ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಭೈರವಿ)

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪರಮ ಕಟಯೊಳಗಿರ್ದ | ಗುರುಲಿಂಗದೊಳಗೆ ಮಾ-

ಕ್ಷರವೆ ಮೊದಲಾದವರವರ ಷಡಕ್ಷರ ಮಂತ್ರ

ವೊರೆದ ಶ್ರೀಗುರುವೆ ಕೃಪೆಯಾಗು     I ೧೨೧ |

ಲಿಂಗದ ಎರಡನೆಯ ಅವಯವ ಕಟಿ, ಇದು ಪರಮವೆನಿಸಿದೆ. ಅರ್ಥಾತ್ ಶ್ರೇಷ್ಠವೆನಿಸಿದೆ. ಕಟಿಭಾಗವು ಸಣ್ಣಾಗಿರುವದರಿಂದ ಅಂದವಾಗಿ ಕಾಣುವದು. ಮೃಗ ರಾಜವೆನಿಸಿದ ಸಿಂಹದ ನಡುವು ಸಾಮಾನ್ಯವಾಗಿ ಸಣ್ಣದಾಗಿರುತ್ತದೆ. ಕುಲವಧುವಿನ ಕಟಿಭಾಗವೂ ಸಣ್ಣದಾಗಿರುವದೆಂಬ ವರ್ಣನೆಯು ಕಾವ್ಯಗಳಲ್ಲಿ ಕಾಣ ಸಿಕ್ಕುವದು. ಶಕ್ತಿ ಸೂಚಕವಾದ ಲಿಂಗ ಪೀಠದ ಮಧ್ಯಭಾಗವೂ ಚಿಕ್ಕದಾಗಿರುವಲ್ಲಿ ವಿಶೇಷತೆಯಿದೆ. ಲೋಕ ವ್ಯವಹಾರಕ್ಕೆ ಯಥೋಚಿತವೆನಿಸಿದೆ.

ಕ್ರಿಯಾಲಿಂಗವೆನಿಸಿದ ಇಷ್ಟಲಿಂಗದ ಎರಡನೆಯ ಲಿಂಗವೇ ಗುರುಲಿಂಗವೆನಿಸಿದೆ. ಈ ಗುರುಲಿಂಗವು ಕಟಿಭಾಗದಲ್ಲಿದೆ. ಗುರುಲಿಂಗದಲ್ಲಿ ‘ಮಃ’ ಪ್ರಣವವಿದೆ. ಇಲ್ಲಿ ಮಾಕ್ಷರ (ಮಕಾರ) ವೆ ಮೊದಲಾಗಿ ಷಡಕ್ಷರ ಮಂತ್ರವು ಅಡಕವಾಗಿದೆ. ಅಂದರೆ ಈ ಗುರುಲಿಂಗ ಷಟ್‌ಸ್ಥಲದಲ್ಲಿ “ಮಃ” ಪ್ರಣವದ ಶ್ರೇಷ್ಠ ಷಡಕ್ಷರ ಮಂತ್ರದ ಇರುವು ಗುಪ್ತವಾಗಿರುತ್ತದೆಂದು ಗುರುವು ಪ್ರಿಯ ಶಿಷ್ಯನಿಗೆ ಲಿಂಗಸ್ಥಾನದಲ್ಲಿಯ ಮಂತ್ರರೂಪವನ್ನು ಬೋಧಿಸುತ್ತಾನೆ. ಮಕಾರ ಮಂತ್ರದ ಸ್ತೋತ್ರ ಕೆಳಗಿನಂತಿದೆ-

ಮಂದಾಕಿನಿ-ಸಲಿಲ-ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ-ಮಹೇಶ್ವರಾಯ |

ಮಂದಾರಪುಷ್ಪ-ಬಹುಪುಷ್ಪ-ಸುಪೂಜಿತಾಯ

ಸ್ಮೈ ಮಕಾರಾಯ ನಮಃ ಶಿವಾಯ (೨) (ಬ್ರಹತ್ ಸ್ತೋತ್ರ ರತ್ನಾಕರ)

ಶ್ರೀರುದ್ರಯಾಮಲ ತಂತ್ರದಲ್ಲಿ ‘ಮ’ಕಾರ ಮಂತ್ರದ ಮಹಿಮೆ

ಮಹಾದೇವಂ ಮಹಾತ್ಮಾನಂ

ಮಹಾಧ್ಯಾನಪರಾಯಣಮ್ |

ಮಹಾಪಾಪಹರಂ ದೇವಂ

ಮಕಾರಾಯ ನಮೋ ನಮಃ (೨)

ಎಂದಿದೆ. ಮಕಾರವು ಮಹಾಧ್ಯಾನ ಪರಾಯಣ ಮಹಾದೇವನ ಸ್ವರೂಪದ್ದಾಗಿದೆ. ಪಾಪನಾಶಕವಾದ ಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲದಲ್ಲಿ ಅವಶ್ಯ ನುತಿಸಬಹುದು.

ಅವಿರಳದ ವರ್ತುಳದ | ಶಿವಲಿಂಗದೊಳು ಶಿಕಾ-

ರವೇ ಮೊದಲಾಗಿರ್ದ – ತವೆ ಷಣ್ಮಂತ್ರವ ತೋ-

ರ್ದವಿರಳ ಗುರುವೆ ಕೃಪೆಯಾಗು     | ೧೨೨||

ಲಿಂಗ ಪೀಠದ ಮೇಲಿನ ಸುತ್ತಳತೆಯೇ ವರ್ತುಳವು. ಇದು ಅವಿರತವಾದುದು. ವಿರಾಮವಿಲ್ಲದೆ ದುಂಡಾದ ಪೂರ್ಣಗೊಂಡ ರೇಖೆಯೇ (ಪರಿಘವೆ) ವರ್ತುಳವು. ಇಲ್ಲಿ ಶಿವಲಿಂಗದ ವಾಸ. ಶಿವಲಿಂಗಕ್ಕೆ ‘ಶಿ’ ಕಾರ ಪ್ರಣವಾಕ್ಷರ ಸಂಬಂಧವಿರುವದು. ಹೀಗೆ ‘ಶಿ’ ಕಾರ ಷಣ್ಮಂತ್ರವನ್ನು ಜ್ಞಾನನಿಬಿಡವಾದ (ಅವಿರಳನೆನಿಸಿದ) ಗುರುನಾಥನು  ತೋರಿಸಿ ರಕ್ಷಿಸುತ್ತಾನೆ. ಇದು ಸದ್ಗುರುವಿನ ಕರ್ತವ್ಯ.

 ‘ಶಿ’ ಕಾರದಲ್ಲಿಯ ‘ಇ’ಕಾರವೇ ಶಕ್ತಿಯು. ʼʼಇಕಾರಃ ಶಕ್ತಿರುಕ್ತಾʼ’ ಎಂದು ಶಾಸ್ತ್ರಕಾರರು ನಿರ್ವಚಿಸಿದ್ದಾರೆ. ವೃತ್ತ, ಕಟಿ, ವರ್ತುಳದಿಂದ ಕೂಡಿದ ಪೀಠವೇ ಲಿಂಗದ ಆಧಾರ ಸ್ಥಾನವಾಗಿದೆ. ಪೂರ್ಣತೆಯನ್ನು ಪಡೆದ ವಸ್ತುವಿನಲ್ಲಿ ಶಕ್ತಿಯ ಆವಿರ್ಭಾವವಾಗುವಂತೆ ಈ ವರ್ತುಳದಲ್ಲಿ ಶಿಕಾರ ಪ್ರಣವವು ಶಕ್ತಿಯ ವೈಶಿಷ್ಟ್ಯತೆ ಯನ್ನು ಸೂಚಿಸುತ್ತದೆ. ಇಂಥ ಶಿಕಾರ ಪ್ರಣವಕ್ಕೆ ಜಗದ್ಗುರು ಶಂಕರಾಚಾರ್ಯರು ವಂದಿಸಿದ್ದಾರೆ.

 ಶಿವಾಯ ಗೌರೀವದನಾಬ್ಜ-ವೃಂದ-

ಸೂರ್ಯಾಯ ದಕ್ಷಾಧ್ವರ ನಾಶಕಾಯ  |

ಶ್ರೀ ನೀಲಕಂಠಾಯ ವೃಷಭ ಧ್ವಜಾಯ

 ಸ್ಮೈ ಶಿಕಾರಾಯ ನಮಃ ಶಿವಾಯ

ಪಾರ್ವತಿಯ ಮುಖಕಮಲವನ್ನು ಅರಳಿಸುವಲ್ಲಿ ಸೂರ್ಯಸದೃಶನಾದ, ದಕ್ಷನ ಯಜ್ಞವನ್ನು ನಾಶಮಾಡಿದ, ವಿಷವನ್ನು ಧರಿಸಿ ನೀಲಕಂಠನೆನಿಸಿದ, ವೃಷಭ ವಾಹನನೆನಿಸಿದ ಶಿವನಿಗೆ ಹಾಗೂ ಶಿವನ ಸ್ವರೂಪವೆನಿಸಿದ ಶಿಕಾರ ಪ್ರಣವಕ್ಕೆ ನಮಸ್ಕಾರವು. ಇದರಂತೆ ಶಿವಷಡಕ್ಷರ ಸ್ತೋತ್ರದಲ್ಲಿ ‘ಶಿ’ ಕಾರ ಮಂತ್ರದ ವರ್ಣನೆ ಕೆಳಗಿನಂತಿದೆ.

ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹಕಾರಕಂ |

ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ” ||

ಮಂಗಲಕರನೂ, ಶಾಂತನೂ, ಜಗದೊಡೆಯೆನಿಸಿ ಲೋಕಕ್ಕೆ ಅನುಗ್ರಹಿಸ ತಕ್ಕವನೂ, ನಿತ್ಯನೂ, ಆದ ಶಿವ ಪದದ ಏಕಾಕ್ಷರವೆನಿಸಿದ ‘ಶಿ’ ಕಾರ ಪ್ರಣವಕ್ಕೆ ಅನಂತ ವಂದನೆಗಳು.

*

ಇಂತು ಗೋಮುಖದೊಳಗಿ | ಪ್ಪಂಥ ಜಂಗಮ ಲಿಂಗ

ಮಂತ್ರ ವಾಕಾರ-ಮುಂತಾದ ಷಣ್ಮಂತ್ರ

ಮಂ ತೋರ್ದ ಗುರುವೆ ಕೃಪೆಯಾಗು   || ೧೨೩ ||

ಇನ್ನು ಕ್ರಮಪ್ರಾಪ್ತವಾದ ಸ್ಥಾನ ಗೋಮುಖವು. ಎಲ್ಲ ಅವಯವಗಳಲ್ಲಿ ಮುಖ ಮುಖ್ಯವಾಗಿರುವಂತೆ ಲಿಂಗಕ್ಕೆ ಗೋಮುಖವು ಸುಂದರ ಅವಯವವಾಗಿದೆ. ಗೋಮುಖಕ್ಕೆ ಜಲಹರಿಯೆಂತಲೂ ಕರೆಯುತ್ತಾರೆ. ಸ್ಥಾವರಲಿಂಗದ ಮೇಲೆ ಅಭಿಷೇಕ ಮಾಡಿದ ಅಭಿಷೇಕವು ಜಲಹರಿಯ ಮುಖಾಂತರವೇ ಹರಿದು ಹೋಗುವದು. ಇಷ್ಟಲಿಂಗದ ಮೇಲೆ ಅಭಿಷೇಕ ಮಾಡಿದರೂ ಜಲಹರಿಯ ಭಾಗದ ಮೂಲಕವೇ ಹೋಗುವದು. ಶಿವನ ಎಡಭಾಗದಲ್ಲಿ ಶಕ್ತಿಯು ಇರುವಂತೆ ಈ ಗೋಮುಖವು ಲಿಂಗದ ಎಡಭಾಗದಲ್ಲಿ ಇರುವದು.

ಈ ಗೋಮುಖದಲ್ಲಿ ಜಂಗಮಲಿಂಗವಿರುತ್ತದೆ. ಅಂತೆಯೇ ಲಿಂಗಕ್ಕರ್ಪಿಸಿದ ಅಭಿಷೇಕಾದಿಗಳು ಗೋಮುಖದಲ್ಲಿ ಸಮರ್ಪಿತಗೊಳ್ಳುವವು. ಜಂಗಮಲಿಂಗಕ್ಕೆ ‘ವಾ’ ಕಾರ ಪ್ರಣವವು ಸಂಬಂಧಗೊಳ್ಳುವದು. ಈ ಜಂಗಮ ಲಿಂಗದಲ್ಲಿ ‘ವಾ’ ಕಾರ

ಮುಖ್ಯವಾದ ಷಣ್ಮಂತ್ರವು ನೆಲೆಗೊಂಡಿರುತ್ತದೆ. ಗುರುದೇವನು ಈ ಗೋಮುಖದಲ್ಲಿ ‘ವಾ’ ಕಾರ ಮಂತ್ರವನ್ನು ಸಂಬಂಧಗೊಳಿಸಿ ಲಿಂಗವನ್ನು ಶಕ್ತಿಯುಕ್ತವನ್ನಾಗಿ ಕರುಣಿಸುತ್ತಾನೆ. ಇಲ್ಲಿ ಲಿಂಗದ ಮುಖವೇ ಜಂಗಮವಾಗಿರುವ ಅನ್ಯೋನ್ಯ ಸಂಬಂಧವೂ

ವ್ಯಕ್ತವಾಗುವದು.

ವಶಿಷ್ಠ ಕಂಭೋದ್ಭವ ಗೌತಮಾರ್ಯ

ಮುನೀಂದ್ರ ದೇವಾರ್ಚಿತ ಶೇಖರಾಯ |

ಚಂದ್ರಾರ್ಕ ವೈಶ್ವಾನರ ಲೋಚನಾಯ

ಸ್ಮೈ ವಕಾರಾಯ ನಮಃ ಶಿವಾಯ (೪) ||

ಎಂದು ಶಂಕರ ಭಗವತ್ಪಾದರು ‘ವಾ’ ಕಾರ ಪ್ರಣವವನ್ನು ನುತಿಸಿದರೆ  ಶಿವಷಡಕ್ಷರ ಸ್ತೋತ್ರದಲ್ಲಿ

ವಾಹನಂ ಋಷಭೋ ಯಸ್ಯ

ವಾಸುಕಿಃ ಕಂಠಭೂಷಣಮ್ |

ವಾಮೇ ಶಕ್ತಿಧರಂ ದೇವಂ

ವ ಕಾರಾಯ ನಮೋ ನಮಃ ||

ಯಾವಾತನಿಗೆ ಋಷಭವು ವಾಹನವೋ, ಸರ್ಪವು ಕಂಠಾಭರಣವೋ, ವಾಮಭಾಗದಲ್ಲಿ ಶಕ್ತಿಸಮೇತನೋ ಅಂಥ ವಾಕಾರ ಮಂತ್ರ ಮೂರ್ತಿಗೆ ನಮಸ್ಕಾರವು.

ನಾದನಾಳದ ಸುಪ್ರ | ಸಾದ ಲಿಂಗದೊಳು ನಿ

ರ್ಭೇದವಹ ಯಕಾ ರಾದಿ ಷಣ್ಮಂತ್ರಗಳ

ಬೋಧಿಸಿದ ಗುರುವೆ ಕೃಪೆಯಾಗು   || ೧೨೪ ||

ಲಿಂಗದ ಐದನೆಯ ಅವಯವ ನಾಳ, ಇದು ನಾದ ರೂಪಾಗಿದೆ. ನಾದವು ಕಳಾಲಿಂಗ ಸ್ವರೂಪವು. ಲಿಂಗಪೀಠದ ಮಧ್ಯ ತಗ್ಗು ಪ್ರದೇಶವೇ ನಾಳವು; ಅಥವಾ ರಂಧ್ರವು. ಪೀಠರಂಧ್ರದ ಸ್ಥಾನವೇ ಲಿಂಗಕ್ಕೆ ಆಶ್ರಯಸ್ಥಾನ. ಈ ನಾದಮಯ (ಕಳಾಮಯ) ನಾಳದಲ್ಲಿರುವದು ಪ್ರಸಾದಲಿಂಗವು. ಅದರೊಳು ಭೇದವಳಿದ ‘ಯ’ ಕಾರ ಪ್ರಣವಾಕ್ಷರವುಂಟು. ಇಲ್ಲಿ ನಾಳಕ್ಕೂ ಮತ್ತು ಅದರೊಳಡಗಿದ ಚಿತ್ಪೀಠವಾದ ಲಿಂಗಕ್ಕೂ ಅಭೇದವಿರುತ್ತದೆ. ಪೀಠ ಹಾಗೂ ಚಿತ್ಪೀಠಗಳೆರಡೂ ಭಿನ್ನವಾಗಿ ಕಂಡರೂ ಶಕ್ತಿವಿಶಿಷ್ಟಾದ್ವೈತ ತತ್ತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ.

ಪ್ರಸಾದ ಲಿಂಗಕ್ಕೆ ಮುಖ್ಯವಾದ ‘ಯ’ ಕಾರಾದಿ ಬೀಜಾಕ್ಷರವುಳ್ಳ ಷಣ್ಮಂತ್ರವು ಅಲ್ಲಿ ಸಂಬಂಧವಾಗುತ್ತದೆ. ಎಂದು ಮುಂತಾಗಿ ಬೋಧಿಸುವನು ಗುರುದೇವನು. ಪಂಚಾಕ್ಷರಿಯ ಅಂತಿಮ ಪ್ರಣವದ ವರ್ಣನೆಯನ್ನು ಶಂಕರಾಚಾರ್ಯರು ಹೀಗೆ ನುತಿಸಿದ್ದಾರೆ.

ಯಕ್ಷಸ್ವರೂಪಾಯ ಜಟಾಧರಾಯ

ಪಿನಾಕ ಹಸ್ತಾಯ ಸನಾತನಾಯ |

ದಿವ್ಯಾಯ ದೇವಾಯ ದಿಗಂಬರಾಯ

ಸ್ಮೈಯ’ ಕಾರಾಯ ನಮಃ ಶಿವಾಯ (೫)

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿದೌ

ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ (೬)

ಪುಣ್ಯಪ್ರದವಾದ ಪಂಚಾಕ್ಷರ ಮಹಾಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲಕ್ಕೆ ಪಠಿಸುವವನು ಶಿವಲೋಕವನ್ನು ಹೊಂದಿ ಶಿವನೊಡನೆ ಆನಂದದಿಂದಿರುವ ಸೌಭಾಗ್ಯವನ್ನು ಪಡೆಯುವನು. ಶಿವಷಡಕ್ಷರ ಸ್ತೋತ್ರದಲ್ಲಿ ಯಕಾರ ಪ್ರಣವದ ಸ್ತುತಿ ಕೆಳಗಿನಂತಿದೆ.

ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪೀ ಮಹೇಶ್ವರಃ

ಯೋ ಗುರುಃ ಸರ್ವ ದೇವಾನಾಂ ಯಕಾರಾಯ ನಮೋ ನಮಃ

ಬಹು ಮೇಲು ಪೀಠದಾ | ಮಹಲಿಂಗದೊಳಗೆ ತಾ

ನಿಹ ಓಂಕಾರಾದಿ ಸಹಜ ಷಣ್ಮಂತ್ರವನ-

ರುಹಿದೆಯೈ ಗುರುವೆ ಕೃಪೆಯಾಗು   | ೧೨೫ |

ಲಿಂಗಷಟ್‌ಸ್ಥಲದಲ್ಲಿ ಬಹು ಮೇಲಾದುದು ಚಿತ್ಪೀಠವು . ಚಿಚ್ಛಕ್ತಿಮಯ ವಾದುದೇ ಚಿತ್ಪೀಠವೆನಿಸುವದು. ಚಿಚ್ಛಕ್ತಿಭರಿತನಾದ ಐಕ್ಯನು ಮಹಾಲಿಂಗದಲ್ಲಿ ಸಮರಸನಾಗಿರುವಂತೆ, ಚಿತ್ಪೀಠದಲ್ಲಿರುವುದು ಮಹಾಲಿಂಗವು. ಈ ಮಹಾಲಿಂಗದಲ್ಲಿ ಮಹವಾದುದು (ಶ್ರೇಷ್ಠವಾದುದು) ಓಂಕಾರ ಪ್ರಣವವು. ಇದು ಸಹಜವೆನಿಸಿದೆ. ಯಾಕಂದರೆ ಓಂಕಾರವು ಷಣ್ಮಂತ್ರವನ್ನು ಸಂಪೂರ್ಣವಾಗಿ ಹುದುಗಿಸಿಕೊಂಡಿದೆ. ಓಂಕಾರದಿಂದಲೇ ಪಂಚ ಪ್ರಾಣಗಳು ಪ್ರಕಟಗೊಳ್ಳುವದರಿಂದ ಸಹಜ ಷಣ್ಮಂತ್ರವೆನಿಸುವದು. ಇಂಥ ಓಂಕಾರದ ಚಿಂತನ ಸಮರಸವಾದ ಚೇತನವಾಗಿದೆ. ಷಡಕ್ಷರ ಸ್ತೋತ್ರದಲ್ಲಿ-

ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |

ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||

ಬಿಂದು ಸಹಿತವಾದ ಓಂಕಾರವನ್ನು ಯೋಗಿಗಳು ಹೃದಯದಲ್ಲಿ ಸದಾಕಾಲವೂ ಧ್ಯಾನಿಸುತ್ತಾರೆ. ಈ ಓಂಕಾರವು ಕಾಮ (ಬಯಸಿದ್ದ)ವನ್ನು ಮೋಕ್ಷವನ್ನುಕೊಡುವಂಥಹ ದಾಗಿದೆ. ʼʼಶಿವತತ್ತ್ವ ರತ್ನಾಕರ’ದ ಪ್ರಥಮ ಕಲ್ಲೋಲದ ಐದನೆಯ ತರಂಗದಲ್ಲಿ

ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಃ ಸ್ವರಾಃ |

ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ||

ಪ್ರಣವೋ ಹಿ ಪರಂ ಬ್ರಹ್ಮ ಪ್ರಣವಃ ಪರಮಂ ಪದಮ್ |

ತಸ್ಮಾದುಚ್ಚಾರಣಾತ್ ಸಮ್ಯಕ್ ಪ್ರಣವಸ್ಯ ಶಿವಾತ್ಮನಃ |

ಪಾತಕಾನಿ ವಿನಶ್ಯಂತಿ ಹೃದಿಧ್ಯಾತೇ ಪರೇ ಶಿವೇ |

ವೇದಗಳು, ಸ್ವರಗಳು ಓಂಕಾರದಿಂದ ಪ್ರಾದುರ್ಭವಿಸಿವೆ. ತ್ರೈಲೋಕದ ಸಕಲ ಸಚರಾಚರ ಪ್ರಾಣಿಗಳಿಗೂ ಓಂಕಾರವೇ ಆಶ್ರಯವಾಗಿದೆ. ಇಂಥ ಓಂಕಾರ ಪ್ರಣವವು ಪರಬ್ರಹ್ಮವೂ, ಪರಮಪದವೂ ಆಗಿದೆ. ಆದ್ದರಿಂದ ಶಿವನ ಆತ್ಮವೇ ಓಂಕಾರ ಪ್ರಣವವು. ಇದನ್ನು ಧ್ಯಾನಪೂರ್ವಕ ಜಪಿಸುವದರಿಂದ ಸಕಲ ಪಾತಕಗಳು ನಾಶವಾಗುತ್ತವೆ. ಎಂದು ಓಂಕಾರದ ಅಪಾರ ಮಹಿಮೆಯನ್ನು ಬಣ್ಣಿಸಿದ್ದಾರೆ. ಇಂಥ ಓಂಕಾರದ ಉಪದೇಶವನ್ನು ಕರುಣಿಸುವ ಗುರುನಾಥನು ಕೃತಕೃತ್ಯನು. ಉಪದೇಶ ಪಡೆಯುವ ಶಿಷ್ಯನೂ ಧನ್ಯನು.

ಚಿತ್ಪೀಠದ ಮಹಾಲಿಂಗ ಮತ್ತು ಓಂಕಾರ ಪ್ರಣವವು ಒಂದಾಗಿದೆ. ಅಂತೆಯೇ ಓಂಕಾರದಲ್ಲಿ ಪಂಚಪ್ರಣವಗಳು ಕೂಡಿಕೊಂಡಿವೆ. ಮತ್ತು ಮಹಾಲಿಂಗದ ಸುನಾಮವೇ ಷಣ್ಮಂತ್ರವು. ಆದ್ದರಿಂದ ಅದು ಸಾರ್ಥಕವಾಗಿದೆ.

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 5

ಜ.ಚ.ನಿ

ಊಟ ಮಾಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿ ಅವರದಾಗಿರಲಿಲ್ಲ, ಅವರ ಅಜ್ಜಂದಿರವರ ಕಾಯಕಕ್ಕೆ ಕೈ ಹಾಕಿದರು. ಅದೇ ಲಿಂಗದಹಳ್ಳಿಯಲ್ಲಿಯೇ ಒಂದು ಸ್ವತಂತ್ರ ಪ್ರಾಥಮಿಕ ಶಾಲೆಯನ್ನು ಪ್ರಾರಂಭ ಮಾಡಿದರು. ಅನೇಕ ಬಾಲಕರು

ಕೂಡಿದರು. ವಿದ್ಯಾಶಿಕ್ಷಣವು ಆರಂಭವಾಯಿತು.

ಇಷ್ಟರಿಂದಲೆ ಅವರ ಮನಸ್ಸು ತೃಪ್ತಿಯಾಗಲಿಲ್ಲ. ತಮ್ಮ ಆತ್ಮಶಿಕ್ಷಣವೂ ಆಗಬೇಕೆಂದು ಆಲೋಚಿಸಿದರು. ಅದಕ್ಕೆ ತಕ್ಕಂತೆ ಅದೇ ಊರಿನಲ್ಲಿ ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯನವರೆಂಬುವರಿದ್ದರು. ಅವರಲ್ಲಿಗೆ ಹೋಗಿ ತಮ್ಮ ಕೋರಿಕೆಯನ್ನು ಅರಿಕೆ ಮಾಡಿದರು. ಅವರು ಸಂತೋಷದಿಂದ ಒಪ್ಪಿದರು. ಅದರಿಂದಾಗಿ ಅವರಲ್ಲಿ ಕನ್ನಡ ಕಾವ್ಯಗಳನ್ನು, ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ನೋಡಲಾರಂಭಿಸಿದರು.

ವೇದಾಂತದ ರುಚಿ ಅವರ ಮನಸ್ಸಿಗೆ ಹಿಡಿಯಿತು. ಸಿದ್ಧಾಂತದ ಅರಿವು ಅವರ ಕಣ್ಣನ್ನು ತೆರೆಯಿಸಿತು. ಇಷ್ಟ-ಪ್ರಾಣ-ಭಾವಲಿಂಗಗಳ ಬಣ್ಣನೆಯ ‘ಕೈವಲ್ಯ ಪದ್ಧತಿಯ ಪದ್ಯಗಳು ಅವರ ಬಾಳನ್ನು ಭಾವರಾಜ್ಯಕ್ಕೇರಿಸಿದವು. ಭಕ್ತಿಪಂಥಕ್ಕೆ ಹಚ್ಚಿತು. ಲಿಂಗಪೂಜೆಯಲ್ಲಿ ಅವರಿಗೆ ಅಮಿತವಾದ ಪ್ರೇಮ ಹುಟ್ಟಿತು. ಒಮ್ಮೊಮ್ಮೆ ಆ ಪೂಜಾ ವೈಭವದಲ್ಲಿ ಆನಂದಪರವಶತೆಯಲ್ಲಿ ಬೆರೆದು ಬಾಹ್ಯವ ಮರೆದು ಶಾಲೆಗೆ ಹೋಗುವುದನ್ನೇ ಮರೆಯುತ್ತಿದ್ದರು, ವೇಳೆಯನ್ನೇ ಮೀರುತ್ತಿದ್ದರು. ನಿಜಗುಣರ ಗ್ರಂಥಗಳ ಅಭ್ಯಾಸದಲ್ಲಿ ಅವರಿಗೆ ದಿನೇ ದಿನೇ ಅಭಿರುಚಿ ಹೆಚ್ಚಿತು. ಆ ಓದಿನ ಮುಂದೆ ಅವರಿಗೆ ಮತ್ತೊಂದು ಬೇಕಾಗದಾಯಿತು. ಇದರಿಂದಾಗಿ ಮೆಲ್ಲಮೆಲ್ಲನೆ ಅವರ ಮನಸ್ಸು ವೈರಾಗ್ಯದ ಒಂದೊಂದೆ ಹಂತಗಳನ್ನು ಏರಹತ್ತಿತು. ಬರಬರುತ್ತ ಸಂಸಾರದ ಕಹಿರಸವು ಅವರ ಅನುಭವಕ್ಕೆ ಬರಹತ್ತಿತು. ದಿನೇ ದಿನೇ ಶರೀರದ ಅಸಾರತೆ ಅಶಾಶ್ವತತೆ ಅವರಿಗೆ ವೇದ್ಯವಾಗತೊಡಗಿತು.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ನಯ-ವಿನಯ ಸಂಪನ್ನನಾದ ವ್ಯಕ್ತಿ ಸಹಜವಾಗಿ ಎಲ್ಲರ ಗಮನ ಸೆಳೆಯುತ್ತಾನೆ. ಜನರ ಪ್ರೀತಿ-ವಿಶ್ವಾಸಗಳಿಗೂ ಪಾತ್ರನಾಗುತ್ತಾನೆ. ಸಮಾಜದಲ್ಲಿ ಸದ್ಗುಣಶೀಲನೆನಿಸಿ ಬಾಳುತ್ತಾನೆ. ಬಾಳು ಬೆಳಗುತ್ತಾನೆ. ವ್ಯಕ್ತಿಯಲ್ಲಿರುವ ಧನ, ಯೌವ್ವನ, ಅಧಿಕಾರ, ವಿದ್ಯೆ ಮೊದಲಾದವುಗಳಿಗೆ ಬೆಲೆ ಬರುವುದು ಆ ವ್ಯಕ್ತಿಯ ನಯ-ವಿನಯ ಹಾಗು ಸರಸ ಸಜ್ಜನಿಕೆಗಳಿಂದ. ಈ ಕಾರಣಕ್ಕಾಗಿಯೇ ‘ವಿದ್ಯಾ ವಿನಯೇನ ಶೋಭತೆ” ಎಂದು ಹೇಳಿರುವುದು.

ದ್ವೇಷಾಸೂಯೆಗಳಿಲ್ಲದ, ಮೋಸ ವಂಚನೆಗಳಿಲ್ಲದ, ಪರಿಶುದ್ಧ ಹೃದಯದ ಸಂಯಮಶೀಲ ವ್ಯಕ್ತಿಗಳಲ್ಲಿ ನಯ-ವಿನಯಗಳು ಮನೆ ಮಾಡಿಕೊಂಡಿರುತ್ತವೆ. ನಯವಿನಯದಿಂದ ಸಜ್ಜನಿಕೆ, ಸಜ್ಜನಿಕೆಯಿಂದ ಮೃದು ವಚನಗಳು ಲಭ್ಯವಾಗುತ್ತವೆ. ಈ ಮೃದು ವಚನಗಳ ಸಕಲ ಜಪತಪಂಗಳು. ಸರ್ವಾರ್ಪಣ ಮನೋಭಾವದಿಂದ ಜನಸೇವೆ ಮಾಡುವ ಮೃದು ವಚನದ ಸದ್ಗುಣಶೀಲರಲ್ಲಿ ವಿನಯಗುಣ ಭಗವಂತನ ಒಲವನ್ನು ಗಳಿಸುವ ಸಾಧನವಾಗಿರುತ್ತದೆ. ಸದುವಿನಯವೇ ಸದಾಶಿವನ ಒಲುಮೆಯಯ್ಯ ಎಂಬ ಬಸವವಾಣಿ ಈ ಮಾತಿಗೊಂದು ನಿದರ್ಶನ.

ವಿದ್ಯಾರ್ಜನೆಯ ಸಂದರ್ಭದಲ್ಲಿ ಸದ್ವಿನಯ ಸದಾಚಾರಗಳು ಅತ್ಯವಶ್ಯವಾಗಿದ್ದರೂ ಆ ವಿದ್ಯೆಯೇ ವ್ಯಕ್ತಿಯನ್ನು ನಯವಿನಯ ಸಂಪನ್ನನಾಗಿಸುತ್ತದೆ.

 ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್

ಪಾತ್ರತ್ವಾತ್ ಧನಮಾಮ್ನೋತಿ ಧನಾದ್ಧರ್ಮಃ ತತಃ ಸುಖಮ್

 ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ಗೌರವಾದರಗಳನ್ನು ಪಡೆದ ವ್ಯಕ್ತಿ ಶ್ರೀಮಂತನಾಗುತ್ತಾನೆ. ತನ್ನಲ್ಲಿರುವ ಧನದಿಂದ ಧರ್ಮಕಾರ್ಯಗಳನ್ನು ನೆರವೇರಿಸುತ್ತ ಸುದೀರ್ಘ ಕಾಲ ಸುಖಿಯಾಗಿ ಬಾಳುತ್ತಾನೆ ಎಂದು ಸುಭಾಷಿತವೊಂದು ಹೇಳುತ್ತದೆ. ಕಾರಣ ಸದಾ ಗರ್ವದಿಂದ ಬೀಗದೆ ನಮ್ರರಾಗಿ ಬಾಗುವುದೇ ವಿಹಿತ.

 ಚೀನ ದೇಶದ ಅತ್ಯಂತ ವೃದ್ಧನಾದ ಸಂತನೊಬ್ಬ ತನ್ನೆಲ್ಲ ಭಕ್ತರನ್ನು ಶಿಷ್ಯರನ್ನು ಕರೆದು ‘ನನ್ನ ಬಾಯಿಯಲ್ಲಿ ಏನಿದೆ? ಎಷ್ಟು ಹಲ್ಲುಗಳಿವೆ? ಹೇಳಿರಿ’ ಎಂದು ಬಾಯಿತೆರೆದು ತೋರಿಸಿದ. ಬಾಯಿಯಲ್ಲಿ ಇಣುಕಿ ನೋಡಿದ ಎಲ್ಲರೂ ‘ಹಲ್ಲುಗಳೆಲ್ಲ ಬಿದ್ದುಹೋಗಿವೆ ಒಂದೂ ಉಳಿದಿಲ್ಲ’ ಎನ್ನುತ್ತಾರೆ. ನಾಲಿಗೆಯಾದರೂ ಇದೆಯಲ್ಲವೇ? ಎಂದು ಸಂತನು ಮರುಪ್ರಶ್ನಿಸುತ್ತಾನೆ. ಎಲ್ಲರೂ ‘ಇದೆ’ ಎನ್ನುತ್ತಾರೆ. ಆಗ ಸಂತನು ‘ನೋಡಿ! ನಾಲಿಗೆಯಾದರೂ ಜನ್ಮದಾರಬ್ದದಿಂದಲೇ ಇದೆ. ಹಲ್ಲುಗಳು ನಂತರ ಬಂದವುಗಳು, ನಂತರ ಹೋಗಬೇಕಾಗಿತ್ತು. ಹಲ್ಲುಗಳೇ ಮೊದಲು ಹೋಗಲು ಕಾರಣವೇನು?’ ಶಿಷ್ಯರೆಲ್ಲರೂ ಕಾರಣವೇನೆಂದು ತಿಳಿಯದೆ ‘ಗೊತ್ತಿಲ್ಲ’ ಎಂದು ಹೇಳಿದರು. ಆಗ ಸಂತನು ನಿಧಾನವಾಗಿ ಇದನ್ನೇ ಹೇಳಲು ನಿಮ್ಮನ್ನೆಲ್ಲ ಕರೆದಿರುವೆ. ನೋಡಿ! ನಾಲಿಗೆ ಈವರೆಗೂ ಇರಲು ಕಾರಣವೆಂದರೆ ಅದರ ಮೃದುತ್ವ ಹಲ್ಲುಗಳು ನಂತರ ಬಂದು ಮೊದಲು ಹೋಗಲು ಕಾರಣ ಅದರ ಕಠಿಣತೆ(ಬಿರುಸುತನ) ಹಾಗು ಕಠಿಣತೆಯ ಬಗ್ಗೆ ಅವುಗಳಿಗಿರುವ ಅಭಿಮಾನವೇ ಕಾರಣ. ಆದ್ದರಿಂದ ನನ್ನ ಪ್ರೀತಿಯ ಶಿಷ್ಯರೇ! ಸುದೀರ್ಘ ಕಾಲ ಬದುಕುವುದಾದರೆ ನಮ್ರರಾಗಿರಿ, ವಿನಯಶಾಲಿಗಳಾಗಿರಿ, ಅಹಂಕಾರ, ಅಭಿಮಾನದಿಂದ ಮುಕ್ತರಾಗಿರಿ ಎಂದು ಉಪದೇಶಿಸುತ್ತಾನೆ.

 ನಯ-ವಿನಯ ನಮ್ಮ ಹೃದಯ ಶ್ರೀಮಂತಿಕೆಯ ಪ್ರತೀಕ. ಅದು ಏತ ತಲೆ ಬಾಗಿದಂತೆ. ಇಕ್ಕುಳ ಕೈ ಮುಗಿದಂತೆ, ಕೃತ್ರಿಮವಾಗಿರದೆ ಗೊನೆಬಿಟ್ಟ ಬಾಳೆಯಂತೆ ನೈಜವಾಗಿರಬೇಕು. ಆಗ ಬದುಕು ಸುಂದರವಾಗುತ್ತದೆ; ಬಂಧುರವಾಗುತ್ತದೆ.

ರಚನೆ: ಪೂಜ್ಯ ಶಿವಬಸವ ದೇವರು ಧಾರವಾಡ

ಶಿವಯೋಗಿ ಕುಮಾರಯೋಗಿ

ಬಂದೆನು ನಿನ್ನಡಿ ಶಿರಬಾಗಿ

ಸಮಾಜಯೋಗಿ ಸಂಜೀವಿನಿಯಾಗಿ || ೧ ||

ಸ್ವಾಮಿ ಸಂಕುಲ ನಿನ್ನಯ ಮಂದಿರ

ಸೇರಿದೆ ನಾನು ಕುಮಾರನ ಹಂದರ

ಮೂಡಿತು ಮನದಿ ಯೋಗದ ಡಂಗುರ

ಆಗಸದಲ್ಲಿ ಕುಮಾರನೇ ಚಂದಿರ || ೨ ||

ಜ್ಯೋತಿಯ ಬೆಳಗುವೆ ನಿನ್ನಯ ಪಾದಕೆ

ಸೇವೆಯ ಮಾಡುವೆ ಬದುಕಿನ ಪುಣ್ಯಕೆ

ತೋರಿಸು ಜ್ಞಾನವ ಅರಿಯದ ಮನಕೆ

ನಿನ್ನಯ ನಾಮವು ನನ್ನಯ ಬಾಳಿಗೆ || ೩ ||

ಶಿವನೇ ನೀನು,  ಬಸವನೇ ನೀನು

ಸಮಾಜ ನೀನು, ಸ್ಮರಣೆಯು ನೀನು

ಭಾಗ್ಯವು ನೀನು ಭಕುತಿಯು ನೀನು

ಧ್ಯಾನವು ನೀನು ಹರಸು ನಮ್ಮನು || ೪ ||

ವರದಿ ನಿರೂಪಕರು.

ಪೂಜ್ಯ ಶಿವಬಸವ ದೇವರು ಧಾರವಾಡ

ಪೂಜ್ಯ ಅಡವೀಶ ದೇವರು ತಾರಿಹಾಳ

ಪೂಜ್ಯ ಆನಂದ ದೇವರು ಹುಣಶ್ಯಾಳ (ಚಿತ್ರಗಳ ಸಂಗ್ರಹ)

 

(ಸುಮಾರು ೪೦ ಸಾಧಕರು ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದವರು ಅನೇಕ ಮಠಗಳಿಗೆ ಉತ್ತರಾಧಿಕಾರಿಗಳಾದವರು, ಹಾಗೂ ಪಟ್ಟಾಧಿಕಾರಿಗಳಾದವರು  ಎಲ್ಲರೂ ಸೇರಿಕೊಂಡು 5 ದಿವಸ ಶಿವಯೋಗ  ಮಂದಿರದಲ್ಲಿ ಇದ್ದುಕೊಂಡು ಗೋಶಾಲೆ ಸ್ವಚ್ಛತೆ ,ಎಲ್ಲ ಗೋಡೆಗಳಿಗೂ ಬಣ್ಣ ಹಚ್ಚುದ ಕೆಲಸ, ನದಿಯ ಪಕ್ಕದಲ್ಲಿರುವ ಸ್ವಚ್ಛತೆ, ಭಸ್ಮ ತಯಾರಿಸುವ ಕಟ್ಟಡದ ಸ್ವಚ್ಛತೆ , ಬಣ್ಣ ಹಚ್ಚುವ ಕೆಲಸ ಜೊತೆಗೆ ಗುರು ಕುಮಾರೇಶ್ವರ ಗದ್ದುಗೆ ಸ್ವಚ್ಛತೆ ಮತ್ತು  ವಾಟರ್ ಫ್ರೆಶರ್‌ ಮಶಿನ್ ಕೊಡುಗೆಯ ಸೇವೆ ಮಾಡಿದ ಯುವ ಯತಿಗಳ ಸೇವೆ ಅನನ್ಯವಾದುದು.

”ಶ್ರೀಕುಮಾರ ತರಂಗಿಣಿ” ಬ್ಲಾಗ್‌ ವರದಿ ರೂಪದಲ್ಲಿ ಪ್ರಕಟಿಸಲು ಹಲವು ಬಾರಿ ಕೇಳಿಕೊಂಡರೂ ಬಹಳ ಸಂಕೋಚಪಟ್ಟುಕೊಂಡ ಯುವಯತಿಗಳ ಪ್ರಚಾರಪ್ರಿಯವಲ್ಲದ ಅನುಪಮ ಸೇವೆ ಮುಂದಿನ ತಲೆಮಾರಿನ ಯುವ ಯತಿಗಳಿಗೆ ದಿಕ್ಸೂಚಿಯಾಗಲೆಂಬ ಒಂದೇ ಒಂದು ಆಶಯದೊಂದಿಗೆ ಒತ್ತಾಯಪೂರ್ವಕ ಈ ವರದಿಯನ್ನು ಸಿದ್ದಪಡಿಸಲಾಗಿದೆ.

ಈ ಸೇವೆಯ ಉದ್ದೇಶವೇನು ಎಂದು ಕೇಳಿದಾಗ ,ಸಾಧಕರ ಈ ಪ್ರಾಮಾಣಿಕ ಮತ್ತು ಪ್ರಾಂಜಲ ಅಂತರಾಳದ ನುಡಿಗಳು ಹೀಗೆ ವ್ಯಕ್ತವಾಗಿವೆ

“ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಸಂಪಾದಕ-”ಶ್ರೀಕುಮಾರ ತರಂಗಿಣಿ” ಬ್ಲಾಗ್‌)

ಸಮಾಜ ಸೇವಾ ದೀಕ್ಷೆ ತೊಟ್ಟಿರುವ ಅಧ್ಯಾತ್ಮ  ಸಾಧಕರಿಗೆ ಒಂದು ಸೇವಾ  ಕಲ್ಪನೆ ಮೂಡಿತು.ಅದು ಎಲ್ಲ ಸಾಧಕರ  ಮನಸ್ಸಿನಲ್ಲಿ  ವಿಚಾರವಾಗಿ ತೋರಿದಾಗ ಅದನ್ನು ಎಲ್ಲ ಮರೀದೇವರುಗಳು ಮನಸಾ ಪೂರ್ವಕವಾಗಿ ಒಪ್ಪಿಕೊಂಡರು. ಆ ಸೇವಾ ತೃಪ್ತಿ ಕಾಯಕವೇ ಪರಮಪೂಜ್ಯ ಶ್ರೀ ಹಾನಗಲ್ಲ ಗುರು ಕುಮಾರೇಶನ ಶಿವಯೋಗ ತಾಣ  ಶಿವಯೋಗ ಮಂದಿರ. ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪ ದಿನಗಳವರೆಗೆ ಸೇವೆ ಮಾಡುವುದಾಗಿ  ನಿರ್ಣಯ ಮಾಡಲಾಯತು.

ಗುರು ಕುಮಾರ ಶಿವಯೋಗಿಗಳು   ಪರಿಸರ ಪ್ರೇಮಿಗಳು ಹಾಗೂ  ಕೃಷಿ ಆಸಕ್ತಿ  ಪ್ರೇರಣಾದಾಯಕರು, ತತ್ ಕಾರಣ ಎಲ್ಲ ಸಾಧಕರು 2022 ರ ಆಷಾಢ ಮಾಸದಲ್ಲಿ  ಶಿವಯೋಗ ಮಂದಿರದಲ್ಲಿ ಸುಮಾರು ಒಂದು ಸಾವಿರ (1000) ಸಸಿ ನೆಡುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು. ಸಸಿಗಳನ್ನ ನೆಟ್ಟೆವು.

ಅದೇ ರೀತಿಯಾಗಿ ಈ ವರ್ಷದ 2023 ರ ಆಷಾಢ ಮಾಸದ ಸೇವಾ ಕೈಂಕರ್ಯ.

ಶ್ರೀ ಶಿವಯೋಗ ಮಂದಿರದಲ್ಲಿ ಶತಮಾನದ ಹಿಂದೆ ಸ್ಥಾಪಿಸಿದ.ಸುಮಾರು 500ಕ್ಕೂ ಹೆಚ್ಚು ದೇಶಿ ಹಸುಗಳನ್ನು  ಪಾಲನೆ ಮಾಡಿರುವ  ಗೋಶಾಲೆ ಅಲ್ಲಿನ ಪ್ರಕೃತಿ  ವೈಭವಕ್ಕೆ ಸಾಕ್ಷಿಯಾಗಿದೆ .

ಆ ಗೋಶಾಲೆ ಸ್ವಚ್ಛಗೊಳಿಸುವುದು ಮೊದಲ ಸೇವಾ ಕಾಯಕವಾಯಿತು. ಜೊತೆಗೆ ಎಲ್ಲ ಗೋಶಾಲೆಗಳ ಗೋಡೆಗಳಿಗೆ ಹಾಗೂ ಕಂಬಗಳಿಗೆ ಬಣ್ಣ ಲೇಪನ ಮಾಡುವ  ಕೆಲಸವನ್ನು ಸ್ವತಃ ಎಲ್ಲ ಸಾಧಕರೇ ಮಾಡಿದರು. ಅದೊಂದು  ಸಾಧಕರ ಆತ್ಮ ತೃಪ್ತಿ ಸೇವೆ ಎಂದಿನಿಸಿತ್ತು.

ಹಸುಗಳಿಂದ ದೊರೆತ ಪವಿತ್ರ ಗೋಮಯದಿಂದ (ಸಗಣಿ)  ತಯಾರಾಗುವ ಶುದ್ಧ ಭಸ್ಮ ತಯಾರಿಕಾ ಕೇಂದ್ರವನ್ನು ನಾವು ಶಿವಯೋಗ ಮಂದಿರದಲ್ಲಿ ನೋಡಬಹುದು. ಆ ಭಸ್ಮ ತಯಾರಿಕ ಕೇಂದ್ರ ಕಟ್ಟಡದ  ಗೋಡೆಗಳಿಗೂ ಬಣ್ಣ ಲೇಪನ ಮಾಡುವ ಸೇವೆ ನಮ್ಮ ಸಾಧಕರಾದ್ದಾಗಿತ್ತು.

ಶಿವಯೋಗ ಮಂದಿರದಲ್ಲಿ ಉಳಿದ ಎಲ್ಲ ಕೆಲಸಗಳನ್ನು ಮಾಡುವುದಾಗಿ ನಿರ್ಣಯಿಸಿದೆವು.

ಸೇವಾ ಕಾರ್ಯಕ್ಕೆ ಬೇಕಾದ ಎಲ್ಲ ಹೊಸ ಸಾಮಗ್ರಿಗಳನ್ನು ಸಾಧಕರು  ನೀಡಿರುವಂತಹ ಹಣದಿಂದ ಕೊಂಡು ತರಲಾಯಿತು.

ಎಲ್ಲ ಸಾಧಕರು ತಮ್ಮ ವಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಒಂದು ವಾರ ಶಿವಯೋಗಮಂದಿರದಲ್ಲಿ ಇದ್ದುಕೊಂಡು ಸೇವೆ ಮಾಡುವುದು ಎಂದು ನಿರ್ಣಯಿಸಿ ಸೇವೆ ಸಲ್ಲಿಸಿದರು.

ಸಾಧಕರ ಸೇವೆಯ ಹಿನ್ನಲೆ

ಹಿಂದಿನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಸೇವೆ ಮಾಡುವುದು ಒಂದು ಪ್ರತಿತಿ ಇದೆ ಸೇವೆ ಎಂದರೆ ಪೂಜಿಸು ಎಂದರ್ಥ ಪೂಜಿಸು ಎಂದರೆ ಗಂಧ ಅಕ್ಷತೆ ದೂಪದೀಪಾರತಿಗಳಿಂದ ಪೂಜಿಸುವದಷ್ಟೇ ಅಲ್ಲ..

ತಂದೆ ತಾಯಿಯನ್ನು ಮಕ್ಕಳಂತೆ ಉಪಚರಿಸುವುದು, ಭಕ್ತಿಯಿಂದ ಗುರು ಸೇವೆ ಮಾಡುವುದು ಮತ್ತು ಮೂಕ ಪ್ರಾಣಿಗಳನ್ನು ಉಪಚರಿಸುವುದು  ಒಂದು ಪುಣ್ಯದ ಕೆಲಸವೇ.

ರಾಮಾಯಣದಲ್ಲಿ ರಾಮನ ಅಜ್ಜ ದಿಲೀಪ ಮಹಾರಾಜನು ಕೂಡ ಗೋಸೇವೆಯನ್ನು ಮಾಡಿ ಸದ್ಗತಿ ಹೊಂದಿದ್ದನ್ನು ನೋಡಬಹುದು. ಸೇವೆ ಮಾಡುವುದು ಎಂದರೆ ಏನನ್ನು ಅಪೇಕ್ಷೆ ಪಡದೆ ನಿಸ್ವಾರ್ಥವಾಗಿ ಉಪಚರಿಸುವುದೇ ಸೇವೆ.ಸೇವೆ  ಮಾಡುವುದರಿಂದ ತನುಮನ ಶುದ್ಧಗೊಳ್ಳುವವು.

ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಕುಮಾರೇಶ್ವರ ಸೇವೆಯು ಪುಣ್ಯ ಪವಿತ್ರವಾದದ್ದು. ಶ್ರೀ ಶಿವಯೋಗ ಮಂದಿರಕ್ಕೆ ಸುಮಾರು 40  ಸಾಧಕರು ಸೇವೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದರು ಸೇವೆ ಮಾಡಲು ಬಂದಿರುವ ಸಾಧಕರಲ್ಲಿ ಸೇವೆಯ ಉತ್ಸಾಹ, ಸಂತೋಷ  ಎದ್ದು ಕಾಣುತ್ತಿತ್ತು.

ಲಿಂ.ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಕನಸಿನ ಶ್ರೀ ಮದ್ವಿರಶೈವ ಶಿವಯೋಗ ಮಂದಿರ 1909 ರಲ್ಲಿ ನಾಡಿನ ಹಲವು ಮಹಾತ್ಮರ ಸಾಕ್ಷಿ ಸಾನಿಧ್ಯದಲ್ಲಿ ಶಿವಯೋಗಿಗಳ ಅಮೃತ ಹಸ್ತದಿಂದ ಸ್ಥಾಪಿಸಲಾಯಿತು.

ಶಿವಯೋಗ ಮಂದಿರದ ಗೋಶಾಲೆ ಮತ್ತು ಪೂಜ್ಯ ಯಳಂದೂರು ಬಸವಲಿಂಗ ಮಹಾಶಿವಯೋಗಿಗಳ ಗೋಶಾಲೆ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡೆವು,ಗೋವುಗಳನ್ನು ಕಾಳಜಿಯಿಂದ,ಪ್ರೀತಿಯಿಂದ ಮುದ್ದಿಸುವುದು ಸಾಧಕರಾದಂತಹ ನಮಗೆಲ್ಲ ಒಂದು ಸವಿನೆನಪು. ಗೋಶಾಲೆಯ ಗೋವುಗಳು ಮೇಯಲು ಹೊರಗಡೆ ಹೋದಮೇಲೆ ಗೋಶಾಲೆಯಲ್ಲಿರುವಂತಹ ಸಗಣಿಯನ್ನು ಒಂದು ಕಡೆ ಗೂಡಿಸಿ ಅದನ್ನು ಭಸ್ಮ ತಯಾರಿಕಾ ಕೇಂದ್ರಕ್ಕೆ ಕಳಿಸಿಕೊಟ್ಟೆವು ತದನಂತರ ಸಾಧಕರಿಂದ ಕೊಡುಗೆಯಾಗಿ ತೆಗೆದುಕೊಂಡು ಬಂದಿರುವಂತಹ ಸುಮಾರು 48000 ರೂ ವೆಚ್ಚದ ಫ್ರೆಶರ್ ಕ್ಲಿನಿಂಗ ಮಷೀನ್ ಮೂಲಕ ಗಟ್ಟಿಯಾದಂತಹ ಸಗಣಿ ಮತ್ತು ಗೋಶಾಲೆಯನ್ನು ಶುಚಿಗೋಳಸಿ ಔಷದ ಉಪಕರಣಗಳಿಂದ ಗೋಶಾಲೆಯಲ್ಲಿ ಹುಳಗಳು ಆಗದಂತೆ ಗೋಶಾಲೆಯನ್ನು ಶುಚಿ ಗೊಳಿಸಿದೆವು.

  ಕುಮಾರೇಶ್ವರ ಶ್ರೀ ಗದ್ದುಗೆಯ ಗೋಡೆಗಳು ಹಾಗೂ ಸದಾಶಿವ ಮಹಾಸ್ವಾಮಿಗಳ ಗದ್ದುಗೆಯ ಭವನದ ಶಿಲಾಮಂಟಪವನ್ನು ಸ್ವಚ್ಛಗೊಳಿಸಿದೆವು. ಕಲ್ಲುಗಳಿಗೆ ಅಂಟಿಕೊಂಡಿರುವಂತಹ ಕಪ್ಪು ಕಲೆ ಮತ್ತು ಪಾಚಿಯನ್ನು ಸ್ವಚ್ಛಗೊಳಿಸಿದೆವು.

ವಿಶೇಷವಾಗಿ ಎಲ್ಲ ಸಾಧಕರು ತಮ್ಮ ಶ್ರೀ ಮಠಗಳ ಗ್ರಾಮದಿಂದ ಭಕ್ತಜನರನ್ನು ಕರೆದುಕೊಂಡು ಬಂದು ಒಂದು ಪೂರ್ಣ ದಿನದ ಸೇವೆಯನ್ನು ಭಕ್ತರಿಂದ ಸೇವೆ ಸಲ್ಲಿಸಲಾಯಿತು.

ತೋಟಗಳ ಸ್ವಚ್ಛತೆ ನದಿ ದಡದಲ್ಲಿ ಬಿದ್ದಿರುವ ಹೂಳು ತೆಗಿಸುವ ಸೇವೆ,ಗೋಶಾಲೆ ಗೋಡೆಗಳಿಗೆ ಬಣ್ಣ ಲೇಪಿಸುವ ಕೆಲಸ ಇನ್ನಿತರ  ಕೆಲಸಗಳನ್ನ  ಭಕ್ತರು ಶ್ರದ್ಧೆಯಿಂದ, ಭಕ್ತಿಯಿಂದ  ಮಾಡಿದರು.

ಭಕ್ತರ ಒಂದು ದಿನದ ಕುಮಾರೇಶ್ವರ ಸೇವೆಯು ಬಹಳ ಭಕ್ತಿ ಭಾವದಿಂದ ನೆರವೇರಿತು.

ಸೇವಾರ್ಥಿಗಳಿಗೆ  ಶಿವಯೋಗ ಮಂದಿರ ವತಿಯಿಂದ ಭಸ್ಮ ರುದ್ರಾಕ್ಷಿ ಹಾಗೂ ಕುಮಾರೇಶ್ವರ ಭಾವಚಿತ್ರವನ್ನು ಆಶೀರ್ವಾದ ರೂಪದಲ್ಲಿ ನೀಡಲಾಯಿತು.

ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷರಾದ ಹಾವೇರಿಯ ಪೂಜ್ಯ ಸದಾಶಿವ ಸ್ವಾಮಿಗಳವರ ಪರವಾನಿಗೆ ಪಡೆದು ಎಲ್ಲ ಸೇವೆ ಸಲ್ಲಿಸಲಾಯಿತು.

 ಶಿವಯೋಗ ಮಂದಿರದ   ಮಡಿಲಿನಲ್ಲಿ ಬೆಳೆದಂತಹ ನಮಗೆಲ್ಲ ಶ್ರೀ  ಕುಮಾರ ಶಿವಯೋಗಿಗಳ ಶಿವಯೋಗತಾಣದ  ಸೇವೆ ಮಾಡುವುದೇ  ಪುಣ್ಯ.ನಮ್ಮ ಜೀವನವೇ ಧನ್ಯ.

ಕುಮಾರೇಶನ ಸೇವೆ ನಮ್ಮ ಬದುಕಿನುದ್ದಕ್ಕೂ  ಮಾಡಿದರು ಸಾಕೇನಿಸದು.ಕುಮಾರೇಶನ ಸೇವೆ ಅದು ಸಾಮಾಜದ ಸೇವೆ ಅದು ಸ್ವಾಮಿ ಸಂಕುಲದ ಏಳಿಗೆ.ಸಮಾಜ ಸೇವಾ ದೀಕ್ಷಾ ತೊಟ್ಟಿರುವ ನಮಗೆ  ಕುಮಾರೇಶನೆ ದಾರಿ ದೀಪ.

ಶಿವಯೋಗ ಮಂದಿರದಲ್ಲಿ ಪ್ರತಿ ನಿತ್ಯ ಮಾಡುವ ಸೇವಾ ಕಾಯಕದಲ್ಲಿ ಒಂದು ವಾರ ನಾವು ಸೇವಾ ಕಾಯಕಕ್ಕೆ ಸಾಕ್ಷಿ  ಆದೆವು

ಗುರುಮಾರೇಶ್ವರ ವಾಣಿ:

ಸ್ವಾಮಿ ಎಂದರೆ.. ಒಡೆಯನಲ್ಲ ಸಮಾಜದ ನಿಷ್ಠಾವಂತ ಸೇವಕ…

ಇಡೀ ಸಮಾಜಕ್ಕೆ  ಗುರುಕುಮಾರೇಶ್ವರ ಸಮಾಜ ಶಕ್ತಿ

🌹 ಸಾಧಕರ ಸಮಾಜ ಸೇವಾ ಸಂಕಲ್ಪ ಯಾತ್ರ🌹

ಲೇಖಕ: ಶ್ರೀಕಂಠ.ಚೌಕೀಮಠ

ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

೨೦೦೭ರಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ಬಸವಣ್ಣನವರ ಕುರಿತು ಒಂದು ವಿವಾದಾತ್ಮಕ ಪುಸ್ತಕ “ಆನುದೇವಾ ಹೊರಗಣದವನು” ಪ್ರಕಟಣೆಯ ವಿರುದ್ದ ಹೋರಾಟದಲ್ಲಿ ಭಾಗಿಯಾಗಿದ್ದೆ. ನಾನು ಬರೆದ ಒಂದು ಲೇಖನ “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಲೇಖನದಲ್ಲಿ ನಾನು ತೋಡಿಕೊಂಡ ಅಳಲು ಮತ್ತು ಬಹಿರಂಗದ ಅಕ್ರೋಶಗಳನ್ನು  ಓದಿದವರೆಲ್ಲ ಆ ಲೇಖನದ ಪರ-ವಿರೋದದ ನಿಲುವು ವ್ಯಕ್ತಪಡಿಸಿ ಪ್ರತಿಕ್ರಿಯಿಸಿದರು .ಆ ಸಂದರ್ಭದಲ್ಲಿ ಬಸವಸಮಿತಿಯ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಶ್ರೀಕಲ್ಯಾಣಶೆಟ್ಟರು ನನಗೆ ದೂರವಾಣಿ ಕರೆಮಾಡಿ ನನ್ನ ಲೇಖನಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿ ನನ್ನ ಪೂರ್ವಾಪೂರ್ವಗಳನ್ನು ವಿಚಾರಿಸಿದರು.ಮಾತಿನ ಮಧ್ಯದಲ್ಲಿ ನಾನು ಬಾಗಲಕೋಟ ತಾಲೂಕಿನ ಹಳ್ಳೂರು ಗ್ರಾಮದವನು ಎಂದು ಹೇಳಿದಾಗ ಅವರು ತಕ್ಷಣ ಗುರುಲಿಂಗಯ್ಯಾ ಚೌಕೀಮಠ ನಿಮಗೇನಾಬೇಕು ಅಂದರು.ಆಶ್ಚರ್ಯಗೊಂಡೆ, ನಾನು ಅವರ ಮಗ ಎಂದು ಹೇಳಿದಕೂಡಲೇ ಬಹಳ ಸಂತೋಷಪಟ್ಟರು ಅವರಿಬ್ಬರೂ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದವರು ಮತ್ತು ಇಬ್ಬರೂ ಹಾಕಿ ಮತ್ತು ಫೂಟ್ಬಾಲ್‌ ಕ್ರೀಡೆಗಳನ್ನು ಕೂಡಿ ಆಡಿದವರಾಗಿದ್ದರು. ಅವರಿಬ್ಬರ ನಡುವೆ ದೂರವಾಣಿ ಸಂಪರ್ಕವನ್ನು ಮಾಡಿಕೊಟ್ಟಾಗ ತಾಸಿಗೂ ಹೆಚ್ಚು ಮಾತನಾಡಿಕೊಂಡಿದ್ದು ಮತ್ತು ಅವರೀರ್ವರ ಬಾಲ್ಯ ಜೀವನವನ್ನು ಮೆಲಕು ಹಾಕಿದ್ದು ನನ್ನ ಕಣ್ಣೆದುರು ಈಗಲೂ ಹಚ್ಚ ಹಸಿರಾಗಿದೆ.

ಈ ಪರಿಚಯದ ನಂತರ ಶ್ರೀಕಲ್ಯಾಣಶೆಟ್ಟರು ನನಗೆ ಬಹಳ ಆತ್ಮೀಯರಾದರು ಮತ್ತು ನಾನು ಕಂಡಾಗಲೆಲ್ಲ ನನ್ನನ್ನು ಅತ್ಯಂತ ಅಂತಃಕರುಣದಿಂದ ಮತ್ತು ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದ ಎದರು ಅವ್ಯಾಹತವಾಗಿ ವಿವಾದಿತ ಪುಸ್ತಕದ ವಿರುದ್ಧದ ಪ್ರತಿಭಟನೆಯಲ್ಲಿ ಯಾವಾಗಲೂ ತಮ್ಮ ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದರು.ಒಂದು ದಿನ ನನ್ನನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ವಿವಾದಿತ ಪುಸ್ತಕ ಕುರಿತಾದ ಚರ್ಚೆಗೆ ಕರೆದೊಯ್ದಿದ್ದರು. ಆ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕ.ಸಾ.ಪ ಅಂದಿನ ಅಧ್ಯಕ್ಷರೂ ಹಾಗು ಬಂಡಾಯ ಸಾಹಿತಿಗಳಾದ ಶ್ರೀ.ಚಂಪಾ (ಡಾ. ಚಂದ್ರಶೇಖರ ಪಾಟೀಲ) ಅವರು ಮಾತಿನಮಧ್ಯದಲ್ಲಿ ನಾನು ಬರೆದ ವಿಜಯಕರ್ನಾಟಕ ಪತ್ರಿಕೆಯ ಲೇಖನವನ್ನು ಉಲ್ಲೇಖಿಸಿ ಟೀಕೆಮಾಡಿದರು, ಯಾವನೋ ಒಬ್ಬ ಒಂದು ಲೇಖನ ಬರೆದು ಪತ್ರಿಕೆಯಲ್ಲಿ ಬರೆದರೆ ಅದನ್ನು ಸಮಾಜದ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವದಿಲ್ಲ.ಅಂತಹ ಲೇಖನಗಳನ್ನು ಕಸದತೊಟ್ಟಿಗೆ ಬೀಸಾಕಬೇಕು ಎಂದು ವೀರಾವೇಷದಿಂದ ಮಾತನಾಡತೊಡಗಿದರು. ಶ್ರೀಕಲ್ಯಾಣಶೆಟ್ಟರು ತಕ್ಷಣ ಎದ್ದು ನಿಂತು ಚಂಪಾ ಮಾತಿಗೆ ಪ್ರತಿರೋಧವ್ಯಕ್ತಪಡಿಸಿ “ಆ ಲೇಖನಾ ಬರದ ಹುಡುಗ ನನ್ನ ಜೊತಿ ಕುಂತಾನ,ಚರ್ಚೆ ಮಾಡೂದಿದ್ರ ಆರೋಗ್ಯಪೂರ್ಣ ಚರ್ಚಾ ಮಾಡ್ರಿ,ಇಲ್ಲದಿದ್ರ ನಿಲ್ಲಿಸಿರಿ” ಅಂದರು ಅವರು ಹಾಗೆ ಅಂದದ್ದೇ ತಡ ಚರ್ಚೆಯಲ್ಲಿ ಭಾಗವಹಿಸಿದ ಬಸವದಳದ ಶ್ರೀ ದಯಾನಂದಸ್ವಾಮಿಗಳು ವೇದಿಕೆಯತ್ತ ನುಗ್ಗಿ ಕಾಗದಗಳನ್ನು ಹರಿದು ಚಂಪಾ ಅವರ ಮೇಲೆ ತೂರಿ ಪ್ರತಿಭಟಿಸಿದರು.ಸಭೆ ನಿಂತು ಗದ್ದಲ ಶುರುವಾಯಿತು. ತಳ್ಳಾಟ ಮತ್ತು ನೂಕಾಟಗಳ ಸುದ್ದಿತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಚಾಮರಾಜಪೇಟೆಯ ಪೋಲಿಸರು ಗದ್ದಲ ನಿಲ್ಲಿಸಲು ಕ್ರಮಕೈಗೊಂಡರು.ನಿವೃತ್‌ ಪೋಲಿಸ್‌ ವರಿಷ್ಠಾಧಿಕಾರಿಗಳಾಗಿದ್ದ ಶ್ರೀಕಲ್ಯಾಣಶೆಟ್ಟರು ಪೋಲಿಸ್‌ ಜೀಪಿನಲ್ಲಿ ನನ್ನನ್ನು ವಸಂತನಗರದ ತಮ್ಮ ಮನೆಗೆ ಕರೆದೊಯ್ದರು.

ಅನೀರಿಕ್ಷಿತ ಗದ್ದಲಕ್ಕೆ ನಾನು ಬಳಲಿಕೊಂಡಿದ್ದೆ, ಶ್ರೀಕಲ್ಯಾಣಶೆಟ್ಟರು ನನಗೆ ಧೈರ್ಯತುಂಬಿ ಮುಖ ತೊಳಿಸಿ ವಿಭೂತಿ ಹಚ್ಚಿಕೊಳ್ಳಲು ನನ್ನನ್ನು ತಮ್ಮ ದೇವರಕೋಣೆಗೆ ಕರೆದೊಯ್ದರು. ದೇವರಕೋಣೆಯಲ್ಲಿ  ಅವರು ನಿತ್ಯಪೂಜಿಸುತ್ತಿದ್ದ ನನ್ನ ಆರಾಧ್ಯದೈವ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ ನನ್ನ ಗಮನ ಸೆಳೆಯಿತು.ಅಲ್ಲಿಯವರೆಗೆ ನಾನು ನೋಡಿದ ಗುರುಗಳ ಚಿತ್ರಗಳು ವಿವಿದ ಕಲಾವಿದರು ಚಿತ್ರಿಸಿದ ಚಿತ್ರಗಳಾಗಿದ್ದವು.ಆದರೆ ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಗುರುಗಳ ಭಾವಚಿತ್ರ ವಿಭಿನ್ನವಾಗಿತ್ತು ಮತ್ತು ನೈಜವಾಗಿತ್ತು.ನೋಡಿದಷ್ಟೂ ಮತ್ತೆ ನೋಡಿಸಿಕೊಳ್ಳುವ ಚಿತ್ರವನ್ನು ಕಣ್ತುಂಬಿಸಿಕೊಂಡು ಚಿತ್ರದ ವಿಶೇಷತೆಯ ಕುರಿತು ಶ್ರೀಕಲ್ಯಾಣಶೆಟ್ಟರಲ್ಲಿ ಪ್ರಶ್ನಿಸಿದೆ.

(ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ)

 ಅಲ್ಲಿಯವರೆಗೆ ಆತಂಕಕ್ಕೆ ಒಳಗಾಗಿದ್ದ ನನ್ನನ್ನು ಸಂತೈಸಿದ್ದ ಶ್ರೀಕಲ್ಯಾಣಶೆಟ್ಟರು ನನ್ನ ಪ್ರಶ್ನೆಗೆ ಭಾವೊದ್ವೇಗಕ್ಕೊಳಗಾದರು.ಅವರ ಕಣ್ಣಂಚುಗಳು ಮಿಂಚತೊಡಗಿದವು. “೧೯೨೭ ರಲ್ಲಿ ನಾನು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ನನ್ನನ್ನು ನನ್ನ ತಂದೆ ಶ್ರೀ ಸಿದ್ದರಾಮಪ್ಪ ಮಮದಾಪೂರ ಅವರು ನನ್ನೂರು ಬದಾಮಿಯ ಶಾಖಾ ಶಿವಯೋಗಮಂದಿರಕ್ಕೆ ದಯಮಾಡಿಸಿದ್ದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ, ಹಸುಗೂಸು ನನ್ನನ್ನು ಪೂಜ್ಯ ಕುಮಾರ ಶಿವಯೋಗಿಗಳು ಎತ್ತಿಕೊಂಡು ಅವರ ಲಿಂಗದಹಸ್ತವನ್ನು ನನ್ನ ಮಸ್ತಕದ ಮೇಲಿಟ್ಟು ಆಶಿರ್ವದಿಸಿದ್ದನ್ನು ನನ್ನ ತಂದೆ ಯಾವಗಲೂ ಹೇಳುತ್ತಿದ್ದರು” ಎಂದು ಹೇಳುತ್ತ ತಮ್ಮ ಎರಡೂ ಕೈಗಳನ್ನು ಕೂಡಿಸಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು. ಕೈಮುಗಿದ ಅವರ ಎರಡೂ ಹಸ್ತಗಳನ್ನು ನನ್ನ ಹಣೆಗೆ ಹಚ್ಚಿಕೊಂಡೆ !. ಕಾರುಣಿಕ ಯುಗಪುರುಷ,ಸಮಾಜ ಸಂಜೀವಿನಿಯಾದ,ವಿಭೂತಿಪುರುಷರ ಪರುಷಹಸ್ತದ ಸ್ಪರ್ಷಆಶೀರ್ವಾದದವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರು ಭಾಗ್ಯಶಾಲಿಗಳೂ,ಪುಣ್ಯವಂತರೂ ಆಗಿದ್ದರು.

ದೆಹಲಿಯ ನಿವೃತ್‌ ಹಿರಿಯ ಕಮಾಂಡ್ಯಂಟ.(ಸಿ.ಆರ್.ಪಿ.ಎಫ್.)‌ , ಮಾಜಿ ಗ್ರುಪ್‌ ಕಮಾಂಡರ್.ಎನ್.ಎಸ್.ಜಿ.(ಬ್ಲ್ಯಾಕ್‌ ಕ್ಯಾಟ್ಸ) ಹಾಗು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತ್ವರಿತ ನ್ಯಾಯಾಲಯದ ನಿವೃತ್‌ ನಾಯಾಧೀಶರಾದ

ಶ್ರೀ.ಬಿ,ಎಸ್.ಕಲ್ಲೂರ ಅವರು ವರ್ಣಿಸಿದಂತೆ “ಶ್ರೀಕಲ್ಯಾಣಶೆಟ್ಟರದು ಕಟ್ಟುಮಸ್ತಾದ ಶರೀರದ ಆಕರ್ಷಕ ವ್ಯಕಿತ್ವವುಳ್ಳವರಾಗಿದ್ದವರು ೧೯೫೦ರ ದಶಕದಲ್ಲಿ ಅವರ ತಂದೆಯವರಾದ ಶ್ರೀ ಎಸ್.ಜಿ.ಕಲ್ಲೂರ ಅವರು ಬೆಳಗಾವಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡ್ ಆಗಿದ್ದ ಸಂಧರ್ಭದಲ್ಲಿ ಬಾಂಬೆ ಪೋಲಿಸ್‌ ಇಲಾಖೆಯಲ್ಲಿ ಸಬ್‌ ಇನೆಸ್ಪೆಕ್ಟರ್‌ ಆಗಿದ್ದ ಶ್ರೀಕಲ್ಯಾಣಶೆಟ್ಟರು,ಶ್ರೀ ನಾಗನೂರ ಮತ್ತು ಶ್ರೀ ಹಸಬಿಯವರು ಶ್ರೀ.ಬಿ,ಎಸ್.ಕಲ್ಲೂರ ಅವರ ಮನೆಗೆ ಬರುತ್ತಿದ್ದರಂತೆ ಶ್ರೀ ಕಲ್ಲೂರ ಅವರು ಶ್ರೀಕಲ್ಯಾಣಶೆಟ್ಟರನ್ನು “ಕಾಕಾ” ಎಂದು ಸಂಬೋಧಿಸುತ್ತಿದ್ದನ್ನು,ಹಾಗು ಶ್ರೀಕಲ್ಯಾಣಶೆಟ್ಟರು ಕಲ್ಲೂರು ಅವರಿಗೆ ವ್ಯಾಯಾಮಗಳ ಬಗ್ಗೆ ಸಲಹೆ ಕೊಡುತ್ತಿದ್ದನ್ನು ಶ್ರೀ ಕಲ್ಲೂರು ಅವರು ತುಂಬ ಆತ್ಮೀಯವಾಗಿ  ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಶ್ರೀಕಲ್ಯಾಣಶೆಟ್ಟರು ಧರಿಸುತ್ತಿದ್ದ ಪೋಲಿಸ್‌ ಹ್ಯಾಟ್‌ ಆಕರ್ಷಕವಾಗಿಯೂ ಮತ್ತು ಬೇರೆಯವರಿಗಿಂತ ಭಿನ್ನವಾಗಿಯೂ ಇರುತ್ತಿತ್ತು ಎಂದು ಜ್ಷಾಪಿಸಿಕೊಳ್ಳುತ್ತಾರೆ.

ರಾಷ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದಿದ್ದ ಶ್ರೀಕಲ್ಯಾಣಶೆಟ್ಟರು ಬಾಂಬೆ ಪೋಲಿಸ್‌ ಇಲಾಖೆ,ಮೈಸೂರು ಪೋಲಿಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಪೊಲೀಸ್ ತರಬೇತಿ ಕೇಂದ್ರ ಕೆ.ಎಸ್.ಪಿ.ಟಿ.ಎಸ್, ಚನ್ನಪಟ್ಟಣದ ಪ್ರಾಂಶುಪಾಲರಾಗಿ,ಆಯ್.ಪಿ.ಎಸ್.‌ ಭಡ್ತಿ ಪಡೆದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿಗಳಾಗಿ ೧೯೮೫ ರಲ್ಲಿ ನಿವೃತ್ತಿ ಹೊಂದಿದರು.

ಕರ್ನಾಟಕದ ರಾಜ್ಯ ಸರಕಾರದ  ದಕ್ಷ ಆದಿಕಾರಿಗಳಾಗಿ ಸೇವೆಸಲ್ಲಿಸಿದ ನಂತರ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಕಲ್ಯಾಣಶೆಟ್ಟರು ೯೬ ವರ್ಷಗಳ ತುಂಬು ಜೀವನ ನಡೆಸಿ ೦೧ ಮಾರ್ಚ ೨೦೨೩ ರಂದು ಲಿಂಗೈಕ್ಯರಾಗುವ ಸಂಧರ್ಭವನ್ನು ನೆನಪಿಸಿಕೊಂಡ ಅವರ ಪುತ್ರ ಶ್ರೀ ಅಶೋಕ ಅವರು ಹೇಳಿದ್ದು ವಿಶೇಷ ವಾಗಿತ್ತು.

ಶ್ರೀಕಲ್ಯಾಣಶೆಟ್ಟರ ಧರ್ಮಪತ್ನಿಯವರು ಫೆ.೨೮, ೨೦೨೩ರಂದು ಲಿಂಗದೊಳಗಾದರಂತೆ ,ಅವರ ಅಂತ್ಯಕ್ರಿಯೆ ಸಂಧರ್ಭದಲ್ಲಿ ಶ್ರೀಕಲ್ಯಾಣಶೆಟ್ಟರು ನಿರ್ಲಿಪ್ತ ಭಾವವನ್ನು ಹೊಂದಿದ್ದರಂತೆ, “ಹೋದರಾ ?” ಎಂಬ ಒಂದೇ ಒಂದು ವಾಕ್ಯವನ್ನು ಹೇಳಿ ತಮ್ಮ ದೈನಿಂದಿನ ಚಟುವಟಿಕೆಯಲ್ಲಿದ್ದು ದಿ.೦೧ ಮಾರ್ಚ ೨೦೨೩ ರಂದು ಪುಣ್ಯದ ಸಾವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರನ್ನು ನಾನು ಕೊನೆಯದಾಗಿ ಮಾತನಾಡಿಸಿದ್ದು ೨೦೨೨ ಅಗಸ್ಟ ತಿಂಗಳಲ್ಲಿ. ನಾನು ಅವರನ್ನು ಭೇಟಿಯಾಗಬೇಕಿತ್ತು, ಆಗಲಿಲ್ಲ.

ಶ್ರೀಕಲ್ಯಾಣಶೆಟ್ಟರ ವಿವಾಹ ವಾರ್ಷಿಕೋತ್ಸವದ ವಜ್ರ ಮಹೋತ್ಸವದ ಚಿತ್ರ

“ ಅವರ ಧರ್ಮಪತ್ನಿಯ ಅಗಲಿಕೆಯಿಂದ ಸರ್‌ ಅವರು  ಮಾನಸಿಕವಾಗಿ ನೊಂದುಕೊಂಡಿದ್ದರೇ ?” ಎಂದು ಕೇಳಿದೆ.        ಶ್ರೀ ಅಶೋಕ ಅವರು ತುಂಬ ಮಾರ್ಮಿಕವಾದ ಉತ್ತರ ಕೊಟ್ಟರು “ ಧೀರ್ಘ ಇನ್ನಿಂಗ್ಸ ಆಡಿದ ಆಟಗಾರರಲ್ಲೊಬ್ಬ ಔಟಾದಾಗ, ಜೊತೆಯಾಟಗಾರನೂ ಫೆವಿಲಿಯನ್ನಗೆ ಹೋದಂತೆ “ , “ ನಮ್ಮ ತಂದೆ ಎಂದೂ ಮಾನಸಿಕವಾಗಿ ಕುಗ್ಗಿದವರಲ್ಲ ಅಂತಿಮ ಕ್ಷಣದವರೆಗೂ ಸದೃಡವಾಗಿದ್ದವರು” ಈ ಮಾತುಗಳನ್ನು ಕೇಳುತ್ತ ಆಕರ್ಷಕ ತೇಜಸ್ಸಿನಿಂದ ಕೂಡಿದ ಮಂದಸ್ಮಿತ ಅಂತಃಕರಣದ ಶ್ರೀಕಲ್ಯಾಣಶೆಟ್ಟರ ವ್ಯಕ್ತಿತ್ವ ಜೊತೆಗೆ  ಅಂದು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಆ ಹಸ್ತಗಳು ನನ್ನ ಕಣ್ಣೆದರು ಬಂದುನಿಂತವು.

ನಮ್ಮ ಸಂಬಂಧಗಳು, ಪೂರ್ವಜನ್ಮದ ಸಂಬಂಧಗಳೆಂಬ ಭಾವನೆ ನನ್ನಲ್ಲಿ ಮೂಡಿತು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಹುಲಿಯಾದರೂ ಹುಲಿಯ ತಿನ್ನುವದಿಲ್ಲ

ಇಲಿಯಾದರೂ ಇಲಿಯ ತಿನ್ನುವದಿಲ್ಲ

ಮಾನವನಾದ ನಾನು

ಮಾನವರ ಹಿಂಸಿಸಿ

ಅವರ ಸರ್ವಸ್ವ ವ ಭಕ್ಷಿಸುತ್ತಲಿದ್ದೇನೆ

ನಿಜ ಮಾನವತ್ವದ ಅರಿವು ನೀಡಿ

ರಕ್ಷಿಸೆನ್ನ

ಗುರುಕುಮಾರ

ಪಂಚಾಕ್ಷರೇಶ್ವರ

* ರಚನೆ ಪೂಜ್ಯ ಪುಟ್ಟರಾಜ ಗವಾಯಿಗಳು

ಕೃಪೆ: ಶ್ರೀಎಸ್. ಸ್ವಾಮಿ  ಜಂಗಮ ಯೋಗಧಾಮ (ಶರಣರ ಬಳಗ)

ಸಂಗೀತ ಗಾಯನ  ಕೃಪೆ :ಶ್ರೀ ಎಸ್. ಎಸ್. ಪಾಟೀಲ ಮಾಜಿ ಸಚಿವರು.ಮುಂಡರಗಿ.

ಈ ವಚನದ ಸಾಲುಗಳು ,ಪರಮ ವಿರಕ್ತರು , ವಿರಾಗಿಗಳು ಮತ್ತು “ಸಮಾಜವೇ ತನ್ನ ಬಂಧು ಬಳಗ ವನ್ನು ಮಾಡಿಕೊಂಡಿದ್ದ

ಪೂಜ್ಯ ಪುಟ್ಟರಾಜ ಗವಾಯಿಗಳ ಲೇಖನಿಯಿಂದ ಹೇಗೆ ಮೂಡಿದವು? ಎಂಬ ಜಿಜ್ಞಾಸೆ ಗೆ ಒಳಗಾದೆ !.

ಸ್ವಾರ್ಥಿ ಮನುಷ್ಯತ್ವ ಒಂದು ವರ್ಗ

ಪೂಜ್ಯ ಪುಟ್ಟರಾಜ ಗವಾಯಿಗಳನ್ನು ನೋವಿಸಿದ್ದನ್ನು ,ಅವರು ಪಟ್ಟುಕೊಂಡ ಯಾತನೆಗಳನ್ನು 80ರ ದಶಕದಲ್ಲಿ ಪೂಜ್ಯರನ್ನು ಹತ್ತಿರದಿಂದ ಕಂಡಿದ್ದ ನನಗೆ ಕಣ್ಣೆದರು ಬಂದವು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ರಕ್ಷಣಾ ಗೋಡೆಯ ಪಕ್ಕದಲ್ಲಿದ್ದ ರೆಡ್ಡಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ನನ್ನ ಇಂಜಿನಿಯರಿಂಗ್ ಶಿಕ್ಷಣ ಆರಂಭಿಸಿದ್ದ ನಾನು  ಹಲವಾರು ಬಾರಿ ಪೂಜ್ಯ ಪಂಚಾಕ್ಷರಿ ಗವಾಯಿಗಳ ಕ್ರಿಯಾಸಮಾಧಿಯ ದರ್ಶನಕ್ಕೆ ಹೋದಾಗ  ಪೂಜ್ಯ ಪುಟ್ಟರಾಜ ಗವಾಯಿಗಳು ಆಶ್ರಮದ ಮಕ್ಕಳ ಉಪಹಾರಕ್ಕೆ ಪಡುತ್ತಿದ್ದ  ವ್ಯವಸ್ಥೆಯ ಹಿಂದಿನ ಕಷ್ಟದ ಅರಿವು ನನಗಿದೆ.ಅಕಸ್ಮಾತ್ ಪೂಜ್ಯರಿಗೆ ನಾನು ಬಂದದ್ದು ಗೊತ್ತಾದರೆ ಆ ಕಷ್ಟದ ವ್ಯವಸ್ಥೆಯಲ್ಲೂ ನನಗೆ ಪ್ರಸಾದ ನೀಡುತ್ತಿದ್ದ ಅಂಥಕರುಣೆಯ ವಾತ್ಸಲ್ಯ ನಾನು ಮರೆಯುವಂತಿಲ್ಲ. ಸೇವಕರಿಂದ ನನ್ನ ಎದೆಯ ಮೇಲೆ ಇಷ್ಟ ಲಿಂಗ ಕಟ್ಟಿಕೊಂಡಿರುವನೋ ಇಲ್ಲವೋ ಎಂಬ ಪರೀಕ್ಷೆಯಂತೂ ನನ್ನನ್ನು ಯಾವಾಗಲೂ ಎಚ್ಚರಗೊಳಿಸುತ್ತಲೇ ಇರುತ್ತದೆ.

ಈ ವಚನ, ಅವರಿಗಾದ ನೋವು ಅಪಮಾನಗಳನ್ನು ತಮ್ಮ ಮೇಲೆಯೇ ಹಾಕಿಕೊಂಡು ಬರೆದ ಸಾಲುಗಳು..

ಅವರೆಂದೂ ಯಾರನ್ನು ಹಿಂಸಿಸಲಿಲ್ಲ.

ಅವರು ಎಂದೂ ಯಾರ ಸರ್ವಸ್ವವನ್ನೂ ಭಕ್ಷಿಸಲಿಲ್ಲ..

ಅವರು ಎಂದೂ ,ಮತ್ತೊಬ್ಬರ ಶ್ರಮವನ್ನು ಜೀವಂತ ಹೂತು ಹಾಕಿ ಆ ಸಮಾಧಿಯ ಮೇಲೆ ರಣಕೇಕೆ ಹಾಕಲಿಲ್ಲ.

ಅವರು ಎಂದೂ ಬಲಿಷ್ಠ, ಬಂಡವಾಳಶಾಹಿ ಭಕ್ತರ ಮೋಹಕ್ಕೆ

ಬಲವಿಲ್ಲದ ಭಕ್ತರ ಸೇವೆಯನ್ನು. ಬಲಿ ಕೊಡಲಿಲ್ಲ.

ಅವರು ಎಂದೂ ಗುರುವಿನ ಮಹಾಗುರುವಿನ ಹೆಸರನ್ನು ಭಕ್ತ ರು ಕೊಟ್ಟ ಋಣ ಕ್ಕೆ ಅಡುವಿಡಲಿಲ್ಲ, ಹರಾಜು ಹಾಕಲಿಲ್ಲ.

ಅವರು ಸ್ವಾಭಿಮಾನಿಗಳಾಗಿದ್ದರು.

ಪದ್ಮಭೂಷಣ ಪ್ರಶಸ್ತಿಗೆ ದೆಹಲಿಗೆ ಬಂದಾಗಲೂ ಸ್ನಾನ ಪೂಜಾದಿ ಗಳಿಗೆ ಭಾವಿ ಇರುವ ಮನೆಯನ್ನೇ ಆಯ್ಕೆಮಾಡಿಕೊಂಡು, ಶ್ರೀಕುಮಾರೇಶ್ವರರ ಕಟ್ಟುನಿಟ್ಟಿನ ಶೀಲಾಚಾರಣೆಮಾಡಿದ್ದು ಅವರ ನಿಷ್ಠುರ ಬದುಕಿಗೆ ಹಿಡಿದ ಕನ್ನಡಿ.

ಬಾಲ್ಯದ

ಆರಂಭದ ದಿನಗಳಲ್ಲಿ ಶ್ರೀ ಶಿವಯೋಗ ಮಂದಿರದ ಪವಿತ್ರ ನೆಲದಲ್ಲಿ ಆಶ್ರಯ ಪಡೆದಿದ್ದ ಪೂಜ್ಯ ಪುಟ್ಟರಾಜ ಗವಾಯಿಗಳು ,ಮೈತುಂಬಾ ಗಾಯಗಳಿಂದ ಅಳುತ್ತ ಕುಳಿತ್ತಿದ್ದರಂತೆ, ಅವರನ್ನು ಮೈದಡವಿ ವಾತ್ಸಲ್ಯದಿಂದ ಎತ್ತಿಕೊಂಡು ಹೋಗಿ ,ರಕ್ತಸಿಕ್ತ ಗಾಯವನ್ನು ತೊಳೆದು ,ಗಿಡಮೂಲಿಕೆ ಯ ಔಷಧ ಹಚ್ಚಿ ಆರೈಕೆ ಮಾಡಿದ ಮಹಾತ್ಮ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಎಂದು ಆ ಕ್ಷಣಕ್ಕೆ  ಪೂಜ್ಯ ಪುಟ್ಟರಾಜ ಗವಾಯಿಗಳಿಗೆ ಗೊತ್ತಾಗಲಿಲ್ಲ ವಂತೆ.  ಬೇರೆಯವರಿಂದ ಕೇಳಿತಿಳಿದುಕೊಂಡ   ಪೂಜ್ಯ ಪುಟ್ಟರಾಜ ಗವಾಯಿಗಳು ಅಂಥ ಮಹಾತ್ಮರ ಕೈಯಲ್ಲಿ ಸೇವೆ ಮಾಡಿಸಿಕೊಂಡೆನೆಲ್ಲ ಎಂಬ ಕೊರಗು ಅವರಲ್ಲಿ ಕೊನೆವರೆಗೂ ಇತ್ತು ಅದನ್ನು ನೆನಪಿಸಿ ಕೊಂಡು ಅವರು ಹಾಕುತ್ತಿದ್ದ ಕಣ್ಣೀರು ಎಂಥವರನ್ನೂ ಸ್ತಂಭೀಭೂತಗೊಳಿಸಿ  ಮಂತ್ರಮುಗ್ಧ ಗೊಳಿಸುತ್ತಿತ್ತು.

ಪೂಜ್ಯರ ನೆನಹು ಇಂದು ಅವರ ವಚನವನ್ನು ಕೇಳುವ ಸಂದರ್ಭದಲ್ಲಿ ಹೃದಯ ಸ್ಪರ್ಶಿಯಾಗಿ ಕಾಡಿತು.

ಅವರ ಬರೆದ ನೋವಿನ ಸಾಲುಗಳು

ಹಲವು ಅರ್ಥಗಳನ್ನು ನೀಡಿತು

ಘಾಸಿಗೊಂಡಿರುವ ನನ್ನ ಹೃದಯದ

ಯಕ್ಷಪ್ರಶ್ನೆ ಗೆ

ಸ್ಪಷ್ಟ ಉತ್ತರವನ್ನೀಯಿತು.

ಶ್ರೀಕುಮಾರ ತರಂಗಿಣಿ  ೨೦೨೩ ಜುಲೈಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ದೇವ  ಪೊರೆಯೊ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೪: ಬಾಳಿನ ಬವಣೆ-ವಿದ್ಯಾಸ್ಮರಣೆ ಲೇಖಕರು: ಪೂಜ್ಯ ಜ.ಚ.ನಿ
  4. ಅನುಭವ-ಅನುಭಾವ :ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಗುರುಕರುಣ ಸೌಂಧರ್ಯ ಲಹರಿ: ಲೇಖಕರು : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
  6. ದೇವಸ್ಥಾನ: -ಜಿ. ಎಸ್. ಶಿವರುದ್ರಪ್ಪ
  7. ಆಡಿಯೋ೧ :
  8. ಶ್ರೀಕುಮಾರೇಶ್ವರ ಭಜನ್‌ “ಗುರುದೇವ ದೇವ ಗುರುಕುಮಾರ” ರಚನೆ
  9. ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.
  10. ಆಡಿಯೋ ೨ : ಶ್ರೀಕುಮಾರೇಶ್ವರ ದೊಹೆಗಳು

ರಚನೆ

:ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ದೇವಪೊರೆಯೊ  ಭವಮಾಲೆಯಜಿತ |

ಭಾವಜಮದಹತ  ಈ ವಸುಜಾತ  ||||

ಚಿತ್ತದ ರಾಗ  ಭ್ರಾಂತಿಯ ಪೂಗ ಗುಹೇಶ್ವರ

ಜೊತೆಗೂಡಿ ಅತಿಬೇಗ  || ||

ವೃತ್ತಿಯ ಜಾಲ  ಚಿಂತೆಯ ಮೂಲ  ಚರೇಶ್ವರ

ಹತಮಾಡಿ ಘನಲೀಲ  || ||

ನಿನ್ನಯ ಸಂಗ ಬನ್ನದ ಭಂಗ ಪರೇಶ್ವರ

ಆನುಗೈದು ಶಿವಯೋಗ || ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ತರಳ ಕೇಳು ಮಾ | ಕ್ಷರವೆ ಮೂರೊಂದಾದ

ವರ ಮೂಲ ಪ್ರಣವದಿರವೆ ಲಿಂಗವೆಂ

ದೊರೆದ ಶ್ರೀಗುರುವೆ ಕೃಪೆಯಾಗು       ||೧೧೬||

ಲಿಂಗವು ಪೂಜ್ಯವಸ್ತುವೆಂಬುದನ್ನು ಸಿದ್ಧಮಾಡುತ್ತ ಅದು ಮೂಲ ಪ್ರಣವ ರೂಪವೆಂದು ಪ್ರತಿಪಾದಿಸುತ್ತಾನೆ.

ಸದ್ಗುರುನಾಥನ ಬೋಧೆಯು ಜೀವನ ವಿಕಾಸದಾಯಕವೂ ಮೋಕ್ಷಪ್ರದಾಯಕವೂ ಆಗಿದೆ. ಆತನು ಶಿಷ್ಯನಲ್ಲಿ ಅತ್ಯಂತ ಕರುಣಾಮಯಿಯಾಗಿ ಪ್ರೀತಿಯ ಪುತ್ರನೆಂದು ಮೈದಡವಿ ತತ್ತ್ವದ ತಿರುಳನ್ನು ತುತ್ತುಮಾಡಿ ಉಣಿಸುವ ಸನ್ನಿವೇಶ ರೋಮಾಂಚನಕಾರಿಯಾದುದು. ವಾತ್ಸಲ್ಯದಿಂದ ಶಿಷ್ಯನ ಚಿತ್ತವೃತ್ತಿಗಳು ಗುರು ವಚನದತ್ತ ಕೇಂದ್ರೀಕೃತವಾದರೆ ಅನುಭವದ ವಿಷಯ ಸುಲಭವಾಗುವದು. ಗುರುವಾದವನು ತನ್ನ ಶಿಷ್ಯವೃಂದಕ್ಕೆ ದಯಾಸಾಗರನೆನಿಸಬೇಕೆಂಬುದು ಇಲ್ಲಿ ಸೂಚಿತ ವಾಗುತ್ತದೆ. ಅಂತೆಯೇ ಗುರುವು ತರಳ ! ಕೇಳು, ಈ ನಿನ್ನ ಲಿಂಗವು ಓಂಕಾರದಿರವು. ಓಂಕಾರವು ಮೂಲ ಪ್ರಣವವಾಗಿದೆ. ಈ ಓಂಕಾರದಲ್ಲಿ ಅ, ಉ, ಮ,’ ಗಳೆಂಬ ಮೂರಕ್ಷರಗಳಿವೆ. ಈ ಮೂರೊಂದಾದುದೇ ಮೂಲಪ್ರಣವೆನಿಸುವದು.

ಚನ್ನಬಸವಣ್ಣನವರು ಕರಣಹಸಿಗೆಯ ಪ್ರಾರಂಭವನ್ನು ಪ್ರಣವದುತ್ಪತ್ತಿಯಿಂದಲೇ ಪ್ರಾರಂಭಿಸುತ್ತದೆ .

ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರ ಇವು

ಮೂರು ಬೀಜಾಕ್ಷರ, ಅಕಾರವೇ ನಾದ, ಉಕಾರವೆ ಬಿಂದು,

ಮಕಾರವೆ ಕಳೆ, ಮತ್ತಂ ಆಕಾರವೆ ರುದ್ರ, ಉಕಾರವೆ ಈಶ್ವರ,

ಮಕಾರವೆ ಸದಾಶಿವ. ಇಂತೀ ಅಕಾರ, ಉಕಾರ, ಮಕಾರಕ್ಕೆ

 ನಾದ ಬಿಂದು ಕಳೆಯೇ ಆಧಾರ, ಆ ನಾದ ಬಿಂದು ಕಳಗೆ

ಪ್ರಕೃತಿಯೆ ಆಧಾರ, ಆ ಪ್ರಕೃತಿಗೆ ಪ್ರಾಣವೆ ಆಧಾರ.

 ಆ ಪ್ರಾಣಕ್ಕೆ ಲಿಂಗವೆ ಆಧಾರ, ‘ಅ’ ಎಂದಡೆ ಅನಾಹತ,

ಉ’ ಎಂದಡೆ ನಾದ ಉಳಿಯತ್ತು, ‘ಮ’ ಎಂಬಲ್ಲಿ

 ಬಿಂದು ಬಂದು ಕೂಡಲು ಶಿವಶಕ್ತಿಯಾಗುತ್ತಂ

ಇಂತಹ ಓಂಕಾರವಾಯಿತ್ತು

ಮುಂದುವರೆದು

 “ಓಂಕಾರಾತ್ಪ್ರಭವಾ ವೇದಾ ಓಂಕಾರಾತ್ಪ್ರಭವಃ ಸ್ವರಃ |

 ಓಂಕಾರಾತ್ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।”

 ಎಂದು ಓಂಕಾರದ ಹಸಿಗೆಯನ್ನು ಮಾಡಿರುವರು. ಓಂಕಾರದಲ್ಲಿ ಶಿವಶಕ್ತಿಯರ ಸಮ್ಮಿಲನವಿದೆ. ಲಿಂಗದಲ್ಲಿ ಅಡಿಪೀಠವೆ ಶಕ್ತಿ ಮುಡಿ ಲಿಂಗವೇ ಶಿವನೆನಿಸಿದ್ದಾನೆ. ಓಂಕಾರದಿಂದಲೇ ವೇದಗಳು, ಸ್ವರಗಳು, ಅಷ್ಟೇ ಅಲ್ಲದೆ ಸಕಲ ಸಚರಾಚರ ಜಗವೆಲ್ಲವೂ ಉತ್ಪನ್ನವಾಗಿದೆ. ಲಿಂಗದ ಲಕ್ಷಣವೂ ಇದೇ ಅರ್ಥವನ್ನು ಒಳಗೊಂಡಿರುವುದಾಗಿ ಈಗಾಗಲೇ ಅರಿತಿದ್ದೇವೆ. ಲಿಂಗ ಮತ್ತು ಪ್ರಣವಕ್ಕೆ ಅಭೇದವಿದೆ. ಕೆಳದಿ ಬಸವಪ್ಪ ನಾಯಕ ವಿರಚಿತ ‘ಶಿವತತ್ತ್ವರತ್ನಾಕರ” ದಲ್ಲಿ-“

“ಓಂಕಾರ ಏವ ಲಿಂಗಂ ಸ್ಯಾತ್ ಸರ್ವಕಾರಣಕಾರಣಮ್ |

ಓಮಿತಿ ಬ್ರಹ್ಮ ಪರಮಂ ಲಿಂಗಾಕಾರಂ ಮಹೇಶ್ವರಮ್॥ ೧-೫-೭ ||

“ಸರ್ವಕಾರಣಕ್ಕೆ ಕಾರಣವಾದ ಓಂಕಾರವೇ ಲಿಂಗವು. ಅದುವೇ ಪರಬ್ರಹ್ಮ ಅದುವೇ ಲಿಂಗಾಕಾರದ ಮಹೇಶ್ವರ” ವೆಂದು ಪ್ರತಿಪಾದಿತವಾಗಿದೆ.

ಈ ರೀತಿಯಾಗಿ ಪ್ರಣವರೂಪವು ಈ ಇಷ್ಟಲಿಂಗವು; ಆದುದರಿಂದ ಇದು ಮಂತ್ರಮೂರ್ತಿಯೆನಿಸಿದೆ, ಅದನ್ನು ಪೂಜಿಸಿ ನೀನೂ ಮಂತ್ರಮಯನೂ ಲಿಂಗ ರೂಪನೂ ಆಗೆಂದು ಬೋಧಿಸಿದ ಗುರುವೆ ! ಲಿಂಗರೂಪವನ್ನು ಕರುಣಿಸು.

ತಾರಕ ಕೃತಿ ಮೊದಲಾ | ದಾರು ಕೃತಿಗಳೆ ಲಿಂಗ

 ದಾರು ಸ್ಥಾನದೊಳು-ಆರು ಪ್ರಣವದ ಕೃತಿಯ

ತೋರಿಸಿದೆ ಗುರುವೆ ಕೃಪೆಯಾಗು     ||೧೧೭||

ಪ್ರಣವರೂಪವೇ ಇಷ್ಟಲಿಂಗವೆಂದು ತಿಳಿಸಿ ಪ್ರಣವದ ಸ್ವರೂಪವೇನೆಂಬುದನ್ನು ನಿರೂಪಿಸುತ್ತಾನೆ.

 ಪ್ರಣವವು ಆರು ಆಕೃತಿಗಳಿಂದ ಮೂರ್ತಿಮತ್ತಾಗಿದೆ. ೧. ತಾರಕ ೨. ದಂಡಕ ೩. ಕುಂಡಲ ೪, ಅರ್ಧಚಂದ್ರ ೫ ದರ್ಪಣ ೬. ಜ್ಯೋತಿ ಎಂಬಿವು ಪ್ರಣವದ ಆರಾಕೃತಿಗಳು. ಪ್ರಣವದ ಶಿರಸ್ಸೇ ತಾರಕಾಕೃತಿ, ಪ್ರಣವದ ಕೊರಳು ದಂಡಾಕೃತಿ; ಅದರ ಕೆಳಗಡೆಯ ಮುಡಿಯೇ ಕುಂಡಲಾಕೃತಿ, ಎರಡನೆಯ ಮುಡಿ ಅರ್ಧ ಚಂದ್ರಾಕೃತಿ; ಮಗ್ಗಲದ ಬಿಂದುವೇ ದರ್ಪಣಾಕೃತಿ; ಪ್ರಣವದ ಮೇಲ್ಗಡೆಯ ಕುಡಿಯೇ ಜ್ಯೋತಿರಾಕೃತಿಯು

ತಾರಕ-ದಂಡಕೋಭಯಾಕೃತಿಗಳಿಗೆ ಕ್ರಮದಿಂದ ನಕಾರ-ಮಕಾರಗಳು (ಪ್ರಣವದ ಬೀಜಾಕ್ಷರಗಳು). ಇವೆರಡಕ್ಕೂ ಅ’ಕಾರ ನಾದ ಪ್ರಣವದ ಸಂಬಂಧ ವಾಗುತ್ತದೆ. ಕುಂಡಲ-ಅರ್ಧಚಂದ್ರೋಭಯಾಕೃತಿಗಳಿಗೆ ಕ್ರಮದಿಂದ ಶಿಕಾರ ವಾಕಾರ ಪ್ರಣವಗಳು. ಇವೆರಡಕ್ಕೂ ‘ಉ’ಕಾರ ಬಿಂದು ಪ್ರಣವದ ಸಂಬಂಧವಿದೆ. ಇನ್ನು ದರ್ಪಣ ಮತ್ತು ಜ್ಯೋತಿರುಭಯಾಕೃತಿಗಳಿಗೆ ಕ್ರಮದಿಂದ ಯಕಾರ ಓಂಕಾರ ಪ್ರಣವಗಳು ಇವೆರಡಕ್ಕೂ ‘ಮ” ಕಾರ ಕಲಾ ಪ್ರಣವದ ಸಂಬಂಧವುಂಟು.

 ಪ್ರಥಮಂ ತಾರಕರೂಪಂ ದ್ವಿತೀಯಂ ದಂಡ ಉಚ್ಯತೇ |

ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಮ್‌ ||

ಪಂಚಮಂ ಬಿಂದು ಸಂಯುಕ್ತಂ ಪ್ರಣವಂ ಪಂಚಬ್ರಹ್ಮರಾಟ್||

 ಆರಾಕೃತಿಗಳಿಗೆ ಆರು (ಬೀಜಾಕ್ಷರ ಅಥವಾ) ಪ್ರಣವದ ಸಂಬಂಧವನ್ನು ಶಿವತತ್ತ್ವ ರತ್ನಾಕರದಲ್ಲಿ

 ನಕಾರ ಸ್ತಾರಕಸ್ಥಾನಂ ಮಕಾರೋ ದಂಡಮುಚ್ಯತೇ ।

ಶಿಕಾರಃ ಕುಂಡಲಾಕಾರೋ ವಾಕಾರಾಶ್ಚಾರ್ಧಚಂದ್ರಕಃ ||

ಯಕಾರೋ ಬಿಂದುರೂಪೋ ಯಮೋಂಕಾರಃ ಪಂಚವರ್ಣಕಃ ||        ||೧-೫-೨೦||

ಎಂದು ವಿವರಿಸಿದ್ದಾರೆ.

ಶಿ. ಶಿ. ಬಸವನಾಳರು ಸಂಪಾದಿಸಿದ ಈ ಗುರುಕರುಣ ತ್ರಿವಿಧಿಯಲ್ಲಿ ತಾರಕಾ ಕೃತಿ’ ಎಂಬ ಪಾಠಾಂತರವಿದೆ. ಆಕೃತಿಯೆಂದರೆ ಆಕಾರ; ಕೃತಿಯೆಂದರೆ ಕ್ರಿಯೆಯೆನಿಸುವದು. ಲಿಂಗದಲ್ಲಿ ನಾಮರೂಪವೂ ಇದೆ. ಕ್ರಿಯೆಯೂ ಸಮನ್ವಯ ಗೊಂಡಿದೆ. ಓಂಕಾರದಲ್ಲಿ  ನಾಮ-ರೂಪ-ಕ್ರಿಯೆಗಳಿರುವಂತೆ ಇಷ್ಟಲಿಂಗದಲ್ಲಿಯೂ ಅವುಗಳು ವ್ಯಾಪಿಸಿವೆ. ನಾಮ-ರೂಪ-ಕ್ರಿಯಾತ್ಮಕವಾದ ಈ ಲಿಂಗವು ಸಕಲ ವೆನಿಸಿದೆ. ನಾಮ-ರೂಪ-ಕ್ರಿಯಾ ಶೂನ್ಯವಾದುದು ನಿಷ್ಕಲವೆನಿಸುವದು. ತೋರುವ ಜಗತ್ತು ಈ ಮೂರರಿಂದಲೇ ಆವರಿಸಿಕೊಂಡಿದೆ. ಜಗದಲ್ಲಿ ಕಾಣಿಸಿಕೊಂಡ ನಾಮ- ರೂಪ-ಕ್ರಿಯಾತ್ಮಕನಾದ ಅಂಗನಿಗೆ ಈ ಲಿಂಗವೂ ನಾಮರೂಪಾತ್ಮಕವೆಂದು ಗುರು ನಾಥನು ತತ್ತ್ವದ ತಿರುಳನ್ನು ತಿಳಿಸಿದ್ದಾನೆ.  

 ಸಕಲಕ್ಕೂ ಕಾರಣವೆನಿಸಿದ ಓಂಕಾರವೇ ಲಿಂಗವಾಗಿರುವಂತೆ; ಸಮಸ್ತ ಕಾರ್ಯಗಳಿಗೆ ನಾಯಕನೆನಿಸಿದ ವಿನಾಯಕ ಅಥವಾ ಗಣಪತಿಯ ಆಕಾರವಾದರೂ ಓಂಕಾರ ಮಯವಾಗಿದೆ. ಓಂಕಾರದ ಆ ಆರು ಆಕೃತಿಗಳಿಂದಲೇ ಗಣಪತಿಯ ಆಕಾರದ ಕಲ್ಪನೆಯು ಸ್ಪಷ್ಟವಾಗುವದು. ಗಣೇಶನ ಪೌರಾಣಿಕ ಕಥಾನಕಗಳು ರೋಚಕ ವಾಗಿರಬಹುದು. ತಾತ್ವಿಕ ವಿಚಾರದಲ್ಲಿ ಪ್ರಣವ ಸ್ವರೂಪವು ಪ್ರಕಟವಾಗುವದು. ಕುಂಡಲ ಮತ್ತು ಅರ್ಧಚಂದ್ರಾಕೃತಿಗಳೇ ವಿನಾಯಕನ ಎರಡು ಹುಬ್ಬುಗಳಾದರೆ  ತಾರಕ-ದಂಡಕಾಕೃತಿಗಳು ಸೊಂಡಿಲೆನಿಸಿದೆ. ಮುಖಮಂಡಲವೇ ದರ್ಪಣ,  ಏಕದಂತವೇ ಜ್ಯೋತಿರಾಕೃತಿಯು.  ಆದ್ದರಿಂದಲೇ ವೈದಿಕ ಕಾರ್ಯಗಳಲ್ಲಿ, ವಿದ್ಯಾ ರಂಭಾದಿ ಕೆಲಸಗಳಲ್ಲಿಯೂ ವಿಘ್ನವಿನಾಶವಾಗಲೆಂದು ಓಂಕಾರ ರೂಪಿ ವಿನಾಯಕನ ಪೂಜೆಯಾಗುತ್ತದೆ. ಓಂಕಾರದ ಗೌರವವಾದರೂ ಗಣಪತಿಯ ರೂಪದಲ್ಲಿ ಸ್ವೀಕರಿಸಲು ಸಾಧ್ಯವಾಗಿದೆಯೆಂದು ಹೇಳಬಹುದು.

ದೇವನಾಗರಿ ಲಿಪಿಯ ಓಂಕಾರಕ್ಕೂ (ದ್ರಾವಿಡ) ಕನ್ನಡ ಲಿಪಿಯ ಓಂಕಾರಕ್ಕೂ ವ್ಯತ್ಯಾಸವಿಲ್ಲ. ದೇವನಾಗರಿ ಲಿಪಿಯ ಓಂಕಾರವನ್ನು ತಿರುವಿದ (ಹೊರಳಿಸಿದ) ರೂಪವೇ ಗಣಪತಿಯ ರೂಪಾಗಿದೆ. ಒಟ್ಟಿನಲ್ಲಿ ಆರು ಕೃತಿಗಳು ಅದರಲ್ಲಿಯೂ ಇವೆ. ಆರಾಕೃತಿಗಳುಳ್ಳದೇ ಪ್ರಣವವು. ಪ್ರಣವದಿರವೇ ಈ ಲಿಂಗವು. ಇದರರ್ಥವನ್ನು ತಿಳಿಸಿ ಪ್ರತ್ಯಕ್ಷ ತೋರಿಸಿ ರಕ್ಷಿಸಿದವನು ಶ್ರೀಗುರುನಾಥನು. ಮಹಾಜ್ಞಾನಿಯಾದ ಕುಮಾರ ಷಣ್ಮುಖನಿಗೆ ಶಿವನು ಓಂಕಾರದ ಅರ್ಥವನ್ನು ಅದೆಷ್ಟೋ ದಿನಗಳವರೆಗೆ ಹೇಳಿದನೆಂಬುದು ಪೌರಾಣಿಕ ಸತ್ಯಕಥೆಯಾಗಿದೆ. ಓಂಕಾರದ ಮಹತ್ವವು ಮಹತ್ತರವಾದುದು. ಈ ಪ್ರಣವ ಮಂತ್ರವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಾಧನವೇ ಲಿಂಗ, ಲಿಂಗವೇ ಪ್ರಣವವು.

 ಓ ಪರಮ ಗುರುವೇ ! ಮಂತ್ರ ಮೂರುತಿಯೇ ನಿರಂಜನ ಪ್ರಭುವೇ | ಪ್ರಣವರೂಪ ಲಿಂಗವನ್ನು ಅನುಸಂಧಾನ ಮಾಡಿ ತತ್ಸ್ವರೂಪಿಯಾಗುವ ಸೌಭಾಗ್ಯ ವನ್ನು ಕರುಣಿಸಿ ಕಾಪಾಡು.

ವೃತ್ತಕಟಿ  ವರ್ತುಳವು | ಮತ್ತೆ ಗೋಮುಖ ನಾಳ

ಚಿತ್ಪೀಠವಾರು ಗೊತ್ತತೋರಿಸಿ ಲಿಂಗ

ವಿತ್ತ ಶ್ರೀಗುರುವೆ ಕೃಪೆಯಾಗು     || ೧೧೮ ॥

ಪ್ರಣವದ ಆರಾಕೃತಿಗಳಿಂದ ಕೂಡಿ ನಾಮ-ರೂಪ ಕ್ರಿಯಾತ್ಮಕವಾದ ಲಿಂಗವು ಆರು ಸ್ಥಲವುಳ್ಳದಾಗಿದೆ. ಅರ್ಥಾತ್ ಷಡವಯವವನ್ನು ಹೊಂದಿದೆಯೆಂಬುದನ್ನು ವಿವರಿಸುತ್ತ ಆ ಆರುಸ್ಥಲಗಳಲ್ಲಿ ಆರಕ್ಷರಗಳನ್ನು ಸಂಬಂಧಿಸಿ ತೋರಿಸುತ್ತಾನೆ ಶಿವ

ಕವಿಯು. ೧) ವೃತ್ತ,  ೨) ಕಟಿ,  ೩) ವರ್ತುಳ,  ೪) ಗೋಮುಖ,  ೫) ನಾಳ,  ೬) ಚಿತ್ಪೀಠ ಇವು ಆರು ಲಿಂಗದ ಅವಯವಗಳು. ಅಂಗನು ಆರಾದಂತೆ ಲಿಂಗವೂ ಆರಾಗಿದೆ. ಆರು ಸ್ಥಲ (ಅವಯವ) ಗಳನ್ನು ಪಡೆದಿದೆ. ಲಿಂಗ ಷಟ್‌ಸ್ಥಲಗಳಲ್ಲಿ ಮಂತ್ರ ಷಡಕ್ಷರ ಆವರಿಸಿಕೊಂಡಿದೆ. ಮಂತ್ರರೂಪವೇ ಲಿಂಗವೆಂಬುದಾಗಿ ಸದ್ಗುರುನಾಥನು ಶಿಷ್ಯನಿಗೆ ಬೋಧಿಸುತ್ತಾನೆ. ಮಂತ್ರರೂಪವಾದ ಲಿಂಗಾರ್ಚನೆಯಿಂದ ಮಂತ್ರಮಯನಾಗ ಬೇಕೆಂಬುದೇ ಗುರುವಿನ ಉಪದೇಶ.

 ಹಿಂದೆ ತಿಳಿಸಿದ ಲಿಂಗದ ಪಂಚಸೂತ್ರಗಳೂ ಈ ಲಿಂಗ ಷಟ್‌ಸ್ಥಲದಲ್ಲಿ ವ್ಯಕ್ತವಾಗುತ್ತದೆ. ವೃತ್ತವೆಂದರೆ ಕೆಳಗಿನ  ಸುತ್ತಳತೆ ಅಥವಾ ಪರಿಘವೆನ್ನಬಹುದು.  ವೃತ್ತವು  ಪೂರ್ಣತೆಯ ಕುರುಹಾಗಿದೆ. ಕಟಿಯೆಂದರೆ ಲಿಂಗದ ನಡುವು. ಕೆಳಗಿನ ವೃತ್ತ ಮತ್ತು ಮೇಲಿನ ವರ್ತುಳದ ನಡುವಿನ ಸಣ್ಣ ಭಾಗವು. ಮೂರನೆಯದು ಮೇಲಿನ ವರ್ತುಳವು. ಪೀಠವೆನಿಸಿದ ಈ ಕೆಳಭಾಗದಲ್ಲಿ ಲಿಂಗವನ್ನಿಡುವ ರಂಧ್ರವು ನಾಳವೆನಿಸುವದು. ಪೀಠದ ನಾಳದಲ್ಲಿದ್ದ ಪ್ರಕಾಶಮಯವಾದ ಬಾಣರೂಪ ಲಿಂಗವೇ ಚಿತ್ಪೀಠವಾಗಿದೆ. ಈ ರೀತಿಯಾಗಿ ಲಿಂಗದಲ್ಲಿಯ ಆರು ಸ್ಥಲಗಳನ್ನು ಗುರುವರನು ದೀಕ್ಷಾ ಸಮಯದಲ್ಲಿ ವಿವರಿಸಿ ಲಿಂಗವನ್ನು ಕರುಣಿಸುತ್ತಾನೆ. ಅಂಗದಲ್ಲಿ ಷಟ್ ಚಕ್ರಗಳನ್ನು ತಿಳಿಸಿ ಷಡ್ಲಿಂಗಗಳ ಮರ್ಮವನ್ನು ಬೋಧಿಸಿದಂತೆ ಇನ್ನು ಲಿಂಗಗಳ ಷಟ್‌ಸ್ಥಲಗಳಲ್ಲಿ ಮಂತ್ರರಹಸ್ಯವನ್ನು ತಿಳಿಸುವ ಮಾತನ್ನು ಮುಂದಿನ ತ್ರಿಪದಿಯಲ್ಲಿ ಪ್ರತಿಪಾದಿಸುತ್ತಾನೆ.

ಬಾಲ ಬಾರೆಂದೆನ್ನ | ಕೈಲಿ ಲಿಂಗವ ಕೊಟ್ಟು

ಈ ಲಿಂಗದೊಳಗೆ-ಮೂಲ ಷಣ್ಮಂತ್ರವನು

ಕೀಲಿಸಿದ ಗುರುವೆ ಕೃಪೆಯಾಗು       ||೧೧೯ ||

ಕರುಣಾಮಯನೂ, ಜ್ಞಾನಸಾಗರನೂ, ವೈರಾಗ್ಯಪರನೂ ಆದ ಸದ್ಗುರುವಿನ ಸನ್ನಿಧಿಯಲ್ಲಿ ವಯೋಮಾನದಿಂದ ಹಿರಿಯನಾದರೂ ಶಿಷ್ಯನು ಬಾಲಕನೇ.  ಜ್ಞಾನ-ವೈರಾಗ್ಯಗಳ ತುಲನೆಯಿಂದ ಸಣ್ಣವನೇ ಸರಿ.  ಕಿಂಕರತ್ವವನ್ನು ವಹಿಸಿದರೆ ಮಾತ್ರ ಗುರುವಿನಿಂದ ಜ್ಞಾನಕಿರಣ ಹರಿದು ಬರುತ್ತದೆ. ಕೀಳಿಂಗಲ್ಲದೆ ಹಯನ ಕರಯದೆಂದುʼʼ ಅಣ್ಣನವರು ಅನುಭವದ ಅಮೃತವನ್ನೇ ಸುರಿದಿರುವರು. ಶಿಷ್ಯನ ಸದಾಚರಣೆ ಗುರುನಾಥನಿಗೆ ತೃಪ್ತಿಯನ್ನೀಡಬೇಕು. ಆಗ ಗುರುವರನು ಸದಯಾಂತಃ ಕರಣದಿಂದ ಶಿಷ್ಯನನ್ನು ಕಂದನಂತೆ, ಹೇ ಬಾಲ ! ಬಾ ನನ್ನ ಹತ್ತಿರಕೆ; ಬಾಳ ಬಾ; ನಿಜವಾದ ಬಾಳು ಈ ನಿನ್ನ ಕೈಯಲ್ಲಿತ್ತ ಇಷ್ಟಲಿಂಗದಲ್ಲಿದೆ.  ಈ ಲಿಂಗವೇ ಜೀವನ ಸಾಗರವನ್ನು ದಾಟಿಸುವ ದಿವ್ಯಸಾಧನ.  ಲಿಂಗದ ಜ್ಞಾನವೇ ಜೀವನದ ಜೀವಾಳ.  ಕ್ರಿಯಾದಿ ದೀಕ್ಷೆಗಳಿಂದ ನಿನ್ನ ಸ್ಥೂಲ-ಸೂಕ್ಷ್ಮ-ಕಾರಣ ಶರೀರವು ಪವಿತ್ರಗೊಂಡು ಮಂತ್ರಮಯವಾಗಿರುವಂತೆ ಈ ಲಿಂಗದಲ್ಲಿಯೂ ಮೂಲಮಂತ್ರವನ್ನು ಕೀಲಿಸಿರುವೆ.

ಇದೂ ಮಂತ್ರಮಯವಾಗಿದೆ. ನಿತ್ಯ ಲಿಂಗಾರ್ಚನೆ, ಲಿಂಗಾರ್ಪಣ, ಲಿಂಗಾನುಭವಗಳಿಂದ ಶಿವಯೋಗದ ಅಥವಾ ಲಿಂಗಾಂಗಯೋಗದ ಅನುಸಂಧಾನ (ಸಾಕ್ಷಾತ್ಕಾರ) ನಡೆಯಬೇಕು. ಮಹಾನುಭಾವಿಗಳು ಅನುಸರಿಸಿದ ಅನುವಿದಾಗಿದೆ” ಎಂದು ಮುಂತಾಗಿ ಬೋಧಿಸಿ ಕೃಪೆಗೆಯುತ್ತಾನೆ.

ಶಿಲ್ಪಿಯು ಅದೆಷ್ಟು ಸುಂದರವಾಗಿ ಕಲಾಮಯವಾದ ಲಿಂಗವನ್ನು ತಯಾರಿಸ ಬಹುದು. ಆದರೆ ಅದು ಲಿಂಗಾಕಾರದ ಮೂರ್ತಿಯಾದೀತೇ ವಿನಾ ಲಿಂಗವೆನಿಸುವದಿಲ್ಲ . ಗುರುಕರಕಮಲ ಸ್ಪರ್ಶದಿಂದಲ್ಲದೆ ಅದರಲ್ಲಿ ಲಿಂಗಗುಣವು ಮೈದೋರುವ ದಿಲ್ಲ. ಶಿಲಾಭಾವವು ಸರಿಯುವದಿಲ್ಲ.  ಅದುಕಾರಣವೇ ಮಾರಾಟಕ್ಕಿಕ್ಕಿದ ಲಿಂಗವನ್ನು ಧರಿಸುವದರಿಂದ ಲಿಂಗ ಕಳೆಯು ಸಮನಿಸುವದಿಲ್ಲ. ಇಂಥ ಲಿಂಗವನ್ನು ಕಟ್ಟಿಕೊಳ್ಳಲೇ ಬಾರದು. ಅದರಿಂದ ಯಾವ ಪ್ರಯೋಜನವಾಗುವದಿಲ್ಲ. ಇವೆಲ್ಲ ದೋಷಗಳನ್ನು ದೂರೀಕರಿಸುವದಕ್ಕಾಗಿ ಗುರುನಾಥನು ಲಿಂಗದ ಮೇಲೆ ಷಡವಯವಗಳಲ್ಲಿ ಷಣ್ಮಂತ್ರಾಕ್ಷರಗಳನ್ನು ಕೀಲಿಸುತ್ತಾನೆ. ಮಂತ್ರಾಕ್ಷರ ಸಂಸ್ಕಾರದಿಂದ ಮಂತ್ರಾಕ್ಷರನ್ಯಾಸ ದಿಂದ ಶಿಲಾಭಾವದ ಲಿಂಗವು ಮಂತ್ರಮಯವಾಗುವದರಲ್ಲಿ ಯಾವ ಸಂದೇಹವಿಲ್ಲ.

ಚಾರುವೃತ್ತದೊಳಿರ್ಪಾ | ಚಾರಲಿಂಗದೊಳಗೆ ನ

ಕಾರ ಮೊದಲಾದ – ಆರು ಪ್ರಣವದ ನೆಲೆಯ

ತೋರಿಸಿದ ಗುರುವೆ ಕೃಪೆಯಾಗು    ೧೨೦ |

ಶರಣಕವಿಯು ಲಿಂಗದ ಒಂದೊಂದು ಸ್ಥಲದಲ್ಲಿ ಒಂದೊಂದು ಮಂತ್ರಾಕ್ಷರಗಳ ಸಂಬಂಧವನ್ನು ತೋರಿಸುತ್ತ ಹೋಗುತ್ತಾನೆ.

ವೃತ್ತ ಸ್ಥಾನವು ಚಾರುತರವಾದುದು. ಯಾಕಂದರೆ ವೃತ್ತವು ಗೋಲಾಕಾರ ವಾಗಿರುವದು.  ದುಂಡಾಗಿರುವದರಿಂದ ಪರಿಪೂರ್ಣವಾಗಿ ಶೋಭಿಸುತ್ತದೆ.  ಅಂತೆಯೇ ಶಿವಕವಿಯು ವೃತ್ತಕ್ಕೆ ಚಾರು ಪದವನ್ನು ವಿಶೇಷಣವಾಗಿ ಬಳಸಿದ್ದಾನೆ. ಅಲ್ಲದೆ ಪೂರ್ಣವಾದ ಪರಿಘದಲ್ಲಿ ಸಕಲವೂ ಸೇರಿದೆಯೆಂಬ ಭಾವವೂ ವ್ಯಕ್ತವಾಗುವದು. ಈ ವೃತ್ತ ಸ್ಥಾನದಲ್ಲಿರುವ ಲಿಂಗ ಆಚಾರಲಿಂಗವೆನಿಸಿದೆ. ವೃತ್ತವು ಎಲ್ಲ ಸ್ಥಲಗಳಿಗೆ ಆಧಾರವಾಗಿರುವಂತೆ ಆಚಾರಲಿಂಗವು ಎಲ್ಲ ಲಿಂಗಗಳಿಗೆ ಆಶ್ರಯವಾಗಿದೆ.

ಈ ಆಚಾರಲಿಂಗದಲ್ಲಿ ನಕಾರ ಪ್ರಣವ ಪ್ರಕಾಶಮಾನವಾಗಿದೆ. ಇಲ್ಲಿ ‘ನ ʼಕಾರ ಮುಖ್ಯವಾಗಿದ್ದು ಅದರಲ್ಲಿ ಉಳಿದೈದು ಪ್ರಣವಗಳು ಸುಪ್ತವಾಗಿವೆ. ವೃತ್ತ ಪೂರ್ಣವಾಗಿರುವಂತೆ ಆಚಾರವು ಪರಿಪಕ್ವಗೊಂಡರೆ ಮಾತ್ರ ಆಚಾರಲಿಂಗದ ಅರಿವು ಆಗುವದು. ಆ ಮಂತ್ರದ ನೆಲೆ ಸ್ಥಿರವಾಗುವದು.

ಶಿವ ಪಂಚಾಕ್ಷರ ಸ್ತೋತ್ರದಲ್ಲಿ ಶಂಕರಾಚಾರ್ಯರು ‘ನ ʼಕಾಲ ಮಂತ್ರಾಕ್ಷರದ ವರ್ಣನೆಯನ್ನು –

ನಾಗೇಂದ್ರ-ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ |

ನಿತ್ಯಾಯ ಶುದ್ಧಾಯ ದಿಗಂಬರಾಯ

ಸ್ಮೈ ನಕಾರಾಯ ನಮಃ ಶಿವಾಯ

ಎಂದು ಸುಂದರವಾಗಿ, ಮಾರ್ಮಿಕವಾಗಿ ಹಾಡಿರುವರು. ಇದರಂತೆ ಶ್ರೀರುದ್ರಯಾಮಲತಂತ್ರದಲ್ಲಿ ಉಮಾಮಹೇಶ್ವರ ಸಂವಾದಲ್ಲಿಯೂ ಷಡಕ್ಷರ ಸ್ತೋತ್ರವು ಅರ್ಥ ಪೂರ್ಣವಾಗಿದೆ-

“ನಮಂತಿ ಋಷಯೋ ದೇವಾಃ ನಮಂತ್ಯಪ್ಸರಸಾಂಗನಾಃ |

ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ” ||

ಮಹಾಮಂತ್ರಕ್ಕೆ ಮಣಿಯದವರಾರು ? ಸಕಲರೂ ಶಿರ ಬಾಗಿಸಲೇಬೇಕಾಗುವದು.