ರಾಗ – ಭೀಮಪಲಾಸ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

ಬೋಧವ ಕೊಡು ದೇವ | ಮನಕೆ |

ಶಿವಯೋಗದ ಸುಸ್ವಾದವ ತಿಳಿಯುವ || ಪ ||

ಹೊನ್ನಿನ ಹೆಣ್ಣಿನ ಭ್ರಾಂತಿಯ ದೂಡಿ |

ಜಂಗಮಾರ್ಯನ ಅಂಗ ಸೇವಿಸುವ || 1 ||

ಜ್ಞಾನ ಬಲಿದು ಭವ ಬಾಧೆಯ ನೀಗಿ

ಬೇಗ ಮೋಕ್ಷದ ಮಾರ್ಗಪಿಡಿಯುವ || 2 ||

ವರಮಠಧೀಶನೆ ತೋಂಟದಾರ್ಯ |

ಬೇಗ ಅಂಗವು ಲಿಂಗದಿ ಬೆರೆವ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಈ ಲಿಂಗದೊಡಲೊಳಗೆ | ಮೂಲೋಕವಡಗಿಹುದು

ಮೂಲೋಕದೊಳಗೆ – ಈ ಲಿಂಗ ಸಂಚರವ

ಪಾಲಿಸಿದೆ ಗುರುವೆ ಕೃಪೆಯಾಗು     ||೧೧೧ ||

ಲಿಂಗಾಂಗಯೋಗವನ್ನು ವಿವರಿಸಿ ಆ ಲಿಂಗದ ಆದ್ಯಂತವನ್ನು ಅರುಹುತ್ತಾನೆ. ಗುರುಕರುಣಿಸಿದ ಲಿಂಗವು ಶಿಷ್ಯನ  ಚಿತ್ಕಳೆಯೆಂಬುದನ್ನು ತಿಳಿದಿದ್ದೇವೆ. ಚಿತ್ಕಳೆಯೇ ಚುಳುಕಾಗಿ ಕರಕಮಲಕ್ಕೆ ಬಂದ ಇಷ್ಟಲಿಂಗ ಚಿಕ್ಕದಲ್ಲ.  ಆಲದ ಬೀಜವು ಅತಿಚಿಕ್ಕದಾಗಿದ್ದರೂ ಅದರಲ್ಲಡಗಿದ ಮರದ ಧರ್ಮ ವ್ಯಾಪಕವಾಗಿದೆ. ಸಣ್ಣ ಬೀಜದಿಂದಲೇ ಬೃಹತ್ತಾದ ಗಿಡವು ಪ್ರಾದುರ್ಭವಿಸುತ್ತದೆ. ಅದರಂತೆ ಈ ಲಿಂಗದೊಡಲೊಳಗೆ  ಸ್ವರ್ಗ ಮರ್ತ್ಯ-ಪಾತಾಳವೆಂಬ ಮೂರು ಲೋಕಂಗಳು ಅಡಗಿದ್ದಾವೆ. ಲಿಂಗದಲ್ಲಿ ತ್ರಿಲೋಕಗಳ ವ್ಯಾಪಕತೆಯಿರುವಂತೆ ಮೂರು ಲೋಕಂಗಳಲ್ಲಿ ಲಿಂಗದ ಸಂಚಾರ (ವ್ಯಾಪಕತೆ) ಪಸರಿಸಿದೆ. ಲಿಂಗವಿಲ್ಲದ ಸ್ಥಾನವೇ ಇಲ್ಲ. ಈ ಮಾತನ್ನು ಸರ್ವಜ್ಞನು ಸುಂದರವಾಗಿ ಹಾಡಿದ್ದಾನೆ.

ಲಿಂಗಕ್ಕೆ ಕಡೆಯಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?

ಲಿಂಗದೊಳು ಜಗವು ಅಡಗಿಹುದು, ಲಿಂಗವನು

ಹಿಂಗಿದವರುಂಟೆ ಸರ್ವಜ್ಞ

ಲಿಂಗಕ್ಕೆ ಕಡೆ-ಮೊದಲಿಲ್ಲ, ಲಿಂಗವು ಸರ್ವತ್ರ ವ್ಯಾಪಿಸಿದೆ. ಅದುಕಾರಣ ಇದನ್ನು ಸಕಲರೂ ಗೌರವಿಸಲೇಬೇಕಾಗುವದು.

ವೀರಶೈವ ಚಿಂತಾಮಣಿಕಾರರು-

ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ |

ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯತೇ ||

ʼʼಲಿಂಗ ಮಧ್ಯದಲ್ಲಿ ಮೂರು ಲೋಕದ ಸಚರಾಚರ ಜಗತ್ತು ಅಡಕವಾಗಿದ್ದು ಆ ಲಿಂಗಕ್ಕಿಂತ ಭಿನ್ನವಾದ ವಸ್ತು ಯಾವುದೂ ಇಲ್ಲ, ಇಂಥ ಲಿಂಗಪೂಜೆ ಅವಶ್ಯ” ವೆಂದು ಪ್ರತಿಪಾದಿಸಿದ್ದಾರೆ.

ಲಿಂಗದಲ್ಲಿ ಸಕಲವೂ ವ್ಯಾಪಿಸಿದೆ. ಲಿಂಗವು ಕರದ ವರರತ್ನ. ಅಂತೆಯೇ-

ಏಕೇನ ವಿಜ್ಞಾತೇನ ಸರ್ವ೦ ವಿಜ್ಞಾತಂ ಭವತಿ | ತದ್ಬ್ರಹ್ಮ||ʼʼ

ಪರಾತ್ಪರವೆನಿಸಿದ ಏಕಮೇವ ವಸ್ತುವಿನ ಸಾಕ್ಷಾತ್ಕಾರದಿಂದ ಸಕಲ ವಸ್ತುಗಳ ಜ್ಞಾನ-ವಿಜ್ಞಾನಗಳು ತಿಳಿಯುವವು. ಅದುವೇ ಬ್ರಹ್ಮ (ಪರಬ್ರಹ್ಮ) ಎಂದು ಉದ್ಧಾಲಕ ಮುನಿಯು ದ್ವಾದಶವರ್ಷ ಅಧ್ಯಯನ ಮಾಡಿ ಮರಳಿದ, ಅಭಿಮಾನಿಯೆನಿಸಿದ. (ಪುತ್ರ) ಶ್ವೇತ ಕೇತುವಿಗೆ ತಿಳಿಯಪಡಿಸಿದಂತೆ ಈ ಲಿಂಗದ ವಿಜ್ಞಾನವನ್ನು ಅವಗತ ಮಾಡಿಕೊಂಡ ಭಕ್ತನು ಯಾವುದರ ಗೊಂದಲಕ್ಕೆ ಅವಕಾಶವೀಯುವುದಿಲ್ಲ. ಆ ಕರದಿಷ್ಟ ಲಿಂಗದಲ್ಲಿಯೇ ಸಕಲ ಸೌಭಾಗ್ಯ ಸನ್ನಿಹಿತವಾಗಿರುತ್ತದೆ.

 ಆನು ಕಾಮಿಸುತಿಪ್ಪ ಸಾಲೋಕ್ಯವಿದೆ.

 ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ.

ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ,

ಎನ್ನ ಧ್ಯಾನದ ಜಪ-ತಪದಿಂದಲೇ ಸಿದ್ಧಿಯಪ್ಪ ಮಹಾಸಿದ್ಧಿಯಿದೆ,

ಆನೇನ ಇಚ್ಛೈಸುವ ಎಲ್ಲವೂ ಇದೆ ನೋಡಾ !

ಶ್ರೀಗುರು ಕಾರುಣ್ಯದಿಂದ ಮಹಾವಸ್ತು

ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ !

ಇನ್ನು ಬಯಲಭ್ರಮೆಯೊಳಗೆ ಹೊಗಿಸದಿರಯ್ಯಾ

ನಿಮ್ಮ ಬೇಡಿಕೊಂಬೆನು ನಿಮಗೆ ಎನ್ನಾಣೆ

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ

ಚತುರ್ವಿಧ ಮುಕ್ತಿಗಳು ಚತುರ್ವಿಧ ಪುರುಷಾರ್ಥಗಳು, ಶಿವಭಕ್ತರು ಬಯಸುವ ಸಕಲ ಪಡಿಪದಾರ್ಥಗಳು ಸಂಕಲ್ಪಗಳು ಕರದಿಷ್ಟಲಿಂಗದ ಧ್ಯಾನ ತಪಾದಿಗಳಿಂದ ಸುಲಭವಾಗಿ ಸಿದ್ಧಿಸುತ್ತವೆಂದ ಬಳಿಕ ಬಯಲು ಭ್ರಮೆಯಲ್ಲಿ ಮನ ಚಲಿಸದಂತಿರಿಸೆಂದು ಆಣೆಯಿಟ್ಟು ಬೇಡಿದ ಉರಿಲಿಂಗ ಪೆದ್ದಣ್ಣನ ಮಾತು ಮನನೀಯ ವಾಗಿದೆ.

ಈಶಾವಾಸ್ಯೋಪನಿಷತ್ತು ಲಿಂಗದ ಪರಿಪೂರ್ಣತೆಯನ್ನು ಉದ್ಘೋಶಿಸಿದೆ

ಓಂ ಪೂರ್ಣಮದಃ ಪೂರ್ಣಮಿದಂ

ಪೂರ್ಣಾತ್ ಪೂರ್ಣಮುದಚ್ಯತೇ ।

ಪೂರ್ಣಸ್ಯ ಪೂರ್ಣಮಾದಾಯ

ಪೂರ್ಣಮೇವಾವ ಶಿಷ್ಯತೇ ।।

ಓಂಕಾರರೂಪದ ಮಹಾಲಿಂಗವು ಪೂರ್ಣವಾಗಿದೆ. ಅದರಿಂದಾದ ಈ ಜಗವೂ ಪರಿಪೂರ್ಣವೇ ಆಗಿದೆ. ಪೂರ್ಣದಲ್ಲಿ ಪೂರ್ಣವನ್ನು ಬೆರೆತರೆ ಪೂರ್ಣವೇ ತಾನೇ ಉಳಿಯುವಂತೆ ಮಹಾಲಿಂಗ ಹಾಗೂ ಇಷ್ಟಲಿಂಗಕ್ಕೂ ಅಂತರವಿಲ್ಲ, ಆಚಾರಾದಿ ಲಿಂಗಗಳ ಆರಾಧನೆಯಿಂದ ಮಹಾಲಿಂಗದಲ್ಲಿ ಕೂಡಿ ಮಹಾಲಿಂಗವೇ ತಾನಾದ ಶರಣನು ಪೂರ್ಣನೆನಿಸುವನು.

 ಜಗತ್ತಿನಲ್ಲಿ ಕಾಣಬರುವ ಲಿಂಗಗಳಿಂದ ಈ ಲಿಂಗ ತತ್ತ್ವದ ವ್ಯಾಪಕತೆ ವೇದ್ಯವಾಗುವದು. ಕಾಶಿಯ ಶ್ರೀಬಾಬು ಶಿವಪ್ರಸಾದರು- “ಪೃಥ್ವಿ ಪ್ರದಕ್ಷಿಣೆ’ ಎಂಬ ಗ್ರಂಥದಲ್ಲಿ – ಮಿಸರದೇಶದಲ್ಲಿ ”ಅಸಿರಿಸ್” ಮತ್ತು ‘ಆಯಿಸಿಸ್” ಎಂಬ ಲಿಂಗವನ್ನೂ, ಗ್ರೀಸ್ ದೇಶದಲ್ಲಿ ಬೆಸಕ್’ ಮತ್ತು ‘ಪಿಯಸಸ್’ ಎಂಬ ಲಿಂಗವನ್ನೂ, ಸ್ಕಾಟಲೆಂಡದ ಗ್ಲಾಸಗೋ ಪಟ್ಟಣದಲ್ಲಿ ಸುವರ್ಣವಿಶಿಷ್ಟ ಲಿಂಗವನ್ನೂ, ಆಸ್ಟ್ರಿಯಾ, ಹಂಗೇರಿಯಲ್ಲಿ ತಂತ್ರಿಸ್ಟಕ ಎಂಬ ಲಿಂಗವನ್ನು, ಅಸೀರಿಯಾ ದೇಶದ ಬಿಲಸನಗರದಲ್ಲಿ ಮುನ್ನೂರು ಘನಹಸ್ತ ಪ್ರಮಾಣವುಳ್ಳ ಮಹಾಲಿಂಗವನ್ನೂ, ಅರಬಸ್ತಾನದಲ್ಲಿ ‘ಸಗೆ ಅನಬದ್’ ಅಂದರೆ ಮಕ್ಕೇಶ್ವರ ಲಿಂಗ (ಇದಕ್ಕೆ ಮುಸಲ್ಮಾನರು ಶ್ರದ್ಧಾಪೂರ್ವಕ ಚುಂಬನ ಕೊಡುತ್ತಾರೆ). ವನ್ನೂ, ಇರಾಣದಲ್ಲಿ ಜ್ವಾಲಾಮಯ ಲಿಂಗವನ್ನೂ, ಪೆರುದೇಶದಲ್ಲಿ ‘ಪಾರ್ಥಿವೇಶ್ವರ” ಲಿಂಗವನ್ನೂ, ಅಮೇರಿಕೆಯ ಪೆಂಬ್ರುಕೋ ಪಟ್ಟಣದಲ್ಲಿ “ದ್ವಿಮುಖ” ಲಿಂಗವನ್ನೂ, ಅಮೇರಿಕೆಯ ಟೆನ್ನಿ ಪಟ್ಟಣದಲ್ಲಿ ಘನಲಿಂಗವನ್ನೂ, ಇಂದಿಗೂ ಆ ಭಾಗದ ಜನರು ಪೂಜಿಸುತ್ತಿದ್ದಾರೆ” ಎಂದು ಲಿಂಗಪೂಜೆಯ ವಿಶ್ವವ್ಯಾಪಕತೆಯನ್ನು ವಿವರಿಸಿದ್ದಾರೆ.

 ಉತ್ತರ ಪ್ರದೇಶದ ಗೋರಖಪುರದಿಂದ ಪ್ರಕಟವಾಗುವ ‘ಕಲ್ಯಾಣ’ ಮಾಸ ಪತ್ರಿಕೆಯ ‘ಶ್ರೀ ಶಿವಾಂಕ” ವೆಂಬ ವಿಶೇಷಾಂಕವನ್ನು ಸನ್ ೧೯೩೩ ರಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಲಿಂಗತತ್ತ್ವದ ಪುರಾತನತೆಯನ್ನು ಮತ್ತು ವಿಶ್ವವ್ಯಾಪಕತೆಯನ್ನು ಅವಲೋಕಿಸಬಹುದು. ಭಾರತೀಯ ಇತಿಹಾಸಕಾರರು ಮತ್ತು ಪುರಾತತ್ತ್ವ ಸಂಶೋಧಕರು ಸಂಗ್ರಹಿಸಿದ ಸಿಂಧೂ ನದಿಯ ಹರಪ್ಪಾ ಮತ್ತು ಮೆಹಂಜೋದಾರದ ಅವಶೇಷಗಳಲ್ಲಿ ಉಪಲಬ್ಧವಾದ ಲಿಂಗಗಳಿಂದ ಲಿಂಗ ಸಂಸ್ಕೃತಿಯ ೪-೫ ಸಾವಿರ ವರುಷ ಪೂರ್ವದ್ದೆಂದು ತಿಳಿದು ಬರುತ್ತದೆ.

ಮೇಲಿನ ಇತಿಹಾಸ ಸ್ಥಾವರ ಲಿಂಗಕ್ಕೆ ಸೀಮಿತವಾದುದು. ಸಿಂಧೂ ಸಂಸ್ಕೃತಿ ಯಲ್ಲಿ ಮಾತ್ರ ಇಷ್ಟಲಿಂಗದ ಅವಶೇಷ ಸಿಕ್ಕುತ್ತದೆ. ಬೃಹತ್ತಾದ, ಹಾಗೂ ಸ್ಥಾವರತ್ವವನ್ನು ಹೊಂದಿದ ಲಿಂಗವನ್ನು ಅಧ್ಯಾತ್ಮಿಕವಾಗಿ ಇಷ್ಟಲಿಂಗವನ್ನಾಗಿ ಅಳವಡಿಸಿಕೊಡುವ ಸದ್ಗುರುವು ಸಾಮಾನ್ಯನಲ್ಲ.  ಅಂತರಂಗದ ಅರುಹಿನ ಕುರುಹೆನಿಸಿದ ಕರದಿಷ್ಟ ಲಿಂಗವನ್ನು ಶರೀರದಿಂದ ಅಗಲದಂತಿರಿಸಬೇಕು. ಅಂದರೆ ಸದಾ ಲಿಂಗದೇವನ ಸಹವಾಸದಲ್ಲಿ ಲಿಂಗಗುಣಗಳು ಮೈಗೂಡುತ್ತವೆ.

ಇಷ್ಟ-ಪ್ರಾಣ-ಭಾವಲಿಂಗಗಳನ್ನು ಸತ್ಕ್ರಿಯಾ-ಸುಜ್ಞಾನ ಪೂರ್ವಕ ಸಂಪೂಜಿಸಿ ಸ್ಥೂಲ-ಸೂಕ್ಷ್ಮ-ಕಾರಣವೆಂಬ ಶರೀರತ್ರಯ ರೂಪ ತ್ರಿವಿಧ ಲೋಕದಲ್ಲಿಯೂ ಆ ಲಿಂಗಗಳು ವ್ಯಾಪಿಸುವಂತೆ ಮಾಡಿಕೊಳ್ಳಬೇಕು. ಅರ್ಥಾತ್, ತ್ರಿವಿಧ ತನುಗಳಿಗೆ ಸಂಬಂಧಿಸಿದ ತ್ರಿವಿಧ ಲಿಂಗಗಳ ಅನುಸಂಧಾನವನ್ನು ಸಾಧಿಸಿ ಲಿಂಗಸ್ವರೂಪನೇ ತಾನಾಗಬೇಕು. ಇದುವೇ ಶ್ರೀಗುರುವಿನ ಕೃಪೆಯ ಸತ್ಪಲವೆನಿಸುವದು.

ಆದಿ ಪೀಠವೆ ಗುರು ಮೇ | ಲಾದ ಪೀಠವೆ ಲಿಂಗ ಅ-

ನಾದಿ ಗೋಮುಖವೆ-ಮೋದ ಜಂಗಮವೆಂದು

ಭೋಧಿಸಿದ ಗುರುವೆ ಕೃಪೆಯಾಗು      || ೧೧೨ ॥

ಪರಶಿವನ ಸಾಕ್ಷಾತ್ ಸ್ವರೂಪವೇ ಲಿಂಗವಾಗಿರವುದೆಂಬುದನ್ನು ಅರಿತಾಯಿತು. ಪರಶಿವನು ನಿಷ್ಕಲನು; ನಿರ್ಗುಣನು. ಲಿಂಗದಲ್ಲಿ ಸಕಲ ನಿಷ್ಕಲತೆಯಿದೆ. ಸಗುಣ ನಿರ್ಗುಣತ್ವವಿದೆ. ಶಿವನು ಭಕ್ತೋದ್ಧಾರಕ್ಕಾಗಿ ತ್ರಿವಿಧ ರೂಪವನ್ನು ಧರಿಸಿದ್ದಾನೆ. ಗುರು-ಲಿಂಗ-ಜಂಗಮರೇ ತ್ರಿಮೂರ್ತಿಗಳು. ವೀರಶೈವರಿಗೆ ಇವು ಪರಮ ಪೂಜನೀಯ ವಸ್ತುಗಳು. ಇವರನ್ನು ಬಿಟ್ಟು ಬೇರೆ ಪೂಜ್ಯರಿಲ್ಲ ವೀರಶೈವರಿಗೆ ಅದು ಕಾರಣ ತನ್ನಂಗೈಯಲ್ಲಿ ಕಾಣುವ ಲಿಂಗದಲ್ಲಿಯೂ ಗುರು-ಜಂಗಮರ ಸ್ವರೂಪವು ಸುಪ್ತವಾಗಿರುತ್ತದೆ.

 “ಸಚ್ಛಿದಾನಂದಂ ಬ್ರಹ್ಮ’ ” ಸತ್ ಚಿತ್ ಆನಂದವೇ ಬ್ರಹ್ಮವೆಂಬ ಶೃತಿ ವಾಕ್ಯದಂತೆ ಲಿಂಗದ ಆದಿ ಪೀಠವು ಅಂದರೆ ಲಿಂಗದ ಕೆಳಗಿನ ಭಾಗವು ಸತ್ ಸ್ವರೂಪನಾದ ಗುರು ರೂಪವಾಗಿದೆ. ಅರ್ಥಾತ್ ಗುರುವು ಲಿಂಗವನ್ನು ಸೃಷ್ಟಿಸುವವನು. ಗುರು ಲಿಂಗಕ್ಕೆ

ಆಧಾರನಾಗಿದ್ದಾನೆ. (ಲಿಂಗದ) ಮೇಲಿರುವ ಬಾಣವು ಅಥವಾ ಲಿಂಗವು ಚಿತ್ ಸ್ವರೂಪವಾಗಿದೆ. ಅನಾದಿ ಗೋಮುಖವು ಆನಂದದಾಯಕನಾದ ಜಂಗಮ ಸ್ವರೂಪವೆನಿಸಿದೆಯೆಂದು ಗುರುವರನು ಬೋಧಿಸುತ್ತಾನೆ.   

ಈ ಕೃತಿಕರ್ತರ ಸಮಕಾಲೀನರೂ, ಶರಣ ಸಹೋದ್ಯೋಗಿಗಳೂ ಚನ್ನ ವೀರೇಶ್ವರ ಯತಿಗಳ ಪರಮ ಶಿಷ್ಯರೂ ಆದ ಬನ್ನಿಮಟ್ಟಿ ಚನ್ನಪ್ಪನವರು ತಮ್ಮ’ಶಿವಾನುಭವ ದೀಪಿಕೆ” ಯಲ್ಲಿ ಇದೇ ಅರ್ಥವನ್ನು,

ಲಿಂಗದಡಿ ಪೀಠ ಶ್ರೀಗುರು |

ಲಿಂಗದ ಮೇಲೂರ್ಧ್ವಪೀಠ ಚಿದ್ಘನಲಿಂಗ ||

ಲಿಂಗದ ಗೋಮುಖ ಜಂಗಮ |

ಲಿಂಗವೆ ಕೂಡಲ ಸಂಗಂ ಬಸವ ಪ್ರಭುವೆ || ೨೮೯ |

ಎಂದು ಪುಷ್ಟಿಕರಿಸುವಂತೆ ಬಣ್ಣಿಸಿರುತ್ತಾರೆ.

ಗುರು-ಜಂಗಮರ ಸಾನಿಧ್ಯವಿಲ್ಲದ ಸಮಯಕ್ಕೆ ಕೇವಲ ಕರದಿಷ್ಟಲಿಂಗವನ್ನು ಪೂಜಿಸಿದರೂ ತ್ರಿವಿಧ ಪೂಜ್ಯರ ಪೂಜೆ ಪೂರೈಸಿದಂತಾಗುವದು. ಈ ತ್ರಿವಿಧ ಪೂಜ್ಯ ವಸ್ತುಗಳು ಅವಿಭಾಜ್ಯ ಅಂಗಗಳು. ಇವು ಒಂದಕ್ಕೊಂದು ಆಶ್ರಯಿಸಿವೆ. ಅದು ಕಾರಣ ಈ ಬೋಧೆಯನ್ನು ಮನದಲ್ಲಿ ಅಳವಡಿಸಿಕೊಂಡು ತ್ರಿವಿಧ ಪೂಜ್ಯ ವಸ್ತುಗಳ ಪೂಜೆ ಮಾಡಿದ ಆನಂದವನ್ನು ಹೊಂದಬೇಕು. ಅಂದರೆ ಮಾತ್ರ ಗುರುಬೋಧೆ ಯಥಾರ್ಥ ವಾಗುವದು

ಅಡಿಯ ಪೀಠವೆ ಇಷ್ಟ | ಮುಡಿಯ ಪೀಠವೆ ಪ್ರಾಣ

ನಡುವಣ ಗೋಮುಖ-ದೃಢ ಭಾವ ಲಿಂಗವೆಂ-

ದೊಡನುಸಿರ್ದ ಗುರುವೆ ಕೃಪೆಯಾಗು     II ೧೧೩ II

ಲಿಂಗದ ಅಡಿಯು ಪೀಠವು, (ಕೆಳಭಾಗ) ಇದು ಲಿಂಗಕ್ಕೆ ಪಾದವಾಗಿದೆ. ಲಿಂಗದ ಪಾದವು ಕ್ರಿಯಾಸ್ವರೂಪವು. ಲಿಂಗದ ಮೇಲಿನ ಪೀಠವು ಮುಡಿಯು ಅಂದರೆ ಮಸ್ತಕವು. ಇದು ಜ್ಞಾನದ ಸಂಕೇತವು. ಜ್ಞಾನವು ಮಸ್ತಕದಲ್ಲಿರುವದು ಸರ್ವರಿಗೂ ಅರಿತ ವಿಷಯ. ಜ್ಞಾನ ಕ್ರಿಯೆಗಳ ವ್ಯಾಖ್ಯಾನದಲ್ಲಿ ಪಾದಕ್ಕೆ ಕ್ರಿಯೆಯ ಉಪಮೆಯನ್ನು ಜ್ಞಾನಕ್ಕೆ ಮುಡಿಯ ಮಾತನ್ನು ಮಹಾನುಭಾವಿಗಳು ಮಾರ್ನುಡಿದಿದ್ದಾರೆ. ಕ್ರಿಯೆಗೆ ಜ್ಞಾನವೇ ಪ್ರಾಣವು. ಪ್ರಾಣವಿಲ್ಲದ ಶರೀರ ಶವವಾಗುವಂತೆ; ಜ್ಞಾನಶೂನ್ಯವಾದ ಕ್ರಿಯೆಯು ಜಡವಾಗುತ್ತದೆ. ಕ್ರಿಯಾ-ಜ್ಞಾನಗಳ ಸಮನ್ವಯದಲ್ಲಿ ಭಾವ ಅಥವಾ ಅನುಭಾವ ಅನುಗೂಡುತ್ತದೆ. ಆದ್ದರಿಂದ ಅಡಿಪೀಠ  ಇಷ್ಟಲಿಂಗವಾದರೆ ಮುಡಿಪೀಠ ಪ್ರಾಣಲಿಂಗವಾಗುತ್ತದೆ. ನಡುವಿನ ಗೋಮುಖವು ದೃಢತರವಾದ ಭಾವ ಲಿಂಗವಾಗಿ ಪರಿಣಮಿಸುವದು.

ಕ್ರಿಯಾ ಜ್ಞಾನಗಳ ಸಮ-ಸಮುಚ್ಚಯದಲ್ಲಿ ಅನುಭಾವ ಬೆಳೆಯುವದು. ಈ ರೀತಿಯಾಗಿ ಕರದಿಷ್ಟಲಿಂಗದಲ್ಲಿ ಪ್ರಾಣ-ಭಾವಲಿಂಗಗಳು ಸೇರಿ ತ್ರಿವಿಧ ಬಗೆಯಾಗಿದ್ದ ಪರಿಯನ್ನು ಶ್ರೀಗುರುವರನು ಉಸುರುತ್ತಾನೆ. ಕ್ರಿಯಾಜ್ಞಾನಗಳು ಸಂಬಂಧವಾಗಿ ಆಚರಣೆಯಲ್ಲಿ ಅಳವಟ್ಟರೆ ಭಾವಬಲಿಯುವದು. ಭಾವ ದೃಢವಾದರೆ ಆ ಕ್ರಿಯಾಲಿಂಗ (ಇಷ್ಟಲಿಂಗ) ಹಾಗೂ ಜ್ಞಾನ (ಪ್ರಾಣ) ಲಿಂಗಗಳು ಭಾವ ಲಿಂಗದಲ್ಲಿ ಒಂದುಗೂಡುವವು. ಅದು ಕಾರಣವೇ ಶಿವಕವಿಯು ಭಾವಕ್ಕೆ ದೃಢ ಭಾವವೆಂದು ಸ್ಪಷ್ಟಪಡಿಸಿರುವನು. “ಭಾವದಲ್ಲಿ ಬ್ರಹ್ಮವೆಂಬ ಮಾತನ್ನು ಅನುಭಾವಿಗಳೂ ಹೇಳಿದ್ದುಂಟು. “ಯಥಾ ಭಾವಸ್ತಥಾ ಸಿದ್ಧಿರ್ಭವತಿ”, ಶುದ್ಧಭಾವದಂತೆ ಸಿದ್ಧಿಯು ಸಂಭವಿಸುವದೆಂದು ಜ್ಞಾನಿಗಳೂ ಪ್ರತಿಪಾದಿಸಿರುವರು.

 ಮೂಢ ಮನುಷ್ಯನ ಭಾವದಲ್ಲಿ ದೃಢತೆಯಿರುತ್ತದೆ. ಗುರುವಾಕ್ಯದಲ್ಲಿ ಶ್ರದ್ಧೆ- ವಿಶ್ವಾಸಗಳು ಘಟ್ಟಿಗೊಂಡಿರುತ್ತವೆ. ಅಂತೆಯೇ ಮುಗ್ಧ ಭಕ್ತನು ಕಲ್ಲನ್ನೂ ದೇವನನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಭಾರತೀಯ ಧಾರ್ಮಿಕ ಸಾಹಿತ್ಯದಲ್ಲಿ ವಿಪುಲವಾಗಿವೆ. ಹಾಲುಮತದ ಗೊಲ್ಲಾಳನು ಕುರಿಯ ಹಿಕ್ಕಿಯಲ್ಲಿ ಶಿವಲಿಂಗವನ್ನು ಕಂಡನು. ಬೇಡರ ಕಣ್ಣಪ್ಪನ ದೃಢ ಭಾವಕ್ಕೆ ಶಿವನು ದೃಢತರ ಪದವಿಯನ್ನಿತ್ತನು. ಅರವತ್ತುಮೂರು ಪುರಾತನರ ಚರಿತ್ರೆಗಳಲ್ಲಿ ಭಾವದೃಢತೆಯೂ ಮತ್ತು ಆತ್ಮಸಮರ್ಪಣೆಯೂ ಪ್ರಮುಖವಾಗಿದೆ. ಭಾವಜೀವಿಯು ಆನಂದಮಯನಾಗಿರುತ್ತಾನೆ. ವಿಮರ್ಶಕನ ಭಾವದಲ್ಲಿ ದೃಢತೆಯಿರುವದಿಲ್ಲ. ಅವನಲ್ಲಿ ಪ್ರತಿಯೊಂದನ್ನು ಪರೀಕ್ಷಿಸುವ ಚಿಕಿತ್ಸಕ ಬುದ್ಧಿ-ಭಾವಗಳು ನೆಲಸಿರುತ್ತವೆ.

 ಶರಣರು ಕೇವಲ ಭಾವ ಜೀವಿಗಳಲ್ಲ, ಕೇವಲ ಜ್ಞಾನಿಗಳಲ್ಲ. ಕರ್ಮಠರೂ ಅವರಲ್ಲ, ಅವರು ಕ್ರಿಯಾ-ಜ್ಞಾನಗಳ ಸಮ್ಮಿಲನದಲ್ಲಿ ಸಮರಸಾನಂದದ ಸವಿಯುಂಡರು ಸಂತಸಪಟ್ಟರು. ಇದುವೇ ಲಿಂಗಾನುಸಂಧಾನದ ಅರಿವು, ಅನುಭಾವದ ಕುರುಹು.

 ಇಂಥ ಕ್ರಿಯಾ-ಜ್ಞಾನ-ಭಾವಗಳ ಮುಪ್ಪುರಿಯೇ ಈ ದೃಷ್ಟಿಲಿಂಗವೆಂದು ಬೋಧಿಸಿದ ಸದ್ಗುರುವೆ ! ಅದರಂತಜ್ಞಾನಸವಿಯನ್ನು ಸವಿಯುವ ಸೌಭಾಗ್ಯವನ್ನು ಸಮನಿಸು.

ಮೊದಲ ಪೀಠವೆ ಸ್ವಯ | ತುದಿಯ ಪೀಠವೆ ಚರ ಮ-

ಧ್ಯದ ಗೋಮುಖ ಪರತತ್ತ್ವ ಜಂಗಮವು ಎಂ

ಬುದ ಪೇಳ್ದ ಗುರುವೆ ಕೃಪೆಯಾಗು     ||೧೪  ||

ಲಿಂಗವು ಇಷ್ಟ-ಪ್ರಾಣ-ಭಾವವೆಂದು ತ್ರಿವಿಧವಾಗಿರುವಂತೆ ಲಿಂಗದ ಹರಣ ವಾದ ಜಂಗಮವೂ ಮೂಬಗೆಯಾಗಿದೆ. ಜಂಗಮದಲ್ಲಿ ಸ್ವಯಜಂಗಮನೆಂತಲೂ ಚರಜಂಗಮನೆಂತಲೂ, ಪರಜಂಗಮನೆಂತಲೂ, ಮೂರು ವಿಧ. ಈ ಮೂವರ ಸ್ವಸ್ವರೂಪ ಲಕ್ಷಣವನ್ನು ಶಿವಕವಿಯು ಮುಂದೆ ಜಂಗಮತತ್ತ್ವವನ್ನು ಪ್ರತಿಪಾದಿಸುವ ಅವಸರದಲ್ಲಿ ವರ್ಣಿಸಿದ್ದಾನೆ. ಲಿಂಗಪೂಜೆಯ ಫಲ ಜಂಗಮನ ಸಾಕ್ಷಾತ್ಕಾರ; ಹಾಗೂ ಪಾದೋದಕ-ಪ್ರಸಾದಗಳು.

  ಸಾಮಾನ್ಯವಾಗಿ ಯಾವುದೊಂದು ವಸ್ತುವಿನ ಯಥಾರ್ಥ ಸ್ವರೂಪವನ್ನು ಅರಿಯುವಾಗ ಆದ್ಯಂತಗಳನ್ನು ಅವಲೋಕಿಸುತ್ತೇವೆ. ಕೆಳಗೆ ಮತ್ತು ಮೇಲೆ ನೋಡುತ್ತೇವೆ. ಅದರೊಳಗಿನ ಗುಣವನ್ನು ಪರೀಕ್ಷಿಸಬೇಕಾಗುವದು. ಕಾರಣ ಪೃಥ್ವಿಯಲ್ಲಿ ಸ್ಥೂಲವಾಗಿ ವ್ಯಾಪಿಸಿರುವದನ್ನು ನೋಡುತ್ತೇವೆ. ಆ ಮೇಲೆ ಅದು ಏನೆಂಬುದನ್ನು ವಿಚಾರಿಸಲು ಮೇಲೆ ನೋಡುತ್ತೇವೆ. ಉದಾಹರಣೆಗಾಗಿ ಒಂದು ವನವನ್ನು ಪ್ರವೇಶಿಸುತ್ತ ಗಿಡಗಳ ಬೊಡ್ಡೆಗಳನ್ನು ಕಾಣುತ್ತೇವೆ. ಇದು ಯಾವ ಮರವೆಂಬ ವಿಚಾರ ಸುಳಿಯುತ್ತಲೇ ಮೇಲೆ ಅವಲೋಕಿಸಿ ಅರ್ಥೈಸಿಕೊಳ್ಳುತ್ತೇವೆ. ಇನ್ನು ಮಧ್ಯಭಾಗವು ಎರಡನ್ನು ಸಮನ್ವಯಗೊಳಿಸುವದು. ಹಾಗೆ, ಲಿಂಗದಲ್ಲಿ ಮೊದಲ ಪೀಠವು ಸ್ಥಾಯಿಯಾಗಿ (ಮೇಲಿನ ಬಾಣಕ್ಕೆ ಆಧಾರವಾಗಿ) ರುವದರಿಂದ ಅದು ಸ್ವಯ ಜಂಗಮವೆನಿಸುವದು. ಲಿಂಗಭಕ್ತನು ಲಿಂಗಪೂಜೆಯಲ್ಲಿ ತನ್ನ ದೃಷ್ಟಿ ಮನಗಳನ್ನು ಲಿಂಗದ ತುದಿಯ ಮೇಲಿರಿಸುವದರಿಂದ ಅದು ಚರಜಂಗಮವೆನಿಸುವದು. ಯಾಕಂದರೆ ಲಿಂಗದಲ್ಲಿ ದೃಷ್ಟಿ-ಮನಗಳು ಸಂಚಲನೆಗೊಳ್ಳುತ್ತಿರುವದರಿಂದ ಅದು ಚರಜಂಗಮವಾಗಿದೆ. ಮೊದಲ ಭಾಗ ಹಾಗೂ ತುದಿಗಳ ಅವಲೋಕನಯಲ್ಲಿ ಮಧ್ಯದ ಗೋಮುಖವು. ಮೇಲಿನವೆರಡೂ ಕ್ರಿಯೆಗಳಿಗೆ ಸಮನ್ವಯಗೊಂಡು ಪರವಾಗಿರುವುದರಿಂದ ಅದು ಪರಜಂಗಮವೆನಿಸುವದು. ಪರಜಂಗಮನು ಸ್ವಯ ಚರಜಂಗಮತ್ವದ ಕ್ರಿಯೆಗಳನ್ನು ಆಚರಿಸಿ ಮುಕ್ತನೆನಿಸುವನು. ತನ್ನ ಲಿಂಗಾನಂದದಲ್ಲಿಯೇ ತಲ್ಲೀನನಾಗಿರುವನು. ಅದು ಕಾರಣ ಪರತರವಾದ ಈ ಇಷ್ಟಲಿಂಗದಲ್ಲಿ ಲಿಂಗದ ಪ್ರಾಣವೆನಿಸಿದ ಜಂಗಮವು ಸ್ವಯ-ಚರ-ಪರವೆಂದು ಮೂಬಗೆಯಾಗಿ ಅಡಕವಾಗಿದೆಯೆಂಬ ತತ್ತ್ವವನ್ನು ಗುರುನಾಥನು ತಿಳಿಸಿಕೊಡುತ್ತಾನೆ.

ಗುರು-ಲಿಂಗ-ಜಂಗಮವು | ವರಭಾವ ಪ್ರಾಣೇಷ್ಟ

ಸ್ಥಿರ-ಚರ-ಪರ ಮೂರು-ಕರದಿಷ್ಟಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೫ ||

ಬಸವಲಿಂಗ ಶರಣರು ಶ್ರೇಷ್ಠದಾರ್ಶನಿಕರು, ಹಾಗೂ ಅನುಭಾವಿ ಕವಿಗಳು. ಅಂತೆಯೇ ಶಿವಾನುಭವವನ್ನು ತಿಳಿಯಲಿಚ್ಛಿಸುವ ಜಿಜ್ಞಾಸುವಿಗೆ ಪ್ರತಿಯೊಂದು ವಿಷಯವನ್ನು ಹಿಂಜಿ-ಹಿಂಜುವ ಜೊತೆಗೆ ಸಿಂಹಾವಲೋಕನವನ್ನು ಆಗಾಗ್ಗೆ ಮಾಡಿಸುತ್ತಾರೆ. ವನರಾಜನಾದ ಸಿಂಹವು ತಾನು ನಿಂತಲ್ಲಿಂದಲೇ ಹಿಂದಿನದನ್ನು ಮುಂದಿನದನ್ನೂ ಅವಲೋಕಿಸುತ್ತದೆ. ಧೀರನಾದವನು ಹಿಂದೆ ಅನುಭವಿಸಿದ ಅನುಭವವನ್ನು ಮೆಲುಕು ಹಾಕುತ್ತ ಮುಂದೆ ಸಾಧಿಸಬೇಕಾದುದನ್ನು ಆಲೋಚಿ ಸುತ್ತಾನೆ. ಹಿಂದಿನ ಅನುಭವವನ್ನು ಸಿಂಹಾವಲೋಕನಗೈಯುತ್ತಾನೆ. ಮೇಲಿನ ಕ್ಲಾಸಿಗೆ ಮುಂದು ವರೆಯುವ ವಿದ್ಯಾರ್ಥಿಯು ಹಿಂದಿನ ಅಭ್ಯಾಸವನ್ನು ಅವಲೋಕಿಸುತ್ತಿರ ಬೇಕು. ಬುನಾದಿ ಭದ್ರವಾಗಿದ್ದರೆ ಭವನವು ಭದ್ರವಾಗುವದು. ಕಾರಣ ಸಾಧಕನು ಮುಂದುವರಿಯಲು ಹಿಂದಿನ ಸತ್ಕ್ರಿಯೆಗಳನ್ನು ಬಿಡದಂತೆ ಆಚರಿಸುತ್ತಿರಬೇಕು. ಮತ್ತು ಪೂರ್ವದ ಶಾಸ್ತ್ರ ಶ್ರವಣವನ್ನು (ಹಿಂದಿನ ಪ್ರಕ್ರಿಯೆಯನ್ನು ಮನದಲ್ಲಿಟ್ಟುಕೊಂಡರೆ ಮುಂದಣ ಅನುಭವವು ಗಮ್ಯವಾಗುವದು.

 ಶಿವಕವಿಯು ಆಗಾಗ್ಗೆ ಹಿಂದೆ ಹೇಳಿದ ವಿಷಯವನ್ನು ಅಲ್ಲಲ್ಲಿ ಸಮಾಹಾರ ಮಾಡುತ್ತಾನೆ. ಲಿಂಗದಲ್ಲಿ ಗುರು-ಲಿಂಗ-ಜಂಗಮವೆಂಬ ತ್ರಿವಿಧ ಪೂಜ್ಯವಸ್ತುಗಳು ವ್ಯಾಪಿಸಿರುವಂತೆ ಭಾವಲಿಂಗ-ಪ್ರಾಣಲಿಂಗ ಇಷ್ಟಲಿಂಗಗಳು ಒಂದಕ್ಕೊಂದು ಹೊಂದಿಕೊಂಡಿವೆ. ಜೊತೆಗೆ ಲಿಂಗದ ಚಿತ್ಕಳೆಯೆನಿಸಿದ ಸ್ವಯಜಂಗಮ, ಚರಜಂಗಮ, ಪರಜಂಗಮದ ಭಾವ ಭರಿತವಾಗಿದೆ.

 ಬ್ರಹ್ಮಾಂಡಗಳ ಮಹಾಲಿಂಗದಲ್ಲಿ ಹುದುಗಿಕೊಂಡಿದ್ದ ಶಕ್ತಿ ಚಿತ್ಕಳಾರೂಪ ಕರದಿಷ್ಟ ಲಿಂಗದಲ್ಲಿ ಅಡಗಿದೆ. ಲಿಂಗದೊಳಗೆ ಎಲ್ಲವೂ ಅಡಗಿದ್ದು ಸಕಲರಲ್ಲಿ ಲಿಂಗದ ವ್ಯಾಪಕತೆಯಿರುವಂತೆ, ಇಷ್ಟಲಿಂಗದಲ್ಲಿ ಶಿಷ್ಯನ ಸಕಲ ಚೈತನ್ಯವು ಹುದುಗಿಕೊಂಡು ಶಿಷ್ಯನಲ್ಲಿ ಪರಿಪೂರ್ಣವಾಗಿ ಲಿಂಗದ ಚೇತನ ಪಸರಿಸಿಕೊಂಡಿರುತ್ತದೆ. ಇಂಥ ಲಿಂಗದಲ್ಲಿ ಪೂಜ್ಯ ವಸ್ತುಗಳ ಸಮಾವೇಶ ಸಮನಿಸಿದೆ. ಯಾಕೆಂದರೆ ಪರಾತ್ಪರ ಪರವಸ್ತುವೇ ಸಕಲನೆನಿಸಿ ಗುರುವಾಗಿ ಲಿಂಗವನ್ನೀಯುತ್ತಾನೆ. ಅರುಹಿನ ಕುರುಹಾಗಿ ಚಿಚ್ಚೈತನ್ಯವೆನಿಸಿದ ಲಿಂಗವು ಪೂಜೆಗೊಳ್ಳುತ್ತದೆ. ಲಿಂಗಕ್ಕೇನೆ ಚೇತನವೆನಿಸಿದ ಜಂಗಮನ ಕೃಪೆಯೂ ಅತ್ಯವಶ್ಯ. ಆದುದರಿಂದ ಲಿಂಗದಲ್ಲಿ ತ್ರಿವಿಧ ವಸ್ತುಗಳ ಅಭಿನ್ನತೆಯಿದೆ. ಲಿಂಗಭಕ್ತನು ಈ ತ್ರಿವಿಧ ಪೂಜ್ಯರನ್ನು ಭಿನ್ನವಾಗಿ ಕಾಣಬಾರದು. ಅದರಲ್ಲೂ ಲಿಂಗದ ಚೈತನ್ಯನೆನಿಸಿದ ಜಂಗಮನ ತ್ರಿವಿಧ ರೂಪಗಳನ್ನೂ ಸೂಕ್ಷ್ಮವಾಗಿ ಪರೀಕ್ಷಿಸಬೇಕು. ಇಂಥ ಅಪ್ರತಿಮ ಸ್ವರೂಪದ ಲಿಂಗವು ಅಸದೃಶವಾದುದು. ಅನುಪಮವಾದುದು.

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 3

ಜ.ಚ.ನಿ

ಹಿನ್ನೆಲೆ

ಸುಮಾರು ಎಂಬತ್ತು ಅಥವಾ ನೂರು ವರ್ಷಗಳ ಹಿಂದೆ ವೀರಶೈವ ಸಮಾಜವು ಮಹಾಂಧಕಾರದಲ್ಲಿ ಮುಳುಗಿತ್ತು. ಮಹಾರೋಗಕ್ಕೆ ಪಕ್ಕಾಗಿತ್ತು. ನಾಡಿಕ್ರಿಯೆಗಳು ನಿಲ್ಲುತ್ತ ಬಂದಿದ್ದವು. ಸಮಾಜವು ಶೈವಸಂಪ್ರದಾಯಕ್ಕೆ ಕಟ್ಟುಬಿದ್ದಿತ್ತು. ಒಂದೆಡೆಗೆ

ನಿರಾಚಾರಗಳು ಇನ್ನೊಂದೆಡೆಗೆ ಅನಾಚಾರಗಳು ಹೆಚ್ಚಿಹೋಗಿದ್ದವು. ಅತ್ಯಾಚಾರಗಳು ಅತಿಯಾಗಿದ್ದವು. ಗುರುಗಳು ತಮ್ಮ ಗೊತ್ತುಗುರಿಗಳನ್ನು ಮರೆತಿದ್ದರು. ಲಿಂಗಗಳು ಅಂಗಗಳಿಂದ ಅಗಲಿ ಮನೆಯ ಜಗುಲಿಗಳ ಏರಿದ್ದವು. ಪಂಚಸೂತ್ರದ ಮಾತು

ಸೂತಕವಾಗಿತ್ತು. ಪವಿತ್ರ ಶಿಲೆಯ ಬದಲು ಅಪವಿತ್ರ ಮಣ್ಣು ಮಟ್ಟೆಯ ಶಿಲೆಯು ಸಾಕ್ಷಿಯಾಗಿತ್ತು. ಜಂಗಮರು ತತ್ವಹೀನರಾಗಿ ತುತ್ತಿಗಾಗಿ ಅಲೆಯುತ್ತಿದ್ದರು. ಭಸ್ಮ ಭಸ್ಮವಾಗಿತ್ತು. ಮಣ್ಣು ಮಟ್ಟೆಗಳಿಂದ ಸಿಕ್ಕ ಬೂದಿ ಬೆರಣಿಗಳಿಂದ ಭಸ್ಮಗಳು ಸಿದ್ಧವಾಗುತ್ತಿದ್ದವು. ರುದ್ರಾಕ್ಷಿಗಳ ಧರಿಸುವುದೊಂದೆಡೆಗಿರಲಿ, ಕಂಡವರೆ ಇರಲಿಲ್ಲ. ಮಠಮಾನ್ಯಗಳಲ್ಲಿಯೆ ಕಾಣುವುದು ಅಪರೂಪವಾಗಿತ್ತು. ಮಂತ್ರೋಚ್ಛಾರಣೆ ಮಾಯವಾಗಿತ್ತು. ಸಂಸಾರ ಚಿಂತೆ ಮಿತಿಮೀರಿತ್ತು. ಎಲ್ಲಿಯೊ ಯಾರಾದರು ಕೆಲವರು

ಮಂತ್ರ ಜಪ ಮಾಡುತ್ತಿದ್ದರೆ ಅವರಿಗೆ ಅದರ ಅರ್ಥವೇನು, ಮರ್ಮವೇನು, ಹೇಗೆ  ಜಪಿಸಬೇಕು ಎಂಬುದೇ ತಿಳಿದಿರಲಿಲ್ಲ. ಪಾದೋದಕ ವಿಧಿ-ವಿಧಾನಗಳನ್ನು ಅರಿತವರಿರಲಿಲ್ಲ. ಪ್ರಸಾದ ಪ್ರಭಾವ ಕುಂದಿತ್ತು. ಪಂಚಾಚಾರಗಳ ಪ್ರಾಣ ತ್ರಾಣಗಳ ಸುಳಿವಿರಲಿಲ್ಲ.

 ಭಕ್ತರು ಶ್ರದ್ಧೆಗೆ ಮಹೇಶ್ವರರು ನಿಷ್ಠೆಗೆ ಪ್ರಸಾದಿಗಳು ಅವಧಾನಕ್ಕೆ ತಿಲಾಂಜಲಿಯ ಬಿಟ್ಟಿದ್ದರು. ಪ್ರಾಣಲಿಂಗಿಗಳಿಗೆ ಆನಂದದ ಸೊಗಸು ಸೋಂಕಿರಲಿಲ್ಲ. ಶರಣರಿಗೆ ಅನುಭಾವದ ಗಂಧವೇ ಗೊತ್ತಿರಲಿಲ್ಲ. ಐಕ್ಯರು ಅಲ್ಲಲ್ಲಿ ಒಬ್ಬೊಬ್ಬರು ಮಿಣುಗುತ್ತಿದ್ದರು. ಆದರೆ ಸಮಾಜದ ಸಾಮರಸ್ಯ ಅವರಿಗಿರಲಿಲ್ಲ. ಇದ್ದರೂ ಸಾಮಾಜಿಕ ಕುಂದುಕೊರತೆಗಳನ್ನು ಪೂರೈಸುವ ಕ್ರಿಯಾಶಕ್ತಿ ಅವರಲ್ಲಿರಲಿಲ್ಲ. ಜ್ಞಾನಪ್ರಚಾರವಿರಲಿಲ್ಲ. ಹೀಗೆ ಸಮಾಜವು ಅಜ್ಞಾನಾಂಧಕಾರದಲ್ಲಿ ಮುಳುಗಿತ್ತು. ನೀತಿ ರೀತಿಗಳ ಶ್ವಾಸೋಚ್ಛ್ವಸಗಳು ನಿಲ್ಲುತ್ತ ಬಂದಿದ್ದವು. ತೀರ ನಿಶ್ಯಕ್ತಿಯೊದಗಿತ್ತು. ಜಡವಾಗಿತ್ತು. ಜಂಜಾಟಕ್ಕಿಕ್ಕಿತ್ತು.

ಆ ಸಮಯದಲ್ಲಿ ವೈದ್ಯಭಾನುವಿನ ಉದಯವಾಯಿತು. ಅಂಧಕಾರ ಹರಿಯಿತು, ಭವರೋಗ ಅಳಿಯಿತು. ಆಚಾರ ವಿಚಾರ ಚಿಕಿತ್ಸೆಯಿಂದ ಉಸಿರು ಉತ್ತಮ ರೀತಿಯಲ್ಲಿ ಆಡತೊಡಗಿತು. ವರ್ಷವರ್ಷಕ್ಕು ಶಕ್ತಿ ಮೈಗೂಡಿ ಬರಹತ್ತಿತು. ಹೊಸರಕ್ತ ಧಮನಿಗಳಲ್ಲಿ ಹರಿಯತೊಡಗಿತು. ಸು. ೩೦-೩೫ ವರ್ಷಗಳಲ್ಲಿ ಸಮಾಜವು ಸಶಕ್ತವಾಗಿ ಸರ್ವಾಂಗ ಸುಂದರವಾಯಿತು. ಹಾಗಾದಲ್ಲಿ ಅಂತಹ ಅಮೋಘವಾದ ಶಕ್ತಿಗೆ ಕಾರಣರಾರು ಎನ್ನುವಿರಾ ? ಅವರೇ ಕಾರಣಿಕ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು. ಅವರು ಮೂಡಿಬಂದುದನ್ನು ಮಾಡಿ ನೆರವೇರಿಸಿದ ಮಣಿಹಗಳಾವವೆಂಬುದನ್ನು ತಿಳಿಯಲಪೇಕ್ಷಿಸುವಿರಾ ? ಹಾಗಾದರೆ ಬನ್ನಿ ! ಕೇಳಬನ್ನಿ !!

 ಕರ್ನಾಟಕ ಕೇಂದ್ರವಾದ ಧಾರವಾಡ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿರುವ ‘ಜೋಯಿಸರ ಹರಳಳ್ಳಿ’ ಎಂಬುದೊಂದು ಸಣ್ಣ ಗ್ರಾಮ, ಗ್ರಾಮ ಸಣ್ಣದಾದರೂ ಅದರ ಧಾಮ ಇಂದು ಹಿರಿಯದು. ಆ ಗ್ರಾಮದಲ್ಲಿ ದೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳಿದ್ದರು. ಅವರು ತಮ್ಮ ನಡೆನುಡಿಗಳಿಂದ ನಾಮ ನೇಮಗಳಿಂದ ಹನ್ನೆರಡನೆಯ ಶತಮಾನದಲ್ಲಿದ್ದ ಕಲ್ಯಾಣದ ಬಸವ ನೀಲಾಂಬಿಕೆಯರ ನೆನಪನ್ನು ತರುವಂತಿದ್ದರು.

 ನಿಜವಾಗಿಯು ತಾಯಿ ನೀಲಮ್ಮನು ನೀಲಾಂಬಿಕೆಯ ಸದೃಶಳು. ಗುಣಗಳಲ್ಲಿ ಗುಂಜಿಯಷ್ಟು ವ್ಯತ್ಯಾಸವಿಲ್ಲ. ಬಸವಯ್ಯನವರ ಭಾಗ್ಯದ ತವರು, ಬಾಳಿನ ಭವನ, ತಾಯಿ ನೀಲಮ್ಮನು ಬಸವಯ್ಯನವರಿಗೆ ಅನುರೂಪಳಾದ ಗೃಹಿಣಿ. ಪರಮ ಪತಿವ್ರತೆ; ಪತಿಯ ಪ್ರಾಣ ದೇವತೆ, ಶಾಂತಿ ಸಂಪನ್ನೆ, ಲಿಂಗಾರ್ಚನಾಸಕ್ತಿ, ಶ್ರಮಿಸುವ ಜೀವಿ, ಸಮತಾಭಾವಿ.

ಮನೆಯ ಕುಂದುಕೊರತೆಗಳನ್ನು ಆಚೆ ನೆರೆಯವರಿಗೆ ಚಾಚೂ ಹೇಳುತ್ತಿರಲಿಲ್ಲ. ನೆರೆ ಮನೆಗಳಿಗೆ ಸ್ವೈರವಾಗಿ ಸುಳಿಯುತ್ತಿರಲಿಲ್ಲ. ಮನೆಯ ಕಷ್ಟ ಕಾರ್ಪಣ್ಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿರಲಿಲ್ಲ. ಕುಂದು ಕೊರತೆ ಕಷ್ಟಕಾರ್ಪಣ್ಯಗಳ ಈ ಸಂಸಾರ ಸಾಗರ ವಿಷವನ್ನು ಕಾರಿದರೂ ಕಷ್ಟ, ನುಂಗಿದರೂ ಕಷ್ಟ, ಕಾರಿದರೆ ಮನೆತನದ ಮರ್ಯಾದೆಗೆ ಭಂಗ, ನುಂಗಿದರೆ ಮನಃಶಾಂತಿಗೆ ಭಂಗ, ಇದನರಿದು ತಾಯಿ ನೀಲಮ್ಮನವರು ಈ ನಂಜನ್ನು ಕಕ್ಕದೆ ಕುಡಿಯದೆ ಕಂಠದಲ್ಲಿಯೇ ಇರಿಸಿಕೊಂಡು ನಿಜಕ್ಕೂ ನೀಲಕಂಠಯರಾಗಿದ್ದರು. ನೀಲಕಂಧರನು ಜೀವನದಲ್ಲಿ ಒಮ್ಮೆ ವಿಷಪಾನ ಮಾಡಿ ಜಗತ್ತಿಗೆ ವರ್ಷಕ್ಕೊಂದು ಸಲ ಯುಗಾದಿ ಬರುವಂತೆ ಮಾಡಿದ್ದರೆ ತಾಯಿ ನೀಲಮ್ಮನವರು ತಮ್ಮ ಬಾಳಿನಲ್ಲಿ ನಿತ್ಯ ನಂಜುಂಡು ದಿನದಿನವೂ ಹೊಸಹಬ್ಬದ ಉಲ್ಲಾಸ ಉಣ್ಣುವಂತೆ ಮಾಡುತ್ತಿದ್ದರು. ಹೊಸ ಹೊಸ ಜೀವನ ಕಾಣುವಂತೆ ಮಾಡುತ್ತಿದ್ದರು. ಅವರು ಈ ಭಾಗ್ಯವಿಲ್ಲದ ಬಾಳಿಗೆ ಬಂದು ರುದ್ರಾಣಿಯಾಗಿದ್ದಂತೆ ತಮ್ಮ ಷಡ್ಗುಣೈಶ್ವರ್ಯಗಳಿಂದ ಇಂದ್ರಾಣಿಯೂ ಆಗಿದ್ದರು. ಅದರಿಂದ ಆ ಬಡತನದ ಬಾಳಿಗೆ ನೀಲಮ್ಮನವರು ಒಂದು ನೀಲರತ್ನ; ಬಡತನದ ಆ ಕಾಳಿರುಳಿಗೆ ಒಂದು ನೀಲಾಂಜನ ; ಬಾಳುರಿಯ ಉಪಶಾಂತಿಗೆ ಅವರೊಂದು ನೀಲಾಚಲ, ಬೋಳಾದ ಈ ಬಾಳಬನಕ್ಕೆ ಅವರೊಂದು ನೀಲೋತ್ಪಲ ಆಗಿದ್ದರೆಂದರೆ ಅತಿಶಯೋಕ್ತಿಯಲ್ಲ. ಅವರೇ ಆ ಬಾಳಿನ ಸಂಪತ್ತು; ಸರ್ವಸ್ವ.

 ಹೀಗೆ ಸಂಸಾರದ ಸರ್ವತೋಮುಖವಾದ ರಥ ಚಾಲನೆಗೆ ಹೆಗಲಿಕ್ಕಿ ಹೊಣೆ ಹೊತ್ತು ಪತಿಗೆ ಹಿಂದಡಿಯಿಡದೆ ಆ ಮಾತಾಯಿ ಮುನ್ನಡೆಯುತ್ತಿದ್ದಳು; ಮುನ್ನಿರೀಕ್ಷಣೆ ಮಾಡುತ್ತಿದ್ದಳು. ಆದರೂ ಬಡತನದ ಬಾಗಿಲನ್ನು ದಾಟಲು ಶಕ್ಯವಾಗಿರಲಿಲ್ಲ. ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿಯಿಂದ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿ ಅವೆರಡು ಕೂಡಿ ಬಾಳಿದವು.

 ಹೀಗೆ ಕೆಲವು ಕಾಲ ಕಳೆದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ.ಶ. ೧೮೬೭ ಪ್ರಭವ ಸಂವತ್ಸರದಲ್ಲಿ ಶ್ರೀ  ಹಾನಗಲ್ಲ ಕುಮಾರ ಪ್ರಭುಗಳು ಜನ್ಮತೊಟ್ಟರು. ವಿರಕ್ತರತ್ನ ಅವತರಿಸಿತು. ಯೋಗಿಚಂದ್ರ ಮೂಡಿತು.     ಸಮಾಜಸೂರ್ಯೋದಯವಾಯಿತು.

ಮುಂದೆ ಕುಮಾರ ಸ್ವಾಮಿಯಾಗಲಿರುವ ಈ ಕುವರನು ಸ್ವಾಮಿ ವಿವೇಕಾನಂದರಿಗೆ ಮೂರು ನಾಲ್ಕು ವರ್ಷ ಚಿಕ್ಕವನು. ಸಮಾಜದ ನಾಡಿನ ವಿವೇಕಾನಂದನಂತಿದ್ದನು. ಅದೇ ನಿಲುವು. ಅದೇ ತೇಜಸ್ಸು, ಆದರೂ ಆ ವೀರವೃತ್ತಿಯಿರಲಿಲ್ಲ; ಸಾಧು

ಸಂಪತ್ತಿಯಿತ್ತು. ಆ ಕಿಡಿನುಡಿಗಳಿಲ್ಲದಿದ್ದರು ವಿಚಾರ ಪರಿಪೂರ್ಣ ಉದಾತ್ತ ಉಪದೇಶದಿಂದ ಜನಾಂಗವನ್ನು ಚೇತರಿಸಿಕೊಳ್ಳುವಂತೆ ಮಾಡುವ ಚೈತನ್ಯವಿತ್ತು. ಹೊಸಕಾರ್ಯಕ್ಷೇತ್ರಕ್ಕೆ ಹೆಜ್ಜೆಯಿಕ್ಕುವಂತೆ ಮಾಡುವ ಅಪ್ರತಿಮ ಪ್ರತಿಭೆಯಿತ್ತು.

ಧೈಯವೊಂದೇ ಕ್ಷೇತ್ರ ಚಿಕ್ಕದು. ಮಾರ್ಗವೊಂದೇ ಪರಿಣಾಮ ಫಲಿತಾಂಶಗಳು ಬೇರೆ. ಕಾಲವೊಂದೇ ಪ್ರಾಂತ ಬೇರೆ, ಅದು ಭಾರತದ ಬೆಳಕು. ಇದು ಕನ್ನಡದ ಕಾಂತಿ, ಇಂತಹ ಕಾರಣಿಕ ಶಿಶುವನ್ನು ಹೆತ್ತತಾಯಿತಂದೆಗಳು ಎಂತಹ ಪುಣ್ಯಶಾಲಿಗಳು !

ಇಂತಹ ಕಾರಣಿಕ ಪುರುಷನನ್ನು ಪಡೆದ ನಾಡು ಸಮಾಜಗಳು ಎಂತಹ ಭಾಗ್ಯಶಾಲಿಗಳು !!

 ಈ ಕಾರಣಿಕ ಶಿಶುವಿನ ಉದಂತ ಉದಯದ ಕಾರಣಗಳಲ್ಲಿ ಹೇಳದೆ ಬಿಡುವಂತಿಲ್ಲ. ಒಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮನವರು ಪವಡಿಸಿ ನಿದ್ದೆಹೋಗಿದ್ದಾರೆ. ಆ ಸಮಯದಲ್ಲಿ ಒಂದು ಸ್ವಪ್ನ ಬಿದ್ದಿದೆ. ಜಂಗಮ ವೇಷಧಾರಿಯಾದ ಒಬ್ಬ ತಾಪಸಿಯು ದರ್ಶನ ಕೊಟ್ಟಿದ್ದಾನೆ. ಜಂಗಮ ಭಕ್ತಿಯಾದ ನೀಲಮ್ಮ ತಾಯಿಯು ನಯಭಯದಿಂದ ನಮಿಸಿದ್ದಾಳೆ. ತಾಪಸಿಯು ತನ್ನ ಕೈಯಲ್ಲಿದ್ದ ಸುರಸುಮವನ್ನು ಆಶೀರ್ವದಿಸಿ ಜಗನ್ಮಾತೆ, ನಾವು ಆಶೀರ್ವದಿಸಿದ ಕುಸುಮಕ್ಕೆ ಬದಲು ನಮಗೊಬ್ಬ ಸುಕುಮಾರನನ್ನು ಕೊಡು. ಇದೇ ನಾವು ನಿನ್ನಲ್ಲಿ ಬೇಡಬಂದ ಭಿಕ್ಷೆ ಎಂದು ಹೇಳಲು, ಅದಕ್ಕೆ ತಾಯಿಗಳು ಆಗಲಿ ಮಹಾತ್ಮ ತಮ್ಮ ಆಶೀರ್ವಾದದಿಂದ ಇನ್ನೊಬ್ಬ ಮಗನು ಹುಟ್ಟುವ ಭಾಗ್ಯವೊದಗಿದಲ್ಲಿ ಅಗತ್ಯವಾಗಿ ಅರ್ಪಿಸುತ್ತೇನೆಂದು ಮಾತುಕೊಟ್ಟಳಂತೆ | ಬಂದು ಬೇಡಿದ ತಾಪಸಿಯು ಯಾರನ್ನುವಿರಾ ? ಸಮಾಜದ ಜನತಾ ಜನಾರ್ದನನೇ ಆ ವೇಷದಲ್ಲಿ ಬಂದು ಬೇಡಿದನೆಂಬುದೇ ನೂರು ಪಾಲಿಗೂ ನಿಜ. ಕುಮಾರನು ಮುಂದೆ ಸಮಾಜ ಕುಮಾರನಾಗಿ ಬಾಳಲಿಲ್ಲವೆ ? ಇದಕ್ಕಿಂತಲು ಬೇರೆ ನಿದರ್ಶನ ಬೇಕೆ ?

 ಇನ್ನೊಂದು ದಿನ ತವರೂರಾದ ಲಿಂಗದಹಳ್ಳಿಯ ಬಳಿಯಲ್ಲಿರುವ ನಂದೀಹಳ್ಳಿಯಲ್ಲಿ ಜರುಗುವ ಬಸವೇಶ್ವರನ ಯಾತ್ರೆಗೆ ನೀಲಮ್ಮನವರು ಹೋಗಿದ್ದರು. ನಂದೀಶ್ವರನ ರಥೋತ್ಸವ ನಡೆಯುತ್ತಿತ್ತು. ಅಲಂಕರಿಸಿದ ಆ ತೇರನ್ನು ನೋಡಿ ನಲಿಯಲು ಅದರ ಬಳಿಗೆ ನೀಲಮ್ಮನವರು ನಿಂತಿದ್ದರು. ಯಾರೋ ತೂರಿದ ಖರ್ಜೂರವೊಂದು ಅನಿರೀಕ್ಷಿತವಾಗಿ ನೀಲಮ್ಮ ತಾಯಿಯ ಉಡಿಯ ಮಡಿಕೆಯಲ್ಲಿ ಬಂದು ಬಿತ್ತು. ಅದನ್ನು ಕಂಡು ಭಕ್ತಿಭರಿತರಾದ ತಾಯಿಯವರು ಇದೂ ಒಂದು ದೇವರ ಕರುಣೆಯೆಂದು ಕೈಗೆ ತೆಗೆದುಕೊಂಡು ಕಣ್ಣುಗಳಿಗೊತ್ತಿಕೊಂಡು ಮನೆಗೆ ಕೊಂಡೊಯ್ದರು. ಸ್ನಾನ ಶಿವಪೂಜೆಗಳನ್ನು ಆಗು ಮಾಡಿಕೊಂಡು ತಂದ ಪ್ರಸಾದವನ್ನು ಪ್ರಸನ್ನಚಿತ್ತದಿಂದ ಲಿಂಗಕ್ಕರ್ಪಿಸಿ ಸ್ವೀಕರಿಸಿದರು. ಅದರ ಫಲವಾಗಿ ಗರ್ಭಧಾರಣೆಯಾಗಿ ನವಮಾಸ ತುಂಬಿ ಕಾರಣಿಕ ಕುಮಾರನು ಜನಿಸಿದನು. ಮಕ್ಕಳಿಲ್ಲದೆ ಮರಗುತ್ತಿದ್ದ ಮಾದಲಾಂಬಿಕೆಗೆ ಬಾಗೇವಾಡಿಯ ದೇವಸ್ಥಾನದಲ್ಲಿರುವ ಬಸವೇಶ್ವರನ ಪುಷ್ಪಫಲಾನುಗ್ರಹದಿಂದ ದ್ವಿತೀಯ ಶಂಭು ಬಸವೇಶ್ವರನು ಜನಿಸಿದಂತೆ ನಮ್ಮ ಕಥಾನಾಯಕನು ಸಹ ಬಸವೇಶ್ವರ ಫಲಾನುಗ್ರಹದಿಂದಲೇ ಜನಿಸಿದ್ದು ಮತ್ತೊಂದು ಉದಂತ ಉದಯದ ಕುರುಹು.

ದಿನವಾವುದೋ ತಿಳಿಯದು ಒಂದು ದಿನ ಬ್ರಾಹ್ಮಿಮುಹೂರ್ತ, ಮಗು ಜನಿಸಿದೆ. ಮನೆಯವರಿಗೆಲ್ಲ ಆನಂದ. ಮನೆಯನ್ನು ಸಾರಣೆ ಕಾರಣೆಗಳಿಂದ ಶುದ್ಧಗೊಳಿಸಿದ್ದಾರೆ. ರಂಗವಲ್ಲಿ ತಳಿರುತೋರಣಗಳಿಂದ ಅಲಂಕರಿಸಿದ್ದಾರೆ. ಜನ್ಮಲಿಂಗಧಾರಣೆಗೆಂದು ಜಂಗಮರೊಬ್ಬರನ್ನು ಕರೆಯಲು ಹೋಗಿದ್ದರು. ಅಷ್ಟರಲ್ಲಿ ಒಬ್ಬ ಮುದುಕ ಮಹೇಶ್ವರರು ಭಿಕ್ಷಕ್ಕಾಗಿ ಮನೆಗೆ ಬಂದರು. ಕೆಲಸ ಮಾಡಲು ಬಂದಿದ್ದ ಒಬ್ಬ ಮುದುಕಿಯು ಸ್ವಾಮಿ ! ಮನೆಯಲ್ಲಿ ಹೆತ್ತಿರುವರು. ಈ ದಿನ ಭಿಕ್ಷೆ ನೀಡುವಂತಿಲ್ಲ, ಮತ್ತೊಂದು ಮನೆಗೆ ಹೋಗಿರಿ ಎಂದು ಹೇಳಿದಳು. ಅಮ್ಮಾ, ಏನು ಹೆತ್ತಿರುವರು ? ಗಂಡುಕೂಸನ್ನು, ಹಾಗಾದಮೇಲೆ ನೀನೇಕಮ್ಮ ಹೀಗೆ ಹೇಳುತ್ತೀಯೆ ! ಸುತನು ಜನಿಸಿದರೆ ಸಂತೋಷವಲ್ಲವೆ? ಸಕ್ಕರೆ ಹಂಚುವುದಿಲ್ಲವೆ? ದೀನದರಿದ್ರರಿಗೆ ದಾನ ಮಾಡುವುದಿಲ್ಲವೆ? ಹೀಗೆ ಲೋಕರೂಢಿಯಿದ್ದು ನೀನು ಒಂದು ಹಿಡಿ ಕಾಳು ನೀಡುವದಿಲ್ಲೆಂದು ಹೇಳುವುದು ಧರ್ಮವೇ? ಸ್ವಾಮಿ, ನೀವು ಹೇಳುವುದೆಲ್ಲ ಸರಿಯೆ. ಆದರದು ಶ್ರೀಮಂತರ ಮಾತು. ನಮ್ಮಂತಹ ಬಡವರು ಎಲ್ಲಿಂದ ಮಾಡಬೇಕು? ಮೊದಲೆ ನಮಗೆ ಮಕ್ಕಳು ಹುಟ್ಟುವುದು ಹೆಚ್ಚು. ದಾನಧರ್ಮ ಮಾಡಿದರೆ ಮತ್ತಷ್ಟು ಹುಟ್ಟ ಬಹುದಲ್ಲವೆ? ಎಂದು ನಗೆ ನುಡಿದಳು. ಅಮ್ಮಾ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಈಗ ಹುಟ್ಟಿದ ಮಗುವನ್ನು ನಮಗೆ ಕೊಟ್ಟುಬಿಡಿರಿ. ಸ್ವಾಮಿ, ಯಾರು ಬೇಡೆನ್ನುವರು? ಅಗತ್ಯವಾಗಿ ತಗೆದುಕೊಂಡು ಹೋಗಿರಿ, ಸಾಕುವ ಸಾಮರ್ಥ್ಯ ನಿಮಗಿದ್ದರೆ ಎಂದು ನಗೆಮಾತಿನಿಂದ ನುಡಿದಳು. ಆಗ ಮಹೇಶ್ವರನು ಹರ್ಷಚಿತ್ತನಾಗಿ ಹೊರಟು ಹೋದನು. ತಾಯಿಯ ಕನಸಿಗೆ ಬಂದು ಹೋಗಿದ್ದ ಆ ಜನತಾಜನಾರ್ದನನೆ ಮರಳಿ ಮಹೇಶ್ವರನ ರೂಪದಲ್ಲಿ ಬಂದು ಸಮಾಜದ ಶಿಶುವನ್ನು ಸಮಾಜಕ್ಕೆ ಕೊಡುವಂತೆ ಜಾಗ್ರತಾವಸ್ಥೆಯಲ್ಲಿ ಮಾತು ತೆಗೆದುಕೊಂಡು ಮರಳಿದನು. ಇದೂ ಒಂದು ಉದಂತ ಉದಯದ ಚಿನ್ಹೆಯಲ್ಲವೆ ?

ಆಮೇಲೆ ಜಂಗಮರೊಬ್ಬರು ಬಂದು ಜನ್ಮಲಿಂಗಧಾರಣೆಯನ್ನು ಮಾಡಿ ಹೋಗುವರು. ಮೂರಾರು ದಿನಗಳು ಕಳೆದ ನಂತರ ಇದ್ದಕ್ಕಿದ್ದಂತೆ ಮಗು ಹಾಲು ಕುಡಿಯದೆ ಹೋಯಿತು. ತಾಯಿಗೆ ದಿಗಲಾಯಿತು. ಮನೆಯವರಿಗೆ ಭಯವಾಯಿತು. ಎಲ್ಲರು ಮಮ್ಮಲ ಮರುಗಿದರು. ಏನಾಗಿದೆಯೋ ಎಂದು ಯಾರಾರನ್ನೋ ಕರೆಯಿಸಿ ತೋರಿಸಿದರು. ಒಬ್ಬೊಬ್ಬರು ಒಂದೊಂದು ಉಪಾಯವನ್ನು ಹೇಳಹತ್ತಿದರು. ‘ಹಾಲಯ್ಯ’ ಎಂದು ಹೆಸರಿಟ್ಟು ನೋಡಿದರು. ಇದುವೆ ಹುಟ್ಟುಹೆಸರಾಯಿತು. ಏನಾದರೂ ಹಸುಮಗು ಹಾಲು ಕುಡಿಯಲಿಲ್ಲ. ಆಗ ಅವರಲ್ಲಿ ಒಬ್ಬರು ಗ್ರಾಮದೇವತೆಯ ಅಂಗಾರವನ್ನು ತಂದು ಹಚ್ಚಬೇಕೆಂದರು. ಆ ಮಾತು ಮಾತೆಯಾದ ನೀಲಮ್ಮನವರ ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿ ಶ್ರೀಗುರುವಿನಿಂದ ಶುದ್ಧವಾದ ಭಸಿತವನ್ನು ತಂದು ಹಣೆಗೆ ಧರಿಸಿದರು. ಆ ಕೂಡಲೇ ಮಗುವು ಮೊಲೆಯುಂಡಿತು. ಸರ್ವರು ಸಂತೋಷಭರಿತರಾದರು. ಕಂದನ ಉಜ್ವಲಂತ ಉತ್ಕ್ರಮಣ ಜೀವನಕ್ಕೆ ಬೀಜಾವಾಪವಿದು.

ದಿನದಿನಕ್ಕೆ ಮಗುವಿಗೆ ಬಲಬಂದಿತು. ಮೈಕೈ ತುಂಬಿಬಂದವು. ಶುಕ್ಲಪಕ್ಷದ ಚಂದ್ರನಂತೆ ಬೆಳೆದನು. ನಗೆ ಬೆಳದಿಂಗಳ ಬೀರಿದನು. ಹನ್ನೊಂದನೆಯ ದಿನ ‘ಸದಾಶಿವ’ನೆಂದು ಹೆಸರಿಟ್ಟರು. ನೆರೆಯವರ ನೇಹದ ಶಿಶುವಾಗಿ ಮನೆಯವರ ಮುದ್ದುಮಗನಾಗಿ ದಿನಗಳೆದನು. ಎಲ್ಲರಿಗೂ ಹಾಲಿನಂತೆ ಹರ್ಷಪ್ರದನಾಗಿ ಅಂಬೆಗಾಲಿನಿಂದ ಆಟವಾಡಿದನು. ಆಡಿಸುವವರ ತೊಡೆಯ ಶಿಶುವಾಗಿ, ಮುದ್ದಿಸುವವರ ಮುಂಗೈಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಬೆಳೆದನು. ತೊದಲ್ನುಡಿಗಳ ಕೇಳಿ ಆನಂದಿಸಿದರು. ನಗೆಮೊಗವ ಕಂಡು ನಲಿದರು. ಮೊಗದ ತೇಜವ ನೋಡಿ ಹರುಷಿಸಿದರು. ಮೃದುತನುವ ಮುಟ್ಟಿ ಸುಖಪಟ್ಟರು. ಹೀಗೆ ಸಕಲರ ಸಂತಸದ ಕೇಂದ್ರವಾಗಿ ಬೆಳೆದು ವರುಷದವನಾದನು.

ಸದಾಶಿವನಿಗೆ ಯಾವ ಆಟಗಳ ಮೇಲೆ ಪ್ರೇಮವಿಲ್ಲದಿದ್ದರು ಗೋಲಿಯಾಟ (ಗುಂಡಿನಾಟ)ದಲ್ಲಿ ಗಮನವಿತ್ತು. ಗುರಿಯಿಟ್ಟು ಹೊಡೆದರೆ ಎಷ್ಟು ದೂರದಲ್ಲಿದ್ದರೂ ತಪ್ಪುತ್ತಿರಲಿಲ್ಲ. ಗುಂಡಿನಾಟದಲ್ಲಿ ಆತನನ್ನು ಸೋಲಿಸುವ ಹುಡುಗರೆ ಇರಲಿಲ್ಲ. ಹೀಗಾಗಿ ಸದಾಶಿವನ ದೃಷ್ಟಿಯೋಗ ಈ ಆಟದಿಂದಲೇ ಪ್ರಾರಂಭವಾಯಿತು. ಸದಾಶಿವನ ಮೆಚ್ಚುಗೆಯ ಮತ್ತೊಂದಾಟವೆಂದರೆ ದೊಂಬರಾಟ, ದೊಂಬರೆಲ್ಲಿ ಬಂದಾಡಿದರು. ಅಲ್ಲಿಗೆ ಹೋಗಿ ನೋಡುತ್ತಿದ್ದನು. ಅವರ ಮೈಕುಣಿತಗಳನ್ನು ಅಂತರದಲ್ಲಿ ಹಗ್ಗದ ಮೇಲೆ ಮಧ್ಯಬಿಂದುವಿನ ತೂಕವಿಡಿದು ಕೆಳಕ್ಕೆ ಬೀಳದಂತೆ ನಡೆವುದನ್ನು ನೋಡಿ ಅಚ್ಚರಿಪಡುತ್ತಿದ್ದನು. ಅದರ ಫಲವಾಗಿ ಹಠಯೋಗದತ್ತ ಆತನ ಮನಸ್ಸು ವಾಲಿತು.

ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ಕಲಿತ ದೃಷ್ಟಿಯೋಗವನ್ನು ಅಲ್ಲಿಗೆ ಕೈ ಬಿಡದೆ ಕೊನೆಯವರೆವಿಗೂ ಸಾಧಿಸಿ ಅದರ ಪರಿಪೂರ್ಣ ಸಿದ್ಧಿಯನ್ನು ಸಫಲತೆಯನ್ನು ಪಡೆದರು. ‘ದೃಷ್ಟಿಶುದ್ಧಿ’ ಎಂಬ ಪ್ರಕರಣದಲ್ಲಿ ಈ ವಿಷಯವನ್ನು ಓದಿ ತಿಳಿಯಬಲ್ಲಿರಿ. ಗೋಲಿಯಾಟದ ಮೇಲೆ ಶ್ರೀಗಳವರಿಗೆ ಕೊನೆಯವರೆಗೂ ಮೆಚ್ಚುಗೆಯಿತ್ತು.

ದೊಂಬರಾಟಗಳನ್ನು ನೋಡಿದ ಫಲವಾಗಿ ಹಠಯೋಗ ಉದ್ಧಾರವಾಯಿತು. ಆ ವಿಷಯದಲ್ಲಿ ಶಿವಯೋಗಮಂದಿರವೆ ಸಾಕ್ಷಿ. ಸಾಧಕರೆ ಪರಮ ಸಾಕ್ಷಿ. ಶಿವಯೋಗಮಂದಿರದಲ್ಲಿಯೂ ಸಹ ದೊಂಬರಾಟ ಬಂದರೆ ಬಿಡದೆ ಕರೆಯಿಸಿ ಆಡಿಸಿ ವಟುಗಳಿಗೆ ಸಾಧಕರಿಗೆ ತೋರಿಸುತ್ತಿದ್ದರು. ಪರಸ್ಪರ ಇರುವ ಆಸನ ವ್ಯತ್ಯಾಸ ಭಾವ ವ್ಯತ್ಯಾಸ ಫಲ ವ್ಯತ್ಯಾಸಗಳನ್ನು ವಿವರಿಸಿ ಹೇಳುತ್ತಿದ್ದರು.   ಹೀಗೆ ಚಿಕ್ಕವಯಸ್ಸಿನ ಆಟಗಳಲ್ಲಿಯೂ ಸಹ ಅವರ ನೋಟ ಹಿರಿದಾಗಿತ್ತು.

ಈ ಆರನೆಯ ವಯಸ್ಸಿನಲ್ಲಿಯೇ ಒಳ್ಳೆಯ ದಿನದಲ್ಲಿ ಅಕ್ಷರಾಭ್ಯಾಸಕ್ಕೆ ಆರಂಭವಾಯಿತು. ಊರಿನಲ್ಲಿ ಬೇರೆ ಶಾಲೆಯಿರಲಿಲ್ಲ. ಸದಾಶಿವನ ಅಜ್ಜಂದಿರಾದ ಶ್ರೀ ಕೊಟ್ರಪ್ಪಯ್ಯನವರೇ ಒಂದು ಸ್ವತಂತ್ರಶಾಲೆ (ಗಾವಠೀಶಾಲೆ) ಯನ್ನು ತೆರೆದಿದ್ದರು. ಅದರಲ್ಲಿಯೆ ಓದಿಗೆ ಮೊದಲಾಯಿತು. ಸದಾಶಿವನು ಕುಶಲಮತಿಯಾಗಿದ್ದನು. ಅಕ್ಷರಾಭ್ಯಾಸವನ್ನು ಆದಷ್ಟು ಬೇಗ ಮುಗಿಸಿ ಶ್ರೇಣಿಗೆ ಸೇರಿದನು. ವರ್ಗದಲ್ಲಿಯೂ ಮೊದಲಿನವನಾಗಿಯೇ ಇರುತ್ತಿದ್ದನು. ಎಲ್ಲರಿಗಿಂತಲೂ ಹೆಚ್ಚಾಗಿಯೇ ಅಂಕಗಳನ್ನು ಪಡೆಯುತ್ತಿದ್ದನು. ಪ್ರತಿವರ್ಷವೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದನು. ಹೀಗೆ ಮೂರು ನಾಲ್ಕು ವರುಷ ಅಬಾಧಿತವಾಗಿ ಓದು ಮುಂದುವರೆಯಿತು. ಆಮೇಲೆ ಎರಡು ಹೊತ್ತು ಶಾಲೆಗೆ ಹೋಗಿ ಓದಲು ಆತಂಕವೊದಗಿತು. ಮನೆಯ ಬಡತನ, ಬಾಳಿನ ಬವಣೆ ಅದಕ್ಕೆ ಕಾರಣವಾಯಿತು.

ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ

‘ನಿಯಮ’ ಶಬ್ದದ ತದ್ಭವ ರೂಪ ನೇಮ. ವ್ರತ ಕಟ್ಟಳೆ, ಧರ್ಮಾಚರಣೆಗಳ ಅರ್ಥದಲ್ಲಿ ನೇಮ ಶಬ್ದದ ಬಳಕೆಯನ್ನು ಕಾಣುತ್ತೇವೆ. ನಿತ್ಯ ಪಾಲಿಸುವ ಮತ್ತು ಕಾಲಬದ್ಧ ನೇಮಗಳಿಗೆ ನಿತ್ಯ ನೇಮ ಅಥವಾ ನೇಮನಿತ್ಯ ಎನ್ನುವರು. ನೇಮ- ನಿತ್ಯಗಳ ಪಾಲನೆಯ ಉದ್ದೇಶ ದೈವದಲ್ಲಿರುವ ನಮ್ಮ ಶ್ರದ್ಧೆಯನ್ನು ಗಟ್ಟಿಗೊಳಿಸುವುದು. ಹಾಗೆಯೇ ಆಶೆ-ಆಮಿಷಗಳನ್ನು ತೊರೆದು ಮನಸ್ಸನ್ನು ಪರಿಶುದ್ಧಗೊಳಿಸುವುದು. ಆದರೆ ಬದುಕಿನಲ್ಲಿ ಸುಖ ಶಾಂತಿಗಳನ್ನು ಪಡೆಯುವುದಕ್ಕಾಗಿಯೇ ಅನೇಕರು ನೇಮಾದಿಗಳನ್ನು ಪಾಲಿಸುವುದುಂಟು. ವ್ಯಕ್ತಿಯ ಅಧ್ಯಾತ್ಮಿಕ ಬದುಕಿಗೆ ಪೂರಕವಾಗಬೇಕಿದ್ದ ನೇಮನಿತ್ಯಗಳು ಕ್ಷಣಿಕ ಫಲಾಪೇಕ್ಷೆಯಲ್ಲಿ ಪರ್ಯವಸಾನಗೊಳ್ಳುತ್ತವೆ. ಅದರಲ್ಲೂ ಕೆಲವರ ವ್ರತ ನೇಮಗಳಿಗೆ ಯಾವುದೇ ನಿಶ್ಚಿತ ಉದ್ದೇಶವಿರುವುದಿಲ್ಲ. ಅಲ್ಲಿರುವುದು

ಇನ್ನೊಬ್ಬರ ಅನುಕರಣೆ ಮಾತ್ರ.

 ನೋಡಿ ನೋಡಿ ಮಾಡುವ ನೇಮ, ತನು ಉದ್ದೇಶವಾಗಿ ಮಾಡುವ ನೇಮ, ಗುರುಪಥ ಮೀರಿ ಮಾಡುವ ನೇಮ ಶಿವಾರ್ಪಿತವಾಗಲಾರವು. ಪರಮಾರ್ಥ ಸಾಧನೆಗಾಗಿ ಗುರುವಿನ ಮಾರ್ಗದರ್ಶನದಂತೆ ನೇಮ ನಿತ್ಯಗಳನ್ನು ಪಾಲಿಸಬೇಕು. ತನ್ನ ಲಿಂಗ (ದೇವರಿಗೆ)ಕ್ಕೆ ಮಾಡುವ ನಿತ್ಯ ನೇಮಗಳನ್ನು ತಾನೇ ಮಾಡಬೇಕೆಂಬುದು ಬಸವಣ್ಣನವರ ಸ್ಪಷ್ಟ ಆದೇಶ.

 ಮನದಲ್ಲಿ ನಿಷ್ಠೆ ಇಲ್ಲದೆ ಹಾಲು, ಕಡಲೆ, ನೀರು, ಪುಷ್ಪಾದಿಗಳ ನೇಮ ಹಿಡಿದವರು ಕ್ರಮವಾಗಿ ಬೆಕ್ಕು, ಕುದುರೆ, ಕಪ್ಪೆ, ತುಂಬಿಯಾಗಿ ಹುಟ್ಟುವರೆಂದು ಒಂದೆಡೆ ಅಲ್ಲಮಪ್ರಭು ವಿಡಂಬಿಸಿದ್ದಾನೆ. ಇಂಥ ನೇಮಗಳು ನಿರರ್ಥಕ. ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ನೇಮ, ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯ ಒಪ್ಪಿಸುವುದೇ ನೇಮ. ಅಂದರೆ ಇದ್ದುದರಲ್ಲಿ ತೃಪ್ತಿ ಹೊಂದುವ, ವಂಚನೆ ಇಲ್ಲದೆ ಹಂಚಿ ಉಣ್ಣುವ, ನಡೆ ನುಡಿ ಪರಿಶುದ್ಧವಾಗಿಟ್ಟುಕೊಳ್ಳುವ ಮತ್ತು ದುಡಿಮೆಯ ಫಲವನ್ನು ಶರಣರಿಗೊಪ್ಪಿಸಿ ದಾಸೋಹಂಭಾವದಿಂದ ಬದುಕುವ ನೇಮಗಳೆ ನಿಜವಾದ ನೇಮಗಳು.  ಅವು ದೇವರಿಗೆ ಒಪ್ಪಿತವಾದ ನೇಮಗಳು.

 ಶಿವರಾತ್ರಿ, ಏಕಾದಶಿ, ಸಂಕಷ್ಟಿಗಳಲ್ಲಿ ಮಾಡುವ ಉಪವಾಸಾದಿ ನೇಮಗಳು ಅರ್ಥವನ್ನು ಕಳೆದುಕೊಂಡು ಆಹಾರ ಬದಲಾವಣೆಗೆ ಸೀಮಿತಗೊಂಡಿವೆ. ಶ್ರಾವಣ ಶುಕ್ರವಾರಗಳ ಲಕ್ಷ್ಮಿ ಪೂಜೆ, ಮಾರ್ಗಶಿರ ಗುರುವಾರಗಳ ಗೌರಿಪೂಜೆಗಳಲ್ಲಿ ಭಕ್ತಿ, ಶ್ರದ್ಧೆಗಳಿಗಿಂತ ವಿಶೇಷಾಲಂಕಾರ ಮತ್ತು ಆಭರಣ ಪ್ರದರ್ಶನಗಳಿಗೆ ಅಗ್ರಸ್ಥಾನ. ವಾಸ್ತುಶಾಂತಿ ಹಾಗು ಗೃಹಶಾಂತಿಗಳಲ್ಲಿ ಭಕ್ತಿ ಇಲ್ಲದೆ ಮಾಡುವ ಅರ್ಥಹೀನ ಹೋಮಹವನಗಳಿಂದ ಪವಿತ್ರ ಪ್ರಸಾದದ ಕೇಡು. ಇದಲ್ಲದೆ ಕೆಲವು ವಿಶಿಷ್ಟ ಪದಾರ್ಥಗಳನ್ನು ತಿನ್ನದಿರುವುದು, ಕ್ಷೌರ ಮಾಡಿಕೊಳ್ಳದಿರುವುದು, ಮೌನದಿಂದಿರುವುದು ಮುಂತಾದ ನೇಮಾದಿಗಳನ್ನು ಪಾಲಿಸುವವರೂ ಉಂಟು. ಆದರೆ ಶುದ್ಧ ಮನಸ್ಸಿನಿಂದ ದೈವವನ್ನು ನೆನೆದವರಿಗೆ ಇಂಥ ಯಾವ ನೇಮನಿತ್ಯಗಳ ಅವಶ್ಯಕತೆ ಇರದು. ಒಟ್ಟಾರೆ

ನೇಮ ನಿತ್ಯಗಳು ನಮ್ಮ ದುರ್ವ್ಯಸನ ದುರಾಚಾರಗಳಿಗೆ ಕಡಿವಾಣದಂತಿರಬೇಕು. ಹಾಗೆಯೇ ಅಧ್ಯಾತ್ಮಿಕ ಪ್ರಗತಿಗೆ, ಅಂತರಂಗ-ಬಹಿರಂಗ ಶುದ್ಧಿಗೆ ಪೂರಕವಾಗಿರಬೇಕು ಎಂಬುದೇ ಮುಖ್ಯ.

 

ರಚನೆ: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳುಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ. ಕ್ಯಾಂಪ: ಅಧ್ಯಾತ್ಮ ಸಿರಿಗಿರಿ ಫಾರ್ಮ ಯಶವಂತನಗರ

ಜಯದೇವ ಗುರುದೇವ ಸದ್ಗುರು ಕುಮಾರ

ಇನ್ನಷ್ಟು ಬೇಡುವೆನು ಸ್ಮರಣೆಯನು ಕುಮಾರ

ಬಂದಷ್ಟು ಹಾಡುವೆನು ಅನುದಿನವು ಕುಮಾರ ||

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೧  ||

ಪೂರ್ಣ ನೀನು ಮಂದಿರದಿ ಪ್ರಕಟವಾದೆ ಕುಮಾರ

ಜಗದೊಳಗೆ ಜಗವಾಗಿ ಆಡಿರುವೆ ಕುಮಾರ

ಉಂಬಾತ ಉಣಿಸುವಾತ ನೀನೆ  ಕುಮಾರ

ಕೊಂಬಾತ ಕೊಡುವಾತ ನೀನೇ ಕುಮಾರ

ತನಗನ್ಯ ತಾ ಅನ್ಯ ಬಿಡಿಸಿಬಿಡು ಕುಮಾರ

ಮನೆಮಾರು ಬಂಧುಗಳು ಇಲ್ಲೆನಗೆ ಕುಮಾರ

ಕಡು ದುಃಖಿಯ ಸಲುಹುವ ಕರಣಾಳು ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೨  ||

ನಿನ್ನಡಿಯ ಬಿಡಲಾರೆ ತೊರೆಯದಿರು ಕುಮಾರ

ಸಾಮಿಪ್ಯ ಬೇಡುವೆನು ಸದ್ಗುರು ಶ್ರೀ ಕುಮಾರ

ಕತ್ತಲೆಗೆ ತುತ್ತಾಗಿ ಸಾಯುವೆನು ಕುಮಾರ

ನಿನ್ನ ಪಾದ ಬಿಡದಂಥ ಮನವ ಕೊಡು ಕುಮಾರ

ನೀನಿರಿಸಿದಂತೆ ನಾನಿರುವೆನೈ ಕುಮಾರ

ನೀ ಮುಂದೆ ನಡೆದರೆ ಜಗ ಬೆಳಗು ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  ||  ೩  ||

ತಂದೆ ನೀನಿತ್ತ ಕಣ್ಣು ಮೂಡಿದರೆ ಕುಮಾರ

ಜಡ ದೇಹಿ ಮನುಜರ ಭವದೂರ ಕುಮಾರ

ನಡೆಯಿತ್ತು ಶಿವಗೋಷ್ಟಿ ನೆನಹಿನಲಿ ಕುಮಾರ

ಒಂದಾಯ್ತು ಗುನಗುನಸಿ ನಿನ್ನಲ್ಲಿ ಕುಮಾರ

ಆಕಾಶದತ್ತತ್ತ ನೀನೆ ಕುಮಾರ

ಪಾತಾಳದತ್ತಾಚೆ ನೀನೆ ಶ್ರೀ ಕುಮಾರ

ಎನ್ನಗಲ ನಿಮ್ಮಗಲ ಜಗದಗಲ ಕುಮಾರ

ದಿಕ್ಕುಗಳು ಕಟ್ಟದ ಅನಂತ ನೀ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  || ೪  ||

ಎನ್ನಂಗದೊಳು ನೀ ಮೂಡಲ್ಕೆ ಕುಮಾರ

ಎನ್ನ ನಾಸಿಕದ ಗಂಧ ಆಚಾರಲಿಂಗ ಕುಮಾರ

ಎನ್ನ ನಾಲಗೆಯ ರಸ ಗುರುಲಿಂಗ ಕುಮಾರ

ಎನ್ನ ಕಣ್ಣಿನ ರೂಪ ಶಿವಲಿಂಗ ಕುಮಾರ

ಎನ್ನ ಚರ್ಮದ ಸ್ಪರ್ಷ ಚರಲಿಂಗ ಕುಮಅರ

ಎನ್ನ ಕಿವಿಯ ಶಬ್ಧ ಪ್ರಸಾದಲಿಂಗ ಕುಮಾರ

ನಾನಾಗಿ  ಇರುವುದೆಲ್ಲ ಮಹಾಲಿಂಗ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ   || ೫  ||

 ದೇಹ ದೇವಾಲಯದಲಿ ಚೈತನ್ಯ ಕುಮಾರ

ನೆಲ ನೀರುಗಾಳಿ ಬೆಂಕಿ ಬಯಲು ಶ್ರೀಕುಮಾರ

ದ್ವೈತ ಲೀಲೆಯ ಸುಖ ಗೀತಭಕ್ತಿ ಕುಮಾರ

ಸ್ವರವಿಟ್ಟು ಹಾಡಿದರೆ ಕೆಡುವ ಗೌಪ್ಯ ಕುಮಾರ

ಸ್ವಯಮೇವ ಸ್ವಯಂಭು ಪರಮ ಶ್ರೀಕುಮಾರ

ರತಿರಹಿತ ಅನ್ನದಾನಿ ಪರಿಣಾಮಿ ಕುಮಾರ

ಸುಕುಮಾರ ಗುರು ಕುಮಾರ ಶ್ರೀ ಕುಮಾರ ದೇವಾ  ||  ೬  ||

ಲೇಖಕರು : ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

 

 

ಪ್ರತೀ ಜೀವಿಗೆ ಆಧಾರ ಭಗವಂತನಿಂದ ನಿರ್ಮಾಣವಾದ ಈ ಭೂಮಂಡಲ.ಇದು ಪಂಚಭೂತಗಳಿಂದ ಆವೃತವಾದದ್ದು.ಇಲ್ಲಿ ಜೀವಿಸುವ ಪ್ರತಿ ಜೀವಿಗೂ ಸುಖ – ದುಃಖ, ಆಸೆ – ನಿರಾಸೆ,ನೋವು – ನಲಿವು ಹೀಗೆ ಎಲ್ಲ ಅನುಭವಗಳು ಸಾಮಾನ್ಯವೇ.ಆದರೆ ಮನುಷ್ಯನನ್ನು ಹೊರತು ಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ತಮ್ಮ ಕುಂದು ಕೊರತೆಗಳನ್ನು,ಕಷ್ಟ ಸುಖಗಳನ್ನು ತಮ್ಮಷ್ಟಕ್ಕೆ ತಾವೇ ನಿಭಾಯಿಸಿಕೊಳ್ಳುತ್ತವೆ. ಸಮತೋಲನದಲ್ಲಿ ಬದುಕು ನಡೆಸುತ್ತವೆ.ಆದರೆ ಮಾನವ ಮಾತ್ರ ಇವುಗಳಿಗಿಂತ ಭಿನ್ನ.ಇವನು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವವ. ಅತೃಪ್ತ,ಸ್ವಾರ್ಥ ಪರತೆಯನ್ನು ತುಂಬಿಕೊಂಡು ನಡೆವವ.ಇವನಿಗೆ ಸುಖ – ದುಃಖ,ನೋವು – ನಲಿವು ,ಲಾಭ – ನಷ್ಟ ಬಂದೊದಗಿದಾಗ ಒಂದೊಂದು ತರಹದ ಮನೋಸ್ಥಿತಿ ಇವನು ಎದುರಿಸುತ್ತಾನೆ.ಇವನು ಭೂಮಿಗೆ ಬಂದ ಕಾರಣ,ಧೇಯೋದ್ದೇಶ,ಕಾರ್ಯ ಕಲ್ಪ ಎಲ್ಲವನ್ನೂ ಬದಿಗೊತ್ತಿ ಲೋಕದ ಮಾಯಾವಶನಾಗಿ ಭವದ ಚಕ್ರದಲ್ಲಿ ಬಿದ್ದು ಭಿನ್ನ ಭಿನ್ನ ರೀತಿಯ ಗುಣಗಳನ್ನು ಹೊಂದಿ ದುಃಖಿಯಾಗಿ ಕೊನೆಗೆ ತನ್ನ ಕೈಲಾಗದಿದ್ದ ಪಕ್ಷದಲ್ಲಿ ಭಗವಂತ ,ಆತ್ಮ ,ಪರಮಾತ್ಮ ಎಂಬುದರ ಕಡೆಗೆ ಚಿತ್ತೈಸುವ. ಈ ಲೋಕದ ವ್ಯವಸ್ಥೆಗೆ ಅಂಟಿಕೊಂಡು ಬದಲಾದ ಮನುಷ್ಯ ಮತ್ತೆ ಆ ಪರಮ ಸ್ವರೂಪ ಪಡೆಯಬೇಕಾದರೆ ಅದಕ್ಕೆ ಮೂಲ ಬೇರು ಈ ಅಂತರಾತ್ಮ ನ ಅರಿವನ್ನು ತಿಳಿಸುವ ಅಧ್ಯಾತ್ಮ. ಇದು ಅವನ ಪಾಪಯುಕ್ತ ದೇಹ,ಮನಸು ಬುದ್ಧಿಯನ್ನು ಪುಣ್ಯಯುಕ್ತವನ್ನಾಗಿ ಮಾಡಿ ಮುಕ್ತನನ್ನಾಗಿ ಮಾಡುತ್ತದೆ.ಆ ಅಧ್ಯಾತ್ಮವನ್ನು ಅರಿಯಲು ಅವನಿಗೆ ಕೆಲವೊಂದಿಷ್ಟು ಮಾರ್ಗಗಳು ಅವಶ್ಯ.ಅವುಗಳಲ್ಲಿ ನೂರಾರು ಮಾರ್ಗಗಳು ಉಂಟು.ಆ ನೂರಾರು ಮಾರ್ಗಗಳಲ್ಲಿ ಅತ್ಯಂತ ಸುಲಭ ಸೂಕ್ಷ್ಮ ಶಿಸ್ತಿನ ವಿದ್ಯೆಯೇ ಈ “ಧ್ಯಾನ ಮತ್ತು ಅನುಷ್ಠಾನ.”

ಧ್ಯಾನ ಮತ್ತು ಅನುಷ್ಠಾನ ಎಂದರೇನು ಅವುಗಳ ಕ್ರಮಗಳೇನು ಹೇಗೆ ಆಚರಿಸಬೇಕು ಎನ್ನುವ ಪರಿಯನ್ನು ಈ ಕೆಳಕಂಡಂತೆ ಅವಲೋಕಿಸೋಣ.

ಮಾನಸಿಕ ಆಘಾತ ತರುವ ಸಂಗತಿಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ, ಸ್ಥಿರ ಚಿತ್ತ ನಮಗಿದೆಯೇ? ಎಂದು ಕೇಳಿದರೆ ಬಹುತೇಕರಿಂದ ಇಲ್ಲ ಎಂಬ ಉತ್ತರ. ಇನ್ನು ಕೆಲವರು ಅವುಗಳನ್ನು ಗಳಿಸುವುದೇಗೆ ಎಂದು ಪ್ರಶ್ನೆ ಎಸೆಯುತ್ತಾರೆ. ಇವುಗಳ ಗಳಿಕೆಗೆ ಯೋಗ ಮಾರ್ಗದ ಧ್ಯಾನವೇ ಸಾಧನ ಹಾಗೂ ಮನಸ್ಸಿನ ಸ್ಥಿರತೆಗೆ ಧ್ಯಾನ ತಾಯಿಬೇರು ಇದ್ದಂತೆ. ವ್ಯಕ್ತಿಗತವಾಗಿ ಶಾಂತಿ ಲಭಿಸಿದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ.

ಧ್ಯಾನ ಎಂದರೇನು?

ಪತಂಜಲಿ ಮುನಿಯು ಅಷ್ಟಾಂಗ ಯೋಗದಲ್ಲಿ ಧ್ಯಾನ ಕುರಿತು ವಿವರಿಸಿದ್ದು, ಧ್ಯಾನ ಸಾಧನೆಯ ಏಳನೇ ಮೆಟ್ಟಿಲಾಗಿದೆ. ಆರನೇ ಮೆಟ್ಟಿಲು ಧಾರಣ. ಧಾರಣ ಎಂದರೆ ಒಂದೇ ವಿಷಯದ ಮೇಲಿನ ಏಕಾಗ್ರತೆ. ಮನಸ್ಸು ಚಂಚಲವಾಗದೆ ತಿಕ್ಕಾಟಕ್ಕೊಳಗಾಗದೆ ತನ್ನ ಕ್ರಿಯೆಯತ್ತಲೇ ಏಕಾಗ್ರವಾಗಿರುವ ಸ್ಥಿತಿ.  ಆಂತರ್ಯದ ಜ್ಞಾನವು ಬುದ್ಧಿಯೊಡನೆ ಉದ್ವೇಗರಹಿತವಾಗಿ ಸಂಗಮಿಸುವಂತೆ ಪ್ರೇರಣೆ ನೀಡುತ್ತದೆ. ಇದೇ ಸ್ಥಿತಿ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ.

*ತಮ್ಮ ಆಂತರ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳಲು ಇರುವ ಸಾಧನ ಧ್ಯಾನವಾಗಿದ್ದು, ಆತ್ಮವನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ಧ್ಯಾನ.

*ಧ್ಯಾನಿಸುವವ – ಧ್ಯಾನ ಕ್ರಿಯೆ -ಧ್ಯೇಯ (ಗುರಿ) ಈ ಮೂರರ ಪರಸ್ಪರ ಸಂಯೋಜನೆಯೇ ಧ್ಯಾನ.

*ಧ್ಯಾನ ಎಂದರೆ ತಲ್ಲೀನತೆ.

*ಅದು ಒಂದು ವಸ್ತುವನ್ನು ಕೇಂದ್ರವಾಗಿ ಇಟ್ಟುಕೊಂಡು ನಮ್ಮನ್ನು ಅದರೊಂದಿಗೆ ಅಳವಡಿಸಿಕೊಳ್ಳುವುದು.

ಧ್ಯಾನದಲ್ಲಿ ಎರಡು ಪ್ರಕಾರ

1) ಸಾಕಾರ ಅಥವಾ ಸಬೀಜ(ಸಗರ್ಭ) ಧ್ಯಾನ: ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವ, ದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ, ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ(ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದೇ ಸಾಕಾರ ಧ್ಯಾನ.

2) ನಿರಾಕಾರ ಅಥವಾ ನಿರ್ಬೀಜ(ಅಗರ್ಭ) ಧ್ಯಾನ: ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ‘0’ ‘ಶೂನ್ಯ’ದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದೇ ನಿರಾಕಾರ ಧ್ಯಾನ.

ಕಮಲ

ಧ್ಯಾನದಲ್ಲಿ ಕಮಲದ ಹೂವಿಗೆ ಪ್ರಮುಖ ಪಾತ್ರ. ಕಮಲ ಧ್ಯಾನದ, ಶುದ್ಧತೆಯ ಪ್ರತೀಕ. ಧರ್ಮ ಪರಂಪರೆಯಲ್ಲಿ ಅದರ ಸೌಂದರ್ಯಕ್ಕೆ ಅಗ್ರಸ್ಥಾನವಿದೆ. ಧ್ಯಾನಕ್ಕೆ ಕುಳಿತ ಸ್ಥಿತಿಯನ್ನು, ದಳಗಳಿಂದ ತನ್ನ ಆಂತರ್ಯದ ಸೌಂದರ್ಯವನ್ನು ಮುಚ್ಚಿಕೊಂಡಿರುವ; ಪೂರ್ಣವಾಗಿ ಅರಳಿ ತನ್ನ ಸುಗಂಧವನ್ನು ಹರಡಲು ಕಾದುನಿಂತ ಕಮಲಕ್ಕೆ ಹೋಲಿಸಬಹುದು. ದಳಗಳು ಬಿಚ್ಚಿದೊಡನೆ ಸೌಂದರ್ಯ, ಸುಗಂಧ ಸುತ್ತಲೂ ಹರಡುವಂತೆ ಸಿದ್ಧಿ ಪಡೆದ ಯೋಗಿಯು ಧ್ಯಾನದ ಮೂಲಕ ಪರಿವರ್ತನೆಗೊಂಡು ತನ್ನ ಅಂತಃ ಪ್ರಭೆಯನ್ನು ಹರಡುತ್ತಾನೆ.

ಧ್ಯಾನಕ್ಕೆ ಸಿದ್ಧತೆ

ಸ್ಥಳ ಆಯ್ಕೆ: ಶುದ್ಧ ಗಾಳಿ ಬೆಳಕಿನಿಂದ ಕೂಡಿದ, ಗಲಾಟೆ, ಗದ್ದಲ, ಕಿರಿಕಿರಿ ಸದ್ದುಗಳಿಲ್ಲದ ಪ್ರಶಾಂತ ಸ್ಥಳ ಧ್ಯಾನಕ್ಕೆ ಸೂಕ್ತ. ಸಮತಟ್ಟಾದ ನೆಲವಿರಲಿ.

ಕಾಲ: ಪ್ರಾತಃ ಕಾಲ, ಸಂಜೆ ಸೂರ್ಯಾಸ್ತದ ನಂತರ, ಮಲಗುವ ಮುನ್ನ ಅಭ್ಯಾಸ ಮಾಡಬಹುದು. ಪ್ರಸ್ತುತ ಒತ್ತಡದ ದಿನಗಳಲ್ಲಿ ಲಭ್ಯವಿರುವ ಬಿಡುವಿನ ವೇಳೆ ಲಘು ಧ್ಯಾನ ಮಾಡಿ ವಿಶ್ರಾಂತಿ ಪಡೆಯಬಹುದು.

ನೆಲ ಹಾಸು: ಧ್ಯಾನಕ್ಕೆ ಕೂರಲು ಹತ್ತಿಯ ಜಮಖಾನ, ರೇಷ್ಮೆ ವಸ್ತ್ರ, ಕಂಬಳಿ, ಸೆಣಬಿನ ನೆಲಹಾಸು ಉತ್ತಮ. ಉನ್ನತ ಸಾಧನೆಗಾಗಿ ಸಾಧಕರು ಜಿಂಕೆ ಹಾಗೂ ಹುಲಿಯ ಚರ್ಮಗಳನ್ನು(ಲಭ್ಯವಿದ್ದಲ್ಲಿ) ಬಳಸಬಹುದು ಎಂದು ಹೇಳಲಾಗಿದೆ.

ಕುಳಿತುಕೊಳ್ಳುವ ವಿಧಾನ: ಧ್ಯಾನಕ್ಕೆ ಪದ್ಮಾಸನದಲ್ಲಿ ಕೂರುವುದು ಒಳಿತು. ಇಲ್ಲವೇ ಯಾವುದೇ ಅನುಕೂಲಕರ ಸ್ಥಿತಿಯಲ್ಲಿ ಕೂರಬಹುದು. ಬೆನ್ನುಹುರಿ, ಕುತ್ತಿಗೆ, ತಲೆ ಒಂದೇ ನೇರಕ್ಕಿರಲಿ.

ಮುದ್ರೆ: ಧ್ಯಾನಕ್ಕೆ ಆತ್ಮಾಂಜಲಿ ಅಥವಾ ಹೃದಯಾಂಜಲಿ ಮುದ್ರೆ, ಜ್ಞಾನ ಮುದ್ರೆ, ಚಿನ್ ಮುದ್ರೆ, ಚಿನ್ಮಯ ಮುದ್ರೆ, ಶಿವ ಮುದ್ರೆ ಪ್ರಮುಖವಾದವು.

ಎಚ್ಚರಿಕೆ

*ಮನಸ್ಸು ಚಂಚಲ,ಉದ್ವೇಗ,ಚಿಂತೆ ಇವುಗಳಿಂದ ಆವೃತವಾದ ಸಮಯದಲ್ಲಿ ಮಾಡಬಾರದು.ಕೆಲವು ನಿಮಿಷ ದೀರ್ಘ ಉಸಿರಾಟ ಮಾಡಿ ಮುಂದುವರೆಯ ಬೇಕು.

* ಯೋಗಾಸನಗಳು, ಪ್ರಾಣಾಯಾಮ ಅಭ್ಯಾಸದ ತಕ್ಷಣ ಧ್ಯಾನ ಬೇಡ. ಪ್ರಾಣಾಯಾಮ, ಧ್ಯಾನಗಳೆರಡನ್ನೂ ಪೂರೈಸುವವರೆಗೆ ಕೂರುವ ಸಾಮರ್ಥ್ಯವಿದ್ದರೆ ಎರಡನ್ನು ಅಭ್ಯಸಿಸಬಹುದು.

* ಕಣ್ಣುಗಳ ದೃಷ್ಟಿ ಮೇಲಕ್ಕೆ ಹರಿಯದಂತೆ ಕಾಯ್ದುಕೊಳ್ಳಿ. ಕಣ್ಣುಚ್ಚಿ ಧ್ಯಾನಿಸುವ ವೇಳೆ ದೃಷ್ಟಿ ಮೇಲಕ್ಕೆ ಹರಿದರೆ ಉಸಿರಾಟಕ್ಕೆ ತಡೆಯೊಡ್ಡುತ್ತದೆ. ನರ, ಮಾಂಸಖಂಡ, ರಕ್ತನಾಳ, ಮೆದುಳಿನ ಮೇಲೆ ಒತ್ತಡ ಬೀಳುತ್ತದೆ.

* ಹಠದಿಂದ ಧ್ಯಾನ ಬೇಡ. ದೇಹ ಚಲನೆಗೆ ಒಳಗಾದಾಗ, ತಲೆ ಅತ್ತಿತ್ತ ತಿರುಗಿದರೆ ಧ್ಯಾನ ನಿಲ್ಲಿಸಿ, ವಿರಮಿಸಿ. ಧ್ಯಾನವನ್ನು ಗುರುಮುಖೇನ ಅಭ್ಯಾಸ ನಡೆಸಿ.

ಪ್ರಯೋಜನಗಳು

* ಧ್ಯಾನದಿಂದ ಮಗುವಿನಂತೆ ಮನಸ್ಸು ವಿಶ್ರಮಿಸುತ್ತದೆ.

* ದೇಹ, ಮನಸ್ಸಿನ ದ್ವಂದ್ವ ದೂರ.

* ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುವಂತಹದ್ದು.

* ಏಕಾಗ್ರತೆ ಲಭಿಸುತ್ತದೆ. ಮನಸ್ಸು ಪ್ರಶಾಂತವಾಗುವುದರಿಂದ ಓದಿಗೆ ಸಹಕಾರಿ. ನೆನಪಿನ ಶಕ್ತಿ ಹೆಚ್ಚಳ.

* ಆಂತರ್ಯದ ಸತ್ಯ ಅರಿವಾಗುತ್ತದೆ. ಪ್ರಜ್ಞೆಯ ವಿಸ್ತಾರಕ್ಕೆ ಧ್ಯಾನ ಕಾರಣ.

* ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದ ರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ.

* ಮನಸ್ಸು ಪ್ರಕೃತಿಯೊಂದಿಗೆ ಒಂದಾಗುತ್ತದೆ.

* ಭಾವೋದ್ವೇಗ, ವಿಕೃತ ಭಾವ ಶಮನವಾಗುತ್ತದೆ.

* ತೇಜಸ್ಸು, ಚಿಂತನೆ, ಜಾಗರೂಕತೆ ವೃದ್ಧಿಸಿ ಅನಂತ ಚೈತನ್ಯ ಲಭಿಸುತ್ತದೆ.

* ಮನಸ್ಸಿನ ಜಾಗೃತಾವಸ್ಥೆಯಿಂದಾಗಿ ಹರ್ಷ, ಶಾಂತಿ, ಸಮಾಧಾನ ತಮ್ಮದಾಗುತ್ತದೆ.

* ಪರಿಶುದ್ಧ ಭಾವನೆ ತಳೆದು ಭ್ರಮೆ ದೂರಾಗುತ್ತದೆ. ದೃಢತೆ ಲಭಿಸುತ್ತದೆ.

* ಅಹಂಕಾರ, ಬಲ, ದರ್ಪ, ಕಾಮ, ಕ್ರೊಧ, ಅಪರಿಗ್ರಹ ತ್ಯಜಿಸಿ ವ್ಯಕ್ತಿ ಶಾಂತನಾಗುತ್ತಾನೆ.

* ಬಂಧನದ ಸ್ಥಿತಿಯಲ್ಲಿ ವ್ಯಕ್ತಿ ಧ್ಯಾನ ಆರಂಭಿಸುತ್ತಾನೆ, ಧ್ಯಾನದ ತತ್ಪರಿಣಾಮವಾಗಿ ಬಂಧ ಮುಕ್ತನಾಗುತ್ತಾನೆ.

*ದೇಹವನ್ನು ಮಣಿಸಿ ದೇಹವನ್ನು ಜಯಿಸಿದ ನಂತರ ಉಸಿರನ್ನು ಜಯಿಸುತ್ತೇವೆ, ನಂತರ ಮನಸ್ಸನ್ನು ಗೆದ್ದು ವಿಚಾರ ಪಕ್ವತೆ ಗಳಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ತತ್ಕರ್ಮಗಳಲ್ಲಿ ಮಗ್ನರಾಗಿ ‘ವಿಕಸಿತ ಜ್ಞಾನ’, ‘ಹೊಸ ಪ್ರಕಾಶ’(ಪ್ರಜ್ಞೆ) ವನ್ನು ಪಡೆಯುತ್ತೇವೆ. ಈ ಜ್ಞಾನದ ಅಧಿಕಾರಿಯಾದ ಮಾನವನು ತಮ್ಮ ಆತ್ಮವನ್ನು ಪರಮಾತ್ಮ(ತನ್ನ ಇಷ್ಟ, ಪ್ರೀತಿ ಪಾತ್ರವಾದ ಅಥವಾ ತಮ್ಮಿಚ್ಛೆಯ ಧರ್ಮ ನಂಬಿಕೆಯ ದೇವರು)ನಿಗೆ ಅರ್ಪಿಸಿ, ಆತನ ಆಜ್ಞೆ ಪಾಲಕನಾಗುತ್ತಾನೆ. ಇದೇ ಶರಣಾಗತಿ ಎಂದು ಅನುಭಾವಿಗಳು ಹೇಳಿದ್ದಾರೆ.

ಅನುಷ್ಠಾನ.

ದಿಕ್ಕುದೆಸೆ, ಗೊತ್ತುಗುರಿಯಿಲ್ಲದೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆ, ಭಾವನೆ ಸಂವೇದನಗಳ ತರಂಗಗಳನ್ನು ಹೇಗೆ ಪರಿಷ್ಕೃತಗೊಳಿಸುವುದು ಎಂಬುದು ಎಲ್ಲರನ್ನೂ ಜೀವನದುದ್ದಕ್ಕೂ ಕಾಡುವ ಒಂದು ಸಮಸ್ಯೆ. ನಮ್ಮ ಆಲೋಚನೆಗಳನ್ನು ನಿರ್ದಿಷ್ಟ ಗುರಿಯುಳ್ಳ ಪೂರ್ಣ ಅರಿವಿನಿಂದ ಕೂಡಿದ ಉಪಯುಕ್ತ ಆಲೋಚನೆಗಳಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು. ಹೊರಜಗತ್ತಿನಂತೆಯೇ ಒಂದು ಒಳಜಗತ್ತು ಇದೆ. ಇಲ್ಲಿ ನಮ್ಮ ನಿಜವಾದ ಸ್ವಭಾವದ ಅಸ್ತಿತ್ವವೊಂದಿರುತ್ತದೆ. ಅದು ಬಾಹ್ಯಪ್ರಪಂಚಕ್ಕಿಂತಲೂ ಬಹಳ ವೈಭವಯುತವಾಗಿ ನಮ್ಮ ಹೃದಯಾಂತರಾಳದಲ್ಲಿ ಇರುವುದು. ಎತ್ತರದ ಪರ್ವತ- ಪ್ರದೇಶದಲ್ಲಿ ನಿಂತರೆ ಪ್ರವಾಹಗಳು ನಮ್ಮನ್ನು ಕೊಚ್ಚಿಕೊಂಡು ಹೋಗಲಾರವು. ಅದೇ ರೀತಿ ಮನಸ್ಸನ್ನು ಪೂರ್ಣ ಅರಿವಿನಿಂದ ಕೂಡಿರುವ ಎತ್ತರದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರಿಸಲು ಪ್ರಯತ್ನ ಮಾಡಿದರೆ ಜೀವನ ಸುಗಮವಾಗುವುದು. ನಮ್ಮ ಒಳ ಅರಿವನ್ನು ಹೊರತೆಗೆಯಲು, ಪರಿಶುದ್ಧ ಪರಿಪಕ್ವ ಸ್ಥಿತಿಯನ್ನು ತಲುಪಲು,ಆತ್ಮಾನಂದವನ್ನು ಆನಂದಿಸಲು ಇರುವ ಏಕೈಕ ಮಾರ್ಗ ಎಂದರೆ ಅನುಷ್ಠಾನ.

*ನಮ್ಮ ಸಂಕಲ್ಪವನ್ನು ಈಡೇರಿಸಲು ಅಂದರೆ ಜಾರಿಗೆ ತರಲು ಇರುವ ಸೋಪಾನವೆ ಈ ಅನುಷ್ಠಾನ.

*ಯೋಗ ಸಾಧನೆಯಿಂದ ಯಾವ ಯಾವ ಸಾಧನೆಯನ್ನೂ ಸಿದ್ಧಿಯನ್ನು ಪಡೆಯಲಿಕ್ಕೆ ಸಾಧ್ಯವೋ ಅದನ್ನೆಲ್ಲ  ಶಿವಯೋಗ ಆಚರಣೆಯ ಅನುಷ್ಠಾನದಿಂದ ಪಡೆಯಲು ಸಾಧ್ಯ.

*ಹೆಸರೇ ಹೇಳುವಂತೆ ಅನುಷ್ಠಾನ ಎಂದರೆ ಇದು ಕೇವಲ ಮೌಖಿಕವಾಗಿ ನುಡಿಯುವ ನುಡಿ ಅಲ್ಲ ಇದು ದೇಹ ಹಾಗೂ ಆತ್ಮ ವಿಜ್ಞಾನದ ಕ್ರಿಯೆಯಾಗಿದೆ.

*ನಿಗ್ರಹಾನುಗ್ರಹ ಶಕ್ತಿ ಪ್ರಾಪ್ತವಾಗಿ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಳು ಅನುಷ್ಠಾನ ಅವಶ್ಯಕ.

*ಅನುಷ್ಠಾನ ಮಾಡಿದ ಮಹನೀಯನಿಗೆ ಪಂಚ ಪರುಷ ಸಿದ್ಧಿಗಳು(ವಾಕ್,ದೃಷ್ಠಿ,ಹಸ್ತ,ಮನೋ,ಭಾವ) ಅವರ ವಶವಾಗಿ

ಅವರ ಬೌದ್ಧಿಕ,ಶಾರೀರಿಕ,ಮಾನಸಿಕ ಚಟುವಟಿಕೆಗಳೆಲ್ಲವೂ ಲೋಕೊದ್ಧಾರಕ್ಕಾಗಿ ಕಾರಣವಾಗುವವು.

*ಸಾಮಾನ್ಯರಂತೆ ಈ ಭೂಮಿಯಲ್ಲಿ ಜನಿಸಿದರೂ ಸಹ ಅನುಷ್ಠಾನ ಮಾತ್ರದಿಂದ ಅವರ ಅಂಗ ಗುಣಗಳೆಲ್ಲ ಶಿವಗುಣಗಳಾಗಿ ಅರಳಿ ನಿತ್ಯ ನಿರಂತರ

ಸುಗಂಧವನ್ನು ಬೀರುತ್ತಲೇ ಇರುತ್ತದೆ.

*ಅನುಷ್ಠಾನ ಎಂದರೆ ಏನೋ ಸಾಮಾನ್ಯ ಇಲ್ಲವೇ ವಿಶೇಷ ಪೂಜಾ ವಿಧಿ ಎಂದು ಯಾರೂ ಭಾವಿಸಬಾರದು.ಅನುಷ್ಠಾನ ಕಾಲದಲ್ಲಿ  ಅಣು ಯುದ್ದ,ಪರಮಾಣು ಯುದ್ಧದಂತಹ ಪ್ರಸಂಗಗಳು ದೇಹದಲ್ಲಿ ಎದುರಿಸಬೇಕಾಗುತ್ತದೆ.ಸೃಷ್ಠಿಯ ಅಸುರೀ ಶಕ್ತಿಗಳನ್ನು ದಮನಮಾಡಿ ವಿಜಯ ಸಂಪಾದಿಸಬೇಕು. ಹೋರಾಟಕ್ಕಿಳಿದಾಗ ಘೋರರೂಪದಲ್ಲಿ ಮೇಲೇರಗುತ್ತವೆ ಅವುಗಳ ನಿಗ್ರಹ ಅಧ್ಯಾತ್ಮಿಕವಾಗಿ ಶಕ್ತಿಶಾಲಿಯಾದ ತಪಸ್ಸಿಗೆ ಮಾತ್ರ ಸಾಧ್ಯ. ಈ ಅನುಷ್ಠಾನ ಭೂಮಿಯು ದೇಹ ಮನಸ್ಸು ಹಾಗೂ ದಶೆಂದ್ರಿಯಗಳು,ಪಂಚ ತನ್ಮಾತ್ರಯಗಳು,ಪಂಚಭೂತಗಳು,ಮತ್ತು ಅಂತಃಕರಣ ಚತುಷ್ಟಯಗಳ ನಡುವಿನ ಮಹಾಯುದ್ಧದ ರಣರಂಗವಾಗಿದೆ.ಅದಕ್ಕಾಗಿಯೇ ಇದನ್ನು ಪಡೆಯಲು ಯೋಗ್ಯ ಗುರುವಿನ ಮಾರ್ಗದರ್ಶನ ಅವಶ್ಯಕ.

ಅನುಷ್ಠಾನ ವಿಧಗಳು.

ಇದರಲ್ಲಿ 3 ವಿಧಗಳು

1.ಸಾತ್ವಿಕ ಅನುಷ್ಠಾನ.

2.ರಾಜಸಿಕ ಅನುಷ್ಠಾನ.

3 ತಾಮಸಿಕ ಅನುಷ್ಠಾನ.

ಸಾತ್ವಿಕ ಅನುಷ್ಠಾನ:- ಇದು ಅಂತರಂಗದ ಅರಿವಿನ ಖನಿಯಾದ ಆತ್ಮವನ್ನು ಶಿವಯೋಗ ಮಾರ್ಗದ ಮೂಲಕ ಅಂದರೆ ಮೊದಮೊದಲು ಸ್ಥೂಲ ತನುವಿನೊಡಗೂಡಿ ಸ್ಥೂಲ ಗ್ರಾಹಿಯಾದ  ಗುರು ಕೊಟ್ಟ ಇಷ್ಟಲಿಂಗದ ನಿರಿಕ್ಷಣೆಯ ಮೂಲಕ ಬಾಹ್ಯ ಇಂದ್ರಿಯಗಳ ಒಳಸೆಳೆತವನ್ನು ಮಾಡುತ್ತಾ ಸೂಕ್ಷ್ಮ ಶರೀರದ ಪ್ರಾಣಲಿಂಗವನ್ನು ಕಂಡುಕೊಳ್ಳುವುದು.ಇದು ಮನೋಗ್ರಾಹಿ.ಇಲ್ಲಿ ಮನೋನಿಗ್ರಹ ವೆ ಇದಕ್ಕೆ ತಾಯಿ ಬೇರು.ನಂತರ ಭಾವಲಿಂಗವನ್ನು ಅದರ ಅರಿವನ್ನು ಭಾವಗಾನುವುದು.ಇಲ್ಲಿ ಅಭ್ಯಂತರ ಸಾಧನೆಯ ಮೂಲಕ ಭಾವಗ್ರಾಹಿ ಆತ್ಮವನ್ನು ಕಾಣುವ ಸ್ಥಿತಿ. ಇದಕ್ಕೆ ಮೂಲ ಮಾರ್ಗವೇ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಮಾರ್ಗ.

ಇಲ್ಲಿ ಆತ್ಮನನ್ನು ಪ್ರಾಧಾನ್ಯವಾಗಿಟ್ಟುಕೊಂಡು ಮುನ್ನಡೆವ ಸಾಧಕನು ದೇಹದ ಸುಖ ದುಃಖಕ್ಕೆ ಬೆಲೆ ಕೊಡದೆ ಇರುತ್ತಾನೆ.ಹಾಗಾಗಿ ಸಾತ್ವಿಕ ಆಹಾರ ಸೇವನೆ,ಸಾತ್ವಿಕ ನಡೆ,ಸಾತ್ವಿಕ ನುಡಿ,ಸಾತ್ವಿಕ ವಾತಾವರಣ,ಸಾತ್ವಿಕ ವಿಚಾರಗಳು ಇದಕ್ಕೆ ಸಹಕಾರಿ.

ಇದನ್ನು  ಬಸವಾದಿ ಪ್ರಮಥ ಶಿವಶರಣರು,ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಇಲಕಲ್ ವಿಜಯ ಮಹಾಂತ ಶಿವಯೋಗಿಗಳು,ಹಾನಗಲ್ಲ ಕುಮಾರ ಮಹಾ ಸ್ವಾಮಿಗಳು,ಹಾವೇರಿ ಶಿವಬಸವ ಮಹಾ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಶಿವಯೋಗಿಗಳು, ಒಳಬಳ್ಳಾರಿಯ ಚನ್ನಬಸವ ತಾತನವರು ಇನ್ನೂ ಹಲವಾರು ಶಿವಯೋಗಿಗಳು ಮಾಡಿದ್ದಾರೆ.

ರಾಜಸಿಕ ಅನುಷ್ಠಾನ:- ಇದು ಒಂದು ಲೌಕಿಕ ಅನುಷ್ಠಾನ ವೆ ಸರಿ.ಲೋಕಾನುಭವ ಇರುವ ವ್ಯಕ್ತಿ ಲೌಕಿಕ ವಸ್ತುವನ್ನು (ತನ್ನ ಹೊಲ, ಮನೆ, ಆಸ್ತಿ,ಪಾಸ್ತಿಗಳನ್ನು ಪಡೆಯಲು ತನ್ನ ಪ್ರತಿಷ್ಠೆಗಳು ,ಬಯಕೆಗಳನ್ನು ಪೂರೈಸಲು ಸಾಮಾನ್ಯವಾಗಿ ದೇವರಿಗೆ ಮೊರೆಹೋಗುತ್ತಾರೆ.ತಾತ್ಕಾಲಿಕ ಭಕ್ತಿ ಇಂದ ಮಾಡುವ ದೇವರ ಪ್ರಾರ್ಥನೆ ಇದು.ಇದು ಲೋಕಾಸಕ್ತ ಎಲ್ಲ ಜನರು ಮಾಡುತ್ತಾರೆ.

ತಾಮಸ ಅನುಷ್ಠಾನ:- ಇದು ಕಾಮಾದಿ ಅರಿಷಡ್ ವೈರಿಗಳನ್ನು ಜಾಗೃತಗೊಳಿಸಿ ದುಷ್ಟಶಕ್ತಿಗಳನ್ನು ವಶಮಾಡಿಕೊಂದು ತನ್ನ ಮನೋವಾಂಚೆಯನ್ನು, ಪ್ರಲೋಭನೆಗಳನ್ನು ಪೂರೈಸುವ ಅನುಷ್ಠಾನವಾಗಿದೆ. ಇದು ವಾಮಾಚಾರ ಬಾನಾಮತಿ ಇತ್ಯಾದಿ ವಿಧಿಗಳು ಇದರಲ್ಲಿವೆ.ಇದನ್ನು ವಾಮಮಾರ್ಗದ ಅಮಾನುಷ ಶಕ್ತಿ ಪಡೆಯಲು ಬಯಸುವವರು ಮಾಡುತ್ತಾರೆ.

ಉಪಸಂಹಾರ:-

ಹೀಗೆ ಮನುಷ್ಯನ ಅಭ್ಯುದಯಕ್ಕೆ ಸಹಕಾರಿ ಆಗುವವು ಈ ಧ್ಯಾನ ಮತ್ತು ಅನುಷ್ಠಾನ.ಅವರವರ ಸಂಪ್ರದಾಯ ಮನೋಸ್ಥಿತಿ ಗೆ ತಕ್ಕಹಾಗೆ ಇವುಗಳು ಅವನ ರೂಢಿಗೆ ಬರುತ್ತವೆ.ಇವೆರಡರಲ್ಲಿ ಏನೇ ವ್ಯತ್ಯಾಸ ಗಣನೀಯವಾಗಿ ಕಂಡು ಬರದಿದ್ದರೂ ಮಾರ್ಗಗಳಲ್ಲಿ,ಅದಕ್ಕೆ ಉಪಯೋಗವಾಗುವ ವಸ್ತು ವ್ಯವಸ್ಥೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ.ಏನೇ ಆಗಲಿ ಪಂಚಭೂತ ಗಳಿಂದ ನಿರ್ಮಾಣವಾದ ಈ ಶರೀರ ಲೋಕದ ಮಾಯೆಗೆ ಅಳವಟ್ಟಾಗಿ ದೇಹಸ್ಥಿತಿ ಪಂಚಭೂತಗಳು ವ್ಯತ್ಯಾಸ ವಾಗುತ್ತವೆ.ಅದನ್ನು ಗಮನಿಸಿ ಅವುಗಳನ್ನು ಸಮಸ್ಥಿತಿಯಲ್ಲಿ ಇಡಲು ಇವುಗಳು ಅತ್ಯವಶ್ಯ. ಬನ್ನಿ ಆಚರಿಸಿ ಆನಂದಿಸೋಣ.

ಲೇಖಕರು: ಚಿಂದೋಡಿ ಬಂಗಾರೇಶ

ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು

ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು.

“ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ”

ನಿಷ್ಠೆಯಿಂದ ಲಿಂಗವ ಪೂಜಿಸಿ

ಮತ್ತೊಂದು ಪಥವನರಿಯದ ಶರಣರು

ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ !

ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು,

ಕೂಡಲಸಂಗಮದೇವಾ, ನಿಮ್ಮ ಶರಣರು.

ಹೀಗೆ ಭಕ್ತಿ ಜ್ಞಾನ ಸ್ವರೂಪರಾದ ಶ್ರೀ ಕುಮಾರ ಶಿವಯೋಗಿಗಳು ಬಸವಾದಿ ಪ್ರಮಥರ ತತ್ವಗಳನ್ನು ಬೆಳಸಲು ಶರಣ ಧರ್ಮವನ್ನು ಪುನರ್ಸ್ಥಾಪಿಸಲೆಂದೇ ಜನಿಸಿ ,ಶರಣರಿಗೆ ಸರಿದೊರೆಯಾಗಿ ದೀನರಿಗೆ ದಯಾಮೂರ್ತಿಯಾಗಿ ,ಗುರುಗಳಿಗೆ ಪರಮ ಗುರುವಾಗಿ ಭಕ್ತಿ ಸ್ವಾತಂತ್ರ್ಯ ಕರುಣಿಸಿದರು..ಬತ್ತಿದ ಮನಸುಗಳಿಗೆ ಭಕ್ತಿಯ ಸೇವೆಯ ಮಳೆಯನ್ನೇ ಸುರಿಸಿದರು.ಕರುಣಾಮಯ ಶ್ರೀಕುಮಾರೇಶ.

ಕುಮಾರೇಶರ, ಬಾಲ್ಯ- ಬೆಳವಣಿಗೆ- ಸಾಧನೆ- ಹಾನಗಲ್ಲ ಮಠಕ್ಕೆ ಬಂದು  ಅವರ ಸಮಾಜ ಸೇವೆಯ ವೈಭವತೆ,ಎಲ್ಲರು ಬಲ್ಲರು “ಘಟದಿಂದ ಮಠ ಬೆಳೆಯಬೇಕು .ಮಠದಿಂದ ಘಟ ಬೆಳೆಯಬಾರದು” ಇದು ಅವರ ಧ್ಯೇಯ,ಘೋಷ. ಅದರಂತೆ ನಡೆದರು.ನುಡಿದಂತೆ ನಡೆದರು.

ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತರ ಸಮುದಾಯವನ್ನು ಕನ್ನಡನಾಡಿನಾದಯಂತ ಸಂಚರಿಸಿ ಸಮಾಜದ ಹಿರಿಯಶಕ್ತಿಗಳೆನ್ನೆಲ್ಲಾ ಒಂದು ಗೂಡಿಸಿ ಸಮಾಜ ಸಿದ್ದಾಂತ ಉಳಿವಿಗಾಗಿ ,ಜೊಯಿಸರಹರಳಹಳ್ಳಿಯ ಯೋಗಿ,ಜೋಳಿಗೆ ಹಿಡಿದು ಭಿಕ್ಷೆಬೇಡಿ ಸಮಾಜದ ಸರ್ವಶಕ್ತಿಯನ್ನು ಒಂದೇ ನೆಲೆಯಲ್ಲಿ ಸಾಕಾರಗೊಳಿಸಿದ ಸಾಕ್ಷಿ ಸೌಧವೇ ಅಖಿಲಭಾರತ ವೀರಶೈವಮಹಾಸಭೆಯ ಸ್ಥಾಪನೆಯ ರೂವಾರಿ ಶ್ರೀಕುಮಾರೇಶರು, ಇಂದು ನಮಗೆಲ್ಲ ಹೆಮ್ಮೆಯ ಹೆಮ್ಮರವಾಗಿ ನಿಂತಿದೆ.

ಅವರ ಆಸೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆ ಸೇರಿದ ಆಭವ್ಯ ದೃಶ್ಯವ ನೋಡಿ ಆನಂದಿತರಾಗಿ ಅದರ ನಿರ್ಮಾಣ ರೂವಾರಿಗಳಾದ ಸಮಾಜದ ಗಣ್ಯಾತಿ ಗಣ್ಯರನ್ನು ಅಂದು ನೋಡಿ ಬಸವಣ್ಣನವರ ಒಂದು ವಚನ ನೆನಪಿಸಿಕೊಂಡರಂತೆ.

“ಕಣ್‌ ಗಳ ನೋಟ ಹೃದಯದ ಜ್ಞಾನ

ಮನದಲ್ಲಿ ಮಾತಅಡುತಿರ್ದಯ್ಯ

ಜೇನು ಮಳೆಗಳು ಕರೆದವು

ಅಮೃತದ ಕಳೆಗಳು ಸುರಇದವು

ಕೂಡಲಸಂಗಮ ದೇವನೆಂಬ

ಸಾಗರದೊಳಡುತಿದ್ದನಯ್ಯ

ಕೂಡಲಸಂಗಮದೇವ.

ಎಂದು ಆನಂದಿರಾದವರಂತೆ ಅದರಂತೆ ಸಮಾಜದ ಇನ್ನೋದು ಮುಖ,ಕಾಯಕ -ದಾಸೋಹ ಸಾಧನೆಗೆ ತರಬೇತಿ ಕನ್ನಡ ವಚನ ಸಾಹಿತ್ಯ ಸಂಸ್ಕೃತಿ ಬೆಳಗಲು ಸ್ಥಾಪಿಸಿದ ಶಿವಯೋಗಮಂದಿರ ಸಂಗೀತ ಲೋಕಕ್ಕೆ ಧೃವತಾರೆಗಳಾದ ಪಂಚಾಕ್ಷರ ಗವಾಯಿಗಳು ,ಪುಟ್ಟರಾಜ ಗವಾಯಿಗಳನ್ನು ಸಮಾಜಕ್ಕೇ ಅಲ್ಲ ದೇಶ-ವಿದೇಶಕ್ಕೆ ಸಂಗೀತ ಸಾಧನೆಯ ಸುಧೆಯನ್ನು ಹರಿಸಿದ ಹರಿಕಾರರು ಇವರು ಶ್ರೀಕುಮಾರ ಶಿವಯೋಗಿಗಳು.

ಆ ಮಹನಿಯರನ್ನು ಎಷ್ಟು ನೆನೆದರು ಸಾಲದು ,ಎಷ್ಟು ಪೂಜಿಸಿದರೂ ಸಾಲದು.ಅವರ ನಿಸ್ವಾರ್ಥ ಸೇವೆಯನ್ನು ನೂರರಲ್ಲಿ ಒಬ್ಬರಾದರು ಅನುಸರಿಸಿದರೆ,ನಡೆದರೆ ಅದೇ ಅವರಿಗೆ ನೀಡುವ ಭಕ್ತಿ ಕಾಣಿಕೆ.

ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ

ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ

ನಿಮ್ಮಾಣೆ! ನಿಮ್ಮ ಪುರಾತರಾಣೆ.

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,

ಕೂಡಲಸಂಗಮದೇವಾ.

ಎಂಬ ವಚನದ ಅಕ್ಷರ ಅಕ್ಷರ ಪಾಲಿಸಿದರು.ಮೈಮೇಲೆ ವಸ್ತ್ರ ಹರಿದಿದ್ದರೂ,ತಾವೇ ಹೊಲೆದುಕೊಂಡು,ಮರೆ ಮಾಡಿಕೊಂಡು ,ಸಮಾಜ-ಸಮಾಜ ಸಮಾಜವೆಂದೇ  ಶಿವಯೋಗಮಂದಿರದಲ್ಲಿ ಮಹಾಲಿಂಗದೊಳು ಐಕ್ಯವಾದ ಅವರ ಜೀವಾತ್ಮ ಸಕಲರಿಗೆ ಸಂಜೀವಿನಿಯಾಗಿರುವುದು. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿದರು.ಒಂದು ಸಭೆಗೂ ಅಧ್ಯಕ್ಷರಾಗದ ನಿಷ್ಕಾಮ ಸಂತರು.ಕುರುಬ ತಂದ ಹಾಲನ್ನು ಶಿವನಿಗರ್ಪಿಸಿ ಸಮಾನತೆಯ ಸಾಕ್ಷಿಭೂತರಾದರು.ಅವರ ಆಸೆಯೊಂದೆ “ ದುಡಿ-ಸುಖ ಪಡಿ”,ಕಾಯಕ ಮಾಡದೇ ಒಂದಗಳ ಅನ್ನವ ಸೇವಿಸಬಾರದು.ಕಾಯಕ-ದಾಸೋಹ-ವಿದ್ಯೆ-ಧರ್ಮ-ಶೃದ್ಧೆ-ಪರೋಪಕಾರದ ಮನಸ್ಥಿತಿಯನ್ನೇ ಬೇಳಗಿಸಿಕೊಳ್ಳಬೇಕೆಂಬ ಸಂದೇಶ ಸಾರಿದ ಜಂಗಮರ ಜಂಗಮ,ಮಹಾ ಜಂಗಮ.

ಅವರಾತ್ಮಕ್ಕೊಂದು ಶರಣು ಶರಣಾರ್ಥಿಗಳು

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮದ ಹಾರ್ದಿಕ ಶುಭಾಶಯಗಳು. ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗನ ೨೪ತಿಂಗಳಲ್ಲಿ ೨೧೮ ಲೇಖನಗಳುನ೨೮ ಕಾವ್ಯಗಳು ಹಾಗು ೧೦ ಮುದ್ರಿತ ವಾಚನಗಳು

ಜೊತೆಗೆ ೧೧೧೪೮ ಓದುಗರು. ಈ ಯಶಸ್ಸಿಗೆ ಸಹಕರಿಸಿದ ಎಲ್ಲ ಪರಮಪೂಜ್ಯರಿಗೆ ಭಕ್ತಿಪೂರ್ವಕ ಮತ್ತು ಹೃದಯಪೂರ್ವಕ ಕೃತಜ್ಞತೆಗಳು

ಶ್ರೀಕುಮಾರ ತರಂಗಿಣಿ  ೨೦೨೩ ಮೇಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ ಪರಾತ್ಪರ ಬಸವೇಶ್ವರನನು” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀ ಕುಮಾರ ಸ್ವಾಮಿಗಳ ವಿಚಾರಗಳು : ಸಖರಾಯಪಟ್ಟಣದ ಶ್ರೀ ಸದಾಶಿವ ಪಟ್ಟಾಧ್ಯಕ್ಷರು
  4. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೨ ಪ್ರವೇಶ: ಲೇಖಕರು: ಪೂಜ್ಯ ಜ.ಚ.ನಿ
  5. ವಿದ್ಯೆ-ಅವಿದ್ಯೆ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  6. ಪಂಚಾಚಾರ: ಪರಿಕಲ್ಪನೆ : ಡಾ:ಸ್ನೇಹಾ ಭೂಸನೂರ
  7. ಆಡಿಯೋ೧ :
  8. ಶ್ರೀಕುಮಾರ ತರಂಗಿಣಿ (ಆರಂಭದಲ್ಲಿ ಸುಕುಮಾರ)  ಮಾಸಿಕ ಬ್ಲಾಗ ದ್ವೀತಿಯ ವಾರ್ಷಿಕೋತ್ಸವ ಸಂಭ್ರಮದ ಸವಿನೆನಪಿಗೆ ಲೋಕಾರ್ಪಣೆಯ ಸವಿನೆನಪು
  9. ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ
  10. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು
  11. ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.
  12. ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ
  13. ಪೂಜ್ಯರ ಆಶೀರ್ವಚನ ೧೪-೦೫-೨೦೨೧
  14. ಆಡಿಯೋ ೨ : ವಿಶೇಷ ಉಪನ್ಯಾಸ ಪೂಜ್ಯ ಶ್ರೀಕುಮಾರೇಶ್ವರರು ಗೌರವಿಸಿದ ಮಹನಿಯರು” 

               ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಡ  ಮಹಾಸ್ವಾಮಿಗಳಿಂದ  ಶಾಂತಾಶ್ರಮ ಹುಬ್ಬಳ್ಳಿ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ದರ್ಬಾರಿ ಕಾನಡಾ)

ಶ್ರೀ ಪರಾತ್ಪರ ಬಸವೇಶ್ವರನನು |

ಸಾರುತ -ಸೇರುತ ಭಜಿಸೋ ನೀ ಮಾನವ || ಪ ||

ಭಕ್ತಿಯ ಮಾರ್ಗದಿ ನಡೆಯುವ ಜನರಿಗೆ

ಶಕ್ತಿಯನರಿತು ಫಲಗಳ ಕೊಡುವ

ಮುಕ್ತಿಯ ಪಥವನ್ನೀಯುವ ಪರಮ || 1 ||

ವೀರಶೈವ ಮತ ಜೀರ್ಣೋದ್ಧಾರಕ

ಸಾರ ಸುಬೋಧಕ ಪರತರಶೋಧಕ

ಪೂರಿತ ಕರುಣದಿ ದೀನಸುರಕ್ಷಕ || 2 ||

ಶಿವಯೋಗದಲಿ ಸುವಿರಾಗದಲಿ

ಭವಿಗಳನೀಕ್ಷಿಸಿ ಭಕ್ತರ ಮಾಡಿದ

ಸುವಿವೇಕದ ಗುರುವಿಗೆ ಗುರುವೆನಿಸಿದ || 3 ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಹಲವು ಯೋಗವ ಮಾಡಿ | ಫಲವೇನು ಮಗನೆ ಎಂ-

ದೊಲಿದು ಲಿಂಗಾಂಗ-ಸುಲಭಯೋಗವನೊಡನೆ

ಕಲಿಸಿದಾ ಗುರುವೆ ಕೃಪೆಯಾಗು     I ೧೦ II

 ಯೋಗಮಾರ್ಗದ ವಿಚಾರಕ್ಕೆ ವಿರಾಮವಿತ್ತು ಅವುಗಳಿಗಿಂತಲೂ ಮಿಗಿಲಾದ ಲಿಂಗಾಂಗಯೋಗದ ಸುಲಭತೆಯನ್ನು ಮತ್ತು ಸಾರ್ಥಕತೆಯನ್ನು ಸರಳವಾಗಿ ಸಾರುತ್ತಾನೆ ಶಿವಕವಿಯು.  

ಯೋಗ ಮಾರ್ಗದಲ್ಲಿ ಮಂತ್ರ, ಲಯ, ಹಠ, ರಾಜಯೋಗಳು ಮುಖ್ಯವಾದ ನಾಲ್ಕು ಯೋಗಗಳಾದರೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಯೋಗಗಳು ಹಲವಾರು ಇವೆ. ಗೀತೆಯಲ್ಲಿ ಪ್ರತಿಯೊಂದು ಅಧ್ಯಾಯದ ಒಂದೊಂದು ವಿಷಯವೂ ಒಂದೊಂದು ಯೋಗವೆಂಬುದಾಗಿಯೇ ಪ್ರತಿಪಾದಿತವಾಗಿದೆ. ಮುಖ್ಯವಾಗಿ ಸಾಂಖ್ಯ ಯೋಗ, ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಜ್ಞಾನ-ವಿಜ್ಞಾನ ಯೋಗ, ರಾಜವಿದ್ಯಾ-ರಾಜಗುಹ್ಯಯೋಗ, ವಿಭೂತಿಯೋಗ, ಭಕ್ತಿಯೋಗ ಮೊದ ಲಾದವುಗಳು ವಿವರಿಸಲ್ಪಟ್ಟಿವೆ. ಸ್ವಾಮಿ ವಿವೇಕಾನಂದರು ಕರ್ಮಯೋಗ, ಜ್ಞಾನ ಯೋಗ, ರಾಜಯೋಗ, ಭಕ್ತಿಯೋಗಗಳನ್ನು ವಿಶ್ಲೇಷಿಸಿದ್ದಾರೆ. ಇವೆಲ್ಲ ಹಲವಾರು ಯೋಗಗಳನ್ನು ಸಾಧನೆ ಮಾಡಿದರೆ ಏಕೈಕ ಫಲವು ಸಿಕ್ಕಬಹುದು. ಆದರೆ ಸಂಪೂರ್ಣ ಫಲ ಸಿಕ್ಕಲಾರದೆಂಬ ಅಭಿಪ್ರಾಯ ಈ ಕೃತಿಕರ್ತರದು. ಅಲ್ಲದೆ ಶರಣ ಸಿದ್ಧಾಂತವೂ ಇದನ್ನೇ ಅನುಮೋದಿಸಿದೆ.

ಹರಭಕ್ತನಾದ ಹರದ ಶರಣನು ತನ್ನ ಸ್ವಾನುಭಾವವನ್ನು ವಿವರಿಸುತ್ತ ಅಷ್ಟಾಂಗ ಯೋಗಗಳಿಗಿಂತ ತಾಂತ್ರಿಕ ಮುದ್ರೆಗಳಿಗಿಂತ ಈ ಲಿಂಗಾಂಗ ಯೋಗದ ಸಹಜತೆಯನ್ನು ತಾತ್ವಿಕತೆನ್ನು ಬಿತ್ತರಿಸುತ್ತಾನೆ. ಕರುಣಾಳು ಗುರುರಾಯನು ಒಲುಮೆಯಿಂದ ಎನಗೆ ಲಿಂಗಾಂಗ ಯೋಗವನ್ನು ಬೋಧಿಸಿದನು. ಇದು ಸುಲಭ ಹಾಗೂ ಸಹಜ ಯೋಗವು. ಎಲ್ಲ ಯೋಗಗಳಲ್ಲಿ ರಾಜಯೋಗವು ಮಿಗಿಲೆನಿಸಿದರೆ  ಅವೆಲ್ಲವುಗಳಿಗೂ ರಾರಾಜಿಸುವ ಈ ಲಿಂಗಯೋಗ, ಅಥವಾ ಶಿವಯೋಗವಾಗಿದೆ. ಇದರಲ್ಲಿ ಎಲ್ಲ ಯೋಗಗಳ ಸಾರ ಅಡಕವಾಗಿದೆ. ಅಂತೆಯೇ ಶಿವಯೋಗವನ್ನು ಯೋಗರಾಜವೆಂದು ಬಣ್ಣಿಸಿದ್ದಾರೆ.  

ಒಂದೊಂದು ಪದಾರ್ಥಗಳಲ್ಲಿ ಒಂದೊಂದು ಗುಣವಿರುವಂತೆ ಒಂದೊಂದು ಯೋಗ ಸಾಧನೆಯಿಂದ ಏಕೈಕ ಫಲ ಲಭ್ಯವಾಗಬಹುದು. ಅನೇಕ ಸಾರವತ್ತಾದ ವಸ್ತುಗಳಿಂದ ತಯಾರಿಸಿದ ‘ಸಾರು’ (ಸಾಂಬಾರ) ವನ್ನು ಊಟದ ಕೊನಗೆ ಸುರಿದು

ಸಂತೃಪ್ತರಾಗುತ್ತಾರೆ. ಹಾಗೇ ಈ ಶಿವಯೋಗದಲ್ಲಿ ಮಂತ್ರಾದಿ ನಾಲ್ಕು ಯೋಗಗಳು, ಕರ್ಮ, ಭಕ್ತಿ, ಜ್ಞಾನ ಯೋಗಗಳು ಮುಪ್ಪುರಿಗೊಂಡು ಶೋಭಿಸುವ ಶಿವಯೋಗವು ಶಿವಭಕ್ತನನ್ನು ಮುಕ್ತನನ್ನಾಗಿಸುವದು. ಶಿವಯೋಗ ಸಾಧಿಸಿದ ಮೇಲೆ ಪುನರ್ಜನ್ಮವಿಲ್ಲ ಕರ್ಮದ ತೊಡಕಿಲ್ಲ. ಭವ-ಬಂಧನದ ಸೋಂಕಿಲ್ಲ.

ಶಿವಲಿಂಗಭಕ್ತನು ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿ, ಅವಧಾನಭಕ್ತಿ, ಅನುಭವಭಕ್ತಿ, ಆನಂದಭಕ್ತಿ, ಸಮರಸಭಕ್ತಿಗಳನ್ನು ಮೈಗೂಡಿಸಿಕೊಳ್ಳುತ್ತ ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರು ಸ್ಥಲಗಳಲ್ಲಿ ನಿಲ್ಲುತ್ತ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗಗಳನ್ನು ಆರಾಧಿಸುತ್ತ ಅವುಗಳಲ್ಲಿ ಬೆರೆಯುವನು. ಗಂಧ, ರಸ, ರೂಪ, ಸ್ಪರ್ಶ ಶಬ್ದ ಹಾಗೂ ಇವುಗಳಿಂದ ದೊರೆಯುವ ತೃಪ್ತಿಯೆಂಬ ಪದಾರ್ಥಗಳನ್ನು ಸುಚಿತ್ತ, ಸುಬುದ್ದಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವಗಳೆಂಬ ಹಸ್ತದಿಂದ ಸುಗಂಧ, ಸುರಸ, ಸುರೂಪ, ಸುಸ್ಪರ್ಶ, ಸುಶಬ್ದ, ಸಂತೃಪ್ತಿಗಳೆಂಬ ಪ್ರಸಾದಗಳನ್ನಾಗಿ

ಉದಾತ್ತೀಕರಿಸಿ ಕೊಂಡು ಆಯಾ ಲಿಂಗ ಮುಖಕ್ಕೆ ಸಮರ್ಪಿಸಿ ಪರಮಾನಂದದಲ್ಲಿ ಲೀನನಾಗಿ ಲೋಲಾಡುವನು. ಇದಲ್ಲದೆ ಲಿಂಗಗತ ಶಕ್ತಿಗಳನ್ನು, ಪ್ರಣವಗಳನ್ನು ಕಲೆಗಳನ್ನು ಸಾದಾಖ್ಯಗಳನ್ನು, ಅಧಿದೇವತೆಗಳನ್ನು ಮತ್ತು ಲಕ್ಷಣಗಳನ್ನು ಅಳವಡಿಸಿ

ಕೊಳ್ಳುವನು. ನೂರೊಂದು ಸ್ಥಲವನ್ನರಿತು ಇನ್ನೂರಾ ಹದಿನಾರು (೨೧೬) ಸಕೀಲುಗಳಲ್ಲಿ ಆಚರಿಸುವನು. ಇಂಥ ಅಸದೃಶವಾದ ಆತ್ಮವಿಜ್ಞಾನಿಯಾಗಿ ಶಿವಯೋಗಿಯೆನಿಸುವನು.

 ಪರಮ ಗುರುವು ಹರಸುವ ಈ ಸರಳವಾದ ಶಿವಯೋಗದಲ್ಲಿ ಯಮಾ ದ್ಯಷ್ಟಾಂಗ ಯೋಗಗಳೂ, ಕ್ರಿಯಾ-ಜ್ಞಾನ-ಭಕ್ತಿ ಸಮನ್ವಯವೂ ಹಾಸುಹೊಕ್ಕಾಗಿದೆ. ಅದು ಕಾರಣ ಈ ಲಿಂಗಾಂಗ ಯೋಗಕ್ಕೆ ಇತರ ಯೋಗಗಳು ಸರಿಬಾರವು.

ಓ ನಿರಂಜನ ನಿರಾಭಾರಿ ಗುರುವೆ ! ಇಂಥ ಸುಲಭ ಸಹಜವಾದ ಲಿಂಗಾಂಗ ಯೋಗವನ್ನು ಮೈಗೂಡಿಸಿಕೊಳ್ಳುವ ಅನುವನ್ನು ಆಚರಿಸಿ ಅಳವಡಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿ ಕಾಪಾಡು. ನಿನ್ನ ಕೃಪೆಯಿಲ್ಲದೆ, ಮಾರ್ಗದರ್ಶನವಿಲ್ಲದೆ ಈ ಶಿವಯೋಗ ಅರಿವಿಗೆ ಬರಲಾರದು.

ಈ ಲಿಂಗ ನಿನ್ನಂಗ | ಕಾಲಿಂಗನವಾಗಲ್ಕೆ

ನೀ ಲಿಂಗ ನಿನ್ನ-ಮೈಲಿಂಗವೆಂದೆನ್ನೊಳ್

ಕೀಲಿಸಿದ ಗುರುವೆ ಕೃಪೆಯಾಗು     ||೧೦೭||

 ಲಿಂಗಾಂಗಯೋಗದ ಮಹತ್ವವನ್ನು ಪುನಃ ಪುನಃ ವರ್ಣಿಸಿದ್ದಾನೆ. ಶಿವಕವಿಯು. ಗುರುಕರುಣಿಸುವ ಇಷ್ಟಲಿಂಗ ಪ್ರತ್ಯಕ್ಷ ಕಾಣುವದು. ಈ ಲಿಂಗವು ಶಿಷ್ಯನಂಗವನ್ನು ಆಲಿಂಗಿಸುತ್ತಲೇ ಅಂಗವನ್ನು ಲಿಂಗಮಯವನ್ನಾಗಿಸುವದು. ಒಳಗಿರುವ ಚೈತನ್ಯವು

ಗುರು-ಲಿಂಗ-ಜಂಗಮ ಕೃಪೆಯಿಂದ ಹೊರಗೆ, ವ್ಯಾಪಿಸಿ ಒಳಹೊರಗು ಬೆಳಗುವದು. ಲಿಂಗಚೈತನ್ಯವು ಜಾಗೃತಗೊಂಡು ಅಜ್ಞಾನ-ದುರ್ಭಾವನೆಗಳನ್ನು ದೂರಗೊಳಿಸುವದು. ಸೂರ್ಯನ ಸನ್ನಿಧಿಯಲ್ಲಿ ಕತ್ತಲಿರಲು ಸಾಧ್ಯವೆ ! ಶ್ರೀಗುರುವು ಶಿಷ್ಯನ ಮಸ್ತಕದ ಚಿಚೈತನ್ಯವನ್ನು ತನ್ನ ಭಾವದಲ್ಲಿ ಭಾವಿಸಿ  ಆತನ ಹೃದಯ ಕಮಲವನ್ನು ಅರಳಿಸಿ ಮಹಾಲಿಂಗವನ್ನು ಕರಕಮಲದಲ್ಲಿ ಕಾಣಿಸು ವಂತೆ ಕರುಣಿಸುವಾಗ ತನು-ಮನ-ಭಾವಗಳನ್ನು ಹಿಂದೆ ವಿವರಿಸಿದಂತೆ ಸಂಸ್ಕರಿಸಿ ಪರಿಶುದ್ಧಗೊಳಿಸುವನು “ಲಿಂಗವನ್ನು ಧರಿಸಿಕೊಂಡ ನೀನು ಸದಾ ಶುದ್ಧ’ ನೆಂದು ಬೋಧಿಸುವನು. ಸಂಚಿತ-ಪ್ರಾರಬ್ಧ-ಆಗಾಮಿಕರ್ಮಗಳಿಂದ ಮುಕ್ತನನ್ನಾಗಿಸುವನು. ತ್ರಿಮಲಗಳ ನಾಶ ಮಾಡುವನು. ಅಗ್ನಿಯನ್ನು ಆವರಿಸಿದ (ಸಂಪರ್ಕಿಸಿದ) ಕಟ್ಟಿಗೆಯು ಅಗ್ನಿಯೇ ಆಗುವಂತೆ; ಲಿಂಗವನ್ನು ಧರಿಸಿದವನು ಲಿಂಗಮಯನೇ ಆಗುವನು. ಆಗಮದಲ್ಲಿ ಉಕ್ತವಾದ ಉತ್ತಮ ಉದಾಹರಣೆ ಉದಾಹರಿಸಲು ಯೋಗ್ಯವಾಗಿದೆ. ಈ ಮಾತನ್ನು ಶ್ರೀಪತಿಪಂಡಿತರು ಶ್ರೀಕರಭಾಷ್ಯದಲ್ಲಿ ಒತ್ತಿ ಹೇಳಿದ್ದಾರೆ-

“ಮಾನವಃ ಶಿವಯೋಗೇನ ಶಿವೋ ಭವತಿ ನಾನ್ಯಥಾ |

ಭ್ರಮಮರಚಿಂತಾಯಾಂ ಕೀಟೋಪಿ ಭ್ರಮರಾಯತೇ”

ಮನೆಗಳಲ್ಲಿ ಇದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಆದರೆ ಆ ವಿಷಯವನ್ನು ಅನುಭವದಲ್ಲಿ ತಂದುಕೊಳ್ಳುವದಿಲ್ಲ, ಕುಡೀಕುಕಾರವೆಂಬ ಭ್ರಮರವು ಬಾಯಲ್ಲಿ ಮಣ್ಣನ್ನು ತಂದು ಬಾಗಿಲು ಕಿಡಿಕಿಗಳ ಸಂಧಿಯಲ್ಲಿ ಮನೆಮಾಡುತ್ತದೆ. ಅದರಲ್ಲಿ ಸಣ್ಣ

ಕೀಡೆಯನ್ನು ತಂದು ತನ್ನ ಭಾವವನ್ನು ನಿತ್ಯವೂ ಭಾವಿಸುತ್ತದೆ. (ತುಂಬುತ್ತದೆ) ಕ್ರಮೇಣ ಕೆಲವು ದಿನಗಳಲ್ಲಿ ಕ್ರೀಡೆಯೂ ಆ ಭ್ರಮರದಂತಾಗುವದು. ಅಂದಮೇಲೆ ಮಾನವನು ಶಿವಲಿಂಗದ ಸಂಪರ್ಕದಿಂದ ಶಿವಮಯನಾಗುವದರಲ್ಲಿ ಯಾವ ಸಂದೇಹವಿಲ್ಲ. ಶಿವನು ತನ್ನ ಸೃಷ್ಟಿಯಲ್ಲಿ ಅನಂತ ಉಪದೇಶವನ್ನು ತುಂಬಿರಿಸಿದ್ದಾನೆ. ಅದನ್ನು ತಿಳಿದುಕೊಳ್ಳುವ ಅಂತರ್ದೃಷ್ಟಿಯು ನಮ್ಮಲ್ಲಿ ಬೆಳೆದು ಬಂದರೆ ನಾವು ನಿಜವಾಗಿಯೂ ಸುಜ್ಞಾನಿಗಳಾಗುತ್ತೇವೆ. ಅರಿವನ್ನು ಕುರುಹನ್ನಾಗಿ ಕರುಣಿಸಿ

ಇಂಥ ಅಂರ್ತದರ್ಶನ ಮಾಡಿಸುವವನೇ ಗುರುವು. ಲಿಂಗದ ನೆಲೆ-ಕಲೆಗಳನ್ನು ಅಳವಡಿಸಿಕೊಂಡರೆ ಅರಿವುಳ್ಳವನನ್ನಾಗಿಸುವನು. ಲಿಂಗವೇ ತಾನಾಗುವದರಲ್ಲಿ ಯಾವ ನ್ಯೂನತೆಯೂ ಇರದು.

 ಓ ಗುರುವೆ ! ಲಿಂಗವನ್ನು ಕರುಣಿಸಿ ಲಿಂಗ ಗುಣಗಳನ್ನು ಎನ್ನಂಗದಲ್ಲಿ ಕೀಲಿಸಿ ಲಿಂಗಮಯನನ್ನಾಗಿ ಮಾಡಿದ ನಿನಗೆ ನಾನು ಚಿರಋಣಿ, ನಿನ್ನ ಋಣ ಎಂದೆಂದಿಗೂ ತೀರದು.  ಮನುಷ್ಯನಾಗಿ ಬಾಳಿ ಬದುಕಿದ ಮೇಲೆ ಮಾತೃಋಣ, ಪಿತೃಋಣ, ಸಮಾಜ

ಋಣಗಳನ್ನು ತೀರಿಸಲೇಬೇಕು. ಅವರವರ ಉಪಕೃತಿಯನ್ನು ಸ್ಮರಿಸಿ ತಕ್ಕ ಕರ್ತವ್ಯ ನಿಷ್ಠನಾದರೆ ಆ ಋಣಗಳು ತೀರಿದಂತಾಗುವವು.

ಈ ಲಿಂಗವೆ ಸತ್ಕ್ರಿ| ಮೂಲ ಸಮ್ಯಕ್ ಜ್ಞಾನ

ದಾಲಯ ನೀ ತ್ರೈ-ಕಾಲ ಪೂಜಿಪುದೆಂದು

ಪಾಲಿಸಿದ ಗುರುವೆ ಕೃಪೆಯಾಗು         | ೧೦೮ |

ಲಿಂಗಭಕ್ತನು ಸರ್ವಾಂಗಲಿಂಗಮಯನಾಗಲು ಲಿಂಗಪೂಜೆಯೇ ಸಾಧನವು. ಲಿಂಗಪೂಜೆಯೇ ಶಿವಯೋಗವು, ಬಾಲಲೀಲಾ ಮಹಾಂತೇಶ್ವರ ಪುರಾಣದಲ್ಲಿ ಕವಿರತ್ನ ಚನ್ನಕವಿಗಳು-

ಶಿವಪೂಜೆಯೇ ಮುಖ್ಯ ಶಿವಯೋಗಮೆನಿಸುವದು |

ಶಿವಪೂಜೆಯಿಲ್ಲದಗೆ ಮುಕ್ತಿ ಘಟಿಸದು ಮತ್ತೆ ʼ’|

ಶಿವಪೂಜೆಗೆಣೆಯುಂಟೆ ಮೂಜಗದೊಳು‘ʼ (ನಾಲ್ಕನೆಯ ಸಂಧಿ)

ಶಿವಪೂಜೆಯೇ ಮುಖ್ಯ ಶಿವಯೋಗವೆಂತಲೂ ಅದಿಲ್ಲದೆ ಮುಕ್ತಿ ದೊರಕದೆಂದೂ ಆ ಶಿವಯೋಗದ ಮಹತ್ವವನ್ನು ತಿಳಿಸಿದ್ದಾರೆ. ಈ ಶಿವಯೋಗದಲ್ಲಿ ಸತ್ಕ್ರಿಯೆಗಳು ಸಮ್ಯಕ್ ಜ್ಞಾನವು ಸಮನ್ವಯವಾಗಿರುತ್ತವೆ. ಅಂತೆಯೇ ಶಿವಯೋಗವು ಜ್ಞಾನ ಕ್ರಿಯೆಗಳ ಸಮನ್ವಯ ಮಾರ್ಗವಾಗಿದೆ. ಇಂಥ ಶಿವಯೋಗವನ್ನು ಸಾಧಿಸುವ ಮೂಲವೇ ಲಿಂಗವು.  ಅದುಕಾರಣ ಈ ಲಿಂಗವು ಸತ್ಕ್ರಿಯಾ ಮೂಲವೂ, ಸಮ್ಯಕ್ ಜ್ಞಾನಕ್ಕೆ ಆಲಯವೂ ಆಗಿದೆ. ಲಿಂಗವಿಲ್ಲದೆ ಮಾಡುವ ಕ್ರಿಯೆಗಳು ಜಡಕರ್ಮಗಳಾಗುತ್ತವೆ. ಜ್ಞಾನಪರಿಪೂರ್ಣವಾಗುವದಿಲ್ಲ. ಗುರುಕರಜಾತನಾದ ಮೇಲೆಯೇ ಲಿಂಗಕ್ರಿಯೆಗಳು ಲಿಂಗಜ್ಞಾನವು ಸಮನಿಸುತ್ತವೆ. ಲಿಂಗವು ಸಮರಸದ ಸ್ರೋತವೆನಿಸುವದು.

ಲಿಂಗಪೂಜೆಯಲ್ಲಿ ಸಮ್ಯಕ್ ಜ್ಞಾನವುಳ್ಳವನಾಗಿ ಸತ್ಕ್ರಿಯೆಗಳನ್ನು ಮಾಡುತ್ತಿರುವದರಿಂದ ಕರ್ಮವು ಜಡವಾಗಲಿ, ಬಂಧನಕಾರಿಯಾಗಲಿ ಆಗುವದಿಲ್ಲ. ಇಲ್ಲಿ ಯಾವ ಫಲಾಪೇಕ್ಷೆಯಾಗಲಿ ಇರುವದಿಲ್ಲ. ಆದರೂ ಅಷ್ಟಾವರಣದ ಪ್ರತ್ಯಕ್ಷ ಫಲಗಳೆನಿಸಿದ ಪಾದೋದಕ-ಪ್ರಸಾದಗಳು ಕೈ ಮೇಲೆಯೇ ದೊರೆಯುವವು. ಭಗವದ್ಗೀತೆಯಲ್ಲಿಯೂ ಯಾವುದೇ ಕರ್ಮವನ್ನು ಕರ್ತವ್ಯ ದೃಷ್ಟಿಯಿಂದ ಮಾಡು, ಆದರೆ ಅ ಫಲದಲ್ಲಿ ಮಾತ್ರ ನಿನಗೆ ಅಧಿಕಾರವಿಲ್ಲವೆಂದು ತಿಳಿಸಿದೆ. ಆದರೆ ನಮ್ಮ ಶರಣ ಸಿದ್ಧಾಂತವು

 ʼʼಕೂಡಲ ಸಂಗಮದೇವರನ್ನು ಪೂಜಿಸಿದ ಫಲ ಕೈಮೇಲೆʼ’

 ಎಂದು ಬಣ್ಣಿಸಿದೆ. ಗುರುವು ಶಿಷ್ಯನ ಅಂಗದಲ್ಲಿ ಕೀಲಿಸಿದ ಲಿಂಗ ಕಲೆಗಳನ್ನು ಅರುವಿನಲ್ಲಿ ತರುವದೇ ಸತ್ಕ್ರಿಯೆಯಾಗುವದು. ಈ ಕಾರ್ಯ ಶಿವಪೂಜೆಯಲ್ಲಿ ಸಾಂಗವಾಗುವದು. ಆಗಬೇಕು. ಅಂತೆಯೇ ಗುರುವು ಈ ನಿನ್ನ ಲಿಂಗವು ಸತ್ಕ್ರಿಯಾ ಜ್ಞಾನಗಳ ಸ್ವರೂಪವಾಗಿದೆ. ಅದನ್ನು ನೀನು ಪೂಜಿಸಿ ಲಿಂಗವೇ ನೀನಾಗೆಂದು ಉಪದೇಶಿಸಿದ್ದಾನೆ. ಗುರೂಪದೇಶವನ್ನು ಅನುಸಂಧಾನ ಮಾಡಿಕೊಳ್ಳುವದೇ ಶಿವಯೋಗವು.

ʼ’ಜ್ಞಾನಂ ಶಿವಮಯಂ, ಭಕ್ತಿಃ ಶೈವೀ, ಧ್ಯಾನಂ ಶಿವಾತ್ಮಕಂ |

ಶಿವವ್ರತಂ ಶಿವಾರ್ಚೇತಿ ಶಿವಯೋಗೋ ಹಿ ಪಂಚಧಾ ||

ಶಿವಯೋಗವು ಶಿವಜ್ಞಾನ ಶಿವಭಕ್ತಿ, ಶಿವಧ್ಯಾನ, ಶಿವವ್ರತ, ಶಿವಾರ್ಚನ ಎಂದು ಐದು ತೆರನಾಗುತ್ತದೆ. ಸದ್ಗುರು ಕೃಪೆಯಿಂದ ಇಷ್ಟಲಿಂಗದ ಸ್ವರೂಪ ಜ್ಞಾನವು ಅಳವಡವದು. ಲಿಂಗಜ್ಞಾನವಿಲ್ಲದೆ ಭಕ್ತಿಧ್ಯಾನಾದಿಗಳು ಸಾಧ್ಯವಾಗುವದಿಲ್ಲ. ಗುರು ಕರುಣೆಯಿಂದ ಶಿವಜ್ಞಾನೋದಯವಾಗುವದು. ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮಚಕ್ರಗತ ಮಹಾಚೈತನ್ಯವನ್ನು ಕರದಿಷ್ಟ ಲಿಂಗವನ್ನಾಗಿ ಕಂಡು ಶಿಷ್ಯನು ಭಯ ಕ೦ಪಿತನಾಗುವದೇ ಭಕ್ತಿಯ ಬೀಜವು ಮೈದೋರುವದು. ಚಿಚ್ಚೈತನವೇ ಪ್ರತ್ಯಕ್ಷವಾದ ಮೇಲೆ ತನ್ಮಯತೆಯುಂಟಾಗುವದೇ ಧ್ಯಾನಕ್ಕೆ ಮೂಲವಾಗುವದು. ಇಂಥ ಪರವಸ್ತುವೇ ಲಿಂಗವೆಂದರಿದ ಬಳಿಕ ಎಲ್ಲವೂ ಶಿವಮಯವೆಂತಲೂ ಶಿವಲಿಂಗಕ್ಕಿಂತ ಭಿನ್ನ ದೇವರಿಲ್ಲವೆಂಬ ದೃಢ ನಿಶ್ಚಯವೇ ಶಿವವೃತವಾಗುವದು. ಶಿವವ್ರತಿಯಾದ ಲಿಂಗಭಕ್ತನು ಗುರು ಪೇಳಿದಂತೆ ಇಷ್ಟಲಿಂಗವನ್ನು ಪೂಜಿಸಿ ಪೂರ್ಣಲಿಂಗನಾಗುವದೇ ಶಿವಾರ್ಚನೆ. ಈ ಐದು ಸತ್ಕ್ರಿಯೆಗಳ ಸಾಕ್ಷತ್ಕಾರವೇ ಶಿವಯೋಗವಾಗಿರುವದು.  

ಅಷ್ಟಾವರಣ ಸಂಪನ್ನನೂ ಪಂಚಾಚಾರ ಪರಾಣಯನೂ ಆದ ಸದ್ಭಕ್ತನು ಮೆಲ್ಲ ಮೆಲ್ಲನೆ ಷಟ್‌ಸ್ಥಲಗಳನ್ನು ಮೈಗೂಡಿಸಿಕೊಳ್ಳುತ್ತ ಐಕ್ಯನೆನಿಸಿ ಮಹಾಲಿಂಗ ದೊಡನೆ ಮಹವ ಸಾಧಿಸುವದೇ ಷಟ್‌ಸ್ಥಲ ಸಿದ್ಧಾಂತದ ಶಿವಪೂಜೆಯು. ಶಿವಪೂಜೆಯಲ್ಲಿ ಮಾಡುವ ಪ್ರತಿಯೊಂದು ವಿಧಾನಗಳು ಸತ್ಕ್ರಿಯೆಗಳೆನಿಸಿವೆ. ಅವುಗಳ ಅರಿವು ಸಮ್ಯಕ್ ಜ್ಞಾನವಾಗಿದೆ. ಈ ಶಿವಾದ್ವೈತ ಸಿದ್ಧಾಂತ (ಶರಣತತ್ತ್ವ) ದಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ವೈಜ್ಞಾನಿಕತೆ, ತಾತ್ವಿಕತೆ ಮನೆಮಾಡಿಕೊಂಡಿವೆ. ಪರಿಶುದ್ಧಗೊಂಡ ಅಂಗತ್ರಯದಲ್ಲಿ ಲಿಂಗತ್ರಯವನ್ನು ಒಂದುಗೂಡಿಸುತ್ತಾ ಹೋಗ ಬೇಕಾಗುವದು. ಇಷ್ಟಲಿಂಗಾರ್ಚನೆಯು ಜೀವನದ ಅಮೃತ ಸಮಯವೆನಿಸಿದೆ. ಅಂತೆಯೇ ಕೇವಲ ಹದಿನಾರು ವರ್ಷ ವಯೋಮಿತಿಯುಳ್ಳ ಮಾರ್ಕಂಡೇಯನು ಸ್ಥಾವರಲಿಂಗವನ್ನು ಪೂಜಿಸಿ ಚಿರಂಜೀವಿಯಾದನು. ಅದಕ್ಕಿಂತಲೂ ಮಿಗಿಲಾದ ಶಿವಪೂಜೆಯ ಪರಿಯನ್ನು ಅರಿತು ಆಚರಿಸುವ ಸಮ್ಯಕ್ ಜ್ಞಾನವುಳ್ಳವನಾಗುವದು ಅತಿಮುಖ್ಯ.

ಶಿವಪೂಜೆಗೈಯ್ಯುವ ಪರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಶಿವಪೂಜೆ (ಶಿವಯೋಗವು)ಯು ಸತ್ಕ್ರಿಯಾ ಸಮ್ಯಕ್ ಜ್ಞಾನಗಳ ಸಮರಸವೆಂಬುದು ಅರಿವಾಗದೇ ಇರದು. ಲಿಂಗವಂತನು ಲಿಂಗತಂದೆಯನ್ನು ಧ್ಯಾನಿಸಿ ನಮಿಸಿ ನಿದ್ದೆಗೈದರೆ ಸ್ವಪ್ನಾವಸ್ಥೆಯ ದೋಷಗಳಿಂದ ದೂರವಾಗುವನು. ಬ್ರಾಹೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ  ಗೈಯುತ್ತ ಜಾಗ್ರತ (ಎದ್ದು) ನಾಗಿ ಲಿಂಗವನ್ನು ಲಿಂಗಯೋಗಿಗಳ ಭಾವಚಿತ್ರಗಳನ್ನು ಸಂದರ್ಶಿಸಿ ಲಿಂಗಬಿಂದವನ್ನು ಭ್ರೂಮಧ್ಯದಲ್ಲಿ ಧ್ಯಾನಿಸಬೇಕು. ಲಿಂಗದೇವನಿಗೆ ಕೇವಲ ಶರಣೆಂದರೂ ಸಾಕು, ‘ಹೊತ್ತಾರೆ ಎದ್ದು ಲಿಂಗವ ನೆನೆದರೆ ಅಪಮೃತ್ಯುಗಳು, ಕಾಲಕರ್ಮಂಗಳು ತಪ್ಪುವವು’ ಎಂದಿದ್ದಾರೆ ನಮ್ಮ ಪ್ರಮಥರು. ಪ್ರಾತಃಕಾಲದ ಶಿವನಾಮಸ್ಮರಣೆ ಅನಂತ ಸಮಸ್ಯೆಗಳನ್ನು ಪರಿಹರಿಸುವದಲ್ಲದೆ ಭವ-ಭಯವನ್ನೇ ನಿವಾರಿಸುವದು. ಅನಂತರ ತನ್ನ ತಂದೆ-ತಾಯಿಗಳಿಗೆ, ಗುರು ಹಿರಿಯರ ಪಾದಕ್ಕೆ ಮಣಿಯಬೇಕು. ಜೀವನದಲ್ಲಿ ಬಾಗಿದವನ ಬಾಳು ಬಂಗಾರ ವಾಗುವದು.

ಸೂರ್ಯೋದಯಕ್ಕೆ ಮುಂಚೆ ಶಿವನಾಮಗಳನ್ನು ಗುರು-ಲಿಂಗ-ಜಂಗಮ ಸ್ತೋತ್ರಗಳನ್ನು ಮನದಲ್ಲಿಯೂ, ಸ್ಪಷ್ಟವಾಗಿಯೂ ಉಚ್ಚರಿಸುತ್ತ ಬಹಿರ್ದೆಶಕ್ಕೆ ಹೋಗಿ ಬಂದು ಕೈಗಳಿಗೆ ಶುದ್ಧವಾದ ಮಣ್ಣನ್ನು ಹಚ್ಚಿ ತೊಳೆದುಕೊಳ್ಳಬೇಕು. ನಂತರ ತಂಬಿಗೆಯನ್ನು

ಬೆಳಗಬೇಕು. ಶೌಚ ಕ್ರಿಯೆಯನ್ನು ಮುಗಿಸಿ ಬರುವಾಗ್ಗೆ ಎಡಗೈಯಲ್ಲಿ ತಂಬಿಗೆಯನ್ನು ಹಿಡಿದು ತರಬಾರದು. ಮಣ್ಣಿನಿಂದ ಕೈ ತೊಳೆಯುವದರಿಂದ ಅದರ ಅಗಾಧವಾದ ಶಕ್ತಿ ಉಗುರಿನ ಮುಖಾಂತರ ಶರೀರದಲ್ಲಿ ಸಂಚಾರವಾಗುವದು. ನೈಸರ್ಗಿಕ ಚಿಕಿತ್ಸಕರು ಈ ಮಾತನ್ನು ಧಾರಳವಾಗಿ ಒಪ್ಪುತ್ತಾರೆ. ಮಣ್ಣಿನ ಪಟ್ಟಿಯ ಉಪಚಾರವನ್ನು ವಿಶೇಷವಾಗಿ ಮಾಡುತ್ತಾರೆ. ಆರೋಗ್ಯ ಭಾಗ್ಯ ಆಚಾರದಲ್ಲಿ ಪೂರ್ಣವಿದೆ. ಮೊಳಕೈ ಮೊಣಕಾಲಿನ ವರೆಗೆ ಸ್ವಚ್ಛವಾಗಿ ತೊಳೆದು ಮುಖವನ್ನು ಬಾಯಿಯನ್ನು ಸ್ವಚ್ಛಗೊಳಿಸಬೇಕು. ಕನಿಷ್ಟ ೩ ಸಲುವಾದರೂ ಮುಕ್ಕುಳಿಸಬೇಕು. ಹನ್ನೆರಡಂಗುಲ ಪ್ರಮಾಣದ ಮಾವು, ಬೇವು, ಜಾಲಿ, ನೆಲ್ಲಿ, ಉತ್ತರಾಣಿ, ಹುಲಗಲಿ, ಮೊದಲಾದ ರಸವುಳ್ಳ ವನಸ್ಪತಿ (ಗಿಡ)ಗಳ ಕಡ್ಡಿಯಿಂದ ಹಲ್ಲುಗಳನ್ನು ತಿಕ್ಕಬೇಕು. ಗಿಡಗಳ ರಸ ಹಲ್ಲಿನಲ್ಲಿ ಹಾಗೂ ವಸಡೆಗಳಲ್ಲಿ ಸಂಬಂಧವಾಗಿ ದೀರ್ಘಕಾಲ ಹಲ್ಲುಗಳ ಶಕ್ತಿ ಹೀನವಾಗುವದಿಲ್ಲ. ಹಲ್ಲುಕಡ್ಡಿಯನ್ನು ಮುಖದಲ್ಲಿರಿಸುವಾಗಲೂ ಉರದ ಲಿಂಗದೇವನಿಗೆ ತೋರಿಸಿದರೆ ಆ ಕರ್ಮವೂ ಸತ್ಕ್ರಿಯೆಯೆನಿಸುವದು. ವೀರಶೈವರು ಮುಖ ತೊಳೆಯುವದಕ್ಕಾಗಲಿ, ಸ್ನಾನ ಮಾಡುವದಕ್ಕಾಗಿಯಾಗಲಿ ಅಡಿಗೆ ಮಾಡುವದಕ್ಕಾಗಲಿ ಅಥವಾ ಕುಡಿಯುವದಕ್ಕಾಗಲಿ ಯಾವದೇ ಕೆಲಸಕ್ಕೆ ಬೇಕಾದ ನೀರಿನಲ್ಲಿ ಧೂಳ ಪಾದೋದಕವನ್ನು ಬೆರೆಸಬೇಕು.

ಕೇವಲ ಬಾಯಿ (ವಾಣಿ) ಯಿಂದ ಅನಂತ ನದಿಗಳ-ತೀರ್ಥಗಳ ಸ್ಮರಣೆ ಮಾಡುವದಕ್ಕಿಂತ ಅಷ್ಟಷಷ್ಠಿ (೬೮) ತೀರ್ಥಗಳ ಫಲಕ್ಕಿಂತ ಮಿಗಿಲೆನಿಸಿದ ಧೂಳ ಪಾದೋದಕವನ್ನು ಉಪಯೋಗಿಸುವದರಿಂದ ಜಲದ ಜಡತ್ವವು ಬಯಲಾಗುವದು. ಧೂಳಪಾದೋದಕವನ್ನು ಸ್ನಾನಾದಿ ಕ್ರಿಯೆಗಳಿಗೆ ಉಪಯೋಗಿಸುವದರಿಂದ ಸ್ಥೂಲ ತನು ಪವಿತ್ರವಾಗುವದು. ಅಪ್ಯಾಯನ ಮಾಡಿದ ಮನ ತಣಿಯುವದು. ಸ್ನಾನ ಮಾಡಿ ಮಡಿಬಟ್ಟೆಯನ್ನು ಉಟ್ಟುಕೊಂಡು ಶಿವನಾಮಗಳನ್ನು ನುಡಿಯುತ್ತ ಶಿವಪೂಜಾ ಗೃಹವನ್ನು ‘ಇದು ಶಿವನ ಸದನವೆಂದು ಭಾವಿಸುತ್ತ ಪ್ರವೇಶಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಬಿಳೇ ಕಂಬಳಿ ಅಥವಾ ಹುಲ್ಲಿನ (ದರ್ಭೆಯ) ಚಾಪೆಯ ಮೇಲೆ ಮುಹೂರ್ತ ಮಾಡಬೇಕು. ನೆಲ-ಕಲ್ಲುಗಳ ಮೇಲೆ ಕುಳಿತುಕೊಂಡು  ಪೂಜಿಸಬಾರದು. ಯಾಕೆಂದರೆ ಕಟ್ಟಿಗೆಗೆ ವಿದ್ಯುತ್ ಪ್ರವಾಹ ಹರಿಯದಿರುವಂತೆ ಆಸನಗಳ ಮೇಲೆ ಕೂಡುವದರಿಂದ ಲಿಂಗತೇಜಃ ಪ್ರವಾಹವು ಶರೀರವನ್ನು ಬಿಟ್ಟು ಚಲಿಸುವದಿಲ್ಲ, ಮತ್ತು ಭೌತಿಕ ಬಾಧೆಯೂ ತಗಲುವದಿಲ್ಲ.

ಸಿದ್ಧಾಸನ, ಪದ್ಮಾಸನ, ವೀರಾಸನ ಅಥವಾ ಸುಖಾಸನಗಳಲ್ಲಿ ಯಾವುದೊಂದು ಆಸನಯುಕ್ತನಾಗಿ  ಋಜುಕಾಯನಾಗಿ ಶುದ್ಧೋದಕದಲ್ಲಿ ಪ್ರಣವವನ್ನು ಬರೆದು ಲಿಂಗಾಭಿಷೇಕ ಮಾಡಿ ಸಂಕ್ಷಿಪ್ತ ಪೂಜೆಯನ್ನು ಮುಗಿಸಬೇಕು. ಗುರುಪಾದೋದಕ ಮಾಡಿಕೊಂಡೇ ಶಿವಪೂಜೆ ಮಾಡುವದು. ಕ್ರಿಯಸ್ತರಿಗೆ ಯೋಗ್ಯವಾದುದು. ಮೊದಲು ಗುರು-ಲಿಂಗ-ಜಂಗಮ ಧ್ಯಾನಮಾಡಿ ಲಿಂಗ ಪೂಜೆಯನ್ನು ಪಾದೋದಕ-ಪ್ರಸಾದ ಸಿದ್ಧಿಗಾಗಿ ಪೂರೈಸುವೆನೆಂದು ಸಂಕಲ್ಪಿಸಬೇಕು. ಈ ಸಂಕಲ್ಪ ಜಡವಾದುದಲ್ಲ. ಜ್ಞಾನೇಂದ್ರಿಯಗಳಿಗೆ ಷಡಕ್ಷರ ಪ್ರಣವಗಳ ಸಂಬಂಧ ಅಥವಾ ಸ್ಪರ್ಶಮಾಡುವದು. ಮತ್ತು ಶರೀರದೊಳಗಿನ ಅಶುದ್ಧ ವಾಯುವನ್ನು ಪ್ರಾಣಾಯಾಮದಿಂದ ಪರಿಶುದ್ಧಗೊಳಿಸುವದಾದ ಮೇಲೆ ಭಕ್ತಸ್ಥಲದ ಆಚರಣೆಯು ಪ್ರಾರಂಭವಾಗುವದು. ಇಲ್ಲಿಯವರೆಗೆ ವಿವರಿಸಿದ ವಿಧಾನವು ಅಷ್ಟಾಂಗ ಯೋಗದ ಪೂರ್ವಭಾಗವನ್ನು ಕೆಲಮಟ್ಟಿಗೆ ಪೂರೈಸುವದು. ಈ ರೀತಿ ಸಹಜವಾದ ಆ ಯೋಗ ಇಲ್ಲಿ ಸಂಗತವಾಗುವದು.

 ಭಕ್ತಸ್ಥಲದಲ್ಲಿ ಆಚಾರಲಿಂಗದ ಅರಿವು ವೇದ್ಯವಾಗುವದು. ಅಷ್ಟಾವರಣದಲ್ಲಿ ಪೂಜಾ ಸಾಧನೆಯ ಮೊದಲನೆಯ ಸಾಮಗ್ರಿ ಭಸ್ಮವಾಗಿದೆ. ಭಸ್ಮದಿಂದ ತನು-ಮನ- ಇ೦ದ್ರಿಯಗಳ ಪೂರ್ವಭಾವವು ಭಸ್ಮವಾಗುತ್ತದೆ. ಭಸ್ಮವನ್ನು ಪೂಜಿಸಿ ಪಂಚಬ್ರಹ್ಮ ಮಂತ್ರೋಚ್ಛಾರಣೆಯಿಂದ ಸಿಂಪರಣೆ ಮಾಡಿಕೊಳ್ಳುವದು ಭಸ್ಮಸ್ನಾನವು. ಜಲಸ್ನಾನವಾದ ಮೇಲೆ ಭಸ್ಮಸ್ನಾನದಿಂದ ಅಂತರಂಗದ ಜಳಕವು ನೈರ್ಮಲ್ಯವು ಮುಗಿದಂತಾಗುವದು. ಎರಡೂ ಕೈಗಳಿಗೆ ಭಸ್ಮವನ್ನು ಲೇಪಿಸಿಕೊಂಡು ಮಂತ್ರ ಸಂಬಂಧಮಾಡಿ ಶರೀರದ ಅಂಗಾಂಗಗಳಿಗೆ ಸವರಿಕೊಳ್ಳಬೇಕು. ಭಸ್ಮ ಸ್ನಾನ ಹಾಗೂ ಲೇಪನಗಳಿಂದ ಶರೀರದ ಶೈತ್ಯಾಂಶವು ನಾಶವಾಗುವದು. ಚರ್ಮದ ಪರಿಶುದ್ಧತೆ ಯುಂಟಾಗುವದು. ನಂತರ ತೋರ ಬೆರಳು, ನಡುವಿನ ಬೆರಳು, ಮತ್ತು ಉಂಗುರ ಬೆರಳು ಈ ಮೂರು ಅಂಗುಲಿಗಳಿಂದ ತ್ರಿಪುಂಡ್ರವನ್ನು ಧರಿಸಬೇಕು. ಗುರುವಿನ ಅಪ್ಪಣೆಯಂತೆ ಆಯಾ ಅವಯವಗಳಲ್ಲಿ ಸ್ಪಷ್ಟವಾಗಿ ಧರಿಸಬೇಕು. ಭಸ್ಮಧರಿಸುವಾಗ ಸಂಕೋಚಗೊಳ್ಳುವದು ಸರಿಯಲ್ಲ. ಭಸ್ಮದಿಂದ ಶರೀರವು ಪವಿತ್ರ ಹಾಗೂ ಶಾಂತ   ವಾಗುವುದು. ಇನ್ನು ರುದ್ರಾಕ್ಷಧಾರಣೆಯಿಂದ ಶರೀರದ ಹೆಚ್ಚಿನ ಉಷ್ಣತೆಯೂ ದೂರವಾಗುವದು.

ಮಾಹೇಶ್ವರ ಸ್ಥಲದಲ್ಲಿ ಮಂತ್ರನ್ಯಾಸಗಳು ದಿಗ್ಭಂಧನ, ಧ್ಯಾನ ಹಾಗೂ ಜಪ ವಿಧಾನಗಳು ಸೇರುವವು. ಶರೀರದಲ್ಲಿ ಶಿವನ ಷಟ್‌ಶಕ್ತಿಗಳನ್ನು ಮಂತ್ರಪೂರೈಕ ಸಂಬಂಧ ಮಾಡಿಕೊಳ್ಳುವದೇ ಮಂತ್ರನ್ಯಾಸವು.

 ಸರ್ವಜ್ಞತಾ ತೃಪ್ತಿರನಾದಿಬೋಧಃ |

ಸ್ವತಂತ್ರತಾ ನಿತ್ಯಮಲುಪ್ತ ಶಕ್ತಿಃ |

ಅನಂತಶಕ್ತಿಶ್ಚ ವಿಭೋರ್ವಿಧಿಜ್ಞಾ

ಷಡಾಹುರಂಗಾನಿ ಮಹೇಶ್ವರಸ್ಯ || ಪಾರಮೇಶ್ವರ ತಂತ್ರ ||

ಮಹಾಪರಶಿವನ ಆರುಶಕ್ತಿಗಳೆನಿಸಿದ ೧) ಸರ್ವಜ್ಞ ಶಕ್ತಿ ೨) ನಿತ್ಯತೃಪಶಕ್ತಿ ೩) ಅನಾದಿ ಬೋಧಶಕ್ತಿ ೪) ಸ್ವತಂತ್ರಶಕ್ತಿ ೫) ಅಲುಪಶಕ್ತಿ, ೬) ಅನಂತಶಕ್ತಿಗಳನ್ನು ಕರಗಳಲ್ಲಿ ದೇಹದಲ್ಲಿ ಮತ್ತು ಅಂಗಾಂಗಗಳಲ್ಲಿ ವಿಧಾನಪೂರ್ವಕ ನ್ಯಾಸ (ಸಂಬಂಧ) ಮಾಡಿಕೊಳ್ಳುವದರಿಂದ ಅಂಥ ಶಕ್ತಿಗಳನ್ನು ತಾನೂ ಧರಿಸಿಕೊಂಡಂತಾಗುವದು. ಅಂತೆಯೇ ಶಿವಯೋಗಿಯ ಸರ್ವಾಂಗವೂ ಲಿಂಗಮಯವಾಗುತ್ತದೆ. ಪರುಷಮಯವೆನಿಸುತ್ತದೆ. ಇಂಥ ಪೂಜ್ಯರು ಮುಟ್ಟಿದ ಪದಾರ್ಥ ಪ್ರಸಾದವಾಗಿ ಪರಿಣಮಿಸುತ್ತದೆ. ಈ

ಷಟ್‌ಶಕ್ತಿಗಳನ್ನು ನ್ಯಾಸಮಾಡಿಕೊಳ್ಳುವದರಿಂದ ಶಿವಯೋಗಿಯು ಸಾಕ್ಷಾತ್ ಶಿವನಾಗುವನು. ಪಂಚಪರುಷಗಳೂ ಅವನಲ್ಲಿ ಗುಪ್ತವಾಗಿ ಪ್ರಭಾವ ಬೀರುವವು.

ನ್ಯಾಸಗಳು ಪೂರೈಸಿದ ಮೇಲೆ ದಿಗ್ಭಂಧನ ಮಾಡಿ ಜಪಮಾಡಬೇಕು. ಜಪ ವಿಧಾನದಿಂದ ನಿಷ್ಠಾಭಕ್ತಿಯು ಬೆಳೆದು ಗುರುಲಿಂಗದ ಪೂಜೆ ಬಲಗೊಳ್ಳುವದು. ನಂತರ ವಾಮಕರವನ್ನು ಪೂಜಿಸಿ ಪಶ್ಚಿಮ ಶಿಖಾಚಕ್ರದಲ್ಲಿರಿಸಿ ಭಾವಲಿಂಗವನ್ನು ಭಾವಿಸಿ ಭ್ರೂಮಧ್ಯದಲ್ಲಿ ಪ್ರಾಣಲಿಂಗವನ್ನು ಕಲ್ಪಿಸಿ ಉರದ ಇಷ್ಟಲಿಂಗವನ್ನು ಕರ ಕಮಲಕ್ಕೆ ಬಿಜಯಂಗೈಸಿಕೊಂಡು ಷೋಡಶೋಪಚಾರ ಅಷ್ಟವಿಧಾರ್ಚನಗಳಿಂದ ಪೂಜಿಸುವದು ಪ್ರಸಾದಿ-ಪ್ರಾಣಲಿಂಗಿಸ್ಥಲದ ಪೂಜೆಯಾಗುವದು. ಜಲ, ಗಂಧ, ಅಕ್ಷತೆ, ಪತ್ರಿ, ಪುಷ್ಪ, ಧೂಪ, ದೀಪ, ನೈವೇದ್ಯ ಇವುಗಳಿಂದ ಮಾಡಿದ ಪೂಜೆ ಅಷ್ಟವಿಧಾರ್ಚನೆಯೆನಿಸುವದು. ಇನ್ನು ಅರ್ಘ್ಯ, ಪಾದ್ಯ, ಅಚಮನ, ಪತ್ರಪುಷ್ಪ ಗಂಧ, ಅಕ್ಷತೆ, ರುದ್ರಾಕ್ಷಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ ಇವು ಷೋಡಶೋಪವಿಚಾರಗಳು, ಈ ಉಪಚಾರಗಳು ಎಲ್ಲರಿಗೆ ಸಾಧ್ಯವಾಗದಿದ್ದರೂ ಅಷ್ಟ ವಿಧಾರ್ಚನೆಯನ್ನು ಮಾಡ ಬಹುದು.

 ಪೂಜೆಯ ಒಂದೊಂದು ಉಪಚಾರವೂ ಒಂದೊಂದು ಅಮೋಘ ಫಲವನ್ನು ಕರುಣಿಸುತ್ತದೆ. ಜಲವು ಶಾಂತಿಯನ್ನು ಗಂಧವು ಪುಷ್ಟಿಯನ್ನು ಮತ್ತು ಆಯುಷ್ಯವನ್ನು ಬೆಳೆಸುವದು. ಅಕ್ಷತೆಯು ಕ್ಷತಿ (ದುಃಖ) ಯನ್ನು ಕಳೆಯವದು. ಪತ್ರ-ಪುಷ್ಪಗಳು ಶಮ-ದಮಾದಿ ದೈವೀ ಸಂಪತ್ತನ್ನು, ಧೂಪವು ಪಾಪವನ್ನು ನಿವಾರಿಸಿ ಪವಿತ್ರತೆಯನ್ನು ಕೊಡುವದು. ದೀಪನೀರಾಜನವು ಅಪಮೃತ್ಯುವನ್ನು  ಹರಣ ಮಾಡುವದು. ನೈವೇದ್ಯವು ಸರ್ವಸಂಪತ್ತನ್ನು ಕೊಡುವದು. ವೀರಶೈವಾಚಾರ ಪ್ರದೀಪಿಕೆ” ಯಲ್ಲಿ ಈ ಫಲವನ್ನು ಪ್ರತಿಪಾದಿಸಿದ್ದಾರೆ.

 ಉಪಚಾರಯುಕ್ತವಾದ ಅರ್ಚನೆಯನ್ನು ಪೂರೈಸಿ ತನ್ನ ನಾಶಿಕಾಗ್ರದಿಂದ ಹನ್ನೆರಡು ಅಂಗಲ ಪರಿಮಿತಿಯಲ್ಲಿ ಅಂಗೈಯೊಳಗಣ ಲಿಂಗವನ್ನು ಕಂಗಳಿಂದ ನಿರೀಕ್ಷಣ ಮಾಡುತ್ತ ಗುರೂಪದಿಷ್ಟ ಷಡಕ್ಷರ ಮಹಾಮಂತ್ರವನ್ನು ನೂರೆಂಟು ಸಲಕ್ಕೆ ಕಮ್ಮಿಯಾಗದಂತೆ ಜಪಿಸಬೇಕು. ಈ ಲಿಂಗ ನಿರೀಕ್ಷಣವು ಪ್ರಾಣಲಿಂಗಿಯ ಅನುಸಂಧಾನವಾಗುವದು. ಪ್ರಸಾದಿಯಾಗಿ ಶಿವಲಿಂಗಕ್ಕೆ ಉಪಚಾರಗಳನ್ನು ಸಮರ್ಪಿಸಿ ಪ್ರಾಣಲಿಂಗಿಯಾಗಿ ಜಂಗಮ ಲಿಂಗದಲ್ಲಿ ದೃಷ್ಟಿ-ಮನ-ಭಾವಗಳನ್ನು ಬೆರೆಯಿಸಬೇಕು. ಪುನಃ ಜಪಿಸಿ ಅರ್ಘ್ಯಕೊಟ್ಟು ಮಂಗಲ ಸ್ತೋತ್ರವನ್ನು ಪಾಡುವ ಶರಣನು ಪತಿಯಾದ ಪ್ರಸಾದಲಿಂಗನ ಪ್ರಸನ್ನತೆಯನ್ನು ಪಡೆಯುವನು. ಅನುಭವದ ಆನಂದವನ್ನು ಸವಿಯುವದು.

ಪೂಜೆಯನ್ನು ಪೂರೈಸಿ ಐಕ್ಯಸ್ಥಲದಲ್ಲಿ ನಿಂದ ಶರಣನು ಗುರು-ಲಿಂಗ- ಜಂಗಮದ ಪಾದೋದಕ-ಪ್ರಸಾದದಲ್ಲಿ ಸಮರಸ ಭಕ್ತಿಯಿಂದ ಮಹಾಲಿಂಗದಲ್ಲಿ ಸಮರಸವಾಗುವನು. ಮಹದಾನಂದಭರಿತನಾಗುವನು. ಇವೆಲ್ಲವುಗಳೂ ಶಿವಪೂಜೆಯ ಸತ್ಕ್ರಿಯೆಗಳಲ್ಲದೆ ಮತ್ತೇನು ? ಈ ಸತ್ಕ್ರಿಯೆಗಳಲ್ಲಿ ಸಮ್ಯಕ್ ಜ್ಞಾನ ಅವಶ್ಯ ಬೇಕಾಗುವದು. ಸುಜ್ಞಾನವಿಲ್ಲದ ಕ್ರಿಯೆ ಸತ್ಕ್ರಿಯೆಯೆನಿಸದು. ಸುಜ್ಞಾನ-ಸತ್ಕ್ರಿಯೆಗಳ ಸಂಗಮವೇ ಶಿವಯೋಗಸಿದ್ಧಿಗೆ ಕಾರಣವಾಗುವದು. ಶಿವಯೋಗದಿಂದ ಪದಾರ್ಥ ಕಾರ್ಯವು ಪ್ರಸಾದ ಕಾಯವೆನಿಸುವದು. ಪರಿಪೂರ್ಣವೆನಿಸುವದು.

ಶ್ರೀ ಗುರುನಾಥನು ಇಂಥ ಮಂಗಲಮಯ ಲಿಂಗವನ್ನು ತ್ರಿಕಾಲದಲ್ಲಿ ಪೂಜಿಸಲು ಬೋಧಿಸುವನು. ಅನಾನುಕೂಲವಾದಲ್ಲಿ ದ್ವಿಕಾಲದಲ್ಲಿ ಅಥವಾ ಏಕಕಾಲದಲ್ಲಿ ಯಾಗಲಿ ಸ್ವಸ್ವರೂಪಾನುಸಂಧಾನವುಳ್ಳ ಈ ಸ್ವಯಂ ಲಿಂಗವನ್ನು ಪೂಜಿಸಿ ಪುನೀತ ನಾಗಬೇಕೆಂಬ ಪಾಲನೆಯನ್ನು ಗುರುವು ಬೋಧಿಸುತ್ತಾನೆ. ಲಿಂಗಪೂಜೆಯಿಂದಲೇ ಲಿಂಗಭಕ್ತನ ಪಾಲನ-ಪೋಷಣವಾಗುತ್ತದೆ. ಅಂತೆಯೇ ಶಿವಕವಿಯು ಪ್ರಯೋಗಿಸಿದ ಹಾಗೂ ಮುಂದೆಯೂ ಉಪಯೋಗಿಸುವ ‘ಪಾಲಿಸಿದ’ ಪದ ಅರ್ಥಪೂರ್ಣವಾಗಿದೆ.

ತ್ಮಿಕವಾಗಿದೆ. ಇಲ್ಲಿ ಪೂಜೆಯ ಪಾಲನೆ ಮತ್ತು ಈ ನಿಯಮವನ್ನು ಪಾಲಿಸುವದರಿಂದ ತನ್ನ ಪಾಲನೆಯೂ ಅವಶ್ಯವಾಗುವದು. ನಂಬಿದರಿಗೆ ಶಂಭು ಇಂಬಾಗಿರುವನು.

ಈ ಲಿಂಗವನು ಭಕ್ತಿ | ಶೀಲನೇಮಗಳಿಂದ

ಓಲೈಸು ನಿನಗೆ-ಮೇಲುಪದವಹುದೆಂದು

ಪಾಲಿಸಿದ ಗುರುವೆ ಕೃಪೆಯಾಗು   ||೧೦೯ ||

ದೃಷ್ಟವಾದ ಇಷ್ಟಲಿಂಗವನ್ನು ಪೂಜಿಸಲು ಅಷ್ಟವಿಧಾರ್ಚನೆ ಷೋಡಶೋಪಚಾರಗಳು ಸಾಧನಗಳಾದರೆ ಪ್ರಾಣಲಿಂಗ ಮತ್ತು ಭಾವಲಿಂಗ ಪೂಜೆಯು ಅವುಗಳಿಂದ ಆಗಲಾರದು. ಅಲ್ಲಿ ಭಕ್ತಿ, ಶೀಲ, ನೇಮಗಳು ಮುಖ್ಯವಾಗಿವೆ. ಯಾಕೆಂದರೆ ಭಂಡಾರಿ ಬಸವಣ್ಣನವರು-

ಅಳಿಯೆರಗದ ಅನಿಲನಲುಗದ ರವಿಕರಂಪುಗದ

ಸುಳಿಗೊಂಡು ದಳವೇರಿ ಹಸುರಳಿದು ಬೆಳುಪುಳಿದ

 ಸುರುಚಿರಮೆನಿಪ್ಪ ಮೂಸಲಮೊಗ್ಗೆಯಂ ಕೊಂಡು

ತಂದು ಕೂಡಲಸಂಗಮನಾಥನನ್ನು ಭಕ್ತಿಯಿಂದ ಪೂಜಿಸಿದರೂ ತೃಪ್ತಿಯಾಗಲಿಲ್ಲ. ಭಯಕಂಪಿತರಾಗಿ ಭಗವಂತನನ್ನು ಬೇಡುತ್ತಾರೆ.

 ಹಾಲೆಂಜಲು ಪಯ್ಯನ, ಉದಕವೆಂಜಲು ಮತ್ಸ್ಯದ

ಪುಷ್ಪವೆಂಜಲು ತುಂಬಿಯು,

ಎಂತು ಪೂಜಿಸುವೆನಯ್ಯಾ,

ಶಿವ, ಶಿವಾ ! ಎಂತು ಪೂಜಿಸುವೆ ?

ಈ ಎಂಜಲವನತಿಗಳೆವಡೆ ಎನ್ನಳವಲ್ಲ

ಬಂದುದ ಕೈಕೋ ಕೂಡಲ ಸಂಗಮದೇವಾ

ವಿಚಾರಿಸಿದಲ್ಲಿ ಯಾವುದೂ ಶುದ್ಧವಾದುದಲ್ಲ, ಹಾಲುಕರುವಿನ ಎಂಜಲು, ನೀರು ಜಲಚರ ಪ್ರಾಣಿಗಳ ಎಂಜಲು, ಹೂಪತ್ರೆಗಳು ಕೀಟಗಳ ಎಂಜಲು, ಯಾವ ಪದಾರ್ಥವೂ ಮಿಸಲವಲ್ಲ, ಯಾವುದನ್ನೂ ಶುದ್ಧ ಮಾಡುವ ಶಕ್ತಿಯು ನಮ್ಮಲ್ಲಿಲ್ಲ. ದೇವಾ ! ಭಕ್ತಿಯ

ಮನದಿಂದ ಬಂದುದನ್ನು ಸ್ವೀಕರಿಸು. ಅದು ನಿನ್ನ ಪೂಜೆಯಾದೀತು. ಕೃಷ್ಣನಾದರೂ-

ಪತ್ರಂ ಪುಷ್ಪಂ ಫಲಂ ತೋಯಂ

ಯೋ ಮೇ ಭಕ್ತ್ಯಾ ಪ್ರಯಚ್ಛತಿ ।। ಗೀತೆ ||

ಯಾವ ಭಕ್ತನು ಪತ್ರಿಯನ್ನಾಗಲಿ, ಪುಷ್ಪವನ್ನಾಗಲಿ, ಫಲವನ್ನಾಗಲಿ, ನೀರನ್ನಾಗಲಿ ಯಾವುದನ್ನಾದರೂ ಭಕ್ತಿಯಿಂದ ಅರ್ಪಿಸಿದರೆ ಮಾತ್ರ ನನಗೆ ಸಲ್ಲುವದು ಎಂದಿದ್ದಾನೆ. ನಾವು ಕೊಡುವ ಯಾವ ದ್ರವ್ಯವು ನಮ್ಮದಿದೆ ? ಎಲ್ಲವೂ ಶಿವನದೇ ಶಿವನಿಂದ ಬಂದಂಥವುಗಳು. ಅಂತೆಯೇ ಜ್ಞಾನನಿಧಿ ಚನ್ನಬಸವಣ್ಣನವರು ವೈಚಾರಿಕವಾದ ಸುಜ್ಞಾನ ಬೆಳಕನ್ನು ಬೀರಿದ್ದಾರೆ.

 ತನು-ಮನ-ಧನ ಮುಂತಾದವೆಲ್ಲವು

ಶಿವನೊಡವೆಯೆಂದು ಮಾಡುವ ಭಕ್ತಂಗೆ

 ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ?

ಮಾಡಬೇಕೆಂಬರಿವಿನ ಕಂದೆರೆದವರಾರು ?

ಮಾಡುವೆನೆಂದು ನೆನೆದ ಚೇತನದ ಪ್ರಾಣವ ತಂದಿರಿಸಿದವರಾರು ?

ಅವರಿಂದಾದ ಒಡವೆಯ ಅವರಿಗೀವುತ್ತ ಉಪಚರಿಯವೆ ?

ನದಿಯ ಉದಕವ ನದಿಗರ್ಪಿಸುವಂತೆ

ಒಡೆಯರಿಗೆ ಒಡವೆಯನರ್ಪಿಸಿ

ತಾ ಶುದ್ಧವಾಗಿ ನಡೆನುಡಿಯಲ್ಲಿ ಕವಲುದೋರದೆ

ತನ್ನಲ್ಲಿ ತಾನೆ ತಿಳಿದು ಘನವೆಡೆಗೊಂಡ ಮಹಾನುಭಾವಿಗಳು   (, ಬ. ವ-೬೨)

ಶಿವಭಕ್ತನು ತನ್ನ ತನು-ಮನ-ಧನಗಳು ಶಿವನವುಗಳೆಂದು ಅರಿಯಬೇಕು. ಗುರು-ಲಿಂಗ-ಜಂಗಮಕ್ಕೆ ಸಮರ್ಪಣೆ ಮಾಡುವ ದ್ರವ್ಯವನ್ನು ಸತ್ಕ್ರಿಯೆಯನ್ನು ಆಚರಿಸುವ ಮನಸ್ಸನ್ನು ಹಾಗೂ ಚೇತನವನ್ನು ಶಿವನೇ ಕೊಟ್ಟಿದ್ದಾನೆ. ನದಿಯನ್ನು ಪೂಜಿಸುವವರು ನದಿಯ ನೀರಿನಿಂದಲೇ ಅರ್ಚಿಸುವಂತೆ ಜಗದೊಡೆಯನಾದ ಪರಶಿವನ ಸೊತ್ತುಗಳನ್ನು ಆ ಶಿವನಿಗೆ ಸಮರ್ಪಿಸುವಂತೆ ಅದಾವ ದೊಡ್ಡಸ್ತನವಿದೆ. ? ನಡೆ-ನುಡಿ ಭಿನ್ನವಾಗದೆ ಎರಡೊಂದಾಗಿ ತನ್ನಲ್ಲಿ ತಾನು ಅರಿತು ಆಚರಿಸಿದರೆ; ಅರ್ಚಿಸಿದರೆ ಮಹಾನುಭಾವಿಯಾಗುವನು. ಜ್ಞಾನಯುತವಾದ ಸತ್ಕ್ರಿಯಾಭರಿತ ಭಕ್ತಿಯು ಶಿವನಿಗರ್ಪಿತವಾಗುತ್ತದೆ. ಆಂತರಿಕ ಅಷ್ಟವಿಧಾರ್ಚನೆಯಲ್ಲಿ ಅಂಗಸುಖಕ್ಕೆ ಅವಕಾಶವಿರಬಾರದು. ಅರಿಷಡ್‌ವರ್ಗಗಳು ಇಲ್ಲದಾಗಬೇಕು. ಅ೦ದರೆ ಭಕ್ತಿಯೊಡನೆ ಶೀಲವು ಸಮನಿಸುವದು.

 ಚಿತ್ತರಗಿ ಸಂಸ್ಥಾನಮಠದ ಮಹಾಂತಸ್ವಾಮಿಗಳವರು ತಮ್ಮ ಲಿಂಗತತ್ತ್ವ ಪರಾಮರ್ಶೆ” ಯಲ್ಲಿ – ಲಿಂಗಪೂಜೆ ಒಂದು ಸಿದಾಂತವೂ ಹೌದು; ವಿಜ್ಞಾನವೂ ಹೌದು, ಅರ್ಚನೆ, ಅಭಿಷೇಕ ಉಪಚಾರ ಉಪಾಸನೆಗಳು ಸ್ಥಾವರ ಲಿಂಗಮೂರ್ತಿ ಪೂಜೆಗಳ ವಿಧಾನ. ಲಿಂಗಪೂಜೆ ಮಾತ್ರ ಇವುಗಳನ್ನು ಬಳಸಿಯೂ ಅತೀತವಾಗಿ ನಿಂತ ಒಂದು ತಂತ್ರ. ಒಂದು ಪದ್ದತಿ, ಒಂದು ವಿಕಾಸಯಾತ್ರೆ, ಇದೊಂದು ಭಾರತೀಯ ಯೋಗಸಮನ್ವಯವೆಂದೂ, ಪೌರ್ವಾತ್ಯ ಸಿದಾಂತದ ತುಟ್ಟತುದಿಯ ಹೂಗೊಂಚಲೆಂದೂ ಹೇಳಲಾಗುತ್ತಿದೆ. ದ್ವೈ, ದ್ವೈ, ದ್ವೈತಾದ್ವೈ, ಶಕ್ತಿವಿಶಿಷ್ಟಾದ್ವೈತ ಕರ್ಮ-ಭಕ್ತಿ- ಜ್ಞಾನ-ಲಯ-ರಾಜಯೋಗಗಳಿಗೆ ಇದೊಂದು ಏಕೈಕ ಮಣಿಮಂಚ; ಯಾವುದೂ ಇದರಲ್ಲಿ ತ್ಯಾಜ್ಯವಿಲ್ಲ. ಎಲ್ಲವೂ ಆಂಶಿಕವಾಗಿ ಬಂದು ಪೂರ್ಣತ್ವವನ್ನು ವ್ಯವಸ್ಥೆಗೊಳಿಸುತ್ತವೆ”, ಎಂದು ಲಿಂಗಪೂಜೆಯ ಸೂಕ್ಷ್ಮತೆಯನ್ನು ಪರಾಮರ್ಶಿಸಿದ್ದಾರೆ.

ಲಿಂಗಭಕ್ತನು ಶೀಲವನ್ನು ಸಂಪಾದಿಸುವ ಪರಿ ಬಹುಸೂಕ್ಷ್ಮವಾಗಿದೆ. ಅರ್ಥ ಪೂರ್ಣವಾಗಿದೆ ಭಕ್ತನು ಆಚಾರಾದಿ ಲಿಂಗಗಳನ್ನು ಅರುವಿನಿಂದ ಅರ್ಚಿಸಬೇಕಗುವದು. ಆಚಾರಲಿಂಗದಲ್ಲಿ ಆಸಕ್ತಿಯುಳ್ಳ ಶಿವಭಕ್ತನು ಸಖೀ-ಸಹೋದರ ಮೋಹವ ಮರೆಯಬೇಕು. ಪೂರ್ವಾಚಾರವನ್ನು ಬಿಡಬೇಕು. ಅನ್ಯದೇವತಾ ಪೂಜೆಯ ಮಾಡಬಾರದು. ಹಿಡಿದ ನೇಮವ ಬಿಡಬಾರದು. ಅಶುಚಿಯಾಗದೇ, ಭಕ್ತನಿಂದೆಯ ಕೇಳದೇ ಇರಬೇಕು. ಗುರುಲಿಂಗ ಪೂಜಕನಾದರೆ ಮಾತಾ-ಪಿತರ ಮೋಹವನ್ನು ತ್ಯಜಿಸಬೇಕು. ಗುರ್ವಾಜ್ಞೆಯ ಮಿರದೆ ಗುರುಮಾರ್ಗಾಚಾರದಲ್ಲಿ ಮುನ್ನಡೆಯಬೇಕು. ಮಾನವರ ಸೇವೆ ಮಾಡಬಾರದು. ಶಿವಲಿಂಗ ಭಕ್ತನಾದರೆ ಅನ್ಯಮೋಹ, ಅನ್ಯದೈವ ಭಜನೆ ಪೂಜೆಗಳನ್ನು ಪೂರ್ಣವಾಗಿ ಪರಿಹರಿಸಬೇಕು. ಪುಣ್ಯಕ್ಷೇತ್ರಗಳನ್ನು ಕುರಿತು ಹೋಗಬಾರದು. ಅಂಗಭೋಗ, ಸತಿಸಂಗವನ್ನು ದೂರೀಕರಿಸಬೇಕು ಜಂಗಮಲಿಂಗಾರಾಧಕನೆನಿಸಿದರೆ ಪೂರ್ವಕುಲಗೋತ್ರವನ್ನು ಮರೆಯಬೇಕು. ಮತ್ತೆ ಅವರೊಡನೆ ಬೆರೆಸಬಾರದು. ಆಸೆಯಿಂದ ಅರ್ಥ ಸಂಗ್ರಹವನ್ನು ಮಾಡಬಾರದು. ಬೇಡಿದಡೆ ಇಲ್ಲೆನ್ನಬಾರದು. ಶಿವಲಾಂಛನದ ನಿಂದೆಯನ್ನು ಕೇಳಬಾರದು. ಪ್ರಸಾದಲಿಂಗದಲ್ಲಿ ಪ್ರಸನ್ನ ಮನವುಳ್ಳವನಾದರೆ ಅಂಗರುಚಿಯನ್ನು ಕಳೆದುಕೊಳ್ಳಬೇಕು. ಅನ್ಯರಿಗೆ ಕೈಯೊಡ್ಡಬಾರದು. ಜೀವ ಹಿಂಸೆಯನ್ನು ಮಾಡದೇ ಆತ್ಮನಿಗ್ರಹವನ್ನು ಸಾಧಿಸಬೇಕು. ಮಹಾಲಿಂಗ ಭಕ್ತನಾದರೆ ಲೋಕದ ಮೋಹವನ್ನು ಮರೆತು ಅಜ್ಞಾನಿಗಳ ಸಂಗವನ್ನು ಪರಿಹರಿಸಬೇಕು. ಮರಣಕ್ಕಂಜದೆ ಸಮತೆ ಸಮಾಧಾನಗಳು ನೆಲೆಗೊಳ್ಳಬೇಕು. ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗದಂತಿರಬೇಕು. ಇದು ನಿಜವಾದ ಲಿಂಗಭಕ್ತನ ಭಕ್ತಿಯ ಶೀಲವೆಂದು ಶರಣರು ಸಾರಿದ್ದಾರೆ.

ಅಚ್ಚಶೀಲತನದ ಹಾಗೂ ಶೀಲವಂತನ ವ್ಯಾಖ್ಯೆಯನ್ನು ಚನ್ನಬಸವಣ್ಣನವರು ಸುಂದರವಾಗಿ, ಸರಳವಾಗಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ-

 ಚಿತ್ತದ ಕಳವಳವಳಿದು ಮನವು ಮಹಾ ಘನದಲ್ಲಿ ನೆಲೆಗೊಂಡುದೆ ಶೀಲ

 ಪರಮ ಪರಿಣಾಮ ನೆಲೆಗೊಂಡುದೆ ಶೀಲ

ಮತ್ತು

 ಭಕ್ತರು ಮತಕ್ಕೆ ಬಂದು ಒಳಹೊರಗೆಂಬುದು ಶೀಲವೆ ?

ಎನ್ನ ಲಿಂಗಕ್ಕೆ ಒಳ್ಳೆಯ ಅಗ್ಗವಣಿಯ ತನ್ನಿ,

ಒಳ್ಳೆಯ ಪುಷ್ಪವ ತನ್ನಿ, ಒಳ್ಳೆಯ ಓಗರವ ಮಾಡಿ

 ಎಂಬುದು ಶೀಲವೆ ? ಅಲ್ಲ

ಪಂಚೇಂದ್ರಿಯ, ಸಪ್ತಧಾತು, ಅರಿಷಡ್ವರ್ಗ,

ಅಷ್ಟಮದಂಗಳ ಕೊಂದಾತನೆ ಶೀಲವಂತ

ಕೂಡಲಚನ್ನಸಂಗಮದೇವಾ    II ೧೦೮೩ II

ಶೀಲವಾದಡೆ ಪ್ರಪಂಚುನಾಸ್ತಿಯಾಗಿರಬೇಕು.

 ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು

ಇಂತಪ್ಪ ಶೀಲಕ್ಕೆ ಭವನಾಸ್ತಿ, ಸೀಮೆಗೆ ಭವನಾಸ್ತಿ,

 ಈ ದ್ವಿವಿಧ ನಾಸ್ತಿಯಾದಲ್ಲದೆ

ಕೂಡಲ ಚನ್ನಸಂಗಯ್ಯನಲ್ಲಿ ಶೀಲವಂತನೆನಿಸಬಾರದು. || ೧೦೮೪ |

ಭಕ್ತನಾದವನು ಶಿವಭಕ್ತರೊಡನೆ ಆತ್ಮೀಯವಾಗಿ ಸಹಕರಿಸಬೇಕು. ಭಿನ್ನತೆ ಯನ್ನೆಣಿಸಬಾರದು. ಪಂಚೇಂದ್ರಿಯಗುಣ, ಸಪ್ತಧಾತು, ಅರಿಷಡ್‌ವರ್ಗ ಹಾಗೂ ಅಷ್ಟಮದಗಳನ್ನು ಜಯಿಸಿದವನೇ ನಿಜವಾದ ಶೀಲವಂತನೆನಿಸುವನು. ಅಂತರಂಗದ ಸಾಧಿಸುವಲ್ಲಿಯೇ ಲಿಂಗವಂತಿಕೆ ವ್ಯಕ್ತವಾಗುವದು. ಜಡಗುಣಗಳು ದೂರವಾದಲ್ಲದೆ ಶೀಲ ಸದ್ಗುಣಗಳು ಸಮನಿಸಲಾರವು. ಸಚ್ಛೀಲವನ್ನು ಸಾಧಿಸುಚಲ್ಲಿಯೆ ಲಿಂಗವಂತಿಕೆ ವ್ಯಕ್ತವಾಗುವದು.

  ಶೀಲತನದೊಂದಿಗೆ ನಿಯಮಿತತನವು ಶಿವಭಕ್ತನನ್ನು ಸುಂದರಗೊಳಿಸುವದು. ಭಕ್ತಿಯ ಸತ್ಯತೆಯೊಂದಿಗೆ ಶೀಲದ ಶಿವಭಾವನೆಯನ್ನು ಸಂಪಾದಿಸಿದರೆ ನಿಯಮದ ಸೌಂದರ್ಯ ಶೋಭಾಯಮಾನವಾಗುವದು. ಶಿವನ ‘ಸತ್ಯಂ ಶಿವಂ ಸುಂದರಂ’ ತತ್ತ್ವ ಮೈಗೂಡಿಸಿಕೊಳ್ಳುವದು. ನೇಮದ ನಿಜವನ್ನು ಅಣ್ಣನ ಮಾತಿನಲ್ಲಿ ನೋಡಿ-

ನೋಡಿ ನೋಡಿ ಮಾಡುವ ನೇಮ ಸಲ್ಲವು ! ಸಲ್ಲವು !

ತನುವುದ್ದೇಶ, ಮನವುದ್ದೇಶವಾಗಿ,-

ಮಾಡುವ ನೇಮ ಸಲ್ಲವು ! ಸಲ್ಲವು !

ಗುರುಪಥವ ಮೀರಿ ಮಾಡುವ ನೇಮ ಸಲ್ಲವು ! ಸಲ್ಲವು !

ಕೂಡಲ ಸಂಗಮದೇವಯ್ಯ ಇವು ನಿಮ್ಮ-

ನಿಜದೊಳಗೆ ನಿಲ್ಲವು; ನಿಲ್ಲವು; (ಬ. ಷ. ವ. ೭೧)

ಮತ್ತು

ಬಂದುದ ಕೈಕೊಳಬಲ್ಲಡೆ ನೇಮ,

ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ

ನಡೆದು ತಪ್ಪದಿದ್ದಡೆ ನೇಮ

ನುಡಿದು ಹುಸಿಯದಿದ್ದಡೆ ನೇಮ

ನಮ್ಮ ಕೂಡಲ ಸಂಗನ ಶರಣರು ಬಂದಡೆ

ಒಡೆಯರಿಗೊಡವೆಯನೊಪ್ಪಿಸುವುದೇ ನೇಮ (೨೩೧ ಬ.ಷ.ವ.)

ಮತ್ತು

ತನ್ನಾಶ್ರಯದ ರತಿ ಸುಖವನು, ತಾನುಂಬ ಊಟವನು

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ,

ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? || ೧೮೩||

 ಶಿವಭಕ್ತನು ಮಾಡುವ ಕ್ರಿಯೆಗಳೆಲ್ಲ ಲಿಂಗದಕ್ರಿಯೆಗಳು, ಲಿಂಗದ ನೇಮಗಳಾದುದರಿಂದ ತನು-ಮನಕ್ಕೆ ಅವಕಾಶ, ಅಲ್ಲಲ್ಲಿ, ಗುರುವಚನದಂತೆ ನಡೆಯುವದು, ನುಡಿಯುವದು ನೀಜನೇಮ. ಬಂದುದನ್ನು ಪ್ರಸಾದವೆಂದು ಕೈಕೊಳ್ಳಬೇಕು. ತನ್ನಲ್ಲಿದುದ್ದನ್ನು ಶಿವಭಕ್ತರಿಗೆ ಇಲ್ಲೊಂದು ವಂಚಿಸಬಾರದು. ನಡೆದು ತಪ್ಪದೆ, ನುಡಿದು ಹುಸಿಯಾಗದಿದ್ದಡೆ ಅದುವೆ ಶಿವನ ನೇಮವಾಗುವದು. ಶಿವನಿಗೆ ಸಮರ್ಪಿಸುವ ಸಾಮಗ್ರಿಗಳನ್ನು ಸ್ವತಃ ಸಂಪಾದಿಸಿ ಪೂರೈಸಬೇಕು. ಅಂದರೆ ಶಿವಲಿಂಗಕ್ಕೆ ತೃಪ್ತಿ ಇಂಥ ಭಕ್ತಿ ಶೀಲ-ನೇಮಗಳಿಂದ ಕೈಗೊಳ್ಳುವ ಶಿವಪೂಜೆಗೆ ಸಮನಾದ ಮೇಲುಪದವಿಲ್ಲ.

ಶಿವಪೂಜೆಗೈಯ್ಯುವ, ಶಿವಯೋಗಾನಂದದಲ್ಲಿ ತುಂದಿಲರಾಗುವ ಶರಣರು ಶಿವನ ಕೈಲಾಸವನ್ನು ಬಯಸಲಿಲ್ಲ. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಿಗೆ ಆಶಿಸಲಿಲ್ಲ.  ಅವರಿದ್ದ ಠಾವು, ಅವರಂಗಳ ವಾರಾಣಿಸಿ, ಕಾಯವೇ ಕೈಲಾಸ, ಅವರ ನುಡಿಯೊಳಗೆ ಚಿಂತಾಮಣಿ, ಅವರಂಗಳ ಮುಂದಣ ಗೋವೇ ಕಾಮಧೇನು. ವೃಕ್ಷವೇ ಕಲ್ಪವೃಕ್ಷವಾಗಿರುತ್ತದೆ. ಇದನ್ನರಿತ ಶಿವಭಕ್ತರು ಬ್ರಹ್ಮಪದವಿ, ವಿಷ್ಣು ಪದವಿ, ರುದ್ರ ಪದವಿಗೆ ಹಾತೊರೆಯದೇ ಶಿವಶರಣರ ತೊತ್ತಾಗಿಸುವಂತೆ ಶಿವನಲ್ಲಿ ಪ್ರಾರ್ಥಿಸಿರುವರು. ಶರಣ ಪದವಿಯೇ ಘನವಾದುದು. ಲಿಂಗಭಕ್ತತನವೇ ಮಿಗಿಲಾದುದು. ಅನುಪಮವಾದುದು. ಗುರುನಾಥನು ಭಕ್ತಿ-ಶೀಲ-ನೇಮಗಳಿಗಾ ಶ್ರಯವಾದ ಇಷ್ಟಲಿಂಗವನ್ನು ಕರುಣಿಸಿ ಮೇಲು ಪದವಿಯನ್ನು ಪಡೆಯಲು ಶಿವಯೋಗ ಪಾಲನೆಯನ್ನು ದಯಪಾಲಿಸಿದ್ದಾನೆ. ಅಂಥ ಆತನ ಸತ್ಕೃಪೆಗೆ ಅದಾವುದು ಸರಿಯಾದೀತು !

ಸಾಲೋಕ್ಯ ಮೊದಲಾದ | ಮೇಲಾದ ಪದನಾಲ್ಕು

ಈ ಲಿಂಗ ಪದಕೆ-ಕೀಳಾಗುತಿಹವೆಂದು

ಪೇಳಿದೈ ಗುರುವೆ ಕೃಪೆಯಾಗು   ||೧೧೦||

ಮೇಲಾದ ಪದ ಅಥವಾ ಪದವಿ, ಕೈವಲ್ಯ, ಮುಕ್ತಿ, ನಿರ್ವಾಣ, ಮೋಕ್ಷ ವೆಂಬುದಾಗಿ ಧರ್ಮ ಗ್ರಂಥಗಳು ಸಾರುತ್ತವೆ. ಜಗತ್ತಿನಲ್ಲಿ ಮಾನವನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬೇಕು. ಅಂದರೆ ಮಾನವ ಜೀವನ ಸಾರ್ಥಕವಾಗುವದು. ಪುರುಷಾರ್ಥಗಳಲ್ಲಿ ಪ್ರಧಾನವಾದುದು ಮೋಕ್ಷ, ಮೋಕ್ಷವನ್ನು ಹೊಂದುವದೇ ಜೀವಾತ್ಮರ ಮಹಾಮಣಿಹ. ಈ ಮೋಕ್ಷವು ನಾಲ್ಕು ತೆರನೆಂದು ಪ್ರತಿಪಾದಿಸುತ್ತಾರೆ -ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂದು. ಈ ನಾಲ್ಕು ಮುಕ್ತಿ-ಪದಗಳು ಲಿಂಗೈಕ್ಯನ ಸಮರಸ ಅಥವಾ ಲಿಂಗಾಂಗಸಮರಸ ಪದವಿಗೆ ಸರಿಬರುವುದಿಲ್ಲವೆಂಬುದು ಸದ್ಗುರುವಿನ ಅಪ್ಪಣೆ.

ಲಿಂಗಪದವಿಗೆ ಅವು ಕೀಳೆಂದು ಹೇಳುವ ಧೈರ್ಯ ಶರಣದು. ಇನ್ನಾವ ಸಿದ್ಧಾಂತ ಇದನ್ನು ಪ್ರತಿಪಾದಿಸುವ ಸಾಹಸ ಮಾಡಿರುವದಿಲ್ಲ.

 ಸದ್ಧರ್ಮದಿಂದ ದುಡ್ಡನ್ನು ಸಂಗ್ರಹಿಸಿ ಸತ್ಕಾಮನೆಗಳನ್ನು ಪೂರೈಸಿದರೆ ಮೋಕ್ಷದ ಒಂದೊಂದು ಮೆಟ್ಟಿಲೂ ಸಾಧಕನಿಗೆ ಸಿಕ್ಕುವದು. ಪುಣ್ಯಫಲದಿಂದ ಜೀವನು ಶಿವಸಾಕ್ಷಾತ್ಕಾರ ಮಾಡಿಕೊಂಡು ಆತನ ಲೋಕದಲ್ಲಿ ವಾಸಿಸಿ ಆ ಪರಶಿವನ

ಆಲೋಕನೆಯಲ್ಲಿರುವುದೇ ಸಾಲೋಕ್ಯ ಪದವಿಯೆನಿಸುವದು. ಅಪರಿಚಿತ ವ್ಯಕ್ತಿಯು ಮೊದಮೊದಲು ದೂರಿಂದ ಅಲೋಕಿಸುವದು ಸಹಜ. ಪರಿಚಯವಾದಂತೆ ಸಮೀಪ ಸಂಬಂಧವನ್ನು ಹೊಂದುವನು. ಅದರಂತೆ ಶಿವಕೃಪೆ ಪಡೆದು ಅವನ ಸಾಮಿಪ್ಯವನ್ನು

ಪಡೆಯುವದೇ ಸಾಮಿಪ್ಯ ಮುಕ್ತಿಯೆನಿಸುವದು. ಸಾಮಿಪ್ಯ-ಸಂಬಂಧ ಸಂಸ್ಕಾರಗಳಿಂದ ಜೀವನು ಶಿವರೂಪವನ್ನು ಸಾಧಿಸುವುದೇ  ಸಾರೂಪ್ಯ ಮುಕ್ತಿಯಾಗುವದು. ಕೊನೆಗೆ ಶಿವನೊಡನೆ ಸಮರಸವಾಗಿ ಬೆರೆಯುವಿಕೆಯು ಸಾಯುಜ್ಯವೆನಿಸುವದು. ಇದುವೇ ಶ್ರೇಷ್ಠವಾದ ಮುಕ್ತಿಯೆನಿಸುವದು. ಉಪಾಸಕರ ಇಚ್ಛೆ ಮತ್ತು ಯೋಗ್ಯತೆಗಳಿಗನುಗುಣವಾಗಿ ಪರಮಾತ್ಮನು ತಕ್ಕ ಫಲವನ್ನು ಕೊಡುತ್ತಾನೆ. ಆದರೆ ಶಿವಶರಣರು ಶಿವನ ಹಂಗನ್ನೇ ಹರಿದಿರುತ್ತಾರೆ. ನಿನ್ನನ್ನು ನಾವು ಏನನ್ನೂ ಬೇಡುವದಿಲ್ಲವೆನ್ನುತ್ತಾರೆ..

ಸಾಲೋಕ್ಯಬೇಕೆಂದು ಪೂಜಿಸಿ ಸಾಲೋಕ್ಯವರವ ಪಡೆದರು.

ಸಾಮೀಪ್ಯ ಬೇಕೆಂದು ಪೂಜಿಸಿ ಸಾಮಿಪ್ಯವರವ ಪಡೆದರು.

ಸಾರೂಪ್ಯಬೇಕೆಂದು ಪೂಜಿಸಿ ಸಾರೂಪ್ಯವರವ ಪಡೆದರು.

ಸಾಯುಜ್ಯಬೇಕೆಂದು ಪೂಜಿಸಿ ಸಾಯುಜ್ಯವರವ ಪಡೆದರು.

ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ

ಈ ನಾಲ್ಕು ಪದವಿಗಳ ಪಡೆದು ಇತ್ತಿತ್ತಲಾದವರೆಲ್ಲಾ

ಅವರು ನಿಮ್ಮ ವೇದಿಸಲರಿವರೆ ?

ಇಂತಿಪ್ಪವ ಕೊಟ್ಟು ಕೊಂಡಾಡುವ

ಕೈಕೂಲಿಕಾರರೆಲ್ಲಾ ನಿಮ್ಮ ಬಲ್ಲರೆ ?

ಕೂಡಲ ಚನ್ನ ಸಂಗಯ್ಯ

 ನಿಮ್ಮ ಶರಣಂಗೆ ಚತುರ್ವಿಧ ಬಯಕೆಯಿಲ್ಲ ಭವಕಲ್ಪಿತವಿಲ್ಲ  (ಚ.ಬ.ವ. ೯೩೯)

ಈ ನಾಲ್ಕು ಪದವಿಗಳನ್ನು ಬೇಕೆಂದು ಬಯಸಿ ಶಿವನನ್ನು ಕೊಂಡಾಡಿ ಪಡೆದ ಸಾಧಕನು ಶಿವನ ನಿಜವನ್ನು ಅರಿಯಲಾರನು. ಪುಣ್ಯವನ್ನು ಕೊಟ್ಟು ಕೊಂಡುಕೊಂಡ – (ಖರೀದಿಸಿದ) ಪದವಿ ಈ ವೇಷ. ಇಂಥದನ್ನು ನಮ್ಮ ಶರಣರು ಬಯಸುವದಿಲ್ಲವೆಂದು ಚನ್ನಬಸವಣ್ಣನವರು ನಿರ್ಧಾರವಾಗಿ ನಿರ್ವಚಿಸಿದ್ದಾರೆ.

ಲಿಂಗವನ್ನು ಸದಾ ಅಂಗದಲ್ಲಿ ಧರಿಸಿ ಇಂದ್ರಿಯಂಗಳಿಗೂ ಲಿಂಗಗಳನ್ನು ಸಂಬಂಧಿಸಿಕೊಂಡ ಲಿಂಗಭಕ್ತನಿಗೆ ಲಿಂಗಾಂಗಯೋಗದಲ್ಲಿ ಈ ಚತುರ್ವಿಧ ಫಲಗಳು ಸಹಜವಾಗಿ ಪ್ರಾಪ್ತವಾಗುತ್ತದೆ. ಶಿವನ (ಶಿವಲಿಂಗದ) ಆರಾಧನೆಯಲ್ಲಿ ಈ ನಾಲ್ಕೂ ಪದವಿಗಳು ಲಭ್ಯವಾಗುವವೆಂಬ ಮಾತನ್ನು ಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ (ಪದ್ಯ-೨೮)

ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇ |

ಸಾಮೀಪ್ಯಂ ಶಿವಭಕ್ತಿಧುರ್ಯಜನತಾ ಸಾಂಗತ್ಯ ಸಂಭಾಷಣೇ |

ಸಾಲೋಕ್ಯಂ ಚ ಚರಾಚರಾತ್ಮಕತನುಧ್ಯಾನೇ ಭವಾನೀಪತೇ |

ಸಾಯುಜ್ಯಂ ಮಮ ಸಿದ್ಧಮತ್ರಭವತಿ ಸ್ವಾಮಿನ್ ಕೃತಾರ್ಥೋ ಸ್ಮ್ಯಹಮ್ ||

ಹೇ ಭವಾನೀಪತಿಯೇ | ನಿನ್ನ ಪೂಜೆಯಿಂದ ಸಾರೂಪ್ಯಮುಕ್ತಿಯು; ಶಿವ ಮಹಾ ದೇವ ಎಂಬ ನಾಮ ಸಂಕೀರ್ತನದಿಂದ ಸಾಮೀಪ್ಯ-ಮುಕ್ತಿಯು; ಶಿವಭಕ್ತಿಯಲ್ಲಿ ಶ್ರೇಷ್ಠರಾದ ಶರಣರೊಡನೆ ಸಹವಾಸ-ಸಂಭಾಷಣೆಗಳಿಂದ ಸಾಲೋಕ್ಯ ಮುಕ್ತಿಯು;

ನಿನ್ನ ಚರಾಚರಾತ್ಮಕರೂಪದ ಧ್ಯಾನದಿಂದ ಸಾಯುಜ್ಯ ಮುಕ್ತಿಯು ನನಗೆ ಇಲ್ಲಿ ಭೂಲೋಕದಲ್ಲಿಯೇ ಸಿದ್ಧವಾಗಿರುತ್ತವೆ. ಆದ್ದರಿಂದ ಹೇ ಸ್ವಾಮಿನ್ ನಾನು ಧನ್ಯನು” ಎಂದು ವರ್ಣಿಸಿರುವರು.

 ಇದರಂತೆ ಮಹಾಶರಣ ಉರಿಲಿಂಗ ಪೆದ್ದಿಗಳು ಚತುರ್ವಿಧ ಮುಕ್ತಿಗಳು ಶರಣನಿಗೆ ಸುಲಭ ಸಾಧ್ಯವೆಂದು ವಿಶ್ಲೇಷಿಸುತ್ತಾರೆ.

 ಸಾಲೋಕ್ಯ ವೆಂದೇನು

ಅಂಗದ ಮೇಲೆ ಲಿಂಗ ಸಂಬಂಧಿಯಾಗಿರುತ್ತಿರಲು !

ಸಾಮೀಪ್ಯವೆಂದೇನು |

ಗುರು-ಲಿಂಗ-ಜಂಗಮದ ದಾಸೋಹದ ಸನ್ನಿಧಿಯೊಳಿರುತ್ತಿರಲು

ಸಾರೂಪ್ಯವೆಂದೇನು ?

ಅನವರತ ಅರ್ಚನೆಯೊಳಿರುತ್ತಿರಲು !

ಸಾಯುಜ್ಯವೆಂದೇನು ?

ಚತುರ್ದಶಭುವನವ ಒಳಕೊಂಡ ಮಹಾಘನವ

ಮನವನಂಗವಿಸಿ ನೆನೆಯುತ್ತಿರಲು !

ಇಂತೀ ಚತುರ್ವಿಧ ಪದವೆಂದೇನು ?

ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ |

ವಸತ

ನಾಲ್ಕೂ ಮುಕ್ತಿಗಳು ಶಿವಶರಣರಿಗೆ ನಿತ್ಯ ಸನ್ನಿಹಿತವಾಗಿರುತ್ತವೆ. ಅನವರತ ಅಂಗದ ಮೇಲೆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ ಸಾಲೋಕ್ಯ ಸಿದ್ಧಿ ಸುಲಭ ವಾಗುವದು. ಅಂಗದ ಲಿಂಗವನ್ನು ಅಂಗೈಯಲ್ಲಿ ಕಂಗಳಿಂದ ಕಾಣುವ ಲಿಂಗಭಕ್ತನಿಗೆ ಬೇರಾರು ಸರಿಸಾಟಿಯಾಗರು. ವಿಭೂತಿ ರುದ್ರಾಕ್ಷಧಾರಣ ಮಾಡಿಕೊಂಡು ‘ರುದ್ರೋ ಭೂತ್ವಾ, ರುದ್ರಂ ಯಜೇತ್’ ಶಿವನಾಗಿ ಶಿವಲಿಂಗವನ್ನು ಪೂಜಿಸೆಂಬ ಶ್ರುತಿಮಾತಿನಂತೆ ಶಿವನ ಸ್ವರೂಪ (ಸಾರೂಪ್ಯ) ವನ್ನು ಪಡೆಯುತ್ತಾನೆ. ಶಿವನ ಷಟ್‌ಶಕ್ತಿಗಳನ್ನು ಶರೀರದಲ್ಲಿ ನ್ಯಾಸ ಮಾಡಿಕೊಳ್ಳುತ್ತಾನೆ. ಷಡಕ್ಷರ ಮಹಾಮಂತ್ರ ಜಪದಿಂದ ಶಿವಲಿಂಗದಲ್ಲಿ ಬೆರೆಯುವವನಾದ್ದರಿಂದ ಲಿಂಗಸಾಮಿಪ್ಯ ಅತ್ಯಂತ ಸಮೀಪವಾಗುತ್ತದೆ. ಶರಣರ ಸಂಗಮಾಡಿ ಶಿವನನ್ನು ಪ್ರತ್ಯಕ್ಷ ಕಾಣುತ್ತಾನೆ. ವೀರಶೈವ ಸಿದ್ಧಾಂತದಲ್ಲಿ ಗುರು-ಲಿಂಗ- ಜಂಗಮರೇ ಪ್ರತ್ಯಕ್ಷ ಶಿವನಲ್ಲವೇ ? ವೀರಶೈವರು ಪಾದೋದಕ ಪ್ರಸಾದಲ್ಲಿ ಸಮರಸವನ್ನು ಹೊಂದಿ ಸಾಯುಜ್ಯವನ್ನು ಪಡೆಯುತ್ತಾರೆ. ಪ್ರತಿನಿತ್ಯದಲ್ಲೂ ಚತುರ್ವಿಧಮುಕ್ತಿ ಸುಖದಲ್ಲಿರುವ ಶರಣನಿಗೆ ಕಾಣದ ಪದವಿಗಳಿಗಾಗಿ ಅದೆಂತು ಆಶೆಯೊಡ ಮೂಡೀತು.

ಕೇವಲ ಪುಣ್ಯ ವಿಶೇಷದಿಂದ ಲಭ್ಯವಾಗುವ ಮೋಕ್ಷವು ದೇಹ ತ್ಯಾಗದ ನಂತರ ಪ್ರಾಪ್ತವಾದರೂ ಪ್ರಯೋಜನವಿಲ್ಲ. ಅಂದರೆ ಶರಣನು ದೇಹವಿರುವಾಗಲೇ ಪ್ರತಿ ನಿತ್ಯ ಮುಕ್ತನಾಗುವನು. ಅದುಕಾರಣ ಈ ಲಿಂಗ ಪದವಿಗೆ ಸಾಲೋಕ್ಯ ಮೊದಲಾದ ಮೇಲಾದ ಪದನಾಲ್ಕು ಕೀಳಾಗುತ್ತವೆಯೆಂದು ಶ್ರೀಗುರುವು ಬೋಧಿಸಿದ್ದಾನೆಂಬುದನ್ನು ಸ್ಪಷ್ಟಪಡಿಸಿದ್ದಾನೆ.

ನದಿಗಳೆಲ್ಲ ಸಮುದ್ರವನ್ನು ಸೇರಿ ಸಮುದ್ರವೇ ಆಗುವಂತೆ ಶಿವನನ್ನು ರೋಮ ರೋಮಂಗಳಲ್ಲಿ ಧರಿಸಿಕೊಂಡ ಶಿವಭಕ್ತನು ತನ್ನ ಇಂದ್ರಿಯಗಳನ್ನೆಲ್ಲ ಲಿಂಗಗಳನ್ನಾಗಿ ಮಾಡಿಕೊಳ್ಳುತ್ತಾನೆ. ಹೃದಯದೊಳಡಗಿದ ಪ್ರಾಪಂಚಿಕ ಆಶೆ-ಆಮಿಷಗಳು ಶಿವ ಮಯವಾಗಿ ಶಿವಪ್ರಸಾದವಾದ ಮೇಲೆ ಇನ್ನಿತರ ಬಯಕೆಗಳು ಉತ್ಪನ್ನವಾಗುವದಿಲ್ಲ. ಶಿವಶರಣರ ಪ್ರಸಾದ ರುಚಿಯನ್ನುಂಡ ಶಿವನು ಕೈಲಾಸಕ್ಕೇ ಹೋಗಲಿಲ್ಲವಂತೆ ! ಅಂದಮೇಲೆ ಗುರು ಕರುಣಿಸುವ ಲಿಂಗ ಪದವಿ ಮಹತ್ತರವಾದುದಲ್ಲವೆ