಸಮರಸವೆಂಬುದು ಅರಿವಾಗದೇ ಇರದು. ಲಿಂಗವಂತನು ಲಿಂಗತಂದೆಯನ್ನು ಧ್ಯಾನಿಸಿ ನಮಿಸಿ ನಿದ್ದೆಗೈದರೆ ಸ್ವಪ್ನಾವಸ್ಥೆಯ ದೋಷಗಳಿಂದ ದೂರವಾಗುವನು. ಬ್ರಾಹೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ  ಗೈಯುತ್ತ ಜಾಗ್ರತ (ಎದ್ದು) ನಾಗಿ ಲಿಂಗವನ್ನು ಲಿಂಗಯೋಗಿಗಳ ಭಾವಚಿತ್ರಗಳನ್ನು ಸಂದರ್ಶಿಸಿ ಲಿಂಗಬಿಂದವನ್ನು ಭ್ರೂಮಧ್ಯದಲ್ಲಿ ಧ್ಯಾನಿಸಬೇಕು. ಲಿಂಗದೇವನಿಗೆ ಕೇವಲ ಶರಣೆಂದರೂ ಸಾಕು, ‘ಹೊತ್ತಾರೆ ಎದ್ದು ಲಿಂಗವ ನೆನೆದರೆ ಅಪಮೃತ್ಯುಗಳು, ಕಾಲಕರ್ಮಂಗಳು ತಪ್ಪುವವು’ ಎಂದಿದ್ದಾರೆ ನಮ್ಮ ಪ್ರಮಥರು. ಪ್ರಾತಃಕಾಲದ ಶಿವನಾಮಸ್ಮರಣೆ ಅನಂತ ಸಮಸ್ಯೆಗಳನ್ನು ಪರಿಹರಿಸುವದಲ್ಲದೆ ಭವ-ಭಯವನ್ನೇ ನಿವಾರಿಸುವದು. ಅನಂತರ ತನ್ನ ತಂದೆ-ತಾಯಿಗಳಿಗೆ, ಗುರು ಹಿರಿಯರ ಪಾದಕ್ಕೆ ಮಣಿಯಬೇಕು. ಜೀವನದಲ್ಲಿ ಬಾಗಿದವನ ಬಾಳು ಬಂಗಾರ ವಾಗುವದು.

ಸೂರ್ಯೋದಯಕ್ಕೆ ಮುಂಚೆ ಶಿವನಾಮಗಳನ್ನು ಗುರು-ಲಿಂಗ-ಜಂಗಮ ಸ್ತೋತ್ರಗಳನ್ನು ಮನದಲ್ಲಿಯೂ, ಸ್ಪಷ್ಟವಾಗಿಯೂ ಉಚ್ಚರಿಸುತ್ತ ಬಹಿರ್ದೆಶಕ್ಕೆ ಹೋಗಿ ಬಂದು ಕೈಗಳಿಗೆ ಶುದ್ಧವಾದ ಮಣ್ಣನ್ನು ಹಚ್ಚಿ ತೊಳೆದುಕೊಳ್ಳಬೇಕು. ನಂತರ ತಂಬಿಗೆಯನ್ನು

ಬೆಳಗಬೇಕು. ಶೌಚ ಕ್ರಿಯೆಯನ್ನು ಮುಗಿಸಿ ಬರುವಾಗ್ಗೆ ಎಡಗೈಯಲ್ಲಿ ತಂಬಿಗೆಯನ್ನು ಹಿಡಿದು ತರಬಾರದು. ಮಣ್ಣಿನಿಂದ ಕೈ ತೊಳೆಯುವದರಿಂದ ಅದರ ಅಗಾಧವಾದ ಶಕ್ತಿ ಉಗುರಿನ ಮುಖಾಂತರ ಶರೀರದಲ್ಲಿ ಸಂಚಾರವಾಗುವದು. ನೈಸರ್ಗಿಕ ಚಿಕಿತ್ಸಕರು ಈ ಮಾತನ್ನು ಧಾರಳವಾಗಿ ಒಪ್ಪುತ್ತಾರೆ. ಮಣ್ಣಿನ ಪಟ್ಟಿಯ ಉಪಚಾರವನ್ನು ವಿಶೇಷವಾಗಿ ಮಾಡುತ್ತಾರೆ. ಆರೋಗ್ಯ ಭಾಗ್ಯ ಆಚಾರದಲ್ಲಿ ಪೂರ್ಣವಿದೆ. ಮೊಳಕೈ ಮೊಣಕಾಲಿನ ವರೆಗೆ ಸ್ವಚ್ಛವಾಗಿ ತೊಳೆದು ಮುಖವನ್ನು ಬಾಯಿಯನ್ನು ಸ್ವಚ್ಛಗೊಳಿಸಬೇಕು. ಕನಿಷ್ಟ ೩ ಸಲುವಾದರೂ ಮುಕ್ಕುಳಿಸಬೇಕು. ಹನ್ನೆರಡಂಗುಲ ಪ್ರಮಾಣದ ಮಾವು, ಬೇವು, ಜಾಲಿ, ನೆಲ್ಲಿ, ಉತ್ತರಾಣಿ, ಹುಲಗಲಿ, ಮೊದಲಾದ ರಸವುಳ್ಳ ವನಸ್ಪತಿ (ಗಿಡ)ಗಳ ಕಡ್ಡಿಯಿಂದ ಹಲ್ಲುಗಳನ್ನು ತಿಕ್ಕಬೇಕು. ಗಿಡಗಳ ರಸ ಹಲ್ಲಿನಲ್ಲಿ ಹಾಗೂ ವಸಡೆಗಳಲ್ಲಿ ಸಂಬಂಧವಾಗಿ ದೀರ್ಘಕಾಲ ಹಲ್ಲುಗಳ ಶಕ್ತಿ ಹೀನವಾಗುವದಿಲ್ಲ. ಹಲ್ಲುಕಡ್ಡಿಯನ್ನು ಮುಖದಲ್ಲಿರಿಸುವಾಗಲೂ ಉರದ ಲಿಂಗದೇವನಿಗೆ ತೋರಿಸಿದರೆ ಆ ಕರ್ಮವೂ ಸತ್ಕ್ರಿಯೆಯೆನಿಸುವದು. ವೀರಶೈವರು ಮುಖ ತೊಳೆಯುವದಕ್ಕಾಗಲಿ, ಸ್ನಾನ ಮಾಡುವದಕ್ಕಾಗಿಯಾಗಲಿ ಅಡಿಗೆ ಮಾಡುವದಕ್ಕಾಗಲಿ ಅಥವಾ ಕುಡಿಯುವದಕ್ಕಾಗಲಿ ಯಾವದೇ ಕೆಲಸಕ್ಕೆ ಬೇಕಾದ ನೀರಿನಲ್ಲಿ ಧೂಳ ಪಾದೋದಕವನ್ನು ಬೆರೆಸಬೇಕು.

ಕೇವಲ ಬಾಯಿ (ವಾಣಿ) ಯಿಂದ ಅನಂತ ನದಿಗಳ-ತೀರ್ಥಗಳ ಸ್ಮರಣೆ ಮಾಡುವದಕ್ಕಿಂತ ಅಷ್ಟಷಷ್ಠಿ (೬೮) ತೀರ್ಥಗಳ ಫಲಕ್ಕಿಂತ ಮಿಗಿಲೆನಿಸಿದ ಧೂಳ ಪಾದೋದಕವನ್ನು ಉಪಯೋಗಿಸುವದರಿಂದ ಜಲದ ಜಡತ್ವವು ಬಯಲಾಗುವದು. ಧೂಳಪಾದೋದಕವನ್ನು ಸ್ನಾನಾದಿ ಕ್ರಿಯೆಗಳಿಗೆ ಉಪಯೋಗಿಸುವದರಿಂದ ಸ್ಥೂಲ ತನು ಪವಿತ್ರವಾಗುವದು. ಅಪ್ಯಾಯನ ಮಾಡಿದ ಮನ ತಣಿಯುವದು. ಸ್ನಾನ ಮಾಡಿ ಮಡಿಬಟ್ಟೆಯನ್ನು ಉಟ್ಟುಕೊಂಡು ಶಿವನಾಮಗಳನ್ನು ನುಡಿಯುತ್ತ ಶಿವಪೂಜಾ ಗೃಹವನ್ನು ‘ಇದು ಶಿವನ ಸದನವೆಂದು ಭಾವಿಸುತ್ತ ಪ್ರವೇಶಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಬಿಳೇ ಕಂಬಳಿ ಅಥವಾ ಹುಲ್ಲಿನ (ದರ್ಭೆಯ) ಚಾಪೆಯ ಮೇಲೆ ಮುಹೂರ್ತ ಮಾಡಬೇಕು. ನೆಲ-ಕಲ್ಲುಗಳ ಮೇಲೆ ಕುಳಿತುಕೊಂಡು  ಪೂಜಿಸಬಾರದು. ಯಾಕೆಂದರೆ ಕಟ್ಟಿಗೆಗೆ ವಿದ್ಯುತ್ ಪ್ರವಾಹ ಹರಿಯದಿರುವಂತೆ ಆಸನಗಳ ಮೇಲೆ ಕೂಡುವದರಿಂದ ಲಿಂಗತೇಜಃ ಪ್ರವಾಹವು ಶರೀರವನ್ನು ಬಿಟ್ಟು ಚಲಿಸುವದಿಲ್ಲ, ಮತ್ತು ಭೌತಿಕ ಬಾಧೆಯೂ ತಗಲುವದಿಲ್ಲ.

ಸಿದ್ಧಾಸನ, ಪದ್ಮಾಸನ, ವೀರಾಸನ ಅಥವಾ ಸುಖಾಸನಗಳಲ್ಲಿ ಯಾವುದೊಂದು ಆಸನಯುಕ್ತನಾಗಿ  ಋಜುಕಾಯನಾಗಿ ಶುದ್ಧೋದಕದಲ್ಲಿ ಪ್ರಣವವನ್ನು ಬರೆದು ಲಿಂಗಾಭಿಷೇಕ ಮಾಡಿ ಸಂಕ್ಷಿಪ್ತ ಪೂಜೆಯನ್ನು ಮುಗಿಸಬೇಕು. ಗುರುಪಾದೋದಕ ಮಾಡಿಕೊಂಡೇ ಶಿವಪೂಜೆ ಮಾಡುವದು. ಕ್ರಿಯಸ್ತರಿಗೆ ಯೋಗ್ಯವಾದುದು. ಮೊದಲು ಗುರು-ಲಿಂಗ-ಜಂಗಮ ಧ್ಯಾನಮಾಡಿ ಲಿಂಗ ಪೂಜೆಯನ್ನು ಪಾದೋದಕ-ಪ್ರಸಾದ ಸಿದ್ಧಿಗಾಗಿ ಪೂರೈಸುವೆನೆಂದು ಸಂಕಲ್ಪಿಸಬೇಕು. ಈ ಸಂಕಲ್ಪ ಜಡವಾದುದಲ್ಲ. ಜ್ಞಾನೇಂದ್ರಿಯಗಳಿಗೆ ಷಡಕ್ಷರ ಪ್ರಣವಗಳ ಸಂಬಂಧ ಅಥವಾ ಸ್ಪರ್ಶಮಾಡುವದು. ಮತ್ತು ಶರೀರದೊಳಗಿನ ಅಶುದ್ಧ ವಾಯುವನ್ನು ಪ್ರಾಣಾಯಾಮದಿಂದ ಪರಿಶುದ್ಧಗೊಳಿಸುವದಾದ ಮೇಲೆ ಭಕ್ತಸ್ಥಲದ ಆಚರಣೆಯು ಪ್ರಾರಂಭವಾಗುವದು. ಇಲ್ಲಿಯವರೆಗೆ ವಿವರಿಸಿದ ವಿಧಾನವು ಅಷ್ಟಾಂಗ ಯೋಗದ ಪೂರ್ವಭಾಗವನ್ನು ಕೆಲಮಟ್ಟಿಗೆ ಪೂರೈಸುವದು. ಈ ರೀತಿ ಸಹಜವಾದ ಆ ಯೋಗ ಇಲ್ಲಿ ಸಂಗತವಾಗುವದು.

 ಭಕ್ತಸ್ಥಲದಲ್ಲಿ ಆಚಾರಲಿಂಗದ ಅರಿವು ವೇದ್ಯವಾಗುವದು. ಅಷ್ಟಾವರಣದಲ್ಲಿ ಪೂಜಾ ಸಾಧನೆಯ ಮೊದಲನೆಯ ಸಾಮಗ್ರಿ ಭಸ್ಮವಾಗಿದೆ. ಭಸ್ಮದಿಂದ ತನು-ಮನ- ಇ೦ದ್ರಿಯಗಳ ಪೂರ್ವಭಾವವು ಭಸ್ಮವಾಗುತ್ತದೆ. ಭಸ್ಮವನ್ನು ಪೂಜಿಸಿ ಪಂಚಬ್ರಹ್ಮ ಮಂತ್ರೋಚ್ಛಾರಣೆಯಿಂದ ಸಿಂಪರಣೆ ಮಾಡಿಕೊಳ್ಳುವದು ಭಸ್ಮಸ್ನಾನವು. ಜಲಸ್ನಾನವಾದ ಮೇಲೆ ಭಸ್ಮಸ್ನಾನದಿಂದ ಅಂತರಂಗದ ಜಳಕವು ನೈರ್ಮಲ್ಯವು ಮುಗಿದಂತಾಗುವದು. ಎರಡೂ ಕೈಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಮಂತ್ರ ಸಂಬಂಧಮಾಡಿ ಶರೀರದ ಅಂಗಾಂಗಗಳಿಗೆ ಸವರಿಕೊಳ್ಳಬೇಕು. ಭಸ್ಮ ಸ್ನಾನ ಹಾಗೂ ಲೇಪನಗಳಿಂದ ಶರೀರದ ಶೈತ್ಯಾಂಶವು ನಾಶವಾಗುವದು. ಚರ್ಮದ ಪರಿಶುದ್ಧತೆ ಯುಂಟಾಗುವದು. ನಂತರ ತೋರ ಬೆರಳು, ನಡುವಿನ ಬೆರಳು, ಮತ್ತು ಉಂಗುರ ಬೆರಳು ಈ ಮೂರು ಅಂಗುಲಿಗಳಿಂದ ತ್ರಿಪುಂಡ್ರವನ್ನು ಧರಿಸಬೇಕು. ಗುರುವಿನ ಅಪ್ಪಣೆಯಂತೆ ಆಯಾ ಅವಯವಗಳಲ್ಲಿ ಸ್ಪಷ್ಟವಾಗಿ ಧರಿಸಬೇಕು. ಭಸ್ಮಧರಿಸುವಾಗ ಸಂಕೋಚಗೊಳ್ಳುವದು ಸರಿಯಲ್ಲ. ಭಸ್ಮದಿಂದ ಶರೀರವು ಪವಿತ್ರ ಹಾಗೂ ಶಾಂತ   ವಾಗುವುದು. ಇನ್ನು ರುದ್ರಾಕ್ಷಧಾರಣೆಯಿಂದ ಶರೀರದ ಹೆಚ್ಚಿನ ಉಷ್ಣತೆಯೂ ದೂರವಾಗುವದು.

ಮಾಹೇಶ್ವರ ಸ್ಥಲದಲ್ಲಿ ಮಂತ್ರನ್ಯಾಸಗಳು ದಿಗ್ಭಂಧನ, ಧ್ಯಾನ ಹಾಗೂ ಜಪ ವಿಧಾನಗಳು ಸೇರುವವು. ಶರೀರದಲ್ಲಿ ಶಿವನ ಷಟ್‌ಶಕ್ತಿಗಳನ್ನು ಮಂತ್ರಪೂರೈಕ ಸಂಬಂಧ ಮಾಡಿಕೊಳ್ಳುವದೇ ಮಂತ್ರನ್ಯಾಸವು.

 ಸರ್ವಜ್ಞತಾ ತೃಪ್ತಿರನಾದಿಬೋಧಃ |

ಸ್ವತಂತ್ರತಾ ನಿತ್ಯಮಲುಪ್ತ ಶಕ್ತಿಃ |

ಅನಂತಶಕ್ತಿಶ್ಚ ವಿಭೋರ್ವಿಧಿಜ್ಞಾ

ಷಡಾಹುರಂಗಾನಿ ಮಹೇಶ್ವರಸ್ಯ || ಪಾರಮೇಶ್ವರ ತಂತ್ರ ||

ಮಹಾಪರಶಿವನ ಆರುಶಕ್ತಿಗಳೆನಿಸಿದ ೧) ಸರ್ವಜ್ಞ ಶಕ್ತಿ ೨) ನಿತ್ಯತೃಪಶಕ್ತಿ ೩) ಅನಾದಿ ಬೋಧಶಕ್ತಿ ೪) ಸ್ವತಂತ್ರಶಕ್ತಿ ೫) ಅಲುಪಶಕ್ತಿ, ೬) ಅನಂತಶಕ್ತಿಗಳನ್ನು ಕರಗಳಲ್ಲಿ ದೇಹದಲ್ಲಿ ಮತ್ತು ಅಂಗಾಂಗಗಳಲ್ಲಿ ವಿಧಾನಪೂರ್ವಕ ನ್ಯಾಸ (ಸಂಬಂಧ) ಮಾಡಿಕೊಳ್ಳುವದರಿಂದ ಅಂಥ ಶಕ್ತಿಗಳನ್ನು ತಾನೂ ಧರಿಸಿಕೊಂಡಂತಾಗುವದು. ಅಂತೆಯೇ ಶಿವಯೋಗಿಯ ಸರ್ವಾಂಗವೂ ಲಿಂಗಮಯವಾಗುತ್ತದೆ. ಪರುಷಮಯವೆನಿಸುತ್ತದೆ. ಇಂಥ ಪೂಜ್ಯರು ಮುಟ್ಟಿದ ಪದಾರ್ಥ ಪ್ರಸಾದವಾಗಿ ಪರಿಣಮಿಸುತ್ತದೆ. ಈ

ಷಟ್‌ಶಕ್ತಿಗಳನ್ನು ನ್ಯಾಸಮಾಡಿಕೊಳ್ಳುವದರಿಂದ ಶಿವಯೋಗಿಯು ಸಾಕ್ಷಾತ್ ಶಿವನಾಗುವನು. ಪಂಚಪರುಷಗಳೂ ಅವನಲ್ಲಿ ಗುಪ್ತವಾಗಿ ಪ್ರಭಾವ ಬೀರುವವು.

ನ್ಯಾಸಗಳು ಪೂರೈಸಿದ ಮೇಲೆ ದಿಗ್ಭಂಧನ ಮಾಡಿ ಜಪಮಾಡಬೇಕು. ಜಪ ವಿಧಾನದಿಂದ ನಿಷ್ಠಾಭಕ್ತಿಯು ಬೆಳೆದು ಗುರುಲಿಂಗದ ಪೂಜೆ ಬಲಗೊಳ್ಳುವದು. ನಂತರ ವಾಮಕರವನ್ನು ಪೂಜಿಸಿ ಪಶ್ಚಿಮ ಶಿಖಾಚಕ್ರದಲ್ಲಿರಿಸಿ ಭಾವಲಿಂಗವನ್ನು ಭಾವಿಸಿ ಭ್ರೂಮಧ್ಯದಲ್ಲಿ ಪ್ರಾಣಲಿಂಗವನ್ನು ಕಲ್ಪಿಸಿ ಉರದ ಇಷ್ಟಲಿಂಗವನ್ನು ಕರ ಕಮಲಕ್ಕೆ ಬಿಜಯಂಗೈಸಿಕೊಂಡು ಷೋಡಶೋಪಚಾರ ಅಷ್ಟವಿಧಾರ್ಚನಗಳಿಂದ ಪೂಜಿಸುವದು ಪ್ರಸಾದಿ-ಪ್ರಾಣಲಿಂಗಿಸ್ಥಲದ ಪೂಜೆಯಾಗುವದು. ಜಲ, ಗಂಧ, ಅಕ್ಷತೆ, ಪತ್ರಿ, ಪುಷ್ಪ, ಧೂಪ, ದೀಪ, ನೈವೇದ್ಯ ಇವುಗಳಿಂದ ಮಾಡಿದ ಪೂಜೆ ಅಷ್ಟವಿಧಾರ್ಚನೆಯೆನಿಸುವದು. ಇನ್ನು ಅರ್ಘ್ಯ, ಪಾದ್ಯ, ಅಚಮನ, ಪತ್ರಪುಷ್ಪ ಗಂಧ, ಅಕ್ಷತೆ, ರುದ್ರಾಕ್ಷಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ ಇವು ಷೋಡಶೋಪವಿಚಾರಗಳು, ಈ ಉಪಚಾರಗಳು ಎಲ್ಲರಿಗೆ ಸಾಧ್ಯವಾಗದಿದ್ದರೂ ಅಷ್ಟ ವಿಧಾರ್ಚನೆಯನ್ನು ಮಾಡ ಬಹುದು.

 ಪೂಜೆಯ ಒಂದೊಂದು ಉಪಚಾರವೂ ಒಂದೊಂದು ಅಮೋಘ ಫಲವನ್ನು ಕರುಣಿಸುತ್ತದೆ. ಜಲವು ಶಾಂತಿಯನ್ನು ಗಂಧವು ಪುಷ್ಟಿಯನ್ನು ಮತ್ತು ಆಯುಷ್ಯವನ್ನು ಬೆಳೆಸುವದು. ಅಕ್ಷತೆಯು ಕ್ಷತಿ (ದುಃಖ) ಯನ್ನು ಕಳೆಯವದು. ಪತ್ರ-ಪುಷ್ಪಗಳು ಶಮ-ದಮಾದಿ ದೈವೀ ಸಂಪತ್ತನ್ನು, ಧೂಪವು ಪಾಪವನ್ನು ನಿವಾರಿಸಿ ಪವಿತ್ರತೆಯನ್ನು ಕೊಡುವದು. ದೀಪನೀರಾಜನವು ಅಪಮೃತ್ಯುವನ್ನು  ಹರಣ ಮಾಡುವದು. ನೈವೇದ್ಯವು ಸರ್ವಸಂಪತ್ತನ್ನು ಕೊಡುವದು. ವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಈ ಫಲವನ್ನು ಪ್ರತಿಪಾದಿಸಿದ್ದಾರೆ.

 ಉಪಚಾರಯುಕ್ತವಾದ ಅರ್ಚನೆಯನ್ನು ಪೂರೈಸಿ ತನ್ನ ನಾಶಿಕಾಗ್ರದಿಂದ ಹನ್ನೆರಡು ಅಂಗಲ ಪರಿಮಿತಿಯಲ್ಲಿ ಅಂಗೈಯೊಳಗಣ ಲಿಂಗವನ್ನು ಕಂಗಳಿಂದ ನಿರೀಕ್ಷಣ ಮಾಡುತ್ತ ಗುರೂಪದಿಷ್ಟ ಷಡಕ್ಷರ ಮಹಾಮಂತ್ರವನ್ನು ನೂರೆಂಟು ಸಲಕ್ಕೆ ಕಮ್ಮಿಯಾಗದಂತೆ ಜಪಿಸಬೇಕು. ಈ ಲಿಂಗ ನಿರೀಕ್ಷಣವು ಪ್ರಾಣಲಿಂಗಿಯ ಅನುಸಂಧಾನವಾಗುವದು. ಪ್ರಸಾದಿಯಾಗಿ ಶಿವಲಿಂಗಕ್ಕೆ ಉಪಚಾರಗಳನ್ನು ಸಮರ್ಪಿಸಿ ಪ್ರಾಣಲಿಂಗಿಯಾಗಿ ಜಂಗಮ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳನ್ನು ಬೆರೆಯಿಸಬೇಕು. ಪುನಃ ಜಪಿಸಿ ಅರ್ಘ್ಯಕೊಟ್ಟು ಮಂಗಲ ಸ್ತೋತ್ರವನ್ನು ಪಾಡುವ ಶರಣನು ಪತಿಯಾದ ಪ್ರಸಾದಲಿಂಗನ ಪ್ರಸನ್ನತೆಯನ್ನು ಪಡೆಯುವನು. ಅನುಭವದ ಆನಂದವನ್ನು ಸವಿಯುವದು.

ಪೂಜೆಯನ್ನು ಪೂರೈಸಿ ಐಕ್ಯಸ್ಥಲದಲ್ಲಿ ನಿಂದ ಶರಣನು ಗುರು-ಲಿಂಗ- ಜಂಗಮದ ಪಾದೋದಕ-ಪ್ರಸಾದದಲ್ಲಿ ಸಮರಸ ಭಕ್ತಿಯಿಂದ ಮಹಾಲಿಂಗದಲ್ಲಿ ಸಮರಸವಾಗುವನು. ಮಹದಾನಂದಭರಿತನಾಗುವನು. ಇವೆಲ್ಲವುಗಳೂ ಶಿವಪೂಜೆಯ ಸತ್ಕ್ರಿಯೆಗಳಲ್ಲದೆ ಮತ್ತೇನು ? ಈ ಸತ್ಕ್ರಿಯೆಗಳಲ್ಲಿ ಸಮ್ಯಕ್ ಜ್ಞಾನ ಅವಶ್ಯ ಬೇಕಾಗುವದು. ಸುಜ್ಞಾನವಿಲ್ಲದ ಕ್ರಿಯೆ ಸತ್ಕ್ರಿಯೆಯೆನಿಸದು. ಸುಜ್ಞಾನ-ಸತ್ಕ್ರಿಯೆಗಳ ಸಂಗಮವೇ ಶಿವಯೋಗಸಿದ್ಧಿಗೆ ಕಾರಣವಾಗುವದು. ಶಿವಯೋಗದಿಂದ ಪದಾರ್ಥ ಕಾರ್ಯವು ಪ್ರಸಾದ ಕಾಯವೆನಿಸುವದು. ಪರಿಪೂರ್ಣವೆನಿಸುವದು.

ಶ್ರೀ ಗುರುನಾಥನು ಇಂಥ ಮಂಗಲಮಯ ಲಿಂಗವನ್ನು ತ್ರಿಕಾಲದಲ್ಲಿ ಪೂಜಿಸಲು ಬೋಧಿಸುವನು. ಅನಾನುಕೂಲವಾದಲ್ಲಿ ದ್ವಿಕಾಲದಲ್ಲಿ ಅಥವಾ ಏಕಕಾಲದಲ್ಲಿ ಯಾಗಲಿ ಸ್ವಸ್ವರೂಪಾನುಸಂಧಾನವುಳ್ಳ ಈ ಸ್ವಯಂ ಲಿಂಗವನ್ನು ಪೂಜಿಸಿ ಪುನೀತ ನಾಗಬೇಕೆಂಬ ಪಾಲನೆಯನ್ನು ಗುರುವು ಬೋಧಿಸುತ್ತಾನೆ. ಲಿಂಗಪೂಜೆಯಿಂದಲೇ ಲಿಂಗಭಕ್ತನ ಪಾಲನ-ಪೋಷಣವಾಗುತ್ತದೆ. ಅಂತೆಯೇ ಶಿವಕವಿಯು ಪ್ರಯೋಗಿಸಿದ ಹಾಗೂ ಮುಂದೆಯೂ ಉಪಯೋಗಿಸುವ ‘ಪಾಲಿಸಿದ’ ಪದ ಅರ್ಥಪೂರ್ಣವಾಗಿದೆ.

ತ್ಮಿಕವಾಗಿದೆ. ಇಲ್ಲಿ ಪೂಜೆಯ ಪಾಲನೆ ಮತ್ತು ಈ ನಿಯಮವನ್ನು ಪಾಲಿಸುವದರಿಂದ ತನ್ನ ಪಾಲನೆಯೂ ಅವಶ್ಯವಾಗುವದು. ನಂಬಿದರಿಗೆ ಶಂಭು ಇಂಬಾಗಿರುವನು.

ಈ ಲಿಂಗವನು ಭಕ್ತಿ | ಶೀಲನೇಮಗಳಿಂದ

ಓಲೈಸು ನಿನಗೆ-ಮೇಲುಪದವಹುದೆಂದು

ಪಾಲಿಸಿದ ಗುರುವೆ ಕೃಪೆಯಾಗು   ||೧೦೯ ||

ದೃಷ್ಟವಾದ ಇಷ್ಟಲಿಂಗವನ್ನು ಪೂಜಿಸಲು ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಸಾಧನಗಳಾದರೆ ಪ್ರಾಣಲಿಂಗ ಮತ್ತು ಭಾವಲಿಂಗ ಪೂಜೆಯು ಅವುಗಳಿಂದ ಆಗಲಾರದು. ಅಲ್ಲಿ ಭಕ್ತಿ, ಶೀಲ, ನೇಮಗಳು ಮುಖ್ಯವಾಗಿವೆ. ಯಾಕೆಂದರೆ ಭಂಡಾರಿ ಬಸವಣ್ಣನವರು-

ಅಳಿಯೆರಗದ ಅನಿಲನಲುಗದ ರವಿಕರಂಪುಗದ

ಸುಳಿಗೊಂಡು ದಳವೇರಿ ಹಸುರಳಿದು ಬೆಳುಪುಳಿದ

 ಸುರುಚಿರಮೆನಿಪ್ಪ ಮೂಸಲಮೊಗ್ಗೆಯಂ ಕೊಂಡು

ತಂದು ಕೂಡಲಸಂಗಮನಾಥನನ್ನು ಭಕ್ತಿಯಿಂದ ಪೂಜಿಸಿದರೂ ತೃಪ್ತಿಯಾಗಲಿಲ್ಲ. ಭಯಕಂಪಿತರಾಗಿ ಭಗವಂತನನ್ನು ಬೇಡುತ್ತಾರೆ.

 ಹಾಲೆಂಜಲು ಪಯ್ಯನ, ಉದಕವೆಂಜಲು ಮತ್ಸ್ಯದ

ಪುಷ್ಪವೆಂಜಲು ತುಂಬಿಯು,

ಎಂತು ಪೂಜಿಸುವೆನಯ್ಯಾ,

ಶಿವ, ಶಿವಾ ! ಎಂತು ಪೂಜಿಸುವೆ ?

ಈ ಎಂಜಲವನತಿಗಳೆವಡೆ ಎನ್ನಳವಲ್ಲ

ಬಂದುದ ಕೈಕೋ ಕೂಡಲ ಸಂಗಮದೇವಾ

ವಿಚಾರಿಸಿದಲ್ಲಿ ಯಾವುದೂ ಶುದ್ಧವಾದುದಲ್ಲ, ಹಾಲುಕರುವಿನ ಎಂಜಲು, ನೀರು ಜಲಚರ ಪ್ರಾಣಿಗಳ ಎಂಜಲು, ಹೂಪತ್ರೆಗಳು ಕೀಟಗಳ ಎಂಜಲು, ಯಾವ ಪದಾರ್ಥವೂ ಮಿಸಲವಲ್ಲ, ಯಾವುದನ್ನೂ ಶುದ್ಧ ಮಾಡುವ ಶಕ್ತಿಯು ನಮ್ಮಲ್ಲಿಲ್ಲ. ದೇವಾ ! ಭಕ್ತಿಯ

ಮನದಿಂದ ಬಂದುದನ್ನು ಸ್ವೀಕರಿಸು. ಅದು ನಿನ್ನ ಪೂಜೆಯಾದೀತು. ಕೃಷ್ಣನಾದರೂ-

ಪತ್ರಂ ಪುಷ್ಪಂ ಫಲಂ ತೋಯಂ

ಯೋ ಮೇ ಭಕ್ತ್ಯಾ ಪ್ರಯಚ್ಛತಿ ।। ಗೀತೆ ||

ಯಾವ ಭಕ್ತನು ಪತ್ರಿಯನ್ನಾಗಲಿ, ಪುಷ್ಪವನ್ನಾಗಲಿ, ಫಲವನ್ನಾಗಲಿ, ನೀರನ್ನಾಗಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ ಮಾತ್ರ ನನಗೆ ಸಲ್ಲುವದು ಎಂದಿದ್ದಾನೆ. ನಾವು ಕೊಡುವ ಯಾವ ದ್ರವ್ಯವು ನಮ್ಮದಿದೆ ? ಎಲ್ಲವೂ ಶಿವನದೇ ಶಿವನಿಂದ ಬಂದಂಥವುಗಳು. ಅಂತೆಯೇ ಜ್ಞಾನನಿಧಿ ಚನ್ನಬಸವಣ್ಣನವರು ವೈಚಾರಿಕವಾದ ಸುಜ್ಞಾನ ಬೆಳಕನ್ನು ಬೀರಿದ್ದಾರೆ.

 ತನು-ಮನ-ಧನ ಮುಂತಾದವೆಲ್ಲವು

ಶಿವನೊಡವೆಯೆಂದು ಮಾಡುವ ಭಕ್ತಂಗೆ

 ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ?

ಮಾಡಬೇಕೆಂಬರಿವಿನ ಕಂದೆರೆದವರಾರು ?

ಮಾಡುವೆನೆಂದು ನೆನೆದ ಚೇತನದ ಪ್ರಾಣವ ತಂದಿರಿಸಿದವರಾರು ?

ಅವರಿಂದಾದ ಒಡವೆಯ ಅವರಿಗೀವುತ್ತ ಉಪಚರಿಯವೆ ?

ನದಿಯ ಉದಕವ ನದಿಗರ್ಪಿಸುವಂತೆ

ಒಡೆಯರಿಗೆ ಒಡವೆಯನರ್ಪಿಸಿ

ತಾ ಶುದ್ಧವಾಗಿ ನಡೆನುಡಿಯಲ್ಲಿ ಕವಲುದೋರದೆ

ತನ್ನಲ್ಲಿ ತಾನೆ ತಿಳಿದು ಘನವೆಡೆಗೊಂಡ ಮಹಾನುಭಾವಿಗಳು   (, ಬ. ವ-೬೨)

ಶಿವಭಕ್ತನು ತನ್ನ ತನು-ಮನ-ಧನಗಳು ಶಿವನವುಗಳೆಂದು ಅರಿಯಬೇಕು. ಗುರು-ಲಿಂಗ-ಜಂಗಮಕ್ಕೆ ಸಮರ್ಪಣೆ ಮಾಡುವ ದ್ರವ್ಯವನ್ನು ಸತ್ಕ್ರಿಯೆಯನ್ನು ಆಚರಿಸುವ ಮನಸ್ಸನ್ನು ಹಾಗೂ ಚೇತನವನ್ನು ಶಿವನೇ ಕೊಟ್ಟಿದ್ದಾನೆ. ನದಿಯನ್ನು ಪೂಜಿಸುವವರು ನದಿಯ ನೀರಿನಿಂದಲೇ ಅರ್ಚಿಸುವಂತೆ ಜಗದೊಡೆಯನಾದ ಪರಶಿವನ ಸೊತ್ತುಗಳನ್ನು ಆ ಶಿವನಿಗೆ ಸಮರ್ಪಿಸುವಂತೆ ಅದಾವ ದೊಡ್ಡಸ್ತನವಿದೆ. ? ನಡೆ-ನುಡಿ ಭಿನ್ನವಾಗದೆ ಎರಡೊಂದಾಗಿ ತನ್ನಲ್ಲಿ ತಾನು ಅರಿತು ಆಚರಿಸಿದರೆ; ಅರ್ಚಿಸಿದರೆ ಮಹಾನುಭಾವಿಯಾಗುವನು. ಜ್ಞಾನಯುತವಾದ ಸತ್ಕ್ರಿಯಾಭರಿತ ಭಕ್ತಿಯು ಶಿವನಿಗರ್ಪಿತವಾಗುತ್ತದೆ. ಆಂತರಿಕ ಅಷ್ಟವಿಧಾರ್ಚನೆಯಲ್ಲಿ ಅಂಗಸುಖಕ್ಕೆ ಅವಕಾಶವಿರಬಾರದು. ಅರಿಷಡ್‌ವರ್ಗಗಳು ಇಲ್ಲದಾಗಬೇಕು. ಅ೦ದರೆ ಭಕ್ತಿಯೊಡನೆ ಶೀಲವು ಸಮನಿಸುವದು.

 ಚಿತ್ತರಗಿ ಸಂಸ್ಥಾನಮಠದ ಮಹಾಂತಸ್ವಾಮಿಗಳವರು ತಮ್ಮ ಲಿಂಗತತ್ತ್ವ ಪರಾಮರ್ಶೆ” ಯಲ್ಲಿ – ಲಿಂಗಪೂಜೆ ಒಂದು ಸಿದಾಂತವೂ ಹೌದು; ವಿಜ್ಞಾನವೂ ಹೌದು, ಅರ್ಚನೆ, ಅಭಿಷೇಕ ಉಪಚಾರ ಉಪಾಸನೆಗಳು ಸ್ಥಾವರ ಲಿಂಗಮೂರ್ತಿ ಪೂಜೆಗಳ ವಿಧಾನ. ಲಿಂಗಪೂಜೆ ಮಾತ್ರ ಇವುಗಳನ್ನು ಬಳಸಿಯೂ ಅತೀತವಾಗಿ ನಿಂತ ಒಂದು ತಂತ್ರ. ಒಂದು ಪದ್ದತಿ, ಒಂದು ವಿಕಾಸಯಾತ್ರೆ, ಇದೊಂದು ಭಾರತೀಯ ಯೋಗಸಮನ್ವಯವೆಂದೂ, ಪೌರ್ವಾತ್ಯ ಸಿದಾಂತದ ತುಟ್ಟತುದಿಯ ಹೂಗೊಂಚಲೆಂದೂ ಹೇಳಲಾಗುತ್ತಿದೆ. ದ್ವೈ, ದ್ವೈ, ದ್ವೈತಾದ್ವೈ, ಶಕ್ತಿವಿಶಿಷ್ಟಾದ್ವೈತ ಕರ್ಮ-ಭಕ್ತಿ- ಜ್ಞಾನ-ಲಯ-ರಾಜಯೋಗಗಳಿಗೆ ಇದೊಂದು ಏಕೈಕ ಮಣಿಮಂಚ; ಯಾವುದೂ ಇದರಲ್ಲಿ ತ್ಯಾಜ್ಯವಿಲ್ಲ. ಎಲ್ಲವೂ ಆಂಶಿಕವಾಗಿ ಬಂದು ಪೂರ್ಣತ್ವವನ್ನು ವ್ಯವಸ್ಥೆಗೊಳಿಸುತ್ತವೆ”, ಎಂದು ಲಿಂಗಪೂಜೆಯ ಸೂಕ್ಷ್ಮತೆಯನ್ನು ಪರಾಮರ್ಶಿಸಿದ್ದಾರೆ.

ಲಿಂಗಭಕ್ತನು ಶೀಲವನ್ನು ಸಂಪಾದಿಸುವ ಪರಿ ಬಹುಸೂಕ್ಷ್ಮವಾಗಿದೆ. ಅರ್ಥ ಪೂರ್ಣವಾಗಿದೆ ಭಕ್ತನು ಆಚಾರಾದಿ ಲಿಂಗಗಳನ್ನು ಅರುವಿನಿಂದ ಅರ್ಚಿಸಬೇಕಗುವದು. ಆಚಾರಲಿಂಗದಲ್ಲಿ ಆಸಕ್ತಿಯುಳ್ಳ ಶಿವಭಕ್ತನು ಸಖೀ-ಸಹೋದರ ಮೋಹವ ಮರೆಯಬೇಕು. ಪೂರ್ವಾಚಾರವನ್ನು ಬಿಡಬೇಕು. ಅನ್ಯದೇವತಾ ಪೂಜೆಯ ಮಾಡಬಾರದು. ಹಿಡಿದ ನೇಮವ ಬಿಡಬಾರದು. ಅಶುಚಿಯಾಗದೇ, ಭಕ್ತನಿಂದೆಯ ಕೇಳದೇ ಇರಬೇಕು. ಗುರುಲಿಂಗ ಪೂಜಕನಾದರೆ ಮಾತಾ-ಪಿತರ ಮೋಹವನ್ನು ತ್ಯಜಿಸಬೇಕು. ಗುರ್ವಾಜ್ಞೆಯ ಮಿರದೆ ಗುರುಮಾರ್ಗಾಚಾರದಲ್ಲಿ ಮುನ್ನಡೆಯಬೇಕು. ಮಾನವರ ಸೇವೆ ಮಾಡಬಾರದು. ಶಿವಲಿಂಗ ಭಕ್ತನಾದರೆ ಅನ್ಯಮೋಹ, ಅನ್ಯದೈವ ಭಜನೆ ಪೂಜೆಗಳನ್ನು ಪೂರ್ಣವಾಗಿ ಪರಿಹರಿಸಬೇಕು. ಪುಣ್ಯಕ್ಷೇತ್ರಗಳನ್ನು ಕುರಿತು ಹೋಗಬಾರದು. ಅಂಗಭೋಗ, ಸತಿಸಂಗವನ್ನು ದೂರೀಕರಿಸಬೇಕು ಜಂಗಮಲಿಂಗಾರಾಧಕನೆನಿಸಿದರೆ ಪೂರ್ವಕುಲಗೋತ್ರವನ್ನು ಮರೆಯಬೇಕು. ಮತ್ತೆ ಅವರೊಡನೆ ಬೆರೆಸಬಾರದು. ಆಸೆಯಿಂದ ಅರ್ಥ ಸಂಗ್ರಹವನ್ನು ಮಾಡಬಾರದು. ಬೇಡಿದಡೆ ಇಲ್ಲೆನ್ನಬಾರದು. ಶಿವಲಾಂಛನದ ನಿಂದೆಯನ್ನು ಕೇಳಬಾರದು. ಪ್ರಸಾದಲಿಂಗದಲ್ಲಿ ಪ್ರಸನ್ನ ಮನವುಳ್ಳವನಾದರೆ ಅಂಗರುಚಿಯನ್ನು ಕಳೆದುಕೊಳ್ಳಬೇಕು. ಅನ್ಯರಿಗೆ ಕೈಯೊಡ್ಡಬಾರದು. ಜೀವ ಹಿಂಸೆಯನ್ನು ಮಾಡದೇ ಆತ್ಮನಿಗ್ರಹವನ್ನು ಸಾಧಿಸಬೇಕು. ಮಹಾಲಿಂಗ ಭಕ್ತನಾದರೆ ಲೋಕದ ಮೋಹವನ್ನು ಮರೆತು ಅಜ್ಞಾನಿಗಳ ಸಂಗವನ್ನು ಪರಿಹರಿಸಬೇಕು. ಮರಣಕ್ಕಂಜದೆ ಸಮತೆ ಸಮಾಧಾನಗಳು ನೆಲೆಗೊಳ್ಳಬೇಕು. ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗದಂತಿರಬೇಕು. ಇದು ನಿಜವಾದ ಲಿಂಗಭಕ್ತನ ಭಕ್ತಿಯ ಶೀಲವೆಂದು ಶರಣರು ಸಾರಿದ್ದಾರೆ.

ಅಚ್ಚಶೀಲತನದ ಹಾಗೂ ಶೀಲವಂತನ ವ್ಯಾಖ್ಯೆಯನ್ನು ಚನ್ನಬಸವಣ್ಣನವರು ಸುಂದರವಾಗಿ, ಸರಳವಾಗಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ-

 ಚಿತ್ತದ ಕಳವಳವಳಿದು ಮನವು ಮಹಾ ಘನದಲ್ಲಿ ನೆಲೆಗೊಂಡುದೆ ಶೀಲ

 ಪರಮ ಪರಿಣಾಮ ನೆಲೆಗೊಂಡುದೆ ಶೀಲ

ಮತ್ತು

 ಭಕ್ತರು ಮತಕ್ಕೆ ಬಂದು ಒಳಹೊರಗೆಂಬುದು ಶೀಲವೆ ?

ಎನ್ನ ಲಿಂಗಕ್ಕೆ ಒಳ್ಳೆಯ ಅಗ್ಗವಣಿಯ ತನ್ನಿ,

ಒಳ್ಳೆಯ ಪುಷ್ಪವ ತನ್ನಿ, ಒಳ್ಳೆಯ ಓಗರವ ಮಾಡಿ

 ಎಂಬುದು ಶೀಲವೆ ? ಅಲ್ಲ

ಪಂಚೇಂದ್ರಿಯ, ಸಪ್ತಧಾತು, ಅರಿಷಡ್ವರ್ಗ,

ಅಷ್ಟಮದಂಗಳ ಕೊಂದಾತನೆ ಶೀಲವಂತ

ಕೂಡಲಚನ್ನಸಂಗಮದೇವಾ    II ೧೦೮೩ II

ಶೀಲವಾದಡೆ ಪ್ರಪಂಚುನಾಸ್ತಿಯಾಗಿರಬೇಕು.

 ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು

ಇಂತಪ್ಪ ಶೀಲಕ್ಕೆ ಭವನಾಸ್ತಿ, ಸೀಮೆಗೆ ಭವನಾಸ್ತಿ,

 ಈ ದ್ವಿವಿಧ ನಾಸ್ತಿಯಾದಲ್ಲದೆ

ಕೂಡಲ ಚನ್ನಸಂಗಯ್ಯನಲ್ಲಿ ಶೀಲವಂತನೆನಿಸಬಾರದು. || ೧೦೮೪ |

ಭಕ್ತನಾದವನು ಶಿವಭಕ್ತರೊಡನೆ ಆತ್ಮೀಯವಾಗಿ ಸಹಕರಿಸಬೇಕು. ಭಿನ್ನತೆ ಯನ್ನೆಣಿಸಬಾರದು. ಪಂಚೇಂದ್ರಿಯಗುಣ, ಸಪ್ತಧಾತು, ಅರಿಷಡ್‌ವರ್ಗ ಹಾಗೂ ಅಷ್ಟಮದಗಳನ್ನು ಜಯಿಸಿದವನೇ ನಿಜವಾದ ಶೀಲವಂತನೆನಿಸುವನು. ಅಂತರಂಗದ ಸಾಧಿಸುವಲ್ಲಿಯೇ ಲಿಂಗವಂತಿಕೆ ವ್ಯಕ್ತವಾಗುವದು. ಜಡಗುಣಗಳು ದೂರವಾದಲ್ಲದೆ ಶೀಲ ಸದ್ಗುಣಗಳು ಸಮನಿಸಲಾರವು. ಸಚ್ಛೀಲವನ್ನು ಸಾಧಿಸುಚಲ್ಲಿಯೆ ಲಿಂಗವಂತಿಕೆ ವ್ಯಕ್ತವಾಗುವದು.

  ಶೀಲತನದೊಂದಿಗೆ ನಿಯಮಿತತನವು ಶಿವಭಕ್ತನನ್ನು ಸುಂದರಗೊಳಿಸುವದು. ಭಕ್ತಿಯ ಸತ್ಯತೆಯೊಂದಿಗೆ ಶೀಲದ ಶಿವಭಾವನೆಯನ್ನು ಸಂಪಾದಿಸಿದರೆ ನಿಯಮದ ಸೌಂದರ್ಯ ಶೋಭಾಯಮಾನವಾಗುವದು. ಶಿವನ ‘ಸತ್ಯಂ ಶಿವಂ ಸುಂದರಂ’ ತತ್ತ್ವ ಮೈಗೂಡಿಸಿಕೊಳ್ಳುವದು. ನೇಮದ ನಿಜವನ್ನು ಅಣ್ಣನ ಮಾತಿನಲ್ಲಿ ನೋಡಿ-

ನೋಡಿ ನೋಡಿ ಮಾಡುವ ನೇಮ ಸಲ್ಲವು ! ಸಲ್ಲವು !

ತನುವುದ್ದೇಶ, ಮನವುದ್ದೇಶವಾಗಿ,-

ಮಾಡುವ ನೇಮ ಸಲ್ಲವು ! ಸಲ್ಲವು !

ಗುರುಪಥವ ಮೀರಿ ಮಾಡುವ ನೇಮ ಸಲ್ಲವು ! ಸಲ್ಲವು !

ಕೂಡಲ ಸಂಗಮದೇವಯ್ಯ ಇವು ನಿಮ್ಮ-

ನಿಜದೊಳಗೆ ನಿಲ್ಲವು; ನಿಲ್ಲವು; (ಬ. ಷ. ವ. ೭೧)

ಮತ್ತು

ಬಂದುದ ಕೈಕೊಳಬಲ್ಲಡೆ ನೇಮ,

ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ

ನಡೆದು ತಪ್ಪದಿದ್ದಡೆ ನೇಮ

ನುಡಿದು ಹುಸಿಯದಿದ್ದಡೆ ನೇಮ

ನಮ್ಮ ಕೂಡಲ ಸಂಗನ ಶರಣರು ಬಂದಡೆ

ಒಡೆಯರಿಗೊಡವೆಯನೊಪ್ಪಿಸುವುದೇ ನೇಮ (೨೩೧ ಬ.ಷ.ವ.)

ಮತ್ತು

ತನ್ನಾಶ್ರಯದ ರತಿ ಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ,

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? || ೧೮೩||

 ಶಿವಭಕ್ತನು ಮಾಡುವ ಕ್ರಿಯೆಗಳೆಲ್ಲ ಲಿಂಗದಕ್ರಿಯೆಗಳು, ಲಿಂಗದ ನೇಮಗಳಾದುದರಿಂದ ತನು-ಮನಕ್ಕೆ ಅವಕಾಶ, ಅಲ್ಲಲ್ಲಿ, ಗುರುವಚನದಂತೆ ನಡೆಯುವದು, ನುಡಿಯುವದು ನೀಜನೇಮ. ಬಂದುದನ್ನು ಪ್ರಸಾದವೆಂದು ಕೈಕೊಳ್ಳಬೇಕು. ತನ್ನಲ್ಲಿದುದ್ದನ್ನು ಶಿವಭಕ್ತರಿಗೆ ಇಲ್ಲೊಂದು ವಂಚಿಸಬಾರದು. ನಡೆದು ತಪ್ಪದೆ, ನುಡಿದು ಹುಸಿಯಾಗದಿದ್ದಡೆ ಅದುವೆ ಶಿವನ ನೇಮವಾಗುವದು. ಶಿವನಿಗೆ ಸಮರ್ಪಿಸುವ ಸಾಮಗ್ರಿಗಳನ್ನು ಸ್ವತಃ ಸಂಪಾದಿಸಿ ಪೂರೈಸಬೇಕು. ಅಂದರೆ ಶಿವಲಿಂಗಕ್ಕೆ ತೃಪ್ತಿ ಇಂಥ ಭಕ್ತಿ ಶೀಲ-ನೇಮಗಳಿಂದ ಕೈಗೊಳ್ಳುವ ಶಿವಪೂಜೆಗೆ ಸಮನಾದ ಮೇಲುಪದವಿಲ್ಲ.

ಶಿವಪೂಜೆಗೈಯ್ಯುವ, ಶಿವಯೋಗಾನಂದದಲ್ಲಿ ತುಂದಿಲರಾಗುವ ಶರಣರು ಶಿವನ ಕೈಲಾಸವನ್ನು ಬಯಸಲಿಲ್ಲ. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಿಗೆ ಆಶಿಸಲಿಲ್ಲ.  ಅವರಿದ್ದ ಠಾವು, ಅವರಂಗಳ ವಾರಾಣಿಸಿ, ಕಾಯವೇ ಕೈಲಾಸ, ಅವರ ನುಡಿಯೊಳಗೆ ಚಿಂತಾಮಣಿ, ಅವರಂಗಳ ಮುಂದಣ ಗೋವೇ ಕಾಮಧೇನು. ವೃಕ್ಷವೇ ಕಲ್ಪವೃಕ್ಷವಾಗಿರುತ್ತದೆ. ಇದನ್ನರಿತ ಶಿವಭಕ್ತರು ಬ್ರಹ್ಮಪದವಿ, ವಿಷ್ಣು ಪದವಿ, ರುದ್ರ ಪದವಿಗೆ ಹಾತೊರೆಯದೇ ಶಿವಶರಣರ ತೊತ್ತಾಗಿಸುವಂತೆ ಶಿವನಲ್ಲಿ ಪ್ರಾರ್ಥಿಸಿರುವರು. ಶರಣ ಪದವಿಯೇ ಘನವಾದುದು. ಲಿಂಗಭಕ್ತತನವೇ ಮಿಗಿಲಾದುದು. ಅನುಪಮವಾದುದು. ಗುರುನಾಥನು ಭಕ್ತಿ-ಶೀಲ-ನೇಮಗಳಿಗಾ ಶ್ರಯವಾದ ಇಷ್ಟಲಿಂಗವನ್ನು ಕರುಣಿಸಿ ಮೇಲು ಪದವಿಯನ್ನು ಪಡೆಯಲು ಶಿವಯೋಗ ಪಾಲನೆಯನ್ನು ದಯಪಾಲಿಸಿದ್ದಾನೆ. ಅಂಥ ಆತನ ಸತ್ಕೃಪೆಗೆ ಅದಾವುದು ಸರಿಯಾದೀತು !

ಸಾಲೋಕ್ಯ ಮೊದಲಾದ | ಮೇಲಾದ ಪದನಾಲ್ಕು

ಈ ಲಿಂಗ ಪದಕೆ-ಕೀಳಾಗುತಿಹವೆಂದು

ಪೇಳಿದೈ ಗುರುವೆ ಕೃಪೆಯಾಗು   ||೧೧೦||

ಮೇಲಾದ ಪದ ಅಥವಾ ಪದವಿ, ಕೈವಲ್ಯ, ಮುಕ್ತಿ, ನಿರ್ವಾಣ, ಮೋಕ್ಷ ವೆಂಬುದಾಗಿ ಧರ್ಮ ಗ್ರಂಥಗಳು ಸಾರುತ್ತವೆ. ಜಗತ್ತಿನಲ್ಲಿ ಮಾನವನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬೇಕು. ಅಂದರೆ ಮಾನವ ಜೀವನ ಸಾರ್ಥಕವಾಗುವದು. ಪುರುಷಾರ್ಥಗಳಲ್ಲಿ ಪ್ರಧಾನವಾದುದು ಮೋಕ್ಷ, ಮೋಕ್ಷವನ್ನು ಹೊಂದುವದೇ ಜೀವಾತ್ಮರ ಮಹಾಮಣಿಹ. ಈ ಮೋಕ್ಷವು ನಾಲ್ಕು ತೆರನೆಂದು ಪ್ರತಿಪಾದಿಸುತ್ತಾರೆ -ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂದು. ಈ ನಾಲ್ಕು ಮುಕ್ತಿ-ಪದಗಳು ಲಿಂಗೈಕ್ಯನ ಸಮರಸ ಅಥವಾ ಲಿಂಗಾಂಗಸಮರಸ ಪದವಿಗೆ ಸರಿಬರುವುದಿಲ್ಲವೆಂಬುದು ಸದ್ಗುರುವಿನ ಅಪ್ಪಣೆ.

ಲಿಂಗಪದವಿಗೆ ಅವು ಕೀಳೆಂದು ಹೇಳುವ ಧೈರ್ಯ ಶರಣದು. ಇನ್ನಾವ ಸಿದ್ಧಾಂತ ಇದನ್ನು ಪ್ರತಿಪಾದಿಸುವ ಸಾಹಸ ಮಾಡಿರುವದಿಲ್ಲ.

 ಸದ್ಧರ್ಮದಿಂದ ದುಡ್ಡನ್ನು ಸಂಗ್ರಹಿಸಿ ಸತ್ಕಾಮನೆಗಳನ್ನು ಪೂರೈಸಿದರೆ ಮೋಕ್ಷದ ಒಂದೊಂದು ಮೆಟ್ಟಿಲೂ ಸಾಧಕನಿಗೆ ಸಿಕ್ಕುವದು. ಪುಣ್ಯಫಲದಿಂದ ಜೀವನು ಶಿವಸಾಕ್ಷಾತ್ಕಾರ ಮಾಡಿಕೊಂಡು ಆತನ ಲೋಕದಲ್ಲಿ ವಾಸಿಸಿ ಆ ಪರಶಿವನ

ಆಲೋಕನೆಯಲ್ಲಿರುವುದೇ ಸಾಲೋಕ್ಯ ಪದವಿಯೆನಿಸುವದು. ಅಪರಿಚಿತ ವ್ಯಕ್ತಿಯು ಮೊದಮೊದಲು ದೂರಿಂದ ಅಲೋಕಿಸುವದು ಸಹಜ. ಪರಿಚಯವಾದಂತೆ ಸಮೀಪ ಸಂಬಂಧವನ್ನು ಹೊಂದುವನು. ಅದರಂತೆ ಶಿವಕೃಪೆ ಪಡೆದು ಅವನ ಸಾಮಿಪ್ಯವನ್ನು

ಪಡೆಯುವದೇ ಸಾಮಿಪ್ಯ ಮುಕ್ತಿಯೆನಿಸುವದು. ಸಾಮಿಪ್ಯ-ಸಂಬಂಧ ಸಂಸ್ಕಾರಗಳಿಂದ ಜೀವನು ಶಿವರೂಪವನ್ನು ಸಾಧಿಸುವುದೇ  ಸಾರೂಪ್ಯ ಮುಕ್ತಿಯಾಗುವದು. ಕೊನೆಗೆ ಶಿವನೊಡನೆ ಸಮರಸವಾಗಿ ಬೆರೆಯುವಿಕೆಯು ಸಾಯುಜ್ಯವೆನಿಸುವದು. ಇದುವೇ ಶ್ರೇಷ್ಠವಾದ ಮುಕ್ತಿಯೆನಿಸುವದು. ಉಪಾಸಕರ ಇಚ್ಛೆ ಮತ್ತು ಯೋಗ್ಯತೆಗಳಿಗನುಗುಣವಾಗಿ ಪರಮಾತ್ಮನು ತಕ್ಕ ಫಲವನ್ನು ಕೊಡುತ್ತಾನೆ. ಆದರೆ ಶಿವಶರಣರು ಶಿವನ ಹಂಗನ್ನೇ ಹರಿದಿರುತ್ತಾರೆ. ನಿನ್ನನ್ನು ನಾವು ಏನನ್ನೂ ಬೇಡುವದಿಲ್ಲವೆನ್ನುತ್ತಾರೆ..

ಸಾಲೋಕ್ಯಬೇಕೆಂದು ಪೂಜಿಸಿ ಸಾಲೋಕ್ಯವರವ ಪಡೆದರು.

ಸಾಮೀಪ್ಯ ಬೇಕೆಂದು ಪೂಜಿಸಿ ಸಾಮಿಪ್ಯವರವ ಪಡೆದರು.

ಸಾರೂಪ್ಯಬೇಕೆಂದು ಪೂಜಿಸಿ ಸಾರೂಪ್ಯವರವ ಪಡೆದರು.

ಸಾಯುಜ್ಯಬೇಕೆಂದು ಪೂಜಿಸಿ ಸಾಯುಜ್ಯವರವ ಪಡೆದರು.

ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ

ಈ ನಾಲ್ಕು ಪದವಿಗಳ ಪಡೆದು ಇತ್ತಿತ್ತಲಾದವರೆಲ್ಲಾ

ಅವರು ನಿಮ್ಮ ವೇದಿಸಲರಿವರೆ ?

ಇಂತಿಪ್ಪವ ಕೊಟ್ಟು ಕೊಂಡಾಡುವ

ಕೈಕೂಲಿಕಾರರೆಲ್ಲಾ ನಿಮ್ಮ ಬಲ್ಲರೆ ?

ಕೂಡಲ ಚನ್ನ ಸಂಗಯ್ಯ

 ನಿಮ್ಮ ಶರಣಂಗೆ ಚತುರ್ವಿಧ ಬಯಕೆಯಿಲ್ಲ ಭವಕಲ್ಪಿತವಿಲ್ಲ  (ಚ.ಬ.ವ. ೯೩೯)

ಈ ನಾಲ್ಕು ಪದವಿಗಳನ್ನು ಬೇಕೆಂದು ಬಯಸಿ ಶಿವನನ್ನು ಕೊಂಡಾಡಿ ಪಡೆದ ಸಾಧಕನು ಶಿವನ ನಿಜವನ್ನು ಅರಿಯಲಾರನು. ಪುಣ್ಯವನ್ನು ಕೊಟ್ಟು ಕೊಂಡುಕೊಂಡ – (ಖರೀದಿಸಿದ) ಪದವಿ ಈ ವೇಷ. ಇಂಥದನ್ನು ನಮ್ಮ ಶರಣರು ಬಯಸುವದಿಲ್ಲವೆಂದು ಚನ್ನಬಸವಣ್ಣನವರು ನಿರ್ಧಾರವಾಗಿ ನಿರ್ವಚಿಸಿದ್ದಾರೆ.

ಲಿಂಗವನ್ನು ಸದಾ ಅಂಗದಲ್ಲಿ ಧರಿಸಿ ಇಂದ್ರಿಯಂಗಳಿಗೂ ಲಿಂಗಗಳನ್ನು ಸಂಬಂಧಿಸಿಕೊಂಡ ಲಿಂಗಭಕ್ತನಿಗೆ ಲಿಂಗಾಂಗಯೋಗದಲ್ಲಿ ಈ ಚತುರ್ವಿಧ ಫಲಗಳು ಸಹಜವಾಗಿ ಪ್ರಾಪ್ತವಾಗುತ್ತದೆ. ಶಿವನ (ಶಿವಲಿಂಗದ) ಆರಾಧನೆಯಲ್ಲಿ ಈ ನಾಲ್ಕೂ ಪದವಿಗಳು ಲಭ್ಯವಾಗುವವೆಂಬ ಮಾತನ್ನು ಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ (ಪದ್ಯ-೨೮)

ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇ |

ಸಾಮೀಪ್ಯಂ ಶಿವಭಕ್ತಿಧುರ್ಯಜನತಾ ಸಾಂಗತ್ಯ ಸಂಭಾಷಣೇ |

ಸಾಲೋಕ್ಯಂ ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ |

ಸಾಯುಜ್ಯಂ ಮಮ ಸಿದ್ಧಮತ್ರಭವತಿ ಸ್ವಾಮಿನ್ ಕೃತಾರ್ಥೋ ಸ್ಮ್ಯಹಮ್ ||

ಹೇ ಭವಾನೀಪತಿಯೇ | ನಿನ್ನ ಪೂಜೆಯಿಂದ ಸಾರೂಪ್ಯಮುಕ್ತಿಯು; ಶಿವ ಮಹಾ ದೇವ ಎಂಬ ನಾಮ ಸಂಕೀರ್ತನದಿಂದ ಸಾಮೀಪ್ಯ-ಮುಕ್ತಿಯು; ಶಿವಭಕ್ತಿಯಲ್ಲಿ ಶ್ರೇಷ್ಠರಾದ ಶರಣರೊಡನೆ ಸಹವಾಸ-ಸಂಭಾಷಣೆಗಳಿಂದ ಸಾಲೋಕ್ಯ ಮುಕ್ತಿಯು;

ನಿನ್ನ ಚರಾಚರಾತ್ಮಕರೂಪದ ಧ್ಯಾನದಿಂದ ಸಾಯುಜ್ಯ ಮುಕ್ತಿಯು ನನಗೆ ಇಲ್ಲಿ ಭೂಲೋಕದಲ್ಲಿಯೇ ಸಿದ್ಧವಾಗಿರುತ್ತವೆ. ಆದ್ದರಿಂದ ಹೇ ಸ್ವಾಮಿನ್ ನಾನು ಧನ್ಯನು” ಎಂದು ವರ್ಣಿಸಿರುವರು.

 ಇದರಂತೆ ಮಹಾಶರಣ ಉರಿಲಿಂಗ ಪೆದ್ದಿಗಳು ಚತುರ್ವಿಧ ಮುಕ್ತಿಗಳು ಶರಣನಿಗೆ ಸುಲಭ ಸಾಧ್ಯವೆಂದು ವಿಶ್ಲೇಷಿಸುತ್ತಾರೆ.

 ಸಾಲೋಕ್ಯ ವೆಂದೇನು

ಅಂಗದ ಮೇಲೆ ಲಿಂಗ ಸಂಬಂಧಿಯಾಗಿರುತ್ತಿರಲು !

ಸಾಮೀಪ್ಯವೆಂದೇನು |

ಗುರು-ಲಿಂಗ-ಜಂಗಮದ ದಾಸೋಹದ ಸನ್ನಿಧಿಯೊಳಿರುತ್ತಿರಲು

ಸಾರೂಪ್ಯವೆಂದೇನು ?

ಅನವರತ ಅರ್ಚನೆಯೊಳಿರುತ್ತಿರಲು !

ಸಾಯುಜ್ಯವೆಂದೇನು ?

ಚತುರ್ದಶಭುವನವ ಒಳಕೊಂಡ ಮಹಾಘನವ

ಮನವನಂಗವಿಸಿ ನೆನೆಯುತ್ತಿರಲು !

ಇಂತೀ ಚತುರ್ವಿಧ ಪದವೆಂದೇನು ?

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ |

ವಸತ

ನಾಲ್ಕೂ ಮುಕ್ತಿಗಳು ಶಿವಶರಣರಿಗೆ ನಿತ್ಯ ಸನ್ನಿಹಿತವಾಗಿರುತ್ತವೆ. ಅನವರತ ಅಂಗದ ಮೇಲೆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ ಸಾಲೋಕ್ಯ ಸಿದ್ಧಿ ಸುಲಭ ವಾಗುವದು. ಅಂಗದ ಲಿಂಗವನ್ನು ಅಂಗೈಯಲ್ಲಿ ಕಂಗಳಿಂದ ಕಾಣುವ ಲಿಂಗಭಕ್ತನಿಗೆ ಬೇರಾರು ಸರಿಸಾಟಿಯಾಗರು. ವಿಭೂತಿ ರುದ್ರಾಕ್ಷಧಾರಣ ಮಾಡಿಕೊಂಡು ‘ರುದ್ರೋ ಭೂತ್ವಾ, ರುದ್ರಂ ಯಜೇತ್’ ಶಿವನಾಗಿ ಶಿವಲಿಂಗವನ್ನು ಪೂಜಿಸೆಂಬ ಶ್ರುತಿಮಾತಿನಂತೆ ಶಿವನ ಸ್ವರೂಪ (ಸಾರೂಪ್ಯ) ವನ್ನು ಪಡೆಯುತ್ತಾನೆ. ಶಿವನ ಷಟ್‌ಶಕ್ತಿಗಳನ್ನು ಶರೀರದಲ್ಲಿ ನ್ಯಾಸ ಮಾಡಿಕೊಳ್ಳುತ್ತಾನೆ. ಷಡಕ್ಷರ ಮಹಾಮಂತ್ರ ಜಪದಿಂದ ಶಿವಲಿಂಗದಲ್ಲಿ ಬೆರೆಯುವವನಾದ್ದರಿಂದ ಲಿಂಗಸಾಮಿಪ್ಯ ಅತ್ಯಂತ ಸಮೀಪವಾಗುತ್ತದೆ. ಶರಣರ ಸಂಗಮಾಡಿ ಶಿವನನ್ನು ಪ್ರತ್ಯಕ್ಷ ಕಾಣುತ್ತಾನೆ. ವೀರಶೈವ ಸಿದ್ಧಾಂತದಲ್ಲಿ ಗುರು-ಲಿಂಗ- ಜಂಗಮರೇ ಪ್ರತ್ಯಕ್ಷ ಶಿವನಲ್ಲವೇ ? ವೀರಶೈವರು ಪಾದೋದಕ ಪ್ರಸಾದಲ್ಲಿ ಸಮರಸವನ್ನು ಹೊಂದಿ ಸಾಯುಜ್ಯವನ್ನು ಪಡೆಯುತ್ತಾರೆ. ಪ್ರತಿನಿತ್ಯದಲ್ಲೂ ಚತುರ್ವಿಧಮುಕ್ತಿ ಸುಖದಲ್ಲಿರುವ ಶರಣನಿಗೆ ಕಾಣದ ಪದವಿಗಳಿಗಾಗಿ ಅದೆಂತು ಆಶೆಯೊಡ ಮೂಡೀತು.

ಕೇವಲ ಪುಣ್ಯ ವಿಶೇಷದಿಂದ ಲಭ್ಯವಾಗುವ ಮೋಕ್ಷವು ದೇಹ ತ್ಯಾಗದ ನಂತರ ಪ್ರಾಪ್ತವಾದರೂ ಪ್ರಯೋಜನವಿಲ್ಲ. ಅಂದರೆ ಶರಣನು ದೇಹವಿರುವಾಗಲೇ ಪ್ರತಿ ನಿತ್ಯ ಮುಕ್ತನಾಗುವನು. ಅದುಕಾರಣ ಈ ಲಿಂಗ ಪದವಿಗೆ ಸಾಲೋಕ್ಯ ಮೊದಲಾದ ಮೇಲಾದ ಪದನಾಲ್ಕು ಕೀಳಾಗುತ್ತವೆಯೆಂದು ಶ್ರೀಗುರುವು ಬೋಧಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಿದ್ದಾನೆ.

ನದಿಗಳೆಲ್ಲ ಸಮುದ್ರವನ್ನು ಸೇರಿ ಸಮುದ್ರವೇ ಆಗುವಂತೆ ಶಿವನನ್ನು ರೋಮ ರೋಮಂಗಳಲ್ಲಿ ಧರಿಸಿಕೊಂಡ ಶಿವಭಕ್ತನು ತನ್ನ ಇಂದ್ರಿಯಗಳನ್ನೆಲ್ಲ ಲಿಂಗಗಳನ್ನಾಗಿ ಮಾಡಿಕೊಳ್ಳುತ್ತಾನೆ. ಹೃದಯದೊಳಡಗಿದ ಪ್ರಾಪಂಚಿಕ ಆಶೆ-ಆಮಿಷಗಳು ಶಿವ ಮಯವಾಗಿ ಶಿವಪ್ರಸಾದವಾದ ಮೇಲೆ ಇನ್ನಿತರ ಬಯಕೆಗಳು ಉತ್ಪನ್ನವಾಗುವದಿಲ್ಲ. ಶಿವಶರಣರ ಪ್ರಸಾದ ರುಚಿಯನ್ನುಂಡ ಶಿವನು ಕೈಲಾಸಕ್ಕೇ ಹೋಗಲಿಲ್ಲವಂತೆ ! ಅಂದಮೇಲೆ ಗುರು ಕರುಣಿಸುವ ಲಿಂಗ ಪದವಿ ಮಹತ್ತರವಾದುದಲ್ಲವೆ

ಶಿವಯೋಗಮಂದಿರದ ಸಾಧಕರಾಗಿದ್ದಾಗಿನ ಅವಧಿಯಲ್ಲಿ ಶ್ರೀ ಕುಮಾರ ಸ್ವಾಮಿಗಳು ಹೇಳಿದವಿಚಾರಗಳನ್ನು ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು ಬರೆದುಕೊಂಡ ಟಿಪ್ಪಣಿಗಳು.

ವೀರಶೈವ ತತ್ತ್ವ ವಿಚಾರ

೧. ಷಣ್ಮತಗಳಲ್ಲಿ ವೀರಶೈವ ಮತವು, ಶೈವದೊಳಗಿನ ಒಂದು ಭೇದವು. ಸಪ್ತವಿಧ ಶೈವಗಳಲ್ಲಿ ಶಿಷ್ಟತಮವಾದ ಅಪ್ರಾಕೃತವೆನಿಸಿದ ವೀರಶೈವ ಮತವು ವಿಶೇಷವು. ಈ ಮತಕ್ಕೆ ಲಿಂಗಾಂಗ ಸಾಮರಸ್ಯವೆ ಅಸಾಧಾರಣ ಲಕ್ಷಣವು.

 ೨. ವೀರಶೈವರಿಗೆಲ್ಲ ಅಪ್ರಾಕೃತತ್ವವು ಜನ್ಮದಿಂದಲೂ ಧರ್ಮದಿಂದಲೂ ಉಂಟು. ಅಪ್ರಾಕೃತತ್ವವು ಜನ್ಮದಿಂದ ಅವ್ಯಕ್ತ ಸ್ಥಿತಿಯಲ್ಲಿದ್ದು ಧರ್ಮದಿಂದ ವ್ಯಕ್ತಸ್ಥಿತಿಯನ್ನು ಹೊಂದುವುದು. ಇದರಿಂದ ಲಿಂಗಧಾರಣಾದಿಗಳು ವ್ಯರ್ಥವೆನಿಸವು. ಆಗಂತುಕರಿಗೆ ಮಾತ್ರ ಧರ್ಮದಿಂದ ಉಂಟು.

 ಈ ಧರ್ಮವು ಅತಿವರ್ಣಾಶ್ರಮಾನುಸಾರವಾದುದು. ಅಂದರೆ ಬ್ರಹ್ಮ ನಿರ್ಮಿತಗಳಾದ ಪ್ರಾಕೃತ ವರ್ಣಾಶ್ರಮ ಧರ್ಮಗಳನ್ನು ಮೀರಿದುದು. ಶಿವನಿರ್ಮಿತ ವರ್ಣಾಶ್ರಮ ಧರ್ಮವುಳ್ಳುದು. ಆದ್ದರಿಂದ ಅಪ್ರಾಕೃತ ಬ್ರಾಹ್ಮಣ್ಯಕ್ಕೂ ತದ್ಗತ ಗುರುತ್ವಕ್ಕೂ ಹಾನಿಯಲ್ಲ.

 ೩. ‘ಶಿವಲಿಂಗವನ್ನು ಧರಿಸಿದೊಡನೆ ಶಿವನೇ ಆಗುವನು’ ಎಂಬ ವಾಕ್ಯವು ಶಿವತ್ವದ ಅಂಕುರಾರೋಪಣ ಸೂಚಕವಾಗಿರುವುದು. ಕೇವಲ ತನ್ನೊಳಗೆ ಅವ್ಯಕ್ತವಾದ ಕಿಂಚಿತ್ ‘ ಶಿವತ್ವವನ್ನೇ ಲಿಂಗಧಾರಣಾದಿ ಸಂಸ್ಕಾರವು, ಅಂಕುರ ರೂಪದಿಂದ ವ್ಯಕ್ತಗೊಳಿಸುವ ಕಾರಣ ಇದು ಅರ್ಥವಾದವಲ್ಲ.  ʼʼಶಿವ ಏವ ನ ಸಂಶಯ?” ಎಂಬ ವಾಕ್ಯವು ಸಾರ್ಥಕವೆನಿಸುವುದು. ಶ್ರೀಗುರು ಸಂಸ್ಕಾರದಿಂದ ಬಂದ ಅಂಕುರರೂಪ ಶಿವತ್ವವನ್ನೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಾಂತರ್ಗತ ಲಿಂಗಾಂಗ ಸಾಮರಸ್ಯ ಮುಂತಾದವುಗಳು ಆಚಾರ ವಿಚಾರಗಳಿಂದ ಕೇವಲ ವ್ಯಕ್ತಸ್ಥಿತಿಗೆ ತರುವುದರಿಂದ ಶಿವತ್ವದ ವ್ಯಾಪಕಸ್ಥಿತಿಯು ಸ್ಪಷ್ಟ ಫಲವೆನಿಸುವುದು. ಅಂಕುರರೂಪ ಶಿವತ್ವವನ್ನು ವ್ಯಕ್ತಪಡಿಸುವುದರಿಂದ ʼʼಶಿವ ಏವ ನ ಸಂಶಯಃ” ಎಂಬ ವಾಕ್ಯ ಸಮನ್ವಯಕ್ಕೆ ಭಂಗಬಾರದು.

 ೪. ಲಿಂಗಧಾರಿಗಳಲ್ಲಿ ಏಳು ಭೇದಗಳಿರುವವು. ಅವುಗಳಲ್ಲಿ ಏಳನೇ ಭೇದವನ್ನು ಹೊಂದುತ್ತಾನೆಂದು ಕೆಲವು ಗ್ರಂಥಗಳಲ್ಲಿ ಉಕ್ತವಾಗಿರುವುದು.

 ಅಷ್ಟಾವರಣ ವಿಶಿಷ್ಟ ಪಂಚಾಚಾರವೆ ವೀರಶೈವ ಧರ್ಮವಾದ್ದರಿಂದ ಈ ಧರ್ಮವೇ ಇತರ ಲಿಂಗಧಾರಿಗಳ ಭೇದವನ್ನು ಸೂಚಿಸುವುದು. ಇದರಿಂದಾಗಿ ಇದು ವ್ಯಾವರ್ತಕ ಧರ್ಮವೆನಿಸುವುದು (ಇಲ್ಲಿ ವಿಚಾರವಿದೆ) ಯೋಗಜ್ಞಾನ ಸಮುಚ್ಚಯವೆ ವ್ಯಾವರ್ತಕ ಧರ್ಮವು

೫. ಲಿಂಗಧಾರಿಗಳಾದ ಅಪ್ರಾಕೃತರೆಲ್ಲರಿಗೂ ಪ್ರಾಕೃತ ವರ್ಣಾಶ್ರಮಗಳಿರುವುದಿಲ್ಲ. ಅಷ್ಟಾವರಣ, ಪಂಚಾಚಾರಾದಿ ಧರ್ಮವೃತ್ತಿಯಿಂದ ಜೀವಿಸುತ್ತಾರೆ. ಅದು ಹೇಗೆಂದರೆ : ಕೃಷಿ, ವಾಣಿಜ್ಯಾದಿ ವೃತ್ತಿಗಳನ್ನು ವೀರಶೈವರಲ್ಲಿ ಕಂಡರೂ ಗುರು, ಲಿಂಗ,  ಜಂಗಮ ಸೇವಾರ್ಥವಾಗಿಯೇ ಆ ವೃತ್ತಿಗಳನ್ನು ಕೈಗೊಂಡಿರುವುದರಿಂದ ಅವು ಪ್ರಾಕೃತವೆನಿಸದೆ ಅಪ್ರಾಕೃತ ವೃತ್ತಿಯಲ್ಲಿ ಗಣನೆಯಾಗಿರುವವು.

 ೬. ವೀರಶೈವ ನಿಯತಿಯಂತೆ ಲಿಂಗಧಾರಿಗಳಾದ ಅಪ್ರಾಕೃತರಲ್ಲಿಯೂ ಅಷ್ಟಾವರಣವೇ ಅಂಗ; ಪಂಚಾಚಾರವೆ ಪ್ರಾಣವಾದ ಭಕ್ತತ್ವವು ಉಂಟು.

೭. ಗುರು, ಲಿಂಗ, ಜಂಗಮ ಈ ತ್ರಿವರ್ಗಕ್ಕೂ ಅಷ್ಟಾವರಣ ವಿಶಿಷ್ಟ ಭಕ್ತತ್ವವುಂಟು.

೮. ಗುರು, ಲಿಂಗ, ಜಂಗಮವು-ಪರಶಿವ ಅಥವಾ ಪರಬ್ರಹ್ಮ ತತ್ತ್ವದ ಪರಿಣಾಮವು. ಲಿಂಗ, ಗುರು, ಜಂಗಮತ್ರಯದಲ್ಲಿ ಉಪಾಸಕೋಪಾಸ್ಯಭೇದವು ಕ್ರಮದಿಂದ ಸಂದರ್ಭಾನುಸಾರ ತೋರುವುದು. ಹೇಗಂದರೆ ಲಿಂಗ, ಗುರು, ಜಂಗಮತ್ರಯಗಳಲ್ಲಿ ಒಂದೊಂದು ಮೂರು ಮೂರು ಭೇದವಾಗಿ ನವವಿಧವಾದುದು ಶಾಸ್ತ್ರಾನುಭವ ಸಮ್ಮತವಾಗಿರುವುದರಿಂದ ಲಿಂಗದೊಳಗಿನ ಲಿಂಗಕ್ಕೆ ಗುರುವಿನಲ್ಲಿ ತೋರಿದ ಲಿಂಗವು ಉಪಾಸ್ಯವಾದುದು. ಅದಕ್ಕಿಂತಲೂ ಜಂಗಮದೊಳಗಿನ ಲಿಂಗವು ಶ್ರೇಷ್ಠ (ಉಪಾಸ್ಯ)ವಾದುದು. ಲಿಂಗದೊಳಗಿನ ಗುರುತ್ವಕ್ಕಿಂತಲೂ ಗುರುವಿನಲ್ಲಿರುವ ಗುರುತ್ವವು ಅಧಿಕ. ಅದಕ್ಕಿಂತಲೂ ಜಂಗಮದೊಳಗಿನ ಗುರುತ್ವವು ಶ್ರೇಷ್ಠ.  ಲಿಂಗದೊಳಗಿನ ಜಂಗಮತ್ವಕ್ಕಿಂತಲೂ ಗುರುವಿನಲ್ಲಿರುವ ಜಂಗಮತ್ವವು ಶ್ರೇಷ್ಠವು.

ಅದಕ್ಕಿಂತ ಜಂಗಮದೊಳಗಿನ ಜಂಗಮತ್ವವು ಅಧಿಕವು. ಈ ಕ್ರಮವನ್ನನುಸರಿಸಿ ಉಪಾಸಕೋಪಾಸ್ಯ ಭಾವವನ್ನು ತಿಳಿಯತಕ್ಕುದು. ಆದರೂ ಒಂದೊಂದು ವಸ್ತುವಿನಲ್ಲಿರತಕ್ಕ ಲಿಂಗ, ಗುರು, ಜಂಗಮ ಇವು ಸಂದರ್ಭಾನುಸಾರವಾಗಿ ಪೂಜಕ

ಪೂಜ್ಯತ್ವವನ್ನು ಹೊಂದುವವು. ಇವುಗಳಿಗೆ ಕ್ರಮವಾಗಿ ಉಪಾಸಕೋಪಾಸ್ಯಭಾವವು ಇರುವುದು. ಸಂದರ್ಭಾನುಸಾರವಾಗಿ ಭಕ್ತವರ್ಗದ ಭಕ್ತಸ್ವರೂಪವಾದ ಲಿಂಗದಲ್ಲಿರುವ ಜಂಗಮಕ್ಕಿಂತಲೂ ಗುರುವಿನಲ್ಲಿರುವ ಲಿಂಗವು ಅಧಿಕವು.  ಗುರುವಿನಲ್ಲಿರುವ ಗುರು ಜಂಗಮಕ್ಕಿಂತಲೂ ಜಂಗಮದಲ್ಲಿರುವ ಜಂಗಮವು ಅಧಿಕವಾದುದು, ಮತ್ತು ಭಕ್ತವರ್ಗದ ಭಕ್ತನಾದರೂ ಯೋಗ್ಯವೃತ್ತಿಯಿಂದ ಗುರು, ಲಿಂಗ, ಜಂಗಮ ಸ್ವರೂಪನಾಗುವನು. ಗುರು, ಜಂಗಮರು ಯೋಗ ರೂಢಿಯಿಂದ ಗುರು ಲಿಂಗ ಜಂಗಮ ಸ್ವರೂಪರಾಗುವದು. ತತ್ತ್ವರೂಪವನೈದದೆ ತತ್ತ್ವದ್ದೇವತಾರಾಧನೆ ಮಾಡಲಿಕ್ಕೆ ಬರುವುದಿಲ್ಲ. ಆದ್ದರಿಂದ ಪದಾರ್ಥ ತನುವೆ ಕಾಲಾನುಗುಣವಾಗಿ ಪ್ರಸಾದತನು ಆಗುವಂತೆ ಭಕ್ತನಾದರೂ ಯೋಗ ವೃತ್ತಿಯಿಂದ ಗುರು ಲಿಂಗ ಜಂಗಮ ಸ್ವರೂಪವನ್ನು ಹೊಂದಿ  ಸಿದ್ಧನೆನಿಸುವನು. ಇದರಂತೆ ಗುರುವರ್ಗದಲ್ಲಿ ಜನಿಸಿರುವವರು, ಗುರುತ್ವ ಸಂಸ್ಕಾರದಿಂದ ಯೋಗರೂಢಿಯಿಂದ ಗುರುಲಿಂಗ ರೂಪವನ್ನು ಹೊಂದುವರು. ಮರಳಿ ಅವರಿಗೆ ಸಂಸ್ಕಾರ ವಿಶೇಷವಾದರೆ ರೂಢಿಯಿಂದಲೂ ಗುರು ಲಿಂಗ ಜಂಗಮ ಸ್ವರೂಪರಾಗುವರು. ಇವರಾದರೂ ಮೇಲ್ಕಂಡಂತೆ ಸಾಧಕ ಸ್ಥಿತಿಯಲ್ಲಿದ್ದು ಉನ್ನತಾವಸ್ಥೆಯನ್ನು ಹೊಂದುತ್ತ ಮುಂದೆ ಸಿದ್ಧ ಸ್ಥಿತಿಯನ್ನು ಹೊಂದುವರು. ಈ ಪ್ರಕಾರವಾಗಿ ಸಂಸ್ಕಾರವಾಗಿ ಅನುಷ್ಠಾನ ಉಪಾಸಕೋಪಾಸ್ಯ ವ್ಯವಸ್ಥೆಯು.

೯. ಗುರು ಜಂಗಮರಿಗೆ ಮತ್ತೊಂದನ್ನಾಶ್ರಯಿಸಿ ಪೂಜ್ಯತ್ವವಿಲ್ಲ. ಅವರು ಸ್ವಯಂ ಪೂಜ್ಯರು. ನಿತ್ಯ ಮುಕ್ತರು.  ಜಗದ್ಧಿತಾರ್ಥವಾಗಿ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಉಪಾಸಿಸುವುದುಂಟು. ವ್ಯಾಪಕವಾದ ಪರಲಿಂಗಕ್ಕೆ ಗುರುಲಿಂಗ ಜಂಗಮವೆಂತಲೂ ಪರ್ಯಾಯ ನಾಮಗಳುಂಟು. ಇದನ್ನೇ ಭೇದೋಪಭೇದಗಳಿಂದ ಸಮಯೋಚಿತವಾಗಿ ಸ್ವಸ್ವರೂಪವಾಗಿ ವ್ಯಾಪ್ಯರಾದ ಗುರು ಲಿಂಗ ಜಂಗಮರು ಪೂಜಿಸುವರು.

 ಗುರು ಜಂಗಮರು ಪೂಜ್ಯರಾಗಬೇಕಾದರೆ ವ್ಯಾಪಕವಾದ ತಮ್ಮ ನಿಜ ಸ್ವರೂಪವಾದ ಮೂಲ ಲಿಂಗವನ್ನು ತಂತಮ್ಮನಿರಾಭಾರಿ-ಸಾಭಾರಿ ಗುರುಗಳ ಪ್ರಯತ್ನ ವಿಶೇಷದಿಂದ ಸಂಸ್ಕರಿಸಿ ಲಿಂಗಾಕಾರಗೊಳಿಸಿ, ಅಂಗತ್ರಯವನ್ನು ಸಂಬಂಧಗೊಳಿಸಿ ಆಜ್ಞಾಪಿಸಿದಂತೆ ಆಚರಿಸುವುದರಿಂದ ಪೂಜ್ಯರೆನಿಸುವರು. ವಿಶುದ್ಧ ಸತ್ವಸ್ವರೂಪೋ ಪಾಧಿಯಂದೊಪ್ಪುವ ಗುರುಮೂರ್ತಿಯು ಮಲಿನ ಸತ್ವಸ್ವರೂಪ ವಿದ್ಯೋಪಹಿತ ಪುರುಷಾಕಾರ ಶರೀರದಲ್ಲಿದ್ದು ಜೀವಕಲೆಯನ್ನು ಸಂಸ್ಕರಿಸಿ ತಮಃ ಪ್ರಧಾನ ಪ್ರಕೃತಿ ಸ್ವರೂಪ ಶಿಲಾಮಯವಾದ ಲಿಂಗಾಕಾರದಲ್ಲಿ ಸ್ಥಾಪಿಸೋಣದರಿಂದ ಲಿಂಗವು ಪೂಜ್ಯವಾಗಿರುವುದು. ಅಂದರೆ ಗುರು ಜಂಗಮರಿಂದಲೆ ಲಿಂಗಕ್ಕೆ ಪೂಜ್ಯತ್ವವು ಬಂದಿರುವುದೆಂದು ಸ್ಪಷ್ಟವೆನಿಸುವುದು.

 ಚತುರ್ವಿಧ ವಾಗ್ವ್ಯವಹಾರ ಪರಬ್ರಹ್ಮಜ್ಞಾನ ಅಧಿಕಾರವುಳ್ಳ ಜೀವ ಚೈತನ್ಯ ವಿಶಿಷ್ಟ ಮನುಷ್ಯರಲ್ಲಿ ಬದ್ಧತ್ವ ಮುಕ್ತತ್ವವಿದ್ದಂತೆ-ಪಶುಪಕ್ಷ್ಯಾದಿ ಮೃತ್ಪಾಷಾಣಾದಿಗಳಲ್ಲಿ ಇಂಥ ಬಂಧತ್ವ ಮುಕ್ತತ್ವವಿರುವುದಿಲ್ಲ. ತಮಃ ಪ್ರಧಾನ ಕೃತಿಯಿಂದ ತೋರಿದ ಜಡಶಿಲೆಯಲ್ಲಿ ಪುರುಷನ ಚೈತನ್ಯಗತವಾಗಿರುವ ಚಿತ್ಕಲೆಯನ್ನು ಪ್ರತಿಷ್ಠಿಸಲು ಆಯಾ ವ್ಯಕ್ತಿಗೆ ಅದು ಪೂಜ್ಯವಾದ ಲಿಂಗವಿರುವುದು. ಚಿತ್ಕಲಾ ಪ್ರತಿಷ್ಠಿತವಾಗುವುದಕ್ಕಿಂತಲೂ ಪೂರ್ವದಲ್ಲಿ ಶಿಲಾಮಯ ಲಿಂಗಾಕಾರದಲ್ಲಿ ಈ ಬಗೆಯ ಬಂಧತ್ವದ ವ್ಯವಹಾರವೇ ಇಲ್ಲದ್ದರಿಂದ ಆ ಲಿಂಗಕ್ಕೆ ಮೋಕ್ಷಾಧಿಕಾರವೇ ಇಲ್ಲ.

ಗುರು ಜಂಗಮರಿಗೆ ಸ್ವಾಮಿತ್ವ, ಸ್ವತಂತ್ರತ್ವದ ಅಧಿಕಾರವು, ಗುರುತ್ವ ಜಂಗಮತ್ವ ಸಂಸ್ಕಾರವಾಗುವದಕ್ಕಿಂತಲು ಮೊದಲು ಅವ್ಯಕ್ತಸ್ಥಿತಿಯಲ್ಲಿದ್ದು ಸಂಸ್ಕಾರ ವಿಶೇಷದಿಂದ ಸ್ಪಷ್ಟವೆನಿಸಿರುವ, ಅಂದರೆ ವ್ಯಕ್ತವಾಗಿರುವ ಸ್ಥಿತಿಯೇ ಮುಕ್ತಿಯೆನಿಸುವುದು. ವಿಸ್ತೃತ

ಸ್ಥಿತಿಯಲ್ಲಿದ್ದ ಬದ್ಧತ್ವವು ನಾಶವಾಗುತ್ತಾಗುತ್ತ ವ್ಯಾಪಕ ಸ್ಥಿತಿಯ ಸ್ವಾಮಿತ್ವ ಸ್ವತಂತ್ರತ್ವ ವುಂಟಾದದ್ದೇ ಮುಕ್ತತ್ವವೆನಿಸುವುದು. ಗುರು ಜಂಗಮರಲ್ಲಿ ಅಪ್ರಾಕೃತ ಪುರುಷತ್ವ ವಿದ್ದಂತೆ ಲಿಂಗದಲ್ಲಿಯಾದರೂ ಅಪ್ರಾಕೃತ ಶಿಲಾತ್ವವಿರುವುದು. ಪುರುಷಾಕಾರದ ಗುರು ಜಂಗಮಾದಿಗಳ ಪ್ರಯತ್ನದಿಂದಲೇ ಶಿಲೆಯಲ್ಲಿದ್ದ ಶಿಲಾಭಾವವು ಹೋಗಿ ಶಿವತ್ವವುಂಟಾಗುವುದು. ಆ ಶಿವತ್ವವು ವ್ಯಾಪಕಸ್ಥಿತಿಗೆ ಬರಬೇಕಾದರೆ ಆ ಭಕ್ತನು ಗುರು ಜಂಗಮರ ಪಾದೋದಕ ಪ್ರಸಾದಾದಿಗಳಿಂದ ಲಿಂಗದಲ್ಲಿ ವ್ಯಾಪಕತ್ವವನ್ನು

ತಂದುಕೊಂಡು ತದ್ವಾರಾ ವ್ಯಾಪಕನಾಗುವುದೇ ಮುಕ್ತಿಯು.  ಸಾರಾಂಶವಿದು : ಗುರು ಜಂಗಮರು ಅನ್ಯವಾದ ಲಿಂಗಾಶ್ರಯವನ್ನು ಮಾಡದೆ ಸ್ವಸ್ವರೂಪ ಲಿಂಗಾರ್ಚನಾದಿಗಳಿಂದ ಮುಕ್ತರಾಗುವರು. ಲಿಂಗವು ಗುರು ಜಂಗಮರಿಂದ ಸ್ಥಾಪಿಸಲ್ಪಟ್ಟು ಗುರು ಜಂಗಮರ ಕೃಪೆಯಿಂದಲೇ ವ್ಯಾಪಕ ಸ್ಥಿತಿಯನ್ನು ಹೊಂದಿ ತನ್ನನ್ನು ಆಶ್ರಯಿಸಿದ ಭಕ್ತನಿಗೆ ಮುಕ್ತಿಯನ್ನುಂಟು ಮಾಡುವುದು.

೧೦. ಕ್ರಿಯಾಜ್ಞಾನರೂಪ ಗುರು. ಕ್ರಿಯಾರೂಪ ಲಿಂಗ. ಜ್ಞಾನರೂಪ ಜಂಗಮ. ಹೀಗೆ ಗುರು-ಲಿಂಗ-ಜಂಗಮ ಶಬ್ದದ ಅನ್ವರ್ಥಕವಿರುವುದು. ಮತ್ತು ಭಕ್ತರ ಅನಿಷ್ಟವನ್ನು ಪರಿಹರಿಸಿ ಕೊಡುವುದರಿಂದಲೂ ‘ಇಷ್ಟಿ’ ಅಂದರೆ ಪೂಜಾ; ಆ ಪೂಜೆಯಿಂದ ನಿರಂತರ ಆರಾಧಿಸಲ್ಪಡುವುದರಿಂದಲೂ ಇಷ್ಟಲಿಂಗವೆ೦ದು ಅನ್ವರ್ಥಕವಾಗಿರುವುದು. ಮಲತ್ರಯ ರೂಪ ಅಜ್ಞಾನಾಂಧಕಾರವನ್ನು ದೂರಮಾಡಿ ಶಿವಾದೈತರೂಪ ನಿತ್ಯಾನಂದವನ್ನುಂಟುಮಾಡಿಕೊಡುವುದಕ್ಕೆ ಕರ್ತೃವಾದ್ದರಿಂದಲೂ ಸಂಶಯ ನಿರಸನದ್ವಾರದಿಂದ ನಿತ್ಯ ಮುಕ್ತಿಯನ್ನುಂಟುಮಾಡುವನಾದ್ದರಿಂದಲೂ  ಬಾಹ್ಯಾಂತರಗಳಲ್ಲಿ  ಹರಿದಾಡುವ ಮನಸ್ಸನ್ನು ಭೇದಿಸಿ ಬೋಧಿಸುವ ಘನ ಸಾಮರ್ಥ್ಯವುಳ್ಳವನಾದ್ದರಿಂದಲೂ ಗುರುವೆಂಬ ಶಬ್ದವು ಅನ್ವರ್ಥಕವಾಗಿರುವುದು.

ತನ್ನ ಪ್ರಕಾಶ ಸಾನ್ನಿಧ್ಯಮಾತ್ರದಿಂದ ಶಿವಶಕ್ತ್ಯತ್ಮಕ ಪ್ರಪಂಚವನ್ನು ಬೆಳಗಿ ಅನಿಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನುಂಟುಮಾಡಿ ಅಂತರ್ಬಹಿರ್ಮನಸ್ಸನ್ನು ಭೇದಿಸುವ ಸ್ವಯಂಪ್ರಕಾಶ ಸ್ವರೂಪವೇ ಜಂಗಮದ ಅನ್ವರ್ಥಕವಾಗಿರುವುದು.

ಸಚ್ಚಿದಾನಂದತ್ವವು ಲಿಂಗ-ಗುರು-ಜಂಗಮ ಈ ತ್ರಿವರ್ಗದ ಅಸಾಧಾರಣ ಲಕ್ಷಣಗಳಾಗಿದ್ದರೂ ಪರಸ್ಪರ ಭಿನ್ನಾಭಿನ್ನ ಲಕ್ಷಣಗಳಿಂದ (ಇಲ್ಲಿ ಅಭಿನ್ನವೆಂದರೆ ಅನ್ನೋನ್ಯವೆಂದರ್ಥ). ಜಗದ್ಧಿತಾರ್ಥವಾಗಿ ದಿವ್ಯ ಚೇಷ್ಟೆಯಿಂದ ಶೋಭಿಸುವವು.

 ೧೧. ಅಷ್ಟಾವರಣವೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಶೋಭಿಸುವ ಅಂಗನೇ ಭಕ್ತಶಬ್ದವಾಚ್ಯನು. ಶಿವನು, ‘ನಾನು ಭಕ್ತನ ಕೇವಲ ಚೈತನ್ಯ ಸ್ವರೂಪವಾದ ಶಿವಕಲೆಯಿಂದಲೂ ಶಿಲಾಮಯವಾದ ಲಿಂಗಾಕಾರದಲ್ಲಿ ಶೋಭಿಸಿ ಪೂಜ್ಯತೆಯ ಪಡೆದಿರುವದರಿಂದ ಆ ಭಕ್ತನ ಜಿಹ್ವಾದ್ವಾರದಿಂದಲೇ ಲಿಂಗರೂಪಿಯಾಗಿ ತೃಪ್ತಿಯನ್ನು ಹೊಂದುವೆನೆಂದು ಹೇಳುವುದೇ ಇದು ಪರ್ಯವಸಿತಾರ್ಥವು.

೧೨. ಅಪ್ರಾಕೃತ ಮುಮುಕ್ಷುಗಳಾದ ಗುರುಜಂಗಮೇತರ ಭಕ್ತವಂಶೀಯರೂ ಆಗಂತುಕರೂ ತಂತಮ್ಮ ಉದ್ಧಾರತೆಯ ದೆಸೆಯಿಂದ ಸ್ವಸ್ವರೂಪ ಲಿಂಗವನ್ನೂ ಆ ಲಿಂಗವನ್ನು ಕರುಣಿಸಿದ ಗುರುಮೂರ್ತಿಗಳನ್ನೂ ಆ ಲಿಂಗ ಮುಖವಾದ ಜಂಗಮ ಮೂರ್ತಿಗಳನ್ನೂ ಗುರು ಲಿಂಗ ಜಂಗಮ ಪೂಜಾಧಿಕಾರ ಪ್ರದಾಯಕ ವ್ರತರೂಪ ಭಸ್ಮ ರುದ್ರಾಕ್ಷಗಳ ಧಾರಣವನ್ನೂ ಇಷ್ಟಲಿಂಗವನ್ನು ಜಾಗ್ರತೆಗೊಳಿಸುವ ಸಾಧನವಾದ ಪಂಚಾಕ್ಷರ ಮಂತ್ರ ಜಪವನ್ನೂ ಗುರು ಲಿಂಗ ಜಂಗಮರೆಂಬ ಇಷ್ಟ ದೇವತೆಗಳ ಪಾದೋದಕ-ಪ್ರಸಾದರೂಪ ಫಲವನ್ನೂ ಭಕ್ತಿಯಿಂದ ಅರ್ಚನಾದಿಗಳ ದ್ವಾರಾ ಸೇವಿಸುವರು.

ಗುರು ಜಂಗಮರಾದರೂ ತಂತಮ್ಮ ಸಾಭಾರಿ ಗುರುಗಳಿಂದ ಮೂರ್ತಿಕರಿಸಿ. ಕೊಡಲ್ಪಟ್ಟ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಪೂಜ್ಯ ಪೂಜಕ ಕ್ರಮವನ್ನತಿಕ್ರಮಿಸದೆ ಗುರು ಜಂಗಮರಿಂದ ಕೊಡಲ್ಪಟ್ಟ ಭಸ್ಮ ರುದ್ರಾಕ್ಷಧಾರಣವನ್ನು ಮತ್ತು ಪಂಚಾಕ್ಷರ ಜಪವನ್ನು ಗುರು ಲಿಂಗ ಜಂಗಮರ ಪಾದೋದಕ ಪ್ರಸಾದಗಳನ್ನು ಜಗದ್ಧಿತಾರ್ಥವಾಗಿ ಪವಿತ್ರ ಲೀಲೆಯಿಂದ ಅಪ್ರಾಕೃತ ಮುಮುಕ್ಷುಗಳೆಂಬಂತೆ ಸಿದ್ಧರಾದವರು ಅರ್ಚನಾದಿ ದ್ವಾರದಿಂದ ಸೇವಿಸುವರು. ಇವರು ಸಹ ಮುಂದೆ ಆಚರಣೆಯ ವಿಶೇಷದಿಂದ ಸಿದ್ಧರಾಗುವರು. ಇದರಿಂದ ಜಂಗಮ ಸಂಪ್ರದಾಯಕರ ಮತ್ತು ಗುರು ಜಂಗಮೇತರ ವಂಶೀಯರ ಅಷ್ಟಾವರಣಾಚರಣೆಯಲ್ಲಿ ತಾರತಮ್ಯ ಭಾವವುಂಟೆಂದು ಸ್ಪಷ್ಟವಾಗಿ ಕಂಡುಬರುವುದು.

ಸಾರಾಂಶವಿದು : ಲಿಂಗಧಾರಿಗಳಾದ ಇತರರು ಧರಿಸಿದ ಲಿಂಗಕ್ಕೂ, ವೀರಶೈವರು ಧರಿಸಿದ ಲಿಂಗಕ್ಕೂ ಯಾವ ತಾರತಮ್ಯವುಂಟೋ ಅವೇ ತಾರತಮ್ಯವು ವೀರಶೈವರಲ್ಲಿಯ ಪೂಜ್ಯ ಪೂಜಕರು ಧರಿಸಿರುವ ಲಿಂಗದಲ್ಲಿಯೂ ಉಂಟು. ಎಲ್ಲರೂ ಧರಿಸಿದ ಲಿಂಗದಲ್ಲಿ ತಾರತಮ್ಯವಿಲ್ಲದೆ ಒಂದೇ ಎಂದು ಹೇಳಲಿಕ್ಕೆ ಬರುವುದಿಲ್ಲ. ಗುರು ಜಂಗಮರನ್ನು ಅಗಲಿದರೆ ಅಥವಾ ಅಪ್ಪಣೆಯನ್ನು ಮೀರಿದರೆ ಅದರಂತೆ ಲಿಂಗವನ್ನಗಲಿದರೆ ಅಪೂಜ್ಯತೆಯುಂಟಾಗುತ್ತದೆ.

೧೩. ಗುರುವು ದೀಕ್ಷಾಕಾಲದಲ್ಲಿ ಶಿಷ್ಯನ ಮಸ್ತಕದಲ್ಲಿದ್ದ ಚಿತ್ಕಲೆಯನ್ನು ಲಿಂಗದಲ್ಲಿ ಸ್ಥಾಪಿಸಿ ಲಿಂಗದಲ್ಲಿದ್ದ ಶಿವಕಲೆಯನ್ನು ಶಿಷ್ಯನ ಪ್ರಾಣದಲ್ಲಿ ಸ್ಥಾಪಿಸಿ ಎರಡನ್ನು ಏಕೀಕರಿಸಿದ ನಂತರ ಲಿಂಗವು ಭಕ್ತನ ಅಂಗವನ್ನು ಬಿಟ್ಟು ಅಗಲಿ ಹೋದಲ್ಲಿ ಪರಸ್ಪರ ಐಕ್ಯತೆಗೂ-ಗುರ್ವಾಜ್ಞಾಪಾಲನೆಗೂ ಭಂಗ ಬರುವುದರಿಂದ ಗುರುವಿನ ಆಜ್ಞೆಗೂ ಲಿಂಗಕ್ಕೂ ಅಪೂಜ್ಯತೆಯುಂಟಾಗುವುದಲ್ಲದೆ ಲಿಂಗವನ್ನಗಲಿದ ಸಾಧಕನಿಗೆ ಭಕ್ತತ್ವದಿಂದ ಪಾತಿತ್ಯವುಂಟಾಗುವುದು. ಲಿಂಗವು ಭಕ್ತನ ದೇಹವನ್ನಾಶ್ರಯಿಸಿಕೊಂಡು ಪೂಜ್ಯತ್ವವನ್ನು ಹೊಂದಿರುವುದು. ಭಕ್ತದೇಹದಿಂದಗಲಿ ಲಿಂಗವು ಸ್ವತಂತ್ರಿಸಿ ಪೂಜಾರ್ಹವಾಗಲಾರದು. ಭಕ್ತ ದೇಹಸಾಪೇಕ್ಷೆಯುಳ್ಳ ಲಿಂಗವು ಅಗಲಿ ಹೋದಲ್ಲಿ ಲಿಂಗತ್ವವು ಲುಪ್ತವಾಗುವುದು. ಗುರುಕುಲೋತ್ಪನ್ನ ಗುರುಕರ ಸಂಜಾತ ಗುರುಕುಲವಾಸಿ ಸಾಧಕ ಸ್ಥಿತಿಯ ಗುರು ಜಂಗಮರಿಗೆ ಸ್ವಸ್ವರೂಪವಾದ ಗುರುದತ್ತ ಲಿಂಗವು ವಿಯೋಗವಾದಲ್ಲಿ ಗುರ್ವಾಜ್ಞಾ

ಪೂರ್ಣಸಿದ್ಧತೆಯ ಉಳುಮೆಯ ಮೂಲಕ ಕ್ರಿಯಾಲೋಪವೆನಿಸಿದ್ದರಿಂದ ಅಪೂಜ್ಯತೆಯೂ ಲಿಂಗಕ್ಕೆ ಭ್ರಷ್ಟತೆಯೂ ಪ್ರಾಪ್ತವಾಗುವುದು. ಪೂರ್ಣಸಿದ್ಧತೆಯನ್ನು ಹೊಂದಿದವರ ಶರೀರದಲ್ಲಿದ್ದ ಲಿಂಗಕ್ಕೂ ಪ್ರಾಣಕ್ಕೂ ಎಂದೂ ವಿಯೋಗವಾಗಲಾರದು. ಇದರಿಂದ ಸಾಧಕ ದೆಸೆಯಲ್ಲಿ ಅವಧಾನಿಗಳ ಅವಶ್ಯಕತೆಯಿಲ್ಲ. ಲಿಂಗಮೂರ್ತಿಯಲ್ಲಿ ಅವಧಾನಕ್ಕೆ ಅವಕಾಶವೇ ಇಲ್ಲದ್ದರಿಂದ ಸಾಧ್ಯ ಸಾಧಕದೆಸೆಯು ಇಲ್ಲವು. ಭಕ್ತಿಯಲ್ಲಿ ವ್ಯಾಪ್ಯವ್ಯಾಪಕತ್ವವು ಸಿದ್ಧ ಸಾಧಕತ್ವವು ಅವಧಾನಾದಿಗಳ ಪ್ರಯತ್ನದಿಂದ ಉಂಟಾಗಿ ತೋರುವಲ್ಲಿ ಗುರು ಜಂಗಮರಲ್ಲಿ ತೋರುವ ಸ್ಥಿತಿಯನ್ನು ಹೇಳುವುದೇನು ?

೧೪. ಪೂಜಕರಾದ ಅಷ್ಟಾವರಣ-ಪಂಚಾಚಾರವುಳ್ಳ ವೀರಶೈವರಿಗೆಲ್ಲ ಪಾದೋದಕವು ಅವಶ್ಯಕವಾಗಿ ಬೇಕು. ಅದರಂತೆ ಪೂಜ್ಯರಾದ ಗುರು ಲಿಂಗ ಜಂಗಮಗಳಿಗಾದರೂ ಬೇಕು. ಲಿಂಗಕ್ಕೆ ಹೇಗೆ ಬೇಕೆಂದರೆ : ಭಕ್ತನಿಚ್ಛೆಯು. ಭಕ್ತನ ಶಿರದರಮನೆಯ ಚಿತ್ಕಲಾ ವಸ್ತುವೇ ಲಿಂಗವು. ಅದೇ ಅವನ ಕರಗತವಾದದ್ದು. ಲಿಂಗವು ಭಕ್ತನನ್ನಾಶ್ರಯಿಸಿಕೊಂಡೇ ಇರಬೇಕಾಗುತ್ತದೆ. ಭಕ್ತನು ಲಿಂಗ ಭೋಗೋಪ ಭೋಗಿಯಾಗಿರುತ್ತಾನೆ. ಅನ್ನೋನ್ಯಾಪೇಕ್ಷೆಯಿರುವುದರಿಂದ ಭಕ್ತನಿಗೆ ಪಾದೋದಕ ಬೇಕಾಗಿದ್ದರೆ ಲಿಂಗಕ್ಕಾದರೂ ಬೇಕು. ಇದರಂತೆ ಗುರು ಜಂಗಮರಿಗೂ ಅವಶ್ಯ ಅವರವರ ಸ್ವಸ್ವರೂಪವಾದ ಲಿಂಗಕ್ಕೂ ಬೇಕು.

 ಪಾದೋದಕವು ಸಂಬಂಧದಿಂದ ದಶವಿಧವಾಗಿರುವುದು. ಮುಖ್ಯವಾಗಿ ತ್ರಿವಿಧವೆನಿಸಿರುವುದು. ಇದು ಸಹಜವು.

೧೫. ಗುರುಲಿಂಗ ಜಂಗಮರಲ್ಲಿ ಅಂತಃಪ್ರಭೇದಗಳಿರುವುದರಿಂದ ಲಿಂಗದಲ್ಲಿದ್ದ ಗುರುಜಂಗಮರ ಸಾನಿಧ್ಯದಿಂದ ಅನಿರ್ವಾಹ ಪಕ್ಷದಲ್ಲಿ ಸಂಬಂಧಾಚರಣೆಯಿಂದ ಪಾದೋದಕ ಪ್ರಸಾದಗಳ ನಿರ್ವಾಹವಾಗುತ್ತದೆ.  

೧೬. ಮುಖ್ಯವಾಗಿ ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕಗಳೆಂದು ಮೂರು ಪ್ರಕಾರಗಳು. ಇವು ಒಂದೊಂದೇ ಮೂರು ಮೂರು ಭೇದಗಳಿಂದ ಕೂಡಿ ನವವಿಧವಾಗಿರುವುದು. ಇವೆಲ್ಲವುಗಳ ಸಮಷ್ಠಿಯಾದುದೇ ಮಹಾ ಪಾದೋದಕ ಜಂಗಮ ಪಾದೋದಕವು. ಇದು ಗಣನೆಯಲ್ಲಿ ಸೇರಲು ದಶ ವಿಧವಾಯಿತು. ಈ ದಶವಿಧ ಪಾದೋದಕದಲ್ಲಿ ಸಂಬಂಧದಿಂದಲೂ ಸಹಜದಿಂದಲೂ ಅನೇಕ ರೀತಿಯಿಂದ ಸಂಬಂಧವುಂಟು. ಸಹಜವು ಒಂದೇ ಪ್ರಕಾರವಿದ್ದು ಸಂಬಂಧದಿಂದ

ಅನೇಕ ವಿಧವಾಗಿರುವುದು. ಸಂದರ್ಭಾನುಸಾರ ಸಂಬಂಧವನ್ನೂ ಮತ್ತೆ ಅನೇಕ ಪ್ರಕಾರ ಮಾಡುವುದುಂಟು. ಮೂರು ಪಾದೋದಕಗಳಲ್ಲಿ ಒಂದೊಂದರೊಳಗೆ ಮೂರು ಮೂರು ಲಿಂಗಗಳ ಸಂಬಂಧ ಮತ್ತು ಪರತರ ಶಿವಲಿಂಗ ಸಂಬಂಧ ; ಇವುಗಳಿಂದ ದಶವಿಧವಾಗಿರುವುದು. ಪಂಚಾಂಗುಲಿಗಳಿಂದ ಅಂದರೆ ಸೂಚಕ ಮುದ್ರೆಯಿಂದ ಎರೆದು ಸ್ವೀಕರಿಸುವುದೇ ದೀಕ್ಷಾಪಾದೋದಕ ಅಥವಾ ಗುರು ಪಾದೋದಕ; ಶಂಖಮುದ್ರೆಯಲ್ಲಿ ಲಿಂಗದ ಮೇಲೆ ಅಭಿಷೇಕ ಮಾಡಿ ಪೂಜಿಸಿದ ಪಾದೋದಕವನ್ನು ಲಿಂಗವನ್ನೆತ್ತಿ ಸ್ವೀಕರಿಸುವುದೆ ಶಿಕ್ಷಾಪಾದೋದಕ ಅಥವಾ ಲಿಂಗ ಪಾದೋದಕ (ಕ್ರಿಯಾ ಪಾದೋದಕ)ವೆಂದು ಪರ್ಯಾಯ ನಾಮಗಳು. ಜಿಹ್ವಾಗ್ರಕ್ಕೆ ಪಾತ್ರೆಯನ್ನೆತ್ತಿ ಇಲ್ಲವೆ ಚಿನ್ಮುದ್ರೆಯಿಂದಾಗಲಿ ಕುರಂಗ ಮುದ್ರೆಯಿಂದಾಗಲಿ ಮುಟ್ಟಿ ಸ್ವೀಕರಿಸುವುದೇ ಮೋಕ್ಷ ಪಾದೋದಕ ಅಥವಾ ಜ್ಞಾನ ಪಾದೋದಕ (ಜಂಗಮ ಪಾದೋದಕ)ವೆಂದು ಹೆಸರುಗಳು. ಪಂಚಾಂಗುಲಿಗಳ ಕೂಟದಲ್ಲಿ ನಿರಾಭಾರಿಗಳು ಸಮಷ್ಟಿರೂಪ ಪ್ರಣವನನ್ನು ಭಾವಿಸಿ ಅದೇ ತನ್ನ ಗುರುವೆಂಬ ಭಾವನೆಯಿಂದ ಸ್ವೀಕರಿಸುವ ಕಾರಣ ಗುರು ಪಾದೋದಕವು; ಹಸ್ತದಲ್ಲಿಯೆ ಲಿಂಗ ಸಂಬಂಧವಿರುವುದರಿಂದಲೂ ಲಿಂಗಾಭಿಷಿಕ್ತವಾದ್ದರಿಂದಲೂ ಲಿಂಗ ಪಾದೋದಕ; ಜಿಹ್ವಾಗ್ರದಲ್ಲಿ ಜಂಗಮ ವಿರುವದರಿಂದ ಜಂಗಮಕ್ಕೆ ಮುಟ್ಟಿಸಿ ತೆಗೆದುಕೊಳ್ಳುವುದರಿಂದ ಜಂಗಮ ಪಾದೋದಕವೆಂಬ ಹೆಸರು.

೧೭. ಭ್ರಮಾರೂಪ ಸಂಸ್ಕಾರಕ್ಕೆ ಕಾರಣವಾದ ಕಲ್ಪನೆಯ ಪದಾರ್ಥ ಲಕ್ಷಣವು ಅರ್ಥಾತ್ ಕಲ್ಪಿತ ತತ್ತ್ವವೇ ಪದಾರ್ಥ ಲಕ್ಷಣವು. ಸಚ್ಚಿದಾನಂದತ್ವವೆ ಪ್ರಸಾದ ಲಕ್ಷಣವು. ಸಾಧಕರಿಂದ ವೀರಮಾಹೇಶ್ವರರು ಸ್ಥೂಲ ಪದಾರ್ಥವನ್ನು ತ್ಯಜಿಸಿ ಸೂಕ್ಷ್ಮ ರೂಪ ಪದಾರ್ಥವನ್ನು ಗುರ ಲಿಂಗ ಜಂಗಮಕ್ಕೆ ಅರ್ಪಿಸಿ ತನ್ಮುಖದಿಂದ ಒಕ್ಕುಳಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

೧೮. ಗುರು ಜಂಗಮರ ಪಾದೋದಕವು ಪ್ರಸಾದವಲ್ಲ. ಪದಾರ್ಥವೆಂದರೆ ಗುರು ಲಿಂಗ ಜಂಗಮರಿಗೆ ಅರ್ಪಣವಾದ ಪ್ರತಿಯೊಂದು ಪರಿಶುದ್ಧ ವಸ್ತುವು ಪ್ರಸಾದವಾಗುವುದೆಂಬ ಪ್ರಮಾಣ ಅನುಭವಾದಿಗಳಿಗೆ ವಿರೋಧವಾಗುವುದು. ಪ್ರಸಾದವೆಂದರೆ ಅಷ್ಟಾವರಣಗಳಲ್ಲಿ ಅಂತಿಮವಾದ ಪಾದೋದಕ ಸೇವನಾಂತರ ಗ್ರಹಿಸಬೇಕಾದ ಪ್ರಸಾದವು; -ಇದಕ್ಕೆ ಬೇರೆಯಾದುದೊ ? ಒಂದೆಯೊ ? ಒಂದೆಯಾದರೆ ಅದರ ಸ್ವೀಕಾರವೇಕೆ ? ಇದೇ ಪ್ರಸಾದವಾದರೆ ಅಷ್ಟಾವರಣಗಳು ಹೇಗೆ ನಿರ್ವಾಹಕ ಮಾಡಲ್ಪಡುವವು ? ಬೇರೆಯಾದರೆ ಪಾದೋದಕಕ್ಕೆ ಕಲ್ಪಿತತ್ವದಿಂದ ಪದಾರ್ಥತ್ವ ವುಂಟಾಗುವುದು. ಮತ್ತು ಗುರು ಲಿಂಗ ಜಂಗಮಕ್ಕೆ ಅರ್ಪಣವಾದುದು ಪ್ರಸಾದ ವಾಗುವುದೆಂಬ ಪ್ರಮಾಣಗಳಿಗೆ ವ್ಯರ್ಥತೆಯುಂಟಾಗುವುದು. ಇದಲ್ಲದೆ ಅಷ್ಟಾವರಣವೆ ಅಂಗವಾಗಿ ಪಂಚಾಚಾರವೆ ಪ್ರಾಣವಾದ ವೀರಶೈವತ್ವಕ್ಕೆ ಅಂಗಲೋಪದಿಂದ ದೋಷವುಂಟಾಗುವುದು. ಪಾದೋದಕವು ಪ್ರಸಾದವೆನಿಸುವುದು. ಪಾದೋದಕವು ಪೂಜ್ಯರ ಮಸ್ತಕದಲ್ಲಿ ಸಚ್ಚಿದಾನಂದ ಸ್ವರೂಪವಾಗಿರುವದೆಂದು ಈ ಮೊದಲು ಉಕ್ತವಾಗಿರುವುದು. ಅಂತಹ ಸಚ್ಚಿದಾನಂದ ಸ್ವರೂಪವೆ ಪ್ರಸಾದವೆನಿಸುವುದು. ಆ ಪ್ರಸಾದವೆ ಪೂಜಕನ ಇಚ್ಛಾ ಜ್ಞಾನ ಕ್ರಿಯಾದಿಗಳಿಂದ ಚಲನಕ್ರಿಯೆಯನ್ನು ಹೊಂದಿ ಚಿದ್ರಸವಾಗಿ ಬಹಿಷ್ಕರಿಸುವುದರಿಂದ ಪ್ರಸಾದವೆನಿಸಿರುವುದು. ಆ ಪೂಜ್ಯರಾದ

ಮೂರ್ತಿಗಳಲ್ಲಿ ಈ ಪಾದೋದಕ ಸಂಬಂಧಗಳಿಂದ ಇಚ್ಛಾ ಜ್ಞಾನ ಕ್ರಿಯೆಗಳೇನೂ ಇಲ್ಲದೆ ಸ್ವಸ್ವರೂಪಾನು ಸಂಧಾನವೇ ಇರುವುದು. ಇಂತಹ ಪೂಜ್ಯರ ಮಸ್ತಕಗತವಾದ ಚಿದ್ಬಿಂದುವೆ ದ್ರವಿಸಿ ಸುಷುಮ್ನಾದ್ವಾರವಾಗಿ ಪಾದಾಂಗುಷ್ಪಗಳಿಂದ ಬಹಿಷ್ಕರಿಸಿದಲ್ಲಿ ಗುರು ಲಿಂಗ ಜಂಗಮ ಪಾದೋದಕ ರೂಪವಾಗಿ ಕಂಗೊಳಿಸುವುದರಿಂದ ಪಾದೋದಕ ರೂಪ ಪ್ರಸಾದವೆನಿಸುವುದು. ಇದೇ ಪ್ರಸಾದವಾದರೆ ಮುಂದೆ ಪ್ರಸಾದವನ್ನು ಏಕೆ ಪಡೆಯಬೇಕೆಂದರೆ : ಪ್ರಸಾದವು ಸಾಮಾನ್ಯ ವಿಶೇಷವೆಂದು ಎರಡು ಬಗೆಯಾಗಿರುವುದು. ಈ ಪಾದೋದಕ ರೂಪ ಪ್ರಸಾದದ ಸಾಮಾನ್ಯ ರೂಪದಿಂದ ಪ್ರಸಾದವೆನಿಸಿ ವಿಶೇಷ ರೂಪದಿಂದ ಪಾದೋದಕವೆನಿಸುವುದು. ಇದರಂತೆ ಅಷ್ಟಾವರಣಗಳಲ್ಲಿಯೂ ಪ್ರಸಾದತ್ವವು ಸಾಮಾನ್ಯ ನೀತಿ ರೀತಿಯಿಂದಿರುವುದು. ಅಂದರೆ ಭಸ್ಮ ರುದ್ರಾಕ್ಷಿ ಮಂತ್ರಾದಿಗಳು ಸಾಮಾನ್ಯವಾಗಿ ಪ್ರಸಾದವಾಗಿದ್ದರೂ ವಿಶೇಷತ್ವದಿಂದ ಭಸ್ಮರುದ್ರಾಕ್ಷಿಗಳೇ ಆಗುವುವು. ಕಡೆಯದಾದ ಈ ಪ್ರಸಾದವು ಫಲರೂಪವಾದ್ದರಿಂದ ಇದರಲ್ಲಿ ಸಾಮಾನ್ಯ ವಿಶೇಷ ರೂಪ ಪ್ರಸಾದತ್ವವಿರುವುದು. ಸಾಮಾನ್ಯ ವಿಶೇಷತ್ವಗಳೆರಡೂ ಇಲ್ಲಿ ಐಕ್ಯವಾಗಿರುವುದರಿಂದ ಐಕ್ಯ ಸ್ಥಲದಲ್ಲಿ ನಿಲುಕಡೆಯೆನಿಸಿರುವುದು.

೧೯. ವೀರಶೈವ ಸಿದ್ಧಾಂತವು .ದ್ವೈತಾದ್ವೈ ತವಾದ್ದರಿಂದ ಗುರು ಲಿಂಗ ಜಂಗಮರಲ್ಲಿ ಭೇದಾಭೇದ ಭಕ್ತನಿಗೆ ಇರಬೇಕು. ಭಕ್ತ ಶಬ್ದವನ್ನು ವಿಚಾರಿಸಿದರೆ ಭಕ್ತಿಪ್ರಧಾನವುಳ್ಳವನೆ ವೀರಶೈವನೆಂದು ತಿಳಿಯುವುದರಿಂದಲೂ, ಭೇದಾಭೇದವನ್ನುಂಟುಮಾಡುವುದರಿಂದ ವೀರಶೈವ ಮತವು ಭಾಕ್ತಿಕ ಮತವಾದ್ದರಿಂದಲೂ, ಭೇದ ಪದವು ಭಾಗ-ವಿಭಾಗ ಮಾಡುವ ಸ್ವಭಾವವುಳ್ಳದ್ದೆಂತೂ, ಪೂಜ್ಯ ಪೂಜಕ ವಸ್ತುಗಳಲ್ಲಿ ಭೇದಾ ಭೇದವನ್ನೆಸಗುವ ಸಾಮರ್ಥ್ಯವುಳ್ಳದ್ದೆಂತಲೂ, ಪ್ರಸಾದ ಭಕ್ತಿ-ಮುಕ್ತಿಗಳಿಗೆ ಏಕದೇಶ ಸ್ಥಿತಿಯಿರುವುದರಿಂದ ಭೇದಾ  ಭೇದಭಾವನೆಯು ಅವಶ್ಯ ಇರಬೇಕಾಗುವುದು. ಆದ್ದರಿಂದ ನಿರ್ವಿಶೇಷೋಪಾಸನೆಯು ಘಟಿಸುವುದು.

೨೦. ಲಿಂಗಪಾದೋದಕವನ್ನು ಗುರು ಜಂಗಮರ ಮಸ್ತಕಕ್ಕೆ ಎರೆಯದಿದ್ದರೂ ಅದು ಲಿಂಗ ಪಾದೋದಕವಾಗುವುದು ಎಂಬ ವಿಷಯವನ್ನು ಶಾಸ್ತ್ರವು ವಿಧಿಸಿರುವುದಿಲ್ಲ; ವಿಧಿಸಬೇಕಾಗಿಯೂ ಇಲ್ಲ. ಮತ್ತು ಅಂಗರೂಪ ಭಕ್ತನಿಗೆ ಗುರು ಜಂಗಮ ಪಾದೋದಕವನ್ನು ಲಿಂಗದ ಮೇಲೆ ಅಭಿಷೇಕ ಮಾಡದಿದ್ದರೆ ಗುರು ಜಂಗಮರ ಪಾದೋದಕವಾಗುವುದಿಲ್ಲ. ಆಚಾರದಲ್ಲಿ ಸಂಬಂಧವೆಂತಲೂ, ಸಹಜವೆಂತಲೂ ಎರಡು ವಿಧವಾಗಿರುವುದು. ಇವೆರಡನ್ನೂ ಪರಸ್ಪರ ಭಿನ್ನ ಭಿನ್ನ ಕಾಲದಲ್ಲಿ ಆಚರಿಸಿ ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಹೊಂದಬೇಕು. ಗುರು ಜಂಗಮರು ಪ್ರತ್ಯಕ್ಷವಿಲ್ಲದಾಗ ಲಿಂಗಮೂರ್ತಿಯಲ್ಲಿ ಗುರುಜಂಗಮರನ್ನು ಅನುಸಂಧಾನಿಸಿ ಆ ಲಿಂಗಮೂರ್ತಿಯನ್ನು ನಿಯಮಿತ ಸ್ಥಿತಿಯಲ್ಲಿರಿಸಿ ಹಸ್ತಪಾದಾದಿಗಳನ್ನು ಭಾವಿಸಿ  ವಾಮ ದಕ್ಷಿಣ ಪಾದಾಂಗುಷ್ಠಗಳನ್ನೂ, ತನ್ನ ಧ್ಯೇಯ ಸ್ಥಾನವನ್ನೂ ಕಲ್ಪಿಸಿ ಗುರು ಲಿಂಗ ಜಂಗಮರ ಸ್ವರೂಪವನ್ನು ಮಂತ್ರಾದಿಗಳ ಅವಧಾನತೆಯಿಂದ ಎರೆದರೆ ಅವ್ಯಕ್ತವಾದ ಶಿವಸ್ವರೂಪ ಪಾದೋದಕವು ವ್ಯಕ್ತವಾಗುವುದು. ಹೀಗಾಗುವ ಪೂರ್ವದಲ್ಲಿ ಶಿವನು

ಅದೇ ಆತ್ಮನಲ್ಲಿ ತನ್ನೊಡನೆ ಐಕ್ಯವಾಗಬೇಕಾಗಿರುವುದು. ಆದರೆ ಹೇಗೆ ಸೃಷ್ಟಿಯೋ ಹಾಗೆ ಸ೦ಹಾರವಿರಬೇಕಾಗುವುದು.

೨೧. ಪೂಜ್ಯರಾದ ಗುರು ಜಂಗಮರಲ್ಲಿ ಪಾದೋದಕವನ್ನು ಕೊಡುವ ಇಚ್ಛೆ ಯತ್ನಾದಿಗಳು ಇಲ್ಲವೇ ಇಲ್ಲ. ಪ್ರದಾತೃತ್ವವು ಗುರು ಜಂಗಮರ ಭಾವನೆಯಲ್ಲಿ  ಎಂದೂ ಬರುವುದಿಲ್ಲ. ಸುಮ್ಮನೆ ನೋಡುವವರಿಗೆ ಮಾತ್ರ ಇದ್ದಂತೆ ಕಾಣಿಸಬಹುದು. ಪೂಜ್ಯರಾದ ಗುರು ಜಂಗಮರ ಮಸ್ತಕದ ಮಧ್ಯ ಸಹೃದಯದಲ್ಲಿ ನೆಲೆಸಿರುವ ಶಿವನಂದಾಮೃತವು ಪೂಜಕರ ಇಚ್ಛೆ ಯತ್ನಾದಿಗಳಿಂದ ಸುಷುಮ್ನಾ ಮಾರ್ಗವಾಗಿ ಪಾದಾಂಗುಷ್ಠ ದ್ವಾರದಿಂದ ಬಹಿಷ್ಕರಿಸಿ ಭಕ್ತನ ಹಸ್ತಗತವಾಗುವುದು. ಆ ಭಕ್ತನು ತಾನು ಪಡೆದುಕೊಂಡು ಪರಮಾನಂದ ಶಿವಸ್ವರೂಪವೇ ಪ್ರತ್ಯಕ್ಷವಾಗಿರುವುದನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸದೆ ಸ್ವೀಕರಿಸಬಾರದು. ಸ್ವೀಕರಿಸಿದ್ದಾದರೆ ಪಾತಿತ್ಯವುಂಟಾಗುವುದೆಂಬ ಶಾಸ್ತ್ರವಿಧಿಗನುಸರಿಸಿ ಆ ಪೂಜ್ಯ ಮೂರ್ತಿಗಳಿಗೆ ಭಕ್ತಿಪೂರ್ವಕ ಶಿವನಂದಾಮೃತವನ್ನು ಅರ್ಪಿಸಿದರೆ ಅವರು ಕೈಕೊಳ್ಳಲೇಬೇಕು. ಪಕ್ಷಾಂತರ ಕೈಕೊಳ್ಳದಿದ್ದರೆ ಭಕ್ತನ ಸಶಾಸ್ತ್ರೀಯವಾದ ಭಕ್ತಿಯನ್ನು ತಿರಸ್ಕರಿಸಬಾರದೆಂಬ ಶಾಸ್ತ್ರೋಕ್ತಿಯ ಉಲ್ಲಂಘನೆಯೇ ವೀರಶೈವ ಮತದ ಭಾಕ್ತಿಕ ಧರ್ಮಾಚರಣೆಗೆ ಲೋಪವುಂಟಾಗುವುದು. ಆದ್ದರಿಂದ ಯೋಗ್ಯವೆಂದು ಅದನ್ನು ಸ್ವೀಕರಿಸಿದರೆ ದತ್ತಾಪಹಾರ ದೋಷವೆನಿಸುವುದು. ಮಧ್ಯೆ ಸಮಷ್ಟಿಯಿಂದ ಆದಿ ಸಮಷ್ಟಿಗೆ ಹೋಗಬೇಕಾದುದು ಸ್ವಭಾವಸಿದ್ಧವಾದುದು. ದತ್ತಾಪಹಾರ ದೋಷವೆಂದರೆ ದಾನವನ್ನು ಕೊಡತಕ್ಕ ವಸ್ತುವಿನಲ್ಲಿ ತನ್ನದೆಂದು ತೆಗೆದುಕೊಂಡು ತನ್ನ ಸ್ವಾರ್ಥಕ್ಕಾಗಿ ಉಪಯೋಗ ಮಾಡುವುದೆ ದತ್ತಾಪಹಾರ ದೋಷವೆನಿಸುವುದು.

 ಉದಾಹರಣೆಗಾಗಿ : ಗುರು ಲಿಂಗ ಜಂಗಮಕ್ಕೆ ತನು ಮನ ಧನಗಳನ್ನು ಸಂಕಲ್ಪಪೂರ್ವಕ ಅರ್ಪಿಸಿ ಮರಳಿ ಆ ಗುರು ಜಂಗಮರ ಸೇವೆಗಾಗಿಯೂ ಆ ಗುರು ಜಂಗಮರ ಇಚ್ಛಾನುಸಾರವಾದ ವೀರಶೈವ ಧರ್ಮಾರ್ಥ ಕಾರಗಳಿಗಾಗಿಯೂ ಆ ತನು ಮನ ಧನಗಳ ವಿನಿಯೋಗಿಸದೆ ತನ್ನ ಮತ್ತು ತನ್ನವರ ಶರೀರಾದಿಗಳ ರಕ್ಷಣೆಗಾಗಿಯೂ ಬಂಧು ಬಳಗದವರ ಪೋಷಣೆಗಾಗಿಯೂ ಆ ತನು ಮನ ಧನಗಳನ್ನು ಪ್ರಯೋಗಿಸಿದರೆ ದತ್ತಾಪಹಾರ ದೋಷವೆನಿಸುವುದು. ಮತ್ತು ಶಿವನು ಲೋಕದಲ್ಲಿ ಅನೇಕ ಪದಾರ್ಥಗಳನ್ನು ಕೊಟ್ಟಿರುವನಷ್ಟೆ ? ಭಕ್ತನು ಭಕ್ತಿಯಿಂದ ಆ ಪದಾರ್ಥಗಳನ್ನು ಶಿವನಿಗೆ ಅರ್ಪಿಸಿದರೆ ಅವುಗಳನ್ನು ಪರಮಾತ್ಮನು ಸ್ವೀಕರಿಸದಿದ್ದರೆ ಆ ಭಕ್ತನು ಹೇಗೆ ಉದ್ಧಾರವಾಗಬೇಕು ? ಸ್ವೀಕರಿಸಿದ್ದಾದರೆ ಶಿವನು ದತ್ತಾಪಹಾರಕನಾಗುವನೇನು ? ಅದರಂತೆ ಪರಶಿವನ ಆಜ್ಞಾನುಸಾರವಾಗಿಯೂ ಜಗದ್ದಿತಾರ್ಥವಾಗಿಯೂ ಅವತರಿಸಿದ ಗುರು ಇಚ್ಛಾನುಸಾರವಾಗಿಯೂ ಜಂಗಮರ ಉತ್ತಮಾಂಗಗತ ಚಿದ್ರಸವನ್ನು ಶಿಷ್ಯನ ಪ್ರಾರ್ಥನಾದಿಗಳಿಂದ ಸಾಕ್ಷತ್ಕರಿಸಿದ್ದನ್ನು ಭಕ್ತನು ಭಕ್ತಿಪೂರ್ವಕ ಆರ್ಪಿಸಲು  ಅದನ್ನು ಆ ಪೂಜ್ಯರು ಸಸ್ವರೂಪವಾದ ಲಿಂಗಕ್ಕರ್ಪಿಸಿ ಆ ಲಿಂಗಮೂರ್ತಿಯ ಕೃಪಾಪ್ರಸಾದವನ್ನು ಸೇವಿಸಿದುದಕ್ಕೆ ದತ್ತಾಪಹಾರ ದೋಷವು ವಿರುವುದೆಂದು ಹೇಳುವ ಬಗೆ ಹೇಗೆ ? ಅಲ್ಲದೆ ನಾವು ನಿತ್ಯಲಿಂಗ ಪೂಜೆಯಲ್ಲಿ ಲಿಂಗಕ್ಕೆ ಅರ್ಪಿಸಿದುದನ್ನೆಲ್ಲ ಲಿಂಗವು ಕೈಕೊಂಡರೆ ಅದೂ ಸಹ ಲಿಂಗದ ದತ್ತಾಪಹಾರ ವಾದೀತಲ್ಲವೆ ?

೨೨. ಗುರು ಕರುಣಿಸಿದ ಲಿಂಗವನ್ನು ಪೂಜ್ಯವೆಂದು ತಿಳಿದು ಆರಾಧಿಸುವರು. ಆ ಲಿಂಗಕ್ಕೆ ಮಾತೃಸ್ಥಾನವಾದ ಗುರುಮೂರ್ತಿಯನ್ನು ಮಾತ್ರ ಧಿಕ್ಕರಿಸುವುದು ತನ್ನ ಜನಕನ ಮುಖ್ಯ ಸಾಮರ್ಥ್ಯವನ್ನು ತಿರಸ್ಕರಿಸಿದವನಿಗಿಂತಲೂ ಅಧಿಕವಾದ

ದೋಷವಾಗುವುದು. ಗುರುವಿಲ್ಲದೆ ಲಿಂಗ ದೊರೆಯದು. ಕಾರಣ ಸಾಧಕ ಗುರುವಾಗಿದ್ದರೂ ಆತನಲ್ಲಿ ದೋಷವನ್ನು ಕಲ್ಪಿಸಬಾರದು; ಗುಣವನೆಣಿಸಬಾರದು. ಶಿವಸ್ವರೂಪರಾದರೂ ಸ್ವಸ್ವರೂಪ ಲಿಂಗಭಕ್ತರು ಎಣಿಸಿದ ಗುರು ಜಂಗಮರು ತಮ್ಮ

ಅನುಸಂಧಾನದ ನಿಲುಕಡೆಗೆ ಅತೀತವಾದ ಅಣುಚಕ್ರದ ನಿರಂಜನ ಲಿಂಗದಿಂದ ಭಾವಲಿಂಗಕ್ಕೆ ಪ್ರಾಣರೂಪವಾದ ಪರ ಜಂಗಮದಿಂದೊಗೆದ ಚಿತ್ಕಲೆಯೇ ಭಕ್ತನ ಭಕ್ತಿ ಪ್ರಾರ್ಥನಾದಿಗಳಿಂದ ಶಿಖಾಚಕ್ರಕ್ಕೆ ಆವಿರ್ಭವಿಸಿದಲ್ಲಿ ಪ್ರಾಣಲಿಂಗಕ್ಕೆ ಚೇತನಾ

ರೂಪವಾದ ಚರಜಂಗಮದಿಂದೊಗೆದು ಚಿನ್ನಾದ ಸ್ವರೂಪವನ್ನು ಧರಿಸಿ ಅಲ್ಲಿಂದ ಭಕ್ತನ ಪ್ರಾರ್ಥನೆಯ ವಿಶೇಷದಿಂದ ಬ್ರಹ್ಮರಂಧ್ರಕ್ಕೆ ಅವತರಿಸಿ ಅಲ್ಲಿಯ ಇಷ್ಟಲಿಂಗಕ್ಕೆ ಚೇತನ ಸ್ವರೂಪವಾದ ಸ್ವಯಜಂಗಮದಿಂದೊಗೆದ ಚಿದ್ಬಿಂದುವೇ ಚಿದ್ರಸವೆನಿಸಿ ಭ್ರೂಮಧ್ಯಾದಿ ಆಧಾರಾಂತವಾದ ಮಹಾಲಿಂಗಾದಿ ಆಚಾರ ಲಿಂಗಾಂತಮಾದ ಷಡ್ಲಿಂಗಗಳನ್ನು ಭಕ್ತನು ಪ್ರಾರ್ಥಿಸಿ ಭಾವನಾದಿ ಸಂಸ್ಕಾರ ವಿಶೇಷದಿಂದ ಆಯಾ ಲಿಂಗಗಳಿಂದ ಆಯಾ ಸ್ಥಾನಗಳಿಗೆ ಅವತರಿಸುತ್ತ ಮೂಲಾಧಾರಗತವಾದ ಆಚಾರಲಿಂಗ ಸ್ಥಾನದಲ್ಲಿ ಇತ್ತೆರನಾಗಿ ಲಿಂಗಾಂಗ ಶಿವಶಕ್ತಿ ಗುರುಲಿಂಗ ಈ ಅಪರ ಪರ್ಯಾಯ ನಾಮಗಳುಳ್ಳ ಪಾದಾಂಗುಷ್ಠ ದ್ವಯಗಳಿಂದ ಆಯಾ ಸ್ವರೂಪವನ್ನು ಹೊಂದಿ ಬಲದಂಗುಷ್ಠದಲ್ಲಿ ಗುರು  ಪಾದೋದಕವಾಗಿ   ಎಡದಂಗುಷ್ಠದಲ್ಲಿ ಲಿಂಗಪಾದೋದಕವಾಗಿ ಅವತರಿಸಿದ ನಂತರ ಆ ಎರಡು ಅಂಗುಷ್ಠಗಳ ಮಧ್ಯದಲ್ಲಿ ಸಂಬಂಧದಿಂದುಂಟಾದ ಸಾಮರಸ್ಯ ರೂಪಾದ ಜಂಗಮ ಪಾದೋದಕವು ಅವತರಿಸಿ ಆಯಾ ಮಂತ್ರ ತಂತ್ರ ಪ್ರಯೋಗಗಳಿಂದ ಸಂಸ್ಕರಿಸಿದ ಪರಿಶುದ್ಧ ಪಾತ್ರೆಯಲ್ಲಿ ಕಂಗೊಳಿಸುತ್ತಿರುವುದು.

೨೩. ಲಿಂಗದಲ್ಲಿ ಲಿಂಗ ಪಾದೋದಕವನ್ನು, ಗುರುವಿನಲ್ಲಿ ಗುರು ಪಾದೋದಕವನ್ನು, ಜಂಗಮದಲ್ಲಿ ಜಂಗಮ ಪಾದೋದಕವನ್ನು ಹೊಂದಬೇಕೆಂಬ ವಿಶೇಷ ವಿಧಿಯಲ್ಲ. ಶಿವ ಪಾದೋದಕವನ್ನು ಸ್ವೀಕರಿಸಬೇಕೆಂಬ ಸಾಮಾನ್ಯ ವಿಧಿಯಾಗಿರುವುದು. ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಸ್ವೀಕರಿಸಬೇಕು. ಅದರಲ್ಲಿ ಒಂದು ಕಡಿಮೆಯಾದರೂ ಅದು ಅನಶನವಾಗುವುದು; ಎಂಬ ವಿಶೇಷ ವಿಧಿಯು ಮಾತ್ರ ಇರುವುದು. ಗುರುಜಂಗಮರು ಸ್ವಪಾದೋದಕದಿಂದ ಸ್ವಪೂಜ್ಯವಾದ ಲಿಂಗಕ್ಕೆರೆಯುವರೆಂದು ಭ್ರಮಾದೃಷ್ಟಿಯುಳ್ಳವರಿಗೆ ಕಂಡರೂ ಪ್ರಮಾದೃಷ್ಟಿ ಯುಳ್ಳವರಿಗೆ ಮಾತ್ರ ಹಾಗೆ ಕಾಣದು. ಒಬ್ಬನು ಮಗಳನ್ನೂ ಮಡದಿಯನ್ನೂ ಆಲಂಗಿಸುವನು. ಆದರೆ ದೋಷದೃಷ್ಟಿಯುಳ್ಳವನಿಗೆ ಪುತ್ರಿಯ ಆಲಿಂಗನವೂ ಸಹ ದೋಷವಾಗಿಯೇ ಕಾಣುವುದು. ಪ್ರಮಾದೃಷ್ಟಿಯುಳ್ಳ ವಿಚಾರಿಗೆ ಮಾತ್ರ ಆ ಆಲಿಂಗನದ ನಿರ್ದೋಷದ ನಿಜಸ್ಥಿತಿಯು ಗೊತ್ತಾಗುವುದು. ಇದು ಸ್ವಚ್ಛವಾದ ನಂತರ ಪರಬ್ರಹ್ಮಸ್ವರೂಪ ಗುರು ಲಿಂಗ ಜಂಗಮದ ಪಾದೋದಕವು.

೨೪. ಪತಿ ಸ್ಥಾನವನ್ನು ಹೊಂದಿದವನು ಪೂಜ್ಯನು. ಪತ್ನಿ ಸ್ಥಾನಾಪನ್ನನಾದವನು ಪೂಜಕನು. ಪತಿರೂಪನಾದ ಪೂಜ್ಯನಿಂದ ಪತ್ನಿ ಸ್ವರೂಪನಾದ ಪೂಜಕನಲ್ಲಿ ಆವಿರ್ಭವಿಸಿ ಪಾದೋದಕ ಶಿಶುವು ತೋರುವುದು. ಇದಕ್ಕೆ ಉದಾಹರಣೆಗಾಗಿ ಕೊಟ್ಟಿರುವ

ಲೋಕಾನುಭವವಾದರೂ ವಿರೋಧಿಸದು. ಸತಿ-ಪತಿಗಳ ಸಾಮರಸ್ಯ ಸಂಯೋಗ ದಿಂದುಂಟಾಗುವ ಶಿಶುವು ಪತಿಯಲ್ಲಿ ಅವ್ಯಕ್ತರೀತಿಯಿಂದ ಬಿಂದುವಿನಷ್ಟು ಜೀವ ಚೈತನ್ಯ ರೂಪವಾಗಿ ಮೂರು ತಿಂಗಳು ವಾಸ ಮಾಡಿದ್ದು ಸತಿಪತಿಗಳ ಸಂಯೋಗ

ವಿಶೇಷದಿಂದ ಘನೀಭೂತವಾದ ಬಿಂದುವೇ ದ್ರವಿಸಿ ಆ ಜೀವ  ಚೈತನ್ಯದೊಡಗೊಂಡು ಜನನ ಧೃತಿಯೆನಿಸಿ  ಸತಿಯ ಗರ್ಭವನ್ನು ಪ್ರವೇಶಿಸಿ ಕ್ರಮದಿಂದ ಸಾವಯವ ರೂಪ ಪಿಂಡವು ವರ್ಧನವಾಗುತ್ತ ಕಡೆಗೆ ಬಹಿಷ್ಕೃತವಾಗಿ ಪುತ್ರರೂಪದಿಂದ ತೋರುವಂತೆ ಪೂಜ್ಯನಲ್ಲಿದ್ದ ಪಾದೋದಕವು ಪೂಜಕನಲ್ಲಿ ತೋರುವದಾದ್ದರಿಂದ ವಿರೋಧವೆನಿಸದು.

೨೫. ಅದು ತನ್ನ ಪಾದೋದಕವಲ್ಲ. ಹೇಗೆಂದರೆ : ವ್ಯಾಪ್ಯನಾದ ಗುರುವು ಅಥವಾ ಜಂಗಮವು ಅಭಿನ್ನವಾದ ಪರಲಿಂಗಾನುಭವದಿಂದ ಅನುಸಂಧಾನದಿಂದಿರುವಾಗ ಆ ಪಶ್ಚಿಮ ಚಕ್ರಗತವಾಗಿ ಸ್ವಸ್ವರೂಪದಿಂ ಘನೀಭೂತವಾಗಿದ್ದ ಆನಂದವೇ ದ್ರವಿಸಿ ಭಕ್ತನ ಕ್ರಿಯಾಕಲಾಪಗಳಿಂದ ಭೇದರೂಪವಾಗಿ ಪಾದದ್ವಾರಾ ತೋರುವುದು. ಅಂತಹ ಪರಲಿಂಗ ಸ್ವರೂಪ ಆನಂದ ರಸವನ್ನು ಭಕ್ತನು ಭಕ್ತಿಯಿಂದ ಶಾಸ್ತ್ರ ವಿಧಿಗನುಸರಿಸಿ ಪೂಜ್ಯರಿಗೆ ಅರ್ಪಿಸುವನು. ಅದನ್ನೇ ಆ ಭಕ್ತಿರೂಪವಾಗಿ ಬಂದ

ಶಿವಾನಂದರೂಪ ತೀರ್ಥವನ್ನೇ ಪೂಜ್ಯರು ತಮಗೆ ಪೂಜ್ಯವೆನಿಸಿದ ಸ್ವಸ್ವರೂಪ ಲಿಂಗಕ್ಕೆ ಅರ್ಪಿಸಿ ಸೇವಿಸುವುದರಿಂದ ದೋಷವೆನಿಸುವುದಿಲ್ಲ. ಆದ್ದರಿಂದ ಸ್ವಪಾದೋದಕವನ್ನು ಶ್ರೇಷ್ಟ ಲಿಂಗಕ್ಕೆ ಅಭಿಷೇಕಿಸಿ ಸ್ವೀಕರಿಸುವುದು ಭೇದಾಭೇದ ಸಿದ್ಧಾಂತ ವಿರೋಧವೆನಿಸದು. ವೀರಶೈವ ಮತವು ಭೇದಾಭೇದ ಸ್ವರೂಪವುಳ್ಳದ್ದಾದ್ದರಿಂದ ಪಾದೋದಕವಾದರೂ ಸ್ವಸ್ವರೂಪದಲ್ಲಿ ಅಭೇದರೂಪವಾಗಿಯೂ ಕ್ರಿಯೆಯಲ್ಲಿ ಭೇದರೂಪವಾಗಿಯೂ ತೋರುವುದು. ಇಂತಹ ಭೇದಾಭೇದ ಸ್ವರೂಪವೆನಿಸಿದ ಚಿದ್ರಸಕ್ಕೆ ಸ್ವಪಾದೋದಕವೆಂದು ಆಕ್ಷೇಪಿಸುವುದು ವೀರಶೈವಮತ ಸಿದ್ಧಾಂತಕ್ಕೆ ವಿರೋಧವೆನಿಸುವುದು.