“ಶ್ರೀಕುಮಾರ ಶಿವಯೋಗಿಗಳು ಹಾಗೂ ಶಿವಯೋಗ ಮಂದಿರ”*

ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ ಬೂದಗುಂಪ.

– ಕರುನಾಡಿಗೊಬ್ಬ ಕುಮಾರನೊಡಯ್ಯ ಆತನ ನಡೆ ಹಿರಿಕಿರಿಯರಿಗೆ ಪಾವನ, ಆತನ ನುಡಿ ಸರ್ವರಿಗೂ ಅಮೃತದ ಧಾರೆ,ಆತನು ನೆನಪಿದೆ ಹೃದಯ ಗೀತೆ ಸಕಲ ಸಂಜೀವಿನಿ ನೋಡಯ್ಯ.

ಆತನಿರುವು ಸಮಾಜಕ್ಕೊಂದು ಪಾವನ, ಆತನ ಸುಳಿವು ಕನ್ನಡಕ್ಕೊಂದು ಜೀವನ, ಇಂದಿನ  ಕರುನಾಡಿಗೆ ದ್ವಿತೀಯ ಬಸವನಂತಿದ್ದನಯ್ಯ- ಶಬ್ದ ಬ್ರಹ್ಮ ಡಾ. ಜ. ಚ.ನಿ.

– ಅಂದು  12 ನೇ ಶತಮಾನದಲ್ಲಿ  ಸಾಮಾಜಿಕ ಕ್ರಾಂತಿಯ ಮೂಲಕ ಭಕ್ತಿಯ ಪಥವ ತೋರ ಬಂದವರು ಬಸವಣ್ಣ,

ಇಂದು 20 ನೇ ಶತಮಾನದಲ್ಲಿ ತ್ಯಾಗ ಮತ್ತು ನಿಸ್ವಾರ್ಥದ  ಸೇವೆಯ ಮೂಲಕ ಶಕ್ತಿಯ ಪಥವ ತೋರ ಬಂದವರು ಶ್ರೀ ಕುಮಾರ ಶಿವಯೋಗಿಗಳು.

**ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಕರುನಾಡಿನ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಸಮೃದ್ಧ ಸಮಾಜದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಅಂಧ -ಅನಾಥರ ಭಾಗ್ಯದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು ಸಮಸ್ತ  ಮಾನವಕಲ್ಯಾಣದ ಉದಯ,

ಕುಮಾರ ಶಿವಯೋಗಿಗಳ ಉದಯ ಅಂದ್ರೆ ಅದು  ಕನ್ನಡ ನಾಡಿನ ಪುಣ್ಯದ ಉದಯ ,ಭಾಗ್ಯೋದಯ.

** ಪೂಜ್ಯರಲ್ಲಿ ಅದೆಂತಃ ವಿಚಾರಧಾರೆಗಳು ತುಂಬಿಕೊಂಡಿದ್ದವು ಅಂದರೆ ಅವರ ಉದಾತ್ತ ಮತ್ತು ದೂರದೃಷ್ಟಿಯ ಚಿಂತನೆಗಳನ್ನ ನೋಡುವುದಾದರೆ,

ಪೂಜ್ಯರ ವ್ಯಕ್ತಿತ್ವ ಅದು ಅತ್ಯಂತ ವೈವಿಧ್ಯಪೂರ್ಣವಾದದ್ದು. ಅವರಲ್ಲಿನ “ಮನನೀಯವಾದ ವಿಚಾರ ಸ್ವಾತಂತ್ರ್ಯ, ಘನ ವಿರಕ್ತಿ, ಆರ್ತದ ಬಗೆಗಿನ ಅಪಾರವಾದ ಅನುಕಂಪ, ಅಜ್ಞ  ಸಮಾಜದ ಏಳಿಗೆಗೆ ಪೂಜ್ಯರು ತೋರಿದ ಕಳಕಳಿ, ಸಾಹಿತ್ಯ ಸಂಸ್ಕೃತಿಗಳ ಅಭಿಮಾನ, ಧರ್ಮ ಸಹಿಷ್ಣುತೆ, ಸಂಘ ಸಂಸ್ಥೆಗಳ ಬಗೆಗಿರುವ ನವೀನ ದೃಷ್ಟಿ, ಕೈ ಹಿಡಿದಿದ್ದನ್ನು ಕೈಗೂಡಿಸಿ ತೀರುವ ದೃಢಸಂಕಲ್ಪ, ಸಂಗೀತ ಕಲೆ ಮೊದಲಾದ ಲಲಿತ ಕಲೆಗಳ ಬಗೆಗಿನ ಅಪಾರ ಪ್ರೀತಿ, ಎಲ್ಲದಕ್ಕೂ ಮಿಗಿಲಾಗಿ ಮನುಕುಲದ ಉದ್ದಾರ, ಮಾನವ ಕಲ್ಯಾಣದ ಚಿಂತನೆ”ಇಂತಹ ಅದೆಷ್ಟೋ ಅದ್ಭುತ  ಸದ್ಗುಣಗಳ ಸಂಗಮವಾಗಿ , ಕಾರುಣ್ಯದ ಕಣ್ಣಾಗಿ,ಸಮಾಜದ ಹೊಂಬಣ್ಣಾಗಿ ಬಾಳಿ ಬೆಳಗಿದ ಸಾಕಾರದ  ಪ್ರತಿರೂಪ ಪೂಜ್ಯ ಗುರುಗಳು.

– ಇಂತಹ ಗುಣಗಳನ್ನ ಪ್ರತಿಯೊಬ್ಬರಿಗೂ ಉಣಗಲಿಸಿದವರು,ಉಡಗಲಿಸಿದವರು, ನಡೆನುಡಿ ಗಲಿಸಿದವರು,

ಕಲಿತು ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಅದ್ಭುತ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನ ನಾಡಿಗೆ ಬಿತ್ತರಿಸಿದ ಮಹಾಂತರು.

*- ಒಂದು ಕಾಲದಲ್ಲಿ ಸಮಾಜ ಹೀಗಿತ್ತು

“( ಜಟಿಲೋ ಮುಂಡಿ ಲುಂಚಿತ ಕೇಶಃ…………) ”

ಹೀಗೆ ದಿಕ್ಕೆಟ್ಟು ಹೋಗಿರುವ ಸಮಾಜಕ್ಕೆ “ಮಹಾಸಭೆ ಮತ್ತು  ಶಿವಯೋಗ ಮಂದಿರದ”ಮೂಲಕ ದಿಕ್ಸೂಚಿಯಾಗಿ ಬಂದವರು ಕುಮಾರ ಶಿವಯೋಗಿಗಳು.

**ಇದನ್ನೆಲ್ಲಾ ಕಣ್ತುಂಬಿ ಕೊಂಡ ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರು ಪೂಜ್ಯರ ಕುರಿತು ಹೀಗೆ ಹೃದಯತುಂಬಿ ಹೇಳಿದ್ದಾರೆ

” ಯಾವ ಕಾಲದಲ್ಲಿ ಅನಕ್ಷರತೆ ತುಂಬಿ ತುಳುಕುತ್ತಿತ್ತು, ಯಾವ ಕಾಲದಲ್ಲಿ ಧರ್ಮಾಂಧತೆಯಲ್ಲಿ ಸಮಾಜ ಬಿದ್ದು ಹೊರಳಾಡುತ್ತಿತ್ತು,

ಆಧುನಿಕ ಸಮಾಜದ ಗಂಧ ಗಾಳಿಯೂ ಬೀಸದ,ಯಾವ ರಾಜಕೀಯ ಸೋಂಕೂ ತಗುಲದ, ಒಬ್ಬ ವೀರ ವಿರಕ್ತ ಸನ್ಯಾಸಿಯ ಮಹಾಸಭೆ ಹಾಗೂ  ಶಿವಯೋಗ ಮಂದಿರ ಅನ್ನುವ ಪರಿಕಲ್ಪನೆ ಇಡಿ ಭಾರತ ದೇಶಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿತಿಲ್ಲ ಅದು ಅಭೂತಪೂರ್ವ, ಅದೊಂದು ಪವಾಡವೇ ಸರಿ.

ಮಹಾಸಭೆ ಮತ್ತು ಶಿವಯೋಗ ಮಂದಿರ ಇಡೀ ಭಾರತ ದೇಶದ ವೀರಶೈವ ಲಿಂಗಾಯತರನ್ನ ಒಗ್ಗೂಡಿಸಲು ಕೈಗೊಂಡಂತಹ ಶ್ರೇಷ್ಠ ಸಂಕಲ್ಪದ ನೇತೃತ್ವ ಹಾನಗಲ್ಲ ಕುಮಾರ ಶಿವಯೋಗಿಗಳದ್ದು . ಅದಕ್ಕಾಗಿಯೇ “ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರ” ಅಂದರು. ಬರಿ “ಅಖಿಲ ಕರ್ನಾಟಕ” ಅನ್ನಲಿಲ್ಲ ಇಡೀ ಭಾರತದ ವೀರಶೈವ ಲಿಂಗಾಯತರು ಒಂದಾಗಿಸೇರಿಕೊಂಡು  ಧರ್ಮ ಜಾಗೃತಿ ಮಾಡಬೇಕು ಅನ್ನುವ ದೃಷ್ಟಿಯಿಂದ.

*ಯಾಕೆ ಈ ವಿಚಾರ ಕುಮಾರ ಶಿವಯೋಗಿಗಳಿಗೆ ಬಂತು, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದ ನಮ್ಮ ಸಮಾಜದಲ್ಲಿ ನಿರಕ್ಷರತೆ ,ಹಾಗೂ ಬಡತನ ತಾಂಡವಾಡುತ್ತಿತ್ತು, ಮೂಡನಂಬಿಕೆ ಮನದಾಳದಲ್ಲಿ ಬೇರು ಬಿಟ್ಟಿತ್ತು ಅದರ ಪರಿಣಾಮವಾಗಿ ಕಂದಾಚಾರಗಳಲ್ಲಿ ಸಮಾಜ ಮುಳುಗಿತ್ತು, ವ್ಯಾಪಾರ ವ್ಯವಹಾರಗಳಲ್ಲಿ ಹಿಂದುಳಿದಿದ್ದರು,ಮೂಲ ಉದ್ಯೋಗ ವಾದ ಕೃಷಿ ಕನಿಷ್ಠ ಮಟ್ಟಕ್ಕೆ ಇಳಿದಿತ್ತು, ಹೀಗೆ ಇಡೀ ಸಮಾಜ ಆರ್ಥಿಕವಾಗಿ ಅಧೋಗತಿಗಿಳಿದಿತ್ತು.ಒಗ್ಗಟ್ಟು ಮಾಯವಾಗಿ ಸಮಾಜ ಒಡೆದ ಕನ್ನಡಿಯಂತಾಗಿತ್ತು , ಇಂಥ ಸಮಾಜವನ್ನು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಔದ್ಯೋಗಿಕವಾಗಿ ಉನ್ನತ ಸ್ಥಿತಿಗೆ ತರುವುದರ ಜೊತೆಗೆ, ಧರ್ಮದ ಸಾಹಿತ್ಯ, ಸಂಸ್ಕೃತಿ,ತತ್ವಗಳ ಆಳವಾದ ಅಭ್ಯಾಸ ಮಾಡಿ ನಶಿಸುತ್ತಿದ್ದ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಏಳಿಗೆ ಮಾಡಬಲ್ಲ ವಟು – ಸಾಧಕರಿಗೆ ಶಿಕ್ಷಣ ಮತ್ತು ತರಬೇತಿ ಕೊಡಿಸಿ ತನ್ಮೂಲಕ ಸಮಾಜದ ಅಜ್ಞಾನವನ್ನು ಅಳಿಸಿಹಾಕಿ ಅವರನ್ನು ಸಮಾಜ ಸೇವೆಗಾಗಿ ಸಿದ್ಧಗೊಳಿಸುವುದೇ ಇದರ ಸ್ಥಾಪನೆಯ ಮೂಲ ಉದ್ದೇಶವಾಗಿತ್ತು ಹಾಗೂ ಹಿನ್ನೆಲೆಯಾಗಿತ್ತು.

* ಇಲ್ಲಿ ಪೂಜ್ಯರು ಎಂಥ ಸಂಪತ್ತನ್ನ ಸಂಪಾದಿಸಿದರು ಕರಗಿಹೋಗುವ, ಸೊರಗಿ ಹೋಗುವ,ಕಳೆದುಹೋಗುವ ಭೌತಿಕ ಸಂಪತ್ತನ್ನ ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದ, ಕಳೆಗುಂದದ, ಮತ್ತೊಂದು ಬೇಕೆನಿಸದ  ಅಧ್ಯಾತ್ಮಿಕ ಜ್ಞಾನ ಸಂಪತ್ತು, ಅರಿವು-ಆಚಾರ, ಯೋಗ – ಶಿವಯೋಗ, ವ್ಯಕ್ತಿ ಹಿತಕ್ಕಿಂತ – ಸಮಷ್ಟಿ ಹಿತ ಮುಖ್ಯ, ಸ್ಥಾನಮಾನಕ್ಕಿಂತ-ಸಮಾಜ ಸೇವೆ ಮುಖ್ಯ, ಜನನಾಯಕನಿಗಿಂತ- ಜನಸೇವಕ ಮುಖ್ಯ, ಇಂತಹ ಸಂಪತ್ತನ್ನಗಳಿಸಿ ಈ ನಾಡಿಗೆ-ನುಡಿಗೆ-ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು.

* ಮಂದಿರವನ್ನು ಸ್ಥಾಪಿಸಿ ಇಲ್ಲಿಗೆ ನನ್ನ ಕಾರ್ಯ ಮುಗಿಯಿತು ಅಂತ ಕೈಕಟ್ಟಿ ಕುಳಿತುಕೊಳ್ಳಲಿಲ್ಲ ಅಲ್ಲಿ ಬರುವ ಸಾಧಕರಿಗೆ ಅನ್ನ ಆಶ್ರಯದ ವ್ಯವಸ್ಥೆ,ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ, ಗೋಶಾಲೆ,ವಿಭೂತಿ ನಿರ್ಮಾಣ,ಪ್ರತಿಯೊಬ್ಬರಿಗೂ ಧರ್ಮದ ತಿಳುವಳಿಕೆಗಾಗಿ ಎಲ್ಲಾ ಗ್ರಂಥಗಳನ್ನೊಳಗೊಂಡ ಗ್ರಂಥಾಲಯ ಹೀಗೆ ಎಲ್ಲ ವ್ಯವಸ್ಥೆಯ ಕುರಿತು 19 ದ್ದೆಯೋದ್ದೇಶಗಳನ್ನ ರಚನೆ ಮಾಡಿದರು.

ಅವುಗಳನ್ನು ಸಂಕ್ಷಿಪ್ತ ರೀತಿಯಲ್ಲಿ,ಮೇಲ್ನೋಟದಲ್ಲಿ ವಿಚಾರಿಸುದಾದರೆ

* ಮೊಟ್ಟ ಮೊದಲು ವಟು -ಸಾಧಕರ ವ್ಯವಸ್ತೆ ಹಾಗೂ ವೇಷ ಭೂಷಣ, ಜೊತೆಗೆ ಅವರಿಗೆ ಕಲಿಸುವ ಅಧ್ಯಾಪಕರು ಹೇಗಿರಬೇಕು ಸದ್ಗುಣ ಸುಶೀಲರಾಗಿರಬೇಕು, ಗುರು-ಲಿಂಗ- ಜಂಗಮ  ಪ್ರೇಮಿಗಳ ಆಗಿರಬೇಕು, ಆಚಾರ-ವಿಚಾರವಂತರಾಗಿರಬೇಕು ಅವರು ಸಾಧಕರಿಗೆ ಎಲ್ಲ ತರಹದ ವಿದ್ಯೆಗಳನ್ನ ಹೇಳಿಕೊಟ್ಟು ಸರ್ವ ವಿದ್ಯಾ ಪಾರಂಗತರನ್ನಾಗಿ ಮಾಡಿಕೊಡಬೇಕು.

*ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಗ್ರಂಥಗಳನ್ನ ಒಳಗೊಂಡ ಒಳ್ಳೆಯ ಸುಸಜ್ಜಿತ ಗ್ರಂಥಾಲಯ ನಿರ್ಮಾಣ.

* ಮತ ಸುಧಾರಣೆಗೆ ಸದ್ವಿವಿಷಯಗಳನ್ನ ಒಳಗೊಂಡ ಕೀರ್ತನೆ, ಸಾಹಿತ್ಯ,ಪದ್ಯಗಳನ್ನ ರಚಿಸಬೇಕು ಅವುಗಳನ್ನ ಕೇಳುಗರಿಗೆ ಪ್ರಿಯವಾಗುವ ರೀತಿಯಲ್ಲಿ ಹೇಳುಗರನ್ನ ಸೃಷ್ಟಿಸಬೇಕು ಅರ್ಥಾತ್ ಪ್ರವಚನಕಾರರನ್ನ.

* ಮತಶಾಸ್ತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ನುರಿತವರನ್ನ ಅಲ್ಲಲ್ಲಿ ಕಳುಹಿಸಿ ಅವರಿಂದ ಧರ್ಮೋಪದೇಶ ಮಾಡಿಸಿ ಜನ ಜಾಗೃತಿ ಮಾಡಿಸಬೇಕು ಜೊತೆಗೆ ಧರ್ಮದ ತತ್ವತ್ರಯಗಳನ್ನ ಜನಮಾನಸದಲ್ಲಿ ಬಿತ್ತಬೇಕು.

* ಮನೆಯಲ್ಲೇ ಕುಳಿತವರಿಗೆ ಧರ್ಮದ ಕುರಿತು ತಿಳಿದುಕೊಳ್ಳಲು ಧರ್ಮ ಪ್ರಸಾರ,ಸಾಹಿತ್ಯ ಪ್ರಸಾರವಾಗಬೇಕೆಂದು 1911 ರಲ್ಲಿ “ಧರ್ಮ ತರಂಗಿಣಿ” ಪತ್ರಿಕೆ ಹೊರಡಿಸಿದರು ಬಸವಾದಿಪ್ರಮಥರ ವಿಚಾರಧಾರೆಗಳು ಮನೆಮನಗಳಿಗೆ ತಲುಪಬೇಕೆಂದು ವಚನ ಸಾಹಿತ್ಯಕ್ಕೆ ಹೊಸ ರೂಪತರಲು ಫ.ಗು.ಹಳಕಟ್ಟಿ ಅವರಿಗೆ ಪ್ರೇರಣೆ ನೀಡಿದರು, ಹುಳುಹತ್ತಿಹಾಳಿಡುವ ತಾಳೆಗರಿಗಳನ್ನು ಸುತ್ತಿ ಸಂಗ್ರಹಿಸುವುದರ ಜೊತೆಗೆ ವಚನಗಳು ಜನರ ಕೈಗೆ ತಲುಪುವಂತೆ ವ್ಯವಸ್ಥೆ ಮಾಡುವುದು. ಹಳಕಟ್ಟಿಯವರು ಕೂಡ “ಶಿವಾನುಭವ” ಪತ್ರಿಕೆಯನ್ನು ಹೊರಡಿಸಿದರು.ನಂತರ ಪೂಜ್ಯರ ಇಷ್ಟೆಲ್ಲ ಕಾರ್ಯಕ್ಕೆ ಪ್ರಭಾವಿತರಾದ ಚೆನ್ನಮಲ್ಲಿಕಾರ್ಜುನಪ್ಪ ನವರು ತಮ್ಮ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂದು ಹಾವೇರಿಯ ಶ್ರೀ ಶಿವಲಿಂಗ ವಿಜಯ ಮುದ್ರಣಾಲಯದಿಂದ “ಸದ್ಧರ್ಮದೀಪಿಕೆ”ಪತ್ರಿಕೆ ಹೊರಡಿಸಿದರು.

ಆನಂತರ 1930ರಲ್ಲಿ ಶಿವಯೋಗಿ ಸಾಧಕರು ಸೇರಿಕೊಂಡು “ಸುಕುಮಾರ” ಪತ್ರಿಕೆ ಹೊರಡಿಸಿದರು. ನಂತರ ಸ್ಥಗಿತಗೊಂಡ ಪತ್ರಿಕೆಯವಿಷಯ 2021 ರಲ್ಲಿ ದೆಹಲಿಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿ  ಸೇವಾ ಸಮಿತಿಯಿಂದ “ಶ್ರೀ ಕುಮಾರ ತರಂಗಿಣಿ ಪತ್ರಿಕೆ” ಅಂತರ್ಜಾಲದ ಮೂಲಕ  ಪ್ರಾರಂಭಗೊಂಡಿತು,2023 ರಲ್ಲಿ ಮತ್ತೆ ಶ್ರೀ ಶಿವಯೋಗ ಮಂದಿರದಿಂದ “ಸುಕುಮಾರ ಪತ್ರಿಕೆ” ಮುದ್ರಣ ರೂಪದಲ್ಲಿ ಪ್ರಕಾಶಗೊಳ್ಳುತ್ತಿದೆ.

ಇದೆಲ್ಲ ಕುಮಾರ ಶಿವಯೋಗಿಗಳು ವಿಚಾರಿಸಿ  ಸಮಾಜವನ್ನು ಈ ರೀತಿ ಕಟ್ಟಬೇಕು ಅನ್ನುವ ದೂರ ದೃಷ್ಟಿ.

* ಜೊತೆಗೆ ಅಂದಿನ ಬ್ರಿಟಿಷಸರ್ಕಾರದ ಜೊತೆ ಸಂಪರ್ಕ ಸಾಧಿಸಲು ಹಾಗೂ ಪತ್ರವ್ಯವಹಾರ ಮಾಡಲಿಕ್ಕೆ ಸಾಧಕರನ್ನ ಭಾಷಾ ಪರಿಣಿತರನ್ನಾಗಿಸಲು  ಗಡಹಿಂಗ್ಲಜದ ವೀರಬಸಪ್ಪ ಶ್ರೇಷ್ಟಿಯವರಿಂದ ಸಾಧಕರಿಗೆ ಆಗ್ಲಭಾಷಾ ಜ್ಞಾನವನ್ನ ಕೊಡಿಸುತ್ತಾರೆ.

* ಇಲ್ಲಿ ಎಂತವರಿಗೆ ಅವಕಾಶ ಮಾಡಿಕೊಟ್ಟರು ಅಂದ್ರೆ ಸಾಧಕರಿಗೆ ಅಷ್ಟೇ ಅಲ್ಲ,ಸಂಸಾರದಲ್ಲಿ ಇದ್ದವರಿಗೆ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನ ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟು, ಅವರಿಗೆ ಪರೀಕ್ಷೆ ಇಟ್ಟು ಅದರಲ್ಲಿ ಉತ್ತೀರ್ಣರಾದವರಿಂದ ಹಳ್ಳಿಹಳ್ಳಿಗೆ ಕಳುಹಿಸಿ ಲಿಂಗಧಾರಣೆ-ರುದ್ರಾಕ್ಷಿ ಧಾರಣೆ- ವಿಭೂತಿ ಧಾರಣೆಯ  ಪರಿಕಲ್ಪನೆ ಹೀಗೆ ಧರ್ಮ ಬೋಧನೆ ಕಾರ್ಯ ಮಾಡಿಸುತ್ತಿದ್ದರು (ಸಾಕ್ಷರತಾ ಅಭಿಯಾನ).

* ಜೊತೆಗೆ ಪೂಜ್ಯರು ಸಕಲ ಪ್ರಾಣಿಗಳಿಗೂ ಲೇಸ ಬಯಸುವಂಥವರು, ಅದಕ್ಕಾಗಿ ಶಿವಯೋಗ ಮಂದಿರದಲ್ಲಿ ಗೋಶಾಲೆ ನಿರ್ಮಾಣ ಮಾಡಿದರು (ಎಷ್ಟು ಪ್ರೀತಿಯೆಂದರೆ ಗೋವುಗಳ ಮೇಲೆ ಬರಗಾಲದಲ್ಲಿ ಕರುಗಳಿಗೆ ಹಾಲು ಉಣಲಿಕ್ಕೆ ಬಿಡಿ ಅಂದ ಘಟನೆ)”ಮಳೆಯಿಲ್ಲದೊಂದು ವರ್ಷಮ್ ಗುಡ್ಡದೊಳು ಹುಲ್ಲು ಬೆಳೆಯದುದರಿಂದಾವುಗಳ ಹಾಲು ತಮ್ಮ ಕರುಗಳಿಗಾಗದೀರ್ಪುದಂ ತಿಳಿದೀ ಮಹಾತ್ಮನಾವತ್ಸಗಳ ಬಾಯಬಡಿದು ಎಳಸಿ ನಾವ್ಕರೆದುಂಬುದೇ ಮಹಾ ಪಾಪ ವೆಂದಳುಕಿ ನಾವೆಲ್ಲರುo ಪಾಲುಣ್ಣದೆಬಿಟ್ಟು ಕರುಗಳನೆ ಕರುಣದಿಂ ಪೋಷಿಪಂತೆಸಗಿದಂ ದನಗಾವ ಜನಕೆ.( ಪುರಾಣ 13 ನೇ ಸಂಧಿ) ” ಹೀಗೆ  ಗೋವುಗಳ ರಕ್ಷಣೆ ಗೋವುಗಳಿಂದ ಬಂದಿರುವ ಗೋಮಯದಿಂದ ಶಾಸ್ತ್ರೋಕ್ತವಾಗಿ ವಿಭೂತಿ ನಿರ್ಮಾಣ ಮಾಡಿಸಿದರು (ನೊಸಲಿಗೆ ವಿಭೂತಿಯೇ ಶೃಂಗಾರ ಶರಣರ ವಾಣಿಯನ್ನ ಚಾಲನೆಗೆ ತಂದವರು), ಪಂಚಸೂತ್ರ ಲಿಂಗಗಳನ್ನ ತಾಯಾರಿಸುವುದು, ಶಿವದಾರವನ್ನ ತಯಾರಿಸುವುದು,ಹೀಗೆ ಎಲ್ಲವುಗಳ ತಯಾರಿಕೆ ಕೇಂದ್ರ ಮಂದಿರವಾಗಬೇಕೆಂದರು.

*ಇದೆಲ್ಲದಕ್ಕೂ ಮಿಗಿಲಾಗಿ ಪೂಜ್ಯರು  ಮಾಡಿದ ಮಹತ್ ಸಂಕಲ್ಪ ಅಂದ್ರೆ ಪ್ರತಿಯೊಂದು ಕ್ಷೇತ್ರದಲ್ಲಿ ಶಿವಯೋಗಿ ಸಾಧಕರಿರಬೇಕೆಂದು ಒಬ್ಬೊಬ್ಬರನ್ನ ಬೆಳೆಸಿದರು.

“ಸಾಹಿತ್ಯದಲ್ಲಿ ಶಬ್ದಬ್ರಹ್ಮ ಡಾ. ಜ . ಚ.ನಿ.ಯವರನ್ನ,ಆಯುರ್ವೇದದಲ್ಲಿ ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮಿಗಳನ್ನ,ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿ  ಕನ್ನಡ ಕೋಟೆ ಕಟ್ಟಲು ಬಾಲ್ಕಿಯ ಚೆನ್ನಬಸವ ಪಟ್ಟಾಧ್ಯಕ್ಷರನ್ನ, ಶಿವಯೋಗದಲ್ಲಿ ಸಕ್ಕರಾಯ ಪಟ್ಟಣದ ಸದಾಶಿವ ಶಿವಾಚಾರ್ಯರನ್ನ, ಕೃಷಿ ಕಾಯಕ ಕ್ಷೇತ್ರದಲ್ಲಿ ಕಪನಳ್ಳಿಯ ರುದ್ರಮುನಿ ಸ್ವಾಮಿಗಳನ್ನ, ಪ್ರವಚನದಲ್ಲಿ ನವಲಗುಂದದ ಬಸವಲಿಂಗ ಸ್ವಾಮಿಗಳನ್ನ, ಯೋಗದಲ್ಲಿ ಯೋಗಿರಾಜ ಕಂಚುಕಲ್ಲಬಿದರಿ ಪ್ರಭು ಕುಮಾರ ಪಟ್ಟಾಧ್ಯಕ್ಷರನ್ನ, ಸಂಗೀತದಲ್ಲಿ ಪಂಚಾಕ್ಷರಿ – ಪುಟ್ಟರಾಜ ಗವಾಯಿಗಳನ್ನ, ಹೀಗೆ ಪ್ರತಿಯೊಂದು ರಂಗದಲ್ಲಿ ಶಿವಯೋಗ ಮಂದಿರ ಇರಬೇಕೆಂದು ಕನಸು ಕಂಡವರು ಸಾಕಾರ ಮಾಡಿದವರು .

* ಪ್ರತಿವರ್ಷ ಶಿವರಾತ್ರಿಯಲ್ಲಿ ಕೀರ್ತನೆ,ಪುರಾಣ, ಸಂಗೀತ ಹೀಗೆ ಎಲ್ಲ ರೀತಿಯ ಧರ್ಮ ಬೋಧನೆ ಕಾರ್ಯ ಆಗಬೇಕು.

*ಅಲ್ಲಲ್ಲಿ ಶಿವ ಯೋಗ ಮಂದಿರ ಶಾಖೆಗಳು ನೆಲೆಸಬೇಕು ಅಲ್ಲಿಯೂ ಸರ್ವರಿಗೂ ಶಿವಾನುಭವ ದೊರೆಯಬೇಕು ಇಂತಹ ದೂರದೃಷ್ಟಿ ಹಾಗೂ ಮಹದ್ದೋದ್ದೇಶ ಇಟ್ಟುಕೊಂಡು ಸ್ಥಾಪಿಸಿದ್ದಕ್ಕಾಗಿ ಇಂದಿಗೆ  115 ವಸಂತಗಳನ್ನ ನಿರ್ವಿಘ್ನವಾಗಿ ದಾಟಿ ಬಂದಿದೆ.ಕುಮಾರ ಶಿವಯೋಗಿಗಳ ಇಂತಹ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ, ಕ್ರಿಯಾಶಕ್ತಿಯ ಸಂಗಮವೆ ಶ್ರೀ ಶಿವಯೋಗ ಮಂದಿರ.ಶರಣು ಶರಣಾರ್ಥಿಗಳು.????

Related Posts