General

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಪ್ರಾಸ್ತಾವಿಕ :

ಷಟ್‌ಸ್ಥಲ ಅಧ್ಯಯನಶೀಲವಲ್ಲ. ಅದು ಅನುಷ್ಠೇಯವಾದುದು. ಆಚಾರ ವಿಚಾರಗಳ ಸಮನ್ವಯದಲ್ಲಿ ಆಚರಣೆಗೆ ಅನುಕೂಲವಾದುದು. ಷಟ್‌ಸ್ಥಲವು ಸಂಸಾರಿಕ ಜೀವನದಲ್ಲಿ ಭಕ್ತಿ (ಪ್ರೇಮ) ಯನ್ನು, ನಿಶ್ಯಕ್ತ ಜೀವನದಲ್ಲಿ ನಿಜ ಶಕ್ತಿಯನ್ನು, ನಿಷ್ಕ್ರಿಯ ಬದುಕಿನಲ್ಲಿ ಸತ್ಕ್ರಿಯೆಯನ್ನು, ಆಲಸ್ಯದ ಬಾಳಿಗೆ ಸ್ವಾವಲಂಬನೆಯನ್ನು, ಅಜ್ಞತನದ ಬದುಕಿಗೆ ಸುಜ್ಞತೆಯನ್ನು ಅಧ್ಯಾತ್ಮದ ಸಾಧನೆಯಲ್ಲಿ ಸ್ವಾನುಭವವನ್ನು, ಸಾಮರಸ್ಯವನ್ನು ಅನುಗ್ರಹಿಸಬಲ್ಲದು. ಈ ಷಟ್‌ಸ್ಥಲ ಸಾಧನೆಯಿಂದ ದೇಹೇಂದ್ರಿಯಗಳು, ಮನ ಪ್ರಾಣಗಳು, ಭಾವ ಜೀವಗಳು ವಿಕಾಸ ಹೊಂದುತ್ತವೆ. ಮಲಿನತೆಯನ್ನು ಮಾಣಿಸಿ ಮೌಲ್ಯವುಳ್ಳವುಗಳಾಗುತ್ತವೆ. ಆಚಾರ ವಿಚಾರಗಳಿಂದ, ಶ್ರದ್ಧೆ-ನಿಷ್ಠೆ-ಅವಧಾನ-ಅನುಭವ-ಆನಂದ-ಅವಿರಳತೆಯನ್ನು ಪಡೆದು ಘನಮನ ಸಂಪನ್ನತೆಯನ್ನು ಸಂಪಾದಿಸಿಕೊಳ್ಳಲು ಸಾಧ್ಯ. ಇದು ಜೀವನ ಸಿದ್ಧಾಂತವೂ ಅಹುದು. ವೀರಶೈವ ಧರ್ಮದ ಸಾಧನ ಪಥವೂ ಅಹುದು.

ವೀರಶೈವ ಧರ್ಮವು ವಿಶಿಷ್ಟವಾದುದಲ್ಲದೆ, ಅನಾದಿ ಸಂಸಿದ್ಧವಾದುದು. ಜಾಗತಿಕ ಧರ್ಮಗಳಲ್ಲಿ ವಿಶ್ವಮಾನ್ಯ ವೈಚಾರಿಕ ಮೌಲ್ಯಗಳನ್ನು ಹೊಂದಿದೆ. ಜಾಗತಿಕ ಬಹುತೇಕ ಧರ್ಮಗಳು ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಟ್ಟಿಗೆ ಪ್ರಯತ್ನಿಸಿದರೆ : ವೀರಶೈವವು ನಿತ್ಯದಲ್ಲಿ ಪರಮಾತ್ಮ (ಲಿಂಗ) ನೊಡನೆ ಸಾಲೋಕ್ಯ- ಸಾಮೀಪ್ಯ-ಸಾರೂಪ್ಯ-ಸಾಯುಜ್ಯಗಳೆಂಬ ಚತುರ್ವಿಧ ಮುಕ್ತಿಗಳನ್ನು ಅನುಭವಿಸುವ ಮಹಾನ್ ಧರ್ಮ; ಕೇವಲ ಅನುಭವಿಸುವದಲ್ಲ, ಅನುಭವದಲ್ಲಿ ಆನಂದ ಪಡೆದು ಸಾಮರಸ್ಯವನ್ನು ಹೊಂದುವ ಸಾಧ್ಯತೆಯುಳ್ಳುದು. ಆನಂದದ ಅನುಭೂತಿಯಲ್ಲಿ ಸಾಮರಸ್ಯದ ಸೊಂಪಿದೆ, ಕಂಪಿದೆ, ಪೆಂಪಿದೆ.

ವೀರಶೈವವು ವ್ಯಾವಹಾರಿಕ-ಸಾಮಾಜಿಕ ವ್ಯವಸ್ಥೆಯೊಂದಿಗೆ ಧಾರ್ಮಿಕ ವ್ಯವಸ್ಥೆಯಲ್ಲಿ ರೂಪಗೊಂಡಿದೆ. ವೀರಶೈವ ಸಿದ್ಧಾಂತದಲ್ಲಿ ಧರ್ಮ-ಸಂಸ್ಕೃತಿ-ಆಚಾರ-ವಿಚಾರ-ಸಾಧನೆ-ಸಿದ್ಧಿಗಳ ಸಮ್ಮಿಲನವಿದೆ. ಯಾವುದನ್ನು ಈ ದರ್ಶನ ಪ್ರತಿಪಾದಿಸುವದೋ ಅದನ್ನು ಆಚರಿಸಲು ಅವಕಾಶವಿದೆ, ಆಚರಿಸಿದಂತೆ ಅಳವಡಿಸಿಕೊಳ್ಳುವ ಯೋಗ್ಯತೆಯಿದೆ. ವೀರಶೈವವು ಪ್ರಾಯೋಗಿಕ ಸಿದ್ಧಾಂತವೆನಿಸಿದೆ. ಇದು ವ್ಯಕ್ತಿನಿಷ್ಠವಲ್ಲ, ಆತ್ಮನಿಷ್ಟವಾದುದು. ತತ್ತ್ವಗಳನ್ನು ಅರಿತು ಆಚರಿಸಿ ತತ್ತ್ವ ರೂಪಿಯಾಗುವ ವೈಶಿಷ್ಟ್ಯ ಇಲ್ಲಿದೆ. ಅಂತೆಯೇ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ಸೂತ್ರವನ್ನು ಪ್ರತಿಪಾದಿಸಿದ್ದಾರೆ.

ನಾಸ್ತಿಕ ದರ್ಶನಗಳಾದ ಜೈನ ಬೌದ್ಧರು ವೇದಾಗಮಗಳನ್ನು ಅಪೌರುಷೇಯವೆಂದು ಅವುಗಳ ಬಗೆಗೆ ಅಶ್ರದ್ಧೆ ಬೆಳಸಿದರಲ್ಲದೆ, ಶೂನ್ಯವಾದವನ್ನು ಪ್ರಾಸ್ತಾಪಿಸಿದ್ದರಿಂದ, ದೈವವನ್ನು ಪರಂಪರೆಯಾಗಿ ನಂಬಿದ ಭಾರತೀಯರಿಗೆ ಈ ಧರ್ಮದಲ್ಲಿ ನಿರಾಸಕ್ತಿ ಬೆಳೆಯಿತು. ನಿರ್ಬಲರಾದರು. ದೈವಭಕ್ತಿ-ಶಕ್ತಿ ಶೂನ್ಯರಾದರು. ಮುಂದೆ ಶಂಕರಾಚಾರ್ಯರು ಬ್ರಹ್ಮಸತ್ಯವನ್ನು ಸ್ಥಾಪಿಸಿ ಆತ್ಮಬಲವನ್ನೇನೋ ತುಂಬಿದರೂ ಜೊತೆಗೆ ಜಗನ್ಯಿಥ್ಯವೆಂದು ಸಂಸಾರದ ಅಸಾರತೆಯನ್ನು ಸಾರಿದರು. ಇದರಿಂದ ಜನರಲ್ಲಿ ಕರ್ತವ್ಯಚ್ಯುತಿ ತಲೆದೋರಿತು. ಆದರೆ ವೀರಶೈವ ಧರ್ಮವು ಶ್ರದ್ಧೆಯನ್ನೇ ಮೂಲವಾಗಿರಿಸಿ, ಸಂಸಾರದ ಅಸಾರತೆಯನ್ನು ಬದಿಗಿರಿಸಿ, ಸ್ವಾವಲಂಬನೆಯ ಮಾರ್ಗವನ್ನು ಕಲಿಸಿ ಲಿಂಗಾಂಗ ಸಾಮರಸ್ಯದ ಉನ್ನತ ಸ್ಥಿತಿಯನ್ನು ಗುಪ್ತವಾಗಿ ಸಾಧಿಸಲು ಕಲಿಸಿತು. ಈ ದಿಶೆಯಲ್ಲಿ ತತ್ವತ್ರಯಗಳು ಮಹತ್ವಪೂರ್ಣವಾಗಿವೆ. ಜೀವನ ಸಿದ್ಧಾಂತವನ್ನು ತಿಳಿಸುವ ಈ ತತ್ವತ್ರಯಗಳು ವಾಸ್ತವಿಕ ಸತ್ಯವನ್ನು ಬೋಧಿಸುವ ಅಧ್ಯಾತ್ಮಿಕ ಸಾಧನಗಳಷ್ಟೇ ಅಲ್ಲ, ನಿರಂತರ ಬಾಳಿ ಬದುಕುವ ಸಹಜ- ಸುಲಭ ಮಾರ್ಗಗಳೂ ಆಗಿವೆ.   

ವಾಸ್ತವಿಕ ಸ್ಥಿತಿಯನ್ನರಿಯದೆ ಅಷ್ಟಾವರಣ ಹಾಗೂ ಪಂಚಾಚಾರಗಳು ವೀರಶೈವ ಸಾಧಕನಿಗೆ ಲಿಂಗಾಂಗ ಸಾಮರಸ್ಯದ ಸಿದ್ಧಿಯಾಗಲು ನೇರವಾಗಿ ಕಾರಣವಾಗದೇ ಪರಂಪರಾ ಕಾರಣಗಳಾಗಿವೆಯೆನ್ನುವುದು ಸರಿಯಲ್ಲ. ಅಷ್ಟಾವರಣ- ಪಂಚಾಚಾರಗಳ ಪರಿಯಿಲ್ಲದೆ ಕೇವಲ ಷಟ್‌ಸ್ಥಲಕ್ಕೆ ಬೆಲೆಯಿಲ್ಲವೆನ ಬೇಕು. ಅಷ್ಟಾವರಣವು ಜೀವನದ ಅವಿಭಾಜ್ಯ ಅಂಗ. ದೇಹ ರಚನೆಗೆ ಅಷ್ಟ ತತ್ವಗಳು ಅವಶ್ಯ ಮತ್ತು ದೇಹ ಪೋಷಣೆಗೂ ಅಷ್ಟ ತತ್ವಗಳು ನಿತ್ಯಬೇಕು. ನಮ್ಮವರು ಈ ಬ್ರಹ್ಮಾಂಡಗತ ತತ್ವಗಳಿಗೆ ಸಂಸ್ಕಾರ ನೀಡಿದ್ದೆ ಅಷ್ಟಾವರಣದ ಪರಿಕಲ್ಪನೆಯಾದರೆ, ಜೀವಾತ್ಮನಿಗೆ ಪಂಚಪ್ರಾಣಗಳೂ ಮುಖ್ಯ. ಹಾಗೆ ವೀರಶೈವನಿಗೆ ಪಂಚಾಚಾರಗಳು ಪ್ರಾಣದಂತೆ ಮುಖ್ಯ ಗುರಿಗಳಾಗಿವೆ, ಧ್ಯೇಯವೂ ಅಹುದೆನ್ನುವುದು ಸತ್ಯ. ಶಿವಪೂಜೆಗೆ ಕುಳಿತು ವಾಮಕರದಲ್ಲಿ ಲಿಂಗವನ್ನು ಪೂಜಿಸುವ ಸಾಧಕ ಸದ್ಭಕ್ತನ ಸ್ವರೂಪವೇ ವಾಮಕರಪೀಠದಲ್ಲಿ ಭಸ್ಮದಿಂದ ಬರೆಯುವ ಪಂಚಕೋನದ ಉದ್ಧರಣೆಯಾಗಿರುವದು. ಇದು ಸ್ವಸ್ವರೂಪ. ಪಂಚಕೋನದ ಮೇಲಿನ ಭಾಗ ಶಿರಸ್ಸು, ಕೆಳಗಿನ ಎಡಬಲದ ಕೋನಗಳೆರಡು ಭುಜಗಳು, ಅದರ ಕೆಳಗಿನ ಎರಡು ಕೋನಗಳು ತೊಡೆಗಳು, ಮಧ್ಯದ ಆರನೆಯ ಭಾಗವು ಹೃದಯವೆನಿಸುವದು. ಈ ಆರರ ಕಲ್ಪನೆ ಷಟ್‌ಸ್ಥಲಕ್ಕೆ ನಾಂದಿಯಾಗಿದೆ. ಈ ತೆರನಾಗಿ ತತ್ತ್ವತ್ರಯಗಳು ಒಂದಕ್ಕೊಂದು ಅವಿನಾಭಾವ ಸಂಬಂಧವುಳ್ಳವುಗಳು. ಗುರುವಿಲ್ಲದೆ ತತ್ವ ತಿಳಿಯದು, ಅವನಿಲ್ಲದೆ ಲಿಂಗ ಲಭಿಸದು. ಲಿಂಗದ ಪ್ರಾಣ ಜಂಗಮ, ಈ ಮೂವರು ವೀರಶೈವರಿಗೆ ಪೂಜ್ಯರು, ಆರಾಧ್ಯರು. ಪೂಜ್ಯ ವಸ್ತುಗಳನ್ನು ಪೂಜಿಸುವ ಸಾಧನಗಳು ಭಸ್ಮ-ರುದ್ರಾಕ್ಷಿ ಮಂತ್ರಗಳು, ಪೂಜೆಯ ಪ್ರತ್ಯಕ್ಷಫಲ ಪಾದೋದಕ- ಪ್ರಸಾದಗಳು ವೀರಶೈವ ದರ್ಶನದಲ್ಲಿ ದೇಹ-ಪ್ರಾಣ-ಆತ್ಮರ ವಿಕಾಸವೆ ತತ್ತ್ವತ್ರಯಗಳ ಪರಿಕಲ್ಪನೆಯಾಗಿದೆ. ಆದ್ದರಿಂದ ಇವು ಅಭಿನ್ನ, ಅವಿಭಾಜ್ಯ

 ಲಿಂಗಧಾರಣವಾಗದೆ ಲಿಂಗಾಚಾರ ಅಳವಡದು, ಲಿಂಗವಿಲ್ಲದೆ ಏಕೇಶ್ವರ ಪೂಜೆಯಾಗಲಿ, ಧಾರ್ಮಿಕ ಸ್ವಾತಂತ್ರ್ಯ ವಾಗಲಿ ಲಭಿಸುವದಿಲ್ಲ. ಲಿಂಗಧಾರಿಯಾದ ಬಳಿಕ ಸಚ್ಛಾರಿತ್ರ್ಯವನ್ನು, ವ್ಯಕ್ತಿತ್ವ ವಿಕಸನವನ್ನು ರೂಪಿಸಿಕೊಳ್ಳಲೇಬೇಕು. ಲಿಂಗವನ್ನು ಪೂಜಿಸುವ ಕೈ ಯಾರನ್ನು ಬೇಡುವಂತಿಲ್ಲ. ಕಾಯಕ ಮಾಡಲೇಬೇಕು. ಕಾಯಕದೊಂದಿಗೆ ದಾಸೋಹಿಯಾಗುವದು ಸದಾಚಾರದ ಉದ್ದೇಶ. ಮೂರನೆಯ ಶಿವಾಚಾರವು ಸಹೋದರತೆಯನ್ನು, ಸಮಾನತೆಯನ್ನು ಭಾವೈಕ್ಯತೆಯನ್ನು ಬಿಂಬಿಸುವದು. ಗಣಾಚಾರವು ಧರ್ಮನಿಷ್ಠೆ, ತನ್ನ ತತ್ವಗಳ ಸಂರಕ್ಷಣೆಯ ಹೊಣೆಯನ್ನು ಬದ್ಧತೆಯನ್ನು ಕಲಿಸುವದು. ಕೊನೆಯ ಭೃತ್ಯಾಚಾರವು ವ್ಯಕ್ತಿ ಗೌರವವನ್ನು ತಿಳಿಸುವದು. ಕಿಂಕರತ್ವವವನ್ನು ಕಲಿಸುವದು. ವ್ಯಕ್ತಿ ಗೌರವದಿಂದ  ಸಮಾಜದಲ್ಲಿ ಸಾಮರಸ್ಯ ಬೆಳೆಯುವದು. ಹೀಗೆ ಪಂಚಾಚಾರಗಳು ವೀರಶೈವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಮರ್ಥವಾಗಿರುವಾಗ ಇವು ನೇರ ಕಾರಣವಾಗದೆ ಪರಂಪರಾ ಕಾರಣವೆನ್ನುವ ವಿಚಾರವನ್ನು  ಪರಿಹರಿಸುವದು. ಆಂತರಿಕ ಸಾಧನೆಗೆ ಬಾಹ್ಯ ಆಚರಣೆ ಅವಶ್ಯ.

 ಷಟ್‌ಸ್ಥಲದ ಪರಿಕಲ್ಪನೆ :

 ಷಟ್‌ಸ್ಥಲದ ಪರಿಕಲ್ಪನೆ ಪಂಚಸೂತ್ರ ಲಿಂಗದ ಪರಿಕಲ್ಪನೆಯೊಂದಿಗಿದೆ. ಲಿಂಗವು ಪ್ರಣವದ ಸ್ವರೂಪವೂ ಆಗಿರುವದು.  ಪ್ರಣವವು ತಾರಕ-ದಂಡಕ ಕುಂಡಲ-ಅರ್ಧಚಂದ್ರ-ದರ್ಪಣ ಜ್ಯೋತಿಗಳೆಂಬ ಆರವಯವವುಳ್ಳಂತೆ, ವೃತ್ತ-ಕಟಿ-ವರ್ತುಳ-ನಾಳ-ಗೋಮುಖ-ಪೀಠವೆಂಬ ಆರು ಲಕ್ಷಣವುಳ್ಳದು ಲಿಂಗವು ಮತ್ತು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ-ಅಖಂಡ ಸ್ವರೂಪನು, ಪರಶಿವನು. ವೀರಶೈವ ಸಿದ್ದಾಂತದಂತೆ ತತ್ತ್ವವಿಕಾಸ ಕ್ರಮದಲ್ಲಿ ಸಹಜ-ನಿರಾಲಂಬ ನಿರಮಯ (ನಿರ್ಮಲ) ನಿಷ್ಕಲ-ನಿರ೦ಜನ-ನಿರವಯಗಳೆಂಬ ತತ್ವಗಳನ್ನು ಪ್ರತಿಪಾದಿಸಿರುವರು. ಸರ್ವಜ್ಞತ್ವ -ನಿತ್ಯತೃಪ್ತತ್ವ – ಅನಾದಿ ಬೋಧಕ ಶಕ್ತಿ, ಸ್ವತಂತ್ರ ಶಕ್ತಿ, ಆಲುಪ್ತ ಶಕ್ತಿ, ಅನಂತಶಕ್ತಿಗಳೆಂಬ ಷಟ್‌ಶಕ್ತಿ ಸಂಪನ್ನನು, ಪರಶಿವನು. ಕರ್ತೃ-ಕರ್ಮ-ಮೂರ್ತ-ಅಮೂರ್ತ-ಶಿವ-ಮಹಾಸಾದಾಖ್ಯಗಳೆಂಬ ಆರು ಸಾದಾಖ್ಯಗಳ ಮೂಲಕ ಪರಶಿವತತ್ವ ಗೋಚರವಾಗುವದು. ಈ ತೆರನಾಗಿ ಷಟ್‌ಸ್ಥಲದ ಪರಿಕಲ್ಪನೆ ರೂಪುಗೊಂಡಿರಲು ಸಾಕು. ಷಟ್‌ಸ್ಥಲವು ತಾತ್ವಿಕವಾಗಿ ಸೈದ್ಧಾಂತಿಕವಾಗಿ ವೈಚಾರಿಕವಾಗಿ ವೈಶಿಷ್ಟ್ಯಪೂರ್ಣವಾಗಿ ಪರಿಕಲ್ಪಿತ ವಾದುದು. ಅಂತೆಯೇ ಈ ಷಟ್‌ಸ್ಥಲದ ಘನತೆಯನ್ನು ಡಾ.ಜ.ಚ.ನಿ. ಯವರು ಮಾರ್ಮಿಕವಾಗಿ ಜೀವನ ಸಿದ್ಧಾಂತ’ ದಲ್ಲಿ ನಿರೂಪಿಸಿರುವರು. ದೇಹೇಂದ್ರಿಯಗಳು, ಮನ-ಪ್ರಾಣಗಳು, ಭಾವ-ಜೀವಗಳು ನುಲಗಬಾರದು. ನೋಯಬಾರದು, ಮಲೆಯಬಾರದು, ಮಲಿನವಾಗಬಾರದು, ಮೌಲ್ಯವುಳ್ಳವುಗಳು ಆಗಬೇಕು, ಮೆರಗುಳ್ಳವುಗಳಾಗಬೇಕು. ಆಚಾರ-ವಿಚಾರವುಳ್ಳವುಗಳೂ ಶ್ರದ್ಧೆ-ನಿಷ್ಠೆ- ಅವಧಾನ ಅನುಭವ-ಆನಂದ-ಅವಿರಳತೆಯುಳ್ಳವುಗಳೂ, ಅಧ್ಯಾತ್ಮಿಕ ಘನತೆಯುಳ್ಳವುಗಳೂ ಆಗಿರಬೇಕೆಂಬುದೆ ಈ ಕೃತಿಯ ಕಲಾದೃಷ್ಟಿ. ಸಕಲೇಂದ್ರಿಯ ಪ್ರಭುತ್ವ ಬರಬೇಕು. ಆತ್ಮ ತತ್ವ ಅಳವಡಬೇಕು. ಅಂತಃಕರಣಗಳಲ್ಲಿ ಮಹಾಂತತೆ ಮೂಡಬೇಕು ಎಂಬುದೇ ಷಟ್‌ಸ್ಥಲ ಸಿದ್ಧಾಂತ ತತ್ವ. ಸತ್ಯ-ತತ್ವ ಷಡಂಗಗಳಲ್ಲಿಯೂ ಷಡ್ಲಿಂಗ (ದೃಕ್ರಿಯಾ ಚೈತನ್ಯ) ಗಳ ಸಂಪೂರ್ಣ ಲೀಲಾ ವಿಲಾಸ ಸಮನಿಸಬೇಕೆಂಬುದೇ ಷಟ್‌ಸ್ಥಲದ ಧ್ಯೇಯ. ಜಡಕರ್ಮ ಜೀವನವು ಕಳಚಿ ಮೂಢ ಜೀವನವು ಹಳಚಿ ಜೀವಕಳಾ ಜೀವನವು ಒಡಮೂಡಬೇಕು. ಸಕಲ ಕ್ರಿಯಾ ಕಲಾಪಗಳು ನಂದನವನವಾಗಬೇಕು. ಸಮ್ಯಗ್‌ಜ್ಞಾನ ಜ್ಯೋತಿರ್ಮಂಡಲವಾಗಬೇಕುʼ’ ಎಂಬುದೇ ಷಟ್‌ಸ್ಥಲ ರಹಸ್ಯವೆಂದು ಷಟ್‌ಸ್ಥಲದ ಮರ್ಮವನ್ನು ಬಿತ್ತರಿಸಿರುವರು.

 ಷಟ್‌ಸ್ಥಲದ ಪ್ರತಿಪಾದನೆ ಹನ್ನೆರಡನೆಯ ಶತಮಾನದಿಂದ ಪ್ರಾರಂಭವಾಯಿತೆನ್ನುವರು. ಆದರೆ ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು ಶ್ರೀಗುರು ವಾದಾತನು ಸಕಲಾಗಮಂಗಳ ಹೃದಯವನರಿದು ಆಚರಿಸಲು ಮತ್ತು ಬೋಧಿಸಲು ನಿರೂಪಿಸಿದ್ದುಂಟು. ಈ ಮಹಾನುಭಾವರು ಹನ್ನೆರಡನೆಯ ಶತಮಾನದಲ್ಲಿ ಷಟ್‌ಸ್ಥಲವನ್ನು ವ್ಯವಸ್ಥಿತವಾಗಿ ಶರಣ ಸಮುದಾಯಕ್ಕೆ ತಿಳಿಸಿದ ಕಾರಣ ಅವರು “ಷಟ್‌ಸ್ಥಲ ಚಕ್ರವರ್ತಿ’ ಗಳೆನ್ನಿಸಿದ್ದು ಪ್ರಸಿದ್ಧ. ಪರಶಿವನು ಮಕುಟಾಗಮದ ಕ್ರಿಯಾಪಾದದ ದ್ವಿತೀಯ ಪಟಲದಲ್ಲಿ-

“ಷಟ್‌ಸ್ಥಲೋಕ್ತ ವಿಧಾನೇನ ಮಹಾಪೂಜಾಂ ಸಮಾಚರೇತ್‌” (೨/೪೧) ಇಷ್ಟಲಿಂಗ ಪೂಜೆಯನ್ನು ಷಟ್‌ಸ್ಥಲ ಕ್ರಮದಲ್ಲಿ ತಿಳಿಸಿದ ವಿಧಾನದಂತೆ ಆಚರಿಸಬೇಕೆಂದು ಹೇಳಿ, ಭಕ್ತಾದಿ ಸ್ಥಲಗಳಲ್ಲಿ ಮಾಡಬೇಕಾದ ಕ್ರಮವನ್ನು ತಿಳಿಸುತ್ತ, ಭಕ್ತಾದಿ ಸ್ಥಲಗಳಲ್ಲಿ ಆಚರಿಸುವ ಅರ್ಪಣ ಕ್ರಮವನ್ನು ಸಹ ನಿರೂಪಿಸಿರುವನು.  ಶರಣ ಸಾಹಿತಿಗಳಾದ ಡಾ. ಹೆಚ್. ತಿಪ್ಪೇರುದ್ರಸ್ವಾಮಿಯವರು “ವಾತುಲಾಗಮದ ಉತ್ತರ ಭಾಗದಲ್ಲಿರುವ ತಂತ್ರೋತ್ತರ ಪ್ರದೀಪವೆಂಬ ಹೆಸರಿನ ಶಿವಸಿದ್ಧಾಂತ ತಂತ್ರದಲ್ಲಿ ಈಶ್ವರನು ಪಾರ್ವತಿಗೆ ಷಟ್‌ಸ್ಥಲ ನಿರ್ಣಯವನ್ನು ನಿರೂಪಿಸಿರುವದಾಗಿ ಹೇಳುತ್ತಾರೆ. ಇದನ್ನು ನೋಡಿದರೆ ಬಹುಶಃ ವಚನಕಾರರಿಗಿಂತ ಮೊದಲೇ ಷಟ್‌ಸ್ಥಲ ಸಿದ್ಧಾಂತ ಉಗಮಗೊಂಡು ಆಗಮಾದಿಗಳಲ್ಲಿ ಬೆಳೆಯುತ್ತಾ ಬರುತ್ತಿದ್ದಿತೆಂದು ಹೇಳಬಹುದು. ಬಸವಾದಿ ಶರಣರ ಕಾಲಕ್ಕೆ ಅದು ಪರಿಪೂರ್ಣತೆಯನ್ನು ಪಡೆಯಿತು. ಕೇವಲ ಸಿದ್ಧಾಂತವಾಗಿ ಉಳಿಯದೇ ಶರಣರ ಉಜ್ವಲ ಸಾಧನೆಯಿಂದ ಜೀವಂತ ಶಕ್ತಿಯಾಗಿ ಪರಿಣಮಿಸಿತು.” ಎಂದು ತಮ್ಮ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿರುವುದು ಯಥೋಚಿತವಾಗಿದೆ.

ಬಸವಾದಿ ಶಿವಶರಣರು ವಿಶೇಷವಾಗಿ ಚನ್ನಬಸವಣ್ಣನವರು ಆಗಮ ಪ್ರತಿಪಾದಿತ ಸಿದ್ಧಾಂತವನ್ನು ಜನ ಭಾಷೆಯಲ್ಲಿ ಜನತೆಗೆ ತಿಳಿಯುವಂತೆ ಕನ್ನಡ ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದರು. ತತ್ವ ನಿರೂಪಣೆಯೊಂದಿಗೆ ಷಟ್‌ಸ್ಥಲದ ಆಚರಣೆಯನ್ನು ಕ್ರಮಗೊಳಿಸಿದರು.

ಈ ಷಟ್‌ಸ್ಥಲ ಸಾಧನವು ಜೀವನ ಸಿದ್ದಾಂತವೆನಿಸಿದಂತೆ ವ್ಯಾವಹಾರಿಕ ಬದುಕಿನಲ್ಲೂ ಜೀವಾತ್ಮನು ಕೈಕೊಳ್ಳುವ ಪ್ರತಿಯೊಂದು ಕಾರ್ಯಗಳಲ್ಲಿ ಆರು ಹಂತಗಳು ಕಾಣಿಸಿಕೊಳ್ಳುತ್ತವೆ. ೧) ಮೊದಲು ಯಾವುದೊಂದು ಕೆಲಸವನ್ನು ಬಯಸಿ ಮಾಡಹತ್ತುತ್ತಾನೆ. ೨) ಕೆಲಸ ಮಾಡಿ ಫಲವನ್ನು ಪಡೆಯುತ್ತಾನೆ. ೩) ಪಡೆದುದನ್ನು ಸಂತಸದಿಂದ ಭೋಗಿಸುವನು 9) ಭೋಗಿಸಿದುದನ್ನು ಜೀರ್ಣಿಸಿಕೊಂಡು ಪ್ರಾಣವಾಗಿಸಿಕೊಳ್ಳುವನು ೫) ಪ್ರಾಣವಾಗಿಸಿಕೊಂಡುದುದಕ್ಕೆ ಶರಣಾಗುವನು ೬) ಶರಣಾದುದಕ್ಕೆ ಅದರೊಡಗೂಡುವನು.

 ಉದಾಹರಣೆಗೆ ಮಾವಿನ ಹಣ್ಣನ್ನು ತಿನ್ನಬಯಸುವದು ಬಯಸಿದುದನ್ನು ಪ್ರಯತ್ನಿಸಿ ಪಡೆಯುವದು, ಪಡೆದ ಹಣ್ಣನ್ನು ತಿನ್ನುವದು, ತಿಂದುದನ್ನು ರಕ್ತವನ್ನಾಗಿ ಪ್ರಾಣವಾಗಿಸಿಕೊಳ್ಳುವದು. ಅದರ ಆನಂದವನ್ನು ಅನುಭವಿಸುವದು. ಆ ಆನಂದದಲ್ಲಿ ಸಮರಸಗೊಳ್ಳುವದು. ಅರ್ಥಾತ್ ದೊರೆತ ಫಲವನ್ನು ಪಡೆದು ಸಂತೃಪ್ತಿಯನ್ನು ಹೊಂದುವದು. ಈ ತೆರನಾಗಿ ಪ್ರತಿಯೊಂದು ಜೀವನ ಕ್ರಿಯೆಯಲ್ಲಿ ಆರು ತೆರನಾಗುವಿಕೆಯು ಕಾಣಬರುವದರಿಂದ ಷಟ್‌ಸ್ಥಲವು ಜೀವನ ಸಿದ್ದಾಂತವೆಂಬುದು ಸ್ಪಷ್ಟವಾಗುತ್ತದೆ. ನಾಗಲಿಂಗದ ಪುಷ್ಪಗಳನ್ನು ಪರೀಕ್ಷಿಸಿದರೆ ಎಲ್ಲ ಹೂಗಳು ಆರಾರು ದಳಗಳುಳ್ಳುದಾಗಿ ಕಾಣ ಬಂದಿತು. ಷಟ್‌ಸ್ಥಲವು ವೀರಶೈವ ಪಾರಿಭಾಷಿಕ ಪದ. ತಾತ್ವಿಕ ಹಿನ್ನೆಲೆಯುಳ್ಳುದು ತಾತ್ವಿಕವಾಗಿರುವಂತೆ, ವೈಜ್ಞಾನಿಕವೂ ವ್ಯಾವಹಾರಿಕವೂ ಆಗಿದೆ.

 ಸ್ಥಲದ ವ್ಯಾಖ್ಯಾನ :

ವೈಜ್ಞಾನಿಕವಾಗಿ ಸೃಷ್ಟಿಯ ವಿಸ್ತಾರದ ವಿಚಾರದಲ್ಲಿ ‘’ಮಹಾಸ್ಪೋಟ’’ ಸಿದ್ಧಾಂತವನ್ನು ವಿವರಿಸುತ್ತಾರೆ. ಅದಕ್ಕೆ ಬಿಗ್ ಬ್ಯಾಂಗ್ ಥೇರಿ’ ಎನ್ನುವರು. ವೀರಶೈವರು ಪ್ರಕೃತಿಯ ಪ್ರಾದುರ್ಭಾವವನ್ನು ಪ್ರಣವದಿಂದ ನಿರೂಪಿಸಿರುವರು. ಪ್ರಣವದ ನಾದಬಿಂದು ಕಲೆಗಳ ವಿಸ್ತಾರದಲ್ಲಿ ಸೃಷ್ಟಿಯು ಮೈದೋರಿದೆ. ನಾದ- ಬಿಂದು-ಕಲೆಗಳಿಂದ ನಕಾರಾದಿ ಪ್ರಣವಾಕ್ಷರಗಳು ಉದಿಸುವವು. ಈ ವಿಚಾರವಾಗಿ ಜಂಗಮ ಪುಂಗವರಾದ ಶ್ರೀ ಅಲ್ಲಮಪ್ರಭು ದೇವರ ವಚನ ಇಂತಿದೆ.

ಆದಿ ಅನಾದಿ ಇಲ್ಲದಂದು ಹಮ್ಮು ಬಿಮ್ಮುಗಳಿಲ್ಲದಂದು

ಸುರಾಳ-ನಿರಾಳವಿಲ್ಲದಂದು, ಶೂನ್ಯ-ನಿಶೂನ್ಯವಿಲ್ಲದಂದು,

ಸಚಾರಚರವೆಲ್ಲ ರಚನೆಗೆ ಬಾರದಂದು

ಗುಹೇಶ್ವರನೊಬ್ಬನೆ ಇದ್ದೆಯಲ್ಲ ಇಲ್ಲದಂತೆ

 ಜಗತ್ ಸೃಷ್ಟಿಯ ಮುನ್ನ ಸೃಷ್ಟಿಕರ್ತ ಹೇಗಿದ್ದನೆಂಬುದನ್ನು ವಿವೇಚಿಸಿದ್ದರೆ : ಇಂಥ ನಿಃಕಲ ಅಥವಾ ನಿಶ್ಶೂನ್ಯದಿಂದಲೇ ಮಹಾಲಿಂಗ ಆವಿರ್ಭಾವವಾಗುವುದು. ಅದರಿಂದಲೇ ಜಗದುತ್ಪತ್ತಿಯಾಗುವುದೆಂದೂ   ತತ್ವಗಳ ವಿಸ್ತಾರವಾಗುವದೆನ್ನುವ ತೋಂಟದ ಸಿದ್ಧಲಿಂಗೇಶ್ವರರು-

ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತು

ಆ ಚಿತ್ತಿನಿಂದ ಕಾರ ಉಕಾರ ಮಕಾರಗಳೆಂಬ ಅಕ್ಷರತ್ರಯಂಗಳಾದವು

ಅಕಾರವೇ ನಾದ, ಉಕಾರವೇ ಬಂದು, ಮಕಾರವೆ ಕಳೆ

ಇಂತೀ ತ್ರಿವಿಧಕ್ಕೆ ತಾಯಿ ಒತ್ತು

ಇಂತಿ ನಾಲ್ಕು ಒಂದಾದಲ್ಲಿ ಓಂಕಾರವೆಂಬ ಪ್ರಣವದುತ್ಪತ್ತಿಯಾಯಿತ್ತು

ಆ ಓಂಕಾರವೆಂಬ ಪ್ರಣವೇ

ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ

ಮಹಾಲಿಂಗ ನೋಡಾ. ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ

ಎಂದು ನಿರೂಪಿಸಿರುವರು. ಆ ಓಂಕಾರ ಪ್ರಣವವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಮಹಾಲಿಂಗವೆನಿಸುವದು. ಅದುವೆ ಷಟ್‌ಸ್ಥಲದ ‘ಸ್ಥಲ’ ಶಬ್ದಕ್ಕೆ ವಾಚ್ಯವೆನಿಸುವದು.

 ‘ಸ್ಥಲ’ ವೆಂದರೆ ಶಬ್ದಕೋಶವು(ನಾ) ೧. ನೆಲ, ಭೂಮಿ, ೨. ಸ್ಥಲ ೩. ಜಮೀನು ಹೊಲ ೪, ಗ್ರಂಥದ ಒಂದು ಭಾಗ, ಪರಿಚ್ಛೇದ

 ೫. ಮೆಟ್ಟಿಲು, ಹಂತ, ಎಂದು ಅರ್ಥೈಸಿದೆ. ಈ ಅರ್ಥಗಳು ವ್ಯಾವಹಾರಿಕವಾಗಿವೆ. ಆದರೆ ವೀರಶೈವ ಧಾರ್ಮಿಕ ಪರಂಪರೆಯಲ್ಲಿ ಸ್ಥಲ ಶಬ್ದಕ್ಕೆ ಮೇಲಿನ ಅರ್ಥಗಳು ಅನ್ವಯಿಸುವುದಿಲ್ಲ. ಇಲ್ಲಿ ‘ಸ್ಥಲ’ ಪದದ ಅರ್ಥ ಭಿನ್ನವಾಗಿದೆ. ಸ್ಥಲ ಶಬ್ದದ ಪಾರಿಭಾಷಿಕತೆಯನ್ನು ಶಾಸ್ತ್ರಕಾರರು-

ಏಕಮೇವ ಪರಂ ಬ್ರಹ್ಮ ಸಚ್ಚಿದಾನಂದ ಲಕ್ಷಣಂ |

ಶಿವತತ್ತ್ವಂ ಶಿವಾಚಾರ್ಯಃ  ಸ್ಥಲಮಿತ್ಯಾಹುರಾದರಾತ್ ||

ಸರ್ವೇಷಾಂ ಸ್ಥಾನಭೂತತ್ವಾಲ್ಲಯಭೂತತ್ವತಸ್ತತಃ |

ತ್ವಾನಾಂ ಮಹದಾದೀನಾಂ ಸ್ಥಲ ಮಿತ್ಯಭಿದೀಯತೇ

ಎಂದು ವಿಸ್ತರವಾಗಿ ನಿರೂಪಿಸಿದ್ದಾರೆ. ಜಗತ್ತಿನಲ್ಲಿ ʼʼಏಕಮೇವಾದ್ವಿತೀಯಂ ಬ್ರಹ್ಮʼʼ ವೆಂಬ ಶ್ರುತಿ ಪ್ರಮಾಣದಂತೆ ತನ್ನಂತೆ ಅನ್ಯವಿಲ್ಲದುದು, ತಾನೊಂದೇ ಒಂದಾದುದು, ಅದುವೆ ಪರಬ್ರಹ್ಮವೆನಿಸಿದೆ. ಸತ್-ಚಿತ್-ಆನಂದ ಸ್ವರೂಪ ಲಕ್ಷಣದಿಂದ ಕೂಡಿದೆ. ಇದನ್ನೇ ನಮ್ಮವರು ಶಿವತತ್ತ್ವವೆಂದು ಗುರುತಿಸಿದರು. ಇದುವೆ ಪರಮಶಿವತತ್ವವೂ ಅಹುದು. ಇದನ್ನೆ ‘ಸ್ಥಲʼ ವೆಂದೂ ಹೇಳುವರು. ಆ ಶಿವತತ್ತ್ವವು ಮಹತ್ ತತ್ವವೇ ಆದಿಯಾದ ಸಕಲ ತತ್ವಗಳಿಗೆ ಆಧಾರಭೂತ (ಆಶ್ರಯಭೂತ) ವೂ ಲಯಭೂತವೂ ಆಗಿರುವದರಿಂದ ಸ್ಥಲವೆಂದು ಕರೆಯಲ್ಪಟ್ಟಿತು. ಒಟ್ಟಿನಲ್ಲಿ ಈ ಜಗತ್ತು ಮೊದಲು ಸ್ಥಿತಿಯನ್ನು ನಂತರದಲ್ಲಿ ಲಯವನ್ನು ಯಾವ ತತ್ವದಲ್ಲಿ ಹೊಂದುವುದೋ ಅದೇ ಸ್ಥಲವೆಂದು ಹೇಳಲ್ಪಡುವದು’. ಈ ವಿಚಾರದಲ್ಲಿ ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ-

ಏಕಏವ ಶಿವಸಾಕ್ಷಾಚ್ಛಿದಾನಂದಮಯೋ ವಿಭುಃ

ನಿರ್ವಿಕಲ್ಪೊ ನಿರಾಕಾರೋ ನಿರ್ಗುಣೋ ನಿಷ್ಟ್ರಪಂಚಕಃ

ಶಿವನೆಂದರೆ ಕೈಲಾಸಪತಿ ಎಂದು ವೀರಶೈವರು ಹೇಳುವದಿಲ್ಲ. ಇವನು ಪಾರ್ವತಿ ಪತಿಯೂ ಅಲ್ಲ. ಪೌರಾಣಿಕ ಶಿವನ ಸಂಬಂಧ ಇಲ್ಲಿಲ್ಲ. ಏಕೇಶ್ವರ ಅರ್ಥಾತ್ ಸರ್ವೇಶ್ವರನಾದವನು ಪರಶಿವನು. ಅವನೇ ಅದ್ವಿತೀಯನು. ಅವನಂತೆ ಬೇರಾರು ಇಲ್ಲದವನು, ಶಾಸ್ತ್ರಕಾರರು ಪ್ರತಿಪಾದಿಸಿದಂತೆ ಪರಶಿವನು ಸ್ವಗತ ಸಜಾತೀಯ- ವಿಜಾತಿಯಗಳೆಂಬ ಮೂರು ಭೇದಗಳಿಂದ ದೂರಾದವನು. ಸ್ವಗತವೆಂದರೆ ತನ್ನಲ್ಲಿಯದು. ಮಾನವನ ಶರೀರದಲ್ಲಿರುವ ಕೈ ಕಾಲು-ಬಾಯಿ-ಮೂಗು ಮುಂತಾದ ಅವಯವಗಳು ಒಂದರಂತೆ ಇನ್ನೊಂದಿಲ್ಲ. ಎಲ್ಲವೂ ಭಿನ್ನವಾಗಿವೆ. ಹಾಗೆ ಗಿಡಮರಗಳಲ್ಲಿ, ಪ್ರಾಣಿಗಳಲ್ಲಿ ಭೇದವನ್ನು ಗುರುತಿಸಬಹುದು. ಇನ್ನು ಎರಡನೆಯದು ಸಜಾತೀಯ ಭೇದ, ರಾಮ-ಲಕ್ಷ್ಮಣರು ಸಹೋದರರಾದರೂ ಇಬ್ಬರಲ್ಲಿ ಭಿನ್ನತೆಯಿರುತ್ತದೆ. ಗಿಡ ಮರಗಳು ಸಜಾತೀಯವಾದರೂ ಬೇರೆ ಬೇರೆಯಾಗಿ ಕಾಣಬರುತ್ತವೆ. ವಿಜಾತೀಯವೆಂದರೆ ಬೇರೆ ಬೇರೆ ಜಾತಿಗಳು, ಮಾನವರದು ಒಂದು ಜಾತಿಯಾದರೆ ಪ್ರಾಣಿಗಳದು ಮತ್ತೊಂದು ಜಾತಿ, ಹಾಗೆ ಪಕ್ಷಿಗಳದು ಅನ್ಯ ಜಾತಿ, ಇವು ಪರಸ್ಪರ ವಿಜಾತಿಯವೆನಿಸುತ್ತವೆ. ಇವು ಮೂರು ಜಾತಿಗಳು ಪರಶಿವನಲ್ಲಿ ಕಾಣುವದಿಲ್ಲ. ಅವನು ನಿರಾಕಾರನಾದ್ದರಿಂದ ಅವಯವಾದಿಗಳಿಲ್ಲ, ಅದಕ್ಕಾಗಿ ಸ್ವಗತ ಭೇದವಿಲ್ಲ. ಅವನಿಗೆ ಸಮನಾದವ ಮತ್ತೊಬ್ಬನಿಲ್ಲವಾದ್ದರಿಂದ ಸಜಾತೀಯ ಭೇದವೂ ಇಲ್ಲ. ಆತ ಅದ್ವಿತೀಯನು. ವಿಜಾತೀಯ ಭೇದವೂ ಇಲ್ಲಿ ಬರುವುದಿಲ್ಲ. ಶಿವನು ಸಚ್ಚಿದಾನಂದ ಸ್ವರೂಪನಾಗಿರುವ ದರಿಂದಲೇ ‘ಪ್ರಭು’ ಎನಿಸುತ್ತಾನೆ. ವಿಭುವೆಂದರೆ ವ್ಯಾಪಕನಾದವನು. ಸರ್ವಾಂತರ್ಯಾಮಿ ಪರಶಿವನು. ಪ್ರಪಂಚಕ್ಕೆ ಅವಕಾಶವಿತ್ತುದು ಆಕಾಶವಾದರೆ, ಈ ಆಕಾಶಕ್ಕೂ ಅವಕಾಶಕೊಟ್ಟ ಪರಮಾತ್ಮನು ಮಹಾವ್ಯಾಪಕನು. ಅವನಿಗೆ ಮತ್ತಾವುದೂ ಅವಕಾಶ ಕೊಟ್ಟಿಲ್ಲ. ಅವನೇ ಸಕಲಕೆಲ್ಲ ವ್ಯಾಪಕನಾದ ಕಾರಣ ಅವನು ವಿಭುವೆನಿಸಿದ್ದಾನೆ. ನಿರಾಕಾರ ಪರಶಿವನ ಅಸ್ತಿತ್ವವನ್ನು ಮನ್ನಿಸುವುದಾದರೆ ಅವನು ಕಾಣುವದಿಲ್ಲವೇಕೆ ? ಎಂಬ ಪ್ರಶ್ನೆ ಸಹಜವಾದುದು. ನಿರಾಕಾರವೆಂದರೆ ಆಕಾರವಿಲ್ಲದವನು. ಅವಯವವುಳ್ಳವನಿಗೆ ಸಾಕಾರವೆನ್ನುವರು. ಅವಯವಗಳು ಸಹಜ ಬರುವುದಿಲ್ಲ. ಇವು ಜನ್ಯವಾದವುಗಳು.  ತಾಯಿಯ ಗರ್ಭದಲ್ಲಿಯೇ ಅವಯವಗಳು ಮೂಡಿ ಬರುತ್ತವೆ. ಪರಮಾತ್ಮನು ಜನಿಸುವದಿಲ್ಲವಾದುದರಿಂದ ಅವನಿಗೆ ಅವಯವವಿಲ್ಲ. ಆತ ನಿರಾಕಾರ, ಆತನು ಜನಿ(ಹುಟ್ಟಿ)ಗೆ ಒಳಗಾಗಿದ್ದರೆ, ಒಂದು ದಿನ ಮರಣವನ್ನು ಹೊಂದಬೇಕಾಗುತ್ತಿತ್ತು ಜನಿಮೃತಿಗಳಿಗೆ ಹೊರಗಾದವನು. ಅವನು ಅವಿನಾಶಿಯಾಗಿದ್ದಾನೆ. ಸಾವಯವಿ ಸಾಕಾರ ವ್ಯಕ್ತಿಯಲ್ಲಿ ಸೌಂದರ್ಯವೂ ಇರಬಹುದು. ಕುರೂಪವೂ ಇರಬಹುದು. ಶಿವನು ನಿರವಯವಿ, ನಿರಾಕಾರನು. ಆದರೆ ಅವನು ಕೇವಲ ಸೌಂದರ್ಯಭರಿತನು.ʼʼ ಸತ್ಯಂ ಶಿವಂ ಸುಂದರಂʼ’ ಎಂದು ವೇದವು ವರ್ಣಿಸಿದೆ. ನಿರಾಕಾರ ಪರಶಿವನ ಅನುಪಮ ಸೌಂದರ್ಯಕ್ಕೆ ಆತ್ಮಜ್ಞಾನಿಗಳು ಮಾರು ಹೋಗುತ್ತಾರೆ. ಆತ್ಮ ಸೌಂದರ್ಯವೇ ಮುಖ್ಯವಾಗಿರುವದು. ವೀರವೀರಾಗಿಣಿ ಅಕ್ಕಮಹಾದೇವಿಯು ವರಿಸಿದ ಪತಿಯ ವರ್ಣನೆ ಹೀಗಿದೆ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವಂಗೆ ನಾನೊಲಿದೆ

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ

ಚಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ

ಭವವಿಲ್ಲದ ಭಯವಿಲ್ಲದ ನಿರ್ಭಯ ಚಲುವಂಗೊಲಿದೆ ನಾನು

ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು

ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ

ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ

ಹೀಗೆ ನಿರಾಕಾರದ ಚಲುವ ಚನ್ನಿಗ ಚನ್ನಮಲ್ಲಿಕಾರ್ಜುನನಿಗೆ ಮಾರು ಹೋದವಳು ಅಕ್ಕಮಹಾದೇವಿ. ಸಾಮಾನ್ಯವಾಗಿ ರೂಪಿದ್ದರೆ ಕೆಡಕುಂಟು, ತೊಡಕುಂಟು, ಕೊನೆಗೆ ಸಾವುಂಟು. ಆದರೆ ಈ ಚನ್ನಿಗ ಚಲುವ ರೂಪಿಲ್ಲದ ರೂಪವಂತ, ಕುರುಹಿಲ್ಲದ ಕಲಾವಂತ, ಆ ವೀರವಿರಾಗಿಣಿ ಮಹದೇವಿ ಅಕ್ಕನ ಮನವನ್ನು ಸೂರೆಗೊಂಡಿದ್ದಾನೆ, ಪರಶಿವ, ಕೊನೆಗೆ ಅವಳಿಗೆ ಭವದ ಭಯವಿಲ್ಲ; ಆತನು ನಿರ್ಭಯ ಚೆಲುವನು, ಸೀಮೆಯಿಲ್ಲದ ನಿಸ್ಸೀಮನು. ಲೌಕಿಕದಲ್ಲಿ ರೂಪಿನ ಚಿಲುವು ಚರ್ಮ ಚಕ್ಷುಗಳಿಗೆ ಮಾತ್ರ ಗೋಚರವಾಗುತ್ತದೆ. ಈ ಪರಶಿವನು ಕೇವಲ ಜ್ಞಾನ ನೇತ್ರಕ್ಕೆ ಅನುಭಾವ ಭಕ್ತಿಗೆ ಮಾತ್ರ ವೇದ್ಯವಾಗುವನು. ಶಿವನು ನಿರ್ಗುಣನೂ ಆಗಿರುವದರಿಂದ ಸದ್ಗುಣ ಶೀಲರಿಗೆ ತೋರವನು.

 ವೀರಶೈವ ದಾರ್ಶನಿಕ ಸಿದ್ಧಾಂತದಲ್ಲಿ ಪ್ರತಿಪಾದಿಸಲ್ಪಡುವ ‘ಸ್ಥಲ’ ಪದವು ಪರಶಿವ ವಾಚ್ಯವಾಗಿರುವಂತೆ ಅವನು ಶಕ್ತಿ ವಿಶಿಷ್ಟನೆಂಬುದನ್ನು ವಿವರಿಸಲಾಗಿದೆ. ಪರಶಿವನಿಗೂ ಶಕ್ತಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕಾಗಿ ‘ನ ಶಿವೇನ  ವಿನಾಶಕ್ತಿರ್ನಶಕ್ತಿ ರಹಿತಃ ಶಿವಃʼʼ ಶಿವನನ್ನು ಹೊರತುಪಡಿಸಿ ಶಕ್ತಿ ಇಲ್ಲ. ಶಕ್ತಿಯನ್ನು ಬೇರ್ಪಡಿಸಿ ಶಿವನಿಲ್ಲ. ಶಿವನಲ್ಲಿಯ ಶಕ್ತಿಯನ್ನು ಬೇರೆ ಮಾಡಿದರೆ ಶವನೆನಿಸುವನು. ವೀರಶೈವ ಸಿದ್ಧಾಂತವು ಶಕ್ತಿವಿಶಿಷ್ಟಾದ್ವೈ ತ” ವೆನಿಸಿದೆ. ಶಕ್ತಿವಿಶಿಷ್ಟನಾದ ಪರಶಿವನು ಲೀಲೆಗಾಗಿ ʼʼಏಕೋಹಂ ಬಹುಸ್ಯಾಂ ಪ್ರಜಾಯೇಯ” ಎಂಬ ಉಪನಿಷನ್ಮಂತ್ರದಂತೆ ತಾನೊಬ್ಬನೇ ಇರುವದು ಸರಿಯಲ್ಲ ; ನಾನು ಬಹಳ ವಿಸ್ತಾರವಾಗಬೇಕೆಂಬ ಸಂಕಲ್ಪ ಮಾಡಲಾಗಿ ಉಪಾಸ್ಯ ಮತ್ತು ಉಪಾಸಕ ಭೇದದಿಂದ ಲಿಂಗ ಹಾಗೂ ಅಂಗವೆಂದು ಎರಡು ತೆರನಾಗುವದು. ಇಲ್ಲಿ ಲಿಂಗವು ಉಪಾಸ್ಯವಾದರೆ, ಅಂಗವು ಉಪಾಸಕವೆನಿಸುವದು. ಉಪಾಸ್ಯವೆಂದರೆ ಪೂಜ್ಯ ವಸ್ತು, ಉಪಾಸಕನೆಂದಾದರೆ ಪೂಜ್ಯ ವಸ್ತುವನ್ನು ಪೂಜಿಸುವವನು. ಈ ವಿಚಾರವನ್ನು ಸಿದ್ಧಲಿಂಗ ಯತಿಗಳು ವಿಸ್ತಾರವಾಗಿ ತಮ್ಮ ವಚನದಲ್ಲಿ ವಿವರಿಸಿರುವರು.

ಷಟ್ ಸ್ಥಲದ ವಿಕಾಸ :

ಆ ನಿಃಕಲ ಶಿವತತ್ವ ತಾನೊಂದೆ

ತನ್ನ ಶಕ್ತಿಯ ಚಲನೆ ಮಾತ್ರದಿಂದ

ಒಂದೆರಡಾಯಿತು ನೋಡಾ.

ಅದರೊಳಗೆ ಒಂದು ಲಿಂಗಸ್ಥಲ ಮತ್ತೊಂದು ಅಂಗಸ್ಥಲ

ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕವೆಂದು

ವರ್ತಿಸುತ್ತಿಹುದು ನೋಡಾ.

ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು

ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು

ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.

ಶಕ್ತಿಯೇ ಪ್ರವೃತ್ತಿಯೆನಿಸಿತ್ತು

ಭಕ್ತಿಯೇ ನಿವೃತ್ತಿಯೆನಿಸಿತ್ತು

ಶಕ್ತಿ-ಭಕ್ತಿಯೆಂದೆರೆಡು ಪ್ರಕಾರವಾಯಿತ್ತು ಶಿವನ ಶಕ್ತಿ

ಲಿಂಗವಾರು ತೆರನಾಯಿತು, ಅಂಗವಾರು ತೆರನಾಯಿತ್ತು

ಶಕ್ತಿಯಾರು ತೆರನಾಗಿತ್ತು, ಭಕ್ತಿಯಾರು ತೆರನಾಗಿತ್ತು

ಅದು ಹೇಂಗೆಂದಡೆ

 ಮೊದಲಲ್ಲಿ ಲಿಂಗ ಮೂರು ತೆರನಾಗಿತ್ತು

ಅದು ಹೇಂಗೆಂದಡೆ

 ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು

ಮೂರು ತೆರನಾಗಿತ್ತು

ಅಂಗವೂ ಮೂರು ತೆರನಾಯಿತ್ತು, ಅದು ಹೇಂಗೆಂದಡೆ

ಯೋಗಾಂಗವೆಂದು, ಭೋಗಾಂಗವೆಂದು, ತ್ಯಾಗಾಂಗವೆಂದು

ಅಂಗವು ಮೂರು ತೆರನಾಯಿತು

ಈ ತೆರನಾಗಿ ಷಟ್‌ಸ್ಥಲದ ವಿಕಾಸವು ವಿಸ್ತಾರವಾದುದನ್ನು ಅವಲೋಕಿಸಬಹುದು. ಪರಶಿವ ಲೀಲಾವಿಲಾಸಕ್ಕಾಗಿ ಉಪಾಸ್ಯ ಲಿಂಗವೆಂದು ಉಪಾಸಕ ಅಂಗವೆಂದು ಎರಡಾಯಿತು. ಎರಡಾದುದು ಮೂರು ಮೂರು ತೆರನಾಗುವದು. ಪ್ರತಿಯೊಬ್ಬ ಮಾನವನಿಗೆ ದೇಹವು ಸ್ಥೂಲ, ಸೂಕ್ಷ್ಮ, ಕಾರಣವೆಂದು ಮೂರರ ಅನುಭವವಾಗುವದು. ಕಾಣುವ ಶರೀರವೆ ಸ್ಥೂಲವು ನಿದ್ರಾವಸ್ಥೆಯಲ್ಲಿ ವ್ಯಕ್ತವಾಗುವದೇ ಸೂಕ್ಷ್ಮ ಶರೀರ, ಸುಷುಪ್ತ್ಯಾವಸ್ಥೆಯಲ್ಲಿ ಗೋಚರವಾಗುವದೇ ಕಾರಣ ಶರೀರ. ಮೂರು ಶರೀರಗಳಲ್ಲಿ ಅಂಟಿಕೊಂಡ ಕಾರ್ಮಿಕ ಮಲ, ಮಾಯಾಮಲ, ಆಣವ ಮಲಗಳೆಂಬ ಮೂರು ದೋಷಗಳು ಮೂರು ಶರೀರದಲ್ಲಿ ಮನೆ ಮಾಡಿರುವುದನ್ನು ಸದ್ಗುರುನಾಥನು ಮೂರು ದೀಕ್ಷೆಗಳಿಂದ ಪರಿಹರಿಸಿದಾಗ ಜೀವಾತ್ಮನು ಅಂಗನೆನಿಸುವನು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರ ಭೋಗಾಂಗವೆನಿಸುವದು. ಕಾರಣ ಶರೀರವು ಯೋಗಾಂಗವೆನಿಸುವದು. ಈ ಮೂರು ಅಂಗಗಳಿಗೆ ಕ್ರಮವಾಗಿ ಇಷ್ಟಲಿಂಗ-ಪ್ರಾಣಲಿಂಗ- ಭಾವಲಿಂಗಗಳನ್ನು ಗುರು ಕರುಣಿಸುತ್ತಾನೆ. ಮೂರಂಗಗಳು ಎರಡೆರಡು ಭಾಗವಾಗಿ ಭಕ್ತ ಮಹೇಶ-ಪ್ರಸಾದಿ-ಪ್ರಾಣಲಿಂಗಿ- ಶರಣ-ಐಕ್ಯವೆಂದು ಆರಾದರೆ, ಮೂರು ಲಿಂಗಗಳು ಆಚಾರಲಿಂಗ- ಗುರುಲಿಂಗ-ಶಿವಲಿಂಗ- ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗಗಳೆ೦ದು ಆರು ತೆರನಾಗುವದೇ ಷಟ್‌ಸ್ಥಲದ ವಿಕಾಸವಾಗುವುದು. ಇದರಂತೆ ಲಿಂಗಗತ ಕಲೆ ಹಾಗೂ ಶಕ್ತಿಯು ನಿವೃತ್ತಿ ಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆಗಳೆಂದು ಆರು ಕಲೆಗಳೆನಿಸುವವು. ಶಕ್ತಿಯು- ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ-ಚಿಚ್ಛಕ್ತಿಗಳೆಂದು ಆರು ತೆರನಾಗುವದು. ಅದರಂತೆ ಅಂಗಗತ ಭಕ್ತಿಯು ಶ್ರದ್ಧಾ-ನಿಷ್ಠಾ ಅವಧಾನ-ಅನುಭವ-ಆನಂದ ಸಮರಸವೆಂದು ಷದ್ವಿಧವಾಗುವದು.

 ವೀರಶೈವ ಸಿದ್ಧಾಂತವು ಪ್ರಾಯೋಗಿಕ ದರ್ಶನ’ ವೆಂಬ ವಿಚಾರವನ್ನು ಈ ಮೊದಲು ನಿರೂಪಿಸಲಾಗಿದೆ. ಮಹಾಲಿಂಗದಿಂದ ಆಚಾರ ಲಿಂಗದ ವಿಕಾಸವನ್ನು ಯೋಗಾಂಗದಿಂದ ತ್ಯಾಗಾಂಗ ವಿಚಾರವನ್ನು ಮಾಡುವದು ಪ್ರವೃತ್ತಿ ಮಾರ್ಗವೆನಿಸಿದರೆ ಭಕ್ತನು ನಿವೃತ್ತಿ ಕಲೆಯುಳ್ಳ ಕ್ರಿಯಾಶಕ್ತಿಯುಕ್ತ ಆಚಾರ ಲಿಂಗವನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಮಾರ್ಗವು ನಿವೃತ್ತಿ ಪಥವೆನಿಸುವದು. ಷಟ್‌ಸ್ಥಲವು ಹಂತ ಹಂತವಾಗಿ ಸೋಪಾನಗಳನ್ನು ಹತ್ತುವದೇ ಆಗಿದೆ. ಭಕ್ತಾದಿ ಸ್ಥಲಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಗೆವುದೇ ಷಟ್‌ಸ್ಥಲ ಸಾಧನವೆನಿಸುವದು. ಪ್ರವೃತ್ತಿಯಿಂದ ನಿವೃತ್ತಿಯತ್ತ ಸಾಗುವುದೇ ಷಟ್‌ಸ್ಥಲದ ಮಣಿಹ. ಅಷ್ಟೇ ಅಲ್ಲ ಸಾಧನೆಯಿಂದ ಸಾಮರಸ್ಯವನ್ನು ಸಾಧಿಸುತ್ತಾ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ತಾನಾಗುವುದು ಷಟ್‌ಸ್ಥಲದ ಮುಖ್ಯ ಧ್ಯೇಯ.

೧. ಭಕ್ತಸ್ಥ

ಪರಶಿವನ ಷಟ್‌ಶಕ್ತಿಗಳ ಸಂಕೋಚದಿಂದ ಜೀವಿಗಳಾಗಿ ಪರಿಣಮಿಸಿದರೆ; ಆ ಷಟ್‌ಶಕ್ತಿಗಳ ವಿಕಾಸವೇ ಷಟ್‌ಸ್ಥಲದ ಸಾಧನೆ. ಪರಮಾತ್ಮನ ಶಕ್ತಿ ಸಂಕೋಚತನವುಳ್ಳ ಜೀವಾತ್ಮನು ಷಟ್‌ಶಕ್ತಿಗಳ ಆವಿಷ್ಕಾರ ಮಾಡಿಕೊಳ್ಳುತ್ತಾ ಸಾಧನೆಯನ್ನು ಪ್ರಾರಂಭಿಸುವನು. ಈ ಜೀವಾತ್ಮನು ಶ್ರೀಗುರು ಕೃಪೆಯಿಂದ ಇಷ್ಟಲಿಂಗವನ್ನು ಪಡೆದಾಗ ಪ್ರಾಣಸ್ವರೂಪವೆನಿಸಿದ ಪಂಚಾಚಾರಗಳು ಮುಹೂರ್ತಗೊಳ್ಳುವವು. ಇಷ್ಟಲಿಂಗ ಧಾರಣೆಯಿಂದ ಲಿಂಗಾಚಾರವು ಅಳವಡುವುದು. ಲಿಂಗಾಚಾರಿಯಾದ ಭಕ್ತನು ಸದಾಚಾರಗಳನ್ನು ತಪ್ಪದೆ ಆಚರಿಸಬೇಕು. ಸಾಮಾನ್ಯವಾಗಿ ಯಾವುದೊಂದು ಕಾರ್ಯಪ್ರವೃತ್ತನಾಗುವ ಮಾನವನ ಉದ್ದೇಶ ಸಂತೃಪ್ತಿಯನ್ನು ಪಡೆಯುವುದೇ ಆಗಿರುವಂತೆ; ಸಾಗರದಿಂದ ಆವಿಯಾಗಿ ಬೇರ್ಪಟ್ಟ ನೀರಿನ ಹನಿಯು ಪುನಃ ಸಾಗರ ಸೇರುವವರೆಗೆ ಸಮಾಧಾನವಿಲ್ಲದೆ ಚಂಚಲವಾಗಿರುತ್ತದೆ. ಆವಿಯಾಗಿ ಮೇಲೆ ಹೋಗಿ ಮೋಡವಾದರೂ ಅದಕ್ಕೆ ಸಮಾಧಾನವಿರುವುದಿಲ್ಲ. ಇತ್ತಿಂದತ್ತ ಅತ್ತಿಂದಿತ್ತ ಸಂಚರಿಸುತ್ತಲೇ ಇರುವದು. ಗುಡುಗುಡಿಸಿ ಅರ್ಭಟಿಸುವದು ಮಳೆಯ ಹನಿಯಾಗಿ ಭೂಮಿಯತ್ತ ಧಾವಿಸುವಾಗ ಮತ್ತಷ್ಟು ತೀವ್ರತೆಯಿರುತ್ತದೆ. ಆ ತೀವ್ರತೆ ಮುಂದುವರೆದು ಹಳ್ಳಕೊಳ್ಳವಾಗಿ ನದಿಯ ಮೂಲಕ ಸಾಗರ ಸೇರಿ ಶಾಂತಿಯನ್ನು ಹೊಂದುವದು. ನಿರಂತರ ಚಲನಶೀಲವಾದ ನೀರು ಸ್ವಚ್ಛವಾಗಿರುವಂತೆ ಸಾಧನ ಶೀಲನಾದ ಸದ್ಭಕ್ತನು ಅತ್ಯಂತ ಶುದ್ಧನೂ ಪವಿತ್ರನೂ ಆಗಿ ಪರಿಣಮಿಸುವನು.

 ಷಟ್‌ಸ್ಥಲದಲ್ಲಿ ಪ್ರಥಮ ಸ್ಥಲವೇ ಭಕ್ತಸ್ಥಲ. ಇದು ತ್ಯಾಗಾಂಗದ ಪ್ರಥಮ ಹಂತವೆನಿಸಿದೆ. ತ್ಯಾಗಾಂಗದಲ್ಲಿ ಭಕ್ತಸ್ಥಲ ಮತ್ತು ಮಹೇಶ್ವರ ಸ್ಥಲಗಳೆಂದು ವಿಭಾಗವಾಗಿವೆ. ಆದಯ್ಯ ಶರಣನು “ತನುಗುಣವಳಿದಲ್ಲಿ ತ್ಯಾಗಾಂಗ” ಎಂದು ತ್ಯಾಗಾಂಗದ ವ್ಯಾಖ್ಯಾನ ಮಾಡಿರುವನು. ತನುವಿನಲ್ಲಿ ಅನಂತ ಗುಣಗಳು-ದುರ್ಗುಣಗಳು ಸಂಭವಿಸುತ್ತವೆ.

 ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು “ಕರಣಹಸಿಗೆ’ ಯಲ್ಲಿ ತನುವಿನಲ್ಲಿ ಉದ್ಭವಿಸುವ ಅಷ್ಟಮದಗಳನ್ನು, ಸಪ್ತವ್ಯಸನಗಳನ್ನು, ಷಡೂರ್ಮಿಗಳನ್ನು, ಅರಿಷಡ್ ವೈರಿಗಳನ್ನು, ಷಡ್‌ ಭ್ರಮೆಗಳನ್ನು ಷದ್ಭಾವ ವಿಕಾರಗಳನ್ನು, ತ್ರಿದೋಷಗಳನ್ನು, ಸದ್ಭಾವ-ದುರ್ಭಾವತ್ರಯ ಇತ್ಯಾದಿ ವಿಷಯಗಳನ್ನು ವಿವರಿಸಿರುವರು. ಇವೆಲ್ಲವುಗಳಿಗೆ ಮೂಲವಾದುದು ಅಹಂಭಾವ, ತಾನಲ್ಲದ್ದನ್ನು ತಾನೆಂದು ಭಾವಿಸಿ ಅಭಿಮಾನ ಪಡುವ ಚಿತ್ತವೃತ್ತಿಗೆ ಅಹಂಕಾರವೆನ್ನುವರು. ಕುಲ-ಛಲ ಧನ-ರೂಪ-ಯೌವನ- ವಿದ್ಯೆ-ರಾಜ್ಯ-ತಪಸ್ಸುಗಳೆಂಬ ಅಷ್ಟಮದಗಳು, ಮದವೆಂದರೆ ಮತ್ತು, ಅಮಲು, ಸೊಕ್ಕು, ಗರ್ವವೆಂದು ಕೋಶಕಾರರು ತಿಳಿಸಿರುವರು. ನಾವು ಉತ್ತಮ ಕುಲದಲ್ಲಿ ಜನಿಸಿದವರೆಂಬುದು, ಉಳಿದವರು ನಮಗೆ ಸರಿಯಲ್ಲವೆ೦ಬ ಭಾವವೇ ಮದ, ಛಲವೆ೦ದರೆ ಹಟ, ಯಾವುದೇ ವಿಷಯದಲ್ಲಾದರೂ ನನ್ನದೇ ಮೇಲೆಂಬ ಹಟವೇ ಛಲ ಮದ, ಶ್ರೀಮಂತಿಕೆ ಹೆಚ್ಚಾದಾಗ ಧನಮದ ಆವರಿಸುವದು. ನನ್ನ ರೂಪ ಲಾವಣ್ಯಕ್ಕೆ ಯಾರೂ ಸರಿಯಿಲ್ಲವೆಂಬುದು ರೂಪಮದ, ವಯಸ್ಸಿಗೆ ಬಂದವನಲ್ಲಿ ಯೌವನಮದ ಸಹಜವಾಗುವದು. ನನ್ನ ಪಾಂಡಿತ್ಯಕ್ಕೆ ಬೇರಾರೂ ಸಮಾನರಲ್ಲವೆಂಬುದು ವಿದ್ಯಾಮದ, ಇಂದಿನ ದಿನಮಾನಗಳಲ್ಲಿ ಪ್ರಜಾಪ್ರಾತಿನಿಧ್ಯದ ಅಧಿಕಾರವೇ ರಾಜ್ಯಮದ, ಸನ್ಯಾಸಿಗಳಿಗೆ ತಪಸ್ಸು, ಅನುಷ್ಠಾನದ ಮದ ಆವರಿಸುವದು.  ಅಭಕ್ಷ್ಯಭಕ್ಷಣ, ಅಪೇಯಪಾನ ಜೂಜಾಟ, ವೇಶ್ಯಾಗಮನ, – ಕಠೋರ ಮಾತನಾಡುವದು, , ಬೇಟೆಯಾಡುವದು, ಕಳವು ಮಾಡುವದು, ಇವೆಲ್ಲವೂ ತನುವಿನಿಂದಲೇ ನಡೆಯುತ್ತವೆ. ಹಸಿವು, ನೀರಡಿಕೆ, ದುಃಖ, ವ್ಯಾಮೋಹ, ಮುಪ್ಪು- ಮರಣಗಳೆ ದೇಹಕ್ಕೆ ಆವರಿಸುವ ತೆರೆಗಳು. ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳು ಅನಿಮಿತ್ತವಾಗಿ ತನುವಿನಲ್ಲಿ ಉದ್ಭವಿಸುವ ವೈರಿಗಳು, ಜಾತಿ-ವರ್ಣ- ಆಶ್ರಮ-ಕುಲ-ಗೋತ್ರ-ನಾಮಗಳೆಂಬ ಆರು ವಿಕಾರಗಳಿಂದ ತನು ಕೂಡಿದೆ. ತಾಯಿ ಹೊಟ್ಟೆಯಲ್ಲಿ ಗರ್ಭವುಂಟಾಗುವದು, ಗರ್ಭಾವಾಸದಿಂದ ಹೊರ ಬರುವದು, ಕ್ರಮೇಣ ಪರಿಣಾಮ ಹೊಂದುವದು, ಬಹಳವಾಗಿ ಬೆಳೆಯುವದು, ಮುಪ್ಪಿನಿಂದ ಕುಸಿಯುವದು, ಕೊನೆಗೆ ಸಾಯುವದು. ಅವಿದ್ಯೆ-ಅಸ್ಮಿತೆ- ರಾಗ-ದ್ವೇಷ-ಅಭಿನಿವೇಶಗಳೆಂಬ ಪಂಚಕ್ಲೇಶಗಳಿಂದ ಕೂಡಿದೆ. ಸತ್ವ-ರಜ-ತಮಸ್ಸಗಳೆಂಬ ಗುಣತ್ರಯಗಳಿವೆ. ಈ ಮೂರು ಗುಣಗಳಿಂದ ಮೂರಹಂಕಾರಗಳುಂಟಾಗುತ್ತವೆ. ಅಧ್ಯಾತ್ಮಿಕ-ಆದಿಭೌತಿಕ, ಆದಿದೈವಿಕಗಳೆಂಬ ತಾಪತ್ರಯಗಳು ಬರುತ್ತವೆ. ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ ಮೂರವಸ್ಥೆಗಳು ಜರುಗುತ್ತವೆ. ಶರೀರವು ವಾತ-ಪಿತ್ತ-ಶ್ಲೇಷಗಳೆಂಬ ಅನೇಕ ರೋಗಗಳಿಗೆ ತುತ್ತಾಗುವದು. ಸದ್ಭಾವನೆಗಳು- ದುರ್ಭಾವನೆಗಳು ಶರೀರದಲ್ಲಿ ಕಾಣಬರುತ್ತವೆ. ಹೀಗೆ ಅನೇಕ ಗುಣಗಳಿಗೆ ಆಕರವಾಗಿರುವ ದೇಹದ ಗುಣಗಳನ್ನು ಭಕ್ತನಾದವನು ಕಳೆದುಕೊಳ್ಳಬೇಕಾಗುವದು. ಸ್ಪಟಿಕದ ಘಟದಂತೆ ಒಳಹೊರಗೂ ಶುದ್ಧನಾದರೆ ಮಾತ್ರ ಭಕ್ತತನ ಬರುವದು. ಬಸವಣ್ಣನವರು-

 ಒಳಗೆ ಕುಟಿಲ, ಹೊರಗೆ ವಿನಯವಾಗಿ

 ಭಕ್ತರೆನಿಸಿಕೊಂಡವರ ಬಲ್ಲನೊಲ್ಲನಯ್ಯಾ ಲಿಂಗವು,

ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯಾ,

ಒಳಹೊರಗೊಂದಾಗದವರಿಗೆ

ಅಳಿಯಾಶೆದೋರಿ ಬೀಸಾಡುವನವರ

ಜಗದೀಶ ಕೂಡಲಸಂಗಮದೇವಾ

ಎಂಬುದಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿರುವರು. ಭಕ್ತನಾದವನು ಒಳಹೊರಗೆ ಶುದ್ಧನಾಗಿರಬೇಕು. ಬಾಹ್ಯದಲ್ಲಿ ವಿನಯವ೦ತಿಕೆ ತೋರಿ ಅಂತರಂಗದಲ್ಲಿ ಕುಟಿಲ ಕುಹಕತನ ದುರ್ವ್ಯಸನಗಳನ್ನಿರಿಸಿಕೊಂಡರೆ ಭಕ್ತನೆನಿಸುವದಿಲ್ಲ. ಎಲ್ಲವನ್ನು ಬಲ್ಲ ಲಿಂಗತಂದೆಯು ಇಂಥವನಿಗೆ ಕೃಪೆ ತೋರುವುದಿಲ್ಲ. ಇವರು ಸನ್ಮಾರ್ಗಕ್ಕೆ ಸಲ್ಲುವುದೂ ಇಲ್ಲ. ಭಕ್ತನು ಒಳಗೂ ಹೊರಗೂ ಒಂದಾಗಬೇಕು. ಇಲ್ಲದಿದ್ದರೆ ಲೌಕಿಕ ಆಶಾಪಾಶದಲ್ಲಿ ಮುಳುಗಿಸಿ ಶಿವನು ಭವ ಬಂಧನಕ್ಕೆ ನೂಕುವನು. ಶಿವಾನುಭವಿ ಮೈಲಾರ ಬಸವಲಿಂಗ ಶರಣರು ಸೂತ್ರ ಬದ್ಧವಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿದ್ದಾರೆ.

ಗುರುಸೇವಾ ಭೃತ್ಯತ್ವ-ಚಿರಲಿಂಗದೇಕತ್ವ

ವರಸತ್ಕಾಯಕ ಉರೆ ದಾಸೋಹವೆ ಭಕ್ತ-

ನಿರವೆಂದ ಗುರುವೆ ಕೃಪೆಯಾಗು

ಭಕ್ತನ ಹೊರಬಾಳು ಇಲ್ಲಿದೆ. ಭಕ್ತನು ಗುರುಸೇವೆ, ಕಿಂಕರ ಭಾವನೆ, ಗುರು-ಲಿಂಗ- ಜಂಗಮರಲ್ಲಿ ಅಭಿನ್ನತೆ, ಕಾಯಕ ನಿಷ್ಠೆ ಮತ್ತು ದಾಸೋಹಂಭಾವಗಳನ್ನು ಮೈಗೂಡಿಸಿಕೊಳ್ಳಬೇಕಾಗುವದು. ಭಕ್ತನು ಕಾಯಕ ನಿಷ್ಠನಾಗಿ ದಾಸೋಹಂಭಾವಿಯಾಗಬೇಕು. ಕಾಯಕವಿಲ್ಲದ ಕೈಯಿಂದ ಲಿಂಗವನ್ನು ಪೂಜಿಸಲು ಯೋಗ್ಯವಾಗುವದಿಲ್ಲ. ಅಂತೆಯೇ ಬಸವ ಮಹಾನುಭಾವರು ಇನ್ನೊಂದಡೆ

ಮಾಡುವ ನೀಡುವ ಭಕ್ತನ ಕಂಡಡೆ

ನಿಧಿನಿಧಾನವ ಕಂಡಂತಾಯಿತ್ತು

ಪಾದೋದಕ-ಪ್ರಸಾದ ಜೀವಿಯ ಕಂಡಡೆ

ಹೋದ ಪ್ರಾಣ ಬಂದಂತಾಯಿತ್ತು

ಎಂದು ಭಕ್ತನ ಕರ್ತವ್ಯ ಕರ್ಮವನ್ನು ಚನ್ನಾಗಿ ನಿರೂಪಿಸಿರುವರು. ಕಾಯಕ ಮಾಡುತ್ತಾ ದಾಸೋಹ ಗೈಯುವುದೆ ಭಕ್ತತನಕ್ಕೆ ಭೂಷಣವೆಂತಲೂ, ಆತನೇ ಸಮಾಜದಲ್ಲಿ ನಿಧಿ-ವಿಧಾನ, ಗುರುಲಿಂಗ ಜಂಗಮರ ಪಾದೋದಕ ಪ್ರಸಾದಕ್ಕಾಗಿ ಭಕ್ತನು ಸದಾ ಬಯಸುವಂತಾಗಬೇಕು.

ಷಟ್‌ಸ್ಥಲದಲ್ಲಿ ಮೊದಲನೆಯ ಮೆಟ್ಟಿಲು ಭಕ್ತಸ್ಥಲ, ಎಲ್ಲ ಸ್ಥಲಗಳಿಗೆ ಅದುವೇ ಆಧಾರಭೂತವಾದುದು. ಷಟ್‌ಸ್ಥಲವು ಕೇವಲ ತಾತ್ವಿಕ ಬೋಧನೆಯನ್ನಷ್ಟೇ ಕಲ್ಪಿಸುವದಿಲ್ಲ, ಭೌತಿಕದಲ್ಲಿ ಬಾಳುವ ಕಲೆಯನ್ನು ಸಹ ತಿಳಿಸುತ್ತದೆ. ಭಕ್ತನಿಗೆ ಆಚಾರ ಲಿಂಗವೇ ಆರಾಧ್ಯ ವಸ್ತು, ಶ್ರದ್ಧಾಭಕ್ತಿಯೇ ಮೂಲ ದ್ರವ್ಯವಾಗಬೇಕು. ಭಕ್ತಸ್ಥಲದಲ್ಲಿ ದ್ವೈತಾದ್ವೈ ತವಿದೆ. ಆತ್ಮ-ಪರಮಾತ್ಮರ ದರ್ಶನವಿದೆ. ಪೂಜ್ಯ-ಪೂಜಕ ಭಾವವಿದೆ. ಶಕ್ತಿ-ಭಕ್ತಿಗಳ ಸಮ್ಮಿಲನವಿದೆ. ಸಾಧನೆ-ಸಿದ್ಧಿಗೆ ಅವಕಾಶವಿದೆ. ಕ್ರಿಯಾಶಕ್ತಿ ಜಾಗ್ರತವಾಗಿ ನಿವೃತ್ತಿ

ಕಲೆಯುಳ್ಳ ಆಚಾರ ಲಿಂಗವನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಬೇಕು. ಮೇಲೆ ವಿವರಿಸಿದ ಕಾಯಗುಣಗಳಳಿದು ಶಿವಗುಣಗಳು ಮೈಗೂಡಬೇಕು, ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂಬ ಭಾವ ಗಟ್ಟಿಗೊಳ್ಳಬೇಕು.

 ಕಂಡಭಕ್ತರಿಗೆ ಕೈಮುಗಿವಾತನೇ ಭಕ್ತ

ಮೃದು ವಚನವೇ ಸಕಲ ಜಪಂಗಳಯ್ಯಾ

ಮೃದು ವಚನವೇ ಸಕಲ ತಪಂಗಳಯ್ಯಾ

ಸದುವಿನಯವೇ ಸದಾಶಿವನ ಒಲುಮೆಯಯ್ಯಾ

ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ

ಲಿಂಗ ಧರಿಸಿದ ಭಕ್ತನು ಅಂಗದ ಮೇಲೆ ಲಿಂಗವುಳ್ಳ ಭಕ್ತರನ್ನು ಕಂಡರೆ ಕೈಮುಗಿಯಬೇಕು. ಬಡವ ಶ್ರೀಮಂತನೆನ್ನದೆ ವ್ಯಕ್ತಿ ಗೌರವ ನೀಡುವದೇ ಭೃತ್ಯಾಚಾರ, ಮೃದು ವಚನಗಳಿಂದ ಮಾತನಾಡುವದೆ ಜಪ-ತಪವೆನಿಸುವದು, ಸದುವಿನಯವೇ ಸದಾಶಿವನ ಕೃಪೆಗೆ ಕಾರಣವಾಗುವದು. ಹೀಗೆ ಸಾಧಕನು ಭಕ್ತಸ್ಥಲವನ್ನು ಆಚಾರನಿಷ್ಠನಾಗಿ ಶ್ರದ್ಧೆಯಿಂದ ಕಾಯಕ-ದಾಸೋಹದಲ್ಲಿ ತೊಡಗಿಸಿಕೊಳ್ಳಬೇಕು.

೨. ಮಾಹೇಶ್ವರ ಸ್ಥಲ

ಶ್ರದ್ಧಾಭಕ್ತಿಯುಳ್ಳ ಭಕ್ತನು ಆಚಾರ ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರಿಂದ ಮಾಹೇಶ್ವರ ಸ್ಥಲವನ್ನು ಪ್ರವೇಶಿಸುವನು. ಇದು ಷಟ್‌ಸ್ಥಲದ ಎರಡನೇ ಹಂತ. ನೆಲತತ್ತ್ವಾಂಗನಾದ ಭಕ್ತನು ಭೂಮಿಯ ಸಹನಶೀಲತೆ, ತಾಳ್ಮೆ, ಕಿಂಕರತ್ವ ಗುಣಗಳನ್ನು ಸಂಪಾದಿಸಿಕೊಂಡಂತೆ; ಜಂಗಮವಾದ ಮಹೇಶ್ವರನು ನೀರಿನಂತೆ ಪರಿಶುದ್ಧತೆಯನ್ನು ಮತ್ತು ಸಚ್ಛಾರಿತ್ರ್ಯವನ್ನು ತನ್ನದಾಗಿಸಿಕೊಳ್ಳಬೇಕಾಗುವದು. ಇಲ್ಲಿ ಸದಾಚಾರ ಸುವಿಚಾರಗಳು ಪ್ರಾಮುಖ್ಯವಾಗುವವು. ಇದರಿಂದ ಸದ್ಭಕ್ತನಲ್ಲಿ ವ್ಯಕ್ತಿತ್ವ ವಿಕಸನವಾಗುವದು. ವ್ಯಕ್ತಿತ್ವದ ಹಿರಿಮೆ-ಗರಿಮೆಗಳನ್ನು ಬೆಳೆಸಿಕೊಳ್ಳುತ್ತ ಗುರುಲಿಂಗದ ಆರಾಧಕನಾಗಬೇಕಾಗುವದು.

 ಷಟ್‌ಸ್ಥಲ ಸಿದ್ಧಾಂತದಲ್ಲಿ ವಿಶೇಷವಾಗಿ ಭಕ್ತಿಯೇ ಜೀವಾಳವೆನಿಸುತ್ತದೆ. ಷಟ್‌ಸ್ಥಲಾತ್ಮಕ ಭಕ್ತಿಯ ವಿಕಾಸವಾಗುವದರಿಂದ ಭಕ್ತನಲ್ಲಿ ಶಕ್ತಿಯ ಸಂಚಯವಾಗುವದು. ಸ್ಥಲಪದ ವಾಚ್ಯನಾದ ಪರಶಿವನು ಸ್ವವಿಮರ್ಶಾರೂಪ ಶಕ್ತಿ ವಿಶಿಷ್ಟವಾಗಿ ಸ್ವಲೀಲೆಯಿಂದ ಶಿವ+ಶಕ್ತಿಗಳೆಂದು ಎರಡಾದಂತೆ, ಶಿವನು ಲಿಂಗ ಅಂಗವೆಂದು ಎರಡಾದುದನ್ನು ಅವಲೋಕಿಸಲಾಗಿದೆ. ಅದರಂತೆ ಶಕ್ತಿಯೂ ಶಕ್ತಿ ಭಕ್ತಿಗಳೆಂದು ಎರಡಾಗುವದು. ಶಿವನೊಡನೆ ತಾದಾತ್ಮ ಸಂಬಂಧವುಳ್ಳ ಶಿವನ ಸಹಧರ್ಮಿಣಿ ಶಕ್ತಿಯು ಭಕ್ತನ ಹಿತಕ್ಕಾಗಿ ಲಿಂಗಸ್ಥಲವನ್ನಾಶ್ರಯಿಸಿ, ಕಲೆಯೆನಿಸಿದರೆ ಅಂಗಸ್ಥಲವನ್ನಾಶ್ರಯಿಸಿ ಭಕ್ತಿಯೆನಿಸುವದು. ಷಟ್‌ಸ್ಥಲ ಮಾರ್ಗದಲ್ಲಿ ಭಕ್ತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಸಾಹಿತ್ಯದಲ್ಲಿ ಸ್ಥಾಯಿಭಾವಗಳಿಗೆ ಪ್ರಾಮುಖ್ಯತೆಯಿದ್ದಂತೆ ಷಟ್‌ಸ್ಥಲದ ಸ್ಥಾಯಿಭಾವವೇ ಭಕ್ತಿಯು. ಷಟ್‌ಸ್ಥಲ ಸೋಪಾನಗಳನ್ನು ಮೇಲೇರಿಸುವ ಆಧಾರ ಸ್ಥಂಭವೇ ಭಕ್ತಿ, ಈ ಭಕ್ತಿ ಶಕ್ತಿಯು ಸಂಸಾರದ ತೊಡಕಿನ ಬಂಧನಗಳನ್ನು ನಾಶಗೊಳಿಸುವದು. ಅಜ್ಞಾನ ಕತ್ತಲೆಯನ್ನು ಹೊಡೆದೊಡಿಸುವದು. ಭಕ್ತಿ ಮಾರ್ಗವು ಪುರಾತನವಾದುದು. ನಾರದ ಮುನಿಯು ಭಕ್ತಿಯನ್ನು ಕುರಿತು “ಭಲ್ತಿಃ  ಸಾ ಪ್ರೇಮ ರೂಪಾʼʼ ಪ್ರೇಮರೂಪವಾದುದೇ ಭಕ್ತಿ ಅರ್ಥಾತ್ ಪ್ರೇಮವೇ ಭಕ್ತಿಯು. ಪ್ರೇಮವೇ ಸಂಬಂಧವನ್ನು ಕಲ್ಪಿಸುತ್ತದೆ. ಸಂಬಂಧವು ಎರಡು ತೆರನಾಗಿದೆ. ಒಂದು ರಕ್ತಗತವಾದುದು. ಇದು ಸ್ವಾರ್ಥಪರವಾದುದು. ಇನ್ನೊಂದು ಭಾವ ಸಂಬಂಧ. ಇದು ಆತ್ಮೀಯವಾದುದು. ರಕ್ತಸಂಬಂಧದಲ್ಲಿ ತಂದೆ-ತಾಯಿ-ಅಕ್ಕ-ತಮ್ಮ-ಅಣ್ಣ-ತಂಗಿ-ಅತ್ತೆ-ಮಾವ-ಮೈದುನ ಇತ್ಯಾದಿ ರಕ್ತ ಸಂಬಂಧವು ಶಾರೀರಿಕ ಸಂಬಂಧವಾದರೆ, ದೇವ-ಭಕ್ತ, ಗುರು-ಶಿಷ್ಯ-ಸ್ನೇಹಿತ-ಇವೆಲ್ಲವೂ ಭಾವ ಸಂಬಂಧಗಳು, ಭಕ್ತ ಭಗವಂತರ ನಡುವೆ ಭಕ್ತಿಯು ಅತ್ಯಂತ ಆತ್ಮೀಯ ಭಾವವನ್ನು ಉಂಟು ಮಾಡುವದು. ಶ್ರವಣ

ಕೀರ್ತನಾದಿ ನವವಿಧ ಭಕ್ತಿಗಳಾದಂತೆ ಷಡ್ವಿಧ ಭಕ್ತಿಯು ವಿಶಿಷ್ಟವಾದುದು. ಲಿಂಗದ ಹೊರತು ಬೇರಾವ ದೇವರಿಲ್ಲವೆಂದು ಶ್ರದ್ಧೆಯು ನಿಷ್ಟೆಯು ಕರಿಗೊಳ್ಳುವದು. ಮಾಹೇಶ್ವರನಿಗೆ ನಿಷ್ಟಾಭಕ್ತೆಯೆ ಸ್ಥಾಯಿಭಾವ. ಈ ಸ್ಥಲದ ವ್ಯಾಖ್ಯಾನವನ್ನು ಮೈಲಾರ ಬಸವಲಿಂಗ ಶರಣರು-

ಗುರು ಲಿಂಗ ನಿಷ್ಠೆಯಿಂ |

ಪರದೈವ ಮೊದಲಾದ

ದುರಿತ ಪಂಚಕವು –

ನಿರಸನವಾಗೆ ಮಾಹೇಶ್ವರನೆಂದ ಗುರುವೆ ಕೃಪೆಯಾಗು

ಎಂಬುದಾಗಿ ಸೂತ್ರಬದ್ಧವಾಗಿ ಮಾಡಿರುವರು. ಆಚಾರ ಲಿಂಗದಲ್ಲಿ ಶ್ರದ್ಧೆಯು ಬೆಳೆದರೆ ಗುರುಲಿಂಗದಲ್ಲಿ ನಿಷ್ಠಾಭಕ್ತಿಯು ದೃಢವಾಗಬೇಕು. ಇಷ್ಟಲಿಂಗವನ್ನಲ್ಲದೆ ಅನ್ಯ ದೈವಗಳ ಆಸಕ್ತಿಯನ್ನು ಸಂಪೂರ್ಣವಾಗಿ ತೊರೆಯಬೇಕು. ಅಂದರೆ ಲಿಂಗನಿಷ್ಠೆಯು ಕರಿಗೊಳ್ಳುವದು. ಪರಸ್ತ್ರೀಯರಲ್ಲಿ ರತಿ, ಪರನಿಂದೆ, ಪ್ರಾಣಿಗಳ ಹಿಂಸೆ, ಪರದ್ರವ್ಯಾಪೇಕ್ಷೆ ಮತ್ತು ತನಗಿಂತ ಭಿನ್ನವಾಗಿ ದೇವರಿದ್ದಾನೆಂಬ ಈ ಐದು ಪಾತಕಗಳನ್ನು ಸಂಪೂರ್ಣವಾಗಿ ಮನಸ್ಸಿನಿಂದ ದೂರ ತಳ್ಳಬೇಕು. ಪಂಚಪಾತಕಗಳಿಂದ ಮುಕ್ತನಾದ ಮಾಹೇಶ್ವರನ ಜೀವನ ಪರಿಶುದ್ಧವಾಗುವದು. ತೋಂಟದ ಸಿದ್ಧಲಿಂಗರು ಈ ಸ್ಥಲದ ಮರ್ಮವನ್ನು ಕೆಳಗಿನಂತೆ ವಿವರಿಸಿರುವರು.

ಅನೃತ, ಅನಾಚಾರ, ಅನ್ಯ ಹಿಂಸೆ,

ಪರಧನ, ಪರಸ್ತ್ರೀ, ಪರನಿಂದೆ ಇವ ಬಿಟ್ಟು

ಲಿಂಗನಿಷ್ಠೆಯಿಂದ ಶುದ್ಧಾತ್ಮನಾಗಿರಬಲ್ಲಡೆ

ಮಾಹೇಶ್ವರ ಸ್ಥಲವೆಂಬೆನಯ್ಯಾ

ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ

ಇದೇ ರೀತಿ ಮಹಾಜ್ಞಾನಿ ಚನ್ನಬಸವಣ್ಣನವರು ಹಾಗೂ ವೈರಾಗ್ಯನಿಧಿ ಮಹಾದೇವಿಯಕ್ಕನವರೂ ಮಾಹೇಶ್ವರ ಬಗೆಯನ್ನು ಬಣ್ಣಿಸಿರುವರು.

ಶಿವನ ಇಚ್ಛಾ ಶಕ್ತಿಯ ಸಂಕೋಚತನದಿಂದ ಜೀವನಲ್ಲಿ ಆಣವಮಲವೆನಿಸಿದರೆ, ಜ್ಞಾನಶಕ್ತಿಯ ಸ೦ಕೋಚತನದಿಂದ ಮಾಯಾಮಲ ಆವರಿಸುವದು. ಕ್ರಿಯಾಶಕ್ತಿಯ ಸಂಕೋಚತನದಿಂದ ಕಾರ್ಮಿಕ ಮಲವು ಅಂಟಿಕೊಳ್ಳುವದು. ಶಿವದೀಕ್ಷೆಯ ಕಾಲದಲ್ಲಿ ಶ್ರೀಗುರು ಶಿಷ್ಯನ ಮಲತ್ರಯಗಳನ್ನು ಉಪದೇಶದಿಂದ ಕಳೆದುಕೊಳ್ಳಲು ಬೋಧಿಸುವರು. ಕ್ರಿಯಾಶಕ್ತಿ, ಜ್ಞಾನಶಕ್ತಿಗಳನ್ನು ಜಾಗೃತಗೊಳಿಸಿ ಕೊಳ್ಳುವದು ಸಾಧಕನ ಸಾಧನೆಯಾಗಬೇಕು. ಕ್ರಿಯಾಶೀಲನಾಗಿ ಪ್ರವೃತ್ತಿ ಪಥದಿಂದ ನಿವೃತ್ತಿ ಕಲೆಯತ್ತ ಮುನ್ನಡೆಯುವದೆ ಷಟ್‌ಸ್ಥಲದ ಮಾರ್ಗ.

 ರಕ್ತ ಸಂಬಂಧಿಗಳಾದ ಬಂಧುಗಳು ವಿಶೇಷ ಸಂದರ್ಭಗಳಲ್ಲಿ ಬಂದುಂಡು ಹೋಗುವರಲ್ಲದೆ ಭವ ಬಂಧನವನ್ನು ಕಳೆಯಲಾರರು. ಆದರೆ ದೇವ ಸಂಬಂಧದಿಂದ ಬಂಧನವನ್ನು ಬಿಡಿಸಿಕೊಳ್ಳಬಹುದು. ವಸ್ತುತಃ ಜೀವ ಪರಮಾತ್ಮರ ಸಂಬಂಧವು ಪರಮಾರ್ಥತಃ ಅಭಿನ್ನವಾದುದೂ ಜೀವನಿಗೆ ಶಕ್ತಿಗಳ ಸಂಕೋಚತನದಿಂದ ಅಜ್ಞಾನ ಮತ್ತು ಮಲತ್ರಯಗಳು ಅಂಟಿಕೊಂಡ ಕಾರಣ ವಾಸ್ತವಿಕ ಸತ್ಯವನ್ನು ಮರೆತು ಹೋಗಿರುತ್ತಾನೆ. ಸುಜ್ಞಾನದಿಂದ ಮಲತ್ರಯಗಳನ್ನು ನಿವಾರಿಸಿಕೊಂಡು ದೇವನೊಡನೆ ಘನಿಷ್ಠ ಸಂಬಂಧವನ್ನು ಬೆಳೆಸಿಕೊಳ್ಳುವದೇ ಮಾಹೇಶ್ವರನ ಮಣಿಹ. ಇಷ್ಟಲಿಂಗವೇ ತನ್ನ ಸರ್ವಸ್ವವೆಂದರಿತು ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರೊಂದಿಗೆ ಸಚ್ಚಾರಿತ್ರ್ಯವನ್ನು ಸಂಪಾದಿಸಿಕೊಂಡರೆ ಗರಿಮೆ ಹೆಚ್ಚುವದು. ಲೌಕಿಕದಲ್ಲಿ ದೈಹಿಕ ಸಂಬಂಧಗಳು ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಂಡರೆ ಅಧ್ಯಾತ್ಮಿಕವಾಗಿ ಮಾಹೇಶ್ವರನಲ್ಲಿ ಅನ್ನೋನ್ಯ ಆತ್ಮೀಯ ಸಂಬಂಧ ಬೆಳೆಯುವದು. ಅದು ಶಾಶ್ವತವೆನಿಸುವದು. ಲೌಕಿಕರು ಯಾಂತ್ರಿಕ ಜೀವನ ನಡೆಸಿ ಸಂಬಂಧಗಳಲ್ಲಿ ಏರಿಳಿತವಾಗಿ ದುಃಖಿಗಳಾಗುವರು. ಇಲ್ಲಿ ಹಾಗಲ್ಲ, ಪವಿತ್ರ ಭಾವನೆಗಳು ಬೆಳೆದು ನಿತ್ಯ ಸಂಬಂಧವನ್ನು ಪಡೆಯುವನು. ಎಲ್ಲರೂ ನನ್ನವರೆಂಬ ಭಾವನೆ ಬೆಳೆಯುವದು. ದೇವನೆ ಸರ್ವಸ್ವವೆಂಬ ಭಾವದಿಂದ ನಡೆದು ತನ್ನ ನಿಷ್ಠೆಯನ್ನು ಗಟ್ಟಿಗೊಳಿಸಿಕೊಳ್ಳುವನು. ಸ್ವಾಧಿಷ್ಠಾನ ಚಕ್ರದಲ್ಲಿ ಗುರುಲಿಂಗವನ್ನು ಜಿಹ್ವಾ ಮುಖದಲ್ಲಿ ಸುಬುದ್ಧಿ ಹಸ್ತದಿಂದ ಶ್ರದ್ಧಾ ಭಕ್ತಿಯಿಂದ ಅರ್ಚಿಸುವವನೆ ಮಾಹೇಶ್ವರನು.

೩. ಪ್ರಸಾದಿಸ್ಥಲ

ಭಕ್ತ-ಮಾಹೇಶ್ವರ ಸ್ಥಲಗಳೆರಡೂ ಒಂದುಗೂಡಿ ತ್ಯಾಗಾಂಗವೆನಿಸಿದರೆ, ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳೆರಡು ಭೋಗಾಂಗದ ಭಾಗಗಳು. ಸ್ಥೂಲ ತನುವಿಗೆ ತ್ಯಾಗಾಂಗವೆಂತಲೂ, ಸೂಕ್ಷ್ಮ ತನುವಿಗೆ ಭೋಗಾಂಗವೆಂದುದು ವೀರಶೈವ ಪರಿಭಾಷೆ, ಭಕ್ತನದು ನೆಲತತ್ವ, ಮಾಹೇಶ್ವರನದು ಜಲತತ್ವ, ನೆಲತತ್ತ್ವದ ಸ್ಥೂಲ ಶರೀರದಲ್ಲಿ ಕಾಣಿಸುವ ಅಸ್ಥಿ-ಮಾಂಸ-ಚರ್ಮ-ನಾಡಿ ಮತ್ತು ರೋಮಗಳ ಪರಿಶುದ್ಧಿಯನ್ನು ಭಕ್ತನು ಸದಾಚಾರ-ಸತ್ಕ್ರಿಯೆಗಳಿಂದ ಸಾಧಿಸಿದರೆ; ಜಲತತ್ತ್ವದಿಂದಾಗುವ ರಸ-ರಕ್ತ ಮೂತ್ರ-ಸ್ವೇದ ಮತ್ತು ಶುಕ್ಲಗಳು ಮಾಹೇಶ್ವರ ಸ್ಥಲದಲ್ಲಿ ಶುದ್ಧವಾಗುತ್ತವೆ. ಸಾಮಾನ್ಯ ವೀರಶೈವನು ಜಂಗಮದೇವನಿಂದ ಅನುಗ್ರಹ ಪಡೆದು ವಿಶೇಷ ವೀರಶೈವನೆನಿಸುವನು. ವಸ್ತುತಃ ಚಿನ್ಮಯಾನುಗ್ರಹದಿಂದ ಷಟ್‌ಸ್ಥಲಾಧಿಕಾರವು ಪ್ರಾಪ್ತವಾಗುವದು. ಜಂಗಮಾನುಗ್ರಹ ಹೊಂದುವದರಿಂದ ಸ್ಥೂಲಕಾಯವು ಪ್ರಸಾದಕಾಯವೆನಿಸುವದು. ಪ್ರಸಾದಕಾಯನಾಗುವದರಿಂದ ತ್ಯಾಗಾಂಗ ಶುದ್ಧಿಯಾಗುವದು. ಇದಕ್ಕೆ ಭಕ್ತ ಮಾಹೇಶ್ವರ ಸ್ಥಲದ ಆಚರಣೆ ಅತ್ಯವಶ್ಯವಾದುದು. ಇದರಿಂದ ಪ್ರಸಾದಿ ಸ್ಥಲವು ಪ್ರಸಾದಕಾಯನಾಗಲು ಸಹಕಾರವಾಗುವದು.

 ಸತ್ಕ್ರಿಯಾಚರಣೆಗಳಿಂದ ಪ್ರತಿಯೊಬ್ಬ ವ್ಯಕ್ತಿಯು ಕಾರ್ಯಶೀಲನಾಗುವನು. ಕರ್ತವ್ಯ ದಕ್ಷತೆಯನ್ನು ಪಡೆಯುವನು. ಈ ಸಾಧಕನು ಕ್ರಿಯಾಶಕ್ತಿಯೊಡನೆ ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಂಡು ನಿವೃತ್ತಿ ಪಥದಲ್ಲಿ ಮುನ್ನಡೆದು ಪ್ರತಿಷ್ಠಾ ಕಲೆಯನ್ನು ತನ್ನದನ್ನಾಗಿಸಿಕೊಳ್ಳುವನು. ಹೀಗೆ ಷಟ್‌ಸ್ಥಲ ಸಿದ್ಧಾಂತವು ಮೆರಗು ಪಡೆಯುವದು. ಕ್ರಿಯಾಶಕ್ತಿ-ಜ್ಞಾನಶಕ್ತಿಗಳ ಸಮ್ಮಿಲನದಿಂದ ಇಚ್ಛಾಶಕ್ತಿಯು ಸಫಲವಾಗುವದು. ಕ್ರಿಯೆ ಮತ್ತು ಜ್ಞಾನಗಳು ಮೈಗೂಡಿದಾಗ ಅಂಥ ಸಾಧಕನ ಇಚ್ಛೆಗಳೆಲ್ಲ ಕೈಗೂಡುವವು. ಅವೆರಡು ಶಕ್ತಿಗಳು ಜಾಗ್ರತವಾಗದಿದ್ದರೆ ಅವನಲ್ಲಿಯ ಇಚ್ಛಾ ಶಕ್ತಿಯು ಬರಿ ಕನಸಿನಂತಾಗುವದು. ಇಚ್ಛಾಶಕ್ತಿಯಲ್ಲಿ ಸಂಕಲ್ಪ ಸಿದ್ಧಿಯು ಮೈದೋರುವದು. ಅದಕ್ಕಾಗಿ ವೀರಶೈವರು ಕ್ರಿಯಾ-ಜ್ಞಾನಗಳನ್ನು ಸಮಸಮುಚ್ಚಯದಿಂದ ಅಳವಡಿಸಿಕೊಂಡಿರುವರು. ಅವಿರಳ ಜ್ಞಾನಿ ಚನ್ನಬಸವಣ್ಣನವರು ಕ್ರಿಯಾ-ಜ್ಞಾನಗಳ ವಿವರಣೆಯನ್ನು ತಿಳಿಯುವಂತೆ ವಚನಿಸಿರುವರು.

ಕ್ರಿಯೆಯೆ ಜ್ಞಾನ, ಆ ಜ್ಞಾನವೇ ಕ್ರಿಯೆ

ಜ್ಞಾನವೆಂದಡೆ ತಿಳಿಯುವದು

ಕ್ರಿಯೆಯೆಂದಡೆ ತಿಳಿದಂತೆ ಮಾಡುವದು

ಪರಸ್ತ್ರೀಯ ಭೋಗಿಸಬಾರದೆಂಬುದೇ ಜ್ಞಾನ

ಅದರಂತೆ ಆಚರಿಸುವದೇ ಕ್ರಿಯೆ

ಅರಿತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ

ಕೂಡಲ ಚನ್ನಸಂಗಮದೇವ

ಜ್ಞಾನ ಕ್ರಿಯೆಗಳು ಸಮನ್ವಯಗೊಳ್ಳುವದರಿಂದ ವ್ಯಕ್ತಿತ್ವ ವಿಕಸನವಾಗುವದು. ಮುಖ್ಯವಾಗಿ ಕ್ರಿಯೆ ಜರುಗಬೇಕಾದರೂ ಜ್ಞಾನ ಬೇಕು. ಜ್ಞಾನ ಲಭಿಸಲು ಕ್ರಿಯೆಯನ್ನು ಮಾಡಬೇಕಾಗುವದು. ಯಾವುದೇ ನಿಷೇಧಿತ ಕಾರ್ಯವನ್ನು ಮಾಡಬಾರದೆಂಬ ಜ್ಞಾನದಂತೆ ನಡೆದರೆ ಆ ಕ್ರಿಯೆಗೆ ಅರ್ಥ ಬರುವದು. ತಿಳಿದು ತಪ್ಪು ಮಾಡುವದರಿಂದ ಅಜ್ಞಾನವು ಆವರಿಸುವದು.

 ಮಾಹೇಶ್ವರ ಸ್ಥಲದಲ್ಲಿ ನಿಷ್ಠೆಯು ಗಟ್ಟಿಗೊಳ್ಳಬೇಕು. “ನಿಶ್ಚಯೇನ ತಿಷ್ಠತೀತಿ ನಿಷ್ಠಾ” ನಿಶ್ಚಯವಾಗಿ ನಿಲ್ಲುವ ಜ್ಞಾನ ನಿಷ್ಠೆಯೆನಿಸುವದು. ಅಚಲವಾದ ಭಕ್ತಿಭಾವವೇ ನಿಷ್ಠೆಯಾಗುವದು. ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯನ್ನಾಗಿ ನಿಶ್ಚಯಿಸಿದ್ದಳು. ಯಶೋಧೆಯು ಕೃಷ್ಣನನ್ನೇ ತನ್ನ ಮಗನೆಂದು ದೃಢವಾಗಿ ನಂಬಿದ್ದಳು. ತುಳಿಸಿದಾಸನೂ ಅವನನ್ನೇ ತನ್ನ ಪುತ್ರನೆಂದು ವಾತ್ಸಲ್ಯದಿಂದ ಆರಾಧಿಸಿದನು. ಹೀಗೆ ಅನೇಕರು ಪರಮಾತ್ಮನಲ್ಲಿ ನಿಷ್ಠಾಭಕ್ತಿಯಿಂದ ಆರಾಧಿಸಿದಂತೆ ಮಾಹೇಶ್ವರನು ಗುರುಲಿಂಗವನ್ನು ನಿಷ್ಠಾಭಕ್ತಿಯಿಂದ ಅರ್ಚಿಸಿದರೂ ಪ್ರಸಾದಿ ಸ್ಥಲದಲ್ಲಿ ಅವಧಾನವಿರಬೇಕಾಗುವದು. ಅವಧಾನವೆಂದರೆ ಜಾಗ್ರತೆ, ಎಚ್ಚರ, ಯಾವುದೊಂದು ಕಾಯಕವನ್ನು ಶ್ರದ್ಧೆಯಿಂದ ಪ್ರಾರಂಭಿಸಿ ನಿಷ್ಠೆಯಿಂದ ಮುಂದುವರೆಸಿ ಬಹಳ ಜನರು ಅವಧಾನವನ್ನು ಕಳೆದುಕೊಳ್ಳುವದರಿಂದ ಆ ಕಾಯಕ ಯಶಸ್ವಿಯಾಗುವದಿಲ್ಲ. ಲಾಭಕ್ಕಿಂತ ಹಾನಿಯೇ ಆಗುವದು.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ

ಇದ್ದರೇನು ಶಿವ ಶಿವಾ ಹೋದಡೇನೊ

ಕೂಡಲ ಸಂಗಮದೇವಯ್ಯ

ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ

ಇಲ್ಲಿ ಬಸವಣ್ಣನವರು ನಿಷ್ಠಾಭಕ್ತಿಯನ್ನು ವಿಶ್ಲೇಷಿಸಿರುವರು. ಗೊಡ್ಡಾಕಳಿಗೆ ದೊಡ್ಡದಾದ ಕರುವ ಬಿಟ್ಟರೆ ಯಾವ ಪ್ರಯೋಜನವಾಗುವದಿಲ್ಲ, ಚನ್ನಬಸವಣ್ಣನವರು

ಭಕ್ತಿಗೆ ಅನುಭಾವವೆ ಬೀಜ ಕಾಣಿರೋ

ಭಕ್ತಿಗೆ ಅನುಭಾವವೆ ಆಚಾರ ಕಾಣಿರೋ

ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು

ಷಡ್ವಿಧ ಭಕ್ತಿಯಲ್ಲಿ ಅನುಭಾವವೇ ಬೀಜ, ಅದುವೆ ಆಚಾರವಾಗಬೇಕೆಂದೂ ಅನುಭಾವವಿಲ್ಲದವನ ಭಕ್ತಿಯಲ್ಲಿ ಹೊಯ್ದಾಟವಿರುವದೆಂದು ಎಚ್ಚರಿಸಿರುವರು. ಈ ಹೊಯ್ದಾಟ ನಿಲ್ಲಬೇಕಾದರೆ ಅವಧಾನ ಅವಶ್ಯ ಬೇಕಾಗುವದು.

 ಈ ಅವಧಾನದಿಂದಲೇ ಭಕ್ತನ ಮನಸ್ಸು ಪ್ರಸನ್ನವಾಗುವದು. ಪ್ರಸನ್ನ ಮನಸ್ಸಿನಲ್ಲಿ ಯಾವ ಚಿಂತೆಗಳು ಕಾಡುವದಿಲ್ಲ. ಅವನ ಮನಸ್ಸು ನಿರ್ಮಲವಾಗಿರುತ್ತದೆ. ನಿರ್ಮಲ ಮನಸ್ಸಿದ್ದರೆ ಮಾತ್ರ ಪ್ರಸನ್ನತೆಯಿರುವದು. ಇದುವೆ ಪ್ರಸಾದಿಯ ಪ್ರಬುದ್ಧತೆ, ತಪ್ಪು ಮಾಡುವವನ ಮನಸ್ಸು ಕಳವಳದಿಂದಲೇ ಇರುವದು. ಅವನಿಗೆ ಚಿಂತೆಯು ಸದಾ ಕಾಡುತ್ತಿರುತ್ತದೆ. ಮೈಲಾರ ಬಸವಲಿಂಗ ಶರಣರು-

ರೂಪು ರುಚಿ ತೃಪ್ತಿಯ ನಿರ್ಲೇಪ ತ್ರೈಲಿಂಗಕ್ಕೆ

ಅರ್ಪಿಸಲು ತಾನೇ ದೀಪ್ತ ಪ್ರಸಾದಿಯೆಂ

ದಾ ಪರಮಗುರುವೇ ಕೃಪೆಯಾಗು

ಎಂದು ಪ್ರಸಾದಿಯ ಲಕ್ಷಣವನ್ನು ನಿರೂಪಿಸಿರುವರು. ಪ್ರಸಾದಿಸ್ಥಲ ಮೂರನೆಯದು. ಇವನು ಶಿವಲಿಂಗ ಪೂಜಕನು ಶಿವಲಿಂಗವು ನೇತೇಂದ್ರಿಯದಲ್ಲಿದೆ. ಈ ಲಿಂಗವು ಇಚ್ಛಾಶಕ್ತಿ ವಿದ್ಯಾಕಲೆಯಿಂದ ಕೂಡಿದೆ. ಪ್ರಸಾದಿಯು ಸದಾ ಸಾವಧಾನದಿಂದ ಶಿವನಿಚ್ಛೆಯಿಂದ ದೊರೆತುದನ್ನು ನಿರಹಂಕಾರ ಹಸ್ತದಲ್ಲಿ ರೂಪು ಪದಾರ್ಥಗಳನ್ನು ಸುರೂಪು ಪ್ರಸಾದಗೊಳಿಸಿ ಶಿವಲಿಂಗಕ್ಕೆ ಅರ್ಪಿಸಿ ಭೋಗಿಸಬೇಕು. ಈ ಸ್ಥಲವು ಭೋಗಾಂಗದ ಅಂಗವೆಂದಿದೆ. ಕರಣೇಂದ್ರಿಯಗಳಿಗೆ ಪ್ರೇರಕವಾದ ಮನಸ್ಸಿನಲ್ಲಿ ದೃಢತೆ ಹೆಚ್ಚಾಗಿ ಶಾಂತನೂ ಸಾವಧಾನವುಳ್ಳವನಾಗುವದೇ ಪ್ರಸಾದಿಯ ಮುಖ್ಯ ಕರ್ತವ್ಯವಾಗಿದೆ. ಹೊಯ್ದಾಟವುಳ್ಳ ಮನಸ್ಸನ್ನು ನಿಶ್ಚಲಗೊಳಿಸಿ ಪ್ರಾಕೃತಿಕ ಭೋಗ ಭವದ ಬೀಜವೆಂದರಿದು ಶಿವಾರ್ಪಿತಭೋಗವನ್ನು ಪಡೆಯುವದರಿಂದ ಭವದ ಬೀಜವನ್ನೇ ಹುರಿದು ಹಾಕುವ ಶಕ್ತಿ ಪ್ರಸಾದಿಯಲ್ಲಿ ಗಟ್ಟಿಗೊಳ್ಳುವದು.

೪. ಪ್ರಾಣಲಿಂಗಿ ಸ್ಥಲ

ಭಕ್ತ-ಮಹೇಶ-ಪ್ರಸಾದಿ ಈ ಮೂರು ಸ್ಥಲಗಳನ್ನು ಪೂರ್ವಯೋಗವೆಂದೂ ಪ್ರಾಣಲಿಂಗಿ- ಶರಣ ಐಕ್ಯ ಸ್ಥಲಗಳನ್ನು ಉತ್ತರಯೋಗವೆಂದು ಶಿವಾನುಭವಿಗಳು ನಿರೂಪಿಸಿರುವರು. ಪ್ರಸಾದಿ ಸ್ಥಲದಲ್ಲಿ ಪ್ರಾಣಲಿಂಗಾರ್ಚನೆ ಪ್ರಾರಂಭವಾಗಿ ಪ್ರಾಣಲಿಂಗಿಸ್ಥಲದಲ್ಲಿ ಅದು ಪೂರ್ಣವಾಗುವದು. ಪ್ರಸಾದಿಯು ಅಗ್ನ್ಯಾಂಗನಾದರೆ, ಪ್ರಾಣಲಿಂಗಿಯು ವಾಯ್ವಂಗನೆನಿಸುವನು. ಪ್ರಾಣಲಿಂಗಿಯು ವಾಯು ತತ್ವದ ಜಂಗಮ ಲಿಂಗವನ್ನು ಆರಾಧಿಸಿ ವಾಯುಮಯ ಪ್ರಾಣವು ಲಿಂಗಸ್ವರೂಪವೆನಿಸುವುದೇ ಪ್ರಾಣಲಿಂಗಿಯ ಪ್ರಾಮುಖ್ಯತೆಯೆನ್ನಬೇಕು. ಬಯಸಿ ಬಂದ ಅಂಗ ಭೋಗವನ್ನು ತ್ಯಜಿಸಿ, ಬಯಸದೆ ಬಂದ ಪ್ರಸಾದವನ್ನು ಲಿಂಗಭೋಗೋಪಭೋಗಿಯಾಗಿಸುವದರಿಂದ ಪ್ರಸಾದ ಕಾಯನಾಗುವನು. ಪ್ರಸಾದ ಕಾಯನಾದ ಪ್ರಸಾದಿಯು ಕ್ರಿಯಾ- ಜ್ಞಾನ-ಇಚ್ಛಾ ಶಕ್ತಿಗಳ ಸಹಾಯದಿಂದ ಆದಿಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡು ಸಾವಧಾನತೆಯಿಂದ ಅನುಭವ ಪಡೆಯುವಲ್ಲಿಯೇ ಪ್ರಕಾಶಕಾಯ ಮೈಗೂಡುವದು ಪ್ರಕಾಶಕಾಯವೆಂದರೆ ಜ್ಞಾನ, ಜ್ಞಾನವೇ ಬೆಳಕು. ಪ್ರಾಣಲಿಂಗದ ಪೂಜೆ ನಡೆಯುವಲ್ಲಿ ಜ್ಞಾನವೇ ಮುಖ್ಯವಾಗುವದು.

 ಮಾನವನು ಅನ್ನ ನೀರಿಲ್ಲದೆ ಬದುಕಬಹುದು ಆದರೆ ಪ್ರಾಣವಾಯುವಿಲ್ಲದೆ ಬದುಕಲು ಆಗದು. ಪ್ರಾಣವಾಯು ಎಲ್ಲರಿಗೂ ಅವಶ್ಯ. ಪ್ರಾಣಿಗಳಿಗೆ, ಗಿಡ-ಮರ ಬಳ್ಳಿಗಳಿಗೆ ಪ್ರಾಣವಾಯು ಬೇಕೇಬೇಕು. ಜೀವನಕ್ಕೆ ಜೀವಾಳವಾದುದು ಪ್ರಾಣ ಜೀವನದ ಅಮೃತವದು, ಆಯುಷ್ಯವದು. ಅರಸವೆಂದೂ ಅನುಭವಿಗಳು ವರ್ಣಿಸಿರುವಲ್ಲಿ ಔಚಿತ್ಯವಿದೆ. ಪ್ರಾಣವು ಮಾನವನಿಗೆ ಹೇಗೆ ಜೀವಾಳವೋ ಹಾಗೆ ಪ್ರಾಣಲಿಂಗಿಗೆ ಪ್ರಾಣಲಿಂಗವು ಮುಖ್ಯವಾಗಬೇಕು. ಲಿಂಗವೇ ಪ್ರಾಣವಾಗಬೇಕು. ಎಲ್ಲವೂ ಲಿಂಗಮಯವಾಗಬೇಕು.

ವಸ್ತುತಃ ವಾಯು ಒಂದೇಯಾಗಿದ್ದರೂ ವಿಭಿನ್ನ ಸ್ಥಾನ ಹಾಗೂ ಕೆಲಸಗಳಿಂದ ಐದು ತೆರನಾಗುವದು. ಹೃದಯದಲ್ಲಿ ಪ್ರಾಣವಾಯುವೆನಿಸಿದರೆ ಮೂಲಾಧಾರದಲ್ಲಿ ಅಪಾನವಾಯುವೆನಿಸುವದು, ನಾಭಿಯಲ್ಲಿ ಸಮಾನವಾಯು, ಕಂಠದಲ್ಲಿ ಉದಾನವಾಯು, ವ್ಯಾನವಾಯು ದೇಹದ ತುಂಬೆಲ್ಲ ಹರಡಿಕೊಂಡಿರುತ್ತದೆ. ಪ್ರಾಣವಾಯು ಹೃದಯದಲ್ಲಿದ್ದುಕೊಂಡು ಮೂಗಿನ ಮೂಲಕ ಶ್ವಾಸೋಚ್ವಾಸಗಳನ್ನು ನಡೆಸುವದು. ಈ ವಾಯುವಿನ ಮೂಲಕವೇ ಶರೀರವು ಚೈತನ್ಯಯುತವಾಗಿರುವದು. ಅಪಾನವಾಯು ಮಲಮೂತ್ರಗಳನ್ನು ಹೊರಹಾಕುವ ಕಾರ್ಯವನ್ನು ಮಾಡುವದು. ನಾಭಿಯಲ್ಲಿರುವ ಸಮಾನವಾಯು ಮಾನವನು ಉಣ್ಣುವ ಅನ್ನದ ರಸದಿಂದಾದ ರಕ್ತವನ್ನು ಎಲ್ಲ ಅವಯವಗಳಿಗೆ ಸಮನಾಗಿ ಹಂಚುತ್ತದೆ. ಉದಾನವಾಯು ಕಂಠಸ್ಥಾನದಲ್ಲಿದ್ದು ಸೀನು, ಡೇಕರಿಕೆ ಮುಂತಾದ ಕ್ರಿಯೆಗಳಿಂದ ದೂಷಿತ ಅಂಶವನ್ನು ಹೊರಹಾಕುತ್ತದೆ. ವ್ಯಾನವಾಯು ಶರೀರದ ನರನಾಡಿಗಳಲ್ಲಿ ಸಂಚರಿಸಿ ರಕ್ತ ಸಂಚಾರವನ್ನು ಸಮನಾಗಿ ಮಾಡಿಸುವದು. ಈ ವಾಯು ವಿಕಾರಗೊಂಡರೆ ಸಂಧಿವಾತ ಅರ್ಧಾಂಗವಾಯುವಿಗೆ ಕಾರಣವಾಗುವದು. ಈ ಎಲ್ಲ ವಿಚಾರಗಳನ್ನು ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ಚನ್ನಾಗಿ ನಿರೂಪಿಸಿರುವರು. ಪ್ರಾಣಾಯಾಮದಿಂದ ಪ್ರಾಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ಪ್ರಾಣಾಯಾಮದಿಂದ ಅಪಾಯವೂ ಸಂಭವಿಸುವದೆಂದು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯಲ್ಲಿ ಅಷ್ಟಾಂಗ ಯೋಗದ ನಿರಸನಮಾಡಿ ಪ್ರಾಣಲಿಂಗದ ಆರಾಧನೆಯನ್ನು ಮಾನಸಿಕವಾಗಿ ಸಾಧಿಸಬೇಕೆಂದು ಪ್ರತಿಪಾದಿಸಿರುವರು. ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಾಣಲಿಂಗದ ಆಂತರಿಕ ಅರ್ಚನೆಯ ವಿಧಿಯನ್ನು ತಿಳಿಸಿರುವರು. ಕ್ಷಮಾ ಗುಣವೇ ಅಭಿಷೇಕ ಜಲ, ವಿವೇಕವೆ ವಸ್ತ್ರ, ಸತ್ಯವೆ ಆಭರಣ, ವೈರಾಗ್ಯವೆ ಪುಷ್ಪಮಾಲಿಕೆ, ಸಮಾಧಿ ಸಂಪತ್ತೆ ದಂಡ, ನಿರಹಂಕಾರವೇ ಅಕ್ಷತೆ, ಶ್ರದ್ಧೆಯ ಧೂಪ, ಮಹಾಜ್ಞಾನವೇ ಜಗತ್ತನ್ನು ಬೆಳಗುವ ದೀಪ, ಭ್ರಾಂತಿರಾಹಿತ್ಯವೇ ನೈವೇದ್ಯ, ಮೌನವೇ ಘಂಟಾನಾದ, ನಿರ್ವಿಷಯವೇ ತಾಂಬೂಲ, ವಿಷಯ ಭ್ರಾಂತಿ ಇಲ್ಲದಿರುವಿಕೆಯೇ ಪ್ರದಕ್ಷಿಣೆ, ಬುದ್ಧಿ ಭಾವಗಳ ತಾದಾತ್ಮ್ಯ ಭಾವವೇ ನಮಸ್ಕಾರ. ಹೀಗೆ ಆಂತರಿಕವಾದ ಉಪಚಾರಗಳಿಂದ ಮನೋ ಹಸ್ತದಲ್ಲಿ ಪ್ರಾಣಲಿಂಗದ ಅರ್ಚನೆಯನ್ನು ಪ್ರಾಣಲಿಂಗಿಯು ಮೊದಲು ಸಾಧಿಸಬೇಕು. ಇಂಥ ಉತ್ಕೃಷ್ಟ ಗುಣಗಳಿಂದ ಮಾತ್ರ ಪ್ರಾಣಲಿಂಗದ ಪೂಜೆಯು ಪ್ರಾಪ್ತವಾಗುವದು. ಪ್ರಾಣಲಿಂಗಿಯ ಸ್ವರೂಪ ಚಿತ್ರಣವನ್ನು ಸ್ವತಂತ್ರ ಸಿದ್ಧಲಿಂಗರ ವಚನದಲ್ಲಿ ನೋಡಬಹುದು.

ಲಿಂಗದಲ್ಲಿ ಪ್ರಾಣವ ನಿಲಿಸಿ ಪ್ರಾಣದಲ್ಲಿ ಲಿಂಗವ ನಿಲ್ಲಿಸಿ

ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು.

ಈ ಲಿಂಗ ಸರ್ವಕರಣಂಗಳ ವೇಧಿಸಿ

 ಕರಣಂಗಳು ಲಿಂಗ ಕಿರಣಂಗಳಾದ ಕಾರಣ

 ಒಳಗೆ ಕರತಳಾಮಳಕದಂತೆ

ಲಿಂಗ ನೆಲೆಗೊಂಡಿತ್ತಾಗಿ ಹೊರಗೆನೆಂದರಿಯೆನು

 ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ನೀವು ಪ್ರಾಣಲಿಂಗವಾಗಿ

ಅಲ್ಲಮಪ್ರಭುದೇವರು ಸಹ ಪ್ರಾಣಲಿಂಗ ಸಾಧನೆಯಿಂದ ಮನ ಉನ್ಮನಗೊಂಡು ಅಮೃತವನ್ನು ಪಡೆಯುವುದಾಗಿ ಹೇಳಿರುವರು.

 ವ್ಯಾವಹಾರಿಕ ಬದುಕಿನಲ್ಲಿ ಅನೇಕರು ವಿಭಿನ್ನ ವಸ್ತುಗಳಲ್ಲಿ ತಮ್ಮ ಪ್ರಾಣವನ್ನಿರಿಸಿ ಕೊಂಡಿರವದನ್ನು ಕಾಣುತ್ತೇವೆ. ಆಯಾ ವಸ್ತುಗಳು ಅವರಿಂದ ದೂರವಾದರೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಂದರ್ಭಗಳನ್ನು ಸಹ ನೋಡುತ್ತೇವೆ. ಉದಾಹರಣೆಗಾಗಿ ಕೆಲವರು ಹೆಂಡತಿಯಲ್ಲಿ ಪ್ರಾಣವಿರಿಸಿದಂತೆ, ಹಲವರು ಮಕ್ಕಳಲ್ಲಿ ಪ್ರಾಣವನ್ನಿರಿಸುತ್ತಾರೆ. ಮತ್ತಿತರರು ತಂದೆ-ತಾಯಿಗಳಲ್ಲಿ ಪ್ರಾಣವನ್ನು ಕೇಂದ್ರೀಕರಿಸಿರುತ್ತಾರೆ. ಅದರಂತೆ ಬಸವ ಮಹಾನುಭಾವರು ಜಂಗಮನನ್ನೆ ತಮ್ಮ ಪ್ರಾಣವೆಂದು ಭಾವಿಸಿದ್ದು, ಜಂಗಮಮೂರುತಿ ಮಹಾಮನೆಗೆ ಬಂದು ಮರಳಿ ಹೋದ ಸಂದರ್ಭದಲ್ಲಿ ಪ್ರಾಣವನ್ನೇ ಕಳೆದುಕೊಂಡ ಸಂಗತಿಯಿದೆ. ಹಾಗೆ ಪ್ರಾಣಲಿಂಗಿಯು ತನ್ನ ಪ್ರಾಣಲಿಂಗವನ್ನೆ ಸರ್ವಸ್ವವೆಂದರಿದು ಅನುಸಂಧಾನ ಮಾಡಬೇಕು. ಪ್ರಾಣಲಿಂಗಿಯು ಅನಾಹತ ಚಕ್ರದ ಜಂಗಮಲಿಂಗವನ್ನು ತ್ವಗಿಂದ್ರಿಯ ಮುಖದಲ್ಲಿ ಅನುಭವ ಭಕ್ತಿಯಿಂದ ಸುಮನೋಹಸ್ತದಿಂದ ಆರಾಧಿಸಿ ಅನುಭವವನ್ನು ಪಡೆಯುವನು.

೫. ಶರಣ ಸ್ಥಲ

 ಕಾರಣಶರೀರವೆನಿಸಿದ ಯೋಗಾಂಗದಲ್ಲಿ ಶರಣಸ್ಥಲ ಹಾಗೂ ಐಕ್ಯಸ್ಥಲಗಳು ಬಂದಿವೆ. ತ್ಯಾಗಾ೦ಗದಿಂದ ಲಿಂಗಭೋಗ ಪಡೆದು ಶಿವಯೋಗ ಸಿದ್ದಿಯನ್ನು ಹೊಂದಲು ಶರಣನು ಅರ್ಹನಾಗುವನು. ವಿಶುದ್ಧಿಚಕ್ರದ ಪ್ರಸಾದಲಿಂಗದ ಆರಾಧಕನು ಶರಣನು, ಭಕ್ತನು ನೆಲತತ್ವವನ್ನು ಪ್ರತಿನಿಧಿಸಿದರೆ, ಶರಣನು  ಆಕಾಶತತ್ವದ ಪ್ರತಿನಿಧಿಯೆನಿಸುವನು. ಭಕ್ತನ ಬಾಳು ಬದುಕಿಗೂ ಶರಣನ ಬಾಳು ಬೆಳಕಿಗೂ ಅದೆಷ್ಟು ಅಂತರ ಮತ್ತೊಂದು ಬಗೆಯಲ್ಲಿ ಅದೆಷ್ಟು ಹತ್ತಿರ. ನೆಲ- ಮುಗಿಲುಗಳಂತೆ ಹತ್ತಿರ. ಆತ್ಮನಿಗೆ ಶರಣನು ಅತ್ಯಂತ ಸಮೀಪದವನಾದ ಕಾರಣವೇ ಯೋಗಾಂಗ ಕಾಯನು. ಶಿವಯೋಗ ಸಿದ್ಧನೆನಿಸುವನು.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿ ಆಚಾರಲಿಂಗದ ಅರ್ಚಕನಾದರೆ, ಶರಣನು ಮೀರಿದ ಕ್ರಿಯಾಶೀಲನು. ಪರಾಶಕ್ತಿಸಮನ್ವಿತ ಪ್ರಸಾದಲಿಂಗದ ಪೂಜಕನು. ಸದಾ ಪ್ರಸನ್ನಚಿತ್ತನೆನಿಸುವನು. ಪ್ರಸಾದಲಿಂಗವು ಶಾಂತ್ಯತೀತ ಕಲಾಪೂರ್ಣವಾದುದು. ಅದಕ್ಕಾಗಿ ಶರಣನ ಜೀವನವು ಪರಿಪೂರ್ಣ ಜೀವನ. ಭಕ್ತ ಸಹಜ ದಾನಿಯಾದರೆ, ಶರಣನು ಸುಯ್ದಾನಿ, ಸುಯ್ದಾನವೆಂದರೆ ಎಚ್ಚರ ಹಾಗೂ ತೃಪ್ತಿ. ಅದು ಸಂತೃಪ್ತಿ, ಅದಕ್ಕಾಗಿ ಆತನು ಪರಿಪೂರ್ಣ ಜೀವಿ. ಪರಿಪೂರ್ಣ ಬದುಕುಳ್ಳವನು. ಸದಾ ಆನಂದಭರಿತನು, ಸವೆಯದ ಸಾಕೆನಿಸದ ಮತ್ತೊಂದನ್ನು ಬಯಸದ ಲಿಂಗಾನಂದದಲ್ಲಿ ಲೋಲಾಡುವನು ಶರಣನು.

ವೀರಶೈವ ಸಿದ್ಧಾಂತದಲ್ಲಿ ವಿಚಾರಿಸಲಾಗಿ ನೆಲತತ್ವದ ಭಕ್ತನಿಗೂ ಆಕಾಶತತ್ವದ ಶರಣನಿಗೂ ಒಂದು ರೀತಿಯ ಮಹದಂತರ ಕಂಡರೂ ಷಟ್‌ಸ್ಥಲ ಸಾಧಕನು ಯಾವುದೇ ಸ್ಥಲದಲ್ಲಿದ್ದರೂ ಭಕ್ತಸ್ಥಲಕ್ಕೆ ಬರಲೇ ಬೇಕಾಗುವದು. ಆಧಾರವನ್ನು ಆಶ್ರಯಿಸಿಯೇ ಆಕಾಶಕ್ಕೇರುವುದು ನಿವೃತ್ತಿ. ಆಕಾಶವಾದರೂ ನೆಲದ ನೆಲೆಯನ್ನು ಬಿಟ್ಟಿಲ್ಲ. ಭಕ್ತನು ನೆಲತತ್ವದ ಗಂಧ ಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸುತ್ತಿದ್ದರೆ; ಶರಣನು ಪಂಚತತ್ವಗಳ ಪಂಚ ಪ್ರಸಾದಗಳನ್ನು ಪ್ರಸಾದಲಿಂಗಕ್ಕೆ ಸಮರ್ಪಿಸುವನು. ಶರಣನ ಜೀವನವು ಆಗಸದಂತೆ ಎತ್ತರವಾದುದು, ಬಿತ್ತರವಾದುದು. ಆಕಾಶಕ್ಕೆ ಬಯಲು ಎಂಬ ಉಪನಾಮವಿರುವಂತೆ ಶರಣನು ಪ್ರಾಪಂಚಿಕ ವ್ಯವಹಾರ- ವ್ಯಾಮೋಹಗಳಿಂದ ಮುಕ್ತನಾಗಿ ಬಟ್ಟಬಯಲನ್ನು ಮುಟ್ಟಲು ಸಿದ್ಧನಾದವನು. ಆತನು ನಿತ್ಯ ನಿರ್ಮಲನೂ ಆಗಿದ್ದಾನೆ. ಶರಣನು ಸಕಲ ಜೀವಿಗಳ ಲೇಸ ಬಯಸುವವನು ವಿಶ್ವಪ್ರೇಮ ಅವನಲ್ಲಿ ಮೈಗೂಡಿರುತ್ತದೆ.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿದ ಆಚಾರಲಿಂಗದ ಅರ್ಚಕನಾದರೆ, ಶರಣನು ಕ್ರಿಯಾ-ಜ್ಞಾನ-ಇಚ್ಛಾ-ಆದಿ-ಪರಾಶಕ್ತಿಗಳು ಮೈಗೂಡಿದ ಪ್ರಸಾದಲಿಂಗದ  ಅರ್ಚಕನೆನಿಸುವನು.  ಡಾ.ಜ.ಚ.ನಿ.ಯವರು ಜೀವನ ಸಿದ್ಧಾಂತದಲ್ಲಿ ಶರಣಸ್ಥಲದ ಬಗೆಗೆ “ಆತ್ಮಾನುಭವವನ್ನು ಆತ್ಮಾನಂದವನ್ನು ಪಡೆದವನು ಅಚ್ಚಶರಣ. ಪಂಚಭೂತಗಳಿಂದ ಪಂಚಕೋಶಗಳಲ್ಲಿ ಉಂಟಾದ ಪ್ರಾಕೃತಿಕ ಶಕ್ತಿ ಸಾಮರ್ಥ್ಯಗಳನ್ನು ಯುಕ್ತಿ-ವಿಚಾರಗಳನ್ನು ಭಕ್ತಿಯಿಂದ ಮಾರ್ಪಡಿಸಿ ಆತ್ಮಾನಂದಕ್ಕೆ ಸಾಮರಸ್ಯಕ್ಕೆ ಅವನ್ನು ಅಣಿಮಾಡಿಕೊಂಡ ಅನುಭಾವಿ.  ವಿಶಾಲ ಮನೋಭಾವವನ್ನು  ಬೆಳೆಸಿಕೊಂಡ ವಿಮರ್ಶಾ ಶಕ್ತಿಸಂಪನ್ನ, ಚಿತ್ತ-ಬುದ್ಧಿ-ಪ್ರಾಣ- ಮನ-ಹಮ್ಮುಗಳಲ್ಲಿರುವ ದೋಷಗಳನ್ನುದೂರಮಾಡಿ ಶಿವಜ್ಞಾನದ ಶುಭ್ರ ಪ್ರಕಾಶದಲ್ಲಿ ಪರಮ ಪ್ರಸನ್ನತೆಯನ್ನು ನಿರ್ದೇಶ ನಿಷ್ಪತ್ತಿಗಳನ್ನು ಪಡೆದ ಪ್ರಗತಿಶೀಲ.  ಮಹಾನಂದವನ್ನು ಮಹಾಪ್ರಕಾಶವನ್ನು ಪಡೆದ ಪೂರ್ಣ ಜೀವಿ.  ಮರ್ತ್ಯಲೋಕದ ಮಣಿಹವನ್ನೆಲ್ಲ ಮಾಡಿ ಮುಗಿಸಿದ ತುಂಬು ಬಾಳು ಶರಣನದು. ವಿಯತ್ತಕ್ಕಿಂತಲೂ ವಿಶೇಷವಾದ ವಿಶಾಲ ಮನೋಭಾವವನ್ನು ವಿಕಾಸಗೊಳಿಸಿಕೊಂಡು ಪ್ರಕಾಶಪಡಿಸಿದ ಪೂರ್ಣಜೀವಿ ಶರಣ” ಎಂದು ಶರಣನ ಮಹತ್ವವನ್ನು ಅನುಭವಪೂರ್ಣವಾಗಿ ಪ್ರತಿಪಾದಿಸಿರುವರು.

ಶರಣನು ಪ್ರಾಕೃತನಲ್ಲ; ಅಪ್ರಾಕೃತನು. ಪ್ರಾಕೃತಿಕ ಜಡತ್ವವನ್ನು ಮೀರಿದವನು. ಅದಕ್ಕಾಗಿ ಅವನು ಬಯಲಮೂರ್ತಿಯು. ಆತನ ವಿದ್ಯಾಬುದ್ಧಿಯಿಂದ ಬ್ರಹ್ಮಾದಿಗಳು ಉದಿಸಿದರೆಂದು ಚನ್ನಬಸವಣ್ಣನವರು ವಚನಿಸಿದ್ದುಂಟು. ಶರಣ ಪದದ ಅರ್ಥ= ರಕ್ಷಣೆ, ರಕ್ಷಕ, ಮನೆ, ಮೊರೆ, ಕಾಪಾಡುವವನು ಎಂದಿದೆ. ಆದರೆ  ಷಟ್‌ಸ್ಥಲಾಂತರ್ಗತ ಶರಣ ಪದ ವಿಶಿಷ್ಟವಾದುದು. ಲಿಂಗಪತಿಗೆ ಶರಣ ಹೊಕ್ಕವನೆ ಶರಣ, ಇಂಥ ಪದವನ್ನು ಸಾಮಾನ್ಯರಿಗೂ ಬಳಸಿ ಇಂದು ಅತಿವ್ಯಾಪ್ತಿಗೊಳಿಸುತ್ತಿರುವದು ಉಚಿತವಲ್ಲ. ಶರಣ ತತ್ವಕ್ಕೆ ಅಪಚಾರ ಮಾಡಿದಂತಾಗುವದು. ಶರಣನು ಆನಂದಭಕ್ತಿಯುಳ್ಳವನಾಗಿ ತಾನೆ ಸತಿಯಾಗಿ ಲಿಂಗ ಪತಿಯನ್ನು ವರಸಿದವನು. ಪರಾಶಕ್ತಿಯುಕ್ತ ಶಾಂತ್ಯತೀತ ಕಲಾಪೂರ್ಣ ಪ್ರಸಾದಲಿಂಗವನ್ನು ಶ್ರೋತ್ರ ಮುಖದಲ್ಲಿ ಸುಜ್ಞಾನ ಹಸ್ತದಿಂದ ಸುಶಬ್ದ ಪ್ರಸಾದವನ್ನು ಅರ್ಪಿಸಿ ಧನ್ಯನಾದವನು. ಈತನ ಇರುವನ್ನು ಅಲ್ಲಮಪ್ರಭುಗಳು-

ಹರಿವ ನದಿಗೆ ಮೈಯಲ್ಲ ಕಾಲು,

ಉರಿವ ಅಗ್ನಿಗೆ ಮೈಯಲ್ಲ ನಾಲಿಗೆ,

ಬೀಸುವ ಗಾಳಿಗೆ ಮೈಯಲ್ಲ ಕೈ(ಮುಖ),

ಗುಹೇಶ್ವರ ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯಾ

ಎಂಬುದಾಗಿ ಶರಣನ ಸರ್ವಾರ್ಪಣ ಭಾವವನ್ನು ನಿರೂಪಿಸಿರುವರು. ಶರಣನ ಅರ್ಚನ, ಅರ್ಪಣ ಅನುಭಾವ ಕ್ರಿಯೆಗಳನ್ನು ಮನಂಬುಗುವಂತೆ ವಿವರಿಸಿರುವರು. ಶರಣನು ಸರ್ವಾಂಗ ಲಿಂಗಮಯನು.

೬. ಐಕ್ಯ ಸ್ಥಲ

ಐಕ್ಯಸ್ಥಲ ಷಟ್‌ಸ್ಥಲದಲ್ಲಿ ಕೊನೆಯದು. ಯೋಗಾಂಗದಲ್ಲಿ ಎರಡನೆಯದು. ಐಕ್ಯನಿಗೆ ಆತ್ಮನೆ ಅಂಗ, ಆತ್ಮಾಂಗನಾದ ಐಕ್ಯನು ಚಿಚ್ಛಕ್ತಿ-ಶಾಂತ್ಯತೀತೋತ್ತರ ಕಲೆಯುಳ್ಳ ಮಹಾಲಿಂಗದೊಡನೆ ಸಮರಸವಾಗುವ ಸಾಮರ್ಥ್ಯವನ್ನು ಸಾಧಿಸುವವನು. ಡಾ|| ಜ.ಚ.ನಿ.ಯವರು ಐಕ್ಯಸ್ಥಲದ ವಿವರಣೆಯನ್ನು ಮನನೀಯವಾಗಿ ನೀಡಿದ್ದಾರೆ- ʼʼಆತ್ಮ ಬೇರಿಲ್ಲ, ದೂರಿಲ್ಲ. ಆತ್ಮ ತಾನೇ; ತನ್ನನ್ನು ಅರಿತಿಲ್ಲ. ಅನುಭವ ಪಡೆದಿಲ್ಲ. ತನ್ನರಿವಿಗಿಂತ ಬೇರಿಲ್ಲ ಭಾಗ್ಯ. ತನ್ನೊಳಗೆ ತಾನಿರುವದಕ್ಕಿಂತ ಬೇರಿಲ್ಲ ಸೌಖ್ಯ ತನ್ನ ಗಳಿಕೆಯೇ ಗಳಿಕೆ. ಆ ಗಳಿಕೆಯಿಂದ ಮನೆ ತುಂಬುವುದಿಲ್ಲ. ಮನ ತುಂಬುತ್ತದೆ. ಅಂತೆಯೇ ‘ಶೂನ್ಯ” ಸಂಪಾದನವೆಂದರು. ಮನದುಂಬುವುದೆಂದರೆ ಮನವರಿಕೆಯಾಗುವಿಕೆ. ಮತ್ತು ಮಹದನುಭವವುಂಟಾಗುವಿಕೆ, ಆತ್ಮ ವಿಕಾಸ ವಾಗುವಿಕೆ, ಸರ್ವಾತ್ಮಭಾವದಿಂದ ಸತ್ಯದತ್ತ ಸಾಗುವಿಕೆ, ಪೂರ್ಣಖಂಡಭಾವವನ್ನು ತೋರುವಿಕೆ, ಕ್ರಿಯಾಘನತೆಯನ್ನು ಜ್ಞಾನಪೂರ್ಣತೆಯನ್ನು ಸಂಪಾದಿಸುವಿಕೆ, ಸಮದರ್ಶಿಯಾಗಿ ಬಾಳುವಿಕೆ. ಇವು ಐಕ್ಯನ ಸಾಧನೆ ಸಿದ್ಧಿಯೆನಿಸುವವು.”

ಷಟ್‌ಸ್ಥಲವು ಶ್ರದ್ಧಾಭಕ್ತಿಯಿಂದ ಪ್ರಾರಂಭವಾಗಿ ಅದು ಘಟ್ಟಗೊಂಡಾಗ ನಿಷ್ಠೆಯಾಗಿ ಪರಿಣಮಿಸುವದು. ನಿಷ್ಠೆಯು ಮೂಢನಂಬಿಕೆಯಿಂದ ಕೂಡದೆ ಕ್ರಿಯಾ-ಜ್ಞಾನಶಕ್ತಿಗಳ ಸಮನ್ವಯದಲ್ಲಿ ಸಾವಧಾನತೆ ಸಾಧಿಸುವುದರಿಂದ ಅನುಭವ ಅಳವಡುವದು. ಅನುಭವದಲ್ಲಿ ಅಮೃತತ್ವವಿರುವಂತೆ ಆನಂದವುಂಟು. ಅದು ಕೇವಲಾನಂದವಾಗದೆ ಅಮಿತಾನಂದವೆನಿಸುವದು.  ಆನಂದ ಲಭಿಸುತ್ತಿದ್ದ ಹಾಗೆ ಲಿಂಗಾಂಗ ಸಾಮರಸ್ಯ ಲಭಿಸುವದೆ ಐಕ್ಯನ ಸಾಧನೆ.

ಶರಣ ಸ್ಥಲವನ್ನು ದಾಟಿದ ಐಕ್ಯನು ಆತ್ಮಲಿಂಗವೆನಿಸುವನು. ಅವನು ಚಿಚ್ಛಕ್ತಿಯುಕ್ತ ಶಾಂತ್ಯತೀತೋತ್ತರ ಕಲಾಪೂರ್ಣ ಮಹಾಲಿಂಗವನ್ನು ಸದ್ಭಾವ ಹಸ್ತದಿಂದ ಆಜ್ಞಾಚಕ್ರದಲ್ಲಿ ಹೃದಯಮುಖವಾಗಿ ಸಂದರ್ಶಿಸುವನು. ತೃಪ್ತಿ ಪದಾರ್ಥಗಳನ್ನು ಸುತೃಪ್ತಿ ಪ್ರಸಾದವಾಗಿಸಿ ಮಹಾಲಿಂಗಕ್ಕೆ ಸಮಿರ್ಪಿಸಿ ಅಮಿತಾನಂದದಿಂದ ಸಮರಸ ಭಕ್ತಿಯಲ್ಲಿ ತೇಲಾಡುವನು.  ಶರಣನು ತನ್ನೆಲ್ಲ ವ್ಯಾವಹಾರಿಕ ಬದುಕನ್ನು ಹಾಗೂ ಅಧ್ಯಾತ್ಮಿಕ ಬದುಕನ್ನು ಭಗವಂತನಿಗೆ ಸಮರ್ಪಿಸಿದ ಕಾರಣ ಶಿವನೇ ಆತನ ಯೋಗಕ್ಷೇಮವನ್ನು ನೋಡುತ್ತಾನೆ. ಅದಕ್ಕಾಗಿ ಶರಣನಿಗೆ ಯಾವುದೇ ಅಡ್ಡಿ ಆತಂಕಗಳು ಬರುವದಿಲ್ಲ. ಆತನು ನಿತ್ಯಾನಂದವನ್ನೇ ಪಡೆಯುವನು. ವ್ಯಾವಹಾರಿಕ ಸುಖಕ್ಕೂ ಆತ್ಮಾನಂದಕ್ಕೂ ಮಹದಂತರವಿದೆ. ಬಾಹ್ಯ ಸುಖ ಕ್ಷಣಿಕ, ಆತ್ಮಾನಂದ ನಿತ್ಯ ಸುಖ. ಶರಣನು ಬಾಹ್ಯ ವಿಷಯಗಳಲ್ಲಿ ಅನಾಸಕ್ತವಾಗಿ ಆತ್ಮಸುಖವನ್ನು ಅನುಭವಿಸುತ್ತ ಐಕ್ಯಸ್ಥಿತಿಯಲ್ಲಿ ಸಮರಸವನ್ನು ಸಾಧಿಸುವನು. ಪರಶಿವನ ಷಟ್‌ಶಕ್ತಿಗಳೆಲ್ಲ ಜಾಗ್ರತಗೊಂಡು ಶರಣನಲ್ಲಿ ಪ್ರತ್ಯಕ್ಷವಾಗುವವು. ಶಿವಯೋಗ ಸಾಧನೆಯಿಂದ ಕಾಮಾದಿ ಅನಿಮಿತ್ತ ವೈರಿಗಳು ಹಸಿವು ತೃಷೆಗಳೆಂಬ ಷಡೂರ್ಮಿಗಳು ಮಾಯವಾಗಿ ಲಿಂಗದ ಬಾಹ್ಯ ಉಪಚಾರಗಳೂ ಇಲ್ಲವಾಗುವವು. ಹಿಮ ಕರಗಿ ನೀರಾಗುವಂತೆ ಕರ್ಪುರ ಕರಗಿ ಬೆಂಕಿಯಾಗುವಂತೆ ಐಕ್ಯನು ಮಹಾಲಿಂಗದಲ್ಲಿ ಒಂದಾಗುವನು. ಮಹಾಲಿಂಗವೇ ತಾನಾಗುವನು.

 ಶರಣ ನಿದ್ರೆಗೈದಡೆ ಜಪಕಾಣಿರೊ

 ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ

 ಶರಣ ನಡೆದುದೆ ಪಾವನ ಕಾಣಿರೊ

 ಶರಣ ನುಡಿದುದೆ ಶಿವತತ್ವ ಕಾಣಿರೂ

 ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೋ

 ಬಸವಣ್ಣನವರ ಸಂದೇಶದಂತೆ ಶರಣನ ಕಾಯವು ಕೈಲಾಸವಾಗುವದು. ಆತನ ನಡೆ-ನುಡಿಗಳು ಪಾವನ, ಅವನೇ ಶಿವತತ್ವ, ಆತನು ಸದಾ ಜಾಗ್ರತನು, ಆತ ನಿದ್ದೆ ಮಾಡಿದನೆಂದರೆ ಜಪವನ್ನೇ ಮಾಡುವನು. ಜಾಗ್ರತನೆಂದಡೆ ಶಿವರಾತ್ರಿಯ ಸಂಕೀರ್ತನವಿದ್ದಂತಾಗುವದು. ಶರಣನು ಪರಮಾತ್ಮ ಸ್ವರೂಪನೇ ಆಗುವನು. ವಸ್ತುತಃ ಹಾಲು-ನೀರುಗಳು ವಿಭಿನ್ನ ಗುಣಧರ್ಮಗಳನ್ನು ಹೊಂದಿದ್ದರೂ ಅವೆರಡನ್ನು ಬೇರ್ಪಡಿಸಲಾಗದು. ಆದರೆ ಒಂದಾದಾಗ ಹಂಸಪಕ್ಷಿ ಬೇರ್ಪಡಿಸುತ್ತದೆಂಬ ವದಂತಿಯಿದೆ. ಆದರೆ ಬೆಂಕಿಯ ಮೇಲಿಟ್ಟರೆ ನೀರು ಸುಟ್ಟು ಹೋಗುತ್ತದೆ. ಹಾಲು ಗಟ್ಟಿಯಾಗುತ್ತ ಹೋಗುತ್ತದೆ. ಹಾಲು ಹಾಲಿನಲ್ಲಿ ಬೆರತಂತೆ ಶರಣನು ಮಹಾಲಿಂಗದಲ್ಲಿ ಒಂದಾಗಿ ಪರಮಾತ್ಮನಲ್ಲಿ ಬೇರಿಲ್ಲದಂತೆ ಸಮರಸ ಹೊಂದುವನು. ಶಿವಶಕ್ತಿಗಳನ್ನು ಸಂಪಾದಿಸಿ ಪರಶಿವನಲ್ಲಿ ಒಂದಾಗುವದೇ ಐಕ್ಯನ ಮಹಾಮಣಿಹ ವೆನಿಸುವದು.

ಉಪಸಂಹಾರ

ಷಟ್‌ಸ್ಥಲ ಸಿದ್ಧಾಂತಕ್ಕೆ ಅಷ್ಟಾವರಣ-ಪಂಚಾಚಾರಗಳು ಪೂರಕವಾದವುಗಳು. ಅಂಗ-ಪ್ರಾಣಗಳು ಗಟ್ಟಿಯಾದರೆ ಆತ್ಮಚೈತನ್ಯವು ಸಶಕ್ತವಾಗುವದು. ಧಾರ್ಮಿಕ ಸ್ವಾತಂತ್ರ್ಯ, ಸಚ್ಚಾರಿತ್ರ್ಯ ದಿಂದ ವ್ಯಕ್ತಿತ್ವ ವಿಕಾಸಗೊಂಡು ಗುರಿಸಾಧನೆಯ ಮಾರ್ಗ ಸುಸೂತ್ರವೆನಿಸುವದು. ವೀರಶೈವ ಸಿದ್ಧಾಂತದಲ್ಲಿ ತತ್ವಗಳ ಅವತರಣ ಜೀವಾತ್ಮನ ಕಲ್ಯಾಣಕ್ಕಾಗಿದೆಯೆಂಬುದನ್ನು ನಂಬಬೇಕು. ಈ ಶ್ರದ್ಧೆಯು ಸಮರಸಕ್ಕೆ ಕಾರಣವಾಗುವದು. ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯೇ ಷಟ್‌ಸ್ಥಲದ ವಿಕಾಸ ಮಾರ್ಗ. ಇದು ಕೇವಲ ಪರಿಕಲ್ಪನೆಯಲ್ಲ, ಅನುಷೇಯವಾದುದು. ಅದಕ್ಕಾಗಿ ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ.

ಷಟ್‌ಸ್ಥಲದಲ್ಲಿ ಅವತರಣ ಕ್ರಿಯೆಗೆ ಪ್ರವೃತ್ತಿ ಮಾರ್ಗವೆಂದರೆ, ಆರೋಹಣ ಪ್ರಕ್ರಿಯೆಗೆ ನಿವೃತ್ತಿ ಪಥವೆನ್ನುವರು. ನಿವೃತ್ತಿ ಕಲೆಯನ್ನು ಗ್ರಹಿಸಿದ ಆಚಾರಲಿಂಗದ ಅನುಸಂಧಾನದಿಂದ ಕ್ರಿಯಾಶೀಲತೆ ಪ್ರಾರಂಭವಾಗಿ ಮೀರಿದಾಚರಣೆಯತ್ತ ಸಾಗುವದೇ ಶರಣನ ಮಹಾಮಣಿಹವೆನ್ನಬೇಕು.

ಕೊನೆ ಟಿಪ್ಪಣಿಗಳು

೧. ಷಟ್‌ಸ್ಥಲ ಚಿಂತನ-ಲೇ. ಡಾ. ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪ್ರಕಾಶಕರು, ಕಾರಂಜಿಮಠ ಪ್ರಕಾಶನ,  ಬೆಳಗಾವಿ, ೨೦೦೩,

೨. ಜೀವನ ಸಿದ್ಧಾಂತ-ಭಕ್ತ ಸಂಪುಟ-ಡಾ. ಜ.ಚ.ನಿ. ಪುಟ ೪ ಮೊದಲ ಮಾತು

೩.  ಚನ್ನಬಸವಣ್ಣನವರ ವಚನಗಳು- ಸಂ. ಡಾ. ಆರ್. ಸಿ. ಹಿರೇಮಠ ವ-೬೩೩,

೪.  ವಚನಗಳಲ್ಲಿ ವೀರಶೈವ ಧರ್ಮ-ಲೇ. ಎಚ್. ತಿಪ್ಪೇರುದ್ರಸ್ವಾಮಿ

೫.   ಅಲ್ಲಮಪ್ರಭು ದೇವರ ವಚನಗಳು ಸಂ. ಆರ್. ಸಿ. ಹಿರೇಮಠ

೬.   ಷಟ್‌ಸ್ಥಲ ಜ್ಞಾನಸಾರಾಮೃತ-ವ-೩೩

೭.   ಶಿವಾನುಭವ ಸೂತ್ರಂ-ಮೊಗ್ಗೆಯ ಮಾಯಿದೇವರು ೨-೩

೮.   ಸಿದ್ಧಾಂತ ಶಿಖಾಮಣಿ-೫-೩೪.

೯.   ಶಿವಶರಣೆಯರ ವಚನಗಳು ಸಂ.ಆರ್‌.ಸಿ.ಹಿ. ವ-೨೫೦.

೧೦.  ಷಟ್‌ಸ್ಥಲ ಜ್ಞಾನ ಸಾರಾಮೃತ – ವಚನ ೩೯.

೧೧.  ಆದಯ್ಯ ಶರಣನ ವಚನಗಳು

೧೨.   ಬಸವಣ್ಣನವರ ವಚನಗಳು  ವ-೯೬

೧೩.   ಗುರುಕರುಣ ತ್ರಿವಿಧಿ ಪದ್ಯ  -೨೨೬

೧೪.   ಬಸವಣ್ಣನವರ ವಚನಗಳು – ವ-೭೫೮.

೧೫.   ಬಸವಣ್ಣನವರ ವಚನಗಳು.

೧೬.   ನಾರದ ಭಕ್ತಿಸ್ತೋತ್ರ-೧

೧೭.   ಗುರುಕರಣ ತ್ರಿವಿಧಿ   ೨೨೭

೧೮.   ಷಟ್‌ಸ್ಥಲ ಜ್ಞಾನ ಸಾರಾಮೃತ- ವ-೨೬೪.

೧೯.   ಚನ್ನಬಸವಣ್ಣನವರ ವಚನಗಳು – ಸಂ. ಆರ್.ಸಿ.ಹಿ. ವ-೧೦೮೭.

೨೦.   ಬಸವಣ್ಣನವರ ವಚನಗಳು – ಸಂ.ಆರ್.ಸಿ.ಹಿ, ವ-೧೦೯.

೨೧.   ಚ.ಬ. ವಚನಗಳು – ೮೧೬.

೨೨.   ಗುರುಕರುಣ ತ್ರಿವಿಧಿ – ಪದ್ಯ – ೨೨೮.

೨೩.   ಸ್ವತಂತ್ರ ಸಿದ್ಧಲಿಂಗೇಶ್ವರ ವಚನ

೨೪.    ಜೀವನ ಸಿದ್ಧಾಂತ-ಶರಣಸ್ಥಲ-ಡಾ. ಜ.ಚ.ನಿ.

೨೫.   ಅಲ್ಲಮಪ್ರಭುದೇವರ ವಚನಗಳು ವ-೧೨೬೫

೨೬.   ಜೀವನ ಸಿದ್ಧಾಂತ-ಐಕ್ಯಸ್ಥಲ.

೨೭.   ಬಸವಣ್ಣನವರ ವಚನಗಳು ವ-೮೭೨,

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ದೃಷ್ಟಿ ಎಂದರೆ ಕಣ್ಣಿನ ನೋಟ ಅಥವಾ ನೋಡುವ ಕ್ರಿಯೆ. ನೋಡುವ ನೋಟದಲ್ಲಿ ನಮ್ಮ ಕಣ್ಣಿಗಿಂತಲೂ ಮನಸ್ಸಿನ ಪಾತ್ರ ಪ್ರಮುಖವಾದುದು. ಕಣ್ಣಿನಿಂದ ಯಾವುದೇ ವಸ್ತುವನ್ನು ನೋಡಿದರೂ ಮನಸ್ಸು ಅದರ ಮೇಲೆ ಕೇಂದ್ರೀಕೃತವಾಗದ ಹೊರತು ಆ ವಸ್ತುವಿನ ಜ್ಞಾನ ನಮಗೆ ಸಾಧ್ಯವಾಗುವುದಿಲ್ಲ. ನಾವು ಒಂದು ವಸ್ತುವನ್ನು ನೋಡಿದಾಗ ಮೊದಲು ನಮ್ಮ ಮನಸ್ಸು ಆ ವಸ್ತುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಬುದ್ದಿಯು ಇದು ಇಂಥ ವಸ್ತುವೆಂದು ನಿರ್ಧರಿಸುತ್ತದೆ. ನಾನು ಈ ವಸ್ತುವನ್ನು ನೋಡುತ್ತಿದ್ದೇನೆ ಎಂಬುದು ಅಹಂಕಾರ. ಹಾಗೆಯೇ ಕಾಮಕ್ರೋಧಾದಿ ಸಂವೇಗಗಳಿಗೆ ಒಳಗಾಗುವುದು ಚಿತ್ತ , ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಇವು ನಮ್ಮ ಅಂತಃಕರಣಗಳು. ‘ಕರಣಂಗಳ ಚೇಷ್ಟೆಗೆ ಮನವೇ ಬೀಜ’ ಎನ್ನುತ್ತಾಳೆ ಅಕ್ಕಮಹಾದೇವಿ.

ಅಂತಃಕರಣಗಳ ವ್ಯವಹಾರವೆಲ್ಲವೂ ಮನಸ್ಸಿನಿಂದ ಮೊದಲ್ಗೊಳ್ಳುತ್ತದೆ. ಹಾಗೆಯೇ  ಕಣ್ಣು ಕಿವಿ ಇತ್ಯಾದಿ ಜ್ಞಾನೇಂದ್ರಿಯಗಳ ವ್ಯವಹಾರಕ್ಕೂ ಮನಸ್ಸೇ ಕಾರಣ. ಆದ್ದರಿಂದ ನಾವು ನೋಡುವ ನೋಟ ಅಥವಾ ನಮ್ಮ ಕಣ್ಣಿನ ದೃಷ್ಟಿ ಪವಿತ್ರವಾಗಿರಲು ಮನಸ್ಸು ಪವಿತ್ರವಾಗಿರಬೇಕಾದುದು ಹಾಗೆಯೇ ನಿರ್ಮಲವಾಗಿರಬೇಕಾದುದು ಅತ್ಯವಶ್ಯ. ʼ ಎಲ್ಲಿ ನೋಡಿದಡಲ್ಲಿ ಮನವೆಳೆಸಿದರೆ ಆಣೆ ನಿಮ್ಮಾಣೆ ನಿಮ್ಮ ಪ್ರಮಥರ ಆಣೆ’ ಎಂದು ಬಸವಣ್ಣನವರು ಮನಸ್ಸಿನ ಹೀನ ದೃಷ್ಟಿಗೆ ಕಡಿವಾಣ ಹಾಕುತ್ತಾರೆ. ಸದಾಭೌತಿಕ

ಸುಖಕ್ಕಾಗಿ ಹಾತೊರೆಯುವ ಹಾಗು ವಿಷಯಾದಿಗಳಿಗೆ ಹರಿಯುವ ಮನಸ್ಸಿಗೆ ಜ್ಞಾನಿಗಳಾದವರು ಸಂಸ್ಕಾರಕೊಟ್ಟು ದೃಷ್ಟಿಯನ್ನು ಪವಿತ್ರವಾಗಿರಿಸಿಕೊಳ್ಳುತ್ತಾರೆ.

 ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಠವತ್!

ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸಃ ಪಂಡಿತಃ!!

 ಎಂಬುದು ಸುಭಾಷಿತೋಕ್ತಿ, ಪರಸ್ತ್ರೀಯರನ್ನು ತಾಯಿಯಂತೆ, ಪರಧನವನ್ನು ಮಣ್ಣಿನ ಹೆಂಟೆಯಂತೆ ಎಲ್ಲ ಜೀವಿಗಳನ್ನು ತನ್ನಂತೆ ಕಾಣುವುದು ಜ್ಞಾನಿಗಳ ಲಕ್ಷಣ. ಇಂಥ ಜ್ಞಾನಿಗಳ ದೃಷ್ಟಿಯೇ ನಿರ್ಮಲದೃಷ್ಟಿ, ಪವಿತ್ರ ದೃಷ್ಟಿಯುಳ್ಳವರಿಗೆ ಎಲ್ಲವೂ ಸುಂದರವಾಗಿ, ಪವಿತ್ರವಾಗಿ ಕಾಣುತ್ತದೆ.

 ಹಚ್ಚ ಹಸಿರಿಬಿಂದ ಕೂಡಿದ ದಟ್ಟ ಕಾಡಿನ ಮಧ್ಯದಲ್ಲಿ ಸುಂದರವಾದ ಒಂದು ಮನೆ ಇತ್ತು. ಅದನ್ನು ಕಂಡ ಸಾಧು ಸತ್ಪುರುಷರೊಬ್ಬರು ‘ಎಷ್ಟು ಸುಂದರವಾದ ಪ್ರಶಾಂತವಾದ ಸ್ಥಳವಿದು! ಇಲ್ಲಿಯೇ ಇದ್ದು ಸದಾ ಭಗವಂತನ ಧ್ಯಾನ ಮಾಡಬೇಕು’ ಎಂದು ಯೋಚಿಸಿದರು. ಅದೇ ಮನೆಯನ್ನು ನೋಡಿದ ಕಳ್ಳನೊಬ್ಬನು ಎಂತಹ ಗುಪ್ತವಾದ ಸ್ಥಳದಲ್ಲಿರುವ ಮನೆ ಇದು! ನಾನು ಕಳವು ಮಾಡಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಇಟ್ಟರೆ ಅವು ಯಾರ ಕಣ್ಣಿಗೂ ಬೀಳಲಾರವು ಎಂದು ಯೋಚಿಸಿದ. ದುರಾಚಾರಿ ದುರ್ವ್ಯಸನಿಯೊಬ್ಬ ಆ ಮನೆಯನ್ನು ಕಂಡು ನನ್ನ ದುರಾಚಾರಕ್ಕಾಗಿ ಇದಕ್ಕಿಂತಲೂ ಉತ್ತಮವಾದ ಏಕಾಂತ ಸ್ಥಳ ಮತ್ತೊಂದಿಲ್ಲ ಎಂದು ನಿರ್ಧರಿಸಿದ. ಹಾಗೆಯೇ ಮನೆಯನ್ನು ನೋಡಿದ ಜೂಜುಗಾರನೊಬ್ಬ ಜೂಜಾಟವಾಡಲು ಅತ್ಯಂತ ಯೋಗ್ಯವಾದ ಮನೆ ಇದು. ನನ್ನ ಗೆಳೆಯರನ್ನೆಲ್ಲ ಇಲ್ಲಿ ಕರೆ ತಂದು ಜೂಜಾಟವಾಡುವ ಎಂದು ಯೋಚಿಸಿದ. ಹೀಗೆ ಒಂದೇ ಮನೆಯನ್ನು ಬೇರೆ ಬೇರೆ ದೃಷ್ಟಿಕೋನ ಹೊಂದಿದ ವ್ಯಕ್ತಿಗಳು ಬೇರೆ ಬೇರೆ ರೂಪದಲ್ಲಿ ನೋಡಿದರು. ನಮ್ಮ ನೋಟದ ಹಿಂದಿನ ಮನಸ್ಸಿನ ಪಾವಿತ್ರ್ಯತೆ ಬಹಳ ಮಹತ್ವದ್ದು. ಆಶೆ-ಆಮಿಷಗಳಿಂದ, ಕಾಮ ಕ್ರೋಧಾದಿ ಮನೋವಿಕಾರಗಳಿಂದ ಮನಸ್ಸು ಮುಕ್ತವಾಗಿರಬೇಕು. ಆಗ ನಮ್ಮ ದೃಷ್ಟಿ ಹಾಗು ಅಂತಃಕರಣಗಳೆಲ್ಲವೂ ಒಳ್ಳೆಯದಾಗುತ್ತವೆ. ದೃಷ್ಟಿಯಂತೆ ಸೃಷ್ಟಿ ಅಲ್ಲವೇ?

ಫ. ಗು. ಹಳಕಟ್ಟಿ, ವಿಜಾಪೂರ

ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ.

ಷಟ್ಸ್ಥಲ ಸಿದ್ಧಾಂತದ ತತ್ವಗಳನ್ನು ಅರಿಯಲು ವಚನ ಗ್ರಂಥಗಳೇ ಬಹು ಸಹಾಯಕಾರಿಗಳು. ಆದರೆ ಸಮಾಜದ ದುರ್ದೈವದಿಂದ ಇದರ ತತ್ವಗಳು ಹಿಂದುಸ್ಥಾನದಲ್ಲಿ ಇನ್ನೂ ಅಪರಿಚಿತವಾಗಿ ಉಳಿದಿವೆ. ಅವುಗಳನ್ನು ಹೊರಗೆಡುಹುವ ಪ್ರಯತ್ನಗಳು ಇನ್ನೂ ಆಗಿರುವದಿಲ್ಲ. ಷಟ್ಸ್ಥಲ ಶಾಸ್ತ್ರವು ವೀರಶೈವ ಧರ್ಮದ ಒಂದು ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಈ ಸಮಾಜದಲ್ಲಿ ಆಗಿ ಹೋದ ಅನೇಕ ಧರ್ಮ ಪ್ರಚಾರಕ್ಕೂ ತತ್ವವೇತ್ತಿಗಳೂ, ಸಾಧು ಸತ್ಪುರುಷರೂ ಇದರ ತತ್ವಗಳನ್ನೇ ಸಾರಿರುವರು. ಷಟ್ಸ್ಥಲದ ಉದ್ದೇಶವು ಮನುಷ್ಯನ ಶಕ್ತಿಗಳನ್ನೂ ಅವನ ಗುಣ ಧರ್ಮಗಳನ್ನೂ ಸರಿಯಾದ ರೀತಿಯಿಂದ ವಿಕಾಸಗೊಳಿಸುವದೇ ಇರುತ್ತದೆ. ಈ ರೀತಿಯನ್ನು ಅವರು ಗೊತ್ತುಪಡಿಸಿ ಅವನ್ನು ಈ ಶಾಸ್ತ್ರದ ಮೂಲಕ ಪ್ರಚುರ ಪಡಿಸಿರುತ್ತಾರೆ. ಆಗಮ ಧರ್ಮಗಳು ಅನೇಕವಿದ್ದು ಅವುಗಳಲ್ಲಿ ಷಟ್ಸ್ಥಲವನ್ನು ವಿಸ್ತಾರವಾಗಿ ಬೋಧಿಸುವ ಧರ್ಮವೆಂದರೆ, ವೀರಶೈವವೇ ಇರುತ್ತದೆ. ವೀರಶೈವರಲ್ಲಿ ಈ ಧರ್ಮದ ಮರ್ಮಗಳನ್ನು ಅರುಹತಕ್ಕ ಗ್ರಂಥಗಳು ಕನ್ನಡ, ಸಂಸ್ಕೃತ, ತಮಿಳು, ತೆಲಗು, ಭಾಷೆಗಳಲ್ಲಿ ಅನೇಕವಿವೆ. ಆದರೆ ಅವುಗಳಲ್ಲಿ ಷಟ್ಸ್ಥಲದ ತತ್ವಗಳನ್ನು ಬಹು ವಿಶದವಾಗಿ ಅರಹುವ ಗ್ರಂಥಗಳೆಂದರೆ ವಚನಗಳೇ ಇವೆ. ಈ ದೃಷ್ಟಿಯಿಂದ ಇವುಗಳ ಮಹತ್ವವು ಬಹಳ ಇರುತ್ತದೆ.

ಈ ಪ್ರಕಾರ ವಚನ ಶಾಸ್ತ್ರವು ಷಟ್ಸ್ಥಲಗಳ ಅಭ್ಯಾಸ ದೃಷ್ಟಿಯಿಂದ ಅಷ್ಟೇ ಅಲ್ಲ,‌ ಇದು ಒಂದು ಕಾಲಕ್ಕೆ ಕರ್ನಾಟಕದಲ್ಲಿ ರಾಜಕೀಯ ಸಾಮಾಜಿಕ ಮತ್ತು ವಾಙ್ಮಯಾತ್ಮಕ ಸ್ಥಿತಿಯಲ್ಲಿ ಬಹು ಮಹತ್ವದ ಬದಲಾವಣೆಗಳನ್ನು ಮಾಡಿರುತ್ತದೆ. ಈ ದೃಷ್ಟಿಯಿಂದಲೂ ಈ ಶಾಸ್ತ್ರ ಗ್ರಂಥಗಳು ಪಠನೀಯವಾಗಿರುತ್ತವೆ.

 ವೀರಶೈವ ಧರ್ಮವು ೧೧-೧೨ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ಪ್ರಸಾರ ಹೊಂದಲಿಕ್ಕೆ ಈ ವಚನಗ್ರಂಥಗಳೇ ಮುಖ್ಯ ಕಾರಣವಾದವೆಂದು ಹೇಳಬಹುದು. ಅವುಗಳ ಮೂಲಕವಾಗಿಯೇ ಆಗಿನ ವೀರಶೈವ ಧರ್ಮ ಪ್ರವರ್ತಕರು ಧರ್ಮ ತತ್ವಗಳನ್ನು ದೇಶಮಧ್ಯದಲ್ಲಿ ಪ್ರಸಾರಗೊಳಿಸಿದರು. ಆ ಕಾಲಕ್ಕೆ ಬಸವಾದಿ ಶಿವಶರಣರು ಕಲ್ಯಾಣ ಪಟ್ಟಣದಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಶಿವಾನುಭವದ ತತ್ವಗಳನ್ನು ಚರ್ಚಿಸಿ ಅವುಗಳನ್ನು ಈ ವಚನಗಳ ಮೂಲಕವಾಗಿಯೇ ಸಾಮಾನ್ಯ ಜನರಿಗೆ ಸಹ ತಿಳಿಯುವಂತೆ ಬೋಧಿಸಿದರು. ಈ ಪ್ರಕಾರ ಆ ಕಾಲಕ್ಕೆ ಹಲಕೆಲವು, ಶಿವಶರಣರಷ್ಟೇ ಅಲ್ಲ, ಅಸಂಖ್ಯಾತ ಶಿವಶರಣರು ಬೇರೆ ಬೇರೆ ಭಾಗಗಳಲ್ಲಿ ಉದ್ಭವಿಸಿ ತಮ್ಮ ತಮ್ಮ ವಿಚಾರಸರಣೆಗೆ ಅನುಸಾರವಾಗಿ ನಾನಾವಿಧವಾಗಿ ಇವುಗಳ ಮೂಲಕ ಧರ್ಮತತ್ವಗಳನ್ನು ಬೋಧಿಸಿದ್ದಾರೆ. ಹೀಗೆ ಈ ಗ್ರಂಥಗಳು ಅಸಂಖ್ಯವಾಗಿ ಹೊರಟು ಒಂದು ವಾಙ್ಮಯ ಸ್ವರೂಪವನ್ನೇ ಹೊಂದಿವೆ. ಹಾಗೆ ಈ ವಾಙ್ಮಯವು ಕೃತ್ರಿಮ ರೀತಿಯಿಂದ ಹೊರಟಿರುವದಿಲ್ಲ. ಅದು ಒಂದು ಧರ್ಮಕ್ರಾಂತಿಯ ಕಾಲಕ್ಕೆ ಹೊರಟಿರುತ್ತದೆ. ಆದುದರಿಂದ ಇದು ಒಂದು ನಿಸ್ಸಾರವಾದ ವಾಙ್ಮಯ ವಾಗಿರುವದಿಲ್ಲ. ಅದರಲ್ಲಿ ಒಂದು ಬಗೆಯ ಚೈತನ್ಯವು ಇರುತ್ತದೆ. ಅದರಲ್ಲಿ ಓಜಸ್ಸು ಇದೆ, ಬಲವು ಇದೆ, ಇಂಥ ವಾಙ್ಮಯವು ವೀರಶೈವರಲ್ಲಿ ಹುಟ್ಟಿದುದಕ್ಕಾಗಿ ಅವರು ಅಭಿಮಾನಪಡತಕ್ಕದ್ದಾಗಿದೆ.

 ವಚನ ಗ್ರಂಥಗಳಲ್ಲಿ ಈ ಬಗೆಯ ಓಜಸ್ಸು ಮತ್ತು ಬಲವು ಉಂಟಾಗಲಿಕ್ಕೆ ಕಾರಣಗಳಾವವು ? ಅವುಗಳ ರಚನೆಯಲ್ಲಿ ಅಂಥದೇನು ಇದೆ ? ಎಂಬುದನ್ನು ನಾವು ವಿಚಾರ ಮಾಡುವದು ಬಹಳ ಮಹತ್ವದ್ದಿರುತ್ತದೆ. ಈ ಬಗ್ಗೆ ನಾವು ಕೆಲವು ಮುಖ್ಯವಾದ ಕಾರಣಗಳನ್ನು ಕೆಳಗೆ ವಿವರಿಸುತ್ತೇವೆ.

 ವಚನ ಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾಗಿ ನುಡಿದ ಸತ್ಯ ಮಾತುಗಳಿವೆ. ಈ ಸಂಗತಿಯೇ ಅವುಗಳ ಓಜಸ್ಸಿಗೆ ಕಾರಣವಾಗಿರುತ್ತದೆ. ಸತ್ಯ ಮಾತುಗಳಲ್ಲಿ ಯಾವಾಗಲೂ ಒಂದು ಬಲವು ಇರುತ್ತದೆ. ತತ್ವವೇತ್ತಿಗಳು ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ನಾನಾ ಬಗೆಯ ಯುಕ್ತಿ ಪ್ರಯುಕ್ತಿಗಳನ್ನು ಯೋಜಿಸುವದುಂಟು. ಇಂಥವರ ಗ್ರಂಥಗಳಲ್ಲಿ ಸೂಕ್ಷ್ಮ ಜಾಙ್ಮಯು ಬೇಕಾದಷ್ಟು ಇರಬಹುದು. ಆದರೆ ಅವುಗಳಲ್ಲಿ ಜೀವಕಳೆಯು ಮಾತ್ರ ಸ್ಫುರಿಸಲಾರದು. ಆದರೆ ಸತ್ಯಭಾಷೆಯ ವಿಧವು ಬೇರೆ. ಅದು ತಟ್ಟನೆ ಮನಸ್ಸಿಗೆ ಹೊಳೆಯುತ್ತದೆ. ಅದರಲ್ಲಿ ಸರಳತೆಯುಂಟು; ಓಜಸ್ಸುಂಟು, ವಚನಗ್ರಂಥಗಳೆಲ್ಲ ಹೀಗೆಯೇ ಇವೆ. ಅವುಗಳನ್ನು ಓದಿದೊಡನೆಯೇ ಅವುಗಳಲ್ಲಿಯ ತತ್ವಗಳ ನಿಜತ್ವವು ಮನಸ್ಸಿನಲ್ಲಿ ಕೂಡಲೇ ಪ್ರಕಾಶಿಸಹತ್ತುತ್ತದೆ. ಅವುಗಳ ಕೂಡ ವಾದವಿವಾದ ಮಾಡಲು ಮನಸ್ಸು ಮುಂದಾಗುವದಿಲ್ಲ. ಒಂದುದಿನ ಸ್ವಾಮಿ ವಿವೇಕಾನಂದರವರು ಸತ್ಯವನ್ನು ತಿಳಿಯಲುದ್ದೇಶಿಸಿ ಶ್ರೀ ರಾಮಕೃಷ್ಣ ಪರಮಹಂಸರಿದ್ದೆಡೆಗೆ ಹೋದರು. ಅವರೊಡನೆ ವಾದವಿವಾದ ಮಾಡುವ ಉದ್ದೇಶದಿಂದಲೇ ಹೋದರು. ಆದರೆ ರಾಮಕೃಷ್ಣರವರ ನುಡಿಗಳನ್ನು ಕೇಳಿದೊಡನೆಯೇ ಅವರೊಡನೆ ವಾದವಿವಾದ ಮಾಡುವ ಅವರ ಮನಸ್ಸು ಹಾರಿಹೋಯಿತು. ಪ್ರತಿ ಒಬ್ಬ ಮಹಾಪುರುಷನ ನುಡಿಯ ರೀತಿಯು ಹೀಗೆಯೇ ಇರುತ್ತದೆ. ಅವನ ಮಾತುಗಳಲ್ಲಿ ಸತ್ಯತೆಯ ಪ್ರಭಾವವು ಸ್ವತಃ ಸಿದ್ಧವಾಗಿಯೇ ಹರಿಯುತ್ತಿರುತ್ತದೆ. ಅದು ಕೂಡಲೇ ಮನಸ್ಸಿನಲ್ಲಿ ಬಿಂಬಿಸುತ್ತದೆ. ವಚನಗಳ ರೀತಿಯಾದರೂ ಹಾಗೆಯೇ ಇದ್ದು

ಅವುಗಳಲ್ಲಿರುವ ಶಕ್ತಿಗೆ ಇದೇ ಮುಖ್ಯ ಕಾರಣವೆಂದು ಹೇಳಬಹುದು.

ವಚನಗಳಲ್ಲಿ ಮೋಹಕತನವು ಇದೆ. ಯಾಕೆಂದರೆ ಅವುಗಳಲ್ಲಿ ಕಾಪಟ್ಯ ಕುಹಕತನ ಕುತಂತ್ರದ ವಿಚಾರಗಳಿಲ್ಲ. ಅಂದರೆ ವಚನಕಾರನು ತನ್ನ ಮನಸ್ಸಿನಲ್ಲಿ ಇದ್ದದ್ದನ್ನು ಇದ್ದಕ್ಕಿದ್ದ ಹಾಗೆಯೇ ನುಡಿಯುವನು. ಚಿಕ್ಕ ಮಗುವಿನ ನುಡಿಯಲ್ಲಿ ಮೋಹಕತನವು ಏಕೆ ಇರುತ್ತದೆಂಬುದನ್ನು ನಾವು ವಿಚಾರಿಸಿದರೆ ಅದು ತನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಇದ್ದಕ್ಕಿದ್ದ ಹಾಗೆಯೇ ನಿರ್ವ್ಯಾಜವಾಗಿ ನುಡಿಯುವದು. ಇದೇ ಮಗುವಿನ ಮಾತಿನ ಮೋಹಕತನಕ್ಕೆ ಕಾರಣವು. ವಚನ ಗ್ರಂಥಗಳು ಹಾಗೆಯೇ ಇರುತ್ತವೆ. ಒಬ್ಬ ಮನುಷ್ಯನು ಅತ್ಯಂತ ವಕೃತ್ವ ಶಕ್ತಿಯುಳ್ಳವನಾಗಿರಬಹುದು. ಇಂಥವರು ಸಮಾಜದಲ್ಲಿ ಹೇರಳವಾಗಿ ದೊರೆಯುವದುಂಟು. ಆದರೆ ಅವರು ಇಷ್ಟರಿ೦ದಲೇ ಸಮಾಜದ ಚಾಲಕರಾದದ್ದು ತೋರಿಬರುವದಿಲ್ಲ. ಇದಕ್ಕೆ ಕಾರಣವೆಂದರೆ ಇವರು ನಡೆದಂತೆ ನುಡಿಯುವದಿಲ್ಲ. ನುಡಿದಂತೆ ನಡೆಯುವುದಿಲ್ಲ . ಆದ್ದರಿಂದ ಇಂಥವರ ಮಾತಿನಲ್ಲಿ ಬಲವಿರುವದಿಲ್ಲ. ಮ. ಗಾಂಧಿಯವರ ವಿಚಾರಗಳು ಸಮ್ಮತವಾಗದೆ ಇದ್ದಂತವರು ನಮ್ಮ ದೇಶದಲ್ಲಿ ಅನೇಕರಿರಬಹುದು. ಆದರೆ ಅವರ ಮಾತಿನಲ್ಲಿ ಕಪಟಭಾವವಿರುವದಿಲ್ಲಾದ್ದರಿಂದ ಅವುಗಳಲ್ಲಿ ಒಂದು ಬಲವುಂಟಾಗಿರುತ್ತದೆ. ಇದೇ ಮೇರೆಗೆ ವಚನಗಳ ಸ್ಥಿತಿಯು ಇರುತ್ತದೆ. ಆದ್ದರಿಂದ ಅವುಗಳಲ್ಲಿ ಒಂದು ಅತರ್ಕ್ಯವಾದ ಶಕ್ತಿಯು ಉತ್ಪನ್ನವಾಗಿರುತ್ತದೆ.

 ವಚನಗಳಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳಲ್ಲಿ ಒಂದು ಅಸಾಧಾರಣ ವಾದ ಧೈರ್ಯಭಾಗವು ತುಂಬಿ ತುಳುಕುತ್ತದೆ. ಅಂದರೆ ಅವುಗಳಲ್ಲಿ ಅಂಜಿ ನುಡಿದ ಮಾತುಗಳಿಲ್ಲ. ಹೀಗೆ ವರ್ತಿಸಬೇಕಾದರೆ ಅತ್ಯಂತ ಮನೋಧೈರ್ಯವು ಬೇಕು. ಸತ್ಯವನ್ನು ಹೇಳಲು  ಜನರು ಯಾವಾಗಲೂ ಹಿಂಜರಿಯುವದುಂಟು. ಹೆರವರ ಇಚ್ಛೆಯಂತೆ ನುಡಿಯುವವರೇ ಬಹಳ. ಆದರೆ ವಚನಕಾರರಲ್ಲಿ ಈ ಬಗೆಯ ಸ್ಥಿತಿಯು ಇರುವದಿಲ್ಲ. ಅವರು ಸಮಾಜದ ದೋಷಗಳನ್ನೂ ಮನುಷ್ಯನ ಕುಂದುಗಳನ್ನೂ ಹೊರಗೆಡವಲು ಎಂದೂ ಹಿಂಜರಿದಿಲ್ಲ. ಇದರಿಂದ ವಚನಕಾರರು ನಿಜವಾದ ಸಮಾಜ ಸುಧಾರಕರಾಗಿರುವರು. ಅವರು ಜ೦ಗಮರು ಮತ್ತು ಮಠಾಧಿಪತಿಗಳ ದುರ್ವೃತ್ತಿಗಳನ್ನೂ ದುಷ್ಟರ ದುರ್ನಡತೆಗಳನ್ನೂ ಎಷ್ಟು ಕಠೋರವಾಗಿ ನಿಂದಿಸಿದರೋ ಅಷ್ಟು ಈಗಿನ ಸಮಾಜ ಸುಧಾರಕರಾರೂ ನಿಂದಿಸಿರಲಿಕ್ಕಿಲ್ಲ. ಸಮಾಜವನ್ನು ಸುಧಾರಿಸಲಪೇಕ್ಷಿಸುವವರು ಸಮಾಜದ ದೋಷಗಳನ್ನು ಹೊರಗೆಡವಲು ಹಿಂಜರಿದರೆ ಅವರ ಉದ್ದಿಶ್ಯ ಕಾರ್ಯಗಳು ಹೇಗೆ ನೆರವೇರಬಹುದು? ಇಂಥವರು ಸಮಾಜದ ರೋಷವನ್ನು ಸಹಿಸಲು ಸಿದ್ಧರಾಗಿರತಕ್ಕದ್ದು. ವಚನಕಾರರ ಚರಿತ್ರೆಗಳನ್ನು ನಾವು ನೋಡಿದರೆ ಅವರು ಹೀಗೆಯೇ ವರ್ತಿಸಿದಂತೆ ತೋರಿಬರುವದು. ಅವರು ತಮ್ಮ ಇಷ್ಟ ಕಾರ್ಯದಲ್ಲಿ ಧನ ಸಂಪತ್ತನ್ನು ಸೂರೆಮಾಡಿರುವರು, ರಾಜ್ಯವೈಭವವನ್ನು ತ್ಯಜಿಸಿರುವರು, ತಮ್ಮ ಪ್ರಾಣವನ್ನು ಕೂಡ ನೀಗಿರುವರು. ಇಂಥವರು ನುಡಿದ ಮಾತುಗಳಲ್ಲಿ ಭೀರುತನವು ಇರುವ ಬಗೆ ಹೇಗೆ ? ಇದರ ಸತ್ಯತೆಯನ್ನು ವಾಚಕರು ನೋಡಬೇಕಾದರೆ ಬಸವಣ್ಣನವರ ಮಾಹೇಶ್ವರ ಸ್ಥಲಕ್ಕೆ ಸಂಬಂಧಿಸಿದ ವಚನಗಳನ್ನಾಗಲಿ ಇಲ್ಲವೆ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯನವರ ವಚನಗಳನ್ನಾಗಲಿ ನೋಡಬೇಕು. ಅಂದರೆ ವಚನಕಾರರಲ್ಲಿ ಎಂಥ ಅಸದೃಶ್ಯವಾದ ಮನೋಧೈರ್ಯ ವಿದೆಂಬುದು ತಿಳಿದುಬರುತ್ತದೆ. ಇದರಿಂದಲೇ ವಚನ ವಾಙ್ಮಯಗಳಲ್ಲಿ ಒಂದು ವಿಲಕ್ಷಣ ಜೀವಕಳೆಯು ಉತ್ಪನ್ನವಾಗಿರುತ್ತದೆ.

ವಚನ ಗ್ರಂಥಗಳಲ್ಲಿ ಪಕ್ಷಪಾತದ ಮಾತುಗಳಿಲ್ಲ. ಇದು ಅವುಗಳಲ್ಲಿಯ ಮತ್ತೊಂದು ವಿಶಿಷ್ಟತ್ವವು. ವಚನಕಾರರು ಇವರು ನನ್ನವರು, ಇವರು ನನ್ನ ಬಂಧುಗಳು, ಇವರು ನನ್ನ ಜಾತಿಯವರು, ನನ್ನ ವರ್ಗದವರೆಂದು ತಿಳಿದು, ಯಾರನ್ನೂ ಎತ್ತಿ ನುಡಿದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಸದ್ಗುಣಗಳು ಎಲ್ಲಿದ್ದರೂ ಅವಕ್ಕೆ ಮನ್ನಣೆ ಕೊಡುವಂಥವರು ಮತ್ತು ದುರ್ಗುಣಗಳು ಇದ್ದಲ್ಲಿ ಸಮೀಪದ ಬಂಧುಗಳಾಗಿದ್ದರೂ ಕೂಡ ಅವರನ್ನು ನಿಂದಿಸುವಂಥವರು ಇರುತ್ತಾರೆ. ಈ ಪ್ರಕಾರ ಅವರು ಎಲ್ಲರೊಡನೆ ಸಮಭಾವದಿಂದ ವರ್ತಿಸಿರುತ್ತಾರೆ. ಒಬ್ಬ ಹೊಲೆಯನಿರಲಿ, ಬ್ರಾಹ್ಮಣನಿರಲಿ, ಶ್ರೀಮಂತನಿರಲಿ, ಬಡವನಿರಲಿ, ಅವನ ಶೀಲಗಳನ್ನು ನೋಡಿ ಅವು ಸರಿಯಾಗಿದ್ದರೆ ಅವನನ್ನು ಕೇವಲ ಸಹೋದರನಂತೆ ಅವರು ಕಾಣುವವರಾಗಿರುವರು. ಈ ಅಭಿಪ್ರಾಯದ ಉಕ್ತಿಗಳು ವಚನಗ್ರಂಥಗಳಲ್ಲಿ ತುಂಬಿ ಹೋಗಿವೆ. ಹೀಗೆ ಅವರು ಬರೇ ನುಡಿಯಲ್ಲಷ್ಟೇ ಅಲ್ಲ, ಹಾಗೆ ನಡೆದೂ ತೋರಿಸಿದರು. ಅಸ್ಪೃಶ್ಯರೊಡನೆ ಅವರು ಸಹಭೋಜನ ಮಾಡಿರುವರು. ಲಗ್ನಾದಿ ವ್ಯವಹಾರಗಳನ್ನು ನಡೆಸಿರುವರು. ಇದರಲ್ಲಿ ಅವರು ಸಮಾಜದ ರೋಷವನ್ನು ಲೆಕ್ಕಿಸಲಿಲ್ಲ. ಈ ಪ್ರಕಾರ ವಚನಗಳೆಂದರೆ, ಅವು ನಡೆದು ತೋರಿಸಿ ನುಡಿದ ಮಾತುಗಳಾಗಿವೆ. ಆದ್ದರಿಂದ ವಚನವಾಙ್ಮವು ವೀರಶೈವರಲ್ಲಿ ಬಹು ಮಹತ್ವದ ಸ್ಥಾನವನ್ನು ಹೊಂದಿರುವದು.

 ವಚನಗಳನ್ನು ಹೇಳುವ ರೀತಿಯಾದರೂ ಅವುಗಳ ಬಲವನ್ನು ಹೆಚ್ಚಿಸಿರುತ್ತದೆ. ಆತ್ಮನಿರೀಕ್ಷಣೆಯಿಂದ ತಮ್ಮ ದೋಷಗಳನ್ನು ತಾವು ತಿಳಿದುಕೊಂಡು ಅವುಗಳನ್ನು ದೂರಮಾಡಿಕೊಳ್ಳುವ ಉದ್ದಿಶ್ಯವಾಗಿ ತಮಗೆ ತಾವೇ ಹೇಳಿಕೊಳ್ಳುವ ಶಬ್ದಗಳು ಇವಾಗಿರುತ್ತವೆ. ವಚನಕಾರರ ಉದ್ದೇಶವು ಪ್ರಥಮದಲ್ಲಿ ತಮ್ಮ ಸುಧಾರಣೆ ಅಂದರೆ ತಮ್ಮ ಉಚ್ಚ ಧ್ಯೇಯದಂತೆ ತಾವು ಮೊದಲು ನಡೆದು ತೋರಿಸುವುದು ಇರುತ್ತದೆ. ಹೀಗೆ ನಡೆದು ತೋರಿಸಿ ಆ ಮೇಲೆ ತಮಗೆ ಉಂಟಾದ ಅನುಭವವನ್ನು ಜನರಿಗೆ ಹೇಳುವದು ಇರುತ್ತದೆ. ಇದೇ ಅವರ ಪದ್ಧತಿಯಾಗಿದೆ. ವಚನಕಾರರು ಎರಡನೆಯವರಿಗೆ ಬರೇ ಉಪದೇಶ ಮಾಡುವ ಕಾರ್ಯವನ್ನು ಕೈಗೊಂಡಿಲ್ಲ. ಮೊದಲು ತಾವು ನಡೆದು ಆಮೇಲೆ ಹೇಳುವವರಾಗಿರುವರು. ನಿಜವಾಗಿ ಇದೇ ಶಿವಾನುಭವವೆನಿಸಿಕೊಳ್ಳುತ್ತದೆ. ಇಂಥವರ ಮಾತುಗಳಲ್ಲಿ ಸಾರವಿರುತ್ತದೆ. ಚೈತನ್ಯವಿರುತ್ತದೆ. ವಚನಶಾಸ್ತ್ರವು ಈ ರೀತಿಯದಾಗಿರುತ್ತದೆ.

ಈಗಿನ ಕಾಲಕ್ಕೆ ಅನೇಕರು ಸಮಾಜ ಚಾಲಕರಾಗಲು ಬಗೆಯುತ್ತಾರೆ. ಸಮಾಜವನ್ನು ಸುಧಾರಿಸಲು ಅಪೇಕ್ಷಿಸುತ್ತಾರೆ. ಆದರೆ ಇವರು ವಚನಕಾರರ ಮಾರ್ಗವನ್ನು ಹಿಡಿದಿದ್ದಾದರೆ ಅವರು ಈ ಸ್ಥಿತಿಯನ್ನು ನಿಸ್ಸಂದೇಹವಾಗಿ ಹೊಂದಬಹುದು. ಅಂದರೆ ವಚನಕಾರರಂತೆ ಅವರು ಸತ್ಯಭಾಷಿಗಳಾಗಿರಬೇಕು. ಅವರಲ್ಲಿ ಯಾವ ಬಗೆಯ ಕಾಪಟ್ಯ ಭಾವವಿರಬಾರದು, ತಾವು ಹಿಡಿದ ಕಾರ್ಯದಲ್ಲಿ ಅತ್ಯಂತ ಧೈರ್ಯಶಾಲಿಗಳಾಗಿರಬೇಕು, ಪಕ್ಷಪಾತವಿರಕೂಡದು ಮತ್ತು ಆತ್ಮ ಸುಧಾರಣೆಯಲ್ಲಿ ತೊಡಗಿರಬೇಕು. ಹೀಗೆ ಇವರು ಆಚರಿಸಿದ್ದಾದರೆ ಅವರು ಮೇಲ್ತರದ ಸ್ಥಿತಿಯನ್ನು ಅವಶ್ಯವಾಗಿ ಹೊಂದುವರು. ವಚನ ಕಾರರಲ್ಲಿ ಈ ಬಗೆಯ ಭಾವವು ತುಂಬಿತುಳುಕುತ್ತದೆ. ಆದ್ದರಿಂದಲೇ ಅವರು ವೀರಶೈವ ಸಮಾಜದಲ್ಲಿ ಒಂದು ಮಹತ್ವದ ಕ್ರಾಂತಿಯನ್ನುಂಟುಮಾಡಲು ಶಕ್ತರಾದರು.

ನಾವು ಯಾವ ವಾಙ್ಮಯವನ್ನು ತೆಗೆದುಕೊಂಡರೂ ಅದು ಎರಡು ವರ್ಗದ ಜನರಿಂದ ಬೆಳೆದದ್ದು ತೋರಿಬರುತ್ತದೆ. ಇವರಲ್ಲಿ ಒಂದು ವರ್ಗದವರಿಗೆ ನಾವು ತತ್ವವೇತ್ತಿಗಳೆಂದು ಹೇಳಬಹುದು. ಇವರು ನಾನಾಬಗೆಯ ಬುದ್ಧಿ ಕುಶಲತೆಗಳನ್ನು ಉಪಯೋಗಿಸಿ ತಮ್ಮ ಮತವನ್ನು ಸಿದ್ಧಪಡಿಸಿರುತ್ತಾರೆ. ಇಂಥ ವರ್ಗದವರಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ ಇಂಥ ತತ್ವಜ್ಞರು ಬರುತ್ತಾರೆ. ಈ ವರ್ಗವಲ್ಲದೆ ಇನ್ನೊಂದು ವರ್ಗವಿದ್ದು ಇವರಿಗೆ ನಾವು ಧರ್ಮಸುಧಾರಕರೆಂದು ಹೇಳಬಹುದು. ಇವರಿಂದಲೂ ಮಹತ್ವದ ವಾಙ್ಮಯವುಂಟಾಗುತ್ತದೆ. ಇಂಥವರಲ್ಲಿ ಗೌತುಮ್ ಬುದ್ಧ, ಕ್ರೈಸ್ತ ಕನಪ್ಯೂಶಿಯಸ್, ಉಪನಿಷತ್ಕಾರರು, ಬಸವೇಶ್ವರ ಮೊದಲಾದ ಧರ್ಮ ಸ್ಥಾಪಕರೂ ಧರ್ಮ ಪ್ರವರ್ತಕರೂ ಸಾಧು ಸತ್ಪುರುಷರೂ ಬರುತ್ತಾರೆ. ಇವರು ತಮ್ಮ ಉಕ್ತಿಗಳಿಂದ ಜನಾಂಗದ ಹೃದಯವನ್ನು ತಲ್ಲಣಿಸಿ ಅದನ್ನು ಉಚ್ಚಸ್ಥಿತಿಗೆ ತಂದಿರುತ್ತಾರೆ. ಇವರು ಮೊದಲನೆಯ ವರ್ಗದವರಂತೆ ಕೇವಲ ಬೌದ್ಧಿಕ ತತ್ವವಿಚಾರಗಳನ್ನು ಹೇಳುತ್ತ ಕೂಡದೆ, ತಾವು ನುಡಿದಂತೆ ಆಚರಿಸಿ ಜಗತ್ತಿನಲ್ಲಿ ಪ್ರಸಿದ್ಧರಾಗಿರುವರು. ಇವರಿಂದ ಉಂಟಾದ ವಾಙ್ಮಯವು ಸಾಮಾನ್ಯವಾದುದಲ್ಲ. ಈ ವಾಙ್ಮಯವು ಇತರ ತತ್ವವೇತ್ತಿಗಳ ಬೌದ್ಧಿಕ ವಾಙ್ಮಯಕ್ಕೆ ಕಾರಣವಾಗಿರುವದು. ಉದಾ: ಉಪನಿಷದ್‌ ಗ್ರಂಥಗಳ ನುಡಿಗಳ ಮೇಲೆ ಹಿಂದುಗಡೆ ಪ್ರಸಿದ್ಧರಾಗಿರುವ ತತ್ವವೇತ್ತಿಗಳು ತಮ್ಮ ಸಿದ್ಧಾಂತಗಳನ್ನು ಕಲ್ಪಿಸಿರುವರು. ಇದರಂತೆಯೇ ಕ್ರೈಸ್ತರ ಬೈಬಲ್, ಮಹ್ಮದೀಯರ ಕುರಾನ, ಬೌದ್ಧರ ಧಮ್ಮಪದ ಇವುಗಳು ಇರುತ್ತವೆ. ಈ ಗ್ರಂಥಗಳ ಮೂಲಕ ಹಿಂದುಗಡೆ ಅನೇಕಾನೇಕ ತತ್ವಗ್ರಂಥಗಳು ಆಯಾಯ ಮತಗಳಲ್ಲಿ ಉತ್ಪನ್ನವಾಗಿರುತ್ತವೆ. ವಚನ ವಾಙ್ಮಯವು ಇದೇ ಬಗೆಯ ವಾಙ್ಮಯದಲ್ಲಿ ಬರುತ್ತದೆ. ಅದರಲ್ಲಿಯ ವಿಚಾರಗಳು ಹಿಂದುಗಡೆ ವೀರಶೈವ ತತ್ವ ಗ್ರಂಥಗಳನ್ನು ಹೆಚ್ಚಿಸಲು ಕಾರಣವಾಗಿವೆ. ವಚನಕಾರರ ಪ್ರತಿ ಒಂದು ವಚನದ ಮೇಲೆ ದೊಡ್ಡ  ದೊಡ್ಡ ಗ್ರಂಥಗಳನ್ನು ಸಹ ಬರೆಯಬಹುದಾಗಿದೆ. ಇಷ್ಟು ಅವು ಪ್ರಫುಲ್ಲಿತ ವಿಚಾರಗಳಿಂದ ತುಂಬಿ ಹೋಗಿವೆ. ಇದೇ ಸಜೀವ ವಾಙ್ಮಯದ ಕುರುಹು.

ಆದರೆ ವೀರಶೈವ ಸಮಾಜದ ಅದೃಷ್ಟದಿಂದ ಇಂಥ ಮಹತ್ತರವಾದ ವಾಙ್ಮಯವನ್ನು ದೂಷಿಸುವ ಕೆಲ ಮಹಾನುಭಾವರು ಇದರಲ್ಲಿ ಉತ್ಪನ್ನರಾಗಿದ್ದಾರೆ. ಇನ್ನೂ ಕೆಲವರು ಸಂಸ್ಕೃತದ ಮೋಹಕ್ಕೆ ಒಳಗಾಗಿ ಈ ಸಜೀವ ಕನ್ನಡ ವಾಙ್ಮಯವನ್ನು ನಿರಾಕರಿಸುವದುಂಟು. ಈ ಸ್ಥಿತಿಯನ್ನು ತೀವ್ರವಾಗಿ ಹೋಗಲಾಡಿಸುವದು ವೀರಶೈವ ಸಮಾಜದ ಅದ್ಯ ಕರ್ತವ್ಯವಾಗಿದೆ. ಆದ್ದರಿಂದ ಅವರು ತಾವು ಸ್ಥಾಪಿಸಿದ ಶಾಲೆಗಳಲ್ಲಿಯೂ ಧರ್ಮ ಪಾಠಶಾಲೆಗಳಲ್ಲಿಯೂ ಈ ಗ್ರಂಥಗಳನ್ನು ಅಭ್ಯಾಸಿಸುವ ಯೋಜನೆ ಮಾಡುವದು ಅವಶ್ಯವಿದೆ. ಇಷ್ಟೇ ಅಲ್ಲ, ಪ್ರತಿ ಒಬ್ಬರು ತಮ್ಮ ಮನೆಯಲ್ಲಿ ಮತ್ತು ಸಭಾ ಸ್ಥಳಗಳಲ್ಲಿ ವಚನಗಳ ತತ್ವಗಳನ್ನು ಪ್ರಸಂಗಿಸಿ ಅವುಗಳನ್ನು ಬಹು ಜನರ ಸಮಾಜಕ್ಕೆ ತಿಳಿಯಪಡಿಸಲು ಯತ್ನಿಸುವದು ಅವಶ್ಯವಿದೆ. ಈ ಪ್ರಕಾರ ಅವರು ವರ್ತಿಸಲೆಂದು ನಾನು ನಮ್ರ ಪೂರ್ವಕವಾಗಿ ಸೂಚಿಸಿ ಈ ನನ್ನ ಲೇಖನವನ್ನು ಮುಗಿಸುತ್ತೇನೆ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

ಪ್ರಾಣಾಯಾಮದ ತ್ರಾಣಗುಂದುವಿಕೆ

ಪ್ರಾಣಾಯಾಮದ ಯೋಗ | ತ್ರಾಣಗುಂದುವುದೆಂದು

ಮಾಣಿಸಿ ಮುಕ್ತಿಯ-ಪ್ರಾಣಲಿಂಗವನಿತ್ತ

ಜಾಣ ಶ್ರೀಗುರುವೆ ಕೃಪೆಯಾಗು   ||೯೬ ||

ನಾಲ್ಕನೆಯದು ಪ್ರಾಣಾಯಾಮ. ಆಸನಗಳ ಸಿದ್ಧಿಯಾದರೂ ಪ್ರಾಣಾಯಾಮದ ಸಾಧನೆಗೆ ಅವಶ್ಯಬೇಕು. ಆಸನಗಳನ್ನು ಸಾಧಿಸಿ ಶ್ವಾಸ ನಿಃಶ್ವಾಸಗಳನ್ನು ನಿಯಮಿತ ಗೊಳಿಸುವದೇ ಪ್ರಾಣಾಯಾಮವೆನಿಸುವದು. ಪ್ರಾಣ ವಾಯುವಿನ ಗಮನಾಗಮನ

ಗಳನ್ನು ನಿರೋಧಗೊಳಿಸುವದಕ್ಕೇನೆ ಪ್ರಾಣಾಯಾಮವೆಂದು ಹೆಸರು. ಹೊರಗಿನ ಶುದ್ಧವಾದ ಪ್ರಾಣ ವಾಯುವನ್ನು ಘ್ರಾಣದಿಂದ ತೆಗೆದುಕೊಳ್ಳುವದು ಶ್ವಾಸವು. ಒಳಗಿನ ಅಶುದ್ಧವಾದ ಅಂಗಾರಾಮ್ಲ ವಾಯುವನ್ನು ಹೊರಕ್ಕೆ ಬಿಡುವದು ನಿಃಶ್ವಾಸವು. ಈ ಕ್ರಿಯೆಯು ಸದಾ ನಡೆದಿರುತ್ತದೆ. ಈ ವಾಯುವಿನ ಗತಿಯನ್ನು ಯೋಗಿಯಾದವನು ಕ್ರಮಬದ್ಧಗೊಳಿಸುವ ಸಾಧನವೇ ಇದು ಪ್ರಾಣಾಯಾಮ. ಇದರಿಂದ ಶಾರೀರಿಕ, ಮಾನಸಿಕ ಪ್ರಸನ್ನತೆ ಮತ್ತು ಸ್ಥಿರತೆಯುಂಟಾಗುವದು.

 ಮನುಸ್ಮೃತಿ”ಯಲ್ಲಿ–

ದಹ್ಯಂತೇ ದಾಹ್ಯಮಾನಾನಾಂ ಧಾತೂನಾಂ ಚ ಯಥಾ ಮಲಾಃ |

ತಥೇಂದ್ರಿಯಾಣಾಂ ದಹ್ಯಂತೇ ದೋಷಾಃ ಪ್ರಾಣಸ್ಯ ನಿಗ್ರಹಾತ್ ||ʼʼ

ʼʼಅಗ್ನಿಯ ಸಂಪರ್ಕದಿಂದ ವಿವಿಧ ಧಾತುಗಳ ಸರ್ವದೋಷ (ಹೊಲಸು) ವು ಸುಟ್ಟು ಹೋಗುವಂತೆ ಪ್ರಾಣಾಯಾಮದಿಂದ ಶಾರೀರಿಕ ಮತ್ತು ಮಾನಸಿಕ ದೋಷಗಳೆಲ್ಲ ಸುಟ್ಟು ತನು-ಮನಗಳೆರಡೂ ಅತ್ಯಂತ ಪವಿತ್ರ, ಪ್ರಸನ್ನ ಹಾಗೂ ನಿರ್ವಿಕಾರಿಗಳಾಗುತ್ತವೆ” ಯೆಂದು ಪ್ರಾಣಾಯಾಮದ ಮಹತಿಯು ಹೇಳಲ್ಪಟ್ಟಿದೆ.

 ”ಯೋಗಾಸನಗಳು” ಎಂಬ ಪುಸ್ತಕದಲ್ಲಿ ಟಿ. ಕೃಷ್ಣಮಾಚಾರ್ಯರು- “ಪ್ರಾಣ ಶಕ್ತಿಗೆ ಆಧಾರವಾದುದೇ ಪ್ರಾಣವಾಯುವು. ಇದು ಹೊರಗಿನ ಗಾಳಿಯಂತಲ್ಲ. ಇದೊಂದು ಸೂಕ್ಷ್ಮ ಮತ್ತು ಅದ್ಭುತವಾದ ಮಿಂಚಿನಂತೆ ವೇಗವುಳ್ಳ ಹಾಗೂ ಬಿಸಿಯೊಂದಿಗೆ ಕೂಡಿದ ತೇಜಃಪ್ರವಾಹ. ಅದನ್ನು ದೃಢಪಡಿಸುವದು ಪ್ರಾಣಾಯಾಮವೆಂಬ ಯೋಗಾಂಗದ ೪ನೆಯ ಮೆಟ್ಟಿಲೆಂದು ಬಣ್ಣಿಸಿದ್ದಾರೆ.

ಪ್ರಾಣಾಯಾಮಕ್ಕೂ ಆಸನಕ್ಕೂ ಸಂಬಂಧವಿದೆ. ಆಸನದ ಸಾಧನೆಯಿಲ್ಲದೆ ಪ್ರಾಣಾಯಾಮವನ್ನು ಮಾಡಲು ಬರುವದಿಲ್ಲ. ಪ್ರಾಣಾಯಾಮವನ್ನು ಚನ್ನಾಗಿ ತಿಳಿಯದೇ ಮಾಡಬಾರದು. ಗುರುಮುಖದಿಂದ ಅರಿತಾಚರಿಸಬೇಕು. ಈ ಪ್ರಾಣಾಯಾಮವು ರೇಚಕ, ಪೂರಕ, ಕುಂಭಕವೆಂದು ಮೂದೆರನಾಗಿದೆ. ಋಜುಕಾಯನಾಗಿ ಕುಳಿತು ಕನಿಷ್ಠ-ಅನಾಮಿಕ ಬೆರಳುಗಳಿಂದ ತನ್ನವಾಮ (ಎಡ) ನಾಸಾಪುಟವನ್ನು ಹಿಡಿದು, ಮಾತ್ರಾಗಣನೆಯಿಲ್ಲದೆ ದಕ್ಷಿಣನಾಸಾಪುಟದಿಂದ ಬಂದು ಮಾಡಿ ಹೊಟ್ಟೆಯೊಳಗಿನ ದೂಷಿತವಾಯುವನ್ನು ನಿಶ್ಯೇಷವಾಗಿ ಹೊರಗೆ ಹಾಕುವದೇ ರೇಚಕವು. ಬಲದ ನಾಸಿಕರಂಧ್ರವನ್ನು ಹೆಬ್ಬೆರಳಿನಿಂದ ಹಿಡಿದು ಎಡಗಡೆಯ ನಾಸಿಕರಂಧ್ರದಿಂದ ಅತಿ ಶೀಘ್ರವೂ ಅತಿಸಾವಕಾಶವೂ ಆಗದಂತೆ ಸಮಾನ ರೀತಿಯಿಂದ ಹನ್ನೆರಡು ಮಾತ್ರೆಗಳವರೆಗೆ ಹೊರಗಣ ಶುದ್ಧವಾಯುವನ್ನು ಮಂತ್ರೋಚ್ಚಾರ ಪೂರ್ವಕ ಒಳಕ್ಕೆ ತೆಗೆದುಕೊಳ್ಳುವದೇ ಪೂರಕವೆನಿಸುವದು.  ಒಳಗೆ ತುಂಬಿಕೊಂಡ ಪ್ರಾಣವಾಯುವನ್ನು, ನಾಶಿಕದ ಎರಡೂ ರಂಧ್ರಗಳನ್ನು ಬಂದು ಮಾಡಿ ಹನ್ನೆರಡು ಅಥವಾ ೧೮ ಮಾತ್ರೆಗಳ ವರೆಗೆ ಅಲ್ಲೇ ತಡೆಯುವದು ಕುಂಭಕವಾಗುವದು. ಪುನಃ ಪುನಃ ಮಾತ್ರೆಗಳನ್ನು ಹೆಚ್ಚಿಸುತ್ತ ಹೋಗಬೇಕು. ಈ ರೀತಿಯಾಗಿ ಪ್ರಣಾಯಾಮವನ್ನು ಸಾಧಿಸುವಲ್ಲಿ ಮಿತಹಾರಿಯಾಗಿರಬೇಕು. ಇದರಿಂದ ಸಾಧಕನು ಶಕ್ತಿಗುಂದುವನು. ಪ್ರಾಣಾಯಾಮವನ್ನೇ ಮುಖ್ಯವಾಗಿರಿಸಿ ಬಹಳ ಹೊತ್ತು ಸಾಧಿಸಿದರೆ ಅಪಾಯವೂ ಸಂಭವಿಸುವದು. .

 ಇದೆಲ್ಲವನ್ನರಿತ ಶರಣರು ಪ್ರಾಣದ ತ್ರಾಣವನ್ನು ಕಡೆಗಾಣಿಸುವ ಪ್ರಾಣಾಯಾಮವನ್ನು ಬಿಡಿಸಿದರು. ಪ್ರಾಣಾಯಾಮದ ಸಾಧನೆಗಿಂತ ಸದ್ಗುರುವು ಮುಕ್ತಿಯನ್ನು ಕರುಣಿಸಬಲ್ಲ ವರರತ್ನವೆನಿಸಿದ ಪ್ರಾಣಲಿಂಗವನ್ನು ಆರಾಧಿಸಲು ಉಪದೇಶಿಸಿದನು. ಈ ಪ್ರಾಣಲಿಂಗಾನುಸಂಧಾನದಲ್ಲಿ ಮನ ಲೀನಗೊಳ್ಳುವದು. ಚಾಂಚಲ್ಯ ಕಡಿಮೆಯಾಗುವದು. ಲಿಂಗಪೂಜಕನು ಶಿವಪೂಜೆಯ ಪ್ರಾರಂಭದಲ್ಲಿ ಸಂಕ್ಷಿಪ್ತವಾದ ಪ್ರಾಣಾಯಾಮವನ್ನು ಮಾಡುತ್ತಾನೆ. ಅದರಿಂದ ಆಂತರಿಕ ವಾಯುವು  ಶುದ್ಧವಾಗುವದು. ಷಡಕ್ಷರ ಮಂತ್ರಸ್ಮರಣೆಗೆ ಅನುಕೂಲವಾಗುವದು. ಗುರುಕರುಣಿಸಿದ ಇಷ್ಟಲಿಂಗವನ್ನು ಷೋಡಶೋಪಚಾರಗಳಿಂದ ಅರ್ಚಿಸಿ ಆಮೇಲೆ ಪ್ರಾಣ ಲಿಂಗಾನುಸಂಧಾನದಿಂದ ಪ್ರಾಣವು ಲಿಂಗಮಯವಾಗುವದು. ಲಿಂಗ-ನಿರೀಕ್ಷಣೆ ಮಾಡುತ್ತ ಮಂತ್ರಾನುಷ್ಠಾನ ಜಪದಿಂದ ಪ್ರಾಣಲಿಂಗದ ಸಾಕ್ಷಾತ್ಕಾರವಾಗುವದು. ಪ್ರಾಣವು ಪ್ರಣವ ಸ್ವರೂಪಗೊಳ್ಳುವದು.

ಪ್ರಾಣವೇ ಲಿಂಗವಾಗಿಯುಳ್ಳ ಶಿವಭಕ್ತನು ಪ್ರಾಣಲಿಂಗದಲ್ಲಿ ಲೀನವಾಗಿ ಹೊರಗಿನ ವೈಷಯಿಕ ವ್ಯಾಮೋಹದಿಂದ ಬಿಡುಗಡೆಯಾಗುವನು. ಭಾವದಲ್ಲಿ ಬೆರೆಯುವ ಯೋಗ್ಯತೆಯನ್ನು ಪಡೆಯುವನು. ಈ ರೀತಿಯಾದ ಸರಳವಾದ ಉಪಾಯವನ್ನು ಕರುಣಿಸಿದ ಸದ್ಗುರುನಾಥನು ನಿಜವಾಗಿಯೂ ಜಾಣನಲ್ಲವೆ |

ಪ್ರತ್ಯಾಹಾರದ ಮಿಥ್ಯತ್ವ

ಪ್ರತ್ಯಾಹಾರವ ಕೊಂಬ | ಮಿಥ್ಯಾಯೋಗವ ಬಿಡಿಸಿ

ತಥ್ಯವಾಗಿರ್ದ – ನಿತ್ಯತೃಪ್ತಿಯ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು   ||೯೭||

ಪ್ರತ್ಯಾಹಾರವು ಅಷ್ಟಾಂಗಯೋಗದಲ್ಲಿ ಐದನೆಯದು. ಇಲ್ಲಿಯವರೆಗೆ ವಿವರಿಸಿದ ಯಮ-ನಿಯಮ-ಆಸನ-ಪ್ರಾಣಾಯಾಮ ಮತ್ತು ಈ ಪ್ರತ್ಯಾಹಾರ ಇದು ಅಷ್ಟಾಂಗ ಯೋಗದಲ್ಲಿ ಬಹಿರಂಗ ಸಾಧನೆಗಳೆನ್ನುತ್ತಾರೆ. ಈ ಐದರಿಂದಲೂ ಬಹಿರಿಂದ್ರಿಯಗಳ ನಿಗ್ರಹವೇ ಮುಖ್ಯ-ಸಾಧ್ಯವಾಗಿದೆ. ಈ ಐದು ಸಾಧನೆಯಿಂದ ಮುಂದಿನ ಮೂರನ್ನು ಸಾಧ್ಯಗೊಳಿಸಲು ಅನುಕೂಲವಾಗುವದು. ಇಲ್ಲಿ ಪ್ರತಿಪಾದಿಸಬೇಕಾದ ಪ್ರತ್ಯಾಹಾರದಲ್ಲಿಯೂ ಕಾಯ-ಕರಣೇಂದ್ರಿಯಗಳನ್ನು ವಿಷಯಗಳಿಂದ ವಿರಮಿಸಿ (ಮುಕ್ತಗೊಳಿಸಿ) ಆತ್ಮ ಸ್ವರೂಪ ಮಾತ್ರದಲ್ಲಿ ಚಿತ್ತವು ಬೆರೆಯುವಂತೆ ಮಾಡುವ ವಿಧಾನವೇ ಇರುತ್ತದೆ. ನಿಜಗುಣ ಶಿವಯೋಗಿಗಳು

 ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ ಹೃದಯಾಕಾಶದಲ್ಲಿಯೇ

 ನಿಲ್ಲಿಸುವುದು ಪ್ರತ್ಯಾಹಾರವು. ಹೃದಯ ಸ್ಥಾನದಿಂದ ಚಲಿಸುವ

ಮನಮಂ ಮರಳಿ ಮರಳಿ ಅಲ್ಲಿಯೇ ಸ್ಥಾಪಿಸುವುದು ಪ್ರತ್ಯಾ ಹಾರವು.

ಅನಾತ್ಮಕವಾದ ದೇಹೇಂದ್ರಿಯಾದಿಕದಲ್ಲಿಯ ಆತ್ಮ

 ಬುದ್ಧಿಯಂ ಬಿಡಿಸಿ ಸ್ವಸ್ವರೂಪ ಸಾಕ್ಷಾತ್ಕಾರಮಂ ಮಾಳ್ಪುದು

 ಪ್ರತ್ಯಾಹಾರವು”

 ಎಂದು ಪಾರಮಾರ್ಥ ಪ್ರಕಾಶಿಕೆ’ ಯಲ್ಲಿ ಪ್ರತಿಪಾದಿಸಿದ್ದಾರೆ. ಮತ್ತು ಪ್ರತ್ಯಾಹಾರವನ್ನು ಸೂಕ್ಷ್ಮವಾಗಿ ಐದು ತೆರನಾಗಿ ವಿವೇಚಿಸುತ್ತಾರೆ. ಪ್ರೇಮ ವಸ್ತುವಿನ ಮೋಹ ತ್ಯಾಗಕ್ಕಾಗಿ ನಿವಾಂತ ಸ್ಥಾನಕ್ಕೆ ಹೋಗುವದು ತನುಪ್ರತ್ಯಾಹಾರವೆಂತಲೂ, ಅಭಿಮಾನ ಬಿಟ್ಟು ನಾನೊಬ್ಬ ಪರಶಿವನ ಸೇವಕನೆಂದು ಸತ್ಕರ್ಮವನ್ನು ಕರ್ಮೇಂದ್ರಿಯಗಳಿಂದ ಮಾಡಹತ್ತಿದರೆ ಅದಕ್ಕೆ ಕರ್ಮೇಂದ್ರಿಯ ಪ್ರತ್ಯಾಹಾರವೆಂತಲೂ, ಎಲ್ಲೆಲ್ಲಿ ದುರ್ವಿಷಯಗಳಿರುವವೋ ಅಲ್ಲಲ್ಲಿ ತನ್ನ ಜ್ಞಾನೇಂದ್ರಿಯಗಳಿಗೆ ಬುದ್ಧಿಕಲಿಸಿ ನಿರೋಧಿಸುವದೇ ಜ್ಞಾನೇಂದ್ರಿಯ ಪ್ರತ್ಯಾಹಾರವೆಂತಲೂ, ಆತ್ಮಚಿಂತನೆಯಲ್ಲಿ ಮನಸ್ಸನ್ನು ತೊಡಗಿಸಿದರೆ ಮನಸ್ಸಿನ ಪ್ರತ್ಯಾಹಾರವೆಂದೂ, ಬುದ್ಧಿಯನ್ನು ಇಂದ್ರಿಯಗಳ ಸಂಬಂಧದಿಂದ ಬಾಹ್ಯಾಂತರ ವಿಷಯಗಳ ವಿಚಾರಕ್ಕೆ ಬಿಡದೆ ಜ್ಞಾನ ಸ್ವರೂಪವಾದ ಆತ್ಮನ ವಿಚಾರದಲ್ಲಿಯೇ ದೃಢವಾಗಿ ನಿಲ್ಲುವಂತೆ ಉಪಯೋಗಿಸುವದೇ ಬುದ್ಧಿಯ ಪ್ರಾತ್ಯಾಹಾರವೆಂತಲೂ ಪ್ರತ್ಯಾಹಾರದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಒಟ್ಟಿನ ಮೇಲೆ ತನುವಿನಿಂದ, ಕರ್ಮೇಂದ್ರಿಯಗಳಿಂದ, ಜ್ಞಾನೇಂದ್ರಿಯಗಳಿಂದ ಮನ-ಬುದ್ಧಿಗಳಿಂದಲೂ ವಿಷಯಗಳನ್ನು ನಿರೋಧಿಸುವದು ಪ್ರತ್ಯಾಹಾರದ ಸ್ಪಷ್ಟವಾದ ಅರ್ಥವೆನಿಸಿದೆ. ಇಂಥ ನಿಗ್ರಹಯೋಗವನ್ನು ಶರಣರು ಮಿಥ್ಯಾಯೋಗವೆಂದು ಕರೆದರು. ಯಾಕೆಂದರೆ ಪ್ರಕೃತಿಯು ಪ್ರತಿಯೊಂದು ಪದಾರ್ಥವನ್ನು ಮಾನವನ ಉಪಯೋಗಕ್ಕಾಗಿ ಕಲ್ಪಿಸಿರುವಾಗ ಇಂದ್ರಿಯಗಳು ಅವುಗಳಿಗಾಗಿ ಆಶಿಸುತ್ತಿರುವಾಗ ಪ್ರತ್ಯಾಹಾರ ಮಾಡುವದು ವ್ಯರ್ಥವೆನಿಸುವದು. ಪದಾರ್ಥಗಳಿಂದ ಜೀವಿಸುವ

ಜೀವಾತ್ಮನು, ಹಸಿರು ಹುಲ್ಲನ್ನು ಮುಂದಿರಿಸಿ ದೂರದಲ್ಲಿ ಕಟ್ಟಿ ಹಾಕಿದ ಪಶುವಿನಂತೆ  ವಿಷಯಗಳಿಂದ ದೂರವಿರುವದು ಅಸಮಂಜಸವೆನಿಸದಿರದು. ಗುರುನಾಥನು ಇಂಥ ವ್ಯರ್ಥವಾದ ವಿಷಯ ನಿಗ್ರಹಯೋಗವನ್ನು ಬಿಡಿಸಿ ಗಂಧ, ರಸ, ರೂಪು, ಸ್ಪರ್ಶ, ಶಬ್ದಗಳೆಂಬ ವಿಷಯಗಳನ್ನು ಉದಾತ್ತೀಕರಣಗೊಳಿಸಿ ಪ್ರಸಾದ ಸ್ವರೂಪವಾಗಿ ಲಿಂಗಭೋಗೋಪಭೋಗಿಯೆನಿಸಿ ನಿತ್ಯ ತೃಪ್ತಿಯನ್ನು ಹೊಂದೆಂದು ಕರುಣಿಸುತ್ತಾನೆ. ತಥ್ಯವಾದ ಅರ್ಪಣಯೋಗವನ್ನು ಕಲಿಸುತ್ತಾನೆ. ಏನೆಲ್ಲವನ್ನು ಭೋಗಿಸಿಯೂ ಉಪವಾಸಿಯಂತಿರುವ ಕಲೆಯನ್ನು ಅನುಗ್ರಹಿಸುತ್ತಾನೆ.

 ಪ್ರಕೃತಿ ಮಾತೆ ಕರುಣಿಸಿದ ಪದಾರ್ಥಗಳನ್ನು ಸುಜ್ಞಾನ ಸತ್ಕ್ರಿಯೆಗಳಿಂದ ಪ್ರಸಾದಗೊಳಿಸಿ ಸ್ವೀಕರಿಸುವದೇ ಪ್ರಸಾದ ಯೋಗವು. ಇದರಿಂದ ನಿತ್ಯತೃಪ್ತತೆ ಸಾಧ್ಯ ವಾಗುವದು. ಅದು ಕಾರಣ ತೃಪ್ತಿಯಿಲ್ಲದ ಪ್ರತ್ಯಾಹಾರವು ಮಿಥ್ಯಾಯೋಗವೇ ಸರಿ. ಯೋಗಾಂಗದ ಅಂಗವಾದ ಈ ಪ್ರತ್ಯಾಹಾರದಿಂದ ಮಾನಸಿಕ ಸಮಾಧಾನ ಸುಲಭವಾಗಿ ಸಿಕ್ಕಲಾರದು. ಅಂತೆಯೇ ಅದನ್ನು ಮಿಥ್ಯಾ ಯೋಗವೆಂಬುದಾಗಿ ವ್ಯಾಖ್ಯಾನಿಸಿದುದರಲ್ಲಿ ಯಥಾರ್ಥತೆಯಿದೆ.

ಇಷ್ಟಲಿಂಗ ಪೂಜೆಯನ್ನು ಪೂರೈಸಿದ ಫಲವು` ಗುರುಲಿಂಗ-ಜಂಗಮರ ಪಾದೋದಕ ಪ್ರಸಾದದಲ್ಲಿ ಪರಿಣಮಿಸುತ್ತದೆ. ಪ್ರತಿನಿತ್ಯದಲ್ಲೂ ಫಲ ಪಡೆಯುವ ಲಿಂಗಭಕ್ತನು ನಿತ್ಯತೃಪ್ತನು, ನಿತ್ಯಮುಕ್ತನು. ಅದಕ್ಕಾಗಿಯೇ ಆತನ ಕರಣೇಂದ್ರಿಯಗಳು ಲಿಂಗೇಂದ್ರಿಯಗಳಾಗುತ್ತವೆ. ವಿಷಯ ವಾಸನೆಯ ಸೋಂಕು ಅವಕ್ಕೆ ಸುಳಿಯಲಾರದು. ಪ್ರತ್ಯಾಹಾರದ ಪರಿಪೂರ್ಣಭಾವ ಲಿಂಗವಂತನಲ್ಲಿಯೇ ಮೈಗೂಡಿಕೊಂಡಿದೆ. ಸರ್ವಾಂಗ ಲಿಂಗಿಯಾದ ಶರಣನು ನಿತ್ಯವೂ ಸಂತೃಪ್ತನೆನಿಸಿದ ಮೇಲೆ ತನುಪ್ರತ್ಯಾಹಾರ, ಕರ್ಮಂದ್ರಿಯ ಪ್ರತ್ಯಾಹಾರ, ಜ್ಞಾನೇಂದ್ರಿಯ ಪ್ರತ್ಯಾಹಾರ, ಮಾನಸಿಕ ಪ್ರತ್ಯಾಹಾರ, ಬುದ್ಧಿಯ ಪ್ರತ್ಯಾಹಾರಗಳನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ಅವಶ್ಯಕತೆಯೆ ಉಳಿಯಲಾರದು.

ಓ ಪರಮ ಗುರುವೆ, ಇಂಥ ತಥ್ಯ ಯೋಗವೆನಿಸಿದ ಅರ್ಪಣ ಸದ್ಭಾವವನ್ನು ಅರುಹಿ ನಿತ್ಯತೃಪ್ತನನ್ನಾಗಿ ಮಾಡು. ನಿತ್ಯ ಮುಕ್ತನಾಗುವ ಪರಿಯನ್ನು ಕರುಣಿಸು. ಲಿಂಗಾಂಗ ಸಾಮರಸ್ಯದಲ್ಲಿ ಸಂತೃಪ್ತಿ ಸದಾ ಸನ್ನಿಹಿತವಾಗಿರುತ್ತದೆ.

ಧ್ಯಾನ ಯೋಗದ ಪರಿಹಾರ

ಮೌನಗೊಂಡಿರುತಿರ್ಪ |  ಧ್ಯಾನಯೋಗವ ಬಿಡಿಸಿ

ನೀನಿಷ್ಟಲಿಂಗ-ಧ್ಯಾನದೊಳಗಿರಿಸಿದೈ

ಮೌನಿ ಶ್ರೀಗುರುವೆ ಕೃಪೆಯಾಗು    ||೯೮||

 ಅಷ್ಟಾಂಗ ಯೋಗದಲ್ಲಿ ಧ್ಯಾನ ಧಾರಣ-ಸಮಾಧಿಗಳ ವಿವೇಕ ಖ್ಯಾತಿಯನ್ನು ಉತ್ಪತ್ತಿ ಮಾಡುವಲ್ಲಿ ಉಪಯುಕ್ತ ಸಾಧನಗಳು. ಆತ್ಮ ಸಾಕ್ಷಾತ್ಕಾರಕ್ಕೆ ಇವು ಮುಖ್ಯವಾದವುಗಳು. ಯೋಗ ದರ್ಶನದಲ್ಲಿ ಮೊದಲು ಧಾರಣ ಯೋಗವನ್ನು ತಿಳಿಸಿ ನಂತರ ಧ್ಯಾನದ ಪ್ರತಿಪಾದನೆ ಬಂದಿದೆ. ಪ್ರಾಣಾಯಾಮ-ಪ್ರತ್ಯಾಹಾರಗಳಿಂದ ಪರಿಶುದ್ಧವಾದ ಚಿತ್ತವು ಸ್ಥಿರಗೊಂಡು ಧೈಯ ವಸ್ತುವಿನ ಧಾರಣ (ಧರಿಸಲು ಯೋಗ್ಯ) ಮಾಡಲು ಶಕ್ತವಾಗುವದು. ಆ ಚಿತ್ತದಲ್ಲಿ ನಿಂತ ಧೈಯವನ್ನು ಧ್ಯಾನಿಸುವುದೇ ಧ್ಯಾನವಾಗುವದು. ಈ ಧ್ಯಾನದ ವ್ಯಾಖ್ಯೆಯನ್ನು ಯೋಗ ದರ್ಶನದಲ್ಲಿ

ತತ್ರ ಪ್ರತ್ಯಯ್ಯೆಕತಾನತಾ ಧ್ಯಾನಮ್ ʼʼ[೩-೨ ||

ಧೈಯ ಮೂರ್ತಿಗಳಲ್ಲಿರಿಸಿದ ವೃತ್ತಿಯ ಏಕಾಕಾರವೇ ಧ್ಯಾನವೆನಿಸುವದೆಂದು ವಿವರಿಸಲಾಗಿದೆ.

ಶಿವಯೋಗ ಪ್ರದೀಪಿಕೆಯಲ್ಲಿ ಮತ್ತು ಪಾರಮಾರ್ಥ ಪ್ರಕಾಶಿಕೆಯಲ್ಲಿ ಧ್ಯಾನ- ಧಾರಣ-ಸಮಾಧಿಗಳೆಂತಲೂ ಕ್ರಮ ನಿರೂಪಿಸಲ್ಪಟ್ಟಿದೆ. ನಮ್ಮ ಶಿವಕವಿಯಾದರೂ ಈ ಮಾರ್ಗವನ್ನೇ ಅನುಸರಿಸಿದ್ದಾನೆ. ಇಲ್ಲಿ ಪ್ರಥಮತಃ ಧ್ಯಾನದ ವಿಚಾರವನ್ನು ವಿವರಿಸಿದ್ದಾನೆ. ಯಾಕೆಂದರೆ ಯೋಗಮಾರ್ಗದಲ್ಲಿ ಯಮ-ನಿಯಮಾದಿಗಳನ್ನು ಸಾಧಿಸಿ ಶುದ್ಧವಾದ ಚಿತ್ತ  ಭಿತ್ತಿಯಲ್ಲಿ ಧೈಯವನ್ನು ಧಾರಣ ಮಾಡಿಕೊಂಡರೇನೆ ಧ್ಯಾನಕ್ರಿಯೆಗೆ ಅನುಕೂಲವಾಗುವದು. ಆದರೆ ಇಲ್ಲಿ ಶಿವಾದ್ವೈತ ಸಿದ್ಧಾಂತವು ಲಿಂಗಧಾರಣ ಪ್ರಕ್ರಿಯೆಯಿಂದಲೇ ಪ್ರಾರಂಭವಾಗುತ್ತದೆ. ಅದುಕಾರಣ ಗುರು ಕೃಪೆಯಿಂದ ಧರಿಸಿಕೊಂಡ ಲಿಂಗವನ್ನು ಧ್ಯಾನಿಸುವುದೇ ಪ್ರಧಾನ ಕರ್ತವ್ಯವಾಗಿದೆ.

ಅಲ್ಲದೇ ಯೋಗ ದರ್ಶನಕಾರರ ಧ್ಯಾನವು ಆಧಾರಾದಿ ಚಕ್ರಗಳಲ್ಲಿಯ ಜ್ಯೋತಿಯನ್ನು ಧ್ಯಾನಿಸುವದೇ ಆಗಿದೆ. ಅವರು ವಿಭಿನ್ನ ಚಕ್ರಗಳಲ್ಲಿ ಭಿನ್ನಮೂರ್ತಿಗಳನ್ನೇ ಧ್ಯಾನಿಸುತ್ತಾರೆ. ಆಧಾರದಲ್ಲಿ ಗಣಪತಿಯನ್ನು ಸ್ವಾಧಿಷ್ಠಾನದಲ್ಲಿ ಚತುರ್ಮುಖ ಬ್ರಹ್ಮನನ್ನು, ಮಣಿಪೂರಕದಲ್ಲಿ ವಿಷ್ಣುವನ್ನು, ಅನಾಹತಚಕ್ರದಲ್ಲಿ ರುದ್ರನನ್ನು, ವಿಶುದ್ಧಿಚಕ್ರದಲ್ಲಿ ಜೀವನನ್ನು, ಆಜ್ಞಾಚಕ್ರದಲ್ಲಿ ಪರಮಾತ್ಮನನ್ನು, ಸಹಸ್ರಾರ ಚಕ್ರದಲ್ಲಿ ಪರಬ್ರಹ್ಮನನ್ನು ಧ್ಯಾನಿಸುತ್ತಾರೆ. ಈ ಏಳು ಚಕ್ರಗಳಲ್ಲಿ ಸಗುಣ ಮೂರ್ತಿಗಳನ್ನು ಕಲ್ಪಿಸುತ್ತ ಅವುಗಳ ಪ್ರಕಾಶವನ್ನೇ ನಿರ್ಗುಣವನ್ನಾಗಿ ಭಾವಿಸುತ್ತಾರೆ. ಇನ್ನು ಕೆಲವರು ಬಾಹ್ಯ ಮೂರ್ತಿಗಳಲ್ಲಿಯೂ ಮನ-ದೃಷ್ಟಿಗಳನ್ನಿಟ್ಟು ಧ್ಯಾನಿಸುತ್ತಾರೆ. ಧೈಯ ಮೂರ್ತಿಗಳನ್ನು ಪುನಃ ಪುನಃ ಮನಸ್ಸಿನಲ್ಲಿಟ್ಟು ಭಾವಿಸುವದರಿಂದ ಧ್ಯಾನವಾಗುವದು. ವಿಭಿನ್ನ ಮೂರ್ತಿಗಳನ್ನು ಧ್ಯಾನಿಸುವದು ಸಹಜ ಮಾರ್ಗವಲ್ಲ, ಮತ್ತು ಅದು ಈ ಧ್ಯಾನವು ಕೇವಲ ಮೌನಯುತವಾದುದು. ಮೌನಿಯಾಗಿ ವಿಭಿನ್ನ ಚಕ್ರಗಳಲ್ಲಿ ಪರಿಪೂರ್ಣ ಧ್ಯಾನವೂ ಆಗುವದಿಲ್ಲವೆಂದು ಶರಣರು ಹೇಳುತ್ತಾರೆ. ಕಾಣದ, ಕಲ್ಪನೆಗೆ  ಬಾರದ ಮೂರ್ತಿಗಳನ್ನು ಕಲ್ಪಿಸಿ ಧ್ಯಾನಿಸುವದರಿಂದ ಅಲ್ಲಿ ಸಗುಣಕ್ಕಿಂತ ನಿರ್ಗುಣದ ಕಲ್ಪನೆಯೇ ಬೆಳೆದು ಬರುತ್ತದೆ.  ನಿರ್ಗುಣ ವಸ್ತುವಿನಲ್ಲಿ ಮನದ ವೃತ್ತಿ ಏಕಾಕಾರವಾಗುವದು ಕಠಿಣ. ಕಾಣದ ವಸ್ತುವನ್ನು ಧ್ಯಾನಿಸಲು ಸುಲಭವಾಗುವದಿಲ್ಲ.

ಅವ್ಯಕ್ತಾಹಿ ಗತಿರ್ದುಖಂ- (ಭ. ಗೀತೆ)

.

 ಆದ್ದರಿಂದ ಮೌನಗೊಂಡಿರುವ ಧ್ಯಾನಯೋಗ ಸಾಧುವಲ್ಲ. ಅಂಥ ಧ್ಯಾನದಿಂದ ಪೂರ್ಣತ್ತ್ವ ಪ್ರಾಪ್ತಿಯಾಗಲಾರದು. . ಗುರುಕರುಣಿಸಿದ ಇಷ್ಟಲಿಂಗವು ಸಾಕಾರವಿರುವದರಿಂದ ಸಗುಣವೂ, ಅರುಹಿನ ಕುರುಹೇ ಆಗಿರುವದರಿಂದ ನಿರ್ಗುಣವೂ ಆಗಿರುತ್ತದೆ. ಕಾಣುವ ಕಾಂತಿಯುಕ್ತವಾದ ಈ ಲಿಂಗದಲ್ಲಿ ದೃಷ್ಟಿಯನ್ನಿರಿಸಿ ಗುರೂಪದಿಷ್ಟವಾದ ಷಡಕ್ಷರ ಮಹಾಮಂತ್ರದ ಅರ್ಥವನ್ನು ಸುಬುದ್ಧಿಯಿಂದ ಗ್ರಹಿಸುತ್ತ ಭಾವದಲ್ಲಿ  ಬೆರೆಯುವ ಲಿಂಗಧ್ಯಾನವು ಅಮೋಘವಾಗಿದೆ. ಅನುಪಮವಾಗಿದೆ.

 ಯೋಗದ ಧ್ಯಾನಕ್ಕಿಂತಲೂ ಶಿವಯೋಗದ ಧ್ಯಾನವು ಯುಕ್ತಿಯುಕ್ತವಾಗಿದೆ. ಇಷ್ಟಲಿಂಗದ ಧ್ಯಾನವು ದೃಷ್ಟಿಯೋಗವೆನಿಸಿದೆ. ಕಣ್ಣಿಗೆ ಕಾಣುವ ಲಿಂಗದಲ್ಲಿ ಮನವು ನಿಲ್ಲುವದು. ಲಿಂಗವು ಕಣ್ಣಿಗೆ ಕಾಣುವ ಆಕಾರವುಳ್ಳುದಾದರೂ ಅದನ್ನು ಪಡೆದ ಪರಿಯನ್ನು ಈ ಹಿಂದೆ ವಿಶದವಾಗಿ ಅರಿತಿದ್ದೇವೆ. ನವಚಕ್ರಗಳಲ್ಲಿಯ ನವಬ್ರಹ್ಮರ ಮಹಾಚೈತನ್ಯವನ್ನು ಸಂಸ್ಕಾರಗೊಳಿಸಿ ಇಷ್ಟಲಿಂಗದ ಕಿರಣಗಳನ್ನಾಗಿ ನವಲಿಂಗಗಳನ್ನು ನೆಲೆಸುವಂತೆ ಗುರುವು ಕರುಣಿಸುತ್ತಾನೆ. ಈ ನವಲಿಂಗಗಳು ತನ್ನ ಚಿಚ್ಛೈತನ್ಯದ ಕುರುಹುಗಳಾಗಿರುವದರಿಂದ ಧ್ಯಾನವು ಸುಲಭಸಾಧ್ಯವಾಗುವದು. ದೃಷ್ಟಿಯೋಗವುಳ್ಳ ಲಿಂಗಧ್ಯಾನವು ಸಫಲವಾಗುವದು.

ದೃಷ್ಟಿಯೋಗದ ಮಹತಿಯು ಅಪಾರವಾಗಿದೆ. ಅಕ್ಕಮಹಾದೇವಿಯು ತನ್ನ ‘ʼಯೋಗಾಂಗ ತ್ರಿವಿಧಿ” ಯಲ್ಲಿ ಅಷ್ಟಾಂಗ ಯೋಗವನ್ನು ಅತಿಗಳೆದು ದೃಷ್ಟಿಯೋಗವನ್ನು ಎತ್ತಿ ತೋರಿಸಿರುವಳು-

ಅಷ್ಟಾವರಣದ ಹಣ್ಣು ಬಟ್ಟಬಯಲೊಳಗಿರಲು

ಅಷ್ಟಾಂಗಯೋಗವನ್ನು ಮಾಡಿ ಬಳಲುವರು

ದೃಷ್ಟಿಯಿಡುವುದನು ಮರೆದಿಹರು ||

ಅಷ್ಟಾವರಣದ ಹಣ್ಣೆಂದರೆ ಕರಕಮಲದಲ್ಲಿ ಕಾಣಿಸಿಕೊಂಡ ಇಷ್ಟಲಿಂಗವು ಅದರಲ್ಲಿ ದೃಷ್ಟಿಯಿಡುವದು ಶ್ರೇಷ್ಠವಾದ ಕೆಲಸ. ಅದನ್ನು ಮರೆತು ಅಷ್ಟಾಂಗ ಯೋಗದ ಬರಿ ಧ್ಯಾನ ಮಾಡಿ ಬಳಲುವಿಕೆಯನ್ನೇ ಪಡೆಯಬೇಕಾಗುವದೆಂದು ತಿಳಿಸಿದ್ದಾಳೆ. ಆಲಿನಿಂದೊಡೆ ಗಾಳಿ, ಮನ, ನಿಂತು ಕಾಲ-ಕರ್ಮರ ಕಾಟ ಅಳಿಯುವದೆಂಬ ಚಾಮರಸನು ಹೇಳಿದ ಪ್ರಭುವಿನ ವಿಚಾರವನ್ನು ಈಗಾಗಲೇ

ತಿಳಿಸಿದ್ದೇವೆ. ಈ ದೃಷ್ಟಿಯೋಗದ ವಿಷಯವನ್ನು ಉಸುರದ ಶರಣರೇ ವಿರಳ. ಸಿದ್ಧಾಂತಕ್ಕನುಗುಣವಾಗಿ

 ʼʼಮನದೊಳಗೆ ದೃಷ್ಟಿಯಿಟ್ಟವನೆ ನಿಜಮುಕ್ತ’ʼ

ಪ್ರಾಣಲಿಂಗದಲ್ಲಿ ದೃಷ್ಟಿ ಬೆರೆಯುವಿಕೆಯೇ ನಿಜಮುಕ್ತಿಯೆನಿಸುವದು. ಛಾಂದೋ ಗ್ಯೋಪನಿಷತ್ತು ಪ್ರತಿಪಾದಿಸಿದ

ಆತ್ಮಾ ವಾರೇ ದೃಷ್ಟವ್ಯಃ’

“ಆತ್ಮನನ್ನು ನೋಡಬೇಕು’ ಎನ್ನುವ ತತ್ತ್ವವನ್ನು ಶರಣರು ಕರಗತ ಮಾಡಿ ಕೊಂಡಿದ್ದಾರೆ. ಶಿವನನ್ನು ನೋಡಿ ಧ್ಯಾನಿಸುವ ನಯನ-ಮನಗಳೆರಡೂ ಪವಿತ್ರವಾಗುತ್ತವೆ. ಶಿವಲಿಂಗವನ್ನು ಕೇವಲ ಉಪಚಾರಗಳಿಂದ ಉಪಚರಿಸುವದು ಅರ್ಚನೆಯಲ್ಲ. ಲಿಂಗವನ್ನು ನಿರೀಕ್ಷಿಸದ ಜಪ ಧ್ಯಾನವಲ್ಲ. ಇವೆಲ್ಲವುಗಳ ಸಂಗಮದಿಂದಲೇ  ಶಿವಯೋಗ ಸಾಧಿಸುವದು. ಈ ವಿಚಾರವನ್ನು ಚನ್ನಬಸವಣ್ಣನವರು ಅನೇಕ ದೃಷ್ಟಾಂತಗಳ ಮೂಲಕ ತಮ್ಮ ವನಚದಲ್ಲಿ ವ್ಯಕ್ತಮಾಡಿದ್ದಾರೆ-

ಕತ್ತಲ ಮನೆಯಲ್ಲಿರ್ದ ಮನುಜನು

 ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ

 ಬೆಂಕಿಯ ಹೊತ್ತಿಸದನ್ನಕ್ಕ ?

ಮರದುದಿಯ ಫಲವು ನೋಟ ಮಾತ್ರಕ್ಕುದುರುವುದೇ

 ಹತ್ತಿ ಹರಿಯದನ್ನಕ್ಕ ?

 ಹುಟ್ಟು ಗುರುಡನು ಕಷ್ಟ ಬಟ್ಟು ಎಷ್ಟು ಹೊತ್ತು ನಡೆದಡೆಯೂ

ಇಚ್ಛಿತ ಪಟ್ಟಣವ ಮುಟ್ಟುವನೇ, ಕಣ್ಣುಳ್ಳವನ ಕೈವಿಡಿಯದನ್ನಕ್ಕ ?

ಹಾಂಗೆ, ಸಮ್ಯಗ್ ಜ್ಞಾನಾತ್ಮಕವಾದ

ಲಿಂಗಾರ್ಚನ, ಲಿಂಗ ನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ

 ಆ ನೆನಹು ನಿರೀಕ್ಷಣೆ ಪೂಜೆ ಇವುಗಳೊಂದೊಂದೆ

ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದ ಮತಿಗಳ ಮೆಚ್ಚುವನೆ,

ಕೂಡಲ ಚನ್ನಸಂಗಮದೇವನು ?

ಕತ್ತಲ ಮನೆಯ ಕುಳಿತು ಬೆಂಕಿಯನ್ನು ಹೊತ್ತಿಸದೆ ಎಷ್ಟೊತ್ತು ಜ್ಯೋತಿಯನ್ನು ನೆನೆದಡೆ ಎಂದೂ ಬೆಳಕಾಗುವದಿಲ್ಲ, ವೃಕ್ಷದ ತುದಿಯ ಹಣ್ಣನ್ನು ಹತ್ತಿ ಹರಿಯ ಬೇಕಲ್ಲದೆ ನೋಟ ಮಾತ್ರದಿಂದ ಕೆಡವುದಕ್ಕಾಗುವದಿಲ್ಲ. ಹುಟ್ಟು ಗುರುಡನು ಕಣ್ಣುಳ್ಳವರ ಕೈಹಿಡಿಯದೆ ಕಷ್ಟಪಟ್ಟು ಎಷ್ಟು ಹೊತ್ತು ನಡೆದರೂ ಇಚ್ಛಿತವಾದ ಪಟ್ಟಣಕ್ಕೆ ಹೋಗಲಾರನು, ಇದರಂತೆ ಸಮ್ಯಗ್ ಜ್ಞಾನಾತ್ಮಕವೆನಿಸಿದ ಸತ್ಕ್ರಿಯಾರೂಪ ಲಿಂಗಾರ್ಚನೆಯು ಲಿಂಗ ನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ ಪರಿಪೂರ್ಣವಾಗುವದಿಲ್ಲ. ಅಲ್ಲದೆ ಈ ನೆನಹು, ನೋಟ, ಪೂಜೆಗಳಲ್ಲಿ ಒಂದೊಂದೇ ಕ್ರಿಯೆಯಿಂದ ಎಂದಿಗೂ ಶಿವಯೋಗ ಸಾಧ್ಯವಾಗುವುದಿಲ್ಲ. ಒಂದೊಂದರಿಂದಲೇ ಮುಕ್ತಿಯನ್ನು ಹೊಂದುವನೆಂಬ ಮಂದಮತಿಯನ್ನು ಮಹಾದೇವನೆಂದಿಗೂ ಮೆಚ್ಚುವದಿಲ್ಲ. ಕಾರಣ  ಅರ್ಚನೆಯಾದ ಬಳಿಕ ಲಿಂಗದಲ್ಲಿ ದೃಷ್ಟಿಯಿಟ್ಟು ಶಿವಷಡಕ್ಷರ ಮಹಾಮಂತ್ರದ ಧ್ಯಾನವನ್ನು ಮಾಡಬೇಕು. ಅಂತೆಯೇ ಅನೇಕ ಶರಣರು ದೃಷ್ಟಿಯೋಗದ ವಿಚಾರ ವಾಗಿ ಕೆಳಗಿನಂತೆ ಪ್ರತಿಪಾದಿಸಿದ್ದಾರೆ, ಬಹುರೂಪಿ ಚೌಡಯ್ಯ ಶರಣನು-

ನೋಡುವವರ ದೃಷ್ಟಿ ಬಟ್ಟಬಯಲು

ಮೋಳಿಗೆ ಮಾರಯ್ಯನವರ ಧರ್ಮಪತ್ನಿ ಮಹಾದೇವಿಯು

ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ’

ಮಹಾನುಭಾವಿ ಬಸವಣ್ಣನವರು-

ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ’

“’ಹೊತ್ತಾರೆ ಎದ್ದು ಲಿಂಗದೇವನ ದೃಷ್ಟಿಯಾರೆ

ನೋಡದವನ ಸಂಸಾರವೇನವನ ?

ಶಂಭು ನಿಮ್ಮಯ ನೋಟ, ಹೆರಹಿಂಗದ ಕಣ್ಬೇ

ನಿಮ್ಮ ನೋಟ ಅನಂತಸುಖ, ಕೂಟ ಪರಮಸುಖ”

ಷಟ್‌ಸ್ಥಲ ಮಹಾಜ್ಞಾನಿ ಚನ್ನಬಸವಣ್ಣನವರು-

“ಸ್ನೇಹದ ನೋಟದಲ್ಲಿಯೇ ತೃಪ್ತಿ”

ತೋಂಟದ ಸಿದ್ಧಲಿಂಗ ಶಿವಯೋಗಿಗಳು-

ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು

ಲಿಂಗ ತಾನೆ ಅಯ್ಯಾ’ |

ಘನಲಿಂಗ ದೇವನು-

ಇಷ್ಟಲಿಂಗಮಂ ಕರದಲ್ಲಿ ಪಿಡಿದು ಪೂಜೆಯಮಾಡಿ

ಆ ಲಿಂಗಮಂ ಅನಿಮಿಷ ದೃಷ್ಟಿಯಿಂದ

ನೋಡುವುದೀಗ ಲಿಂಗದ ನೋಟ

ಹೀಗೆ ಹೇಳಿರುವ ಹಲವಾರು ಶರಣರ ದೃಷ್ಟಿಯೋಗದ ವಿಚಾರವನ್ನು ಚ. ಸುಂದರೇಶನ್ನರು ತಮ್ಮ “ದೃಷ್ಟಿಯೋಗ’ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ. ದೃಷ್ಟಿ ಯೋಗವು ಶಿವಯೋಗದ ಜೀವಾಳ. ಇದರಿಂದ ಲಿಂಗಧ್ಯಾನವು ಪರಿಪೂರ್ಣವೂ ಫಲದಾಯಕವೂ ಆಗುವದು.   

ಶಿವಯೋಗವು ತನ್ನದೇ ಆದ ಐದಂಗಳನ್ನು ಹೊಂದಿದೆ. ೧) ಶಿವಜ್ಞಾನ, ೨) ಶಿವಭಕ್ತಿ, ೩) ಶಿವಧ್ಯಾನ, ೪) ಶಿವವ್ರತ, ೫) ಶಿವಾರ್ಚನ, ಶಿವನ ವಿಷಯಕ ಜ್ಞಾನವಿದ್ದರೆ ಶಿವನಲ್ಲಿ ಭಕ್ತಿ ಬೆಳೆಯುವದು ಅಂಥ ಶಿವಲಿಂಗದಲ್ಲಿ ಭಕ್ತಿಯಿಂದ ಧ್ಯಾನವುಳ್ಳವನಾಗಿ ಬಹಿರ್ಲಕ್ಷ್ಯವನ್ನು ಅಂತರ್ಮುಖಗೊಳಿಸಬೇಕು. ಧೈಯ ವಸ್ತುವಾದ ಲಿಂಗಾಕಾರವೇ ತಾನಾಗಬೇಕು.   ಸರ್ವವೂ ಶಿವಮಯವೆಂಬ ವ್ರತವು  ವಿಶಾಲ ಮನೋಭಾವವುಳ್ಳವನನ್ನಾಗಿ ಮಾಡುವದು. ಶಿವಾರ್ಚನೆಯಲ್ಲಿ ಬಾಹ್ಯವಾದ ಇಷ್ಟಲಿಂಗದ ಪೂಜೆಯು ಉಪಚಾರಗಳಿಂದ ಕೂಡಿದ್ದರೆ, ಪ್ರಾಣಲಿಂಗದ ಪೂಜೆ ಆಂತರಿಕ ಜ್ಞಾನ ಮತ್ತು ಧ್ಯಾನಗಳಿಂದ ಕೂಡಿರುತ್ತದೆ. ಈ ಲಿಂಗ ಧ್ಯಾನವು ಹೆಚ್ಚಿದಂತೆ ಪ್ರಾಣಲಿಂಗವೇ ತಾನಾಗುವನು. ಇಂಥ ಇಷ್ಟಲಿಂಗ ಧ್ಯಾನವುಳ್ಳ ಶ್ರೀಗುರುವು ಮೌನಿಯಾಗುತ್ತಾನೆ. ಬಾಹ್ಯ ವ್ಯವಹಾರದಲ್ಲಿ ಮೌನವುಳ್ಳವನಾಗುತ್ತಾನೆ. ಇಂಥ ಲಿಂಗಧ್ಯಾನವನ್ನು ಕಲಿಸಿಕೊಡುವ ಗುರುನಾಥನು ಮಾನ್ಯತೆಯನ್ನು ಪಡೆದವನಾಗುತ್ತಾ.  ನೆಂತಲೂ ಪಾಠಾಂತರದ ಅರ್ಥ ಸರಿಹೋಗುವದು.

ಧಾರಣಯೋಗದ ನಿರಸನ

ಧಾರಣದ ಯೋಗದಾ | ಚರಣೆಯನೆ ಅತಿಗಳೆದು

ಕಾರಣದ ಲಿಂಗ-ಧಾರಣವ ಗೈದ ಪರಿ

ಪೂರ್ಣ ಶ್ರೀಗುರುವೆ ಕೃಪೆಯಾಗು   ||೯೯ ||

ಧಾರಣವೆಂದರೆ ಧರಿಸುವದು. ಪರಿಶುದ್ಧವಾದ, ಸ್ಥಿರವಾದ ಮನೋಭೂಮಿಕೆಯಲ್ಲಿ ಆರಾಧ್ಯ ವಸ್ತುವಿನ ಆಕಾರ ಕರಿಗೊಳ್ಳುವದು. ಪೂರ್ವೋಕ್ತ ಪಂಚಾಂಗಗಳಿಂದ ಧಾರಣಯೋಗವನ್ನು ಸಾಧಿಸಲು ಅನುಕೂಲವಾಗುವದು. ಮನಸ್ಸಿನ ಅಧೀನಗಳಾದ ಇಂದ್ರಿಯಗಳು ಮನೋನಿಗ್ರಹದಿಂದ ವಶವಾದರೆ ಧೈಯ ವಸ್ತುವಿನ ಸ್ವಸ್ವರೂಪವು ಚಿತ್ತದಲ್ಲಿ ಸ್ಥಿರಗೊಳ್ಳುವದು. ಆ ಧೈಯವನ್ನು ಕಾಣುತ್ತ ಧ್ಯಾನ ಲೀನವಾಗುವನು. ಅದಕ್ಕಾಗಿಯೇ ಧ್ಯಾನ-ಧಾರಣ-ಸಮಾಧಿಗಳು ವಿವೇಕ ಖ್ಯಾತಿಗಳೆಂದು ಕರೆಯಲ್ಪಟ್ಟಿವೆ. ಅಂದರೆ ಆತ್ಮನ ಅರಿವನ್ನು ಹೇಳತಕ್ಕವುಗಳೆಂದರ್ಥ.

 ಧಾರಣವು ಆಧಿಭೌತಿಕ, ಅಧ್ಯಾತ್ಮಿಕವೆಂದು ವಿಭಾಗವಾಗುತ್ತದೆ. ಸೂರ್ಯ- ಚಂದ್ರ, ದೇವತಾ ಮೂರ್ತಿ, ಶಿವಲಿಂಗ (ಸ್ಥಾವರ), ಸಾಲಿಗ್ರಾಮಾದಿಗಳು ಧಾರಣ ಕ್ರಿಯೆಯ ಆಧಿಭೌತಿಕ ಸ್ಥಾನಗಳೆನಿಸುತ್ತವೆ. ಆಧಾರಾದಿ ಚಕ್ರಗಳ ಮೂರ್ತಿಗಳ ಚೈತನ್ಯ ಧಾರಣವು ಆಧ್ಯಾತ್ಮಿಕ ಸ್ಥಲವುಳ್ಳದಾಗುವದು. ಆಧಿಭೌತಿಕ ಧಾರಣವು ಬಾಹ್ಯವಾಗಿದ್ದರೆ ಆಧ್ಯಾತ್ಮಿಕ ಧಾರಣಯೋಗವು ಆಂತರಿಕವಾಗಿದೆ.

 ಧಾರಣಕ್ರಿಯೆಯು ನಿತ್ಯ ವ್ಯವಹಾರದಲ್ಲಿಯೂ ನಡೆಯುತ್ತದೆ. ಉದಾಹರಣೆಗಾಗಿ-ಹಿರಿಯರು ಹೇಳುವ ಮಾತಿನಲ್ಲಿ ಶ್ರದ್ಧೆಯಿಂದ ಕಿವಿಗೊಟ್ಟರೆ ಸರಿ, ಉದಾಸೀನದಿಂದ ಅವರೇನಾದರೂ ಹೇಳಿಕೊಳ್ಳಲಿ, ತನ್ನ ಮನ ಮಾತ್ರ ಬೇರೆಡೆಗೆ ಇದ್ದರೆ ಅವರ ಅಭಿಪ್ರಾಯ ಅವನಿಗೆ ತಿಳಿಯುವದೇ ಇಲ್ಲ. ಕೇಳುವ ಕಿವಿಯಲ್ಲಿ ಮನಸ್ಸು ನಿಂತರೆ ಶಬ್ದ ವಾಕ್ಯಾರ್ಥ ಅನುಭವಕ್ಕೆ ಬರುತ್ತದೆ. *ಶಾಕುಂತಲ ನಾಟಕದಲ್ಲಿ ಶಕುಂತಲೆಯು ದುಷ್ಯಂತ ರಾಜನ ಚಿಂತೆಯಲ್ಲಿ ಮಗ್ನವಾಗಿರುವಾಗ ದೂರ್ವಾಸ ಮುನಿಯು ಭಿಕ್ಷೆ ಕೇಳಿ  ಬೇಡಿದ್ದಾಗಲಿ, ಸಿಟ್ಟಿಗೆದ್ದು ಶಾಪಕೊಡುವುದನ್ನಾಗಲಿ ಅವಳು ಅರಿಯುವದಿಲ್ಲ. ಮಹಾಮುನಿಯ ಮಾತನ್ನು ಅನಾದರ ಗೊಳಿಸಿದುದುಕ್ಕೇನೇ ಅವಳು ಮುಂದೆ ತೊಂದರೆಯನ್ನು ಅನುಭವಿಸಿದಳು.

 ಇದರಂತೆ ಊಟ ಮಾಡುವಾಗ ಮನ ವ್ಯಗ್ರವಾದರೆ ಷಡ್ರಸಾನ್ನವೂ ಸಹರುಚಿಸುವದಿಲ್ಲ. ಸುಗಂಧದ ವಾಸನೆಯೂ ತಿಳಿಯುವದಿಲ್ಲ, ಬುದ್ಧಿಯ ಗ್ರಹಿಕೆಯೂ ನಿಂತುಹೋಗುತ್ತದೆ. ಕಾರಣ ಆಯಾ ಕಾರ್ಯಗಳಲ್ಲಿ ಮನ ಕೂಡಿರಬೇಕು. ಚಿತ್ತಭಿತ್ತಿ ಹಸನಾಗಿರಬೇಕು. ಅಂತೆಯೇ    ಹಿರಿಯರು ಮನವಿಟ್ಟು ಕೆಲಸ ಮಾಡಲು. ಹೇಳುವದುಂಟು. ಮನಮುಟ್ಟಿ ಮಾಡುವ ಕಾರ್ಯದಲ್ಲಿ ಕುಶಲತೆ ಲಭಿಸುವದು. ಅದಕ್ಕಾಗಿ ಕೃಷ್ಣನು “ಯೋಗಃ ಕರ್ಮಸು ಕೌಶಲಮ್  ಕಾರ್ಯದಲ್ಲಿ ಕುಶಲತೆಯನ್ನು ಸಾಧಿಸುವುದೇ ಯೋಗವೆಂದು ಪ್ರತಿಪಾದಿಸಿದ್ದಾನೆ. ಅರ್ಜುನನಿಗೆ ಯುದ್ಧ ಕಾರ್ಯದಲ್ಲಿಯಾದರೂ ಮನಃಪೂರ್ವಕ ಬಾಣಪ್ರಯೋಗ ಮಾಡೆಂದು ತಿಳಿಸುತ್ತಾನೆ. ಅಂದರೇನೆ ಗುರಿಸಾಧಿಸಲು ಸಾಧ್ಯವಾಗುವದು.

 ಸಾಧಕನಾದವನು ತನ್ನ ಧೈಯ ವಸ್ತುವಿನಲ್ಲಿ ಮನಸ್ಸನ್ನು ಕೇಂದ್ರೀಕೃತಗೊಳಿಸ ಬೇಕು. ಗುರುವಾದ ದ್ರೋಣಾಚಾರ್ಯರ ಬಾಣ ಪ್ರಯೋಗ ಪರೀಕ್ಷೆಯಲ್ಲಿ ಏಕಲಕ್ಷ್ಯವುಳ್ಳ ಅರ್ಜುನನಿಗೆ ಗುರಿಯಾದ ಪಕ್ಷಿಯ ಕೊರಳೊಂದೆ ಕಂಡಿತು. ಉಳಿದ ಯಾವ ಪಕ್ಷಿಯ ಅವಯವವೂ ಕಾಣಲಿಲ್ಲ. ಗಿಡದ ಶಾಖೆಗಳೂ ಗೋಚರಿಸಲಿಲ್ಲ. ಆದರೆ ಉಳಿದ ಶಿಷ್ಯರಿಗೆ ಎಲ್ಲವೂ ಕಂಡುದರಿಂದ ಗುರಿ ಸಿಕ್ಕಲಿಲ್ಲ. ಅರ್ಜುನನು ಮಾತ್ರ ಅದನ್ನು ಸಾಧಿಸಿ ಉತ್ತೀರ್ಣನಾದ. ಅಂತೆಯೇ ಮುಂದೆ ದ್ರೌಪದಿಯ ಸ್ವಯಂವರದಲ್ಲಿಯಾದರೂ ಕಾಯ್ದ ಎಣ್ಣೆಯಲ್ಲಿ ಮೇಲಿನ ಮೀನದ ಛಾಯೆಯನ್ನು ನೋಡಿ ಮೇಲೆ ಗುರಿ ಹೊಡೆಯುವ ಮಹಾಕಾರ್ಯದಲ್ಲಿ ಅವನು ಜಯಶಾಲಿಯಾದನು. ಈ ರೀತಿಯಾಗಿ ಸರ್ವೆ೦ದ್ರಿಯ ವಿಷಯಗಳ ಅರಿವಾಗಬೇಕಾದರೂ ಆ ಇಂದ್ರಿಯಗಳಲ್ಲಿ ಚಿತ್ತವು ಸ್ಥಿರವಾಗಬೇಕಾಗುವದು.

 ಅಧ್ಯಾತ್ಮ ಸಾಧಕನು ತಾನು ಹೊಂದಬೇಕಾದ ಆರಾಧ್ಯ ವಸ್ತುವಿನಲ್ಲಿಯೇ ತನ್ನ ಎಲ್ಲ ಇಂದ್ರಿಯಗಳು ತಲ್ಲೀನವಾಗಬೇಕು. ಶಿವನನ್ನು ಭಜಿಸುವ ಭಕ್ತನಿಗೆ ಕಣ್ಣಿನಲ್ಲಿ ಕಾಣುವ ವಸ್ತುಗಳೆಲ್ಲವೂ ಆ ಶಿವನ ಆಕಾರದಲ್ಲಿಯೇ ಕಾಣಬೇಕು. ಕಿವಿಯಲ್ಲಿ ಆತನ ಗುಣಗಾನವೇ ಕೇಳಿಸುವಂತಾಗಬೇಕು. ಉಣ್ಣುವ ಪದಾರ್ಥವು ಶಿವಪ್ರಸಾದವಾಗಿಯೇ ತೀರಬೇಕು. ವಾಸಿಸುವ ಗಂಧವೂ ಶಿವನಿಗೆ ಸಮರ್ಪಿಸಿದ ಪುಷ್ಪ-ಧೂಪ ಗಂಧವಾಗಿ ಅಭ್ಯಾಸವಾಗಬೇಕು. ಹೀಗಾದರೆ ಆ ಸಾಧಕನು ತೀವ್ರದಲ್ಲಿ ಧೈಯ ವಸ್ತುವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವನು. ಮೀರಾಬಾಯಿಯು ವಿಷವನ್ನು ಸಹ ಕೃಷ್ಣನ ಚರಣಾಮೃತವೆಂದು ಸ್ವೀಕರಿಸಿ ಅಮರಳಾದಳು. ಒಟ್ಟಿನಲ್ಲಿ ಮನವು ಲಕ್ಷದಲ್ಲಿ ಲೀನವಾದರೆ ಧಾರಣಯೋಗವು ಸುಗಮವಾಗುವದು.

 ಯೋಗಶಾಸ್ತ್ರಕಾರರ ಧಾರಣವು ಶರೀರದ ಸಪ್ತ ಚಕ್ರಗಳಲ್ಲಿಯ ನಿರ್ಗುಣ ವಸ್ತುವಿನ ಧಾರಣವಾಗಿದೆ. ಅಧ್ಯಾತ್ಮಿಕವಾಗಿರುವದರಿಂದ ಸುಲಭ ಸಾಧ್ಯವಾಗುವದಿಲ್ಲ. ಈ ನಿರವಯವನ್ನು ಧಾರಣ ಮಾಡುವದು ಸರಿಯಲ್ಲವೆಂದು ವಿಚಾರಿಸಿ ಶರಣರು ಸಗುಣವೂ, ನಿರ್ಗುಣ ನಿರಾಕಾರವೂ ಆದ ಪ್ರಾಣಲಿಂಗದ ಧ್ಯಾನದಿಂದ ಲಭ್ಯವಾಗುವ ಭಾವಲಿಂಗದ ಧಾರಣವು ಪರಿಪೂರ್ಣವಾದುದೆಂದು ಬೋಧಿಸಿದ್ದಾರೆ. ಬಾಹ್ಯದಲ್ಲಿ ಇಷ್ಟಲಿಂಗದ ಧಾರಣೆಯು ಸರ್ವೆಂದ್ರಿಯಗಳಲ್ಲಾದರೆ ಪ್ರಾಣದಲ್ಲಿ ಪ್ರಾಣಲಿಂಗದ ಧ್ಯಾನ ಸಾರ್ಥಕವಾಗುವದು. ಆಗ ಕಾರಣತನುವಿನ ಭಾವವು ಬೆರೆಯುವದು. ತನುಭಾವ, ಇಂದ್ರಿಯಭಾವ ಬಯಲಾಗಿ ಎಲ್ಲ ಇಂದ್ರಿಯಗಳಲ್ಲಿ ಲಿಂಗಭಾವ ಬರಬೇಕು. ಕ್ರಿಯಾಜ್ಞಾನಗಳು ಅನುಭವದಲ್ಲಿ ಅಳವಡಬೇಕು. ಅಂದರೆ ಭಾವದಲ್ಲಿ ಭಾವಲಿಂಗವಾಗಿ ಬಯಲಾತ್ಮನಾಗುವ ಶಕ್ತಿ ಬರುತ್ತದೆ. ಇಂಥ ಭಾವವನ್ನೇ ಹೊಂದಿದ ಅಲ್ಲಮ ಪ್ರಭುಗಳು ವೋಮಕಾಯರೇನಿಸಿದ್ದರು. ಇದು ನಿರಂಜನ ಪ್ರಭುವಿನ ಅನುಗ್ರಹವಿಲ್ಲದೆ ದೊರೆಯದು. ನಿರಾಭಾರಿ ಗುರುನಾಥನು ಸ್ವತಃ ತಾನು

ತನು-ಮನ-ಭಾವಂಗಳಲ್ಲಿ ತ್ರಿಲಿಂಗಗಳನ್ನು ಧಾರಣ ಮಾಡಿ ಪರಿಪೂರ್ಣವಾಗಿರುತ್ತಾನೆ. ಅಂಥವರ ಕೃಪೆಯಾದರೆ ಧಾರಣಯೋಗವು ಸುಗಮವಾಗುವದು.

ಅಣ್ಣನವರ-

ವಚನದಲ್ಲಿ ನಾಮಾಮೃತ ತುಂಬಿ

ನಯನದಲ್ಲಿ ನಿಮ್ಮ ಮೂರುತಿ ತುಂಬಿ

ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲಾನು ತುಂಬಿ

ವಚನ, ನಯನ, ಮನ, ಶ್ರವಣೇಂದ್ರಿಯ ಮೊದಲಾದವುಗಳಲ್ಲಿಯೂ ಶಿವನೇ ತುಂಬಿದರೆ ನಾನು ಭ್ರಮರದಂತೆ ನಿಮ್ಮ ಚರಣಕಮಲದಲ್ಲಿ ತುಂಬಿ ಬಾಳುವೆನೆನ್ನುವ ಮಾತು ಧಾರಣ ತತ್ತ್ವಕ್ಕೆ ಉತ್ತಮ ಉದಾಹರಣೆಯಾಗಿದೆ. ಬಾಹ್ಯ ವ್ಯವಹಾರವು ಈ ರೀತಿಯಾದರೆ ಅಂತರಂಗದಲ್ಲೂ ಪ್ರಾಣ-ಭಾವಲಿಂಗಗಳು ಭರಿತವಾಗುವವು.

  ಸಮಾಧಿಯೋಗದ ನಿರಸನ

ಸುಸಮಾಧಿಯೋಗ ತಾ | ಮಸವೆಂದು ತೊಲಗಿಸುತ

 ಅಸಮ ಲಿಂಗದೊಳು-ಅಸುವಳಿದೊಡೈಕ್ಯವೆಂ-

ದುಸುರಿದೈ ಗುರುವೆ ಕೃಪೆಯಾಗು       ||೧೦೦||

ಅಷ್ಟಾಂಗಯೋಗದ ಅಂತಿಮ ಸಾಧನವೇ ಸಮಾಧಿಯು. ಇಲ್ಲಿ ಧ್ಯಾನ-ಧ್ಯಾತ್ಮ ಧೈಯಗಳು ಏಕಾಕಾರವಾಗುವವು. ಧೈಯವಸ್ತುವೇ ತಾನಾಗುವದೇ ಸಮಾಧಿಯ  ಮುಖ್ಯಗುರಿ.  ಧ್ಯಾನಗೈಯುವವನು, ಧ್ಯಾನವು, ಒಂದಾಗುವದು ಸಮಾಧಿಯಾಗು ವದು. ಚಿತ್ತದ ವಿಕ್ಷೇಪ (ಚಂಚಲವೃತ್ತಿ) ಗಳು ಇಲ್ಲಿ ಉಳಿದಿರುವುದಿಲ್ಲ. ಧಾರಣ ಮಾಡಿದ ಧೈಯವೇ ತಾನಾಗುವಾಗ ಬಾಹ್ಯ ವೃತ್ತಿಗಳು ಬಯಲಾಗುತ್ತವೆ.

‘ಸಮಾಧಿ’ ಶಬ್ದದ ವ್ಯುತ್ಪತ್ತಿ ಲಭ್ಯವಾದ ಅರ್ಥವಾದರೂ ಕೂಡುವದು, ಅಥವಾ ಏಕರೂಪವಾಗುವದು-

ಸಮ್ಯಗಾಧೀಯತೇ ಏಕಾಗ್ರೀಕ್ರಿಯತೇ

ವಿಕ್ಷೇಪಾನ್ ಪರಿಹೃತ್ಯ ಮನೋ ಯತ್ರ ಸ ಸಮಾಧಿಃ”

 ವಿಕ್ಷೇಪಗಳನ್ನು ತಡೆದು ಚಿತ್ತವನ್ನು ಏಕಾಗ್ರಗೊಳಿಸುವದು. ಧ್ಯಾನಾವಸ್ಥೆಯಲ್ಲಿ ಧ್ಯಾನ-ಧೈಯವಸ್ತು ಮತ್ತು ಧ್ಯಾನಮಾಡುವವ ಇವುಗಳು ಭಿನ್ನ ಭಿನ್ನವಾಗಿ ಪ್ರತೀತವಾಗುತ್ತವೆ. ಆದರೆ ಸಮಾಧಿಯಲ್ಲಿ ಧೈಯ ವಸ್ತುವು ಮಾತ್ರ ಉಳಿಯುತ್ತದೆ. ಯೋಗದರ್ಶನದಲ್ಲಿ(ಮೂರನೆಯಪಾದ ೩ನೇ ಸೂತ್ರ).

ತದೇವಾರ್ಥಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಮಿವ ಸಮಾಧಿ: ೩||

ಅದೇ ಧ್ಯಾನವೃತ್ತಿಗೆ ಕೇವಲ ಧ್ಯೇಯವೊಂದೇ ಭಾಸವಾದಾಗ ಸ್ವರೂಪ ಶೂನ್ಯದಂತಾಗುವದೇ ಸಮಾಧಿ ಎಂದು ಪ್ರತಿಪಾದಿಸಿದೆ. ಈ ಸಮಾಧಿಯು ಎರಡು ತೆರನಾಗುತ್ತದೆ. ಸದಾನಂದ ಯೋಗಿಯು ವೇದಾಂತಸಾರ’ದಲ್ಲಿ

ಸಮಾಧಿರ್ದ್ವಿವಿಧಃ ಸವಿಕಲ್ಪೋ ನಿರ್ವಿಕಲ್ಪ ಕಶ್ಚಿತಿ”

ಸವಿಕಲ್ಪಕ ನಿರ್ವಿಕಲ್ಪಕಗಳೆಂದು ಸಮಾಧಿಯನ್ನು ವಿಭಾಗಮಾಡಿಸಿದ್ದಾನೆ. ಇವನ್ನೇ ಯೋಗದರ್ಶನಕಾರರು- “ಸಂಪ್ರಜ್ಞಾತ ಸಮಾಧಿ, ಅಸಂಪ್ರಜ್ಞಾತ ಸಮಾಧಿ” ಎಂದು ಕರೆದಿರುವರು. ಉದಾಹರಣೆಗಾಗಿ ಬೆಂಕಿಯನ್ನು ತಕ್ಕೊಳ್ಳಬಹುದು. ಬೆಂಕಿಯು ಕಟ್ಟಿಗೆಯ ತುಂಡುಗಳನ್ನು ಸುಟ್ಟು ತನ್ನಂತಾದ ಮೇಲೂ ಎಷ್ಟೋ ಹೊತ್ತು ಉರಿಯುತ್ತದೆ. ಹಾಗೆ ಸಂಪ್ರಜ್ಞಾತ ಸಮಾಧಿಯಲ್ಲಿ ಧ್ಯಾನ ಧ್ಯಾತ್ಮ, ಧ್ಯೇಯಗಳು ಅಡಗಿ ಕೇವಲ ಧ್ಯೇಯವಾಗಿರುತ್ತಾನೆ. ಅಗ್ನಿಯು ಉರಿದು ಕೊನೆಗೆ ತಾನೂ ಶಾಂತವಾಗುವಂತೆ ಸಮಾಧಿಸ್ಥಿತಿಯಲ್ಲಿ ಧ್ಯೇಯವೂ ಅಡಗಿ ಹೋಗುವದನ್ನೇ ಅಸಂಪ್ರಜ್ಞಾತ ಸಮಾಧಿಯೆಂದು ಕರೆದಿರುವರು.

ಸಮಾಧಿಸ್ಥಿತಿಯಲ್ಲಿಯೂ ಧ್ಯೇಯದ ಅರ್ಥಪ್ರತ್ಯಯವಿರುವದರಿಂದ ಇದು ಪೂರ್ಣವಾದ ಸಮರಸವಲ್ಲವೆಂದು ಶರಣರು ಅದನ್ನು ತಾಮಸವೆಂದು ಕರೆದರು. ಸಮಾಧಿಸ್ಥಿತಿಯಲ್ಲಿ ಯಾವುದೂ ಇರಬಾರದು. ಅಲ್ಲಿ ವಿಚಾರಸುಳಿದರೆ ತನ್ನ ಜೀವಜ್ಞಾನ ಉಳಿದಿರುವದು. ಆದರೆ ಲಿಂಗಾಂಗಯೋಗದಲ್ಲಿ ಪ್ರಾಣವೂ ಲಿಂಗವಾಗಿ ಭಾವದಲ್ಲಿ ಬೆರೆಯುವವನೇ ಐಕ್ಯನು. ಲಿಂಗಭಕ್ತನು ನಿತ್ಯಜೀವನದಲ್ಲಿ ಸಂಸಾರ ಹೊಂದಿದ್ದರೂ ಐಕ್ಯ ಸ್ಥಿತಿಗೇರಬಲ್ಲನು. ಕಮಲದ ಎಲೆಯು ನೀರಿನಲ್ಲಿದ್ದರೂ ನೀರಿನ ಲೇಪವಿಲ್ಲದಂತೆ

ಶರಣನು ಸಂಸಾರಿಯಾದರೂ ಸಂಸಾರ ಲೇಪವಿಲ್ಲದಂತಿರುವನು. ಸರ್ಪಭೂಷಣ ಶಿವಯೋಗಿಗಳು-

ಯಾವ ಕೃತ್ಯದೊಳಿರುತಿರ್ದ್ದರು ಶಿವಯೋಗಿ

ಭಾವದೊಳಗೆ ಬ್ರಹ್ಮವನು ಬಿಡದಿಹನು

ಹೊರಗೆ ಸಕಲ ಲೋಕ ವ್ಯವಹಾರದೊಳಗಿರ್ದು         || ||

ಗುರುಸಿದ್ದನನು ಸಂಧಾನದೆ ಬೆರೆದಿಹನು

ಶಿವಯೋಗಿಯಾದವನು ಯಾವ ಲೌಕಿಕ ಕೆಲಸದೊಳಗೆ ತೊಡಗಿದ್ದರೂ ತನ್ನ ಭಾವದಲ್ಲಿ ಶಿವನನ್ನು ಧ್ಯಾನಿಸದೇ ಬಿಡನು. ಲೋಕವ್ಯವಹಾರಗಳಲ್ಲಿಯೂ ಗುರುಸಿದ್ಧನಾದ ಪರಶಿವಲಿಂಗನ ಅನುಸಂಧಾನದಲ್ಲಿಯೇ ಬೆರೆದಿರುವನು. ಎಂದು ಐಕ್ಯಸ್ಥಿತಿಯಲ್ಲಿರುವ ಶಿವಯೋಗಿಯ ಸ್ವರೂಪವನ್ನು ವರ್ಣಿಸಿರುವರು.

 ಯೋಗಿಯು ಸಂಸಾರ ಭಾವವನ್ನು ತುಚ್ಛವೆಂದು ತ್ಯಜಿಸಿ ಮೌನಧ್ಯಾನದಲ್ಲಿ ನಿರ್ಗುಣ ಬ್ರಹ್ಮವನ್ನು ಧಾರಣ ಮಾಡಿ ಸಮಾಧಿ ಹೊಂದುವದು ತಾಮಸ ಗುಣ (ಅಜ್ಞಾನ) ಎಂದು, ಇಂಥ ಸಮಾಧಿಯೋಗವನ್ನು ಬಿಡಿಸಿ ಗುರುವು ಅಸಮ ಅನುಪಮವೆನಿಸಿದ ತನ್ನ ಕರದಿಷ್ಟದ ಮಹಾಲಿಂಗದಲ್ಲಿ ಪ್ರಾಣವು-ಭಾವವು ಏಕಾಕಾರವಾಗುವದೇ ಐಕ್ಯಸ್ಥಿತಿಯೆಂದು ಬೋಧಿಸುತ್ತಾನೆ. ಐಕ್ಯನಲ್ಲಿ ಅರ್ಥ-ಪ್ರಾಣ- ಅಭಿಮಾನಗಳು ಅಡಗಿ ತೋರದಂತಾಗಿರುತ್ತವೆ. ಅಂತೆಯೇ ಹಡಪದಪ್ಪಣ್ಣನು ಕೂಡಲಸಂಗಮನಲ್ಲಿ ಬಸವಣ್ಣನವರು ಐಕ್ಯವಾಗುವ ಸಂದೇಶವನ್ನು ತಿಳಿಸಿದಾಕ್ಷಣ ನೀಲಮ್ಮನವರು-“ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವನ್ನು ಅಳಿದು ತಮ್ಮ ಕರದಿಷ್ಟ ಲಿಂಗದಲ್ಲಿ ಬೆರೆದು ಐಕ್ಯರಾಗುವ ಕಥಾನಕ’ ಅನುಭವಪೂರ್ಣವಾಗಿದೆ. ಈ ರೀತಿಯಾದ ಶಿವಯೋಗವು ಸಹಜಯೋಗ. ಅಷ್ಟಾಂಗಯೋಗವು ಶಿವಯೋಗದಂತೆ ಸಹಜವೆನಿಸದು. ಅದುಕಾರಣ ಅದು ಅಸಹಜವೆನಿಸುತ್ತದೆ. ಅಸಹಜತೆಯಲ್ಲಿ ತಾಮಸಗುಣ ವ್ಯಕ್ತವಾಗುವದರಿಂದ ಅದನ್ನು ತಾಮಸವೆಂದರು. ಇಂಥ ತಾಮಸಮಯವಾದ ಸಮಾಧಿಯೋಗವನ್ನು ತೊಲಗಿಸಿ ಲಿಂಗಾಂಗ ಸಾಮರಸ್ಯದ ಸವಿಯನ್ನು ಸವಿಯುವಂತೆ ಗುರುವರನು ಕರುಣಿಸುತ್ತಾನೆ. ಲಿಂಗೈಕ್ಯನಾಗುವ ಗುರಿಯನ್ನು ತೋರಿಸಿ ಕೊಡುತ್ತಾನೆ. ಐಕ್ಯಸ್ಥಲದ ವಿಚಾರ ಮುಂದೆ ಬರುವದರಿಂದ ಇಲ್ಲಿ ವಿಸ್ತಾರಗೊಳಿಸುವ ಅವಶ್ಯಕತೆಯಿಲ್ಲ.

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

ಶ್ರೀಮ. ನಿ.ಪ್ರ. ಶ್ರೀ ಶಿವಬಸವಸ್ವಾಮಿಗಳು ಹೊಸಮಠ,

ಅಕ್ಕಿಹೊಂಡ, ಹುಬ್ಬಳ್ಳಿ

ಹನ್ನೆರಡನೆಯ ಶತಮಾನವು ವೀರಶೈವರ ಕ್ರಾಂತಿಯ ಕಾಲ. ವೀರಶೈವವನ್ನು ಅಂಗೀಕರಿಸಿದ ಅನೇಕರು ಈ ಕಾಲದಲ್ಲಿ ಈ ಮಾರ್ಗವನ್ನು ಹಿಡಿದು ಮಹಾಮಹಿಮರೆನಿಸಿದ್ದಾರೆ. ಅವರು ಶರಣರೆಂದು ಪ್ರಮಥರೆಂದೂ ಪ್ರಸಿದ್ಧಿ ಪಡೆದಿರುವರು. ಪ್ರಮಥ ಎಂಬುದು ಅಲೌಕಿಕ ಪದವಿ. ಈ ಪದವಿಯನ್ನು ಪಡೆದವರಿಗೆಲ್ಲ ಶ್ರೀ ಬಸವೇಶ್ವರರು ಪ್ರಮುಖರು. ಅಂತೆಯೇ ಬಸವಾದಿ ಪ್ರಮಥರು ಎಂದು ಕರೆಯುವ ರೂಢಿ ಬಂದಿದೆ.

ಶ್ರೀ ಚನ್ನಬಸವೇಶ್ವರರೂ ಪ್ರಮಥರಲ್ಲಿ ಮುಂದುವರೆದವರೇ ಆಗಿದ್ದರು. ಬಸವೇಶ್ವರರು ದಂಡನಾಯಕರೆನಿಸಿದ್ದರೆ, ಚನ್ನಬಸವೇಶ್ವರರು ಚಿಕ್ಕದಂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇವರು ಷಟ್‌ಸ್ಥಲ ಚಕ್ರವರ್ತಿಗಳೂ ಆಗಿದ್ದಾರೆ. ಆದುದರಿಂದಲೆ ಅನುಭವ ಮಂಟಪದ ಮಹಾಸಭೆಯಲ್ಲಿ ಚನ್ನಬಸವೇಶ್ವರರ ಸ್ಥಾನ ಇನ್ನೂ ಹಿರಿದು. ಇವರು ಅನೇಕ-ಸಲ ಬಸವೇಶ್ವರರಿಗೂ ಹಿತನುಡಿಗಳನ್ನು ತಿಳಿಸಿ ಎಚ್ಚರಿಸಿದ್ದಾರೆ. ಅಂತೆಯೇ ಇವರು ಲೌಕಿಕ-ಪಾರಮಾರ್ಥಿಕಗಳೆರಡರಲ್ಲಿಯೂ ಮುಂದುವರೆದು ಮಹಾಮುತ್ಸದ್ದಿಗಳೂ, ಮೇಧಾವಿಗಳೂ, ಆಗಿದ್ದಾರೆ. ಈ ಚನ್ನಬಸವೇಶ್ವರರು ಜನನದ ಬಗ್ಗೆ ಈಗೀಗ ಅಪಸ್ವರಗಳು ಕೇಳಿಬರಹತ್ತಿದೆ. ಈ ಅಪಸ್ವರಗಳು ಸಮಾಜದಲ್ಲಿಯ ಜನರ ಮನಸ್ಸುಗಳನ್ನು ಕದಡಿವೆ.

ಚನ್ನಬಸವೇಶ್ವರರು ಪ್ರಸಾದದಿಂದ ಜನಿಸಿದರು ಎಂದು ಒಬ್ಬ ಕವಿಗಳು ತಿಳಿಸಿದ್ದರೆ, ಕಕ್ಕಯ್ಯನವರ ಪ್ರಸಾದದಿಂದ ಜನಿಸಿದರೆಂದು ಇನ್ನು ಕೆಲವರು ತಿಳಿಸುತ್ತಾರೆ. ಶಿವಪ್ರಸಾದದಿಂದ ಜನಿಸಿದರೆಂದು ವಿರೂಪಾಕ್ಷ ಪಂಡಿತರು ತಿಳಿಸುತ್ತಾರೆ. ಅಂತು

ಇವರೆಲ್ಲರ ಅಭಿಪ್ರಾಯಗಳೂ ಚನ್ನಬಸವೇಶ್ವರರ ಜನನವು ಪ್ರಸಾದದಿಂದ ಆಯಿತೆಂದು ಇರುತ್ತವೆ. ಆದರೆ ಸಿಂಗಿರಾಜನು ಮಾತ್ರ ಚನ್ನ ಬಸವೇಶ್ವರರು ಶಿವದೇವನ ಮಗನೆಂದು ತಿಳಿಸಿದ್ದಾರೆ. ಕರ್ನಾಟಕ ಕವಿಚರಿತೆಯ ಅಭಿಪ್ರಾಯದ ಪ್ರಕಾರ ಇವರೆಲ್ಲ ಹದಿನೈದು, ಹದಿನಾರು, ಹದಿನೇಳನೆಯ ಶತಮಾನದವರಾಗಿದ್ದಾರೆ. ಹನ್ನೆರಡನೆಯ ಶತಮಾನದ  ಸ೦ಗತಿಯನ್ನು ಮೂರ್ನಾಲ್ಕೈದು ನೂರು ವರ್ಷಗಳ ನಂತರ ತಿಳಿಸುವಾಗ ನಾಲಿಗೆಯಿಂದ ನಾಲಿಗೆಗೆ ಸೇರಿ ಕಿವಿಯಿಂದ ಕಿವಿಗಳಿಗೆ ತಲ್ಪುವಾಗ ಅನೇಕ ವ್ಯತ್ಯಾಸಗಳು ಆಗುವ ಸಂಭವವು ಸಹಜವಾದುದು.

ಇಂಗಳೇಶ್ವರ ಬಾಗೇವಾಡಿಯ ನಾಡಿನ ಮಾದರಸ ಮಾದಲಾಂಬಿಕೆ ಎಂಬ ದಂಪತಿಗಳಿಗೆ ಅನೇಕ ವರುಷಗಳ ವರೆಗೆ ಮಕ್ಕಳಾಗದಿರಲು ಇವರು ಕಂದನನ್ನು ಪಡೆಯಲು ನಂದೀಶ್ವರ ವ್ರತವನ್ನಾಚರಿಸಿದರು. ಈ ಸಮಯದಲ್ಲಿ ವೀರಶೈವದ ಮೇಲೆ

ಬೇರೆಯವರ ಅಘಾತದಿಂದ ಕೆಟ್ಟ ಪರಿಣಾಮವು ಆಗುತ್ತಲಿತ್ತು ಇದನ್ನು ಸರಿಪಡಿಸುವ ಸಲುವಾಗಿ ಒಬ್ಬ ಮಹಾವಿಭೂತಿಯ ಉದಯವು ಆಗಬೇಕಾದ ಅವಶ್ಯಕತೆಯೂ ಬಹಳವಾಗಿತ್ತು. ಅಂತೆಯೇ ಶಿವಮತದ ಮೇಲೆ ಆಗುತ್ತಿರುವ ಅಘಾತವನ್ನು ನಿವಾರಣೆಮಾಡಲು ಈ ದಂಪತಿಗಳು ನಡೆಸುತ್ತಿರುವ ನಂದಿ ವ್ರತದ ಫಲವಾಗಿ ಶಿವನ ಅಪ್ಪಣೆಯಿಂದ ನಂದಿಕೇಶ್ವರನು ಇವರ ಮಗುವಾಗಿ ಜನಿಸಿದನು. ಮುಂದೆ ಈ ಮಗುವಿಗೆ ಬಸವೇಶ್ವರ ಎಂಬ ಹೆಸರು ಬಂದಿದೆ. ಈ ಬಸವೇಶ್ವರರಿಗೆ ನಾಗಮ್ಮ ಎಂಬ ಅಕ್ಕನೂ ಇದ್ದಾಳೆ. ಇವಳಿಗೆ ಅಕ್ಕನಾಗಮ್ಮ ಎಂಬ ಹೆಸರು ರೂಢವಾಗಿ ಬಂದಿದೆ.

 ಬಸವೇಶ್ವರರು ಎಂಟನೆಯ ವರ್ಷದವರಾದರು. ಆಗ ಅವರ ತಂದೆ ಅವರ ವಂಶಪರಂಪರೆಯ ಸಾಂಪ್ರದಾಯಕ-ಧಾರ್ಮಿಕ-ಸಂಸ್ಕಾರವಾದ ಉಪನಯನವನ್ನು ಮಾಡಿಸಬೇಕಾಯಿತು. ಬಸವೇಶ್ವರರಿಗೆ ಇದು ಒಪ್ಪಿತವಾಗಲಿಲ್ಲ ಕೇವಲ ಬ್ರಾಹ್ಮಣ್ಯವನ್ನುಂಟು ಮಾಡುವ ಈ ಸಂಸ್ಕಾರಕ್ಕಿಂತ ಮಾನವನನ್ನು ಮಾನವ ಧರ್ಮದ ಕಡೆಗೆ ಕರೆದೊಯ್ಯುವ ವಿಧಾಯಕ ಕ್ರಿಯೆಗಳನ್ನು ಹೊಂದಿದ ಯಾವುದಾದರೂ ಹೆದ್ದಾರಿಯಿರುವುದೇ ? ಎಂಬ ವಿಚಾರಮಾಡಿ ಈ ಹೆದ್ದಾರಿಯನ್ನು ಹಿಡಿಯಬೇಕೆಂಬ ಯೋಚನೆಯನ್ನು ಮಾಡಿದರು. ಈ ಬಗ್ಗೆ ತಂದೆ ಮಕ್ಕಳ ನಡುವೆ ವಿವಾದವೂ ಆಯಿತು. ಕೊನೆಗೆ ಬಸವೇಶ್ವರರು ತತ್ವದ ಸಲುವಾಗಿ ತಂದೆಯನ್ನಗಲುವ ಪ್ರಸಂಗವೂ ಪ್ರಾಪ್ತವಾಯಿತು. ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಿರುವಾಗ ತಮ್ಮ ಸಮೀಪದಲ್ಲಿಯೇ ಪ್ರಸಿದ್ಧಿ ಪಡೆದ ಕೂಡಲಸಂಗಮ ಕ್ಷೇತ್ರದಲ್ಲಿರುವ ಅಧ್ಯಾತ್ಮಿಕ ಕೇಂದ್ರಕ್ಕೆ ಹೊರಡುವ ನಿರ್ಧಾರಮಾಡಿದರು. ಈ ನಿರ್ಧಾರವನ್ನು ತನ್ನ ಅಕ್ಕನಾದ ನಾಗಮ್ಮನಿಗೂ ತಿಳಿಸಿದರು. ನಾಗಮ್ಮನವರು ಇದಕ್ಕೊಪ್ಪಿದರಲ್ಲದೆ ತಾವು ಸಹ ತಮ್ಮನ ಸಂಗಡ ಹೊರಡಲು ತಯಾರಾದರು. ಮಾನವನು ಬ್ರಾಹ್ಮಣನಾಗಿ ಬ್ರಹ್ಮಜ್ಞಾನಮಾಡಿಕೊಳ್ಳುವದಷ್ಟೇ ಮಾನವಧರ್ಮವಲ್ಲ, ಆ ಜ್ಞಾನವನ್ನು ಕ್ರಿಯೆಯಲ್ಲಿ ತಂದು ದೇವರ ಲೋಕಕ್ಕೆ ಹೋಗಬೇಕು. ದೇವರ ಬಳಿಯಲ್ಲಿರಬೇಕು. ದೇವರ ರೂಪವನ್ನು ಹೊಂದಬೇಕು, ದೇವರೊಡನೆ ಹೊಂದಿಕೊಳ್ಳಬೇಕು, ಕೊನೆಗೆ ದೇವನೇ ತಾನಾಗಬೇಕು. ಇದುವೆ ಮಾನವಧರ್ಮ ಎಂದು ಪ್ರತಿಪಾದಿಸುತ್ತ ಲಿಂಗಭೇದವಿಲ್ಲದೆ ಸ್ತ್ರೀಯರೂ ಈ ದಾರಿಯನ್ನು ಹಿಡಿಯಲು ಬರುತ್ತದೆ. ಎಂದು ತಿಳಿಸುತ್ತಿರುವ ತಮ್ಮನ ಪ್ರತಿಪಾದನೆಯಿಂದ ಅಕ್ಕನು ಪ್ರಭಾವಿತಳಾದುದು ಸಹಜವೇ ಆಗಿದೆ. ಅಂತೆಯೇ ಅವಳು ತಂದೆ ತಾಯಿಗಳನ್ನಗಲುವ  ಸಾಹಸಕ್ಕೆ ಮುಂದಾದಳು. ಅಲ್ಲದೆ ಅವಳು ಇವರಲ್ಲಿಯೇ ಮದುವೆಯಾಗಿ ಕೂಸುಳ್ಳವಳಾಗಲಿ ಗರ್ಭವತಿಯಾಗಲಿ ಇರಬಹುದಾಗಿದೆ. ಸಂಸಾರ ಭ್ರಾಂತಿಯಿಲ್ಲದ ಪತಿದೇವನಾದ ಶಿವಸ್ವಾಮಿ ಇದ್ದುದರಿಂದಲೂ ಅವಳ ಅಧ್ಯಾತ್ಮಜೀವನವನ್ನು ಸಾಗಿಸಲು  ಪ್ರೇರಕವಾಗಿದೆಯೆನ್ನುಬಹುದು.

ಕೂಡಲಸಂಗಮಕ್ಷೇತ್ರಕ್ಕೆ ತಲುಪಿದ ಈ ಅಕ್ಕತಮ್ಮಂದಿರು ಆಗ ಅಲ್ಲಿ ಪ್ರಸಿದ್ಧವಾಗಿರುವ ಮಠಕ್ಕೆ ಬಂದರು. ಅಲ್ಲಿ ಜಾತವೇದರೆಂಬ ಗುರುಗಳು ಇದ್ದರು. ಇವರು ಮುಮುಕ್ಷುಗಳಿಗೆ ಮಾನವಧರ್ಮವನ್ನು ಬೋಧಿಸುತ್ತಿದ್ದರು. ಅನೇಕ ಜನ್ಮಗಳನ್ನು ಕಳೆದು ಅವುಗಳಲ್ಲಿ ಮಾಡಿದ ಪುಣ್ಯವಿಶೇಷದಿಂದ ಈಗ ಮಾನವನಾದವನು ಕೇವಲ ಮಾನವನಾಗಿಯೇ ಉಳಿಯಬಾರದು. ಹೀಗೆ ಉಳಿದರೆ ಇವನಿಗೆ ಈ ಜನನ ಮರಣರೂಪವಾದ ಭವರೋಗವು ತಪ್ಪುವುದಿಲ್ಲ. ಮಾನವನು ತನಗೆ ದೊರೆತ ಈ ಶರೀರವನ್ನು ಲಿಂಗವನ್ನಾಗಿ ಮಾಡಿಕೊಳ್ಳಬೇಕು. ಈ ಅಂಗವು ಸಾಧನೆಯಿಂದ ಲಿಂಗವಾಗುವದು. ಹೀಗೆ ಲಿಂಗವಾಗುವುದೇ ಮೋಕ್ಷ ಎಂದು ಅವರು ಮುಮುಕ್ಷುಗಳಾದ ಭಕ್ತಿ-ಭಾವುಕರಿಗೆ ಬೋಧಿಸುತ್ತಿದ್ದರು. ಲಿಂಗವೆಂದರೇ ಶಿವ. ಈ ಶಿವನನ್ನು ಅನುಭವದಿಂದ ಅರಿಯುವದೇ ಶಿವಾನುಭವ. ಈ ಶಿವಾನುಭವ ಸಾಧನೆಯಿಂದಲೇ ಮೋಕ್ಷ ಸಾಧ್ಯ ಇಲ್ಲವಾದರೆ ಇಲ್ಲ. ಇದನ್ನು ಸಾಧಿಸಿದವರಿಗೆ ಪುನರ್ಜನ್ಮವೆಂಬ ಭವರೋಗವು ಸೋಂಕುವುದಿಲ್ಲ ಎಂದು ಶಿವಾನುಭವವನ್ನು ಗುರುಗಳು ಅವರಿಗೆಲ್ಲ ತಿಳಿಸುತ್ತಿದ್ದರು.

 ಬಸವೇಶ್ವರರು ಕುಶಾಗ್ರಮತಿಗಳು, ಶ್ರೀಗುರುಗಳು ಬೋಧಿಸುತ್ತಿರುವ ಸಂಗತಿಗಳನ್ನೆಲ್ಲ ಗ್ರಹಿಸಿದರು. ಶರೀರವು ಸ್ಥೂಲವಾಗಲಿ, ಸೂಕ್ಷ್ಮವಾಗಲಿ, ಕಾರಣವೇ ಆಗಲಿ; ಅದು ಶರೀರವೇ. ಶರೀರವೆಂದರೆ ಹಳೆಯ ಅ೦ಗಿಯಂತೆ ಹರಿದುಹೋಗುವದೇ ಆಗ ಹೊಸ

ಅಂಗಿಯನ್ನು ತರಿಸಿ ತೊಡುವಂತೆ ಮತ್ತೊಂದು ಶರೀರವು ಬರಲೇಬೇಕು. ಮತ್ತೆ ಕಳೆಯಬೇಕು. ಮತ್ತೆ ಹೊಸದನ್ನು ತರಬೇಕು. ಈ ಕ್ರಮದಿಂದ ಶರೀರವು ಇರುವವರೆಗೂ ಅದಕ್ಕೆ ಜನನ ಮರಣಗಳು ತಪ್ಪಲಾರವು. ಆದುದರಿಂದ ಈ ಶರೀರಗಳನ್ನು ಲಿಂಗ

ಸಂಬಂಧದಿಂದ ಅಂಗಗಳನ್ನಾಗಿ ಮಾರ್ಪಡಿಸಬೇಕು. ಈ ಅಂಗಗಳು ಅಂಗತನವನ್ನು ಮೀರಿ ಲಿಂಗತನವನ್ನು ಸಂಪಾದಿಸಬೇಕು. ಮುಂದೆ ಈ ಅಂಗಲಿಂಗವೆಂಬ ಜ್ಞಾನವು ಸಹ ಶೂನ್ಯವಾಗಬೇಕು. ಎಂಬ ಉಪದೇಶವನ್ನು ಸಾಧನ ಮಾರ್ಗದಿಂದ ಸಿದ್ಧಿಯನ್ನು ಪಡೆದರು. ಈ ಬಗೆಯ ಶಿವಾನುಭವದ ಅಭ್ಯಾಸವನ್ನು ಮಾಡಿಮುಗಿಸಲು ಅವರಿಗೆ ಹನ್ನೆರಡು ವರ್ಷಗಳೂ ನಂತರ ಅದರ ಸಿದ್ಧಿಯನ್ನು ಪಡೆಯಲು ಆರು ವರ್ಷಗಳೂ ಕಳೆದಿರಬೇಕು. ಉಪನಯನವನ್ನು ತೊರೆದು ಬಂದ ಇವರಿಗೆ ಇಷ್ಟು ಅವಧಿಯನ್ನು ಕಳೆದ ಮೇಲೆ ಶ್ರೀ ಬಸವೇಶ್ವರರಿಗೆ ಇಪ್ಪತ್ತೈದು ವರ್ಷಗಳು ಆಗಿರಬೇಕಾಗುತ್ತದೆ. ಕೂಡಲ ಸಂಗಮ ಕ್ಷೇತ್ರದಲ್ಲಿ ಅವರು ತಮ್ಮ ಸಾಧನೆಯನ್ನು ಸಾಗಿಸಿ ಸಿದ್ಧಿ ಪಡೆದ ಸಲುವಾಗಿ ತಮ್ಮ ಅಂಗಯ್ಯಲ್ಲಿಯ ಲಿಂಗದೇವನಿಗೆ ಕೂಡಲಸಂಗಯ್ಯನೆಂದು ಕರೆದಿರುವದನ್ನು ಅವರ ವಚನಗಳಲ್ಲಿರುವ ಮುದ್ರಿಕೆಯಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದೇವೆ.

 ಅಕ್ಕನಾಗಮ್ಮ ಶಿವದೇವ ದಂಪತಿಗಳ ಮಗುವಾದ ಚನ್ನಬಸವೇಶ್ವರರು ಸಹ ಈಗ ಈ ಮಹಾನುಭಾವಿಗಳಾದ ಬಸವೇಶ್ವರರ ಜೊತೆಗೆ ಇರಬೇಕು. ಅಂತೆಯೇ ಚನ್ನಬಸವೇಶ್ವರರು ಸಹ ಈ ಕೂಡಲ ಸಂಗಮನಾಥನ ಹೆಸರನ್ನೇ ನಡುವೆ ಚನ್ನ’ ಎಂದು ಸೇರಿಸಿ ‘ಕೂಡಲಚನ್ನಸಂಗಮದೇವ’ ಎಂದು ತಮ್ಮ ಲಿಂಗದೇವನಿಗೆ ಹೆಸರಿಸಿದ್ದಾರೆ. ಸಂಗಮನಾಥನ ಸ್ಥಲದ ಪ್ರಭಾವವು ಬಸವೇಶ್ವರರ ಮೇಲೆ ಪರಿಣಮಿಸಿದಂತೆ ಚನ್ನಬಸವೇಶ್ವರರ ಮೇಲೆಯೂ ಪರಿಣಮಿಸಿರಬೇಕು ಎಂಬುದನ್ನು ಇವರ ಈ ವಚನ ಮುದ್ರಿಕೆಗಳು ತಿಳಿಸುತ್ತವೆ.   

 ಬಸವೇಶ್ವರರು ಹಾಗೂ ಚನ್ನಬಸವೇಶ್ವರರು ಇಬ್ಬರೂ ಕೂಡಲ ಸಂಗಮದ ಪರಿಸರದಲ್ಲಿ ವ್ಯಾಸಂಗ ಮಾಡುತ್ತ ಸಾಧನೆಯ ಮಾರ್ಗದಲ್ಲಿದ್ದರೆಂಬುದನ್ನು ನಾವು ಗ್ರಹಿಸಿದ ಬಳಿಕ ಕಲ್ಯಾಣದಲ್ಲಿ ನಡೆಯಿತೆಂದು ತಿಳಿಸುವ ಕಕ್ಕಯ್ಯನವರ ಪ್ರಸಾದದಿಂದ ಆದ

ಚನ್ನಬಸವೇಶ್ವರರ ಜನನಕ್ಕೂ ಈ ಕೂಡಲ ಸಂಗಮದಲ್ಲಿ ಇವರು ವಾಸ ಮಾಡಿದ ಸಂಗತಿಗೂ ಸಂಬಂಧವು ಬರುವುದೇ ಇಲ್ಲ, ಏಕೆಂದರೆ ಕೂಡಲಸಂಗಮದಲ್ಲಿ ವಾಸ ಮಾಡಿ ಪ್ರಸಿದ್ಧಿಯನ್ನು ಪಡೆದ ನಂತರವೇ ಇವರು ಕಲ್ಯಾಣದ ಕಡೆಗೆ ಹೋದರು ಎಂಬುದು ಎಲ್ಲರೂ ಅರಿತ ಸಂಗತಿಯಾಗಿದೆ. ಅಂದ ಬಳಿಕ ಕಕ್ಕಯ್ಯನವರ ಪ್ರಸಾದದಿಂದ ಚನ್ನಬಸವೇಶ್ವರರ ಜನನವಾಯಿತೆಂಬ ಮಾತಿಗೆ ಪುಷ್ಟಿ ದೊರೆಯಲಾರದು.

 ಗಂಡು-ಹೆಣ್ಣುಗಳೆರಡೂ ಸೇರಿದಾಗ ಈ ಎರಡು ಶಕ್ತಿಗಳಿಂದ ಮಗುವು ಜನಿಸುತ್ತಿದೆ ಎಂಬ ಸಂಗತಿಯನ್ನು ಜಗತ್ತಿನಲ್ಲಿರುವ ಸಾಮಾನ್ಯರೂ ಅರಿತಿದ್ದಾರೆ. ಈ ಮಾತನ್ನು ನಮ್ಮ ಶರಣರು ಸಹ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ” ಎಂದು ತಿಳಿಸಿದ್ದಾರೆ. ಹೀಗಿದ್ದು ಚನ್ನಬಸವೇಶ್ವರರು ಜನನವಾದ ಬಗ್ಗೆ ತಿಳಿಸುತ್ತಿರುವ ಈ ಸಂಗತಿಗಳು ವ್ಯತ್ಯಾಸಗೊಂಡಿರಬಹುದೆಂದು ಸ್ಪಷ್ಟವೇ ಇದೆ. ಚನ್ನಬಸವೇಶ್ವರರು ಕಲ್ಯಾಣದಲ್ಲಿ ಶರಣರೊಳಗೆಲ್ಲ ಜ್ಞಾನನಿಧಿಯಾದ ಮಹಿಮಾ ಶಾಲಿಗಳಾಗಿದ್ದಾರೆ. ತಂದೆಯು ಚಿಕ್ಕಂದಿನಲ್ಲಿ ತೀರಿ ಹೋದುದರಿಂದ ಅವರ ಹೆಸರು ಪ್ರಸಿದ್ಧವಾಗಿಲ್ಲವಾದುದರಿಂದಲೂ ಚನ್ನಬಸವೇಶ್ವರರ ಮಹಿಮೆ ಘನವಾಗಿ ಕಂಡ ಕಾರಣದಿಂದಲೂ ಈ ಸಂಗತಿಯು ನಡೆದ ಮೂರುನೂರು ವರ್ಷಗಳ ನಂತರ ಇವರ ಚರಿತ್ರೆಗಳು ರಚನೆಗೊಂಡುದರಿಂದಲೂ ಇವರು ಚನ್ನಬಸವೇಶ್ವರ ಅಯೋನಿಜತನವನ್ನು ಮುಂದು ಮಾಡಿ ಅವರ ಹಿರಿಮೆ ಗರಿಮೆಗಳನ್ನು ತಿಳಿಸಲು ಮಾಡಿದ ಪ್ರಯತ್ನವಾಗಿರಬಹುದೆಂದು ಈ ಚರಿತೆಗಳಿಂದ ಅನಿಸದೆ ಇರಲಾರದು. ಆದರೆ ಶಿವಸ್ವಾಮಿಯೆಂಬ ತಂದೆಯು ಇವರಿಗಿದ್ದನೆ೦ಬ ಸಂಗತಿಯು ಎಲ್ಲರೂ ಒಪ್ಪುವ ಸಂಗತಿಯಾಗಿದೆ.

 ಚಿಕ್ಕದಣ್ಣಾಯಕರೆನಿಸಿಕೊಂಡ ಚನ್ನಬಸವೇಶ್ವರರು ಅನುಭವ ಮಂಟಪದಲ್ಲಿ ಮಹಾಜ್ಞಾನಿಗಳೆನಿಸಿ ಷಟ್‌ಸ್ಥಲಗಳ ಅರಿವನ್ನು ಸರ್ವಾತ್ಮನಾ ಹೊಂದಿದವರಾಗಿದ್ದರು. ಅಂತೆಯೇ ಅವರು ಅಲ್ಲಮಪ್ರಭುದೇವರ ತರುವಾಯ ಶೂನ್ಯ ಸಿಂಹಾಸನವನ್ನಲಂಕರಿಸಿದ ಪೀಠಾಧಿಕಾರಿಗಳಾಗಿ ಜಗದ್ಗುರು ಎಂಬ ಅತ್ಯುಚ್ಚ ಪದವಿಯನ್ನು ಪಡೆದು ಷಟ್‌ಸ್ಥಲ  ಚಕ್ರವರ್ತಿಗಳು ಎನಿಸಿದ ಸಂಗತಿಯೂ ಪ್ರಸಿದ್ಧವೆ ಇದೆ. ಹೀಗೆ ಷಟ್ ಸ್ಥಲ ಚಕ್ರವರ್ತಿಗಳಾದ ಇವರು ಗುರುಕರಸಂಜಾತರಾದುದರಿಂದಲೂ ಪೂರ್ವಾಶ್ರಯದ ನಿರಸನವಾದುದರಿಂದಲೂ, ತಂದೆಯ ಹೆಸರು ಪ್ರಸಿದ್ಧವಿಲ್ಲದುದರಿಂದಲೂ, ಚರಿತೆಕಾರರು ಇವರ ಅಯೋನಿಜತನವನ್ನು ಮೂರುನೂರು ವರ್ಷಗಳ ನಂತರ ತಿಳಿಸಿರುವದು ಒಂದು ಬಗೆಯಿಂದ ಯುಕ್ತವಾಗುತ್ತದೆ. ಈಗ ಇವರು ಗುರುಪ್ರಸಾದ, ಶಿವಪ್ರಸಾದ, ಶರಣರ ಪ್ರಸಾದ ಅ೦ದರೆ ಕಾರುಣ್ಯದಿಂದ ಈ ಬಗೆಯಾಗಿ ಷಟ್‌ಸ್ಥಲ ಚಕ್ರವರ್ತಿಗಳಾದರೆಂದು ತಿಳಿಸುವದೂ ಜನತೆ ತಿಳಿದುಕೊಳ್ಳುತ್ತಿರುವುದೂ ಸಮಂಜಸವಾಗಿದೆ.

 ಈ ಬಗೆಯಾಗಿ ಶ್ರೀ ಚನ್ನಬಸವವೇಶ್ವರರ ಚರಿತೆಯು ಸ್ಪಷ್ಟವಾಗಿರುವಾಗ ಇತಿಹಾಸ ಸಂಶೋಧನೆಯ ಬಗೆಗೆ ವ್ಯಾಸಂಗ ಮಾಡಿ ಶಾಸನಗಳ ಸಂಶೋಧಕರಾಗಿ ಮಹಾಪಾಂಡಿತ್ಯವನ್ನು ಸಂಪಾದಿಸಿದ ಮಹಾನುಭಾವರೊಬ್ಬರು ಒಂದು ತರ್ಕಬದ್ಧಊಹೆಯನ್ನೂ ಮಾಡಬಹುದು’ ಎಂಬ ಸಂಶಯದ ಕಡೆಗೇಕೆ ಕೈ ಚಾಚಿದರೋ ತಿಳಿಯದು. ಶರಣ ಮಾರ್ಗದಲ್ಲಿ ವಿಜಾತೀಯ ವಿವಾಹದಷ್ಟೇ ಏಕೆ ಬಳಿಕೆಗಳು ಇರುವದಿಲ್ಲ. ಅವರ ಬಳಕೆ ಭಕ್ತರೊಡನೆ ಅಲ್ಲದೆ ಭವಿಗಳ ಸಂಗಡ ಅಲ್ಲ, ಯಾರೇ ಇರಲಿ ಲಿಂಗವಂತಿಕೆಯನ್ನು ಪಡೆದು ಶಿವಭಕ್ತನಾದ ಮೇಲೆ ಅವರ ಪೂರ್ವಾಶ್ರಮವು ಕಳೆದು ಹೋಗುವದೆಂಬುದನ್ನು ಶರಣ ಮಾರ್ಗಾವಲಂಬಿಗಳು ಒಪ್ಪುತ್ತಿರುವಾಗ “ಅಕ್ಕನಾಗಮ್ಮನನ್ನು ಡೋಹರ ಕಕ್ಕಯ್ಯನಿಗೆ ಮದುವೆ ಮಾಡಿಸಿರುವದು ಹೆಚ್ಚು ಸಂಭವನೀಯವಾಗಿ ತೋರುತ್ತದೆ’ ಎಂಬ ಮಾತು ಅಪಸ್ವರವಾಗಿ ಪರಿಣಮಿಸುತ್ತದೆ.

ಕಕ್ಕಯ್ಯನವರು ಜಾತಿಯಿಂದ ಡೋಹರರೋ ? ಅಥವಾ ಶರಣ ಮಾರ್ಗದಲ್ಲಿ ಡೋಹರರ ಕಾಯಕವನ್ನು ಕೈಕೊಂಡು ಡೋಹರರೆನಿಸಿದರೋ? ಎಂಬ ಅಂಶವು ಸಹ ವಿಚಾರಣೀಯವಾಗಿದೆ. ಕಾಶ್ಮೀರದ ಅರಸು ಮಹಾದೇವ ಭೂಪಾಲನು ಆಗ ತನ್ನ ಕಾಯಕದಿ೦ದ ಮೋಳಿಗೆ ಮಾರುವ ಸಲುವಾಗಿ ಮೋಳಿಗೆಯ ಮಾರಯ್ಯನೇ  ಆಗಿರುವದನ್ನು ಶರಣರ ಚರಿತೆಯಲ್ಲಿ ನಾವು ಕಾಣುತ್ತೇವೆ. ಇದರಂತೆ ಶರಣರಿಗಾಗಿ ಆಯಾ ಕಾಯಕಗಳಲ್ಲಿ ನಿರತರಾದವರಿಗೆ ಆಯಾ ಹೆಸರು ಬಂದಿರುವುದೇನೂ ಅಸಂಭವನೀಯವಲ್ಲ. ಬಸವೇಶ್ವರರು ಒಂದು ವಚನದಲ್ಲಿ ಕಕ್ಕಯ್ಯನವರಿಗೆ ಡೋಹರ ಎಂದು ಪ್ರಯೋಗಿಸಿರುವದನ್ನು ಡೋಹರನೆಂಬೆನೆ ಕಕ್ಕಯ್ಯನ ಎಂಬ ಮಾತಿನಿಂದ ಉದ್ಧರಿಸಿದ್ದಾರೆ. ಇದರಿಂದ ಅವರು ಕಕ್ಕಯ್ಯನವರ ಡೋಹರತನವನ್ನು ಆ ಕಾಲದಲ್ಲಿಯೇ ಅಲ್ಲಗಳೆದಿರುವಾಗ ಈಗಲೂ ನಾವು ಅವರಿಗೆ ಜಾತೀಯಭಾವನೆಯಿಂದ ಆ ಮಾತನ್ನು ಬಳಿಸಿ ಅವರ ಪವಿತ್ರ ಕಾಯಕಕ್ಕೆ ಜಾತೀಯ ಕಲಂಕವನ್ನು ಬಳಿದಂತಾದೀತು.

 ಬಸವೇಶ್ವರರು ಕಕ್ಕಯ್ಯನವರೊಡನೆ ನಡೆದುಕೊಂಡ ರೀತಿಯನ್ನು ನೋಡಿದರೆ ಕಕ್ಕಯ್ಯನವರು ಬಸವೇಶ್ವರರಿಗಿಂತ ಎಷ್ಟೋ ಹಿರಿಯ ವಯಸ್ಸಿನವರಾಗಿ ತೋರುತ್ತಿದೆ. ಬಸವೇಶ್ವರರು ಒಂದು ವಚನದಲ್ಲಿ ಅಪ್ಪ ನಮ್ಮ ಮಾದರ ಚನ್ನಯ್ಯ ಬೊಪ್ಪನು ನಮ್ಮ

ಡೋಹರ ಕಕ್ಕಯ್ಯ’ ಎಂದು ನುಡಿವಲ್ಲಿ ಕಕ್ಕಯ್ಯನವರು ಬಸವೇಶ್ವರರ ಅಜ್ಜನ ಸ್ಥಾನವನ್ನು ಹೊಂದುವ ವಯಸ್ಸಿನಲ್ಲಿದ್ದಾರೆ. ಅಲ್ಲದೆ ಬಸವಾದಿಗಳಿಗಿಂತಲೂ ಹಿಂದಿನವರಾದ ದೇವರ ದಾಸಿಮಯ್ಯನವರು ಸಹ ತಮ್ಮ ವಚನದಲ್ಲಿ ‘ಕೀಳು ಮಾದರ ಚೆನ್ನಯ್ಯ, ಕೀಳು

ಡೋಹರಕಕ್ಕಯ್ಯ ಎಂದು’ ಪ್ರಯೋಗಿಸಿರುವದನ್ನು ಕಾಣುತ್ತೇವೆ. ಇದರಿಂದ ಕಕ್ಕಯ್ಯನವರು ವಯಸ್ಸಿನಿಂದ ಬಹಳ ಹಿರಿಯರು ಎಂಬುದು ತೋರುತ್ತದೆ. ಅಲ್ಲದೆ ವಿಜಾತಿಯ ವಿವಾಹಕ್ಕೆ ಬಸವೇಶ್ವರರ ಕ್ರಾಂತಿಗಿಂತ ಹಿಂದೆ ನಡೆದ ಸಂಗತಿಯು ಚರಿತೆಗಳಲ್ಲಿ

ತೋರುವದಿಲ್ಲ. ಆದುದರಿಂದ ಈ ವಿಜಾತೀಯ ವಿವಾಹವು ಅದರಲ್ಲಿಯೂ ವಯೋಮಾನದಿ೦ದ ತೀರ ಹಿರಿಯರಾದವರೊಡನೆ ನಡೆದ ವಿಷಮ ವಿವಾಹವು ನಡೆಯಿತೆಂದು ಹೇಳುವದು ಕೂಡ ವ್ಯವಹಾರಿಕವಾಗಿ ಒಪ್ಪದ ಸಂಗತಿಯಾಗಿಲ್ಲ.

 ಕಕ್ಕಯ್ಯನವರಿಗೆ ಮದುವೆಯಾದ ಸಂಗತಿಯು ಬೇರೆ ಕಡೆಗೆ ದೊರೆಯುತ್ತದೆ. ಅವರ ಧರ್ಮಪತ್ನಿ ನಲಿನಿದೇವಿ ಮಗ ಧೂರಯ್ಯ ಎಂಬುವರಿದ್ದರೆಂದೂ, ಮಲ್ಲದೇವಿಯೆಂಬ ಸತಿಯು ಕಕ್ಕಯ್ಯನವರಿಗಿದ್ದಳೆಂದೂ ತಿಳಿಯುತ್ತದೆ. ಹೀಗೆ ಅವರ ದಾಂಪತ್ಯ ಜೀವನವು

ಸಕಲವಾಗಿ ಸಾಗಿರುವಾಗ ಅಕ್ಕನಾಮ್ಮನ ಸಂಗಡ ಡೋಹರ ಕಕ್ಕಯ್ಯನವರ ಮದುವೆ ಮಾಡಿಸಿದ ಸಂಗತಿಯು ಹೆಚ್ಚು ಸಂಭವನೀಯವು ಹೇಗೆ ಆದೀತು ? ಆದುದರಿಂದ ಮದುವೆಯ ವಿಚಾರದಲ್ಲಿ ಅಕ್ಕನಾಗಮ್ಮ ಹಾಗೂ ಕಕ್ಕಯ್ಯನವರ ನಡುವೆ ಯಾವದೇ ಬಗೆಯ ಸಂಬಂಧ ಉಳಿಯುವದಿಲ್ಲ ಎಂಬುದು ಚರಿತೆಯಿಂದಲೇ ಸ್ಪುಟವಾಗಿ ಕಾಣುತ್ತಿದೆ.

ಕಕ್ಕಯ್ಯನವರು ಜಾತಿ ಡೋಹರರಾಗಿದ್ದು ಮಹಾನುಭಾವರೊಬ್ಬರು ಕಲ್ಪಿಸಿದ ಮದುವೆಯು ಅಕ್ಕನಾಗಮ್ಮನ ಸಂಗಡ ಆದುದೇ ನಿಜವಾಗಿದ್ದರೆ,-ಹರಳಯ್ಯ ಮಧುವರಸರ ಮಕ್ಕಳ ಮದುವೆ ನಡೆದಾಗ ಆ ಕೂಡಲೇ ನಡೆಯಿತೆಂದು ತಿಳಿಯುವ ಘನಘೋರ ಪ್ರಸ೦ಗವು ಆಗಲೇ ನಡೆದು ಹೋಗುತ್ತಿತ್ತು. ಅಲ್ಲದೆ ಅಂತಹ ಸಂಕರವನ್ನು ಒಪ್ಪದ ಆಗಿನ ರಾಜಕೀಯವು ಇದಕ್ಕೆ ಕಾರಣವಾದ ಬಸವೇಶ್ವರರನ್ನು ದಂಡನಾಯಕ ಪದವಿಗೆ ತರುತ್ತಲೇ ಇದ್ದಿಲ್ಲ. ಹೀಗೆ ಜನಿಸಿದ ಚನ್ನಬಸವೇಶ್ವರರನ್ನು ಚಿಕ್ಕದಂಡನಾಯಕರನ್ನಾಗಿ ಮಾಡುತ್ತಲೇ ಇರಲಿಲ್ಲ. ಇಷ್ಟೇ ಅಲ್ಲ ಕಲ್ಯಾಣದ ಶರಣರ ಕ್ರಾಂತಿಯೇ ಆಗುತ್ತಿರಲಿಲ್ಲವಾಗಿ ಈಗ ದೊರೆಯುವ ಇತಿಹಾಸವೂ ದೊರೆಯದೆ ಬೇರೆ ಸ್ವರೂಪದಲ್ಲಿ ಬರುತ್ತಿತ್ತು.

ಸಿಂಗಿರಾಜರು ತಿಳಿಸಿದಂತೆ ನಾಗಮ್ಮನವರಿಗೆ ಶಿವಸ್ವಾಮಿ ಎಂಬ ಪತಿಯಿದ್ದನೆಂಬುದನ್ನು ಒಪ್ಪಿಕೊಳ್ಳಬೇಕು. ಇವರು ಆರಾಧ್ಯ ಬ್ರಾಹ್ಮಣರಾಗಿದ್ದರು. ಜನಾಂಗವು ವೀರಶೈವರಾಗಿದ್ದ ಬ್ರಾಹ್ಮಣರ ಜೋಕಾಲಿಯೊಳಗೆ ಕುಳಿತು ಜನಿವಾರವನ್ನು ಹೊಂದಿದ್ದರು. ಇಂತಹ ಪವಿತ್ರ ದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರೆಂಬುದು ಸ್ಪಷ್ಟವೇ ಇದೆ. ಇದರಂತೆಯೇ ಕಕ್ಕಯ್ಯನವರು ಸಹ ತಮ್ಮ ಧರ್ಮಪತ್ನಿಯೊಡನೆ ದಾಂಪತ್ಯ ಜೀವನವನ್ನು ಸಾಗಿಸಿ ಮಗುವನ್ನು ಪಡೆದಿದ್ದರೆಂಬುದು ಸಹ ಚರಿತೆಯಲ್ಲಿ ತಿಳಿಯುತ್ತದೆ. ಹೀಗಿದ್ದೂ ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಮಹಾ ಪಾಂಡಿತ್ಯವನ್ನು ಪ್ರಕಟಿಸಿದ ಮಹಾನುಭಾವರೊಬ್ಬರು ‘ಸಂಭವನೀಯ ನಿರ್ಣಯಗಳನ್ನು ಭಾವಿಸಬೇಕು’ ಎಂಬ ಭಾವನಾ ಪ್ರಪಂಚಕ್ಕೆ ಏಕೆ ಮರಳಿದರೋ ? ಎಂಬುದು ತಿಳಿಯದಂತಿದೆ.

ಎಂಟನೂರು ವರ್ಷಗಳ ಹಿಂದಿನ ಸಂಗತಿಯನ್ನು ಇಂದು ವಿಚಾರಿಸುವಾಗ ಲಭ್ಯವಿರುವ ಸಂಗತಿಗಳನ್ನು ಆಧರಿಸಿ ಅವುಗಳಿಗೆ ಹೊಂದಿಕೆಯಾಗುವ ಒಳ್ಳೆಯ ರೂಪವನ್ನೂ ಕೊಡುವದು ವಿಹಿತವಲ್ಲದೆ, ಕಲ್ಪನಾ ಪ್ರಪಂಚಕ್ಕೆ ಮರುಳಾಗಿ ಸಾಮಾಜಿಕರ ಒಳ್ಳೆಯ ಭಾವನೆಯ ಮೇಲೆ ಗೆರೆಯೆಳೆಯುವದು ಪಂಡಿತರಾದವರಿಗೆ ವಿಹಿತವಲ್ಲ.

ಇವರು ಮಹಾ ಪ೦ಡಿತರೆಂದು ಗ್ರಹಿಸಿ ಇವರು ನುಡಿದ ನುಡಿಯನ್ನು ಪ್ರಮಾಣಿಸಿಕೊಂಡು ಕೊಟ್ಟ ಹೇಳಿಕೆಯೊಂದರಿಂದ ಸಾಮಾಜಿಕರ ಚಿತ್ತ ಭಿತ್ತಿಯ ಮೇಲೆ ವಿರೂಪದ ಚಿತ್ರವನ್ನು ಮೂಡುವಂತೆ ಮಾಡಿದುದು ಸಹ ಈ ಮಹಾಪಂಡಿತರೇ ಹೊಣೆಯಾಗಬಹುದಾದ ಅನ್ಯಾಯವಾಗಿದೆ. ಏನೇ ಆಗಲಿ ಆ ಮಾತನ್ನು ಈಗ ಮರೆತು ಬಿಡೋಣ.

ಶಿವಸ್ವಾಮಿ ಅಕ್ಕನಾಗಮ್ಮ ಎಂಬ ದಂಪತಿಗಳ ಪವಿತ್ರದಾಂಪತ್ಯದಿಂದ ಚನ್ನಬಸವೇಶ್ವರರು ಜನಿಸಿದರು. ತೀರ ಎಳೆತನದಲ್ಲಿಯೇ ಶಿವಸ್ವಾಮಿಯು ತೀರಿಹೋದನು. ಆದುದರಿಂದ ಅವರ ಹೆಸರು ಜನತೆಗೆ ಹೆಚ್ಚಾಗಿ ಪರಿಚಯವಾಗಲಿಲ್ಲ. ಚನ್ನಬಸವೇಶ್ವರರು ಮುಂದೆ ತಮ್ಮ ಅಧ್ಯಾತ್ಮಿಕ ತೇಜದಿಂದ ಶೂನ್ಯಪೀಠದ ಅಧಿಕಾರಿಗಳಾಗಿ ಷಟ್‌ಸ್ಥಲ ಚಕ್ರವರ್ತಿಗಳೂ ಆದರು. ಈ ಪ್ರಸಂಗದಲ್ಲಿ ಪ್ರಮಥ ಪುಂಗವರಾದ ಬಸವೇಶ್ವರರ ಅನುಭವ ಮಂಟಪದ ಮಹಾಶರಣರ ಹಾಗೂ ಶಿವನ ಕಾರುಣ್ಯದ ಕಂದರಾದುದರಿಂದ ಈ ಸಂಗತಿಯು ಮೂರುನೂರು ವರ್ಷಗಳ ನಂತರ ಚರಿತೆಯನ್ನು ಬರೆಯುವ ಕವಿಗಳಿಗೆ ನಾಲಿಗೆಯಿಂದ ನಾಲಿಗೆಯ ಮೇಲೆ ಬಂದು ಕಿವಿಯಿಂದ ಕಿವಿಗೆ ತಲ್ಪುತ್ತ ವ್ಯತ್ಯಾಸಗೊಂಡು ದೊರಕಿದೆ. ಆದ್ದರಿಂದ ಅವರೆಲ್ಲ ಪವಿತ್ರಭಾವನೆಗಳಿಗಾಗಿ ಪ್ರಸಾದದಿಂದ ಜನಿಸಿದರೆಂದು ತಿಳಿಸಿರಬಹುದಾಗಿದೆ. ಈ ಪವಿತ್ರ ಭಾವನೆಯು ಈಗಲೂ ಜನತೆಯಲ್ಲಿರುವಾಗ ಅವನ್ನು ಕೆಡಿಸದಂತೆ ಉಳಿಸುವುದೇ ಸರಿಯಾಗುವದು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

೧. ಪ್ರಸ್ತಾವನೆ

ಎಂಬತ್ತು ನಾಲ್ಕು ಲಕ್ಷ ಜೀವ ರಾಶಿಗಳಲ್ಲಿ ಮಾನವ ಜೀವಿ ಶ್ರೇಷ್ಠ. ಮಾನವನಿಗೆ ಮಹಾದೇವನು ತನು-ಮನ-ಭಾವಗಳನ್ನು ದಯಪಾಲಿಸಿದ್ದಾನೆ. ಉಳಿದೆಲ್ಲ ಪ್ರಾಣಿಗಳಿಗೆ ತನುವನ್ನು ಮಾತ್ರ ನೀಡಿದ್ದಾನೆ. ಮಾನವನಿಗೆ ತನುವಿನಲ್ಲಿ ವಾಕ್‌ಶಕ್ತಿಯನ್ನು ಧೀಶಕ್ತಿಯನ್ನು ಮತ್ತು ಕೃತು ಶಕ್ತಿಯನ್ನು ಕರುಣಿಸಿದ್ದಾನೆ. ಈ ತ್ರಿವಿಧ ಶಕ್ತಿಗಳಿಂದ ಮಾನವ ಶ್ರೇಷ್ಠತೆಯನ್ನು ಮೆರೆಯುತ್ತಾನೆ. ವಾಕ್‌ಶಕ್ತಿಯ ಪ್ರಭಾವದಿಂದ ಭಾವನೆಗಳನ್ನು ವ್ಯಕ್ತ ಮಾಡುವನು. ಧೀಶಕ್ತಿಯಿಂದ ಜಾಣ್ಮೆಯನ್ನು ತೋರುವನು. ಕೃತುಶಕ್ತಿಯಿಂದ ಧೀಶಕ್ತಿಯ ಪ್ರಭಾವವನ್ನು ಬೀರಬಲ್ಲನು.

ಮನುಷ್ಯನ ದೇಹವು ಯಂತ್ರವಿದ್ದಂತಿದೆ. ಬ್ರಹ್ಮಾಂಡವು ಬೃಹತ್ತಾದ ವಿಜ್ಞಾನವಾಗಿದೆ. ಪಿಂಡಾಂಡವು ಬ್ರಹ್ಮಾಂಡದ ಪ್ರತಿರೂಪವೇ ಆಗಿದೆ. ಪಿಂಡಾಂಡವೆಂದರೇನೆ ದೇಹ, ತನು, ಶರೀರ, ಕಾಯ ಇತ್ಯಾದಿ ಅನೇಕ ನಾಮಗಳಿವೆ. ನಿಜಗುಣರು – ‘ತನುವಿದನುಳಿದಿಂದ್ರ ಜಾಲವದುಂಟೆ ?’ ಎಂದಿರುವುದು ಯಥಾರ್ಥವಾಗಿದೆ. ಇಂದ್ರಜಾಲ ಮನುಷ್ಯನನ್ನು ಆಶ್ಚರ್ಯಗೊಳಿಸುವಂತೆ, ತನುವನ್ನು ಕುರಿತು ಚಿಂತಿಸಿದರೆ ಅತ್ಯಾಶ್ಚರ್ಯವೇ ಉಂಟಾಗುವದು. ಆದರೆ ಅದರ ಚಿಂತನ ಮಾಡುವವರು ವಿರಳ.

ತನ್ನ ತನು ಸುಂದರವಾಗಿರಬೇಕು; ಗಟ್ಟಿಯಾಗಿರಬೇಕು. ದಷ್ಟ ಪುಷ್ಟವಾಗಿರಬೇಕೆನ್ನುವವರು ಬಹಳ. ಶರೀರ ಬೆಳವಣಿಗೆಯತ್ತ ಗಮನ ಹರಿಸುವವರೆ ಹೆಚ್ಚು. ಕವಿರತ್ನ ಕಾಲಿದಾಸನು-ʼʼಶರೀರಮಾದ್ಯಂ ಖಲು ಧರ್ಮಸಾಧನʼʼ ಧರ್ಮಾಚರಣೆಗೆ ಶರೀರವೆ ಮೊದಲಿನ ಸಾಧನ ವಾಗಿದೆಯೆಂದಿದ್ದಾನೆ. ಶರೀರವಿಲ್ಲದೆ ಯಾವ ಧರ್ಮಕಾರ್ಯಗಳು ಘಟಿಸುವುದಿಲ್ಲ. ಆದರೆ ತನುವಿನಲ್ಲಿ ನೆಣವಿದ್ದಾಗ ಮಾತ್ರ ಧರ್ಮಕಾರ್ಯಗಳಾಗಲಿ, ಪರೋಪಕಾರ್ಯಗಳಾಗಲಿ ನಡೆಯಬಲ್ಲವು. ಶರೀರವಿದ್ದು ರೋಗಗ್ರಸ್ಥವಾದರೆ ಏನನ್ನು ಮಾಡಲಾಗದು. ಅದಕ್ಕಾಗಿ ದೇಹ ಸ್ವಸ್ಥವಿರುವಾಗಲೆ ಭಗವಚ್ಛಿಂತನೆ, ಆತ್ಮಚಿಂತನೆ; ಪರೋಪಕಾರ ಮಾಡಬೇಕು. ಅಂತೆಯೇ ಬಸವ   ಮಹಾನುಭಾವರು ”ಕೂಡಲ ಸಂಗಮದೇವರನೊಲಿಸಲು ಬಂದ ಪ್ರಸಾದಕಾಯವ ಕೆಡಿಸಲಾಗದು” ಎಂದು ಹಿತನುಡಿದಿರುವರು. ಕಾಯ ಪ್ರಸಾದಕಾಯವಾಗಬೇಕು, ಧರ್ಮಕಾರ್ಯಕ್ಕೆ ಸಾಧನವಾಗಿರಬೇಕು. ಪರೋಪಕಾರಕ್ಕೆ ಮುಂದಾಗಬೇಕಲ್ಲದೆ ಪರಪೀಡನೆಗೆ ಕಾರಣವಾಗಬಾರದು.

 ಶರೀರ ಆರೋಗ್ಯಪೂರ್ಣವಾಗಿದ್ದರೇನೆ ಮನಸ್ಸು ಬುದ್ಧಿಗಳು ಸ್ವಸ್ಥವಾಗಿರಬಲ್ಲವು.ಶರೀರದ ಆರೋಗ್ಯವನ್ನು, ಮಾನಸಿಕ ಸ್ವಾಸ್ಥ್ಯವನ್ನು ಬುದ್ಧಿಯ ವಿಕಾಸವನ್ನು, ಆತ್ಮದ ಚಿಂತನವನ್ನು ಕಾಪಾಡಿಕೊಳ್ಳಲು ಮಾನವ ಪ್ರಯತ್ನಿಸಬೇಕಾಗುವದು. ಈ ದಿಶೆಯಲ್ಲಿ ಯಾವುದನ್ನು ಅಲಕ್ಷಿಸುವಂತಿಲ್ಲ. ಶಾರೀರಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯ, ಬುದ್ಧಿಯ ವಿಕಾಸ, ಆತ್ಮದ ಚಿಂತನಗಳೊಂದಿಗೆ ಭೌತಿಕ ಜಗತ್ತಿನ ಸಂಬಂಧ ಹಾಗೂ ಜಗತ್‌ಸೃಷ್ಟಿಗೆ ಕಾರಣಕರ್ತನಾದ ಪರಮಾತ್ಮನನ್ನು ಅರಿಯುವ ಕಾರ್ಯ ಬಹುಕಾಲದಿಂದ ಬೆಳೆದುಬಂದಿತು. ಭೌತಿಕ ಜಗತ್ತಿನ ಬೆಳವಣಿಗೆಯ ಬಗೆಗೆ ಅನೇಕ ಅನುಮಾನಗಳು, ಪ್ರಶ್ನೆಗಳು ಉಂಟಾದರೆ, ವಿಜ್ಞಾನ ಪರಿಹಾರಗಳನ್ನು ಒದಗಿಸಿರಲು ಸಾಕು. ದೈಹಿಕ ಬೆಳವಣಿಗೆಯನ್ನು ಸಹ ವಿಜ್ಞಾನ ವಿಶ್ಲೇಷಿಸಬಹುದು. ಆದರೆ ದೇಹಾತೀತ ಅನುಭವಗಳನ್ನು ವಿಜ್ಞಾನ ತಿಳಿಸಲಾರದು. ವಿಜ್ಞಾನ ತಿಳಿಸದುದನ್ನು ಅಧ್ಯಾತ್ಮತಿಳಿಸಬಲ್ಲುದು. ಅಧ್ಯಾತ್ಮಿಕ ವಿಜ್ಞಾನ ಅನುಭವ- ಅನುಭೂತಿ-ಆತ್ಮಾನಂದವನ್ನು ತಿಳಿಸುವದು. ಇವೆಲ್ಲದಕ್ಕೂ ಸ್ವಸ್ಥ ಶರೀರವೇ ಸಾಧನ ಮಾತ್ರ.

 ಆತ್ಮಜ್ಞಾನದ ಅರಿವು ಉಂಟಾಗಲು, ಆನಂದಮಯ ಜೀವನ ಸಾಗಿಸಲು ಶಾರೀರಿಕ ಆರೋಗ್ಯ ಅವಶ್ಯ. ಅದಕ್ಕಾಗಿ ಶರೀರ ವಿಜ್ಞಾನವನ್ನು ತಿಳಿದುಕೊಳ್ಳಬೇಕಾಗುವದು. ಅಧಿ+ಆತ್ಮಪದಗಳೇ ಅಧ್ಯಾತ್ಮವೆನಿಸುವದು. ಕೇವಲ ದೈಹಿಕವಾಗಿ ವಿಚಾರಿಸದೆ ದೇಹಕ್ಕೆ ಚೈತನ್ಯ ನೀಡುವ ಆತ್ಮನ ಬಗೆಗೆ ಚಿಂತಿಸುವುದು ಅಧ್ಯಾತ್ಮವೆನಿಸುವದು. ಕೇವಲ ಪರಚಿಂತೆಯನ್ನು ಮಾಡದೆ ನಮ್ಮ ಚಿಂತೆಯನ್ನು ಮಾಡುವುದು ಅಧ್ಯಾತ್ಮವೆನಿಸುವುದು. ನಮ್ಮ ಚಿಂತೆಯೆಂದರೆ ನಮ್ಮ ಹೊಟ್ಟೆಪಾಡಿನ, ಹೆಂಡರು ಮಕ್ಕಳ ಚಿಂತನೆಯಲ್ಲ. ನಾನಾರು ? ನಾನು ಏಕೆ ಹುಟ್ಟಿದೆ ? ಹುಟ್ಟಿಗೆ ಕಾರಣವೇನು ? ಹುಟ್ಟಿದವನು ಸಾಯುವುದೇಕೆ ? ಸಾವು ಎಂದರೇನು ? ಏಕೆ ? ಸತ್ತನಂತರ ಎಲ್ಲಿಗೆ ಹೋಗುತ್ತೇವೆ ? ಶರೀರ ಮತ್ತು ಆತ್ಮನಿಗಿರುವ ಸಂಬಂಧವೇನು ? ಸತ್ತನಂತರ ಮತ್ತೆ ಹುಟ್ಟುತ್ತದೆಯೋ ? ಸಾವಿಗೂ ಮರು ಹುಟ್ಟಿಗೂ ಮಧ್ಯದಲ್ಲಿ ಎಲ್ಲಿರುತ್ತೇವೆ ? ಹೋಗುವುದೆಲ್ಲಿಗೆ ? ಬರುವುದಾದರೂ ಎಲ್ಲಿಂದ ? ಮತ್ತೆ ಮತ್ತೆ ಹುಟ್ಟಲೇಬೇಕೆ ? ಹುಟ್ಟದಂತಾಗಲು ಸಾಧ್ಯವೇ ? ಹುಟ್ಟದಂತಾಗಲು ನಾವೇನು ಮಾಡಬೇಕು ? ಹುಟ್ಟು-ಸಾವಿನ ನಡುವೆ ಸಾಗಿಸುವ ಜೀವನ, ಜೀವನದಲ್ಲಿ ಬರುವ ಸುಖ- ದುಃಖ, ನೋವು-ನಲಿವು, ಆಟ-ಪಾಠ, ಸೋಲು – ಗೆಲುವು, ಸಿರಿತನ – ಬಡತನ, ರೋಗ – ರುಜಿನಗಳು ಏಕೆ ? ಕೆಲವರೇಕೆ ಬಡವರು ? ಹಲವರು ಸಿರಿವಂತರೇಕೆ ? ಯಾರಿಗೂ ಕೆಟ್ಟದ್ದನ್ನು ಮಾಡದಿದ್ದರೂ ಬರುವ ಯಾತನೆಗಳೇಕೆ ? ಜೀವನದಲ್ಲಿ ನಡೆಯುವ ಘಟನೆಗಳಿಗೂ,  ವಿಜ್ಞಾನ ಉತ್ತರಿಸದು.  

 ಸಾಮಾನ್ಯ ವಿಜ್ಞಾನ ಉತ್ತರಿಸಲಾಗದ ವಿಷಯಗಳನ್ನು ತಿಳಿಸಬಲ್ಲುದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ವಿವರಿಸಲಾಗದ ನಿಗೂಢ ವಿಶ್ವ ಸತ್ಯಗಳನ್ನು ವಿವರಿಸಬಲ್ಲದು ಅಧ್ಯಾತ್ಮ. ಸಾಮಾನ್ಯ ವಿಜ್ಞಾನ ನಿಯಂತ್ರಿಸಲಾಗದ ಚೈತನ್ಯದ ಸ್ತರಗಳೇ ಅಧ್ಯಾತ್ಮ. ಮಾನವನ ಬುದ್ಧಿವಂತಿಕೆಯ ಜಾಣ್ಮೆಯನ್ನು ಮೀರಿದ ವಿಚಾರಗಳನ್ನು ನಿರೂಪಿಸುವುದು ಅಧ್ಯಾತ್ಮ ಮಾನವನ ದೇಹಾತೀತ ಅನುಭವಗಳೇ ಅಧ್ಯಾತ್ಮ. ಮಾನವನ ಅತೀಂದ್ರಿಯ ಅನುಭವಗಳೇ ಆಧ್ಯಾತ್ಮ. ಸಾಮಾನ್ಯ ವಿಜ್ಞಾನವನ್ನು ಮೀರಿದ ಜ್ಞಾನವೇ ಅಧ್ಯಾತ್ಮಿಕ ವಿಜ್ಞಾನ. ಇಂಥ ಅಧ್ಯಾತ್ಮ ಜ್ಞಾನದಿಂದ ಮೇಲಿನ ಪ್ರಶ್ನೆಗಳಿಗೆ ಪರಿಹಾರ ದೊರೆಯುವದು. ಶಾಂತಿ-ಸಮಾಧಾನಗಳು ಲಭಿಸುವವು.

ವೇದಾಂತಿಗಳು ಶರೀರದ ಅನಿತ್ಯತೆಯನ್ನು, ಕ್ಷಣಭಂಗುರತೆಯನ್ನು ಹೇಳಿದರೆ, ಶರಣರು ದೇಹ ದೇಗುಲವೆಂದರು, ಪ್ರಸಾದಕಾಯವೆಂದು ಕೊಂಡಾಡಿದರು. ವಸ್ತುತಃ ಶರೀರವು ಷದ್ಭಾವವಿಕಾರವುಳ್ಳುದು. ಬಾಲ್ಯ- ಯೌವ್ವನ ವಾರ್ಧಕ್ಯಾದಿಗಳಿಂದ ವಿಕಾರಗೊಳ್ಳುವದು. ಕೆನ್ನೆಯ ಕೂದಲು ನೆರೆಯೊಡೆದು, ಗಲ್ಲಗಳು ಒಳಸೇರಿ ಹಲ್ಲು ಹೋಗಿ, ಬೆನ್ನುಬಾಗಿ, ಕಾಲ ಮೇಲೆ ಕೈಯೂರಿ ಅನ್ಯರ ಹಂಗಿನಲ್ಲಿ ಬಾಳಬೇಕಾದ ಶರೀರದ ಯಥಾರ್ಥತೆಯನ್ನರಿತು ಸಾರ್ಥಕ ಬದುಕಿಗಾಗಿ ಬಳಸಿಕೊಳ್ಳಬೇಕು. ಪಾರಮಾರ್ಥಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಹುಟ್ಟಿದವನುಸಾಯಲೇಬೇಕು; ಶರೀರ ಗಟ್ಟಿಯಾಗಿರುವಾಗಲೇ ಸದುಪಯೋಗವಾಗಬೇಕು.

ತನುವೆಂಬುದೊಂದು ಇಂದ್ರಜಾಲವೆಂದು ಬಣ್ಣಿಸಿದಂತೆ ಈ ಶರೀರದಲ್ಲಿ ಅದೆಷ್ಟು ಇಂದ್ರಿಯಗಳು, ಅದೆಷ್ಟು ವಾಯುಗಳು, ಅದೆಷ್ಟು ಕರಣಗಳು, ಅದೆಷ್ಟು ತತ್ವಗಳು, ಅದೆಷ್ಟು ನಾಡಿಗಳು, ಅದೆಷ್ಟು ಆತ್ಮಗಳು ಇವೆಯೆಂಬುದನ್ನು ಆಲೋಚಿಸಬೇಕು. ಕಾಣುವ ಶರೀರವೊಂದೆನಿಸಿದರೂ ಅದರೊಳಗೆ ಮತ್ತೆಷ್ಟು ತನುಗಳಡಗಿವೆಯೆಂಬುದು ವಿಚಾರಣೀಯ. ಈ ಶರೀರದಲ್ಲಿ ಅದೆಷ್ಟು ಮದಗಳು, ಅದೆಷ್ಟು ಅನಿಮಿತ್ತ ವೈರಿಗಳು, ಅದೆಷ್ಟು ಧಾತುಗಳು, ಅದೆಷ್ಟು ವ್ಯಸನಗಳು, ಅದೆಷ್ಟು ತೆರೆಗಳು, ಅದೆಷ್ಟು ಭ್ರಮೆಗಳು, ಅದೆಷ್ಟು ಕೋಶಗಳು, ಅದೆಷ್ಟು ಕ್ಲೇಶಗಳು, ಅದೆಷ್ಟು ಗುಣಗಳು, ಅದೆಷ್ಟು ಅಹಂಕಾರಗಳು, ಅದೆಷ್ಟು ತಾಪತ್ರಯಗಳು, ಅದೆಷ್ಟು ಜೀವಗಳು, ಅದೆಷ್ಟು ಅವಸ್ಥೆಗಳು,ಅದೆಷ್ಟು ಭಾವಗಳು, ಅದೆಷ್ಟು ಮನಗಳು, ಅದೆಷ್ಟು ಅಗ್ನಿಗಳು ಅಡಿಗಿವೆಯೆಂಬುದನ್ನು ತಿಳಿದರೆ ಅಬ್ಬಬ್ಬಾ ಶರೀರವೆಂಬುದೊಂದು ಅದ್ಭುತವಾದ ಆಶ್ಚರ್ಯಕಾರಕ ಯಂತ್ರವೆಂಬುದರ ಅರಿವಾಗದಿರದು. ಇವೆಲ್ಲವುಗಳ ವಿಶ್ಲೇಷಣೆಯನ್ನು ಮಹಾಜ್ಞಾನಿ ಕಿರಿವಯದ ಹಿರಿಯ ಅನುಭಾವಿ ಷಟ್‌ಸ್ಥಲ ಚಕ್ರವರ್ತಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರವಾಗಿ ನಿರೂಪಿಸಿರುವರು.

ಭಾರತೀಯ ದರ್ಶನಗಳಲ್ಲಿ ಆಸ್ತಿಕ ದಾರ್ಶನಿಕರಿಗಿಂತ ನಾಸ್ತಿಕ ದಾರ್ಶನಿಕರಾದ ಲೋಕಾಯತ ಸಂಪ್ರದಾಯದವರು, ಅರ್ಥಾತ್ ಚಾರ್ವಾಕರು ದೇಹದ ಯಥಾರ್ಥತೆಯನ್ನು ಅರಿತಿದ್ದಾರೆ. ದೇಹಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದವರು. ‘ಋಣಂ ಕೃತ್ವಾ ಘೃತಂ ಪಿಬೇತ್ ʼ ಸಾಲ ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. ಅ೦ದರೆ ಸಾಲವಾದರೂ ಸರಿ, ಸುಖವಾಗಿ ಇರಬೇಕೆನ್ನುವರು. ಕಾಣದ ಆತ್ಮವನ್ನು ಮನ್ನಿಸದೆ, ಕಾಣುವ ಕಾಯಕ್ಕೆ ಪ್ರಾಶಸ್ತ್ಯ ಕೊಟ್ಟರು.ʼ ‘ಚೈತನ್ಯ ವಿಶಿಷ್ಟ ಕಾಯಃ ಪುರುಷಃ ʼʼ ಎಂಬ ಸೂತ್ರವನ್ನು ಲೋಕಾಯತ ಮತದ ಮೂಲ ದಾರ್ಶನಿಕನಾದ ಬೃಹಸ್ಪತಿಯ ಪ್ರತಿಪಾದಿಸಿದರು. ಆದರೆ ಆಸ್ತಿಕ ದಾರ್ಶನಿಕರು ಶರೀರ ಅನಿತ್ಯವೆಂದು ಹೇಳಿದರೂ “ಮುಕ್ತಿಗೆ ಪರಮೋಪಾಯವೆನಿಸಿದ ಆತ್ಮ ಜ್ಞಾನವು ದೇಹವಿರುವಾಗಲೇ ಸಾಧ್ಯವಾಗುವದೆಂದೂ’ ನಿರೂಪಿಸಿದರು.

 ಆತ್ಮಜ್ಞಾನಕ್ಕೆ ಆಶ್ರಯವಾದುದು ಕಾಯ. ಅದರಂತೆ ಪ್ರಾಣಕ್ಕಾಶ್ರಯವೆನಿಸಿದ್ದು ಕಾಯ, ಧರ್ಮಸಾಧನಗಳಿಗೆ ಪ್ರೇರಣೆ ನೀಡುವದು ಕಾಯ. ಅವಿರಳಜ್ಞಾನಿ ಚನ್ನಬಸವಣ್ಣನವರು-““ತಿಳಿಯುವದೇ ಜ್ಞಾನ, ತಿಳಿದಂತೆ ನಡೆಯುವದೇ ಕ್ರಿಯೆ. ಅರಿತು ನಡೆಯದಿದ್ದರೆ ಅದೇ ಅಜ್ಞಾನ’ ವೆಂದು ಜ್ಞಾನ ಕ್ರಿಯೆಗಳ ಸ್ವರೂಪವನ್ನು ಮಾರ್ಮಿಕವಾಗಿಯೇ ಹೇಳಿದ್ದು ದಾರ್ಶನಿಕರಿಗೂ ಅಚ್ಚರಿಯಾಗಿರಲು ಸಾಕು. “ದೇಹವಿಲ್ಲದಿದ್ದೊಡೆ ಪ್ರಾಣಕ್ಕಾಶ್ರಯವುಂಟೆ ?” ಎಂದೂ ಪ್ರಶ್ನಿಸಿದ್ದರಲ್ಲಿ ದೇಹದ ಅವಶ್ಯಕತೆ ವ್ಯಕ್ತವಾಗುತ್ತದೆ. ಜ್ಞಾನವನ್ನು ಸಂಪಾದಿಸಲು ಸ್ವಸ್ಥಕಾಯಬೇಕು. ಜ್ಞಾನದ ಸಾಕಾರರೂಪ ವ್ಯಕ್ತವಾಗಲು ಕ್ರಿಯೆಬೇಕು. ತಿಳಿದಂತೆ ಕಾರ್ಯಗೈದಾಗ ಜ್ಞಾನ ಪ್ರತ್ಯಕ್ಷವಾಗುವದು. ಪರಸ್ತ್ರೀಯನ್ನು ಭೋಗಿಸಬಾರದೆಂಬ ಜ್ಞಾನ. ಅದರಂತೆ ನಡೆದಾಗ ಆ ಜ್ಞಾನಕ್ಕೆ ಬೆಲೆಯಿದೆ. ಇಲ್ಲದಿದ್ದರೆ ಅದೇ ಅಜ್ಞಾನವೆಂಬ ನುಡಿಯಲ್ಲಿ ಔಚಿತ್ಯವಿದೆ. ದೇಹವನ್ನು ಹೇಯವೆಂದವರಿಗೆ ಶರಣರು ಎಚ್ಚರಿಕೆ ಕೊಟ್ಟರು. ದೇವರ ನೊಲಿಸಬಂದ ಪ್ರಸಾದಕಾಯವನ್ನು ಕೆಡಿಸಲಾಗದೆಂದರು. ಬೀಜವು ಚೆನ್ನಾಗಿ ಫಲಿಸಬೇಕಾದರೆ ಉತ್ತಮವಾದ ಭೂಮಿಯ ಅವಶ್ಯಕತೆಯಿರುವಂತೆ; ಜಲ, ಬೆಳಕು ಹಾಗೂ ಗಾಳಿಗಳೂ ಬೇಕು. ಅದರಂತೆ ಮಾನವನ ಆತ್ಮಶಕ್ತಿಯು ವಿಕಾಸಗೊಳ್ಳಬೇಕಾದರೆ ದೇಹ ಮತ್ತು ಅದಕ್ಕೆ ಪೋಷಕವಾದ ಅನ್ನ-ನೀರು- ಪರಿಸರಗಳು ಮುಖ್ಯ, ದೇಹ ಸದೃಢವಾಗಿರದಿದ್ದರೆ ಯಾವುದನ್ನೂ ಸಾಧಿಸಲಾಗದು. ಅಂತೆಯೇ ಅನುಭಾವಿ ಚನ್ನಬಸವಣ್ಣನವರು-

ಕಾಯದಿಂದ ಲಿಂಗ ದರುಶನ,

 ಕಾಯದಿಂದ ಜಂಗಮ ದರುಶನ,

 ಕಾಯದಿಂದ ಪ್ರಸಾದ ಸಂಪತ್ತು,

 ಕೂಡಲ ಚನ್ನಸಂಗಯ್ಯಾ ಈ ಕಾಯದಿಂದ

 ನಿಮ್ಮವನು ಕಂಡೆನಯ್ಯಾ.

 ಕಾಯದ ಮಹತ್ವವನ್ನು ಬಿತ್ತರಿಸಿರುವರು. ಮಾನವನು ಕಾಯದಿಂದ ಕಾಯಕ ಮಾಡಿ ಸಕಲ ಪದಾರ್ಥಗಳನ್ನು ಪಡೆಯುವನು, ಗುರುಸೇವೆ ಮಾಡಿ ಲಿಂಗವನ್ನು ಹೊಂದುವನು. ನಿತ್ಯ ಲಿಂಗದರ್ಶನವಾಗುವದು. ಲಿಂಗ ಪೂಜೆಯ ಫಲ ಜಂಗಮ ದರುಶನ. ಜಂಗಮನ ಅನುಗ್ರಹದಿಂದ ಪ್ರಸಾದ ಸಂಪತ್ತು ಲಭಿಸುವದು. ಅಷ್ಟೇ ಅಲ್ಲ,  ಲಿಂಗವನ್ನು ಪೂಜಿಸಿ ಲಿಂಗಗಳನ್ನು ಸರ್ವಾಂಗದಲ್ಲಿ ಸಂಬಂಧಗೊಳಿಸಿ ಸರ್ವಾಂಗಲಿಂಗ ಮಯನೆನಿಸುವ ಸಾಮರ್ಥ್ಯ ಲಭಿಸುವುದು ಸಂಸ್ಕಾರಗೊಂಡ ಕಾಯದಿಂದ.

ಕಾಯಕ್ಕೆ ದೇಹ, ತನು, ಶರೀರ, ಭೋಗಾಯತನ ಇತ್ಯಾದಿ ಹಲವು ನಾಮಗಳಿದ್ದರೆ ವೀರಶೈವರು ಅಂಗವೆಂದು ಕರೆದಿರುವರು. ಕಾಯ ಕಷ್ಟಗಳನ್ನು ಮಾಡಬಲ್ಲುದು ಕಾಯವೆನಿಸಿದರೆ, ಸಾಂಸಾರಿಕ ಚಿಂತಾಗ್ನಿಯಲ್ಲಿ ಸುಡಲ್ಪಡುವುದರಿಂದ ಇದು ದೇಹವೆನಿಸಿತು. ಶಿವನ ಶಕ್ತಿಗಳು ಸಂಕೋಚಗೊಂಡು ಜೀವನಾಗುತ್ತಾನೆ. ಮತ್ತು ಜೀವಾತ್ಮನು ತನುವೆನಿಸುವನು. ತನುವೆಂದರೆ ಚಿಕ್ಕದು, ಜೀವಿಯ ಶಕ್ತಿ ಚಿಕ್ಕದು. ಕಾರ್ಯಕ್ಷಮತೆ ಸಣ್ಣದು. ಮನಸ್ಸು ಅಲ್ಪ; ಭಾವ ಸಹ ಸಂಕೋಚಗೊಂಡುದು. ಅದಕ್ಕಾಗಿ ಇದು ತನುವೆನಿಸಿದೆ. ಶರೀರವೆಂದರೆ ಸಣ್ಣಾಗುವದು, ಸೊರಗುವದು. ಬಾಲ್ಯದಿಂದ ಯೌವನಾವಸ್ಥೆಯಲ್ಲಿ ದೊಡ್ಡದಾದ ಶರೀರವು ವಾರ್ಧಕ್ಯಕ್ಕೆ ಸೊರಗುತ್ತ ಹೋಗುವುದಿಲ್ಲವೇ? ಲೋಕಾಯತರು ಶಾರೀರಿಕ ಭೋಗಕ್ಕೇನೆ ಮಹತ್ವ ನೀಡಿದ ಕಾರಣ ಇದಕ್ಕೆ ಭೋಗಾಯತನವೆಂದು ಕರೆದರು. ಶರೀರವು ಎಲ್ಲ ಭೋಗಗಳಿಗೆ ಆಶ್ರಯ ಸ್ಥಾನವಾಗಿದೆ. ಜ್ಞಾನ-ಕ್ರಿಯೆಗಳಲ್ಲಿ ಸಮಸಮುಚ್ಚಯವನ್ನು ಪ್ರತಿಪಾದಿಸುವ ವೀರಶೈವರು ತನುವಿಗೆ ಅಂಗವೆಂದು ಕರೆದರು. ‘ಅಂ’ ಎಂದರೆ ಪರಮಾತ್ಮ, ಆ ಪರಶಿವನನ್ನು ಕೂಡುವ ಕಾಯವು ಅಂಗವೆನಿಸಿತು. ಭಾರತೀಯ ಎಲ್ಲ ದಾರ್ಶನಿಕರು- ʼʼಜನ್ಮನಾ ಜಾಯತೇ ಶೂದ್ರಃ, ಕರ್ಮಣಾ ದ್ವಿಜ ಉಚ್ಯತೇ”  ಪ್ರಾಕೃತಿಕವಾಗಿ ಹುಟ್ಟವ ಜೀವಿಗಳು ಶೂದ್ರರಾಗಿಯೇ ಜನಿಸಿ ಉಪನಯನ ಸಂಸ್ಕಾರದಿಂದ ದ್ವಿಜರೆನಿಸುವರು, ಅರ್ಥಾತ್ ಸಂಸ್ಕಾರ ಹೊಂದಿ ಬ್ರಾಹ್ಮಣತ್ವವನ್ನು ಹೊಂದುವರು. ಆದರೆ ವೀರಶೈವರು ತಾಯಿಯ ಗರ್ಭದಲ್ಲಿರುವ ಶಿಶುವಿಗೆ ೮ನೇ ತಿಂಗಳಲ್ಲಿ ಲಿಂಗಸಂಸ್ಕಾರ ಮಾಡುವದರಿಂದ ಈ ಮಗು ಶೂದ್ರನಾಗದೆ ಲಿಂಗ ಸಂಬಂಧವುಳ್ಳದಾಗಿ ಜನಿಸುವದು. ಲಿಂಗೋದ್ಭವನಾಗಿಯೇ ಮರ್ತ್ಯಕ್ಕೆ ಬರುವದು. ಲಿಂಗಧಾರಿಯಾಗಿ ಲಿಂಗವನ್ನೇ ಪ್ರಾಣವಾಗಿಸಿಕೊಳ್ಳುವನು. ಪ್ರಾಣಲಿಂಗಿಯೆನಿಸುವನು. ವೀರಶೈವರು ಜಗತ್ತನ್ನು ಮಿಥ್ಯವೆಂದು ಭಾವಿಸಲಿಲ್ಲ. ಎಲ್ಲವೂ ಶಿವಮಯವೆಂದು ಭಾವಿಸಿ ಶಿವನಿತ್ತ ಪದಾರ್ಥಗಳನ್ನು ಲಿಂಗಮುಖವಾಗಿ ಭೋಗಿಸುವರು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರವು ಭೋಗಾಂಗವೆನಿಸುವದು. ಲಿಂಗಭೋಗೋಪಭೋಗಿಗಳಾಗಿ, ಲಿಂಗದಲ್ಲಿ ಬೆರೆಯುವ ಯೋಗವನ್ನು ಸಾಧಿಸುವರು. ಅದಕ್ಕಾಗಿ ಕೊನೆಯದು ಯೋಗಾಂಗವೆನಿಸಿತು. ತ್ಯಾಗಾಂಗದಲ್ಲಿ ಜೀವಗುಣಗಳ ತ್ಯಾಗವಿದೆ. ಸಾಂಸಾರಿಕ ವ್ಯಾಮೋಹದ ತ್ಯಾಗವಿದೆ. ಜಡಗುಣಗಳ ತ್ಯಾಗವಿದೆ. ತನುಗುಣಗಳ ತ್ಯಾಗವಿದೆ. ಲಿಂಗಭೋಗೋಪಭೋಗಿಯಾಗಿ ಎಲ್ಲ ಭೋಗಗಳನ್ನು ಭೋಗಿಸಿ ಲಿಂಗದೊಡನೆ ಬೆರೆಯುವ ಶಿವಯೋಗ ಸಾಧನೆಯಿರುವುದರಿಂದ ಯೋಗಾಂಗವೆನಿಸುವದು. ಲಿಂಗವೆ ತಾನಾಗುವ ಯೋಗವನ್ನು ಹೊಂದುವನು.

ಇಂಥ ಕಾಯದ ಅರಿವನ್ನು ಯಥಾರ್ಥವಾಗಿ ನಿರೂಪಿಸಿದ ‘ಕರಣ ಹಸಿಗೆ’ ಯು ಶಿವಾನುಭವಿಗಳ ಪಠ್ಯವೇ ಆಗಿರುವದು. ಚಿನ್ಮಯಾನುಗ್ರಹವನ್ನು ಹೊಂದುವವರು ಅವಶ್ಯವಾಗಿ ಕರಣಹಸಿಗೆಯನ್ನು ಅಧ್ಯಯನ ಮಾಡಲೇಬೇಕು. ಅನುಗ್ರಹ ಮಾಡುವ  ಪೂರ್ವದಲ್ಲಿ ಕರಣ ಹಸಿಗೆಯನ್ನು ಕುರಿತು ಚಿಂತನ ಮಾಡುತ್ತಿದ್ದರು. ನಂತರ ಧಾರ್ಮಿಕ ಸಂಸ್ಕಾರ ಸಂಪನ್ನವಾಗುತ್ತಿತ್ತು, ಸಂಸ್ಕಾರಕ್ಕೆ ಪೂರಕವಾಗಿ ಅಧ್ಯಾತ್ಮದ ಚಿಂತನ ನಡೆಯಬೇಕು. ಶರೀರವಿಜ್ಞಾನದ ವಿವೇಚನೆಗೈಯ್ಯುವದರಿಂದ ಆತ್ಮಜ್ಞಾನಕ್ಕೆ ಅನುವಾಗುವದು. ಅಧ್ಯಾತ್ಮಸಿದ್ಧಿ ಲಭಿಸುವುದು.

 ‘ಕರಣ ಹಸಿಗೆ’ಯ ವಿಷಯಗಳನ್ನು ಪರಶೀಲಿಸಿದರೆ ಇದು ವೀರಶೈವರಿಗೇನೇ ಮೀಸಲಾದ ಕೃತಿಯಲ್ಲ. ಮಾನವ ಮಾತ್ರರಿಗೇನೇ ಸಂಬಂಧಿಸಿದ ಮಹತ್ವದ ಕೃತಿಯಾಗಿದೆ. ಮಾನವ ಶರೀರವನ್ನು ವಿಶ್ಲೇಷಿಸುವ ಗ್ರಂಥವಾಗಿರುವದರಿಂದ ಸಕಲ ಮಾನವರು ಇದನ್ನು ಓದಿ ಅರ್ಥೈಸಿಕೊಳ್ಳ ಬಹುದು. ಶರೀರದ ರಚನೆಯ ಸಿದ್ದಾಂತ ಇದಾಗಿರುವುದರಿಂದ ಇದರ ವಿಶೇಷತೆಯನ್ನು ಸಕಲರೂ ಅರಿಯಬೇಕು. ವೀರಶೈವರ ಸಿದ್ಧಾಂತವು ತತ್ವ ತ್ರಯಗಳಲ್ಲಿ ಅಡಗಿರುವದರಿಂದ ಆ ವಿಚಾರ ಇದರಲಿಲ್ಲ. ಇದು ವಾದ- ವಿವಾದಗಳಿಗೂ ಕಾರಣವಾಗಿಲ್ಲ. ಮತ ಧರ್ಮದ ಚರ್ಚೆ ಇದರಲ್ಲಿಲ್ಲ. ಭಾರತೀಯ ಸನಾತನ ಧರ್ಮದ ಅರಿವನ್ನು ಮಾಡಿಕೊಳ್ಳಬಹುದಾದ ವಿಶಿಷ್ಟ ಕೃತಿಯಿದು. ವೇದಾಂತಿಗಳು ಚಿಂತಿಸಿದ ಪಂಚೀಕರಣದ ವಿಚಾರ ಇಲ್ಲಿದೆ. ಪಂಚಭೂತಗಳ ಗುಣ-ಕರ್ಮ-ವರ್ಣ-ಧರ್ಮಗಳ ಅಧಿದೇವತೆ ಚಿಂತನ ಇಲ್ಲಿದೆ. ಇಂದ್ರಿಯಗಳ ವಿಶ್ಲೇಷಣೆಯೊಂದಿಗೆ ಹಲವಾರು ವಿಷಯಗಳ ವಿವೇಚನೆಯಿದೆ.

 ಆಧುನಿಕ ಶರೀರ ವಿಜ್ಞಾನಿಗಳು ಚಿಂತಿಸಿರುವುದಕ್ಕಿಂತಲೂ ಹೆಚ್ಚಿನ ವಿಷಯ ವಿವೇಚನೆ ಇಲ್ಲಿ ಲಭಿಸುವುದು. ಆದರೆ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಾರೀರಿಕ ಕ್ರಿಯೆಗಳ ಬಗೆಗೆ, ಶಾರೀರಿಕ ರೋಗಗಳ ಬಗೆಗೆ, ಮತ್ತು ರೋಗ ಚಿಕಿತ್ಸೆ ಬಗೆಗೆ ಬಹಳಷ್ಟು ಸಂಶೋಧನೆ, ಚಿಂತನಗಳು ಬೆಳೆದು ಬಂದಿವೆ. ಯಾಂತ್ರೀಕರಣಗಳ ಆವಿಷ್ಕಾರವೂ ಆಗಿದೆ. ಹಲವಾರು ಮುಖ್ಯ ಅವಯವಗಳ ಜೋಡಣೆಯೂ ಆಗುತ್ತಿದೆ. ಇದೂ ಇಂದಿನ ಅದ್ಭುತ ಸಾಧನೆಯೇ ಎನ್ನಬೇಕು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಎಲ್ಲ ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಶರೀರ ರಚನೆಯನ್ನು ತಿಳಿಸಿ ಕೊಡಲು ಶರೀರ ವಿಜ್ಞಾನ ಶಾಸ್ತ್ರ (Anatomy) ವನ್ನು ಆಮೂಲಾಗ್ರವಾಗಿ ಕಲಿಸುತ್ತಾರೆ. ಶರೀರ ಉತ್ಪತ್ತಿಗೆ ಸ್ತ್ರೀಯಳ ಅಂಡಾಣು ಪುರುಷನ ವೀರ್ಯಾಣು ಕಾರಣ. ಅದನ್ನೇ ಬಸವಣ್ಣನವರೂ “ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ʼ ಎಂದು ವಚನಿಸಿದ್ದುಂಟು. ಗರ್ಭಧಾರಣೆಯಾಗಬೇಕಾದರೆ ಸ್ತ್ರೀಯಳು ರಜಸ್ವಲೆಯಾದಾಗ ಪುರುಷನ ಸಂಯೋಗವೂ ಅವಶ್ಯವೆಂಬುದನ್ನು ಸ್ಪಷ್ಟಪಡಿಸಿರುವರು. ಗರ್ಭಧಾರಣೆಯಾದಂದಿನಿಂದ ಮಗು ಜನನವಾಗುವ ವರೆಗಿನ ವಿವರವನ್ನು ಕರಣ ಹಸಿಗೆ ಪ್ರತಿಪಾದಿಸಿದ್ದಕ್ಕಿಂತ ಮಿಗಿಲಾಗಿ ವೈದ್ಯಕೀಯ ವಿಜ್ಞಾನ ಅವಗತ ಮಾಡಿಸುತ್ತದೆ. ಗರ್ಭಧರಿಸಿ ಶರೀರದ ಅಂಗಗಳು ಬೆಳೆದ ೨೮೦ನೆ ದಿನ ಮಗು ಈ ಮರ್ತ್ಯಲೋಕಕ್ಕೆ ತಲೆಕೆಳಗಾಗಿ ಬರುವದು. ಜೀವಿಯ ಆರೋಗ್ಯ ರಕ್ಷಣೆ ಕಾಪಾಡಲು ರೋಗಕಾರಣ ಹಾಗೂ ರೋಗ ನಿಧಾನವನ್ನು ಹುಡುಕಲು ಸೂಕ್ಷ್ಮವಾದ ಅಧ್ಯಯನ  ನಡೆದಿರುವುದು. ಮಾನವನ ಕೈಕಾಲುಗಳ ಬಗೆಗೆ ಆರು ತಿಂಗಳ ಚಿಂತನ ನಡೆದರೆ; ಕುತ್ತಿಗೆಯಿಂದ ಮೇಲೆ ಕಿವಿ, ಮೂಗು, ತಲೆ ಬರುಡೆಗಳ ಬಗೆಗೆ ಅಧ್ಯಯನ ಮುಂದುವರೆವುದು. ಹೀಗೆ ಚಿಂತನ ಮಂಥನ ನಡೆದಂತೆ, ಹೊಟ್ಟೆಯಲ್ಲಿಯ ಅಂಗಾಂಗಗಳ ಸಂಶೋಧನೆಯೂ ಮುಖ್ಯವಾಗುವದು. ದೇಹದ ಬಿಡಿಭಾಗಗಳನ್ನು ಕುರಿತು ಸೂಕ್ಷ್ಮವಾದ ಅನ್ವೇಷಣೆ ಜರುಗುತ್ತದೆ. ಶರೀರದಲ್ಲಿಯ ಕೈಕಾಲುಗಳ, ಹೊಟ್ಟೆಯಲ್ಲಿ ಪುಪ್ಪಸ, ಯಕೃತ್ತು ಮೊದಲಾದವುಗಳನ್ನು ಚನ್ನಾಗಿ ಪರಿಶೀಲಿಸುತ್ತಾರೆ. ನರನಾಡಿಗಳ-ಅಸ್ಥಿಗಳ ಬೆಳವಣಿಗೆ, ರಕ್ತ ಪ್ರಸರಣ ರಕ್ತಶುದ್ದೀಕರಣ ಇವೆಲ್ಲವುಗಳ ವ್ಯವಸ್ಥಿತ ಅಧ್ಯಯನ ಇಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಭಿಸುತ್ತದೆ.

ಆಧುನಿಕ ವೈದ್ಯ ವಿಜ್ಞಾನಿಗಳು ಮಾನವರ ಗುಣಾವಗುಣಗಳ ರೋಗಾದಿಗಳನ್ನು ಅರಿಯಲು ವಂಶವಾಹಿನಿ (ಜೀನ್ಸ)ಯ ಅಧ್ಯಯನಕ್ಕೆ ಮಹತ್ವ ಕೊಟ್ಟಿರುವರು. ಆದರೆ ಸೃಷ್ಟಿಕರ್ತನಾದ ಜಗನ್ನಿಯಾಮಕತ್ವದ ವ್ಯವಸ್ಥೆ ಕುರಿತು ಇಂದಿಗೂ ಉತ್ತರಿಸಿಲ್ಲವೆಂಬುದನ್ನು ಸಂಶೋಧಕರೂ ಒಪ್ಪುತ್ತಾರೆ. ೮೫೦ ವರುಷಗಳ ಹಿಂದೆಯೇ ಶಿವಶರಣರ ಅನುಭಾವ ಅನುಭೂತಿಗಳು ಬಹು ಎತ್ತರಕ್ಕೆ ತಲುಪಿವೆ. ಆತ್ಮನನ್ನು ಕುರಿತು ಚಿಂತಿಸಿದ್ದಾರೆ. ಅಲ್ಲದೆ ಮಾನವನ ಹುಟ್ಟು ಬೆಳವಣಿಗೆಯ ಬಗೆಗೂ ಆಲೋಚಿಸಿದ್ದಾರೆ. ಇಂದು ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಗುರುತಿಸಬಹುದಾದ ಸಂಗತಿಗಳನ್ನು ಸಾಧನ-ಸಾಮಗ್ರಿಗಳಿಲ್ಲದ ಪೂರ್ವದಲ್ಲೂ ಹಿಂದಿನವರು ಸಾಧಿಸಿದ ಸಾಧನೆಯೂ ಅಲ್ಪವಲ್ಲ. ಗರ್ಭ ಬೆಳವಣಿಗೆ ಶರೀರದಲ್ಲಿ ಅವಯವಗಳ ಕ್ರಿಯೆಗಳೊಂದಿಗೆ ಆಂತರಿಕ ಗುಣಾವಗುಣಗಳ ವಿಚಾರವನ್ನು ನಿರೂಪಿಸಿದ್ದು ಮಹತ್ವದ ಅಂಶಗಳಲ್ಲವೇ ?

ಕರಣಹಸಿಗೆಯ ವ್ಯಾಖ್ಯಾನಗಳು ಸಾಕಷ್ಟು ಕಾಣಬರುವುದಿಲ್ಲ. ಒಂದೆರಡು ವೇದ್ಯವಾದರೂ ಅರ್ಥೈಸುವುದು ಸುಲಭವೆನಿಸವು. ಇನ್ನು ಬೇರೆ ಬೇರೆ ರೀತಿಯ ಮೂಲ ಪ್ರಕಟನೆಗಳು ಮಾತ್ರ ಕೆಲಮಟ್ಟಿಗೆ ಆಗಿವೆ. ಇತ್ತೀಚೆಗೆ ಡಾ. ಶ್ರೀ ಇಮ್ಮಡಿ ಶಿವಬಸವ ಸ್ವಾಮಿಗಳು ಸಂಪಾದಿಸಿದ ಚನ್ನಬಸವಣ್ಣನವರ ಕರಣ ಹಸಿಗೆಯು ಸುಂದರ ಆವೃತ್ತಿಯಲ್ಲಿ ಬೆಳಕು ಕಂಡಿದೆ. ಅನೇಕ ನ್ಯೂನ್ಯತೆಗಳನ್ನು ಸರಿಪಡಿಸಿ ಪ್ರಕಟಿಸಿದ್ದಾರೆ. ಆದರೂ ಮೂಲ  ಕೃತಿಗಿಂತಲೂ ಟೀಕಾಕಾರನ ವಿವರಣೆ ಸರಳವೆನಿಸುವುದಿಲ್ಲ. ಭಾಷೆ ಶಬ್ದಗಳು ಸುಲಭ ಗ್ರಾಹ್ಯವೆನಿಸುವುದಿಲ್ಲ, ಸಂವಾದ ರೂಪದಲ್ಲಿ ದೀರ್ಘವಾದ ಟೀಕೆ ಬಂದಿದ್ದರೂ ಇಂದಿನ ದಿನಮಾನಗಳಲ್ಲಿ ಕಾಲಾವಕಾಶಕ್ಕೆ ಅನುಗುಣವಾಗಿ ಅರ್ಥೈಸಿಕೊಳ್ಳಲು ಸುಲಭವಾಗಲೆಂದು ಈ ಕೃತಿಯ ವ್ಯಾಖ್ಯಾನವನ್ನು ಕೈಕೊಳ್ಳ ಬೇಕಾಯಿತು.

 “ಕರಣ ಹಸಿಗೆ’ ಇಲ್ಲಿ ಎರಡು ಪದಗಳಿವೆ. ಕರಣ ಮತ್ತು ಹಸಿಗೆ; ಕರಣವೆಂದರೆ ಸಾಧನ, ಇಲ್ಲಿ ಕರಣ ಪದಕ್ಕೆ ತತ್ತ್ವಂಗಳು ಎಂದು, ಹಸಿಗೆ ಯೆಂದರೆ ವಿಭಾಗ; ಶರೀರದಲ್ಲಿ ಬರುವ ತತ್ತ್ವಗಳನ್ನು ಬೇರೆ ಬೇರೆಯಾಗಿ ವಿಭಾಗಿಸಿ ತೋರುವುದೇ ಈ ಕರಣ ಹಸಿಗೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೊಂದು ದೃಷ್ಟಾಂತವನ್ನು ಸಹ ನೀಡಿರುವರು.

 ಒಬ್ಬ ಒಕ್ಕಲಿಗನು ತನ್ನ ಹೊಲದಲ್ಲಿ ಹದವಾದ ಮಳೆಯಾದರೆ ಎತ್ತುಗಳ ಸಹಾಯದಿಂದ ಉಪಕರಣಗಳನ್ನು ಉಪಯೋಗಿಸಿ ಹೊಲವನ್ನು ಹಸನುಮಾಡಿ ಹಲವಾರು ರೀತಿಯ ಬೀಜಗಳನ್ನು ಬಿತ್ತುತ್ತಾನೆ. ಕಾಲಕಾಲಕ್ಕೆ ಕಳೆ ಕಸಗಳನ್ನು ತೆಗೆದು ಬೆಳೆಯನ್ನು ಬೆಳೆಸುವನು. ಬೆಳೆ ಮಾಗಿದ ಬಳಿಕ, ಅದನ್ನು ಕಟಾವು ಮಾಡಿ ಕೂಡಿ ಹಾಕುತ್ತಾನೆ. ಶುಭಮುಹೂರ್ತದಲ್ಲಿ ಕಣಮಾಡಿ ಒಕ್ಕೂವನು. ಒಕ್ಕಿ ತೂರಿ ರಾಶಿಯನ್ನು ಸಿದ್ಧಗೊಳಿಸುವನು. ಪೂಜಿಸಿ ಗೋಣಿಚೀಲಗಳಲ್ಲಿ ಸಂಗ್ರಹಿಸುವನು. ಚಕ್ಕಡಿಯಲ್ಲಿ ಮನೆಗೆ ಒಯ್ದು ವ್ಯವಸ್ಥೆಗೊಳಿಸುವನು. ಎಲ್ಲ ಧಾನ್ಯಗಳ ಲೆಕ್ಕಾಚಾರ ಮಾಡುವನು. ಜೋಳ ಇಷ್ಟಾ ಯಿತು. ಹೆಸರು, ಮಡಕೆ, ತೊಗರಿ, ಉದ್ದು, ಅಲಸಂದಿ ಇಷಿಷ್ಟಾದವು. ಭತ್ತ, ಗೋದಿ, ಕಡಲೆ ವಗೈರೆ ಕಾಳುಗಳು ಇಷ್ಟಿಷ್ಟಾದವು ಎಂದು ಎಲ್ಲವನ್ನು ಅಳೆದಳೆದು ಭಾಗ

ಮಾಡುವನು. ಇದುವೆ ಹಸಿಗೆಯೆನಿಸುವದು.

ಇದರಂತೆ ಬ್ರಹ್ಮಾಂಡವೆಂಬ ಜಗತ್ತಿನ ಕ್ಷೇತ್ರಕ್ಕೆ ಒಡೆಯನಾದ ಪರಶಿವನೆಂಬ ಮಹಾ ಒಕ್ಕಲಿಗನು- ಜಗತ್ತಿನ ನಿರ್ಮಾಣ ಮಾಡಿದನು. ಮೊಟ್ಟ ಮೊದಲು ತನ್ನ ಪಂಚಮುಖಗಳಿಂದ ಪಂಚಭೂತಗಳನ್ನು ನಿರ್ಮಿಸಿದನು. ಅವುಗಳ ತಾರತಮ್ಯದಿಂದ ಇಪ್ಪತ್ತೈದು ತತ್ತ್ವಗಳನ್ನು ಹುಟ್ಟಿಸಿ ಶರೀರ ರಚನೆಯೊಂದಿಗೆ ತನ್ನ ಗೋಪ್ಯಮುಖದಲ್ಲಿ ಆತ್ಮನನ್ನು ಸೃಜಿಸಿದನು. ಆ ಆತ್ಮನು ದೇಹವೆ ನಾನೆಂಬ ಭಾವದಿಂದ ತನ್ನ ನಿಜದರಿವನ್ನು ಮರೆಯುವನು. ಅಜ್ಞಾನಿಯಾಗಿ ಅನೇಕ ಜನ್ಮ-ಜನ್ಮಾಂತರಗಳನ್ನು ಹೊಂದುತ್ತಲಿರುವನು. ಪುಣ್ಯವಶದಿಂದ ದೇವತಾ ಜನ್ಮವನ್ನು, ಪಾಪದಿಂದ ಸ್ಥಾವರ ಜನ್ಮವನ್ನು ಪುಣ್ಯ-ಪಾಪಗಳ ಸಮ್ಮಿಶ್ರಣದಿಂದ ಮಾನವ ಜನ್ಮವನ್ನು ಪಡೆಯುವನೆಂದು ಅನುಭಾವಿಗಳು ನಿರೂಪಿಸುವುದುಂಟು. ಈ ಮಾನವ ಶರೀರದಲ್ಲಿಯೂ ಶಾರೀರಿಕ ಹಸಿಗೆಯನ್ನು ವಿವರಿಸುವದೇ ಈ ಕೃತಿಯ ಮೂಲ ಗುರಿಯಾಗಿದೆ.

 ಶಿವಶರಣರು ವೇದ-ಉಪನಿಷತ್ತುಗಳನ್ನು, ಆಗಮ-ತಂತ್ರಗಳನ್ನು, ಯೋಗ-ಪುರಾಣಗಳನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಅವರಲ್ಲಿ ಚನ್ನಬಸವಣ್ಣನವರು ಸಂಸ್ಕೃತ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಭ್ಯಾಸ ಮಾಡಿದವರು. ಈ ”ಕರಣ ಹಸಿಗೆ’ ಕೃತಿಯಲ್ಲಿ ವಿಜಯ ಭೈರವಾಗಮ’ದ ಉಲ್ಲೇಖ ಮಾಡಿದ್ದಾರೆ. ಈ ಆಗಮವು ಪಾರಮೇಶ್ವರಾಗಮದ ಶಾಖಾಗಮ ವಿಜಯ ಭೈರವಿ ಆಗಮ. ತಂತ್ರ ಸಂಗ್ರಹ ಹಾಗೂ ವಾತುಲ ಶುದ್ಧಾಗಮಬಗಳೂ ಈ ಕೃತಿಗೆ ಸಹಕಾರಿಯೆನ್ನಬಹುದು. ವೇದದ ಅಂತಿಮ ಭಾಗವಾದ ಉಪನಿಷತ್ ಪ್ರತಿಪಾದ್ಯ ವಿಷಯವೇ ವೇದಾಂತವೆನಿಸಿದೆ. ವೇದಾಂತದಲ್ಲಿಯೂ ಪಂಚೀಕರಣದ ವಿಚಾರ ಮಾಡಲಾಗಿದೆ. ದೇಹೋತ್ಪತ್ತಿಗೆ ಪಂಚೀ ಕರಣವೇ ಮುಖ್ಯ.  ಸಾ೦ಖ್ಯರು ಮೊಟ್ಟ ಮೊದಲು ತತ್ತ್ವಗಳನ್ನು ಪರಿಗಣಿಸಿದವರು. ೨೫ ತತ್ತ್ವಗಳನ್ನು ಪ್ರತಿಪಾದಿಸಿದವರು ಸಾಂಖ್ಯರು. ಅಹಂಕಾರ, ದಶನಾಡಿ, ದಶವಾಯು, ಪಂಚೀಕರಣ,ತ್ರಿಗುಣಗಳು,ತಾಪತ್ರಯ ಮುಂತಾದವುಗಳನ್ನು ವಿವರಿಸುವಲ್ಲಿ ಅತ್ಯಂತ ಪ್ರಾಚೀನ ಪರಂಪರೆ ಸಾಂಖ್ಯರಲ್ಲಿದೆ. ಆದರೆ ಸಾಂಖ್ಯರ ಪದ್ದತಿಗಿಂತ ʼಕರಣಹಸಿಗೆʼಯು ಭಿನ್ನವಾಗಿದೆಯೆಂಬುದನ್ನು ನೋ

ಪೂಜ್ಯ ಜಗದ್ಗುರು ಡಾ.ಶ್ರೀ ಸಿದ್ದರಾಮ ಸ್ವಾಮಿಗಳು ತೋಂಟದಾರ್ಯಮಠ  ಗದಗ

ಸಂಸಾರದ ಕಷ್ಟಕೋಟಲೆಗಳಲ್ಲಿ ಸಿಕ್ಕು ಘಾಸಿಯಾದ ಮನುಷ್ಯನು ಶಿವಪಥವನ್ನು ಅರಿತು ನಿತ್ಯಸುಖಿಯಾಗಬೇಕೆಂದು ಬಯಸುತ್ತಾನೆ. ಶಿವಪಥವೆಂದರೆ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ. ತಾನು ಶಿವನ ಅಂಗವಾದ ಆತ್ಮ ಎಂಬ ಜ್ಞಾನ

ಪಡೆದು ಪುನಃ ಶಿವನೊಂದಿಗೆ ಸಾಮರಸ್ಯ ಪಡೆಯುವುದು. ಇದುವೆ ಮೋಕ್ಷಮಾರ್ಗ. ಶಿವಪಥದಲ್ಲಿ ಮುನ್ನಡೆಯಬೇಕೆಂಬ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ(ಗುರುಪಥ)ದ ಆವಶ್ಯಕತೆ ಇದೆ.  ವೇದ, ಆಗಮ, ಶಾಸ್ತ್ರ, ಪುರಾಣಗಳು ಕಾಣಲರಿಯದ ಶಿವಪಥವನ್ನು

ಕಂಡವನು ಗುರುಮಾತ್ರ. ಶಿವಪಥವನ್ನು ತೋರಲು ಆತನೇ ಸಮರ್ಥ. ಗುರು ತನ್ನಲ್ಲಿರುವ ಅಪಾರ ಕರುಣೆಯಿಂದ ಮೋಕ್ಷಾಪೇಕ್ಷಿಯಾದ ವ್ಯಕ್ತಿಯ ಅಜ್ಞಾನವನ್ನು ಕಳೆದು ಸುಜ್ಞಾನಿಯಾಗಿಸುತ್ತಾನೆ. ಭವಿತನವನ್ನು ಕಳೆದು ಭಕ್ತನಾಗಿಸುತ್ತಾನೆ. ಹೀಗೆ

ಗುರುಕರುಣೆ ಪಡೆದ ಭಕ್ತನೆ ಶಿವಪಥಕ್ಕೆ ಅರ್ಹನಾಗುತ್ತಾನೆ.

 ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಗುರುವಿಗಿಂತ ಅಧಿಕವಾದುದು ಯಾವುದೂ ಇಲ್ಲ. ಗುರೋರಧಿಕಂ ನ ಗುರೋರಧಿಕಂ’ ಎಂಬುದು ಶೃತಿವಾಕ್ಯ. ‘ಗುರುದೈವಾತ್ಪರಂ ನಾಸ್ತಿ’ ಗುರುವಿಗಿಂತಲೂ ಶ್ರೇಷ್ಠನಾದ ದೇವರಿಲ್ಲ. ಅವನು ಬ್ರಹ್ಮನ್ನರಿತ ಪರಬ್ರಹ್ಮ. ನಿಜವನರಿದ ನಿಶ್ಚಿಂತ, ಅವನೇ ಶಿವಪಥದರ್ಶಕ. ಶಿಲೆಯೊಳಗಣ ಬೆಂಕಿಯಂತೆ, ಬೀಜದೊಳಗಣ ವೃಕ್ಷದಂತೆ ದೃಷ್ಟಿಗೆ ಅಗೋಚರನಾದ ಶಿವನನ್ನು ತೋರುವವನೇ ಶ್ರೀಗುರು. ಇಂಥ ಗುರುವಿನ  ಉಪದೇಶವನ್ನು ಹೊಂದಿದಾಗಲೇ ನರರಿಗೆ ಮುಕ್ತಿ. ಗುರುವಚನದಿಂದ ಅಂಗ ಮನ ಪ್ರಾಣಗಳು ಪರಿಶುದ್ಧವಾಗಿ ಸದ್ಭಕ್ತಿ ನೆಲೆಗೊಳ್ಳುವುದು. ಭವಪಾಶ ಹರಿದು ನಿಜಮುಕ್ತಿಯ ದರ್ಶನವಾಗುವುದು.

ಗುರೂಪದೇಶ, ಗುರುವಿನ ಮಾರ್ಗದರ್ಶನವಿಲ್ಲದೆ ಕೇವಲ ತಪಸ್ಸಿನಿಂದ ಮೋಕ್ಷವನ್ನು ಪಡೆಯಬೇಕೆಂಬ ಛಲದಿಂದ ಯುವಕ್ರೀತನೆಂಬ ಋಷಿಕುಮಾರ ಕಾಡಿಗೆ ತೆರಳಿದ. ಕಾಡಿನಲ್ಲಿ ಆಗಲೇ ತಪೋನಿರತರಾಗಿದ್ದ ಹಿರಿಯ ಋಷಿಮುನಿಗಳೆಲ್ಲರೂ

ಗುರೂಪದೇಶ ಹೊಂದಿ ಸಾಧನೆ ಮುಂದುವರಿಸಲು ಪರಿಪರಿಯಾಗಿ ಹೇಳಿದರೂ ಆತ ತನ್ನ ನಿರ್ಧಾರಕ್ಕೆ ಅಚಲನಾಗಿದ್ದ. ಒಂದು ದಿನ ಯುವಕ್ರೀತ ಗಂಗಾನದಿಯ ತೀರದಲ್ಲಿ ನಡೆದು ಹೋಗುವಾಗ ನದಿಯಲ್ಲಿ ಮಳಲನ್ನು (ಉಸುಕು) ಎಸೆಯುತ್ತ ಕುಳಿತಿದ್ದ ಮುದುಕನೊಬ್ಬನನ್ನು ಕಂಡ. ಆಶ್ಚರ್ಯಚಕಿತನಾಗಿ ‘ಎಷ್ಟು ದಿನಗಳಿಂದ ಹೀಗೆ ನದಿಯಲ್ಲಿ ಮಳಲನ್ನು ಎಸೆಯುತ್ತ ಕುಳಿತಿರುವೆ? ಮಳಲನ್ನು ನದಿಗೆ ಎಸೆಯುತ್ತಿರುವ ಕಾರಣವೇನು?’ ಎಂದು ಕೇಳಿದ. ಆಗ ಮುದುಕನು ‘ಕಳೆದ ಎಂಬತ್ತು ವರ್ಷಗಳಿಂದ ತುಂಬಿ ಹರಿಯುತ್ತಿರುವ ಈ ನದಿಗೆ ಮಳಲಿನಿಂದ ಸೇತುವೆ ನಿರ್ಮಿಸುತ್ತಿರುವೆ’ ಎಂದು ಉತ್ತರಿಸಿದ. ಅಯ್ಯಾ! ಎಂದಾದರೂ ಈ ಮಳಲಿನಿಂದ ಸೇತುವೆ ನಿರ್ಮಾಣ ಸಾಧ್ಯವೇ? ವ್ಯರ್ಥವಾಗಿ ಸಮಯವನ್ನೇಕೆ ಕಳೆಯುತ್ತಿರುವೆ! ಎಂದು ಯುವಕ್ರೀತ ಮರಳಿ ಮುದುಕನನ್ನು ಪ್ರಶ್ನಿಸಿದ. ಪ್ರಶಾಂತ ಮುದ್ರೆಯಲ್ಲಿದ್ದ ಆ ಮುದುಕ ‘ಅಪ್ಪಾ ಯುವಕ್ರೀತ! ಗುರೂಪದೇಶ, ಗುರುಕರುಣೆ, ಗುರುವಿನ

ಮಾರ್ಗದರ್ಶನವಿಲ್ಲದೆ ನೀನು ಮೋಕ್ಷವನ್ನು ಸಂಪಾದಿಸುವುದಾದರೆ ಈ ಹಿಡಿ ಮಳಲಿನಿಂದ ಜನ ಸಂಚಾರಕ್ಕೆ ಸೇತುವೆ ನಿರ್ಮಾಣವೂ ಸಾಧ್ಯ’ ಎಂದು ಉತ್ತರಿಸಿದಾಗ ತನ್ನ ತಪ್ಪಿನ ಅರಿವಾಗಿ ಶಿವಜ್ಞಾನ ಸಿದ್ಧಿಯುಳ್ಳ ಗುರುವಿನಿಂದ ಶಿವಪಥವನ್ನರಿಯುತ್ತಾನೆ.

 ಅಧ್ಯಾತ್ಮ ಸಿದ್ಧಿಯನ್ನು ಪಡೆದ, ನಿಜದ ನಿಲವನ್ನರಿತ, ಅಪಾರ ಕರುಣೆಯುಳ್ಳ ಗುರುವಿನ ಮಾರ್ಗದರ್ಶನದಲ್ಲಿ ಮಾತ್ರ ಶಿವಪಥದ ಅರಿವು ಸಾಧ್ಯವಾಗುವುದು. ಅಂತೆಯೇ ಬಸವಣ್ಣನವರು ‘ಶಿವಪಥ ಅರಿವೊಡೆ ಗುರುಪಥ ಮೊದಲು’ ಎಂದು ಹೇಳಿರುವುದು. ಆದ್ದರಿಂದ ಮೋಕ್ಷಾಪೇಕ್ಷಿಯಾದ ಮನುಷ್ಯನು ಶ್ರದ್ಧೆಯಿಂದ, ಕಿಂಕರಭಾವದಿಂದ ಗುರುಸೇವೆ ಮಾಡಿ ಗುರುಕರುಣೆ, ಗುರುಪಥ ಹೊಂದುವುದೇ ಸೂಕ್ತ.

ಕರಣ ಹಸಿಗೆ ಅರ್ಥಾತ್ ದೇಹಾತ್ಮ ವಿಜ್ಞಾನ

ಲೇಖಕರು ಡಾ.ಸ. ಜ. ನಾಗಲೋಟಿಮಠ

MBBS.DCP.MD.FIC Path.

President Karnataka Rajya Vijnan Parishat.

Chairman Indian College of Pathologists

ಇದರಲ್ಲಿ ಚೆನ್ನಬಸವಣ್ಣನವರು ಹಲವಾರು ಸಂಗತಿಗಳನ್ನು ವಿವರಿಸಿದ್ದಾರೆ. ಜಗತ್ತಿನಲ್ಲಿ ಮೊಟ್ಟ ಮೊದಲು ಹುಟ್ಟಿದ್ದು ಪ್ರಣವ; ಅದು ಓಂಕಾರ. ಓಂಕಾರದಿಂದ ಜನ್ಮತಾಳಿದ್ದು ಎಂದರೆ ಪಂಚಮಹಾಭೂತಗಳು ಭಾರತೀಯರಾದ ನಾವು ಇದನ್ನು ನಂಬುತ್ತೇವೆ. ಪಂಚಮಹಾಭೂತಗಳೆಂದರೆ ಪೃಥ್ವಿ, ಅಪ್, ತೇಜ, ವಾಯು ಹಾಗೂ ಆಕಾಶ, ಈ ಪಂಚಭೂತಗಳನ್ನು ಬೇರೆ ದೇಶದವರು, ಸಂಸ್ಕೃತಿಯವರು ಮಾನ್ಯ ಮಾಡಿದಂತಿಲ್ಲ. ಈ ಸಂಗತಿಯನ್ನು ಭಾರತೀಯ ವಿಜ್ಞಾನಿಗಳು ಒರೆಗೆ ಹಚ್ಚಿ ಸ್ಪಷ್ಟ ಪಡಿಸಬೇಕು. ಜೀವ ಜಗತ್ತು ಹುಟ್ಟಿದುದು ಪಂಚಮಹಾಭೂತಗಳಿಂದ ಎಂದು ವರ್ಣಿಸುತ್ತೇವೆ. ಇದನ್ನೂ ಸಹ ಸಂಶೋಧಿಸಿ ಜಗತ್ತಿನ ವಿಜ್ಞಾನಿಗಳಿಗೆ ವಿವರಿಸಬೇಕು. ಓಂಕಾರವಾಗಲಿ, ಪಂಚ ಮಹಾಭೂತಗಳಾಗಿ ಸುಳ್ಳು ಎಂದು ಹೇಳಲು ಬರುವದಿಲ್ಲ. ಯಾಕಂದರೆ ಮುಂದೆ ವರ್ಣಿಸಲ್ಪಡುವ ಪಿಂಡಸ್ಥಲದಲ್ಲಿಯ ವಿವರಣೆ ಎಷ್ಟು ಖಚಿತವಾಗಿದೆ ಎಂದರೆ ಅಚ್ಚರಿ ಎನಿಸುತ್ತದೆ. ಬರಿಗಣ್ಣಿಗೆ ಕಾಣಲು ಸಾಧ್ಯವಿರದ ವಸ್ತುಗಳನ್ನು ಕರಾರುವಕ್ಕಾಗಿ ವರ್ಣಿಸಿದ್ದಾರೆ. ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಬೆಳವಣಿಗೆಯನ್ನು ದಿನದಿನಕ್ಕೆ ವಾರದಿಂದ ವಾರಕ್ಕೆ ವಿವರಿಸಿದ್ದಾರೆ. ಪ್ರಥಮ ದಿನದಿಂದ ಪ್ರಾರಂಭಿಸಿ ಪ್ರಸವವಾಗುವವರೆಗೆ ಸರಿಯಾಗಿ ವರ್ಣನೆ ಬರುತ್ತದೆ. ಇಂದಿನ ವೈದ್ಯಶಾಸ್ತ್ರದ ವಿವರಗಳು ಹಾಗೂ ಕರಣ ಹಸಿಗೆಯಲ್ಲಿ ಉಲ್ಲೇಖಿತ ಸಂಗತಿಗಳು ಒಂದೇ ಆಗಿವೆ. (ಈ ವಿವರಗಳು ನಮಗೆ ದೊರೆಯುವದು ವಿರುಪಾಕ್ಷ ಪಂಡಿತರು ಬರೆದ ಚೆನ್ನಬಸವ ಪುರಾಣದಲ್ಲಿ )ಈ ಸಂಗತಿಗಳು ನಮ್ಮ ಜನರಿಗೆ ತಿಳಿಯಲೆಂದು  ನಾನು ಕೆಲವು ಮೆಡಿಕಲ್ ಕಾಲೇಜುಗಳ ಪ್ರಸವ ವಿಭಾಗಗಳಲ್ಲಿ ಇವನ್ನು ಬರೆಸಿ ತೂಗುಬಿಟ್ಟಿದ್ದೆ.  ಗ್ರಂಥದಲ್ಲಿ ಹೇಳಲ್ಪಡುವ ವಿಷ್ಣುವಾಯು ಹಾಗೂ ಸೂತಿಕಾವಾಯುಗಳು ಸತ್ಯವೇ ? ಎಂಬುದು ಚರ್ಚಿಸಲ್ಪಡಬೇಕು. ಇದಾಗಿಲ್ಲ, ಇದೆಲ್ಲ ಜರುಗಬೇಕಾಗಿದೆ. ನಮ್ಮ ವೈದ್ಯವಿಜ್ಞಾನಿಗಳು ಸಂಶೋಧಿಸಬೇಕು. ಇನ್ನೂ ಮುಂದೆ ಹೋಗಿ ಕರಣ ಹಸಿಗೆಯಲ್ಲಿ ಸಂಭೋಗದ ವೇಳೆ ದಿನಗಳ ಆಧಾರದ ಮೇಲೆ ಹುಟ್ಟುವ ಕೂಸಿನಲ್ಲಿ ಗುಣಗಳು ಮೂಡುತ್ತವೆ ಎನ್ನುತ್ತಾ, ಹುಟ್ಟುವ ಮಗುವಿನ ಲಿಂಗ ನಿರ್ಣಯಿಸಲ್ಪಡುತ್ತದೆ ಎನ್ನುತ್ತಾರೆ. ಇಂಥ ಸಂಗತಿಗಳನ್ನು ನಾವು ವಿಚಾರಿಸಬೇಕು. ಗರ್ಭದಲ್ಲಿಯ ಕೂಸಿಗೆ ಕಿವಿ ಕೇಳುವದು ಎಂದಿನಿಂದ ಎಂಬ ಪ್ರಶ್ನೆಗೆ ಇಲ್ಲಿ ಸೂಚನೆ ಇದೆ. ನಾವು ಅದನ್ನು ನಿರ್ಲಕ್ಷಿಸಿ ಬಿಟ್ಟೆವು. ಈ ಸಂಗತಿಯನ್ನು ಖಚಿತಗೊಳಿಸಲು ಬ್ರಿಟೀಷ ವೈದ್ಯ ವಿಜ್ಞಾನಿಗಳು ಮಾನವ ಪ್ರಯೋಗಗಳನ್ನು ನಡೆಸಿದರು. ಆರು ತಿಂಗಳ ಗರ್ಭವಾದಾಗ ಗರ್ಭದಲ್ಲಿರುವ ಶಿಶುವಿಗೆ ಕಿವಿ ಕೇಳಿಸುತ್ತದೆ ಎಂದು ಜಗತ್ತಿಗೆ ತೋರಿಸಿದರು.    ಇಂಥ ಘಟನೆಗಳು ನಮ್ಮನ್ನು ಬಡಿದೆಬ್ಬಿಸಬೇಕಾಗಿದೆ. ಮೂಲ ಕರಣ ಹಸಿಗೆ ಓದಲು ಸುಲಭವೆನಿಸುತ್ತಿರಲಿಲ್ಲ. ಮುಂಡರಗಿಯ ಸನ್ನಿಧಿಯವರು ಈ  ಗ್ರಂಥವನ್ನು ಬರೆದು ವಿಜ್ಞಾನಿಗಳಿಗೆ ಸಂಶೋಧನೆಯ ಮಹಾದ್ವಾರವನ್ನೇ ತೆರೆದಿದ್ದಾರೆ. ಮುಂದಿನ ಕಾರ್ಯವನ್ನು ವೈದ್ಯರೂ ವಿಜ್ಞಾನಿಗಳೂ ಎತ್ತಿಕೊಳ್ಳಬೇಕು.

ಕರಣಹಸಿಗೆ ಕೇವಲ ಧರ್ಮ ಗ್ರಂಥವಲ್ಲ ಅದು ವೀರಶೈವರಿಗೆ ಅವರ ತತ್ವಗಳನ್ನು ತಿಳಿಸುವ ಗ್ರಂಥವಲ್ಲ. ಇದು ವೈಜ್ಞಾನಿಕ ಗ್ರಂಥ. ಇಡೀ ಜಗತ್ತಿನ ಜನರು ಪಠಣ ಮಾಡುವ ಗ್ರಂಥ ಸಂಶೋಧನೆಗಳ ಬೀಜಗಳಿಂದ ಕೂಡಿ ಇಟ್ಟಿರುವ ಕಣಜವಾಗಿದೆ.

ಈ ಪುಸ್ತಕವನ್ನು ವಿರಕ್ತಸ್ವಾಮಿಗಳ ಬೆನ್ನಿಗೆ ಕಟ್ಟುವ ಪದ್ಧತಿ ಇದೆ. ಅದನ್ನು ಮುಂದುವರೆಸುವದಲ್ಲದೆ ವೈದ್ಯವಿಜ್ಞಾನಿಗಳ ಬೆನ್ನಿಗೆ ಕಟ್ಟಬೇಕೆಂಬುದು ನನ್ನ ಅನಿಸಿಕೆ.

ಲೇಖಕರು :ಷಣ್ಮುಖಯ್ಯ ಅಕ್ಕೂರಮಠ

(ಷಣ್ಮುಗಯ್ಯ ಅಕ್ಕೂರಮಠ ಅವರು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಬೂದಿಹಾಳ ಗ್ರಾಮದಲ್ಲಿ 1939 ಆಗಸ್ಟ್‌ 23ರಂದು ಜನಿಸಿದರು. ತಂದೆ ವೀರಪ್ಪಯ್ಯ ಶಾಸ್ತ್ರಿ ಅಕ್ಕೂರಮಠ, ತಾಯಿ ಬಸವಲಿಂಗಾಂಬೆ. ಸಂಸ್ಕೃತದಲ್ಲಿ ಅಪಾರ ಆಸಕ್ತಿ ತಳೆದಿದ್ದರು. ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ, ತರ್ಕ ಮೊದಲಾದ ವಿಷಯಗಳ ಅಧ್ಯಯನ ಮಾಡಿದರು. ಸ್ನಾತಕೋತ್ತರ ಪದವೀಧರರು. 1970ರಲ್ಲಿ ಪ್ರಯಾಗ ವಿಶ್ವವಿದ್ಯಾನಿಲಯದ (ಉತ್ತರ ಪ್ರದೇಶ)ದಿಂದ ಸಾಹಿತ್ಯರತ್ನವನ್ನೂ ಪಡೆದರು. 1983ರಲ್ಲಿ ಮೈಸೂರು ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ಬಿ.ಎಡ್., ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.

ಆರೂಢ ಸಂಪ್ರದಾಯದ ಸದ್ಗುರು ಬಾಬಾ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ, ಶ್ರೀಮತಿ ಶಾಂತ ಶ್ರೀ ಬಿ.ವಿ. ಗೌಡ ಫೌಂಡೇಶನ್‍ನಿಂದ ಪಂಚಾಚಾರ್ಯ ಪ್ರಶಸ್ತಿ, ಶಿವಲಿಂಗ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಶಕುಂತಳ ಜಯದೇವ ಶರಣ ಪ್ರಶಸ್ತಿ, ಕಾಶಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನದಿಂದ `ಸಾಹಿತ್ಯ ವಿಶಾರದ’ ಹಾಗೂ `ಆರ್ಯಭಟ’ ಪ್ರಶಸ್ತಿಗಳು ಸಂದಿವೆ.)

ಭಾರತೀಯ ತತ್ತ್ವಶಾಸ್ತ್ರಚಿಂತನೆಯ ಹಾದಿಯಲ್ಲಿ ಜೀವಾತ್ಮ-ಪರಮಾತ್ಮರ ಸ್ವರೂಪ ಸಂಬಂಧಗಳ ಬಗೆಗೆ ಪ್ರಾಚೀನ ಕಾಲದಿಂದಲೂ ಜಿಜ್ಞಾಸೆ ನಡೆದು ಬಂದಿದೆ. ದಾರ್ಶನಿಕರ ಅಭಿಪ್ರಾಯಗಳೂ ಬೇರೆ ಬೇರೆಯಾಗಿವೆ.

ಅದ್ವೈತಿಗಳು-ಜೀವಾತ್ಮ-ಪರಮಾತ್ಮ ಬೇರೆ ಅಲ್ಲ; ‘ಸರ್ವಂ ಖಲ್ವಿದಂ ಬ್ರಹ್ಮ’ ಎಂದು ಬ್ರಹ್ಮತತ್ತ್ವವೊಂದನ್ನೇ ಒಪ್ಪುತ್ತಾರೆ. ದ್ವೈತಿಗಳು-ಜೀವಾತ್ಮ ಪರಮಾತ್ಮರಲ್ಲಿ, ಜೀವ-ಜೀವರಲ್ಲಿ ಭೇದವಿದೆ ಎಂದು ಮನ್ನಿಸುತ್ತಾರೆ. ವಿಶಿಷ್ಟಾದ್ವೈತಿಗಳು ಚಿತ್- ಆಚಿತ್-ಈಶ್ವರ ಎಂಬುದಾಗಿ ಮೂರು ತತ್ತ್ವಗಳಿವೆ ಎಂದು ಹೇಳುತ್ತಾ ಇವು, ಪ್ರತ್ಯೇಕವಾಗಿಲ್ಲ; ದಾಳಿಂಬ ಹಣ್ಣಿನ ಕಾಳಿನಂತೆ ಈಶ್ವರನಲ್ಲಿ ಸೇರಿವೆ. ಪರಮಾತ್ಮ ಒಂದೇ ಆಗಿದೆ, ಎಂದು ಸಮನ್ವಯಗೊಳಿಸುತ್ತಾರೆ. ಬೌದ್ಧ ದಾರ್ಶನಿಕರಲ್ಲಿ ಜೀವಾತ್ಮ-ಪರಮಾತ್ಮ ಶಬ್ದಗಳ ಪ್ರಯೋಗವಿಲ್ಲ. ಬುದ್ಧನದು ಅನಾತ್ಮವಾದ. ದೇವರ ಕಲ್ಪನೆ ಇಲ್ಲ. ಜೈನ ದಾರ್ಶನಿಕರು-ಮೂರು ಪ್ರಕಾರದ ಆತ್ಮಗಳನ್ನು ಒಪ್ಪುತ್ತಾರೆ. ಆದರೆ ಪ್ರತ್ಯೇಕ ಪರಮಾತ್ಮನ ಕಲ್ಪನೆ ಇಲ್ಲ. ಲೋಕಾಯುತ (ಚಾರ್ವಾಕ) ದರ್ಶನದಲ್ಲಿ ಆತ್ಮ-ಪರಮಾತ್ಮರ ವಿಚಾರವೇ ಇಲ್ಲ, ಮೀಮಾಂಸಕರ ಪ್ರಕಾರ ಆತ್ಮಗಳು ಆನೇಕ. ಆದರೆ, ಅವರಿಗೆ ದೇವರಲ್ಲಿ ನಂಬಿಕೆ ಇಲ್ಲ.

ವೀರಶೈವ (ಶಕ್ತಿ ವಿಶಿಷ್ಟಾದ್ವೈತ) ದಾರ್ಶನಿಕರು ಪರಶಿವನಿಗೆ ‘ಶಿವ’ ‘ಲಿಂಗ’ ‘ಸ್ಥಲ’ವೆಂಬ ಪದಗಳಿಂದ ಕರೆದಿದ್ದಾರೆ. ಜೀವಾತ್ಮನಿಗೆ ‘ಅಂಗ’ ವೆಂಬ ವಿಶಿಷ್ಟ ಪದ ಪ್ರಯೋಗ ಮಾಡಿದ್ದಾರೆ. ಹೀಗೆ ದಾರ್ಶನಿಕರಲ್ಲಿ ಜೀವಾತ್ಮ-ಪರಮಾತ್ಮರ ಬಗೆಗೆ ವಿಭಿನ್ನ ವಿಚಾರಗಳಿದ್ದರೂ, ಎಲ್ಲ ಧರ್ಮಗಳ ಧೈಯ ಆತ್ಮ-ಪರಮಾತ್ಮರ ಏಕತೆ. ಜೀವ-ದೇವನಾಗುವ, ಮಹೋನ್ನತ ನಿಲುವನ್ನೇ ಸಾರುತ್ತವೆ. ವೀರಶೈವ ದಾರ್ಶನಿಕರು ಪರವಸ್ತುವಿನ (ಲಿಂಗ) ಒಂದು ಅಂಶವಾಗಿರುವ ಜೀವಾತ್ಮ (ಅಂಗ) ಶಿವಯೋಗ ಸಾಧನೆಯ ಮೂಲಕ ಷಟ್‌ಸ್ಥಲದ ಮಾರ್ಗದಲ್ಲಿ ಕ್ರಮಿಸಿ, ಮತ್ತೆ ಅಂಗ-ಲಿಂಗದಲ್ಲಿ ಒಂದಾಗುವುದು. ಇದು, ವೀರಶೈವ ಪರಿಭಾಷೆಯಲ್ಲಿ ಲಿಂಗಾಂಗ ಸಾಮರಸ್ಯ’, ‘ಬಯಲು’, ‘ಶೂನ್ಯ’ ಎನ್ನುವ ಪದಗಳಿಂದಲೂ ಕರೆಯುತ್ತಾರೆ. ಲಿಂಗಾಂಗ ಸಾಮರಸ್ಯವೇ ವೀರಶೈವ ಸಿದ್ಧಾಂತದ ಪರಮ ಧೈಯ’.

ಜಾಗತಿಕ ಧರ್ಮಗಳು ಜೀವ-ದೇವನಾಗುವ ಪರಿಯನ್ನು ವಿವರಿಸುತ್ತವೆ. ವೀರಶೈವದ ಉದ್ದೇಶವೂ ಇದೇ ಆಗಿದೆ. ವೀರಶೈವ ಧರ್ಮ-ಪ್ರಾಚೀನ ಶೈವ ಧರ್ಮ ಮಹಾವೃಕ್ಷದ ಪ್ರಧಾನ ಶಾಖೆಯಾಗಿದೆ. ಆಚಾರ ಭೇದ ಹಾಗೂ ಅನುಭವ ಭೇದಗಳಿಂದಾಗಿ ಅನಾದಿಶೈವ, ಆದಿಶೈವ, ಅನುಶೈವ, ಮಹಾಶೈವ, ಯೋಗಶೈವ, ಜ್ಞಾನಶೈವ, ವೀರಶೈವ ಎಂಬ ಏಳು ಪ್ರಭೇದಗಳನ್ನು ಶಿವಾಗಮಗಳು ವಿವರಿಸುತ್ತವೆ.

 ಭಾರತೀಯ ಅಧ್ಯಾತ್ಮ ಚಿಂತನೆಯ ಪರಂಪರೆಯಲ್ಲಿ ಲಿಂಗ-ಅಂಗಗಳ ಪರಿಕಲ್ಪನೆ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಉಪನಿಷತ್ತುಗಳಲ್ಲಿ ಜೀವಾತ್ಮ-ಪರಮಾತ್ಮ ಬ್ರಹ್ಮ ಎನ್ನುವ ಪದಗಳ ಪ್ರಯೋಗವಿದೆ. ಭಾರತೀಯ ತತ್ತ್ವಶಾಸ್ತ್ರದ ಸೌಧಕ್ಕೆ ಜೀವಾತ್ಮ-ಪರಮಾತ್ಮ ಎಂಬ ಎರಡು ಆಧಾರ ಸ್ಥಂಭಗಳಾದಂತೆ, ವೀರಶೈವ ಸಿದ್ಧಾಂತಕ್ಕೆ ಅಂಗ-ಲಿಂಗ ತತ್ತ್ವಗಳು ಅಡಿಗಲ್ಲು ಗಳಾಗುತ್ತವೆ.

ಲಿಂಗದ ಪರಿಕಲ್ಪನೆ :

 “ಲಿಂಗ’ ಪದ ವೀರಶೈವ ಧರ್ಮದಲ್ಲಿ ವಿಸ್ತಾರವಾದ ಅರ್ಥವನ್ನೊಳಗೊಂಡಿರುತ್ತದೆ. ‘ಲಿಂಗ’ ವೀರಶೈವ ಧರ್ಮದ ಕೇಂದ್ರ ಬಿಂದು ಆರಾಧ್ಯ ದೈವ, ಲಿಂಗಕ್ಕೆ, ಪರತತ್ತ್ವ, ಪರಶಿವ, ಪರಶಿವನ ಒಂದು ಸಂಕೇತ. ಇತ್ಯಾದಿ- ಅರ್ಥಗಳಿವೆ. (ವೀ.ಪಾ.ಪ.ಕೋ.ಶ.ಪು.೪೪೮) ಲೀನಮರ್ಥಂಗಮಯತಿ ಇತಿಲಿಂಗಂ’ʼ ಎನ್ನುವ ವ್ಯುತ್ಪತ್ತಗನುಗುಣವಾಗಿ, ಈ ಪ್ರಪಂಚ ಯಾವುದರಿಂದ ಸೃಷ್ಟಿಯಾಗಿ, ರಕ್ಷಿತವಾಗಿ ಪುನಃ ಯಾವುದರಲ್ಲಿ ಲಯವಾಗುವುದೋ ಅಂತಹ ಸರ್ವಾಧಾರವಾದ ವಸ್ತುವೇ ಲಿಂಗ.  ‘ಯತೋವಾ ಇಮಾನಿ ಭೂತಾನಿ

ಜಾಯಂತೇ’ ಎನ್ನುವ ತೈತ್ತರೀಯ ಉಪನಿಷತ್ತು ಇದೇ ಅರ್ಥವನ್ನು ಸೃಷ್ಟಿಕರಿಸುತ್ತದೆ. ‘ಲಿಂಗಂ ತದ್ಬ್ರಹ್ಮ ಶಾಶ್ವತಂ’  ‘ಲಿಂಗಂ ಬ್ರಹ್ಮ ಸನಾತನಂ’ ಎನ್ನುವ ವಾಕ್ಯಗಳು, ‘ಲಿಂಗ’ ವನ್ನು ಶಿವನೆಂದೂ, ಬ್ರಹ್ಮನೆಂದು ಕರೆಯುತ್ತವೆ. ‘ಶೇತೇ ಅಸ್ಮಿನ್ ಸರ್ವಮಿತಿ ಶಿವಃ’ ಎನ್ನುವ ನಿರುಕ್ತಿಯು, ಚರಾಚರ ಜಗತ್ತೆಲ್ಲ-ಇವನಲ್ಲಿ  ಅಡಗಿರುವುದರಿಂದ ಶಿವನೆಂದು ಹೆಸರಾಗಿದೆ.

ಲೀಯತೆ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |

ತಸ್ಮಾಲ್ಲಿಂಗಂ ಪರಂ ಬ್ರಹ್ಮ ಕಾರಣಂ ನಿತ್ಯಮವ್ಯಯಂ ||

ಎಂದು ಸಿದ್ಧಾಂತ ಶಿಖಾಮಣಿ ಮೇಲಿನ ವಿಷಯವನ್ನೇ ಸಮರ್ಥಿಸುತ್ತದೆ.

ಶಿವ ಏವ ಸ್ವಯಂ ಲಿಂಗಂ ಇತಿ ಲಿಂಗಸ್ಯ ವೈಭವಮ್ (ಅನುಭವ ಸೂತ್ರ ೩-೭)

ಶಿವನೇ ಸ್ವಯಂ ಲಿಂಗವೆಂದು ಅನುಭವಸೂತ್ರ ತಿಳಿಸುತ್ತದೆ.

ಆಕಾಶಂ ಲಿಂಗ ಮಿತ್ಯಾಹುಃ ಪೃಥ್ವೀ ತಸ್ಯ ಪೀಠಿಕಾ |

ಆಲಯಂ ಸರ್ವಭೂತಾನಾಂ, ಲಯನಾ ಲಿಂಗಮುಚ್ಯತೇ ||   (ಚಂದ್ರಜ್ಞಾನಾಗಮ ಕ್ರಿಯಾಪಾದ, ೩೫೧)

ವಿಶಾಲವಾದ ಆಕಾಶವೇ ಲಿಂಗ, ವಿಸ್ತಾರವಾದ ಭೂಮಿ ಪೀಠಿಕೆ, ಜಗತ್ತಿಗೆ ಆಧಾರವಾಗಿ ಆಲಯವಾಗಿದೆ ಎನ್ನುವ ಲಿಂಗದ ಸ್ವರೂಪ ಕಲ್ಪನೆ ಆಗಮದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಲಿಂಗದ ವಿರಾಟ್ ಸ್ವರೂಪವನ್ನು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ ;

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ

ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ

ಅಗಮ್ಯ, ಅಗೋಚರ ಅಪ್ರತಿಮ ಲಿಂಗವೇ ಕೂಡಲಸಂಗಮದೇವಯ್ಯ

ಎನ್ನ ಕರಸ್ಥಲಕ್ಕೆ ಬಂದು, ಚುಳುಕಾದಿರಯ್ಯ

ಎನ್ನುತ್ತಾರೆ. ವೀರಶೈವ ಧಾರ್ಮಿಕ ಸಾಹಿತ್ಯದಲ್ಲಿ ಲಿಂಗದ ಪರಿಕಲ್ಪನೆ ಮಹೋನ್ನತವಾಗಿದೆ. ಲಿಂಗವನ್ನು ಶರೀರದಲ್ಲಿ ಧರಿಸಿ, ಕರಪೀಠದಲ್ಲಿ ಅರ್ಚಿಸಬೇಕೆಂಬ ವಿಶೇಷ ನಿಯಮವಿದೆ. ಲಿಂಗವು ಸ್ಥಾವರ, ಇಷ್ಟಲಿಂಗವೆಂದು ಎರಡು ವಿಧ. ದೇವಾಲಯಗಳಲ್ಲಿ ಸ್ಥಾಪಿತವಾದ ಲಿಂಗ ಸ್ಥಾವರ, ಗುರುಗಳಿಂದ ದೀಕ್ಷೆ ಪಡೆದು ಶರೀರದ ಮೇಲೆ ಧರಿಸುವುದು ಇಷ್ಟಲಿಂಗ. ಸ್ಥಾವರಲಿಂಗವನ್ನು ಅನೇಕರು ಸಾಮೂಹಿಕವಾಗಿ ಪೂಜಿಸಬಹುದು; ಆದರೆ ಇಷ್ಟಲಿಂಗವನ್ನು ಯಾವ ಸಾಧಕನು ಧರಿಸುತ್ತಾನೋ ಆತನು ಮರಣ ಪರ್ಯಂತ ನಿತ್ಯವೂ ಪೂಜಿಸಬೇಕೆಂಬ ನಿಯಮವಿದೆ. ಸಾಧಕನ ದೇಹ ತ್ಯಾಗದ ನಂತರವೂ ಲಿಂಗ ಅವನೊಡನೆ ವಿಲೀನವಾಗುತ್ತದೆ. ಆದ್ದರಿಂದ ಇದು ಇಷ್ಟಲಿಂಗ. ಈ ಲಿಂಗ ಪೂಜಾ ವ್ರತವನ್ನು ಶಾಂಭವ ವ್ರತ, ಪಾಶುಪತ ವ್ರತ, ಶಿರೋವ್ರತವೆಂದು, ಆಗಮಗಳು ಬಣ್ಣಿಸುತ್ತವೆ.

ಅಂಗದ ಪರಿಕಲ್ಪನೆ : 

ವೀರಶೈವರಲ್ಲಿ ಜೀವಾತ್ಮ ಎಂಬ ಪದಕ್ಕೆ ಪರ್ಯಾಯವಾಗಿ- ‘ಅಂಗ’ ಪದ ಪ್ರಯೋಗವಾಗಿದೆ. ಶ್ರೀ ಗುರುವಿನಿಂದ ದೀಕ್ಷೆಯನ್ನು ಪಡೆದು ಪರಿಶುದ್ಧ ಜೀವ ಎಂದೂ, ‘ಅಂ’ ಎಂದರೆ ಪರಶಿವಲಿಂಗ, ‘ಗಂ’ ಎಂದರೆ- ಗಮಿಸಲು, ಹೊಂದಲು, ಸನ್ನದ್ಧವಾದ ಜೀವ ಎಂದೂ-

ಅಮಿತಿ ಬ್ರಹ್ಮ ಸನ್ಮಾತ್ರಂ ಗಚ್ಛತೀತಿ ಗಮುಚ್ಛ್ಯತ”   (ಅನುಭವ ಸೂತ್ರ)

ಅಂಗವು, ಲಿಂಗದೆಡೆಗೆ ಸಾಗುವ ತತ್ತ್ವ. ಇದು ಅಂಗದ ನಿರುಕ್ತಿ ತನ್ನೊಳಗಿರುವ ಲಿಂಗಕ್ಕೆ ಅಂಗವಾಗುವ ಕಾರಣ ಅಂಗನೆಂಬ ನಾಮ’ ಮೂಲ ಚಿನ್ನವಿದ್ದಂತೆ ಲಿಂಗ, ಆ ಚಿನ್ನದಿಂದಾದ ಆಭರಣ ಅಂಗ. ನಾಮರೂಪಗಳು ಅಳಿದರೆ ಅಂಗವೇ ಲಿಂಗ ಇತ್ಯಾದಿ, ಅಂಗ ಶಬ್ದಕ್ಕೆ ದಾರ್ಶನಿಕರು ಶರಣರು, ಅತ್ಯಂತ ಮೌಲಿಕವಾದ ಅರ್ಥ ವಿವರಣೆ ನೀಡಿದ್ದಾರೆ. ʼಅಜ್ಞಾನದಿಂದ ಆವೃತವಾದ ಜೀವ

ಎಚ್ಚರಗೊಂಡು-ಅಧ್ಯಾತ್ಮಿಕ ಜಾಗೃತಿಯಿಂದ ಮುಮುಕ್ಷುವಾಗಿ ‘ಅಂಗ’ ಎನಿಸಿಕೊಳ್ಳುತ್ತಾನೆ ಎನ್ನುವ ಉದಾತ್ತ ಕಲ್ಪನೆ ಇದೆ.

ಇನ್ನು ವೀರಶೈವ ಪಾರಿಭಾಷಿಕ ಪದಕೋಶದಲ್ಲಿ ಅಂಗ ಶಬ್ದಕ್ಕೆ ಒಡಲು, ದೇಹ, ದೀಕ್ಷೆ ಹೊಂದಿದ ದೇಹ, ದೇಹದ ಒಂದು ಭಾಗ, ಅವಯವ, ಶಿವಾಂಶವುಳ್ಳ ಚೇತನ, ಶುದ್ಧ ಜೀವಾತ್ಮ ಇತ್ಯಾದಿ ಅರ್ಥಚ್ಛಾಯೆಗಳಿವೆ. ಆದರೂ ಅಂಗ, ಬರೀ ದೇಹವಲ್ಲ, ಬರೀ ಜೀವಾತ್ಮನಲ್ಲ, ದೇಹಾತ್ಮ ಅಥವಾ ಅಂಗವೆನ್ನುವುದೇ ಸೂಕ್ತವಾಗಿ ಕಾಣುತ್ತದೆ. ದೇಹ, ಜೀವಾತ್ಮಎನ್ನುವ ಅರ್ಥಗಳಿದ್ದರೂ ಅವು ಬೇರೆ-ಬೇರೆ ಅಲ್ಲ ʼʼಲಿಂಗವೆಂದರೆ ಶಿವ, ಅಂಗವೆಂದರೆ ಜೀವ, ಜೀವನಿಗೆ ಅಧಿಷ್ಠಾನವಾದ ದೇಹ-ಜೀವನಿರುವಷ್ಟು ಕಾಲ ಈ ದೇಹವೂ ಶಿವ, ಅವನಿಲ್ಲದಾಗ ಬರೀ ಶವ” ಎನ್ನುವ ಅನುಭವಿಗಳ ಮಾತು ಸತ್ಯ. ದೇಹ, ಪ್ರಸಾದ ಕಾಯ, ಚೈತನ್ಯದ ದೇಗುಲ ಅದು ಬೇರೆ ಅಲ್ಲ. ಒಂದೆಡೆ, ದೇಹಾತ್ಮ ವಿಚಾರವಾಗಿ ಓಷೋ ಹೇಳುತ್ತಾರೆ.

“Do not divide them. They are not two. They are already one. They have always been one. Where the energy becomes conscious it is the soul. When it becomes unconscious it becomes the body…… Body and conscious are two poles of one phenomenon”.

(The great challenge p. 167)

ಈ ವಿವರಣೆಯನ್ನು ಗಮನಿಸಿದರೆ, ವೀರಶೈವ ದಾರ್ಶನಿಕರು ದೇಹಾತ್ಮನಿಗೆ ‘ಅಂಗ’ ವೆಂದೂ ಕರೆದಿರುವುದು ಅರ್ಥಪೂರ್ಣ ಎನಿಸುತ್ತದೆ. ಕಾರಣ ಮಾನವ ದೇಹದಲ್ಲಿ ಬರೀ ಆತ್ಮವೊಂದೇ ಇಲ್ಲ. ಪಂಚಜ್ಞಾನೇಂದ್ರಿಯಗಳು (ಕಣ್ಣು-ಕಿವಿ-ಮೂಗು-ನಾಲಗೆ ಚರ್ಮ) ಪಂಚ ಕರ್ಮೇಂದ್ರಿಯಗಳು (ವಾಕ್-ಪಾಣಿ-ಪಾದ, ಪಾಯು-ಉಪಸ್ಥೆ) ಪಂಚಭೂತಗಳು (ಪೃಥ್ವಿ, ಅಪ್, ತೇಜ, ವಾಯು, ಆಕಾಶ) ಪಂಚತನ್ಮಾತ್ರಗಳು(ಶಬ್ದ-ಸ್ಪರ್ಶ-ರೂಪ-ರಸ-ಗಂಧ) ಹೀಗೆ ದೇಹ ಇವೆಲ್ಲವುಗಳನ್ನೊಳಗೊಂಡ ವಿಶಾಲ ಸಂಗ್ರಹಾಲಯವಾಗಿದೆ.

ತ್ರಿವಿಧ ಶರೀರ :

ಮನುಷ್ಯನಿಗೆ ತ್ರಿವಿಧ ಶರೀರಗಳಿವೆ ಎಂದು ಯೋಗಶಾಸ್ತ್ರ ಹೇಳುತ್ತದೆ. ಅವು ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳು.

 ಸ್ಥೂಲ ಶರೀರ ಪಂಚೂಭೂತಗಳಿಂದಾಗಿ, ಆಹಾರದಿಂದ ರಕ್ಷಿತವಾಗಿದೆ.  ಸೂಕ್ಷ್ಮ ಶರೀರ, ಇದು ಸ್ಥೂಲ ದೇಹದ ಒಳಭಾಗದಲ್ಲಿದೆ, ಪ್ರತ್ಯೇಕವಾಗಿದೆ. ಇಲ್ಲಿ ಮನುಷ್ಯನ ಚಿತ್ತ ವೃತ್ತಿಗಳು, ಆಲೋಚನೆಗಳು ಎಂಬ ಅಲೆಗಳು-ವ್ಯಕ್ತವಾಗುತ್ತವೆ. ಬುದ್ಧಿ-ಅಹಂಕಾರ, ಮನಸ್ಸು ಪ್ರಾಣ ಪಂಚತನ್ಮಾತ್ರಗಳು ಇಲ್ಲಿವೆ. ಕಾರಣ ಶರೀರ, ಇದು ಅತ್ಯಂತ ಒಳಗೆ ಇರುವುದು. ಇಲ್ಲಿಯೇ ಅವಿದ್ಯೆಯ ಬೀಜ, ಮಾಯೆಯ ಭಾವನೆ ಬೇರೂರುವುದು. ಇವುಗಳ ಹಿಂದೆ ಆತ್ಮವಿದೆ ಎಂದು ಯೋಗ ಶಾಸ್ತ್ರದ ನಿರೂಪಣೆ.

 ಇವುಗಳಲ್ಲದೆ, ದೇಹದಲ್ಲಿ ಪಂಚಕೋಶಗಳು ಇವೆ. ಕತ್ತಿಯ ಒರೆಯಲ್ಲಿರುವಂತೆ, ಆತ್ಮ ಪಂಚಕೋಶಗಳೊಳಗಿದ್ದಾನೆ, ಎನ್ನುವ ಪರಿಕಲ್ಪನೆ ಇದೆ.

ಅನ್ನಮಯ ಕೋಶ-ಸ್ಥೂಲ ಶರೀರ, ಪ್ರಾಣಮಯ ಕೋಶ ಇದು ಕರ್ಮೇಂದ್ರಿಯ ಮೂಲಕ ವ್ಯಕ್ತವಾಗುತ್ತದೆ. ಮನೋಮಯ ಕೋಶ-ಪಂಚ ಜ್ಞಾನೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ವಿಜ್ಞಾನಮಯಕೋಶ ಬುದ್ಧಿ ಜ್ಞಾನೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ಪ್ರಾಣಮಯ ಮನೋಮಯ-ವಿಜ್ಞಾನಮಯ ಕೋಶಗಳಲ್ಲಿ ಸೂಕ್ಷ್ಮ ಶರೀರ ಕೆಲಸ ನಿರ್ವಹಿಸುತ್ತದೆ. ಐದನೆಯದು ಆನಂದಮಯ ಕೋಶ ಇದೇ ಕಾರಣ ಶರೀರ. ಇದು ಜೀವಾತ್ಮನಿಗೆ, ತೀರಾ ನಿಕಟವಾಗಿರುವ ಕೋಶ. ಜಾಗ್ರದಾವಸ್ಥೆಯಲ್ಲಿ ನಾವು ಸ್ಥೂಲ ದೇಹದಲ್ಲಿರುತ್ತೇವೆ. ಕನಸಿನಲ್ಲಿ ಸೂಕ್ಷ್ಮ ಶರೀರಕ್ಕೆ ಹೋಗುತ್ತೇವೆ. ಸುಷುಪ್ತಿಯಲ್ಲಿ ಕಾರಣ ಶರೀರಕ್ಕೆ ಹೋಗುತ್ತೇವೆ-ಈ ಮೂರು ಅವಸ್ಥೆಗಳಲ್ಲೂ ಸಾಕ್ಷೀ ಭಾವ ಇದೆ. ಅದೇ ಆತ್ಮ ಎಂದು ಯೋಗಶಾಸ್ತ್ರದ ವಿವರಣೆ.

ಯೋಗದರ್ಶನ :

ಭಾರತೀಯ ದರ್ಶನಗಳಲ್ಲಿ ಯೋಗ ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಯೋಗ ದರ್ಶನ ಪ್ರಾಚೀನವಾದುದು. ಎಲ್ಲರಿಗೂ ಬೇಕಾದುದು. ಯೋಗ ಯುಜ್-ಸಂಗತ ಕರಣೇ=ಘಟಿಸು, ಕೂಡುವಿಕೆ, ಒಂದಾಗುವಿಕೆ ಎನ್ನುವ ಅರ್ಥಗಳಿವೆ. ಯುಜ್ ಧಾತುವಿನಿಂದ ಯೋಗ ಪದವು ನಿಷ್ಪನ್ನಗೊಳ್ಳುತ್ತದೆ. ಪತಂಜಲಿ ಹಠಯೋಗ, ಲಯಯೋಗ-ಮಂತ್ರಯೋಗ, ರಾಜಯೋಗ ಎಂಬ ಯೋಗ ಪ್ರಭೇದಗಳನ್ನು ಹೇಳಿ, ಅವುಗಳ ಪ್ರಯೋಜನವನ್ನು ತಿಳಿಸಿದ್ದಾನೆ.

ರಾಜಯೋಗ-ಹಠಯೋಗದಿಂದ, ಶರೀರಶುದ್ಧಿ; ಲಯಯೋಗದಿ೦ದ ಪ್ರಾಣಶುದ್ಧಿ; ಮಂತ್ರಯೋಗದಿಂದ ಮನಶುದ್ಧಿ ಈ ಯೋಗಗಳ ಸಾಧನೆಯಿಂದ ಜೀವನ ಶುದ್ಧಿ ಎಂದು ವಿವರಿಸುತ್ತಾನೆ. ‘ಯೋಗ’ ವನ್ನು ಕುರಿತು ವಿವಿಧ ವ್ಯಾಖ್ಯಾನಗಳಿವೆ.  

ಪತಂಜಲಿ ಯೋಗ ದರ್ಶನದಲ್ಲಿ ಯೋಗಶ್ಚಿತ್ತ ವೃತ್ತಿನಿರೋಧಃ’, ಅಂದರೆ ಮನಸ್ಸಿನ ಚಂಚಲ ವೃತ್ತಿಗಳ ನಿರೋಧವೇ ಯೋಗವೆನ್ನುತ್ತಾನೆ. ಭಗವದ್ಗೀತೆಯಲ್ಲಿ ‘ಯೋಗಃ ಕರ್ಮಸು ಕೌಶಲಂ’ ‘ಸಮತ್ವಂ ಯೋಗಮುಚ್ಚತೇ’ ಅಂದರೆ ಕರ್ಮದಲ್ಲಿ ಕುಶಲತೆ, ಚಿತ್ತ ಸಮತೆಯೇ ಯೋಗವೆನ್ನುವ ವ್ಯಾಖ್ಯೆ ಇದೆ. ʼʼಮನಃ ಪ್ರಶಮನೋಪಾಯ ಯೋಗ ಇತ್ಯಭಿಧೀಯತೆ’ ಮನಸ್ಸನ್ನು ಪ್ರಶಾಂತಗೊಳಿಸುವ ಉಪಾಯವೇ ಯೋಗ ಎನ್ನುತ್ತದೆ- ಯೋಗವಾಶಿಷ್ಟ.

”ತಾಂ ಯೋಗಮಿತಿಮನ್ಯತೇ ಸ್ಥಿರಾಂ ಇಂದ್ರಿಯ ಧಾರಣಂ” ಇಂದ್ರಿಯಗಳು ಮತ್ತು ಮನಸ್ಸಿನ ಮೇಲೆ ಸ೦ಪೂರ್ಣ ಹತೋಟಿ ಹೊಂದಿರುವ ಸ್ಥಿತಿ ಎಂದು ಕಠೋಪನಿಷತ್ತು ತಿಳಿಸುತ್ತದೆ. ಹೀಗೆ ಯೋಗವನ್ನು ಕುರಿತು ವಿವಿಧ ವ್ಯಾಖ್ಯಾನಗಳಿದ್ದರೂ ಅವುಗಳ ಆಶಯ ಒಂದೇ ಆಗಿದೆ. ಅದು ಮನಸ್ಸಿನ ಏಕಾಗ್ರತೆ, ನಿಗ್ರಹ ಹಾಗೂ ವಿಕಾಸದ ವಿಧಾನ.

ಅತ್ತ ಇತ್ತ ಹರಿವ ಮನವ ಒಂದು ಕಡೆ

ನಿಲ್ಲಿಸಬಲ್ಲರೆ ಗುಹೇಶ್ವರ ಲಿಂಗದ ಬೆಳಗು

ಅಂತರಂಗದಲ್ಲಿಯೇ ಗೋಚರಿಸುತ್ತದೆ ಎನ್ನುತ್ತಾರೆ ಅಲ್ಲಮಪ್ರಭು.

Yoga literally means connection or union with the supreme spirit. What unites us with the supreme spirit is yoga. There is only one in the universe”.

 “Yoge for its true understanding depends not on words but on Experience”.

ಜೀವ ದೇವನೊಂದಿಗೆ ಸೇರುವುದೇ ಯೋಗ, ಜೀವ-ದೇವ ಸಂಬಂಧವು ಯೋಗ ಸಾಧನೆಯ ವಿಷಯ. ಅನುಭವಕ್ಕೆ ತಂದುಕೊಳ್ಳುವ ವಿಷಯವೇ ವಿನಃ ಅದನ್ನು ಕುರಿತು, ಚರ್ಚಿಸುವ, ವರ್ಣಿಸುವ ವಿಷಯವಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. (Common Sense About Yoga P. 75)

ಯೋಗ ಸಾಧನೆಯ ಹಾದಿಯಲ್ಲಿ ಮನಃಶುದ್ಧಿ ಏಕಾಗ್ರತೆ, ಅತ್ಯವಶ್ಯ. ಮನಸ್ಸಿನ ಏಕಾಗ್ರತೆಗೆ ಅನೇಕ ಯೋಗಗಳ ಪ್ರಯೋಗಗಳಿವೆ. ಮನೋದೇಹಿಯಾದ ಮಾನವನ ಮನಸ್ಸು ಮರ್ಕಟ. ಮನಸ್ಸೇ ಮನುಷ್ಯ ಜಗತ್ತಿನ ಆಗು-ಹೋಗು, ಕಲ್ಪನೆ-ಪರಿಕಲ್ಪನೆಗಳಿಗೆಲ್ಲ ಕಾರಣ. ಮನಶ್ಯಾಸ್ತ್ರದ ವ್ಯಾಖ್ಯಾನಗಳಲ್ಲಿ ವಿಜ್ಞಾನದ ಪ್ರಯೋಗಗಳಲ್ಲಿ ಇಂದಿನವರೆಗೆ ನಿಖರವಾಗಿ ಮನಸ್ಸು ಎಂದರೆ ಇದೇ ಎಂದು ತೀರ್ಮಾನವಾಗಿಲ್ಲ.   ನಮ್ಮ ಅಸ್ತಿತ್ವವನ್ನು ನಿರ್ಧರಿಸುವ ಮನಸ್ಸು ನಮ್ಮ ಜೀವನದ ಭಾಗವಾಗಿದ್ದರೂ, ನಮಗೆ ಅಪರಿಚಿತವಾಗಿದೆ. ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಅದನ್ನು ನಿಗ್ರಹಿಸುವ, ಏಕಾಗ್ರತೆಗೆ ತರುವ ವಿಧಾನಗಳಿವೆ. ಮಾನವ ದೇವರೊಂದಿಗೆ ಜಗತ್ತಿನೊಂದಿಗೆ ಸಂಬಂಧ ಬೆಳಸುವುದು ಮನಸ್ಸಿನ ಮೂಲಕವೆ, ಇದೇ ಯೋಗ ! ಇದೇ ಭಾರತೀಯ ಅಧ್ಯಾತ್ಮಿಕ ಇತಿಹಾಸ.

 ಯೋಗ ಸಾಧನೆ ದುರ್ಗಮ ಮಾರ್ಗ, ಸರ್ವಜ್ಞನ ವಚನವೊಂದು ಹೀಗಿದೆ :

ದಾಸಿಯ ಕೊಡದಂತೆ ಸೂಸುತಿಪ್ಪುದು ಯೋಗ

ದಾಸಿ ಪರ ಪುರುಷನಾಶಿಸಲದು |

ಬೀಸಿ ಬಿದ್ದಂತೆ ಸರ್ವಜ್ಞ ||

ಯೋಗವು ದಾಸಿಯ ತಲೆಯ ಮೇಲಿನ ತುಂಬಿದ ಕೊಡದಂತೆ, ಮನಸ್ಸು ಅತ್ತಿತ್ತ ಹೊರಳಿದರೆ, ಕೊಡವು ಬಿದ್ದು, ಚೂರಾಗುತ್ತದೆ ಎಂದು ಮನಸ್ಸಿನ ಏಕಾಗ್ರತೆ, ಯೋಗ ಮಹತ್ವವನ್ನು ತಿಳಿಸುತ್ತಾನೆ.

 ಯೋಗ ಸಾಧನೆಯಲ್ಲಿ ಅಧ್ಯಾತ್ಮಿಕ ಆದರ್ಶದಲ್ಲಿ ನಂಬಿಕೆ ಇರಬೇಕು. ಅಧ್ಯಾತ್ಮಿಕ ಜೀವನದ ಪ್ರಥಮ ಅರ್ಹತೆ, ನೈಜ ಆತ್ಮವನ್ನು ಅರಿಯುವ ಸಾಮರ್ಥದಲ್ಲಿ ಅತೀವ ಶ್ರದ್ಧೆ ಬೇಕು, ತಾನು ಚಿಂತಿಸುವ, ಅದೇ ತಾನಾಗುವ ದೈವದ ಬಗ್ಗೆ ನಂಬಿಕೆ ಬೇಕು. ನಂಬಿಕೆಗೆ ಅಗಾಧ ಶಕ್ತಿ ಇದೆ. ಸಾಧಕ ಏನನ್ನು ಅರಸಿಕೊಂಡು ಬಂದನೋ, ಅದೇ ತಾನು ಎಂದು, ಅರಿವಾಗುವ ಸ್ಥಿತಿ, ಈ ಸ್ಥಿತಿ ಇನ್ನೊಬ್ಬರಿಗೆ ವಿವರಿಸಲುಬಾರದು. ಇಂತಹ ಸ್ಥಿತಿಗೇರಿದ ಯೋಗಿಗಳ ಸಾನಿಧ್ಯದಲ್ಲಿ ಕ್ರೂರ ಪ್ರಾಣಿಗಳು ತಮ್ಮ ಕ್ರೌರ್ಯವನ್ನು ಮರೆತು ಪ್ರೇಮವನ್ನು ಮೆರೆಯುತ್ತವೆ ಎಂದು ಪತಂಜಲಿ ಹೇಳುತ್ತಾನೆ. ನಂಬಿಕೆ- ದೃಢವಾದ ನಂಬಿಕೆ ಇರವಲ್ಲಿ ವಿಚಾರ ವಿಮರ್ಶೆಗೆ ಸ್ಥಾನವಿಲ್ಲ. ಕಾರಣ Reason is the great enemy that faith has ಎನ್ನುವ ಮಾತಿನಂತೆ, ವಿಚಾರ ನಂಬಿಕೆಯ ಪ್ರಬಲ ಶತ್ರು. ಯೋಗ ಸಾಧನೆಯಲ್ಲಿ ನಂಬಿಕೆಗೆ ಪ್ರಾಧಾನ್ಯ.

ವೀರಶೈವ-ಶಿವಯೋಗ : ಪರಿಕಲ್ಪನೆ

ವೀರಶೈವ ಧರ್ಮದ ಶಿವಯೋಗ, ಇತರ ಯೋಗಗಳಿಗಿಂತ, ವಿಭಿನ್ನವಾಗಿ ಭಾರತೀಯ ಯೋಗ ಪರಂಪರೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿದೆ. ಇದರ ನೆಲೆ-ಹಿನ್ನೆಲೆ ಶಿವಾಗಮಗಳಲ್ಲಿ ಪಾರಮೇಶ್ವರ- ಸೂಕ್ಷ್ಮ-ಚಂದ್ರಜ್ಞಾನ ಆಗಮಗಳಲ್ಲಿ ಶಿವಯೋಗದ ವಿಚಾರವಿದೆ. ವೀರಶೈವ ತತ್ತ್ವಜ್ಞಾನದ ಮೂಲ, ವಿಚಾರಗಳ ಸ್ರೋತ ಆಗಮಗಳಲ್ಲಿರುವುದರಿಂದ, ಅಲ್ಲಿ ಬರುವ ಷಟ್‌ಸ್ಥಲ ಸಿದ್ಧಾಂತವು ಶಿವಯೋಗವನ್ನೇ ಪ್ರತಿಪಾದಿಸುತ್ತದೆ. ಷಟ್‌ಸ್ಥಲದಲ್ಲಿ ಬರುವ ಪ್ರಾಣಲಿಂಗದ ಸ್ಥಲದಲ್ಲಿ ಬರುವ ವಿಚಾರಗಳು ಸಂಪೂರ್ಣ ಶಿವಯೋಗಮಯವಾಗಿವೆ.

ಚರಾಚರಾತ್ಮಕಂ ಸರ್ವಂ ಜಗದೇತಚ್ಛವಾತ್ಮಕಂ |

ಭಾವಯನ್ನಾತ್ಮ ತಾದಾತ್ಮ್ಯಂ ಯೋಗ ಶೈವಮಿತಿಸ್ಮೃತಃ | (ಪಾ.ಅ.ಪ. ಶ್ಲೋ ೨೫)

ಜಗತ್ತನ್ನು ಶಿವಸ್ವರೂಪವೆಂದು, ಭಾವಿಸಿ, ಅದರಲ್ಲಿ ಅಧ್ಯಾತ್ಮ ಭಾವ ಹೊಂದುವುದು ‘ಯೋಗಶೈವ’ ಎಂದು ಪಾರಮೇಶ್ವರಾಗಮ ತಿಳಿಸುತ್ತದೆ.

ಶಿವಜ್ಞಾನ ಶಿವೇಭಕ್ತಿ: ಶಿವಾಚಾರ: ಶಿವವ್ರತಮ್ |

ಶಿವಲಿಂಗಾರ್ಚನಾಜ್ಞಪ್ತಿಃ ಶಿವಯೋಗೋಹಿ ಪಂಚಧಾ ||

ಎಂದು ಐದು ವಿಧ ಶಿವಯೋಗಗಳನ್ನು ವೀರಾಗಮ ವಿವರಿಸುತ್ತದೆ. ಮತ್ತೆ ಚಂದ್ರಜ್ಞಾನಾಗಮದಲ್ಲಿ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ, ಭಾವಲಿಂಗದಲ್ಲಿ ಭಾವಯೋಗಗಳನ್ನು, ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗ ಎಂದು ತಿಳಿಸುತ್ತದೆ. (ಪಾ.ಆ.ಕ್ರ.ಪಾ. ೩-೩೯-೪೦). ವ್ಯಕ್ತಿ ತನ್ನ ಬಾಹ್ಯ ಸ್ವರೂಪವನ್ನು ಅರಿಯಲು ಕನ್ನಡಿಯ ಅಗತ್ಯವಿರುವಂತೆ ಆಂತರಿಕ ಆತ್ಮ ಸ್ವರೂಪವನ್ನು ಅರಿಯಲು ಕನ್ನಡಿಯಂತಹ ಒಂದು ಪವಿತ್ರ ವಸ್ತು (ಇಷ್ಟಲಿಂಗ) ವನ್ನು ವೀರಶೈವ ಸಾಧಕರು ಸ್ವೀಕರಿಸಲೇಬೇಕಾಯಿತು. ಸ್ಥಾವರ ಮೂರ್ತಿಗಳ ಬದಲಾಗಿ ಆತ್ಮನ ಕುರುಹಾದ

ಇಷ್ಟಲಿಂಗವನ್ನು, ಸ್ವೀಕರಿಸಿ ಅಹಂ ಗ್ರಹೋಪಾಸನೆಯಿಂದ ಸಾಧನೆ ಮಾಡುತ್ತಾರೆ. ತನ್ನನ್ನು ಹಾಗೂ ಹೊರಗಿನ ಪ್ರಪಂಚವನ್ನು ಮರೆತು ಮನಸ್ಸಿನ ಸಮಾಧಿ ಸ್ಥಿತಿ ಹೊಂದಲು, ಒಂದು ವಸ್ತುವಿನ ಅಗತ್ಯವಿದೆ, ಎಂಬುದು ಮನಶ್ಯಾಸ್ತ್ರಜ್ಞರ ಅಭಿಮತ. ಬಹುಪಾಲು ಸಾಮಾನ್ಯ ಜನರಿಗೆ ಧ್ಯಾನ ಮಾಡಲು ಒಂದು ಕುರುಹು (ಪ್ರತೀಕ) ಬೇಕೇ ಬೇಕು. ಅದು ಇಲ್ಲದಿದ್ದರೆ, ಮನಸ್ಸು ಅಲೆದಾಡುತ್ತದೆ. ಹಾರುವ ಪಟದಂತಿರುವ ಮನಸ್ಸಿಗೆ ಒಂದು ಸೂತ್ರ ಬೇಕು. ಮನಸ್ಸಿನ ಏಕಾಗ್ರತೆಗೆ ಕುರುಹಿನ ಮೂಲಕ ದೇವರನ್ನು ಧ್ಯಾನಿಸುತ್ತಾನೆ. ಏಕಾಗ್ರತೆಗೆ ಓಂಕಾರ ಜಪ ಸಾಕು ಎಂದು ಪತಂಜಲಿ ತಿಳಿಸುತ್ತಾನೆ. (ಯೋಗಸೂತ್ರ ೧-೨೭-೨೯), ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ, ಯಾವುದೇ ವಸ್ತು ದೇವರ ಪ್ರತೀಕವಾಗಬಹುದು. ಕುರುಹೇ ದೇವರಲ್ಲ. ಆದರೆ ಕುರುಹಿನ ಮೂಲಕ ಅರಿವು ಪಡೆದು ಅದರ ಹಿಂದಿರುವ ಪರಮ ಸತ್ಯವನ್ನು ಗ್ರಹಿಸಬೇಕಾಗುತ್ತದೆ.

ತಂತ್ರಸಾರದ ಶ್ಲೋಕವೊಂದು ಹೀಗಿದೆ :

ಪ್ರಥಮಾ ಪ್ರತಿಮಾ ಪೂಜಾ | ಜಪಸ್ತೋತ್ರಾದಿ ಮಧ್ಯಮಾ |

ಉತ್ತಮಾ ಮಾನಸೀ ಪೂಜಾ ಸೋಹಂ ಪೂಜೋತ್ತಮೋತ್ತಮಾ |

ಮೊದಲನೆಯದು ಪ್ರತಿಮಾ ಪೂಜೆ, ಜಪಸ್ತೋತ್ರಗಳು ಮಧ್ಯಮ, ಉತ್ತಮವಾದದ್ದು ಮಾನಸ ಪೂಜೆ. ಇವುಗಳಿಗಿಂತ ಶ್ರೇಷ್ಠವಾದುದ್ದು. ‘ಸೋಹಂ’ ಪೂಜೆ. ಈ ಸೋಹಂ ಪೂಜೆ ಅಥವಾ ಅಹಂ ಗ್ರಹೋಪಾಸನೆ ವೀರಶೈವರದು. ಇಷ್ಟಲಿಂಗ ಆತ್ಮನ ಪೂಜೆ, ಉಪಾಸಕ ಉಪಾಸ್ಯ ವಸ್ತು (ಇಷ್ಟಲಿಂಗ) ವಿನೊಂದಿಗೆ ತನ್ನನ್ನು ಒಂದಾಗಿಸಿಕೊಂಡು, ತನ್ನ ಆತ್ಮನ ಮೇಲೆ ಧ್ಯಾನ ಮಾಡುತ್ತಾನೆ. ಅಲ್ಲಿ ಉಪಾಸ್ಯ-ಉಪಾಸಕರ ಏಕತೆ ಸಾಮರಸ್ಯವಾಗುತ್ತದೆ. ಇದೇ ಪ್ರಾಣಲಿಂಗ ಪೂಜೆ, ಅಧ್ಯಾತ್ಮಿಕ ಜೀವನ,

ಒಂದು ಏಣಿ ಇದ್ದಂತೆ, ಹಂತ ಹಂತವಾಗಿ ಮುಂದುವರಿಯಬೇಕು.

ಇಷ್ಟಲಿಂಗ ದೀಕ್ಷೆ : ಪರಿಕಲ್ಪನೆ

ಶಿವಯೋಗ ಪಥದಲ್ಲಿ ಸಾಗಿ ಲಿಂಗಾಂಗ ಸಾಮರಸ್ಯದ ಗುರಿ ತಲುಪಲು ಸಾಧಕನಿಗೆ ಇಷ್ಟಲಿಂಗ ದೀಕ್ಷೆ ಅತ್ಯಾವಶ್ಯಕ. ದೀಕ್ಷೆಯಿಂದಲೇ ಅವನು ವೀರಶೈವನಾಗಿ ಅರ್ಹತೆ ಪಡೆಯುತ್ತಾನೆ. ಸಾಧಕನಿಗೆ ಶಿವಯೋಗ ಪಥದಲ್ಲಿ ಸಾಗಿದಂತೆ ಅವನ ಮನಸ್ಸು ಕ್ರಮೇಣ ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ಉಂಟಾಗಿ, ಅಧ್ಯಾತ್ಮದ ಮಾರ್ಗದರ್ಶನಕ್ಕಾಗಿ, ಗುರುವನ್ನು ಆಶ್ರಯಿಸುತ್ತಾನೆ.  ಗುರೂಪದೇಶ ಮಹತ್ವದ್ದಾಗಿದೆ.

ಗುರೂಪದೇಶತೋಜ್ಞೇಯಂ ನಜ್ಞೇಯಂ ಶಾಸ್ತ್ರಕೋಟಿಭಿಃ

ಎನ್ನುವಂತೆ ಶಾಸ್ತ್ರದ ಕೋಟಿ-ಕೋಟಿ ಗ್ರಂಥಗಳಿಗಿಂತ ಗುರೂಪದೇಶ ಮಿಗಿಲಾದದ್ದು, ಶ್ರೀಗುರು ಶಿಷ್ಯನನ್ನು ಪರೀಕ್ಷಿಸಿ ಶಿವದೀಕ್ಷೆಯನ್ನು ಅನುಗ್ರಹಿಸುತ್ತಾನೆ. ಶಿಷ್ಯನ ಸ್ಥೂಲ-ಸೂಕ್ಷ್ಮ-ಕಾರಣ ದೇಹಗಳಲ್ಲಿರುವ ಆಣವ ಮಾಯಾ-ಕಾರ್ಮಿಕಗಳೆಂಬ, ಮಲತ್ರಯಗಳನ್ನು ವೇಧಾ-ಮನು-ಕ್ರಿಯೆಗಳೆಂಬ ದೀಕ್ಷೆಗಳಿಂದ ಪರಿಹರಿಸಿ ತನುತ್ರಯಗಳಲ್ಲಿ ಇಷ್ಟ-ಪ್ರಾಣ- ಭಾವಲಿಂಗಗಳನ್ನು ಸ್ಥಾಪಿಸಿ ಹಸ್ತ-ಮಸ್ತಕ ಸಂಯೋಗದಿಂದ ಶಿಷ್ಯನ ಚಿತ್‌ಕಲೆಯನ್ನು ಶಿವಲಿಂಗದಲ್ಲಿ ನಿಯೋಜಿಸಿ ಶಿವಕ್ಕೂ- ಜೀವಕ್ಕೂ ಸಾಮರಸ್ಯ ಮಾಡಿ ಇಷ್ಟಲಿಂಗವನ್ನು ಶಿಷ್ಯನ ಹಸ್ತದಲ್ಲಿರಿಸಿ ಪಂಚಾಕ್ಷರಿ ಮಹಾ ಮಂತ್ರವನ್ನು ಉಪದೇಶಿಸಿ ಇದು ನಿನ್ನ ಪ್ರಾಣಲಿಂಗ, ದೇಹದಿಂದ ಎಂದೂ ಅಗಲಿಸಬಾರದೆಂದು ಉಪದೇಶ ಮಾಡುತ್ತಾನೆ. ʼʼಪ್ರಾಣವದ್ಧಾರಣೀಯ ತತ್ ಪ್ರಾಣಲಿಂಗಮಿದಂ ತವʼʼ(ಸಿ.ಶಿ.) ಎಂಬುದಾಗಿ, ಲಿಂಗ ದೀಕ್ಷೆಗೆ ಅರ್ಥಪೂರ್ಣ ವ್ಯಾಖ್ಯೆ ಇದೆ. “ದೀಯತೇ ಪರಮಂಜ್ಞಾನಂ ಕ್ಷೀಯತೇ ಪಾಶಬಂಧನಂʼʼ (ಸಿ.ಶಿ). ‘ಇಷ್ಟಾವಾಸ್ತಿಕರಂ ಸಾಕ್ಷಾತ್ ಅನಿಷ್ಟ ಪರಿಹಾರಕಂ (ಅನುಭವ ಸೂತ್ರ) ಇತ್ಯಾದಿ ವಾಕ್ಯಗಳೂ ದೀಕ್ಷೆಯ ಮಹತ್ವವನ್ನೇ ಸಾರುತ್ತವೆ. ದೀಕ್ಷಾಬದ್ಧನಾದ ಸಾಧಕನು ಕ್ರಿಯಾ ಪ್ರಧಾನ ಅಷ್ಟಾವರಣ; ನೀತಿ ಪ್ರಧಾನ ಪಂಚಾಚಾರ; ಜ್ಞಾನ ಪ್ರಧಾನ ಷಟ್‌ಸ್ಥಲಗಳ ಸಾಧನೆಯಿಂದ ಲಿಂಗಾಂಗ ಸಾಮರಸ್ಯ ಪಡೆಯುತ್ತಾನೆ. ವೀರಶೈವರ ಈ ದೀಕ್ಷಾ ಕ್ರಮ ಬರೀ ಪೂಜಾ ವಿಧಾನವಲ್ಲ: ಸಾಧಕನ ದೈವೀ ಶಕ್ತಿಯನ್ನು ಬೆಳಗಿಸಿ, ಅದನ್ನು ಪರಿಪೂರ್ಣಗೊಳಿಸುವ ಪರಮ ಸಾಧನವಾಗಿದೆ.

ದೀಕ್ಷೆಯನ್ನು ಕುರಿತು ಬಸವಣ್ಣನವರು.

ಅಯ್ಯಾ ಎನ್ನ ಹೃದಯದಲ್ಲಿ ನ್ಯಸ್ತವಾಗಿರುವ

ಪರಮ ಚಿದ್ಬೆಳಗ ಹಸ್ತ-ಮಸ್ತಕ ಸಂಯೋಗದಿಂದೊಳಗೂಡಿ

ಮಹಾ ಬೆಳಗ ಮಾಡಿದಿರಲ್ಲ

ಅಯ್ಯಾ ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗು ತಂದು

ಭಾವದೊಳಗಿಂಬಿಟ್ಟಿರಲ್ಲಾ

ಅಯ್ಯಾ ಎನ್ನ ಭಾವದೊಳಗೂಡಿದ ಮಹಾಬೆಳಗು ತಂದು

ಮನಸ್ಸಿನೊಳಗಿಂಬಿಟ್ಟಿರಲ್ಲಾ

ಅಯ್ಯಾ ಎನ್ನ ಮನಸಿನೊಳು ಕೂಡಿಹ ಮಹಾಬೆಳಗು ತಂದು

ಎನ್ನ ಕಂಗೊಳೊಳಗಿಂಬಿಟ್ಟಿರಲ್ಲಾ

ಅಯ್ಯಾ ಎನ್ನ ಕರಸ್ಥಲದಲ್ಲಿ ಥಳಥಳಸಿ ಬೆಳಗಿ ಹೊಳೆಯುತ್ತಿಪ್ಪ ಅಖಂಡ

ತೇಜವನೆ, ಇಷ್ಟಲಿಂಗವೆಂಬ, ದೃಷ್ಟಿ ತೋರಿ ನಿಶ್ಚಯದ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ

ಅಯ್ಯಾ ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ ನೀವು ನಿಮ್ಮ ಮಹತ್ವವ

ಹುದುಗಿದಿರಲ್ಲಾ ಅಯ್ಯಾ ಎನ್ನ ಆರಾಧ್ಯ ಕೂಡಲ ಸಂಗಮದೇವಾ

ಎನ್ನೊಳಗೆ ನಿಮ್ಮಿರವ, ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾʼʼ

ಬಸವಣ್ಣನವರ ಈ ವಚನ ಸರಳವಾಗಿ, ದೀಕ್ಷೆಯ ರಹಸ್ಯವನ್ನು ಬಿಚ್ಚಿ ತೋರಿಸುತ್ತದೆ.

ದೀಕ್ಷೆಯ ಪರಿಣಾಮ ಸಾಧಕನಿಗೆ ಹೇಗಾಗುತ್ತದೆ ಎಂದು ಚನ್ನಬಸವಣ್ಣನವರ ವಚನ ಹೀಗೆ ಹೇಳುತ್ತದೆ.

ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ,

ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ,

ಶಬ್ದದಲ್ಲಿ ವಿರೋಧ ಇಂತೀ ಭವಿಯ ಕಳೆದು ಭಕ್ತನ ಮಾಡಿದ ಪರಿ….

ಇಂತು ಪೂರ್ವ ಗುಣವಳಿದು, ಪುನರ್ಜಾತನಾದ, ಕಾರಣ ಕೂಡಲ ಚನ್ನಸಂಗಾ

ನಿಮ್ಮ ಶರಣ ಸರ್ವಾಂಗಲಿಂಗಿಯಾದ.

ಎನ್ನುತ್ತಾನೆ. ಯೋಗ್ಯ ಗುರುವಿನಿಂದ ಯೋಗ್ಯ ಶಿಷ್ಯನಿಗೆ ಲಭಿಸಿದ ದೀಕ್ಷೆ ಸಾರ್ಥಕವಾಗುತ್ತದೆ. ಗುರುವಿಗೆ ತಕ್ಕ ಶಿಷ್ಯ ಅಧ್ಯಾತ್ಮ ಕ್ಷೇತ್ರದಲ್ಲಿ ಸಿಗುವುದು ಒಂದು ಮಂಗಳದ ಘಟನೆ. ಅನರ್ಹ ಶಿಷ್ಯನಿಗೆ ನೀಡುವ ದೀಕ್ಷೆ ವ್ಯರ್ಥ, “ಹಸನಮಾಡಿ ಹರಗಿದ ಹೊಲದಲ್ಲಿ ಕಸವ ಬಿತ್ತುವ ಮರುಳತನ’ವಾಗುತ್ತದೆ. ಎಂದು ತೋಂಟದ ಸಿದ್ಧಲಿಂಗರು ಎಚ್ಚರಿಸಿದ್ದಾರೆ. ರಾಮಕೃಷ್ಣ ಪರಮಹಂಸರು ಹೇಳುವಂತೆ-

ಸದ್ಗುರು ಉರಿಯುತ್ತಿರುವ ಪಂಜನಂತಿರಬೇಕು ಯೋಗ್ಯನಾದ ಶಿಷ್ಯ-ಒಣಗಿದ ಸೌದೆಯಂತಿರಬೇಕು. ಒಣಗಿದ ಸೌದೆ ಬೆಂಕಿ ಸ್ಪರ್ಶವಾದ ಕೂಡಲೇ ಹತ್ತಿಕೊಳ್ಳುತ್ತದೆ. ಹಸೀ ಸೌದೆಯಾದರೆ, ಹತ್ತುವುದಿಲ್ಲ. ಶಿಷ್ಯ ಒಣಗಿದ ಸೌದೆಯಂತಿರಬೇಕು. ಅಂದರೆ ಗುರುವಿನ ಉಪದೇಶದ ಜ್ಞಾನದ ಕಿಡಿ ಅವನಲ್ಲಿ ಹೊತ್ತಿಕೊಳ್ಳುತ್ತದೆ” ಎಂದು ಅವರು ಕೊಡುವ ದೃಷ್ಟಾಂತಗಳು ದೀಕ್ಷೆ-ಗುರು-ಶಿಷ್ಯರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ.

ಶಿವಯೋಗ ಸಾಧಕ ಗುರೂಪದೇಶವನ್ನು, ಒಬ್ಬ ವಿಜ್ಞಾನಿ ಪ್ರಯೋಗ ಶಾಲೆಯಲ್ಲಿ ವಿಜ್ಞಾನವನ್ನು ಪರೀಕ್ಷೆ ಮಾಡುವಂತೆ, ತನ್ನ ಸಾಧನೆಯ ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಬೇಕು, ಅಧ್ಯಾತ್ಮದ ದಾರಿ ಸಾಹಸದ ದಾರಿ, ಅಲ್ಲಿ ಜಾರುವ ಸಂಭವವೇ ಹೆಚ್ಚು. ಅದಕ್ಕೆ ಅಖಂಡ ತಾಳ್ಮೆಬೇಕು. ಆದರ್ಶಗಳನ್ನು ಪಾಲಿಸ ಬೇಕಾದರೆ ಅವಿಶ್ರಾಂತ ಶ್ರಮಬೇಕು. ದೀಕ್ಷೆ ದುರ್ಬಲರಿಗೆ, ಸೋಮಾರಿಗಳಿಗೆ ಸಲ್ಲದು. ಬರೀ ಗುರೂಪದೇಶ ಪಡೆದು ಕುಳಿತರೆ ಸಾಲದು. ಜೀವನದಲ್ಲಿ ಸತತ ಸಾಧನೆಯಿಂದ, ಅಳವಡಿಸಿಕೊಂಡಾಗ ಮಾತ್ರ ಉಪದೇಶ ಸಫಲವಾಗುತ್ತದೆ. “ಕೈದುವ ಕೊಡಬಹುದಲ್ಲದೆ ಕಲಿತನವ ಕೋಡಬಹುದೇ? ಸದ್ಗುರು

ಕಾರುಣ್ಯವಾದರೂ, ಸಾಧಿಸಿದವನಿಲ್ಲ, ಸಕಲೇಶ್ವರಾ” ಎಂದು ಎಚ್ಚರಿಸಿದ್ದಾನೆ- ಸಕಲೇಶ ಮಾದರಸ.   

ವೀರಶೈವ ಸಿದ್ಧಾಂತದಲ್ಲಿ ಶಿವ, ಬ್ರಹ್ಮವನ್ನು ‘ಸ್ಥಲ’ ವೆಂದು ಕರೆದಿದ್ದಾರೆ. ಲಿಂಗ ಶಬ್ದ ಇದಕ್ಕೆ ಪರ್ಯಾಯವಾಗಿದೆ. “ಸ್ಥಿಯತೇ ಲೀಯತೇ ಯತ್ರ ಜಗದೇತಚ್ಚರಾಚರಂ ತದ್ಬ್ರಹ್ಮಸ್ಥಲಮಿತ್ಯುಕ್ತಂ ಸ್ಥಲತತ್ತ್ವ ವಿಶಾರದೈಃʼʼ ಎನ್ನುವ ಆಗಮ ಪ್ರಮಾಣದಂತೆ ಯಾವುದರಿಂದ ಎಲ್ಲಾ ಬಂದಿದೆಯೋ, ಯಾರಲ್ಲಿ ಎಲ್ಲಾ ಜೀವಿಸಿದೆಯೋ, ಎಲ್ಲಿಗೆ ಕೊನೆಗೆ ತೆರಳುವುದೋ ಅದೇ ಬ್ರಹ್ಮ ಅಥವಾ ಲಿಂಗ. ಇದನ್ನೇ ಸ್ಥಲವೆಂದು ಕರೆದಿದ್ದಾರೆ.

ಈ ‘ಸ್ಥಲ’ ಪರಶಿವ ಸ್ವಲೀಲೆಯಿಂದ ಅಂಗಸ್ಥಲ ಲಿಂಗಸ್ಥಲವೆಂದು ಎರಡು ವಿಧವಾಗುತ್ತದೆ. ‘ಲಿಂಗವು’ ಭಕ್ತನ ಅನುಗ್ರಹಾರ್ಥವಾಗಿ ಸ್ಥೂಲ-ಸೂಕ್ಷ್ಮ-ಕಾರಣ ಶರೀರಗಳ ಸ್ಥಾನ ಭೇದದಿಂದ ಇಷ್ಟ-ಪ್ರಾಣ-ಭಾವ ಲಿಂಗಗಳೆಂದು, ಮೂರು ವಿಧವಾಗುತ್ತವೆ. ಮತ್ತೆ ಇಷ್ಟಲಿಂಗದಲ್ಲಿ ಆಚಾರಲಿಂಗ, ಗುರುಲಿಂಗವೆಂದೂ, ಪ್ರಾಣ-ಲಿಂಗದಲ್ಲಿ ಶಿವಲಿಂಗ-ಜಂಗಮ ಲಿಂಗವೆಂದೂ, ಭಾವಲಿಂಗದಲ್ಲಿ-

ಪ್ರಸಾದಲಿಂಗ-ಮಹಾಲಿಂಗವೆಂದೂ ಆರು ಪ್ರಕಾರಗಳಾಗುತ್ತವೆ. ಪರಶಿವನ ಮತ್ತೊಂದು ರೂಪವೇ ‘ಅಂಗ’ (ಜೀವ) ಇದರಲ್ಲೂ ಯೋಗಾಂಗ-ಭೋಗಾಂಗ-ತ್ಯಾಗಾಂಗ ಎಂದು ಮೂರು ವಿಧ-ಇವುಗಳನ್ನು ಅನುಸರಿಸಿ, ಬೇರೆ-ಬೇರೆ ಸ್ಥಲಗಳೂ ಉಂಟಾಗುತ್ತವೆ.

ತ್ಯಾಗಾಂಗದಲ್ಲಿ ಭಕ್ತ-ಮಹೇಶ ಎಂದೂ; ಭೋಗಾಂಗದಲ್ಲಿ ಪ್ರಸಾದಿ- ಪ್ರಾಣಲಿಂಗಿ ಎಂದೂ ಯೋಗಾಂಗದಲ್ಲಿ-ಶರಣ-ಐಕ್ಯವೆಂದು, ಆರು ಪ್ರಕಾರಗಳಾಗುತ್ತವೆ.

 ಹೀಗೆ ಇನ್ನೂ ಉಪಾಂಗಗಳೊಂದಿಗೆ ಅಂಗಸ್ಥಲ ೪೪ ಭಾಗಗಳಾಗಿ ಲಿಂಗಸ್ಥಲ ೫೯ ಭಾಗಗಳಾಗಿ ವಿಭಾಗಿಸಲ್ಪಟ್ಟಿರುತ್ತವೆ. ಅಂಗಸ್ಥಲವು ೪೪ ಲಿಂಗಸ್ಥಲವು ೫೭ ಒಟ್ಟು ೧೦೧ ಸ್ಥಲಗಳಾಗುತ್ತವೆ.

ಅಂಗಸ್ಥಲದ

ತ್ಯಾಗಾಂಗದಲ್ಲಿ ಭಕ್ತಸ್ಥಲ ಮಹೇಶ ಸ್ಥಲ ಶ್ರದ್ಧಾಭಕ್ತಿ-ನಿಷ್ಠಾಭಕ್ತಿಗಳು,

ಭೋಗಾಂಗದಲ್ಲಿ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಅವಧಾನ ಭಕ್ತಿ- ಅನುಭಾವ ಭಕ್ತಿಗಳು,

ಯೋಗಾಂಗದಲ್ಲಿ ಶರಣಸ್ಥಲ ಐಕ್ಯಸ್ಥಲ ಆನಂದಭಕ್ತಿ-ಸಮರಸ ಭಕ್ತಿ.

ಲಿಂಗಸ್ಥಲದ

ಇಷ್ಟಲಿಂಗದಲ್ಲಿ ಆಚಾರಲಿಂಗ-ಗುರುಲಿಂಗ, ಕ್ರಿಯಾಶಕ್ತಿ-ಜ್ಞಾನಶಕ್ತಿಗಳು,

ಪ್ರಾಣಲಿಂಗದಲ್ಲಿ ಶಿವಲಿಂಗ-ಜಂಗಮಲಿಂಗ, ಇಚ್ಛಾಶಕ್ತಿ-ಆದಿಶಕ್ತಿಗಳು,

ಭಾವಲಿಂಗದಲ್ಲಿ ಪ್ರಸಾದಲಿಂಗ-ಮಹಾಲಿಂಗ, ಪರಾಶಕ್ತಿ-ಚಿತ್‌ಶಕ್ತಿಗಳು ಪ್ರಧಾನ

ಹೀಗೆ ವೀರಶೈವ ಶಿವಯೋಗಿಯು ೧೦೧ ಸ್ಥಾನಗಳ ಜ್ಞಾನವನ್ನು ಪಡೆದು ಹಂತ ಹಂತವಾಗಿ ಮುಂದುವರಿದು ಶಿವಯೋಗ ಸಿದ್ಧಿಯನ್ನು ಪಡೆಯಬೇಕಾಗುತ್ತದೆ. ಭಾರತೀಯ ಯೋಗಶಾಸ್ತ್ರ ಪರಂಪರೆಯಲ್ಲಿ ವೀರಶೈವ ಶಿವಯೋಗದ ಪರಿಕಲ್ಪನೆ, ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಸ್ಥಲಗಳ ಪರಿಕಲ್ಪನೆಯಲ್ಲಿ ಒಂದು-ಎರಡಾಗಿ, ಮೂರಾಗಿ, ಆರಾಗಿ ಮುವತ್ತಾರೂ ಆಗಿ; ಕೊನೆಗೆ ೧೦೧ ಆಗುವ ಸಾಧನಾ ಪಥದ ಹೆಜ್ಜೆಗಳು ಕೇವಲ ಸಂಖ್ಯಾ ಚಮತ್ಕಾರವಲ್ಲ: ಶಿವಯೋಗಿಗಳು ಸಾಧಿಸಬಹುದಾದ ಶಿವಯೋಗದ ಅಂಕಗಣಿತ; ಜೀವಂತ ಪ್ರಕ್ರಿಯೆ. ಯಾವ ಏಕ(ಸ್ಥಲ) ದಿಂದ ಅನೇಕ (೧೦೧) ವಾಗಿದೆಯೋ, ಯಾವ ಏಕ, ಅನೇಕದಂತಿದೆಯೋ, ಆ ಏಕವನ್ನು ಕಂಡು ಹಿಡಿದು ಅದರಲ್ಲಿ ಐಕ್ಯವಾಗುವುದೇ, ಶಿವಯೋಗದ ಪರಿ, ಲಿಂಗಾಂಗ ಸಾಮರಸ್ಯದ ಗುರಿ. ಶಿವನ ಪೂಜೆ, ಶಿವನ ಕ್ರಿಯೆ, ಶಿವಜಪ, ಶಿವಧಾನ್ಯ, ಶಿವಜ್ಞಾನಗಳ ಯೋಗಶಾಸ್ತ್ರ ಇಲ್ಲಿಯ ೧೦೧ ಸ್ಥಲಗಳು ಶಿವಯೋಗ ಸಾಧನೆಯ ಸೋಪಾನಗಳು. ಸೋಪಾನಗಳು ಶಿಖರಗಳಲ್ಲಿ ಬೆಟ್ಟದ ತುದಿಯಲ್ಲಿರುವ ದೇಗುಲಕ್ಕೆ, ಒಂದೊಂದೇ ಮೆಟ್ಟಿಲನ್ನು ಏರಿ, ಮನಸ್ಸಿನ ಎಲ್ಲ ಆತ೦ಕಗಳನ್ನು ಹಿಂದಕ್ಕೆ ತಳ್ಳಿ, ಮುಂದೆ ಸಾಗುವ ಯಾತ್ರಿಕನಂತೆ ಅಂಗನು ಲಿಂಗದೇವನ ಯಾತ್ರೆಗೆ ಸಾಗುವ ಮಹಾಯಾತ್ರೆ (Long Journey). ಇದು ಶಿವಯೋಗ, ವಿಜ್ಞಾನ, ಪರವ ಮಾನಸಶಾಸ್ತ್ರ, ವ್ಯಕ್ತಿಯ ಮಾನಸಿಕ ವಿಕಾಸದ ಪರಿಪೂರ್ಣತೆ.

ಷಟ್ ಸ್ಥಲಗಳ ಸಾಧನಾಕ್ರಮ : ಪರಿಕಲ್ಪನೆ

ಶಿವನಲ್ಲಿರುವ ಶಕ್ತಿಯು, ಪ್ರವೃತ್ತಿ ಮಾರ್ಗದಲ್ಲಿ ಶಕ್ತಿರೂಪದಿಂದಿದ್ದು ನಿವೃತ್ತಿ ಮಾರ್ಗದಲ್ಲಿ ಭಕ್ತಿ ಸ್ವರೂಪವನ್ನು ತಾಳುತ್ತದೆ. ಅದೇ ಭಕ್ತಿ

ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯವೆಂಬ ಆರು ಸ್ಥಲಗಳಲ್ಲಿ ಕ್ರಮವಾಗಿ ಶ್ರದ್ಧಾ-ನಿಷ್ಕಾ-ಅವಧಾನ-ಅನುಭವ, ಆನಂದ-ಸಮರಸ ಭಾವವನ್ನು ಆಶ್ರಯಿಸುತ್ತವೆ.

ಸಾಧಕ (ಅಂಗ)ನು ಭಕ್ತಸ್ಥಲದಲ್ಲಿ ಅಷ್ಟಾವರಣ ಸಂಪನ್ನನಾಗಿ, ಪಂಚಾಚಾರ ಶೀಲನಾಗಿ, ಅವುಗಳನ್ನು ಅನುಷ್ಠಾನ ಮಾಡುವ ಪ್ರವೃತ್ತಿ ಬೆಳೆದು ಅವನಿಗೆ ‘ಶ್ರದ್ಧಾʼ ಭಾವನೆ ಬೆಳೆಯುತ್ತದೆ. ‘ಬೀಜ-ವೃಕ್ಷ’ ನ್ಯಾಯದಂತೆ, ಈ ಹಂತದಲ್ಲಿ ಬೀಜ ಪರಿವರ್ತನೆಗೊಂಡು, ವೃಕ್ಷ ಬೆಳೆಯುವಂತೆ, ದೇಹಾದಿ ಅಭಿಮಾನ ನಷ್ಠವಾಗಿ, ದೈವೀ ಶ್ರದ್ಧೆ ಬೆಳೆಯುತ್ತದೆ. 

ಮಹೇಶ ಸ್ಥಲದಲ್ಲಿ ಶ್ರದ್ಧೆ-ಕ್ರಮೇಣ ನಿಷ್ಠೆಯಾಗಿ, ಪರಿಣಮಿಸುತ್ತದೆ. ಸಾಧಕ ತನ್ನ ಆಚಾರ ವಿಚಾರಗಳಲ್ಲಿ ವ್ರತ ನಿಷ್ಠನಾಗುತ್ತಾನೆ. ದಾರ್ಶನಿಕರು ಈ ಸ್ಥಲವನ್ನು ‘ಸಲಿಲ-ಮುಕ್ತ ನ್ಯಾಯ’ಸ್ಥಲವೆಂದು ಕರೆದಿದ್ದಾರೆ. ಸಮುದ್ರದ ಮುತ್ತಿನ ಚಿಪ್ಪಿನಲ್ಲಿ ಬಿದ್ದ ಸ್ವಾತಿಯ ಮಳೆಯ, ನೀರು ಕಾಲಾನಂತರದಲ್ಲಿ ಗಟ್ಟಿಗೊಂಡು ಮುತ್ತು ಆಗವಂತೆ ಅಂಗನಲ್ಲಿ (ಸಾಧಕ) ಶ್ರದ್ಧೆ ನಿಷ್ಠೆಯಾಗಿ ಪರಿಣಮಿಸುತ್ತದೆ.

ಪ್ರಸಾದಿ ಸ್ಥಲದಲ್ಲಿ ಸಾಧಕನ ಭಕ್ತಿಯು ಚಿತ್ತಶುದ್ಧಿಯ ಮೂಲಕ ಅವಧಾನ ಭಕ್ತಿ ಎನಿಸುತ್ತದೆ. ಈ ಹಂತದಲ್ಲಿ ಸಾಧಕನಿಗೆ ಜಾಗ್ರತ, ಎಚ್ಚರ ಮೂಡುತ್ತದೆ. ಇದನ್ನು ‘ಅನಲ ಕಾಷ್ಠ ನ್ಯಾಯ’ ಸ್ಥಲವೆಂದು ಕರೆಯುತ್ತಾರೆ. ಅಗ್ನಿ ಸಂಪರ್ಕಕ್ಕೆ ಬಂದ ಕಾಷ್ಠ ತನ್ನ ಗುಣಗಳನ್ನು ಕಳೆದುಕೊಳ್ಳುವಂತೆ, ಸಾಧಕನಲ್ಲಿ ಶಿವಭಕ್ತಿ ಎಚ್ಚರಗೊಂಡು ಅವನ, ಮನಸ್ಸಿನ ದೋಷಗಳು, ಕಷಾಯಗಳು ಭಸ್ಮವಾಗಿ, ಚಿತ್ತ ಪ್ರಸನ್ನವಾಗಿ, ಪ್ರಸಾದ ಕಾಯನಾಗುತ್ತಾನೆ.

ಪ್ರಾಣಲಿಂಗಿ ಸ್ಥಲದಲ್ಲಿ ಸಾಧಕನ ಭಾವನೆ ಇನ್ನೂ ತೀವ್ರವಾಗಿ ಬೆಳೆದು ಅನುಭಾವ ಉಂಟಾಗುತ್ತದೆ.  ಇದನ್ನು ದಾರ್ಶನಿಕರು ‘ಭ್ರಮರ-ಕೀಟ ನ್ಯಾಯ’ ಎಂದು ಕರೆದಿದ್ದಾರೆ. ಕೀಟವೊಂದು ಭ್ರಮರವನ್ನು  ನೆನೆದು-ನೆನೆದು, ಭ್ರಮರವೇ ಆಗುವಂತೆ, ಅಂಗನು ಲಿಂಗವನ್ನು ನೆನೆದು-ನೆನೆದು, ಲಿಂಗವಾಗುವ ಹಂತಕ್ಕೆ ಏರುತ್ತಾನೆ. ʼʼಕೀಟ ಭ್ರಮರ ಯೋಗೇನ ಭ್ರಮರೋ ಭವತಿ ಧ್ರುವಂʼ’- ಶಿವಭಕ್ತ ಶಿವಯೋಗೇನ ʼʼಶಿವೋ ಭವತಿ ನಿಶ್ಚಿತಂ” ಎನ್ನುವ ಪ್ರಮಾಣ ವಾಕ್ಯದಲ್ಲಿ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗಿ, ಶಿವಾನುಭವದ ನೆಲೆಗೆ ಏರುತ್ತಾನೆ.

ಶರಣಸ್ಥಲ ಈ ಸ್ಥಲದಲ್ಲಿ ಸಾಧನಕಲ್ಲಿ ಆನಂದ ಭಕ್ತಿ ಉಂಟಾಗುತ್ತದೆ. ಶಿವನಲ್ಲಿ ಅಚಲ ನಂಬಿಕೆ ಬಂದು ಆನಂದವಾಗುತ್ತದೆ. ಈ ಸ್ಥಲವನ್ನು ʼʼಸತಿ-ಪತಿ ನ್ಯಾಯ’ ಸ್ಥಲವೆಂದು ಕರೆಯುತ್ತಾರೆ. ಇಲ್ಲಿ ಸಾಧಕನಿಗೆ ತಾನು ಶರಣನೆಂಬ ಅಭಿಮಾನ ಉಂಟಾಗುತ್ತದೆ. ತಾನು ಸತಿ-ಲಿಂಗಪತಿ ಎಂಬ ಭಾವನೆ ಬೆಳೆದು ಸಾಧನೆ ಮುಂದುವರಿಯುತ್ತದೆ.

ಐಕ್ಯಸ್ಥಲ-ಈ ಸ್ಥಲದಲ್ಲಿ ಸಾಧಕನಿಗೆ ಸಮರಸ ಭಾವ ಬೆಳೆಯುತ್ತದೆ. ಈ ಹಂತದಲ್ಲಿ ಜೀವ ಭಾವವಳಿದು, ಪರಮಾತ್ಮನಲ್ಲಿ ಅಂಗ ಭಾವವಳಿದು, ಲಿಂಗದಲ್ಲಿ ಬೆರೆಯುತ್ತಾನೆ. ಈ ಸ್ಥಲವನ್ನು ದಾರ್ಶನಿಕರು “ಶಿಖಿ-ಕರ್ಪೂರ ನ್ಯಾಯ’ವೆಂದು ಗುರುತಿಸುತ್ತಾರೆ. ಬೆಂಕಿ-ಕರ್ಪುರ ಸಂಯೋಗದಿಂದ ಉರಿದು ಕಡೆಗೆ, ಎರಡೂ ಇಲ್ಲವಾಗುವಂತೆ, ನೀರು-ನೀರಿನಲ್ಲಿ, ಬೆಂಕಿ-ಬೆಂಕಿಯಲ್ಲಿ ಬೆರೆಯುವಂತೆ, ನದಿಯು  ಸಮುದ್ರವನ್ನು ಸೇರುವಂತೆ, (ಜಲೇ-ಜಲಮಿವನ್ಯಸ್ತಂ ವಹ್ನೌವಹ್ನಿರಿವಾರ್ಪಿತಂ | ಪರಬ್ರಹ್ಮಣಿ ಲೀನಾತ್ಮ ವಿಭಾಗೇನ ಸದೃಕತ್ ಸಿದ್ಧಾಂತ ಶಿಖಾಮಣಿ). ಇದೇ ಲಿಂಗಾಂಗ – ಸಾಮರಸ್ಯ.

ಷಟ್‌ಸ್ಥಲಗಳ ಮಾರ್ಗದಲ್ಲಿ-ಭಕ್ತ-ಮಹೇಶ-ಪ್ರಸಾದಿ ಸ್ಥಲಗಳು- ಶಿವಯೋಗದ ಬಹಿರ್ ಸಾಧನೆಗಳಾದರೆ; ಪ್ರಾಣಲಿಂಗಿ-ಶರಣ-ಐಕ್ಯಸ್ಥಲಗಳು ಅಂತರಂಗ ಶಿವಯೋಗದ ಸಾಧನೆಗಳು   

ಯೋಗ-ಶಿವಯೋಗ :

ಪತಂಜಲಿಯ ಯೋಗಶಾಸ್ತ್ರಕ್ಕೂ ಶಿವಯೋಗಕ್ಕೂ ತುಂಬಾ ಸಾಮ್ಯತೆಯನ್ನು ಗುರುತಿಸಬಹುದಾಗಿದೆ. ದೇಹದ ಅಂತರ್- ಬಹಿರ್‌ ಶುದ್ಧಿಗಾಗಿ ಪತಂಜಲಿ ಹೇಳುವ ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರಗಳು ಬಹಿರ್ಯೊಗ, ಸಾಧನೆಗಳು, ಧಾರಣ ಧ್ಯಾನ-ಸಮಾಧಿಗಳು ಅಂತರಂಗದ ಯೋಗ ಸಾಧನೆಗಳು. ಯಮ-ನಿಯಮ ಪರಿಪಾಲನೆ ಶಿವಯೋಗದ ಭಕ್ತಸ್ಥಲದಲ್ಲಿ ಆಗುತ್ತದೆ. ಪ್ರತ್ಯಾಹಾರ- ಪ್ರಸಾದಿ ಸ್ಥಲದಲ್ಲೂ; ಧ್ಯಾನ-ಧಾರಣ, ಪ್ರಾಣಲಿಂಗಿ ಸ್ಥಲದಲ್ಲೂ; ಸಮಾಧಿ-ಐಕ್ಯಸ್ಥಲದಲ್ಲೂ, ಶಿವಯೋಗಿಯ ಆಚರಣೆಯ ಅನುಭವಕ್ಕೆ ಬರುತ್ತವೆ.

ಲಿಂಗಾಂಗ ಸಾಮರಸ್ಯವನ್ನು ಸಾಧಿಸಲು, ಶಿವಯೋಗಿಗಳು ಸಾಧಿಸಿದ ಯೋಗ- ಶಿವಯೋಗ. ಹಠ-ಲಯ-ಮಂತ್ರ-ರಾಜ ಯೋಗಗಳು ಶರೀರ, ಪ್ರಾಣ, ಮನ, ಬುದ್ಧಿಗಳನ್ನು ಶುದ್ದೀಕರಿಸಿ, ಅವುಗಳ ವಿಕಾಸಕ್ಕೆ ಕಾರಣವಾದರೆ ಶಿವಯೋಗ, ಈ ಎಲ್ಲಾ ಶಕ್ತಿಗಳನ್ನು ವಿಕಾಸಗೊಳಿಸಿ, ಲಿಂಗಾಂಗ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಶರೀರ- ಇಂದ್ರಿಯ, ಮನ, ಪ್ರಾಣ, ಬುದ್ಧಿಗಳಲ್ಲಿ ಲಿಂಗ ಕಿರಣಗಳನ್ನು ಬೆಳಗಿಸಿ, ಶಿವಾತ್ಮಕವಾಗಿ ರೂಪಾಂತರಗೊಳಿಸುವುದೇ, ಶಿವಯೋಗ. ದೇಹಕ್ಕೆ ಸ್ಥಿರತೆ ನೀಡುವ ಆಸನ, ವಾಯುವಿಗೆ ಸ್ಥಿರತೆ ನೀಡುವ ಪ್ರಾಣಾಯಾಮ ಇವು ಇಷ್ಟಲಿಂಗದ ದೃಷ್ಟಿಯೋಗದಿಂದ ಸಂಭವಿಸುತ್ತವೆ. ಇಂದ್ರಿಯಗಳ ಬಯಕೆಗಳನ್ನು, ಹಿಂದಿರುಗಿಸುವ, ಪ್ರತ್ಯಾಹಾರವು ಪ್ರಸಾದಿ ಸ್ಥಲದಲ್ಲೇ ಅನುಭವಕ್ಕೆ ಬರುತ್ತದೆ. ಇಂದ್ರಿಯಗಳ ವಿಷಯಗಳನ್ನು ಪದಾರ್ಥರೂಪದಿಂದ ಗ್ರಹಿಸದೇ ಪ್ರಸಾದ ರೂಪದಿಂದ ಗ್ರಹಿಸುವ ಕಾರಣ, ಪ್ರತ್ಯಾಹಾರವನ್ನು ಪ್ರತ್ಯೇಕವಾಗಿ ಆಚರಿಸುವ ಅಗತ್ಯವಿಲ್ಲ. ಧ್ಯಾನ-ಸಮಾಧಿಗಳು, ಐಕ್ಯಸ್ಥಲದಲ್ಲಿ ಅನುಭವಕ್ಕೆ ಬರುತ್ತವೆ. ಕಣ್ಣಿಗೆ ಕಾಣುವುದು, ಇಷ್ಟಲಿಂಗ, ಮನಸ್ಸಿಗೆ ಕಾಣುವುದು ಪ್ರಾಣಲಿಂಗ, ಭಾವದಲ್ಲಿ ಕಾಣುವುದು ಭಾವಲಿಂಗ, ಪತಂಜಲಿಯೂ ಸಮಾಧಿಗಳಲ್ಲಿ ಸಂಪ್ರಜ್ಞಾತ ಅಸಂಪ್ರಜ್ಞತವೆಂದು  ಎರಡು ವಿಧವೆಂದು ಹೇಳುತ್ತಾನೆ.

ಭಾವದಲ್ಲಿ ಮನಸ್ಸು ಮಗ್ನವಾಗುವುದು ಸಂಪ್ರಜ್ಞಾತ ಸಮಾಧಿ, ಭಾವದಲ್ಲೇ ಮನಸ್ಸು ನಿಮಗ್ನ (ಮುಳುಗು) ವಾಗುವುದು, ಅಸಂಪ್ರಜ್ಞಾತ ಸಮಾಧಿ ಇದಕ್ಕೊಂದು ದೃಷ್ಟಾಂತ ಹೀಗಿದೆ. ಒಂದು ತೊಟ್ಟಿಲಲ್ಲಿ ಮಗು ಆಡುತ್ತಾ ಮಲಗಿದೆ. ಅದನ್ನು ಮಲಗಿಸಲು ತಾಯಿ ಜೋಗುಳ ಹಾಡುತ್ತಾ ತೂಗುತ್ತಿದ್ದಾಳೆ ಆಕೆ ಹಾಡುತ್ತಿದ್ದಾಳೆ, ಕಾಲ ಸರಿಯುತ್ತದೆ. ತಾಯಿಯ ಹಾಡು ಕೇಳುತ್ತಾ ಕೇಳುತ್ತಾ ಮಗು ಮೌನವಾಗುತ್ತದೆ. ಮಲಗಿ ಆನಂದಿಸುತ್ತದೆ. ತೂಗುತ್ತಾ-ತೂಗುತ್ತಾ ತಾಯಿ ತನಗರಿವಿಲ್ಲದಂತೆ, ನಿಶ್ಯಬ್ದ ನಿದ್ರೆಯಲ್ಲಿ ಪ್ರವೇಶಿಸುತ್ತಾಳೆ. ಆ ಸಮಯದಲ್ಲಿ ಮಗುವಿಲ್ಲ; ತಾಯಿಯಿಲ್ಲ; ತೊಟ್ಟಿಲಲ್ಲಿ ತೂಗುವಿಕೆಯೂ ಇಲ್ಲ. ಆನಂದ ಸಮರಸಗೊಂಡಿದೆ. ಅಲ್ಲಿ ವ್ಯಕ್ತಿ ಪ್ರಜ್ಞೆಯೂ ಇಲ್ಲ. ಇದು ಅಸಂಪ್ರಜ್ಞಾತ ಸಮಾಧಿಯೋಗ.

ಲಿಂಗವು ಪೂಜ್ಯವಸ್ತು; ಅಂಗ ಪೂಜಕ, ಶರೀರದಲ್ಲಿ ಆರು ಚಕ್ರಗಳಿವೆ. ಎಂದು ಯೋಗಿಗಳು ಹೇಳುತ್ತಾರೆ. ಮೂಲಾಧಾರ (ಮಲಸ್ಥಾನ) ಸ್ವಾಧಿಷ್ಠಾನ (ಜಲಸ್ಥಾನ) ಮಣಿಪುರ (ಅಗ್ನಿಸ್ಥಾನ) ಅನಾಹತ (ವಾಯು ಸ್ಥಾನ) ವಿಶುದ್ಧಿ (ಶಬ್ದ) ಆಜ್ಞಾ (ಮನಸ್ಸು) ಇವು ಶಕ್ತಿಯ ಜಾಗೃತ ಸಾಧನೆಯ ಅಂಶಗಳು, ಈ ಆರು ಚಕ್ರಗಳಲ್ಲಿ ಒಂದೊಂದರಂತೆ ಆರು ಲಿಂಗಗಳಿದ್ದು, ಪ್ರತಿಯೊಂದು ಚಕ್ರದಲ್ಲೂ ಲಿಂಗ- ಅಂಗಗಳ ಸಾಮರಸ್ಯವನ್ನು, ಶಿವಯೋಗಿಯು, ಇಷ್ಟಲಿಂಗದ ಮೂಲಕ ಸಾಧಿಸಬೇಕು. ಮೂಲಾಧಾರದಲ್ಲಿ ಆಚಾರಲಿಂಗ, ಸ್ವಾಧಿಷ್ಠಾನದಲ್ಲಿ ಗುರುಲಿಂಗ, ಮಣಿಪುರದಲ್ಲಿ ಶಿವಲಿಂಗ : ಅನಾಹತ ಚಕ್ರದಲ್ಲಿ ಜಂಗಮ ಲಿಂಗ, ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗ; ಆಜ್ಞಾಚಕ್ರದಲ್ಲಿ ಮಹಾಲಿಂಗ. ಹೀಗೆ ಶಿವಯೋಗ ಸಾಧಕನ ಇಡೀ ದೇಹವೇ, ಲಿಂಗಮಯ ಎನ್ನುವ ಅದ್ಭುತ ಕಲ್ಪನೆ ಶಿವಯೋಗದಲ್ಲಿದೆ. ಭ್ರೂಮಧ್ಯದ, ಮೇಲು ಭಾಗದಲ್ಲಿ ಬ್ರಹ್ಮರಂಧ್ರವಿದೆ. ಅಲ್ಲಿ ಸಾವಿರಾರು ದಳದ ಕಮಲ ಮಧ್ಯದಲ್ಲಿ ಚಂದ್ರಮಂಡಲ-ಕೈಲಾಸ. ಅಲ್ಲಿ ಮೂವತ್ತಾರು ತತ್ತ್ವಗಳಿಗೆ, ಅತೀತವಾದ ಸ್ವಪ್ರಕಾಶವಿದೆ. ಅಲ್ಲಿ ಹಂಸರೂಪಿ ಲಿಂಗವನ್ನು ಅವನೇ ನಾನು (ಸೋಹಂ) ಎನ್ನುವ ಭಾವನೆಯಿಂದ ಧ್ಯಾನಿಸುತ್ತಾನೆ ಇದೇ ಶಿವ ಜೀವೈಕ್ಯ ಸಿದ್ಧಿ. ಇದೇ ಲಿಂಗಾಂಗ ಸಾಮರಸ್ಯದ ಪರಿಕಲ್ಪನೆ. ಇದೇ ಶಿವಯೋಗ ಸಮಾಧಿ. ಶಿವಯೋಗದಲ್ಲಿ ಭಕ್ತಸ್ಥಲ ದಿಂದ-ಐಕ್ಯಸ್ಥಲದ ವರೆಗೆ ಸಾಧಕ ಬೆಳೆಯುತ್ತಾ ಬಂದಂತೆ, ಲಿಂಗೋಪಾಸನೆಯಿಂದ, ಭಕ್ತಿಯೂ ವಿಕಾಸಗೊಳ್ಳುತ್ತಾ ಬರುತ್ತದೆ. ಆಯಾ ಲಿಂಗಗಳ ಕ್ರಿಯಾ ಶಕ್ತಿಯೂ, ವಿಕಾಸವಾಗುತ್ತದೆ. ವೀರಶೈವ ಶಿವಯೋಗದ ವಿಭಾಗ ವಿಫುಲ ವೈವಿಧ್ಯವನ್ನು ಪಡೆದಿದೆ. ಷಟ್‌ಸ್ಥಲಗಳಲ್ಲಿ ೧೮ ವಿಭಾಗ ; ೩೬ ವಿಭಾಗ ಕೆಲವೆಡೆ ೨೧೬ ರವರೆಗೂ ಹಬ್ಬಿ ಹರಡಿದೆ. ಇವುಗಳಲ್ಲಿ ಏಕೋತ್ತರ ಶತಸ್ಥಲದ ಪರಿಕಲ್ಪನೆ ಪ್ರಸಿದ್ಧವಾಗಿದೆ. ೧೦೧ ಸ್ಥಲಗಳ ವಿಭಾಗ ಕ್ರಮದಲ್ಲಿ ಅಧ್ಯಾತ್ಮಿಕ ವಿಕಾಸದ ಆಶಯ ವ್ಯಕ್ತವಾಗಿದೆ. ಲಿಂಗ ಸ್ವರೂಪ-ಉಪಾಸನಾ ವಿಧಾನ, ಶಕ್ತಿ-ಭಕ್ತಿಗಳ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿ ತಿಳಿಸುತ್ತವೆ. ಶಿವಯೋಗ ಸಾಧನೆಗೆ ಇದು ಒಂದು ಮನಶ್ಯಾಸ್ತ್ರದ ಕೈಪಿಡಿ. ಇಲ್ಲಿ ಭಕ್ತಿ-ಜ್ಞಾನ-ಕ್ರಿಯೆ-ಧ್ಯಾನ-ಉಪಾಸನೆ ಎಲ್ಲವೂ ಸಂಮಿಲಿತವಾಗಿದೆ. ವೀರಶೈವ ಧರ್ಮದ ತಾತ್ವಿಕ ಭಾಗ ಸಿದ್ಧಾಂತವಾದರೆ ಶಿವಯೋಗ ಅದರ ಪ್ರಯೋಗ. ಲಿಂಗಾಂಗ ಸಾಮರಸ್ಯ ಅದರ ಸಿದ್ಧಿ Science and applied science ಎಂದು ಹೇಳಬಹುದು. ಒಟ್ಟಿನಲ್ಲಿ ವೀರಶೈವದ ಶಿವಯೋಗ ಸಾಧನಾ ರಂಗವು ಲಿಂಗಾಗ ಸಾಮರಸ್ಯ ಯೋಗ ವಿಜ್ಞಾನದ ಮಹಾ ಪ್ರಯೋಗ ಶಾಲೆ ಎಂದು ಹೇಳಬಹುದಾಗಿದೆ.

ಅವಲೋಕಿಸಿದ ಕೃತಿಗಳು :

೧. ಶಿವಯೋಗ ಪ್ರದೀಪಿಕಾ : ಚನ್ನಸದಾಶಿವಯೋಗಿ

೨. ಯೋಗದರ್ಶನ : ಪತಂಜಲಿ

೩. ಯೋಗಾಂಕ : ಗೀತಾ ಪ್ರೆಸ್ ಗೋರಖಪುರ

೪. ಶಕ್ತಿವಿಶಿಷ್ಟಾದ್ವೈತ : ವೈ. ನಾಗೇಶ ಶಾಸ್ತ್ರಿ

೫.ಶಿವಾದ್ವೈತ ದರ್ಶನ; ಡಾ .ಜ.ಚ.ನಿ

೬. ಶಕ್ತಿವಿಶಿಷ್ಟಾದ್ವೈ ತ ತತ್ತ್ವತ್ರಯ ವಿಮರ್ಶೆ : ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು.

೭.ಭಾರತೀಯ ತತ್ತ್ವಶಾಸ್ತ್ರ : ಡಾ. ಎಂ. ಪ್ರಭಾಕರ ಜೋಷಿ, ಪ್ರೊ. ಹೆಗಡೆ ಸಿದ್ದಾಪುರ

೮.ಮಹಾಯಾತ್ರೆ : ಡಾ. ಆರ್. ಸಿ. ಹಿರೇಮಠ .

೯.ವಚನಗಳಲ್ಲಿ ವೀರಶೈವ ಧರ್ಮ : ಡಾ. ಹೆಚ್. ತಿಪ್ಪೇರುದ್ರಸ್ವಾಮಿ

೧೦. ವಚನ ಶಾಸ್ತ್ರ ರಹಸ್ಯ : ರಂ. ರಾ. ದಿವಾಕರ

೧೧. ವೀರಶೈವ ಸಂಹಿತೆ : ಷಣ್ಮುಖಯ್ಯ ಅಕ್ಕೂರಮಠ

೧೨. ಸೂಕ್ಷ್ಮಾಗಮ : ಅನು : ಷಣ್ಮುಖಯ್ಯ ಅಕ್ಕೂರಮಠ

೧೩. ಶಕ್ತಿ ವಿಶಿಷ್ಟಾದ್ವೈತ ದರ್ಶನ : ಡಾ. ಟಿ. ಜಿ. ಸಿದ್ಧಪ್ಪಾರಾಧ್ಯ

೧೪. ದರ್ಶನ : ದಿಗ್ದರ್ಶನ : ಮಹಾಪಂಡಿತ ರಾಹುಲ ಸಾಂಕೃತ್ಯಾಯನ

೧೫. ಧ್ಯಾನ ಮತ್ತು ಆಧ್ಯಾತ್ಮಿಕ ಜೀವನ : ಸ್ವಾಮಿ ಯತೀಶ್ವರಾನಂದ

.