ವರದಿ ನಿರೂಪಕರು.

ಪೂಜ್ಯ ಶಿವಬಸವ ದೇವರು ಧಾರವಾಡ

ಪೂಜ್ಯ ಅಡವೀಶ ದೇವರು ತಾರಿಹಾಳ

ಪೂಜ್ಯ ಆನಂದ ದೇವರು ಹುಣಶ್ಯಾಳ (ಚಿತ್ರಗಳ ಸಂಗ್ರಹ)

 

(ಸುಮಾರು ೪೦ ಸಾಧಕರು ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದವರು ಅನೇಕ ಮಠಗಳಿಗೆ ಉತ್ತರಾಧಿಕಾರಿಗಳಾದವರು, ಹಾಗೂ ಪಟ್ಟಾಧಿಕಾರಿಗಳಾದವರು  ಎಲ್ಲರೂ ಸೇರಿಕೊಂಡು 5 ದಿವಸ ಶಿವಯೋಗ  ಮಂದಿರದಲ್ಲಿ ಇದ್ದುಕೊಂಡು ಗೋಶಾಲೆ ಸ್ವಚ್ಛತೆ ,ಎಲ್ಲ ಗೋಡೆಗಳಿಗೂ ಬಣ್ಣ ಹಚ್ಚುದ ಕೆಲಸ, ನದಿಯ ಪಕ್ಕದಲ್ಲಿರುವ ಸ್ವಚ್ಛತೆ, ಭಸ್ಮ ತಯಾರಿಸುವ ಕಟ್ಟಡದ ಸ್ವಚ್ಛತೆ , ಬಣ್ಣ ಹಚ್ಚುವ ಕೆಲಸ ಜೊತೆಗೆ ಗುರು ಕುಮಾರೇಶ್ವರ ಗದ್ದುಗೆ ಸ್ವಚ್ಛತೆ ಮತ್ತು  ವಾಟರ್ ಫ್ರೆಶರ್‌ ಮಶಿನ್ ಕೊಡುಗೆಯ ಸೇವೆ ಮಾಡಿದ ಯುವ ಯತಿಗಳ ಸೇವೆ ಅನನ್ಯವಾದುದು.

”ಶ್ರೀಕುಮಾರ ತರಂಗಿಣಿ” ಬ್ಲಾಗ್‌ ವರದಿ ರೂಪದಲ್ಲಿ ಪ್ರಕಟಿಸಲು ಹಲವು ಬಾರಿ ಕೇಳಿಕೊಂಡರೂ ಬಹಳ ಸಂಕೋಚಪಟ್ಟುಕೊಂಡ ಯುವಯತಿಗಳ ಪ್ರಚಾರಪ್ರಿಯವಲ್ಲದ ಅನುಪಮ ಸೇವೆ ಮುಂದಿನ ತಲೆಮಾರಿನ ಯುವ ಯತಿಗಳಿಗೆ ದಿಕ್ಸೂಚಿಯಾಗಲೆಂಬ ಒಂದೇ ಒಂದು ಆಶಯದೊಂದಿಗೆ ಒತ್ತಾಯಪೂರ್ವಕ ಈ ವರದಿಯನ್ನು ಸಿದ್ದಪಡಿಸಲಾಗಿದೆ.

ಈ ಸೇವೆಯ ಉದ್ದೇಶವೇನು ಎಂದು ಕೇಳಿದಾಗ ,ಸಾಧಕರ ಈ ಪ್ರಾಮಾಣಿಕ ಮತ್ತು ಪ್ರಾಂಜಲ ಅಂತರಾಳದ ನುಡಿಗಳು ಹೀಗೆ ವ್ಯಕ್ತವಾಗಿವೆ

“ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಸಂಪಾದಕ-”ಶ್ರೀಕುಮಾರ ತರಂಗಿಣಿ” ಬ್ಲಾಗ್‌)

ಸಮಾಜ ಸೇವಾ ದೀಕ್ಷೆ ತೊಟ್ಟಿರುವ ಅಧ್ಯಾತ್ಮ  ಸಾಧಕರಿಗೆ ಒಂದು ಸೇವಾ  ಕಲ್ಪನೆ ಮೂಡಿತು.ಅದು ಎಲ್ಲ ಸಾಧಕರ  ಮನಸ್ಸಿನಲ್ಲಿ  ವಿಚಾರವಾಗಿ ತೋರಿದಾಗ ಅದನ್ನು ಎಲ್ಲ ಮರೀದೇವರುಗಳು ಮನಸಾ ಪೂರ್ವಕವಾಗಿ ಒಪ್ಪಿಕೊಂಡರು. ಆ ಸೇವಾ ತೃಪ್ತಿ ಕಾಯಕವೇ ಪರಮಪೂಜ್ಯ ಶ್ರೀ ಹಾನಗಲ್ಲ ಗುರು ಕುಮಾರೇಶನ ಶಿವಯೋಗ ತಾಣ  ಶಿವಯೋಗ ಮಂದಿರ. ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪ ದಿನಗಳವರೆಗೆ ಸೇವೆ ಮಾಡುವುದಾಗಿ  ನಿರ್ಣಯ ಮಾಡಲಾಯತು.

ಗುರು ಕುಮಾರ ಶಿವಯೋಗಿಗಳು   ಪರಿಸರ ಪ್ರೇಮಿಗಳು ಹಾಗೂ  ಕೃಷಿ ಆಸಕ್ತಿ  ಪ್ರೇರಣಾದಾಯಕರು, ತತ್ ಕಾರಣ ಎಲ್ಲ ಸಾಧಕರು 2022 ರ ಆಷಾಢ ಮಾಸದಲ್ಲಿ  ಶಿವಯೋಗ ಮಂದಿರದಲ್ಲಿ ಸುಮಾರು ಒಂದು ಸಾವಿರ (1000) ಸಸಿ ನೆಡುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು. ಸಸಿಗಳನ್ನ ನೆಟ್ಟೆವು.

ಅದೇ ರೀತಿಯಾಗಿ ಈ ವರ್ಷದ 2023 ರ ಆಷಾಢ ಮಾಸದ ಸೇವಾ ಕೈಂಕರ್ಯ.

ಶ್ರೀ ಶಿವಯೋಗ ಮಂದಿರದಲ್ಲಿ ಶತಮಾನದ ಹಿಂದೆ ಸ್ಥಾಪಿಸಿದ.ಸುಮಾರು 500ಕ್ಕೂ ಹೆಚ್ಚು ದೇಶಿ ಹಸುಗಳನ್ನು  ಪಾಲನೆ ಮಾಡಿರುವ  ಗೋಶಾಲೆ ಅಲ್ಲಿನ ಪ್ರಕೃತಿ  ವೈಭವಕ್ಕೆ ಸಾಕ್ಷಿಯಾಗಿದೆ .

ಆ ಗೋಶಾಲೆ ಸ್ವಚ್ಛಗೊಳಿಸುವುದು ಮೊದಲ ಸೇವಾ ಕಾಯಕವಾಯಿತು. ಜೊತೆಗೆ ಎಲ್ಲ ಗೋಶಾಲೆಗಳ ಗೋಡೆಗಳಿಗೆ ಹಾಗೂ ಕಂಬಗಳಿಗೆ ಬಣ್ಣ ಲೇಪನ ಮಾಡುವ  ಕೆಲಸವನ್ನು ಸ್ವತಃ ಎಲ್ಲ ಸಾಧಕರೇ ಮಾಡಿದರು. ಅದೊಂದು  ಸಾಧಕರ ಆತ್ಮ ತೃಪ್ತಿ ಸೇವೆ ಎಂದಿನಿಸಿತ್ತು.

ಹಸುಗಳಿಂದ ದೊರೆತ ಪವಿತ್ರ ಗೋಮಯದಿಂದ (ಸಗಣಿ)  ತಯಾರಾಗುವ ಶುದ್ಧ ಭಸ್ಮ ತಯಾರಿಕಾ ಕೇಂದ್ರವನ್ನು ನಾವು ಶಿವಯೋಗ ಮಂದಿರದಲ್ಲಿ ನೋಡಬಹುದು. ಆ ಭಸ್ಮ ತಯಾರಿಕ ಕೇಂದ್ರ ಕಟ್ಟಡದ  ಗೋಡೆಗಳಿಗೂ ಬಣ್ಣ ಲೇಪನ ಮಾಡುವ ಸೇವೆ ನಮ್ಮ ಸಾಧಕರಾದ್ದಾಗಿತ್ತು.

ಶಿವಯೋಗ ಮಂದಿರದಲ್ಲಿ ಉಳಿದ ಎಲ್ಲ ಕೆಲಸಗಳನ್ನು ಮಾಡುವುದಾಗಿ ನಿರ್ಣಯಿಸಿದೆವು.

ಸೇವಾ ಕಾರ್ಯಕ್ಕೆ ಬೇಕಾದ ಎಲ್ಲ ಹೊಸ ಸಾಮಗ್ರಿಗಳನ್ನು ಸಾಧಕರು  ನೀಡಿರುವಂತಹ ಹಣದಿಂದ ಕೊಂಡು ತರಲಾಯಿತು.

ಎಲ್ಲ ಸಾಧಕರು ತಮ್ಮ ವಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಒಂದು ವಾರ ಶಿವಯೋಗಮಂದಿರದಲ್ಲಿ ಇದ್ದುಕೊಂಡು ಸೇವೆ ಮಾಡುವುದು ಎಂದು ನಿರ್ಣಯಿಸಿ ಸೇವೆ ಸಲ್ಲಿಸಿದರು.

ಸಾಧಕರ ಸೇವೆಯ ಹಿನ್ನಲೆ

ಹಿಂದಿನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಸೇವೆ ಮಾಡುವುದು ಒಂದು ಪ್ರತಿತಿ ಇದೆ ಸೇವೆ ಎಂದರೆ ಪೂಜಿಸು ಎಂದರ್ಥ ಪೂಜಿಸು ಎಂದರೆ ಗಂಧ ಅಕ್ಷತೆ ದೂಪದೀಪಾರತಿಗಳಿಂದ ಪೂಜಿಸುವದಷ್ಟೇ ಅಲ್ಲ..

ತಂದೆ ತಾಯಿಯನ್ನು ಮಕ್ಕಳಂತೆ ಉಪಚರಿಸುವುದು, ಭಕ್ತಿಯಿಂದ ಗುರು ಸೇವೆ ಮಾಡುವುದು ಮತ್ತು ಮೂಕ ಪ್ರಾಣಿಗಳನ್ನು ಉಪಚರಿಸುವುದು  ಒಂದು ಪುಣ್ಯದ ಕೆಲಸವೇ.

ರಾಮಾಯಣದಲ್ಲಿ ರಾಮನ ಅಜ್ಜ ದಿಲೀಪ ಮಹಾರಾಜನು ಕೂಡ ಗೋಸೇವೆಯನ್ನು ಮಾಡಿ ಸದ್ಗತಿ ಹೊಂದಿದ್ದನ್ನು ನೋಡಬಹುದು. ಸೇವೆ ಮಾಡುವುದು ಎಂದರೆ ಏನನ್ನು ಅಪೇಕ್ಷೆ ಪಡದೆ ನಿಸ್ವಾರ್ಥವಾಗಿ ಉಪಚರಿಸುವುದೇ ಸೇವೆ.ಸೇವೆ  ಮಾಡುವುದರಿಂದ ತನುಮನ ಶುದ್ಧಗೊಳ್ಳುವವು.

ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಕುಮಾರೇಶ್ವರ ಸೇವೆಯು ಪುಣ್ಯ ಪವಿತ್ರವಾದದ್ದು. ಶ್ರೀ ಶಿವಯೋಗ ಮಂದಿರಕ್ಕೆ ಸುಮಾರು 40  ಸಾಧಕರು ಸೇವೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದರು ಸೇವೆ ಮಾಡಲು ಬಂದಿರುವ ಸಾಧಕರಲ್ಲಿ ಸೇವೆಯ ಉತ್ಸಾಹ, ಸಂತೋಷ  ಎದ್ದು ಕಾಣುತ್ತಿತ್ತು.

ಲಿಂ.ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಕನಸಿನ ಶ್ರೀ ಮದ್ವಿರಶೈವ ಶಿವಯೋಗ ಮಂದಿರ 1909 ರಲ್ಲಿ ನಾಡಿನ ಹಲವು ಮಹಾತ್ಮರ ಸಾಕ್ಷಿ ಸಾನಿಧ್ಯದಲ್ಲಿ ಶಿವಯೋಗಿಗಳ ಅಮೃತ ಹಸ್ತದಿಂದ ಸ್ಥಾಪಿಸಲಾಯಿತು.

ಶಿವಯೋಗ ಮಂದಿರದ ಗೋಶಾಲೆ ಮತ್ತು ಪೂಜ್ಯ ಯಳಂದೂರು ಬಸವಲಿಂಗ ಮಹಾಶಿವಯೋಗಿಗಳ ಗೋಶಾಲೆ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡೆವು,ಗೋವುಗಳನ್ನು ಕಾಳಜಿಯಿಂದ,ಪ್ರೀತಿಯಿಂದ ಮುದ್ದಿಸುವುದು ಸಾಧಕರಾದಂತಹ ನಮಗೆಲ್ಲ ಒಂದು ಸವಿನೆನಪು. ಗೋಶಾಲೆಯ ಗೋವುಗಳು ಮೇಯಲು ಹೊರಗಡೆ ಹೋದಮೇಲೆ ಗೋಶಾಲೆಯಲ್ಲಿರುವಂತಹ ಸಗಣಿಯನ್ನು ಒಂದು ಕಡೆ ಗೂಡಿಸಿ ಅದನ್ನು ಭಸ್ಮ ತಯಾರಿಕಾ ಕೇಂದ್ರಕ್ಕೆ ಕಳಿಸಿಕೊಟ್ಟೆವು ತದನಂತರ ಸಾಧಕರಿಂದ ಕೊಡುಗೆಯಾಗಿ ತೆಗೆದುಕೊಂಡು ಬಂದಿರುವಂತಹ ಸುಮಾರು 48000 ರೂ ವೆಚ್ಚದ ಫ್ರೆಶರ್ ಕ್ಲಿನಿಂಗ ಮಷೀನ್ ಮೂಲಕ ಗಟ್ಟಿಯಾದಂತಹ ಸಗಣಿ ಮತ್ತು ಗೋಶಾಲೆಯನ್ನು ಶುಚಿಗೋಳಸಿ ಔಷದ ಉಪಕರಣಗಳಿಂದ ಗೋಶಾಲೆಯಲ್ಲಿ ಹುಳಗಳು ಆಗದಂತೆ ಗೋಶಾಲೆಯನ್ನು ಶುಚಿ ಗೊಳಿಸಿದೆವು.

  ಕುಮಾರೇಶ್ವರ ಶ್ರೀ ಗದ್ದುಗೆಯ ಗೋಡೆಗಳು ಹಾಗೂ ಸದಾಶಿವ ಮಹಾಸ್ವಾಮಿಗಳ ಗದ್ದುಗೆಯ ಭವನದ ಶಿಲಾಮಂಟಪವನ್ನು ಸ್ವಚ್ಛಗೊಳಿಸಿದೆವು. ಕಲ್ಲುಗಳಿಗೆ ಅಂಟಿಕೊಂಡಿರುವಂತಹ ಕಪ್ಪು ಕಲೆ ಮತ್ತು ಪಾಚಿಯನ್ನು ಸ್ವಚ್ಛಗೊಳಿಸಿದೆವು.

ವಿಶೇಷವಾಗಿ ಎಲ್ಲ ಸಾಧಕರು ತಮ್ಮ ಶ್ರೀ ಮಠಗಳ ಗ್ರಾಮದಿಂದ ಭಕ್ತಜನರನ್ನು ಕರೆದುಕೊಂಡು ಬಂದು ಒಂದು ಪೂರ್ಣ ದಿನದ ಸೇವೆಯನ್ನು ಭಕ್ತರಿಂದ ಸೇವೆ ಸಲ್ಲಿಸಲಾಯಿತು.

ತೋಟಗಳ ಸ್ವಚ್ಛತೆ ನದಿ ದಡದಲ್ಲಿ ಬಿದ್ದಿರುವ ಹೂಳು ತೆಗಿಸುವ ಸೇವೆ,ಗೋಶಾಲೆ ಗೋಡೆಗಳಿಗೆ ಬಣ್ಣ ಲೇಪಿಸುವ ಕೆಲಸ ಇನ್ನಿತರ  ಕೆಲಸಗಳನ್ನ  ಭಕ್ತರು ಶ್ರದ್ಧೆಯಿಂದ, ಭಕ್ತಿಯಿಂದ  ಮಾಡಿದರು.

ಭಕ್ತರ ಒಂದು ದಿನದ ಕುಮಾರೇಶ್ವರ ಸೇವೆಯು ಬಹಳ ಭಕ್ತಿ ಭಾವದಿಂದ ನೆರವೇರಿತು.

ಸೇವಾರ್ಥಿಗಳಿಗೆ  ಶಿವಯೋಗ ಮಂದಿರ ವತಿಯಿಂದ ಭಸ್ಮ ರುದ್ರಾಕ್ಷಿ ಹಾಗೂ ಕುಮಾರೇಶ್ವರ ಭಾವಚಿತ್ರವನ್ನು ಆಶೀರ್ವಾದ ರೂಪದಲ್ಲಿ ನೀಡಲಾಯಿತು.

ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷರಾದ ಹಾವೇರಿಯ ಪೂಜ್ಯ ಸದಾಶಿವ ಸ್ವಾಮಿಗಳವರ ಪರವಾನಿಗೆ ಪಡೆದು ಎಲ್ಲ ಸೇವೆ ಸಲ್ಲಿಸಲಾಯಿತು.

 ಶಿವಯೋಗ ಮಂದಿರದ   ಮಡಿಲಿನಲ್ಲಿ ಬೆಳೆದಂತಹ ನಮಗೆಲ್ಲ ಶ್ರೀ  ಕುಮಾರ ಶಿವಯೋಗಿಗಳ ಶಿವಯೋಗತಾಣದ  ಸೇವೆ ಮಾಡುವುದೇ  ಪುಣ್ಯ.ನಮ್ಮ ಜೀವನವೇ ಧನ್ಯ.

ಕುಮಾರೇಶನ ಸೇವೆ ನಮ್ಮ ಬದುಕಿನುದ್ದಕ್ಕೂ  ಮಾಡಿದರು ಸಾಕೇನಿಸದು.ಕುಮಾರೇಶನ ಸೇವೆ ಅದು ಸಾಮಾಜದ ಸೇವೆ ಅದು ಸ್ವಾಮಿ ಸಂಕುಲದ ಏಳಿಗೆ.ಸಮಾಜ ಸೇವಾ ದೀಕ್ಷಾ ತೊಟ್ಟಿರುವ ನಮಗೆ  ಕುಮಾರೇಶನೆ ದಾರಿ ದೀಪ.

ಶಿವಯೋಗ ಮಂದಿರದಲ್ಲಿ ಪ್ರತಿ ನಿತ್ಯ ಮಾಡುವ ಸೇವಾ ಕಾಯಕದಲ್ಲಿ ಒಂದು ವಾರ ನಾವು ಸೇವಾ ಕಾಯಕಕ್ಕೆ ಸಾಕ್ಷಿ  ಆದೆವು

ಗುರುಮಾರೇಶ್ವರ ವಾಣಿ:

ಸ್ವಾಮಿ ಎಂದರೆ.. ಒಡೆಯನಲ್ಲ ಸಮಾಜದ ನಿಷ್ಠಾವಂತ ಸೇವಕ…

ಇಡೀ ಸಮಾಜಕ್ಕೆ  ಗುರುಕುಮಾರೇಶ್ವರ ಸಮಾಜ ಶಕ್ತಿ

🌹 ಸಾಧಕರ ಸಮಾಜ ಸೇವಾ ಸಂಕಲ್ಪ ಯಾತ್ರ🌹

ಲೇಖಕ: ಶ್ರೀಕಂಠ.ಚೌಕೀಮಠ

ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

೨೦೦೭ರಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ಬಸವಣ್ಣನವರ ಕುರಿತು ಒಂದು ವಿವಾದಾತ್ಮಕ ಪುಸ್ತಕ “ಆನುದೇವಾ ಹೊರಗಣದವನು” ಪ್ರಕಟಣೆಯ ವಿರುದ್ದ ಹೋರಾಟದಲ್ಲಿ ಭಾಗಿಯಾಗಿದ್ದೆ. ನಾನು ಬರೆದ ಒಂದು ಲೇಖನ “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಲೇಖನದಲ್ಲಿ ನಾನು ತೋಡಿಕೊಂಡ ಅಳಲು ಮತ್ತು ಬಹಿರಂಗದ ಅಕ್ರೋಶಗಳನ್ನು  ಓದಿದವರೆಲ್ಲ ಆ ಲೇಖನದ ಪರ-ವಿರೋದದ ನಿಲುವು ವ್ಯಕ್ತಪಡಿಸಿ ಪ್ರತಿಕ್ರಿಯಿಸಿದರು .ಆ ಸಂದರ್ಭದಲ್ಲಿ ಬಸವಸಮಿತಿಯ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಶ್ರೀಕಲ್ಯಾಣಶೆಟ್ಟರು ನನಗೆ ದೂರವಾಣಿ ಕರೆಮಾಡಿ ನನ್ನ ಲೇಖನಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿ ನನ್ನ ಪೂರ್ವಾಪೂರ್ವಗಳನ್ನು ವಿಚಾರಿಸಿದರು.ಮಾತಿನ ಮಧ್ಯದಲ್ಲಿ ನಾನು ಬಾಗಲಕೋಟ ತಾಲೂಕಿನ ಹಳ್ಳೂರು ಗ್ರಾಮದವನು ಎಂದು ಹೇಳಿದಾಗ ಅವರು ತಕ್ಷಣ ಗುರುಲಿಂಗಯ್ಯಾ ಚೌಕೀಮಠ ನಿಮಗೇನಾಬೇಕು ಅಂದರು.ಆಶ್ಚರ್ಯಗೊಂಡೆ, ನಾನು ಅವರ ಮಗ ಎಂದು ಹೇಳಿದಕೂಡಲೇ ಬಹಳ ಸಂತೋಷಪಟ್ಟರು ಅವರಿಬ್ಬರೂ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದವರು ಮತ್ತು ಇಬ್ಬರೂ ಹಾಕಿ ಮತ್ತು ಫೂಟ್ಬಾಲ್‌ ಕ್ರೀಡೆಗಳನ್ನು ಕೂಡಿ ಆಡಿದವರಾಗಿದ್ದರು. ಅವರಿಬ್ಬರ ನಡುವೆ ದೂರವಾಣಿ ಸಂಪರ್ಕವನ್ನು ಮಾಡಿಕೊಟ್ಟಾಗ ತಾಸಿಗೂ ಹೆಚ್ಚು ಮಾತನಾಡಿಕೊಂಡಿದ್ದು ಮತ್ತು ಅವರೀರ್ವರ ಬಾಲ್ಯ ಜೀವನವನ್ನು ಮೆಲಕು ಹಾಕಿದ್ದು ನನ್ನ ಕಣ್ಣೆದುರು ಈಗಲೂ ಹಚ್ಚ ಹಸಿರಾಗಿದೆ.

ಈ ಪರಿಚಯದ ನಂತರ ಶ್ರೀಕಲ್ಯಾಣಶೆಟ್ಟರು ನನಗೆ ಬಹಳ ಆತ್ಮೀಯರಾದರು ಮತ್ತು ನಾನು ಕಂಡಾಗಲೆಲ್ಲ ನನ್ನನ್ನು ಅತ್ಯಂತ ಅಂತಃಕರುಣದಿಂದ ಮತ್ತು ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದ ಎದರು ಅವ್ಯಾಹತವಾಗಿ ವಿವಾದಿತ ಪುಸ್ತಕದ ವಿರುದ್ಧದ ಪ್ರತಿಭಟನೆಯಲ್ಲಿ ಯಾವಾಗಲೂ ತಮ್ಮ ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದರು.ಒಂದು ದಿನ ನನ್ನನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ವಿವಾದಿತ ಪುಸ್ತಕ ಕುರಿತಾದ ಚರ್ಚೆಗೆ ಕರೆದೊಯ್ದಿದ್ದರು. ಆ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕ.ಸಾ.ಪ ಅಂದಿನ ಅಧ್ಯಕ್ಷರೂ ಹಾಗು ಬಂಡಾಯ ಸಾಹಿತಿಗಳಾದ ಶ್ರೀ.ಚಂಪಾ (ಡಾ. ಚಂದ್ರಶೇಖರ ಪಾಟೀಲ) ಅವರು ಮಾತಿನಮಧ್ಯದಲ್ಲಿ ನಾನು ಬರೆದ ವಿಜಯಕರ್ನಾಟಕ ಪತ್ರಿಕೆಯ ಲೇಖನವನ್ನು ಉಲ್ಲೇಖಿಸಿ ಟೀಕೆಮಾಡಿದರು, ಯಾವನೋ ಒಬ್ಬ ಒಂದು ಲೇಖನ ಬರೆದು ಪತ್ರಿಕೆಯಲ್ಲಿ ಬರೆದರೆ ಅದನ್ನು ಸಮಾಜದ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವದಿಲ್ಲ.ಅಂತಹ ಲೇಖನಗಳನ್ನು ಕಸದತೊಟ್ಟಿಗೆ ಬೀಸಾಕಬೇಕು ಎಂದು ವೀರಾವೇಷದಿಂದ ಮಾತನಾಡತೊಡಗಿದರು. ಶ್ರೀಕಲ್ಯಾಣಶೆಟ್ಟರು ತಕ್ಷಣ ಎದ್ದು ನಿಂತು ಚಂಪಾ ಮಾತಿಗೆ ಪ್ರತಿರೋಧವ್ಯಕ್ತಪಡಿಸಿ “ಆ ಲೇಖನಾ ಬರದ ಹುಡುಗ ನನ್ನ ಜೊತಿ ಕುಂತಾನ,ಚರ್ಚೆ ಮಾಡೂದಿದ್ರ ಆರೋಗ್ಯಪೂರ್ಣ ಚರ್ಚಾ ಮಾಡ್ರಿ,ಇಲ್ಲದಿದ್ರ ನಿಲ್ಲಿಸಿರಿ” ಅಂದರು ಅವರು ಹಾಗೆ ಅಂದದ್ದೇ ತಡ ಚರ್ಚೆಯಲ್ಲಿ ಭಾಗವಹಿಸಿದ ಬಸವದಳದ ಶ್ರೀ ದಯಾನಂದಸ್ವಾಮಿಗಳು ವೇದಿಕೆಯತ್ತ ನುಗ್ಗಿ ಕಾಗದಗಳನ್ನು ಹರಿದು ಚಂಪಾ ಅವರ ಮೇಲೆ ತೂರಿ ಪ್ರತಿಭಟಿಸಿದರು.ಸಭೆ ನಿಂತು ಗದ್ದಲ ಶುರುವಾಯಿತು. ತಳ್ಳಾಟ ಮತ್ತು ನೂಕಾಟಗಳ ಸುದ್ದಿತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಚಾಮರಾಜಪೇಟೆಯ ಪೋಲಿಸರು ಗದ್ದಲ ನಿಲ್ಲಿಸಲು ಕ್ರಮಕೈಗೊಂಡರು.ನಿವೃತ್‌ ಪೋಲಿಸ್‌ ವರಿಷ್ಠಾಧಿಕಾರಿಗಳಾಗಿದ್ದ ಶ್ರೀಕಲ್ಯಾಣಶೆಟ್ಟರು ಪೋಲಿಸ್‌ ಜೀಪಿನಲ್ಲಿ ನನ್ನನ್ನು ವಸಂತನಗರದ ತಮ್ಮ ಮನೆಗೆ ಕರೆದೊಯ್ದರು.

ಅನೀರಿಕ್ಷಿತ ಗದ್ದಲಕ್ಕೆ ನಾನು ಬಳಲಿಕೊಂಡಿದ್ದೆ, ಶ್ರೀಕಲ್ಯಾಣಶೆಟ್ಟರು ನನಗೆ ಧೈರ್ಯತುಂಬಿ ಮುಖ ತೊಳಿಸಿ ವಿಭೂತಿ ಹಚ್ಚಿಕೊಳ್ಳಲು ನನ್ನನ್ನು ತಮ್ಮ ದೇವರಕೋಣೆಗೆ ಕರೆದೊಯ್ದರು. ದೇವರಕೋಣೆಯಲ್ಲಿ  ಅವರು ನಿತ್ಯಪೂಜಿಸುತ್ತಿದ್ದ ನನ್ನ ಆರಾಧ್ಯದೈವ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ ನನ್ನ ಗಮನ ಸೆಳೆಯಿತು.ಅಲ್ಲಿಯವರೆಗೆ ನಾನು ನೋಡಿದ ಗುರುಗಳ ಚಿತ್ರಗಳು ವಿವಿದ ಕಲಾವಿದರು ಚಿತ್ರಿಸಿದ ಚಿತ್ರಗಳಾಗಿದ್ದವು.ಆದರೆ ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಗುರುಗಳ ಭಾವಚಿತ್ರ ವಿಭಿನ್ನವಾಗಿತ್ತು ಮತ್ತು ನೈಜವಾಗಿತ್ತು.ನೋಡಿದಷ್ಟೂ ಮತ್ತೆ ನೋಡಿಸಿಕೊಳ್ಳುವ ಚಿತ್ರವನ್ನು ಕಣ್ತುಂಬಿಸಿಕೊಂಡು ಚಿತ್ರದ ವಿಶೇಷತೆಯ ಕುರಿತು ಶ್ರೀಕಲ್ಯಾಣಶೆಟ್ಟರಲ್ಲಿ ಪ್ರಶ್ನಿಸಿದೆ.

(ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ)

 ಅಲ್ಲಿಯವರೆಗೆ ಆತಂಕಕ್ಕೆ ಒಳಗಾಗಿದ್ದ ನನ್ನನ್ನು ಸಂತೈಸಿದ್ದ ಶ್ರೀಕಲ್ಯಾಣಶೆಟ್ಟರು ನನ್ನ ಪ್ರಶ್ನೆಗೆ ಭಾವೊದ್ವೇಗಕ್ಕೊಳಗಾದರು.ಅವರ ಕಣ್ಣಂಚುಗಳು ಮಿಂಚತೊಡಗಿದವು. “೧೯೨೭ ರಲ್ಲಿ ನಾನು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ನನ್ನನ್ನು ನನ್ನ ತಂದೆ ಶ್ರೀ ಸಿದ್ದರಾಮಪ್ಪ ಮಮದಾಪೂರ ಅವರು ನನ್ನೂರು ಬದಾಮಿಯ ಶಾಖಾ ಶಿವಯೋಗಮಂದಿರಕ್ಕೆ ದಯಮಾಡಿಸಿದ್ದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ, ಹಸುಗೂಸು ನನ್ನನ್ನು ಪೂಜ್ಯ ಕುಮಾರ ಶಿವಯೋಗಿಗಳು ಎತ್ತಿಕೊಂಡು ಅವರ ಲಿಂಗದಹಸ್ತವನ್ನು ನನ್ನ ಮಸ್ತಕದ ಮೇಲಿಟ್ಟು ಆಶಿರ್ವದಿಸಿದ್ದನ್ನು ನನ್ನ ತಂದೆ ಯಾವಗಲೂ ಹೇಳುತ್ತಿದ್ದರು” ಎಂದು ಹೇಳುತ್ತ ತಮ್ಮ ಎರಡೂ ಕೈಗಳನ್ನು ಕೂಡಿಸಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು. ಕೈಮುಗಿದ ಅವರ ಎರಡೂ ಹಸ್ತಗಳನ್ನು ನನ್ನ ಹಣೆಗೆ ಹಚ್ಚಿಕೊಂಡೆ !. ಕಾರುಣಿಕ ಯುಗಪುರುಷ,ಸಮಾಜ ಸಂಜೀವಿನಿಯಾದ,ವಿಭೂತಿಪುರುಷರ ಪರುಷಹಸ್ತದ ಸ್ಪರ್ಷಆಶೀರ್ವಾದದವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರು ಭಾಗ್ಯಶಾಲಿಗಳೂ,ಪುಣ್ಯವಂತರೂ ಆಗಿದ್ದರು.

ದೆಹಲಿಯ ನಿವೃತ್‌ ಹಿರಿಯ ಕಮಾಂಡ್ಯಂಟ.(ಸಿ.ಆರ್.ಪಿ.ಎಫ್.)‌ , ಮಾಜಿ ಗ್ರುಪ್‌ ಕಮಾಂಡರ್.ಎನ್.ಎಸ್.ಜಿ.(ಬ್ಲ್ಯಾಕ್‌ ಕ್ಯಾಟ್ಸ) ಹಾಗು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತ್ವರಿತ ನ್ಯಾಯಾಲಯದ ನಿವೃತ್‌ ನಾಯಾಧೀಶರಾದ

ಶ್ರೀ.ಬಿ,ಎಸ್.ಕಲ್ಲೂರ ಅವರು ವರ್ಣಿಸಿದಂತೆ “ಶ್ರೀಕಲ್ಯಾಣಶೆಟ್ಟರದು ಕಟ್ಟುಮಸ್ತಾದ ಶರೀರದ ಆಕರ್ಷಕ ವ್ಯಕಿತ್ವವುಳ್ಳವರಾಗಿದ್ದವರು ೧೯೫೦ರ ದಶಕದಲ್ಲಿ ಅವರ ತಂದೆಯವರಾದ ಶ್ರೀ ಎಸ್.ಜಿ.ಕಲ್ಲೂರ ಅವರು ಬೆಳಗಾವಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡ್ ಆಗಿದ್ದ ಸಂಧರ್ಭದಲ್ಲಿ ಬಾಂಬೆ ಪೋಲಿಸ್‌ ಇಲಾಖೆಯಲ್ಲಿ ಸಬ್‌ ಇನೆಸ್ಪೆಕ್ಟರ್‌ ಆಗಿದ್ದ ಶ್ರೀಕಲ್ಯಾಣಶೆಟ್ಟರು,ಶ್ರೀ ನಾಗನೂರ ಮತ್ತು ಶ್ರೀ ಹಸಬಿಯವರು ಶ್ರೀ.ಬಿ,ಎಸ್.ಕಲ್ಲೂರ ಅವರ ಮನೆಗೆ ಬರುತ್ತಿದ್ದರಂತೆ ಶ್ರೀ ಕಲ್ಲೂರ ಅವರು ಶ್ರೀಕಲ್ಯಾಣಶೆಟ್ಟರನ್ನು “ಕಾಕಾ” ಎಂದು ಸಂಬೋಧಿಸುತ್ತಿದ್ದನ್ನು,ಹಾಗು ಶ್ರೀಕಲ್ಯಾಣಶೆಟ್ಟರು ಕಲ್ಲೂರು ಅವರಿಗೆ ವ್ಯಾಯಾಮಗಳ ಬಗ್ಗೆ ಸಲಹೆ ಕೊಡುತ್ತಿದ್ದನ್ನು ಶ್ರೀ ಕಲ್ಲೂರು ಅವರು ತುಂಬ ಆತ್ಮೀಯವಾಗಿ  ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಶ್ರೀಕಲ್ಯಾಣಶೆಟ್ಟರು ಧರಿಸುತ್ತಿದ್ದ ಪೋಲಿಸ್‌ ಹ್ಯಾಟ್‌ ಆಕರ್ಷಕವಾಗಿಯೂ ಮತ್ತು ಬೇರೆಯವರಿಗಿಂತ ಭಿನ್ನವಾಗಿಯೂ ಇರುತ್ತಿತ್ತು ಎಂದು ಜ್ಷಾಪಿಸಿಕೊಳ್ಳುತ್ತಾರೆ.

ರಾಷ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದಿದ್ದ ಶ್ರೀಕಲ್ಯಾಣಶೆಟ್ಟರು ಬಾಂಬೆ ಪೋಲಿಸ್‌ ಇಲಾಖೆ,ಮೈಸೂರು ಪೋಲಿಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಪೊಲೀಸ್ ತರಬೇತಿ ಕೇಂದ್ರ ಕೆ.ಎಸ್.ಪಿ.ಟಿ.ಎಸ್, ಚನ್ನಪಟ್ಟಣದ ಪ್ರಾಂಶುಪಾಲರಾಗಿ,ಆಯ್.ಪಿ.ಎಸ್.‌ ಭಡ್ತಿ ಪಡೆದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿಗಳಾಗಿ ೧೯೮೫ ರಲ್ಲಿ ನಿವೃತ್ತಿ ಹೊಂದಿದರು.

ಕರ್ನಾಟಕದ ರಾಜ್ಯ ಸರಕಾರದ  ದಕ್ಷ ಆದಿಕಾರಿಗಳಾಗಿ ಸೇವೆಸಲ್ಲಿಸಿದ ನಂತರ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಕಲ್ಯಾಣಶೆಟ್ಟರು ೯೬ ವರ್ಷಗಳ ತುಂಬು ಜೀವನ ನಡೆಸಿ ೦೧ ಮಾರ್ಚ ೨೦೨೩ ರಂದು ಲಿಂಗೈಕ್ಯರಾಗುವ ಸಂಧರ್ಭವನ್ನು ನೆನಪಿಸಿಕೊಂಡ ಅವರ ಪುತ್ರ ಶ್ರೀ ಅಶೋಕ ಅವರು ಹೇಳಿದ್ದು ವಿಶೇಷ ವಾಗಿತ್ತು.

ಶ್ರೀಕಲ್ಯಾಣಶೆಟ್ಟರ ಧರ್ಮಪತ್ನಿಯವರು ಫೆ.೨೮, ೨೦೨೩ರಂದು ಲಿಂಗದೊಳಗಾದರಂತೆ ,ಅವರ ಅಂತ್ಯಕ್ರಿಯೆ ಸಂಧರ್ಭದಲ್ಲಿ ಶ್ರೀಕಲ್ಯಾಣಶೆಟ್ಟರು ನಿರ್ಲಿಪ್ತ ಭಾವವನ್ನು ಹೊಂದಿದ್ದರಂತೆ, “ಹೋದರಾ ?” ಎಂಬ ಒಂದೇ ಒಂದು ವಾಕ್ಯವನ್ನು ಹೇಳಿ ತಮ್ಮ ದೈನಿಂದಿನ ಚಟುವಟಿಕೆಯಲ್ಲಿದ್ದು ದಿ.೦೧ ಮಾರ್ಚ ೨೦೨೩ ರಂದು ಪುಣ್ಯದ ಸಾವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರನ್ನು ನಾನು ಕೊನೆಯದಾಗಿ ಮಾತನಾಡಿಸಿದ್ದು ೨೦೨೨ ಅಗಸ್ಟ ತಿಂಗಳಲ್ಲಿ. ನಾನು ಅವರನ್ನು ಭೇಟಿಯಾಗಬೇಕಿತ್ತು, ಆಗಲಿಲ್ಲ.

ಶ್ರೀಕಲ್ಯಾಣಶೆಟ್ಟರ ವಿವಾಹ ವಾರ್ಷಿಕೋತ್ಸವದ ವಜ್ರ ಮಹೋತ್ಸವದ ಚಿತ್ರ

“ ಅವರ ಧರ್ಮಪತ್ನಿಯ ಅಗಲಿಕೆಯಿಂದ ಸರ್‌ ಅವರು  ಮಾನಸಿಕವಾಗಿ ನೊಂದುಕೊಂಡಿದ್ದರೇ ?” ಎಂದು ಕೇಳಿದೆ.        ಶ್ರೀ ಅಶೋಕ ಅವರು ತುಂಬ ಮಾರ್ಮಿಕವಾದ ಉತ್ತರ ಕೊಟ್ಟರು “ ಧೀರ್ಘ ಇನ್ನಿಂಗ್ಸ ಆಡಿದ ಆಟಗಾರರಲ್ಲೊಬ್ಬ ಔಟಾದಾಗ, ಜೊತೆಯಾಟಗಾರನೂ ಫೆವಿಲಿಯನ್ನಗೆ ಹೋದಂತೆ “ , “ ನಮ್ಮ ತಂದೆ ಎಂದೂ ಮಾನಸಿಕವಾಗಿ ಕುಗ್ಗಿದವರಲ್ಲ ಅಂತಿಮ ಕ್ಷಣದವರೆಗೂ ಸದೃಡವಾಗಿದ್ದವರು” ಈ ಮಾತುಗಳನ್ನು ಕೇಳುತ್ತ ಆಕರ್ಷಕ ತೇಜಸ್ಸಿನಿಂದ ಕೂಡಿದ ಮಂದಸ್ಮಿತ ಅಂತಃಕರಣದ ಶ್ರೀಕಲ್ಯಾಣಶೆಟ್ಟರ ವ್ಯಕ್ತಿತ್ವ ಜೊತೆಗೆ  ಅಂದು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಆ ಹಸ್ತಗಳು ನನ್ನ ಕಣ್ಣೆದರು ಬಂದುನಿಂತವು.

ನಮ್ಮ ಸಂಬಂಧಗಳು, ಪೂರ್ವಜನ್ಮದ ಸಂಬಂಧಗಳೆಂಬ ಭಾವನೆ ನನ್ನಲ್ಲಿ ಮೂಡಿತು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಹುಲಿಯಾದರೂ ಹುಲಿಯ ತಿನ್ನುವದಿಲ್ಲ

ಇಲಿಯಾದರೂ ಇಲಿಯ ತಿನ್ನುವದಿಲ್ಲ

ಮಾನವನಾದ ನಾನು

ಮಾನವರ ಹಿಂಸಿಸಿ

ಅವರ ಸರ್ವಸ್ವ ವ ಭಕ್ಷಿಸುತ್ತಲಿದ್ದೇನೆ

ನಿಜ ಮಾನವತ್ವದ ಅರಿವು ನೀಡಿ

ರಕ್ಷಿಸೆನ್ನ

ಗುರುಕುಮಾರ

ಪಂಚಾಕ್ಷರೇಶ್ವರ

* ರಚನೆ ಪೂಜ್ಯ ಪುಟ್ಟರಾಜ ಗವಾಯಿಗಳು

ಕೃಪೆ: ಶ್ರೀಎಸ್. ಸ್ವಾಮಿ  ಜಂಗಮ ಯೋಗಧಾಮ (ಶರಣರ ಬಳಗ)

ಸಂಗೀತ ಗಾಯನ  ಕೃಪೆ :ಶ್ರೀ ಎಸ್. ಎಸ್. ಪಾಟೀಲ ಮಾಜಿ ಸಚಿವರು.ಮುಂಡರಗಿ.

ಈ ವಚನದ ಸಾಲುಗಳು ,ಪರಮ ವಿರಕ್ತರು , ವಿರಾಗಿಗಳು ಮತ್ತು “ಸಮಾಜವೇ ತನ್ನ ಬಂಧು ಬಳಗ ವನ್ನು ಮಾಡಿಕೊಂಡಿದ್ದ

ಪೂಜ್ಯ ಪುಟ್ಟರಾಜ ಗವಾಯಿಗಳ ಲೇಖನಿಯಿಂದ ಹೇಗೆ ಮೂಡಿದವು? ಎಂಬ ಜಿಜ್ಞಾಸೆ ಗೆ ಒಳಗಾದೆ !.

ಸ್ವಾರ್ಥಿ ಮನುಷ್ಯತ್ವ ಒಂದು ವರ್ಗ

ಪೂಜ್ಯ ಪುಟ್ಟರಾಜ ಗವಾಯಿಗಳನ್ನು ನೋವಿಸಿದ್ದನ್ನು ,ಅವರು ಪಟ್ಟುಕೊಂಡ ಯಾತನೆಗಳನ್ನು 80ರ ದಶಕದಲ್ಲಿ ಪೂಜ್ಯರನ್ನು ಹತ್ತಿರದಿಂದ ಕಂಡಿದ್ದ ನನಗೆ ಕಣ್ಣೆದರು ಬಂದವು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ರಕ್ಷಣಾ ಗೋಡೆಯ ಪಕ್ಕದಲ್ಲಿದ್ದ ರೆಡ್ಡಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ನನ್ನ ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದ್ದ ನಾನು  ಹಲವಾರು ಬಾರಿ ಪೂಜ್ಯ ಪಂಚಾಕ್ಷರಿ ಗವಾಯಿಗಳ ಕ್ರಿಯಾಸಮಾಧಿಯ ದರ್ಶನಕ್ಕೆ ಹೋದಾಗ  ಪೂಜ್ಯ ಪುಟ್ಟರಾಜ ಗವಾಯಿಗಳು ಆಶ್ರಮದ ಮಕ್ಕಳ ಉಪಹಾರಕ್ಕೆ ಪಡುತ್ತಿದ್ದ  ವ್ಯವಸ್ಥೆಯ ಹಿಂದಿನ ಕಷ್ಟದ ಅರಿವು ನನಗಿದೆ.ಅಕಸ್ಮಾತ್ ಪೂಜ್ಯರಿಗೆ ನಾನು ಬಂದದ್ದು ಗೊತ್ತಾದರೆ ಆ ಕಷ್ಟದ ವ್ಯವಸ್ಥೆಯಲ್ಲೂ ನನಗೆ ಪ್ರಸಾದ ನೀಡುತ್ತಿದ್ದ ಅಂಥಕರುಣೆಯ ವಾತ್ಸಲ್ಯ ನಾನು ಮರೆಯುವಂತಿಲ್ಲ. ಸೇವಕರಿಂದ ನನ್ನ ಎದೆಯ ಮೇಲೆ ಇಷ್ಟ ಲಿಂಗ ಕಟ್ಟಿಕೊಂಡಿರುವನೋ ಇಲ್ಲವೋ ಎಂಬ ಪರೀಕ್ಷೆಯಂತೂ ನನ್ನನ್ನು ಯಾವಾಗಲೂ ಎಚ್ಚರಗೊಳಿಸುತ್ತಲೇ ಇರುತ್ತದೆ.

ಈ ವಚನ, ಅವರಿಗಾದ ನೋವು ಅಪಮಾನಗಳನ್ನು ತಮ್ಮ ಮೇಲೆಯೇ ಹಾಕಿಕೊಂಡು ಬರೆದ ಸಾಲುಗಳು..

ಅವರೆಂದೂ ಯಾರನ್ನು ಹಿಂಸಿಸಲಿಲ್ಲ.

ಅವರು ಎಂದೂ ಯಾರ ಸರ್ವಸ್ವವನ್ನೂ ಭಕ್ಷಿಸಲಿಲ್ಲ..

ಅವರು ಎಂದೂ ,ಮತ್ತೊಬ್ಬರ ಶ್ರಮವನ್ನು ಜೀವಂತ ಹೂತು ಹಾಕಿ ಆ ಸಮಾಧಿಯ ಮೇಲೆ ರಣಕೇಕೆ ಹಾಕಲಿಲ್ಲ.

ಅವರು ಎಂದೂ ಬಲಿಷ್ಠ, ಬಂಡವಾಳಶಾಹಿ ಭಕ್ತರ ಮೋಹಕ್ಕೆ

ಬಲವಿಲ್ಲದ ಭಕ್ತರ ಸೇವೆಯನ್ನು. ಬಲಿ ಕೊಡಲಿಲ್ಲ.

ಅವರು ಎಂದೂ ಗುರುವಿನ ಮಹಾಗುರುವಿನ ಹೆಸರನ್ನು ಭಕ್ತ ರು ಕೊಟ್ಟ ಋಣ ಕ್ಕೆ ಅಡುವಿಡಲಿಲ್ಲ, ಹರಾಜು ಹಾಕಲಿಲ್ಲ.

ಅವರು ಸ್ವಾಭಿಮಾನಿಗಳಾಗಿದ್ದರು.

ಪದ್ಮಭೂಷಣ ಪ್ರಶಸ್ತಿಗೆ ದೆಹಲಿಗೆ ಬಂದಾಗಲೂ ಸ್ನಾನ ಪೂಜಾದಿ ಗಳಿಗೆ ಭಾವಿ ಇರುವ ಮನೆಯನ್ನೇ ಆಯ್ಕೆಮಾಡಿಕೊಂಡು, ಶ್ರೀಕುಮಾರೇಶ್ವರರ ಕಟ್ಟುನಿಟ್ಟಿನ ಶೀಲಾಚಾರಣೆಮಾಡಿದ್ದು ಅವರ ನಿಷ್ಠುರ ಬದುಕಿಗೆ ಹಿಡಿದ ಕನ್ನಡಿ.

ಬಾಲ್ಯದ

ಆರಂಭದ ದಿನಗಳಲ್ಲಿ ಶ್ರೀ ಶಿವಯೋಗ ಮಂದಿರದ ಪವಿತ್ರ ನೆಲದಲ್ಲಿ ಆಶ್ರಯ ಪಡೆದಿದ್ದ ಪೂಜ್ಯ ಪುಟ್ಟರಾಜ ಗವಾಯಿಗಳು ,ಮೈತುಂಬಾ ಗಾಯಗಳಿಂದ ಅಳುತ್ತ ಕುಳಿತ್ತಿದ್ದರಂತೆ, ಅವರನ್ನು ಮೈದಡವಿ ವಾತ್ಸಲ್ಯದಿಂದ ಎತ್ತಿಕೊಂಡು ಹೋಗಿ ,ರಕ್ತಸಿಕ್ತ ಗಾಯವನ್ನು ತೊಳೆದು ,ಗಿಡಮೂಲಿಕೆ ಯ ಔಷಧ ಹಚ್ಚಿ ಆರೈಕೆ ಮಾಡಿದ ಮಹಾತ್ಮ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಎಂದು ಆ ಕ್ಷಣಕ್ಕೆ  ಪೂಜ್ಯ ಪುಟ್ಟರಾಜ ಗವಾಯಿಗಳಿಗೆ ಗೊತ್ತಾಗಲಿಲ್ಲ ವಂತೆ.  ಬೇರೆಯವರಿಂದ ಕೇಳಿತಿಳಿದುಕೊಂಡ   ಪೂಜ್ಯ ಪುಟ್ಟರಾಜ ಗವಾಯಿಗಳು ಅಂಥ ಮಹಾತ್ಮರ ಕೈಯಲ್ಲಿ ಸೇವೆ ಮಾಡಿಸಿಕೊಂಡೆನೆಲ್ಲ ಎಂಬ ಕೊರಗು ಅವರಲ್ಲಿ ಕೊನೆವರೆಗೂ ಇತ್ತು ಅದನ್ನು ನೆನಪಿಸಿ ಕೊಂಡು ಅವರು ಹಾಕುತ್ತಿದ್ದ ಕಣ್ಣೀರು ಎಂಥವರನ್ನೂ ಸ್ತಂಭೀಭೂತಗೊಳಿಸಿ  ಮಂತ್ರಮುಗ್ಧ ಗೊಳಿಸುತ್ತಿತ್ತು.

ಪೂಜ್ಯರ ನೆನಹು ಇಂದು ಅವರ ವಚನವನ್ನು ಕೇಳುವ ಸಂದರ್ಭದಲ್ಲಿ ಹೃದಯ ಸ್ಪರ್ಶಿಯಾಗಿ ಕಾಡಿತು.

ಅವರ ಬರೆದ ನೋವಿನ ಸಾಲುಗಳು

ಹಲವು ಅರ್ಥಗಳನ್ನು ನೀಡಿತು

ಘಾಸಿಗೊಂಡಿರುವ ನನ್ನ ಹೃದಯದ

ಯಕ್ಷಪ್ರಶ್ನೆ ಗೆ

ಸ್ಪಷ್ಟ ಉತ್ತರವನ್ನೀಯಿತು.

ಶ್ರೀಕುಮಾರ ತರಂಗಿಣಿ  ೨೦೨೩ ಜುಲೈಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ದೇವ  ಪೊರೆಯೊ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೪: ಬಾಳಿನ ಬವಣೆ-ವಿದ್ಯಾಸ್ಮರಣೆ ಲೇಖಕರು: ಪೂಜ್ಯ ಜ.ಚ.ನಿ
  4. ಅನುಭವ-ಅನುಭಾವ :ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಗುರುಕರುಣ ಸೌಂಧರ್ಯ ಲಹರಿ: ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
  6. ದೇವಸ್ಥಾನ: -ಜಿ. ಎಸ್. ಶಿವರುದ್ರಪ್ಪ
  7. ಆಡಿಯೋ೧ :
  8. ಶ್ರೀಕುಮಾರೇಶ್ವರ ಭಜನ್‌ “ಗುರುದೇವ ದೇವ ಗುರುಕುಮಾರ” ರಚನೆ
  9. ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.
  10. ಆಡಿಯೋ ೨ : ಶ್ರೀಕುಮಾರೇಶ್ವರ ದೊಹೆಗಳು

ರಚನೆ

:ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ದೇವಪೊರೆಯೊ  ಭವಮಾಲೆಯಜಿತ |

ಭಾವಜಮದಹತ  ಈ ವಸುಜಾತ  ||||

ಚಿತ್ತದ ರಾಗ  ಭ್ರಾಂತಿಯ ಪೂಗ ಗುಹೇಶ್ವರ

ಜೊತೆಗೂಡಿ ಅತಿಬೇಗ  || ||

ವೃತ್ತಿಯ ಜಾಲ  ಚಿಂತೆಯ ಮೂಲ  ಚರೇಶ್ವರ

ಹತಮಾಡಿ ಘನಲೀಲ  || ||

ನಿನ್ನಯ ಸಂಗ ಬನ್ನದ ಭಂಗ ಪರೇಶ್ವರ

ಆನುಗೈದು ಶಿವಯೋಗ || ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ತರಳ ಕೇಳು ಮಾ | ಕ್ಷರವೆ ಮೂರೊಂದಾದ

ವರ ಮೂಲ ಪ್ರಣವದಿರವೆ ಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೬||

ಲಿಂಗವು ಪೂಜ್ಯವಸ್ತುವೆಂಬುದನ್ನು ಸಿದ್ಧಮಾಡುತ್ತ ಅದು ಮೂಲ ಪ್ರಣವ ರೂಪವೆಂದು ಪ್ರತಿಪಾದಿಸುತ್ತಾನೆ.

ಸದ್ಗುರುನಾಥನ ಬೋಧೆಯು ಜೀವನ ವಿಕಾಸದಾಯಕವೂ ಮೋಕ್ಷಪ್ರದಾಯಕವೂ ಆಗಿದೆ. ಆತನು ಶಿಷ್ಯನಲ್ಲಿ ಅತ್ಯಂತ ಕರುಣಾಮಯಿಯಾಗಿ ಪ್ರೀತಿಯ ಪುತ್ರನೆಂದು ಮೈದಡವಿ ತತ್ತ್ವದ ತಿರುಳನ್ನು ತುತ್ತುಮಾಡಿ ಉಣಿಸುವ ಸನ್ನಿವೇಶ ರೋಮಾಂಚನಕಾರಿಯಾದುದು. ವಾತ್ಸಲ್ಯದಿಂದ ಶಿಷ್ಯನ ಚಿತ್ತವೃತ್ತಿಗಳು ಗುರು ವಚನದತ್ತ ಕೇಂದ್ರೀಕೃತವಾದರೆ ಅನುಭವದ ವಿಷಯ ಸುಲಭವಾಗುವದು. ಗುರುವಾದವನು ತನ್ನ ಶಿಷ್ಯವೃಂದಕ್ಕೆ ದಯಾಸಾಗರನೆನಿಸಬೇಕೆಂಬುದು ಇಲ್ಲಿ ಸೂಚಿತ ವಾಗುತ್ತದೆ. ಅಂತೆಯೇ ಗುರುವು ತರಳ ! ಕೇಳು, ಈ ನಿನ್ನ ಲಿಂಗವು ಓಂಕಾರದಿರವು. ಓಂಕಾರವು ಮೂಲ ಪ್ರಣವವಾಗಿದೆ. ಈ ಓಂಕಾರದಲ್ಲಿ ಅ, ಉ, ಮ,’ ಗಳೆಂಬ ಮೂರಕ್ಷರಗಳಿವೆ. ಈ ಮೂರೊಂದಾದುದೇ ಮೂಲಪ್ರಣವೆನಿಸುವದು.

ಚನ್ನಬಸವಣ್ಣನವರು ಕರಣಹಸಿಗೆಯ ಪ್ರಾರಂಭವನ್ನು ಪ್ರಣವದುತ್ಪತ್ತಿಯಿಂದಲೇ ಪ್ರಾರಂಭಿಸುತ್ತದೆ .

ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರ ಇವು

ಮೂರು ಬೀಜಾಕ್ಷರ, ಅಕಾರವೇ ನಾದ, ಉಕಾರವೆ ಬಿಂದು,

ಮಕಾರವೆ ಕಳೆ, ಮತ್ತಂ ಆಕಾರವೆ ರುದ್ರ, ಉಕಾರವೆ ಈಶ್ವರ,

ಮಕಾರವೆ ಸದಾಶಿವ. ಇಂತೀ ಅಕಾರ, ಉಕಾರ, ಮಕಾರಕ್ಕೆ

 ನಾದ ಬಿಂದು ಕಳೆಯೇ ಆಧಾರ, ಆ ನಾದ ಬಿಂದು ಕಳಗೆ

ಪ್ರಕೃತಿಯೆ ಆಧಾರ, ಆ ಪ್ರಕೃತಿಗೆ ಪ್ರಾಣವೆ ಆಧಾರ.

 ಆ ಪ್ರಾಣಕ್ಕೆ ಲಿಂಗವೆ ಆಧಾರ, ‘ಅ’ ಎಂದಡೆ ಅನಾಹತ,

ಉ’ ಎಂದಡೆ ನಾದ ಉಳಿಯತ್ತು, ‘ಮ’ ಎಂಬಲ್ಲಿ

 ಬಿಂದು ಬಂದು ಕೂಡಲು ಶಿವಶಕ್ತಿಯಾಗುತ್ತಂ

ಇಂತಹ ಓಂಕಾರವಾಯಿತ್ತು

ಮುಂದುವರೆದು

 “ಓಂಕಾರಾತ್ಪ್ರಭವಾ ವೇದಾ ಓಂಕಾರಾತ್ಪ್ರಭವಃ ಸ್ವರಃ |

 ಓಂಕಾರಾತ್ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।”

 ಎಂದು ಓಂಕಾರದ ಹಸಿಗೆಯನ್ನು ಮಾಡಿರುವರು. ಓಂಕಾರದಲ್ಲಿ ಶಿವಶಕ್ತಿಯರ ಸಮ್ಮಿಲನವಿದೆ. ಲಿಂಗದಲ್ಲಿ ಅಡಿಪೀಠವೆ ಶಕ್ತಿ ಮುಡಿ ಲಿಂಗವೇ ಶಿವನೆನಿಸಿದ್ದಾನೆ. ಓಂಕಾರದಿಂದಲೇ ವೇದಗಳು, ಸ್ವರಗಳು, ಅಷ್ಟೇ ಅಲ್ಲದೆ ಸಕಲ ಸಚರಾಚರ ಜಗವೆಲ್ಲವೂ ಉತ್ಪನ್ನವಾಗಿದೆ. ಲಿಂಗದ ಲಕ್ಷಣವೂ ಇದೇ ಅರ್ಥವನ್ನು ಒಳಗೊಂಡಿರುವುದಾಗಿ ಈಗಾಗಲೇ ಅರಿತಿದ್ದೇವೆ. ಲಿಂಗ ಮತ್ತು ಪ್ರಣವಕ್ಕೆ ಅಭೇದವಿದೆ. ಕೆಳದಿ ಬಸವಪ್ಪ ನಾಯಕ ವಿರಚಿತ ‘ಶಿವತತ್ತ್ವರತ್ನಾಕರ” ದಲ್ಲಿ-“

“ಓಂಕಾರ ಏವ ಲಿಂಗಂ ಸ್ಯಾತ್ ಸರ್ವಕಾರಣಕಾರಣಮ್ |

ಓಮಿತಿ ಬ್ರಹ್ಮ ಪರಮಂ ಲಿಂಗಾಕಾರಂ ಮಹೇಶ್ವರಮ್॥ ೧-೫-೭ ||

“ಸರ್ವಕಾರಣಕ್ಕೆ ಕಾರಣವಾದ ಓಂಕಾರವೇ ಲಿಂಗವು. ಅದುವೇ ಪರಬ್ರಹ್ಮ ಅದುವೇ ಲಿಂಗಾಕಾರದ ಮಹೇಶ್ವರ” ವೆಂದು ಪ್ರತಿಪಾದಿತವಾಗಿದೆ.

ಈ ರೀತಿಯಾಗಿ ಪ್ರಣವರೂಪವು ಈ ಇಷ್ಟಲಿಂಗವು; ಆದುದರಿಂದ ಇದು ಮಂತ್ರಮೂರ್ತಿಯೆನಿಸಿದೆ, ಅದನ್ನು ಪೂಜಿಸಿ ನೀನೂ ಮಂತ್ರಮಯನೂ ಲಿಂಗ ರೂಪನೂ ಆಗೆಂದು ಬೋಧಿಸಿದ ಗುರುವೆ ! ಲಿಂಗರೂಪವನ್ನು ಕರುಣಿಸು.

ತಾರಕ ಕೃತಿ ಮೊದಲಾ | ದಾರು ಕೃತಿಗಳೆ ಲಿಂಗ

 ದಾರು ಸ್ಥಾನದೊಳು-ಆರು ಪ್ರಣವದ ಕೃತಿಯ

ತೋರಿಸಿದೆ ಗುರುವೆ ಕೃಪೆಯಾಗು     ||೧೧೭||

ಪ್ರಣವರೂಪವೇ ಇಷ್ಟಲಿಂಗವೆಂದು ತಿಳಿಸಿ ಪ್ರಣವದ ಸ್ವರೂಪವೇನೆಂಬುದನ್ನು ನಿರೂಪಿಸುತ್ತಾನೆ.

 ಪ್ರಣವವು ಆರು ಆಕೃತಿಗಳಿಂದ ಮೂರ್ತಿಮತ್ತಾಗಿದೆ. ೧. ತಾರಕ ೨. ದಂಡಕ ೩. ಕುಂಡಲ ೪, ಅರ್ಧಚಂದ್ರ ೫ ದರ್ಪಣ ೬. ಜ್ಯೋತಿ ಎಂಬಿವು ಪ್ರಣವದ ಆರಾಕೃತಿಗಳು. ಪ್ರಣವದ ಶಿರಸ್ಸೇ ತಾರಕಾಕೃತಿ, ಪ್ರಣವದ ಕೊರಳು ದಂಡಾಕೃತಿ; ಅದರ ಕೆಳಗಡೆಯ ಮುಡಿಯೇ ಕುಂಡಲಾಕೃತಿ, ಎರಡನೆಯ ಮುಡಿ ಅರ್ಧ ಚಂದ್ರಾಕೃತಿ; ಮಗ್ಗಲದ ಬಿಂದುವೇ ದರ್ಪಣಾಕೃತಿ; ಪ್ರಣವದ ಮೇಲ್ಗಡೆಯ ಕುಡಿಯೇ ಜ್ಯೋತಿರಾಕೃತಿಯು

ತಾರಕ-ದಂಡಕೋಭಯಾಕೃತಿಗಳಿಗೆ ಕ್ರಮದಿಂದ ನಕಾರ-ಮಕಾರಗಳು (ಪ್ರಣವದ ಬೀಜಾಕ್ಷರಗಳು). ಇವೆರಡಕ್ಕೂ ಅ’ಕಾರ ನಾದ ಪ್ರಣವದ ಸಂಬಂಧ ವಾಗುತ್ತದೆ. ಕುಂಡಲ-ಅರ್ಧಚಂದ್ರೋಭಯಾಕೃತಿಗಳಿಗೆ ಕ್ರಮದಿಂದ ಶಿಕಾರ ವಾಕಾರ ಪ್ರಣವಗಳು. ಇವೆರಡಕ್ಕೂ ‘ಉ’ಕಾರ ಬಿಂದು ಪ್ರಣವದ ಸಂಬಂಧವಿದೆ. ಇನ್ನು ದರ್ಪಣ ಮತ್ತು ಜ್ಯೋತಿರುಭಯಾಕೃತಿಗಳಿಗೆ ಕ್ರಮದಿಂದ ಯಕಾರ ಓಂಕಾರ ಪ್ರಣವಗಳು ಇವೆರಡಕ್ಕೂ ‘ಮ” ಕಾರ ಕಲಾ ಪ್ರಣವದ ಸಂಬಂಧವುಂಟು.

 ಪ್ರಥಮಂ ತಾರಕರೂಪಂ ದ್ವಿತೀಯಂ ದಂಡ ಉಚ್ಯತೇ |

ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಮ್‌ ||

ಪಂಚಮಂ ಬಿಂದು ಸಂಯುಕ್ತಂ ಪ್ರಣವಂ ಪಂಚಬ್ರಹ್ಮರಾಟ್||

 ಆರಾಕೃತಿಗಳಿಗೆ ಆರು (ಬೀಜಾಕ್ಷರ ಅಥವಾ) ಪ್ರಣವದ ಸಂಬಂಧವನ್ನು ಶಿವತತ್ತ್ವ ರತ್ನಾಕರದಲ್ಲಿ

 ನಕಾರ ಸ್ತಾರಕಸ್ಥಾನಂ ಮಕಾರೋ ದಂಡಮುಚ್ಯತೇ ।

ಶಿಕಾರಃ ಕುಂಡಲಾಕಾರೋ ವಾಕಾರಾಶ್ಚಾರ್ಧಚಂದ್ರಕಃ ||

ಯಕಾರೋ ಬಿಂದುರೂಪೋ ಯಮೋಂಕಾರಃ ಪಂಚವರ್ಣಕಃ ||        ||೧-೫-೨೦||

ಎಂದು ವಿವರಿಸಿದ್ದಾರೆ.

ಶಿ. ಶಿ. ಬಸವನಾಳರು ಸಂಪಾದಿಸಿದ ಈ ಗುರುಕರುಣ ತ್ರಿವಿಧಿಯಲ್ಲಿ ತಾರಕಾ ಕೃತಿ’ ಎಂಬ ಪಾಠಾಂತರವಿದೆ. ಆಕೃತಿಯೆಂದರೆ ಆಕಾರ; ಕೃತಿಯೆಂದರೆ ಕ್ರಿಯೆಯೆನಿಸುವದು. ಲಿಂಗದಲ್ಲಿ ನಾಮರೂಪವೂ ಇದೆ. ಕ್ರಿಯೆಯೂ ಸಮನ್ವಯ ಗೊಂಡಿದೆ. ಓಂಕಾರದಲ್ಲಿ  ನಾಮ-ರೂಪ-ಕ್ರಿಯೆಗಳಿರುವಂತೆ ಇಷ್ಟಲಿಂಗದಲ್ಲಿಯೂ ಅವುಗಳು ವ್ಯಾಪಿಸಿವೆ. ನಾಮ-ರೂಪ-ಕ್ರಿಯಾತ್ಮಕವಾದ ಈ ಲಿಂಗವು ಸಕಲ ವೆನಿಸಿದೆ. ನಾಮ-ರೂಪ-ಕ್ರಿಯಾ ಶೂನ್ಯವಾದುದು ನಿಷ್ಕಲವೆನಿಸುವದು. ತೋರುವ ಜಗತ್ತು ಈ ಮೂರರಿಂದಲೇ ಆವರಿಸಿಕೊಂಡಿದೆ. ಜಗದಲ್ಲಿ ಕಾಣಿಸಿಕೊಂಡ ನಾಮ- ರೂಪ-ಕ್ರಿಯಾತ್ಮಕನಾದ ಅಂಗನಿಗೆ ಈ ಲಿಂಗವೂ ನಾಮರೂಪಾತ್ಮಕವೆಂದು ಗುರು ನಾಥನು ತತ್ತ್ವದ ತಿರುಳನ್ನು ತಿಳಿಸಿದ್ದಾನೆ.  

 ಸಕಲಕ್ಕೂ ಕಾರಣವೆನಿಸಿದ ಓಂಕಾರವೇ ಲಿಂಗವಾಗಿರುವಂತೆ; ಸಮಸ್ತ ಕಾರ್ಯಗಳಿಗೆ ನಾಯಕನೆನಿಸಿದ ವಿನಾಯಕ ಅಥವಾ ಗಣಪತಿಯ ಆಕಾರವಾದರೂ ಓಂಕಾರ ಮಯವಾಗಿದೆ. ಓಂಕಾರದ ಆ ಆರು ಆಕೃತಿಗಳಿಂದಲೇ ಗಣಪತಿಯ ಆಕಾರದ ಕಲ್ಪನೆಯು ಸ್ಪಷ್ಟವಾಗುವದು. ಗಣೇಶನ ಪೌರಾಣಿಕ ಕಥಾನಕಗಳು ರೋಚಕ ವಾಗಿರಬಹುದು. ತಾತ್ವಿಕ ವಿಚಾರದಲ್ಲಿ ಪ್ರಣವ ಸ್ವರೂಪವು ಪ್ರಕಟವಾಗುವದು. ಕುಂಡಲ ಮತ್ತು ಅರ್ಧಚಂದ್ರಾಕೃತಿಗಳೇ ವಿನಾಯಕನ ಎರಡು ಹುಬ್ಬುಗಳಾದರೆ  ತಾರಕ-ದಂಡಕಾಕೃತಿಗಳು ಸೊಂಡಿಲೆನಿಸಿದೆ. ಮುಖಮಂಡಲವೇ ದರ್ಪಣ,  ಏಕದಂತವೇ ಜ್ಯೋತಿರಾಕೃತಿಯು.  ಆದ್ದರಿಂದಲೇ ವೈದಿಕ ಕಾರ್ಯಗಳಲ್ಲಿ, ವಿದ್ಯಾ ರಂಭಾದಿ ಕೆಲಸಗಳಲ್ಲಿಯೂ ವಿಘ್ನವಿನಾಶವಾಗಲೆಂದು ಓಂಕಾರ ರೂಪಿ ವಿನಾಯಕನ ಪೂಜೆಯಾಗುತ್ತದೆ. ಓಂಕಾರದ ಗೌರವವಾದರೂ ಗಣಪತಿಯ ರೂಪದಲ್ಲಿ ಸ್ವೀಕರಿಸಲು ಸಾಧ್ಯವಾಗಿದೆಯೆಂದು ಹೇಳಬಹುದು.

ದೇವನಾಗರಿ ಲಿಪಿಯ ಓಂಕಾರಕ್ಕೂ (ದ್ರಾವಿಡ) ಕನ್ನಡ ಲಿಪಿಯ ಓಂಕಾರಕ್ಕೂ ವ್ಯತ್ಯಾಸವಿಲ್ಲ. ದೇವನಾಗರಿ ಲಿಪಿಯ ಓಂಕಾರವನ್ನು ತಿರುವಿದ (ಹೊರಳಿಸಿದ) ರೂಪವೇ ಗಣಪತಿಯ ರೂಪಾಗಿದೆ. ಒಟ್ಟಿನಲ್ಲಿ ಆರು ಕೃತಿಗಳು ಅದರಲ್ಲಿಯೂ ಇವೆ. ಆರಾಕೃತಿಗಳುಳ್ಳದೇ ಪ್ರಣವವು. ಪ್ರಣವದಿರವೇ ಈ ಲಿಂಗವು. ಇದರರ್ಥವನ್ನು ತಿಳಿಸಿ ಪ್ರತ್ಯಕ್ಷ ತೋರಿಸಿ ರಕ್ಷಿಸಿದವನು ಶ್ರೀಗುರುನಾಥನು. ಮಹಾಜ್ಞಾನಿಯಾದ ಕುಮಾರ ಷಣ್ಮುಖನಿಗೆ ಶಿವನು ಓಂಕಾರದ ಅರ್ಥವನ್ನು ಅದೆಷ್ಟೋ ದಿನಗಳವರೆಗೆ ಹೇಳಿದನೆಂಬುದು ಪೌರಾಣಿಕ ಸತ್ಯಕಥೆಯಾಗಿದೆ. ಓಂಕಾರದ ಮಹತ್ವವು ಮಹತ್ತರವಾದುದು. ಈ ಪ್ರಣವ ಮಂತ್ರವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನವೇ ಲಿಂಗ, ಲಿಂಗವೇ ಪ್ರಣವವು.

 ಓ ಪರಮ ಗುರುವೇ ! ಮಂತ್ರ ಮೂರುತಿಯೇ ನಿರಂಜನ ಪ್ರಭುವೇ | ಪ್ರಣವರೂಪ ಲಿಂಗವನ್ನು ಅನುಸಂಧಾನ ಮಾಡಿ ತತ್ಸ್ವರೂಪಿಯಾಗುವ ಸೌಭಾಗ್ಯ ವನ್ನು ಕರುಣಿಸಿ ಕಾಪಾಡು.

ವೃತ್ತಕಟಿ  ವರ್ತುಳವು | ಮತ್ತೆ ಗೋಮುಖ ನಾಳ

ಚಿತ್ಪೀಠವಾರು ಗೊತ್ತತೋರಿಸಿ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು     || ೧೧೮ ॥

ಪ್ರಣವದ ಆರಾಕೃತಿಗಳಿಂದ ಕೂಡಿ ನಾಮ-ರೂಪ ಕ್ರಿಯಾತ್ಮಕವಾದ ಲಿಂಗವು ಆರು ಸ್ಥಲವುಳ್ಳದಾಗಿದೆ. ಅರ್ಥಾತ್ ಷಡವಯವವನ್ನು ಹೊಂದಿದೆಯೆಂಬುದನ್ನು ವಿವರಿಸುತ್ತ ಆ ಆರುಸ್ಥಲಗಳಲ್ಲಿ ಆರಕ್ಷರಗಳನ್ನು ಸಂಬಂಧಿಸಿ ತೋರಿಸುತ್ತಾನೆ ಶಿವ

ಕವಿಯು. ೧) ವೃತ್ತ,  ೨) ಕಟಿ,  ೩) ವರ್ತುಳ,  ೪) ಗೋಮುಖ,  ೫) ನಾಳ,  ೬) ಚಿತ್ಪೀಠ ಇವು ಆರು ಲಿಂಗದ ಅವಯವಗಳು. ಅಂಗನು ಆರಾದಂತೆ ಲಿಂಗವೂ ಆರಾಗಿದೆ. ಆರು ಸ್ಥಲ (ಅವಯವ) ಗಳನ್ನು ಪಡೆದಿದೆ. ಲಿಂಗ ಷಟ್‌ಸ್ಥಲಗಳಲ್ಲಿ ಮಂತ್ರ ಷಡಕ್ಷರ ಆವರಿಸಿಕೊಂಡಿದೆ. ಮಂತ್ರರೂಪವೇ ಲಿಂಗವೆಂಬುದಾಗಿ ಸದ್ಗುರುನಾಥನು ಶಿಷ್ಯನಿಗೆ ಬೋಧಿಸುತ್ತಾನೆ. ಮಂತ್ರರೂಪವಾದ ಲಿಂಗಾರ್ಚನೆಯಿಂದ ಮಂತ್ರಮಯನಾಗ ಬೇಕೆಂಬುದೇ ಗುರುವಿನ ಉಪದೇಶ.

 ಹಿಂದೆ ತಿಳಿಸಿದ ಲಿಂಗದ ಪಂಚಸೂತ್ರಗಳೂ ಈ ಲಿಂಗ ಷಟ್‌ಸ್ಥಲದಲ್ಲಿ ವ್ಯಕ್ತವಾಗುತ್ತದೆ. ವೃತ್ತವೆಂದರೆ ಕೆಳಗಿನ  ಸುತ್ತಳತೆ ಅಥವಾ ಪರಿಘವೆನ್ನಬಹುದು.  ವೃತ್ತವು  ಪೂರ್ಣತೆಯ ಕುರುಹಾಗಿದೆ. ಕಟಿಯೆಂದರೆ ಲಿಂಗದ ನಡುವು. ಕೆಳಗಿನ ವೃತ್ತ ಮತ್ತು ಮೇಲಿನ ವರ್ತುಳದ ನಡುವಿನ ಸಣ್ಣ ಭಾಗವು. ಮೂರನೆಯದು ಮೇಲಿನ ವರ್ತುಳವು. ಪೀಠವೆನಿಸಿದ ಈ ಕೆಳಭಾಗದಲ್ಲಿ ಲಿಂಗವನ್ನಿಡುವ ರಂಧ್ರವು ನಾಳವೆನಿಸುವದು. ಪೀಠದ ನಾಳದಲ್ಲಿದ್ದ ಪ್ರಕಾಶಮಯವಾದ ಬಾಣರೂಪ ಲಿಂಗವೇ ಚಿತ್ಪೀಠವಾಗಿದೆ. ಈ ರೀತಿಯಾಗಿ ಲಿಂಗದಲ್ಲಿಯ ಆರು ಸ್ಥಲಗಳನ್ನು ಗುರುವರನು ದೀಕ್ಷಾ ಸಮಯದಲ್ಲಿ ವಿವರಿಸಿ ಲಿಂಗವನ್ನು ಕರುಣಿಸುತ್ತಾನೆ. ಅಂಗದಲ್ಲಿ ಷಟ್ ಚಕ್ರಗಳನ್ನು ತಿಳಿಸಿ ಷಡ್ಲಿಂಗಗಳ ಮರ್ಮವನ್ನು ಬೋಧಿಸಿದಂತೆ ಇನ್ನು ಲಿಂಗಗಳ ಷಟ್‌ಸ್ಥಲಗಳಲ್ಲಿ ಮಂತ್ರರಹಸ್ಯವನ್ನು ತಿಳಿಸುವ ಮಾತನ್ನು ಮುಂದಿನ ತ್ರಿಪದಿಯಲ್ಲಿ ಪ್ರತಿಪಾದಿಸುತ್ತಾನೆ.

ಬಾಲ ಬಾರೆಂದೆನ್ನ | ಕೈಲಿ ಲಿಂಗವ ಕೊಟ್ಟು

ಈ ಲಿಂಗದೊಳಗೆ-ಮೂಲ ಷಣ್ಮಂತ್ರವನು

ಕೀಲಿಸಿದ ಗುರುವೆ ಕೃಪೆಯಾಗು       ||೧೧೯ ||

ಕರುಣಾಮಯನೂ, ಜ್ಞಾನಸಾಗರನೂ, ವೈರಾಗ್ಯಪರನೂ ಆದ ಸದ್ಗುರುವಿನ ಸನ್ನಿಧಿಯಲ್ಲಿ ವಯೋಮಾನದಿಂದ ಹಿರಿಯನಾದರೂ ಶಿಷ್ಯನು ಬಾಲಕನೇ.  ಜ್ಞಾನ-ವೈರಾಗ್ಯಗಳ ತುಲನೆಯಿಂದ ಸಣ್ಣವನೇ ಸರಿ.  ಕಿಂಕರತ್ವವನ್ನು ವಹಿಸಿದರೆ ಮಾತ್ರ ಗುರುವಿನಿಂದ ಜ್ಞಾನಕಿರಣ ಹರಿದು ಬರುತ್ತದೆ. ಕೀಳಿಂಗಲ್ಲದೆ ಹಯನ ಕರಯದೆಂದುʼʼ ಅಣ್ಣನವರು ಅನುಭವದ ಅಮೃತವನ್ನೇ ಸುರಿದಿರುವರು. ಶಿಷ್ಯನ ಸದಾಚರಣೆ ಗುರುನಾಥನಿಗೆ ತೃಪ್ತಿಯನ್ನೀಡಬೇಕು. ಆಗ ಗುರುವರನು ಸದಯಾಂತಃ ಕರಣದಿಂದ ಶಿಷ್ಯನನ್ನು ಕಂದನಂತೆ, ಹೇ ಬಾಲ ! ಬಾ ನನ್ನ ಹತ್ತಿರಕೆ; ಬಾಳ ಬಾ; ನಿಜವಾದ ಬಾಳು ಈ ನಿನ್ನ ಕೈಯಲ್ಲಿತ್ತ ಇಷ್ಟಲಿಂಗದಲ್ಲಿದೆ.  ಈ ಲಿಂಗವೇ ಜೀವನ ಸಾಗರವನ್ನು ದಾಟಿಸುವ ದಿವ್ಯಸಾಧನ.  ಲಿಂಗದ ಜ್ಞಾನವೇ ಜೀವನದ ಜೀವಾಳ.  ಕ್ರಿಯಾದಿ ದೀಕ್ಷೆಗಳಿಂದ ನಿನ್ನ ಸ್ಥೂಲ-ಸೂಕ್ಷ್ಮ-ಕಾರಣ ಶರೀರವು ಪವಿತ್ರಗೊಂಡು ಮಂತ್ರಮಯವಾಗಿರುವಂತೆ ಈ ಲಿಂಗದಲ್ಲಿಯೂ ಮೂಲಮಂತ್ರವನ್ನು ಕೀಲಿಸಿರುವೆ.

ಇದೂ ಮಂತ್ರಮಯವಾಗಿದೆ. ನಿತ್ಯ ಲಿಂಗಾರ್ಚನೆ, ಲಿಂಗಾರ್ಪಣ, ಲಿಂಗಾನುಭವಗಳಿಂದ ಶಿವಯೋಗದ ಅಥವಾ ಲಿಂಗಾಂಗಯೋಗದ ಅನುಸಂಧಾನ (ಸಾಕ್ಷಾತ್ಕಾರ) ನಡೆಯಬೇಕು. ಮಹಾನುಭಾವಿಗಳು ಅನುಸರಿಸಿದ ಅನುವಿದಾಗಿದೆ” ಎಂದು ಮುಂತಾಗಿ ಬೋಧಿಸಿ ಕೃಪೆಗೆಯುತ್ತಾನೆ.

ಶಿಲ್ಪಿಯು ಅದೆಷ್ಟು ಸುಂದರವಾಗಿ ಕಲಾಮಯವಾದ ಲಿಂಗವನ್ನು ತಯಾರಿಸ ಬಹುದು. ಆದರೆ ಅದು ಲಿಂಗಾಕಾರದ ಮೂರ್ತಿಯಾದೀತೇ ವಿನಾ ಲಿಂಗವೆನಿಸುವದಿಲ್ಲ . ಗುರುಕರಕಮಲ ಸ್ಪರ್ಶದಿಂದಲ್ಲದೆ ಅದರಲ್ಲಿ ಲಿಂಗಗುಣವು ಮೈದೋರುವ ದಿಲ್ಲ. ಶಿಲಾಭಾವವು ಸರಿಯುವದಿಲ್ಲ.  ಅದುಕಾರಣವೇ ಮಾರಾಟಕ್ಕಿಕ್ಕಿದ ಲಿಂಗವನ್ನು ಧರಿಸುವದರಿಂದ ಲಿಂಗ ಕಳೆಯು ಸಮನಿಸುವದಿಲ್ಲ. ಇಂಥ ಲಿಂಗವನ್ನು ಕಟ್ಟಿಕೊಳ್ಳಲೇ ಬಾರದು. ಅದರಿಂದ ಯಾವ ಪ್ರಯೋಜನವಾಗುವದಿಲ್ಲ. ಇವೆಲ್ಲ ದೋಷಗಳನ್ನು ದೂರೀಕರಿಸುವದಕ್ಕಾಗಿ ಗುರುನಾಥನು ಲಿಂಗದ ಮೇಲೆ ಷಡವಯವಗಳಲ್ಲಿ ಷಣ್ಮಂತ್ರಾಕ್ಷರಗಳನ್ನು ಕೀಲಿಸುತ್ತಾನೆ. ಮಂತ್ರಾಕ್ಷರ ಸಂಸ್ಕಾರದಿಂದ ಮಂತ್ರಾಕ್ಷರನ್ಯಾಸ ದಿಂದ ಶಿಲಾಭಾವದ ಲಿಂಗವು ಮಂತ್ರಮಯವಾಗುವದರಲ್ಲಿ ಯಾವ ಸಂದೇಹವಿಲ್ಲ.

ಚಾರುವೃತ್ತದೊಳಿರ್ಪಾ | ಚಾರಲಿಂಗದೊಳಗೆ ನ

ಕಾರ ಮೊದಲಾದ – ಆರು ಪ್ರಣವದ ನೆಲೆಯ

ತೋರಿಸಿದ ಗುರುವೆ ಕೃಪೆಯಾಗು    ೧೨೦ |

ಶರಣಕವಿಯು ಲಿಂಗದ ಒಂದೊಂದು ಸ್ಥಲದಲ್ಲಿ ಒಂದೊಂದು ಮಂತ್ರಾಕ್ಷರಗಳ ಸಂಬಂಧವನ್ನು ತೋರಿಸುತ್ತ ಹೋಗುತ್ತಾನೆ.

ವೃತ್ತ ಸ್ಥಾನವು ಚಾರುತರವಾದುದು. ಯಾಕಂದರೆ ವೃತ್ತವು ಗೋಲಾಕಾರ ವಾಗಿರುವದು.  ದುಂಡಾಗಿರುವದರಿಂದ ಪರಿಪೂರ್ಣವಾಗಿ ಶೋಭಿಸುತ್ತದೆ.  ಅಂತೆಯೇ ಶಿವಕವಿಯು ವೃತ್ತಕ್ಕೆ ಚಾರು ಪದವನ್ನು ವಿಶೇಷಣವಾಗಿ ಬಳಸಿದ್ದಾನೆ. ಅಲ್ಲದೆ ಪೂರ್ಣವಾದ ಪರಿಘದಲ್ಲಿ ಸಕಲವೂ ಸೇರಿದೆಯೆಂಬ ಭಾವವೂ ವ್ಯಕ್ತವಾಗುವದು. ಈ ವೃತ್ತ ಸ್ಥಾನದಲ್ಲಿರುವ ಲಿಂಗ ಆಚಾರಲಿಂಗವೆನಿಸಿದೆ. ವೃತ್ತವು ಎಲ್ಲ ಸ್ಥಲಗಳಿಗೆ ಆಧಾರವಾಗಿರುವಂತೆ ಆಚಾರಲಿಂಗವು ಎಲ್ಲ ಲಿಂಗಗಳಿಗೆ ಆಶ್ರಯವಾಗಿದೆ.

ಈ ಆಚಾರಲಿಂಗದಲ್ಲಿ ನಕಾರ ಪ್ರಣವ ಪ್ರಕಾಶಮಾನವಾಗಿದೆ. ಇಲ್ಲಿ ‘ನ ʼಕಾರ ಮುಖ್ಯವಾಗಿದ್ದು ಅದರಲ್ಲಿ ಉಳಿದೈದು ಪ್ರಣವಗಳು ಸುಪ್ತವಾಗಿವೆ. ವೃತ್ತ ಪೂರ್ಣವಾಗಿರುವಂತೆ ಆಚಾರವು ಪರಿಪಕ್ವಗೊಂಡರೆ ಮಾತ್ರ ಆಚಾರಲಿಂಗದ ಅರಿವು ಆಗುವದು. ಆ ಮಂತ್ರದ ನೆಲೆ ಸ್ಥಿರವಾಗುವದು.

ಶಿವ ಪಂಚಾಕ್ಷರ ಸ್ತೋತ್ರದಲ್ಲಿ ಶಂಕರಾಚಾರ್ಯರು ‘ನ ʼಕಾಲ ಮಂತ್ರಾಕ್ಷರದ ವರ್ಣನೆಯನ್ನು –

ನಾಗೇಂದ್ರ-ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ |

ನಿತ್ಯಾಯ ಶುದ್ಧಾಯ ದಿಗಂಬರಾಯ

ಸ್ಮೈ ನಕಾರಾಯ ನಮಃ ಶಿವಾಯ

ಎಂದು ಸುಂದರವಾಗಿ, ಮಾರ್ಮಿಕವಾಗಿ ಹಾಡಿರುವರು. ಇದರಂತೆ ಶ್ರೀರುದ್ರಯಾಮಲತಂತ್ರದಲ್ಲಿ ಉಮಾಮಹೇಶ್ವರ ಸಂವಾದಲ್ಲಿಯೂ ಷಡಕ್ಷರ ಸ್ತೋತ್ರವು ಅರ್ಥ ಪೂರ್ಣವಾಗಿದೆ-

“ನಮಂತಿ ಋಷಯೋ ದೇವಾಃ ನಮಂತ್ಯಪ್ಸರಸಾಂಗನಾಃ |

ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ” ||

ಮಹಾಮಂತ್ರಕ್ಕೆ ಮಣಿಯದವರಾರು ? ಸಕಲರೂ ಶಿರ ಬಾಗಿಸಲೇಬೇಕಾಗುವದು.

ಜ.ಚ.ನಿ

ಮನೆಯು ಜನಗಳಿಂದ ತುಂಬಿತ್ತು. ಧನಧಾನ್ಯಗಳಿಂದ ಬರಿದಾಗಿತ್ತು. ತಾತ ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ ಮುಂತಾಗಿ ಮನೆಯಲ್ಲಿ ಹತ್ತು ಹನ್ನೆರಡು ಜನರಿದ್ದರು. ಸಂಪಾದನೆ ಯಾವ ಬಗೆಯಲ್ಲಿಯು ಇರಲಿಲ್ಲ. ಅಜ್ಜಂದಿರು ಓದಿಸುತ್ತಿದ್ದ ಸ್ವತಂತ್ರ ಶಾಲೆಯ ಫಲವಾಗಿ ಜನಗಳಿಂದ ವರ್ಷಕ್ಕೊಮ್ಮೆ ಬರುತ್ತಿದ್ದ ಅಲ್ಪಸ್ವಲ್ಪ ಪ್ರಾಪ್ತಿ.  ಅದೇತಕ್ಕೂ ಸಾಲುತ್ತಿರಲಿಲ್ಲ. ಪ್ರತಿನಿತ್ಯ ಭಿಕ್ಷೆಯ ಮಾಡದೆ ವಿಧಿಯಿರಲಿಲ್ಲ. ಈ ಮಧ್ಯೆ ತಂದೆಯವರು ಹಠಾತ್ತಾಗಿ ಶಿವಾಧೀನರಾದದ್ದು ಒಂದು ತುಂಬಿಬಾರದ ಕೊರತೆ. ಕೆಲಸ

ಮಾಡುವವರ ಸಂಖ್ಯೆ ಕಡಿಮೆಯಾಯಿತು. ೧೦೫ ವರ್ಷ ವಯಸ್ಸಿನ ತಾತಂದಿರು ಸಹ ಹಸುವಿಗೆ ಹುಲ್ಲನ್ನು ಕೊಯ್ದು ಇಲ್ಲವೆ ಕೆತ್ತಿ ತರುವ ಕಾಯಕ ಮಾಡಬೇಕಾಯಿತು. ಅಣ್ಣಂದಿರಾದ ಶಿವಬಸವಯ್ಯನವರು ಒಬ್ಬರೆ ತರುವ ಭಿಕ್ಷೆಯಿಂದ ಚರಿತಾರ್ಥ ಸಾಗದಂತಾಯಿತು. ಸದಾಶಿವಯ್ಯನವರು ಭಿಕ್ಷಕ್ಕೆ ಹೋಗುವ ಸರದಿ ಬಂದಿತು. ಹೋಗದಿದ್ದರೆ ವಿಧಿಯಿಲ್ಲದೆ ಹೋಯಿತು. ಒಪ್ಪೋತಿನ ಶಾಲೆಗೆ ತಿಲಾಂಜಲಿ ಬಿಡಬೇಕಾಯಿತು; ಬಿಟ್ಟಾಯಿತು. ಒಪ್ಪತ್ತಿನ ಓದು ಅವರ ಮನಸ್ಸಿಗೆ ತೃಪ್ತಿತರಲಿಲ್ಲ. ಅದೇ ಅವರಿಗೊಂದು ಚಿಂತೆಯಾಗಿತ್ತು; ಚಿತ್ತಚಪಲತೆಯಾಗಿತ್ತು.

ಒಂದು ದಿನ ಬೆಳಗಿನ ಜಾವ. ಎಂದಿನಂತೆ ಎದ್ದು ಮುಖ ತೊಳೆದು ವಿಭೂತಿ ಧಾರಣೆ ಮಾಡಿಕೊಂಡು ಒಂದು ಹಳ್ಳಿಗೆ ಸದಾಶಿವಯ್ಯನವರು ಭಿಕ್ಷಕ್ಕೆ ಹೋದರು. ನಾಲ್ಕಾರು ಮನೆ ಭಿಕ್ಷವಾಯಿತು. ಮತ್ತೊಂದು ಮನೆಯೊಳಕ್ಕೆ ಹೋಗಲು ಮುಂದುವರಿದರು. ಅಷ್ಟರಲ್ಲಿ ಅದೇ ಮನೆಯ ಕಟ್ಟೆಯ ಮೇಲಿದ್ದ ಮುದುಕನೊಬ್ಬನು, ‘ಏನ ಅಯ್ಯಪ್ಪ, ಭಿಕ್ಷೆ ಬೇಡಲು ನೀನೇನು ಮುದುಕನೆ ? ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗ, ಈಗಲೇ ಈ ತಿರುಪೆಗೆ ನಿಂತರೆ ಹೇಗೆ ? ಇನ್ನೂ ನೀನು ಎಷ್ಟು ದಿನ ಬದುಕಬೇಕಾಗಿದೆ ? ಎಷ್ಟು ಜನ ಮಕ್ಕಳು ಮರಿಗಳನ್ನು ಹೆತ್ತು ಸಾಕಬೇಕಾಗಿದೆ ? ಭಿಕ್ಷಾನ್ನದಿಂದಲೇ ಇದೆಲ್ಲ ಹೇಗೆ ಸಾಧ್ಯ ? ವಿದ್ಯೆ ಕಲಿತು ಬುದ್ಧಿವಂತನಾಗದೆ ಸೋಮಾರಿಯಾಗಿ ‘ಭಿಕ್ಷಾಂ ದೇಹಿ’ ಎಂದು ಭಿಕ಼್ಷೆ ಬೇಡುವುದೆ ? ಇನ್ನೊಬ್ಬರಿಗೆ ಹೊರೆಯಾಗಿ ಬಾಳುವುದೊಂದು ಬಾಳೆ ? ಬದುಕುವುದೊಂದು ಬದುಕೆ ? ನೀನು ಜನಿಸದಿದ್ದರೆ ಜಗತ್ತು ಹಾಳಾಗುತಿತ್ತೆ? ಎಂದು ಮುಂತಾಗಿ ಬುದ್ಧಿವಾದ ಬೈಗಳ ಸುರಿಸಿದನು. ಸದಾಶಿವಯ್ಯನವರ ಮೃದುವಾದ ಮನಸ್ಸಿನ ಮೇಲೆ ಆ ಮೊನಚಾದ ಮಾತುಗಳು ಚೆನ್ನಾಗಿ ನಾಟಿದವು. ತಾಳ್ಮೆಗೆಟ್ಟರು. ಅಲ್ಲಿಂದ ಮುಂದಿನ ಮನೆಗೆ ಭಿಕ್ಷಕ್ಕೆ ಹೋಗುವ ಮನಸ್ಸು ಉಳಿಯಲಿಲ್ಲ. ಮೊದಲೆ ವಿದ್ಯಾರ್ಜನೆಗಾಗಿ ತವಕಿಸುತ್ತಿದ್ದ ಮನಸ್ಸು ಮತ್ತಿಷ್ಟು ತವಕಗೊಂಡಿತು. ಹೇಗಾದರೂ ಮಾಡಿ ವಿದ್ಯಾರ್ಜನೆ ಮಾಡಬೇಕೆಂದು ಗಟ್ಟಿಗೊಂಡಿತು. ಹಾಗೆಯೇ ಊರಿಗೆ ಹಿಂದಿರುಗಿದರು. ಬರುತ್ತ ಆ ಮುದುಕನು ಆಡಿದ ಮಾತುಗಳನ್ನು ನೆನೆದು ದುಃಖ ಉಕ್ಕಿತು, ಕಣ್ಣೀರು ಮುನ್ನೀರಾಗಿ ಹರಿಯತೊಡಗಿತು. ಸಮಾಧಾನ ಮಾಡುವರಾರು ? ದಾರಿಯುದ್ದಕ್ಕು ಅತ್ತು ಅತ್ತು ಹೃದಯ ಭಾರವಾಯಿತು. ಬುದ್ಧಿಸಿಮಿತವಿಲ್ಲದಾಯಿತು. ಮನಸಿನ ಮೇಲೆ ಮೂಡಿದ ಮಾತಿನ ಗಾಯ ಮಾಣಲಿಲ್ಲ. ದುಃಖದ ಭರದಲ್ಲಿ ದಾರಿ ಸಾಗಲಿಲ್ಲ. ದಟ್ಟಡಿಯಿಟ್ಟು ನಡೆದಿದ್ದನು. ಹೊತ್ತು ಹೆಚ್ಚಾದರೂ ಅವನಿಗೇನು ಕಾಣಲಿಲ್ಲ. ಚಿಂತೆ ಶೋಕಗಳಲ್ಲಿ ಹೊತ್ತುಗೊತ್ತುಗಳಿಗೆ ಸ್ಥಾನವೆಲ್ಲಿ ? ಅಷ್ಟರಲ್ಲಿ ಊರು ಹತ್ತಿರಕ್ಕೆ ಬಂದಿತು. ಬೆಚ್ಚಿನೋಡಿ ಕಣ್ಣೀರು ಒರಸಿಕೊಂಡು ಬಾಗಿಲ ಬಳಿಗೆ ಬಂದನು. ತಂಗಿಯು ತಂಬಿಗೆಯಲ್ಲಿ ತಂದ ನೀರಿನಿಂದ ಕಾಲುತೊಳೆದು ಒಳಗೆ ಹೋದನು. ಅಕ್ಕನು ಓಡಿ ಬಂದು ಜೋಳಿಗೆಯನ್ನು ನೋಡಿದಳು. ದಿನಕ್ಕಿಂತಲು ಹಿಟ್ಟು ತೀರ ತುಸು ಇದ್ದಿತು. ಅವ್ವಾ, ತಮ್ಮನಿಂದು ಹಿಟ್ಟು ತುಸು ತಂದಿದ್ದಾನೆ ಎಂದು ಕೂಗಿ ಹೇಳಿದಳು. ಆ ಮಾತು ಕೇಳಿ ಅಲ್ಲಿಯೇ ಇದ್ದ ಅಣ್ಣನು, ಅಂಗಡಿಗೆ ಹಾಕಿ ಫಲಾರ (ಫಲಾಹಾರ) ತಿಂದಿರಬೇಕು ಎಂದು ದೂರು ಹೇಳಿದನು.

ತಾಯಿ ನೀಲಾಂಬೆ ಜಳಕ ಮಾಡಿ ಮಡಿಯುಟ್ಟು ಅಡುಗೆಯ ಮನೆಯ ತನ್ನ  ಕೆಲಸದಲ್ಲಿ ತೊಡಗಿದ್ದಳು. ಮಕ್ಕಳ ಮಾತುಗಳ ಕೇಳಿ ಮನಸ್ಸು ತಾಳದೆ ಬಂದು ನೋಡಿದಳು. ಅವರು ಹೇಳಿದಂತೆ ನಿಜವಾಗಿಯೂ ಎಂದಿಗಿಂತ ತೀರ ಕಡಿಮೆಯಾಗಿತ್ತು. ಮಗನ ಮೇಲೆ ತಾಯಿಗೆ ತುಂಬಾ ಮಮತೆಯಿತ್ತಾದರು ಸಂಸಾರ ನಿರ್ವಹಣ ದೃಷ್ಟಿಯಿಂದ ತುಂಬ ಸಿಟ್ಟಿಗೆದ್ದಳು; ಸಾವಿರಾಡಿದಳು. ಗಾಯದ ಮೇಲೆ ಕಾಯ್ದ ಕಂಬಿಯ ಕೀಸಿದಂತಾಯಿತು. ಮೊದಲೆ ಮುದುಕನ ಬಿರಿನುಡಿಗಳಿಂದ ಬೆಂದ ಹೃದಯ ಮತ್ತಿಷ್ಟೂ ನೊಂದಿತು.  ಅಕ್ಕನ ಚಾಡಿ, ಅಣ್ಣನ ಅಪವಾದ, ಅವ್ವನ ಆರ್ಭಟ ಯಾವುದನ್ನು ಸಹಿಸಬೇಕು. ಏನೆಂದು ಸಮಾಧಾನ ಹೇಳಬೇಕು. ಹೇಳಬೇಕೆಂದಿದ್ದರೆ ಬೇಕಾದಷ್ಟಿತ್ತು. ಹೇಳುವ ಮನಸ್ಸು ಮಾಡಲಿಲ್ಲ. ಇದಿರಾಡಲು ಇವನಿಗೆ ಇಷ್ಟವಿಲ್ಲದೆ ಹೋಯಿತು. ಕಷ್ಟವೊದಗಿದಷ್ಟು ಅವನ ಮನ ಪುಟಕ್ಕಿಟ್ಟ ಚಿನ್ನದಂತೆ ಚೊಕ್ಕಟವಾಗ ತೊಡಗಿತ್ತು. ಅಲ್ಲದೆ ಬಾಗಿಲ ಬಳಿ ತಂಗಿ ನೀರು ತಂದು ಕೊಟ್ಟಾಗ ಅವನು ಬರಿ ಕಾಲುಗಳನ್ನೇ ತೊಳೆದಿರಲಿಲ್ಲ. ಜೊತೆಗೆ ಕಾಮಕ್ರೋಧಗಳನ್ನು ತೊಳೆದಿದ್ದನು. ತೊಡೆದು ಹಾಕಿದ್ದನು. ಅದರಿಂದ ಅವನ ಮುಚ್ಚಿದ ತುಟಿ ಎರಡಾಗಲಿಲ್ಲ. ಊಟದ ಆಶೆ ಉಳಿಯಲಿಲ್ಲ. ಏನೂ ತೋಚದಾಯಿತು. ಯಾವುದೂ ಬೇಡವಾಯಿತು. ಸಹಿಸದ ಸಂಕಟದಿಂದ ಮರುಮಾತಾಡದೆ ಮನೆಯ ಒಂದು ಮೂಲೆಯಲ್ಲಿ ಹೋಗಿ ಕುಳಿತನು.ಅವನು ಕುಳಿತರೂ ಅವನ ಮನಸ್ಸು ಸುಮ್ಮನಾಗಲಿಲ್ಲ. ಅದು ಚಿಂತೆಗೊಳಗಾಯಿತು. ಇನ್ನು ನಾನು ಇಲ್ಲಿ ಇರುವುದರಿಂದ, ಹೀಗೆ ಕಾಲಕಳೆವುದರಿಂದ ಯಾವ ಪ್ರಯೋಜನವಿಲ್ಲ. ಮಾನಮರ್ಯಾದೆ ಮತ್ತೂ ಇಲ್ಲ. ಎಲ್ಲಿಗಾದರೂ ಹೋಗಿ ಯಾರ ಆಶ್ರಯವನ್ನಾದರೂ ಬೇಡಿ ಓದಿಕೊಳ್ಳಬೇಕು. ಆದರೆ ಎಲ್ಲಿಗೆ ಹೋಗುವುದು ? ಯಾರನಾಶ್ರಯಿಸುವುದು ? ಎಂದು ಎಷ್ಟೋ ಬಗೆಯಾಗಿ ಯೋಚಿಸತೊಡಗಿತ್ತು. ಅಷ್ಟರಲ್ಲಿ ಅಣ್ಣನ ಕೂಗು. ಹೀಗೆ ಸುಮ್ಮನೆ ಮೂಲೆ ಹಿಡಿದು ಕುಳಿತರೇನು ? ಮನೆಗೆಲಸ ಮಾಡುವರಾರು ? ದನದ ಮನೆ ಕಸಗೂಡಿಸಿಲ್ಲ. ಮೈಲಿಗೆಯ ಬಟ್ಟೆಗಳ ತೊಳೆದಿಲ್ಲ. ಇವುಗಳಲ್ಲಿ ಯಾವುದನ್ನಾದರೂ ಮಾಡ ಏಳು ! ಎನ್ನಲು ಸದಾಶಿವಯ್ಯನು ಬಟ್ಟೆ ತೊಳೆವುದನ್ನೇ ಒಪ್ಪಿಕೊಂಡು ಬಟ್ಟೆಗಳೊಡನೆ ಬಾವಿಯಿದ್ದಲ್ಲಿಗೆ ಬಂದು ಬಟ್ಟೆಗಳನ್ನು ಹಸನಾಗಿ ತೊಳೆದನು. ಆದರೆ ಮರಳಿ ಮನೆಗೆ ಹೋಗಲು ಮನಸ್ಸಿಲ್ಲ. ಬಡತನದ ಬಾಳಿನಲ್ಲಿ ಇಷ್ಟು ದಿನ ತಮ್ಮ ಮನಸ್ಸಿಗೆ ವಿರೋಧವಾಗಿ ಅದೆಷ್ಟೋ ತಗ್ಗಿ ನಡೆದನು; ಅದೆಷ್ಟೋ ಕುಗ್ಗಿ ನಡೆದನು. ಇನ್ನು ಹಾಗೆ ಇರಲು ಸಾಧ್ಯವಿರಲಿಲ್ಲ. ವಿದ್ಯಾಭ್ಯಾಸದ ಕಡೆಗೆ ಅವನ ಮನಸ್ಸು ತೀವ್ರವಾಗಿ ಹರಿಯಿತು. ಬೆಳಗಿನಿಂದ ಊಟವಿಲ್ಲದಿದ್ದರು ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ. ಬಟ್ಟೆಗಳನ್ನು ಮನೆಗೆ ಕಳಿಸುವ ಬಗೆ ಹೇಗೆ ? ಎಂದು ಯೋಚಿಸುತ್ತಿರುವಾಗ ನೆರೆಮನೆಯವರೊಬ್ಬರು ನೀರಿಗೆಂದು ಅಲ್ಲಿಗೆ ಬಂದರು. ಅವರನ್ನು ನೋಡಿ ಮನ ಹಿಗ್ಗಿತು. ಉಂಡಷ್ಟು ಸಂತಸವಾಯಿತು. ಮನೆಯಲ್ಲಿ ಕೊಡಹೇಳಿ ತೊಳೆದ ಬಟ್ಟೆಗಳನ್ನು ಅವರ ಕೈಯಲ್ಲಿ ಕೊಟ್ಟನು. ನನ್ನನ್ನು ಕೇಳಿದರೆ ಹಳ್ಳಿಗೆ ಹೋದನೆಂದು ಹೇಳಿ ಎಂದು ತಿಳಿಸಿದನು. ಹಾಗೆಯೇ ಹೊರಟುಬಿಟ್ಟನು. ಸ್ವಲ್ಪ ದೂರ ಹೋದಮೇಲೆ ಹಸಿದಿದ್ದರೂ ಹಂಗಿಲ್ಲದೆ ನಿಟ್ಟೋಟದಿಂದ ಓಡಿದನು. ಏಕೆಂದರೆ ಯಾರಾದರು ಬಂದು ಹಿಂದಕ್ಕೆ ಕರೆದೊಯ್ದಾರೆಂಬ ಭಯ ಅವನಿಗೆ. ಅದರಿಂದಾಗಿ ಬೇಗ ಅವನು ಕಜ್ಜರಿ ಗ್ರಾಮವನ್ನು ಸೇರಿದನು; ಕೊಂಚ ಮನ ಸೈರಣೆಗೊಂಡಿತು.

 ಆಗ ಆ ಊರಿನಲ್ಲಿ ಶಾಲೆ ಉತ್ತಮ ರೀತಿಯಲ್ಲಿದ್ದು ಹೆಸರುವಾಸಿಯಾಗಿತ್ತು. ಅದರಿಂದ ಅಲ್ಲಿ ತನ್ನ ಹೆಚ್ಚಿನ ಅಭ್ಯಾಸ ಆಗುತ್ತದೆಂದು ಆಲೋಚಿಸಿ ಅಲ್ಲಿಗೆ ಬಂದಾಯಿತು. ಆದರೆ ಅವನ ಬಳಿ ಬಿಡಿಗಾಸು ಸಹ ಇರಲಿಲ್ಲ. ಅಷ್ಟು ಅಕಿಂಚನನಾಗಿದ್ದನು. ಆಶ್ರಯದ ಮಾತು ಮುಂದೆ ಬಂದಿತು. ಊರಿನಲ್ಲಿ ಯಾರ ಪರಿಚಯವೂ ಇರಲಿಲ್ಲ. ಎಲ್ಲಿ ಯಾರ ಮನೆಗೆ ಹೋಗಿ ಕೇಳುವುದು ? ಸಾಧ್ಯವಾಗದೆ ಹೋಯಿತು. ಹಾಗೆಯೇ ಅದೇ ಊರಿನ ಅರಳಿಕಟ್ಟೆಯ ಮೇಲೆ ಕುಳಿತು ಬಿಟ್ಟನು. ಬೆಳಗಿನಿಂದ ಊಟವಿಲ್ಲ. ಮೈಮೇಲೆ ಸರಿಯಾದ ಬಟ್ಟೆಯಿಲ್ಲ. ಇತ್ತಹಸಿವಿನ ಬಾಧೆ, ಅತ್ತ ಮನಸ್ಸಿನ ವೇಧೆ, ಎರಡನ್ನೂ ಸಹಿಸದೆ ಹೋದನು. ಕಣ್ಣುಗಳಲ್ಲಿ ನೀರೂರಿತು. ಭವಿಷ್ಯತ್ತಿನ ಕಾರ್ಗತ್ತಲೆಯ ಕಪ್ಪುಕಲೆ ಕಂದಿದ ಮುಖದ ಮೇಲೆ ನೆಲೆ ನಿಂತಿತು. ಆ ಸಮಯಕ್ಕೆ ಅದೇ ಊರಿನ ಹಿರಿಯಮಠದ ರಾಚಯ್ಯನವರೆಂಬುವರು ಅಲ್ಲಿಗೆ ಆಕಸ್ಮಿಕವಾಗಿ ಬಂದರು. ಅರಳಿಕಟ್ಟೆಯಲ್ಲಿ ಕುಳಿತು ಅಳುತ್ತಿರುವ ಅಣುಗನ ಮೇಲೆ ಅವರ ದೃಷ್ಟಿ ಹರಿಯಿತು. ಪಡುವ ಅವಸ್ಥೆಯನ್ನು ನೋಡಿ ಆದ್ಯಂತವನ್ನು ಕೇಳಿ ಮನಮರುಗಿ, ಕರಳುಕರಗಿ ಮಠಕ್ಕೆ ಕರೆದೊಯ್ದರು. ಹಸಿದ ಹೊಟ್ಟೆಗೆ ಊಟ ದೊರೆಯಿತು. ಓದಲು ಊರಿನವರಿಂದ ಸಹಾಯ  ಮಾಡಿಸಿಕೊಡುವೆನೆಂಬ ಅಭಯವೂ ಅವರಿಂದ ದೋರೆಯಿತು.  ಕೇಳಿ ಮನಸ್ಸಿಗೆ ನೆಮ್ಮದಿಯಾಯಿತು. ಆ ದಿನ ಸುಖವಾಗಿ ನಿದ್ದೆ ಹೋದನು.

 ಮರುದಿನ ರಾಚಯ್ಯನವರು ಮಾತುಕೊಟ್ಟಂತೆ ಊರಿನಲ್ಲಿ ಹೋಗಿ ಇದ್ದ ಸಂಗತಿಯನ್ನು ಜನರಿಗೆ ಹೇಳಿ ವಿದ್ಯಾಸಹಾಯವೆಂದು ಕೇಳಿ ಹಣ ಶೇಖರಿಸಿದರು. ಬಂದ ಹಣದಲ್ಲಿ ಬಟ್ಟೆ ಓದುವ ಪುಸ್ತಕ ಹಲಗೆ ಬಳಪ ಮುಂತಾದ ಸಾಮಾನುಗಳನ್ನು ತಂದು ಸದಾಶಿವಯ್ಯನವರಿಗೆ ಕೊಟ್ಟು ಶಾಲೆಗೆ ಸೇರಿಸಿದರು. ಅವನ ಧೈರ್ಯದ ಸಾಹಸಕ್ಕೆ ಇಂದು ದಾರಿ ಸಿಕ್ಕಿತು. ಮುಖದ ಮೇಲೆ ಕೃತಜ್ಞತೆಯ ಚಿನ್ಹೆ ಚಿಮ್ಮಿತು. ಸದಾಶಿವಯ್ಯನವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅನಿರೀಕ್ಷಿತವಾದ ಈ ಸಹಾಯದಿಂದ ಅವರ ಓದುವ ಉತ್ಸಾಹ ಇಮ್ಮಡಿ ಮುಮ್ಮಡಿಯಾಗಿ ಹೆಮ್ಮಿತು. ಮನಸಿಟ್ಟು ಮತಿಗೊಟ್ಟು ಓದತೊಡಗಿದರು. ಒಂದರಗಳಿಗೆಯನ್ನು ಸಹ ವ್ಯರ್ಥ ಕಳೆಯುತ್ತಿರಲಿಲ್ಲ. ಪಾಠಬರುವವರಿವಿಗೂ ಊಟ ಮಾಡುತ್ತಿರಲಿಲ್ಲ. ಆಟವಾಡುತ್ತಿರಲಿಲ್ಲ. ನೆರವನ್ನು ನಿರರ್ಥಕಮಾಡಿಕೊಳ್ಳಲಿಲ್ಲ. ತನ್ನ ಓದಾಯ್ತು. ತಾನಾಯ್ತು. ಈ ರೀತಿ ಒಮ್ಮನದಿಂದ ಓದಿ ಕೆಲವು ದಿನಗಳಲ್ಲಿಯೆ ಶಾಲೆಯ ಜಾಣ ವಿದ್ಯಾರ್ಥಿಯಾದರು. ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸದ್ಗುಣಗಳಿಂದ ಮಠದವರಿಗೆ ಮುದ್ದು ಹುಡುಗರಾದರು.

 ಈ ಬಗೆಯಾಗಿ ನಾಲ್ಕು ವರ್ಷ ಓದಿದರು. ಏಳನೆಯ ವರ್ಗದ ಅಭ್ಯಾಸವೂ ಕೊನೆಗಂಡಿತು. ಉತ್ತಮವಾಗಿ ಕೊನೆಗಂಡಿತು. ಈ ವರ್ಗದ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎಂದು ಹೆಸರು. ಇದು ಜಿಲ್ಲೆಯ ಕೇಂದ್ರಸ್ಥಳದಲ್ಲಿಯೇ ಜರುಗುತ್ತಿತ್ತು. ಅಲ್ಲಿಗೆ ಹೋಗಿ ಪರೀಕ್ಷೆಗೆ ಕುಳಿತುಕೊಳ್ಳಲು ಸದಾಶಿವಯ್ಯನವರು ಮನಸ್ಸು ಮಾಡಿದರು. ಶಿಕ್ಷಕರ ಅನುಮತಿಯನ್ನು ಪಡೆದರು. ಅಸುಂಡಿ ಶಿವನಗೌಡನೆಂಬ ಸಹಾಧ್ಯಾಯಿಯೊಡನೆ ಕಾಲುನಡಿಗೆಯಿಂದ ಧಾರವಾಡಕ್ಕೆ ಬಂದರು. ಪರೀಕ್ಷೆ ಕಟ್ಟಿ ಆಯಿತು, ಕೊಟ್ಟು ಆಯಿತು. ಆದರೇನು ? ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಉದ್ದೇಶವೆ ಬೇರೆಯಾಯಿತು. ಆದದ್ದೆ ಬೇರೆಯಾಯಿತು. ಮಹಾತ್ಮರ ಚರಿತ್ರೆಯೆ ಮರ್ತ್ಯಕ್ಕೆ ವಿಲಕ್ಷಣವಾದುದು, ಮನುಷ್ಯರಿಗೆ ಮೀರಿದುದು ಎಂಬುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ ಎಲ್ಲರಿಗಿಂತಲು ಬುದ್ಧಿವಂತರಾದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿರುವುದೆಂದರೇನು ? ಮನೋನಿಶ್ಚಯಕ್ಕೆ ವಿಪರೀತವಾದ ಫಲಿತಾಂಶ ಸಿಕ್ಕುವುದೆಂದರೇನು ?

 ಸದಾಶಿವಯ್ಯನವರ ಮನಸ್ಸು ಇದರಿಂದಾಗಿ ವಿಶೇಷ ವ್ಯಥೆಗೊಳಗಾಯಿತು. ಕಜ್ಜರಿಯಲ್ಲಿ ಯಾರಿಗೂ ಮುಖ ತೋರದೆ ಮರೆಯಲ್ಲಿಯೇ ಇದ್ದು ಹೋದರು. ಅನ್ನದ ಆಶೆ ಹರಿದರು. ಆನೆಯೆತ್ತರದ ಆಲೋಚನೆಗಳಿಗೆ ಆಗರವಾದರು. ಸ್ನೇಹಿತರು ಶಿಕ್ಷಕರು ಏನೇನೋ ಸಮಾಧಾನ ಹೇಳಿದರು. ಆದರೆ ಒಂದೂ ಪ್ರಯೋಜನ ವಾಗಲಿಲ್ಲ. ಮರಳಿ ಪ್ರಯತ್ನ ಮಾಡಿನೋಡೆಂದರು.ಮನಸ್ಸು   ಮಾಡಲಿಲ್ಲ. ಪೂರ್ತಿ ಮನಃಪರಿವರ್ತನವಾಗಿ ಹೋಗಿತ್ತು. ಎಲ್ಲರ ಹೇಳಿಕೆಗಳಿಗೂ ಅವರ ಆಲೋಚನೆಗೂ ನೆಲಮುಗಿಲ ಅಂತರವಾಯಿತು. ಒಂದಕ್ಕೊಂದು ಮೇಳೆಸುವ ಬಗೆ ಹೇಗೆ ? ಸಾಧ್ಯವಾಗಲಿಲ್ಲ. ಇನ್ನು ಅಲ್ಲಿರಲು ಅವರ ಮನಸ್ಸು ಒಪ್ಪಲಿಲ್ಲ. ಹಾಗೆಯೇ ಹೊರಟು ಅವರ ತಾಯಿಯ ತವರು ಮನೆಯಿದ್ದ ಲಿಂಗದಹಳ್ಳಿಗೆ ಬಂದರು. ತಾಯಿಯ ತವರುಮನೆಯಲ್ಲಿ ನಿಂತರು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ಇಂದ್ರಿಯಗಳು ಮತ್ತು ಅಂತಃಕರಣಗಳ ಮೂಲಕ ನಾವು ಪಡೆಯುವ ಜ್ಞಾನಕ್ಕೆ ಅನುಭವ ಎಂದು ಸ್ಥೂಲವಾಗಿ ಹೇಳುತ್ತೇವೆ. ಬದುಕಿನಲ್ಲಿ ನಾವು ಹೊಂದುವ ಅನೇಕ ರೀತಿಯ ಅನುಭವಗಳು ವಸ್ತುವಿನ ಪ್ರತ್ಯಕ್ಷ ಸಂಪರ್ಕ ಹಾಗು ಸುಖ-ದುಃಖ, ನೋವು-ನಲಿವು, ಹುಟ್ಟು-ಸಾವು ಮುಂತಾದವುಗಳ ಅನಿವಾರ್ಯತೆಯಿಂದ ಬಂದಂತಹವುಗಳು. ಆಗ ನಾವು ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಅನುಭವಗಳೆಲ್ಲ ಲೌಕಿಕವಾದವು. ಆದರೆ ಅನುಭಾವ ಇವುಗಳಿಂದ ಭಿನ್ನವಾದ ಒಂದು ವಿಶಿಷ್ಟ ಅನುಭವ, ಅದು ಪಾರಲೌಕಿಕವಾದುದು. ಅದು ಆತ್ಮವಿದ್ಯೆ. ತಾನಾರೆಂಬುದನ್ನು ತೋರುವ ವಿದ್ಯೆ. ನಮ್ಮ ಬುದ್ಧಿ, ಇಂದ್ರಿಯಗಳು, ತರ್ಕ ಹಾಗೂ ಪ್ರಯೋಗ ಪರೀಕ್ಷೆಗಳಿಗೆ ಅತೀತವಾಗಿರುವ ದೈವೀಶಕ್ತಿಯನ್ನು ಕುರಿತು ಚಿಂತಿಸುವುದು, ಆ ದೈವೀಶಕ್ತಿಯೇ ಪರಮಸತ್ಯ ಎಂದು ನಂಬುವುದು ಹಾಗು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅನುಭಾವ.

 ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಹಿತಂ ಮುಖಂ

 ತತ್ವಂ ಪೂಷನ್ನಪಾವೃಣು ಸತ್ಯ ಧರ್ಮಾಯ ದೃಷ್ಟಯೇ

 ಪರಮಸತ್ಯವು ತೇಜೋಮಯವಾದ ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಇಂಥ ಪರಮಸತ್ಯದ ಸಾಕ್ಷಾತ್ಕಾರಕ್ಕಾಗಿ ಸತ್ಯಧರ್ಮಗಳನ್ನು ಅಳವಡಿಸಿಕೊಂಡ ಸಾಧಕನ ದೃಷ್ಟಿ ಅಂತರ್ಮುಖವಾಗಬೇಕಾಗುತ್ತದೆ. ಆಗ ತನು ಮನ ಭಾವ ನಷ್ಟವಾಗಿ ವಿಶ್ವಾತ್ಮನೇ ತಾನಾಗುವ ಅನುಭಾವ ಸಿದ್ಧಿಸುತ್ತದೆ. ಅನುಭಾವ ಒಂದು ರೀತಿಯಲ್ಲಿ ಪರಮಸತ್ಯದ ಅರಿವನ್ನು ಮಾಡಿಕೊಡುವ ಒಂದು ಅತೀಂದ್ರಿಯ, ಅತಿಬೌದ್ಧಿಕ ಅನುಭವ. ಅದು ಮಾತು, ಮನಸ್ಸುಗಳನ್ನು ಮೀರಿದ ವೈಯಕ್ತಿಕ ಅನುಭವ. ಅದರ ತೀವ್ರತೆ ಪ್ರಖರತೆಯನ್ನಳೆಯಲು ಭಾಷೆ ಅಸಮರ್ಥವಾಗುವುದರಿಂದ ಅದು ಅವರ್ಣನೀಯ ಹಾಗೆಯೇ ಅನಿರ್ವಚನೀಯ. ಅಂತೆಯೇ ಶರಣರು ‘ಅನುಭಾವವೆಂಬುದು ನೆಲದ ಮರೆಯ ನಿಧಾನ, ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ’ ಎಂದು ಹೇಳಿರುವುದು.

 ಸಮುದ್ರದ ಆಳವನ್ನು ಅಳೆಯಲು ಹೋದ ಉಪ್ಪಿನ ಬೊಂಬೆಯೊಂದು ಸಮುದ್ರದಲ್ಲಿ ಮುಳುಗಿದಾಗ ಕರಗಿಹೋಯಿತಂತೆ. ಸಮುದ್ರದ ಆಳವನ್ನು ವಿವರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಪರಮಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅನುಭಾವಿಯು ತನ್ನ ಯಾವ ಅನುಭವದ ಬಗ್ಗೆಯೂ ಹೇಳಲಾರ. ಆ ಅನುಭವ ಅತ್ಯಂತ ಶುದ್ಧ ಅನುಭವ. ಅದೇ ಅನುಭಾವ. ಅನುಭಾವದಲ್ಲಿ ದೊರೆವ ಆನಂದವೇ ನಿಜವಾದ ಆನಂದ, ಪರಮಾನಂದ. ಅದು ಸ್ವಯಂವೇದ್ಯ ಇಂಥ ಪರಮಾನಂದವನ್ನು ಅನುಭವಿಸುವ ಅನುಭಾವಿ ಅದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡುವುದೆಂದರೆ ಕುರುಡನಿಗೆ ಬಣ್ಣವನ್ನು ಕುರಿತು ಬೋಧಿಸಿದಂತೆ ನಿರರ್ಥಕ. ಆದರೆ ಅನುಭಾವಿಗಳ ಸಂಗ, ಸಾನ್ನಿಧ್ಯ ನಮಗೆ ಸುಖ, ಶಾಂತಿ ಸಮಾಧಾನ ಹಾಗು ನೆಮ್ಮದಿಯನ್ನುಂಟು ಮಾಡುತ್ತದೆ. ಅನುಭಾವಿಗಳು ವಿಶ್ವಕುಟುಂಬಿಗಳಾಗಿರುತ್ತಾರೆ. ಮಾನವ ಕಲ್ಯಾಣವೇ ಅವರ ಜೀವನ ಗುರಿಯಾಗಿರುತ್ತದೆ.

ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ.

ಸ್ವಾನುಭಾವದ ನೆಲೆಯ ನಾನೇನು ಬಲ್ಲೆನೈ

ನೀನೇ ಒಳವೊಕ್ಕು ಏನ ನುಡಿಸಿದೊಡನೆ

ನಾ ನುಡಿವೆ ಗುರುವೇ ಕೃಪೆಯಾಗು.||

ಶಿಲೆಯ ತೆಪ್ಪವ ನೇರಿ ಜಲವ ದಾಟುವೆನೆಂಬ

ಬಲು ಮೂಡತನವ ತೊಳಗಿಸುತ ನೀಎನ್ನ

ಸಲಹು ಶ್ರೀ ಗುರುವೇ ಕೃಪೆಯಾಗು.||

ಕನ್ನಡ ನಾಡಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ್ದು 12 ನೇಯ ಶತಮಾನದ ಶರಣರು, ಮಾನವ ಕುಲವು ಸರಿಸಮಾನವಾಗಿ ಮೇಲು-ಕೀಳು, ಜಾತಿ, ಕುಲ, ವರ್ಣದಿಂದ ಬೇರ್ಪಡಿಸಿ  ಬದುಕಲು ಪ್ರಯತ್ನವನ್ನು ಪಟ್ಟವರು, ಅವರಿಗೆ ಮುಂದಿನವರು ತಮ್ಮ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಶರಣನಾಗಿ ಮಹಾದೇವನೊಂದಿಗೆ ಇರಬೇಕು ಸರ್ವರು ಬಂದುತ್ವದಿಂದ ಇರಬೇಕೆಂಬ ಮಹಾದಾಸೆ, ಅದುವೇ ಶರಣ ಜೀವನ. ಶಿವಾನುಭವಿಗಳ ಜೀವನ ಹೇಗಿರಬೇಕೆಂದು ಬದುಕಿ ತೋರಿಸಿ ಕೊಟ್ಟವರಾಗಿದ್ದಾರೆ, ಅವರ ನೆರಳಿನಲ್ಲಿಯೇ 15 ನೇಯ ಶತಮಾನದಲ್ಲಿ ತೋಂಟದ ಶ್ರೀ ಸಿದ್ಧಲಿಂಗ ಶಿವಯೋಗಿಗಳು “ಷಟಸ್ಥಲ ಜ್ಞಾನಸಾರಾಮೃತ”ವನ್ನು ರಚಿಸಿ ತಮ್ಮ ಶಿಷ್ಯ ಸಂಪತ್ತನ್ನು ಸಂಪಾದಿಸಿ ದೇಶ ಸಂಚಾರ ಮಾಡಿ ಹಲವು ಕಡೆಗಳಲ್ಲಿ ಹಲವು ಜನರನ್ನು ಶಿವಾನುಭವಿಗಳನ್ನು ಹುಟ್ಟು ಹಾಕಿದರು, ನಂತರದಲ್ಲಿ  ಶ್ರೀ ನಿಜಗುಣ ಶಿವಯೋಗಿಗಳು, ಶ್ರೀ ಸರ್ಪಭೂಷಣ ಶಿವಯೋಗಿಗಳು, ಶ್ರೀ ಮುಪ್ಪಿನ ಷಡಕ್ಷರಿಗಳು, ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳು, ಶ್ರೀ ಘನಮಠದಾರ್ಯರು ಕೇವಲ ಭಕ್ತಿಯ ಭಾವದಿಂದ ಹಾಡುಗಬ್ಬ ಪದಗಳನ್ನು‌ ರಚಿಸಲಿಲ್ಲಾ, ಏನೋ ಬರೆಯಬೇಕು ಎಂದು ಬರೆದವುಗಲ್ಲಾ, ತತ್ವ, ಶಾಸ್ತ್ರ, ಆಚಾರ, ಸಿದ್ದಾಂತವನ್ನು ತಾವು ಸಂಪೂರ್ಣವಾಗಿ ಅಳವಡಿಸಿಕೊಂಡು ಇನ್ನಿತರರಿಗೆ ಅಧಿಕಾರ ವಾಣಿಯಿಂದ ಪ್ರತಿಪಾದಿಸಿದ್ದಾರೆ, ಅದೇ ಸಾಲಿನಲ್ಲಿ ಮೈಲಾರ ಬಸವಲಿಂಗ ಶರಣರು ಬರುವರು.

ಶಿವ ಭಕ್ತರಾದ ಬಸವಪ್ಪ ಒಬ್ಬ ವ್ಯಾಪಾರಿ ಶರಣನಾದ ಶ್ರೀ ಬಸವಲಿಂಗ ಶರಣರು ತಾವು ನಿಜಜೀವನದಲ್ಲಿ ನಡೆಸಿದ ಆಚರಣೆ, ಗುರುಗಳ ಮುಖಾಂತರ ತಿಳಿದುಕೊಂಡಿದ್ದಾ ವೀರಶೈವ ಸಿದ್ಧಾಂತ ತತ್ವವನ್ನು,

1) ಷಟಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ.

2) ಗುರು ಕರುಣ ತ್ರವಿಧಿ.

3) ಶಿವಾನುಭವ ದರ್ಪಣ.

4) ಲಿಂಗ ಪೂಜಾ ವಿಧಾನ ಎಂಬ ಗ್ರಂಥಗಳನ್ನು ಸ್ವತಃ ರಚನೆಯಾಗಿದ್ದು ಗುರುವಿನ ಕರುಣೆಯಿಂದ.

ಜನಸಾಮಾನ್ಯರ ನಡೆನುಡಿಯಲ್ಲಿ ವೀರಶೈವ ಸಿದ್ಧಾಂತ ತತ್ವವನ್ನು ಮೂಡಿಸಿಕೊಳ್ಳುವ ದಿವ್ಯ ದರ್ಶನ ನೀಡಿದವರು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳು. ಅಷ್ಟಾವರಣ, ಪಂಚಾಚಾರ, ಷಟಸ್ಥಲ, ಶಿವಾನುಭವ ಸಾರಾಮೃತವನ್ನು ಸ್ವತಃ ನಡೆಸುವುದರ ಮೂಲಕ ಉಪದೇಶವನ್ನು ನೀಡಿದವರಾಗಿದ್ದಾರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ. ನೋಡುಗರ ಕಣ್ಣು ಸೆಳೆಯುವ ಸ್ಥಾನ, ತುಂಗಭದ್ರೆಯು ತುಂಬಿ ಹರಿಯುವ ಮೂಲಕ ಅಲ್ಲಿನ ಪ್ರಕೃತಿಯನ್ನು ಸುಮಧುರವಾಗಿಸಿ ತನ್ನಲ್ಲಿಯೇ ಗುರುಗಳನ್ನು ಕರೆಯಿಸಿಕೊಂಡಿದ್ದಾಳೆಇಲ್ಲಿ ತಪೋನಿಷ್ಟರು ನಡೆದಾಡಿದ ಸ್ಥಾನ, ಶ್ರೀ ಚೆನ್ನವೀರ ಶಿವಯೋಗಿಗಳು ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಹಲವು ಸಾಧಕರಿಗೆ ಮಾರ್ಗದರ್ಶನ ಉಪದೇಶವನ್ನು ಮಾಡಿದವರುಹೊಳಲಿನ ಲಿಂಗಪ್ಪ ಶರಣರು, ಬನ್ನಿಮಟ್ಟಿಯ ಚೆನ್ನಪ್ಪ ಶರಣರು, ಮೈಸೂರು ಪ್ರಾಂತ್ಯದ ಶಿವಬಸವ ಸ್ವಾಮಿಗಳು, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು, ಇನ್ನೂ ಹಲವು ಸಾಧಕರು ಇಲ್ಲಿಯೇ ತಮ್ಮ ತಪವನ್ನು ಆಚರಿಸಿ ವಿದ್ಯೆಗೈದಿದ್ದಾರೆ. ಆ ದಿವ್ಯ ಜ್ಯೋತಿ ಪ್ರಕಾಶದಲ್ಲಿ ಬೆಳಗಿದವರು ಅಗ್ರಗಣ್ಯರಲ್ಲಿ ಒಬ್ಬರಾದವರು ಮೈಲಾರದ ಬಸವಲಿಂಗ ಶರಣರು.

ಬಸವಲಿಂಗ ಶರಣರ ಜೊತೆ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿಗಳು ಕ್ರಿ. ಶ. 1810-1830 ಇದ್ದು ಸಹಪಾಠಿ ಆಗಿ ಅವರಿಂದಲೇ ಶಾಸ್ರ್ತಾಭ್ಯಾಸವನ್ನು ಮಾಡಿದ್ದರಿಂದ ಚಿಂತಕರು ಹೇಳುವ ಪ್ರಕಾರ ಅವರದ್ದು 18 ನೇಯ ಶತಮಾನದ ಕಡೆಯ ಭಾಗದಲ್ಲಿ ಕ್ರಿ. ಶ. 1780-1800 ಇದ್ದವರು ಎಂದು ತಿಳಿಯಬಹುದಾಗಿದೆ. 

ಇವರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಡಿನ ಹೆಸರಾಂತ ಮೈಲಾರ ಗ್ರಾಮದವರು, ಮೈಲಾರ ಎಂದೊಡನೆ ನಮ್ಮ ನೆನಪಿಗೆ ಬರುವುದು ಮೈಲಾರಲಿಂಗೇಶ್ವರ, ಈ ದೇವಸ್ಥಾನಕ್ಕೆ ಹೋಗುವ ಎಡಗಡೆ, ದೇವಸ್ಥಾನದ ಹತ್ತಿರವೇ ಬಸವಪ್ಪನ (ಬಸವಲಿಂಗ ಶರಣರು) ಮನೆ ಇದೆ, ಇವರು  ವ್ಯಾಪಾರ ಕಾಯಕವನ್ನು ಮಾಡುತ್ತಿದ್ದ ಮನೆತನದಲ್ಲಿ ಜನಿಸಿದವರು, ಇವರ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಕಂಡು ಬಂದಿಲ್ಲಾ, ತಾತ್ವಿಕವಾಗಿ ಅಧ್ಯಾತ್ಮದ ಹಾದಿಯಲ್ಲಿ ಬರುವ ಸಾಧಕನು ಗುರುಕರಣೆಯನ್ನು ಪಡೆದು ಮಾಂಸಮಯ ಶರೀರವನ್ನು ಮಂತ್ರಮಯ ಶರೀರವನ್ನು ಮಾಡಿಕೊಂಡು ಗುರುಸಂಬಂಧವನ್ನು ಇಟ್ಟುಕೊಳ್ಳುವುದರಿಂದ ತಂದೆ ತಾಯಿಯ ಹೆಸರನ್ನು ಮುನ್ನೆಲೆಗೆ ತೋಚದೇ ಗುರುವಿನ ಹೆಸರನ್ನು ತೋರುವುದೇ ರೂಡಿಯಲ್ಲಿದೆ, ಅದೇ ಮಾರ್ಗದಲ್ಲಿ ಬಸವಪ್ಪನು ತನ್ನ ತಂದೆ ತಾಯಿಯ ಹೆಸರನ್ನು ಎಲ್ಲಿಯೂ ಹೇಳದೇ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಅನುಗ್ರಹವನ್ನು ಪಡೆದು ಅವರ ಅಂಕಿತದಲ್ಲಿಯೇ ತನ್ನ ಕೃತಿಯನ್ನು ರಚಿಸಿದ್ದಾರೆ.

ಬಸವಪ್ಪನು ಯಾರಲ್ಲಿ ವಿದ್ಯೆಯನ್ನು ಕಲಿತಿದ್ದಾರೆ ಎಂಬುದು ತಿಳಿಯುವುದಿಲ್ಲ, ಅವರು ಕನ್ನಡದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದರು, ಅವರ ಹತ್ತಿರಕ್ಕೆ ಬರುವ ವ್ಯಾಪಾರಿಗೆ ಬೇಕಾದ ವಸ್ತುಗಳನ್ನು ಯೋಗ್ಯವಾದ ಬೆಲೆಗೆ ಮಾರಾಟಮಾಡುವವರಾಗಿದ್ದರು, ಅವರು ಸಮಯವನ್ನು ಕೊಟ್ಟರೇ ಅವರ ಕಷ್ಟ ಸುಖವನ್ನು ವಿಚಾರಿಸಿ ತಕ್ಕ ನೀತಿ ಧರ್ಮವನ್ನು ಹೇಳಿ ಧೈರ್ಯವನ್ನು ಹೇಳಿಕೊಡುವ ಜನಾನುರಾಗಿಯಾಗಿದ್ದರು, ಇವರು ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರುಜನರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕಿಂತ ಅವರು ಮಾತಿನಲ್ಲಿ ಬರುವ ತತ್ವ, ನೀತಿ, ಧರ್ಮದ ತತ್ವವನ್ನು, ಧರ್ಮದ ಸಿದ್ದಾಂತವನ್ನು ಕೊಂಡುಕೊಂಡು ಹೋಗಲು ಬಂದವರೇ ಹೆಚ್ಚು.

ಬಸವಪ್ಪನವರು ಯಾರಿಗೂ ವ್ಯಾಪಾರದಲ್ಲಿ ಮೋಸ ವಂಚನೆಯನ್ನು ಮಾಡಿದವರಲ್ಲಾ, ಯಾವುದೇ ಆಸೆ ಆಕಾಂಕ್ಷೆಗಳು ಸಾಸಿವೆಯಷ್ಟು ಇದ್ದಿಲ್ಲಾ, ಅವರು ಎಲ್ಲವನ್ನೂ ಹೊಂದಿದ್ದರು ಗುರು ಲಿಂಗ ಜಂಗಮರ ದಾಸೋಹಿಯಾಗಿದ್ದಾಕೊಂಡು ಬಸವಪ್ಪನು ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಚಿನ್ಮಯ ದೀಕ್ಷೆಯನ್ನು ಪಡೆದು ಬಸವಲಿಂಗ ಶರಣರು ಎಂದಾಗುವರು, ಮನೆಯಿಂದ ಕಿಲೋಮೀಟರ್ ದೂರದಲ್ಲಿದ್ದರೂ ಮನಕ್ಕೆ ಹತ್ತಿರದಲ್ಲಿದ್ದ ಲಿಂಗನಾಯಕನಹಳ್ಳಿಗೆ ಬಂದು ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಸಾಮೀಪ್ಯದಲ್ಲಿಯೇ ಹೆಚ್ಚು ಕಾಲ ಇರತೊಡಗಿದರು, ಅವರ ಸಾನಿಧ್ಯದಲ್ಲಿ ಹಲವಾರು ಸಾಧಕರು ಮೊದಲೇ ಇದ್ದವರು ಅವರ ಜೊತೆ ಶಾಸ್ತ್ರ ಚಿಂತನವನ್ನು ಮಾಡುತ್ತಿದ್ದರು, ಖಾವಿದಾರರಿಗೆ  “ನೀವು ಖಾವಿ ಲಾಂಛನದಾರಿಗಳು ನೀವು ಎಷ್ಟು ವೀರಶೈವ ಶಾಸ್ರ್ತಾಭ್ಯಾಸವನ್ನು ಮಾಡಿದ್ದೀರಿ? ನೀವು ಎಷ್ಟು ವೇದಾಂತವನ್ನು ತಿಳಿದಿದ್ದೀರಿ? ಶಿವಾನುಭವವನ್ನು ಎಷ್ಟು ಓದಿದ್ದೀರಿ?” ಎಂದು ಕೇಳಿದಾಗ ಅವರುಗಳು ಉತ್ತಮವಾದ ಉತ್ತರವನ್ನು ಕೊಟ್ಟರೆ ಸರಿ ಇಲ್ಲ ಅಂದರೆ “ಏಕೆ ನೀವು ಜನರನ್ನು ಮೋಸಗೊಳಿಸುವಿರಿ? ಭಕ್ತರ ವಿತ್ತಾಪಹರಣವನ್ನು ಏಕೆ ಮಾಡುವಿರಿ? ಭಕ್ತರೇನೊ ಗುರುಗಳು ಎಂದು ಭಕ್ತಿಯಿಂದ ಬರುವರು ಅವರಿಗೆ ಏಕೆ ಮೋಸವನ್ನು ಮಾಡುವಿರಿ?” ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿ ಅವರು ಹಾದಿಯಲ್ಲಿ ತಪ್ಪಿದಾಗ ತಿದ್ದಿ ಅವರನ್ನು ಚೆನ್ನವೀರೇಶನ ಸೇವೆಯಲ್ಲಿರಿಸಿ ಅವರಿಗೆ ವೀರಶೈವ ಸಿದ್ದಾಂತವನ್ನು, ಶಿವಾನುಭವ, ಷಟಸ್ಥಲ ಸಿದ್ಧಾಂತವನ್ನು ತಿಳಿಸಿ ಇವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪ್ರಬುದ್ಧರಾದಾಗ ಅವರುಗಳಿಗೆ ನಮಸ್ಕರಿಸುವರು, ಹೀಗೆ ಬಸವಲಿಂಗರು ಅಗ್ರಗಣ್ಯರಾಗಿ ಹೆಸರುವಾಸಿ ಆಗುವರು.

ಆದರಿಂದ ಆ ಪ್ರದೇಶವು ವೀರಶೈವರ ಪ್ರಮುಖ ಸ್ಥಾನದಲ್ಲಿ ಒಂದಾಗಿ ಅನೇಕ ಗ್ರಾಮಗಳಲ್ಲಿ ವೀರಶೈವತತ್ವವು ಅಚ್ಚಳಿಯದೆ ಉಳಿದಿದೆ.

ಒಮ್ಮೆ ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ತಮ್ಮ ಮಠಕ್ಕೆ ಯೋಗ್ಯ ಮರಿಯನ್ನು  ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಶ್ರೀ ಮೈಲಾರದ ಬಸವಲಿಂಗ ಶರಣರು ಒಬ್ಬ ದೇವರಿಗೆ ವಿರೋಧ ಮಾಡುವರು ಈ ಮರಿದೇವರು ಮುಕ್ಕಾಗಿದ್ದಾರೆ ಇವರಿಗೆ ಸ್ವಾಮಿಯಾಗಲು ಅರ್ಹರಲ್ಲ ಎಂದು ಕ್ಯಾತೆಮಾಡುವರು, (ಒಮ್ಮೆ ಗುರುಗಳು ಹಾಗೂ ಶಿಷ್ಯರು ದೇಶ ಸಂಚಾರಕ್ಕೆ ಕೈಗೊಂಡಿದ್ದರು ಎಲ್ಲಿಯೋ ಇದ್ದ ನರಿಯು ಬಂದು ಒಬ್ಬ ಮರಿದೇವರ ಕಾಲಿಗೆ ಬಾಯಿ ಹಾಕಿರುತ್ತೆ ಆ ನೋವಿನಿಂದ ಆ ದೇವರು ಚೀರುವರು ಆಗ ಅಲ್ಲಿಯೇ ಇದ್ದ ಗುರುಗಳು “ಅದು ನಮ್ಮ ವಸ್ತು ಬಿಡು”ಎಂದ ಕೂಡಲೇ ಆ ನರಿ ಬಿಟ್ಟು ಹೋಗುತ್ತೆ ಅವರನ್ನೇ ಶ್ರೀ ಚೆನ್ನವೀರ ಶಿವಯೋಗಿಗಳು ಮಠಕ್ಕೆ ಉತ್ತರಾಧಿಕಾರಗಳಾಗಿ ನೇಮಿಸುತ್ತಿದ್ದರು). ಆಗ ಗುರುಗಳು ಏನಪ್ಪಾ ಬಸಪ್ಪ ನೀನು ನಿಜವಾದ ತತ್ವವನ್ನು ಬಲ್ಲಿಲ್ಲವೇ  ಶರಣರು ಹೇಳಿರುವ ಮಾತು ನೆನಪಿಲ್ಲವೇಎಂದು –

ಶ್ರೀಗುರು ಕರುಣಿಸಿ, ಅಂಗದ ಮೇಲೆ ಲಿಂಗವ ಧರಿಸಿದ ಕಾರಣ, ಸರ್ವಾಂಗವು ಲಿಂಗವಾಯಿತ್ತು. ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ, ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣ ಸರ್ವಾಂಗಲಿಂಗಿಯಾದನು.

ಸರ್ವಾಂಗ ಲಿಂಗಿಯಾದ ಇವರು ಅರ್ಹರಲ್ಲಾ ಎನ್ನುವೆ ಎಷ್ಟು ಸರಿ ಎಂದು ಕೋಪದಿಂದ “ನೀನು ಬಸಪ್ಪ ಅಲ್ಲಾ ಮುಶಪ್ಪ ಎಂದು ಬೈಯುತ್ತಾರೆ. ಹರ ಮುನಿದರೆ ಗುರು ಕಾಯುವನುಎಂಬ ಉಕ್ತಿಯಂತೆ. ಇಲ್ಲಿ ಗುರುಗಳು ಕೋಪದಿಂದ ಬೈದರು ಕೂಡ ಅವರು ಗುರುತಾಯಿಯಾಗಿ ನಮ್ಮೆಲ್ಲರನ್ನೂ ಸಲಹುವರು, ಮಗನು ತಪ್ಪು ಮಾಡಿದಾಗ ತಾಯಿ ಅವನನ್ನು ಏನೆಲ್ಲಾ ಬೈದರು ಅದೇ ಮಗನು ಹೊರಗೆ ಹೋಗುವಾಗ ಅವನು ಎಡವಿ ಬಿದ್ದು ಅವನ ರಕ್ತ ಕಂಡರೆ ಸಾಕು ಎಂಥಹ ಕಠೋರ ತಾಯಿಯಾದರು ಅವನನ್ನು ಮುದ್ದು ಮಾಡಿ ಅವನ ನೋವು ತನ್ನ ನೋವು ಎಂದು ಪ್ರೀತಿಯನ್ನು ಹಂಚಿಕೊಳ್ಳುವಳು ಅದೇ ರೀತಿ ಇಲ್ಲಿ ಶಿಷ್ಯನನ್ನು ಬೈದರು ಅವನ ತಪ್ಪುಗಳನ್ನು ಮನ್ನಿಸುವವರು ಒಬ್ಬ ಗುರುಗಳು. ಶಿಷ್ಯನಿಂದ ಸಮಾಜದಲ್ಲಿನ ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು (ಲಾಭ-ನಷ್ಪ, ನೋವು-ನಲಿವು, ) ವಿಕ್ಷಿಸಿ ತಾನು ಅದರಲ್ಲಿ ಬಾಗಿಯಾಗುವವರು ನಿಜವಾದ ಗುರುಗಳು.

ಪುರಾಣ, ಇತಿಹಾಸದಲ್ಲಿ ಶಿಷ್ಯರುಗಳ ಉದ್ದಾರಕ್ಕೆ ಏನೆಲ್ಲಾ ತ್ಯಾಗವನ್ನು ಗುರುವಾದವನು ಮಾಡಿದ್ದಾನೆ ಎಂಬ ಉದಾಹರಣೆಗಳು ಬಹಳ, ಒಬ್ಬ ಬೇಟೆಯಾಡುವ ಹುಡುಗ ಎಂದು ಭೇಟಿಯಾಗದೇ ಇರುವ ಗುರುವನ್ನು ದೂರದಿಂದಲೇ ಅವನು ತನ್ನ ಶಿಷ್ಯರಿಗೆ ವಿದ್ಯೆಯನ್ನು ಕಲಿಸುವುದನ್ನು ನೋಡಿ ನಾನು ಇದೇ ರೀತಿ ಬಿಲ್ವಿದ್ಯೆಯನ್ನು ಇನ್ನಷ್ಟು ಕಲಿಯಬೇಕೆಂದುಕೊಂಡಿದ್ದನು ಏಕಲವ್ಯ, ಅವನು ದ್ರೋಣಾಚಾರ್ಯರನ್ನೇ ಗುರುಗಳನ್ನಾಗಿ ಸ್ವೀಕಾರ ಮಾಡಿ ಅವರ  ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ತಾನು ಗುರುವಿನ ಮುಂದೆ ವಿದ್ಯೆಯನ್ನು ಕಲಿಯಬೇಕು ಎಂದು ಅದರ ಮೂಲಕವೇ ತಾನು ಬಿಲ್ವಿದ್ಯೆಯನ್ನು, ಶಬ್ದವೇಧಿ ವಿದ್ಯೆಯನ್ನು ಕಲಿತವನು ಏಕಲವ್ಯ, ಅವನು ಬಿಟ್ಟ ಬಿಲ್ಲು ನೀರು ಕುಡಿಯುವ ಶ್ವಾನಕ್ಕೆ ಬೀಳುತ್ತೆ ಅದನ್ನು ನೋಡಿದ ದ್ರೋಣಾಚಾರ್ಯರ ಶಿಷ್ಯರು (ರಾಜಕುಮಾರರು) ಗುರುಗಳ ಬಳಿ ಬಂದು ನಡೆದ ಘಟನೆ ತಿಳಿಸಿ ಬಿಲ್ಲನ್ನು ಬಿಟ್ಟವನು ಯಾರು ಎಂದು ಕಂಡುಹಿಡಿದು, ಅವರೆಲ್ಲರೂ ಯಾರು ನೀನು? ನೀನು ಈ ವಿದ್ಯೆಯನ್ನು ಯಾರಿಂದ ಕಲಿತೇ? ನಿನ್ನ ವಿದ್ಯಾ ಗುರುಗಳು ಯಾರು? ‘ ಎಂದು ಕೇಳಿದಾಗ, ಏಕಲವ್ಯನು ತಾನು ದ್ರೋಣಾಚಾರ್ಯರಿಂದ ಈ ವಿದ್ಯೆಯನ್ನು ಕಲಿತೆ, ದ್ರೋಣಾಚಾರ್ಯರೇ ನನ್ನ ಗುರುಗಳು ಎಂದು ವಾದಮಾಡುವನು, ತಾನು ಯಾವ ವಿದ್ಯೆಯನ್ನು ಇವನಿಗೆ ಹೇಳಿಲ್ಲಾ,ಇವನಾರೂ ಎಂಬುದೇ ಗೊತ್ತಿರಲಿಲ್ಲ, ಆದರೂ ನನ್ನ ಹೆಸರನ್ನು ಹೇಳುತ್ತಿದ್ದಾನೆ, ಎಂದು ವಿಚಾರಿಸಿ, ಭವಿಷ್ಯದ ದೃಷ್ಟಿಯಿಂದ ಧರ್ಮದ ಉಳಿವಿಗಾಗಿ, ದ್ರೋಣಾಚಾರ್ಯರು ತನ್ನ ಉತ್ತಮ ಶಿಷ್ಯನಾದ ಅರ್ಜುನನಿಗೆ ಏಕಲವ್ಯನಿಂದ ಭವಿಷ್ಯದಲ್ಲಿ ಕಾಣುವ ತೊಂದರೆ ಆಗಬಾರದು ಎಂದು. ಅವನಿಂದ ಗುರುಕಾಣಿಕೆಯನ್ನು ಅವನ ಬಲಗೈಯ ಹೆಬ್ಬೆರಳು ಕೇಳುವರು, ಇಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಕೇಳಿದ ಕಾಣಿಕೆ ಭೇಧ ಭಾವದ,ಸ್ವಾರ್ಥ ಉದ್ದೇಶಗಳ ಸಂಕೇತವಾದರೆ, ಹಾಲವರ್ತಿ ಶ್ರೀ ಚೆನ್ನವೀರ ಮಹಾಸ್ವಾಮಿಗಳು ಬಸವಲಿಂಗರ ಮೇಲಿನ ಸಿಟ್ಟು ಗುರುತಾಯಿಯಂತೆ, ಅವನಿಂದ ಧರ್ಮಕ್ಕೆ ಲಾಭದಿಂದಲೇ ಶಿಕ್ಷಕೊಟ್ಟಿದ್ದು ಅದರಿಂದಲೇ ಬಸವಲಿಂಗ ಶರಣರು ಗುರುಕರುಣ ತ್ರಿವಿಧಿಯನ್ನು ರಚಿಸಿದ್ದು, ನಮ್ಮಿಂದ ಏನಾದರೂ ಕೆಲಸವಾಗಬೇಕಾದರೆ ಅದಕ್ಕೆ ಕಾರ್ಯ,ಕಾರಣ, ಸದ್ಭಾವ ಇದ್ದೆ ಇರುತ್ತದೆ, ಬಸವಲಿಂಗರ ಕೃತಿಗಳು ಸದ್ಭಾವದಿಂದಲೇ ರಚನೆಯಾದದ್ದು.

ಗುರುಗಳ ಆಜ್ಞೆಯಂತೆ ದಿನಗಳೆದಂತೆ ದಿನಗಳೆದಂತೆ ಬಸವಲಿಂಗ ಮುಖವು ಮುಶ್ಯದ ಹಾಗೆ (ಆ ಭಾಗದಲ್ಲಿ ಕಪ್ಪು ಬಣ್ಣದ ಮುಂಭಾಗಕ್ಕೆ ಮುಶ್ಯ ಎಂದು ಕರೆಯುವರು) ಕಪ್ಪು ಮುಖದ ಮಂಗನ ಹಾಗೆ ಬದಲಾಗುತ್ತೆ ಹೋಗುತ್ತೆ ಅದರ ತಪ್ಪಿಗಾಗಿ ವೀರಶೈವ ಧರ್ಮದ ಸಂಪೂರ್ಣ ತತ್ವವನ್ನು ಹೇಳುತ್ತಾ ಶಿಕ್ಷೆಯ ನಿವಾರಣೆಗೆ, ಗುರುವಿನ ಕರುಣೆಯನ್ನು ಪಡೆಯುವ ಸಲುವಾಗಿ ರಚಿಸಿದ್ದೆ – ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ). ಬಸವಲಿಂಗ ಶರಣರು ತಮ್ಮ ಅಮೋಘವಾದ ಜ್ಞಾನಬಂಡಾರದಿಂದ, ವಿದ್ವತ್ತು, ತೌಲನಿಕ, ಅನುಭವ ಸಂಪತ್ತಿನಿಂದ ಜ್ಞಾನದ ಹನಿಯನ್ನು ಉದಯಿಸಿ, ಏಕ ಕಾಲಕ್ಕೆ 333 ತ್ರಿಪದಿಯನ್ನು ರಚಿಸಿದರು. ಇದರಲ್ಲಿ ಸಮಗ್ರ ವೀರಶೈವ ಲಿಂಗಾಯತ ದಾರ್ಶನಿಕ ಸಿದ್ಧಾಂತವು ಒಳಗೊಂಡಿದೆ, ಅಷ್ಟಾವರಣ ಪಂಚಾಚಾರ ಷಟಸ್ಥಲ ಪ್ರಾಮುಖ್ಯತೆ ಇದರಲ್ಲಿ ಅಡಕವಾಗಿದೆ, ಒಂದಕ್ಕೊಂದು ಆಚರಣೆಗೆ ಹೇಗೆ ಸಮನ್ವಯಗೊಳ್ಳುತ್ತವೆ ಎಂಬುದನ್ನು ಈ ಎರಡು ಸಾಲಿನಲ್ಲಿಯೇ ಬಿತ್ತಿದ್ದಾರೆ, ಈ ತ್ರಿಪದಿಯಲ್ಲಿ ಪ್ರಯೋಗಿಸಲ್ಪಟ್ಟಾ ಯಾವ ಶಬ್ದವೂ ಅನಾವಶ್ಯಕವಾಗಿ ಪ್ರಯೋಗಿಸಿಲ್ಲಾ ಎಲ್ಲವೂ ಅರ್ಥಪೂರ್ಣವಾಗಿ ತನ್ನ ಸಿದ್ಧಾಂತವನ್ನು ತಿಳಿಸುತ್ತವೆ. ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಅದರಿಂದಲೇ  ಹೆಮ್ಮರವಾಗಿ ಬೆಳೆಯುವ ಹಾಗೆ ಈ ಚಿಕ್ಕ ತ್ರಿವಿಧಿಯನ್ನು ಅಖಂಡ ಸಿದ್ಧಾಂತವೇ ಅಡಕವಾಗಿದೆ.

ಗುರು ಕರುಣ ತ್ರಿವಿಧಿಯಲ್ಲಿ ಮೂರು ಮೂರು ಸಾಲಿನ 333 ತ್ರಿಪದಿಯ ಕೊನೆಯಲ್ಲಿ ಶ್ರೀ ಗುರುವೇ ಕೃಪೆಯಾಗು‘, ಎಂದು ಮುಕ್ತಾಯಗೊಳ್ಳುವುದರಿಂದ ಇದು ಕೇವಲ ಶ್ರೀಗುರು ಪ್ರಾರ್ಥನಾ ತ್ರಿಪಧಿಯಂದು ತಿಳಿಯುವರು ಅದರಲ್ಲಿ ವೀರಶೈವ ತತ್ವಸಿದ್ದಾಂತವನ್ನೊಳಗೊಂಡಿದೆ, ಮೇಲು ನೋಟಕ್ಕೆ ಗುರು ಕರುಣ ಸೌಂದರ್ಯ ಲಹರಿ (ಗುರು ಕರುಣ ತ್ರವಿಧಿ) ಅಷ್ಟಾವರಣ ಪ್ರತಿಪಾದಿಸುವ ಕೃತಿ ಎಂದು ಕಂಡರು ಒಳಹೊಕ್ಕು ನೋಡಿದಾಗ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ಆಚರಣೆಗೆ ಪೂರಕವಾಗಿ ಸಮನ್ವಯಗೊಂಡಿರುವ ಮಾರ್ಗ, ಅಂಗ, ಪ್ರಾಣ, ಆತ್ಮಗಳಾದ ಅಷ್ಟಾವರಣ ಪಂಚಾಚಾರ ಷಟಸ್ಥಲಗಳು ಬಿಟ್ಟಿರಲಾರದಷ್ಟು ಜೀವರಸ ಒಂದೇ ಅದೇ ಲಿಂಗಾಂಗ ಸಾಮರಸ್ಯವೀರಶೈವರ ಕೊನೆಯಗುರಿಯೇ ಲಿಂಗಾಂಗ ಸಾಮರಸ್ಯವನ್ನು ಪಡೆಯುವುದು, ಅಂಗನು ಲಿಂಗದಲ್ಲಿ ಬೆರೆತು ಲಿಂಗಾಂಗ ಸಾಮರಸ್ಯ ಪಡೆಯುವನು, ಇದೆ ಕೊನೆಯ ಅನುಭವ ಅಥವಾ ಈ ಅನುಭವವೇ ಕೊನೆಯದುಒಮ್ಮೆ ಉಂಟಾದ ಪರಶಿವನ ಅನುಭವವು ಕೊನೆಯ ತನಕ ಇಟ್ಟುಕೊಂಡು ಜೀವಿಸುವವನೇ ಶಿವಾನುಭವಿ ಎನ್ನಲಾಗುತ್ತದೆ, ವೀರಶೈವನ ಚರಮಗುರಿಯಾದ ಶಿವಾನುಭಾವ ಹಾಗೂ ಲಿಂಗಾಂಗ ಸಾಮರಸ್ಯವನ್ನು ಪಡೆಯಲು ಅಷ್ಟಾವರಣ ಪಂಚಾಚಾರದೊಂದಿಗೆ ಷಟಸ್ಥಲಾಚರಣೆಯೇ ಸರಿಯಾದ ಮಾರ್ಗವೆಂದು ಬಸವಲಿಂಗರ (ವೀರಶೈವರ) ನಂಬಿಗೆ ಇದನ್ನೇ ಬಸವಲಿಂಗ ಶರಣರು ತಮ್ಮ ಕೃತಿಗಳಲ್ಲಿ ಬಹಳ ವಿವರಗಳನ್ನು ಕೊಟ್ಟು  ವಿಸ್ತಾರವಾಗಿ ವಿಧವಿಧವಾಗಿ ಪ್ರತಿಪಾಸಿದ್ದಾರೆ. ಇದನ್ನೇ ತ್ರಿವಿಧಿಗಳು ಒಳಗೊಂಡಿರಬೇಕು ಒಂದನ್ನು ಬಿಟ್ಟು ಇನ್ನೊಂದು ಇದ್ದರೆ ಅದು ಚರಮಗುರಿಗೆ ಹೊರಗಾಗುತ್ತೇ, ಮೂರು ಕೂಡಿಯೇ ನಡೆಯಬೇಕು, ಯಾವಾಗಲೂ ಕೂಡಿಯೇ ಇರಬೇಕು ಅದರಲ್ಲಿ ದ್ವೈತದೃಷ್ಟಿಇರಬಾರದು ಶಿವಾದ್ವೈತದೃಷ್ಟಿರಬೇಕು, ಖಂಡದೃಷ್ಟಿಅಲ್ಲಾ ಅಖಂಡ ದೃಷ್ಟಿ, ಪರಿಪೂರ್ಣ ದೃಷ್ಟಿ. ಈ ಶಿವಾದ್ವೈತ ದೃಷ್ಟಿಗಳು ವೀರಶೈವ ಸಿದ್ಧಾಂತ ಸಂಸ್ಕೃತಿಯ ಪ್ರಧಾನಲಕ್ಷಣವೆಂದು ಅರಿತು ಶ್ರೀ ಮೈಲಾರ ಬಸವಲಿಂಗ ಶರಣರು ಅಷ್ಟಾವರಣಗಳಲ್ಲಿ ಪ್ರಥಮದಲ್ಲಿ ಬರುವ ಗುರುವನ್ನು ಶ್ರೀ ಗುರುವೇ ಕೃಪೆಯಾಗು‘ , ‘ಶ್ರೀ ಗುರುವೇ ಕೃಪೆಯಾಗುಎಂದು ಪ್ರಾರ್ಥಿಸುತ್ತಾ, ಷಡಚಕ್ರಗಳ ವಿವರಣೆಎಲ್ಲಾ ಯೋಗಗಳಲ್ಲಿ ಶಿವಯೋಗವೇ ಮಿಗಿಲು, ಅಷ್ಟಾವರಣಗಳಾದ ಗುರು, ಲಿಂಗ, ಜಂಗಮರ ಲಕ್ಷಣವನ್ನು, ಮಹಿಮೆಯನ್ನು, ವಿಭೂತಿ ರುದ್ರಾಕ್ಷಿಗಳನ್ನು ಯಾವ ರೀತಿ ಧರಿಸಬೇಕು, ಎಲ್ಲೆಲ್ಲಿ ಧರಿಸಬೇಕು, ಮಂತ್ರದ ವಿಶೇಷತೆ ಅದರಲ್ಲಿ ಯಾವ ಮಂತ್ರ ವೀರಶೈವರು  ಜಪಿಸಬೇಕು, ಹೇಗೆ ಇರಬೇಕು ಎಂಬುದನ್ನುಪಾದೋದಕ, ಪ್ರಸಾದಗಳಲ್ಲಿನ ವಿಧಗಳು, ಅದರ ಮಹತ್ವವನ್ನು, ಅಣಿಮಾಧಿಸಿದ್ದಿಗಳ  ವಿಶೇಷವಾಗಿ ವಿವರಣೆಯನ್ನು ನೀಡುತ್ತಾ ವೀರಶೈವ ಸಿದ್ದಾಂತವನ್ನೆ ಅತೀ ಕಡಿಮೆ ಅಕ್ಷರಗಳನ್ನು ವಿವರಿಸಿದ್ದಾರೆ,

ನಿರಾಭಾರಿ ಗುರುವನ್ನು ಸ್ತುತಿಗೈದು ಸಾಬಾರಿ ಗುರುವಿನ ಸ್ವರೂಪ, ಮಹತ್ವ, ಅವನ ಅವಶ್ಯಕತೆ ಏನಿದೆ ಎಂದು ತಿಳಿಸಿದ್ದಾರೆ, ಗುರು ಕೃಪೆಯು ಆಗಬೇಕಾದರೆ ಗುರು ದೀಕ್ಷೆ ಪಡೆದು ಲೌಕಿಕ ತಂದೆ ತಾಯಿಯವರಾದ, ಬಂದು ಬಳಗವನ್ನು ತ್ಯಜಿಸಿ ಎಲ್ಲವನು ಗುರುವಿನಲ್ಲಿಯೇ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ, ಸದ್ಗುರುವೇ ಸರ್ವಸ್ವ ಎಂದು ಅವನನ್ನೇ ಆರಾದಿಸಿದಾಗ ಅವನು ಕೃಪೆಯು ಆಗುತ್ತದೆ ಎಂದು ತಿಳಿಸಿದ್ದಾರೆ. ಶಿಷ್ಯನ ಲಕ್ಷಣ ಹೇಗೆ ಗುರುವಿನಲ್ಲಿ ವರ್ತಿಸಬೇಕು, ಗುರುವಾದವನ ಲಕ್ಷಣ ಅವನ ಸ್ವರೂಪ ಗುರು ಶಿಷ್ಯರ ಸಂಬಂಧವನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ, ಈ ಮಾನವ ಜೀವಿಯೂ ಹುಟ್ಟಿ ಎಡರು ಕಂಟಕಗಳಿಂದ ಸುಖಾಸುಮ್ಮನೆ ವ್ಯರ್ಥವಾಗಿ ಹೋಗುವುದನ್ನು, ಆಸೆಯಿಂದ ಮಾಯೆ ಬಂದು ಮಾಯೆಯ ಉಪಟಳಕ್ಕೆ ಈ ಶರೀರ ಹೋಗುವುದನ್ನು, ಪಂಚಭೂತಗಳ ಭಯವನ್ನು ಪಂಚಿಕರಣದಿಂದಲೇ ಶರೀರ ಆದದ್ದು, ಪಂಚಭೂತಮಯವಾದ ಶರೀರದ ಇಂದ್ರಿಯಗಳನ್ನು, ದೇಹವಿಕಾರದ ಅರಿವನ್ನು ಮಾರ್ಮಿಕವಾಗಿ ನುಡಿದಿದ್ದಾರೆ, ಅಷ್ಟಮಧಗಳಿಂದ ಸಪ್ತವ್ಯಸನಗಳನ್ನು ಅನುಭವಿಸುವುದು ಗಾಳಿಗೆ ಇಕ್ಕಿದ ಸೋಡರು, ಜ್ಞಾನೇಂದ್ರಿಯಗಳ  ಪರಿಚಯವನ್ನು ಮಾಡುವಾಗ ಕೆಲವೊಂದು ತೀರ್ಥಕ್ಷೇತ್ರ ದರ್ಶನವನ್ನು ಮಾಡಿಸುವುದರ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು, ಅಂತಃಕರಣ ಚತುಷ್ಟಯಗುಣತ್ರಯವನ್ನು ನೀಡಿದ್ದಾರೆ, ಸಂಸಾರ ಬಂಧನದಿಂದ ಮುಕ್ತನಾಗಲು ಗುರುವಿನಲ್ಲಿ ಪ್ರಾರ್ಥಿಸಿದ್ದಾರೆ, ಸಂಸಾರಹೇಯ ಸ್ಥಲದ ತ್ರಿಪದಿಯನ್ನುವೀರಶೈವ ಸಿದ್ಧಾಂತ ತಿಳಿಸುವ ತ್ರಿಪದಿಗಳನ್ನು ಅದೆಷ್ಟೋ ಒಳಹೊಕ್ಕು ನೋಡಿದರು ಸಮುದ್ರದ ಆಳದಂತೆ ಕಾಣುತ್ತದೆ,

ಶ್ರೀ ಗುರುವೇ ಸತ್ಕ್ರಿಯೆಯಾಗರವೇ ಸುಜ್ಞಾನ

ಸಾಗರವೇ ಎನ್ನ ಮತಿಗೆ ಮಂಗಳವನಿತ್ತು

ರಾಗದಿಂ ಬೇಗ ಕೃಪೆಯಾಗು

       ಎಂದು ಗುರುಕೃಪೆಯನ್ನು ಬೇಡುತ್ತಾ .

ನೀನೊಲಿದಡೆ ಕೊರಡು ಕೊನರುವುದಯ್ಯಾ, ನೀನೊಲಿದಡೆ ಬರಡು ಹಯನಹುದಯ್ಯಾ, ನೀನೊಲಿದಡೆ ವಿಷವೆಲ್ಲ ಅಮತವಹುದಯ್ಯಾ, ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ.

       ದೇವನೊಲಿದರೆ  ಕಣ್ಣು ಇರಲಾರದವನಿಗೆ ಕಣ್ಣು ಬರುವಹಾಗೆ, ಕಿವಿಕೇಳಲಾರದವನಿಗೆ ಕಿವಿ ಕೇಳುವಹಾಗೆ, ವಿಷವೆಲ್ಲಾ ಅಮೃತ ಆಗುವಹಾಗೆ, ಆಸಾಧ್ಯವು ಸಾಧ್ಯವಾಗುವವು ಎನ್ನುವ ಬಸವವಾಣಿಯ ತಾತ್ಪರ್ಯವನ್ನೆ ಬಸವಲಿಂಗ ಶರಣರು ಚಿತ್ರಿಸಿದ್ದಾರೆ –

ಕೊರಡು ಕೊನರುವುದು ಬಲುಬರಡು ಹಯನಾಗುವುದು

ಕುರುಡಂಗೆ ಕಣ್ಣು ಬಹುದು ನಿನ್ನೊಲುಮೆ

ಎಂದರಿದೆನೈ ಗುರುವೇ ಕೃಪೆಯಾಗು.

ಮಾನಸವು ವಚನ ಸಂಧಾನವಾಗಿರ್ಪ ಮ

ಹಾನುಭಾವದ ಸುಜ್ಞಾನ ಮಂತ್ರದ ನಿಜವೇ

ನೀನೆಂದ  ಗುರುವೇ ಕೃಪೆಯಾಗು,

ಗುರು ಲಿಂಗ ಚರತೀರ್ಥ ಚಿರಶೇಷ ಭಸಿತಾಕ್ಷಿ

ವರಮಣಿಮಂತ್ರಾಷ್ಟವರಣ ನಿನ್ನಂಗವೆಂ

ದೊರದ ಶ್ರೀ ಗುರುವೇ ಕೃಪೆಯಾಗು

ಎನ್ನುತ್ತಾ

ಎಲ್ಲವನ್ನು ಒಳಗೊಂಡಿರುವ ಮದ್ಗುರುವೆ,

ನೀನು ಅಷ್ಟಾವರಣವೇ ಅಂಗವೆಂದು

ಹೇಳಿಕೊಟ್ಟ ಗುರುವೇ ಕೃಪೆಯಾಗು.

ಬಸವ ಬಾರೆಂದನೆಗೆ ಅಸಮಲಿಂಗವೆ ನೀನೆಂ

ದುಸುರಿದಬಳಿಕ ಬಸವಲಿಂಗನೆ ಎಂದು

ಪೆಸರಿಟ್ಟಾ ಗುರುವೇ ಕೃಪೆಯಾಗು

ಬಸವಪ್ಪ ಇದ್ದವಾ ನಾನು ನಿನ್ನ ಕೃಪಾದೃಷ್ಠಿಯಿಂದ ನೀನು ನನ್ನನ್ನು ಬಸವಲಿಂಗವೆಂದು ಹೆಸರನ್ನು ಇಟ್ಟಾ ಗುರುವೇ ಕೃಪೆಮಾಡು ಎಂದು ಬಿನ್ನವಿಸಿಕೊಂಡು,

ವೀರಶೈವರ ಪಂಚಾಚಾರ ಷಟಸ್ಥಲ ಮಾರ್ಗೋ

ದ್ದಾರ ನಿಜ‌ಸುಖದ ಸಾರ ನಡೆ ನುಡಿ ಚೆನ್ನ

ವೀರ ಮದ್ಗುರುವೆ ಕೃಪೆಯಾಗು.

ಎನ್ನುತ್ತಾ ಸಮಾಪ್ತಿಮಾಡುವರು.

ಬಾಹ್ಯಾರಚನೆಯ ಅಷ್ಟಾವರಣಗಿಂತ ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವವನಿಗೆ  ಶೂನ್ಯಸಂಪಾದನೆ ಆಗುವುದು ಎಂದು ಸಮರೋಪಗೊಳಿಸುವರು, ನಿರಾಭಾರಿ ಗುರುಗಳಾದ ಹಾಲವರ್ತಿ ಶ್ರೀ ಚೆನ್ನವೀರ ಶಿವಯೋಗಿಗಳ ಕೃಪೆಯಿಂದ ಶರಣನಾಗಿ ಗುರುಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೊಳಿಸುವುದರ ಮೂಲಕ ಗುರು ಕರುಣ ತ್ರಿವಿಧಿಯಲ್ಲಿ ಕ್ರಮಬದ್ಧವಾದ ವೀರಶೈವ ಸಿದ್ಧಾಂತ ತತ್ವವನ್ನು  ಪ್ರತಿಪಾದಿಸಿದ್ದಾರೆ, ಶೂನ್ಯ ಸಂಪಾದನೆಯನ್ನು ಮಾಡಿಕೊಳ್ಳುವ ಸಾಧಕರಿಗೆ ಸ್ವಾನುಭಾವದಿಂದ ನಡೆಯುವವನಿಗೆ ಅತ್ಯುತ್ತಮ ಸಾಧನವಾಗಬಹುದಾಗಿದೆ.

ಶರಣನು ಗುರು ಕರುಣೆಯಿಂದ ಅರಳಿ ವೀರಶೈವ ಸಿದ್ಧಾಂತ ಶಾಸ್ತ್ರವನ್ನು ಹೊತ್ತು ಸರಳವಾಗಿ ಪರಿಚಯಿಸುವ ಒಂದು ಗ್ರಂಥವಾಗಿದೆ, ತ್ರಿಪದಿಗಳನ್ನು ಬರೆದು ಸರ್ವಜ್ಞನು ತಾನು ವಚನಗಳನ್ನು ರಚಿಸಿ ಸಮಾಜದ ಎಲ್ಲಾ ಅಂಕುಡೊಂಕು, ತತ್ವ, ನೀತಿ ಧರ್ಮವನ್ನು ಹೇಳಿದ ಹಾಗೆ  ಶರಣರು ರಚಿಸಿದ ಮೂರು ಮೂರು ಸಾಲಿನ ಪದಗಳಿಂದ ಜೋಡಿಸಿ ಧರ್ಮತತ್ವವನ್ನು ನಡೆನುಡಿಯನ್ನು‌ ಏಕಿಕರಿಸಿಕೊಂಡು ಅವರು ತ್ರಿಪದಿಗಳನ್ನು ರಚಿಸಿದ್ದಾರೆ, ತ್ರಿವಿಧ ಎಂದರೆ ಮೂರು ವಿಧ ಎಂದರ್ಥ, ಇದರಲ್ಲಿ ಅಷ್ಟಾವರಣ ಪಂಚಾಚಾರ ಷಟಸ್ಥಲಗಳ ವಿವರಣೆಯೊಂದಿಗೆ ಹೇಳಲ್ಪಟ್ಟಿದೆ, ಸಾಹಿತ್ಯದಲ್ಲಿ ತ್ರಿಪದಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದವುಗಳಾಗಿವೆ, 12ನೇಯ ಶತಮಾನದಲ್ಲಿ ಕೆಲವು ಶರಣ ಶರಣಿಯರು ತ್ರಿಪದಿಯಲ್ಲಿ ತಮ್ಮ ವಿಚಾರ ತತ್ವವನ್ನು ಹೇಳಿದ್ದಾರೆ, ಜಾನಪದ ಸಾಹಿತ್ಯವು, ಸರ್ವಜ್ಞನ ವಚನಗಳು ಹೀಗೆ ಹಲವು ಕವಿಗಳು ತ್ರಿಪದಿಯನ್ನು ರಚಿಸಿದ್ದಾರೆ ಮೈಲಾರದ ಬಸವಲಿಂಗ ಶರಣರು ಗುರು ಕರುಣ ತ್ರಿವಿದಿಯನ್ನು ರಚಿಸಿ ತತ್ವ ವಿಚಾರವನ್ನು ಮಂಡಿಸಿಕೊಟ್ಟು ಗುರುವಿನ ತಕ್ಕ ಶಿಷ್ಯನಾಗಿ ಗುರು ಸ್ತೋತ್ರ, ಗುರು ಮಹತ್ವವನ್ನು ತಿಳಿಸಿ ವೀರಶೈವ ಧರ್ಮದ ತತ್ವ ಸಿದ್ಧಾಂತದ ಸರ್ವ ಮಗ್ಗಲುಗಳನ್ನು ತಿಳಿಸಿ, ಪಾರಾಯಣ ರೂಪದಲ್ಲಿ ಕೃತಿಯನ್ನು ರಚಿಸಿದ್ದಾರೆ.

-ಜಿ. ಎಸ್. ಶಿವರುದ್ರಪ್ಪ

ದೇವಸ್ಥಾನಗಳು ಭಾರತೀಯರ ಸಾಮಾಜಿಕ-ಧಾರ್ಮಿಕ-ಅಧ್ಯಾತ್ಮಿಕ ಜೀವನದ ಕೇಂದ್ರವಾಗುತ್ತ, ಶತಶತಮಾನಗಳಿಂದ ವಿವಿಧ ಧರ್ಮಗಳವರ ಸಾಮುದಾಯಿಕ ಬದುಕನ್ನು ನಿಯಂತ್ರಿಸುವ ಹಾಗೂ ರೂಪಿಸುವ ಸತ್ವಗಳಂತೆ ವರ್ತಿಸಿವೆ. ಜತೆಗೆ, ಕಾವ್ಯ, ಚಿತ್ರ, ಶಿಲ್ಪ, ಸಂಗೀತ, ನೃತ್ಯ ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ನೆಲೆಯೂ ಆಗುತ್ತ ಸಂಸ್ಕೃತಿಯ ಸಂವರ್ಧನೆಯಲ್ಲಿ ಇವುಗಳು ವಹಿಸುತ್ತ ಬಂದಿರುವ ಪಾತ್ರವು ಗಣನೀಯವಾದದ್ದು. ಪ್ರಾಚೀನ ಕರ್ನಾಟಕದಲ್ಲಂತೂ ಇವುಗಳ ನಿಯೋಗವು ಬಹುಮುಖವಾದದ್ದು. ಕೆಲವು ವೇಳೆ ಯತಿಗಳ ಹಾಗೂ ಧರ್ಮ ಗುರುಗಳ ಮಠಗಳಾಗಿ ದ್ದವು. ಜನರ ಧಾರ್ಮಿಕ ಅನನ್ಯಕತೆಯ ಅರವಟ್ಟಿಗೆಗಳಾಗಿದ್ದವು. ಸಮಾಜದ ಸಂಸತ್ತಿನ ಸಂಚಯನ ಹಾಗೂ ವಿತರಣೆಯ ಭಾಂಡಾರಗಳಾಗಿದ್ದವು; ನ್ಯಾಯಾಲಯಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು . ವಿವಿಧ ಕಲಾ ಚಟುವಟಿಕೆಗಳ ಆಶ್ರಯ ಸ್ಥಾನವಾಗಿ

ದ್ದವು: ಬಹುಜನಕ್ಕೆ ಉದ್ಯೋಗವನ್ನು ಕಲ್ಪಿಸುವ ಸಾಧನಗಳೂ ಆಗಿದ್ದವು. ಇಂಥ ಮಹತ್ವದ ‘ಸಂಸ್ಥೆ’ಗಳನ್ನು, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ಪ್ರಕರ್ಷಗೊಂಡ “ವೀರಶೈವ’ವೆಂಬ ಸಾಮಾಜಿಕ-ಧಾರ್ಮಿಕ ಚಳುವಳಿ ಯೊಂದು ಮೊಟ್ಟ ಮೊದಲನೆ ಬಾರಿಗೆ ನಿರಾಕರಿಸಿತೆಂಬುದು ಅತ್ಯಂತ ಮಹತ್ವದ ಹಾಗೂ ಆಶ್ಚರ್ಯದ ಒಂದು ಘಟನೆಯಾಗಿದೆ. ಪರಂಪರಾಗತವಾಗಿ ಜನರ ಬದುಕಿನೊಂದಿಗೆ ಬೆಸೆದುಕೊಂಡು ಬಂದ ದೇವಸ್ಥಾನವೆಂಬ ಸಂಸ್ಥೆಯನ್ನು, ನಿಜವಾದ ದೈವ ಭಕ್ತರೂ, ಧರ್ಮಶ್ರದ್ಧೆಯುಳ್ಳವರೂ ಆದ ಈ ಶಿವಶರಣರು ಮೊಟ್ಟ ಮೊದಲು ವೈಚಾರಿಕ ಚಿಕಿತ್ಸೆಗೆ ಒಳಪಡಿಸಿ ಅದನ್ನು ಅಧ್ಯಾತ್ಮಿಕ ನೆಲೆಯಲ್ಲಿ ಪುನರ್‌ ವ್ಯಾಖ್ಯಾನಿಸಿದ ರೀತಿ, ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಒಂದು ದಿಟ್ಟ ಹೆಜ್ಜೆಯಾಗಿದೆ. ಒಂದು ರೀತಿಯ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಒಂದು ದಿಟ್ಟ ಹೆಜ್ಜೆಯಾಗಿದೆ. ಒಂದು ರೀತಿಯಲ್ಲಿ ಇದು ಮೇಲು ನೋಟಕ್ಕೆ ದೇವರನ್ನು ಧರ್ಮವನ್ನು ಒಪ್ಪಿಕೊಂಡು ‘ದೇವಸ್ಥಾನ’ವನ್ನು ನಿರಾಕರಿಸುವ ನಿಲುವಿನಂತೆ ತೋರಿದರೂ, ಮೂಲತಃ ‘ದೇವಾಲಯ’ದ ಕಲ್ಪನೆಯನ್ನೆ ಈ ಶರಣ ಧರ್ಮ, ತಾನು ಕಟ್ಟಿದ ಹೊಸ ಧರ್ಮದ ತಾತ್ವಿಕ ನೆಲೆಯಲ್ಲಿ ಪುನಾರಚನೆಗೊಳಿಸಿದ

ಕ್ರಮ ಅತ್ಯಂತ ವೈಚಾರಿಕವಾದುದಾಗಿದೆ ಹಾಗೂ ಅದರ ಸಾಮಾಜಿಕ ಕ್ರಾಂತಿಯ ಆಶಯಕ್ಕೆ ಉಚಿತವಾದುದಾಗಿದೆ.

ಹಾಗೆ ನೋಡಿದರೆ ವಚನಕಾರರಿಗೆ ಹಿನ್ನೆಲೆಯಾದ ಭಾರತೀಯ ಶೈವ ಧರ್ಮವಾಗಲಿ ಅವರಿಗೆ ಮನೋಧರ್ಮದಲ್ಲಿ ಹತ್ತಿರವಾದ ತಮಿಳುನಾಡಿನ ಅರವತ್ತು ಮೂವರು ಪುರಾತನರ ನಿಲುವಾಗಲೀ ದೇವಸ್ಥಾನ ಕೇಂದ್ರಿತವಾದದ್ದು. ವಚನಕಾರರು ಅತ್ಯಂತ ಗೌರವದಿಂದ ಸ್ಮರಿಸುವ ತಮಿಳುನಾಡಿನ ಈ ಶಿವಭಕ್ತರು ಮುಖ್ಯವಾಗಿ ಸ್ಥಾವರ ಲಿಂಗದ ಆರಾಧಕರು. ಹೀಗಾಗಿ ಅವರ ಭಕ್ತ ಜೀವನಕ್ಕೆ ದೇವಸ್ಥಾನಗಳು ಅನಿವಾರ್ಯ ವಾದವುಗಳು – ಆದರೆ ವಚನಕಾರರು ಅಥವಾ ಶಿವಶರಣರು, ದೇವರನ್ನೂ, ಭಕ್ತಿ ಯನ್ನೂ ಒಪ್ಪಿಕೊಂಡು, ದೇವಸ್ಥಾನವನ್ನು ನಿರಾಕರಿಸಿದ್ದು ಯಾಕೆ? ಅದಕ್ಕೆ ಮುಖ್ಯವಾದ ಕಾರಣ, ಈಗಾಗಲೆ ಎಲ್ಲರೂ ಬಲ್ಲಂತ, ವೀರಶೈವವು ದೇವರ ಕಲ್ಪನೆಯನ್ನು ದೇವಸ್ಥಾನದಿಂದ ಮನುಷ್ಯನ ಶರೀರಕ್ಕೆ ಸ್ಥಾವರಲಿಂಗದಿಂದ ಇಷ್ಟಲಿಂಗಕ್ಕೆ ಸ್ಥಳಾಂತರಗೊಳಿಸಿದ್ದೇ ಆಗಿದೆ. ಇದು ನಿಜಕ್ಕೂ ಮಹತ್ವದ ಬದಲಾವಣೆಯೇ, ದೇವರು ಎಲ್ಲೆಲ್ಲಿಯ ಇದ್ದಾನೆ. ಆತ ಸರ್ವಾಂತರ್ಯಾಮಿ ಎಂಬ ಭಾವನೆಗೆ, ದೇವರು ದೇವಸ್ಥಾನದಲ್ಲಿ  ಇದ್ದಾನೆ ಎಂದು ತಿಳಿಯುವ ಹಾಗೂ ನಡೆದುಕೊಳ್ಳುವ ಕ್ರಮ ಒಂದು ವಿರೋಧಾಭಾಸ ದಂತೆ ತೋರಿರಬೇಕು. ಆದರೆ ಕೊಂಚ ವಿಚಾರಮಾಡಿ ನೋಡಿದರೆ, ದೇವರು ಎಲ್ಲೆಲ್ಲಿಯೂ ಇದ್ದಾನೆ ಎಂಬ ಭಾವನೆಗೆ, ದೇವಸ್ಥಾನಗಳ ಅಸ್ತಿತ್ವ ಯಾವ ರೀತಿಯಲ್ಲಿಯ ಅಸಂಬದ್ಧವಾಗುವುದಿಲ್ಲ. ಯಾಕೆಂದರೆ ಎಲ್ಲೆಲ್ಲಿಯೂ ಇರುವ ದೇವರು ದೇವಸ್ಥಾನದಲ್ಲಿಯೂ ಇದ್ದಾನೆ ಎಂದು ತರ್ಕಿಸಲು ಸಾಧ್ಯ. ಆದರೆ ‘ದೇವರು ಎಲ್ಲೆಲ್ಲಿಯೂ ಇದ್ದಾನೆ’ ಎಂಬ ಕಲ್ಪನೆ ಅಮೂರ್ತವಾದದ್ದು, ದೇವರು ದೇವಸ್ಥಾನದಲ್ಲಿಯೂ ಇದ್ದಾನೆ ಎಂಬ ಕಲ್ಪನೆ ಮೂರ್ತಿವಾದದ್ದು, ದೇವರ ಅಮೂರ್ತಿವಾದ ಕಲ್ಪನೆ ಎಲ್ಲರಿಗೂ ಅನುಭವಕ್ಕೆ ಸುಲಭ ಸಾಧ್ಯವಲ್ಲದ ಕಾರಣ, ಸಾಮಾನ್ಯ ಬಹುಸಂಖ್ಯಾತರಿಗೆ ದೇವಸ್ಥಾನ ಅತ್ಯಂತ ಅಗತ್ಯವಾದವುಗಳು-ಅವರ ಧರ್ಮ ಶ್ರದ್ಧೆಗೆ, ನಿಜವಾದ ಅನುಭಾವಿಗಳು ದೇವರನ್ನು ಮೂರ್ತಿದಲ್ಲಿ ಎಂತೋ, ಹಾಗೆಯೇ ಅಮೂರ್ತದಲ್ಲೂ ಅನುಭವಿಸಬಲ್ಲರು. ಅವರ ಪಾಲಿಗೆ ದೇವರ ಆಕಾರ ಎಷ್ಟು ಸತ್ಯವೋ, ಅದರ ನಿರಾಕಾರವೂ ಅಷ್ಟೇ ಸತ್ಯ. ಇದನ್ನು ವಚನಕಾರರು ಬಲ್ಲರು. ಆದರೆ ಎಲ್ಲರೂ ಮೂರ್ತಾಮೂರ್ತಗಳ ನೆಲೆಯಲ್ಲಿ ಸಂಚರಿಸಬಲ್ಲ ಅನುಭಾವಿಗಳಲ್ಲ. ಕೇವಲ ಭಕ್ತಿಯ ನೆಲೆಯಲ್ಲಿ ಬದುಕುವ ಬಹುಸಂಖ್ಯಾತ ಭಕ್ತ ಜನರ ಪಾಲಿಗೆ, ತಮಗೆ ಇಷ್ಟ’ವಾದ ದೈವದ ಆಕಾರದಲ್ಲಿ ಪೂಜಿಸಲು ದೇವಸ್ಥಾನ ವೆಂಬ ಒಂದು ನೆಲೆ ಬೇಕೆ ಬೇಕು. ಆದರೆ ವಚನಕಾರರು ಮಾಡಿದ್ದೆಂದರೆ, ಬಹುಸಂಖ್ಯಾತರ ಭಕ್ತಿಗೆ, ಅದುವರೆಗೂ ಆಲಂಬನದ ನೆಲೆಯಾಗಿದ್ದ ದೇವಸ್ಥಾನವನ್ನು, ನಿರಾಕರಿಸಿ, ದೇವರ ಹಾಗೂ ದೇವಸ್ಥಾನದ ಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಿದ್ದಲ್ಲದೆ, ಅದನ್ನು ಒಪ್ಪಿಕೊಳ್ಳುವಂತಹ ಒಂದು ಮನಃಸ್ಥಿತಿಯನ್ನೂ ನಿರ್ಮಾಣ ಮಾಡಿದ್ದು.  

ವೀರಶೈವದ ‘ದೇವರ ಕಲ್ಪನೆ’ ಮೂಲತಃ ಪರಂಪರಾಗತವಾದ ‘ದೇವರ’ ಕಲ್ಪನೆಯಿಂದ ಭಿನ್ನವಾದದ್ದು. ಒಂದೆಡೆ ಪುರಾಣೋಕ್ತವಾದ ಶಿವನ ಮೂರ್ತಿ ಪೂಜೆ ಮತ್ತು ಶಿವನ ಸಂಕೇತವಾದ ಲಿಂಗ (ಸ್ಥಾನಕಲಿಂಗ) ಪೂಜೆ-ಈ ಎರಡು ರೂಪ ಗಳನ್ನು ದೇವಸ್ಥಾನ ಸಮೇತ ನಿರಾಕರಿಸಿ, ದೇವತ್ವ ಕಲ್ಪನೆಯ ಸಾಂಕೇತಿಕ ರೂಪವಾಗಿ ಇಷ್ಟಲಿಂಗವನ್ನು ಸ್ವೀಕರಿಸಿ ತಮ್ಮ ಕೊರಳಲ್ಲಿ ಕಟ್ಟಿಕೊಂಡರು . ಈ ಅರ್ಥದಲ್ಲಿ ಇಷ್ಟಲಿಂಗ, ರೂಪವೂ ಅಲ್ಲ, ಅರೂಪವೂ ಅಲ್ಲ. ಅದರ ಬದಲು ಅದು ನಿರಾಕಾರಕ್ಕೆ ಅತ್ಯಂತ ಸಮೀಪವಾದ ಒಂದು ಸಂಕೇತ ಮಾತ್ರ. ಹೀಗೆ ದೇವರ ಕಲ್ಪನೆಯನ್ನು ದೇವಾಲಯದಿಂದ ಮತ್ತು ಅದರ ಪೌರಾಣಿಕ ಹಿನ್ನೆಲೆಗಳಿಂದ ಬಿಡಿಸಿ ಮನುಷ್ಯನ  ಶರೀರಕ್ಕೆ ಸ್ಥಳಾಂತರ ಮಾಡುವುದರ ಮೂಲಕ ಮನುಷ್ಯನ ಶರೀರವನ್ನೇ ದೇವಸ್ಥಾನ ವನ್ನಾಗಿ ಮಾಡಿದ್ದಲ್ಲದೆ ಆ ಕಾರಣದಿಂದ ಮನುಷ್ಯತ್ವಕ್ಕೆ ಒಂದು ಘನತೆ-ಗೌರವವನ್ನು ವಚನಕಾರರು ತಂದುಕೊಟ್ಟರೆಂಬುದು ತೀರ ಮಹತ್ವದ ಸಂಗತಿಯಾಗಿದೆ.

ದೇಹವೇ ದೇವಾಲಯವೆಂಬ ಕಲ್ಪನೆಯನ್ನು ಹಾಗೂ ಇಷ್ಟಲಿಂಗ ನಿಷ್ಠೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ವಚನಕಾರರು, ದೇವಸ್ಥಾನಗಳನ್ನೂ, ಅದಕ್ಕೆ ಸಂಬಂಧಿಸಿದ ವಿವಿಧ ವಿಧಿಗಳನ್ನೂ, ಆಚರಣೆಗಳನ್ನೂ, ಅತ್ಯಂತ ತೀವ್ರವಾಗಿ ನಿರಾಕರಿಸಿದ್ದರ ಹಿಂದೆ  ಇರುವ ಉದ್ದೇಶಗಳೂ ಹಾಗೂ ಅದರ ಪರಿಣಾಮಗಳೂ ಬಹುಮುಖವಾದವುಗಳಾಗಿವೆ. ಮೊದಲನೆಯದಾಗಿ ಕರ್ನಾಟಕದ ಅಂದಿನ ಪರಿಸರದಲ್ಲಿ ಹಲವು ಧಾರ್ಮಿಕ ಸೆಳೆತಗಳೂ, ಬಹುದೇವತಾರಾಧನೆಯ ಪದ್ಧತಿಗಳೂ, ಸಾಮಾಜಿಕವಾದ ತರತಮಗಳೂ, ಜನರ ಬದುಕನ್ನು ಒಂದು ರೀತಿಯಲ್ಲಿ ವಿಘಟನೆಗೆ ಒಳಗೂಡಿಸಿದ ಸಂಗತಿಗಳಾಗಿದ್ದವು. ಹೀಗೆ ವಿಘಟನೆಗೊಂಡ ಬದುಕನ್ನೂ ಹಾಗೂ ಮನಃಸ್ಥಿತಿಯನ್ನು ಒಂದು ಸಂಘಟನೆಯ ಕೇಂದ್ರಕ್ಕೆ ತರುವ ಪ್ರಯತ್ನದಲ್ಲಿ ಬಹುದೇವತಾರಾಧನೆಯನ್ನೂ,

ಹಾಗೂ ದೇವಸ್ಥಾನಗಳನ್ನೂ ನಿರಾಕರಿಸುವುದು ಹೊಸ ಶರಣ ಧರ್ಮದ ಅವಶ್ಯಕತೆಯಾಗಿತ್ತು. ಆದಕಾರಣ ವಚನಕಾರರು ‘ಹಾಳುಮೊರಡಿಗಳಲ್ಲಿ, ಊರದಾರಿಗಳಲ್ಲಿ ಕೆರೆ ಬಾವಿ ಹೊಗಿದು ಮರಂಗಳಲ್ಲಿ, ಗ್ರಾಮ ಮಧ್ಯಗಳಲ್ಲಿ, ಚಾಸಧ ಪಟ್ಟಣ ಪ್ರದೇಶಗಳಲ್ಲಿ  ಹಿರಿಯಾಲದ ಮರದಲ್ಲಿ ಮನೆಯಮಾಡಿ’ (ವ ೫೫ ಬಸವಣ್ಣ ) ಜನರ ನಂಬಿಕೆಗಳನ್ನು ಹಿಡಿದು ಪೂಜೆಗೊಳ್ಳುತಿದ್ದ ಬಹು ಸಂಖ್ಯಾತ ಕ್ಷುದ್ರ ದೇವತೆಗಳನ್ನು “ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ” (ವ ೫೬೧ ಬಸವನಾಳ) ಎಂದು ಪೂಜಿಸುವ ಪ್ರವೃತ್ತಿಗಳನ್ನೂ, ಆಗಲೇ ನೆಲೆನಿಂತ ದೇವಾಲಯಗಳಿಗೆ ದಾನ-ದತ್ತಿಗಳನ್ನು ಬಿಡುವ, ಹೊಸ ದೇವಸ್ಥಾನಗಳನ್ನು ಕಟ್ಟಿಸಿ ಲಿಂಗ ಪ್ರತಿಷ್ಠೆ ಮಾಡಿಸುವ ʼಉಳ್ಳವರʼ ಧಾರ್ಮಿಕ ಕಾರ್ಯಗಳನ್ನು ಖಂಡಿಸಿ ಸಮಾಜದ ಮನಸ್ಸನ್ನು ‘ಏಕದೈವ’ ಕೇಂದ್ರಕ್ಕೆ ತಂದ್ದದೆಂಬುದು, ಸಾಮಾಜಿಕವಾಗಿ ಕೂಡಾ ಮಾತ್ರವಲ್ಲ ಧಾರ್ಮಿಕವಾಗಿಯೂ ಸಂಘಟನೆ’ಯ ದೃಷ್ಟಿಯಿಂದ ಬಹುಮುಖ್ಯವಾದ ಹೆಜ್ಜೆಯಾಗಿದೆ ಮತ್ತು ಏಕದೈವವಾದ ಶಿವ.. ಇಷ್ಟಲಿಂಗ’ ರೂಪದಿಂದ ತನ್ನ ಕರಸ್ಥಲ ಹಾಗೂ ಉರಸ್ಥಲಗಳಲ್ಲಿಯೆ ಇದ್ದಾನೆ ಮತ್ತು ಆ ಮೂಲಕ ತನ್ನ ದೇಹವೇ ದೇಗುಲವಾಗಿದೆ. ಈ ರೀತಿ ದೇಹವನ್ನು ದೇಗುಲವನ್ನಾಗಿ ಮಾಡಿಕೊಂಡ ತಾವೆಲ್ಲರೂ ವರ್ಣವರ್ಗಗಳ ತರತಮವಿಲ್ಲದೆ ಅಧ್ಯಾತ್ಮಿಕವಾಗಿ ಸಮಾನರು…ಎಂಬ ಧರ್ಮಶ್ರದ್ಧೆ ಹಾಗೂ ಸಮಾನತೆಯ ಭಾವನೆಯನ್ನು ಮತ್ತು ಆತ್ಮಪ್ರತ್ಯಯವನ್ನು ಮೂಡಿಸಿದ್ದು ದೇವಾಲಯ ನಿರಾಕರಣೆಯ ನಿಲುವಿನ ಪರಿಣಾಮವಾಗಿದೆ. ದೇವಾಲಯ ನಿರಾಕರಣೆಯಿಂದ ಇಷ್ಟಲಿಂಗದ ನಿಷ್ಠೆಯನ್ನು ದೃಢಗೊಳಿಸುವ ಈ ವಿಧಾನದಿಂದ, ಭಕ್ತನಿಗೂ ದೇವರಿಗೂ ದೇವಾಲಯದ ಕಾರಣದಿಂದ ನಡುವೆ ಸ್ಥಾಪಿತವಾದ ‘ಪೂಜಾರಿ’ಯ ಮಾಧ್ಯಮನನ್ನು ನಿರಾಕರಿಸಿ, ಭಕ್ತಿ ಎನ್ನುವುದು ಭಕ್ತ ಹಾಗೂ ಭಗವಂತನ ನಡುವಣ ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನ- ಎನ್ನುವ ಭಾವನೆಯನ್ನು ಪ್ರತಿಪಾದಿಸುತ್ತದೆ.

 ಎರಡನೆಯದಾಗಿ, ಶರಣ ಧರ್ಮದ ಪರಿಸರದಲ್ಲಿ ಆಗಲೇ ನೆಲೆನಿಂತ ದೇವಾಲಯ ಸಂಸ್ಕೃತಿ ಮುಖ್ಯವಾಗಿ ʼಉಳ್ಳವರ’ ಹಾಗೂ ಉಚ್ಚವರ್ಗದವರ ಸ್ವತ್ತಾಗಿದ್ದು ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡ ಅವರನ್ನು ಶೋಷಣೆಗೆ ಗುರಿಪಡಿಸುವ ಸಾಧನವಾಗಿತ್ತು. ಅದಕ್ಕೂ ಮಿಗಿಲಾಗಿ ಸಮಾಜದ ಕೆಳವರ್ಗದ ಬಹು ಸಂಖ್ಯಾತರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಲಾಗಿತ್ತು. ವಚನಕಾರರು ಈ ಪ್ರವೃತ್ತಿಯನ್ನು ‘ದೇವಾಲಯ ನಿರಾಕರಣೆ’ಯ ಮೂಲಕ ಪ್ರತಿಭಟಿಸಿದ ಕ್ರಮ ತೀರಾ ವಿಶಿಷ್ಟವಾಗಿದೆ. ಈ ಹೊತ್ತು ಕೆಲವರಿಗೆ ಅನ್ನಿಸಬಹುದು ಹೀಗೆ ದೇವಾಲಯವನ್ನು ನಿರಾಕರಣೆ ಮಾಡದೆ ವಚನಕಾರರು, ಸಂಘಟಿತವಾಗಿ ದೇವಾಲಯ ಪ್ರವೇಶವನ್ನೆ ಒಂದ ಚಳುವಳಿಯನ್ನಾಗಿ ಮಾಡಿಕೊಂಡು ಅದರ ಮೂಲ ಒಂದು ಸಾಮಾಜಿಕ  ಕ್ರಾಂತಿಯನ್ನೆ ಮಾಡಬಹುದಾಗಿತ್ತಿಲ್ಲ ಎಂದು.  ಆದರೆ ಕೊಂಚ ವಿಚಾರ ಮಾಡಿ ನೋಡಿದರೆ, ದೇವಾಲಯ ಪ್ರವೇಶಕ್ಕೆ ಚಳುವಳಿ ಮಾಡುವುದಕ್ಕಿಂತ, ದೇವಾಲಯವನ್ನು ನಿರಾಕರಿಸುವುದು ಹೆಚ್ಚು ದಿಟ್ಟತನದ ಹಾಗೂ ವೈಚಾರಿಕ ನಿಲುವಿನ ಕ್ರಾಂತಿಯಾಗಿದೆ ಮತ್ತು ಈ ಹೊತ್ತಿಗೂ ಇದು ಅತ್ಯಂತ ಪ್ರಸ್ತುತವಾದ ಸಂಗತಿಯಾಗಿದೆ. ಯಾಕೆಂದರೆ ದೇವಾಲಯ  ಪ್ರವೇಶಕ್ಕೆ ಹೊಡೆದಾಡಿ ಪ್ರವೇಶ ಗಿಟ್ಟಿಸುವುದರಿಂದಾಗುವ ಪರಿಣಾಮಗಳಿಗಿಂತ, ದೇವಸ್ಥಾನವನ್ನೇ ನಿರಾಕರಿಸುವುದರಿಂದ ಆಗುವ ಪರಿಣಾಮಗಳು ತೀರಾ ವ್ಯಾಪಕವೂ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಕವೂ ಆಗಿವೆ ಮತ್ತು ಆಗುತ್ತಿವೆ ಎಂಬುದನ್ನು ಗುರುತಿಸಿ ಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಿಂದ ನೋಡಿದರೆ ‘ದೇವಸ್ಥಾನ ನಿರಾಕರಣೆ’ ಮುಖ್ಯವಾಗಿ ಪುರೋಹಿತ ಷಾಹೀ ಪ್ರವೃತ್ತಿಗೆ ಹಾಗೂ ಅಧಿಕಾರ ಷಾಹೀ ವ್ಯವಸ್ಥೆಗೆ ತೋರಿದ ಮೊದಲ ಪ್ರತಿಕ್ರಿಯೆಗಳಾಗಿವೆ. ಹಾಗೆ ನೋಡಿದರೆ ಈ ದೇಶದ ಚರಿತ್ರೆಯಲ್ಲಿ ಪುರೋಹಿತರು ಮತ್ತು ಅಧಿಕಾರಷಾಹಿಗಳನ್ನು ಬೇರ್ಪಡಿಸಿ ನೋಡುವುದು ಕಷ್ಟ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳೂ, ಒಂದೇ ಖಡ್ಗದ ಎರಡು ಭಾಯಿಗಳೊ ಎಂದು ಹೇಳಬಹುದು. ದೇವಸ್ಥಾನ ಮಠ ಹಾಗೂ ಅರಮನೆಗಳು ಇರವುಗಳ ಕೇಂದ್ರಗಳು. ವಾಸ್ತವವಾಗಿ ದೇವಾಲಯಗಳು ಅಭಿವೃದ್ಧಿ ಹೊಂದಿದ್ದು ಬ್ರಾಹ್ಮಣ ಕ್ಷತ್ರಿಯ, ಪುರೋಹಿತಷಾಹಿ ಹಾಗೂ ರಾಜರ ಪರಸ್ಪರ ಸಹಕಾರ ಸಹಯೋಗಗಳಿಂದ ಮತ್ತು ಈ ವರ್ಗದವರ ರುಚಿ ಅಭಿರುಚಿಗಳೇ ದೇವಾಲಯಗಳ ವ್ಯವಸ್ಥೆಯನ್ನೂ ರಚನೆಯನ್ನೂ ನಿಯಂತ್ರಿಸಿದವುಗಳು. ದೇವಾಲಯಗಳ ಪ್ರತಿಮಾ ವಿಧಾನವು ಮಧ್ಯ ಕಾಲೀನ ರಾಜರ ಅರಮನೆಗಳ ಜೀವನ ವಿಧಾನದ ಮಾದರಿಗಳ ಮೇಲೆ ರೂಪುಗೊಂಡದ್ದಾಗಿದೆ. ದಕ್ಷಿಣ ಭಾರತದ ಹಲವು ದೇವಾಲಯಗಳಂತೂ ಅವುಗಳ ವಿಸ್ತಾರ ವೈಭವಗಳಲ್ಲಿ ಆರಮನೆಗಳನ್ನು ನೆನಪಿಗೆ ತರುವಂತಿವೆ. ದೇವಾಲಯದ ಗೋಪುರವು ರಾಜತ್ವದ ಶಕ್ತಿಯ ಪ್ರತೀಕವಾಗಿದೆ. ದೇವಾಸ್ಥಾನಗಳು ಒಂದು ರೀತಿಯಲ್ಲಿ ನಾಟ್ಯಶಾಲೆಗಳಂತೆ ಭಾಸವಾಗುತ್ತವೆ. ದೇವತಾ ವಿಗ್ರಹಗಳೂ ಹಾರ-ಕಿರೀಟಕುಂಡಲಾದಿ ರಾಜೋಚಿತ ವೇಷಭೂಷಣಗಳಿಂದ ರಾಜಿಸುತ್ತವೆ. ದೇವಸ್ಥಾನಗಳ ಶಿಲ್ಪಗಳೂ, ರಾಜರ ವಿರಾಮದ ವೇಳೆಯ ಚಟುವಟಿಕೆಗಳಾದ, ಗಾಯನ, ನರ್ತನ, ಮಲ್ಲಯುದ್ಧ, ಕುದುರೆ ಸವಾರಿ, ಶೃಂಗಾರ- ಇತ್ಯಾದಿಗಳನ್ನು ಬಿಂಬಿಸುತ್ತವೆ. ಈ ಎಲ್ಲವೂ ದೇವಸ್ಥಾನಗಳು ಹೇಗೆ ಆಳುವ ವರ್ಗದ ಅಭಿರುಚಿಯಿಂದ ನಿಯಂತ್ರಿತವಾಗಿವೆ ಎಂಬುದನ್ನು ಸೂಚಿಸುತ್ತವೆ. ಇದು ದೇವಸ್ಥಾನದ ಒಂದು ಮುಖವಾದರೆ, ಅದರ ಇನ್ನೊಂದು ಮುಖ ಅದರ ಒಳಗಿನ ವ್ಯವಸ್ಥೆಗೆ ಸಂಬಂಧಪಟ್ಟದ್ದು, ಇದರ ಸಂಪೂರ್ಣ ನಿಯಂತ್ರಣ ಪುರೋಹಿತಷಾಹಿಯದು. ಅದರಲ್ಲಿಯೂ ಮುಖ್ಯವಾಗಿ ಬ್ರಾಹ್ಮಣವರ್ಗದ್ದು, ಅರ್ಚನೆ ಉತ್ಸವ-ದಾನ-ದಕ್ಷಿಣೆ-ವ್ರತ-ಸೀಮ ಇತ್ಯಾದಿಗಳ ಹೆಸರಿನಲ್ಲಿ ಜನರ ಧರ್ಮ ಶ್ರದ್ಧೆಯ ಉಪಯೋಗಗಳನ್ನು ಬಲ್ಲವರು ಇವರು. ಇವರ ಜತೆಗೆ “ಉಳ್ಳವರು’ ಹಣ ಉಳ್ಳ ಶ್ರೀಮಂತರು, ದೇವಾಲಯಾದಿ ನಿರ್ಮಾಣ ಕಾರ್ಯಗಳನ್ನು ಒಂದು ಪುಣ್ಯ ಕರ್ಮವೆಂದುಭಾವಿಸಿದವರು. ದೇವಸ್ಥಾನಗಳಿಗೆ ದಾನ-ದತ್ತಿಗಳನ್ನು ಬಿಟ್ಟು ಶಾಸನಗಳನ್ನು ಬರೆಯಿಸಿದವರು. (ಈ ಪಟ್ಟಿಗೆ ರಾಜರೂ ಸೇರುತ್ತಾರೆ. ತಮ್ಮ ಸಂಪತ್ತಿನ ಒಂದಷ್ಟು ಭಾಗ ದೇವಕಾರ್ಯಕ್ಕೆ ವಿನಿಯೋಗವಾಗಲಿ ಎಂಬ ಶ್ರದ್ಧೆಯುಳ್ಳವರು ಮತ್ತು ತಮ್ಮ ಸಂಪತ್ತಿನ ಗಳಿಕೆಯ ಪಾಪ ಪ್ರಜ್ಞೆಯನ್ನು ಈ ಪುಣ್ಯ ಕಾರ್ಯಗಳ ಮೂಲಕ ತೊಳೆದುಕೊಳ್ಳಲು ಬಯಸುವವರು. ಈ ಎಲ್ಲ ಕಾರಣಗಳಿಂದ ವಚನ ಚಳುವಳಿಗೆ ಹಿನ್ನೆಲೆಯಾದ ಅಂದಿನ ಕರ್ನಾಟಕದ ಪರಿಸರದಲ್ಲಿ ಲಕುಲೀಶ ಪಾಶುಪತ ಸಂಪ್ರದಾಯದ ಶೈವರಿಂದ ಬಹುಸಂಖ್ಯೆಯ ದೇವಾಲಯಗಳು ನಿರ್ಮಾಣಗೊಂಡಿದ್ದವು. “ಮಧ್ಯಕಾಲೀನ ಯುಗದ ದಕ್ಷಿಣದ ತಪ್ಪಲಿನ ಭೂಮಿಯಲ್ಲಿ ದೇವ ಮಂದಿರಗಳ ನಿರ್ಮಾಣಕ್ಕೆ ಉಕ್ಕುಬಂದ ಕಾಲ, ಐದರಿಂದ ಏಳನೆಯ ಶತಮಾನಗಳ ಅವಧಿಯಲ್ಲಿ ಬಾದಾಮಿಯ ಚಾಳುಕ್ಯರು ತಮ್ಮರಾಜಧಾನಿಯಾದ ಐಹೊಳೆ ಒಂದರಲ್ಲಿಯೇ ಎಪ್ಪತ್ತರಷ್ಟು ದೇವಾಲಯಗಳನ್ನು ಕಟ್ಟಿಸಿದ್ದಾರೆ. ಎರಡನೆಯ ಚಾಳುಕ್ಯ ವಿಕ್ರಮಾದಿತ್ಯನು ಎಂಟನೆಯ ಶತಮಾನದಲ್ಲಿ ಈಗಿನ ವಿಜಾಪುರ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ತನ್ನ ರಾಜ ವೈಭವವನ್ನು ವ್ಯಕ್ತಪಡಿಸುವುದಕ್ಕೆ ಮೂರು ಬೃಹದ್ ದೇವಸ್ಥಾನಗಳನ್ನು ಕಟ್ಟಿಸಿದನು…….ಕ್ರಿ. ಶ. ೧೧೫೦ ರಿಂದ ೧೩೫೦ರ ವರೆಗಿನ ಎರಡುನೂರು ವರ್ಷಗಳಲ್ಲಿ ಶೈವರು ಏನಿಲ್ಲೆಂದರೂ ನಾನೂರು ಐವತ್ತು ಶಿವದೇವಾಲಯಗಳನ್ನೂ, ವೈಷ್ಣವರು ಒಂದುನೂರು ದೇವಾಲಯಗಳನ್ನೂ, ಕಟ್ಟಿರುವುದು ಆ ಕಾಲದಲ್ಲಿ ದೇವ ಮಂದಿರಗಳ ನಿರ್ಮಾಣ ಕಾರ್ಯದಲ್ಲಿ ಧರ್ಮಗಳು ಸ್ಪರ್ಧೆಯ ದ್ಯೋತಕಗಳಾಗಿವೆ. ಇಂಥ ಪರಿಸರದಲ್ಲಿ ದೇವಾಲಯಗಳನ್ನು ನಿರಾಕರಿಸುವುದರ ಮೂಲಕ ಸೂಕ್ಷ್ಮವಾಗಿ ರಾಜಷಾಹಿಯನ್ನೂ, ಸ್ಪಷ್ಟವಾಗಿ ಪುರೋಹಿತಷಾಹಿಯನ್ನೂ ವಿರೋಧಿಸಿದ ಶರಣ ಧರ್ಮದ ವೈಚಾರಿಕತೆಯನ್ನೂ ಕ್ರಿಯಾಶೀಲತೆಯನ್ನೂ ಅರ್ಥಮಾಡಿಕೊಳ್ಳಬಹುದು.

 ಹಾಗೆ ನೋಡಿದರೆ ಶರಣರ ದೇವಾಲಯ ವಿರೋಧ ದೇವಸ್ಥಾನಗಳನ್ನು ಕುರಿತ ಅಗೌರವದಿಂದ ಹುಟ್ಟಿಕೊಂಡ ಕ್ರಿಯೆ ಅಲ್ಲ. ವಾಸ್ತವವಾಗಿ ಈ ಶರಣ ಚಳುವಳಿಯ ಮುಖ್ಯ ವಚನಕಾರರು ಒಂದಲ್ಲ ಒಂದು ರೀತಿಯಲ್ಲಿ ದೇವಾಲಯಗೋತ್ರ’ಕ್ಕೆ ಸೇರಿ ದವರೇ. ಅವರವರ ಅಂಕಿತಗಳಂತೂ ಸ್ಪಷ್ಟವಾಗಿ ಸ್ಥಾವರ ಲಿಂಗದ ದೇವಸ್ಥಾನಗಳನ್ನು ಸೂಚಿಸುತ್ತವೆ. ಬಸವಣ್ಣನವರ ಅಂಕಿತವಾದ ‘ಕೂಡಲಸಂಗಮದೇವ’ ಈ ಹೊತ್ತಿಗೂ ಇರುವ ಕೂಡಲಸಂಗಮದ ದೇವಸ್ಥಾನವನ್ನು, ಅಕ್ಕಮಹಾದೇವಿ ಹಾಗೂ ಸಿದ್ಧರಾಮನ ಅಂಕಿತಗಳು ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನವನ್ನೂ, ಅಲ್ಲಮಪ್ರಭುವಿನ ʼಗುಹೇಶ್ವರ’ ಎನ್ನುವುದು ಬಳ್ಳಿಗಾವೆಯಗೂಗೇಶ್ವರ ದೇವಾಲಯವನ್ನೂ ಹೀಗೆ ಇನ್ನೂ ಕೆಲವು ವಚನಕಾರರ ಅಂಕಿತಗಳು ಅವರವರು ಬಂದ ಪರಿಸರದ ದೇವಾಲಯಗಳನ್ನು ಬೆರಳಿಟ್ಟು ತೋರಿಸುತ್ತವೆ. ಈ ಶರಣರಲ್ಲಿ, ಮುಖ್ಯವಾಗಿ ಸಿದ್ಧರಾಮನು ದೇವಾಲಯ ನಿರ್ಮಾಣದ ವಿಚಾರದಲ್ಲಿ ವಿಶೇಷವಾದ ಕಾಳಜಿ ವಹಿಸಿದವನು. ಅವನ ಲೋಕಕಲ್ಯಾಣ ರೂಪವಾದ ಸಾಧನೆಯಲ್ಲಿ ಕೆರೆ ಬಾವಿ ದೇವಾಲಯಗಳ ನಿರ್ಮಾಣವೂ ಸೇರುತ್ತದೆ. ಈ ಕೆಲವು ಶರಣರ .ಅಂಕಿತಗಳ ನಡುವೆ, ಅಲ್ಲಮಪ್ರಭುವಿನ ಅಂಕಿತ ಈ ಗುಗ್ಗೇಶ್ವರನನ್ನು ಸೂಚಿಸಿದರೂ, ‘ಗುಹೇಶ್ವರ’ ಎಂಬ ಬಳ್ಳಿಗಾವೆಯ ಅಂಕಿತವು ದೇವಾಲಯ ಸಂಸ್ಕೃತಿಯ ಇತಿಹಾಸದಲ್ಲಿ ದೇವಾಲಯ ರಚನೆಗಳ ಪೂರ್ವಾವಸ್ಥೆಯಾದ ‘ಗುಹೆ’ ಯನ್ನು ಅಥವಾ ಗುಹಾಲಯ ಶಿಲ್ಪಗಳ ಪರಂಪರೆಯನ್ನು ಸೂಚಿಸುವಂತೆ ತೋರುತ್ತದೆ. ಯಾಕೆಂದರೆ “ದೇವಸ್ಥಾನಗಳ ಬೆಳವಣಿಗೆಯ ಚರಿತ್ರೆಯಲ್ಲಿ ಗುಹಾಲಯಗಳ ನಿರ್ಮಿತಿಯ ಅತ್ಯಂತ ಪ್ರಾಚೀನವಾದದ್ದು. ಭಾರತೀಯ ವಾಸ್ತುಶಿಲ್ಪದ ಸುಮಾರು ಒಂದು ಸಾವಿರ ವರ್ಷಗಳ ಕಾಲಮಾನದಲ್ಲಿ ನಿಜವಾದ ಸ್ಮಾರಕಗಳೆಂದರೆ ಗುಹಾಲಯಗಳೇ. ಭಾರತದ ದೇವಾಲಯ ಶಿಲ್ಪಕ್ಕೆ ಇದು ವಿಶಿಷ್ಟವಾದ ಲಕ್ಷಣವಾಗಿದೆ.  ಕ್ರಿ. ಪೂ. ೩ನೆ ಶತಮಾನದಿಂದ ಕ್ರಿ.ಶ, ೧೦ನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಂಡ ಗುಹಾಲಯಗಳ ಸಂಖ್ಯೆ ಒಂದು ಸಾವಿರದ ಇನ್ನೂರಕ್ಕೂ ಮಿಗಿಲಾಗಿವೆ.  ಉಪನಿಷತ್ತುಗಳಲ್ಲಾಗಲೀ ಧರ್ಮಶಾಸ್ತ್ರಗಳಲ್ಲಾಗಲಿ ದೇವಸ್ಥಾನಗಳ ವಿಷಯವು ಪ್ರಸ್ತಾಪಿತವಾದಂತೆ ತೋರುವುದಿಲ್ಲ. ಆಗ ಅರಣ್ಯದ ಏಕಾಂತಕ್ಕೆ ಸರಿದು ಗುರುವಿನ ಮಾರ್ಗದರ್ಶನದಲ್ಲಿ ಸಾಧಕನು ಜಿಜ್ಞಾ ಸೆಗೆ ತೊಡಗುವುದು ಮುಖ್ಯವಾಗಿತ್ತು. “ದಟ್ಟವಾದ ಕಾಡಿನ ಕತ್ತಲೆಯನ್ನು ಪ್ರವೇಶಿಸುವಸಾಧಕನ ಕ್ರಿಯೆ; ಅಂತರಂಗವನ್ನು ಧ್ಯಾನದ ಮೂಲಕ ಪ್ರವೇಶಿಸುವುದರ ಸಂಕೇತವಾಗಿದೆ. ಮುಂದಿನ ಹಂತವಾದ ಗುಹಾಲಯಗಳು ಈ ಸಂಕೇತದ ಸಮರ್ಥನೆಯಾಗಿವೆ. ಜೈನ, ಬೌದ್ಧ ಹಿಂದೂ ಗುಹಾಲಯಗಳೂ ಏಕಾಂತಕ್ಕೆ ಹಿಂದಿರುಗುವ ಸಾಧಕನ ಮನಃಸ್ಥಿತಿಯ ಹಳಹಳಿಕೆ ಯನ್ನು ಸೂಚಿಸುತ್ತವೆ,” ಸಾಧುಸನ್ಯಾಸಿಗಳಿಗೆ ಹಾಗೂ ಅಧ್ಯಾತ್ಮಸಾಧಕರಿಗೆ ಮತ್ತು ಅದೇ ಬಗೆಯ ಪ್ರವೃತ್ತಿಯವರಿಗೆ ಗುಹೆಗಳು ಏಕಾಂತದ ಧ್ಯಾನಕ್ಕೆ ಅನುಕೂಲವಾದ ನೆಲೆಗಳಾಗಿದ್ದುದೇನೋ ನಿಜ ಆದರೆ ಭಕ್ತರಿಗೆ ದೇವಸ್ಥಾನಗಳು ಬೇಕಾದವು, ಯಾವಾಗ ಶಿವ, ವಿಷ್ಣು, ರಾಮ, ಕೃಷ್ಣ ಪಂಥಗಳು ವ್ಯಾಪಕವಾದುವೋ ಆಗ ಮತ್ತು ಭಕ್ತ ಪಂಥದ ಪ್ರಭಾವದಿಂದ, ದೇವಾಲಯಗಳ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯಿತೆಂದು ತೋರುತ್ತದೆ. ಹೀಗಾಗಿ ದೇವಾಲಯ ನಿರ್ಮಿತಿ ಒಂದು ಪರಂಪರೆಯಾಗಿ ರೂಪುಗೊಂಡಿತು . ಅಲ್ಲಮನ ಅಂಕಿತವಾದ ‘ಗುಹೇಶ್ವರ’ ಎನ್ನುವುದು, ದೇವಾಲಯ ನಿರ್ಮಿತಿಯ ಪ್ರಾಚೀನ ರೂಪವನ್ನು ಸೂಚಿಸಿದರೆ, ಇತರ ಕೆಲವು ವಚನಕಾರರ ಅಂಕಿತಗಳು ದೇವಾಲಯಗಳನ್ನು ಸೂಚಿಸುತ್ತವೆ ಮತ್ತು ಎಲ್ಲ ವಚನಕಾರರ ಧೋರಣೆ ಮತ್ತೆ ದೇವಾಲಯವನ್ನು ನಿರಾಕರಿಸುವ ಹಾಗೂ ಮೀರುವ ನೆಲೆಯನ್ನು ನಿರ್ದೇಶಿಸುತ್ತವೆ. ಹಾಗೆ ನಿರಾಕರಿಸುವ ಮತ್ತು ಮೀರುವ ಮನಃಸ್ಥಿತಿಯ ಮೂಲಕ, ವಚನಕಾರರು ದೇವಾಲಯದ ಪ್ರಾಚೀನ ಮಾದರಿಗೆ, ಅಂದರೆ ‘ದೇಹವೇ ದೇವಾಲಯ’ ಎಂಬ ಕಲ್ಪನೆಗೆ ಹಿಂದಿರುಗುತ್ತಾರೆ. ಈ ಪ್ರಾಚೀನ ಮಾದರಿ, ದೇವಸ್ಥಾನಗಳ ಎಲ್ಲ ಬಗೆಯ ʼಮೂರ್ತಿʼ ರೂಪಗಳಿಗೂ ಬಹುಶಃ ಮೊದಲನೆಯದು.

ದೇವಾಲಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಮಾಜದ ಮನಸ್ಸಿಗೆ, ದೇವಾಲಯದ ನಿರಾಕರಣೆಯಿಂದ ಉಂಟಾಗುವ ಶೂನ್ಯವನ್ನು ತುಂಬಲು ‘ದೇಹವೇ ದೇವಾಲಯ’ ಎಂಬ  ಪರ್ಯಾಯವನ್ನು ವಚನಕಾರರು ಸೂಚಿಸಿದರಷ್ಟೆ? ಹಾಗೆ ನೋಡಿದರೆ, ಈ ಸೂಚನೆಯೂ ಹೊಸದೇನಲ್ಲ. ‘ದೇಹೋ ಜೀವಾಲಯಃ ಪ್ರೋಕ್ತಃ ಜೀವೋ ಜೀವಃ ಸನಾತನಃ” ಎಂಬ ಉಕ್ತಿಯೊಂದಿದೆ. ಇದು ಎಷ್ಟು ಪ್ರಾಚೀನವೋ, ತಿಳಿಯದು. ಆದರೂ ಅದು ಕೇವಲ ಒಂದು ಕಲ್ಪನೆಯೋ, ಆಶಯವೋ ಆಗಿದೆಯೇ ಹೊರತು ಶಿವಶರಣರಲ್ಲಿಯಂತ ಒಂದು ಪ್ರಾಯೋಗಿಕ ತಾತ್ವಿಕ ನಿಲುವಾಗಿ ಎಂದಾದರೂ ಅನುಭೂತವಾಗಿತ್ತೆಂದು ಹೇಳಲು ಬಾರದು. ಆದರೆ ಭಾರತೀಯ ವಾಸ್ತುಶಿಲ್ಪದ ಪ್ರಕಾರ ದೇಹಕ್ಕೂ ದೇವಾಲಯಕ್ಕೂ ಇರುವ ಸಂಬಂಧ ಅತ್ಯಂತ ಅರ್ಥಪೂರ್ಣವಾದುದಾಗಿದೆ. ಸಾಮಾನ್ಯವಾಗಿ ಭಾರತೀಯದೇವಸ್ಥಾನಗಳು ಮನುಷ್ಯ ಶರೀರದ ನೀಲನಕ್ಷೆಯನ್ನೇ ಅವಲಂಬಿಸಿ ರಚಿತವಾಗಿವೆ. ಗುಡಿಯನ್ನು ಕಟ್ಟುವ ಮೊದಲು ‘ಗರ್ಭ’ವಿನ್ಯಾಸ’ ಎಂಬ ವಿಧಿಯನ್ನು, ನೆರವೇರಿಸುವುದರ ಮೂಲಕ, ದೇವಸ್ಥಾನವು, ಭ್ರೂಣದಿಂದ ಶರೀರವು ರೂಪುತಾಳುವಂತೆ ಏಳುವುದೆಂದು ಕಲ್ಪಿಸಿಕೊಳ್ಳಲಾಗಿದೆ ಮತ್ತು ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯ ಶರೀರದ ಇತರ ಅವಯವಗಳೊಂದಿಗೆ ಸಮೀಕರಿಸಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ, ದೇವಾಲಯದ ಎರಡೂ ಬದಿಗಳನ್ನು ಹಸ್ತ ಅಥವಾ ಪಾರ್ಶ್ವವೆಂದೂ ಕಂಬಗಳನ್ನು ಪಾದಗಳೆಂದೂ, ಗೋಪುರವನ್ನು ಶಿಖರ ಅಥವಾ ಶಿರಸ್ಸೆಂದೂ, ಮೂರ್ತಿಯನ್ನು ಒಳಗೊಳ್ಳುವ ಭಾಗಕ್ಕೆ ಗರ್ಭಗುಡಿಯಂದೂ ಹೇಳಲಾಗಿದೆ. ಹೀಗೆ ಮೂಲತಃ ದೇವಸ್ಥಾನವೇ ಮನುಷ್ಯ ಶರೀರ, ಮನುಷ್ಯ ಶರೀರವ ದೇವಸ್ಥಾನ ಎಂಬ ಸಮೀಕರಣವೊಂದು ಸಾಧಿತವಾಗಿದೆ. ಬಸವಣ್ಣನವರ ಸುಪ್ರಸಿದ್ಧವಾದ

 ಉಳ್ಳವರು ಶಿವಾಲಯ ಮಾಡುವರಯ್ಯ

 ನಾನೇನ ಮಾಡುವ ಬಡವನಯ್ಯ

 ಎನ್ನ ಕಾಲೇ ಕಂಬ, ದೇಹವೇ ದೇಗುಲ,

ಶಿರವೆ ಹೊನ್ನ ಕಳಸವಯ್ಯ

ಕೂಡಲ ಸಂಗಮದೇವ ಕೇಳಯ್ಯ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

 ಎಂಬ ವಚನ, ಈಗ ಉಲ್ಲೇಖಿಸಿದ ವಾಸ್ತುಶಾಸ್ತ್ರದ ನೆನಪನ್ನು ತರುವುದಲ್ಲದೆ, ಶರಣರ ದೇವಾಲಯದ ಪರಿಕಲ್ಪನೆಯನ್ನು ಕುರಿತ ಅತ್ಯುತ್ತಮ ವ್ಯಾಖ್ಯಾನವೂ ಆಗಿದೆ. ಉಳ್ಳವರು ಮಾಡುವ ದೇವಸ್ಥಾನದೊಂದಿಗೆ ಬಸವನಾದ ತಾನು ಮಾಡುವ ದೇವಸ್ಥಾನವನ್ನು ಮುಖಾಮುಖಿಯಾಗಿರಿಸಿ, ಹೇಗೆ ಒಂದು ಕಾಲಕ್ಕೆ ಸಾಂಸ್ಕೃತಿಕವಾಗಿ ಅರ್ಥಪೂರ್ಣವಾಗಿದ್ದ ದೇವಾಲಯ, ಈಗ ಅರ್ಥವನ್ನು ಕಳೆದುಕೊಂಡು `ಸ್ಥಾವರ’ವಾಗಿದೆ ಎಂಬುದನ್ನು ಸೂಚಿಸುತ್ತ, ಮತ್ತೆ ಪರ್ಯಯವಾಗಿ ‘ದೇಹವೇ ದೇಗುಲ’ವೆಂಬ ‘ಜಂಗಮ’ ಅಥವಾ ಚಲನಶೀಲ ಸ್ಥಿತಿಗೆ ಹಿಂದಿರುಗುವ ಆಶಯವನ್ನು ಅಭಿವ್ಯಕ್ತಪಡಿಸುವ ಕ್ರಮ ಅನನ್ಯವಾಗಿದೆ. ಈ ವಚನ ಮುಖ್ಯವಾಗಿ ಪ್ರತಿಪಾದಿಸುವುದು ಶಿವಾಲಯವನ್ನು ಮಾಡುವ ಕ್ರಿಯೆಯನ್ನಲ್ಲ, ವ್ಯಕ್ತಿ ತಾನೇ ಶಿವಾಲಯ “ಆಗುವ” ಕ್ರಿಯೆಯನ್ನು .

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಶ್ರೀ ಡಿ.ಎಸ್‌ ಕರ್ಕಿಯವರ  ಶಿವಯೋಗಮಂದಿರ ಕುಇತು ಬರೆದ ಲೇಖನದ  ಸಾಲುಗಳು ಅತ್ಯಂತ ಅರ್ಥಪೂರ್ಣ ಮತ್ತು ಸುಂದರವಾಗಿವೆ

ಇದೋ ಮಂದಿರ ಶಿವಮಂದಿರ

ಶಿವಯೋಗದ ಮಂದಿರ

ಪ್ರಕೃತಿಯ ಪರಮಾನಂದದ

ಸುಧೆ ಸೂಸುವ ಚಂದಿರ

…….

ಶಿವಯೋಗಮಂದಿರ ! ಸುಂದರವಾದ ಸ್ಥಳಕ್ಕೆ ತುಂಬಾ ಸಮಂಜಸವಾದ ಹೆಸರು, ಶಿವ, ಯೋಗ, ಮಂದಿರ- ಈ ಮೂರರಲ್ಲಿ ನಮಗೆ ಮೂರೂ ಬೇಕು. ಮಹೇಶ್ವರನ ಹೆಸರುಗಳಲ್ಲಿ ‘ಶಿವ’ ಎಂಬ ಹೆಸರು ಎಷ್ಟು ಚಿಕ್ಕದೋ ಅಷ್ಟೇ ಅರ್ಥಪೂರ್ಣವಾದುದು. ಸತ್ಯಂ, ಶಿವಂ ಸುಂದರಂ-ಎಂಬ ಜೀವನದ ಸರ್ವೋತ್ಕೃಷ್ಟ ತತ್ವಗಳಲ್ಲಿ ‘ಶಿವ’ ಶಬ್ದವು ಮಧ್ಯವರ್ತಿಯಾಗಿ, ಎಂದರೆ ಸತ್ಯವನ್ನು ಸೌಂದರ್ಯವನ್ನು ಸಮರಸಗೊಳಿಸುವ ಶುಭ ಸತ್ವವಾಗಿ ಸಮಾವೇಶವಾಗಿದೆಯೆಂಬುದನ್ನು ನೆನೆಯಬೇಕು. ಮಹಾದೇವನ ಮಂಗಲಮಯವಾದ, ಕರುಣಾ ಪೂರ್ಣವಾದ ಮಹೋನ್ನತವಾದ ಸ್ವರೂಪವನ್ನು ‘ಶಿವ’ ಶಬ್ದವು ಎರಡೆಂದರೆ ಎರಡೇ ಅಕ್ಷರಗಳಲ್ಲಿ ನಿರೂಪಿಸುತ್ತದೆ. ‘ಶಿವ’ ಶಬ್ದಕ್ಕೆ ‘ಶುಭ’ ಎಂಬ ಅರ್ಥವೂ ಉಂಟು. ಹೀಗೆ ಶುಭದಿಂದ ಪ್ರಾರಂಭವಾಗುತ್ತದೆ ‘ಶಿವಯೋಗಮಂದಿರದ ಹೆಸರು ಶುಭಕ್ಕೆ ‘ಯೋಗ’ದ ಯೋಗ ದೊರೆತು ಆನಂದದ ಆಗರವಾದಂತಿದೆ ಶಿವಯೋಗಮಂದಿರ.

ಶಿವಯೋಗಮಂದಿರದ ರಚನೆಗಾಗಿ ಸುಂದರವಾದ ಸನ್ನಿವೇಶವನ್ನು ಆಯ್ದ ಪ್ರತಿಭೆ ಸಾಮಾನ್ಯವಾದುದಲ್ಲ. 

ಸೌಂದರ್ಯರ್ಯಾನುಭವವನ್ನು ಶಿವಾನುಭವವನ್ನು ತನ್ನಲ್ಲಿ ಸಮರಸಗೊಳಿಸಿಕೊಂಡ ಪ್ರತಿಭೆಯದು. ಅದು  ಹಾನಗಲ್ಲ ಕುಮಾರ ಸ್ವಾಮಿಗಳಮಹಾ ವ್ಯಕ್ತಿತ್ವವನ್ನು ಬೆಳಗಿದ ಪ್ರತಿಭೆ……

ಶ್ರೀಕುಮಾರ ತರಂಗಿಣಿ  ೨೦೨೩ ಜೂನಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ಬೋಧವ ಕೊಡು ದೇವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-25 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3 ಉದಂತ ಉದಯ, ಉಜ್ವಲಂತ ಉತ್ಕ್ರಮಣ: ಲೇಖಕರು: ಪೂಜ್ಯ ಜ.ಚ.ನಿ
  4. ನೇಮ-ನಿತ್ಯ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಸುಕುಮಾರ ಗುರುಕುಮಾರ ನಿವೇದನ ಕಾವ್ಯ : ರಚನೆ: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ.
  6. ಧ್ಯಾನ ಮತ್ತು ಅನುಷ್ಠಾನ : ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
  7. ದಯಾನಿಧಿ ಹಾನಗಲ್ಲ ಶ್ರೀ ಕುಮಾರೇಶ : ಲೇಖಕರು: ಚಿಂದೋಡಿ ಬಂಗಾರೇಶ.ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು
  8. ಆಡಿಯೋ೧ :
  9. ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮದ ಸವಿನೆನಪಿಗೆ ಲೋಕಾರ್ಪಣೆಯ ಸವಿನೆನಪು
  10. ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ
  11. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು
  12. ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.
  13. ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ
  14. ಪೂಜ್ಯರ ಆಶೀರ್ವಚನ ೧೪-೦೫-೨೦೨೧
  15. ಆಡಿಯೋ ೨ : ವಿಶೇಷ ಉಪನ್ಯಾಸ ಪೂಜ್ಯ ಶ್ರೀಕುಮಾರೇಶ್ವರರು ಗೌರವಿಸಿದ ಮಹನಿಯರು” 

               ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಡ  ಮಹಾಸ್ವಾಮಿಗಳಿಂದ  ಶಾಂತಾಶ್ರಮ ಹುಬ್ಬಳ್ಳಿ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ