General

ವಿದ್ವಾನ್‌ ಜಿ.ವಿ.ಶಿವಸ್ವಾಮಿ

ನಮ್ಮ ರಾಜ್ಯವು ಧರ್ಮಸಮನ್ವಯದ ಪುಣ್ಯಭೂಮಿ. ಈ ನಾಡಿನಲ್ಲಿ ಅನೇಕ ಮಹಾತ್ಮರು, ಸಾಧು-ಸಂತರು, ಆಚಾರ್ಯರು, ಶಿವಶರಣರು ಆಗಾಗ್ಗೆ ಉದಯಿಸಿ ತಮ್ಮ ಆಧ್ಯಾತ್ಮಿಕ ತೇಜಸ್ಸಿನಿಂದ ಜನಸಾಮಾನ್ಯರನ್ನು ಉದ್ಧಾರ ಮಾಡಿರುವವರಲ್ಲಿ  ನಿಜಗುಣ ಶಿವಯೋಗಿಗಳೂ ಒಬ್ಬರು

 “ಜ್ಯೋತಿ ಬೆಳಗುತಿದೆ

ವಿಮಲ ಪರಂಜ್ಯೋತಿ ಬೆಳಗುತಿದೆ

ಮಾತು ಮನಂಗಳಿಂದತ್ತತ್ತ ಮೀರಿದ

ಸಾತಿಶಯದ ನಿರುಪಾಧಿಕ ನಿರ್ಮಲ

ಜ್ಯೋತಿ ಬೆಳಗುತಿದೆ”

ಎಂದು ಹೇಳಿ ಜನರಲ್ಲಿ ಇದ್ದ ಅಂಧಕಾರವನ್ನು ದೂರ ಮಾಡಲು ಪ್ರಯತ್ನಿಸಿದವರು ನಿಜಗುಣ ಶಿವಯೋಗಿಗಳು  ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನ್ನು ತುಂಬಿ ಬಸವಣ್ಣನೆಂಬ ಜ್ಯೋತಿ ಬೆಳಗಿಸಿದ ಮೇಲೆ ಅದು ಕಳೆಗುಂದುತ್ತಿದ್ದಾಗ ಮತ್ತೊಮ್ಮೆ ಆ ಜ್ಯೋತಿಗೆ ಅಧ್ಯಾತ್ಮಿಕ ತೈಲವನ್ನೆರೆದು ಹೊಸ ಬೆಳಕನ್ನು ಕೊಟ್ಟು ಆ ಜ್ಯೋತಿಯನ್ನು ನಾಡಿನಲ್ಲೆಲ್ಲಾ ಪ್ರಜ್ವಲಿಸುವಂತೆ ಮಾಡಿದ ಮಹಾತ್ಮರು  ನಿಜಗುಣ  ಶಿವಯೋಗಿಗಳು.

ನಿಜಗುಣರ ಕಾಲ ಮತ್ತು ಜೀವನವನ್ನು ಕುರಿತು ಹೇಳಬಹುದಾದ ಐತಿಹಾಸಿಕ ಆಧಾರಗಳು ಸಾಕಷ್ಟು ದೊರೆಯುವುದಿಲ್ಲ. ಅವರ ಕಾಲ  ದೇಶಾದಿಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಟ್ಟಿನಲ್ಲಿ ಅನೇಕ ವಿದ್ವಾಂಸರು ಇವರು ೧೬ನೇ ಶತಮಾನದಲ್ಲಿ ಇದ್ದಿರಬಹುದೆಂದು ಅಭಿಪ್ರಾಯ ಪಟ್ಟಿರುತ್ತಾರೆ.

 ಮೈಸೂರು ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿಗೆ ಸ್ವಲ್ಪ ದೂರದಲ್ಲಿ ಪ್ರಶಾಂತವಾಗಿ ಹರಿಯುತ್ತಿರುವ ಕಾವೇರಿ  ಕಪಿಲೆಗಳ ಸುಗಮವೆಂದು ಹೆಸರು ಪಡೆದಿರುವ ತಿರುಮಲಕೂಡಲ ಆಚೆಗೆ ಸ್ವಲ್ಪ ದೂರದಲ್ಲಿ ಶುಭುಲಿಂಗನ ಬೆಟ್ಟವಿದೆ.ಬೆಟ್ಟದ ಪ್ರದೇಶಕ್ಕೆ ಸೇರಿದಂತೆ ಇರುವ ಒಂದು ಸಣ್ಣಗ್ರಾಮ ಚಿಲಕವಾಡಿ.  ಅದರ ಮತ್ತೊಂದು ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕುಂತೂರು ಗ್ರಾಮವಿದೆ. ಇವೆರಡು ಗ್ರಾಮಗಳ ಎಲ್ಲೆಯಲ್ಲಿ ಇರುವುದೇ ಶಂಭುಲಿಂಗನ ಬೆಟ್ಟ, ಈ ಬೆಟ್ಟವು ಪವಿತ್ರವಾಗಿಯೂ ರಮಣೀಯವಾಗಿಯೂ ಇದ್ದು, ಸಾಧು-ಸಂತರ ತಪೋಕ್ಷೇತ್ರವಾಗಿ, ನಿಜಗುಣ ಶಿವಯೋಗಿಗಳ ಸಿದ್ಧಿಯ ತಾಣವಾಗಿದೆ. ಇಲ್ಲಿಯೇ ನಿಜಗುಣರು ತಪೋನುಷ್ಠಾನ ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದುಕೊಂಡು ಜ್ಞಾನಜ್ಯೋತಿಯಾದರು. ಈ ಬೆಟ್ಟದಲ್ಲಿ ಇಂದಿಗೂ ನಿಜಗುಣರ ಗುಹೆ ಮತ್ತು  ಶಂಭುಲಿಂಗನ ದೇವಾಲಯ ಇವೆ. ಈ ಸ್ಥಳದಲ್ಲಿ ಸುಂದರವಾದ ಪ್ರಾರ್ಥನಾ ಮಂದಿರ ನಿರ್ಮಾಣಮಾಡಿ, ನಿಜಗುಣ ಶಿವಯೋಗಿಗಳ ಅಮೃತಶಿಲೆ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಇವರು ಕೊಳ್ಳೆಗಾಲದ ಸುತ್ತಮುತ್ತಲ ಪ್ರದೇಶಕ್ಕೆ  ರಾಜರಾಗಿದ್ದರೆಂದು ಕೆಲವು ಆಧಾರಗಳಿಂದ ತಿಳಿದು ಬರುತ್ತದೆ. ಇವರು ಬುದ್ಧನಂತೆ ರಾಜ್ಯ- ಕೋಶಾಧಿಗಳನ್ನು ತ್ಯಜಿಸಿ ಸನ್ಯಾಸಿಗಳಾದರು

ನಿಜಗುಣರು ಹೊರ ಪ್ರಪಂಚಕ್ಕೆ ರಾಜರಂತೆ ಕಂಡರೂ ಒಳಪ್ರಪಂಚದಲ್ಲಿ ತಪಸ್ವಿಗಳು, ರಾಜಭೋಗದಲ್ಲಿ ಯೋಗ ಬೀಜವನ್ನು ಬಿತ್ತಿ ಬೆಳಸಿದವರು. ಅವರ ಪ್ರಜಾನುರಾಗ, ದೀನ- ದಲಿತರ ಬಗ್ಗೆ ಅನುಕಂಪ, ಸಾಧು-ಸಂತರನ್ನು, ಶರಣರನ್ನು ಜಂಗಮರನ್ನು ಸಮಾನ ಭಾವನೆಯಿಂದ ಕಂಡು ಪೂಜಿಸಿದವರು. ಬಂದ ಯಾತ್ರಾರ್ಥಿಗಳಿಗೂ, ಗುರು ಜಂಗಮರಿಗೂ  ದಾಸೋಹವನ್ನು ನಡೆಸಿದ ಕಾಯಕ ನಿಷ್ಠರು,

 “ಶಿವಪಥವನರಿವಡೆ ಗುರುಪಥವೇ ಮೊದಲು’ ಎಂಬ ಬಸವಣ್ಣನವರ ನುಡಿಯನ್ನು ಅರಿತ ನಿಜಗುಣರು ತಮ್ಮ ಗುರುಗಳಾದ ಶ್ರೀ ಶಂಭುಲಿಂಗಸ್ವಾಮಿಗಳವರ ನೇತೃತ್ವದಲ್ಲಿ ಶಿವಾದ್ವೈತ ಸಿದ್ಧಾಂತವನ್ನು ಕುರಿತು ಜಿಜ್ಞಾಸೆ ನಡೆಸಿ, ಅವರ ಮಾರ್ಗದರ್ಶನದಲ್ಲಿ ಜ್ಞಾನವನ್ನು ಸಂಪಾದಿಸಿಕೊಂಡರು. ಮೆಚ್ಚಿನ ಶಿಷ್ಯನಾದ ನಿಜಗುಣರ ಅಭಿರುಚಿಯನ್ನು ಗಮನಿಸಿದ ಗುರು ಶಂಭುಲಿಂಗಸ್ವಾಮಿಗಳು ಶಿಷ್ಯನನ್ನು ವೈರಾಗ್ಯ ಮೂರ್ತಿಯನ್ನಾಗಿ ಪರಿವರ್ತಿಸಲು ಸಂಸಾರದಲ್ಲಿ ಇರುವ ದುಃಖ ಮತ್ತು ಅದರ ವ್ಯಾಮೋಹದಿಂದಾಗುವ ಅನರ್ಥಗಳನ್ನು ವಿವರಿಸಿ, ಶಿವಾದ್ವೈತ ತತ್ತ್ವಗಳನ್ನು ಮತ್ತು ಮೋಕ್ಷಪದವಿಯ ಮಾರ್ಗವನ್ನು . – ಬೋಧಿಸಿದರೂ ನಿಜಗುಣರ ಮನಸ್ಸು ಸಂಸಾರದಿಂದ ವಿಮುಖವಾಗಲಿಲ್ಲ.

 ಒಮ್ಮೆ ನಿಜಗುಣರು ಗುರುಗಳ ಬಳಿಗೆ ಹೋಗಿ, “ಏನು. ಮಾಡಲಿ – ಗುರುವೇ, ನಾನು ಸಂಸಾರವನ್ನು ತ್ಯಾಗ ಮಾಡಬೇಕೆನ್ನುತ್ತೇನೆ. ಆದರೆ ಸಂಸಾರ ನನ್ನನ್ನು ಬಿಡುತ್ತಿಲ್ಲ” ಎಂದರು, ಶಿಷ್ಯನ ಮನಸ್ಸನ್ನು ಅರಿತ ಗುರುಗಳು ಏನಾದರೂ ಮಾಡಿ   ಪರಿವರ್ತಿಸಬೇಕೆಂದು ಚಿಂತಿಸಿ, ಒಮ್ಮೆ ಊರು ಮುಂದೆ ಇರುವ ಮರವನ್ನು ಹೋಗಿ ತಬ್ಬಿಕೊಂಡು ನಿಂತುಬಿಟ್ಟರು. ರಾಜಗುರುಗಳ ವರ್ತನೆಯನ್ನು ಕಂಡ ಜನ ರಾಜನಿಗೆ ವರದಿ ಮಾಡಿದರು. ನಿಜಗುಣರು ಬಂದು ನೋಡಿ ಆಶ್ಚರ್ಯದಿಂದ ಗುರುಗಳನ್ನು ಕೇಳಿದರು, “ಇದೇನು ಗುರುವೇ ಹೀಗೆ ನಿಂತಿರುವಿರಿ?” ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಈ ಸಂಸಾರ ನಿನ್ನನ್ನು ಹಿಡಿದುಕೊಂಡು ಹೇಗೆ ಬಿಡುತ್ತಿಲ್ಲವೋ, ಹಾಗೆ ಈ ಮರವು ನನ್ನನ್ನು ಹಿಡಿದುಕೊಂಡು ಬಿಡುತ್ತಿಲ್ಲ’ ಎಂದರು. ಗುರುಗಳ ಈ ಮಾತು ನಿಜಗುಣರ ಮನಸ್ಸಿಗೆ ನಾಟಿತು. ಮನಸ್ಸಿನಲ್ಲಿ ವಿದ್ಯುತ್ ಹರಿದಂತಾಯಿತು. ಹೌದು ಗುರುದೇವ, ನಾನೆ ಸಂಸಾರವನ್ನು ಹಿಡಿದುಕೊಂಡು ಸಂಸಾರವು ನನ್ನನ್ನು ಹಿಡಿದುಕೊಂಡಿದೆ ಎನ್ನುತ್ತಿದ್ದೇನೆ”. ಇಲ್ಲದ ನೆಪವನ್ನು ಮಾನವರು ಹುಡುಕುತ್ತಾರೆ, ನನ್ನ ಅಜ್ಞಾನಕ್ಕೆ ಸರಿಯಾದ ಮಾರ್ಗವನ್ನೇ ತೋರಿದಿರಿ.

ಆರು ನಾನೆಂದು ವಿಚಾರಿಸು ವಿಷಮ ಸಂ-

ಸಾರವನು ಕನಸೆಂದರಿ |

ಮಾರಮರ್ದನ ಶಂಭುಲಿಂಗವನೊಲಿಸಿ ಗಂಭೀರ ಸುಖದೊಳಿರೆಂದರುಪುವ

 ಎಂದು ನುಡಿದು ರಾಜ್ಯ ಮಡದಿ ಮಕ್ಕಳನ್ನು ತ್ಯಜಿಸಿ, ಗುರುಗಳ ಮಾರ್ಗದರ್ಶನದಂತೆ ಜಂಗಮ ದೀಕ್ಷೆಯನ್ನು ಪಡೆದು ನಾಡನ್ನೇ ಪ್ರೀತಿಸುವ ಪರಮ ವೈರಾಗ್ಯ ಮೂರ್ತಿಗಳಾದರು

 ನಿಜಗುಣ ಶಿವಯೋಗಿಗಳು ಬಹುಮುಖ ಪ್ರತಿಭೆ ಯುಳ್ಳವರು. ಅಗಾಧವಾದ ವಿದ್ವತ್ತಿನಿಂದಲೂ, ತಪಶ್ಚರ್ಯ ದಿಂದಲೂ, ಶಾಸ್ತ್ರಗಳ ಅಭ್ಯಾಸ ಬಲದಿಂದಲೂ ಜ್ಞಾನನಿಧಿ ಯಾದರು. ಗದ್ಯ-ಪದ್ಯದಲ್ಲಿ ಅನೇಕ ಗ್ರಂಥಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

 ನಿಜಗುಣ ಶಿವಯೋಗಿಯು ಒಬ್ಬ ಸಾಮಾನ್ಯ ಕವಿ ಎಂದು ಹೇಳುವುದಕ್ಕಿಂತ ಒಬ್ಬ ದಾರ್ಶನಿಕ ಕವಿ ಎಂದು ಹೇಳಬೇಕಾಗುತ್ತದೆ. ಅವರ ಸಾಹಿತ್ಯ ಕೃಷಿ ವಿಫುಲವಾದದ್ದು. ಕನ್ನಡ ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದೂ ಆಗಿದೆ. ಇವರಿಗೆ ವೇದ, ಆಗಮ, ಉಪನಿಷತ್ತು, ಸ್ಮೃತಿಗಳಲ್ಲಿ ಪಾಂಡಿತ್ಯವಲ್ಲದೆ, ಪುರಾಣ, ಇತಿಹಾಸ, ಸಂಗೀತ, ವ್ಯಾಕರಣ, ತರ್ಕ, ಜ್ಯೋತಿಷ್ಯ, ಯೋಗಗಳಲ್ಲಿಯೂ ಪಾಂಡಿತ್ಯ ಇತ್ತು. ‘ವಿದ್ಯಾಸಂಪನ್ನ, ಸುಜ್ಞಾನ ಚಕ್ರವರ್ತಿ’ ಮುಂತಾದ ಬಿರುದಗಳು ನಿಜಗುಣರನ್ನು ಆಶ್ರಯಿಸಿ ಗೌರವ ಪಡೆದವೆಂದರೆ ಉತ್ಪ್ರೇಕ್ಷೆಯಾಗಲಾರದು.

ನಿಜಗುಣ ಶಿವಯೋಗಿಗಳ ಕೃತಿಗಳು

೧)ಕೈವಲ್ಯ ಪದ್ಧತಿ

೨)ಪರಮಾನುಭವ ಬೋಧೆ

೩)ಅನುಭವ ಸಾರ

೪)ಪರಮಾರ್ಥಗೀತೆ

೫)ಪಾರಮಾರ್ಥ ಪ್ರಕಾಶಿಕೆ

೬)ವಿವೇಕ ಚಿಂತಾಮಣಿ

೭)ಅರವತ್ತು ಮೂವರ ಪುರಾತನ ತ್ರಿವಿಧಿ

ಮತ್ತು ದರ್ಶನ ಸಾರ, ಆತ್ಮ ತರ್ಕ ಚಿಂತಾಮಣಿ ಈ ಎರಡು ಗ್ರಂಥಗಳು ಸಿಕ್ಕಿರುವುದಿಲ್ಲ. ಇವರ ಕೃತಿಗಳು ತೆಲಗು, ತಮಿಳು, ಸಂಸ್ಕೃತ, ಮರಾಠಿ ಭಾಷೆಗಳಿಗೂ ಭಾಷಾಂತರ ಗೊಂಡಿವೆ. ನಿಜಗುಣರ ಕೃತಿಗಳನ್ನು ಓದಿ ನೋಡಿದಾಗ ನಮಗೆ ಸಾಹಿತ್ಯ ಶ್ರೀಮಂತಿಕೆಯ ಗೋಚರವಾಗುತ್ತದೆ. ಅವರ ಕೃತಿಗಳು ಒಂದಕ್ಕೊಂದು ಪೂರಕವೆಂಬಂತೆ ತೋರುತ್ತವೆ, ಮುಮುಕ್ಷುಗಳು ಮೊದಲು ‘ಪಾರಮಾರ್ಥದ ಪ್ರಕಾಶ’ ತಿಳಿಯಬೇಕು. ಅದಕ್ಕೆ ‘ವಿವೇಕ ಚಿಂತಾಮಣಿ’ಯ ಅರಿವು ಬೇಕು. ಅದನ್ನು ಪಡೆದುಕೊಂಡ ನಂತರ ‘ಅನುಭವಸಾರ’ ಬೇಕು. ಅನುಭವದ ಸಾರವನ್ನು ಜೀರ್ಣಿಸಿಕೊಂಡು ಜ್ಞಾನಿಯು ‘ಪರಮಾರ್ಥಗೀತೆ’ಯನ್ನು ಆನಂದ ದಿಂದ ಹಾಡುತ್ತಾ ‘ಕೈವಲ್ಯ ಪದ್ಧತಿ’ಯನ್ನು ತಿಳಿದು ಅನುಭವಿಸಬೇಕು ಎಂಬುದು ಅವರ ಗ್ರಂಥಗಳ ಅಧ್ಯಯನದಿಂದ ತಿಳಿದು ಬರುತ್ತದೆ

. ‘ಕೈವಲ್ಯ ಪದ್ಧತಿ’ಯು ನಿಜಗುಣ ಶಿವಯೋಗಿಗಳ ಕೊನೆಯ ಕೃತಿರತ್ನವಾಗಿದೆ. ವೇದಾಂತ ತತ್ತ್ವಗಳನ್ನು ಬೋಧನೆ ಮಾಡುವಾಗ ‘ಪರಮಾನುಭವ’ವಿಲ್ಲದೆ ಬೋಧನೆ ಮಾಡಲಾಗುವುದಿಲ್ಲ. ಎಲ್ಲವನ್ನೂ ಗುರುಮುಖೇಣ ಅರಿಯಬೇಕು.

“ಶ್ರೀಗುರು ವಚನೋಪದೇಶವನಾಲಿಸಿ ದಾಗಳಹುದು ನರರಿಗೆ ಮುಕುತಿ…..

ಎಂದು ಒತ್ತಿಹೇಳಿದ್ದಾರೆ. ತಾವು  ಗುರುಮುಖದಿಂದ ತಿಳಿದ ತತ್ವಗಳನ್ನು ಅರಗಿಸಿಕೊಂಡು, ಶಿವಯೋಗ ಸಿದ್ಧಪುರುಷರಾಗಿ, ತಾವು ಗಳಿಸಿದ ಜ್ಞಾನವಾಹಿನಿಯನ್ನು ನಾಡಿನಲ್ಲೆಲ್ಲಾ ಹರಡಿಸಿ ಜನಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತತ್ವಗಳನ್ನು ಉಪದೇಶಿಸಿರುವುದು ತಿಳಿದುಬರುತ್ತದೆ.  ಪುರಂದರದಾಸರು ‘ಪುರಂದರ ವಿಠಲ’ ಎಂತಲೂ ಅಕ್ಕಮಹಾದೇವಿ ‘ಚನ್ನಮಲ್ಲಿ ಕಾರ್ಜುನ’ ನೆಂತಲೂ, ಬಸವಣ್ಣನವರು ‘ಕೂಡಲ ಸಂಗಮದೇವ’ ನೆಂತಲೂ ತಮ್ಮ ವಚನಗಳ ಅಂತ್ಯದಲ್ಲಿ ಅಂಕಿತವನ್ನು ಹೇಳಿ ಕೊಂಡಿರುವರಂತೆ, ನಿಜಗುಣ ಶಿವಯೋಗಿಗಳೂ ಸಹ ‘ಶಂಭುಲಿಂಗ’  ಎಂದು ಅಂಕಿತವನ್ನು ಇಟ್ಟುಕೊಂಡಿದ್ದಾರೆ.

 ಉದಾಹರಣೆಗೆ

 : ಪ್ರಣವಾಕಾರದ ಗುಣಮೂರು ಮುಟ್ಟಿದ

 ಗಣನೆಗತೀತಾರ್ಥವನೆ ತೋರುವ ||

ಅಣುಮಾತ್ರ ಚಲನೆ ಇಲ್ಲದ ಮೋಕ್ಷ ಚಿಂತಾ |

 ಮಣಿಯೆನಿಸುವ ಶಂಭುಲಿಂಗವೆ ತಾನಾದ |

 ಎಂದು ಹಾಡಿದ್ದಾರೆ.

  ನಿಜಗುಣರ ಸಮಗ್ರ ಜೀವನ ಚರಿತ್ರೆಯಿಂದ ತಿಳಿದು ಬರುವುದೇನೆಂದರೆ ಅವರು ಒಬ್ಬ ದಕ್ಷ ಆಡಳಿತಗಾರರೂ | ಸಮಾಜ ಸುಧಾರಕರೂ, ಕವಿಗಳೂ, ದಾರ್ಶನಿಕರೂ, ತತ್ವನಿಷ್ಠರೂ | ಮಹಾತ್ಮರೂ ಆಗಿದ್ದರು. ಅವರೆಲ್ಲಿ ನಾವೆಲ್ಲಿ ? ಮಾನವರಾಗಿ | ಹುಟ್ಟಿ ಮಹಾಮಹಿಮರಾಗಿ ಮಾನವರ ಸರ್ವತೋಮುಖ ಪ್ರಗತಿಗಾಗಿ ದುಡಿದರು. ಅವರು ಬಡವ-ಬಲ್ಲಿದ, ಉಚ್ಚ  ನೀಚ ಎಂಬ ಭೇದ ಭಾವನೆಯನ್ನು ತೊಡೆದು ಹಾಕಲು, ಪ್ರಯತ್ನಿಸಿದರು ಶರಣರ ಜೀವನದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದವರು.

 ದೇವರನ್ನು ನಂಬಬೇಕು,ದೇವ ಲೋಕವೆಂಬುದು ಅವು ಅಲ್ಲಿಯೂ ಇಲ್ಲ, ಅವೆಲ್ಲವೂ ಇಲ್ಲಿಯೇ ಇವೆ. ಸತ್ಯವನ್ನ ನುಡಿವುದೇ ದೇವಲೋಕ, ಮಿಥ್ಯವನ್ನ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ ಅನಾಚಾರವೇ ನರಕ, ಎಂದು ಬಸವಣ್ಣನವರು ನುಡಿದಿರುವ ವಚನದ ಸಾರವನ್ನು ತಿಳಿದು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಅಧ್ಯಾತ್ಮಿಕ ರಂಗದ ಧೃವತಾರೆಯಾಗಿ ಮಿನುಗಿ, ಆಚರಣೆಯಲ್ಲಿ ನಡೆ ನುಡಿಗಳನ್ನು ಹೊ೦ದಾಗಿಸಿ ಸಮಾಜದ ಜನತೆಯನ್ನು ಕೈಹಿಡಿದು ನಡೆಸಿದವರು. ಅವರ ಉಪದೇಶಗಳು ಕಲುಷಿತ ವಾತಾವರಣದಲ್ಲಿ ಕಂಗೆಟ್ಟುನಿಂತ ಜೀವಿಗೆ ಶಾಂತಿ, ಸುಖ, ನೆಮ್ಮದಿಯನ್ನು ನೀಡುತ್ತವೆ. ನಿಜಗುಣ ಶಿವಯೋಗಿಗಳು ಬೋಧಿಸಿದ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. ನಿಜಗುಣ ಶಿವಯೋಗಿಗಳ ಕೃತಿಗಳ ಪ್ರಭಾವ ಶ್ರೀ ಸರ್ಪಭೂಷಣ ಶಿವಯೋಗಿಗಳ ಮೇಲೆ ಆಗಿದೆ. ಅವರು ತಮ್ಮ ‘ಕೈವಲ್ಯ ಕಲ್ಪವಲ್ಲರಿ’ಯಲ್ಲಿ ನಿಜಗುಣರನ್ನು ಸ್ಮರಿಸಿರುತ್ತಾರೆ

ಪ್ರೊ. ಜೆ.ಎಸ್.ಸಿದ್ದಲಿಂಗಯ್ಯ

ಸರ್ಪಭೂಷಣ ಶಿವಯೋಗಿಗಳ ಹೆಸರು ನೆನಪಾಗುತ್ತಿದ್ದಂತೆ ಬೆಂಗಳೂರಿನ ೬೩ ಮಠಗಳಲ್ಲಿ ಧಾರ್ಮಿಕವಾಗಿಯೂ, ಸಾಹಿತ್ಯಕವಾಗಿಯೂ, ಮುಖ್ಯವಾದ ಎರಡು ಮಠಗಳು ನಮ್ಮ ಗಮನವನ್ನು ಸೆಳೆಯ ತೊಡಗುತ್ತವೆ. ಅವೆಂದರೆ ತಿಪ್ಪಶೆಟ್ಟಿಮಠ ಮತ್ತು ಸರ್ಪಭೂಷಣ ಮಠಗಳು. ಯಾವುದೇ ಒಂದು ಮಠದ ಅಥವಾ ಸಂಸ್ಥೆಯ ಹೆಸರು ಉಜ್ವಲವಾಗುವುದು ಆ ಮಠ ಕಾರಣವಾದ ಸಾಂಸ್ಕೃತಿಕ ಕ್ರಿಯೆಯಿಂದ . ಬೆಂಗಳೂರಿನಲ್ಲಿದ್ದ ೬೩ ಮಠಗಳಲ್ಲು ಧಾರ್ಮಿಕವಾದ ಹಾಗೂ ಶೈಕ್ಷಣಿಕವಾದ ಕಾರ್ಯಗಳು ನಡೆಯುತ್ತಲೇ ಇದ್ದವು. ಏಕೆಂದರೆ ಬೆಂಗಳೂರಿನ ಆ ಮಠಗಳು ಮಾಮೂಲುಪೇಟೆ, ಚಿಕ್ಕಪೇಟೆ, ಅರಳೇಪೇಟೆ, ಅಕ್ಕಿಪೇಟೆ, ದೊಡ್ಡಪೇಟೆ – ವಲಯಗಳಲ್ಲಿ ಸ್ಥಾಪಿತವಾಗಿದ್ದು ಅವುಗಳು ಹುಟ್ಟಿಕೊಂಡಿದ್ದ ಅಂದಿನ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾರ್ಗದರ್ಶನಕ್ಕಾಗಿ. ಆದರೆ ತಿಪ್ಪಶೆಟ್ಟಿಮಠ ಮತ್ತು ಸರ್ಪಭೂಷಣ ಮಠಗಳು ಈ ಎಲ್ಲ ಮಠಗಳಿಗಿಂತಲೂ ಅಧಿಕವಾದ ಸಾಹಿತ್ಯ ಸೇವೆಯನ್ನು ಮಾಡಿದವು.

ಒಂದರ್ಥದಲ್ಲಿ ತಿಪ್ಪಶಟ್ಟಿಮಠ ಮತ್ತು ಸರ್ಪಭೂಷಣ ಮಠಗಳಿಗೆ ಗುರು-ಶಿಷ್ಯ ಬಾಂಧವ್ಯವನ್ನು ಹೇಳಬಹುದು. ಏಕೆಂದರೆ ತಿಪ್ಪಶೆಟ್ಟಿ ಮಠಕ್ಕೆ ಗುರುಗಳಾಗಿ ಬಂದ ಶ್ರೀ ಗುರುಸಿದ್ಧ ಸ್ವಾಮಿಗಳು ಸರ್ಪಭೂಷಣರನ್ನು ರೂಪಿಸಿದ ಮಹಾಶಿಲ್ಪಿಗಳು. ಆದ್ದರಿಂದ ಈ ಎರಡು ಮಠಗಳು ಒಂದು ರೀತಿಯಲ್ಲಿ ಗುರುಶಿಷ್ಯರಂತಿದ್ದು ಗುರುಸಿದ್ಧಸ್ವಾಮಿಗಳ ವ್ಯಕ್ತಿತ್ವದಂತೆಯೇ ಸರ್ಪಭೂಷಣರ ವ್ಯಕ್ತಿತ್ವವೂ ಕೂಡ ಸಾಹಿತ್ಯ ಲೋಕದಲ್ಲಿಯೂ, ಪ್ರಮುಖವಾಗಿದೆ. ಗುರುಸಿದ್ಧರ ಶಿಷ್ಯರಾದರೂ ಸಪ್ಪಣ್ಣನವರು ಸೃಜನ ಪ್ರತಿಭೆಯಲ್ಲಿ ಗುರುಗಳನ್ನು ಮೀರಿಸಿದವರು. ಆದ್ದರಿಂದ ಸರ್ಪಭೂಷಣ ಶಿವಯೋಗಿಗಳನ್ನು ಕುರಿತು ಯೋಚಿಸುವಾಗ ಅವರು ಮಠದ ಅಧ್ಯಕ್ಷರಾದ ಧರ್ಮಗುರುಗಳಾಗಿ ಹೇಗೊ ಹಾಗೆಯೇ ಅಥವಾ ಅದಕ್ಕಿಂತಲೂ ಮಿಗಿಲಾಗಿ ಸಾಹಿತ್ಯ ಸೇವೆಯನ್ನು ಮಾಡಿದ ಶಿವಯೋಗಿಗಳಾಗಿ ನಮ್ಮ ಗಮನವನ್ನು ಸೆಳೆಯುತ್ತಾರೆ. ಎಡೆಯೂರ ಸಿದ್ಧಲಿಂಗ ಯತಿಗಳಂತೆ ಷಡಕ್ಷರ ದೇವನಂತೆ ಮಠಾಧಿಪತಿಗಳಾಗಿಯೂ ಸಾಹಿತ್ಯ ಸೇವೆಯಲ್ಲಿ ಮುಂದಾದವರು.

 ಸಪ್ಪಣ್ಣನವರು ಹುಟ್ಟಿದ್ದು ೧೭೯೫ರಲ್ಲಿ. ಲಿಂಗೈಕ್ಯರಾದದ್ದು ೧೮೩೯ರಲ್ಲಿ. ಕೇವಲ ೪೫ ವರ್ಷಗಳಷ್ಟು ಕಾಲ ಬದುಕಿದ್ದ ಸಪ್ಪಣ್ಣನವರು ಬಾಣಾವರದಿಂದ ಬಂದು ಬೆಂಗಳೂರಿನಲ್ಲಿ ನೆಲಸಿದ್ಧ ಮಲ್ಲಿಕಾರ್ಜುನಪ್ಪನವರ ಆರು ಮಕ್ಕಳಲ್ಲಿ ಒಬ್ಬರು. ಇವರ ತಾಯಿ ಚೆನ್ನಮ್ಮ,  ಸಪ್ಪಣ್ಣನವರನ್ನು ಸಪ್ಪಣ್ಣನವರು, ಸಪ್ಪಣ್ಣಪ್ಪನವರು, ಸಪ್ಪಣ್ಣಸ್ವಾಮಿಗಳು, ಸಪ್ಪಣ್ಣಾರ್ಯರು, ಸಪ್ಪಯ್ಯನವರು, ಸರ್ಪಭೂಷಣರು, ಸರ್ಪಭೂಷಣ ಶಿವಯೋಗಿಗಳು ಎಂದೆಲ್ಲ ವ್ಯವಹರಿಸುವುದುಂಟು.

 ಇಷ್ಟು ನಮಗೆ ಸಪ್ಪಣ್ಣನವರು ಹತ್ತಿರದವರಾದರು ಅವರ ಬಾಲ್ಯ, ವಿದ್ಯಾಭ್ಯಾಸಗಳ ಬಗೆಗೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಒಂದನೆಯದಾಗಿ ಸಪ್ಪಣ್ಣನವರು ಬಾಲ್ಯದಲ್ಲಿ ಅತ್ಯಂತ ಬುದ್ಧಿವಂತರೂ ತುಂಟರೂ ಆಗಿದ್ದರು ಎಂದು ಈ ವಿಷಯದಲ್ಲಿ ಶಿವಮೂರ್ತಿ ಶಾಸ್ತ್ರಿಗಳು ಸಪ್ಪಣ್ಣನವರು ಐದು ವರ್ಷದವರಾಗಿದ್ದಾಗ ಅವರ ತಂದೆ-ತಾಯಿಗಳು ಶ್ರೀಗುರುಸಿದ್ದ  ಸ್ವಾಮಿಗಳನ್ನು ತಮ್ಮ ಮಗನಿಗೆ ಬುದ್ಧಿ ಹೇಳಬೇಕೆಂದು ಪ್ರಾರ್ಥಿಸಿಕೊಂಡರೆಂದೂ ಗುರುಸಿದ್ಧಸ್ವಾಮಿಗಳು ಹಾಗೆ ಸಪ್ಪಣ್ಣನವರನ್ನು ಅಕ್ಕರೆಯಿಂದ ಮಾತಾಡಿಸಿದಾಗ ಅವರೇ ಪಾಠ ಹೇಳುವುದಾದರೆ ಆಗಲಿ ಎಂದರೆಂದೂ ಹೇಳುತ್ತಾರೆ  ಅದರಂತೆ ಸಪ್ಪಣ್ಣ ಗುರುಸಿದ್ಧ ಸ್ವಾಮಿಗಳ ಮಠದಲ್ಲಿ ಉಳಿದು  ೨೨ ವರ್ಷಗಳವರೆಗೆ ಶಿಕ್ಷಣ ಪಡೆದು ವೇದ, ಆಗಮ, ತರ್ಕ, ವ್ಯಾಕರಣ, ಛಂದಸ್ಸು, ಸಂಗೀತ ಹಾಗೂ ಕನ್ನಡ ಸಂಸ್ಕೃತ ಸಾಹಿತ್ಯಗಳ ಸಾರವನ್ನೆಲ್ಲ ಹೀರಿ ಗುರುಗಳ ಮೆಚ್ಚಿಗೆಗೆ ಪಾತ್ರರಾದರೆನ್ನುತ್ತಾರೆ. ಆದರೆ ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು ಈ ಘಟನೆಗೆ ಕಾರಣವಾದ ಸಪ್ಪಣ್ಣನ ಶಿಕ್ಷಣದ ಬಗ್ಗೆ ಮಾತಾಪಿತೃಗಳು ೬-೭ ವರ್ಷದವರೆಗಿದ್ದಾಗ ಗುರುಗಳಲ್ಲಿ ಪ್ರಸ್ಥಾಪಿಸಿದರೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ಅವರು ಸಪ್ಪಣ್ಣನವರು ಮನೆಯಲ್ಲಿದ್ದೇ ಮಠಕ್ಕೆ ಹೋಗಿ ಕಲಿಯುತ್ತಿದ್ದರೆಂದೂ ಬರುಬರುತ್ತ ಮಠದಲ್ಲಿಯೇ ಹೆಚ್ಚು ಕಾಲ  ಕಳೆಯಲಾರಂಭಿಸಿದರೆಂದೂ ಸೂಚಿಸುತ್ತಾರೆ.

ಮುಂದೆ ಸಪ್ಪಣ್ಣನವರು ವಿರಕ್ತಿಯನ್ನು ಸ್ವೀಕರಿಸಿದ ಬಗೆಗೂ ಈ ಇಬ್ಬರ ಹೇಳಿಕೆಗಳಲ್ಲೂ ಸ್ವಲ್ಪ ಭೇದವಿದೆ. ಶಾಸ್ತ್ರಿಗಳ ಪ್ರಕಾರ ಸಪ್ಪಣ್ಣನವರಿಗೆ ಯೌವನೋದಯ ವಾಗುತ್ತಿದ್ದಂತೆ ಅವರ ಮಾತಾ ಪಿತೃಗಳೇ ಅಲ್ಲದೆ ಬಂಧುಗಳು ಕೂಡ ಮದುವೆ ಮಾಡಿ ಗೃಹಸ್ಥಾಶ್ರಮಕ್ಕೆ ಸೇರಿಸಲು ವಿಶೇಷ ಪ್ರಯತ್ನ ಮಾಡಿದರೆಂದೂ ಸಪ್ಪಣ್ಣನವರ ಮನಸ್ಸಿನ ಆಶಯಂತೆ ಅವರ ಗುರುಗಳಾದ ಗುರುಸಿದ್ಧಸ್ವಾಮಿಗಳ ಮಧ್ಯೆ ಪ್ರವೇಶಿಸಿದ ಮೇಲೆ ಈ ಪ್ರಯತ್ನ ನಿಂತು ಹೋಯಿತೆಂದು ಹೇಳಲಾಗುತ್ತದೆ, ಮಲ್ಲಾಬಾದಿಯವರು ತಮ್ಮ ಮಠದಲ್ಲಿ ತಮ್ಮಿಂದ ವಿದ್ಯೆ ಕಲಿಯಲು ಬರುತ್ತಿದ್ದ ಸಪ್ಪಣ್ಣನವರ ವ್ಯಕ್ತಿತ್ವ, ಪ್ರತಿಭೆ ಹಾಗೂ ವಿರಕ್ತಾಶ್ರಮದಲ್ಲಿದ್ದ ಒಲವನ್ನು ಕಂಡು ತಾವೇ ಸಪ್ಪಣ್ಣನವರ ತಂದೆಯನ್ನು ನಿಮ್ಮ ಮಗನನ್ನು ನಮ್ಮ ಮಠಕ್ಕೆ ಮರಿಯಾಗಿ ನೀಡಿರೆಂದು ಕೇಳಿಕೊಂಡರೆಂದೂ, ಗುರುಗಳಿಂದಾಗಿಯೇ ಇಂದು ಘನತೆಯ ಸ್ಥಾನಕ್ಕೇರಿರುವ ತಮ್ಮ ಮಗನನ್ನು ಅವರು ಗುರುಗಳ ಇಚ್ಛೆಯಂತೆಯೇ ಮಠಕ್ಕೆ ಮರಿಯಾಗಿ ನೀಡಿದರೆಂದೂ ಮತ್ತೆ ಅವರ ಮಡದಿಯ ಒಪ್ಪಿಗೆಯನ್ನು ಇದಕ್ಕೆ ಪಡೆದಿದ್ದರೆಂದು ತಿಳಿಸುತ್ತಾರೆ.

ವ್ಯಾಪಾರಿಯೊಬ್ಬರ ಮಗನಾದ ಸಪ್ಪಣ್ಣ ಸರ್ಪಭೂಷಣ ಶಿವಯೋಗಿಯಾದದ್ದು ಹೀಗೆ, ಸಪ್ಪಣ್ಣನವರು ಕೇವಲ ಅಧ್ಯಯನ ತಪಸ್ಸು, ಆಚರಣೆ, ಇಷ್ಟರಿಂದಲೇ ಬೆಳೆದವರಲ್ಲ. ಇವುಗಳ ಜೊತೆಗೆ ಗುರುಗಳ ಅನುಮತಿಯನ್ನು ಪಡೆದು ೧೨ ವರುಷಗಳಷ್ಟು ದೀರ್ಘ ಕಾಲ ಕಾಶಿಯನ್ನೊಳಗೊಂಡು ಕರ್ನಾಟಕದ ತೀರ್ಥ ಕ್ಷೇತ್ರಗಳೆಲ್ಲವನ್ನು ಸಂದರ್ಶಿಸಿ ಮಠಗಳಲ್ಲಿ ನಡೆದ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಂಡು ಲೋಕಾನುಭವವನ್ನು ಪಡೆದು ಮಾಗಿದ ವ್ಯಕ್ತಿತ್ವವನ್ನು ಪಡೆದವರಾದರು. ಇಷ್ಟೆಲ್ಲ ತೀರ್ಥ ಯಾತ್ರೆಯನ್ನು ಅವರು ಹಿಂಡನಗಲಿದ ಗಜದಂತೆ ಏಕಾಂಗಿ  ಮಾಡಿದರು. ಆದ್ದರಿಂದಲೇ ಈ ಯಾತ್ರಾವಧಿ ಅವರ ಧ್ಯಾನ, ಇಷ್ಟಲಿಂಗಾನುಸಂಧಾನ ಹಾಗು ಅನುಭಾವಗಳು ಮಾಗಿ ಆಚರಣೆಗೆ ವಿಶೇಷವಾದ ಶಕ್ತಿಯನ್ನು ತುಂಬಿದಂತೆ ತೋರುತ್ತದೆ.

ಯಾತ್ರಾವಧಿಯಲ್ಲಿ ನಡೆದ ಅನೇಕ ಘಟನೆಗಳು ರೂಪುಗೊಳ್ಳುತ್ತಿದ್ದ ಅವರ ಮಹಾನ್ ವ್ಯಕ್ತಿತ್ವದ ಹಲವಾರು ಮುಖಗಳನ್ನು ವ್ಯಂಜಿಸುವಂತೆ ತೋರುತ್ತವೆ.

ಉದಾಹರಣೆಗೆ ಕೆಲವು ಸಂಗತಿಗಳನ್ನು ಗಮನಿಸಬಹುದು. ಸಪ್ಪಣ್ಣನವರು ಚಿತ್ರದುರ್ಗದ ಮಠದಲ್ಲಿ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾಗ ಪರ ಮತೀಯನೊಬ್ಬನು ವಾದದಲ್ಲಿ ಇನ್ನೇನು ಜಯಗಳಿಸುತ್ತಿರುವ ನೆಂದಾಗ ತಾವೇ ವಾದಕ್ಕಿಳಿದು ಪ್ರತಿವಾದಿಯನ್ನು ಗೆದ್ದುದು ಅವರ ಶಾಸ್ತ್ರಜ್ಞಾನ ಖಚಿತತೆ ಹಾಗು ತರ್ಕ ಪರಿಣತಿಗೆ ದ್ಯೋತಕವಾಗಿದೆ. ಹುಬ್ಬಳ್ಳಿಯ ಮಠ ಹಾಗೂ ಅಲ್ಲಮ ಪ್ರಭು ಸಂಪ್ರದಾಯದ ಉರುವ ಕೊಂಡದ ಗವಿ ಮಠಗಳಲ್ಲಿ ನಡೆದ ಶಿವಾನುಭವ ಗೋಷ್ಠಿಗಳಲ್ಲೂ  ಸಪ್ಪಣ್ಣನವರು ವಿದ್ವತ್ತು ಆಚರಣೆ, ಸಂಗೀತ ಮತ್ತು ಸೃಜನಶೀಲ ಪ್ರತಿಭೆ ಇವುಗಳೆಲ್ಲದರಿಂದ ಎಲ್ಲರ ಮೆಚ್ಚುಗೆಗೂ ಗೌರವಕ್ಕೂ ಕಾರಣರಾದದ್ದು ಅವರಲ್ಲಿದ್ದ ವಿನಯದಿಂದ ಎಂಬುದನ್ನು ಮರೆಯಲಾಗದು; ಸಪ್ಪಣ್ಣನವರು ಕ್ರಾಂತಿಕಾರಿಗಳು, ಸುರಪುರ ರಾಜ್ಯದ ಮಂತ್ರಿ ಲಿಂಗಣ್ಣ ತಮ್ಮನ್ನು ಶಿವಪೂಜೆಗೆಂದು ಆಹ್ವಾನಿಸಿದಾಗ ಅದಕ್ಕೆ ಒಪ್ಪಿದ ಸಪ್ಪಣ್ಣನವರು ಸುರಪುರದ  ಹಾದಿಯಲ್ಲಿದ್ದಾಗ ಶಿವಪೂಜಾ ಸಮಯವಾಗಲು ಹತ್ತಿರದಲ್ಲಿದ್ದ ಬಾವಿಯಲ್ಲಿ ಮಿಂದು ಇಷ್ಟ ಲಿಂಗಾನುಸಂಧಾನಕ್ಕೆ ಕುಳಿತ ಶಿವಯೋಗಿ ಇವರು, ಇವರಿಗಾಗಿ. ಕಾದಿದ್ದ ಮಂತ್ರಿ ಇವರು ಊರ ಹೊರಗಿನ ಬಾವಿಯ ಬಳಿಯೇ ಪೂಜಾನಿಷ್ಟರಾಗಿ ಕುಳಿತಿರುವುದನ್ನು ಸುದ್ದಿಗಾರರಿಂದ ತಿಳಿದು ಓಡೋಡಿ ಬಂದು “ಬುದ್ದಿ ಇದು ಹೊಲೆಯರ ಬಾವಿ, ಇಲ್ಲಿಯೇ ನೀವು ಪೂಜೆಗೆ ಕುಳಿತುಕೊಳ್ಳುವಂತೆ ಮಾಡಿದ ಪಾಪಿ ನಾನು, ನನ್ನನ್ನು ಕ್ಷಮಿಸಿ” ಎಂದಾಗ, ಸಪ್ಪಣ್ಣ ದಾಸಿಮಯ್ಯನ ವಚನವನ್ನುದ್ಧರಿಸಿ ಹೊಲೆ ಎಂಬುದು ಹುಟ್ಟಿನಿಂದ ಬರುವ ಜಾತಿಯಲ್ಲ ಎಂದು ವಿಶದಪಡಿಸಿದ ಸಂಪ್ರದಾಯದವರು. ಅಷ್ಟೇ ಅಲ್ಲ ಅವರೊಮ್ಮೆ  ಶಿವಪೂಜೆಗೆ ಹೋಗುವಾಗ ಹೊಸ್ತಿಲಿನ ಹೊರಗೆ ತಮ್ಮ ಪೂರ್ವಾಶ್ರಮದ ಅತ್ತಿಗೆ ರಜಸ್ವಲೆ ಎಂದು ಹಾಗೆ ಕುಳಿತಿರುವುದಾಗಿ ತಿಳಿದಾಗ ಆಕೆಯನ್ನು ಒಳಕ್ಕೆ ಬರಹೇಳು ಪ್ರಕೃತಿ ಸಹಜವಾದುದು ಸೂತಕವಲ್ಲ; ಅಲ್ಲದೆ ನಮ್ಮ ಶರಣರದು ಸೂತಕವಿಲ್ಲದ  ಸಮಾಜ; ಎಂದ ನಿಚ್ಚಳವಾದ ಅರಿವಿನ ಮಹಾನುಭಾವರು ಅವರು. ಅಷ್ಟೆ ಅಲ್ಲ   ಇವರ ಇಷ್ಟಲಿಂಗಾನುಸಂಧಾನದ ದಿವ್ಯಾನುಭವವನ್ನು ಕಂಡ ೭೦೦ ಜನದಷ್ಟು ಅನ್ಯಧರ್ಮಿಯರು. ನಮಗೂ ಇಷ್ಟಲಿಂಗ ದೀಕ್ಷೆಯನ್ನು ನೀಡಿ ಎಂದು ಕೇಳಿದಾಗ ಅವರು ನಿಜವಾಗಿಯೂ ದೀಕ್ಷೆಗರ್ಹರಾಗಿರುವುದನ್ನು ಗಮನಿಸಿ ತಮ್ಮ ಸಮಾಜದ ಅನೇಕರು ಪ್ರತಿಭಟಿಸುತ್ತಿದ್ದರೂ ಅದನ್ನು ಲಕ್ಷಕ್ಕೆ ತಂದುಕೊಳ್ಳದೇ ಅವರಿಗೆಲ್ಲರಿಗೂ ಲಿಂಗದೀಕ್ಷೆ ದೊರಕಲು ಕಾರಣರಾದವರು. ಅವರ ಬದುಕಿನಲ್ಲಿ ಇಂಥ ಅನೇಕ ಮಹತ್ತರ ಘಟನೆಗಳು ನಡೆದದ್ದರಿಂದ ತೋಪಿನ ಮಠದ ಷಡಕ್ಷರ ಶಿವಯೋಗಿಗಳು ಆಚರಣೆ ಎಂದರೆ ಸಪ್ಪಣ್ಣವರ ಆಚರಣೆ ಅಥಣಿಯಪ್ಪಗಳ ಆಚರಣೆ ಎಂದು ಉದ್ಧರಿಸುವ ಮಟ್ಟದ ವ್ಯಕ್ತಿತ್ವ ಸಪ್ಪಣ್ಣನವರದು. ಈ ಕಾರಣದಿಂದಾಗಿಯೇ ಸಪ್ಪಣ್ಣನವರ ಬದುಕನ್ನು ಕುರಿತು ಹಲವಾರು ಪವಾಡಗಳು ಹುಟ್ಟಿಕೊಂಡಿವೆ.

ಸಪ್ಪಣ್ಣನವರು ತೀರ್ಥಯಾತ್ರೆಯನ್ನು ಮುಗಿಸಿ ಬಂದಾಗ ಅವರ ಗುರುಗಳಾದ ಗುರುಸಿದ್ಧ ಸ್ವಾಮಿಗಳಿಗಾದ ಆನಂದ ಅಷ್ಟಿಷ್ಟಲ್ಲ. ಬೆಂಗಳೂರಿಗೆ ಬಂದ ಸ್ವಲ್ಪ ಅವಧಿಯಲ್ಲಿಯೇ ಗುರುಸಿದ್ಧಸ್ವಾಮಿಗಳು ಲಿಂಗೈಕ್ಯರಾಗಲು ಮಠದ ಚರಮೂರ್ತಿಗಳು ಹಾಗೂ ಮಠಕ್ಕೆ ಸಂಬಂಧಿಸಿದ ಅಭಿಮಾನಿ ಭಕ್ತರು ಸಪ್ಪಣ್ಣನವರೇ ಈ ಮಠಕ್ಕೆ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಬೇಕೆಂದು ಒತ್ತಾಯ ಮಾಡಿದಾಗ ಅದಕ್ಕೊಪ್ಪದೆ ಮಠದಲ್ಲಿದ್ದ ಚಿಕ್ಕ ಗುರುಸಿದ್ಧಸ್ವಾಮಿಗಳನ್ನೇ ಮಠಾಧ್ಯಕ್ಷರಾಗುವಂತೆ ಮಾಡಿ, ತಾವು ತಮ್ಮ ಎಲ್ಲ ಸಮಯವನ್ನು ಅಧ್ಯಯನ, ಪ್ರವಚನ ಹಾಗೂ ಕಾವ್ಯ ಸೃಷ್ಟಿಯಲ್ಲಿ ತೊಡಗಿಸಿಕೊಂಡ ವೀರ ಶಿವಯೋಗಿಗಳು,

 ಸಪ್ಪಣ್ಣನವರು ತಾವು ಪಡೆದಿದ್ದ ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕೆಂದು ಸಂಕಲ್ಪ ಮಾಡಿದವರು. ಹೀಗಾಗಿ ಅವರ ಅಪಾರವಾದ ಅಧ್ಯಯನದಿಂದ ಪ್ರಾಪ್ತವಾದ ವಿದ್ವತ್ತು, ಕನ್ನಡ ಸಂಸ್ಕೃತ ಸಾಹಿತ್ಯಗಳ ಸಾರ, ಸಂಗೀತ ಪ್ರೌಢಿಮೆ, ಸಹಜವಾಗಿ ಉಕ್ಕ ತೊಡಗಿದ್ದ ಸೃಜನಶೀಲ ಪ್ರತಿಭೆ ಇವುಗಳಿಂದಾಗಿ ಸಪ್ಪಣ್ಣನವರ ಪ್ರವಚನಗಳಿಗೆ ಹಾಗು ವಾಗ್ಮಿತೆಗೆ ಒಂದು ಹೊಸ ಆಯಾಮ ಪ್ರಾಪ್ತವಾಗಿತ್ತು. ಕೇಳುವವರನ್ನು ಮಂತ್ರ ಮುಗ್ಧರನ್ನಾಗಿ ಮಾಡುವ ಶಕ್ತಿ ಅವರ ಮಾತಿಗಿತ್ತು. ಲೋಕದ ಜನರನ್ನು ಕುರಿತಾದ ಅಂತಃಕರಣದಿಂದಾಗಿ ಅವರ ನುಡಿಗಳಲ್ಲಿ ಆತ್ಮೀಯತೆ ತುಂಬಿ ತುಳುಕುತ್ತಿತ್ತು.  ವಿದ್ವಾಂಸರಾದರೂ ಅವರ ಸರಳತೆ ಹಾಗೂ ವಿನಯಶೀಲತೆ ಅವರ ವ್ಯಕ್ತಿತ್ವಕ್ಕೆ ಅಯಸ್ಕಾಂತ ಶಕ್ತಿಯನ್ನು ನೀಡಿತ್ತು.  ಇದರಿಂದಾಗಿ ತಮ್ಮ ಗುರುಗಳು ಆಶೆಪಟ್ಟಿದ್ದಂತೆ ತಿಪ್ಪಶಟ್ಟಿಮಠಕ್ಕೆ ಇವರು ಅಧ್ಯಕ್ಷ ರಾಗದಿದ್ದರೂ ಗುರುಗಳ ಸಂಕಲ್ಪ ಮಾತ್ರ ಹುಸಿಯಾಗಲಿಲ್ಲ.  ತಿಪ್ಪಶೆಟ್ಟಿ ಮಠದ ನೆರವು, ತಮ್ಮ ಪ್ರವಚನಕ್ಕೆ ಹಾಗೂ ಮಾರ್ಗದರ್ಶನಕ್ಕೆ ಬಂದು ತಮ್ಮ  ಅಭಿಮಾನಿಗಳೆನಿಸಿದ್ದ ಭಕ್ತರು ನೀಡಿದ ಕಾಣಿಕೆಗಳು ಮತ್ತೆ ಮೈಸೂರರಸರಲ್ಲಿ ಉನ್ನತಾಧಿಕಾರದಲ್ಲಿದ್ದ ನಾಯಕರು ಪುಕ್ಕಟೆಯಾಗಿ ಸರ್ಕಾರದಿಂದ ಕೊಡಿಸಿದ ನಿವೇಶನ ಇವುಗಳ ನೆರವಿನಿಂದ ಸಪ್ಪಣ್ಣನವರು ಸರ್ಪಭೂಷಣ ಮಠವನ್ನು ಕಟ್ಟಲು ಒಪ್ಪಬೇಕಾಯಿತು. ಮತ್ತೆ ಆ ಮಠ ರೂಪಗೊಂಡದ್ದು ಅವರ ಶಿಷ್ಯರೂ ಹಾಗೂ ಅವರ ಉತ್ತರಾಧಿಕಾರಿಗಳೂ ಆದ  ಫಾಲಲೋಚನ ಸ್ವಾಮಿಗಳಿಂದ, ಫಾಲಲೋಚನ ಸ್ವಾಮಿಗಳಂತು ಮಳೆ, ಗಾಳಿ, ಬಿಸಿಲು ಎನ್ನದೆ ಮಠದ ಮತ್ತು ಮಠದ ಆವರಣದಲ್ಲಿರುವ ಓಂಕಾರೇಶ್ವರ ದೇವಾಲಯದ ಗೋಪುರಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಟ್ಟರು. ಒಂದು ಮಧ್ಯಾಹ್ನ ಸಪ್ಪಣ್ಣನವರು ಇಲ್ಲೇನು ನಡೆಯುತ್ತಿದೆ ಎಂದು ನೋಡಿದರೆ, ಉರಿಬಿಸಿಲಿನಲ್ಲಿ ಫಾಲಲೋಚನ ಸ್ವಾಮಿಗಳು ಇನ್ನೇನು ಮುಗಿಯಲಿದ್ದ ಓಂಕಾರೇಶ್ವರ ದೇವಾಲಯದ ಗೋಪುರದ ಉಸ್ತುವಾರಿ ನೋಡುತ್ತಿದ್ದಾರೆ, ಇನ್ನೊಂದು ವಾರದಲ್ಲಿ ಮಠದ ಕಳಸವೇ ಕಳಚಿ ಬೀಳಲಿರುವಾಗ ಈ ಗೋಪುರಕ್ಕೇಕೆ ? ಇಷ್ಟು ಕಷ್ಟ ಪಡುತ್ತಿದ್ದೀರಿ ? ಎಂದು ತಮಗರಿಯದೆ ನುಡಿದುಬಿಟ್ಟರು. ಸಪ್ಪಣ್ಣನವರು ತಮ್ಮ ಸಾವನ್ನು ಮುಂಗಂಡ ಶಿವಯೋಗಿಗಳೇ ಇರಬೇಕು. ಇದಾದ ಒಂದು ವಾರದಲ್ಲಿ ಶಿವಪೂಜೆಗೆ ಕುಳಿತ ಸಪ್ಪಣ್ಣನವರು ಇಷ್ಟಲಿಂಗಾನುಸಂಧಾನಕ್ಕೆ ಕುಳಿತು ಶಿವಯೋಗ ವನ್ನು ಸಾಧಿಸಿದರು. ಮತ್ತೆ ಮೇಲೇಳಲೇ ಇಲ್ಲ. ಅಂಥ ಘನ ಮಹಿಮರು ಸಪ್ಪಣ್ಣನವರು.

 ಸಪ್ಪಣ್ಣನವರು ಬೇರಾವ ಸಾಹಿತ್ಯ ಕೃತಿಗಳನ್ನು ರಚಿಸದಿದ್ದರೂ ಅವರ ವ್ಯಕ್ತಿತ್ವದ ಮಹಿಮೆಯಿಂದಾಗಿಯೂ ನಡೆಸಿದ ಪ್ರವಚನಗಳು ಹಾಗೂ ಜನಕ್ಕೆ ನೀಡಿದ ಮಾರ್ಗದರ್ಶನಗಳಿಂದಾಗಿಯೂ ಜನರ ಹೃದಯದಲ್ಲಿ ನೆಲಸಿದ  ಶಿವಯೋಗಿಗಳಾಗಿದ್ದರು. ಅವರು ಕನ್ನಡ-ಸಂಸ್ಕೃತ ಎರಡರಲ್ಲಿಯೂ ಪ್ರತಿಭಾ ಸಂಪನ್ನರೂ, ಕಾವ್ಯ ರಚನಾ ಸಮರ್ಥರೂ ಆಗಿದ್ದರು. ಎರಡು ಸಂಸ್ಕೃತ ಕೃತಿಗಳನ್ನು, ಒಂದು ಕನ್ನಡ ಕೃತಿಯನ್ನು ನೀಡಿದ್ದಾರೆ.

“ಭುಜಂಗಮಾಲಾ ಶಿವಸಂಕೀರ್ತನಂ” ಎಂಬುದು ಅವರ ಮೊದಲನೆಯ ಸಂಸ್ಕೃತ ಕಾವ್ಯಕೃತಿ. ೩೧ ವೃತ್ತಗಳನ್ನು ಒಳಗೊಂಡ ಈ ಕೃತಿಯನ್ನು ಇವರು ಪಂಚ ಚಾಮರ ವೃತ್ತದಲ್ಲಿ ರಚಿಸಿದ್ದಾರೆ. ಪಂಚ ಚಾಮರ ವೃತ್ತ ಸಂಸ್ಕೃತದಲ್ಲಿ ಅದರ  ನಾದಲೋಲತೆಗಾಗಿ ತುಂಬ ಖ್ಯಾತವಾಗಿರುವ ವೃತ್ತ, ರಾವಣ ನಿಂದ ರಚಿತವಾಯಿತೆನ್ನಲಾದ ಶಿವತಾಂಡವ ಸ್ತೋತ್ರವು  ಇದೇ ಛಂದಸ್ಸಿನದೇ. ‘ಭುಜಂಗಮಾಲಾ ಶಿವಸಂಕೀರ್ತನಂʼಕೃತಿಯನ್ನು ಸಪ್ಪಣ್ಣನವರು,  ಇಷ್ಟಲಿಂಗಾನುಸಂಧಾನ ಸಮಯದಲ್ಲಿ ಹಾಡಿರಬೇಕು. ಅಲ್ಲದೆ ಇದು ಅವರ ಚೊಚ್ಚಲು ಕೃತಿಯೂ ಆಗಿರಬೇಕು. ಏಕೆಂದರೆ ಈ ಕೃತಿಯಲ್ಲೆಲ್ಲೂ ತಮ್ಮ ಗುರುಗಳಾದ ಗುರುಸಿದ್ಧ ಸ್ವಾಮಿಗಳ ಸ್ಮರಣೆ ಇಲ್ಲ. ಗ್ರಂಥಾರಂಭದಲ್ಲಿ ಬರುವ ಶ್ರೀ ಗುರುಚರಣಂ ನಮಾಮಿ ಎಂಬಲ್ಲಿ ತಮ್ಮ ಗುರುಗಳನ್ನು ಕವಿ ಸೂಚ್ಯವಾಗಿ ಸ್ಮರಿಸಿರುವಂತೆ ತೋರುತ್ತದೆ. ಈ ಕೃತಿ ದೊರೆತದ್ದು ಒಂದು ಆಕಸ್ಮಿಕವೇ. ಬಹುಶಃ ಶಿವಪೂಜಾ ಸಮಯದಲ್ಲಿ ತಮಗೆ ತಾವೇ ಹಾಡಿಕೊಳ್ಳುತ್ತಿದ್ದ ಈ ಸಂಕೀರ್ತನೆಯ ಹಾಡುಗಳನ್ನು   ಕೇಳಿ ಅವರ ಸಮೀಪದ ಭಕ್ತರೊಬ್ಬರಾದ ಲಿಂ|| ಕಂಬಿ ಸಿದ್ದರಾಮಣ್ಣನವರು ಕಾಗದದ ಪ್ರತಿಯೊಂದರಲ್ಲಿ ಈ ಪದ್ಯಗಳನ್ನು ನೆನಪಿನಿಂದ ಬರೆದಿಟ್ಟುಕೊಂಡಿದ್ದರು. ಅದನ್ನು ಅವರು ವಿದ್ವಾನ್ ಬಸವರಾಜಯ್ಯನವರಿಗೆ ಪ್ರಕಟಣೆಗೆಂದು ನೀಡಿ ಬೇರಾವ ಪ್ರತಿಗಳು ಸಿಕ್ಕದ ಅದೊಂದೇ ಪ್ರತಿಯ ನೆರವಿನಿಂದ ೪೬ ವರ್ಷಗಳಾದ ಮೇಲೆ ಅಂದರೆ ೧೯೮೭ರಲ್ಲಿ ಇದನ್ನು ಪ್ರಕಟಿಸಲಾಯಿತು. ಈ ಕಾರಣದಿಂದ ಈ ಕೃತಿಯಲ್ಲಿ ಹಲವಾರು ಭಾಷಾದೋಷಗಳು ಉಳಿದಿವೆ. ಭುಜಂಗಮಾಲಾ ಶಿವಸಂಕೀರ್ತನವು ಶಿವಯೋಗಿಗಳ ಶಿವಸ್ತೋತ್ರವಾಗಿದ್ದು  ನಾದಲೋಲತೆಯಿಂದ ಕೂಡಿ ಭಕ್ತಿಯಿಂದ ಹಾಡಿಕೊಳ್ಳಲು ಅನುಕೂಲಕರವಾಗಿದೆ. ಈ ಕೃತಿಯಲ್ಲಿ ನಾದಲೋಲತೆ ಮತ್ತು ಭಕ್ತಿ  ಇದ್ದಂತೆ ಕಾವ್ಯದ ಗುಣ ಕಡಿಮೆಯಾಗಿದೆ.

 ಅವರ ಎರಡನೆಯ ಕೃತಿ ‘ಜ್ಞಾನಶತಕಂ’ ಇದು ಸಂಸ್ಕೃತ ಕೃತಿ, ಶಿವಯೋಗಿಗಳೇ ಸೂಚಿಸುವಂತೆ ಪ್ರಸ್ಥಾನತ್ರಯಗಳ ಸಮಗ್ರ ಸಾರವನ್ನು ಒಳಗೊಂಡಿದೆ. ಈ ಕೃತಿಯ ಮೊದಲನೆಯ ವೃತ್ತ ತಮ್ಮ ಗುರುಗಳಾದ ಗುರುಸಿದ್ಧರ ಧ್ಯಾನದಲ್ಲಿದೆ.

ಗುರು ಸಿದ್ಧ ಗುರುಮಿದಾನೀಂ

ಕಲಯೇ ನಮದುದಯ ವಿಂಧ್ಯ ಘಟಯೋನಿಮ್

ವೃತಕೃತಕರಣಗ್ಲಾನಿಂ

ಚುಳುಕಿತ ವೇದಾಂತ ನಿಮ್ಮಘ್ನಾನಿಮ್

ಈ ವೃತ್ತದಲ್ಲಿ ತಮ್ಮ ಗುರುಗಳನ್ನು ಧ್ಯಾನಿಸಿರುವುದಷ್ಟೇ ; ಅವರ ವೇದಾಂತ ಜ್ಞಾನಮೇರುತ್ವವನ್ನೂ ಧ್ವನಿಸಿದ್ದಾರೆ. ಎರಡು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಗ್ರಂಥದಾಶಯವನ್ನು ಅವರೇ ಸೂಚಿಸಿರುವುದು ಹೀಗೆ :

ಪ್ರಸ್ಥಾನತ್ರಯಕಾಂತಾರ ಪ್ರವೇಶಾನುಷ್ಣಚೇತಸಃ

ಮುಮುಕ್ಷೋಸುಖಮುಕ್ತ್ಯರ್ಥಮಿದಂ ಶತಕಮುಚ್ಯತೇ.

(ಪ್ರಸ್ಥಾನತ್ರಯ ಅರಣ್ಯದಲ್ಲಿ ಹೋಗಲು ಮಂದ ಬುದ್ದಿ ಯುಳ್ಳ ಮೋಕ್ಷಗಾಮಿಗೆ ಸಂಸಾರದಿಂದ ಸುಲಭವಾಗಿ   ಬಿಡುಗಡೆ ದೊರೆಯುವುದಕ್ಕಾಗಿ ಈ ಜ್ಞಾನ ಶತಕವು ಹೇಳಲ್ಪಟ್ಟಿದೆ.)

 ಈ ಗ್ರಂಥ ರಚನೆಯ ಉದ್ದೇಶ ಮುಮುಕ್ಷುಸುಖಾರ್ಥವಾಗಿ ಪ್ರಸ್ಥಾನತ್ರಯ ಸಾರವನ್ನು ನಿರೂಪಿಸುವುದಾದರೂ ಸಪ್ಪಣ್ಣನವರು ಕವಿಗಳೂ ಆದ್ದರಿಂದ ಅಲ್ಲಲ್ಲಿ ಕವಿತೆಯ ಮಿಂಚೂ ಆಡುತ್ತದೆ.

 ಅವರ ಪ್ರಧಾನವಾದ ಸಾಹಿತ್ಯ ಕೃತಿಯೆಂದರೆ ಕೈವಲ್ಯ ಕಲ್ಪವಲ್ಲರಿಯೇ.

 ಸಪ್ಪಣ್ಣನವರೇ ತಮ್ಮ ಈ ಕೃತಿಯನ್ನು ನಿಜಗುಣ ಕೈವಲ್ಯ ಪದ್ಧತಿ ಕೃತಿಗೆ ಹಬ್ಬಿಸಿದ ಕಲ್ಪವಲ್ಲರಿ ಎಂದು ಕರೆದುಕೊಂಡರೆಂದು ಹೇಳಲಾಗಿದೆ. ನಿಜವಾಗಿಯೂ ಇದು ಕಲ್ಪವೃಕ್ಷದ ಬಳ್ಳಿಯೇ. ಇದನ್ನವರು ಬರೆದದ್ದು, ಜನರಿಗೆ ತಿಳಿಯಲೆಂದು ಕನ್ನಡದಲ್ಲಿ. ಇಲ್ಲಿಯ ಹಾಡುಗಳು ಮಠಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಭಾಗಗಳ ಜನರ ನಾಲಗೆಯಲ್ಲಿ ನರ್ತಿಸುತ್ತಿರುವುದಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಅನೇಕ ಕಡೆ ಇವುಗಳ ಹಸ್ತಪ್ರತಿಗಳು ದೊರೆಯುವುದು ಇದರ ಜನಪ್ರಿಯತೆಗೆ ದ್ಯೋತವಾಗಿದೆ. ಈ ಹಾಡುಗಳ ಅಂಕಿತ ಗುರುಸಿದ್ದ’ ಎಂಬುದಾಗಿದೆ.

ಕೈವಲ್ಯಕಲ್ಪವಲ್ಲರಿ’ಯು ನಿಜಗುಣರ ಕೈವಲ್ಯ ಪದ್ಧತಿ ಯಂತೆಯೇ ಶಿವಕಾರುಣ್ಯ, ಪ್ರಾರ್ಥನಾ ಸ್ಥಲ, ಜೀವ ಸಂಶೋಧನ ಸ್ಥಲ, ನೀತಿಕ್ರಿಯಾಚರ್ಯ ಪ್ರತಿಪಾದನಸ್ಥಲ ಹಾಗೂ ಜ್ಞಾನ ಪ್ರತಿಪಾದನಗಳೆಂಬ ಐದು  ಸ್ಥಲಗಳನ್ನೊಳಗೊಂಡಿದೆ. ಪ್ರತಿಯೊಂದು ಸ್ಥಲದಲ್ಲಿ ಕ್ರಮವಾಗಿ ೨೬, ೨೧, ೨೫, ೨೯ ಮತ್ತು ೭೬ ಹಾಡುಗಳನ್ನೊಳಗೊಂಡಿದೆ. ಸಪ್ಪಣ್ಣನವರ ವಚನಗಳು, ಸ್ವರ ವಚನಗಳು, ಅನುಭವಸಾರ, ಅಧ್ಯಾತ್ಮಿಕ ಸುಖಪ್ರಬೋಧ ಪ್ರಕರಣ ಎಂದೆಲ್ಲ ಕರೆಯುವ ಈ ಹಾಡುಗಳ ಕೃತಿ ಈಗ ಕೈವಲ್ಯ ಕಲ್ಪವಲ್ಲರಿಯೆಂದೇ ಪ್ರಸಿದ್ಧವಾಗಿದೆ. ಪ್ರತಿಯೊಂದು ಹಾಡಿಗೂ ರಾಗ ಸಂಯೋಜನೆಯನ್ನೂ ಶಿವಯೋಗಿಗಳು ಯೋಚಿಸಿ ಸಾಹಿತ್ಯ ಸಂಗೀತ ಕ್ಷೇತ್ರಗಳೆರಡಕ್ಕೂ ಅಪೂರ್ವಸೇವೆ ಸಲ್ಲಿಸಿದ್ದಾರೆ, ಹಾಡುಗಳ ಜನಪ್ರಿಯತೆ ಎಷ್ಟು ಪ್ರಖರವೆಂದರೆ “ಅನುಭವದಡಿಗೆಯ ಮಾಡಿ’ ಎಂಬ ಹಾಡು ಅಂಕಿತ ಬದಲಾವಣೆ ಮಾತ್ರದಿಂದ ಪುರಂದರರ ಹಾಡುಗಳಲ್ಲಿ ಸೇರಿಹೋಗಿದೆ.

ಜನಪದ ಗೀತೆಗಳ ಒಗಟು, ವಚನಗಳ ಬೆಡಗು, ತತ್ವ ಪದಗಳ ಅನುಭಾವ ಇವುಗಳು ಮೇಲೈಸಿರುವ ಸಪ್ಪಣ್ಣನವರ ಪ್ರತಿಭೆ ಇಲ್ಲಿ ಉಪಮೆ, ರೂಪಕ ದೃಷ್ಟಾಂತ ಸಂಕೇತಗಳನ್ನು ಬಳಸಿಕೊಂಡಿದೆ. ವಚನ ಹಾಗೂ ಪದಗಳಿಂದಲೂ ಪ್ರಭಾವಿತವಾಗಿದೆ. ಕಾಮಾಗ್ನಿ, ಅಶ್ರುಸೃಷ್ಟಿ ಪರಿಭವಾಂಭೋನಿಯಂಥ ರೂಪಕಗಳು; ನೆರೆದ ಸಂತೆಯ ಪರಿಯು, ನೀರ-ಗುರುಳೆಯ ತೆರೆದಿ, ಎಣ್ಣೆಯಿರುವನಕ ದೀವಿಗೆಯುರಿಯುವವೋಲು, ವ್ರಣಕೆ ಮುಸುರುವ ನೊಣಗಳಂತೆ ಪಸಿಯ ಕಾಯ್ ಲವಣವುಂಬಂತೆ, ಕೆಸರಿನೊಳಗಾಡುತಿಹ ಕುಂಬಾರ ಹುಳುವಿನಂತೆ, ಒಂದು ಮರದಖಿಳಪಕ್ಷಿಗಳು ಸಂಜೆಯೊಳಗೊಂದಿ ಬೆಳಗಿನೊಳಗಲಿ ಹೋಗುವಂತೆ, ಎಳೆಯ ಶಿಶುವಿನ ತಲೆಯ ಮೇಲೆ ಮಂದರಗಿರಿಯನಿಳುಹಿದಂತೆ, ನಾನಾಗೊವುಗಳ ಹಾಲೊಂದೆ ರೂಪಾದಂತೆ, ಕುರಿಯ ಹೊತ್ತದನು ಮರೆದು ಸುತ್ತಲರಸುವ ಕುರುಬನಂದದೂಳು, ಕುರುಡರಾನೆಯ ಮುಟ್ಟಿ ಮನಕೆ ಬಂದಂದದಿಂದರಿವಂತೆ, ಎಳೆಗರುವನಗಲ್ದು ಮೇಯಲು ಪೋದ ಹಸುವು ತನ್ನೊಳಗದನೆ ನೆನೆದು ಮೇವನೆ ಮರವಂತ- ಇಂಥ ಉಪಮೆಗಳಿವೆ. ದೃಷ್ಟಾಂತಗಳಂತೂ  ವಿಪುಲ. ಕಾಯಕಾಂತಾರವ ಹೊಕ್ಕು ಬೇಂಟೆಯನಾಡಿ, ಅನುಭವದಡಿಗೆಯ ಮಾಡಿ, ಮನವೆಂಬ ಮರ್ಕಟ ಇಂಥ ಹಾಡುಗಳು ಶಕ್ತಿಯುತ ವಾಗುವುದೇ ಕಣ್ಣಿಗೆ ಕಟ್ಟುವಂತೆ ಮಾಡುವ ಆ ಚಿತ್ರಗಳಿಂದ. ತೇರು ಸಾಗಿತು ಹಾಡಂತು ನಮ್ಮ ಕಣ್ಣ ಮುಂದೆಯೇ ದೇಹವೆಂಬ ತೇರು ಹರಿದಾಡುವ ವಿಸ್ಮಯಾನುಭವವನ್ನು ಮೂಡಿಸುತ್ತದೆ. ಸಪ್ಪಣ್ಣನವರದನ್ನು ಆರಂಭಿಸಿದ ರೀತಿ ಅತ್ಯಂತ ಆಕರ್ಷಕವಾದದ್ದು;ಮುಕ್ತಿ ಕನ್ಯೆಯರನ್ನೇ ತೇರು ಸಾಗಿತು  ನೋಡಬನ್ನಿರೇ’ ಎಂದು ಕರೆಯುವ ಆತ್ಮೀಯತೆಯ ದನಿ ಇಲ್ಲಿಯ ಅನುಭಾವವನ್ನು ಹೃದಯದಾಳಕ್ಕೆ ಇಳಿಸಿಬಿಡುತ್ತದೆ.

 ತತ್ವ ವಿಚಾರಕ್ಕೆ ಬರುತ್ತಿದ್ದಂತೆ ಸಪ್ಪಣ್ಣನವರ ವಾಣಿಗೆ ಉತ್ಸಾಹವೇರುತ್ತದೆ. ಜೀವನಾನುಭವ ಹಾಗೂ ಯೌಗಿಕಾನು ಭವಗಳು ಮೇಲೈಸಿ ಕಾವ್ಯ ಗೇಯತೆಗಳು ಒಂದರೊಳಗೊಂದು ಜೋಡಿಸಿ ನಡೆಯುತ್ತವೆ,

ತತ್ವ ನಿರೂಪಣೆ ಮಾಡುವಾಗ ಸಪ್ಪಣ್ಣನವರು ಬಳಸಿಕೊಳ್ಳುವ ತಂತ್ರ ಸರಳವೂ ನೇರವೂ ಚಿತ್ರಮಯವೂ ಆದದ್ದು. ಇಲ್ಲಿ ಕಾಯವೇ ಕಾಂತಾರವಾಗುತ್ತದೆ. ಅಲ್ಲಿ ತುಡುಗು ಮಾಡುವ ಕೋಣ ಹುಲಿ ಕರಡಿ ಆನೆಗಳು ಮತ್ತೇನೂ ಅಲ್ಲ, ಮನಸ್ಸನ್ನು ಕಾಡುವ ದುರ್ಗುಣಗಳು. ಒಂದೊಂದು ದುರ್ಗುಣಕ್ಕೊಂದು ಪ್ರಾಣಿರೂಪವನ್ನಿತ್ತು ಜ್ಞಾನದ ಬಾಣವನ್ನು ಸದ್ಭಕ್ತಿಯೆಂಬ ಬಿಲ್ಲಿಗೆ ಹೂಡಿ ಗೆಲ್ಲಬೇಕೆಂದು ನಿರೂಪಿಸುತ್ತದೆ. ಒಂದರ್ಥದಲ್ಲಿ  ಅರೂಪವೆನ್ನಬಹುದಾದ ತತ್ತ್ವವನ್ನು ಕಣ್ಣುಮುಂದೆ ಚಿತ್ರಮಯವಾಗುವಂತೆ  ಮಾಡುವ ಈ ರೀತಿಯ ಈ ಹಾಡುಗಳನ್ನು ಹೃದ್ಯವಾಗುವಂತೆ ಯೂ ಜನಪ್ರಿಯವಾಗುವಂತೆಯೂ ಮಾಡಿರುವದು .ಪರತತ್ತ್ವ ಸಾಧನೆಯನ್ನಿವರು ರೂಪಿಸುವ ರೀತಿ ಅನ್ಯಾದೃಶವಾದ್ದು. ಹೃದಯವೆಂಬ ಹೊಲದಲ್ಲಿ ಪರತತ್ತ್ವದ ಬೆಳೆ ಬೆಳೆಯಬೇಕೆನ್ನುತ್ತಾರೆ, ಇಲ್ಲಿಯ ಹೂಲವನ್ನುಳುವ ಎತ್ತುಗಳು ಶಮೆದಮೆಗಳು, ಸಮತೆಯೆಂಬ ಭಾವವೇ ಗುರುವಿನುಪದೇಶವೆಂಬ ಬೀಜ ಬೆಳೆಯಲು ಹಾಕುವ ಗೊಬ್ಬರ. ಇಷ್ಟಾದರೆ ಸಾಲದು ಮಳೆಯ ನೆರವು ಬೇಕೆಂದು ನೆನಪಿಸಿ ದೈವ ಕೃಪೆಯ ಅಗತ್ಯದತ್ತ ನಮ್ಮ ಗಮನ ಸಳೆದು ದುರಿತ ದುರ್ಗುಣಗಳ ಕಳೆಯನ್ನು ಕಿತ್ತರೆ  ಪ್ರಾಪ್ತವಾಗುವ ಬೆಳೆಯೇ ಸ್ಥಿರವಾದ ಮುಕ್ತಿ ಎನ್ನುವ ಧಾನ್ಯವೆಂದು ಹೇಳಿ ಈ ಹಾಡಿಗೆ ಒಂದು ತಿರುವನ್ನು ಕೊನೆಗೆ ನೀಡುತ್ತಾರೆ. ಈ ಧಾನ್ಯವನ್ನುಂಡು ಪ್ರಾಪ್ತವಾದ ಪರಮಾನಂದದಿಂದ ಸಂಸಾರಬಂಧನವೆಂಬ ಬರಗಾಲವನ್ನು ದೂರ ಅಟ್ಟಿ ಎಂದು ನಾಟಕೀಯಗೊಳಿಸುತ್ತಾರೆ.

ಡಾ. ರಂ. ಶ್ರೀ ಮುಗಳಿಯವರು ನಿಜಗುಣರ ಬಗ್ಗೆ ಬರೆಯುತ್ತ ಸಪ್ಪಣ್ಣನವರನ್ನು ನೆನಪು ಮಾಡಿಕೊಂಡು ‘ಸರ್ಪಭೂಷಣ ಇಲ್ಲವೆ ಸಪ್ಪಣ್ಣನು ಅದೇ ಬಗೆಯ ಉದಾತ್ತ ಮನೋಧರ್ಮ ಮತ್ತು ಅನುಭಾವವುಳ್ಳ ಹಾಡುಗಾರನು’ ಎನ್ನುತ್ತಾರೆ. ‘ಕೈವಲ್ಯ ಕಲ್ಪವಲ್ಲರಿ ಕನ್ನಡಿಗರು ಸರ್ಪಭೂಷಣರಿಂದ ಪಡೆದ ಅನುಭವದ ಅಕ್ಷಯ ಭಂಡಾರ’ ಎಂದಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕರು, ಶ್ರೀ ನಿಜಗುಣ ಶಿವಯೋಗಿಗಳೂ ಸರ್ಪಭೂಷಣ ಶಿವಯೋಗಿಗಳೂ ಧ್ವನಿ ಪ್ರತಿಧ್ವನಿಗಳಂತಿದ್ದು ಸಮಾನಸ್ಕಂದರಾಗಿರುವರು’ ಎಂಬ ಬಸವರಾಜಯ್ಯನವರ ಅಭಿಪ್ರಾಯ ವಿರೋಧಾಭಾಸದಿಂದ ಕೂಡಿದೆ, ಸಮಾನ ಸ್ಕಂದರಂದು ಕೊನೆಯಲ್ಲಿ ಹೇಳಿದ್ದರೂ ಅವರು ‘ಧ್ವನಿ ಪ್ರತಿಧ್ವನಿ ಗಳತಿಂದ್ದು ಎಂದಿರುವುದು. ಸಪ್ಪಣ್ಣನವರದು ಪ್ರತಿಧ್ವನಿಯೆಂಬರ್ಥ ಮೂಡಿಸಿಬಿಡುತ್ತದೆ. ಇದನ್ನು  ದೃಷ್ಟಿಯಲ್ಲಿಟ್ಟುಕೊಂಡೇ….. “ಸಪ್ಪಣ್ಣಾರ್ಯರು ಪ್ರತಿಭಾವಂತರಾದ ಕವಿಗಳಾದುದರಿಂದ ಅವರ ಕೈವಲ್ಯಕಲ್ಪವಲ್ಲರಿ ಕೈವಲ್ಯ ಪದ್ಧತಿಯ ಬರಿಯ ಅನುಕರಣ ಅಥವಾ ಶುಷ್ಕಾನುವಾದವೆಂದೆನಿಸುವುದಿಲ್ಲ” ಎಂದು ಬಸವನಾಳರು

ಸರಿಯಾಗಿ ಗುರುತಿಸಿದ್ದಾರೆ. ಈ ಗ್ರಂಥದಲ್ಲಿ ನಾಲ್ವತ್ತರ ಮೇಲ್ಪಟ್ಟು ಭಿನ್ನರಾಗಗಳನ್ನೂ ಅವುಗಳ ಅವಾಂತರ ಪ್ರಕಾರಗಳನ್ನೂ ಬಳಸಿದ್ದಾರೆ’ ಎಂದು ಹೇಳಿ ಒಟ್ಟಿನಲ್ಲಿ ಕೈವಲ್ಯ ಕಲ್ಪವಲ್ಲರಿ ಸಂಗೀತಕ್ಕಾಗಿ ರಚಿಸಿದ ಸಾಹಿತ್ಯವಾದರೂ ಇದರಲ್ಲಿ ಉಚ್ಚ ಸಾಹಿತ್ಯದ ಯಾವ ಮುಖ್ಯ ಲಕ್ಷಣಕ್ಕೂ ಚ್ಯುತಿ ಬಂದಿಲ್ಲವೆಂದೇ ಹೇಳಬಹುದು’ ಎಂದಿದ್ದಾರೆ. ಇಂದಿಗೂ ಕಲ್ಪವಲ್ಲರಿಯ ಸಂಗೀತ ಮೌಲ್ಯದ ಬಗ್ಗೆ ಆಳವಾದ ಅಧ್ಯಯನ ನಡೆಯದಿರುವುದು ದುರ್ದೆವದ ಸಂಗತಿಯಾಗಿದೆ. ಈ ವಿಷಯ ಇರಲಿ, ಸಪ್ಪಣ್ಣನ ವರು ಮತ್ತು ನಿಜಗುಣರ ಪ್ರತಿಭೆ ಸಂಬಂಧದ ಬಗ್ಗೆ ಹುಟ್ಟಿಕೊಂಡ ನಂಬಿಕೆಯನ್ನು ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರು ಹೀಗೆ ಉಲ್ಲೇಖಿಸಿದ್ದಾರೆ. “ಆರು ಶಾಸ್ತ್ರ ಬರೆದಿಟ್ಟು ಹೋದರೂ ಇನ್ನೂ ಕೂಡ ಜ್ಞಾನ ಅದರಲ್ಲಿ ಪೂರ್ಣವಾಗಿಲ್ಲವೆಂದು ಆ ನಿಜಗುಣಪ್ಪನವರೇ ಮತ್ತೆ ಸಪ್ಪಣ್ಣನವರಾಗಿ ಅವತರಿಸಿದ್ದಾರೆ.”

ಹನ್ನೆರಡು ವರ್ಷಗಳ ಅವರ ತೀರ್ಥಯಾತ್ರೆ ಹಾಗೂ ಮಠಗಳ ಯಾತ್ರೆಯಲ್ಲಿ ಅವರು ಕಲಿತದ್ದು ತಮ್ಮ ಗುರುಗಳಾದ ಗುರುಸಿದ್ಧರಲ್ಲಿ ಕಲಿತುದಕ್ಕಿಂತಲೂ ಹೆಚ್ಚೆಂದು ಹೇಳಬೇಕು. ಮಠಗಳಲ್ಲಿ ನಡೆಯುತ್ತಿದ್ದ ಶಿವಾನುಭಾವಗೋಷ್ಠಿಗಳಲ್ಲಿ ಸಪ್ಪಣ್ಣನವರು ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಏಕಂದರೆ ಜ್ಞಾನವೆಂಬುದು ಎಲ್ಲ ದಿಕ್ಕಿನಿಂದಲೂ ಹರಿದು ಬರುತ್ತದೆಂಬುದನ್ನು ಅವರು ಚೆನ್ನಾಗಿ ಮನಗಂಡಿದ್ದರು. ಆದರೆ ಇವರ ಕಲಿಯುವ ಉತ್ಸುಕತೆ ಜೊತೆಗೆ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತಿತ್ತು. ಅಂಥ ಸಂದರ್ಭಗಳು ಸಪ್ಪಣ್ಣ ನವರಿಗೆ ಮುಜಗರವುಂಟುಮಾಡಿದರೂ ಅವರ ಪ್ರತಿಭೆ ಹಾಗೂ ವ್ಯಕ್ತಿತ್ವ ಪ್ರಕಟವಾಗಲು ಕಾರಣವಾದದ್ದು ಮಾತ್ರ ಯೋಗಾಯೋಗ, ವ್ಯಾಕರಣ, ತರ್ಕ, ಛಂದಸ್ಸು, ವೇದೋಪ ನಿಷತ್ತುಗಳು, ಪುರಾಣ ಹಾಗೂ ಕಾವ್ಯಗಳ ಅಪಾರವಾದ ಜ್ಞಾನ ಅವರಲ್ಲಿ ಮೂಡಿಸಿದ್ದ ವಿನಯದಿಂದಾಗಿ ಎಂಥವರ ಮನಸ್ಸನ್ನಾದರೂ ಆಕರ್ಷಿಸುತ್ತಿತ್ತು. ಜೊತೆಗೆ ಅವರಲ್ಲಿದ್ದ ಸೃಜನಶೀಲ ಪ್ರತಿಭೆಗೆ ಸಂಗೀತ ಜ್ಞಾನವೂ ನೇರವಾಗಿ ಅವರ ವಾಗ್ಮಿತೆಗೆ ಮಂತ್ರಗಾರಿಕೆ ಪ್ರಾಪ್ತವಾಗಿತ್ತು ಇವೆಲ್ಲಕ್ಕಿಂತಲೂ ಪ್ರಧಾನವಾದುದು ಇಷ್ಟಲಿಂಗಾನು ಸಂಧಾನದಿಂದ ಪ್ರಾಪ್ತವಾಗಿದ್ದ ಶಿವಯೋಗ ಸಿದ್ಧಿ, ಪ್ರವಾಸ ಕಾಲದಲ್ಲಿ ಕನಿಷ್ಠ ಮೂರು ಮಠಗಳ ಅಧ್ಯಕ್ಷತೆ ವಹಿಸಿಕೊಳ್ಳುವ ಅಹ್ವಾನ ಬಂದರೂ ಅವುಗಳತ್ತ  ಲಕ್ಷವನ್ನೇ ನೀಡದ ವೀರವೀರಕ್ತಿ, ಅಷ್ಟೇ ಏನು, ಸ್ವತಃ ಗುರುಸಿದ್ಧರ ಅನಂತರ ಆ ಪೀಠಕ್ಕೆ ಅಧ್ಯಕ್ಷರಾಗಬೇಕೆಂದು ಹರಗುರು ಚರಮೂರ್ತಿಗಳು ಹಾಗೂ ಭಕ್ತಾದಿಗಳು ತೀವ್ರವಾದ ಒತ್ತಾಯ ಮಾಡಿದರೂ ಅದನ್ನೊಲ್ಲದ ತಮ್ಮ ಸಹಪಾಠಿಗಳಾಗಿದ್ದ ಚಿಕ್ಕಗುರುಸಿದ್ಧಸ್ವಾಮಿಗಳನ್ನೇ ಅಧ್ಯಕ್ಷರನ್ನಾಗಿಸಿದ ಇವರ ವಿರತಿ ಸಿದ್ದಿ ಅದ್ಭುತ, ಮಂತ್ರಮುಗ್ಧರನ್ನಾಗಿ ಮಾಡಬಲ್ಲ ಪ್ರವಚನ ಶಕ್ತಿ ಅದ್ಭುತವಾದ ಸಂಗೀತ ಶಕ್ತಿ, ವಿನಯ ವಿದ್ವತ್ತುಗಳು ಶಿವಯೋಗ-ಇವುಗಳು ಅವರ ವ್ಯಕ್ತಿತ್ವಕ್ಕೊಂದು ಪ್ರಭಾವಲಯವನ್ನು  ನಿರ್ಮಿಸಿದ್ದವು. ಅದರಿಂದಾಗಿ ಬೆಂಗಳೂರಿನಲ್ಲಿ ಅವರಿದ್ದ ಜಾಗಕ್ಕೆ ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತಾದಿಗಳೂ ಹರಗುರು ಚರಮೂರ್ತಿಗಳು  ಬರತೊಡಗಿದರು. ಧಾರವಾಡ,ಬಿಜಾಪುರ, ಮತ್ತು ಬಳ್ಳಾರಿ ಜಿಲ್ಲೆಗಳು ಹಾಗೂ ರಾಯಚೂರ ಆದವಾನಿಗಳ ಕಡೆಯಿಂದ ಭಕ್ತಾದಿಗಳೂ ಚಿತ್ರದುರ್ಗ, ಶಿವಮೊಗ್ಗ, ಮೈಸುರು,ಜಿಲ್ಲೆಗಳಿಂದ ಹರಗುರುಚರಮೂರ್ತಿಗಳೂ ಪಟ್ಟ ಚರಾಧಿಕಾರಿಗಳೂ ದರ್ಶನಾಶೀರ್ವಾದಗಳಿಗಾಗಿ ಬರತೊಡಗಿದರು ಸಪ್ಪಣ್ಣನವರಿದ್ದ ತಿಪ್ಪಶೆಟ್ಟಿ ಮಠವೀಗ ಇವರಿಂದಾಗಿ ಒಂದು ಮಹತ್ವದ ಧರ್ಮ ಮತ್ತು ಸಂಸ್ಕೃತಿಗಳ ಕೇಂದ್ರವಾಗಿ ಅಲ್ಲಿನ  ಮಠಾದಿಪತಿಗಳಾಗಿದ್ದ ಚಿಕ್ಕ ಗುರುಸಿದ್ದಸ್ವಾಮಿಗಳಿಗೆ  ಮುಜುಗರವಾಗಬಹುದೆಂದು  ಭಕ್ತಾದಿಗಳ ಒತ್ತಾಯದಿಂದ ಬೇರೆ ಮಠವನ್ನೆ ಕಲ್ಪಿಸಬೇಕೆಂದೆ ವಿಚಾರ  ಬಂದಷ್ಟೇ ಅಲ್ಲ ಅಂದಿನ ಸರ್ಕಾರದಿಂದ ಪುಕ್ಕಟೆಯಾಗಿ ಜವೀನನ್ನು ಪಡೆಯುವದು ಕಷ್ಟವಾಗಲಿಲ್ಲ.ಈ ವಿಷಯದಲ್ಲಿ ಅಂದು ಉನ್ನತಾಧಿಕಾರಿಗಳಾಗಿದ್ದ ತೋಪಖಾನೆ ಕೃಷ್ಣರಾಯ(ದಿವಾನ್‌ ಕೃಷ್ಣಪ್ಪನಾಯಕ)ರು ವಹಿಸಿದ ಪಾತ್ರ ಸಾಮಾನ್ಯವಲ್ಲ.ಭಕ್ತಾದಿಗಳು ಚಕ್ಕ ಗುರುಸಿದ್ದಸ್ವಾಮಿಗಳು ನೀಡಿದ ಆರ್ಥಿಕ ನೆರವು ಕೂಡಿ ಬಂದರೂ ಮಠದ ನಿರ್ಮಾಣದ ಜವಾಬ್ದಾರಿ ಮತ್ತೆ ಇವರ ಅಭಿಮಾನದ ಶಿಷ್ಯ ಫಾಲಲೋಚನರ ಮೇಲೆಯೇ ಬಿದ್ದಿತು.ಅಂಥ ಸರ್ಪಭೂಷಣ ಶಿವಯೋಗಿಗಳ ಶಿಷ್ಯರು ಎಷ್ಟು ಎನ್ನುವ ವಿವರವಾದ ದಾಖಲೆಯಿಲ್ಲದಿದ್ದರು ಫಾಲಲೋಚನರು  ಅವರ ಅಭಿಮಾನದ ಶಿಷ್ಯರೂ ಹಾಗೂ ಅನತಂರದ ಪೀಠಾಧಿಕಾರಿಗಳೂ ಆದರು, ಮಠಾಧೀಶರಾದ ಪ್ರಭುಸ್ವಾಮಿಗಳಂತೂ ಸಹಪಾಠಿಗಳಾದರೂ ಸಪ್ಪಣ್ಣನವರ ವ್ಯಕ್ತಿತ್ವದ ಮಹಿಮೆಗೆ ಮಾರು ಹೋದವರೇ .ಆದ್ದರಿಂದಲೇ ಕಾಶಿಯ ಯಾತ್ರೆಯನ್ನು ಸಪ್ಪಣ್ಣನವರ ಇಂಗಿತದಂತೆ ನಿಲ್ಲಿಸಿ ಸಪ್ಪಣ್ಣನವರು ಲಿಂಗೈಕ್ಯರಾಗುವವರಿಗೂ ಜೊತೆಗಿದ್ದ ರೆಂಬುದನ್ನು ಮರೆಯಲಾಗದು.ಜೊತೆಗೆ ವೃಷಭಲಿಂಗ ಶಿವಯೋಗಿಗಳು ತಮ್ಮನ್ನು ಶ್ರೀ ಸರ್ಪಭೂಷಣ ಗುರುವರೇಣ್ಯ ಚರಣಾರವಿಂದ  ಮತ್ತು ಮಧುಕರ ಸ್ವರೂಪವೆಂದು ಹೆಮ್ಮೆಯಿಂದ ಕರೆದುಕೊಂಡಿದ್ದಾರೆ.ನರಗಲ್ಲು ಸೋಮಣ್ಣನವರು ಷಡಕ್ಷರದೇವನ ಶಬರಶಂಕರ ವಿಳಾಸಕ್ಕೆ ಅರ್ಥಬರೆದವರು ಸಪ್ಪಣ್ಣಸ್ವಾಮಿಗಳ ಶಿಷ್ಯರೆಂದು ತಿಳಿದು ಬರುತ್ತದೆ.ಇನ್ನೂ ಇಂಥ ಎಷ್ಟು ಜನಕ್ಕೆ ಗುರುಗಳೋ ಬಲ್ಲವರಾರು.

ವಿರಕ್ತರಾಗಿ ಘನತೆವೆತ್ತ ವ್ಯಕ್ತಿತ್ವ; ಅಪಾರ ವಿದ್ವತ್ಸಂಪನನ್ನತೆ; ಯೋಗ ಸಿದ್ದ ತೇಜಸ್ವಿ ಮುಖ; ಸಂಗಿತ ಜ್ಞಾನ ಸಮೃದ್ದವಾಗಿರುವ ಹದವಾದ ಶಾರೀರ ;ನಮ್ರತೆ; ಸರಳತೆಗಳಿಂದ ಕೂಡಿದ ವಾಗ್ಮಿತೆ ಇವುಗಳೆಲ್ಲದರಿಂದ ಶ್ರೀಮಂತವಾದ ಅವರು ಮಠಾಧಿಶರೂ ಆಗಿರಲು ಅಂಥವರ ಗುರುತ್ವ ಯಾರಿಗೆ ಬೇಡ?

ಡಾ. ಸ.ಜ.ನಾಗಲೋಟಮಠ

ವೀರಶೈವ ಧರ್ಮದಲ್ಲಿ ಇಷ್ಟಲಿಂಗ, ಅಷ್ಟಾವರಣ, ಪಂಚಾಚಾರ ಹಾಗು ಷಟ್‌ಸ್ಥಲಗಳು ಬಹು ಮಹತ್ವದವು, ಪಾದೋದಕವು ಅಷ್ಟಾವರಣದಲ್ಲಿಯ ಒಂದು ಆವರಣ, ಪಾದೋದಕ ಶಬ್ದದ ಸರಳಾರ್ಥವೆಂದರೆ ಪಾದಗಳನ್ನು ತೊಳೆದ ನೀರು,ಇತ್ತೀಚೆಗೆ ಪಾದೋದಕವು ಗೊಂದಲವನ್ನು ಎಬ್ಬಿಸಿದೆ. ಹಲವಾರು ಜನ ಶರಣರು,ಸ್ವಾಮಿಗಳು, ಸ್ವಾಮಿನಿಯರು, ಜಗದ್ಗುರು ಎಂದು ಕರೆಸಿಕೊಳ್ಳುವವರು ಪಾದೋದಕದ ಬಗ್ಗೆ ಅಪಪ್ರಚಾರ ಮಾಡುತ್ತಿರುವರು. ಇವರೊಡನೆ ಕೆಲವು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಸೇರಿಕೊಂಡಿದ್ದಾರೆ. ಅವರೂ ಸಹ ಬೇರೆಯವರನ್ನು ತೆಗಳುವ ಪಾಂಡಿತ್ಯ ಪ್ರದರ್ಶಿಸುವರು. ಪಾದೋದಕವು ಅಷ್ಟಾವರಣದ ಒಂದು ಆವರಣ. ವೀರಶೈವ ಧರ್ಮ ಸ್ಥಾಪಕರು ಇದಕ್ಕೆ ಮಹತ್ವ ಕೊಟ್ಟು ಇದನ್ನು ಅಷ್ಟಾವರಣಗಳಲ್ಲಿ ಸೇರಿಸಿಕೊಂಡರು. ಶರಣರು ಇದನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು. ಆದರೆ ಕೆಲವು ಶರಣರು ಹಾಗು ವೀರಶೈವರು ಇದನ್ನು ವಿರೋಧಿಸುತ್ತಿರಲೇಬೇಕು. ಆದ್ದರಿಂದ ಚನ್ನಬಸವಣ್ಣನವರು ಈ ವಚನ ರಚಿಸಿರಲು ಸಾಕು.

ಗುರುಜಂಗಮದ ಪಾದ ತೀರ್ಥವು ಲಿಂಗಾಭಿಷೇಕಕ್ಕೆ ಸಲ್ಲದೆಂಬ

ಮಂದಮತಿಗಳು ನೀವು ಕೇಳಿರೋ

ಮಂತ್ರ ಸಂಸ್ಕಾರದಿಂದ ಜಡಶಿಲೆ ಲಿಂಗವಾಗುತಿರ್ಪುದೆಂಬಿರಿ

ಆ ಮಂತ್ರ ಸಂಸ್ಕಾರದಿಂದ ಶಿವಾಂಶಿಕನಾದ ಮನುಷ್ಯನು

ಶಿವಜ್ಞಾನ ಸಂಪನ್ನನಾಗಿ ಗುರುವಾಗನೆ?

ಮತ್ತೆ ಜಂಗಮವಾಗನೆ? ಹೇಳಿರೊ

ಸಂಸ್ಕಾರದಿಂದ ಲಿಂಗಕ್ಕೆ ಸಂಸ್ಕಾರವಿಲ್ಲದ ಮನುಷ್ಯನ ಪಾದಜಲವು

ಸಲ್ಲದೆಂದಡೆ ಅದು ಸಹಜವೆಂಬೆನು

ಸಂಸ್ಕಾರ ವಿಶಿಷ್ಟವಾದ ಲಿಂಗಕ್ಕೆಯೂ ಜಂಗಮಕ್ಕೆಯೂ

ಅಭೇದವೆಂಬುದು ಆಗಮೋಕ್ತಿ-

“ಪದೋದಾದಭಿ ಷೇಚನಂ’ ಎಂದು ಸಾರುತಿಹುದು ಕಾಣಿರೋ

ಇದು ಕಾರಣ, ಅಂತಪ್ಪ ಗುರುಜಂಗಮದ ಪಾದತೀರ್ಥವು

ಆಯೋಗ್ಯವೆಂದಡೆ

ನಮ್ಮ ಕೂಡಲಚನ್ನಸಂಗಯ್ಯನ ವಚನವ

ನಿರಾಕರಿಸಿದಂತಕ್ಕು ಕಾಣಿರೋ

ಇಂಥದೇ ಒಂದು ವಚನವನ್ನು ಸಿದ್ಧರಾಮೇಶ್ವರರು ರಚಿಸಿರುವರು.

ಪಾದೋದಕವೆಂಬುದು ಪರಮಾತ್ಮನ ಚಿದ್ರೂಪ ನೋಡಾ,

ಪಾದೋದಕವೆಂಬುದು ಮೋಕ್ಷದ ಮಾರ್ಗ ನೋಡಾ,

ಪಾದೋದಕವೆಂಬುದು ಪಾಪದ ಕೇಡು ನೋಡಾ

ಪಾದೋದಕವೆಂಬುದು ಪ್ರಮಥರ ಇರವು ನೋಡಾ

ಪಾದೋದಕವೆಂಬುದು ಕಪಿಲಸಿದ್ಧ ಮಲ್ಲಿಕಾರ್ಜುನನ ಮಹಿಮೆ ನೋಡಾ.

ಹೀಗೆ ಶರಣರೆಲ್ಲ ಪಾದೋದಕದ ಮಹತ್ವವನ್ನು ಹಾಡಿದ್ದಾರೆ. ಬಹುಶಃ ಆಗ ತೆಗಳುವವರ ಸಂಖ್ಯೆ ಸಣ್ಣದಿರಬೇಕು. ಇಂದು ಹೊಗಳುವವರು ಕಡಿಮೆ ಆಗಿದ್ದಾರೆ. ತೆಗಳುವವರು ಅಧಿಕವಾಗಿದ್ದಾರೆ. ಆದ್ದರಿಂದಲೇ ಪಾದೋದಕವು ಅಮಾನ್ಯವಾಗುತ್ತಲಿದೆ. ವೀರಶೈವರ ಅಷ್ಟಾವರಣಗಳು ಸಪ್ತಾವರಣವಾಗುತ್ತಿವೆ.

ಹಾಗಾದರೆ ಯಾವ ಕಾರಣಕ್ಕಾಗಿ ಹಿರಿಯರು ಈ ಪಾದೋದಕವನ್ನು ಸೇರಿಸಿದರು? ಯಾವದೋ ಮಹತ್ವದ ಕಾರಣ ಇದ್ದಿರಲೇ ಬೇಕು. ಪಾದೋದಕಕ್ಕೆ ಇನ್ನೊಂದು ಅರ್ಥ ಇರಬೇಕು. ಅದು ಸರಳಾರ್ಥದಂತೆ ಪಾದತೊಳೆದ ನೀರು ಇರಲಿಕ್ಕಿಲ್ಲ. ಪಾದಗಳು ಎಂದರೆ ಭೂಮಿಯ ಮೇಲೆ ನಿಲ್ಲುವ ಕರಣಗಳು. ಪಾದಗಳು ಮುಖ್ಯವಾಗಿ ನಡೆಯಲು ಬೇಕು. ಅಂದರೆ ವ್ಯಕ್ತಿಯ ನಡೆಯನ್ನು ಅವು ಪ್ರತಿನಿಧಿಸುತ್ತವೆ.

ಕಾಲಿನ ಹೆಬ್ಬೆರಳು ನಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾರಣ ಪಾದೋದಕ ಪಡೆಯುವಾಗ ಹೆಬ್ಬೆರಳಿಗೆ ಮಹತ್ವ ಕೊಡುವರು. ಹೆಬ್ಬೆರಳು ಅಂದರೆ ವ್ಯಕ್ತಿಯ ನಡತೆ-ವ್ಯಕ್ತಿಯ ನಡಾವಳಿ, ಅಂದರೆ ವ್ಯಕ್ತಿ ಗುಣವಿಶೇಷಣಗಳು. ಒಟ್ಟಿನಲ್ಲಿ ವ್ಯಕ್ತಿಯ ಚಾರಿತ್ರ್ಯ,ಸಂಸ್ಕಾರ, ವ್ಯಕ್ತಿ ಬದುಕಿದ್ದ ರೀತಿ-ನೀತಿ, ಅವನ ನಡೆನುಡಿ, ಪಾದೋದಕ ಅಂದರೆ ವ್ಯಕ್ತಿಯ ರೀತಿ ನೀತಿ, ನಡೆನುಡಿ, ಸೇವೆ. ಜನ ಕಲ್ಯಾಣ  ಕಾರ್ಯಗಳು. ಇವೆಲ್ಲಉತ್ತಮವಿದ್ದರೆ ಮಾತ್ರ ಆ ವ್ಯಕ್ತಿ ಪಾದೋದಕ ಕೊಡಲು ಅರ್ಹ, ಇಲ್ಲವಾದರೆ ಆ ನೀರು ನೀರಾಗಿಯೇ ಉಳಿಯುವುದು, ಕಡಿಮೆ ಇಲ್ಲವೆ ಕೀಳು ವ್ಯಕ್ತಿತ್ವದ ಪಾದೋದಕ ಕೊಡಲು ಅನರ್ಹ. ಅಂಥ ಪಾದೋದಕ ಕಲಶ ನೀರೇ ವಿನಃ ಪವಿತ್ರವಾದುದಲ್ಲ. ಈ ಮಾತನ್ನು ಕೆಳಗಿನ ವಚನದಲ್ಲಿ ತಿಳಿಯಬಹುದು.

“ಸಂಸ್ಕಾರವಿಲ್ಲದ ಮನುಷ್ಯನ ಪಾದ ಜಲವು ಸಲ್ಲದೆಂದಡೆ ಅದು ಸಹಜವೆಂಬೆನು” ಒಬ್ಬರ ಪಾದೋದಕ ಸ್ವೀಕರಿಸುವುದೆಂದರೆ ಅವನ ನಡತೆಯನ್ನು ಒಪ್ಪಿಕೊಂಡಂತೆ, ಅವರು ಬಾಳಿದಂತೆ ಬಾಳಲು ಆಶೆ ಪಟ್ಟಂತೆ. ಅಂಥ ನಡತೆಯನ್ನು ಅನುಕರಿಸಲು ಸಿದ್ಧರಾದಂತೆ.

ಪಾದೋದಕದಲ್ಲಿ ಇನ್ನೊಂದು ಸಂಗತಿ ಇದೆ. ಅದೆಂದರೆ ಸಮಾನತೆ ತರುವುದು, ವೀರಶೈವರಲ್ಲಿ ಒಬ್ಬರು ಹೆಚ್ಚಿನವರು, ಉಳಿದವರು ಕೆಳಮಟ್ಟದವರು ಎಂಬ ಪಶ್ನೆಯಿಲ್ಲ. ಎಲ್ಲರೂ ಸಮಾನರೆ, ಶಿಷ್ಯನು ಗುರುವಿನ ಪಾದೋದಕ ಸ್ವೀಕರಿಸುವನು. ತತ್‌ಕ್ಷಣವೇ ಗುರುವು ಶಿಷ್ಯನಿಗೆ ನಮಸ್ಕರಿಸಿ ಪಾದೋದಕ ಕೊಡಬೇಕೆಂದು ಪ್ರಾರ್ಥಿಸುವನು. ಆಗ ಗುರುವು ಶಿಷ್ಯನನ್ನು ತನ್ನ ಗುರುವೆಂದು ಭಾವಿಸುವನು. ನಿಯಮದ ಪ್ರಕಾರ, ಪಾದೋದಕ ಪಡೆಯುವನು, ಶಿಷ್ಯನು ಗುರುವಿಗಿಂತ ವಯಸ್ಸಿನಲ್ಲಿ ಚಿಕ್ಕವನಿರಬಹುದು. ಕಡಿಮೆ ಕಲಿತವನಿರಬಹುದು. ಆದರೂ ಈಗ ಅವನು ತನ್ನ ಗುರುವಿನ ಗುರುವೂ ಹೌದು. ಅಂದರೆ ಎಲ್ಲರೂ ಸಮಾನರಾದಂತೆ. ಇದೇ ವೀರಶೈವ ಧರ್ಮದ ಗುರಿ.

ಅನೇಕ ಹಿರಿಯ ಸ್ವಾಮಿಗಳು ಪಾದೋದಕವನ್ನು ಪಡೆಯಲು ಕ್ರಿಯಾಮೂರ್ತಿಗಳನ್ನು ಗುರುತಿಸಿರುತ್ತಾರೆ. ಅವರು ಸ್ವಾಮಿಗಳಿಗಿಂತ ಚಿಕ್ಕವರಿರಬಹುದು, ಕಡಿಮೆ ಕಲಿತವರಿರಬಹುದು, ಗೃಹಸ್ಥರಾಗಿರಬಹುದು. ಆದರೆ ಇವರ ನಡತೆ ಶುದ್ಧವಾಗಿರುತ್ತದೆ. ಸಮಾಜದಲ್ಲಿ ಅವರಿಗೆ ಗೌರವ ಸ್ಥಾನವಿರುವುದು. ಕಾರಣವೇ ಪಾದೋದಕ ಎರಡು ಫಲಕೊಡುವುದು. ಒಂದು ಜಾಗತಿಕ ಸಮಾನತೆ ಎರಡನೆಯದು ಜೀವನದಲ್ಲಿ ಒಳ್ಳೆಯ ನಡತೆ ಅಳವಡಿಸಿಕೊಳ್ಳುವುದು, ದೂರು ಮಾಡಿದರೆ ಧರ್ಮವನ್ನೇ ಹಾಳು ಮಾಡಿದಂತೆ. ಮರಳಿ ಈ ಜನರು ಸನಾತನ ಧರ್ಮವನ್ನೇ ಒಪ್ಪಿಕೊಂಡಂತೆ ಅನಿಸುವುದು. ವೀರಶೈವರಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಪ್ರಶ್ನೆಯೇ ಬರುವುದಿಲ್ಲ.

ನಾನು ಎಲ್ಲರಿಗಿಂತ ಕಿರಿಯ ಎಂಬುದೇ ಕೊನೆಯ ಮಾತು. ಗುರು-ಶಿಷ್ಯರ ಸಂಬಂಧಗಳು ಹೇಗಿರಬೇಕು ಎಂಬ ಪ್ರಶ್ನೆಗೆ ಕೆಳಗಿನ ವಚನ ಉತ್ತರಿಸುತ್ತದೆ.

ಶ್ರೀಗುರುಲಿಂಗವು ಶಿಷ್ಯನ ಬರವ ಕಂಡು

ಬಂದು ಪಾದದ ಮೇಲೆ ಬೀಳುವಾತ ಗುರುಲಿಂಗ

ಮಂಡೆಯ ಹಿಡಿದೆತ್ತುವಾತ ಶಿಷ್ಯ.

ಶ್ರೀಗುರುಲಿಂಗವು ಶಿಷ್ಯನ ಸಿಂಹಾಸನದಲ್ಲಿ ಕುಳ್ಳಿರಿಸಿ

ಪಾದಾರ್ಚನೆಯ ಮಾಡುವಾತ ಗುರುಲಿಂಗ

ಮಾಡಿಸಿಕೊಂಬಾತ ಶಿಷ್ಯ

ಶ್ರೀಗುರುಲಿಂಗವು ಶಿಷ್ಯನಾರೋಗಣೆಯ ಮಾಡುತ್ತಿದ್ದಾನೆಂದು ಬಂದು

ಪ್ರಸಾದವ ಕೊಂಬಾತ ಗುರುಲಿಂಗ, ಇಕ್ಕುವಾತ ಶಿಷ್ಯ.

ಇದು ಕಾರಣ ದ್ವಿವಿಧ ಸಂಬಂಧ ಸಮಮತವಾಯಿತ್ತು

ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ

ಎಲ್ಲ ಕಡೆಗೂ ಎಲ್ಲ ಹಂತಗಳಲ್ಲಿ ಜಾಗತಿಕ ಸಮಾನತೆ ಒಡೆದು ಕಾಣಬೇಕು. ಇದೇ ನಿಯಮವನ್ನು ನಾವು ಬೆಳೆಸಬೇಕು. ಇಲ್ಲವಾದರೆ ವೀರಶೈವ ಪ್ರಮುಖರು ನಾವೇ ಎಂದು ಹೇಳಿಕೊಂಡು ತಿರುಗುತ್ತಿರುವ ಸ್ವಾಮಿಗಳು, ಅವರ ಬೆಂಬಲಿಗರು ಕೂಡಿಕೊಂಡು ವೀರಶೈವ ಧರ್ಮದ ನಿಯಮಗಳನ್ನು ಪರಿಶೀಲಿಸಿ ಹೊಸ ನಿಯಮಗಳನ್ನು ಬರೆಯಬೇಕು. ಹಿರಿಯರು-ಶರಣರು ನಡೆದು ಬಂದ ರೀತಿ-ನೀತಿಗಳು ದೋಷರಹಿತವಾಗಿವೆ ಎಂದು ಸಾರಬೇಕು. ಎಲ್ಲರೂ ಇವರ ನಿಯಮ ಪಾಲಿಸಬೇಕು ಎಂದು ಹೇಳಬೇಕು. ಆಗ ಮಾತ್ರ ವೀರಶೈವ ಜನಸಾಮಾನ್ಯರಲ್ಲಿ ಗೊಂದಲ ಕಡಿಮೆಯಾಗುವುದು. ಇಲ್ಲದೆ ಹೋದರೆ ಧರ್ಮದ ನಿಯಮಗಳಿಗೂ ಮುಂದಾಳುಗಳ ನಡತೆಗೂ ಅಂತರ ಕಂಡುಬರುವುದು.

ಅಖಿಲ ಭಾರತ ವೀರಶೈವ  ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ

 ಸ್ಥಳ :ಕುಮಾರ ನಗರ ದಿ. ೨೨-೨-೧೯೬೦

ಮಹಿಳೆಯರ ಉನ್ನತಿಗಾಗಿ ಶರಣರು ಮಹೋನ್ನತ ಕಾರ್ಯವನ್ನು ಮಾಡಿದ್ದಾರೆ

ಅಖಿಲ ಭಾರತ ವೀರಶೈವ  ಮಹಾಸಭಾಧಿವೇಶನ ಮಹಿಳಾ ಪರಿಷತ್ತಿನಲ್ಲಿ ಶ್ರೀಮತಿ ಜಯದೇವಿ ಲಿಗಾಡೆಯವರ ಭಾಷಣ

 ಸ್ಥಳ :ಕುಮಾರ ನಗರ ದಿ. ೨೨-೨-೧೯೬೦

ಸಂಗ್ರಹ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹೆಣ್ಣು ಅಬಲೆಯೆಂದು ಕಡೆಗಣಿಸಿದ ಒಂದು ಕಾಲವೂ ಇದ್ದಿತು. ಆದರೆ ದಿನಗಳೆದಂತೆ ಬದಲಾದ ಪರಿಸ್ಥಿತಿಯೊಂದಿಗೆ ಹೆಣ್ಣಿನ ಆ ಸ್ಥಿತಿ ನಿವಾರಣೆಯಾಗುತ್ತ ಬಂದಿತು.

ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಾಮಾಜಿಕದಲ್ಲಿ ಧಾರ್ಮಿಕದಲ್ಲಿ ಆರ್ಥಿಕದಲ್ಲಿ ಯಾವ ಅಧಿಕಾರವೂ ಇರಲಿಲ್ಲ. ಮನ್ನಣೆಯೂ ಇರಲಿಲ್ಲ. ಹೆಣ್ಣು ಶೂದ್ರಳು ಮೋಕ್ಷಕ್ಕೆ ಅರ್ಹಳಲ್ಲ ಅವಳಿಗೆ ಆತ್ಮವಿಲ್ಲ ಎಂದುಸಾರಿದರು ಕೆಲವರು. ಅಂಥ ಧರ್ಮದ ದಾರಿಯಲ್ಲಿ ಕುಗ್ಗುತ್ತ ಮುಗ್ಗುತ್ತ ಸಾವಿರ ನೋವುಗಳನ್ನು ತಾಳಿ ನಡೆದು ಬಂದಿರಲು ಹೆಣ್ಣು ಜೀವನ ತನ್ನ ಗೋಳನ್ನು ಹೇಳಿಕೊಳ್ಳಲು ಅದಕ್ಕೆ ಇರಲಿಲ್ಲ ಕೇಳುವ ಕಿವಿಯೂ ಇರಲಿಲ್ಲ. ಕಣ್ಣಿದ್ದು ಕುರುಡರಾದವರಿಗೆ ಅವರ ಸಾವು ನೋವುಗಳು ಕಾಣಲಿಲ್ಲ. ಹೀಗೆ ಹೆಣ್ಣಿನ ಕೊರಗು ಎಷ್ಟು? ಮರಗು ಎಷ್ಟು ಎಂದು ಲೆಕ್ಕಹಾಕಲು ಬರುವಂತಿಲ್ಲ. ತಿಂದ ಬೇನೆ, ನೊಂದ ನೋವು ಹೆತ್ತವರಿಗಲ್ಲದೆ ಹೊತ್ತವರಿಗಲ್ಲದೆ ಏನು ಗೊತ್ತು ? ಹೆಣ್ಣು ಮಕ್ಕಳು ಕರುಣದಿಂದ ಕರೆದದ್ದು, ಕರುಳು ಹರಿದು ಕೂಗಿದ್ದು ಮೊದಲು ಕೇಳಿಸಿತು ಶರಣರಿಗೆ.

ಮಹಿಳೆ ಪಾವನಳಾದಳು

12 ನೆಯ ಶತಮಾನದಲ್ಲಿ ಎಲ್ಲಾ ವರ್ಗದ ಮಹಿಳೆಯರು ಸಮಾನ ಗೌರವವನ್ನು ಸ್ವೀಕರಿಸಿದರು. ಅವರು ಸ್ವತಃ ಕಾಯಕವನ್ನು ಮಾಡಿ, ವಚನೆ ರಚನೆಯನ್ನು ಮಾಡಿರುವರು. ಎಲ್ಲಾ ಶರಣರು ಅಷ್ಟೇ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಹೆಣ್ಣು ಮಾಯೆಯಲ್ಲ ಅವಳು ಶಕ್ತಿ ಸ್ವರೂಪಗಳು. ಹೆಣ್ಣು ಹೆಣ್ಣಲ್ಲಾ ಹೆಣ್ಣು ರಕ್ಕಸಿಯಲ್ಲಾ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ ಎಂದು ಅನ್ನಿಸಿಕೊಳ್ಳುವಂತಾಯಿತು..

ಬೇಕಾಗುವದಕ್ಕಿಂತಲೂ ಹೆಚ್ಚು ಸಂಗ್ರಹಿಸಬಾರದು. ಎಂಬ ಸಮತ ವಾದದ ತತ್ವವನ್ನು ಅಂದು ಬೀರಿದಳು ಲಕ್ಕಮ್ಮ.

ಕದರೀಯ ರೆಮ್ಮವ್ವ ಚದುರಿ ನಿನ್ನ ರಾಟೀಯ

ಸದರೀಗ ತಂದೆ ಬಾಪೂಜಿ

ಸದರೀಗ ತಂದ ಬಾಪೂಜಿ ತಾನೂತ

ಮಾದರಿ ಮಾಡ್ಯಾನ ಜಗದಾಗ

           ( ತಾಯಿಯ ಪದಗಳು )

   ಶರಣರ ಮಹತ್ಕಾರ್ಯ

ರಾಟಿಯ ಕಾಯಕದ ಮಹತ್ವವನ್ನು ಮೊದಲು ತೋರಿಸಿದವಳು ಕರಿಯ ರೆಮ್ಮವ್ವ. ಹೀಗೆ ಒಬ್ಬರೆ ಇಬ್ಬರೆ? ಅನೇಕ ಶಿವಶರಣೆಯರು ತಮ್ಮ ತಮ್ಮ ಕಾಯಕ ದಲ್ಲಿ ನಿರತರಾದರು. ಜಗತ್ತಿನಲ್ಲಿ ಶ್ರೇಷ್ಠವೆನಿಸಿಕೊಂಡ ತತ್ವ ಅನುಭವಗಳನ್ನು ಆಚರಿಸಿ ಜನರಿಗೆ ದಾರಿ ತೋರಿದರು. ಧರ್ಮದಲ್ಲಿ ಸಮಾಜದಲ್ಲಿ ಸ್ತ್ರೀಯರು ಸಮಾನ ರಾಗಿ ಅನುಭಾವ, ಸತ್ಕ್ರಿಯೆ, ಆಚಾರ ವಿಚಾರಗಳಲ್ಲಿ ಕಡಿಮೆಯವರಲ್ಲ ಎಂಬುದನ್ನು ಸಿದ್ಧಪಡಿಸಿದರು. ಅಂಥ ಅನುವಿನ ತಿಳಿಬೆಳಕಿನಲ್ಲಿ ಸ್ತ್ರೀಯರನ್ನು ಸಲಹಿದರು ಬೆಳಸಿದರು, ನಮ್ಮ ಶರಣರು. ಆ ಪರಂಪರೆಯಲ್ಲಿ ನಾವು ಬೆಳೆದಿದ್ದೇವೆ

 ಸಮಾಜ ದೃಷ್ಟಿ ಬದಲಾಗಲಿ

ಆ ಹಿರಿಯ ತಾಯಂದಿರು ಗಳಿಸಿದ ಅನುಭಾವದಾಗರವನ್ನು ಉಳಿಸಿಕೊಂಡು, ಬಳಿಸಿಕೊಂಡು ಹೇಗೆ ಬೆಳಸಿಕೊಂಡು ಹೋಗಬೇಕು, ಎಂಬುವದೇ ನಮ್ಮ ಮೇಲಿರುವ ಇಂದಿನ ಹೊಣೆ; ಅಷ್ಟೆ ಸಮಾಜದ ಮೇಲೂ ಇದೆ. ಏಕೆಂದರೆ ಹೆಣ್ಣು ಮಕ್ಕಳ ಬಗೆಗೆ ಇರುವ ಸಮಾಜದ ದೃಷ್ಟಿಕೋನವು ಬದಲಾಗದೆ ಸ್ತ್ರೀಯರ ಉದ್ಧಾರವಿಲ್ಲ. ಸ್ತ್ರೀಯರ ಉದ್ಧಾರವಿಲ್ಲದೆ ಸಮಾಜಕ್ಕೆ ಪ್ರಗತಿ ಇಲ್ಲ.

   ಸರಿಯಾದ ಶಿಕ್ಷಣ ಅವಶ್ಯ

ಸ್ತ್ರೀಯರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಬರೀ ಅಕ್ಷರ ಜ್ಞಾನವಿದ್ದರೆ ಇಲ್ಲವೆ ಒಂದೆರಡು ಭಾಷೆಯನ್ನು ನುಡಿಯಲು ಕಲಿತರೆ ಸಾಲದು. ಇಂದಿನ ಉಚ್ಚ ಶಿಕ್ಷಣವು ಸ್ತ್ರೀಯರಿಗೆ ಎಷ್ಟು ಪ್ರಯೋಜನಕಾರಿಯಾಗಿದೆ, ಆಗಬಲ್ಲುದು? ಎಂಬುದನ್ನು ವಿಚಾರ ಮಾಡಬೇಕಾದುದು. ಗೃಹವಿಜ್ಞಾನಕ್ಕೂ ಸ್ತ್ರೀಯರ ಜೀವನಕ್ಕೂ ನಿಕಟ ಸಂಬಂಧ ಅಂಥ ಶಿಕ್ಷಣ ಅವರಿಗೆ ಸಿಗುವಂತೆ ಆಗಬೇಕು.

  ಕಾಯದೆ ಕಾರ್ಯವಾಗಲಿ

`ಆರ್ಥಿಕದಲ್ಲಿ ಪಾಲು ಸಿಗಬೇಕು. ಎಂದು ಸರಕಾರ ಕಾಯ್ದೆ ಮಾಡಿದರೂ ತಂದೆ ತಾಯಿಗಳು ಅಣ್ಣ ತಮ್ಮಂದಿರು ಸಹಕರಿಸದ ಏನಃ ಕಾಯ್ದೆಯು ಕಾವ್ಯರೂಪದಲ್ಲಿ ಬರುವದು ದುಸ್ತರವಾದದು. ಸ್ತ್ರೀಯರಿಗೆ ಆರ್ಥಿಕದಲ್ಲಿ ಕಾಯ್ದೆಯು ಬೆಂಬಲ ವಿದ್ದರೂ ಕೆಲ ವಿಧವೆಯರ ಗೋಳು ಹೇಳತೀರದು. ಅಂಥವರ ಗೋಳಿನ ಬಾಳನ್ನು ಕಂಡಿದ್ದೇನೆ. ಅಂಥ ಕೆಲವರಿಗೆ ಪಾಲವು ಬೇಕಿಲ್ಲ ಹೊಟ್ಟೆ ತುಂಬ ಅನ್ನ, ವರುಷಕ್ಕೆ ಎರಡು ಸೀರೆ ಕೊಟ್ಟರೆ ಸಾಕಾಗಿದೆ

 ಗಂಡು ಹೆಣ್ಣಿನ ಜೀವನ

ಹೆಣ್ಣು ಗಂಡಿನ ಜೀವನ ಸುಗಮವೂ ಸುಂದರವೂ ಆಗಬೇಕಾದರೆ, ಪರಸ್ಪರರಲ್ಲಿ ತಿಳವಳಿಕೆ ಬೆಳೆಯಬೇಕು. ಸ್ತ್ರೀಯು ಪುರುಷನ ಪ್ರತಿಸ್ಪರ್ಧಿಯಲ್ಲಿ ಪೋಷಕಳು. ಬಾಪೂಜಿಯವರ ಮಾತಿನಲ್ಲಿ ಹೇಳಬೇಕಾದರೆ, ಸ್ತ್ರೀ ಪುರುಷರಿಬ್ಬರು ಪರಸ್ಪರ ಪಾಲಕರು ಚಾಲಕರು ಮೂಲಕರು ಎಂದು ಹೇಳಬಹುದು.

ಇಂದಿನ ಸ್ತ್ರೀಯರು ಹೆಚ್ಚಾಗಿ ವಚನ ವಾಜ್ಮಯವನ್ನು ಜಾನಪದಗಳನ್ನು ಓದಿ ತಿಳಿದು ಅಳವಡಿಸಿಕೊಳ್ಳಬೇಕು. ಅವುಗಳನ್ನು ಸಂಗ್ರಹಿಸುವ, ಹೊಸದಾಗಿ ಬರೆಯುವ ಕಾರ್ಯವನ್ನು ಮುನ್ನಡಿಸಬೇಕು. ಹರಟೆ ಪರನಿಂದೆಗಳಲ್ಲಿ ಕಾಲ ಕಳೆಯದೆ ಯಾವದಾದರೂ ಒಂದು ಉತ್ತಮ ಸಾಧನೆಯಲ್ಲಿ ಮನ ತೊಡಗಿಸ ಬೇಕು. ರಾಟಿಯ ಕಾಯಕವನ್ನು ಮತ್ತೆ ಅಳವಡಿಸಬೇಕು.

ಮಾನವೀಯ ಜೀವನದ ಶಿಖರದಮೇಲೆ ಅಹಿಂಸಾಮಯ ಪವಿತ್ರ ಪತಾಕೆ ಯನ್ನು ಹಾರಾಡಿಸುವ ನಿಜವಾದ ಶ್ರೇಯಸ್ಸನ್ನು ಸ್ತ್ರೀಯು ಕೈವಶಮಾಡಿಕೊಳ್ಳಬೇಕು. ವಿಶ್ವಶಾಂತಿಯ ನಿಜವಾದ ವಿಧಾನವು ಸ್ತ್ರೀಯರಲ್ಲಿದೆ. ಹೀಗಿದ್ದರೂ, ವಿಶ್ವ ಶಾಂತಿಗಾಗಿ ಸ್ತ್ರೀಯರು ಏನೂ ಮಾಡಲಿಲ್ಲ, ಇದರ ಬಗ್ಗೆ ನನಗೆ ನಾಚಿಕೆಯಾಗಿದೆ ಆದರ್ಶ ಪ್ರೇರಿತರಾಗಿ, ಅಹಿಂಸೆಯ ದಾರಿಯಲ್ಲಿ ಮುನ್ನುಗ್ಗುವ ಶಕ್ತಿಯಲ್ಲಿ ಪುರುಷರಿಗಿಂತಲೂ, ಸ್ತ್ರೀಯು ಅಧಿಕ ಗುಣಸಂಪನ್ನಳಾಗಿದ್ದಾಳೆ. ಇಂಥ ಶಕ್ತಿಯನ್ನು ಶರಣರು ಮತ್ತೆ ಮತ್ತೆ ಕರುಣಿಸಲಿ

ಡಾ|| ಬಸವರಾಜ ಹಿರೇಮಠ

ಸಹ ಪ್ರಾಧ್ಯಾಪಕರು,

ಆಯುರ್ವೇದ ಮತ್ತು ಯುನಾನಿ ತಬ್ಬಿಯಾ ಕಾಲೇಜು

ಮತ್ತು ಆಸ್ಪತ್ರೆ (ದೆಹಲಿ ಸರಕಾರ)

ಕರೋಲಬಾಗ, ನವದೆಹಲಿ-110005.

 

          ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅವುಗಳು ಜೀವಿಸಲು ಪ್ರಾಣವಾಯು, ನೀರು ಮತ್ತು ಆಹಾರದ ಅವಶ್ಯಕತೆ ಇದ್ದೇ ಇದೆ.  ಆದರೆ ಅವುಗಳನ್ನು ಸೇವಿಸುವ ವಿಧಾನ ಮತ್ತು ಪ್ರಮಾಣ ಭಿನ್ನಭಿನ್ನವಾಗಿದೆ.

          ಸೃಷ್ಟಿ ಸಂಕುಲದಲ್ಲಿಯ ಪ್ರಾಣಿ, ಪಕ್ಷಿಗಳು ಜಲಚರವಾಸಿಗಳು ಮುಖ್ಯವಾಗಿ ತಮ್ಮ ಆಹಾರವನ್ನು ಹುಡುಕುವದರಲ್ಲಿಯೇ ಮಗ್ನವಾಗಿರುತ್ತವೆ.  ಆದರೆ ವಿಕಸಿತ ಮೆದುಳು ಹೊಂದಿರುವ ಮನುಷ್ಯನು ಆಹಾರವನ್ನು ತನ್ನ ರುಚಿಗೆ ತಕ್ಕಂತೆ ಹಸಿವೆಗೆ ತಕ್ಕಂತೆ ತಯಾರಿಸಿ ಸೇವಿಸುತ್ತಾನೆ.

          ಸೃಷ್ಟಿಯಲಿ ಮಾನವನ ವಿಕಾಸವಾದಂತೆ ಅವರ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿಯೂ ಅನೇಕ ಬದಲಾವಣೆಗಳಾದವು.  ನಂತರ ಜ್ಞಾನ, ವಿಜ್ಞಾನಗಳ ರೂವಾರಿಯಾದ ಜ್ಞಾನ ಬೆಳೆದಂತೆ ವಿಜ್ಞಾನದ ವಿಕಸನವೂ ಆಯಿತು, ಆಗುತ್ತಿದೆ ಮುಂದೆಯೂ ಆಗುವದು.

          ಆಹಾರವೇ ಔಷಧಿ, ಔಷಧಿಯೇ ಆಹಾರ ಎಂಬ ಮೇಲ್ಪಂಕ್ತಿಯನ್ನು ನೋಡಿದಾಗ ಕ್ಷಣಕಾಲ ಓದುಗರಲ್ಲಿ ಆಶ್ಚರ್ಯವೆನಿಸಿರಬಹುದು.  ಅಂದರೆ, ಆಹಾರವನ್ನು ನಾವು ಯಾವಾಗ, ಹೇಗೆ, ಎಷ್ಟು ಪ್ರಮಾಣ ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಸೇವಿಸಬೇಕು.

ಆಹಾರ:- ಯಾವುದು ಶರೀರದ ಪೋಷಣೆ ಮಾಡುವುದೋ, ಮತ್ತು ಯಾವುದನ್ನು ಸೇವಿಸುವದರಿಂದ ಮನ ಪ್ರಸನ್ನತೆ ಮತ್ತು ಶಾರೀರಿಕ ಶಕ್ತಿ ವೃದ್ಧಿಸುವುದೋ ಅದು ಆಹಾರ.  ಆಯುರ್ವೇದ ಆರ್ಷ ಗ್ರಂಥಗಳಲ್ಲಿ ಆಹಾರದ ಮಹತ್ವ, ಆಹಾರ ತಯಾರಿಸುವ ವಿಧಾನ, ಸಂತುಲಿತ ಆಹಾರ, ವಿರುದ್ಧ ಆಹಾರ, ಆಹಾರ ಸೇವನೆ ಕಾಲ ಮತ್ತು ಆಯಾ ರೋಗಗಳಿಗನುಸಾರ ರೋಗಿಗಳಿಗೆ ನೀಡಲಾಗುವ ಪಥ್ಯೆ ಆಹಾರಗಳ ಬಗ್ಗೆ ಅತ್ಯಂತ ವಿಸ್ತಾರವಾಗಿ ವಿವರಿಸಲಾಗಿದೆ.

          ಸಂತುಲಿತ ಆಹಾರವೆಂದರೆ, ಯಾವುದು ಪಂಚಮಹಾಭೂತಾತ್ಮಕವಾಗಿರುವುದೊ, ಮಧುರಾಧಿ ಷಡ್ರಸಾತ್ಮವಾಗಿರುವುದೋ, ಶರೀರ ಪೋಷಣೆಯ ಜೊತೆಗೆ ಶಾರೀರಿಕ ಹಾಗೂ ಇಂದ್ರಿಯ ಶಕ್ತಿಗಳ ವೃದ್ಧಿಗೆ ಸಹಾಯಕವಾಗಿರುವುದೊ ಸಾತ್ವಿಕ ಗುಣವುಳ್ಳದ್ದಾಗಿರುವುದೋ ತಯಾರಿಸಿದ ಮೇಲೆ ಅದರಿಂದ ಹೊರಸೂಸುವ ಪರಿಮಳ ಅದರ ವರ್ಣ ಮತ್ತು ಅನುಸರಿಸಿದ ವಿಧಾನಗಳು ಇವೇ ಮೊದಲಾದವನ್ನೊಳಗೊಂಡ ಅಂಶಗಳ ಸಂಕ್ರಮಣವೇ ಸಂತುಲಿತ ಆಹಾರ.

ವಿರುದ್ಧ ಆಹಾರ:

          ಆಯುರ್ವೇದ ಗ್ರಂಥಗಳಲ್ಲಿ ವಿರುದ್ಧ ಆಹಾರ ಎಂದರೇನು? ಅವುಗಳಲ್ಲಿ ಎಷ್ಟು ವಿಧ ಮತ್ತು ವಿರುದ್ಧ ಆಹಾರ ಸೇವಿಸುವದರಿಂದ ಯಾವ ಯಾವ ರೋಗಗಳು ಉಂಟಾಗುವವು ಎಂಬುದನ್ನು ವಿವರಿಸಲಾಗಿದೆ.

ಉದಾಹರಣೆಗೆ:

  • ವಿಧಿವಿರುದ್ಧ
  • ಕಾಲವಿರುದ್ಧ
  • ಸಂಸ್ಕಾರವಿರುದ್ಧ     
  • ಉಪಚಾರವಿರುದ್ಧ
  • ದೇಶವಿರುದ್ಧ
  • ಸಂಯೋಗ ವಿರುದ್ಧ
  • ದೋಷವಿರುದ್ಧ 
  • ಪಾಕವಿರುದ್ಧ
  • ಮೂತ್ರವಿರುದ್ಧ
  • ಅಗ್ನಿವಿರುದ್ಧ          
  • ವೀರ್ಯ ವಿರುದ್ಧ     
  • ಕೋಷ್ಠವಿರುದ್ಧ
  • ಅವಸ್ಥಾ ವಿರುದ್ಧ  
  • ಕ್ರಮವಿರುದ್ಧ  
  • ಪರಿಹಾರ ವಿರುದ್ಧ

ವಿಧಿವಿರುದ್ಧ ಏಕಾಂತ ಪ್ರದೇಶದಲ್ಲಿ ಕುಳಿತು ಸೇವಿಸದೇ ಇರುವದು.

ಕಾಲ ವಿರುದ್ಧ ಶೀತಕಾಲದಲ್ಲಿ ಶೀತ ಗುಣವುಳ್ಳ ಮತ್ತು ರೂಕ್ಷ ಸೇವನೆ

ಸಂಸ್ಕಾರ ವಿರುದ್ಧ : ಜೇಷಲ ಕಟ್ಟಿಗೆಯಲ್ಲಿ ನವಿಲಿನ ಮಾಂಸವನ್ನು ಸುಟ್ಟು ತಯಾರಿಸಲಾದ    ಮಾಂಸ ವ್ಯಂಜನ.

ದೇಶ ವಿರುದ್ಧ :ಅತೀ ಮಳೆ ಬಿಳುವ ಪ್ರದೇಶದಲ್ಲಿ ಇದ್ದವರು ಸ್ನಿಗ್ಧ ಮತ್ತು                  ಶೀತಗುಣವುಳ್ಳ ಆಹಾರದ ಸೇವನೆ.   

ಸಂಯೋಗ ವಿರುದ್ಧ          :ಹುಳಿ ಪದಾರ್ಥ (ಆಮ್ಲರಸಾತ್ಮಕ) ಗಳನ್ನು ಹಾಲಿನೊಂದಿಗೆ ಬೆರೆಸಿ           ತಯಾರಿಸಿದ ಅಹಾರ.

ದೋಷ ವಿರುದ್ಧ:ವಾತ ಪ್ರಕೃತಿಯುಳ್ಳ ವ್ಯಕ್ತಿಯು ರೂಕ್ಷ, ಶೀತ ಆಹಾರ ಸೇವನೆಯಿಂದ

                                      ಪುನಃ ವಾತ ದೋಷವು ವೃದ್ಧಿಯಾಗುವದು.

ಪಾಕ ವಿರುದ್ಧ:ಉದಾಹರಣೆಗೆ, ಅನ್ನ ತಯಾರಿಸುವಾಗ ಅದು ಸರಿಯಾಗಿ                        ಬೆಂದಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ.  ಅರೆಬೆಂದ ಅನ್ನ – ಹಾಗೂ ಸಂಪೂರ್ಣ ಸುಟ್ಟು ಹೋದ ಅನ್ನ ಇವರೆಡೂ ಪಾಕ   ವಿರುದ್ಧ ಅಹಾರ.

ಮೂತ್ರಾ ವಿರುದ್ಧ    :         ಜೇನುತುಪ್ಪ ಹಾಗೂ ತುಪ್ಪ ಇವೆರಡನ್ನೂ ಸಮ ಪ್ರಮಾಣದಲ್ಲಿ

                                      ಸೇವಿಸುವದೂ ಕೂಡಾ ಮೂತ್ರಾ ವಿರುದ್ಧವಾಗಿದೆ.

ಅಗ್ನಿ ವಿರುದ್ಧ             :         ಮಂದಾಗ್ನಿಯುಳ್ಳ ವ್ಯಕ್ತಿ ಪತನಕ್ಕೆ ಜಡವಾದ (ಗುರು) ಆಹಾರ

                                      ನೀಡುವದರಿಂದ ಆಹಾರವು ಸರಿಯಾಗಿ ಪಚನವಾಗುವದಿಲ್ಲ.

ವೀರ್ಯ ವಿರುದ್ಧ      :         ಶೀತ ವೀರ್ಯವುಳ್ಳ ಹಾಲಿಗೆ ಉಷ್ಣ ವೀರ್ಯವುಳ್ಳ ಪಿಪ್ಪಲಿ ಮಿಶ್ರಣ ಮಾಡಿ ಸೇವಿಸುವದರಿಂದ  (ಹಾಲು ಮತ್ತು ಮತ್ಸ್ಯ)

ಕೋಷ್ಠ ವಿರುದ್ಧ:ಕ್ರೂರಕೋಷ್ಠವುಳ್ಳ ವ್ಯಕ್ತಿಗೆ ಅಲ್ಪ ಪ್ರಮಾಣದಲ್ಲಿ ಆಹಾರ ನೀಡುವದು

ಅವಸ್ಥಾ ವಿರುದ್ಧ:    ಅಧಿಕ ಶ್ರಮದ ಕೆಲಸ ಮಾಡುವ ವ್ಯಕ್ತಿಗೆ ವಾತವರ್ಧಕ ಆಹಾರ

                                      ನೀಡುವದು.

ಕ್ರಮ ವಿರುದ್ಧ         :ಮಲಮೂತ್ರ ತ್ಯಾಜ ಮಾಡದೇ ಆಹಾರ ಸೇವನೆ.

ಆಹಾರ ಸೇವನ ಕಾಲ :         ಆಹಾರವನ್ನು ಯಾವಾಗ ಸೇವನೆಯನ್ನು ಮಾಡಬೇಕು ಎನ್ನುವದೂ ಅಷ್ಟೆ ಮುಖ್ಯ.

ಇಲ್ಲಿ ಆಹಾರ ಸೇವನೆ ಕಾಲ:

•         ಈ ಮೇಲೆ ವಿವರಿಸಿದ ಸಂತುಲಿತ ಆಹಾರವನ್ನು ಬೆಳಗಿನ ಜಾವ ಎದ್ದ ಮೇಲೆ ಮಲಮೂತ್ರ ವಿಸರ್ಜಿಸಿದ ಬಳಿಕ ಪ್ರಾತಃ ವಿಧಿ ವಿಧಾನಗಳನ್ನು ಮುಗಿಸಿದ ಬಳಿಕ ತನ್ನ ಎಲ್ಲಾ ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು ತನ್ನ ಹಸಿವಿಗೆ ತಕ್ಕ ಹಾಗೆ ಸೇವನೆ ಮಾಡುವದು.  ಆಹಾರವನ್ನು ಮಧ್ಯರಾತ್ರಿಯಲ್ಲಿಯೂ ನಸುಕಿನ ಜಾವದಲ್ಲಿಯೂ ಮತ್ತು ಸೇವನೆ ಮಾಡಬಾರದು.

ದಿವಸದಲ್ಲಿ ಎಷ್ಟು ಹೊತ್ತು ಊಟ ಮಾಡಬೇಕು?

  • ಒಂದು ಹೊತ್ತು ಉಂಡವ ಯೋಗಿ
  • ಎರಡು ಹೊತ್ತು ಉಂಡವ ಭೋಗಿ
  • ಮೂರು ಹೊತ್ತು ಉಂಡವ ರೋಗಿ
  • ನಾಲ್ಕು ಹೊತ್ತು ಉಂಡವ ಕಂಬಳಿಯಲ್ಲಿ ಕಚ್ಚಿಕೊಂಡು ಹೋಗಿ

        ಈ ಮೇಲಿನ ಸಾಲುಗಳನ್ನು ವೈಜ್ಞಾನಿಕವಾಗಿ ಗಮನಿಸಿದಾಗ ಮೊದಲನೆಯ ಉಕ್ತಿ ಒಂದು ಹೊತ್ತು ಉಂಡವ ಯೋಗಿ ಅಂದರೆ ವ್ಯಕ್ತಿಯು ತನ್ನ ವಯಸ್ಸಿಗನುಗುಣವಾಗಿ ಜಠರಾಗ್ನಿಗನುಗುಣವಾಗಿ ಸಂತುಲಿತ ಆಹಾರವನ್ನು ಮಿತವಾಗಿ ದಿವಸದಲ್ಲಿ ಒಂದು ಹೊತ್ತು ಮಾತ್ರ ಸೇವಿಸುವದರಿಂದ ಅವನು ಯೋಗಿ.  ಇದರರ್ಥ ಅವನು ಸದಾ ನಿರೋಗಿ, ನಿರೋಗಿಯೇ ನಿಜವಾದ ಯೋಗಿ.

ಆಹಾರ ಸೇವನೆ ನಂತರ ಏನು ಮಾಡಬೇಕು?

ಉಂಡು ನೂರಡಿಯ ತಿರುಗಾಡಿ, ಕೆಂಡಕ್ಕೆ ಕೈ ಕಾಸಿ

ಗಂಡ ಭುಜವ ಮೇಲ್ಮಾಡಿ ಮಲಗಿದೊಡೆ

ವೈದ್ಯನ ಗಂಡ ಸರ್ವಜ್ಞ ||

ರಾತ್ರಿ ಭೋಜನಾನಂತರ ಬೇಗನೇ ಮಲಗಬಾರದು, ಮರಾಠಿಯಲ್ಲಿ ಶತಪೌಲಿ ಎನ್ನುವರು.  ಅಂದರೆ ಭೋಜನಾನಂತರ ಶರೀರಕ್ಕೆ ಆಯಾಸವಾಗದ ಹಾಗೆ ನೂರಾರು ಹೆಜ್ಜೆ ನಡೆದಾಡುವದು.  ನಂತರ ಒಲೆಯ ಮುಂದೆ ಕುಳಿತು ಕೈಗಳನ್ನು ಸ್ವಲ್ಪ ಬೆಚ್ಚಗೆ ಮಾಡಬೇಕು.  ಇತ್ತೀಚಿನ ದಿನಗಳಲ್ಲಿ ಯಾರ ಮನೆಯಲ್ಲಿಯೂ ಕಟ್ಟಿಗೆ, ಬೆರಣಿ ಹಾಗೂ ಇದ್ದಿಲು ಉಪಯೋಗಿಸಿ ಅಡುಗೆ ಮಾಡುತ್ತಿಲ್ಲ.  ಆದ್ದರಿಂದ ಇದು ಸಾಧ್ಯವಾಗುತ್ತಿಲ್ಲ.  ಗಂಡ ಭುಜವ ಮೇಲ್ಮಾಡಿ ದಲ್ಲಿ ಮಲಗುವದು.  ಇದು ವೈಜ್ಞಾನಿಕವಾಗಿಯೂ ಅಷ್ಟೇ ಸತ್ಯವಾಗಿದೆ.  ಈ ಭಂಗಿಯಲ್ಲಿ ಮಲಗಿದರೆ ಪಚನಕ್ರಿಯೆಯು ಸರಾಗವಾಗಿ ನಡೆಯುವದು.  ಮಲಬದ್ಧತೆಯು ನಿವಾರಣೆಯಾಗುವದು.  ಈ ಮೇಲಿನ ಸರ್ವಜ್ಞನ ವಚನದಿಂದ ಅರ್ಥೈಸುವದೇನೆಂದರೆ ಅಯುರ್ವೇದ ವಿಜ್ಞಾನ ಮತ್ತು ಅದರ ಮಹತ್ವವನ್ನು ತಮ್ಮ ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪುವ ಹಾಗೆ ಹೇಳಿದ್ದಾರೆ.  ಹೀಗೆ ಹಲವಾರು ನಮ್ಮ ವಚನಕಾರರು ತಮ್ಮ ತಮ್ಮ ವಚನಗಳಲ್ಲಿ ಆಹಾರ, ನಿದ್ರಾ, ಬ್ರಹ್ಮಚರ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ.

•         ಆಹಾರವನ್ನು ಔಷಧಿಯಂತೆ ಸೇವಿಸುವದೂ ಒಂದು ವೈಜ್ಞಾನಿಕ ವಿಧಾನವೇ ಸರಿ – ಆಯಾ ರೋಗಗಳಿಗನುಸಾರ, ರೋಗಿಗಳನುಸಾರ.•   ಆಯುರ್ವೇದದಲ್ಲಿ ಉಲ್ಲೇಖಿಸಿದ ಹಾಗೆ

ಮಂಡ, ಪೇಯಾ, ವಿಲೇಪಿ, ಯವಾಗೂ ಕೃಷರಾ, ಯೂಷ ಮುಂತಾದ ಪಥ್ಯ ಆಹಾರ ತಯಾರಿಕಾ ವಿಧಾನಗಳನ್ನು ಹಾಗೂ ಅವನ್ನು ಯಾವ ಯಾವ ಸಂದರ್ಭಗಳಲ್ಲಿ ಹೇಗೆ ಸೇವನೆ ಮಾಡಬೇಕು.  ಮತ್ತು ಈ ಪಥ್ಯಕರ ಆಹಾರ ಸೇವನೆಯಿಂದ ಶರೀರಕ್ಕೆ ಉಂಟಾಗುವ ಲಾಭಗಳ ಬಗ್ಗೆ ತಿಳಿಸಲಾಗಿದೆ.  ಇನ್ನು ಸರಳ ಭಾಷೆಯಲ್ಲಿ ವಿವರಿಸಬೇಕೆಂದರೆ ಮನೆಗಳಲ್ಲಿ ತಲೆತಲಾಂತರದಿಂದ ತಯಾರಿಸಿಕೊಂಡು ಬಂದ ಜೋಳದ ಗಂಜಿ, ಅಕ್ಕಿ ಗಂಜಿ, ನುಚ್ಚು, ಕಿಚಡಿ, ಅನ್ನ ಮುಂತಾದ ಭಕ್ಷ್ಯಗಳು, ಮಾಂಸ ಭಕ್ಷ್ಯಗಳು, ಪೇಯಗಳು, ವ್ಯಂಜನಗಳು ಮತ್ತು ವ್ಯಂಜನಗಳನ್ನು ತಯಾರಿಸುವಾಗ ಉಪಯೋಗಿಸುವ ಮಸಾಲೆ ಪದಾರ್ಥಗಳು, ಎಣ್ಣೆ, ಉಪ್ಪು, ಸಕ್ಕರೆ, ಬೆಲ್ಲ, ವಿವಿಧ ತರಕಾರಿಗಳು ದ್ವಿದಳ ಧಾನ್ಯಗಳು, ವಿವಿಧ ಹಣ್ಣುಗಳು ವಿವಿಧ ಉಪ್ಪಿನಕಾಯಿಗಳು ಎಲ್ಲವೂ ಔಷಧೀಯ ಗುಣಗಳನ್ನೇ ಹೊಂದಿವೆ. 

ಅನ್ನದ ಮಹತ್ವ:

ತೈತ್ತಿರೀಯ ಉಪನಿಷತ್ತಿನಲ್ಲಿ ಅನ್ನದಿಂದಲೇ ಪ್ರಾಣಿಯ ಉತ್ಪತ್ತಿ, ಅನ್ನದಿಂದಲೇ ಶರೀರ ವೃದ್ಧಿಯಾಗುವದು.

ಯಥಾವಿಧಿ ಸೇವಿಸಿದ ಅನ್ನದಿಂದ ಶರೀರ ಸ್ವಾಸ್ಥ್ಯದಿಂದಿರುವದು ಹಾಗೂ ಧೀರ್ಘಾಯುಷ್ಯ ಪ್ರದವಾಗುವದು.

ಅನ್ನಂ ಬ್ರಹ್ಮೇತಿ ವ್ಯಜನಾತ್ – ಅಚಿದರೆ ಅನ್ನವು ಪರಬ್ರಹ್ಮ ಸ್ವರೂಪಿ, ವೈದ್ಯ ಚಾಣಕ್ಯನ ಪ್ರಕಾರ ಈ ಜಗತ್ತಿನಲ್ಲಿ ಮೂರೇ ಮೂರು ರತ್ನಗಳಿವೆ.  ಅವು ಯಾವುವೆಂದರೆ ಅನ್ನ ಜಲ ಮತ್ತು ಸುಭಾಷಿತ, ಆದರೆ ಮೂರ್ಖರು ರತ್ನದ ಕಲ್ಲುಗಳನ್ನೇ ನಿಜವಾದ ರತ್ನಗಳೆಂದು ತಿಳಿದಿದ್ದಾರೆ.

ಆಕಳ ಹಾಲಿನ ಮಹತ್ವ:

ಎಲ್ಲಾ ತರಹದ ಹಾಲುಗಳಲ್ಲಿ ಆಕಳ ಹಾಲು ಶ್ರೇಷ್ಠವಾದುದು.  ಅದು ಜೀವನೀಯ ಮತ್ತು ರಸಾಯನಗಳುಳ್ಳದ್ದಾಗಿದೆ.  ಯಾರು ಆಕಳು ಹಾಲನ್ನು ಸೇವಿಸುವದಿಲ್ಲವೋ ಅವರು ಕೃಶ ಕಾಯದವರೂ, ನಿರ್ವೀರ್ಯರೂ, ದುರ್ಬಲರೂ ಹಾಗೂ ಕುರೂಪಿಗಳಾಗಿರುವರು.

ಇಂದ್ರದೇವನ ಪ್ರಕಾರ ಆಕಳ ಹಾಲು ಅಮೃತವೇ.  ಯಾರು ಗೋದಾನವನ್ನು ಮಾಡುವರೋ ಅವರು ಅಮೃತವನ್ನೇ ದಾನ ಮಾಡಿದಂತೆ.

ಧಾರೋಷ್ಣ ಹಾಲು :  ಅಂದರೆ ಆಕಳ ಹಾಲು ಕರೆಯುವ ಸಂದರ್ಭದಲ್ಲಿಯೇ ವಿಳಂಬ ಮಾಡದೇ ಸೇವಿಸುವದೇ ಧಾರೋಷ್ಣ ಹಾಲು.

ತಕ್ರದ (ಮಜ್ಜಿಗೆ) ಮಹತ್ವ:

     ಯಾವ ರೀತಿ ದೇವತೆಗಳು ಅಮೃತವನ್ನು ಸೇವಿಸಿ ಅಮರರಾದರೋ ಅದೇ ರೀತಿ ಇಹಲೋಕದಲ್ಲಿ ತಕ್ರವನ್ನು ಸೇವಿಸುವದರಿಂದ ಅಮರರಾಗುತ್ತಾರೆ.

ಅಮೃತಂ ದುರ್ಲಭಂ ನೈರಾಂ, ದೇವಾನಾಮುದಕಂ ತಥಾ |

ಪಿತೃಣಾಂ ದುರ್ಲಭಂ ಪುತ್ರ ಸ್ತಕ್ರಂ ಶಕ್ರಸ್ಯ ದುರ್ಲಭಂ ||

ಇದರರ್ಥ : ಹೇಗೆ ಮನುಷ್ಯರಿಗೆ ಅಮೃತವು ದೇವತೆಗಳಿಗೆ ನೀರು, ತಂದೆಗೆ ಪುತ್ರನೂ ಹಾಗೂ

 ಇಂದ್ರನಿಗೆ ತಕ್ರವೂ ದುರ್ಲಭವಾಗಿದೆ.ಅಲ್ಲದೇ-          ಯಾವ ಮನೆಯಲ್ಲಿ ಮೊಸರು ಕಡೆದು ಮಜ್ಜಿಗೆ ಮಾಡುವ ಸಪ್ಪಳವೂ, ಚಿಕ್ಕ ಚಿಕ್ಕ ಮಕ್ಕಳ ಮನೆ ತುಂಬ ಓಡಾಡುವ ಸಪ್ಪಳವೂ ಮತ್ತು ಗುರುಗಳ, ಅತಿಥಿಗಳ ಆದರ ಸತ್ಕಾರವೂ ಇರುವದಿಲ್ಲವೋ ಅದು ಸ್ಮಶಾನಕ್ಕೆ ಸಮಾನ.

ಮಿತಾಹಾರ ಅಂದರೆ:

          ಯಾವುದರ ಸೇವನೆಯಿಂದ ಶರೀರ ಮತ್ತು ಜೀವಾತ್ಮನು ತೃಪ್ತಿಯಾಗುವನೋ ಮತ್ತು ಜಠರದ ಒಂದು ನಾಲ್ಕಾಂಶ ಭಾಗವು ಖಾಲಿ ಇರುವದೋ ಮತ್ತು ಹಾಲು ಮೊಸರು, ಮಜ್ಜಿಗೆ, ತುಪ್ಪ ಇತ್ಯಾದಿಗಳಿಂದ ಕೂಡಿದ ಆಹಾರ.ಹಿತಕರವಾದ, ತನ್ನ ಹಸಿವಿಗೆ ತಕ್ಕಂತೆ ಮತ್ತು ಹಾಲು, ತುಪ್ಪಗಳಿಂದ ಕೂಡಿದ ಆಹಾರ ಸೇವನೆಯೂ ಕೂಡ ಒಂದು ತಪಸ್ಸು ಇದ್ದಂತೆ.

        ಇನ್ನು ಆಹಾರವನ್ನು ಯಾವಾಗ ಮತ್ತು ಎಷ್ಟು ಹೊತ್ತು ಸೇವಿಸಬೇಕು ಎನ್ನವದೂ ಅಷ್ಟೇ ಮುಖ್ಯವಾಗಿದೆ.  ಆಹಾರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಅಂದರೆ ದಿವಸದಲ್ಲಿ ಎರಡೇ ಹೊತ್ತು ಸೇವಿಸಬೇಕು ಹಾಗೂ ಇದುವೇ ವೇದ ಸಮ್ಮತವಾಗಿದೆ. ಅಲ್ಲದೇ ಭೋಜನಾಂತರ ತಕ್ಷಣವೇ ವ್ಯಾಯಾಮ ಮಾಡುವದಾಗಲೀ, ಮೈಥುನದಲ್ಲಿ ತೊಡಗುವದಾಗಲೀ, ಓದುವದಾಗಲಿ ಅತಿಯಾಗಿ ಜಲಪಾನ ಮಾಡುವದಾಗಲೀ, ಹಾಡುವದಾಗಲೀ ಅಥವಾ ಮಲ್ಲಯುದ್ಧ ಮಾಡುವದಾಗಲೀ ಮಾಡಬಾರದು.  ಕನಿಷ್ಠ ಪಕ್ಷ ಭೋಜನ ಆದ ಮೇಲೆ ಒಂದು ಗಂಟೆ ಒಳಗೆ ಮೇಲೆ ವಿವರಿಸಿದವುಗಳನ್ನು ಮಾಡಬಾರದು.

ಔಷಧ:

          ಔಷಧ, ಔಷಧಿ, ಪ್ರಾಯಶ್ಚಿತ್, ಪ್ರಶಮನ, ಬೇಷಜ, ಮುಂತಾದ ಅನ್ವರ್ಥಗಳು ಔಷಧಿಗೆ ಇವೆ.  ಅಂದರೆ ಯಾವುದು ರೋಗವನ್ನು ಸಂಪೂರ್ಣ ಹೋಗಲಾಡಿಸಿ ಪುನಃ ಆರೋಗ್ಯವನ್ನು ದೊರಕಿಸಿಕೊಡುವದೋ ಅದೇ ಔಷಧಿ.

ಔಷಧಿ ಎಂದರೆ – ಜನಸಾಮಾನ್ಯರು ತಿಳಿದ ಹಾಗೆ ಔಷಧಿ ಅಂಗಡಿಯಲ್ಲಿ ಕೊಂಡುಕೊಳ್ಳುವ ಮಾತ್ರೆ/ಗುಳಿಗೆ ಔಷಧಿ ಇವೇ ಮೊದಲಾದವುಗಳಲ್ಲದೇ ಔಷಧಿಗೆ ಒಂದು ದೊಡ್ಡ ಅರ್ಥವನ್ನು ಕೊಡಬಹುದಾಗಿದೆ.

ಔಷಧಿ: ಭಾರತೀಯ ಆಯುರ್ವೇದ ಪರಂಪರೆಯ ಆರ್ಷ ಗ್ರಂಥಗಳಾದ ಚರಕ ಸಂಹಿತೆ, ಸುಪ್ರಿತ ಸಂಹಿತೆ, ಅಷ್ಟಾಂಗ ಸಂಗ್ರಹ ಮುಂತಾದವುಗಳಲ್ಲಿ ಔಷಧಿ ಅಂದರೆ ಏನು? ಅವುಗಳ ಮೂಲ ಏನು? ಔಷಧಿಯ ತಯಾರಿಕಾ ವಿಧಾನಗಳೇನು? ಅವನ್ನು ಯಾವ ಯಾವ ಸ್ವರೂಪದಲ್ಲಿ ತಯಾರಿಸಬೇಕು ಎಂಬಿತ್ಯಾದಿ ಅಂಶಗಳನ್ನು ವಿವರವಾಗಿ, ಸ್ಪಷ್ಟವಾಗಿ ವಿವರಿಸಲಾಗಿದೆ.

ಆಹಾರವೇ ಔಷಧಿ:

ಪ್ರಾಣ: ಪ್ರಾಣಬೃತಾಂ ಅನ್ನಂ ತದ್‍ಯುಕ್ತ್ಯಾ ನಿವಂತಿ ಅಸೂನ್|

ವಿಷಂ ಪ್ರಾಣಹರಂ ತಚ್ಛ್ ಯುಕ್ತಿಯುಕ್ತಂ ರಸಾಯನಂ|| (ಚರಕ)

ಆಹಾರವು ಸಹ ಜೀವರಾಶಿಗಳಿಗೆ ಪ್ರಾಣವೇ ಸರಿ.  ಅದನ್ನು ಯುಕ್ತಿಪೂರ್ವಕವಾಗಿ ಸೇವಿಸಿದರೆ ಅದು ಶರೀರಕ್ಕೆ ರಸಾಯನ ಇಲ್ಲದಿದ್ದರೆ ಅದೇ ವಿಷಕ್ಕೆ ಸಮಾನವಾಗಿ ಪ್ರಾಣಹರಣವನ್ನುಂಟು ಮಾಡುವದು.

          ಇದರರ್ಥ ಮನುಷ್ಯನು ತನ್ನ ವಯೋಬಲಕ್ಕನುಗುಣವಾಗಿ ತನ್ನ ಜಠರಾಗ್ನಿ ಬಲಕ್ಕನುಗುಣವಾಗಿ ಶರೀರಕ್ಕೆ ಸಾತ್ಮ್ಯಕ್ಕನುಗುಣವಾಗಿ ಆಹಾರವನ್ನು ಸೇವಿಸಬೇಕು.

ಏಕರಸಾಭ್ಯಾನೋ ದುರ್ಬಲ್ಯಕರಾಣಾಂ|| (ಚರಕ)

ಸರ್ವ ರಸಾಭ್ಯುಸೋ ಬಲಕರಾಣಾಂ||

ಇದರರ್ಥ-

          ಸೇವಿಸುವ ಆಹಾರವು ಮಧುರಾದಿ ಷಡ್ರಸಗಳಿಂದ ಯುಕ್ತವಾಗಿರಬೇಕು.  ಹಾಗೆಯೇ ಆಹಾರದ ವರ್ಣ, ಗಂಧ, ರುಚಿ ಆದರ ಆಕಾರ ಮನಸ್ಸಿಗೆ ಮುದ ನೀಡುವಂತಿರಬೇಕು.  ಆಹಾರ ಸೇವನೆಯಿಂದ ಇಂದ್ರಿಯಗಳು ಪ್ರಸನ್ನವಾಗಿರಬೇಕು ಹಾಗೂ ಆರೋಗ್ಯಕ್ಕೆ ಹಿತಕರವಾಗಿರಬೇಕು.

ಆಹಾರವು ಮೂರು ವಿಧವಾಗಿದೆ

ಸಾತ್ವಿಕ ಆಹಾರ:- ಸಾತ್ವಿಕ ಆಹಾರ ಸೇವನೆಯಿಂದ ಆಯುಷ್ಯ, ಮನೋಬಲ, ಶಾರೀರಿಕಬಲ, ಸ್ವಾಸ್ತ್ಯವನ್ನು ವೃದ್ಧಿಸುವಂಥಾದ್ದು, ಮನಕ್ಕೆ ಆಹ್ಲಾದವನ್ನುಂಟು ಮಾಡುವದು.  ಮತ್ತು ಘೃತಾದಿ ಸ್ನಿಗ್ಧ ಗುಣಗಳಿಂದ ಕೂಡಿದ ಆಹಾರ, ಹಾಗೂ ಸಾತ್ವಿಕ ಗುಣವುಳ್ಳವರು ಭೋಜಿಯಾಗಿರುತ್ತಾರೆ.

ರಾಜಸು ಆಹಾರ: ಯಾವ ಆಹಾರದ ಸೇವನೆಯಿಂದ ಎದೆ ಉರಿ, ಹೊಟ್ಟೆ ಉರಿ ಕಂಡುಬರುವದೋ, ಆಹಾರವು ಹುಳಿ, ಉಪ್ಪು, ಖಾರ ಕ್ಷಾರಯುಕ್ತವಾಗಿರುವದೋ, ದುಃಖ ಶೋಕ ಮತ್ತು ರೋಗವನ್ನುಂಟು ಮಾಡುವದೋ ಇಂಥ ಆಹಾರವು ರಾಜಸ ಪ್ರಕೃತಿಯವರಿಗೆ ಹೆಚ್ಚು ಪ್ರೀಯವಾಗಿರುವದು. ರಾಜಸ ಪ್ರಕೃತಿಯುಳ್ಳವರು ಪೂರ್ಣ ಭೋಜಿಯಾಗಿರುತ್ತಾರೆ.

ತಾಮಸಿಕ ಆಹಾರ:-

       ಆಹಾರ ತಯಾರಿಸಿದ ಎಷ್ಟೋ ಗಂಟೆಗಳ ಮೇಲೆ ಸೇವಿಸುವದು, ಅಥವಾ ರಾತ್ರಿ ಮಾಡಿದ ಅಡುಗೆ ಬೆಳಿಗ್ಗೆ ಸೇವಿಸುವದು, ಬೇರೊಬ್ಬರ ಎಂಜಲು ಹಾಗೂ ಶರೀರದಲ್ಲಿ ತಾಮಸೀ ಗುಣ ಉತ್ಪನ್ನ ಮಾಡುವದು ತಾಮಸಿಕ ಆಹಾರವಾಗದ್ದು, ತಾಮಸ ಪ್ರಕೃತಿಯುಳ್ಳವರು ಅತೀ ಭೋಜಿಯಾಗಿರುತ್ತಾರೆ.

ವಿಷ್ಣು ಪುರಾಣದಲ್ಲಿ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವದನ್ನು ವಿವರಿಸಲಾಗಿದೆ:

ಜಠರಂ ಪೂರಯೇದರ್ಧಂ ಅನ್ನೈರ್ಭಾಗಂ ಜಲೇನ ಜೆ|

ವಾಯೋಃ ಸಂಚಣಾರ್ಥಆಯ ಚತುರ್ಥಂ ಅವಶೇಷಯೇತ್||

ಅಂದರೆ –

          ಜಠರದ ಅರ್ಥ ಭಾಗ ಆಹಾರದಿಂದಲೂ, ಆಹಾರದ ಅರ್ಧಭಾಗ ನೀರಿನಿಂದಲೂ ಹಾಗೂ ನೀರಿನ ಅಂಗವಾದ ವಾಯುವಿನಿಂದಲೂ ಕೂಡಿದ್ದರೆ  ಔಷಧಿಯೇ ಆಹಾರ:

          ಚರಕಾಚಾರ್ಯರು ಹೇಳಿದ ಹಾಗೆ ಜಗತ್ತಿನಲ್ಲಿ ದೊರೆಯುವ ಎಲ್ಲಾ ವನಸ್ಪತಿಗಳಲ್ಲಿ, ಪಶು ಪಕ್ಷಿಗಳಲ್ಲಿ, ಜಲಚರ ಪ್ರಾಣಿಗಳಲ್ಲಿ, ಭೂಗರ್ಭದಲ್ಲಿ ಸ್ಥಿತಿ ಮೂಲ ವಸ್ತುಗಳಲ್ಲಿ ಔಷಧಿಯ ಗುಣಗಳಿವೆ.  ಇವುಗಳನ್ನು ಹೇಗೆ ಬಳಸಬೇಕು.  ಹೇಗೆ ಔಷಧಿಯಾಗಿ ತಯಾರಿಸಬೇಕು ಎನ್ನುವದು ಬಹಳ ಮುಖ್ಯವಾಗಿದೆ.

•         ಆಹಾರದಲ್ಲಿ ಬಳಸುವ ಎಲ್ಲಾ ವಸ್ತುಗಳು ಒಂದಿಲ್ಲಾ ಒಂದು ಔಷಧಿಯ ಗುಣಗಳನ್ನು ಹೊಂದಿರುತ್ತವೆ.

•         ಉದಾಹರಣೆಗೆ – ಆಹಾರದಲ್ಲಿ ಬಳಸಲಾಗುವ ಶುಂಠಿ, ಕಾಳುಮೆಣಸು ಸಾಸಿವೆ, ಜೀರಿಗೆ, ಅಜವಾನ, ಲವಂಗ, ಏಲಕ್ಕಿ, ಕಲ್ಲು ಸಕ್ಕರೆ, ಬೆಲ್ಲ ವಿವಿಧ ತರಕಾರಿಗಳು ವಿವಿಧ ಹಣ್ಣುಗಳು.

ಅಲ್ಲದೇ – ಕೆಲವು ಔಷಧೀಯ ಪೇಯಗಳು, ಪಾನಕಗಳು, ಮಾಂಸರಸಗಳನ್ನು ಸ್ವಲ್ಪದರಲ್ಲೇ ವಿವರಿಸಲಾಗಿದೆ.

ಉದಾಹರಣೆಗೆ – ಅರ್ಜುನ ಕ್ಷೀರಪಾಕ

                     ಖರ್ಜೂರಾದಿ ಮರಿಫ.

                     ಚಿಂಚಾ ಪಾನಕ

                     ವಿವಿಧ ಔಷಧಿಯುಕ್ತ ತಕ್ರಗಳು

                     ಔಷಧಿಯುಕ್ತ ಮಾಂಸಭಕ್ಷಗಳು

                     ಇವೆಲ್ಲವುಗಳು ಔಷಧಿಯುಕ್ತ ಆಹಾರಗಳೇ,

ಇವೆಲ್ಲವುಗಳ ಆಧಾರದ ಮೇಲೆ ಈ ವೈಜ್ಞಾನಿಕ ಲೇಖನದ ಶೀರ್ಷಿಕೆಗೆ ಒಂದು ವೈಜ್ಞಾನಿಕ ಪರಿಕಲ್ಪನೆಯನ್ನು ನೀಡುವ ಪ್ರಯತ್ನ ಲೇಖಕರದ್ದಾಗಿದೆ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ

ಶಶಿಸೂರ್ಯಬಿಂಬದಾ | ರಸಬಲಿದ ಪರ್ವತವ

ಶಿಶುವಾಗಿ ಹತ್ತಿಪಶುವಾಗಿ ಸುಳಿದೆನೈ

ಅಸಮ ಶ್ರೀ ಗುರುವೆ ಕೃಪೆಯಾಗು||೫೧||

 ಈ ದಾರ್ಶನಿಕ ಕವಿಯು ಶಿವಾಂಶಿಕನಾದ ಜೀವಾತ್ಮನು ಮಾಯ ಮೋಹಗಳ ತಮಂಧದಲ್ಲಿ ಮುಳುಗಿ ನಿವೃತ್ತಿಯನ್ನು ಅರಿಯದೆ ಪಶುವಾಗುವ ಪರಿಯನ್ನು ಇಲ್ಲಿ ಪ್ರದರ್ಶಿಸುತ್ತಾನೆ.

ಪರ್ವತಗಳಲ್ಲಿ ರಸಮೂಲಿಕೆಗಳು ಚಂದ್ರನ ಬೆಳದಿಂಗಳ ತಂಪನ್ನು ಸೂರ್ಯನ ಬಿಸಿಲಿನ ಶಾಖವನ್ನು ಹೊಂದಿ ಚೆನ್ನಾಗಿ ಬೆಳೆಯುತ್ತವೆ. ಗಿಡಮೂಲಿಕೆಗಳನ್ನು ಉಪಯೋಗಿಸುವ ಜ್ಞಾನವಿಲ್ಲದೆ ಜೀವಿಯು ಪಶ್ವತವನ್ನೆಲ್ಲ ಸುತ್ತಾಡಿ ಅಜ್ಞಪಶುವಿನಂತೆ

ತನ್ನ ಜೀವನವನ್ನೂ ಕಳೆದುಕೊಳ್ಳುತ್ತಾನೆ. ಸಂಜೀವಿನಿಯಿಂದ ಅಮರಕಾಯವನ್ನು ಪಡೆಯಬಹುದು. ಆದರೆ ತಜ್ಞರ ಮಾರ್ಗದರ್ಶನವಿಲ್ಲದೆ ಆ ಕಾಯಕಲ್ಪವನ್ನು ಕಲಿಯಲು ಸಾಧ್ಯವಾಗುವದಿಲ್ಲ. ಇದು ತ್ರಿಪದಿಯ ವಾಚ್ಯಾರ್ಥ.

ಮಾನವನ ದೇಹ ಪರ್ವತದಲ್ಲಿ ಶಸಿ ಸೂರ್ಯರೆಂದರೆ ಎಡಗಣ್ಣು ಮತ್ತು ಬಲಗಣ್ಣು ಅಥವಾ ಇಡಾ-ಪಿಂಗಳ ನಾಡಿಗಳು. ಎಡಗಣ್ಣಿಗೆ ಚಂದ್ರನೇತ್ರವೆಂತಲೂ, ಬಲಗಣ್ಣಿಗೆ ಸೂರ್ಯನೇತ್ರವೆಂತಲೂ ಕರೆಯುತ್ತಾರೆ. ಈ ಶರೀರದಲ್ಲಿ ಒಟ್ಟು ೭೨ ಸಾವಿರ ನಾಡಿಗಳಿರುತ್ತವೆಂದು ಚನ್ನಬಸವಣ್ಣನವರು “ಘಟಚಕ್ರದ”ಲ್ಲಿ ಪ್ರತಿಪಾದಿಸಿದ್ದಾರೆ.

ಈ ಮಾತನ್ನು ಇಂದಿನ ಶರೀರ ವಿಜ್ಞಾನವನ್ನು ಬಲ್ಲವರೂ ಒಪ್ಪುತ್ತಾರೆ. ಎಲ್ಲ ನಾಡಿಗಳಲ್ಲಿ ೧೫೦೦ ನಾಡಿಗಳು ಶರೀರಕ್ಕೆ ಕಾರಣವಾಗಿ ಕೆಲಸ ಮಾಡುತ್ತವೆ. ಅವುಗಳೊಳಗೆ ೭೦೦ ನಾಡಿಗಳು ಮುಖ್ಯವಾಗಿದ್ದು ಇವುಗಳಲ್ಲಿ ೧೦೦ ನಾಡಿಗಳು ಪ್ರಧಾನವಾಗಿರುತ್ತವೆ. ಮತ್ತೆ ಅವುಗಳಲ್ಲಿ ೨೮ ನಾಡಿಗಳು ಮಾತ್ರ ಅತ್ಯಂತ ಪ್ರಯೋಜನಕಾರಿಗಳಾಗಿರುತ್ತವೆ. ಈ ೨೮ ನಾಡಿಗಳಲ್ಲಿ ಪ್ರಾಣವಾಹಿನಿಯಾಗಿರುವ ಹತ್ತು ನಾಡಿಗಳು ಶರೀರದ ಎಲ್ಲ ಆಗು ಹೋಗುಗಳನ್ನು ಸೂಚಿಸಿ ನಿಯಂತ್ರಿಸುತ್ತವೆ. ಅತಿ ಮುಖ್ಯವೆನಿಸಿದ ಹತ್ತುವಿಧ-ಜೀವನಾಡಿಗಳಲ್ಲಿ ಇಡಾ-ಪಿಂಗಳಾ ಮತ್ತು ಸುಷುಮ್ಮಾ ಈ ಮೂರು ನಾಡಿಗಳು ಜೀವಾತ್ಮನ ಪ್ರಾಣ ಮಾರ್ಗದಲ್ಲಿರುತ್ತವೆ.

“ಇವುಗಳು ಅತ್ಯಂತ ಸೂಕ್ಷ್ಮವಾದ ಪಾರದರ್ಶಕವಾದ ದ್ರವ್ಯಗಳಿಂದ ನಿರ್ಮಾಣ ವಾಗಿದ್ದು ಆತ್ಮಶಕ್ತಿಯ ಸೂಕ್ಷ್ಮಪ್ರವಾಹಗಳನ್ನು ಒಯ್ಯುವ ಕಾಲುವೆಗಳಾಗಿವೆ”ಯೆಂದು ನವಕಲ್ಯಾಣಮಠದ ಶ್ರೀ ಕುಮಾರಸ್ವಾಮಿಗಳು ತಮ್ಮ ಶಿವಯೋಗ ರಹಸ್ಯ’ವೆಂಬ ಗ್ರಂಥದಲ್ಲಿ ಬರೆದಿದ್ದಾರೆ. ಇಂಥಾ ಇಡಾ ಮತ್ತು ಪಿಂಗಳಗಳು ಭಾವಪ್ರೇರಕ ದ್ರವಗುಣಗಳನ್ನು ಹೊಂದಿರುವದರಿಂದ ಅದುವೆ ಬಿಂಬವೆನಿಸುವದು, ಈ ಬಿಂಬ ದಿಂದ ಬಲಗೊಂಡ ಪರ್ವತವೆಂದರೆ ಜ್ಞಾನವುಳ್ಳ ಮಸ್ತಕವು, ಮಸ್ತಕದ ಸಹಸ್ರಾರ

ಚಕ್ರದಲ್ಲಿ ಜ್ಞಾನಿಯಾದ ಯೋಗಿಯು ಅಮೃತ ಬಿಂದುವನ್ನು ಪಡೆಯುತ್ತಿರುತ್ತಾನೆ. ಅದರಂತೆ ತಾಯಿಯ ಗರ್ಭದಲ್ಲಿದ್ದ ಶಿಶುವು (ಜೀವಾತ್ಮನು) ಇಡಾ ಪಿಂಗಳ ನಾಡಿಗಳಿಂದ ಆತ್ಮ ಶಕ್ತಿಯ ಸೂಕ್ಷ್ಮ ಬಿಂದುವನ್ನು ಪಡೆದು ಪೂರ್ವಜನ್ಮದ ಅರಿವನ್ನು ಹೊಂದುತ್ತಾನೆ. ಇದು ಶಿವನ ಲೀಲೆ. ಆದರೆ ತಾಯಿಯ ಹೊಟ್ಟೆಯಲ್ಲಿ ಜ್ಞಾನ ಪಡೆದ ಶಿಶುವು ಪ್ರಸೂತಿ ಗಾಳಿಯಿಂದ ಹೊರಬರುತ್ತಲೇ ಪಶುವಿನಂತೆ ಜ್ಞಾನಶೂನ್ಯವಾಗಿ ಬಿಡುತ್ತದೆ. ಅರ್ಥಾತ್ ಗರ್ಭಾವಸ್ಥೆಯಲ್ಲಿದ್ದ ಜೀವಾತ್ಮನು ಇಡಾ ಪಿಂಗಳ ನಾಡಿಗಳಲ್ಲಿ ಸಂಚರಿಸುತ್ತಿದ್ದು ಜ್ಞಾನದ ಕೇಂದ್ರವಾದ ಮಸ್ತಕದಲ್ಲಿ ಜ್ಞಾನವನ್ನು ಪಡೆದಿರುತ್ತಾನೆ. ಅದಕ್ಕಾಗಿ ಹಿಂದಿನ ಜನ್ಮದ ಸ್ಮರಣೆ ಬಂದು- ‘ದೇವಾ ! ಪರಮಾತ್ಮಾ! ಇನ್ನು ಮುಂದೆ ನನ್ನನ್ನು ಈ ಭವದಲ್ಲಿ ನೂಕಬೇಡ. ಇನ್ನೆಂದೂ ನಿನ್ನನ್ನು ಮರೆಯುವದಿಲ್ಲ’ ವೆಂದು ಅನನ್ಯಭಾವದಿಂದ ಜೀವಾತ್ಮನು ಪ್ರಾರ್ಥಿಸುತ್ತಾನೆ. ಆದರೆ ಪ್ರಸೂತಿ ಕಾಲಕ್ಕೆ ವಿಷ್ಣುವಾಯುವು ಗರ್ಭಾಶಯದಿಂದ ಜೀವನನ್ನು ಹೊರನೂಕುತ್ತಿರಲು ಪೂರ್ವಜನ್ಮದ ಅರಿವೆಲ್ಲ ಹಾರಿಹೋಗಿ ಮಾಯಾಮೋಹಗಳಲ್ಲಿ ಸಿಲುಕುತ್ತಾನೆ.

ಇದು ಕಾರಣ ಶಿಶುವಿನ ಜನ್ಮವಾಗುವ ಮುಂಚೆಯೇ ಗರ್ಭಾಷ್ಟಮಿಯಲ್ಲಿ ಶಿವಲಿಂಗ ಸಂಸ್ಕಾರವನ್ನಿತ್ತು ಪೂರ್ವದ (ಗರ್ಭಾವಸ್ಥೆಯಲ್ಲಿ ಉಂಟಾದ) ಜ್ಞಾನವುಳಿಯುವಂತೆ ಮಾಡುವದೇ ವೀರಶೈವ ಸಿದ್ದಾಂತದ ಪ್ರಮುಖ ವೈಶಿಷ್ಟ್ಯವಾಗಿದೆ. ಈ

ಅಭಿಪ್ರಾಯವನ್ನೇ ಶಿವಕವಿಯು ಬಿತ್ತರಿಸಿದ್ದಾನೆ. ತಾಯಿಯ ಹೊಟ್ಟೆಯಲ್ಲಿ ಜ್ಞಾನೋದಯವಾದ ಶಿಶುವಿಗೆ ಆ ಜ್ಞಾನವು ಪುನಃ ಪ್ರಾದುರ್ಭಾವವಾಗಬೇಕಾದರೆ ಶ್ರೀಗುರುವಿನಿಂದ ಗರ್ಭದ ಎಂಟನೇ ತಿಂಗಳಲ್ಲಿ ಲಿಂಗಧಾರಣ ಸಂಸ್ಕಾರವನ್ನು

ಮಾಡಿಸಬೇಕು. ಗುರುದೇವನು ಇಂಥ ಅದ್ಭುತ ಸಂಸ್ಕಾರವನ್ನು ಕರುಣಿಸುವದರಿಂದಲೇ ಅಸಮನೆನಿಸುತ್ತಾನೆ.

“ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ ||”

“ಹುಟ್ಟಿನಿಂದ ಶೂದ್ರನಾಗಿ ಸಂಸ್ಕಾರಬಲದಿಂದ ದ್ವಿಜನೆನಿಸುವನು” ಎಂಬ ಬ್ರಾಹ್ಮಣ್ಯ ವಾದವನ್ನು ತೆಗೆದು ಹಾಕುತ್ತಾನೆ ಶ್ರೀಗುರುವು, ಗರ್ಭದ ಎಂಟನೇ ತಿಂಗಳಲ್ಲಿ ಜ್ಞಾನೋದಯವಾದ ಶಿಶುವಿಗೆ ಲಿಂಗಸಂಸ್ಕಾರವನ್ನು ಕೊಡಿಸುವದರಿಂದ ಜನನವಾದ  ಮೇಲೆ ಬರುವ ಶೂದ್ರತ್ವವಾಗಲಿ, ಪಶುತ್ವವಾಗಲಿ, ಉಳಿಯಲಾರದು. ಮಹಾಭಾರತ ದಲ್ಲಿ ಹೇಳಿದಂತೆ

ಸುಭದ್ರಾದೇವಿಯ ಗರ್ಭದಲ್ಲಿದ್ದ ವೀರ ಅಭಿಮನ್ಯುವು ಚಕ್ರವ್ಯೂಹವನ್ನು ಬೇಧಿಸುವ ಕಥೆಯನ್ನು ಮಾವನಾದ ಶ್ರೀಕೃಷ್ಣನಿಂದ (ತಾಯಿಯ ಮುಖಾಂತರ) ಕೇಳಿದ್ದನು. ಅಂತೆಯೇ ಮಹಾಭಾರತ ಸಂಗ್ರಾಮದ ಸಂದರ್ಭದಲ್ಲಿ ಆ ಜ್ಞಾನ ಸಂಸ್ಕಾರವು ಅವನಿಗೆ ಬೋಧಕವಾಯಿತು. ಸಹಾಯಕವಾಯಿತು. ಆದರೆ ಚಕ್ರವ್ಯೂಹವನ್ನು ಪ್ರವೇಶಿಸುವ ಕಥೆಯನ್ನು ಮಾತ್ರ ಕೇಳಿದ್ದರಿಂದ ಆ ವ್ಯೂಹದಿಂದ ಮರಳಿ ಬಾರದೇ ಅಲ್ಲೇ ವೀರಸ್ವರ್ಗವನ್ನು ಪಡೆದನೆಂಬ ಕಥಾನಕವು ಜನಜನಿತವಾಗಿದೆ.

  ಇದರಂತೆ ತಾಯಿಯ ಗರ್ಭಸ್ಥಶಿಶುವಿಗೆ ಎಂಟನೇ ತಿಂಗಳಲ್ಲಿ ಅವಶ್ಯವಾಗಿ ಶಿವ (ಲಿಂಗ) ಸಂಸ್ಕಾರವನ್ನು ಶ್ರೀಗುರುವಿನಿಂದ ಕೊಡಿಸಬೇಕು. ಇದರಿಂದ ಮಕ್ಕಳು ಶಿವ ಸಂಸ್ಕಾರಿಗಳೂ, ಆದರ್ಶರೂ, ಶರಣಮಾರ್ಗಾವಲಂಬಿಗಳೂ ಆಗುವಲ್ಲಿ ಸಂದೇಹವಿಲ್ಲ.

  ಕರಿಯ ಬಣ್ಣದ ಪಕ್ಷಿ | ಗರಿಯ ಗಾಳಿಯ ಕೂಡಿ

ತಿರುಗಿ ನಾ ಸೋತು ಶಿರಬಾಗಿ ನಿಮ್ಮಂಘ್ರಿ

ಗೆರಗಿದೆನು ಗುರುವೆ ಕೃಪೆಯಾಗು||೫೨||

ಗರ್ಭಾಷ್ಟಮಿಯಲ್ಲಿ ಲಿಂಗಸಂಸ್ಕಾರವನ್ನು ಮಾಡಿಸದಿದ್ದರೆ, ಪಕ್ಷಿಯ ಗರಿಯಂತೆ ಜೀವಾತ್ಮನು ತಿರುಗುತ್ತಾನೆಂಬ ವಿಷಯವನ್ನು ಶಿವಕವಿಯು ವಿಶದಪಡಿಸಿದ್ದಾನೆ.

ಕಪ್ಪು ಬಣ್ಣದ ಪಕ್ಷಿಯ ಗರಿಯು ಸುಂಟರ ಗಾಳಿಯಲ್ಲಿ ಸಿಕ್ಕರೆ ಸುತ್ತಿ ಸುತ್ತಿ ಬರುತ್ತದೆ. ಕರಿಯಬಣ್ಣದ ಪಕ್ಷಿಯೆಂದರೆ ಅಜ್ಞಾನವು, ಅಜ್ಞಾನದಿಂದ ಸಂಬಂಧವಾಗುವ ಕುಕರ್ಮವೆಂಬ ರೆಕ್ಕೆಯು ಜೀವಾತ್ಮನಿಗೆ ಅಂಟುತ್ತದೆ. ಈ ದುರ್ವಾಸನೆಯ ಗಾಳಿಯಲ್ಲಿ

ಜೀವಾತ್ಮನು ಜನ್ಮ ಜನ್ಮಾಂತರಕ್ಕೆ ತಿರು ತಿರುಗಿ ಬರುತ್ತಾನೆ. ಇದರಿಂದ ಅವನು ಸೋಲನ್ನಪ್ಪಬೇಕಾಗುವದು.

ಗುರುವೆ ! ಈ ಸಾಂಸಾರಿಕ ದುರ್ವಾಸನೆಯ ಗಾಳಿಯಲ್ಲಿ ಹುಟ್ಟಿ ಬೇಸತ್ತಿರುವೆ. ನಿನ್ನ ಪದಕಮಲದಲ್ಲಿ ಶಿರಬಾಗಿಬೇಡುತ್ತೇನೆ, ಕರುಣಿಸು. ಸೋತವನಿಗೆ ಸಂತೈಸುವಲ್ಲಿ ಶ್ರೀಗುರುವೇ ಸಮರ್ಥನು. ಭೂಮಿಗೆ ಬರವಮುಂಚೆಯೇ ಶಿವಸಂಸ್ಕಾರವನ್ನಿತ್ತು

ಕರ್ಮದ ಗರಿಯನ್ನು ಕತ್ತರಿಸಿಹಾಕು, ಮಂತ್ರೋಪದೇಶಮಾಡಿ ಕಪ್ಪು ಪಕ್ಷಿಯನ್ನು ನನ್ನ ದೇಹದಿಂದ ಹಾರಿಸಿಬಿಡು. ಅರ್ಥಾತ್ ಅಜ್ಞಾನವನ್ನು ಹೋಗಲಾಡಿಸು.

ಶಿವದೀಕ್ಷಾ ಸಂಸ್ಕಾರದಿಂದ ಪಾಪ-ಕರ್ಮವೆಲ್ಲ ಕಪ್ಪು ಪಕ್ಷಿಗಳಾಗಿ ಹಾರಿ ಹೋದವೆಂದು “ಸ್ಕಂದ ಪುರಾಣ”ದ ಬ್ರಷ್ಟೋತ್ತರ ಖಂಡದಲ್ಲಿ ಉಲ್ಲೇಖನೀಯವಾಗಿದೆ.

ತನ್ಮಂತ್ರ ಧಾರಣಾದೇವ ತನ್ಮುನೇರ್ಹಸ್ತ ಸಂಗಮಾತ್ |  

 ನಿರ್ಯಯುಸ್ತಸ್ಯ ವಪುಷೋ ವಾಯಸಾಃ ಶತಕೋಟಯಃ || ೧.೫೮ ||

ತಾಯಿಗರ್ಭದ ಎಂಟನೇ ತಿಂಗಳಲ್ಲಿ ಶಿವಸಂಸ್ಕಾರವನ್ನು ಪಡೆದ ಶಿಶುವು ೮ನೇ ವರ್ಷದಲ್ಲಿ ಪುನಃ ಗುರು ಹಸ್ತಸ್ಪರ್ಶವನ್ನು ಹೊಂದಿ ಮಂತ್ರೋಪದೇಶವನ್ನು ಪಡೆಯಲೇಬೇಕು. ಗುರುವು ಶಿಷ್ಯನ ಮಸ್ತಕದ ಮೇಲೆ ಹಸ್ತವನ್ನಿಟ್ಟು ಶರೀರ ಶುದ್ದಿಗೊಳಿಸುವನು. ಕರ್ಣದಲ್ಲಿ ಷಡಕ್ಷರ ಮಹಾಮಂತ್ರವನ್ನು ಉಪದೇಶ ಮಾಡುವದರಿಂದ ಅವನ ಶರೀರದಲ್ಲಿಯ ಪಾಪಕರ್ಮವೆಂಬ ಶತಕೋಟಿ ಕಾಗೆಗಳು ಹಾರಿ ಹೋದವೆಂಬುದು ಮೇಲಿನ ಮಂತ್ರದಿಂದ ತಿಳಿದುಬರುತ್ತದೆ.

ಶಿವಸಂಸ್ಕಾರದಿಂದ ಸ್ಥೂಲ-ಸೂಕ್ಷ ಕಾರಣ ತನುಗಳು ಶುದ್ಧವಾಗುವವು, ಅದು ಕಾರಣ ಶ್ರೀಗುರುಪಾದದಲ್ಲಿ ಬಾಗಬೇಕು. ನತಮಸ್ತಕನಾಗಬೇಕು. ಶಿಷ್ಯನ ಮಸ್ತಕಕ್ಕೆ ಗುರುಪಾದದಂಗುಷ್ಟದ ಸ್ಪರ್ಶವಾಗುವದರಿಂದ ಗುರುಕರುಣೆಯಾಗುವದಲ್ಲದೆ ಜ್ಞಾನದ ಬೆಳಕು ಹರಿದುಬರುತ್ತದೆ. ಬಾಗಿದ ಬೆತ್ತ ಬಹುಕಾಲ ಬಾಳುತ್ತದೆ. ಗುರುಹಿರಿಯರಿಗೆ ಬಾಗದವನು ಹಕ್ಕಿಯ ರೆಕ್ಕೆಯಂತೆ ಗಾಳಿಗೆ ಹಾರಿ ಹೋಗುವನು. ನಾಶವನ್ನು ಹೊಂದುವನು. ಆದ್ದರಿಂದ ಶ್ರೀಗುರುಕೃಪೆ ಪಡೆದು ಕರ್ಮಚ್ಛೇದವನ್ನು ಹೊಂದುವದೇ

ಜೀವಾತ್ಮನ ಗುರಿಯಾಗಿದೆ. ಇದನ್ನು ಮನನಮಾಡಿಕೊಂಡ ಶಿವಕವಿಯ ಸಾಂಸಾರಿಕ ವಾಸನೆಯ ಗಾಳಿಯಲ್ಲಿ ಬಳಲಿ ಬೆಂಡಾಗಿ ಶಕ್ತಿ ಗುಂದಿ ಶ್ರೀಗುರುವಿನ ಅಂಘ್ರಿಗೆರಗಿ ಕೃಪೆಬೇಡಿದ್ದಾನೆ. ಆಧ್ಯಾತ್ಮಿಕ ಸಾಧಕರಿಗೆ ಮಾರ್ಗದರ್ಶನ ಮಾಡಿದ್ದಾನೆ.

ಸರಿಬಿತ್ತಿ ಬೆಸನೊಗದ | ಮರದ ಶಾಖೆಯೊಳು ವಾ

ನರರಾಜ ಕುಳಿತು-ಧರೆ ಮೂರನಾಳ್ವನೆಂ

ದರಿದೆ ಶ್ರೀಗುರುವೆ ಕೃಪೆಯಾಗು||೫೩||

ಶಿವಕವಿಯ ಬೆಡಗಿನ ಮಾತುಗಳಿಂದ ತಾತ್ವಿಕ ವಿಚಾರವನ್ನು ಬಿತ್ತರಿಸುತ್ತಾನೆ.  “ಸಂಗಾತ್ ಸಂಜಾಯತೇ ಜೀವಃ’. ಎಂಬ ಉಕ್ತಿಯಂತೆ ಎರಡು ವಸ್ತುಗಳ ಸಂಗದಿಂದ ಮತ್ತೊಂದು ವಸ್ತುವಿನ ಪ್ರಾಧುರ್ಭಾವವಾಗುವದು. ಅಂತೆಯೇ ಕೃಷಿ ಮಾಡಿದ

ಭೂಮಿಯಲ್ಲಿ ಬೀಜ ಮತ್ತು ನೀರನ್ನು ಹಾಕಿದರೆ ಸಸಿಯು ಹುಟ್ಟುತ್ತದೆ. ಆ ಸಸಿಯು ಬೆಳೆದು ದೊಡ್ಡದಾಗಿ ಮರವಾದರೆ ಅದರಲ್ಲಿ ಮಂಗಗಳು ವಾಸಮಾಡಬಲ್ಲವು. ಹಿರಿಯ ಮಂಗ ತನ್ನ ಹಿಂಡಿನೊಡನೆ ಮರದ ಶಾಖೆ ಶಾಖೆಗಳಲ್ಲಿ ಹಾರಾಡಿ ತಮ್ಮ ಚೇಷ್ಟೆಯನ್ನು ಮಾಡುವದು.

ಇದರಂತೆ : ಸರಿಯಾದ ಎರಡಾದ ತಂದೆಯ ಶುಕ್ಲ ಮತ್ತು ತಾಯಿಯ ಶೋಣಿತದ ಸಮಾಗಮದಿಂದ ಬೆಸವೆನಿಸುವ (ಒಂದಾದ) ಶರೀರವು ಉತ್ಪನ್ನವಾಗುವದು. ಈ ಶರೀರವು ತಾರುಣ್ಯಕ್ಕೆ ಬರಲು, ಬೆಳೆದ ಮರನಂತಾಗುವದು. ಅಂದರೆ ದೇಹವು ವೃಕ್ಷ ; ಇದರ ಕರುಣೇಂದ್ರಿಯಗಳೇ ಶಾಖೆಗಳೆನಿಸುವವು. ಇಂದ್ರಿಯಗಳಿಗೆ ಚಾಲನೆ ಕೊಡುವ ಮನಸ್ಸೇ ಮಂಗ, ಅದನ್ನೇ ವಾನರ ರಾಜನೆಂದು ಶಿವಕವಿಯು ಬಣ್ಣಿಸಿದ್ದಾನೆ. ಈ ಮನವು ಹಿರಿಯ ಮಂಗನಂತೆ ಅತಿ ಚಂಚಲವೂ ಕುಚೇಷ್ಟೆಯುಳ್ಳುದೂ ಆಗಿದೆ. ಕಪಿಯು ಮರದ ಶಾಖೆ-ಶಾಖೆಗಳಿಗೆ ಹಾರಾಡಿ ಕಾಯಿಯನ್ನೋ ಹಣ್ಣನ್ನೋ ತಿನ್ನುವಂತೆ ಮನವೆಂಬ ಮಂಗನು ಶರೀರದ ಇಂದ್ರಿಯಗಳ ಮುಖಾಂತರ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಷಯಗಳ ಭೋಗಕ್ಕೆ ಹಾತೊರೆದು ಪಾತಾಳ ಲೋಕ, ಭೂಲೋಕ, ಸ್ವರ್ಗಲೋಕಗಳೆಂಬ ಮೂರು ಮಂಡಲಗಳನ್ನು ಆಳಬಯಸುವದು. ಸುಖದ ಕಲ್ಪನೆ ಅನಂತ ಮುಖವಾಗಿ ಮೂರು ಲೋಕಗಳ ವ್ಯಾಪ್ತಿಯೂ ಮನವೆಂಬ ಕಪಿರಾಯನಿಗೆ ಸಾಕಾಗುವದಿಲ್ಲ. ಅನೇಕ ಸಾಧು ಸಂತರು ಮನಸ್ಸಿಗೆ ಮಂಗನ ಹೋಲುವಿಕೆ (ಉಪಮೆ)ಯನ್ನು ಕೊಟ್ಟಿದ್ದು ಅತ್ಯಂತ ಸಮೀಚೀನವಾಗಿದೆ. ಷಡಕ್ಷರ ಕವಿಗಳು –

“ಮನವೆಂಬ ಮರ್ಕಟನ ಚಪಲ ಚೇಷ್ಟೆಗಳನು

ಎಷ್ಟೊಂದು ಬಣ್ಣಿಸಲಿʼʼ

ಎಂದು ಹಾಡಿ ದಣಿದಿದ್ದಾರೆ. ಷಣ್ಮುಖ ಶಿವಯೋಗಿಗಳು-

“ ಮನವೆಂಬ ಮರ್ಕಟವು ತನುವೆಂಬ ವೃಕ್ಷವನೇರಿ,

ಇಂದ್ರಿಯಗಳಿಂಬ ಶಾಖ-ಶಾಖೆಗಳಿಗೆ ಹಾರಿ,

ವಿಷಯಗಳೆಂಬ ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ ಅಖಂಡೇಶ್ವರಾ’.

 ಎಂದು ಮರ್ಕಟನ ಸುಂದರ ಸಾದೃಶ್ಯವನ್ನು ಕಂಡಿದ್ದಾರೆ. ಇದೇ ತೆರನಾಗಿ ಅಣ್ಣ ಬಸವಣ್ಣನವರೂ

“ಮರವನೇರಿದ ಮರ್ಕಟನಂತೆ

ಹಲವು ಕೊಂಬೆಗೆ ಹಾಯುತ್ತಲಿದೆ;

ಬೆಂದ ಮನವ ನಾನೆಂತು ನಂಬುವೆನಯ್ಯ !

ಎಂತು ನಚ್ಚುವೆನಯ್ಯಾ ! ಎನ್ನ ತಂದೆ

ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯ !”

ಎಂದು ಮನಸ್ಸಿನ ಉಪಟಳವನ್ನು ಚಿತ್ರಿಸಿದ್ದಾರೆ ಮತ್ತು ಅನುಭವಿಗಳಾದ ಶಿಶುನಾಳ ಶರೀಫರ –

‘ʼಕಟ್ಟೋ ಮಂಗ್ಯಾನ್ನ ! ಬೇಡ್ತದ ಹಣ್ಣ!”

ಎಂಬ ಜಾನಪದ ಗೀತೆಯಲ್ಲಿಯೂ ಮೇಲಿನ ವಿಷಯ ಅಭಿವ್ಯಕ್ತವಾಗಿದೆ.

ʼ’ಮನ ಏವ ಮನುಷ್ಯಾಣಾಂ

ಕಾರಣಂ ಬಂಧ ಮೋಕ್ಷಯೋಃ |ʼʼ

ಮನಸ್ಸೇ ಭವಬಂಧನಗಳೆರಡಕ್ಕೂ ಅಲ್ಲದೆ ಮೋಕ್ಷಕ್ಕೂ ಕಾರಣವಾಗಿದೆಯೆಂದು ನೀತಿಕಾರರು ನಿರೂಪಿಸಿದ್ದಾರೆ.

 ಮನವೆಂಬ ಮಂಗನು ಸ್ಥೂಲ-ಸೂಕ್ಷ್ಮಕಾರಣಗಳೆಂಬ ತನುತ್ರಯದಲ್ಲಿ ಜಾಗ್ರತ್ ಸ್ವಪ್ನ-ಸುಷುಪ್ತಿಯಲ್ಲಿಯೂ ಸಂಚರಿಸುತ್ತಾನೆ. ಹೀಗೆ ಒಳಹೊರಗಿನ ತ್ರಿಭುವನಗಳನ್ನು ಆಳಬಲ್ಲ ಮಾನವನ ಮನಸ್ಸನ್ನು ಸ್ಥಿರಗೊಳಿಸಬಲ್ಲಾತನು ಗುರು ದೇವನೊಬ್ಬನೆ.

ಹೇ ಗುರುವೆ ! ಎನ್ನ ಮನವೆಂಬ ಮಂಗನನ್ನು ಷಡಕ್ಷರ ಮಂತ್ರೋಪದೇಶದಿಂದ ಶಿಕ್ಷಿಸಿ ಮಂತ್ರ ಜಪವೆಂಬ ಹಗ್ಗದಿಂದ ಅದನ್ನು ಕಟ್ಟುವ ಸಾಮರ್ಥ್ಯವನ್ನು ಕೊಡು. ಇಂಥ ಸನ್ಮಾರ್ಗವನ್ನು ತೋರಿಸಿಕೊಟ್ಟ ಗುರುನಾಥ ! ಕೃಪೆಮಾಡಿ ಉದ್ದರಿಸು.

ಹಿಂದಿನ ತ್ರಿಪದಿಯಲ್ಲಿ ಗುರು ಕರ್ಮಚ್ಛೇದನಗೊಳಿಸಿ ಮಂತ್ರೋಪದೇಶ ಮಾಡಿದ ಮೇಲೆ ಮಂತ್ರದ ಅನುಸಂಧಾನ ಅಥವಾ ನಾಮಜಪದಿಂದ ಮನವೆಂಬ ಮಂಗನನ್ನು ಬಂಧಿಸಲು ಬರುತ್ತದೆಂಬುದೇ ಇದರ ತಿರುಳು.

ಹದ್ದು ಹಾವನು ಕಚ್ಚಿ | ಬದ್ದ ವಿಷ ತಲೆಗೇರಿ

ಬಿದ್ದುದೈ ನೆಲಕೆ – ಮದ್ದು ಮಂತ್ರವ ಬಲ್ಲ

ಸಿದ್ದ ಶ್ರೀಗುರುವೆ ಕೃಪೆಯಾಗು ||೫೪||

ಲೌಕಿಕ ವೈದ್ಯನು ಶಾರೀರಿಕ ರೋಗವನ್ನು ಕಳೆದರೆ ಗುರುಸ್ವಾಮಿಯು ಭವ ರೋಗವನ್ನು ನಿವಾರಿಸಬಲ್ಲ ಅಲೌಕಿಕ ವೈದ್ಯನು. ಈ ಭವರೋಗ ವೈದ್ಯನ ಘನತೆಯನ್ನು ಕವಿರತ್ನ ಚನ್ನಕವಿಗಳು “ಹಾನಗಲ್ಲ ಶ್ರೀಕುಮಾರೇಶ್ವರ ಪುರಾಣ’ದಲ್ಲಿ ಸುಂದರವಾಗಿ ಬಣ್ಣಿಸಿದ್ದಾರೆ. ಶ್ರೀಗುರುನಾಥನನ್ನು ಮನದುಂಬಿ ನುತಿಸಿದ್ದಾರೆ.

“ಭವರೋಗಿಯಾದೆನೆಗೆ ಜ್ಞಾನ ಮೆಂಬೊಂದೌಷ-

ಧವನಿತ್ತು ಗುರುವೆಂಬ ವೈದ್ಯನಾ ಕಾಮಾದಿ

ವಿವಿಧ ವಿಷಯಂಗಳೆಂಬ ಪಥ್ಯಮಂ ಮಾಡಬೇಡೆಂದೊರೆದು ಕರುಣದಿಂದೆ |

ಶಿವಪೂಜೆಯೆಂಬ ಘನಪಥ್ಯಮಂ ಪಿಡಿಸಿದಂ

ಸುವಿರಕ್ತಿಯಿರದಾನಪಥ್ಯ ಸೇವನೆಯಿಂದ

ಭವರೋಗವಳಿಯದಳಲುವೆ ನನಗೆ ವೈರಾಗ್ಯಮಂ ಕೊಟ್ಟು ಸಲಹು ಶಿವನೆ ||”

ಮಾನವನು ಹುಟ್ಟುಸಾವೆಂಬ ಭವರೋಗದಲ್ಲಿ ಸಿಲುಕಿಕೊಂಡಿದ್ದಾನೆ. ಇಂಥ ರೋಗಿಗೆ ಶ್ರೀಗುರುವೇ ವೈದ್ಯನು. ಜ್ಞಾನೋಪದೇಶವೇ ಔಷಧ, ಔಷಧ ಕುಡಿದರೂ ಪಥ್ಯ ಮಾಡುವದು ರೋಗಿಯ ಕರ್ತವ್ಯ. ಆದರೆ ಕಾಮಾದಿ ವಿಷಯಗಳೆಂಬ ಅಪಥ್ಯ ಮಾಡಿದರೆ ಅವನ ಈ ಭವರೋಗವು ವಾಸಿಯಾಗಲಾರದು. ಅದಕ್ಕೋಸುಗ ಭವರೋಗ ವೈದ್ಯನು ಶಿವಪೂಜೆಯೆಂಬ ಘನವಾದ ಪಥ್ಯವನ್ನು ಮಾಡಹಚ್ಚಿ ವಿಷಯ ವೈರಾಗ್ಯವೆಂಬ ಅನುದಾನವನ್ನು ಕೊಟ್ಟರೆ ಭವರೋಗವು  ನಿವಾರಣೆಯಾಗಬಲ್ಲದು. ಇದೇ ರೀತಿಯಾಗಿ ತ್ರಿಪದಿಯ ಕರ್ತನಾದ ಶಿವಕವಿಯು, ಗುರುವು ಮಹಾ ವೈದ್ಯನೆಂತಲೂ, ಮಂತ್ರವನ್ನರಿತ ಸಿದ್ಧಪುರುಷನೆಂತಲೂ ಪ್ರಸ್ತಾಪಿಸಿದ್ದಾನೆ.

ಮೊದಲು ಲೌಕಿಕ ದೃಷ್ಟಾಂತವನ್ನು ಹೇಳುತ್ತಾನೆ. ನೂರಾರು ಮೈಲುಗಳ ಮೇಲೆ ಆಕಾಶದಲ್ಲಿ ಹಾರಾಡುತ್ತಿರುವ ಹದ್ದು ಆಮಿಷವನ್ನು ಕಂಡು ಭೂಮಿಗೆ ಎರಗುತ್ತದೆ. ಆಗ ಅದಕ್ಕೆ ದೊರಕಿದುದು ವಿಷವುಳ್ಳ ಹಾವು. ಅದನ್ನು ಕಚ್ಚಿ ತಿಂದಾಗ ವಿಷ ತಲೆಗೇರಿ ನೆಲಕ್ಕೆ ಬಿದ್ದು ಮೂರ್ಛಹೊಂದುತ್ತದೆ. ಕೊನೆಯುಸಿರನ್ನೂ ಎಳೆಯಬಹುದು ಅದಕ್ಕೆ ಉಪಚರಿಸುವವರಾರು ?

ಇದರಂತೆ ಅಂತರಾರ್ಥವನ್ನು ಹಿಂಜಿನೋಡಲು; ಹದ್ದು = ಪ್ರಾಣವಾಯು; ಪ್ರಾಣಕ್ಕೆ ಅಂಟಿಕೊಂಡಿರುವ ವೈಷಯಿಕ ವ್ಯಸನವೇ ಹದ್ದು. ಹಾವು ಎಂದರೆ ಇಲ್ಲಿ ಹಾವಿನಂತೆ ಡೊಂಕಾದ ಮನವೆಂಬ ಕುಂಡಲಿನಿ, ವಿಷಯಗತವಾದ ಬಯಕೆಯು ಮನದಲ್ಲಿ ಮನೆಮಾಡಿಕೊಂಡಿರುವದೇ ಕಚ್ಚುವಿಕೆ. ಮನಸ್ಸು ವಿಷಯಗಳ ವ್ಯಾಮೋಹದಲ್ಲಿ ಬಹಿಮುರ್ಖವಾಗಿ ಸಂಚರಿಸುವದರಿಂದ ಶ್ರೀಕೃಷ್ಣನು ಹೇಳುವಂತೆ- (ಗೀತೆಯಲ್ಲಿ) ಸಂಗದಿಂದ ಕಾಮಹುಟ್ಟಿ; ಕಾಮ ಪೂರ್ತಿಯಾಗದಿದ್ದರೆ ಕ್ರೋಧವು; ಕ್ರೋಧದಿಂದ

ಸಂಮೋಹವು; ಇದರಿಂದ ಬುದ್ಧಿ ಭ್ರಮಣೆಯೂ ಆಗುವದು. ಅಂದರೆ ವಿಷಯದ ಸಂಗವೆಂಬ ಅಂಧಕಾರವು ಬುದ್ಧಿಯನ್ನು ಕೆಡಿಸಿ ಜೀವಾತ್ಮನನ್ನು ಅಧೋಗತಿಗೆ ನೂಕುತ್ತದೆ. ವಿಷಯ-ವ್ಯಸನವು ತಲೆಗೇರಿದಂಥವನು ಪುನಃ ಪುನಃ ಭವಕ್ಕೆ ಬರುತ್ತಾನೆ. ಜನ್ಮ ಕರ್ಮಗಳ ಬಂಧನದಲ್ಲಿ ಸಿಲುಕುತ್ತಾನೆ.

ಪಂಚೇಂದ್ರಿಯವೆಂಬ ಹೆಡೆಯನುಳ್ಳ

ಸಂಸಾರಸರ್ಪ ದಷ್ಟವಾಗಲು;

ಪಂಚ ವಿಷಯವೆಂಬ ವಿಷಹತ್ತಿ ಮೂರ್ಛಿತರಾದರೆಲ್ಲ ಲೋಕವೆಲ್ಲ

 ಸರ್ವರ ಕಚ್ಚಿ ಕೂಡಿಯಾಡುವ ಸರ್ಪನ

ಬಾಯ ಕಟ್ಟಲರಿಯದೆ ಮರಣವಾದರಲ್ಲಿ ;

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನನರಿಯದವರಿಲ್ಲ.

ಎಂಬ ಸ್ವತಂತ್ರ ಸಿದ್ಧಲಿಂಗೇಶ್ವರರ ವಚನವು ಈ ತ್ರಿಪದಿಯ ಅರ್ಥವನ್ನೇ ಪುಷ್ಟಿಕರಿಸಿದೆ ; ಸ್ಪಷ್ಟಗೊಳಿಸಿದೆ.

 ಈ  ಭವಬಂಧನವನ್ನು ಬಿಡಸಬಲ್ಲ ವೈದ್ಯನು ಗುರುದೇವನು. ಅವನಿಗೇನೇ ಮದ್ದು ಗೊತ್ತು; ಮಂತ್ರ ಗೊತ್ತು. ಗುರುವು ದೀಕ್ಷೆಯನ್ನಿತ್ತು ಮೂಮಲಗಳನ್ನು ಕಳೆದು ಮಾಂಸಮಯ ಶರೀರವನ್ನು ಮಂತ್ರಮಯವನ್ನಾಗಿಸಿ ಷಡಕ್ಷರ ಮಂತ್ರವನ್ನು ಬೋಧಿಸಿ ಮನವು ಮಹಾಲಿಂಗದಲ್ಲಿ ಕೂಡುವ ಸಾಧ್ಯತೆಯನ್ನು ಕರುಣಿಸುತ್ತಾನೆ. ಅಂತೆಯೇ ಆತನು ಸಿದ್ಧಪುರುಷನು, ವೈಷಯಿಕ ಮದ್ದು ಹಾವಿನಂತಿರುವ ಮನವನ್ನು ಕಚ್ಚಿ ನೆಲಕ್ಕೆ (ಭವಕ್ಕೆ) ಬೀಳಿಸುವದನ್ನು ತಡೆಯಬಲ್ಲವನು. ಮದ್ದು ಮಂತ್ರಗಳನ್ನಿತ್ತು ರಕ್ಷಿಸಬಲ್ಲವನೇ ಸಿದ್ಧ ಶ್ರೀಗುರು. ಆತನ ಕರುಣೆ ಅತ್ಯವಶ್ಯವಾಗಿದೆ. ಗುರುಪುತ್ರನಾಗಿ ಶಿವಪೂಜೆಯೆಂಬ ಪಥ್ಯವನ್ನು ಹಿಡಿದು ವೈರಾಗ್ಯ-ಸಾಧನೆಯಿಂದ ಮಂತ್ರ ಜಪಾನುಷ್ಠಾನದಿಂದ ಮನವನ್ನು ಮಹಾಲಿಂಗದಲ್ಲಿ ಬೆರೆಯಿಸುವ ಶಕ್ತಿಯನ್ನು ಪಡೆಯಬಹುದು

ಸುರಲೋಕದರಸು | ನರಲೋಕವಾಳಲ್ಕೆ

ಸುರಲೋಕವೆಲ್ಲ ನರಲೋಕದೊಳಗಾದ

ಪರಿಗಂಡೆ ಗುರುವೆ ಕೃಪೆಯಾಗು ||೫೫||

“ಸರ್ವಂ ಶಿವಮಯಂ ಜಗತ್ʼʼ  ಸಕಲ ಜಗತ್ತು ಶಿವಮಯವಾಗಿದೆಯೆಂದು ಶಾಸ್ತ್ರಕಾರರು ಸಾರಿದ್ದಾರೆ. ಶಿವನಿಂದ ಉತ್ಪನ್ನವಾದ ಈ ಜಗವೆಲ್ಲವೂ ಶಿವನ ಒಂದು ಅಂಶವೆ. ಅಂದಮೇಲೆ ಮಾನವನು ಆತನ ಅಂಶನು ಅಥವಾ ಅಂಗನು, ಮಾನವನು ಪುಣ್ಯಮಯವಾದ ಶರೀರದಿಂದ ಮಹಾದೇವನನ್ನು ಕಾಣಬಲ್ಲನು. ಕೊನೆಗೆ ಅವನೇ ತಾನಾಗಬಲ್ಲನು. ಮಹಾಕವಿ

ಕಾಳಿದಾಸನು ತನ್ನ ಕುಮಾರ ಸಂಭವ’? ಮಹಾಕಾವ್ಯದಲ್ಲಿ –

ಶರೀರಮಾದ್ಯಂ ಖಲು ಧರ್ಮಸಾಧನಮ್ ||

ಶರೀರವೇ ಧರ್ಮಾಚರಣೆಗೆ ಪ್ರಥಮ ಸಾಧನವೆಂದು ಹೇಳಿದ್ದರೆ, ಕನ್ನಡದ ಶಿವಕವಿ-ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಪರಮೇಶ್ವರನು-

“ಯೋಗ ಯೋಗ್ಯರು ಯೋಚಿಸುತ ಭೂ-

ಭಾಗದಲ್ಲಿ ಮಾನವ ಶರೀರಿಗ-

ಳಾಗಿ ಸಾಧಿಸಿ ನಿಜವನರಿವರು ಗಿರಿಜೆ ಕೇಳೆಂದ || ೩೪ ||

ಎಂದು ಪಾರ್ವತಿಗೆ ‘ಯೋಗವನ್ನು ಬಲ್ಲಿದ ಯೋಗಿಗಳು ಸಹ ಭೂವಲಯದಲ್ಲಿ ಮಾನವಶರೀರದಿಂದಲೇ ಭಕ್ತಿಮಾರ್ಗವನ್ನು ಸಾಧಿಸಿ ನಿಜವನ್ನು ಅರಿಯುತ್ತಾರೆಂದು” ತಿಳಿಸಿದ್ದಾನೆ. ಸಕಲ ಜೀವರಾಶಿಗಳಿಗೆ ದುರ್ಲಭವಾದ ಮಾನವ ಶರೀರವನ್ನು ಪಡೆದ

ಮೇಲೆ ಸನ್ಮಾರ್ಗದಲ್ಲಿ ನಡೆದು ಯೋಗ್ಯನಾಗಬೇಕು.

“ಸತ್ಯವ ನುಡಿವುದೇ ದೇವಲೋಕ;

ಮಿಥ್ಯವ ನುಡಿವುದೇ ಮರ್ತ್ಯಲೋಕ;’

ಎಂದು ಅಣ್ಣಬಸವಣ್ಣನವರು ತಿಳಿಸಿದಂತೆ ನಡೆ ನುಡಿಗಳೊಂದಾದರೆ ಸುರಲೋಕವು ಭೂಲೋಕದೊಳಗೇ ಇರುವದು. ದೇವಲೋಕದ ಶಿವನ ಅಂಶನಾದ ಮಾನವನು ಸನ್ಮಾರ್ಗದಲ್ಲಿ ಶಾಂತರೊಸೆದಹುದೆಂದು ಬಣ್ಣಿಸುವ ಮಾರ್ಗದಲ್ಲಿ

ನಡೆದರೆ ಅವನೇ ದೇವನಾಗುವನು. ಅವನಿರುವ ಈ ನರಲೋಕವು ಸುರಲೋಕವಾಗುವದು. ಗುರುಕರುಣೆಯನ್ನು ಪಡೆದ ಈ ದೇಹವು ಸುಂದರ ನಡೆಯಿಂದ ಸುರಲೋಕ ವೆನಿಸುವದು. ಅದರ ಒಡೆಯನಾದ ಜೀವಾತ್ಮನು ಅಥವಾ ಅಂಗನು, ಅವನೇ

ಅರಸನು, ತನ್ನ ಬಹಿರ್ಮುಖಗಳಾದ ನರಲೋಕರೂಪ ಇಂದ್ರಿಯಗಳನ್ನು ಲಿಂಗಗಳನ್ನಾಗಿ ಪರಿವರ್ತಿಸಿ ಅವನ್ನು ತನ್ನ ವಶದಲ್ಲಿಟ್ಟುಕೊಂಡನಾದರೆ ಸುರಲೋಕವಾಗುವದು. ಸುಂದರವಾಗುವುದು. ಸಜೀವನಾಗಿ ಶಿವಭಾವನೆಯಿಂದ ಇಂದ್ರಿಯ ಲೋಕವನ್ನೆಲ್ಲ ಸೌಂದರ್ಯವುಳ್ಳವುಗಳನ್ನಾಗಿ ಮಾಡಿದರೆ –

“ಸತ್ಯಂ ಶಿವಂ ಸುಂದರಂ”

ಎಂಬ ತತ್ತ್ವಯುಕ್ತನಾಗುವದರಲ್ಲಿ ಸಂದೇಹವಿಲ್ಲ. ಅದುಕಾರಣ ಸದಾಚಾರ ಸನ್ಮಾರ್ಗದಿಂದ ನಡೆದು ಈ ಮಾನವಜೀವನದಲ್ಲಿ ಕಾಣದ ಸುರಲೋಕವನ್ನು ಅಳವಡಿಸಿಕೊಂಡು ದೇವನಾಗಬಹುದು. ಯಾವ ಮಹಾತ್ಮನಾದರೂ ದೇವಲೋಕವನ್ನು ತರುವದಿಲ್ಲ. ಈ ಲೋಕವನ್ನೇ ತಮ್ಮ ಆದರ್ಶದಿಂದ ಉಪದೇಶದಿಂದ ಸನ್ಮಾರ್ಗ ತೋರಿ ಸ್ವರ್ಗಸದೃಶ್ಯವನ್ನಾಗಿ ಮಾಡುತ್ತಾರೆ. ಹಿಂದೀ ಸಾಹಿತ್ಯದ ಕ್ರಾಂತಿಕಾರಿ ಕವಿಯಾದ ಮೈಥಿಲಿ ಶರಣ ಗುಪ್ತನು ತನ್ನ ‘ಸಾಕೇತ’ವೆಂಬ ಮಹಾಕಾವ್ಯದಲ್ಲಿ

ಪುರುಷೋತ್ತಮ ರಾಮಚಂದ್ರನ ಜೀವನ ಚಿತ್ರಣವನ್ನು ಮಾಡುತ್ತ ಅವನ ಮುಖದಿಂದ ನುಡಿಸಿದ ಈ ಕೆಳಗಿನ ವಚನಗಳು ಮನನೀಯವಾಗಿವೆ-

“ಮೈಂ ಆರ್ಯೊಂಕಾ ಆದರ್ಶ ಬತಾನೆ ಆಯಾ |

ಭವಮೇಂ ನವ ವೈಭವ ವ್ಯಾಪ್ತ ಕರಾನೆ ಆಯಾ |

ನರ ಕೋ ಈಶ್ವರತಾ ಪ್ರಾಪ್ತ ಕರಾನೆ ಆಯಾ |

ಸಂದೇಶ ಯಹಾಂ ಮೈಂ ನಹೀಂ ಸ್ವರ್ಗ ಕಾ ಲಾಯಾ |

ಇಸ ಭೂತಲಕೋ ಹೀ ಸ್ವರ್ಗ ಬನಾನೆ ಆಯಾ || ಪುಟ ೨೩೪-೩೩.೫

“ನಾನು ಆರ್ಯರ (ಹಿರಿಯರ) ಅಥವಾ ಪೂರ್ವಜರ ಆದರ್ಶವನ್ನು ಹೇಳಲು ಬಂದಿದ್ದೇನೆ. ಈ ಭವದಲ್ಲಿ ನೂತನವಾದ ವೈಭವವನ್ನು ತುಂಬಲು ಬಂದಿದ್ದೇನೆ. ಮಾನವನಿಗೆ ಈಶ್ವರತ್ವದ ಪ್ರಾಪ್ತಿಯನ್ನುಂಟು ಮಾಡಿಸಲು ನನ್ನ ಆಗಮನವಾಗಿದೆ.

ಆದರೆ ನಾನು ಸ್ವರ್ಗದಿಂದ ಯಾವ ಸಂದೇಶವನ್ನು ಮಾತ್ರ ತಂದಿಲ್ಲ. ಈ ಭೂಮಂಡಲವನ್ನೇ ಸ್ವರ್ಗ (ಸದೃಶ) ವನ್ನಾಗಿ ಪರಿವರ್ತಿಸಲು ಬಂದಿದ್ದೇನೆ.”

ಪುಣ್ಯಪುರುಷರ ಜೀವನದ ಆದರ್ಶವನ್ನು ಅನುಸರಿಸಿ ನಡೆದರೆ ಅವನ ಜೀವನ ಸುರಲೋಕದಂತಾಗುವದು. ಗುರುವೆ ! ನಿಮ್ಮ ನಡೆ-ನುಡಿಯ ಆದರ್ಶದಿಂದ ನಿತ್ಯವಾದ ಸ್ವರ್ಗಸುಖವನ್ನು ಕಾಣುವ ಪರಿಯನ್ನು ತೋರಿ ರಕ್ಷಿಸು.

.* ಪ್ರೋ. ಎಸ್, ಡಿ, ಇಂಚಲ

ಕನ್ನಡಿಗರ ಜೀವನವನ್ನೇ ತಮ್ಮ ದಿವ್ಯವಾದ ತಪೋತೇಜಸ್ಸಿನಿಂದ ಬೆಳಗಿ ಮುನ್ನಡೆಸಿ ಹೋದ ಕಾರಣಿಕ ಶ್ರೀ ಕುಮಾರಯೋಗಿಯ ಪುಣ್ಯ ಸ್ಮರಣೆಯ ಗತಿಹೀನರಾದ ಮತಿಹೀನರಾದ ನಮಗೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ. ನಿರುತ್ಸಾಹದ ನಿಬ್ಬೆರಗಿನಲ್ಲಿರುವ ಇಂದಿನ ಕನ್ನಡದ ಮಣ್ಣಿಗೆ ಕಾಯಕಯೋಗಿ ಕುಮಾರೇಶ್ವರನ ನೆನಹು ಆಶಾದಾಯಕವಾದ ಹೊಸ ಜೀವರಸವನ್ನು ಕರೆಯುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಇಂಥ ಮಹಾಮಹಿಮರ ಜೀವನ ಚರಿತ್ರೆಯಿಂದ ನಾವಿಂದು ಬೆಳಕನ್ನು ತುಂಬಿಕೊಳ್ಳಬೇಕಾಗಿದೆ. ಕಾರ್ಯೋತ್ಸಾಹದ ಕಿಡಿಯನ್ನು ಹೊತ್ತಿಸಿಕೊಳ್ಳಬೇಕಾಗಿದೆ.  ಅವರಿತ್ತ ಆ ದಿವ್ಯ ಸಂದೇಶವು ಇಂದಿನವರಾದ ನಮಗೆ ಬಾಳಬಟ್ಟೆಯ ಪರಮಾಗಮ ವಾಗಿದೆ. ಅಂತೆಯೇ ಇಂದು ಶ್ರೀಗಳ ಸವಿನೆನಹು ಭಾರತ ಹುಣ್ಣಿಮೆಯ ಬೆಳದಿಂಗಳಂತೆ ನಮ್ಮ ಬುವಿ ಬಾನುಗಳನ್ನು ತುಂಬಿ ಮೈಮನಗಳನ್ನು ಅರಳಿಸಿ  ಚೇತನಕಾರಿಯಾಗಿ ತೂರಿ ಬರುತ್ತದೆ. ಅದರ ಶುಭ್ರವಾದ ಪವಿತ್ರ ಪ್ರವಾಹದಲ್ಲಿ ನಮ್ಮ ಮೈಮನಗಳನ್ನು ತೇಲುಬಿಟ್ಟು ನಮ್ಮ ಬಾಳಿನ ಮುಂಗೆಲಸಕ್ಕೆ ಮಂಗಳವನ್ನು ಹಾಡೋಣ. ಕಾರ್ಯಕ್ಷೇತ್ರದಲ್ಲಿ ಭಕ್ತಿ ವಿಶ್ವಾಸಗಳಿಂದ ಕಂಕಣ ಬದ್ಧರಾಗಿ ಇಳಿಯೋಣ.

ಕಾರಣಿಕ ಶ್ರೀ ಕುಮಾರಯೋಗಿಯ ಪಾವನತರವಾದ ಈ ಜೀವನ ಪ್ರವಾಹವು ಅನಂತಮುಖವಾಗಿ ಹರಿದು, ಕಾಡಾದ ಕನ್ನಡವನ್ನು ತನ್ನ ತ್ಯಾಗ ಸಾಹಸಗಳ ನಂದನವನವನ್ನಾಗಿ ಮಾಡುವ ಮಹತ್ಕಾರ್ಯದಲ್ಲಿ ಬಿಡುಗಡೆಯನ್ನು ಹೊಂದಿ ಬಯಲನ್ನೇ ಬೆಳಗಿ ಹೋಗಿದೆ. ಅದೊಂದು ಮಹಾತ್ಮನ ಪೂರ್ಣ ಚಿತ್ರವಾಗಿದೆ. ಸತ್ಯ ಸೌಂದರ್ಯದ  ಸಂಗೀತದಿಂದೊಡಗೂಡಿದ ಮಹಾಕಾವ್ಯವಾಗಿದೆ. ಶ್ರೀಗಳ ಬದುಕು ಅವರ ಆತ್ಮ ಸಾಕ್ಷಾತ್ಕಾರದ ಪ್ರತಿಬಿಂಬ; ಮಾನವ ಕಲ್ಯಾಣ ಸಾಧನೆಯ ಅಮೃತ ಸಿದ್ದಿ! ಸಮಾಜ-ಸಂಸ್ಕೃತಿ, ಸಾಹಿತ್ಯ-ಸಂಸ್ಕಾರದ ನಂದಾದೀಪ! ಕ್ರಾಂತಿಯ ಸ್ಟುರಣ! ಶಾಂತಿಯ ಸದನ! ದೀನ ದುರ್ಬಲರ ಅನವರತ ಆಧಾರ! ಹೀಗೆ. ನಾನಾ ಮುಖವಾದ ಶ್ರೀಗಳ ಜೀವನವು ಕನ್ನಡಿಗರ ಅಕ್ಷಯ ನಿಧಿಯಾಗಿದೆ. ತ್ಯಾಗ ಪ್ರೇಮ, ಸೇವೆಗಳ ಸಾರ ಸರ್ವಸ್ವವಾಗಿದೆ. ಅವರದು ಕೇವಲ ಆತ್ಮ ಕಲ್ಯಾಣಕ್ಕಾಗಿ  ದಲಿತ ದರಿದ್ರರ ಏಳ್ಗೆಗಾಗಿ ಪರಿತಪಿಸಿದ ಕೃಷಿ ಜೀವನವಾಗಿದೆ. ಅಂತೆಯೇ ಅವರು ಮೆಟ್ಟಿದ ನೆಲ ಪುಣ್ಯಕ್ಷೇತ್ರವಾಯಿತು. ಅವರು ಕೊಟ್ಟ ಆ ದೃಷ್ಟಿಯಿಂದ ಜನಾಂಗದಲ್ಲಿ ಒಂದು ನವೀನ ಸೃಷ್ಟಿಯೇ ಧರೆಗಿಳಿಯಿತು. ಆಗ ಕನ್ನಡ ನಾಡು  ಧನ್ಯವಾಗಿ ನಮ್ಮ ಸಮಾಜ ಚೇತರಿಸಿಕೊಂಡಿತು. ಬೀಡು ಬಿಟ್ಟು ಅಂಧಕಾರವು ಕರಗಿ  ಜ್ಞಾನಸೂರ್ಯ ಹೊಂಗಿರಣಗಳು ಬಾಳನ್ನು ಬೆಳಗಿದವು ಜನಜೀವನದಲ್ಲಿ ಧರ್ಮ, ನೀತಿ, ದಾನ ದುಡಿಮೆಗಳು ರೂಪಗೊಂಡು ಸತ್ವಯುತವಾದ ಸಮಾಜದ  ಉದಯವಾಯಿತು . ಜನ ಸಾಮಾನ್ಯರ ಬದುಕು ಕೊಳೆಯನ್ನು ಕಳೆದು ಹಸನಾಯಿತು. ಕಷ್ಟಕಾರ್ಪಣ್ಯ ಗಳನ್ನಳಿದು ಹಗುರಾಯಿತು. ಕಸಬು  ಕಾಯಕಗಳನ್ನು ಕೈಕೊಂಡು ಸ್ವಾವಲಂಬಿಯಾಗಿ ಸಮರ್ಥವಾಯಿತು. ಇದು ಅಮೋಘವಾದ ಕ್ರಾಂತಿ. ಈ ಬಗೆಯಾಗಿ ರಕ್ತರಹಿತ ಕ್ರಾಂತಿಯನ್ನೆಸಗಿದ ಅಮೋಘ ಶಕ್ತಿಯಾದ ಶಾಂತಿದೂತನಾದ ಕರ್ಮಯೋಗಿ ಕುಮಾರನ ಜೀವನವು ಅಸಾಮಾನ್ಯವಾದುದು ಎಂದು ಬೇರೆ ಹೇಳಬೇಕಾಗಿಲ್ಲ.

ಶ್ರೀಗಳ ವ್ಯಕ್ತಿತ್ವ ವೈವಿಧ್ಯಪೂರ್ಣವಾಗಿ ಉಜ್ವಲವಾದುದು. ವಿಶಾಲವಾದ ವೈರಾಗ್ಯ, ಮನನೀಯವಾದ ವಿಚಾರ ಸ್ವಾತಂತ್ರ್ಯ, ಆರ್ತರ ಬಗೆಗಿರುವ ಅಪಾರವಾದ ಅನುಕಂಪ, ಅಜ್ಞ ಸಮಾಜದ ಏಳೆಗೆ ತೋರಿದ ಅತುಲವಾದ ಕಳಕಳಿ, ಸಾಹಿತ್ಯ  ಸಂಸ್ಕೃತಿಗಳ ಅಭಿಮಾನ, ಸಂಘ ಸಂಸ್ಥೆಗಳ ಬಗೆಗಿರುವ ನವೀನ ದೃಷ್ಟಿ ಕಾರ್ಯ ಕುಶಲತೆ ಧರ್ಮ ಸಹಿಷ್ಣುತೆ, ಹಿಡಿದುದನ್ನು ಕೈಗೂಡಿಸಿಯೇ ಬಿಡುವ ದೃಢಸಂಕಲ್ಪ. ಸಂಗೀತ, ಚಿತ್ರ ಮೊದಲಾದ ಲಲಿತ ಕಲೆಗಳ ಬಗೆಗಿರುವ ಕಲಾಪ್ರೇಮ ಎಲ್ಲಕ್ಕೂ ಹೆಚ್ಚಾಗಿ ಮಾನವ ಕಲ್ಯಾಣ ಚಿಂತನೆ. ಇವೇ ಮೊದಲಾದ ಎಷ್ಟೋ ಸದ್ಗುಣಗಳಿಂದ ಮಂಡಿತವಾದ ಅವರ ಮೂರ್ತಿ ಪ್ರಭೆಯು ಪ್ರಕಾಂಡ ಪ್ರಭಾವವುಳ್ಳದ್ದಾಗಿತ್ತು. ತ್ಯಾಗ ಧೈರ್ಯ ಸಾಹಸಗಳಲ್ಲಿ ಶ್ರೀಗಳು ಅಸದೃಶರಾಗಿದ್ದು ಅದು ಸದಾ ಕಾಲವೂ ಸತ್ಯಕ್ಕಾಗಿ ಸತ್ಯದರ್ಶನಕ್ಕಾಗಿ ಜನತೆಯ ಸೌಭಾಗ್ಯಕ್ಕಾಗಿ ತಮ್ಮದಾದ ಎಂಥದನ್ನೂ ತ್ಯಾಗ ಮಾಡುವ ಮನೋನಿರ್ಧಾರ ಶ್ರೀಗಳ ವ್ಯಕ್ತಿತ್ವದಲ್ಲಿ ಮೂರ್ತಿ ಮುಂತಾಗಿತ್ತು. ನಮ್ಮ ನಾಡಿನಲ್ಲಿ ಯೋಗಿಯಾಗಿ ಬೈರಾಗಿಯಾಗಿ ಅವರ ಸ್ಥಾನ ಉನ್ನತವಾಗಿದೆ. ಸಾಹಿತ್ಯ ಶಿಕ್ಷಣ ಸಂಶೋಧಕರಾಗಿ ಸಂಗ್ರಾಹಕರಾಗಿ ಅವರ ಸ್ಥಾನ ಮಹಾ ಮಹೋನ್ನತವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಬಡವರ ಮಗುವಾಗಿ ಹುಟ್ಟಿ ಬಡತನದ ಬವಣೆಯಲ್ಲಿ ಬಳಲಿ ವಿದ್ಯಾರ್ಜನೆಗಾಗಿ ಹುಲುಬಿ ಹಂಬಲಿಸಿ ಆತ್ಮಶಕ್ತಿಯಿಂದ ನಿದಿಧ್ಯಾಸ ಅಭ್ಯಾಸಗಳ ಬಲದಿಂದ ಗುರುವಿನ ಅನುಗ್ರಹದಿಂದ ಮಾನವ ಜೀವನದ ಅಗ್ನಿ ಪರೀಕ್ಷೆಯಲ್ಲಿ ಬಿದ್ದು ಒರೆಗೆ ಬಂಗಾರದಂತೆ ಬೆಳಗಿ ಹೋದ ಕಾರಣಿಕ ಶಿವಯೋಗಿಯು ಕನ್ನಡ ತಾಯಿಯ ಅಮೃತ ಕುವರನಾದುದು ಗಮನಿಸತಕ್ಕ ಮಾತಾಗಿದೆ. ಶಿವನೇ ಸೃಷ್ಟಿಯಲ್ಲಿ ಹುಟ್ಟಿ ಸಾಮಾನ್ಯರ ಸೇವೆಗೈದು ತನ್ಮೂಲಕ ಶಿವಾನುಭವದ ಶಿಖರವನ್ನೇರುವುದಕ್ಕೆ ಕುಮಾರನ ಕಥೆಯು ಅಮರವಾದ ಉಪಮೆಯಾಗಿದೆ. ಕನ್ನಡಿಗರ ಸಾತ್ವಿಕ ಜೀವನದ ಬೃಹತ್ ಶೈಲಕ್ಕೆ ಗೌರೀಶಂಕರವಾಗಿದೆ. ಶಾಂತಿ ಕಿರಣಗಳನ್ನು ಸೂಸುವ ದೀಪಸ್ತಂಭವಾಗಿದೆ.

 ಶ್ರೀಗಳ ಕೀರ್ತಿಯನ್ನು ಕಾರ್ಯದಕ್ಷತೆಯನ್ನೂ ಸಮಾಜೋದ್ಧಾರವನ್ನೂ ಎತ್ತಿ ತೋರಿಸುವ ಜೀವಂತ ಕುರುಹುಗಳು ನಮ್ಮ ನಾಡಿನಲ್ಲಿ ಇನ್ನೂ ಮೌನ  ಗಂಭೀರವಾಗಿ ನಿಂತಿವೆ. ಶಿವಯೋಗ ಮಂದಿರವು ಅಂಥದೊಂದು ಸಜೀವ ಸಂಸ್ಥೆ, ಅದರ ಸಂಸ್ಥಾಪನೆಯ ಕಥನ ಗೀತೆಯನ್ನೂ ಮಹಿಮೆಯನ್ನೂ ಪವಿತ್ರಳಾದ ಮಲಪಹಾರಿಣಿಯು ಅಂದಿನಿಂದ ಇಂದಿನವರೆಗೆ ತನ್ನ ತರಂಗ ತರಂಗವಾದ ಜಲತರಂಗದ ಸಂಗೀತದೊಂದಿಗೆ ಮೌನವಾಗಿ ಜೋಗುಳಗರೆಯುತ್ತಿದ್ದಾಳೆ. ಕರ್ನಾಟಕದ ಆತ್ಮಾನುಭೂತಿಯ ಅಧ್ಯಾತ್ಮ ಕೇಂದ್ರವಾಗಿರುವ ಶ್ರೀಗಳ ಪಾದಧೂಳಿಯಿಂದ ಪಾವನವಾದ ಶಿವಯೋಗ ಮಂದಿರದ ಅಡಿದಾವರೆಗಳನ್ನು ತೊಳೆಯುವ ಚಿರಂತನ ಸೇವೆಯಲ್ಲಿ ನಿರತಳಾಗಿದ್ದಾಳೆ. ಸಮಾಜದ ತಾಯಿಯಾದ ಭಕ್ತಿಜ್ಞಾನ ವೈರಾಗ್ಯಗಳ ಸಂಗಮ ಕೇಂದ್ರವಾದ ನಮ್ಮ ಸಮಾಜದ ಗುರು ವರ್ಗವನ್ನು ತರಬೇತಿಗೊಳಿಸುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಮಹತ್ತರವಾದದ್ದೆಂದು ಕಂಡು ಹಿಡಿದ ಶ್ರೀಗಳು ಶಿವಯೋಗ ಸಾಧನೆಯ ಗರಡಿಯಂತಿದ್ದ ಈ ಮಂದಿರವನ್ನು ಸ್ಥಾಪಿಸಿದರು. ನವೋ ನವವಾಗುತ್ತಿರುವ ನಮ್ಮ ಸಮಾಜದ ಹಿತಸಂಬಂಧಗಳನ್ನು ಉಳಿಸಿ ಬೆಳಿಸಿ ಬೆಳಗಿಸಿಕೊಂಡು ಹೋಗುತ್ತಿರುವ ಗುರುವೃಂದವು ಇಲ್ಲಿಯ ಪವಿತ್ರ ವಾತಾವರಣದಲ್ಲಿ ತರಬೇತಿ ಹೊಂದುತ್ತಿರುವುದು ಅತ್ಯಂತ ಮಹತ್ವದ್ದು, ಈ ಮಂದಿರದ ಆಂತರ್ಯದಲ್ಲಿ ಅದರ ಸುತ್ತಲಿನ ತರಮರಾದಿಗಳಲ್ಲಿ ಖಗ ಮೃಗಾದಿಗಳಲ್ಲಿ ಶ್ರೀಗಳ ಅಧ್ಯಾತ್ಮ ಜ್ಯೋತಿಯು ಬೆಳಗುತ್ತಿರುವುದರಿಂದಲೇ ಮಂದಿರವು ಸಮಾಜಕ್ಕೆ ಸ್ಫೂರ್ತಿಯನ್ನು ನೀಡಲು ಶಕ್ತವಾಗಿದೆ . ಸಮಾಜದ ಆಗು ಹೋಗುಗಳ ಸೂತ್ರಗಳನ್ನು  ಹಿಡಿದು ಮುನ್ನಡೆಯಿಸುವುದೆ ಈ  ಮಂದಿರದ ಘನವಾದ ಉದ್ದೇಶವು , ಈ ಚೇತನಶಕ್ತಿ ನೈತಿಕ ಬಲ ಶ್ರೀಗಳ ಒಲವಿನಿಂದಧಿಕವಾಗಿ ಮಂದಿರದ ಮುಂದಿರುವ ಆಶಯವು  ಹಣ್ಣಿಸುವಂತೆ ನಮ್ಮ ಸಮಾಜದ ಮುಂದಾದುಗಳು ಗುರುಗಳು ಯತ್ನಿಸುವರಾಗಿ  ಆಶಿಸುತ್ತೇವೆ.

 ಹೀಗೆ ಶ್ರೀಗಳು ಕೇವಲ ತತ್ವಬೋಧನೆಗೆಂದು ನಿಂತ ವಚನ ವೀರರಾಗಿರದೆ  ತತ್ವಸಾಧನೆಯ ಸತ್ವಯುತವಾದ ಮುಂದಾಳುಗಳೂ ಕ್ರಿಯಾಶಿಲ್ಪಿಗಳೂ ಆಗಿದ್ದರು. ಆದುದರಿಂದಲೇ ಸಮಾಜ ಜಾಗೃತಿಯ ಬಗ್ಗೆ ತಾವು ಕಂಡ ಎಷ್ಟೋ ಕನಸುಗಳನ್ನು ನನಸಾಗಿಸಲು ತಮ್ಮ ಜೀವಮಾನದಲ್ಲೆಲ್ಲ ಹಸಿವು ನೀರಡಿಕೆಗಳಿಲ್ಲದೆ ಯತ್ನಿಸಿದ ರೆಂಬುದು ಗಮನಿಸತಕ್ಕ ಸಂಗತಿಯಾಗಿದೆ. ಲಿಂಗಾಯತ ಸಮಾಜದ ಸಂಘಟನೆಗಾಗಿ ಮಹಾಸಭೆಯೊಂದನ್ನು ೧೯೦೪ರಲ್ಲಿ ಸರದೇಸಾಯಿ ಶಿರಸಂಗಿಯವರ ಅಧ್ಯಕ್ಷತೆಯಲ್ಲಿ ಸಂಸ್ಥಾಪಿಸಿದರು. ಅದರ ನೇತೃತ್ವದಲ್ಲಿ ಸಮಾಜದಲ್ಲಿ ಕ್ರಾಂತಿಯಾಯಿತು. ಸಾಮಾಜಿಕ ಶೈಕ್ಷಣಿಕ ಸಾಂಪತ್ತಿಕ ಸಾಹಿತ್ಯಕ ಮತ್ತು ಔದ್ಯೋಗಿಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಯು ಅಖಂಡವಾಗಿ ಸಾಗಿತ್ತು. ಅಲ್ಲಿಗೆ ತಮ್ಮ ದೀರ್ಘವಾದ ಸಾಹಸದಿಂದ ಒಂದು ಲಕ್ಷದ ವರೆಗೆ ಹಣ ಶೇಖರಿಸಿ ಲಿಂಗಾಯತ ಎಜ್ಯುಕೇಶನ್ ಫಂಡನ್ನು ನಿರ್ಮಿಸಿದರು. ಸಮಾಜ ಜಾಗ್ರತೆಯ ಚಟುವಟಿಕೆಗಳೆಂದು ವೀರಶೈವ ಮಹಾಸಭೆಯ ಜೊತೆಯಲ್ಲಿಯೇ ಅದಕ್ಕೆ ಅಂಗವಾಗಿ ಲಿಂಗಾಯತ ಮಹಿಳಾ ಪರಿಷತ್ತು, ಲಿಂಗಾಯತ  ತರುಣ ಸಂಘ, ಶಿಕ್ಷಣ ಸಮ್ಮೇಲನ, ವೈದ್ಯಕೀಯ ಸಮ್ಮೇಲನ ಮೊದಲಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರು. ಅದುದರಿಂದಲೇ ಅವರ ಜೀವಮಾನದ ಕಾಲವು ನಮ್ಮ ಸಮಾಜದ ಉತ್ಕ್ರಾಂತಿಯ ಕಾಲವಾಯಿತು.

ಈ ರೀತಿಯಿಂದ ಶ್ರೀಗಳವರ ಜೀವನವು ಗುಣಧರ್ಮಗಳಿಗೆ ನಿಧಿಯಾಗಿ, ಸತ್ಕರ್ಮಗಳ ಶಾಂತಿಯ ಆಗರವಾಗಿ ಮಾನವ ಕಲ್ಯಾಣಕ್ಕೆ ಉತ್ತುಂಗ ಶಿಖರವಾಗಿ ಗಂಭೀರವಾಯಿತು. ವ್ಯಕ್ತಿ ಮತ್ತು ಸಮಾಜಗಳ ಅನ್ನೋನ್ಯವಾದ ವಿಕಾಸದ ಸಂದರ್ಭದಲ್ಲಿ ಎದುರಾಗಿ ಬಂದ ಅನೇಕ ವಿಷಮ ಸನ್ನಿವೇಶಗಳನ್ನು ಸಹಿಸಿ ಉದಾರ ಭಾವನೆಯಿಂದ ವಿಶಾಲ ಹೃದಯದಿಂದ, ನಮ್ಮ ಜನಕ್ಕೆ ಆದರ್ಶ ವ್ಯಕ್ತಿಯಾಗಿ ನಮ್ಮವರ ಅಮೋಘ ಶಕ್ತಿಯಾಗಿ ಬಾಳಿದರು. ಜೀವನದ ಆಳಕ್ಕೆ ಇಂದು, ಮಾನವ ಕಲ್ಯಾಣದ ಎತ್ತರಕ್ಕೆ ಹಾರಿ ಜಗದಲವೂ ವಿಶಾಲವಾಗಿ ನಿಲ್ಲಲು ಸಮರ್ಥರಾದರು ಶ್ರೀಗಳು. ಅವರ ಆ ವ್ಯಕ್ತಿದೀಪ ನಮ್ಮೆಲ್ಲರ ಗರ್ಭಗುಡಿಯಲ್ಲಿ ನಂದಾದೀಪವಾಗಿ ಬೆಳಗುತ್ತಲಿದೆ, ಆ ಕರುಣಾಮಯ ಬೆಳಕು ಬರಡಾದ ನಮ್ಮ ಬಾಳಂಚಿನಲ್ಲಿ ಮತ್ತೊಮ್ಮೆ ಮೂಡಿ ಬೆಳಗಲೆಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸುವೆವು.

(ಆಕರ : ಸುಕುಮಾರ ಸಂ: ೪ 1956)

-ಡಾ. ಜಿ. ಎಸ್. ಶಿವರುದ್ರಪ್ಪ

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,

ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು

ತೊಳಗಿ ಬೆಳಗುತ್ತಿದ್ದಿತಯ್ಯಾ ಶಿವನ ಪ್ರಕಾಶ………’

ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತು, ಅವರ ಸಮಕಾಲೀನರಾದ ಶ್ರೀ ಅಲ್ಲಮ ಪ್ರಭುಗಳು ಮಾಡಿದ ವ್ಯಾಖ್ಯಾನ ರೂಪದ ವಚನ ಇದು. ದಿವ್ಯ ಅನುಭಾವಿಯೊಬ್ಬರು ಅಂದಿನ ಮಹಾ ಸಾಧಕರೊಬ್ಬರನ್ನು ಕುರಿತು ಆಡಿದ ಈ ರೂಪಕ ಬಸವಣ್ಣನವರ ವ್ಯಕ್ತಿತ್ವದ ಸಮಗ್ರ ಚಿತ್ರವನ್ನು ಕೊಡುವುದರ ಜೊತೆಗೆ, ಅಂದು ಶಿವಶರಣರಿಂದ ಪ್ರಚಲಿತವಾದ ವಚನವೆಂಬ ವಿಶಿಷ್ಟ ಸಾಹಿತ್ಯ ಪ್ರಕಾರದ ಸ್ವರೂಪ ಸ್ವಭಾವಗಳನ್ನೂ ಪರಿಚಯ ಮಾಡಿಕೊಡುತ್ತದೆ.

ಹೌದು; ಅಲ್ಲಮ ಪ್ರಭುಗಳು ಹೇಳುವಂತೆ ಬಸವಣ್ಣನವರು ಒಂದು ಜ್ಯೋತಿಯು; ಆದರೆ ಅದರಿಂದ ಬೆಳಗುತ್ತಿರುವುದು, ‘ಶಿವನ ಪ್ರತಾಪ’ ಅನುಭಾವದ ತೇಜಸ್ಸು. ಆ ಒಂದು ಜ್ಯೋತಿ ಹನ್ನೆರಡನೆಯ ಶತಮಾನದಂದು ತನ್ನ ದೀಪ್ತಿಯಿಂದ ಎಷ್ಟೊಂದು ದೀಪಗಳನ್ನು ಹತ್ತಿಸಿ ‘ತಮಂಧಘನ’ವಾದ ಅಂದಿನ ಆವರಣದಲ್ಲಿ ವಿನೂತನವಾದೊಂದು ಧಾರ್ಮಿಕ ಕ್ರಾಂತಿಯನ್ನೂ, ಅದರ ಪರಿಣಾಮರೂಪದ ಸಾಹಿತ್ಯ ಕ್ರಾಂತಿಯನ್ನೂ ಮಾಡಿ, ಪಂಪನ ನಂತರದ ಮತ್ತೊಂದು ನವೋದಯಕ್ಕೆ ಅಚಾರ್ಯಶಕ್ತಿಯಾಯಿತು. ಅಂತೆಯೇ ಅವರ ಬದುಕು ಎಷ್ಟೊಂದು ಕವಿಗಳ ಕಾವ್ಯಕ್ಕೆ ಪ್ರೇರಣೆಯನ್ನು ಸ್ಫೂರ್ತಿಯನ್ನು ನೀಡಿತು ! ಈ ದೃಷ್ಟಿಯಿಂದ ನೋಡಿದರೆ ಬಸವಣ್ಣನವರು ಕನ್ನಡ ಸಾಹಿತ್ಯದ ಪ್ರಯೋಗಶೀಲವಾದ ಕ್ರಾಂತಿ ಪ್ರವಾಹವೊಂದರ ದೊಡ್ಡ ತರಂಗವಾಗಿ ಗೋಚರಿಸುತ್ತಾರೆ.

ಮಹಾವ್ಯಕ್ತಿಗಳು ತಮ್ಮ ಬದುಕಿನ ಕಡಲನ್ನು ಕಡೆದು ಪಡೆದ ಭಾವ ಮೌಲ್ಯಗಳು ಅಂದಂದಿನ ಯುಗದ ಕವಿವಾಣಿಯ ಮೂಲಕ ಪ್ರಸಾರಗೊಳ್ಳುತ್ತವೆ. ಅಂತೆಯೇ ಬಸವಣ್ಣನವರ ಬದುಕು, ಹಾಗೂ ಅವರು ಮಥಿಸಿ ಬಾಳಿನಾಳದಿಂದ ತಂದ ಮೌಲ್ಯಗಳು, ಹರಿಹರ, ರಾಘವಾಂಕ ಮೊದಲಾದ ಕವಿಗಳ ಕಾವ್ಯದಲ್ಲಿ ಪುನಃ ಪ್ರಸಾರಿತವಾಗಿ ‘ಬಸವಯುಗ’ವೊಂದನ್ನು ಕನ್ನಡ ಸಾಹಿತ್ಯದಲ್ಲಿ ತೆರೆದಿವೆ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ’-ಎಂಬ ಅವರ ಸಂಸಾರ ಸೂತ್ರ; ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ’- ಎಂಬ ಮಾತಿನಿಂದ ಧ್ವನಿತವಾಗುವ ಚಾರಿತ್ರಶುದ್ಧಿಯ ಬೆಲೆ; ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನು ಒಂದೇ ಎಂಬೆ’ ಎನ್ನುವಲ್ಲಿ ಕಂಡು ಬರುವ ಸಮಾನತೆಯ ಆದರ್ಶ; ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ – ಎಂಬಲ್ಲಿ ಕಂಡು ಬರುವ ಆ ವಿನಯ, ‘ಮೃದು ವಚನವೇ ಸಕಲ ಜಪಂಗಳಯ್ಯ’- ಎಂಬ ಮಾತಿನಿಂದ ವ್ಯಕ್ತವಾಗುವ ಆ ಮಾರ್ದವತೆ; ‘ನುಡಿದರೆ ಮುತ್ತಿನ ಹಾರದಂತಿರಬೇಕು…. ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು’- ಎನ್ನುವಲ್ಲಿ ಮಾತಿನ ರೀತಿಯನ್ನು ಕುರಿತ ವಿವರಣೆ ಹಾಗೂ ಅದು ತಲುಪಬೇಕಾದ ನೆಲೆ; ‘ನಾಳೆಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವರು’ ಎನ್ನುವಲ್ಲಿ ಕಂಡು ಬರುವ ಶಿವಾರ್ಪಿತ ವ್ಯಕ್ತಿತ್ವದ ಮೃತ್ಯುಂಜಯ ಮನೋಭಾವ ಈ ಎಲ್ಲ ಭಾವಮೌಲ್ಯಗಳ ವಿಶಿಷ್ಟ ಸಮನ್ವಯ ಬಸವಣ್ಣನವರ ಜ್ಯೋತಿರ್ಮಯ ನಿರ್ಮಲಮುಗ್ಧ ಮನೋಹರ ಮೂರ್ತಿಯ ಚಿತ್ರವನ್ನು ಕನ್ನಡಕ್ಕೆ ನೀಡಿವೆ.

ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಬಸವಣ್ಣನವರ ವಚನಗಳು ಅಪೂರ್ವವಾದ ಕಾಣಿಕೆ ಎನ್ನಬಹುದು. ಬಸವಣ್ಣನವರಿಗಿಂತ ಹಿಂದೆಯೇ ಈ ವಚನವಾಯದ ತೊರೆ ಹರಿಯುತಿದ್ದಿತಾದರೂ, ಬಸವಣ್ಣನವರ ವ್ಯಕ್ತಿತ್ವದ ನೆರೆ ನುಗ್ಗಿ ಅದರ ಪಾತ್ರ ವಿಸ್ತಾರವಾಯಿತು. ತುಂಬಿ ಗಂಭೀರವಾಯಿತು. ಆದರೆ ಒಂದು ಮಾತು: ಬಸವಣ್ಣನವರು ಪ್ರಧಾನವಾಗಿ ಸಾಹಿತಿಯಲ್ಲ: ದೊಡ್ಡ ಆಚಾರ್ಯರು. ಎಂದರೆ ಅವರು ಸಾಹಿತಿಯ ಮನೋಭಾವದಿಂದ ವಚನ ರಚನೆಗೆ ಕೈಹಾಕಿದವರಲ್ಲ, ತಾವು ಆಡಿದ ಮಾತು ಕಾವ್ಯವಾಯಿತೇ ಇಲ್ಲವೇ ಎಂದು ಶಂಕಿಸಿದವರಲ್ಲ ; ತಾವು ಬರೆದದ್ದು ಕಾವ್ಯವಾಗಲಿಲ್ಲವೆಂದು ಕೊರಗಿದವರೂ ಅಲ್ಲ, ಏಕೆಂದರೆ ಅವರಿಗಿರಲಿಲ್ಲ ಆಸ್ಥಾನ ಕವಿಯಾಗಿ ಪಂಡಿತರನ್ನು ಮೆಚ್ಚಿಸಬೇಕೆಂಬ ಹಂಬಲ; ಅವರಿಗಿದ್ದುದು ಬದುಕು ಹಸನಾಗಬೇಕೆಂಬ ಹೆಬ್ಬಯಕೆ, ಆ ಸುಧಾರಣೆಯನ್ನು ಕುರಿತ ಹಂಬಲ, ತುಡಿತ, ತೊಳಲಾಟ ಹಾಗೂ ಇದರಲ್ಲಿ ಜೀವ ಏರಿದ ಎತ್ತರ ಇವು ಅವರಿಗೆ ಪ್ರಧಾನ. ಹೀಗಾಗಿ ಅವರು ಆಡಿದ ಮಾತು ಅವರಿಗರಿವಿಲ್ಲದಂತೆಯೇ ಕಾವ್ಯವಾಯಿತು; ವಚನವೆಂಬ ಹೊಸ ಸಾಹಿತ್ಯ ಪ್ರಕಾರವೊಂದು ಮೂಡಿ ಬೆಳೆಯಿತು. ಅಂದಂದಿನ ಅನುಭವಗಳನ್ನು ನೇರವಾಗಿ, ಸರಳವಾಗಿ, ನಿರೂಪಿಸುವ ಆತ್ಮಕಥನದ ರೀತಿಯೇ ಇವುಗಳ ಚೆಲುವು. ಅದುವರೆಗೂ ಹರಿದು ಬಂದ ವಸ್ತುನಿಷ್ಠ ಪುರಾಣ ಪದ್ಧತಿಯನ್ನು ತೆಗೆದೊಗೆದು, ತಮ್ಮ ಅನುಭವಗಳನ್ನು ವಯಕ್ತಿಕವಾಗಿ ಅಭಿವ್ಯಕ್ತಗೊಳಿಸುವ ವ್ಯಕ್ತಿನಿಷ್ಠ ವಿಧಾನವೊಂದು ಮೂಡಿದುದು ಅತ್ಯಂತ ಹರ್ಷದಾಯಕವಾದ ಸಂಗತಿ. ಈ ಬಗ್ಗೆ ಬಸವಣ್ಣನವರೆ ಒಂದೆಡೆ

ತಾಳ ಮಾನ ಸರಿಸವನರಿಯೆ,

 ಓಜೆ ಬಜಾವಣೆ ಲೆಕ್ಕವನರಿಯೆ.

ಅಮೃತಗಣ ದೇವಗಣವನರಿಯೆ !

ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.

ಎನ್ನುತ್ತಾರೆ. ಈ ವಚನ ಅಂದು ಮೈಗೊಂಡ ವಚನ ರಚನಾ ಕ್ರಮವನ್ನು ಹೇಗೋ ಹಾಗೆಯೇ ಕವಿ ಮನೋಧರ್ಮವನ್ನೂ ಬಿಂಬಿಸುತ್ತದೆ. ಆನು ಒಲಿದಂತೆ ಹಾಡುವೆ’ – ಎಂಬ ವ್ಯಕ್ತಿ ಸ್ವಾತಂತ್ರದ ಧೈರ್ಯ ಬಹುಶಃ ಅಂದಿನ ತನಕ ಯಾವ ಕವಿಗೂ ಬಂದಂತೆ ತೋರುವದಿಲ್ಲ, ತಮ್ಮ ಆಶ್ರಯದಾತರ ಮನಸ್ಸಂತೋಷಕ್ಕೋ ಪಂಡಿತ ಪ್ರಶಸ್ತಿಗೋ “ಮನುಜರ ಮೇಲೆ, ಸಾವವರ ಮೇಲೆ’ ತಮ್ಮ ಕಾವ್ಯವನ್ನು ಪ್ರೌಢವಾದ ಭಾಷೆಯಲ್ಲಿ ಕಟ್ಟಿದ ಪುರಾಣ ಕವಿ ಪುಂಗವರ ಪದ್ಧತಿಯಲ್ಲಿ ಅಂದಂದಿನ ಅನುಭವವನ್ನು ತಮ್ಮದೇ ಆದ ಆಡುಮಾತಿನ ಜಾಡಿನಲ್ಲಿ ಹರಿಸಿ ‘ಅನು ಒಲಿದಂತೆ ಹಾಡುವೆ’ ಎಂದ ವ್ಯಕ್ತಿನಿಷ್ಠವಾದ ಭಾವಗೀತಾತ್ಮಕವಾದ ಈ ಪದ್ಧತಿಯಲ್ಲಿ ! ಅಚ್ಚುಕಟ್ಟಾಗಿ ಇಕ್ಕೆಲಗಳಲ್ಲಿಯೂ ಸಾಲುಮರಗಳನ್ನು ಬೆಳೆಯಿಸಿಕೊಂಡು, ಛತ್ರ ಚಾವಡಿಗಳನ್ನು ನಿರ್ಮಿಸಿಕೊಂಡು, ನಗರದಿಂದ ನಗರಕ್ಕೆ ಸಾಗುವ ರಾಜಮಾರ್ಗಗಳಲ್ಲಿ, ಕಾಡು ಮೇಡುಗಳ ನಡುವೆ ಏರಿಳಿದು, ಗಿರಿನೆತ್ತಿಯ ತೀರ್ಥಕ್ಷೇತ್ರಗಳೆಡೆಗೆ ನಡೆಯುವ ಹೆಜ್ಜೆ ಬರೆದ ಕಾಲು ಹಾದಿಗಳ ರೀತಿಯಲ್ಲಿ !

ಬಸವಣ್ಣನವರ ವಚನಗಳಲ್ಲಿ ಬೇರೆ ಯಾರ ವಚನಗಳಲ್ಲಿಯೂ ಕಾಣದ ಒಂದು ವಿಶಿಷ್ಟ ಗುಣವೆಂದರೆ, ಅಂತರಂಗದ ಅಂದಂದಿನ ತೊಳಲಾಟಗಳ ನಿರೂಪಣೆ, ಸತ್ಯದ ಹಾದಿ ನಡೆವ ಮಹಾಸಾಧಕನೊಬ್ಬ ತನ್ನ ಅಂತರಂಗ ಹಾಗೂ ಬಹಿರಂಗ ಜಗತ್ತಿನೊಡನೆ ನಡೆಸಿದ ನಿರಂತರ ಹೋರಾಟದ ಕ್ರಿಯೆ-ಪ್ರತಿಕ್ರಿಯೆಗಳ ಚಿತ್ರ ಇವುಗಳಲ್ಲಿದೆ, ಪ್ರಾಮಾಣಿಕವಾದ ಆತ್ಮ ಸಂಶೋಧಕರೊಬ್ಬರು ಅಪೂರ್ವ ದಿನಚರಿಯ ವಿಶಿಷ್ಟ ಮಾದರಿಗಳನ್ನು ಬಸವಣ್ಣನವರ ವಚನಗಳಲ್ಲಿ ನಾವು ಕಾಣಬಹುದು. ಉದಾಹರಣೆಗೆ ಅವರ ವಚನಗಳಿಂದ ಎತ್ತಿಕೊಂಡ ಈ ಹಲವು ಮಾತುಗಳನ್ನು ನೋಡಿ

‘ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ

ಎನ್ನುವನು ಕಾಯಯ್ಯಾ’

‘ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯಾ’

“ಎನ್ನವರೊಲಿದು ಹೊನ್ನ ಶೂಲದಲಿಕ್ಕಿದರೆನ್ನ ಹೊಗಳಿ, ಹೊಗಳಿ

ನಾನೇನು ಪಾಪವ ಮಾಡಿದೆನೋ?

“ಎನ್ನಲ್ಲಿ ಭಕ್ತಿ ಸಾಸವೆಯ ಪಡಾಗದನಿತಿಲ್ಲ:

ಎನ್ನ ಭಕ್ತನೆಂಬರು, ಸಮಯಾಚಾರಿಯೆಂಬರು |

ನಾನೇನು ಪಾಪವು ಮಾಡಿದ್ದೇನೋ’

 ‘ಬೆರಣಿಯನಾಯಲೊಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ

ನೀ ಕರುಣಿಸಾ ಕೂಡಲ ಸಂಗಮದೇವಾ’.

ಇಂತಹ ಮಾತುಗಳು ಅವರ ಮಾನಸಿಕ ಹೋರಾಟದ ವ್ಯಥೆಯ ಕಥೆಯನ್ನೂ, ಅಂತೆಯೇ ಅವರು ಏರಿದ ನಿಲುವನ್ನೂ ಸೂಚಿಸುತ್ತವೆ.

ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಮತ್ತೊಂದು ಗುಣವೆಂದರೆ, ಅವರ ರೂಪಕ ವೈಭವ, ಬಸವಣ್ಣನವರ ವಚನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ, ನಾರಣಪ್ಪ, ಬಸವೇಶ್ವರ ಇವರಿಬ್ಬರ ಹಾಗೆ ಭಾಷೆಯ ಸಾಧ್ಯತೆಯನ್ನು ಸೂರೆಮಾಡಿದವರು ಹಾಗೂ ರೂಪಕ ನಿರ್ಮಾಣ ಮಾಡಿದವರು ವಿರಳವೆಂದೇ ಹೇಳಬೇಕು. ಒಂದು ಪಂಕ್ತಿಯಲ್ಲಿ ಒಂದೇ ಒಂದು ಚಿತ್ರ ಮಿನುಗುತ್ತಾ ನಿಲ್ಲುವುದುಂಟು- ‘ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಆಯಿತಯ್ಯಾ’ ಎಂಬಲ್ಲಿಯಂತೆ; ಕೆಲವೆಡೆ ಒಂದೇ ವಚನದಲ್ಲಿ ಮೂರು, ನಾಲ್ಕು ಶಬ್ದ ಚಿತ್ರಗಳೂ ಬರುವುದುಂಟು

‘ಬೆಲ್ಲವ ತಿಂದ ಕೋಡಗನಂತೆ ಸಿಹಿಯನರಸದಿರಾ ಮನವೇ,

ಕಬ್ಬುತಿಂದ ನರಿಯಂತೆ ಹಿಂದಕ್ಕೆಳಸದಿರಾ ಮನವೇ,

 ಗಗನವನಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ ಮನವೇ…..

ಹೀಗೆ ‘ಬೆಲ್ಲವ ತಿಂದ ಕೋಡಗ’ ‘ಕಬ್ಬು ತಿಂದ ನರಿ’ ‘ಗಗನವನಡರಿದ ಕಾಗೆ’- ಈ ಮೂರು ಚಿತ್ರಗಳೂ ಚಂಚಲ ಮನಸ್ಸಿನ ಸ್ವಭಾವದ ಪ್ರತಿಮೆಗಳಾಗಿವೆ. ಮತ್ತೆ ಕೆಲವೆಡೆ ಒಂದೇ ಪ್ರತಿಮೆ ಒಂದು ವಚನದ ತುಂಬ ತುಂಬಿ ಥಳಥಳಿಸುವುದೂ ಉಂಟು

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ?

 ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ,

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ?

ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ

ಮನೆಯೊಳಗೆ ಮನೆಯೊಡೆಯನಿಲ್ಲ.

ಮನಸ್ಸಿನ ರಿಕ್ತ ಸ್ಥಿತಿಯ ಸೊಗಸಾದ ಪ್ರತಿಮೆ, ‘ಮನೆಯೊಳಗೆ ಮನೆಯೊಡೆಯನಿಲ್ಲದ ಈ ಮನೆಯ ಚಿತ್ರ. ಮತ್ತೆ ಒಂದೊಂದು ಸಲ ಒಂದೇ ಒಂದು ಚಿತ್ರ ಮೂರು ನಾಲ್ಕು ವಚನಗಳಲ್ಲಿ ವಿಸ್ತರಿಸಿ ಸೊಗಸುವುದೂ ಉಂಟು ವಿಷಯವೆಂಬ ಹಸುರನನ್ನ ಮುಂದೆ ತಂದು ಪಸರಿಸದೆಯಯ್ಯಾ; ಹಸುವೇನ ಬಲ್ಲದು? ಹಸುರೆಂದೆಳಸುವುದು’ ಎಂದು ಮೊದಲಾಗುವ ಹಸುವಿನ ಚಿತ್ರ, ಇನ್ನೊಂದು ವಚನದಲ್ಲಿ, “ಕೆಸರಲ್ಲಿ ಬಿದ್ದ ಪಶುವಿನಂತಾನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ” ಎಂದು ಮುಂದುವರಿದು, ಮತ್ತೊಂದು ವಚನದಲ್ಲಿ “ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ ಅಂಬೇ ಅಂಬೇ’ ಎಂದು ಒರಲುತ್ತಲಿದ್ದೇನೆ’ ಎಂದು ಮುಂದು ವರಿಯುತ್ತದೆ. ಹೀಗೆ ಈ ವಚನಗಳ ತುಂಬ ಇಂಥ ಚಿತ್ರಪರಂಪರೆ ಯಾರನ್ನಾದರೂ ಬೆರಗಾಗಿಸುತ್ತದೆ. ಅಂದಣವನೇರಿದ ಸೊಣಗ” ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗ” ““ಹಡಿಕೆಗೆ ಮೆಚ್ಚದ ಸೊಣಗ

“ಕೆಸರಲ್ಲಿ ಬಿದ್ದ ಪಶು” “ಮರವನೇರಿದ ಮರ್ಕಟ” ‘ಸಲುಗೆಗೆ ಸಲ್ಲದ ಕಳ್ಳ ನಾಣ್ಯ, – ಇತ್ಯಾದಿ ಚಿತ್ರಗಳು ಮಾನಸಿಕ ಅಪಕ್ವತೆ ಹಾಗೂ ಅವ್ಯವಸ್ಥೆಗೊಡ್ಡಿದ ಪ್ರತಿಮೆಗಳಾದರೆ, ‘ಅರಿಸಿನವನೆ ಮಿಂದು ಹೊಂದೊಡಿಗೆಮನೆ ತೊಟ್ಟು ಪುರುಷನ ಬಲವಿಲ್ಲದ ಲಲನೆಯಂತೆ” ಕಾಯುವ ಹೆಣ್ಣು ‘ಗಿಳಿಯ ಹಂಜರವಿಕ್ಕಿ ಸೊಡರಿಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರುವ ಹಾರುವ’ ವಧು- ದೇವಪತಿಗಾಗಿ ಹಾರೈಸಿ ನಿಂತ ಜೀವಸತಿಯ ಚಿತ್ರವನ್ನು ಕೊಡುತ್ತದೆ. ಇಂತಹ ಎಷ್ಟೋ ಚಿತ್ರಗಳಿಂದ ಈ ವಚನಗಳು ಅಪೂರ್ವ ತೇಜಸ್ಸಿನಿಂದ ಮಿನುಗುತ್ತವೆ.

ಬಸವಣ್ಣನವರ ವಚನಗಳಲ್ಲಿ ಈ ಬಗೆಯ ರೂಪಕ ಭಾಷೆ, ಅಂತರಂಗದ ತೀವ್ರ ತುಮುಲಗಳನ್ನು ನಿರೂಪಿಸಿ ದಂತೆ, ಅವರ ಸೂಕ್ತಿ ಸದೃಶವಾದ, ಸರಳವಾದ, ನಿರಾಲಂಕಾರವೆಂಬಂತಹ ಮಾತುಗಳೂ, ದೊರೆಯುತ್ತವೆ. ಅವರು ಅಂದಿನ ಸಮಾಜದ ನಡೆವಳಿಕೆಗಳನ್ನು ಕುರಿತು ಆಡಿದ ವಚನಗಳಲ್ಲಿ, ‘ಕೊಲ್ಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ’ ‘ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯಾ’ ‘ಅಯ್ಯಾ ಎಂದೊಡೆ ಸ್ವರ್ಗ, ಎಲವೊ ಎಂದೊಡೆ ನರಕ’ ‘ದೇವನೊಬ್ಬ ನಾಮ ಹಲವು’ – ಇಂತಹ ಮಾತುಗಳಲ್ಲಿ ಭಾಷೆಯನ್ನು ಅವರು ಬಳಸಿಕೊಂಡ ರೀತಿ ಸೊಗಸಾಗಿದೆ. ವಾಸ್ತವವಾಗಿ ಜನಭಾಷೆಯನ್ನು ವಚನ ರಚನೆಗೆ ಬಳಸಿಕೊಂಡು ಬಸವಣ್ಣನವರು ‘ಕನ್ನಡ ಮಾಧ್ಯಮ’ದ ಮಹತ್ತನ್ನು ಎತ್ತಿ ತೋರಿಸಿದ್ದಾರೆ. ಭಾಷೆ-ಛಂದಸ್ಸಿನ ದೃಷ್ಟಿಯಿಂದಲೂ ಅವರ ಸಾಧನೆ ಸಾಮಾನ್ಯವಾದುದೇನಲ್ಲ, ವಚನ ಶೈಲಿಯ ಈ ಮುಕ್ತಗಮನವನ್ನು ನೋಡಿ

ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರಗೂಡುವೋಗದ ಮುನ್ನ,

 ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,

ಕಾಲಮೇಲೆ ಕಯ್ಯನೂರಿ ಕೋಲ ಹಿಡಿಯದ ಮುನ್ನ

ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ

ಪೂಜಿಸು ನಮ್ಮ ಕೂಡಲ ಸಂಗಮದೇವನ

ಈ ಅಪೂರ್ವವಾದ ಧಾಟಿ, ಅಂದಿನ ಕಾಲಕ್ಕಾದರೂ ಸಂಪ್ರದಾಯದ ಪಾಚಿಯನ್ನು ಸರಿಸಿ ಸಾಮಾನ್ಯ ಭಾಷೆಯ ಸರಳ ಸೌಂದರ್ಯದ ಪರಿಚಯ ಮಾಡಿಕೊಡುತ್ತದೆ. ಇಲ್ಲಿನ ಮನೋಧರ್ಮ ಭಾವಗೀತೆಯ ಕವಿಯದು; ಇವುಗಳ ಭಾಷೆ ಜನಸಾಮಾನ್ಯದ ಆಡುಮಾತಿನ ಭಾಷೆ; ಇಲ್ಲಿನ ಶೈಲಿ ಸ್ವಚ್ಛಂದ, ಒಂದು ಮಾತಿನಲ್ಲಿ ಹೇಳುವುದಾದರೆ ಭಾವಗೀತಾತ್ಮಕವಾದ ಮುಕ್ತಛಂದದ ಮುಕ್ತಕಗಳು ಈ ವಚನಗಳು ಇವುಗಳಲ್ಲಿ ತೊಳಗಿ ಬೆಳಗುತ್ತಿರುವುದು ಶಿವನ ಸೋಪಾನವನ್ನೇರಿ ಹೊರಟ ಆತ್ಮಸಾಧಕರ ಮಿಂಚಿನ ಹೆಜ್ಜೆಗಳ ಗುರುತು. ಬಸವಣ್ಣನವರ ಮಾತಿನಲ್ಲಿಯೇ ಹೇಳುವುದಾದರೆ

ಕೆರೆ ಹಳ್ಳ ಬಾವಿಗಳು ಮೈದೆಗೆದರೆ

ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು;

 ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು,

ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ,

ಲಿಂಗವೆ ಕಾಣಬಹುದು.

 ಹೌದು; ಕೂಡಲಸಂಗನ ಶರಣರಾದ ಬಸವಣ್ಣನವರು ಮನದೆರೆದು ಮಾತಾಡಿದ್ದರಿಂದ ಕನ್ನಡ ಸಾಹಿತ್ಯಕ್ಕೆ ಲಭಿಸಿತು ಈ ವಚನ ದೃಷ್ಟಿ; ಇವುಗಳಲ್ಲಿ ತೊಳಗಿ ಬೆಳಗುತ್ತಿದೆ ಲಿಂಗಾನುಭಾವದ ದೃಷ್ಟಿ,

——————————————————————————-

Article collected by ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

– ಡಾ. ಜಿ.ಎಸ್. ಶಿವರುದ್ರಪ್ಪ

ಹನ್ನೆರಡನೆಯ ಶತಮಾನದಷ್ಟು ಹಿಂದೆಯ ಕನ್ನಡ ನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮ ಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊಟ್ಟ ಅಕ್ಕಮಹಾದೇವಿ, ಅಂದು ಬಸವಣ್ಣನವರ ವ್ಯಕ್ತಿಕೇಂದ್ರದಲ್ಲಿ ರೂಪುಗೊಂಡ ಶರಣ ಚಳುವಳಿಯ ಮೇಲೆ ಹಾದುಹೋದ ಒಂದು ಉಜ್ವಲವಾದ ಮಿಂಚಿನ ಗೆರೆಯಂತೆ ತೋರುತ್ತಾಳೆ. ಈ ಹೊತ್ತು ನಾವು ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ಹನ್ನೆರಡನೆಯ ಶತಮಾನದ ಸಾಮಾಜಿಕ ಧಾರ್ಮಿಕ ಸ್ವರೂಪದ ವಚನ ಚಳುವಳಿಯೊಂದಿಗೆ ಗುರುತಿಸುತ್ತೇವೆಯಾದರೂ, ಆಕೆಗೂ ಈ ಚಳುವಳಿಗೂ ಇದ್ದ ಸಂಬಂಧ ಕೇವಲ ಆಗಂತುಕವೂ ತಾತ್ಕಾಲಿಕವೂ ಆದದ್ದೆಂಬುದು ಮಾತ್ರ ನಿಜ. ಹಾಗೆ ನೋಡಿದರೆ ಈ ಸಂದರ್ಭದ ಮಹಾ ಅನುಭಾವಿಯಾದ ಅಲ್ಲಮನ ಸಂಬಂಧ ಕೂಡಾ, ಈ ಚಳುವಳಿಯೊಂದಿಗೆ, ಇದೇ ಸ್ವರೂಪದ್ದೇ. ಆದರೆ ಅಲ್ಲಮ ಈ ಚಳುವಳಿಯಲ್ಲಿ ವಹಿಸಿದ ಪಾತ್ರ, ಅಕ್ಕನದಕ್ಕಿಂತ ಭಿನ್ನವಾದದ್ದು ಹಾಗೂ ಮಹತ್ವದ್ದು. ಆತ ‘ಅನುಭವ ಮಂಟಪ’ದ ಅಧ್ಯಕ್ಷನಾಗಿ ಗುರುವಾಗಿ, ಮಾರ್ಗದರ್ಶಕನಾಗಿ, ವಿಮರ್ಶಕನಾಗಿ ‘ಪ್ರಭು’ ಎನ್ನುವ ಗೌರವಕ್ಕೆ ಪಾತ್ರನಾಗಿ, ಈ ಚಳುವಳಿಯೊಂದಿಗೆ ಹೆಚ್ಚು ಗಾಢವಾದ ಸಂಬಂಧವನ್ನು ಹೊಂದಿ ಕೆಲವು ಕಾಲವಾದರೂ ಜತೆಗೆ ಇದ್ದವನು. ಆದರೆ ಮಹಾದೇವಿ ಉಡುತಡಿಯಿಂದ ಶ್ರೀಶೈಲ ಶಿಖರಕ್ಕೆ ಬಿಟ್ಟ ಬೆಳಕಿನ ಬಾಣದಂತೆ ನೇರವಾಗಿ ಹೊರಟ ಹಾದಿಯಲ್ಲಿ, ಕಲ್ಯಾಣದ ಈ ಶರಣ ಕಿರಣ ಕೇಂದ್ರದಿಂದ ಆಕರ್ಷಿತಳಾಗಿ ಸ್ವಲ್ಪ ಕಾಲ ನಿಂತವಳು. ತನ್ನ ವ್ಯಕ್ತಿತ್ವ ಹಾಗೂ ಆನುಭಾವಿಕ ನಿಲುವುಗಳಿಂದ ಶರಣ ಸಮೂಹವನ್ನು ಬೆರಗುಗೊಳಿಸಿದವಳು. ತನ್ನ ವೈರಾಗ್ಯ ಮತ್ತು ವೈಚಾರಿಕತೆಯ ಪರಿಣತಿಯಿಂದ ‘ಅಕ್ಕ’ ಎಂದು ಕರೆಯಿಸಿಕೊಳ್ಳುವ ಗೌರವಕ್ಕೆ ಪಾತ್ರಳಾದವಳು ತನ್ನ  ಅಧ್ಯಾತ್ಮಿಕ ಸಂವಾದದಿಂದ ಶರಣ ಚಳುವಳಿಯ ಪ್ರಮುಖರ ಪ್ರಶಂಸೆಯನ್ನು ಗಳಿಸಿ ಕೊಂಡವಳು.?

ಆದರೆ ಅಕ್ಕಮಹಾದೇವಿ ಕಲ್ಯಾಣಕ್ಕೆ ಬರುವ ಮುನ್ನವೇ ಅವಳ ತಾತ್ವಿಕ ನಿಲುವುಗಳ ಹಾಗೂ ಜೀವನ ವಿಧಾನದ ಪರಿಕಲ್ಪನೆಗಳೂ ಬಹುಮಟ್ಟಿಗೆ ಸಿದ್ಧವಾಗಿದ್ದವು ಮತ್ತು ಆಕೆ ತನ್ನ ವೈಚಾರಿಕತೆ ಹಾಗೂ ನಿರ್ಭಯವಾದ ನಿಲುವು ಮತ್ತು ನಡೆಗಳಿಂದಾಗಿ ಸಾಕಷ್ಟು ಹೆಸರಾಗಿದ್ದಳೆಂದು ತೋರುತ್ತದೆ. ತನ್ನ ಪಯಣದ ಹಾದಿಯಲ್ಲಿ ಶರಣ ಚಳುವಳಿಯೊಳಕ್ಕೆ ಬಂದ ಈಕೆ, ಇಲ್ಲಿ ಎಷ್ಟು ಕಾಲ ಇದ್ದಳೆಂಬ ಬಗ್ಗೆ ಖಚಿತವಾಗಿ ಹೇಳಲುಬಾರದು. ಆದರೆ ಆಕೆ ಇಲ್ಲಿದ್ದದ್ದು ಕೆಲವೆ ಕಾಲದ ಮಟ್ಟಿಗೆ ಎಂಬುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅವಳ ನಿಲುಗಡೆ ಕಲ್ಯಾಣವಲ್ಲ; ಶ್ರೀಶೈಲ, ಸ್ವತಂತ್ರವಾಗಿ ತನ್ನ ದಾರಿ ಹಾಗೂ ಗುರಿಗಳನ್ನು ಸ್ಪಷ್ಟವಾಗಿ  ಕಂಡುಕೊಂಡ ಈಕೆ ತಾತ್ವಿಕವಾಗಿ ಹಾಗೂ ವೈಚಾರಿಕವಾಗಿ ವಚನ ಚಳುವಳಿಗೆ ಋಣಿಯಾಗಿರುವುದು ತೀರಾ ಕಡಿಮೆ ಎಂದೇ ತೋರುತ್ತದೆ. ಈ ಚಳುವಳಿಯ ಅನೇಕ ಶರಣ ಶರಣೆಯರ ವ್ಯಕ್ತಿತ್ವ ಹಾಗೂ ಆಲೋಚನಾ ವಿಧಾನ ಮತ್ತು ಅವರವರ ಅಭಿವ್ಯಕ್ತಿಯ ಕ್ರಮಗಳು ರೂಪುಗೊಂಡದ್ದು ಕಲ್ಯಾಣ ಕೇಂದ್ರಿತ ವಚನ ಚಳುವಳಿಯಿಂದಲೇ. ಆದರೆ ಮಹಾದೇವಿಯಕ್ಕನ ವಿಚಾರದಲ್ಲಿ ಈ ಮಾತನ್ನು ಹೇಳುವ ಹಾಗಿಲ್ಲ. ಹಾಗೆಂದರೆ ಎತ್ತರದ ನಿಲುವನ್ನು ಗಳಿಸಿಕೊಂಡ ಅಂದಿನ   ಶರಣ ಚಳುವಳಿಯ ವ್ಯಕ್ತಿತ್ವಗಳ ಪ್ರಭಾವ ಆಕೆಯ ಮೇಲೆ ಆಗಲಿಲ್ಲ ಎಂದಾಗಲೀ, ವಚನಕಾರರನೇಕರ ಸಹವಾಸ ಹಾಗೂ ಸಂವಾದ ಅವಳ ಅಭಿವ್ಯಕ್ತಿಗೆ ನೆರವಾಗಲಿಲ್ಲವೆಂದಾಗಲೇ ಈ ಮಾತಿನ ಅರ್ಥವಲ್ಲ. ಆದರೆ ಅಕ್ಕ ಈ ಶರಣಸಮುದಾಯಕ್ಕೆ ಬರುವ ವೇಳೆಗಾಗಲೇ ಶರಣಧರ್ಮದ ತಾತ್ವಿಕ ನಿಲುವುಗಳೂ, ಸಾಮಾಜಿಕ ದೃಷ್ಟಿಕೋನಗಳೂ ಒಂದು ರೀತಿಯಲ್ಲಿ ಸಿದ್ಧವಾಗಿದ್ದು, ಇದರ ಚೌಕಟ್ಟಿನೊಳಗಿನ ಎಷ್ಟೋ ಸಂಗತಿಗಳೊಂದಿಗೆ ಆಕೆಯ ಅಭಿಪ್ರಾಯಗಳು ಹೆಣ್ಣೆ ಸಂಗತವಾಗದೆ ಹೋದವೆಂಬುದು ಗುರುತಿಸಿಕೊಳ್ಳಬೇಕಾದ ಅಂಶವಾಗಿದೆ. ಈ ದೃಷ್ಟಿಯಿಂದ  ಅಕ್ಕಮಹಾದೇವಿಯು ಈ ವಚನ ಚಳುವಳಿಯಲ್ಲಿ ಇತರರಿಗಿಂತ ಬೇರೆಯೇ ಆಗಿ ನಿಲ್ಲುತ್ತಾಳೆ  ಮತ್ತು ವೈಯಕ್ತಿಕ ನೆಲೆಯಲ್ಲಿ ಈ ಚಳುವಳಿಗೆ ಆಕೆ ತೋರುವ ಪ್ರತಿಕ್ರಿಯೆಗಳು  ಗಮನಾರ್ಹವಾಗಿವೆ.

ಭಗವತ್ಪರವಾದ ವ್ಯಾಕುಲತೆ, ಎಲ್ಲ ಅನುಭಾವಿಗಳಂತೆ ಪುಸ್ತಕ ಹಾಗೂ ಶಾಸ್ತ್ರಜ್ಞಾನಗಳ ಬಗ್ಗೆ ಅವಳಿಗಿದ್ದ ತಿರಸ್ಕಾರ, ಪರಂಪರಾಗತವಾಗಿ `ಜಾತಿ ಹಾಗೂ ವರ್ಣಭೇದಗಳನ್ನು  ಪ್ರತಿಪಾದಿಸುತ್ತಿದ್ದ ವೇದ-ಪುರಾಣ-ಆಗಮಗಳ ನಿರಾಕರಣೆ ಇತ್ಯಾದಿಗಳ ವಿಚಾರದಲ್ಲಿ ಅವರಿಗೆ ವಚನ ಚಳುವಳಿಯೊಂದಿಗೆ ಸಹಮತವಿದ್ದರೂ, ಮಾಯೆಯನ್ನು ಕುರಿತ ಅವಳ ವ್ಯಾಖ್ಯಾನ ಮಾತ್ರ ತೀರಾ ವಿಶಿಷ್ಟವಾದುದಾಗಿದೆ. ಹಾಗೆ ನೋಡಿದರೆ ಭಾರತೀಯ ತತ್ವಜ್ಞಾನದ  ಪ್ರಕಾರ’ಮಾಯೆ’ ಎಂದರೆ ಸತ್ಯವಲ್ಲದ, ಆದರೆ ಸತ್ಯದ ಹಾಗೆ ಭಾಸವಾಗುವ ಈ ಜಗತ್ತಿನ ತೋರಿಕೆ; ಮತ್ತು ಅನೇಕ ವಿಧವಾದ ಆಸೆ-ಆಮಿಷಗಳಿಂದ ಜಗತ್ತಿನೊಂದಿಗೆ ಜೀವನನ್ನು  ಬಂಧಿಸುವ ಒಂದು ಅವಿದ್ಯೆಯ ಉಪಕರಣ. ಹೀಗೆ ಮನುಷ್ಯನನ್ನು ಹಿಡಿದು ಕಟ್ಟುವ ಈ ಮಾಯೆಯನ್ನು ‘ಹೆಣ್ಣು-ಹೊನ್ನು-ಮಣ್ಣು’ ಎಂದು ವರ್ಣಿಸಲಾಗಿದೆ. ಸ್ವಲ್ಪ ವಿಚಾರ ಮಾಡಿ ನೋಡಿದರೆ ಈ ವ್ಯಾಖ್ಯಾನ ಮುಖ್ಯವಾಗಿ ಸಾಧಕನಾದ ಹಾಗೂ ಮುಮುಕ್ಷುವಾದ ಪುರುಷನ ದೃಷ್ಟಿಕೋನದಿಂದ ಹುಟ್ಟಿಕೊಂಡದ್ದು. ಆದರೆ ಅಕ್ಕಮಹಾದೇವಿ ಈ ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಸ್ತ್ರೀಪರವಾಗಿ ವ್ಯಾಖ್ಯಾನಿಸಿರುವ ಕ್ರಮವು ತೀರಾ ವಿಶಿಷ್ಟವಾದುದಾಗಿದೆ. ಆಕೆ ಹೇಳುತ್ತಾಳೆ :

ಪುರುಷನ ಮುಂದೆ ಮಾಯೆ

ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ

ಸ್ತ್ರೀಯ ಮುಂದೆ ಮಾಯೆ

ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ

ಹೆಣ್ಣಿಗೆ ಗಂಡು ಮಾಯೆ

ಗಂಡಿಗೆ ಹೆಣ್ಣು ಮಾಯೆ

   ಈ ಮಾತುಗಳಲ್ಲಿ , ಹೆಣ್ಣು ಗಂಡಿನ ಪಾಲಿಗೆ ‘ಮಾಯೆ’ಯಾಗುವುದಾದರೆ, ಗಂಡು ಹೆಣ್ಣಿನ ಪಾಲಿಗೆ ಯಾಕೆ ಮಾಯೆ ಅಲ್ಲ ? ಎಂಬ ದೃಷ್ಟಿಕೋನ, ಮಹಿಳಾಪರವಾದ ಒಂದು ಪ್ರತಿಕ್ರಿಯೆಯಾಗಿದೆ. ಹಾಗೆಯೆ ಕಟ್ಟಿಕೊಂಡ ಹೆಂಡತಿಯನ್ನು ಗಂಡ ಅಧ್ಯಾತ್ಮ ಸಾಧನೆಯ ನೆಪದಿಂದ ಬಿಟ್ಟು ಹೋಗುವುದೂ ‘ವೈರಾಗ್ಯದ ಲಕ್ಷಣವಾಗುವುದಾದರೆ, ಕಟ್ಟಿಕೊಂಡ ಗಂಡನನ್ನು ತನ್ನ ಅಧ್ಯಾತ್ಮಸಾಧನೆಗಾಗಿ ಹೆಣ್ಣು ಬಿಟ್ಟು ಹೋಗುವುದೂ ವೈರಾಗ್ಯ ಯಾಕೆ ಆಗುವುದಿಲ್ಲ ಎನ್ನುವುದನ್ನು, ಆಕೆ ಕೌಶಿಕನನ್ನು ಬಿಟ್ಟು ಹೊರಟ ಸಂದರ್ಭವು. ಸಾಂಕೇತಿಸುತ್ತದೆ ಎಂದು ಭಾವಿಸುವುದು ತಪ್ಪೇನೂ ಆಗುವುದಿಲ್ಲ.

ವಚನ ಚಳುವಳಿಯ ಶರಣಧರ್ಮದೊಂದಿಗೆ ಸಂಗತವಾಗಲಾರದ ಆಕೆಯ ದೃಷ್ಟಿಕೋನಗಳೂ, ವಿಚಾರಗಳೂ ಸ್ವಾರಸ್ಯವಾಗಿದೆ  

ವಚನ ಚಳುವಳಿ ಲೌಕಿಕ ದಾಂಪತ್ಯ ಜೀವನವನ್ನು ಅಧ್ಯಾತ್ಮ ಸಾಧನೆಯ ನೆಲೆಗಟ್ಟನ್ನಾಗಿ ಒಪ್ಪಿಕೊಂಡಿತ್ತು. ಹಾಗೆಯೆ ಈ ಲೋಕ ಜೀವನವನ್ನೂ ಒಪ್ಪಿಕೊಂಡಿತ್ತು. ‘ಸತಿ  ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಗೆ’ ಎಂಬ ಜೇಡರ ದಾಸಿಮಯ್ಯನ ಮಾತೂ ‘ಮರ್ತಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎಂಬ ಬಸವಣ್ಣನವರ ಮಾತೂ, ಈ ನಿಲುವಿಗೊಂದು  ನೆಲೆಗಟ್ಟನ್ನು ಹಾಕಿದ್ದವು. ಸಂಸಾರದಲ್ಲಿದ್ದೂ ಶಿವಯೋಗವನ್ನು ಸಾಧಿಸಬಹುದು ಎಂಬ ಈ ಧರ್ಮಸೂತ್ರವೇ ಬಹುಶಃ ಬಹುಜನರನ್ನು ಈ ಚಳುವಳಿಯೊಳಕ್ಕೆ ಆಕರ್ಷಿಸಿರಬಹುದು. ಹಾಗೆ ನೋಡಿದರೆ ಈ ಶರಣ ಧರ್ಮದ ಚಳುವಳಿಯಲ್ಲಿ ಪಾಲುಗೊಂಡವರೆಲ್ಲ ಬಸವಣ್ಣನವರಿಂದ ಮೊದಲುಗೊಂಡು, ಸಂಸಾರಿಗಳೇ, ಗೃಹಸ್ಥರೇ ಮತ್ತು ಗೃಹಸ್ಥರಲ್ಲದ ಇತರ ಹಿರಿಯರು ಯಾರೂ ಗೃಹಸ್ಥನಾಗಿರುವುದು ಅಧ್ಯಾತ್ಮ ಸಾಧನೆಗೆ ಒಂದು ಆತಂಕ ಎಂಬ ಮಾತನ್ನು ಹೇಳಿದವರಲ್ಲ. ಹೀಗಿರುವಾಗ ಲೌಕಿಕ ದಾಂಪತ್ಯದ ಮೂಲವಾದ ಮದುವೆಯ ಕಲ್ಪನೆಯನ್ನೆ ಮಹಾದೇವಿ ಪ್ರಶ್ನಿಸಿದಳು. ಮತ್ತು ಸಂದರ್ಭದ ಒತ್ತಡದಿಂದ ತಾನು ಮದುವೆಯಾಗ ಬೇಕಾಗಿ ಬಂದ ಗಂಡನನ್ನೆ ಬಿಟ್ಟು ಬಂದ ಈ ಹೆಣ್ಣುಮಗಳ ನಡವಳಿಕೆ, ಲೌಕಿಕ ದಾಂಪತ್ಯವನ್ನು ಮೂಲಮಾನವಾಗಿ ಒಪ್ಪಿಕೊಂಡ ವಚನ ಚಳುವಳಿಯ ನಿಲುವಿಗೆ ವಿರೋಧವಾಗುವುದಿಲ್ಲವೆ – ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೆ ಉದ್ಭವಿಸುತ್ತದೆಯಲ್ಲದೆ, ಅಕ್ಕನ ಈ ನಡವಳಿಕೆ ಹೇಗೆ ಈ ವಚನ ಚಳುವಳಿಯಲ್ಲಿ ಪಾಲುಗೊಂಡ ಮಹಿಳೆಯರಿಗೆ ಮಾದರಿಯಾದೀತು ಎಂಬ ಸಂಶಯಕ್ಕೆ ಅವಕಾಶಮಾಡಿಕೊಡುತ್ತದೆ. ಆದರೂ ಅಕ್ಕನ ನಿಲುವನ್ನು ಅಂದಿನ ಶರಣರು ಒಪ್ಪಿಕೊಂಡರು, ಗೌರವಿಸಿದರು, ಅವಳನ್ನು ‘ಅಕ್ಕ’ ಎಂದು ಪೂಜ್ಯಭಾವದಿಂದ ಹೊಗಳಿದರು. ಯಾಕೆ ?

 ಯಾಕೆಂದರೆ, ಅಕ್ಕ ‘ಮದುವೆ’ಯನ್ನು ನಿರಾಕರಿಸಿದವಳಲ್ಲ; ಮದುವೆ ಎಂಬ ವ್ಯವಸ್ಥೆಯನ್ನು ಪ್ರಶ್ನಿಸಿದಳು, ಪ್ರತಿಭಟಿಸಿದಳು. ‘ಮದುವೆ’ಯಲ್ಲಿ ಹೆಣ್ಣಿನ ಆಯ್ಕೆಯ ಸ್ವಾತಂತ್ರ ವನ್ನು ತಿರಸ್ಕರಿಸುವ ಪ್ರವೃತ್ತಿಯನ್ನು ವಿರೋಧಿಸಿದಳು, ಅಲ್ಲದೆ ಅವಳ ಮದುವೆಯ ಕಲ್ಪನೆ ಲೌಕಿಕವಾದದ್ದಲ್ಲ; ಅನುಭಾವಿಕವಾದದ್ದು. ಅಂದರೆ ತಾನು ‘ಹೆಣ್ಣು , ತನ್ನ ಬದುಕಿನ ಗಮ್ಯವಾದ ಆ ದೈವ ‘ಗಂಡು’ ಎನ್ನುವ ಭಾವನೆ ಅದು. ವೀರಶೈವ ಪರಿಭಾಷೆಯಲ್ಲಿ ಹೇಳುವುದಾದರೆ ‘ಶರಣ ಸತಿ ಲಿಂಗ ಪತಿ’; ವೈಷ್ಣವ ಪರಿಭಾಷೆಯಲ್ಲಿ ಹೇಳುವುದಾದರೆ ‘ಮಧುರಭಾವ’.

ಈ ಭಾವ ಹೆಣ್ಣಿಗೆ ಸಹಜವಾದಷ್ಟು ಅನುಕೂಲವಾದಷ್ಟು ಗಂಡಿನ ವಿಚಾರಕ್ಕೆ ಹೊಂದಲಾರದು. ಅಂದರೆ ಶರಣರೆಲ್ಲರೂ, ಅವರು ಗಂಡಾಗಲಿ ಹಣ್ಣಾಗಲೀ ತಾವೆಲ್ಲ ಸತಿಯರು, ಆ ದೇವರು ಅಥವಾ ಶಿವನೊಬ್ಬನೇ ನಿಜವಾದ ಗಂಡು ಎಂಬ ಈ ‘ಶರಣ ಸತಿ ಲಿಂಗ ಪತಿ’ ಎಂಬ ಕಲ್ಪನೆಯು ಲೌಕಿಕ ದಾಂಪತ್ಯ ಜೀವನವನ್ನು ಮೌಲಿಕವಾದ ಒಂದು ನೆಲೆ ಎಂದು ಅಂಗೀಕರಿಸಿದ ವೀರಶೈವ ಧರ್ಮದ ಆಚರಣೆಯಲ್ಲಿ ಎಷ್ಟರಮಟ್ಟಿಗೆ ಒಂದು  ತಾತ್ವಿಕ ನಿಲುವಾಗಿ ಸಲ್ಲಬಲ್ಲದೋ ಎಂಬ ಬಗ್ಗೆ ನನಗೆ ತೀರಾ ಅನುಮಾನಗಳಿವೆ’ ಅದರ ಬದಲು ಭಕ್ತ ಭಗವಂತ ಅಥವಾ ಶರಣ ಮತ್ತು ಲಿಂಗ ಈ ಸಂಬಂಧವೇ ಇಲ್ಲಿ ಹೆಚ್ಚು ಸುಗಮವಾಗುವಂತೆ ತೋರುತ್ತದೆ. ಆದರೂ ಪ್ರಾಸಂಗಿಕವಾಗಿ ಭಕ್ತನಾದವನು ಸತಿ ಭಾವವನ್ನು ಆರೋಪಿಸಿಕೊಂಡು ಸಾಧನೆಯಲ್ಲಿ ತೊಡಗಿದ ನಿದರ್ಶನಗಳು ಉಂಟು. ಬಸವಣ್ಣನವರಲ್ಲಿಯೂ ಅವರು ಈ ಭಾವದಲ್ಲಿ ನಿಂದ ಮನಃಸ್ಥಿತಿಯನ್ನು ಉಲ್ಲೇಖಿಸುವ ಒಂದೆರಡು ವಚನಗಳುಂಟು; ಉರಿಲಿಂಗ ದೇವ, ಗಜೇಶಮಸಣಯ್ಯ ಇಂಥ ಕೆಲವರು, ‘ಶರಣಸತಿ ಲಿಂಗಪತಿ’ ಭಾವದಲ್ಲಿಯೇ ತಮ್ಮ ವ್ಯಕ್ತಿತ್ವವನ್ನು ನಿಲ್ಲಿಸಿಕೊಂಡು ಬರದ ವಚನಗಳು ಇವೆ. ಆದರೆ ವಾಸ್ತವವಾಗಿ ‘ಶರಣಸತಿ ಲಿಂಗಪತಿ’ ಎಂಬ ನಿಲುವು ಈಗಾಗಲೇ ಹೇಳಿದಂತೆ ಹಣ್ಣಿನ ವ್ಯಕ್ತಿತ್ವ ಹಾಗೂ ಮನಃಸ್ಥಿತಿಗೆ ಹೆಚ್ಚು ಅನುಕೂಲಕರವಾದದ್ದು. ಈ ದೃಷ್ಟಿಯಿಂದ ಅಕ್ಕಮಹಾದೇವಿಗೆ ಈ ನಿಲುವು ಸಹಜವಾಗಿದೆ. ಅನೇಕ ಶಿವಶರಣೆಯರ ನಡುವೆ ಈಕೆಯೊಬ್ಬಳೆ ತಾನು ಸತಿ, ಲಿಂಗವೆ ಪತಿ ಎಂಬ ಭಾವದಲ್ಲಿ ನಿಂದವಳು. ಇದು ಅವಳ ಅನುಭಾವಕ್ಕೆ ಉಚಿತವಾಗಿದೆ. ಯಾಕೆಂದರೆ ಲೌಕಿಕ ದಾಂಪತ್ಯದ ಕಲ್ಪನೆಯನ್ನು ನಿರಾಕರಿಸಿ ತನ್ನ ಅನುಭಾವದ ಗಮ್ಯವಾದ ‘ಗಂಡನ’ ಅನ್ವೇಷಣೆಯಲ್ಲಿ ಹೊರಟವಳು ಅವಳು. ಇದರಿಂದಾಗಿ ತನ್ನ ಹಾಗೂ ಚನ್ನಮಲ್ಲಿಕಾರ್ಜುನನ ಸಂಬಂಧವೇ ಅವಳ ಅನುಭಾವದ ಮೂಲನೆಲೆಯಾಗಿದೆ. ಈ ಸಂಬಂಧ ಈ ಹೊತ್ತಿನದಲ್ಲ. ನಿನ್ನೆಯದಲ್ಲ. ಅನಂತಕಾಲದ್ದು. ಇದು ‘ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದ್ದೆ  ನೋಡಾ’ ಎಂಬ ಅವಳ ಉಕ್ತಿಯಲ್ಲಿ ಸೂಚಿತವಾಗಿದೆ. ತಾತ್ವಿಕವಾಗಿ ನೋಡಿದರೆ, ಜೀವ ಹಾಗೂ ದೇವರ ಸಂಬಂಧ ಸನಾತನವಾದದ್ದು. ಅಕ್ಕ ಈ ತಾತ್ವಿಕ ನೆಲೆಯ ಜೀವಂತ ವ್ಯಾಖ್ಯಾನದಂತೆ ಇದ್ದಾಳೆ. ಈ ದೃಷ್ಟಿಯಿಂದ ಮಹಾದೇವಿ ಹರನ ಸನಾತನ ಸಂಗಾತಿಯ ಪ್ರತೀಕವಾಗಿದ್ದಾಳೆ. ಯಾವಾಗ ಈಕೆ ತನ್ನ ಹಾಗೂ ತನ್ನ ದೇವ ಪತಿಯ ಸನಾತನ ಸಂಬಂಧವನ್ನು ಗುರುತಿಸಿಕೊಳ್ಳುತ್ತಾಳೆಯೋ ಆಗ ಸಹಜವಾಗಿಯೆ ಈ ಲೋಕದ ಸಾಂಪ್ರದಾಯಿಕ ವೈವಾಹಿಕ ಸಂಬಂಧದ ಮೂಲಕ ಏರ್ಪಡುವ ದಾಂಪತ್ಯ ಅರ್ಥಹೀನವಾಗುತ್ತದೆ. ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ?” (ವ. 91) ಎಂಬ ಅವಳ ಪ್ರಶ್ನೆ ಈ ನಿಲುವಿಗೆ ಸಹಜವಾಗಿಯೆ ಇದೆ. ಈ ಲೋಕದ ಗಂಡರು ‘ಸಾವಕೆಡುವ’ ಗಂಡರಾಗಿ ಕಾಣುತ್ತಾರೆ. ಇದಕ್ಕೆ ಬದಲಾಗಿ ಆಕೆ ತನ್ನ ಸನಾತನ ಪತಿಯಾದ ‘ಸಾವಿಲ್ಲದ ಕೇಡಿಲ್ಲದ’ ಪುರುಷನಿಗಾಗಿ ಹಂಬಲಿಸುತ್ತಾಳೆ. ಆದ ಕಾರಣವೆ ಸಂದರ್ಭದ ಬಲದಿಂದ ಕೌಶಿಕನೊಂದಿಗೆ ಒದಗಿದ  ಅವಳ ಒಲ್ಲದ ಮದುವೆ ಅವಳ ಪಾಲಿಗೆ ಹರಿಹರನು ವರ್ಣಿಸುವಂತೆ ‘ವಿಷಮ ಸುಖ ಸಂಪತ್ ಸಂಯೋಗ ಒಲ್ಲದ ಸನ್ನಿಧಿ’ಯಾಗಿ, ಮುರಿದುಬಿತ್ತು.

 ಅಕ್ಕ ತನ್ನ ಹಲವಾರು ವಚನಗಳಲ್ಲಿ ಅನುಭಾವಿಕ ನೆಲೆಯಲ್ಲಿ ತನಗೆ ಆಗಲೇ ಮದುವೆಯಾಗಿರುವ ಸಂಗತಿಯನ್ನು ಹೇಳಿಕೊಂಡಿದ್ದಾಳೆ. ಚೆನ್ನಮಲ್ಲಿಕಾರ್ಜುನನೆಂಬ ಗಂಡನೊಡನೆ  ಎಂದೋ ಮದುವೆಯಾದ ಈ ಹೆಣ್ಣು, ಈ ಭವದ ಹಾದಿಯಲ್ಲಿ ತನ್ನ ಗಂಡನನ್ನು ಹುಡುಕಿಕೊಂಡು ಆತನಿರುವಲ್ಲಿಗೆ ಹೊರಟಿದ್ದಾಳೆ. ತಾನು ಅನಂತ ಕಾಲದಿಂದ ಒಲಿದ ಹಾಗೂ ಮದುವೆಯಾದ ಗಂಡನನ್ನು ಹುಡುಕಿಕೊಂಡು ಹೊರಟ ರೀತಿಯೆ ಅಕ್ಕನ ಅನುಭಾವಿಕ ಅನ್ವೇಷಣೆಯ ಒಂದು ಪ್ರತೀಕವಾಗಿದೆ. ಪರಿಸ್ಥಿತಿ ಹೀಗಿರುವಾಗ ಆಕೆ ದಾಂಪತ್ಯ ಜೀವನದಲೌಕಿಕ ಕಲ್ಪನೆಯನ್ನು ನಿರಾಕರಿಸಿದ್ದು ತೀರಾ ಸಹಜವಾಗಿದೆ. ಆದರೆ ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುತ್ತ, ಲೌಕಿಕ ದಾಂಪತ್ಯ  ಜೀವನವನ್ನು ಅಧ್ಯಾತ್ಮ ಸಾಧನೆಗೆ ವಿರೋಧವಲ್ಲವೆಂದು ಒಪ್ಪಿಕೊಂಡ ಅಂದಿನ ಶರಣ ಧರ್ಮದ ಸಾಮಾಜಿಕ ನಿಲುವಿಗೆ ಅಕ್ಕನ ನಿಲುವು, ಒಂದು ವ್ಯಕ್ತಿನಿಷ್ಠವಾದ ಪ್ರತಿಕ್ರಿಯೆಯೋ ಎಂಬಂತೆ, ಪ್ರತ್ಯೇಕವಾಗಿಯೇ ಎದ್ದು ಕಾಣುತ್ತದೆ. ಆದರೆ ಆ ಕಾರಣಕ್ಕೆ ಅಕ್ಕ ಲೌಕಿಕ ಸಾಂಸಾರಿಕ ಜೀವನ ವಿಧಾನವನ್ನು, ಹಗುರವಾಗಿ ನೋಡುವುದಿಲ್ಲ. ಆಕೆ ಹೇಳುತ್ತಾಳೆ-

 ಹಾವಿನ ಬಾಯ ಹಲ್ಲ ಕಳೆದು

 ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ

………………………………………………………………….

 ಚೆನ್ನಮಲ್ಲಿಕಾರ್ಜುನ ನೀನೊಲಿದವರು

 ಕಾಯಗೊಂಡಿದರೆನ ಬೇರ (ನ 157. ಎಲ್. ಬಸವರಾಜು)

  ಎಂದರೆ ಸಂಸಾರ ಎನ್ನುವದು ತ್ಯಾಜ್ಯವೇನಲ್ಲ. ಆದರೆ ಅದು ವಿಷದ ಹಲ್ಲುಗಳಿರುವ ಸರ್ಪವೆಂಬ ಅರುವಿರಬೇಕು ಈ ಹಾವಿನ ಬಾಯ ಹಲ್ಲುಗಳನ್ನು, ಅಂದರೆ ಕಾಮಕ್ರೋಧಾದಿಗಳನ್ನು, ಕಿತ್ತು ಹಾಕಿ ಬದುಕುವುದಾದರೆ ಹಾವಿನ ಸಂಗವೇ ಲೇಸು. ಆದರೆ ಸಂಸಾರವನ್ನು ಹೀಗೆ ಗೆದ್ದು ಬದುಕಲು ಚೆನ್ನಮಲ್ಲಿಕಾರ್ಜುನನ ಒಲುಮೆ ಅಗತ್ಯ. ಆದ ಕಾರಣ ನಿಜವಾದ ಭಕ್ತನಾಗಿ ಸಂಸಾರದಲ್ಲಿ ಬದುಕುವವರೂ ಗೌರವಾರ್ಹರೇ ಎಂಬುದು ಅಕ್ಕನ ನಿಲುವು; ಮತ್ತು ತನ್ನ ದಾರಿಯ ಬೇರೆ ಎಂಬುದನ್ನು ಕಂಡುಕೊಂಡ ಅಕ್ಕ, ಹಿಡಿದ ದಾರಿಯೇ ಸರಿ, ಆದ ಕಾರಣ ಉಳಿದವರು ಅದನ್ನು ಅನುಸರಿಸಬೇಕೆಂದು ಎಂದೂ ಹೇಳಲಿಲ್ಲ. ಯಾಕೆಂದರೆ ಆಧ್ಯಾತ್ಮ ಸಾಧನೆ ಎಂಬುದು ಮೂಲತಃ ವೈಯಕ್ತಿಕವಾದದ್ದು.

 ತನ್ನ ಇಷ್ಟ ದೈವವನ್ನು ತನ್ನ ಗಂಡನೆಂದು ಭಾವಿಸಿದ ಅಕ್ಕನ ದೈವದ ಕಲ್ಪನೆ ಅಂದಿನ ವೀರಶೈವ ಧರ್ಮದ ‘ಲಿಂಗ’ದ ಕಲ್ಪನೆಯಿಂದ ಭಿನ್ನವಾಗಿದೆ. ಆಕೆಯ ದೈವವಾದ ಚೆನ್ನಮಲ್ಲಿಕಾರ್ಜುನ ಪರಮ ಸಾಕಾರಸುಂದರಮೂರ್ತಿ, ಅಕ್ಕ ಆಗಾಗ ‘ರೂಹಿಲ್ಲದ ಚೆಲುವ’ನೆಂದು ಅವನನ್ನು ವರ್ಣಿಸಿದರೂ, ಅವಳ ಕಣ್ಣಿಗೆ ಮುಖ್ಯವಾಗಿ ಆತ ಸೌಂದರ್ಯದ ಮೂರ್ತಿಯೇ ಹೊರತು, ವೀರಶೈವದ ಇಷ್ಟಲಿಂಗ’ ಪ್ರತಿನಿಧಿಸುವ  ನಿರಾಕಾರಕ್ಕೆ ಸಮೀಪವಾದ ಸಂಕೇತವಲ್ಲ. ಯಾಕೆಂದರೆ ದೈವವನ್ನು ಗಂಡೆಂದು ಅಥವಾ ಗಂಡನೆಂದು ಕಲ್ಪಿಸಿಕೊಂಡ  ಅಕ್ಕನ ಕಣ್ಣಿಗೆ, ಆತ ಸರ್ವೆಂದ್ರಿಯ ಸಾಕಾರ ಸುಂದರನಾಗಿಯೇ ಕಾಣುತ್ತಾನೆ. ಆತನೊಂದಿಗೆ ಈಕೆ ಒಂದಾಗುವ ಸ್ಥಿತಿ ಕೇವಲ ‘ಬಯಲ’ ಅಥವಾ ಬೆಳಕಿನ ಅಥವಾ ಕೇವಲ ಜ್ಯೋತಿಯ ಸ್ಥಿತಿ ಮಾತ್ರವಾಗದೆ ಅದು ಉತ್ಕಟವಾದ ಪ್ರಣಯಾನುಭವವಾಗಿದ್ದು, ಶೃಂಗಾರದ ರೂಪಕಗಳ ಮೂಲಕವಾಗಿಯೆ ವರ್ಣಿತವಾಗಿದೆ.

 ಅಕ್ಕನ ಅನುಭಾವ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಕನಸು, ಹಂಬಲ ಹಾಗೂ ತಳಮಳಗಳ ರೂಪದ ಅನ್ವೇಷಣೆಯ ಸ್ಥಿತಿಯಾಗಿರುವುದರಿಂದ, ಮುಖ್ಯವಾಗಿ ಅದು ಗಾಢವಾದ ಅಂತರ್ಮುಖ ಪ್ರವೃತ್ತಿಯಾಗಿದೆ. ಬಸವಣ್ಣನವರದು ಮುಖ್ಯವಾಗಿ ಸಮಾಜ ಕ್ಷೇಮಕಾತರವಾದ ಬಹಿರ್ಮುಖ ಪ್ರವೃತ್ತಿ; ಅಲ್ಲಮನದಾದರೋ ಇದ್ದೂ ಇಲ್ಲದಂತಹ ನೆಲೆಯಲ್ಲಿ ಸಂಚರಿಸುತ್ತಾ, ಈ ಎಲ್ಲವನ್ನು ಮೀರಿದ ಒಂದು ಊರ್ಧ್ವಮುಖ ಪ್ರವೃತ್ತಿ. ಅಕ್ಕನದು ಅಂತರ್ಮುಖ ಪ್ರವೃತ್ತಿಯಾದುದರಿಂದ ಸಮಾಜ ಸುಧಾರಣಾ ಪರವಾದ ಕಾಳಜಿಗಳು ಅವಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಆಕೆ ತನ್ನೊಂದಿಗೆ ತಾನು ಮಾತನಾಡಿಕೊಂಡದ್ದಲ್ಲ ಅದ್ಭುತವಾದ ಭಾವಗೀತೆಯ ಗುಣವನ್ನು ಪ್ರಕಟಿಸುತ್ತದೆ.  ಆಗಾಗ ಆಕೆ ಲೋಕದೊಂದಿಗೆ ಮಾತನಾಡಿದರೂ ಅದು ತನ್ನ ಧೈರ್ಯಕ್ಕೆ, ಸಮಾಧಾನಕ್ಕೆ ಹಾಗೂ ತ ನ್ನ ನಡವಳಿಕೆಯ ಸಮರ್ಥನೆಗೆ, ತಾನೊಲಿದ ಗಂಡನೊಂದಿಗೆ ತನಗೆ ಒದಗಿದ ವಿರಹ ಹಾಗೂ ಆತನೊಂದಿಗೆ ತಾನು ಒಂದಾಗುವ ಉತ್ಕಟವಾದ ಹಂಬಲದ ಪ್ರಯಾಣದ ಉದ್ದಕ್ಕೂ ಅವಳು ಆಡುವ ಮಾತೆಲ್ಲ ಭಾರತೀಯ ಪ್ರೇಮ ಕಾವ್ಯದ ವಿರಹಗೀತಗಳ ಮಾದರಿಗಳಂತಿವೆ. ಅವಳ ವಚನಗಳಲ್ಲಿ ಉತ್ಕಟವಾದ ಶೃಂಗಾರಭಾವದ ಅನೇಕ ಕ್ಷಣಗಳು ದಾಖಲಾಗಿವೆ. ಈ ಅರ್ಥದಲ್ಲಿ ಅಕ್ಕಮಹಾದೇವಿ ಕನ್ನಡದ ಮೊದಲ ಹಾಗೂ ಮೊದಲ ದರ್ಜೆಯ ಕವಯಿತ್ರಿಯಾಗಿದ್ದಾಳೆ.

 ‘ಅಕ್ಕ ಏಕಾಂಗಿಯಾದ, ಆದರೆ ನಿಜವಾಗಿಯೂ ಧೀರಳಾದ ಹೆಣ್ಣು’ ಲೋಕದ ನಿಂದೆ, ಅಪವಾದ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಂಡವಳಲ್ಲ. ನಿಜವಾದ ಅಧ್ಯಾತ್ಮ ಸಾಧಕರಲ್ಲಿ ಕಂಡು ಬರುವ ನಿರ್ಭಯತೆ ಆಕೆಯ ವ್ಯಕ್ತಿತ್ವದ ಲಕ್ಷಣವಾಗಿದೆ. ಆದರೆ ಆಕೆಯ ಈ ಧೈರ್ಯ ಲೋಕದ ಲಜ್ಜೆಯ ಗಡಿಯನ್ನೂ ದಾಟುವ ದಿಗಂಬರತ್ವ ಅಥವಾ  ಬತ್ತಲತನವನ್ನು ಕೈಗೊಳ್ಳವಷ್ಟು ಮುಂದುವರಿದಿತ್ತೆ ಅಥವಾ ಬೇರೆ ಮಾತಿನಲ್ಲಿ ಹೇಳುವುದಾದರೆ, ಆನೇಕರು ಭಾವಿಸಿರುವಂತೆ ಅಕ್ಕ ಬಟ್ಟೆಯ ಹಂಗನ್ನು ಕಿತ್ತೊಗೆದು, ಕೇಶರಾಶಿಯಿಂದ ತನ್ನ ದಿಗಂಬರತ್ವವನ್ನು ಮರೆಮಾಡಿಕೊಂಡು ಸಂಚರಿಸಿದಳೆ ಎನ್ನುವ ಸಂಗತಿ ತುಂಬ ವಿಲಕ್ಷಣವಾಗಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಇದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೂಬ್ಬಳು, ಅವಳೆಂಥ ಅನುಭಾವಿಯಾಗಿದ್ದರೂ, ಬೆತ್ತಲೆಯಾಗಿ, ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು, ಅತ್ಯಂತ ಅಸಂಗತವೂ, ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ. ಈ ನಡವಳಿಕೆ ವೀರಶೈವ ಧರ್ಮಕ್ಕೆ ಸಂಪೂರ್ಣ ವಿರುದ್ಧ ಮಾತ್ರವಲ್ಲ; ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೂಡ ಹೆಣ್ಣಿಗೆ ಕ್ಷೇಮಕರವಾದದ್ದಲ್ಲ.

  ಈ ಕುರಿತು ಮೊದಲು ನಾವು ಗಮನಕ್ಕೆ ತೆಗೆದುಕೊಳ್ಳಬೇಕಾದದ್ದು ಅಂದಿನ ಸಮಕಾಲೀನ ವಚನಕಾರ್ತಿಯರ ಪ್ರತಿಕ್ರಿಯೆಗಳನ್ನು, ಅಕ್ಕನ ಸಮಕಾಲೀನರಾದ ಯಾವ ವಚನಕಾರ್ತಿಯರ ಯಾವ ವಚನಗಳಲ್ಲಿಯೂ ಈ ಕುರಿತು ಒಂದಾದರೂ ಪ್ರತಿಕ್ರಿಯೆ ದಾಖಲಾಗಿಲ್ಲವಲ್ಲ ! ಹಾಗೆಯೆ ಇತರ ಅನೇಕ ವಚನಕಾರರ ವಚನಗಳಲ್ಲಿ ಅಕ್ಕನ ಬತ್ತಲೆತನದ ಬಗ್ಗೆ ಒಂದಾದರೂ ಉಲ್ಲೇಖಗಳಿಲ್ಲವಲ್ಲ.

 ಅಕ್ಕನ ಸಮಕಾಲೀನರಾದ ಪ್ರಮುಖ ವಚನಕಾರರ ಹಾಗೂ ವಚನಕಾರ್ತಿಯರ, ಆನಂತರ ಅಕ್ಕನ ಬದುಕನ್ನು ಕುರಿತು ಮೊಟ್ಟ ಮೊದಲು ‘ಮಹಾದೇವಿಯಕ್ಕಗಳ ರಗಳೆ’ ಎಂಬ ಕಾವ್ಯವನ್ನು ಬರೆದ ಹರಿಹರನು ಕೂಡ ಆಕೆ ಬತ್ತಲೆಯಾಗಿ ನಡದಳೆಂದು ಹೇಳಿಲ್ಲ. ಆದರೆ ಹರಿಹರನೊಬ್ಬನ ಹೊರತು ಮುಂದಿನವರೆಲ್ಲರೂ ಆಕೆ ದಿಗಂಬರಳಾಗಿದ್ದಳೆಂದೂ, ಕೂದಲಿನಿಂದ ತನ್ನ ಮೈಯನ್ನು ಮರೆಮಾಡಿಕೊಂಡಿದ್ದಳೆಂದೂ ವರ್ಣಿಸಿದ್ದಾರೆ. ಆದರೆ ಈ ಸಂಗತಿಯನ್ನು ಕುರಿತ ಹರಿಹರನ ಕಾವ್ಯದ ಸಂದರ್ಭವೆ ಈ ಬಗೆಯ ತಪ್ಪುಗ್ರಹಿಕೆಗೆ ಆಸ್ಪದವನ್ನು ಕಲ್ಪಿಸುವಷ್ಟು ಸಂದಿಗ್ಧವಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ : ಅಕ್ಕ ಮೂರು ಷರತ್ತುಗಳ  ಒಂದು ಮೇರೆಗೆ ಕೌಶಿಕನನ್ನು ಮದುವೆಯಾಗಿ, ಅವನೊಡನೆ ಅರಮನೆಯಲ್ಲಿ ಕೆಲವು ಕಾಲ ಇದ್ದಳೆಂದು ಚಿತ್ರಿಸುವ ಹರಿಹರ, ಮೂರೂ ಷರತ್ತುಗಳನ್ನೂ ಉಲ್ಲಂಘಿಸಿದ ಕೌಶಿಕನ ಸಹವಾಸವನ್ನು ಮಹಾದೇವಿ ಬಿಟ್ಟು ಹೊರಟ ಸಂದರ್ಭವನ್ನು ಕುರಿತು ಹೀಗೆ ವರ್ಣಿಸಿದ್ದಾನೆ:ಒಂದು ದಿನ ಅರಮನೆಗೆ ಮಹಾದೇವಿಯ ಆರಾಧ್ಯ ದೇವರಾದ ಗುರುಗಳು ಬಂದಾಗ ಸಜ್ಜೆಮನೆಯಿಂದ ಸಂಭ್ರಮದಿಂದ ನಮಸ್ಕರಿಸಲು ಧಾವಿಸಿದ ಮಹದೇವಿಗೆ ಗುರುಗಳು ‘ಮಗಳೆ ದುಕೂಲಮಂ ಬಾಸಣಿಸಿಕೊಳ್ (ಮಗಳೆ ಬಟ್ಟೆಯನ್ನುಟ್ಟುಕೋ) ಎನ್ನಲಾಗಿ, ಆಕೆ ತನ್ನ ವಸ್ತ್ರಗಳ ಕಡೆ ಕೈ ಚಾಚಿದಾಗ ಕೌಶಿಕನು ‘ತೆಗೆ ತೆಗೆ ನಿನಗೇನ್ ಅತ್ಯಂತ ಭಕ್ತಿಗೆ ಮೀರಿದ ವಿರಕ್ತಿಗೆ ಸೀರೆಯೇಕೆಂದು ಕೈಯ್ಯ ದುಕೂಲಮಂ ಸೆಳೆಯಲು, ಹಾ ಮೂರು ತಪ್ಪು ತೀರ್ದುದು ಎನ್ನಿಚ್ಛೆ ಸಾರ್ದುದು, ಭವಿಸಂಗವೊಳಸೋರ್ದುದು ವಿರಕ್ತಿ ನಿಮಿರ್ದುದು ನಿಷ್ಠೆಯುಳಿದುದು ಬರ್ದುಂಕಿದೆನ್ ಬರ್ದುಂಕಿದೆನ್ ಎನುತ್ತೆ ಆಶಾರಹಿತ ಕೇಶಾಂಬರಿಯಾಗಿ ತಿರುಗಿ ಧವಳಾರದೊಳಗಿರ್ದ ಚನ್ನಮಲ್ಲಿಕಾರ್ಜುನನ ಕರಸ್ಥಳದೊಳ್ ಬಿಜಯಂಗೆಯ್ದಿಕೊಂಡು…… ಮಹಾದೇವಿ ಪುರಮಂ ಪೊರಮಟ್ಟು ಶ್ರೀ ಪರ್ವತಾಭಿಮುಖಿಯಾದಳ್.‌

    ಹರಿಹರನ ಅನಂತರ ಶರಣರ ವಚನಗಳ ಆಧಾರದಿಂದ ಶೂನ್ಯ ಸಂಪಾದನೆಯನ್ನು ಕಟ್ಟುವ ಅದ್ಭುತ ನಾಟಕೀಯ ತಂತ್ರವನ್ನು ಆವಿಷ್ಕಾರ ಮಾಡಿದ ಮೊದಲ ‘ಶೂನ್ಯ ಸಂಪಾದನಕಾರ’ನಾದ ಶಿವಗಣ ಪ್ರಸಾದಿ  ಮಹಾದೇವಯ್ಯನು (ಸು. 1460) ಅಕ್ಕ ಮಹಾದೇವಿಯು ಕಲ್ಯಾಣಕ್ಕೆ ಬಂದ ಸಂದರ್ಭವನ್ನು ಚಿತ್ರಿಸುತ್ತ-

‘ದಿಗಂಬರದುಡಿಗೆಯನುಟ್ಟು ಕೇಶವೆಂಬ ಅಂಬರವಂ ಮುಸುಕಿಟ್ಟು

 ಕರಸ್ಥಲದೊಳಿರ್ಪ ಇಷ್ಟಲಿಂಗದೊಳು ದೃಷ್ಟಿನಟ್ಟು ಭಾವಕವು

ಗೊಂಡು ಲೌಕಿಕದ ಲಜ್ಞಾಭಿಮಾನಮಂ ತೊಡೆದು

 ಭವಸಾಗರಮಂ ದಾಂಟಿ ಚೆನ್ನಮಲ್ಲಿಕಾರ್ಜುನನ

ವಿಕಳಾವಸ್ಥೆಯೊಳು ತನ್ನ ಮಡೆದು

ಎಂದು ವರ್ಣಿಸುತ್ತಾನೆ. ಹರಿಹರನಲ್ಲಿ ಆಕೆ ಶಯ್ಯಾಗೃಹದಲ್ಲಿ ಬೆತ್ತಲೆಯಾಗಿದ್ದುದು,ಅನಂತರ ಕೌಶಿಕ ತೆಗೆತೆಗೆ ನಿನಗೆ ಸೀರೆಯೇಕೆ ಎಂದದ್ದು ಆಮೇಲೆ ಆಕೆ ‘ಕೇಶಾಂಬರಿಯಾಗಿ ತಿರುಗಿ ಬಂದು’ ಇಷ್ಟಲಿಂಗವನ್ನು ಕೈಗೆತ್ತಿಕೊಂಡು ಪುರವನ್ನು ಬಿಟ್ಟು ಶ್ರೀಶೈಲಾಭಿಮುಖವಾಗಿ ಹೊರಟಿದ್ದು ಇದೆಲ್ಲವೂ, ಶಿವಗಣ ಪ್ರಸಾದಿ ಮಹಾದೇವಯ್ಯನ ಗ್ರಹಿಕೆಯಲ್ಲಿ ತಪ್ಪಾಗಿ ಭಾವಿತವಾಗಿ, ಅಕ್ಕ ‘ದಿಗಂಬರದುಡಿಗೆಯನುಟ್ಟು ಕೇಶವೆಂಬ ಅಂಬರಮಂ ಮುಸುಕಿಟ್ಟು’  ಬಂದಳೆಂಬ ವರ್ಣನೆಯಾಗಿ ಮಾರ್ಪಟ್ಟು ಮುಂದಿನ ಕೃತಿಕಾರರನ್ನು ದಾರಿತಪ್ಪಿಸಿತಂದು ತೋರುತ್ತದೆ. ಮುಂದಿನ ಎಲ್ಲರೂ ಅಕ್ಕ ದಿಗಂಬರೆಯಾಗಿ, ಕೇಶವನ್ನು ಮುಸುಕಿಟ್ಟು ಸಂಚರಿಸಿದಳಂದೇ ಚಿತ್ರಿಸಿದರು. ಮುಂದಿನ ಶೂನ್ಯ ಸಂಪಾದನಕಾರರು ಕಲ್ಯಾಣದ ಅನುಭವ ಮಂಟಪಕ್ಕೆ ಹೀಗೆ ದಿಗಂಬರಯೂ ಕೇಶಾಂಬರೆಯೂ ಆಗಿ ಬಂದ ಅಕ್ಕನನ್ನು, ಪ್ರಭುವು ನಾನಾ ಬಗೆಯಲ್ಲಿ ಪ್ರಶ್ನೆ ಮಾಡಿ, ನೀನು ನಿಜವಾಗಿಯೂ ಅನುಭಾವಿಯಾದ ಪಕ್ಷದಲ್ಲಿ ಹೀಗೆ ಕೂದಲನ್ನು ಯಾಕೆ ಮರೆಮಾಡಿದ್ದೀಯ ಎಂದು ಕೇಳಿದಂತೆಯೂ ಅದಕ್ಕೆ ಅಕ್ಕ ಸಮರ್ಪಕವಾದ ಉತ್ತರವನ್ನು ಕೊಟ್ಟಂತೆಯೂ ಅದ್ಭುತವಾದ ನಾಟ್ಯಮಯ ಸಂದರ್ಭವನ್ನು ಚಿತ್ರಿಸಿದ್ದಾರ” ಮುಂದೆ ಜನ ಮನದಲ್ಲಿ ಅಕ್ಕನನ್ನು ಕುರಿತು ಈ ‘ಕೇಶಾಂಬರೆ’ಯಾದ ಚಿತ್ರವೇ ಸ್ಥಾಯಿಯಾಗಿ ಉಳಿದುಬಂದಿದೆ; ಚಿತ್ರಕಾರರು ಅಕ್ಕಮಹಾದೇವಿಯನ್ನು ಹೀಗೆಯೆ ಚಿತ್ರಿಸಿದ್ದಾರೆ. ಆದರೆ, ಹೆಣ್ಣೋಬ್ಬಳು ಈ ಬಗೆಯ ‘ಅವಸ್ಥೆ’ಯಲ್ಲಿ ಇದ್ದಳೆಂಬುದು ಎಷ್ಟು ಸಂಭಾವ್ಯ ಹಾಗೂ ಉಚಿತ ಎಂಬುದರ ಬಗ್ಗೆ ಬಹುಜನ ಗಂಭೀರವಾಗಿ ವಿಚಾರ ಮಾಡಿದಂತೆ ತೋರುವುದಿಲ್ಲ.

 ಈ ಹಿನ್ನೆಲೆಯಲ್ಲಿ ದಿವಂಗತ ಶ್ರೀ ಎಚ್. ದೇವೀರಪ್ಪನವರು ಕೆಲವು ವರ್ಷಗಳ ಹಿಂದೆ ಬರೆದ ʼಕೇಶಾಂಬರೆಯ ದಿಗಂಬರೆಯೆʼ ಎಂಬ  ಸಂಶೋಧನ ಬರೆಹವೊಂದರ ವಿಚಾರ ಸರಣಿಯನ್ನು ಗಮನಿಸುವುದು ಅಗತ್ಯವಾಗಿದೆ..ಅವರು ಮುಖ್ಯವಾಗಿ ಹರಹರನಲ್ಲಿ  ಬರುವ ʼಕೇಶಾಂಬರೆʼ ಎಂಬ ಮಾತನ್ನು ಅರ್ಥೈಸಿರುವ ಕ್ರಮವು ತರ್ಕಬದ್ದವಾಗಿದೆ ಎಂಬುದು ನಮ್ಮ ಅಭಿಪ್ರಾಯ ಕೂಡ. ಅಕ್ಕಮಹಾದೇವಿ ಕೌಶಿಕನ ಅರಮನೆಯನ್ನು ಬಟ್ಟು ಹೋಗುವಾಗ  ʼಕೇಶಾಂಬರೆಯಾಗಿ ತಿರುಗಿ ಬಂದು  ಪರ್ವತಾಭಿಮುಖಿಯಾಗಿ ನಡೆತಂದಳ್‌ ಎಂಬ ವರ್ಣನೆಯಿದೆಯಷ್ಟೆ, ಕೌಶಿಕನನ್ನು ಕೊಟ್ಟ ಕೊನೆಯದಾಗಿ ತಿರಸ್ಕರಿಸಿದಾಗ ಆಕೆ ಕೇಶಾಂಬರೆಯಾಗಿ ತಿರುಗಿಬಂದು (ಅಂದರೆ ಅರಮನೆಯ ಒಂದು ಭಾಗದಿಂದ ಕೇಶಾಂಬರೆಯಾಗಿ  ಹಿಂದಕ್ಕೆ …  ಪೂಜಾಗೃಹಕ್ಕೆ ಬಂದು) “ಚೆನ್ನಮಲ್ಲಿಕಾರ್ಜುನನಂ ಕರಸ್ಥಲದೊಳ್ ಬಿಜಯಂಗೈಯ್ದಿಕೊಂಡು ಪುರವನ್ನು ಬಿಟ್ಟು ಹೊರಟಳೆಂಬುದು ಇಲ್ಲಿನ ಉಲ್ಲೇಖವಾಗಿದೆ. “ಕೇಶಾಂಬರೆ” ಎಂಬ ಪದಕ್ಕೆ ಕೇಶದಿಂದ ಮಾಡಿದ ಬಟ್ಟೆಯನ್ನು ಧರಿಸಿದವಳು ಎಂದು ಅರ್ಥ ಮಾಡಬೇಕಾಗುತ್ತದೆ’ ಎನ್ನುತ್ತಾರೆ ದೇವೀರಪ್ಪನವರು. ಇದೇ ಪದವನ್ನು ಬಳಸಲಾದ ಇನ್ನೂ ಒಂದೆರಡು ಉಲ್ಲೇಖಗಳ ಕಡೆ ಅವರು ಗಮನವನ್ನು ಸೆಳೆದಿದ್ದಾರೆ. ಹರಿಹರನ ‘ಅಕ್ಕಮಹಾದೇವಿಯ ರಗಳೆ’ಯಲ್ಲಿಯೆ, ಏಳನೆಯ ಸ್ಥಳದಲ್ಲಿ

 ಬರುತಿರ್ದಳಶಿಭಕ್ತಿಯುಡುತಡಿಯ ಮಹಾದೇವಿ

 ಪರಮ ವೈರಾಗ್ಯ ರಸವೆಯ್ದೆ ತನುವಂ ತೀವಿ

 ನಿಷ್ಠೆ ಪಾದದ ರಕ್ಷೆಯಾಗುತಿರೆ ನಡೆಯುತುಂ

 ಉಟ್ಟ ಕೇಶಾಂಬರಂ ದಟ್ಟಯಿಸಿ ಮೆರೆಯುತು

 ಎಂಬಲ್ಲಿ ‘ಉಟ್ಟ ಕೇಶಾಂಬರಂ’ ಎಂಬ ಮಾತನ್ನು ಗಮನಿಸಬೇಕು. ಹಾಗೆಯ ಹರಿಹರನ ‘ಕೇಶಿರಾಜ ದಂಡನಾಯಕನ ರಗಳೆ’ಯಲ್ಲಿಯೂ, ಆತ ಮಂತ್ರಿ ಪದವಿಯನ್ನು ತ್ಯಜಿಸಿ ಹೊರಟ ಸಂದರ್ಭವನ್ನು ಚಿತ್ರಿಸುವಾಗ

 ಆಸೆಗೆಡಗೊಡದೆ ತನ್ನಯ ವಸ್ತಮಂಬಿಟ್ಟು

 ಆಶಾಂಬರನ ಸುತಂ ಕೇಶಾಂಬರವನುಟ್ಟು

  ಎಂಬ ವರ್ಣನೆಯಿಂದ ಈ ಎರಡೂ ಸಂದರ್ಭಗಳಲ್ಲಿಯೂ ‘ಕೇಶಾಂಬರ’ ಎಂದರೆ ಕೇಶದಿಂದ ಅಂಬರ, ಉಣ್ಣಿಯ ನೂಲಿನಿಂದ ಮಾಡಿದ ಬಟ್ಟೆ ಅಥವಾ ಗೊಂಗಡಿ ಅಥವಾ ಕರಿಯ ಕಂಬಳಿಯ ನಿಲುವಂಗಿ ಎಂದು ಅರ್ಥವೇ ಹೊರತು, ಕೂದಲನ್ನು ಮರೆಮಾಡಿಕೊಂಡ ಬೆತ್ತಲೆಯ ಸ್ಥಿತಿ ಎಂದು ಅರ್ಥವಾಗುವುದಿಲ್ಲವೆಂದು ದೇವೀರಪ್ಪನವರು ವ್ಯಾಖ್ಯಾನಿಸುತ್ತಾರೆ. ಈಗಲೂ ಹಿಮಾಲಯದ ಪರಿಸರದಲ್ಲಿ ಕರಿಯಕಂಬಳಿಯ ನಿಲುವಂಗಿ ತೊಟ್ಟ ಸಾಧುಗಳಿದ್ದಾರೆ. ಕಾಳಿಕಂಬಳಿವಾಲಾ’ ಅನ್ನುವ ಸನ್ಯಾಸಿಯ ಹೆಸರು ಇಂದಿಗೂ ಪ್ರಸ್ಥಿವಾಗಿದೆ. ಈ ಹಿನ್ನೆಲೆಯಿಂದ ನೋಡಿದಾಗ `ತೆಗೆ ತೆಗೆ ನಿನಗೇನು ? ಅತ್ಯಂತ ಭಕ್ತಿಗೆ ಮೀರಿದ ವಿರಕ್ತಿಗೆ ಸೀರೆಯೇಕೆ’ ಎಂದು ಕೌಶಿಕನು ವ್ಯಂಗ್ಯವಾಗಿ ಮೂದಲಿಸಿದಾಗ, ಆಕೆಗೆ ಎಲ್ಲ ವಸ್ತ್ರಗಳ ಬಗೆಗೂ ಜಿಗುಪ್ಸೆಯುಂಟಾಗಿ, ‘ಕೇಶಾಂಬರ’ವನ್ನು, ಎಂದರೆ ಕರಿಯ ಕಂಬಳಿಯಿಂದ ಮಾಡಿದ ಉಡುಗೆಯನ್ನು ಧರಿಸಿ’ ಅರಮನೆ ಹಾಗೂ ನಗರವನ್ನು ಬಿಟ್ಟು ಹೊರಟು ಬಂದಿರಬೇಕು, ಆದ ಕಾರಣ ಮಹಾದೇವಿ ‘ಕೇಶಾಂಬರೆ’ಯಾಗಿದ್ದಳೆಂದರೆ, ತನ್ನ ಉದ್ದವಾದ ತಲೆಕೂದಲನ್ನು ಮರೆಮಾಡಿಕೊಂಡು ಬೆತ್ತಲೆಯ ಸ್ಥಿತಿಯಲ್ಲಿ ಇದ್ದಳೆಂದು ಅರ್ಥಮಾಡುವುದು ತೀರಾ ಅಸಂಗತವಾದ ಕಲ್ಪನೆ ಎನ್ನುವುದರಲ್ಲಿ ಸಂದೇಹವಿಲ್ಲ. ಮತ್ತು ‘ಬೆತ್ತಲೆ’ ಎಂದರೆ ಕೇವಲ ಶಾರೀರಿಕವಾದ ಒಂದು ವಸ್ತ್ರಹೀನ ಸ್ಥಿತಿ ಎಂದು ವಾಚ್ಯವಾಗಿ ಭಾವಿಸುವುದಕ್ಕಿಂತ, ಎಲ್ಲ ಬಗೆಯ ಆವರಣಗಳನ್ನೂ ಕಳಚಿಕೊಂಡ ಆತ್ಮದ ಒಂದು ಮುಕ್ತ ಸ್ಥಿತಿ ಎಂದು ಸಾಂಕೇತಿಕವಾಗಿ ಗ್ರಹಿಸುವುದೂ ಅಗತ್ಯವಾಗಿದೆ.

 “ಎಳೆಯಂದಿನಲ್ಲಿ ತಂದೆತಾಯಂದಿರ, ಯೌವನದಲ್ಲಿ ಕೈಹಿಡಿದ ಗಂಡನ, ಮುಪ್ಪಿನಲ್ಲಿ ಮಕ್ಕಳ ರಕ್ಷಣೆಯಲ್ಲಿ ಇರಬೇಕಾದ ಹೆಣ್ಣು, ಸ್ವಾತಂತ್ರ ಕ್ಕೆ ಅರ್ಹಳಲ್ಲ”- ಎಂಬ ಮನುಧರ್ಮ ಸೂತ್ರವು ನಿಯಂತ್ರಿಸಿದ ಸಾಂಸಾರಿಕ ಚೌಕಟ್ಟನ್ನು ದಾಟಿ, ಹೆಣ್ಣಿಗೆ ಇದರಿಂದಾಚೆಯ ಬೇರೊಂದು ಅಸ್ತಿತ್ವವೂ ವ್ಯಕ್ತಿತ್ವವೂ ಉಂಟು ಎಂಬುದನ್ನು ತನ್ನ ವೈಚಾರಿಕತೆ ಹಾಗೂ ದಿಟ್ಟತನದ ನಡವಳಿಕೆಯ ಮೂಲಕ ಸಾಧಿಸಿ ತೋರಿಸಿದ ಅಕ್ಕಮಹಾದೇವಿ, ಹನ್ನೆರಡನೆಯ ಶತಮಾನದ ಶರಣ ಚಳುವಳಿಯ ನಡುವೆ ಒಂದು ವಿಶಿಷ್ಟವೂ ಭಿನ್ನವೂ ಆದ ನಿಲುವಿನಿಂದ ಹೆಣ್ತನದ ಘನತೆ ಗೌರವಗಳ ಪ್ರತೀಕವಾಗಿದ್ದಾಳೆ.

ಡಾ. ಸಿ.ವಿ.ಪ್ರಭುಸ್ವಾಮಿಮಠ

ಅಲ್ಲಮಪ್ರಭು ಕನ್ನಡನಾಡಿನ ವಚನ ಚಳುವಳಿಯ ಫಲವಾಗಿ ಮೂಡಿಬಂದ ಧೀಮಂತ ಅನುಭಾವಿ ಮತ್ತು ಉನ್ನತ ತತ್ವಜ್ಞಾನಿ. ೧೨ನೇ ಶತಮಾನದಲ್ಲಿ ಬಾಳಿದ ಅಲ್ಲಮ ಪ್ರಭುವಿನ ಅಧಿಕೃತ ಚರಿತ್ರೆಯನ್ನು ತಿಳಿಸುವ ಒಂದೇ ಗ್ರಂಥ ಎಂಬುದಿಲ್ಲ. ಮುಖ್ಯವಾಗಿ ಅಲ್ಲಮನ ಚರಿತ್ರೆಯನ್ನು ಆತನನ್ನು ಕುರಿತು ರಚಿತವಾದ ಕಾವ್ಯಗಳಿಂದ, ಸ್ವತಃ ಅಲ್ಲಮನ ವಚನಗಳಿಂದ ಶೂನ್ಯಸಂಪಾದನೆಗಳಿಂದ ಜಾನಪದ ಕಾವ್ಯಗಳಿಂದ ತಿಳಿಯಬಹುದಾಗಿದೆ. ಕಾವ್ಯಗಳಲ್ಲಿ ಹರಿಹರನ ಸಂಪ್ರದಾಯ, ಚಾಮರಸನ ಸಂಪ್ರದಾಯ ಎಂದು ಪ್ರತ್ಯೇಕಿಸಿ ಗುರುತಿಸಲಾಗುತ್ತದೆ ಹರಿಹರನ ‘ಪ್ರಭುದೇವರ ರಗಳೆ’ ವಚನ ಚಳುವಳಿಗೆ ತುಂಬ ಸಮೀಪದಲ್ಲಿ ರಚಿತವಾದ ಕೃತಿಯಾದ್ದರಿಂದ ಅದು ಚರಿತ್ರೆಗೆ ಹೆಚ್ಚು ಸಮೀಪವಾದ ಕೃತಿಯೆಂದು ಗುರುತಿಸಲಾಗುತ್ತದೆ. ಚಾಮರಸನ ‘ಪ್ರಭುಲಿಂಗ ಲೀಲೆ’ ಅಲ್ಲಮನನ್ನು ಕುರಿತು ರಚಿತವಾದ ಸಾಂಕೇತಿಕ ತಾತ್ವಿಕ ಕಾವ್ಯ. ಇದೇ ಸಂದರ್ಭದಲ್ಲಿ ಪುರಾಣದೃಷ್ಟಿಗೆ ಎಳಂದೂರು ಹರೀಶ್ವರನ ‘ಪ್ರಭುದೇವ ಪುರಾಣ’ವನ್ನು ಹೆಸರಿಸಬಹುದಾಗಿದೆ.

ಇನ್ನು ‘ಶೂನ್ಯ ಸಂಪಾದನೆ’ ಸಂಪುಟಗಳು ವೀರಶೈವ ಧರ್ಮ ಒಂದು ಸಾಂಸ್ಥಿಕ ರೂಪವನ್ನು ಪಡೆಯುತ್ತಿರುವ ಸಂದರ್ಭದಲ್ಲಿ, ಅಲ್ಲಮನನ್ನು ಕೇಂದ್ರವ್ಯಕ್ತಿಯನ್ನಾಗಿಟ್ಟುಕೊಂಡು ಶೂನ್ಯತತ್ವವೊಂದನ್ನು ವಿಕಾಸಗೊಳಿಸಿದ ವಚನ ಸಂಪಾದನ ಕೃತಿಗಳು. ಇವುಗಳಲ್ಲದೆ ‘ಮಂಟೆಸ್ವಾಮಿಯ ಕಾವ್ಯ’ ಹಳ್ಳಿಗರ ಹಾಡುವಿನಂಥ ಜಾನಪದ ಕೃತಿಗಳು ಮತ್ತು ಇನ್ನೂ ಅನೇಕ ಕಾವ್ಯಭಾಗಗಳು, ಪುರಾಣಗಳು ಅಲ್ಲಮನ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನಿಸಿವೆ. ಸ್ವತಃ ಅಲ್ಲಮನ ವಚನಗಳು ಆತನ ಆಂತರಂಗಿಕ ವ್ಯಕ್ತಿತ್ವವು ವಿಕಾಸಗೊಂಡ ಬಗೆಯನ್ನು ಸೂಚಿಸುತ್ತವೆ.

ಮೇಲಿನ ಕೃತಿಗಳ ನೆರವಿನಿಂದ ಅಲ್ಲಮನ ಜೀವನ ಚರಿತ್ರೆಯ ಒಂದು ಸ್ಥೂಲವಾದ ಚಿತ್ರವನ್ನು ರೂಪಿಸಿಕೊಳ್ಳಬಹುದಾಗಿದೆ. ಅಲ್ಲಮನ ಜನ್ಮ ಬನವಾಸಿ ಪ್ರಾಂತಕ್ಕೆ ಸೇರಿದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ. ಅದು ಕಾಳಾಮುಖ ಶೈವರ ದೊಡ್ಡ  ಅಧ್ಯಾತ್ಮಿಕ ಕೇಂದ್ರವಾಗಿತ್ತು. ಹರಿಹರ ಅಲ್ಲಮನ ತಂದೆ ನಾಗವಾಸಾಧಿಪತಿಯಾಗಿದ್ದನೆಂದು ಹೇಳಿದರೆ ಚಾಮರಸ ಆತನ ತಂದೆ ತಾಯಿಗಳ  ಹೆಸರುಗಳನ್ನು ಗುಣವಾಚಕವಾಗಿ ನಿರಹಂಕಾರ ಸುಜ್ಞಾನಿಯೆಂದು ಹೇಳುತ್ತಾನೆ  ಆಧುನಿಕ ಸಂಶೋಧನೆ ಅಲ್ಲಮನು ನಟ್ಟುವರ ಜಾತಿಗೆ ಸೇರಿದವನೆಂದು ಗುರುತಿಸಿದೆ.

ಅಲ್ಲಮನು ತಾರುಣ್ಯಕ್ಕೆ ಬಂದಾಗ ಕಾಮಲತೆ ಎಂಬುವಳನ್ನು ಮೋಹಿಸಿ ಅವಳ ಅಕಾಲ ಮರಣದಿಂದ ವೈರಾಗ್ಯದತ್ತ ತಿರುಗಿದನೆಂದು ಹರಿಹರ ಹೇಳಿದರೆ ಚಾಮರಸನು ಮೋಹಿಸಿ ಬಂದ ಮಾಯಾದೇವಿಯನ್ನು ತಿರಸ್ಕರಿಸಿ ಮಾಯಾ- ಕೋಲಾಹಲನಾದನೆಂದು ಹೇಳುತ್ತಾನೆ. ಇನ್ನು ಆತನ ಗುರುವಾದ ಅನಿಮಿಷಯೋಗಿ ಗುಹೆಯಲ್ಲಿ ಜ್ಯೋರ್ತಿಲಿಂಗವನ್ನು ನೀಡಿದ ಬಗ್ಗೆ ಹರಿಹರ, ಚಾಮರಸ, ಸ್ವತಃ ಅಲ್ಲಮನ ವಚನಗಳಲ್ಲಿ ಉಲ್ಲೇಖ ದೊರೆಯುವುದಲ್ಲದೆ ಅನಂತರ ಅಲ್ಲಮನು ತನ್ನ  ಕಠಿಣತಮ ಅಧ್ಯಾತ್ಮಿಕ ಸಾಧನೆಯಿಂದ ಉನ್ನತ ನೆಲೆಗೇರಿದ ಬಗೆಯು ತಿಳಿಯುತ್ತದೆ.

ಅಲ್ಲಮನು ಕೇವಲ ವೈಯಕ್ತಿಕವಾದ ಅಧ್ಯಾತ್ಮಿಕ, ಆನುಭವಿಕ ಸಾಧನೆಯಲ್ಲೇ ಮುಳುಗದೆ, ಲೋಕೋದ್ಧಾರದ ಕಾರ್ಯದಲ್ಲಿ ಮುಂದುವರಿದ ಬಗ್ಗೆ ಅವನ ವ್ಯಕ್ತಿತ್ವಕ್ಕೆ ಸಾಮಾಜಿಕ ಮುಖವೊಂದು ಇದ್ದ ಬಗ್ಗೆ ಅವನ ಸಂಪರ್ಕದಲ್ಲಿ ಬಂದು ತಮ್ಮ  ವ್ಯಕ್ತಿತ್ವವನ್ನು ಉದ್ಧರಿಸಿಕೊಂಡ ವ್ಯಕ್ತಿಗಳ ಸಂದರ್ಭಗಳು ಸೂಚನೆಯನ್ನು ನೀಡುತ್ತವೆ. ಉದಾಹರಣೆಗೆ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ, ಮಹಾದೇವಿಯಕ್ಕ, ಬಸವಣ್ಣನವರನ್ನು ಹೆಸರಿಸಬಹುದಾಗಿದೆ. ಲೋಕಕಲ್ಯಾಣವೇ ಮುಖ್ಯಗುರಿಯಾಗಿದ್ದ ಅಲ್ಲಮನು, ಬಳ್ಳಿಗಾವಿ. ಬನವಾಸಿ, ಸೊನ್ನಲಿಗೆ, ಕಲ್ಯಾಣ, ಕಾಶಿ, ಕೇದಾರ ಕ್ಷೇತ್ರಗಳನ್ನು ಸುತ್ತಿ ಕೊನೆಯಲ್ಲಿ ಶ್ರೀಶೈಲದ ಕದಳಿವನದಲ್ಲಿ ಕಣ್ಮರೆಯಾದಂತೆ ತಿಳಿಯುತ್ತದೆ.

ಅಲ್ಲಮಪ್ರಭುವಿನ ಲೋಕಕಲ್ಯಾಣದ ಕಾರ್ಯಕ್ರಮದಲ್ಲಿ ಅವನು ಕಲ್ಯಾಣದ ಅನುಭಾವಮಂಟಪದಲ್ಲಿ ನಿಂತು ಶರಣರೊಡನೆ ನಡೆಸಿದ ಅನುಭಾವಗೋಷ್ಠಿ ಮುಖ್ಯವಾದದ್ದು. ಅವರ ಅನೇಕ ವಚನಗಳ ಚಿಂತನೆಯ ಹಿನ್ನಲೆಯಲ್ಲಿ ಈ ಶಿವಾನುಭವಗೋಷ್ಠಿಯು ಕೆಲಸಮಾಡಿರುವುದನ್ನು ಗಮನಿಸಬಹುದಾಗಿದೆ. ಅಲ್ಲಮನ ವಚನಗಳ ಈ ಮುಖವನ್ನು ಪರಿಶೀಲಿಸುವ ಮೊದಲು  ಸ್ಥೂಲವಾಗಿಯಾದರೂ ಅನುಭಾವವೆಂದರೇನು? ಭಾರತೀಯ ಅನುಭಾವ ಪರಂಪರೆಯು ಸಾಗಿಬಂದ ಅನುಭವಿಕ ಘಟ್ಟಗಳನ್ನು ಕುರಿತು ಸಂಕ್ಷೇಪದಲ್ಲಿ ಪ್ರಸ್ತಾಪಿಸುವುದು ಉಚಿತವೆಂದು ಕಾಣುತ್ತದೆ. ವಚನಗಳ ಸಂದರ್ಭದಲ್ಲಿ ಅನುಭಾವವೆಂದರೆ ಅದು ಆತ್ಮವಿದ್ಯೆ, ಇರುವಿನೊಳಗಿನ ಅರಿವು ಅದು ಇಂದ್ರಿಯಾತೀತವಾದ ಅನುಭವ’ ಎಂದು ಮುಂತಾಗಿ ಹೇಳಲಾಗುತ್ತದೆ. ಅನುಭಾವ ಪರಂಪರೆಗಳನ್ನು ೧) ಹಿಂದೂ ೨) ಕ್ರಿಶ್ಚಿಯನ್ ೩) ಸೂಫಿ ,೪) ಬೌದ್ಧ ಎಂದು ಗುರುತಿಸಲಾಗುತ್ತದೆ. ಈ ಅನುಭಾವ ಪರಂಪರೆಗಳು ಕೊನೆಯಲ್ಲಿ ಒಂದೇ ಕೇಂದ್ರದಲ್ಲಿ ಕೊನೆಗೊಳ್ಳುತ್ತವೆ ಎಂದೂ, ..ಇಲ್ಲ ಅವು ತಮ್ಮ ತಮ್ಮ ವಿಶಿಷ್ಟತೆಯೊಂದಿಗೆ ಬೇರೆ ಬೇರೆಯಾಗಿಯೇ ಉಳಿಯುತ್ತವೆ ಎಂದೂ  ಕೆಳಗಿನಂತೆ ಗುರುತಿಸಲಾಗುತ್ತದೆ. ಅಭಿಪ್ರಾಯಗಳಿವೆ. ಭಾರತೀಯರಲ್ಲಿ ಅನುಭಾವ ಪರಂಪರೆಗಳ ಘಟ್ಟಗಳನ್ನು ಈ

೧) ವೇದಗಳ ಯಜ್ಞಗಳಿಂದ ರಹಸ್ಯ ತಿಳಿಯುವ ಪ್ರಯತ್ನ

೨) ಉಪನಿಷತ್ತುಗಳ ಕಾಲಕ್ಕೆ ಯಜ್ಞಗಳಿಂದ ದೊರೆಯುವ ಫಲ ಕ್ಷಣ ಭಂಗುರವೆಂದು ಶಾಶ್ವತ ಸುಖಸಾಧನೆಗೆ ಜ್ಞಾನಯಜ್ಞದ ಪ್ರತಿಪಾದನೆ

೩) ಭಗವದ್ಗೀತೆಯಲ್ಲಿ ಆತ್ಮನಿಂದ ಆತ್ಮನಲ್ಲಿಯೇ ಸಂತುಷ್ಟನಾಗುವ ಸ್ಥಿತಿ

ಇವಲ್ಲದೆ ಒಟ್ಟು ಭಾರತೀಯ ಶೈವ ಅನುಭಾವ ಪರಂಪರೆಯ ತಾತ್ವಿಕ ಚಿಂತನೆಗೆ ಪ್ರತಿಭಟನೆಯಾಗಿ ಅಲ್ಲಮನಲ್ಲಿ ಶರಣರ ಅನುಭಾವ ಪರಂಪರೆ ಪ್ರಾತಿನಿಧಿಕವಾಗಿ ರೂಪುಗೊಂಡಿರುವುದನ್ನು ಇತ್ತೀಚೆಗೆ ದಿವಂಗತ ಡಾ . ಡಿ.ಆರ್.ನಾಗರಾಜ ಅವರು ತಮ್ಮ “ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ” ಎಂಬ ಗ್ರಂಥದಲ್ಲಿ ಗುರುತಿಸಿದ್ದಾರೆ. ಇನ್ನು ಅಲ್ಲಮಪ್ರಭುವಿನ ವಚನಗಳ ಅಭಿವ್ಯಕ್ತಿ ಕ್ರಮವನ್ನು ಕುರಿತು ವಿವೇಚಿಸಿ, ಅನಂತರ ಪ್ರಾತಿನಿಧಿಕವಾಗಿ ಆತನ ಕೆಲವು ವಚನಗಳನ್ನು ವಿಶ್ಲೇಷಿಸಬಹುದಾಗಿದೆ. ಅಲ್ಲಮ ಪ್ರಭುವಿನ ವಚನಗಳು ಸಾಮಾನ್ಯವಾಗಿ ಅಂದು ಎಲ್ಲ ಶರಣರ ವಚನಗಳಂತೆ ಸ್ಥೂಲವಾಗಿ ಮೇಲುನೋಟಕ್ಕೆ ಕಂಡರೂ ಆತನ ವ್ಯಕ್ತಿ ವಿಶಿಷ್ಟವಾದ ಅಭಿವ್ಯಕ್ತಿ ಕ್ರಮವು ಆತನ ವಚನಗಳಲ್ಲಿರುವುದು ಕಂಡುಬರುತ್ತದೆ. ಅದನ್ನು ವಚನ ಪರಿಭಾಷೆಯಲ್ಲಿ “ಬೆಡಗು” ಎಂದು ಗುರುತಿಸಲಾಗುತ್ತದೆ. ಬೆಡಗು ಎಂದರೆ ಸೌಂದರ್ಯ, ಬೆರಗು, ಆಶ್ಚರ್ಯ, ವೈರುಧ್ಯಾತ್ಮಕ ಅಭಿವ್ಯಕ್ತಿ ಕ್ರಮ ಎಂದು ಗುರುತಿಸಲಾಗುತ್ತದೆ. ಈ ಬೆಡಗು ಕನ್ನಡ ವಚನ ಅಭಿವ್ಯಕ್ತಿಗೆ ವಿಶಿಷ್ಟವಾಗಿದ್ದರೂ, ಇದನ್ನು ಹೋಲುವ ಅಥವ ಇದಕ್ಕೆ ಪ್ರೇರಣೆಯನ್ನು ನೀಡಿರಬಹುದಾದ ಅಭಿವ್ಯಕ್ತಿ ರೀತಿ, ಸಂಸ್ಕೃತ, ಪ್ರಾಕೃತ, ಪಾಲಿ, ಹಿಂದಿ ಭಾಷೆಗಳಲ್ಲಿರುವುದು ಕಂಡು ಬರುತ್ತದೆ. ಸಂಸ್ಕೃತದಲ್ಲಿ ಅದನ್ನು ‘ಸಂಧಾಭಾಷಾ’ ಅಥವ ‘ಸಂಧ್ಯಾಭಾಷಾ’ ಅಂದರೆ ಸಂಜೆ ಮಂಪರಿನಂಥ ಅಸ್ಪಷ್ಟ ಅಭಿವ್ಯಕ್ತಿ ಕ್ರಮ ಎಂದು ಕರೆಯಲಾಗುತ್ತದೆ. ಅಸ್ಪಷ್ಟತೆ, ಗೂಢ, ರಹಸ್ಯಾತ್ಮಕತೆಯೇ ಇದರ ವೈಶಿಷ್ಟವಾಗಿದೆ. ಇದನ್ನೇ ಹಿಂದಿಯಲ್ಲಿ ‘ಉಲಟ್ ಭಾಷಾ’ ಎಂದು ಕರೆಯಲಾಗುತ್ತದೆ.

ಅಲ್ಲಮಪ್ರಭುವಿನ ಕೆಲವು ಸರಳ ವಚನಗಳ ಪ್ರಸ್ತಾಪದೊಂದಿಗೆ ಅವನ ಬೆಡಗಿನ ವಚನಗಳ ವಿಶೇಷತೆಯನ್ನು ಗುರುತಿಸಬಹುದಾಗಿದೆ. ಶರಣರ ಆಂದೋಲನ ಪ್ರಧಾನವಾಗಿ ಸಮಾಜೋ-ಧಾರ್ಮಿಕ ಕ್ರಾಂತಿಯ ಮೂಲಕ ರೂಪುಗೊಂಡಿದ್ದರಿಂದ ಸಾಮಾನ್ಯವಾಗಿ ಎಲ್ಲರ ವಚನಗಳಲ್ಲೂ ಈ ಸಾಮಾಜಿಕ ಮುಖವು ಕಾಣದಿರಲು ಸಾಧ್ಯವಿಲ್ಲ. ಅದಕ್ಕೆ ಅಲ್ಲಮಪ್ರಭು ಹೊರತಾಗುವುದಿಲ್ಲ.

“ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ

ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ

ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆʼʼ

 ಈ ವಚನದಲ್ಲಿ ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ ಎಂದರೆ ದೇವರಿಗಾಗಿ ಸತ್ತವರಿಲ್ಲ ಎಂಬ ಸರಳ ಅರ್ಥದಂತೆಯೇ “ನಿಮಗಾಗಿ’ ದೇವನಿಗೆ ಆಗಿ ಸಂದು ಅಂದರೆ ಸಲ್ಲಿದವರು ಶಾಶ್ವತರು ಅವರಿಗೆ ಸಾವಿಲ್ಲ ಎಂಬ ಸ್ವಾರಸ್ಯಕರ ಅಂಶವನ್ನು ವ್ಯಕ್ತಪಡಿಸುತ್ತದೆ.

“ಕಲ್ಲಮನೆಯ ಮಾಡಿ ಕಲ್ಲದೇವರ ಮಾಡಿ

ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೆ?

ಲಿಂಗ ಪ್ರತಿಷ್ಠೆಯ ಮಾಡಿದವರಿಗೆ ನಾಯಕ ನರಕ ಗುಹೇಶ್ವರಾ?

ಬಸವಣ್ಣನವರ ಹಾಗೆಯೇ ಅಲ್ಲಮನೂ ಸ್ಥಾವರ ದೇವಾಲಯ ನಿರ್ಮಾಣವನ್ನು ಸ್ಥಾವರ ಲಿಂಗ ಪ್ರತಿಷ್ಠಾಪನೆಯನ್ನು ವಿಡಂಬಿಸಿರುವುದು ಇಲ್ಲಿನ ವಿಶೇಷತೆಯಾಗಿದೆ.

“ಸಂಸಾರವೆಂಬ ಹೆಣಬಿದ್ದಿದ್ದಡೆ, ತಿನಬಂದ ನಾಯ ಜಗಳವನೋಡಿರೆ

ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ

ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆʼʼ

ಸಂಸಾರವನ್ನು ಹೆಣಕ್ಕೆ ಹೋಲಿಸಿರುವುದು, ವಿಷಯ ಸುಖ ಬೆನ್ನು ಹತ್ತಿದ ಜೀವಿಗಳನ್ನು ಜಗಳ ಮಾಡುವ ನಾಯಿಗಳಿಗೆ ಹೋಲಿಸಿ, ಅವುಗಳ ಜಗಳ ಕಂಡು ಸಂಸಾರವೆಂಬ ಹೆಣ ನಗುತ್ತಿದೆ ಎಂದು ವೈರುಧ್ಯದಲ್ಲಿ ಹಿಡಿದು ಅರ್ಥ ಸ್ವಾರಸ್ಯ ಹೆಚ್ಚಿಸಿರುವುದು ಇಲ್ಲಿನ ವಿಶೇಷತೆಯಾಗಿದೆ.

ಢಾಂಬಿಕ ಭಕ್ತಿಯನ್ನು ವಿಡಂಬಿಸಿರುವುದಕ್ಕೆ-

“ಹಾಲನೇಮ ಹಿಡಿದಾತ ಬೆಕ್ಕಾಗಿ ಹುಟ್ಟುವ

ಕಡಲೆ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ”

ಇವು ನಿಜವಾದ ಭಕ್ತಿಯಿಲ್ಲದವರ ಪರಿ ಎಂದು ಅಲ್ಲಮ ವ್ಯಂಗ್ಯವಾಡುತ್ತಾನೆ.

ಕೊಟ್ಟ ಕುದುರೆಯನೇರಲರಿಯದೆ

ಮತ್ತೊಂದು ಕುದುರೆಯ ಬಯಸುವವರು

ವೀರರೂ ಅಲ್ಲ ಧೀರರೂ ಅಲ್ಲ…”

ದತ್ತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಗುರಿಸಾಧಿಸದ ವ್ಯರ್ಥ ಸಾಹಸಿಗರನ್ನು ಕುರಿತ ವಿಮರ್ಶೆ ಇಲ್ಲಿ ವ್ಯಕ್ತವಾಗಿದೆ.

“ಎತ್ತಣ ಮಾಮರ ಎತ್ತಣ ಕೋಗಿಲೆ

ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬ ವಚನದಲ್ಲಿ ಅವ್ಯಕ್ತವಾದ ಜೀವ- ದೇವ ಸಂಬಂಧವನ್ನು ಅರ್ಥಪೂರ್ಣವಾಗಿ ವ್ಯಕ್ತಪಡಿಸಲಾಗಿದೆ.

“ವೇದವೆಂಬುದು ಓದಿನ ಮಾತು

ಶಾಸ್ತ್ರವೆಂಬುದು ಸಂತೆಯ ಸುದ್ದಿ…”

 ದೈವೀ ಅನುಭವವನ್ನು ಅನುಭವಕ್ಕೆ ತಂದುಕೊಳ್ಳಲಾಗದ ಸಾಂಪ್ರದಾಯಕ ಆರಾಧನೆಯ ಯಾಂತ್ರಿಕ ಸಾಹಸವನ್ನು ಅಲ್ಲಮನು ವಚನದಲ್ಲಿ ವಿಮರ್ಶೆಗೆ ಒಳಪಡಿಸಿದ್ದಾನೆ… ಗುಹೇಶ್ವರನೆಂಬುದು ಮೀರಿದ ಘನವು” ಎಂಬ ಮಾತಿನಲ್ಲೇ ಅದರ ಅಗಮ್ಯತೆ ವ್ಯಕ್ತವಾಗಿದೆ.

ಇನ್ನು ಬೆಡಗಿನ ವಚನಗಳನ್ನು ಕುರಿತು ಮಧ್ಯ ಕನ್ನಡ ಕಾಲದಲ್ಲಿ ನಡೆದ ಟೀಕು, ಭಾಷ್ಯವನ್ನು ಕುರಿತು ಒಂದೆರೆಡು ಮಾತುಗಳನ್ನು ಹೇಳಬೇಕು. ಟೀಕು, ಭಾಷ್ಯಗಳಲ್ಲಿ, ವಚನಗಳಿಗೆ ಸಿದ್ಧವಾದ ಅರ್ಥವನ್ನು ಧಾರ್ಮಿಕ ತಾಂತ್ರಿಕ ದೃಷ್ಟಿಯಿಂದ ಹೇಳುವ ಪ್ರಯತ್ನ ವಿಶೇಷವಾಗಿ ನಡೆಯಿತು. ಅವು ತಮ್ಮ ಉದ್ದೇಶದಲ್ಲಿ ಒಂದು ಮಟ್ಟದ ವಿಮರ್ಶೆಯಾಗಿ ಸಫಲವಾದವು ಆದರೆ ಕಾಲಕ್ರಮದಲ್ಲಿ ಆ ಪದಗಳಿಗೆ ಅದೇ ಅರ್ಥ ಎಂದು ಕಟ್ಟುಹಾಕಿ ವ್ಯಾಖ್ಯಾನ ಮಾಡುವ ಪರಂಪರೆ ಮುಂದುವರೆದಂತೆ ವಚನಗಳನ್ನು ಕುರಿತು ಬೇರೆ ಮುಕ್ತವ್ಯಾಖ್ಯಾನ ಸಾಧ್ಯವಾಗದೆ ಅವಕ್ಕೆ ಒಂದು ಅರ್ಥದ ಮಿತಿಯೇ ಉಂಟಾದಂತೆ ಕಂಡು ಬರುತ್ತದೆ ಆದರೆ ಆಧುನಿಕ ಕಾಲದಲ್ಲಿ ನಡೆದ ವಚನ ವಿಶ್ಲೇಷಣೆಯು ಭಿನ್ನ ವ್ಯಾಖ್ಯಾನ ಸಾಧ್ಯತೆಯನ್ನು ರೂಪಿಸುವುದರ ಮೂಲಕ ವಚನಗಳಿಗೆ ಹೊಸ, ಹೊಸ ವ್ಯಾಖ್ಯಾನಗಳು ಮೂಡಿ ಬರಲು ಕಾರಣವಾಯಿತು. ಉದಾಹರಣೆಗೆ ಅಲ್ಲಮನ ವಚನದ ಒಂದು ವ್ಯಾಖ್ಯಾನವನ್ನು ಗಮನಿಸಬಹುದಾಗಿದೆ.

 ಗಂಗಾದೇವಿ ಮುಂಡೆಯಾದಳು,

ಗೌರಿದೇವಿ ಓಲೆಯ ಕಳೆದಳು,

ಚಂದ್ರ ಸೂರ್ಯರಿಬ್ಬರೂ ನೀರಿಳಿದರಲ್ಲಾ!

ವಾಯುದೇವ ವಿಮಾನವ ಹೊತ್ತ,

ವಾಸುದೇವ ತಲೆಗೊಳ್ಳಿಯ ನಿರಿದ

ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ”

ಈ ವಚನದಲ್ಲಿ ಅಲ್ಲಮನು ಈಶ್ವರನ ನಿರಾಕಾರ ಸ್ವರೂಪವನ್ನು ಕುರಿತು ಹೇಳುತ್ತಾನೆ. ಅಂದರೆ ಕಲ್ಪನೆಯಾಚೆ ಶಬ್ದಕ್ಕೆ ಸಿಗದೆ ಉಳಿಯುವ ನಿರಾಕಾರ ಸ್ವರೂಪವನ್ನು ಶಬ್ದದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಾನೆ. ಶಿವನು (ಗುಹೇಶ್ವರ) ಸಾಯುತ್ತಾನೆ. ಗಂಡ ಸತ್ತಮೇಲೆ ಹೆಂಡಂದಿರಿಗೆ ವೈಧವ್ಯ ಪ್ರಾಪ್ತವಾಗುತ್ತದೆ. ಗಂಗೆ ಮುಂಡೆಯಾಗುತ್ತಾಳೆ. ಗೌರಿ ಮಾಂಗಲ್ಯದ ಸಂಕೇತವಾದ ಓಲೆಯನ್ನು ಕಳಚುತ್ತಾಳೆ. ಅಂತ್ಯ ಸಂಸ್ಕಾರದ ಸಿದ್ಧತೆ ನಡೆಯುತ್ತದೆ. ಚಂದ್ರಸೂರ್ಯರಿಬ್ಬರೂ ನೀರಿಳಿದು ಸ್ನಾನ ಮಾಡಿಸುತ್ತಾರೆ. ವಾಯುದೇವ ವಿಮಾನವ ಹೊತ್ತು ಸಾಗುತ್ತಾನೆ. ಶರೀರವೆಲ್ಲ ಸುಟ್ಟು ಸಂಸ್ಕಾರ ಮುಗಿದು ಅನಂತರ ಗುಹೇಶ್ವರ ಸತ್ತನೆಂಬ ಸುದ್ದಿ ಮಾತ್ರ ಉಳಿಯುತ್ತದೆ.

ವಿಶ್ವದೇಹಿಯಾದ ಶಿವನಿಗೆ ಸಂಸ್ಕಾರ ಮಾಡುವುದಕ್ಕೆ ಅವನ ಕಳ್ಳು ಬಳ್ಳಿಗೆ ಸೇರಿದ ಚಂದ್ರಸೂರ್ಯ ವಾಯುದೇವ ವಾಸುದೇವ ಭಾಗವಹಿಸುವರೆಂದು ಹೇಳುವ  ಅಲ್ಲಮನ ಕಲ್ಪಕತೆಯನ್ನು ಗಮನಿಸಬೇಕು. ಹೀಗಾಗಿ ಅನಂತತೆಯ ಮಧ್ಯದಲ್ಲಿ ನಡೆಯುವ ಈ ಬಯಲಿನ ಸಂಸ್ಕಾರವೂ ಕೂಡ ಇಲ್ಲಿ ಅರ್ಥಪೂರ್ಣವಾಗುತ್ತದೆ. ಲೌಕಿಕದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರೆಂದು ಬಡಿದಾಡುವ ನಮ್ಮ ಈ ಕೆಳಕೆಳಗಿನ ಬಡಿದಾಟಗಳೆಲ್ಲ ಇಲ್ಲಿಂದಿತ್ತಲೇ ಉಳಿದು ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ ಮಾತ್ರ ಉಳಿಯುತ್ತದೆ. ಗುಹೇಶ್ವರ ಸತ್ತನೆಂಬುದು ಕೇವಲ ಸುದ್ಧಿ, ಸೃಷ್ಟಿ, ಸ್ಥಿತಿ ಲಯ ಕ್ರಿಯೆಗಳಾಚೆ ತಾನೇ ತಾನಾಗಿ ಉಳಿಯುವ ಆತನಿಗೆ ಸಾವೆಂದರೇನು?  ಎಂದೂ ಸಾಯದ ಆತನನ್ನು ಕುರಿತು ಸತ್ತನೆಂದು ಸುದ್ಧಿ ಉಂಟಾದುದು, ಅವನ ಸಾವಿನ ಪರಿಣಾಮವಾಗಿ ಆತನ ಇಬ್ಬರೂ ಹೆಂಡಂದಿರು (ಗಂಗೆ-ಗೌರಿ) ವಿಧವೆಯರಾಗುವರೆಂದು ಹೇಳುವ ಅಲ್ಲಮನ ಕಲ್ಪಕತೆಯನ್ನು ಗಮನಿಸಬೇಕು. ಇಲ್ಲಿ ಆತನ ಶೂನ್ಯದ ದರ್ಶನ ಹೇಗೆ ವ್ಯಕ್ತವಾಗಿದೆ ಗಮನಿಸಬೇಕು.

ಶರಣರ ದೃಷ್ಟಿಯಲ್ಲಿ ಸಾವು ಎಂದೂ ನಾಶದ ಸಂಕೇತವಲ್ಲ. ಸಾವು ಎಂಬುದು ಸತ್ಯತತ್ವದ ಸಾಕ್ಷಾತ್ಕಾರ ಎಂಬ ಅರ್ಥದಲ್ಲಿ ಅಲ್ಲಮನು-

“ನಾ ಸತ್ತೆನೆಂದು ಹೆಣ ಕೂಗಿದುದುಂಟೆ?” ಎಂದು ಕೇಳುತ್ತಾನೆ. “ಮುಂಡೆಯಾಗುವಿಕೆ” “ಓಲೆ ಕಳೆಯುವಿಕೆ” “ನೀರಿಳಿಯುವುದು” “ವಿಮಾನ ಹೊರುವುದು” “ತಲೆಗೊಳ್ಳಿಯ ನಿರಿಯುವುದು” ಇವು ಜಡತ್ವದ ಅಳಿವಿನ ಸಂಕೇತಗಳಾದರೆ, ಗುಹೇಶ್ವರನ ಸಾವಿನ ಸುದ್ದಿ ಚಿರಂತನತ್ವದ ಪ್ರತೀಕವಾಗುತ್ತದೆ. ಒಟ್ಟು ಪರಿಣಾಮದಲ್ಲಿ ಅಂತ್ಯಸಂಸ್ಕಾರ ಈ ಅಖಂಡ ಪ್ರತಿಮೆ ಅಲ್ಲಮನ ಅನುಭಾವದೃಷ್ಟಿಗೆ ನಿರ್ಲಿಪ್ತ ಅಭಿವ್ಯಕ್ತಿಗೆ ಉತ್ತಮವಾದ ವಾಹಕವಾಗುತ್ತದೆ.

ಚಿಂತನೆಯ ದೃಷ್ಟಿಯಿಂದಲ್ಲದೆ ಕಾವ್ಯಾಭಿವ್ಯಕ್ತಿಯ ದೃಷ್ಟಿಯಿಂದಲೂ ಅಲ್ಲಮನು ಶಿಷ್ಟ ಕಾವ್ಯ ಸಂಪ್ರದಾಯದಿಂದ ಭಿನ್ನವಾಗಿ ನಿಲ್ಲುತ್ತಾನೆ. “ವಸ್ತುಕ-ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು ಇತ್ತಿತ್ತಲ್ಲದೆ ಅತ್ತತ್ತಲಾರು ಬಲ್ಲರು? ಇವರೆತ್ತಲೆಂದರಿಯರು, ಗಾಳಿವಿಂಡುಗಡೆವರು ನಿಮ್ಮನ್ನೆತ್ತ ಬಲ್ಲರು ಗುಹೇಶ್ವರಾ?”

ರಾಜರ ದ್ವಾರದಲ್ಲಿ ನಿಂತು ತಮ್ಮ ಭೌತಿಕ ಅಪೇಕ್ಷೆಗಾಗಿ ಕಾವ್ಯ ರಚಿಸುವ ಕವಿಗಳ ಮಾತುಗಳು ಕೇವಲ ಈ ಲೋಕದ ಮಿತಿಯಲ್ಲಿ ರಚಿತವಾದವು ಅವರಿಗೆ ಅತ್ತತ್ತಲೇನು ಎಂಬುದು ತಿಳಿಯಲಾರದು ಹೀಗಾಗಿ ನಿಮ್ಮನ್ನೆತ್ತ ಬಲ್ಲರು ಗುಹೇಶ್ವರಾ? ಎಂದು ಪ್ರಶ್ನಿಸುವುದರ ಮೂಲಕ ಅಲ್ಲಮನು ಆ ಕಾವ್ಯ ಮಾರ್ಗದ ಮಿತಿಯನ್ನು ಶರಣರ ಕಾವ್ಯ ಮಾರ್ಗದ ಉನ್ನತಿಯನ್ನು ಸೂಚಿಸಿದ್ದಾನೆ.