General

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

 

 

 

ಗ್ರಹಗೋಂಕಿದವ ತಾನೆ | ಗ್ರಹವಾಗುತಿಹನಂತೆ

ಮಹಲಿಂಗವ ನೀ | ವಹಿಸಲ್ಕೆ ನೀ ಲಿಂಗ

ವಹೆಯೆಂದ ಗುರುವೆ ಕೃಪೆಯಾಗು   || ೧೩೬ ॥

 

ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕರು ಭೂತ-ಪ್ರೇತ-ಪಿಶಾಚಿಗಳನ್ನು ನಂಬುವದಿಲ್ಲ. ಹಲವರು ಹೆಚ್ಚಾಗಿ ನಂಬುತ್ತಾರೆ. ಕೆಲವರಂತೂ ಅತ್ಯಂತ ಭಯ ಪಡುತ್ತಾರೆ. ಆದರೆ ಅವುಗಳ ಯಥಾರ್ಥತೆಯನ್ನರಿತರೆ ಅಧೈರ್ಯಪಡಲೇಬೇಕಾಗುವದಿಲ್ಲ. ಮಾನವನ ಅತ್ಯಧಿಕವಾದ ದುರಾಶೆಯು ಶಾಂತವಾಗದೆ ದುರ್ಮರಣ ವನ್ನಪ್ಪಿದರೆ ಅವನ ಕಾರಣ ಶರೀರಗತವಾದ ಅತೃಪ್ತವಾಸನೆಯು ದುರ್ಬಲ ಮನಸ್ಸಿನ ಮಾನವರಲ್ಲಿ ಪ್ರವೇಶಿಸಿ ತನ್ನ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೇನೆ ಗ್ರಹಬಡಿಯುವದೆಂಬ ವಾಡಿಕೆ ಬೆಳೆದು ಬಂದಿದೆ. ವಾಸನಾಮಯೀ ಜೀವಿಯು ಪರಕಾಯವನ್ನು ಪ್ರವೇಶಿಸಿ ವಿವಿಧ ರೀತಿಯಲ್ಲಿ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಪ್ರಯತ್ನಸುತ್ತದೆ. ಆದ್ದರಿಂದ ಗ್ರಹಹೊಡೆದವನು ಆ ಪಿಶಾಚಿಯ ನಡೆ-ನುಡಿಯನ್ನು ಅವಶ್ಯ ಅನುಸರಿಸುವನು. ಹೆಣ್ಣುಗಂಡಿನಂತೆ ವರ್ತಿಸುವದು ಅಥವಾ ಗಂಡು ಹೆಣ್ಣಿನಂತೆ ವರ್ತಿಸುವದು ಕಾಣಬರುತ್ತದೆ.

 

ಗ್ರಹಸೋಂಕಿದವನು ಗ್ರಹದಂತಾಗುತ್ತಿರುವಾಗ ಪರಮ ಪವಿತ್ರವಾದ ಮಹಾಲಿಂಗದ ಸಂಬಂಧದಿಂದ ಜೀವಾತ್ಮನು ಲಿಂಗಮಯನಾಗುವದು ಸಾಧ್ಯವಿದೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ

 

 ಇಷ್ಟಲಿಂಗಮಿದಂ ಸಾಕ್ಷಾದನಿಷ್ಟ – ಪರಿಹಾರಕಮ್ |

ಧಾರಯೇದವಧಾನೇನ ಶರೀರೇ ಸರ್ವದಾ ಬುಧಃ  || ೬-೫೦ ||

 

ಸುಜ್ಞಾನಿಯಾದವನು ಪ್ರತ್ಯಕ್ಷವಾಗಿ ಸಾಂಸಾರಿಕ ಅನಿಷ್ಟವನ್ನು ಪರಿಹರಿಸಬಲ್ಲ. ಈ ಇಷ್ಟಲಿಂಗವನ್ನು ತ್ರಿಕಾಲದಲ್ಲಿಯೂ ಶರೀರದ ಮೇಲೆ ಸಾವಧಾನದಿಂದ ಧರಿಸಬೇಕೆಂದು ಶ್ರೀ ರೇಣುಕಾಚಾರ್ಯರ ವಾಣಿಯಲ್ಲಿ ತಿಳಿಸಿದ್ದಾರೆ.

 

ಹಿಂದೆ ವಿವರಿಸಿದ ಆರೂ ಸ್ಥಾನಗಳನ್ನು ಹೊರತುಪಡಿಸಿ ಕೆಲವರು ಲಿಂಗವನ್ನು ನಡದಲ್ಲಿ ಹಾಕುವರು .. ಕೆಲವರಿಗಂತೂ ಇದೊಂದು ಹೊಸಬಗೆಯಾಗಿದೆ. ಆದರೆ ಇದು ಶುದ್ಧತಪ್ಪು. ಯಾಕಂದರೆ-

 

ನಾಭೇರಧಸ್ತಾತ್ ಲಿಂಗಸ್ಯ ಧಾರಣಂ ಪಾಪಕಾರಣಮ್ || ಸಿ. ಶ. ೬-೫೨ ||

 

ನಾಭಿಯ ಕೆಳಗೆ ಲಿಂಗವನ್ನು ಧರಿಸುವದರಿಂದ ಪಾಪ ಭಾಗಿಗಳಾಗಬೇಕಾಗುವದು. ಅಗಸ್ತ್ಯರಿಗೆ ರೇಣುಕರು ಎಚ್ಚರಿಕೆಯನ್ನಿತ್ತಿದ್ದಾರೆ. ಇಷ್ಟಲಿಂಗವು ಸಾಮಾನ್ಯವಾದುದಲ್ಲ. ನಮ್ಮ ಸಕಲ ಅನಿಷ್ಟಗಳನ್ನು ಕಳೆಯಬಲ್ಲ ಮಹಾಸಾಧನವಾಗಿದೆ. ಜ.ಚ.ನಿ. ಯವರು ಸಿದ್ಧಾಂತ ಶಿಖಾಮಣಿಯ ಅನುವಾದ ಕಾವ್ಯವೆನಿಸಿದ ‘ಮಣಿ ಮುಕುರ’ದಲ್ಲಿ

 

ಇಷ್ಟಲಿಂಗವಿದು ತಾಂ ಸಾಕ್ಷಾದನಿಷ್ಟ ಪರಿ-

ಹಾರಕಮಿದನಂ ಬಲ್ಲಿದರಾವಾಗಳುಂ

ಶರೀರದೊಳವಧಾನದಿಂದಗಲದಂತೆವೊಲ್

ಧರಿಸಿರ್ಪುಳ್ಕರಿಂ ಸುಕ್ಷೇಮ ಕಾರಣಂ || ಪು ೫೬ ||

 

ಇಷ್ಟಲಿಂಗವನ್ನು ಅವಧಾನಪೂರ್ವಕ ಸದಾ ಶರೀರದ ಮೇಲೆ ಧರಿಸಿಕೊಂಡಿರ ಬೇಕೆಂದು ಹೇಳಿದ್ದಾರೆ. ಆದರೆ ಇಂದಿನ ವೀರಶೈವ ಧರ್ಮಾನುಯಾಯಿಗಳು – ಲಿಂಗವನ್ನು ಹಾಕಿಕೊಳ್ಳುವದೇ ಬೇಡವಾಗಿದೆ. ಹಾಕಿದರೆ ನಾಚಿಕೆ, ಅದನ್ನು ದೇವರ ಜಗುಲಿಯ ಮೇಲೋ, ಮನೆಯಗೂಟಕ್ಕೂ ಹಾಕುತ್ತಾರೆ. ಹಲವರಿಗೆ ದೇವರೂ ಇರುವದಿಲ್ಲ. ಕೆಲವರು ಸ್ನಾನ ಮಾಡಿದಾಗ ಪೂಜಿಸಿ ಪುನಃ ಜಗುಲಿಗೆ ಕಳಿಸುತ್ತಾರೆ. ಜಗುಲಿಯ ಮೇಲೆ ಇಡುವದರಿಂದ ಅದು ಇಷ್ಟಲಿಂಗವೆನಿಸುವದಿಲ್ಲ. ಗುರುದೀಕ್ಷೆಯ ಸಂಸ್ಕಾರದಿಂದ ಬಂದ ಲಿಂಗವೇ ಲಿಂಗಗುಣಗಳನ್ನು ಕರುಣಿಸಬಲ್ಲುದು. ಮತ್ತೆ ಕೆಲವರು ಲಿಂಗದ ಕರಡಿಗೆಯನ್ನು ಶೋಭೆಗೆಂದು ಧರಿಸುತ್ತಾರೆ. ಆದರೆ ಅದು ಖಾಲಿಯಾಗಿಯೋ ಅಥವಾ ಚಿಲ್ಲರೆ ನಾಣ್ಯಗಳನ್ನಿಡುವ ಪೆಟ್ಟಿಗೆಯಾಗಿಯೋ ಉಪಯೋಗಿಸಲ್ಪಡುತ್ತದೆ. ಇಂಥ ಲಿಂಗವಂತರಿಗೆ ಲಿಂಗವಂತಿಕೆಯಾಗಲಿ ಅಥವಾ ಲಿಂಗಗುಣಗಳಾಗಲಿ ಯಾವ ಕಾಲದಲ್ಲಿಯೂ ಬರಲಾರವು. ಅವರು ಲಿಂಗವಂತರೆಂದೆನ್ನಿಸಿಕೊಳ್ಳಲು ಯೋಗ್ಯರಲ್ಲ.

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವೆಂಬ ಭಾವ ಬಲಿಯಬೇಕು. ಆಗ ಪ್ರಾಣಲಿಂಗದ ಸಂಬಂಧವಾಗುವದು. ಇಷ್ಟಲಿಂಗವು ಅಕಸ್ಮಾತ್ ಕಳಚಿದರೆ ಪ್ರಾಣವು  ತಾನಾಗಿ ಹೋದಂತಾಗಬೇಕು. ಇಂಥ ಭಾವ ಬೆಳೆಯುವದರಿಂದ ಭಾವಲಿಂಗ ಸಂಗಿಯೆನಿಸುವನು. ಇವನಿಗೆ ಭಾವಲಿಂಗದ ಸಾಕ್ಷಾತ್ಕಾರ ಸುಲಭವಾಗುವದು. ನಿಜ ಲಿಂಗಮಯನಾಗುವನು, ಓ ಗುರುವೆ’! ಕರುಣಿಸು ನಿಜಲಿಂಗಸ್ವರೂಪಿ ನಾನಾಗುವಂತೆ

‘ಪೂಜ್ಯೇಷು ಅನುರಾಗೋ ಭಕ್ತಿಃ’ ಪೂಜ್ಯರಲ್ಲಿರುವ ಅನುರಾಗ(ಪ್ರೇಮ)ವೇ ಭಕ್ತಿ ಎಂದು ನಾರದಭಕ್ತಿಸೂತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರು, ತಂದೆ- ತಾಯಿಗಳು ನಮಗೆ ಪೂಜ್ಯರು. ಅವರಲ್ಲಿ ನಾವು ಶ್ರದ್ಧಾಪೂರ್ವಕವಾದ ಪ್ರೇಮವನ್ನು ಹೊಂದಿರುತ್ತೇವೆ. ಇದು ಭಕ್ತಿ ಎನಿಸಿದರೂ ‘ಈಶ್ವರೇ ಪರಾನುರಕ್ತಿಃ ಭಕ್ತಿ’ ಅಂದರೆ ಪರಮಾತ್ಮನಲ್ಲಿ ನಾವು ಇಡುವ ಅತಿಶಯವಾದ ಅನುರಕ್ತಿಯೆ ಭಕ್ತಿ ಎಂದು ಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪರಮಾತ್ಮನಲ್ಲಿರುವ ನಮ್ಮ ಶ್ರದ್ಧೆ, ಅನುರಕ್ತಿಗಳು ನಿಷ್ಠೆಯಾಗಿ ಮುಂದುವರೆಯಬೇಕು. ಆ ನಿಷ್ಠೆ ಏಕೋಭಾವವಾಗಿ ಸಹಜಗುಣವಾಗಿ ಬೆಳೆಯಬೇಕು. ಅಂದರೆ ಇಹಪರಗಳೆಲ್ಲವನ್ನು ಮರೆತು ಪರಮಾತ್ಮನೊಬ್ಬನನ್ನೆ ಮನದಲ್ಲಿ ನೆನೆವುದು ಅತ್ಯಂತ ಶ್ರೇಷ್ಠವಾದ ಭಕ್ತಿ ಎನಿಸುವುದು.

ಜಗತ್ತಿನಲ್ಲಿ ಅನೇಕರು ಬರೀ ಆಡಂಬರದ ಪೂಜಾದಿಗಳನ್ನು ನೆರವೇರಿಸುತ್ತ ತಾವೇ ಪರಮಭಕ್ತರೆಂದೂ, ತಾವು ಆಚರಿಸುವ ಭಕ್ತಿಯೇ ಶ್ರೇಷ್ಠ ಭಕ್ತಿ ಎಂದೂ ಗರ್ವದಿಂದ ನುಡಿಯುತ್ತಾರೆ. ಮನಸ್ಸಿನಲ್ಲಿ ಯಾವುದೇ ಶ್ರದ್ಧೆ, ನಿಷ್ಠೆ ಹಾಗು ದೃಢತೆ ಇಲ್ಲದ ಇಂತಹವರ ಭಕ್ತಿಯನ್ನು ಕಂಡು ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ’ ಎಂದು ಹೇಳುವ ಆಯ್ದಕ್ಕಿ ಲಕ್ಕಮ್ಮ. ಅದು ನಿರರ್ಥಕವಾದ ಭಕ್ತಿ, ಅದೆಂದೂ ಪರಮಾತ್ಮನಿಗೆ ಸಲ್ಲದು ಎಂದು ಸ್ಪಷ್ಟಪಡಿಸುತ್ತಾಳೆ. ನಿಜವಾದ ಭಕ್ತನು ಸದಾಚಾರವನ್ನು ಅರಿತು ಆಚರಿಸುತ್ತಾನೆ. ಸಿರಿಸಂಪತ್ತುಗಳ ವಿಷಯದಲ್ಲಿ ಅವನೆಂದೂ ಅಹಂಕಾರ, ಮಮಕಾರಗಳನ್ನು ಹೊಂದುವುದಿಲ್ಲ. ಅವೆಲ್ಲವೂ ಪರಮಾತ್ಮನ ಸೊಮ್ಮು ಎಂಬ ಭಾವ ಅವನಲ್ಲಿ ಗಟ್ಟಿಗೊಂಡಿರುತ್ತದೆ. ದಾಸೋಹಂಭಾವದಿಂದ ಶಿವನ ಸೊಮ್ಮು ಶಿವನಿಗೆ ಅರ್ಪಿಸುವ ಭಕ್ತನು ಶಿವನಿಗೆ ಪ್ರಿಯನಾಗಿರುತ್ತಾನೆ. ಭಕ್ತಿಯ ಕುರುಹಾದ ದಾಸೋಹವನ್ನು ಮಾಡುವುದು ಭಕ್ತನ ಕರ್ತವ್ಯಗಳಲ್ಲೊಂದು. ಪರಮಾತ್ಮನು ಭಕ್ತಿಪ್ರಿಯ. ಭಕ್ತಿಯಿಂದ ಸಮರ್ಪಿಸಿದ ನೀರೂ ಕೂಡ ಅವನಿಗೆ ಪ್ರಿಯವೆ.

ಭಕ್ತಿಯ ಪ್ರಾರಂಭದ ಹಂತದಲ್ಲಿ ಪೂಜ್ಯನಾದ ದೇವ ಬೇರೆ, ಪೂಜಕನಾದ ತಾನು ಬೇರೆ ಎಂಬ ಭಾವ ಇರುತ್ತದೆ. ಭಕ್ತಿವಿಕಾಸವಾದಂತೆ ಪೂಜ್ಯ ಪೂಜಕನೆಂಬ ಭೇದಭಾವ ಇಲ್ಲದಂತಾಗಿ ಭಕ್ತ ಮತ್ತು ದೇವರಲ್ಲಿ ಸಹಜ ಸಾಮರಸ್ಯ ಉಂಟಾಗುತ್ತದೆ. ಇದೇ ಭಕ್ತಿಯ ನಿಜವಾದ ಉದ್ದೇಶ ಈ ಉದ್ದೇಶ ಈಡೇರಿದಾಗ ಭಕ್ತನು ಜನನ ಮರಣಗಳಿಂದ ಮುಕ್ತನಾಗಿ ಸ್ವಸ್ವರೂಪಾನುಸಂಧಾನದಲ್ಲಿ ನಿರತನಾಗುತ್ತಾನೆ. ಅದುವೇ ಮೋಕ್ಷ ಸ್ಥಿತಿ.

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ’ ಮೋಕ್ಷ ಸಂಪಾದನೆಯ ಅನೇಕ ಮಾರ್ಗಗಳಲ್ಲಿ ಭಕ್ತಿಮಾರ್ಗದಷ್ಟು ಸರಳವಾದ, ಸುಲಭವಾದ ಮಾರ್ಗ ಬೇರೊಂದಿಲ್ಲ. ಅನನ್ಯಗತಿಕನಾಗಿ ಭಕ್ತಿಯಿಂದ ನೆನೆವ ಭಕ್ತನನ್ನು ಸರ್ವವಿಧದಿಂದಲೂ ದೇವನೆ ರಕ್ಷಿಸುವನು. ಭಕ್ತನು ಮಾತ್ರ ಸದಾ ಆನಂದಾನುಭೂತಿಯಲ್ಲಿ ಮಗ್ನನಾಗಿರುತ್ತಾನೆ. ಕೊನೆಗೆ ದೇವರಲ್ಲಿಯೇ ಲೀನನಾಗುತ್ತಾನೆ. ಆನಂದಾನುಭೂತಿಯ ಸ್ಥಿತಿಯಂತೂ ಮೋಕ್ಷಕ್ಕಿಂತಲೂ ಶ್ರೇಷ್ಠವಾದುದು. ಅದು ಭಕ್ತನಿಗೆ ಮಾತ್ರ ಸಾಧ್ಯವಾದುದು. ಅದಕ್ಕಾಗಿಯೇ ನಿಜಗುಣ ಶಿವಯೋಗಿಗಳು:

ಕರುಣಿಸೆನಗಿದನ ಬೇಡುವನಭವ ಬೇರೊಂದು

ವರವನೊಲ್ಲೆನು ಮುಕ್ತಿದೊರೆವ ಸಾಧನವ

ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತಿಯನ್ನಾಚರಿಸುವ ಸಂದರ್ಭದಲ್ಲಿ ದೊರೆವ ಸುಖ, ಆನಂದ ಮುಕ್ತಿಯ ಸ್ಥಿತಿಯಲ್ಲಿ ದೊರೆಯದು. ಮುಕ್ತಿ ಎಂಬ ಸಕ್ಕರೆಯಾಗುವುದಕ್ಕಿಂತ ಇರುವೆಯಾಗಿ ಸಕ್ಕರೆಯ ಸವಿಯನ್ನು ಸವಿಯುವುದೇ ಮೇಲು ಎಂಬುದು ಅವರ ಅಭಿಪ್ರಾಯ. ಮುಕ್ತಿಗಿಂತ ಭಕ್ತಿಯೇ ಶ್ರೇಷ್ಠ, ಭಕ್ತಿಯೇ ಮುಕ್ತಿಯ ಜನನಿ. ಭಕ್ತಿಯ ಬಲದಿಂದ ಏನೆಲ್ಲವನ್ನೂ ಭಕ್ತನು ಸಾಧಿಸುತ್ತಾನೆ. ಆದರೆ ಅವನ ಭಕ್ತಿಯಲ್ಲಿ ಶ್ರದ್ಧೆ ನಿಷ್ಠೆಗಳು ನೆಲೆಗೊಂಡಿರಬೇಕು. ಅದುವೆ ನಿಜಭಕ್ತಿ, ಅದುವೇ ಮುಕ್ತಿಗೆ ಸಾಧನ.

ವೀರಶೈವ ಸಾಧಕನು ಗುರು,ಲಿಂಗ,ಜಂಗಮರನ್ನ ವಿಭೂತಿ,ರುದ್ರಾಕ್ಷಿ,ಮಂತ್ರಗಳಿಂದ ಪೂಜಿಸಿದಾಗ ದೊರೆಯುವ ಫಲವೇ ಪಾದೋದಕ-ಪ್ರಸಾದ.

ಪದಾರ್ಥವೆಂದರೆ:- ತಾನೆ ದುಡಿದದ್ದು,ತನ್ನದು ಎಂಬ ಅಹಂಕಾರ ಮಮಕಾರಗಳಿಂದ ಭುಂಜಿಸುವ ಆಹಾರ ಅದು ಪದಾರ್ಥ.

ಪ್ರಸಾದವೆಂದರೆ:- ಅದು ಪೂಜ್ಯರ ಕೃಪೆ,ಭಗವಂತನದಯೆ, ಹಿರಿಯರಿಂದ ಪಡೆದದ್ದು ಅನ್ನುವ ಭಾವದೊಂದಿಗೆ , ದೇವರಿಗೆ ಅರ್ಪಿಸಿ ಬಂದುದ್ದನ್ನ ದಾಸೋಹಂ ಭಾವದಿಂದ ಸೇವಿಸುವ ಆಹಾರ ಅದು ಪ್ರಸಾದ.

“ಎಲ್ಲಿ ಸೋಹಂ ಭಾವವಿದೆ ಅದು ಪದಾರ್ಥ, ಎಲ್ಲಿ  ದಾಸೋಹಂ ಭಾವವಿದೆ ಅದು ಪ್ರಸಾದ”

“ಪದಾರ್ಥ ಸೇವನೆಯಿಂದ ಬಂಧನ, ಪ್ರಸಾದ ಸೇವನೆಯಿಂದ ಮುಕ್ತಿ”

ಯಾವುದನ್ನು ಸ್ವೀಕರಿಸಿದಾಗ ಪ್ರಸನ್ನತೆ ಉಂಟಾಗುವುದು ಅದುವೇ ಪ್ರಸಾದ.

ಬಾಹ್ಯ ದ್ರವ್ಯವು ಪದಾರ್ಥವಾದರೆ, ಅಂತರ್ದ್ರವ್ಯವು (ಶುದ್ಧ ಭಾವ) ಪ್ರಸಾದವಾಗುತ್ತದೆ.

ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ನೀಡುವುದೇ ಪ್ರಸಾದ ರಹಸ್ಯ.

“ಒಲ್ಲೆನೆಂಬುದು ವೈರಾಗ್ಯ;ಒಲಿವೆನೆಂಬುದು ಕಾಯ ಗುಣ

ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ

ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ

ಕೂಡಲಸಂಗಮ ದೇವರ ನೊಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು”

– ಜೀವಿಯು ದಿಕ್ಷೆಯಿಂದ ಶುದ್ಧನಾಗಿ ಗುರುಲಿಂಗ ಜಂಗಮರನ್ನ ಪೂಜಿಸಿ, ಇವರಿಗೆ ತನ್ನದೆನ್ನುವದನ್ನೆಲ್ಲವನ್ನು ಅಂದರೆ ಬರಿ ಆಹಾರವನ್ನಷ್ಟೇ ಅಲ್ಲ, ಭೋಗ್ಯ ವಿಷಯಗಳನ್ನು, ಭೋಗಸಾಧನಗಳಾದದೇಹಂದ್ರಿಯಗಳನ್ನು,

ಭೋಕೃತವಾದ ತನ್ನನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ

ಇವೆಲ್ಲವುಗಳನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು.

ಆಗ ಜೀವಿಯು ಶಿವನಂತೆ ಪ್ರಸಾದ ರೂಪನಾಗುವನು.

:- ಪ್ರಸಾದದಲ್ಲಿ 11 ವಿಧ

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬರು ನೀವು ಕೇಳಿರಿ

ಶುದ್ಧ ಪ್ರಸಾದ ಗುರು ಮುಖದಿಂದ ಬಂದುದು

ಸಿದ್ಧ ಪ್ರಸಾದ ಲಿಂಗ ಮುಖದಿಂದ ಬಂದುದು

ಪ್ರಸಿದ್ಧ ಪ್ರಸಾದ ಜಂಗಮ ಮುಖದಿಂದ ಬಂದುದು

ಇದರೊಳಗೆ ಆವುದ ಘನವೆಂಬೇ? ಆವುದ ಕಿರಿದೆಂಬೇ

ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ.

ಗುರುಪ್ರಸಾದದಿಂದ ತನು ಶುದ್ಧವಾಯಿತು.

ಲಿಂಗಪ್ರಸಾದದಿಂದ ಮನಶುದ್ದವಾಯಿತು.

ಜಂಗಮಪ್ರಸಾದದಿಂದ ಭಾವ ಶುದ್ಧವಾಯಿತು.

ಶರಣ ಸಂಗದಿಂದ ಪ್ರಸಾದ ಸಾಧ್ಯವಾಯಿತು

ಕೂಡಲ ಚನ್ನಸಂಗಮದೇವಯ್ಯ ಈ ತ್ರಿವಿಧ ಪ್ರಸಾದವ ಕೊಂಡೆನ್ನ ಭವಂನಾಸ್ತಿಯಾಯಿತ್ತು.

 

1 ಶುದ್ಧ ಪ್ರಸಾದ:- ಭಸ್ಮ ಲೇಪಿತಹಸ್ತದಿಂದ ಊಟದ ಪಾತ್ರೆಯಲ್ಲಿರುವ ಭೋಜನ ಪದಾರ್ಥಗಳನ್ನು ಶುದ್ಧ ಮಾಡುವುದು ಶುದ್ಧ ಪ್ರಸಾದ.

2 ಸಿದ್ದಪ್ರಸಾದ:- ಶುದ್ಧ ಪ್ರಸಾದವನ್ನು ಲಿಂಗಕ್ಕರ್ಪಿಸಿದಾಗ  ಅಲ್ಲಿ ಪ್ರಸಾದ ಕಳೆವೇಧಿಸುವುದೇ ಸಿದ್ದ ಪ್ರಸಾದ.

3 ಪ್ರಸಿದ್ಧ ಪ್ರಸಾದ:- ಸಿದ್ದಪ್ರಸಾದವನ್ನು ಜಂಗಮಾರ್ಪಣ ಭಾವದಿಂದ ನಾಲಿಗೆಮೇಲಿಟ್ಟು ಸ್ವೀಕರಿಸುವುದೇ ಪ್ರಸಿದ್ಧ ಪ್ರಸಾದ .

4ಆಪ್ಯಾಯನ ಪ್ರಸಾದ:-ಶುದ್ಧ,ಸಿದ್ಧ,ಪ್ರಸಿದ್ಧ ಪ್ರಸಾದ ಸೇವನೆಯಿಂದಾದ ಮನೋವಿಕಾಸವೇ ಅಪ್ಯಾಯನ ಪ್ರಸಾದವೆನಿಸುತ್ತದೆ.

5 ಸಮಯ ಪ್ರಸಾದ:-ಈ ಪ್ರಸಾದ ಸೇವನೆಯ ಸಮಯದಲ್ಲಿ ಇತರ ಪದಾರ್ಥಗಳನ್ನು ಸೇವಿಸುವುದು ಅನರ್ಪಿತವೆಂದು ತಿಳಿಯುವುದು ಸಮಯಪ್ರಸಾದವಾಗಿದೆ.

6 ಪಂಚೇಂದ್ರಿಯವಿರಹಿತ ಪ್ರಸಾದ:- ಇತರ ವಿಷಯಗಳ ಕಡೆಗೆ ಪಂಚೇಂದ್ರಿಯಗಳನ್ನು ಹೋಗಗೊಡದಿರುವುದು.

7 ಅಂತಃಕರಣ ವಿರಹಿತ ಪ್ರಸಾದ:- ಇತರ ಸಂಕಲ್ಪಾದಿಗಳಿಗೆ ಅಂತಃಕರಣ ಸುಳಿಯದಂತೆಮಾಡಿ ನಿಶ್ಚಲತೆಯಿಂದ ಪ್ರಸಾದ ಸೇವಿಸುವುದು.

8 ಪ್ರಸಾದೀಯ ಪ್ರಸಾದ:- ಗುರುಲಿಂಗ ಜಂಗಮದಿಂದ ಪಡೆದ ಪ್ರಸಾದದೊಡನೆ ತನ್ನ ಪ್ರಸಾದವನ್ನು ಭುಂಜಿಸುವುದು ಪ್ರಸಾದೀಯ ಪ್ರಸಾದ.

9 ಸದ್ಭಾವ ಪ್ರಸಾದ:- ಪ್ರಸಾದದಲ್ಲಿ ಪದಾರ್ಥ ಭಾವನೆಯನ್ನಳಿದು ಸದ್ಭಾವದಿಂದ ಭೋಗಿಸುವುದು.

10 ಸಮತಾ ಪ್ರಸಾದ:- ಪ್ರಸಾದ ಸೇವನೆಯ ಸಮಯದ ಹೊರತು ಇನ್ನೇನನ್ನೂ ಸೇವಿಸದೆ ಶಾಂತಿ ಸಹನೆಗಳಿಂದ ಇರುವುದು.

11 ಜ್ಞಾನ ಪ್ರಸಾದ:- ಈ ಸಮತಾಪ್ರಸಾದದಿಂದ ಪುನಃ ಪೂಜೆ ಪ್ರಾರಂಭವಾಗುವವರೆಗೂ ಪ್ರಸಾದಕಾಯನಾಗಿರುವುದು ಜ್ಞಾನ ಪ್ರಸಾದವಾಗಿ ಕಂಗೊಳಿಸುತ್ತದೆ.

-ಗುರುವಿನ ಮುಖಾಂತರ ಬಂದ ಪ್ರಸಾದಕ್ಕೆ ಶುದ್ಧ ಪ್ರಸಾದ, ಇಷ್ಟಲಿಂಗಪ್ರಸಾದ,ರೂಪ ಪ್ರಸಾದ,ತ್ಯಾಗಾಂಗ ಪ್ರಸಾದವೆಂಬರು.

ಲಿಂಗ ಮುಖಾಂತರ ಬಂದ ಪ್ರಸಾದಕ್ಕೆ ಸಿದ್ಧ ಪ್ರಸಾದ,ಪ್ರಾಣ ಲಿಂಗಪ್ರಸಾದ, ರುಚಿ ಪ್ರಸಾದ ಭೋಗಾಂಗ ಪ್ರಸಾದವೆಂಬರು.

ಜಂಗಮನ ಮುಖಾಂತರ ಬಂದ ಪ್ರಸಾದಕ್ಕೆ ಪ್ರಸಿದ್ಧ ಪ್ರಸಾದ, ಭಾವಲಿಂಗ ಪ್ರಸಾದ,ತೃಪ್ತಿ ಪ್ರಸಾದ,ಯೋಗಾಂಗ ಪ್ರಸಾದವೆಂಬರು.

ಈ ಪ್ರಸಿದ್ಧ ಪ್ರಸಾದ ಅರ್ಥಾತ್ ಜಂಗಪ್ರಸಾದವನ್ನ ಮಹಾಮನೆಯಲ್ಲಿ ಬಸವೇಶ್ವರರು ಸ್ವೀಕರಿಸುತ್ತಿದ್ದರು

ಬಸವೇಶ್ವರರು ಮಿಗಿಸಿದ ಪ್ರಸಾದವನ್ನ ಅವರ ಸೇವಕರು ಸ್ವೀಕರಿಸುತ್ತಿದ್ದರು, ಅವರ ಸೇವಕರು ಮಿಗಿಸಿದ ಪ್ರಸಾದವನ್ನ ಕಲ್ಯಾಣದ ಅಂಗಳಕ್ಕೆ ಪ್ರಭುದೇವರ ದರ್ಶನಕ್ಕೆಂದು ಅಪಘಾನಿಸ್ತಾನದಿಂದ ಆಗಮಿಸಿದ ಮರುಳ ಶಂಕರ ದೇವ

ಚಂದ್ರಮನಿಗೆ ಚಕೋರ ಪಕ್ಷಿಯು ಹಾರೈಸಿಕೊಂಡಿರುವಂತೆ, ವಸಂತ ಋತುವನ್ನು ಕೋಗಿಲೆ ನಿರೀಕ್ಷಿಸಿದ್ದು ಕೊಂಡಿರುವಂತೆ 12 ವರ್ಷಗಳ ಕಾಲ ಮಹಾಮನೆಯ ಪ್ರಸಾದ ಕುಂಡಲದಲ್ಲಿದ್ದು ಮಿಕ್ಕ ಪ್ರಸಾದವನ್ನ ಸ್ವೀಕರಿಸಿದ.

ಆ ಶರಣರ ಮಾತನ್ನ ಕೇಳಲೇಬೇಕು

“ಜಂಗಮ ಪಾದೋದಕವ ಮಜ್ಜನವ ಮಾಡಿ,

ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ, ಶಿವ ಕಲ್ಯಾಣ ಮಾಡಿದ.

ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ.

ಲಿಂಗೈಕ್ಯ ಚೈತನ್ಯ ಪ್ರಸಾದವೆಂದು,

ತನಗೆ ಚೈತನ್ಯ ಜಂಗಮವೆಂದು,

ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.

ಜಂಗಮಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ.

ಒಡೆಯರೊಕ್ಕುದ ತಾ ಸವಿದು,

ತನ್ನೊಕ್ಕೂದ ಮಿಕ್ಕುದ ತನ್ನ ಗೃಹಚರರಂಡು,

ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕಾಯಿತ್ತು.

ಆ ಪ್ರಸಾದ ಗುಂಡವೇ ಗೃಹವಾಗಿತ್ತು.

ಆ ಪ್ರಸಾದ ಅರ್ಪಿಸುತ್ತಲೇ ಎನ್ನ ಲಿಂಗಕ್ಕೆ ಪೂಜೆ.

ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧ ಪ್ರಸಾದವಾಯಿತ್ತು, ಮನಸ್ಸಿದ್ದ ಪ್ರಸಾದವಾಯಿತ್ತು.

ಗುರುವವಿಡಿದನಾಗಿ ಆನೆ ಪ್ರಸಿದ್ಧ ಪ್ರಸಾದವಾದೆನಯ್ಯ.

ಇನ್ನು ಬದುಕಿದೆನು ಕಾಣ,

ಶುದ್ಧ ಸಿದ್ದ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯ,

ನಿಮ್ಮ ಶರಣ ಸಿದ್ದರಾಮಯ್ಯನ ಕಂಡು ಸಿಕಿಕರ್ಪೂರ ಯೋಗದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.

ನಿಜವಾಗಿಯೂ ನೋಡಿದರೆ ಮನುಷ್ಯ ಬದುಕಲಿಕ್ಕಾಗಿ ಆಹಾರ ಸೇವಿಸಬೇಕು, ಆದರೆ ಆಹಾರ ಸೇವಿಸಲಿಕ್ಕಾಗಿ ಬದುಕಿರುವವರೇ ಬಹಳಜನ ಈ ಲೋಕದಲ್ಲಿ.

ಕೇವಲ ಒಕ್ಕೂ-ಮಿಕ್ಕುದ ತೆಗೆದುಕೊಳ್ಳುವವನು ಮಾತ್ರ ಪ್ರಸಾದಿಯಲ್ಲ, ಬಂದುದನ್ನು ಬೇಕು-ಬೇಡನ್ನದೆ, ಹಿತ- ಅಹಿತವೆನ್ನದೆ, ಸ್ತುತಿ-ನಿಂದೆ ಎನ್ನದೆ ಸಮಭಾವವಾಗಿ ಸ್ವೀಕರಿಸುವುದು ಪ್ರಸಾದಿಯಾದವನ ಸಲ್ಲಕ್ಷಣವೆನ್ನುವರು ಶರಣರು.

ಅದನ್ನೇ ಷಣ್ಮುಖ ಶಿವಯೋಗಿಗಳು ವಿವರಿಸುವಂತೆ :-

ಎನ್ನ ಆಗು ಹೋಗು, ಸುಖ-ದುಃಖ,ಆನಿ-ವೃದ್ಧಿ,ಭಯ-ಭೀತಿ, ಲಜ್ಜೆ-ಮೋಹ,ಸಜ್ಜನ-ಸಮತೆ,ಸಳುವು-ಸಂಚಾರ,ಚಿತ್ತ -ಸುಚಿತ್ತ,ಬುದ್ಧಿ-ಸುಬುದ್ಧಿ,ಅಹಂಕಾರ-ನಿರಹಂಕಾರ,ಭಾವ -ಸದ್ಭಾವ, ಎಡ-ಬಲ,ಮೇಲು-ಕೀಳು ಮೊದಲಾದವುಗಳೆಲ್ಲ ಪ್ರಸಾದವೆಂಬುದು ಇಂತಾಗಿ ಅಖಂಡೇಶ್ವರ             ನೀನೆಂಬ ಪ್ರಸಾದ ಸಾಗರದಲ್ಲಿ ನಾನೆಂಬುದು ಮುಳುಗಿ ನೆಲೆದಪ್ಪಿ ಹೋದೆನಯ್ಯ.

ಹೀಗೆ ಪರಿಶುದ್ಧ ಕ್ರಿಯೆಯಿಂದ ಪ್ರಸಾದಿಯು ನಡೆದುದೆ ಶಿವಪಥವೆನಿಸುತ್ತದೆ.

:-ಗುರು ಕರುಣ ತ್ರಿವಿಧಿಯಲ್ಲಿ ಪ್ರಸಾದ ತ್ರೈವಿಧವನ್ನು ಶ್ರೀ ಗುರು ಶಿಷ್ಯನಿಗೆ ಉದ್ದರಿಸುವನು

“ಶುದ್ಧ ಶೇಷವೇ ಇಷ್ಟ, ಸಿದ್ಧವೇ ಪ್ರಾಣ,    ಪ್ರಸಿದ್ಧವೇ ಭಾವ, ನಿರ್ಧರ ತ್ರೈಲಿಂಗವ

ಸಮುದ್ದರಿಪ -ಗುರುವಿಗೆ ಕೃಪೆಯಾಗು”

ಈ ಮೂರು ಪ್ರಸಾದವ ಸ್ವೀಕರಿಸುವಲ್ಲಿ ಪ್ರಸಾದದಲ್ಲಿ ನಿರ್ಧರ (ನಿಷ್ಠೆಯ) ಭಾವವಿರಬೇಕೆನ್ನುವರು ಮೈಲಾರದ ಬಸವಲಿಂಗ ಶರಣರು.

“ನಂಬಿದರೆ ಪ್ರಸಾದ;ನಂಬದಿದ್ದರೆ ವಿಷ ವೆನಿಸುವುದು”

ದೃಢನಿಷ್ಠೆಯಿಂದಲೇ ಪದಾರ್ಥವು ಪ್ರಸಾದವೆನಿಸುವುದು, ಇಂಥ ಪ್ರಸಾದಿಕ ಕ್ರಿಯೆಗಳಿಂದ, ಪ್ರಸಾದಿಕ ಪ್ರಜ್ಞೆಯಿಂದ, ಪ್ರಸಾದಿಕಾನುಭೂತಿಯಿಂದ ಅಂಗನು  ಪ್ರಸಾದ ಕಾಯನಾಗುವನು ಜೊತೆಗೆ ಯಾವಾಗಲೂ ಪ್ರಸನ್ನ ಚಿತ್ತವುಳ್ಳವನಾಗುವನು “ಪ್ರಸಾದಸ್ತು ಪ್ರಸನ್ನತಾ”.

ಆಹಾರವನ್ನು ಭಗವಂತನ ಪ್ರಸಾದವೆಂದು ಆತನಿಗೆ ಅರ್ಪಿಸಿ ತುತ್ತಿಗೊಮ್ಮೆ ಆತನನ್ನು ನೆನೆಯುತ್ತ ಉಣ್ಣಬೇಕು,

ಇದು ದೇಹ ಭಾವವನ್ನು ಕಳೆದುಕೊಂಡು ಪ್ರಸಾದ ಭಾವವನ್ನು ಅಳವಡಿಸಿಕೊಳ್ಳುವ ಸುಂದರ ಸೂತ್ರವಾಗಿದೆ

ಅದನ್ನೇ ಬಸವಣ್ಣನವರು ತಿಳಿಸುತ್ತಾರೆ

“ಮೌನದಲುಂಬುವುದು ಆಚಾರವಲ್ಲ,

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಾ ಶರಣೆನ್ನುತ್ತಿರಬೇಕು,

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡಡೆ”

ಆತನ ಕರುಣೆಯ ಸ್ಮರಣೆಯಿಂದ ಕರಣವೃತ್ತಿಗಳು ಅಂದರೆ ಇಂದ್ರಿಯವಿಕಾರಗಳು ಅರ್ಥಾತ್ ಮನಸ್ಸು ಪ್ರಸನ್ನವಾಗುತ್ತದೆ.

ಹೀಗೆ ಪ್ರಸಾದ ಸ್ವೀಕರಿಸುವಲ್ಲಿ ಮನೋನೈರ್ಮಲ್ಯ ನೆಲೆಗೊಂಡು, ಮಾನಸಿಕವಾದ ಶಾಶ್ವತ ಪ್ರಸನ್ನತೆ ಅಳವಡುವುದು, ಹೀಗೆ ಸ್ವೀಕರಿಸುತ್ತಾ ಬದುಕುವಲ್ಲಿ ಸಾಧಕನು ಲಿಂಗ ಭೂಗೋಪಭೋಗಿಯಾಗಿರುತ್ತಾನೆ.

ಭಗವಂತನಿಗೆ ಅರ್ಪಿಸುವದನ್ನ ಶ್ರದ್ಧೆಯಿಂದ ಅರ್ಪಿಸಬೇಕು, ಅಟ್ಟಹಾಸದಿಂದ ಅಥವಾ ಪ್ರಸಿದ್ಧಿಗೊಸ್ಕರ,ದೇವರ ಕಾಟ ಕಳೆಯಲೆಂದು ಅರ್ಪಿಸಬಾರದು.

ಅರ್ಪಣ ಮನೋಭಾವ ಸಾಧಕನಲ್ಲಿ ನೆಲೆಗೊಳ್ಳಬೇಕು. ಅರ್ಪಿಸಿದ ಪ್ರಸಾದದಲ್ಲಿ ಒಂದು ಕಣವನ್ನು ಸಹ ಬಿಡದೆ ಉಪಯೋಗಿಸಬೇಕು ಅರ್ಥಾತ್ ಪ್ರಸಾದವನ್ನು ಕೆಡಿಸಬಾರದು

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

  

ಪರಮೇಷ್ಟ ಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು       || ||

 

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಕ್ರಮವು. ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ.

 

ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು  ಪರರನ್ನೆಂದೂ ಬೇಡ ಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು.  ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು. ಮನಬಂದಂತೆ – ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು. ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾ ಕ್ರಮದಲ್ಲಿ ತಪ್ಪದಂತೆ ನಡೆಯಬೇಕು.  ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯಶುದ್ಧ ನಡೆ ಮತ್ತು ನುಡಿಯು. ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ

ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣ

ನವರು ಇಂಥ ಶರಣನ (ವರ್ಣನೆಯ) ನ್ನು ಮನವಾರ ಹೊಗಳಿದ್ದು ಗಮನೀಯ ವಾಗಿದೆ. ನೋಡಿ-

 

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ.

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

 

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಬಾಹ್ಯ ಪ್ರಪಂಚದ ಮಾತೇಕೆ ?

 

ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಛಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

 

ಅಡಿಯ ಸೋ೦ಕಲು ಸರ್ಪ | ಮುಡಿಗೆ ವಿಷವೇರ್ಪಂತೆ

ಮೃಡಲಿಂಗ ಸೋಂಕು-ಒಡಲ ಪರ್ಬುವುದೆಂದು

 ನುಡಿದ ಶ್ರೀಗುರುವೆ ಕೃಪೆಯಾಗು    ||  ೧೩೫ ||

 

ಒಮ್ಮೊಮ್ಮೆ ಅಡ್ಡಾಡುವ ಮಾನವನ ಅಡಿಯನ್ನು ಹಾವು ಕಡಿಯುವದು. ಆಗ ಅದರ ವಿಷವು ಕೆಲವೇ ಕ್ಷಣಗಳಲ್ಲಿ ಆತನ ಮುಡಿಯವರೆಗೂ ವ್ಯಾಪಿಸಿ ಬಿಡುವದು. ಆ ಮನುಷ್ಯನ ಮೈಯೆಲ್ಲಾ ವಿಷಮಯವಾಗುವದು. ಒಂದು ವಿಷಪ್ರಾಣಿ ಕಚ್ಚಿದರ ಪರಿಣಾಮದಿಂದ ಶರೀರವೇ ವಿಷಮಯವಾಗುವದೆಂದ ಬಳಿಕ, ಮೃಡಲಿಂಗದ ಸೋಂಕು ಒಡಲನ್ನು ಹಬ್ಬುವದರಲ್ಲಿ ಯಾವ ಸಂಶಯವಿದೆ ? ಇಷ್ಟಲಿಂಗದ ಸಂಸ್ಪರ್ಶ ವಿದ್ಯುತ್ತಿನಂತಿಹುದು. ವಿದ್ಯುತ್ ಶಾಖವು ಅಕಸ್ಮಾತ್ ಕೈಗೆ ತಗುಲಿದರೆ ಶರೀರವೇ ಕಂಪಿಸುತ್ತದೆ. ಅದರಂತೆ ಗುರುಕರುಣಿಸಿದ ಇಷ್ಟಲಿಂಗವು ಶಿಷ್ಯನ ಶರೀರವನ್ನೆಲ್ಲಾ ಆವರಿಸುವದು, ಶಾಸ್ತ್ರಕಾರರು ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಕೀಟಭೃಂಗ ನ್ಯಾಯವನ್ನು ಉದಾಹರಿಸುತ್ತಾರೆ

 

‘ʼಕೀಟೋ ಭ್ರಮರಯೋಗೇನ ಭ್ರಮರೋ ಭವತಿ ಧೃವಮ್ |

ಮಾನವಃ ಶಿವಯೋಗೇನ ಶಿವೋ ಭವತಿ ನಿಶ್ಚಯಾತ್ ||ʼʼ

 

ಮನೆಯ ಕಿಡಕಿ ಬಾಗಿಲುಗಳ ಸಂಧಿಯಲ್ಲಿ ಕುರಡೀಕುಕಾರ (ಭ್ರಮರ)ವು ಮಣ್ಣಿನಿಂದ ಚಿಕ್ಕಗೂಡನ್ನು ಮಾಡಿ ಅದರಲ್ಲಿ ಹಸಿರು ಕ್ರೀಡೆಯನ್ನು ತಂದು ಇಟ್ಟು ತನ್ನ ಭಾವನೆಯನ್ನು ಕೊಡುತ್ತದೆ. ಕೆಲವು ದಿನಗಳ ಮೇಲೆ ಆ ಕ್ರೀಡೆಯು ಕುರಡೀ ಕುಕಾರವೇ ಆಗುವದು. ಹಾಗಾದ ಬಳಿಕ ಮಾನವನು ಶಿವ (ಲಿಂಗ) ಸಂಸ್ಕಾರದಿಂದ ಹಾಗೂ ಲಿಂಗಧಾರಣದಿಂದ ಶಿವನಾಗುವದರಲ್ಲಿ ಯಾವ ಸಂಶಯವಿದೆ ? ಗುರುದೇವನು ಉಪದೇಶಿಸಿದ ಬೋಧೆ ಯಥಾರ್ಥವಾದುದು. ಶಿಷ್ಯನು ತನ್ನ ತನು-ಮನ-ಭಾವ ಗಳನ್ನು ಪರಿಶುದ್ಧಗೊಳಿಸಿಕೊಂಡು ಲಿಂಗವನ್ನು ಶ್ರದ್ಧೆಯಿಂದ ಧರಿಸಿದರೆ ನಿಶ್ಚಯವಾಗಿಯೂ ಪರಮ ಪಾವನನೆನಿಸುವನು. ಲಿಂಗರೂಪವೇ ತಾನಾಗುವನು.

ಲಿಂಗರೂಪಾಗಲು ಲಿಂಗವನ್ನು ಕೇವಲ ಆಯತ ಮಾಡಿಕೊಂಡರಾಗುವದಿಲ್ಲ. ಸುಜ್ಞಾನ-ಸತ್ಕ್ರಿಯೆಗಳ ಸತ್ಕ್ರಮದ ಸಮನ್ವಯದಲ್ಲಿ ಲಿಂಗವನ್ನು ಸ್ವಾಯತ್ತೀ ಕರಿಸಿಕೊಳ್ಳಬೇಕು. ಲಿಂಗಸನ್ನಿಹಿತನಾಗಿ ಲಿಂಗಮಯನಾಗುವನು. ಓ ಗುರುದೇವ ! ಈ ಮೃಡಲಿಂಗ ಸೋಂಕಿನ ಸೊಂಪು ಎನ್ನಂಗವನ್ನು ಸಾಕ್ಷಾತ್ಕಾರಿಸುವಂತೆ ಹೃದಯ ತುಂಬಿ  ಹರಸು, ಅನುಗ್ರಹಿಸುತ

ಮನೆ ಮಠಗಳ, ತಾಯಿ ತನ್ನವರ ಮೋಹವನ್ನು ತೊರೆದು ಬಂದ ಸದಾಶಿವಯ್ಯನವರನ್ನು ಸ್ವಾಮಿಗಳೆಂದು  ಸಂಬೋಧಿಸುತ್ತೇವೆ. ಇದಕ್ಕಿಂತಲು ಹೆಚ್ಚಿನ ಸ್ವಾಮಿತ್ವ ಬೇರಿಲ್ಲ. ಸಿದ್ಧಾರ್ಥನು ಸಂಸಾರವನ್ನು ಅನುಭವಿಸಿ ಸನ್ನಿವೇಶಗಳನ್ನು ಪರಿಣಮಿಸಿ ತನ್ನ ೨೯ನೆಯ ವಯಸ್ಸಿನಲ್ಲಿ ವಿರತನಾಗಿದ್ದರೆ ಸದಾಶಿವ ಸ್ವಾಮಿಯು ಷೋಡಶಪ್ರಾಯದಲ್ಲಿಯೆ ಸಂಸಾರಕ್ಕೆ ಸಿಕ್ಕುಬೀಳದೆ ವ್ಯಾಮೋಹಕ್ಕೆ ಬಾಯ್ನೀರು ಕರೆಯದೆ ವೀರ ವಿರಾಗಿಗಳಾಗಿ ಹೊರಟಿರುವುದರಲ್ಲಿಯೇ ಅವರ ಮನೋಧೈರ್ಯದ ಮಹತ್ತು ಸ್ಥಿರಪ್ರಜ್ಞೆತೆಯ ಸಂಪತ್ತು ಎಷ್ಟಿತ್ತೆಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ನಿರೂಹ್ಯವು ನಿರ್ವಿಷಯವೆ ! ಅದಿರಲಿ.

 

ಸದಾಶಿವ ಸ್ವಾಮಿಗಳವರು ಲಿಂಗದಹಳ್ಳಿಯಿಂದ ಹೊರಟು ಬಂದು ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆರೂಢರಲ್ಲಿ ಪಂಚದಶಿ-ವಿಚಾರ ಸಾಗರ- ಪರಮಾನುಭವ ಬೋಧೆ ಮುಂತಾದ ಗ್ರಂಥಗಳ ಅಭ್ಯಾಸವನ್ನು ಆರಂಭಿಸಿದರು. ವಿವೇಕಾನಂದರು ಒಬ್ಬ ಅಧ್ಯಾಪಕರ ಮುಖಾಂತರ ರಾಮಕೃಷ್ಣ ಪರಮಹಂಸರನ್ನು ಅರಿತರು. ಸದಾಶಿವ ಸ್ವಾಮಿಗಳವರಿಗೆ ಮಾತ್ರ ಆರೂಢರನ್ನು ಅರಿಯಲು ಯಾರ ನೆರವೂ ಬೇಕಾಗಲಿಲ್ಲ. ಅದ್ವೈತ ಸಿದ್ಧಾಂತದಲ್ಲಿ ಆರೂಢರ ಖ್ಯಾತಿ ಅಷ್ಟೊಂದು ಹಬ್ಬಿತ್ತು. ಹಬ್ಬಿಹೂವಾಗಿತ್ತು. ಹೂವಿನ ವಾಸನೆ ಎಲ್ಲೆಲ್ಲಿಯೂ ಹರಡಿತ್ತು. ವೇದಾಂತದ ವಾತ್ಸಲ್ಯ ವಿಶೇಷವಾದಾಗ ಸದಾಶಿವಸ್ವಾಮಿಗಳವರೆ ಅವರ ಪ್ರಭಾವಕ್ಕೆ ಒಳಪಟ್ಟಿರಬೇಕು; ಪಟ್ಟಿದ್ದರು.

 

ಸದಾಶಿವಸ್ವಾಮಿಗಳವರು ಆರೂಢರಲ್ಲಿ ವೇದಾಂತಾಭ್ಯಾಸ ಮಾಡುತ್ತಿದ್ದರು. ವೇದಾಂತಿಗಳಾಗಿರಲಿಲ್ಲ. ಅಲ್ಲಿ ನಡೆಯುತ್ತಿರುವ ಬಾಹ್ಯಾದ್ವೈತವು ಸ್ವಾಮಿಗಳವರ ಮನಸ್ಸಿಗೆ ಹಿಡಿಯುತ್ತಿರಲಿಲ್ಲ. ಸತ್ಯಸಿದ್ಧಾಂತದ ಹವ್ಯಾಸ ಇವರಲ್ಲಿ ಮಿಡಿಯುತ್ತಿತ್ತು. ಅದಕ್ಕಾಗಿ ಇವರು ವಾಸ ಭೋಜನಾದಿಗಳನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಸ್ವಂತ ಕಲ್ಪಿಸಿಕೊಂಡಿದ್ದರು. ಪಾಠ ಪ್ರವಚನಾದಿಗಳಿಗೆ ಮಾತ್ರ ಆರೂಢರಲ್ಲಿಗೆ ಹೋಗುತ್ತಿದ್ದರು.

 

ಹೀಗಿರಲು ಒಂದು ದಿನ ಪ್ರವಚನದಲ್ಲಿ ಇಷ್ಟಲಿಂಗವು ಬಾಹ್ಯವಸ್ತು ಅದರ ಪೂಜೆ ಮೂರ್ತಿಪೂಜೆ. ಅದರ ಪೂಜೆಯಿಂದ, ಧಾರಣೆಯಿಂದ ಪ್ರಯೋಜನವಿಲ್ಲ ಎಂದು ಮುಂತಾಗಿ ಚರ್ಚೆ ವಿಚರ್ಚೆ ನಡೆಯಿತು. ಈ ವಿಷಯದಲ್ಲಿ ಸ್ವಾಮಿಗಳವರ ಮನಸ್ಸು ಹೊಯ್ದಾಡಿತು. ಧರಿಸಿದ ಇಷ್ಟಲಿಂಗದ ವಿಷಯದಲ್ಲಿ ಸಂಶಯ ಉದಯಿಸಿತು. ಆಗ ಅವರನ್ನು ಹುಬ್ಬಳ್ಳಿಯಲ್ಲಿ ಎರಡೆತ್ತಿನ ಮಠದ ಶ್ರೀಗಳೊಬ್ಬರು ಶಿವಾನುಭವಿಗಳಿದ್ದರು. ಅವರನ್ನು ಬೆದಕಿಕೊಂಡು ಹೋಗಿ ಸ್ವಾಮಿಗಳು ಇಷ್ಟಲಿಂಗ ತ್ಯಾಗದ ವಿಷಯವಾಗಿ ಬಹುದಿನ ಚರ್ಚಿಸಿದರು. ಅವರಿಂದಲು ಸ್ವಾಮಿಗಳ ಸಂಶಯ ಪರಿಹಾರವಾಗಲಿಲ್ಲ. ಆಗ ಅದೇ ಶ್ರೀಗಳವರು ‘ತಮ್ಮಾ ನೀನು ಬಳ್ಳಾರಿ ಭಾಗದಲ್ಲಿರುವ ಎಮ್ಮಿಗನೂರು ಜಡೆಸಿದ್ದರ ಬಳಿಗೆ ಹೋಗು. ಅಲ್ಲಿ ನಿನ್ನ ಸಂಶಯ ನಿರಸನವಾಗಬಲ್ಲುದು. ಅವರನ್ನು ಸಂದರ್ಶಿಸದೆ ನೀನು ಇಷ್ಟಲಿಂಗವನ್ನು ತ್ಯಜಿಸಬೇಡ’ ಎಂದು ಹೇಳಿ ಕಳುಹಿಸಿದರು.

 

ಸದಾಶಿವ ಸ್ವಾಮಿಗಳವರು ಸಹ ಆ ಜಡೆಸಿದ್ದರ ಹೆಸರನ್ನು ಕೇಳಿದ್ದರು. ಹೆಚ್ಚಾಗಿ ಬಲ್ಲಿದರು, ನಿಚ್ಚಟದ ನಡೆಯವರು ಎಂದು ಎಲ್ಲೆಲ್ಲಿಯು ಅವರ ಪುಣ್ಯವಾರ್ತೆ ಪಸರಿಸಿತ್ತು. ಅದರಿಂದಾಗಿ ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಪ್ರೇಮ ಹುಟ್ಟಿತು. ಒಬ್ಬ ಭಕ್ತನನ್ನು ಜೊತೆಗೂಡಿ ಜಡೆಸಿದ್ಧರಲ್ಲಿಗೆ ಪ್ರಯಾಣವಾದರು. ಆಗ ರೈಲು ಬಸ್ಸುಗಳಿಲ್ಲ. ಅದರಿಂದಾಗಿ ದಿನವು ಎಂಟು ಹತ್ತು ಮೈಲು ಕಾಲು ನಡಿಗೆಯಿಂದ ಪ್ರಯಾಣ ಬೆಳಸಿದರು. ಅಲ್ಲಲ್ಲಿ ಕೆರೆಮಡುಗಳಲ್ಲಿ ಸ್ನಾನ ಮಾಡಿ ತರುಮೂಲಗಳಲ್ಲಿ ಶಿವಪೂಜೆಯಂ ತೀರಿಸಿ, ಕರತಲ ಭಿಕ್ಷದಿಂದ ಪ್ರಸಾದ ಪರಿಗ್ರಹಿಸುತ್ತ ಮುನ್ನಡೆದರು. ಆಗ ಸ್ವಾಮಿಗಳವರು ಧರಿಸುತ್ತಿದ್ದುದು ಒಂದೇ ಒಂದು ಕಾವಿಯ ಶಾಟಿ, ಮಸ್ತಕದ ಮೇಲೆ ಕಂಬಳಿಯ ಕೊಪ್ಪಿ, ಕೈಯಲ್ಲಿ ಒಂದು ತಂಬಿಗೆ, ತೋಳಿನಲ್ಲಿ ಒಂದು ಜೋಳಿಗೆ. ಇಷ್ಟರ ಹೊರತು ಇನ್ನೇನು ಇರಲಿಲ್ಲ.

 

ಇಷ್ಟು ಕಷ್ಟಗಳಿದ್ದರು ಅವನ್ನೆಲ್ಲ ಲೆಕ್ಕಿಸದೆ ಸಾಗಿದರು. ಸತ್ಯ ಸಿದ್ಧಾಂತದ ಹವ್ಯಾಸದ ಹೆಚ್ಚಳ ಅವರಲ್ಲಿ ಅಷ್ಟಿತ್ತು. ಅದರಿಂದಾಗಿ ಈ ಕಷ್ಟಗಳೊಂದೂ ಅವರಿಗೆ ಕಾಣಲಿಲ್ಲ. ಬಹುದೂರದ ಪ್ರಯಾಣವನ್ನು ಪ್ರಯಾಸವಿಲ್ಲದೆ ತೀರಿಸಿ ಜಡೆಸಿದ್ದರಲ್ಲಿಗೆ ಹೋದರು. ಸ್ವಾಮಿಗಳು ಬರುವ ಮೊದಲಿಗೆ ಸಿದ್ಧರು ತಮ್ಮ ಸಿದ್ಧಿಯಿಂದ ಸ್ವಾಮಿಗಳವರ ಮಹತ್ತನ್ನು ಅರಿತು ತಮ್ಮೆದುರಿನಲ್ಲಿದ್ದ ಶಿಷ್ಯರಿಗೆ ಸಂಜ್ಞೆಯಿಂದ ಕಸ ತೆಗೆಯಿರಿ, ಬರಲು ದಾರಿಮಾಡಿಕೊಡಿರಿ ಎಂದು ಹೇಳಿ ವ್ಯವಸ್ಥೆ ಮಾಡಿಸಲು ಆರಂಭಿಸಿದುದನ್ನು ಕಂಡು ಜನರು ಅದಾವ ಮಹಾತ್ಮರು ಬರುವರೋ ಎಂದು ಅಚ್ಚರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವಸ್ವಾಮಿಗಳವರು ಅಲ್ಲಿಗೆ ಆಗಮಿಸಿದರು. ಇವರ ಮನಸ್ಸಿನ ಬಯಕೆಯನ್ನು ಸಿದ್ಧರು ತಾವೇ ತಿಳಿದು ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಹೆಗಲಮೇಲಿದ್ದ ವಸ್ತ್ರವೊಂದನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಕೈ ಜೋಡಿಸಿಕೊಂಡು ನಿಲ್ಲುವರು. ಇದನ್ನೆಲ್ಲ ಬರುತ್ತಿದ್ದ ಸದಾಶಿವ ಸ್ವಾಮಿಗಳವರು ಕಂಡು ಕಡು ಆಶ್ಚರ್ಯವನ್ನು ಆನಂದವನ್ನು ಹೊಂದಿ ಆತ್ಮತೃಪ್ತಿಯಿಂದ ಅಷ್ಟಾಂಗ ನಮಸ್ಕಾರ ಮಾಡಿದರು. ಆಗ ಸಿದ್ಧರು ಸ್ವಾಮಿಗಳನ್ನು ಶಿವಯೋಗಿ ಎಂದು ಸಂಬೋಧಿಸಿದರು.

 

ಸ್ವಾಮಿಗಳವರು ಸಿದ್ಧರಿಗಾಗಿ ತಂದಿದ್ದ ಕೆಲವು ಪದಾರ್ಥಗಳನ್ನು ಸ್ವೀಕರಿಸಲು ಕೊಟ್ಟರು. ಹಸಿ-ಬಿಸಿ ಎನ್ನದೆ ಬೇಡಿದ್ದು-ಬೇಡದ್ದು ಎನ್ನದೆ ಬೇಕು-ಬೇಡ ಎನ್ನದೆ ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುವ ಅವರ ನಿಜವಾದ ಆರೂಢಸ್ಥಿತಿಯನ್ನು ಕಂಡು ತಣಿದರು. ಮಠ ಮಾನ್ಯಗಳ ಅನ್ನ ಅರಿವೆಗಳ ಹಂಗಿಲ್ಲದೆ ಮಾನಾಪಮಾನಗಳ ಜಯಾಪಜಯಗಳ ಹಿಗ್ಗು ಕುಗ್ಗುಗಳಿಲ್ಲದೆ ಇರುವ ಸಹಜಾರೂಢಸ್ಥಿತಿಗೆ ಸ್ವಾಮಿಗಳು ತಲೆದೂಗಿದರು, ತಲೆಬಾಗಿದರು.

 

ಇದಕ್ಕೆ ವಿಪರೀತಾಚರಣೆಯುಳ್ಳ ಹುಬ್ಬಳ್ಳಿಯ ಆರೂಢರಲ್ಲಿಗೆ ತಾವಿನ್ನು ಹೋಗಬಾರದೆಂದು ಭಾವಿಸಿ ಇನ್ನೆಲ್ಲಿಗೆ ಹೋಗಬೇಕೆಂಬುದನ್ನು ಸಿದ್ಧರನ್ನೆ ಕೇಳಬೇಕೆಂದು ಆಶಿಸಿ ಇರುವಷ್ಟರಲ್ಲಿ ಇವರ ಇಂಗಿತವ ತಿಳಿದು ಸಿದ್ಧರು ‘ಎಲ್ಲಿದ್ದೆಯೋ ಅಲ್ಲಿಗೆ ಹೋದರಾಯಿತು’ ಎಂದು ಮೂರು ಸಲ ನುಡಿದರು.

 

ಜಡೆಸಿದ್ದರ ಆ ಅಪ್ಪಣೆಯನ್ನು ಮೀರದೆ ಸ್ವಾಮಿಗಳು ಮರಳಿ ಹುಬ್ಬಳ್ಳಿಗೆ ಬಂದು ಅದೇ ಆರೂಢರಲ್ಲಿಯ ವೇದಾಂತಾಭ್ಯಾಸವನ್ನು ಮಾಡಹತ್ತಿದರು. ಇಷ್ಟಲಿಂಗ ಪರಿತ್ಯಾಗದ ಸಂಶಯವನ್ನು ಹಳಚಿ ಇಷ್ಟಲಿಂಗ ಧಾರಿಗಳಾಗಿಯೇ ಇದ್ದರು. ಹೀಗೆ ವೇದಾಂತಾಭ್ಯಾಸ ನಡೆದಿದ್ದರೂ ಸಿದ್ಧಾಂತ-ಹವ್ಯಾಸವನ್ನು ಕೈ ಬಿಟ್ಟಿರಲಿಲ್ಲ. ಅವರೊಡನೆ ಕೈ ಮಾಡುತ್ತಿರಲಿಲ್ಲ.

 

ಅಂದು ತಾಯಿ ಹೇಳಿದ ಮದುವೆಯನ್ನು ಮಾಡಿಕೊಳ್ಳದ ಸದಾಶಿವಸ್ವಾಮಿಗಳವರು ಇಂದು ಜಡೆಸಿದ್ದರು ಹೇಳಿದ ಲಿಂಗಪತಿಯ ಮದುವೆಯನ್ನು ಮಾಡಿಕೊಂಡರು. ಲೌಕಿಕ ಸತಿಗೆ ಗಂಡನಾಗಿ ಬದುಕುವದಕ್ಕಿಂತ ಲಿಂಗಪತಿಗೆ ಶರಣ ಸತಿಯಾಗಿ ಬಾಳುವುದು ಲೇಸೆಂದು ಮನಗಂಡರು.

ಶರಣ ಸತಿಯ ಮದುವೆಯ ಸಂಭ್ರಮವನ್ನು ನೋಡಿರಮ್ಮ     ||ಪ||

ಪರಮಾನಂದ ಪಯೋನಿಧಿಯೊಳಗೋಲಾಡಿರಮ್ಮ

 

ಸಿಂಗರಿಸಿದ ಶುಭಮಂದಿರವಂದದ ಹಂದರವಮ್ಮ

ಮಂಗಳ ಚೌಕದ ಹಸೆಯ ಜಗುಲಿ ಹಸನಾದುದಮ್ಮ

ಕಂಗೊಳಿಸುವ ಕಲಶಗಳಿಂದೈರಣೆ ತುಂಬಿತಮ್ಮ

ಹಿಂಗದವರೊಳೊಪ್ಪುವ ತಳಿರೆಡೆವರವೆನಿಸಿತಮ್ಮ           ||೧||

 

ಕಲಶೋದಕದೊಳು ಮಿಂದು ಶುಚಿತೆಯಳವಟ್ಟುದಮ್ಮ

ತಿಳಿವಿನ ಬೆಳುವಟ್ಟೆಯನೊಲಿದುಡೆ ಚಲುವೆತ್ತುದಮ್ಮಾ

ತಿಲಕ ಭಸಿತ-ರುದ್ರಾಕ್ಷಿಮಯ ಮಣಿದೊಡವಾದುದಮ್ಮ

ವಿಳಸಿತ ಶಿವ ಹಸ್ತಬ್ಜದ ತೊಂಡಿಲು ಗಟ್ಟಿತಮ್ಮ                ||೨||

 

ನೆರೆದ ಗಣಂಗಳೊಸಗೆಯ ಸುವಾಸಿನಿಯರುಗಳಮ್ಮ

ಪರಿವಿಡಿದೊರೆವಾಗಮ ವಿಧಿವಾದ್ಯದ ರಭಸವಮ್ಮ

ವರಮಂತ್ರದ ಶೋಭಾನವಿಂಬಾಗಿರೆ ಪಾಡಿತಮ್ಮ

ಸರಿದುದು ಮಾಯಾಮಲ ಕರ್ಮದ ತೆರೆಯಾಗಳಮ್ಮ       ||೩||

 

ಭಜನೆ ಭಕುತಿಗಳಿವೆ ಜೀರಿಗೆ ಬೆಲ್ಲವಾದವಮ್ಮ

ನಿಜದೀಕ್ಷಾ ಸಮಯದ ಸುಮುಹೂರ್ತ ಸಮನಿಸಿತಮ್ಮ

ಸುಜನ ಜನದ ಕೈವಾರವೆ ಮಂಗಳಪಾಠವಮ್ಮ

ತ್ರಿಜಗನ್ನುತ ಗುರುಕರುಣ ರಸದ ಕೈಧಾರೆಯಮ್ಮ            ||೪||

 

ಮೆರೆವ ಶಿರದರಮನೆಯ ನಿಬ್ಬಣವೈತಂದುದಮ್ಮ

ಕೊರೆತರಹಿತ ಶಂಭುಲಿಂಗನೇ ಮದವಳಿಗನಮ್ಮ

ಮೆರೆದಿನಿಸಗಲದ ನೇಹವೆರಸಿ ಕೈ ವಿಡಿದನಮ್ಮ

ನೆರೆದಿಹ ಮುತ್ತೈದೆ ಶರಣವಧು ನಿಜಕಾಣಿರಮ್ಮ                ||೫||

 

ಅದಕ್ಕೆ ಸರಿಯಾಗಿ ನಿಜಗುಣರ ಈ ನಿಜಬೋಧೆಯಿಂದ ಸ್ವಾಮಿಗಳ ಮನ ಮತ್ತೂ ಗಟ್ಟಿಗೊಂಡಿತು. ಈ ಬಾಳುವೆಗೆ ಬಾಗಿದರು. ಈ ಬಳುವಳಿಗೆಯ ಕೈ ಕೊಂಡರು. ಈ ಬಳಗದಲ್ಲಿ ಕೂಡಿದ್ದರು.ʼʼ ಆವ ಪುಣ್ಯವೊ ಲಿಂಗಪೂಜಾ ವಿಧಿಯ ಅನುಭಾವವಹುದು ನರಜನ್ಮದೊಳು ಸಾವಿರ ಮುಖದೊಳರಸಿ ನೋಡಿ ನಿಗಮಾಗಮಾವಳಿ ಕಾಣದ ಸಾಧ್ಯವಿದು” ಎಂದು ಲಿಂಗಧಾರಣ ಲಿಂಗಾರ್ಚನ ಸೌಭಾಗ್ಯವನ್ನು ಸರ್ವೋತ್ಕೃಷ್ಟತೆಯನ್ನು ನಿಜಗುಣರು ಹೃದಯಾರೆ ಹಾಡಿಹರಿಸಿದಾರೆ; ಹವಣತೋರಿ ಹೆಚ್ಚಳಿಕೆ ಹೊರಗೆಡವಿದಾರೆ; ಹೆಮ್ಮೆಯ ಹಿತೋಪದೇಶ ಹೇಳಿದಾರೆ.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಮಠ ಗದಗ

 

ಜಂತೂನಾಂ ನರಜನ್ಮ ದುರ್ಲಭಂ ಅಂದರೆ ಕ್ರಿಮಿಕೀಟಾದಿ ಅನಂತ ಜೀವರಾಶಿಗಳಲ್ಲಿ ನರಜನ್ಮ ದುರ್ಲಭವಾದುದಷ್ಟೇ ಅಲ್ಲ ಶ್ರೇಷ್ಠವಾದುದೂ ಕೂಡ. ಇದು ಅರಿವಿನ ಜನ್ಮ. ಕ್ರಿಯಾಶೀಲರಾಗಿ, ಜ್ಞಾನಸಂಪನ್ನರಾಗಿ, ಭಾವಜೀವಿಗಳಾಗಿ ಈ ಜನ್ಮದಲ್ಲಿಯೇ ಭೋಗಮೋಕ್ಷಗಳೆರಡನ್ನು ಪಡೆಯಬಹುದಾಗಿದೆ. ಧರ್ಮಕಾರ್ಯಗಳನ್ನು ನೆರವೇರಿಸುತ್ತ ಇಹಪರಗಳೆರಡರಲ್ಲಿಯೂ ಸುಖವನ್ನು ಹೊಂದಲು ಈ ನರಜನ್ಮ ಸಾಧನವಾಗಿದೆ. ಆದ್ದರಿಂದಲೇ ಮಹಾಕವಿ ಕಾಳಿದಾಸನು ಶರೀರಮಾದ್ಯಂ ಖಲು ಧರ್ಮ ಸಾಧನಂ‘ ಎಂದು ಹೇಳಿರುವುದು. ಅನೇಕ ಜನ್ಮಗಳ ಪುಣ್ಯವಿಶೇಷದಿಂದ ಹಾಗೂ ಪರಮಾತ್ಮನ ವಿಶೇಷ ಕೃಪೆಯಿಂದ ಲಭ್ಯವಾಗಿರುವ ಈ ಜನ್ಮವನ್ನು

ನಿರರ್ಥಕವಾಗಿ ಹಾಳು ಮಾಡಿಕೊಳ್ಳಬೇಡಿರೆಂದು ದಾಸರು ಸಾರಿ ಸಾರಿ ಹೇಳುತ್ತಾರೆ. ತನುವಿನ ದೋಷಗಳನ್ನತಿಗಳೆದು ಲೌಕಿಕ ಸುಖಭೋಗದ ಭ್ರಾಂತಿಯಿಂದ ಮುಕ್ತನಾಗಿ, ಗುರುಬೋಧೆ ಪಡೆದು ದೈವ ನಿಷ್ಠೆ ಅಳವಡಿಸಿಕೊಂಡಾಗ ಈ ನರಜನ್ಮವನ್ನು ಹರಜನ್ಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದುವೇ ನರಜನ್ಮದ ಸಾರ್ಥಕ್ಯ .

 

ನರಜನ್ಮವನ್ನು ಹರಜನ್ಮವಾಗಿಸಿಕೊಂಡಾತ ಗುರು. ನರಜನ್ಮವನ್ನು ಹರಜನ್ಮವಾಗಿಸುವವನೂ ಗುರು. ಗುರುಕಾರುಣ್ಯ ಸಂಸ್ಕಾರಕ್ಕೆ ಒಳಗಾದ ನರರ ಕರಣೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಾಂಸಪಿಂಡ, ಮಂತ್ರಪಿಂಡವಾಗುತ್ತದೆ. ಜೀವ ಶಿವನಾಗುತ್ತಾನೆ. ದೇಹ ದೇಗುಲವಾಗುತ್ತದೆ. ಗುರುವಿನ ಬೋಧೆ ಎಂಬ ಅರಿವಿನ ಜ್ಯೋತಿ ಶರೀರವನ್ನೆಲ್ಲ ವ್ಯಾಪಿಸಿದಾಗ ಮರವೆಯ ಕತ್ತಲು ಸಹಜವಾಗಿಯೇ ದೂರಾಗುತ್ತದೆ. ಗುರುವಿನ ಚರಣಸ್ಪರ್ಶ ತನುಕರಣಾದಿಗಳ ದೋಷಗಳನ್ನೆಲ್ಲ ಸುಟ್ಟು ಸರ್ವಾಂಗವನ್ನು ಲಿಂಗವಾಗಿಸುವುದೆಂಬ ದಾಸಿಮಾರ್ಯರ ವಚನವೊಂದು ಹೀಗಿದೆ:

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥಾ

ಗುರುವಿನ ಚರಣದಲ್ಲಿ ಅಂತಹ ಅದ್ಭುತವಾದ ಶಕ್ತಿ ಇದೆ. ಅಂಥ ಗುರುಚರಣವ ಪೂಜಿಸಿದ ಹಸ್ತ, ನೋಡಿದ ಕಣ್ಣು, ಹಾಡಿದ ನಾಲಿಗೆ, ನೆನೆದ ಮನ, ಧ್ಯಾನಿಸಿದ ಹೃದಯವೆಲ್ಲವೂ ಪರಿಶುದ್ಧವಾಗುವವು.

ಹರಜನ್ಮವನ್ನು ಸಾಧಿಸುವುದು ನರಜನ್ಮದಲ್ಲಿ ಮಾತ್ರ ಸಾಧ್ಯ. ಉಳಿದ ಯಾವ ಜನ್ಮದಲ್ಲಿಯೂ ಇದು ಸಾಧ್ಯವಿಲ್ಲ. ಹುಟ್ಟುಸಾವುಗಳೆಂಬ ಭವಚಕ್ರದಿಂದ ಮುಕ್ತನಾಗಲು ಮಾನವ ಶರೀರ ಒಂದು ಅಪೂರ್ವ ಸಾಧನ. ‘ಯೋಗ ಯೋಗ್ಯರು ಭೂ ಭಾಗದೊಳು ಮಾನವ ಶರೀರಿಗಳಾಗಿ ಸಾಧಿಸಿ ನಿಜವನ್ನರಿವರು’ ಎಂದು ಮಹಾಕವಿ ಚಾಮರಸ ಮಾನವ ಜನ್ಮದ ಪ್ರಯೋಜನವನ್ನು ಕುರಿತು ಹೇಳುತ್ತಾನೆ. ನಿಜವನ್ನರಿತು ನಿಜವೇ ತಾವಾಗಲು ನರಜನ್ಮ ಅತ್ಯಂತ ಸಹಕಾರಿ. ನರಜನ್ಮ ಪಡೆದವರು ಯೋಗ್ಯ

ಗುರುವನ್ನಾಶ್ರಯಿಸಿ ಅವರ ಬೋಧಾಮೃತದಿಂದ ದುರಿತ ದುರ್ಗುಣಗಳನ್ನು ನಿವಾರಿಸಿಕೊಂಡು ಮನಸ್ಸನ್ನು ಪರಿಶುದ್ಧಗೊಳಿಸಬೇಕು. ನರಜನ್ಮವನ್ನು ಅಹಂಕಾರ- ಮಮಕಾರಗಳಿಂದ ಬಂಧಿಸದ ಅರಿವಿನಿಂದೊಡಗೂಡಿ ಪರಮಾತ್ಮನ ನಿಲವನರಿದರೆ ಅದೇ ಹರಜನ್ಮ. ಗುರುವಿನ ಉಪದೇಶದಂತೆ ನಡೆದ ನರರು ತಮ್ಮ ನರಜನ್ಮವನ್ನು ನೀಗಿ ಹರಜನ್ಮವನ್ನು ನಿಸ್ಸಂದೇಹವಾಗಿ ಪಡೆಯುತ್ತಾರೆ. ಹಾಗೆಯೇ ಪರಿಭವದಿಂದ ಮುಕ್ತರಾಗುತ್ತಾರೆ. ಅಂಥ ಗುರುವಿಗೆ ‘ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಶರಣು ಶರಣಾರ್ಥಿ’ ಎಂದು ಅಕ್ಕಮಹಾದೇವಿ ಹೇಳಿದಂತೆ ನಾವು ಶರಣಾರ್ಥಿಗಳನ್ನು ಹೇಳೋಣ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ನರಮನುಜನು ಪಟ್ಟ ದರಸಾಗಲವಗೆ ನೀ

ಶಿರಬಾಗದಿರಲು-ಶಿರದೊಳಗೆ ಲಿಂಗವನು

ಧರಿಸೆಂದ ಗುರುವೆ ಕೃಪೆಯಾಗು    || ೧೩೧ ||

ಭಕ್ತನು ಶಿವಶರಣರ ಕಿಂಕರರ ಕಿಂಕರನಾಗಲು ಬಯಸುತ್ತಾನೆ. ಆದರೆ ಭವಿಯಾದ ಅರಸನ ಆಸರವನ್ನೂ ಇಚ್ಛಿಸುವದಿಲ್ಲ. ಶಿವಭಕ್ತನಲ್ಲದ ಮನುಜನಿಗೆ ಮಣಿಯುವದೂ ಇಲ್ಲ. ಇಂಥ ಛಲವುಳ್ಳವನೇ ಶಿವಲಿಂಗವನ್ನು ಶಿರದಲ್ಲಿ ಧರಿಸ ಬೇಕೆಂಬುದನ್ನು ಶಿವಕವಿಯು ಲಿಂಗಧರಿಸುವ ನಾಲ್ಕನೆಯ ಸ್ಥಾನವನ್ನಾಗಿ ನಿರೂಪಿಸಿದ್ದಾನೆ.

ಭಕ್ತನಲ್ಲದ ಸಾಮಾನ್ಯ ನರನು ಪೂರ್ವದ ಪುಣ್ಯವಿಶೇಷದಿಂದ ರಾಜ್ಯಕ್ಕೆ ಪಟ್ಟದರಸನಾದರೆ ಶರಣನಾದವನು ಅವನನ್ನು ಶಿರಬಾಗಿ ವಂದಿಸಲಾರನು. ಭವಿಗೆ ಬಾಗದ ಭಕ್ತನು ಮಸ್ತಕದೊಳಗೆ ಮಹಾಲಿಂಗವನ್ನು ಧರಿಸಬೇಕೆಂಬುದು ಶ್ರೀಗುರುವಿನ ಬೋಧೆಯಾಗಿದೆ. ಕಾಯಕನಿಷ್ಠನಾದ ಭಕ್ತನು ಭವಿಯನ್ನು ಬೇಡನು. ಅವನಿಂದ ಯಾವ ಆಶೆಯನ್ನು ಮಾಡನು. ಅವನ ಹಂಗೂ ಅವನಿಗೆ ಇರದು. ಅರವತ್ತು ಮೂವರು ಪುರಾತನರಲ್ಲೊಬ್ಬರಾದ ಶರಣ ರಕ್ಷಕನಾದ ಕಲಿಗಣನಾಥನೆಂಬ ಶೂರ- ಶರಣನಾದ ಅರಸನು ಭವಿಯಾಗಿ ಬಂದ ಶಿವನಿಗೂ ವಂದಿಸಲಿಲ್ಲ. ಆದರೆ ಭವಿಯಾದ ಅವನಿಗೆ ಶಿಕ್ಷಿಸಿ ಲಿಂಗಧಾರಣಮಾಡಿದ ಕಥೆ ಅದ್ಭುತವಾದುದು. ಶರಣರು ನ್ಯಾಯನಿಷ್ಠುರರು. ದಾಕ್ಷಿಣ್ಯಪರರಾಗಿ ಬಾಳುವದಿಲ್ಲ. ಅಂತೆಯೇ ಭವಿಯಾದವನು ಅರಸನಾಗಿದ್ದರೂ ಅವನನ್ನು ಮನ್ನಿಸಲಾರರು. ಇಂಥ ಧೀರೋದಾತ್ತತೆಯಲ್ಲಿಯೇ ವೀರಶೈವನ ವೀರತ್ತ್ವವು ಪ್ರಕಟಗೊಳ್ಳುವದು.

ಭಕ್ತಿಭಾಂಡಾರಿಯೆನಿಸಿದ ವೀರಶೈವ ನಿರ್ಣಯಪರಮಾವತಾರಿಯೆನಿಸಿದ ಅಣ್ಣಬಸವಣ್ಣನವರು ಭವಿಯಾದ ಬಿಜ್ಜಳನಲ್ಲಿ ಕಾಯಕ ಮಾಡುತ್ತಿದ್ದರೇ ಹೊರತು   ಅವನಿಗೆ ವಂದಿಸುತ್ತಿರಲಿಲ್ಲ; ಆದರೆ ತನ್ನ ಬೆರಳಿನ ನಂದಿಯುಂಗುರವನ್ನು ಮುಂದೆ ಮಾಡಿ ಇಷ್ಟಲಿಂಗವನ್ನು ಗುರು-ಜಂಗಮ ಧ್ಯಾನಪೂರ್ವಕ ಔಪಚಾರಿಕವಾಗಿ, ರಾಜಗೌರವೋಚಿತಕ್ಕಾಗಿ ಬಿಜ್ಜಳನಿಗೆ ಕೈಮುಗಿಯುತ್ತಿದ್ದನು; ಅರ್ಥಾತ್ ತಮ್ಮ ಹಸ್ತದ ನಂದೀಶ್ವರನಿಗೆ ವಂದಿಸುವ ಭಾವವಿರುತ್ತಿತ್ತು. ಇದರ ರಹಸ್ಯವನ್ನರಿತ ಕೊಂಡೆಯವರು ರಾಜನಿಗೆ ತಿಳಿಸಿದರು. ಸಾರಾಸಾರ ವಿವೇಕವಿಲ್ಲದ ಅರಸನು ಅಣ್ಣನವರಿಗೆ ಉಂಗುರ ತೆಗೆದಿರಿಸಿ ಸಿಂಹಾಸನಕ್ಕೆ ಮಣಿಯ ಬೇಕೆಂದಾಗ ಬಸವ ಮಹಾನುಭಾವರು ಬಿಜ್ಜಳನನ್ನು ಕೆಳಗಿರಿಸಿ ವಂದಿಸುತ್ತಿರಲು ಆ ಸಿಂಹಾಸನವು ಧಗಧಗನೆ ಉರಿಯ ಹತ್ತುವದು. ದಿಗ್ಭ್ರಮೆಗೊಂಡ ಅರಸನು ದಂಡಾಧೀಶನಲ್ಲಿ ಕ್ಷಮೆ ಕೇಳಿದನು ಎಂಬ ಚರಿತ್ರೆ ಬಸವ ಪುರಾಣದಲ್ಲಿ ಕಾಣಸಿಕ್ಕುವದು.

ಶರಣರಿಂದ ವಂದಿಸಿಕೊಳ್ಳುವ ವ್ಯಕ್ತಿಯು ಮಹಾ ಮಹಿಮನೇ ಆಗಿರಬೇಕು. ದೊಡ್ಡವರಿಗೆ ಮಣಿಯುವದು ಲೋಕಾಚಾರ. ಅದಕ್ಕಪಚಾರ ಮಾಡಿದರೆ ಅನಾಹುತಕ್ಕೇನೆ ಔತಣ ಕೊಟ್ಟಂತಾಗುವದು. ಇದಕ್ಕೆ ಬಿಜ್ಜಳನ ಉದಾಹರಣೆಯೇ ಸಾಕ್ಷಿಯಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಮಾತುಗಳು ಎರಡು. ಭಕ್ತನಲ್ಲದವನು ಭಕ್ತರಿಂದ ನಮಸ್ಕರಿಸಿಕೊಳ್ಳಬಾರದು. ಇನ್ನೊಂದು ಭಕ್ತನಾದವನು ಭವಿಗಳ ಆಮಿಷಾದಿಗಳಿಗೆ ಆಶಿಸದೆ ಸ್ವತಂತ್ರ ಧೀರನಾಗುವ ಮನೋಭಾವವುಳ್ಳವನಾಗಬೇಕು.

ಈ ತ್ರಿಪದಿಯನ್ನು ರಚಿಸಿದ ಶಿವಕವಿಯು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ತ್ರಿಪದಿಯ ಅರ್ಥವನ್ನು  ಚನ್ನಬಸಣ್ಣನವರ ವಚನವು ಪುಷ್ಟಿಕರಿಸಿದೆ.

 ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಬಳಿಕ

 ಅನ್ಯರಿಗೆ ತಲೆಬಾಗದಿರಬೇಕು; ಮಾನವರ ಬೇಡದಿರಬೇಕು.

 ಹಸಿವು ತೃಷೆ ವಿಷಯಂಗಳು ಲಿಂಗದಲ್ಲಿ ನಿಕ್ಷೇಪವಾಗಿರಬೇಕು

 ಜಾಗೃತ್ -ಸ್ವಪ್ನ-ಸುಷುಪ್ತಿಯಲ್ಲಿ ಲಿಂಗದ

ನಿಲುಕಡೆಯನರಿದು ತೆರಹಿಲ್ಲದಿರಬೇಕು.

 ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಮಹಾತ್ಮಂಗೆ

ಇದೆ ಮುಕ್ತಿ ಪಥವಯ್ಯ ಕೂಡಲ ಚನ್ನಸಂಗಮದೇವಾ. II ಚ. ಬ. ವ. ೯೧೦ |

 ಉರದಿಂದ ಉತ್ತಮಾಂಗಕ್ಕೆ ಲಿಂಗವನ್ನು ಬರಮಾಡಿಕೊಂಡ ಮಹಾತ್ಮನು ಸರ್ವಾಂಗ ಲಿಂಗಮಯನಾಗಿರುತ್ತಾನೆ. ಸಕಲವೂ ಲಿಂಗವೆಂದರಿದ ಬಳಿಕ ಲಿಂಗವಲ್ಲದ ಅನ್ಯ ವಸ್ತುವಿಗೆ, ಅನ್ಯವ್ಯಕ್ತಿಗೆ ವಂದಿಸಲಾರನು. ಸಕಲವನ್ನು ದಯಪಾಲಿಸುವವನು ದೇವನೇ ಎಂದರಿದು ಮಾನವರನ್ನು ಬೇಡುವದಿಲ್ಲ. ಜೀವಗುಣವೆನಿಸಿದ ಹಸಿವು, ತೃಷೆ; ವಿಷಯಗಳು ಲಿಂಗದಲ್ಲಿ ಅಡಗಿ ಲಿಂಗದ ಮಹಾಪ್ರಸಾದವಾಗುವವು. ತ್ರಿವಿಧಾವಸ್ಥೆ ಯಲ್ಲಿಯೂ ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡು ಜ್ಞಾನಿಯಾಗಿರುತ್ತಾನೆ.

ಅಂದಮೇಲೆ ಲೋಕದ ಮಾನವರಿಂದ ಅವನಿಗೇನಾಗಬೇಕು ? ಶರಣನ ಪರಿಯೇ ಲೋಕಕ್ಕೆ ಭಿನ್ನವಾಗಿರುವುದು. ಸರ್ವಸಂಗವನ್ನು ಪರಿಹರಿಸಿದ ಶರಣನು ಶಿವಭಕ್ತ ನಲ್ಲದವನಿಗೆ ಶಿರಬಾಗುವ ಅವಶ್ಯಕತೆಯೂ ಬೀಳಲಾರದು. ಉತ್ತಮಾಂಗದಲ್ಲಿ

ಲಿಂಗವನ್ನು ಧರಿಸುವ ಯೋಗ್ಯತೆಯನ್ನು ಪಡೆದ ಮಹಾನುಭಾವಿಗೆ ಇಂದಿನ ಕಾಲದಲ್ಲಿಯೂ ಅನ್ಯರಿಗೆ ವಂದಿಸುವ ಯಾವ ಅವಸರ ಬರಲಾರದು.

ಸಕಲರ್ಗೆ ಸಟೆಯು ಪಾ | ತಕವೆಂದು ನೀಗಿ ಚಿತ್

 ಸುಖದ ಲಿಂಗವನು-ಮುಖಸಜ್ಜೆಯೊಳಿಡಬೇಕೆಂ-

ದಕಳಂಕ ಗುರುವೆ ಕೃಪೆಯಾಗು     || ೧೩೨ ॥

ಶರಣರಿಗೆ ಶಿರಬಾಗಿಸುವದೇ ಶಿರಕ್ಕೆ ಭೂಷಣವಾಗಿರುವಂತೆ; ಮುಖಕ್ಕೆ ಸತ್ಯವಚನವೇ ಭೂಷಣವೆಂಬುದನ್ನು ಶಿವಕವಿಯು ತತ್ತ್ವಮಯವಾಗಿ ಪ್ರತಿಪಾದಿಸಿದ್ದಾನೆ. ಸತ್ಸ್ವರೂಪನಾದ ಶಿವನೊಲುಮೆಗೆ ಸತ್ಯವೇ ಮೂಲ. ಸಟೆಯೇ ಪಾತಕದ ಸತ್ಯದ ಪರಿಭಾಷೆ.ಮೂಲ. ಶಿವಭಕ್ತನಲ್ಲಿ ಸತ್ಯವು ನಿತ್ಯವಾಗಿರಬೇಕು. ನಡೆ-ನುಡಿಯೊಂದಾಗುವದೇ

ನಾಸತೋ ವಿದ್ಯತೇ ಭಾವಃ ನಾಭಾವೋ ವಿದ್ಯತೇ ಸತಃ

ಅಸತ್ಯಕ್ಕೆ ಅಸ್ತಿತ್ವವಿಲ್ಲ. ಸತ್ಯಕ್ಕೆ ಅಭಾವವಿಲ್ಲವೆಂಬ ಗೀತಾರ್ಥವೂ ಸತ್ಯದ ಘನತೆಯನ್ನೇ ಘೋಷಿಸುತ್ತದೆ. ಷಣ್ಮುಖ ಶಿವಯೋಗಿಗಳು-

ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ,

ಅಸತ್ಯದ ಮನೆಯಲ್ಲಿ ಶಿವನಿರ್ಪನೆ ?

ಇಲ್ಲಿಲ್ಲ ನೋಡಿರೋ

! ಇದು ಕಾರಣ

ನಮ್ಮ ಅಖಂಡೇಶ್ವರ ಲಿಂಗವನೊಲಿಸಬೇಕಾದಡೆ

ಸತ್ಯವನೆ ಸಾಧಿಸಬೇಕು ಕಾಣಿರೋ |

ಎಂದು ಸತ್ಯದ ನಿಲವನ್ನು ಸಾರಿದರೆ, ಅಣ್ಣ ಬಸವಣ್ಣನವರು-

ದಿಟವ ನುಡಿವುದು, ನುಡಿದಂತೆ ನಡೆವುದು

ಹುಸಿಯ ನಡೆದು ತಪ್ಪುವ

ಪ್ರಪಂಚಯನೊಲ್ಲ ಕೂಡಲ ಸಂಗಮದೇವ

ಎಂದು ದಿಟದ ಮಾಟವನ್ನು ಮೂಡಿಸಿದ್ದಾನೆ. ವೈರಾಗ್ಯನಿಧಿ ಅಕ್ಕನು

ಸಟೆ-ದಿಟವೆಂಬುವೆರಡು-ವಿಡಿದು ನಡೆವುದೀ ಲೋಕವೆಲ್ಲವು.

ಸಟೆ-ದಿಟವೆಂಬುವರೆದು ಎಡಿದು ನಡೆವ ಲೋಕದೊಡನೆ

ಶರಣನು ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದೊಡನೆ

ಆತನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ,

ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು,

ಕುಡಿವುದೆಲ್ಲ ಸುರೆ, ಹುಸಿಯೆಂಬುದೇ ಹೊಲೆ

ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ ?

ಹುಸಿಯನಾಡಿ ಲಿಂಗವ ಪೂಜಿಸಿದೊಡೆ

ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚನ್ನಮಲ್ಲಿಕಾರ್ಜುನಾ |

ಸಟೆಯೆಂದರೆ ಅಸತ್ಯ. ದಿಟವೆಂದರೆ ಸತ್ಯ. ಈ ಸತ್ಯಾಸತ್ಯಗಳ ಸಮ್ಮಿಶ್ರಣವೇ ಸಂಸಾರದ ಇರವು. ಸಟೆ-ದಿಟಗಳೆರಡನ್ನು ಒಂದುಗೂಡಿಸಿ ನಡೆಯುವ ಲೋಕದ ನಡತೆಗೂ, ಶರಣನ ಸತ್ಯವಾದ ಸದಾಚರಣೆಯ ಪರಿಗೂ ತೀರ ಭಿನ್ನವಾಗಿದೆ. ಬಾಹ್ಯ ಜೀವನದಲ್ಲಿ ಶರಣನೆನಿಸಿ ಗುರು-ಲಿಂಗ-ಜಂಗಮದಲ್ಲಿ ಸಟೆಯಾಡಿದರೆ ಶರಣತ್ವಕ್ಕೇನೆ ಕುಂದು. ಅವನು ನಿಜ ಶರಣನೆನಿಸನು. ಆ ತ್ರಿವಿಧ ಪೂಜ್ಯರಿಗೆ ದ್ರೋಹಿಯಾಗುವನು. ಅಘೋರ ನರಕಿಯೆನಿಸುವನು. ಯಾಕಂದರೆ ಶಿವನು ಸತ್ಯದಲ್ಲಲ್ಲದೆ ಅಸತ್ಯದಲ್ಲಿಲ್ಲ. ಅಸತ್ಯವಾದಿಯಾದ ಸಂಸಾರಿಯು ಶಿವನಿಗೆ ದೂರವಾಗುವನು. ಅಸತ್ಯವನ್ನು ನುಡಿದು

ಮಾಡಿದ ಶಿವಲಿಂಗಪೂಜೆಯೂ ಸಫಲವಾಗಲಾರದು. ಈ ಹುಸಿಯಲ್ಲಿಯೇ ಹೊಲೆತನವಿದೆ. ಹುಸಿಕ ಭೋಗಿಸಿದುದೆಲ್ಲ ಹೊಲಸಾಗುವದು. ಜೊಳ್ಳನ್ನು ಬಿತ್ತಿದರೆ ಮೊಳಕೆ ಹುಸಿಯಾಗುವಂತೆ; ಅಸತ್ಯದಿಂದ ಸತ್ಯದ ಫಲ ದೊರೆಯದು ಎಂದು ಮುಂತಾಗಿ ಶರಣರು ಸತ್ಯದ ಸತ್ಯವನ್ನು ಸಾರಿದ್ದಾರೆ. ಸತ್ಯದ ಅರಿವುಳ್ಳ ಅಲ್ಲಮಪ್ರಭುಗಳು ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು. ಲಕ್ಷಕ್ಕೊಮ್ಮೆ

ನುಡಿಯ ಲಾಗದು. ಕೋಟಿಗೊಮ್ಮೆ ನುಡಿಯಲಾಗದೆಂದು ಅಪ್ಪಣೆ ಮಾಡಿದ್ದಾರೆ. ಕೇವಲ “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪ ವೆಂತಲೂ; ನುಡಿಗೆ ತಕ್ಕನಡೆಯ ಕಂಡೊಡ ಕೂಡಲ ಸಂಗಮದೇವನೊಳಗಿರುವನೆಂತಲೂ ಅಣ್ಣನವರು ನಡೆ-ನುಡಿಗಳ ಸಾಮರಸ್ಯದ ಸಾರವನ್ನು ಸೂಸಿದ್ದಾರೆ.

ಅಸತ್ಯವು ಜೀವಾತ್ಮನ ಜೀವನದಲ್ಲಿ ಅಪಾಯಕಾರಿಯೆನಿಸಿದರೂ ಮಾನವನು ಅದನ್ನೇ ಆಶಿಸುತ್ತಾನೆ. ಈ ಮಾತನ್ನು ತೋಂಟದ ಸಿದ್ಧಲಿಂಗ ಶಿವಯೋಗಿಗಳು-

ಹೆಣನ ಕಂಡರೆ ನಾಯಕಚ್ಚಿದಲ್ಲದೆ ಮಾಣ್ಣುದೇ ?

ಹಣವ ಕಂಡರೆ ಮನ ಕರಗಿದಲ್ಲದೆ ಮಾಣ್ಣುದೇ ?

ಬಿಸಿಯ ಕಂಡರೆ ಬೆಣ್ಣೆ ಕರಗಿದಲ್ಲದೆ ಮಾಣ್ಣುದೇ ?

ಹುಸಿಯ ಕಂಡರೆ ಲೋಕಮೆಚ್ಚುವದು, ನಚ್ಚುವದು

ಮಹಾಲಿಂಗ ಗುರುಶಿವಸಿದ್ಧೇಶ್ವರ ಪ್ರಭುವೇ !

ಸತ್ತಪ್ರಾಣಿಯನ್ನು ನೋಡಿದ ನಾಯಿ ಅಂದಣವನ್ನೇರಿದ್ದರೂ ಕೆಳಗೆ ಹಾರಿ ಕಚ್ಚದೆ ಬಿಡುವದಿಲ್ಲ. ಹಣಕಂಡು ಮನಕರಗದ ಮಾನವರಿಲ್ಲ. ಬೆಂಕಿಯ ಕಂಡು ಬೆವೆಯದ ಬೆಣ್ಣಿಯಿಲ್ಲ. ಇದರಂತೆ ಲೋಕದ ಮಾನವನು ಹುಸಿಯನ್ನು ಕಂಡು ಮೆಚ್ಚುತ್ತಾನೆ.ನಚ್ಚುತ್ತಾನೆಂದು ತಿಳಿಸಿದ್ದಾರೆ. ಬಹುಮುಖವಾದ ಪ್ರಪಂಚವು ಕೆಳಮುಖವಾಗಿಯೇ ಹರಿಯುವದು.ಅಧೋಮುಖವಾದ ಜಲವು ಹೊಂದಲಾರದೋ

ಊರ್ಧ್ವ ಗತಿಯನ್ನೆಂದೂ ಅದರಂತೆ ಅಸತ್ಯವನ್ನು ಅನುಸರಿಸುವ ನರನು ಸತ್ಯದ ನಿಲವನ್ನು

ಅರಿಯಲಾರನು. ಅಸತ್ಯ ಅನಿತ್ಯವಾದರೆ ಸತ್ಯವು ನಿತ್ಯವೆನಿಸುವದು.

ಮಹಾತ್ಮಾ ಗಾಂಧೀಜಿಯವರು ಸತ್ಯದ ಮಹತ್ವವನ್ನರಿತುಕೊಂಡು ನಿತ್ಯರಾದರು. ಅವರ ಭೌತಿಕ ದೇಹವು ಅನಿತ್ಯವಾಗಿ ನಾಶ ಹೊಂದಿದ್ದರೂ ಕೀರ್ತಿ ಕಾಯವು ಶಾಶ್ವತವಾಗಿದೆ. ನಿತ್ಯಸತ್ಯವೆನಿಸಿದೆ. ತಮ್ಮ ಜೀವನವನ್ನೇ ಸತ್ಯದ ಪ್ರಯೋಗದಲ್ಲಿ ಪ್ರಯೋಗಿಸಿಕೊಂಡ ಹಲವಾರು ಘಟನೆಗಳನ್ನು ಅವರ ಆತ್ಮಚರಿತ್ರೆಯಲ್ಲಿ ಕಾಣುತ್ತೇವೆ. ಸತ್ಯ ಹರಿಶ್ಚಂದ್ರನ ಜೀವನವನ್ನು ಚಿತ್ರಿಸಿದ ಮಹಾಕವಿ ರಾಘವಾಂಕನು ಆ ಮಹಾಕಾವ್ಯದಲ್ಲಿ “ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರ” ಎಂಬ ತತ್ತ್ವವನ್ನು

ಓತಪ್ರೋತವಾಗಿ ತುಂಬಿದ್ದಾನೆ. ಇಂಥ ಸತ್ಯ ಸ್ವರೂಪವನ್ನು ಜೀವನದಲ್ಲಿ ಅಳವಡಿಸಿಕೊಂಡವನು ಶರಣನಾಗುವನು.

ಸತ್ಯದಲ್ಲಿ ಚಿತ್‌ಸುಖದ ಲಿಂಗವು ಚಿತ್ರಕ್ಕೆ ಚೇತನವನ್ನು ನೀಡುವದು. ಅವನು ಚೈತನ್ಯಮಯನಾಗುವನು. ಸತ್ಯವನ್ನು ಪರಿಪಾಲಿಸುವ ಲಿಂಗಭಕ್ತನು ಜ್ಞಾನಾನಂದ ಮಯಲಿಂಗವನ್ನು ಮುಖವೆಂಬ ಸೆಜ್ಜೆ (ಕರಡಿಗೆ) ಯೊಳಗಿಡಬೇಕೆಂಬುದು ಗುರುವಿನ ವಚನ. ಕಲಂಕ ರಹಿತನಾದ ಸದ್ಗುರುನಾಥನು ಸತ್ಯದ ಮರ್ಮವನ್ನು ತಿಳಿಸಿ ಚಿತ್ಸುಖದ ಲಿಂಗವನ್ನು ಮುಖ ಸಜ್ಜೆಯಲ್ಲಿ ಧರಿಸಬಹುದೆಂದು ಬಣ್ಣಿಸುತ್ತಾನೆ. ಮುಖವೆಂಬ ಕರಡಿಗೆಯಲ್ಲಿ ಲಿಂಗವನ್ನು ಧರಿಸುವ ಶರಣನ ವಾಣಿ ಪ್ರಸಾದ ವಾಣಿಯಾಗುವದು. ಅವನಲ್ಲಿ ಸುಳ್ಳು ಸೋಂಕಲಾರದು. ಪ್ರಸಾದವಾಣಿಯಲ್ಲಿಯೇ ಚಿತ್ಸುಖದ

ಪ್ರೋತವಿದೆ. ಸತ್ಯವೇ ನಿತ್ಯಲಿಂಗದ ನಿಜವು. ಅಂಥ ಸತ್ಯವನ್ನು ಸಾಧಿಸಿ ಚಿತ್‌ಸುಖದ ಲಿಂಗವನ್ನು ಧರಿಸುವ ಶಕ್ತಿಯನ್ನು ದಯಪಾಲಿಸುವ ಪರಮ ಗುರುವೆ ! ನಿರಂಜನ ಪ್ರಭುವೆ ! ಕೃಪೆದೋರು.

ಸ್ವಮತಮಾರ್ಗವ ಬಿಟ್ಟು ವಿಮುಖನಾಗದೊಡೆ ಸ

ತೃಮದ ಲಿಂಗವ-ನಮಳ್ಳೆಕ್ಯದಿ ಧರಿಸೆಂದ

ವಿಮಲ ಶ್ರೀಗುರುವೆ ಕೃಪೆಯಾಗು || ೧೩ ||

ಶಿವಕವಿಯು ಲಿಂಗವನ್ನು ಧರಿಸಲು ಯೋಗ್ಯವೆನಿಸಿದ ಕರ, ಕಕ್ಷೆ, ಉರ, ಶಿರ,ಮುಖಸಜ್ಜೆಗಳನ್ನು ನಿರೂಪಿಸಿ ಆರನೆಯ ಸ್ಥಾನವಾದ ಅಮಲೈಕ್ಯದಲ್ಲಿ ಲಿಂಗಧಾರಣೆಯ ಗರಿಷ್ಠತೆಯನ್ನು ಗುರುತಿಸುತ್ತಾನೆ. ಅಮಲೈಕ್ಯ ಸ್ಥಿತಿಯನ್ನು ಸಾಧಿಸಲು ಸ್ವಮತಾಚರಣೆ ಅತ್ಯವಶ್ಯವಾದುದು. ಸ್ವಮತದಲ್ಲಿ ಸತ್ಯಮವಿರುವದು. ಪರಮತಾವಲಂಬನೆಯಲ್ಲಿ ಸತ್ಯಮ ನಿಲ್ಲುವದಿಲ್ಲ. ಯಾಕಂದರೆ ಪರಮತದ ಪರಿಪೂರ್ಣ ಪರಿಚಯವಿರುವದಿಲ್ಲ. ಆದ್ದರಿಂದ ಸ್ವಮತಮಾರ್ಗಾಚರಣೆಯೇ ಸತ್ಯಮದ ತವರು.

ಇಲ್ಲಿ ಮತವೆಂದರೆ ಅಭಿಪ್ರಾಯ ಅಥವಾ ಧರ್ಮವೆಂದು ಗ್ರಹಿಸಬಹುದು.ಸ್ವಮತವೆಂದರೆ ತನ್ನದೇ ಆದ ಧರ್ಮ. ಸ್ವಕೀಯ ಸಿದ್ಧಾಂತವುಳ್ಳುದಾಗುವದು. ತಮ್ಮ ಹಿರಿಯರು ಅರಿತು ಆಚರಿಸಿ ಕಲಿಸಿ ತೋರಿಸಿಕೊಟ್ಟ ಧರ್ಮಾಚರಣೆಯು ಸ್ವಮತವಾದುದು. ಇಂಥ ಸ್ಪಧರ್ಮಾಚರಣೆಯನ್ನು ತಿಳಿಯದೆ, ಅರ್ಥೈಸಿಕೊಳ್ಳದೆ ತ್ಯಜಿಸಿ ಪರಮತಾಚರಣೆಯು ಮನವೆಳಸಿದರೆ ಅವನಿಗೆ ಪ್ರತಿಕೂಲವೇ ಕಾದಿರುವದು. ಸ್ವಮತದ ಕ್ರಮವನ್ನು ಬಿಟ್ಟಲ್ಲಿ ಕಷ್ಟ ಬಿಟ್ಟಿದ್ದಲ್ಲ, ಯಾಕಂದರೆ ಪ್ರಥಮತಃ ತನ್ನ ಧರ್ಮದಲ್ಲಿಯೇ ಅಭಿಮಾನವಿಲ್ಲದವನು ಇನ್ನೊಂದರಲ್ಲಿ ಶ್ರದ್ಧೆಯನ್ನು ಇಡಲಾರನು.ಅಲ್ಲದೆ ಚಾಚೂತಪ್ಪದೆ ಅದನ್ನು ಅನುಸರಿಸಲಾರನು. ಅಂತೆಯೇ ಕ್ರಮ ತಪ್ಪಿ ನಡೆವುದರಿಂದ ಕಷ್ಟಮಿನ್ನುಂಟೆ ?”

ಎಂದಿದ್ದಾರೆ ನಿಜಗುಣರು. ನೈತಿಕ ಧರ್ಮವು ಪ್ರತಿಯೊಬ್ಬರಲ್ಲಿ ಸಮಾನವಾಗಿರುತ್ತದೆ.ಆಚರಣೆಯು ಭಿನ್ನವಾಗಿರಬಹುದು. ಬೇರೆ ಬೇರೆಯಾದ ಆಚರಣೆಗಳನ್ನು ಅನುಸರಿಸುವದು ಸುಲಭವಲ್ಲ. ಅದಕ್ಕಾಗಿ ಶಿವಕವಿಯು ಲಿಂಗನಿಷ್ಠೆಯು ಬೆಳೆಯಲೆಂದು ಸ್ವಮತಮಾರ್ಗವನ್ನು ಬಿಟ್ಟು ವಿಮುಖನಾಗಬಾರದೆಂದು ತಿಳಿಸಿದ್ದಾನೆ. ಉತ್ತಮ ಜೀವನವನ್ನು ಧಾರಣಮಾಡಬಲ್ಲ ಹಾಗೂ ಅದನ್ನು ಪೋಷಿಸಬಲ್ಲ ನೈತಿಕ ಸಾಧನೆಯೇ ಧರ್ಮವೆನಿಸುವದು. ಆತ್ಮನ ಅಭ್ಯುದಯ ಮತ್ತು ಮುಕ್ತಿಯ ನಿಲವುಗಳನ್ನೊಳಗೊಂಡುದೇ ನಿಜವಾದಧರ್ಮವೆನಿಸುವದು. ಯಥಾರ್ಥವಾದ* ಧರ್ಮ ಮರ್ಮವನ್ನು ತಿಳಿಯದೇ ಪರಮತವನ್ನು ಗ್ರಹಿಸುವದು ಭಯಾಕನವೇ ಆಗಿದೆ. ಕ್ಷತ್ರಿಯನಾದ ಅರ್ಜುನನು ರಣರಂಗದಲ್ಲಿ ದಾಯಾದಿಗಳನ್ನು ಗುರುಗಳನ್ನು ಕಂಡು ಮೋಹವಿದ್ದಲವಾಗಿ ತನ್ನ ಕರ್ತವ್ಯ ಕರ್ಮವನ್ನು ಮರೆತು ಕೈಯಲ್ಲಿಯ ಬಿಲ್ಲು ಬಾಣಗಳನ್ನು ಕೆಳಗೆಸೆಯುತ್ತಾನೆ. ನಪುಂಸಕನಂತೆ ಕುಳಿತುಕೊಳ್ಳುತಿರಲು ಕೃಷ್ಣನು ಉಪದೇಶಿಸಬೇಕಾಯಿತು- ಅರ್ಜುನ ! ನೀನು ಕ್ಷತ್ರಿಯ, ಯುದ್ಧ ಮಾಡುವದೇ ನಿನ್ನ ಧರ್ಮ, ಯುದ್ಧದಲ್ಲಿ ಗೆದ್ದರೆ ರಾಜ್ಯ ನಿನ್ನದು. ಸತ್ತರೆ ವೀರಸ್ವರ್ಗ ಸಿಕ್ಕುವದು. ಮತ್ತು-

ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ನಿನ್ನ ಕ್ಷತ್ರಿಯ ಧರ್ಮದಲ್ಲಿ ಮಡಿದರೂ ಮುಕ್ತನಾಗುವಿ. ಅದುಕಾರಣ ಭಯಕ್ಕೆ ಕಾರಣವಾದ ಪರಧರ್ಮವನ್ನು ಅವಲಂಬಿಸುವದು ಬೇಡ. ಕ್ಷತ್ರಿಯನಿಗೆ ಅಧೈರ್ಯ ಮೋಹಗಳು ಹೇಡಿಯನ್ನಾಗಿಸುತ್ತವೆ. ಕೃಷ್ಣನ ಉಪದೇಶದಂತೆ ಕರ್ಮಸನ್ಯಾಸ ಭಾವದಿಂದ ಸ್ವಕರ್ತವ್ಯವನ್ನು ನಿರ್ವಹಿಸಿ ವೀರತನದಿಂದ ಕ್ಷತ್ರಿಯಧರ್ಮವನ್ನು ಕಾಪಾಡಿ, ಕಳೆದುಕೊಂಡ ತಮ್ಮ ರಾಜ್ಯವನ್ನು ಪುನಃ ಪಡೆದನು. ವೀರಶೈವನು ಸ್ವಧರ್ಮವಾದ ಲಿಂಗನಿಷ್ಠೆಯಲ್ಲಿ ತತ್ಪರನಾಗಬೇಕು. ತ್ರಿವಿಧ ಪೂಜ್ಯರನ್ನು ಗೌರವಿಸಬೇಕು ಲಿಂಗನಿಷ್ಠೆಯನ್ನು ತ್ಯಜಿಸದೆ ಅನ್ಯದೇವತೆಗಳಲ್ಲಿ ಮನವೆಳಸದಿದ್ದರೆ ಮಾತ್ರ ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವದು ಸಾರ್ಥಕವಾಗುವದು ಅಮಲೈಕ್ಯದಲ್ಲಿ ಲಿಂಗವನ್ನು ಧರಿಸಬಲ್ಲವನು ಲಿಂಗವೇ ತಾನಾಗುವನು. ಶಿವನು ವಿಷವನ್ನು ಕಂಠದಲ್ಲಿರಿಸಿಕೊಂಡು ನೀಲಕಂಠನಾದಂತೆ ಲಿಂಗವನ್ನು ಅಮಲೈಕ್ಯ (ಕಂಠ) ದಲ್ಲಿ ಧರಿಸಿಕೊಳ್ಳುವ ಸಂಪ್ರದಾಯ ಬಂದಿದೆ. ಈ ಯೋಗ್ಯತೆ ಬಹುಜನರಿಗೆ ಸಾಧ್ಯವಾಗುವದಿಲ್ಲ. ಅಜಗಣ್ಣನ್ನು ಕೃಷಿಕಾಯಕ ಮಾಡುತ್ತಿರಲು ಒಮ್ಮೆ

ಹೊಲದಲ್ಲಿ ಘಟಸರ್ಪವು ತನ್ನ ಹಣೆಯಲ್ಲಿಯ ದಿವ್ಯರತ್ನವನ್ನು ಮುಂದಿಟ್ಟು ರಾತ್ರಿ ಸಮಯ ಆ ಪ್ರಕಾಶದಲ್ಲಿ ಮೇಯುತ್ತಿದ್ದುದನ್ನು ಕಂಡನು. ಇವನ ಸಪ್ಪಳದಿಂದ ಜಾಗ್ರತೆಗೊಂಡ ಹಾವು ತನ್ನ ರತ್ನವನ್ನು ಹೆಡೆಯಲ್ಲಿ ಸೇರಿಸಿಕೊಂಡಿತು. ಆಗ ಅಜಗಣ್ಣನಿಗೆ- ಇಂಥ ಪ್ರಾಣಿಯೂ ಸಹ ತನ್ನ ರತ್ನವನ್ನು ಗೌಪ್ಯವಾಗಿಟ್ಟು ಕೊಳ್ಳುವಾಗ ನಾನೇಕೆ ನನ್ನ ವರರತ್ನವೆನಿಸಿದ ಇಷ್ಟಲಿಂಗವನ್ನು ಅಮಳೆಕ್ಯ ಮಾಡಿಕೊಳ್ಳ ಬಾರದು ! ಎಂದು ವಿಚಾರಿಸಿ ತನ್ನ ಜೀವನಾಂತ್ಯದವರೆಗೂ ಲಿಂಗವನ್ನು ಅಮಲೈಕ್ಯದಲ್ಲಿಯೇ ಧರಿಸುತ್ತಿದ್ದನ್ನು ನಿಷ್ಠಾವಂತನೆನಿಸಿ ನಿಜೈಕ್ಯ ಪದವಿಯನ್ನು ಸಾಧಿಸಿ ಮಹಾಶರಣನೆನಿಸಿದನು.ಚನ್ನಬಸವಣ್ಣನವರು ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವ ಔಚಿತ್ಯವನ್ನು

ಹಾಗೂ ಯೋಗ್ಯತೆಯನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ.

ಅಮಳೋಕ್ಯದಲ್ಲಿ ಲಿಂಗವ ಧರಿಸುವಡೆ

ಅನ್ನಪಾನಾದಿಗಳ ಹಂಗಳಿಯಬೇಕು;

ಅಹಂಕಾರ, ಮಮಕಾರ, ಅಷ್ಟಮದಂಗಳಳಿಯಬೇಕು;

ಅನುಭಾವ ಘನವೇದ್ಯವಾಗಬೇಕು;

ಕಾಮದ ಕಣ್ಣ ತೆರೆಯದಿರಬೇಕು;

ಶಬ್ದ ನಿಃಶಬ್ದವಾಗಬೇಕು;

ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು;

ಕೂಡಲ ಚನ್ನ ಸಂಗಯ್ಯನಲ್ಲಿ ಅಮಳೋಕ್ಯದಲ್ಲಿ ಲಿಂಗವ ಧರಿಸಿ

ಪರಮ ಪರಿಣಾಮಿಯಾಗಬೇಕು || ೯೦೯ ||

ಅಮಲೈಕ್ಯದಲ್ಲಿ ಲಿಂಗವನ್ನು ಧರಿಸುವ ಶರಣನ ಸತ್ಯಮವು ಇಂತಿದೆ. ಅನ್ನಪಾನಾದಿಗಳ ಹಂಗಳಿದು, ಪಾದೋದಕ ಪ್ರಸಾದಂಗಳಲ್ಲಿ ಶ್ರದ್ಧೆಯುಳ್ಳವನಾಗಬೇಕು, ಅಹಂಕಾರ,ಮಮಕಾರ, ಅಷ್ಟಮದಗಳಿಗೆ ಅವಕಾಶವಿಲ್ಲದಾಗಬೇಕು. ಅನುಭಾವವೇ ಮುಖ್ಯವಾಗಬೇಕು. ಕಣ್ಣ ನೋಟದಲ್ಲಿ ಕಾಮನಕಾಟವಳಿದು ಶಿವಮಯವಾಗಿ ಕಾಣುವ ನೋಟವು ಬಲಿಯಬೇಕು. ಲಿಂಗವಿಷಯವಲ್ಲದ ಶಬ್ದಗಳನ್ನು ಮಾತಾಡಲೂಬಾರದು ಕೇಳಲೂ ಬಾರದು. ಸಾಂಸಾರಿಕ ವ್ಯವಹಾರಕ್ಕಾಗಿ ಶಬ್ದಗಳನ್ನು ಬಳಸದೆ ಮಹಾಮಂತ್ರ ಜಪದಲ್ಲಿ ಮನಸ್ಸನ್ನು ಲೀನಗೊಳಿಸಿ ಬಾಹ್ಯ ಶಬ್ದಗಳನ್ನು ನಿಶ್ಯಬ್ದಗೊಳಿಸಬೇಕು. ಮಹಾಲಿಂಗದಲ್ಲಿಯೇ ಮನವು ಲೀನವಾದರೆ ಪರಮ ಪರಿಣಾಮಿಯೆನಿಸುವನು. ನಿಜೈಕ್ಯನಾಗುವನು.

ಇಂಥ ಸತ್ಯಮವನ್ನು ತಿಳಿಸಿ ಅಮಲೈಕ್ಯದಲ್ಲಿ ಲಿಂಗಧಾರಣೆಯನ್ನು ಬೋಧಿಸಿದ ಸದ್ಗುರುವೆ ! ಸದಾಕಾಲವೂ ನನ್ನವನಾಗಿರು. ನಿನ್ನವನನ್ನು ಲಿಂಗಮಯನನ್ನಾಗಿಸುವ ಶಕ್ತಿಯನ್ನು ಕರುಣಿಸು. ನಿನ್ನ ಕರುಣೆಯಿಲ್ಲದೆ ಅಂಗಾಂಗಗಳು ಲಿಂಗಗುಣವನ್ನು ಹೊಂದಲಾರವು.

ಪರಮೇಷ್ಟಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು  || ೧೩೪ ||

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಯಮವು, ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ. ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು ಪರರನ್ನೆಂದೂ ಬೇಡಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು. ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು.ಮನಬಂದಂತೆ ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು.ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾಕ್ರಮದಲ್ಲಿ ತಪ್ಪದಂತೆ ನಡೆಯಬೇಕು. ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯ ಶುದ್ಧ ನಡೆ ಮತ್ತು ನುಡಿಯು, ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ

ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣನವರು ಇಂಥ ಶರಣನ (ವರ್ಣನೆಯ) ನ್ನು ಮನವಾರೆ ಹೊಗಳಿದ್ದು ಗಮನೀಯವಾಗಿದೆ. ನೋಡಿ-

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

ಬಾಹ್ಯ ಪ್ರಪಂಚದ ಮಾತೇಕೆ ?

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಚಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

ಶ್ರೀಕಂಠ.ಚೌಕೀಮಠ

ಶ್ರೀ ರುದ್ರಮುನಿ ಶಿವಯೋಗಿ ಚರಿತೆ

ಸಂಪಾದಕರು:ಶ್ರೀಗುರುಕಂದ

ಪ್ರಕಾಶಕರು:ಶ್ರೀ.ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು .ಶಿವಯೋಗಾಶ್ರಮ,ಕಾಳೇನಹಳ್ಳಿ ಶಿಕಾರಿಪುರ ಶಿವಮೊಗ್ಗ.

ಈ ಗ್ರಂಥವನ್ನು ಪೂಜ್ಯ ಶ್ರೀ ಗುರುಕಂದ ( ಶ್ರೀ ಸ್ವಾಮಿ ಶಿವಾತ್ಮಾನಂದ ಪುರಿ) ಯವರು ದಿ.೮ ಅಕ್ಟೋಬರ್‌೨೦೨೩ ರಂದು ಆಶೀರ್ವದಿಸಿದರು. ಮಾರ್ಗದುದ್ದಕ್ಕೂ ಪುಸ್ತಕವನ್ನು ಕಣ್ಣಾಡಿಸುತ್ತಿದ್ದ ನನಗೆ ಒಂದು ವಿಶೇಷ ವಿಷಯವೊಂದು ಗೋಚರವಾಯಿತು.

ನಾನು ಹಲವುಬಾರಿ ಹಲವು ಪುಸ್ತಕಗಳನ್ನು ಓದುವಾಗ ಓದಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು ಎಂಬ ವಾಕ್ಯ ಬಹಳಬಾರಿ ಕೂತೂಹಲಕ್ಕೆಡೆಮಾಡಿತ್ತು.

ಆದರೆ ಈ ಪುಸ್ತಕ ಓದುವಾಗ ಒಂದು ಸನ್ನಿವೇಷವಂತೂ ಮಂತ್ರಮುಗ್ಧವನ್ನಾಗಿಸಿತು !.

ಶ್ರೀಗುರುಕಂದ ಅವರ  ಪುಸ್ತಕದ  ಕೆಲವು ಸಾಲುಗಳನ್ನೇ ಮತ್ತೆ ಮತ್ತೆ ಬರೆಯುತ್ತಿರುವೆ.

“ರುದ್ರಯ್ಯನ ಮುಖದಲ್ಲಿ ಶೋಭೆಗೊಂಡಿದ್ದ  ಶಿವಕಳೆಯನ್ನು ಶ್ರೀಕುಮಾರಸ್ವಾಮಿಗಳು ಸೂಕ್ಷ್ಮವಾಗಿ  ಗಮನಿಸಿದರು.ತನ್ನ ಮನದಿಂಗಿತವನ್ನು ನುಡಿಯಲಾಗದೆ ನಿಂತಿದ್ದ ರುದ್ರಯ್ಯನ ಬಯಕೆಯನ್ನು ಕೆಳದಿ ಶ್ರೀ ರೇವಣಸಿದ್ದ ಪಟ್ಟಾಧ್ಯಕ್ಷರು ನುಡಿದಿದ್ದರು.”ರುದ್ರಯ್ಯನ ಪ್ರೌಡಶಿಕ್ಷಣಕ್ಕೆ ಶಿವಯೋಗ ಮಂದಿರದಲ್ಲಿ ಅವಕಾಶ ಕಲ್ಪಿಸಿ ಬುದ್ಧಿ”

ಶ್ರೀಕುಮಾರಸ್ವಾಮಿಗಳು, ಕೆಳದಿ ಶ್ರೀಗಳವರ ಪ್ರಸ್ಥಾಪಕ್ಕೆ ಸಮ್ಮತಿಸಿದ್ದರು.ತಮ್ಮೊಡನೆ ರುದ್ರಯ್ಯ ಬರಲು ಅನುವಿತ್ತಿದ್ದರು.

ಆದರೆ ಶಿವಯೋಗಮಂದಿರದ ಆಡಳಿತ ವ್ಯವಸ್ಥೆಯ ವಿಶ್ವಸ್ಥ ಮಂಡಳಿ ವಯಸ್ಸಿನಲ್ಲಿ ಆಗಲೇ ಹಿರಿಯರಾಗಿದ್ದ ರುದ್ರಯ್ಯನಿಗೆ ಮಂದಿರದ ವಟುಗಳೊಂದಿಗೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ.”ಸ್ವಾಮಿಗಳು ತಮ್ಮ ಜೊತೆ ಯಾವುದೋ “ಕರೆಮರಿ” ಕರಕೊಂಡು ಬಂದು ಸೇರಿಸೋಕೆ ನೋಡ್ತಾರೆ” ಎಂದು ಒಬ್ಬ ಸದಸ್ಯರು ಲಘುವಾಗಿ ಮಾತನಾಡಿದ್ದರು. ರುದ್ರಯ್ಯ ಕಪ್ಪಾಗಿದ್ದರಿಂದ “ಕರೆ ಮರಿ” ಎಂದು ಕರೆದಿದ್ದರು ! .

ಮಂದಿರದ ನಿಯಮಗಳಲ್ಲಿ ವಯೋಮಾನ ಮೀರಿದ್ದ ರುದ್ರಯ್ಯನಿಗೆ ಪ್ರವೇಶ  ನಿರಾಕರಿಸಲ್ಪಟ್ಟಿದ್ದನ್ನು ತಮ್ಮ ಅಧಿಕಾರದಲ್ಲಿ ಶ್ರೀಕುಮಾರಸ್ವಾಮಿಗಳು ನಿಯಮ ಸಡಿಲಿಸಿ ಪ್ರವೇಶಕ್ಕೆ ಅನುವು ನೀಡಬಹುದಾಗಿತ್ತು;

ಆದರೆ ಅವರು ಹಾಗೆ ವರ್ತಿಸಲಿಲ್ಲ.

ಒಬ್ಬ ಯೋಗ್ಯ  ಸಾಧಕನಿಗೆ ಮಂದಿರದ ಶಿಕ್ಷಣ ಲಭ್ಯವಾಗಬೇಕೆಂದು ರುದ್ರಯ್ಯನನ್ನು ತಮ್ಮ ಸೇವಾ ಕಾರ್ಯಗಳಿಗೆ ಮರಿದೇವರಾಗಿ ಇರಿಸಿಕೊಂಡರು. ಶ್ರೀಕುಮಾರಸ್ವಾಮಿಗಳ ಮೊದಲ ದರ್ಶನದಲ್ಲೇ ತನ್ನ ನಿಜ ಗುರುವನ್ನು ದರ್ಶಿಸಿದ್ದ ಧನ್ಯತೆಯಲ್ಲಿ ಶ್ರೀ ಗುರು ಚರಣಕ್ಕೆ ಅಂತರಂಗದಲ್ಲೇ ಸರ್ವಾರ್ಪಣೆ ಮಾಡಿಕೊಂಡಿದ್ದ ರುದ್ರಯ್ಯ ಕೊನೆಗೂ ತನ್ನ ಶ್ರೀ ಗುರುವಿನ ಕೃಪಾಕಂದನಾಗಿ ಅವರ ಆಪ್ತವಲಯದೊಳಗೆ ಸೇರಿದ್ದ……

ಶ್ರೀಕುಮಾರಸ್ವಾಮಿಗಳು ಮಂದಿರದ ವಿದ್ಯಾರ್ಥಿಗಳೊಂದಿಗೆ ರುದ್ರಮುನಿದೇವರನ್ನೂ  ಪರೀಕ್ಷೆಗೆ  ವಿದ್ಯಾರ್ಥಿಯಂದು ನೊಂದಾಯಿಸಿದ್ದರು.ಒಬ್ಬ ಕಾರಕೂನರ ಜೊತೆ ಪರೀಕ್ಷೆ ಕಟ್ಟಿದ್ದ ವಿದ್ಯಾರ್ಥಿಗಳು ರೈಲಿನಲ್ಲಿ ಮುಂಬಯಿಗೆ ಹೋಗಿ ಪರೀಕ್ಷೆ ಬರೆದು ಬಂದಿದ್ದರು.ಫಲಿತಾಂಶ ಬಂದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.ರುದ್ರಮುನಿದೇವರು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಿದ್ದರು.ಆಗ ಶ್ರೀ ಕುಮಾರಸ್ವಾಮಿಗಳು “ಕರೆ ಮರಿ”  ಎಂದು ರುದ್ರಮುನಿ ದೇವರನ್ನು ಕರೆಯುತ್ತಿದ್ದವರಿಗೆ ಅರಿವಾಗುವಂತೆ “ಇವನು ಕರೆ ಮರಿಯಲ್ಲ ,ಖರೆ ಮರಿ” ಎಂದು ನುಡಿದಿದ್ದರು.

…….. ಶ್ರೀಕುಮಾರಸ್ವಾಮಿಗಳು ತಮ್ಮ ಖರೆ ಮರಿ ರುದ್ರಮುನಿ ದೇವರನ್ನುತಾವು ಸ್ಥಾಪಿಸಿದ್ದ ಕಾಳೇನಹಳ್ಳಿಯ   ಶಿವಯೋಗಾಶ್ರಮಕ್ಕೆ ಕಳುಹಿಸಲು ತಿರ್ಮಾನ ಮಾಡಿದರು……

……ವರುಷಕ್ಕೆರಡು ಮೂರು ಸಲ ಮಲೆನಾಡ ಪ್ರವಾಸಕ್ಕೆ ಬರುತ್ತಿದ್ದ ಶ್ರೀಕುಮಾರಸ್ವಾಮಿಗಳು ತಮ್ಮ ಮಾತನ್ನು ಪಾಲಿಸುತ್ತ ಸಾಧನೆಯಲ್ಲಿರುವ ಶ್ರೀರುದ್ರಮುನಿದೇಶಿಕರನ್ನುಕಂಡು ಆನಂದಗೊಳ್ಳುತ್ತಿದ್ದರು.೪೦೦ ಎಕರೆ ಜಮೀನಿನ ಕೃಷಿಗಾಗಿ ಆಗಿನ್ನೂ ಅಪರೂಪವಾಗಿದ್ದ ಟ್ರಾಕ್ಟರ ತರಿಸಿ ಶ್ರೀಕುಮಾರಸ್ವಾಮಿಗಳು ವ್ಯವಸ್ಥೆ ಮಾಡಿದರು.ಹೀಗೆ ಭೇಟಿಯಿತ್ತು ತಂಗುವ ತಮ್ಮ ನಿಜಗುರುವಿನಲ್ಲಿ ಶ್ರೀರುದ್ರಮುನಿ ದೇಶಿಕರು ಮುಂದಿನ ದೀಕ್ಷೆಗೆ ಪ್ರಾರ್ಥಿಸುತ್ತಿದ್ದರು.”ಇನ್ನೂ ಸಮಯ ಬಂದಿಲ್ಲ ತಾಳಿಕೋ” ಎಂದು ಶ್ರೀಕುಮಾರಸ್ವಾಮಿಗಳು ಒಂದೇ ಒಂದು ಮಾತನ್ನು ಪ್ರತಿಸಲವೂ ಹೇಳುತ್ತಿದ್ದರು.

ಶ್ರೀರುದ್ರಮುನಿ ದೇಶಿಕರು ಶಿವಯೋಗಾಶ್ರಮಕ್ಕೆ ಬಂದು ನಿಂತು ಹತ್ತು ವರುಷ ಉರಳಿದ್ದವು.ಅವರು ಪ್ರಾರ್ಥಿಸುತ್ತಿದ್ದ ಶಿವಯೋಗಮಾರ್ಗದ ಮುಂದಿನ ದೀಕ್ಷೆ ಇನ್ನೂ ಪ್ರಾಪ್ತವಾಗಿರಲಿಲ್ಲ.ಹೀಗಿರುವಾಗಲೇ ಶ್ರೀರುದ್ರಮುನಿ ದೇಶಿಕರ ಸಾಧನೆ ಸುಳಿಯೊಳಗೆ ಸಿಲುಕಿದಂಥ ಆಘಾತದ ಸುದ್ದಿ ಅವರನ್ನು ದಿಕ್ಕೆಡಿಸುವಂತೆ ಮಾಡಿತ್ತು.ತಮ್ಮ ನಿಜಗುರು,ತಮ್ಮ ಭವಕ್ಕಂಟಿದ್ದ ಬಂಧನವನ್ನು ತೊಡೆದುಕೊಳ್ಳಲು ಶಿವಯೋಗ ಮಾರ್ಗದಲ್ಲಿ ತಮ್ಮನ್ನು ತೊಡಗಿಸಿದ್ದ,ತಾವು ಸರ್ವಸ್ವವೆಂದು ನಂಬಿದ್ದ ಶ್ರೀಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದರು.

ತಮ್ಮ ಶ್ರೀಗುರುವಿನ ಅಗಲಿಕೆಯ ದುಃಖ ಶಮನಗೊಳ್ಳಲು ಶ್ರೀರುದ್ರಮುನಿ ದೇಶಿಕರಿಗೆ ಬಹಳಷ್ಟು ದಿನ ಹಿಡಿದವು.ಪೂಜೆಗೆ ಕುಳಿತಾಗ ತಮ್ಮ ನಿತ್ಯದ  ಕಾಯಕದಲ್ಲಿ ಮುಳುಗಿದಾಗ ಶ್ರೀಕುಮಾರೇಶನ ಮೂರ್ತಿ ಕಂಗಳೆದರು ಸುಳಿದು ನಿಲ್ಲುತ್ತಿತ್ತು,ಕಿವಿಯಲ್ಲಿ ಅವರ ನುಡಿಗಳು ಅನುರಣಿಸುತ್ತಿದ್ದವು. “ಹುಟ್ಟುಗುರುಡನಿಗೆ ಕೋಲ ಕೊಟ್ಟು ಕೈ ಬಿಟ್ಟಂತೆ,ಮುಟ್ಟಿ ಅಭಯವಿತ್ತು ಕೈ ಬಿಟ್ಟಿಯಾ ಕುಮಾರೇಶಾ…ನಿಮ್ಮಡಿಯ ಮರೆಸದಂತೆ ಮುನ್ನೆಡಸು ಕುಮಾರೇಶ..” ಎಂದು ಮೊರೆಯಿಡುತ್ತಿದ್ದರು.ಆಗ ಕನಸಿನಲ್ಲಿ ದರ್ಶನವಿತ್ತ ಶ್ರೀಕುಮಾರಸ್ವಾಮಿಗಳು “ಸಾಧಕ ಹೀಗೆ ದುಃಖಿಯಾಗಬಾರದು” ಎಂದಿದ್ದರು.ತಾವು ಸೂಕ್ಷ್ಮ ಕಾಯದಲ್ಲಿರುವ ಸುಳಿವು ನೀಡಿದ್ದರು.

ಮುಂದೆ ಕೆಲವು ದಿನ ಕಳೆಯುವದರಲ್ಲಿ ಶ್ರೀ ಶಿವಬಸವಸ್ವಾಮಿಗಳು ಶಿವಯೋಗಅಶ್ರಮಕ್ಕೆ ಆಗಮಿಸಿದರು.ಶ್ರೀಕುಮಾರ ಸ್ವಾಮಿಗಳ ಜೊತೆಗೂಡಿ ಬರುತ್ತಿದ್ದವರು ಈಗ ಒಬ್ಬರೇ ಬಂದಿರುವದನ್ನು ಕಂಡು ಶ್ರೀ ರುದ್ರಮುನಿ ದೇಶಿಕರಲ್ಲಿ ಮತ್ತೆ ತಮ್ಮ ಶ್ರೀಗುರುವಿನ ಅಗಲಿಕೆ ಪುಟಿದಿದ್ದರೂ ದುಃಖವನ್ನು ಹತ್ತಿಕ್ಕಿಕೊಂಡಿದ್ದರು.ತಮ್ಮ ಕೊನೆ ಕ್ಷಣಗಳಲ್ಲಿ ಶ್ರೀಕುಮಾರಸ್ವಾಮಿಗಳು ಶಿವಯೋಗಮಂದಿರವನ್ನು ,ಸಾಧಕ-ವಟುಗಳನ್ನು ತಮ್ಮ ಮಡಿಲಿಗೆ ಹಾಕಿರುವ ನುಡಿಯನ್ನು ನುಡಿದಿದ್ದು ಶ್ರೀರುದ್ರಮುನಿ ದೇಶಿಕರನ್ನುಕಂಡಾಗ ಶ್ರೀಶಿವಬಸವಸ್ವಾಮಿಗಳಿಗೆ ನೆನಪಾಗಿತ್ತು.ಪೂಜಾದಿಗಳನ್ನು ಮುಗಿಸಿ ಶ್ರೀಶಿವಬಸವ ಸ್ವಾಮಿಗಳು ಒಂದೆರಡು ದಿನ ತಂಗುವದಾಗಿ ತಿಳಿಸಿದರು.ಶ್ರೀರುದ್ರಮುನಿ ದೇಶಿಕರು ದುಗುಡಗೋಳ್ಳದಿರಲು ಹಿತೋಕ್ತಿಗಳನ್ನು ಹೇಳಿದರು.ದೇಶಿಕರು ಮೌನವಾಗಿ ಆಲಿಸಿದರು.

ಶಿವಯೋಗಾಶ್ರಮದಲ್ಲಿ ತಂಗಿದ್ದ ಶ್ರೀಶಿವಬಸವಸ್ವಾಮಿಗಳು ಅಂದು ಬಿಲ್ವ ವೃಕ್ಷದ ಕಟ್ಟೆಯಮೇಲೆ ಆಸೀನರಾಗಿದ್ದರು.

ದೃಷ್ಠಿಕಂಗೆಳೆದುರಿನ ಕುಮುದ್ವತಿಯಲ್ಲಿ ನೆಟ್ಟಿತ್ತು.ತೀಡುವ ಗಾಳಿಯ ಸುಯಿಲು ಕೂಡ ನಿಂತು ನಿಶ್ಚಲವಾಗಿತ್ತು.ತಮ್ಮ ಬೆನ್ನಿನ ಮೇಲೆ  ಯಾರೋ ನಿಧಾನವಾಗಿ ಅಕ್ಷರಗಲನ್ನು ಬರೆಯುತ್ತಿರುವ ಭಾಸವಾಯಿತು.

ಶ್ರೀಶಿವಬಸವ ಸ್ವಾಮಿಗಳು ಧ್ಯಾನಸ್ಥರಾಗಿ ತಮ್ಮ ಬೆನ್ನಿನ ಬರಹವನ್ನು ಗುರುತಿಸಲಾರಂಭಿಸಿದರು.”ರುದ್ರಮುನಿ ದೇಶಿಕರಿಗೆನಿರಂಜನ ಸ್ಥಲ ದೀಕ್ಷೆ ದಯಪಾಲಿಸುವದು” ಸಂದೇಶ ಪೂರ್ಣಗೊಂಡಾಗ ಇದು ಶ್ರೀಕುಮಾರಸ್ವಾಮಿಗಳ ಸೂಚನೆ ಎಂದು ಶ್ರೀಶಿವಬಸವ ಸ್ವಾಮಿಗಳಿಗೆ ಅರಿವಾಗಿತ್ತು. ಶ್ರೀ ರುದ್ರಮುನಿ ದೇಶಿಕರು ಈಗ ನಿಮ್ಮ ಬೆನ್ನು ಬಿದ್ದಿದ್ದಾರೆ ಎನ್ನುವದನ್ನು ಹೀಗೆ  ಶ್ರೀಕುಮಾರಸ್ವಾಮಿಗಳು ತಮಗೆ ತಿಳಿಸಿದ್ದು ಶ್ರೀ ಶಿವಬಸವ ಸ್ವಾಮಿಗಳಿಗೆ ಆಶ್ಚರ್ಯವಾಗಿತ್ತು.

ಈ ವಿಷಯವನ್ನು ಶ್ರೀ ರುದ್ರಮುನಿ ದೇಶಿಕರಿಗೆ ತಿಳಿಸಿದರು. ತಮ್ಮ ಅಂತರಂಗದ ಪ್ರಾರ್ಥನೆ ಫಲಿಸುವಂತೆ ತಮ್ಮನ್ನು ಉದ್ದರಿಸಲು ಶ್ರೀಕುಮಾರ ಸ್ವಾಮಿಗಳು ತೋರಿರುವ ಲೀಲೆ ಶ್ರೀರುದ್ರಮುನಿ ದೇಶಿಕರಿಗೆ “”ಸೂಕ್ಷ್ಮ ಕಾಯದಲ್ಲಿದ್ದೇವೆ”” ಎಂದು ನೀಡಿದ್ದ ಸುಳಿವಿಗೆ ಸಾಕ್ಷಿಯಂತೆ ಕಂಡಿತ್ತು…

ಗ್ರಂಥದ ಲೇಖಕರಾದ ಶ್ರೀಗುರುಕಂದ ಅವರ  ಕಣ್ಣಿಗೆ ಕಟ್ಟುವ ಈ ಸನ್ನಿವೇಷದ ವರ್ಣನೆ ಸರಳ ಭಾಷೆಯಲ್ಲಿ ಬಳಸಿದ ಒಂದು ಅವಿರಳ ಶಬ್ಧ  “ಸೂಕ್ಷ್ಮ ಕಾಯದಲ್ಲಿದ್ದೇವೆ” ಪುಸ್ತಕದ ಪುಟ-ಪುಟಗಳಲ್ಲಿ ಮತ್ತು ಶ್ರೀ ರುದ್ರಮುನಿ ಶಿವಯೋಗಿಗಳ ಲೀಲೆಗಳಲ್ಲಿ ಪ್ರತಿಧ್ವನಿಸಿತು. ಹಾಗೆಯೇ ಶ್ರೀಶಿವಬಸವ ಸ್ವಾಮಿಗಳಿಗಳ ಬೆನ್ನ ಮೇಲೆ ಮೂಡಿದ ಸಂದೇಶ ನನ್ನ ಕೂತೂಹಲದ ವಾಕ್ಯ “ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು “ ಎಂಬ ವಾಕ್ಯಕ್ಕೆ ಖಚಿತ ಸಾಕ್ಷಿ ನೀಡಿತು .

  • ಶ್ರೀಕಂಠ.ಚೌಕೀಮಠ

೧೦-೧೦-೨೦೨೩

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಇಂತಪ್ಪ ಲಿಂಗದಾ | ದ್ಯಂತ ಷಡುಸ್ಥಾನದೊಳು

ದಾಂತಾದಿ ಮಾಂತ-ಮಂತ್ರ ಮೂಲವ ತೋರಿ

ದಂತಪ್ಪ ಗುರುವೆ ಕೃಪೆಯಾಗು   ೧೨೬ |

ಮೇಲೆ ವಿವರಿಸಿದಂಥ ಈ ಇಷ್ಟಲಿಂಗದ ಆದ್ಯಂತಗಳೆನಿಸಿದ ವೃತ್ತ, ಕಟಿ ವರ್ತುಳ, ಗೋಮುಖ, ನಾಳ, ಚಿತ್ಪೀಠಗಳೆಂಬ ಆರು ಸ್ಥಾನಗಳಲ್ಲಿ ಕ್ರಮವಾಗಿ ನ ಕಾರ; ‘ಮ’ ಕಾರ; ‘ಶಿ’ ಕಾರ; ‘ವಾ’ ಕಾರ; ‘ಯ’ ಕಾರ; ಹಾಗೂ `ಓಂ’ ಕಾರಗಳೆಂಬ ಷಣ್ಮಂತ್ರವನ್ನು ತೋರಿಸಿದಂತಪ್ಪ ಸದ್ಗುರುವೆ ಕೃಪೆಯಾಗು ಎಂದು ಶಿವಕವಿಯು ಲಿಂಗಷಟ್‌ಸ್ಥಲಗಳಲ್ಲಿ ಷಡಕ್ಷರ ಮಂತ್ರದ ವ್ಯಾಪಕತೆಯನ್ನು ಹಾಗೂ ಮರ್ಮವನ್ನು ವಿವರಿಸಿ ಉಪಸಂಹಾರಗೊಳಿಸಿದ್ದಾನೆ. ಲಿಂಗದ ಷಟ್‌ಸ್ಥಾನಗಳನ್ನು ವಿಭಾಗಿಸಿ ಮಂತ್ರಗಳನ್ನು ಸಂಬಂಧಿಸುವ ಪರಿಯು ಶರಣಕವಿಯ ಮಂತ್ರಮಹತ್ವವನ್ನು ವ್ಯಕ್ತಗೊಳಿಸಿದೆ.

‘ದಾಂತಾದಿ ಮಾಂತ ಮಂತ್ರಮೂಲ’ ವೆಂಬ ವಾಕ್ಯ ಪ್ರಯೋಗದಿಂದ ಷಡಕ್ಷರ ಮಹಾಮಂತ್ರದ ಸುಂದರಸ್ವರೂಪ ಹೊರಹೊಮ್ಮಿದೆ. ಇಲ್ಲಿ ಶಿವಕವಿಯ ವೈಯಾಕರಣದ ಜ್ಞಾನ ವಿಸ್ತಾರತೆಯೂ ವಿಸ್ತೃತಗೊಂಡಿದೆ. ದಾಂತವೆಂದರೆ ತವರ್ಗದ ಅಂತ್ಯಾಕ್ಷರವು ‘ನ’ ಕಾರ. ನಕಾರವೇ ಆದಿಯಾಗಿಯುಳ್ಳ. ಮಾಂತದ ಆದಿಯಾದ ಅಕ್ಷರ ‘ಯ’ ಕಾರವು . ಅರ್ಥಾತ್ ಪವರ್ಗದ ಅಂತಿಮಾಕ್ಷರ ಮಕಾರ. ಈ ಮಕಾರದ ಮೇಲೆ ಆದಿಯಾಗಿ ಬರುವ ಅಕ್ಷರವೇ ಯಕಾರವು . ನಕಾರಾದಿ ಯಕಾರ ಕಡೆಯಾದ ಮಂತ್ರವೆ೦ದಾಗುವದು. ಇನ್ನು ”ಮಂತ್ರ ಮೂಲ’ ವೆಂದರೆ ಈ ಮೇಲಿನ ಪಂಚಾಕ್ಷರಿ ಮಂತ್ರಕ್ಕೆ ಆಧಾರವಾದ ಪ್ರಣವವೇ ಓಂಕಾರವು. ಇಲ್ಲಿ ಈ ದಾರ್ಶನಿಕ ಶಿವಕವಿಯು ವ್ಯಾಕರಣ ಜ್ಞಾನವೂ ಚಮತ್ಕಾರಿಕ ರೀತಿಯಲ್ಲಿ ಪ್ರಕಟಗೊಂಡಿದೆ.

ಈ ಷಡಕ್ಷರ ಮಹಾಮಂತ್ರದ ಷಟ್‌ತತ್ತ್ವವನ್ನು ‘ಶಿವತತ್ತ್ವ ರತ್ನಾಕರದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ-

ಯಕಾರಃ ಪರಿಪೂರ್ಣತ್ವಂ ವಾಕಾರೋ ನಿತ್ಯಮೇವ ಚ |

 ಆನಂದಶ್ಚ ಶಿಕಾರಃ ಸ್ಯಾತ್ ಮಕಾರಶ್ಚಿತ್ ಸ್ವರೂಪಕಃ ||

ನಕಾರಃ ಸತ್‌ ಸ್ವರೂಪಂ ಚ ಪ್ರಣವೋ ವಿಶ್ವರೂಪಕಃ |

ಶಿವನು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣವಾಗಿ ವ್ಯಾಪಕನಾಗಿರುವಂತೆ ಶಿವಾತ್ಮಕವಾದ ಈ ಮಹಾಮಂತ್ರವೆನಿಸಿದ ಷಡಕ್ಷರವೂ ಶಿವನ ಷಟ್‌ಸ್ವರೂಪಗಳನ್ನು ಒಳಗೊಂಡಿದೆ. ಯಕಾರವು ಪರಿಪೂರ್ಣತ್ವವನ್ನು ಹೊಂದಿದ್ದರೆ ವಾಕಾರವು ನಿತ್ಯತ್ವದ

ದ್ಯೋತಕವಾಗಿದೆ. ಶಿಕಾರವು ಆನಂದಮಯವೆನಿಸಿದರೆ ಮಕಾರವು ಜ್ಞಾನ ಸ್ವರೂಪವುಳ್ಳುದಾಗಿದೆ. ನಕಾರವು ಸತ್‌ಸ್ವರೂಪವನ್ನು ಪಡೆದು ಓಂಕಾರ ಪ್ರಣವವು ವಿಶ್ವವ್ಯಾಪಕತ್ವ ರೂಪವನ್ನು ಧರಿಸಿದೆ. ಅಂತೆಯೇ ಓಂಕಾರದಲ್ಲಿ ಸಕಲವು ಗರ್ಭೀಕರಿಸಿದೆ. ಹೀಗೆ ಷಟ್‌ಪ್ರಣವಗಳಲ್ಲಿ ಒಂದೊಂದು ಶಿವತತ್ತ್ವಸ್ವರೂಪವು ಸನ್ನಿಹಿತವಾಗಿದೆ. ಇಂಥ ಶಿವತತ್ತ್ವಭರಿತವಾದ ಮಹಾಮಂತ್ರವು ಅಸಾಧಾರಣ ಶಕ್ತಿಯುಳ್ಳುದು. ಇಂಥ ಷಣ್ಮಂತ್ರಭರಿತ ಇಷ್ಟಲಿಂಗವೂ ಅನುಪಮವಾದುದು. ಓ ಪರಮ ಗುರುವೆ

ಮಂತ್ರಮಯ ಮಹಾಲಿಂಗವನ್ನು ಅಂಗವಿಸಿಕೊಳ್ಳು ವಂತೆ ಹರಸು.

ತನಯ ಪೇಳುವೆ ನಿನ್ನ    | ತನುವಿನೊಳಗೀ ಲಿಂಗ

ವನು ಧರಿಸಿಕೊಂಬ ಘನ ಚಾರಿತ್ರವ ಕೇಳೆಂ

 ದನಘ ಶ್ರೀಗುರುವೆ ಕೃಪೆಯಾಗು   ||೧೨೭||

ಶ್ರೀಗುರುವು ಶಿಷ್ಯನ ತತ್ತ್ವಜಿಜ್ಞಾಸಾಭಾವವನ್ನು ಅರಿತು ಇಷ್ಟಲಿಂಗದ ಲಕ್ಷಣ-ಸ್ವರೂಪ ಹಾಗೂ ಮಹತ್ವವನ್ನು ತಿಳುಹಿ ಸದ್ಯಃ ಅಂಥ ಲಿಂಗವನ್ನು ಧರಿಸಿ ಕೊಳ್ಳುವ ಸ್ಥಾನವನ್ನು ಮತ್ತು ಯೋಗ್ಯತೆಯನ್ನು ತಿಳಿಸುವವನಾಗುತ್ತಾನೆ.

 “ಸದ್ಗುರು ಕರಕಮಲದಲ್ಲಿ ಸಂಜಾತನಾದ ತನಯನೆ ! ಚಿತ್ತವಿಟ್ಟು ಕೇಳು. ನಾನು ಪೇಳುವ ನುಡಿಗಳಲ್ಲಿ ಪರಮಪಾವನವೂ ದಿವ್ಯವೂ, ಭವ್ಯವೂ ಆದ ಈ ಇಷ್ಟಲಿಂಗವನ್ನು ಯಾವ ಯಾವ ಸ್ಥಾನಗಳಲ್ಲಿ ಯಾವ ಯಾವ ತತ್ತ್ವವನ್ನರಿತು ಘನತೆ ಪಡೆದು ಧರಿಸಿಕೊಳ್ಳಬೇಕೆಂಬ ಘನವಾದ ಚಾರಿತ್ರವಿದೆ. ಇಂಥ ಅನುಪಮ ಚರಿತ್ರವನ್ನರಿಯದೆ ಧರಿಸುವ ಲಿಂಗಧಾರಣೆ ಭಾರವಾದೀತು. ಹಾಗೆ ಧರಿಸಿದರೆ ಯಾವ ಪ್ರಯೋಜನವೂ ಎನಿಸದು. ಅದುಕಾರಣ ಅದರ ಮರ್ಮವನ್ನರಿತು ಧರಿಸುವದು ಪ್ರತಿಯೊಬ್ಬ ವೀರಶೈವನ ಕರ್ತವ್ಯವಾಗಿದೆ. ಅಲ್ಲಿಯೇ ವೀರಪದದ ಸಾರ್ಥಕತೆಯಿದೆ. ದಿವ್ಯತೆಯಿದೆ; ಭವ್ಯತೆಯಿದೆ. ಲಿಂಗಧಾರಣ ಚಾರಿತ್ರತೆಯ ಎಚ್ಚರಿಕೆಯನ್ನರಿತು  ಧರಿಸುವ ಭಕ್ತನೇ ನಿಜ ವೀರಶೈವನಾಗುವನು” ಎಂದ ಮುಂತಾಗಿ ಮಮತೆಯಿಂದ ಅಘ (ಪಾಪ) ರಹಿತನಾದ ಸದ್ಗುರುನಾಥನು ಸದುವಿನಯಶೀಲ ಶಿಷ್ಯನಿಗೆ ಬೋಧಿಸುತ್ತಾನೆ.

 ಲಿಂಗಧಾರಣೆಯ ಅಸಾಧಾರಣತೆಯನ್ನು ಮೈಗೂಡಿಸಿಕೊಂಡ ಶ್ರೀಗುರುವೇ ಅನಘನೆನಿಸುವನು. ಘನತೆವೆತ್ತವನಾಗುವನು. ಲಿಂಗಧಾರಣೆಯ ಸಾರ್ಥಕ್ಯವನ್ನು ಸಾಧಿಸಿದ ಚನ್ನವೀರ ಯತಿಗಳ ಶಿಷ್ಯನೆನಿಸಿದ ಈ ದಾರ್ಶನಿಕ ಶರಣನು ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿದ್ದನೆಂಬುದು ಧ್ವನಿತವಾಗುತ್ತದೆ. ಆತನ ವೀರತ್ವದ ಕೆಚ್ಚು ಮೆಚ್ಚುವಂಥಹದು. ಮುಂದೆ ಕ್ರಮವಾಗಿ ಲಿಂಗಧಾರಣೆಯ ವಿವರವನ್ನು ವಿವರಿಸುತ್ತಾನೆ.

ನರಮಾನವರಿಗೊಮ್ಮೆ | ಕರವೊಡ್ಡಿ ಬೇಡುವಾ-

ಚರಣೆಯನೆ ಉಳಿದು-ಕರಪೀಠದೊಳು ಲಿಂಗ

ಧರಿಸೆಂದ ಗುರುವೆ ಕೃಪೆಯಾಗು   || ೧೨೮ ||

ಶರೀರದಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಸ್ಥಾನಗಳು ಆರು. ೧) ಕರ, ೨) ಕಕ್ಷೆ, ೩) ಉರ, ೪) ಶಿರ, ೫) ಮುಖಸೆಜ್ಜೆ, ೬) ಅಮಳೈಕ್ಯವೆಂದು ಆರು ಲಿಂಗಧರಿಸುವ ಅವಯವಗಳು. ಕರಪೀಠಾದಿಗಳಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಯೋಗ್ಯತೆ ಹೇಗಿರಬೇಕೆಂಬ ಮರ್ಮವನ್ನು ಕ್ರಮಶಃ ನಿರೂಪಿಸುತ್ತಾನೆ.

 ಸದ್ಗುರುನಾಥನು ಶಿರದ ಸಹಸ್ರದಳಕಮಲ ಮಧ್ಯದ ಕಳೆಯನ್ನು ತನ್ನ ಭಾವಕ್ಕೆ ಭಾವದಿಂದ ಶಿಷ್ಯನ ಮನದಲ್ಲಿ ತಂದು ಆ ಮನದಿಂದ ನೇತ್ರದ್ವಾರಾ ಕರಕಮಲಕ್ಕೆ ಇಷ್ಟಲಿಂಗವನ್ನಾಗಿ ಮೂರ್ತಗೊಳಿಸುತ್ತಾನೆ. ಪ್ರಾಣ ಮತ್ತು ಭಾವಗಳನ್ನು ಒಳಗೊಂಡ  ಇಷ್ಟಲಿಂಗವನ್ನು ಧರಿಸುವ ಕರವು ಪರಮಪವಿತ್ರವಾಗಿರಬೇಕು. ಹಸ್ತಹಸನವಾಗದೇ ಶಿವನ ಪ್ರಸನ್ನತೆ ಪ್ರಾದುರ್ಭವಿಸುವದಿಲ್ಲ. ಶಿವಲಿಂಗವನ್ನು ಧರಿಸಿಕೊಳ್ಳುವ ಕೈಯು ಬೇರೊಬ್ಬ ನರನನ್ನು ಮರೆತೂ ಬೇಡಬಾರದು. ನರ ಮತ್ತು ಮಾನವ ಶಬ್ದಗಳು ಸಮಾನಾರ್ಥಕವಾಗುವದರಿಂದ ಶಿವಕವಿಯು ದ್ವಿರುಕ್ತಿದೋಷಕ್ಕೆ ಗುರಿಯಾಗಬೇಕಾಗುವದು. ಆದರೆ ನರ ಮತ್ತು ಮಾನವ ಪದಗಳೆರಡನ್ನು ಪ್ರಯೋಗಿಸುವಲ್ಲಿ ಧ್ವನಿಯಿದೆ. ವ್ಯಂಜನವಿದೆ. ಸಾಂಕೇತಿಕತೆಯಿದೆ. ಇಷ್ಟಲಿಂಗವನ್ನು ಧರಿಸಿಕೊಳ್ಳುವ ಭಕ್ತನು ಯಾರೊಬ್ಬರನ್ನು ಕೈಯೊಡ್ಡಿ ಬೇಡಬಾರದೆಂಬ ಅರ್ಥ ವಿಸ್ತಾರವು ವ್ಯಾಪಿಸಿದೆ. ದ್ವಿರುಕ್ತಿ ದೋಷದ ಲವಶೇವೂ ಶಿವಕವಿಗೆ ಸೋಂಕುವದಿಲ್ಲ.

ಆದಾನ-ಪ್ರದಾನಗಳೇ ಕರದ ಕರ್ಮವಾಗಿದ್ದರೂ ಪ್ರದಾನ ಗುಣವೇ ತನ್ನದಾಗಬೇಕು. ಕಾಯಕವನ್ನು ಮಾಡಿ ಗುರು-ಲಿಂಗ-ಜಂಗಮಕ್ಕೆ ಸಲ್ಲಿಸುವ ಕರ್ತವ್ಯ ಭಕ್ತನದಾಗಬೇಕು. ಜೊತೆಗೆ ಆ ಪೂಜ್ಯರಿಂದ ಪಾದೋದಕ ಪ್ರಸಾದಗಳಿಗಾಗಿ ಕೈಯೊಡ್ಡಬೇಕಲ್ಲದೆ ತನ್ನ ಹೊಟ್ಟೆ ಹೊರೆಯಲು ಸತಿ-ಸುತರನ್ನು ಸಲುಹಲು ಕನಸಿನಲ್ಲಿಯೂ ಮಾನವರನ್ನು ಯಾಚಿಸಬಾರದು.

. ಭವಿಗಳನ್ನಂತೂ ಎಂದೂ ಬೇಡಬಾರದು. ಅವರ ಪದಾರ್ಥಗಳು ತನ್ನ ಶಿವಲಿಂಗಕ್ಕೆ ಸಲ್ಲಲಾರವು.  

 ‘’ಧರೆಗೆ ಯಾಚನೆಯಿಂದ ಲಘುತನಮುಂಟೆ ?’’

ನಿಜಗುಣ ಶಿವಯೋಗಿಗಳು ಯಾಚನೆಯ ಲಘುತ್ವವನ್ನು ಪ್ರತಿಪಾದಿಸಿರುವರು. ಬೇಡುವದು ಬಹುಕೀಳುತನ, ಬೇಡುವಕೈಯಿಂದ ಕಾಯಕಮಾಡಿ ದಾಸೋಹಿಯಾಗಿ ನೀಡಿ ಗುರುಪ್ರಸಾದವನ್ನು ಪಡೆಯಬೇಕು. ಲಿಂಗಭಕ್ತನು ಎಂದೂ ಯಾವ ಯಾವ ಕಾಲದಲ್ಲಿಯೂ ಇತರರನ್ನು ಬೇಡಬಾರದೆಂದು ಶರಣರು ಕಾಯಕದ ಕಟ್ಟಳೆಯನ್ನು ಕಟ್ಟಿದರು. ಕಲ್ಯಾಣದಲ್ಲಿ ಬೇಡದ ಜನರಿಲ್ಲವೆಂದೇ ಅಣ್ಣನವರು- “ಬೇಡವವರಿಲ್ಲದೇ ಬಡವನಾದೆನಯ್ಯಾ !” ಎಂದು ಉದ್ಗಾರ ತೆಗೆದರು. ಶರಣ ಸಂತತಿಗೆಲ್ಲ ಕಾಯಕ ನಿಯಮವನ್ನು ಕಲ್ಪಿಸಿಕೊಟ್ಟು ಸಮಾಜವನ್ನು ಸಮೃದ್ಧಗೊಳಿಸಿದರು. ಆರ್ಥಿಕ ಸಮತೋಲನವನ್ನು ತಂದುಕೊಟ್ಟರು. ದುರಾಶೆಯ ದುಷ್ಟ ಬೀಜವನ್ನು ಹುರಿದು ಹಾಕಿದರು. ಸಂತೃಪ್ತಿಯ ಜೀವನದ ಸಂಜೀವಿನಿಯನ್ನು ತಂದುಕೊಟ್ಟರು. ಕಾಯಕವು

ಶರಣರಿಗೆ ಮರುಜೇವಣಿಯಾಯಿತು.

 ಕಾಯಕಲ್ಪದಿಂದ ಕರಸ್ಥಲವೂ ಪರಸ್ಥಲವಾಗಬಲ್ಲುದು. ಜ್ಞಾನನಿಧಿ ಚನ್ನಬಸವಣ್ಣ ನವರು ಕರಸ್ಥಲದ ನಿಜವನ್ನು ನಿಚ್ಚಳವಾಗಿ ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ-

ಕರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ

ಲಿಂಗದಲ್ಲಿ ಅನಿಮಿಷದೃಷ್ಟಿಯಾಗಿರಬೇಕು.

ತನ್ನ ತಾನೇ ಅನಿಮಿಷನಾಗಿರಬೇಕು.

ಜಂಗಮದ ನಿಲುಕಡೆಯನರಿಯಬೇಕು.

ಪ್ರಸಾದದಲ್ಲಿ ಪರಿಪೂರ್ಣನಾಗಿರಬೇಕು.

ಹಿರಣ್ಯಕ್ಕೆ ಕೈಯಾನದಿರಬೇಕು.

ತನ್ನ ನಿಲುಕಡೆಯ ತಾನರಿಯದಿರಬೇಕು

ಇದು ಕಾರಣ ಕೂಡಲ ಚನ್ನ ಸಂಗಯ್ಯನಲ್ಲಿ

ಕರಸ್ಥಲದ ನಿಜವನರಿವಡೆ ಇದೇ ಕ್ರಮ

ಕರಸ್ಥಲದಲ್ಲಿ ಲಿಂಗಧಾರಣವಾದ ಮೇಲೆ ಲಿಂಗಭಕ್ತನ ಅನಿಮಿಷ ದೃಷ್ಟಿಯಾಗಬೇಕು. ಎಲ್ಲವೂ ಲಿಂಗಮಯವಾಗಿ ಕಾಣಬೇಕು. ಲಿಂಗದ ಹರಣ ಜಂಗಮವೆಂದರಿದು ಕಾಯಕದಿಂದ ದಾಸೋಹ ಮಾಡಬೇಕು. ಜಂಗಮದ ಶೇಷ ಪ್ರಸಾದದ ಮಹತ್ವವನ್ನರಿತು ಪರಿಪೂರ್ಣವಾಗಿ ತೃಪ್ತಮನವುಳ್ಳವನಾಗಿರ ಬೇಕು. ಹೀಗಾದ ಬಳಿಕ ಅನ್ಯರ ಧನಕ್ಕೆ ಕೈಯಾನದಿರಬೇಕು. ಆಶಿಸದಿರಬೇಕು. ಕೇವಲ ತನ್ನತನ (ಸ್ವಾರ್ಥ) ಕ್ಕಾಗಿ ಸಂಗ್ರಹಿಸಿದ ಧನವು ತ್ರಿವಿಧ ದಾಸೋಹವೆನಿಸದು. ತ್ಯಾಗದಿಂದ ಭೋಗವಾಗಬೇಕು. ಅಂದರೆ ತ್ಯಾಗಾಂಗ ಶುದ್ಧಿ. ಪ್ರಸಾದ ಭೋಗದಿಂದ ಭೋಗಾಂಗ ಶುದ್ಧಿಯಾದೀತು. ಇಂಥ ನಿಜಾಚರಣೆಯು ಕರಸ್ಥಲವನ್ನು ಪರಸ್ಥಲ (ಲಿಂಗಸ್ಥಲ) ವನ್ನಾಗಿಸುವದು ಎಂದು ಬೋಧಿಸಿದ ಬೋಧಾಗುರುವೆ ! ಭವದ ಬೇರಾದ ಬೇಡುವಿಕೆಯನ್ನು ಬಹುದೂರಗೊಳಿಸು.

ಬೇಡುವಿಕೆಯು ತೀರ ಸಾಮಾನ್ಯವಾದುದು. ಬೇಡುವ ಕೈಯು ಕೆಳಗಿರುವದಲ್ಲದೆ; ನೀಡುವವನ ಕರ ಮೇಲಾಗಿರುತ್ತದೆ. ಬೇಡುವದರಿಂದ ಜೀವನವೇ ಕೀಳೆನಿಸುವದು. ನೀಡುವವನು ಮೇಲೆನಿಸುವನು. ದಾನಗುಣ ಅವರ್ಣನೀಯವಾದುದು.

ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು |

ಪರಿಣಾಮವಕ್ಕು ಪದವಕ್ಕು ಕೈಲಾಸ

ನೆರೆಮನೆಯು ಅಕ್ಕು ಸರ್ವಜ್ಞ || ಸ. ವ. ೬೦೪ ||

ಕೊಡುವಾತನೇ ಹರನು ಪಡೆವಾತನೇ ನರನು |

ಒಡಲ ಒಡವೆಗಳು ಕೆಡೆದು ಹೋಗದ ಮುನ್ನ

ಕೊಡು ಪಾತ್ರವರಿದು ಸರ್ವಜ್ಞ || ೬೧೯ ||

ಆಗ ಬಾ, ಈಗ ಬಾ, ಹೋಗಿ ಬಾ ಎನ್ನದಲೆ

ಆಗಲೇ ಕರೆದು ಕೊಡುವವನ ಧರ್ಮ ಹೊ-

ನ್ನಾಗದೆ ಬಿಡದು ಸರ್ವಜ್ಞ || ೨೨ ||

ಎಂದು ಮುಂತಾಗಿ ಸರ್ವಜ್ಞ ಕವಿಯು ದಾನದ ಅಪಾರ ಮಹಿಮೆಯನ್ನು ಮುಕ್ತ ಕಂಠದಿಂದ ಬಣ್ಣಿಸಿದ್ದಾನೆ. ಮಾನವನು ಸ್ವಭಾವತಃ ಲೋಭಿಯು. ಲೋಭಗುಣ ಅಂಟಿಕೊಂಡಿರುತ್ತದೆ. ಈ ಆಶಾಪಾಶವು ತೆರಣಿಯ ಹುಳದಂತೆ ಸುತ್ತಿಕೊಂಡು ತನ್ನನ್ನೇ ನಾಶಪಡಿಸುವದು. ಆಶೆಯು ನಿರಾಶೆಯಾಗಿ ಪರಿವರ್ತನ ಹೊಂದಬೇಕಾದರೆ ಬೇಡುವ ಕರ ನೀಡುವಂತಾಗಬೇಕು. ಭಿಕ್ಷೆ ಬೇಡುವ ಭಿಕ್ಷುಕನು ನೀಡುವವರಿಗೆ ಉತ್ತಮ ಉಪದೇಶವನ್ನೇ ನೀಡುತ್ತಾನೆ-ಹಿಂದಿನ ಜನ್ಮದಲ್ಲಿ ನಾನು ಯಾರಿಗೂ ನೀಡಿಲ್ಲವೆಂದು ಇಂದು ಈ ಭಿಕ್ಷಾ ಪಾತ್ರೆಯನ್ನು ಹಿಡಿದು ತಿರುಗುತ್ತಿರುವೆ. ನೀವಾದರೂ  ನನ್ನಂತಾಗ ಬೇಡಿ”ರೆಂದು ಸಾರುತ್ತಾನಂತೆ.

ಜನ-ಜೀವಿಗಳಿಗೆ ಜೀವನವ (ನೀರ) ನ್ನು ನೀಡುವ ಮೋಡಗಳು ಆಕಾಶದಲ್ಲಿ ಮೆರೆದರೆ ಆ ನೀರನ್ನು ಸಂಗ್ರಹಿಸುವ ಸಾಗರ ಕೆಳಗಿದೆ. ಅದುಕಾರಣ ಕೈಯೊಡ್ಡದ ಕರ ಸಾರ್ಥಕತೆಯನ್ನು ಪಡೆಯಬಲ್ಲುದು. ಈ ಸಾಫಲ್ಯತನ ಕಾಯಕಶೀಲದಲ್ಲಿದೆ. ದಾಸೋಹದ ನಿಯಮದಲ್ಲಿದೆ. ಇಂಥ ಕಾಯಕ ಮತ್ತು ದಾಸೋಹ ಕೈಕೊಂಡ ಕರವು ಇಷ್ಟಲಿಂಗವನ್ನು ಧರಿಸಿಕೊಳ್ಳಲು ಸಮರ್ಥವೆನಿಸುವನು. ಲಿಂಗವನ್ನು ದಯ ಪಾಲಿಸುವ ಸದ್ಗುರುನಾಥನು ಶಿಷ್ಯನಿಗೆ ಕರಸ್ಥಲದ ಸಾರ್ಥಕ್ಯವನ್ನು ಬೋಧಿಸುವನು. ನರಮಾನವರನ್ನು ಬೇಡುವ ಆಚರಣೆಯನ್ನು ನಿರಾಕರಿಸುತ್ತ ಕರದ ಪರಾವಲಂಬನೆ ಯನ್ನು ದೂರೀಕರಿಸುತ್ತ; ಸ್ವಾವಲಂಬನೆಯ ಸಿದ್ಧಿಯನ್ನು ದಯಪಾಲಿಸುವನು. ಧನ-ಧಾನ್ಯಾದಿಗಳಿಂದ ದರಿದ್ರನೆನಿಸಿದರೂ ದಾಸೋಹಿಯೆನಿಸುವ ಶಿವಭಕ್ತನಿಗೆ ಶಿವನು ಪ್ರಿಯನಾಗುವನೆಂಬುದನ್ನು ಗುರು ತಿಳಿಸುತ್ತಾನೆ.

ಇಂದ್ರಿಯೇಚ್ಛೆಗೆ ಹರಿವ | ಮಂದಬುದ್ಧಿಯ ನೀಗಿ

ದಂದು ಲಿಂಗವನು – ಕಂದ ಕಕ್ಷೆಯೊಳು ದರಿ-

ಸೆಂದ ಶ್ರೀಗುರುವೆ ಕೃಪೆಯಾಗು      ||೧೨೯ ||

ಶಿವಕವಿಯು-ಕರಸ್ಥಲದಲ್ಲಿ ಲಿಂಗಧಾರಣೆಯ ಮರ್ಮವನ್ನು ತಿಳಿಸಿ ಯಾಚನೆಯನ್ನು ನಿವಾರಿಸಿ ಕಾಯಕ-ದಾಸೋಹ ತತ್ತ್ವಗಳನ್ನು ಮನನ ಮಾಡಿಸಿದ ಸುಜ್ಞಾನ ಮೂರುತಿ ಗುರುದೇವನು ಇಂದ್ರಿಯೇಚ್ಛೆಯನ್ನು ಹರಿದು ಹಾಕುವ ನೀತಿಯನ್ನು

ನಿರೂಪಿಸುವನೆಂಬುದನ್ನು ನಿರ್ವಚಿಸುತ್ತಾನೆ.

ಬಲವಾನ್ ಇಂದ್ರಿಯಗ್ರಾಮಃ ” (ವ್ಯಾಸರ ನುಡಿ)

ಇಂದ್ರಿಯಗಳ ಸಮೂಹವು ಬಲಶಾಲಿಯಾಗಿದೆ. ಇಂದ್ರಿಯ ಶಕ್ತಿಗೆ ಮಣಿಯದವರಿಲ್ಲ. ಇಂದ್ರಿಯಗಳ ಶಕ್ತಿಗೆ ಅಶ್ವಶಕ್ತಿಯನ್ನು ಉಪನಿಷತ್ಕಾರರು ಉಪಮಿಸಿದ್ದಾರೆ. ಭೌತಿಕ ವಿಜ್ಞಾನಿಗಳೂ ಸಹ ಯಾವುದೇ ಎಂಜನ್ನಿನ ಬಲವನ್ನು ಗುರುತಿಸುವಾಗ ಅಶ್ವಶಕ್ತಿಗೆ ತುಲನೆ ಮಾಡುತ್ತಿರುವದು ಯಥೋಚಿತವಾಗಿದೆ. ಕಠೋಪನಿಷತ್ತಿನ ಪ್ರಥಮಾಧ್ಯಾಯದ ಮೂರನೆಯ ವಲ್ಲಿಯಲ್ಲಿ ಯಮಧರ್ಮನು ಧೀರಬಾಲಕ ಆತ್ಮತತ್ತ್ವಜಿಜ್ಞಾಸು ನಚಿಕೇತನಿಗೆ

ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು |

ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ || ೩ ||

ಇಂದ್ರಿಯಾಣಿ ಹಯಾನಾಹುರ್ವಿಷಯಾನ್ ತೇಷು ಗೋಚರಾನ್ |

ʼʼಶರೀರವೇ ರಥವು.  ಆತ್ಮನು ರಥಿಕನು.  ರಥದ ಸಾರಥಿಯೇ ಬುದ್ಧಿಯು. ಇಂದ್ರಿಯಗಳು ರಥವನ್ನು ಜಗ್ಗುವ ಕುದುರೆಗಳು.  ಮನವು ಅವುಗಳಿಗೆ ಜೋಡಿಸಿದ ಲಗಾಮು. ಶಬ್ದಾದಿ ವಿಷಯಂಗಳೇ ಪ್ರತ್ಯಕ್ಷ ಗೋಚರಿಸುವ ಪದಾರ್ಥಗಳೆಂದು ತಿಳಿʼʼ ಎಂಬುದಾಗಿ ಬೋಧಿಸಿದ್ದಾನೆ. ರಥದ ಸಾರಥಿಯು ಬುದ್ಧಿವಂತನಾಗಿದ್ದರೆ ರಥಿಕನು ಯೋಗ್ಯ ಗುರಿಯನ್ನು ಗುರುತಿಸಬಲ್ಲನು. ಅಂತೆಯೇ ಬುದ್ಧಿಗೆ ಸಾರಥಿಯ ಸಂಕೇತ ಸಮೀಚೀನವಾಗಿದೆ. ಬುದ್ಧಿಯಿಲ್ಲದ ಸಾರಥಿಯು ರಥವನ್ನು ಗುರಿಯತ್ತ ಸಾಗಿಸಲಾರನು. ರಥವನ್ನೆಳೆಯುವ ಕುದುರೆಗಳು ಅವನ ವಶವರ್ತಿಯಾಗಿ ವರ್ತಿಸಲಾರವು. ಇದರಂತೆ ಆಧ್ಯಾತ್ಮಿಕ ರಥವೆನಿಸಿದ ಶರೀರಕ್ಕೆ ಸಾರಥಿಯಾದ ಬುದ್ಧಿಯು ಮಂದವಾಗಿದ್ದರೆ ಕುದುರೆಗಳೆಂಬ ಇಂದ್ರಿಯಗಳು ತಮ್ಮಿಚ್ಛೆಯಂತೆ ಹರಿಯುತ್ತವೆ. ಸುಬುದ್ಧಿಯುಳ್ಳ ಮಾನವನು ಸುವಿವೇಕದಿಂದ ಇಂದ್ರಿಯಗಳನ್ನು ನಿಗ್ರಹಿಸುತ್ತಾನೆ. ಇಂದ್ರಿಯೇಚ್ಛೆಗೆ ಮನವನ್ನು ಮಾರುಗೊಳಿಸುವದಿಲ್ಲ. ಸುವಿಚಾರದಿಂದ, ಸತ್ಕ್ರಿಯೆಗಳಿಂದ, ಸತ್ಸಂಗದಿಂದ ಇಂದ್ರಿಯಗಳನ್ನು ಹಾಗೂ ಮನವನ್ನು ಉದಾತ್ತೀಕರಿಸಬೇಕು. ಪರಿಪಕ್ವಗೊಳಿಸಬೇಕು. ಈ ರೀತಿಯಾಗಿ ಮನ ಮತ್ತು ಇಂದ್ರಿಯಗಳು ಸುಬುದ್ಧಿಯಿಂದ ಸಮರ್ಥವಾದರೆ ಇಷ್ಟಲಿಂಗವನ್ನು ಕಕ್ಷೆಯಲ್ಲಿ ಧಾರಣ ಮಾಡಬೇಕು.

 ಕಕ್ಷೆಯೆಂದರೆ ಎಡದ ತೋಳು. ಇಂಜಕ್ಷನ್ ಮಾಡುವ ವೈದ್ಯನು ರೋಗಿಯ ಹೃದಯಕ್ಕೆ ಎಣ್ಣೆಯ ಪರಿಣಾಮವು ತೀವ್ರವಾಗಲೆಂದು ಎಡರಟ್ಟಿಗೇನೇ ಮಾರುವಂತೆ ಹೃದಯ ಮಧ್ಯದ ಚಿತ್ಕಳೆಯ ದ್ಯೋತಕವಾಗಿ ಮತ್ತು ಸಾಮೀಪ್ಯ ಸಂಬಂಧವನ್ನು ಸೂಚಿಸುವದಕ್ಕಾಗಿಯೂ ಕಕ್ಷೆಗೆ ಲಿಂಗಧಾರಣ ಮಾಡುವ ಕ್ರಮ ಪುರಾತನಕಾಲದಿಂದಲೂ ಬೆಳೆದುಬಂದಿದೆ. ಎಡರಟ್ಟೆಯಲ್ಲಿ ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಬುದ್ಧಿಯ ಮಂದತ್ವವನ್ನು ಕಳೆದುಕೊಂಡರೆ ಇಂದ್ರಿಯಗಳ ಇಚ್ಛೆಯು ಲಿಂಗೇಚ್ಛೆಯಾಗ ಬಲ್ಲುದೆಂದು ಸದ್ಗುರು ಬೋಧಿಸುತ್ತಾನೆ.

ಷಟ್‌ಸ್ಥಲ ಜ್ಞಾನಿ, ಸತ್ಕ್ರಿಯೆಯ ಸುಯಿದಾನಿ ಚನ್ನಬಸವಣ್ಣನರು-

ಕಕ್ಷೆಯಲ್ಲಿ ಲಿಂಗವ ಧರಿಸಿದ ಬಳಿಕ,

ಅನ್ಯಕಾಂಕ್ಷೆ ಇಲ್ಲದಿರಬೇಕು,

ಮಾಯದ ಉಸುರಡೆಯಾಡದಿರಬೇಕು.

ಸಂಸಾರ ಸಂಗವ ಹೊದ್ದದೆ ಮನವು

ಮಹಾಸ್ಥಲವನಿಂಬುಗೊಂಡಿರಬೇಕು.

ಕೂಡಲ ಚೆನ್ನಸಂಗಯ್ಯನಲ್ಲಿ ಏಕಾರ್ಥವಾಗಿರಬೇಕು

ಇದೆ ಕಕ್ಷೆಯಲ್ಲಿ ಲಿಂಗವ ಧರಿಸುವ ಕ್ರಮ || ೯೦೭ II

ಕಕ್ಷೆಯಲ್ಲಿ ಲಿಂಗವನ್ನು ಧರಿಸಿ ಲಿಂಗಭಕ್ತನು ಲಿಂಗದಿಚ್ಛೆಯಲ್ಲದ ವಸ್ತುವನ್ನು ಬಯಸಬಾರದು. ಮಾಯೆಯನ್ನು ಹೊದ್ದದಿರಬೇಕು. ಸಂಸಾರ ಸಂಗವನ್ನು ತ್ಯಜಿಸಿ ಮಹಾಲಿಂಗದಲ್ಲಿ ಮನವು ತಲ್ಲೀನಗೊಳ್ಳಬೇಕು. ಇಂತಾದರೆ ಕಕ್ಷೆಯಲ್ಲಿ ಲಿಂಗ ಧರಿಸಲು ಯೋಗ್ಯಕ್ರಮವೆಂದು ಬೋಧಿಸಿದ್ದಾರೆ.

ಅಂಗದ ಆರವಯವಗಳಲ್ಲಿ ಲಿಂಗವನ್ನು ಧರಿಸುವ ಶಿವಭಕ್ತನು ಸದ್ಗುರು ಬೋಧೆಯಂತೆ ಸದ್ಗುಣಗಳನ್ನು ಅಳವಡಿಸಿಕೊಳ್ಳುವದು ಸಮೀಚೀನವಾಗಿದೆ. ಮುಂದಿನ ತ್ರಿಪದಿಯಲ್ಲಿ ಎದೆಯ ಮೇಲೆ ಲಿಂಗಧಾರಣದ ಅಂತರಾರ್ಥವನ್ನು   ವಿವರಿಸುತ್ತಾನೆ.

 ಪರಹೆಣ್ಣಿಗೆದೆಗೊಟ್ಟು |  ಭರದಿಂದಲಪ್ಪುವಾ

ದುರಿತವನೆ ಉಳಿದು-ಉರಸಜ್ಜೆಯೊಳು ಲಿಂಗ

ಧರಿಸೆಂದ ಗುರುವೆ ಕೃಪೆಯಾಗು    || |

ಕರದಲ್ಲಿ ಕಾಣಿಸುವದು ಇಷ್ಟಲಿಂಗ, ಕಕ್ಷೆಯಲ್ಲಿ ಧರಿಸುವದು ಪ್ರಾಣಲಿಂಗ, ಉರದಲ್ಲಿ ಧಾರಣಮಾಡುವದು ಭಾವಲಿಂಗ ದ್ಯೋತಕವೆಂತಲೂ ಭಾವಿಸಬಹುದು. ಸ್ಥೂಲವಾಗಿ ಪ್ರತ್ಯಕ್ಷವಾಗಿ ಪೂಜೆಗೈಯಲು ಅನುಕೂಲವಾದುದು ಇಷ್ಟಲಿಂಗವು. ಶರೀರದ ಎಡಭಾಗದಲ್ಲಿಯೇ ಪ್ರಾಣಪುಪ್ಪುಸವಿರುವದರಿಂದ ಅದನ್ನು ಸೂಚಿಸುವ ಎಡದ ರಟ್ಟೆಯಲ್ಲಿ ಕಟ್ಟುವದು ಪ್ರಾಣಲಿಂಗದ ಪರಿಯಾಯವಾಗ ಬಹುದು. ಹೃದಯದಮೇಲೆ ಧರಿಸುವದು ಭಾವಲಿಂಗವೆನ್ನಬಹುದು. ದುಷ್ಕರ್ಮಗಳ ಭಾವವಳಿದು ಮನಪವಿತ್ರವಾದರೆ ಭಾವಲಿಂಗದ ಅನುಸಂಧಾನ ಸಾಧ್ಯವಾಗುವದು. ಅದು ಕಾರಣ ಉರದಮೇಲೆ ಲಿಂಗವನ್ನು ಧರಿಸುವ ಭಕ್ತನು ಪರರ ಹೆಣ್ಣು ಮಕ್ಕಳನ್ನು ಅಪ್ಪಿಕೊಳ್ಳುವ ಪಾಪವನ್ನು ಪರಿಹರಿಸಬೇಕು. ಲಿಂಗವನ್ನು ಅಪ್ಪಿಕೊಂಡ ಎದೆಯು ಪರಸ್ತ್ರೀಯಳ ಎದೆಯನ್ನು ಸೋಂಕಬಾರದು. ಪಂಚಪಾತಕಗಳಲ್ಲಿ ಪರಸ್ತ್ರೀ ಸಂಗವೊಂದೆಂದು ಅನುಭವಿಗಳು ಸಾರಿದ್ದಾರೆ. ಪರಸ್ತ್ರೀ ಸಂಗದಲ್ಲಿ ಲೋಲುಪನಾದ ಜೀವಿಯು ಅನಂತ ಪಾಪಗಳನ್ನು ಮಾಡುತ್ತಾನೆ. ತನ್ನ ತನುವನ್ನು, ಧನವನ್ನು, ಮನವನ್ನು ಅವಳಿಗಾಗಿ ಸೂರೆಮಾಡುತ್ತಾನೆ. ಸ್ವತಂತ್ರತೆಯನ್ನು ಕಳೆದುಕೊಳ್ಳುತ್ತಾನೆ. ಕಳ್ಳನಂತೆ ಸುಳ್ಳನಾಗಿ ಸುಳಿದಾಡುತ್ತಾನೆ. ಅಪರಾಧಿಯಾಗಿ ಸಜ್ಜನ ಸಹವಾಸದಿಂದ ದೂರಾಗಿ ದುರ್ಜನರ ಸಹವಾಸದಲ್ಲಿ ಬೀಳುತ್ತಾನೆ. ವಿಷಯ ಲಂಪಟತನದಿಂದ ತನ್ನ ಸತಿಸುತರನ್ನು, ಬಾಂಧವರನ್ನು ದುಃಖಕ್ಕೀಡು ಮಾಡುತ್ತಾನೆ. ಇದನ್ನರಿತ ಸದ್ಗುರುನಾಥನು ದಯೆಯಿಂದ ಇಂಥ ದುರಿತದಿಂದ ದೂರಿರಬೇಕೆಂದು ಸಾರುತ್ತಾನೆ. ಸಲಹುತ್ತಾನೆ.

ಪರಧನ ಪರಸ್ತ್ರೀಯನ್ನು ಪರಿಹರಿಸುವ ಶರಣ ಸಾಹಿತ್ಯ ಅಪಾರವಾಗಿದೆ. ಶರಣ ಧರ್ಮಕ್ಕೆ ನೀತಿಯೇ ನೆಲೆಗಟ್ಟಾಗಿದೆ. ಅಣ್ಣಬಸವಣ್ಣನವರು-

ನೋಡಲಾಗದು, ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ

ತಗರ ಬೆನ್ನಲಿ ಹರಿವ ಸೊಣಗನಂತೆ ಬೇಡ ಕಾಣಿರೋ !

ಒಂದಾಶೆಗೆ ಸಾಸಿರ ವರುಷ ನರಕದೊಳದ್ದುವ ಕೂಡಲ ಸಂಗಮದೇವ

ಚನ್ನ ಬಸವಣ್ಣನವರು-

ದಾಸಿಯರ ಸಂಗ ಕಸನೀರ ಹೊರಸಿತ್ತು.

ವೇಸಿಯರ ಸಂಗ ಎಂಜಲವ ತಿನಿಸಿತ್ತು. 

ಪರಸ್ತ್ರೀಯರ ಸಂಗ ಪಂಚಮಹಾ ಪಾತಕವ ತಂದಿತ್ತು.

ಈ ತ್ರಿವಿಧವು ನಾಸ್ತಿಯಾದಲ್ಲದೆ ಭಕ್ತನಲ್ಲ

ಭಕ್ತಿಯಿಲ್ಲದೆ ಮುಕ್ತಿಗೆ ಸಲ್ಲ ನಮ್ಮ ಕೂಡಲ ಚನ್ನಸಂಗಯ್ಯನಲ್ಲಿ

ದೇವರ ದಾಸಿಮಾರ್ಯರು-

ಈಶನ ಶರಣರು ವೇಶಿಯ ಹೋದರೆ

ಮೀಸಲೋಗರವ ಹೊರಗಿರಿಸಿದಡೆ

ಹಂದಿ ಮೂಸಿನೋಡಿದಂತೆ ಕಾಣಾ ರಾಮನಾಥಾ ?

ಮತ್ತು

ಶಿವಪೂಜೆಯೆತ್ತ ? ವಿಷಯದ ಸವಿಯೆತ್ತ?

ಆ ವಿಷಯದ ಸವಿ ತಲೆಗೇರಿ

ಶಿವಪೂಜೆಯ ಬಿಟ್ಟು ವೇಶಿಯರ ಎಂಜಲ

ಹೇಸದೆ ತಿಂಬ ದೋಷಿಗಳೇನೆಂಬೆನೈ ರಾಮನಾಥಾ ?

ಅಂಬಿಗರ ಚೌಡಯ್ಯ ಶರಣನು-

ಬ್ರಹ್ಮದ ಮಾತನಾಡಿ

ನ್ಯೆಯರ ಕಾಲದೆಸೆಯಲ್ಲಿ ಕುಳಿತಲ್ಲಿ

ಪರಬೊಮ್ಮದ ಮಾತು ಅಲ್ಲಿ

ನಿಂದಿತ್ತೆಂದನಂಬಿಗರ ಚೌಡಯ್ಯ

ಎಂದು ಮುಂತಾಗಿ ಪರಸ್ತ್ರೀಸಂಗವನ್ನು ಶರಣರು ನಿಷ್ಠುರವಾಗಿ ನಿಷೇಧಿಸಿದ್ದಾರೆ. ಪರಸ್ತ್ರೀಸಂಗವನ್ನು ತೊರೆಯದೆ ಉರದಲ್ಲಿ ಲಿಂಗವನ್ನು ಧರಿಸಬಾರದೆಂಬುದೇ ಶಿವ ಕವಿಯ ಸದಾಶಯವಾಗಿದೆ.

ಈ ಉರಸ್ಥಲದ ಹಿರಿಮೆಯನ್ನು ಗರಿಮೆಯನ್ನು ಚನ್ನಬಸವಣ್ಣನವರ ವಚನದಿಂದ ಅರಿತುಕೊಳ್ಳೋಣ-

ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ

ಮನದ ಕೊನೆಯಿಂದ ಲಿಂಗವನಗಲದಿರಬೇಕು

ಉರ ಗುರುಸ್ಥಲ, ಉರ ಲಿಂಗಸ್ಥಲ, ಉರ ಜಂಗಮಸ್ಥಲ,

ಉರ ಪ್ರಸಾದಿಸ್ಥಲ, ಉರ ಮಹಾಸ್ಥಲ,

ಉರ ಅನುಭಾವಸ್ಥಲವೆಂದರಿವುದು.

ಅನ್ಯ ಮಿಶ್ರಂಗಳ ಹೊದ್ದಲಾಗದು

ತಟ್ಟು-ಮುಟ್ಟು-ತಾಗು ನಿರೋಧಂಗಳಿಗೆ ಗುರಿಯಾಗಲಾರದು.

ಇಂದ್ರಿಯಗಳ ಕೂಡಿ ಮನಸ್ತಾಪಗೊಳ್ಳದೆ

ಉರಲಿಂಗ ಸ್ವಾಯತವಾಗಿರ್ದುದು

ಪ್ರಾಣಲಿಂಗಿ ಲಿಂಗಪ್ರಾಣಿಗಿದು ಚಿಹ್ನ

ಕೂಡಲ ಚನ್ನಸಂಗಮದೇವಾ || ೯೦೪ ||

ಉರಸ್ಥಲವು ಗುರು-ಲಿಂಗ-ಜಂಗಮ-ಪ್ರಸಾದಗಳೆಂಬ ಚತುರ್ವಿಧ ಸಾರಾಯ ಸಂಪತ್ತಿಗೆ ಆಶ್ರಯ ಸ್ಥಾನವೆನಿಸಿದ್ದರಿಂದ ಮಹಾಸ್ಥಲವೆಂದೆನಿಸಿದೆ. ಉರದಲ್ಲಿಯೇ ಅನುಭಾವ ಮಡುಗಟ್ಟಬಲ್ಲುದು. ಅದು ಕಾರಣ ಉರಕ್ಕೆ ಅನ್ಯವಸ್ತುಗಳ ಸಂಪರ್ಕ ಹೊಲ್ಲ. ಉರದಿಂದ ಪರಸ್ತ್ರೀಯರ ತಟ್ಟು-ಮುಟ್ಟುಗಳು ದೂರಾಗಬೇಕು. ಉರದ ಮೇಲೆ ಶಿವಲಿಂಗವನ್ನು ಸ್ವಾಯತಗೊಳಿಸಿಕೊಂಡ ಮೇಲೆ ಮನದ ಕೊನೆಯಿಂದ ಲಿಂಗವನಗಲದಂತಿರಬೇಕಲ್ಲದೆ ; ಪ್ರಾಣಲಿಂಗಿ-ಲಿಂಗಪ್ರಾಣಿಯೆನಿಸಬೇಕು. ಇದುವೆ ಉರದಲ್ಲಿ ಲಿಂಗವ ಧರಿಸುವ ಮಹಾ ಸಂಕೇತ.

ಜ.ಚ.ನಿ

ಮಗನು ಬಂದು ಲಿಂಗದಹಳ್ಳಿಯಲ್ಲಿರುವ ಸಮಾಚಾರವು ತಾಯಿಗೆ ತಿಳಿಯಿತು. ಮಗನನ್ನು ನೋಡದೆ ನಾಲೈದು ವರ್ಷಗಳಾಗಿದ್ದವು. ಮಗನಿಗೆ ಮದುವೆಯ ವಯಸ್ಸು ಪ್ರಾಪ್ತವಾಗಿತ್ತು. ಇವನ್ನೆಲ್ಲ ನೆನೆದು ತಾಯಿ ನೀಲಮ್ಮನವರು ತಮ್ಮ  ತವರೂರಾದ ಲಿಂಗದಹಳ್ಳಿಗೆ ಉತ್ಸುಕತೆಯಿಂದ ಬಂದರು. ಓದಿ ಬಂದ ಮಗನನ್ನು ನೋಡಿ ನಲಿದರು. ಮಗನ ಧೈರ್ಯ ಸಾಹಸಗಳನ್ನು ಮನಸಾರೆ ಕೊಂಡಾಡಿದರು. ‘ಮನೆಯಿಂದ ಕುರುಡುಕಾಸನ್ನು ಅಪೇಕ್ಷಿಸದೆ ನಿನ್ನ ಕುಶಲತೆಯಿಂದ ಅನ್ಯರ ಮನಕರಗಿಸಿ ಅವರ ಆಶ್ರಯ ಪಡೆದು ಇಲ್ಲಿಯವರೆವಿಗೂ ಓದಿಬಂದದ್ದೆ ಒಂದು ಹೆಚ್ಚು. ಅದೇ ನನಗೊಂದು ಸಂತೋಷ. ಅದೇ ನನಗೊಂದು ಸಾವಿರ. ಈ ವಿಷಯದಲ್ಲಿ ನಿನ್ನನ್ನು ಎಷ್ಟು ಕೊಂಡಾಡಿದರು ಕಡಿಮೆ ! ಸಾಕು ನಡೆ. ಇನ್ನು ನೀನು ಮಾಸ್ತರನಾಗಿ ಗಳಿಸುವುದು ಬೇಡ. ಮನೆಗೆ ನಡೆ, ವಯಸ್ಸೂ ಆಗಿದೆ. ಮದುವೆ ಮಾಡಲು ಒಂದು ಕನ್ಯೆಯನ್ನು ನೋಡಿ ನಿಶ್ಚಯಿಸಲಾಗಿದೆ, ಲಗ್ನಮಾಡಿಕೊಂಡು ಮನೆಬಾಳಿನ ಭಾರ ನಿರ್ವಹಿಸುವುದು ನಿನ್ನ ಕರ್ತವ್ಯಕೋಟಿಗೆ ಸೇರಿದ ಮಾತಾಗಿದೆ. ಅದಕ್ಕೆ ಮಗನು ‘ತಾಯಿ, ನೀನು ಹೇಳುವುದೆಲ್ಲ ನಿಜ. ಆದರೆ ಇಷ್ಟು ಬೇಗ ಮದುವೆಯಾಗಲು ನನ್ನ ಮನಸ್ಸಿಲ್ಲ: ಮನೆಗೆ ಬಂದಿರಲು ಇಷ್ಟವಿಲ್ಲ. ಒಂದೆರಡು ವರ್ಷ ಕಳೆದು ಬಂದಲ್ಲಿ ಆಗ ಯಾವುದನ್ನು ಖಚಿತವಾಗಿ ಹೇಳುತ್ತೇನೆ. ಈಗ ಸುಮ್ಮನೆ ಬಲವಂತಿಸಬೇಡ.’ ಎಂದು ಹೇಳಿ ತಾಯಿಯನ್ನು ಸಮಾಧಾನ ಮಾಡಿ ಊರಿಗೆ ಕಳುಹಿಸಿದರು.

ಸದಾಶಿವಯ್ಯನವರು ಎಂದಿಗಿಂತ ಊರಿನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ದಕ್ಷತೆಯಿಂದ ಮಾಡಿಸತೊಡಗಿದರು. ಊರಿನವರಿಗೆಲ್ಲ ಅಚ್ಚುಮೆಚ್ಚಿನವರಾಗಿದ್ದರು. ಅಂದಿನ ಅನಾಗರಿಕತೆಯ  ಕಾಲದಲ್ಲಿಯೂ ಸಹ ಹಳ್ಳಿಯ ಹುಡುಗರು  ಪ್ರೇಮೋತ್ಸಾಹಗಳಿಂದ ಶಾಲೆಗೆ ಬರುತ್ತಿದ್ದರೆಂಬುದು ಶಿಕ್ಷಕರಿಗೆ ಶಿಕ್ಷಣದಲ್ಲಿರುವ ವಿಚಕ್ಷಣತೆಯ ಕುರುಹಲ್ಲವೆ ? ಬುದ್ಧಿಬಲ್ಲವರಿಗೆ ವಿದ್ಯೆ ಕಲಿಸುವುದು ಒಂದು ಹೆಚ್ಚಲ್ಲ. ಏನೂ ತಿಳಿಯದ ಎಳೆ ಕಂದರಿಗೆ ವಿದ್ಯಾಭ್ಯಾಸ ಮಾಡಿಸುವುದು ತುಂಬಾ ಕಷ್ಟದ ಕೆಲಸ.  ಮಕ್ಕಳ ಮನಸ್ಸಿನಂತೆ ಹೋಗಿ ಮಕ್ಕಳನ್ನು ಒಲಿಸಿ ಅಕ್ಕರಿಗರನ್ನು ಮಾಡುವ ಹೊಣೆಗಾರಿಕೆಯ ಕೆಲಸವನ್ನು ಮಾಡಿ ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ- ಕಾರ್ಪಣ್ಯ, ಪ್ರಾಥಮಿಕ ಶಿಕ್ಷಣವು ನಿಜಕ್ಕು ತುಂಬಾ ಪ್ರಯಾಸಕರವಾದುದು. ಮಕ್ಕಳನ್ನು ಮುಂದಿನ ಮಹಾಜನಗಳನ್ನಾಗಿ ಮಾಡುವ ಮೊದಲನೆಯ ಹೊಣೆಗಾರಿಕೆಯದು. ಅದನ್ನು ತೃಪ್ತಿಕರವಾಗಿ ತಾಳ್ಮೆಯಿಂದ ಜಾಣ್ಮೆಯಿಂದ ನೆರವೇರಿಸುವವನೆ ನಿಜವಾದ ಶಿಕ್ಷಕ, ಸದಾಶಿವಯ್ಯನವರು ಅಂತಹ ಸಮರ್ಥರಾಗಿದ್ದರು. ಸೂಕ್ತ ಶಿಕ್ಷಣ ಕೊಡುತ್ತಿದ್ದರು.

ಊರಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಂತೆ, ತಾವೂ ಸಹ ವೇದಾಂತ ವಿದ್ಯಾವಂತರಾಗುತ್ತಿದ್ದರು. ಅದಾಗಳೆ ಅದೆಷ್ಟೋ ಆಗಿದ್ದರು. ಅಷ್ಟಕ್ಕೆ ನಿಲ್ಲಿಸದೆ ವೇದಾಂತ ಜಿಜ್ಞಾಸೆಯನ್ನು ಮುಂದುವರಿಸಿದ್ದರು. ನಿಜಗುಣರ ಗ್ರಂಥಗಳನ್ನು ಬಿಟ್ಟು ನಿಮಿಷವೂ ಇರುತ್ತಿರಲಿಲ್ಲ. ೧. ಕೈವಲ್ಯ ಪದ್ಧತಿ, ೨. ಪರಮಾನುಭವ ಬೋಧೆ, ೩. ಪರಮಾರ್ಥ ಗೀತೆ, ೪. ಪರಮಾರ್ಥ ಪ್ರಕಾಶಿಕೆ, ೫. ಅನುಭವಸಾರ, ೬. ವಿವೇಕ ಚಿಂತಾಮಣಿ ಇವೇ ಅವರ ಸೊತ್ತು. ಇವೇ ಅವರ ಗೊತ್ತು. ಅವುಗಳಿಗಾಗಿ ಅವರ ಮನಸ್ಸು ಮಾರುಹೋಗಿತ್ತು. ಆ ಆರು ಗ್ರಂಥಗಳ ಅವರಿಗೆ ಆರು ಮಂದಿ ಆಪ್ತ ಸ್ನೇಹಿತರಾಗಿದ್ದರು. ಯಾವಾಗಲೂ ಅವುಗಳಡೊನೆಯೆ ಕಾಲ ಕಳೆಯುತ್ತಿದ್ದರು. ರಾತ್ರಿ ಹನ್ನೆರಡು ಹೊಡೆಯುವವರೆವಿಗೂ ಬಿಡದೆ ಅವನ್ನು ಓದುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಸಮಾಳದ ಬಸವಯ್ಯನವರಲ್ಲಿಗೆ ಹೋಗಿ ವಿಚಾರವಿನಿಮಯ ಮಾಡುತ್ತಿದ್ದರು; ವಿಶೇಷ ವಿಷಯಗಳನ್ನು ಪರಿಗ್ರಹಿಸುತ್ತಿದ್ದರು. ಆರು ಗ್ರಂಥಗಳಲ್ಲಿ ಮೊದಲನೆಯದಾದ ಕೈವಲ್ಯ ಪದ್ಧತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದುತ್ತಿದ್ದರು. ಪ್ರತಿಪದ್ಯದಲ್ಲಿ ಬುದ್ಧಿ ಮನಸ್ಸುಗಳನ್ನಿಟ್ಟು ಅರ್ಥವಿಸುತ್ತಿದ್ದರು. ಅವುಗಳಲ್ಲಿ ಈ ಪದ್ಯವು ಅವರ ಮನಸ್ಸಿನಲ್ಲಿ ನೇರವಾಗಿ ನಾಟಿತು.

ಸುಮ್ಮನಾಗದು ಅರಿವಿನಿಂದವೆ ಮುಕುತಿ

 ನೆಮ್ಮಿ ಲೇಸೆನಿಸುವ ಗುಣಗಣವಿಲ್ಲದವನಿಗೆ

ಗುರುಪಾದ ಸೇವೆ ಶರಣರ ಸಂಗ ಹರಪೂಜೆ

ಕರುಣ ವಿನಯ ನಿಜಸಮಯ ನಿಷ್ಠೆ

ವಿರತಿ ವಿವೇಕ ವಿದ್ಯೆ ಶಮೆ ದಮೆ ಸತ್ಯ ಧರ್ಮ

ವರಭಕ್ತಿ ನೀತಿಗಳ ಬಲವಿಲ್ಲದವನಿಗೆ

 ನಿಗಮಾಗಮದೊಳು ನಂಬುಗೆ ನಿತ್ಯವಿಧಿಗಳ

 ನಗಲದೆಚ್ಚರು ದೇಹದೊಳು ವಿಮೋಹ

 ಜಗದಪವಾದದೆಡೆಯೊಳು ಭೀತಿ, ಸುಜನರ

ಬಗೆಗೊಳಿಸುವ ನಡೆನುಡಿಯಿಲ್ಲದವನಿಗೆ

ಕಾವನಲರಂಬಿಗೆದೆಗೊಡದ ಬಲುವೆ ಜೀವ

 ಭಾವವೆಳ್ಳನಿತು ದೋರದಮಳಯೋಗ

 ತೀವಿದನುಭವ ಸುಖರೂಪನಾದ ಶಂಭುಲಿಂಗ

ವಾವರಿಸಿ ಕೀಟಭೃಂಗನ್ಯಾಯವಿಲ್ಲದವನಿಗೆ

ಈ ಪದ್ಯದ ಪ್ರತಿಶಬ್ದದ ರೂಪವೆ ತಾವಾಗಲು ಸದಾಶಿವಯ್ಯನವರು ಸಂಪೂರ್ಣ ಮನಸ್ಸು ಮಾಡಿದರು. ಈ ಪದ್ಯಬೀಜವು ಅವರ ಮನೋಭೂಮಿಕೆಯಲ್ಲಿ ಮೊಳಕೆಯಾಗಿ ಮೂಡಿತು. ಒಂದೆರಡು ವರ್ಷಗಳಲ್ಲಿ ಹೆಮ್ಮರವಾಗಿ ಚೆನ್ನಾಗಿ ಬೇರೂರಿತು. ಹೂ ಹಣ್ಣಾಗಿಸುವ ಬಯಕೆ ಹೆಬ್ಬಯಕೆಯಾಗಿ ನೆಲೆನಿಂತಿತ್ತು.

 ಈ ಸಮಯದಲ್ಲಿ ಇತ್ತ ತಾಯಿಯವರು ಮಗನ ಮದುವೆಯ ಮಾತನ್ನು ಮತ್ತೆ ನೆನಪಿಸಿಕೊಂಡರು. ನೆನವಿನೊಡನೆ ಬಡತನದ ಬಾಳಿನ ಚಿತ್ರವೂ ಎದುರು ನಿಂತಿತು. ಅದು ರಕ್ತವಿಲ್ಲದ ಚಿತ್ರ, ಶಕ್ತಿಯಿಲ್ಲದ ಚಿತ್ರ, ನೋಡಲಾಗದು, ನಿತ್ತರಿಸಲಾಗದು. ಬಡತನದ ಆ ಭಯಾನಕ ಚಿತ್ರ ಮದುವೆಯ ಮಾತನ್ನು ನಸುಹಿಂದೂಡಲೆಳಸಿತು. ಆದರೆ ಮಾತೆಯ ಮನಸ್ಸು ಅದಕ್ಕೆ ಒಳಪಡಲಿಲ್ಲ. ಈ ಬಡತನ ನಮಗೆ ಎಂದಿನಿಂದಲು ಇದ್ದದ್ದೆ: ಯಾವ ಕಾಲಕ್ಕು ತೀರದ್ದೆ : ಏನಾದರಾಗಲಿ ಮಗನ ಮದುವೆಯನ್ನು ಈ ಸಲ ನಿಲ್ಲಿಸಬಾರದು. ನೆರವೇರಿಸಿಯೇ ತೀರಬೇಕು.  ಬಡತನಕ್ಕೆ ಮಗನ ಮದುವೆಯನ್ನು ಮಾಡಿದಿರಲು ಸಾಧ್ಯವೆ ? ಅಲ್ಲದೆ ಮಗನು ಸಹ ಆ ದಿನ ಒಂದೆರಡು ವರ್ಷ ಬಿಟ್ಟು ಬಾ’ ಎಂದು ಹೇಳಿದ್ದಾನೆ. ಅದರಂತೆ ಎರಡು ವರ್ಷಗಳು ಕಳೆದವು. ಅಂದು ಕೊಟ್ಟು ಬಂದ ಮಾತನ್ನು ನೆರವೇರಿಸದೆ ಇರುವುದು ಹೇಗೆ ? ಮಗನಾದರೂ ಏನೆಂದುಕೊಂಡಾನು? ಏನಾದರಾಗಲಿ, ಈ ಸಲ ಮದುವೆ ಮಾಡಿಬಿಡುವುದೇ ನಿರ್ಧಾರ ಎಂದು ಆಲೋಚಿಸಿದಳು.

ಆದರೆ ನೀಲಮ್ಮ ತಾಯಿಯವರು ಎಣಿಸಿದಷ್ಟು ಮಗನ ಮದುವೆ ಸುಲಭವಾಗಿರಲಿಲ್ಲ. ಹಣ ಹೇಗಾದರು ಮಾಡಬಹುದಾಗಿತ್ತು. ಮಗನ ಮನಸ್ಸನ್ನು ಒಪ್ಪಿಸುವುದು ಆಗದ ಕೆಲಸವಾಗಿತ್ತು. ಈಚೆಗೆ ಉಂಟಾದ ಮಗನ ಮನದ ಉಪರತಿಯ ವಿಷಯ ಅವರಿಗೇನು ಗೊತ್ತು? ಸರ್ವಸಾಮಾನ್ಯ ಮಕ್ಕಳಂತೆ ತನ್ನ ಮಗನು ಒಪ್ಪಬಹುದೆಂದೆ ಅವರ ತಿಳುವಳಿಕೆ; ಹೃದಯ ಹರಕೆ, ಆ ಮನದ ಬಯಕೆಯಿಂದ ತಾಯಿ ಮಗನ ಬಳಿಗೆ ಬಂದಳು.

ಬಂದು ಮಗನನ್ನು ಕರೆದರು. ಮದುವೆಯ ಮಾತೆತ್ತಿದರು. ಮಗನು ನನಗೆ ಮನೆಯೂ ಬೇಡ, ಮದುವೆಯೂ ಬೇಡ’ ಎಂದನು. ಆ ಮಾತನ್ನು ಕೇಳಿ ಮಾತೆಯ ಮನಸ್ಸು ಕಸಿವಿಸಿಗೊಂಡಿತು ಕಳವಳಗೊಂಡಿತು. ಚಿತ್ತಸ್ಥೈರ್ಯ ತಂದುಕೊಂಡು ಮಗನ ಮನಸ್ಸು ಒಲಿಸಲು ಸಾಹಸ ಮಾಡಿದರು; ಸಾಧ್ಯವಿದ್ದಷ್ಟು ಹೇಳಿದರು. ಮತ್ತೊಬ್ಬರಾದರೆ ಮನಸ್ಸು ಆಗಳೆ ತವಕಿಸುವಷ್ಟರ ಮಟ್ಟಿಗೆ ಹೇಳಿದರು. ಹೇಳಿದರೇನು ಪ್ರಯೋಜನವಾಗಲಿಲ್ಲ. ಪ್ರತಿಯಾಗಿ ಅಮ್ಮಾ! ಅದಾಗದು. ಅಜೀರ್ಣ ಆದವನಿಗೆ ಅಮೃತವು ವಿಷವಾಗುವುದಿಲ್ಲವೇನಮ್ಮ. ಹೀಗಿರುವಾಗ ವಿಷ ಕುಡಿಸಿದರೇ ಬದುಕವರೇನಮ್ಮ ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವರೇನಮ್ಮ. ಬೀಳದವರನ್ನು ಬಲವಂತದಿಂದ ನೂಕಿ ಬೀಳಿಸುವರೇನಮ್ಮ! ಅದರಲ್ಲಿಯೂ ತಾಯಿಯಾದವರು ಈ ಹಾಳುಭಾವಿಯಲ್ಲಿ ತಬ್ಬುವರೇನಮ್ಮ! ಬೇಡ, ಅಂತಹ ಅಕರುಣೆಯ ಅಕೃತ್ಯವನ್ನು ಮಾಡಬೇಡ. ಆಲೋಚಿಸದೆ ದುಡುಕಬೇಡ, ನೀನು ಹೇಳುವುದು ಮೂರು ದಿನದ ಸಂಸಾರ, ನಾಲ್ಕನೆಯ ದಿನಕ್ಕೆ ದುಃಖದ ಸಾಗರ. ಇದರಲ್ಲಿಲ್ಲ ಸತ್ಯಸುಖದ ಸಾರ, ಇದರಲ್ಲಿ ನನ್ನನ್ನು ಸರ್ವಥಾ ಕೆಡುವ ಬೇಡ, ಈ ನಶ್ವರವಾದ ಶರೀರದಿಂದ ನಿತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕತ್ತಲೆಯ ಕೋಣೆಯಲ್ಲಿ ಕೊನೆಯಿಲ್ಲದೆ ಕಾಂತಿಯನ್ನು ಹಚ್ಚಬೇಕಾಗಿದೆ. ಆ ಅಚ್ಚಳಿಯದ ಬೆಳಗಿನಲ್ಲಿ ಅನೇಕ ಜೀವರು ಕಣ್ಣರಳಿಸಬೇಕಾಗಿದೆ. ಬಾಳ ಬಗೆಗಳನ್ನು ಕಣ್ಣಾರ ಕಾಣಬೇಕಾಗಿದೆ. ಅದಿರಲಿ ಈಗ ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡಿತವ, ಕಾಮನು ಮತ್ತೇಭವಿ ಕ್ರೀಡಿಗವ ಮಾಡಹತ್ತಿದ್ದಾರೆ. ಇವರನ್ನು ಸೆದೆಬಡೆಯಲು ಕಾಲಾರಿಯು ಕಾಮಾರಿಯು ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯ ಹಂಬಲಿಸುತ್ತಿದೆ; ಹಾತೊರೆಯುತ್ತಿದೆ. ಅದಕ್ಕಾಗಿಯೇ ನಿನ್ನನ್ನು ನಿರೀಕ್ಷಿಸಿಕೊಂಡಿದ್ದೆನು. ನೀನು ಬಂದದ್ದು ಲೇಸಾಯಿತು ಮಾತೆ, ಜನ್ಮದಾತೆ ! ಇಲ್ಲಿಯವರೆವಿಗೂ ನನ್ನ ಸರ್ವಸ್ವ ನೀನಾಗಿದ್ದೆ. ನನ್ನ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟೆ. ನೀನು ಸುಮ್ಮನಿರದೆ ನನ್ನನ್ನು ಊರಿಗೆ ಕರೆಯಿಸಿಕೊಂಡು ಮನೆಯ ಬಾಳಿಗೆ ನೂಕಿದ್ದರೆ ನಾನೆಲ್ಲಿ ಇಷ್ಟಾದರೂ ಓದುತ್ತಿದ್ದೆನು. ಈಗ ಓದಿದ್ದು ನಿನ್ನ ಕೃಪೆ. ಈಗ ಅರಿತಿದ್ದುದು ನಿನ್ನ ಆಶೀರ್ವಾದ. ತಾಯೆ, ತಿರುಗಿ ಆ ಸಂಸ್ಕೃತಿಗೆ ಎಳೆಯಬೇಡ, ಮುನ್ನೋಡುವ ಕಾಲಿಗೆ ತೊಡಕ ಸುತ್ತಬೇಡ. ನಿನಗೆ ಇನ್ನೂ ಒಬ್ಬ ಹಿರಿಯ ಮಗನು ಇದ್ದಾನೆ. ಅವರಿಂದ ಸಂಸಾರ ನಿರ್ವಹಣೆಯಾಗುತ್ತದೆ. ನನ್ನನ್ನು ವೃಥಾ ಆಶಿಸಬೇಡ, ಶೋಕಿಸಬೇಡ, ಎಷ್ಟಾದರು ತಾಯಿ ಋಣ ದೊಡ್ಡದು. ಅದನ್ನು ತೀರಿಸಿದಲ್ಲದೆ ಮುಂದಾರಿಯಿಲ್ಲ. ಅದಕ್ಕಾಗಿ ಈ ಒಂದೆರಡು ವರ್ಷಗಳಲ್ಲಿ ಶಿಕ್ಷಕವೃತ್ತಿಯಿಂದ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ. ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀನು ತಾಯಿಯೆಂಬ ಮಮತೆ ನನ್ನಲ್ಲಿಯು ನಾನು ಮಗನೆಂಬ ಮಮತೆ ನಿನ್ನಲ್ಲಿಯು ಖಂಡಿತವಾಗಿ ಇರಕೂಡದು. ಸಂತೋಷವಾಗಿ ಹರಸು” ಎಂದು ಹೇಳಿ ನಮಸ್ಕರಿಸಿ ಹಾಗೆಯೇ ಹೊರಟು ಬಿಟ್ಟರು; ದೂರ ಹೋದ ಮೇಲೆ ಕಣ್ಣಿಗೆ ಕಾಣದಂತಾದರು. ಜನತಾ ಜನಾರ್ದನನು ಕಡೆಗು ತನ್ನ ಭಿಕ್ಷವನ್ನು ಕೊಂಡೊಯ್ದೆ ಬಿಟ್ಟನು.   

 ತಾಯಿ ನೀಲಮ್ಮನವರಿಗೆ ದಿಕ್ಕು ತೋಚದಂತಾಯಿತು. ತಾನು ಯೋಚಿಸಿದ ಯೋಚನೆಗಳನ್ನೆಲ್ಲ ಕನಸಿನಲ್ಲಿ ಕಂಡಂತಾಯಿತು. ಕಣ್ಣಿಗೆ ಕತ್ತಲು ಕವಿದಂತಾಯಿತು. ತುಂಬು ಹರೆಯದ ಹುಡುಗ ಹೀಗೆಲ್ಲ ಮಾಡುತ್ತಾನೆಂದು ಅವಳು ಬಯಸಿರಲಿಲ್ಲ; ಭಾವಿಸಿರಲಿಲ್ಲ. ಅನಿರೀಕ್ಷಿತವಾಗಿ ಮರಕ್ಕೆ ಸಿಡಿಲು ಬಡಿದಂತಾಯಿತು. ಹೃದಯ ತಳಮಳಿಸಿತು. ಮನಸ್ಸು ಮರಗಿತು. ಕಣ್ಣೀರು ಕಾಲುವೆಯಾಗಿ ಹರಿಯಿತು. ಕಾರ್ಗತ್ತಲೆ ಕವಿದಂತಾಯಿತು. ಮುಂದಾಲೋಚನೆ ಹರಿಯದಂತಾಯಿತು. ಬಾಳಿನ ಭಾಗ್ಯ ಸಾಗಿ ಹೋದಂತಾಯಿತು. ಹರುಷದ ಹೊಳೆ ಹರಿದು ಹೋದಂತಾಯಿತು. ಬೆಳಗುವ ಜ್ಯೋತಿ ನಂದಿದಂತಾಯಿತು. ಕೊನರುವ ಮರ ಕಮರಿದಂತಾಯಿತು. ಈ ದುರ್ದಮ್ಯ ವಾತಾವರಣದಲ್ಲಿ ಕೊಂಚಕಾಲ ಆ ತಾಯಿ ಅಚಲದೆ ಕುಳಿತಳು. ಬಾಹ್ಯಸ್ಮೃತಿಯಿಲ್ಲದಾದಳು. ಆಮೇಲೆ ಎಚ್ಚೆತ್ತು ನಿಡುಸುಯ್ದು ನೋಡುತ್ತಾಳೆ. ಕುಮಾರನಿಲ್ಲ. ಶೂನ್ಯವಾದ ಮನೆ. ಮೌನವಾತಾವರಣ. ಏನನ್ನು ನೋಡುವುದು, ಯಾರನ್ನು ಕೇಳುವುದು? ಸಾಗಿ ಹೋದ ಕುಮಾರನನ್ನು ಅಗಲಿ ಹೋದ ಕುಮಾರನನ್ನು ಕರೆದು ತಂದು ತೋರುವರಾರು ? ತಾನು ಹೆತ್ತ ಕುಮಾರನನ್ನು ತನ್ನ ಕಣ್ಣಮುಂದಿದ್ದ ಕುಮಾರನನ್ನು ಕೊಂಡೊಯ್ದವರಾರು? ಸ್ವಪ್ನದ ಸಾಧುವೆ? ಜಾಗೃತದ ಜೋಗಿಯೆ? ಇದೇನು ಜಾದು ಆಟವೆ? ಮಾಯೆ ಮಾಟವೇ? ಯಾವ ಜಾಯಮಾನವಿದು? ಕಾಲ ಜರಡಿಯಲ್ಲಿ ಪತಿದೇವರು ಮಾವಂದಿರು ಸೋಸಿ ಹೋದರು. ಜನತಾ ಜೋಗಿಯ ಜೋಳಿಗೆಗೆ ಮಗನು ಮಾರುಹೋದನು. ಕಣ್ಣಿನ ಹಬ್ಬ ಕಳೆದುಹೋಯಿತು. ಇಲ್ಲಿದ್ದು ಮಾಡುವುದೇನು ಎಂದು ನಿರ್ವಾಹವಿಲ್ಲದೆ ನಿಧಾನವಾಗಿ

ಎದ್ದು ಊರದಾರಿ ಹಿಡಿದಳು. ದಾರಿಯುದ್ದಕ್ಕೆ ಆ ತಾಯಿಯ ಕೋಮಲ ಹೃದಯದಲ್ಲಿ ಚಿಂತೆ ವ್ಯಥೆ ಕಥೆ ತಾಂಡವಾಡಿದವು. ತೀರದ ನೋವಿನಿಂದ ನೊಂದಳು. ತಾಗದ ಉರಿಯಿಂದ ಬೆಂದಳು. ಹಾಗು ಹೀಗು ಮನೆ ಬಂದು ಸೇರಿದಳು. ಮಕ್ಕಳನ್ನು ನೋಡಿ

ಮತ್ತೆ ದುಃಖ ಇಮ್ಮಿಗಿಲಾಯಿತು. ನಡೆದುದನ್ನೆಲ್ಲ ತೋಡಿದಳು. ತನ್ನ ದೌರ್ಭಾಗ್ಯವನ್ನು ಬಿಚ್ಚಿ ತೋರಿದಳು; ಮಕ್ಕಳನ್ನು ಅತ್ತು ತೋರಿದಳು. ದುಃಖದಲ್ಲಿ ಮುಳುಗಿಸಿದಳು. ಅಂದಿನ ದಿನ ಆ ಮನೆಯೆ ಶೋಕಸಾಗರದಲ್ಲಿ ಮುಳುಗಿದಂತಿತ್ತು. ಅವರಿಗೇನು ಗೊತ್ತು ಹೀಗಾದುದು ಮುಂಬೆಳಸಿನ ಬಿತ್ತು ಎಂಬುದು. ಬಿತ್ತಿದ ಬೀಜ ಕೈ ಬಿಟ್ಟುಹೋಯಿತೆಂದು ಮರುಗಿದಂತಾಯಿತು; ಕೊರಗಿದಂತಾಯಿತು. ಪ್ರೇಮ ಕುರುಡೆಂಬ ಮಾತು ಸಾರ್ಥಕವಾಗಬೇಕಲ್ಲವೆ? ಸಂಭವವಾಗಬೇಕಲ್ಲವೆ?

ಸದಾಶಿವಯ್ಯನವರು ಸತ್ಯ ಸಂಕಲ್ಪದಿಂದ ಕಾಯಕಷ್ಟದಿಂದ ಸಂಪಾದಿಸಿ ಕೊಟ್ಟ ಆ ಸ್ವಲ್ಪ ಸಂಪದವೆ ಮನೆತನದ ಮೂಲನಿಧಿಯಾಯಿತು. ಅದರಿಂದಾಗಿ ಮನೆಯ ಬಾಳು ಯಾವ ತೊಂದರೆಯಿಲ್ಲದೆ ಸಾಗಿತು. ವಿವೇಕಾನಂದರು ತಮ್ಮ ಮನೆಯಲ್ಲಿರುವ ಅನ್ನ ಬಟ್ಟೆಗಳ ಕೊರತೆಯನ್ನು ಗುರು ಮುಖಾಂತರ ಕೇಳಿ ಪಡೆದರು. ನಮ್ಮ ಸದಾಶಿವ ಸ್ವಾಮಿಗಳವರು ತಮ್ಮ ಕಷ್ಟಾರ್ಜಿತವನ್ನೇ ಕೊಟ್ಟು ಹರಿಸಿದರು; ಕಷ್ಟ ಹರಿಸಿದರು.