ಶಿವಯೋಗಮಂದಿರದ ಸಾಧಕರಾಗಿದ್ದಾಗಿನ ಅವಧಿಯಲ್ಲಿ ಶ್ರೀ ಕುಮಾರ ಸ್ವಾಮಿಗಳು ಹೇಳಿದವಿಚಾರಗಳನ್ನು ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು ಬರೆದುಕೊಂಡ ಟಿಪ್ಪಣಿಗಳು.

ವೀರಶೈವ ತತ್ತ್ವ ವಿಚಾರ

೧. ಷಣ್ಮತಗಳಲ್ಲಿ ವೀರಶೈವ ಮತವು, ಶೈವದೊಳಗಿನ ಒಂದು ಭೇದವು. ಸಪ್ತವಿಧ ಶೈವಗಳಲ್ಲಿ ಶಿಷ್ಟತಮವಾದ ಅಪ್ರಾಕೃತವೆನಿಸಿದ ವೀರಶೈವ ಮತವು ವಿಶೇಷವು. ಈ ಮತಕ್ಕೆ ಲಿಂಗಾಂಗ ಸಾಮರಸ್ಯವೆ ಅಸಾಧಾರಣ ಲಕ್ಷಣವು.

 ೨. ವೀರಶೈವರಿಗೆಲ್ಲ ಅಪ್ರಾಕೃತತ್ವವು ಜನ್ಮದಿಂದಲೂ ಧರ್ಮದಿಂದಲೂ ಉಂಟು. ಅಪ್ರಾಕೃತತ್ವವು ಜನ್ಮದಿಂದ ಅವ್ಯಕ್ತ ಸ್ಥಿತಿಯಲ್ಲಿದ್ದು ಧರ್ಮದಿಂದ ವ್ಯಕ್ತಸ್ಥಿತಿಯನ್ನು ಹೊಂದುವುದು. ಇದರಿಂದ ಲಿಂಗಧಾರಣಾದಿಗಳು ವ್ಯರ್ಥವೆನಿಸವು. ಆಗಂತುಕರಿಗೆ ಮಾತ್ರ ಧರ್ಮದಿಂದ ಉಂಟು.

 ಈ ಧರ್ಮವು ಅತಿವರ್ಣಾಶ್ರಮಾನುಸಾರವಾದುದು. ಅಂದರೆ ಬ್ರಹ್ಮ ನಿರ್ಮಿತಗಳಾದ ಪ್ರಾಕೃತ ವರ್ಣಾಶ್ರಮ ಧರ್ಮಗಳನ್ನು ಮೀರಿದುದು. ಶಿವನಿರ್ಮಿತ ವರ್ಣಾಶ್ರಮ ಧರ್ಮವುಳ್ಳುದು. ಆದ್ದರಿಂದ ಅಪ್ರಾಕೃತ ಬ್ರಾಹ್ಮಣ್ಯಕ್ಕೂ ತದ್ಗತ ಗುರುತ್ವಕ್ಕೂ ಹಾನಿಯಲ್ಲ.

 ೩. ‘ಶಿವಲಿಂಗವನ್ನು ಧರಿಸಿದೊಡನೆ ಶಿವನೇ ಆಗುವನು’ ಎಂಬ ವಾಕ್ಯವು ಶಿವತ್ವದ ಅಂಕುರಾರೋಪಣ ಸೂಚಕವಾಗಿರುವುದು. ಕೇವಲ ತನ್ನೊಳಗೆ ಅವ್ಯಕ್ತವಾದ ಕಿಂಚಿತ್ ‘ ಶಿವತ್ವವನ್ನೇ ಲಿಂಗಧಾರಣಾದಿ ಸಂಸ್ಕಾರವು, ಅಂಕುರ ರೂಪದಿಂದ ವ್ಯಕ್ತಗೊಳಿಸುವ ಕಾರಣ ಇದು ಅರ್ಥವಾದವಲ್ಲ.  ʼʼಶಿವ ಏವ ನ ಸಂಶಯ?” ಎಂಬ ವಾಕ್ಯವು ಸಾರ್ಥಕವೆನಿಸುವುದು. ಶ್ರೀಗುರು ಸಂಸ್ಕಾರದಿಂದ ಬಂದ ಅಂಕುರರೂಪ ಶಿವತ್ವವನ್ನೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಾಂತರ್ಗತ ಲಿಂಗಾಂಗ ಸಾಮರಸ್ಯ ಮುಂತಾದವುಗಳು ಆಚಾರ ವಿಚಾರಗಳಿಂದ ಕೇವಲ ವ್ಯಕ್ತಸ್ಥಿತಿಗೆ ತರುವುದರಿಂದ ಶಿವತ್ವದ ವ್ಯಾಪಕಸ್ಥಿತಿಯು ಸ್ಪಷ್ಟ ಫಲವೆನಿಸುವುದು. ಅಂಕುರರೂಪ ಶಿವತ್ವವನ್ನು ವ್ಯಕ್ತಪಡಿಸುವುದರಿಂದ ʼʼಶಿವ ಏವ ನ ಸಂಶಯಃ” ಎಂಬ ವಾಕ್ಯ ಸಮನ್ವಯಕ್ಕೆ ಭಂಗಬಾರದು.

 ೪. ಲಿಂಗಧಾರಿಗಳಲ್ಲಿ ಏಳು ಭೇದಗಳಿರುವವು. ಅವುಗಳಲ್ಲಿ ಏಳನೇ ಭೇದವನ್ನು ಹೊಂದುತ್ತಾನೆಂದು ಕೆಲವು ಗ್ರಂಥಗಳಲ್ಲಿ ಉಕ್ತವಾಗಿರುವುದು.

 ಅಷ್ಟಾವರಣ ವಿಶಿಷ್ಟ ಪಂಚಾಚಾರವೆ ವೀರಶೈವ ಧರ್ಮವಾದ್ದರಿಂದ ಈ ಧರ್ಮವೇ ಇತರ ಲಿಂಗಧಾರಿಗಳ ಭೇದವನ್ನು ಸೂಚಿಸುವುದು. ಇದರಿಂದಾಗಿ ಇದು ವ್ಯಾವರ್ತಕ ಧರ್ಮವೆನಿಸುವುದು (ಇಲ್ಲಿ ವಿಚಾರವಿದೆ) ಯೋಗಜ್ಞಾನ ಸಮುಚ್ಚಯವೆ ವ್ಯಾವರ್ತಕ ಧರ್ಮವು

೫. ಲಿಂಗಧಾರಿಗಳಾದ ಅಪ್ರಾಕೃತರೆಲ್ಲರಿಗೂ ಪ್ರಾಕೃತ ವರ್ಣಾಶ್ರಮಗಳಿರುವುದಿಲ್ಲ. ಅಷ್ಟಾವರಣ, ಪಂಚಾಚಾರಾದಿ ಧರ್ಮವೃತ್ತಿಯಿಂದ ಜೀವಿಸುತ್ತಾರೆ. ಅದು ಹೇಗೆಂದರೆ : ಕೃಷಿ, ವಾಣಿಜ್ಯಾದಿ ವೃತ್ತಿಗಳನ್ನು ವೀರಶೈವರಲ್ಲಿ ಕಂಡರೂ ಗುರು, ಲಿಂಗ,  ಜಂಗಮ ಸೇವಾರ್ಥವಾಗಿಯೇ ಆ ವೃತ್ತಿಗಳನ್ನು ಕೈಗೊಂಡಿರುವುದರಿಂದ ಅವು ಪ್ರಾಕೃತವೆನಿಸದೆ ಅಪ್ರಾಕೃತ ವೃತ್ತಿಯಲ್ಲಿ ಗಣನೆಯಾಗಿರುವವು.

 ೬. ವೀರಶೈವ ನಿಯತಿಯಂತೆ ಲಿಂಗಧಾರಿಗಳಾದ ಅಪ್ರಾಕೃತರಲ್ಲಿಯೂ ಅಷ್ಟಾವರಣವೇ ಅಂಗ; ಪಂಚಾಚಾರವೆ ಪ್ರಾಣವಾದ ಭಕ್ತತ್ವವು ಉಂಟು.

೭. ಗುರು, ಲಿಂಗ, ಜಂಗಮ ಈ ತ್ರಿವರ್ಗಕ್ಕೂ ಅಷ್ಟಾವರಣ ವಿಶಿಷ್ಟ ಭಕ್ತತ್ವವುಂಟು.

೮. ಗುರು, ಲಿಂಗ, ಜಂಗಮವು-ಪರಶಿವ ಅಥವಾ ಪರಬ್ರಹ್ಮ ತತ್ತ್ವದ ಪರಿಣಾಮವು. ಲಿಂಗ, ಗುರು, ಜಂಗಮತ್ರಯದಲ್ಲಿ ಉಪಾಸಕೋಪಾಸ್ಯಭೇದವು ಕ್ರಮದಿಂದ ಸಂದರ್ಭಾನುಸಾರ ತೋರುವುದು. ಹೇಗಂದರೆ ಲಿಂಗ, ಗುರು, ಜಂಗಮತ್ರಯಗಳಲ್ಲಿ ಒಂದೊಂದು ಮೂರು ಮೂರು ಭೇದವಾಗಿ ನವವಿಧವಾದುದು ಶಾಸ್ತ್ರಾನುಭವ ಸಮ್ಮತವಾಗಿರುವುದರಿಂದ ಲಿಂಗದೊಳಗಿನ ಲಿಂಗಕ್ಕೆ ಗುರುವಿನಲ್ಲಿ ತೋರಿದ ಲಿಂಗವು ಉಪಾಸ್ಯವಾದುದು. ಅದಕ್ಕಿಂತಲೂ ಜಂಗಮದೊಳಗಿನ ಲಿಂಗವು ಶ್ರೇಷ್ಠ (ಉಪಾಸ್ಯ)ವಾದುದು. ಲಿಂಗದೊಳಗಿನ ಗುರುತ್ವಕ್ಕಿಂತಲೂ ಗುರುವಿನಲ್ಲಿರುವ ಗುರುತ್ವವು ಅಧಿಕ. ಅದಕ್ಕಿಂತಲೂ ಜಂಗಮದೊಳಗಿನ ಗುರುತ್ವವು ಶ್ರೇಷ್ಠ.  ಲಿಂಗದೊಳಗಿನ ಜಂಗಮತ್ವಕ್ಕಿಂತಲೂ ಗುರುವಿನಲ್ಲಿರುವ ಜಂಗಮತ್ವವು ಶ್ರೇಷ್ಠವು.

ಅದಕ್ಕಿಂತ ಜಂಗಮದೊಳಗಿನ ಜಂಗಮತ್ವವು ಅಧಿಕವು. ಈ ಕ್ರಮವನ್ನನುಸರಿಸಿ ಉಪಾಸಕೋಪಾಸ್ಯ ಭಾವವನ್ನು ತಿಳಿಯತಕ್ಕುದು. ಆದರೂ ಒಂದೊಂದು ವಸ್ತುವಿನಲ್ಲಿರತಕ್ಕ ಲಿಂಗ, ಗುರು, ಜಂಗಮ ಇವು ಸಂದರ್ಭಾನುಸಾರವಾಗಿ ಪೂಜಕ

ಪೂಜ್ಯತ್ವವನ್ನು ಹೊಂದುವವು. ಇವುಗಳಿಗೆ ಕ್ರಮವಾಗಿ ಉಪಾಸಕೋಪಾಸ್ಯಭಾವವು ಇರುವುದು. ಸಂದರ್ಭಾನುಸಾರವಾಗಿ ಭಕ್ತವರ್ಗದ ಭಕ್ತಸ್ವರೂಪವಾದ ಲಿಂಗದಲ್ಲಿರುವ ಜಂಗಮಕ್ಕಿಂತಲೂ ಗುರುವಿನಲ್ಲಿರುವ ಲಿಂಗವು ಅಧಿಕವು.  ಗುರುವಿನಲ್ಲಿರುವ ಗುರು ಜಂಗಮಕ್ಕಿಂತಲೂ ಜಂಗಮದಲ್ಲಿರುವ ಜಂಗಮವು ಅಧಿಕವಾದುದು, ಮತ್ತು ಭಕ್ತವರ್ಗದ ಭಕ್ತನಾದರೂ ಯೋಗ್ಯವೃತ್ತಿಯಿಂದ ಗುರು, ಲಿಂಗ, ಜಂಗಮ ಸ್ವರೂಪನಾಗುವನು. ಗುರು, ಜಂಗಮರು ಯೋಗ ರೂಢಿಯಿಂದ ಗುರು ಲಿಂಗ ಜಂಗಮ ಸ್ವರೂಪರಾಗುವದು. ತತ್ತ್ವರೂಪವನೈದದೆ ತತ್ತ್ವದ್ದೇವತಾರಾಧನೆ ಮಾಡಲಿಕ್ಕೆ ಬರುವುದಿಲ್ಲ. ಆದ್ದರಿಂದ ಪದಾರ್ಥ ತನುವೆ ಕಾಲಾನುಗುಣವಾಗಿ ಪ್ರಸಾದತನು ಆಗುವಂತೆ ಭಕ್ತನಾದರೂ ಯೋಗ ವೃತ್ತಿಯಿಂದ ಗುರು ಲಿಂಗ ಜಂಗಮ ಸ್ವರೂಪವನ್ನು ಹೊಂದಿ  ಸಿದ್ಧನೆನಿಸುವನು. ಇದರಂತೆ ಗುರುವರ್ಗದಲ್ಲಿ ಜನಿಸಿರುವವರು, ಗುರುತ್ವ ಸಂಸ್ಕಾರದಿಂದ ಯೋಗರೂಢಿಯಿಂದ ಗುರುಲಿಂಗ ರೂಪವನ್ನು ಹೊಂದುವರು. ಮರಳಿ ಅವರಿಗೆ ಸಂಸ್ಕಾರ ವಿಶೇಷವಾದರೆ ರೂಢಿಯಿಂದಲೂ ಗುರು ಲಿಂಗ ಜಂಗಮ ಸ್ವರೂಪರಾಗುವರು. ಇವರಾದರೂ ಮೇಲ್ಕಂಡಂತೆ ಸಾಧಕ ಸ್ಥಿತಿಯಲ್ಲಿದ್ದು ಉನ್ನತಾವಸ್ಥೆಯನ್ನು ಹೊಂದುತ್ತ ಮುಂದೆ ಸಿದ್ಧ ಸ್ಥಿತಿಯನ್ನು ಹೊಂದುವರು. ಈ ಪ್ರಕಾರವಾಗಿ ಸಂಸ್ಕಾರವಾಗಿ ಅನುಷ್ಠಾನ ಉಪಾಸಕೋಪಾಸ್ಯ ವ್ಯವಸ್ಥೆಯು.

೯. ಗುರು ಜಂಗಮರಿಗೆ ಮತ್ತೊಂದನ್ನಾಶ್ರಯಿಸಿ ಪೂಜ್ಯತ್ವವಿಲ್ಲ. ಅವರು ಸ್ವಯಂ ಪೂಜ್ಯರು. ನಿತ್ಯ ಮುಕ್ತರು.  ಜಗದ್ಧಿತಾರ್ಥವಾಗಿ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಉಪಾಸಿಸುವುದುಂಟು. ವ್ಯಾಪಕವಾದ ಪರಲಿಂಗಕ್ಕೆ ಗುರುಲಿಂಗ ಜಂಗಮವೆಂತಲೂ ಪರ್ಯಾಯ ನಾಮಗಳುಂಟು. ಇದನ್ನೇ ಭೇದೋಪಭೇದಗಳಿಂದ ಸಮಯೋಚಿತವಾಗಿ ಸ್ವಸ್ವರೂಪವಾಗಿ ವ್ಯಾಪ್ಯರಾದ ಗುರು ಲಿಂಗ ಜಂಗಮರು ಪೂಜಿಸುವರು.

 ಗುರು ಜಂಗಮರು ಪೂಜ್ಯರಾಗಬೇಕಾದರೆ ವ್ಯಾಪಕವಾದ ತಮ್ಮ ನಿಜ ಸ್ವರೂಪವಾದ ಮೂಲ ಲಿಂಗವನ್ನು ತಂತಮ್ಮನಿರಾಭಾರಿ-ಸಾಭಾರಿ ಗುರುಗಳ ಪ್ರಯತ್ನ ವಿಶೇಷದಿಂದ ಸಂಸ್ಕರಿಸಿ ಲಿಂಗಾಕಾರಗೊಳಿಸಿ, ಅಂಗತ್ರಯವನ್ನು ಸಂಬಂಧಗೊಳಿಸಿ ಆಜ್ಞಾಪಿಸಿದಂತೆ ಆಚರಿಸುವುದರಿಂದ ಪೂಜ್ಯರೆನಿಸುವರು. ವಿಶುದ್ಧ ಸತ್ವಸ್ವರೂಪೋ ಪಾಧಿಯಂದೊಪ್ಪುವ ಗುರುಮೂರ್ತಿಯು ಮಲಿನ ಸತ್ವಸ್ವರೂಪ ವಿದ್ಯೋಪಹಿತ ಪುರುಷಾಕಾರ ಶರೀರದಲ್ಲಿದ್ದು ಜೀವಕಲೆಯನ್ನು ಸಂಸ್ಕರಿಸಿ ತಮಃ ಪ್ರಧಾನ ಪ್ರಕೃತಿ ಸ್ವರೂಪ ಶಿಲಾಮಯವಾದ ಲಿಂಗಾಕಾರದಲ್ಲಿ ಸ್ಥಾಪಿಸೋಣದರಿಂದ ಲಿಂಗವು ಪೂಜ್ಯವಾಗಿರುವುದು. ಅಂದರೆ ಗುರು ಜಂಗಮರಿಂದಲೆ ಲಿಂಗಕ್ಕೆ ಪೂಜ್ಯತ್ವವು ಬಂದಿರುವುದೆಂದು ಸ್ಪಷ್ಟವೆನಿಸುವುದು.

 ಚತುರ್ವಿಧ ವಾಗ್ವ್ಯವಹಾರ ಪರಬ್ರಹ್ಮಜ್ಞಾನ ಅಧಿಕಾರವುಳ್ಳ ಜೀವ ಚೈತನ್ಯ ವಿಶಿಷ್ಟ ಮನುಷ್ಯರಲ್ಲಿ ಬದ್ಧತ್ವ ಮುಕ್ತತ್ವವಿದ್ದಂತೆ-ಪಶುಪಕ್ಷ್ಯಾದಿ ಮೃತ್ಪಾಷಾಣಾದಿಗಳಲ್ಲಿ ಇಂಥ ಬಂಧತ್ವ ಮುಕ್ತತ್ವವಿರುವುದಿಲ್ಲ. ತಮಃ ಪ್ರಧಾನ ಕೃತಿಯಿಂದ ತೋರಿದ ಜಡಶಿಲೆಯಲ್ಲಿ ಪುರುಷನ ಚೈತನ್ಯಗತವಾಗಿರುವ ಚಿತ್ಕಲೆಯನ್ನು ಪ್ರತಿಷ್ಠಿಸಲು ಆಯಾ ವ್ಯಕ್ತಿಗೆ ಅದು ಪೂಜ್ಯವಾದ ಲಿಂಗವಿರುವುದು. ಚಿತ್ಕಲಾ ಪ್ರತಿಷ್ಠಿತವಾಗುವುದಕ್ಕಿಂತಲೂ ಪೂರ್ವದಲ್ಲಿ ಶಿಲಾಮಯ ಲಿಂಗಾಕಾರದಲ್ಲಿ ಈ ಬಗೆಯ ಬಂಧತ್ವದ ವ್ಯವಹಾರವೇ ಇಲ್ಲದ್ದರಿಂದ ಆ ಲಿಂಗಕ್ಕೆ ಮೋಕ್ಷಾಧಿಕಾರವೇ ಇಲ್ಲ.

ಗುರು ಜಂಗಮರಿಗೆ ಸ್ವಾಮಿತ್ವ, ಸ್ವತಂತ್ರತ್ವದ ಅಧಿಕಾರವು, ಗುರುತ್ವ ಜಂಗಮತ್ವ ಸಂಸ್ಕಾರವಾಗುವದಕ್ಕಿಂತಲು ಮೊದಲು ಅವ್ಯಕ್ತಸ್ಥಿತಿಯಲ್ಲಿದ್ದು ಸಂಸ್ಕಾರ ವಿಶೇಷದಿಂದ ಸ್ಪಷ್ಟವೆನಿಸಿರುವ, ಅಂದರೆ ವ್ಯಕ್ತವಾಗಿರುವ ಸ್ಥಿತಿಯೇ ಮುಕ್ತಿಯೆನಿಸುವುದು. ವಿಸ್ತೃತ

ಸ್ಥಿತಿಯಲ್ಲಿದ್ದ ಬದ್ಧತ್ವವು ನಾಶವಾಗುತ್ತಾಗುತ್ತ ವ್ಯಾಪಕ ಸ್ಥಿತಿಯ ಸ್ವಾಮಿತ್ವ ಸ್ವತಂತ್ರತ್ವ ವುಂಟಾದದ್ದೇ ಮುಕ್ತತ್ವವೆನಿಸುವುದು. ಗುರು ಜಂಗಮರಲ್ಲಿ ಅಪ್ರಾಕೃತ ಪುರುಷತ್ವ ವಿದ್ದಂತೆ ಲಿಂಗದಲ್ಲಿಯಾದರೂ ಅಪ್ರಾಕೃತ ಶಿಲಾತ್ವವಿರುವುದು. ಪುರುಷಾಕಾರದ ಗುರು ಜಂಗಮಾದಿಗಳ ಪ್ರಯತ್ನದಿಂದಲೇ ಶಿಲೆಯಲ್ಲಿದ್ದ ಶಿಲಾಭಾವವು ಹೋಗಿ ಶಿವತ್ವವುಂಟಾಗುವುದು. ಆ ಶಿವತ್ವವು ವ್ಯಾಪಕಸ್ಥಿತಿಗೆ ಬರಬೇಕಾದರೆ ಆ ಭಕ್ತನು ಗುರು ಜಂಗಮರ ಪಾದೋದಕ ಪ್ರಸಾದಾದಿಗಳಿಂದ ಲಿಂಗದಲ್ಲಿ ವ್ಯಾಪಕತ್ವವನ್ನು

ತಂದುಕೊಂಡು ತದ್ವಾರಾ ವ್ಯಾಪಕನಾಗುವುದೇ ಮುಕ್ತಿಯು.  ಸಾರಾಂಶವಿದು : ಗುರು ಜಂಗಮರು ಅನ್ಯವಾದ ಲಿಂಗಾಶ್ರಯವನ್ನು ಮಾಡದೆ ಸ್ವಸ್ವರೂಪ ಲಿಂಗಾರ್ಚನಾದಿಗಳಿಂದ ಮುಕ್ತರಾಗುವರು. ಲಿಂಗವು ಗುರು ಜಂಗಮರಿಂದ ಸ್ಥಾಪಿಸಲ್ಪಟ್ಟು ಗುರು ಜಂಗಮರ ಕೃಪೆಯಿಂದಲೇ ವ್ಯಾಪಕ ಸ್ಥಿತಿಯನ್ನು ಹೊಂದಿ ತನ್ನನ್ನು ಆಶ್ರಯಿಸಿದ ಭಕ್ತನಿಗೆ ಮುಕ್ತಿಯನ್ನುಂಟು ಮಾಡುವುದು.

೧೦. ಕ್ರಿಯಾಜ್ಞಾನರೂಪ ಗುರು. ಕ್ರಿಯಾರೂಪ ಲಿಂಗ. ಜ್ಞಾನರೂಪ ಜಂಗಮ. ಹೀಗೆ ಗುರು-ಲಿಂಗ-ಜಂಗಮ ಶಬ್ದದ ಅನ್ವರ್ಥಕವಿರುವುದು. ಮತ್ತು ಭಕ್ತರ ಅನಿಷ್ಟವನ್ನು ಪರಿಹರಿಸಿ ಕೊಡುವುದರಿಂದಲೂ ‘ಇಷ್ಟಿ’ ಅಂದರೆ ಪೂಜಾ; ಆ ಪೂಜೆಯಿಂದ ನಿರಂತರ ಆರಾಧಿಸಲ್ಪಡುವುದರಿಂದಲೂ ಇಷ್ಟಲಿಂಗವೆ೦ದು ಅನ್ವರ್ಥಕವಾಗಿರುವುದು. ಮಲತ್ರಯ ರೂಪ ಅಜ್ಞಾನಾಂಧಕಾರವನ್ನು ದೂರಮಾಡಿ ಶಿವಾದೈತರೂಪ ನಿತ್ಯಾನಂದವನ್ನುಂಟುಮಾಡಿಕೊಡುವುದಕ್ಕೆ ಕರ್ತೃವಾದ್ದರಿಂದಲೂ ಸಂಶಯ ನಿರಸನದ್ವಾರದಿಂದ ನಿತ್ಯ ಮುಕ್ತಿಯನ್ನುಂಟುಮಾಡುವನಾದ್ದರಿಂದಲೂ  ಬಾಹ್ಯಾಂತರಗಳಲ್ಲಿ  ಹರಿದಾಡುವ ಮನಸ್ಸನ್ನು ಭೇದಿಸಿ ಬೋಧಿಸುವ ಘನ ಸಾಮರ್ಥ್ಯವುಳ್ಳವನಾದ್ದರಿಂದಲೂ ಗುರುವೆಂಬ ಶಬ್ದವು ಅನ್ವರ್ಥಕವಾಗಿರುವುದು.

ತನ್ನ ಪ್ರಕಾಶ ಸಾನ್ನಿಧ್ಯಮಾತ್ರದಿಂದ ಶಿವಶಕ್ತ್ಯತ್ಮಕ ಪ್ರಪಂಚವನ್ನು ಬೆಳಗಿ ಅನಿಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನುಂಟುಮಾಡಿ ಅಂತರ್ಬಹಿರ್ಮನಸ್ಸನ್ನು ಭೇದಿಸುವ ಸ್ವಯಂಪ್ರಕಾಶ ಸ್ವರೂಪವೇ ಜಂಗಮದ ಅನ್ವರ್ಥಕವಾಗಿರುವುದು.

ಸಚ್ಚಿದಾನಂದತ್ವವು ಲಿಂಗ-ಗುರು-ಜಂಗಮ ಈ ತ್ರಿವರ್ಗದ ಅಸಾಧಾರಣ ಲಕ್ಷಣಗಳಾಗಿದ್ದರೂ ಪರಸ್ಪರ ಭಿನ್ನಾಭಿನ್ನ ಲಕ್ಷಣಗಳಿಂದ (ಇಲ್ಲಿ ಅಭಿನ್ನವೆಂದರೆ ಅನ್ನೋನ್ಯವೆಂದರ್ಥ). ಜಗದ್ಧಿತಾರ್ಥವಾಗಿ ದಿವ್ಯ ಚೇಷ್ಟೆಯಿಂದ ಶೋಭಿಸುವವು.

 ೧೧. ಅಷ್ಟಾವರಣವೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಶೋಭಿಸುವ ಅಂಗನೇ ಭಕ್ತಶಬ್ದವಾಚ್ಯನು. ಶಿವನು, ‘ನಾನು ಭಕ್ತನ ಕೇವಲ ಚೈತನ್ಯ ಸ್ವರೂಪವಾದ ಶಿವಕಲೆಯಿಂದಲೂ ಶಿಲಾಮಯವಾದ ಲಿಂಗಾಕಾರದಲ್ಲಿ ಶೋಭಿಸಿ ಪೂಜ್ಯತೆಯ ಪಡೆದಿರುವದರಿಂದ ಆ ಭಕ್ತನ ಜಿಹ್ವಾದ್ವಾರದಿಂದಲೇ ಲಿಂಗರೂಪಿಯಾಗಿ ತೃಪ್ತಿಯನ್ನು ಹೊಂದುವೆನೆಂದು ಹೇಳುವುದೇ ಇದು ಪರ್ಯವಸಿತಾರ್ಥವು.

೧೨. ಅಪ್ರಾಕೃತ ಮುಮುಕ್ಷುಗಳಾದ ಗುರುಜಂಗಮೇತರ ಭಕ್ತವಂಶೀಯರೂ ಆಗಂತುಕರೂ ತಂತಮ್ಮ ಉದ್ಧಾರತೆಯ ದೆಸೆಯಿಂದ ಸ್ವಸ್ವರೂಪ ಲಿಂಗವನ್ನೂ ಆ ಲಿಂಗವನ್ನು ಕರುಣಿಸಿದ ಗುರುಮೂರ್ತಿಗಳನ್ನೂ ಆ ಲಿಂಗ ಮುಖವಾದ ಜಂಗಮ ಮೂರ್ತಿಗಳನ್ನೂ ಗುರು ಲಿಂಗ ಜಂಗಮ ಪೂಜಾಧಿಕಾರ ಪ್ರದಾಯಕ ವ್ರತರೂಪ ಭಸ್ಮ ರುದ್ರಾಕ್ಷಗಳ ಧಾರಣವನ್ನೂ ಇಷ್ಟಲಿಂಗವನ್ನು ಜಾಗ್ರತೆಗೊಳಿಸುವ ಸಾಧನವಾದ ಪಂಚಾಕ್ಷರ ಮಂತ್ರ ಜಪವನ್ನೂ ಗುರು ಲಿಂಗ ಜಂಗಮರೆಂಬ ಇಷ್ಟ ದೇವತೆಗಳ ಪಾದೋದಕ-ಪ್ರಸಾದರೂಪ ಫಲವನ್ನೂ ಭಕ್ತಿಯಿಂದ ಅರ್ಚನಾದಿಗಳ ದ್ವಾರಾ ಸೇವಿಸುವರು.

ಗುರು ಜಂಗಮರಾದರೂ ತಂತಮ್ಮ ಸಾಭಾರಿ ಗುರುಗಳಿಂದ ಮೂರ್ತಿಕರಿಸಿ. ಕೊಡಲ್ಪಟ್ಟ ಸ್ವಸ್ವರೂಪ ಚಿತ್ಕಲಾ ಲಿಂಗವನ್ನು ಪೂಜ್ಯ ಪೂಜಕ ಕ್ರಮವನ್ನತಿಕ್ರಮಿಸದೆ ಗುರು ಜಂಗಮರಿಂದ ಕೊಡಲ್ಪಟ್ಟ ಭಸ್ಮ ರುದ್ರಾಕ್ಷಧಾರಣವನ್ನು ಮತ್ತು ಪಂಚಾಕ್ಷರ ಜಪವನ್ನು ಗುರು ಲಿಂಗ ಜಂಗಮರ ಪಾದೋದಕ ಪ್ರಸಾದಗಳನ್ನು ಜಗದ್ಧಿತಾರ್ಥವಾಗಿ ಪವಿತ್ರ ಲೀಲೆಯಿಂದ ಅಪ್ರಾಕೃತ ಮುಮುಕ್ಷುಗಳೆಂಬಂತೆ ಸಿದ್ಧರಾದವರು ಅರ್ಚನಾದಿ ದ್ವಾರದಿಂದ ಸೇವಿಸುವರು. ಇವರು ಸಹ ಮುಂದೆ ಆಚರಣೆಯ ವಿಶೇಷದಿಂದ ಸಿದ್ಧರಾಗುವರು. ಇದರಿಂದ ಜಂಗಮ ಸಂಪ್ರದಾಯಕರ ಮತ್ತು ಗುರು ಜಂಗಮೇತರ ವಂಶೀಯರ ಅಷ್ಟಾವರಣಾಚರಣೆಯಲ್ಲಿ ತಾರತಮ್ಯ ಭಾವವುಂಟೆಂದು ಸ್ಪಷ್ಟವಾಗಿ ಕಂಡುಬರುವುದು.

ಸಾರಾಂಶವಿದು : ಲಿಂಗಧಾರಿಗಳಾದ ಇತರರು ಧರಿಸಿದ ಲಿಂಗಕ್ಕೂ, ವೀರಶೈವರು ಧರಿಸಿದ ಲಿಂಗಕ್ಕೂ ಯಾವ ತಾರತಮ್ಯವುಂಟೋ ಅವೇ ತಾರತಮ್ಯವು ವೀರಶೈವರಲ್ಲಿಯ ಪೂಜ್ಯ ಪೂಜಕರು ಧರಿಸಿರುವ ಲಿಂಗದಲ್ಲಿಯೂ ಉಂಟು. ಎಲ್ಲರೂ ಧರಿಸಿದ ಲಿಂಗದಲ್ಲಿ ತಾರತಮ್ಯವಿಲ್ಲದೆ ಒಂದೇ ಎಂದು ಹೇಳಲಿಕ್ಕೆ ಬರುವುದಿಲ್ಲ. ಗುರು ಜಂಗಮರನ್ನು ಅಗಲಿದರೆ ಅಥವಾ ಅಪ್ಪಣೆಯನ್ನು ಮೀರಿದರೆ ಅದರಂತೆ ಲಿಂಗವನ್ನಗಲಿದರೆ ಅಪೂಜ್ಯತೆಯುಂಟಾಗುತ್ತದೆ.

೧೩. ಗುರುವು ದೀಕ್ಷಾಕಾಲದಲ್ಲಿ ಶಿಷ್ಯನ ಮಸ್ತಕದಲ್ಲಿದ್ದ ಚಿತ್ಕಲೆಯನ್ನು ಲಿಂಗದಲ್ಲಿ ಸ್ಥಾಪಿಸಿ ಲಿಂಗದಲ್ಲಿದ್ದ ಶಿವಕಲೆಯನ್ನು ಶಿಷ್ಯನ ಪ್ರಾಣದಲ್ಲಿ ಸ್ಥಾಪಿಸಿ ಎರಡನ್ನು ಏಕೀಕರಿಸಿದ ನಂತರ ಲಿಂಗವು ಭಕ್ತನ ಅಂಗವನ್ನು ಬಿಟ್ಟು ಅಗಲಿ ಹೋದಲ್ಲಿ ಪರಸ್ಪರ ಐಕ್ಯತೆಗೂ-ಗುರ್ವಾಜ್ಞಾಪಾಲನೆಗೂ ಭಂಗ ಬರುವುದರಿಂದ ಗುರುವಿನ ಆಜ್ಞೆಗೂ ಲಿಂಗಕ್ಕೂ ಅಪೂಜ್ಯತೆಯುಂಟಾಗುವುದಲ್ಲದೆ ಲಿಂಗವನ್ನಗಲಿದ ಸಾಧಕನಿಗೆ ಭಕ್ತತ್ವದಿಂದ ಪಾತಿತ್ಯವುಂಟಾಗುವುದು. ಲಿಂಗವು ಭಕ್ತನ ದೇಹವನ್ನಾಶ್ರಯಿಸಿಕೊಂಡು ಪೂಜ್ಯತ್ವವನ್ನು ಹೊಂದಿರುವುದು. ಭಕ್ತದೇಹದಿಂದಗಲಿ ಲಿಂಗವು ಸ್ವತಂತ್ರಿಸಿ ಪೂಜಾರ್ಹವಾಗಲಾರದು. ಭಕ್ತ ದೇಹಸಾಪೇಕ್ಷೆಯುಳ್ಳ ಲಿಂಗವು ಅಗಲಿ ಹೋದಲ್ಲಿ ಲಿಂಗತ್ವವು ಲುಪ್ತವಾಗುವುದು. ಗುರುಕುಲೋತ್ಪನ್ನ ಗುರುಕರ ಸಂಜಾತ ಗುರುಕುಲವಾಸಿ ಸಾಧಕ ಸ್ಥಿತಿಯ ಗುರು ಜಂಗಮರಿಗೆ ಸ್ವಸ್ವರೂಪವಾದ ಗುರುದತ್ತ ಲಿಂಗವು ವಿಯೋಗವಾದಲ್ಲಿ ಗುರ್ವಾಜ್ಞಾ

ಪೂರ್ಣಸಿದ್ಧತೆಯ ಉಳುಮೆಯ ಮೂಲಕ ಕ್ರಿಯಾಲೋಪವೆನಿಸಿದ್ದರಿಂದ ಅಪೂಜ್ಯತೆಯೂ ಲಿಂಗಕ್ಕೆ ಭ್ರಷ್ಟತೆಯೂ ಪ್ರಾಪ್ತವಾಗುವುದು. ಪೂರ್ಣಸಿದ್ಧತೆಯನ್ನು ಹೊಂದಿದವರ ಶರೀರದಲ್ಲಿದ್ದ ಲಿಂಗಕ್ಕೂ ಪ್ರಾಣಕ್ಕೂ ಎಂದೂ ವಿಯೋಗವಾಗಲಾರದು. ಇದರಿಂದ ಸಾಧಕ ದೆಸೆಯಲ್ಲಿ ಅವಧಾನಿಗಳ ಅವಶ್ಯಕತೆಯಿಲ್ಲ. ಲಿಂಗಮೂರ್ತಿಯಲ್ಲಿ ಅವಧಾನಕ್ಕೆ ಅವಕಾಶವೇ ಇಲ್ಲದ್ದರಿಂದ ಸಾಧ್ಯ ಸಾಧಕದೆಸೆಯು ಇಲ್ಲವು. ಭಕ್ತಿಯಲ್ಲಿ ವ್ಯಾಪ್ಯವ್ಯಾಪಕತ್ವವು ಸಿದ್ಧ ಸಾಧಕತ್ವವು ಅವಧಾನಾದಿಗಳ ಪ್ರಯತ್ನದಿಂದ ಉಂಟಾಗಿ ತೋರುವಲ್ಲಿ ಗುರು ಜಂಗಮರಲ್ಲಿ ತೋರುವ ಸ್ಥಿತಿಯನ್ನು ಹೇಳುವುದೇನು ?

೧೪. ಪೂಜಕರಾದ ಅಷ್ಟಾವರಣ-ಪಂಚಾಚಾರವುಳ್ಳ ವೀರಶೈವರಿಗೆಲ್ಲ ಪಾದೋದಕವು ಅವಶ್ಯಕವಾಗಿ ಬೇಕು. ಅದರಂತೆ ಪೂಜ್ಯರಾದ ಗುರು ಲಿಂಗ ಜಂಗಮಗಳಿಗಾದರೂ ಬೇಕು. ಲಿಂಗಕ್ಕೆ ಹೇಗೆ ಬೇಕೆಂದರೆ : ಭಕ್ತನಿಚ್ಛೆಯು. ಭಕ್ತನ ಶಿರದರಮನೆಯ ಚಿತ್ಕಲಾ ವಸ್ತುವೇ ಲಿಂಗವು. ಅದೇ ಅವನ ಕರಗತವಾದದ್ದು. ಲಿಂಗವು ಭಕ್ತನನ್ನಾಶ್ರಯಿಸಿಕೊಂಡೇ ಇರಬೇಕಾಗುತ್ತದೆ. ಭಕ್ತನು ಲಿಂಗ ಭೋಗೋಪ ಭೋಗಿಯಾಗಿರುತ್ತಾನೆ. ಅನ್ನೋನ್ಯಾಪೇಕ್ಷೆಯಿರುವುದರಿಂದ ಭಕ್ತನಿಗೆ ಪಾದೋದಕ ಬೇಕಾಗಿದ್ದರೆ ಲಿಂಗಕ್ಕಾದರೂ ಬೇಕು. ಇದರಂತೆ ಗುರು ಜಂಗಮರಿಗೂ ಅವಶ್ಯ ಅವರವರ ಸ್ವಸ್ವರೂಪವಾದ ಲಿಂಗಕ್ಕೂ ಬೇಕು.

 ಪಾದೋದಕವು ಸಂಬಂಧದಿಂದ ದಶವಿಧವಾಗಿರುವುದು. ಮುಖ್ಯವಾಗಿ ತ್ರಿವಿಧವೆನಿಸಿರುವುದು. ಇದು ಸಹಜವು.

೧೫. ಗುರುಲಿಂಗ ಜಂಗಮರಲ್ಲಿ ಅಂತಃಪ್ರಭೇದಗಳಿರುವುದರಿಂದ ಲಿಂಗದಲ್ಲಿದ್ದ ಗುರುಜಂಗಮರ ಸಾನಿಧ್ಯದಿಂದ ಅನಿರ್ವಾಹ ಪಕ್ಷದಲ್ಲಿ ಸಂಬಂಧಾಚರಣೆಯಿಂದ ಪಾದೋದಕ ಪ್ರಸಾದಗಳ ನಿರ್ವಾಹವಾಗುತ್ತದೆ.  

೧೬. ಮುಖ್ಯವಾಗಿ ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕಗಳೆಂದು ಮೂರು ಪ್ರಕಾರಗಳು. ಇವು ಒಂದೊಂದೇ ಮೂರು ಮೂರು ಭೇದಗಳಿಂದ ಕೂಡಿ ನವವಿಧವಾಗಿರುವುದು. ಇವೆಲ್ಲವುಗಳ ಸಮಷ್ಠಿಯಾದುದೇ ಮಹಾ ಪಾದೋದಕ ಜಂಗಮ ಪಾದೋದಕವು. ಇದು ಗಣನೆಯಲ್ಲಿ ಸೇರಲು ದಶ ವಿಧವಾಯಿತು. ಈ ದಶವಿಧ ಪಾದೋದಕದಲ್ಲಿ ಸಂಬಂಧದಿಂದಲೂ ಸಹಜದಿಂದಲೂ ಅನೇಕ ರೀತಿಯಿಂದ ಸಂಬಂಧವುಂಟು. ಸಹಜವು ಒಂದೇ ಪ್ರಕಾರವಿದ್ದು ಸಂಬಂಧದಿಂದ

ಅನೇಕ ವಿಧವಾಗಿರುವುದು. ಸಂದರ್ಭಾನುಸಾರ ಸಂಬಂಧವನ್ನೂ ಮತ್ತೆ ಅನೇಕ ಪ್ರಕಾರ ಮಾಡುವುದುಂಟು. ಮೂರು ಪಾದೋದಕಗಳಲ್ಲಿ ಒಂದೊಂದರೊಳಗೆ ಮೂರು ಮೂರು ಲಿಂಗಗಳ ಸಂಬಂಧ ಮತ್ತು ಪರತರ ಶಿವಲಿಂಗ ಸಂಬಂಧ ; ಇವುಗಳಿಂದ ದಶವಿಧವಾಗಿರುವುದು. ಪಂಚಾಂಗುಲಿಗಳಿಂದ ಅಂದರೆ ಸೂಚಕ ಮುದ್ರೆಯಿಂದ ಎರೆದು ಸ್ವೀಕರಿಸುವುದೇ ದೀಕ್ಷಾಪಾದೋದಕ ಅಥವಾ ಗುರು ಪಾದೋದಕ; ಶಂಖಮುದ್ರೆಯಲ್ಲಿ ಲಿಂಗದ ಮೇಲೆ ಅಭಿಷೇಕ ಮಾಡಿ ಪೂಜಿಸಿದ ಪಾದೋದಕವನ್ನು ಲಿಂಗವನ್ನೆತ್ತಿ ಸ್ವೀಕರಿಸುವುದೆ ಶಿಕ್ಷಾಪಾದೋದಕ ಅಥವಾ ಲಿಂಗ ಪಾದೋದಕ (ಕ್ರಿಯಾ ಪಾದೋದಕ)ವೆಂದು ಪರ್ಯಾಯ ನಾಮಗಳು. ಜಿಹ್ವಾಗ್ರಕ್ಕೆ ಪಾತ್ರೆಯನ್ನೆತ್ತಿ ಇಲ್ಲವೆ ಚಿನ್ಮುದ್ರೆಯಿಂದಾಗಲಿ ಕುರಂಗ ಮುದ್ರೆಯಿಂದಾಗಲಿ ಮುಟ್ಟಿ ಸ್ವೀಕರಿಸುವುದೇ ಮೋಕ್ಷ ಪಾದೋದಕ ಅಥವಾ ಜ್ಞಾನ ಪಾದೋದಕ (ಜಂಗಮ ಪಾದೋದಕ)ವೆಂದು ಹೆಸರುಗಳು. ಪಂಚಾಂಗುಲಿಗಳ ಕೂಟದಲ್ಲಿ ನಿರಾಭಾರಿಗಳು ಸಮಷ್ಟಿರೂಪ ಪ್ರಣವನನ್ನು ಭಾವಿಸಿ ಅದೇ ತನ್ನ ಗುರುವೆಂಬ ಭಾವನೆಯಿಂದ ಸ್ವೀಕರಿಸುವ ಕಾರಣ ಗುರು ಪಾದೋದಕವು; ಹಸ್ತದಲ್ಲಿಯೆ ಲಿಂಗ ಸಂಬಂಧವಿರುವುದರಿಂದಲೂ ಲಿಂಗಾಭಿಷಿಕ್ತವಾದ್ದರಿಂದಲೂ ಲಿಂಗ ಪಾದೋದಕ; ಜಿಹ್ವಾಗ್ರದಲ್ಲಿ ಜಂಗಮ ವಿರುವದರಿಂದ ಜಂಗಮಕ್ಕೆ ಮುಟ್ಟಿಸಿ ತೆಗೆದುಕೊಳ್ಳುವುದರಿಂದ ಜಂಗಮ ಪಾದೋದಕವೆಂಬ ಹೆಸರು.

೧೭. ಭ್ರಮಾರೂಪ ಸಂಸ್ಕಾರಕ್ಕೆ ಕಾರಣವಾದ ಕಲ್ಪನೆಯ ಪದಾರ್ಥ ಲಕ್ಷಣವು ಅರ್ಥಾತ್ ಕಲ್ಪಿತ ತತ್ತ್ವವೇ ಪದಾರ್ಥ ಲಕ್ಷಣವು. ಸಚ್ಚಿದಾನಂದತ್ವವೆ ಪ್ರಸಾದ ಲಕ್ಷಣವು. ಸಾಧಕರಿಂದ ವೀರಮಾಹೇಶ್ವರರು ಸ್ಥೂಲ ಪದಾರ್ಥವನ್ನು ತ್ಯಜಿಸಿ ಸೂಕ್ಷ್ಮ ರೂಪ ಪದಾರ್ಥವನ್ನು ಗುರ ಲಿಂಗ ಜಂಗಮಕ್ಕೆ ಅರ್ಪಿಸಿ ತನ್ಮುಖದಿಂದ ಒಕ್ಕುಳಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

೧೮. ಗುರು ಜಂಗಮರ ಪಾದೋದಕವು ಪ್ರಸಾದವಲ್ಲ. ಪದಾರ್ಥವೆಂದರೆ ಗುರು ಲಿಂಗ ಜಂಗಮರಿಗೆ ಅರ್ಪಣವಾದ ಪ್ರತಿಯೊಂದು ಪರಿಶುದ್ಧ ವಸ್ತುವು ಪ್ರಸಾದವಾಗುವುದೆಂಬ ಪ್ರಮಾಣ ಅನುಭವಾದಿಗಳಿಗೆ ವಿರೋಧವಾಗುವುದು. ಪ್ರಸಾದವೆಂದರೆ ಅಷ್ಟಾವರಣಗಳಲ್ಲಿ ಅಂತಿಮವಾದ ಪಾದೋದಕ ಸೇವನಾಂತರ ಗ್ರಹಿಸಬೇಕಾದ ಪ್ರಸಾದವು; -ಇದಕ್ಕೆ ಬೇರೆಯಾದುದೊ ? ಒಂದೆಯೊ ? ಒಂದೆಯಾದರೆ ಅದರ ಸ್ವೀಕಾರವೇಕೆ ? ಇದೇ ಪ್ರಸಾದವಾದರೆ ಅಷ್ಟಾವರಣಗಳು ಹೇಗೆ ನಿರ್ವಾಹಕ ಮಾಡಲ್ಪಡುವವು ? ಬೇರೆಯಾದರೆ ಪಾದೋದಕಕ್ಕೆ ಕಲ್ಪಿತತ್ವದಿಂದ ಪದಾರ್ಥತ್ವ ವುಂಟಾಗುವುದು. ಮತ್ತು ಗುರು ಲಿಂಗ ಜಂಗಮಕ್ಕೆ ಅರ್ಪಣವಾದುದು ಪ್ರಸಾದ ವಾಗುವುದೆಂಬ ಪ್ರಮಾಣಗಳಿಗೆ ವ್ಯರ್ಥತೆಯುಂಟಾಗುವುದು. ಇದಲ್ಲದೆ ಅಷ್ಟಾವರಣವೆ ಅಂಗವಾಗಿ ಪಂಚಾಚಾರವೆ ಪ್ರಾಣವಾದ ವೀರಶೈವತ್ವಕ್ಕೆ ಅಂಗಲೋಪದಿಂದ ದೋಷವುಂಟಾಗುವುದು. ಪಾದೋದಕವು ಪ್ರಸಾದವೆನಿಸುವುದು. ಪಾದೋದಕವು ಪೂಜ್ಯರ ಮಸ್ತಕದಲ್ಲಿ ಸಚ್ಚಿದಾನಂದ ಸ್ವರೂಪವಾಗಿರುವದೆಂದು ಈ ಮೊದಲು ಉಕ್ತವಾಗಿರುವುದು. ಅಂತಹ ಸಚ್ಚಿದಾನಂದ ಸ್ವರೂಪವೆ ಪ್ರಸಾದವೆನಿಸುವುದು. ಆ ಪ್ರಸಾದವೆ ಪೂಜಕನ ಇಚ್ಛಾ ಜ್ಞಾನ ಕ್ರಿಯಾದಿಗಳಿಂದ ಚಲನಕ್ರಿಯೆಯನ್ನು ಹೊಂದಿ ಚಿದ್ರಸವಾಗಿ ಬಹಿಷ್ಕರಿಸುವುದರಿಂದ ಪ್ರಸಾದವೆನಿಸಿರುವುದು. ಆ ಪೂಜ್ಯರಾದ

ಮೂರ್ತಿಗಳಲ್ಲಿ ಈ ಪಾದೋದಕ ಸಂಬಂಧಗಳಿಂದ ಇಚ್ಛಾ ಜ್ಞಾನ ಕ್ರಿಯೆಗಳೇನೂ ಇಲ್ಲದೆ ಸ್ವಸ್ವರೂಪಾನು ಸಂಧಾನವೇ ಇರುವುದು. ಇಂತಹ ಪೂಜ್ಯರ ಮಸ್ತಕಗತವಾದ ಚಿದ್ಬಿಂದುವೆ ದ್ರವಿಸಿ ಸುಷುಮ್ನಾದ್ವಾರವಾಗಿ ಪಾದಾಂಗುಷ್ಪಗಳಿಂದ ಬಹಿಷ್ಕರಿಸಿದಲ್ಲಿ ಗುರು ಲಿಂಗ ಜಂಗಮ ಪಾದೋದಕ ರೂಪವಾಗಿ ಕಂಗೊಳಿಸುವುದರಿಂದ ಪಾದೋದಕ ರೂಪ ಪ್ರಸಾದವೆನಿಸುವುದು. ಇದೇ ಪ್ರಸಾದವಾದರೆ ಮುಂದೆ ಪ್ರಸಾದವನ್ನು ಏಕೆ ಪಡೆಯಬೇಕೆಂದರೆ : ಪ್ರಸಾದವು ಸಾಮಾನ್ಯ ವಿಶೇಷವೆಂದು ಎರಡು ಬಗೆಯಾಗಿರುವುದು. ಈ ಪಾದೋದಕ ರೂಪ ಪ್ರಸಾದದ ಸಾಮಾನ್ಯ ರೂಪದಿಂದ ಪ್ರಸಾದವೆನಿಸಿ ವಿಶೇಷ ರೂಪದಿಂದ ಪಾದೋದಕವೆನಿಸುವುದು. ಇದರಂತೆ ಅಷ್ಟಾವರಣಗಳಲ್ಲಿಯೂ ಪ್ರಸಾದತ್ವವು ಸಾಮಾನ್ಯ ನೀತಿ ರೀತಿಯಿಂದಿರುವುದು. ಅಂದರೆ ಭಸ್ಮ ರುದ್ರಾಕ್ಷಿ ಮಂತ್ರಾದಿಗಳು ಸಾಮಾನ್ಯವಾಗಿ ಪ್ರಸಾದವಾಗಿದ್ದರೂ ವಿಶೇಷತ್ವದಿಂದ ಭಸ್ಮರುದ್ರಾಕ್ಷಿಗಳೇ ಆಗುವುವು. ಕಡೆಯದಾದ ಈ ಪ್ರಸಾದವು ಫಲರೂಪವಾದ್ದರಿಂದ ಇದರಲ್ಲಿ ಸಾಮಾನ್ಯ ವಿಶೇಷ ರೂಪ ಪ್ರಸಾದತ್ವವಿರುವುದು. ಸಾಮಾನ್ಯ ವಿಶೇಷತ್ವಗಳೆರಡೂ ಇಲ್ಲಿ ಐಕ್ಯವಾಗಿರುವುದರಿಂದ ಐಕ್ಯ ಸ್ಥಲದಲ್ಲಿ ನಿಲುಕಡೆಯೆನಿಸಿರುವುದು.

೧೯. ವೀರಶೈವ ಸಿದ್ಧಾಂತವು .ದ್ವೈತಾದ್ವೈ ತವಾದ್ದರಿಂದ ಗುರು ಲಿಂಗ ಜಂಗಮರಲ್ಲಿ ಭೇದಾಭೇದ ಭಕ್ತನಿಗೆ ಇರಬೇಕು. ಭಕ್ತ ಶಬ್ದವನ್ನು ವಿಚಾರಿಸಿದರೆ ಭಕ್ತಿಪ್ರಧಾನವುಳ್ಳವನೆ ವೀರಶೈವನೆಂದು ತಿಳಿಯುವುದರಿಂದಲೂ, ಭೇದಾಭೇದವನ್ನುಂಟುಮಾಡುವುದರಿಂದ ವೀರಶೈವ ಮತವು ಭಾಕ್ತಿಕ ಮತವಾದ್ದರಿಂದಲೂ, ಭೇದ ಪದವು ಭಾಗ-ವಿಭಾಗ ಮಾಡುವ ಸ್ವಭಾವವುಳ್ಳದ್ದೆಂತೂ, ಪೂಜ್ಯ ಪೂಜಕ ವಸ್ತುಗಳಲ್ಲಿ ಭೇದಾ ಭೇದವನ್ನೆಸಗುವ ಸಾಮರ್ಥ್ಯವುಳ್ಳದ್ದೆಂತಲೂ, ಪ್ರಸಾದ ಭಕ್ತಿ-ಮುಕ್ತಿಗಳಿಗೆ ಏಕದೇಶ ಸ್ಥಿತಿಯಿರುವುದರಿಂದ ಭೇದಾ  ಭೇದಭಾವನೆಯು ಅವಶ್ಯ ಇರಬೇಕಾಗುವುದು. ಆದ್ದರಿಂದ ನಿರ್ವಿಶೇಷೋಪಾಸನೆಯು ಘಟಿಸುವುದು.

೨೦. ಲಿಂಗಪಾದೋದಕವನ್ನು ಗುರು ಜಂಗಮರ ಮಸ್ತಕಕ್ಕೆ ಎರೆಯದಿದ್ದರೂ ಅದು ಲಿಂಗ ಪಾದೋದಕವಾಗುವುದು ಎಂಬ ವಿಷಯವನ್ನು ಶಾಸ್ತ್ರವು ವಿಧಿಸಿರುವುದಿಲ್ಲ; ವಿಧಿಸಬೇಕಾಗಿಯೂ ಇಲ್ಲ. ಮತ್ತು ಅಂಗರೂಪ ಭಕ್ತನಿಗೆ ಗುರು ಜಂಗಮ ಪಾದೋದಕವನ್ನು ಲಿಂಗದ ಮೇಲೆ ಅಭಿಷೇಕ ಮಾಡದಿದ್ದರೆ ಗುರು ಜಂಗಮರ ಪಾದೋದಕವಾಗುವುದಿಲ್ಲ. ಆಚಾರದಲ್ಲಿ ಸಂಬಂಧವೆಂತಲೂ, ಸಹಜವೆಂತಲೂ ಎರಡು ವಿಧವಾಗಿರುವುದು. ಇವೆರಡನ್ನೂ ಪರಸ್ಪರ ಭಿನ್ನ ಭಿನ್ನ ಕಾಲದಲ್ಲಿ ಆಚರಿಸಿ ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಹೊಂದಬೇಕು. ಗುರು ಜಂಗಮರು ಪ್ರತ್ಯಕ್ಷವಿಲ್ಲದಾಗ ಲಿಂಗಮೂರ್ತಿಯಲ್ಲಿ ಗುರುಜಂಗಮರನ್ನು ಅನುಸಂಧಾನಿಸಿ ಆ ಲಿಂಗಮೂರ್ತಿಯನ್ನು ನಿಯಮಿತ ಸ್ಥಿತಿಯಲ್ಲಿರಿಸಿ ಹಸ್ತಪಾದಾದಿಗಳನ್ನು ಭಾವಿಸಿ  ವಾಮ ದಕ್ಷಿಣ ಪಾದಾಂಗುಷ್ಠಗಳನ್ನೂ, ತನ್ನ ಧ್ಯೇಯ ಸ್ಥಾನವನ್ನೂ ಕಲ್ಪಿಸಿ ಗುರು ಲಿಂಗ ಜಂಗಮರ ಸ್ವರೂಪವನ್ನು ಮಂತ್ರಾದಿಗಳ ಅವಧಾನತೆಯಿಂದ ಎರೆದರೆ ಅವ್ಯಕ್ತವಾದ ಶಿವಸ್ವರೂಪ ಪಾದೋದಕವು ವ್ಯಕ್ತವಾಗುವುದು. ಹೀಗಾಗುವ ಪೂರ್ವದಲ್ಲಿ ಶಿವನು

ಅದೇ ಆತ್ಮನಲ್ಲಿ ತನ್ನೊಡನೆ ಐಕ್ಯವಾಗಬೇಕಾಗಿರುವುದು. ಆದರೆ ಹೇಗೆ ಸೃಷ್ಟಿಯೋ ಹಾಗೆ ಸ೦ಹಾರವಿರಬೇಕಾಗುವುದು.

೨೧. ಪೂಜ್ಯರಾದ ಗುರು ಜಂಗಮರಲ್ಲಿ ಪಾದೋದಕವನ್ನು ಕೊಡುವ ಇಚ್ಛೆ ಯತ್ನಾದಿಗಳು ಇಲ್ಲವೇ ಇಲ್ಲ. ಪ್ರದಾತೃತ್ವವು ಗುರು ಜಂಗಮರ ಭಾವನೆಯಲ್ಲಿ  ಎಂದೂ ಬರುವುದಿಲ್ಲ. ಸುಮ್ಮನೆ ನೋಡುವವರಿಗೆ ಮಾತ್ರ ಇದ್ದಂತೆ ಕಾಣಿಸಬಹುದು. ಪೂಜ್ಯರಾದ ಗುರು ಜಂಗಮರ ಮಸ್ತಕದ ಮಧ್ಯ ಸಹೃದಯದಲ್ಲಿ ನೆಲೆಸಿರುವ ಶಿವನಂದಾಮೃತವು ಪೂಜಕರ ಇಚ್ಛೆ ಯತ್ನಾದಿಗಳಿಂದ ಸುಷುಮ್ನಾ ಮಾರ್ಗವಾಗಿ ಪಾದಾಂಗುಷ್ಠ ದ್ವಾರದಿಂದ ಬಹಿಷ್ಕರಿಸಿ ಭಕ್ತನ ಹಸ್ತಗತವಾಗುವುದು. ಆ ಭಕ್ತನು ತಾನು ಪಡೆದುಕೊಂಡು ಪರಮಾನಂದ ಶಿವಸ್ವರೂಪವೇ ಪ್ರತ್ಯಕ್ಷವಾಗಿರುವುದನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸದೆ ಸ್ವೀಕರಿಸಬಾರದು. ಸ್ವೀಕರಿಸಿದ್ದಾದರೆ ಪಾತಿತ್ಯವುಂಟಾಗುವುದೆಂಬ ಶಾಸ್ತ್ರವಿಧಿಗನುಸರಿಸಿ ಆ ಪೂಜ್ಯ ಮೂರ್ತಿಗಳಿಗೆ ಭಕ್ತಿಪೂರ್ವಕ ಶಿವನಂದಾಮೃತವನ್ನು ಅರ್ಪಿಸಿದರೆ ಅವರು ಕೈಕೊಳ್ಳಲೇಬೇಕು. ಪಕ್ಷಾಂತರ ಕೈಕೊಳ್ಳದಿದ್ದರೆ ಭಕ್ತನ ಸಶಾಸ್ತ್ರೀಯವಾದ ಭಕ್ತಿಯನ್ನು ತಿರಸ್ಕರಿಸಬಾರದೆಂಬ ಶಾಸ್ತ್ರೋಕ್ತಿಯ ಉಲ್ಲಂಘನೆಯೇ ವೀರಶೈವ ಮತದ ಭಾಕ್ತಿಕ ಧರ್ಮಾಚರಣೆಗೆ ಲೋಪವುಂಟಾಗುವುದು. ಆದ್ದರಿಂದ ಯೋಗ್ಯವೆಂದು ಅದನ್ನು ಸ್ವೀಕರಿಸಿದರೆ ದತ್ತಾಪಹಾರ ದೋಷವೆನಿಸುವುದು. ಮಧ್ಯೆ ಸಮಷ್ಟಿಯಿಂದ ಆದಿ ಸಮಷ್ಟಿಗೆ ಹೋಗಬೇಕಾದುದು ಸ್ವಭಾವಸಿದ್ಧವಾದುದು. ದತ್ತಾಪಹಾರ ದೋಷವೆಂದರೆ ದಾನವನ್ನು ಕೊಡತಕ್ಕ ವಸ್ತುವಿನಲ್ಲಿ ತನ್ನದೆಂದು ತೆಗೆದುಕೊಂಡು ತನ್ನ ಸ್ವಾರ್ಥಕ್ಕಾಗಿ ಉಪಯೋಗ ಮಾಡುವುದೆ ದತ್ತಾಪಹಾರ ದೋಷವೆನಿಸುವುದು.

 ಉದಾಹರಣೆಗಾಗಿ : ಗುರು ಲಿಂಗ ಜಂಗಮಕ್ಕೆ ತನು ಮನ ಧನಗಳನ್ನು ಸಂಕಲ್ಪಪೂರ್ವಕ ಅರ್ಪಿಸಿ ಮರಳಿ ಆ ಗುರು ಜಂಗಮರ ಸೇವೆಗಾಗಿಯೂ ಆ ಗುರು ಜಂಗಮರ ಇಚ್ಛಾನುಸಾರವಾದ ವೀರಶೈವ ಧರ್ಮಾರ್ಥ ಕಾರಗಳಿಗಾಗಿಯೂ ಆ ತನು ಮನ ಧನಗಳ ವಿನಿಯೋಗಿಸದೆ ತನ್ನ ಮತ್ತು ತನ್ನವರ ಶರೀರಾದಿಗಳ ರಕ್ಷಣೆಗಾಗಿಯೂ ಬಂಧು ಬಳಗದವರ ಪೋಷಣೆಗಾಗಿಯೂ ಆ ತನು ಮನ ಧನಗಳನ್ನು ಪ್ರಯೋಗಿಸಿದರೆ ದತ್ತಾಪಹಾರ ದೋಷವೆನಿಸುವುದು. ಮತ್ತು ಶಿವನು ಲೋಕದಲ್ಲಿ ಅನೇಕ ಪದಾರ್ಥಗಳನ್ನು ಕೊಟ್ಟಿರುವನಷ್ಟೆ ? ಭಕ್ತನು ಭಕ್ತಿಯಿಂದ ಆ ಪದಾರ್ಥಗಳನ್ನು ಶಿವನಿಗೆ ಅರ್ಪಿಸಿದರೆ ಅವುಗಳನ್ನು ಪರಮಾತ್ಮನು ಸ್ವೀಕರಿಸದಿದ್ದರೆ ಆ ಭಕ್ತನು ಹೇಗೆ ಉದ್ಧಾರವಾಗಬೇಕು ? ಸ್ವೀಕರಿಸಿದ್ದಾದರೆ ಶಿವನು ದತ್ತಾಪಹಾರಕನಾಗುವನೇನು ? ಅದರಂತೆ ಪರಶಿವನ ಆಜ್ಞಾನುಸಾರವಾಗಿಯೂ ಜಗದ್ದಿತಾರ್ಥವಾಗಿಯೂ ಅವತರಿಸಿದ ಗುರು ಇಚ್ಛಾನುಸಾರವಾಗಿಯೂ ಜಂಗಮರ ಉತ್ತಮಾಂಗಗತ ಚಿದ್ರಸವನ್ನು ಶಿಷ್ಯನ ಪ್ರಾರ್ಥನಾದಿಗಳಿಂದ ಸಾಕ್ಷತ್ಕರಿಸಿದ್ದನ್ನು ಭಕ್ತನು ಭಕ್ತಿಪೂರ್ವಕ ಆರ್ಪಿಸಲು  ಅದನ್ನು ಆ ಪೂಜ್ಯರು ಸಸ್ವರೂಪವಾದ ಲಿಂಗಕ್ಕರ್ಪಿಸಿ ಆ ಲಿಂಗಮೂರ್ತಿಯ ಕೃಪಾಪ್ರಸಾದವನ್ನು ಸೇವಿಸಿದುದಕ್ಕೆ ದತ್ತಾಪಹಾರ ದೋಷವು ವಿರುವುದೆಂದು ಹೇಳುವ ಬಗೆ ಹೇಗೆ ? ಅಲ್ಲದೆ ನಾವು ನಿತ್ಯಲಿಂಗ ಪೂಜೆಯಲ್ಲಿ ಲಿಂಗಕ್ಕೆ ಅರ್ಪಿಸಿದುದನ್ನೆಲ್ಲ ಲಿಂಗವು ಕೈಕೊಂಡರೆ ಅದೂ ಸಹ ಲಿಂಗದ ದತ್ತಾಪಹಾರ ವಾದೀತಲ್ಲವೆ ?

೨೨. ಗುರು ಕರುಣಿಸಿದ ಲಿಂಗವನ್ನು ಪೂಜ್ಯವೆಂದು ತಿಳಿದು ಆರಾಧಿಸುವರು. ಆ ಲಿಂಗಕ್ಕೆ ಮಾತೃಸ್ಥಾನವಾದ ಗುರುಮೂರ್ತಿಯನ್ನು ಮಾತ್ರ ಧಿಕ್ಕರಿಸುವುದು ತನ್ನ ಜನಕನ ಮುಖ್ಯ ಸಾಮರ್ಥ್ಯವನ್ನು ತಿರಸ್ಕರಿಸಿದವನಿಗಿಂತಲೂ ಅಧಿಕವಾದ

ದೋಷವಾಗುವುದು. ಗುರುವಿಲ್ಲದೆ ಲಿಂಗ ದೊರೆಯದು. ಕಾರಣ ಸಾಧಕ ಗುರುವಾಗಿದ್ದರೂ ಆತನಲ್ಲಿ ದೋಷವನ್ನು ಕಲ್ಪಿಸಬಾರದು; ಗುಣವನೆಣಿಸಬಾರದು. ಶಿವಸ್ವರೂಪರಾದರೂ ಸ್ವಸ್ವರೂಪ ಲಿಂಗಭಕ್ತರು ಎಣಿಸಿದ ಗುರು ಜಂಗಮರು ತಮ್ಮ

ಅನುಸಂಧಾನದ ನಿಲುಕಡೆಗೆ ಅತೀತವಾದ ಅಣುಚಕ್ರದ ನಿರಂಜನ ಲಿಂಗದಿಂದ ಭಾವಲಿಂಗಕ್ಕೆ ಪ್ರಾಣರೂಪವಾದ ಪರ ಜಂಗಮದಿಂದೊಗೆದ ಚಿತ್ಕಲೆಯೇ ಭಕ್ತನ ಭಕ್ತಿ ಪ್ರಾರ್ಥನಾದಿಗಳಿಂದ ಶಿಖಾಚಕ್ರಕ್ಕೆ ಆವಿರ್ಭವಿಸಿದಲ್ಲಿ ಪ್ರಾಣಲಿಂಗಕ್ಕೆ ಚೇತನಾ

ರೂಪವಾದ ಚರಜಂಗಮದಿಂದೊಗೆದು ಚಿನ್ನಾದ ಸ್ವರೂಪವನ್ನು ಧರಿಸಿ ಅಲ್ಲಿಂದ ಭಕ್ತನ ಪ್ರಾರ್ಥನೆಯ ವಿಶೇಷದಿಂದ ಬ್ರಹ್ಮರಂಧ್ರಕ್ಕೆ ಅವತರಿಸಿ ಅಲ್ಲಿಯ ಇಷ್ಟಲಿಂಗಕ್ಕೆ ಚೇತನ ಸ್ವರೂಪವಾದ ಸ್ವಯಜಂಗಮದಿಂದೊಗೆದ ಚಿದ್ಬಿಂದುವೇ ಚಿದ್ರಸವೆನಿಸಿ ಭ್ರೂಮಧ್ಯಾದಿ ಆಧಾರಾಂತವಾದ ಮಹಾಲಿಂಗಾದಿ ಆಚಾರ ಲಿಂಗಾಂತಮಾದ ಷಡ್ಲಿಂಗಗಳನ್ನು ಭಕ್ತನು ಪ್ರಾರ್ಥಿಸಿ ಭಾವನಾದಿ ಸಂಸ್ಕಾರ ವಿಶೇಷದಿಂದ ಆಯಾ ಲಿಂಗಗಳಿಂದ ಆಯಾ ಸ್ಥಾನಗಳಿಗೆ ಅವತರಿಸುತ್ತ ಮೂಲಾಧಾರಗತವಾದ ಆಚಾರಲಿಂಗ ಸ್ಥಾನದಲ್ಲಿ ಇತ್ತೆರನಾಗಿ ಲಿಂಗಾಂಗ ಶಿವಶಕ್ತಿ ಗುರುಲಿಂಗ ಈ ಅಪರ ಪರ್ಯಾಯ ನಾಮಗಳುಳ್ಳ ಪಾದಾಂಗುಷ್ಠ ದ್ವಯಗಳಿಂದ ಆಯಾ ಸ್ವರೂಪವನ್ನು ಹೊಂದಿ ಬಲದಂಗುಷ್ಠದಲ್ಲಿ ಗುರು  ಪಾದೋದಕವಾಗಿ   ಎಡದಂಗುಷ್ಠದಲ್ಲಿ ಲಿಂಗಪಾದೋದಕವಾಗಿ ಅವತರಿಸಿದ ನಂತರ ಆ ಎರಡು ಅಂಗುಷ್ಠಗಳ ಮಧ್ಯದಲ್ಲಿ ಸಂಬಂಧದಿಂದುಂಟಾದ ಸಾಮರಸ್ಯ ರೂಪಾದ ಜಂಗಮ ಪಾದೋದಕವು ಅವತರಿಸಿ ಆಯಾ ಮಂತ್ರ ತಂತ್ರ ಪ್ರಯೋಗಗಳಿಂದ ಸಂಸ್ಕರಿಸಿದ ಪರಿಶುದ್ಧ ಪಾತ್ರೆಯಲ್ಲಿ ಕಂಗೊಳಿಸುತ್ತಿರುವುದು.

೨೩. ಲಿಂಗದಲ್ಲಿ ಲಿಂಗ ಪಾದೋದಕವನ್ನು, ಗುರುವಿನಲ್ಲಿ ಗುರು ಪಾದೋದಕವನ್ನು, ಜಂಗಮದಲ್ಲಿ ಜಂಗಮ ಪಾದೋದಕವನ್ನು ಹೊಂದಬೇಕೆಂಬ ವಿಶೇಷ ವಿಧಿಯಲ್ಲ. ಶಿವ ಪಾದೋದಕವನ್ನು ಸ್ವೀಕರಿಸಬೇಕೆಂಬ ಸಾಮಾನ್ಯ ವಿಧಿಯಾಗಿರುವುದು. ಗುರು ಲಿಂಗ ಜಂಗಮ ತ್ರಿವಿಧ ಪಾದೋದಕವನ್ನು ಸ್ವೀಕರಿಸಬೇಕು. ಅದರಲ್ಲಿ ಒಂದು ಕಡಿಮೆಯಾದರೂ ಅದು ಅನಶನವಾಗುವುದು; ಎಂಬ ವಿಶೇಷ ವಿಧಿಯು ಮಾತ್ರ ಇರುವುದು. ಗುರುಜಂಗಮರು ಸ್ವಪಾದೋದಕದಿಂದ ಸ್ವಪೂಜ್ಯವಾದ ಲಿಂಗಕ್ಕೆರೆಯುವರೆಂದು ಭ್ರಮಾದೃಷ್ಟಿಯುಳ್ಳವರಿಗೆ ಕಂಡರೂ ಪ್ರಮಾದೃಷ್ಟಿ ಯುಳ್ಳವರಿಗೆ ಮಾತ್ರ ಹಾಗೆ ಕಾಣದು. ಒಬ್ಬನು ಮಗಳನ್ನೂ ಮಡದಿಯನ್ನೂ ಆಲಂಗಿಸುವನು. ಆದರೆ ದೋಷದೃಷ್ಟಿಯುಳ್ಳವನಿಗೆ ಪುತ್ರಿಯ ಆಲಿಂಗನವೂ ಸಹ ದೋಷವಾಗಿಯೇ ಕಾಣುವುದು. ಪ್ರಮಾದೃಷ್ಟಿಯುಳ್ಳ ವಿಚಾರಿಗೆ ಮಾತ್ರ ಆ ಆಲಿಂಗನದ ನಿರ್ದೋಷದ ನಿಜಸ್ಥಿತಿಯು ಗೊತ್ತಾಗುವುದು. ಇದು ಸ್ವಚ್ಛವಾದ ನಂತರ ಪರಬ್ರಹ್ಮಸ್ವರೂಪ ಗುರು ಲಿಂಗ ಜಂಗಮದ ಪಾದೋದಕವು.

೨೪. ಪತಿ ಸ್ಥಾನವನ್ನು ಹೊಂದಿದವನು ಪೂಜ್ಯನು. ಪತ್ನಿ ಸ್ಥಾನಾಪನ್ನನಾದವನು ಪೂಜಕನು. ಪತಿರೂಪನಾದ ಪೂಜ್ಯನಿಂದ ಪತ್ನಿ ಸ್ವರೂಪನಾದ ಪೂಜಕನಲ್ಲಿ ಆವಿರ್ಭವಿಸಿ ಪಾದೋದಕ ಶಿಶುವು ತೋರುವುದು. ಇದಕ್ಕೆ ಉದಾಹರಣೆಗಾಗಿ ಕೊಟ್ಟಿರುವ

ಲೋಕಾನುಭವವಾದರೂ ವಿರೋಧಿಸದು. ಸತಿ-ಪತಿಗಳ ಸಾಮರಸ್ಯ ಸಂಯೋಗ ದಿಂದುಂಟಾಗುವ ಶಿಶುವು ಪತಿಯಲ್ಲಿ ಅವ್ಯಕ್ತರೀತಿಯಿಂದ ಬಿಂದುವಿನಷ್ಟು ಜೀವ ಚೈತನ್ಯ ರೂಪವಾಗಿ ಮೂರು ತಿಂಗಳು ವಾಸ ಮಾಡಿದ್ದು ಸತಿಪತಿಗಳ ಸಂಯೋಗ

ವಿಶೇಷದಿಂದ ಘನೀಭೂತವಾದ ಬಿಂದುವೇ ದ್ರವಿಸಿ ಆ ಜೀವ  ಚೈತನ್ಯದೊಡಗೊಂಡು ಜನನ ಧೃತಿಯೆನಿಸಿ  ಸತಿಯ ಗರ್ಭವನ್ನು ಪ್ರವೇಶಿಸಿ ಕ್ರಮದಿಂದ ಸಾವಯವ ರೂಪ ಪಿಂಡವು ವರ್ಧನವಾಗುತ್ತ ಕಡೆಗೆ ಬಹಿಷ್ಕೃತವಾಗಿ ಪುತ್ರರೂಪದಿಂದ ತೋರುವಂತೆ ಪೂಜ್ಯನಲ್ಲಿದ್ದ ಪಾದೋದಕವು ಪೂಜಕನಲ್ಲಿ ತೋರುವದಾದ್ದರಿಂದ ವಿರೋಧವೆನಿಸದು.

೨೫. ಅದು ತನ್ನ ಪಾದೋದಕವಲ್ಲ. ಹೇಗೆಂದರೆ : ವ್ಯಾಪ್ಯನಾದ ಗುರುವು ಅಥವಾ ಜಂಗಮವು ಅಭಿನ್ನವಾದ ಪರಲಿಂಗಾನುಭವದಿಂದ ಅನುಸಂಧಾನದಿಂದಿರುವಾಗ ಆ ಪಶ್ಚಿಮ ಚಕ್ರಗತವಾಗಿ ಸ್ವಸ್ವರೂಪದಿಂ ಘನೀಭೂತವಾಗಿದ್ದ ಆನಂದವೇ ದ್ರವಿಸಿ ಭಕ್ತನ ಕ್ರಿಯಾಕಲಾಪಗಳಿಂದ ಭೇದರೂಪವಾಗಿ ಪಾದದ್ವಾರಾ ತೋರುವುದು. ಅಂತಹ ಪರಲಿಂಗ ಸ್ವರೂಪ ಆನಂದ ರಸವನ್ನು ಭಕ್ತನು ಭಕ್ತಿಯಿಂದ ಶಾಸ್ತ್ರ ವಿಧಿಗನುಸರಿಸಿ ಪೂಜ್ಯರಿಗೆ ಅರ್ಪಿಸುವನು. ಅದನ್ನೇ ಆ ಭಕ್ತಿರೂಪವಾಗಿ ಬಂದ

ಶಿವಾನಂದರೂಪ ತೀರ್ಥವನ್ನೇ ಪೂಜ್ಯರು ತಮಗೆ ಪೂಜ್ಯವೆನಿಸಿದ ಸ್ವಸ್ವರೂಪ ಲಿಂಗಕ್ಕೆ ಅರ್ಪಿಸಿ ಸೇವಿಸುವುದರಿಂದ ದೋಷವೆನಿಸುವುದಿಲ್ಲ. ಆದ್ದರಿಂದ ಸ್ವಪಾದೋದಕವನ್ನು ಶ್ರೇಷ್ಟ ಲಿಂಗಕ್ಕೆ ಅಭಿಷೇಕಿಸಿ ಸ್ವೀಕರಿಸುವುದು ಭೇದಾಭೇದ ಸಿದ್ಧಾಂತ ವಿರೋಧವೆನಿಸದು. ವೀರಶೈವ ಮತವು ಭೇದಾಭೇದ ಸ್ವರೂಪವುಳ್ಳದ್ದಾದ್ದರಿಂದ ಪಾದೋದಕವಾದರೂ ಸ್ವಸ್ವರೂಪದಲ್ಲಿ ಅಭೇದರೂಪವಾಗಿಯೂ ಕ್ರಿಯೆಯಲ್ಲಿ ಭೇದರೂಪವಾಗಿಯೂ ತೋರುವುದು. ಇಂತಹ ಭೇದಾಭೇದ ಸ್ವರೂಪವೆನಿಸಿದ ಚಿದ್ರಸಕ್ಕೆ ಸ್ವಪಾದೋದಕವೆಂದು ಆಕ್ಷೇಪಿಸುವುದು ವೀರಶೈವಮತ ಸಿದ್ಧಾಂತಕ್ಕೆ ವಿರೋಧವೆನಿಸುವುದು.

ಜ.ಚ.ನಿ

ಕನ್ನಡ ನಾಡಿನಲ್ಲಿ ಇಂದಿನವರೆಗೂ ಆಗಿ ಹೋದ ಅನಂತ ಮಹಾನುಭಾವರು ಒಂದೊಂದು ಕೃತಿ ಕಲೆಗಳಿಂದ ತಮ್ಮ ತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ; ರಹಸ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಕಲಾವಂತರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿದ್ದಾರೆ. ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸಿದ ಶ್ರೇಷ್ಠ ಮಹಾನುಭಾವನೆಂದರೆ ವರಿಷ್ಠ ಕಾರಣಿಕ ಪುರುಷನೆಂದರೆ ಲಿಂ. ಶ್ರೀ ನಿ. ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು. ಅವರ ಇಡೀ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ; ಐಹಿಕಾಮುಷ್ಮಿಕ ಸಾಧನವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸದ್ಗುಣಗಳು ಗುಂಪಿತವಾಗಿದ್ದವು; ಗುಡ್ಡೆಯಾಗಿದ್ದವು. ವಿಚಾರ ಸ್ವಾತಂತ್ರ ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯಭಿಮಾನ, ಕಾರ್ಯಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದವು. ಅಸದೃಶವಾದ ಸ್ವಾರ್ಥತ್ಯಾಗ, ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ

ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾತ್ತ ಉದ್ದೇಶ, ಉದಾರ ಉತ್ತೇಜನ, ಉನ್ನತ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಪ್ರಕೃತಿ ಗುಣಗಳಾಗಿದ್ದವು. ಈ ಎಲ್ಲ ಸದ್ಗುಣಗಳಿಂದ ಶ್ರೀ ಕುಮಾರಯೋಗಿಯು ತನ್ನ

ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿಯೆ ಇಡೀ ಕನ್ನಡ ಕುವರನಾಗಿ ಬದುಕಿದನು. ಕಾರಣಿಕನಾಗಿ ಬಾಳಿದನು. ಹೊಟ್ಟೆಯಲ್ಲಿ ಹುಟ್ಟುವ ಸಾಮಾನ್ಯ ಕುವರನು ತನ್ನ ತಂದೆ-ತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಇಡೀ ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲಕೇಳಿಗಳಿಂದ ತನ್ನ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು, ಅಸಾಧಾರಣವಾದ ಪ್ರೌಢಲೀಲೆಗಳಿಂದ ಪವಿತ್ರ ಕಾರ್ಯಗಳಿಂದ ಇಡೀ ಜನಾಂಗವನ್ನು ಕಡುಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರಯೋಗಿಯು ಮಾಡಿದನು; ಮಹಾಕಾರಣಿಕನಾದನು. ಆತನ ಸಹಜವಾದ ಸಣ್ಣನಗೆ, ನನ್ನಿವಾತು, ಪುಣ್ಯಕಳೆಗಳನ್ನು ಕಂಡು ಕೇಳಿ ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ, ಮಿತವಾದ ಅನುಭವಪೂರ್ಣ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ ಪಾಮರರಿಲ್ಲ. ಅವರು ಕೈಕೊಳ್ಳುತ್ತಿರುವ ಕಲ್ಮಷರಹಿತವಾದ ಕಾರ್ಯಕಲಾಪಗಳಿಗೆ ಸಂಪತ್ತು ಸಹಾಯಗಳನ್ನು ನೀಡದ ಸಾಹುಕಾರರಿಲ್ಲ, ಸಾಮಾಜಿಕರಿಲ್ಲ.

 ಅವರು ಓಜಸ್ಸಿನಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೆ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಆಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅಡಿಯನ್ನಿಟ್ಟರು. ಆ ಮಹತ್ಕಾರ್ಯಗಳಲ್ಲಿ ಒದಗುವ ತೊಡಕು ತೊಂದರೆಗಳಿಗೂ ಬರುವ ಭಯಭೀತಿಗಳಿಗೂ ಅವರು ಅಂಜಲಿಲ್ಲ; ಅಳುಕಲಿಲ್ಲ. ದೊಡ್ಡ ಪ್ರವಾಹವು ತನಗೆ ಎದುರಾಗುವ ಕಾಡುಗೀಡುಗಳನ್ನು ತನ್ನ ಸೆಳೆವಿನಿಂದ ಭೇದಿಸಿ, ದೊಡ್ಡ ದೊಡ್ಡ ದುಂಡುಬಂಡೆಗಳ ಮೇಲೆ ನೆಗೆದು ಮುಂದಕ್ಕೆ ಸಾಗುವಂತೆ, ಸಾಗರ ಸೇರುವಂತೆ ಶ್ರೀಗಳು ತಮ್ಮ ಸತ್ಕಾರ್ಯಸಾಧನೆಯಲ್ಲಿ ಎಡೆಬಿಡದೆ ಅಡ್ಡಬರುವ ದುರಂತವಾದ ಎಡರುತೊಡರುಗಳನ್ನು ಸಹ ತನ್ನ ವೈರಾಗ್ಯದ ವಜ್ರಾಘಾತದಿಂದ ಹೊಡೆದು ಒಡೆದು ಪುಡಿಮಾಡಿ ತನ್ನ ಧೈಯದತ್ತ ವಾಯುವೇಗದಿಂದ ಸಾಗಿದರು. ಸಾಧಿಸಿದರು. ಸತ್ಯವನ್ನು ಎತ್ತಿಹಿಡಿಯಲು ಸಮಾಜವನ್ನು ಸುಂದರಗೊಳಿಸಲು ಸ್ವಲ್ಪವೂ ಹೆದರದೆ ಹಿಂಜರಿಯದೆ ಛಲತೊಟ್ಟರು; ಬಲ ಮುಡಿಪಿಟ್ಟರು. ಅವರು ಮಾಡಿದ ಮಹಾಕಾರ್ಯಗಳ ಮಹಾಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು, ಬೆರಗುಗೊಳಿಸಿತು. ಆ ಪುಣ್ಯಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು; ದಾರಿ ಹಚ್ಚಿತು. ಆ ಕುಮಾರಯೋಗಿಯು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ ಪ್ರತಿಯೊಬ್ಬ ಸಮಾಜಾಭಿಮಾನಿಯ ಸಂಸ್ಕೃತಿಯಭಿಮಾನಿಯ ಹೃದಯಮಂದಿರದ ಮಾನ್ಯಮೂರ್ತಿಯಾದನು; ಪೂಜ್ಯವ್ಯಕ್ತಿಯಾದನು;  ಯೋಗಿಯಾದನು; ವಿರಾಗಿಯಾದನು ಕಾರಕನಾದನು; ಕಾರಣಿಕನಾದನು. ಅಂತಹ ಪುಣ್ಯಶ್ಲೋಕಿಯ ಪವಿತ್ರಚರಿತ್ರೆಯನ್ನು ಮನತಟ್ಟಿದ ರೀತಿಯಲ್ಲಿ ಮಂದಟ್ಟಾಗುವಂತೆ ಮುಂದಿರಿಸುವ ಪ್ರಯತ್ನ ಪಡಲಾಗಿದೆ; ಪ್ರವೇಶ ಮಾಡಲಾಗಿದೆ.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ವಿದ್ಯೆ-ಅವಿದ್ಯೆಗಳೆರಡೂ ಭಾರತೀಯ ತತ್ವಶಾಸ್ತ್ರದ ಅಮೂಲ್ಯ ಪಾರಿಭಾಷಿಕ ಪದಗಳು. ನಮ್ಮ ಪ್ರಾಚೀನ ಋಷಿಮುನಿಗಳ ದೃಷ್ಟಿಯಲ್ಲಿ ಇವು ಬ್ರಹ್ಮದ ಶಕ್ತಿಗಳು. ಈಗ ನಾವು ದಿನನಿತ್ಯ ‘ವಿದ್ಯೆ’ ಎಂದು ಕರೆಯುವುದೆಲ್ಲ ವಾಸ್ತವದಲ್ಲಿ ಅವಿದ್ಯೆ. ಅವಿದ್ಯೆ ಎಂದಾಕ್ಷಣ ತಿರಸ್ಕರಣೀಯವಾದುದು ಎಂದಲ್ಲ. ಲೌಕಿಕ ಜೀವನಕ್ಕೆ ತೀರ ಅಗತ್ಯವಾದುದು. ನಮ್ಮ ಐಹಿಕ ಸುಖ ಹಾಗು ಅಭ್ಯುದಯಕ್ಕೆ ಕಾರಣವಾದುದು ಈ ಅವಿದ್ಯೆಯೇ. ದಾರ್ಶನಿಕರು ಅವಿದ್ಯೆಗೆ ಕರ್ಮವೆಂದೂ ಕರೆದುದುಂಟು. ಕರ್ಮರಹಿತವಾಗಿ ಮನುಷ್ಯ ಬದುಕಲಾರ. ಆದರೆ ಅವನು ಮಾಡುವ ಕರ್ಮದಲ್ಲಿ ಅಂದರೆ ಭಗವತ್ಸೇವೆಯಲ್ಲಿ ನಾನೆಂಬ ಅಭಿಮಾನವಿರಬಾರದು. ಅಹಂಕಾರ ಮಮಕಾರಗಳಿಗೆ ಅಲ್ಲಿ ಅವಕಾಶವಿಲ್ಲ. ರಾಗದ್ವೇಷಗಳಿರಬಾರದು. ಪ್ರತಿಫಲಾಪೇಕ್ಷೆ ಇಲ್ಲದೆ ಶ್ರದ್ಧೆಯಿಂದ ಸೇವೆ ಮಾಡುವುದು ಸತ್ಯಕರ್ಮವೆನಿಸುವುದು. ಇದು ಮೃತ್ಯುವನ್ನು ಗೆಲ್ಲಲು ಅತ್ಯಂತ ಸಹಕಾರಿಯಾದುದು.

 ಅವಿದ್ಯೆ ಮೌಲಿಕವಾಗುವುದು ವಿದ್ಯೆಯ ಸ್ಪರ್ಶದಿಂದ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಅಂದರೆ ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಒಯ್ಯುವುದೋ ಅದು ನಿಜವಾದ ವಿದ್ಯೆ. ಇದು ಮನುಷ್ಯನನ್ನು ದೈವತ್ವಕ್ಕೇರಿಸುವುದು. ದಾರ್ಶನಿಕರ ದೃಷ್ಟಿಯಲ್ಲಿ ಈ ವಿದ್ಯೆಯೇ ಜ್ಞಾನ.  ಮನುಷ್ಯನ ಅಧ್ಯಾತ್ಮ ಸಾಧನೆಗೆ ಅತ್ಯವಶ್ಯವಾದುದು. ಇಂತಹ ವಿದ್ಯೆಯನ್ನು ಕರಗತ ಮಾಡಿಕೊಂಡವನು ನಿತ್ಯಾನಿತ್ಯವನ್ನು ವಿವೇಕವುಳ್ಳವನಾಗುತ್ತಾನೆ. ಐಹಿಕ ಸುಖ ಭೋಗಗಳನ್ನು ಕ್ಷಣಿಕವೆಂದು ಪರಿಭಾವಿಸಿ ಅವುಗಳಲ್ಲಿ ಪೂರ್ಣ ವಿರಕ್ತಿಯನ್ನು ಹೊಂದುತ್ತಾನೆ. ಸಂಯಮದಿಂದ ಕೂಡಿದ ಪವಿತ್ರ ಜೀವನವನ್ನು ನಡೆಸುತ್ತ ಸದಾ ಪರಮಾರ್ಥ ಚಿಂತನೆಯಲ್ಲಿ ಕಾಲ ಕಳೆಯುತ್ತಾನೆ. ಕೊನೆಗೆ ಬ್ರಹ್ಮನನ್ನು ಅರಿತು ಬ್ರಹ್ಮಸ್ವರೂಪಿಯೇ ಆಗುತ್ತಾನೆಂಬುದು ನಮ್ಮ ದಾರ್ಶನಿಕರ ಅಭಿಮತ.

ಮಾನವರ ಬದುಕಿನಲ್ಲಿ ವಿದ್ಯೆ-ಅವಿದ್ಯೆಗಳೆರಡೂ ಪ್ರಮುಖ ಸ್ಥಾನ ಪಡೆದಿವೆ. ಇವುಗಳ ಸಂಯೋಗದಿಂದ ಅಮೃತತ್ವವನ್ನು ಹೊಂದಲು, ಆತ್ಮತತ್ವ ತಿಳಿಯಲು ಸಾಧ್ಯವಾಗುತ್ತದೆ.

ವಿದ್ಯಾಂ ಚಾ ವಿದ್ಯಾಂ ಚ ಯಸ್ತದ್ವೇದೋ ಭಯಗ್ಂ ಸಹ

 ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ

 ಅಂದರೆ ವಿದ್ಯೆ ಮತ್ತು ಅವಿದ್ಯೆಗಳೆರಡನ್ನೂ ಅರಿತವರು ಲೌಕಿಕ ರೂಪವಾದ ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ ಅಧ್ಯಾತ್ಮ ಸಾಧಕವಾದ ವಿದ್ಯೆಯ ಮೂಲಕ ಅಮೃತತ್ವವನ್ನು ಪಡೆಯುತ್ತಾರೆ ಎಂದರ್ಥ.

ಸಾಮಾನ್ಯ ಜನರು ತಮ್ಮ ಜೀವನವನ್ನು ಅವಿದ್ಯೆಗೆ ಸೀಮಿತಗೊಳಿಸಿ, ಪ್ರಪಂಚದಲ್ಲಿ ಸುಖ ಮತ್ತು ತೃಪ್ತಿಯನ್ನು ಹೊಂದಲು ಪ್ರಯತ್ನಿಸುತ್ತಾರೆ. ಆದರೆ ಜ್ಞಾನಿಗಳು ಅಮೃತತ್ವದ ಕಡೆಗೆ ಶಾಶ್ವತ ಸುಖದ ಕಡೆಗೆ ಸಾಗುತ್ತಾರೆ. ಒಟ್ಟಾರೆ ಮನುಷ್ಯ ಜೀವನದ ಗುರಿ ಅವಿದ್ಯೆಯನ್ನು ವಿದ್ಯೆಯಲ್ಲಿ ರೂಪಾಂತರಗೊಳಿಸುವುದು. ಅಂದರೆ ಅವಿದ್ಯೆಯ ದುರ್ಗಮ ಮಾರ್ಗದಲ್ಲಿ ಮುನ್ನಡೆದು ವಿದ್ಯೆಯ ಬೆಳಕಿನಲ್ಲಿ ಜೀವನವನ್ನು ಅರಳಿಸುವುದೇ ಆಗಿದೆ. ಹೀಗೆ ಆನಂದಮಯವಾದ ವಿದ್ಯಾಭೂಮಿಕೆಯಲ್ಲಿ ಜೀವನವನ್ನು ಅರಳಿಸಿದಾಗ ದಿವ್ಯತೃಪ್ತಿ ಹಾಗು ಅಮೃತತ್ವವನ್ನು ಪಡೆಯಲು ಸಾದ್ಯವಾಗುವದು.

ಡಾ:ಸ್ನೇಹಾ ಭೂಸನೂರ

ಮನುಷ್ಯ ಸಮಾಜ ಜೀವಿ. ಈ ಕಾರಣಕ್ಕಾಗಿ ಪರಸ್ಪರ ಸೌಹಾರ್ದ ಸಂಬಂಧ ಅನಿವಾರ್ಯ. ಎಲ್ಲ ಧರ್ಮೀಯರಿಗೂ ಅವರವರ ಪರಂಪರೆಯಿಂದ ಬಂದ ಧರ್ಮ ಗ್ರಂಥಗಳವೆ. ಅವುಗಳಲ್ಲಿಯ ನೀತಿ, ನಿಯಮಗಳು ಆಯಾ ಧರ್ಮೀಯರಿಗೆ ಸಾಮಾಜಿಕ ಆಚಾರ  ಸಂಹಿತೆಗಳಾಗಿವೆ. ಜೀವನದ ನಡೆ-ನುಡಿಯಲ್ಲಿ ಮಾತ್ರವಲ್ಲದೆ ಆಹಾರ ವಿಹಾರದಲ್ಲೂ ಈ ನಿಯಮಗಳು ಸ್ಪಷ್ಟವಾಗಿವೆ .ಹಾಗೆ ವಿವಿಧ ಧರ್ಮಗಳಿಗೆ ಅವುಗಳದೇ ಆದ ಆಚಾರಗಳು. ಯಾವ ಕಾರ್ಯ ಮನುಷ್ಯನ ಅಂತರಂಗ – ಬಹಿರಂಗದ ಅಭ್ಯುದಯಕ್ಕೆ ಕಾರಣವಾಗುವುದೋ ಅದನ್ನೇ ಧರ್ಮ ಎನ್ನಬಹುದು. ʼಧರ್ಮʼ ಶಬ್ದಕ್ಕೆ ದಾರ್ಶನಿಕರು ವಿಫುಲವಾದ ಅರ್ಥ ಕೊಟ್ಟಿದ್ದಾರೆ. ಅವೆಲ್ಲವುಗಳ ಸಾರ ಮಾನವ ಜೀವನದ ಉದ್ಧಾರವೇ ಆಗಿದೆ.  ಅಂತರಂಗದ ಅಗೋಚರ ಶಕ್ತಿಯ ಸಾಕ್ಷಾತ್ಕಾರಕ್ಕಾಗಿ, ಮನುಷ್ಯನು ಕಂಡಕೊಂಡ ಸಾಧನಾ ಮಾರ್ಗಗಳು ಹಲವಾರು.  ಭಕ್ತಿಯೋಗ, ಜ್ಞಾನಯೋಗ ಕರ್ಮಯೋಗ, ಧ್ಯಾನಯೋಗ ಇತ್ಯಾದಿಗಳು ಸಾಧನಾಯುಕ್ತ ಆಚರಣೆಯ ಮಾರ್ಗಗಳಾದವು. ಜಗತ್ತು- ಜೀವಾತ್ಮ-ಪರಮಾತ್ಮ ಸಂಬಂಧಗಳ ರಹಸ್ಯಗಳನ್ನು ಬಹಿರಂಗಗೊಳಿಸಲು ಪ್ರಯತ್ನಿಸಿದ ಮಾನವನು  ಈ ಮಾರ್ಗಗಳನ್ನು ಅವಲಂಬಿಸೆದ. ಇವೆಲ್ಲಾ ಕಾರ್ಯಗಳಿಗೆ  ಜೀವವೇ ಆಧಾರ. ದೇಹವೇ ಸಾಧನ ಸಂಪತ್ತಾಯಿತು. ಕೊನೆಗೆ ಜೀವಾತ್ಮ ಪರಮಾತ್ಮರ ಸಾಮರಸ್ಯವೇ  ಜೀವನದ ಗುರಿಯೆಂಬುದು ಆತನ ಅಂತಿಮ ನಿರ್ಧಾರವಾಯಿತು. ಅದರ ಸಾಧನೆ, ಸಿದ್ಧಿಯಲ್ಲಿ ವೈವಿಧ್ಯತೆ ಬೆಳೆಸಿಕೊಂಡು, ಬಳಸಿಕೊಂಡು ಸಂತೋಷ ಪಟ್ಟ. ಈ ಸಾಧನೆಯ ಮಾರ್ಗಗಳೇ ಆಚಾರಗಳು. ಅದನ್ನು ಸರಳವಾಗಿ ಹೇಳುವುದಾದರೆ ನಡೆಯೇ ಆಚಾರ, ನುಡಿಯೇ ವಿಚಾರ . ಜಗತ್ತಿನ ಎಲ್ಲ  ಧಾರ್ಮಿಕ , ದಾರ್ಶನಿಕ, ಸಾಂಸ್ಕೃತಿಕ, ಸಾಮಾಜಿಕ ನಡೆ ನುಡಿಗಳೇ ಆಧಾರವೆಂಬುದನ್ನು ಧರ್ಮ ಗ್ರಂಥಗಳು ಒತ್ತುಕೊಟ್ಟು ಹೇಳಿವೆ.

ಆಚಾರ:

ಆಚಾರವೆಂದರೆ  ಅನುಸಂಧಾನಕ್ಕೆ ಪೂರಕವಾದ ಕ್ರಿಯೆಗಳು ಎನ್ನುಬಹುದು . ಈ ಕ್ರಿಯೆಗಳು ಸಾಧಕನು ಸಿದ್ದಿ ಪಡೆಯಲು  ಅನುಸರಿಸಬೇಕಾದ ನಿಯಮಗಳಾಗಿವೆ ಇದನ್ನು  ʼನೀತಿ ಪಾಲನೆʼ  ಎಂದು ಇನ್ನೊಂದು ಹೆಸರಿನಿಂದಲೂ ಕರೆಯಬಹುದು.ನೀತಿ ಸಾರ್ವಜನಿಕವಾದ ಆಚರಣೆಯಾಗಿದೆ, ಸಮಾಜ ಜೀವಿಯಾದವನು ಪರಸ್ಪರ  ಸೌಹಾರ್ದಯುತ ಜೀವನ ಸಾಧನೆಗೆ ಅನುಸರಿಸುವ ಸಾಮಾಜಿಕ ಬಾಹ್ಯಾ ನಿಯಮಗಳನ್ನು ನೀತಿ ಎನ್ನಬಹದು. ಹಿಂದೂ ಸಂಸ್ಕೃತಿಯಲ್ಲಿ ಆಚಾರ – ನೀತಿ -ಧರ್ಮ ಒಂದೇ ಆಗಿವೆ.  ನಮ್ಮ ಋುಷಿ ಮುನಿಗಳು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜೀವನದ ಗುರಿ ಸಾಧನೆಗೆ ಅನೇಕ ನಿಯಮಗಳನ್ನು ಸೂಚಿಸಿ ಅಪಾರ ಸಾಹಿತ್ಯವನ್ನು ಸೃಷ್ಟಿಸಿದರು. ಅವು ಶ್ರುತಿ, ಸ್ಮೃತಿ ಮತ್ತು ಸೂತ್ರ ಸಾಹಿತ್ಯವೆಂದು ಪ್ರಸಿದ್ಧಿ ಪಡೆದಿವೆ.

ಪಾಶ್ಚಾತ್ಯರ ಚಿಂತನೆ :

ಪಾಶ್ಚಾತ್ಯರು ಆಚಾರಗಳನ್ನು ‘ಎಥಿಕ್ಸ್’ (Ethics) ಎಂದೂ ‘ಮಾರಲ್’ (Moral) ಎಂದೂ ಕರೆದಿದ್ದಾರೆ. ‘ಎಥಿಕ್ಸ್’ ಪದವು ‘ಆಯಾ ಸಮಾಜದ ಸಂಸ್ಕಾರಗಳು’, ‘ಆಚಾರ ಪದ್ಧತಿಗಳು’ ಎಂಬ ಅರ್ಥವನ್ನು ಒಳಗೊಂಡರೆ, ‘ಮಾರಲ್’ ಎಂಬುದು, ತನ್ನ ಸಮಾಜದೊಡನೆ ವ್ಯವಹರಿಸುವಾಗ ಅನುಸರಿಸಬೇಕಾದ ನಿಯಮಗಳು’ ಎಂದಿದೆ. ಪಾಶ್ಚಾತ್ಯ ದಾರ್ಶನಿಕ ಸಾಕ್ರೆಟಿಸ್‌ನು ‘ಜೀವನದ ನೀತಿ ನಿಯಮಗಳ ಶ್ರೇಷ್ಠತೆಯನ್ನು ದಾರ್ಶನಿಕರ ಅನುಭವಗಳ ಆಧಾರದ ಮೇಲೆ ನಿರ್ಧರಿಸಬೇಕು’ ಎನ್ನುತ್ತಾನೆ. ಸ್ಪೇನ್ ದೇಶದ ತತ್ವಜ್ಞಾನಿ ಸ್ಪೀನೋಜಾ ತನ್ನ ‘ಎಥಿಕ್ಸ್’ ಗ್ರಂಥದಲ್ಲಿ, ‘ಜಗತ್ತಿನ ಆಗು ಹೋಗುಗಳೆಲ್ಲಾ ದೇವರ ಇಚ್ಛೆಯಂತೆಯೇ ನಡೆಯುತ್ತವೆ. ಅದನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿಲ್ಲ. ಶ್ರೇಷ್ಟ ಜನರು ಅದನ್ನೇ ಅನುಸರಿಸಿ ನಡೆಯುತ್ತಾರೆ. ಅದೇ ನೀತಿ ಮಾರ್ಗ” ಎನ್ನುತ್ತಾನೆ. ಜರ್ಮನಿಯ ದಾರ್ಶನಿಕ ಇಮ್ಯಾನುಯಲ್ ಕಾಂಟ್‌ನು ವೈಜ್ಞಾನಿಕ ಅರಿವಿನ ಹಿನ್ನೆಲೆಯಲ್ಲಿ ದರ್ಶನವನ್ನು ಚಿಂತಿಸಿದವನು. ನೀತಿಶಾಸ್ತ್ರಕ್ಕೆ ಸಂಬಂಧಪಟ್ಟಂತೆ ತನ್ನ “The Critics of Practice Reason” ಗ್ರಂಥದಲ್ಲಿ ಮಾನವ ಸ್ವತಂತ್ರ ಮತ್ತು ಶಾಶ್ವತ. ದೇವರಿದ್ದಾನೆ ಎಂಬ ನಂಬಿಗೆಗೆ ನಮ್ಮಲ್ಲಿರುವ ನೀತಿ ನಿಯಮಗಳೇ ಆಧಾರ. ನೀತಿಯು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿದೆ’ ಎನ್ನುತ್ತಾನೆ. ಹದಿನೆಂಟನೆಯ ಶತಮಾನದ ಜಾನ್ ಸ್ಟುವರ್ಟ್‌ಮಿಲ್ ಹಾಗೂ ಜೆರೆಮೆ ಬೆಂಥ್ಯಾಮ್ ಚಿಂತಕರು, ಬಹುಜನರಿಗೆ ಸುಖವಾಗುವ ನಡುವಳಿಕೆಗಳನ್ನು ನೀತಿ’ ಎನ್ನುತ್ತಾರೆ. ಹೀಗೆ ಪಾಶ್ಚಾತ್ಯ ದಾರ್ಶನಿಕರ ಪ್ರಕಾರ ಸಹ, ನೀತಿ ಎಂಬುದು ಧರ್ಮದ ಪ್ರಮುಖ ಅಂಶವಾಗಿದೆ. ಆದ್ದರಿಂದ ಧರ್ಮಕ್ಕೆ ಮಹತ್ವ ಬರುವುದು ನೀತಿಯ ಆಚರಣೆಯಿಂದ ಎಂಬುದು ಸುವ್ಯಕ್ತವಾಗುತ್ತದೆ.

ಭಾರತೀಯರ ದೃಷ್ಟಿಯಲ್ಲಿ ಧಾರ್ಮಿಕ ಆಚರಣೆಗಳು ನೀತಿಯ ಆಚರಣೆಗಳೇ ಆಗಿವೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ವಿಶಿಷ್ಟ ಆಚರಣೆಗಳಿವೆ. ಬಾಹ್ಯದಲ್ಲಿ ಭಿನ್ನತೆಯಿದ್ದರೂ ಆಯಾ ಆಚರಣೆಗಳ ಗುರಿಯೆಲ್ಲಾ ಒಂದೇ ಆಗಿರುತ್ತದೆ. ಮಾನವ ಜೀವನಕ್ಕೆ ಒಂದು ಗುರಿಯಿದೆ. ಆ ಗುರಿ ಯಾವುದೆಂದು ತೋರಿಸಿ ಕೊಡುವುದೇ ದರ್ಶನ. ನಮ್ಮಲ್ಲಿರುವ ಆಂತರಿಕ ಚೈತನ್ಯಕ್ಕೆ ಆತ್ಮ-ಜೀವಾತ್ಮಎಂದು ಕರೆಯುತ್ತೇವೆ. ಅದು ಪರಮಾತ್ಮನ ಅಂಶವೇ ಆಗಿದೆ. ಜೀವಾತ್ಮ ಪರಮಾತ್ಮ ಅಭಿನ್ನ ಎಂದು ನಿರ್ಧರಿಸಿದ ದರ್ಶನಗಳು ಕೆಲವು.  ಜೀವಾತ್ಮನು ಪರಮಾತ್ಮನ ಕೇವಲ ಅಂಶ ಮಾತ್ರ ಎಂದು ನಂಬಿದ ದರ್ಶನಗಳು ಕೆಲವು. ಜೀವಾತ್ಮ

ಪರಮಾತ್ಮರ ಸಾಮರಸ್ಯವೇ ಜೀವನದ ಗುರಿ, ಅದೇ ಮುಕ್ತಿ.   ಜೀವಾತ್ಮ ಕರ್ಮ ವಿಶೇಷದಿಂದ ದೇಹಾತ್ಮವಾಗಿ ಒಂದು ರೀತಿಯ ಬಂಧನವನ್ನು ಅನುಭವಿಸುತ್ತದೆ. ಅದು ಬಿಡುಗಡೆ ಹೊಂದಿ ಪರಮಾತ್ಮನಲ್ಲಿ ಬೆರೆಯಬೇಕು. ಅದೇ ಜೀವನದ ಗುರಿ’, ಎಂದು ಮತ್ತೆ ಕೆಲವು ದರ್ಶನಗಳು ಪ್ರತಿಪಾದಿಸಿವೆ. ವೀರಶೈವ ದರ್ಶನಗಳಲ್ಲಿ ಜೀವಾತ್ಮ ಪರಮಾತ್ಮನ ಬೆರೆಯುವಿಕೆಯನ್ನು ಲಿಂಗಾಂಗ

ಸಾಮರಸ್ಯ ಎಂದೂ ಶಿವಜೀವೈಕ್ಯವೆಂದೂ ಕರೆಯಲಾಗಿದೆ. ಹೀಗೆ ಗುರಿಯನ್ನು ವಿವಿಧ ದರ್ಶನಗಳಲ್ಲಿ ವಿವಿಧ ರೀತಿಯಲ್ಲಿ ವಿಶ್ಲೇಷಿಸಿವೆ. ಈ ಪ್ರಯತ್ನಕ್ಕಾಗಿ ಬಳಸುವ ಕ್ರಿಯೆಯೇ ಆಚಾರಗಳು ಆಚಾರಗಳೆಂದರೆ ಗುರಿಯನ್ನು ಸೇರಲು, ಬದುಕಿನಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಕ್ರಿಯೆಗಳು.  ಗುರಿ ಪರಮ ಪವಿತ್ರವಾದುದರಿಂದ ಆಚರಣೆಗಳೂ ಪರಿಶುದ್ಧ ವಾಗಿರಬೇಕು  ಪರಮ ಪವಿತ್ರವಾಗಿರಬೇಕು.  ಬಾಹ್ಯ ಆಚಾರಗಳು ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತವೆ. ಆಂತರಿಕ ಆಚಾರಗಳು ನಿರ್ದಿಷ್ಟವಾಗಿ ದೈವನಿಯಮದಂತೆ ನಡೆಯುತ್ತವೆ. ಎಲ್ಲ ಧರ್ಮಗಳೂ ಬಾಹ್ಯ ಮತ್ತು ಆಂತರಿಕ ಆಚಾರಗಳನ್ನು  ಸಮನ್ವಯಗೊಳಿಸಿ ಅವುಗಳಿಗೆ ಸೈದ್ಧಾಂತಿಕ ಸ್ವರೂಪವನ್ನು ಕೊಟ್ಟಿವೆ.

ಶೈವಾಗಮಗಳಲ್ಲಿ ಪಂಚಾಚಾರ :

ವೀರಶೈವ ಸಿದ್ಧಾಂತಕ್ಕೆ ಶಿವಾಗಮಗಳೇ ಪ್ರೇರಕಗಳಾಗಿವೆ. ಶಿವಾಗಮಗಳು ಸಂಖ್ಯೆ ೨೮.

ಇವುಗಳಲ್ಲಿ ಕಾರ್ಮಿಕದಿಂದ ಸುಪ್ರಭೇದದವರೆಗಿನ ಹತ್ತು ಆಗಮಗಳು ಶಿವಭೇದವೆಂದೂ ವಿಜಯದಿಂದ ವಾತುಲದವರೆಗಿನ ಹದಿನೆಂಟು ಆಗಮಗಳು ರುದ್ರಭೇದವೆಂದೂ ವಿಂಗಡಿಸಲಾಗಿದೆ. ಆಗಮಗಳ ಉತ್ತರಾರ್ಧವು ವೀರಶೈವ ದರ್ಶನದ ಪ್ರತಿಪಾದಿಕವೆಂದಿದೆ. ವೀರಶೈವನಿಗೆ ಸಾಧನಾ ಪ್ರಯೋಗದ ಪರಿಕರಗಳು, ಪಂಚಾಚಾರ ಅನುಸಂಧಾನದ ಅಡಿಗಲ್ಲು ಎನ್ನಬಹುದು. ಇವೆರಡೂ, ಗುರುವಿನುಪದೇಶ ಮತ್ತು ಮಾರ್ಗದರ್ಶನದಿಂದ ಅಳವಡಿಸಿಕೊಳ್ಳಬೇಕಾದವುಗಳು.

ಕಾರಣಾಮಗದಲ್ಲಿ ಶಿಷ್ಯನು ಅಷ್ಟಾವರಣಗಳಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು, ಪಂಚಾಚಾರಕ್ಕನುಗುಣವಾಗಿ ಜೀವನವನ್ನು ನಡೆಸಬೇಕು ಎಂದಿದೆ. ಚಂದ್ರಜ್ಞಾನಾಗಮದಲ್ಲಿ ಪಂಚಾಚಾರಗಳ ಕುರಿತು ವಿವರವಾಗಿ ನಿರೂಪಿಸಲ್ಪಟ್ಟಿದೆ. ಅವೆಂದರೆ, ‘ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಇವು ಪಂಚಾಚಾರಗಳು. ಗುರುವಿನಿಂದ ಕೊಡಲ್ಪಟ್ಟ ಲಿಂಗದ ಹೊರತು ಬೇರೆ ದೈವ ಭುವಿಯಲ್ಲಿ ಇಲ್ಲ ಎಂಬ ಭಾವನೆಯನ್ನು ಲಿಂಗದಲ್ಲಿಡುವುದೇ ಲಿಂಗಾಚಾರ’ ಎಂದಿದೆ.

ಸದಾಚಾರ ಕುರಿತು ಚಂದ್ರಜ್ಞಾನಾಗಮದಲ್ಲಿ ಹೀಗೆ ಹೇಳಿದೆ-ಸದಾಚಾರ ಸಂಪನ್ನರು ಎಂಟು ವಿಧವಾದ ಶೀಲಗಳನ್ನು ಅನುಸರಿಸಬೇಕು. ೧. ಈ ದೇಹವು ಅಶಾಶ್ವತ ಎಂಬ ಭಾವನೆಯನ್ನು ಬೆಳೆಸಿಕೊಂಡು ಜೀವನ ನಡೆಸುವುದಕ್ಕೆ ಅಂಕುರ ಶೀಲವೆಂದಿದೆ. ೨. ತಾವು ವಾಸಿಸುವ ಕುಟುಂಬದವರೆಲ್ಲಾ ಶಿವದೀಕ್ಷೆಯನ್ನು ಪಡೆದಿರಬೇಕೆಂಬುದು ಉತ್ಪನ್ನ ಶೀಲ ೩. ಅಷ್ಟಾವರಣದ ಭಸ್ಮ, ರುದ್ರಾಕ್ಷಧಾರಣೆ ಮಾಡಿರುವುದು ದ್ವಿದಲ ಶೀಲ ೪, ಶಿವತತ್ವಗಳಲ್ಲಿ ಅಚಲ ಶ್ರದ್ಧೆ ಇಟ್ಟಿರುವುದು ಪ್ರವೃದ್ಧ ಶೀಲ ೫ ಶಿವಲಿಂಗಾರ್ಚನೆ ಮಾಡದೆ ಯಾವುದೇ ಪ್ರಸಾದವನ್ನು ಸ್ವೀಕರಿಸದಿರುವುದು ಸಪ್ರಕಾಂಡ ಶೀಲ. ೬ ತಾನು ಸ್ವೀಕರಿಸುವ ಪ್ರಸಾದವನ್ನು ಇಷ್ಟಲಿಂಗಕ್ಕೆ ಅರ್ಪಿಸುವುದೇ ಸಶಾಖಶೀಲ ೮. ಎಲ್ಲ ವ್ಯವಹಾರಗಳನ್ನು ಶಿವಾರ್ಪಿತ ಭಾವನೆಯಿಂದ ಮಾಡುವುದು ಸುಷ್ಪಶೀಲ ೭. ಗುರುಲಿಂಗ ಜಂಗಮದಲ್ಲಿ ಒಂದೇ ತೆರನಾದ ಭಾವನೆಯಿಂದ ಕೂಡಿರುವುದು ಸಫಲ ಶೀಲ. ಹೀಗೆ ಎಂಟು ವಿಧದ ಶೀಲಗಳನ್ನು ವೀರಶೈವರು ಅನುಸಂಧಾನ ಮಾಡವುದೇ ಸದಾಚಾರವೆಂದು ಹೇಳಿದೆ.

ಶಿವಾಚಾರ ಕುರಿತು ಚ೦ದ್ರಜ್ಞಾನಾಗಮದಲ್ಲಿ ಶಾಸ್ತ್ರ ವಿಧಿಯಂತೆ ಹದಿನಾರು ವಸ್ತುಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಶುದ್ಧಗೊಳಿಸಬೇಕೆಂದು ಹೇಳಿದೆ. ಅವು ಯಾವುವೆಂದರೆ, ೧ ಭೋಗಿಸುವ ಆಹಾರ ಪದಾರ್ಥಗಳನ್ನೆಲ್ಲ ಭಸ್ಮದಿಂದ ಶುದ್ಧಿಗೊಳಿಸುವುದು ದ್ರವ್ಯಶುದ್ಧಿ ೨. ತನ್ನ ಭೂಮಿಯನ್ನು ನಂದಿಯ ಮುದ್ರೆಯಿಂದ ಆವೃತಗೊಳಿಸಿದ ಮರ, ಲೋಹ ಶಿಲೆಯನ್ನು ಬಳಸುವುದು ಕ್ಷೇತ್ರ ಶುದ್ಧಿ. ೩ ಲಿಂಗ ಮುದ್ರೆಯಿಂದ ಶೋಭಿಸುವುದು ಗೃಹಶುದ್ಧಿ, ೪, ಅದೇ ರೀತಿ ಪಾತ್ರಗಳಿರುವುದು ಭಂಡಶುದ್ಧಿ. ೫. ತೃಣ ಸಂಸ್ಕರಿಸುವುದು ತೃಣಶುದ್ಧಿ, ೬, ಬಳಸುವ ಸೌದೆ ಮರಮುಟ್ಟುಗಳ ಸಂಸ್ಕಾರಕ್ಕೆ ಕಾಷ್ಟಶುದ್ಧಿ. ೭ ತಾಂಬೂಲಕ್ಕೆ ಬಳಸುವ ವಸ್ತುಗಳಿಗೂ ಅದೇ ರೀತಿ ಸಂಸ್ಕಾರ ಕೊಟ್ಟರೆ ತಾಂಬೂಲಶುದ್ಧಿ, ೮. ಆಹಾರವನ್ನು ತಯಾರಿಸುವವರು ಶಿವದೀಕ್ಷೆಯನ್ನು ಪಡೆದಿರಬೇಕು. ಭವಿಯ ದೃಷ್ಟಿ ಬೀಳದಂತಿದ್ದರೆ ಪಾಕಶುದ್ಧಿ. ೯. ಶುದ್ಧ ಆಹಾರವನ್ನು ಸೇವಿಸುವ ಗೋವಿನ ಹಾಲು, ಮೊಸರು, ಬೆಣ್ಣೆಗಳನ್ನು ಸಂಸ್ಕರಿಸಿ ಉಪಯೋಗಿಸುವುದು ರಸಶುದ್ಧಿ, ೧೦, ಪುನರ್ಜನ್ಮಕ್ಕೆ ಒಳಗಾಗುವಂತಹ ಪಾಪ ಕರ್ಮಗಳನ್ನು ಮಾಡದಿರುವುದು ಭವಶುದ್ಧಿ ೧೧. ಪಂಚಭೂತಾತ್ಮಕವಾದ ಸೃಷ್ಟಿಯ ಪ್ರಾಣಿಗಳು ವಸ್ತುಗಳಿಗಾಗಲಿ ಅಪಕಾರ ಮಾಡದೆ ಎಲ್ಲದರ ಕ್ಷೇಮವನ್ನೇ ಬಯಸುವುದು ಭೂತಶುದ್ಧಿ, ೧೨. ಎಲ್ಲದರಲ್ಲಿಯೂ ಶಿವಭಾವವನ್ನು ತಳೆದಿರುವುದು ಭಾವಶುದ್ದಿ, ೧೩ ನಡೆಯುವ ಮಾರ್ಗದಲ್ಲಿ ಕಂಡ ಕ್ರಿಮಿಕೀಟಗಳಿಗೆ ನೋವಾಗದಂತೆ ಎಚ್ಚರವಹಿಸಿ ನಡೆಯುವುದು ಮಾರ್ಗಶುದ್ಧಿ, ೧೪. ಸೂರ್ಯನ ಉದಯಕ್ಕೆ ಮುನ್ನ ಬೆಳಗಿನ ಜಾವದಲ್ಲಿ ಶಿವಲಿಂಗಾರ್ಚನೆ ಮಾಡುವುದು ಕಾಲಶುದ್ಧಿ. ೧೫. ತನ್ನ ಮಾತಿನಲ್ಲಿ ಮತ್ತೊಬ್ಬರಿಗೆ ನೋವಾಗದಂತೆ ಕೇಳುಗರಿಗೆ ಹರ್ಷ ತರುವಂತೆ ಮಾತನಾಡುವುದು ವಾಕ್ಕುದ್ಧಿ ೧೬. ಸರ್ವ ಕಾಲದಲ್ಲಿಯೂ ಶರಣರ ಸದ್ಭಕ್ತರ ಸಹವಾಸದಲ್ಲಿರುವುದು ಜನಶುದ್ಧಿ, ಈ ರೀತಿ ಹದಿನಾರು ವಿಧವಾದ ನಿಯಮಗಳನ್ನು ಅನುಸರಿಸುವುದೇ ಶಿವಾಚಾರ.

 ಗಣಾಚಾರ ಕುರಿತಂತೆ ಚಂದ್ರಜ್ಞಾನಾಗಮದ ಕ್ರಿಯಾಪಾದದಲ್ಲಿ ಉಲ್ಲೇಖಿಸಿದಂತೆ, ಭಕ್ತನು ಅನುಸರಿಸುವ ಅರವತ್ನಾಲ್ಕು ಶೀಲಗಳು ಈ ಕೆಳಗಿನಂತಿವೆ. ೧. ಸತ್ಯವನ್ನು ನುಡಿಯುವುದು. ೨. ಪ್ರಿಯವಾದ ನುಡಿಗಳನ್ನಾಡುವುದು. ೩. ಸಂತತಿಗಳ ಅಧ್ಯಯನ, ೪, ಗುರು, ಲಿಂಗ, ಜಂಗಮ, ಹಿರಿಯರ ಸ್ತುತಿ ೫. ಮಾನವರ ಸ್ತುತಿ ಮಾಡದಿರುವುದು. ೬ ಆತ್ಮಪ್ರಶಂಸೆ ಮಾಡಿಕೊಳ್ಳದಿರುವುದು. ೭ ಅನ್ಯರನ್ನು ಹೀಯಾಳಿಸದಿರುವುದು, ಇವು ಏಳು ವಾಕ್ ಶೀಲಗಳು,  ೮. ಗುರು, ಲಿಂಗ, ಜಂಗಮನನ್ನು ಗೌರವದಿಂದ ಕಾಣಬೇಕು. ೯. ಪೂಜೆಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸುವುದು. ೧೦. ರುದ್ರಾಕ್ಷಿಮಾಲೆಯನ್ನು ಹಿಡಿದು ಶಿವಮಂತ್ರವನ್ನು ಜಪಿಸುವುದು. ೧೧ ಗುರು, ಲಿಂಗ, ಜಂಗಮರನ್ನು ಆರಾಧಿಸುವುದು. ೧೨. ಶಿವಧರ್ಮದ ಅಭ್ಯುದಯಕ್ಕಾಗಿ ದಾನ ಧರ್ಮಗಳನ್ನು ಆಚರಿಸುವುದು. ೧೩. ಗುರು, ಲಿಂಗ, ಜಂಗಮ ಸೇವೆ. ೧೪, ಗುರು, ಲಿಂಗ, ಜಂಗಮ ಪ್ರದಕ್ಷಿಣೆ. ೧೫. ಸತ್ಕಾರ್ಯಕ್ಕಾಗಿ ಸಂಚಾರ. ೧೬ ಲಿಂಗಾರ್ಚನೆಗಾಗಿ ಸ್ಥಿರಾಸನ. ೧೭ ಇಷ್ಟಲಿಂಗವನ್ನು ಸದಾ ಧರಿಸಿರುವುದು. ೧೮. ಇಷ್ಟಲಿಂಗ ದರ್ಶನದಿಂದ ಪ್ರಸನ್ನತೆ ಪಡೆಯುವುದು-ಇವು ಪಾದಗತಶೀಲಗಳು. ೧೯. ಇಷ್ಟಲಿಂಗ ನಿರೀಕ್ಷಣೆ. ೨೦. ಅದರಿಂದ ಆನಂದಬಾಷ್ಪ ಸುರಿಸುವುದು-ಇವು ಚಕ್ಷುಗತ ಶೀಲಗಳು. ೨೧. ಗುರು, ಲಿಂಗ, ಜಂಗಮಕ್ಕೆ ಅರ್ಪಿತವಾದ ಪ್ರಸಾದವನ್ನು ಸ್ವೀಕರಿಸುವುದು- ಇದು ಜಿಹ್ವಾಗತ ಶೀಲ, ೨೨. ಗುರು, ಲಿಂಗ, ಜಂಗಮಕ್ಕರ್ಪಿಸಿದ ಕುಸುಮಗಳ ಪರಿಮಳವನ್ನು ಘ್ರಾಣಿಸುವುದು ಘ್ರಾಣಗತ ಶೀಲ. ೨೩ ಗುರು, ಲಿಂಗ, ಜಂಗಮರ ಸ್ತೋತ್ರವನ್ನು ಕೇಳುವುದು. ೨೪. ಗುರು, ಲಿಂಗ, ಜಂಗಮ ನಿಂದೆಯನ್ನು ಕೇಳದಿರುವುದು -ಶ್ರೋತಗತ ಶೀಲ.

ಕಾಯಗತ ಶೀಲಗಳು ೨೭ ಮೈಲಿಗೆಯಾದಾಗ ಸ್ನಾನ ಮಾಡುವುದು ೨೮. ಭವಿಸ್ಪರ್ಶ ಮಾಡದಿರುವುದು. ೨೯. ಭಸ್ಮ, ರುದ್ರಾಕ್ಷಧಾರಣೆ ಮಾಡಿಕೊಂಡಿರುವುದು. ಮನೋಗತ ಶೀಲಗಳು -೩೦. ಬ್ರಹ್ಮಚರ್ಯೆ ೩೧ ಭಕ್ತಿರತಿ ೩೨. ಅಧರ್ಮದ ಬಗ್ಗೆ ಕ್ರೋಧ. ೩೩ ಶಿವಾರಾಧಾನೆಯ ಬಗೆಗೆ ಲೋಭ ೩೪. ಭಕ್ತರಲ್ಲಿ ಮೋಹ, ೩೫. ಇಂದ್ರಿಯಗಳ ಬಗೆಗೆ ಮಾತ್ಸರ್ಯ ೩೬. ಮಾಯಾವಿಗಳ ಬಗೆಗೆ ಮದ. ೩೭ ಗುರು, ಲಿಂಗ, ಜಂಗಮದಲ್ಲಿ ದೋಷಾರೋಪಣೆ ಮಾಡದಿರುವುದು. ೩೮. ಅಹಿಂಸೆ, ೩೯, ದಯೆ, ೪೦. ನಿರ್ವಂಚನೆ. ೪೧ ಶತ್ರುತ್ವವಿಲ್ಲದಿರುವುದು. ೪೨. ಗುರು, ಲಿಂಗ, ಜಂಗಮದಲ್ಲಿ ನಂಬಿಕೆ. ೪೩ ಆಪತ್ತಿನಲ್ಲೂ ಧರ್ಮನಿರತನಾಗಿರುವುದು. ೪೪. ವೈರಿಗಳನ್ನು ನಿಂದಿಸದಿರುವುದು. ೪೫. ಭವದ ಭೋಗದಲ್ಲಿ ನಿರಾಸಕ್ತಿಯಿರುವುದು. ೪೬. ಅಪ್ರಮಾದ ೪೭ ಅಯೋಗ್ಯವಾದುದರಲ್ಲಿ ಆಸಕ್ತಿಯಿಲ್ಲದಿರುವುದು. ೪೮ ಪರರ ವಸ್ತುಗಳ ಅಪಹರಣ ಮಾಡದಿರುವುದು. ೪೮. ಅಲಭ್ಯವಾದುದಕ್ಕೆ ಚಿಂತಿಸದಿರುವುದು. ೫೦. ಶಿವನ  ರೂಪ ನಾಮಸ್ಮರಣೆ ೫೧. ಶಿವತತ್ವ ಚಿಂತನೆ. ೫೨. ಗುರು ಹಿರಿಯರ ಪಾದಸೇವೆ ೫೩. ಮಾನಸ ಪೂಜೆ ೫೪. ಗುರು ಹಿರಿಯರ ಸ್ಮರಣೆ, ೫೫. ಸೇವಾಭಾವನೆ. ೫೬. ಶಿವನಲ್ಲಿ ಸಖ್ಯ ಭಾವನೆ. ೫೭. ಶರಣಾಗತಿ ೫೮. ಮೂಲಮಂತ್ರ ಜಪ. ೫೯. ಶಿವನ ರೂಪದ ಅನುಸಂಧಾನ. ೬೦. ನಿರಂತರ ಶಿವಸ್ಮರಣೆ. ೬೧. ಶಿವಸ್ಮರಣೆಯಲ್ಲಿ ನಿಷ್ಠೆ . ೬೨. ಶಿವೋಹಂಭಾವದ ಅನುಸಂಧಾನ. ೬೩ ಶೀಲಗಳ ಅನುಸಂಧಾನದಲ್ಲಿ ಛಲದಿಂದಿರುವುದು. ೬೪. ಶಿವನ ಅನಂತ  ರೂಪಗಳನ್ನು ತನ್ನ ರೂಪವೆಂದೇ ಭಾವಿಸಿ ಆನಂದಪರವಶನಾಗಿರುವುದು.

  ಭೃತ್ಯಾಚಾರವೆಂದರೆ ಕಿಂಕರತ್ವದಿಂದ ಗುರು, ಲಿಂಗ, ಜಂಗಮ ಸೇವೆ ಮಾಡುವುದು. ತಾನು ಅವರಿಗಿಂತ ಹಿರಿಯನಲ್ಲವೆಂಬ ಅಹಂಕಾರ ನಿರಸನದಿಂದ ಶಿವ ಸಾಕ್ಷಾತ್ಕಾರಕ್ಕಾಗಿ ಸಲ್ಲಿಸುವ ಸೇವೆ ಭೃತ್ಯಾಚಾರವೆನಿಸುವುದು.

ಹೀಗೆ ಪಂಚಾಚಾರಗಳ ವಿವರಣೆಯನ್ನು ಚಂದ್ರಜ್ಞಾನಾಗಮದಲ್ಲಿ ಸಮಗ್ರವಾಗಿ ಕಾಣಬಹುದು. ಆದರೆ ವೀರಶೈವ ದರ್ಶನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ವಾತುಲಾಗಮ, ಸೂಕ್ಷ್ಮಾ ಗಮ, ದೇವೀಕಾಲೋತ್ತರ, ಪಾರಮೇಶ್ವರ, ವಿರಾಗಮಗಳಲ್ಲಿ ವಿವರಿಸಲ್ಪಟ್ಟಿವೆ. ಶರಣ ಸಂಸ್ಕೃತಿಯಲ್ಲಿ ಉಲ್ಲೇಖಿತವಾದ ವೀರಶೈವ ಸೈದ್ಧಾಂತಿಕ ಸಂಗತಿಗಳಿಗೆಲ್ಲಾ ಆಗಮದಲ್ಲಿರುವ ವಿವರಣೆಗಳೇ ಆಧಾರವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆಗಮದ ಶ್ಲೋಕಗಳನ್ನು ಶರಣರು ತಮ್ಮ ವಚನಗಳಲ್ಲಿ ಧಾರಾಳವಾಗಿ ಬಳಸಿರುವುದು ಈ ಅಭಿಪ್ರಾಯಕ್ಕೆ ಪ್ರೇರಕವಾಗಿದೆ.

 ವೀರಶೈವವು ಜಗತ್ತಿನ ಅನ್ಯ ದರ್ಶನಗಳಂತೆ ಸ್ವತಂತ್ರವಾಗಿ ಚಿಂತನೆಗೈದ ದರ್ಶನ. ಇಲ್ಲಿ ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್‌ಸ್ಥಲವೇ ಆತ್ಮ ಎಂದು ನಿಶ್ಚಯಗೊಂಡಿದೆ. ಅಷ್ಟಾವರಣಗಳು ಸಾಧಕನ ಪ್ರೇರಕಶಕ್ತಿಗಳು, ರಕ್ಷಾಕವಚಗಳು. ಇದನ್ನು ಅಳವಡಿಸಿಕೊಂಡ ಸಾಧಕನು ಪಂಚಾಚಾರಗಳಿಂದಲೇ ತನ್ನ ಯಾತ್ರೆಯನ್ನು ಆರಂಭಿಸಬೇಕು. ಈ ಸಾಧನೆಗೆ ಹತ್ತು ಇಂದ್ರಿಯಗಳು ಹೇಗೆ ಪ್ರಧಾನವೆಂಬುದನ್ನು ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ನಿರೂಪಿಸಿದ್ದಾರೆ.

ಭವಿತನಕ್ಕೆ ಹೇಸಿ ಭಕ್ತನಾದೆಹೆನೆಂದಡೆ

 ಆ ಭವಿಯ ಪೂರ್ವಾಶ್ರಮವ ಕಳೆದು

ಭಕ್ತನ ಮಾಡುವ ಪರಿಯೆಂತಯ್ಯ ?

 ತನ ಕಾಯವ ಶುದ್ಧವ ಮಾಡುವುದು

ಜೀವವ ಶುದ್ಧವ ಮಾಡುವುದು

 ಆತ್ಮವ ಶುದ್ಧವ ಮಾಡುವುದು

ಮಂತ್ರ ಶುದ್ಧವ ಮಾಡುವುದು

ವಾಕ್ಕು, ಪಾಣಿ, ಪಾದ, ವಾಯು, ಗುಹ್ಯವೆಂಬ

 ಕರ್ಮೇಂದ್ರಿಯ ಶುದ್ಧವ ಮಾಡುವುದು

ಶ್ತ್ರೋತ್ರ, ನೇತ್ರ, ಜಿಹ್ವ., ತಕ್ಕು, ಘ್ರಾಣವೆಂಬ

ಬುಧೀಂದ್ರಿಯಗಳ ಶುದ್ಧವ ಮಾಡುವುದು

ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿ

ಜೀವನೇ ಶಿವನೆಂಬ ಪರಿಯಾಯವ ಕೆಡಿಸಿ

ಶಿವನೇ ಜೀವನೆಂಬ ಪರಿಯಾಯವ ತೋರಿ ಪಂಚವಕ್ತ್ರಂಗಳ ನೆಲೆಗೊಳಿಸಿ

ಶ್ವೇತ ಪೀತ ಹರಿತ ಕಪೋತ ಮಾಂಜಿಷ್ಟ ಗೌರವರ್ಣಂಗಳ ತೋರಿ

ಪಂಚಭೂತ ಶುದ್ಧವ ಮಾಡುವುದು

ಜೀವಾತ್ಮ ಪರಮಾತ್ಮಾ ಚ ಎಂಬ ಶ್ರುತಿಯಿಂದ

ಆತ್ಮ ಶುದ್ಧವ ಮಾಡುವುದು

ಇಂತು ಸರ್ವಶುದ್ಧವ ಮಾಡುವುದು

ಆತನ ತಂದು ಗಣ ತಿಂತಿಣಿಯ ಮುಂದೆ ನಿಲ್ಲಿಸಿ

ಆ ಶಿಷ್ಯನ ಜಿಹ್ವೆಯಲ್ಲಿ ಶೃತಿಯನೋದಿಸಿ

ಓಂ ಕರ್ಮಣಾ ಮನಸಾ ವಾಚಾ ಗುರುಭಕ್ತ್ಯಾಂತು ವತ್ಸಲಃ ||

ಶರೀರಮರ್ಥ೦ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ‘||

ಎಂದು ಮನಃ ಸ್ಮರಣೆಯ ಆಡಿಸಿ

ಆ ಶಿಷ್ಯನ ಭವಚ್ಛೇದವ ಮಾಡಿ ಚೌಕ ಮಧ್ಯದಲ್ಲಿ ಕುಳ್ಳಿರಿಸಿ

ಓಂ।। ಸಮೇಕಾಮಾನ್ ಕಾಮಕಾಮಾಯಮಹ್ಯಂ

ಎಂಬ ಮಂತ್ರದಿಂದ ಅಗೋದಕವ ತಳೆದು

ಭಾಳದಲ್ಲಿ ವಿಭೂತಿಯ ಪಟ್ಟವ ಕಟ್ಟಿ

ಮಸ್ತಕ ಕಳಸದ ಮೇಲೆ ಹಸ್ತವನಿರಿಸಿ

ಸಹಸ್ರದಳ ಕಮಲದೊಳಗಿದ್ದ ವಸ್ತುವನ್ನು

ಭಾವಕ್ಕೆ ಭಾವದಿಂದ ಮನಕ್ಕೆ ಮನದಿಂದ ದೃಷ್ಟಿಗೆ ತಂದು

ಕುಮಾರ ಮೂರ್ತಿಯೊಳಗೆ ಹುದುಗಿಸಿ

ಇದೇ ಇಷ್ಟಲಿಂಗವೆಂದು ತೋರಿ

ಕರಮನಭಾವದಲ್ಲಿ ನಿರ್ಧರಿಸೆಂದು ಹೇಳಿ

ಸ್ಥಾವರಲಿಂಗ ಪೂಜೆಯ ಮಾಣಿಸಿ

ಕರಕ್ಕೆ ಕಂಕಣವ ಕಟ್ಟಿ ನಿರ್ಧಾರದ ತಾಳೆಯ ಕಂಠದಲ್ಲಿ ಕಟ್ಟಿ

ಕಲಿಯಾಗು ಎಂದು ಎನ್ನ ಕೃತಾರ್ಥವ ಮಾಡಿದ

ಕೂಡಲಚೆನ್ನಸಂಗಯ್ಯ ನಿಮ್ಮ ಶರಣ ಸಂಗನ

ಬಸವಣ್ಣನ ಪಾದಕ್ಕೆ ನಮೋ ನಮೋ ಎಂದೆನು

ಕರ್ಮೇ೦ದ್ರಿಯಗಳು ಜ್ಞಾನೇಂದ್ರಿಯಗಳ ಆಜ್ಞೆಯನ್ನು ಪಾಲಿಸಬೇಕು. ಜ್ಞಾನ ಅಂತರಂಗಕ್ಕೆ ಸಂಬಂಧಿಸಿದುದು, ಕ್ರಿಯೆ ಬಹಿರಂಗಕ್ಕೆ ಸಂಬಂಧಿಸಿದುದು. ಇವೆರಡರ ಸಮನ್ವಯವೇ ಧಾರ್ಮಿಕ ಅರ್ಥದಲ್ಲಿ ಆಚಾರವೆನಿಸುತ್ತದೆ. ಅದನ್ನೇ ಚೆನ್ನಬಸವಣ್ಣ ನವರು-

ʼʼಕ್ರಿಯೆಯೆ ಜ್ಞಾನ ಆ ಜ್ಞಾನವೆ ಕ್ರಿಯೆ

ಜ್ಞಾನವೆಂದರೆ ತಿಳಿಯುವುದು

ಕ್ರಿಯೆ ಎಂದರೆ ತಿಳಿದಂತೆ ಮಾಡುವುದು

ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ

ಅದರಂತೆ ಆಚರಿಸುವುದ ಕ್ರಿಯೆ

ಅರಿದು ಆಚರಿಸದಿದ್ದಡೆ ಅದೆ ಅಜ್ಞಾನ ನೋಡ

ಕೂಡಲ ಚೆನ್ನಸಂಗಮದೇವಾ

ಎಂದಿದ್ದಾರೆ. ಇದು ಬಾಹ್ಯಶುದ್ಧಿಗೆ ಅನುಸರಿಸುವ ನೀತಿ. ದಾರ್ಶನಿಕರ ದೃಷ್ಟಿಯಲ್ಲಿ ಆಚಾರ ಶಬ್ದವು ಮಹತ್ವದ ಅರ್ಥವನ್ನು ಪಡೆದಿದೆ. ಆಚಾರದಿಂದ ಲೌಕಿಕ ಜೀವನದ ಸುಖ ಸಮೃದ್ಧಿಗಳೂ ಲಭಿಸಬೇಕು, ಅಂತೆಯೇ ಅದು ಅಲೌಕಿಕದ ಸಾಧನವೂ ಆಗಬೇಕು

ಮಾನವ ಜೀವನ ಎಲ್ಲ ಜೀವರಾಶಿಗಳಿಗಿಂತಲೂ ಶ್ರೇಷ್ಠವೆಂದು ಎಲ್ಲ ಧರ್ಮಗಳೂ ಸಮರ್ಥಿಸಿವೆ. ಪುನರ್ಜನ್ಮವನ್ನು ಯಾವ ಧರ್ಮವೂ ಬೋಧಿಸಿಲ್ಲ. ಮನುಷ್ಯ ಮಹಾದೇವನಾಗಬೇಕೆಂಬುದೇ ಧರ್ಮದರ್ಶನಗಳ ಗುರಿಯಾಗಿದೆ. ಈ ಕುರಿತಂತೆ ಶರಣ ಹಡಪದ ಅಪ್ಪಣ್ಣನವರು ಹೀಗೆ ಹೇಳುತ್ತಾರೆ.

ಈ ಜಗದೊಳಗಣ ಆಟವ ನೋಡಿದರೆ

ಎನಗೆ ಹಗರಣವಾಗಿ ಕಾಣಿಸುತ್ತಿದೆ.

ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು

ಮುಂದಣ ಮುಕ್ತಿಯನರಿಯರು

ಬಂದ ಬಂದ ಭವದಲ್ಲಿ ಮುಳುಗುತ್ತಲಿದ್ದಾರೆ

ನಾನಿದರಂದವನರಿದು ದ್ವಂದ್ವವ ಹರಿದು

ಜಗದ ನಿಂದೆ ಸ್ತುತಿಯ ಸಮಗಂಡು

ಹಿಂದ ಹರಿದು ಮುಂದುವರಿದು

ಸದಮಳಾನಂದದಲ್ಲಿ ಐಕ್ಯವಾಗಿ

ಸತ್ಯ ಶರಣರ ಪಾದದಲ್ಲಿ

ನಿರ್ಮುಕ್ತನಾದೆನಯ್ಯಾ

ಬಸವಪ್ರಿಯ ಕೂಡಲ ಚೆನ್ನಬಸವಣ್ಣ’

ಎಂದಿದ್ದಾರೆ. ಮೋಕ್ಷ ಪ್ರಾಪ್ತಿಯೇ ಜೀವನದ ಗುರಿ. ಈ ಗುರಿ ಮುಟ್ಟುವುದಕ್ಕಾಗಿಯೇ ಸಾಧನೆ ನಡೆಯಬೇಕು. ಅದೇ ರೀತಿಯನ್ನು ಅಲ್ಲಮಪ್ರಭು ಹೀಗೆ ಹೇಳುತ್ತಾರೆ-

ತನು ನಿಮ್ಮ ಪೂಜಿಸುವ ಕೃಪೆಗೆ ಸಂದುದು

ಮನ ನಿಮ್ಮ ನೆನೆವ ಧ್ಯಾನಕ್ಕೆ ಸಂದುದು

ಪ್ರಾಣ ನಿಮ್ಮ ರತಿ ಸುಖಕ್ಕೆ ಸಂದುದು

ಇಂತು ತನು, ಮನ, ಪ್ರಾಣ ನಿಮಗೆ ಸಂದಿಪ್ಪ

ನಿಸ್ಸಂಗಿಯಾದ ನಿಶ್ಚಟ ನಿಜ ಲಿಂಗೈಕ್ಯ

ಕಾಣಾ ಗುಹೇಶ್ವರಾ’

ಎಂದಿದ್ದಾರೆ. ತನು, ಮನ ಇವು ಸಾಮಾನ್ಯವಾಗಿ ಅಹಂಭಾವದ ಪ್ರತೀಕಗಳು. ಅವುಗಳಿಗೆ ಸಂಸ್ಕಾರವಿಲ್ಲದಿದ್ದರೆ ದಾರಿ ದುರ್ಗಮವಾಗುತ್ತದೆ.

 ಅದರಲ್ಲೂ ಮನಸ್ಸಿನ ಪಾತ್ರ ಹಿರಿದು. ಮನಸ್ಸು ಸರಿ ಮಾರ್ಗದಲ್ಲಿ ಚಲಿಸಿದರೆ ತನು ಅದನ್ನು ಅನುಸರಿಸುತ್ತದೆ. ಪ್ರಾಣ ತಾನಾಗಿ ಅದರತ್ತ ಸಾಗುತ್ತದೆ. ಈ ಮೂರರ ನಿಯಂತ್ರಣವೇ ಆಚಾರವೆನ್ನಬಹುದು. ತನು-ಮನ-ಪ್ರಾಣಗಳ ಕ್ರಿಯೆಯನ್ನು ಶರಣರು ಆಚಾರವೆಂದು ಕರೆದಿದ್ದಾರೆ. ಆಚಾರಗಳಲ್ಲಿ ಬಹಿರಂಗದ ಆಚಾರಗಳು ಹಾಗೂ ಆಂತರಿಕ ಆಚಾರಗಳೂ ಸಮಾವೇಶಗೊಳ್ಳಬೇಕು. ಇವುಗಳನ್ನೇ ವೀರಶೈವ ದರ್ಶನಕಾರರು ಪಂಚಾಚಾರಗಳೆಂದು ಕರೆದಿದ್ದಾರೆ.

ಪಂಚಾಚಾರಗಳು :

ವೀರಶೈವ ಸಂಸ್ಕೃತಿಯಲ್ಲಿ ಪಂಚಾಚಾರಗಳಿಗೆ ಪ್ರಮುಖ ಸ್ಥಾನವಿದೆ. ಶರಣರು ತಮ್ಮ ಕಾಲದಲ್ಲಿ ಎದುರಿಸಿದ ಸವಾಲುಗಳಲ್ಲಿ ತಮ್ಮ ನಂಬಿಕೆಯನ್ನು ಅನುಸರಿಸುವವರನ್ನು ಏಕಸೂತ್ರದಲ್ಲಿ ಬಂಧಿಸಿ ಸಂಘಟಿಸುವುದಾಗಿತ್ತು. ಅದಕ್ಕಾಗಿ ಅವರು ಒಂದು ಸಾಮಾಜಿಕ ನೀತಿ ಸಂಹಿತೆಯನ್ನು ಸಾಮಾನ್ಯರೆಲ್ಲರಿಗೂ ಅನ್ವಯಿಸುವಂತೆ ಸೃಷ್ಟಿಸಿದರು. ಶರಣರಿಗಿಂತ ಹಿಂದೆಯೂ ಒಬ್ಬ ವ್ಯಕ್ತಿಯು ಮಾಡಬಾರದ್ದೆಂಬ ದೃಷ್ಟಿಯಿಂದ ಪಂಚಮಹಾಪಾತಕಗಳ ಕಲ್ಪನೆಯಿತ್ತು .ಇದು ನೀತಿಯಾದರೂ ನೇತ್ಯಾತ್ಮಕವಾದದ್ದು, ಇಂಥವುಗಳನ್ನು ಮಾಡಬೇಡ ಎಂದು ತಡೆಯುವಂಥದು. ಪ್ರಾಯಶಃ ಇದಕ್ಕೆ ವೈದೃಶ್ಯರೂಪದಲ್ಲಿ ಇತ್ಯಾತ್ಮಕವಾದ, ಆಚರಿಸಲೇಬೇಕಾದ, ಆಚರಣೆಗಳನ್ನು ಶರಣರು ಬೋಧಿಸಿದರು. ಇದು ಒಂದು ಬಗೆಯಲ್ಲಿ ಮಾಡಬಾರದ ಪಂಚಪಾತಕಗಳಿಗೆ ಪೂರಕವಾದುದು. ಶರಣರು ನಾನಾ ಬಗೆಯ ಶೀಲಗಳನ್ನು ವಿವರವಾಗಿ ಬೋಧಿಸಿದ್ದಾರೆ. ಒಂದೆಡೆ ಐವತ್ತು ಆಚಾರಗಳನ್ನು ಉಲ್ಲೇಖಿಸಿದರೆ ಇನ್ನೊಂದೆಡೆ ಶ್ರೇಷ್ಠ ಶರಣನೊಬ್ಬನು ಆಚರಿಸುವ ಐವತ್ತೆರಡು ಆಚಾರಗಳನ್ನು ಹೇಳಲಾಗಿದೆ. ಮತ್ತೊಂದೆಡೆ ಅರವತ್ನಾಲ್ಕು ಆಚಾರಗಳ ಉಲ್ಲೇಖವಿದೆ. ಐವತ್ತಾರು ನೇಮ, ಮೂವತ್ತೆರಡು ಕೃತ್ಯಗಳನ್ನು ಉಲ್ಲೇಖಿಸಿದೆ. ಶರಣರು ಇವುಗಳನ್ನೆಲ್ಲಾ ಒಂದುಗೂಡಿಸಿ ಒಟ್ಟಾರೆ ಎರಡು ಭಾಗ ಮಾಡಿ ಮೊದಲ ಭಾಗದಲ್ಲಿ ಐದು ಆಚಾರಗಳನ್ನು ಸೇರಿಸಿ ಪಂಚಾಚಾರಗಳೆಂದು ಕರೆದರು. ಎರಡನೆಯ ಗುಂಪು ಸುಪ್ತಾಚಾರಗಳೆನಿಸಿದವು. ಪಂಚಾಚಾರವು ಬಾಹ್ಯ ಆಚರಣೆಗಳಿಗೆ ಅನ್ವಯಿಸಿದರೆ ಸಪ್ತಾಚಾರಗಳು ಅಂತರಂಗದ ನಡುವಳಿಕೆಗಳನ್ನು ನಿರ್ದೇಶಿಸುತ್ತವೆ.

 ಅವಿರಳ ಜ್ಞಾನಿ ಚೆನ್ನಬಸವಣ್ಣನವರು ಪಂಚಾಚಾರಗಳ ಸ್ವರೂಪವನ್ನು ವಿಸ್ತೃತವಾಗಿ ಅನೇಕ ವಚನಗಳಲ್ಲಿ ವಿವರಿಸಿದ್ದಾರೆ. ಅದರ ಗಂಭೀರ ಸ್ವರೂಪದ ಚಿತ್ರಣ ಈ ಕೆಳಗಿನ ವಚನದಲ್ಲಿ ಕಾಣಬಹುದು-

ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ

ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ ||

ಲಿಂಗವನ್ನಲ್ಲದೆ ಅನ್ಯವನರಿಯದಿರುವುದೇ ಲಿಂಗಾಚಾರ,

ಸಜ್ಜನ ಕಾಯಕದಲ್ಲಿ ತಂದು ಗುರುಲಿಂಗಜಂಗಮಕ್ಕೆ ನೀಡಿ

ಸತ್ಯಶುದ್ಧನಾಗಿಹುದೇ’ ಸದಾಚಾರ

ಶಿವಭಕ್ತರಲ್ಲಿ ಕುಲಗೋತ್ರ ಜಾತಿ ವರ್ಣಾಶ್ರಮವನರಸದೆ

ಅವರೊಕ್ಕುದಕೊಂಬುದೇ ಶಿವಾಚಾರ,

ಶಿವಾಚಾರದ ನಿಂದೆಯ ಕೇಳದಿಹುದೇ ಗಣಾಚಾರ,

ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ

ಭಯಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ

ಇಂತೀ ಪಂಚಾಚಾರವುಳ್ಳ ಭಕ್ತರ ಒಕ್ಕುದನಿಕ್ಕಿ ಸಲಹಯ್ಯ

ಪ್ರಭುವೆ ಕೂಡಲ ಚೆನ್ನಸಂಗಮದೇವಾ’

ಈ ಒಂದು ವಚನದಲ್ಲಿ ಪಂಚಾಚಾರಗಳ ಅಂತರಾರ್ಥ, ಬಹಿರಾರ್ಥವನ್ನೆಲ್ಲಾ ಸಮರಸಗೊಳಿಸಿದ್ದಾರೆ. ಇವುಗಳನ್ನು ಒಂದೊಂದಾಗಿ ವಿಶ್ಲೇಷಿಸಬಹುದು.

೧. ಲಿಂಗಾಚಾರ :

 ಈ ತತ್ವದಲ್ಲಿ ಎರಡು ಪದಗಳಿವೆ. ‘ಲಿಂಗ+ಆಚಾರ’ ಅಂದರೆ ಲಿಂಗದ ಬಗ್ಗೆ ಆಚಾರವುಳ್ಳವನಾಗಿರುವುದು. ವೀರಶೈವನು ಲಿಂಗದೊಡನೆ ನಡೆದುಕೊಳ್ಳಬೇಕಾದ ರೀತಿಯನ್ನು ವಿಧಿಸುತ್ತದೆ. ದೀಕ್ಷೆ ಪಡೆದು, ಲಿಂಗ ಧರಿಸಿ, ಭವಿಯಾಗಿದ್ದವನು ಭಕ್ತನಾಗಿ ಮಾರ್ಪಟ್ಟ ಮೇಲೆ ತ್ರಿಕರಣ ಪೂರ್ವಕವಾಗಿ ಆ ಲಿಂಗವನ್ನೇ ನಂಬಿರಬೇಕು. ಅನ್ಯದೈವವನ್ನಾಗಲಿ, ಸ್ಥಾವರಲಿಂಗವನ್ನಾಗಲಿ ಪೂಜಿಸ ಬಾರದು. ಲಿಂಗವು ಬಾಹ್ಯ ಕುರುಹು ಅಷ್ಟೇ. ಅದು ಸರ್ವತ್ರವ್ಯಾಪಿಯಾದ ಚೈತನ್ಯದ ಸಂಕೇತ. ಆದ್ದರಿಂದ ಲಿಂಗವನ್ನು ಧರಿಸಿರುವವರಲ್ಲಿ ಏಕತೆಯನ್ನು ಸಾಧಿಸಬೇಕೆಂಬ ಆಶಯ.

ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ

ಅಯ್ಯಾ ಶ್ರೀ ಗುರು ಕರುಣಿಸಿಕೊಟ್ಟ ಲಿಂಗಜಂಗಮವಲ್ಲದೆ

ಅನ್ಯದೈವಂಗಳ ತ್ರೈವರಣದಲ್ಲಿ ಅರ್ಚಿಸ

ದಿರ್ಪುದೆ ಲಿಂಗಾಚಾರವೆಂಬೆನಯ್ಯ’

ಎಂದು ಹೇಳುವಲ್ಲಿ ‘ಲಿಂಗ’ ಶಬ್ದಕ್ಕಿರುವ ವ್ಯಾಪಕವಾದ ಅರ್ಥವನ್ನು ಗಮನಿಸಬೇಕು. ಇಷ್ಟಲಿಂಗದ ವೈಶಿಷ್ಟ್ಯವೆಂದರೆ ಅದು ಅಂಗಡಿಯಿಂದ ತಂದು ಪೂಜಿಸುವ ವಸ್ತುವಲ್ಲ ಅದು ಶ್ರೀ ಗುರು ಕರುಣಿಸಿಕೊಟ್ಟದ್ದು, ಅಂದರೆ ಗುರುವಿಗೂ ಶಿಷ್ಯನಿಗೂ ನಿಕಟ ಸಂಪರ್ಕ ಕಲ್ಪಿಸಿದ ತತ್ವ ಸಂಪತ್ತು.  ಸಮರ್ಥ ಗುರುವಿನ ಸಂಪರ್ಕದಿಂದ ತನು ಮನದ ಅಶುಚಿತ್ವವೂ, ಅಜ್ಞಾನವೂ ಅಳಿಸಿ ಅಂತರಂಗದಲ್ಲಿ ಆತ್ಮ ಸಾಕ್ಷಾತ್ಕಾರ ಸಾಧನೆಗೆ ಸಂಕಲ್ಪ ಮಾಡುವಂತಾಗಬೇಕು. ಅದರಿಂದ ಅಂಗಕ್ಕೂ ಲಿಂಗಕ್ಕೂ ಸಂಸ್ಕಾರ  ದೊರೆಯಬೇಕು.

ವೀರಶೈವ ಸಿದ್ಧಾಂತದಲ್ಲಿ ಪ್ರತಿಪಾದಿಸಿದಂತೆ ಗುರು, ಲಿಂಗ ಮತ್ತು ಶಿಷ್ಯ (ಭಕ್ತ) ಈ ಮೂರಕ್ಕೂ ಉತ್ತಮ ಸಂಸ್ಕಾರವಿರಬೇಕಾಗುತ್ತದೆ. ಇಷ್ಟಲಿಂಗಾರ್ಚನೆ ಸಾಧನೆಯ ಪ್ರಥಮ ಹಂತ. ಈ ಹಂತದಲ್ಲಿ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ, ಷೋಡಶೋಪಚಾರಗಳನ್ನು ನಡೆಸಬೇಕಾಗುತ್ತದೆ. ಇದಕ್ಕೆ ಕಾರಣ ಮನವನ್ನು ಲಿಂಗದಲ್ಲಿ ನಿಲ್ಲಿಸುವುದಕ್ಕಾಗಿ ಪ್ರೇರಕ ಈ ಅರ್ಚನೆ; ಆದರೆ ಅದೇ ಗುರಿಯಲ್ಲ, ನಿಜವಾದ ಅರ್ಚನೆಯೆಂದರೆ ಇಷ್ಟಲಿಂಗದಲ್ಲಿ ಯೋಗದ ಅನುಸಂಧಾನ ನಡೆಯಬೇಕಾಗುತ್ತದೆ. ಷಣ್ಮುಖ ಸ್ವಾಮಿಗಳು-

ಎನ್ನ ಕರ ಕಮಲಮಧ್ಯದಲ್ಲಿ ಪರಮಶಿವ

ಲಿಂಗವ ತುಂಬಿ, ಆ ಲಿಂಗದ ಮಧ್ಯದಲ್ಲಿ ಕಂಗಳ

ತುಂಬಿ, ಆ ಕಂಗಳ ಮಧ್ಯದಲ್ಲಿ ಮನವ ತುಂಬಿ,

ಆ ಮನದ ಮಧ್ಯದಲ್ಲಿ ಭಾವವ ತುಂಬ ಪರಮಾಗಿರ್ದೆನಯ್ಯ

ನಿಮ್ಮೊಳಗೆ ಅಖಂಡೇಶ್ವರಾ

ಎಂದಿದ್ದಾರೆ. ಇದನ್ನು ಗಮನಿಸಿದಾಗ ‘ಇಷ್ಟಲಿಂಗ’ ಅರ್ಚನೆಗೆ ಬಳಸುವ ಸಾಧನ ಮಾತ್ರವಲ್ಲ, ಅದು ಮುಕ್ತಿಗೆ ಏಣಿ ಇದ್ದಂತೆ. ಅದಕ್ಕೆ ಬಳಸುವ ಶಿಲೆ ಅದರ ಮೇಲೆ ರೂಪಿಸುವ ಚಿದ್ರಸದಂತೆ. ಹೀಗೆ ಆಂತರಿಕ ಸಿದ್ಧಿಗೆ ಬಾಹ್ಯದಲ್ಲಿ ಇಷ್ಟಲಿಂಗ’ ವನ್ನು ಒಂದು ಸಾಧನವಾಗಿಸಿಕೊಂಡ ನಂತರ ಪ್ರಾಣಲಿಂಗ ಪೂಜೆ, ಕೊನೆಗೆ ಭಾವಲಿಂಗ ಪೂಜೆ ನಡೆಯಬೇಕು. ಸ್ಥೂಲ ತನುವಿನಲ್ಲಿ ಇಷ್ಟಲಿಂಗ ಪೂಜೆ, ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗ ಪೂಜೆ, ಕಾರಣತನುವಿನಲ್ಲಿ ಭಾವಲಿಂಗ ಪೂಜೆ ನಡೆಯಬೇಕು. ಇಂತಹ ಕ್ರಿಯೆಯೇ ಲಿಂಗಾಚಾರವೆಂದು ಪ್ರತಿಬೋಧಿತವಾಗಿದೆ.

೨. ಸದಾಚಾರ :

ಇದನ್ನು ಸತ್+ಆಚಾರ ಎಂದು ಬಿಡಿಸಬಹುದು. ಪಂಚಾಚಾರಗಳಲ್ಲಿ ಇದು ಎರಡನೆಯ ಆಚಾರವಾಗಿದೆ. ಶರಣ ಸಂಸ್ಕೃತಿಯ ಜೀವಾಳವೇ ಸದಾಚಾರವಾಗಿದೆ. ಸದಾಚಾರವನ್ನು ಸಮಯಾಚಾರವೆಂತಲೂ ಕರೆಯಲಾಗಿದೆ. ಇದು ಜಾತಿ ಮತ, ಲಿಂಗ, ಪಕ್ಷ, ಪಂಥ ಭೇದವಿಲ್ಲದೆ ಎಲ್ಲರೂ ಅನುಸರಿಸಿ ಆತ್ಮೋದ್ಧಾರ ಮಾಡಿಕೊಳ್ಳುವ ಸುಲಭ ಸಹಜಯೋಗ.  ಸತ್ ಪದವು ‘ಸತ್ಯ’ ಎಂಬ ಅರ್ಥವನ್ನು ಕೊಡುತ್ತದೆ. ಸತ್ ಎಂಬುದು ಪರಮಾತ್ಮನ ಸ್ಮರಣೆಯ ಸಂಕೇತ. ಆಚಾರವೆಂಬುದು ಮಾನವರ ನಡೆ-ನುಡಿ, ಜೀವನ ವಿಧಾನಗಳ ಸಂಕೇತ. ಮಾನವ ಜೀವನ ದೊರೆತಿರುವುದೇ ಭಾಗ್ಯ. ಅದನ್ನು ಸದುಪಯೋಗಪಡಿಸಿಕೊಂಡು ಸಾರ್ಥಕಗೊಳಿಸಬೇಕೆಂಬುದೇ ಸರ್ವರ ಅಪೇಕ್ಷೆ. ಅದಕ್ಕಾಗಿ ಬೇಕಾದ ಪರಿಸರವನ್ನು ಸೃಷ್ಟಿಕರ್ತನು ನಿರ್ಮಿಸಿದ್ದಾನೆ. ಅದನ್ನು ಬಳಸಿಕೊಳ್ಳುವ ಕ್ರಿಯಾಶೀಲತೆ ಬೇಕು.

 ‘ಸದಾಚಾರವು’ ಸತ್ಯಶುದ್ಧ ಮಾರ್ಗ, ಸರ್ವರ ಹಿತಕ್ಕಾಗಿ ಮಾಡುವ ಸತ್ಕಾರ್ಯಗಳು, ಸತ್ಯಶುದ್ಧ ಉದ್ಯೋಗ ಮೊದಲಾದ ಅರ್ಥಗಳನ್ನು ಒಳಗೊಳ್ಳುತ್ತದೆ. ಇಲ್ಲಿ ಕೇವಲ ಉದರನಿಮಿತ್ತವಾಗಿ ತನ್ನ  ಕುಟುಂಬದ ಕ್ಷೇಮಕ್ಕಾಗಿ ಮಾಡುವ ಕಾರ್ಯವನ್ನು ಸದಾಚಾರವೆನ್ನಲಾಗದು. ಕೇವಲ ಸ್ವಾರ್ಥ ಪರನಾಗಿರಬಾರದು. ಅಂಥವರು ಭಕ್ತನೆನಿಸಿಕೊಳ್ಳಲು ಅಯೋಗ್ಯ, ಅಂಥವರ ಬಗ್ಗೆ ಚೆನ್ನಬಸವಣ್ಣನವರು-

ʼ’ಹಸಿವಿನ ಹಂಗಿಗೆ ಭವಿತಾವಕ್ಕೆ ಇಚ್ಛೆ

ಮಾಡವವರು, ಮಥನದ ಹಂಗಿಗೆ ಭವಿಸಂಗದ

ಇಚ್ಛೆಯ ಮಾಡುವರು, ಶ್ರೋತ್ರದ, ನೇತ್ರದ

ಘ್ರಾಣದ ಸುಖವ ಭುಂಜಿಸುವನ್ನಕ್ಕ

ಭಕ್ತಿಯೆಂತೆಂಬೆ, ಲಿಂಗೈಕ್ಯನೆಂತೆಂಬೆ

ಕೂಡಲ ಚೆನ್ನಸಂಗಯ್ಯ

ಅವರು ಸದಾಚಾರಕ್ಕೆ

ಸಲ್ಲರು ದೂರ ನೋಡಯ್ಯʼʼ

ಎಂದು ತೀವ್ರವಾಗಿ ಖಂಡಿಸುತ್ತಾರೆ. ಸದಾಚಾರವು ಸಮುದಾಯದ ಸದಸ್ಯನೊಬ್ಬನು ತನ್ನ ಬಾಳನ್ನು ಇತರರೊಂದಿಗೆ ಕಳೆಯಬೇಕಾದ ರೀತಿಯನ್ನು ಹೇಳುತ್ತದೆ. ವೀರಶೈವನು ಭಿಕ್ಷೆಯೆತ್ತದೆ, ಸೋಮಾರಿಯಾಗಿ ತಿನ್ನದೆ, ತನ್ನ ಸ್ವಂತ ಸಂಪಾದನೆಯಿಂದಲೇ ಜೀವನವನ್ನು ನಡೆಸಬೇಕು. ಸದಾಚಾರಕ್ಕೆ ಮುಖ್ಯವಾದುದು ಕಾಯಕ, ಕಾಯಕದಿಂದ ಹಣ ಸಂಪಾದನೆ ಮಾಡಿ ತಾನು ಜೀವಿಸುವುದಷ್ಟೇ ಅಲ್ಲದೆ, ಅದನ್ನು ತನ್ನ ಸಮಾಜದ ಇತರರೊಂದಿಗೆ ಹಂಚಿ ಅನುಭವಿಸಬೇಕು ಎಂದು ಸದಾಚಾರವು ನಿಯಮಿಸುತ್ತದೆ.

“ಕಾಯಕವೇ ಕೈಲಾಸ’ ಎಂಬುದು ಶರಣತತ್ವದ ಜೀವಾಳ, ಕಾಯಕ ಸತ್ಯಶುದ್ಧವಾಗಿರಬೇಕು. ಮತ್ತು ಗಳಿಸಿದ್ದನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಬೇಕು. ಅದನ್ನು ಇನ್ನೂ ಸೂಕ್ಷ್ಮವಾಗಿ ಗುರುವಿಗೆ ತನುವು ಲಿಂಗಕ್ಕೆ ಮನವು, ಜಂಗಮಕ್ಕೆ ಧನವು ಅರ್ಪಿತವಾಗಬೇಕು. ಇಲ್ಲಿ ಗುರುವಿಗೆ ತನು ಎಂದರೆ ಗುರುವಿನ ಹಸ್ತಮಸ್ತಕ ಸಂಯೋಗದಿಂದ ಪರಿಶುದ್ಧಗೊಂಡ ದೇಹದ ಕ್ರಿಯೆಗಳೆಲ್ಲಾ ಗುರುವಿನ ಕೃಪೆಗೆ ಪಾತ್ರವಾಗಬೇಕು. ಗುರೂಪದೇಶ ಮಾರ್ಗದಲ್ಲಿ ಪರಮಾತ್ಮನ ಸಂಪತ್ತಾಗಿರುವ ಈ ದೇಹವು ಬಳಕೆಯಾಗಬೇಕು ಎಂಬುದೇ ಗುರುವಿಗೆ ತನುವನ್ನರ್ಪಿಸಬೇಕೆಂಬ ಭಾವ. ಅದೇ ರೀತಿ ಲಿಂಗಕ್ಕೆ ಮನವನ್ನು ಎಂದರೆ ಮನಸ್ಸು ಶಿವಮಯವಾಗಬೇಕು. ಲಿಂಗ ವಿಶ್ವದ ಪ್ರತೀಕ. ಮನಸ್ಸು ಎಲ್ಲಾ ಇಂದ್ರಿಯಗಳ ಸೂತ್ರಧಾರ, ಅದು ಚಂಚಲವಾದರೆ, ಅನೀತಿಯ ದಾರಿ ಹಿಡಿಯುವದೇ ಹೆಚ್ಚು. ಆದ್ದರಿಂದ ಅದನ್ನು ಸ್ಥಿರಗೊಳಿಸಿ ಲಿಂಗದ ನೆನಹನ್ನು ತುಂಬಬೇಕು. ಮನ ಲಿಂಗಮಯವಾಗುವುದು ಎಂದರೆ ವಿಶ್ವಮಯವಾಗುವುದು ಎಂದರ್ಥ. ಧನ ಜಂಗಮಕ್ಕೆ ಎಂದರೆ, ತನ್ನ ದುಡಿಮೆಯ ಫಲ ಪರಹಿತಕ್ಕೆ ಬಳಕೆ ಯಾಗಬೇಕೆಂಬುದು ಶರಣರ ನಿಲುವು. ಹೀಗೆ ತನು-ಮನ-ಧನವನ್ನು ಸದುಪಯೋಗಪಡಿಸುವುದೇ ಸಹಜ ಯೋಗ, ಇದೇ ಸದಾಚಾರ ಅಥವಾ ಸಮಯಾಚಾರ, ಸದಾಚಾರದ ಬಗೆಗೆ ಬಸವಣ್ಣನವರ ನಡಿಗಳು ಗಮನಾರ್ಹ.

ಲಕ್ಷಗಾವುದ ಹೋಗಿ

ಭಕ್ತಭಕ್ತನ ಕಾಂಬುದು ಸದಾಚಾರ

ಅಲ್ಲಿ ಕೂಡಿ ದಾಸೋಹವ ಮಾಡಿದಡೆ

ಕೂಡಿಕೊಂಬನು ನಮ್ಮ ಕೂಡಲ ಸಂಗಮದೇವಾ”

ಎಂದಿದ್ದಾರೆ. ಅಂತೆಯೇ ಅವರ ಮತ್ತೊಂದು ವಚನದಲ್ಲಿ,

ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಸದ್ಭಕ್ತನು;

ಮಾಡಿದಡೆ ಮಾಡಲಿ ಮಾಡಿದಡೆ ತಪ್ಪೇನು ?

ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈ ದುಡುಕಿದಡೆ

ಅದು ಪ್ರಸಾದವಲ್ಲ, ಕಿಲ್ಬ

ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ

ಪ್ರಸಾದಕ್ಕೆ ಕೈ ತೆಗೆದಡೆ, ಅದು ಲಿಂಗಕ್ಕೆ ಬೋನ,

ಇದು ಕಾರಣ, ಕೂಡಲ ಸಂಗಮದೇವಾ

ಇಂತಪ್ಪ ಸದಾಚಾರಿಗಳನೆನಗೆ ತೋರಾ |

ಎಂದಿದ್ದಾರೆ. ಇಲ್ಲಿ ಪರಸ್ಪರ ಪ್ರೇಮ ಸೌಹಾರ್ದಗಳ ಪ್ರತಿಪಾದನೆ ಇದೆ, ಸಮಾಜದಲ್ಲಿ ಸಾಮರಸ್ಯದ ಸಾಧನೆಯ ಸೂಚನೆಯಿದೆ.

ಸದಾಚಾರದಲ್ಲಿ ಎಂಟು ವಿಧಗಳು. ೧. ಉತ್ಪನ್ನ ಶೀಲ, ೨. ಆಚಾರಶೀಲ, ೩. ಉದ್ಯೋಗಶೀಲ, ೪. ಉತ್ಕುಲ ಶೀಲ, ೫. ಸಂಬಂಧಶೀಲ, ೬. ಪ್ರಸನ್ನಶೀಲ, ೭. ಉತ್ತಮಶೀಲ. ಜ್ಞಾನಶೀಲ. ಇಲ್ಲಿ ‘ಶೀಲ ಎಂದಿರುವುದು ಆಚಾರ ಶಬ್ದದ ಪರ್ಯಾಯ ಪದ. ಸದಾಚಾರದಲ್ಲಿ ಇರಬೇಕಾದ, ಗಮನಿಸಬೇಕಾದ, ಗಳಿಸಬೇಕಾದ, ಬಳಸಬೇಕಾದ ಆಂತರಿಕ ಸಂಪತ್ತಿನ ವಿವರಣೆ ಈ ಶೀಲ ಸಂಪತ್ತಿನಲ್ಲಿ ವ್ಯಕ್ತವಾಗಿದೆ. ಸದಾಚಾರದ ಅಂತರಾರ್ಥವನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಒಟ್ಟಾರೆ ಸದಾಚಾರಿಯು

ಅಷ್ಟಾವರಣಗಳಲ್ಲಿ ಅಚಲ ನಂಬಿಕೆ, ವೀರಶೈವರನ್ನೆಲ್ಲ ಸಮಾನವೆಂದು ತಿಳಿಯುವುದು ಭವಿಗಳೊಡನೆ ಸೇರದಿರುವುದು, ಲೌಕಿಕ ಕರ್ಮಗಳಲ್ಲಿಯ ವಿಧಿ ನಿಷೇಧಗಳನ್ನು ಪಾಲಿಸುವುದು ಮುಂತಾದವುಗಳನ್ನು ಒಳಗೊಳ್ಳುತ್ತಾನೆ.

೩. ಶಿವಾಚಾರ :

ಪಂಚಾಚಾರಗಳಲ್ಲಿ ಮೂರನೆಯದು ಶಿವಾಚಾರ. ಇಲ್ಲಿಯೂ ಶಿವ+ಆಚಾರ ಎಂದು ಎರಡು ಪದಗಳಿವೆ. ಶಿವಾಚಾರದ ತತ್ವಾರ್ಥವನ್ನು ಅರಿಯಬೇಕಾದಲ್ಲಿ ಮೊದಲು ‘ಶಿವ’ ಶಬ್ದದ ಮೂಲಾರ್ಥವನ್ನು ಅರಿಯಬೇಕಾಗುತ್ತದೆ. ಅಮರಕೋಶದಲ್ಲಿ ‘ಶಿವ’ ಶಬ್ದಕ್ಕೆ ʼʼಶ್ವಃ ಶ್ರೇಯಸಂ ಶಿವಂ ಭದ್ರಂ ಕಲ್ಯಾಣಕಾರಿ, ಮಂಗಳಪ್ರದವಾದುದೇ ಶಿವ” ಎಂಬರ್ಥ. ಶರಣರು ಹಿಂದೂ ಸಂಸ್ಕೃತಿಯ

ಪೌರಾಣಿಕ ಶಿವನ ಪ್ರತಿಪಾದನೆಗನುಗುಣವಾದ ಶಿವಚಾರತತ್ವ ಪ್ರತಿಪಾದಿಸಿಲ್ಲ ಬದಲಾಗಿ ಸದಾ ಲೋಕಕಲ್ಯಾಣವನ್ನೆ ಬಯಸುವ, ಲೋಕಹಿತಕರವಾದ ಮಂಗಳ ಕಾರ್ಯವನ್ನೇ ಕೈಕೊಳ್ಳುವ ಶಿವಭಕ್ತನನ್ನು ಪ್ರತಿಪಾದಿಸುತ್ತಾರೆ.

 ಶಿವಾಚಾರತತ್ವದಲ್ಲಿ ಸ್ವಾರ್ಥಭಾವವನ್ನು ತೊರೆದು ಸರ್ವವೂ ಶಿವನ ಪ್ರಸಾದವೆಂಬ ಭಾವನೆ ಬೆಳೆಯುತ್ತದೆ. ಅದರಿಂದ ಅಹಂಕಾರ, ಮಮಕಾರವಳಿಯುತ್ತದೆ. ಶಿವತ್ವವೇ ಜೀವನದಲ್ಲಿ ಬೆಳೆಯುತ್ತದೆ ಮತ್ತು ಉಳಿಯುತ್ತದೆ. “ಶಿವಭಕ್ತರಲ್ಲಿ ಕುಲಗೋತ್ರ, ಜಾತಿ, ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೇ ಶಿವಾಚಾರ” ಎಂದು ಚೆನ್ನಬಸವಣ್ಣನವರು ‘ಶಿವಾಚಾರ’ ವನ್ನು ವಿಶ್ಲೇಷಿಸಿದ್ದಾರೆ. ಶಿವಾಚಾರವು ತನ್ನ ಧರ್ಮಕ್ಕೆ ಸೇರಿದವರನ್ನು ಕಾಣಬೇಕಾದ ಬಗೆಯನ್ನು ವಿಧಿಸುತ್ತದೆ. ತನ್ನ ಧರ್ಮದ ಉತ್ತಮಿಕೆಗಾಗಿ, ಪ್ರಸಾರಕ್ಕಾಗಿ ವ್ಯಕ್ತಿಯು ತನ್ನ ನಡುವಳಿಕೆ-ಮನೋಭಾವಗಳಿಂದ ಸಲ್ಲಿಸಬೇಕಾದ ಕಾಣಿಕೆಯನ್ನು ಹೇಳುತ್ತದೆ.

ಶರಣರ ಕಾಲಕ್ಕೆ ಎಲ್ಲ ಮತಜಾತಿಗಳಿಂದ ವೀರಶೈವಕ್ಕೆ ಮತಾಂತರ ನಡೆಯಿತು. ಶರಣರು ಲಿಂಗಧಾರಿಗಳಲ್ಲಿ ಸಮಾನತೆಯನ್ನು ಬೋಧಿಸುವುದು ಆಗ ಅತ್ಯವಶ್ಯವಾಗಿತ್ತು. ವೀರಶೈವಕ್ಕೆ ಸೇರಿದ ಕೆಲವರು ತಮ್ಮ ಜಾತಿ, ಮತ, ಸಾಮಾಜಿಕ ಸ್ಥಿತಿಗತಿಗಳ ಸ್ಮರಣೆಯಿಂದ ಕೀಳೆಂದು ಪರಿಗಣಿಸುತ್ತಿದ್ದರು. ಇದು ಧರ್ಮದ ಐಕ್ಯತೆಗೆ ಮಾರಕವಾದ್ದರಿಂದ ಐಕ್ಯಮತ ಸಾಧನೆಯ ಉದ್ದೇಶದಿಂದ ಶರಣರು ಶಿವಾಚಾರವನ್ನು ನಿಯಮಿಸಿದರು. ಕೇವಲ ಊಟೋಪಚಾರಗಳಲ್ಲಿ ಮಾತ್ರವಲ್ಲದೆ, ವೈವಾಹಿಕ ಸಂಬಂಧಗಳಲ್ಲಿಯೂ ವೀರಶೈವರೆಲ್ಲ ಅಡೆತಡೆಯಿಲ್ಲದೆ ಸೇರಬೇಕೆಂದು ಬೋಧಿಸಿದರು. ಜೀವನವೇ ಶಿವಮಯವಾಗಬೇಕು. ಅದು ಶಿವಾಚಾರದ ಲಕ್ಷಣ. ಅವನು ಮಾಡುವ ಕಾರ್ಯವು ಮಂಗಳಕರವಾಗಿರಬೇಕು; ಯಾರಿಗೂ ಅಹಿತಕಾರಿಯಾಗಿರಬಾರದು.

ಶಿವಚಿಂತೆ, ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ

ಆಚಾರ ಶಿವಾಚಾರ ತಮ ತಮಗೆ ಸೂರೆಯೆ,

 ಕೂಡಲಸಂಗಮದೇವನ ನೆರೆ ಪೂಜಿಸಿದವಂಗಲ್ಲದೆʼʼ

 ಶಿವಾಚಾರಿಗಳು ಸದಾ ಶಿವಚಿಂತೆಯಲ್ಲಿರಬೇಕು. ಅವರ ಮನಸ್ಸಿನಲ್ಲಿ ದುಷ್ಟ ಆಲೋಚನೆಗಳು ಸುಳಿಯಬಾರದು. ಅದನ್ನು ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ –

ಅವರ ನಡೆಯೊಂದು ನುಡಿಯೊಂದಾದಡೆ

 ಶಿವಾಚಾರಕ್ಕವರು ಸಲ್ಲರಯ್ಯಾ |

ಬಲ್ಲನು, ಸಾತ್ವಿಕರಲ್ಲದವರನೊಲ್ಲನು;

ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು,

ಪ್ರಪಂಚಯ ಮನವನೊಲ್ಲನು ಕೂಡಲಸಂಗಮದೇವನು’,

ಈ ವಚನದಲ್ಲಿ ಶಿವಾಚಾರದ ಒಟ್ಟು ವಿಶ್ಲೇಷಣೆ ಮೂಡಿ ಬಂದಿದೆ. ಶಿವಾಚಾರ ಸಂಪನ್ನನ ನಡೆ ನುಡಿಗಳಲ್ಲಿ ಭೇದವಿರಬಾರದು, ಸ್ವಾರ್ಥ, ರೋಷಗಳಿರಬಾರದೆಂಬುದು ಅಷ್ಟೇ ನಿಖರವಾದುದು. ತತ್ವವನ್ನು ಹೇಳುವುದು ಸುಲಭ, ಆದರೆ ಆಚರಣೆ ಕಷ್ಟದಾಯಕ. ಏಕೆಂದರೆ,

ಶಿವಾಚಾರವೆಂಬುದೊಂದು ಬಾಳಬಾಯಧಾರೆ,

ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು,

ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು

ಬಿಚ್ಚಿ ಬೇರಾದಡೆ ಮೆಚ್ಚುವನೇ ನಮ್ಮ

ಕೂಡಲಸಂಗಮದೇವಾʼʼ

ಶಿವಾಚಾರವೆಂಬುದು ಕತ್ತಿಯ ಅಲಗಿನಷ್ಟೇ ಹರಿತವಾಗಿದೆ. ಅದನ್ನು ಅಳವಡಿಸಿಕೊಳ್ಳುವಲ್ಲಿ ತನ್ಮಯತೆ, ನಿರ್ವ೦ಚನೆ ಇರಬೇಕಾಗುತ್ತದೆ. ಇಲ್ಲಿ ಬಸವಣ್ಣನವರು ಆತ್ಮಸಾಕ್ಷಿಯಾಗಿ ಹೇಳುವುದೆಂದರೆ-

ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯವ ಮುಟ್ಟಲೀಯದೆ

ಆಚಾರವ ಶಿವಾಚಾರವ ಮಾಡುವೆ;

ಭಯ ಭಕ್ತಿಯಿಂದ ತೋರುವೆ ಮನದಲ್ಲಿ ವಂಚನೆಯಿಲ್ಲದೆ;

ಭಾವಶುದ್ಧ ಪೂಜೆಯ ಮಾಡುವ

ಎನ್ನ ಪ್ರಾಣ ಶಕ್ತಿಯಿಂದ ಕೂಡುವೆ

ಕೂಡಲಸಂಗಮದೇವರ ʼʼ

ಇಂತಹ ಪ್ರತಿಜ್ಞೆಯಿಂದ ತಮ್ಮ ಶಿವಾಚಾರ ಸಂಪನ್ನತೆಯನ್ನು ವ್ಯಕ್ತಪಡಿಸಿದ್ದಾರೆ.

ಶಿವಾಚಾರವು ಕೇವಲ ಬಹಿರ೦ಗದ ಆಚರಣೆಯಲ್ಲ, ಅದೊಂದು ಅಂತರಂಗದ ಸಾಧನೆಯಾಗಿದೆ. ಅದರ ವಿವರಣೆ ಸುಲಭ ಸಾಧ್ಯವಲ್ಲ ಎಂಬುದನ್ನು

ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ

ಕರಿಯ ಕನ್ನಡಿಯೊಳಡಗಿದಂತಯ್ಯಾ |

ಗುಣಿ ಅವಗುಣಿಯೊಡನಾಡಿದಡೆ

ಅದೆ ಆತನ ಕರ್ಮಫಲ ನೋಡಾ |

ಕೂಡಲಸಂಗನ ಶರಣರ ಅನುಭಾವ

ಭವದುಃಖಗಳಿಗೆ ವೇದ್ಯವಾಗದು’ʼ

ಎಂದು ಗಂಭೀರವಾಗಿ ಚಿತ್ರಿಸಿದ್ದಾರೆ.

ಶಿವಶರಣರು ವಿಶ್ವಮಾನವ ಭಾವನೆಯುಳ್ಳವರು ಎಂಬುದು ನಿತ್ಯ ಸತ್ಯ. ಆದರೆ ಅವರು ಸರ್ವಸಮ  ಭಾವವನ್ನು ಎಲ್ಲ ಮಾನವರಿಗೂ ಅನ್ವಯಿಸಿಲ್ಲ. ಅದು ‘ಶಿವಭಕ್ತರಲ್ಲಿ ಎಂದು ನಿರ್ದೇಶಿಸಿದ್ದಾರೆ. ಶಿವಭಕ್ತರೆಂದರೆ ಲಾಂಛನಧಾರಿಗಳೆಂದಲ್ಲ. ಹಿಂದೆ ಹೇಳಿದಂತೆ ಕಾಮಕ್ರೋಧಾದಿಗಳಿಂದ ದೂರಾದವರು. ಪಂಚೇಂದ್ರಿಯ, ಸಪ್ತಧಾತುಗಳಿಗೆ ದಾಸರಾಗದವರು. ಅಂಥವರಲ್ಲಿ ಭೇದವೆಣಿಸಬಾರದೆಂಬ ನಿರ್ದೇಶನ. ನಡೆಯೆಲ್ಲವೂ ಶಿವನಡೆ, ನುಡಿಯೆಲ್ಲವೂ ಶಿವನುಡಿಯಾದರೆ ಅದು ನಿಜವಾಗಿ ಶಿವಾಚಾರವೆನಿಸುತ್ತದೆ ಎಂಬುದನ್ನು ಶರಣರು ಪ್ರತಿಪಾದಿಸಿದ್ದಾರೆ.

೪. ಗಣಾಚಾರ :

ಪಂಚಾಚಾರಗಳಲ್ಲಿ ನಾಲ್ಕನೆಯ ಆಚಾರವೇ ಗಣಾಚಾರವಾಗಿದೆ. ಗಣ+ಆಚಾರ ಈ ಪದದಲ್ಲಿ ‘ಗಣ’ ಎಂಬುದು ಪ್ರಬಲ ಸಂಘಟನೆಯನ್ನು ಹಾಗೂ ಆತ್ಮರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧನಾಗುವ ಧೀರನನ್ನು ಸೂಚಿಸುತ್ತದೆ. ಗಣಾಚಾರವು ವೀರಶೈವನು ಇತರ ಧರ್ಮಗಳಿಂದ ತನ್ನ ಧರ್ಮವನ್ನು ರಕ್ಷಿಸಬೇಕಾದ, ಪೋಷಿಸಬೇಕಾದ ಕರ್ತವ್ಯವನ್ನು ಒಳಗೊಳ್ಳುತ್ತದೆ. ಗಣಾಚಾರಿಯು ಲಿಂಗ ದ್ರೋಹ, ಜಂಗಮ ದ್ರೋಹಗಳನ್ನು ಸಹಿಸಬಾರದು. ಅಂತಹ ವಿರೋಧಿ ಕೃತ್ಯಗಳನ್ನು ವೀರತನದಿಂದ

ಎದುರಿಸಬೇಕು. ಹಾಗೆ ಬಗ್ಗು ಬಡಿಯಲು ಸಾಧ್ಯವಾಗದಿದ್ದರೆ ತಾನೇ ಆ ಜಾಗದಿಂದ ಹೊರಡಬೇಕು. ಸ್ವಧರ್ಮದ ಪ್ರಸಾರಕ್ಕೆ ವೀರಾವೇಶವನ್ನು ಪಡೆದು ಪ್ರಾಣಾರ್ಪಣೆಯನ್ನು ಮಾಡಲೂ  ಹಿಂಜರಿಯಬಾರದೆಂಬ ತತ್ವವನ್ನು ಗಣಾಚಾರವು ಬೋಧಿಸುತ್ತದೆ. ಶರಣ ಸಾಮವೇದಿ, ಶರಣ ಶಂಕರದಾಸಿಮಯ್ಯ, ಶರಣ ಆದಯ್ಯ ಮೊದಲಾದವರು ಈ ಬಗೆಯ ಜೀವನವನ್ನು ನಡೆಸಿದ ಭಕ್ತರ ಜೀವನವನ್ನೇ ವಸ್ತುವಾಗಿಟ್ಟುಕೊಂಡು ರಚಿಸಿದ ಹರಿಹರನ ಹಲವಾರು ರಗಳೆಗಳನ್ನಿಲ್ಲಿ ನೆನೆಯಬಹುದು.

ಚೆನ್ನಬಸವಣ್ಣನವರು ‘ಶಿವಾಚಾರದ ನಿಂದೆಯ ಕೇಳದಿರುವುದೇ ಗಣಾಚಾರ’ ಎಂದಿದ್ದಾರೆ. ಶರಣರ ಜೀವನ ಸಂದೇಶ ಪಾಪಿಯ ಮರ್ಧನವಲ್ಲ, ಪಾಪದ ನಿರ್ಮೂಲನೆ. ಅದನ್ನು ಅನುಸರಿಸುವ ರೀತಿ-ನೀತಿಗಳನ್ನು ಶರಣರ ನುಡಿ ಬೆಳಕಿನಲ್ಲಿ ನೋಡಬೇಕು. ಗಣಾಚಾರವೆಂಬುದು ಒಂದು ರೀತಿಯ ಜೀವನ ವ್ರತ. ಅಂತಹ ವ್ರತಿಗಳಿಗೆ ಬಸವಣ್ಣನವರು ಮಣಿಯುತ್ತಾರೆ.

ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತು ಮಾಡಿ

ಸಲಹಿದ ಸುಖವು, ಸಾಲೋಕ್ಯ, ಸಾಮೀಪ್ಯ,

ಸಾರೂಪ್ಯ, ಸಾಯುಜ್ಯದಂತುಟಲ್ಲ,

ಕೇಳಯ್ಯ ಕೂಡಲಸಂಗನ ಶರಣರು

ತಮ್ಮ ಒಕ್ಕುದನಿಕ್ಕಿ ಸಲುಹಿದ ಸುಖವ

ಎಂಬಲ್ಲಿ ಗಣಾಚಾರಿಗಳ ಸಹಯೋಗವು ಮುಕ್ತಿಗಿಂತಲೂ ಮಿಗಿಲಾದುದು ಎನ್ನುತ್ತಾರೆ. ತಮ್ಮ ಮತ್ತೊಂದು ವಚನದಲ್ಲಿ-

ಲಿಂಗಮುಖದಿಂದ ಬಂದ ಪ್ರಸಾದವನ್ನಲ್ಲದೆ

ಕೊಂಡೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ !

ಲಿಂಗಾರ್ಪಿತವಲ್ಲದೆ ಉದಕವ ಮುಕ್ಕಳಿಸಿದೆನಾಡದೆ

ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ,

ಲಿಂಗಾರ್ಪಿತವಲ್ಲದೆ, ಹುಲ್ಲುಕಡ್ಡಿಯ ಕೊಂಡೆನಾದಡೆ, ನಾ ಬಲ್ಲೆ

ಮುಂದೆ, ಭವ ಘೋರನರಕವೆಂಬುದ |

ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು, ಅಳವರಿಯದೆ

ನುಡಿದೆನು, ಕಡೆ ಮುಟ್ಟಿ ಸಲಿಸದಿದ್ದಡೆ ತಲೆದಂಡ

ಕೂಡಲ ಸಂಗಮದೇವಾʼʼ

ಎಂದು ಅರ್ಥವತ್ತಾಗಿ ಸಮರ್ಥಿಸಿದ್ದಾರೆ. ಗಣಾಚಾರವೆಂಬುದು ದೇಹ ಬಲಿದ ಪ್ರದರ್ಶನವಲ್ಲ, ಅದು ಆತ್ಮಬಲದ ಸ್ಪಂದನ. ಅಂಥವರು ಶಿವನೊಲಿದ ಶಿವಗಣಂಗಳೆನಿಸುತ್ತಾರೆ. “ದಯವೇ ಧರ್ಮ, ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’ ಎನ್ನುವ ಶರಣ ಧರ್ಮದ ಆರಾಧಕರು ಗಣಾಚಾರಿಗಳು.

೫. ಭೃತ್ಯಾಚಾರ :

 ಪಂಚಾಚಾರಗಳಲ್ಲಿ ಕೊನೆಯದು ಇದು. ಭೃತ್ಯ+ಆಚಾರ ಎರಡು ಶಬ್ದಗಳ ಸಮನ್ವಯವಿದೆ. ಭೃತ್ಯ ಎಂದರೆ ಸಾಮಾನ್ಯ ಅರ್ಥದಲ್ಲಿ ‘ಸೇವಕ’ ಎಂದು ಭಾವಿಸಲಾಗಿದೆ. ಆದರೆ ವೀರಶೈವದಲ್ಲಿ ಭೃತ್ಯಾಚಾರವು ತನ್ನ ಧರ್ಮದ ಹಿರಿಯರೊಡನೆ ನಡೆದುಕೊಳ್ಳಬೇಕಾದ ಬಗೆಯನ್ನು ವಿಧಿಸುತ್ತದೆ. “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಭಾವನೆ ಬೆಳೆದಾಗ, ತಾನು ಹೆಚ್ಚು ನೀನು ಹೆಚ್ಚು ಎಂಬ ಘರ್ಷಣೆ ಇರುವುದಿಲ್ಲ. ಅದರೊಡನೆ ತನ್ನ ಧರ್ಮಾನುಯಾಯಿಗಳ ಬಗ್ಗೆ ಪ್ರೀತಿ ವಿಶ್ವಾಸಗಳು ಬೆಳೆಯುತ್ತವೆ.

 ಸೇವಕ ಎಂಬಲ್ಲಿ ತನ್ನ ಉದರನಿಮಿತ್ತವಾಗಿ ಸೇವೆ ಮಾಡುವವರಿರಬಹುದು ಇಲ್ಲವೆ ಪ್ರಾಣಭಯದಿಂದ ಸೇವೆ ಮಾಡುವವರು ಇರಬಹುದು. ಶರಣರು ಭೃತ್ಯ ಶಬ್ದವನ್ನು ಬಳಸಿರುವುದು ಇಂತಹ ಅರ್ಥಗಳಲ್ಲಿ ಅಲ್ಲ.  ದೈವದತ್ತವಾದ ತನು-ಮನ- ಧನಗಳನ್ನು ಪರಹಿತಕ್ಕಾಗಿ ವಿನಿಯೋಗಿಸುವವನು. ಅವನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಗೈಯುವವನು ಹಾಗೂ ಅದನ್ನು ಜೀವನ ಧರ್ಮವೆಂದು ಭಾವಿಸಿದವನು. ತನ್ನ ಸೇವೆಯಿಂದ ಅನ್ಯರ ಉದ್ಧಾರ ಎಂಬ ಅಹಂಕಾರವಿಲ್ಲದೆ ಅದು ತನ್ನ ಉದ್ಧಾರ ಎಂದು ಭಾವಿಸುವವನು. ಈ ಅರ್ಥದಲ್ಲಿ ‘ಭೃತ್ಯ’ ಶಬ್ದವನ್ನು ಶರಣರು ಪ್ರಯೋಗಿಸಿದ್ದಾರೆ.

ಚೆನ್ನಬಸವಣ್ಣನವರು ”ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯ ಭಕ್ತಿಯಿಂದ ಆಚರಿಸುವುದೇ ಭೃತ್ಯಾಚಾರ” ಎಂದಿದ್ದಾರೆ. ಈ ನಿಟ್ಟಿನಲ್ಲಿ ಬಸವಣ್ಣನವರ ಹಲವು ಸಂದೇಶಗಳು ಗಮನಾರ್ಹ.

ಸ್ವಾಮಿ ಭೃತ್ಯ ಸಂಬಂಧಕ್ಕೆ ಆವುದು ಪಥವೆಂದಡೆ,

ದಿಟವ ನುಡಿವುದು, ನುಡಿದಂತೆ ನಡೆವುದು

ನುಡಿದು ಹುಸಿವ, ನಡೆದು ತಪ್ಪುವ

ಪ್ರಪಂಚಯನೊಲ್ಲ ಕೂಡಲಸಂಗಮದೇವ’;

ಎಂಬಲ್ಲಿ ಭಕ್ತಿಯ ನೆಲೆಗಟ್ಟಿನ ಮೇಲೆ ನಿಲ್ಲಬೇಕಾದ ಭೃತ್ಯಾಚಾರದ ಚಿತ್ರ ಇದೆ. ಸೇವೆ ಯಾವತ್ತೂ ಪ್ರೇಮಮಯವಾಗಿರಬೇಕು. ಹಾಗೆಯೇ ಅನುಭವಮಯವಾಗಿರಬೇಕು. ಅದೆಂದರೆ-

ಇತ್ತ ಬಾರಯ್ಯಾ, ಇತ್ತ ಬಾರಯ್ಯಾ, ಎಂದು

ಭಕ್ತರೆಲ್ಲರೂ ಕೂರ್ತು ಹತ್ತೆ ಕರೆವುತ್ತಿರಲು

ಮತ್ತೆ ಕೆಲಕ್ಕೆ ಹೋಗಿ ಶರಣೆಂದು ಹಸ್ತಬಾಯನೆ ಮುಚ್ಚಿ

ಕಿರಿದಾಗಿ ಭೃತ್ಯಾಚಾರವ ನುಡಿದು

ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ

ಕೂಡಲಸಂಗಮದೇವ ಪ್ರಮಥರ ಮುಂದೆ ʼʼ

ಇವೆಲ್ಲವುಗಳ ಜೊತೆಗೆ ಕಳಶಪ್ರಾಯವಾದ ಸೂತ್ರವೆಂದರೆ ಮಾಡುವವನು ತಾನಲ್ಲ, ಮಾಡಿಸಿಕೊಳ್ಳು ವವನೂ ಮಾಡುವವನೂ ದೇವನೇ ಎಂಬ ಅನುಭಾವ ಅಳವಡಬೇಕು. ನೃತ್ಯಾಚಾರದಲ್ಲಿ ತನ್ನನ್ನು ತಾನ ಮರೆತು ಪರಮಾತ್ಮನ ಸೂತ್ರದಂತೆ ತಾನು ನಡೆಯುತ್ತಿರುವ ನಿಷ್ಠೆ ಬಲಗೊಳ್ಳಬೇಕು. ತಾನು ಯಾವ ಜೀವಕ್ಕೆ ಸೇವೆ ಸಲ್ಲಿಸಿದರೂ ಅದು ಪರಮಾತ್ಮನ ಸೇವೆ ಮತ್ತು ಅದು ಅವನ ಆಜ್ಞೆಯಂತೆಯೇ ನಡೆಯುತ್ತಿದೆ ಎಂಬ ಭಾವನೆ ತನು-ಮನ-ಭಾವದಲ್ಲಿ ತುಂಬಿರಬೇಕು. ನೃತ್ಯಾಚಾರವೆಂಬುದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ, ಅದಕ್ಕಾಗಿ ತಾನೆಸಗುವ ಕೈಂಕರ್ಯವಾಗಬೇಕು. ಅಣುರೇಣು ತೃಣಕಾಷ್ಟಗಳೆಲ್ಲವೂ ಶಿವಸೃಷ್ಟಿಯೆಂದು ನಂಬಿ ಸೇವೆಗೈಯಬೇಕು. ಅದೇ ನೃತ್ಯಾಚಾರದ ತಿರುಳು. ಒಟ್ಟಿನಲ್ಲಿ, ಪಂಚಾಚಾರಗಳ ಕುರಿತು ಬಸವಣ್ಣನವರು ಒಂದೇ ವಚನದಲ್ಲಿ ಸೂತ್ರಬದ್ಧವಾಗಿ ಹೀಗೆ ವಿವರಿಸಿದ್ದಾರೆ

ಲಿಂಗವೇ ಪರವೆಂದರಿದು ಅನ್ಯದೇವರ

ಭಜನೆಯಿಲ್ಲದಿಪ್ಪುದೇ ಲಿಂಗಚಾರ

ತ್ಕ್ರಿಯೆಯಿಂದ ಧನವ ಸಂಪಾದಿಸಿ

ಗುರು, ಲಿಂಗ, ಜಂಗಮ, ದಾಸೋಹ, ದಾನ

ಪರೋಪಕಾರ ಮಾಡುವುದು ಸದಾಚಾರ

ಅಂಗದ ಮೇಲೆ ಲಿಂಗವಿರ್ಪ ಶಿವಭಕ್ತನೇ

ಶಿವರೂಪವೆಂದರಿದು, ಅವರ ಮಂದಿರವ ಪೊಕ್ಕು

ಮಿಕ್ಕುದನುಂಬುದೇ ಶಿವಾಚಾರ

ಶಿವನಿಂದೆಯ ಕಿವಿಗೊಟ್ಟು

ಕೇಳದಿಪ್ಪುದೇ ಗಣಾಚಾರ

ಶಿವಭಕ್ತರ ಶಿಶುವು ಹೊಟ್ಟೆಯಲ್ಲಿರ್ಪುದ ಕಂಡು

ಯಜಮಾನನೆಂದರಿದು ನಮ್ರ ಭಾವದಿಂ

ನಡೆದುಕೊಳ್ಳುವುದೇ ಭೃತ್ಯಾಚಾರ

ಇಂತೀ ಪಂಚಾಚಾರಯುಕ್ತವಾಗಿ ನಡೆಯುವ

ಶಿವಭಕ್ತನೊಕ್ಕುಮಿಕ್ಕುದನಿಕ್ಕಿ ಸಲಹಯ್ಯಾ

ಕೂಡಲಸಂಗಮದೇವಾ

ಪಂಚಾಚಾರಗಳು ವೀರಶೈವ ವಿಶಿಷ್ಟವಾದವುಗಳೇ.  ಆದಾಗ್ಯೂ ಪಂಚಾಚಾರಗಳಲ್ಲಿ ವೀರಶೈವ ಧರ್ಮ ವಿಶಿಷ್ಟ ಅಂಶವನ್ನು ಹಿಂದಕಿಟ್ಟು ನೋಡಿದರೆ ಆ ಆಚಾರಗಳೆಲ್ಲವೂ ಇಂದಿನ ಆಧುನಿಕ ಬದುಕಿನ ಎಲ್ಲ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಮಾರ್ಗವನ್ನು ತೋರಿಸುವ ದಿಕ್ಸೂಚಿಗಳಾಗಿವೆ. ಇವು ಸರ್ವಕಾಲಕ್ಕೂ, ಸಮಸ್ತ ಮನುಕುಲಕ್ಕೂ ಅನ್ವಯಿಸುವ ಸಾಮಾಜಿಕ ಮತ್ತು ಧಾರ್ಮಿಕ ಪ್ರಕ್ರಿಯೆಗಳಾಗಿವೆ. ಇಂತಹ ದಿವ್ಯ ತತ್ವಗಳನ್ನು ಕೊಡಮಾಡಿದ ಶರಣರು ಎಲ್ಲ ಕಾಲಕ್ಕೂ ಜಗನ್ಮಾನ್ಯರಾಗುತ್ತಾರೆ. ಪಂಚಾಚಾರಗಳು ವಿಶ್ವಮಾನ್ಯ ಮಾನವೀಯ ಮೌಲ್ಯಗಳಾಗುತ್ತವೆ.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಬದುಕು ಮತ್ತು ಸವಿಸುವ ದಾರಿಯಲ್ಲಿ ಸಂಚರಿಸುವಾಗ ಜರಗುವ ಪ್ರಕ್ರಿಯೆಗಳು ನಮಗೊಂದು ದೊಡ್ಡ ಪಾಠವಾಗಿ ಮಾರ್ಪಾಡುತ್ತವೆ ಎನ್ನುವದರ ಕುರಿತು ಚಿಂತಿಸುವಾಗ,
ಹನ್ನೆರಡನೆಯ ಶತಮಾನದಲ್ಲಿ ಬರೆದಿಟ್ಟಿರುವ ಬಸವಣ್ಣನವರ ಈ ವಚನ ಬದುಕಿನ ಕರಾಳ ಮುಖದ ವಿರಾಟದರ್ಶನ ಮಾಡಿಸಿತು

ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,

ಏಡಿಸಿ ಕಾಡಿತ್ತು ಶಿವನ ಡಂಗುರ!

ಮಾಡಿದೆನೆನ್ನದಿರಾ ಲಿಂಗಕ್ಕೆ,

ಮಾಡಿದೆನೆನ್ನದಿರಾ ಜಂಗಮಕ್ಕೆ.

ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ,

ಬೇಡಿತ್ತನೀವ ಕೂಡಲಸಂಗಮದೇವ

If it flashes across the mind that one is performing service,

the drum of Lord Shiva warns with a harsh sound.

Never say that you served the Lord!

Never say that you served His wandering (mobile) devotees!

If the thought that you served does not occur in your mind,

the Lord Kudala Sangama will grant you whatever you aspire for.

ಭಕ್ತನು ಸೇವಕ, ಶಿವನು ಯಜಮಾನ. ಸೇವಕನು ಯಜಮಾನನ ಕೆಲಸವನ್ನು ಮಾಡಿ-ಮಾಡಿಸಿದವನು ಯಜಮಾನನೆಂದು-ಅವನ ಹೆಸರನ್ನು ಮುಂದುಮಾಡದೆ ತಾನೇ ಮಾಡಿದವನೆಂದು-ಒಳಗೊಳಗೇ ಆದರೂ ಬಡಿವಾರ ಮಾಡಿದರೆ ಯಜಮಾನನು ಗಮನಿಸಿ ಶಿಕ್ಷಿಸುತ್ತಾನೆ.

ಹಾಗೆಯೇ ಭಕ್ತನು ತನ್ನ ಯಜಮಾನನಾದ ಶಿವನಿಗಾಗಲಿ, ಅವನ ಪ್ರತಿನಿಧಿಯಾದ ಜಂಗಮಕ್ಕಾಗಲಿ ಮಾಡಿ ನೀಡಿ ದಾಸೋಹಂಭಾವದಿಂದಿರದೆ ಅಹಂಭಾವಿಯಾದರೆ ಸವಾಲೆಸೆದು ಕಾಡುತ್ತಾನೆ. ಮಾಡುವವನು ನೀನೆ ಮಾಡಿಸುವವನು ನೀನೆ ಎಂದು ಶಿವನಿಗೆ ವಿನಮ್ರವಾಗಿ ನಡೆದರೆ ಅವನನ್ನು ಶಿವನು ತನ್ನ ಅರ್ಧಾಸನದಲ್ಲಿ ತೊಡೆಯಲ್ಲಿ ತಲೆಯಲ್ಲಿ ಮೆರೆಸುತ್ತಾನೆ.

– ವ್ಯಾಖ್ಯಾನಕಾರರು

ಡಾ.ಎಲ್. ಬಸವರಾಜು

ಶ್ರೀಕುಮಾರ ತರಂಗಿಣಿ  ೨೦೨೩ ಎಪ್ರಿಲ್ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ದೇವ ಕಾಯೋ ನೀ ಮಾಯಾತೀತನೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೩ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ನಾನು ಕಂಡ ಕುಮಾರ ಯೋಗಿ: ಲೇಖಕರು: ಪೂಜ್ಯ ಜ.ಚ.ನಿ
  4. ಷಟ್‌ಸ್ಥಲ : ಪರಿಕಲ್ಪನೆ :• ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  5. ದೃಷ್ಟಿ- ಸೃಷ್ಟಿ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  6. ವಚನ ವಾಙ್ಮಯದ ಮಹತ್ವ :ಫ. ಗು. ಹಳಕಟ್ಟಿ, ವಿಜಾಪೂರ
  7. ಅಪ್ಪ ಹಾನಗಲ್ಲ ಕುಮಾರೇಶ : ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
  8. ಆಡಿಯೋ೧ : ವಿಶೇಷ ಉಪನ್ಯಾಸ
  9. ಶ್ರೀಕುಮಾರೇಶ್ವರರ ಶಿಷ್ಯ ಸಂಪತ್ತು” ಪರಮಪೂಜ್ಯ
  10. ಶ್ರೀ ಮ.ನಿ.ಪ್ರ. ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ
  11. ಶ್ರೀ ಅನ್ನದಾನೇಶ್ವರ ದೇವಮಂದಿರಮಠ.ಸುಕ್ಷೇತ್ರ ಮಣಕವಾಡ
  12. ಆಡಿಯೋ ೨ : ದೇವ..ದೇವಾ..ಶ್ರೀಕುಮಾರೇಶ
  13. ಗಾಯನ: ಶ್ರೀಸಿದ್ಧೇಂದ್ರಕುಮಾರ ಹಿರೇಮಠ
  14. ರಚನೆ : ಶ್ರೀಕಂಠ. ಚೌಕೀಮಠ

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ರಾಗ – ಕೇದಾರ ಗೌಳ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ದೇವ | ಕಾಯೋ ನೀ ಮಾಯಾತೀತನೆ || ಪ ||

ವೀರಶೈವವ ಸಾರಿ ತೋರುವ |

ಭೂರಿ ಭಕ್ತಿಯುಕ್ತರ ಪಾರುಗೊಳಿಸುತೆ || 1 ||

ಶಿಷ್ಟ ಮತವಿದು ನಷ್ಟಗೊಳ್ವುದು |

ತುಷ್ಟಿಗೊಳಿಸುವೆನೆಂದ ಭೀಷ್ಟ ವೀಯುತೆ || 2 ||

ಮತವೆ ನಿನ್ನದು ಪತಿಯೆ ಕಾಯ್ವುದು |

ಗತಿಯ ಕಾಣದಿರ್ಪರ ಜತಿಯಗೂಡುತೆ || 3 ||

ಇಂತು ಸಭೆಯೊಳು ಕುಂತು ಜನಗಳು |

ಪಂಥಗಾರರಾಗಿರುವಂತೆ ಮಾಡುತೆ || 4 ||

ಬೇಡಿಕೊಂಬೆನು ಮಾಡು ಕೃಪೆಯನು |

ಮೂಢರಾದ ಜನಗಳ ನೋಡಿ ಮರೆಯದೆ || 5 ||

ವೇದವೆಂಬುದು ಭೇದವೀವುದು |

ಬೋಧಿಸೈಕ್ಯ ಮತದ ಹಾದಿ ತೋರಿಸಿ || 6 ||

ಮತವು ನಿನ್ನಯ ಹಿತದ ಸೀಮೆಯ |

ಗತಿಯೊಳೈಕ್ಯಗೊಳ್ಳುವ ಮತಿಯ ಕೊಡುತೆ || 7 ||

ಸ್ವಂತಪರರಿಗೆ ಸಂತ ಜನರಿಗೆ |

ಅಂತರ್ಯಾಮಿಯಾಗಿ ಹಂತೆ ತೊಲಗಿಸಿ || 8 ||

ಸಿದ್ಧಲಿಂಗನೆ  ಪೊದ್ದಿರ್ದದವರನೆ |

ಶುದ್ಧರಾಗಿರುವಂತೆ ತಿದ್ದಿ ತೋರುತೆ || 9 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಷ್ಟಾಂಗಯೋಗ ಬಲು | ಕಷ್ಟವೆಲೊ ಮಗನೆ ಎಂ

ದಿಷ್ಟ ಲಿಂಗವನು. ಸೃಷ್ಟಿಸುತ ಕರಕಿತ್ತ

ಶ್ರೇಷ್ಠ ಶ್ರೀಗುರುವೆ ಕೃಪೆಯಾಗು   ||೧೦೧||

ಇಲ್ಲಿಯವರೆಗೆ ಅಷ್ಟಾಂಗಯೋಗದ ವಿಚಾರವನ್ನು ವಿವರವಾಗಿ ಆಲೋಚಿಸಿದ್ದೇವೆ. ಅಷ್ಟಾಂಗಯೋಗದಲ್ಲಿ ಪ್ರತಿಯೊಂದು ಯೋಗಾಂಗವನ್ನು ಅನಂತಾನಂತ ನಿಯಮ ಪೂರ್ವಕ ಅನೇಕ ವ್ರತಗಳನ್ನು ಆಚರಿಸುತ್ತ ಬಾಹ್ಯಯೋಗಗಳನ್ನು ಸಿದ್ಧಿಸಿ ವಿವೇಕ ಖ್ಯಾತಿಗಳೆನಿಸಿದ ಧ್ಯಾನ ಧಾರಣ ಸಮಾಧಿಗಳನ್ನು ಸಾಧಿಸುವದು ಕೊನೆಗೆ ನಿರ್ವಿಕಲ್ಪಕ (ಅಸಂಪ್ರಜ್ಞಾತ) ಸಮಾಧಿಯನ್ನು ಸಿದ್ಧಿಸುವುದು ಸುಲಭವಲ್ಲ. ಸಿದ್ಧರಾದವರೂ ವಿರಳ. ಆದರೆ ಯೋಗಭ್ರಷ್ಟರಾಗುವವರ ಸಂಖ್ಯೆಯೇ ಬಹಳ. ಯೋಗಭ್ರಷ್ಟರಾದವರು ಪುನಃ ಪುನಃ ಹುಟ್ಟಿ ಯೋಗವನ್ನು ಸಾಧಿಸಬೇಕಾಗುವದು. ಅದು ಕಾರಣವೆ ಸಮಾಧಿಯು ತಾಮಸವೆಂದು ಹಿಂದಿನ ತ್ರಿಪದಿಯಲ್ಲಿ ಉಕ್ತವಾಗಿದೆ. ಇಂಥ ಅಷ್ಟಾಂಗಯೋಗವು ಕಷ್ಟಕರವಲ್ಲದೆ ಮತ್ತೇನು |

ಈ ಅಷ್ಟಾಂಗಯೋಗದ ಕಷ್ಟತತಿಯನ್ನು ಅರಿತ ಗುರುನಾಥನು ದಯೆಯಿಂದಲೂ ಪ್ರೀತಿಯಿಂದಲೂ ಇಷ್ಟಲಿಂಗವನ್ನು ಶಿರದರಮನೆಯಲ್ಲಿಂದ ಸೃಷ್ಟಿಸಿ ಕರಕಮಲಕ್ಕೆ ಕೊಟ್ಟಿದ್ದಾನೆ. ಈ ಕರದಿಷ್ಟಲಿಂಗಯೋಗ ಸುಲಭಯೋಗ, ಸಹಜ ಯೋಗ, ಶಿವಯೋಗ. ಅಂತೆಯೇ ಅದು ಮಂಗಲಕರಯೋಗವೆನಿಸಿದೆ.

 ಅಷ್ಟಾಂಗಯೋಗವು ಕ್ರಮಸಾಧನೆಯುಳ್ಳುದು. ಒಂದೊಂದನ್ನೇ ಆಚರಿಸುತ್ತ ಅಳವಡಿಸಿಕೊಳ್ಳುತ್ತ ಸಾಧಿಸಬೇಕಾಗುವದು. ಶಿವಯೋಗದಲ್ಲಿ ಅಥವಾ ಲಿಂಗಾಂಗ ಯೋಗದಲ್ಲಿ ಯೋಗದ ಎಂಟೂ ಅಂಗಗಳೂ ಏಕಕಾಲಕ್ಕೆ ಸಮಾವೇಶಗೊಳ್ಳುತ್ತವೆ. ಲಿಂಗಾಂಗ ಸಾಮರಸ್ಯ ಜ್ಞಾನವುಳ್ಳ ಶಿವಭಕ್ತನಿಗೆ ಸುಮನ-ಸತ್ಕ್ರಿಯೆಗಳಿಂದ ಯಮವು ಲಿಂಗಪೂಜೆಯ ನಿಯಮವು, ಶಿವಪೂಜೆಗೆ ಕುಳಿತುಕೊಳ್ಳುವ ಆಸನವು, ಪ್ರಾಣ ಲಿಂಗಾನುಸಂಧಾನದಲ್ಲಿ ಪ್ರಾಣಾಯಾಮವು, ಪ್ರಸಾದ ಶುದ್ಧಿಯಲ್ಲಿ ಪ್ರತ್ಯಾಹಾರವು, ಉಪಾಂಶು-ಮಾನಸಿಕ ಜಪಗಳೇ ಲಿಂಗಧ್ಯಾನವು, ಭಾವದಲ್ಲಿ ಭಾವಲಿಂಗವನ್ನು ಹೊಂದುವದೇ ಧಾರಣವು. ಐಕ್ಯಸ್ಥಿತಿಯಲ್ಲಿ ಸಮಾಧಿ. ಹೀಗೆ ಇವೆಲ್ಲವೂ ಶಿವಯೋಗದಲ್ಲಿ ಸಮತ್ವಗೊಳ್ಳುತ್ತವೆ.

ಅಷ್ಟಾಂಗಯೋಗದಲ್ಲಿ ಆಯಾಸವಿದೆ, ಕರ್ಮಜಡತೆಯಿದೆ. ಲಿಂಗಾಂಗ  ಯೋಗದಲ್ಲಿ ಯಾವ ಆಯಾಸವಿಲ್ಲ, ಕರ್ಮಜಡತೆಯ ಸೋಂಕಿಲ್ಲ, ನವನಾಥರಲ್ಲಿ ಪ್ರಸಿದ್ಧನಾದ ಗೋರಕ್ಷನಾಥನು ಹಠಯೋಗಸಾಧನೆಯಿಂದ ವಜ್ರದೇಹಿಯಾಗಿದ್ದರೂ, ಶಿವಯೋಗ ಸಿದ್ಧನೆನಿಸಿ ವೋಮಕಾಯನಾದ ಅಲ್ಲಮಪ್ರಭುವಿನ ಸಿದ್ಧಿಗೆ ಶರಣಾಗತ ನಾದ ಎಂಬ ಆಖ್ಯಾನಕ ರೋಚಕವೂ ತಾತ್ವಿಕವೂ ಆಗಿದೆ. ಇದರಿಂದ ಅಷ್ಟಾಂಗ ಯೋಗಕ್ಕಿಂತಲು   ಶಿವಯೋಗವೇ ಮಿಗಿಲೆಂದು ತಿಳಿಯದಿರದು.

ಅಷ್ಟಾಂಗ ಯೋಗವು ಬಹು ಕ್ರಿಯೆಗಳಿಂದ ಕೂಡಿ ಅಲ್ಪ ಫಲ ಕೊಟ್ಟರೆ ಶಿವಯೋಗವು ಅಲ್ಪ ಕ್ರಿಯೆ, ಬಹು ಫಲದಾಯಕವಾಗಿದೆ. ಸಾಮಾನ್ಯಾಧಿಕಾರಿಯೂ ಸಹ ಲಿಂಗಪೂಜೆಯ ಮರ್ಮವನ್ನು ಅರಿತು ಆಚರಿಸಬಹುದು. ಅಳವಡಿಸಿಕೊಳ್ಳ  ಬಹುದು. ಆದರೆ ಯೋಗವು ಹಾಗಲ್ಲ. ಇದನ್ನೆಲ್ಲ ತಿಳಿದ ಮಹಾಗುರುವು ಶಿಷ್ಯೋದ್ಧಾರಕ್ಕಾಗಿ ಇಷ್ಟಲಿಂಗವನ್ನು ಹುಟ್ಟಿಸಿ ಕರುಣಿಸಿದುದು ಮಹಾಕರುಣೆಯೇ ಸರಿ. ಸುಲಭದಲ್ಲಿ ಸಿಕ್ಕುವ ಮುಕ್ತಿದಾಯಕನಾದ ಗುರುವರನು ಶ್ರೇಷ್ಠವಲ್ಲದೆ ಮತ್ತೇನು ! ಅವನು ಪರಮಶ್ರೇಷ್ಠನೆನಿಸಿದ್ದಾನೆ.

ಶಾಂಬವಿಯ ಮುದ್ರೆಯ ವಿ | ಡಂಬಿಸುತಲೆನಗೆ ಸ್ವ-

ಯಂಭು ಲಿಂಗವ ಕ-ರಾಂಬುಜದೊಳಿತ್ತ ಕರು

ಣಾಂಬುನಿಧಿ ಗುರುವೆ ಕೃಪೆಯಾಗು   | ೧೦೨ |

ಶಿವಕವಿಯು ಅಷ್ಟಾಂಗಯೋಗದ ವಿಚಾರಗಳನ್ನು ಸೂಕ್ಷ್ಮವಾಗಿ ನಿರಸನ ಮಾಡಿ ಹಠಯೋಗಕ್ಕಿಂತಲೂ ಶಿವಯೋಗವೇ (ಲಿಂಗಾಂಗಯೋಗ) ಮಿಗಿಲಾದುದೆಂದು ಪ್ರತಿಪಾದಿಸಿದ ಮೇಲೆ ಯೋಗ ಮಾರ್ಗದ ಇನ್ನೊಂದು ಪ್ರಭೇದವೆನಿಸಿದ ತಾಂತ್ರಿಕ ಮಾರ್ಗದ ಮುದ್ರೆಗಳನ್ನು ಸೂಕ್ತವಾಗಿ ವಿಡಂಬಿಸುತ್ತಾನೆ.

ಮುದ್ರೆಯೆಂದರೆ ಮುದ್ರಿಕೆಯಿಂದ ಹೇಳಬಹುದು. ಅಂದರೆ ಸಂಕೇತವನ್ನು ಕೆತ್ತಿರುವ ಉಂಗುರ ಅಥವಾ ಸಾಧನವೆಂತಲೂ ಅರ್ಥ ಮಾಡಬಹುದು. ವೈಷ್ಣವರು ದೇಹ ಶುದ್ದಿಗಾಗಿ ಮತಾಚಾರ್ಯರಿಂದ ಭಗವಂತನ ಚಿನ್ಹೆಯನ್ನು (ಅಚ್ಚು) ಮುದ್ರಿಸಿಕೊಳ್ಳುವದಕ್ಕೂ ಮುದ್ರೆಯೆಂಬುದಾಗಿ ಹೆಸರಿದೆ. ಇನ್ನು ತಾಂತ್ರಿಕ ಮಾರ್ಗದಲ್ಲಿಯೂ ಈ ಮುದ್ರೆಗಳ ವಿಚಾರ ಬರುತ್ತದೆ. ತಂತ್ರವು ಆಗಮದ ಒಂದು ಭಾಗವು, ಆಗಮವು ವೇದದ ಸಮಕಾಲೀನವೆಂತಲೂ, ಕೆಲವರು ಅದಕ್ಕೂ ಮೊದಲಿನದೆಂತಲೂ ಪ್ರತಿಪಾದಿಸುತ್ತಾರೆ. ಕೆಲವು ಕಾರಣಗಳಿಂದ ಇತ್ತೀಚಿನದೆಂಬುದಾಗಿಯೂ ಹೇಳುತ್ತಾರೆ. “ಶ್ರೀಮೃಗೇಂದ್ರೋತ್ತರಾಗಮ” ದಲ್ಲಿ ೨೮ ಶಿವಾಗಮಗಳು ಶಿವನ ಸದ್ಯೋಜಾತಾದಿ-ಪಂಚಮುಖದಿಂದ ಸೃಷ್ಟಿಯ ಕಾಲಕ್ಕೇನೆ ಹುಟ್ಟಿದವೆನ್ನುವ ಸಬಲ ಪ್ರಮಾಣದಿಂದ ಆಗಮಗಳ ಬಹಪ್ರಾಚೀನತೆ ಕಂಡುಬರುತ್ತದೆ. ಉಪಾಗಮಗಳು ಅಧಿಕ ಸಂಖ್ಯೆಯಲ್ಲಿವೆ. ಆಗಮಗಳಲ್ಲಿ ಶಿವನು ಶಿವೆ (ಪಾರ್ವತಿ)ಗೆ ಕ್ರಿಯಾ- ಜ್ಞಾನವನ್ನು ಆಚಾರ-ವಿಚಾರಗಳನ್ನು, ಯೋಗ-ಶಿವಯೋಗವನ್ನು, ಏನೆಲ್ಲ  ವಿಷಯವನ್ನು ಬೋಧಿಸಿದ್ದಾನೆ. ಶಿವಾದ್ವೈತ ಸಾಹಿತ್ಯ ಕರ್ತೃಗಳೆನಿಸಿದ ಜ.ಚ.ನಿ. ಯವರು ಸೂಕ್ಷ್ಮ ತಂತ್ರಸಾರ’ದ ಮುಮ್ಮಾತಿನಲ್ಲಿ ಆಗಮದ ವಿಷಯ ವ್ಯಾಪ್ತಿ ಯನ್ನು ಪ್ರಸ್ತಾಪಿಸುತ್ತ-ಚಿತ್ತಶುದ್ಧಿಗೆ ಬೇಕಾದ ಧರ್ಮಗಳು; ಕಾಯಶುದ್ಧಿಗೆ  ಬೇಕಾದ ಕ್ರಿಯೆಗಳು, ಪ್ರಾಣಶುದ್ಧಿಗೆ ಬೇಕಾದ ಯೋಗಗಳು; ಬುದ್ಧಿವಿಕಾಸಕ್ಕೆ ಬೇಕಾದ ಜ್ಞಾನ-ವಿಜ್ಞಾನಗಳು, ಶಿಲ್ಪ ಸಂಗೀತ ಚಿತ್ರ ಮೊದಲಾದ ಮನೋಲ್ಲಾಸಕ ಕಲೆಗಳು ಆಗಮಗಳಲ್ಲಿವೆ. ಹುಟ್ಟು-ಸಾವಿನ, ಬಾಳು-ಬದುಕಿನ, ಆಗುಹೋಗುಗಳ ವಿಚಾರ ನಿಗಮಗಳಲ್ಲಿದೆ. ಉಪಾಸನೆಯ ವಿಧಿ-ವಿಧಾನಗಳು ನಿರೂಪಿತವಾಗಿವೆ. ಹೆಸರಾದ ಅರವತ್ತು ನಾಲ್ಕು ಕಲೆಗಳನ್ನು ವಿವರಿಸುತ್ತವೆ ಆಗಮಗಳು” ಎಂದುದಾಗಿ ವರ್ಣಿಸಿದ್ದಾರೆ.

 ದೇವತೆಯ ಧ್ಯಾನ ಮತ್ತು ಉಪಾಸನೆಯ ಐದಂಗಗಳಾದ ಪಟಲ, ಪದ್ಧತಿ, ಕವಚ, ಸಹಸ್ರನಾಮ, ಸ್ತೋತ್ರಗಳಿಂದ ಕೂಡಿದ ಗ್ರಂಥವು ಆಗಮದಲ್ಲಿ ತಂತ್ರ ಸಾಹಿತ್ಯವೆನಿಸುವದು. ಆಗಮಗಳಲ್ಲಿ ಸೃಷ್ಟಿ, ಪ್ರಲಯ, ದೇವತಾರ್ಚನೆ, ಸರ್ವ ಸಾಧನ ಪುರಶ್ಚರಣ, ಷಟ್‌ಕರ್ಮ (ಶಾಂತಿ-ವಶೀಕರಣ ಸ್ತಂಭನ ವಿದ್ವೇಷಣ, ಉಚ್ಚಾಟನ ಮತ್ತು ಮಾರಣಗಳು), ಮತ್ತು ಧ್ಯಾನಯೋಗ ಹೀಗೆ ಏಳು ವಿಷಯಗಳು ಉಕ್ತವಾಗಿವೆ. ಶಾಕ್ತ್ಯಾಗಮದ ವಾಮಾಚಾರ ಹಾಗೂ ಹೈಯ ಪೂಜಾಪದ್ಧತಿಗಳಿಂದ ತಾಂತ್ರಿಕವಿಧಿ-ವಿಧಾನಗಳು ನಿಂದಾಸ್ಪದವಾದವು. ಕೌಲಾಚಾರ ಅಥವಾ ಸಮಯಮಾರ್ಗಿಗಳಲ್ಲಿ ಪಂಚತತ್ತ್ವ ಸಾಧನೆಯು ಬರುತ್ತದೆ. ಕುಲವೆಂದರೆ ಆಧಾರಾದಿ ಚಕ್ರಗಳು, ಅವುಗಳನ್ನು ಅರಿಯಲು ಶ್ರೀ ಚಕ್ರದ ಪೂಜೆ ಮಾಡುವವನು ಕೌಲನೆನಿಸುವನು. ಅಥವಾ ಸಮಯಮಾರ್ಗಿಯೆಂತಲೂ ಕರೆಯಲ್ಪಡುತ್ತಾನೆ.

ಕಾಲಾಂತರದಲ್ಲಿ ಶ್ರೀಚಕ್ರದ ಕಲ್ಪನೆಯು ಸ್ತ್ರೀಯೋನಿಯ ಪೂಜೆಗೆ ಮಾರ್ಪ ಟ್ಟಿತು. ಶ್ರೀಚಕ್ರದ ಸಾಧನೆಯಲ್ಲಿ ಸಿದ್ಧಿ ಸಾಧಿಸಿದ ಮಂದಾಧಿಕಾರಿಗಳು ವಾಮ ಚಾರಿಗಳಾಗಿ ವರ್ತಿಸಹತ್ತಿದರು. ಶ್ರೀಚಕ್ರದ ಸಾಧನೆಗೆ ಪಂಚತತ್ತ್ವ ಸಾಧನೆಯೂ ಪೋಷಕವಾದುದು. ಈ ಪಂಚತತ್ತ್ವ ಸಾಧನೆಯ ಪಂಚ ಮಕಾರಗಳು. ಕೇವಲ ಬಾಹ್ಯವಾಚ್ಯಾರ್ಥದಲ್ಲಿ ಪರಿವರ್ತನಗೊಂಡವು. ಪಂಚ ಮಕಾರಗಳೆಂದರೆ- ೧) ಮಧ್ಯ ೨) ಮಾಂಸ ೩) ಮತ್ಸ ೪) ಮುದ್ರಾ ಮತ್ತು ೫) ಮೈಥುನಗಳು. ಇವುಗಳ ತಾತ್ವಿಕ ವಿಚಾರ ಅರ್ಥಪೂರ್ಣವಾಗಿದೆ.

ʼ’ಧ್ಯಂ ಮಾಂಸಂ ಚ ಮೂನಂ ಚ

ಮುದ್ರಾ ಮೈಥುನಮೇವ ಚ |

ಮಕಾರಪಂಚಕಂ ಪ್ರಾಹುಃ

ಯೋಗೀನಾಂ ಮುಕ್ತಿದಾಯಕಮ್ ”

ಪಂಚಮಕಾರಗಳು ಯಥಾರ್ಥತಃ ಯೋಗಿಗಳಿಗೆ ಮುಕ್ತಿದಾಯಕವಾಗಿವೆ ಎನ್ನುವ ಮಾತಿನ ಮಥಿತಾರ್ಥ ಹೀಗಿದೆ-ಮಧ್ಯವೆಂದರೆ ಹೊರಗಿನ ಮದವೇರಿಸಿ ಬುದ್ಧಿ  ಶೂನ್ಯನನ್ನಾಗಿಸುವ ಮಧ್ಯವಲ್ಲ. ೬೯ನೆಯ ತ್ರಿಪದಿಯಲ್ಲಿ ವಿವರಿಸಿದಂತೆ ಶಿರದಲ್ಲಿಯ ಬ್ರಹ್ಮರಂಧ್ರ ಅಥವಾ ಸಹಸ್ರದಳ ಕಮಲದಲ್ಲಿ ಸ್ರವಿಸುವ ಅಮೃತವನ್ನು ಯೋಗಿಗಳು ಮಧ್ಯವೆಂದು ಕರೆದಿದ್ದಾರೆ. ಇದಕ್ಕೆ ಕುಲಾರ್ಣವತಂತ್ರ ಹಾಗೂ ಗಂಧರ್ವತಂತ್ರಗಳಲ್ಲಿ ಮತ್ತು ಯೋಗಚೂಡಾಮಣ್ಯುಪನಿಷತ್ತಿನಲ್ಲಿ ಪ್ರಮಾಣಗಳು ಉಪಲಬ್ಧವಾಗುತ್ತವೆ. ಸಹಸ್ರಾರದ ಸುಧೆಯನ್ನು ಖೇಚರೀ ಮುದ್ರೆಯ ಸಾಧನೆಯಿಂದ ಸಾಧಿಸಲು ಬರುವದು. ಇದನ್ನು ಮುಂದೆ ವಿಚಾರಿಸುವಾ

 ತಂತ್ರಸಾಧಕನು ಪುಣ್ಯ ಹಾಗೂ ಪಾಪರೂಪಿಯಾದ ಜೀವಾತ್ಮನ ಪಶು (ವಿಷಯ) ಗಳನ್ನು ಜ್ಞಾನರೂಪೀ ಖಡ್ಗದಿಂದ ಸಂಹರಿಸಿ ತನ್ನ ಮನಸ್ಸನ್ನು ಬ್ರಹ್ಮದಲ್ಲಿ ಲೀನಗೊಳಿಸುವವನು ಮಾಂಸಹಾರಿಯೆನಿಸುವನು. ಶರೀರದಲ್ಲಿರುವ ಈಡಾ (ಇಡಾ) ಮತ್ತು ಪಿಂಗಳಾ ನಾಡಿಗಳಲ್ಲಿ ಪ್ರವಹಿಸುವ ಶ್ವಾಸ-ನಿಃಶ್ವಾಸಗಳೇ ಮತ್ಸ್ಯಗಳು. ಅವುಗಳನ್ನು ಕುಂಭಕದಿಂದ ಪ್ರಾಣ ವಾಯುವನ್ನು ಸುಷುಮ್ಮಾನಾಡಿಯಲ್ಲಿ ಸಂಚಾಲನೆ ಗೊಳಿಸುವುದಕ್ಕೆ ಮತ್ಸ್ಯಸಾಧನೆಯೆನಿಸುವದು. ಅಸತ್‌ಸಂಗದಿಂದ ಬಂಧನ ವಾಗುವದನ್ನು ಅರಿತು ಸತ್ಸಂಗವನ್ನು ಮಾಡಿ ಮುಮುಕ್ಷುವೆನಿಸಿ ಅಸತ್‌ಸಂಗವನ್ನು ಸಂಪೂರ್ಣ ತ್ಯಜಿಸುವದೇ ಮುದ್ರೆಯೆನಿಸುವದು. ಇನ್ನು ಮೈಥುನವೆಂದರೆ- ಸೇರಿಸುವುದು ಅಥವಾ ಕೂಡಿಸುವದು ಎಂದರ್ಥ. ಸಹಸ್ರಾರದಲ್ಲಿರುವ ಶಿವನೊಡನೆ ಕುಂಡಲಿನಿಯನ್ನು ಜಾಗೃತಗೊಳಿಸುವದು ಅಥವಾ ಸುಷಮ್ಮಾ ನಾಡಿಯಲ್ಲಿ ಪ್ರಾಣವನ್ನು ಮಿಳನಗೊಳಿಸುವದು ಎಂಬುದಾಗಿ ಅನುಭವಿಗಳು ತಿಳಿಸುತ್ತಾರೆ

.ಸಾಂಸಾರಿಕ ಸುಖಕ್ಕಿಂತ ಸಾವಿರ ಪಾಲು ಅಧಿಕವಾದ ಸುಖವು ಸುಷುಮ್ಮಾ ನಾಡಿಯಲ್ಲಿ ಪ್ರಾಣವಾಯುವನ್ನು ಸ್ಥಿರಗೊಳಿಸುವದರಿಂದ ಉಂಟಾಗುವದು. ಇದೇ ನಿಜವಾದ ಮೈಥುನವೆಂದು ತಂತ್ರವೇತ್ತರು ಪ್ರತಿಪಾದಿಸಿದ್ದಾರೆ. ತಂತ್ರ ಪ್ರಮಾಣವೂ ಉಂಟು. ನಿಜವಾದ ತತ್ತ್ವವನ್ನರಿಯದ ವಾಮಮಾರ್ಗಿಗಳು ಸ್ವೇಚ್ಛಾಚಾರದಿಂದ ವರ್ತಿಸಿ, ಸಿದ್ಧಾಂತಕ್ಕೇನೆ ಕಲಂಕವನ್ನುಂಟು ಮಾಡಿರುವರು. ಆದರೆ ನಾಥ ಸಂಪ್ರದಾಯದ ಗೋರಕ್ಷನಾಥನೇ ಮುಂತಾದ ಹಠಯೋಗಿಗಳು ಪಂಚತತ್ತ್ವ ಶುದ್ದಿಯಿಂದ ಮುದ್ರೆಗಳ ಸಾಧನೆಯಿಂದಲೂ ವಜ್ರಕಾಯರಾದ ಇತಿಹಾಸ ಯೋಗ ಶಾಸ್ತ್ರದಿಂದ ತಿಳಿದು ಬರುತ್ತದೆ.

 ಯೋಗಮುದ್ರೆಗಳಲ್ಲಿ ಮುಖ್ಯವಾದವುಗಳು ಮೂರು ಖೇಚರೀ ಶಾಂಭವೀ, ಷಣ್ಮುಖೀ ಎಂದು  ಅಂತರಾತ್ಮನ ಅರಿವಿಗಾಗಿ ನಯನ-ಮನ-ಪ್ರಾಣಗಳ ಸಂಯಮನಕ್ಕಾಗಿ ಸಾಧಿಸುವ ಬಾಹ್ಯ ಕ್ರಿಯೆಗಳೇ ಮುದ್ರೆಗಳು, ತ್ರಿಪದಿಯ ಶಿವಕವಿಯು ಮೊದಲನೆಯದಾಗಿ ಶಾಂಭವೀ ಮುದ್ರೆಯನ್ನು ವಿಡಂಬಿಸುತ್ತಾನೆ.

 ಈ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಯ ಟೀಕಾಕಾರರು-

ಮೋಚಯತಿ, ದ್ರಾವಯತೀತಿ ಮುದ್ರಾ’

 ಅಜ್ಞಾನಾಂಧಕಾರವನ್ನು ತೊಲಗಿಸಿ ಶಿವಾನಂದ ಪ್ರವಾಹವನ್ನು ನಿರಾಯಾಸದಿಂದ ಸುರಿಸುವದೇ ಮುದ್ರೆಯೆನಿಸುವದು” ಎಂದು ಪ್ರತಿಪಾದಿಸಿದ್ದಾರೆ. ನಿಜಗುಣ ಶಿವಯೋಗಿಗಳು-

ಹೃದಯಾಕಾಶಮಧ್ಯದ ದಿವ್ಯಲಿಂಗ ಸ್ಥಲದಂತರ್ಲಕ್ಷ್ಯಮಂ

ಕಾಣ್ಬುದಕ್ಕೆ ಪರಮೋಪಾಯಮಾದ ಮುದ್ರಾಲಕ್ಷಣ

ವೆಂದು ಪಾರಮಾರ್ಥ ಪ್ರಕಾಶಿಕೆ”ಯಲ್ಲಿ ಮುದ್ರೆಯ ಸ್ವರೂಪವನ್ನು ತಿಳಿಸಿದ್ದಾರೆ. ಮುದ್ರೆಗಳು ರಾಜಯೋಗಾಂತರ್ಗತವಾಗಿವೆ. ಖೇಚರೀ ಮುದ್ರೆ ಮತ್ತು ಶಾಂಭವೀ  ಮುದ್ರೆಗೆ ಹೆಚ್ಚಿನ ಅಂತರವಿಲ್ಲ. ಈ ಶಾಂಭವೀ ಮುದ್ರೆಯ ವಿವರವು ಕೆಳಗಿನಂತಿದೆ

ಅಂತರ್ಲಕ್ಷ್ಯವಿಲೀನ ಚಿತ್ತಪವನೋ ಯೋಗೀ ಯದಾ ವರ್ತತೇ |

ದೃಷ್ಟ್ಯಾ ನಿಶ್ಚಲತಾರಯಾ ಬಹಿರಧಃ ಪಶ್ಯನ್ನಪಶ್ಯನ್ನಪಿ ||

ಮುದ್ರೆಯಂ ಖಲು ಶಾಂಭವೀ ಭವತಿ ಸಾ ಲಬ್ಧಾ ಪ್ರಸಾದಾದ್ಗುರೋಃ ||

ಅಂದರೆ ಹೃದಯದ ಅನಾಹತ ಚಕ್ರಗತ ಮಹಾಚೈತನ್ಯದಲ್ಲಿ ಲಕ್ಷ ಪ್ರಾಣ ಮತ್ತು ನಿಶ್ಚಲವಾದ ದೃಷ್ಟಿಗಳನ್ನು ಇರಿಸಿ, ಹೊರಗೆ ಕೆಳಗೆ ನೋಡುತ್ತಿದ್ದರೂ ನೋಡದಂತಿರುವದೇ ಶಾಂಭವೀ ಮುದ್ರೆಯೆನಿಸುವದು. ಈ ಮುದ್ರೆಯು ಸದ್ಗುರುವಿನ ಕೃಪಾಪ್ರಸಾದದಿಂದಲ್ಲದೇ ಅರಿವಿಗೆ ಬರುವದಿಲ್ಲ, ಶಾಂಭವ ಸ್ವರೂಪವನ್ನಾಗಿಸುವ ಸಾಧನೆಯೇ ಶಾಂಭವೀಯು

ನಾಶಿಕಾಗ್ರದಲ್ಲಿರಿಸಲ್ಪಟ್ಟ ನಿಮೇಷೋನ್ಮೇಷಂಗಳಿಲ್ಲದ

ಲೋಚನಂಗಳ ದಿವ್ಯಾಲೋಕನದಿಂದೆ ಲಕ್ಷಿಸಲು ಯೋಗ್ಯ-

ಮಾದ ಹೃದಯದಲ್ಲಿ ನಿಶ್ಚಲವಾದ ಜ್ಯೋತಿರ್ಮ೦ಡಲವನು

ಕಾಂಬುದೇ ಶಾಂಭವೀ ಮುದ್ರೆಯೆನಿಸುವದು.

ಎಂದು ಶಾಂಭವೀ ಮುದ್ರಾ ಸ್ವರೂಪವನ್ನು ನಿಜಗುಣರು ವಿವರಿಸಿದ್ದಾರೆ. ಇದನ್ನೇ ಶಿವಯೋಗ ಪ್ರದೀಪಿಕೆಯ ಐದನೆಯ ಪಟಲ ೭ನೆಯ ಶ್ಲೋಕದಲ್ಲಿ ನೋಡಿ-

ಅಂತಶ್ಚಿತ್ತಂ ಬಹಿಶ್ಚಕ್ಷುರ್ನಿಮೇಷೋನ್ಮೇಷವರ್ಜಿತಂ ||

ಏಷಾ ಸಾ ಶಾಂಭವೀ ಮುದ್ರಾ ಸರ್ವತಂತ್ರೇಷು ಗೋಪಿತಾ |

ಶಾಂಭವೀ ದ್ವಿವಿಧಾ ಪ್ರೋಕ್ತಾ ಪೂರ್ವೋತ್ತರವೀಭೇದತಃ ||

ಚಿತ್ತವು ಅಂತರ್ಲಕ್ಷ್ಯವುಳ್ಳದ್ದಾಗಿ ಚಕ್ಷುಗಳು ನಿಮೇಷ (ರೆಪ್ಪೆ ಮುಚ್ಚುವದು) ಉನ್ಮೇಷ (ರೆಪ್ಪೆ ತೆರೆಯುವದು) ಗಳಿಲ್ಲದಂತಿರುವದೇ ಶಾಂಭವೀ ಮುದ್ರೆಯು. ಇದು ಎಲ್ಲ ತಂತ್ರಗಳಲ್ಲಿ ರಹಸ್ಯವಾಗಿ ಹೇಳಲ್ಪಟ್ಟಿದೆ. ಮತ್ತು ದಿವ್ಯ ಹೃದಯಲಿಂಗಾನುಸಂಧಾನಕ್ಕೆ  ಶಾಂಭವೀಯೆನಿಸುವದು. ಇದು ನಾಸಿಕಾಗ್ರದೃಷ್ಟಿಯ ದ್ವಾರಾ ನಾದನುಸಂಧಾನವನ್ನು ಮಾಡುವ ಮನದೊಳು ಕೂಡಲು ಪೂರ್ವಶಾಂಭವೀ” ಯೆನಿಸುವದು. ಆ ನಾಸಿಕಾಗ್ರದೃಷ್ಟಿಯೂ ಮನವೂ ನಾದಬ್ರಹ್ಮದಲ್ಲಿ ಮುಳುಗಲು (ಬೆರೆಯಲು) ‘ಉತ್ತರ ಶಾಂಭವೀ’ ಯೆನಿಸುವದು. ಹೀಗೆ ಇದು ಎರಡು ತೆರನಾಗಿರುವದು. ಈ ಎರಡೂ ವಿಧದಿಂದಲೂ ಯೋಗಿಗಳು ನಾದಾನುಸಂಧಾನವನ್ನು ಮಾಡುವರೆಂದು ಟೀಕಾಕಾರರು ವಿವರಿಸಿದ್ದಾರೆ.

ಮನವು ಅಂತರ್ಮುಖಗೊಂಡು ದೃಷ್ಟಿಯು ನಾಶಿಕದ ತುದಿಯಲ್ಲಿದ್ದು ನಾದಬ್ರಹ್ಮನು ಅನುಸಂಧಾನ ಮಾಡುವ ಈ ಶಾಂಭವೀ ಮುದ್ರೆಯು ಉತ್ತಮ ಗುರುವಿನ ಮಾರ್ಗದರ್ಶನದಿಂದಲೂ ಸುಲಭವಾಗಿ ಸಿದ್ಧಿಸುವದಿಲ್ಲ. ಅಂತರ್ಮುಖವಾದ ಮನಸ್ಸಿನಲ್ಲಿ ವಿಷಯಗಳ ಸುಳಿದಾಟವು ನಿಲ್ಲಬೇಕು. ಬಹಿರ್ಗತವಾದ ದೃಷ್ಟಿಗೆ ಯಾವುದನ್ನೂ ಕಾಣದಂತಿರಿಸುವದು ಸಹಜವಲ್ಲ. ಮನ-ನೇತ್ರಗಳ ಅಂತರದಿಂದ ಪ್ರಾಣವೂ ವಿಷಯವ್ಯಾಮೋಹದಿಂದ ದೂರವಾಗಲಾರದು. ಕಾರಣ ಇಂಥ ಶಾಂಭವೀ ಮುದ್ರೆಯಿಂದ ಸುಲಭ ಪ್ರಯೋಜನವೆನಿಸುವದಿಲ್ಲ ಎಂಬುದನ್ನು ಮನಸಾ ಅರಿತ ಶರಣರು ಈ ಶಾಂಭವೀ ಮುದ್ರೆಯನ್ನು ವಿಡಂಬಿಸಿದರು.

 ಶಾಂಭವಿಯ ಮುದ್ರೆಯಲ್ಲಿ ಬಾಹ್ಯ ದೃಷ್ಟಿ ಅಂತಃ ಸಂಯಮನವಿರುವದು ಸಮಂಜಸ ಹಾಗೂ ಸಹಜವೆನಿಸುವದಿಲ್ಲ. ಸಮರಸಕ್ಕೆ ಸಾಧನವಾಗಲಿಕ್ಕಿಲ್ಲವೆಂದು ಮನಗಂಡು ಕರುಣಾನಿಧಿಯಾದ ಸದ್ಗುರುವು ಸ್ವಸ್ವರೂಪವಾದ ಸ್ವಯಲಿಂಗವನ್ನು ಶಿಷ್ಯನ ಕರಕಮಲಕ್ಕೆ ತ೦ದಿರಿಸಿದುದು ಅನುಪಮ ಪವಾಡವೇ ಆಗಿದೆ. ಕರದಿಷ್ಟ ಲಿಂಗದಲ್ಲಿ ದೃಷ್ಟಿಯನ್ನು ಮನವನ್ನು ಪ್ರಾಣವನ್ನು ಬೆರೆಸಿ ಲಿಂಗವೇ ತಾನಾಗುವ ಶಾಂಭವ ಪದವನ್ನು ಪಡೆಯಲು ಉಪದೇಶಿಸಿದ್ದಾನೆ. ಧ್ಯಾನದ ವಿಷಯದಲ್ಲಿ ಹಿಂದೆ ಪ್ರತಿಪಾದಿಸಿದಂತೆ ಲಿಂಗಯೋಗದಲ್ಲಿ ದೃಷ್ಟಿಯೋಗದ ಮಹತ್ವವು ಅಗಣಿತವಾಗಿದೆ. ಅಂಥ ಶಿವಲಿಂಗಯೋಗದಿಂದಾಗುವ ಶಾಂಭವ (ಶಿವ) ಸ್ವರೂಪವು ಸಹಜವಾಗಿ ಪ್ರಾಪ್ತವಾಗುವದು. *ಇಷ್ಟಲಿಂಗವಿಲ್ಲದೆ ಮಾಡುವ ಶಾಂಭವೀ ಮುದ್ರೆಗಿಂತ ಇಷ್ಟಲಿಂಗದಲ್ಲಿರಿಸುವ ನಯನ-ಮನ-ಹರಣಗಳನ್ನು ಕೇಂದ್ರೀಕರಿಸುವ ಈ ಸ್ವಯಂಭುಲಿಂಗ ಮುದ್ರೆ ಮಹತ್ತಾದುದು. ಇದುವೆ ನಿಜವಾದ ಶಿವಯೋಗದ ಶಾಂಭವೀ ಮುದ್ರೆ. ಕ್ರಿಯಾಶಾಂಭವೀ ಮುದ್ರೆ, ಇದಕ್ಕೆ ಸರಿಸಮವಾದುದು ಬೇರೊಂದಿಲ್ಲ”

ಣ್ಮೂಗು ಕಿವಿ ಬಲಿವ | ಷಣ್ಮುಖಿಯ ಮುದ್ರೆ ಬಹು

ತಿಣ್ಣೆಂದು ಬಿಡಿಸಿ – ಷಣ್ಮಂತ್ರಲಿಂಗ ತೋ-

ರ್ದಾಣ್ಮ ಶ್ರೀಗುರುವೆ ಕೃಪೆಯಾಗು   ||೧೦೩ ||

ಆಗಮಗಳಲ್ಲಿ ಶಿವನು ಪಾರ್ವತಿಗೆ ಬೋಧಿಸಿದಂತೆ ಪುತ್ರನಾದ ಷಣ್ಮುಖನಿಗೂ ಉಪದೇಶಿಸಿದ್ದಾನೆ. ಕೆಲವು ಆಗಮಗಳಲ್ಲಿ ಪಾರ್ವತಿದೇವಿಯು ಶ್ರೋತೃವಾಗಿದ್ದರೆ ಕೆಲವೊಂದರಲ್ಲಿ ಕುಮಾರ ಷಣ್ಮುಖಸ್ವಾಮಿಯು ಶಿಷ್ಯತ್ವವನ್ನು ವಹಿಸಿದ್ದಾನೆ. ಶಾಂಭವೀ ಮುದ್ರೆಯನ್ನು ಶಂಭುವು (ಶಿವನು) ತನ್ನ ಅರ್ಧಾಂಗಿನಿಯಾದ ಶಾಂಭವಿಗೆ ತಿಳಿಯಪಡಿಸಿದ್ದರೆ ಷಣ್ಮುಖಿಯ ಮುದ್ರೆಯನ್ನು ಷಣ್ಮುಖನಿಗೆ ಬೋಧಿಸಿರುವನು. ಕುಮಾರನು ಆರು ಮುಖವುಳ್ಳವನಾಗಿರುವಂತೆ ಈ ಷಣ್ಮುಖೀ ಮುದ್ರೆಯಲ್ಲಿಯೂ ಅದನ್ನು ಮುದ್ರಿಸುವ (ಮುಚ್ಚುವ) ವಿಷಯವು ಪ್ರತಿಪಾದಿತವಾಗಿದೆ. ಸಾಂಕೇತಿಕ ಅರ್ಥವುಳ್ಳದ್ದಾಗಿದೆ. ಖೇಚರೀ ಮತ್ತು ಶಾಂಭವೀ ಮುದ್ರೆಗಳು ಉತ್ತಮ ಅಧಿಕಾರಿಗಳಿಗೆ ಸಾಧ್ಯವಾದರೆ, ಷಣ್ಮುಖೀ ಮುದ್ರೆಯು ಕನಿಷ್ಠಾಧಿಕಾರಿಗೂ ಸಾಧ್ಯವೆಂದು ನಿಜಗುಣರು ತಿಳಿಸಿದ್ದಾರೆ.

 ಷಣ್ಮುಖೀ ಮುದ್ರೆಯ ಲಕ್ಷಣವನ್ನು ಶಿವಯೋಗ ಪ್ರದೀಪಿಕೆಕಾರರು-

“ವಕ್ತ್ರೇ ಚಾಪೂರ್ಯವಾಯುಂ ಹುತವಹನಿಲಯೇ ಅಪಾನಮಾಕೃಷ್ಯ ಧೃತ್ಯಾ |

ಸ್ವಾಂಗುಷ್ಠಾದ್ಯಂಗುಲೀಭಿರ್ನಿಜಕರತಲಯೋಃ  ಷಡ್ಭಿರೇವಂ ನಿರುಧ್ಯ  ||

ಶ್ರೋತ್ರೇ ನೇತ್ರೇ ಚ ನಾಸಾಪುಟಯುಗಳಮ್ ಅಥಾನೇನ ಮಾರ್ಗೆಣ ಧೀರಾಃ |

ಪಶ್ಯಂತಿ ಪ್ರತ್ಯಯಾನ್ ಸತ್ಪ್ರಣವಬಹುವಿಧ- ಧ್ಯಾನಸಂಲೀನಚಿತ್ತಾಃ    || ೫-೧೭ ||

ಮುಖದ ಏಕದೇಶಮಾದ ನಾಸಾಪುಟದಲ್ಲಿ ಪ್ರಾಣವಾಯುವನ್ನು ಪೂರಿಸಿ ಅಗ್ನಿ ಸ್ಥಾನವೆನಿಸುವ ಅಧಃಕುಂಡಲಿನೀ ಸ್ಥಲದ ತ್ರಿಕೋಣಾಕಾರಮಾದ ಮೂಲಾಧಾರದಲ್ಲಿಯ ಅಪಾನವಾಯುವನ್ನು ಆಕುಂಚನಗೊಳಿಸಿ ತನ್ನ ಕರತಲವೆರಡರಲ್ಲಿಯ ಅಂಗುಷ್ಠ-ತರ್ಜನೀ-ಮಧ್ಯಮ (ಅಂಗುಷ್ಠ=ಹೆಬ್ಬೆರಳು, ತರ್ಜನೀ=ತೋರಬೆರಳು; ಮಧ್ಯಮ=ನಡುವಿನ ಬೆರಳು) ಗಳೆಂಬ ಆರೂ ಬೆರಳುಗಳಿಂದ ಶ್ರೋತ್ರ, ನೇತ್ರ, ನಾಸಾಪುಟಯುಗಳವನ್ನು ತಡೆದು ಈ ಷಣ್ಮುಖೀಕರಣ ಮಾರ್ಗದಿಂದ ನಿಶ್ಚಲ ತತ್ತ್ವಚಿತ್ತರಾದ ಯೋಗೀಶ್ವರರು ಪ್ರಣವದ ದಶವಿಧನಾದಲ್ಲಿ ಲೀನಚಿತ್ತರಾಗಿ ದಶವಿಧ ಬಿಂದು ಸಾಕ್ಷಾತ್ಕಾರರೂಪವಾದ ಪ್ರತ್ಯಯಗಳನ್ನು ಕಾಣುತ್ತಿಹರು” ಎಂದು ಬಸವಾರಾಧ್ಯರು ಟೀಕೆಯಲ್ಲಿ ವಿವರಿಸಿರುವರು.

 ಈ ಷಣ್ಮುಖೀ ಮುದ್ರೆಯಲ್ಲಿ ಸಾಧಕನು ತನ್ನ ಕಿವಿಯೆರಡು, ಕಣ್ಣೆರುಡು ಮತ್ತು ಮೂಗಿನ ರಂಧ್ರಗಳೆರಡು ಸೇರಿ ಆ ಆರನ್ನು ತನ್ನ ಕೈಗಳ ಹೆಬ್ಬೆರಳು, ತೋರಬೆರಳು, ನಡುವಿನ ಬೆರಳುಗಳಿಂದ ಮುಚ್ಚುವನು. ಮುಖದ ಷಣ್ಮುಖಗಳನ್ನು (ಆರು ರಂಧ್ರಗಳ ಬಾಯಿಯನ್ನು) ಬಂದು ಮಾಡಿ ಬಾಯಿಯಿಂದ ಗಾಳಿಯನ್ನು ಒಳಗೆಳೆದು ತುಂಬಿ ಹೃದಯದಲ್ಲಿ ನಿಲ್ಲಿಸಿ ಅಗ್ನಿಸ್ಥಾನವಾದ ನಾಭಿಮಂಡಲದ ಅಧಃ ಕುಂಡಲಿನಿಯಲ್ಲಿ ಸಂಬಂಧವುಳ್ಳ ಮೂಲಾಧಾರದ ಅಪಾನವಾಯುವನ್ನು ಮೇಲೇರಿಸಿ ಹೃದಯಗತ ತುರ್ಯಾವಸ್ಥೆಯನ್ನು ಹೊಂದಿದ ಪ್ರಾಣವಾಯುವಿನೊಡನೆ ಸುಷುಮ್ಮಾನಾಡಿಯ ದ್ವಾರಾ ಮೇಲಕ್ಕೇರಿಸಿ ಸಹಸ್ರಾರದಲ್ಲಿ ಧೀರರಾದ ಯೋಗಿಗೆ ಅನಾಹತನಾದವು ಉತ್ಪನ್ನವಾಗಿ ದಶವಿಧನಾದಗಳು ಗೋಚರಿಸುವವು. ಮತ್ತು ದೃಷ್ಟಿಯಲ್ಲಿ ದಶವಿಧ ಬಿಂದುಗಳನ್ನು ಕಾಣುವರು. ಇದುವೆ ಷಣ್ಮುಖೀ ಮುದ್ರೆಯ ಮಹಾ ಸಾಧನವೆಂದು ಅನುಭವಿಗಳು ವಿವರಿಸಿದ್ದಾರೆ.

ಶಿವಯೋಗ ಪ್ರದೀಪಿಕೆಯಲ್ಲಿ ಟೀಕಾಕಾರರು ಷಣ್ಮುಖೀ ಮುದ್ರೆಯಿಂದ ಗೋಚರಿಸುವ ಬಿಂದು ಪ್ರಕಾರವನ್ನು ಈ ರೀತಿ ತಿಳಿಸಿದ್ದಾರೆ- “ಭ್ರೂಮಧ್ಯದಲ್ಲಿ ಬೆಳಗುವ ನಯನ ದೀಪ್ತಿಯೇ ಬಿಂದು ದೇವನ ಮಹಾಸ್ಥಾನವಪ್ಪುದರಿಂದೆ ೧) ಧೂಮ್ರ ವರ್ಣದಂತೆ, ೨) ಮೇಘಪಟಲದಂತೆ ಕಾಣ್ಬುದು ಶುದ್ಧತಮೋಗುಣಾತ್ಮಕವಾದ ಸ್ಥೂಲಬಿಂದುವೆನಿಸುವದು. ೩) ಕುಂಕುಮ ವರ್ಣದಂತೆ, ೪) ಖದ್ಯೋತಗಳಂತೆ ಕಾಣ್ಬುದು ಶುದ್ಧರಜೋಗುಣಾತ್ಮಕವಾದ ಮಧ್ಯಬಿಂದುವೆನಿಸುವುದು. ೫) ಶುದ್ಧಸ್ಪಟಿಕ ದಂತೆ. ೬) ನಿರ್ಮಲಾಕಾರದಿಂದ ಕಾಣ್ಬುದು ಶುದ್ಧಸಾತ್ವಿಕವಾದ ಪರಮಬಿಂದು ವೆನಿಸುವದು”.

 ಷಣ್ಮುಖೀಮುದ್ರೆಯಲ್ಲಿ ಶ್ರವಣೇಂದ್ರಿಯ, ನೇತ್ರಂದ್ರಿಯ ಮತ್ತು ಘ್ರಾಣೇಂದ್ರಿಯಗಳ ವಿಷಯಗಳಾದ ಶಬ್ದ, ರೂಪ, ಗಂಧಗಳ ವಿಕಾರವು ದೂರವಾಗುವದು ಮತ್ತು ೧) ಚಿಣ್‌ನಾದ, ೨) ಚಿಣ್ ಚಿಣ್‌ನಾದ, ೩) ಘಂಟಾನಾದ, ೪) ಶಂಖನಾದ, ೫) ತಂತಿಯನಾದ, ೬) ತಾಳಗಳನಾದ, ೭) ಕೊಳಲಿನನಾದ, ೮) ಭೇರಿಯನಾದ ೯) ಮೃದಂಗನಾದ, ೧೦) ಮೇಘನಾದಗಳೆಂಬ

ದಶವಿಧನಾದವಾಗಿ ಪರಿವರ್ತನೆ ಹೊಂದಿ ತನ್ಮಯನನ್ನಾಗಿಸುವದು. ಮತ್ತು ಆತ್ಮದ ಅರಿವೂ ಆಗಬೇಕಾದರೆ ಕಷ್ಟಸಾಧ್ಯವಾಗುವದು.

 ಇಂಥ ಷಣ್ಮುಖೀ ಮುದ್ರೆಯು ಕಣ್ಮಗು ಕಿವಿಗಳನ್ನು ಬಂಧಿಸಿ ಆಯಾಸಪಡಿಸುವದು. ಮತ್ತು ಅದು ಸುಸಾಧ್ಯವೂ ಅಲ್ಲ.  ಅದಕ್ಕಿಂತ ಷಣ್ಮಂತ್ರ ಲಿಂಗಾರಾಧನೆಯು ಸುಲಭವೆಂದು ಶಿವಕವಿಯು ಒತ್ತಿ ಹೇಳುತ್ತಾನೆ. ಸದ್ಗುರುವು ಎನ್ನೊಡೆಯನಾದುದ ರಿಂದ ನನ್ನ ಚಿಂತೆ ಅವನಿಗಿದೆ. ಆತನು ಈ ಷಣ್ಮುಖೀ ಮುದ್ರೆಯು ಶಿಷ್ಯನಿಗೆ ಬಹುತಿಣ್ಣೆಂದು ತಿಳಿದು ಅದರ ಗೋಜನ್ನು ಬಿಡಿಸುತ್ತಾನೆ. ಅಂದರೆ ಈ ಮುದ್ರೆಯು ಬಾಹುಭಾರವೂ ಆಯಾಸಕರವೂ ಎಂದು ತಿಳಿದು ಅದನ್ನು ಪರಿಹರಿಸಿ   ಷಣ್ಮಂತ್ರವೆನಿಸಿದ ಷಡಕ್ಷರ ಮಹಾಮಂತ್ರ ಭರಿತವಾದ ಇಷ್ಟಲಿಂಗವನ್ನು ಕರುಣಿಸಿದ್ದಾನೆ. ಲಿಂಗದಲ್ಲಿ ಷಣ್ಮುಂತ್ರದ ಕಲೆಯು ಪಸರಿಸಿರುವಂತೆ ಅಂಗದಲ್ಲಿಯೂ ತುಂಬುತ್ತಾನೆ. ಮೂಗಿನಲ್ಲಿ ನಕಾರ ಪ್ರಣವವನ್ನು, ಬಾಯಿಯಲ್ಲಿ ಮಕಾರ ಮಂತ್ರವನ್ನು, ಕಣ್ಣಿನಲ್ಲಿ ಶಿಕಾರವನ್ನು, ತ್ವಕ್ಕಾದ ಗಲ್ಲಗಳಲ್ಲಿ ವಾಕಾರ ಬೀಜಾಕ್ಷರವನ್ನು, ಕಿವಿಯಲ್ಲಿ ಯಕಾರವನ್ನು, ಹೃದಯದಲ್ಲಿ ಹಾಗೂ ಭ್ರೂಮಧ್ಯದಲ್ಲಿ ಓಂಕಾರ ಪ್ರಣವನ್ನು ಸಂಬಂಧಗೊಳಿಸಿ ಮಾಂಸಮಯ ಕಾಯವನ್ನು ಮಂತ್ರಮಯ ವನ್ನಾಗಿಸಿದ್ದಾನೆ.

ಜ್ಞಾನೇಂದ್ರಿಯಗಳಲ್ಲಿ ಆಯಾ ಮಂತ್ರಗಳನ್ನು ನೆಲೆಗೊಳಿಸಿ ಲಿಂಗವನ್ನು ಸಂಬಂಧ ಮಾಡಿದ್ದರಿಂದ ನನ್ನ ಸರ್ವಾಂಗವೆಲ್ಲ ಲಿಂಗಮಯವಾಗಿದೆ. ಶಿವಲಿಂಗವನ್ನು ನಿರೀಕ್ಷಣ ಮಾಡುವ ನೇತ್ರಗಳು ಶಿವಲಿಂಗವೇ ತಾವಾಗಿ ಮಹಾಮಂತ್ರದ ಜಪಾನುಷ್ಠಾನದಿಂದ ಪ್ರಣವನಾದವು ಶ್ರವಣೇಂದ್ರಿಯದಲ್ಲಿ ನಿಜಲಿಂಗಾನಂದದಲ್ಲಿ ತನ್ಮಯನಾಗುವ ಅವಕಾಶ ಈ ಷಣ್ಮಂತ್ರ ಲಿಂಗಮುದ್ರೆಯಲ್ಲಿ ಓತಪ್ರೋತವಾಗಿದೆ.

ಓ ಗುರುವೆ ! ಬಹುಭಾರವಾದ ಇಂಥ ಷಣ್ಮುಖೀ ಮುದ್ರೆಯ ಜಡತ್ವವನ್ನು ಪರಿಹರಿಸಿ ಸುಲಭ ಸಾಧ್ಯವಾದ ಷಣ್ಮಂತ್ರ ಲಿಂಗಮುದ್ರೆಯನ್ನು ಸಾಧಿಸುವ ಶಕ್ತಿಯನ್ನು ಕರುಣಿಸಿ ಕಾಪಾಡು.

ಖೇಚರಿಯ ಮುದ್ರೆ ನೀ | ನಾಚರೀಸಲೇನುಂಟು

ಗೋಚರಿಪ ಲಿಂಗ-ದಾಚರಣೆ ಘನವೆಂದು

ಸೂಚಿಸಿದ ಗುರುವೆ ಕೃಪೆಯಾಗು   ||೧೦೪||

ಯೋಗಿಗಳು ಖೇಚರೀ ಮುದ್ರೆಯನ್ನು ಉತ್ತಮ ಅಧಿಕಾರಿಗೆ, ಶಾಂಭವೀ ಮುದ್ರೆಯನ್ನು ಮಧ್ಯಮಾಧಿಕಾರಿಗೆ, ಷಣ್ಮುಖೀ ಮುದ್ರೆಯನ್ನು ಮಂದಾಧಿಕಾರಿಗೆಂದು ಹೇಳುತ್ತಾರೆ. ರಾಜಯೋಗದಲ್ಲಿ ಖೇಚರೀ ಮುದ್ರೆಯು ರಾಜಮುದ್ರೆಯೆನಿಸಿದೆ. ಇದರ ಮಹತ್ವವು ಉಪನಿಷತ್ತಿನಲ್ಲಿ ಧಾರಾಳವಾಗಿ ಬಂದಿದೆ. ಯೋಗ ಚೂಡಾಮಣ್ಯು-ಪನಿಷತ್ತಿನಲ್ಲಿ ಖೇಚರೀ ಮುದ್ರೆಯ ಮಹತ್ವವನ್ನು ಬಹುವಾಗಿ ಬಣ್ಣಿಸಿದ್ದಾರೆ. ಆಕಾಶದಲ್ಲಿ ಸಂಚರಿಸುವ ಶಕ್ತಿಯನ್ನು ಈ ಖೇಚರೀ ಮುದ್ರೆಯಿಂದ ಸಾಧ್ಯವೆಂದು ಕೆಲವರು ಪ್ರತಿಪಾದಿಸಿದ್ದಾರೆ. ಈ ಮುದ್ರೆಯನ್ನು ಭ್ರೂಮಧ್ಯದಲ್ಲಿ ಊರ್ಧ್ವ ದೃಷ್ಟಿಯಿಂದ ಸಾಧಿಸುವ ಕಾರಣ ಇದಕ್ಕೆ ಖೇಚರೀ ಎಂಬ ಸಾರ್ಥಕ ನಾಮ ಬಂದಿದೆ.

 ಯೋಗ ಚೂಡಾಮಣ್ಯುಪನಿಷತ್ಕಾರರು ಖೇಚರೀ ಮುದ್ರೆಯ ಲಕ್ಷಣವನ್ನು

ಕಪಾಲಕುಹರೇ ಜಿಹ್ವಾ ಪ್ರವಿಷ್ಟಾ ವಿಪರೀತಗಾ |

ಭ್ರುವೋರಂತರ್ಗತಾ ದೃಷ್ಟಿರ್ಮುದ್ರಾ ಭವತಿ ಖೇಚರೀ || ೫೨ ||

ನಾಲಗೆಯನ್ನು ಕೆನ್ನೆಗಳ ನಡುವಿರುವ ಸಂಧಿಯಲ್ಲಿ ವಿಪರೀತವಾಗಿ (ನಾಲಿಗೆಯಲ್ಲಿ ಎರಡು ಹೋಳು ಮಾಡಿ ಒಳಹೊರಗೆ ಹೊರಳಿಸಿ) ಸೇರಿಸಬೇಕು. ದೃಷ್ಟಿಯನ್ನು ಹುಬ್ಬುಗಳ ಮಧ್ಯದಲ್ಲಿರಿಸಬೇಕು. ಆಗ ಖೇಚರೀ ಮುದ್ರೆಯೆನಿಸುವದು. ಫೇರಂಡ ಸಂಹಿತೆಯೂ ಇದೇ ತೆರನಾಗಿ ಖೇಚರಿಯ ಚರಿತ್ರೆಯನ್ನು ಬಿತ್ತರಿಸಿದೆ. ಶಿವಯೋಗ ಪ್ರದೀಪಿಕೆಯಲ್ಲಿ ಖೇಚರೀ ಮುದ್ರೆಯನ್ನು ಎರಡು ಪ್ರಕಾರವಾಗಿ ವಿಂಗಡಿಸಿದ್ದಾರೆ. ಒಂದು ಬಾಹ್ಯದಲ್ಲಿ ಖೇಚರೀ ಇನ್ನೊಂದು ಅಂತಃ ಖೇಚರೀ ಎಂದು ಇಬ್ಬಗೆಯಾಗಿದೆ.

ಮೇಲೆ ವಿವರಿಸಿದ ಲಕ್ಷಣವು ಬಾಹ್ಯಖೇಚರಿಯಾಗಿದೆ. ಅಂತಃಖೇಚರಿಯ ಲಕ್ಷಣವು ಕೆಳಗಿನಂತಿದೆ

ಲಕ್ಷ್ಯಲೀನ ಮನಸಾನಿಲೇನ ಯೋ ವರ್ತತೇ ಅಚಲಿತತಾರಯಾ ಭವೇತ್ |

ಖೇಚರೀ ಯಾಥ ಸೈವ ಶಾಂಭವೀಮುದ್ರಯಾ ಸ ತು ತಯಾ ಜಗದ್ಗುರುಃ    II ಶಿ.ಪ್ರ. ೫-೩||

ಯಾವ ಯೋಗಿಯು ಹೃತ್ಕಮಲದ ದಿವ್ಯಲಿಂಗವೆಂಬ ಅಂತರ್ಲಕ್ಷ್ಯದಲ್ಲಿ ಮನಸ್ಸು, ಮನಸ್ಸಿನೊಡನೆ ಬೆರೆತ ವಾಯುವಿನಿಂದ ನಿಶ್ಚಲವಾದ ತಾರಕಮಂಡಲ (ಕಣ್ಣಿನಲ್ಲಿಯ ಗುಡ್ಡೆಗಳು) ವುಳ್ಳವನಾಗುವನೋ ಈ ಸ್ಥಿತಿಯು ಅಂತಃ ಖೇಚರೀಯೆನಿ ಸುವದು. ಈ ಖೇಚರೀಮುದ್ರೆಯೇ ನಾಸಿಕಾಗ್ರದೃಷ್ಟಿಯಿಂದ ಶಾಂಭವೀ ಮುದ್ರೆಯೆನಿಸುವದು. ಈ ಹಿಂದೆ ಇದರ ವ್ಯಾಖ್ಯಾನವನ್ನು ಅವಲೋಕಿಸಲಾಗಿದೆ.

 ಖೇಚರೀ ಮುದ್ರೆಗಳನ್ನು ಸಾಧಿಸಿದ ಯೋಗೀಶ್ವರನು ಜಾಗ್ರ-ಸ್ವಪ್ನ-ಸುಷುಪ್ತಿ ಗಳ ಜಯಗಳಿಸಿ ಜಗದ್ಗುರುವೆನಿಸುವನು. ಅಂದರೆ ಲೋಕ ಪೂಜ್ಯವೆನಿಸುವನು. ಇವನಿಗಿಂತಲೂ ಪೂಜ್ಯನು ಬೇರೊಬ್ಬನೆನಿಸನು. ಇದೇ ಮಾತನ್ನು ನಿಜಗುಣರೂ ಸಹ ಪಾರಮಾರ್ಥ ಪ್ರಕಾಶಿಕೆಯಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ಪ್ರತಿಪಾದಿಸಿದ್ದಾರೆ.

ಖೇಚರೀಮುದ್ರೆಯ ದೃಷ್ಟಿ ಮನೋಮಾರುತಂಗಳ

ನಿಶ್ಚಲತ್ವದಿಂ ಕ್ರಮದಿಂ ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ-

 ವಸ್ಥಾತ್ರಯಂಗಳಂ ಗೆಲಿದಾತನೇ ಜಗದ್ಗುರುವಪ್ಪಂ

 ಜಗದ್ಗುರುತ್ವದ ಲಕ್ಷಣ ಇಷ್ಟು ಗಹನವಾಗಿದೆ. ಶಿವಯೋಗಸಾಧನೆಯಲ್ಲಿಯೂ ಪರಜಂಗಮನೆನಿಸಿ ಶಿವಸಾಮ್ರಾಜ್ಯವನ್ನೇ ಕವಡಿಗೆ ಸಮಮಾಡಿ ಅವಸ್ಥಾತ್ರಯಗಳನ್ನು ಮೀರಿ ಮಹಾಮಹಿಮನೆನಿಸಿದಲ್ಲಿ ಜಗದ್ಗುರುತ್ವವು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ ವೃತ್ತಿ ಗುರುತ್ವವಾದೀತು, ಯೋಗಿಗಳು ಖೇಚರೀ ಮುದ್ರೆಯ ಮಹಾ ಸಾಧನೆಯಿಂದ ಅವರ್ಣನೀಯವಾದ ಯೋಗ್ಯತೆಯನ್ನು ಪಡೆದಿದ್ದಾರೆ. ಈ ಮುದ್ರೆಯ ಅಗಣಿತವಾದ ಮಹತ್ವಕ್ಕೆ ಯೋಗ ಚೂಡಾಮಣ್ಯುಪನಿಷತ್ತಿನ ಕೆಲವು ಪ್ರಮಾಣಗಳನ್ನು  ಅವಲೋಕಿಸಿ-

ನ ರೋಗೋ ಮರಣಂ ನಾಸ್ತಿ ನ ನಿದ್ರಾ ನ ಕ್ಷುಧಾ ತೃಷಾ |

ನ ಚ ಮೂರ್ಛಾ ಭವೇತ್ತ ಸ್ಯ ಯೋ ಮುದ್ರಾಂ ವೇತ್ತಿ ಖೇಚರೀಮ್ ||

ಪೀಡ್ಯತೇ ನ ಚ ರೋಗೇ  ಲಿಪ್ಯತೇ ನ ಸ ಕರ್ಮಭಿಃ |

ಬಾಧ್ಯತೇ ನ ಚ ಕೇನಾಪಿ ಯೋ ಮುದ್ರಾಂ ವೇತ್ತಿ ಖೇಚರೀಮ್ ||

ಖೇಚರ್ಯಾ ಮುದ್ರಿತಂ ಯೇನ ವಿವರಂ ಲಂಬಿಕೋರ್ಧ್ವತಃ |

ನ ತಸ್ಯ ಕ್ಷೀಯತೇ ಬಿಂದುಃ ಕಾಮಿನ್ಯಾಲಿಂಗಿತಸ್ಯ ಚ ||

ಯಾವದ್ಬಿಂದುಃ ಸ್ಥಿತೋ ದೇಹೇ ತಾವನ್ಮೃತ್ಯುಭಯಂ ಕುತಃ ||

ಯಾವದ್ಬದಾ ನಭೋಮುದ್ರಾ ತಾವಂದ್ಬಿಂದುರ್ನ ಗಚ್ಛತಿ ॥

ಕಥಿತೇಯಂ ಮಹಾಮುದ್ರಾ ಮಹಾ ಸಿದ್ಧಿಕರೀ ನೃಣಾಮ್ |

ಗೋಪನೀಯಾ ಪ್ರಯತ್ನೇನ ನ ದೇಯಾ ಯಸ್ಯ ಕಸ್ಯಚಿತ್ |

“ಈ ಖೇಚರೀ ಮುದ್ರೆಯನ್ನು ಸಾಧಿಸಿದ ಸಾಧಕನಿಗೆ ರೋಗ, ನಿದ್ರೆ, ಹಸಿವು ನೀರಡಿಕೆ, ಮೂರ್ಛಗಳು ಹೋಗುವವಲ್ಲದೆ ಮರಣವೂ ಇಲ್ಲದಾಗುವದು. ಅವನನ್ನು ರೋಗಗಳು, ಕರ್ಮಗಳು ಪೀಡಿಸಲಾರವು. ಈ ಮುದ್ರಾಸಾಧನೆಯ ಪ್ರಭಾವದಿಂದ ವೀರ್ಯವನ್ನು ಊರ್ಧ್ವಮುಖಗೊಳಿಸಿದವನು ಸ್ತ್ರೀಯಳನ್ನು ಅಲಂಗಿಸಿದರೂ ಅವನಿಗೆ ವೀರ್ಯಪಾತವಾಗುವದಿಲ್ಲ.  ನಭೋಮುದ್ರೆ (ಖೇಚರೀ) ಯನ್ನು ಸಾಧಿಸುತ್ತಿರುವವನಿಗೆ ವೀರ್ಯಪಾತ ನಿಂತು ಹೋಗುವದು. ದೇಹದಲ್ಲಿ ವೀರ್ಯವು ಘಟ್ಟಿಗೊಂಡರೆ ಅವನಿಗೆ ಮರಣವೆಂಬುದೇ ಇಲ್ಲ. ಇಂಥ ಸರ್ವಸಿದ್ದಿ ದಾಯಕವಾದ ಈ ಮಹಾಮುದ್ರೆಯನ್ನು ಸಿಕ್ಕ ಸಿಕ್ಕ ಮನುಷ್ಯನಿಗೆ ಹೇಳಬಾರದು. ರಹಸ್ಯವಾಗಿರಬೇಕು’, ಎಂದಿದ್ದಾರೆ ಉಪನಿಷತ್ಕಾರರು. ಕೆಲವು ಸಾಧಕ ಯೋಗಿಗಳು ಅಂತಃಖೇಚರಿಯನ್ನು ಅರಿಯದೆ ಬಹುಪ್ರಯಾಸವುಳ್ಳ ಲಂಬಿಕಾ ಯೋಗವೆನಿಸುವ ಬಾಹ್ಯ ಖೇಚರಿಯನ್ನು ಆಶ್ರಯಿಸಿ ನಾಲಿಗೆಯನ್ನು ಸೀಳುವ ವಿಷಯದಲ್ಲಿ ಆತುರ ಪಡುತ್ತಾರೆಂದು ಚನ್ನ ಸದಾಶಿವಯೋಗಿಗಳು ಹೇಳಿದ್ದಾರೆ.

ಅಂತೂ ಖೇಚರೀ ಮುದ್ರೆಯ ಬಾಹ್ಯ ಸ್ವರೂಪವು ಅತ್ಯಂತ ಆಯಾಸಕರವಾಗಿದೆ. ಅಂತಃಖೇಚರೀಯ ಅಲ್ಪವಾದ ಅನುಸಂಧಾನವು ಶಿವಯೋಗದಲ್ಲಿಯೂ ಸುಲಭವಾಗಿ ಸಮಾವೇಶವಾಗುವದು. ಅದನ್ನರಿತ ಸದ್ಗುರುವು ಖೇಚರೀ ಮುದ್ರೆ ಯನ್ನು ಆಚರಿಸುವದಕ್ಕಿಂತ ಘನವಾದ ಮತ್ತು ಪ್ರತ್ಯಕ್ಷ ಕಾಣುವ ಲಿಂಗದಾಚರಣೆಯನ್ನು ಸೂಚಿಸಿರುವನು. ಇದು ಸುಲಭ ಸಾಧ್ಯವಾದುದು. ಆದರೆ ನಾಲಗೆಯನ್ನು (ಸೀಳಿ ಒಂದು ಭಾಗವನ್ನು ಗಂಟಲೊಳಗೆ ಇನ್ನೊಂದನ್ನು) ಮುಂದಕ್ಕೆಳೆದು ಭ್ರೂ ಮಧ್ಯಭಾಗಕ್ಕೆ ಮುಟ್ಟಿಸಿ ದೃಷ್ಟಿ ನಿಲ್ಲಿಸುವ ಈ ಕಡು ಕಷ್ಟಕರವಾದ ಖೇಚರೀ  ಮುದ್ರೆಯನ್ನು ಬದಿಗಿರಿಸಿ ಅಂಗೈಯಲ್ಲಿ ಗೋಚರಿಸುವ ಮಂಗಲಮಯ ಶಿವಲಿಂಗದಲ್ಲಿ ಕಂಗಳ ದೃಷ್ಟಿಯನ್ನಿಡಲು ಕಲಿಸಿ ನಾಲಿಗೆಯಿಂದ ಷಡಕ್ಷರ ಮಂತ್ರವನ್ನು ಜಪಿಸುತ್ತ ಮನ-ಭಾವಗಳನ್ನು ಆ ಲಿಂಗದಲ್ಲಿ ಬೆರೆಯಿಸುವ ಲಿಂಗಧಾರಣೆ ಶ್ರೇಷ್ಠ ತರವಾದುದು.  ಲಿಂಗಪೂಜೆಯೆಂಬ ಘನವಾದ ಸತ್ಕ್ರಿಯೆಯಿಂದ ಕಾಮ-ಕಾಲ- ಮಾಯೆಯನ್ನು ಗೆಲ್ಲಲು ಬರುವದು. ಐಕ್ಯನೆನಿಸಿ ಬಯಲಾತ್ಮನಾಗುವ ಸಾಧನೆಗೆ ಖೇಚರಿಯ ನಿಲವು ನಿಲ್ಲಲಾರದು.

 ಶೂನ್ಯವನ್ನು ಸಂಪಾದಿಸಿ ನಿರಂಜನನಾದ ಅಲ್ಲಮನ ನಿಲುವಿಗೆ ಹಠಯೋಗವನ್ನು ಸಾಧಿಸಿ ವಜ್ರಕಾಯನಾದ ಗೋರಕ್ಷನ ವ್ಯಕ್ತಿತ್ವವು ಹಾರಿಹೋಯಿತೆಂಬುದನ್ನು ಹಿಂದೆಯೂ ತಿಳಿಸಿದೆ. ಬಯಲಾತ್ಮನಾದವನಿಗೆ ಯಾವ ಉಪಾಧಿ ತಾಗೀತು ! ಕಾರಣ ಗುರುಕುರಣೆಯಿಂದ ಕಾಣಬರುವ ಇಷ್ಟಲಿಂಗದಾಚರಣೆಗೆ ಯೋಗಮುದ್ರೆಗಳು ಸರಿಗಾಣವು, ಓ ಗುರುವೆ, ಅಂಥ ನಿಜಲಿಂಗೈಕ್ಯನನ್ನು ಮಾಡುವ ಘನವಾದ ಲಿಂಗದನಿಲವನ್ನು ಎನ್ನಲ್ಲಿ ನೆಲೆಗೊಳಿಸು. ಕೃಪೆಮಾಡಿ ಕಾಪಾಡು.

ಹಠಯೋಗಮಾರ್ಗ ಸಂ | ಕಟದಿನಾಗುವ ಮೋಕ್ಷ

ಸಟೆಯೆಂದು ಬಿಡಿಸಿ-ಘಟದ ಸಂಗದ ಲಿಂಗ

ದಿಟವೆಂದ ಗುರುವೆ ಕೃಪೆಯಾಗು    ||೧೦೫||

ಇಲ್ಲಿಯವರೆಗೆ ವಿಚಾರಿಸಿದಂತೆ ಯೋಗಮಾರ್ಗವಾಗಲಿ ತಾಂತ್ರಿಕಮಾರ್ಗವಾಗಲಿ  ಸುಲಭಸಾಧ್ಯವಲ್ಲವೆಂಬುದು ವೇದ್ಯವಾಗಿದೆ. ಯೋಗದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳು-ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ವೆಂದು. ಇಷ್ಟದೇವತಾರೂಪ ಮಂತ್ರ ಜಪವೇ ಮಂತ್ರಯೋಗವಾದರೆ ಇಷ್ಟದೇವತಾ ಮೂರ್ತಿಯಲ್ಲಿ ಪ್ರಣವಾತ್ಮಕನಾದದಲ್ಲಿ ಮನೋಮಾರುತಂಗಗಳನ್ನು ಒಡಗೂಡಿಸಿ ಬೆರೆಯುವದೇ ಲಯಯೋಗವೆನಿಸುವದು. ಯಮಾದ್ಯಷ್ಟಾಂಗಯೋಗವು, ಮಹಾ ಮುದ್ರೆಗಳು, ಬಂಧಗಳು, ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ, ಕಪಾಲಭಾತಿ ಗಳೆಂಬ ಷಟ್‌ಕರ್ಮಗಳು, ಮೊದಲಾದ ಕಷ್ಟತರ ಸಾಧನೆಗಳಿಂದ ದೇಹ-ಮನ ಜೀವವನ್ನು ಪರಿಶುದ್ಧಗೊಳಿಸುವ ಯೋಗವೇ ಹಠಯೋಗವೆನಿಸುವದು. ಈ ಹಠ ಯೋಗದ ಕೆಲವು ಅಂಗಗಳು ಮಂತ್ರಯೋಗ ಮತ್ತು ಲಯಯೋಗಕ್ಕಾದರೂ ಪೋಷಕವಾಗಿವೆ. ಹಠಯೋಗದಿಂದ ಶುದ್ಧನಾದ ಜೀವನು ಅಂತರ್ಲಕ್ಷ್ಯವುಳ್ಳವನಾಗಿ ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವದು ರಾಜಯೋಗವೆನಿಸುವದು.

ʼʼ ಶಬ್ದಾತ್ಮಕ ಮಂತ್ರಯೋಗ ಸಾಧನೆಗಿಂತ ನಿಶ್ಯಬ್ದಾತ್ಮಕವಾದ ಮನೋಲಯ ವೆನಿಸುವ ಲಯಯೋಗವು ವಿಶೇಷವಾದುದು. ಪ್ರಾಣಾಯಾಮದ ಸಾಧನದಿಂದ ವಾಯುಜಯವನ್ನು ಪಡೆದು ಮನಸ್ಸಿನ ಸ್ಥಿರತೆ ಹೊಂದುವ ಹಠಯೋಗವು ಲಯಯೋಗಕ್ಕಿಂತ ಮಿಗಿಲಾಗಿದೆ. ಮನಸ್ಸು ಮತ್ತು ಅನಿಲಗಳನ್ನು ನಿರಾಯಾಸದಿಂದ ನಿಲಿಸಿ ನಿಜವಸ್ತು ಸಾಕ್ಷಾತ್ಕಾರವನ್ನು ಮಾಡಿಸುವ ರಾಜಯೋಗವು ಎಲ್ಲವುಗಳಿಗಿಂತ ಹೆಚ್ಚಿನದು ಎಂದು ನಿಜಗುಣ ಶಿವಯೋಗಿಗಳು ಯೋಗಮಾರ್ಗದ ಕ್ರಮಿಕತೆಯನ್ನು ಸಾರಿದ್ದಾರೆ. ಅಧಿಕ ಶ್ರಮ ಸಾಧ್ಯವಾದ ಯೋಗಫಲವನ್ನು ಶರಣರು ಒಪ್ಪಲಿಲ್ಲ. ಹಠಯೋಗವು ಹೆಸರಿಗೆ ತಕ್ಕಂತಿದೆ. ಅನ್ವರ್ಥಕತೆಯನ್ನು ಹೊಂದಿದೆ. ಹಟವೆಂದರೆ ಜೋರಾವರಿ ಅಥವಾ ಬಲಾತ್ಕಾರ. ಇಲ್ಲಿ ಸಹಜತೆಯಿರುವದಿಲ್ಲ.  ಬಲಾತ್ಕಾರದಿಂದ ಇಂದ್ರಿಯಗಳನ್ನು, ಮನಸ್ಸನ್ನು, ವಾಯುವನ್ನು, ಬುದ್ಧಿಯನ್ನು ನಿಗ್ರಹಿಸುವ, ನಿರೋಧಿಸುವ ಯೋಗದಿಂದ ಸಂಕಟವಾಗದೆ ಇರದು.

 ಇಂಥ ಸಂಕಷ್ಟದಿಂದಾಗುವ ಮೋಕ್ಷವೂ ದಿಟವಾದುದಲ್ಲ. ಅದು ಸಟೆಯಾದು ದೆಂದರೆ ಅನೇಕ ದುಃಖಗಳನ್ನು ಅನುಭವಿಸಿ ತನು-ಮನ-ಇಂದ್ರಿಯಗಳನ್ನು ಬಳಲಿಸಿ ಶಿವನ ಕೃಪಾಪ್ರಸಾದವನ್ನು ತ್ಯಜಿಸಿ ಯೋಗಿಯೆನಿಸಿ ಶರೀರ ನಾಶವಾದ ಮೇಲೆ ಮೋಕ್ಷವನ್ನು ಹೊಂದುವನು. ಅಣಿಮಾದಿ ಸಿದ್ಧಿಗಳನ್ನು ಪಡೆಯಬಹುದು. ಆದರೆ ಪುಣ್ಯಕ್ಷಯವಾದರೆ ಪುನಃ ಯೋಗಿಯು ಭವಕ್ಕೆ ಬರುವನು. ಅಲ್ಲದೆ ಯೋಗ ಭ್ರಷ್ಟರಾಗಿ ಜನ್ಮಾಂತರಗಳನ್ನು ಅನುಭವಿಸುವವರೇ ಹೆಚ್ಚು. ಇದು ಕಾರಣ ಸಂಕಷ್ಟ ದಿಂದ ಸಾಧ್ಯವೆನಿಸುವ ಹಠಯೋಗ ಮಾರ್ಗದಲ್ಲಿ ಲಭ್ಯವಾಗುವ ಮೋಕ್ಷವೂ ಸಟೆ ಯಾಗುವದು. ಅಂದರೆ ಸ್ಥಿರ (ಶಾಶ್ವತ) ಮೋಕ್ಷವಾಗುವುದಿಲ್ಲ.

ಇದನ್ನರಿತು ಸದ್ಗುರುವು ಕಾಯಘಟವನ್ನು ಸಂಸ್ಕರಿಸಿ ಶುದ್ಧಗೊಳಿಸಿ ಮಂತ್ರ ಮಯವಾಗಿಸಿ ಇಷ್ಟಲಿಂಗವನ್ನು ಸಂಗತ ಮಾಡುವನು. ಗುರೂಪದೇಶದಂತೆ ಸಾರ್ಥಕತೆಯನ್ನು ಪಡೆದ ಭಕ್ತನ ಕಾಯವು ಪಂಚಭೂತಗಳಲ್ಲಿ ಅಡಗುವಾಗ (ದೇಹಾವಸಾನದಲ್ಲಿ) ಲೂ ಶಿಷ್ಯನ ಸಂಗ ಬಿಡದ ಲಿಂಗವೇ ದಿಟವಾದುದು. ಈ  ಲಿಂಗೈಕ್ಯನಾಗುವ ಮೋಕ್ಷವೇ ಸತ್ಯವಾದುದು. ಲಿಂಗ ಕಳೆಯಲ್ಲಿ ಅಂಗಕಳೆಯು ಬೆರೆತು ಮಹಾಕಳೆಯಾದ ಮೇಲೆ ಸ್ಥೂಲ ಕಾಯದೊಂದಿಗೆ ಹೋಗುವ ಇಷ್ಟಲಿಂಗವು ಸತ್ಯವಾಗಿಯೂ ಸಮರಸದ ಲಿಂಗವಾಗಿದೆ.  ಕಾಯವಿಡಿದು ಕೈವಲ್ಯಕ್ಕೇರುವ ಕಷ್ಟವಿಲ್ಲದ ಯೋಗ ಲಿಂಗಾಂಗಯೋಗ. ಇದು ಕ್ರಿಯಾ-ಜ್ಞಾನಗಳ ಸಮನ್ವಯಯೋಗ, ಯೋಗಿಗಳ ಯೋಗದಲ್ಲಿ ಕ್ರಿಯೆ ಯಳಿದು ಕೇವಲ ಜ್ಞಾನ ಮಾರ್ಗದಿಂದ ಸಂತೃಪ್ತಿ ಸಮನಿಸಲಾರದು. ಸಕ್ಕರೆಯು ಸಿಹಿಯೆಂಬುವದು ಕೇವಲ ಜ್ಞಾನದಿಂದ ತಿಳಿಯದು. ಅದು ಕಾರಣ ಗುರುವು ಕರಣೇಂದ್ರಿಯಗಳನ್ನು ಸಂತೃಪ್ತಿಯಿದೆ. ನಿತ್ಯತೃಪ್ತತೆಯಿಂದ ಸತ್ಯಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ಶಿವಯೋಗಸಾಧಕನಿಗೆ. ಆದ್ದರಿಂದ ಲಿಂಗಾಂಗಯೋಗವು ದಿಟವಾದುದು. ಅಂಥ ದಿಟಯೋಗದಲ್ಲಿ ಧೀರನಾಗುವ ಧೈರ್ಯವನ್ನು ದಯಪಾಲಿಸು ಗುರುತಂದೆಯೆ

ಜ.ಚ.ನಿ

೧೯೨೪ ಇದ್ದಿರಬೇಕು. ನವಿಲುಗುಂದ ತಾಲೂಕು ಅಣ್ಣಿಗೆರೆಯ  ತೋಂಟದಾರ್ಯರ ಶಾಖಾಮಠ. ಒಂದು ದಿನ ಮುಂಜಾವು. ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು. ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತಮಾಡಿತ್ತು. ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು. ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು. ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು. ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ. ಅದು ಯೋಗ ಠೀವಿ, ಆರ್ಜವ ದೇಹ ಅಜಾನುಬಾಹು, ವಿಶಾಲವಾದ ಹಣೆ, ಎವೆಯಿಕ್ಕದ ಕಣ್ಣು, ಜಗತ್ತನ್ನೇ ಜರಿದಿದ್ದರು. ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು. ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು. ಯೋಗ ಬಲ್ಲಿದರಾಗಿದ್ದರೂ ಯೋಗದ ಏಳ್ಗೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು. ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿ ಆಸೇಚನವಾಗಿತ್ತು. ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು. ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ

ಸತ್ಕರ್ಮ-ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು. ನಿಷ್ಕಾಮಿಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ

ಕೌಶಲ್ಯವಿತ್ತು. ವಿರಕ್ತಶಿಖಾಮಣಿಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು. ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ-ಪ್ರಯೋಗಗಳ ಸಂಭ್ರಮ ಸೂರೆಗೊಂಡಿತ್ತು. ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು. ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು. ಬರಿ ದಯೆ-ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು. ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು.  ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ. ಅವರೆ ನಾ ಕಂಡ ಕಾರಣಿಕ ಕುಮಾರ

ಯೋಗಿಗಳು. ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನ್ನು ನೀಡಿ, ಜ್ಞಾನಬೆಳಗನು ಹರಡಿ, ಜಗಚ್ಛಕ್ಷುವಿನಂತೆ ಜಗಜಗಿಸಿದ್ದರು. ಅಂದು ಆ ಬಿಂಬವ ಕಂಡೆ.

ಕಂಡೆನ್ನ ಕಂಗಳು ಧನ್ಯವಾದವು. ಜನ್ಮ ಸಾರ್ಥಕವಾಯಿತು. ಇದಕ್ಕೆ ಮೂಲಕಾರಣರು ಅಡ್ನೂರಿನ ಶ್ರೀಮಂತ ಮಲ್ಲಿಕಾರ್ಜುನಗೌಡರು. ಇವರನ್ನಿಲ್ಲಿ ನೆನೆಯದಿದ್ದರೆ ಲೋಪವಾದೀತು, ಲೌಕಿಕ ವಿರೋಧವಾದೀತು!

ಇಂದು ಅದೇ ಆ ಮಹಾಕಾರಣಿಕ ಕುಮಾರ ಯೋಗಿಯ ಐತಿಹಾಸಿಕ ಭಾವಚಿತ್ರವನ್ನು ಬಲ್ಲಂತೆ ಚಿತ್ರಿಸಿ ಕಾಣುವ ಭಾಗ್ಯವು ಶ್ರೀ ಮ.ಲಿಂ.ಚ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಸತ್ಪ್ರೇರಣೆಯಿಂದ ಮತ್ತೆ ಒದಗಿ ಬಂದಿದೆ; ಒಂದುಗೂಡಿನಿಂತಿದೆ. ಇದಕ್ಕಾಗಿ ಶ್ರೀ ಸದಾಶಿವ ಶಿವಾಚಾರ್ಯರಲ್ಲಿ ಧನ್ಯವಾದಗಳು.

 ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು, ಬೇಸರ ಬಾರದು.

ನಿಮ್ಮ ನೋಟವನಂತ ಸುಖ

 ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ

 ಕುಮಾರ ಯೋಗೀಶ್ವರ ನಿಮ್ಮ ನೋಡಿ

 ನೋಡಿ ಮನದಲ್ಲಿ

 ರತಿಹುಟ್ಟಿ ನಿಮಿರ್ದವೆನ್ನ ಕಂಗಳು

 ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ, ನಟ್ಟ ನೋಟದಿಂದ ನೋಡಿ, ನಲಿಯಲು ಮುಂದುವರಿಯಲಾಗಿದೆ, ಉಲಿಯಲು ಮೊದಲು ಮಾಡಲಾಗಿದೆ.

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಪ್ರಾಸ್ತಾವಿಕ :

ಷಟ್‌ಸ್ಥಲ ಅಧ್ಯಯನಶೀಲವಲ್ಲ. ಅದು ಅನುಷ್ಠೇಯವಾದುದು. ಆಚಾರ ವಿಚಾರಗಳ ಸಮನ್ವಯದಲ್ಲಿ ಆಚರಣೆಗೆ ಅನುಕೂಲವಾದುದು. ಷಟ್‌ಸ್ಥಲವು ಸಂಸಾರಿಕ ಜೀವನದಲ್ಲಿ ಭಕ್ತಿ (ಪ್ರೇಮ) ಯನ್ನು, ನಿಶ್ಯಕ್ತ ಜೀವನದಲ್ಲಿ ನಿಜ ಶಕ್ತಿಯನ್ನು, ನಿಷ್ಕ್ರಿಯ ಬದುಕಿನಲ್ಲಿ ಸತ್ಕ್ರಿಯೆಯನ್ನು, ಆಲಸ್ಯದ ಬಾಳಿಗೆ ಸ್ವಾವಲಂಬನೆಯನ್ನು, ಅಜ್ಞತನದ ಬದುಕಿಗೆ ಸುಜ್ಞತೆಯನ್ನು ಅಧ್ಯಾತ್ಮದ ಸಾಧನೆಯಲ್ಲಿ ಸ್ವಾನುಭವವನ್ನು, ಸಾಮರಸ್ಯವನ್ನು ಅನುಗ್ರಹಿಸಬಲ್ಲದು. ಈ ಷಟ್‌ಸ್ಥಲ ಸಾಧನೆಯಿಂದ ದೇಹೇಂದ್ರಿಯಗಳು, ಮನ ಪ್ರಾಣಗಳು, ಭಾವ ಜೀವಗಳು ವಿಕಾಸ ಹೊಂದುತ್ತವೆ. ಮಲಿನತೆಯನ್ನು ಮಾಣಿಸಿ ಮೌಲ್ಯವುಳ್ಳವುಗಳಾಗುತ್ತವೆ. ಆಚಾರ ವಿಚಾರಗಳಿಂದ, ಶ್ರದ್ಧೆ-ನಿಷ್ಠೆ-ಅವಧಾನ-ಅನುಭವ-ಆನಂದ-ಅವಿರಳತೆಯನ್ನು ಪಡೆದು ಘನಮನ ಸಂಪನ್ನತೆಯನ್ನು ಸಂಪಾದಿಸಿಕೊಳ್ಳಲು ಸಾಧ್ಯ. ಇದು ಜೀವನ ಸಿದ್ಧಾಂತವೂ ಅಹುದು. ವೀರಶೈವ ಧರ್ಮದ ಸಾಧನ ಪಥವೂ ಅಹುದು.

ವೀರಶೈವ ಧರ್ಮವು ವಿಶಿಷ್ಟವಾದುದಲ್ಲದೆ, ಅನಾದಿ ಸಂಸಿದ್ಧವಾದುದು. ಜಾಗತಿಕ ಧರ್ಮಗಳಲ್ಲಿ ವಿಶ್ವಮಾನ್ಯ ವೈಚಾರಿಕ ಮೌಲ್ಯಗಳನ್ನು ಹೊಂದಿದೆ. ಜಾಗತಿಕ ಬಹುತೇಕ ಧರ್ಮಗಳು ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಟ್ಟಿಗೆ ಪ್ರಯತ್ನಿಸಿದರೆ : ವೀರಶೈವವು ನಿತ್ಯದಲ್ಲಿ ಪರಮಾತ್ಮ (ಲಿಂಗ) ನೊಡನೆ ಸಾಲೋಕ್ಯ- ಸಾಮೀಪ್ಯ-ಸಾರೂಪ್ಯ-ಸಾಯುಜ್ಯಗಳೆಂಬ ಚತುರ್ವಿಧ ಮುಕ್ತಿಗಳನ್ನು ಅನುಭವಿಸುವ ಮಹಾನ್ ಧರ್ಮ; ಕೇವಲ ಅನುಭವಿಸುವದಲ್ಲ, ಅನುಭವದಲ್ಲಿ ಆನಂದ ಪಡೆದು ಸಾಮರಸ್ಯವನ್ನು ಹೊಂದುವ ಸಾಧ್ಯತೆಯುಳ್ಳುದು. ಆನಂದದ ಅನುಭೂತಿಯಲ್ಲಿ ಸಾಮರಸ್ಯದ ಸೊಂಪಿದೆ, ಕಂಪಿದೆ, ಪೆಂಪಿದೆ.

ವೀರಶೈವವು ವ್ಯಾವಹಾರಿಕ-ಸಾಮಾಜಿಕ ವ್ಯವಸ್ಥೆಯೊಂದಿಗೆ ಧಾರ್ಮಿಕ ವ್ಯವಸ್ಥೆಯಲ್ಲಿ ರೂಪಗೊಂಡಿದೆ. ವೀರಶೈವ ಸಿದ್ಧಾಂತದಲ್ಲಿ ಧರ್ಮ-ಸಂಸ್ಕೃತಿ-ಆಚಾರ-ವಿಚಾರ-ಸಾಧನೆ-ಸಿದ್ಧಿಗಳ ಸಮ್ಮಿಲನವಿದೆ. ಯಾವುದನ್ನು ಈ ದರ್ಶನ ಪ್ರತಿಪಾದಿಸುವದೋ ಅದನ್ನು ಆಚರಿಸಲು ಅವಕಾಶವಿದೆ, ಆಚರಿಸಿದಂತೆ ಅಳವಡಿಸಿಕೊಳ್ಳುವ ಯೋಗ್ಯತೆಯಿದೆ. ವೀರಶೈವವು ಪ್ರಾಯೋಗಿಕ ಸಿದ್ಧಾಂತವೆನಿಸಿದೆ. ಇದು ವ್ಯಕ್ತಿನಿಷ್ಠವಲ್ಲ, ಆತ್ಮನಿಷ್ಟವಾದುದು. ತತ್ತ್ವಗಳನ್ನು ಅರಿತು ಆಚರಿಸಿ ತತ್ತ್ವ ರೂಪಿಯಾಗುವ ವೈಶಿಷ್ಟ್ಯ ಇಲ್ಲಿದೆ. ಅಂತೆಯೇ ಅಷ್ಟಾವರಣವೇ ಅಂಗ, ಪಂಚಾಚಾರಗಳೇ ಪ್ರಾಣ, ಷಟ್‌ಸ್ಥಲವೇ ಆತ್ಮವೆಂಬ ಸೂತ್ರವನ್ನು ಪ್ರತಿಪಾದಿಸಿದ್ದಾರೆ.

ನಾಸ್ತಿಕ ದರ್ಶನಗಳಾದ ಜೈನ ಬೌದ್ಧರು ವೇದಾಗಮಗಳನ್ನು ಅಪೌರುಷೇಯವೆಂದು ಅವುಗಳ ಬಗೆಗೆ ಅಶ್ರದ್ಧೆ ಬೆಳಸಿದರಲ್ಲದೆ, ಶೂನ್ಯವಾದವನ್ನು ಪ್ರಾಸ್ತಾಪಿಸಿದ್ದರಿಂದ, ದೈವವನ್ನು ಪರಂಪರೆಯಾಗಿ ನಂಬಿದ ಭಾರತೀಯರಿಗೆ ಈ ಧರ್ಮದಲ್ಲಿ ನಿರಾಸಕ್ತಿ ಬೆಳೆಯಿತು. ನಿರ್ಬಲರಾದರು. ದೈವಭಕ್ತಿ-ಶಕ್ತಿ ಶೂನ್ಯರಾದರು. ಮುಂದೆ ಶಂಕರಾಚಾರ್ಯರು ಬ್ರಹ್ಮಸತ್ಯವನ್ನು ಸ್ಥಾಪಿಸಿ ಆತ್ಮಬಲವನ್ನೇನೋ ತುಂಬಿದರೂ ಜೊತೆಗೆ ಜಗನ್ಯಿಥ್ಯವೆಂದು ಸಂಸಾರದ ಅಸಾರತೆಯನ್ನು ಸಾರಿದರು. ಇದರಿಂದ ಜನರಲ್ಲಿ ಕರ್ತವ್ಯಚ್ಯುತಿ ತಲೆದೋರಿತು. ಆದರೆ ವೀರಶೈವ ಧರ್ಮವು ಶ್ರದ್ಧೆಯನ್ನೇ ಮೂಲವಾಗಿರಿಸಿ, ಸಂಸಾರದ ಅಸಾರತೆಯನ್ನು ಬದಿಗಿರಿಸಿ, ಸ್ವಾವಲಂಬನೆಯ ಮಾರ್ಗವನ್ನು ಕಲಿಸಿ ಲಿಂಗಾಂಗ ಸಾಮರಸ್ಯದ ಉನ್ನತ ಸ್ಥಿತಿಯನ್ನು ಗುಪ್ತವಾಗಿ ಸಾಧಿಸಲು ಕಲಿಸಿತು. ಈ ದಿಶೆಯಲ್ಲಿ ತತ್ವತ್ರಯಗಳು ಮಹತ್ವಪೂರ್ಣವಾಗಿವೆ. ಜೀವನ ಸಿದ್ಧಾಂತವನ್ನು ತಿಳಿಸುವ ಈ ತತ್ವತ್ರಯಗಳು ವಾಸ್ತವಿಕ ಸತ್ಯವನ್ನು ಬೋಧಿಸುವ ಅಧ್ಯಾತ್ಮಿಕ ಸಾಧನಗಳಷ್ಟೇ ಅಲ್ಲ, ನಿರಂತರ ಬಾಳಿ ಬದುಕುವ ಸಹಜ- ಸುಲಭ ಮಾರ್ಗಗಳೂ ಆಗಿವೆ.   

ವಾಸ್ತವಿಕ ಸ್ಥಿತಿಯನ್ನರಿಯದೆ ಅಷ್ಟಾವರಣ ಹಾಗೂ ಪಂಚಾಚಾರಗಳು ವೀರಶೈವ ಸಾಧಕನಿಗೆ ಲಿಂಗಾಂಗ ಸಾಮರಸ್ಯದ ಸಿದ್ಧಿಯಾಗಲು ನೇರವಾಗಿ ಕಾರಣವಾಗದೇ ಪರಂಪರಾ ಕಾರಣಗಳಾಗಿವೆಯೆನ್ನುವುದು ಸರಿಯಲ್ಲ. ಅಷ್ಟಾವರಣ- ಪಂಚಾಚಾರಗಳ ಪರಿಯಿಲ್ಲದೆ ಕೇವಲ ಷಟ್‌ಸ್ಥಲಕ್ಕೆ ಬೆಲೆಯಿಲ್ಲವೆನ ಬೇಕು. ಅಷ್ಟಾವರಣವು ಜೀವನದ ಅವಿಭಾಜ್ಯ ಅಂಗ. ದೇಹ ರಚನೆಗೆ ಅಷ್ಟ ತತ್ವಗಳು ಅವಶ್ಯ ಮತ್ತು ದೇಹ ಪೋಷಣೆಗೂ ಅಷ್ಟ ತತ್ವಗಳು ನಿತ್ಯಬೇಕು. ನಮ್ಮವರು ಈ ಬ್ರಹ್ಮಾಂಡಗತ ತತ್ವಗಳಿಗೆ ಸಂಸ್ಕಾರ ನೀಡಿದ್ದೆ ಅಷ್ಟಾವರಣದ ಪರಿಕಲ್ಪನೆಯಾದರೆ, ಜೀವಾತ್ಮನಿಗೆ ಪಂಚಪ್ರಾಣಗಳೂ ಮುಖ್ಯ. ಹಾಗೆ ವೀರಶೈವನಿಗೆ ಪಂಚಾಚಾರಗಳು ಪ್ರಾಣದಂತೆ ಮುಖ್ಯ ಗುರಿಗಳಾಗಿವೆ, ಧ್ಯೇಯವೂ ಅಹುದೆನ್ನುವುದು ಸತ್ಯ. ಶಿವಪೂಜೆಗೆ ಕುಳಿತು ವಾಮಕರದಲ್ಲಿ ಲಿಂಗವನ್ನು ಪೂಜಿಸುವ ಸಾಧಕ ಸದ್ಭಕ್ತನ ಸ್ವರೂಪವೇ ವಾಮಕರಪೀಠದಲ್ಲಿ ಭಸ್ಮದಿಂದ ಬರೆಯುವ ಪಂಚಕೋನದ ಉದ್ಧರಣೆಯಾಗಿರುವದು. ಇದು ಸ್ವಸ್ವರೂಪ. ಪಂಚಕೋನದ ಮೇಲಿನ ಭಾಗ ಶಿರಸ್ಸು, ಕೆಳಗಿನ ಎಡಬಲದ ಕೋನಗಳೆರಡು ಭುಜಗಳು, ಅದರ ಕೆಳಗಿನ ಎರಡು ಕೋನಗಳು ತೊಡೆಗಳು, ಮಧ್ಯದ ಆರನೆಯ ಭಾಗವು ಹೃದಯವೆನಿಸುವದು. ಈ ಆರರ ಕಲ್ಪನೆ ಷಟ್‌ಸ್ಥಲಕ್ಕೆ ನಾಂದಿಯಾಗಿದೆ. ಈ ತೆರನಾಗಿ ತತ್ತ್ವತ್ರಯಗಳು ಒಂದಕ್ಕೊಂದು ಅವಿನಾಭಾವ ಸಂಬಂಧವುಳ್ಳವುಗಳು. ಗುರುವಿಲ್ಲದೆ ತತ್ವ ತಿಳಿಯದು, ಅವನಿಲ್ಲದೆ ಲಿಂಗ ಲಭಿಸದು. ಲಿಂಗದ ಪ್ರಾಣ ಜಂಗಮ, ಈ ಮೂವರು ವೀರಶೈವರಿಗೆ ಪೂಜ್ಯರು, ಆರಾಧ್ಯರು. ಪೂಜ್ಯ ವಸ್ತುಗಳನ್ನು ಪೂಜಿಸುವ ಸಾಧನಗಳು ಭಸ್ಮ-ರುದ್ರಾಕ್ಷಿ ಮಂತ್ರಗಳು, ಪೂಜೆಯ ಪ್ರತ್ಯಕ್ಷಫಲ ಪಾದೋದಕ- ಪ್ರಸಾದಗಳು ವೀರಶೈವ ದರ್ಶನದಲ್ಲಿ ದೇಹ-ಪ್ರಾಣ-ಆತ್ಮರ ವಿಕಾಸವೆ ತತ್ತ್ವತ್ರಯಗಳ ಪರಿಕಲ್ಪನೆಯಾಗಿದೆ. ಆದ್ದರಿಂದ ಇವು ಅಭಿನ್ನ, ಅವಿಭಾಜ್ಯ

 ಲಿಂಗಧಾರಣವಾಗದೆ ಲಿಂಗಾಚಾರ ಅಳವಡದು, ಲಿಂಗವಿಲ್ಲದೆ ಏಕೇಶ್ವರ ಪೂಜೆಯಾಗಲಿ, ಧಾರ್ಮಿಕ ಸ್ವಾತಂತ್ರ್ಯ ವಾಗಲಿ ಲಭಿಸುವದಿಲ್ಲ. ಲಿಂಗಧಾರಿಯಾದ ಬಳಿಕ ಸಚ್ಛಾರಿತ್ರ್ಯವನ್ನು, ವ್ಯಕ್ತಿತ್ವ ವಿಕಸನವನ್ನು ರೂಪಿಸಿಕೊಳ್ಳಲೇಬೇಕು. ಲಿಂಗವನ್ನು ಪೂಜಿಸುವ ಕೈ ಯಾರನ್ನು ಬೇಡುವಂತಿಲ್ಲ. ಕಾಯಕ ಮಾಡಲೇಬೇಕು. ಕಾಯಕದೊಂದಿಗೆ ದಾಸೋಹಿಯಾಗುವದು ಸದಾಚಾರದ ಉದ್ದೇಶ. ಮೂರನೆಯ ಶಿವಾಚಾರವು ಸಹೋದರತೆಯನ್ನು, ಸಮಾನತೆಯನ್ನು ಭಾವೈಕ್ಯತೆಯನ್ನು ಬಿಂಬಿಸುವದು. ಗಣಾಚಾರವು ಧರ್ಮನಿಷ್ಠೆ, ತನ್ನ ತತ್ವಗಳ ಸಂರಕ್ಷಣೆಯ ಹೊಣೆಯನ್ನು ಬದ್ಧತೆಯನ್ನು ಕಲಿಸುವದು. ಕೊನೆಯ ಭೃತ್ಯಾಚಾರವು ವ್ಯಕ್ತಿ ಗೌರವವನ್ನು ತಿಳಿಸುವದು. ಕಿಂಕರತ್ವವವನ್ನು ಕಲಿಸುವದು. ವ್ಯಕ್ತಿ ಗೌರವದಿಂದ  ಸಮಾಜದಲ್ಲಿ ಸಾಮರಸ್ಯ ಬೆಳೆಯುವದು. ಹೀಗೆ ಪಂಚಾಚಾರಗಳು ವೀರಶೈವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಮರ್ಥವಾಗಿರುವಾಗ ಇವು ನೇರ ಕಾರಣವಾಗದೆ ಪರಂಪರಾ ಕಾರಣವೆನ್ನುವ ವಿಚಾರವನ್ನು  ಪರಿಹರಿಸುವದು. ಆಂತರಿಕ ಸಾಧನೆಗೆ ಬಾಹ್ಯ ಆಚರಣೆ ಅವಶ್ಯ.

 ಷಟ್‌ಸ್ಥಲದ ಪರಿಕಲ್ಪನೆ :

 ಷಟ್‌ಸ್ಥಲದ ಪರಿಕಲ್ಪನೆ ಪಂಚಸೂತ್ರ ಲಿಂಗದ ಪರಿಕಲ್ಪನೆಯೊಂದಿಗಿದೆ. ಲಿಂಗವು ಪ್ರಣವದ ಸ್ವರೂಪವೂ ಆಗಿರುವದು.  ಪ್ರಣವವು ತಾರಕ-ದಂಡಕ ಕುಂಡಲ-ಅರ್ಧಚಂದ್ರ-ದರ್ಪಣ ಜ್ಯೋತಿಗಳೆಂಬ ಆರವಯವವುಳ್ಳಂತೆ, ವೃತ್ತ-ಕಟಿ-ವರ್ತುಳ-ನಾಳ-ಗೋಮುಖ-ಪೀಠವೆಂಬ ಆರು ಲಕ್ಷಣವುಳ್ಳದು ಲಿಂಗವು ಮತ್ತು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ-ಅಖಂಡ ಸ್ವರೂಪನು, ಪರಶಿವನು. ವೀರಶೈವ ಸಿದ್ದಾಂತದಂತೆ ತತ್ತ್ವವಿಕಾಸ ಕ್ರಮದಲ್ಲಿ ಸಹಜ-ನಿರಾಲಂಬ ನಿರಮಯ (ನಿರ್ಮಲ) ನಿಷ್ಕಲ-ನಿರ೦ಜನ-ನಿರವಯಗಳೆಂಬ ತತ್ವಗಳನ್ನು ಪ್ರತಿಪಾದಿಸಿರುವರು. ಸರ್ವಜ್ಞತ್ವ -ನಿತ್ಯತೃಪ್ತತ್ವ – ಅನಾದಿ ಬೋಧಕ ಶಕ್ತಿ, ಸ್ವತಂತ್ರ ಶಕ್ತಿ, ಆಲುಪ್ತ ಶಕ್ತಿ, ಅನಂತಶಕ್ತಿಗಳೆಂಬ ಷಟ್‌ಶಕ್ತಿ ಸಂಪನ್ನನು, ಪರಶಿವನು. ಕರ್ತೃ-ಕರ್ಮ-ಮೂರ್ತ-ಅಮೂರ್ತ-ಶಿವ-ಮಹಾಸಾದಾಖ್ಯಗಳೆಂಬ ಆರು ಸಾದಾಖ್ಯಗಳ ಮೂಲಕ ಪರಶಿವತತ್ವ ಗೋಚರವಾಗುವದು. ಈ ತೆರನಾಗಿ ಷಟ್‌ಸ್ಥಲದ ಪರಿಕಲ್ಪನೆ ರೂಪುಗೊಂಡಿರಲು ಸಾಕು. ಷಟ್‌ಸ್ಥಲವು ತಾತ್ವಿಕವಾಗಿ ಸೈದ್ಧಾಂತಿಕವಾಗಿ ವೈಚಾರಿಕವಾಗಿ ವೈಶಿಷ್ಟ್ಯಪೂರ್ಣವಾಗಿ ಪರಿಕಲ್ಪಿತ ವಾದುದು. ಅಂತೆಯೇ ಈ ಷಟ್‌ಸ್ಥಲದ ಘನತೆಯನ್ನು ಡಾ.ಜ.ಚ.ನಿ. ಯವರು ಮಾರ್ಮಿಕವಾಗಿ ಜೀವನ ಸಿದ್ಧಾಂತ’ ದಲ್ಲಿ ನಿರೂಪಿಸಿರುವರು. ದೇಹೇಂದ್ರಿಯಗಳು, ಮನ-ಪ್ರಾಣಗಳು, ಭಾವ-ಜೀವಗಳು ನುಲಗಬಾರದು. ನೋಯಬಾರದು, ಮಲೆಯಬಾರದು, ಮಲಿನವಾಗಬಾರದು, ಮೌಲ್ಯವುಳ್ಳವುಗಳು ಆಗಬೇಕು, ಮೆರಗುಳ್ಳವುಗಳಾಗಬೇಕು. ಆಚಾರ-ವಿಚಾರವುಳ್ಳವುಗಳೂ ಶ್ರದ್ಧೆ-ನಿಷ್ಠೆ- ಅವಧಾನ ಅನುಭವ-ಆನಂದ-ಅವಿರಳತೆಯುಳ್ಳವುಗಳೂ, ಅಧ್ಯಾತ್ಮಿಕ ಘನತೆಯುಳ್ಳವುಗಳೂ ಆಗಿರಬೇಕೆಂಬುದೆ ಈ ಕೃತಿಯ ಕಲಾದೃಷ್ಟಿ. ಸಕಲೇಂದ್ರಿಯ ಪ್ರಭುತ್ವ ಬರಬೇಕು. ಆತ್ಮ ತತ್ವ ಅಳವಡಬೇಕು. ಅಂತಃಕರಣಗಳಲ್ಲಿ ಮಹಾಂತತೆ ಮೂಡಬೇಕು ಎಂಬುದೇ ಷಟ್‌ಸ್ಥಲ ಸಿದ್ಧಾಂತ ತತ್ವ. ಸತ್ಯ-ತತ್ವ ಷಡಂಗಗಳಲ್ಲಿಯೂ ಷಡ್ಲಿಂಗ (ದೃಕ್ರಿಯಾ ಚೈತನ್ಯ) ಗಳ ಸಂಪೂರ್ಣ ಲೀಲಾ ವಿಲಾಸ ಸಮನಿಸಬೇಕೆಂಬುದೇ ಷಟ್‌ಸ್ಥಲದ ಧ್ಯೇಯ. ಜಡಕರ್ಮ ಜೀವನವು ಕಳಚಿ ಮೂಢ ಜೀವನವು ಹಳಚಿ ಜೀವಕಳಾ ಜೀವನವು ಒಡಮೂಡಬೇಕು. ಸಕಲ ಕ್ರಿಯಾ ಕಲಾಪಗಳು ನಂದನವನವಾಗಬೇಕು. ಸಮ್ಯಗ್‌ಜ್ಞಾನ ಜ್ಯೋತಿರ್ಮಂಡಲವಾಗಬೇಕುʼ’ ಎಂಬುದೇ ಷಟ್‌ಸ್ಥಲ ರಹಸ್ಯವೆಂದು ಷಟ್‌ಸ್ಥಲದ ಮರ್ಮವನ್ನು ಬಿತ್ತರಿಸಿರುವರು.

 ಷಟ್‌ಸ್ಥಲದ ಪ್ರತಿಪಾದನೆ ಹನ್ನೆರಡನೆಯ ಶತಮಾನದಿಂದ ಪ್ರಾರಂಭವಾಯಿತೆನ್ನುವರು. ಆದರೆ ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು ಶ್ರೀಗುರು ವಾದಾತನು ಸಕಲಾಗಮಂಗಳ ಹೃದಯವನರಿದು ಆಚರಿಸಲು ಮತ್ತು ಬೋಧಿಸಲು ನಿರೂಪಿಸಿದ್ದುಂಟು. ಈ ಮಹಾನುಭಾವರು ಹನ್ನೆರಡನೆಯ ಶತಮಾನದಲ್ಲಿ ಷಟ್‌ಸ್ಥಲವನ್ನು ವ್ಯವಸ್ಥಿತವಾಗಿ ಶರಣ ಸಮುದಾಯಕ್ಕೆ ತಿಳಿಸಿದ ಕಾರಣ ಅವರು “ಷಟ್‌ಸ್ಥಲ ಚಕ್ರವರ್ತಿ’ ಗಳೆನ್ನಿಸಿದ್ದು ಪ್ರಸಿದ್ಧ. ಪರಶಿವನು ಮಕುಟಾಗಮದ ಕ್ರಿಯಾಪಾದದ ದ್ವಿತೀಯ ಪಟಲದಲ್ಲಿ-

“ಷಟ್‌ಸ್ಥಲೋಕ್ತ ವಿಧಾನೇನ ಮಹಾಪೂಜಾಂ ಸಮಾಚರೇತ್‌” (೨/೪೧) ಇಷ್ಟಲಿಂಗ ಪೂಜೆಯನ್ನು ಷಟ್‌ಸ್ಥಲ ಕ್ರಮದಲ್ಲಿ ತಿಳಿಸಿದ ವಿಧಾನದಂತೆ ಆಚರಿಸಬೇಕೆಂದು ಹೇಳಿ, ಭಕ್ತಾದಿ ಸ್ಥಲಗಳಲ್ಲಿ ಮಾಡಬೇಕಾದ ಕ್ರಮವನ್ನು ತಿಳಿಸುತ್ತ, ಭಕ್ತಾದಿ ಸ್ಥಲಗಳಲ್ಲಿ ಆಚರಿಸುವ ಅರ್ಪಣ ಕ್ರಮವನ್ನು ಸಹ ನಿರೂಪಿಸಿರುವನು.  ಶರಣ ಸಾಹಿತಿಗಳಾದ ಡಾ. ಹೆಚ್. ತಿಪ್ಪೇರುದ್ರಸ್ವಾಮಿಯವರು “ವಾತುಲಾಗಮದ ಉತ್ತರ ಭಾಗದಲ್ಲಿರುವ ತಂತ್ರೋತ್ತರ ಪ್ರದೀಪವೆಂಬ ಹೆಸರಿನ ಶಿವಸಿದ್ಧಾಂತ ತಂತ್ರದಲ್ಲಿ ಈಶ್ವರನು ಪಾರ್ವತಿಗೆ ಷಟ್‌ಸ್ಥಲ ನಿರ್ಣಯವನ್ನು ನಿರೂಪಿಸಿರುವದಾಗಿ ಹೇಳುತ್ತಾರೆ. ಇದನ್ನು ನೋಡಿದರೆ ಬಹುಶಃ ವಚನಕಾರರಿಗಿಂತ ಮೊದಲೇ ಷಟ್‌ಸ್ಥಲ ಸಿದ್ಧಾಂತ ಉಗಮಗೊಂಡು ಆಗಮಾದಿಗಳಲ್ಲಿ ಬೆಳೆಯುತ್ತಾ ಬರುತ್ತಿದ್ದಿತೆಂದು ಹೇಳಬಹುದು. ಬಸವಾದಿ ಶರಣರ ಕಾಲಕ್ಕೆ ಅದು ಪರಿಪೂರ್ಣತೆಯನ್ನು ಪಡೆಯಿತು. ಕೇವಲ ಸಿದ್ಧಾಂತವಾಗಿ ಉಳಿಯದೇ ಶರಣರ ಉಜ್ವಲ ಸಾಧನೆಯಿಂದ ಜೀವಂತ ಶಕ್ತಿಯಾಗಿ ಪರಿಣಮಿಸಿತು.” ಎಂದು ತಮ್ಮ ಸಂಶೋಧನಾ ಗ್ರಂಥದಲ್ಲಿ ಉಲ್ಲೇಖಿಸಿರುವುದು ಯಥೋಚಿತವಾಗಿದೆ.

ಬಸವಾದಿ ಶಿವಶರಣರು ವಿಶೇಷವಾಗಿ ಚನ್ನಬಸವಣ್ಣನವರು ಆಗಮ ಪ್ರತಿಪಾದಿತ ಸಿದ್ಧಾಂತವನ್ನು ಜನ ಭಾಷೆಯಲ್ಲಿ ಜನತೆಗೆ ತಿಳಿಯುವಂತೆ ಕನ್ನಡ ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದರು. ತತ್ವ ನಿರೂಪಣೆಯೊಂದಿಗೆ ಷಟ್‌ಸ್ಥಲದ ಆಚರಣೆಯನ್ನು ಕ್ರಮಗೊಳಿಸಿದರು.

ಈ ಷಟ್‌ಸ್ಥಲ ಸಾಧನವು ಜೀವನ ಸಿದ್ದಾಂತವೆನಿಸಿದಂತೆ ವ್ಯಾವಹಾರಿಕ ಬದುಕಿನಲ್ಲೂ ಜೀವಾತ್ಮನು ಕೈಕೊಳ್ಳುವ ಪ್ರತಿಯೊಂದು ಕಾರ್ಯಗಳಲ್ಲಿ ಆರು ಹಂತಗಳು ಕಾಣಿಸಿಕೊಳ್ಳುತ್ತವೆ. ೧) ಮೊದಲು ಯಾವುದೊಂದು ಕೆಲಸವನ್ನು ಬಯಸಿ ಮಾಡಹತ್ತುತ್ತಾನೆ. ೨) ಕೆಲಸ ಮಾಡಿ ಫಲವನ್ನು ಪಡೆಯುತ್ತಾನೆ. ೩) ಪಡೆದುದನ್ನು ಸಂತಸದಿಂದ ಭೋಗಿಸುವನು 9) ಭೋಗಿಸಿದುದನ್ನು ಜೀರ್ಣಿಸಿಕೊಂಡು ಪ್ರಾಣವಾಗಿಸಿಕೊಳ್ಳುವನು ೫) ಪ್ರಾಣವಾಗಿಸಿಕೊಂಡುದುದಕ್ಕೆ ಶರಣಾಗುವನು ೬) ಶರಣಾದುದಕ್ಕೆ ಅದರೊಡಗೂಡುವನು.

 ಉದಾಹರಣೆಗೆ ಮಾವಿನ ಹಣ್ಣನ್ನು ತಿನ್ನಬಯಸುವದು ಬಯಸಿದುದನ್ನು ಪ್ರಯತ್ನಿಸಿ ಪಡೆಯುವದು, ಪಡೆದ ಹಣ್ಣನ್ನು ತಿನ್ನುವದು, ತಿಂದುದನ್ನು ರಕ್ತವನ್ನಾಗಿ ಪ್ರಾಣವಾಗಿಸಿಕೊಳ್ಳುವದು. ಅದರ ಆನಂದವನ್ನು ಅನುಭವಿಸುವದು. ಆ ಆನಂದದಲ್ಲಿ ಸಮರಸಗೊಳ್ಳುವದು. ಅರ್ಥಾತ್ ದೊರೆತ ಫಲವನ್ನು ಪಡೆದು ಸಂತೃಪ್ತಿಯನ್ನು ಹೊಂದುವದು. ಈ ತೆರನಾಗಿ ಪ್ರತಿಯೊಂದು ಜೀವನ ಕ್ರಿಯೆಯಲ್ಲಿ ಆರು ತೆರನಾಗುವಿಕೆಯು ಕಾಣಬರುವದರಿಂದ ಷಟ್‌ಸ್ಥಲವು ಜೀವನ ಸಿದ್ದಾಂತವೆಂಬುದು ಸ್ಪಷ್ಟವಾಗುತ್ತದೆ. ನಾಗಲಿಂಗದ ಪುಷ್ಪಗಳನ್ನು ಪರೀಕ್ಷಿಸಿದರೆ ಎಲ್ಲ ಹೂಗಳು ಆರಾರು ದಳಗಳುಳ್ಳುದಾಗಿ ಕಾಣ ಬಂದಿತು. ಷಟ್‌ಸ್ಥಲವು ವೀರಶೈವ ಪಾರಿಭಾಷಿಕ ಪದ. ತಾತ್ವಿಕ ಹಿನ್ನೆಲೆಯುಳ್ಳುದು ತಾತ್ವಿಕವಾಗಿರುವಂತೆ, ವೈಜ್ಞಾನಿಕವೂ ವ್ಯಾವಹಾರಿಕವೂ ಆಗಿದೆ.

 ಸ್ಥಲದ ವ್ಯಾಖ್ಯಾನ :

ವೈಜ್ಞಾನಿಕವಾಗಿ ಸೃಷ್ಟಿಯ ವಿಸ್ತಾರದ ವಿಚಾರದಲ್ಲಿ ‘’ಮಹಾಸ್ಪೋಟ’’ ಸಿದ್ಧಾಂತವನ್ನು ವಿವರಿಸುತ್ತಾರೆ. ಅದಕ್ಕೆ ಬಿಗ್ ಬ್ಯಾಂಗ್ ಥೇರಿ’ ಎನ್ನುವರು. ವೀರಶೈವರು ಪ್ರಕೃತಿಯ ಪ್ರಾದುರ್ಭಾವವನ್ನು ಪ್ರಣವದಿಂದ ನಿರೂಪಿಸಿರುವರು. ಪ್ರಣವದ ನಾದಬಿಂದು ಕಲೆಗಳ ವಿಸ್ತಾರದಲ್ಲಿ ಸೃಷ್ಟಿಯು ಮೈದೋರಿದೆ. ನಾದ- ಬಿಂದು-ಕಲೆಗಳಿಂದ ನಕಾರಾದಿ ಪ್ರಣವಾಕ್ಷರಗಳು ಉದಿಸುವವು. ಈ ವಿಚಾರವಾಗಿ ಜಂಗಮ ಪುಂಗವರಾದ ಶ್ರೀ ಅಲ್ಲಮಪ್ರಭು ದೇವರ ವಚನ ಇಂತಿದೆ.

ಆದಿ ಅನಾದಿ ಇಲ್ಲದಂದು ಹಮ್ಮು ಬಿಮ್ಮುಗಳಿಲ್ಲದಂದು

ಸುರಾಳ-ನಿರಾಳವಿಲ್ಲದಂದು, ಶೂನ್ಯ-ನಿಶೂನ್ಯವಿಲ್ಲದಂದು,

ಸಚಾರಚರವೆಲ್ಲ ರಚನೆಗೆ ಬಾರದಂದು

ಗುಹೇಶ್ವರನೊಬ್ಬನೆ ಇದ್ದೆಯಲ್ಲ ಇಲ್ಲದಂತೆ

 ಜಗತ್ ಸೃಷ್ಟಿಯ ಮುನ್ನ ಸೃಷ್ಟಿಕರ್ತ ಹೇಗಿದ್ದನೆಂಬುದನ್ನು ವಿವೇಚಿಸಿದ್ದರೆ : ಇಂಥ ನಿಃಕಲ ಅಥವಾ ನಿಶ್ಶೂನ್ಯದಿಂದಲೇ ಮಹಾಲಿಂಗ ಆವಿರ್ಭಾವವಾಗುವುದು. ಅದರಿಂದಲೇ ಜಗದುತ್ಪತ್ತಿಯಾಗುವುದೆಂದೂ   ತತ್ವಗಳ ವಿಸ್ತಾರವಾಗುವದೆನ್ನುವ ತೋಂಟದ ಸಿದ್ಧಲಿಂಗೇಶ್ವರರು-

ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತು

ಆ ಚಿತ್ತಿನಿಂದ ಕಾರ ಉಕಾರ ಮಕಾರಗಳೆಂಬ ಅಕ್ಷರತ್ರಯಂಗಳಾದವು

ಅಕಾರವೇ ನಾದ, ಉಕಾರವೇ ಬಂದು, ಮಕಾರವೆ ಕಳೆ

ಇಂತೀ ತ್ರಿವಿಧಕ್ಕೆ ತಾಯಿ ಒತ್ತು

ಇಂತಿ ನಾಲ್ಕು ಒಂದಾದಲ್ಲಿ ಓಂಕಾರವೆಂಬ ಪ್ರಣವದುತ್ಪತ್ತಿಯಾಯಿತ್ತು

ಆ ಓಂಕಾರವೆಂಬ ಪ್ರಣವೇ

ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿಯಪ್ಪ

ಮಹಾಲಿಂಗ ನೋಡಾ. ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ

ಎಂದು ನಿರೂಪಿಸಿರುವರು. ಆ ಓಂಕಾರ ಪ್ರಣವವೇ ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಮಹಾಲಿಂಗವೆನಿಸುವದು. ಅದುವೆ ಷಟ್‌ಸ್ಥಲದ ‘ಸ್ಥಲ’ ಶಬ್ದಕ್ಕೆ ವಾಚ್ಯವೆನಿಸುವದು.

 ‘ಸ್ಥಲ’ ವೆಂದರೆ ಶಬ್ದಕೋಶವು(ನಾ) ೧. ನೆಲ, ಭೂಮಿ, ೨. ಸ್ಥಲ ೩. ಜಮೀನು ಹೊಲ ೪, ಗ್ರಂಥದ ಒಂದು ಭಾಗ, ಪರಿಚ್ಛೇದ

 ೫. ಮೆಟ್ಟಿಲು, ಹಂತ, ಎಂದು ಅರ್ಥೈಸಿದೆ. ಈ ಅರ್ಥಗಳು ವ್ಯಾವಹಾರಿಕವಾಗಿವೆ. ಆದರೆ ವೀರಶೈವ ಧಾರ್ಮಿಕ ಪರಂಪರೆಯಲ್ಲಿ ಸ್ಥಲ ಶಬ್ದಕ್ಕೆ ಮೇಲಿನ ಅರ್ಥಗಳು ಅನ್ವಯಿಸುವುದಿಲ್ಲ. ಇಲ್ಲಿ ‘ಸ್ಥಲ’ ಪದದ ಅರ್ಥ ಭಿನ್ನವಾಗಿದೆ. ಸ್ಥಲ ಶಬ್ದದ ಪಾರಿಭಾಷಿಕತೆಯನ್ನು ಶಾಸ್ತ್ರಕಾರರು-

ಏಕಮೇವ ಪರಂ ಬ್ರಹ್ಮ ಸಚ್ಚಿದಾನಂದ ಲಕ್ಷಣಂ |

ಶಿವತತ್ತ್ವಂ ಶಿವಾಚಾರ್ಯಃ  ಸ್ಥಲಮಿತ್ಯಾಹುರಾದರಾತ್ ||

ಸರ್ವೇಷಾಂ ಸ್ಥಾನಭೂತತ್ವಾಲ್ಲಯಭೂತತ್ವತಸ್ತತಃ |

ತ್ವಾನಾಂ ಮಹದಾದೀನಾಂ ಸ್ಥಲ ಮಿತ್ಯಭಿದೀಯತೇ

ಎಂದು ವಿಸ್ತರವಾಗಿ ನಿರೂಪಿಸಿದ್ದಾರೆ. ಜಗತ್ತಿನಲ್ಲಿ ʼʼಏಕಮೇವಾದ್ವಿತೀಯಂ ಬ್ರಹ್ಮʼʼ ವೆಂಬ ಶ್ರುತಿ ಪ್ರಮಾಣದಂತೆ ತನ್ನಂತೆ ಅನ್ಯವಿಲ್ಲದುದು, ತಾನೊಂದೇ ಒಂದಾದುದು, ಅದುವೆ ಪರಬ್ರಹ್ಮವೆನಿಸಿದೆ. ಸತ್-ಚಿತ್-ಆನಂದ ಸ್ವರೂಪ ಲಕ್ಷಣದಿಂದ ಕೂಡಿದೆ. ಇದನ್ನೇ ನಮ್ಮವರು ಶಿವತತ್ತ್ವವೆಂದು ಗುರುತಿಸಿದರು. ಇದುವೆ ಪರಮಶಿವತತ್ವವೂ ಅಹುದು. ಇದನ್ನೆ ‘ಸ್ಥಲʼ ವೆಂದೂ ಹೇಳುವರು. ಆ ಶಿವತತ್ತ್ವವು ಮಹತ್ ತತ್ವವೇ ಆದಿಯಾದ ಸಕಲ ತತ್ವಗಳಿಗೆ ಆಧಾರಭೂತ (ಆಶ್ರಯಭೂತ) ವೂ ಲಯಭೂತವೂ ಆಗಿರುವದರಿಂದ ಸ್ಥಲವೆಂದು ಕರೆಯಲ್ಪಟ್ಟಿತು. ಒಟ್ಟಿನಲ್ಲಿ ಈ ಜಗತ್ತು ಮೊದಲು ಸ್ಥಿತಿಯನ್ನು ನಂತರದಲ್ಲಿ ಲಯವನ್ನು ಯಾವ ತತ್ವದಲ್ಲಿ ಹೊಂದುವುದೋ ಅದೇ ಸ್ಥಲವೆಂದು ಹೇಳಲ್ಪಡುವದು’. ಈ ವಿಚಾರದಲ್ಲಿ ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ-

ಏಕಏವ ಶಿವಸಾಕ್ಷಾಚ್ಛಿದಾನಂದಮಯೋ ವಿಭುಃ

ನಿರ್ವಿಕಲ್ಪೊ ನಿರಾಕಾರೋ ನಿರ್ಗುಣೋ ನಿಷ್ಟ್ರಪಂಚಕಃ

ಶಿವನೆಂದರೆ ಕೈಲಾಸಪತಿ ಎಂದು ವೀರಶೈವರು ಹೇಳುವದಿಲ್ಲ. ಇವನು ಪಾರ್ವತಿ ಪತಿಯೂ ಅಲ್ಲ. ಪೌರಾಣಿಕ ಶಿವನ ಸಂಬಂಧ ಇಲ್ಲಿಲ್ಲ. ಏಕೇಶ್ವರ ಅರ್ಥಾತ್ ಸರ್ವೇಶ್ವರನಾದವನು ಪರಶಿವನು. ಅವನೇ ಅದ್ವಿತೀಯನು. ಅವನಂತೆ ಬೇರಾರು ಇಲ್ಲದವನು, ಶಾಸ್ತ್ರಕಾರರು ಪ್ರತಿಪಾದಿಸಿದಂತೆ ಪರಶಿವನು ಸ್ವಗತ ಸಜಾತೀಯ- ವಿಜಾತಿಯಗಳೆಂಬ ಮೂರು ಭೇದಗಳಿಂದ ದೂರಾದವನು. ಸ್ವಗತವೆಂದರೆ ತನ್ನಲ್ಲಿಯದು. ಮಾನವನ ಶರೀರದಲ್ಲಿರುವ ಕೈ ಕಾಲು-ಬಾಯಿ-ಮೂಗು ಮುಂತಾದ ಅವಯವಗಳು ಒಂದರಂತೆ ಇನ್ನೊಂದಿಲ್ಲ. ಎಲ್ಲವೂ ಭಿನ್ನವಾಗಿವೆ. ಹಾಗೆ ಗಿಡಮರಗಳಲ್ಲಿ, ಪ್ರಾಣಿಗಳಲ್ಲಿ ಭೇದವನ್ನು ಗುರುತಿಸಬಹುದು. ಇನ್ನು ಎರಡನೆಯದು ಸಜಾತೀಯ ಭೇದ, ರಾಮ-ಲಕ್ಷ್ಮಣರು ಸಹೋದರರಾದರೂ ಇಬ್ಬರಲ್ಲಿ ಭಿನ್ನತೆಯಿರುತ್ತದೆ. ಗಿಡ ಮರಗಳು ಸಜಾತೀಯವಾದರೂ ಬೇರೆ ಬೇರೆಯಾಗಿ ಕಾಣಬರುತ್ತವೆ. ವಿಜಾತೀಯವೆಂದರೆ ಬೇರೆ ಬೇರೆ ಜಾತಿಗಳು, ಮಾನವರದು ಒಂದು ಜಾತಿಯಾದರೆ ಪ್ರಾಣಿಗಳದು ಮತ್ತೊಂದು ಜಾತಿ, ಹಾಗೆ ಪಕ್ಷಿಗಳದು ಅನ್ಯ ಜಾತಿ, ಇವು ಪರಸ್ಪರ ವಿಜಾತಿಯವೆನಿಸುತ್ತವೆ. ಇವು ಮೂರು ಜಾತಿಗಳು ಪರಶಿವನಲ್ಲಿ ಕಾಣುವದಿಲ್ಲ. ಅವನು ನಿರಾಕಾರನಾದ್ದರಿಂದ ಅವಯವಾದಿಗಳಿಲ್ಲ, ಅದಕ್ಕಾಗಿ ಸ್ವಗತ ಭೇದವಿಲ್ಲ. ಅವನಿಗೆ ಸಮನಾದವ ಮತ್ತೊಬ್ಬನಿಲ್ಲವಾದ್ದರಿಂದ ಸಜಾತೀಯ ಭೇದವೂ ಇಲ್ಲ. ಆತ ಅದ್ವಿತೀಯನು. ವಿಜಾತೀಯ ಭೇದವೂ ಇಲ್ಲಿ ಬರುವುದಿಲ್ಲ. ಶಿವನು ಸಚ್ಚಿದಾನಂದ ಸ್ವರೂಪನಾಗಿರುವ ದರಿಂದಲೇ ‘ಪ್ರಭು’ ಎನಿಸುತ್ತಾನೆ. ವಿಭುವೆಂದರೆ ವ್ಯಾಪಕನಾದವನು. ಸರ್ವಾಂತರ್ಯಾಮಿ ಪರಶಿವನು. ಪ್ರಪಂಚಕ್ಕೆ ಅವಕಾಶವಿತ್ತುದು ಆಕಾಶವಾದರೆ, ಈ ಆಕಾಶಕ್ಕೂ ಅವಕಾಶಕೊಟ್ಟ ಪರಮಾತ್ಮನು ಮಹಾವ್ಯಾಪಕನು. ಅವನಿಗೆ ಮತ್ತಾವುದೂ ಅವಕಾಶ ಕೊಟ್ಟಿಲ್ಲ. ಅವನೇ ಸಕಲಕೆಲ್ಲ ವ್ಯಾಪಕನಾದ ಕಾರಣ ಅವನು ವಿಭುವೆನಿಸಿದ್ದಾನೆ. ನಿರಾಕಾರ ಪರಶಿವನ ಅಸ್ತಿತ್ವವನ್ನು ಮನ್ನಿಸುವುದಾದರೆ ಅವನು ಕಾಣುವದಿಲ್ಲವೇಕೆ ? ಎಂಬ ಪ್ರಶ್ನೆ ಸಹಜವಾದುದು. ನಿರಾಕಾರವೆಂದರೆ ಆಕಾರವಿಲ್ಲದವನು. ಅವಯವವುಳ್ಳವನಿಗೆ ಸಾಕಾರವೆನ್ನುವರು. ಅವಯವಗಳು ಸಹಜ ಬರುವುದಿಲ್ಲ. ಇವು ಜನ್ಯವಾದವುಗಳು.  ತಾಯಿಯ ಗರ್ಭದಲ್ಲಿಯೇ ಅವಯವಗಳು ಮೂಡಿ ಬರುತ್ತವೆ. ಪರಮಾತ್ಮನು ಜನಿಸುವದಿಲ್ಲವಾದುದರಿಂದ ಅವನಿಗೆ ಅವಯವವಿಲ್ಲ. ಆತ ನಿರಾಕಾರ, ಆತನು ಜನಿ(ಹುಟ್ಟಿ)ಗೆ ಒಳಗಾಗಿದ್ದರೆ, ಒಂದು ದಿನ ಮರಣವನ್ನು ಹೊಂದಬೇಕಾಗುತ್ತಿತ್ತು ಜನಿಮೃತಿಗಳಿಗೆ ಹೊರಗಾದವನು. ಅವನು ಅವಿನಾಶಿಯಾಗಿದ್ದಾನೆ. ಸಾವಯವಿ ಸಾಕಾರ ವ್ಯಕ್ತಿಯಲ್ಲಿ ಸೌಂದರ್ಯವೂ ಇರಬಹುದು. ಕುರೂಪವೂ ಇರಬಹುದು. ಶಿವನು ನಿರವಯವಿ, ನಿರಾಕಾರನು. ಆದರೆ ಅವನು ಕೇವಲ ಸೌಂದರ್ಯಭರಿತನು.ʼʼ ಸತ್ಯಂ ಶಿವಂ ಸುಂದರಂʼ’ ಎಂದು ವೇದವು ವರ್ಣಿಸಿದೆ. ನಿರಾಕಾರ ಪರಶಿವನ ಅನುಪಮ ಸೌಂದರ್ಯಕ್ಕೆ ಆತ್ಮಜ್ಞಾನಿಗಳು ಮಾರು ಹೋಗುತ್ತಾರೆ. ಆತ್ಮ ಸೌಂದರ್ಯವೇ ಮುಖ್ಯವಾಗಿರುವದು. ವೀರವೀರಾಗಿಣಿ ಅಕ್ಕಮಹಾದೇವಿಯು ವರಿಸಿದ ಪತಿಯ ವರ್ಣನೆ ಹೀಗಿದೆ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವಂಗೆ ನಾನೊಲಿದೆ

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ

ಚಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ

ಭವವಿಲ್ಲದ ಭಯವಿಲ್ಲದ ನಿರ್ಭಯ ಚಲುವಂಗೊಲಿದೆ ನಾನು

ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು

ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ

ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ

ಹೀಗೆ ನಿರಾಕಾರದ ಚಲುವ ಚನ್ನಿಗ ಚನ್ನಮಲ್ಲಿಕಾರ್ಜುನನಿಗೆ ಮಾರು ಹೋದವಳು ಅಕ್ಕಮಹಾದೇವಿ. ಸಾಮಾನ್ಯವಾಗಿ ರೂಪಿದ್ದರೆ ಕೆಡಕುಂಟು, ತೊಡಕುಂಟು, ಕೊನೆಗೆ ಸಾವುಂಟು. ಆದರೆ ಈ ಚನ್ನಿಗ ಚಲುವ ರೂಪಿಲ್ಲದ ರೂಪವಂತ, ಕುರುಹಿಲ್ಲದ ಕಲಾವಂತ, ಆ ವೀರವಿರಾಗಿಣಿ ಮಹದೇವಿ ಅಕ್ಕನ ಮನವನ್ನು ಸೂರೆಗೊಂಡಿದ್ದಾನೆ, ಪರಶಿವ, ಕೊನೆಗೆ ಅವಳಿಗೆ ಭವದ ಭಯವಿಲ್ಲ; ಆತನು ನಿರ್ಭಯ ಚೆಲುವನು, ಸೀಮೆಯಿಲ್ಲದ ನಿಸ್ಸೀಮನು. ಲೌಕಿಕದಲ್ಲಿ ರೂಪಿನ ಚಿಲುವು ಚರ್ಮ ಚಕ್ಷುಗಳಿಗೆ ಮಾತ್ರ ಗೋಚರವಾಗುತ್ತದೆ. ಈ ಪರಶಿವನು ಕೇವಲ ಜ್ಞಾನ ನೇತ್ರಕ್ಕೆ ಅನುಭಾವ ಭಕ್ತಿಗೆ ಮಾತ್ರ ವೇದ್ಯವಾಗುವನು. ಶಿವನು ನಿರ್ಗುಣನೂ ಆಗಿರುವದರಿಂದ ಸದ್ಗುಣ ಶೀಲರಿಗೆ ತೋರವನು.

 ವೀರಶೈವ ದಾರ್ಶನಿಕ ಸಿದ್ಧಾಂತದಲ್ಲಿ ಪ್ರತಿಪಾದಿಸಲ್ಪಡುವ ‘ಸ್ಥಲ’ ಪದವು ಪರಶಿವ ವಾಚ್ಯವಾಗಿರುವಂತೆ ಅವನು ಶಕ್ತಿ ವಿಶಿಷ್ಟನೆಂಬುದನ್ನು ವಿವರಿಸಲಾಗಿದೆ. ಪರಶಿವನಿಗೂ ಶಕ್ತಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕಾಗಿ ‘ನ ಶಿವೇನ  ವಿನಾಶಕ್ತಿರ್ನಶಕ್ತಿ ರಹಿತಃ ಶಿವಃʼʼ ಶಿವನನ್ನು ಹೊರತುಪಡಿಸಿ ಶಕ್ತಿ ಇಲ್ಲ. ಶಕ್ತಿಯನ್ನು ಬೇರ್ಪಡಿಸಿ ಶಿವನಿಲ್ಲ. ಶಿವನಲ್ಲಿಯ ಶಕ್ತಿಯನ್ನು ಬೇರೆ ಮಾಡಿದರೆ ಶವನೆನಿಸುವನು. ವೀರಶೈವ ಸಿದ್ಧಾಂತವು ಶಕ್ತಿವಿಶಿಷ್ಟಾದ್ವೈ ತ” ವೆನಿಸಿದೆ. ಶಕ್ತಿವಿಶಿಷ್ಟನಾದ ಪರಶಿವನು ಲೀಲೆಗಾಗಿ ʼʼಏಕೋಹಂ ಬಹುಸ್ಯಾಂ ಪ್ರಜಾಯೇಯ” ಎಂಬ ಉಪನಿಷನ್ಮಂತ್ರದಂತೆ ತಾನೊಬ್ಬನೇ ಇರುವದು ಸರಿಯಲ್ಲ ; ನಾನು ಬಹಳ ವಿಸ್ತಾರವಾಗಬೇಕೆಂಬ ಸಂಕಲ್ಪ ಮಾಡಲಾಗಿ ಉಪಾಸ್ಯ ಮತ್ತು ಉಪಾಸಕ ಭೇದದಿಂದ ಲಿಂಗ ಹಾಗೂ ಅಂಗವೆಂದು ಎರಡು ತೆರನಾಗುವದು. ಇಲ್ಲಿ ಲಿಂಗವು ಉಪಾಸ್ಯವಾದರೆ, ಅಂಗವು ಉಪಾಸಕವೆನಿಸುವದು. ಉಪಾಸ್ಯವೆಂದರೆ ಪೂಜ್ಯ ವಸ್ತು, ಉಪಾಸಕನೆಂದಾದರೆ ಪೂಜ್ಯ ವಸ್ತುವನ್ನು ಪೂಜಿಸುವವನು. ಈ ವಿಚಾರವನ್ನು ಸಿದ್ಧಲಿಂಗ ಯತಿಗಳು ವಿಸ್ತಾರವಾಗಿ ತಮ್ಮ ವಚನದಲ್ಲಿ ವಿವರಿಸಿರುವರು.

ಷಟ್ ಸ್ಥಲದ ವಿಕಾಸ :

ಆ ನಿಃಕಲ ಶಿವತತ್ವ ತಾನೊಂದೆ

ತನ್ನ ಶಕ್ತಿಯ ಚಲನೆ ಮಾತ್ರದಿಂದ

ಒಂದೆರಡಾಯಿತು ನೋಡಾ.

ಅದರೊಳಗೆ ಒಂದು ಲಿಂಗಸ್ಥಲ ಮತ್ತೊಂದು ಅಂಗಸ್ಥಲ

ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕವೆಂದು

ವರ್ತಿಸುತ್ತಿಹುದು ನೋಡಾ.

ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು

ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು

ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.

ಶಕ್ತಿಯೇ ಪ್ರವೃತ್ತಿಯೆನಿಸಿತ್ತು

ಭಕ್ತಿಯೇ ನಿವೃತ್ತಿಯೆನಿಸಿತ್ತು

ಶಕ್ತಿ-ಭಕ್ತಿಯೆಂದೆರೆಡು ಪ್ರಕಾರವಾಯಿತ್ತು ಶಿವನ ಶಕ್ತಿ

ಲಿಂಗವಾರು ತೆರನಾಯಿತು, ಅಂಗವಾರು ತೆರನಾಯಿತ್ತು

ಶಕ್ತಿಯಾರು ತೆರನಾಗಿತ್ತು, ಭಕ್ತಿಯಾರು ತೆರನಾಗಿತ್ತು

ಅದು ಹೇಂಗೆಂದಡೆ

 ಮೊದಲಲ್ಲಿ ಲಿಂಗ ಮೂರು ತೆರನಾಗಿತ್ತು

ಅದು ಹೇಂಗೆಂದಡೆ

 ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು

ಮೂರು ತೆರನಾಗಿತ್ತು

ಅಂಗವೂ ಮೂರು ತೆರನಾಯಿತ್ತು, ಅದು ಹೇಂಗೆಂದಡೆ

ಯೋಗಾಂಗವೆಂದು, ಭೋಗಾಂಗವೆಂದು, ತ್ಯಾಗಾಂಗವೆಂದು

ಅಂಗವು ಮೂರು ತೆರನಾಯಿತು

ಈ ತೆರನಾಗಿ ಷಟ್‌ಸ್ಥಲದ ವಿಕಾಸವು ವಿಸ್ತಾರವಾದುದನ್ನು ಅವಲೋಕಿಸಬಹುದು. ಪರಶಿವ ಲೀಲಾವಿಲಾಸಕ್ಕಾಗಿ ಉಪಾಸ್ಯ ಲಿಂಗವೆಂದು ಉಪಾಸಕ ಅಂಗವೆಂದು ಎರಡಾಯಿತು. ಎರಡಾದುದು ಮೂರು ಮೂರು ತೆರನಾಗುವದು. ಪ್ರತಿಯೊಬ್ಬ ಮಾನವನಿಗೆ ದೇಹವು ಸ್ಥೂಲ, ಸೂಕ್ಷ್ಮ, ಕಾರಣವೆಂದು ಮೂರರ ಅನುಭವವಾಗುವದು. ಕಾಣುವ ಶರೀರವೆ ಸ್ಥೂಲವು ನಿದ್ರಾವಸ್ಥೆಯಲ್ಲಿ ವ್ಯಕ್ತವಾಗುವದೇ ಸೂಕ್ಷ್ಮ ಶರೀರ, ಸುಷುಪ್ತ್ಯಾವಸ್ಥೆಯಲ್ಲಿ ಗೋಚರವಾಗುವದೇ ಕಾರಣ ಶರೀರ. ಮೂರು ಶರೀರಗಳಲ್ಲಿ ಅಂಟಿಕೊಂಡ ಕಾರ್ಮಿಕ ಮಲ, ಮಾಯಾಮಲ, ಆಣವ ಮಲಗಳೆಂಬ ಮೂರು ದೋಷಗಳು ಮೂರು ಶರೀರದಲ್ಲಿ ಮನೆ ಮಾಡಿರುವುದನ್ನು ಸದ್ಗುರುನಾಥನು ಮೂರು ದೀಕ್ಷೆಗಳಿಂದ ಪರಿಹರಿಸಿದಾಗ ಜೀವಾತ್ಮನು ಅಂಗನೆನಿಸುವನು. ಸ್ಥೂಲ ಶರೀರವು ತ್ಯಾಗಾಂಗವಾದರೆ, ಸೂಕ್ಷ್ಮ ಶರೀರ ಭೋಗಾಂಗವೆನಿಸುವದು. ಕಾರಣ ಶರೀರವು ಯೋಗಾಂಗವೆನಿಸುವದು. ಈ ಮೂರು ಅಂಗಗಳಿಗೆ ಕ್ರಮವಾಗಿ ಇಷ್ಟಲಿಂಗ-ಪ್ರಾಣಲಿಂಗ- ಭಾವಲಿಂಗಗಳನ್ನು ಗುರು ಕರುಣಿಸುತ್ತಾನೆ. ಮೂರಂಗಗಳು ಎರಡೆರಡು ಭಾಗವಾಗಿ ಭಕ್ತ ಮಹೇಶ-ಪ್ರಸಾದಿ-ಪ್ರಾಣಲಿಂಗಿ- ಶರಣ-ಐಕ್ಯವೆಂದು ಆರಾದರೆ, ಮೂರು ಲಿಂಗಗಳು ಆಚಾರಲಿಂಗ- ಗುರುಲಿಂಗ-ಶಿವಲಿಂಗ- ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗಗಳೆ೦ದು ಆರು ತೆರನಾಗುವದೇ ಷಟ್‌ಸ್ಥಲದ ವಿಕಾಸವಾಗುವುದು. ಇದರಂತೆ ಲಿಂಗಗತ ಕಲೆ ಹಾಗೂ ಶಕ್ತಿಯು ನಿವೃತ್ತಿ ಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆಗಳೆಂದು ಆರು ಕಲೆಗಳೆನಿಸುವವು. ಶಕ್ತಿಯು- ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ-ಚಿಚ್ಛಕ್ತಿಗಳೆಂದು ಆರು ತೆರನಾಗುವದು. ಅದರಂತೆ ಅಂಗಗತ ಭಕ್ತಿಯು ಶ್ರದ್ಧಾ-ನಿಷ್ಠಾ ಅವಧಾನ-ಅನುಭವ-ಆನಂದ ಸಮರಸವೆಂದು ಷದ್ವಿಧವಾಗುವದು.

 ವೀರಶೈವ ಸಿದ್ಧಾಂತವು ಪ್ರಾಯೋಗಿಕ ದರ್ಶನ’ ವೆಂಬ ವಿಚಾರವನ್ನು ಈ ಮೊದಲು ನಿರೂಪಿಸಲಾಗಿದೆ. ಮಹಾಲಿಂಗದಿಂದ ಆಚಾರ ಲಿಂಗದ ವಿಕಾಸವನ್ನು ಯೋಗಾಂಗದಿಂದ ತ್ಯಾಗಾಂಗ ವಿಚಾರವನ್ನು ಮಾಡುವದು ಪ್ರವೃತ್ತಿ ಮಾರ್ಗವೆನಿಸಿದರೆ ಭಕ್ತನು ನಿವೃತ್ತಿ ಕಲೆಯುಳ್ಳ ಕ್ರಿಯಾಶಕ್ತಿಯುಕ್ತ ಆಚಾರ ಲಿಂಗವನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಮಾರ್ಗವು ನಿವೃತ್ತಿ ಪಥವೆನಿಸುವದು. ಷಟ್‌ಸ್ಥಲವು ಹಂತ ಹಂತವಾಗಿ ಸೋಪಾನಗಳನ್ನು ಹತ್ತುವದೇ ಆಗಿದೆ. ಭಕ್ತಾದಿ ಸ್ಥಲಗಳಲ್ಲಿ ಆಚಾರಾದಿ ಲಿಂಗಗಳ ಆರಾಧನೆಗೆವುದೇ ಷಟ್‌ಸ್ಥಲ ಸಾಧನವೆನಿಸುವದು. ಪ್ರವೃತ್ತಿಯಿಂದ ನಿವೃತ್ತಿಯತ್ತ ಸಾಗುವುದೇ ಷಟ್‌ಸ್ಥಲದ ಮಣಿಹ. ಅಷ್ಟೇ ಅಲ್ಲ ಸಾಧನೆಯಿಂದ ಸಾಮರಸ್ಯವನ್ನು ಸಾಧಿಸುತ್ತಾ ಅಂಗವೇ ಲಿಂಗ, ಲಿಂಗವೇ ಅಂಗ, ಲಿಂಗವೇ ತಾನಾಗುವುದು ಷಟ್‌ಸ್ಥಲದ ಮುಖ್ಯ ಧ್ಯೇಯ.

೧. ಭಕ್ತಸ್ಥ

ಪರಶಿವನ ಷಟ್‌ಶಕ್ತಿಗಳ ಸಂಕೋಚದಿಂದ ಜೀವಿಗಳಾಗಿ ಪರಿಣಮಿಸಿದರೆ; ಆ ಷಟ್‌ಶಕ್ತಿಗಳ ವಿಕಾಸವೇ ಷಟ್‌ಸ್ಥಲದ ಸಾಧನೆ. ಪರಮಾತ್ಮನ ಶಕ್ತಿ ಸಂಕೋಚತನವುಳ್ಳ ಜೀವಾತ್ಮನು ಷಟ್‌ಶಕ್ತಿಗಳ ಆವಿಷ್ಕಾರ ಮಾಡಿಕೊಳ್ಳುತ್ತಾ ಸಾಧನೆಯನ್ನು ಪ್ರಾರಂಭಿಸುವನು. ಈ ಜೀವಾತ್ಮನು ಶ್ರೀಗುರು ಕೃಪೆಯಿಂದ ಇಷ್ಟಲಿಂಗವನ್ನು ಪಡೆದಾಗ ಪ್ರಾಣಸ್ವರೂಪವೆನಿಸಿದ ಪಂಚಾಚಾರಗಳು ಮುಹೂರ್ತಗೊಳ್ಳುವವು. ಇಷ್ಟಲಿಂಗ ಧಾರಣೆಯಿಂದ ಲಿಂಗಾಚಾರವು ಅಳವಡುವುದು. ಲಿಂಗಾಚಾರಿಯಾದ ಭಕ್ತನು ಸದಾಚಾರಗಳನ್ನು ತಪ್ಪದೆ ಆಚರಿಸಬೇಕು. ಸಾಮಾನ್ಯವಾಗಿ ಯಾವುದೊಂದು ಕಾರ್ಯಪ್ರವೃತ್ತನಾಗುವ ಮಾನವನ ಉದ್ದೇಶ ಸಂತೃಪ್ತಿಯನ್ನು ಪಡೆಯುವುದೇ ಆಗಿರುವಂತೆ; ಸಾಗರದಿಂದ ಆವಿಯಾಗಿ ಬೇರ್ಪಟ್ಟ ನೀರಿನ ಹನಿಯು ಪುನಃ ಸಾಗರ ಸೇರುವವರೆಗೆ ಸಮಾಧಾನವಿಲ್ಲದೆ ಚಂಚಲವಾಗಿರುತ್ತದೆ. ಆವಿಯಾಗಿ ಮೇಲೆ ಹೋಗಿ ಮೋಡವಾದರೂ ಅದಕ್ಕೆ ಸಮಾಧಾನವಿರುವುದಿಲ್ಲ. ಇತ್ತಿಂದತ್ತ ಅತ್ತಿಂದಿತ್ತ ಸಂಚರಿಸುತ್ತಲೇ ಇರುವದು. ಗುಡುಗುಡಿಸಿ ಅರ್ಭಟಿಸುವದು ಮಳೆಯ ಹನಿಯಾಗಿ ಭೂಮಿಯತ್ತ ಧಾವಿಸುವಾಗ ಮತ್ತಷ್ಟು ತೀವ್ರತೆಯಿರುತ್ತದೆ. ಆ ತೀವ್ರತೆ ಮುಂದುವರೆದು ಹಳ್ಳಕೊಳ್ಳವಾಗಿ ನದಿಯ ಮೂಲಕ ಸಾಗರ ಸೇರಿ ಶಾಂತಿಯನ್ನು ಹೊಂದುವದು. ನಿರಂತರ ಚಲನಶೀಲವಾದ ನೀರು ಸ್ವಚ್ಛವಾಗಿರುವಂತೆ ಸಾಧನ ಶೀಲನಾದ ಸದ್ಭಕ್ತನು ಅತ್ಯಂತ ಶುದ್ಧನೂ ಪವಿತ್ರನೂ ಆಗಿ ಪರಿಣಮಿಸುವನು.

 ಷಟ್‌ಸ್ಥಲದಲ್ಲಿ ಪ್ರಥಮ ಸ್ಥಲವೇ ಭಕ್ತಸ್ಥಲ. ಇದು ತ್ಯಾಗಾಂಗದ ಪ್ರಥಮ ಹಂತವೆನಿಸಿದೆ. ತ್ಯಾಗಾಂಗದಲ್ಲಿ ಭಕ್ತಸ್ಥಲ ಮತ್ತು ಮಹೇಶ್ವರ ಸ್ಥಲಗಳೆಂದು ವಿಭಾಗವಾಗಿವೆ. ಆದಯ್ಯ ಶರಣನು “ತನುಗುಣವಳಿದಲ್ಲಿ ತ್ಯಾಗಾಂಗ” ಎಂದು ತ್ಯಾಗಾಂಗದ ವ್ಯಾಖ್ಯಾನ ಮಾಡಿರುವನು. ತನುವಿನಲ್ಲಿ ಅನಂತ ಗುಣಗಳು-ದುರ್ಗುಣಗಳು ಸಂಭವಿಸುತ್ತವೆ.

 ಅವಿರಳ ಜ್ಞಾನಿ ಶ್ರೀ ಚನ್ನಬಸವಣ್ಣನವರು “ಕರಣಹಸಿಗೆ’ ಯಲ್ಲಿ ತನುವಿನಲ್ಲಿ ಉದ್ಭವಿಸುವ ಅಷ್ಟಮದಗಳನ್ನು, ಸಪ್ತವ್ಯಸನಗಳನ್ನು, ಷಡೂರ್ಮಿಗಳನ್ನು, ಅರಿಷಡ್ ವೈರಿಗಳನ್ನು, ಷಡ್‌ ಭ್ರಮೆಗಳನ್ನು ಷದ್ಭಾವ ವಿಕಾರಗಳನ್ನು, ತ್ರಿದೋಷಗಳನ್ನು, ಸದ್ಭಾವ-ದುರ್ಭಾವತ್ರಯ ಇತ್ಯಾದಿ ವಿಷಯಗಳನ್ನು ವಿವರಿಸಿರುವರು. ಇವೆಲ್ಲವುಗಳಿಗೆ ಮೂಲವಾದುದು ಅಹಂಭಾವ, ತಾನಲ್ಲದ್ದನ್ನು ತಾನೆಂದು ಭಾವಿಸಿ ಅಭಿಮಾನ ಪಡುವ ಚಿತ್ತವೃತ್ತಿಗೆ ಅಹಂಕಾರವೆನ್ನುವರು. ಕುಲ-ಛಲ ಧನ-ರೂಪ-ಯೌವನ- ವಿದ್ಯೆ-ರಾಜ್ಯ-ತಪಸ್ಸುಗಳೆಂಬ ಅಷ್ಟಮದಗಳು, ಮದವೆಂದರೆ ಮತ್ತು, ಅಮಲು, ಸೊಕ್ಕು, ಗರ್ವವೆಂದು ಕೋಶಕಾರರು ತಿಳಿಸಿರುವರು. ನಾವು ಉತ್ತಮ ಕುಲದಲ್ಲಿ ಜನಿಸಿದವರೆಂಬುದು, ಉಳಿದವರು ನಮಗೆ ಸರಿಯಲ್ಲವೆ೦ಬ ಭಾವವೇ ಮದ, ಛಲವೆ೦ದರೆ ಹಟ, ಯಾವುದೇ ವಿಷಯದಲ್ಲಾದರೂ ನನ್ನದೇ ಮೇಲೆಂಬ ಹಟವೇ ಛಲ ಮದ, ಶ್ರೀಮಂತಿಕೆ ಹೆಚ್ಚಾದಾಗ ಧನಮದ ಆವರಿಸುವದು. ನನ್ನ ರೂಪ ಲಾವಣ್ಯಕ್ಕೆ ಯಾರೂ ಸರಿಯಿಲ್ಲವೆಂಬುದು ರೂಪಮದ, ವಯಸ್ಸಿಗೆ ಬಂದವನಲ್ಲಿ ಯೌವನಮದ ಸಹಜವಾಗುವದು. ನನ್ನ ಪಾಂಡಿತ್ಯಕ್ಕೆ ಬೇರಾರೂ ಸಮಾನರಲ್ಲವೆಂಬುದು ವಿದ್ಯಾಮದ, ಇಂದಿನ ದಿನಮಾನಗಳಲ್ಲಿ ಪ್ರಜಾಪ್ರಾತಿನಿಧ್ಯದ ಅಧಿಕಾರವೇ ರಾಜ್ಯಮದ, ಸನ್ಯಾಸಿಗಳಿಗೆ ತಪಸ್ಸು, ಅನುಷ್ಠಾನದ ಮದ ಆವರಿಸುವದು.  ಅಭಕ್ಷ್ಯಭಕ್ಷಣ, ಅಪೇಯಪಾನ ಜೂಜಾಟ, ವೇಶ್ಯಾಗಮನ, – ಕಠೋರ ಮಾತನಾಡುವದು, , ಬೇಟೆಯಾಡುವದು, ಕಳವು ಮಾಡುವದು, ಇವೆಲ್ಲವೂ ತನುವಿನಿಂದಲೇ ನಡೆಯುತ್ತವೆ. ಹಸಿವು, ನೀರಡಿಕೆ, ದುಃಖ, ವ್ಯಾಮೋಹ, ಮುಪ್ಪು- ಮರಣಗಳೆ ದೇಹಕ್ಕೆ ಆವರಿಸುವ ತೆರೆಗಳು. ಕಾಮ, ಕ್ರೋಧ, ಲೋಭ, ಮೋಹ, ಮದ-ಮತ್ಸರಗಳು ಅನಿಮಿತ್ತವಾಗಿ ತನುವಿನಲ್ಲಿ ಉದ್ಭವಿಸುವ ವೈರಿಗಳು, ಜಾತಿ-ವರ್ಣ- ಆಶ್ರಮ-ಕುಲ-ಗೋತ್ರ-ನಾಮಗಳೆಂಬ ಆರು ವಿಕಾರಗಳಿಂದ ತನು ಕೂಡಿದೆ. ತಾಯಿ ಹೊಟ್ಟೆಯಲ್ಲಿ ಗರ್ಭವುಂಟಾಗುವದು, ಗರ್ಭಾವಾಸದಿಂದ ಹೊರ ಬರುವದು, ಕ್ರಮೇಣ ಪರಿಣಾಮ ಹೊಂದುವದು, ಬಹಳವಾಗಿ ಬೆಳೆಯುವದು, ಮುಪ್ಪಿನಿಂದ ಕುಸಿಯುವದು, ಕೊನೆಗೆ ಸಾಯುವದು. ಅವಿದ್ಯೆ-ಅಸ್ಮಿತೆ- ರಾಗ-ದ್ವೇಷ-ಅಭಿನಿವೇಶಗಳೆಂಬ ಪಂಚಕ್ಲೇಶಗಳಿಂದ ಕೂಡಿದೆ. ಸತ್ವ-ರಜ-ತಮಸ್ಸಗಳೆಂಬ ಗುಣತ್ರಯಗಳಿವೆ. ಈ ಮೂರು ಗುಣಗಳಿಂದ ಮೂರಹಂಕಾರಗಳುಂಟಾಗುತ್ತವೆ. ಅಧ್ಯಾತ್ಮಿಕ-ಆದಿಭೌತಿಕ, ಆದಿದೈವಿಕಗಳೆಂಬ ತಾಪತ್ರಯಗಳು ಬರುತ್ತವೆ. ಜಾಗ್ರ-ಸ್ವಪ್ನ-ಸುಷುಪ್ತಿಗಳೆಂಬ ಮೂರವಸ್ಥೆಗಳು ಜರುಗುತ್ತವೆ. ಶರೀರವು ವಾತ-ಪಿತ್ತ-ಶ್ಲೇಷಗಳೆಂಬ ಅನೇಕ ರೋಗಗಳಿಗೆ ತುತ್ತಾಗುವದು. ಸದ್ಭಾವನೆಗಳು- ದುರ್ಭಾವನೆಗಳು ಶರೀರದಲ್ಲಿ ಕಾಣಬರುತ್ತವೆ. ಹೀಗೆ ಅನೇಕ ಗುಣಗಳಿಗೆ ಆಕರವಾಗಿರುವ ದೇಹದ ಗುಣಗಳನ್ನು ಭಕ್ತನಾದವನು ಕಳೆದುಕೊಳ್ಳಬೇಕಾಗುವದು. ಸ್ಪಟಿಕದ ಘಟದಂತೆ ಒಳಹೊರಗೂ ಶುದ್ಧನಾದರೆ ಮಾತ್ರ ಭಕ್ತತನ ಬರುವದು. ಬಸವಣ್ಣನವರು-

 ಒಳಗೆ ಕುಟಿಲ, ಹೊರಗೆ ವಿನಯವಾಗಿ

 ಭಕ್ತರೆನಿಸಿಕೊಂಡವರ ಬಲ್ಲನೊಲ್ಲನಯ್ಯಾ ಲಿಂಗವು,

ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯಾ,

ಒಳಹೊರಗೊಂದಾಗದವರಿಗೆ

ಅಳಿಯಾಶೆದೋರಿ ಬೀಸಾಡುವನವರ

ಜಗದೀಶ ಕೂಡಲಸಂಗಮದೇವಾ

ಎಂಬುದಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿರುವರು. ಭಕ್ತನಾದವನು ಒಳಹೊರಗೆ ಶುದ್ಧನಾಗಿರಬೇಕು. ಬಾಹ್ಯದಲ್ಲಿ ವಿನಯವ೦ತಿಕೆ ತೋರಿ ಅಂತರಂಗದಲ್ಲಿ ಕುಟಿಲ ಕುಹಕತನ ದುರ್ವ್ಯಸನಗಳನ್ನಿರಿಸಿಕೊಂಡರೆ ಭಕ್ತನೆನಿಸುವದಿಲ್ಲ. ಎಲ್ಲವನ್ನು ಬಲ್ಲ ಲಿಂಗತಂದೆಯು ಇಂಥವನಿಗೆ ಕೃಪೆ ತೋರುವುದಿಲ್ಲ. ಇವರು ಸನ್ಮಾರ್ಗಕ್ಕೆ ಸಲ್ಲುವುದೂ ಇಲ್ಲ. ಭಕ್ತನು ಒಳಗೂ ಹೊರಗೂ ಒಂದಾಗಬೇಕು. ಇಲ್ಲದಿದ್ದರೆ ಲೌಕಿಕ ಆಶಾಪಾಶದಲ್ಲಿ ಮುಳುಗಿಸಿ ಶಿವನು ಭವ ಬಂಧನಕ್ಕೆ ನೂಕುವನು. ಶಿವಾನುಭವಿ ಮೈಲಾರ ಬಸವಲಿಂಗ ಶರಣರು ಸೂತ್ರ ಬದ್ಧವಾಗಿ ಭಕ್ತನ ಲಕ್ಷಣವನ್ನು ನಿರೂಪಿಸಿದ್ದಾರೆ.

ಗುರುಸೇವಾ ಭೃತ್ಯತ್ವ-ಚಿರಲಿಂಗದೇಕತ್ವ

ವರಸತ್ಕಾಯಕ ಉರೆ ದಾಸೋಹವೆ ಭಕ್ತ-

ನಿರವೆಂದ ಗುರುವೆ ಕೃಪೆಯಾಗು

ಭಕ್ತನ ಹೊರಬಾಳು ಇಲ್ಲಿದೆ. ಭಕ್ತನು ಗುರುಸೇವೆ, ಕಿಂಕರ ಭಾವನೆ, ಗುರು-ಲಿಂಗ- ಜಂಗಮರಲ್ಲಿ ಅಭಿನ್ನತೆ, ಕಾಯಕ ನಿಷ್ಠೆ ಮತ್ತು ದಾಸೋಹಂಭಾವಗಳನ್ನು ಮೈಗೂಡಿಸಿಕೊಳ್ಳಬೇಕಾಗುವದು. ಭಕ್ತನು ಕಾಯಕ ನಿಷ್ಠನಾಗಿ ದಾಸೋಹಂಭಾವಿಯಾಗಬೇಕು. ಕಾಯಕವಿಲ್ಲದ ಕೈಯಿಂದ ಲಿಂಗವನ್ನು ಪೂಜಿಸಲು ಯೋಗ್ಯವಾಗುವದಿಲ್ಲ. ಅಂತೆಯೇ ಬಸವ ಮಹಾನುಭಾವರು ಇನ್ನೊಂದಡೆ

ಮಾಡುವ ನೀಡುವ ಭಕ್ತನ ಕಂಡಡೆ

ನಿಧಿನಿಧಾನವ ಕಂಡಂತಾಯಿತ್ತು

ಪಾದೋದಕ-ಪ್ರಸಾದ ಜೀವಿಯ ಕಂಡಡೆ

ಹೋದ ಪ್ರಾಣ ಬಂದಂತಾಯಿತ್ತು

ಎಂದು ಭಕ್ತನ ಕರ್ತವ್ಯ ಕರ್ಮವನ್ನು ಚನ್ನಾಗಿ ನಿರೂಪಿಸಿರುವರು. ಕಾಯಕ ಮಾಡುತ್ತಾ ದಾಸೋಹ ಗೈಯುವುದೆ ಭಕ್ತತನಕ್ಕೆ ಭೂಷಣವೆಂತಲೂ, ಆತನೇ ಸಮಾಜದಲ್ಲಿ ನಿಧಿ-ವಿಧಾನ, ಗುರುಲಿಂಗ ಜಂಗಮರ ಪಾದೋದಕ ಪ್ರಸಾದಕ್ಕಾಗಿ ಭಕ್ತನು ಸದಾ ಬಯಸುವಂತಾಗಬೇಕು.

ಷಟ್‌ಸ್ಥಲದಲ್ಲಿ ಮೊದಲನೆಯ ಮೆಟ್ಟಿಲು ಭಕ್ತಸ್ಥಲ, ಎಲ್ಲ ಸ್ಥಲಗಳಿಗೆ ಅದುವೇ ಆಧಾರಭೂತವಾದುದು. ಷಟ್‌ಸ್ಥಲವು ಕೇವಲ ತಾತ್ವಿಕ ಬೋಧನೆಯನ್ನಷ್ಟೇ ಕಲ್ಪಿಸುವದಿಲ್ಲ, ಭೌತಿಕದಲ್ಲಿ ಬಾಳುವ ಕಲೆಯನ್ನು ಸಹ ತಿಳಿಸುತ್ತದೆ. ಭಕ್ತನಿಗೆ ಆಚಾರ ಲಿಂಗವೇ ಆರಾಧ್ಯ ವಸ್ತು, ಶ್ರದ್ಧಾಭಕ್ತಿಯೇ ಮೂಲ ದ್ರವ್ಯವಾಗಬೇಕು. ಭಕ್ತಸ್ಥಲದಲ್ಲಿ ದ್ವೈತಾದ್ವೈ ತವಿದೆ. ಆತ್ಮ-ಪರಮಾತ್ಮರ ದರ್ಶನವಿದೆ. ಪೂಜ್ಯ-ಪೂಜಕ ಭಾವವಿದೆ. ಶಕ್ತಿ-ಭಕ್ತಿಗಳ ಸಮ್ಮಿಲನವಿದೆ. ಸಾಧನೆ-ಸಿದ್ಧಿಗೆ ಅವಕಾಶವಿದೆ. ಕ್ರಿಯಾಶಕ್ತಿ ಜಾಗ್ರತವಾಗಿ ನಿವೃತ್ತಿ

ಕಲೆಯುಳ್ಳ ಆಚಾರ ಲಿಂಗವನ್ನು ಅತ್ಯಂತ ಶ್ರದ್ಧೆಯಿಂದ ಆರಾಧಿಸಬೇಕು. ಮೇಲೆ ವಿವರಿಸಿದ ಕಾಯಗುಣಗಳಳಿದು ಶಿವಗುಣಗಳು ಮೈಗೂಡಬೇಕು, ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂಬ ಭಾವ ಗಟ್ಟಿಗೊಳ್ಳಬೇಕು.

 ಕಂಡಭಕ್ತರಿಗೆ ಕೈಮುಗಿವಾತನೇ ಭಕ್ತ

ಮೃದು ವಚನವೇ ಸಕಲ ಜಪಂಗಳಯ್ಯಾ

ಮೃದು ವಚನವೇ ಸಕಲ ತಪಂಗಳಯ್ಯಾ

ಸದುವಿನಯವೇ ಸದಾಶಿವನ ಒಲುಮೆಯಯ್ಯಾ

ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ

ಲಿಂಗ ಧರಿಸಿದ ಭಕ್ತನು ಅಂಗದ ಮೇಲೆ ಲಿಂಗವುಳ್ಳ ಭಕ್ತರನ್ನು ಕಂಡರೆ ಕೈಮುಗಿಯಬೇಕು. ಬಡವ ಶ್ರೀಮಂತನೆನ್ನದೆ ವ್ಯಕ್ತಿ ಗೌರವ ನೀಡುವದೇ ಭೃತ್ಯಾಚಾರ, ಮೃದು ವಚನಗಳಿಂದ ಮಾತನಾಡುವದೆ ಜಪ-ತಪವೆನಿಸುವದು, ಸದುವಿನಯವೇ ಸದಾಶಿವನ ಕೃಪೆಗೆ ಕಾರಣವಾಗುವದು. ಹೀಗೆ ಸಾಧಕನು ಭಕ್ತಸ್ಥಲವನ್ನು ಆಚಾರನಿಷ್ಠನಾಗಿ ಶ್ರದ್ಧೆಯಿಂದ ಕಾಯಕ-ದಾಸೋಹದಲ್ಲಿ ತೊಡಗಿಸಿಕೊಳ್ಳಬೇಕು.

೨. ಮಾಹೇಶ್ವರ ಸ್ಥಲ

ಶ್ರದ್ಧಾಭಕ್ತಿಯುಳ್ಳ ಭಕ್ತನು ಆಚಾರ ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರಿಂದ ಮಾಹೇಶ್ವರ ಸ್ಥಲವನ್ನು ಪ್ರವೇಶಿಸುವನು. ಇದು ಷಟ್‌ಸ್ಥಲದ ಎರಡನೇ ಹಂತ. ನೆಲತತ್ತ್ವಾಂಗನಾದ ಭಕ್ತನು ಭೂಮಿಯ ಸಹನಶೀಲತೆ, ತಾಳ್ಮೆ, ಕಿಂಕರತ್ವ ಗುಣಗಳನ್ನು ಸಂಪಾದಿಸಿಕೊಂಡಂತೆ; ಜಂಗಮವಾದ ಮಹೇಶ್ವರನು ನೀರಿನಂತೆ ಪರಿಶುದ್ಧತೆಯನ್ನು ಮತ್ತು ಸಚ್ಛಾರಿತ್ರ್ಯವನ್ನು ತನ್ನದಾಗಿಸಿಕೊಳ್ಳಬೇಕಾಗುವದು. ಇಲ್ಲಿ ಸದಾಚಾರ ಸುವಿಚಾರಗಳು ಪ್ರಾಮುಖ್ಯವಾಗುವವು. ಇದರಿಂದ ಸದ್ಭಕ್ತನಲ್ಲಿ ವ್ಯಕ್ತಿತ್ವ ವಿಕಸನವಾಗುವದು. ವ್ಯಕ್ತಿತ್ವದ ಹಿರಿಮೆ-ಗರಿಮೆಗಳನ್ನು ಬೆಳೆಸಿಕೊಳ್ಳುತ್ತ ಗುರುಲಿಂಗದ ಆರಾಧಕನಾಗಬೇಕಾಗುವದು.

 ಷಟ್‌ಸ್ಥಲ ಸಿದ್ಧಾಂತದಲ್ಲಿ ವಿಶೇಷವಾಗಿ ಭಕ್ತಿಯೇ ಜೀವಾಳವೆನಿಸುತ್ತದೆ. ಷಟ್‌ಸ್ಥಲಾತ್ಮಕ ಭಕ್ತಿಯ ವಿಕಾಸವಾಗುವದರಿಂದ ಭಕ್ತನಲ್ಲಿ ಶಕ್ತಿಯ ಸಂಚಯವಾಗುವದು. ಸ್ಥಲಪದ ವಾಚ್ಯನಾದ ಪರಶಿವನು ಸ್ವವಿಮರ್ಶಾರೂಪ ಶಕ್ತಿ ವಿಶಿಷ್ಟವಾಗಿ ಸ್ವಲೀಲೆಯಿಂದ ಶಿವ+ಶಕ್ತಿಗಳೆಂದು ಎರಡಾದಂತೆ, ಶಿವನು ಲಿಂಗ ಅಂಗವೆಂದು ಎರಡಾದುದನ್ನು ಅವಲೋಕಿಸಲಾಗಿದೆ. ಅದರಂತೆ ಶಕ್ತಿಯೂ ಶಕ್ತಿ ಭಕ್ತಿಗಳೆಂದು ಎರಡಾಗುವದು. ಶಿವನೊಡನೆ ತಾದಾತ್ಮ ಸಂಬಂಧವುಳ್ಳ ಶಿವನ ಸಹಧರ್ಮಿಣಿ ಶಕ್ತಿಯು ಭಕ್ತನ ಹಿತಕ್ಕಾಗಿ ಲಿಂಗಸ್ಥಲವನ್ನಾಶ್ರಯಿಸಿ, ಕಲೆಯೆನಿಸಿದರೆ ಅಂಗಸ್ಥಲವನ್ನಾಶ್ರಯಿಸಿ ಭಕ್ತಿಯೆನಿಸುವದು. ಷಟ್‌ಸ್ಥಲ ಮಾರ್ಗದಲ್ಲಿ ಭಕ್ತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಸಾಹಿತ್ಯದಲ್ಲಿ ಸ್ಥಾಯಿಭಾವಗಳಿಗೆ ಪ್ರಾಮುಖ್ಯತೆಯಿದ್ದಂತೆ ಷಟ್‌ಸ್ಥಲದ ಸ್ಥಾಯಿಭಾವವೇ ಭಕ್ತಿಯು. ಷಟ್‌ಸ್ಥಲ ಸೋಪಾನಗಳನ್ನು ಮೇಲೇರಿಸುವ ಆಧಾರ ಸ್ಥಂಭವೇ ಭಕ್ತಿ, ಈ ಭಕ್ತಿ ಶಕ್ತಿಯು ಸಂಸಾರದ ತೊಡಕಿನ ಬಂಧನಗಳನ್ನು ನಾಶಗೊಳಿಸುವದು. ಅಜ್ಞಾನ ಕತ್ತಲೆಯನ್ನು ಹೊಡೆದೊಡಿಸುವದು. ಭಕ್ತಿ ಮಾರ್ಗವು ಪುರಾತನವಾದುದು. ನಾರದ ಮುನಿಯು ಭಕ್ತಿಯನ್ನು ಕುರಿತು “ಭಲ್ತಿಃ  ಸಾ ಪ್ರೇಮ ರೂಪಾʼʼ ಪ್ರೇಮರೂಪವಾದುದೇ ಭಕ್ತಿ ಅರ್ಥಾತ್ ಪ್ರೇಮವೇ ಭಕ್ತಿಯು. ಪ್ರೇಮವೇ ಸಂಬಂಧವನ್ನು ಕಲ್ಪಿಸುತ್ತದೆ. ಸಂಬಂಧವು ಎರಡು ತೆರನಾಗಿದೆ. ಒಂದು ರಕ್ತಗತವಾದುದು. ಇದು ಸ್ವಾರ್ಥಪರವಾದುದು. ಇನ್ನೊಂದು ಭಾವ ಸಂಬಂಧ. ಇದು ಆತ್ಮೀಯವಾದುದು. ರಕ್ತಸಂಬಂಧದಲ್ಲಿ ತಂದೆ-ತಾಯಿ-ಅಕ್ಕ-ತಮ್ಮ-ಅಣ್ಣ-ತಂಗಿ-ಅತ್ತೆ-ಮಾವ-ಮೈದುನ ಇತ್ಯಾದಿ ರಕ್ತ ಸಂಬಂಧವು ಶಾರೀರಿಕ ಸಂಬಂಧವಾದರೆ, ದೇವ-ಭಕ್ತ, ಗುರು-ಶಿಷ್ಯ-ಸ್ನೇಹಿತ-ಇವೆಲ್ಲವೂ ಭಾವ ಸಂಬಂಧಗಳು, ಭಕ್ತ ಭಗವಂತರ ನಡುವೆ ಭಕ್ತಿಯು ಅತ್ಯಂತ ಆತ್ಮೀಯ ಭಾವವನ್ನು ಉಂಟು ಮಾಡುವದು. ಶ್ರವಣ

ಕೀರ್ತನಾದಿ ನವವಿಧ ಭಕ್ತಿಗಳಾದಂತೆ ಷಡ್ವಿಧ ಭಕ್ತಿಯು ವಿಶಿಷ್ಟವಾದುದು. ಲಿಂಗದ ಹೊರತು ಬೇರಾವ ದೇವರಿಲ್ಲವೆಂದು ಶ್ರದ್ಧೆಯು ನಿಷ್ಟೆಯು ಕರಿಗೊಳ್ಳುವದು. ಮಾಹೇಶ್ವರನಿಗೆ ನಿಷ್ಟಾಭಕ್ತೆಯೆ ಸ್ಥಾಯಿಭಾವ. ಈ ಸ್ಥಲದ ವ್ಯಾಖ್ಯಾನವನ್ನು ಮೈಲಾರ ಬಸವಲಿಂಗ ಶರಣರು-

ಗುರು ಲಿಂಗ ನಿಷ್ಠೆಯಿಂ |

ಪರದೈವ ಮೊದಲಾದ

ದುರಿತ ಪಂಚಕವು –

ನಿರಸನವಾಗೆ ಮಾಹೇಶ್ವರನೆಂದ ಗುರುವೆ ಕೃಪೆಯಾಗು

ಎಂಬುದಾಗಿ ಸೂತ್ರಬದ್ಧವಾಗಿ ಮಾಡಿರುವರು. ಆಚಾರ ಲಿಂಗದಲ್ಲಿ ಶ್ರದ್ಧೆಯು ಬೆಳೆದರೆ ಗುರುಲಿಂಗದಲ್ಲಿ ನಿಷ್ಠಾಭಕ್ತಿಯು ದೃಢವಾಗಬೇಕು. ಇಷ್ಟಲಿಂಗವನ್ನಲ್ಲದೆ ಅನ್ಯ ದೈವಗಳ ಆಸಕ್ತಿಯನ್ನು ಸಂಪೂರ್ಣವಾಗಿ ತೊರೆಯಬೇಕು. ಅಂದರೆ ಲಿಂಗನಿಷ್ಠೆಯು ಕರಿಗೊಳ್ಳುವದು. ಪರಸ್ತ್ರೀಯರಲ್ಲಿ ರತಿ, ಪರನಿಂದೆ, ಪ್ರಾಣಿಗಳ ಹಿಂಸೆ, ಪರದ್ರವ್ಯಾಪೇಕ್ಷೆ ಮತ್ತು ತನಗಿಂತ ಭಿನ್ನವಾಗಿ ದೇವರಿದ್ದಾನೆಂಬ ಈ ಐದು ಪಾತಕಗಳನ್ನು ಸಂಪೂರ್ಣವಾಗಿ ಮನಸ್ಸಿನಿಂದ ದೂರ ತಳ್ಳಬೇಕು. ಪಂಚಪಾತಕಗಳಿಂದ ಮುಕ್ತನಾದ ಮಾಹೇಶ್ವರನ ಜೀವನ ಪರಿಶುದ್ಧವಾಗುವದು. ತೋಂಟದ ಸಿದ್ಧಲಿಂಗರು ಈ ಸ್ಥಲದ ಮರ್ಮವನ್ನು ಕೆಳಗಿನಂತೆ ವಿವರಿಸಿರುವರು.

ಅನೃತ, ಅನಾಚಾರ, ಅನ್ಯ ಹಿಂಸೆ,

ಪರಧನ, ಪರಸ್ತ್ರೀ, ಪರನಿಂದೆ ಇವ ಬಿಟ್ಟು

ಲಿಂಗನಿಷ್ಠೆಯಿಂದ ಶುದ್ಧಾತ್ಮನಾಗಿರಬಲ್ಲಡೆ

ಮಾಹೇಶ್ವರ ಸ್ಥಲವೆಂಬೆನಯ್ಯಾ

ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ

ಇದೇ ರೀತಿ ಮಹಾಜ್ಞಾನಿ ಚನ್ನಬಸವಣ್ಣನವರು ಹಾಗೂ ವೈರಾಗ್ಯನಿಧಿ ಮಹಾದೇವಿಯಕ್ಕನವರೂ ಮಾಹೇಶ್ವರ ಬಗೆಯನ್ನು ಬಣ್ಣಿಸಿರುವರು.

ಶಿವನ ಇಚ್ಛಾ ಶಕ್ತಿಯ ಸಂಕೋಚತನದಿಂದ ಜೀವನಲ್ಲಿ ಆಣವಮಲವೆನಿಸಿದರೆ, ಜ್ಞಾನಶಕ್ತಿಯ ಸ೦ಕೋಚತನದಿಂದ ಮಾಯಾಮಲ ಆವರಿಸುವದು. ಕ್ರಿಯಾಶಕ್ತಿಯ ಸಂಕೋಚತನದಿಂದ ಕಾರ್ಮಿಕ ಮಲವು ಅಂಟಿಕೊಳ್ಳುವದು. ಶಿವದೀಕ್ಷೆಯ ಕಾಲದಲ್ಲಿ ಶ್ರೀಗುರು ಶಿಷ್ಯನ ಮಲತ್ರಯಗಳನ್ನು ಉಪದೇಶದಿಂದ ಕಳೆದುಕೊಳ್ಳಲು ಬೋಧಿಸುವರು. ಕ್ರಿಯಾಶಕ್ತಿ, ಜ್ಞಾನಶಕ್ತಿಗಳನ್ನು ಜಾಗೃತಗೊಳಿಸಿ ಕೊಳ್ಳುವದು ಸಾಧಕನ ಸಾಧನೆಯಾಗಬೇಕು. ಕ್ರಿಯಾಶೀಲನಾಗಿ ಪ್ರವೃತ್ತಿ ಪಥದಿಂದ ನಿವೃತ್ತಿ ಕಲೆಯತ್ತ ಮುನ್ನಡೆಯುವದೆ ಷಟ್‌ಸ್ಥಲದ ಮಾರ್ಗ.

 ರಕ್ತ ಸಂಬಂಧಿಗಳಾದ ಬಂಧುಗಳು ವಿಶೇಷ ಸಂದರ್ಭಗಳಲ್ಲಿ ಬಂದುಂಡು ಹೋಗುವರಲ್ಲದೆ ಭವ ಬಂಧನವನ್ನು ಕಳೆಯಲಾರರು. ಆದರೆ ದೇವ ಸಂಬಂಧದಿಂದ ಬಂಧನವನ್ನು ಬಿಡಿಸಿಕೊಳ್ಳಬಹುದು. ವಸ್ತುತಃ ಜೀವ ಪರಮಾತ್ಮರ ಸಂಬಂಧವು ಪರಮಾರ್ಥತಃ ಅಭಿನ್ನವಾದುದೂ ಜೀವನಿಗೆ ಶಕ್ತಿಗಳ ಸಂಕೋಚತನದಿಂದ ಅಜ್ಞಾನ ಮತ್ತು ಮಲತ್ರಯಗಳು ಅಂಟಿಕೊಂಡ ಕಾರಣ ವಾಸ್ತವಿಕ ಸತ್ಯವನ್ನು ಮರೆತು ಹೋಗಿರುತ್ತಾನೆ. ಸುಜ್ಞಾನದಿಂದ ಮಲತ್ರಯಗಳನ್ನು ನಿವಾರಿಸಿಕೊಂಡು ದೇವನೊಡನೆ ಘನಿಷ್ಠ ಸಂಬಂಧವನ್ನು ಬೆಳೆಸಿಕೊಳ್ಳುವದೇ ಮಾಹೇಶ್ವರನ ಮಣಿಹ. ಇಷ್ಟಲಿಂಗವೇ ತನ್ನ ಸರ್ವಸ್ವವೆಂದರಿತು ಲಿಂಗದಲ್ಲಿ ನಿಷ್ಠೆಯನ್ನು ಬೆಳೆಸಿಕೊಳ್ಳುವದರೊಂದಿಗೆ ಸಚ್ಚಾರಿತ್ರ್ಯವನ್ನು ಸಂಪಾದಿಸಿಕೊಂಡರೆ ಗರಿಮೆ ಹೆಚ್ಚುವದು. ಲೌಕಿಕದಲ್ಲಿ ದೈಹಿಕ ಸಂಬಂಧಗಳು ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಂಡರೆ ಅಧ್ಯಾತ್ಮಿಕವಾಗಿ ಮಾಹೇಶ್ವರನಲ್ಲಿ ಅನ್ನೋನ್ಯ ಆತ್ಮೀಯ ಸಂಬಂಧ ಬೆಳೆಯುವದು. ಅದು ಶಾಶ್ವತವೆನಿಸುವದು. ಲೌಕಿಕರು ಯಾಂತ್ರಿಕ ಜೀವನ ನಡೆಸಿ ಸಂಬಂಧಗಳಲ್ಲಿ ಏರಿಳಿತವಾಗಿ ದುಃಖಿಗಳಾಗುವರು. ಇಲ್ಲಿ ಹಾಗಲ್ಲ, ಪವಿತ್ರ ಭಾವನೆಗಳು ಬೆಳೆದು ನಿತ್ಯ ಸಂಬಂಧವನ್ನು ಪಡೆಯುವನು. ಎಲ್ಲರೂ ನನ್ನವರೆಂಬ ಭಾವನೆ ಬೆಳೆಯುವದು. ದೇವನೆ ಸರ್ವಸ್ವವೆಂಬ ಭಾವದಿಂದ ನಡೆದು ತನ್ನ ನಿಷ್ಠೆಯನ್ನು ಗಟ್ಟಿಗೊಳಿಸಿಕೊಳ್ಳುವನು. ಸ್ವಾಧಿಷ್ಠಾನ ಚಕ್ರದಲ್ಲಿ ಗುರುಲಿಂಗವನ್ನು ಜಿಹ್ವಾ ಮುಖದಲ್ಲಿ ಸುಬುದ್ಧಿ ಹಸ್ತದಿಂದ ಶ್ರದ್ಧಾ ಭಕ್ತಿಯಿಂದ ಅರ್ಚಿಸುವವನೆ ಮಾಹೇಶ್ವರನು.

೩. ಪ್ರಸಾದಿಸ್ಥಲ

ಭಕ್ತ-ಮಾಹೇಶ್ವರ ಸ್ಥಲಗಳೆರಡೂ ಒಂದುಗೂಡಿ ತ್ಯಾಗಾಂಗವೆನಿಸಿದರೆ, ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳೆರಡು ಭೋಗಾಂಗದ ಭಾಗಗಳು. ಸ್ಥೂಲ ತನುವಿಗೆ ತ್ಯಾಗಾಂಗವೆಂತಲೂ, ಸೂಕ್ಷ್ಮ ತನುವಿಗೆ ಭೋಗಾಂಗವೆಂದುದು ವೀರಶೈವ ಪರಿಭಾಷೆ, ಭಕ್ತನದು ನೆಲತತ್ವ, ಮಾಹೇಶ್ವರನದು ಜಲತತ್ವ, ನೆಲತತ್ತ್ವದ ಸ್ಥೂಲ ಶರೀರದಲ್ಲಿ ಕಾಣಿಸುವ ಅಸ್ಥಿ-ಮಾಂಸ-ಚರ್ಮ-ನಾಡಿ ಮತ್ತು ರೋಮಗಳ ಪರಿಶುದ್ಧಿಯನ್ನು ಭಕ್ತನು ಸದಾಚಾರ-ಸತ್ಕ್ರಿಯೆಗಳಿಂದ ಸಾಧಿಸಿದರೆ; ಜಲತತ್ತ್ವದಿಂದಾಗುವ ರಸ-ರಕ್ತ ಮೂತ್ರ-ಸ್ವೇದ ಮತ್ತು ಶುಕ್ಲಗಳು ಮಾಹೇಶ್ವರ ಸ್ಥಲದಲ್ಲಿ ಶುದ್ಧವಾಗುತ್ತವೆ. ಸಾಮಾನ್ಯ ವೀರಶೈವನು ಜಂಗಮದೇವನಿಂದ ಅನುಗ್ರಹ ಪಡೆದು ವಿಶೇಷ ವೀರಶೈವನೆನಿಸುವನು. ವಸ್ತುತಃ ಚಿನ್ಮಯಾನುಗ್ರಹದಿಂದ ಷಟ್‌ಸ್ಥಲಾಧಿಕಾರವು ಪ್ರಾಪ್ತವಾಗುವದು. ಜಂಗಮಾನುಗ್ರಹ ಹೊಂದುವದರಿಂದ ಸ್ಥೂಲಕಾಯವು ಪ್ರಸಾದಕಾಯವೆನಿಸುವದು. ಪ್ರಸಾದಕಾಯನಾಗುವದರಿಂದ ತ್ಯಾಗಾಂಗ ಶುದ್ಧಿಯಾಗುವದು. ಇದಕ್ಕೆ ಭಕ್ತ ಮಾಹೇಶ್ವರ ಸ್ಥಲದ ಆಚರಣೆ ಅತ್ಯವಶ್ಯವಾದುದು. ಇದರಿಂದ ಪ್ರಸಾದಿ ಸ್ಥಲವು ಪ್ರಸಾದಕಾಯನಾಗಲು ಸಹಕಾರವಾಗುವದು.

 ಸತ್ಕ್ರಿಯಾಚರಣೆಗಳಿಂದ ಪ್ರತಿಯೊಬ್ಬ ವ್ಯಕ್ತಿಯು ಕಾರ್ಯಶೀಲನಾಗುವನು. ಕರ್ತವ್ಯ ದಕ್ಷತೆಯನ್ನು ಪಡೆಯುವನು. ಈ ಸಾಧಕನು ಕ್ರಿಯಾಶಕ್ತಿಯೊಡನೆ ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಂಡು ನಿವೃತ್ತಿ ಪಥದಲ್ಲಿ ಮುನ್ನಡೆದು ಪ್ರತಿಷ್ಠಾ ಕಲೆಯನ್ನು ತನ್ನದನ್ನಾಗಿಸಿಕೊಳ್ಳುವನು. ಹೀಗೆ ಷಟ್‌ಸ್ಥಲ ಸಿದ್ಧಾಂತವು ಮೆರಗು ಪಡೆಯುವದು. ಕ್ರಿಯಾಶಕ್ತಿ-ಜ್ಞಾನಶಕ್ತಿಗಳ ಸಮ್ಮಿಲನದಿಂದ ಇಚ್ಛಾಶಕ್ತಿಯು ಸಫಲವಾಗುವದು. ಕ್ರಿಯೆ ಮತ್ತು ಜ್ಞಾನಗಳು ಮೈಗೂಡಿದಾಗ ಅಂಥ ಸಾಧಕನ ಇಚ್ಛೆಗಳೆಲ್ಲ ಕೈಗೂಡುವವು. ಅವೆರಡು ಶಕ್ತಿಗಳು ಜಾಗ್ರತವಾಗದಿದ್ದರೆ ಅವನಲ್ಲಿಯ ಇಚ್ಛಾ ಶಕ್ತಿಯು ಬರಿ ಕನಸಿನಂತಾಗುವದು. ಇಚ್ಛಾಶಕ್ತಿಯಲ್ಲಿ ಸಂಕಲ್ಪ ಸಿದ್ಧಿಯು ಮೈದೋರುವದು. ಅದಕ್ಕಾಗಿ ವೀರಶೈವರು ಕ್ರಿಯಾ-ಜ್ಞಾನಗಳನ್ನು ಸಮಸಮುಚ್ಚಯದಿಂದ ಅಳವಡಿಸಿಕೊಂಡಿರುವರು. ಅವಿರಳ ಜ್ಞಾನಿ ಚನ್ನಬಸವಣ್ಣನವರು ಕ್ರಿಯಾ-ಜ್ಞಾನಗಳ ವಿವರಣೆಯನ್ನು ತಿಳಿಯುವಂತೆ ವಚನಿಸಿರುವರು.

ಕ್ರಿಯೆಯೆ ಜ್ಞಾನ, ಆ ಜ್ಞಾನವೇ ಕ್ರಿಯೆ

ಜ್ಞಾನವೆಂದಡೆ ತಿಳಿಯುವದು

ಕ್ರಿಯೆಯೆಂದಡೆ ತಿಳಿದಂತೆ ಮಾಡುವದು

ಪರಸ್ತ್ರೀಯ ಭೋಗಿಸಬಾರದೆಂಬುದೇ ಜ್ಞಾನ

ಅದರಂತೆ ಆಚರಿಸುವದೇ ಕ್ರಿಯೆ

ಅರಿತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ

ಕೂಡಲ ಚನ್ನಸಂಗಮದೇವ

ಜ್ಞಾನ ಕ್ರಿಯೆಗಳು ಸಮನ್ವಯಗೊಳ್ಳುವದರಿಂದ ವ್ಯಕ್ತಿತ್ವ ವಿಕಸನವಾಗುವದು. ಮುಖ್ಯವಾಗಿ ಕ್ರಿಯೆ ಜರುಗಬೇಕಾದರೂ ಜ್ಞಾನ ಬೇಕು. ಜ್ಞಾನ ಲಭಿಸಲು ಕ್ರಿಯೆಯನ್ನು ಮಾಡಬೇಕಾಗುವದು. ಯಾವುದೇ ನಿಷೇಧಿತ ಕಾರ್ಯವನ್ನು ಮಾಡಬಾರದೆಂಬ ಜ್ಞಾನದಂತೆ ನಡೆದರೆ ಆ ಕ್ರಿಯೆಗೆ ಅರ್ಥ ಬರುವದು. ತಿಳಿದು ತಪ್ಪು ಮಾಡುವದರಿಂದ ಅಜ್ಞಾನವು ಆವರಿಸುವದು.

 ಮಾಹೇಶ್ವರ ಸ್ಥಲದಲ್ಲಿ ನಿಷ್ಠೆಯು ಗಟ್ಟಿಗೊಳ್ಳಬೇಕು. “ನಿಶ್ಚಯೇನ ತಿಷ್ಠತೀತಿ ನಿಷ್ಠಾ” ನಿಶ್ಚಯವಾಗಿ ನಿಲ್ಲುವ ಜ್ಞಾನ ನಿಷ್ಠೆಯೆನಿಸುವದು. ಅಚಲವಾದ ಭಕ್ತಿಭಾವವೇ ನಿಷ್ಠೆಯಾಗುವದು. ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯನ್ನಾಗಿ ನಿಶ್ಚಯಿಸಿದ್ದಳು. ಯಶೋಧೆಯು ಕೃಷ್ಣನನ್ನೇ ತನ್ನ ಮಗನೆಂದು ದೃಢವಾಗಿ ನಂಬಿದ್ದಳು. ತುಳಿಸಿದಾಸನೂ ಅವನನ್ನೇ ತನ್ನ ಪುತ್ರನೆಂದು ವಾತ್ಸಲ್ಯದಿಂದ ಆರಾಧಿಸಿದನು. ಹೀಗೆ ಅನೇಕರು ಪರಮಾತ್ಮನಲ್ಲಿ ನಿಷ್ಠಾಭಕ್ತಿಯಿಂದ ಆರಾಧಿಸಿದಂತೆ ಮಾಹೇಶ್ವರನು ಗುರುಲಿಂಗವನ್ನು ನಿಷ್ಠಾಭಕ್ತಿಯಿಂದ ಅರ್ಚಿಸಿದರೂ ಪ್ರಸಾದಿ ಸ್ಥಲದಲ್ಲಿ ಅವಧಾನವಿರಬೇಕಾಗುವದು. ಅವಧಾನವೆಂದರೆ ಜಾಗ್ರತೆ, ಎಚ್ಚರ, ಯಾವುದೊಂದು ಕಾಯಕವನ್ನು ಶ್ರದ್ಧೆಯಿಂದ ಪ್ರಾರಂಭಿಸಿ ನಿಷ್ಠೆಯಿಂದ ಮುಂದುವರೆಸಿ ಬಹಳ ಜನರು ಅವಧಾನವನ್ನು ಕಳೆದುಕೊಳ್ಳುವದರಿಂದ ಆ ಕಾಯಕ ಯಶಸ್ವಿಯಾಗುವದಿಲ್ಲ. ಲಾಭಕ್ಕಿಂತ ಹಾನಿಯೇ ಆಗುವದು.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ

ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ

ಇದ್ದರೇನು ಶಿವ ಶಿವಾ ಹೋದಡೇನೊ

ಕೂಡಲ ಸಂಗಮದೇವಯ್ಯ

ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ

ಇಲ್ಲಿ ಬಸವಣ್ಣನವರು ನಿಷ್ಠಾಭಕ್ತಿಯನ್ನು ವಿಶ್ಲೇಷಿಸಿರುವರು. ಗೊಡ್ಡಾಕಳಿಗೆ ದೊಡ್ಡದಾದ ಕರುವ ಬಿಟ್ಟರೆ ಯಾವ ಪ್ರಯೋಜನವಾಗುವದಿಲ್ಲ, ಚನ್ನಬಸವಣ್ಣನವರು

ಭಕ್ತಿಗೆ ಅನುಭಾವವೆ ಬೀಜ ಕಾಣಿರೋ

ಭಕ್ತಿಗೆ ಅನುಭಾವವೆ ಆಚಾರ ಕಾಣಿರೋ

ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು

ಷಡ್ವಿಧ ಭಕ್ತಿಯಲ್ಲಿ ಅನುಭಾವವೇ ಬೀಜ, ಅದುವೆ ಆಚಾರವಾಗಬೇಕೆಂದೂ ಅನುಭಾವವಿಲ್ಲದವನ ಭಕ್ತಿಯಲ್ಲಿ ಹೊಯ್ದಾಟವಿರುವದೆಂದು ಎಚ್ಚರಿಸಿರುವರು. ಈ ಹೊಯ್ದಾಟ ನಿಲ್ಲಬೇಕಾದರೆ ಅವಧಾನ ಅವಶ್ಯ ಬೇಕಾಗುವದು.

 ಈ ಅವಧಾನದಿಂದಲೇ ಭಕ್ತನ ಮನಸ್ಸು ಪ್ರಸನ್ನವಾಗುವದು. ಪ್ರಸನ್ನ ಮನಸ್ಸಿನಲ್ಲಿ ಯಾವ ಚಿಂತೆಗಳು ಕಾಡುವದಿಲ್ಲ. ಅವನ ಮನಸ್ಸು ನಿರ್ಮಲವಾಗಿರುತ್ತದೆ. ನಿರ್ಮಲ ಮನಸ್ಸಿದ್ದರೆ ಮಾತ್ರ ಪ್ರಸನ್ನತೆಯಿರುವದು. ಇದುವೆ ಪ್ರಸಾದಿಯ ಪ್ರಬುದ್ಧತೆ, ತಪ್ಪು ಮಾಡುವವನ ಮನಸ್ಸು ಕಳವಳದಿಂದಲೇ ಇರುವದು. ಅವನಿಗೆ ಚಿಂತೆಯು ಸದಾ ಕಾಡುತ್ತಿರುತ್ತದೆ. ಮೈಲಾರ ಬಸವಲಿಂಗ ಶರಣರು-

ರೂಪು ರುಚಿ ತೃಪ್ತಿಯ ನಿರ್ಲೇಪ ತ್ರೈಲಿಂಗಕ್ಕೆ

ಅರ್ಪಿಸಲು ತಾನೇ ದೀಪ್ತ ಪ್ರಸಾದಿಯೆಂ

ದಾ ಪರಮಗುರುವೇ ಕೃಪೆಯಾಗು

ಎಂದು ಪ್ರಸಾದಿಯ ಲಕ್ಷಣವನ್ನು ನಿರೂಪಿಸಿರುವರು. ಪ್ರಸಾದಿಸ್ಥಲ ಮೂರನೆಯದು. ಇವನು ಶಿವಲಿಂಗ ಪೂಜಕನು ಶಿವಲಿಂಗವು ನೇತೇಂದ್ರಿಯದಲ್ಲಿದೆ. ಈ ಲಿಂಗವು ಇಚ್ಛಾಶಕ್ತಿ ವಿದ್ಯಾಕಲೆಯಿಂದ ಕೂಡಿದೆ. ಪ್ರಸಾದಿಯು ಸದಾ ಸಾವಧಾನದಿಂದ ಶಿವನಿಚ್ಛೆಯಿಂದ ದೊರೆತುದನ್ನು ನಿರಹಂಕಾರ ಹಸ್ತದಲ್ಲಿ ರೂಪು ಪದಾರ್ಥಗಳನ್ನು ಸುರೂಪು ಪ್ರಸಾದಗೊಳಿಸಿ ಶಿವಲಿಂಗಕ್ಕೆ ಅರ್ಪಿಸಿ ಭೋಗಿಸಬೇಕು. ಈ ಸ್ಥಲವು ಭೋಗಾಂಗದ ಅಂಗವೆಂದಿದೆ. ಕರಣೇಂದ್ರಿಯಗಳಿಗೆ ಪ್ರೇರಕವಾದ ಮನಸ್ಸಿನಲ್ಲಿ ದೃಢತೆ ಹೆಚ್ಚಾಗಿ ಶಾಂತನೂ ಸಾವಧಾನವುಳ್ಳವನಾಗುವದೇ ಪ್ರಸಾದಿಯ ಮುಖ್ಯ ಕರ್ತವ್ಯವಾಗಿದೆ. ಹೊಯ್ದಾಟವುಳ್ಳ ಮನಸ್ಸನ್ನು ನಿಶ್ಚಲಗೊಳಿಸಿ ಪ್ರಾಕೃತಿಕ ಭೋಗ ಭವದ ಬೀಜವೆಂದರಿದು ಶಿವಾರ್ಪಿತಭೋಗವನ್ನು ಪಡೆಯುವದರಿಂದ ಭವದ ಬೀಜವನ್ನೇ ಹುರಿದು ಹಾಕುವ ಶಕ್ತಿ ಪ್ರಸಾದಿಯಲ್ಲಿ ಗಟ್ಟಿಗೊಳ್ಳುವದು.

೪. ಪ್ರಾಣಲಿಂಗಿ ಸ್ಥಲ

ಭಕ್ತ-ಮಹೇಶ-ಪ್ರಸಾದಿ ಈ ಮೂರು ಸ್ಥಲಗಳನ್ನು ಪೂರ್ವಯೋಗವೆಂದೂ ಪ್ರಾಣಲಿಂಗಿ- ಶರಣ ಐಕ್ಯ ಸ್ಥಲಗಳನ್ನು ಉತ್ತರಯೋಗವೆಂದು ಶಿವಾನುಭವಿಗಳು ನಿರೂಪಿಸಿರುವರು. ಪ್ರಸಾದಿ ಸ್ಥಲದಲ್ಲಿ ಪ್ರಾಣಲಿಂಗಾರ್ಚನೆ ಪ್ರಾರಂಭವಾಗಿ ಪ್ರಾಣಲಿಂಗಿಸ್ಥಲದಲ್ಲಿ ಅದು ಪೂರ್ಣವಾಗುವದು. ಪ್ರಸಾದಿಯು ಅಗ್ನ್ಯಾಂಗನಾದರೆ, ಪ್ರಾಣಲಿಂಗಿಯು ವಾಯ್ವಂಗನೆನಿಸುವನು. ಪ್ರಾಣಲಿಂಗಿಯು ವಾಯು ತತ್ವದ ಜಂಗಮ ಲಿಂಗವನ್ನು ಆರಾಧಿಸಿ ವಾಯುಮಯ ಪ್ರಾಣವು ಲಿಂಗಸ್ವರೂಪವೆನಿಸುವುದೇ ಪ್ರಾಣಲಿಂಗಿಯ ಪ್ರಾಮುಖ್ಯತೆಯೆನ್ನಬೇಕು. ಬಯಸಿ ಬಂದ ಅಂಗ ಭೋಗವನ್ನು ತ್ಯಜಿಸಿ, ಬಯಸದೆ ಬಂದ ಪ್ರಸಾದವನ್ನು ಲಿಂಗಭೋಗೋಪಭೋಗಿಯಾಗಿಸುವದರಿಂದ ಪ್ರಸಾದ ಕಾಯನಾಗುವನು. ಪ್ರಸಾದ ಕಾಯನಾದ ಪ್ರಸಾದಿಯು ಕ್ರಿಯಾ- ಜ್ಞಾನ-ಇಚ್ಛಾ ಶಕ್ತಿಗಳ ಸಹಾಯದಿಂದ ಆದಿಶಕ್ತಿಯನ್ನು ಸಾಕ್ಷಾತ್ಕರಿಸಿಕೊಂಡು ಸಾವಧಾನತೆಯಿಂದ ಅನುಭವ ಪಡೆಯುವಲ್ಲಿಯೇ ಪ್ರಕಾಶಕಾಯ ಮೈಗೂಡುವದು ಪ್ರಕಾಶಕಾಯವೆಂದರೆ ಜ್ಞಾನ, ಜ್ಞಾನವೇ ಬೆಳಕು. ಪ್ರಾಣಲಿಂಗದ ಪೂಜೆ ನಡೆಯುವಲ್ಲಿ ಜ್ಞಾನವೇ ಮುಖ್ಯವಾಗುವದು.

 ಮಾನವನು ಅನ್ನ ನೀರಿಲ್ಲದೆ ಬದುಕಬಹುದು ಆದರೆ ಪ್ರಾಣವಾಯುವಿಲ್ಲದೆ ಬದುಕಲು ಆಗದು. ಪ್ರಾಣವಾಯು ಎಲ್ಲರಿಗೂ ಅವಶ್ಯ. ಪ್ರಾಣಿಗಳಿಗೆ, ಗಿಡ-ಮರ ಬಳ್ಳಿಗಳಿಗೆ ಪ್ರಾಣವಾಯು ಬೇಕೇಬೇಕು. ಜೀವನಕ್ಕೆ ಜೀವಾಳವಾದುದು ಪ್ರಾಣ ಜೀವನದ ಅಮೃತವದು, ಆಯುಷ್ಯವದು. ಅರಸವೆಂದೂ ಅನುಭವಿಗಳು ವರ್ಣಿಸಿರುವಲ್ಲಿ ಔಚಿತ್ಯವಿದೆ. ಪ್ರಾಣವು ಮಾನವನಿಗೆ ಹೇಗೆ ಜೀವಾಳವೋ ಹಾಗೆ ಪ್ರಾಣಲಿಂಗಿಗೆ ಪ್ರಾಣಲಿಂಗವು ಮುಖ್ಯವಾಗಬೇಕು. ಲಿಂಗವೇ ಪ್ರಾಣವಾಗಬೇಕು. ಎಲ್ಲವೂ ಲಿಂಗಮಯವಾಗಬೇಕು.

ವಸ್ತುತಃ ವಾಯು ಒಂದೇಯಾಗಿದ್ದರೂ ವಿಭಿನ್ನ ಸ್ಥಾನ ಹಾಗೂ ಕೆಲಸಗಳಿಂದ ಐದು ತೆರನಾಗುವದು. ಹೃದಯದಲ್ಲಿ ಪ್ರಾಣವಾಯುವೆನಿಸಿದರೆ ಮೂಲಾಧಾರದಲ್ಲಿ ಅಪಾನವಾಯುವೆನಿಸುವದು, ನಾಭಿಯಲ್ಲಿ ಸಮಾನವಾಯು, ಕಂಠದಲ್ಲಿ ಉದಾನವಾಯು, ವ್ಯಾನವಾಯು ದೇಹದ ತುಂಬೆಲ್ಲ ಹರಡಿಕೊಂಡಿರುತ್ತದೆ. ಪ್ರಾಣವಾಯು ಹೃದಯದಲ್ಲಿದ್ದುಕೊಂಡು ಮೂಗಿನ ಮೂಲಕ ಶ್ವಾಸೋಚ್ವಾಸಗಳನ್ನು ನಡೆಸುವದು. ಈ ವಾಯುವಿನ ಮೂಲಕವೇ ಶರೀರವು ಚೈತನ್ಯಯುತವಾಗಿರುವದು. ಅಪಾನವಾಯು ಮಲಮೂತ್ರಗಳನ್ನು ಹೊರಹಾಕುವ ಕಾರ್ಯವನ್ನು ಮಾಡುವದು. ನಾಭಿಯಲ್ಲಿರುವ ಸಮಾನವಾಯು ಮಾನವನು ಉಣ್ಣುವ ಅನ್ನದ ರಸದಿಂದಾದ ರಕ್ತವನ್ನು ಎಲ್ಲ ಅವಯವಗಳಿಗೆ ಸಮನಾಗಿ ಹಂಚುತ್ತದೆ. ಉದಾನವಾಯು ಕಂಠಸ್ಥಾನದಲ್ಲಿದ್ದು ಸೀನು, ಡೇಕರಿಕೆ ಮುಂತಾದ ಕ್ರಿಯೆಗಳಿಂದ ದೂಷಿತ ಅಂಶವನ್ನು ಹೊರಹಾಕುತ್ತದೆ. ವ್ಯಾನವಾಯು ಶರೀರದ ನರನಾಡಿಗಳಲ್ಲಿ ಸಂಚರಿಸಿ ರಕ್ತ ಸಂಚಾರವನ್ನು ಸಮನಾಗಿ ಮಾಡಿಸುವದು. ಈ ವಾಯು ವಿಕಾರಗೊಂಡರೆ ಸಂಧಿವಾತ ಅರ್ಧಾಂಗವಾಯುವಿಗೆ ಕಾರಣವಾಗುವದು. ಈ ಎಲ್ಲ ವಿಚಾರಗಳನ್ನು ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ಚನ್ನಾಗಿ ನಿರೂಪಿಸಿರುವರು. ಪ್ರಾಣಾಯಾಮದಿಂದ ಪ್ರಾಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚಿನ ಪ್ರಾಣಾಯಾಮದಿಂದ ಅಪಾಯವೂ ಸಂಭವಿಸುವದೆಂದು ಬಸವಲಿಂಗ ಶರಣರು ಗುರುಕರಣ ತ್ರಿವಿಧಿಯಲ್ಲಿ ಅಷ್ಟಾಂಗ ಯೋಗದ ನಿರಸನಮಾಡಿ ಪ್ರಾಣಲಿಂಗದ ಆರಾಧನೆಯನ್ನು ಮಾನಸಿಕವಾಗಿ ಸಾಧಿಸಬೇಕೆಂದು ಪ್ರತಿಪಾದಿಸಿರುವರು. ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಾಣಲಿಂಗದ ಆಂತರಿಕ ಅರ್ಚನೆಯ ವಿಧಿಯನ್ನು ತಿಳಿಸಿರುವರು. ಕ್ಷಮಾ ಗುಣವೇ ಅಭಿಷೇಕ ಜಲ, ವಿವೇಕವೆ ವಸ್ತ್ರ, ಸತ್ಯವೆ ಆಭರಣ, ವೈರಾಗ್ಯವೆ ಪುಷ್ಪಮಾಲಿಕೆ, ಸಮಾಧಿ ಸಂಪತ್ತೆ ದಂಡ, ನಿರಹಂಕಾರವೇ ಅಕ್ಷತೆ, ಶ್ರದ್ಧೆಯ ಧೂಪ, ಮಹಾಜ್ಞಾನವೇ ಜಗತ್ತನ್ನು ಬೆಳಗುವ ದೀಪ, ಭ್ರಾಂತಿರಾಹಿತ್ಯವೇ ನೈವೇದ್ಯ, ಮೌನವೇ ಘಂಟಾನಾದ, ನಿರ್ವಿಷಯವೇ ತಾಂಬೂಲ, ವಿಷಯ ಭ್ರಾಂತಿ ಇಲ್ಲದಿರುವಿಕೆಯೇ ಪ್ರದಕ್ಷಿಣೆ, ಬುದ್ಧಿ ಭಾವಗಳ ತಾದಾತ್ಮ್ಯ ಭಾವವೇ ನಮಸ್ಕಾರ. ಹೀಗೆ ಆಂತರಿಕವಾದ ಉಪಚಾರಗಳಿಂದ ಮನೋ ಹಸ್ತದಲ್ಲಿ ಪ್ರಾಣಲಿಂಗದ ಅರ್ಚನೆಯನ್ನು ಪ್ರಾಣಲಿಂಗಿಯು ಮೊದಲು ಸಾಧಿಸಬೇಕು. ಇಂಥ ಉತ್ಕೃಷ್ಟ ಗುಣಗಳಿಂದ ಮಾತ್ರ ಪ್ರಾಣಲಿಂಗದ ಪೂಜೆಯು ಪ್ರಾಪ್ತವಾಗುವದು. ಪ್ರಾಣಲಿಂಗಿಯ ಸ್ವರೂಪ ಚಿತ್ರಣವನ್ನು ಸ್ವತಂತ್ರ ಸಿದ್ಧಲಿಂಗರ ವಚನದಲ್ಲಿ ನೋಡಬಹುದು.

ಲಿಂಗದಲ್ಲಿ ಪ್ರಾಣವ ನಿಲಿಸಿ ಪ್ರಾಣದಲ್ಲಿ ಲಿಂಗವ ನಿಲ್ಲಿಸಿ

ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು.

ಈ ಲಿಂಗ ಸರ್ವಕರಣಂಗಳ ವೇಧಿಸಿ

 ಕರಣಂಗಳು ಲಿಂಗ ಕಿರಣಂಗಳಾದ ಕಾರಣ

 ಒಳಗೆ ಕರತಳಾಮಳಕದಂತೆ

ಲಿಂಗ ನೆಲೆಗೊಂಡಿತ್ತಾಗಿ ಹೊರಗೆನೆಂದರಿಯೆನು

 ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ನೀವು ಪ್ರಾಣಲಿಂಗವಾಗಿ

ಅಲ್ಲಮಪ್ರಭುದೇವರು ಸಹ ಪ್ರಾಣಲಿಂಗ ಸಾಧನೆಯಿಂದ ಮನ ಉನ್ಮನಗೊಂಡು ಅಮೃತವನ್ನು ಪಡೆಯುವುದಾಗಿ ಹೇಳಿರುವರು.

 ವ್ಯಾವಹಾರಿಕ ಬದುಕಿನಲ್ಲಿ ಅನೇಕರು ವಿಭಿನ್ನ ವಸ್ತುಗಳಲ್ಲಿ ತಮ್ಮ ಪ್ರಾಣವನ್ನಿರಿಸಿ ಕೊಂಡಿರವದನ್ನು ಕಾಣುತ್ತೇವೆ. ಆಯಾ ವಸ್ತುಗಳು ಅವರಿಂದ ದೂರವಾದರೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಂದರ್ಭಗಳನ್ನು ಸಹ ನೋಡುತ್ತೇವೆ. ಉದಾಹರಣೆಗಾಗಿ ಕೆಲವರು ಹೆಂಡತಿಯಲ್ಲಿ ಪ್ರಾಣವಿರಿಸಿದಂತೆ, ಹಲವರು ಮಕ್ಕಳಲ್ಲಿ ಪ್ರಾಣವನ್ನಿರಿಸುತ್ತಾರೆ. ಮತ್ತಿತರರು ತಂದೆ-ತಾಯಿಗಳಲ್ಲಿ ಪ್ರಾಣವನ್ನು ಕೇಂದ್ರೀಕರಿಸಿರುತ್ತಾರೆ. ಅದರಂತೆ ಬಸವ ಮಹಾನುಭಾವರು ಜಂಗಮನನ್ನೆ ತಮ್ಮ ಪ್ರಾಣವೆಂದು ಭಾವಿಸಿದ್ದು, ಜಂಗಮಮೂರುತಿ ಮಹಾಮನೆಗೆ ಬಂದು ಮರಳಿ ಹೋದ ಸಂದರ್ಭದಲ್ಲಿ ಪ್ರಾಣವನ್ನೇ ಕಳೆದುಕೊಂಡ ಸಂಗತಿಯಿದೆ. ಹಾಗೆ ಪ್ರಾಣಲಿಂಗಿಯು ತನ್ನ ಪ್ರಾಣಲಿಂಗವನ್ನೆ ಸರ್ವಸ್ವವೆಂದರಿದು ಅನುಸಂಧಾನ ಮಾಡಬೇಕು. ಪ್ರಾಣಲಿಂಗಿಯು ಅನಾಹತ ಚಕ್ರದ ಜಂಗಮಲಿಂಗವನ್ನು ತ್ವಗಿಂದ್ರಿಯ ಮುಖದಲ್ಲಿ ಅನುಭವ ಭಕ್ತಿಯಿಂದ ಸುಮನೋಹಸ್ತದಿಂದ ಆರಾಧಿಸಿ ಅನುಭವವನ್ನು ಪಡೆಯುವನು.

೫. ಶರಣ ಸ್ಥಲ

 ಕಾರಣಶರೀರವೆನಿಸಿದ ಯೋಗಾಂಗದಲ್ಲಿ ಶರಣಸ್ಥಲ ಹಾಗೂ ಐಕ್ಯಸ್ಥಲಗಳು ಬಂದಿವೆ. ತ್ಯಾಗಾ೦ಗದಿಂದ ಲಿಂಗಭೋಗ ಪಡೆದು ಶಿವಯೋಗ ಸಿದ್ದಿಯನ್ನು ಹೊಂದಲು ಶರಣನು ಅರ್ಹನಾಗುವನು. ವಿಶುದ್ಧಿಚಕ್ರದ ಪ್ರಸಾದಲಿಂಗದ ಆರಾಧಕನು ಶರಣನು, ಭಕ್ತನು ನೆಲತತ್ವವನ್ನು ಪ್ರತಿನಿಧಿಸಿದರೆ, ಶರಣನು  ಆಕಾಶತತ್ವದ ಪ್ರತಿನಿಧಿಯೆನಿಸುವನು. ಭಕ್ತನ ಬಾಳು ಬದುಕಿಗೂ ಶರಣನ ಬಾಳು ಬೆಳಕಿಗೂ ಅದೆಷ್ಟು ಅಂತರ ಮತ್ತೊಂದು ಬಗೆಯಲ್ಲಿ ಅದೆಷ್ಟು ಹತ್ತಿರ. ನೆಲ- ಮುಗಿಲುಗಳಂತೆ ಹತ್ತಿರ. ಆತ್ಮನಿಗೆ ಶರಣನು ಅತ್ಯಂತ ಸಮೀಪದವನಾದ ಕಾರಣವೇ ಯೋಗಾಂಗ ಕಾಯನು. ಶಿವಯೋಗ ಸಿದ್ಧನೆನಿಸುವನು.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿ ಆಚಾರಲಿಂಗದ ಅರ್ಚಕನಾದರೆ, ಶರಣನು ಮೀರಿದ ಕ್ರಿಯಾಶೀಲನು. ಪರಾಶಕ್ತಿಸಮನ್ವಿತ ಪ್ರಸಾದಲಿಂಗದ ಪೂಜಕನು. ಸದಾ ಪ್ರಸನ್ನಚಿತ್ತನೆನಿಸುವನು. ಪ್ರಸಾದಲಿಂಗವು ಶಾಂತ್ಯತೀತ ಕಲಾಪೂರ್ಣವಾದುದು. ಅದಕ್ಕಾಗಿ ಶರಣನ ಜೀವನವು ಪರಿಪೂರ್ಣ ಜೀವನ. ಭಕ್ತ ಸಹಜ ದಾನಿಯಾದರೆ, ಶರಣನು ಸುಯ್ದಾನಿ, ಸುಯ್ದಾನವೆಂದರೆ ಎಚ್ಚರ ಹಾಗೂ ತೃಪ್ತಿ. ಅದು ಸಂತೃಪ್ತಿ, ಅದಕ್ಕಾಗಿ ಆತನು ಪರಿಪೂರ್ಣ ಜೀವಿ. ಪರಿಪೂರ್ಣ ಬದುಕುಳ್ಳವನು. ಸದಾ ಆನಂದಭರಿತನು, ಸವೆಯದ ಸಾಕೆನಿಸದ ಮತ್ತೊಂದನ್ನು ಬಯಸದ ಲಿಂಗಾನಂದದಲ್ಲಿ ಲೋಲಾಡುವನು ಶರಣನು.

ವೀರಶೈವ ಸಿದ್ಧಾಂತದಲ್ಲಿ ವಿಚಾರಿಸಲಾಗಿ ನೆಲತತ್ವದ ಭಕ್ತನಿಗೂ ಆಕಾಶತತ್ವದ ಶರಣನಿಗೂ ಒಂದು ರೀತಿಯ ಮಹದಂತರ ಕಂಡರೂ ಷಟ್‌ಸ್ಥಲ ಸಾಧಕನು ಯಾವುದೇ ಸ್ಥಲದಲ್ಲಿದ್ದರೂ ಭಕ್ತಸ್ಥಲಕ್ಕೆ ಬರಲೇ ಬೇಕಾಗುವದು. ಆಧಾರವನ್ನು ಆಶ್ರಯಿಸಿಯೇ ಆಕಾಶಕ್ಕೇರುವುದು ನಿವೃತ್ತಿ. ಆಕಾಶವಾದರೂ ನೆಲದ ನೆಲೆಯನ್ನು ಬಿಟ್ಟಿಲ್ಲ. ಭಕ್ತನು ನೆಲತತ್ವದ ಗಂಧ ಪ್ರಸಾದವನ್ನು ಆಚಾರಲಿಂಗಕ್ಕೆ ಅರ್ಪಿಸುತ್ತಿದ್ದರೆ; ಶರಣನು ಪಂಚತತ್ವಗಳ ಪಂಚ ಪ್ರಸಾದಗಳನ್ನು ಪ್ರಸಾದಲಿಂಗಕ್ಕೆ ಸಮರ್ಪಿಸುವನು. ಶರಣನ ಜೀವನವು ಆಗಸದಂತೆ ಎತ್ತರವಾದುದು, ಬಿತ್ತರವಾದುದು. ಆಕಾಶಕ್ಕೆ ಬಯಲು ಎಂಬ ಉಪನಾಮವಿರುವಂತೆ ಶರಣನು ಪ್ರಾಪಂಚಿಕ ವ್ಯವಹಾರ- ವ್ಯಾಮೋಹಗಳಿಂದ ಮುಕ್ತನಾಗಿ ಬಟ್ಟಬಯಲನ್ನು ಮುಟ್ಟಲು ಸಿದ್ಧನಾದವನು. ಆತನು ನಿತ್ಯ ನಿರ್ಮಲನೂ ಆಗಿದ್ದಾನೆ. ಶರಣನು ಸಕಲ ಜೀವಿಗಳ ಲೇಸ ಬಯಸುವವನು ವಿಶ್ವಪ್ರೇಮ ಅವನಲ್ಲಿ ಮೈಗೂಡಿರುತ್ತದೆ.

ತ್ಯಾಗಾಂಗದ ಭಕ್ತನು ಕ್ರಿಯಾಶೀಲವಾಗಿ ನಿವೃತ್ತಿ ಕಲೆಯನ್ನಾಶ್ರಯಿಸಿದ ಆಚಾರಲಿಂಗದ ಅರ್ಚಕನಾದರೆ, ಶರಣನು ಕ್ರಿಯಾ-ಜ್ಞಾನ-ಇಚ್ಛಾ-ಆದಿ-ಪರಾಶಕ್ತಿಗಳು ಮೈಗೂಡಿದ ಪ್ರಸಾದಲಿಂಗದ  ಅರ್ಚಕನೆನಿಸುವನು.  ಡಾ.ಜ.ಚ.ನಿ.ಯವರು ಜೀವನ ಸಿದ್ಧಾಂತದಲ್ಲಿ ಶರಣಸ್ಥಲದ ಬಗೆಗೆ “ಆತ್ಮಾನುಭವವನ್ನು ಆತ್ಮಾನಂದವನ್ನು ಪಡೆದವನು ಅಚ್ಚಶರಣ. ಪಂಚಭೂತಗಳಿಂದ ಪಂಚಕೋಶಗಳಲ್ಲಿ ಉಂಟಾದ ಪ್ರಾಕೃತಿಕ ಶಕ್ತಿ ಸಾಮರ್ಥ್ಯಗಳನ್ನು ಯುಕ್ತಿ-ವಿಚಾರಗಳನ್ನು ಭಕ್ತಿಯಿಂದ ಮಾರ್ಪಡಿಸಿ ಆತ್ಮಾನಂದಕ್ಕೆ ಸಾಮರಸ್ಯಕ್ಕೆ ಅವನ್ನು ಅಣಿಮಾಡಿಕೊಂಡ ಅನುಭಾವಿ.  ವಿಶಾಲ ಮನೋಭಾವವನ್ನು  ಬೆಳೆಸಿಕೊಂಡ ವಿಮರ್ಶಾ ಶಕ್ತಿಸಂಪನ್ನ, ಚಿತ್ತ-ಬುದ್ಧಿ-ಪ್ರಾಣ- ಮನ-ಹಮ್ಮುಗಳಲ್ಲಿರುವ ದೋಷಗಳನ್ನುದೂರಮಾಡಿ ಶಿವಜ್ಞಾನದ ಶುಭ್ರ ಪ್ರಕಾಶದಲ್ಲಿ ಪರಮ ಪ್ರಸನ್ನತೆಯನ್ನು ನಿರ್ದೇಶ ನಿಷ್ಪತ್ತಿಗಳನ್ನು ಪಡೆದ ಪ್ರಗತಿಶೀಲ.  ಮಹಾನಂದವನ್ನು ಮಹಾಪ್ರಕಾಶವನ್ನು ಪಡೆದ ಪೂರ್ಣ ಜೀವಿ.  ಮರ್ತ್ಯಲೋಕದ ಮಣಿಹವನ್ನೆಲ್ಲ ಮಾಡಿ ಮುಗಿಸಿದ ತುಂಬು ಬಾಳು ಶರಣನದು. ವಿಯತ್ತಕ್ಕಿಂತಲೂ ವಿಶೇಷವಾದ ವಿಶಾಲ ಮನೋಭಾವವನ್ನು ವಿಕಾಸಗೊಳಿಸಿಕೊಂಡು ಪ್ರಕಾಶಪಡಿಸಿದ ಪೂರ್ಣಜೀವಿ ಶರಣ” ಎಂದು ಶರಣನ ಮಹತ್ವವನ್ನು ಅನುಭವಪೂರ್ಣವಾಗಿ ಪ್ರತಿಪಾದಿಸಿರುವರು.

ಶರಣನು ಪ್ರಾಕೃತನಲ್ಲ; ಅಪ್ರಾಕೃತನು. ಪ್ರಾಕೃತಿಕ ಜಡತ್ವವನ್ನು ಮೀರಿದವನು. ಅದಕ್ಕಾಗಿ ಅವನು ಬಯಲಮೂರ್ತಿಯು. ಆತನ ವಿದ್ಯಾಬುದ್ಧಿಯಿಂದ ಬ್ರಹ್ಮಾದಿಗಳು ಉದಿಸಿದರೆಂದು ಚನ್ನಬಸವಣ್ಣನವರು ವಚನಿಸಿದ್ದುಂಟು. ಶರಣ ಪದದ ಅರ್ಥ= ರಕ್ಷಣೆ, ರಕ್ಷಕ, ಮನೆ, ಮೊರೆ, ಕಾಪಾಡುವವನು ಎಂದಿದೆ. ಆದರೆ  ಷಟ್‌ಸ್ಥಲಾಂತರ್ಗತ ಶರಣ ಪದ ವಿಶಿಷ್ಟವಾದುದು. ಲಿಂಗಪತಿಗೆ ಶರಣ ಹೊಕ್ಕವನೆ ಶರಣ, ಇಂಥ ಪದವನ್ನು ಸಾಮಾನ್ಯರಿಗೂ ಬಳಸಿ ಇಂದು ಅತಿವ್ಯಾಪ್ತಿಗೊಳಿಸುತ್ತಿರುವದು ಉಚಿತವಲ್ಲ. ಶರಣ ತತ್ವಕ್ಕೆ ಅಪಚಾರ ಮಾಡಿದಂತಾಗುವದು. ಶರಣನು ಆನಂದಭಕ್ತಿಯುಳ್ಳವನಾಗಿ ತಾನೆ ಸತಿಯಾಗಿ ಲಿಂಗ ಪತಿಯನ್ನು ವರಸಿದವನು. ಪರಾಶಕ್ತಿಯುಕ್ತ ಶಾಂತ್ಯತೀತ ಕಲಾಪೂರ್ಣ ಪ್ರಸಾದಲಿಂಗವನ್ನು ಶ್ರೋತ್ರ ಮುಖದಲ್ಲಿ ಸುಜ್ಞಾನ ಹಸ್ತದಿಂದ ಸುಶಬ್ದ ಪ್ರಸಾದವನ್ನು ಅರ್ಪಿಸಿ ಧನ್ಯನಾದವನು. ಈತನ ಇರುವನ್ನು ಅಲ್ಲಮಪ್ರಭುಗಳು-

ಹರಿವ ನದಿಗೆ ಮೈಯಲ್ಲ ಕಾಲು,

ಉರಿವ ಅಗ್ನಿಗೆ ಮೈಯಲ್ಲ ನಾಲಿಗೆ,

ಬೀಸುವ ಗಾಳಿಗೆ ಮೈಯಲ್ಲ ಕೈ(ಮುಖ),

ಗುಹೇಶ್ವರ ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯಾ

ಎಂಬುದಾಗಿ ಶರಣನ ಸರ್ವಾರ್ಪಣ ಭಾವವನ್ನು ನಿರೂಪಿಸಿರುವರು. ಶರಣನ ಅರ್ಚನ, ಅರ್ಪಣ ಅನುಭಾವ ಕ್ರಿಯೆಗಳನ್ನು ಮನಂಬುಗುವಂತೆ ವಿವರಿಸಿರುವರು. ಶರಣನು ಸರ್ವಾಂಗ ಲಿಂಗಮಯನು.

೬. ಐಕ್ಯ ಸ್ಥಲ

ಐಕ್ಯಸ್ಥಲ ಷಟ್‌ಸ್ಥಲದಲ್ಲಿ ಕೊನೆಯದು. ಯೋಗಾಂಗದಲ್ಲಿ ಎರಡನೆಯದು. ಐಕ್ಯನಿಗೆ ಆತ್ಮನೆ ಅಂಗ, ಆತ್ಮಾಂಗನಾದ ಐಕ್ಯನು ಚಿಚ್ಛಕ್ತಿ-ಶಾಂತ್ಯತೀತೋತ್ತರ ಕಲೆಯುಳ್ಳ ಮಹಾಲಿಂಗದೊಡನೆ ಸಮರಸವಾಗುವ ಸಾಮರ್ಥ್ಯವನ್ನು ಸಾಧಿಸುವವನು. ಡಾ|| ಜ.ಚ.ನಿ.ಯವರು ಐಕ್ಯಸ್ಥಲದ ವಿವರಣೆಯನ್ನು ಮನನೀಯವಾಗಿ ನೀಡಿದ್ದಾರೆ- ʼʼಆತ್ಮ ಬೇರಿಲ್ಲ, ದೂರಿಲ್ಲ. ಆತ್ಮ ತಾನೇ; ತನ್ನನ್ನು ಅರಿತಿಲ್ಲ. ಅನುಭವ ಪಡೆದಿಲ್ಲ. ತನ್ನರಿವಿಗಿಂತ ಬೇರಿಲ್ಲ ಭಾಗ್ಯ. ತನ್ನೊಳಗೆ ತಾನಿರುವದಕ್ಕಿಂತ ಬೇರಿಲ್ಲ ಸೌಖ್ಯ ತನ್ನ ಗಳಿಕೆಯೇ ಗಳಿಕೆ. ಆ ಗಳಿಕೆಯಿಂದ ಮನೆ ತುಂಬುವುದಿಲ್ಲ. ಮನ ತುಂಬುತ್ತದೆ. ಅಂತೆಯೇ ‘ಶೂನ್ಯ” ಸಂಪಾದನವೆಂದರು. ಮನದುಂಬುವುದೆಂದರೆ ಮನವರಿಕೆಯಾಗುವಿಕೆ. ಮತ್ತು ಮಹದನುಭವವುಂಟಾಗುವಿಕೆ, ಆತ್ಮ ವಿಕಾಸ ವಾಗುವಿಕೆ, ಸರ್ವಾತ್ಮಭಾವದಿಂದ ಸತ್ಯದತ್ತ ಸಾಗುವಿಕೆ, ಪೂರ್ಣಖಂಡಭಾವವನ್ನು ತೋರುವಿಕೆ, ಕ್ರಿಯಾಘನತೆಯನ್ನು ಜ್ಞಾನಪೂರ್ಣತೆಯನ್ನು ಸಂಪಾದಿಸುವಿಕೆ, ಸಮದರ್ಶಿಯಾಗಿ ಬಾಳುವಿಕೆ. ಇವು ಐಕ್ಯನ ಸಾಧನೆ ಸಿದ್ಧಿಯೆನಿಸುವವು.”

ಷಟ್‌ಸ್ಥಲವು ಶ್ರದ್ಧಾಭಕ್ತಿಯಿಂದ ಪ್ರಾರಂಭವಾಗಿ ಅದು ಘಟ್ಟಗೊಂಡಾಗ ನಿಷ್ಠೆಯಾಗಿ ಪರಿಣಮಿಸುವದು. ನಿಷ್ಠೆಯು ಮೂಢನಂಬಿಕೆಯಿಂದ ಕೂಡದೆ ಕ್ರಿಯಾ-ಜ್ಞಾನಶಕ್ತಿಗಳ ಸಮನ್ವಯದಲ್ಲಿ ಸಾವಧಾನತೆ ಸಾಧಿಸುವುದರಿಂದ ಅನುಭವ ಅಳವಡುವದು. ಅನುಭವದಲ್ಲಿ ಅಮೃತತ್ವವಿರುವಂತೆ ಆನಂದವುಂಟು. ಅದು ಕೇವಲಾನಂದವಾಗದೆ ಅಮಿತಾನಂದವೆನಿಸುವದು.  ಆನಂದ ಲಭಿಸುತ್ತಿದ್ದ ಹಾಗೆ ಲಿಂಗಾಂಗ ಸಾಮರಸ್ಯ ಲಭಿಸುವದೆ ಐಕ್ಯನ ಸಾಧನೆ.

ಶರಣ ಸ್ಥಲವನ್ನು ದಾಟಿದ ಐಕ್ಯನು ಆತ್ಮಲಿಂಗವೆನಿಸುವನು. ಅವನು ಚಿಚ್ಛಕ್ತಿಯುಕ್ತ ಶಾಂತ್ಯತೀತೋತ್ತರ ಕಲಾಪೂರ್ಣ ಮಹಾಲಿಂಗವನ್ನು ಸದ್ಭಾವ ಹಸ್ತದಿಂದ ಆಜ್ಞಾಚಕ್ರದಲ್ಲಿ ಹೃದಯಮುಖವಾಗಿ ಸಂದರ್ಶಿಸುವನು. ತೃಪ್ತಿ ಪದಾರ್ಥಗಳನ್ನು ಸುತೃಪ್ತಿ ಪ್ರಸಾದವಾಗಿಸಿ ಮಹಾಲಿಂಗಕ್ಕೆ ಸಮಿರ್ಪಿಸಿ ಅಮಿತಾನಂದದಿಂದ ಸಮರಸ ಭಕ್ತಿಯಲ್ಲಿ ತೇಲಾಡುವನು.  ಶರಣನು ತನ್ನೆಲ್ಲ ವ್ಯಾವಹಾರಿಕ ಬದುಕನ್ನು ಹಾಗೂ ಅಧ್ಯಾತ್ಮಿಕ ಬದುಕನ್ನು ಭಗವಂತನಿಗೆ ಸಮರ್ಪಿಸಿದ ಕಾರಣ ಶಿವನೇ ಆತನ ಯೋಗಕ್ಷೇಮವನ್ನು ನೋಡುತ್ತಾನೆ. ಅದಕ್ಕಾಗಿ ಶರಣನಿಗೆ ಯಾವುದೇ ಅಡ್ಡಿ ಆತಂಕಗಳು ಬರುವದಿಲ್ಲ. ಆತನು ನಿತ್ಯಾನಂದವನ್ನೇ ಪಡೆಯುವನು. ವ್ಯಾವಹಾರಿಕ ಸುಖಕ್ಕೂ ಆತ್ಮಾನಂದಕ್ಕೂ ಮಹದಂತರವಿದೆ. ಬಾಹ್ಯ ಸುಖ ಕ್ಷಣಿಕ, ಆತ್ಮಾನಂದ ನಿತ್ಯ ಸುಖ. ಶರಣನು ಬಾಹ್ಯ ವಿಷಯಗಳಲ್ಲಿ ಅನಾಸಕ್ತವಾಗಿ ಆತ್ಮಸುಖವನ್ನು ಅನುಭವಿಸುತ್ತ ಐಕ್ಯಸ್ಥಿತಿಯಲ್ಲಿ ಸಮರಸವನ್ನು ಸಾಧಿಸುವನು. ಪರಶಿವನ ಷಟ್‌ಶಕ್ತಿಗಳೆಲ್ಲ ಜಾಗ್ರತಗೊಂಡು ಶರಣನಲ್ಲಿ ಪ್ರತ್ಯಕ್ಷವಾಗುವವು. ಶಿವಯೋಗ ಸಾಧನೆಯಿಂದ ಕಾಮಾದಿ ಅನಿಮಿತ್ತ ವೈರಿಗಳು ಹಸಿವು ತೃಷೆಗಳೆಂಬ ಷಡೂರ್ಮಿಗಳು ಮಾಯವಾಗಿ ಲಿಂಗದ ಬಾಹ್ಯ ಉಪಚಾರಗಳೂ ಇಲ್ಲವಾಗುವವು. ಹಿಮ ಕರಗಿ ನೀರಾಗುವಂತೆ ಕರ್ಪುರ ಕರಗಿ ಬೆಂಕಿಯಾಗುವಂತೆ ಐಕ್ಯನು ಮಹಾಲಿಂಗದಲ್ಲಿ ಒಂದಾಗುವನು. ಮಹಾಲಿಂಗವೇ ತಾನಾಗುವನು.

 ಶರಣ ನಿದ್ರೆಗೈದಡೆ ಜಪಕಾಣಿರೊ

 ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ

 ಶರಣ ನಡೆದುದೆ ಪಾವನ ಕಾಣಿರೊ

 ಶರಣ ನುಡಿದುದೆ ಶಿವತತ್ವ ಕಾಣಿರೂ

 ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೋ

 ಬಸವಣ್ಣನವರ ಸಂದೇಶದಂತೆ ಶರಣನ ಕಾಯವು ಕೈಲಾಸವಾಗುವದು. ಆತನ ನಡೆ-ನುಡಿಗಳು ಪಾವನ, ಅವನೇ ಶಿವತತ್ವ, ಆತನು ಸದಾ ಜಾಗ್ರತನು, ಆತ ನಿದ್ದೆ ಮಾಡಿದನೆಂದರೆ ಜಪವನ್ನೇ ಮಾಡುವನು. ಜಾಗ್ರತನೆಂದಡೆ ಶಿವರಾತ್ರಿಯ ಸಂಕೀರ್ತನವಿದ್ದಂತಾಗುವದು. ಶರಣನು ಪರಮಾತ್ಮ ಸ್ವರೂಪನೇ ಆಗುವನು. ವಸ್ತುತಃ ಹಾಲು-ನೀರುಗಳು ವಿಭಿನ್ನ ಗುಣಧರ್ಮಗಳನ್ನು ಹೊಂದಿದ್ದರೂ ಅವೆರಡನ್ನು ಬೇರ್ಪಡಿಸಲಾಗದು. ಆದರೆ ಒಂದಾದಾಗ ಹಂಸಪಕ್ಷಿ ಬೇರ್ಪಡಿಸುತ್ತದೆಂಬ ವದಂತಿಯಿದೆ. ಆದರೆ ಬೆಂಕಿಯ ಮೇಲಿಟ್ಟರೆ ನೀರು ಸುಟ್ಟು ಹೋಗುತ್ತದೆ. ಹಾಲು ಗಟ್ಟಿಯಾಗುತ್ತ ಹೋಗುತ್ತದೆ. ಹಾಲು ಹಾಲಿನಲ್ಲಿ ಬೆರತಂತೆ ಶರಣನು ಮಹಾಲಿಂಗದಲ್ಲಿ ಒಂದಾಗಿ ಪರಮಾತ್ಮನಲ್ಲಿ ಬೇರಿಲ್ಲದಂತೆ ಸಮರಸ ಹೊಂದುವನು. ಶಿವಶಕ್ತಿಗಳನ್ನು ಸಂಪಾದಿಸಿ ಪರಶಿವನಲ್ಲಿ ಒಂದಾಗುವದೇ ಐಕ್ಯನ ಮಹಾಮಣಿಹ ವೆನಿಸುವದು.

ಉಪಸಂಹಾರ

ಷಟ್‌ಸ್ಥಲ ಸಿದ್ಧಾಂತಕ್ಕೆ ಅಷ್ಟಾವರಣ-ಪಂಚಾಚಾರಗಳು ಪೂರಕವಾದವುಗಳು. ಅಂಗ-ಪ್ರಾಣಗಳು ಗಟ್ಟಿಯಾದರೆ ಆತ್ಮಚೈತನ್ಯವು ಸಶಕ್ತವಾಗುವದು. ಧಾರ್ಮಿಕ ಸ್ವಾತಂತ್ರ್ಯ, ಸಚ್ಚಾರಿತ್ರ್ಯ ದಿಂದ ವ್ಯಕ್ತಿತ್ವ ವಿಕಾಸಗೊಂಡು ಗುರಿಸಾಧನೆಯ ಮಾರ್ಗ ಸುಸೂತ್ರವೆನಿಸುವದು. ವೀರಶೈವ ಸಿದ್ಧಾಂತದಲ್ಲಿ ತತ್ವಗಳ ಅವತರಣ ಜೀವಾತ್ಮನ ಕಲ್ಯಾಣಕ್ಕಾಗಿದೆಯೆಂಬುದನ್ನು ನಂಬಬೇಕು. ಈ ಶ್ರದ್ಧೆಯು ಸಮರಸಕ್ಕೆ ಕಾರಣವಾಗುವದು. ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯೇ ಷಟ್‌ಸ್ಥಲದ ವಿಕಾಸ ಮಾರ್ಗ. ಇದು ಕೇವಲ ಪರಿಕಲ್ಪನೆಯಲ್ಲ, ಅನುಷೇಯವಾದುದು. ಅದಕ್ಕಾಗಿ ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ.

ಷಟ್‌ಸ್ಥಲದಲ್ಲಿ ಅವತರಣ ಕ್ರಿಯೆಗೆ ಪ್ರವೃತ್ತಿ ಮಾರ್ಗವೆಂದರೆ, ಆರೋಹಣ ಪ್ರಕ್ರಿಯೆಗೆ ನಿವೃತ್ತಿ ಪಥವೆನ್ನುವರು. ನಿವೃತ್ತಿ ಕಲೆಯನ್ನು ಗ್ರಹಿಸಿದ ಆಚಾರಲಿಂಗದ ಅನುಸಂಧಾನದಿಂದ ಕ್ರಿಯಾಶೀಲತೆ ಪ್ರಾರಂಭವಾಗಿ ಮೀರಿದಾಚರಣೆಯತ್ತ ಸಾಗುವದೇ ಶರಣನ ಮಹಾಮಣಿಹವೆನ್ನಬೇಕು.

ಕೊನೆ ಟಿಪ್ಪಣಿಗಳು

೧. ಷಟ್‌ಸ್ಥಲ ಚಿಂತನ-ಲೇ. ಡಾ. ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪ್ರಕಾಶಕರು, ಕಾರಂಜಿಮಠ ಪ್ರಕಾಶನ,  ಬೆಳಗಾವಿ, ೨೦೦೩,

೨. ಜೀವನ ಸಿದ್ಧಾಂತ-ಭಕ್ತ ಸಂಪುಟ-ಡಾ. ಜ.ಚ.ನಿ. ಪುಟ ೪ ಮೊದಲ ಮಾತು

೩.  ಚನ್ನಬಸವಣ್ಣನವರ ವಚನಗಳು- ಸಂ. ಡಾ. ಆರ್. ಸಿ. ಹಿರೇಮಠ ವ-೬೩೩,

೪.  ವಚನಗಳಲ್ಲಿ ವೀರಶೈವ ಧರ್ಮ-ಲೇ. ಎಚ್. ತಿಪ್ಪೇರುದ್ರಸ್ವಾಮಿ

೫.   ಅಲ್ಲಮಪ್ರಭು ದೇವರ ವಚನಗಳು ಸಂ. ಆರ್. ಸಿ. ಹಿರೇಮಠ

೬.   ಷಟ್‌ಸ್ಥಲ ಜ್ಞಾನಸಾರಾಮೃತ-ವ-೩೩

೭.   ಶಿವಾನುಭವ ಸೂತ್ರಂ-ಮೊಗ್ಗೆಯ ಮಾಯಿದೇವರು ೨-೩

೮.   ಸಿದ್ಧಾಂತ ಶಿಖಾಮಣಿ-೫-೩೪.

೯.   ಶಿವಶರಣೆಯರ ವಚನಗಳು ಸಂ.ಆರ್‌.ಸಿ.ಹಿ. ವ-೨೫೦.

೧೦.  ಷಟ್‌ಸ್ಥಲ ಜ್ಞಾನ ಸಾರಾಮೃತ – ವಚನ ೩೯.

೧೧.  ಆದಯ್ಯ ಶರಣನ ವಚನಗಳು

೧೨.   ಬಸವಣ್ಣನವರ ವಚನಗಳು  ವ-೯೬

೧೩.   ಗುರುಕರುಣ ತ್ರಿವಿಧಿ ಪದ್ಯ  -೨೨೬

೧೪.   ಬಸವಣ್ಣನವರ ವಚನಗಳು – ವ-೭೫೮.

೧೫.   ಬಸವಣ್ಣನವರ ವಚನಗಳು.

೧೬.   ನಾರದ ಭಕ್ತಿಸ್ತೋತ್ರ-೧

೧೭.   ಗುರುಕರಣ ತ್ರಿವಿಧಿ   ೨೨೭

೧೮.   ಷಟ್‌ಸ್ಥಲ ಜ್ಞಾನ ಸಾರಾಮೃತ- ವ-೨೬೪.

೧೯.   ಚನ್ನಬಸವಣ್ಣನವರ ವಚನಗಳು – ಸಂ. ಆರ್.ಸಿ.ಹಿ. ವ-೧೦೮೭.

೨೦.   ಬಸವಣ್ಣನವರ ವಚನಗಳು – ಸಂ.ಆರ್.ಸಿ.ಹಿ, ವ-೧೦೯.

೨೧.   ಚ.ಬ. ವಚನಗಳು – ೮೧೬.

೨೨.   ಗುರುಕರುಣ ತ್ರಿವಿಧಿ – ಪದ್ಯ – ೨೨೮.

೨೩.   ಸ್ವತಂತ್ರ ಸಿದ್ಧಲಿಂಗೇಶ್ವರ ವಚನ

೨೪.    ಜೀವನ ಸಿದ್ಧಾಂತ-ಶರಣಸ್ಥಲ-ಡಾ. ಜ.ಚ.ನಿ.

೨೫.   ಅಲ್ಲಮಪ್ರಭುದೇವರ ವಚನಗಳು ವ-೧೨೬೫

೨೬.   ಜೀವನ ಸಿದ್ಧಾಂತ-ಐಕ್ಯಸ್ಥಲ.

೨೭.   ಬಸವಣ್ಣನವರ ವಚನಗಳು ವ-೮೭೨,

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

ದೃಷ್ಟಿ ಎಂದರೆ ಕಣ್ಣಿನ ನೋಟ ಅಥವಾ ನೋಡುವ ಕ್ರಿಯೆ. ನೋಡುವ ನೋಟದಲ್ಲಿ ನಮ್ಮ ಕಣ್ಣಿಗಿಂತಲೂ ಮನಸ್ಸಿನ ಪಾತ್ರ ಪ್ರಮುಖವಾದುದು. ಕಣ್ಣಿನಿಂದ ಯಾವುದೇ ವಸ್ತುವನ್ನು ನೋಡಿದರೂ ಮನಸ್ಸು ಅದರ ಮೇಲೆ ಕೇಂದ್ರೀಕೃತವಾಗದ ಹೊರತು ಆ ವಸ್ತುವಿನ ಜ್ಞಾನ ನಮಗೆ ಸಾಧ್ಯವಾಗುವುದಿಲ್ಲ. ನಾವು ಒಂದು ವಸ್ತುವನ್ನು ನೋಡಿದಾಗ ಮೊದಲು ನಮ್ಮ ಮನಸ್ಸು ಆ ವಸ್ತುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಬುದ್ದಿಯು ಇದು ಇಂಥ ವಸ್ತುವೆಂದು ನಿರ್ಧರಿಸುತ್ತದೆ. ನಾನು ಈ ವಸ್ತುವನ್ನು ನೋಡುತ್ತಿದ್ದೇನೆ ಎಂಬುದು ಅಹಂಕಾರ. ಹಾಗೆಯೇ ಕಾಮಕ್ರೋಧಾದಿ ಸಂವೇಗಗಳಿಗೆ ಒಳಗಾಗುವುದು ಚಿತ್ತ , ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಇವು ನಮ್ಮ ಅಂತಃಕರಣಗಳು. ‘ಕರಣಂಗಳ ಚೇಷ್ಟೆಗೆ ಮನವೇ ಬೀಜ’ ಎನ್ನುತ್ತಾಳೆ ಅಕ್ಕಮಹಾದೇವಿ.

ಅಂತಃಕರಣಗಳ ವ್ಯವಹಾರವೆಲ್ಲವೂ ಮನಸ್ಸಿನಿಂದ ಮೊದಲ್ಗೊಳ್ಳುತ್ತದೆ. ಹಾಗೆಯೇ  ಕಣ್ಣು ಕಿವಿ ಇತ್ಯಾದಿ ಜ್ಞಾನೇಂದ್ರಿಯಗಳ ವ್ಯವಹಾರಕ್ಕೂ ಮನಸ್ಸೇ ಕಾರಣ. ಆದ್ದರಿಂದ ನಾವು ನೋಡುವ ನೋಟ ಅಥವಾ ನಮ್ಮ ಕಣ್ಣಿನ ದೃಷ್ಟಿ ಪವಿತ್ರವಾಗಿರಲು ಮನಸ್ಸು ಪವಿತ್ರವಾಗಿರಬೇಕಾದುದು ಹಾಗೆಯೇ ನಿರ್ಮಲವಾಗಿರಬೇಕಾದುದು ಅತ್ಯವಶ್ಯ. ʼ ಎಲ್ಲಿ ನೋಡಿದಡಲ್ಲಿ ಮನವೆಳೆಸಿದರೆ ಆಣೆ ನಿಮ್ಮಾಣೆ ನಿಮ್ಮ ಪ್ರಮಥರ ಆಣೆ’ ಎಂದು ಬಸವಣ್ಣನವರು ಮನಸ್ಸಿನ ಹೀನ ದೃಷ್ಟಿಗೆ ಕಡಿವಾಣ ಹಾಕುತ್ತಾರೆ. ಸದಾಭೌತಿಕ

ಸುಖಕ್ಕಾಗಿ ಹಾತೊರೆಯುವ ಹಾಗು ವಿಷಯಾದಿಗಳಿಗೆ ಹರಿಯುವ ಮನಸ್ಸಿಗೆ ಜ್ಞಾನಿಗಳಾದವರು ಸಂಸ್ಕಾರಕೊಟ್ಟು ದೃಷ್ಟಿಯನ್ನು ಪವಿತ್ರವಾಗಿರಿಸಿಕೊಳ್ಳುತ್ತಾರೆ.

 ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಠವತ್!

ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸಃ ಪಂಡಿತಃ!!

 ಎಂಬುದು ಸುಭಾಷಿತೋಕ್ತಿ, ಪರಸ್ತ್ರೀಯರನ್ನು ತಾಯಿಯಂತೆ, ಪರಧನವನ್ನು ಮಣ್ಣಿನ ಹೆಂಟೆಯಂತೆ ಎಲ್ಲ ಜೀವಿಗಳನ್ನು ತನ್ನಂತೆ ಕಾಣುವುದು ಜ್ಞಾನಿಗಳ ಲಕ್ಷಣ. ಇಂಥ ಜ್ಞಾನಿಗಳ ದೃಷ್ಟಿಯೇ ನಿರ್ಮಲದೃಷ್ಟಿ, ಪವಿತ್ರ ದೃಷ್ಟಿಯುಳ್ಳವರಿಗೆ ಎಲ್ಲವೂ ಸುಂದರವಾಗಿ, ಪವಿತ್ರವಾಗಿ ಕಾಣುತ್ತದೆ.

 ಹಚ್ಚ ಹಸಿರಿಬಿಂದ ಕೂಡಿದ ದಟ್ಟ ಕಾಡಿನ ಮಧ್ಯದಲ್ಲಿ ಸುಂದರವಾದ ಒಂದು ಮನೆ ಇತ್ತು. ಅದನ್ನು ಕಂಡ ಸಾಧು ಸತ್ಪುರುಷರೊಬ್ಬರು ‘ಎಷ್ಟು ಸುಂದರವಾದ ಪ್ರಶಾಂತವಾದ ಸ್ಥಳವಿದು! ಇಲ್ಲಿಯೇ ಇದ್ದು ಸದಾ ಭಗವಂತನ ಧ್ಯಾನ ಮಾಡಬೇಕು’ ಎಂದು ಯೋಚಿಸಿದರು. ಅದೇ ಮನೆಯನ್ನು ನೋಡಿದ ಕಳ್ಳನೊಬ್ಬನು ಎಂತಹ ಗುಪ್ತವಾದ ಸ್ಥಳದಲ್ಲಿರುವ ಮನೆ ಇದು! ನಾನು ಕಳವು ಮಾಡಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಇಟ್ಟರೆ ಅವು ಯಾರ ಕಣ್ಣಿಗೂ ಬೀಳಲಾರವು ಎಂದು ಯೋಚಿಸಿದ. ದುರಾಚಾರಿ ದುರ್ವ್ಯಸನಿಯೊಬ್ಬ ಆ ಮನೆಯನ್ನು ಕಂಡು ನನ್ನ ದುರಾಚಾರಕ್ಕಾಗಿ ಇದಕ್ಕಿಂತಲೂ ಉತ್ತಮವಾದ ಏಕಾಂತ ಸ್ಥಳ ಮತ್ತೊಂದಿಲ್ಲ ಎಂದು ನಿರ್ಧರಿಸಿದ. ಹಾಗೆಯೇ ಮನೆಯನ್ನು ನೋಡಿದ ಜೂಜುಗಾರನೊಬ್ಬ ಜೂಜಾಟವಾಡಲು ಅತ್ಯಂತ ಯೋಗ್ಯವಾದ ಮನೆ ಇದು. ನನ್ನ ಗೆಳೆಯರನ್ನೆಲ್ಲ ಇಲ್ಲಿ ಕರೆ ತಂದು ಜೂಜಾಟವಾಡುವ ಎಂದು ಯೋಚಿಸಿದ. ಹೀಗೆ ಒಂದೇ ಮನೆಯನ್ನು ಬೇರೆ ಬೇರೆ ದೃಷ್ಟಿಕೋನ ಹೊಂದಿದ ವ್ಯಕ್ತಿಗಳು ಬೇರೆ ಬೇರೆ ರೂಪದಲ್ಲಿ ನೋಡಿದರು. ನಮ್ಮ ನೋಟದ ಹಿಂದಿನ ಮನಸ್ಸಿನ ಪಾವಿತ್ರ್ಯತೆ ಬಹಳ ಮಹತ್ವದ್ದು. ಆಶೆ-ಆಮಿಷಗಳಿಂದ, ಕಾಮ ಕ್ರೋಧಾದಿ ಮನೋವಿಕಾರಗಳಿಂದ ಮನಸ್ಸು ಮುಕ್ತವಾಗಿರಬೇಕು. ಆಗ ನಮ್ಮ ದೃಷ್ಟಿ ಹಾಗು ಅಂತಃಕರಣಗಳೆಲ್ಲವೂ ಒಳ್ಳೆಯದಾಗುತ್ತವೆ. ದೃಷ್ಟಿಯಂತೆ ಸೃಷ್ಟಿ ಅಲ್ಲವೇ?