Meditations

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಸೆಪ್ಟಂಬರ ೨೦೨೧ ರ ಸಂಚಿಕೆ

೫. ಸದ್ಗುರುವಿನ ಮಹಿಮಾತಿಶಯ

ಪರಕೆ ಪರವಾಗಿರ್ದ | ಪರತತ್ವ ಮೂರ್ತಿಯ ನಿಜ

ದಿರವೆ ರೂಪಾಗಿ ಧರೆಯೊಳಗೆ ಚರಿಸುತಿಹ

ಪರಮ ಶ್ರೀಗುರುವೆ ಕೃಪೆಯಾಗು  || ೧೬ ||

ಗುರುಕೃಪೆಯ ಅವಶ್ಯಕತೆಯನ್ನು ನಿರೂಪಿಸಿ ಸಂತೃಪ್ತನಾಗದ ಶಿವಕವಿಯು ಸದ್ಗುರುವಿನ ಮಹಿಮಾತಿಶಯವನ್ನು ಹನ್ನೊಂದು ನುಡಿಗಳಲ್ಲಿ ವಿಶದೀಕರಿಸುತ್ತಾನೆ.

ಪರಶಬ್ದದ ಅರ್ಥ ಅನಂತ ಇವೆ. ಪರಶಬ್ದವು ವಿಶೇಷಣವಾಗಿ ನಾಮಪದವಾಗಿ, ಅವ್ಯಯವಾಗಿ ಪ್ರಯೋಗವಾಗಿ ವಿಭಿನ್ನ ಅರ್ಥಗಳನ್ನು ಕೊಡುತ್ತದೆ. ಇಲ್ಲಿ’ಪರ’ ಅಂದರೆ ದೂರದ, ಆಚೆಯ ಮೇಲಿನ ಎಂಬರ್ಥವನ್ನು ಮಾಡುವದೇ ವಿಹಿತ.

ಪರತತ್ವಮೂರ್ತಿಯು ಪರಕ್ಕೆ ಪರವಾಗಿದೆ. ಪರಮಾತ್ಮನು ಕಾಣದ ನಿರ್ಗುಣನು.ಪರತತ್ವಮೂರ್ತಿಯ ಇರುವಿಕೆಯನ್ನು ತಿಳಿಯುವದು ಸುಲಭವಲ್ಲ. ಅಂಥ ಪರ ವಸ್ತುವಿನ ಸ್ವರೂಪವನ್ನು ಕಠೋಪನಿಷತ್ತಿನಲ್ಲಿ ಯಮರಾಜನು ನಚಿಕೇತನಿಗೆ ಬೋಧಿಸಿದ್ದುಉಲ್ಲೇಖನೀಯವಾಗಿದೆ.

ನ ಜಾಯತೇ  ಮ್ರಿಯತೇ ವಾ ವಿಪಶ್ಚಿತ್

ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್ |

ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ

ನ ಹನ್ಯತೇ ಹನ್ಯಮಾನೇ ಶರೀರೇ ||

ಹುಟ್ಟುವದು, ಸಾಯುವದು ಶರೀರವಲ್ಲದೆ; ನಿತ್ಯನೂ, ಪುರಾಣ ಪುರುಷನೂ,ಶಾಶ್ವತನೂ ಎಂದು ಪ್ರಸಿದ್ಧನಾದ ಆತ್ಮನಲ್ಲ. ಆತ್ಮವು ನಿತ್ಯವಾದ ವಸ್ತು . ಅದಕ್ಕೆಯಾವಾಗಲೂ ಮರಣವಿಲ್ಲ. ಮತ್ತು ಅವಸ್ಥಾಧಿಕೃತ ದೋಷಗಳು ಅದಕ್ಕೆ ಅಂಟುವದಿಲ್ಲ. ಅದು ನಮ್ಮ ಇಂದ್ರಿಯ, ಮನ, ಬುದ್ಧಿ, ಪ್ರಾಣಕ್ಕಿಂತಲೂ ಬೇರೆಯಾಗಿರುತ್ತದೆ. ಉಪನಿಷತ್ತುಗಳಲ್ಲಿ ಆತ್ಮತತ್ತ್ವವನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ.ನಮ್ಮ ಶರಣರು ಉಪನಿಷತ್ ವಿಚಾರಕ್ಕಿಂತಲೂ ಆತ್ಮವಸ್ತುವನ್ನು ಬಹು ಸೂಕ್ಷ್ಮವಾಗಿಯೂ, ವಿಚಾರಪೂರ್ವಕವಾಗಿಯೂ ಮಂಡಿಸಿದ್ದಾರೆ.

ಪ್ರಭುದೇವರು :

ಆದಿಯಾಧಾರವಿಲ್ಲದಂದು ಹಮ್ಮಬಿಮ್ಮುಗಳಿಲ್ಲದಂದು,

ಶೂನ್ಯನಿಶ್ಯೂನ್ಯವಿಲ್ಲದಂದು ಸುರಾಳ-ನಿರಾಳವಿಲ್ಲದಂದು

ಸಚರಾಚರವೆಲ್ಲ ರಚನೆಗೆ ಬಾರದಂದು,

ಗುಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ

ಚನ್ನಬಸವಣ್ಣನವರು :

ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೆ

ಸ್ವಯಂಭು ವಾಗಿರ್ದಿರಯ್ಯಾ !

ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ

ಅನಂತಕಾಲ ವಿರ್ದಿರಲ್ಲಾ!

ನಿಮ್ಮ ಆದ್ಯಂತವ ನೀವೆ ಅರಿವುತಿದ್ದಿರಲ್ಲಾ !

ನಿಮ್ಮ ನಿಜಭಾವವ ನೀವೆ ಬಲ್ಲಿರಿ

ಕೂಡಲ ಚನ್ನಸಂಗಮದೇವಾ.

ಮಡಿವಾಳ ಮಾಚರಸ :

ಆದಿಯನಾದಿಯಿಲ್ಲದಂದು, ಮಹಾಶೂನ್ಯವಿಲ್ಲದಂದು,

ಸಾಧ್ಯ ಅಸಾಧ್ಯವಿಲ್ಲದಂದು, ರೂಪು ನಿರೂಪಿಲ್ಲದಂದು

ಸ್ಕೂಲ-ಸೂಕ್ಷ್ಮವಿಲ್ಲದಂದು

ಸಾಕಾರ-ನಿರಾಕಾರವೆಂಬ ವಾಕು ಹುಟ್ಟದಂದು

ದ್ವ್ಯತಾದ್ವ್ಯೆತವಾಗದಂದು

ಶಂಕರ-ಶಶಿಧರ, ಈಶ್ವರರೆಂಬ ಗಣಾಧೀಶ್ವರರಿಲ್ಲದಂದು

ವರ್ತನೆ ನಿರ್ವತ್ರನೆಯಿಲ್ಲದಂದು,

ಉಮೆಯ ಕಲ್ಯಾಣವಾಗದಂದು

ಇವರಾರೂ ಒಬ್ಬರ ನಾಮ ಸೀಮೆಯಿಲ್ಲದಂದು

ನೀನು ಉಲುಹಡಗಿರ್ದೆಯಲ್ಲಾ

ಕಲಿದೇವರ ದೇವಯ್ಯಾ !

ಬಸವಣ್ಣನವರು :

ಅಮೂಲ್ಯನು, ಅಪ್ರಮಾಣನು, ಅಗೋಚರ ಲಿಂಗವು

ಆದಿ ಮಧ್ಯ, ಅಂತ್ಯವಿಲ್ಲದ ಲಿಂಗವು

ಸ್ವತಂತ್ರ ಲಿಂಗವು, ನಿತ್ಯನಿರ್ಮಲ ಲಿಂಗವು,

ಅಯೋನಿ ಸಂಭವನಯ್ಯಾ ನಮ್ಮ ಕೂಡಲಸಂಗಮದೇವಯ್ಯ

ಈ ಎಲ್ಲ ವಚನಗಳಿಂದ ಪರಕ್ಕೆ ಪರವಾದ ಪರವಸ್ತುವಿನ ನಿಜರೂಪವು ಗೋಚರಿಸದೆ ಇರದು. ಯಾವ ಲೀಲೆಯಿಲ್ಲದೆ ಸ್ವಯಂಭುವಾದುದೇ ಪರಾತ್ಪರ ಪರವಸ್ತು. ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ತಮ್ಮ ಅನುಭವ ಗೀತೆಯಲ್ಲಿ

ರೂಪು ರೂಪಿನೊಳಡಗಿ ರೂಪಿಸದೆ ನಿಂದ ನಿಜ

ರೂಪು ನಿಶ್ಚಲವಾಗಿ ಸಂಚಲಿಸದೆ |

ತಾ ಪರಾತ್ಪರವಾಗಿ ನಿಂದ ನಿಜಪದವು ಚಿ-

ದ್ರೂಪ ಕೂಡಲ ಚನ್ನ ಸಂಗಯ್ಯನು ||

ಪರಾತ್ಪರ ಪರವಸ್ತುವಿನ ಯಥಾರ್ಥರೂಪವನ್ನು ಚಿತ್ರಿಸಿದ್ದಾರೆ.

ಕಲ್ಲುಮಠದ ಪ್ರಭುದೇವರು ತಮ್ಮ ‘ಲಿಂಗಲೀಲಾ-ವಿಲಾಸಚಾರಿತ್ರ’ದಲ್ಲಿ ಈ ಪರವಸ್ತು ಅಥವಾ ನಿಷ್ಕಲ ಲಿಂಗದ ವಿಲಾಸವನ್ನು ಕುರಿತು ‘ವಾಙ್ಮನಕ್ಕೆ ಬಾರದ ಅಖಂಡಾದ್ವಯ ನಿತ್ಯ-ನಿರವಯ ಪರಿಪೂರ್ಣ ಚೈತನ್ಯಜ್ಞಾನಪ್ರಭಾ ಬೆಳಗಿ ನಿಂದೊಪ್ಪುತಿಪ್ಪುದು ನಿಷ್ಕಲ ಪರಶಿವಲಿಂಗವು…. ಸುಚಿತ್ರಾನಂದಮಯವಾಗಿ ತನ್ನ ಜ್ಞಾನವಿಲಾಸಾನಂದ ಲೀಲೆಯಿಂದ ಅಖಂಡ ತೇಜೋ ಮೂರ್ತಿಯಾದ ಮಹಾಲಿಂಗವಾಯಿತ್ತು’ ಎಂದು ವರ್ಣಿಸಿ ಈ ಮಹಾಲಿಂಗದ ಚಿದ್ವಿಲಾಸ ಲೀಲೆಯಿಂದಲೆ ಸಮಸ್ತ ಜಗತ್ತಿನ ಉದಯವಾಯಿತೆಂದು ವರ್ಣಿಸಿದ್ದಾರೆ. ಜೀವನಿಗೆ ದೇಹ ಧರ್ಮದ ಸಂಬಂಧವಾಗಿ ಅಹಂ ಮಮತೆಯಿಂದ ಅಜ್ಞಾನವು ಉದ್ಭವಿಸುವದು.

ಅಜ್ಞಾನವೆಂಬ ಕತ್ತಲೆಯಿಂದ ಪಾರಾಗದ ಜೀವನನ್ನು ಉದ್ಧರಿಸಲು ಆ ಪರಾತ್ಪರ ವಸ್ತುವೇ ಸದ್ಗುರುವಾಗಿ ಉದಯವಾಯಿತು. ಕಾಣದ ಕೇಳದ ಪರವಸ್ತುವಿನಿಂದ ಪ್ರಯೋಜನವಿಲ್ಲ. ಜಗತ್ತಿನ ಜನಗಳನ್ನು ಉದ್ಧರಿಸಲು ಸಾಕಾರ ಮೂರ್ತಿಯಾಗಿ ಉದ್ಭವಿಸಿ, ಅಲ್ಲಲ್ಲಿ ಸಂಚರಿಸುವ ಗುರುದೇವನು ಸಾಮಾನ್ಯನಲ್ಲ. ಈ ಬಗ್ಗೆ ವಚನಕಾರರ ವಚನಗಳು ವಿಪುಲವಾಗಿವೆ. ಸ್ವತಂತ್ರ ಸಿದ್ಧಲಿಂಗೇಶ್ವರರು –

ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ

ಅಂಧಕಾರದ ಗುಹೆಯೊಳಗಿದ್ದವರಂತೆ ಇದ್ದರಯ್ಯಾ ಜೀವರೆಲ್ಲಾ

ಹೊಲಬುದಪ್ಪಿ ತಿಳವಿಲ್ಲದೆ ಕಳವಳಗೊಳ್ಳುತ್ತಿದ್ದರಯ್ಯ

ಅಡವಿಯ ಹೊಕ್ಕ ಶಿಶುವಿನಂತೆ

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ !

ನಿಮ್ಮ ಕರುಣವಾಗದನ್ನಕ್ಕ ಬಳಲುತ್ತಿದ್ದರಯ್ಯಾ ಹೊಲಬನರಿಯದೆ

ಗುರು ಕರುಣೆಯಿಂದಲ್ಲದೆ ಜಗದ ಅಜ್ಞಾನ ಹರಿಯದು ಜೀವಿಗಳ ಬದ್ಧತನವಳಿಯದು. ಹೊಲಬು ದೊರೆಯದು. ಸದ್ಗುರುವೇ ದಾರಿತೋರುವವನು, ಸೂರ್ಯನು ಬ್ರಹ್ಮಾಂಡವನ್ನು ಬೆಳಗಿದರೆ ಗುರುವರನು ಪಿಂಡಾಂಡವನ್ನು ಬೆಳಗುವನು.

ಬ್ರಹ್ಮಾಂಡಗತ ಕತ್ತಲೆಯ ಕಳೆಯುವನು ದಿನಕರನು.

ಪಿಂಡಾಂಡಗತ ಕತ್ತಲೆಯ ಕಳೆಯುವನು ಗುರುವರನು.

ನಿರಾಕಾರ ಶಿವನು ಭಕ್ತನಿಗೆ ತೋರುವವನಲ್ಲ.

ಸಾಕಾರ ಗುರುದೇವ ಭಕ್ತಹಿತ ಕೋರುವನೆಂದ

ನಮ್ಮ ಮೃಡಗಿರಿಯ ಅನ್ನದಾನೀಶ (ವ. ವ. ೧೧)

ಭಕ್ತ ಹಿತಕ್ಕಾಗಿ ಬಾಳುವವನೇ ಪರಮ ಗುರು. ಇಂಥವನೆ ಜಗದ ಜೀವಿಗಳ ಜಂಜಡವನ್ನು ನೀಗಿಸಿ ಸನ್ಮಾರ್ಗವನ್ನು ತೋರಬಲ್ಲನು.

ಪಿಂಡವಧರಿಸಿ ಬ್ರ |  ಹ್ಮಾಂಡವನೊಳಕೊಂಡು

ಪಿಂಡಬ್ರಹ್ಮಾಂಡ | ಪರಿಪೂರ್ಣವೆನಿಸಿದ್ದ (ಅ)

ಖಂಡ ಶ್ರೀಗುರುವೇ ಕೃಪೆಯಾಗು || ೧೭ ||

ಪರಿಶುದ್ಧವಾದ ಅಂತಃಕರುಣವುಳ್ಳ ಜೀವನಿರುವ ಈ ಶರೀರವು ಪಿಂಡವನಿಸುವದು. ಬ್ರಹ್ಮಾಂಡವೆಂದರೆ ಶಿವನ ಮಹಾಕಾರ್ಯ ; ಈ ಜಗತ್ತು. ಪಿಂಡವು ಬ್ರಹ್ಮಾಂಡದ ಒಂದಂಶ, ಬ್ರಹ್ಮಾಂಡವು ಅಸಂಖ್ಯ ಪಿಂಡಾಂಡಗಳ ಸಮೂಹ. ಪಿಂಡವು ವ್ಯಷ್ಟಿಯಾದರೆ ಬ್ರಹ್ಮಾಂಡವು ಸಮಷ್ಟಿಯಾಗಿದೆ. ಎಲ್ಲವುಗಳನ್ನು ಒಳಗೊಂಡಿದೆ.ಪಿಂಡಾಂಡ ಮತ್ತು ಬ್ರಹ್ಮಾಂಡಗಳು ಒಂದಕ್ಕೊಂದು ಬೀಜವೃಕ್ಷ ನ್ಯಾಯದಂತೆ ಅನ್ನೋನ್ಯ ಸಂಬಂಧವನ್ನು ಹೊಂದಿವೆ. ಬೀಜದಲ್ಲಿ ವೃಕ್ಷವಿರುವಂತೆ, ವೃಕ್ಷದಲ್ಲಿ ಬೀಜವಿರುವದು. ಹಾಗೇ ಶರೀರದಲ್ಲಿ ಶಿವನ ಚೈತನ್ಯವಿದೆ. ಶಿವನಲ್ಲಿ ಈ ಜಗವೆಲ್ಲ ಅಡಗಿದೆ. ಆ ಶಿವನು ನಿಷ್ಕಲನಾಗಿರುವದರಿಂದ ಕಣ್ಣಿಗೆ ಕಾಣುವದಿಲ್ಲ. ಗುರುವು ಸಕಲ ನಾಗಿ, ಕಾಯವನ್ನು ಧರಿಸಿ ಬ್ರಹ್ಮಾಂಡವನ್ನು ವ್ಯಾಪಿಸಿದ್ದಾನೆ. ಅದಕ್ಕಾಗಿ ಪಿಂಡಾಂಡ ಮತ್ತು ಬ್ರಹ್ಮಾಂಡಗಳಲ್ಲಿ ಪರಿಪೂರ್ಣನಾಗಿದ್ದಾನೆ. ಅಖಂಡನೆನಿಸಿ ಮೆರೆಯುತ್ತಿದ್ದಾನೆ.

ಗುರುವರನು ವ್ಯಷ್ಟಿಗತನಾದ ಶಿಷ್ಯನ ಪಿಂಡಾಂಡವನ್ನು ಪರಿಶುದ್ಧ ಗೊಳಿಸುತಿದ್ದರೂ ಬ್ರಹ್ಮಾಂಡದ (ಜಗತ್ತಿನ) ಪರಿಶೋಧಕನೂ ಆಗಿದ್ದಾನೆ. ಅದಕ್ಕಾಗಿ ಅವನು ಪರಿಪೂರ್ಣ ಸ್ವರೂಪನೆನಿಸುವನು. ಯಾಕೆಂದರೆ ಛಾಂದೋಗ್ಯೂಪನಿಷತ್ತಿನಲ್ಲಿ ಪ್ರತಿಪಾದಿಸಿದಂತೆ “ಏಕೇನ ವಿಜ್ಞಾನೇನ ಸರ್ವ೦ ವಿಜ್ಞಾತಂ ಭವತಿ |’ ಏಕೈಕನಾದ ಪರಶಿವನ (ಪರವಸ್ತುವಿನ) ಜ್ಞಾನವನ್ನು ಪಡೆದರೆ ತನ್ಮಯವಾದ ಸಕಲ ಜಗತ್ತಿನ ಜ್ಞಾನವಾಗುವದು. ಸದ್ಗುರುನಾಥನು ಪರವಸ್ತುವನ್ನು ಅರಿತು ಪರವಸ್ತುವೇ ತಾನಾಗಿರುತ್ತಾನೆ. ಪರವಸ್ತು ಪರಿಪೂರ್ಣ ಮತ್ತು ಅಖಂಡ ಸ್ವರೂಪವಲ್ಲವೆ ?

ಹದಿನಾಲ್ಕು ಭುವನ ತುಂ | ಬಿದುದೊಂದು ಬ್ರಹ್ಮಾಂಡ

ವದರಂತೆ ತೋರ-ಅಗಣಿತ ಬ್ರಹ್ಮಾಂಡ

ಕ್ಕಧಿಕಾರಿ ಗುರುವೆ ಕೃಪೆಯಾಗು  || ೧೮ ||

ಬೃಹತ್ತೆಂದರೆ ದೊಡ್ಡದು. ಬೃಹತ್ತತೆಯುಳ್ಳುದೆ ಬ್ರಹ್ಮ ಅಂಡವೆಂದರೆ ತತ್ತಿ.ಬ್ರಹ್ಮಾಂಡವು ದೊಡ್ಡ ತತ್ತಿಯಾಕಾರದ್ದೆಂದು ಅನುಭವಿಗಳು ಹೇಳುತ್ತಾರೆ. ಈ ಬ್ರಹ್ಮಾಂಡವು ಅತಳ, ವಿತಳ, ಸುತಳ, ನಿತಳ, ತಳಾತಳ, ರಸಾತಳ, ಪಾತಾಳ (ಇವು ಏಳು ಕೆಳಗಿವೆ)

ಭೂಲೋಕ, ಭುವರ್ಲೋಕ, ಸುವರ್ಲೋಕ, ಸತ್ಯಲೋಕ, ಜನಲೋಕ, ತಪೋಲೋಕ,ಮಹಾಲೋಕ (ಇವು ಏಳು ಮೇಲಿನವು) ಹೀಗೆ ಹದಿನಾಲ್ಕು ಭುವನಗಳಿಂದ ತುಂಬಿದೆ. ಹದಿನಾಲ್ಕು ಲೋಕಗಳಿಂದ ತುಂಬಿದುದೇ ಬ್ರಹ್ಮಾಂಡವೆಂದು ಹೆಸರು.ಶಿವನ ಉದರದಲ್ಲಿ ಅಸಂಖ್ಯ ಲೋಕಗಳು ಇರುವದರಿಂದ ವಿಷಪಾನ ಮಾಡದೇ ವಿಷಕಂಠನೆನಿಸಿದ ಪೌರಾಣಿಕ ಕಥೆ ಪ್ರಸಿದ್ಧವಿದೆ.

ಬ್ರಹ್ಮಾಂಡದಂತೆ ತೋರುವ, ಲೆಖವಿಲ್ಲದ ಸಮಸ್ತ ಬ್ರಹ್ಮಾಂಡಗಳಿಗೂ ಒಡೆಯನಾದವನು ಗುರುದೇವನೆ. ಗುರುವಿಲ್ಲದೆ ಮಾರ್ಗದರ್ಶನ ದೊರೆಯದು. ಯಾವ ಲೋಕದಲ್ಲಿಯಾದರೂ ಸದ್ಗುರುವು ಮಾರ್ಗದರ್ಶನ ಮಾಡಿದ ನಿದರ್ಶನಗಳು ಸಿಕ್ಕುತ್ತಿವೆ. ದೇವತೆಗಳ ಲೋಕದಲ್ಲಿ ಬೃಹಸ್ಪತಿಯು ಗುರುವಾದರೆ ರಾಕ್ಷಸ ಲೋಕದಲ್ಲಿ ಶುಕ್ರಾಚಾರ್ಯನು ಗುರುವಾಗಿದ್ದಾನೆ.

“ವರ್ಣ ಮಾತ್ರಂ ಕಲಿಸಿದಾತಂ ಗುರು” ಎಂದು ಕನ್ನಡ ಗಾದೆ ಗುರುವಿನ ಗುರುತನ್ನು ಸಾರುತ್ತಿದೆ. ಗುರುವಿಲ್ಲದೆ ಯಾವ ಜ್ಞಾನ ಸಿಕ್ಕಲಾರದು. “ಆಚಾರ್ಯ ದೇವೋ ಭವ’ವೆಂದು ವೇದವು ಸದ್ಗುರುವಿನ ವಿಭುತ್ವವನ್ನು ಉದ್ಘೋಷಿಸಿದೆ. ಸಕಲ ಲೋಕಂಗಳಿಗೆ ಪ್ರಭುವಾದ ಗುರುವಿನ ಕೃಪೆಯಾದವನಿಗೆ ಯಾವ ಕೊರತೆಯೂ ಆಗಲಾರದೆಂಬುದೇ ಶಿವಕವಿಯ ಆಶಯವಾಗಿದೆ.

ನಾದ-ಬಿಂದುಗಳೇಕ | ವಾದ ವಸ್ತುವಿಗೆ ನೀ-

ನಾದಿ ಚೈತನ್ಯನಾಗಿ ಶೋಭಿಸುತಿಪ್ಪಾ

ನಾದಿ ಶ್ರೀಗುರುವೆ ಕೃಪೆಯಾಗು || ೧೯ ||

ಬಸವಲಿಂಗಶರಣರು ನಿಷ್ಕಲನಾದ ಪರಶಿವನ ನಾದಬಿಂದು-ಕಲಾರೂಪ ವಾದ ಸ್ವರೂಪ ಲಕ್ಷಣವನ್ನು ಶ್ರೀಗುರುವಿನಲ್ಲಿ ಸಮನ್ವಯಗೊಳಿಸಿದ್ದಾರೆ. ಅನುಭವಿಗಳು ಪರಶಿವನನ್ನು ಶೂನ್ಯ ಸ್ವರೂಪದಲ್ಲಿ ಕಂಡು ಶೂನ್ಯಕ್ಕೂ ಚೇತನವಾದ ನಿಶೂನ್ಯವನ್ನು ಪರಿಶೋಧಿಸಿರುವರು. ನಾದವೆಂದರೆ ಧ್ವನಿ ; ಪ್ರಣವನಾದ. ಬಿಂದುವೆಂದರೆ ಪ್ರಕಾಶ, ಕಲೆಯೆಂದರೆ ಚೈತನ್ಯ, ನಾದ ಹೊರಹೊಮ್ಮಿದಾಗ ಪ್ರಣವ ಸ್ವರೂಪವು ಪ್ರಕಾಶಗೊಳ್ಳುವದು.ಮುಂದೆ ಪ್ರಕಾಶಕ್ಕೆ ಚೈತನ್ಯ ತುಂಬಲು ಕಲೆಯಾಗಿ ವ್ಯಕ್ತವಾಗುವದು. ಅಂದರೆ ಓಂಕಾರದ ನಾದ ಪ್ರಾರಂಭವಾಗಲು ಅದನ್ನು ಪ್ರಕಾಶಗೊಳಿಸಲು ಕಲೆಯಾಗಿ ಅಭಿವ್ಯಕ್ತವಾಗುವದು. ಅದು ಅಕ್ಷರ ವ್ಯಕ್ತರೂಪವನ್ನು ಹೊಂದುವದು. ಈ ನಾದ-ಬಿಂದು-ಕಲೆಗಳು ಒಂದಾದ ಆದಿ ಪರವಸ್ತುವಿಗೆ (ಶೂನ್ಯ ಶಿವನಿಗೆ) ಅನಾದಿ ಚೈತನ್ಯನಾಗಿ ಪರಿಶೋಭಿಸುವವನು ಶ್ರೀಗುರುವು. ಗುರುವು ಪರಾತ್ಪರ ಪರವಸ್ತುವಿನ ಪ್ರತಿರೂಪ. ನಿಶೂನ್ಯದ ಪ್ರತೀಕ.

ಪರ ಶಬ್ದವು ಪರಜಂಗಮನ ಬೋಧಕವಾಗಿದೆ. ಅನಾದಿ ವಸ್ತುವೇ ಜಂಗಮ ತತ್ತ್ವವು. ಅಂಥ ಜಂಗಮನ ಅಥವಾ ನಿರಾಭಾರಿ ಗುರುವಿನ ಪರಮ ಗುರುತ್ವದ ಕಲ್ಪನೆ ಅನಾದಿಯಾಗಿದೆ. ಗುರುತ್ವವನ್ನು ನೀಡುವ ಚೇತನ ಮತ್ತೊಂದಿಲ್ಲ. ಅದು ಅನಾದಿ ಸಂಸಿದ್ಧವಾಗಿದೆ. ಸ್ವಯಂ ಚೇತನವಾಗಿದೆ. ಅಂಥ ಶ್ರೀಗುರುವೆ ! ನಿನ್ನ ಶಿಷ್ಯನಲ್ಲಿಯೂ ನಾದಬಿಂದು-ಕಲೆಗಳನ್ನು ಜಾಗೃತಗೊಳಿಸು.

ಗುರುವು ಮಂತ್ರೋಪದೇಶಮಾಡಿ ಪ್ರಣವ ಪಂಚಾಕ್ಷರಿಯನ್ನು ತುಂಬುವನು.ಅರ್ಥಾತ್ ಸರ್ವಾಂಗದಲ್ಲಿ ಮಂತ್ರನ್ಯಾಸಗೊಳಿಸುವನು. ಇಷ್ಟಲಿಂಗವನ್ನು ಕರುಣಿಸಿ ಬಿಂದುವನ್ನು ನಿಲ್ಲಿಸಲು ಕಲಿಸುವನು. ಶ್ರೀ ಜ.ಚ.ನಿ. ಯವರು ಬಿಂದುವೆಂದರೆ ರಸವೆಂದೂ ಅರ್ಥೈಸಿರುವರು. ಲಿಂಗ ಪೂಜೆಯ ಫಲವಾಗಿ ಗುರುಚರಣದ ಕರುಣ ರಸಾಸ್ವಾದವೂ ಒಂದಲ್ಲವೆ ! ಲಿಂಗದಲ್ಲಿ ಬಿಂದು ನಿಂದೊಡೆ ಚೈತನ್ಯ ಬೆಳಗುವದು. ಇದೆಲ್ಲದಕ್ಕೂ ಶ್ರೀಗುರುವೇ ಕಾರಣನು. ಆ ಗುರುಚೈತನ್ಯವೇ ಎಲ್ಲಕ್ಕೂ ಚೇತನವಾಗಿದೆ.

ವಸುಧಾಕೃತ್ಯವ ಮಾಳ್ವ | ಶಶಿಭಾನು ಜ್ಯೋತಿಯಿಂ

ದೆಸೆವ ಬೆಳಗಿಂಗೆ ಮೂಲಕಳೆಯಾಗಿ ಶೋ-

ಭಿಸುವ ಶ್ರೀಗುರುವೆ ಕೃಪೆಯಾಗು || ೨೦ ||

ಮೇಲೆ ಶ್ರೀಗುರು ನಾದ-ಬಿಂದು-ಕಲಾಸ್ವರೂಪನೆಂದು ಪ್ರತಿಪಾದಿಸಿ ಇಲ್ಲಿ ಸ್ವಯಂಜ್ಯೋತಿ ಸ್ವರೂಪನೆಂದು ನಿರೂಪಿಸಿದ್ದಾನೆ. ವೀರವಿರಾಗಿಣಿ, ಜ್ಞಾನದಖಣಿ ಅಕ್ಕಮಹಾದೇವಿಯ ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ” ಎನ್ನುವ ವಚನದಲ್ಲಿ ಲೋಕವ್ಯವಹಾರಕ್ಕೆ ಸೂರ್ಯಚಂದ್ರರ ಬೆಳಕೇ ಕಾರಣವಾಗಿದೆ. ಸೂರ್ಯನು ಉದಯಿಸಿದಾಗ ಜೀವಿಗಳಲ್ಲಿ ನವಚೈತನ್ಯ ಜಾಗ್ರತವಾಗುತ್ತದೆ. ದಿನವೆಲ್ಲ ದುಡಿದು ದಣಿದ ಮಾನವರಿಗೆ ಇರುಳಿನಲ್ಲಿ ಚಂದ್ರನು ತನ್ನ ಆಹ್ಲಾದಕರ ಕಿರಣಗಳಿಂದ ಸಂತೃಪ್ತಿಯನ್ನು ನೀಡುತ್ತಾನೆ. ಅಗ್ನಿಯು ಆಹಾರವನ್ನು ಬೇಯಿಸುವದು, ಕತ್ತಲೆಯಲ್ಲಿ ಬೆಳಕನ್ನು ನೀಡುವದು. ಈ ಅಗ್ನಿಯು ಉರುವಲದ ಸಹಾಯದಿಂದ ವ್ಯಕ್ತವಾದರೆ ಚಂದ್ರನು ಸೂರ್ಯನ ಪ್ರಕಾಶವನ್ನು ಪಡೆದುಕೊಂಡೇ ಬೆಳಕನ್ನು ಬೀರುವನು. ವಿಜ್ಞಾನಿಗಳು ಶಶಿಯನ್ನು ಪರಪ್ರಕಾಶಿಯೆಂದು ಕಂಡು ಹಿಡಿದಿರುವರು. ಚಂದ್ರನಿಗೆ ಪ್ರಕಾಶವನ್ನು ಕೊಡುವ ರವಿಯಾದರೂ ಸ್ವಯಂಪ್ರಕಾಶ ವುಳ್ಳವನಲ್ಲ, ಇವೆಲ್ಲ ಬೆಳಕುಗಳಿಗೆ ಮೂಲಕಳೆಯಾಗಿ, ಚೈತನ್ಯವಾಗಿ ಪರಿಶೋಭಿಸುವ ವಸ್ತು ಮತ್ತೊಂದಿದೆ. ಈ ಮಾತನ್ನು ಶ್ವೇತಾಶ್ವತರ ಕೃತಿಯು ವ್ಯಕ್ತಗೊಳಿಸಿದೆ.

‘ನ ತತ್ರ ಸೂರ್ಯೋ ಭಾತಿ, ನ ಚಂದ್ರ ತಾರಕಾಃ |

ನೇಮಾ ವಿದ್ಯುತೋ ಭಾತಿ, ಕುತೋಯಮಗ್ನಿ: ||

ತಮೇವ ಬಾಂತಮನುಭಾತಿ ಸರ್ವಂ |

ತಸ್ಯ ಭಾಸಾ ಸರ್ವಮಿದಂ ವಿಭಾತಿ  ||

ಸ್ವಯಂಜ್ಯೋತಿ ಪರಶಿವನ ಪ್ರಕಾಶದಿಂದಲೇ ಸೂರ್ಯ, ಚಂದ್ರ, ನಕ್ಷತ್ರ, ವಿದ್ಯುತ್ ಮತ್ತು ಅಗ್ನಿ ಇವೆಲ್ಲವುಗಳು ಬೆಳಗುತ್ತವೆ. ಆದರೆ ಇವುಗಳು ಮಹಾಪ್ರಕಾಶದೆದುರು ಏನೂ ಅಲ್ಲ. ಆ ಸ್ವಯಂಜ್ಯೋತಿಯ ಪ್ರಕಾಶವನ್ನು ಪಡೆದುಕೊಂಡೇ ಸೂರ್ಯಾದಿ ಗ್ರಹಗಳು ಬೆಳಗುತ್ತವೆ. ಪರಶಿವನ ಪ್ರಕಾಶವೇ ಎಲ್ಲಕ್ಕೂ ಕಾರಣವಾಗಿದೆ.

ಸ್ವಯಂಜ್ಯೋತಿ ಸ್ವರೂಪನಾದ ಪರಶಿವನೇ ಭಕ್ತೋದ್ಧಾರಕ್ಕಾಗಿ ಸಕಲ ರೂಪನಾಗಿ ಮೆರೆಯುತ್ತಿರುವವನು ಗುರುವೆಂಬುದು ಸ್ಪಷ್ಟವಾಗಿದೆ. ಸದ್ಗುರುನಾಥನು ಸ್ವಯಂಜ್ಯೋತಿಸ್ವರೂಪನು. ಸದ್ಗುರುವಿನ ಸನ್ನಿಧಿಯನ್ನು ಪಡೆದುಕೊಂಡರೆ ಅಜ್ಞಾನಾಂಧಕಾರದ ಸುಳಿವೂ ತೋರಲಾರದು. ಅಂತೆಯೇ ಕವಿಗಳು ಸದ್ಗುರುವಿನ ಸನ್ನಿಧಿಯಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.

ಜಾತಿಭೇದವನಳಿದು | ನೀತಿಮಾರ್ಗವ ಪೇಳಿ

ಓತು ತ್ರೈಭುವನ-ದಾರಾಧ್ಯ ನೆನಿಸಿದ ಅ-

ಜಾತ ಶ್ರೀ ಗುರುವೆ ಕೃಪೆಯಾಗು || ೨೧ ||

“ಚಾತುರ್ವಣ್ಯ್ರಂ ಮಯಾ ಸೃಷ್ಟಂ

ಗುಣಕರ್ಮ ವಿಭಾಗಶಃ’ || ಭ. ಗೀತೆ ||

ಗುಣ ಮತ್ತು ಕರ್ಮಭೇದದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಣಗಳು ನನ್ನಿಂದ ನಿರ್ಮಿತವಾಗಿವೆಯೆಂದು ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ. ವೇದವನ್ನು ಓದಿ ಬ್ರಾಹ್ಮಣನಾದರೆ, ಕತ್ತಿ ಹಿಡಿದು ಯುದ್ಧಮಾಡಿ ರಾಜ್ಯಗಳಿಸಿ ಕ್ಷತ್ರಿಯನೆನಿಸುವನು. ವ್ಯಾಪಾರಮಾಡಿ ವೈಶ್ಯನಾಗಿದ್ದರೆ, ಸೇವೆಗೈದು ಶೂದ್ರನೆನಿಸಿರುವನು.

ಇಂದಿನ ವೈಜ್ಞಾನಿಕಯುಗದ ಮಾನವನು ಈ ಚಾತುರ್ವಣ್ಯ್ರವನ್ನು ಒಪ್ಪುವ ದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಂದ, ಸ್ವಾರ್ಥಪೂರ್ವಕವಾಗಿ ಮಾನವ ಸಮಾಜದಲ್ಲಿ ಜಾತಿಭೇದಗಳನ್ನು ಕಲ್ಪಿಸಿ ವಿಭಿನ್ನತೆಯನ್ನುಂಟುಮಾಡಲ್ಪಟ್ಟಿದೆ.

ವಸ್ತುತಃ ಮಾನವಕುಲವು ಸಮಾನವಾದುದು. ಮೂಲಭೂತ ಹಕ್ಕುಗಳು ಸಕಲರಿಗೂ ಸೇರಿವೆ. ಆದರೆ ಜಾತಿ ವರ್ಣಾಶ್ರಮಗಳ ಸಂಕೋಲೆಯು ಮಾನವ ಕುಲವನ್ನು ಛಿದ್ರ ಛಿದ್ರಗೊಳಿಸಿದೆ. ಕಾಯಕಗಳಿಂದ ಬೆಳೆದುಬಂದ ವರ್ಗಗಳು ಜಾತಿಗಳಾಗಿ ಪರಿಣಮಿಸಿವೆ. ಶಿಕ್ಷಣಶೂನ್ಯ ಜನತೆಯನ್ನು ಬುದ್ಧಿವಂತನಾದವನು ದೂರ ದೂರ ಸರಿಸಿದನು. ವೇದಗಳನ್ನು ಕಲಿತು ಬಲ್ಲಿದನಾದವನು ಬ್ರಾಹ್ಮಣ ನೆನಿಸಿದನು.

ಬ್ರಾಹ್ಮಣನಾದವನು ಬ್ರಹ್ಮಜ್ಞಾನಿಯಾಗಿ ಸಮದರ್ಶಿತ್ವವನ್ನು ಪಡೆಯದೆ, ವೈದಿಕ ವೃತ್ತಿಯನ್ನು ಕೈಕೊಂಡು ಸರ್ವರಿಗೂ ಅಧಿಕನೆಂದೇ ಸಾರಿದನು. “ರಾಜಾ ಪ್ರತ್ಯಕ್ಷ ದೇವತಾ”ಯೆಂದು ಹೊಗಳಿ ಶರೀರ ಬಲದಿಂದ ಸದೃಢರಾದವರನ್ನು ಮೇಲೆತ್ತಿದನು. ಈ ಬಾಹುಬಲವುಳ್ಳವರನ್ನು ಕ್ಷತ್ರಿಯರನ್ನಾಗಿಸಿದನು. ವ್ಯಾವಹಾರಿಕ ಬುದ್ಧಿಯುಳ್ಳವರನ್ನು ವೈಶ್ಯರನ್ನಾಗಿ ಪರಿಗಣಿಸಿದನು, ವ್ಯಾಪಾರದಿಂದ ಬಂದ ಲಾಭದಲ್ಲಿ ಭೂಸುರನೆನಿಸಿದ ಬ್ರಾಹ್ಮಣನ ಹೊಟ್ಟೆ ಸುಖವಾಗಿ ತುಂಬುತ್ತ ಬಂದಿತು. (ಮಾನವಧರ್ಮ ಪುಟ ೧೧೩ ರಲ್ಲಿ) ಒಟ್ಟಿನ ಮೇಲೆ ಸ್ವಾರ್ಥ ಸಾಧನೆಯಿಂದಲೇ ಮಾನವ ಸಮಾಜವು ಭಿನ್ನ ಭಿನ್ನವಾಯಿತು.

ಅಣ್ಣ ಬಸವಣ್ಣನವರು “ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಅಕ್ಕಸಾಲಿಗನಾದ.” ಎಂದು ಮುಂತಾಗಿ ಕಟುವಾಗಿ ತಿಳಿಸಿ ಜಾತಿಯ ಜಾಡ್ಯವನ್ನು ದೂರಮಾಡಿದರು. ಜಾತಿ ಮಾನವ ನಿರ್ಮಿತವಾದುದು. ಕಾಯಕದಿಂದ ಬರುವ ಜಾತಿಗಳು ಮಹತ್ವದವುಗಳಲ್ಲ. ದೇವನಿರ್ಮಿತ ಮಾನವಕುಲವೊಂದೇ ವಿಶಿಷ್ಟವಾಗಿದೆ. ಮನುಷ್ಯನಿರ್ಮಿತ ಕಾಯಕಗತ ಜಾತಿಗಳು ಅನಂತನಾಗಿರಬಹುದು. ಮಾನವ ಜಾತಿಯು ನೀತಿ ಭರಿತವಾಗಬೇಕು. ದೇವನ ಕೃಪೆಗೆ ಕಾರಣವಾಗಬೇಕು. ಆಗ ದೇವನೊಲಿದಾತನೇ ನಿಜವಾದ ಜಾತನೆಂದು ಶಿವಶರಣರು ಸಿದ್ಧಮಾಡಿದರು. ಜ್ಞಾನಿ ಗಳಾದವರಿಗೆ ಯಾವ ಜಾತಿಯ ಸೋಂಕಿರುವದಿಲ್ಲ. ಜ್ಞಾನಿಗಳಾದ ಕಬೀರದಾಸರು –

ಜಾತಿ ನ ಪೂಛೋ ಸಾಧೂಕಿ, ಪೂಛ ಲೀಜೀಯೇ ಜ್ಞಾನ |

ಮೌಲ ಕರೋ ತಲವಾರಕೀ, ರಹನೇ ದೋ ಮ್ಯಾನ ||

ಸತ್ಪುರುಷರ ಜಾತಿಯನ್ನು ಕೇಳಬೇಡ, ಜ್ಞಾನವನ್ನು ಕೇಳಿ ತಿಳಿದುಕೊ ಯಾಕಂದರೆ (ಖಡ) ಕತ್ತಿಗೆ ಬೆಲೆಯನ್ನು ಕಟ್ಟುವರಲ್ಲದೆ, ಕತ್ತಿಯ ಮೇಲಿನ ಒರೆಗೆ ಯಾರೂ ಬೆಲೆ ಕಟ್ಟುವದಿಲ್ಲವೆಂದು ಜಾತಿಯ ಜಾಡ್ಯವನ್ನು ಖಂಡಿಸಿರುವರು.

ವೀರಶೈವ ಸಿದ್ಧಾಂತದಲ್ಲಿ ಸದ್ಗುರುನಾಥನು ಶಿವದೀಕ್ಷೆಗೈದನೆಂದರೆ ಶಿಷ್ಯನ ಪೂರ್ವಾಶ್ರಮ ನಿರಸನವಾಗುವದು. “ಜನ್ಮನಾ ಜಾಯತೇ ಶೂದ್ರ: ಕರ್ಮಣಾ ದ್ವಿಜ ಉಚ್ಯತೇ ।” ಬ್ರಾಹ್ಮಣನ ಹೊಟ್ಟೆಯಲ್ಲಿ ಹುಟ್ಟಿದ ಶಿಶುವಿಗಾದರೂ ಶೂದ್ರತ್ವ ಬಿಡುವ ದಿಲ್ಲ, ಉಪನಯನ ಸಂಸ್ಕಾರದಿಂದಲೇ ದ್ವಿಜತ್ವ (ಬ್ರಾಹ್ಮಣ್ಯತ್ವ)ವು ಪ್ರಾಪ್ತವಾಗುತ್ತದೆ. ವೀರಶೈವಧರ್ಮದಲ್ಲಿ ಜಾತಿಸೂತಕವಿಲ್ಲ. ಇದು ತಮ್ಮ ಸೂಚಕವಾಗಿದೆ. ವೀರಶೈವನು ಗರ್ಭಾಷ್ಟಮಿಯಲ್ಲಿಯೇ ಗುರುವಿನಿಂದ ಗರ್ಭಸ್ಥ ಶಿಶುವಿಗೆ ಲಿಂಗಸಂಸ್ಕಾರ ಮಾಡಿಸಿ ಶೂದ್ರತ್ವವನ್ನು ಕಳೆಯುತ್ತಾನೆ. ಇಲ್ಲಿ ಶೂದ್ರತ್ವಕ್ಕೆ ಅವಕಾಶವೇ ಇಲ್ಲ. ಸಾಮಾನ್ಯವಾಗಿ ಎಲ್ಲ ಧರ್ಮಿಯರಲ್ಲಿ ಸ್ತ್ರೀಯರಿಗೆ ಸಂಸ್ಕಾರಗಳಿಲ್ಲ. ಆದರೆ ವೀರಶೈವರಲ್ಲಿ ಸ್ತ್ರೀಪುರುಷರೆಂಬ ಭೇದವಿಲ್ಲದೆ ಧರ್ಮಸಂಸ್ಕಾರ ನಡೆಯುವದು.

ಈ ಜಾತಿ ಸೂತಕವನ್ನು ಕಳೆಯುವ ಸಾಮರ್ಥ್ಯ ಸದ್ಗುರುವಿನಲ್ಲಿದೆ. ಗುರುವರನು ದೀಕ್ಷಾಸಂಸ್ಕಾರಗಳಿಂದ ಶಿಷ್ಯರ ಜಾತಿಭೇದಗಳನ್ನೆಲ್ಲ ಕಳೆದುಹಾಕುತ್ತಾನೆ. ಮಹಾಮಾನವ ಧರ್ಮದ ನೀತಿಯನ್ನು ಪ್ರೀತಿಯಿಂದ ಕಲಿಸುತ್ತ ಶರಣಕುಲದವನನ್ನಾಗಿ ಮಾಡುವನು. ನಿಜಗುಣರು ಕೈವಲ್ಯ ಪದ್ಧತಿಯಲ್ಲಿ –

“ದುರಿತಕರ್ಮವನೊಲ್ಲದಿರು, ಪುಣ್ಯವನೆ ಮಾಡು |

ಹರನಡಿವಿಡಿ, ಶಾಂತರೊಡನಾಡು ||

ಕರುಣವಿರಲಿ ಜೀವರೂಳು, ನೀತಿವಿದನಾಗು |

ಪೊರೆ ಪೊರ್ದಿದರನೆಂದು ಬೆಸಸುವ ||

ನಿಂದಿಸಿ ನುಡಿಯದಿರಾರನು ಮನಸಿಗೆ

ಬಂದತೆ ನಡೆಯದಿರಿಹದಲ್ಲಿ ||

ಕುಂದುವಡೆಯದಿರು ಕಾಮಾದಿಗಳನು ಜಯಿ

ಸೆಂದು ಕೈವಿಡಿದನುಗ್ರಹಿಸುವ ||”

ಎಂದು ಗುರುಬೋಧಿಸುವ ನೀತಿಮಾರ್ಗವನ್ನು ಸುಂದರವಾಗಿ ತಿಳಿಸಿರುವರು.ಗುರುನಾಥನು ಶಾಂತಿ, ಸಮಾಧಾನ, ಶಮ, ದಮ, ಸತ್ಯ, ಶೌಚ, ಅಸ್ತೇಯ, ಅಕ್ರೋಧ ಸದ್ಭಕ್ತಿ ಮೊದಲಾದ ನೈತಿಕ ಉಪದೇಶಾಮೃತವನ್ನು ಪ್ರೀತಿಯಿಂದ ಶಿಷ್ಯನಿಗಿತ್ತು ಶರಣ ಮಾರ್ಗದಲ್ಲಿ ಮುನ್ನಡೆಯಿಸುವನು. ಆದುದರಿಂದಲೇ ಗುರುವು ಮೂರುಲೋಕಗಳಿಗೂ ಪೂಜ್ಯನೆನಿಸುವನು. ತಾನು ಎಲ್ಲಜಾತಿಯ ಸಂಕೋಲೆಯನ್ನು ಬಿಡಿಸುವದರಿಂದಲೇ ಅಜಾತನು. ಜಾತಿಯ ಸೋಂಕು ಸದ್ಗುರುವಿಗಿಲ್ಲ. ಮಾಂಸಮಯ ಶರೀರ ಗುರುವಿನದಲ್ಲ. ಮಂತ್ರ ಮೂರಿಯೆನಿಸಿರುವನು. ಅಂಥವನೇ ಅಜಾತನು.

ಶ್ರೀಗುರುವೇ ! ನೀನೊಲಿದು ಎನ್ನನ್ನು ಸುಜಾತನನ್ನಾಗಿ ಮಾಡು. ಶಿಷ್ಯನು ಗುರುಕರಜಾತನಾಗಬೇಕಾದುದೇ ಮುಖ್ಯಗುರಿ. “ಜಾತಿಮತಗಳೆಷ್ಟಾದರೇನು ? ಸದ್ಗುರುವಿನ ನೀತಿಯೊಂದಲ್ಲವೆ !”

ಜೀವಜಾಲಗಳೊಳಗೆ | ಅವನಾದರೂ ನೀನು

ಕೈವಿಡಿದವನೆ-ಪಾವನಾತ್ಮಕ, ಗುರು

ದೇವ ನೀನೆನಗೆ ಕೃಪೆಯಾಗು II ೨೨ II

ಸಕಲಜೀವಿಗಳಿಗೆ ಲೇಸನ್ನು ಬಯಸುವದೇ ಅಚಾತನ ಕರ್ತವ್ಯ, ಗುರುರಾಯನು ಎಲ್ಲ ಜೀವಿಗಳಿಗೂ ಅಂತಃಕರಣವನ್ನು ನೀಡುತ್ತಾನೆ. ಸ್ವರ್ಗ ಮರ್ತ್ಯ-ಪಾತಾಳಗಳಲ್ಲಿಯ ದೇವತೆಗಳಿಗೆ ಮಾನವರಿಗೆ, ದಾನವರಿಗೆ ಸನ್ಮಾರ್ಗವನ್ನು ತೋರುತ್ತಾನೆ. ದೇವತೆಗಳಲ್ಲಿ ವಿಷಯಲೋಲುಪತೆ ಅಧಿಕವಾಗುತ್ತದೆ. ಅದಕ್ಕೆ ಅವರಿಗೆ ಶಮೆದಮೆಯನ್ನು ತಿಳಿಸಿ ದೇವತ್ವವನ್ನು ಉಳಿಸುತ್ತಾನೆ. ಮಾನವರಲ್ಲಿ ಸಂಕೋಚ ಸ್ವಭಾವ ವನ್ನು ಕಳೆದು ಮಾನವೀಯತೆಯನ್ನು ತುಂಬುತ್ತಾನೆ. ಕ್ರೂರರಾದ ದಾನವರಿಗೆ ದಯಾ ಧರ್ಮವನ್ನು ತಿಳಿಸಿ ಉದ್ಧರಿಸುತ್ತಾನೆ. ಗುರುವಿನಲ್ಲಿ ಭೇದ ಭಾವವಿರದು. ಜೀವಿಗಳಲ್ಲಿ ಯಾವಪ್ರಾಣಿಯಾದರೂ ಗುರುಸಾನ್ನಿಧ್ಯವನ್ನು ಬಯಸಿದರೆ ಅದಕ್ಕೆ ಗುರುಕೃಪೆಯಾಗದೇ ಇರದು. ಗುರುಕೃಪೆಯಾಗದೇ ಯಾವನೂ ಪಾವನನಾಗಲಾರನು. ಅದು ಕಾರಣ ಸದ್ಗುರುದೇವನನ್ನು ಶರಣು ಹೋಗಬೇಕು. ಚನ್ನಾಗಿ ನೆರೆನಂಬಬೇಕು ನಮ್ಮ ವಚನವಲ್ಲರಿಯಲ್ಲಿ –

ಆವಲೋಹವಾದಡೇನು ಪರುಷಕ್ಕೆ ಸಮಭಾವ;

ಆವ ಕಟ್ಟಿಗೆಯಾದಡೇನು ಅನಲಕ್ಕೆ ಸಮಭಾವ;

ಆವ ಕುಲದವನಾದಡೇನು ಸದ್ಗುರುವಿಗೆ ಸಮಭಾವ;

ಸಂಸಾರಸಾಗರವ ದಾಟಿಸದೇ ಬಿಡನು

ಇಂಥವನೇ ಗುರುದೇವ, ಅವನ ನೀನಂಬೆಂದ

ನಮ್ಮ ಮೃಡಗಿರಿ ಅನ್ನದಾನೀಶ (ವ.ವ. ೧೭)

ಸದ್ಗುರುವಿನ ಸಮದೃಷ್ಟಿ ವ್ಯಕ್ತವಾಗಿದೆ. ಪರುಷಮಣಿ ಸಾಮೀಪ್ಯಕ್ಕೆ ಬಂದ ಲೋಹವಾದರೂ ಹೊನ್ನಾಗದೇ ಬಿಡದು. ಬೆಂಕಿಯಲ್ಲಿ ಬಿದ್ದ ಯಾವ ಕಟ್ಟಿಗೆ ಯಾದರೂ ತತ್ಸ್ವರೂಪವನ್ನೇ ಹೊಂದುವದು, ಸದ್ಗುರುವಿನ ಸಾನಿಧ್ಯ ಇವಕ್ಕಿಂತಲೂ ಮಿಗಿಲಾಗಿದೆ. ಗುರುವಿನ ಕೈ ಬರಿಗೈಯಲ್ಲ. ಅದು ಪರುಷ ಹಸ್ತ, ಅಲ್ಲಲ್ಲ ! ಪರುಷಮಣಿಯನ್ನೇ ನಿರ್ಮಿಸುವ ಅಮೃತ ಹಸ್ತ, ದೇವರದಾಸಿಮಾರ್ಯರು-

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗಕಾಣಾ ರಾಮನಾಥ,

ಎಂದು ಗುರುವಿನ ಹಸ್ತದಂತೆ ಚರಣದ ಮಹತ್ವವನ್ನು ಬಿತ್ತರಿಸಿದ್ದಾರೆ. ಗುರು ಕೃಪಾಸ್ಪರ್ಶದಿಂದ ಶಿಷ್ಯನೂ ಗುರುತ್ವವನ್ನು ಪಡೆಯುವನು. ಓಗುರುವೆ ! ಗುರುದೇವ ! ನೀನೆನಗೆ ತಡಮಾಡದೆ ಕೃಪೆ ಮಾಡು.

ಹಲವು ಮಾತೇನು ನೀ | ನೊಲಿದು ಪಾದವನಿಟ್ಟ

ನೆಲವೆ ಸುಕ್ಷೇತ್ರ-ಜಲವೆ ಪಾವನ ತೀರ್ಥ

ಸುಲಭ ಶ್ರೀ ಗುರುವೆ ಕೃಪೆಯಾಗು || ೨೩ ||

ಶಿವಕವಿಗಳು ಗುರುಹಸ್ತ ಸ್ಪರ್ಶಪಡೆದ ಜೀವಿಯು ಪಾವನವಾಗುವಂತೆ ಗುರುಪಾದಸ್ಪರ್ಶಪಡೆದ ನೆಲ-ಜಲಗಳೂ ಕ್ಷೇತ್ರತೀರ್ಥಗಳಾಗುವವೆಂದು ಪ್ರತಿಪಾದಿಸಿದ್ದಾರೆ. ಗುರುಪಾದಸ್ಪರ್ಶದಿಂದ ಜಡವೂ ಚೈತನ್ಯಮಯವಾಗುವದೆಂಬುದನ್ನು ತಿಳಿಸಿದ್ದಾರೆ.

ಹಲವು ಗೊಳ್ಳು ಮಾತುಗಳಿಂದೇನು ? ಎಂದು ಅನುಭವಿಗಳಾದ ಶರಣರು ತಾವೇ ಪ್ರಶ್ನಿಸಿ ಉತ್ತರಿಸುತ್ತಾರೆ. ಗುರುವೆ ! ನೀನು ಕರುಣೆಯಿಂದ ಒಲಿದು ಪಾದವಿಟ್ಟ ಭೂಮಿಯು ಪರಮಕ್ಷೇತ್ರವಾಗುವದು. ನೀ ನಿಂದ, ಮಿಂದ ಜಲ ಪರಮ ಪಾವನ ತೀರ್ಥವಾಗುವದು. ಇಂಥ ಉದಹಾರಣೆಗಳು ಅನಂತವಾಗಿ ಕಾಣಬರುತ್ತಿವೆ. ಇದೇ ಮಾತನ್ನು ಮೊಗ್ಗೆಯ ಮಾಯಿದೇವರು ತಮ್ಮ ಶತಕತ್ರಯದಲ್ಲಿ

ಶರಣಂ ಶಾಂಭವಯೋಗಿ ಇದ್ದ ನೆಲನೇ ಕ್ಷೇತ್ರಂ ಪವಿತ್ರಂ ಪರಂ |

……ಡಿಸಲೆಂದು ಪೊಕ್ಕ ಜಲಮೇ ತೀರ್ಥಂ ಮಹಾಪಾವನಂ || ೧೮ ||

ಎಂದು ಶಿವಯೋಗಿ ಮೆಟ್ಟಿದ ನೆಲ, ಪೊಕ್ಕ ಜಲ ಪಾವನವಾಗುವವೆಂದು ತಿಳಿಸಿದ್ದಾರೆ. ಹೀಗೆ ಜಡವಾದ ನೆಲ-ಜಲಗಳನ್ನು ಸುಲಭವಾಗಿ ಪವಿತ್ರಗೊಳಿಸುವ ಶಕ್ತಿಯನ್ನು ಹೊಂದಿದ ಸದ್ಗುರುವೇ ನನ್ನನ್ನು ಪುನೀತನನ್ನಾಗಿ ಮಾಡೆಂದು ಬೇಡಿಕೊಂಡಿದ್ದಾರೆ.

ಇನ್ನುಳಿದ ಮಾತೇನು | ಮುನ್ನನೀನೊಲಿದು ನೀ-

ಮನ್ನಿಸಿದವನ-ಧನ್ಯನಾಗುವನು ಪ್ರ-

ಸನ್ನ ಶ್ರೀಗುರುವೆ ಕೃಪೆಯಾಗು || ೨೪ ||

ಸದ್ಗುರುವಿನ ಮಹಿಮಾತಿಶಯವನ್ನು ಮತ್ತೆ ಮತ್ತೆ ಎತ್ತಿ ತೋರಿಸಿದ್ದಾರೆ. ಬೇರೆ ಉದಾಹರಣೆಗಳನ್ನು ಉದಹರಿಸಿ ಪ್ರಯೋಜನವಿಲ್ಲ. ಗುರು ಕೃಪೆಗೆ ಯಾವ ದೃಷ್ಟಾಂತವೂ ಸರಿಬಾರದು. ಗುರುಕರುಣೆ ಸಣ್ಣದಲ್ಲ. ಗುರುಕರುಣೆಗೆ ಯಾವುದೂ ಸಮವಾಗದು. ಅದಕ್ಕಾಗಿ ಇನ್ನುಳಿದ ಮಾತೇನು” ಎಂದು ಪ್ರಸ್ತಾಪ ಮಾಡಿದ್ದಾರೆ.

ಗುರುಪ್ರಸನ್ನತೆ ಪ್ರಾಮುಖ್ಯ, ಸದ್ಗುರುವು ಸದಾಕಾಲವೂ ಪ್ರಸನ್ನನಾಗಿದ್ದರೂ ಶಿಷ್ಯನೂ ಸೇವೆಯನ್ನು ಸಲ್ಲಿಸಬೇಕಾಗುವದು. ಗೀತೆಯು ‘ಗುರು ಶುಶ್ರೂಷಯಾ ವಿದ್ಯಾ.” ಗುರುಸೇವೆಯ ಬಲದಿಂದಲೇ ಆತ್ಮವಿದ್ಯೆಯು ಲಭ್ಯವಾಗುವದು. ಸೇವೆ ಗುರುವಿನನ್ನು ತೀವ್ರವಾಗಿ ಪ್ರಸನ್ನನನ್ನಾಗಿಸುತ್ತದೆ. ಗುರು ಪ್ರಸನ್ನನಾಗಿ ಕರುಣೆ ದೋರಿದರೆ ಆ ಶಿಷ್ಯನು ಧನ್ಯನಾಗುವನು. ಗುರುಮನ್ನಣೆಗಿಂತ ಇನ್ನಾವ ಪದವಿಯಿದೆ?

ಗುರುಪಾದ ಸೇವೆ ಮಾಡುವ ಭಾಗ್ಯವನ್ನು ಬೇಡಿದ ಮಹಾನುಭಾವಿಗಳ ಉದಾಹರಣೆ ಗಳು ಅನಂತವಾಗಿವೆ. ಗುರು ಮನ್ನಣೆಯಲ್ಲಿ ಎಲ್ಲ ಗೌರವಗಳುಂಟು. ಗುರುವಿನ ಅನುಗ್ರಹವು ಭಕ್ತಿಯಿಂದಲ್ಲದೇ ಬೇರೆ ಯಾವ ಪ್ರಭಾವದಿಂದಲೂ ದೊರೆಯಲಾರದು. ಶಿಷ್ಯನ ಪರಿಶುದ್ಧ ಹೃದಯಕ್ಕೆ, ನಿರ್ಮಲಭಾವಕ್ಕೆ, ನಿಷ್ಕಾಮ ಭಕ್ತಿಗೆ ಗುರು ಕರುಣೆ ಕರಗಿ ಹರಿದುಬರುತ್ತದೆ. ಅಂತೆಯೇ ಶರಣರು ಯಾವ ಪದವಿಗೂ ಆಶೆಮಾಡದೇ ಗುರುಪಾದ ಸೇವೆಯನ್ನು ಬಯಸಿದರು. ಹಾವಿನಾಳ ಕಲ್ಲಯ್ಯ ಶರಣನು –

ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.

ಪರಮ ಪದವಿಯ ನಿಮ್ಮೆದೆಯಲ್ಲಿ ಇರಿದುಕೊಳ್ಳಿ.

ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು.

ಮಹಾಲಿಂಗ ಕಲ್ಲೇಶ್ವರ ದೇವಾ,

ಪರಮ ಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.

ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿ ಸತಿಶಿರೋಮಣಿ ಲಕ್ಕಮ್ಮನು-

ಮಾಡುವ ಮಾಟವುಳ್ಳನ್ನಕ್ಕ ಬೇರೊಂದು

ಪದವನರಸಲೇತಕ್ಕೆ ?

ದಾಸೋಹವೆಂಬ ಸೇವೆಯ ಬಿಟ್ಟು

ನೀಸಲಾರದೆ ಕೈಲಾಸವೆಂಬ ಆಸೆಬೇಡ

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವ ಕೈಲಾಸ

ಜಗದಣ್ಣ ಬಸವಣ್ಣನವರು –

ಬ್ರಹ್ಮಪದವಿಯನೊಲ್ಲೆ

ವಿಷ್ಣು ಪದವಿಯನೊಲ್ಲೆ

ರುದ್ರ ಪದವಿಯನೊಲ್ಲೆ

ಮತ್ತಾವ ಪದವಿಯನೊಲ್ಲೆನಯ್ಯಾ !

ಕೂಡಲಸಂಗಮದೇವಾ ! ನಿಮ್ಮ ಸದ್ಭಕ್ತರ

ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ

ಎಂದು ಮುಂತಾಗಿ ಶರಣರು ಸೇವಾಭಾವನೆಯಲ್ಲಿಯೇ ಶಿವನನ್ನು ಕಂಡಿದ್ದಾರೆ. ಗುರು ಪಾದ ಸೇವೆಯೇ ಸಾರ ಸರ್ವಸ್ವವಾಗಿದೆ. ಸದ್ಗುರು ಮನ್ನಣೆಯೇ ಜೀವನದ ಧೈಯವಾಗಿದೆ.

ದೊರೆಯೊಲಿದ ಬಡವಂಗೆ | ಧರೆಯ ಮನ್ನಣೆಯುಂಟು

ಗುರುವೆ ನೀನೊಲಿದ – ಶರಣಂಗೆ ಸರಿಯುಂಟೆ

ಕರುಣಿ ಶ್ರೀಗುರುವೆ ಕೃಪೆಯಾಗು || ೨೫ ||

ಮೇಲೆ ವಿವರಿಸಿದ ಗುರು ಮನ್ನಣೆಯ ಭಾಗ್ಯವನ್ನು ಲೌಕಿಕ ಉದಾಹರಣೆ ಯಿಂದ ಶಿವಕವಿಯು ಪುಷ್ಟಿಕರಿಸುತ್ತಾನೆ. ದೊರೆಯು ಧರೆಯ ಪಾಲಕ, ದೀನದಲಿತ ರಕ್ಷಕ. ನಿಷ್ಠಾವಂತ ಸೇವಕನು ಅರಸನ ಒಲುಮೆಯನ್ನು ಪಡೆದರೆ ರಾಜ್ಯದ ಜನರೆಲ್ಲ ಸೇವಕನಿಗೆ ಗೌರವ ನೀಡುತ್ತಾರೆ. ಅಂತೆಯೇ “ಅರಸು ಒಲಿದರೆ ಅರ್ಧರಾಜ್ಯ” ವೆಂಬ ನಾಣ್ಣುಡಿಯು ಪ್ರಸಿದ್ಧವಾಗಿದೆ. ಅರಸು ಕೆಲವು ಸ್ಥಾನಗಳ ಒಡೆಯ. ತನ್ನ ಪ್ರದೇಶದ ಅಧಿಕಾರಿಯು, ಆತನ ಒಲುಮೆಗೆ ಪಾತ್ರನಾದವನು ಸೀಮಿತ ಗೌರವ ಪಡೆಯಬಲ್ಲನು. ಆದರೆ-ಗುರುರಾಯ ತ್ರಿಲೋಕದೊಡೆಯ. ಜಗತ್ತಿಗೆಲ್ಲ ಗುರು, ಜಗದ್ಗುರುವೆನಿಸಿದ್ದಾನೆ. ಅವನು ಬ್ರಹ್ಮಾಂಡ ನಾಯಕನೆಂದು ಈ ಹಿಂದೆ ಹೊಗಳಿಸಿಕೊಂಡಿದ್ದಾನೆ. ಅಂಥ ಗುರುವಿನ ಕೃಪೆಗೆ ಒಳಗಾದ ಶರಣನಿಗೆ ಯಾರು ಸರಿಯಾಗಬಹುದು? ನೀತಿಕಾರರು.

“ಗುರುತ್ವಂ ನೃಪತ್ವಂ ಚ ನೈವ ತುಲ್ಯಂ ಕದಾಚನ |

ಸ್ವದೇಶೇ ಪೂಜ್ಯತೇ ರಾಜಾ ಗುರುಃ ಸರ್ವತ್ರ ಪೂಜ್ಯತೇ ||’

ಗುರುತ್ವವು ಮತ್ತು ನೃಪತ್ವವು ಎಂದೂ ಸರಿಬರಲಾರವು. ನೃಪನಾದರೂ ಗುರುವಿಗೆ ಮನ್ನಣೆ ನೀಡುತ್ತಾನೆ; ನೀಡಲೇಬೇಕು. ತನ್ನ ರಾಜ್ಯದಲ್ಲಿ ರಾಜನು ಗೌರವ ಪಡೆದರೆ ಜಗತ್ತಿನಲ್ಲೆಲ್ಲ ಗುರುರಾಯನು ಗೌರವ ಹೊಂದುತ್ತಾನೆಂದು ತಿಳಿಸಿದ್ದಾರೆ.ಅಸದೃಶನಾದ ಕರುಣಾಮಯ ಗುರುವೆ ! ನೀನೊಲಿದು ಗೌರವಕ್ಕೆ ಯೋಗ್ಯನನ್ನಾಗಿಸು.

ಕೊರಡು ಕೊನರುವದು ಬಲು | ಬರಡು ಹಯನಾಗುವದು

ಕುರುಡಂಗೆ ಕಣ್ಣು ಬಹುದು, ನಿನ್ನೊಲುಮೆ ಎಂ-

ದರಿದೆನೈ ಗುರುವೇ ಕೃಪೆಯಾಗು || ೨೬ ||

ಗುರುದೇವ ! ನಿನ್ನ ಒಲುಮೆಯ ಮಹತ್ವವು ಅನುಪಮವಾಗಿದೆ. ಅಸದೃಶವಾಗಿದೆ. ಮಾತಿಗೆ ಮೀರಿದೆ. ವರ್ಣನೆಗೆ ನಿಲುಕದಾಗಿದೆ. ನಿನ್ನ ಅಂತಃಕರುಣದ ಒಲುಮೆಯೆಂಬ ಅಮೃತ ಸಿಂಚನದಿಂದ ಒಣಗಿದ ಮರದ ತುಂಡು ಚಿಗುರುತ್ತದೆ.ಗೊಡ್ಡಾಕಳು ಚನ್ನಾಗಿ ಹಾಲು ಕರೆಯಬಲ್ಲುದು. ಕಣ್ಣಿಲ್ಲದ ಕುರುಡನು ಎಲ್ಲವನ್ನು ನೋಡಬಹುದು. ಎಲ್ಲದಕ್ಕೂ ನಿನ್ನ ಒಲುಮೆಯೆ ಮೂಲ ಕಾರಣವಾಗಿದೆ. ಹಾಲಕೆರೆ ಅನ್ನದಾನ ಸ್ವಾಮಿಗಳು ಹಿಮಾಲಯಕ್ಕೆ ಪ್ರಯಾಣ ಬೆಳಸಿದಾಗ ಅವರಪ್ಪಣೆಯಂತೆ ಪುರಾಣ ಶ್ರವಣಕ್ಕಾಗಿ ಹಾಕಿದ ಹಂದರ ಕಟ್ಟಿಗೆಗಳು ಚಿಗುರಿದ ಘಟನೆ ಅವರ ಪುರಾಣದಿಂದ ತಿಳಿದು ಬರುತ್ತದೆ. ಹಾವೇರಿ ಶಿವಬಸವ ಶ್ರೀಗಳ ಪುರಾಣ ಹಾಗೂ ಮೃಡಗಿರಿ ಅನ್ನದಾನೀಶ್ವರ ಲೀಲಾಮೃತಗಳಲ್ಲಿ ಆ ಪೂಜ್ಯರ ಕೃಪಾಶೀರ್ವಾದದಿಂದ ಬರಡಾಕಳುಗಳು ಹಾಲು ಕರೆದ ಸಂಗತಿಯು ವೇದ್ಯವಾಗುತ್ತದೆ. ಹಾನಗಲ್ಲ ಕುಮಾರ ಮಹಶಿವಯೋಗಿಯ ಧ್ಯಾನದಿಂದ ಕಣ್ಣಿಲ್ಲದ ಮುದಕಿಯು ಕಣ್ಣು ಪಡೆದ ಪವಾಡ ಬಹಳ ಹಿಂದಿನದಲ್ಲ.

ನೀನೊಲಿದರೆ ಕೊರಡು ಕೊನರುವದಯ್ಯಾ

ನೀನೊಲಿದರೆ ಬರಡು ಹಯನಹುದಯ್ಯಾ

ನೀನೊಲಿದರೆ ವಿಷವೆಲ್ಲ ಅಮೃತವಹುದಯ್ಯಾ

ನೀನೊಲಿದರೆ ಸಕಲ ಪಡಿ ಪದಾರ್ಥಗಳು

ಇದರಲ್ಲಿರ್ಪ್ಪವು ಕೂಡಲಸಂಗಮದೇವಾ !

ಎಂದು ಅಣ್ಣನವರು ಗುರುಸಂಗಮನಾಥನ ಒಲುಮೆಯ ಗರಿಮೆಯನ್ನು ಗುರುತಿಸಿದ್ದಾರೆ.

ಗುರುವೇ ! ಏನೆಲ್ಲವನ್ನು ಕೊಡಬಲ್ಲೆ. ನಿನ್ನ ಒಲುಮೆ ಎನ್ನ ಮೇಲಾಗಲಿ, ಎನ್ನಮತಿಯ ಅಮಂಗಲವು ದೂರಾಗಲಿ ಎಂಬ ಶಿವಕವಿಯ ಹೃದಯ ಧ್ವನಿ ಇಲ್ಲಿ ವ್ಯಕ್ತವಾಗುತ್ತದೆ. ಈ ರೀತಿ ಗುರುವಿನ ಮಹಿಮಾತಿಶಯನ್ನು ಪರಿಪರಿಯಾಗಿ ವರ್ಣಿಸುತ್ತಾನೆ.

ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ

ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು. ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು. ಹಿಂದೊಮ್ಮೆ ಸರ್ವಾಂಗ ಸುಂದರವಾಗಿ ಮೆರೆದ ಲಿಂಗಾಯತ ಸಮಾಜವು ಇಂದು, ಧಾರ್ಮಿಕ, ನೈತಿಕ ಅಧಃಪತನದಿಂದ ರುದ್ರರೂಪವನ್ನು ಧರಿಸಿ ಹುಚ್ಚೆದ್ದು ಕುಣಿಯುವುದನ್ನು ಕಂಡು ಮಮ್ಮಲ ಮರುಗಿ ಕರಗಿದರು. ಅದರ ಉಳಿಮೆಗಾಗಿ, ಉನ್ನತಿಗಾಗಿ ತಮ್ಮ ತನು ಮನಧನವನ್ನೇ ಅರ್ಪಿಸಿದರು; ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದೇನಿಜವಾದ ಸ್ವಾಮಿಯ ಕುರುಹು ಅಲ್ಲವೆ? ಇಂತಹ ಸ್ವಾಮಿಗಳಿಂದಲೇ ಜಗದೋದ್ಧಾರ ಕಾರ್ಯವು ನೆರವೇರಬೇಕಾದುದು ಸಹಜ. ಆದರೆ ಭಕ್ತರ ಪ್ರಸಾದದಿಂದ ಪುಷ್ಟಗೊಂಡು ಬೆಳೆಯುತ್ತರಲಿರುವ ಸ್ವಾಮಿಗಳು ಶ್ರೀಗಳವರಿಂದ ಪಾಠ ಕಲಿಯುವುದು ಅವಶ್ಯವಲ್ಲವೆ? ಸ್ವಾಮಿಗಳಾದವರು ಸಮಾಜಕ್ಕೆ ಹೆತ್ತ ತಾಯಿಯಂತೆ ಇರಬೇಕು.ಅವರು ಸನ್ಮಾರ್ಗದ ಶಿಕ್ಷಣವನ್ನು ಪಡೆದು, ಸಮಾಜ ಬಂಧುಗಳಿಗೆ ಆಸರದ ಕೈಯನ್ನು ನೀಡಬೇಕಾದುದು ಅತ್ಯಾವಶ್ಯಕ.

ಹಾನಗಲ್ಲ ಶ್ರೀಗಳವರ ಜೀವಿತ ಕಾಲದಲ್ಲಿ ಒದಗಿದ ಸಮಾಜ ಸನ್ನಿವೇಶಗಳು ಅವರ ಎದೆಯೊಳಗಿನ ಬತ್ತಿಯನ್ನು ಹೊತ್ತಿಸದೇ ಇರಲಿಲ್ಲ. ಬಂದ ಪರಿಸ್ಥಿತಿಯನ್ನು ಸಮಾಜದ ನಡತೆಯಲ್ಲಿ ಮೈಗೂಡಿಸುವ ಜಾಣೆಯು ಶ್ರೀಗಳವರಲ್ಲಿ ಸ್ವಾಭಾವಿಕವಾಗಿತ್ತು. ಎಂತೆಂತಹ ಭೀಷ್ಮಸನ್ನಿವೇಶಗಳು ಒದಗಿದರೂ ‘ಸಾಕು ಮಾಡೋ ದೇವಾ’ ಎಂದು ಕೂಗದೆ, ಹಣೆಗೆ ಕೈಹಚ್ಚಿಕೊಂಡು ಕೂಡ್ರದೆ,

ಶಾಸ್ತ್ರೀಯವಾದ, ಸರ್ವಸಮ್ಮತವಾದ, ವ್ಯವಹಾರಿಕ ಉಪಾಯವನ್ನು ಹುಡುಕಿ ತೆಗೆಯುತ್ತಿದ್ದರು, ಅವರ ನಿರ್ಮಲವಾದ ಅಂತಃಕರಣವ್ಯಾಪ್ತಿಯ ನೇಸರನ ಬೆಳಗಿನಂತೆ ಧನಿಕ-ದರಿದ್ರ, ಜಾಣ ಮೂಢ, ಉಚ್ಛ-ನೀಚ , ಸ್ತ್ರೀ-ಪುರುಷ ಎಂಬ ಭೇದಭಾವನೆಯಿಲ್ಲದೆ ಸರ್ವರಿಗೂ ‘ಜ್ಞಾನಾಮೃತವನ್ನು ಬಯಸುತ್ತಿತ್ತು. ಅವರು ಸುಖವನ್ನು ಕಾಣುತ್ತಿದ್ದುದು ಸ್ವಾರ್ಥಮಯ ಕ್ರಿಮಿಜೀವನದಲ್ಲಲ್ಲ, ನಿಸ್ವಾರ್ಥಮಯವಾದ ಘನಜೀವನದಲ್ಲಿ, ಇಂತಹ ಘನಜೀವಿಗೆ ಮಠಮಾನ್ಯಗಳು ಹಕ್ಕಿಯ ಗೂಡಿನಂತೆ ಸಣ್ಣದಾಗಿ ಕಂಡರೂ ಆಶ್ಚರ್ಯವೇನಲ್ಲ. ಶ್ರೀಗಳವರು ಲಿಂಗಾಯತ ಸಮಾಜದ ವಳಬೇನೆಯನ್ನರಿತು, ಅದರ ನಿವಾರಣೆಗೆ ಗುರು ಜ೦ಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು, ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು, ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೆ ಅವರ ಲಕ್ಷ್ಯ ಹರಿದಿತ್ತು.

ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಕೇಳುತ್ತಿದ್ದರು, ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮಂದಿಗೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಘಲವಕ್ಕು  ಸ್ವಾಮಿ ಕಾರ್ಯಕ್ಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು, ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಗೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭವಿಸುತ್ತಿದ್ದರು, ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಎಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು.

ಶ್ರೀಗಳವರು ಹಮ್ಮಿಕೊಂಡ ಕಾರ್ಯಕ್ರಮವು ವಿಶಾಲವೂ ಬಹುಮುಖವುಳ್ಳದಾಗಿದೆ, ಅವ್ರಗಳಲ್ಲಿ ಶಿವಯೋಗಮಂದಿರ ಮತ್ತು ವೀರಶೈವ ಮಹಾಸಭೆಗಳು ಬಹುಮುಖ್ಯವಾದವು. ಇವೆರಡೂ ಅವಳಿಜವಳಿ ಸಂಸ್ಥೆಗಳು,ಒಂದರಲ್ಲಿ ಲೌಕಿಕ ಮುಖ್ಯವಾದರೆ ಇನ್ನೊಂದರಲ್ಲಿ ಪಾರಮಾರ್ಥ ಗಣ್ಯವಾಗಿದೆ.ಇವೆರಡ ನಾಣ್ಯದ ಎರಡು ಮಗ್ಗುಲದಂತೆ ಇವೆ, ಇವೆರಡಕ್ಕೂ ಮೂಲಕಾರಣರು ಶ್ರೀ ಶಿವಯೋಗಿಗಳು, ಸಮಾಜದ ಹಿತಕ್ಕಾಗಿ ನಿರ್ಮಿಸಲ್ಪಟ್ಟ ಈ ಎರಡೂ ಸಂಸ್ಥೆಗಳಲ್ಲಿ ಶ್ರೀಗಳವರ ಬುದ್ಧಿ, ಸಾಹಸ, ತಪಸ್ಸು ಮನೆ ಮಾಡಿಕೊಂಡಿವೆ, ಅವರ ಪ್ರಭುದ್ಧಾವಸ್ಥೆಯ ಘಟನೆಗಳನ್ನು ಕಣ್ಣಿಟ್ಟು ಅವಲೋಕಿಸಿದರೆ ಅವರು ಅತಿಮಾನವರೆಂಬ ಮಾತು ದಿಟಪೂವಾಗಿ ನಿಲ್ಲುವುದು, ಲಿಂಗಾಯತ ಸಂಸ್ಕೃತಿಯ ಪುನರುದ್ಧಾರಕ್ಕಾಗಿ, ಸಾಮಾನ್ಯ ಜನತೆಯ ಉದ್ಧಾರಕ್ಕಾಗಿ ಇವೆರಡೂ ಸಂಸ್ಥೆಗಳನ್ನು ಕಟ್ಟಿ, ಅವು ಸರಿಯಾಗಿ ನಡೆಯಲೆಂದು ತಮ್ಮ ಶರೀರವನ್ನು ಚಂದನದಂತೆ ಸವೆಸಿ ದುಡಿದರು. ತಮ್ಮ ಜೀವನವನ್ನು ದೀವಿಗೆಯಂತೆ ಉರಿಸಿ, ಸಮಾಜದ ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಿದರು. ಬತ್ತಿ ತಾನು ಸುಟ್ಟುಕೊಂಡಾಗಲ್ಲವೆ ಇನ್ನೊಬ್ಬರಿಗೆ ಬೆಳಕಿನ ಸಹಾಯ ಸಿಗುವುದು? ಮಠಾಧಿಪತಿಗಳು ಲೋಕ ಸೇವೆಯನ್ನು ಕೈಕೊಂಡು, ತಮ್ಮ ಉದ್ಧಾರದೊಡನೆ ಜಗತ್ತನ್ನು ಸಹ ಉದ್ಧಾರ ಮಾಡಬಲ್ಲವರೆಂಬುದನ್ನು ಶ್ರೀಗಳು ತಮ್ಮ ಕರ್ತವ್ಯದಕ್ಷತೆಯಿಂದ ಸಿದ್ಧ ಮಾಡಿ ತೋರಿಸಿದರು. ಅರ್ಧ ಶತಮಾನದ ಹಿಂದೆ ಲಿಂಗಾಯತರು, ತಾವು ಲಿಂಗಾಯತರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಿಂದೂ ಧರ್ಮದಲ್ಲಿ ತಮ್ಮ ಸ್ಥಾನವಾವುದು? ತಮ್ಮ ತತ್ವ ಸಂಸ್ಕೃತಿಗಳ ನೆಲೆಬೆಲೆಯೇನು? ತಮ್ಮ ಸಮಾಜ ಎತ್ತ ಸಾಗಿದೆ? ತಮ್ಮ ಭವ್ಯಭವಿಷ್ಯವೇನು?- ಎಂಬ ಕಲ್ಪನೆಯಿಲ್ಲದೆ ಸಮಾಜಬಂಧುಗಳು ಅರೆನಿದ್ರೆಯಲ್ಲಿದ್ದಾಗ, ಬಡಿದೆಬ್ಬಿಸಿ ಕಣ್ಣು ತೆರೆಯಿಸಿದವರು ಪೂಜ್ಯ ಹಾನಗಲ್ಲ ಶ್ರೀಗಳವರು. ಸಮಾಜದ ಯಾವ ಭಾಗದಲ್ಲಿಯೇ ಆಗಲಿ,ಕೊರತೆಯಾದುದನ್ನು ಕಂಡರೆ, ಅದು ತಮ್ಮ ಶರೀರದಲ್ಲಿಯ ನೋವೆಂದು ಅವರು ಬಗೆಯುತ್ತಿದ್ದರು. ತಮ್ಮ ಶರೀರದ ಪಂಚಪ್ರಾಣಗಳ ಪ್ರಯೋಜನವು ಸಮಾಜದ ಸ್ವಾಸ್ಥ್ಯಕ್ಕೆ ಆಗಲೆಂದು ಬಗೆದು, ತಮ್ಮ ಆತ್ಮಬಲವನ್ನು ತಪೋನಿಗ್ರಹದಿಂದ ಬೆಳೆಯಿಸಿಕೊಂಡರು. ಪಾವನತಮವಾದ ಶಂಭುಲಿಂಗನ ಬೆಟ್ಟದಲ್ಲಿ ಬಹುಕಾಲ ಅನುಷ್ಠಾನ ಮಾಡಿದರು. ಮುಂದೆ ಮಧುಕರ ವೃತ್ತಿಯನ್ನು ತಳೆದು, ಮಹಾತ್ಮರಿದ್ದೆಡೆಗೆ ಹೋಗಿ, ಅವರಿಂದ ಅನುಭಾವ ಸಂಪತ್ತನ್ನು ಪಡೆದರು. ತಪೋಭೂಮಿಯಾದ ಶ್ರೀ ಎಡೆಯೂರು ಕ್ಷೇತ್ರಕ್ಕೆ ಹೋಗಿ ಪ್ರಸಾದ ಸಿದ್ಧಿಯನ್ನು ಪಡೆದುಕೊಂಡರು.

ಇಷ್ಟಕ್ಕೆ ತೃಪ್ತರಾಗಲಿಲ್ಲ ಶ್ರೀ ಹಾನಗಲ್ಲ ಶ್ರೀಗಳು; ಲೋಕಸೇವೆ ಒಬ್ಬ ವ್ಯಕ್ತಿಯಿಂದ ಪರಿಪೂರ್ಣವಾಗಿ ನಡೆಯಲಾರದೆಂದು ಬಗೆದು, ಚರ ತಿಂಥಿಣಿಯೊಂದನ್ನುತಮ್ಮ ವಲಯವನ್ನಾಗಿರಿಸಿಕೊಂಡು, ಸಮಾಜದ ಅಭ್ಯುದಯ ಕಾರ್ಯಕ್ಕೆ ಕೈಹಾಕಿದರು. ಧರ್ಮಾಚರಣೆಯಲ್ಲಿಯೇ ಸತ್ಯ ಸೌಂದರ್ಯಗಳ ಸ್ವಾರಸ್ಯವಿದೆಯೆಂದು ಬೋಧೆ ಮಾಡುತ್ತ ಜನಾಂಗದಲ್ಲಿ ಆಸ್ತಿಕ್ಯ, ಔತ್ಸುಕ್ಯಗಳನ್ನು ಹುಟ್ಟಿಸಿದವರು. ಶ್ರೀಗಳವರ ಪ್ರಯತ್ನದಿಂದ ಲಿಂಗಾಯತರು ಲಿಂಗಧಾರಣದ ಮಹತಿಯನ್ನು ತಿಳಿದರು;ಉಪಟಳದಿಂದ ಪಾರಾದರು. ವೀರಶೈವ ಮಹಾಸಭೆಯನ್ನು ಶ್ರೀಗಳವರು ಕೂಡಿಸಿ ಧರ್ಮಪ್ರಸಾರ ಮಾಡಿದರು. ಶಿವಯೋಗ ವಿದ್ಯೆಯ ಪ್ರಸಾರಕ್ಕಾಗಿ ಶಿವಯೋಗಮಂದಿರವನ್ನು ಭದ್ರಗೊಳಿಸಿದರು. ಅವರ ಧಾರ್ಮಿಕ ಆಂದೋಲನವು ಸಾರ್ವಜನಿಕ ಪ್ರೇಮ ಮತ್ತು ಹಿರಿಯರ ಬುದ್ದಿವಂತಿಕೆಯಿಂದ ಸಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರ ಪರಿಶ್ರಮದ ಫಲವಾಗಿ, ಅಲ್ಪದಿನಗಳಲ್ಲಿಯೇ ಅಲ್ಲಲ್ಲಿ, ಕೀರ್ತನಕಾರಿಗಳು, ಧರ್ಮಬೋಧಕರು, ಸಂಗೀತ ಕಲಾವಿದರು ನಿಸ್ವಾರ್ಥ ಬುದ್ಧಿಯಿಂದ ಸಮಾಜ ಸೇವೆ ಮಾಡುತ್ತಿರುವುದು ಗೋಚರವಾಯಿತು. ಶಾಸ್ತ್ರೋಕ್ತ ರೀತಿಯಲ್ಲಿ ನಿರ್ಮಿತವಾದ ಲಿಂಗಭಸ್ಮಗಳು ಶಿವಯೋಗಮಂದಿರದ ಮುಖಾಂತರ ಸದ್ಭಕ್ತರ ನಿಜಾಚರಣೆಗೆ ದೊರೆಯತೊಡಗಿದವು. ಈ ಮಂದಿರದಲ್ಲಿ ನುರಿತ ಯೋಗಸಾಧಕರು ಶಿವಯೋಗದಲ್ಲಿ ಮಹಾಸಿದ್ಧಿಯನ್ನು ಪಡೆದರು. ಇಲ್ಲಿ ಸಾಧನೆ ಮಾಡಿದ ಹರಗುರು ಚರಮೂರ್ತಿಗಳು ನಾಡಿನಲ್ಲಿ ಹಬ್ಬಿ, ಬೀಳು ಬಿದ್ದಿರುವ ಮಠಗಳನ್ನಾಶ್ರಯಿಸಿ ಧರ್ಮಬೋಧೆಗೆ ಸಿದ್ಧರಾದರು. ನಾಡು ಚೇತರಿಸಿಕೊಂಡಿತು; ನುಡಿ ಮೈಮುರಿಯ ತೊಡಗಿತು. ಶಿವಯೋಗಮಂದಿರದ ದೀಪಗಳು ಎಲ್ಲೆಡೆಯಲ್ಲಿ ಪಸರಿಸಿ ನಾಡು ಬೆಳಗುವಂತಾಯಿತು. ಶ್ರೀಗಳವರ ಉನ್ನತ ದೃಷ್ಟಿ, ಉನ್ನತ ಧ್ಯೇಯಗಳ ಸಮನ್ವಯದಿಂದ ಅವರ ಜೀವನದ ದಾರಿ ಹೆದ್ದಾರಿಯಾಯಿತು. ಆನೆ ನಡೆದುದೇ ದಾರಿಯಲ್ಲವೆ?

ಹೀಗೆ, ಬಹುಮುಖದ ವ್ಯಕ್ತಿತ್ವವನ್ನು ಪಡೆದ ಶ್ರೀಗಳವರು ಲಿಂಗಾಯತ ಸಮಾಜವನ್ನು ಆದರ್ಶಪ್ರಾಯವಾಗಿ ಮೂಡಿಸುವ ಕಾರ್ಯದಲ್ಲಿದ್ದಾಗಲೇ ಸಂಜೆಯಾಯಿತು. ಕರ್ಮಸಾಕ್ಷಿಯಾದ ಆತ್ಮರವಿಯು ಕಣ್ಮರೆಯಾದನು. ಗುರುವು ಅಗೋಚರನಾದನು. ಅವನು ಇನ್ನೆಲ್ಲಿ ದರ್ಶನ ನೀಡುವನು? ಅವನ ಪ್ರಯತ್ನರೂಪೀ ಸಂಧ್ಯಾಕಿರಣಗಳು ನಮಗೆ ಮಾರ್ಗದರ್ಶನ ಮಾಡಿಸುತ್ತಲಿವೆ. ಅಂತಹ ಕಾರಣಪುರುಷನು ಇನ್ನೊಮ್ಮೆ ಮೂಡಿ ಬಾರದೆ ಇರನೆಂದು ನಮ್ಮ ನಂಬಿಗೆ.

(ಆಕರ : ನುಡಿಲಿಂಗ-ಲೇ: ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು, ನವಲಗುಂದ)

ಪೂಜ್ಯ ಶ್ರೀ ಲಿಂ. ಡಾ. ಶಿವಬಸವ ಸ್ವಾಮಿಗಳು,ರುದ್ರಾಕ್ಷಿಮಠ ನಾಗನೂರ

ಶಿವಯೋಗಿ ಗುರುವು ಪರುಷಮಣಿ ಇದ್ದಂತೆ. ಗುರುವಿನ ಕೃಪೆಯಿಂದ-ಕರುಣಾಕಟಾಕ್ಷದಿಂದ ಶಿಷ್ಯನು ಪುನೀತನಾಗುತ್ತಾನೆ. ಗುರುಕರುಣೆಯಿಂದ ಅಲೌಕಿಕ ಆತ್ಮಶಕ್ತಿಯನ್ನು ಶಿಷ್ಯನು ಪಡೆಯಬಲ್ಲ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಂತಹ ಕರುಣಾಳು ಗುರುದೇವರು. ಅವರ ಅಮಿತ ಕರುಣೆಯ ನೆರಳಿನಲ್ಲಿ ಅನೇಕ ಸಾಧಕರು ಸಿದ್ಧಿಯನ್ನು ಪಡೆದವರುಂಟು. ಅವರ ಸೇವೆಯನ್ನುಮಾಡುವ ಭಾಗ್ಯ ಅನೇಕ ಸಾಧಕರಿಗೆ ಲಭಿಸಿತ್ತು. ಅಂತಹ ಪರಮ ಭಾಗ್ಯ ನಮ್ಮ ಪಾಲಿಗೂ ಬಂದಿತ್ತು.

ಹದಿನೈದು ವರ್ಷಗಳವರೆಗೆ ಪೂಜ್ಯರ ಶೀಲಾಚರಣೆಯಲ್ಲಿ ಸೇವೆಯ ಲಾಭ.ಈ ಅವಧಿಯಲ್ಲಿ ಪೂಜ್ಯರನ್ನು ಬಹಳ ಹತ್ತಿರದಿಂದ ಕಾಣುವ ಸುಯೋಗ ಒದಗಿತ್ತು.ನಾವು ಹೆಚ್ಚಾಗಿ ಸೇವೆಯಲ್ಲಿಯೇ ಇರುತ್ತಿದ್ದೆವು. ಆದುದರಿಂದ ಹೆಚ್ಚು ವಿದ್ಯಾವ್ಯಾಸಂಗಮಾಡುವುದು ಸಾಧ್ಯವಾಗಲಿಲ್ಲ. ಆದರೆ ಪೂಜ್ಯರ ಸೇವೆಯಲ್ಲಿ ದೊರೆತ ಅನುಭಾವಎಂತಹ ಪಾಂಡಿತ್ಯಕ್ಕೂ ಎಟುಕದು. ಈ ಸೇವಾ ಪ್ರಸಂಗದಲ್ಲಿ ಅನೇಕ ಘಟನೆಗಳು ನಡೆದು ಹೋಗಿವೆ ಅವೆಲ್ಲವುಗಳಲ್ಲಿ ಸ್ಪುಟವಾದ ಪೂಜ್ಯರ ಘನವಾದ ದಿವ್ಯ ವ್ಯಕ್ತಿತ್ವದ ಕೆಲವು ಅಂಶಗಳನ್ನು ಮಾತ್ರ ಈ ಸಂಸ್ಕರಣೆಯಲ್ಲಿ ಮೂಡಿಸಲಾಗಿದೆ.

ಸ್ವಾತ್ವಿಕ ಮತ್ತು ಸರಳ ಜೀವನ

ಪೂಜ್ಯ ಶ್ರೀಗಳವರ ಜೀವನದ ಪ್ರತಿನಿತ್ಯದ ಆಚರಣೆಯಲ್ಲಿ ಸಾತ್ವಿಕತೆ ಮತ್ತು ಸರಳತೆ ಎದ್ದು ಕಾಣುತ್ತಿದ್ದವು. ಅವರು ಮಿತಾಹಾರಿಗಳು. ಅವರ ಪ್ರಸಾದದಲ್ಲಿ ಸಾತ್ವಿಕತೆ ಮತ್ತು ನಿರ್ಮಲತೆ ಎರಕಗೊಂಡಿದ್ದವು. ಅವರು ಎಂದೂ ನಾಲಿಗೆಯ ರುಚಿಗೆ ಮಾರುಹೋಗಲಿಲ್ಲ. ಖಾರ, ಉಪ್ಪು, ಹುಳಿಯನ್ನು ಕೊನೆಯವರೆಗೂ ಮುಟ್ಟಲಿಲ್ಲ.ಸೈಂಧವ ಲವಣವನ್ನು ಮಾತ್ರ ಅಲ್ಪ ಮಾತ್ರೆಯಲ್ಲಿ ಸೇವಿಸುತ್ತಿದ್ದರು. ಅವರ ಸಪ್ಪೆ ಸಾರಿನ ಮಸಾಲೆಯಲ್ಲಿ ಜೀರಿಗೆ ಮತ್ತು ಹವೀಜ (ಧನಿಯಾ)ದ ಪುಡಿ ಮಾತ್ರ ಸೇರುತ್ತಿತ್ತು.

ಶ್ರೀಗಳವರು ಹೆಚ್ಚಾಗಿ ತಪ್ಪಲುಪಲ್ಯವನ್ನು ತುಸು ಕುದಿಸಿ ತೆಗೆದುಕೊಳ್ಳುತ್ತಿದ್ದರು.ಕಿರುಕಸಾಲೆ ಅವರ ನೆಚ್ಚಿನ ತಪ್ಪಲು ಪಲ್ಯ ಬಿಳಿಯ ಕಣಜಗಲಿ, ಬೇವು, ಕಕ್ಕಿ ಮತ್ತುಅಮೃತ ಬಳ್ಳಿಯ ಚಿಗುರೆಲೆ, ನೆಗ್ಗಲಿ ಮತ್ತು ಉತ್ತರಾಣಿಯ ಮುಗುಳುಗಳನ್ನು ಅವರು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಋತು ಮಾಸಕ್ಕೆ ತಕ್ಕಂತೆ ಇವನ್ನು ಅವರು ಬಳಸಿಕೊಳ್ಳುತ್ತಿದ್ದರು. ಮಾಗಣಿ ಬೇರಿನ ಉಪ್ಪಿನಕಾಯಿ ಅವರ ಮೆಚ್ಚಿನ ನೆಂಚಿಗೆ ಅವರು ಹುರಿದ ಹೆಸರು ಬೇಳೆ, ಆಕಳ ಹಾಲು ಮತ್ತು ತುಪ್ಪವನ್ನೇ ಯಾವಾಗಲೂ ಪ್ರಸಾದದಲ್ಲಿ ವಿನಿಯೋಗಿ ಸುತ್ತಿದ್ದರು. ಅವರ ಪಾಕ ಸಾತ್ವಿಕ, ಅವರ ಪ್ರಸಾದ ಬಹು ಮಿತ ಮತ್ತು ಹಿತ.

ನಿಯಮಿತ ಕಾರ್ಯಕ್ರಮ

ಶ್ರೀಗಳವರು ಸದಾ ಜಾಗ್ರತರಾಗಿರುತ್ತಿದ್ದರು. ಅವರ ಪ್ರತಿ ನಿತ್ಯದ ಕಾರಗಳು ಗಡಿಯಾರದಂತೆ ನಿಯಮಿತವಾಗಿ ಚಾಚೂ ತಪ್ಪದೆ ನಡೆಯುತ್ತಿದ್ದವು. ಪ್ರತಿದಿನವೂ ಮುಂಜಾನೆ ೪ಗಂಟೆಗೆ ಎದ್ದು, ಅರ್ಧ ಗಂಟೆ ಧ್ಯಾನಸ್ಥರಾಗಿ ಕುಳಿತು ಆ ಮೇಲೆ ತಾವೇ ಗಂಟೆ ಬಾರಿಸಿ ಸಾಧಕರನ್ನೂ ಸೇವಕರನ್ನೂ ಎಚ್ಚರಿಸುತ್ತಿದ್ದರು; ಅನಂತರ ಮುಖ ತೊಳೆದು, ಭಸ್ಮಧಾರಣ ಮಾಡಿಕೊಂಡು ಶಿವಾನುಭವ ಪ್ರವಚನವನ್ನು ೬ಗಂಟೆಯ ವರೆಗೂ ನಡೆಯಿಸುತ್ತಿದ್ದರು. ಮಗ್ಗೆಯ ಮಾಯಿದೇವರ ‘ಶತಕತ್ರಯ ಅವರ ಅಚ್ಚುಮೆಚ್ಚಿನ ಅನುಭವ ಗ್ರಂಥ.

ಶ್ರೀಗಳವರು ಪ್ರತಿನಿತ್ಯ ಮುಂಜಾನೆ ಪ್ರಾತರ್ವಿಧಿ ಗಳಿಗಾಗಿ ಊರ ಹೊರಗೆ (ಶಿವಯೋಗಮಂದಿರದಲ್ಲಿದ್ದರೆ ಗುಡ್ಡಗಳಲ್ಲಿ) ಮೈಲುಗಟ್ಟಲೆ ಪಾದಚಾರಿಗಳಾಗಿ ನಡೆಯುತ್ತಿದ್ದರು. ಎತ್ತರದ ನಿಲುವು, ಖಡ ಖಡ ಕಾಯ, ನಿರ್ಮಲ ನೇತ್ರ, ಆಜಾನುಬಾಹು, ಹಸ್ತದಲ್ಲಿ ತಮ್ಮ ಎತ್ತರದ ಬೆತ್ತ ಸಾಕ್ಷಾತ್ ಜಂಗಮದ ರೂಪಾಗಿರುತ್ತಿದ್ದರು. ಎಂತಹ ಪಾಮರ-ಪತಿತನನ್ನೂ ಉದ್ಧರಿಸೇವೆಂಬ ಅನುಗ್ರಹಭಾವ ಅವರ ಈ ಭವ್ಯರೂಪದಲ್ಲಿ ಮೈದಾಳಿ ನಡೆಯುವಂತಿತ್ತು.

ನಿತ್ಯದ ಈ ಸಂಚಾರದ ಕಾಲದಲ್ಲಿ ಮರಡಿಯೇ ಆಗಲಿ, ಕಾಡೇ ಆಗಲಿ ಅಲ್ಲಿ ದೊರೆತ ವನಸ್ಪತಿಗಳನ್ನು ಸಂಗ್ರಹಿಸುವುದು, ಅವುಗಳ ಪರಿಜ್ಞಾನವನ್ನು ಜೊತೆಯಲ್ಲಿದ್ದ ಸೇವಕರಿಗೆ ಮಾಡಿಕೊಡುವುದು ಅವರ ನಿತ್ಯನೇಮವಾಗಿದ್ದಿತು. ಅವರ ಆಯುರ್ವೇದ ಪ್ರೇಮ, ವನಸ್ಪತಿ ವಿಜ್ಞಾನ ಅಪರಿಮಿತ ಮತ್ತು ಅನುಕರಣೀಯವಾಗಿದ್ದವು.

ಪ್ರಾತಃಸಂಚಾರವಾದ ಮೇಲೆ ಸ್ನಾನ-ಶಿವಪೂಜೆ ಗಳನ್ನು ಮುಗಿಸಿಕೊಂಡು ಶ್ರೀಗಳವರು ಭಿಕ್ಷೆಗೆ ದಯಮಾಡಿಸುವುದು ನಿತ್ಯದ ಪದ್ಧತಿಯಾಗಿದ್ದಿತು. ಜನಸೇವೆಯೇ ಅವರಿಗೆ ಈಶಸೇವೆಯಾಗಿದ್ದಿತು. ಎಲ್ಲ ಕಾರ್ಯಗಳಿಗೂ ಹೊತ್ತಿಗೆ ಸರಿಯಾಗಿ ನಿಯಮಿತವಾಗಿ ಅಚ್ಚುಕಟ್ಟಾಗಿ ನಡೆಯಬೇಕು. ಅಂದರೆ ಅವರಿಗೆ ಸಮಾಧಾನ. ಒಮ್ಮೊಮ್ಮೆ ಭಿಕ್ಷೆಯ ಕಾರ್ಯದಲ್ಲಿ ಶಿವಪೂಜೆ ಅರ್ಪಿತಕ್ಕೆ ವ್ಯತ್ಯಯವೂ ಬರುತ್ತಿತ್ತು. ಆದರೆ ಅವರು ಪೂಜೆಗೆ ತಡವಾಯಿತೆಂದು ಅವಸರ ಮಾಡುತ್ತಿರಲಿಲ್ಲ. ಸಭೆಯ ಭಾಷಣ, ಪ್ರವಚನ ಮತ್ತು ಶಿವಕೀರ್ತನ ಮೊದಲಾದ ಬೋಧೆಯ ಕಾರ್ಯಕ್ರಮಗಳನ್ನು ಕ್ರಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಿಸಿ ಸಂತೋಷಪಡುತ್ತಿದ್ದರು. ಅವರೆಂದೂ ಶರೀರ ಸೌಖ್ಯವನ್ನು ಕನಸು-ಮನಸಿನಲ್ಲಿಯೂ ಬಯಸಿದವರಲ್ಲ. ಅವರ ವಿರಕ್ತಿ ಕಡು ಕಠೋರರೀತಿಯದು. ಶ್ರೀಗಳವರು ಹಸಿವು-ತೃಷೆಗಳನ್ನು ಗೆದ್ದ ಮಹಾಂತರೆಂದರೆ ಸರಿಯಾದೀತು.

ಸಾಧಕರ ನಡೆನುಡಿಯನ್ನು ತಿದ್ದುವ ಹಂಬಲ

ಶ್ರೀಗಳವರು ಶಿವಯೋಗಮಂದಿರವನ್ನು ಸ್ಥಾಪಿಸಿ ಚಿಕ್ಕ ವಟುಗಳನ್ನು ಎಳೆಯ ಸಾಧಕರನ್ನೂ ಅಲ್ಲಿ ತಂದಿಟ್ಟರು. ಅವರನ್ನು ತಮ್ಮ ಕರಸಂಜಾತರೆಂದು ಬಗೆದು ವಾತ್ಸಲ್ಯದಿಂದ ಸಾಕಿ ಸಲುಹಿದರು. ಅವರಿಗೆ ಸರಿಯಾದ ಶಿಕ್ಷಣ ದೊರೆಯುವಂತೆ ಎಲ್ಲ ಏರ್ಪಾಡುಗಳನ್ನು ಮಾಡಿದರು. ಯೋಗ-ಶಾಸ್ತ್ರಗಳ ವ್ಯಾಸಂಗದ ಜೊತೆಗೆ ಪ್ರತಿಯೊಬ್ಬ ವಟುವಿನ ಸಾಧಕನ ನಡೆ-ನುಡಿಗಳನ್ನು ತಿದ್ದುವ ಹೊಸ ಕ್ರಮಗಳನ್ನೇ ಅನುಸರಿಸಿ ಪ್ರಯೋಗಿಸಿದರು. ಏಕಾಂತದಲ್ಲಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ಆದ ಸ್ವಪ್ನಗಳನ್ನು, ಮಾಡಿದ ತಪ್ಪುಗಳನ್ನು ಕೇಳಿ ತಿಳಿದು ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು. ಸಾಧಕರು ಬರಿಯ ಆಸ್ತಿವಂತ ಶ್ರೀಮಂತ ಮಠಗಳಿಗೆ ಅಧಿಕಾರಿಗಳಾಗಿ ಹೋದರೆ ಆಗಲಿಲ್ಲ. ಅವರು ತಮ್ಮ ಇಡಿಯ ಜೀವನವನ್ನೇ ಸಮಾಜ ಸೇವೆಗೆಂದು ಧಾರೆಯೆರೆಯಬೇಕು ಎಂಬುದು ಶ್ರೀಗಳವರ ಬಯಕೆ ಯಾಗಿದ್ದಿತು. ಕೆಲವು ಸಾಧಕರು ತಾವು ಮಠ-ಮಾನ್ಯಗಳಿಗೆ ಅಧಿಕಾರಿಗಳಾಗದೆ ಆಜೀವ ದೇಶಿಕರಾಗಿದ್ದು ಸಮಾಜಸೇವೆ ಮಾಡುವ ಪ್ರತಿಜ್ಞೆಯನ್ನು ಪೂಜ್ಯರ ಮುಂದೆ ಸಾಷ್ಟಾಂಗಪ್ರಣತರಾಗಿ ಕೈಕೊಂಡವರೂ ಉಂಟೂ. ಅವರು ಅಂತಹ ತ್ಯಾಗ ಭಾವನೆಯಿಂದ ಪ್ರೇರಿತರಾದ ಸಾಧಕರನ್ನು ಕಂಡು ಪರಿಶ್ರಮ ಸಾರ್ಥಕವಾದೀತೆಂದು ಆನಂದ ಪಡುತ್ತಿದ್ದರು. ಸಮಾಜಸೇವೆಯ ವ್ರತದಲ್ಲಿ ದೀಕ್ಷಿತರಾದ ಸುಶಿಕ್ಷಿತ ಮತ್ತು ಸಮರ್ಥ ಸಾಧಕರನ್ನೇ ಅವರು ಶಿವಯೋಗಮಂದಿರದ ಸ್ಥಿರವಾದ ಆಸ್ತಿಯೆಂದು ಬಗೆದಿದ್ದರು.

ಸಂಸ್ಥೆಯ ಪ್ರೇಮ

ಶಿವಯೋಗಮಂದಿರವೆಂಬ ಸಂಸ್ಥೆ ಶ್ರೀಗಳವರ ಉದಾತ್ತ ಧೈಯಗಳ ಸಾಕಾರ ರೂಪವಾಗಿದ್ದಿತು. ಆ ಮಹಾಸಂಸ್ಥೆ ಅವರ ಸಮಾಜ ಸುಧಾರಣೆಯ ಬೃಹದ್ ಯೋಜನೆಗಳ ಪ್ರಯೋಗ ಕ್ಷೇತ್ರವಾಗಿದ್ದಿತು. ಅದನ್ನು ಪೂರ್ಣ ಉನ್ನತಿಗೆ ಉಚ್ಛ್ರಾಯ ಸ್ಥಿತಿಗೆ ಒಯ್ಯುವ ಹಂಬಲ ಅವರಲ್ಲಿ ಪ್ರಬಲವಾಗಿತ್ತು, ಹಗಲಿರುಳು ಅವರು ಅದರ ಸುಧಾರಣೆಯ ಚಿಂತೆ ಮಾಡಿದರು. ಅದೇ ಅವರ ಮಠವಾಗಿದ್ದಿತು. ಅವರು ಹಾನಗಲ್ಲ ವಿರಕ್ತಮಠಕ್ಕೆ ಅಧಿಕಾರಿಗಳಾಗಿದ್ದರೂ ಅದರ ಚಿಂತೆ ಮಾಡಲಿಲ್ಲ. ತಾವಿರುವಾಗಲೇ ಮತ್ತೊಬ್ಬ ಯೋಗ್ಯ ಸಾಧಕರಿಗೆ ಅಧಿಕಾರ ಪಟ್ಟಿ ಮಾಡಿ ನಿಶ್ಚಿಂತರಾಗಿದ್ದರು. ಶ್ರೀಗಳವರು ಹಾನಗಲ್ಲ ಮಠದಲ್ಲಿ ವಾಸ್ತವ್ಯವಿದ್ದಾಗ ಮಲೆ ನಾಡಿನ ಸಾವಿರಾರು ಜನ ಭಕ್ತರು ಪ್ರತಿನಿತ್ಯ ದರ್ಶನಾಶೀರ್ವಾದ ಪಡೆಯಲು ಬರುತ್ತಿದ್ದರು. ಕಾಣಿಕೆ ಕಾಯಿ-ಕರ್ಪುರಗಳು ರಾಶಿಯಾಗಿ ಒಟ್ಟಿರುತ್ತಿದ್ದವು. ಶ್ರೀಗಳವರು ಆವೆಲ್ಲವನ್ನು ಲೆಕ್ಕ ಮಾಡಿಸಿ ನೇರವಾಗಿ ಶಿವಯೋಗಮಂದಿರಕ್ಕೆ ಕಳಿಸಿಕೊಡುತ್ತಿದ್ದರು.

ಒಮ್ಮೆ ಅಕ್ಕಿಆಲೂರಿನ ಒಬ್ಬ ಸಿರಿವಂತ ತಾಯಿ ಹಾನಗಲ್ಲ ಮಠಕ್ಕೆಂದು ತನ್ನಆಸ್ತಿಯನ್ನು ಭಕ್ತಿಯಿಂದ ದಾನವಾಗಿ ಬರೆದು ಅರ್ಪಿಸಿದಳು. ಶ್ರೀಗಳವರು ಅದೆಲ್ಲವನ್ನುಮಂದಿರದ ಹೆಸರಿಗೆ ಬರೆಯಿಸಿದರು. ಅವರು ಸ್ವಂತಕ್ಕಾಗಿ ಒಂದು ಚಿಕ್ಕಾಸನ್ನೂ ಮುಟ್ಟಲಿಲ್ಲ, ಬಳಸಲಿಲ್ಲ. ತಮಗೆ ಬೇಕಾದ ಖಾದಿಯ ಬಟ್ಟೆಗಳನ್ನು ಭಕ್ತರೇ ಕೊಡಿಸಿದವನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅದಕ್ಕಾಗಿ ಹಾನುಗಲ್ಲ ಮಠ ಇಲ್ಲವೆ ಶಿವಯೋಗಮಂದಿರ ಸಂಸ್ಥೆಯ ಒಂದು ಪೈಸೆಯನ್ನೂ ಮುಟ್ಟುತ್ತಿರಲಿಲ್ಲ.  ಸಂಸ್ಥೆಯ ಆಡಳಿತವನ್ನು ಅಭಿಮಾನಿ ಸ್ವಾಮಿಗಳಿಗೆ-ಭಕ್ತರಿಗೆ ಒಪ್ಪಿಸಿ ನಿಶ್ಚಿಂತರಾಗಿದ್ದರು.

ಶ್ರೀಗಳವರು ಧನದಾಶೆ-ಅಧಿಕಾರಲಾಲಸೆಗಳನ್ನು ಮೆಟ್ಟಿ ವೀರವಿರತಿಯ ತುತ್ತತುದಿಯನ್ನು ಏರಿ ನಿರ್ಭಯರಾಗಿದ್ದರು.

ನಿರಹಂಕಾರ ವೃತ್ತಿ

ನಿರಂಜನ-ನಿರಾಭಾರಿ ವೀರಶೈವ ವಿರಕ್ತರ ಸಂಪ್ರದಾಯದಲ್ಲಿ ನಿರಹಂಕಾರ ವೃತ್ತಿಗೆ ಬಹಳ ಪ್ರಾಶಸ್ಯವಿದೆ. ಮೂರ್ತಿಗಳು ಒಬ್ಬರನೊಬ್ಬರು ಕಂಡಾಗ ಪರಸ್ಪರ ಸಾಷ್ಟಾಂಗ ಪ್ರಣತರಾಗುವುದು ವಿರಕ್ತರ ಸಮಯಾಚಾರವಾಗಿದೆ. ಅವರಲ್ಲಿ ಹಿರಿಯ-ಕಿರಿಯ ಎಂಬ ವಯೋಮಾನ-ಸ್ಥಾನಮಾನಗಳ ಭೇದಭಾವ ಎಳ್ಳಷ್ಟೂ ಬರಕೂಡದು. ವಿರಕ್ತರ ಈ ನಿರಹಂಕಾರ ವೃತ್ತಿಯನ್ನು ಶ್ರೀಗಳವರಲ್ಲಿ ಅನೇಕ ಸಲ ಪ್ರತ್ಯಕ್ಷ ಕಂಡಿದ್ದೇವೆ.

ಶ್ರೀಗಳವರು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದರು. ಪರಳಿಯ ಪ್ರಕರಣದಲ್ಲಿ ವಿಜಯ ಸಂಪಾದಿಸಿದ್ದರು, ಶಿವಯೋಗಮಂದಿರವೆಂಬ ಆದರ್ಶ ಯೋಗಾಶ್ರಮವನ್ನು ಕಟ್ಟಿ ಬೆಳೆಸಿದ್ದರು. ಇಡಿಯ ನಾಡಜನರು ಅವರನ್ನು ತೋಂಟದ ಶ್ರೀ ಸಿದ್ಧಲಿಂಗಯತಿಯ ಅವತಾರವೆಂದು ಬಗೆದು ಪೂಜಿಸುತ್ತಿದ್ದರು. ಆದರೆ ಶ್ರೀಗಳವರಿಗೆ ಈ ವಿಶಾಲಕೀರ್ತಿಯ ಸೋಂಕು ತಗುಲಲಿಲ್ಲ. ಅವರು ತಮ್ಮನ್ನು ಹಿರಿಯರೆಂದು ಎಂದೂ ಬಗೆಯಲಿಲ್ಲ. ಅವರು ವಿನಯದ ಸಾಕಾರ ಮೂರ್ತಿಯಾಗಿದ್ದರು.

ವಿರಕ್ತ ಸಮಯಾಚಾರದಲ್ಲಿ ಇನ್ನೊಂದು ಆಚರಣೆ ಆದರ್ಶವಾಗಿದೆ. ಶಿವಪೂಜೆಯಾದ ನಂತರ ಮೂರ್ತಿಗಳ ಪಾದಪೂಜೆ ಮಾಡಿ ಪಾದೋದಕ ಪಡೆದು ಪ್ರಸಾದವನ್ನು ಸ್ವೀಕರಿಸುವುದು ವಿಶಿಷ್ಟವಾಗಿದೆ. ಶ್ರೀಗಳವರು ಎಂದೂ ತಮ್ಮ ಪಾದಪೂಜೆಯನ್ನು ಮಾಡಿಸಿಕೊಳ್ಳಲಿಲ್ಲ.

ಒಂದು ಸಲ ಶ್ರೀಗಳವರು ಮುಂಡರಗಿಯಿಂದ ಹೂವಿನಹಡಗಲಿಗೆ ದಯಮಾಡಿಸುವ ತಯಾರಿಯಲ್ಲಿದ್ದರು ಸ್ನಾನವಾಯಿತು ನೆರೆಯಲ್ಲಿ ಮೂರ್ತಿಗಳೊಬ್ಬರ ಪಾದಪೂಜೆ ನಡೆಯುತ್ತಿತ್ತು. ಶ್ರೀಗಳವರು ಕೂಡಲೇ ಅಲ್ಲಿಗೆ ದಯಮಾಡಿಸಿ ಸಾಷ್ಟಾಂಗವೆರಗಿ ಪಾದೋದಕ ಸ್ವೀಕರಿಸಿ ಬಂದರು. ಮೂರ್ತಿಗಳು ಯಾರೇ ಇರಲಿ, ಭೇದಭಾವ ಮಾಡುತ್ತಿರಲಿಲ್ಲ. ಲಾಂಛನಕ್ಕೆ ಶರಣೆನ್ನುತ್ತಿದ್ದರು. ಪೂಜ್ಯರು ನಿರಂಹಕಾರ ವೃತ್ತಿಗೆ ಇದೊಂದು ಜ್ವಲಂತ ಉದಾಹರಣೆ.

ಪವಾಡ ಪುರುಷರು

ಶಿವಯೋಗಿಗಳಲ್ಲಿ ಅಣಿಮಾದಿ ಅಷ್ಟಸಿದ್ಧಿಗಳು ತಾವಾಗಿಯೇ ಬಂದು ನೆಲೆಸಿರುತ್ತವೆ. ಅವರ ಆತ್ಮಬಲ ಅಂತಹುದು. ಆದರೆ ನಿಜವಾದ ಯೋಗಿಯೂ ಅವನ್ನು ತೋರಗೊಡುವುದಿಲ್ಲ. ತೋರಗೊಡಲು ಬಾರದು. ಸಿದ್ಧಿಗಳನ್ನು ಪ್ರಕಟವಾಗಿ ಪ್ರಯೋಗಿಸಿ ಧರೆ ಯೋಗಿಯೂ ಒಬ್ಬ ಮಾಟಗಾರನಂತೆಯೇ ಸರಿ. ಈ ಮಾಟವೂ ಮಾಯೆಯೇ. ಈ ಮಾಯೆಯನ್ನು ಪ್ರದರ್ಶಿಸಿ ನಾವು ಜನರನ್ನು ಮರುಳುಮಾಡಿ ಬೇಕಾದಷ್ಟು ಕೀರ್ತಿಯನ್ನು ಸಂಪತ್ತನ್ನೂ ಪಡೆಯಬಹುದು ಆದರೆ ಕೊನೆಗೆ ಯೋಗಿಯು ಈ ಮಾಯೆಯ ಮಾಟಕ್ಕೆ ತಾನೇ ಎರವಾಗಿ ವಿನಾಶಕ್ಕೆ ಗುರಿಯಾಗಬೇಕಾಗುತ್ತದೆ. ಇದು ಶಾಶ್ವತವಾದ ಅನುಭವದ ಮಾತು.

ದ್ಯಾಂಪುರದ ಶ್ರೀ ಚನ್ನಕವಿಗಳು ರಚಿಸಿದ ಶ್ರೀಗಳವರ ಪುರಾಣದಲ್ಲಿ ನಾವೆಲ್ಲಿಯೂ ಪವಾಡಗಳನ್ನು ಕಾಣುವುದಿಲ್ಲ ಆದುದರಿಂದ ಅವರು ಪವಾಡ ಪುರುಷರಲ್ಲವೆನ್ನಬಹುದೇ? ಅವರ ಅನೇಕ ಪವಾಡಗಳು ಅಜ್ಞರನ್ನು ಎಚ್ಚರಿಸುವುದಕ್ಕಾಗಿ ಲೋಕಹಿತಕ್ಕಾಗಿ ತಾವಾಗಿಯೇ ಘಟಿಸುತ್ತಿದ್ದವು. ಅಂತಹ ಸನ್ನಿವೇಶಗಳನ್ನು ನಾವು ಪ್ರತ್ಯಕ್ಷ ಕಂಡಿದ್ದೇವೆ.

ಒಮ್ಮೆ ಅನಿರೀಕ್ಷಿತವಾಗಿ ಸೊಲ್ಲಾಪುರಕ್ಕೆ ದಯಮಾಡಿಸುವ ಪ್ರಸಂಗ ಬಂದಿತು.ಆಗ ಶ್ರೀಗಳವರು ರೇಲ್ವೆಯಲ್ಲಿ ಪ್ರವಾಸ ಮಾಡುತ್ತಿರಲಿಲ್ಲ. ಅಂದು ಈ ನಿಯಮವನ್ನು ಮುರಿಯಲೇಬೇಕಾಯಿತು. ಸೊಲ್ಲಾಪುರದ ಶ್ರೀ ವೀರೇಶ್ವರ ಶಿವಶರಣವೆಂದರೆ ಶ್ರೀಗಳವರಿಗೆ ಬಹಳ ಗೌರವ ಮತ್ತು ಅಭಿಮಾನ, ಶರಣರ ಆರೋಗ್ಯ ಚಿಂತಾಜನಕವೆಂದು ತಾರು ಬಂದಿತ್ತು. ಶ್ರೀಗಳವರ ಆರೋಗ್ಯವು ಚೆನ್ನಾಗಿರಲಿಲ್ಲ ಆದರೂ ಶರಣರ ಯೋಗಕ್ಷೇಮವನ್ನು ವಿಚಾರಿಸುವ ಆತುರತೆಯಿಂದ ರೇಲ್ವೆ ಪ್ರವಾಸಕ್ಕೆ ಸಿದ್ಧರಾದರು. ಟಾಂಗಾ ಬಂದಿತು ಸ್ಟೇಶನ್ನಿಗೆ ಬಂದೆವು (ಬಹುಶಃ ಆಗ ಗದಗಿನಲ್ಲಿ ಮುಕ್ಕಾಮು ಮಾಡಿದ್ದರು) ಗಾಡಿ ಹೊರಡುವುದರಲ್ಲಿತ್ತು ಗಡಿಬಿಡಿಯಿಂದ ಓಡಾಡಿದೆವು ಎಲ್ಲಿಯೂ ಸೀಟು ಸಿಗಲಿಲ್ಲ ಕೊನೆಗೆ ಅವಸರ ಮಾಡಿ ಬ್ರೆಕ್ಕಿನ ಡಬ್ಬಿಯಲ್ಲಿ ಹತ್ತಿ ಕುಳಿತೆವು.

ಟಿಕೆಟ್ ಚೆಕ್ಕರನು ಬಂದು ನಮಗೆ ಮನಬಂದಂತೆ ಅಂದನು, ಬಹಳ ತಾಸು ಕೊಟ್ಟನು.ಇಷ್ಟೆಲ್ಲ ಆದರೂ ಶ್ರೀಗಳವರು ಮೌನವಾಗಿಯೇ ಇದ್ದರು. ಮುಂದಿನ ಸ್ಟೇಶನ್ನು ಬರುವಷ್ಟರಲ್ಲಿ ಟಿಕೆಟ್ ಚೆಕ್ಕರನಿಗೆ ವಿಪರೀತವಾಗಿ ಹೊಟ್ಟೆಕಡಿತ ಬಂದಿತ್ತು ಅವನು ‘ಸ್ವಾಮಿ ಕ್ಷಮಿಸಿ’ ಎಂದು ಗೋಗರೆದನು ಅವನಿಗೆ ಶ್ರೀಗಳವರು ಅಭಯಹಸ್ತ ತೋರಿದರು. ಅವನು ತುಸು ಹೊತ್ತಿನಲ್ಲಿ ಸ್ವಸ್ಥನಾಗಿ ಬಂದು ಮತ್ತೆ ಶ್ರೀಗಳವರಿಗೆ ನಮಸ್ಕರಿಸಿ ಯೋಗ್ಯವಾದ ಕಂಪಾರ್ಟಮೆಂಟನಲ್ಲಿ ನಮಗೆ ಸ್ಥಳ ಮಾಡಿಕೊಟ್ಟನು. ಶ್ರೀಗಳವರನ್ನು ಪವಾಡ ಪುರುಷರೆಂದು ಕಾಣುವುದಕ್ಕಿಂದ ಅವರೊಬ್ಬ ಸತ್ಕ್ರಿಯಾನಿಷ್ಠ ವಿರಕ್ತಸ್ವಾಮಿ ಮತ್ತು ನಿಸ್ವಾರ್ಥ ಸಮಾಜೋದ್ಧಾರಕ ಕಾರಕರ್ತರೆಂದು ಬಗೆಯುವಲ್ಲಿಯೇ ಅವರ ವ್ಯಕ್ತಿತ್ವದ ಘನತೆ-ಗೌರವ ಮೆರಗು ಮೂಡಿ ಮಿಂಚುತ್ತದೆ

ಲೇಖಕರು: ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ : ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦.

ಸಂಗ್ರಹ ಸಹಕಾರ

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ೧೯-೨-೩೦ ನೇ ದಿವಸ ಸಂಜೆಯ ೬ ವರೆ ಗಂಟೆಗೆ ಶಿವಯೋಗಮಂದಿರದಲ್ಲಿ ಲಿಂಗೈಕ್ಯರಾದದ್ದಕ್ಕೆ ನಾವು ಅತ್ಯಂತ ವಿಷಾದಪಡುತ್ತೇವೆ. ಕರ್ನಾಟಕದಲ್ಲಿ ಆಗಿ ಹೋದ ಮಹಾಪುರುಷರಲ್ಲಿ ಇವರನ್ನು ನಾವು ಅವಶ್ಯವಾಗಿ ಗಣಿಸಬಹುದಾಗಿದೆ. ಇವರು ಜೀವಿತಕಾಲದಲ್ಲಿ ಸಾರ್ವಜನಿಕ ಹಿತಕ್ಕಾಗಿ ಎಡೆಬಿಡದೆ ದುಡಿದರು. ಅವರು ಅನೇಕ ಮಹತ್ವದ ಕಾರ್ಯಗಳನ್ನು ಮಾಡುತ್ತ ಬಂದರು. ಇಡೀ ಕರ್ನಾಟಕವು ಅದರಲ್ಲಿ ವಿಶೇಷವಾಗಿ ವೀರಶೈವ ಸಮಾಜವು ಇವರಿಗೆ ಅತ್ಯಂತ ಋಣಿಯಾಗಿರುವದು.

ಸಮಾಜವು ಹಿಂದೆ ಬಿದ್ದ ಕಾಲಕ್ಕೆ ಅದನ್ನು ಮುಂದಕ್ಕೆ ದೂಡಲು ಒಬ್ಬಾನೊಬ್ಬನು ಮೊದಲು ಪ್ರವೃತ್ತನಾಗುತ್ತಾನೆ. ಅವನು ಈ ಪ್ರಕಾರ ಉದ್ಭವಿಸಿ ಅದಕ್ಕೆ ಯೋಗ್ಯ ದಾರಿಯನ್ನು ತೋರಿಸಿಕೊಡುತ್ತಾನೆ. ಆ ಮೇಲೆ ಅವನ ತರುವಾಯ ಅವನು ಹಾಕಿಕೊಟ್ಟ ಹಾದಿಯಂತೆ ಸಮಾಜವು ಕೆಲದಿವಸ ಹೋದ ಬಳಿಕ ಅದು ಪುನಃ ಸ್ತಬ್ಧವಾಗುವ ಪ್ರಸಂಗವು ಬರಲು ಮತ್ತೊಬ್ಬರು ಉತ್ಪನ್ನರಾಗಿ ಅದರಲ್ಲಿ ಹೊಸ ಚೈತನ್ಯವನ್ನು ಹುಟ್ಟಿಸುತ್ತಾರೆ. ಇಂಥವರೆಲ್ಲರೂ ಮಹಾವಿಭೂತಿಗಳೇಸರಿ. ಇಂಥವರ ವರ್ಗ ದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಇರುತ್ತಾರೆ. ಹೋದ ಶತಮಾನದ ಮಧ್ಯದಲ್ಲಿ ಬರೇ ಲಿಂಗಾಯತರಿಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಯೋಗ್ಯ ಹಾದಿಯನ್ನು ತೋರಿಸಿ ಕೊಟ್ಟವರು ಕೈ ನಾ. ಚನಬಸಪ್ಪ ಧಾರವಾಡ ಇರುತ್ತಾರೆ. ಕರ್ನಾಟಕತ್ವದ ಬೀಜಾರೋಪಣವನ್ನು ಕನ್ನಡ ನಾಡಿನಲ್ಲಿ ಮೊದಲು ಊರಿದವರು ಇವರೇ ಇದ್ದಾರೆ. ಇವರ ಕಾಲಕ್ಕೆ ಅನೇಕ ವಿದ್ವಾಂಸರು ಹುಟ್ಟಿ ಕನ್ನಡವನ್ನು ಬೆಳಕಿಗೆ ತಂದರು.ಆ ಮೇಲೆ ಕೈ. ವಾ. ಗುರುಸಿದ್ಧಪ್ಪ ಗಿಲಗಂಚಿ ಮತ್ತು ರಾ ಬ ರುದ್ರಗೌಡ ಅರಟಾಳ ಇವರು ವೀರಶೈವ ಸಮಾಜದಲ್ಲಿ ಉತ್ಪನ್ನರಾಗಿ ಆಧುನಿಕ ಸಂಸ್ಕೃತಿಯ ಜ್ಞಾನವನ್ನು ಹಬ್ಬಿಸಲಿಕ್ಕೆ ಪ್ರಯತ್ನಿಸಿದರು. ಈ ಮಹನೀಯರು ತಮ್ಮ ಪ್ರಯತ್ನಗಳನ್ನು ೧೫-೨೦ ವರ್ಷ ನಡಿಸುವಷ್ಟರಲ್ಲಿಯೇ ಶ್ರೀ, ಹಾನಗಲ್ಲ ಕುಮಾರ ಸ್ವಾಮಿಗಳು ಮುಂದಕ್ಕೆ ಬಂದು ವೀರಶೈವ ಸಮಾಜದಲ್ಲಿ ಧರ್ಮದ ನಿಜವಾದ ಸಂಸ್ಕೃತಿಯನ್ನು ಹಬ್ಬಿಸಲಿಕ್ಕೆ ಕಾರಣವಾದರು. ಧರ್ಮ ಸಂಸ್ಕೃತಿಯೇ ಸಮಾಜದ ತಳಹದಿಯಾಗಿರುತ್ತದೆಂದು ಭಾವಿಸಿ ಅದಕ್ಕೋಸ್ಕರವೇ ಅವರು ತಮ್ಮ ಇಡೀ ಆಯುಷ್ಯವನ್ನೇ ಅರ್ಪಿಸಿದರು.

ವೀರಶೈವ ಮಹಾಸಭೆಯು ಇರುವ ವರೆಗೆ ವೀರಶೈವ ಜನ ಸಮುದಾಯದಲ್ಲಿ ಅದು ವಿಶೇಷ ಚಳವಳಿಯನ್ನು ಹಬ್ಬಿಸಲಿಕ್ಕೆ ಸಾಧನೀಭೂತವಾಯಿತು. ಅದರ ಮೂಲಕ ಸಾರ್ವಜನಿಕ ಕಾರ್ಯ ಮಾಡಲಿಚ್ಛಿಸುವವರಿಗೆ ತಮ್ಮ ಚಳವಳಿಗಳನ್ನು ಸಾಗಿಸಲಿಕ್ಕೆ ಬಹಳ ಉಪಯೋಗವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಮಹಾಸಭೆಯನ್ನು ಆರಂಭಿಸಿ, ಅದರ ೭-೮ ಅಧಿನಿವೇಶನಗಳಲ್ಲಿ ಪ್ರತ್ಯಕ್ಷ ಕಾರ್ಯ ಮಾಡಿ.ಜನರಲ್ಲಿ ಜಾಗ್ರತೆಯನ್ನು ಹುಟ್ಟಿಸಿದರು. ಇದು ಅವರು ಮಾಡಿದ ಮಹತ್ವದ ಕಾರ್ಯವಾಗಿದೆ. ಶ್ರೀ ಸ್ವಾಮಿಗಳು ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಉತ್ಸುಕರಾದ್ದರಿಂದ ಮಹಾಸಭೆಯು ಜಾಗ್ರತೆಯ ಮೂಲಕ ಅವರು ಬದಾಮಿ ಮಹಾಕೂಟದಲ್ಲಿ ಶಿವಯೋಗಮಂದಿರವೆಂಬ ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಅವರು ಮಾಡಿದ ಎರಡನೇ ಮಹತ್ವದ ಕಾರ್ಯವಾಗಿದೆ.

 

ಶಿವಯೋಗವು ವೀರಶೈವ ಧರ್ಮದಲ್ಲಿ ಒಂದು ವಿಶಿಷ್ಟ ಯೋಗಪದ್ಧತಿಯಾಗಿರುತ್ತದೆ. ಇದನ್ನು ಪ್ರಸಾರಗೊಳಸಬೇಕೆಂಬುದೇ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಮುಖ್ಯ ಧ್ಯೇಯವಾಗಿತ್ತು. ಇದಕ್ಕೋಸ್ಕರವಾಗಿಯೇ ಅವರು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಹೀಗೆ ಶಿವಯೋಗ ಮಂದಿರದಲ್ಲಿ ಶಿಕ್ಷಣಹೊಂದಿ ಮಠಾಧಿಕಾರಿಗಳು ಮಠಗಳಲ್ಲಿ ಪಟ್ಟಾಧ್ಯಕ್ಷರಾಗುವದರಿಂದ ಸಮಾಜದ ಪ್ರಗತಿಯು ಬಹು ಬೇಗನೆ ಆಗುವದೆಂದು ಅವರ ಪೂರ್ಣ ತಿಳುವಳಿಕೆಯಾಗಿತ್ತು. ಈ ದೃಷ್ಟಿಯಿಂದಲೇ ಅವರು ಈ ೨೨ ವರ್ಷಗಳ ವರೆಗೆ ಈ ಸಂಸ್ಥೆಯನ್ನು ನಡೆಸುತ್ತ ಬಂದರು.

ಈ ಶಿವಯೋಗ ಸಾಧನೆಗೋಸ್ಕರ, ಅತ್ಯಂತ ಬಿಗಿತರವಾದ ವರ್ತನೆಯು ಅವಶ್ಯವೆಂದು ಅವರ ಭರವಸೆ ಇದ್ದ ದರಿ೦ದ ಅವರು ಅಲ್ಲಿ ಶಿಕ್ಷಣ ಹೊಂದುವವರಿಗೆ ಬಹು ಕಟ್ಟಾಚರಣೆಗಳನ್ನು ಕಲ್ಪಿಸಿದರುಆ ಪ್ರಕಾರ ಈ ಆಚರಣೆಗೆ ಒಳಗಾಗಿ ಈ ಸಂಸ್ಥೆಯಿಂದ ಅನೇಕರು ಹೊರಬಿದ್ದು ಬಹುಕಡೆಗೆ ಮಠಾಧಿಕಾರಿಗಳಾಗಿದ್ದದ್ದೂ ಅವರು ಅನೇಕ ಬಗೆಯ ಸಮಾಜ ಕಾರ್ಯಗಳಲ್ಲಿ ತೊಡಗಿದ್ದೂ ತೋರಿಬರುತ್ತಿದೆ. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದ ಈ ಕಾರ್ಯವು ಸಾಮಾನ್ಯವಾದುದಲ್ಲ.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಪ್ರಕಾರ ಕೇವಲ ಧಾರ್ಮಿಕ ಭಾವನೆಯುಳ್ಳವರಾಗಿದ್ದರೂ ಅವರು ವ್ಯವಹಾರವನ್ನು ತಿರಸ್ಕರಿಸಿಬಿಡಲಿಲ್ಲ. ಅವರು ಆಧುನಿಕ ಸುಧಾರಣೆಗಳನ್ನು ಕೈಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು. ಅವರು ಅಸಂಖ್ಯ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ದೊರಕಿಸಲು ಬಹಳ ಸಹಾಯ ಮಾಡಿದರು. ಮತ್ತು ತಮ್ಮ ಶಿವಯೋಗಮಂದಿರದಲ್ಲಿಯೇ ಒಂದು ಇಂಗ್ಲಿಷ್ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದರು. ಅವರು ಶಿವಯೋಗಮಂದಿರದ ಹಣದಿಂದಲೇ ಗಿರಣಿಯನ್ನು ಸ್ಥಾಪಿಸಿದ್ದು ಅದು ಯಾವಾಗಲೂ ಊರ್ಜಿತ ಸ್ಥಿತಿಯಲ್ಲಿಯೇ ಇದೆ. ಅವರು ಶಿವಯೋಗಮಂದಿರದ ಜಮೀನುಗಳಲ್ಲಿ ಹೊಸ ತರದ ಒಕ್ಕಲುತನ ಸುಧಾರಣೆಗಳನ್ನು ಕೈಕೊಳ್ಳಲು ಬಹಳ ಆತುರ ಪಡುತ್ತಿದ್ದರು. ಮತ್ತು ಈ ದೃಷ್ಟಿಯಿಂದಲೇ ಅವರು ಅನೇಕ ಕಡೆಗೆ ಶಿವಯೋಗಮಂದಿರಕ್ಕೋಸ್ಕರ ಜಮೀನುಗಳನ್ನು ಸಂಪಾದಿಸಿರುವರು. ಅವರ ಮನಸ್ಸಿನಲ್ಲಿ ಶಿವಯೋಗ ಮಂದಿರದ ಮುಖಾಂತರ ಇಡೀ ದೇಶದಲ್ಲಿ ಧಾರ್ಮಿಕ ಪ್ರಚಾರ ಕಾರ್ಯಮಾಡಬೇಕೆಂದು ಬಹಳ ಇದ್ದ ದರಿಂದ ಅವರು ಅನೇಕ ಕಡೆಗೆ ಕೀರ್ತನಕಾರರೂ ಉಪನ್ಯಾಸಕರೂ ಹೋಗಿ ಉಪದೇಶ ಮಾಡಲು ಬಹಳ ಪ್ರೋತ್ಸಾಹಿಸುತಿದ್ದರು. ಹಾಗೆಯೇ ಅವರು ಗವಾಯಿಗಳಿಗೂ ಉತ್ತೇಜನ ಕೊಡುತ್ತಿದ್ದರು. ಎಲ್ಲಿಯಾದರೂ ಸಭೆಗಳಾಗುತ್ತಿದ್ದರೆ, ಅವರಿಗೆ ಆಮಂತ್ರಣ ಬರುವದೇ ತಡ, ಅವರು ಅವುಗಳಿಗೆ ತಪ್ಪದೇ ಹೋಗುತ್ತಿದ್ದರು. ಮತ್ತು ಅವರು ಹೋದಲ್ಲಿ ಬಂದ ಜನರಿಗೆ ಉಚ್ಚ ತರದ ಸಮಾಜ ಸುಧಾರಣೆಯ ವಿಚಾರಗಳನ್ನೇ ಹೇಳುವರು. ಅವರ ಈ ಶ್ರೇಷ್ಠ ವರ್ತನೆಗೆ ಜನರು ಅತ್ಯಂತ ಪೂಜ್ಯಭಾವವನ್ನು ತಾಳಿದವರಾಗಿ ಅವರ ನುಡಿಗಳನ್ನು ಅತ್ಯಾದರದಿಂದ ಆದರಿಸುವರು. ಅವರ ಸಾನ್ನಿಧ್ಯದಲ್ಲಿ ಯಾವಾಗಲೂ ಉಚ್ಚ ವಿಚಾರತರಂಗಗಳೇ ಹೊರಡುತ್ತಿದ್ದವು. ಕೆಡಕಿಗೆ ಅದರಲ್ಲಿ ಆಸ್ಪದವಿರಲಿಲ್ಲ.

ನಮ್ಮ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಈಗಿನ ಕಾಲಕ್ಕೆ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಂತೆ ವರ್ತಿಸಿ ಹೋದರು.(ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈಗಿನ ಕಾಲದಲ್ಲಿ ಷಟ್ಸ್ಥಲ ಶಾಸ್ತ್ರದಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು.ಅವರ ಮರ್ಮಗಳು ಅವರಿಗೆ ಗೊತ್ತಿದ್ದಷ್ಟು ಬೇರೆ ಯಾರಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ. ವಚನ ಶಾಸ್ತ್ರದಲ್ಲಿ ಅವರು ಪಾರಂಗತರಾದ್ದರಿಂದಲೇ ಆಗ.ಅವರು ಈ ಸಂಗತಿಗಳು ಅವರಿಗೆ ಪೂರ್ಣ ಮನವರಿಕೆಯಾಗಿದ್ದವು. ಅವರ ಬಗ್ಗೆ ಈ ಸಂಗತಿಯನ್ನು ನಾವು ಸ್ವತಃ ಬಲ್ಲೆನು. ನಾನು ವಚನ ಶಾಸ್ತ್ರಸಾರ ೧ ನೇ ಭಾಗವನ್ನು ರಚಿಸಿದ ಕಾಲಕ್ಕೆ ಈ ಸಂಗತಿಯನ್ನು ಅವರು ಕೇಳಿದ ಕೂಡಲೆ ಅವರು ಕೆಲವು ಶಾಸ್ತ್ರಿಗಳನ್ನು ಕರೆದುಕೊಂಡು ವಿಜಾಪುರಕ್ಕೆ ಸಮಕ್ಷಮ ಬಂದು ಆ ಗ್ರಂಥದ ಬಹು ಭಾಗವನ್ನು ನನ್ನಿಂದ ಓದಿಸಿದರು.ನಾನು ವಿಷಮಜ್ವರದಿಂದ ಅಶಕ್ತನಾಗಿದ್ದ ಕಾರಣ ತಾವೇ ವಿಜಾಪುರಕ್ಕೆ ಹೀಗೆ ಕೇಳಲಿಕ್ಕೆ ಬಂದಿದ್ದರ ಮೇಲಿಂದ ಅವರು ಈ ವಿಷಯದ ಬಗ್ಗೆ ಎಷ್ಟು ಮಹತ್ತರ ಪ್ರೀತಿಯುಳ್ಳವರಾಗಿದ್ದರೆಂಬುದು ಯಾರಾದರೂ ಊಹಿಸಬಹುದಾಗಿದೆ. ಮತ್ತು ಅವರೇ ಈ ಗ್ರಂಥವನ್ನು ಅಚ್ಚುಹಾಕಲು ನನಗೆ ಉತ್ತೇಜನ ಕೊಟ್ಟರು. ಅವರು ಶಿವಯೋಗಮಂದಿರದಲ್ಲಿ ಅಸಂಖ್ಯ ಪುರಾತನ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿರುವರು. ಅವುಗಳಲ್ಲಿ ಅನೇಕವುಗಳು ಬಹಳ ಬೆಲೆಯುಳ್ಳ ಗ್ರಂಥಗಳಾಗಿವೆ. ನನಗೆ ಬೇಕಾಗುವ ಗ್ರಂಥಗಳ ಬಗ್ಗೆ ಶಿವಯೋಗಮಂದಿರಕ್ಕೆ ನಾನು ಬರೆದ ಕೂಡಲೇ ಅವರು ಅವುಗಳನ್ನ ನನ್ನ ಕಡೆಗೆ ತಪ್ಪದೆ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದರು. ಇದರ ಮೇಲಿಂದ ಧಾರ್ಮಿಕ ಶೋಧ ಮಾಡುವವರಿಗೆ ಅವರು ಎಷ್ಟು ಪ್ರೋತ್ಸಾಹಿಸುತ್ತಿದ್ದರೆಂಬದು ತಿಳಿದು ಬರುತ್ತದೆ.

ಶ್ರೀ ಸ್ವಾಮಿಗಳು ಸಮಾಜದಲ್ಲಿ ರೂಢವಾಗಿರುವ ಭೇದಗಳನ್ನು ಮುರಿಯಲಿಕ್ಕೆ ಯಾವಾಗಲೂ ಬಹಳ ಪ್ರಯತ್ನಿಸುತ್ತಿದ್ದರು. ಇದಕ್ಕೋಸ್ಕರ ಅವರು ಕರ್ನಾಟಕದಲ್ಲೆಲ್ಲ ಬಹಳ ಸುಚಾರಮಾಡುತ್ತ ಬಂದರು. ಯಾವ ಊರಲ್ಲಾದರೂ ಏನಾದರೂ ತಂಟೆಗಳು ಉತ್ಪನ್ನನಾದರೆ ಸಾಕು, ಅವರನ್ನು ಕರೆಯಲಿಕ್ಕೆ ಯಾರಾದರೂ ಬಂದರೆ ಅವರು ತಟ್ಟನೇ ಅಲ್ಲಿಗೆ ಹೋಗಿಎಲ್ಲ ಜನರಿಗೂ ಸಮಾಧಾನ ಹೇಳಲು ಸಿದ್ಧರಾಗಿರುತ್ತಿದ್ದರು. ಈ ವಿಷಯದಲ್ಲಿ ಅವರು ತೋರಿ ಸುತ್ತಿನ ಚಟುವಟಿಕೆಗಳು ಅವರ್ಣನೀಯವಾಗಿರುತ್ತವೆ. ಇದರಲ್ಲಿ ಅವರು ಜನರು ಸರಿಯಾಗಿ ನಡೆಯಬೇಕೆಂದು ಅಭಿಲಾಷೆಯೇ ಹೊರ್ತು ಬೇರೆ ಯಾವ ಉದ್ದೇಶವೂ ಇರಲಿಲ್ಲ. ಇದರಿಂದ ಅವರು ಎಲ್ಲರಿಗೂ ಬೇಕಾಗಿದ್ದರು. ಅವರು ಮಾಡಿದ ಮತ್ತೊಂದು ಮಹತ್ವದ ಕಾರ್ಯವೆಂದರೆ, ಸಮಯ ಭೇದಗಳನ್ನು ಮುರಿದದ್ದು, ವಿರಕ್ತ ವರ್ಗದವರಲ್ಲಿರುವ ಈ ಭೇದಗಳ ಮೂಲಕ ದೇಶದಲ್ಲಿ ಅನೇಕ ಮನಸ್ತಾಪಗಳು ಬಹು ದಿವಸಗಳಿಂದಲೂ ನಡೆದಿದ್ದವು. ಆದರೆ ಶ್ರೀ ಸ್ವಾಮಿಗಳವರು ಈ ಸಮಯಗಳನ್ನು ಸಂಪೂರ್ಣ ಮುರಿದುಹಾಕಿದರು. ಇದರ ಶ್ರೇಯಸ್ಸು ಇವರಿಗೇ ಇರುತ್ತದೆ. ಇವರಿಂದ ಈಗ ಮುರಿಗೀ, ಕುಮಾರ, ಕೆಂಪಿನ,ಚಿಲ್ಲಾಳ ಎಂಬ ಸಮಯ ಭೇದಗಳು ಬಹಳ ಕಡಿಮೆಯಾಗಿವೆ. ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಈ ಪ್ರಕಾರ ಒಂದು ಮಹತ್ತರವಾದ ಕಾರ್ಯವನ್ನು ಸಮಾಜಕ್ಕೆ ಮಾಡಿರುವರು.

ಶ್ರೀ ಸ್ವಾಮಿಗಳು ದೀರ್ಘೋದ್ಯೋಗಿಗಳು, ಸ್ವಲ್ಪ ತೊಂದರೆ ಬಂದ ಕೂಡಲೇ ಅವರು ಎಂದೂ ಹಿಂದೆಗೆಯುವವರಲ್ಲ. ಮಹಾಕೂಟ ಸ್ಥಾನದಲ್ಲಿ ಮಂದಿರವನ್ನು ಸ್ಥಾಪಿಸಿದ ವರುಷ ಅವರಿಗೆ ಅನೇಕ ತೊಂದರೆಗಳು ಉತ್ಪನವಾದವು. ಈ ಪ್ರದೇಶವು ವನ್ಯಮೃಗಗಳಿ೦ದ ತುಂಬಿದ ಅರಣ್ಯ ಭಾಗವು.ಆಗ ಅಲ್ಲಿ ಇರಲಿಕ್ಕೆ ಸ್ಥಳವಿಲ್ಲ. ಅಲ್ಲಿ ಇದ್ದವರಿಗೆ ಭಯಂಕರ ಮಲೇರಿಯ ಜ್ವರವು ವ್ಯಾಪಿಸಿತು. ಆಗ ಆನೇಕರು ಶ್ರೀ ಸ್ವಾಮಿಗಳಿಗೆ ಈ ಕಾರ್ಯವನ್ನು ಬಿಟ್ಟು ಕೊಡಲು ಉಪದೇಶಿಸಿದರು.ಆದರೆ ಶ್ರೀ ಸ್ವಾಮಿಗಳು ಅಚಲವಾದ ಧೈರ್ಯದಿಂದ ಆ ಸ್ಥಳದಲ್ಲಿಯೇ ಇದ್ದುಕೊಂಡು ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಹಣವನ್ನು ಶೇಖರಿಸಿ ಇರಲಿಕ್ಕೆ ಕಟ್ಟಡ ಗಳನ್ನೂ ಯೋಗ್ಯ ಜಲಾಶಯವನ್ನೂ ಬೇಕಾದ ವ್ಯವಸ್ಥೆಗಾರರನ್ನೂ ಏರ್ಪಡಿಸಿಕೊಂಡು ಆ ನಿರ್ಜನ ಪ್ರದೇಶವನ್ನು ಊರ್ಜಿತಸ್ಥಿತಿಗೆ ತಂದರು. ಒ೦ದುಸಂಸ್ಥೆಯನ್ನು ಸ್ಥಾಪಿಸುವದು ದುಸ್ತರವು. ಆದರೆ ಅದನ್ನು ಕೈಕೊಂಡು ಶಾಶ್ವತ ತಳಹದಿಯ ಮೇಲೆ ಹಾಕುವದು ಎಲ್ಲಕ್ಕೂ ದುಸ್ತರವಾದ ಕೆಲಸವು. ಈ ಕಾರ್ಯವು ಒಬ್ಬ ಯೋಜಕನ ಹೊರ್ತು ಯಾರಿಗೂ ಆಗಲಾರದು. ಇಂಥ ಯೋಜನಾ ಸಾಮರ್ಥ್ಯವನ್ನು ಶ್ರೀ ಹಾನಗಲ್ಲ ಕುಮಾರ ಸ್ವಾಮಿ ಗಳು ಪಡೆದದ್ದರಿಂದಲೇ ಅವರಿ೦ದ ಈ ಮಹತ್ಕಾರ್ಯವು ಸಿದ್ಧಿಸಿತು.) ಶ್ರೀ ಸ್ವಾಮಿಗಳು ಧರ್ಮದ ಮತ್ತು ಸಮಾಜದ ಯೋಗ್ಯತೆಗೆ ಕುಂದು ಬರುವ ಪ್ರಸಂಗಗಳು ಬಂದ ಕೂಡಲೇ ಅವರಲ್ಲಿ ಒಂದು ವಿಲಕ್ಷಣ ಶಕ್ತಿಯೇ ಉತ್ಪನ್ನವಾಗುತ್ತಿತ್ತು. ಅವರ ಆಯುಷ್ಯದಲ್ಲಿ ಈ ಬಗೆಯ ಅನೇಕ ಪ್ರಸಂಗಗಳು ಒದಗಿದವು. ೧೯೦೨ ರಲ್ಲಿ ಹುಬ್ಬಳ್ಳಿಯಲ್ಲಿ ಶ್ರೀಜಗದ್ಗುರು ಗುರುಸಿದ್ಧ ಮಹಾಸ್ವಾಮಿಗಳವರ ಆಂದೋಲನೋತ್ಸವಕೆ ಆತಂಕ ಬರಲು ಅದರಲ್ಲಿ ಅವರು ಬಹಳ ಸಾಹಸಮಾಡಿದರು. ೧೯೧೯ ನೇ ಇಸ್ವಿಯಲ್ಲಿ ಮಹಾಸಭೆಯನ್ನು ಮಾಡುವ ಕಾಲಕ್ಕೆ ಶ್ರೀ ಉಜ್ಜಿನಿ ಮಹಾ ಪೀಠದಲ್ಲಿದ್ದ ವ್ಯಾಜ್ಯಗಳು ಅಡ್ಡ ಬರುವವೆಂದು ತಿಳಿದ ಕೂಡಲೆ ಅವರು ಅನೇಕ ಮಹನೀಯರನ್ನು ಕರೆದುಕೊಂಡು ಹೋಗಿ ಅವುಗಳನ್ನು ಸರಿಪಡಿಸಲು ಪ್ರಯತ್ನಿಸಿದರು. ಪರಳೀವ್ಯಾಜ್ಯದಲ್ಲಿ ಅವರು ಮಾಡಿದ ದೀರ್ಘೋದ್ಯೋಗಗಳು ಎಲ್ಲರಿಗೂ ಗೊತ್ತೇ ಇವೆ. ಆ ಕಾಲಕ್ಕೆ ಅವರು ಅನೇಕ ಶಾಸ್ತ್ರಿಗಳನ್ನು ಬರಮಾಡಿಕೊಂಡು ವ್ಯಾಜ್ಯಕ್ಕೆ ಬೇಕಾಗುವ ಎಲ್ಲ ಸಲಹೆಗಳನ್ನು ಒದಗಿಸಿ ಕೊಟ್ಟರು. ಇಷ್ಟೇ ಅಲ್ಲ, ಅದಕ್ಕೆ ಹಣದ ಅಡಚಣಿಯಾಗಲು ದೇಶ ಮಧ್ಯದಲ್ಲಿ ಹೋಗಿ ಬಹಳ ಶ್ರಮಪಟ್ಟು ಹಣವನ್ನು ಕೂಡಿಸಿ ಕಾರ್ಯಕ್ಕೆ ವಿಶೇಷ ಸಹಾಯವಾದರು. ಈ ಬಗೆಯ ಉದಾಹರಣೆಗಳು ಅವರ ಆಯುಪ್ಯದಲ್ಲಿ ಅಸಂಖ್ಯಾತವಾಗಿರುತ್ತವೆ.

ಈ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ತಮ್ಮ ಆಯುವ್ಯವನ್ನೆಲ್ಲ ಧರ್ಮ ಜಾಗ್ರತಿ, ಸಮಾಜ ಸುಧಾರಣೆಗೋಸ್ಕರ – ವೆಚ್ಚ ಮಾಡಿ ದರು. ಅವರು ೧೮೬ ೭ ನೇ ಇಸ್ವಿಯಲ್ಲಿ ಜನಿಸಿ ತಮ್ಮ ಆಯ ವ್ಯವ ೬೩ ನೇ ವರ್ಷದಲ್ಲಿ ಲಿಂಗೈಕ್ಯರಾದರು. ಅವರು ಸಮಾಜ ಕಾರ್ಯಗಳನ್ನು ತಮ್ಮ ವಯಸ್ಸಿನ ೨೨ ನೇ ವರ್ಷದಲ್ಲಿ ಆರಂಭಿಸಿ ಅವುಗಳಲ್ಲಿಯೇ ತಮ್ಮ ದೇಹವನ್ನು ಸವಿಸಿದರು.ಇಂಥ ಮಹಾನುಭಾವರಿಗೋಸ್ಕರ ಸಮಾಜ ವೆಲ್ಲವು ಚಿರಋಣಿಯಾಗಿರುತ್ತದೆ. ಈಗಿನ ಕಾಲಕ್ಕೆ ಶಿವಯೋಗಮಂದಿರದಲ್ಲಿಯೇ ಶ್ರೀ ಸ್ವಾಮಿಗಳವರು ಲಿಂಗೈಕ್ಯರಾಗಿದ್ದು ಈ ಸಂಸ್ಥೆಯನ್ನು ಅತ್ಯುತ್ಕೃಷ್ಟ ರೀತಿಯಿಂದ ನಡಿಸುವದರಲ್ಲಿಯೇ ಅವರ ನಿಜವಾದ ಸ್ಮಾರಕವಿರುತ್ತದೆ. ಇದು ಉಚ್ಚ ತಮಸ್ಥಿತಿಗೆ ಬರಲಿಕ್ಕೆ ಅವಶ್ಯವಾಗಿರುವ ಎಲ್ಲ ಸಾಮಗ್ರಿಗಳನ್ನು ಅವರು ಏರ್ಪಡಿಸಿರುವರು, ಈ ಸಾಮಗ್ರಿಗಳನ್ನು ಸರಿಯಾಗಿ ಉಪಯೋಗಿಸುವದರಲ್ಲಿಯೇ ಸಮಾಜದ ಉತ್ಕೃಷ್ಟತೆ ಮತ್ತು ಯೋಗ್ಯತೆಯು ಇರುತ್ತದೆ. ಈ ಬಗ್ಗೆ ಅದರ ಟ್ರಸ್ಟಿಗಳು ಜಾಗರೂಕರಾಗಿರಬೇಕೆಂದು ಅವರಿಗೆ ನಮ್ಮ ಸವಿನಯ ಸೂಚನೆಯಿದೆ. ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿದ ಈ ಮಂದಿರ ವನ್ನು ಈ ಪ್ರಕಾರ ಅತ್ಯುನ್ನತಸ್ಥಿತಿಗೆ ಒಯ್ದು ಅವರ ಕೀರ್ತಿಯನ್ನು ಇನ್ನು ಹೆಚ್ಚಾಗಿ ಬೆಳೆಯುವಂತೆ ಇವರು ಮಾಡಲೆಂದು ಹಾರೈಸಿ ನಾವು ನಮ್ಮ ಲೆಕ್ಕಣಿಕೆಯನ್ನು ಇಲ್ಲಿಯೇ ನಿಲ್ಲಿಸುತ್ತೇವೆ.

ಲೇಖಕರು :ಪೂಜ್ಯ ವಿಜಯಪ್ರಭು ದೇವರು ಬೂದಗುಂಪ

                    ಪ್ರಿಯ ಸಹೃದಯರೆ ಭವ್ಯ ಭಾರತದ ದಿವ್ಯ    ಪರಂಪರೆಯಲ್ಲಿ ಹಲವಾರು ಋಷಿ ಮುನಿಗಳು, ಸಂತ ಮಹಾಂತರು ಉದಯಿಸಿ ಈ ನೆಲವನ್ನು ಪಾವನ ಗೊಳಿಸಿದರು. ಅಂತಹ ಮಹಾತ್ಮರ ಮಾರ್ಗದರ್ಶನ ,  ದೇಶದಸಂಸ್ಕೃತಿ,ಮಾತೃಭಾಷೆಯನ್ನು ಮರೆತು ಆಂಗ್ಲರ ಆಳ್ವಿಕೆಗೆ ಒಳಪಟ್ಟು ಕೇವಲ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ತಮ್ಮನ್ನೇ ತಾವು ಮರೆತಿರುವ ದುರಂತದ ಸನ್ನಿವೇಶ ಅದು 19ನೇ ಶತಮಾನ. ವಿದೇಶಿಯ ಜೀವನ ಕೇವಲ ”ಲರ್ನಿಂಗ್” ಮತ್ತು ”ಅರ್ನಿಂಗ್” ಕಲಿಸುತ್ತೆ. ಆದರೆ ಭಾರತೀಯ ಸಂಸ್ಕೃತಿ ಇವೆರಡರ ಜೊತೆ “ಲಿವಿಂಗ್” ಸಹ ಕಲಿಸುತ್ತೆ.

ಈ ಸಾಂಸ್ಕೃತಿಕ ಶ್ರೀಮಂತ ದೇಶವನ್ನು ಆರ್ಥಿಕವಾಗಿ ಉನ್ನತ ಗೊಳಿಸಬೇಕಾದರೆ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣ, ಧರ್ಮವಂತ, ಸಂಸ್ಕಾರವಂತ, ವಿಚಾರವಂತ ನಾಗಬೇಕು. ಇಲ್ಲಿನ ಬಡತನ ಹಾಗೂ ನಿರಕ್ಷರತೆ ಇವೆರಡನ್ನು ಮುಕ್ತ ಗೊಳಿಸಿದಾಗ ಮತ್ತೆ ಜಗದ್ಗುರು ಭಾರತವನ್ನು ಕಾಣಲು ಸಾಧ್ಯ. ಹೀಗೆ ಸದೃಢ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಸಾಕ್ಷರರಾಗಬೇಕು,ಧರ್ಮವಂತ ರಾಗಬೇಕು, ಅಂತಹ ಮಾರ್ಗದರ್ಶನ ತೋರಲು ಸಮಾಜೋದ್ಧಾರದ ಸತ್ಯ ಸಂಕಲ್ಪವನ್ನು ಹೊತ್ತು ಅವತರಿಸಿದ ಶಿವಾವತಾರಿಗಳೇ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು.                                                                                                                        19ನೇ  ಶತಮಾನ ಉತ್ತರಾರ್ಧದ ಸಮಾಜದ  ಸರ್ವತೋಮುಖ ಅಭಿವೃದ್ಧಿಗೆ   ಹಲವಾರು ಯೋಜನೆಗಳನ್ನು ರೂಪಿಸಲು ಭಕ್ತರ  ಬಾಳಿನ ಸಂಕಷ್ಟ ಪರಿಹರಿಸಲು, ದೀನ-ದಲಿತರಿಗೆ, ಅಂಧ-ಅನಾಥರಿಗೆ ದಾರಿ ತೋರಲು, ಸ್ವಾಮಿತ್ವದ ಘನತೆ ಹೆಚ್ಚಿಸಲು, ನಾಡು-ನುಡಿ-ಭಾಷೆಯ ಮರ್ಮ  ತಿಳಿಯದೆ ಅಂಧಕಾರದಲ್ಲಿ ಮುಳುಗಿ ಬಾಡಿಹೋಗಿರುವ ಸಮಾಜಕ್ಕೆ ಶಿಕ್ಷಣ, ಅಧ್ಯಾತ್ಮ, ಶಿವಯೋಗ  ಎಂಬ ನೀರು ಗೊಬ್ಬರ ಎರೆದು ಮತ್ತೆ  ನವಸಮಾಜವನ್ನು ನಿರ್ಮಿಸಿ ಸಮಾಜಕ್ಕೆ ಚೈತನ್ಯ ತುಂಬಿ,

“ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂಬ ಶರಣರ ವಾಣಿಗೆ ವ್ಯಾಖ್ಯಾನವಾಗಿ ಬಂದವರು ಶ್ರೀ ಕುಮಾರ ಶಿವಯೋಗಿಗಳು.

                ಮುಖ್ಯವಾಗಿ ಶಿವಮತ ಅವನತಿಯತ್ತ ಸಾಗುತ್ತಿರುವಾಗ,   ಲಿಂಗತತ್ವವ ಮರೆತು ಅಲೌಕಿಕ ವ್ಯವಹಾರದಲ್ಲಿ ಮುಳುಗಿ, ಬಸವಾದಿ ಪ್ರಮಥರ ಅನುಭಾವದ ವಚನಗಳು ಹುಳುಹತ್ತಿ ಹಾಳಾಗುತ್ತಿದ್ದ  ಸಂದರ್ಭದಲ್ಲಿ ಅಂತಹ ವಿಚಾರವನ್ನು ಭಕ್ತ ಸಮುದಾಯಕ್ಕೆ ವೀರಶೈವ ಮತದ ಆಚರಣೆಗಳನ್ನು ತಿಳಿಸುತ್ತ , ಪರಮತದ ಪ್ರಭಾವಕ್ಕೆ ಒಳಗಾಗಿ ಶಿವಮತದ ಜನರು ತಮ್ಮ ಮತ-ಧರ್ಮದ ಮಹತ್ತನ್ನ ಗೌಣವಾಗಿಸಿಕೊಂಡು, ವಿದ್ಯೆಯನ್ನು ಕಲಿಯದೆ ವಂಚಿತರಾಗಿ, ಭಕ್ತ ಸಮುದಾಯ ಲಿಂಗಧಾರಣೆ ಹೊರತಾಗುತ್ತ ತಮ್ಮ ಬಾಳನ್ನೇ ಸಂಕಷ್ಟದಲ್ಲಿ ಮುಳುಗಿಸಿಕೊಂಡಿರುವ ಇಂತಹ ಸಮಾಜವನ್ನುದ್ಧರಿಸುವುದು ವೀರಶೈವ ಮತದ ಕೇಂದ್ರಗಳಾದ ಮಠಗಳ ಕಾರ್ಯ ಬಹಳ ಪ್ರಮುಖವಾಗಿದ್ದು ಎಂದು ತಿಳಿದು ಸಮಾಜದ, ಶಿವಮತದ ಏಳಿಗೆಗಾಗಿ ಅವಿರತ ಶ್ರಮಿಸಿದ ಶ್ರೇಯಸ್ಸು ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.

                ಯಾವುದೇ ಒಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ಕಾರ್ಯ, ಜಾಗೃತಗೊಳಿಸುವ ಕಾರ್ಯದಲ್ಲಿ ನಿಸ್ವಾರ್ಥ ಸೇವೆ, ಲೋಕ ಹಿತದೃಷ್ಠಿ, ಉನ್ನತಾದರ್ಶದ ಮೌಲ್ಯಗಳು ಇದ್ದಾಗ ಮಾತ್ರ ಆ ಕಾರ್ಯ ಫಲಕಾರಿಗುತ್ತದೆ ಎಂದು ಮನಗಂಡ ಶಿವಯೋಗಿಗಳು, ಒಂದು ಸಮಾಜದ ಧಾರ್ಮಿಕತೆ ಬೆಳೆದು ತಲೆಯೆತ್ತಿ ಹೆಮ್ಮರವಾಗ ಬೇಕಾದರೆ ಅಧ್ಯಾತ್ಮಿಕತೆ, ಶಿಕ್ಷಣ,ಧರ್ಮದ ತಿಳುವಳಿಕೆ ಇದ್ದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವೆಂದು ಅರಿತ ಶ್ರೀಗಳು ತಮ್ಮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ತೆರೆದರು., ಗುಲಾಮಗಿರಿಯಿಂದ ಬದುಕುತ್ತಿದ್ದ ಸಮಾಜವನ್ನು ಜಾಗೃತಗೊಳಿಸುವತ್ತ ಶ್ರೀಗಳು ಗಮನ ಹರಿಸಿದಿದ್ದರು.

               .

              ಶ್ರೀಮಠದಲ್ಲಿ ಬಡಮಕ್ಕಳಿಗೆ, ವಿದ್ಯಾಕಾಂಕ್ಷಿಗಳಿಗೆ ಒಳ್ಳೆಯ ಮಾರ್ಗದರ್ಶನ ಹಾಗೂ ವಿದ್ಯೆಯನ್ನು ನೀಡುವಂತಹ ಉಪಾಧ್ಯಾಯರನ್ನು ನಿಯಮಿಸಿದರು. ಅಷ್ಟೇ ಅಲ್ಲದೇ ಸ್ವತ: ಶ್ರೀಗಳೇ ಆ ಶಿಕ್ಷಕರಿಗೆ ಬೋಧನಾ ವಿಚಾರದ ಮಾರ್ಗದರ್ಶನ ನೀಡುತ್ತಿದ್ದರು.

                ಪ್ರಾಥಮಿಕ ಶಿಕ್ಷಣವಿಲ್ಲದೆ ಪರಕೀಯರ ಆಳ್ವಿಕೆಯ ತೊಳಲಾಟದಲ್ಲಿ ಸಿಲುಕಿ ವಿದೇಶಿ ಕಾಲಮಾನದ ಶಿಕ್ಷಣಕ್ಕೆ ಒಳಗಾಗಿ ನಮ್ಮ ಜನ  ಸಂಸ್ಕೃತಿಯನ್ನು ಮರೆತಿದ್ದಾರೆ. ಇಂತಹ ಮಕ್ಕಳಿಗೆ ಮಾತೃಭಾಷೆ, ದೇವಭಾಷೆಯಾದ ಸಂಸ್ಕೃತ ಶಿಕ್ಷಣ ಮುಖ್ಯವಾಗಿ ನೀಡಿಸಬೇಕು. ವಿದೇಶಿಗರ ದಿನಾಂಕ, ತಿಂಗಳುಗಳನ್ನು ಮರೆಸಿ ಭವ್ಯ ಭಾರತದ ಪರಂಪರೆಯಂತೆ ವಾರ-ತಿಥಿ-ನಕ್ಷತ್ರ-ಯೋಗ-ಕರಣದಂತ ಪಂಚಾಂಗ ಮರ್ಮ ಹಾಗೂ ಸಂವತ್ಸರ-ಮಾಸ-ಋತುಚಕ್ರ-ಪಕ್ಷಗಳ ಬಗ್ಗೆ ಹೀಗೆ ನಮ್ಮ ದೇಶಿ  ಪರಂಪರೆಯ ಶಿಕ್ಷಣ ನೀಡಲು ಶ್ರೀಗಳು ಶ್ರಮಿಸಿದರು. ಅಷ್ಟೇ ಅಲ್ಲದೆ ಒಳ್ಳೆ ವಿದ್ಯಾವಂತರನ್ನು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿ, ಕೊಲ್ಕತ್ತಾ ಇಂತಹ ಬೇರೆ ಬೇರೆ ಕಡೆ ಕಳಿಸಿಕೊಟ್ಟು ಅವರಿಗೆಲ್ಲ ಹಣದ ವ್ಯವಸ್ಥೆಯನ್ನು ಸಹಿತ ಶ್ರೀಗಳೇ ನೋಡಿಕೊಳ್ಳುತ್ತಿದ್ದರು. ಕೇವಲ ಶಿಕ್ಷಣವಲ್ಲದೆ ಸಂಗೀತ, ಕಲೆ ಹೀಗೆ ಮುಂತಾದ ವಿಷಯಗಳ ಕುರಿತು ತಮ್ಮ ಶ್ರೀಮಠದಲ್ಲಿ ಜ್ಞಾನದಾಸೋಹ ಮಾಡುತ್ತಿದ್ದರು.

                  ಒಂದು ದಿನ  ಕಾಡಶೆಟ್ಟಿ ಹಳ್ಳಿಯ ಹಕ್ಕಲ ಬಸವೇಶ್ವರ ಜಾತ್ರೆಗೆ ಭಕ್ತರ ಬಿನ್ನಹದಂತೆ ಕುಮಾರ ಶ್ರೀಗಳು ದಯಮಾಡಿಸಿರುತ್ತಾರೆ. ಅಲ್ಲಿನ ಕಾರ್ಯಕ್ರಮದಲ್ಲಿ ಹಾಡಿದ ಗುರುಬಸವಯ್ಯ ಮತ್ತು ಗದಿಗೆಯ್ಯ ಎಂಬ ಇಬ್ಬರು ಅಂಧ ಮಕ್ಕಳನ್ನು ಕಂಡು ಇಂತಹ ಮಧುರ ಕಂಠದಿಂದ ಹಾಡಿದ ಈ ಮಕ್ಕಳಿಗೆ ಸಂಗೀತ ಶಿಕ್ಷಣ ಕೊಡಿಸಿ ಒಳ್ಳೆಯ ಗಾಯಕರನ್ನಾಗಿಸಬೇಕೆಂದು ಶ್ರೀಗಳು ಇರ್ವರನ್ನು ನಮಗೆ ಕೊಡಿ ಇವರ ಭವಿಷ್ಯವನ್ನು ನಾವು ರೂಪಿಸುತ್ತೇವೆ ಎಂದು ಅಂಧ ಮಕ್ಕಳನ್ನ ತಮ್ಮ ಜೋಳಿಗೆಗೆ ಹಾಕಿಸಿಕೊಂಡು ತಮ್ಮ ಶ್ರೀ ಮಠದಲ್ಲಿಯೇ ಅವರಿಗೆ ಸಂಗೀತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು. ಸಂಸ್ಕೃತ, ವೇದ,ಉಪನಿಷತ್ತು,ಶಾಸ್ತ್ರಗಳ ಜೊತೆ ಸಂಗೀತ ಶಿಕ್ಷಣವು ಪ್ರಾರಂಭವಾಯಿತು.

               ಈ ಇರ್ವ ಅಂಧ ಬಾಲಕರಿಗೆ ಕರ್ನಾಟಕ ಸಂಗೀತ ಕಲಿಸಲು ತಂಜಾವೂರು ಗಾಯಕರನ್ನ ನೇಮಿಸಿದರು. ನಂತರ ಹೊಸಪೇಟೆಯ ಭೀಮರಾಯರೆಂಬ ಗಾಯಕರಿಂದ, ಶಿರಾಳಕೊಪ್ಪದಲ್ಲಿದ್ದ ಗದಿಗೆಯ್ಯರೆಂಬ ಗಾಯಕರಿಂದ ತಿಂಗಳಿಗೆ 25 ರುಪಾಯಿ ಬತ್ತೆ ನೀಡಿ ಶಿಕ್ಷಣ ಕೊಡಿಸಿದರು. ಕೇವಲ ಕರ್ನಾಟಕ ಸಂಗೀತವಷ್ಟೇ ಅಲ್ಲ ಭಾರತೀಯ ಸಂಗೀತದ ರಸ ಭಂಡಾರವಾದ ಹಿಂದೂಸ್ತಾನಿ ಸಂಗೀತವನ್ನು ಉಸ್ತಾದ ವಹಿದ್ ಖಾನರಂತ ಸಂಗೀತಗಾರರಿಗೆ ತಿಂಗಳಿಗೆ 150 ರೂಪಾಯಿ ಸಂಭಾವನೆ ಕೊಟ್ಟು ಹೀಗೆ ಹಲವಾರು ಸಂಗೀತ ವಿದ್ವಾಂಸರಿಂದ ಸಂಗೀತ ಶಿಕ್ಷಣ ನೀಡಿಸಿದರು. ಕುಮಾರ ಶ್ರೀಗಳಿಂದ ಆಶೀರ್ವಾದ ಹಾಗೂ ಎಲ್ಲ ವ್ಯವಸ್ಥೆ ಪಡೆದು ಜಗತ್ತಿಗೆ ಉಭಯ ಗಾನವಿಶಾರದ ನೆಂಬ ಅಭಿದಾನವನ್ನು ಪಡೆದು ಸಂಗೀತ ಲೋಕಕ್ಕೆ ಮೆರಗು ತಂದವರೇ ಶ್ರೀ ಪಂಚಾಕ್ಷರ ಗವಾಯಿಗಳು. ಅವರನ್ನು ಹರಸಿ ಆಶೀರ್ವದಿಸಿದವರೇ ಮಾತೃ ಮಮತೆಯ ಹೃದಯವಂತಿಕೆಯ ಮಹಾಶಿವಯೋಗಿಗಳು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಎಂಬುದನ್ನು ಮರೆಯುವಂತಿಲ್ಲ.

               ಹೀಗೆ ಎಲ್ಲದರ ಶಿಕ್ಷಣವನ್ನು ಅನಕ್ಷರಸ್ಥರಿಗೆ ದೀನ-ದಲಿತರಿಗೆ ಅಂಧ-ಅನಾಥರಿಗೆ ನೀಡುವುದರ ಮುಖಾಂತರ, ಕೇವಲ “ಮಠಗಳಿರುವುದು ಸ್ವಾಮಿಗಳ ಆಶ್ರಯತಾಣಕ್ಕಲ್ಲ, ದೇಹಿ ಎಂದು ಬಂದವರ ಕಷ್ಟವನ್ನು ದೂರಮಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ವಿದ್ಯಾ ಕೇಂದ್ರಗಳಾಗಬೇಕು. ” ಎಂದು ತಿಳಿದು ನಡೆದು ತೋರಿದ ಜಂಗಮ ಪುಂಗವರು.

            ಕೇವಲ ಜ್ಞಾನದಾಸೋಹ ಅಷ್ಟೇ ಅಲ್ಲ ಅನ್ನದಾಸೋಹಕ್ಕೂ ಪ್ರೇರಣೆಯಾದವರು ಶ್ರೀಗಳು. ಭಕ್ತ ಸಮುದಾಯದ ಶ್ರೇಯೋಭಿವೃದ್ಧಿಯತ್ತ ಗಮನಹರಿಸಿದ ಶ್ರೀಗಳು ಕ್ರಿ.ಶ.1896 ರಲ್ಲಿ ಹಾನಗಲ್ಲ ಪೀಠಾಧಿಕಾರಿ ವಹಿಸಿ ಒಂದೇ ವರ್ಷದಲ್ಲಿ ಕ್ರಿ.ಶ. 1897ರಲ್ಲಿ ಪ್ರಕೃತಿ ವಿಕೋಪದಿಂದ ಈ ನಾಡು ಬರಗಾಲದ ಬವಣೆಯಲ್ಲಿ ಸಿಲುಕಿತ್ತು. ತಮ್ಮ ತಮ್ಮ ಹತ್ತಿರವಿದ್ದ ಕಾಳು-ಕಡಿ ಅಂತಹ ದವಸ-ಧಾನ್ಯಗಳನ್ನು ಖಾಲಿಯಾಗಿ ಬಡವರು ಹಸಿವಿನಿಂದ ಕಂಗೆಟ್ಟಿದ್ದರು. ಹಸಿವಿನಿಂದ ಬಳಲುತ್ತಿದ್ದವರ ನೋವು ಕಂಡು ಶ್ರೀಗಳು ತಮ್ಮ ಮಠದಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆಗೊಳಿಸಿದ್ದರು. ಹೀಗೆ ಕೆಲವು ದಿನಗಳು ಉರುಳಿದವು. ಶ್ರೀಮಠದಲ್ಲಿ ಅನ್ನ ದಾಸೋಹಕ್ಕೆ ಹಣದ ಕೊರತೆ ಎದುರಾಗಿತ್ತು ಇಂತಹ ಸಂದರ್ಭದಲ್ಲಿ ಹಳೆಕಾಲದ ಮಠದ ಜೀರ್ಣೋದ್ಧಾರಕ್ಕಾಗಿ ಕೂಡಿಟ್ಟ ಮೂರು ಸಾವಿರ ರೂಪಾಯಿಗಳನ್ನು ಅಂದರೆ ಈಗಿನ ಕಾಲಕ್ಕೆ 3ಕೋಟಿ ಬೆಲೆ ಇಷ್ಟೆಲ್ಲ ಹಣವನ್ನು ಭಕ್ತರ ಹಸಿವನ್ನು ನಿವಾರಿಸಲು ಶ್ರೀಗಳು ವಿನಿಯೋಗಿಸಿದರು. ಅಷ್ಟೇ ಅಲ್ಲದೆ ಮಠದಲ್ಲಿ ಸಂಗ್ರಹವಾಗಿದ್ದ 800 ಚೀಲ ಭತ್ತವು ದಾಸೋಹಕ್ಕಾಗಿ ವಿನಿಯೋಗಿಸಿದ್ದರು. ಮಠದ ಹಣ, ದವಸಧಾನ್ಯಗಳು ಮುಗಿದಿದ್ದವು. ನಾಡಿಗೆಲ್ಲ ದಾಸೋಹ ಮಾಡುವುದು ಸಾಧ್ಯವಾಗದ ಮಾತು ಇದನ್ನು ಇಲ್ಲಿಗೆ ನಿಲ್ಲಿಸೋಣವೆಂದು ಭಕ್ತರು ಶ್ರೀಗಳಿಗೆ ಭಿನ್ನಹವಿರಿಸಿದಾಗ ಆರಂಭಿಸಿದ ಅನ್ನದಾಸೋಹ ನಿಲ್ಲಿಸಬಾರದು, ಹೀಗೆ ಮಧ್ಯದಲ್ಲಿ ನಿಲ್ಲಿಸಿದರೆ ಆ ಶಿವ ಮೆಚ್ಚೋದಿಲ್ಲವೆಂದು ಶ್ರೀಗಳು ಸಮಾಧಾನದಿಂದ ಭಕ್ತರಿಗೆ ಬೋಧಿಸಿದರು. “ಬಡವರು ಹಸಿವಿನಿಂದ ಸಾಯುವುದನ್ನು ನೋಡಿ ಸುಮ್ಮನಿರಬೇಕೆ ? ಹಸಿದವರ ಜೊತೆ ನಾವು ಸಾವಿಗೆ ಸಾಗುವ ತನಕ ಈ ದಾಸೋಹ ನಿಲ್ಲಬಾರದು” ಎಲ್ಲವೂ ಶಿವನಿಚ್ಚೆ ಎಂದು ನುಡಿದ ಶ್ರೀಗಳ ಮಾತು ಒಂದು ಕ್ಷಣ ರೋಮಾಂಚನವಾಗುವಂತಹದ್ದು. ಶಿವನ ಆಶೀರ್ವಾದವೇನು ಅನ್ನುವ ಹಾಗೆ ಶ್ರೀಮಠದ ಪರಮಭಕ್ತರಾದ ಅಣ್ಣಿಗೇರಿ ಶಂಕರಪ್ಪನವರು ತಮ್ಮ ಹೊಲವನ್ನು 7000 ರೂಪಾಯಿಗೆ ಮಾರಿ ದಾಸೋಹ ವ್ಯವಸ್ಥೆಗೆ ಹಣವನ್ನು ನೀಡಿದ್ದರು. ಇದರ ಜೊತೆಗೆ ಶ್ರೀಗಳು ತಮ್ಮ ಮಠದ ಒಂದು ದೊಡ್ಡ ಭಾಗವನ್ನು ಮೂರು ಸಾವಿರ ರೂಪಾಯಿಗೆ ಮಾರಿ ಶ್ರೀಮಠದಲ್ಲಿ ದಾಸೋಹ ನಿಲ್ಲದಂತೆ ಮುಂದುವರಿಸಲಾಗಿತ್ತು. ಹೀಗೆ ಮಠದ ಎಲ್ಲ ಕಾರ್ಯ ನೋಡಿ   ಆ ಶಿವ ಕೃಪೆತೋರಿ ಮರುವರ್ಷವೇ ಭುವಿಗೆ ಮಳೆಗರೆದ, ಹೊಲ-ಗದ್ದೆಗಳು ಬೆಳೆ ತುಂಬಿ ನಿಂತವು, ಬರಗಾಲದ ಬವಣೆ ದೂರಾಗಿ ಎಲ್ಲ ಭಕ್ತರ ಮನದಲ್ಲಿ ನವೋಲ್ಲಾಸ ತುಂಬಿತು.

                   ಇಂತಹ ಸಂಕಷ್ಟದಲ್ಲಿ ಆ ಶಿವರೂಪವೇ ಧರೆಗಿಳಿದು, ಶ್ರೀ ಕುಮಾರ ಶಿವಯೋಗಿಗಳ ರೂಪದಲ್ಲಿ ನಮ್ಮನ್ನು ಕಾಪಾಡಿತು. ಅಂತಹ ಕರುಣಾಳು ಗುರುವರರನ್ನ ಪಡೆದ ನಾವೇ ಧನ್ಯರು, ಎಂದು ಎಲ್ಲ ಭಕ್ತರು ಶ್ರೀಮಠದ ಶಿವಯೋಗಿಗಳ ದರ್ಶನ ಪಡೆದು ಹರ್ಷಭರಿತರಾದರು. ಮರುವರ್ಷ ಶ್ರೀಮಠದ ದಾಸೋಹಕ್ಕೆಂದು ಭಿಕ್ಷೆಗೆ ಹೋದ ಶ್ರೀಗಳಿಗೆ ಎಲ್ಲ ಭಕ್ತರು ಸೇರಿ ಬುದ್ಧಿ ನಾವೇ ನಮಗೆ ಎಷ್ಟೆಷ್ಟು ಸಾಧ್ಯವಾಗುತ್ತೋ ಅಷ್ಟು ದವಸ-ಧಾನ್ಯಗಳನ್ನು ಕೂಡಿಸಿಕೊಂಡು ಮಠಕ್ಕೆ ತಂದು ಅರ್ಪಿಸುತ್ತೇವೆ ಎಂದರು.”ಬೇಡಿಸಿಕೊಂಬಾತ ಭಕ್ತನಲ್ಲ” ಎಂಬ ಶರಣ ವಾಣಿಯಂತೆ ಎಲ್ಲ ಭಕ್ತರು ಶ್ರೀಮಠಕ್ಕೆ ದವಸ-ಧಾನ್ಯಗಳನ್ನು ಅರ್ಪಿಸಿದರು. ಸಂಕಷ್ಟದ ದಿನಗಳಲ್ಲಿ, ಆಪತ್ತಿನ ಕಾಲದಲ್ಲಿ ತಮ್ಮ ಹೊಲವನ್ನು ಮಾರಿ ದಾಸೋಹದ ಸೇವೆಗೆ ಮುಂದಾದ ಅಣ್ಣಿಗೇರಿ ಶಂಕ್ರಪ್ಪನವರಿಗೆ ಮತ್ತೆ ಹೊಲವನ್ನು ಆ ಭಕ್ತರಿಗೆ ಮರಳಿಸಿದ ಭಕ್ತವತ್ಸಲ, ಮಮತಾಮಯಿ ಶ್ರೀ ಕುಮಾರ ಶಿವಯೋಗಿಗಳು. ಜ್ಞಾನ ದಾಸೋಹ, ಅನ್ನ ದಾಸೋಹ ಮಾಡುತ್ತಾ ಸಮಾಜ ಸೇವೆಗೆ ಕಟಿಬದ್ಧರಾಗಿ ನಿಂತರು ಶ್ರೀಗಳು.

                 ಶ್ರೀಗಳ ಪಾಲಿಗೆ ಮತ್ತೊಂದು ಜನಸೇವೆ ಕಾದು ನಿಂತಿತ್ತು. ಹೇಗೆ ಇಂದಿನ ದಿನಮಾನದಲ್ಲಿ ವೈರಸ್ಸಿನ ರೌದ್ರಾವತಾರ ಹೇಗೆ ಎಲ್ಲೆಡೆ ತಾಂಡವವಾಡುತ್ತಿದೆ, ಹಾಗೆ ಅಂದಿನ ಕಾಲದಲ್ಲಿಯೂ ಕೂಡಾ ‘ಕಾಲರಾ’ ರೋಗ ತಾಂಡವವಾಡುತ್ತಾ ಹಾನಗಲ್ಲ ಗ್ರಾಮವನ್ನು ತಲುಪಿತ್ತು. ಇಂತಹ ಸಮಯದಲ್ಲಿ ಆ ರೋಗಕ್ಕೆ ಹಲವಾರು ಜನ ಬಲಿಯಾಗುತ್ತಿರುವುದನ್ನು ನೋಡಿ ಸ್ವತ: ಶ್ರೀಗಳೇ ರೋಗಕ್ಕೆ ಸಿಲುಕಿಕೊಂಡವರ ಮನೆಮನೆಗಳಿಗೆ ಭೇಟಿ ನೀಡಿ, “ಎಲ್ಲಿ ಆ ಸೋಂಕು ತಮಗೆ ಸೋಂಕಿತು ಎನ್ನುವ ಭಯದ ಭಾವವನ್ನು ತೊಡೆದು ಹಾಕಿ” ಸ್ವತ: ತಾವೇ ಔಷಧೋಪಚಾರ ಚಿಕಿತ್ಸೆ ನೀಡಿ, ಗಂಜಿ ಕೇಂದ್ರವನ್ನು ತೆರೆದು ಮನೆಮನೆಗೆ ಗಂಜಿ ನೀಡುವ ಕಾರ್ಯದಲ್ಲಿ ತೊಡಗಿದರು. ಮೈಲಾರದ ಬಸವಲಿಂಗ ಶರಣರ ವಾಣಿಯಂತೆ:-

             ” ಹಲವು ಮಾತೇನು ನೀನೊಲಿದು ಪಾದವನಿಟ್ಟ

           ನೆಲವೆ ಸುಕ್ಷೇತ್ರ ಜಲವೆ ಪಾವನ ತೀರ್ಥ

            ಸುಲಭ ಶ್ರೀ ಗುರುವೇ ಕೃಪೆಯಾಗು”

ಎನ್ನುವಂತೆ ಕುಮಾರ ಶಿವಯೋಗಿಗಳ ಪಾದ ಸ್ಪರ್ಶದಿಂದ ಮನೆಗಳಲ್ಲಿ ಅಡಿಯಿರಿಸಿದ್ದ ಕಾಲರಾ ರೋಗ  ಕಾಲ್ಕಿತ್ತಿತ್ತು. ಸಂಜೀವಿನಿಯಂತ ಶ್ರೀಗಳ ಪಾದಸ್ಪರ್ಶದಿಂದ ಸೋಂಕು ದೂರವಾಗಿತ್ತು.

                 ಮಠದ ಪೀಠಾಧಿಕಾರವನ್ನು ವಹಿಸಿಕೊಂಡು ಸಮಾಜದ ಈಗಿನ ಸ್ಥಿತಿಗತಿಗಳನ್ನು ತಮ್ಮ ಅರಿವಿನಲ್ಲಿ ಕಂಡು ತಾವು ಮಾಡಬೇಕಾದ ಸಮಾಜೋದ್ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.ಒಂದೆಡೆ ಜ್ಞಾನದಾಸೋಹ ಮತ್ತೊಂದೆಡೆ ಅನ್ನದಾಸೋಹ ಹಾಗೂ ಆರೋಗ್ಯ ದಾಸೋಹ ಹೀಗೆ ಬಳಲಿ ಬಂದ ಭಕ್ತರ ಕಣ್ಣೀರನ್ನು ಒರೆಸಿ ಸಾಂತ್ವನ ನೀಡಿದ ದಾಸೋಹ ಮೂರ್ತಿ ಶ್ರೀ ಕುಮಾರ ಶಿವಯೋಗಿಗಳು.

               “ವಿದ್ಯೆ ಕಲಿಸಿದರೆಮಗೆ ಯಾರೋ ಅಕ್ಕರೆಯಿಂದ

           ಅನ್ನವಿತ್ತರು ಯಾರೋ ಅತಿ ಮಮತೆಯಿಂದ

           ಯಾರು ತಿದ್ದಿದರೆಮ್ಮ ದಿನ ದಿನ ನಡೆ ನುಡಿಯ

            ನಮಿಸೊ ಆ ಚೇತನಕೆ – ಮುದ್ದುರಾಮ”

                ಅಂತಹ ಆ ಚೈತನ್ಯ ಶಕ್ತಿ ,ಮಹಾನ್ ಚೇತನ ಶ್ರೀ ಕುಮಾರ ಶಿವಯೋಗಿಗಳಿಗೆ ನೂರು ನಮನ. ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ  ಆಶೀರ್ವಾದ ಸದಾ ಇರಲೆಂದು ಪ್ರಾರ್ಥಿಸುತ್ತೇನೆ

ಡಾ. ಸಿದ್ಧಯ್ಯ ಪುರಾಣಿಕ

(ಸಿದ್ಧಯ್ಯ ಪುರಾಣಿಕ (ಜೂನ್ ೧೮೧೯೧೮ – ಸೆಪ್ಟೆಂಬರ್ ೫, ೧೯೯೪) ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ.ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು.

ಗುಲ್ಬರ್ಗದಲ್ಲಿ ನಡೆದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಿದ್ಧಯ್ಯ ಪುರಾಣಿಕರನ್ನು ಅರಸಿಬಂದಿವೆ.

ಸಿದ್ಧಯ್ಯ ಪುರಾಣಿಕರು ಉರ್ದು, ಇಂಗ್ಲಿಷ್, ಸಂಸ್ಕೃತಗಳಲ್ಲೂ ಪಾಂಡಿತ್ಯ ಹೊಂದಿದ್ದವರು. ಕನ್ನಡದಲ್ಲಂತೂ ಉದ್ಧಾಮ ವಾಗ್ಮಿಗಳು. ‘ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ’ ಎಂಬ ಅವರ ಆತ್ಮಕಥೆ ಅನೇಕ ಕಾರಣಗಳಿಗಾಗಿ ಪ್ರಮುಖವಾದ ಸಾಹಿತ್ಯಕ ದಾಖಲೆಯಾಗಿದೆ. ಕುವೆಂಪು ಅವರು ಸಿದ್ಧಯ್ಯ ಪುರಾಣಿಕರನ್ನು ಕುರಿತು ಹೇಳಿರುವ ಮಾತುಗಳನ್ನು ಗಮನಿಸಿ: “ಜ್ಞಾನ, ಅಧಿಕಾರ, ವಿನಯ, ಸೌಜನ್ಯ, ಸೃಜನಶೀಲತೆಗಳು ಏಕತ್ರ ಸಮಾವೇಶಗೊಳ್ಳುವುದು ತುಂಬಾ ಅಪರೂಪ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದ ವಿಷಯವಾಗಿದೆ. ಇದಕ್ಕೆ ಅಪರೂಪವಾಗಿ ನಿಂತ ಪ್ರತಿಭಾಶೀಲ ಸತ್ಪುರುಷ ವಿರಳ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಪುರಾಣಿಕರು)

ವಿರಾಗವಿಭು ಹಾನಗಲ್ಲ ಕುಮಾರ ಸ್ವಾಮಿಗಳವರು ರಾಣೇಬೆನ್ನೂರ ತಾಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಕ್ರಿ.ಶ. ೧೮೬೭ರಲ್ಲಿ ಜನ್ಮವೆತ್ತಿದರು. ತಂದೆ ತಾಯಿಗಳು ಬಸವಯ್ಯ-ನೀಲಮ್ಮನವರು, ಸುಶೀಲರು, ಸದಾಚಾರಿಗಳು, ಧರ್ಮ ಪರಾಯಣರು.ಆದರೆ ಬಡವರು. ಬಡತನದ ಮೂಲಕ ಶ್ರೀಗಳವರ ವಿದ್ಯಾಭ್ಯಾಸ ಸರಿಯಾಗಿ ಸಾಗಲಿಲ್ಲ.ಆದರೆ ಅವರ ಅದಮ್ಯವಾದ ಅರಿವಿನ ಹಂಬಲ ಆರಲಿಲ್ಲ. ಅವರು ಪ್ರಬುದ್ಧರಾದ ಮೇಲೆ ಸ್ವಾಧ್ಯಾಯದಿಂದಲೇ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡು ಮಹಾಶಿವಾನುಭವಿ ಗಳಾದರು, ತತ್ವವೇತ್ತರಾದರು.

ಅವರ ತೆಳುವಾದ, ಎತ್ತರವಾದ ಮೈಕಟ್ಟಿನಲ್ಲಿ ತಾರುಣ್ಯವು ತುಳುಕಿತು; ಅವರ ಹೊಳೆವ ಕಣ್ಣುಗಳು ಇನ್ನೂ ಪ್ರಕಾಶಪೂರ್ಣವಾಗಿ ಮಿಂಚಿದುವು; ಆದೇದೀಪ್ಯಮಾನ ಮುಖಮಂಡಲ ಇನ್ನೂ ತೇಜೋಮಯವಾಗಿ ರಾರಾಜಿಸಿತು. ಅವರ ತಾಯಿ ನೀಲಮ್ಮನವರಿಗೆ ಅವರಿಗೆ ಮದುವೆ ಮಾಡಬೇಕೆಂಬ ಮಾತೃಸಹಜವಾದ ಆಸೆ ಉದಿಸಿತು. ಆಗ ಲಿಂಗದಹಳ್ಳಿಯಲ್ಲಿ ಹಗಲು ಶಿಕ್ಷಕರಾಗಿ ಹಗಲಿರುಳೂ ಉಜ್ವಲ ವ್ಯಾಸಂಗಿಗಳಾಗಿ ಜೀವನರಥವನ್ನು ಶಿವಪಥದಲ್ಲಿ ನಡೆಸಿಕೊಂಡು ಹೊರಟಿದ್ದರು ಹಾಲಯ್ಯನವರು ಮುಂದೆ ಕುಮಾರ ಸ್ವಾಮಿಗಳಂದು ಅಮರರಾದ ಅಮೃತಪುತ್ರರು.ತಾಯಿಯು ಮದುವೆಯ ಮಾತೆತ್ತಲು ನಕ್ಕು ನುಡಿದರು, ‘ತಾಯೆ, ನಾನಿದಾಗಲೇ ಸಂಸಾರಿಯಾಗಿ ಬಿಟ್ಟಿದ್ದೇನೆ. ಆದರೆ ಈ ಸಂಸಾರದ ಪರಿಯೇ ಬೇರೆ. ಇದನ್ನು ನಿಜಗುಣ ಶಿವಯೋಗಿಗಳು ಇಂತು ಬಣ್ಣಿಸಿದ್ದಾರೆ:

ಯೋಗಿಗೆ ಸಕಲ ಸಂಸಾರ ಸಂಗವದಿಲ್ಲ

ವಾಗಿ ತಿಳಿವರದು ಮುಸಿನೋಡು ತಾಯೇ!

ವರವಿದ್ಯೆಯೆಂಬ ಕುಲವನಿತೆಯುಂಟು, ಅಗಲದ

ಪರಿತೋಷವೆಂಬ ಮೋಹದಣಗನುಂಟು

ವಿರತಿಯೆಂಬನುಕೂಲ ಜನಮುಂಟು, ಕ್ಷಮೆಯೆಂಬ

ಚರನುಂಟು, ಶಾಂತಿಯೆಂಬ ಸಖನ ಸರಸಮುಖ!!

ನುತಭಕ್ತಿಯೆಂಬ ಮಾತೆಯುಂಟು, ಸುಚರಿತ್ರವೆಂಬ

ಪಿತನುಂಟು ಸತ್ಯವೆಂಬ ಕುವರಿಯುಂಟು

ಹಿತವಾದ ನಂಬಿಗೆಯೆಂಬಾಪ್ತ ಜನರ ಸೇವೆಯುಂಟು

ಮತಿಯೆಂಬ ಗೇಹ ಮುಂಟು, ಆಚಾರವೆಂಬ ಕ್ಷೇತ್ರಮುಂಟು!

ದಾಸಿಯುಂಟು ಅಹಿಂಸೆಯಂಬ, ದಾಸನುಂಟು ಅಸ್ತೇಯವೆಂಬ

ಲೇಸನೀವ ಮೈತ್ರಾದಿಯೆಂಬ ಪೌತ್ರರುಂಟು,

ಮುಕ್ತಿಯೆಂಬದೇಶಮುಂಟು, ಗುರು ಶಂಭುಲಿಂಗವೆಂಬ ಗುರುತನಗುಂಟು!

ಇಂಥ ಸಂಸಾರವನ್ನು ಇದಾಗಲೇ ಸ್ವೀಕರಿಸಿ ಬಿಟ್ಟಿರುವೆ ತಾಯೆ-ಮತ್ತೊಂದು ಸಂಸಾರವನ್ನು ಎಲ್ಲಿ ಕಟ್ಟಿಕೊಳ್ಳಲಿ? ಇದೊ, ನಾನು ಶಿಕ್ಷಕನಾಗಿ ಸಂಪಾದಿಸಿದ ಮುನ್ನೂರು ರೂಪಾಯಿಗಳಿವೆ. ಇವುಗಳನ್ನು ಮಗನ ಕಿರಿಯ ಕಾಣಿಕೆಯೆಂದು ಸ್ವೀಕರಿಸಿ ಸಂತುಷ್ಟಳಾಗಿ ಹೋಗು. ಇನ್ನು ಮುಂದೆ ಮಗನೆಂಬ ಮೋಹದಿಂದ ಮತ್ತೆ ನನ್ನ ಹತ್ತಿರ ಬರಬೇಡ!’

ನೀಲಮ್ಮನವರು ನಿರುಪಾಯರಾಗಿ ಹೊರಟು ಹೋದರು. ಹಾಲಯ್ಯನವರು ಜ್ಞಾನಭಿಕ್ಷುಗಳಾಗಿ ಹೊರಟರು. ಆಗ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳವರ ಯಶೋದುಂದುಭಿ ಮೊಳಗುತ್ತಿದ್ದಿತು. ಅಲ್ಲಿಗೆ ಹೋದರು. ಸಿದ್ಧಾರೂಢರ ಸನ್ನಿಧಿಯಲ್ಲಿ ತಮಗೆ ಅತ್ಯಂತ ಪ್ರಿಯವಾಗಿದ್ದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರಗಳ ಆಳವಾದ ಅಧ್ಯಯನ ನಡೆಸಿದರು. ಸಿದ್ಧಾರೂಢರ ವೇದಾಂತ ಪ್ರವಚನ ವೈಖರಿ ಅವರ ಚಿತ್ತವನ್ನು ಆಕರ್ಷಿಸಿತಾದರೂ ಅವರ ಇಷ್ಟಲಿಂಗ ತ್ಯಾಗವು ಇವರಿಗೆ ಒಪ್ಪಿಗೆಯಾಗಲಿಲ್ಲ.ಆದುದರಿಂದ ಅಲ್ಲಿಯ ರುದ್ರಾಕ್ಷಿಮಠದಲ್ಲಿ ಸ್ನಾನ ಲಿಂಗಾರ್ಚನಾದಿಗಳನ್ನು ಪೂರೈಸುತ್ತ, ಭಿಕ್ಷಾನ್ನದಿಂದ ಜೀವಿಸುತ್ತ, ಪಾಠ ಪ್ರವಚನಗಳಿಗಾಗಿ ಮಾತ್ರ ಸಿದ್ಧಾರೂಢರ ಮಠಕ್ಕೆ ಬರುತ್ತ ಕಾಲ ಕಳೆಯತೊಡಗಿದರು. ಹೀಗೆ ಬಾಳು ಸಾಗಿರಲು ಒಂದು ದುರ್ಘಟನೆ ನಡೆಯಿತು. ಎಂದಿನಂತೆ ಅವರು ಭಿಕ್ಷಾನ್ನಕ್ಕಾಗಿ ಭಕ್ತರ ಮನೆಗೆ ಹೋದಾಗ ಮನೆಯೊಂದರಲ್ಲಿ ಕಾಮಿನಿಯೊಬ್ಬಳು ಅವರ ಗಂಡುಗಾಡಿಯನ್ನು ಕಂಡು ಮನಸೋತು ಲಜ್ಜೆಗೆಟ್ಟು ಅವರ ಜೋಳಿಗೆಯನ್ನೇ ಹಿಡಿದು ಒಳಗೆಳೆದಳು. ಶ್ರೀಗಳವರು ಅವಳ ಕಾಮ ಪಿಪಾಸೆಗೆ ಹೇಸಿ ಆ ಜೋಳಿಗೆಯನ್ನು ಅವಳ ಕೈಯಲ್ಲಿಯೇ ಬಿಟ್ಟು ಹಿಂದಿರುಗಿದರು. ಅನಿರೀಕ್ಷಿತವಾಗಿ ನಡೆದ ಆ ಸತ್ವಪರೀಕ್ಷೆಯಲ್ಲಿ ತೇರ್ಗಡೆಯಾದರು, ವೈರಾಗ್ಯ ವಿಜಯವನ್ನು ಮೆರೆದರು.

ಮೊದಲೇ ಸಿದ್ಧಾರೂಢರ ಇಷ್ಟಲಿಂಗವಿರಹಿತ ಆಚರಣೆಯನ್ನು ಒಪ್ಪದೆ ಮನಸ್ಸಿಲ್ಲದ ಮನಸ್ಸಿನಿಂದ ಹುಬ್ಬಳ್ಳಿಯಲ್ಲಿದ್ದ ಅವರಿಗೆ ಈ ಘಟನೆಯಿಂದ ಇನ್ನೂಬೇಸರವೆನಿಸಿತು. ಅಲ್ಲಿಯ ಎರಡೆತ್ತಿನ ಮಠಾರ್ಯರ ಸಲಹೆಯ ಮೇರೆಗೆ ಆಗ ಶರಣವರೇಣ್ಯರೆಂದು ಹೆಸರಾಗಿದ್ದ ಎಮ್ಮಿಗನೂರ ಜಡೆಯಸಿದ್ಧರ ದರ್ಶನಕ್ಕೆ ಹೊರಟರು. ದಾರಿಯುದ್ದಕ್ಕೂ ಅವರ ಪಾವನಮೂರ್ತಿಯನ್ನು ಕಂಡು ಧನ್ಯರಾಗದವರಿಲ್ಲ.

ಬಿಳಿಗಂಬಳಿಯ ಕೊಪ್ಪೆಯಿಂದ ಕೌಪೀನದಿಂ

ತಿಳಿಗಾವಿಯಂಗಿಯಿಂ ಶಾಟಿ ಪಾವುಟಗಳಿಂ

ಹೊಳೆವ ತಂಬಿಗೆಯಿಂದ ಭೂತಿರುದ್ರಾಕ್ಷಮಾಲೆಗಳಿಂದ ಬೆತ್ತದಿಂದ

ಬಲಿದ ತೋಳಾಧಾರದಿಂದ ರಾಜಿಸಿ ಪೋಪ

ಚೆಲುವ ಹರೆಯದ ಸತ್ಯಶೋಧಕನ ವೇಷಮಂ

ನೆಲದೊಳೀಕ್ಷಿಪರ ಕಂಗಳಣಿಯವೇ ಸತ್ವಭಾವವನವರ್ಮೊಂದರೇ?

(ಚೆನ್ನಕವಿ ಕೃತ ಹಾನಗಲ್ಲ ಕುಮಾರೇಶ್ವರ ಪುರಾಣ, ಸಂ. ೪, ಪ. ೨೦)

ಜಡೆಯಸಿದ್ಧರ ದರ್ಶನವಾಯಿತು. ಅವರ ನಿರಂಕುಶ ಸದ್ವೃತ್ತಿಯನ್ನೂ, ವಿಶೇಷ ವೈರಾಗ್ಯಮಯ ಲಕ್ಷಣಗಳನ್ನೂ, ಬಾಹ್ಯಕ್ರಿಯಾನಿವಹ ವಿಸ್ಕೃತಿಯನ್ನೂ ನಿಜಾನಂದಭಾವವನ್ನೂ ನೋಡಿ ಹಾಲಯ್ಯನವರ ಹರುಷ ಹಾಲುಗಡಲಾಗಿ ಉಕ್ಕಿ ಹರಿಯಿತು. ಅವರ ಅನುಗ್ರಹವನ್ನು ಪಡೆದು ಸಂಕೇತರೂಪವಾಗಿ ಸಂಶಯ ನಿವಾರಣೆಯನ್ನೂ ಪಡೆದರು. ತರುವಾಯ ಪರಮ ತಪಸ್ವಿಗಳೂ, ಶಿವಯೋಗಸಿದ್ಧರೂ ಶಿವಾನುಭವಸಾಗರರೂ ಆಗಿದ್ದ ಎಳಂದೂರಿನ ಬಸವಲಿಂಗ ಸ್ವಾಮಿಗಳವರ ಶಿಷ್ಯತ್ವವನ್ನು ವಹಿಸಿದರು. ಎಳಂದೂರ ಬಸವಲಿಂಗ ಸ್ವಾಮಿಗಳು ಮೊದಲು ಗದಗಿನ ಜಗದ್ಗುರು ಶ್ರೀ ತೋಂಟದಾರ್ಯಮಠದ ಮರಿದೇವರು. ವೈರಾಗ್ಯದ ಕರೆಗೆ ಓಗೊಟ್ಟು ಶ್ರೀ ನಿಜಗುಣ ಶಿವಯೋಗಿಗಳ ತಪೋಭೂಮಿಗೆ ಬಂದು ತಿರುಮಕೂಡಲ ನರಸೀಪುರದ ಕಪಿಲಾ-ಕಾವೇರಿ ಸಂಗಮದಲ್ಲಿ ಅನುಷ್ಠಾನ ಮಾಡಿದರು. ನಿಜಗುಣರ ಕೃತಿಗಳ ಆಳವಾದ ಅಭ್ಯಾಸ ಮಾಡಿದರು. ಅವುಗಳನ್ನು ಆಚರಣೆಯಲ್ಲಿ ತಂದು ಶಿವಯೋಗ ಸಿದ್ಧರಾದರು.

ಇಂಥ ಸದ್ಗುರು ಕುಮಾರೇಶನಂಥ ಶಿಷ್ಯರ ಸಮಾಗಮವಾದುದು ಕಬ್ಬಿಗೆ ಜೇನು ಇಟ್ಟಂತಾಯಿತು. ಗುರೂಪದೇಶವನ್ನು ಹೊಂದಿ ಕುಮಾರೇಶರು ಶಂಭುಲಿಂಗನಬೆಟ್ಟದ ನಿಜಗುಣರ ಗವಿಯಲ್ಲಿ ಅನುಷ್ಠಾನ ಮಾಡಿ ಆತ್ಮಸಾಕ್ಷಾತ್ಕಾರ ಮಾಡಿಕೊಂಡರು.ಗುರು ಬಸವಲಿಂಗ ಸ್ವಾಮಿಗಳು ಶಿಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ನೋಡಿ ಹಿರಿಹಿರಿ ಹಿಗ್ಗಿ ಕ್ರಿಯೋಪದೇಶವನ್ನು ಮಾಡಿ ಲಿಂಗೈಕ್ಯರಾದರು. ಕುಮಾರೇಶರು ತಾಯಿಯಿಲ್ಲದ ತಬ್ಬಲಿಗಳಂತಾಗಿ ಸೊರಬ ಪ್ರಾಂತದಲ್ಲಿರುವ ಷಟ್‌ಕಾವ್ಯಕರ್ತೃ ಗುರುಬಸವ ಸ್ವಾಮಿಗಳವರ ಕ್ಯಾಸನೂರಲ್ಲಿರುವ ಗದ್ದಿಗೆಯ ಬಳಿ ಅನುಷ್ಠಾನ ಮಾಡುತ್ತ ಕುಳಿತರು.

ಅತ್ತ ಹಾನಗಲ್ಲಿನ ವಿಖ್ಯಾತ ವಿರಕ್ತಾಶ್ರಮವಾದ ಕುಮಾರ ಸ್ವಾಮಿಗಳ ಮಠದಲ್ಲಿದ್ದ ಶ್ರೀ ಫಕೀರಸ್ವಾಮಿಗಳು ತಪೋನಿಷ್ಠರೂ ವಾಕ್ಸಿದ್ಧಿಯುಳ್ಳವರೂ ಎನಿಸಿ ಅನೇಕರ ಉದ್ಧಾರ ಮಾಡಿ ವೃದ್ಧಾಪ್ಯ ಆವರಿಸಲು ಒಬ್ಬ ಯೋಗ್ಯ ಉತ್ತರಾಧಿಕಾರಿಯ ಶೋಧನೆಯಲ್ಲಿದ್ದರು. ಶ್ರೀ ಕುಮಾರೇಶನ ಕೀರ್ತಿಯನ್ನು ಸೊರಬ ಪ್ರಾಂತದ ಸದ್ಭಕ್ತರಿಂದ ತಿಳಿದು ಕುಮಾರೇಶರನ್ನು ಕರೆಸಿಕೊಂಡು ತಮ್ಮ ಉತ್ತರಾಧಿಕಾರಿಗಳಾಗಲು ಒಡಂಬಡಿಸಿದರು. ಶ್ರೀ ಫಕೀರಸ್ವಾಮಿಗಳವರು ಲಿಂಗೈಕ್ಯರಾಗಲು ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಯ ತೀರದಲ್ಲಿರುವ ಬಿದರಿಯ ಮುಧೋಳ ಮಠದ ಚೆನ್ನಬಸವಯ್ಯ-ಶಿವಲಿಂಗಮ್ಮನವರಿಗೆ ಪುತ್ರರಾಗಿ ಜನಿಸಿ, ಸವದತ್ತಿಯ ಚೌಕೀಮಠದ ಶ್ರೀ ಶಿವಲಿಂಗ ಸ್ವಾಮಿಗಳವರ ಕೃಪಾದೃಷ್ಟಿಗೆ ಪಾತ್ರರಾಗಿ, ಬಂದರದ ರುದ್ರಪ್ಪನವರಲ್ಲಿ ಶಿವಾನುಭವಶಾಸ್ತ್ರ ನಿಷ್ಣಾತರಾಗಿ, ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧಶಿವಯೋಗಿಗಳಿಂದ ಅನುಗ್ರಹ ಅಧಿಕಾರ ಪಡೆದು, ನವಿಲುತೀರ್ಥದಲ್ಲಿ ತಪಸ್ಸು ಮಾಡಿಪರಮ ತಪಸ್ವಿಗಳಾಗಿ ಅಥಣಿ ಶಿವಯೋಗಿಗಳ ವಿಶ್ವಾಸದ ಸಂಗಡಿಗರಾಗಿ ವಿಖ್ಯಾತರಾಗಿದ್ದ ಬಿದರಿ ಕುಮಾರ ಸ್ವಾಮಿಗಳಿಂದ ಕುಮಾರೇಶರಿಗೆ ಹಾನಗಲ್ಲ ಮಠದ ಅಧಿಕಾರ ಪ್ರಧಾನ ಜರುಗಿತು. ಆಗ ಸದಾಶಿವಸ್ವಾಮಿಗಳೆಂಬ ಅಭಿದಾನ ಪ್ರಾಪ್ತವಾದರೂ ಹಾನಗಲ್ಲ ಕುಮಾರ ಸ್ವಾಮಿಗಳೆಂಬ ಹೆಸರೇ ಕೊನೆಯವರೆಗೆ ಜನರ ರಸನೆಯಲ್ಲಿ ಉಳಿಯಿತು.

ಶ್ರೀಗಳವರ ಅಂತವಿಲ್ಲದ ಕರ್ತೃತ್ವಶಕ್ತಿಗೆ ಮಹಾಪೂರ ಬಂದಿತು. ಮೊದಲು ಹಾನಗಲ್ಲ ಮಠದಲ್ಲಿಯೇ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ೧೯೦೪ರಲ್ಲಿ ಅವರ ದೂರದರ್ಶಿತ್ವ ಹಾಗೂ ಅದ್ವಿತೀಯ ಕರ್ತೃತ್ವಗಳಿಂದ ಧಾರವಾಡದಲ್ಲಿ ವೀರಶೈವ ಮಹಾಸಭೆ ತ್ಯಾಗವೀರ ಲಿಂಗರಾಜ ಸಿರಸಂಗಿ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.ಅಲ್ಲಲ್ಲಿ ವಿದ್ಯಾಸಂಸ್ಥೆಗಳೂ, ವೀರಸನ್ಯಾಸಿಗಳೂ, ಸಮಾಜ ಸಂಸ್ಕರಣ ಕಾರ್ಯಗಳೂ ಅತ್ಯಂತ ಉತ್ಸಾಹದಿಂದ ಉದಯವಾದವು. ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡಿಪಾಗಿಡಬಲ್ಲ ಶಿವಯೋಗಸಿದ್ಧರ ಸಮೂಹ ವೊಂದು ಸಿದ್ಧವಾಗುವವರೆಗೆ ಸಮಾಜದ ಉದ್ಧಾರ ಸಾಧ್ಯವಿಲ್ಲವೆಂಬುದನ್ನು ಮನಗಂಡ ಕುಮಾರೇಶರು ಅಂಥ ಸಾಧಕರನ್ನು ಸಿದ್ಧಗೊಳಿಸುವ ಸಂಸ್ಥೆಯೊಂದನ್ನು ಸ್ಥಾಪಿಸಲು ಮನಸ್ಸು ಮಾಡಿದರು.ಪಟ್ಟದಕಲ್ಲಿನ ಹತ್ತಿರ ಭದ್ರನಾಯಕನ ಜಾಲಿಹಾಳೆಂಬ ಸಣ್ಣ ಗ್ರಾಮದಲ್ಲಿ ಬಡ ಭಕ್ತನೊಬ್ಬನ ಮಗನಾಗಿ ಹುಟ್ಟಿ, ಬಾಗಲಕೋಟೆಯ ಮನಗೂಳಿ ವಿರೂಪಾಕ್ಷಯ್ಯನವರ ಸಾಕುಮಗನಾಗಿ ಬೆಳೆದು, ಅಲ್ಲಿಯ ಪ್ರಸಿದ್ಧ ಶಿವಾನುಭವಿಗಳಾಗಿದ್ದ ಕಿಣಗಿ ಬಸವಲಿಂಗಪ್ಪನವರ ಪ್ರಭಾವದಿಂದ ಅಧ್ಯಾತ್ಮದತ್ತ ಒಲಿದು, ಇಳಕಲ್ಲ ಹತ್ತಿರದ ಕೊಡಗಲಿಯ ವಿರಕ್ತಮಠದಲ್ಲಿದ್ದ ಮಹಾತಪಸ್ವಿ ಮಹಾಲಿಂಗ ಸ್ವಾಮಿಗಳವರಿಂದ ಉಪದೇಶ ಪಡೆದು, ನಾಡಿನಲ್ಲಿ ಸಂಚರಿಸಿ ತಮ್ಮ ಅಸ್ಖಲಿತ ವಾಣಿಯಿಂದ ಅದ್ಭುತವಾದ ಪುರಾಣ ಪ್ರವಚನ ಕೀರ್ತನ ಕಲೆಯಿಂದ ಸ್ವಮತ ಪರಮತಗಳ ಆಸ್ತಿಕರೆಲ್ಲ ಆದರಕ್ಕೆ ಪಾತ್ರರಾಗಿ ವಿರಾಗವಿಭುವೆಂದು ಹೆಸರಾಗಿದ್ದ ವೈರಾಗ್ಯದ ಮಲ್ಲಣಾರ್ಯರಿಂದ ಶ್ರೀಗಳವರ ಈ ಯೋಜನೆಗೆ ಬೆಂಬಲ ಸಿಕ್ಕಿತು. ೧೯೦೮ರಲ್ಲಿ ಬಾಗಲಕೋಟೆಯಲ್ಲಿ ಕೀರ್ತಿಶೇಷ ರಾಜಾ ಲಖಮನಗೌಡಾ ಬಸವಪ್ರಭು ಸರದೇಸಾಯಿ ಒಂಟಮುರಿ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ನಾಲ್ಕನೆಯ ವೀರಶೈವ ಮಹಾಸಭಾಧಿವೇಶನದ ಕಾಲಕ್ಕೆ ಧರ್ಮಾವತಾರಿಗಳಾದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಆಲೋಚನಾ ಸಭೆ ಸೇರಿ ಆ ಬಗ್ಗೆ ಅಂತಿಮ ನಿರ್ಣಯವನ್ನು ಅಂಗೀಕರಿಸಲಾಯಿತು. ಆಗ ಮಹಾತಪಸ್ವಿಗಳೆನಿಸಿದ್ದ ಇಳಕಲ್ಲ ಮಹಾಂತ ಸ್ವಾಮಿಗಳವರು ತೋರಿಸಿದ ಸ್ಥಳದಲ್ಲಿ “ಶಿವಯೋಗಮಂದಿರ’ವೆಂಬ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ನಿರ್ಣಯವಾಯಿತು.

ಅರಸೀಕೆರೆ ತಾಲೂಕಿನ ಸಸಿವಾಳ ಗ್ರಾಮದಲ್ಲಿ ಹಿರಿಯಮಠದ ವೀರಯ್ಯ-ಗೌರಮ್ಮರಿಗೆ ಮಳೆಯಪ್ಪಾರ್ಯನೆಂಬ ನಾಮದಿಂದ ಮಗನಾಗಿ ಶಾ.ಶ. ೧೭೭೨ರಲ್ಲಿ ಜನಿಸಿ, ಬಳ್ಳಾರಿಯ ಸಕ್ಕರಿ ಕರಡೆಪ್ಪನವರ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ, ಹುನಗುಂದ ತಾಲೂಕಿನ ಚಿತ್ತರಗಿಯ ಶಿವಯೋಗ ಪೀಠವನ್ನೇರಿ ವಿಜಯಮಹಾಂತ ಶಿವಯೋಗಿಗಳಾಗಿ ಮಹಾತ್ಮರಾದವರು ಇಳಕಲ್ಲ ಮಹಾಂತ ಸ್ವಾಮಿಗಳವರು. ‘ಶಮೆ, ದಯೆ, ವಿವೇಕ, ವೈರಾಗ್ಯ, ಪರಿಪೂರ್ಣ ಭಾವ, ಶಾಂತಿ,ಕಾರುಣ್ಯ, ಶ್ರದ್ಧೆ, ಸತ್ಯ, ಸದ್ಭಕ್ತಿ, ಶಿವಜ್ಞಾನ, ಶಿವಾನಂದ’ಗಳೇ ಸಾಕಾರವಾಗಿದ್ದ ಮಹಾತ್ಮರವರು. ಮಠದ ಆಳುಗಳು ಪ್ರಮಾದವಶದಿಂದ ಸರಕಾರದ ಮರಗಳನ್ನು ಕಡಿದು ದಂಡನೆಗೆ ಗುರಿಯಾಗುವ ಪರಿಸ್ಥಿತಿಯಲ್ಲಿರುವಾಗ ತಾವೇ ತಾಲೂಕು ಆಫೀಸಿಗೆ ಹೋಗಿ ತಮ್ಮ ತಮ್ಮದೇ, ಶಿಕ್ಷೆ ತಮಗೆ ವಿಧಿಸಬೇಕೆಂದು’ ಹೇಳಿದ ಮಹಾನುಭಾವರವರು.

ವಾರದ ಮಲ್ಲಪ್ಪನವರು ಕಾಣಿಕೆಯೆಂದು ಹಣತುಂಬಿದ ತಾಟನ್ನು ಎದುರಿಗಿರಿಸಿದಾಗ ಹಣವನ್ನು ತೃಣವೆಂದು ಕಂಡು, `ಬಸವಣ್ಣನವರ ವಚನಗಳ ತಿರುಳನ್ನು ತಿಳಿದು ನಡೆಯುತ್ತೇನೆ’ ಎಂಬ ವಚನಭಿಕ್ಷೆಯನ್ನು ನೀಡೆಂದು ಅವರನ್ನು ಕೇಳಿದ ಆಶಾರಹಿತ ಅಧ್ಯಾತ್ಮವೀರರವರು. ಸರ್ವಧರ್ಮ ಸಮನ್ವಯ ದೃಷ್ಟಿಯನ್ನಿರಿಸಿಕೊಂಡು ಸಕಲ ಮತದವರಿಗೂ ಶ್ರೇಯ ಪ್ರೇಯಗಳನ್ನು ಅನುಗ್ರಹಿಸಿ ಅಮರರಾದ ಅನುಭಾವಿಗಳವರು.ಅಂಥ ಮಹಾತ್ಮರು ತೋರಿಸಿದ, ಹಿಂದೆ ಮಹಾಮಹಿಮ ಕೊಟ್ಟೂರು ಬಸವೇಶ್ವರರ ತಪೋವನವಾಗಿದ್ದ, ಇಂದು ಬನಶಂಕರಿನಾಗನಾಥ ಮಹಾಕೂಟ, ವಾತಾಪಿಪುರ (ಬಾದಾಮಿ) ಪಟ್ಟದಕಲ್ಲು ಮತ್ತು ಐಹೊಳೆಗಳ ಮಧ್ಯದಲ್ಲಿರುವ ಪವಿತ್ರ ಸ್ಥಾನದಲ್ಲಿ ಶಿವಯೋಗಮಂದಿರ ಸಂಸ್ಥೆಯು ಕ್ರಿ.ಶ. ೧೯೦೯ರಲ್ಲಿ ಸ್ಥಾಪಿತವಾಯಿತು.ಸ್ವತಃ ಇಳಕಲ್ಲ ಮಹಾಂತ ಸ್ವಾಮಿಗಳವರೇ ವೈ, ಶು. ೭ಗೆ ಲಿಂಗಮುದ್ರೆಗಳನ್ನು ಸ್ಥಾಪಿಸಿದರು. ವಟುಗಳು ಬಂದರು. ಯೋಗಪಟು ಗಳಾಗತೊಡಗಿದರು. ಶಾಸ್ತ್ರಕಾರರು,ಕಲೆಗಾರರು, ಕವಿಗಳು, ವೈದ್ಯರು, ಸಿದ್ಧರು, ಸಾಧಕರು, ಭಕ್ತರು, ಮುಕ್ತರು ಸಾಲುಸಾಲಾಗಿ ಶಿವಯೋಗಮಂದಿರಕ್ಕೆ ಬರತೊಡಗಿದರು. ಶಿವಯೋಗ ಮಂದಿರವು ಶಿವಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಗ್ರಂಥಸಂಗ್ರಹ-ಸಂಶೋಧನ-ಪ್ರಕಾಶನ ಕಾರ್ಯ ನಡೆಯಿತು; ಉಪದೇಶಕರು, ಸಂಗೀತಕಾರರು, ಕವಿಗಳು, ಕೀರ್ತನಕಾರರು ಸಿದ್ಧರಾಗತೊಡಗಿದರು. ಸಮಾಜ ಜಾಗೃತಿಗಾಗಿ, ಪುನರುಜೀವನಕ್ಕಾಗಿ, ವೈದ್ಯಶಾಸ್ತ್ರದ ವ್ಯಾಸಂಗ ಸಂಶೋಧನೆಗಳು ನಡೆದುವು; ಭಸ್ಮ-ಲಿಂಗಗಳ ನಿರ್ಮಾಣ, ಕೃಷಿ ಸಂವರ್ಧನ,ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಗೋಸಂವರ್ಧನ, ಖಾದಿ ಪ್ರೋತ್ಸಾಹನ-ಹೀಗೆ ಹಲವು ಮುಖವಾಗಿ ರಾಷ್ಟ್ರ ನಿರ್ಮಾಣಕಾರ್ಯ ಭರದಿಂದ ಸಾಗಿತು; ಶಿಕ್ಷಣ ಪ್ರಸಾರ, ಸಾಹಿತ್ಯ ಪ್ರಚಾರಗಳಿಗೆ ನರೆಬಂದಿತು; ವಾಣಿಜ್ಯ ವ್ಯಾಪಾರಗಳಿಗೂ ಉತ್ತೇಜನ ದೊರೆಯಿತು. ಪತ್ರಿಕೆಗಳೂ ಪ್ರಕಟವಾಗತೊಡಗಿದವು.ಒಟ್ಟಿನಲ್ಲಿ ಹೊಸ ಹುಟ್ಟೊಂದು ತಲೆದೋರಿತು.

ಎಂಥ ಹೊಸಹುಟ್ಟದು! ಎಳಂದೂರ ಬಸವಲಿಂಗ ಸ್ವಾಮಿಗಳು, ಬಿದರಿ ಕುಮಾರ ಸ್ವಾಮಿಗಳು, ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು, ಚಿತ್ತರಗಿಯ ಮಹಾಂತಶಿವಯೋಗಿಗಳು, ಮಲ್ಲನಕೆರೆಯ ಚನ್ನಬಸವ ಸ್ವಾಮಿಗಳು, ಹುಬ್ಬಳ್ಳಿಯ ಮೂರುಸಾವಿರಮಠದ ಗಂಗಾಧರ ಮಹಾಸ್ವಾಮಿಗಳವರು, ಅನಂತಪುರದ ಜಗದ್ಗುರು ಗುರುಬಸವ ಮಹಾಸ್ವಾಮಿಗಳು ಮತ್ತು ಜ. ಲಿಂಗ ಮಹಾಸ್ವಾಮಿಗಳು, ಗದಗಿನ ತೋಂಟದಾರ್ಯ ಮಠದ ಜ. ಸಿದ್ದೇಶ್ವರ ಸ್ವಾಮಿಗಳು, ಹಾವೇರಿಯ ಹುಕ್ಕೇರಿಮಠದ

ಶಿವಬಸವ ಮಹಾಸ್ವಾಮಿಗಳು, ಶಾಂತವೀರ ಸ್ವಾಮಿಗಳು ಕರವೀರಮಠ ಬಾಗಲಕೋಟೆ. ಕೆಳದಿಯ ಹಿರಿಯಮಠದ ರೇವಣಸಿದ್ಧ ಪಟ್ಟಾಧ್ಯಕ್ಷರು, ಸೊಲ್ಲಾಪುರದ ವೀರೇಶ್ವರ ಶರಣರು, ಕಲ್ಲೂರ ಶರಣರು, ಹಾಲಕೆರೆಯ ಅನ್ನದಾನ ಸ್ವಾಮಿಗಳು, ಗುತ್ತಲದ ರುದ್ರಸ್ವಾಮಿಗಳು, ಸೂಡಿಯ ಪಟ್ಟಾಧ್ಯಕ್ಷರು ಮೊದಲಾದ ಶರಣ ಕುಲದೀಪಕರ ಸಂಯುಕ್ತ ಪ್ರಭಾವಲಯದಲ್ಲಿ ಉದ್ಭವಿಸಿ ಕುಮಾರ ಸ್ವಾಮಿಗಳ ಆತ್ಮತೇಜದಲ್ಲಿ ತೊಳಗಿ ಬೆಳಗಿದ ಆ ಹೊಸಹುಟ್ಟು ಅವಿಸ್ಮರಣೀಯವಾದುದು. ಅದು ಇತ್ತ ಅಮೃತ ಫಲಗಳಾದರೂ ಎಂಥವು! ಬಾಗಲಕೋಟೆಯ ಶಿವಮೂರ್ತಿ ಸ್ವಾಮಿಗಳು, ಕಂಚುಕಲ್ಲ.ಬಿದರೆ ‘ಯೋಗಿರಾಜ’ ಪ್ರಭುಕುಮಾರ ಪಟ್ಟಾಧ್ಯಕ್ಷರು, ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು, ನವಿಲುಗುಂದದ ಗವಿಮಠದ ಬಸವಲಿಂಗ ಶಿವಯೋಗಿಗಳು.ನಿಡುಮಾಮಿಡಿ ಜಗದ್ಗುರುಗಳು (ಜ.ಚ.ನಿ), ಬಂಥನಾಳ ಶಿವಯೋಗಿಗಳು,ಕುರವತ್ತಿಯ ತೋಂಟದಾರ್ಯ (ಮಹಾದೇವ) ಸ್ವಾಮಿಗಳು, ಐಹೊಳೆಯ ಸದಾಶಿವದೇವರು, ಚಿತ್ತರಗಿ ಇಳಕಲ್ಲ ಪೀಠದ ಗುರು ಮಹಾಂತ ಸ್ವಾಮಿಗಳು,ಸಂಪಗಾವಿಯ ನೀಲಕಂಠ ಶಿವಾಚಾರ್ಯರು, ಹಾನಗಲ್ಲ ಮಹೇಶ್ವರ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಸ್ವಾಮಿಗಳು, ಜಡೆಯ ಸಿದ್ಧಬಸವ ಸ್ವಾಮಿಗಳು, ಕಲ್ಯಾಣದ ಸಿದ್ಧಲಿಂಗ ಸ್ವಾಮಿಗಳು, ಬನವಾಸಿಯ ಸಿದ್ಧವೀರ ಸ್ವಾಮಿಗಳು, ಕುಷ್ಟಗಿಯ ಪಟ್ಟದ ಕರಿಬಸವ ಶಿವಾಚಾರ್ಯರು, ಸಖರಾಯಪಟ್ಟಣದ ಸದಾಶಿವ ಪಟ್ಟಾಧ್ಯಕ್ಷರು,ಹುಬ್ಬಳ್ಳಿಯ ಮೂರುಸಾವಿರಮಠದ ಹಿಂದಿನ ಜಗದ್ಗುರುಗಳವರು, ಅನಂತಪುರದ ಜ, ಸಚ್ಚಿದಾನಂದ ಮುರುಘರಾಜೇಂದ್ರ ಸ್ವಾಮಿಗಳು, ಹಾನಗಲ್ಲ ಸದಾಶಿವ ಸ್ವಾಮಿಗಳು,ಅಂಕಲಗಿಯ ಸಿದ್ಧರಾಮ ಸ್ವಾಮಿಗಳು, ಮುಂಡರಗಿಯ ಅನ್ನದಾನ ಸ್ವಾಮಿಗಳು, ಹಾರಹಳ್ಳಿ, ತಾವಕೆರೆ, ತೆಲಸಂಗ, ಬೇವಿನಕಟ್ಟೆ, ಖೆಳಗಿ, ನಿಡಗುಂದಿಕೊಪ್ಪ, ಮೊರಬ,ಕಪನಳ್ಳಿ, ನಾಗನೂರು, ಕೆರೂರು, ರಾವೂರು, ಗುಳೇದಗುಡ್ಡ, ಸಾಲೂರು, ಭಾಲ್ಕಿ,ಬಾರಂಗಿ ಕೂಡ್ಲಿ, ಮುಳ್ಳಳ್ಳಿ, ಕಡಕೋಳ, ಹೊಸಳ್ಳಿ, ಅಮೀನಗಡ, ಸಿಂದಗಿ, ಶಿರ್ಶಿ,ನೀಲಗುಂದ, ಹಾಸನ, ಸವದತ್ತಿ, ಪಡುಸಲಗಿ, ಗುಡಗೇರಿ, ಚಿಕ್ಕಸುಗೂರ, ತುಪ್ಪದ ಕುರಹಟ್ಟಿ, ಕನ್ನೂರು, ಚಿಂಚಣಿ, ಗುಳೇದಗುಡ್ಡ, ಗೊಗ್ಗಿಹಳ್ಳಿ, ಕಾಪನಹಳ್ಳಿ, ಬೇನಾಳ,ರಾಮಗಡ್ಡಿ, ಬಾಣಾವರ, ಬೀಳಗಿ, ದೊಡ್ಡಮೇಟಿ ಕುರಿಕೆ, ಹಾಲ್ಟಿ, ಗೌರಿಕೆರೆ, ಬಬಲೇಶ್ವರ.ಸವಣೂರು, ತಡಸ ಮೊದಲಾದ ಸ್ಥಳಗಳ ಶ್ರೀಗಳವರು, ಉಭಯಗಾನವಿಶಾರದ ಪಂಚಾಕ್ಷರ ಗವಾಯಿಗಳು ಅವರ ಪಟ್ಟಶಿಷ್ಯರಾದ ಪುಟ್ಟಯ್ಯನವರು, ಸಂಗೀತ ಸುಧಾಕರ ಬಸವರಾಜ ರಾಜಗುರು, ಸಂಗೀತ ವಿದ್ವಾನ್ ಕರೂರು ಗುರುಬಸವಾರ್ಯ ಹಿರೇಮಠರು, ಸಂಗೀತ ಸುಧಾಕರ ಸಿದ್ಧರಾಮ ಜಂಬಲದಿನ್ನಿ ಮೊದಲಾದ ಸಂಗೀತವಿದ್ವಾಂಸರು, ಕವಿರತ್ನ ಚೆನ್ನಕವಿಗಳು ದ್ಯಾಂಪುರ, ಪಂ. ಕಲ್ಲಿನಾಥ ಶಾಸ್ತ್ರಿಗಳು ಪುರಾಣಿಕ, ಮಹಾಲಿಂಗ ವೀರಾರ್ಯ ಹಿರೇಮಠ ದ್ಯಾಂಪುರ, ಗಂಗಾಧರ ಶಾಸ್ತ್ರಿಗಳು ಚಿತ್ತರಗಿ, ಬಸವಲಿಂಗ ಶಾಸ್ತಿಗಳಂಥ ಕೀರ್ತನಾಚಾರ್ಯರು-ಹೀಗೆ ಎಣಿಕೆಗೆ ಎಟುಕದಷ್ಟು ಅಮೃತಫಲಗಳನ್ನು ಕೊಟ್ಟಿತು ಕುಮಾರೇಶನು ತಂದ ಹೊಸಹುಟ್ಟು,

ವೀರವೈರಾಗ್ಯವನ್ನಪ್ಪಿದರೂ ಕುಮಾರೇಶರು ಕರುಣರಸಭರಿತರು, ಉದಾರ ಚರಿತರು. ಅವರ ವಟುವಾತ್ಸಲ್ಯ, ದೀನಬಂಧುತ್ವ, ಸರ್ವಧರ್ಮ ಸಮನ್ವಯ ದೃಷ್ಟಿ,“ಸರ್ವೇಜನಾಸ್ಸುಖಿನೋ ಭವಂತು’ ಎಂಬ ವಿಶ್ವವಿಶಾಲ ಹೃದಯ ಇತ್ಯಾದಿಗಳು ಅವರ್ಣನೀಯವಾದವುಗಳು. ಶಿವಯೋಗ ಮಂದಿರದಲ್ಲಿ ಒಮ್ಮೆ ನವಿಲುಗುಂದದ ಬಸವಲಿಂಗ ಸ್ವಾಮಿಗಳವರು ಭಾಷಣ ಮಾಡುತ್ತ ‘ಜಗತ್ತಿನಲ್ಲಿ ವೀರಶೈವ ಮತವೇ ಶ್ರೇಷ್ಠ’ವೆಂದು ಸಾರಲು ಶ್ರೀ ಕುಮಾರ ಯೋಗಿಗಳು ಅವರನ್ನು ‘ಜಗತ್ತಿನ ಯಾವ ಯಾವ ಧರ್ಮಗಳ ಬಗೆಗೆ ಓದಿಕೊಂಡಿರುವೆ?’ ಎಂದು ಕೇಳಿದರಂತೆ. ಬಸವಲಿಂಗ ಸ್ವಾಮಿಗಳವರಿಂದ ‘ಇಲ್ಲ’ವೆಂಬ ಉತ್ತರಬರಲು, ‘ಕೇವಲ ನಿನ್ನ ಧರ್ಮದ ಬಗ್ಗೆ ಮಾತ್ರ ಓದಿಕೊಂಡು ಜಗತ್ತಿನ ಎಲ್ಲ ಧರ್ಮಗಳಿಗಿಂತ ನಿನ್ನ ಧರ್ಮವೇ ಶ್ರೇಷ್ಠವಾದುದೆಂದು ಹೇಗೆ ಹೇಳಿದೆ? ಅದಕ್ಕೆ ಆಧಾರವೇನು? ಎಲ್ಲರಿಗೂ ತಮ್ಮ ಧರ್ಮ ಪ್ರಿಯವಾಗುತ್ತದೆ. ನಮ್ಮ ಧರ್ಮವೇ ಶ್ರೇಷ್ಠವೆಂದು ಸಾರಿ ಅನ್ಯರ ಮನ ನೋಯಿಸುವುದು ಉಚಿತವೆ? ಎಲ್ಲ ಧರ್ಮಗಳನ್ನೂ ತುಲನಾತ್ಮಕ ದೃಷ್ಟಿಯಿಂದ ಅರಿತುಕೊಳ್ಳಬೇಕು.ಎಲ್ಲ ಧರ್ಮಗಳ ಬಗೆಗೂ ಸಹಿಷ್ಣುತೆ ಇರಬೇಕು. ಸ್ವಮತ ಶ್ರದ್ಧೆಯು ಅನ್ಯಮತಗಳ ಅವಹೇಳನೆಗೆ ಆಸ್ಪದವೀಯ ಬಾರದು!’ ಎಂದು ಶ್ರೀಗಳವರ ಉದಾರವಾಣಿ ವಚಿಸಿತಂತೆ. ಅವರ ಪ್ರಭಾವದಿಂದಲೇ ಇಂದಿಗೂ ನವಿಲುಗುಂದದ ಗವಿಮಠದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿದೆ.

ಅಸ್ಪೃಶ್ಯತೆಯ ನಿವಾರಣೆಗಾಗಿ ಹೆಣಗಿದರವರು. ಶ್ರೀಮಂತರ ಸೌಧಗಳಿಗೆ ಹೋಗುವುದನ್ನು ಬಿಟ್ಟಾದರೂ ಬಡವರ ಮನೆಗಳಿಗೆ ಹೋಗುತ್ತಿದ್ದರವರು. ಸರಳ ಜೀವನ ಉನ್ನತ ಆದರ್ಶಗಳೇ ಉಸಿರಾಗಿದ್ದವರವರು. ಖಾದಿಗೆ ಪ್ರೋತ್ಸಾಹವನ್ನಿತ್ತರವರು. ಅನೇಕ ಹೃದಯಸ್ಪರ್ಶಿಯಾದ ಭಾವಗೀತೆಗಳನ್ನು ರಚಿಸಿ ನವೀನ ನಿಜಭಕ್ತಿ ತರಂಗಿಣಿಯನ್ನು ಹರಿಸಿದವರು ಅವರು. ಶುದ್ಧ ಭಕ್ತಿಯಿಂದ ಬಡ ಕುರಬನೊಬ್ಬನು ತಂದಿದ್ದ ಹಾಲನ್ನು ಸ್ವೀಕರಿಸುವುದೋ ಬಿಡುವುದೋ ಎಂದು ಉಳಿದವರು ವಿವೇಚನೆಗೆ ಒಳಗಾಗಿದ್ದಾಗ ನಿಜಭಕ್ತಿ ಬೆರೆತ ಆ ಹಾಲೇ ಅಮೃತವೆಂದು ಅದನ್ನು ಸ್ವೀಕರಿಸಿದವರು ಆ ಮಹಾತ್ಮರು. ಸೊಲ್ಲಾಪುರದ ವೀರೇಶ್ವರ ಶಿವಶರಣರು ಲಿಂಗೈಕ್ಯರಾಗಲಿರುವರೆಂಬ ಸುದ್ದಿ ತಿಳಿಯುತ್ತಲೆ ವ್ರತಭಂಗವನ್ನೂ ಗಮನಿಸದೆ ಉಗಿಬಂಡಿಯಲ್ಲಿ ಪ್ರವಾಸ ಮಾಡಿದವರು ಆ ಕೃಪಾಸಿಂಧುಗಳು. ಅವರು ಏನು ಅಹುದು? ಏನು ಅಲ್ಲ?

ಭಕ್ತಿಯಲ್ಲಿ ಬಸವ ನೀನಯ್ಯ ಜ್ಞಾನದಲ್ಲಿ ಚನ್ನಬಸವ ನೀನಯ್ಯ!

ವಿರತಿಯಲ್ಲಿ ಅಲ್ಲಮಪ್ರಭು ನೀನಯ್ಯ! ಶಿವಯೋಗದಲ್ಲಿ ಸಿದ್ಧರಾಮ ನೀನಯ್ಯ!

ಐಕ್ಯದಲ್ಲಿ ಅಜಗಣ್ಣ ನೀನಯ್ಯ! ಉಳಿದ ಕಾಯಕಂಗಳಲ್ಲಿ

ಎಲ್ಲ ಶಿವಶರಣರಂಶ ನೀನಯ್ಯ! ಶ್ರೀ ನಿಡುಮಾಮಿಡಿ ಶ್ರೀಗಿರಿ

ಸೂರ್ಯ ಸಿಂಹಾಸನಾಧೀಶವಾಸ ಕುಮಾರೇಶ್ವರ

ಜಚನಿ

ಕಾಯವಿಕಾರವಿಲ್ಲ ಮನದುಣಮಿಲ್ಲ ಮದಾಳಿಯಿಲ್ಲವಾ

ವಾಯು ಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲ ವಾನಗಂ

ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ

ಪಾಯಮದಿಲ್ಲ ನಿನ್ನೊಳ ಮಹಾ ಪ್ರಭುಲಿಂಗ ಕುಮಾರಯೋಗಿಯೆ||

ಲಿಂ, ಕವಿರತ್ನ ಚೆನ್ನಕವಿಗಳು

ಎಂಬ ಜ.ಚ.ನಿಯವರ ವಚನ ರತ್ನವನ್ನು ಮತ್ತು ಕವಿರತ್ನ ಚೆನ್ನಕವಿಗಳ ನುಡಿಯೊಂದನ್ನು ಉದ್ಧರಿಸಿಬಿಟ್ಟರೆ ಸಾಕೆಂದು ತೋರುತ್ತದೆ.

( ಆಕರ : ಸಿದ್ಧಯ್ಯ ಪುರಾಣಿಕರ ‘ಶರಣ ಚರಿತಾಮೃತ’ ಪು. ೮೨೧-೮೩೨)

ಡಾ.ಜಿ.ಕೆ.ಹಿರೇಮಠ

          ಕಾಲದ ಕೂಗು, ಜನಾಂಗದ ಕರುಳಿನ ಕರೆ, ನೊಂದವರ ನಿಟ್ಟುಸಿರು, ಬೆಂದವರ ಬೇಗೆಯ ಫಲರೂಪವಾಗಿ ಮಹಾಪುರುಷರೊಬ್ಬರ ಜನನ ಆಗುತ್ತದೆ ಎಂಬುದು ಜನತೆಯ ನಂಬಿಕೆ. ಸಾಮಾಜಿಕ, ಧಾರ್ಮಿಕ ಸ್ಥೀತ್ಯಂತರಗಳು ವೈಪರಿತ್ಯಕ್ಕೆ ಮುಟ್ಟಿದಾಗ ಒಂದು ಮಹಾನ್ ಆತ್ಮವು ಉಗಮಿಸಿ ಸಮಾಜ ಸುಧಾರಣೆಯ ಹಾಗೂ ಮಾನವ ಜನಾಂಗದ ಮೌಲ್ಯಗಳನ್ನು ಬಿತ್ತಿ ಮೇಲೆತ್ತಿ ತರುವ ಮಹಾಹೊಣೆಯನ್ನು ಹೊತ್ತು ನಿಲ್ಲುತ್ತದೆ. ಬುದ್ಧ, ಬಸವ, ಏಸು, ಪೈಗಂಬರ, ಮಹಾವೀರರಂಥವರು ಹೊಸಬೆಳಗು ಮೂಡಿಸಿದ ಮಹಾತ್ಮರುಗಳು.      ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಅದರಲ್ಲೂ ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಸಮಾಜ ಕಟ್ಟುವ ಕ್ರಾಂತಿಯಲ್ಲಿ ಮಿಂಚಿನಂತೆ ಪ್ರಜ್ವಲವಾಗಿ ಪ್ರಕಾಶಿಸಿ ಸ್ವಾಮಿತ್ವಕ್ಕೆ ಮುಕುಟಮಣಿಯಾಗಿ ಶೋಭಿಸಿದ ಕುಮಾರಯೋಗಿ ಒಬ್ಬ ಅಪೂರ್ವ ಅನುಭಾವಿ, ಅಪೂರ್ವ ಶಿವಯೋಗಿ, ನಿರ್ಲಿಪ್ತ, ನಿರ್ಮೋಹಿ, ನಿರಹಂಕಾರಿಗಳಾಗಿ ಬೆಳಗಿದ ಮಾನವಿಕ ವ್ಯಕ್ತಿತ್ವ ಅವರದು. ತಮ್ಮ ಸುತ್ತ ಏನಿತ್ತೊ ಅದೆಲ್ಲಕ್ಕೂ ಬದುಕುಕೊಟ್ಟ ಪ್ರಬುದ್ಧ ಮಹಾಜಂಗಮರು. ಹನಿಯಾಗಿ, ಹಳ್ಳವಾಗಿ, ಹೊಳೆಯಾಗಿ ಮಹಾನದಿಯಾಗಿ ಪ್ರವಹಿಸಿದ ಕುಮಾರಯೋಗಿಯು ಅಳಿಯದ ವಿಭೂತಿಯಾಗಿದ್ದಾರೆ. ಮಾನವೇತಿಹಾಸದಲ್ಲಿ ಅಚ್ಚುಗೊಂಡ ಪ್ರಭಾವ ಮುದ್ರೆಯ ನಿಜಶಾಸನವಾಗಿದ್ದಾರೆ. ಕನ್ನಡ ನಾಡಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದ ಸಾಲಿಮಠ ಮನೆತನ ಧರ್ಮ-ಸಂಸ್ಕøತಿಗಳ ತಾಣ. ಆಗ ಬಳ್ಳಾರಿ ಭಾಗದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದ್ದರಿಂದ ಮೂಲತಃ ಈ ಮನೆತನದವರು ಬಳ್ಳಾರಿ ಜಿಲ್ಲೆ ಕೊಟ್ಟೂರಿನಿಂದ ವಲಸೆ ಬಂದು ನೆಲೆಸಿದವರು ದರಿಹಂಚಿನ ಚಿಕ್ಕ ಮನೆಯನ್ನು ನಿರ್ಮಿಸಿಕೊಂಡು, ಒಂದು ನೂರಾ ಐದು ವರ್ಷ ಬಾಳಿದ ಕೊಟ್ಟೂರು ಬಸವಾರ್ಯರು ಈ ಗ್ರಾಮಕ್ಕೆ ಬಂದು ನೆಲೆಸಿದ ಮೇಲೆ ಕೈಕೊಂಡ ವೃತ್ತಿಯೆಂದರೆ ‘ಅಕ್ಷರದೀಕ್ಷೆ’. ಸುಶಿಕ್ಷಿತರೂ, ಓದು-ಬರಹ ಬಲ್ಲವರೂ ಆಗಿದ್ದ ಬಸವಾರ್ಯರು ಗ್ರಾಮದ ಮನೆಮನೆಗೆ ಹೋಗಿ ಪಾಲಕರಲ್ಲಿ ಖುದ್ದಾಗಿ ಮಕ್ಕಳು ಅಕ್ಷರ ಕಲಿಯಲು ಕಳುಹಿಸಿಕೊಡುವಂತೆ ವಿನಂತಿಸುತ್ತಾರೆ. ಊರಿನ ಎಲ್ಲ ಮಕ್ಕಳನ್ನು ತಮ್ಮ ಮನೆಯ ಶಾಲಾ ತೆಕ್ಕೆಗೆ ತರುತ್ತಾರೆ. ಮಕ್ಕಳಿಗೆಲ್ಲ ಅಕ್ಷರ ತೀಡಿಸಿ, ರೂಢಿಸಿ ‘ಕನ್ನಡ ಅಕ್ಷರದೀಕ್ಷೆ’ ನೀಡಿ ಶಿಕ್ಷಕ ವೃತ್ತಿಗೆ ಆದರ್ಶಪ್ರಾಯರಾದ ಅವರು ವೃತ್ತಿಯ ಘನತೆಯಿಂದಾಗಿ ಸಾಲಿಮಠ ಬಸವಾರ್ಯರು ಎಂಬುದಾಗಿ ಗ್ರಾಮ ಜನರಲ್ಲಿ ಮನೆಮಾತಾದರು. ಅಕ್ಷರ ಸಂಸ್ಕøತಿಯ ಕಾರಣವಾಗಿ ಈ ಮನೆತನಕ್ಕೆ ‘ಸಾಲಿಮಠ’ ಎಂಬ ಹೆಸರು ಅಡ್ಡ ಹೆಸರಾಗಿ ಬಂದಿತು.      ಸಾಲಿಮಠ ಬಸವಾರ್ಯರ ಮಗನಾದ ಬಸಯ್ಯನವರು ಹಿರಿಯರ ಆದರ್ಶಗಳನ್ನು ಅಚ್ಚೊತ್ತಿಕೊಂಡವರು. ನೀಲಮ್ಮನವರನ್ನು ಧರ್ಮಪತ್ನಿಯಾಗಿ ಪಡೆದ ಮೇಲಂತೂ ಸಾಲಿಮಠ ಮನೆತನ ಸಂಸ್ಕಾರದ ಕಣಜವಾಯಿತು. ಬಸಯ್ಯ-ನೀಲಮ್ಮರ ಎರಡನೆಯ ಪುತ್ರನಾಗಿ 11-09-1867 ರಂದು ಬುಧವಾರ ಬೆಳಗ್ಗೆ ಸೂರ್ಯೋದಯದ ಸಮಯಕ್ಕೆ ಜನಿಸಿದ ಮಗುವೇ ‘ಹಾಲಯ್ಯ’. ಈ ಬಾಲಕನು ನೆರೆಯವರ ನೇಹದ ಶಿಶುವಾಗಿ, ಮುದ್ದಿಸುವವರ ಮುಂಗೈ ಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಸಕಲರ ಅಕಳಂಕ ವಾತ್ಸಲ್ಯದ ಕುಡಿಯಾಗಿ ಬೆಳೆದನು. ವಯೋವೃದ್ಧ ಬಸವಾರ್ಯರ ‘ಅಕ್ಷರ ದೀಕ್ಷೆ’ಯು ಶುಭ್ರಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿಯಾಯಿತು.      ಆಟದ ವಯಸ್ಸಿನಲ್ಲಂತೂ ಗೋಲಿಗುಂಡ, ಬುಗುರಿ, ಚಿಣ್ಣಿದಾಂಡು, ಚಕ್ರಬಿಡುವುದು ಮೊದಲಾದ ಆಟಗಳನ್ನು ಆಡುವುದರ ಜೊತೆಗೆ ಈ ಆಟಗಳ ವಸ್ತುಗಳನ್ನು ಸಂಗ್ರಹಿಸುವುದು, ಜೊತೆ ಗೆಳೆಯರೊಡನೆ ಈಜಲು ಹೋಗುವುದು, ಪಾಠಗಳನ್ನು ಏಕಚಿತ್ತದಿಂದ ಆಲಿಸುವುದು. ಪಟಪಟನೆ ಲೆಕ್ಕ ಬಿಡಿಸಿ ಅರಳು ಹುರಿದಂತೆ ಹೇಳುವದು, ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ದುಂಡಾಗಿ ಬರೆಯುವುದು, ಪದ್ಯಗಳನ್ನು ರಾಗಬದ್ಧವಾಗಿ ಕಂಠಪಾಠ ಮಡುವುದು, ಗದ್ಯಪಾಠಗಳನ್ನು ಮನನ ಮಾಡಿಕೊಳ್ಳುವಲ್ಲಿ ತನ್ನ ಪ್ರತಿಭೆಯನ್ನು ಮೆರೆದು ಶಿಕ್ಷಕರಿಂದ ‘ಜಾಣ ವಿದ್ಯಾರ್ಥಿ’ ಎನಿಸಿಕೊಂಡನು. ಗೋಲಿಗುಂಡ ಹಿಡಿದಿದ್ದರೂ ಇನ್ನೇನನ್ನೋ ಮೆಲಕು ಹಾಕುತ್ತಿದ್ದ ಹಾಲಯ್ಯನ ಮನಸ್ಸು ತುಂಭ ಕಿರಿಯ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಚಿಂಥನ, ತಾರ್ಕಿಕತೆ, ಏಕಾಗ್ರತೆ, ಬಡತನ, ಬವಣೆ, ಸಮಾಜ-ಶಿಕ್ಷಣ ಜನರ ನೋವು-ನಲಿವು, ದೇಶ-ಭಾಷೆ, ಹೀಗೆ ಮನ ಆಲಿಯುತ್ತ ಒಮ್ಮೊಮ್ಮೆ ಪಾಪ-ಪೂಣ್ಯ ದೇವರು, ಜಗಸೃಷ್ಠಿಯಂತಹ ತುಂಬ ಗಹನವೂ, ಉನ್ನತವೂ ಆದ ವಿಚಾರಗಳ ಕಡೆಗೂ ಏರಿಳಿಯುತ್ತಿತ್ತು.      ಕನ್ನಡ ಮುಲ್ಕೀ ತರಗತಿಯವರೆಗೂ ಓದಿದ ಹಾಲಯ್ಯ ಮುಲ್ಕೀ ಪರೀಕ್ಷೆ ಬರೆಯಲು ರಾಣೀಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದುಕೊಂಡು ಬಂದು ಪರೀಕ್ಷೆ ಬರೆದರು. ಸಾಕಷ್ಟು ಓದಿಯೇ ಪರೀಕ್ಷೆ ಬರೆದಿದ್ದರೂ ಪರೀಕ್ಷೆಯ ಫಲಿತಾಂಶ ಅನುತ್ತೀರ್ಣವೆಂದು ಗೊತ್ತಾದಾಗ ಬಾಲಕ ಹಾಲಯ್ಯನಿಗೆ ನಿರಾಶೆಯಾದರೂ ಎದೆಗುಂದಲಿಲ್ಲ. “ವಿದ್ಯಾಬಲ ಉಡುಗಿದರೂ ಚಿಂತೆಯಿಲ್ಲ ಛಲ ಉಡುಗದು” ಎಂಬಂತೆ ಮುಂದಿನ ವೀರ ಸಂಕಲ್ಪದ ದೀರ್ಘಾಲೋಚನೆ ಮಾಡುತ್ತ “ಬಟ್ಟೆ-ಹಿಟ್ಟು ಕೊಡುವ ವಿದ್ಯೆ ನನಗೆ ಬೇಡ” ಎಂದು ಗಟ್ಟಿ ನಿಲುವು ಮಾಡದನು. ತಾಯಿಯ ತವರೂರಾದ ಲಿಂಗದಳ್ಳಿಯಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಿ ತಾವೆ ಶಿಕ್ಷಕರಾಗಿ ಅನೇಕರ ಬಾಳನ್ನು ಬೆಳಗಿದರು. ಆಗ ಹಾಲಯ್ಯ ಮಾಸ್ತರರಿಗೆ ವರ್ಷಕ್ಕೆ ಒಂದು ನೂರು ರೂಪಾಯಿ ಸರಕಾರದ ಸಂಬಳವಿತ್ತು. ನಿಸ್ಪøಹ ಭಾವನೆಯ ಶಿಕ್ಷಕ ವೃತ್ತಿ, ವೈರಾಗ್ಯದ ಜೀವನ ಅಧ್ಯಾತ್ಮ ಮನೋಧರ್ಮ, ಸಾತ್ವಿಕತೆಯ ಸ್ವಭಾವ ಎಲ್ಲವೂ ತಾವಿದ್ದ ಗ್ರಾಮೀಣ ಪರಿಸರದ ಮೇಲೆ ಪ್ರಭಾವ ಬೀರಿದವು.      ಹೀಗಿರುವಾಗ ತಾಯಿ ನೀಲಮ್ಮಳು ಮದುವೆಯ ಪ್ರಸ್ತಾಪ ಮಾಡಿದಾಗ ಆ ಮಾತಿಗೆ ತಡೆಹಾಕಿ ‘ಇಕೋ! ಈ ನಿನ್ನ ಉದರದಲ್ಲಿ ಜನಿಸಿದ ಋಣಭಾರವನ್ನು ಸ್ವಲ್ಪು ಮಟ್ಟಿಗಾದರೂ ಇಳಿಸಿಕೊಳ್ಳಬಹುದೆಂದು ಭಾವಿಸಿ ಮೂರು ವರ್ಷ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತಿದ್ದೇನೆ. ನನ್ನದೇ ಆದ ದಾರಿಯಲ್ಲಿ ನಾನು ಸಾಗುತ್ತಿರುವಾಗ ಇನ್ನು ಮೇಲೆ ತಾಯಿ ಎಂಬ ಮೋಹವು ನನ್ನಲ್ಲಿಯೂ; ಮಗನೆಂಬ ಮೋಹವು ನಿನ್ನಲ್ಲಿಯೂ ಇರಕೂಡದು! ಎಂದು ಹೇಳಿ ಮದುವೆಯ ವಿಚಾರ ಸ್ಪಷ್ಟವಾಗಿ ತಳ್ಳಿಬಿಡುತ್ತಾರೆ. ತಾಯಿ ನೀಲಮ್ಮ ಮಗನ ಸಹಜ ಹಾಗೂ ವೀರ ವೈರಾಗ್ಯಗಳನ್ನು ತಿಳಿದು ಗಟ್ಟಿ ಮನಸ್ಸು ಮಾಡಿದಳು.      ‘ವೈರಾಗ್ಯ’ ಇದೊಂದು ಅಗ್ನಿದಿವ್ಯ. ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ ಜೀವ-ಭಾವಗಳ ನಿರಸನ ಸಾಧಿಸಿ ಇಷ್ಟ ದೈವದ ಉಪಾಸಣೆಯಿಂದ ಸರ್ವಾರ್ಪಣ ಸಿದ್ಧಿಯನ್ನು ಸಂಪಾದಿಸಿದವರೇ ವಿರಾಗಿಗಳು. ಸಾಹಸ ಪ್ರವೃತ್ತಿಯ ಸಾಧಕರ ಅಂತಶಕ್ತಿಗೆ ವೈರಾಗ್ಯ ಒಂದು ಸವಾಲು. ಅಲ್ಲಮಪ್ರಭುದೇವ, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದರಂತಹ ವೀರವಿರಾಗಿಗಳ ವೈರಾಗ್ಯವೇ ಹಾಲಯ್ಯನವರದಾಗಿತ್ತು. ವೈರಾಗ್ಯದ ಜೊತೆಗೆ ‘ಶೀಲ’ವೂ ಅವರ ಆಂತರಿಕ ಬದುಕಿನ ಮೌಲ್ಯವಾಗಿತ್ತು. ಜೀವಧನವಾಗಿತ್ತು. ಸತ್ಯದಲ್ಲಿ ನಡೆಯುವುದು, ಸತ್ಯದಲ್ಲಿ ನುಡಿಯುವುದು, ಆಚಾರ-ವಿಚಾರಗಳಲ್ಲಿ ಗಟ್ಟಿತನ, ಅಂತರಂಗ-ಬಹಿರಂಗಗಳಲ್ಲಿ ಶುದ್ಧಿ, ಯೋಚನೆಗಳು-ಯೋಜನೆಗಳಾಗಿ ಸಾಕಾರಗೊಳಿಸುವುದು ಇವುಗಳ ಜೊತೆಗೆ ಮಾನವನ ಏಳ್ಗೆಯೇ ಶೀಲ, ಜಾತಿ-ಮತಗಳ ವಿಷ ಬೀಜ ಬಿತ್ತದಿರುವುದೆ ಶೀಲ, ಮೇಲು-ಕೀಳುಗಳ ಭಾವನೆ ತಂದುಕೊಳ್ಳದಿರುವುದೇ ಶೀಲ, ಸಮಾಜದ ಸಂಸ್ಕರಣೆಯೇ ಶೀಲ, ಸಕಲ ಜೀವರಾಶಿಗಳ ಸಂರಕ್ಷಣೆಯೇ ಶೀಲ, ಈ ಬಗೆಯ ಗಟ್ಟಿಗೊಂಡ ವ್ಯಕ್ತಿತ್ವ ಹಾಲಯ್ಯನವರದಾಗಿತ್ತು. ಹಾಲಯ್ಯ ಬೆಳೆದಂತೆ ಹಾಲಯ್ಯ ಮಾಸ್ತರರಾಗಿ, ಹಾಲಯ್ಯ ದೇಶಿಕರಾಗಿ, ಹಾನಗಲ್ಲ ವಿರಕ್ತಮಠದ ಅಧಿಕಾರ ಹೊಂದಿ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವಸ್ವಾಮಿಗಳಾಗಿ ನಾಮಕರಣಗೊಂಡು, ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಕುಮಾರ ಸ್ವಾಮಿಗಳೆಂದು ನಂತರ ಗುರುಗಳ ಅಭಿಧಾನರಾಗಿ ಸಮಾಜೋದ್ಧಾರದ ಕ್ರಾಂತದರ್ಶಿ ಕುಮಾರ ಯೋಗಿಯಾಗಿ ಯುಗಪುರುಷರೆಂದೆನಿಸಿದರು. ಅವರ ಬದುಕು ಆತ್ಮಸಂಸ್ಕಾರದ ಪ್ರತಿಬಿಂಬ. ಮಾನವ ಕಲ್ಯಾಣ ಸಾಧನೆಯ ಮಹಾಮಾರ್ಗ. ವಿದ್ಯೆ, ಸಂಸ್ಕøತಿ, ಸಮಾಜ, ಧರ್ಮ, ಸಾಹಿತ್ಯ, ಸಂಗೀತ ಕಲೆಗಳ ಸಂಚ ಲನ ಮಹಾಕಾವ್ಯವಾಗಿದೆ. ದೀನ-ದುರ್ಬಲರ, ದಲಿತ-ದರಿದ್ರರ, ಅನಾಥ-ಅಂಧರ ಏಳ್ಗೆಗಾಗಿ ಸ್ವಾತಂತ್ರ್ಯದ ಪೂರ್ವದ ದಿನಗಳಲ್ಲಿ ಸ್ಥಾಪನೆ ಮತ್ತು ಸುಧಾರಣೆಗಳ ಕ್ರಾಂತಿಯೆನ್ನಸಗಿದವರು. 1903ರ ವೇಳೆಗಾಗಲೇ ಹಾನಗಲ್ಲು, ಹಾವೇರಿ, ಶೆಲವಡಿ, ರಾಣೆಬೆನ್ನೂರು, ಸಂಶಿ, ಅಬ್ಬಿಗೇರಿ ಆಮೇಲೆ ಹುಬ್ಬಳ್ಳಿ, ರೋಣ, ಮುಂಡರಗಿ, ಬದಾಮಿ, ಬಗಲಕೋಟೆ ಹೀಗೆ ಅನೇಕ ಕಡೆಗಳಲ್ಲಿ ಸಂಸ್ಕøತ ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾ ಸಂಚಲನಗೈದರು. ಪಾಠಶಾಲೆಗಳಲ್ಲಿ ಅಭ್ಯಾಸ ಮಾಡಿ ಪಂಡಿತರಾಗುವ, ಮಠಾಧಿಪತಿಗಳಾಗುವ ಘನ ಕಾರ್ಯಗಳು ನಡೆದವು. ಕಬ್ಬಿಣ ಕಡಲೆಯಾಗಿದ್ದ ಸಂಸ್ಕøತವನ್ನು ತಿಳಿಯುವ ಮತ್ತು ಆ ಭಾಷೆಯ ಧಾರ್ಮಿಕ ತತ್ವಗಳನ್ನು ಕನ್ನಡಕ್ಕೆ ತರುವ ತೀವ್ರತರ ಚಟುವಟಿಕೆಗಳು ಉಂಟಾದವು. ಯಾವುದೇ ಭಾಷೆಯು ಎಲ್ಲರಿಗೂ ಎಂಬುದನ್ನು ಮನದಟ್ಟು ಮಾಡಿಕೊಡಲು ಸತತ ಶ್ರಮಿಸಿದರು. ಬಸವಣ್ಣನವರ ಅನುಭವ ಮಂಟಪ ಸಂಸ್ಕøತಿಯನ್ನು ಸಜೀವಗೊಳಿಸುವ ಸಾಧನೆಯಾಗಿ ‘ಐತಿಹಾಸಿಕ ಅಗತ್ಯದ ಸೃಷ್ಟಿ’ ಎಂಬಂತೆ 1904ರಲ್ಲಿ ಶ್ರೀಮದ್ವೀರಶೈವ ಮಹಾಸಭೆ ಸ್ಥಾಪಿಸಿದರು. ದೀನರ, ದುರ್ಬಲರ, ಮಕ್ಕಳ, ಮಹಿಳೆಯರ ಏಳ್ಗೆಗಾಗಿ ದುಡಿಯುವುದು, ವಿವಿಧ ಧರ್ಮಗಳ ಮಧ್ಯೆ ಸೌಹಾರ್ದ ಮತ್ತು ಸಾಮರಸ್ಯ ಬೆಸೆಯುವುದು. ಧರ್ಮ, ಸಾಹಿತ್ಯ, ಸಂಸ್ಕøತಿ, ಸಂಶೋಧನೆಗಳು ನಡೆಯುವಂತೆ ಮಾಡುವುದು ಮಹಾಸಭೆಯ ಉದ್ಧೇಶವಾಗಿದೆ. ಸಾಮಾಜಿಕ ಕುಂದು-ಕೊರತೆಗಳನ್ನು ದೂರಮಾಡಿ ಸಮಾನತೆಯನ್ನು ಸಾರುವ ಧಾರ್ಮಿಕ ಸಂವಿಧಾನವೂ ಹೌದು. ವಿಶ್ವದ ಮಾನವೀಯತೆಯ ಮಹಾಪುರುಷರಲ್ಲೊಬ್ಬರಾದ ಕುಮಾರ ಶಿವಯೋಗಿಗಳು ಮಾನವ ಕುಲದ ಸಮಗ್ರ ಉನ್ನತಿಗಾಗಿ ಅಧ್ಯಾತ್ಮ ಸಾಧನೆಯ ತರಬೇತಿ ನೀಡುವ ಅಗತ್ಯತೆಯನ್ನು ಮನಗಂಡಿದ್ದರು. ಸ್ವಾತಂತ್ರ್ಯಪೂರ್ವ, ಕರ್ನಾಟಕ ಏಕೀಕರಣ ಪೂರ್ವ ಕಾಲದಲ್ಲಿ 1909ರಲ್ಲಿ ಶ್ರೀಮದ್ವೀರಶೈವ ಶಿವಯೋಗಮಂದಿರ ಎಂಭ ಧಾರ್ಮಿಕ ಸಂಸ್ಥೆಯನ್ನು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನಲ್ಲಿ ಸ್ಥಾಪಿಸಿದರು. ಧರ್ಮಗುರುಗಳಾಗುವ ಮುನ್ನ ಧಾರ್ಮಿಕ, ನೈತಿಕ, ಯೌಗಿಕ, ಶಿಕ್ಷಣದ ಸಂಸ್ಕಾರ ಕೊಡುವ ಸಾಂಸ್ಕøತಿಕ ಹೆದ್ದಾರಿಯೊಂದು ತೆರೆದುಕೊಂಡಿತು. ಧಾರ್ಮಿಕ ಹೆಗ್ಗುರುತು ಈ ಸಂಸ್ಥೆಯದಾಗಿದೆ. ವ್ಯಷ್ಟಿಯಿಂದ ಸಮಷ್ಟಿ ಬದಕಿಗೆ ಹೊಸರೂಪ ನೀಡಲು ಮುಂದಾದ ಶಿವಯೋಗಮಂದಿರವು ಇಂದು ನಾಡಿನ ನಾನಾ ಮಠಗಳಿಗೆ ಮಠಾಧಿಪತಿಗಳನ್ನು ಕೊಟ್ಟಿದೆ. ಶಿಕ್ಷಣ, ಉಚಿತ ಪ್ರಸಾದ ನಿಲಯಗಳ ಮೂಲಕ ಸಹಸ್ರಾರು ಮಠಗಳು ಘನಕಾರ್ಯ ಮಾಡುತ್ತಿರುವುದು ನಾಡಿನ ಶೈಕ್ಷಣಿಕ ಇತಿಹಾಸದಲ್ಲಿ ಬಹುಮಹತ್ವವಾಗಿದೆ. ಗದಗನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕರಾದ ಕುಮಾರ ಶಿವಯೋಗಿಗಳು ಅಂಧರ, ಅನಾಥರ, ಅಂಗವಿಕಲರ ಬಾಳಿಗೆ ಬೆಳಕು ನೀಡಿದವರು. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳಿಗೆ ಸಂಗೀತದ ಶಿಕ್ಷಣ ಕೊಡಿಸಿ ಅವರಂಥ ಸಹಸ್ರಾರು ಅಂಧರು ಒಳಗಣ್ಣಿನಿಂದ ಲೋಕ ಅರಿತರು. ಸಂಗೀತ, ಕೀರ್ತನ, ಪ್ರವಚನಗಳ ಮುಖಾಂತರ ಜ್ಞಾನದ ಬೆಳಕು ನೀಡಿದರು. ಭಕ್ತರ ಮನೆಗೆ ಹೋದಾಗ ಭಕ್ತರು ಕೊಟ್ಟ ಕಾಣಿಕೆಯನ್ನು ಭಕ್ತರಿಗೇ ಮರಳಿಸಿ ಅವರ ಮನೆಗಳ ಗೋಡೆ-ಗದ್ದುಗೆಗಳಲ್ಲಿ ಹುದುಗಿ ಪೂಜಿಸಲ್ಪಡುತ್ತಿದ್ದ ಕೈಬರಹ, ತಾಳೆಗರಿ ತಾಡೋಲೆಗಳನ್ನು ಸಂಗ್ರಹಿಸಿದರು. ಫ.ಗು.ಹಳಕಟ್ಟಿಯವರನ್ನು ಜೊತೆಗೆ ಕರೆದುಕೊಂಡು ಮುದ್ರಣಕ್ಕೆ ಮುಂದಾದರು. ಹೋದ ಹೋದಲ್ಲೆಲ್ಲ ಶರಣರ ವಚನಗಳನ್ನು ಪ್ರಸಾರ ಮಾಡಿದರು. ಪತ್ರಕೆಗಳನ್ನು ಆರಂಭಿಸಿ ಸಾಹಿತ್ಯ ಪ್ರಸಾರ ಮಾಡಿದವರು. ಉದ್ಧರಣೆಗಳನ್ನು ಪೋಷಿಸಿದರು. ಅನೇಕ ಗ್ರಂಥಗಳ ಸಂಶೋಧನೆಗೆ ಪ್ರೋತ್ಸಾಹ ನೀಡಿದರು. ಅನುಭಾವದ ಹಾಡುಗಬ್ಬಗಳನ್ನು ರಚಿಸಿದವರು ತಾವಾಗಿದ್ದರೂ ಎಲ್ಲಿಯೂ ತಮ್ಮ ಹೆಸರನ್ನು ನಮೂದಿಸಿಕೊಂಡವರಲ್ಲ. ಗೋಶಾಲೆಯನ್ನು ಸ್ಥಾಪಿಸಿ ಲಕ್ಷಲಕ್ಷ ಗೋವುಗಳನ್ನು ಸಂರಕ್ಷಿಸಿ ಪ್ರಾಣಿಪ್ರೇಮಕ್ಕೆ ಸಾಕ್ಷಿಯಾದವರು. ಪಕ್ಷಿ, ಪರಿಸರ, ಗಿಡ, ಬಳ್ಳಿ ಒಟ್ಟಾರೆ ತಮ್ಮ ಸುತ್ತಮುತ್ತ ಏನಿತ್ತೊ ಅದೆಲ್ಲವನ್ನು ತಮ್ಮಂತೆ ಬದುಕಿಸಿದ ಬೆಳೆಯಲು ಆಶ್ರಯವನ್ನಿತ್ತವರದು ಅಂತಃಕರಣದ ಹೃದಯ! ದಯಾಭಾವದ ಹೃದಯ! ತಮ್ಮ ಜೀವಿತಾವಧಿಯ ಅರವತ್ಮೂರು ವರ್ಷಗಳನ್ನು ಕಾಲ್ನಡಿಗೆಯಲ್ಲೆ ಕಳೆದವರು. ಸಮಯದ ಅಪವ್ಯಯ ಎಂದರೆ ಅಪರಾಧ ಎಂದು ನಂಬಿದವರು. ಅವರ ವ್ಯಕ್ತಿತ್ವದ ಪ್ರಭಾವ ಮುದ್ರೆ ಇಂದಿನ ವರೆಗೂ ಜನತೆಯ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರಿದೆ ಎನ್ನುವುದಕ್ಕೆ ಅವರ ಹೆಸರನ್ನು ತಂದೆ-ತಾಯಿಗಳು ತಮ್ಮ ಮಕ್ಕಳಿಗೆ, ಭಕ್ತರು ಮಠಾಧಿಪತಿಗಳಿಗೆ ನಾಮಕರಣಗೊಳಿಸುತ್ತಿರುವುದು. ಅವರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣಗೊಳ್ಳುತ್ತಿರುವುದು. ಅಲ್ಲದೆ ಅವರನ್ನು ಕುರಿತ ಕಾವ್ಯ-ಸಾಹಿತ್ಯ, ಸಂಶೋಧನಾ ಸಾಹಿತ್ಯ ನಿರ್ಮಾಣವಾಗುತ್ತಿರುವುದೇ ಪ್ರತ್ಯಕ್ಷ ನಿದರ್ಶನವಾಗಿದೆ. ಕುಮಾರ ಶಿವಯೋಗಿಗಳ ಕ್ರಾಂತದರ್ಶಿತ್ವವು ಆ ಒಂದು ಯುಗಕ್ಕೂ ಸೀಮಿತಗೊಳ್ಳುವಂತಹದ್ದಲ್ಲ. ಅವರ ಅಧ್ಯಾತ್ಮ ಅನುಭಾವ ಸಾಧನೆಗಳ ಔನ್ನತ್ಯವು ಯುಗ-ಯುಗಗಳಿಗೆ ಪ್ರಭಾವ ಬೀರಬಹುದಾದುದು. ಕಾರಣ ಜಾತಿ, ಕುಲ, ಭಾಷೆ, ದೇಶಗಳನ್ನು ಮೀರಿದ ವ್ಯಕ್ತಿತ್ವ ಅವರದು. 19-02-1930 ನೇ ಇಸ್ವಿ ಗುರುವಾರ ದಿವಸ ಸಂಜೆ 7 ಗಂಟೆಗೆ ಕುಮಾರ ಶಿವಯೋಗಿಗಳ ಉಸಿರು ಲಿಂಗದಲ್ಲಿ ಲೀನವಾದಾಗ ನಾಡಿನ ಹೃದಯಗಳು ಮಮ್ಮಲ ಮರಗಿದವು. ಧರ್ಮಸ್ತಂಭದ ಮೇಲೆ ಹೃದಯದ ಹಣತೆಯನ್ನಿರಿಸಿ ಧ್ಯಾನತೈಲವನ್ನೆರೆದು ಕ್ರಿಯಾಬತ್ತಿವಿಡಿದ ಅವರ ಜ್ಞಾನಜ್ಯೋತಿ ಉರಿಯುತ್ತಲೇ ಇದೆ. ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಲೇ ಇದೆ. ವಿಶ್ವದ ಕಲ್ಯಾಣದ ಬಯಕೆ ಬಯಸಿ ಬಂದ ಸಮರ್ಥ ವ್ಯಕ್ತಿ-ಶಕ್ತಿಗಳ ಮನದ ತಂತಿಗಳನ್ನು ಮೀಟುತ್ತಲೇ ಇದೆ. “ಆಚಾರದಲ್ಲಿ ತಪ್ಪಿದರೆ ನಮ್ಮ ದೋಷ; ಅನಾಚಾರದಲ್ಲಿ ನಡೆದರೆ ನಿಮ್ಮ ದೋಷ ಇವೇ ನಮ್ಮ-ನಿಮ್ಮ ಹೊಣಾಗಾರಿಕೆ” ಎಂದು ಅಳಿಸಲಾರದ ವಿಭೂತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವ ಸಾಧಕರಲ್ಲಿಯೂ, ಸಂಸ್ಕøತಿಯಲ್ಲಿ ನಿರತರಾಗಿರುವ ಮಠಾಧಿಪತಿಗಳಲ್ಲಿಯೂ ಗಟ್ಟಿಗೊಂಡಿದ್ದಾರೆ.    

ರಚನೆ: ಗುರು ಪಾದ ಸೇವಕ

ಶ್ರೀ ರೇವಣಸಿದ್ದಯ್ಯ ಹಿರೇಮಠ

ಆಕಾಶವಾಣಿ ಕಲಾವಿದರು ಚಿಂಚೋಳಿ

ಕಲಿಯುಗದಿ ಸತ್ಯ ಸಾರಿದ ಕಾರಣಿಕ ಶಿವಯೋಗಿ |

ಕಾವಿ ಲಾಂಛನಕ್ಕೆ ಬೆಲೆ ತಂದ ಸಮರ್ಥ ಗುರುವಾಗಿ |

ಅರಿವು ಆಚಾರ ಶುಚಿಯಾಗಿಸಿದ ಸಮಾಜ ಜಾಗ್ರತೆಗಾಗಿ |

ವಿಶ್ವಮಾನ್ಯ ವ್ಯಕ್ತಿತ್ವದ ವೀರಶೈವ ಧರ್ಮದ ನಿಜಯೋಗಿ ||||

ಭರತ ಖಂಡದಲ್ಲಿ ಅಧ್ಯಾತ್ಮ ನಕ್ಷತ್ರದ ಜೊತಿಯಾಗಿ|

ಆಧ್ಯಾತ್ಮಿಕ ಸಿರಿಯಲ್ಲಿ ವಿಶ್ವದೆತ್ತರಕ್ಕೆ ತಾ ಬೆಳಗಿ|

ಘನವಂತ ಗುಣವಂತ ದಯಾವಂತ ಸ್ವಾಮಿಯಾಗಿ|

ಜನ ಮನ ಕೊಟಿಯ ಸತ್ಯಯುಗದ ಶ್ರೇಷ್ಠಯೋಗಿ ||||

ಜಗದ ಲೇಸನೆ ಬಯಸಿದ ವಿರಾಟ್ಟುರದ ಯತಿಯಾಗಿ |

ಬರದ ಭವಣೆ ನೀಗುವರೆಗೆ ಲೋಟ ಗಂಜಿ ಕುಡಿದ ಹಠಯೋಗಿ |

ಪೂರ್ಣ ಬ್ರಹ್ಮ ನಿರಾಕಾರ ಮೂರ್ತಿ ಲಿಂಗವೆಂದರುಹಿದ ಲಿಂಗಾಗಿ |

ವೀರಶೈವ ವಿಶ್ವಧರ್ಮವೆಂಬ ಸತ್ಯ ಸಾರಿದ ಕುಮಾರ ಶಿವಯೋಗಿ ||||

ಧರ್ಮತತ್ವ ಭೋಧೆಗೈವ ಧರ್ಮಸಭೆ ರಚಿಸಿದ ಶಿವಯೋಗಿ |

ವೀರ ವೈರಾಗ್ಯದ ಅಪರಂಜಿ ರನ್ನ ಜೊತಿ ನಿಜ ವಿರಕ್ತನಾಗಿ |

ಗುರುವಿರಕ್ತರ ಹೃದಯದಿ ಬೆಳಗುತ್ತಿದೆ ನಿರಂಜನ ನಂದಾದೀಪವಾಗಿ |

ಕರ ಮುಗಿದು ಬರೆದನು ಪುಟ್ಟ ರಸಿಕನು ಮಂದಿರದ ಶಿಶುವಾಗಿ ||||

ಪಥಿಕನ ಟಿಪ್ಪಣೆಗಳು

ಸಹೃದಯರಿಗೆ ನನ್ನ ನಮಸ್ಕಾರಗಳು.

ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತ,ಕಳೆದ ಜೂನ ತಿಂಗಳ ಸುಕುಮಾರ  ಬ್ಲಾಗ್‌ ನ ವಿಶೇಷ ಸಂಚಿಕೆಯಲ್ಲಿ ಮೂಡಿಬಂದ “ ಮಹಾಜ್ಯೋತಿ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು”  ಲೇ.ಡಾ.ಸಿದ್ದಣ್ಣ ಉತ್ನಾಳ ಅವರ ಲೇಖನದ ಸಾಲುಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ.

“ಜೀವ ಶಿವನಾಗುವತ್ತ ಮಾಡುವ ಸಾಧನೆಯೇ ಯೋಗ . ಇದರಲ್ಲಿ ಮಂತ್ರ ಯೋಗ , ಲಯಯೋಗ , ಹಠಯೋಗ , ರಾಜಯೋಗ ಹಾಗೂ ಶಿವಯೋಗ ಎಂದು ಐದು ಪ್ರಕಾರಗಳುಂಟು . ‘ ಪರಿಪೂರ್ಣಯೋಗ ‘ ವೆಂದು ಪರಿಪೂರ್ಣ ಯೋಗವೇ ಮುಖ್ಯವೆಂದು ಭಾವಿಸುವವರುಂಟು , ಆದರೆ ” ಶಿವಯೋಗ’ವೇ ಪರಿಪೂರ್ಣ ಅರ್ಥಾತ್ ಪೂರ್ಣ ಯೋಗ.

ಆ ಪರಶಿವನಲ್ಲಿ ಮನವನ್ನು ಲೀನಗೊಳಿಸಿ ಧ್ಯಾನಿಸುವುದೇ ಮಂತ್ರಯೋಗ , ಕರಣೇಂದ್ರಿಯ ಭೋಗದಿಂದ ಬಿಡುಗಡೆ ಹೊಂದಿ , ಪರಶಿವನಲ್ಲಿ ಚಿತ್ವನ್ನು ಲಯಗೊಳಿಸುವದೇ ಲಯಯೋಗ . ಸರಾಗವಾಗಿ ಸಂಚರಿಸುತ್ತಿರುವ ಪ್ರಾಣ ವಾಯುವನ್ನು ಮೂಗಿನ ರಂಧ್ರದ ಮೂಲಕ ತಡೆಹಿಡಿದು ತೂಬಿಸಿ ಹಣೆಯಲ್ಲಿ ಹೊಳೆಯುವ ಪ್ರಕಾಶವನ್ನೇ ತದೇಕ ಚಿತ್ತದಿಂದ ನೋಡುವುದೇ ಹಠಯೋಗ . ಈ ಜಗತ್ತಿನಲ್ಲಿ ಒಳ – ಹೊರಗೆಲ್ಲಾ ತುಂಬಿರುವ ಪ್ರಕಾಶವೇ ( ಪರತತ್ವವೆ ) ತಾನೆಂದು ತಿಳಿದು , ಆ ಅರಿವನ್ನೂ ಮೀರಿ ನಿಲ್ಲುವುದೇ ರಾಜಯೋಗ , ಒಂಭತ್ತು ಚಕ್ರಗಳಲ್ಲಿ ಒಂದು ಮಹಾಜ್ಯೋತಿ ಸಂಚರಿಸುವುದು . ಆ ಜ್ಯೋತಿಯೇ ಗುರುಸಿದ್ಧ ಮೂರ್ತಿ : ಗುರುಸಿದ್ಧ ನೇ ಶಿವಸ್ವರೂಪಿ ಎಂದು ಎರಡಿಲ್ಲದೇ ಭಾವಿಸಿ ನಂಬಿ ಧ್ಯಾನಿಸುವುದೇ ಶಿವಯೋಗ .

 ಪರತತ್ವವು ತನಗೆ ತಾನೇ ಗೋಚರಿಸು ವುದು . ಶರೀರದಲ್ಲಿ ಪರಂಜ್ಯೋತಿಯಿದೆ , ಪರತತ್ವವೂ ಇದೆ . ಆ ಜ್ಯೋತಿಯೇ ಮೂಲಸ್ವರೂಪ ; ಇದನ್ನೇ ಪರಬ್ರಹ್ಮ ಸ್ವರೂಪವೆನ್ನುತ್ತಾರೆ . ಈ ದೇಹದಲ್ಲಿ ಇರುವ ನವಚಕ್ರಗಳನ್ನು ಸಂಧಿಸಿ ಚಿಜ್ಯೋತಿಯನ್ನು ಕಾಣಬಹುದು . ಇದುವೇ ಪರಿಪೂರ್ಣ‌ ಲಿಂಗ , ಪರಶಿವತತ್ವ , ಹೀಗೆ ಪರಶಿವತತ್ವ ಕಂಡು ಶಿವಯೋಗಿ ಗಳಾದರು.

ಈ ಸಾಲುಗಳ ಬೆನ್ನು ಹತ್ತಿ  ಹುಡುಕಾಟ ಆರಂಬಿಸಿದ ನನಗೆ ಈ ತಿಂಗಳ ವಿಶೇಷಾಂಕದ ಲೇಖನಗಳ  ಸಂಗ್ರಹ ಸಂಪಾದನೆ ಅದ್ಭುತ ಉತ್ತರವನ್ನೇ ನೀಡಿತು !.

ಪರಮಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಕಾವ್ಯದ ಸಾಲುಗಳಂತೂ  “ಚಿದ್ಬಿಂದು” ವಿನ ದರ್ಶನ ಮಾಡಿಸಿದ್ದು ಒಂದು “ಅನುಭೂತಿ “!!.

“ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು”

ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಧಾರವಾಹಿ

 ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩ : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಕಾವ್ಯ

  1. ಪರಮ ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕಾವ್ಯ “ಶಿವಯೋಗ”
  2. “ಯೋಗ”: ಜಡೆಯೊಡೆಯ ತ್ರಿವಿಧಿ :ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು  ಸಮಾಧಾನ ಕಲಬುರಗಿ  ವ್ಯಾಖ್ಯಾನ : ಶ್ರೀ ರಾಮೇಶ್ವರ ಬಿಜ್ಜರಗಿ -ಸೋಲಾಪುರ
  • ಯೋಗ :ಸಂಗೀತ ಗಾಯನ : ಪೂಜ್ಯ ಪ್ರಭು ಚನ್ನಬಸವ ಸ್ವಾಮಿಗಳು ಅಥಣಿ (ಧ್ವನಿ ಮುದ್ರಣ ಎರಡು ಯೋಗದ ಕುರಿತು ಹಾಡುಗಳು).
  • ಶಿವಯೋಗಮಂದಿರ : ಪೂಜ್ಯ ಮುಪ್ಪಿನ ಬಸವಲಿಂಗ ದೇವರು  ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಾಲಕೆರೆ

ಲೇಖನಗಳು

  1. ಸಾಧಕರ ಯೋಗಾಸನಗಳು  :ಪೂಜ್ಯ ಲಿಂ.ವ್ಯಾಕರಣಾಳು ಸಿದ್ಧಲಿಂಗ ಪಟ್ಟಾಧ್ಯಕ್ಷರು
  2. ಯೋಗ ಸಾಧನೆ : ಲಿಂ. ಪೂಜ್ಯ ಶ್ರೀ ಸಂಗನಬಸವಸ್ವಾಮಿಗಳು, ಬಂಥನಾಳ
  3. ಯೋಗಿರಾಜ ಶ್ರೀ ಪ್ರಭು ಕುಮಾರ ಪಟ್ಟಾಧ್ಯಕ್ಷರು ಲೇಖಕರು : ಜ.ಚ.ನಿ.
  4. ತತ್ವಪದ ಹಾಗು ವಚನಗಳ ಮುಕ್ತಿತತ್ವ” ಪೂಜ್ಯ ಶ್ರೀ ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ
  5. ಯೋಗಯುಕ್ತ – ರೋಗ ಮುಕ್ತ : ಪೂಜ್ಯ  ವೀರಬಸವ ದೇವರು,  ಆಸಂಗಿ
  6. ಯೋಗವೂ ವೀರಶೈವರೂ : ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ
  7. ಮಾನವೀಯತೆಯ ಮಹಾಮೂರ್ತಿ ಸಿಂದಗಿ ಪಟ್ಟಾಧ್ಯಕ್ಷರು.:ಡಾ. ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು
  8. ಯೋಗಸಾಧಕ ಬೋಧಕರಾಗಿ ಹಾನಗಲ್ಲ ಶ್ರೀಗಳವರು

ಲೇಖಕರು:ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ.

Rtd. Professor and Chairman Institute of Kannada Studies and Former Hon. Professor Institute of Yoga Studies Karnatak University, Dharwad.

  • ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ

(ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)

  • ಕೆ. ಎಸ್. ಪಲ್ಲೇದ ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ

ಯೋಗ ವಿಡಿಯೋ : ಪೂಜ್ಯ  ವೀರಬಸವ ದೇವರು,  ಆಸಂಗಿ ಮತ್ತು ಪೂಜ್ಯ ಆನಂದ ದೇವರು ಹಾವೇರಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಜೂನ ೨೦೨೧ ರ ಸಂಚಿಕೆ

೨. ಸದ್ಗುರುವಿನ ಸ್ವರೂಪ

ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ

ಹರವೆ ನಿಜ ಭಕ್ತಿ – ಜ್ಞಾನ ವೈರಾಗ್ಯ ಮಂ

ದಿರವೆ ಮದ್ಗುರವೆ ಕೃಪೆಯಾಗು || ||

ಶಿವಕವಿಯು ಇಲ್ಲಿಂದ ನಾಲ್ಕು ನುಡಿಗಳಲ್ಲಿ ಅಷ್ಟಾವರಣದಲ್ಲಿ ಮೊದಲನೆಯ ದೇವರೆನಿಸಿದ ಸದ್ಗುರು ಸ್ವರೂಪವನ್ನು ಬಣ್ಣಿಸಿದ್ದಾನೆ . ಶಿಷ್ಯನ ಹೃತ್ತಾಪವನ್ನು ಹರಣಮಾಡಿ ಬೇಡಿದ ಬಯಕೆಗಳನ್ನು ಪೂರ್ಣಗೊಳಿಸಬಲ್ಲವನೇ ಸದ್ಗುರು . ಈ ಲೋಕದಲ್ಲಿ ಅನಂತ ಗುರುಗಳಿದ್ದಾರೆ . ಅವರೆಲ್ಲರೂ ಸದ್ಗುರುಗಳಲ್ಲ . ಎಲ್ಲರೂ ಶಿಷ್ಯನ ಹೃತ್ತಾಪವನ್ನು ಕಳೆಯಲು ಸಮರ್ಥರಲ್ಲ .

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |

ಗುರವೋ ವಿರಲಾಃ ಸಂತಿ ಶಿಷ್ಯ ಹೃತಾಪಹಾರಕಾಃ ||

ಶಿಷ್ಯರ ಧನವನ್ನು ಸೂರೆಮಾಡುವ ಗುರುಗಳೇ ಬಹಳ . ಭಕ್ತರ ತಾಪತ್ರಯ ಗಳನ್ನು ದೂರಮಾಡಿ ಸದ್ಗತಿಯನ್ನು ದಯಪಾಲಿಸಬಲ್ಲ ಸದ್ಗುರುಗಳು ವಿರಳವಾಗಿದ್ದಾರೆ . ಅಂತೆಯೇ ಶರಣಕವಿಯು ಪ್ರಥಮತಃ ಸದ್ಗುರುವಿನ ಸ್ವರೂಪವನ್ನು ಕಂಡುಕೊಂಡಿದ್ದಾನೆ . ಸಾಧಕರಿಗೆ ಮಾರ್ಗದರ್ಶನವನ್ನು ಮಾಡಿದ್ದಾನೆ . ಸದ್ಗುರುವಾದವನು ಸಾಮಾನ್ಯನಲ್ಲ , ಸದ್ಗುರುವಿನಲ್ಲಿ ಶಿಷ್ಯರನ್ನು ಉದ್ಧರಿಸುವ ಮಹಾಕಾಂಕ್ಷೆ ಮನೆ ಮಾಡಿಕೊಂಡಿರುತ್ತದೆ . ಭಕ್ತರನ್ನು ಲೌಕಿಕ ಹಾಗೂ ಪಾರಮಾರ್ಥಿಕ ಸಿರಿಸಮನ್ವಿತರನ್ನಾಗಿ ಮಾಡಬಲ್ಲನು . ತನಗಾಗಿ ಯಾವುದನ್ನೂ ಬಯಸದ ಮಹಾತ್ಯಾಗಿ ಯಾಗಿರುತ್ತಾನೆ . ಅದಕ್ಕಾಗಿ ಗುರುವರನು ಭಕ್ತ ಸಮುದಾಯಕ್ಕೆ ಕಲ್ಪತರುವಾಗಿದ್ದಾನೆ . ಸಾಮಾನ್ಯ ತರು ಕಟ್ಟಿಗೆಯ ಕೊರತೆಯನ್ನು ಮಾತ್ರ ನೀಗಿಸಬಲ್ಲುದು ಕಲ್ಪತರು ಬೇಡಿದ ಬಯಕೆಯನ್ನೆಲ್ಲ ನಿವಾರಿಸುತ್ತದೆ . ಸದ್ಗುರುವು ಭಕ್ತನಿಗೆ ಸತ್ಕಾಯಕವನ್ನು ನಿರೂಪಿಸಿ ಸಕಲೈಶ್ವರ್ಯವನ್ನು ದಯಪಾಲಿಸುತ್ತಾನೆ . ಸುಜ್ಞಾನವನ್ನು ಉಪದೇಶಿತ ಲಿಂಗಾಂಗಸಮರಸಾನಂದದ ಸವಿಯನ್ನು ಕರುಣಿಸುತ್ತಾನೆ . ಇಂಥ ಸದ್ಗುರುದೇವನೇ ಸದ್ಭಕ್ತರ ಮನವನ್ನು ಆಕರ್ಷಿಸುವಲ್ಲಿ ಸಮರ್ಥನಾಗುತ್ತಾನೆ . ಸದ್ಗುರುವು ಬಾಹ್ಯ ಮತ್ತು ಆಂತರಿಕವಾಗಿಯೂ ಮನೋಹರನಾಗಿರುತ್ತಾನೆ . ಸೌಂದರ್ಯಕ್ಕೆ ತಕ್ಕ ಶಿವತ್ವವೂ ತುಂಬಿ ತುಳುಕುತ್ತದೆ . ಮಂಗಲ ಮಯವಾದ ಸುಂದರತೆಯಲ್ಲಿ ಅವಶ್ಯವಾಗಿ ಸತ್ಯವಿರುತ್ತದೆ . “ ಸತ್ಯಂ ಶಿವಂ ಸುಂದರಂ ‘ ತತ್ತ್ವ ಓತಪ್ರೋತವಾಗಿರುತ್ತದೆ . ಅದುಕಾರಣ ಸದ್ಗುರುನಾಥನು ನೈಜವಾದ ಭಕ್ತಿ – ಜ್ಞಾನ – ವೈರಾಗ್ಯಗಳಿಗೆ ಆಶ್ರಯ ಸ್ವರೂಪನಾಗಿರುತ್ತಾನೆ . ಸದ್ಗುರುವಿನ ಭಕ್ತಿ – ಜ್ಞಾನ – ವೈರಾಗ್ಯಗಳಲ್ಲಿ ಅಸಹಜತೆಯಿರುವದಿಲ್ಲ . ಮೂರೂ ಸತ್ಯ ಸ್ವರೂಪವಾಗಿರುತ್ತವೆ . ಯಥಾರ್ಥವಾಗಿ ಸದ್ಗುಣಭರಿತನಾದವನೇ ಇನ್ನಿತರರಿಗೆ ಸದ್ಗುಣಗಳನ್ನು ಕಲಿಸಬಲ್ಲನು . ಡಾಂಭಿಕ ಮನೋಭಾವದವನಿಂದ ನೈಜ ಭಕ್ತಿ – ಜ್ಞಾನವೈರಾಗ್ಯಗಳು ಹರಿದು ಬರಲಾರವು . ಭಕ್ತರ ಮನೋಭೂಮಿಕೆಯಲ್ಲಿ ಬೆಳೆದು ಫಲ ನೀಡಲಾರವು . ಸದ್ಗುರುವು ನಿರ್ವಂಚನೆಯಿಲ್ಲದೆ ಭಕ್ತಿಯಿಂದ ಬಂದ ಭಕ್ತರಿಗೆ ಕಲ್ಪತರುವಿನಂತೆ ಭಕ್ತಿ – ಜ್ಞಾನ ವೈರಾಗ್ಯಗಳನ್ನು ನೀಡುತ್ತಿದ್ದರೆ ಆತ್ಮೀಯತೆ ಬೆಳೆದು ಬರುತ್ತದೆ . ಬಸವಲಿಂಗ ಶರಣರಿಗೆ ಇಂಥ ಸದ್ಗುರುಗಳು ದೊರೆತಿದ್ದರೆಂಬುದು ಸ್ಪಷ್ಟವಾಗುತ್ತದೆ . ಅವರು ಆತ್ಮೀಯವಾಗಿ ಮದ್ಗುರುವೆ ! ಕೃಪೆಯಾಗಬೇಕೆಂದು ಪ್ರಾರ್ಥಿಸಿದ್ದಾರೆ . ಶಿಷ್ಯನು ಗುರುವನ್ನು ತನ್ನವನನ್ನಾಗಿ ಮಾಡಿಕೊಂಡರೆ ಗುರುವು ತನ್ನವರ್ಗೆ ತಾನು ಅವಶ್ಯವಾಗಿ ಸುಖವನ್ನು ಕರುಣಿಸುತ್ತಾನೆ .

**********

  ದೇಶಿಕನೆ ಅನುಭಾವೋ | ಲ್ಲಾಸಕನೆ ಸಂಕಲ್ಪ

 ನಾಶಕನೆ ಣವಾದಿ  ತ್ರೈಮಲದೊಳ್ನಿ

 ರಾಶಕನೆ ಎನಗೆ ಕೃಪೆಯಾಗು || ||

“ಆಣವಾದಿ  ತ್ರೈಮಲಮಂ ನಿರಾಶಕನೆ “ ಎನ್ನುವ ಪಾಠಾಂತರವೂ ಇದೆ . ಗೋವು ಅಡವಿಯಲ್ಲಿ ಚೆನ್ನಾಗಿ ಹುಲ್ಲು ಮೇಯ್ದು ತೃಪ್ತವಾಗಿ ತನ್ನ ಕರುವಿಗೆ ಹಾಲುಣಿಸಲು ಹಾತೊರೆಯುವಂತೆ ; ಸದ್ಗುರುವಾದವನು ಸದ್ಭಕ್ತ ಶಿಶುಗಳಿಗೆ ಅನುಭವಾಮೃತವನ್ನು ನೀಡಿ ತಣಿಸುತ್ತಿರಬೇಕು . ಇದು ಸದ್ಗುರುವಿನ ಕರ್ತವ್ಯವನ್ನು ಸೂಚಿಸುತ್ತದೆ . ಅದಕ್ಕಾಗಿ ಶಿವಕವಿಯು ದೇಶಿಕನೇ ಎಂಬ ಸಂಬೋಧನೆಯನ್ನು ಮಾಡಿದ್ದಾನೆ .

ನಿತ್ಯಲಿಂಗಾರ್ಚನೆಯನ್ನು ಮಾಡಿ ಭಕ್ತರ ಕಲ್ಯಾಣಕ್ಕಾಗಿ ದೇಶವನ್ನು ಸಂಚರಿಸುವ ಗುರುವರನೇ ದೇಶಿಕನೆನಿಸಿಕೊಳ್ಳುವನು . ಅವನು ಶಿವಾನುಭವಾನಂದದಲ್ಲಿ ತಲ್ಲೀನನಾಗಿ ತನ್ನ ಅನುಭವೋಪದೇಶದಿಂದ ಶಿಷ್ಯರನ್ನು ಉಲ್ಲಾಸಗೊಳಿಸುವನು . ಮನಸ್ಸಿನ ಸಂಕಲ್ಪ – ವಿಕಲ್ಪಗಳನ್ನು ನಾಶಮಾಡುವನು . ಫಲಾಪೇಕ್ಷೆಯಿಂದ ಮಾಡುವ ಕಾರ್ಯ ಗಳು ಸಂಕಲ್ಪಿತಗಳೆನಿಸುವವು . ಅಂಥ ಸಂಕಲ್ಪಗಳನ್ನು ನಾಶಮಾಡಿ ನಿಷ್ಕಾಮಭಕ್ತಿ ಯನ್ನು ಬೆಳೆಸುವನು . ನಿಷ್ಕಾಮ ಭಕ್ತಿಯು ಅಳವಡಲೆಂದು ಶಿಷ್ಯನ ಆಣವಮಲ , ಮಾಯಾಮಲ , ಕಾರ್ಮಿಕಮಲಗಳೆಂಬ ತ್ರಿದೋಷಗಳನ್ನು ಕಳೆದು ತನು – ಮನ – ಧನ ಗಳನ್ನು ಪರಿಶುದ್ಧಗೊಳಿಸುವನು . ಸ್ವತಃ ತಾನು ಹೊನ್ನು ಹೆಣ್ಣು – ಮಣ್ಣುಗಳೆಂಬ . ತ್ರಿಮಲಗಳನ್ನು ನಿರಾಕರಿಸುವಲ್ಲಿ ಯೋಗ್ಯತೆಯುಳ್ಳವನಾಗಿರುವನೆಂಬುದು ಶರಣ ಕವಿಯ ಆಶಯವಾಗಿದೆ . ಯಾರು ಹೊನ್ನು – ಹೆಣ್ಣು – ಮಣ್ಣುಗಳಲ್ಲಿ ನಿರಾಶೆಯುಳ್ಳವರಾಗಿ ಮಲತ್ರಯ ವನ್ನು ದೂರಮಾಡಿಕೊಂಡಿರುತ್ತಾರೆಯೋ ಅಂಥವರು ಮಾತ್ರ ಭಕ್ತರ ಸಂಕಲ್ಪ ವಿಕಲ್ಪಗಳನ್ನು ದೂರಮಾಡಿ ಮಲತ್ರಯಗಳಿಂದ ಮುಕ್ತರನ್ನಾಗಿ ಮಾಡಬಲ್ಲರು . ಓ ಗುರುವೇ ! ನೀನು ಸಮರ್ಥನಾಗಿರುವಿ . ಕಾರಣ ನನ್ನ ತ್ರಿಮಲಗಳನ್ನು ನಿವಾರಿಸಿ ಕೃಪೆದೋರು

***********

ಕಾರ್ಯ ಕಾರಣ ಭಕ್ತಿ | ತುರ್ಯ ತಾಮಸದ ಚಿತ್

ಸೂರ್ಯ ಎಡರಿಂಗೆ ಧೈರ್ಯವಾಗಿಹ ಗುರು

ರ್ಯ ನೀನೆನಗೆ ಕೃಪೆಯಾಗು  || ||

 ಗುರುದೇವರು ಗುರುವರನಾಗಬೇಕಾದರೆ ಗುರುತ್ವದ ಗರಿಮೆಯನ್ನು ಹೊಂದಿರಬೇಕಾಗುವುದು . ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ ಮತ್ತು ಧೈರ್ಯಗಳಿಗೆ ಆಶ್ರಯನಾದವನೇ ಗುರುವರನು .

 ಸಕಲ ಶುಭಕಾರ್ಯಗಳಿಗೆ ಗುರುವರನೇ ಕಾರಣ . ಗುರುವಿಲ್ಲದೆ ಸಂಸ್ಕಾರ ಕಾರ್ಯಗಳು ಘಟಿಸಲಾರವು . ಶಿಷ್ಯನಲ್ಲಿಯ ತ್ರಿಮಲಗಳನ್ನು ಕಳೆದು ತ್ರಿವಿಧಾಂಗಗಳಲ್ಲಿ ಲಿಂಗಗಳ ಸಂಬಂಧವೆಂಬ ಶುಭಕಾರ್ಯಗಳಿಗೆ ಗುರುವೇ ಮೊದಲಿಗನು , ವಿವಾಹಾದಿ ಲೌಕಿಕ ಕಾರ್ಯಗಳಿಗೂ ಗುರು ಬೇಕು . ಗುರುವಿಲ್ಲದೆ ಅವು ಫಲಿಸಲಾರವು . ಗುರುವಾದರೂ ಭಕ್ತಿಯಲ್ಲಿ ಮಿಗಿಲಾಗಿರಬೇಕು . ಭಕ್ತಿಯೇ ಮುಕ್ತಿಯ ಸಾಧನ . ಭಕ್ತಿಯೇ ಷಟ್‌ಸ್ಥಲಾಚರಣೆಯ ಕೀಲು , ಭಕ್ತಿಯ ಪರಾಕಾಷ್ಠತೆಯನ್ನು ಸಾಧಿಸಿದ ಸದ್ಗುರು ಭಕ್ತರಿಗೆ ಕಿಂಕರತನವನ್ನು ಕಲಿಸಬಲ್ಲನು . ಅಂದರೆ ಅಹಂಕಾರವು ಎಳ್ಳಿನ ಮೊನೆಯಷ್ಟಾದರೂ ಇರಕೂಡದು ಅಹಂಕಾರವು ನಾಶವಾದರೇನೇ ಭಕ್ತಿಯು ನೆಲೆಸುವದು , ಭಕ್ತಿಯ ಸೌಜನ್ಯತೆಯಿಂದಲೇ ಸದ್ಗುರುನಾಥನು ಉನ್ನತ ಸ್ಥಾನದಲ್ಲಿರು ತಾನೆ , ಮತ್ತು ಭಕ್ತಿಯುಳ್ಳ ಭಕ್ತರ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವಲ್ಲಿ ಜ್ಞಾನ ಸೂರ್ಯನಾಗಿರುತ್ತಾನೆ . ಅದಕ್ಕಾಗಿ ಅನುಭವಿಗಳು,

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನ ಕತ್ತಲೆಯಿಂದ ಕುರುಡನಾದವನ ಕಣ್ಣುಗಳು ಜ್ಞಾನವೆಂಬ ಕುಂಚಿನಿಂದ ಯಾವಾತನಿಂದ ತಗೆಯಲ್ಪಡುವವೋ ಅವನೇ ಸದ್ಗುರು . ಅಂಥ ಸದ್ಗುರುವಿಗೆ ಶರಣು ಮಾಡಿರುವರು , ಗುರುವರನು ಎಡರು ಕಂಟಕಗಳನ್ನು ನಿವಾರಿಸುವಲ್ಲಿ ಧೈರ್ಯದ ಮೂರ್ತಿಯೇ ಆಗಿರುತ್ತಾನೆ . ಎಲ್ಲ ಭೀತಿಗಳಲ್ಲಿ ಭವಭೀತಿ ಬಲುದೊಡ್ಡದು . ಇದನ್ನು ನಿವಾರಿಸುವವನೇ ಸದ್ಗುರುವು . ಗುರುಕೃಪೆಯಿಂದಲೇ ಭಕ್ತನಲ್ಲಿ ಧೃತಿ ದೃಢವಾಗುತ್ತದೆ . ಧೈರ್ಯ ವಂತನಿಗೆ ಸಕಲಕಾರ್ಯಗಳಲ್ಲಿ ಜಯ ಖಂಡಿತ ಸಿಕ್ಕುವದು , ಗುರುಕೃಪೆಯಿಂದ ಧೃತಿವಂತ ನಾಗಿ ಶಿವಸಂಸ್ಕಾರಗಳನ್ನು ಪಡೆದು ಭಕ್ತಿಯಿಂದ ಸುಜ್ಞಾನವನ್ನು ಪಡೆಯಬೇಕು . ಇದೆಲ್ಲವೂ ಸದ್ಗುರುಕೃಪೆಯಿಂದ ಸಾಧ್ಯ , ಓ ಗುರುವೇ !

ಅಸತೋ ಮಾ ಸದ್ಗಮಯ

ತಮಸೋ ಮಾ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂ ಗಮಯ

ಅಸತ್ಯದಿಂದ ಸತ್ಯದೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ , ಮೃತ್ಯುವಿನಿಂದ ಅಮೃತತ್ವದೆಡೆಗೆ ಕರೆದೊಯ್ದು ಕಾಪಾಡು . ಅಮರತ್ವವನ್ನು ಸಾಧಿಸಬಲ್ಲ ಶಕ್ತಿಯನ್ನು ದಯಪಾಲಿಸು .

***********

ಸಾಧ್ಯ ಸದ್ಭಕ್ತರ್ಗೆ | ವೇದ್ಯ ಲಿಂಗೈಕ್ಯರ್ಗೆ

ಭೇದ್ಯ ಸತ್ಪ್ರಮಥ ಗಣನಿಕರವೆಲ್ಲಕ್ಕಾ

ರಾಧ್ಯ ನೀನೆನಗೆ ಕೃಪೆಯಾಗು || ||

ಮೇಲಿನ ಮೂರು ನುಡಿಗಳಲ್ಲಿ ಸದ್ಗುರುವಿನ ಸ್ವರೂಪವನ್ನು ವರ್ಣಿಸಿ ಅಂಥ ಗುರುವನ್ನು ಅರಿಯಲು ಯೋಗ್ಯರಾದ ಶಿಷ್ಯರನ್ನೂ ನಿರೂಪಿಸಿದ್ದಾನೆ . ಇಲ್ಲಿ ಭಕ್ತನ ಯಥಾರ್ಥತೆಯ ಅರಿವೂ ಕಾಣಬರುತ್ತದೆ . ಸದ್ಗುರುನಾಥನು ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ , ಧೈರ್ಯತ್ವಗಳನ್ನು ಸಾಕ್ಷಾತ್ಕರಿಸಿಕೊಂಡಂತೆ , ಶಿಷ್ಯನು ಸದ್ಭಕ್ತನೂ , ಲಿಂಗೈಕ್ಯ ಸ್ಥಿತಿಗೇರಿದವನೂ ಸತ್ಪ್ರ ಮಥರಿಗೆ ಮಾನ್ಯನೂ ಆಗಬೇಕಾಗುತ್ತದೆ . ನೈಜಭಕ್ತಿಯುಳ್ಳ ಸದ್ಭಕ್ತರಿಗೆ ಮಾತ್ರ ಗುರುವು ಸಾಧಿಸಲು ಯೋಗ್ಯನಾಗುವನು . ಅಂದರೆ ನಿಜವಾದ ಭಕ್ತಿಯಿಂದ ಮಾತ್ರ ಗುರು ಸಾಕ್ಷಾತ್ಕಾರವಾಗುವದು .

 ಲಿಂಗದ ನೆಲೆಕಲೆಗಳನ್ನು ಗುರುಮುಖದಿಂದ ಅರಿತು ತನ್ನ ಅಂಗಾಂಗಗಳಲ್ಲಿ ಅಳವಡಿಸಿಕೊಂಡಾಗ ಲಿಂಗಮಯನಾಗುವನು . ಲಿಂಗೈಕ್ಯನೆನಿಸುವನು . ಇಂಥವನು ಮಾತ್ರ ಗುರುಮಹತಿಯನ್ನು ಗುರುತಿಸಬಲ್ಲನು . ಲಿಂಗಾಂಗ ಸಾಮರಸ್ಯ ಸುಖವನ್ನು ಅನುಭವಿಸಬಲ್ಲ ಪ್ರಮಥ ಪುಂಗವರು ಗುರುತತ್ವದ ಆಳವನ್ನು ಅಳೆಯಬಲ್ಲರು . ಮಹಿಮಾಶೀಲನಾದ ಸದ್ಗುರು ಯೋಗ್ಯತೆಯುಳ್ಳ ಎಲ್ಲರಿಂದಲೂ ಪೂಜೆಗೊಳ್ಳಲು ಇಲ್ಲಿ ಸಾಧಕ , ಸಿದ್ಧ , ಪರಿಪೂರ್ಣ ( ಸ್ವತಃಸಿದ್ದ ) ಈ ಮೂವರ ಅರಿವಾಗುತ್ತದೆ . ಸಾಧಕನಾದ ಭಕ್ತನಿಗೆ ಗುರು ಲಿಂಗವನ್ನು ಕರುಣಿಸುತ್ತಾನೆ . ಭಕ್ತನಾಗಿ ಲಿಂಗವನ್ನು ಆಯತ ಮಾಡಿಕೊಳ್ಳುವವನೇ ಸಾಧಕನು , ಲಿಂಗ ಗುಣಗಳನ್ನು ಸ್ವಾಯತ್ತೀಕರಿಸಿ ಕೊಂಡವನೇ ಲಿಂಗೈಕ್ಯನು . ಅವನೇ ಸಿದ್ಧನು . ಲಿಂಗವನ್ನು ಸನ್ನಿಹಿತಮಾಡಿ ಕೊಂಡು ತಾನೇ ಲಿಂಗನಾದವನು ; ಪರಿಪೂರ್ಣನು ಅಥವಾ ಸ್ವತಃಸಿದ್ಧನೆನ್ನಬಹುದು . ಅವನೇ ಪ್ರಮಥ ಪುಂಗವ , ಲಿಂಗ ಪರಿಪೂರ್ಣ , ಶಿವಪಥವನರಿಯಲು ಗುರುಪಥ ಮುಮ್ಮೊದಲು ಶಿವಪಥವನರಿಯಲು ಶಿವಶರಣರ ಸಂಗ ಮುಖ್ಯವಾಗಿದೆ .

 ಶ್ರೀ ಚನ್ನಬಸವೇಶ್ವರ ದೇವರು ತಮ್ಮ ಮಂತ್ರಗೋಪ್ಯದಲ್ಲಿ ಶಿವನ ಸಾಕಾರ ಮೂರ್ತಿಯೇ ಸದ್ಗುರುವೆಂದು ಗುರುಸ್ತೋತ್ರವನ್ನು ಮಾಡಿದ್ದಾರೆ .

 ಗುರುವೆ ಪರಶಿವನೆ | ಸಕಲಾಗಮಂಗಳ ಮೂರ್ತಿ

 ಗುರುವೆ ಅಜ್ಞಾನ ತಿಮಿರಕ್ಕಂಜನ

ಗುರುವಿಗೂ ಪರಶಿವನಿಗೂ ಭಿನ್ನತೆಯಿಲ್ಲ . ಶಿವನ ಸಾಕಾರ ಮೂರ್ತಿಯೇ ಸದ್ಗುರುವು . ಗುರುಸಾಕ್ಷಾತ್ಕಾರವೇ ಶಿವಸಾಕ್ಷಾತ್ಕಾರವಾಗಿದೆ . ಅದುಕಾರಣ ಗುರು ದೇವನು ಸದ್ಭಕ್ತರ್ಗೆ ಸಾಧ್ಯನಾಗುತ್ತಾನೆ . ಲಿಂಗೈಕ್ಯರ್ಗೆ ವೇದ್ಯನಾಗುತ್ತಾನೆ . ಸತ್ಪ್ರಮಥರಿಗೆ ಭೇದ್ಯನೂ , ಬೋಧ್ಯನೂ ಆಗುತ್ತಾನೆ . ಅಂಥ ಸದ್ಗುರು ಸರ್ವರಿಗೆ ಆರಾಧ್ಯನಾಗುವದ ರಲ್ಲಿ ಸಂಶಯವೇನಿದೆ ? ಭೋ ಗುರುವೆ ! ನಿನ್ನ ಕೃಪೆ ಬಯಸಿ ಬಂದ ನನಗೂ ಆಶ್ರಯನೀಡೆಂದು ಪ್ರಾರ್ಥಿಸಿದ್ದಾರೆ .