ಕ್ರಾಂತದರ್ಶಿ ಕುಮಾರಯೋಗಿ

ಡಾ.ಜಿ.ಕೆ.ಹಿರೇಮಠ

          ಕಾಲದ ಕೂಗು, ಜನಾಂಗದ ಕರುಳಿನ ಕರೆ, ನೊಂದವರ ನಿಟ್ಟುಸಿರು, ಬೆಂದವರ ಬೇಗೆಯ ಫಲರೂಪವಾಗಿ ಮಹಾಪುರುಷರೊಬ್ಬರ ಜನನ ಆಗುತ್ತದೆ ಎಂಬುದು ಜನತೆಯ ನಂಬಿಕೆ. ಸಾಮಾಜಿಕ, ಧಾರ್ಮಿಕ ಸ್ಥೀತ್ಯಂತರಗಳು ವೈಪರಿತ್ಯಕ್ಕೆ ಮುಟ್ಟಿದಾಗ ಒಂದು ಮಹಾನ್ ಆತ್ಮವು ಉಗಮಿಸಿ ಸಮಾಜ ಸುಧಾರಣೆಯ ಹಾಗೂ ಮಾನವ ಜನಾಂಗದ ಮೌಲ್ಯಗಳನ್ನು ಬಿತ್ತಿ ಮೇಲೆತ್ತಿ ತರುವ ಮಹಾಹೊಣೆಯನ್ನು ಹೊತ್ತು ನಿಲ್ಲುತ್ತದೆ. ಬುದ್ಧ, ಬಸವ, ಏಸು, ಪೈಗಂಬರ, ಮಹಾವೀರರಂಥವರು ಹೊಸಬೆಳಗು ಮೂಡಿಸಿದ ಮಹಾತ್ಮರುಗಳು.      ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಅದರಲ್ಲೂ ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಸಮಾಜ ಕಟ್ಟುವ ಕ್ರಾಂತಿಯಲ್ಲಿ ಮಿಂಚಿನಂತೆ ಪ್ರಜ್ವಲವಾಗಿ ಪ್ರಕಾಶಿಸಿ ಸ್ವಾಮಿತ್ವಕ್ಕೆ ಮುಕುಟಮಣಿಯಾಗಿ ಶೋಭಿಸಿದ ಕುಮಾರಯೋಗಿ ಒಬ್ಬ ಅಪೂರ್ವ ಅನುಭಾವಿ, ಅಪೂರ್ವ ಶಿವಯೋಗಿ, ನಿರ್ಲಿಪ್ತ, ನಿರ್ಮೋಹಿ, ನಿರಹಂಕಾರಿಗಳಾಗಿ ಬೆಳಗಿದ ಮಾನವಿಕ ವ್ಯಕ್ತಿತ್ವ ಅವರದು. ತಮ್ಮ ಸುತ್ತ ಏನಿತ್ತೊ ಅದೆಲ್ಲಕ್ಕೂ ಬದುಕುಕೊಟ್ಟ ಪ್ರಬುದ್ಧ ಮಹಾಜಂಗಮರು. ಹನಿಯಾಗಿ, ಹಳ್ಳವಾಗಿ, ಹೊಳೆಯಾಗಿ ಮಹಾನದಿಯಾಗಿ ಪ್ರವಹಿಸಿದ ಕುಮಾರಯೋಗಿಯು ಅಳಿಯದ ವಿಭೂತಿಯಾಗಿದ್ದಾರೆ. ಮಾನವೇತಿಹಾಸದಲ್ಲಿ ಅಚ್ಚುಗೊಂಡ ಪ್ರಭಾವ ಮುದ್ರೆಯ ನಿಜಶಾಸನವಾಗಿದ್ದಾರೆ. ಕನ್ನಡ ನಾಡಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದ ಸಾಲಿಮಠ ಮನೆತನ ಧರ್ಮ-ಸಂಸ್ಕøತಿಗಳ ತಾಣ. ಆಗ ಬಳ್ಳಾರಿ ಭಾಗದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದ್ದರಿಂದ ಮೂಲತಃ ಈ ಮನೆತನದವರು ಬಳ್ಳಾರಿ ಜಿಲ್ಲೆ ಕೊಟ್ಟೂರಿನಿಂದ ವಲಸೆ ಬಂದು ನೆಲೆಸಿದವರು ದರಿಹಂಚಿನ ಚಿಕ್ಕ ಮನೆಯನ್ನು ನಿರ್ಮಿಸಿಕೊಂಡು, ಒಂದು ನೂರಾ ಐದು ವರ್ಷ ಬಾಳಿದ ಕೊಟ್ಟೂರು ಬಸವಾರ್ಯರು ಈ ಗ್ರಾಮಕ್ಕೆ ಬಂದು ನೆಲೆಸಿದ ಮೇಲೆ ಕೈಕೊಂಡ ವೃತ್ತಿಯೆಂದರೆ ‘ಅಕ್ಷರದೀಕ್ಷೆ’. ಸುಶಿಕ್ಷಿತರೂ, ಓದು-ಬರಹ ಬಲ್ಲವರೂ ಆಗಿದ್ದ ಬಸವಾರ್ಯರು ಗ್ರಾಮದ ಮನೆಮನೆಗೆ ಹೋಗಿ ಪಾಲಕರಲ್ಲಿ ಖುದ್ದಾಗಿ ಮಕ್ಕಳು ಅಕ್ಷರ ಕಲಿಯಲು ಕಳುಹಿಸಿಕೊಡುವಂತೆ ವಿನಂತಿಸುತ್ತಾರೆ. ಊರಿನ ಎಲ್ಲ ಮಕ್ಕಳನ್ನು ತಮ್ಮ ಮನೆಯ ಶಾಲಾ ತೆಕ್ಕೆಗೆ ತರುತ್ತಾರೆ. ಮಕ್ಕಳಿಗೆಲ್ಲ ಅಕ್ಷರ ತೀಡಿಸಿ, ರೂಢಿಸಿ ‘ಕನ್ನಡ ಅಕ್ಷರದೀಕ್ಷೆ’ ನೀಡಿ ಶಿಕ್ಷಕ ವೃತ್ತಿಗೆ ಆದರ್ಶಪ್ರಾಯರಾದ ಅವರು ವೃತ್ತಿಯ ಘನತೆಯಿಂದಾಗಿ ಸಾಲಿಮಠ ಬಸವಾರ್ಯರು ಎಂಬುದಾಗಿ ಗ್ರಾಮ ಜನರಲ್ಲಿ ಮನೆಮಾತಾದರು. ಅಕ್ಷರ ಸಂಸ್ಕøತಿಯ ಕಾರಣವಾಗಿ ಈ ಮನೆತನಕ್ಕೆ ‘ಸಾಲಿಮಠ’ ಎಂಬ ಹೆಸರು ಅಡ್ಡ ಹೆಸರಾಗಿ ಬಂದಿತು.      ಸಾಲಿಮಠ ಬಸವಾರ್ಯರ ಮಗನಾದ ಬಸಯ್ಯನವರು ಹಿರಿಯರ ಆದರ್ಶಗಳನ್ನು ಅಚ್ಚೊತ್ತಿಕೊಂಡವರು. ನೀಲಮ್ಮನವರನ್ನು ಧರ್ಮಪತ್ನಿಯಾಗಿ ಪಡೆದ ಮೇಲಂತೂ ಸಾಲಿಮಠ ಮನೆತನ ಸಂಸ್ಕಾರದ ಕಣಜವಾಯಿತು. ಬಸಯ್ಯ-ನೀಲಮ್ಮರ ಎರಡನೆಯ ಪುತ್ರನಾಗಿ 11-09-1867 ರಂದು ಬುಧವಾರ ಬೆಳಗ್ಗೆ ಸೂರ್ಯೋದಯದ ಸಮಯಕ್ಕೆ ಜನಿಸಿದ ಮಗುವೇ ‘ಹಾಲಯ್ಯ’. ಈ ಬಾಲಕನು ನೆರೆಯವರ ನೇಹದ ಶಿಶುವಾಗಿ, ಮುದ್ದಿಸುವವರ ಮುಂಗೈ ಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಸಕಲರ ಅಕಳಂಕ ವಾತ್ಸಲ್ಯದ ಕುಡಿಯಾಗಿ ಬೆಳೆದನು. ವಯೋವೃದ್ಧ ಬಸವಾರ್ಯರ ‘ಅಕ್ಷರ ದೀಕ್ಷೆ’ಯು ಶುಭ್ರಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿಯಾಯಿತು.      ಆಟದ ವಯಸ್ಸಿನಲ್ಲಂತೂ ಗೋಲಿಗುಂಡ, ಬುಗುರಿ, ಚಿಣ್ಣಿದಾಂಡು, ಚಕ್ರಬಿಡುವುದು ಮೊದಲಾದ ಆಟಗಳನ್ನು ಆಡುವುದರ ಜೊತೆಗೆ ಈ ಆಟಗಳ ವಸ್ತುಗಳನ್ನು ಸಂಗ್ರಹಿಸುವುದು, ಜೊತೆ ಗೆಳೆಯರೊಡನೆ ಈಜಲು ಹೋಗುವುದು, ಪಾಠಗಳನ್ನು ಏಕಚಿತ್ತದಿಂದ ಆಲಿಸುವುದು. ಪಟಪಟನೆ ಲೆಕ್ಕ ಬಿಡಿಸಿ ಅರಳು ಹುರಿದಂತೆ ಹೇಳುವದು, ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ದುಂಡಾಗಿ ಬರೆಯುವುದು, ಪದ್ಯಗಳನ್ನು ರಾಗಬದ್ಧವಾಗಿ ಕಂಠಪಾಠ ಮಡುವುದು, ಗದ್ಯಪಾಠಗಳನ್ನು ಮನನ ಮಾಡಿಕೊಳ್ಳುವಲ್ಲಿ ತನ್ನ ಪ್ರತಿಭೆಯನ್ನು ಮೆರೆದು ಶಿಕ್ಷಕರಿಂದ ‘ಜಾಣ ವಿದ್ಯಾರ್ಥಿ’ ಎನಿಸಿಕೊಂಡನು. ಗೋಲಿಗುಂಡ ಹಿಡಿದಿದ್ದರೂ ಇನ್ನೇನನ್ನೋ ಮೆಲಕು ಹಾಕುತ್ತಿದ್ದ ಹಾಲಯ್ಯನ ಮನಸ್ಸು ತುಂಭ ಕಿರಿಯ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಚಿಂಥನ, ತಾರ್ಕಿಕತೆ, ಏಕಾಗ್ರತೆ, ಬಡತನ, ಬವಣೆ, ಸಮಾಜ-ಶಿಕ್ಷಣ ಜನರ ನೋವು-ನಲಿವು, ದೇಶ-ಭಾಷೆ, ಹೀಗೆ ಮನ ಆಲಿಯುತ್ತ ಒಮ್ಮೊಮ್ಮೆ ಪಾಪ-ಪೂಣ್ಯ ದೇವರು, ಜಗಸೃಷ್ಠಿಯಂತಹ ತುಂಬ ಗಹನವೂ, ಉನ್ನತವೂ ಆದ ವಿಚಾರಗಳ ಕಡೆಗೂ ಏರಿಳಿಯುತ್ತಿತ್ತು.      ಕನ್ನಡ ಮುಲ್ಕೀ ತರಗತಿಯವರೆಗೂ ಓದಿದ ಹಾಲಯ್ಯ ಮುಲ್ಕೀ ಪರೀಕ್ಷೆ ಬರೆಯಲು ರಾಣೀಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದುಕೊಂಡು ಬಂದು ಪರೀಕ್ಷೆ ಬರೆದರು. ಸಾಕಷ್ಟು ಓದಿಯೇ ಪರೀಕ್ಷೆ ಬರೆದಿದ್ದರೂ ಪರೀಕ್ಷೆಯ ಫಲಿತಾಂಶ ಅನುತ್ತೀರ್ಣವೆಂದು ಗೊತ್ತಾದಾಗ ಬಾಲಕ ಹಾಲಯ್ಯನಿಗೆ ನಿರಾಶೆಯಾದರೂ ಎದೆಗುಂದಲಿಲ್ಲ. “ವಿದ್ಯಾಬಲ ಉಡುಗಿದರೂ ಚಿಂತೆಯಿಲ್ಲ ಛಲ ಉಡುಗದು” ಎಂಬಂತೆ ಮುಂದಿನ ವೀರ ಸಂಕಲ್ಪದ ದೀರ್ಘಾಲೋಚನೆ ಮಾಡುತ್ತ “ಬಟ್ಟೆ-ಹಿಟ್ಟು ಕೊಡುವ ವಿದ್ಯೆ ನನಗೆ ಬೇಡ” ಎಂದು ಗಟ್ಟಿ ನಿಲುವು ಮಾಡದನು. ತಾಯಿಯ ತವರೂರಾದ ಲಿಂಗದಳ್ಳಿಯಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಿ ತಾವೆ ಶಿಕ್ಷಕರಾಗಿ ಅನೇಕರ ಬಾಳನ್ನು ಬೆಳಗಿದರು. ಆಗ ಹಾಲಯ್ಯ ಮಾಸ್ತರರಿಗೆ ವರ್ಷಕ್ಕೆ ಒಂದು ನೂರು ರೂಪಾಯಿ ಸರಕಾರದ ಸಂಬಳವಿತ್ತು. ನಿಸ್ಪøಹ ಭಾವನೆಯ ಶಿಕ್ಷಕ ವೃತ್ತಿ, ವೈರಾಗ್ಯದ ಜೀವನ ಅಧ್ಯಾತ್ಮ ಮನೋಧರ್ಮ, ಸಾತ್ವಿಕತೆಯ ಸ್ವಭಾವ ಎಲ್ಲವೂ ತಾವಿದ್ದ ಗ್ರಾಮೀಣ ಪರಿಸರದ ಮೇಲೆ ಪ್ರಭಾವ ಬೀರಿದವು.      ಹೀಗಿರುವಾಗ ತಾಯಿ ನೀಲಮ್ಮಳು ಮದುವೆಯ ಪ್ರಸ್ತಾಪ ಮಾಡಿದಾಗ ಆ ಮಾತಿಗೆ ತಡೆಹಾಕಿ ‘ಇಕೋ! ಈ ನಿನ್ನ ಉದರದಲ್ಲಿ ಜನಿಸಿದ ಋಣಭಾರವನ್ನು ಸ್ವಲ್ಪು ಮಟ್ಟಿಗಾದರೂ ಇಳಿಸಿಕೊಳ್ಳಬಹುದೆಂದು ಭಾವಿಸಿ ಮೂರು ವರ್ಷ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತಿದ್ದೇನೆ. ನನ್ನದೇ ಆದ ದಾರಿಯಲ್ಲಿ ನಾನು ಸಾಗುತ್ತಿರುವಾಗ ಇನ್ನು ಮೇಲೆ ತಾಯಿ ಎಂಬ ಮೋಹವು ನನ್ನಲ್ಲಿಯೂ; ಮಗನೆಂಬ ಮೋಹವು ನಿನ್ನಲ್ಲಿಯೂ ಇರಕೂಡದು! ಎಂದು ಹೇಳಿ ಮದುವೆಯ ವಿಚಾರ ಸ್ಪಷ್ಟವಾಗಿ ತಳ್ಳಿಬಿಡುತ್ತಾರೆ. ತಾಯಿ ನೀಲಮ್ಮ ಮಗನ ಸಹಜ ಹಾಗೂ ವೀರ ವೈರಾಗ್ಯಗಳನ್ನು ತಿಳಿದು ಗಟ್ಟಿ ಮನಸ್ಸು ಮಾಡಿದಳು.      ‘ವೈರಾಗ್ಯ’ ಇದೊಂದು ಅಗ್ನಿದಿವ್ಯ. ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ ಜೀವ-ಭಾವಗಳ ನಿರಸನ ಸಾಧಿಸಿ ಇಷ್ಟ ದೈವದ ಉಪಾಸಣೆಯಿಂದ ಸರ್ವಾರ್ಪಣ ಸಿದ್ಧಿಯನ್ನು ಸಂಪಾದಿಸಿದವರೇ ವಿರಾಗಿಗಳು. ಸಾಹಸ ಪ್ರವೃತ್ತಿಯ ಸಾಧಕರ ಅಂತಶಕ್ತಿಗೆ ವೈರಾಗ್ಯ ಒಂದು ಸವಾಲು. ಅಲ್ಲಮಪ್ರಭುದೇವ, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದರಂತಹ ವೀರವಿರಾಗಿಗಳ ವೈರಾಗ್ಯವೇ ಹಾಲಯ್ಯನವರದಾಗಿತ್ತು. ವೈರಾಗ್ಯದ ಜೊತೆಗೆ ‘ಶೀಲ’ವೂ ಅವರ ಆಂತರಿಕ ಬದುಕಿನ ಮೌಲ್ಯವಾಗಿತ್ತು. ಜೀವಧನವಾಗಿತ್ತು. ಸತ್ಯದಲ್ಲಿ ನಡೆಯುವುದು, ಸತ್ಯದಲ್ಲಿ ನುಡಿಯುವುದು, ಆಚಾರ-ವಿಚಾರಗಳಲ್ಲಿ ಗಟ್ಟಿತನ, ಅಂತರಂಗ-ಬಹಿರಂಗಗಳಲ್ಲಿ ಶುದ್ಧಿ, ಯೋಚನೆಗಳು-ಯೋಜನೆಗಳಾಗಿ ಸಾಕಾರಗೊಳಿಸುವುದು ಇವುಗಳ ಜೊತೆಗೆ ಮಾನವನ ಏಳ್ಗೆಯೇ ಶೀಲ, ಜಾತಿ-ಮತಗಳ ವಿಷ ಬೀಜ ಬಿತ್ತದಿರುವುದೆ ಶೀಲ, ಮೇಲು-ಕೀಳುಗಳ ಭಾವನೆ ತಂದುಕೊಳ್ಳದಿರುವುದೇ ಶೀಲ, ಸಮಾಜದ ಸಂಸ್ಕರಣೆಯೇ ಶೀಲ, ಸಕಲ ಜೀವರಾಶಿಗಳ ಸಂರಕ್ಷಣೆಯೇ ಶೀಲ, ಈ ಬಗೆಯ ಗಟ್ಟಿಗೊಂಡ ವ್ಯಕ್ತಿತ್ವ ಹಾಲಯ್ಯನವರದಾಗಿತ್ತು. ಹಾಲಯ್ಯ ಬೆಳೆದಂತೆ ಹಾಲಯ್ಯ ಮಾಸ್ತರರಾಗಿ, ಹಾಲಯ್ಯ ದೇಶಿಕರಾಗಿ, ಹಾನಗಲ್ಲ ವಿರಕ್ತಮಠದ ಅಧಿಕಾರ ಹೊಂದಿ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವಸ್ವಾಮಿಗಳಾಗಿ ನಾಮಕರಣಗೊಂಡು, ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಕುಮಾರ ಸ್ವಾಮಿಗಳೆಂದು ನಂತರ ಗುರುಗಳ ಅಭಿಧಾನರಾಗಿ ಸಮಾಜೋದ್ಧಾರದ ಕ್ರಾಂತದರ್ಶಿ ಕುಮಾರ ಯೋಗಿಯಾಗಿ ಯುಗಪುರುಷರೆಂದೆನಿಸಿದರು. ಅವರ ಬದುಕು ಆತ್ಮಸಂಸ್ಕಾರದ ಪ್ರತಿಬಿಂಬ. ಮಾನವ ಕಲ್ಯಾಣ ಸಾಧನೆಯ ಮಹಾಮಾರ್ಗ. ವಿದ್ಯೆ, ಸಂಸ್ಕøತಿ, ಸಮಾಜ, ಧರ್ಮ, ಸಾಹಿತ್ಯ, ಸಂಗೀತ ಕಲೆಗಳ ಸಂಚ ಲನ ಮಹಾಕಾವ್ಯವಾಗಿದೆ. ದೀನ-ದುರ್ಬಲರ, ದಲಿತ-ದರಿದ್ರರ, ಅನಾಥ-ಅಂಧರ ಏಳ್ಗೆಗಾಗಿ ಸ್ವಾತಂತ್ರ್ಯದ ಪೂರ್ವದ ದಿನಗಳಲ್ಲಿ ಸ್ಥಾಪನೆ ಮತ್ತು ಸುಧಾರಣೆಗಳ ಕ್ರಾಂತಿಯೆನ್ನಸಗಿದವರು. 1903ರ ವೇಳೆಗಾಗಲೇ ಹಾನಗಲ್ಲು, ಹಾವೇರಿ, ಶೆಲವಡಿ, ರಾಣೆಬೆನ್ನೂರು, ಸಂಶಿ, ಅಬ್ಬಿಗೇರಿ ಆಮೇಲೆ ಹುಬ್ಬಳ್ಳಿ, ರೋಣ, ಮುಂಡರಗಿ, ಬದಾಮಿ, ಬಗಲಕೋಟೆ ಹೀಗೆ ಅನೇಕ ಕಡೆಗಳಲ್ಲಿ ಸಂಸ್ಕøತ ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾ ಸಂಚಲನಗೈದರು. ಪಾಠಶಾಲೆಗಳಲ್ಲಿ ಅಭ್ಯಾಸ ಮಾಡಿ ಪಂಡಿತರಾಗುವ, ಮಠಾಧಿಪತಿಗಳಾಗುವ ಘನ ಕಾರ್ಯಗಳು ನಡೆದವು. ಕಬ್ಬಿಣ ಕಡಲೆಯಾಗಿದ್ದ ಸಂಸ್ಕøತವನ್ನು ತಿಳಿಯುವ ಮತ್ತು ಆ ಭಾಷೆಯ ಧಾರ್ಮಿಕ ತತ್ವಗಳನ್ನು ಕನ್ನಡಕ್ಕೆ ತರುವ ತೀವ್ರತರ ಚಟುವಟಿಕೆಗಳು ಉಂಟಾದವು. ಯಾವುದೇ ಭಾಷೆಯು ಎಲ್ಲರಿಗೂ ಎಂಬುದನ್ನು ಮನದಟ್ಟು ಮಾಡಿಕೊಡಲು ಸತತ ಶ್ರಮಿಸಿದರು. ಬಸವಣ್ಣನವರ ಅನುಭವ ಮಂಟಪ ಸಂಸ್ಕøತಿಯನ್ನು ಸಜೀವಗೊಳಿಸುವ ಸಾಧನೆಯಾಗಿ ‘ಐತಿಹಾಸಿಕ ಅಗತ್ಯದ ಸೃಷ್ಟಿ’ ಎಂಬಂತೆ 1904ರಲ್ಲಿ ಶ್ರೀಮದ್ವೀರಶೈವ ಮಹಾಸಭೆ ಸ್ಥಾಪಿಸಿದರು. ದೀನರ, ದುರ್ಬಲರ, ಮಕ್ಕಳ, ಮಹಿಳೆಯರ ಏಳ್ಗೆಗಾಗಿ ದುಡಿಯುವುದು, ವಿವಿಧ ಧರ್ಮಗಳ ಮಧ್ಯೆ ಸೌಹಾರ್ದ ಮತ್ತು ಸಾಮರಸ್ಯ ಬೆಸೆಯುವುದು. ಧರ್ಮ, ಸಾಹಿತ್ಯ, ಸಂಸ್ಕøತಿ, ಸಂಶೋಧನೆಗಳು ನಡೆಯುವಂತೆ ಮಾಡುವುದು ಮಹಾಸಭೆಯ ಉದ್ಧೇಶವಾಗಿದೆ. ಸಾಮಾಜಿಕ ಕುಂದು-ಕೊರತೆಗಳನ್ನು ದೂರಮಾಡಿ ಸಮಾನತೆಯನ್ನು ಸಾರುವ ಧಾರ್ಮಿಕ ಸಂವಿಧಾನವೂ ಹೌದು. ವಿಶ್ವದ ಮಾನವೀಯತೆಯ ಮಹಾಪುರುಷರಲ್ಲೊಬ್ಬರಾದ ಕುಮಾರ ಶಿವಯೋಗಿಗಳು ಮಾನವ ಕುಲದ ಸಮಗ್ರ ಉನ್ನತಿಗಾಗಿ ಅಧ್ಯಾತ್ಮ ಸಾಧನೆಯ ತರಬೇತಿ ನೀಡುವ ಅಗತ್ಯತೆಯನ್ನು ಮನಗಂಡಿದ್ದರು. ಸ್ವಾತಂತ್ರ್ಯಪೂರ್ವ, ಕರ್ನಾಟಕ ಏಕೀಕರಣ ಪೂರ್ವ ಕಾಲದಲ್ಲಿ 1909ರಲ್ಲಿ ಶ್ರೀಮದ್ವೀರಶೈವ ಶಿವಯೋಗಮಂದಿರ ಎಂಭ ಧಾರ್ಮಿಕ ಸಂಸ್ಥೆಯನ್ನು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನಲ್ಲಿ ಸ್ಥಾಪಿಸಿದರು. ಧರ್ಮಗುರುಗಳಾಗುವ ಮುನ್ನ ಧಾರ್ಮಿಕ, ನೈತಿಕ, ಯೌಗಿಕ, ಶಿಕ್ಷಣದ ಸಂಸ್ಕಾರ ಕೊಡುವ ಸಾಂಸ್ಕøತಿಕ ಹೆದ್ದಾರಿಯೊಂದು ತೆರೆದುಕೊಂಡಿತು. ಧಾರ್ಮಿಕ ಹೆಗ್ಗುರುತು ಈ ಸಂಸ್ಥೆಯದಾಗಿದೆ. ವ್ಯಷ್ಟಿಯಿಂದ ಸಮಷ್ಟಿ ಬದಕಿಗೆ ಹೊಸರೂಪ ನೀಡಲು ಮುಂದಾದ ಶಿವಯೋಗಮಂದಿರವು ಇಂದು ನಾಡಿನ ನಾನಾ ಮಠಗಳಿಗೆ ಮಠಾಧಿಪತಿಗಳನ್ನು ಕೊಟ್ಟಿದೆ. ಶಿಕ್ಷಣ, ಉಚಿತ ಪ್ರಸಾದ ನಿಲಯಗಳ ಮೂಲಕ ಸಹಸ್ರಾರು ಮಠಗಳು ಘನಕಾರ್ಯ ಮಾಡುತ್ತಿರುವುದು ನಾಡಿನ ಶೈಕ್ಷಣಿಕ ಇತಿಹಾಸದಲ್ಲಿ ಬಹುಮಹತ್ವವಾಗಿದೆ. ಗದಗನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕರಾದ ಕುಮಾರ ಶಿವಯೋಗಿಗಳು ಅಂಧರ, ಅನಾಥರ, ಅಂಗವಿಕಲರ ಬಾಳಿಗೆ ಬೆಳಕು ನೀಡಿದವರು. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳಿಗೆ ಸಂಗೀತದ ಶಿಕ್ಷಣ ಕೊಡಿಸಿ ಅವರಂಥ ಸಹಸ್ರಾರು ಅಂಧರು ಒಳಗಣ್ಣಿನಿಂದ ಲೋಕ ಅರಿತರು. ಸಂಗೀತ, ಕೀರ್ತನ, ಪ್ರವಚನಗಳ ಮುಖಾಂತರ ಜ್ಞಾನದ ಬೆಳಕು ನೀಡಿದರು. ಭಕ್ತರ ಮನೆಗೆ ಹೋದಾಗ ಭಕ್ತರು ಕೊಟ್ಟ ಕಾಣಿಕೆಯನ್ನು ಭಕ್ತರಿಗೇ ಮರಳಿಸಿ ಅವರ ಮನೆಗಳ ಗೋಡೆ-ಗದ್ದುಗೆಗಳಲ್ಲಿ ಹುದುಗಿ ಪೂಜಿಸಲ್ಪಡುತ್ತಿದ್ದ ಕೈಬರಹ, ತಾಳೆಗರಿ ತಾಡೋಲೆಗಳನ್ನು ಸಂಗ್ರಹಿಸಿದರು. ಫ.ಗು.ಹಳಕಟ್ಟಿಯವರನ್ನು ಜೊತೆಗೆ ಕರೆದುಕೊಂಡು ಮುದ್ರಣಕ್ಕೆ ಮುಂದಾದರು. ಹೋದ ಹೋದಲ್ಲೆಲ್ಲ ಶರಣರ ವಚನಗಳನ್ನು ಪ್ರಸಾರ ಮಾಡಿದರು. ಪತ್ರಕೆಗಳನ್ನು ಆರಂಭಿಸಿ ಸಾಹಿತ್ಯ ಪ್ರಸಾರ ಮಾಡಿದವರು. ಉದ್ಧರಣೆಗಳನ್ನು ಪೋಷಿಸಿದರು. ಅನೇಕ ಗ್ರಂಥಗಳ ಸಂಶೋಧನೆಗೆ ಪ್ರೋತ್ಸಾಹ ನೀಡಿದರು. ಅನುಭಾವದ ಹಾಡುಗಬ್ಬಗಳನ್ನು ರಚಿಸಿದವರು ತಾವಾಗಿದ್ದರೂ ಎಲ್ಲಿಯೂ ತಮ್ಮ ಹೆಸರನ್ನು ನಮೂದಿಸಿಕೊಂಡವರಲ್ಲ. ಗೋಶಾಲೆಯನ್ನು ಸ್ಥಾಪಿಸಿ ಲಕ್ಷಲಕ್ಷ ಗೋವುಗಳನ್ನು ಸಂರಕ್ಷಿಸಿ ಪ್ರಾಣಿಪ್ರೇಮಕ್ಕೆ ಸಾಕ್ಷಿಯಾದವರು. ಪಕ್ಷಿ, ಪರಿಸರ, ಗಿಡ, ಬಳ್ಳಿ ಒಟ್ಟಾರೆ ತಮ್ಮ ಸುತ್ತಮುತ್ತ ಏನಿತ್ತೊ ಅದೆಲ್ಲವನ್ನು ತಮ್ಮಂತೆ ಬದುಕಿಸಿದ ಬೆಳೆಯಲು ಆಶ್ರಯವನ್ನಿತ್ತವರದು ಅಂತಃಕರಣದ ಹೃದಯ! ದಯಾಭಾವದ ಹೃದಯ! ತಮ್ಮ ಜೀವಿತಾವಧಿಯ ಅರವತ್ಮೂರು ವರ್ಷಗಳನ್ನು ಕಾಲ್ನಡಿಗೆಯಲ್ಲೆ ಕಳೆದವರು. ಸಮಯದ ಅಪವ್ಯಯ ಎಂದರೆ ಅಪರಾಧ ಎಂದು ನಂಬಿದವರು. ಅವರ ವ್ಯಕ್ತಿತ್ವದ ಪ್ರಭಾವ ಮುದ್ರೆ ಇಂದಿನ ವರೆಗೂ ಜನತೆಯ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರಿದೆ ಎನ್ನುವುದಕ್ಕೆ ಅವರ ಹೆಸರನ್ನು ತಂದೆ-ತಾಯಿಗಳು ತಮ್ಮ ಮಕ್ಕಳಿಗೆ, ಭಕ್ತರು ಮಠಾಧಿಪತಿಗಳಿಗೆ ನಾಮಕರಣಗೊಳಿಸುತ್ತಿರುವುದು. ಅವರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣಗೊಳ್ಳುತ್ತಿರುವುದು. ಅಲ್ಲದೆ ಅವರನ್ನು ಕುರಿತ ಕಾವ್ಯ-ಸಾಹಿತ್ಯ, ಸಂಶೋಧನಾ ಸಾಹಿತ್ಯ ನಿರ್ಮಾಣವಾಗುತ್ತಿರುವುದೇ ಪ್ರತ್ಯಕ್ಷ ನಿದರ್ಶನವಾಗಿದೆ. ಕುಮಾರ ಶಿವಯೋಗಿಗಳ ಕ್ರಾಂತದರ್ಶಿತ್ವವು ಆ ಒಂದು ಯುಗಕ್ಕೂ ಸೀಮಿತಗೊಳ್ಳುವಂತಹದ್ದಲ್ಲ. ಅವರ ಅಧ್ಯಾತ್ಮ ಅನುಭಾವ ಸಾಧನೆಗಳ ಔನ್ನತ್ಯವು ಯುಗ-ಯುಗಗಳಿಗೆ ಪ್ರಭಾವ ಬೀರಬಹುದಾದುದು. ಕಾರಣ ಜಾತಿ, ಕುಲ, ಭಾಷೆ, ದೇಶಗಳನ್ನು ಮೀರಿದ ವ್ಯಕ್ತಿತ್ವ ಅವರದು. 19-02-1930 ನೇ ಇಸ್ವಿ ಗುರುವಾರ ದಿವಸ ಸಂಜೆ 7 ಗಂಟೆಗೆ ಕುಮಾರ ಶಿವಯೋಗಿಗಳ ಉಸಿರು ಲಿಂಗದಲ್ಲಿ ಲೀನವಾದಾಗ ನಾಡಿನ ಹೃದಯಗಳು ಮಮ್ಮಲ ಮರಗಿದವು. ಧರ್ಮಸ್ತಂಭದ ಮೇಲೆ ಹೃದಯದ ಹಣತೆಯನ್ನಿರಿಸಿ ಧ್ಯಾನತೈಲವನ್ನೆರೆದು ಕ್ರಿಯಾಬತ್ತಿವಿಡಿದ ಅವರ ಜ್ಞಾನಜ್ಯೋತಿ ಉರಿಯುತ್ತಲೇ ಇದೆ. ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಲೇ ಇದೆ. ವಿಶ್ವದ ಕಲ್ಯಾಣದ ಬಯಕೆ ಬಯಸಿ ಬಂದ ಸಮರ್ಥ ವ್ಯಕ್ತಿ-ಶಕ್ತಿಗಳ ಮನದ ತಂತಿಗಳನ್ನು ಮೀಟುತ್ತಲೇ ಇದೆ. “ಆಚಾರದಲ್ಲಿ ತಪ್ಪಿದರೆ ನಮ್ಮ ದೋಷ; ಅನಾಚಾರದಲ್ಲಿ ನಡೆದರೆ ನಿಮ್ಮ ದೋಷ ಇವೇ ನಮ್ಮ-ನಿಮ್ಮ ಹೊಣಾಗಾರಿಕೆ” ಎಂದು ಅಳಿಸಲಾರದ ವಿಭೂತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವ ಸಾಧಕರಲ್ಲಿಯೂ, ಸಂಸ್ಕøತಿಯಲ್ಲಿ ನಿರತರಾಗಿರುವ ಮಠಾಧಿಪತಿಗಳಲ್ಲಿಯೂ ಗಟ್ಟಿಗೊಂಡಿದ್ದಾರೆ.    

Related Posts