General

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪಂಚ ಮಹಾಭೂತಗಳ – ಪಂಚೀಕರಣ

ಭೂತ ಪಂಚಕ ಪಂಚ | ಭೂತ ತವೆ ಕೂಡಲ

ದ್ಭೂತಮಯವಾದ ಭೂತಳಕೆ ಕರ್ತ ಭೂ-

ನಾಥ ಶ್ರೀಗುರುವೆ ಕೃಪೆಯಾಗು      || ೬೧ ॥

ಪಂಚಮಹಾಭೂತಗಳ ಪ್ರತ್ಯೇಕವಾದ ವಿಷಯವನ್ನು ಪ್ರತಿಪಾದಿಸಿ ಅವುಗಳ ಪಂಚೀಕರಣವನ್ನು ಗ್ರಂರ್ಥಕರ್ತನು  ಪ್ರಸ್ತಾಪಿಸುತ್ತಾನೆ.

 ಮಹಾದೇವನಾದ ಪರಮಾತ್ಮನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯಗಳೆಂಬ ಐದು ಮುಖಗಳಿಂದ ನೆಲ,ಜಲ, ಅನಲ, ಅನಿಲ, ಆಕಾಶಗಳೆಂಬ ಸಮಷ್ಟಿರೂಪ ಪಂಚಭೂತಗಳು ಹುಟ್ಟಿದವು. ಅವು ಮುಂದೆ 

ʼ’ಪಂಚಮಹಾಭೂತಂಗಳ ಪಂಚಾಂಶಿಕಮಂ

 ಪಂಚೀಕೃತಿಯನೈದುತ್ತಿರಲು ದೇಹವಾಯ್ತು”

ಎಂದು ಚನ್ನಬಸವಣ್ಣನವರು ಕರಣಹಸಿಗೆಯಲ್ಲಿ’ ದೇಹದ ಉತ್ಪತ್ತಿಗೆ ಪಂಚ ಮಹಾಭೂತಗಳ ಪಂಚೀಕರಣವೇ ಕಾರಣವೆಂದು ತಿಳಿಸಿದ್ದಾರೆ. ಈ ಪಂಚೀಕರಣದ ವ್ಯಾಖ್ಯೆಯನ್ನು ವಿದ್ಯಾರಣ್ಯ ಮುನಿಗಳು ತಮ್ಮ ಪಂಚದಶಿ’ಯೆಂಬ ವೇದಾಂತ ಗ್ರಂಥದಲ್ಲಿ –

“ದ್ವಿಧಾ ವಿಧಾಯ ಚ ಏಕೈಕಂ

ಚತುರ್ಧಾ ಪ್ರಥಮಂ ಪುನಃ |

ಸ್ವಸ್ವೇತರ ದ್ವಿತೀಯಾಂಶೈಃ

ಯೋಜಯೇತ್ ಪಂಚ ಪಂಚತೇ || ೧ – ೨೬ ||

ಎಂಬುದಾಗಿ ಪ್ರತಿಪಾದಿಸಿದ್ದಾರೆ. ಇದಕ್ಕೆ ಸರಿಯಾದ ಅರ್ಥಬರುವಂತೆ ಕನ್ನಡ ಷಟ್‌ಶಾಸ್ತ್ರಗಳ ನಿರ್ಮಾಪಕರಾದ ನಿಜಗುಣಶಿವಯೋಗಿಗಳು ತಮ್ಮ ಪರಮಾರ್ಥ ಗೀತೆಯಲ್ಲಿ –

“ಆ ಭೇದದೊಳರಿ ಭೂತಮಿವೈದು |

ಶೋಭೆಯನೈದಿದ ವೊಂದೊಂದೈದು ||

ಸರಿಭಾಗದೊಳೊಂದೆರಡಾಗಿ |

ಎರಡರೊಳೊಂದಂಶವೆ ನೆಲೆಯಾಗಿ ||

ಉಳಿದರ್ಧಂಶಂಗಳೆ ನಾಲ್ಕಾಗಿ |

ತಿಳಿಭಾಗಂ ಬಡೆದವು ಸಮನಾಗಿ ||

ನೆಲೆಯಾಗಿರ್ಧಾಯಂಶಂಗಳೊಳು |

ಉಳಿದ ನಿಜಾಂಶವನಾ ಮಿಕ್ಕರೊಳು ||

ಬೆರಕೆಯನೈದಿದಮೊಂದೊಂದೈದು |

ವಿರಚಿಸಿ ತತ್ತ್ವಮಿವಿಪ್ಪತ್ತೈದು ||

ಈ ತತ್ತ್ವಸಮೇಷ್ಟಿಯೇ ತನುವಾಯ್ತು!

ಈ ತೆರನಿಂ ಪಂಚೀಕೃತವಾಯ್ತು | |೨ – ೨||

ಸಕಲರಿಗೂ ತಿಳಿಯುವಂತೆ ಪಂಚೀಕರಣವನ್ನು ವಿಶದಪಡಿಸಿದ್ದಾರೆ.

ಈ ಪಂಚೀಕರಣವನ್ನು ಸ್ಪಷ್ಟವಾಗಿ, ಸ್ಪುಟವಾಗಿ ತಿಳಿಯಲು ಬೆಳ್ಳಿ-ಬಂಗಾರ ತಾಮ್ರ-ಹಿತ್ತಾಳಿ ಮತ್ತು ಕಬ್ಬಿಣವೆಂದು ಪಂಚಲೋಹದ ನಾಣ್ಯಗಳನ್ನು ತೆಗೆದು ಕೊಂಡು ಐದರಲ್ಲಿಯೂ ಎರಡೆರಡು ಭಾಗಮಾಡಿ ಒಂದರ್ಧಭಾಗವನ್ನು ಹಾಗೇ ಇಟ್ಟು, ಉಳಿದರ್ಧ ಭಾಗಗಳಲ್ಲಿ ಪುನಃ ನಾಲ್ಕು ನಾಲ್ಕು ಭಾಗಗಳನ್ನು ಮಾಡಿ ಈ ನಾಲ್ಕು ಭಾಗಗಳ ವಿನಿಮಯವನ್ನು ಇತರ  ನಾಣ್ಯಗಳ ಭಾಗದೊಡನೆ ಮಾಡಿದರೆ, ಎಲ್ಲ ನಾಣ್ಯಗಳು ಪ್ರತಿಯೊಂದು ಲೋಹದ ಅಂಶವನ್ನು ಪಡೆದು, ತಾನು ಅರ್ಧ ಪ್ರಮಾಣ ದಲ್ಲಿ ಇರುವದರಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವದು. ಅಂದರೆ ಬಂಗಾರದ ನಾಣ್ಯವು ಅರ್ಧಭಾಗವಿದ್ದು ಉಳಿದ ಬೆಳ್ಳಿ, ತಾಮ್ರ, ಕಬ್ಬಿಣದ ಎರಡಾಣೆ (೧|೮ನೇ ಭಾಗ)ಯಷ್ಟನ್ನು ಪ್ರತಿಯೊಂದರಿಂದ ಪಡೆದು ತಾನು ಪೂರ್ಣವಾಗುವದು. ಇದರಂತೆ  ಪೃಥ್ವಿ, ಅಪ್, ತೇಜ, ವಾಯು, ಆಕಾಶಗಳನ್ನು ವಿಭಾಗಿಸಿ ವಿನಿಮಯ ಗೊಳಿಸುವದ ರಿಂದ ಅವು ತಮ್ಮ ಸ್ವಂತ ಅಸ್ತಿತ್ವವನ್ನು ಅರ್ಧ ಇಟ್ಟುಕೊಂಡು ಉಳಿದಭೂತಗಳ ೮ ನೆಯ ಭಾಗವನ್ನು ಪಡೆದುಕೊಳ್ಳುತ್ತವೆ. ಹೀಗೆ ಐದು ಭೂತಗಳೂ ಐದೈದಾಗಿ ಇಪ್ಪತ್ತೈದು ಭಾಗಗಳಾಗುತ್ತವೆ. ಅಲ್ಲದೆ ಇಪ್ಪತ್ತೈದು ತತ್ತ್ವಗಳೆನಿಸುತ್ತವೆ. ಪೃಥ್ವಿಯಲ್ಲಿ ತನ್ನ ಅಂಶವು  ಅರ್ಧವಾಗಿರುವದರಿಂದ ಹೆಚ್ಚು ಗುಣಧರ್ಮವು ಅದರದೇ ಆಗುವದು. ಉಳಿದ ಐದರ ಪ್ರಮಾಣವು ಅದರಲ್ಲಿ ಸಮಾವೇಶವಾಗಿರುತ್ತದೆ. ಶಾರೀರಿಕ ಗುಣಧರ್ಮವನ್ನು ವಿಂಗಡಿಸಿದರೆ ಪಂಚಭೂತಗಳ ಪಂಚೀಕರಣದ ಮರ್ಮವು ಸ್ಪಷ್ಟವಾಗುವದು.

ಶರೀರದಲ್ಲಿ ಕಾಣುವ ಪಂಚಕರ್ಮೇಂದ್ರಿಯಗಳು ಪೃಥ್ವಿಯ ಅಂಶಗಳು. ಅವು ಯಾವುಗಳೆಂದರೆ, ಗುದ, ಗುಹ್ಯ, ಪಾದ, ಪಾಣಿ, ಮುಖ (ಬಾಯಿ), ಪೃಥ್ವಿಯ ಅರ್ಧಭಾಗವೇ ಗುದೇಂದ್ರಿವು. ಪೃಥ್ವಿಯಲ್ಲಿ ಸೇರಿದ ಎಂಟನೇ ಭಾಗದ (೧|೮ನೇ ಭಾಗ) ಜಲವೇ ಗುಹ್ಯೆದ್ರಿಯವು. ಒಂದೆಂಟನೇ ಭಾಗದ ಅಗ್ನಿಯೇ ಪಾದವು. ಎಂಟನೇ ಭಾಗದ ವಾಯುವೇ ಪಾಣಿ (ಕೈ). ಅದರ ಎಂಟನೇ ಭಾಗದ ಆಕಾಶವೇ ಮುಖ (ಬಾಯಿ) ವೆನಿಸುವದು. ಗಂಧ, ರಸ, ರೂಪ, ಸ್ಪರ್ಶ, ಶಬ್ದಗಳೆಂಬ ಪಂಚತನ್ಮಾತ್ರೆಗಳೇ ಜಲದ ಅಂಶಗಳು. ಆ ಅಪ್ಪುವಿನ ಅರ್ಧಭಾಗವು ರಸವೆನಿಸುವದು. ಜಲದಲ್ಲಿ ಸೇರಿದ ಅಗ್ನಿಯ ಎಂಟನೇ ಭಾಗವು ರೂಪವಾಗುವದು. ವಾಯುವಿನ ಎಂಟನೇ ಭಾಗವು ಸ್ಪರ್ಶವಾಗುವದು. ಆಕಾಶದ ಎಂಟನೇ ಭಾಗವು ಶಬ್ದ, ಪೃಥ್ವಿಯ ಎಂಟನೇ ಭಾಗವೇ ಗಂಧವು.

 ಇನ್ನು ಅಗ್ನಿತತ್ತ್ವದಿಂದ ಹುಟ್ಟಿದವುಗಳು ನೇತ್ರ, ತ್ವಕ್, ಶ್ರೋತ್ರ, ಘ್ರಾಣ, ಜಿಹ್ವೆ. ಗಳೆಂಬ ಜ್ಞಾನೆಂದ್ರಿಯಗಳು, ಅಗ್ನಿಯ ಅರ್ಧಭಾಗವೇ ನೇತ್ರವು ಉಳಿದರ್ಧ ಭಾಗದಲ್ಲಿ ಸೇರಿದ ಕಾಲುಭಾಗದ ವಾಯುವೇ ತ್ವಕ್ಕು; ಕಾಲುಭಾಗದ ಆಕಾಶವೇ ಶ್ರೋತ್ರವು. ಪೃಥ್ವಿಯ ಕಾಲುಭಾಗವೇ ಘ್ರಾಣವೆನಿಸುವದು. ಅಪ್ಪುವಿನ ಪಾದಾಂಶವೇ ಜಿಹ್ವೆ.ಯು.

ವಾಯು ಮಹಾಭೂತದಿಂದ ಉತ್ಪನ್ನವಾದವುಗಳು ವ್ಯಾನ, ಸಮಾನ, ಉದಾನ, ಅಪಾನ, ಪ್ರಾಣಗಳೆಂಬ ಪಂಚವಾಯುಗಳು, ವಾಯುವಿನ ಅರ್ಧಭಾಗವೇ ವ್ಯಾನವಾಯು, ಈ ವಾಯುವಿನ ಅರ್ಧಭಾಗದಲ್ಲಿ ಸೇರಿದ ಆಕಾಶದ ಪಾದಾಂಶವು ಸಮಾನವಾಗುವದು. ಅಗ್ನಿಯ ಕಾಲುಭಾಗವೇ ಉದಾನವಾಯು, ಕಾಲುಭಾಗವೇ ಅಪಾನವಾಯು. ಪೃಥ್ವಿಯ ಕಾಲುಭಾಗವೇ ಪ್ರಾಣವಾಯು. ಅಂತೇನೆ ಪೃಥ್ವಿಯನ್ನು ಬಿಟ್ಟು ಮೇಲಕ್ಕೆ ಹಾರಿದ ಮಾನವನಿಗೆ ಪ್ರಾಣವಾಯು ಸಿಕ್ಕುವದಿಲ್ಲ.

ಮನ-ಬುದ್ಧಿ-ಚಿತ್ತ ಅಹಂಕಾರಗಳೆಂಬ ಅಂತಃಕರಣ ಚತುಷ್ಟಯವು ಜಾತೃ ಅಥವಾ ಆತ್ಮನು ಹುಟ್ಟಿದ್ದು ಆಕಾಶ ಮಹಾಭೂತದಿಂದ. ಆಕಾಶದ ಅರ್ಧಭಾಗವೇ ಙ್ಞತೃ. ಆಕಾಶದ ಅರ್ಧಭಾಗದಲ್ಲಿ ಸೇರಿದ ಕಾಲುಭಾಗದ ವಾಯುವೇ  ಮನವಾಗು ವದು. ಪಾದಾಂಶದ ಅಗ್ನಿಯೇ ಬುದ್ದಿಯು, ಅಪ್ಪುವಿನ ಪಾದಾಂಶವೇ ಚಿತ್ತ. ಪೃಥ್ವಿಯ ಪಾದಾಂಶವೇ ಅಹಂಕಾರ. ಹೀಗೆ ಇಪ್ಪತ್ತೈದು ತತ್ತ್ವಗಳು ಹುಟ್ಟಿದವು. ಪಂಚ ಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು, ಪಂಚವಾಯು ಗಳು, ಮತ್ತು ಅಂತಃಕರಣ ಚತುಷ್ಟಯದೊಡನೆ ಕೂಡಿದ ಆತ್ಮನು ಸೇರಿ ಇಪ್ಪತ್ತೈದು  ತತ್ತ್ವಗಳಾಗುತ್ತವೆ.*

ಈ ಇಪ್ಪತ್ತೈದು ತತ್ತ್ವಗಳಿಂದಲೇ ಭೌತಿಕ ಶರೀರದ ಉತ್ಪತ್ತಿಯಾಗುವದೆಂದು ವೇದಾಂತಿಗಳು ಪ್ರತಿಪಾದಿಸುತ್ತಾರೆ. ಶಿವಾದ್ವೈತಿಗಳಾದ ಶರಣರು ಶರೀರ ಉತ್ಪತ್ತಿಗೆ ಮೂವತ್ತಾರು (೩೬) ತತ್ತ್ವಗಳನ್ನು ಹೇಳುತ್ತಾರೆ.

“ಆತ್ಮ ತತ್ತ್ವ ಇಪ್ಪತ್ತೈದು ; ವಿದ್ಯಾತತ್ತ್ವ ಹತ್ತು ; ಶಿವತತ್ತ್ವ ಒಂದು

ಅದೆಂತೆಂದೊಡೆಃ ಭೂತಾದಿ ಪಂಚಕಂಗಳೈದು,

ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,

ಶಬ್ದಾದಿ ವಿಷಯಂಗಳೈದು,

ವಾಗಾದಿ ಕರ್ಮೇಂದ್ರಿಯಂಗಳೈದು

ಮನವಾದಿ ಪಂಚಕಂಗನೈದು; ಆತ್ಮತತ್ತ್ವ ಇಪ್ಪತ್ತೈದು

ಕರ್ಮಸಾದಾಖ್ಯ, ಕರ್ತೃಸಾದಾಖ್ಯ, ಮೂರ್ತಿಸಾದಾಖ್ಯ,

ಅಮೂರ್ತಿ ಸಾದಾಖ್ಯ, ಶಿವಸಾದಾಖ್ಯ,

 ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ

ಶಾಂತಿಕಲೆ, ಶಾಂತ್ಯತೀತಕಲೆ ಇಂತು ವಿದ್ಯಾತತ್ತ್ವಹತ್ತು

ಶಿವತತ್ತ್ವ ಒಂದು; ಇಂತು ಮೂವತ್ತಾರು ತತ್ತ್ವಂಗಳು

…………….ಅಪ್ರಮಾಣ ಕೂಡಲಸಂಗಮದೇವ.ʼʼ

ಜ.ಚ.ನಿ. ಯವರು ತಮ್ಮ ‘ಶಿವಾದೈತ ದರ್ಶನ’ ದಲ್ಲಿ (ಪುಟ ೩೧) “ಶಿವ, ಶಕ್ತಿ, ಸದಾಶಿವ, ಈಶ್ವರ, ಶುದ್ಧವಿದ್ಯೆ, ಮಾಯೆ, ಕಲಾ, ಕಾಲ, ಅಶುದ್ಧವಿದ್ಯೆ, ನಿಯತಿ, ರಾಗ, ಪುರುಷ, ಪ್ರಕೃತಿ, ಬುದ್ಧಿ, ಅಹಂಕಾರ, ಮನಸ್ಸು, ಪಂಚಕರ್ಮೇಂದ್ರಿಯ, ಪಂಚಜ್ಞಾನೇಂದ್ರಿಯ, ಪಂಚತನ್ಮಾತ್ರೆ, ಪಂಚಭೂತಂಗಳು” ಎಂದುದಾಗಿ ಮೂವತ್ತಾರು ತತ್ತ್ವಗಳನ್ನು ತಿಳಿಸಿದ್ದಾರೆ.

ಈ ಮೂವತ್ತಾರು ತತ್ತ್ವಗಳಲ್ಲಿ ಮೊದಲಿನವೈದು ಶುದ್ಧಾಧ್ವತತ್ತ್ವಗಳು. ಮಧ್ಯದವು ಎಂಟು ಮಿಶ್ರಾಧ್ವತತ್ತ್ವಗಳು, ಮುಂದಿನವು ಇಪ್ಪತ್ತು ಮೂರು ಅಶುದ್ಧಾದ್ವ ತತ್ತ್ವಗಳು. ಮೊದಲಿನವೈದು ಶುದ್ಧಾದ್ವತತ್ತ್ವಗಳು ಶಿವನಿಗೆ ಸಂಬಂಧಿಸಿದವು. ನಂತರ ಎಂಟು ಮಿಶ್ರಾಧ್ವತತ್ತ್ವಗಳು ಶಕ್ತಿಗೆ ಸಂಬಂಧವಾಗುತ್ತವೆ. ಇವರಿಬ್ಬರ ಸಂಯೋಗದಲ್ಲಿ ವ್ಯಕ್ತವಾಗುವ ಜೀವಾತ್ಮನು ಅಶುದ್ಧತತ್ತ್ವದಿಂದ ಉತ್ಪನ್ನವಾಗುವನು. ಹೀಗೆ ಮೂವತ್ತಾರು ತತ್ತ್ವಗಳಿಂದ ಜೀವಾತ್ಮನು ಜನಿಸುವನು.

ಪರಶಿವನು ೩೬ ತತ್ತ್ವಗಳ ತುತ್ತತುದಿಯಲ್ಲಿ ಕಂಗೊಳಿಸುತ್ತಿರುತ್ತಾನೆ. ಅವನ ಅಂಶನಾದ ಜೀವಾತ್ಮನು ೩೬ ತತ್ತ್ವಗಳಿಂದಲೇ ಹುಟ್ಟಿ ೨೧೬ ಸಕೀಲಗಳಲ್ಲಿ ಸಂಚರಿಸಿ ಶರಣನಾಗಿ ಪುನಃ ಮೂವತ್ತಾರು ತತ್ತ್ವವಿಶಿಷ್ಟ ಶಿವನಲ್ಲಿ ಲಿಂಗೈಕ್ಯನಾಗುವನು ಅಂತೆಯೇ ಆಚಾರ ಪರಿಪೂರ್ಣರಾದ ಶಿವಭಕ್ತರ ಮಹಾತ್ಮರ ಸಮಾಧಿಗಳನ್ನು ಸಹ ಈ ಮೇಲಿನ ತತ್ತ್ವದಂತೆ  ನಿರ್ಮಿಸಲಾಗುತ್ತಿದೆ. ೩೬ ತತ್ತ್ವದ ದ್ಯೋತಕವಾಗಿ ಅಂಗನ ಅಷ್ಟು ೩೬ ಘನಪಾದ ಪಾದದಳತೆಯ ಮೆಟ್ಟಿಲನ್ನಿಳಿದು ೨೧೬ ಪಾದದ ಕುಂಬ ದಲ್ಲಿ ಪರಿಪೂರ್ಣನಾಗಿ ೩೬ ಘನಪಾದದ ಕಿರಿಗುಣಿಯಲ್ಲಿ ಮುಹೂರ್ತಗೊಳ್ಳುವನು.

ಪರಶಿವನು ೩೬ ತತ್ತ್ವಾಗ್ರದಲ್ಲಿ ಪರಿಶೋಭಿಸುತ್ತಿರುತ್ತಾನೆಂಬುದನ್ನು ಕವಿರಹ ದ್ಯಾಂಪೂರ ‘ಚನ್ನಕವಿ”ಗಳು ‘ಹಾನಗಲ್ಲ ಕುಮಾರೇಶ್ವರ ಪುರಾಣ”ದ ಇಪ್ಪತ್ತನೆ ಸಂಧಿಯ ಪ್ರಾರಂಭದಲ್ಲಿ ಪ್ರಾರ್ಥನಾ ರೂಪವಾಗಿ ವರ್ಣನೆ ಮಾಡಿದ್ದು ಅತ್ಯಂತ ಸುಂದರವಾಗಿದೆ. ಹಾಗೂ ಮೂವತ್ತಾರು ತತ್ತ್ವಗಳನ್ನು ಅರಿತುಕೊಳ್ಳಲು ಈ ಪದ್ಯ ಸಹಾಯಕವೂ ಆಗಿದೆ –

”ವರಪಂಚಭೂತಗಳು ಪಂಚ ತನ್ಮಾತ್ರೆಗಳು

ನೆರೆದೈದು ಕರ್ಮೇಂದ್ರಿಯಂಗಳುಂ ಪಂಚ ಭಾ-

 ಸುರ ಚಿದಿಂದ್ರಿಯಗಳುಂ ಮಾನಸಾಹಂಕಾರ ಬುದ್ಧಿ, ಗುಣ, ರಾಗ, ವಿದ್ಯೆ

ಸುರುಚಿರ ನಿಯತಿ ಕಲಾ-ಕಾಲ ಪ್ರಕೃತಿಗಳುಂ

ಪುರುಷಮೀಶ್ವರ ಸದಾಶಿವಶಕ್ತಿಶಿವಗಳೆಂ

ಬುರುತರದೊಳೆಸೆವ ಮೂವತ್ತಾರು ತತ್ತ್ವಾಗ್ರದೊಳ್ಪೊಳೆವ

ಶಂಭು ಸಲಹು (೨೪ – ೧)

೩೬ ತತ್ತ್ವಗಳನ್ನು ಮೀರಿದಾತನು ಪರಶಿವನು. ತತ್ತ್ವಗಳ ಬಂಧನದಲ್ಲಿ ಮುಳುಗಿದವನು ಜೀವಾತ್ಮನು. ಶಿವಕವಿಯು ಪ್ರಸ್ತುತ ತ್ರಿಪದಿಯಲ್ಲಿ ಭೂತ ಪಂಚಕವು ಪಂಚಭೂತವನ್ನು ತವೆ ಕೂಡಲು ಅದ್ಭುತಮಯವಾದ ಮಾನವ ತನುವು  ಉಂಟಾಗುವದೆಂಬುದನ್ನೇ ಪ್ರಸ್ತಾಪಿಸಿದ್ದಾನೆ. ಮತ್ತು ಈ ತನುಗುಣವನ್ನು ಕಳೆದುಕೊಳ್ಳಲು ಭೂತಳಕ್ಕೆ ಕರ್ತನಾದ, ತತ್ತ್ವಪರಿಪೂರ್ಣನಾಗಿ ಪರಿಶೋಭಿಸುವ, ಭೂನಾಥ ಶ್ರೀ ಗುರುವನ್ನು ಮೊರೆ ಹೋಗಬೇಕೆಂಬುದೇ ಶಿವಕವಿಯ ಅಭಿಪ್ರಾಯವು

.  ದೇಹಗತವಾದ ಭೂತ ಪಂಚಕಕ್ಕೆ ಆಧ್ಯಾತ್ಮಿಕ ಭೂತಗಳೆಂತಲೂ, ಸಮಷ್ಟಿ  ರೂಪಾದ ಮಹಾಭೂತ ಪಂಚಕವು ಆಧಿದೈವಿಕ ಭೂತವೆಂತಲೂ ಹೆಸರು. ಈ ಆಧ್ಯಾತ್ಮಿಕ ಪಂಚಭೂತಗಳು ಆಧಿ ದೈವಿಕ ಪಂಚಭೂತಗಳೊಡನೆ ಸೇರಿ ವ್ಯಾವಹಾರಿಕ ಜೀವನು ಪ್ರಾದುರ್ಭವಿಸುತ್ತಾನೆ. ಈ ಭೂಮಂಡಲದ ಕಾರ್ಯವು ಅದ್ಭುತಮಯ ವಾದುದು. ಇಲ್ಲಿಯ ವೈಚಿತ್ರ್ಯ ಹೇಳಲಸದಳವಾಗಿದೆ. ಜೀವಿಗಳು ಕೇವಲ ಭೂತ ಮಯವಾದರೆ ಭವ-ಬಂಧನ ತಪ್ಪುವದಿಲ್ಲ. ಭೂನಾಥನಾದ ಶ್ರೀ ಗುರುವಿಗೆ ಶರಣಾಗತರಾಗಬೇಕು. ದೇಹದ ಅಶುದ್ಧಭೂತ ತತ್ತ್ವಗಳನ್ನು ಪರಿಶೋಧಿಸಿ ಪಾವನಗೊಳಿಸಿ ಮಾಂಸಮಯ ಪಿಂಡವನ್ನು ಮಂತ್ರಪಿಂಡವನ್ನಾಗಿಸಿ ಇಂದ್ರಿಯ ಗಳಿಗೆಲ್ಲ ಲಿಂಗಸಂಬಂಧ ಮಾಡುವನು ಗುರುವರನು. ಅಲ್ಲದೆ ಪದಾರ್ಥಗಳನ್ನು ಪ್ರಸಾದವನ್ನಾಗಿ ಪರಿಣಮಿಸುವ ಸಾಮರ್ಥ್ಯವುಳ್ಳವನಾಗಿರುವದರಿಂದಲೇ ಭೂನಾಥ ನಾಗಿದ್ದಾನೆ. ಅಂಥ ಪರಮಗುರುವೆ ! ಕೃಪೆದೋರಿ ಎನ್ನ ಪಂಚಭೂತಮಯ ಶರೀರವನ್ನು ಶುದ್ಧಗೊಳಿಸಿ ಕಾಪಾಡು.

೧. ದೇಹ ವಿಕಾರ

ನಂದಿರ್ದ ಬೆಂಕಿ ಘನ | ಸಿಂಧುವನೆ ಆವರಿಸಿ

ನಿಂದುರಿವುತಿಹುದು ನಂದಿಪುದೇತರಲೈ?

ತಂದೆ ಶ್ರೀ ಗುರುವೆ ಕೃಪೆಯಾಗು   ||೬೩ ||

ಈ ಪಂಚಭೌತಿಕವಾದ ತನುವು ಅಜ್ಞಾನದಿಂದ ಅನೇಕ ವಿಕಾರಗಳನ್ನು ಹೊಂದುತ್ತದೆ. ಅನೇಕ ಯಾತನೆಗಳನ್ನು ಅನುಭವಿಸುತ್ತದೆ. ತಾಪತ್ರಯಗಳಲ್ಲಿ ಬಳಲುತ್ತದೆ. ಈ ದುಃಖತತಿಯನ್ನು ನಿವಾರಿಸಬಲ್ಲವನು ಪರಮ ಶ್ರೀ ಗುರುವೆಂಬುದನ್ನು ಇಲ್ಲಿ    ಶರಣಕವಿಯು ನಿರೂಪಿಸುತ್ತಾನೆ.

ಪ್ರಜ್ವಲಿಸುವ ಅಗ್ನಿಯನ್ನು ಕಂಡು ದೂರವಿರಬಹುದು; ಆದರೆ ನಂದಿ (ಆರಿದಂತೆ)ದಂತೆ ಕಾಣುವ ಬೂದಿ ಮುಚ್ಚಿದ ಅಗ್ನಿಯು ಅಪಾಯಕ್ಕೆ ಕಾರಣ ವಾಗುವದು. ಈ ಬೆಂಕಿಯು ಭೂಮಿಯ ಮೇಲೆ ಇರುವಂತೆ ನೀರಿನಲ್ಲಿಯು ಇರುತ್ತದೆ. ಅದಕ್ಕೆʼʼ ವಡವಾನಲ’ʼಎಂದು ಶಾಸ್ತ್ರಕಾರರು ಕರೆದಿರುವರು. ಇದು ಕಣ್ಣಿಗೆ ಕಾಣುವದಿಲ್ಲ. ಈ ಮಾತನ್ನು ಶರಣರೂ ಪಡಿನುಡಿದಿದ್ದಾರೆ.

“ಉದಕದೊಳಗೆ ಬೈಚಿಟ್ಟ ಬೇಗೆಯ ಕಿಚ್ಚಿನಂತಿದ್ದು

ಎಂದು ಅಣ್ಣನವರು ವಿವರಿಸಿದ್ದರೆ; ಸರ್ವಜ್ಞನು

ಕ್ಷೀರದಲ್ಲಿ ಘೃತ, ವಿಮಲ ನೀರಿನೊಳು ಶಿಖಿಯಿದ್ದು

ಆರಿಗೂ ತೋರದದು…… ಎಂದಿದ್ದಾನೆ.

“ಉದಕದೊಳಗೆ ಕಿಚ್ಚು ಹುಟ್ಟಿ ಸುಡುತ್ತಿದ್ದುದ ಕಂಡೆ’

ಮತ್ತು- ನೀರುಗಿಚ್ಚೆದ್ದರೆ ಸಮುದ್ರವೆ ಗುರಿ

ಒಡಲುಗಿಚ್ಚೆದ್ದರೆ ಆ ತನುವೇ ಗುರಿ,

ಎಂದುದಾಗಿ ಮಹಾಜ್ಞಾನಿ ಅಲ್ಲಮಪ್ರಭುಗಳು ವಿವೇಚಿಸಿದ್ದಾರೆ.

ಆದರೆ ಇಂದಿನ ಮುಂದುವರೆದ ವಿಜ್ಞಾನಿಯು ಇಂಥ ವಡವಾನಲದ ಶಕ್ತಿಯನ್ನು ಇನ್ನೂ ಉಪಯೋಗಿಸಿಕೊಂಡಂತೆ ತೋರುವದಿಲ್ಲ. ನೀರಿನ ಒತ್ತಡದಿಂದ ಕೇವಲ ವಿದ್ಯುತ್ತನ್ನು ತಯಾರಿಸಲಾಗುತ್ತಿದೆ. ಈ ವಿದ್ಯುತ್ತು ನೀರಿನ ತೇವಾಂಶದಲ್ಲಿ ಹಾಗೂ ದ್ರವಪದಾರ್ಥಗಳಲ್ಲಿ ಪಸರಿಸುವ ಪರಿಯನ್ನು ಕಾಣುತ್ತೇವೆ. ಒಣ ಪದಾರ್ಥಗಳಲ್ಲಿ ಅದರ ಪ್ರವಾಹ ಹರಿದು ಬರುವದಿಲ್ಲ. ಅದಕ್ಕಾಗಿಯೇ ವಿದ್ಯುತ್ತಿನ ರಿಪೇರಿ ಕೆಲಸ ಮಾಡುವಾಗ ಒಣಕಟ್ಟಿಗೆ ತುಂಡನ್ನು ಕಾಲಿನಕೆಳಗೆ ಇಟ್ಟುಕೊಳ್ಳುತ್ತಾರೆ.

ಮಹಾನುಭಾವಿಗಳು ಮೇಲೆ ತಿಳಿಸಿದಂತೆ ವಡವಾನಲವು ಘನತರವಾದ ಸಮುದ್ರದಲ್ಲಿ ವ್ಯಾಪಿಸಿಕೊಂಡು ಅಲ್ಲಿಯೇ ಸ್ಥಿರವಾಗಿ ನಿಂತು ಉರಿಯುತ್ತಿದೆ. ಅದನ್ನು ಯಾರೂ ಅರಿಸಲಾರರು. ಆದರೆ ಪಂಚಭೂತಗಳ ಶಕ್ತಿಯನ್ನು ನಿಯಂತ್ರಿಸಬಲ್ಲ ಆತ್ಮಜ್ಞಾನಿಯು ವಡವಾನಲವನ್ನು ಆರಿಸಬಹುದು; ನಿಶ್ಚಿತವಾಗಿ ಆರಿಸುತ್ತಾನೆ.

ಸಂಸಾರಸಾಗರದಲ್ಲಿ ಬೆಂಕಿಯಂತಿರುವ ಆತ್ಮಜ್ಞಾನವು ನಂದಿಹೋದರೆ ಅಜ್ಞಾನವು ಜೀವಾತ್ಮನನ್ನು ಆವರಿಸುವದು. ಬೂದಿಮುಚ್ಚಿದ ಕೆಂಡದಂತೆ ಅಜ್ಞಾನವು ಇವನನ್ನು ಒಳಗೊಳಗೆ (ಶರೀರದಲ್ಲಿ) ಬೇಯಿಸುತ್ತದೆ. ಅಲ್ಲದರಲ್ಲಿ ಅಹುದೆಂಬ  ಬುದ್ಧಿಯು ಅಜ್ಞಾನಕ್ಕೆ ಕಾರಣ. ಜೀವಾತ್ಮನು ದೇಹವೇ ತಾನು, ದೇಹಸುಖವೇ ನಿಜಸುಖವೆಂದು ಸಾಂಸಾರಿಕ ವ್ಯಾಮೋಹದಲ್ಲಿ ಸಿಲುಕುತ್ತಾನೆ. ಸುಖ-ಸಂತೃಪ್ತಿಗಳು ದೊರೆಯದಿದ್ದಾಗ ನೊಂದುಕೊಳ್ಳುವನು;ದುಃಖಿತನಾಗುವನು.ಈ ಅಙ್ಞನದಿಂದ ಉಂಟಾಗುವ ನೋವು ಬಾಳ-ಸಮುದ್ರವನ್ನು ವ್ಯಾಪಿಸಿ ಎಡಬಿಡದೆ ದಹಿಸುತ್ತದೆ, ಈ ನೋವು ಆರದ ನೋವಾಗಿದೆ. ಇದರಿಂದ ಜೀವನವು ಬರಡಾಗುತ್ತದೆ. ಇದನ್ನು ನಿವಾರಿಸುವ ಸಾಮರ್ಥ್ಯ ಶ್ರೀ ಗುರುವಿನಲ್ಲಿದೆ. ಗುರುವೆ ! ನಿನ್ನ ಜ್ಞಾನಬೋಧೆಯಿಂದ ಎನ್ನಲ್ಲಿಯ ಅಜ್ಞಾನದ ಬೇಗೆಯನ್ನು, ಹೊಗೆಯನ್ನು ಹೋಗಲಾಡಿಸಿ ಆತ್ಮಜ್ಞಾನಾಗ್ನಿಯನ್ನು ಬೆಳಗಿಸಿ ಕಾಪಾಡು.

ಅಜ್ಞಾನದಿಂದ ತನುವಿನಲ್ಲಿ, ಕರುಣೇಂದ್ರಿಯಗಳಲ್ಲಿ ತಾಮಸೀತನ ಬೆಳೆಯುತ್ತದೆ. ತಾಮಸಗುಣವು ಜೀವಾತ್ಮನನ್ನು ದುಃಖಿಯನ್ನಾಗಿಸುತ್ತದೆ. ಈ ಮಾತನ್ನು ನಿಜ ಗುಣರು “ಕೈವಲ್ಯ ಪದ್ಧತಿ’ಯಲ್ಲಿ ತಿಳಿಸುತ್ತಾರೆ.

“ಒಡಲು ತಾನೆಂದರಿವುದೇ ಮಂದಮತಿ ಮೋಸ |

ಜಡಭಾವ ನಿದ್ರೆ ನಿಷೇಧ ಕಾರ್ಮಾಳಿ |

ಬಿಡದಲಸತೆ ಚಪಲು ವಿಡಿದು ವೃಥಾ |

ಕೆಡುವ ತನುವನ ಕೂಡಿಹುದು ತಾಮಸಗುಣ’

ಶರೀರವೇ ನಾನೆಂಬ ವ್ಯರ್ಥವಾದ ಮಂದಬುದ್ಧಿಯಿಂದ ಮೋಸ, ಅಲಸ್ಯ, ನಿದ್ರೆ, ದುಷ್ಕರಗಳನ್ನು ಬಿಡದೆ ಚಾಪಲ್ಯತನದಿಂದ ವ್ಯರ್ಥಕೆಡಿಸುವ ದೇಹಾಭಿಮಾನವೇ ತಾಮಸಗುಣವೆನಿಸುವದು. ಈ ತಾಮಸಗುಣವೇ ಬಾಳಸಮುದ್ರದಲ್ಲಿ ನೋವನ್ನುಂಟು ಮಾಡುವ ಅರದ (ನಂದದ) ಬೆಂಕಿಯಾಗಿದೆ. ಕಾರಣ ಗುರೂಪದೇಶದಿಂದ ತಾಮಸೀ ತನವು ದೂರವಾಗುವದು. ಅದಕ್ಕಾಗಿ ಗುರುಕರುಣೆ ಗುರೂಪದೇಶಗಳು ಅವಶ್ಯಬೇಕು.

ತಲೆಯಿಲ್ಲದಂಗನೆಯ | ಮೊಲೆಯೇಳು ತೊರೆತಿರಲು

ತಲೆಯೆಂಟರಿಂದ ಮೊಲೆಯನುಂಬುದ ಕಂಡಾ.

ನಲಸಿದೆನು ಗುರುವೆ ಕೃಪೆಯಾಗು     || ೬೩ ||

ಅಜ್ಞಾನದಿಂದ ಬೆಂದ ನೊಂದ ಜೀವಾತ್ಮನು ಸಪ್ತವ್ಯಸನಗಳನ್ನು ಅಷ್ಟಮದ ಗಳಿಂದ ಸೇವಿಸಲು ಆತುರಪಡುತ್ತಾನೆಂಬ ವಿಷಯವನ್ನು ಬಹುಮಾರ್ಮಿಕವಾಗಿ ಇಲ್ಲಿ ಚಿತ್ರಿಸಿದ್ದಾನೆ.

‘ಸರ್ವೆಷು ಗಾತ್ರೇಷು ಶಿರಃ ಪ್ರಧಾನಮ್ |’

ಎಲ್ಲ ಅವಯವಗಳಲ್ಲಿ ಶಿರಸ್ಸೇ ಮುಖ್ಯವಾದುದು. ದೇಹದಲ್ಲಿ ತಲೆ ಮತ್ತು ಒಡಲು ಎಂಬೆರಡು ಪ್ರಧಾನ ಅಂಗಗಳು, ಶಿರದಿಂದಲೇ ಒಡಲಿಗೆ ಮನ್ನಣೆಯಿದೆ. ಒಡಲಿಗೆ ಅನ್ನವೇ ಆಹಾರವಾದರೆ ಮುಡಿ (ತಲೆ)ಗೆ ಜ್ಞಾನವೇ ಆಹಾರ, ಜ್ಞಾನವಿಲ್ಲದ ತಲೆ ಬರಿದಲೆಯೆನಿಸುವದು. ಅದು ಕೇವಲ ರುಂಡ, ರುಂಡವಿಲ್ಲದ್ದು ಮುಂಡವಾಗುವದು. ಅದಕ್ಕಾಗಿಯೇ ಲೌಕಿಕದಲ್ಲಿ ಅಜ್ಞಾನಿಗೆ ತಲೆಯಿಲ್ಲದವನೆನ್ನುವದು ರೂಢಿಯಾಗಿದೆ. ಇದೇ ಮಾತನ್ನು ಇಲ್ಲಿ ಶಿವಕವಿಯು ವ್ಯಂಜನಗೊಳಿಸಿದ್ದಾನೆ

 ತಲೆಯಿಲ್ಲದಂಗನೆಯು ಅಲ್ಪ ಸುಖಕ್ಕಾಗಿ ಜೀವಿಯನ್ನು ನೋಯಿಸುತ್ತಾಳೆ ಬೇಯಿಸುತ್ತಾಳೆ. . ಈ ಅಂಗನೆಯ ಶಕ್ತಿ ಅಪರಿಮಿತವಾದುದು  ಅಸಾಧ್ಯವಾದುದು. ಅಲ್ಲಮಪ್ರಭುಗಳೂ ಸಹ ಈಕೆಯ ಶಕ್ತಿಗೆ ಬೆರಗಾಗಿದ್ದಾರೆ –

ʼʼ….ಆ ಮರೆವೆಯೆಂಬ ಮಹಾಮಾಯೆ

ವಿಶ್ವದ ಮುಸುಕಿನಲ್ಲಿ; ನಾಬಲ್ಲೆ ಬಲ್ಲಿದರೆಂಬ

ಅರುಹಿರಿಯರೆಲ್ಲ ತಾಮಸಕ್ಕೊಳಗಾಗಿ

ಮೀನಕೇತನ ಬಲೆಗೆ ಸಿಕ್ಕು ; ಮಾಯೆಯ

ಬಾಯತುತ್ತಾದರಲ್ಲಾ ಗುಹೇಶ್ವರಾ !”

‘ಮರವೆ’ ಯೆಂದರೆ ಅಜ್ಞಾನವೆಂದೇ ಅರ್ಥವಾಗುವದು. ವೇದಾಂತಿಗಳು ಅಜ್ಞಾನಕ್ಕೆ ಮಾಯೆಯೆನ್ನುವ ವಿಚಾರವನ್ನು ಈಗಾಗಲೇ ತಿಳಿಸಿದ್ದಾಗಿದೆ. ಈ ಮಾಯೆಯು ಬಲ್ಲೆ, ಬಲ್ಲಿದೆನೆನ್ನುವ ಹಿರಿಯರನ್ನು ಸಹ ತಾಮಸೀ ಗುಣಿಗಳನ್ನಾಗಿ ಮಾಡಿ ಕಾಮನ ಬಲೆಗೆ ಸಿಕ್ಕಿಸಿ ತನ್ನ ಬಾಯತುತ್ತನ್ನಾಗಿಸಿ ನುಂಗುತ್ತಾಳೆ. ಇದು ಭಯಾನಕವೇ ಆಗಿದೆ. ಅಂದ ಮೇಲೆ ಸಾಮಾನ್ಯವಾದ ಅಜ್ಞ ಜೀವಿಯು ಮಾಯಾಂಗನೆಯ ವಶವಾಗುವದರಲ್ಲೇನು ಆಶ್ಚರ್ಯಕರವಾಗಿದೆ ?

ರಸ, ರುಧಿರ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಞಾ, ಶುಕ್ಲಗಳೆಂಬ ಸಪ್ತಧಾತು ಗಳಿಂದ ಹುಟ್ಟಿದ ಜೀವಾತ್ಮನ ದೇಹವು ಮಾಯಾಂಗನೆಯ ಸಪ್ತವಿಧವಾದ ಮೊಲೆಗಳಿಗೆ ಆಶಿಸುವುದು ಸ್ವಾಭಾವಿಕ. ಇವಕ್ಕೆ ಸಪ್ತವ್ಯಸನಗಳೆಂತಲೂ ಕರೆಯುತ್ತಾರೆ. ೧. ಅಭಕ್ಷ್ಯ ಭಕ್ಷಣ, ೨. ಅಪೇಯಪಾನ, ೩, ದ್ಯೂತ, ೪, ವೇಶ್ಯಾಗಮನ, ೫, ವಾಕ್ಪಾರುಷ್ಯ, ೬. ಮೃಗಯಾವಿಹಾರ, ೭. ಚೌರ್ಯ ಇವು ಮಾಯಾಂಗನೆಯ ತೊರೆಬಿಟ್ಟ ಮೊಲೆಗಳು. ಜೀವಾತ್ಮನು ನಿಷಿದ್ಧ ವಸ್ತುಗಳಲ್ಲೇ ಹೆಚ್ಚು ಆಸಕ್ತಿಯುಳ್ಳವನಾಗಿರುತ್ತಾನೆ. ೧)ತಿನ್ನಬಾರದ (ತಿನ್ನಲು ಯೋಗ್ಯವಲ್ಲದ ಪದಾರ್ಥಗಳನ್ನು ಭಕ್ಷಿಸುವದು.೨) ಕುಡಿಯಲು ನಿಷೇಧಿಸಿದ ಮದ್ಯಾದಿ ಪೇಯವನ್ನು ಕುಡಿಯುವದು.೩) ಜೂಜಾಡುವದು. ೪) ಪರಸ್ತ್ರೀಗಮನ ಮಾಡುವದು. ೫) ಅವಾಚ್ಯ ಮತ್ತು ಕರ್ಕಶ ಶಬ್ದಗಳನ್ನು ಮಾತಾಡುವದು. ೬) ಬೇಟೆಯಾಡಿ ಪ್ರಾಣಿ ಹಿಂಸೆ ಮಾಡುವದು. ೭) ಪರರದ್ರವ್ಯವನ್ನು ಅಪಹರಣ ಮಾಡುವದು.

ಡಾ. ಫ.ಗು. ಹಳಕಟ್ಟಿಯವರು ವಚನಶಾಸ್ತ್ರಸಾರದ ೨ನೆಯ ಭಾಗದ ೧೨೪ನೇ ಪುಟದಲ್ಲಿ ʼʼತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ ಇಂತಿವು ಸಪ್ತವ್ಯಸನ’ʼ ಗಳೆಂದು ಶರಣ ಸಾಹಿತ್ಯದಿಂದ ಸಂಗ್ರಹಿಸಿದ್ದಾರೆ. ಎರಡೂ ವಿಧಗಳನ್ನು ಪರಿಶೀಲಿಸಿದರೂ ಮನುಷ್ಯನ ಅಧೋಗತಿಗೆ ಕಾರಣವಾದವುಗಳೇ ಇರುತ್ತವೆ. ಇಂಥ ಸಪ್ತವ್ಯಸನಗಳೆಂಬ ಮೊಲೆಯುಣ್ಣಲು ಜೀವನಿಗೆ ಎಂಟು ತಲೆಗಳಾಗುತ್ತವೆ. ಏಳನ್ನು ಎಂಟು ತಿನ್ನುವಾಗ ಆತುರತೆ ಹೆಚ್ಚಾಗುತ್ತದೆ. ಹಾಗಾದರೆ ಎಂಟು ತಲೆಗಳು ಯಾವುವೆಂಬುದನ್ನು ಅನುಭವಿಗಳು –

ʼʼ ಕುಲಂ ಛಲಂ ಧನಂ ಚೈವ

ರೂಪ ಯೌವನಮೇವಚ ।

ವಿದ್ಯಾ ರಾಜ್ಯಂ ತಪಶ್ಚೈವ

ಏತೇ ಚಾಷ್ಟಮದಾಃ ಸ್ಮೃತಾಃ ||

೧. ಕುಲಮದ,೨. ಛಲಮದ, ೩. ಧನಮದ, ೪, ರೂಪಮದ, ೫. ಯೌವನಮದ, ೬. ವಿದ್ಯಾನದ, ೩. ರಾಜ್ಯಮದ ಹಾಗೂ ೮.ತಪೋಮದಗಳೆಂದು ಅಷ್ಟಮದಗಳನ್ನು ವಿಂಗಡಿಸಿದ್ದಾರೆ. ಈ ಸಪ್ತವ್ಯಸನಗಳು ತಾಮಸೀಗುಣವುಳ್ಳವುಗಳಾದರೆ  ಅಷ್ಟಮದಗಳು ರಾಜಸೀಗುಣಭರಿತವಾಗಿವೆ. ಸಪ್ತವ್ಯಸನಗಳೆಂಬ ಮೊಲೆಗಳನ್ನು ಅಷ್ಟಮದಗಳೆಂಬ ತಲೆಗಳಿಂದ ಭೋಗಿಸುವ ಜೀವನಿಗೆ ತೃಪ್ತಿಯಲ್ಲಿದೆ ? ತುಷ್ಟಿ ದೊರೆಯದಿದ್ದರೂ ಪುನಃಪುನಃ ಅವುಗಳಿಗಾಗಿ ಹಾತೊರೆಯುವ ಜೀವಾತ್ಮನ ಸ್ಥಿತಿಯನ್ನು ಲಕ್ಷಿಸುವವನಿಗೆ ಅಲಸಿಕೆ (ಜುಗುಪ್ಸೆ) ಬರುವದು ಸಹಜ. ಆ ಅಲಸಿಕೆ ಅರ್ಥಾತ್ ಜುಗುಪ್ಸೆಯು ಜ್ಞಾನಿಗೆ ಮಾತ್ರ ಬರಲು ಸಾಧ್ಯ.

ಗುರುವೆ ! ಜ್ಞಾನನಿಧಿಯೇ ನನ್ನ ವೈಷಯಿಕ ಸ್ಥಿತಿಯನ್ನು ನೋಡಿ ಅಲಸಿಕೆ ಪಡಬೇಡ, ಬೇಜಾರು ಮಾಡಿಕೊಳ್ಳದೆ ರಕ್ಷಿಸು. ನಿಜವಾದ ಸುಜ್ಞಾನವಿಲ್ಲದ್ದಕ್ಕಾಗಿ ಹೀಗಾಗಿರುವ ಕೃಪೆಮಾಡು, ಯಾಕೆಂದರೆ –

ʼʼ………….ಜ್ಞಾನಜ್ಯೋತಿ ಕೆಡಲೊಡನೆ

ನಾಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರೂ

ತಾಮಸಕ್ಕೊಳಗಾಗಿ ಸೀಮೆ ತಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ’

ಎಂದು ಅಲ್ಲಮಪ್ರಭುಗಳು ಜ್ಞಾನ ಹೀನವಾದಾಗ ಬಲ್ಲಿದಜ್ಞಾನಿಯೂ ತಾಮಸಕ್ಕೊಳ ಗಾಗಿ ಕೆಡುವರೆಂಬ ಮಾತನ್ನು ಬಿತ್ತರಿಸಿದ್ದಾರೆ. ಕಾರಣ ಅಜ್ಞಾನದಿಂದ ಆವರಿಸುವ ಸಪ್ತವ್ಯಸನಗಳನ್ನು ನಿವಾರಿಸಿ ಶರಣರು ನಿರೂಪಿಸುವ ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುವ ಸಪ್ತ ಸೂತ್ರಗಳನ್ನು ಬಾಳಿನಲ್ಲಿ ಒಡಮೂಡಿಸಿಕೊಳ್ಳಬೇಕು.

ಸಪ್ತ ಪದವು ಬಹಳ ಮಾರ್ಮಿಕವಾಗಿದೆ. ಸಪ್ತವ್ಯಸನಗಳನ್ನು ಪ್ರತಿಪಾದಿಸುವಂತೆ ; ಸಪ್ತಪದದಿಂದ ಉತ್ತಮ ಮಾರ್ಗದರ್ಶನವೂ ಸಿಕ್ಕುತ್ತದೆ. ಆದರೆ ಏಳು ಅಂಕೆಯನ್ನು ಕೆಲವರು ಅವಲಕ್ಷಣವೆಂದು ತಿಳಿಯುತ್ತಾರೆ.ʼʼ ಏಳು ಬೀಳುʼʼಎನ್ನುವರು. ಅದು ಸರಿಯಲ್ಲ. ಬಹುವಿಷಯಗಳನ್ನೊಳಗೊಂಡ ಈ ಸಪ್ತಪದವು ಮಹತ್ವದ್ದಿದ್ದು ಪವಿತ್ರವೂ ಆಗಿದೆ  ವೇದಲ್ಲಿಯೂ ಏಳರ ಮಹತ್ವ ಇಂತಿದೆ.

ಸಪ್ತ ಪ್ರಾಣಾಃ ಪ್ರಭವಂತಿ ತಸ್ಮಾತ್ಸಪ್ತಾರ್ಚಿಷಃ |

ಸಮಿಧಸಪ್ತ ಜಿಹ್ವಾಃ  ಸಪ್ತ ಇಮೇ ಲೊಕಾ ||

ಯೇಷು ಚರಂತಿ ಪ್ರಾಣಾ ಗುಹಾಶಯಾನ್ನಿಹಿತಾ

ಸ್ಸಪ್ತಸಪ್ತ ಅತಸ್ಸಮುದ್ರಾಗಿರಯಶ್ಚ ಸರ್ವೇ

 ಸ್ಮಾತ್ಸ್ಯೆಂದಂತೆ ಸಿಂಧವ ಸ್ವರೂಪಾಃ ಅತಶ್ಚ ವಿಶ್ವಾ

ಓಷಧಯೋ ರಸಾಶ್ಚಯೇ ನೈಷ ಭೂತಸ್ತಿಷ್ಠತ್ಯಂತರಾತ್ಮಾ ||

ಹೀಗೆ-ಸಪ್ತ ಪದವು ಸಪ್ತ ಋಷಿಗಳನ್ನು, ಸಪ್ತ ಮಾತೃಕೆಯರನ್ನು, ಏಳಗ್ನಿಯನ್ನು ಏಳು ಸಮುದ್ರ, ಏಳುಗಿರಿಗಳನ್ನು ಮತ್ತು ವೇದಾಂತವನ್ನು ಭೋಧಿಸುವಾಗ ಶಿಷ್ಯನಿಗೆ ಸಪ್ತ ಭೂಮಿಕೆಗಳನ್ನು ಮತ್ತು ಲಗ್ನ ಸಮಾರಂಭದಲ್ಲಿ ಅಗ್ನಿ ಸಾಕ್ಷಿಯಾಗಿ ಸಪ್ತಪದಿಯನ್ನು ಮಾಡಿಸುವದನ್ನೂ ಸೂಚಿಸುತ್ತದೆ. ಭಕ್ತಿ ಭಾಂಡಾರಿ ಬಸವಣ್ಣನವರು ಸಕಲರ ಲೇಸಿಗಾಗಿ ಅಂತರಂಗ ಬಹಿರಂಗ ಶುದ್ಧಿಗಾಗಿ ಸಪ್ತಸೂತ್ರಗಳನ್ನೇ ಪ್ರತಿಪಾದಿಸಿದ್ದಾರೆ.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ,

ಮುನಿಯಬೇಡ, ತನ್ನ ಬಣ್ಣಿಸಬೇಡ,

ಅನ್ಯರಿಗೆ ಅಸಹ್ಯಪಡಬೇಡ, ಇದಿರು ಹಳಿಯಲುಬೇಡ,

ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ;

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿʼʼ

ಇದೇ ತೆರನಾಗಿ ಮಹಾದೇವನೇ ತಾನಾಗುವ ಸಪ್ತ ಸಾಧನಗಳನ್ನು ಆದಯ್ಯ ಶರಣರು ಬಹು ಮಾರ್ಮಿಕವಾಗಿ ಬೋಧಿಸಿದ್ದಾರೆ.

“ತನುವಿನಲ್ಲಿ ನಿರ್ಮೊಹ, ಮನದಲ್ಲಿ ನಿರಹಂಕಾರ

ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ

ವಿಷಯದಲ್ಲಿ ಉದಾಶೀನ, ಭಾವದಲ್ಲಿ ದಿಗಂಬರ

ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ

ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ”

ಇಂಥ ಸಪ್ತ ಸಾಧನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಪ್ತವ್ಯಸನಗಳನ್ನು ಅವಶ್ಯವಾಗಿ ದೂರೀಕರಿಸಲು ಶಕ್ತರಾಗುತ್ತೇವೆ. ಅಲ್ಲದೆ ಅಷ್ಟಾವರಣದ ಸಾಕ್ಷಾತ್ಕಾರ ದಿಂದ ಅಷ್ಟಮದಗಳನ್ನು ನಿವಾರಿಸಿಕೊಳ್ಳಲು  ಸಮರ್ಥರಾಗುತ್ತೇವೆಂಬುದನ್ನು ಶರಣ ಕವಿಯು ಈ ತ್ರಿಪದಿಯಲ್ಲಿ ಅಭಿವ್ಯಂಜನಗೊಳಿಸಿದ್ದಾನೆ.

ಸಪ್ತವ್ಯಸನಗಳನ್ನು ಅಷ್ಟಮದಗಳನ್ನು ಪರಿಹರಿಸಿಕೊಳ್ಳದಿದ್ದರೆ ತಲೆಯಿಲ್ಲದವರಾಗಿ ಮಾಯಾಂಗನೆಯ ಬಲೆಯಲ್ಲಿ ಬಿದ್ದು ಬಳಲಬೇಕಾಗುವದು. ಅದುಕಾರಣ ಅಷ್ಟಾವರಣದ ರಕ್ಷಾಕವಚದಿಂದ ಅಷ್ಟಮದಗಳನ್ನು ಧಿಃಕರಿಸಿ ಸಪ್ತ ಸಾಧನೆಗಳಿಂದ ಸಪ್ತವ್ಯಸನಗಳನ್ನು ನಾಶಮಾಡಿಕೊಂಡರೆ ಪರಿಶುದ್ಧನಾದ ಅಂಗವಾಗಿ ಭಕ್ತನಾಗುವ ಸೌಖ್ಯ ಸಿಕ್ಕುವದರಲ್ಲಿ ಯಾವ ಸಂದೇಹವಿಲ್ಲ. ಇದೆಲ್ಲದಕ್ಕೂ ಸದ್ಗುರುವಿನ ಕರಣೆಯೆಂಬುದು ಮೂಲವಾಗಿದೆ

 ರಂಭೆ ತಾಂ ತರುತಿರ್ಪ * | ಒಂಬತ್ತು ತೂತಿನಾ

ಕುಂಭದೊಳ್ನೀರು – ತುಂಬಿಕೊಂಡಿರ್ದುದೇ

ನೆಂಬೆನೈ ಗುರುವೆ ಕೃಪೆಯಾಗು    ||೬೪ ||

ಜೀವಾತ್ಮನು ಜ್ಞಾನವನ್ನು ಕಳೆದುಕೊಳ್ಳುವದಕ್ಕೆ ಕಾರಣವನ್ನು ಇಲ್ಲಿ ಸೂಚ್ಯವಾಗಿ ವಿವರಿಸುತ್ತಾನೆ. ಶಿವಕವಿಯ ದೃಷ್ಟಿಯಲ್ಲಿ ಸೌಂದರ್ಯಭಾವವೂ ತುಂಬಿ ಹೊರಸೂಸಿದೆ.

ಲೋಕ ವ್ಯವಹಾರದಲ್ಲಿ ನೀರು ತರುವ ನಾರಿಯರ ದೃಶ್ಯ ಸುಂದರವಾದುದು. ಕಮನೀಯವಾದುದು. ಆ ಸನ್ನಿವೇಶವನ್ನು ಮನೋಹರವಾಗಿ ಬಳಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕೊಡಹೊತ್ತವಳು ಸಾಮಾನ್ಯಳಲ್ಲ; ಅವಳು ರಂಭೆ, ಪದಪ್ರಯೋಗ ದಲ್ಲಿಯೂ ಆಕರ್ಷಣೆಯಿದೆ. ಅಮರಸಿಂಹನು ತನ್ನ ಅಮರಕೋಶ”ದಲ್ಲಿ –

“ಘೃತಾಚೀ ಮೇನಕಾ ರಂಭಾ ಊರ್ವಶೀ ಚ ತಿಲೋತ್ತಮಾ ।”

ಎಂದು ದೇವಲೋಕದ ಅಪ್ಸರೆಯರ ಹೆಸರನ್ನು ಹೇಳಿದ್ದಾನೆ. ಕಾರಣ ಈ ಮಾಯಾಂಗನೆಯಾದ ರಂಭೆಯು ಸ್ವರ್ಗಲೋಕದ ಅಪ್ಸರೆಯಂತೆ ಮತ್ತಷ್ಟು ಮೋಹಿನಿ ಯಾಗಿದ್ದಾಳೆ. ಇವಳು ಹೊತ್ತ ಕುಂಭ (ಕೊಡ) ಒಂಬತ್ತು ತೂತುಗಳಿಂದ ಕೂಡಿದೆ. ರಂಧ್ರಗಳು ಒಂಬತ್ತಿದ್ದರೂ ಒಳಗಿನ ನೀರು ಮಾತ್ರ ಹರಿದು ಹೋಗುವದಿಲ್ಲ. ಈ ವೈಚಿತ್ರಕ್ಕೆ ಏನೆಂಬೆನೆಂದು ಸ್ವತಃ ಶಿವಕವಿಯು ಅಚ್ಚರಿಪಟ್ಟಿದ್ದಾನೆ. ಇದು ಆಶ್ಚರ್ಯಕರ ಘಟನೆಯಲ್ಲದೆ ಮತ್ತೇನು ?

ದೇಹಾಭಿಮಾನಿಯಾಗಿರುವ ಜೀವನು ಮಾಯಾಮಯನಾಗಿರುವದರಿಂದ ಅವನು ಹೊತ್ತಕಾಯವೇ ಘಟವು. ಈ ಶರೀರ ಕೊಡಕ್ಕೆ ಎರಡು ಕಿವಿ, ಎರಡು ಕಣ್ಣು, ಎರಡು ಮೂಗಿನ ಹೊರಳೆಗಳು, ಒಂದು ಬಾಯಿ, ಒಂದು ಗುಹ್ಯ, ಇನ್ನೊಂದು ಗುದ  ಹೀಗೆ ಒಂಬತ್ತು ರಂಧ್ರಗಳಿವೆ. ಈ ಭೌತಿಕ ದೇಹವು ಒಂಬತ್ತು ಛಿದ್ರಗಳಿಂದ ತುಂಬಿದೆ. ಇಷ್ಟು ತೂತುಗಳಿದ್ದ ಕೊಡದಲ್ಲಿ ನೀರಿನಂತೆ ಚಂಚಲವಾದ ವಾಯುತತ್ತ್ವದ ಮನಸ್ಸು ಸೋರಿ ಹೋಗುವದಿಲ್ಲ. ಆದರೆ ಇಂದ್ರಿಯಗಳ ಮುಖಾಂತರ ತನ್ನ ಬಯಕೆಯ ಆಟವನ್ನು ಆಡುತ್ತಿದೆ. ಆದ್ದರಿಂದ ಹೊರಗಿನ ಬಹಿರ್ಮುಖಗಳಾದ ರಂಧ್ರಗಳನ್ನು ವಿಷಯಾದಿಗಳತ್ತ ಹರಿಬಿಟ್ಟಿರುವದರಿಂದ ಅವನು ಆಜ್ಞಾನಿಯಾಗಿದ್ದಾನೆ. ಇದನ್ನರಿತ ಅಣ್ಣನವರು –

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ !

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ !

 ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ !

 ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ

ಇರಿಸು ಕೂಡಲಸಂಗಮದೇವಾ !

ಎಂದು ಕಾಲು, ಕಣ್ಣು, ಕಿವಿ ಮೊದಲಾದ ಇಂದ್ರಿಯಗಳು ಶಿವಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸೆಂದು ಶಿವನನ್ನು ಪ್ರಾರ್ಥಿಸಿದ್ದಾರೆ. ಶಿವನಲ್ಲಿ, ಶಿವಲಿಂಗ. ಧ್ಯಾನದಲ್ಲಿ, ಶಿವವಿಷಯಕಜ್ಞಾನದಲ್ಲಿ  ಏಕನಿಷ್ಠಾಪರನಾಗುವದರಿಂದ ಚಂಚಲವಾದ ಮನಸ್ಸುಸ್ಥಿರವಾಗುವದು

 ಜಮದಗ್ನಿಯ ಸತಿಯಾದ ರೇಣುಕಾ ಎಲ್ಲಮ್ಮನು ತನ್ನ ಪತಿಪೂಜೆಗಾಗಿ ಪ್ರತಿನಿತ್ಯ ಉಸುಗಿನ ಕೊಡದಲ್ಲಿ ಮಡಿ ನೀರನ್ನು ತುಂಬಿಕೊಂಡು ಸರ್ಪನ ಸಿಂಬಿಯ ಮೇಲಿಟ್ಟು ಕೊಂಡು ಬರುತ್ತಿದ್ದಳೆಂಬುದು ಪೌರಾಣಿಕ ಕಥೆಯು, ಅವಳು ತನ್ನ  ಪಾತಿವ್ರತ್ಯಧರ್ಮ ದಿಂದ ಇಂಥ ಅಘಟಿತ ಘಟನೆಯನ್ನು ಮಾಡುತ್ತಿದ್ದಳು.

ಇದರಂತೆ ಜೀವಾತ್ಮನು ಗುರುಕರುಣೆಯಿಂದ ಕಾಯ-ಘಟವನ್ನು ದೀಕ್ಷಾಗ್ನಿ ಯಲ್ಲಿ ಸುಡಿಸಿಕೊಂಡು ನವರಂಧ್ರಗಳಲ್ಲಿ ನವಲಿಂಗಗಳನ್ನು ತುಂಬಿಸಿಕೊಳ್ಳಬೇಕು. ಅದರಿಂದ ಈ ಕಾಯಘಟವು ಭದ್ರವಾಗುವದು. ಇಂಥ ಕೊಡದಲ್ಲಿ ಭಕ್ತಿರಸವು ತುಂಬಿ ಅಂಗನಿಗೆ ಆನಂದದಾಯಕವಾಗಬಲ್ಲುದು. ಹರಿದಾಡುವ ಮನವೂ ಇಂದ್ರಿಯ ಲಿಂಗಗಳಿಂದ ಕಾಣುವ ಪದಾರ್ಥಗಳ ಭೌತಿಕ ಗುಣವನ್ನು ನಿವಾರಿಸಿ ಪ್ರಸಾದಗಳನ್ನಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಪಡೆಯುವದು. ಮತ್ತು ಆತ್ಮವೂ  ಸಂತೃಪ್ತನಾಗುವನು. ಅಂಗನು ಸುಜ್ಞಾನ ಭರಿತ ಕ್ರಿಯೆಗಳಿಂದ ಲಿಂಗಾಂಗ ಸಾಮರಸ್ಯದ ಸುಖವನ್ನು ಸಾಧಿಸುವಂತಾಗುವನು.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಭವಿಗಳು ಧರ್ಮಸಾಧನೆಗೆ ಕಾರಣವಾದ ಶರೀರಕ್ಕೆ ಅನೇಕ ಉಪಮೆಗಳನ್ನು ಕೊಟ್ಟಿದ್ದಾರೆ. ಇಲ್ಲಿ ಘಟವೆಂದು ವರ್ಣಿಸಿದಂತೆ ಹಲಕೆಲವರು ಶರೀರವನ್ನು ಹುತ್ತವನ್ನಾಗಿ, ಕ್ಷೇತ್ರವನ್ನಾಗಿ, ಕಾಂತಾರವನ್ನಾಗಿ, ತೋಟವನ್ನಾಗಿ, ಕೆರೆಯನ್ನಾಗಿ, ದೇವಾಲಯವನ್ನಾಗಿ ಉಪಮಿಸಿದ್ದಾರೆ. ಪ್ರಾಸಂಗಿಕವಾಗಿ ಈ ವಚನಗಳು ಮನನೀಯವಾಗಿವೆ ತೋಂಟದ ಸಿದ್ಧಲಿಂಗಯತಿಗಳು –

“ತನುವೆಂಬುದುದೊಂದು ಹುತ್ತಕ್ಕೆ ಒಂಬತ್ತು ಬಾಗಿಲು;

ತಾಮಸವೆಂಬ ಸರ್ಪಂಗೆ ತಲೆ ಹದಿನಾಲ್ಕು, ಒಡಲಾರು,

ಬಾಲನ ಬ್ರಹ್ಮಲೋಕಕ್ಕೆ ಇಟ್ಟು ಶಿರವ ಹರಿದ್ವಾರದಲ್ಲಿರಿಸಿ

ಕರಣೇಂದ್ರಿಯಂಗಳೆಂಬ ಕಾಳಕೂಟ ವಿಷವನೆ ಉಗುಳುತ್ತಿದೆ ನೋಡಾ |

ಆ ವಿಷವು ಶಿವಶರಣರಲ್ಲದವರನೆಲ್ಲರ ಸುಡುವುದ ಕಂಡೆನು

ಕಾಣಾ ಮಹಾಲಿಂಗ ಗುರುಶಿವಸಿದ್ದೇಶ್ವರ ಪ್ರಭುವೆ”

ಎಂದಿದ್ದರೆ – ಮಹಾ ಶಿವಶರಣೆ ಲಿಂಗಮ್ಮನು  

ʼʼತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ

ಹೆಡೆ ಎತ್ತಿ ಆಡುತ್ತಿರಲು, ಆ ಸರ್ಪನ ಕಂಡು

ನಾ ಹೆದರಿಕೊಂಡು ಗುರುಕರುಣವೆಂಬ ಪರುಷವ

ತಂದು ಮುಟ್ಟಿಸಲು ನೋಟ ನಿಂದಿತ್ತು;

ಹೆಡೆ ಅಡಗಿತ್ತು, ಗುರುಕರುಣವೆಂಬ ಪರುಷವೆ ನಿಂದಿತ್ತು.

ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ

ಶರಣರ ಪಾದವ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯ

ಅಪ್ಪಣ್ಣಪ್ರಿಯ ಚನ್ನಬಸವಣ್ಣಾ !’

ತನುವನ್ನು ಹುತ್ತನ್ನಾಗಿಯೂ, ಮನವನ್ನು ಸರ್ಪವನ್ನಾಗಿ ಕಂಡಿದ್ದಾರೆ. ತನು- ಹುತ್ತಿನ, ಮನ-ಸರ್ಪನ ವೈಷಯಿಕ ವಿಷವು ಗುರುಕರುಣದಿಂದ ದೂರವಾಗುವದರಲ್ಲಿ ಸಂಶಯವಿಲ್ಲ. ಶಿವಶರಣರಾದವರಿಗೆ ಈ ವಿಷ ಅಮೃತವಾಗುತ್ತದೆ. ಕಾರಣ  ಸದ್ಗುರುವಿ ನಲ್ಲಿ ಶರಣಾಗತನಾಗಿ ಕಾಯವನ್ನು ಪಾವನವನ್ನಾಗಿಸಿ ಕೊಳ್ಳುವದು ಶಿಷ್ಯನ ಧರ್ಮವಾಗಿದೆ

ಗಾಳಿಗಿಕ್ಕಿದ ಸೊಡರಿ | ನೇಳಿಗೆಯನೇನೆಂಬೆ

ಬಾಳ್ವ ಧನಿಕರನು – ಗೀಳು ಮಾಡುವದೈ  ಕೃ –

ಪಾಳು ಶ್ರೀ ಗುರುವೆ ಕೃಪೆಯಾಗು     [೬೫ |

ಇನ್ನು ಗುರುಕರರುಣೆಯನ್ನು ಪಡೆಯದ ಕಾಯವು ಗಾಳಿಗಿಕ್ಕಿದ ಸೊಡರಿನಂತೆ ತೀವ್ರನಾಶವಾಗಿ ಹೋಗುವದೆಂಬುದನ್ನು ಸೋದಾಹರಣಪೂರ್ವಕವಾಗಿ ಪ್ರತಿಪಾದಿಸಿದ್ದಾನೆ.

ಮಾನವಜನ್ಮವು ಬಹು ಪುಣ್ಯಪ್ರದವಾದುದು. ಬಹುಜನ್ಮದ ಪುಣ್ಯದ ಫಲದಿಂದ ಮಾನವ ಶರೀರ ಲಭ್ಯವಾಗುತ್ತದೆ. ಅದರ ಮಹತ್ವವನ್ನರಿತು ಸಾರ್ಥಕ ಮಾಡಿಕೊಳ್ಳು ವದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ನೀತಿಕಾರರು –

“ಮಹತಾ ಪಣ್ಯ ಪಣ್ಯೇನ

ಕ್ರೀತೇಯಂ ಕಾಯನೌಸ್ತ್ವಯಾ |

ಪಾರಂ ದುಃಖೋದಧೇರ್ಗಂತುಂ

ತರ ಯಾವನ್ನ ಭಿದ್ಯತೇ ॥”

ಶರೀರವೆಂಬ ನೌಕೆಯನ್ನು ಮಹತ್ತರವಾದ ಪುಣ್ಯಫಲದಿಂದ ಖರೀದಿ ಮಾಡಿದ್ದೇವೆ. ಈ ನಾವೆಯಿಂದ ದುಃಖಮಯವಾದ ಸಂಸಾರಸಾಗರವನ್ನು ತೀವ್ರವಾಗಿಯೇ ದಾಟಬೇಕು. ಯಾಕೆಂದರೆ ಯಾವಾಗ ಈ ನೌಕೆಯು ಒಡೆದು ಹೋದೀತೆಂಬುದು  . ಗೊತ್ತಿಲ್ಲವೆಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಮಾನವ ಜನ್ಮವೇ ಸಕಲ ಜೀವ ಜಂತುಗಳಲ್ಲಿ ಮಿಗಿಲಾಗಿದೆ

ಕ್ರಿಮಿ ಕೀಟ-ಪತಂಗೇಭ್ಯಃ ಪಶವಃ ಪ್ರಜ್ಞಯಾಧಿಕಾಃ |

ಪಶುಭೋSಪಿ ನರಾಃ ಶ್ರೇಷ್ಮಾ………..!!?

ಕ್ರಿಮಿ, ಕೀಟ, ಪತಂಗಗಳಿಗಿಂತಲೂ ಪಶುಗಳು ತಿಳುವಳಿಕೆಯುಳ್ಳವುಗಳಾಗಿರುತ್ತವೆ. ಅವುಗಳಿಗಿಂತ ಮಾನವನು ಶ್ರೇಷ್ಠನಾಗಿದ್ದಾನೆಂದು ವ್ಯಾಸರು ತಮ್ಮ ಪುರಾಣಗಳಲ್ಲಿ ಮಾನವ ಜನ್ಮದ ಅಧಿಕ್ಯತೆಯನ್ನು ಪ್ರತಿಪಾದಿಸಿದ್ದಾರೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ –

”ದುರ್ಲಭಂ ಮಾನುಷಂ ಪ್ರಾಪ್ಯ

ಜನನಂ ಜ್ಞಾನ-ಸಾಧನಮ್ |

ಯೇ ನ ಜಾನಂತಿ ದೇವೇಶಂ

ತೇಷಾಮಾತ್ಮಾ ನಿರರ್ಥಕಃ” ॥ ೧೧.೬೩ ||

ದುರ್ಲಭವಾದ, ಜ್ಞಾನಕ್ಕೆ ಸಾಧನವಾದ ಮಾನುಷ ಜನ್ಮವನ್ನು ಪಡೆದೂ ಪರಮಾತ್ಮನನ್ನು ಯಾರು ತಿಳಿಯುವದಿಲ್ಲವೋ ಅವರ ಆತ್ಮವು ನಿರರ್ಥಕವಾದುದೆಂದು ಬೋಧಿಸಿದ್ದಾರೆ. ಆತ್ಮತತ್ತ್ವವನ್ನು ತಿಳಿಯಬೇಕಾದದ್ದು ಮಾನವ ಜನ್ಮದ ಮಹಾಮಣಿಹ. ಅದುವೇ ಮನುಷ್ಯನ ಕರ್ತವ್ಯವೂ ಆಗಿದೆ. ಕರ್ತವ್ಯವನ್ನು ಮರೆತರೆ ಕಾಯದ ಫಲ ದಕ್ಕುವದಿಲ್ಲ. ಅದು ನಿರರ್ಥಕವಾಗಿ ಹೋಗುವದು.

ಕರ್ತವ್ಯ ಚ್ಯುತಿಯಾದರೆ ವಾಸನಾ ಬಲವು ಬಲಿಯುವದು. ಈ ವಾಸನಾ ಗಾಳಿಯು ಜನ್ಮ-ಜನ್ಮಾಂತರದಲ್ಲಿ ಪವಿತ್ರ ಮಾನವ ಶರೀರವನ್ನು ಹಾಳು ಮಾಡಿ ಬಿಡುತ್ತದೆ. ಗಾಳಿಯಲ್ಲಿ ಇರಿಸಿದ ದೀಪಕ್ಕೆ ಏಳಿಗೆಯಾಗುವದಿಲ್ಲವೆಂಬುದು ಬಾಲಕನಿಗೂ ಸಹ ತಿಳಿದ ವಿಷಯ. ಈ ದೀಪಕ್ಕೆ ಪ್ರಾಣವಾಯು ಬೇಕು. ಅದು ಅತಿಯಾಗಬಾರದು. ಮಿತವಾದ, ಗಾಳಿಯಿಂದ ಜ್ಯೋತಿಯು ಶಾಂತವಾಗಿ ಬೆಳಗಿ ಪ್ರಕಾಶವನ್ನು ಕೊಡಬಲ್ಲುದು. ಇದರಂತೆ ಶರೀರವೆಂಬ ಪ್ರಣತಿಯಲ್ಲಿ ಜ್ಞಾನಜ್ಯೋತಿಯು  ಪ್ರಾಣವಾಯುವಿನಿಂದಲೇ ಪ್ರಜ್ವಲಿಸುತ್ತದೆ. ಪ್ರಾಣವಾಯುವು ವಿಷಯವಾಸನಾ ರೂಪವನ್ನು ತಾಳಿದರೆ ಜ್ಞಾನ ಜ್ಯೋತಿಗೆ ಮಂಕುಬರುವದು. ಪ್ರಕಾಶ ಪಸರಿಸದು. ಅಂದರೆ ಶಾರೀರಿಕ ವ್ಯಾಮೋಹವು ಸುಜ್ಞಾನಕ್ಕೆ ಅಡ್ಡಿಯಾಗುವದು. ಅದು ಬಲು ಬಲವತ್ತರವಾದುದು. ಶಾರೀರಿಕ ವ್ಯಾಮೋಹದಿಂದ ವೈಷಯಿಕ ಗಾಳಿಯು ಬಲ್ಲಿದೆನೆನ್ನುವ ಜ್ಞಾನಧನಿಕರ ಜ್ಞಾನಜ್ಯೋತಿ ಯನ್ನು ನಷ್ಟಗೊಳಿಸಿ ಜೀವನವನ್ನೇ ಗೀಳು ಮಾಡಿ (ಹಾಳು ಮಾಡಿ) ಬಿಡುವದು. ಇಲ್ಲಿ “ಬಾಳ್ವ’ ಪದಕ್ಕಿಂತಲೂ ಬಲ್ಲ’ ಪದ ಪ್ರಯೋಗವು  ಸಾರ್ಥಕವೆನಿಸುತ್ತದೆ

 ಶರೀರವು ಸುಖಕ್ಕೂ, ಮತ್ತು ದುಃಖಕ್ಕೂ ಕಾರಣವಾಗಿದೆ. ವಿಷಯ ಗಾಳಿಯನ್ನು ದೂರಮಾಡಿ ಸತ್ಕರ್ಮಯುತವಾದರೆ ಅದು ಸುಖಕ್ಕೆ ಸಾಧನವಾಗುವದು, ವಾಸನಾಗಾಳಿ ಬಲಿಷ್ಠವಾದರೆ ದುಖಿಯೂ ಆಗುವದು. ಇದೇ ಮಾತನ್ನು ಮಹಾಭಾರತದಲ್ಲಿ

‘ಶರೀರಮೇವಾಯತನಂ ಸುಖಸ್ಯ

ದುಖಸ್ಯ ಚಾಪ್ಯಾಯತನಂ ಶರೀರಮ್ |

ಯದ್ಯಚ್ಛರೀರೇಣ ಕರೋತಿ ಕರ್ಮ

ತೇನೈವ ದೇಹೀ ಸಮುಪಾಶ್ನುತೆ ತತ್ ||

ʼʼಸುಖಕ್ಕೂ ಹಾಗೂ ದುಃಖಕ್ಕೂ ಶರೀರವೇ ಸದನ (ಮನೆ)ವಾಗಿದೆ. ಈ ಶರೀರದಿಂದ ಯಾವ ಪ್ರಕಾರದ ಕರ್ಮಮಾಡುವನೋ ಅಂಥ ಫಲವನ್ನು ಪಡೆಯುವನೆಂದು” ವ್ಯಾಸರು ನಿರೂಪಿಸಿದ್ದು ಸಮೀಚೀನವೇ ಆಗಿದೆ.

ಜ್ಞಾನಿಯೂ ಸಹ ಒಮ್ಮೊಮ್ಮೆ ವಾಸನಾಬಲದಿಂದ ದುಷ್ಕರ್ಮವನ್ನೇ ಮಾಡತೊಡಗುವನು. ಅಂಥ ಸಂದರ್ಭದಲ್ಲಿ –

ಕಾಮಾರ್ತಾ ಹಿಂ ಪ್ರಕೃತಿಕೃಪಣಾಃ :

ಚೇತನಾ…ಚೇತನೇಷು (ಮೇಘದೂತ)

ವಿಷಯ ವಾಸನಾಯುಕ್ತರಾದ ಕಾಮುಕರು ಚೇತನ ಮತ್ತು ಆಚೇತನ ವಸ್ತುಗಳಲ್ಲಿ ಸಹ ಸ್ವಭಾವತಃ ದೀನರಾಗುವರೆಂಬ ಕಾಲಿದಾಸನ ಮಾತು ಸತ್ಯವೆನಿಸುವದು. ಭಾರವಿಕವಿಯ “ಕಿರಾತಾರ್ಜುನೀಯ” ಕಾವ್ಯದಲ್ಲಿ,

ʼ’ಆಪಾತರಮ್ಯಾಃ ವಿಷಯಾಃ ಪರ್ಯಂತಪರಿತಾಪಿನಃ |

ʼʼಪ್ರಾರಂಭದಲ್ಲಿ ಶಬ್ದಾದಿ ವಿಷಯಗಳು ರಮ್ಯವೆನಿಸಿ ಅಂತ್ಯದಲ್ಲಿ ದುಃಖವನ್ನೇ ಕೊಡತಕ್ಕವುಗಳೆಂದೂ” ಪ್ರತಿಪಾದಿಸಿದ್ದಾನೆ. ಇಂಥ ವಿಷಯವಾಸನೆಯಿಂದ ಜೀವನು ಅನಂತ ಬಾಧೆಗಳನ್ನು ಅನುಭವಿಸಿ ಹುಟ್ಟು-ಸಾವುಗಳಿಗೆ ಒಳಗಾಗುವನು. ಇದನ್ನರಿತ ನಿಜಗುಣರು ದಯಾಮಯನಾದ ಶಂಕರನಲ್ಲಿ ಅನನ್ಯವಾಗಿ ಬೇಡಿಕೊಂಡದ್ದು ಯೋಗ್ಯವೆನಿಸಿದೆ.

ಶಂಕರಾ ! ನೋಡು ನೀನೆನ್ನ ಪರಿಭವದ ಬಾಧೆಯನು ಕೃಪೆ

ಮಾಡು ಬೇಗದೊಳಗಭಯವಿತ್ತು | ಶಂಕರಾ ।। ಪ ।।

ಮಾಯ ಕರ್ಮದ ಭಾಧೆ, ಕಾಯಕರಣದ ಬಾಧೆ |

ವಾಯು ವಿಷಯೇಂದ್ರಿಯದ ಬಾಧೆ | ಶಂಕರಾ ।।

ಹೇಯವಹ ಜನನ ಮರಣದ ಬಾಧೆ ತಾಪ- ಸಮು

ದಾಯದತಿಬಾಧೆ ಬಲುಹೆನಗೆ | ಶಂಕರಾ || ॥ ೧ ॥

 ಹಸಿವು ತೃಷೆಗಳ ಬಾಧೆ ವ್ಯಸನವೇಳರ ಬಾಧೆ |

ದೆಸೆಗೆಡಿಸುವರಿಕುಳದ ಬಾಧೆ | ಶಂಕರಾ ||

ಕುಸುಮ ಬಾಣನ ಬಾಧೆ ಮದಶೋಕ ಮೋಹರತಿ

ವಿಸರದುರುಬಾಧೆ ಘನವೆನಗೆ | ಶಂಕರಾ ||

(ಕೈವಲ್ಯ ಪದ್ಧತಿ)

ದೇಹಧಾರಿಗೆ ಎನಿತೆನಿತು ಬಾಧೆಗಳಿವೆಯೆಂಬುದು ಈ ಪದ್ಯದಿಂದ ವೇದ್ಯವಾಗದೆ ಇರದು. ಇಷ್ಟು ಬಾಧೆಗಳನ್ನು ಸಹಿಸಿಯೂ ತೀವ್ರ ಶಿವನತ್ತ ಮನಹರಿದರೆ ಜೀವಾತ್ಮನ ತನು ಸಾರ್ಥಕವಾಗುವದು. ಶರೀರವು ಬಾಧೆಗಳಿಂದ ಲಘುತ್ವವನ್ನು ಹಾಗೂ ಆ ಕಷ್ಟಗಳನ್ನು ಪರಿಹರಿಸುವ ಪರಮಗುರುವಿನಲ್ಲಿ ಮೊರೆ ಹೊಕ್ಕರೆ ಸಾಫಲ್ಯತೆಯನ್ನು ಶಿವಯೋಗಿಗಳು ಪಡೆಯುವದು. ಆದ್ದರಿಂದ ಗುರುದೀಕ್ಷೆಯನ್ನು ಹೊಂದಿ ಶಿವಲಿಂಗಾರಾಧನೆಯಿಂದ ಕಾಯವನ್ನು ಕೀರ್ತಿಮಯಗೊಳಿಸಿಕೊಳ್ಳಬೇಕು. ಮತ್ತೊಂದೆಡೆಯಲ್ಲಿ ನಿಜಗುಣ ಶಿವಯೋಗಿಗಳು-

 “ನರಜನ್ಮದಿಂದಿಹದೊಳು ಮಿಗಿಲುಂಟೆ?

ಎಂದು ಹಾಡಿಹರಿಸಿದ್ದಾರೆ.  ನರಜನ್ಮಮಿಗಿಲಾಗಿದ್ದರೂ ಈ ಕಾಯದ ಇರುವಿಕೆಯು ಅನಿಶ್ಚಿತವಾದುದು ಅದನ್ನರಿತು ತೀವ್ರವಾಗಿ ಪರಶಿವನನ್ನು ಆರಾಧಿಸಬೇಕು. ಅಣ್ಣನವರು.

|| ೨ ||

ನೆರೆ ಕೆನ್ನಗೆ, ತೆರೆ ಗಲಕ್ಕೆ, ಶರೀರಗೂಡು ವೋಗದ ಮುನ್ನ,

ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ,

ಕಾಲಮೇಲೆ ಕೈಯ್ಯನೂರಿ ಕೋಲು ಹಿಡಿಯದ ಮುನ್ನ,

ಮುಪ್ಪಿಂದೊಪ್ಪುವಳಿಯದ ಮುನ್ನ,

ಮೃತ್ಯು ಮುಟ್ಟದ ಮುನ್ನ,

ಪೂಜಿಸು ನಮ್ಮ ಕೂಡಲ ಸಂಗಮದೇವನ.

 ಮತ್ತು   

“ನೀರಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು

ಸುರಕ್ಷಿತವ ಮಾಡುವ ಭರವನೋಡಾ !

ಮಹಾದಾನಿ ಕೂಡಲ ಸಂಗಮದೇವನ

ಭಜಿಸಿ ಬದುಕೋ ಕಾಯವ ನಿಶ್ಚಯಿಸದೆ.”

ಮುಂತಾಗಿ ಶರೀರದ ಯಥಾರ್ಥ ಚಿತ್ರವನ್ನು ಚಿತ್ರಿಸಿದ್ದಾರೆ. ಸ್ವಭಾವತಃ ಶರೀರವು ಜೀರ್ಣವಾಗುವಂಥಹದು. ಅಂತೆಯೇ ವ್ಯಾಕರಣಕಾರರು

ʼʼಶೀರ್ಯತ ಇತಿ ಶರೀರಮ್ʼʼ

ʼʼಜೀರ್ಣವಾಗಿ ಹೋಗುವದೆಂಬುದಾಗಿಯೇ ಇದಕ್ಕೆ ಶರೀರವೆಂದು ಹೆಸರು ಬಂದಿದೆ.” ಯೆಂದು ವ್ಯಾಖ್ಯೆಯನ್ನು ಮಾಡಿದ್ದಾರೆ. ಶರೀರವು ನೀರಗುರುಳ್ಳಿಯಂತೆ ನಶ್ವರವಾಗಿದ್ದು ಅದನ್ನೇ ಮೆಚ್ಚಿ ಸಮಯವನ್ನು ಕಳೆಯುವದಕ್ಕಿಂತ ಆದರಿಂದ ಸದ್ಧರ್ಮವನ್ನು ಸಾಧಿಸು ವದು ಮೇಲು. ಸ್ಕೂಲ ಶರೀರನಾಶವಾದರೂ ಕಾರಣಗತ ಸದ್ಗುಣಗಳು ಶಾಶ್ವತವಾಗಿ ಉಳಿಯುತ್ತವೆ. ಅಂತೆಯೆ ಹಿತೋಪದೇಶ”ದಲ್ಲಿ ಪಂಡಿತ ವಿಷ್ಣು ಶರ್ಮನು –

“ಶರೀರಂ ಕ್ಷಣವಿಧ್ವಂಸಿ ಕಲ್ಪಾಂತರ ಸ್ಥಾಯಿನೋ ಗುಣಾಃ |’

ಶರೀರವು ಕ್ಷಣಭಂಗುರವಾದರೆ, ತನುವಿನಿಂದ ಸಂಪಾದಿತವಾದ ಗುಣಗಳು ಯುಗ ಯುಗಾಂತರದಲ್ಲಿ ಅಮರವಾಗಿ ಉಳಿಯುತ್ತವೆ”ಯೆಂದು ಶರೀರದ ಸಾರ್ಥಕತೆಯ ಮಹತ್ವವನ್ನು ಬಿತ್ತರಿಸಿದ್ದಾನೆ.

ಪರಶಿವನನ್ನು ಕಾಣುವ ಪರಮಸಾಧನವೂ ಕಾಯ”ವೆಂದು ಮಹಾಜ್ಞಾನಿ ಚನ್ನಬಸವಣ್ಣನವರು ಕೆಳಗಿನಂತೆ ತಿಳಿಸಿದ್ದಾರೆ.

“ಕಾಯದಿಂದ ಲಿಂಗದರುಶನ,

ಕಾಯದಿಂದ ಜಂಗಮದರುಶನ,

ಕಾಯದಿಂದ ಪ್ರಸಾದ ಸಂಪತ್ತು,

ಕೂಡಲ ಚನ್ನಸಂಗಯ್ಯ ಈ ಕಾಯದಿಂದ ನಿಮ್ಮ ಕಂಡೆನಯ್ಯಾ !

ತನುವಿನಿಂದಲೇ ಲಿಂಗ-ಜಂಗಮ ದರ್ಶನವಾಗುವದು. ಅದರಿಂದಲೇ ಪರಮ ಪ್ರಸಾದ ಸಂಪತ್ತು ಲಭ್ಯವಾಗುವದು.

ಅದುಕಾರಣ ವಾಸನಾಗಾಳಿಯ ಸೆಳೆತಕ್ಕೆ ಸಿಕ್ಕು ನಾಶಹೊಂದುವ ಶರೀರವನ್ನು ಮತ್ತು ಅದರೊಳಗಿರುವ ಜ್ಞಾನ ಜ್ಯೋತಿಯನ್ನು ಶ್ರೀ ಗುರುಕರುಣೆಯಿಂದ ಬೆಳಗಿಸಿಕೊಳ್ಳಬೇಕು. ಕಾಯದ ಸಾಫಲ್ಯತೆಯನ್ನು ಪಡೆಯಬೇಕು. ಆತ್ಮಜ್ಞಾನದ ಸೊಬಗನ್ನು ಸಾಧಿಸಬೇಕು. ಅದುವೆ ಮಾನವ ಜೀವನದ ಮುಖ್ಯ ಗುರಿ, ಮೇರುಸಿರಿ, ಓ ಗುರುವೇ ಅಂಥ ಜ್ಞಾನ ಬೆಳಕನ್ನು ನೀಡಿ ಕೃಪೆಮಾಡಿ ಕಾಪಾಡು.

ಶಿವಕವಿಯು ಪಂಚಮಹಾಭೂತಗಳ ವಿಷಯವನ್ನು ತಿಳಿಸಿದ ಮೇಲೆ ದೇಹ ವಿಕಾರವನ್ನು ಪ್ರತಿಪಾದಿಸಿರುವದರಿಂದ ಅಧ್ಯಾತ್ಮಿಕ ಅಧಿಕಾರಿಗೆ ಶರೀರ ಮತ್ತು ಜೀವನದ ನೈಜವಿಚಾರಗಳನ್ನು ತಿಳಿಯುವಲ್ಲಿ ಸುಲಭವಾಗಿದೆ. ಸಾಂಸಾರಿಕ ಹೇಯವನ್ನು ಮನಗಾಣುವಲ್ಲಿ ಕ್ರಮಬದ್ಧವಾಗಿದೆ. ಕಾಲ-ಕಾಮ ಮಾಯೆಗಳ ಕಾಟವು ದೇಹವನ್ನು ಮುತ್ತಿ ದಹಿಸುತ್ತದೆ. ನಾಶಮಾಡುತ್ತದೆ. ಇದನ್ನರಿತು ಸದ್ಗುರು ಕರುಣೆಯನ್ನು ಶೀಘ್ರವಾಗಿ ಪಡೆಯಬೇಕಾದುದು ಮುಖ್ಯ ಧೈಯವೆಂಬ ಮಾತು ಸುಸ್ಪಷ್ಟವಾಗಿದೆ.

ಡಾ.ಚೆನ್ನಕ್ಕ ಪಾವಟೆ

ಪ್ರಸ್ತಾವನೆ: ಕೈವಲ್ಯ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪ್ರಕಾರದ ತತ್ವಸಾಹಿತ್ಯ ಅನುಭಾವಿಗಳ ಅನುಭವವಾಣಿಯಾಗಿ ಮಾನವಜೀವನದ ಯೋಗಕ್ಷೇಮಕ್ಕಾಗಿ ಹೊರಹೊಮ್ಮಿದವು ಕೈವಲ್ಯತತ್ವಗಳು. ಸಕಲಜೀವಾತ್ಮರಿಗೆ ಲೇಸನೇ ಬಯಸುವ ಮಣಿಹ ಹೊತ್ತು, ಅವರ ಜೀವನಕ್ಕೆ ಸ್ಪಂದಿಸಿ ಹಸನುಗೊಳಿಸಲು ರೂಪಿತಗೊಂಡ ಸುವರ್ಣಮಾಧ್ಯಮಗಳು. ಗೇಯಪ್ರಧಾನ, ಸ್ವರಪ್ರಧಾನ ಮಾಧ್ಯಮವಾದ ಈ ಕಾವ್ಯಪ್ರಕಾರವನ್ನು ಅನುಭಾವಿಗಳು ತತ್ವಪದಗಳೆಂದು ಕರೆದಿರುವರು. ವಿಭಿನ್ನ  ಮಟ್ಟಗಳಲ್ಲಿ ತಾಳ ಲಯ ಭಾವ ಪ್ರಧಾನವಾಗಿ, ಹಾಡಲು ಸರಳವಾಗುವಂತೆ ಜನಸಾಮಾನ್ಯರಿಗೆ ಮನಮುಟ್ಟುವ ನೇರಭಾಷೆಯಲ್ಲಿ ಈ ಹಾಡುಗಬ್ಬಗಳನ್ನು ರಚಿಸಿರುವರು. ಸಂಗೀತ ಸಾಹಿತ್ಯ ಅಧ್ಯಾತ್ಮ ಈ ಮೂರು ದೃಷ್ಟಿಗಳನ್ನೊಳಗೊಂಡ ಮುಪ್ಪುರಿಯ ಪ್ರಕಾರದ ವಿಶಿಷ್ಟ ಸಾಧನ ಇದು. ಶರಣರ ಬದುಕಿನ ಮೌಲ್ಯಗಳನ್ನು ಲೋಕಕ್ಕೆ ಅರುಹಲು ಸಾರ್ಥಕ ಬದುಕಿನ ನಿರ್ಮಾಣಕ್ಕೆ ಅನುಭಾವ ಪದಗಳು ದಾರಿದೀಪವಾಗಿವೆ.

ಶರಣರ ಗದ್ಯಾತ್ಮಕ ಬರವಣಿಗೆಗೂ ಸರ್ವಜ್ಞನ ಪದ್ಯಾತ್ಮಕ ಬರವಣಿಗೆಗೂ ನಾವು ‘ವಚನ’ ವೆಂಬ ಪದವನ್ನು ಬಳಸುತ್ತೇವೆ. ಇದನ್ನು ಗಮನಿಸಿದರೆ ‘ವಚನ’ ವೆಂಬ ಪದ ಗದ್ಯ ಆಕೃತಿಯನ್ನು ಸೂಚಿಸುವದಿಲ್ಲ; ಪದ್ಯ ಆಕೃತಿಯನ್ನೂ ಸೂಚಿಸುವದಿಲ್ಲ, ‘ಪ್ರಾಮಾಣಿಕತೆ’ ಎಂಬ ಆಶಯವನ್ನು ಸೂಚಿಸುತ್ತಿರಬಹುದೆನಿಸುತ್ತದೆ. ಪ್ರಾಮಾಣಿಕತೆ ಅಥವಾ ಪ್ರಮಾಣ ಮಾಡಿ ಹೇಳುವಿಕೆಗೆ ನಾವು ‘ವಚನ’ (Promise) ಎನ್ನುವುದನ್ನು ಇಲ್ಲಿ ನೆನೆಯಬಹುದು. ಆದುದರಿಂದ ವಚನವೆನ್ನುವುದು ಆತ್ಮದೇವತೆಯ ಮೇಲೆ ಆಣೆ ಇಟ್ಟು ಗದ್ಯರೂಪದಲ್ಲಿಯೋ ಪದ್ಯರೂಪದಲ್ಲಿಯೋ ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದುದು ಎನ್ನಬೇಕಾಗುತ್ತದೆ.

ಸ್ವರವಚನವೆಂಬುದು ವೀರಶೈವರು ಬಳಸಿದ ಒಂದು ಹೊಸ ಸಾಹಿತ್ಯಕ ಪರಿಭಾಷೆ. ಸ್ವರವಚನ, ಸ್ವರಪದ ಸ್ಥೂಲಅರ್ಥದಲ್ಲಿ ಇದು ಹಾಡುಗಬ್ಬ. ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಪಲ್ಲವಿ-ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ, ಇದು ಸ್ವರವಚನದ ರೂಪಮುದ್ರೆ, ಸಾಮಾನ್ಯವಾಗಿ ಪ್ರತಿಯೊಂದು ಅನುಭಾವ ಪದಗಳ ತಲೆಯ ಮೇಲೆ ರಾಗಗಳ, ಕೆಲವೊಮ್ಮೆ ತಾಳಗಳ ನಿರ್ದೇಶನವಿರುತ್ತಿದ್ದು, ಇದು ಅನುಭಾವಿಗಳ ಸಂಗೀತ ಜ್ಞಾನಕ್ಕೆ ಸೂಚನೆ ಎನಿಸಿವೆ. ವೀರಶೈವತತ್ವ, ಲೋಕನೀತಿ ಇದರ ವಸ್ತುಸಂಪತ್ತು.

ಕನ್ನಡ ಅನುಭಾವ ಪದಗಳ ಪರಂಪರೆ ಶಿವಶರಣರಷ್ಟೇ ಪ್ರಾಚೀನವಾದುದು. ಬಸವಾದಿ ಪ್ರಮಥರ ವಚನಮಾಲಿಕೆಯಲ್ಲಿ ನಡೆದು ಬಂದ ಚನ್ನಬಸವಣ್ಣನವರ ‘ಪದಮಂತ್ರಗೋಪ್ಯ’, ಮಹಾದೇವಿಯಕ್ಕನ ಯೋಗಾಂಗತ್ರಿವಿಧಿ’, ಶಿವಯೋಗಿ ಸಿದ್ಧರಾಮನ ‘ಬಸವ ತ್ರಿವಿಧಿ’ಗಳನ್ನು ಗಮನಿಸಿದರೆ ಹನ್ನೆರಡನೆಯ ಶತಮಾನದ ವಚನಕಾರರು ‘ಮರ್ತ್ಯಲೋಕವನ್ನು ಕರ್ತಾರನ ಕಮ್ಮಟ’ವಾಗಿಸುವ ಅನುಭಾವಿಗಳೂ, ಶಿವಾನುಭಾವಿಗಳೂ ವಾಗ್ಗೇಯಕಾರರೂ ಆಗಿದ್ದರೆಂದು ಹೇಳಬೇಕು.

ಕರ್ನಾಟಕದ ಅಧ್ಯಾತ್ಮಿಕ ಚರಿತ್ರೆಯಲ್ಲಿ ಶರಣರ ಬಳಿವಿಡಿದು ಬಂದ ಅನುಭಾವಿಗಳ ಪರಂಪರೆ ತುಂಬ ದೊಡ್ಡದು. ಷಟ್‌ಶಾಸ್ತ್ರಗಳ ರಚನಕಾರರಾಗಿ, ತತ್ವಜ್ಞಾನದ ಮೇರು ಶಿಖರವನ್ನೇರಿದ ನಿಜಗುಣ ಶಿವಯೋಗಿಗಳು ಈ ಪರಂಪರೆಯಲ್ಲಿ ಮೊದಲಿಗರು. ಅವರು ಬಾಳಿ ಬದುಕಿದುದು ಹದಿನೈದನೆಯ ಶತಮಾನದಲ್ಲಿ, ತತ್ವಪದ, ಹಾಡುಗಬ್ಬ ಹಾಗೂ ಅನುಭಾವಗೀತೆಗಳು-ಒಟ್ಟಾರೆ ಕೈವಲ್ಯಸಾಹಿತ್ಯಕ್ಕೆ ಇವರನ್ನು ಆದ್ಯ ಪ್ರವರ್ತಕರೆಂದು ವಿದ್ವಾಂಸರು ಗುರುತಿಸಿದ್ದಾರೆ.

ಇವರ ಸಮಕಾಲೀನರೆಂದು ಸಾರುವ ಮುಪ್ಪಿನ ಷಡಕ್ಷರಿಗಳು, ಸರ್ಪಭೂಷಣ ಶಿವಯೋಗಿಗಳು, ಘನಮಠಾರ್ಯರು, ಬಸವಲಿಂಗಶರಣರು, ಬಾಲಲೀಲಾಮಹಂತ ಶಿವಯೋಗಿಗಳು, ಕಡಕೋಳದ ಮಡಿವಾಳೇಶ್ವರರು, ಶಾಲ್ಯದ ಅರಸರು, ಕರಿಬಸವಸ್ವಾಮಿಗಳು, ಶಂಕರಾನಂದ ನಿಂಬರಗಿ ಮಹಾರಾಜ, ಮತಕೂರು ನಂಜುಡಸ್ವಾಮಿಗಳು ಮೊದಲಾದವರು ಅನುಭಾವ ಪದಗಳ ಪರಂಪರೆಯಲ್ಲಿ ಮಿನುಗಿದ ಅನುಭಾವಿರತ್ನಗಳು.

ಮುಪ್ಪಿನ ಷಡಕ್ಷರಿಗಳ ನೆಲೆ-ಬೆಲೆ:

ಕನ್ನಡ ಅನುಭಾವ ಸಾಹಿತ್ಯ ಕ್ಷೇತ್ರದಲ್ಲಿ ಮುಪ್ಪಿನ ಷಡಕ್ಷರಿಗಳದ್ದು ವಿಶಿಷ್ಟವಾದ ಸ್ಥಾನಮಾನ, ಅಂತರಂಗ ಸಾಧನೆಯ ಆತ್ಮಕಥೆಯನ್ನು ಬಿಂಬಿಸುವ ಸಾಹಿತ್ಯ ಅವರದು. ಭಕ್ತಿಯೆ ಮೈವೆತ್ತು ಬಂದ ಭಾವುಕ ಹೃದಯದ ವ್ಯಕ್ತಿತ್ವ ಷಡಕ್ಷರಿಗಳದು. ಅವರ ಹಾಡುಗಳಲ್ಲಿ ತಾತ್ವಿಕ ಸಿದ್ಧಾಂತ, ಆಚರಣೆಯ ಮಾರ್ಗಗಳೆರಡರ ಸುಂದರ ಸಮನ್ವಯ ಸಾಧಿಸಿದೆ. ಸಾಧಕನ ಅಧ್ಯಾತ್ಮಿಕ ವಿಕಾಸದ ತಳಹದಿಯನ್ನು ವ್ಯಕ್ತಪಡಿಸುವ ಷಟ್‌ಸ್ಥಲ ವೀರಶೈವ ಸಾರಸರ್ವಸ್ವವನ್ನು ಒಳಗೊಂಡಿವೆ. ಶಿವಶರಣರ ಸತಿಪತಿಭಾವದ ಮಧುರಭಕ್ತಿಯ ಪರಾಕಾಷ್ಠೆ ಮಡುಗಟ್ಟಿ ನಿಂತಿದೆ. ಶರಣರ ಆಚಾರ ವಿಚಾರ ಸಂಸ್ಕೃತಿಗಳ ಪ್ರಭಾವ ಪರಿಣಾಮ ಅಚ್ಚಳಿಯದೆ ಅಚ್ಚೊತ್ತಿವೆ.

ಮುಪ್ಪಿನ ಷಡಕ್ಷರಿಗಳ ಜೀವನ ಸಾಧನೆಗಳ ವಿಚಾರವಾಗಿ ಖಚಿತವಾಗಿ ತಿಳಿಯುವ ಆಧಾರಗಳು ಕಡಿಮೆ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು, ಅವರು ತಪಸ್ಸುಗೈದ ಶಂಭುಲಿಂಗನ ಬೆಟ್ಟದಲ್ಲಿಯೆ ಸ್ವಲ್ಪಕಾಲ ವಾಸವಾಗಿದ್ದರು ಎನ್ನುವ ವಿಚಾರವೂ ಇದೆ. ಹೈದರಅಲಿ ಶಾಸನ ಹಾಗೂ ಮಾದೇಶ್ವರ ಸಾಂಗತ್ಯ ಕೃತಿಯ ಮೂಲಕ ತಿಳಿದುಬರುವಂತೆ ಸುತ್ತೂರು, ವಂಡರಬಾಳು, ಕುಂತೂರು, ನಂಜನಗೂಡು ಹಾಗೂ ಎರೆಗಂಬಳಿ ಈ ಐದು ಊರುಗಳಲ್ಲಿ ಇದ್ದ ಐದುಮಠಗಳು ಪಂಚಮಠಗಳೆಂದು ಪ್ರಸಿದ್ಧಿ ಪಡೆದಿದ್ದವು. ಮುಪ್ಪಿನ ಷಡಕ್ಷರಿಗಳು ಎರೆಗಂಬಳಿಮಠದವರೆಂದು ದಿ|| ಬಿ. ಶಿವಮೂರ್ತಿ ಶಾಸ್ತ್ರಿಗಳು ಸೂಚಿಸಿರುವರು.

ಎರೆಗಂಬಳಿಯ ಗುರುಸಿದ್ಧ ಶಿವಯೋಗಿಗಳು ಕ್ರಿಯಾಪುರುಷರು. ಲಿಂಗಭೋಗೋಪ ಭೋಗಿಗಳು. ಹಿಂದೆ ಒಂದು ಬಾರಿ ೧೨ವರ್ಷ ಅನಾವೃಷ್ಟಿಯಿಂದ ಬರಗಾಲ ಎದುರಿಸಬೇಕಾದ ಸಂದರ್ಭ ಬಂದಾಗ ಸಿದ್ದಲಿಂಗ ಶಿವಯೋಗಿಗಳು ತಮ್ಮ ತಪೋಬಲದಿಂದ ಕರಿಯ ಕಂಬಳಿ ಬೀಸಿ ಮಳೆ ತರಿಸಿ ಊರನ್ನು ಸಂತೃಪ್ತಗೊಳಿಸಿದ್ದರಿಂದ ಅವರಿಗೆ ಕರಿಯ ಕಂಬಳಿ > ಎರೆಗಂಬಳಿ ಹೆಸರು ಬಂದುದನ್ನು ಡಾ. ಗದ್ದಗಿಮಠರು ತಮ್ಮ ‘ಜಾನಪದ ಗೀತೆಗಳು’ ಕೃತಿಯಲ್ಲಿ ತಿಳಿಸಿರುವರು. ಆ ಎರೆಗಂಬಳಿಯ ಗುರುಸಿದ್ಧ ಶಿವಯೋಗಿಗಳು ಮುಪ್ಪಿನ ಷಡಕ್ಷರಿಗಳ ದೀಕ್ಷಾಗುರುಗಳು. ತಮ್ಮ ವೈಯಕ್ತಿಕದ ಹಾಗೂ ತಂದೆ ತಾಯಿಗಳ ಪ್ರಸ್ತಾಪ ಮಾಡದ ಷಡಕ್ಷರಿಗಳು ತಮ್ಮ ಒಂದು ಹಾಡಿನಲ್ಲಿ ಗುರು ಸಿದ್ಧಲಿಂಗ ಶಿವಯೋಗಿಗಳವರನ್ನು ಮನದುಂಬಿ ಕೊಂಡಾಡಿರುವರು:

ಎರೆಗಂಬಳಿಯ ಸಿದ್ಧ

ವರಲಿಂಗ ನಾಮದಿಂ

ಹರಣೆ ನೀನೆನಗೆ ದೀಕ್ಷೆಯ ಮಾಡಿದೆ

ವರ ಷಡಕ್ಷರಿಯ ದೇ

ವರ ನಾಮದಿಂದೆನಗೆ

ಅರುಹಿದಿರಿ ಶಿವಶಾಸ್ತ್ರದನುಭವವನು|

ಪ್ರಸ್ತುತ ಪದ್ಯ ಗುರುಶಿಷ್ಯರ ನೇರ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸಿದೆ. “ಷಡಕ್ಷರಿಯ ದೇವರ ನಾಮದಿಂದೆನಗೆ ಅರುಹಿದಿರಿ” ಎಂದು ಹೇಳಿರುವದನ್ನು ನೋಡಿದರೆ ಇವರ ಮೊದಲ ಹೆಸರು ಬೇರೆ ಇದ್ದಿರಬೇಕೆಂದೂ ಗುರುಕರುಣೆಯ ನಂತರ ಷಡಕ್ಷರಿ ಎಂಬ ಹೆಸರನ್ನು ಪಡೆದಿರಬೇಕೆಂದೂ ಹೇಳಲು ಅವಕಾಶವಿದೆ.

ಕಾಲಾಂತರದಲ್ಲಿ ಮುಪ್ಪಿನ ಷಡಕ್ಷರಿಗಳು ಎರೆಗಂಬಳಿಯ ಮಠಕ್ಕೆ ಅಧಿಪತಿಗಳಾಗಿದ್ದರೆಂದು ತೋರುತ್ತದೆ. ಎರೆಗಂಬಳಿ ಗ್ರಾಮ ಮೈಸೂರುಜಿಲ್ಲೆ ಯಳಂದೂರು ತಾಲೂಕಿನಲ್ಲಿದೆ. ಇಂದಿಗೂ ಅಲ್ಲಿ ಷಡಕ್ಷರಿಗಳ ಗದ್ದುಗೆ ಇದ್ದು ಭಕ್ತಾದಿಗಳಿಗೆ ಜಾಗ್ರತಸ್ಥಾನವಾಗಿದೆ. ಇದಕ್ಕೆ ತುಸುದೂರದಲ್ಲಿ ಶಂಭುಲಿಂಗನ ಬೆಟ್ಟವಿದೆ. ಇದು ನಿಜಗುಣ ಶಿವಯೋಗಿಗಳು ತಪೋನುಷ್ಠಾನಗೈದ ಪವಿತ್ರಕ್ಷೇತ್ರ. ಮುಪ್ಪಿನ ಷಡಕ್ಷರಿಗಳು ತಪಸ್ಸು ಕೈಕೊಂಡ ಒಂದು ಗವಿ ಅಲ್ಲಿದ್ದು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ತಮ್ಮ ಕೃತಿಗಳಲ್ಲಿ ಹೆಸರಿಸದೆ ಹೋಗಿದ್ದು ಸಂಶಯಕ್ಕೆ ಅವಕಾಶವನ್ನುಂಟು ಮಾಡಿವೆ.

ಮುಪ್ಪಿನ ಷಡಕ್ಷರಿಗಳ ಕಾವ್ಯ ‘ಷಡಕ್ಷರಿಲಿಂಗ’ ಅಂಕಿತದಲ್ಲಿ ಹಾಡಿರುವ ಅನುಭಾವದ ಪದಗಳು ಶಿವಾಷ್ಟಕ, ಶಿವಯೋಗಾಷ್ಟಕಗಳು ಕ್ರಮವಾಗಿ ಶಿವಪೂಜಾ ವೈಭವ, ಶಿವಯೋಗದ  ಐಸಿರಿಗಳನ್ನು ವರ್ಣಿಸುವ ಅಷ್ಟಕಗಳಾಗಿವೆ. ಇವೆಲ್ಲ ಮೂಲತಃ ತತ್ವಪದಗಳೇ ಆಗಿದ್ದು ಒಂದೆಡೆ ಸಂಗ್ರಹಿಸಿರುವ ಸಂಗ್ರಹಕಾರರು ‘ಸುಬೋಧಸಾರ’ ಎಂದು ಹೆಸರಿಸಿರುವರು. ತಾಳೇಗರಿಯ ಪ್ರತಿಗಳಲ್ಲಿ ಮುಪ್ಪಿನ ಷಡಕ್ಷರಿಸ್ವಾಮಿಗಳವರ ‘ಸ್ವರವಚನಗಳು’ ಮುಪ್ಪಿನ ಷಡಕ್ಷರಿಗಳ ‘ಕೈವಲ್ಯಪದಗಳು’ ಎಂದು ಇವೆ.

ಮುಪ್ಪಿನ ಷಡಕ್ಷರಿಗಳವರ ತಾತ್ವಿಕ ಪದಗಳ ಸಂಗ್ರಹವನ್ನು ೧೯೪೦ರಲ್ಲಿ ಹರ್ಡೆಕರ ಮಂಜಪ್ಪನವರ ಪ್ರಾಮಾಣಿಕ ಪ್ರಯತ್ನದಿಂದಾಗಿ ‘ಸುಬೋಧಸಾರ’ ಎಂಬ ಗ್ರಂಥದಲ್ಲಿ ಸಮಗ್ರ ಸಂಗ್ರಹರೂಪದಲ್ಲಿ ಪ್ರಕಟಿಸಿದರು. ಇತ್ತೀಚೆಗೆ ೧೯೮೭ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಮೈಸೂರಿನಿಂದ ‘ಮುಪ್ಪಿನ ಷಡಕ್ಷರಿಗಳ ಕೈವಲ್ಯಪದ (ಸುಬೋಧಸಾರ)’ ಎಂಬ ಹೆಸರಿನಿಂದ ಶಾಸ್ತ್ರಶುದ್ಧವಾದ ೮೭ ಪದಗಳ ಸಂಗ್ರಹದೊಂದಿಗೆ ಪ್ರಕಟಿಸಿದೆ. ಧಾರವಾಡದ ಮುರುಘಾಮಠದವರು ಈ ಕೃತಿಯನ್ನು ಹೆಚ್ಚಿನ ಬದಲಾವಣೆ ಇಲ್ಲದೆ ಅಷ್ಟೇ ಪದಗಳಿಂದ ಮತ್ತೊಮ್ಮೆ ಮುದ್ರಿಸಿರುವರು.

ನಿಜಗುಣರದ್ದು ಅದೈತಪ್ರಧಾನ ಜ್ಞಾನಮಾರ್ಗವಾಗಿದ್ದರೆ, ಷಡಕ್ಷರಿಗಳದ್ದು ಶರಣಸತಿ ಲಿಂಗಪತಿ ಭಾವ ಪ್ರಧಾನವಾದ ಭಕ್ತಿಮಾರ್ಗ, ನಿಜಗುಣರ ಹಾಡು ಉಪನಿಷತ್ತು ಆಗಮಾದಿಗಳ ಪ್ರಭಾವದಿಂದ ಕೂಡಿದ್ದು ಸಾಧಕ ಚೇತನವೊಂದರ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸಿಕೊಡುತ್ತವೆ. ನಿಜಗುಣರದು ಮುಖ್ಯವಾಗಿ ವೇದಾಂತದರ್ಶನ. ಆದರೆ ಮುಪ್ಪಿನ ಷಡಕ್ಷರಿಗಳದು ಲಿಂಗನಿಷ್ಠೆಯಿಂದ ಒಡಗೂಡಿದ ಅದಮ್ಯ ಚೇತನ, ಗಂಭೀರ ತತ್ವಗಳನ್ನೊಳಗೊಂಡ ಷಡಕ್ಷರಿಯ ಪದಗಳು ಅತ್ಯಂತ ಸುಲಭ, ಸರಳ, ಸುಲಲಿತ ಶೈಲಿಯಿಂದೊಡಗೂಡಿದ ಅನುಭಾವಬಂಧ. ಮಾನವೀಯತೆ, ಅನುಕಂಪ,  ಮಾನವಧರ್ಮದ ಹೆಚ್ಚುಗಾರಿಕೆ ಸಾರುವ, ವೈರಾಗ್ಯ ಬೋಧನೆಯಿಂದೊಡಗೂಡಿದ ಮಾನವ ಜೀವಿತ ರಹಸ್ಯ ಚಿಂತನೆಯಂತಹ  ಗಹನವಿಷಯಗಳ ಪ್ರಸ್ತಾಪ ಅತ್ಯಂತ ಸುಲಲಿತವಾಗಿ ಹಾಡುಗಳಲ್ಲಿ ಒಡಮೂಡಿ ಬಂದಿವೆ.

ಷಡಕ್ಷರಿಯ ಹಾಡುಗಳಲ್ಲಿ ಅಧ್ಯಾತ್ಮಿಕ ಸೌಂದರ್ಯ:

ಆಡುವುದು ಶಿವರೂಪ

ಹಾಡುವುದು ಶಿವನುಡಿಯು

ಮಾಡುವುದು ನಿತ್ಯ ಶಿವಪೂಜೆ

ಶರಣರಿಗೆ ಈಡು ಜಗದೊಳಗೆ

ಏನುಂಟು ದೊರೆಯೆ?

ಬಹುರೂಪಿ ಚೌಡಯ್ಯಗಳ ಶಿವನುಡಿಯಂತೆ ತಮ್ಮ ಜೀವನವನ್ನು ಅಳವಡಿಸಿಕೊಂಡವರು ಮುಪ್ಪಿನ ಷಡಕ್ಷರಿಗಳು. ಶಿವಾನುಭವಿಗಳು. ಲಿಂಗಾಸಕ್ತರು. ಅವರ ಹಾಡುಗಳ ಗುಣಲಕ್ಷಣವನ್ನು ಗಣನೆಗೆ ತೆಗೆದುಕೊಂಡರೆ ಸಿದ್ಧಯ್ಯ ಪುರಾಣಿಕರು ಮುನ್ನುಡಿಯಲ್ಲಿ ವ್ಯಕ್ತಪಡಿಸಿದಂತೆ ‘ತಾದಾತ್ಮ್ಯ ತನ್ಮಯತೆ, ಪರವಶತೆ, ವಿರಳತೆ ಭಕ್ತಿಯ ಆವೇಶ, ಅತಿಸಲುಗೆ, ಸಮರಸಭಾವ, ಅನನ್ಯಶರಣತೆ, ವೈರಾಗ್ಯದ ಉಜ್ವಲತೆ, ಇವೇ  ಮುಪ್ಪಿನಾರ್ಯರ ಹಾಡುಗಳ ಹೆಗ್ಗುರುತು ಹಾಗೂ ವೈಶಿಷ್ಟ್ಯಗಳೆನ್ನಬೇಕು.  ಸರಳತೆ, ಸಂಕ್ಷಿಪ್ತತೆ, ತಾತ್ವಿಕದರ್ಶನದಿಂದ ಪ್ರತಿಯೊಬ್ಬ ವ್ಯಕ್ತಿಯ ಹೃದಯ ತಟ್ಟುವ ಮುಟ್ಟುವ ಅವರ ಮನವನ್ನು ಬೆಳಗಿಸುವ ಅಂಶಗಳು ಕಂಡುಬರುತ್ತವೆ. ಸಾಧಕರ ಹೃದಯದ ಶಿವಭಾವದ ಬೆಸುಗೆಯಲ್ಲಿ ಆತ್ಮಾನುಭವದ ರಸವನ್ನು ಉಸಿರಿಸಿದವರು  ಮುಪ್ಪಿನ ಷಡಕ್ಷರಿಗಳು.

ಪ್ರಸ್ತುತ ಲೇಖನದ ಪರಿಮಿತಿಯನ್ನು ಗಮಿನಿಸಿ ಕೆಲವು ಹಾಡುಗಳ ಸಮಾಲೋಚನೆಯ ಮೂಲಕ ಷಡಕ್ಷರಿಗಳ ಜೀವನ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಗುರುತಿಸಬಹುದಾಗಿದೆ. ಅವರ ದಿವ್ಯತತ್ವವನ್ನು ಅರುಹುವ ಒಂದು ಹಾಡು:

ಅವರವರ ದರುಶನಕ

ಅವರವರ ವೇಷದಲ್ಲಿ

ಅವರವರಿಗೆಲ್ಲ ಗುರು ನೀನೊಬ್ಬನೆ

ಅವರವರ ಭಾವಕ್ಕೆ

ಅವರವರ ಪೂಜೆಗಂ

ಅವರವರಿಗೆಲ್ಲ ಶಿವ ನೀನೊಬ್ಬನೆ||

ಹೋರಾಟವಿಕ್ಕಿಸಲು

ಬೇರಾದೆಯಲ್ಲದೆ

ಬೇರುಂಟೆ ಜಗದೊಳಗೆ ನೀನಲ್ಲದೆ

ಆರು ಅರಿಯರು ನೀನು

ಬೇರಾದ ಪರಿಗಳನ್ನು

ಮಾರಾರಿ ಶಿವ ಷಡಕ್ಷರಿಲಿಂಗವೆ||

ಸಕಲ ಜನಮನವನ್ನು ಮುಟ್ಟಿ ಸ್ಪಂದಿಸಬಲ್ಲ ದೈವೀಗುಣ ಮುಪ್ಪಿನ ಷಡಕ್ಷರಿಗಳ ಹಾಡುಗಳಲ್ಲಿವೆ. ಭಾವ ತುಂಬಿ ತುಳುಕುವ ಸರಳ ಸುಂದರ ಅಭಿವ್ಯಕ್ತಿ ಇಲ್ಲಿ ನೆಲೆನಿಂತಿದೆ ಶಿವಕಾರುಣ್ಯಕ್ಕಾಗಿ ಹಂಬಲಿಸಿ ಸಂಸಾರದ ನಶ್ವರತೆಯಲ್ಲಿ ಶಾಶ್ವತವಾದುದನ್ನು ಕಂಡುಕೊಳ್ಳುವ ಸಾಧಕನ ಜೀವ ಎಚ್ಚರಿಕೆಯ ಕಡೆಗೆ ತಿರುಗುವ ಸೂಕ್ಷ್ಮ ದೃಷ್ಟಿಕೋನ ಇಲ್ಲಿ ಒಡಮೂಡಿದೆ.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದುದು ಅವರ ಆತ್ಮಶೋಧನೆ, ಮಾನಸಿಕ ಚಿಂತನೆ, ಸ್ವಾಭಿಮಾನ, ವಚನಕಾರರದು ಈ ನಿಟ್ಟಿನಲ್ಲಿ ನವ್ಯಪ್ರಜ್ಞೆ ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ಅವರವರ ದರುಶನ, ವೇಷ,ಭಾವ, ಪೂಜೆಗೆ ಒಲಿಯುವಂತೆ  ಎರಡಳಿದು ಒಂದಾದಲ್ಲಿ ಅವನ ದರ್ಶನವೆಂಬ ಸೂಕ್ಷ್ಮ ನುಡಿಮುತ್ತನ್ನು ವ್ಯಕ್ತಪಡಿಸಿರುವರು. ಶರಣರು ತಮ್ಮ ಸಾಧನೆಯ ಮಾರ್ಗದಲ್ಲಿ ಅವಲಂಬಿಸಿದುದು ತಾತ್ವಿಕ ಹಿನ್ನೆಲೆಯನ್ನು ಅದನ್ನು ತಾತ್ವಿಕ ಜಿಜ್ಞಾಸೆಯ ಮಟ್ಟದಲ್ಲಿ ನಿಲ್ಲಿಸದೆ ಅನುಭಾವದಿಂದ ಆನಂದದತ್ತ ಮುನ್ನಡೆಸಿದರು. ಪ್ರಧಾನವಾಗಿ ಅವರು ಅನುಸರಿಸಿದುದು ಅನುಭಾವಮಾರ್ಗ, ಅದರ ಅವಲಂಬನೆಗೆ ಹಂದರವಾಗಿ ವೀರಶೈವ ಸಿದ್ಧಾಂತ ಪರಿಣಮಿಸಿತು. ಅದರಲ್ಲೂ ವೀರಶೈವರ ಷಟ್‌ಸ್ಥಲಮಾರ್ಗ ಅವರಿಗೆ ಹೆಚ್ಚಾಗಿ ಹಿಡಿಸಿತು. ಭಕ್ತಿ ಜ್ಞಾನ ಕ್ರಿಯೆಗಳು ಇಲ್ಲಿ ಮುಪ್ಪುರಿಗೊಂಡು  ಸಾಮರಸ್ಯಕ್ಕೇರಿಸುವ ನಿಚ್ಚಣಿಕೆಗಳನ್ನು ನಿರ್ಮಿಸಿವೆ. ಶರಣರ ಸಾಧನೆಯಿಂದ ಷಟ್‌ಸ್ಥಲ ಪರಿಪೂರ್ಣತೆಯೊಂದಿಗೆ ಹೊಸಕ್ರಾಂತಿಯನ್ನು ಪಡೆಯಿತು. ಈ ಚೌಕಟ್ಟಿನಲ್ಲಿ ಮುಪ್ಪಿನ ಷಡಕ್ಷರಿಗಳ ಅನುಭಾವ ಪದಗಳ ಅಧ್ಯಯನ ಇನ್ನೂ ವ್ಯವಸ್ಥಿತವಾಗಿ ನಡೆಯಬೇಕಿದೆ.

ಆರ್ತಭಾವ ಸಾಧಕನ ಆರಂಭದ ಒಂದು ಸ್ಥಿತಿಯೆಂಬುದನ್ನು ಒಂದಲ್ಲ ಒಂದು ರೂಪದಲ್ಲಿ ಜಗತ್ತಿನ ಎಲ್ಲ ಸಾಧಕರ ಜೀವನದಲ್ಲಿಯೂ ಕಾಣಬಹುದು. ಬಸವಣ್ಣನವರ “ಅಯ್ಯಾ ಅಯ್ಯಾ ಎಂದು ಕರೆಯುತ್ತಲಿದ್ದೇನೆ, ಓ ಎನ್ನಲಾಗದೇ ಅಯ್ಯ, ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕ ದೂರನ’ ಎಂದು ಮನದ ಹಂಬಲವನ್ನು ವ್ಯಕ್ತಪಡಿಸಿದ್ದು ಇದೇ ಮನಸ್ಥಿತಿಯಲ್ಲಿ, ನಡೆ ಮತ್ತು ನುಡಿಗಳ ಸಮನ್ವಯಕ್ಕೆ ಅನುಭಾವಿಗಳಿತ್ತ ಮಹತ್ವ ಹೆಚ್ಚಿನದು. ನುಡಿದಂತೆ ನಡೆವುದನ್ನೆ ಅವರು ತಮ್ಮ  ಬದುಕಿನಲ್ಲಿ ರೂಢಿಸಿಕೊಂಡು ಬಂದವರು. ದಿಟವ ನುಡಿವುದು ನುಡಿದಂತೆ ನಡೆವುದು’ ಈ ಪರಿಶುದ್ಧ ಸಾಧನೆಗೆ ನೈತಿಕ ನಿಷ್ಠೆಬೇಕು. ಅಂತರಂಗದ ಅರಿವು ಬಹಿರಂಗದ ವ್ಯಾಪಾರಕ್ಕೆ ಕಡಿವಾಣ ಹಾಕುವ ಯಂತ್ರ, ಅಂತರಂಗದ ಆತಶುದ್ಧಿ ಅವರ ಅರಿವಿಗೆ ಪೂರಕವೆನಿಸಿತ್ತು.

ಇಂಥ ಸಂದರ್ಭದಲ್ಲಿ ಸಾಧಕನಿಗೆ ಆತ್ಮಜಾಗೃತಿ ತುಂಬ ಮುಖ್ಯ. ವಿಶ್ವಾಸ ಮತ್ತು ಕ್ರಿಯೆಗಳು ಭಕ್ತಸ್ಥಲದ ಮುಖ್ಯ ಲಕ್ಷಣಗಳು, ಪಾಪಸಮೂಹವನ್ನು ಕಳೆದುಕೊಂಡು ಶುದ್ಧಾಂತಃಕರಣನಾದವನು ಪಿಂಡಸ್ಥಲಯೋಗ್ಯನಾಗುತ್ತಾನೆ. ಅವನಲ್ಲಿ ಶಿವತತ್ವ   ಸುಪ್ತವಾಗಿ ಅಡಗಿರುತ್ತದೆ. ತಾನು ಶಿವಸ್ವರೂಪನೆಂದು ಶಿವನಾಗಿಯೆ ಶಿವನನ್ನು ಪೂಜಿಸುವುದು. ಹೀಗೆ ತನ್ನ ಸ್ವಸ್ವರೂಪವನ್ನು ತತ್ವತಃ ತಿಳಿದ ಭಕ್ತನಿಗೆ ವಿಸೃಮತಿಯೊಂದು ಈ ಮರೆವೆಗೆ ಕಾರಣವಾಗಿ ಸಂಸಾರದ ವಿಷಯದಲ್ಲಿ ಜಿಹಾಸೆ ಸಹಜವಾಗಿಯೇ ಹುಟ್ಟುತ್ತದೆ. ಇದರ ಒಂದು ಹಂತವನ್ನು ‘ಸಂಸಾರಹೇಯಸ್ಥಲ’ ಎಂದು ಕರೆದರು ಶರಣರು.ಇದು ಕೇವಲ ತಿರಸ್ಕಾರದ ಮಾರ್ಗವಲ್ಲ: ಹೇಯವಾದ ಸಂಸಾರವನ್ನು ಉಪಾದೇಯವಾಗಿಸಬಹುದಾದ ಜೀವನ ಕೌಶಲವನ್ನು ಕಂಡುಕೊಳ್ಳುವ ಮಾರ್ಗವೂ ಹೌದು, ಶಿವಭಾವವನ್ನು ಆಹ್ವಾನಿಸುತ್ತ ಮನಸ್ಸನ್ನು ಆ ದೈವೀನಿಲುವಿಗೆ ತಂದುಕೊಳ್ಳಬೇಕೆಂಬುದನ್ನು ಹೇಳುವ ಕಳಕಳಿಯ ಅಭಿವ್ಯಕ್ತಿ ಮುಪ್ಪಿನ ಷಡಕ್ಷರಿಗಳದು.

ಹುಟ್ಟು ಸಾವುಗಳ ಭವಚಕ್ರದಲ್ಲಿ ಸಿಲುಕಿಕೊಳ್ಳದೆ ಅದರಿಂದ ಪಾರುಗಾಣುವಲ್ಲಿ

‘ಧರೆಯತ್ತಲೆನ್ನನ್ನು ಬರಿಸದಿರು ಸದ್ಗುರುವೆ ಧರೆಯ ಪಾಪದೊಳು ನಾ ಜನಿಸಲಾರೆ’

ಎಂದು ಸಂಸಾರದ ಜಂಜಡದ ಬಗ್ಗೆ ಜಿಗುಪ್ಸೆ ಪಡುವ ಸಾಧಕ ಇದನ್ನು ಬಿಟ್ಟು ಓಡಿಹೋಗಬೇಕೆಂಬುದಿಲ್ಲ. ಮನುಷ್ಯ ಜೀವನಕ್ಕೆ ಇದು ತ್ಯಾಜ್ಯವೆಂಬ ಭಾವವಲ್ಲ ಇದನ್ನು ಮೀರಿ ಮುನ್ನಡೆಯಬೇಕಾದರೆ ನಿರ್ಲಿಪ್ತ ಮನೋಭಾವ ಅಷ್ಟೇ ಅವಶ್ಯಕ. ಪರಮಾತ್ಮನ ಕಾರುಣ್ಯ ಪಡೆಯುವ ಮಾರ್ಗದಲ್ಲಿ ಮುನ್ನಡೆಯುವಾಗ ಆತ್ಮವೀಕ್ಷಣೆ ಅದರ ಮೊದಲ ಮೆಟ್ಟಿಲು, ಸಾಧಕಲೋಕದ ಆಕರ್ಷಣೆಯಿಂದ ವಿಮುಖವಾಗಿ ಅಂತರ್ ನಿರೀಕ್ಷಣೆಯ ನಿಷ್ಠೆಯನ್ನು ಕೈಗೊಳ್ಳಬೇಕಾಗುತ್ತದೆ

ʼʼ ಮಾಯೆ ನೀನು ಚಲುವೆ, ಕಾಯ ಮುನ್ನವೆ ಚೆಲುವು,

ಹೇಯವಾಯಿತು. ಒಳಗನರಿತ ಬಳಿಕʼʼ

ಎಂದು ಮಾಯೆಯನ್ನು ಕುರಿತು ಚಿಂತಿಸಿ ಅದರ ಹೇಯತನಕ್ಕೆ ನಾಚಿ ಹಿಂದೆ ಸರಿದಿದ್ದಾರೆ. ನಶ್ವರವಾದ ಮೌಲ್ಯಗಳ ತಾತ್ಕಾಲಿಕ ದೃಷ್ಟಿಯಿಂದ ಪರಿಮಿತಗೊಳ್ಳದೆ, ಶಾಶ್ವತ, ಚಿರಕಾಲ ಬಾಳುವ ಮೌಲ್ಯಗಳ ಅದಮ್ಯ ಅಭೀಪ್ಸೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ಮಾಡಿದ್ದೂ ಉಂಟು. ಇದಕ್ಕೆ ಪ್ರೇರಣೆ ಈ ಲೌಕಿಕಸುಖವನ್ನು ಕುರಿತ ಅತೃಪ್ತ ಮನೋಭಾವ. ಇಲ್ಲಿನ ಸುಖಸಾಧನಗಳ ವಿಚಾರದಲ್ಲಿ ಅತೃಪ್ತಿ ಮೂಡದ ಹೊರತು ಇವುಗಳಾಚೆಯ ಸುಖದ ಅಭೀಪ್ಸೆ ತೀವ್ರವಾಗುವುದಿಲ್ಲ. ಆದುದರಿಂದ ಇವುಗಳ ವಿಚಾರದಲ್ಲಿ ಅತೃಪ್ತಿಯನ್ನು ಕಂಡುಕೊಳ್ಳುವಂತಹ ಆತ್ಮಜಾಗೃತಿಯನ್ನು ಪ್ರತಿಜೀವಿಗಳಿಗೆ ಬೋಧಿಸುವ ಪ್ರತಿಜ್ಞೆ ಷಡಕ್ಷರಿಗಳವರ ವಚನಗಳಲ್ಲಿ ನೆಲೆನಿಂತಿವೆ.

ತನ್ನ ಕಾಯವನ್ನೇ ಶಿವನ ಉನ್ನತಾಲಯ ಮಾಡಿ ತನ್ನ ಸರ್ವಾಂಗಗಳನ್ನು ಮನಪ್ರಾಣಗಳನ್ನು ಚನ್ನ ಷಡಕ್ಷರಿಗೆ ಸಮರ್ಪಿಸಿದೆ:

ಎನ್ನ ಕಾಲುಗಳೆರಡು ಉನ್ನತ ಕಂಭವೈ

ಎನ್ನ ಒಡಲೇ ನಿನಗೆ ಶಿವಾಲಯ, ಎನ್ನ ತೋಳುಗಳೆರಡು

ಉನ್ನತದ ವದನಕ್ಕೆ ಎನ್ನ ಶಿರ ಸೌವರ್ಣ ಕಲಶವಯ್ಯ

ಎನ್ನ ಸರ್ವಾಂಗವೆನ್ನ ನಿನ್ನ ಪರಿಣಾಮಕ್ಕೆ ಚೆನ್ನಾಗಿ ಸಲಿಸುವೆನು ಎಲೆ ಲಿಂಗವೆʼ

ತನ್ನ ದೇಹವನ್ನೇ ಇಷ್ಟಲಿಂಗಕ್ಕೆ ಎಡೆಮಾಡುವ ಸರ್ವಸಮರ್ಪಣಾಭಾವ ಇಲ್ಲಿ ಸುವ್ಯಕ್ತವಾಗಿದೆ.

ಶಿವಭಾವ ನೆಲೆಗೊಂಡ ಬಳಿಕ:

ಶಿವಭಾವದ ನೆಲೆಯನ್ನು ಸಾಧಿಸಲು ತಾರುಣ್ಯದಲ್ಲಿಯೆ ತೀವ್ರ ವೈರಾಗ್ಯದಿಂದ ವಿರಕ್ತಾಶ್ರಮ ತಳೆದು ಯೋಗಸಾಧನೆಯಲ್ಲಿ ತೊಡಗಿದವರು ಷಡಕ್ಷರಿಗಳು. ಆಧ್ಯಾತ್ಮದ ಸಕಲ ಹಂತಗಳನ್ನು ಏರಿ ಪ್ರತ್ಯಕ್ಷಾನುಭವವನ್ನು ಪಡೆದವರು. ಆಂತರಿಕ ಸಾಧನೆಯ ಆಧ್ಯಾತ್ಮಿಕ ಬೆಳಸಿನ ಅನುಭಾವದೊಂದಿಗೆ ಸಂಗತಗೊಂಡವರು, ಕುಡಿಯೊಡೆದು ಬೆಳೆಯುವ ಪೈರಿನಂತೆ ಸಹಜವಾಗಿಯೆ ಮೂಡಿ ಬಂದುದು ಅವರ ತತ್ವವಲ್ಲರಿ:

‘ಧರೆಯ ಸುಖದ ಭೋಗವೆನಗೆ ಹರಿದು ಹೋಗಲಿ, ಒಡೆದ ಗಡಿಗೆ

 ಹರಕು ಜೋಳಿ ಎಡದ ಕೈಯೊಳು ಮುರಿದ ಕೋಲು ಇಷ್ಟೇ ಸಾಕು’

ಎಂಬ ಅವರ ಒಂದು ಹಾಡು ಷಡಕ್ಷರಿಗಳ ಅಸೀಮ ವೈರಾಗ್ಯಭಾವವನ್ನು ಬಿಂಬಿಸಿದೆ. ಇಲ್ಲಿ ಮುಖ್ಯವಾಗಿ ಕಾಣುವುದು ಅವರ ವೈರಾಗ್ಯದತ್ತ ಒಲಿದ ತೀವ್ರವಾದ ಒಲವು, ಸಾಧನೆಯ ಎಲ್ಲ ಹಂತಗಳಲ್ಲಿ ಇದು ತುಂಬ ಅವಶ್ಯಕ. ‘ತ್ಯಾಗಭೋಗ ಸಮನ್ವಯ’ ಅಥವಾ ‘ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಎಂಬ ಘೋಷಣೆಗಳು ದೇಹ ದಂಡನೆಯ ತೀವ್ರ ಸಂಯಮ  ನಿಯಮನಿಷ್ಠೆಗಳು ಅಗತ್ಯ.

 ದಂಡಿಸದೆ ದೇಹವನು ಖಂಡಿಸದೆ ಕರಣವನು ಉಂಡುಡು ಸ್ವರ್ಗಕೈದಲ್ಕೆ ಅದನೇನು ರಂಡೆಯಾಳುವಳೇ ? ಎಂದು ಸರ್ವಜ್ಞ ಹೇಳಿದ್ದು ಇದೇ ಅರ್ಥದಲ್ಲಿಯೆ. ಶರಣರ ತ್ಯಾಗಭೋಗ ಸಮನ್ವಯ ಸಂಯಮರಹಿತವಾದುದಲ್ಲ, ಆದರೆ ಈ ಸಂಯಮ ಕೃತಕವಾಗದೆ ಅಂತರಂಗದ ಅರಿವಿನಿಂದ ಉಂಟಾದ ಚಿತ್ತಶುದ್ಧಿಯಿಂದ ಬಂದುದು. ಇಲ್ಲಿ ಷಡಕ್ಷರಿಗಳು ಹೇಳುವ ವೈರಾಗ್ಯವೂ ಜೀವನವನ್ನು ಅರಿವಿನತ್ತ ತಿರುಗಿಸುವ ಎಚ್ಚರಿಕೆಯಿಂದ ಕೂಡಿದ್ದು, ಇಡೀ ಸೃಷ್ಟಿವಿನ್ಯಾಸವನ್ನೇ ದೂರದಿಂದ ನಿಂತು ನೋಡುವ ಸಾಕ್ಷಿಪ್ರಜ್ಞೆ ಇಲ್ಲಿ ಎಚ್ಚರಿಕೆಯಿಂದ ಕಾರ್ಯಮಾಡಿದೆ.

“ನಿನ್ನೊಳಗೆ ಕಾಲನಿಹ, ನಿನ್ನೊಳಗೆ ನೇಣು ಕತ್ತರಿಗಳಿಹವು, ನಿನ್ನೊಳಗೆ ವಿಷವಿಹುದು, ನಿನ್ನೊಳಗೆ ನರಕಗಳುಂಟು. ಛೀ ಮಾರಿ ಹೋಗತ್ತ’ ಎಂದು ಸಂಸಾರದ ಮೋಹ ಮಾಯೆಗಳನ್ನು ಹೀಗಳೆದು ಒಳಗನ್ನು ಅರಿಯುವ ಅಂತರ್ದೃಷ್ಟಿಯನ್ನು  ತೆರೆಯಬೇಕೆಂದು ಆ ದೇವದೇವನಲ್ಲಿ ಬಿನ್ನವಿಸಿಕೊಂಡಿರುವರು. ಈ ಲೋಕದ ನಾಮರೂಪ ಕ್ರಿಯಾತ್ಮಕವಾದ ಅರ್ಥವತ್ತಾದ ಚಿತ್ರವಿದು. ಇದನ್ನು ಎದುರಿಸುವಲ್ಲಿ ಅನೇಕ ವಿಫಲತೆಗಳನ್ನು ಮನಗಂಡಿದ್ದರೂ ಅದು ನಿರಾಶೆಯಿಂದ ಪ್ರೇರಿತವಾದ ನಿರಸನವಾಗಿರದೆ ಮಹದಾಶೆಯಿಂದ ಕೂಡಿದ ಆತ್ಮಜಾಗೃತಿಯಾಗಿದೆ.

ಸಾಧನೆ ದೃಢಗೊಂಡ ಬಳಿಕ ಒಂದು ನೈತಿಕ ನೆಲೆಗಟ್ಟಿನ ಮೇಲೆ ಅದು ಬೆಳೆಯುತ್ತದೆ. ಹಿಂದಿನ ಎರಡೂ ಸ್ಥಲಗಳಲ್ಲಿ ಕಾಣುವ ತಳಮಳ ಹಂಬಲ ಹಾರೈಕೆಗಳನ್ನು ದಾಟಿ ಗುರಿಯತ್ತ ಮುನ್ನಡೆಯುವ ನೈತಿಕನಿಷ್ಠೆ ಇಲ್ಲಿ ಕಾಣುತ್ತದೆ. ವೈರಾಗ್ಯವೆನ್ನುವುದು ಜೀವನವನ್ನು ಸಾಗಿಸುವ ಹೇಡಿಗಳ ಮುಖವಾಡವಾಗಬಾರದೆನ್ನುವ ಅಭಿಪ್ರಾಯ ಇಲ್ಲಿಯ ಅನೇಕ ಹಾಡುಗಳಲ್ಲಿ ಒಡಮೂಡಿವೆ. ಭಕ್ತಿ ಪರಮಪ್ರೇಮವಾದ ತುಂಬು ಹೃದಯದ ಪ್ರಾರ್ಥನೆಯಿಂದ ಮೊದಲ್ಗೊಂಡು ತತ್ವಚಿಂತನೆಯ ಅಂತರ್ ದೃಷ್ಟಿಯಿಂದ ದೀಪ್ತವಾದ ದರ್ಶನದವರೆಗೂ ಬೆಳೆಯಬೇಕು. ಪೂರ್ಣವಿಕಾಸದೃಷ್ಟಿಯನ್ನು ಪಡೆಯಬೇಕು. ಭಕ್ತಿಯ ಅಭಿವ್ಯಕ್ತಿ ಮೊದಲು ತನುವಿನಲ್ಲಿ, ಅನಂತರ ವಚನದಲ್ಲಿ ಈ ಎರಡಕ್ಕೂ ಹಿನ್ನೆಲೆಯಾಗಿದ್ದ ಮನದಲ್ಲಿಯೆ ಗಟ್ಟಿಗೊಂಡು ಬೆಳೆಯಬೇಕು. ಲಿಂಗಪೂಜೆಯಲ್ಲಿ ಅದು ಸಾಕ್ಷಾತ್ಕಾರಗೊಳ್ಳಬೇಕು:

ಎನ್ನ ಸಮತೆಯ ಜಲವು

ಎನ್ನ ಸದ್ಗುಣ ಗಂಧ

ಎನ್ನ ನಿತ್ಯತ್ವವೇ ಅಕ್ಷತೆಗಳು

ಎನ್ನ ಜ್ಞಾನವೆ ಪುಷ್ಪ

ಎನ್ನ ಭಕ್ತಿಯ ಬೋನ

ಎನ್ನ ಮನವೇ ನಿಮಗೆ ಪೂಜಾರಿಯು||

ಜೀವಭಾವವಳಿದು ಶಿವಭಾವ ನೆಲೆಗೊಂಡು ಶಿವಾನುಭವದ ನಿಲುವಿಗೇರುವ ಅಂತರಂಗದ ದಿವ್ಯಮಾರ್ಗವನ್ನು ಷಡಕ್ಷರಿ ಸಾಧಕರಿಗೆ ತಿಳಿಸಿರುವರು. ಚಿತ್ತಸಮತೆ ಎಂಬ ಜಲ, ಸದ್ಗುಣವೆಂಬ ಗಂಧ, ನಿತ್ಯತ್ವವೆಂಬ ಅಕ್ಷತೆಗಳು, ಜ್ಞಾನವೆಂಬ ಪುಷ್ಪ, ಭಕ್ತಿ ಎಂಬ ಬೋನ, ಮನಸ್ಸೆಂಬ ಪೂಜಾರಿಯಿಂದ ನೈವೇದ್ಯ ಮಾಡಿಸುವ ಶಿವಮಾನಸಪೂಜೆ. ಎಷ್ಟು ಅರ್ಥಪೂರ್ಣವಾಗಿದೆ ಈ ಶಿವಪೂಜೆ!

ಸಾಧಕನಿಗೆ ಶರಣಸ್ಥಲದಲ್ಲಿ ಆನಂದಭಕ್ತಿಯ ಆಚರಣೆಯಿಂದ ಪರಮಾತ್ಮನಲ್ಲಿನಿಶ್ಚಲಭಾವ, ಸತಿಪತಿಭಾವ ನೆಲೆಗೊಂಡು ಶಾಶ್ವತಸ್ಥಿತಿಯ ನಿಲವು ಮೂಡುತ್ತದೆ. ಅಧ್ಯಾತ್ಮಪಥದಲ್ಲಿ ನಡೆವ ಯಾತ್ರಿಕನ ಮನಸ್ಸಿನ ಹೊಯ್ದಾಟದ ಪ್ರತಿಯೊಂದು ನೆಲೆಯು ಇಲ್ಲಿ ಪ್ರಾಮಾಣಿಕ ಅನಿಸಿಕೆಗಳೆಂಬಂತೆ ಚಿತ್ರಿತವಾದುದೂ ಒಂದು ವಿಶೇಷವೆಂದೇ ಹೇಳಬೇಕು. ಮುಪ್ಪಿನ ಷಡಕ್ಷರಿಗಳ ಅಧ್ಯಾತ್ಮಿಕ ಕವನಗಳು ಶಿವಭಾವ ನೆಲೆಗೊಳ್ಳುವ ಸಂದರ್ಭದಲ್ಲಿ ಹೊರಹೊಮ್ಮಿದವು. ಹೀಗಾಗಿ ಮಾನವನ ಮನವನ್ನು ಮಹತ್ತಿಗೆ ತಿರುಗಿಸುವ ಅಲೌಕಿಕ ಸೌಂದರ್ಯ ಪಡೆದವು. ಶಿವಕಾರುಣ್ಯ ಪಡೆದು ನಿರಂತರ ಜಾಗೃತಿಯ ನೈತಿಕಸಾಧನೆಯಿಂದ ಹದಗೊಂಡು ಅಂತರ್ಮುಖ ಯೋಗಸಾಧನೆಯಲ್ಲಿ ಮುಂದುವರೆದಿವೆ. ಇಂಥ ದೃಢವಾದ ಸಾಧನೆ ಇಲ್ಲದೆ ಸಹಜವೈರಾಗ್ಯ ಸಾಧಿಸದೆ ಯಾವುದೋ ಆವೇಶದ ಕ್ಷಣದಲ್ಲಿ ಮೂಡಿ ಮರೆಯಾದರೆ ಅಂಥ ‘ವೈರಾಗ್ಯ ಇಲಿಯನ್ನು ಕಂಡು ಬೆಕ್ಕು ಪುಟನೆಗೆದಂತೆ’. ಇಂಥ ಅಲ್ಪ ಕ್ಷಣಿಕ ವೈರಾಗ್ಯವನ್ನು ಪ್ರಸೂತಿ ವೈರಾಗ್ಯ, ಪುರಾಣವೈರಾಗ್ಯ ಮತ್ತು  ಸ್ಮಶಾನವೈರಾಗ್ಯವೆಂದು ಹೇಳಿದವರು ಅನುಭಾವಿ ಸರ್ಪಭೂಷಣ ಶಿವಯೋಗಿಗಳವರು.

ಅವರ ದೃಷ್ಟಿಯಲ್ಲಿ ಭೋಗಜೀವನ ನಶ್ವರ, ಭೋಗಜೀವನದ ಬಿಡುಗಡೆ ಬಯಸಿ ತ್ಯಾಗಮಾರ್ಗದಲ್ಲಿ ಯೋಗ ಸಾಧನೆ ಕೈಕೊಂಡು ಮುಂದುವರೆಯಲು ತಿಳಿಸಿರುವರು:

ಧರೆಯ ಸುಖದ ಭೋಗವೆನಗೆ

ಹರಿದು ಹೋಗಲಯ್ಯ ನಿಮ್ಮ

ಚರಣಕಮಲದಲ್ಲಿ ಮನವು ಮಗ್ನವಾಗಲಿ||

ಎಂದು ಸಾರಿದ ಮುಪ್ಪಿನ ಷಡಕ್ಷರಿಗಳು ಅಲೌಕಿಕ ಪ್ರೇಮಕ್ಕೆ ಮನ `ಮಾರಿ ಕೊಂಡಿರುವರು. ಅಧ್ಯಾತ್ಮಪಥಿಕರಾಗಿ, ಸತ್ಯ ಸಂಶೋಧಕರಾಗಿ ಭೋಗ ಜೀವನ ಅಳಿಸಿ ಸದಾ ಪರಮಾತ್ಮನ ಪಾದಕಮಲದಲ್ಲಿ ಮನವನ್ನು ಮುಡಿಪಾಗಿರಿಸಿ ತಮ್ಮ ಬದುಕನ್ನೇ ಒಂದು ಸಂದೇಶವನ್ನಾಗಿರಿಸಿದ್ದಾರೆ.

 ಷಡಕ್ಷರಿಗಳದು ಶಿವಶರಣರ ಸತ್ಯಶುದ್ಧ ಆಚರಣೆಯಲ್ಲಿ ದೃಢನಂಬುಗೆ. ಆ ವಿಶ್ವಾಸವನ್ನು ಯಾರೂ ಅಲುಗಿಸುವಂತಿಲ್ಲ, ಶಿವಶರಣರೇ ಅವರಿಗೆ ತಂದೆತಾಯಿಗಳು, ಅವರೇ ಬಂಧುಬಳಗ, ತವರಿನ ಮಮತೆಯ ಕಣ್ಮಣಿಗಳು. ಆ ಮನೆತನದಲ್ಲಿ ಹುಟ್ಟಿದ ಹಿರಿಯಮಗಳು ತಾನು ಅಮಾವಾಸೆ ಕಳೆದು ಹುಣ್ಣಿಮೆ ಹತ್ತಿರ ಬಂದರೂ ಅವರು ತನ್ನನ್ನು ಕರೆಯ ಬರುವುದು ಬೇಡವೇ ? ಹೆಣ್ಣಿಗೆ ಹೆತ್ತ ತಾಯಿಯ ಮುಂದೆ ತನ್ನ ಸುಖ ದುಃಖಗಳನ್ನು ಹಂಚಿಕೊಳ್ಳುವ ಹೆಬ್ಬಯಕೆಯಂತೆ, ಪರಮಾತ್ಮನೆಂಬ ಮಾತೃಹೃದಯದ ದೇವತೆಯ ಮುಂದೆ ತನ್ನ ಲೌಕಿಕದ ಗಂಟನ್ನು ಬಿಚ್ಚಿಕೊಳ್ಳಬೇಕೆಂಬ ಕಳವಳ ಕಾತುರ ಮಡುಗಟ್ಟಿ ನಿಂತಿವೆ. ಇದೇ ಲೌಕಿಕ ಭಾವನೆ ವಿಕಸಿತಗೊಂಡು ಅಲೌಕಿಕಕ್ಕೆ ಉದಾತ್ತೀಕರಣಗೊಳ್ಳುವಂತೆ  ಲೌಕಿಕದಿಂದಲ್ಲವೇ ಪಾರಮಾರ್ಥಿಕ ಸುಖವನ್ನು ಮನಗಾಣುವುದು. ಇದನ್ನೇ ಶರಣರು  ಕರೆದುದು ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ವೆಂದು. ಈ ಕಮ್ಮಟದ ಸಾಧನೆಗೆ ಅವರು ಕೈಕೊಂಡ ಅತ್ಯಂತ ಸರಳ ಸಹಜ ಮಾರ್ಗ ಏನಿರಬಹುದೆಂದು ಗಮನಿಸೋಣವೇ ?

“ಅಕ್ಕನಾಗಮ್ಮ ಸತ್ಯಚಂಗಳೆ ಚಲ್ವೆ, ಅಕ್ಕರೆಯ ಮಹಾದೇವಿ ಸುಗ್ಗವ್ವೆಯ ಚಿಕ್ಕಕೊಡಗೂಸಿನವರಕ್ಕರೆಯ ತೊತ್ತಿನ ಮಗ ತಾನೆಂದು ತಿಳಿದು ಅವರು ತಿಂದುಂಡು ಬಿಟ್ಟುದನು ತಿಂದು ಅವರಂಗಳವ ಗುಡಿಸಿ ಬಾಗಿಲ ಕಾಯ್ವೆ’ ಎಂದು ಹೇಳುವಲ್ಲಿ ಆ ತವರುಮನೆಯವರಲ್ಲಿ ಅವರಿಟ್ಟ ಪ್ರೇಮ ಮಮತೆ, ಅತ್ಮೀಯತೆ ಭಾವೈಕ್ಯತೆ, ಪ್ರಾಮಾಣಿಕ ನಿರ್ಮಲ ಅನಿಸಿಕೆ ವ್ಯಕ್ತವಾಗದೇ ಇರದು.

ಶಿವಶರಣರಲ್ಲಿ ಅವರಿಗೆ ಬೆಳೆದ ತಾದಾತ್ಮ್ಯತೆ ಹತ್ತು ಹಲವಾರು ಮುಖಗಳಲ್ಲಿ ಕಾವ್ಯವಾಹಿನಿಯಾಗಿ ಹರಿದು ಬಂದಿದೆ. ಮುಪ್ಪಿನ ಷಡಕ್ಷರಿಗಳವರ ಒಂದು ಹಾಡು ‘ಮಗಳೆ ಎನ್ನಯ ಮಾತು ಕೇಳು’ ಎಂದು ಆರಂಭಗೊಳ್ಳುವಂತಹುದು. ಹೆತ್ತವರು ಪತಿಗೃಹಕ್ಕೆ ತೆರಳುತ್ತಿರುವ ಮಗಳಿಗೆ ಮಾಡುವ ಉಪದೇಶದ ಒಂದು ಸಂದರ್ಭವನ್ನು ನೆನಪಿಗೆ ತಂದು ಕೊಡುವ, ಜೊತೆಗೆ ಅಲೌಕಿಕ ಅಧ್ಯಾತ್ಮ ಸನ್ನಿವೇಶದ ಒಂದು ಚಿತ್ರ ಓದುಗರ ಕಣ್ಮುಂದೆ ಕಟ್ಟುತ್ತದೆ.

ಅಧ್ಯಾತ್ಮಪರ ಸಾಧಕರೆಲ್ಲ ಮನಸ್ಸೆಂಬ ಮಗಳಿಗೆ ಹೇಳುವ ತಿಳಿವು, ಅರಿವು ಶಂಭುಲಿಂಗದ ಬೆಟ್ಟವೇ ಅವರಿಗೆ ಸಿಂಹಾಸನವಾಗಿ, ಸಮಸ್ತ ಲೋಕದ ಜನತೆಗೆ ‘ಶರಣಸತಿ ಲಿಂಗಪತಿ’ ಭಾವದ ತತ್ವವನ್ನು ಧಾರೆಯೆರೆಯುವದನ್ನು ಗಮನಿಸಬೇಕು. ಹಾಡಿನ ಮುಖ್ಯಾಂಶಗಳನ್ನು ಗ್ರಹಿಸುವದಾದರೆ,

“ಮಗಳೆ ಪರಮಾತ್ಮನು (ಇಷ್ಟಲಿಂಗ) ನಿನ್ನ ಪತಿ.

ಅವನಿಗೆ ನಿನ್ನ ಅಂಗಗುಣಗಳನ್ನೆಲ್ಲ ಎಡೆಮಾಡು.

ವಿಷಯಸುಖದ ಕಡೆಗೆ ಮನಸ್ಸನ್ನು ಕೊಡಬೇಡ.

ಪ್ರಾತಃಕಾಲದಲ್ಲಿ ಮನೆಯ (ಮನ) ಕಸವನ್ನು ತೆಗೆದು ಪೂಜೆಗೆ ತೊಡಗು.

ಮನೆಯಲ್ಲಿ (ಮನಸ್ಸಿನಲ್ಲಿ ಕತ್ತಲೆ ಬೀಳದಂತೆ ನೋಡಿಕೋ,

ಮತಿ ಮಸುಳದಂತಿರು; ಉತ್ತಮರ ಸಹವಾಸಮಾಡು.

ಪತಿಯು ಕೋಪಗೊಳ್ಳಲು ಅವಕಾಶ ಕೊಡಬೇಡ.

ಹಗಲು ರಾತ್ರಿ ಅವನ ಧ್ಯಾನದಲ್ಲಿರು; ಬೇಸರ ಪಡಬೇಡ.

ನಿನ್ನ ಪತಿ ಕಾಮಜಿತ; ನೀನು ಅತಿಕಾಮಿ, ಮನಶುದ್ಧಿಯಿಂದಿರು.

ಘನಭೋನವನ್ನು ಇನಿಯಂಗೆ ಎಡೆ ಮಾಡು;

ನೀನು ತಪ್ಪು ಮಾಡಿ ಕಾಲು ಪಿಡಿವಡೆ ಅವನಿಗೆ ಕಾಲಿಲ್ಲ

ನೀ ಹಿಡಿವಡೆ ಅವನಿಗೊಡಲಿಲ್ಲ.

ಎಂದು ಪತಿದೇವನ ಅಲೌಕಿಕ ಸ್ವರೂಪವನ್ನು ಮಗಳಿಗೆ ಸೂಕ್ಷ್ಮವಾಗಿ ಮನದಟ್ಟು ಮಾಡಿಕೊಟ್ಟು ಅವನತ್ತಲೇ ಮನಸ್ಸನ್ನು ಕೇಂದ್ರೀಕರಿಸುವ ಸಾಧನೆಯ ಪರಿಯನ್ನು ಅರುಹುತ್ತಾರೆ.

‘ಮೂರು ಕೋಣೆಗಳೊಳಗೆ (ಸ್ಥೂಲ, ಸೂಕ್ಷ್ಮ, ಕಾರಣತನುಗಳು)ಮೂರು ಜ್ಯೋತಿಯ ಬೆಳಗು (ಇಷ್ಟ ಪ್ರಾಣ ಭಾವಲಿಂಗ ಪೂಜೆ)ಆರೈದು ಇಹವ ಪರವರಿಯದೆ ಮಧ್ಯೆ ಕೋಣೆಯ ಮನೆಯೊಳು ಮಾರಾರಿಯನ್ನು (ಸೂಕ್ಷ್ಮ ಶರೀರದಲ್ಲಿ ಪ್ರಾಣಲಿಂಗೋಪಾಸನೆ) ನೀನಪಾರ ಸುಖದೊಳು ಹೊಂದಿ ,ನಾರಿ ನೀನಿರುʼ ಎಂದು  ಅನುಭಾವದ ದೈವೀಸಾಧನೆಯ ನೆಲೆಬೆಲೆಯನ್ನು ವಿವರಿಸಿ,

“ನಿನ್ನವನು ತನ್ನಂತೆ ಮಾಡುವನೊಲಿದು

ಎಂದು ಕೈಕೊಂಡ ದಿವ್ಯಸಾಧನೆಗೆ ಅನುಪಮ ಅಮೂಲ್ಯ ಸತ್ಫಲವನ್ನು ಸೂಚಿಸಿರುವರು. ಇಡೀ ಪದ್ಯ ಷಟ್‌ಸ್ಥಲಸಾಧನೆಯ ಮಾರ್ಗದುದ್ದಕ್ಕೂ ಸಾಧಕನಾದವನು ಭಕ್ತ ಮಹೇಶ್ವರ ಸ್ಥಲದ ಶ್ರದ್ಧಾಭಕ್ತಿ ನೈಷ್ಠಿಕಭಕ್ತಿ ಪ್ರಸಾದಿ-ಪ್ರಾಣಲಿಂಗಿಸ್ಥಲದ ಅವಧಾನಭಕ್ತಿ, ಅನುಭಾವಭಕ್ತಿ, ಶರಣ ಸ್ಥಲದ ಆನಂದಭಕ್ತಿ, ಐಕ್ಯಸ್ಥಲದಲ್ಲಿ ಸಮರಸಗೊಳ್ಳುವಿಕೆಯನ್ನು ಸೂಚಿಸಿದೆ. ಶರಣ ಸ್ಥಲದಲ್ಲಿ ಇಷ್ಟಲಿಂಗವೇ ಪತಿ ತಾನೇ ಸತಿಯಾಗಿ ಸಾಧನೆ ಮಾಡುತ್ತ ಸಾಮರಸ್ಯ ಹೊಂದುವ ನಿಲುವನ್ನು  ಷಡಕ್ಷರಿಶಿವಯೋಗಿಗಳು ಸಾಧಕರಿಗೆ, ತಂದೆ ತಾಯಿಗಳು ಮಗಳಿಗೆ ನೀಡುವ ಶಿವಾನುಭವದ ಉಪದೇಶರೂಪದ ಈ ರೂಪಕಪದ್ಯ ಅಧ್ಯಾತ್ಮ  ಸಾಧಕರಿಗೆ ಬೆಳಕಿನ ಕಿರಣವಾಗಿದೆ.

ಹೀಗೆ ಸಮಾಜದರ್ಶನದ ಯಾವದೇ ವಿಷಯವನ್ನು ಕೈಗೊಂಡಿರಲಿ, ಅದರಲ್ಲಿ ವಸ್ತುನಿಷ್ಠವಾದ ಆತ್ಮೀಯವಾದ ವಿಚಾರವಿನಿಮಯ ಕೈಗೊಳ್ಳದೆ, ಸಮಾಜಕ್ಕೆ ದಾರಿದೀಪವಾದ ತಾತ್ವಿಕ ತಿಳಿವಳಿಕೆ ಮಾಡಿಕೊಡದೆ, ಮುಪ್ಪಿನ ಷಡಕ್ಷರಿಗಳು ಮುಂದೆ ಹೋದುದೇ ಇಲ್ಲ, ಇಂಥ ಉನ್ನತಮಟ್ಟದ ಅಧ್ಯಾತ್ಮಪರ ಮನೋಭಾವನೆ ಸಮಾಜ ಜಾಗ್ರತಿಯನ್ನುಂಟು ಮಾಡುವ ಧರ್ಮದರ್ಶಿ ಬಸವ ನೇತಾರ, ಅನುಭಾವಿ ಮುಪ್ಪಿನ ಷಡಕ್ಷರಿಗಳಂತಹ ಮಹಾನುಭಾವರು ನಮಗೆ ಇಪ್ಪತ್ತೊಂದನೆಯ ಶತಮಾನಕ್ಕೂ ಪ್ರಸ್ತುತ, ಈ ಲೋಕ ಶಾಶ್ವತವಿರುವವರೆಗೂ ಅವರ ತತ್ವಗಳು ನಮಗೆ ಪ್ರಸ್ತುತ

ಕೈವಲ್ಯ ಪದಗಳ ರಮಸತ್ಯ:

ಹುಟ್ಟು ಸಾವಿನ ಭವಚಕ್ರಗಳ ಮಧ್ಯೆ ಸಿಲುಕಿರುವ ಮಾನವ ಬದುಕಿದಷ್ಟು ಕಾಲ ಆತ್ಮತೃಪ್ತನಾಗಿರಬೇಕು. ಸಾರ್ಥಕ ಬದುಕು ಅವನದಾಗಬೇಕು. ‘ಲಿಂಗವಾಗಿ ಲಿಂಗಪೂಜಿಸಬೇಕು; ಲಿಂಗಪೂಜಿಸಿ ಲಿಂಗವೇ ಆಗಬೇಕು’ ಎಂಬುದು ಮುಪ್ಪಿನ  ಷಡಕ್ಷರಿಗಳಂತಹ ಅನುಭಾವಿಗಳು ರಚಿಸಿದ ಕೈವಲ್ಯಪದಗಳ ಚರಮಸತ್ಯ; ಅಂತಿಮಸತ್ಯ. ಮುಪ್ಪಿನ ಷಡಕ್ಷರಿಗಳ ಬದುಕಿನ ಪುಟಗಳನ್ನು ಹೊರಳಿಸಿ ನೋಡಿದಾಗ ಷಟ್ಟದಿಯ ಝೇಂಕಾರದ ಓಂಕಾರ ನಿನಾದದಲ್ಲಿ ತನ್ಮಯಗೊಂಡಿರುವುದು ಮನವೇದ್ಯವಾಗುತ್ತದೆ.

ಮುಪ್ಪಿನ ಷಡಕ್ಷರಿಗಳ ಅನುಭಾವ ಪದ್ಯಗಳು ಶ್ರೇಷ್ಠಕಾವ್ಯದ ಸ್ಥಾನವನ್ನು ತುಂಬಬಲ್ಲವು ಅಧ್ಯಾತ್ಮಪಥಿಕನಿಗೆ ಮಹಾತತ್ವದೆಡೆಗೆ ದಿವ್ಯಧ್ವನಿಯಾಗಿ ಸೂಕ್ತ ಮಾರ್ಗದರ್ಶನ ಮಾಡಬಲ್ಲವು. ಛಂದೋಬದ್ಧ ಸಂಗೀತಬದ್ಧ ರಾಗತಾಳರೂಪಬದ್ಧ ವೈಶಿಷ್ಟ್ಯಗಳನ್ನು ಹೊಂದಿ ಓದುಗರ ಮನಸ್ಸನ್ನು ಹಸನುಗೊಳಿಸಿ ಅರಳಿಸಬಲ್ಲವು.

ಪ್ರತಿಪದ್ಯ ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಷಟ್ಟದಿಗಳಲ್ಲಿ ರಚಿತಗೊಂಡವು. ಷಟ್ಟದಿಯ ಪ್ರಮುಖ ಲಕ್ಷಣ ಮಾತ್ರಾಗಣಕ್ಕೆ ತಿರುಗಿದಾಗ ಓದುಗಬ್ಬದ ವಿಸ್ತಾರಕ್ಕೆ ಅಧಿಕ ಪ್ರಾಶಸ್ತ್ಯ ಶೃತಿ, ತಾಳ, ಲಯಬದ್ಧ ಛಂದಸ್ಸು, ರೂಪಕ,  ದೃಷ್ಟಾಂತ, ಉಪಮಾನ ಶ್ಲೇಷೆ ಅಲಂಕಾರಗಳ ತೊಡುಗೆ, ಹದವರಿತ ಭಾಷೆ, ಮಧುರಭಕ್ತಿಯ ಕಾವ್ಯದ ಅರ್ಥಗೌರವವನ್ನು ಅಧಿಕಗೊಳಿಸಿವೆ.,

 ಅನುಭಾವಸತ್ವ ಅಂತರಂಗದ ಕದ ತಟ್ಟುತ್ತದೆ. ಸತಿಪತಿಭಾವ ಬೆಸೆಯುತ್ತದೆ. ಲೌಕಿಕ ಅಲೌಕಿಕಗಳು ಬೆರೆತು ಬೇರಾಗದ, ಒಡವೆರೆದು ಒಂದಾದ ಸಾಮರಸ್ಯ ಹೊಂದುತ್ತವೆ. ನವನವೀನ ಭಾವಗಳ ಆವಿಷ್ಕಾರ, ಆತ್ಮಾನಂದ, ತನ್ಮೂಲಕ ಅನುಭವಾನಂದ ‘ಶಿವೇತರಕ್ಷತೆಯೆ ಮುಖ್ಯ ಗುರಿಯಾಗುತ್ತದೆ. ಪ್ರತಿಪದ್ಯಗಳ ಮೇಲಿನ ಪೂರ್ವಿ, ಸುರುಟಿ, ಲಹರಿ, ಮಲಹರಿ, ವಸಂತ, ಸಾರಂಗ, ಧನ್ಯಾಸಿ ರಾಗಗಳು ಮುಪ್ಪಿನ ಷಡಕ್ಷರಿಗಳ ರಾಗಜ್ಞಾನವನ್ನು ಸಾರಿ ಸಾರಿ ಹೇಳಿವೆ. ‘ಷಡಕ್ಷರಿಲಿಂಗ’ ಸ್ವರವಚನದ ರೂಪ ಮುದ್ರೆ ಷಡಕ್ಷರಿಗಳನ್ನು ಅನುಭಾವಿ ಸ್ವರವಚನಕಾರರ ಮಾಲಿಕೆಗೆ ಸೇರಿಸಿವೆ. ವೀರಶೈವ ತತ್ವ, ಲೋಕನೀತಿಸಾರಗಳನ್ನು ಬಿತ್ತರಿಸಿವೆ. ‘ಶಿವತತ್ವಗೀತವ ಹಾಡುವುದು ಶಿವನ ಮುಂದೆ ನಲಿನಲಿದಾಡುವುದು ಷಡಕ್ಷರಿಗಳ ಅಂತರಂಗದ ಘನ ಉದ್ದೇಶ. ಇಂಥವರ ದಿವ್ಯವಚನಾಮೃತ ಪ್ರಪಂಚವನ್ನು ಪಾರಮಾರ್ಥಿಕದೆಡೆಗೆ, ಅನುಭಾವದ ಉನ್ನತ ನಿಲುವಿಗೆ ಬೆಸೆಯುತ್ತವೆ.

ಆಧುನಿಕರ ದೃಷ್ಟಿಯಲ್ಲಿ ಮುಪ್ಪಿನ ಷಡಕ್ಷರಿಗಳು:

ಅನುಭಾವಿ ಶಿವಶರಣರ ಬಗ್ಗೆ ಆಳವಾದ ಅಧ್ಯಯನ ಕೈಗೊಂಡ ಕನ್ನಡದ ಖ್ಯಾತ ಸಾಹಿತಿ ತಿಪ್ಪೇರುದ್ರಸ್ವಾಮಿಗಳವರ ಅಭಿಪ್ರಾಯದಲ್ಲಿ,

ʼʼಮುಪ್ಪಿನ ಷಡಕ್ಷರಿಗಳ ಹಾಡುಗಳಲ್ಲಿ ಕಾಣುವುದು ಶಿವನಿಷ್ಠೆಯಿಂದ ಮುಂದುವರೆಯುವ ಸಾಧಕ ಚೇತನವೊಂದರ ಪರಿಶುದ್ಧ ಜೀವನದ ಪ್ರಾಮಾಣಿಕ ಉದ್ಗಾರ. ನಿಜಗುಣರಲ್ಲಿ ಕಾಣುವಂತಹ ಯೌಗಿಕ ತೇಜಸ್ಸಿನ ಸೂರ್ಯಪ್ರಭೆಯನ್ನು ಇಲ್ಲಿ ಕಾಣುವದಿಲ್ಲವಾದರೂ, ಶಾಂತಭಕ್ತಿಯ ತಂಪುಬೆಳಕನ್ನು ಇಲ್ಲಿ ಪಡೆಯಬಹುದಾಗಿದೆ. ನಿಜಗುಣರ ಬಹುಮುಖ ಅನುಭವ ಪಾಂಡಿತ್ಯಗಳಾಗಲೀ, ಅಭಿವ್ಯಕ್ತಿಯ ವೈವಿಧ್ಯವಾಗಲೀ, ಇವರಲಿಲ್ಲ, ಇವರ ಹಾಡುಗಳಲ್ಲಿ ಬಹುಪಾಲು ಶರ ಇಲ್ಲವೆ ಭೋಗ ಷಟ್ಟದಿಗಳಲ್ಲಿ ರಚಿತವಾದವು; ಬಹುಮಟ್ಟಿಗೆ ಏಕಮುಖವಾದವು. ಕೈವಲ್ಯಪದ್ಧತಿಯ ವಿಸ್ತಾರ ಹಿನ್ನೆಲೆಗಳನ್ನಾಗಲಿ ಎತ್ತರ ಬಿತ್ತರಗಳನ್ನಾಗಲೀ ‘ಸುಬೋಧಸಾರ’ದಲ್ಲಿ ನಿರೀಕ್ಷಿಸಲಾಗದು. ಇಲ್ಲಿನ ಹಾಡುಗಳು ತಿಳಿಯಾದ ಮಾಧುರ್ಯ ಮತ್ತು ಆತ್ಮೀಯತೆಗಳಿಂದ ಆಸ್ವಾದವಾಗುತ್ತವೆ. ತಮ್ಮ ಕುಸುಮಕೋಮಲ ದಳಗಳನ್ನು ಅರಳಿಸಿ ನರುಗಂಪನ್ನು ಸೂಸುತ್ತವೆ. ಈ ದೃಷ್ಟಿಯಿಂದ ಕೈವಲ್ಯ ಸಾಹಿತ್ಯದಲ್ಲಿ ಇವುಗಳ ಸ್ಥಾನ ಗಣನೀಯವಾಗಿದೆ. (ಕನ್ನಡದಲ್ಲಿ ಕೈವಲ್ಯ ಸಾಹಿತ್ಯ  ಪು.೪೫)

ಕನ್ನಡದ ಹಿರಿಯ ಕವಿ ಚನ್ನವೀರ ಕಣವಿಯವರು,

“ಮುಪ್ಪಿನಾರ್ಯರ ಹಾಡುಗಳಲ್ಲಿ ಹೃದಯಂಗಮ ವರ್ಣನೆ,ವಿಶಾಲ ದರ್ಶನವಿರುವಂತೆಯೇ ನವನವೀನಭಾವಗಳ ಆವಿಷ್ಕಾರವಿದೆ. ಅವು ಅತ್ಯಂತ ಮಧುರವಾಗಿ ನಿರಾಯಾಸವಾಗಿ, ಗಿಡದಿಂದ ಹೂ ಚಿಗುರು ಹೊಮ್ಮುವಂತೆ ಸಹಜವಾಗಿ  ಹೊರಹೊಮ್ಮುತ್ತವೆ. (ವೈರಾಗ್ಯದಲರು, ಪು.೨೦೮)

ಮೇಲಿನ ವಿದ್ವಾಂಸರ ವಿಚಾರಗಳನ್ನು ಗಮನಿಸಿದಾಗ ಮುಪ್ಪಿನ ಷಡಕ್ಷರಿಗಳು ವೀರಶೈವ ತತ್ವಪದಗಳ ಮತ್ತು ಹಾಡುಗಬ್ಬಗಳ ಪ್ರಕಾರಕ್ಕೆ ಕೊಟ್ಟ ಅಪಾರ ಅಮೂಲ್ಯ ಕೊಡುಗೆ ವಿದಿತವಾಗುತ್ತವೆ. ಇಂತಹ ಅನುಪಮ ಕೊಡುಗೆ ಅವರ ಎತ್ತರ ಬಿತ್ತರಗಳನ್ನು ಇನ್ನಷ್ಟು ಹೆಚ್ಚಿಸಿವೆಯೆಂದೇ ಹೇಳಬೇಕು.

ವೀರಶೈವ ಅನುಭಾವ ಸಾಹಿತ್ಯ ವಾಹಿನಿಯಲ್ಲಿ ಧಾರ್ಮಿಕ ತಾತ್ವಿಕ ನೈತಿಕ ನೆಲೆಯನ್ನು ಗಟ್ಟಿಗೊಳಿಸಿ ಮುಮುಕ್ಷುಗಳಿಗೆ ವೈರಾಗ್ಯಪರರಿಗೆ, ಶಿವಕಾರುಣ್ಯ, ಅರ್ಚನ, ಪೂಜನೋತ್ಪಾದ ನೀತಿನಿಯಮಾಚಾರ, ಹರಗುರು ಚರಮೂರ್ತಿಗಳಿಗೆ ಸನ್ಮಾರ್ಗದರ್ಶನ ಮಾಡಿಕೊಟ್ಟಿವೆ.ಸಾಹಿತ್ಯ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ಮುಪ್ಪಿನ ಷಡಕ್ಷರಿಗಳನ್ನು ಅನುಭಾವ ಸಾಹಿತ್ಯ ಪಥದಲ್ಲಿ ಚಿರಂತನಗೊಳಿಸಿವೆ.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

ಡಾ|| ಬಸವರಾಜ ಸಬರದ

ಘನಮಠದಾರ್ಯ ಬಹುಮುಖ ವ್ಯಕ್ತಿತ್ವ ಹೊಂದಿದ ಶಿವಯೋಗಿ, ಈತ ಶರಣನಾಗಿ ತತ್ವಪದಕಾರನಾಗಿ, ನೇಗಿಲಯೋಗಿಯಾಗಿ ಅನುಭಾವಿಯಾಗಿ ಸಾಧಿಸಿದ ಕಾರ್ಯಗಳು ಇಂದಿಗೂ ಮುಖ್ಯವೆನಿಸುತ್ತವೆ. ಶಿವಯೋಗಿಯಾದವನಿಗೆ ಭಾಷೆ, ಪ್ರದೇಶ, ಜಾತಿ, ಲಿಂಗ, ಇವುಗಳ ಭೇದವಿರುವುದಿಲ್ಲವೆಂಬುದನ್ನು ಘನಮಠದಾರ್ಯ ತೋರಿಸಿಕೊಟ್ಟ. ಮಾನವೀಯತೆ ದೊಡ್ಡದೆಂಬುದನ್ನು ತಿಳಿಸಿಕೊಟ್ಟ.

ಕ್ರಿ.ಶ. ೧೮೨೮ರಲ್ಲಿ ಆಂಧ್ರಪ್ರದೇಶದ ಅತ್ರಾಫ್ ಜಿಲ್ಲಾ ಪಡ್ಲೂರ ತಾಲ್ಲೂಕಿನ ದೋರ್ವಾಡ ಗ್ರಾಮದಲ್ಲಿ ಈ ಘನಮಠದಾರ್ಯ ಜನಿಸಿದ. ನಾಗಭೂಷಣ ನೆಂಬುದು ಈತನ ಹೆಸರು. ವೀರಯ್ಯ ವೀರಾಂಬೆ ಈತನ ತಂದೆ-ತಾಯಿಗಳು. ಯೌವನಕ್ಕೆ ಬಂದಾಗ ಮದುವೆಯಾಯಿತು. ಒಂದು ಹೆಣ್ಣು ಮಗುವೂ ಹುಟ್ಟಿತು. ನಂತರ ಕೆಲದಿನಗಳಲ್ಲಿಯೇ ಜೀವನದಲ್ಲಿ ವೈರಾಗ್ಯ ತಾಳಿ ತನ್ನ ಇಪ್ಪತ್ತೆರಡನೆಯ ವಯಸ್ಸಿಗೆ ತನ್ನ ಊರನ್ನೂ, ಸಂಸಾರವನ್ನೂ ತೊರೆದು ಕನ್ನಡ ನಾಡಿಗೆ ಬಂದ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅನೇಕ ಊರುಗಳಲ್ಲಿ ಸಂಚರಿಸಿದ. ಬಸವಕಲ್ಯಾಣದಲ್ಲಿ ಸಂಚರಿಸಿ ಶರಣರ ತತ್ವಗಳನ್ನು ತಿಳಿಯಬೇಕೆಂಬ ಉತ್ಸುಕತೆಯಿಂದ ಘನಮಠಸ್ವಾಮಿಗಳೆಂಬುವರ ಬಳಿ ಕನ್ನಡ ಕಲಿತ ಶರಣರ ತತ್ವಗಳನ್ನು ತಿಳಿದುಕೊಂಡು ಭಕ್ತಿತುಂಬಿ ಹಾಡಿದ. ಹಾಡುಗಳ ರಚಿಸಿದ. ಗುರುವಾದ. ಘನಮಠಾಧೀಶನ ಅಂಕಿತವನ್ನಿಟ್ಟುಕೊಂಡ. ತಾನೇಗುರುವಾದ.  ಘನಮಠದಾರ್ಯನಾದ. ಕ್ರಿ.ಶ. ೧೮೮೦ರಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರ ತಾಲೂಕಿನ ಸಂತೆ ಕಲ್ಲೂರಿನಲ್ಲಿ ಲಿಂಗೈಕ್ಯನಾದ.

ರಾಯಚೂರ ಜಿಲ್ಲೆಯೇ ಘನಮಠದಾರ್ಯನ ಕಾರ್ಯಕ್ಷೇತ್ರವಾಯಿತು. ದೇವದುರ್ಗ ತಾಲೂಕಿನ ಜಾಲಹಳ್ಳಿಯ ವೀರಭದ್ರಕವಿಗೆ, ಅರವತ್ತುಮೂರು ಪುರಾತನರ ಪುರಾಣವನ್ನು ವಾರ್ಧಕ ಷಟ್ಟದಿಯಲ್ಲಿ ಬರೆಯುವಂತೆ ಪ್ರೇರೇಪಿಸಿದ. ನಾರದಗಡ್ಡೆಯ ಚೆನ್ನಬಸವಸ್ವಾಮಿಗಳಿಗೂ ಘನಮಠದಾರ್ಯನಿಗೂ ಕರಣಪ್ರಸಾದದ ಬಗೆಗೆ ವಾದ ನಡೆದಿತ್ತೆಂದು ತಿಳಿದು ಬರುತ್ತದೆ. ವೀರಶೈವ ಸಿದ್ಧಾಂತ ಕುರಿತು, ಅಧ್ಯಾತ್ಮ ಕುರಿತು ಘನಮಠದಾರ್ಯ ಅಧ್ಯಯನ ಮಾಡಿದ, ಚರ್ಚಿಸಿದ, ತನ್ನ ಅನುಭವಕ್ಕೆ ಬಂದ ಸತ್ಯವನ್ನು ಕಂಡುಕೊಂಡ ದೊಡ್ಡ ಅನುಭಾವಿಯಾಗಿ ಬೆಳೆದು ನಿಂತ.

ಹನ್ನೆರಡನೆಯ ಶತಮಾನದ ವಚನಕಾರರ ವಿಚಾರಗಳನ್ನೇ ನಾಗಭೂಷಣ – ಪ್ರಚಾರಮಾಡತೊಡಗಿದ. ವಚನಕಾರರು ಮೂಢನಂಬಿಕೆಗಳ ವಿರುದ್ಧ, ಅಂಧಸಂಪ್ರದಾಯದ ವಿರುದ್ಧ ಹೋರಾಡಿದಂತೆ, ನಾಗಭೂಷಣನೂ ಕೂಡ ಇಂತಹ ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದ, ಜನರನ್ನು ಜಾಗೃತಗೊಳಿಸಿದ. ಬಹುದೇವೋಪಾಸನೆಯನ್ನು ಅಲ್ಲಗಳೆದು ಗುಡಿಗುಂಡಾರಗಳಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸಿದ. ಇಷ್ಟಲಿಂಗಕ್ಕೆ ಪ್ರಾಧಾನ್ಯತೆಯನ್ನು ನೀಡಿ ಶಿವಯೋಗಿಯೆನಿಸಿಕೊಂಡ. ಮಠ-ಮಾನ್ಯಗಳ ವಿರೋಧಿಯಾದ. ತಾನು ಜೀವಂತವಿದ್ದಾಗ ಯಾವುದೇ ಮಠ ಮಾನ್ಯಗಳನ್ನು ಕಟ್ಟದೆ ಚಲಿಸುವ ಜಂಗಮನಾದ. ತಾನು ಸತ್ತನಂತರ ತನ್ನ ಸಮಾಧಿಯ ಮೇಲೆ ಯಾರಾದರೂ ಗದ್ದುಗೆ ಮಂಟಪವನ್ನು ಕಟ್ಟಿದರೆ ಅವರ ವಂಶ ನಿರ್ವಂಶವಾಗುವುದೆಂದು ಅಭಿಶಾಪವನ್ನಿತ್ತ. ಹೀಗೆ ಶರಣರ ತತ್ವಗಳಿಗೆ ಬದ್ಧನಾಗಿದ್ದ ನಾಗಭೂಷಣ ಬದುಕಿನಲ್ಲಿಯೂ ಅವುಗಳನ್ನು ಆಚರಣೆಗೆ ತಂದ,

ಹೊನ್ನು-ಹೆಣ್ಣು-ಮಣ್ಣುಗಳಿಗಾಗಿ ಪರಿತಪಿಸದೆ, ಜ್ಞಾನ, ಅನುಭಾವ, ಅಂತರಂಗಶುದ್ಧಿಯತ್ತ ಆಸಕ್ತನಾದ ನಾಗಭೂಷಣ ನಿಜವಾದ ಜಂಗಮನಾದ. ಡಂಭಾಚಾರವನ್ನು ಅಲ್ಲಗಳೆದು ಸರಳ ಭಕ್ತಿಯನ್ನು ತಿಳಿಸಿದ. ಭಕ್ತರಲ್ಲಿದ್ದ ಮೌಢ್ಯತೆಯನ್ನಳಿಸಿ, ವೈಚಾರಿಕತೆಯನ್ನು ಬೆಳೆಸಿದಾಗ ಜನಜೀವನದಲ್ಲಿ ಅನೇಕ ಬದಲಾವಣೆಗಳಾದವು. ಇವುಗಳನ್ನೇ ಭಕ್ತರು ಪವಾಡಗಳೆಂದು ಕರೆಯುತ್ತಾರೆ. ಇಂತಹ ಅನೇಕ ಪವಾಡಗಳನ್ನು ನಾಗಭೂಷಣ ಮಾಡಿರುವುದು ತಿಳಿದುಬರುತ್ತದೆ.

ಗುಡಿ ಗುಂಡಾರಗಳಲ್ಲಿ, ಮಠ-ಮಾನ್ಯಗಳಲ್ಲಿ ಕುಳಿತುಕೊಂಡು ದೇವರು-ಧರ್ಮಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದವರನ್ನು ನೇರವಾಗಿ ವಿರೋಧಿಸಿದ. ನಾಗಭೂಷಣ ಕಾಯಕಕ್ಕೆ ಅತ್ಯಂತ ಪ್ರಾಧಾನ್ಯತೆಯನ್ನು ತಂದುಕೊಟ್ಟ. ದಾನದಂತಹ ಮೌಲ್ಯವನ್ನು ತಿರಸ್ಕರಿಸಿ ದಾಸೋಹದಂತಹ ಉದಾತ್ತ ಮೌಲ್ಯವನ್ನು ಪ್ರಸಾರ ಮಾಡಿದ. ಸದಾಚಾರ-ಸದುವಿನಯಗಳನ್ನು ಹೇಳಿಕೊಟ್ಟ, ನಾಗಭೂಷಣ ಅಹಂಕಾರ-ಅಹಂಭಾವಗಳನ್ನು ತೊರೆಯಲು ತಿಳಿಸಿದ. ಮಾನವನಲ್ಲಿರುವ ಪ್ರೀತಿ-ಅಂತಃಕರಣಗಳೇ ನಿಜವಾದ ಮೌಲ್ಯಗಳೆಂದು ಸಾರಿ ಹೇಳಿದ.

ನಾಗಭೂಷಣ ಕನ್ನಡ ನಾಡಿನ ಪ್ರಮುಖ ತತ್ವಪದಕಾರರಲ್ಲಿ ಒಬ್ಬನಾಗಿದ್ದಾನೆ. ‘ಭಕ್ತಿಸುಧಾಸಾರ’ ವೆಂಬ ಈತನ ಕೃತಿಯಲ್ಲಿ ೧೪೭ ಹಾಡುಗಳಿವೆ. ಈ ಹಾಡುಗಳನ್ನು “ತತ್ವಪದಗಳು” ಎಂಬ ಹೆಸರಿನಲ್ಲಿ ಕ್ರಿ.ಶ. ೧೯೭೦ರಲ್ಲಿ ಸಂತೆಕಲ್ಲೂರಿನ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮಿಗಳು ಪ್ರಕಟಪಡಿಸಿದ್ದಾರೆ.

ಕನ್ನಡದಲ್ಲಿ ತತ್ವಪದ ಸಾಹಿತ್ಯಕ್ಕೆ ದೀರ್ಘವಾದ ಪರಂಪರೆಯಿದೆ. ಈ ಪರಂಪರೆ ಹನ್ನೆರಡನೆಯ ಶತಮಾನದ ವಚನಕಾರರಿಂದ ಪ್ರಾರಂಭವಾಗುತ್ತದೆ. ಹನ್ನೆರಡನೆಯ ಶತಮಾನದ ವಚನಕಾರರು ಸಾವಿರಾರು ಸ್ವರವಚನಗಳನ್ನು ರಚಿಸಿದ್ದಾರೆ. ಇದೇ ಹಾಡುಗಬ್ಬವು ತತ್ವಪದವೆಂಬ ಹೆಸರಿನಲ್ಲಿ ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಗಳಿಂದ ಜನಪ್ರಿಯವಾಯಿತು. ಹೀಗಾಗಿ ಈ ತತ್ವಪದ ಸಾಹಿತ್ಯ ಪರಂಪರೆಯನ್ನು ಹುಟ್ಟುಹಾಕಿದವರಲ್ಲಿ ನಿಜಗುಣ ಶಿವಯೋಗಿಗಳು ಮೊದಲಿಗರಾಗುತ್ತಾರೆ.  ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ ಈ ಮುಂತಾದ ಶಿವಯೋಗಿಗಳ ಅನುಭಾವ ಪದಗಳು ಕನ್ನಡ ಸಾಹಿತ್ಯದ ಹೊಸ ಬೆಳವಣಿಗೆಯನ್ನು ತೋರಿಸುತ್ತವೆ.

ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ನಂತರ, ಅದೇ ಎತ್ತರದ ಸಾಧನೆ ಮಾಡಿದವರಲ್ಲಿ ನಾಗಭೂಷಣ ಘನಮಠ ಶಿವಯೋಗಿ ಮುಖ್ಯವಾಗುತ್ತಾನೆ. ಸರ್ಪಭೂಷಣ ಶಿವಯೋಗಿ ಬೆಂಗಳೂರು ಪ್ರದೇಶದಲ್ಲಿ ಹೊಸಬೆಳಕನ್ನು ಮೂಡಿಸಿದರೆ, ಈ ಘನಮಠ ಶಿವಯೋಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ರಾಯಚೂರ ಜಿಲ್ಲೆಯಲ್ಲಿ ತತ್ವಪದಗಳನ್ನು ಹಾಡಿ ಜನಮನದಲ್ಲಿ ಹಸಿರಾಗಿದ್ದಾನೆ.

ಅನೇಕ ಊರುಗಳನ್ನು ಸಂಚರಿಸಿದ ನಾಗಭೂಷಣ ಶಿವಯೋಗಿಯ ತತ್ವಪದಗಳಲ್ಲಿ ವೈವಿಧ್ಯತೆಯಿದೆ. ನೂತನಾಲ್ಲಮಪ್ರಭು ಎಂದೇ ಈತ ಹೆಸರಾಗಿದ್ದಾನೆ. ಪಾದಚಾರಿಯಾಗಿ ತಿರುಗುತ್ತಾ ಅಸಂಖ್ಯಾತ ಭಕ್ತರ ನೋವು-ನಲಿವುಗಳಿಗೆ ಸ್ಪಂದಿಸಿದ ಈ ಶಿವಯೋಗಿ, ಬದುಕಿನಲ್ಲಿ ಸಮಾಜದಲ್ಲಿ ಕಂಡದ್ದನ್ನೇ ತನ್ನ ತತ್ವಪದಗಳ ಮೂಲಕ ಪ್ರಕಟಿಸಿದ್ದಾನೆ. ಭಕ್ತಿ-ವೈರಾಗ್ಯ, ನಿಷ್ಠೆ, ಕಾಯಕ, ದಾಸೋಹ, ಸದಾಚಾರ, ಸದುವಿನಯ ಇಂತಹ ವಿಷಯಗಳನ್ನೇ ಅಭಿವ್ಯಕ್ತಿಸುವ ಈತನ ತತ್ವಪದಗಳಲ್ಲಿ ಅಲ್ಲಲ್ಲಿ ಸಾಮಾಜಿಕ ವಿಡಂಬನೆ ತೀವ್ರತರವಾಗಿದೆ.

ನನ್ನ ಪ್ರಕಾರ ತತ್ವಪದಕಾರರ ಬಹುಮುಖ್ಯವಾದ ಕೊಡುಗೆಯೆಂದರೆ, ವಸಾಹತುಶಾಹಿ ವಿರುದ್ಧ ನಡೆಸಿದ ಹೋರಾಟವಾಗಿದೆ. ಈ ತತ್ವಪದಕಾರರು ಸಾಮಾಜಿಕ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ತೋರಿಸಿದ್ದಾರೆ. ವಸಾಹತುಶಾಹಿಯೆಂಬುದನ್ನು ನಾನಿಲ್ಲಿ ಮೂರು ಹಂತಗಳಲ್ಲಿ ವಿಂಗಡಿಸಲಿಚ್ಛಿಸುತ್ತೇನೆ. ಮೊದಲನೆಯದು ಬ್ರಿಟಿಷರ ರಾಜಕೀಯ ವಸಾಹತುಶಾಹಿ, ಎರಡನೆಯದು ಸಾಂಸ್ಕೃತಿಕ ವಸಾಹತುಶಾಹಿ, ಮೂರನೆಯದು ಮನುಷ್ಯನ ಮನಸ್ಸಿನ ವಸಾಹತುಶಾಹಿ, ಕೈವಾರ ನಾರಾಯಣಪ್ಪ ,ಕಡಕೋಳ ಮಡಿವಾಳಪ್ಪ, ಬೈಲೂರ ಕೃಷ್ಣಪ್ಪನಂತಹ ತತ್ವಪದಕಾರರು ಬ್ರಿಟಿಷರ ರಾಜಕೀಯ ವಸಾಹತುಶಾಹಿಯ ವಿರುದ್ಧ ಇಲ್ಲಿಯ ಪಾಳೆಯಗಾರಿಕೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಸಾಂಸ್ಕೃತಿಕ ವಸಾಹತುಶಾಹಿಯೆಂಬುದು ಕೇವಲ ಬ್ರಿಟೀಷರ ಆಳ್ವಿಕೆಗೆ ಮಾತ್ರ ಸಂಬಂಧಿಸಿರದೆ, ನಮ್ಮ ದೇಶದ ಪುರೋಹಿತಶಾಹಿ ವ್ಯವಸ್ಥೆ ಸ್ಥಾಪಿಸಿದ ಚಾತುರ್ವರ್ಣ ಪದ್ಧತಿಯಾಗಿದೆ. ತತ್ವಪದಕಾರರು ಇಂತಹ ವರ್ಣವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಡಗಿರುವ ಸ್ವಾರ್ಥ, ಸಣ್ಣತನ, ದ್ವೇಷ, ಕಪಟತನ ಇವುಗಳು ಅತ್ಯಂತ ಅಪಾಯಕಾರಿಯಾದವುಗಳು. ತತ್ವಪದಕಾರರು ಇಂತಹ ಮನಸ್ಸಿನ ವಸಾಹತುಶಾಹಿ ವಿರುದ್ಧ ಹೋರಾಡಿದ್ದಾರೆ. ಹೀಗಾಗಿ ಇವರ ರಚನೆಗಳು ಇಂದಿಗೂ ಅಧ್ಯಯನ ಯೋಗ್ಯವಾಗುತ್ತವೆ.

ನಾಗಭೂಷಣನಂತಹ ತತ್ವಪದಕಾರರು ಮುಖ್ಯವಾಗಿ ಸಾಂಸ್ಕೃತಿಕ ವಸಾಹತುಶಾಹಿ ಹಾಗೂ ಮನಸ್ಸಿನ ವಸಾಹತುಶಾಹಿಗಳ ವಿರುದ್ಧ ದನಿಯೆತ್ತಿದ್ದಾರೆ. ವರ್ಣವ್ಯವಸ್ಥೆಯನ್ನು  ಗಟ್ಟಿಗೊಳಿಸುವಲ್ಲಿ ಅನೇಕ ವೇದ-ಶಾಸ್ತ್ರ-ಪುರಾಣಗಳು ಪರೋಕ್ಷವಾಗಿ ಕಾರಣವಾಗಿವೆ. ಅಂತೆಯೇ ಹನ್ನೆರಡನೆಯ ಶತಮಾನದ ವಚನಕಾರರು, ವೇದ ಶಾಸ್ತ್ರ ಪುರಾಣಗಳನ್ನು ಅಲ್ಲಗಳೆದರು.ಅವರ ಪರಂಪರೆಯಲ್ಲಿಯೇ ಮುಂದುವರೆದ ನಾಗಭೂಷಣ ವೇದ-ಶಾಸ್ತ್ರ-ಪುರಾಣಗಳ ಪೊಳ್ಳುತನಗಳನ್ನು ಬಯಲಿಗೆಳೆಯುವುದರ ಮೂಲಕ ಸಾಂಸ್ಕೃತಿಕ ವಸಾಹತುಶಾಹಿಯ ಕುತಂತ್ರಗಳನ್ನು ಸ್ಪಷ್ಟಪಡಿಸುತ್ತಾನೆ… ಈ ತತ್ವಪದಕಾರನ ಹಾಡೊಂದು ಈ ದಿಸೆಯಲ್ಲಿ ಗಮನಾರ್ಹವಾಗಿದೆ

“ವೇದಶಾಸ್ತ್ರ ಪುರಾಣಗಳೋದಿದ ವೇದಾದಿಗಳೆಲ್ಲ

ಭೇದವನರಿಯದೆ ಭಂಗಬಟ್ಟವರು, ಪೋದವು ನಿಜವಲ್ಲ!!

ಹಲವು ಶಾಸ್ತ್ರ ತಂತ್ರಗಳೋದಿ  ತ್ರೈಮಲವನು ಬಿಡಲಿಲ್ಲ!

ಫಲವೇನೈ ಗಿಳಿಯೋದಿ ಮಲವ ತಿಂದೊಲದಾಯ್ತಲ್ಲ!!

ವೇದಾಂತದೊಳುದ್ಭವಿಸಿದ ಜ್ಞಾನವದಾದಿ ವಿದ್ಯೆಯಲ್ಲ!

ಸಾಧಿಸಿ ಸುಜ್ಞಾನದಿ ಚರಿಸುವವನೇ ದೊರೆ ಜಗಕೆಲ್ಲ!!”

-ಶ್ರೀ ಘನಮಠೇಶ ತತ್ವಪದಗಳು : ಪುಟ ೨

ಎಂಬಂತಹ ನುಡಿಗಳಲ್ಲಿ ವೇದಶಾಸ್ತ್ರ ಪುರಾಣಗಳ ಮೂಲಕ ನಡೆದ ಶೋಷಣೆಯನ್ನು ಘನಮಠದಾರ್ಯ ಖಂಡಿಸಿದ್ದಾನೆ. ಪುರೋಹಿತಶಾಹಿಯೇ ಈ ದೇಶದ ಪ್ರಥಮ ವಸಾಹುತಶಾಹಿ. ಇಂತಹ ಸಾಂಸ್ಕೃತಿಕ ವಸಾಹತುಶಾಹಿಯ ವಿರುದ್ಧ  ಘನಮಠದಾರ್ಯ ಅನೇಕ ತತ್ವಪದಗಳಲ್ಲಿ ಪ್ರತಿಕ್ರಿಯಿಸಿದ್ದಾನೆ.

ಡಾಂಭಿಕ ಭಕ್ತಿಯನ್ನು ಕುರಿತು ಈ ತತ್ವಪದಕಾರ ಬಹುವಿಧವಾಗಿ ವಿಡಂಬಿಸಿದ್ದಾನೆ.

ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ ಈ ಸೊಳೆಮಕ್ಕಳಿ

ಗೆಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ||

ಉಣುವ ಜಂಗಮದೇವರೈತಂದು|    ಹಸಿವೆನಲು ಮುಂದಿನ |

ಮನೆಗೆ ಹೋಗಿಲ್ಲೇಕೆ ನಿಂತೆಂದು   |ಪಳಿಯುತ್ತ ಸಕ್ಕರಿ  |

ಕಣಕ ಮುಂತಾದವನ್ನು ಬಲಿತಂದು  | ತೀರ್ಥಾರ್ಥಿಯೊಳು  ಧಾ |

ರುಣಿಯ ತಿರುಗುತ ಬಳಲಿ ತಾವಂದು| ಪರಿಭ್ರಮಿತರಾಗುತೆ |

ಕುಣಿ ತೆವರ್‌ ಮಣ್ಣುಳ್ಳ ಗರಿಕಾನನಗುಹಂಗಳನರಸಿ ಕಷ್ಟದಿ

ಉಣದ ಕಲ್ಲಿಗೆ ಅಟ್ಟು ನೀಡುವ ಬಣವ ಮಾನವ ಪಶುಗಳಿಗೆ

-(ಶ್ರೀಘನಮಠೇಶ ತತ್ವಪದಗಳ: ಪುಟ: ೭೬)

.

ಈ ನುಡಿಗಳಲ್ಲಿ, ಹನ್ನೆರಡನೆಯ ಶತಮಾನದ ವಚನಕಾರರ ನುಡಿಗಳ ಪ್ರೇರಣೆಯನ್ನು ಕಾಣಬಹುದಾಗಿದೆ. ಘನಮಠದಾರ್ಯ, ಬಸವಣ್ಣನನ್ನು ಆದರ್ಶವನ್ನಾಗಿಟ್ಟುಕೊಂಡ ತತ್ವಪದಕಾರ, ಬಸವನ ಭಕ್ತಿ ಹೀಗಾಗಿ ಬಸವಣ್ಣನ ವಚನಗಳು ನೇರ ಪ್ರಭಾವವನ್ನು  ಈತನ ಹಾಡುಗಳಲ್ಲಿ  ಕಾಣಬಹುದಾಗಿದೆ. ಉಣ್ಣುವ ಜಂಗಮಕ್ಕೆ ನಡೆಯೆಂಬರು,ʼʼ ಉಣ್ಣುವ ಜಂಗಮಕ್ಕೆ ನಡಿಯೆಂಬುವರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು” ಎಂಬ  ವಚನದ ಆಶಯವೇ ಘನಮಠದಾರ್ಯನಲ್ಲಿ ಹಾಡಿನ ಮೂಲಕ ಅಭಿವ್ಯಕ್ತವಾಗಿದೆ. : ಜಾತೀಯತೆಯನ್ನು ನೇರವಾಗಿ ವಿರೋಧಿಸಿದ ಈ ಶರಣ ಇಲ್ಲಿಯ, ಅಸಮಾನತೆಯ ಬದುಕಿಗೆ ಜಾತಿಯೇ ಮುಖ್ಯ ಕಾರಣವೆಂದು ಭಾವಿಸಿದ್ದಾನೆ. ಜಾತಿಗೋತ್ರವನ್ನು ಹಿಡಿದು, ತಾವು ಪ್ರಖ್ಯಾತರೆಂದು ತಿಳಿದುಕೊಂಡವರಿಗೆ  ಘನಮಠದಾರ್ಯ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾನೆ. ರೀತಿಯ ಹೆಸರಿನಲ್ಲಿ ಒಡೆದಾಳುವಂತಹ ಮನುಜರನ್ನು ಕಂಡು “ಮುಚ್ಚಿಕೊಳ್ಳಿರೊ’ ಎಂದು ಎಚ್ಚರಿಸಿದ್ದಾನೆ.

ಒಳ್ಳೆಯ ಮನುಷ್ಯರದೇ ನಿಜವಾದ ಕುಲ, ಅದೇ ಶಿವನ ಕುಲವೆಂದು ಹೇಳುತ್ತ:

ಕೆಸರೊಳ್ ಕಂಜವದು ಜನಿಸೆ | ಕೆಸರೆನಿಸದ ತೆರನು||

ಅಸಮಪುಣ್ಯದಿಂ ಪಶುಪತಿಭಕ್ತನೆನಿಸಿ ತಾನೆಲ್ಲುದಯಿಸಲಾತನ್‌ಸತ್

ಮುತ್ತುದಯಿಸಿ ಜಲದೊಳ್ ಜಲವದು ಮುತ್ತಾಗಿರದದರೋಳ್ |

ಮರ್ತ್ಯದೊಳಗೆ ತನುವೆತ್ತು ಪೂರ್ವಳಿದುತ್ತಮ ಗುರು

ಸತ್ಪುತ್ರನಾದವನು।।

ಶ್ರೀ ಘನಮಠೇಶ ತತ್ವಪದಗಳು: ಪು: ೮೯).

ಇಂತಹ ಅನೇಕ ನುಡಿಗಳಲ್ಲಿ ಈ ತತ್ವಪದಕಾರ, ಜಾತೀಯತೆಯನ್ನು ಖಂಡಿಸಿದ್ದಾನೆ. ಕೆಸರಿನಲ್ಲಿ ಕಮಲ ಹುಟ್ಟಿದಂತೆ, ಜಲದಲ್ಲಿ ಮುತ್ತು ಹುಟ್ಟಿದಂತೆ, ಹೊಲಗೇರಿಯಲ್ಲಿ ಹುಟ್ಟುವ ಮನುಷ್ಯನೂ ಪವಿತ್ರನೇ ಆಗಿದ್ದಾನೆಂದು ಸ್ಪಷ್ಟಪಡಿಸಿದ್ದಾನೆ.

“ಉಪ್ಪು ಹುಳಿಯ ಬಿಟ್ಟು ನಾನು ಸಪ್ಪೆಯನುಂಡೆನೆಂತೀದಿ

ಉಪ್ಪನರಿಯದ ನಾಯಿನರಿಗಳಿಗಪ್ಪುದೆ ಷಟ್‌ಸ್ಥಲದ ಹಾದಿ?”

ಎಂದು ಕೇಳಿದ ತತ್ವಪದಕಾರ,

“ಬೆಳ್ಳಿ ತಾಮ್ರದೇವರು ಬಹು ಸತ್ಯುಳ್ಳವೆಂದು ಕೂಗುವೆ

ಕಳ್ಳರು ಒಯ್ದು ಕಡಿದು ಕರಗಿದಡೆಲ್ಲಿಗೈದಿದವೋ?”

ಎಂದು ಪ್ರಶ್ನಿಸುತ್ತಾನೆ. ಸ್ಥಾವರವನ್ನು ವಿರೋಧಿಸಿದ ಈ ಅನುಭಾವಿ, ಉಪ್ಪು-ಹುಳಿ ಬಿಟ್ಟು ತಿರುಗುವ ಸಂನ್ಯಾಸಿಗಳನ್ನೂ ವಿಡಂಬಿಸುತ್ತಾನೆ. ವಚನಕಾರರ ಆಶಯಗಳನ್ನೇ ತನ್ನ ತತ್ವಪದಗಳಲ್ಲಿ ಹೇಳಿದ ಘನಮಠದಾರ್ಯನ ಅನುಭಾವ  ಎತ್ತರವಾದುದು. ನಿತ್ಯ ಬದುಕಿನ ನಡೆ-ನುಡಿಗಳಲ್ಲಿಯೇ ಅನುಭಾವವನ್ನು ಕಾಣುವ ಈತನ ತತ್ವಪದಗಳು ಜನಸಾಮಾನ್ಯರಿಗೂ ಅರ್ಥವಾಗುವ ಗೇಯಗೀತೆಗಳಾಗಿವೆ.

“ಹೊತ್ತಿರಲಿಕೆ ಊರಿಗೆ ಸೇರೋ | ದಾರಿ

ಕತ್ತಲೆಯೊಳಗರುಪುವರಾರೊ

ಬೀಜದ ನೆಲ್ಲು ಕುಟ್ಟಿಯು ಕೊಟ್ಟು | ಚಲ್ಲು

ತೋಜೆಯಿಂ  ಶುದ್ಧಭಾಂಡದೊಳಟ್ಟು ||

ಮಾಜದ ಜಂಗಮೇಶನಿಗೆ ಕೊಟ್ಟು | ಘನ

ತೇಜ ಪ್ರಸಾದವನುಂಡುಟ್ಟು ||

-ಶ್ರೀ ಘನಮಠೇಶ ತತ್ವಪದಗಳು: ಪುಟ: ೮೭)

 ಎಂಬಂತಹ ಅನೇಕ ನುಡಿಗಳು ನೀತಿವಿಚಾರವನ್ನು ತಿಳಿಸುತ್ತಲೇ ಅನುಭಾವದೆತ್ತರವನ್ನು ತಲುಪುತ್ತವೆ. ಮನಸರಳ ನಡೆ-ನುಡಿ ಪ್ರಾಮಾಣಿಕತೆ, ಸತ್ಯಶುದ್ಧ ಜೀವನ ಇಷ್ಟಾದರೆ ಸಾರ್ಥಕವೆಂದು ಹೇಳಿದ ಈ ತತ್ವಪದಕಾರ ಡಾಂಭಿಕತೆ, ಜಾತೀಯತೆಯನ್ನು ತಿರಸ್ಕರಿಸಿ ಅಂತಸ್ತು ಅಹಂಭಾವವನ್ನು ಅಲ್ಲಗಳೆದಿದ್ದಾನೆ.

ಮೇಲಿನ ನುಡಿಯಲ್ಲಿ ಬಂದಿರುವ ‘ಬೀಜದ ನೆಲ್ಲು’ ಎಂದರೆ ತೋರಿಕೆಯ ಅರ್ಥ’ಗಟ್ಟಿನೆಲ್ಲು ಯೆಂದಾದರೆ,  ಶಿವಬೀಜವನ್ನೊಳಗೊಂಡಿರುವ ಜೀವಾತ್ಮವೆಂಬುದು ಒಳ ಅರ್ಥವನ್ನು ಸೂಚಿಸುತ್ತದೆ. ಹೊಟ್ಟು’ ಎಂದರೆ ಜೀವಾತ್ಮವನ್ನು ಆವರಿಸಿರುವ ಮಲಾವರಣವೇ ಆಗಿದೆ. ಈ ಮಲಾವರಣವನ್ನು ತೆಗೆಯಲು ಗುರುವಿನ ಅಗತ್ಯವಿದೆಯೆಂದು ಘನಮಠದಾರ್ಯ ಇಲ್ಲಿ ವಿವರಿಸಿದ್ದಾನೆ. ‘ಮೂರು ಬೆಟ್ಟಗಳ ಯುಕ್ತಿಲಿ `ದಾಟೊ ಎಂಬ ನುಡಿ ಸ್ಥೂಲ-ಸೂಕ್ಷ್ಮಕಾರಣ ತನುಗಳನ್ನು ದಾಟುವ ಕ್ರಿಯೆಯೇ ಆಗಿದೆ. ಆಸೆ-ಆಮಿಷಗಳೆಂಬ ಹುಲಿಗಳನ್ನು ಕೊಂದು, ಅರಿಷಡ್ವರ್ಗಗಳೆಂಬ ಕಳ್ಳರಿಂದ ಪಾರಾಗಿ ಊರನ್ನು ಸೇರುವ ಬಗೆಯನ್ನು ತಿಳಿಸಿದ್ದಾನೆ. ಇಂತಹ ಅನೇಕ ಪದಗಳಲ್ಲಿ ಇಹದ ಮೂಲಕ ಪರವನ್ನು ಕಾಣುವ ಪ್ರಯತ್ನವಿದೆ.

ನಾಗಭೂಷಣ ಶಿವಯೋಗಿ ಮಹತ್ವದ ತತ್ವಪದಗಳನ್ನು ನೀಡಿರುವಂತೆ, ಕೃಷಿಗೆ ಸಂಬಂಧಿಸಿದ ‘ಕೃಷಿಜ್ಞಾನ ಪ್ರದೀಪಿಕೆ” ಯೆಂಬ ಕೃತಿಯನ್ನು ಕೊಟ್ಟಿದ್ದಾನೆ. ಹೀಗಾಗಿ ಈತ ಶಿವಯೋಗಿ ಆಗಿರುವುದರ ಜತೆಗೆ ನೇಗಿಲಯೋಗಿಯೂ ಆಗಿದ್ದಾನೆ. ಬಸವಣ್ಣ ಮುಂತಾದ ವಚನಕಾರರ ಕಾಯಕ ತತ್ವದಿಂದ ಪ್ರೇರಣೆ ಪಡೆದ ಈ ಶಿವಯೋಗಿ, ಮನುಷ್ಯರ ಮನದಲ್ಲಿ ಭಕ್ತಿಬೀಜಗಳನ್ನು ಬಿತ್ತುವುದರ ಜತೆಗೆ, ಭೂಮಿಯಲ್ಲಿ ವಿವಿಧ ಬೀಜಗಳನ್ನು ಬಿತ್ತಿ ಬೆಳೆ ತೆಗೆದಿದ್ದಾನೆ. ಹೊರಗಿನ ನೆಲವನ್ನು ಕೃಷಿ ಕಾಯಕದಿಂದ ಹಸಿರುಗೊಳಿಸುವುದರ ಜತೆಗೆ ಒಳಗಿನ ನೆಲವನ್ನು ಅಧ್ಯಾತ್ಮದ ಮೂಲಕ ಹಸಿರಾಗಿರಿಸಿದ್ದಾನೆ. ಹೀಗಾಗಿ ಕೃಷಿಕಾಯಕ ಈ ತತ್ವಪದಕಾರನಲ್ಲಿ ವಿವಿಧ ಅರ್ಥಗಳನ್ನು ಪಡೆದುಕೊಂಡಿದೆ.

“ಕೃಷಿ ಜ್ಞಾನ ಪ್ರದೀಪಿಕೆ” ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲನೆ ಭಾಗದಲ್ಲಿ ಭೂಮಿ, ಮಳೆ, ಬೆಳೆ ಈ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳಿದ್ದರೆ, ಎರಡನೆಯ ಭಾಗದಲ್ಲಿ ವೀರಶೈವ ಧರ್ಮ-ತತ್ವಗಳಿಗೆ ಬಂಧಿಸಿದ ವಿಷಯವಿದೆ. ಭೂಮಿ ಹಾಗೂ ಅದರ ಮಹತ್ವ, ಸಾಗುವಳಿಗಾಗಿ ಸಿದ್ಧತೆಗಳು, ನಟ್ಟುಕಡಿಸುವುದು, ಗೊಬ್ಬರ ಹಾಕುವುದು, ಒಣ ಬೇಸಾಯ, ನೀರಾವರಿ ಬೇಸಾಯ ಈ ಎಲ್ಲ ವಿಷಯವನ್ನು ಕುರಿತಂತೆ ಈ ಕೃತಿಯಲ್ಲಿ ವಿವರವಾಗಿ ಹೇಳಲಾಗಿದೆ. ಹಾಗೆಯೇ ಕೊನೆಯಲ್ಲಿ ಬರುವ ಪಾರಮಾರ್ಥ ಕೃಷಿಯ ಪ್ರತಿಪಾದನೆಯಿಂದ ಈ ಕೃತಿಗೆ ಮತ್ತೊಂದು ಹೊಸ ಆಯಾಮ ದೊರಕುತ್ತದೆ.

ಈ ಘನಮಠದಾರ್ಯ ವಿಶಿಷ್ಟ ತತ್ವಪದಕಾರನಾಗಿದ್ದಾನೆ. ಆಂಧ್ರಪ್ರದೇಶದಿಂದ ಬಂದ ಈತ ಕನ್ನಡ ನಾಡಿನಲ್ಲಿ ಸಂಚರಿಸಿ ಕನ್ನಡಿಗನಾದ, ತೆಲಗು-ಕನ್ನಡಗಳ ಭಾಷಾ ಬಾಂಧವ್ಯವನ್ನಿಲ್ಲಿ ಕಾಣಬಹುದಾಗಿದೆ. ನೆಲದ ಕೃಷಿ, ಮನದ ಕೃಷಿ ಹಾಗೂ ತನುವಿನ ಕೃಷಿಯನ್ನು ಹೇಳುವ ಈ ಅನುಭಾವಿಯ ರಚನೆಗಳಲ್ಲಿ ಬದುಕಿನ ಸಮನ್ವಯವನ್ನು ನೋಡಬಹುದಾಗಿದೆ.

ತತ್ವಪದಕಾರರಲ್ಲಿ ಕೆಲವರು ನೆಲ-ನೆಲೆಗಳನ್ನು ತೊರೆದು, ಸಂಸಾರ-ಸಂಬಂಧಗಳನ್ನು ಬಿಟ್ಟು ಮುಕ್ತಿಯೊಂದೇ ಪರಮ ಶ್ರೇಷ್ಠವೆಂದು ಅಲೆದಾಡಿದವರಿದ್ದಾರೆ. ವ್ಯವಸ್ಥೆ ಬಗೆಗೆ ಆಲೋಚಿಸಿದ, ವ್ಯವಸ್ಥೆಯ ಬದಲಾವಣೆಯ ಬಗೆಗೆ ಚಿಂತಿಸದೆ ಮನುಷ್ಯ ಮಾತ್ರ ಬದಲಾವಣೆ ಬೇಕೆಂದು ಹೇಳಿದವರಿದ್ದಾರೆ. ಇಂತಹ ಅನೇಕ ಹೇಳಿಕೆಗಳು, ಸ್ತ್ರೀಯರನ್ನು ಕುರಿತಂತೆ ಅವರು ತಾಳಿರುವ ನಂಬಿಕೆಗಳು, ಅಧ್ಯಾತ್ಮಿಕ ಹೆಸರಿನಲ್ಲಿ ಇಹದ ಬದುಕನ್ನು ನಿರಾಕರಿಸುವ ಅವರ ಧೋರಣೆಗಳು ನಮಗಿಂದು ಮಿತಿಗಳಾಗಿ ಕಾಣಬಹುದು. ಆದರೆ ಘನಮಠದಾರ್ಯನಂತಹ ತತ್ವಪದಕಾರರು ನೆಲ-ನೆಲೆಯ ಮೂಲಕವೇ ಪಾರಮಾರ್ಥವನ್ನು ಕಂಡುಕೊಂಡದ್ದು, ಸಂಸಾರದ ಸುಖವನ್ನು ಅನುಭವಿಸಿಯೂ ಅಧ್ಯಾತ್ಮದ ಸಾಧನೆ ಮಾಡಿದ್ದು ಮುಖ್ಯವಾಗುತ್ತದೆ. ವಚನಕಾರರಂತೆ ಇಹದ ಮೂಲಕವೇ ಪರವನ್ನು ಕಾಣುವ, ಇಲ್ಲಿ ಸಲ್ಲಿದಾಗಲೇ ಅಲ್ಲಿ ಸಲ್ಲುತ್ತದೆಂದು ಹೇಳುವ  ಸ್ತುನಿಷ್ಠತೆಯನ್ನು ಈ ತತ್ವಪದಕಾರನಲ್ಲಿ ಕಾಣಬಹುದಾಗಿದೆ. ಜನರ ಮೌಢ್ಯತೆಯನ್ನು ಹೋಗಲಾಡಿಸಿ, ಅಂಧಸಂಪ್ರದಾಯಗಳನ್ನು ತೊರೆದು, ವೇದ-ಶಾಸ್ತ್ರ-ಪುರಾಣಗಳ ಪೊಳ್ಳುತನವನ್ನು ಬಯಲಿಗೆಳೆದು ಮನುಷ್ಯರ ಪ್ರಯತ್ನಕ್ಕೆ ಕೃಷಿ ಕಾಯಕಕ್ಕೆ ಮಹತ್ವ ನೀಡಿದ  ಘನಮಠದಾರ್ಯ ಇಂದಿಗೂ ಪ್ರಸ್ತುತನಾಗಿದ್ದಾನೆ. ಈತನ ತತ್ವಪದಗಳನ್ನು, ಕೃಷಿಜ್ಞಾನ ಪ್ರದೀಪಿಕೆಯಂತಹ ಕೃತಿಗಳನ್ನು ಹೊಸ ನೆಲೆಗಳ ಮೂಲಕ ಚರ್ಚಿಸಬೇಕಾಗಿ ಬದುಕಿನ ವಾಸ್ತವತೆಯ ಹಿನ್ನೆಲೆಯಲ್ಲಿ ಚಿತ್ರಿಸಬೇಕಾಗಿದೆ.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

ಬಿ.ಮಹಾದೇವಪ್ಪ

ಕ್ರಿ.ಶ. ೧೭೮೦ರಿಂದ ೧೮೫೫ರವರೆಗೆ ಬಾಳಿ ಬದುಕಿದ ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಕ್ರಾಂತಿಕಾರಿ ಕವಿಗಳು, ಬಂಡಾಯ ಕವಿಗಳು ಮತ್ತು ಅನಿಷ್ಟಗಳು ಕಂಡಾಗಲೆಲ್ಲ ಖಂಡತುಂಡವಾಗಿ ಖಂಡಿಸಿದ ಪ್ರಚಂಡಕವಿಗಳು, ಕಲಬುರ್ಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಬಿದನೂರು ಗ್ರಾಮದ ವಿಧವೆ ಗಂಗಮ್ಮ ಮತ್ತು ಮಠದ ವಿರೂಪಾಕ್ಷ ಸ್ವಾಮಿಗಳ ಸಂಬಂಧದಿಂದ ಹುಟ್ಟಿದ ಶ್ರೀ ಮಡಿವಾಳಪ್ಪನವರನ್ನು ಸಮಾಜವು ತೀಕ್ಷ್ಣ ದೃಷ್ಟಿಯಿಂದ ನೋಡಿದಾಗ, ಶ್ರೀ ಮಡಿವಾಳಪ್ಪನವರು ಸಮಾಜವನ್ನು ಬಹಳ ತೀಕ್ಷ್ಣ ದೃಷ್ಟಿಯಿಂದ ಅವಲೋಕಿಸಿದರು. ಅವರ ವಿಧವೆಯ ಮಗನಾಗಿ ಎದುರಿಸಿದ ಹತ್ತು ಹಲವು ಕಹಿ ಅನುಭವಗಳೇ ಕಾವ್ಯಮಯವಾಗಿ ಹರಿದು ಬಂದವು. ವಿಧವೆಯ ಮಗನೆಂಬ ಕಾರಣದಿಂದ ಸಂಪ್ರದಾಯಪ್ರಿಯ ಜಂಗಮರಾರೂ ಬಾಲಕ ಮಡಿವಾಳಪ್ಪನವರ ಕೊರಳಿಗೆ ಇಷ್ಟಲಿಂಗ ಕಟ್ಟಲು ಮುಂದೆ ಬರದಿದ್ದಾಗ ಲಿಂಗವಿರಹದ ನೋವೇ ಭಕ್ತಿಯ ಪ್ರವಾಹವಾಗಿ ಹೊರಹೊಮ್ಮಿತು. ಮತ್ತು ಸಂಪ್ರದಾಯನಿಷ್ಠರ ಬಗೆಗಿನ ಕ್ರೋಧವೇ ಬಂಡಾಯಗಾರನಾಗಿ ಕಂಡರಿಸಿತು

.

“ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪೂಜಿಸಿ, ವಂದಿಸಿ, ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯʼʼ ಎಂದು ಅಣ್ಣ ಬಸವಣ್ಣನವರು ಹೇಳಿದಾಗ್ಯೂ ಇವರು ಕುಲಛಲದ ಮಾತನಾಡುವರಲ್ಲಾ ಎಂದು ಸಿಟ್ಟಿನಿಂದ ಮಾನವರ ಜನನ ರೀತಿಯನ್ನೆಲ್ಲ ತರ್ಕಬದ್ಧವಾಗಿ ಜಾಲಾಡಿದರು. ಅವರ ಒಂದು ಪದ್ಯ ಹೀಗೆ ಬರುತ್ತದೆ:

ಮುಡುಚೆಟ್ಟಿನೊಳು ಬಂದು ಮುಟ್ಟುತಟ್ಟು ಅನ್ನುತೀರಿ

ಮುಡುಚೆಟ್ಟೆಲ್ಲ್ಯಾದ ಹೇಳಿರಣ್ಣ

ಮುಟ್ಟಾದ ಮೂರುದಿನಕ ಹುಟ್ಟಿಬಂದಿರಿ ನೀವು

ಮುಡುಚೆಟ್ಟೆಲ್ಲ್ಯಾದ ಹೇಳಿರಣ್ಣ

ತೊಗಲೊಳು ತೊಗಲು ಹೊಕ್ಕು ತಗಲಿ ಬಂದೀರಿ. ನೀವು

ಅಗಲ ಮಾತಾಡುವುದೇನಣ್ಣ?

ಬಗೆಯ ತಿಳಿಯದೆ ಇದರ ಬಗದು ಮಾತಾಡಿದರೆ

ನಗೆಗೇಡಿಯಾಗುತಾದಣ್ಣ

ಎಲವಿನಾಲಯದೊಳು ಒಳಗ್ಹೊಕ್ಕು ನೀ ಕುಂತು

ಒಲಿದಂತೆ ಆಡಬೇಡಣ್ಣ

 ಎಲುವು ತೊಗಲು ಮಜ್ಜೆ ಮಲ ಮೂತ್ರ ಮಾಂಸವು

ನಿನ್ನೊಳಗೆ ಕಾಣುತಾದಣ್ಣ

ಹೀಗೆ ಶ್ರೀಮಡಿವಾಳಪ್ಪನವರು ಜಾತಿ ಪಾರಮ್ಯದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಮರವನ್ನೇ ಸಾರಬೇಕಾಗುತ್ತದೆ “ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಂ ದ್ವಿಜಮುಚ್ಚತೇ’ʼ ಎಂಬ ಶಾಸ್ತ್ರೋಕ್ತ ಮಾತನ್ನು ಅಲಕ್ಷಿಸಿ ಉಚ್ಚ ನೀಚ ಎಂದು ಒಣ ಅಭಿಮಾನದಿಂದ ಬೀಗುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಅನೇಕ ಹಾಡುಗಳು ಉಪಲಬ್ದ ಇವೆ.

೧. “ಊಚದ್ಯಾವದೋ ಇದರೊಳು ನೀಚದಾವದೋ?

ನಾಚುವದ್ಯತಕೆ ಎನ್ನಮುಂದೆ ಭೂಚರ್ಯಕೆ ಬಂದಮೇಲೆ ||ಪ||

ತುಲ್ಲು ತುಣ್ಣಿಲಿಂದ ಹುಟ್ಟಿ, ಹೊಲ್ಲಹೊವೆಯ ದೇಹ ತೊಟ್ಟಿ

ಬಲ್ಲೆನಂತೊ ಬಿಂಕದಿಂದೆ, ವಳ್ಲಿವಳ್ಳಿ ಸುಳ್ಳೆ ಕೆಟ್ಟಿ ||೧||

೨.ದಾವದೋ, ಕುಲದಾವದೋ?

ಕುಲದ ವಿವರವ ತಿಳಿದ್ಹೇಳೆಲೋ    ಮೂಢ  || ಪ||

ಒಂಬತ್ತು ತಿಂಗಳು ತಾಯಿಯ ಹಾಟು

ತಂದಿದು ಒಂದಿಷ್ಟು ಅರಗದ್ಯಾಣದಷ್ಟು

ಅದರೊಳು ಕೂಡಿ ಬಂದಾದ ಜೀವ ಒಂದಿಷ್ಟು

ಮೂಬೆರಕಿ ಮೂಳ ನಿನಗ್ಯಾಗಿಷ್ಟು ನೇಟು ||೧||

೩. ಐತಾನದ್ಹಮ್ಮೇನೂ ಚುಮ್ಮಾ| ದೇಹ

ಮೈಥುನದಿಂದ ಆವದಿ ತಾಯಿ-ತುದಿಯ ಸೊಮ್ಮ

ಶ್ರೀ ಕಡಕೋಳ ಮಡಿವಾಳಪ್ಪನವರನ್ನು ಆ ಕಾಲದಲ್ಲಿ ಎಲ್ಲರೂ ತುಚ್ಛ ದೃಷ್ಟಿಯಿಂದಲೇ ನೋಡಲಿಲ್ಲ, ಹೊನ್ನನ್ನು ಚೆನ್ನಾಗಿ ಪರೀಕ್ಷಿಸುವ ಜನರು ಆ ಕಾಲದಲ್ಲಿಯೂ ಇದ್ದರು. ಬಿದನೂರಿನ ಶ್ರೀಮಲ್ಲಿಕಾರ್ಜುನಪ್ಪಗೌಡರು ತಾಯಿ ಗಂಗಮ್ಮ ಮತ್ತು ಮಗ ಮಡಿವಾಳನನ್ನು ಬಹಳ ಮಮತೆ ಕಕ್ಕುಲಾತಿಯಿಂದ ನೋಡಿಕೊಂಡರು. ಶ್ರೀ ಮಡಿವಾಳಪ್ಪನವರ ದೈವಭಕ್ತಿ ಮತ್ತು ಪರಮ ವಿರಕ್ತಿಯನ್ನು ಪರಿಶೀಲಿಸಿದ ಅರಳಗುಂಡಿಗೆ ಶ್ರೀ ಶರಣಬಸವೇಶ್ವರರು ತಮ್ಮ ಗುರು ಮರುಳಾರಾಧ್ಯರ ಮೂಲಕ ಅವರಿಗೆ ಇಷ್ಟಲಿಂಗ ಧಾರಣೆ ಮಾಡಿಸಿದರು. ಚಿಮಣಗೇರಿ ಗುಡ್ಡದ ಮಠಾಧೀಶರು ಅವರ ತಪೋನುಷ್ಠಾನ -ಶಿವಯೋಗ ಪರಾಕಾಷ್ಠೆಯನ್ನು ಅನುಲಕ್ಷಿಸಿ ಜಂಗಮದೀಕ್ಷೆ ನೀಡಿದರು. ಶ್ರೀ ಶರಣಬಸವೇಶ್ವರರ ಜೊತೆಗೆಯೇ ಜೀವನ ಸಾಗಿಸಬೇಕೆಂದಾಗ ಅರಳಗುಂಡಿಗೆಯ ಹಳೇಪ್ಯಾಟಿ ಬಸಯ್ಯನವರಂತಹ ಪಾಖಂಡಿಗಳು ಕುಲನೆಲಿ ಎತ್ತಿ  ಛೇಡಿಸುತ್ತಾ ಇಲ್ಲದ ಅಪವಾದವನ್ನು ಹೊರಿಸಿ ತೊಂದರೆ ಕೊಟ್ಟರು. ಶ್ರೀ ಶರಣಬಸವೇಶ್ವರರಿಗೆ ತೊಂದರೆಯಾಗಬಾರದೆಂದು ಅರಳಗುಂಡಿಗೆಯನ್ನು ತ್ಯಜಿಸಿ ಜಂಬೇರಾಳ ಎಂಬ ಗ್ರಾಮಕ್ಕೆ ಬಂದು, ಅಲ್ಲಿಂದಲೂ ನಿರ್ಗಮಿಸಿ, ಕೋಣ ಸಿರಸಿಗೆಗೆ ಬಂದು, ಅಲ್ಲಿಯೂ ಅಜ್ಞ ಜನರ ಉಪಟಳ ಜಾಸ್ತಿ ಆದಾಗ ಕಡಕೋಳ ಗ್ರಾಮಕ್ಕೆ ಬಂದು ಅಲ್ಲಿಯ ಆಹ್ಲಾದಕರ ಪರಿಸರಕ್ಕೆ ಮನಸೋತು ಒಂದು ಮಠ ಕಟ್ಟಿಕೊಂಡು ವಿರಕ್ತ  ಜಂಗಮರಾಗಿ ನೆಲೆನಿಂತರು. ಅದೇ ಅವರಿಗೆ ಕಡೆಯ ಕೊಳ್ಳವಾಯಿತು. ಅಲ್ಲಿಯೇ ಕ್ರಿ.ಶ. ೧೮೫೫ರಲ್ಲಿ ಸಜೀವ ಸಮಾಧಿ ಹೊಂದಿದರು.

ಮನುಷ್ಯ ಎಲ್ಲಿ ಹುಟ್ಟಿದ ಯಾರಿಗೆ ಹುಟ್ಟಿದ ಎಂಬವುಗಳು ಮುಖ್ಯವಾದವುಗಳು ಅಲ್ಲವೇ ಅಲ್ಲ, ಆತ ಹೇಗೆ ಬಾಳಿದ, ಪರರನ್ನು ಹೇಗೆ ಬಾಳಗೊಟ್ಟ ಎಂಬುವು ಮನುಷ್ಯ ಜೀವನದ ಸಾರ್ಥಕತೆಯನ್ನು ಸಾರಿ ಹೇಳುತ್ತವೆ. ಶ್ರೀ ಮಡಿವಾಳಪ್ಪನವರು ಕಡಕೋಳದಲ್ಲಿ ನೆಲೆನಿಂತ ನಂತರ ತಾವು ನಂಬಿದ ತತ್ವಗಳಿಗೆ ಬದ್ಧರಾಗಿ, ಕಲ್ಯಾಣದ ಶಿವಶರಣರ ಆದರ್ಶ ಮಾರ್ಗ,  ಪಥಿಕರಾಗಿ, ಕಡಕೋಳದಲ್ಲಿಯೇ ಒಂದು ಆಧುನಿಕ ಅನುಭವ ಮಂಟಪ ರಚಿಸಿಕೊಂಡು ಭಕ್ತಿಪಕ್ಷ ರೂಪಿಸಿಕೊಳ್ಳುತ್ತಾರೆ.  ಹನ್ನೆರಡನೆಯಶತಮಾನದ ಅನುಭವ ಮಂಟಪಕ್ಕಾದರೋ ಇಷ್ಟಲಿಂಗ ಕಡ್ಡಾಯವಾಗಿತ್ತು. ಆದರೆ ೧೯ನೆಯ ಶತಮಾನದ ಕಡಕೋಳ ಅನುಭವ ಮಂಟಪದಲ್ಲಿ ಕಾಲಮಾನಕ್ಕನುಸರಿಸಿ ಇಷ್ಟಲಿಂಗ ಐಚ್ಛಿಕವೆನಿಸುತ್ತೆನಿಸುತ್ತದೆ. ಅವರ ಶಿಷ್ಯ ಬಳಗದಲ್ಲಿ ಬ್ರಾಹ್ಮಣ ಬೈನೂರು, ಕೃಷ್ಣಪ್ಪನವರು, ಕಬ್ಬಲಿಗರಜಾತಿಯ ಕಡ್ಲೆವಾಡದ ಸಿದ್ಧಪ್ಪನವರು, ಮುಸಲ್ಮಾನ ಜಾತಿಯ ಚೆನ್ನೂರ ಜಲಾಲ ಸಾಹೇಬರು, ಮೋಟನಹಳ್ಳಿಯ ಹಸನಸಾಹೇಬರು, ಶೀಲವಂತ ಹಂಗರಗಿ ಬಸವಲಿಂಗಪ್ಪನವರು, ರೆಡ್ಡಿಕುಲದ ಕೋಡಿ ರಾಮಲಿಂಗಾರೆಡ್ಡಿಯವರು-ಹೀಗೆ ಅಸಂಖ್ಯಾತ ಜನರು ಅವರ ಸುತ್ತಮುತ್ತ ನೆರೆದು ಅನುಭಾವದ ಅಡಿಗೆಯನ್ನು ಮಾಡಿ ಸವಿಯುತ್ತಿರುತ್ತಾರೆ. “ಎಂಥ ಮಾನವ ಜನ್ಮ ಇದು ಮಾಯಿಗೆ ಸೋತಾದ” ಎಂಬ ವಿಷಾದದೊಡನೆ ಮಾನವ ಜನ್ಮದ  ಸಾರ್ಥಕತೆಯ ಚಿಂತನೆಗಳು ಅಲ್ಲಿ ನಡೆಯುತ್ತವೆ. “ಮಚ್ಚಲಿ ಹೊಡಿರಿವಗ, ಕಚ್ಚೆಗಡುಕ ನಿಜದೆಚ್ಚರ ಅರಿಯದೆ ಹುಚ್ಚು  ನಾಯಾಂಗ ಮನಿ ಮನಿ ತಿರುಗವಗ” ಎಂಬ ರೊಚ್ಚಿನ ನಿರ್ಧಾರಗಳು ಅಲ್ಲಿ ಆಗುತ್ತವೆ. “ಏತರ ಕಟಿಪಿಟಿ ಒಂದಿನ ಹೋಗದು ಲಟಿಪಿಟಿ ಸಂಸಾರ ಮಾಡ್ತೀರಿ ಜಟಿಪಿಟಿ, ಆದರ ಭಕ್ತಿ ಮಾಡುದು ತುಟುಮಿಟಿ’ ಎಂಬಂತಹ ಅನಿತ್ಯ ಸಂಸಾರದ ಬೆತ್ತಲೆ ಚಿತ್ರಗಳು ಅಲ್ಲಿ ಮೂಡಿ ನಿಲ್ಲುತ್ತಿದ್ದವು.

ಮನುಷ್ಯ ಮಾಯೆಯ ಜ್ವಾಲೆಗೆ ಬೀಳುವದಾಗಲಿ, ಹಲವು ಹಗರಣಗಳನ್ನು ಮಾಡುವುದಾಗಲಿ ಸುಳ್ಳು, ಮೋಸ, ವಂಚನೆಗೆ ಒಳಗಾಗುವುದಾಗಲಿ, ರೂಪ ಮನುಷ್ಯನದಿದ್ದರೂ ನಾಯಿ, ಕೋತಿ, ಕತ್ತೆಗಳ ಹಾಗೆ ವರ್ತಿಸುವುದಾಗಲಿ, ಸೃಶ್ಯಾಸೃಶ್ಯ ಆಚರಿಸುವುದಾಗಲಿ ಜ್ಞಾನದ ಕೊರತೆಯೆಂಬ ನಿತ್ಯ ಸತ್ಯವನ್ನು ಕಂಡು ಕೊಂಡ  ಮಡಿವಾಳಪ್ಪನವರು ಮಾನವರ ಜ್ಞಾನಾರ್ಜನೆಗೆ ವಿಶೇಷ ಮಹತ್ವಕೊಟ್ಟರು. “ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ ವೇದ ಶಾಸ್ತ್ರ ಪುರಾಣಾಗಮಗಳೆಂಬ ನೇಣ ಕಟ್ಟಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ, ತೊಟ್ಟಿಲು ಮುರಿದು ನೇಣ ಹರಿದು, ಜೋಗುಳ ನಿಂದಲ್ಲದೆ ಗುಹೇಶ್ವರ ಲಿಂಗವ ಕಾಣಬಾರದು” ಎಂಬ ಅಲ್ಲಮ ಪ್ರಭುಗಳ ಮಾತನ್ನು ಎತ್ತಿ ಹಿಡಿದು ಶ್ರೀ ಮಡಿವಾಳಪ್ಪನವರು ತಮ್ಮ ಹತ್ತಿರ ಬಂದ ಮುಮುಕ್ಷುಗಳಿಗೆಲ್ಲ ಬ್ರಹ್ಮ ಜ್ಞಾನಿಗಳಾಗಬೇಕೆಂದೇ ಬೋಧಿಸುತ್ತಿದ್ದರು. ಜ್ಞಾನವನ್ನು ಆರಾಧಿಸುವದು, ಅಜ್ಞಾನವನ್ನು ನಿಯಂತ್ರಿಸುವದು ಅವರ ಪ್ರಮುಖ ಉಪದೇಶವಾಗಿರುತ್ತಿತ್ತು. ಈ ಕೆಳಗಿನ ಹಾಡಿನಲ್ಲಿ ಬಹಳ ಮಾರ್ಮಿಕವಾಗಿ ತಿಳಿಸಿದ್ದಾರೆ.

ಧನವ ಗಳಿಸಬೇಕು ಇಂಥಾದ್ದು| ಈ ಜನರಿಗೆ ತಿಳಿಯದಂಥಾದ್ದು

ಅನುದಿನ ಅಜಹರಿಮನುಮುನಿಗಳು ಎಲ್ಲ| ಹೌದು, ಹೌದು, ಹೌದೆಂಬಂಥದ್ದು

ಕೊಟ್ಟರೆ ಹೋಗದಂಥಾದ್ದು  |ಅದು ಇಟ್ಟರೆ ಕೊಳೆಯದಂಥಾದ್ದು

ಕಟ್ಟಿದ ಗಂಟು ಬಯಲೊಳಗಿಟ್ಟರೂ | ಮುಟ್ಟಲಿಬಾರದಂಥಾದ್ದು. 

ಜ್ಞಾನ ಸಂಪಾದನೆ ಜತೆಗೆ ಅಜ್ಞಾನದ ಹೋಗಲಾಡಿಸುವಿಕೆಯೂ ಅಷ್ಟೇ ಮಹತ್ವಪೂರ್ಣವಾದುದು. ಅಜ್ಞಾನ ಇರುವವರೆಗೆ ಜ್ಞಾನಕ್ಕೆ ಜಾಗ ಇರುವುದಿಲ್ಲ. ಅಜ್ಞಾನ ತನ್ನಿಂದ ತಾನೇ ಆವರಿಸಿಕೊಂಡು ಬರುವುದರಿಂದ ಅದರ ನಿಯಂತ್ರಣಕ್ಕೆ ನಾವು ಗುರು ಮತ್ತು ಪರಮಾತ್ಮನನ್ನು ಮೊರೆ ಹೋಗಬೇಕಾಗುತ್ತದೆ. ಈ ಕೆಳಗಿನ ಪದ್ಯದಲ್ಲಿ ಅವರು ಅದನ್ನೇ ಮಾಡಿದ್ದಾರೆ.

ನಾನಿತ್ತಲೆಳೆದರೆ ತಾನತ್ತಲೆಳೆಯುವದು! ಇನ್ನೇನಿನ್ನೇನೋ

ಅಜ್ಞಾನೆಂಬುವ ಕೋಣ ಸಾಧ್ಯವಾಗದು ನೋಡಾ| ಇನ್ನೇನಿನ್ನೇನೊ

ಹಸಿ ಹುಲ್ಲ ಕಂಡಲ್ಲಿ ಬಿಸಿಲೊಳು ಮೇಯುವುದು | ಇನ್ನೇನಿನ್ನೇನೊ

ಮುಂದೆ ಸಸಲ ಒಡೆದೀತೆಂದು ಕುಶಲ ತಿಳಿಯದು ಕೋಣ | ಇನ್ನೇನಿನ್ನೇನೂ

ಮುಪ್ಪುರಿಕೂಡಿಸಿಮುಗದಾತರ ಹಾಕಿದ್ದೆ. | ಇನ್ನೇನಿನ್ನೇನೋ

ಜಪ್ಪಿಸಿ ಹಿಡಿದರೆ ತಪ್ಪಿಸಿಕೊಂಡು ಹೋಯಿತು |. ಇನ್ನೇನಿನ್ನೇನೊ

ಮೂರಾರು ಕೋಣನೊಳು ತಾನೆ ತುಂಬಿತೋ ಕೋಣ  |ಇನ್ನೇನಿನ್ನೇನೊ,

ನಮ್ಮ ಧೀರ ಮಹಾಂತೇಶ ಗಮಾರಿಬಿಟ್ಟೆನು ಕೋಣ’ | ಇನ್ನೇನಿನ್ನೇನೊ

ಜನಪದರ ದೈನಂದಿನ ಜೀವನಕ್ಕೆ ಅನ್ವಯಿಸಿ ಅನೇಕ ಬೆಡಗಿನ ಹಾಡುಗಳನ್ನು ಶ್ರೀ ಮಡಿವಾಳಪ್ಪನವರು ಬಹಳ ಅರ್ಥಗರ್ಭಿತವಾಗಿಯೂ ಬಹಳ ತತ್ವಗರ್ಭಿತವಾಗಿಯೂ ಬರೆದಿದ್ದಾರೆ. ನೋಡಲಿಕ್ಕೆ ಅವು ಸಂಸಾರದ ತಾಪತ್ರಯಗಳನ್ನು  ಬಣ್ಣಿಸುವ ಹಾಡುಗಳೆನಿಸಿದರೂ ಗಾಢಾರ್ಥದಲ್ಲಿಯೂ ಗೂಢಾರ್ಥದಲ್ಲಿಯೂ ಅವು ಆಧ್ಯಾತ್ಮಿಕ ಒಲವಿನ ಹಾಡುಗಳಾಗಿರುತ್ತವೆ. ಒಲ್ಲೆನೆಪ್ಪೋ ಹೆಂಡಿರನೊಲ್ಲೆನಪ್ಪೋ! ಇಬ್ಬರ ಹೆಂಡಿರ ಕಾಟಿಗಾಗಿ ಮಗ್ಗದ ಕೋಣೆಯೊಳು ಡೊಗ್ಗದೆನಪ್ರೊ” ಎಂಬುದು ಐಹಿಕ ಮತ್ತು ಪಾರಮಾರ್ಥಿಕವನ್ನು ಸಮನಾಗಿ ತೂಗಿಸುವೆನೆಂಬುವವರ ಸುಂದರ ವಿಡಂಬನೆಯಾಗಿದೆ.

ʼʼ ಅತ್ತಿಯ ಮನಿಗ್ಹೋಗುವಲ್ಲಿ | ಊರಾಗ | ಮತ್ತ್ಯಾವ ನಿಟ್ಟಿದಿ ಇಲ್ಲಿ’ ಎಂಬುದು ಸಂಸಾರಕ್ಕೆ ಜೋತು ಬೀಳುವವರ ಅಪಹಾಸ್ಯವಾಗಿದೆ. ʼʼಮಗನೊಂದು ಹಡದೇನಲ್ಲ! ಮದವಿಗಂಡ ಮನಿಯಾಗಿಲ್ಲ. ಉಂಡು ಉಟ್ಟು ತಿರುಗಲಿಲ್ಲ, ಮಿಂಡಿ ನಾ ಬಸಿರಾಗಲಿಲ್ಲ ಎಂಬುದು ಇಷ್ಟಲಿಂಗವೆಂಬ ಮಗನ ಪಡೆದ ಸಂಕೇತವಾಗಿದೆ. ಹೀಗೆ ಇಂತಹ ನೂರಾರು ಹಾಡುಗಳು ಶ್ರೀ ಮಡಿವಾಳಪ್ಪನವರ ಸಾಹಿತ್ಯದಲ್ಲಿ ನಮಗೆ ದೊರೆಯುತ್ತವೆ.

ಹರಿಯ ಎದೆಯನ್ನು ಮೆಟ್ಟಿದೆನು, ಹರನ ಅರ್ಧಾಂಗದೊಳು ನೆರೆ, ಸುಟಿಗೆಯಾಡಿದೆನು ಬ್ರಹ್ಮನ ಬಾಯ ಮುದ್ರಿಸಿದೆಯೆಂದು ಮಾಯೆಯ ಪ್ರತಾಪವನ್ನು ಬಣ್ಣಿಸಿದ ಚಾಮರಸ ಕವಿಯ ರೀತಿಯಲ್ಲಿಯೇ ಶ್ರೀ ಮಡಿವಾಳಪ್ಪನವರು ಮಾಯೆ  ಎಂಥಾದೆಂಬುದನ್ನು ಗುಲ್ಬರ್ಗಾ ಜಿಲ್ಲೆಯ ಗ್ರಾಮ್ಯ ಭಾಷೆಯಲ್ಲಿ ಅದ್ಭುತವಾಗಿ ಬಣ್ಣಿಸಿದ್ದಾರೆ. ಮಾಯೆಯನ್ನು ಪೋರಿ ಎಂದು ಕರೆದ ಮಡಿವಾಳಪ್ಪನವರ ವೈಶಿಷ್ಟ್ಯವೇ ವೈಶಿಷ್ಟ್ಯ. ಆ ಹಾಡು ಹೀಗಿದೆ.

ಅಜೀಬ ತಮಾಷದ ಪೋರ್ಯಾಳೊ ಅಜಹರಿರುದ್ರಗ  ಮೀರ್ಯಾಳೋ

ಅಜಗಜಮಾತಿಗೆ ದೂರಾಳೊ |ನಿಜಮಹಾಜ್ಞಾನಕ ತೋರ್ಯಾಳೊ

ಪೋರಿ ನೋಡಿದರೆ ತುತ್ತಾಳೋ | ದಾರಿ ತೆಲಿಮ್ಯಾಲ ಹೊತ್ತಾ

ಸೀರಿನಿರಿಗಿ ಮ್ಯಾಲಕ್ಕೆತ್ಯಾಳೊ | ಮೂರೂ ಲೋಕ ಮುರಿದ್ತೊತ್ತ್ಯಾಳೊ

ಈ ಹೆಣ್ಣ ಯಾರಿಗಿ ಕಾಣ್ಯಾಳೊ | ಎಲ್ಲರ ಕಣ್ಣಗ ಹೂಣ್ಯಾಳೊ

ತುಣ್ಣಿಗೆ ಹುಟ್ಟಲ್ದ ಹೆಣ್ಣ ಹಾಳೊ  |ಕಣ್ಣ ಕಟ್ಟಿ ನೋಡಿದ್ರ ಕಾಣಸತಾಳೊ

ತೂಗಲಮ್ಯಾಲ ಬೆಳೆಸ್ಯಾಳಪ್ಪ | ಅವು ಮುಗಿಲಿಗಿ ಮುಟ್ಯಾವ ನೋಡಪ್ಪ

ಅಗಲಾಡಿತು. ಜಗ ಜನರಪ್ಪ | ಈ ಭುಗಲಿನೊಳಗೆ ಮಡಿವಾಳಪ್ಪನಪ್ಪ

ಶ್ರೀ ಮಡಿವಾಳಪ್ಪನವರು ಆಶು ಕವಿಗಳಾಗಿದ್ದರು. ಸಂದರ್ಭಕ್ಕೆ ತಕ್ಕಂತೆ ಹಾಡುಗಳು ಸುರಿಸುತ್ತಿದ್ದವು. ಅವರ ವಿಶೇಷತೆಯೆಂದರೆ ಕಲ್ಬುರ್ಗಿ ಜಿಲ್ಲೆ ಕನ್ನಡ ಅಶುದ್ಧವಾಗಿದೆಯೆಂದು ಇತರರು ಜರಿಯುತ್ತಿದ್ದಾಗ ಈ ಅಶುದ್ಧ ಕನ್ನಡಕ್ಕೂ ಅಧ್ಯಾತ್ಮದ ಶಕ್ತಿಯಿದೆಯೆಂದು ತೋರಿಸಿಕೊಟ್ಟರು. ಜನವಾಣಿ ಅಷ್ಟೇ ಅಲ್ಲ ಜನಪದರ ಮಾತುಗಳಿಗೂ ದೈವಸಾಕ್ಷಾತ್ಕಾರದ ಶಕ್ತಿಯಿದೆಯೆಂಬುದನ್ನು ಮೊದಲಿಗರಾಗಿ ತೋರಿಸಿಕೊಟ್ಟರು.

(ಲೇಖನ ಸೌಜನ್ಯ: ಸರ್ಪಭೂಷಣ ಮಠ ಬೆಂಗಳೂರು ಪ್ರಕಟಣೆಗಳು)

ಕವಿ ಸಿಂಗಿರಾಜರ ಕಾಲ: ಕ್ರಿ.ಶ.ಸು.೧೫೦೦, ವೀರಶೈವ ಕವಿಗಳು.
ಸಿಂಗಿರಾಜರು ವಾರ್ಧಕಷಟ್ಪದಿಯಲ್ಲಿ ‘ಬಸವಚಾರಿತ್ರ’ (ಸಿಂಗಿರಾಜಪುರಾಣ) ಎಂಬ ಕೃತಿ ರಚಿಸಿದ್ದಾರೆ.
ಈ ಕೃತಿಯು ಬಸವಣ್ಣನವರ ಚರಿತ್ರೆಯನ್ನು ಕುರಿತದ್ದಾಗಿದೆ ಮತ್ತು ಈ ಕೃತಿಯಲ್ಲಿ ಸಿಂಗಿರಾಜನು ಪುರಾಣಕ್ಕಿಂತ ವಾಸ್ತವಕ್ಕೆ ಹತ್ತಿರವಾಗುವಂತೆ ಬರೆದಿದ್ದಾರೆ.
ಬಸವಚಾರಿತ್ರದ ವಿಶೇಷತೆಗಳು:
೧) ದೇವಾಲಯದ ರಂಗ ಮಂಟಪದಲ್ಲಿರುವ ನಂದಿಕೋಡುಗಳ ಮೂಲಕ ಶಿವಲಿಂಗವನ್ನು ನೋಡುವ ವಿಧಾನ ಸಿಂಗಿರಾಜ ಪುರಾಣ ಮತ್ತು ರಾಘವಾಂಕ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
೨) ಚೆನ್ನಬಸವಣ್ಣನವರ ತಂದೆಯ ಹೆಸರನ್ನು `ಬಸವ ಚಾರಿತ್ರ್ಯ’ (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರು ಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.
೩) ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಈ ಕೃತಿಯಿಂದ ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ ರಲ್ಲಿ ರಚನೆಯಾದ ಸಿಂಗಿರಾಜರ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜರು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟರಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.
ಸಿಂಗಿರಾಜರ ಕಾವ್ಯದ ಕೆಲವು ಸಾಲುಗಳು

ಶ್ರೀ ಷಡ್ಗುಣೈಶ್ವರ್ಯಹಸಂಪನ್ನ ಬಸವ ಗುರು
ವೇಷಮಂ ಧರಿಸಿ ಮರ್ತ್ಯದಿ ಭಕ್ತರುಗಳನುಱೆ
ಪೋಷಿಸಿದ ಕಾರಣವ ಕೃತಿಮಾಳ್ಪೆ ಸದ್ಭಕ್ತಜನರಱಿವ ಮಾಳ್ಕೆಯಿಂದ

ಶ್ರೀಮದಮರೇಂದ್ರಾರ್ಚಿತಂ ಪರಾತ್ಪರಮನಿ
ಸ್ಸೀಮನದ್ವಯನತುಳನನಘ ನಿಗಮಾಗಮ
ಸ್ತೋಮ ಸಂಸ್ತುತ್ಯಗೋಚರ ನಿರಾಲಂಬ ನಿಶ್ಚಿಂತ ನಿಜ ನಿತ್ಯಮೂರ್ತಿ
ಪ್ರೇಮದಿಜನಾರ್ದನಜ ಮನುಮುನಿಪ ಯಕ್ಷ ಖಚ
ರಾಮರಮೇಶ್ವರರ್ಗಖಿಳಸಂಪದವಿತ್ತ
ಸ್ವಾಮಿ ಕಾಶೀಪುರಾಧಿಪ ವಿಶ್ವಪತಿ ಕೂರ್ತು ನೆಲಸೆನ್ನ ಹೃದಯದೊಳಗೆ ||೧||

ಆವುದಂತಸ್ಥವೀ ಕೃತಿಮೂಲವೃತ್ತಾಂತ
ಸಾವಯವೆನಲು ಭರ್ಗನೆರಡನೆಯ ಮೂರ್ತಿ ವೃಷ
ಭಾವತಾರನು ಬಸವನಾಮದಿಂ ಜನಿಸಿ ಸದ್ಭಕ್ತಿಪಥ ತೋಱಿ ಜಗವ
ಪಾವನವ ಮಾಡಿ ಪರವೆರಸಿದ ಮಹಾ ರಹ
ಸ್ಯಾವಳಿಯ ಗಣಕುಲಕೆ ನಂದಿಮಹಕಾಳರು
ದ್ರಾವರೇಣ್ಯನೊಡರ್ಚಿದೋಜೆ ಕಲ್ಪಿತ ರಸಾಯನಸಿದ್ಧಿ ಶರಣರ್ಗಿದು ||೯||

ನಕ್ರದಿಂದವಹಾರದಿಂ ಕಮಠದಿಂ ಕದುಳಿ
ಚಕ್ರದಿಂ ತಿಮಿ ತಿಮಿಂಗಿಲ ಪ್ರೋಷ್ಠದಿಂ ಕುಳಿರ
ವಕ್ರದಿಂ ಮದ್ಗುರವಮಕರದಿಂ ಕರಿಮಕರದಿಂ ಜಳೂಕದಿ ಪುಷ್ಕರ
ಚಕ್ರನಿಚಯದಿ ಶಾಲಿಹೋತ್ರಕುಲದಿಂ ದ್ವಿರದ
ಚಕ್ರವಾಳದಿ ಕರಭದಿಂ ಜೀವ
ವಿಕ್ರಮದಿ ಮನುಜಸಂಚಯದಿ ಪೊಂಪೊಗೆದು ವಾರಾಶಿ ಕಣ್ಗೆಸೆದಿರ್ದುದು ||೧೩||

ಲೀಲೆಯಿಂದಾ ಭದ್ರಸಿಂಹವಿಷ್ಟರದಿನೊ
ಡ್ಡೋಲಗಂಗೊಟ್ಟು ಕುಳ್ಳಿರ್ದ ಪರಶಕ್ತಿಯ ಸ
ಮೇಳದಿಂ ಸ್ಕಂದ ನಂದೀಶ್ವರ ಗಣಾಧೀಶ ವೀರಭದ್ರ ಪ್ರಮುಖರ
ಸಾಲುಸಂಗಡದ ರುದ್ರಾಳಿಗಳ ತ್ರೈಜಗ
ತ್ಪಾಲಸಂಖ್ಯಾತರ್ಪುರಾತನರ್ಮಾಹೇಶ
ಜಾಲ ಸಾನಂದಾದಿ ಸಾಮೀಪ್ಯರೊಗ್ಗಿನಿಂ ಬಳಸಿರ್ದುದುಮೆವರನನು ||೨೨||

ಲಾಲಿಸುತಲಖಿಳ ಸುಖಸಂಪದುತ್ತರಪರಮ
ಲೀಲೆಯಿಂದಿರೆ ಉಮಾವರನು ದಿವಿಜಾಳಿಗಳ
ಪಾಲಿಸುತಿರಲ್ಕೆಯಂತಾಸಮಯದೊಳು ಬಸವರಾಜ ಭೂವಳಯದಲ್ಲಿ
ಭಾಳಾಕ್ಷನಪರಾವತಾರ ತಾಂ ಸದ್ಗತಿಸ
ಮೇಳಗಳ ಭಕ್ತರ್ಗೆ ತೋಱಿ ಬಂದಾ ಶಿವನ
ಓಲಗದ ಮುಂದೆ ಪುಷ್ಪಕವನಿಳಿದಾಕಥಾವೃತ್ತಾಂತಮಂ ಪೇಳ್ವೆನು ||೩೭||

ಏಕ್ಷನೆಯ ಸಂಧಿ

ಸೂಚನೆ:-
ಈಶನಟ್ಟಿದ ಕಾರಣದ ಲಿಪಿಯ ಚಪ್ಪನ್ನ
ಭಾಷೆಯವರಱಿಯದಿರಲದ ನೋಡುತೋದಿ ಭೂ
ಮೀಶಂಗೆ ತಿಳುಪಿ ಭಂಡಾರದಧ್ಯಕ್ಷಮಂ ಪಡೆದ ಸಂಗನಬಸವನು

ಶ್ರೀಮದಖಿಳಾಗಮಾರ್ಣವ ಮಥನಗೈದು ನಿ
ಸ್ಸೀಮನಂದೀಶ ಪ್ರಮಥರ್ಗಮಲವಚನರಚ
ನಾ ಮಹಾವಸ್ತುವಿಸ್ತೀರ್ಣಮಂ ಸ್ಥಲವಿಟ್ಟನಾ ಮಂತ್ರರಹಸ್ಯಾದಿಯ
ಭೂಮಿಯ ಶಿವಾರ್ಚಕರ್ಗೊರೆದಬಸವೇಶ್ವರನ
ನಾಮಾಮೃತಾಕೃತಿಯ ವಿಶ್ವೇಶನಮಲಪದ
ತಾಮರಸಷಟ್ಚರಣಷಟ್ಪದೀಗಳಿಂ ಸಿಂಗಿರಾಜಾಂಕನೆನಲದೆಂತೊ ||೧||

ಮಕುಟವರ್ಧನರೆಂಟು ಸಾವಿಲಮವರೊಳಡಸಿ
ಸಕಲರಾಜರ ರಾಜಪುತ್ರ ಸಚಿವರ ಮಾನ್ಯ
ಪ್ರಕರ ಬಾಹತ್ತರ ನಿಯೋಗ ದಂಡಾಧೀಶರಖಿಳ ಭಾಷಾಯುಕ್ತರ
ನಿಕರ ಚೌಷಷ್ಠಿ ನಾನಾಕಳಾನ್ವಿತ ಪರೀ
ಕ್ಷಕರ ನಡುವೊಡ್ಡೋಲಗದೊಳೊಪ್ಪಿರಲ್ಕಾಕ
ಸ್ಮಿಕದ ಲಿಖಿತಂಬರದಿ ಭರದಿ ಬಿದ್ದಿತು ನೃಪನ ಎಸೆವ ಸಿಂಹಾಸನದೊಳು||೪||

ಆ ಲಿಖಿತವಂ ತೆಗೆದು ಚೋದ್ಯವೆಂದೇನುತ ಭೂ
ಲೋಲ ಮೂಗಿಂಗೆ ಕೈಯಿಟ್ಟು ತಾ ನೋಡೆ ಕಣು
ಕೀಲಿಸುವೊಲಾಗತಿ ಭೀತಿಯಿಂ ಸಚಿವರ್ಗಿತ್ತರವರದನು ನೋಡೆ
ಆಲಿ ಸಿಡಿವಂತಹುದು ತುಟಿಮಿಡುಕ ತೆಱಹಿಲ್ಲ
ನಾಲಿಗೆಗೆ ಬಿಯ್ಯಗಂ ಹೂಡಿದಂತಹುದದಱ
ಮೂಲ ಲಿಪಿ ಭಾಷೆ ತಿಳಿಯದೆ ಬಳಲಿ ಬಲ್ಲವರ್ಗಳೆಲ್ಲರಂ ಕರೆಸಿ ತೋಱೆ ||೫||

ಗಣಕರಂ ಹಳಿದು ಲಿಖಿತರ ಮೀಱಿ ಮುಹೂರ್ತಕರ
ಡೊಣದು ವಿದ್ವಾಂಸರಂ ವಿಧಿಗೊಳಿಸುತಾಗಮಿಕ
ರೆಣಿಕೆಗೊಳ್ಳದೆ ಕವಿಗಮಕಿವಾದಿವಾಗ್ಮಿಗಳ ಭ್ರಮೆಗೊಳಿಸಿ ಬಲ್ಲವರನು
ತೃಣಮಾಡಿ ಸಾಮರ್ಥ್ಯ ಸಟೆಯೆನಿಸಿ ತಾರ್ಕಿಕರ
ನಣೆದು ಗಣಿತಜ್ಞರಂ ಗುಣಗೆಡಿಸಿ ಲಿಪಿಯ ಲ
ಕ್ಷಣದಕ್ಷರಂದಿಳಿಯದೆಲ್ಲರಂ ಅಲ್ಲೆನಿಸಿ ಓಡಾಡಿತೇಂ ಪೊಗಳ್ವೆನು ||೬||

ಗಗನಲಿಪಿ ಧೂಮಲಿಪಿ ಜಲಲಿಪಿ ಪಿಶಾಚಲಿಪಿ
ಖಗಲಿಪಿ ಕದಂಬಲಿಪಿ ಕಲ್ಪಲಿಪಿ ಕಾಕಲಿಪಿ
ನಿಗಮಲಿಪಿ ನೀಲಲಿಪಿ ಚಕ್ರಲಿಪಿ ಲೆಖ್ಖಲಿಪಿ ಬಿಂದುಲಿಪಿ ದರ್ಪಣಲಿಪಿ
ಭೃಗುಲಿಪಿ ಪ್ರಬಂಧಲಿಪಿ ಶಸ್ತ್ರಲಿಪಿ ಚಿತ್ರಲಿಪಿ
ವಿಗತಲಿಪಿ ರಣಲಿಪಿ ಶಿಲಾಲಿಪಿ ಶಿರೋರ್ಲಿಪಾ
ದಗಣಿತ ಮಹಾಲಿಪಿಗಳೊಳಗಱಿದು ತಿಳಿಯದಳಲುತಲಿರ್ದು ಬಳಲಿ ಮತ್ತೆ ||೮||

ಹಲವನಾಡೆಹುದಿಲ್ಲ ಕಾರ್ಯ ಹೋ ಹೋ ಸಾಕು
ಗಲಭೆಯೇಕೀ ಲಿಪಿಯನೋದಿ ತಿಳಿಪಿದಡೆಮ್ಮ
ಬಲಕೆ ರಾಜ್ಯಕ್ಕೆ ರಣಭಂಡಾರವೆಲ್ಲವಕ್ಕಧಿಕತ್ವದೊಡೆತನಕ್ಕೆ
ಸಲುಗೆ ವೇಳ್ದಂಡಾಧಿನಾಥಪದಮಂ ಕೊಟ್ಟು
ಸಲಹುವೆನೆನಲ್ಸಾಧ್ಯವಲ್ಲೆಮಗೆ ಸಾಧಿಸೀ
ಫಲವ ಪಡೆಯಲು ಬಲ್ಲಗಲದೀ ಲಿಖಿತ ದೈವಿಕಮಾರ್ಗೆ ತಿಳಿಯದೆನಲು ||೧೦||

ಸಂಗಮದೊಳಿರ್ದು ಕಾರಣದಿಂದೆ ಬಂದು ಕರ
ಣಂಗಳಾಶ್ರಯದಲ್ಲಿ ಬರೆವುತಿಹ ಬಸವೇಶ್ವ
ರಂಗೆ ಭಾವದೊಳಿರ್ದು ಶರಣನಾಕಾರದಿಂದೆಂದುದಶರೀರವಾಕ್ಕು
ಲಿಂಗಜಂಗಮದಿರವ ನೀನಱಿದು ಮಾಳ್ಪ ಲೇ
ಸಿಂಗೆ ತಕ್ಕಧಿಕ ಫಲಬೇಕೆಂದು ಲಿಖಿತಮಂ
ಸಂಗಮೇಶ್ವರಲೀಲೆಯಿಂದಟ್ಟಿದೋಲೆಯಿದು ಸಾಧ್ಯ ನಿನಗೋದೆಂದನೆ||೧೧||

ರೂಢೀಶ ನಿಮ್ಮ ಬರವೇಳ್ದನೆನೆ ಎದ್ದು ನಿಲೆ
ನೋಡಿ ಬೆಱಗಾಯ್ತು ಸಭೆ ಏನಿವನ ಮರುಳುಮಾ
ತಾಡಿಸಿತೊ ಮೇಣ್ಬಲ್ಲನೋ ದೇವತಾಕರುಣವೋ ಕಾಕುವಗರಣವನು
ಆಡುವನೊ ಯೆನುತೆಲ್ಲರಲ್ಲಲ್ಲಿ ನಿಂದು ಮಾ
ತಾಡುತಿರಲಾ ಸಭಾಶಧಿಮಥನಕ್ಕೆ ಶಿವ
ನಾಡಿಸುವ ಮಂದರದೊಲೈತಂದಬಸವರಸ ಬಿಜ್ಜಳನ ಸಮ್ಮುಖಕ್ಕೆ|| ೧೯||

ವಿಷಮದೋಲಿದು ವಿರಾಜಿತ ರಾಜಶೇಖರನ
ವಿಷಯದಿನೊಗೆದುದಿದಱ ವೃತ್ತಾಂತಮಂ ದಿಟಂ
ಬೆಸಗೊಂಬೆಯಾದಡಾದಱಂತಸ್ಥವೆಲ್ಲವಂ ತಿಳಿವೆಯಾದೊಡೆ ಪೇಳ್ವೆನು
ವಸುಧೆಗಚ್ಚರಿ ನಿನನ ಪರಮ ಸಂಪದಲಕ್ಷ್ಮಿ
ಗೆಸಕವಿದು ಬಿಜ್ಜಳನರೇಂದ್ರಯೆನೆ ಹಾರವಿಸಿ
ಬಸವ ನಮ್ಮಯ್ಯ ಪೇಳೆಂತೆನಲ್ಕೋಲೆಯನೊಡರ್ಚೋದಲುಜ್ಜುಗಿಸಿದಂ ||೨೩||

ಸ್ವಸ್ತಿ ಶ್ರೀಮನ್ಮಹಾದೇವಾಧಿದೇವಸಂ
ಸ್ತುತ್ಯ ಸಂಗಮನಾಥನನುಮತಂ ಇದು ಮಿಕ್ಕಿ
ನ ಸ್ಥಿತಿಯದೇಶ ಗಾಧೆಯಕನ್ಯವಾದ ಸಿದ್ಧಾಂತ ಬದ್ಧಾಂತವಲ್ಲ
ವಸ್ತುವಱುವತ್ತಾಱು ಕೋಟಿಯಂ ತೋಱುವ ಸು
ವಸ್ತುವಂಜನ ದೇವಲಿಪಿ ನಿನ್ನ ಭಾಗ್ಯದ ಸ
ಮಸ್ತ ಸಾರೋದ್ಧಾರ ಶಾಸನವಿದೆಂದು ಬಸವೇಶನೋದಿದನೋಲೆಯ ||೨೪||

ಭಾಪುರೆಮ್ಮಯ್ಯ ಕಿಱಿದೆನಬಹುದೆ ಪರುಷಮಂ
ಭಾಪುವೆಮ್ಮಯ್ಯಬಾಯಿತ್ತ ಬಾಯೆಂದಪ್ಪಿ
ಭೂಪ ಸಿಂಹಾಸನದ ಬಲದ ಭಾಗದೊಳಿಂಬುಗೊಟ್ಟು ಕುಳ್ಳಿರಿಸಿಕೊಂಡು
ಕೂಪ ಸಚಿವರೊಳೆಂದ ನೋಡಿರೈ ಈ ಹಿರಿಯ
ಪಾಪಿಗಳೊಳಾರುವಱಿಯದ ಲಿಪಿಯನೋದಿದ ಮ
ಹಾಪರುಷ ಕಿಱಿದೆಯೆನೆನೆರವಿ ತಲೆಗುತ್ತಿ ನೆಲನಂ ಬರೆದುದೇಂ ಪೊಗಳ್ವೆನು ||೨೫||

ಇಟ್ಟಿಮುಱಿಯಿತ್ತು ತಾರ್ಕಿಕರೊಡಲ ಶೂಲದಿಂ
ದಿಟ್ಟಂತೆಯಾ ಪ್ರಭಾಕರರ್ಗಳೆದೆ ಚಾರ್ವಾಕ ನಾನಾಭಾಷೆ ದೇಶಿಕರ
ನೆಟ್ಟನುರಿಗುತ್ತಿದಂತಾರುಹತ ಬೌದ್ಧ ಬರುಬೋಧಕರ ಬದಿಯಲಲಗ
ಹೆಟ್ಟಿದಂತಾಯ್ತು ನಾನಾಭಾಷೆ ದೇಶಿಕರ
ಕಟ್ಟೂರಿಸಿತು ಸಿದ್ಧರದ್ವೈತ ಸಮಯಿಗಳ
ಮೆಟ್ಟಿ ಸೀಳಿತು ನಿಮ್ಮ ಬಸವಣ್ಣನೋದು ವಾದಿಗಳ ಮುಂಬಲ್ಗಳೆದುದು ||೨೬||

ಬಸಿರ ಕಿಚ್ಚಿಂಗೆ ಬಣಬೆಯಂ ಸುಡುವನಂತೆ ತಾ
ಮಸಿಗರಱಿಯರ್ಭೂಪ ನಿನ್ನ ಮಹದೈಶ್ವರ್ಯ
ವಸುಮತಿಯಱಿಯೆ ಪೆರ್ಚಲೆಂದು ಶಶಿಶೇಖರಾಜ್ಞಾನುಸಾರದಿ ಬಂದುದು
ಕುಶಲತೆಯು ನಿನಗೆ ಸಂತಸದೆಸಕ ಮುಂದೆನ
ಲ್ಬಸವೇಶನೆಡೆಗೆ ಬಂದಸಮಾನ ಲಿಪಿಯ ವಾ
ಚಿಸಿದ ತೆಱತದ್ದ್ರವ್ಯಮಿಹ ತಾಣಮಂ ತೋಱಿ ಪಾಲಿಸೆನಲರ್ತಿಯಿಂದ ||೨೬||

ಚಾಳುಕ್ಯಚಕ್ರೇಶನಿದು ನಿಜದ ನಿಱಿಗೆಯೆಂ
ದೇಳಲೊಡೆ ಮುಂಕೊಂಡು ಮುಂ ಧನವ ಬೈತಿಟ್ಟ
ಮೂಲಿಗನೊಲಮ್ಮಮ್ಮ ನಡೆದು ನಿಕ್ಷೇಪದೆಡೆಗೈದಿ ಹರಶರಣೆನುತ್ತ
ಭಾಳಲೋಚನ ಶರಣು ಭರ್ಗ ಶರಣುಗ್ರ ತ್ರಿ
ಶೂಲಿ ಶರಣಂಬಿಕಾಪತಿ ಶರಣು ದುರಿತರಿಪು
ನೀಲಕಂಠನೆ ಸಂಗಮೇಶ ಶರಣೆಂದು ನಿಧಿಯಂ ಮೆಟ್ಟಿ ನಿಂದಿರ್ದನು ||೩೦||

ಇದೆಯಿಲ್ಲಿ ದಾತಾ ಮಾತಾವಯಸ್ತಂಭವಾ
ಯಿದೆಯಿಲ್ಲಿ ಇಂದಿರಾನಂದಲಾವಣ್ಯರಸ
ಮಿದೆಯಿಲ್ಲಿ ಸಂಕ್ರಂದನ ಲೋಕವಾರೂಢ ಭೋಗ ಭಾಗ್ಯಾಗಂತುಕ
ಇದೆಯಿಲ್ಲಿ ಧನದನಾಪತ್ಕೋಶ ನಿತ್ಯನಿಧಿ
ಇದೆಯಿಲ್ಲಿ ಸಕಲಸಂಪತ್ಕರನಿಧಾನಫಲ
ಇದೆಯಿಲ್ಲಿ ಭೂಪ ತೆಗೆಸೈ ತೆಗೆಸು ಲಿಪಿಯಾರ್ಥದರ್ಥದೋಱುವೆನೆಂದೆನೆ ||೩೧||

ಹಾರೆಕಾಱರು ಸಲಿಕೆಕಾರ ಗುದ್ದಲಿಕಾಱ
ಗೋರಿಕಾಱರ್ಕವಿದು ಬಂದು ತನ್ಮುಖದಿ ಹೊಡೆ
ದಾರಿಯಗೆಯಲ್ಕೊಂದು ತೆಱದ ಭೈರವ ಭೂತ ಭೇತಾಳ ಪ್ರಳಯಗ್ರಹ
ತೋಱಿ ತವದಿರ ಕಣ್ಗೆ ಉರಗ ವ್ಯಾಘ್ರತಿಚಂಡ
ಘೋರ ಭಯ ಹೊಯ್ದು ಬೊಬ್ಬಿಡುತೋಡಲೇನದಱ
ಕಾರ್ಯ ಭಿಕ್ಷವನೊಲ್ಲೆನಾಯ ತೆಗೆಯೆಂಬವೊಲಾಯ್ತಾವುದಿದಕುಪಮಾನವು ||೩೨||

ಎನಲು ಪಂಚಾಕ್ಷರಿಯ ಜಪಿಸುತನಿತಗಲದೊಳು
ಘನತ್ರಿಪುಂಡ್ರಂದಳೆವುತೆನ್ನನೀಕ್ಷಿಸುತಗೆಯಿ
ರೆನುತಭಯವಿತ್ತೆಲ್ಲರಂ ಬರಿಸಿ ತಾ ನಿಂದು ಬಳಸಗೆಸಲೊಡನೆ ಮುಗುಳೆ
ಕನಕ ಕಣ್ದೆಱೆದುದೀತನ ಭಕ್ತಿಯುನ್ನತಿಯ
ದಿನಕರ ದೆಸೆಯ ಬೆಳಗುವಂತೆ ರಾಯನ ಭಾಗ್ಯ
ವನಿತೆಯಂ ಭೂಕಾಂತೆ ಪಡೆದಳೆನೆ ನಿಧಿನಿಧಾನಂ ರೂಪು ನಿಜದೋಱಿತು ||೩೩||

ರಾಜನುತ್ಸಹದಿಂದೆ ರಾಜಿಸುತಖಿಲ ಸಭಾ
ರಾಜರಾಹಾ ವಿರಾಜಿತ ಮೌಳಿದೂಗಿದರು
ಮೂಜಗದೊಳಿಲ್ಲದಚ್ಚರಿಯೆಂದು ವಿದ್ಯಾಧಿರಾಜ ಪ್ರಮುಖರೆಲ್ಲರು
ರಾಜನಂ ರಾಜರಾಜಾಧೀಶನಂ ಬಸವ
ರಾಜನಂಗವ ರಾಜಶೇಖರನೆ ಬಲ್ಲನೆಂ
ದಾ ಜನಂ ಕೈಯೆತ್ತಿ ಪೊಡವಡುತ್ತಿರ್ದರಪ್ರತಿಮನಪ್ರತಿಮನೆಂದು ||೩೪||

ಆವ ಕಡೆ ನೋಳ್ಪಡೊಡ್ಡೈಸೆ ಬಹ ಪುರಜನಗ
ಳಾವಕಡೆ ನೋಳ್ಪೊಡೊಡ್ಡೈಸಿ ಬಹ ನಾರಿಯರ
ದಾವಕಡೆ ನೋಳ್ಪೊಡೊಡ್ಡೈಸಿ ಬಹ ಪರಿವಾರ ಪಲತೆಱದ ವಾದ್ಯಂಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ತೇಜಿಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ರಥವಾಜಿ
ಆವಕಡೆ ನೋಳ್ಪೊಡೊಡ್ಡೈಸಿ ಬಹ ಗಜಘಟಾಳಿಗಳೆಲ್ಲಂ ಸಿಂಗರದೊಳು ||೩೯||

ಆ ಪುರದೊಳೆಲ್ಲ ಮೆಱೆಸುತ್ತ ತನ್ನರಮನೆಗೆ
ಭೂಪ ಬಿಜಯಂಗೆಯ್ಸಿಕೊಂಡು ಬಂದುನ್ನತಾ
ಳಾಪ ಪ್ರಧಾನ ಪಟ್ಟಂಗಟ್ಟಿದನು ರಾಷ್ಟ್ರಪುರಕೆ ಭಂಡಾರಕ್ಕೆಲ್ಲ
ಈ ಪುರೋಹಿತರಿಗೀ ಸಚಿವ ಕರಣಕ್ಕೆಲ್ಲ
ನೀ ಪರಮಪಾಲಕಾಗ್ರಣಿಯೆಂದು ವೊರೆದು ಮ
ದ್ರೂಪ ದಂಡಾಧೀಶ ಬಸವರಸರೆಂದೊಸಗೆವಱೆಗಳಂ ಮೊಳಗಿಸಿದನು ||೪೭||

ರಾಜೋಪಚಾರ ರಚನಾಳಾಪಕೇನುಳ್ಳ
ತೇಜಸಂಪದವಿತ್ತು ಬಹಳಪ್ರಯತ್ನದಿ ವಿ
ರಾಜಿಪುನ್ನತದ ಒಂದರಮನೆಯ ಕೊಟ್ಟು ತಾ ಗೃಹಪ್ರವೇಶಂಗೆಯಿಸಲು
ಮೂಜಗಂ ಮೋಹನಂಗೊಳಲು ಮಂಗಳಕುಳಸ
ಮಾಜಗಳ ಕೈಗೊಳಿಸಿ ಕಳುಪೆ ಪುರದೊಳು ಬಸವ
ರಾಜರಾಜಿತನು ಬಂದರಮನೆಯ ಹೊಕ್ಕು ಸಂಗಮನಾಥ ಶರಣೆನುತಲೆ ||೪೮||

ಆಗಣಸಮೇಳದೊಳು ಸುಖಮಿರುತೆ ರಾಜವಿನಿ
ಯೋಗದೊಳು ಮೈದೋಱಿರಲ್ಕೆ ವಿಶ್ವಾಸ ಸ್ವಯ
ಮಾಗಿ ಮನಬೇಱಿಲ್ಲದಿರಬೇಕೆನುತ್ತರಸ ನೆನೆದನೊಂದನುಬಂಧವ
ಆಗ ತಾತನ ಪಿಂತೆ ಸಂಗೀತಚೂಡಾಮ
ಣ್ಯಾಗಳಾ ಬಲ್ಲಹನೊಳೆಮ್ಮ ತಾಯ್ಸಹಗಮನ
ವಾಗಲಾ ದಿನಕೆಮ್ಮ ತಮ್ಮ ಕರ್ನಹದೇವ ಬಾಲನಿಗಿರಲಾತನ ||೫೨||

ಲೀಲೆಯಿಂ ಮೊಲೆಯೂಡಿ ಸಲಹಿದಳು ಮಂತ್ರಿಕುಲ
ಪಾಲ ಸಿದ್ಧರಸದಣ್ಣೌಯಕರರಸಿ ಪುಣ್ಯ
ಶೀಲದೇವತೆ ಪದ್ಮಗಂಧಿಯಾಕೆಯ ಉದರದಲಿ ಬಳಿಕ ಜನಿಸಿದಾಕೆ
ನೀಲಲೋಚನೆ ಯೆಮಗೆ ತಂಗಿಯಾಗಿಹಳಾಕೆಯನು
ನೀಲಲೋಚನ ಬಸವಗೀವೆನೆನುತುತ್ಸಾಹ
ದಾಳಾಪದಲಿ ಪಟ್ಟವಧುವೆಂದು ಮದುವೆಯಂ ಮಾಡಿದಂ ನೃಪ ಬಸವಗೆ||೫೩||

ಸಂಪಾದಕರು ಶ್ರೀ ಎಮ್.ಎಸ್.ಸುಂಕಾಪುರ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

‘ರಾಜೇಂದ್ರ ವಿಜಯ’ದ ಕಥಾಸಾರ

ಪುಣ್ಯಭೂಮಿಯೆನಿಸಿದ ಕರ್ನಾಟಕ ದೇಶದ ಮಧ್ಯದಲ್ಲಿ ಮಹಿಮೆಯ ನಾಡು, ಮಂಗಳದ ಬೀಡು, ಸೌಖ್ಯದ ಸದನ, ಭೂಮಿಯ ವದನ, ಸತ್ಯದ ನೆಲೆ, ನಿತ್ಯದ ನಿಜವಾಗಿ ರಾಜೇಂದ್ರನ ರಾಜ್ಯ ಮೆರೆಯುತ್ತಿದೆ. ಅವನ ರಾಜ್ಯದಲ್ಲಿ ಪ್ರಜೆಗಳು ನಿತ್ಯ ಸುಖಿಗಳಾಗಿ ಕುಂದದೆ ಕಂದದೆ ಬಾಳುತ್ತಾರೆ. ಲಕ್ಷ್ಮಿ ಬಂದು ಅಲ್ಲಿಯೆ ಸ್ಥಿರವಾಗಿ ನಿಂತಿದ್ದಾಳೆ. ಸಕಲೈಶ್ವರ್ಯದ ನೆಲೆ ವೀಡಾಗಿ ರಾಜ್ಯ ಕಂಗೊಳಿಸುತ್ತದೆ. ಅವನ ರಾಜ್ಯದಲ್ಲಿ ಜನಸುಖಕಾರಿ, ಕುತಾಪವಿದಾರಿ, ಸಮುದ್ರದದಾರಿ, ಪಾವನಸುಶೀಲಿ, ತರಂಗವಿಲೋಲಿಯಾಗಿ ಹರಿಯುವ ಮಲಪ್ರಭಾನದಿ ಕೃಷ್ಣಾ ನದಿಗೆ ಬಂದು ಕೂಡುತ್ತದೆ. ಅವೆರಡು ಹೊಳೆಗಳ ಮಧ್ಯದಲ್ಲಿ ಮಲಪ್ರಭಾನದಿಗೆ ಸಮೀಪವಾಗಿ ಪಟ್ಟಶಿಲಾಪುರ (ಪಟ್ಟದಕಲ್ಲು) ವು ಹಮ್ಮಿರಪುರವೆಂದು ಖ್ಯಾತಿವೆತ್ತು ಶೋಭ ಸುತ್ತವೆ. ಆ ನಗರವು ಕೋಟೆಕೊತ್ತಳಗಳಿಂದ ಕೂಡಿ ಗಂಭೀರವಾಗಿ ಮೆರೆಯುತ್ತದೆ. ನಿಗಮನೂ ನಿತ್ಯನೂ ಆದ ಲೋಕನಾಥನೇ ಅಲ್ಲಿಯ ಮುಖ್ಯ ದೇವತೆ, ಶ್ರೀ ರಾಮನಿಂದ ಹಾಳಾದ ಲಂಕೆಯನ್ನು, ನೀರಿನಿಂದ ಹಾಳಾದ ದ್ವಾರಕಾ ಪಟ್ಟಣವನ್ನು ಹಮ್ಮಿರಪುರಕ್ಕೆ ತೋಡೆಂದು ಹೇಳುವದ ಮೂಕ್ತಿಯೇ ಸರಿ. ಮನುರಾಜನು ನಂದೀಶ್ವರವಂಶಜನೆಂದು ತಿಳಿಸವಂತಿರುವ ಬಿಂಕದ ಬಿರುದಿನ ನಂದಿಧ್ವಜಗಳು ಆ ಪಟ್ಟಣದಲ್ಲಿ ಚೆಲುವಾಗಿ ನೆರೆಯುತ್ತವೆ. ಈ ಪರಿಯಾಗಿ ನಾನಾವಸ್ತುವಿನ ಕೋಶದಂತೆ, ಸೌಭಾಗೈದ ಸಾರದಂತೆ, ಮನೋಹರವಾಗಿ ತೋರುವ ಹಮ್ಮಿರಪುರದ ಸಿಂಗರದ ಸಿರಿಯರಮನೆಯೊಳ್ ತ್ರೈಲೋಕ್ಯ ಚೂಡಾಮಣಿ ರಾಜನು ಸಕಲೈಶ್ವರ್ಯ ದಿಂದ ಗೌರವಾಟೋಪ ಪ್ರತಾಪದಿಂದ ಒಪ್ಪುತ್ತಾನೆ.

ಆ ತ್ರೈಲೋಕ್ಯಚೂಡಾಮಣಿರಾಜನು ವಂಶೋದ್ಧಾರಕನಾದ ಮಗನು ತನ್ನ ಬಾಳಿನಲ್ಲಿ ಬೆಳಗಲಿಲ್ಲವೆಂದು ವ್ಯಥೆಪಡುತ್ತಾನೆ. ಅವನ ಪಟ್ಟದ ರಾಣಿಯಾದ ಮಹಾದೇವಿಗೆ ಅದಕ್ಕಿಂತಲೂ ಹೆಚ್ಚಾದ ಚಿಂತೆ. ಚಿಂತೆಯ ಕಾರ್ಮೋಡದಲ್ಲಿ ಒಮ್ಮಿಂದೊಮ್ಮೆಲೆ ಆಸೆಯ ಮಿಂಚೊಂದು ಹೊಳೆದು ಹೊಳೆದಲ್ಲಿಯೇ ಮಾಯವಾಗುತ್ತದೆ. ತಪಶ್ಚರ್ಯದಿಂದ ಶಿಲಾದನು ನಂದಿಯನ್ನು ಹಿಂದೆ ಪಡೆದನು; ಹಾಗೆ ಶಂಕರಯೋಗಧ್ಯಾನದಲ್ಲಿದ್ದರೆ ನಂದನಸಿದ್ಧಿಯಾಗುವದೆಂದು ರಾಜದಂಪತಿಗಳಿಗೆ ಹೊಳೆಯುತ್ತದೆ. ರಾಜನು ಋತುಕಾಲವನರಿತು ವಿಷಮ ತಪಗೆಯ್ಯುತ್ತಾನೆ; ಶಾಂತಶಿವನನ್ನು ತನ್ನ ಹೃದಯಕಮಲದಲ್ಲಿಟ್ಟು ನೆನೆಯುತ್ತಾನೆ. ಅವನ ಮಡದಿ ಮಹಾದೇವಿ ಶಿವಲಿಂಗಾರ್ಚನೆಗೆ ತೊಡಗುತ್ತಾಳೆ. ಶಿವಯೋಗದಲ್ಲಿ ನಿರತರಾದವರಿಗೆ ಶಿವನು ಒಲಿಯದಿದ್ದಾನೆ ? ರಾಜನಿಗೆ ಶಿವದರ್ಶನವಾಗುವದು ಯೋನಿಜನಲ್ಲದ ಸಕಲಕಲಾನಿಪುಣನಾದ ಪುತ್ರನಾಗಲೆಂದು ಶಿವನು ರಾಜನಿಗೆ ಹರಸುತ್ತಾನೆ. ರಾಣಿಗೆ ಶಿವಪ್ರಸನ್ನ ವರವು ದೊರೆಯುತ್ತದೆ. ಸತಿ-ಪತಿಗಳೀರ್ವರೂ ಒಂದು ದಿನ ಮಲಗಿದ ಸಮಯದಲ್ಲಿ, ಪ್ರಣವವೇ ಕರಚರಣಾದಿ ಅವಯವಗಳನ್ನು ಧರಿಸಿ ಮಗುವಾಗಿ ಮಗ್ಗುಲದಲ್ಲಾಡುವದನ್ನು ರಾಜರಾಣಿಯರು ಕಂಡು ಹರ್ಷಭರಿತರಾಗುತ್ತಾರೆ. ಇದು ಶಿವನ ಪ್ರಸಾದವೆಂದು ಅವರು ಕೊಂಡಾಡುವರು, ತಾವೇ ಭುವನದಲ್ಲಿ ಭಾಗ್ಯ ವಂತರೆಂದು ಭಾವಿಸುವರು. ದಿನಗಳೆದಂತೆ ಮಗು ಚಂದ್ರನಂತೆ ಹಿಗ್ಗಿ ಬಾಲಲೀಲೆಯನ್ನು ತೋರಿಸುತ್ತದೆ. ಶೈಶವ ಕಳೆದು ಹರೆಯ ಕಾಲಿದ್ದೊಡನೆ ಸಕಲ ಕಲೆಗಳು ರಾಜಕುಮಾರನ ಹಸ್ತಗತವಾಗುತ್ತವೆ. ವೀರವಿಜಯನಾದ ರಾಜಕುಮಾರನಿಗೆ ಮನುರಾಜ, ರಾಜೇಂದ್ರ, ಹಮ್ಮಿರ ಎಂದು ಅಸದೃಶವಾದ ಹೆಸರುಗಳೊಪ್ಪುತ್ತವೆ. ಅವನ ಹೆಸರುಗಳು ಅಂಕಿತ ನಾದರೂ ಅನ್ವರ್ಥಕವಾಗುತ್ತವೆ.

ತ್ರೈಲೋಕ್ಯ ಚೂಡಾಮಣಿರಾಜನು ಸುಕುಮಾರನಿಗೆ ಯುವರಾಜ ಪಟ್ಟವನ್ನು ಕಟ್ಟಿ, ತದನಂತರ ರೂಪವತಿಯಾದ ಸದ್ಗುಣ ಶೀಲೆಯಾದ ಕಾಂಭೋಜರಾಜನ ಪುತ್ರಿ ಗೌರೀದೇವಿಯನ್ನು ತಂದು ಹಮ್ಮಿರನಿಗೆ ಲಗ್ನ ಮಾಡಿ ಸಂತಸಪಡುತ್ತಾನೆ. ಅನುಕೂಲದ ನೂತನ ಸತಿಪತಿಗಳಿಗೆ ತನು ಬೇರೆಯಾಗಿದ್ದರೂ ಶಿವನಲ್ಲಿಟ್ಟಿದ್ದ ನೆನಹು ವಿಚ್ಛಿನ್ನವಾಗುತ್ತದೆ. ಸತಿಪತಿಗೆಳೊಂದಾದ ಭಕ್ತಿ ಬೆಳೆಯಲಾರಂಭಿಸುವದು. ರಾಜೇಂದ್ರನು ಹೊರಗೆ ಅರಿ ಕಂಟಕರನ್ನು ಮುರಿದು, ತನ್ನೊಳಗೆ ಆರು ವೈರಿಗಳನ್ನು ಗೆದ್ದು, ಎಲ್ಲೆಲ್ಲಿಯೂ ಶಾಂತಿ ಸಾಮ್ರಾಜ್ಯ ನೆಲೆಗೊಳ್ಳುವಂತೆ ಯತ್ನಿಸುತ್ತಾನೆ. ಪರಶಿವ ಚರಣಾರವಿಂದದಲ್ಲಿ ಭ್ರಮರವಾಗಿ ಝೇಂಕರಿಸುವನು. ಒಳಹೊರಗೊಂದಾದವರಿಗೆ ಇದ್ದುದೇ ಕೈಲಾಸವಲ್ಲವೆ ? ಹಮ್ಮಿರನನ್ನು ಜನ ಹೊಗಳುತ್ತದೆ, ‘ವೀರ ವಿತರಣ ವಿದ್ಯಾಭಿಲೋಲಂ ಶಿವಗುರುಚರಲಿಂಗ ಸದ್ಭಕ್ತಿ ಸಂಪದ್ಭಾಸುರಶೀಲಂ ಸಕಲಜನ ಪರಿಪಾಲನಾನುಕೂಲಂ ವಿಲಸಿತಕೀರ್ತಿ ವಿಶಾಲ ಸುಚರಿತ್ರಂ’ ಎಂದು. ಆದರೆ ಅರಸನು ಶಿವಯೋಗ ನಿದ್ರಾಮುದ್ರಿತ ಭದ್ರಾಂಗನಾಗಲು ಯತ್ನಿಸುತ್ತಾನೆ.

ಮನುರಾಜೇಂದ್ರನ ಕೀರ್ತಿ ದಶದಿಕ್ಕುಗಳಲ್ಲಿ ಪಸರಿಸುವದನ್ನು ಕ೦ಡು ಚಂಡಕೋದಂಡನು ಮನದಲ್ಲಿಯೇ ಮಾತ್ಸರ್ಯ ತಾಳಿ ಕುದಿಯುತ್ತಾನೆ. ಮನುರಾಜನ ಶೌಯ್ಯೋನ್ನತಿಯನ್ನು ಮುರಿಯುವದಕ್ಕಾಗಿ ಸೂಕ್ಷ್ಮ ಪಾಯ ಹುಡುಕುವನು; ಮರ್ಮಸ್ಥಾನಗಳನ್ನು ಹುಡುಕಿ ಬರಲು ಬೇಹಿಗರನ್ನು

ಕಳಿಸುವನು. ಸತ್ಯದ ಮುಂದೆ ಠಕ್ಕು ನಿಲ್ಲಬಲ್ಲುದೆ ? ಕಳ್ಳಬಂಟರು ಮನು ರಾಜನ ಸೆರೆಯಾಳಾಗುವರು. ಇದನ್ನು ತಿಳಿದ ಚಂಡಕೋದಂಡನು ತನ ಗೂಢಪುರುಷರನ್ನು ಬಿಡಿಸಿಕೊಳ್ಳುವದಕ್ಕಾಗಿ ಚಂದ್ರಬುದ್ಧನೆಂಬ ನಿಜ ಮಂತ್ರಿಯನ್ನು ಕಳಿಸುತ್ತಾನೆ. ಮಹೀಶ್ವರನ ಸಭೆಯನ್ನು ನೋಡಿ ಚಂದ್ರ ಬುದ್ಧ ಮಂತ್ರಿ ವಿಸ್ಮಿತನಾಗುವನು. ಬಂದ ಕಾರ್ಯ ಮಾತ್ರ ಸಫಲವಾಗುವದಿಲ್ಲ. ಚಂಡಕೋದಂಡನ ಮನವೆಂಬ ವಿಷಭೂಮಿಯಲ್ಲಿ ಯುದ್ದವೆಂಬ ಬೇವಿನ ಬೀಜ ಮೊಳಕೆಯೊಡೆಯುವದು. ದ್ರೋಣಸಿಂಧೂರ ನಗರಿಯ ರಣಭೀಮನನ್ನು, ಪಿಂಜಿರವಾಟಿಯ ವಿಜಯ ಚೂಡನನ್ನು, ಮಹೀಂದ್ರಾ ಕರದ ಮದನ ವಿಲಾಸನನ್ನು ಮತ್ತು ಅನೇಕ ಮಂಡಲೇಶ್ವರರನ್ನು ತನ್ನ ಸಹಾಯಕ್ಕೆ ತೆಗೆದುಕೊಂಡು ಮಹಾಸೈನ್ಯವನ್ನು ನಿರ್ಮಿಸಿ, ತನ್ನ ಸೇನಾ ಪತಿಯಾದ ವೀರಜಂಭರಾಜನೊಡನೆ ವೈರಿಯನ್ನು ಮುರಿಯುವದಕ್ಕಾಗಿ ಚಂಡಕೋದಂಡನು ಹೊರಡುತ್ತಾನೆ. ಹಮ್ಮಿರನಗರದೊಡೆಯನ ಹಮ್ಮನ್ನು ಮುರಿದಿಡಲು ಹೊರಟ ಸೈನ್ಯ ಭಯಂಕರವಾದುದು. ಸೈನ್ಯ ಬಂದುದೇ ತಡ, ಮನುರಾಜನ ರಾಜ್ಯವನ್ನೇ ಮುತ್ತುತ್ತದೆ. ಬಡಗಣ ದಿಕ್ಕಿನಲ್ಲಿರುವ ವಿಡೂರಿಗೆ, ಪಡುವಣ ದಿಕ್ಕಿನಲ್ಲಿರುವ ವಸಂತಪುರಿಗೆ, ತೆಂಕಣ ದಿಕ್ಕಿನಲ್ಲಿರುವ ಲೋಕಾಪುರಕ್ಕೆ ಮಧುರಂಗರಾಜನು ಒಮ್ಮೆಲೇ ಮುಮ್ಮೊಗವಾಗಿ ಮುತ್ತಿಗೆ ಹಾಕುತ್ತಾನೆ. ಶ್ರೀ ವೀರಭದ್ರಾವತಾರನಾದ ಹಮ್ಮೀರ ಕದನಕೋಳಾಹಳನ್ನು ಇದನ್ನು ಕಂಡು ಸುಮ್ಮನಾಗುವದು ಸಾಧ್ಯವೆ? ಏರಿ ಬಂದ ವೈರಿ ಸೈನ್ಯದ ಮೇಲೆ ಸಿಡಿಲಂತೆರಗಿ ಯುದ್ಧ ಮಾಡುತ್ತಾನೆ. ಚಂಡಕೋದಂಡನು ನರಿಯಂತೆ ಓಡಿಹೋಗುವನು.. ಆ ರಣದಲ್ಲಿ ರಣ ಭೀಮನು ಪೇಣನಾದ. ಮದನವಿಲಾಸನ್ನು ಕದನದೊಳಳಿದ. ವಿಜಯ ಚೂಡನು ವಿಕಟಾರಿಗನಾದ. ಕುಂತಳದರಸು ಮುಂದಲೆ ಕೊಯ್ದಿಕೊಂಡು ಅವಮಾನಿತನಾದ. ಹಮ್ಮಿರ ಭಾಸುರ ಧಿರೋತ್ತಮ ವೀರರಾಜ ವಿಜಯನು ಸಾಮಾನ್ಯನೇ ಯುದ್ಧದೊಳ್?

ಮನುರಾಜನ ರಾಜ್ಯ ವಿಕಾಸವಾದಂತೆ ಮನವೂ ವಿಲಾಸಗೊಳ್ಳವುದು. ವಿನೋದಕ್ಕಾಗಿ ಬೇಟೆಯಾಡಬೇಕೆಂದು ಒಂದು ದಿನ ರಾಜನವಸಂತಪುರದ ಸಮೀಪದಲ್ಲಿರುವ ಕಾನನಕ್ಕೆ ಬೇಡಪಡೆಯೊಂದಿಗೆ ನಡೆಯುವನು, ನಾನಾ ರೀತಿಯಿಂದ ಬೇಟೆ ಸಾಗುತ್ತದೆ. ಮಲಪ್ರಭಾನದಿಯ ತೀರದ ವನಾಂತರವೆಂದರೆ ವೃಕ್ಷಪಕ್ಷಿಗಳಿಗಾನಂದ ಸ್ಥಳ, ಅದೇ ವಸಂತಪುರ ಪ್ರಾಂತ ಅಲ್ಲಿ ರಾಜನು ವಿಶ್ರಮಿಸುತ್ತಾನೆ. ಬೇಟೆಯ ಬಳಲಿಕೆ ನೀಗುವದಕ್ಕಾಗಿ ನೀರು ಕುಡಿಯಬೇಕೆಂದು ರಾಜನಿಗೆ ಇಚ್ಛೆಯಾಗುತ್ತದೆ. ಆದರೇನು ? ತನಗೆ ಬೇಕಾದ ವಸ್ತುಗಳನ್ನು ಶಿವಲಿಂಗಕ್ಕೆ ಕೊಟ್ಟಿಲ್ಲದೆ ಕೊಳ್ಳಲಾಗದೆಂಬ ಶೀಲವುಳ್ಳ ಪರಮ ಶಿವಭಕ್ತ ಮನುರಾಜ, ಸಮೀಪದಲ್ಲಿ ಎಲ್ಲಿ ಯಾದರೂ ಶಿವಲಿಂಗಮೂರ್ತಿ ಇದ್ದರೆ ಕಾಣಬೇಕೆಂದು ಸೇವಕರನ್ನು ಕಳಿಸುತ್ತಾನೆ. ಯಾವ ದಿಕ್ಕಿನಲ್ಲಿ ಹುಡುಕಿದರೂ ಶಿವಲಿಂಗದರ್ಶನವಾಗಲಿಲ್ಲ. ಆದರೆ ಸಮೀಪದಲ್ಲಿಯೇ ಉತ್ತರದಿಕ್ಕಿನಲ್ಲಿ ಒಂದು ಗೂಳಿ ಮಲಗಿದ್ದು ದೇಹದ ಮೇಲೆ ಲಿಂಗಮುದ್ರೆಯಿದ್ದುದು ಕಂಡು ಬಂತು. ಮೂಣ ಮುಖವಾಗಿ ಮಲಗಿದ ಗೂಳಿಯ ವೃಷಭೇಶ್ವರ, ಸಾಮಾನ್ಯರಿಗೆ ಅದು ಹೇಗೆ ತಿಳಿಯಬೇಕು? ಕಣ್ಣರಿಯದಿದ್ದರೂ ಕರುಳರಿಯದೆ ?

ವಚನ-

ಇಂತು ವಂದನಂಗೆಯ್ವುತ್ತೆ ಸಮೀಪಕ್ಕೆ ಬರಲೊಡಂ ರೌದ್ರಸಂಚಲಂಗಳೇನು ಮಿಲ್ಲದೆ ಸುಸ್ಥಿರದಿಂದಿರ್ಪ ಭದ್ರೇಶ್ವರನಂ ನೋಡಿ ಹೃದಯೋಲ್ಲಾಸವಾಗಿ ದೇವರಂ ಪೂಜಿಸಲ್ ದೇವಾಲಯಮಂ ಪ್ರದಕ್ಷಿಣಂ ಮಳ್ಪಂತೆ ಲಿಂಗ ಮುದ್ರೆಯಂ ಭಜಿಸುವದಕ್ಕೆ ಲಿಂಗಮುದ್ರೆಗಾಧಾರವಾದ ಬಸವನಂ ಪ್ರದಕ್ಷಿಣ ಮಾಡುತ್ತೆ ಮುಂದಕ್ಕೆ ಬರ್ಪ ಸಮಯದೊಳಾತನ ಚಿತ್ಕಳೆಯಂ ಬರಸೆಳೆದು ತನ್ನ ರಸನಾಗ್ರದಲ್ಲಿ ಮೂರ್ತಿಗೊಳಿಸಿ ತಳೆದಿರ್ಪಿನಂ-

ವಚನ-

ವಿಮಳ ತರದಿಷ್ಟ ಲಿಂಗಮಂ ರಸನಾಗ್ರದಲ್ಲಿ ತೋಲಾಗಿ ನಾಲಗೆಯ ಕೆಳಗಣೆ ಹಸ್ತಮಂ ನೀಡಿ ವಿಡಿದಾಲಿಂಗಮುಂ ಚಿತ್ತವೃತ್ತಿಯಿಂದರ್ಚಿಸಿ ತತ್ ಸ್ವಷ್ಟಾಚಾರ ಕ್ರಿಯಾರ್ಪಣಾನಂತರದೊಳ್ ವೃಷಭೇಶ್ವರಂ ನಾಲಗೆಯೊಳ್ ಲಿಂಗವನೆಂತು ತೆಗೆದು ಕೊಳುತ್ತಿರಲೊಡನಂತು ಮೂರ್ಛೆಯಾಗುವ ಸದ್ಭಕ್ತನಂ ನೋಡಿ ಲಿಂಗ ಪ್ರಾಣತ್ವಂ ನೆಲೆಗೊಂಡುದೆಂದಾನಂದಿಸಿ ನಂದೀಶ್ವರಾವತಾರಮಂ ತಾಳು ಪ್ರಮಥಗಣ ಪರಿವೃತವಾಗಿದೆ ದೇವತತಿ ಪೂಮಳೆಗರೆಯೆ ಸಕಲ ವೈಭವದಿಂ ಸಮಸ್ತ ದೀಕ್ಷಾ ಪ್ರಧಾನ ಕ್ರಿಯಾನುಗೃಹಂಗೆಯು ಸ್ಥಳಕುಳ ಗುರುಲಿಂಗ ಜಂಗಮ ಸಗುಣ ನಿರ್ಗುಣ ತತ್ವ ಮಂತ್ರಮೂರ್ತಿ ನಾನಾವಿಧಾನವನಳವಡಿಸಿ ಸನತ್ಕುಮಾರ ಪ್ರಬೋಧ ಪ್ರಮಥೇಂದ್ರ ಪ್ರಭು ಗುರುಸ್ವಾಮಿ ಪೋಗಲೊಡನಾ  ಕಾಲದೊಳ್ ಶಿಷೋತ್ತಮಂ ಕೀರ್ತಿಸುತ್ತಿರ್ದಪಂ

ಮನುರಾಜನು, ಪುಣ್ಯದ ಪುಂಜದಂತೆ, ಶಿವನ ಸದ್ಗುಣ ರಾಶಿಯಂತೆ, ಭಕ್ತರ ಬೆಳ್ಜಸದಂತೆ, ಪರಶಿವನ ಸದ್ದರ್ಮ ಸತ್ಯಾನಂದ ವಿಮಳ ವಿಳಸಿತ ಧವಳಾತುಳಾಖಂಡ ಚಿತ್ಪಿಂಡ ವೃಷಭೇಶ್ವರನನ್ನು ಕಂಡು ವಂದಿಸುವನು. ಲಿಂಗಮುದ್ರೆಗೆ ಆಧಾರವಾದ ಬಸವನಿಗೆ ಪ್ರದಕ್ಷಿಣೆ ಹಾಕುವನು. ಮುಂದೆ ನಿಂದು ಶಿರಸಾ ವಹಿಸಿ ನಮಸ್ಕರಿಸುವಾಗ ನಂದಿಯ ರಸನಾಗ್ರದಲ್ಲಿ ಇಷ್ಟಲಿಂಗ ಕಾಣುತ್ತದೆ. ಮನುರಾಜನು ನಾಲಗೆಯ ಕೆಳಗಡೆಯಲ್ಲಿ ಕೈನೀಡಿ ಲಿಂಗವನ್ನು ಸ್ವೀಕರಿಸಿ, ಅದನ್ನು ಚಿತ್ತವೃತ್ತಿಯಿಂದ ಪೂಜಿಸುತ್ತಾನೆ. ಲಿಂಗಪ್ರಾಣತ್ವವು ಭಕ್ತನಲ್ಲಿ ನೆಲೆಗೊಳ್ಳುತ್ತದೆ. ಶಿಷೋತ್ತಮನಿಗೆ ಲಿಂಗ ನೀಡಿದ ನಂದಿ ಆನಂದದಿಂದ ಕೈಲಾಸಕ್ಕೆ ತೆರಳುವನು. ಮನುರಾಜನು ತನ್ನ ಗುರುವನ್ನೂ ಇಷ್ಟಲಿಂಗ ವನ್ನೂ ನಾನಾವಿಧವಾಗಿ ಹೊಗಳುತ್ತಾನೆ. ಅನಿಮಿಷ ದೃಷ್ಟಿಯಿಂದ ಇಷ್ಟಲಿಂಗವನ್ನು ಅವನು ನೋಡುತ್ತಿದ್ದುದರಿಂದ, ಅಂದಿನಿಂದ ಅನಿಮಿಷದೇವ ನೆಂಬ ಅಸಾಧಾರಣವಾದ ಹೆಸರು ಅವನಿಗೆ ಬರುತ್ತದೆ. ಇಷ್ಟು ದಿವಸಗಳವರೆಗೆ ಶಿವಭಕ್ತನಾಗಿದ್ದ ಅರಸನ ತನು ಲಿಂಗದೀಕ್ಷೆಯಿಂದ ಲಿಂಗಮಯವಾಗುತ್ತದೆ.

ಅವನೇ ಲಿಂಗದೇವನಾಗುವನು; ಯೋಗೀಶ್ವರನಾಗುವನು,

ಶಿವಶರಣನಾದ ಅನಿಮಿಷದೇವನು ಸ್ವಲೀಲಾನಂದ ಪರಮ ಚರಿತ ನಾಗಿ ಇಹಪರದ ಹಂಗು, ಸುಖದುಃಖ, ಪುಣ್ಯ ಪಾಪ, ಧರ್ಮಕರ್ಮಗಳನ್ನೆಲ್ಲ ನೀಗಿ, ಶಿವಸಂಸ್ಕಾರದಿಂದ ಸಕಲ ಸುಖಭೋಗಗಳನ್ನನುಭವಿಸಿ ದೇಶ ಕೋಶ ಭಾಗ್ಯಗಳನ್ನು ಬಿಟ್ಟು, ಪರತರದಿಷ್ಟಲಿಂಗ ಧ್ಯಾನವಳವಟ್ಟು, ಸಕಳದೇವತಾ ಸಾರ್ವಭೌಮ ಸಾಂಬಬ್ರಹ್ಮ ಸದಾಶಿವನಲ್ಲಿ ಸಮರಸವಾಗುತ್ತಾನೆ ಶಿವಯೋಗಸಮಾಧಿಯಲ್ಲಿ ವೇಳೆ ಕಳೆಯುತ್ತಾನೆ. ಪರಮ ನಿರಂಜನ ಲೀಲೆಯೇ ಅವನ ಕಾಯಕವಾಗುತ್ತದೆ. ಅನಂತ ವೈಭವದಿಂದೊಡಗೂಡಿ – ಮೆರೆಯುವ ಅನಿಮಿಷಾರಣ್ಯವೇ ಅವನ ತಪೋಭೂಮಿಯಾಗುವದು.

ಆ ಸಮಯದಲ್ಲಿ ನಿರ್ಮಾಯ ಗಣೇಶ್ವರನು ನಿತ್ಯನಿರ್ಮಾಯನೆಂಬ ಬಿರುದನ್ನು ಧರಿಸಿ ಕೈಲಾಸದಿಂದ ಭೂಲೋಕಕ್ಕೆ ಬರುವನು. ಅವನೇ ಶ್ರೀ ಅಲ್ಲಮ ಪ್ರಭುದೇವನು; ಬನವಸೆಯಲ್ಲಿ ಮಮಕಾರ ಭೂಪಾಲ ಮೋಹಿನೀದೇವಿಯರಿಗೆ, ಮಧುಕೇಶ್ವರನ ಪ್ರಸಾದದಿಂದ ಪಾರ್ವತಿಯ ತಾಮಸರೂಪವೇ ಮೂರ್ತಿವೆತ್ತು ಮಾಯಾದೇವಿಯಾಗಿ ಜನಿಸುತ್ತದೆ. ಆ ಕನ್ನೆ ಭಾಸುರದ ಚನ್ನೆ; ನೋಡುವರ ಕಣ್ಣಿಗೆ ಮಂಗಳವಾಗಿ, ಕಾಲ ಕಳೆದಂತೆ ಶೃಂಗಾರಾಂಗದ ಸೊಬಗನ್ನು ಸೂಸುತ್ತಾಳೆ. ಪ್ರತಿನಿತ್ಯದಲ್ಲಿ ಮಧುಕೇಶ್ವರನನ್ನು ಪೂಜಿಸಿ, ನೃತ್ಯದಿಂದ ಶಿವನನ್ನು ತೃಪ್ತಿ ಬಡಿಸುತ್ತಾಳೆ. ಮಾಯೆ ಕುಣಿಯತೊಡಗಿದರೆ ಜಗದ ತಲ್ಲಣವನ್ನು ಬಣ್ಣಿಸಬಲ್ಲವರಾರು ಒಂದು ದಿವಸ ಎಂದಿನಂತೆ ಮಧುಕೇಶ್ವರನ ಮುಂದೆ ಮಾಯೆಯ ನೃತ್ಯ, ಲಿಂಗಲೀಲಾವಿಲಾಸದಲ್ಲಿ ಮೆರೆಯುವ ಪ್ರಭು ಮದ್ದಳಿಗನಾಗಿ ಶಿವಾಲಯದ ಹೊರಗಡೆಯಲ್ಲಿ ಸುಳಿಯುತ್ತಾನೆ; ಮದ್ದಳೆಯನ್ನು ದೃತ ಮಧ್ಯ ವಿಳಂಬಿತ ಗತಿಗಮಕದಿಂದ ಬಾರಿಸುತ್ತಾನೆ. ಅದೆಂತಹ ನಾದ! ಮಾಯಾದೇವಿಯು ಮೇಘನಾದಕ್ಕೆ ಲವಲವಿಸುವ ಸೋಗೆಯಂತೆ, ಮದ್ದಳೆಯ ನಾದಕ್ಕೆ ಹುಚ್ಚೆದ್ದು ಕುಣಿಯುತ್ತಾಳೆ. ಮದ್ದಳೆಯವನನ್ನು ನೋಡುವ ಕೂಡುವ ಮಾಯೆಯ ಬಯಕೆ ಕುಡಿವರಿಯುತ್ತದೆ. ಪ್ರಭು ನಟನಾಟಕದ ವಿಟವೇಷದ ರಸಿಕರದೇವ, ಅವನಲ್ಲಿ ಮುದ್ದು ಮೊಗವನ್ನು, ಸಿಂಗರದ ಸಿರಿಯನ್ನು : ಗಾಡಿಯ ಗಾಂಭೀರ್ಯನನ್ನು ಕಂಡ ಮಾಯೆ ಅಲ್ಲಮನನ್ನೇ ತನ್ನ ನಾಟ್ಯಾಚಾರ್ಯನನ್ನಾಗಿರಿಸಿಕೊಳ್ಳುವಳು, ಏಕಾಂತದ ನಾಟಕಶಾಲೆಯೊಳೊಂದುದಿನ ಮಾಯಾದೇವಿ ಅಲ್ಲಮನನ್ನು ಹಿಡಿಯ ಹೋಗಲು, ನಿರ್ಮಾಯನೆಂಬ ಬಿರುದನ್ನು ಪಡೆದ ಪ್ರಭು ಅವಳ ಕೈಗೆ ಸಿಲುಕದೆ ಬಯಲಾಗುತ್ತಾನೆ. ಮಾಯೆ ಭಂಗಿತಳಾಗುವಳು. ಮಾಯಾ ಕೋಳಾಹಳ ಲೀಲಾನಾಟಕ ನಟನೆಯ ಅಲ್ಲಮಪ್ರಭುವೇನು ಸಾಮಾನೆ ? ಮುಂದೆ ಅವನು ಭಕ್ತರ ಉದ್ಧಾರಕ್ಕಾಗಿ ಲೋಕಸಂಚಾರ ಕೈಕೊಳ್ಳುವನು.

ಗೊಗ್ಗಯ್ಯನು ತೋಟವನ್ನು ಮಾಡುವ ಕಾಯಕದಲ್ಲಿ ನಿರತನಾಗಿ ಪ್ರಖ್ಯಾತಿಪಡೆದ ವ್ಯಕ್ತಿ, ಸಾವನ್ನು ತಿಳಿಯದೆ ಬರಿ ಗಾವದಿಗೆಲಸಕ್ಕೆ ಯೋಗ್ಯನಾದ ಭಕ್ತ; ಜೀವಾನುಕಂಪಿಯಾಗದೆ ಧಾವತಿಗೊಳಗಾದ ಜೀವಿ, ಅಂತಹನನ್ನು ಕಂಡು ಪ್ರಭು ಮರುಗುತ್ತಾನೆ; ಗೊಗ್ಗಯ್ಯನಿಗೆ ಇಷ್ಟಲಿಂಗ ಮಹಿಮೆಯನ್ನು ತಿಳಿಸಿಹೇಳಿ, ಅದಿಲ್ಲದೆ ಭವರುಜೆಯಳಿದು ನಿಜಮುಕ್ತಿ ಯಾಗದೆಂದು ಸ್ಪಷ್ಟಗೊಳಿಸುತ್ತಾನೆ: ಮತ್ತು ಶಿಷ್ಯಕಾರಣವಾಗಿ ಶಿವಯೋಗ ಸಮಾಧಿಯೊಳಿದ್ದ ಗುರುವಾದ ಅನಿಮಿಷದೇವನನ್ನು ಸ್ವಾನುಭವ ಜ್ಞಾನದಿಂದ ತಿಳಿದು, ಗೊಗ್ಗಯ್ಯನ ತೋಟದಲ್ಲಿಯೇ ಒಂದು ಕಡೆಯಲ್ಲಿ ಭೂಮಿಯನ್ನು ಅಗಿಸುವನು; ಒಳಗೆ ಕನಕಕಳಸಪರಿಮಿಳಿತ ದಿವ್ಯ ಶಿವಾ ಲಯವನ್ನು ಕಂಡು ಗೊಗ್ಗಯ್ಯನು ವಿಸ್ಮಿತನಾಗುವನು. ಇದೇನು ಚಮತ್ಕಾರವೆಂದು ಅವನು ಕೇಳಲು, ಪ್ರಭುದೇವನು ಮದ್ಗುರು ಸ್ವಾಮಿಯ ನಿಮಿಷದೇವರೆಂದು ಹೇಳಿ, ದೇವಾಲಯದೊಳಗೆ ಹೊಕ್ಕು ಚೈತನ್ಯ ವಾಗಿ ಅಸ್ತಿಮಾತ್ರ ತನುವಿನಿಂದಿದ್ದ ಗುರುಮೂರ್ತಿಯನ್ನು ಕರೆದು, ಅವನ ಕರಕಂಬದಿಷ್ಟಲಿಂಗವನ್ನು ಗ್ರಹಿಸಿ, ಇಷ್ಟ ಬ್ರಹ್ಮಳಿಂಬಿಟ್ಟು ಕೊಳ್ಳುವನು. ಗೊಗ್ಗಯ್ಯನಿಗೆ ಪ್ರಭುದೇವನು ಈ ರೀತಿ ಮೊದಲು ಅರಸರಿದ್ದು ನಂತರ ಪರಮ ಶಿವೈಕ್ಯರಾದ ಹಲವಾರು ಶಿವಭಕ್ತರ ಕಥೆಗಳನ್ನು ಹೇಳುವನು. ಕಾಂಚೀಪುರಿಯ ರಾಜೇಂದ್ರ ಚೋಳ-ಪಿಣ್ಯಾಕ ಸಿದ್ಧನ ಕಥೆ

ವಿಸ್ತಾರವಾಗಿ ಬರುತ್ತದೆ. ಧ್ರುವ, ಪ್ರಹ್ಲಾದ, ವಿಭೀಷಣರು ಶಿವಭಕ್ತರಾದುದನ್ನು ಪ್ರಭು ಹೇಳುತ್ತಾನೆ. ಹರಿಯು ಹತ್ತು ಅವತಾರಗಳಲ್ಲಿ ಹುಟ್ಟಿ ಬಂದುದು, ಮೋಕ್ಷಪಡೆದುದು, ಹರನಿಂದ ಎಂಬುದನ್ನು ಶಾಸ್ತ್ರಸಮ್ಮತವಾಗಿ ಗೊಗ್ಗಯ್ಯನಿಗೆ ತಿಳಿಸುತ್ತಾನೆ. ಶ್ರೀ ವೀರಭದ್ರನೇ ಮಾರುತಿಗೆ ಲಿಂಗಧಾರಣ ಮಾಡಿ ಮೋಕ್ಷ ಮಾರ್ಗ ತೋರಿಸಿದನೆಂದು ಹೇಳುವ ಸಂದರ್ಭ ಬರುತ್ತದೆ.

ಬೇಡರ ಸಂಕಣ್ಣನಾಯಕ, ಭದ್ರಾಯುಷ್ಯರಾಜನ ಕಥೆಗಳನ್ನು ಪ್ರಭು ಹೆಚ್ಚು ವಿಸ್ತಾರವಾಗಿ ಹೇಳಿ, ಭಕ್ತಿಯ ಪಾರಮ್ಯವನ್ನು ಗೊಗ್ಗಯ್ಯನಿಗೆ ತಿಳಿಸುತ್ತಾನೆ. ಹೀಗೆ ಅನೇಕ ಶಿವಶರಣರ ಕಥೆಗಳನ್ನು ಹೇಳಿ ಗೊಗ್ಗಯ್ಯನಿಗೆ ಸನ್ಮಾರ್ಗ ತೋರಿಸಿ ಮುಂದೆ ಸಾಗುವನು. ಕಲ್ಯಾಣ ಪಟ್ಟಣಕ್ಕೆ ಹೋಗಿ ಭಕ್ತಿಭಂಡಾರಿ ಬಸವಣ್ಣನವರಿಗೆ ದರ್ಶನವಿತ್ತು ಸಿದ್ಧರಾಮ ಬಸವಣ್ಣನವರಿಗೆ ಅನಿಮಿಷದೇವನ ಕಥೆಯನ್ನು ತಾನೇ ಹೇಳುತ್ತಾನೆ.

ಬಸವಣ್ಣನವರು ಸಾಕ್ಷಾತ್ ನಂದಿಯ ಅವತಾರವೆಂದು ವೀರಶೈವರ ನಂಬಿಕೆ. ಕಲ್ಯಾಣಕ್ಕೆ ಬಂದಾಗ ಪ್ರಭುದೇವರು ಬಸವಣ್ಣನ ಮಹಿಮೆ ಯನ್ನು ಹೊಗಳುತ್ತಾರೆ. ಬಸವಣ್ಣ ಪ್ರಭುವಿಗೆ ಮಣಿಯುತ್ತಾನೆ. ಯಾಕಂದರೆ ನಂದಿ ಅನಿಮಿಷದೇವನಿಗೆ ಲಿಂಗಕೊಟ್ಟಿದ್ದರೆ, ಅನಿಮಿಷ ದೇವನು ಪ್ರಭುವಿಗೆ ಲಿಂಗ ನೀಡಿದ್ದಾನೆ. ಪ್ರಭು ಮೇಲಾಗಿ ಕಾರಣಿಕ ಪುರುಷ, ತಪ್ಪಿದವರನ್ನು ತಿದ್ದುವದಕ್ಕಾಗಿ ಲೋಕಸಂಚಾರ ಕೈಕೊಂಡ ಸಿದ್ಧ ವ್ಯಕ್ತಿ; ವೈರಾಗ್ಯಮೂರ್ತಿ, ಹೀಗಿರಲು ಗುರುವಾರು, ಶಿಷ್ಯನಾರು ಎಂದು ಕೇಳಲೇಕೆ? ಕೆಳಗಿನಂತಿದೆ ಬಸವಣ್ಣ ಪ್ರಭುವಿನ ಸಂಬಂಧ:

” ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ, ಆ ಲಿಂಗ ನಿನಗೆ ಸೇರಿತ್ತಾಗಿ ಬಸವಣ್ಣನ ಸಾಂಪ್ರದಾಯದ ಕಂದ ನೋಡಾ ನೀನು. ಭಕ್ತಿ ದಳದುಳದಿಂದ ಚೆನ್ನ ಸಂಗಮನಾಥನೆಂಬ ಲಿಂಗವನನುಗ್ರಹಿಸಿ ಕೊಂಡೆನಾಗಿ ಬಸವಣ್ಣನ ಸಾಂಪ್ರದಾಯದ ಕಂದ ನೋಡಾ ನಾನು

ಇಂತಿಬ್ಬರಿಗೂ ಒಂದು ಕುಲಸಲವಾದ ಕಾರಣ ಕೂಡಲ ಚೆನ್ನಸಂಗಯ್ಯ ನಲ್ಲಿ ಬಸವಣ್ಣನ ಮಹಮನೆಯ ಪ್ರಸಾದ ಇಬ್ಬರಿಗೂ ಒಂದೇ ಕಾಣಾ ಪ್ರಭುವೆ.” (ಶೂ. ಸಂ. ಪು. ೫೦) ಇದೇ ರಾಜೇಂದ್ರವಿಜಯದ ಸಂಕ್ಷಿಪ್ತ ಕಥಾವಸ್ತು.

ಅನಾದಿಗಣನಾಥನ ಶಿಷ್ಯನು ಆದಿಗಣನಾಥನು. ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು. ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು. ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು. ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು. ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು. ಇಂತು ಅನಾದಿವಿಡಿದು ಬಂದ ಅನುಪಮಲಿಂಗವು, ಗುಹೇಶ್ವರನೆಂಬ ಹೆಸರನೊಳಕೊಂಡು, ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಗಾಳಿ ಗಾಳಿಯ ಕೂಡಿ | ಜಾಳಂದ್ರ ಗಿರಿಗಳನು

ದಾಳಿಯನು ಒಯ್ದು-ಆಳುವ ಬಗೆಯನು ನಾ

ಕೇಳಿದೆನು ಗುರುವೆ ಕೃಪೆಯಾಗು || ೫೯ ||

ಅನಲಭೂತವನ್ನು ವರ್ಣಿಸಲು ರಾಮಾಯಣ ಕಥೆಯನ್ನು ಪ್ರಸ್ತಾಪಿಸಿದ್ದರೆ ಅನಿಲ ಭೂತದ ಭಯಾನಕತೆಯನ್ನು ವ್ಯಕ್ತಗೊಳಿಸಲು ಪೌರಾಣಿಕ ಕಥೆಯ ಮಾಧ್ಯಮವನ್ನು ಗ್ರಹಿಸಿದ್ದಾನೆ. ಶಿವಕವಿಯು

ಹಿಂದೆ ಗಾಳಿಯಲ್ಲಿ ಪರ್ವತಗಳು ಪಕ್ಷಿಗಳಂತೆ ಹಾರಾಡಿ ಜನತೆಯನ್ನು ಉಧ್ವಸ್ಥ ಗೊಳಿಸುತ್ತಿದ್ದವಂತೆ. ದೇವತೆಗಳ ಮೊರೆ ಕೇಳಿ ಇಂದ್ರನು ತನ್ನ ವಜ್ರಾಯುಧದಿಂದ ಗಿರಿಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿದನು. ಅಂದಿನಿಂದ ಪರ್ವತಗಳು ಕದಲುವದಿಲ್ಲ. ಹೀಗೆ ಇಂದ್ರನಿಂದ ಜಾಳಾದ (ಹಾಳಾದ) ಗಿರಿಗಳಲ್ಲಿ ಸಾಮಾನ್ಯ ಗಾಳಿಯು ಬಿರುಗಾಳಿಯೊಡನೆ ಕೂಡಿ ದಾಳಿಮಾಡಿ ಗಿಡ-ಬಳ್ಳಿಗಳನ್ನು ಹಾರಿಸಿಕೊಂಡು ಹೋಗಬಹುದು. ಆದರೆ ಆ ಗಾಳಿಯು ಪರ್ವತವನ್ನೇನೂ ಮಾಡಲಾರದು. ಇದೇ ಮಾತನ್ನು ಮಹಾಕವಿ ಕಾಳಿದಾಸನು ತನ್ನ ರಘುವಂಶ” ಕಾವ್ಯದಲ್ಲಿ

“ನ ಪಾದಪೋನ್ಮೂಲಶಕ್ತಿರಂಹಃ

ಶಿಲೋಚ್ಛಯೇ ಮೂರ್ಚ್ಛತಿ ಮಾರುತಸ್ಯ ‘

 ಮರಗಳನ್ನು ಕಿತ್ತುಹಾಕಬಲ್ಲ ಶಕ್ತಿಯುಳ್ಳ ಗಾಳಿಯು ಪರ್ವತವನ್ನು ಹಾರಿಸುವಲ್ಲಿ ಬಲಹೀನವಾಗಿದೆ. ಅಂದರೆ ಅದು ಗಿರಿಯನ್ನು ಏನೂ ಮಾಡಲಾರದೆಂದೇ ತಿಳಿಸಿದ್ದಾನೆ.

ಶರೀರದಲ್ಲಿ ವಾಯು ತತ್ತ್ವದ ಮನವೇ ಗಾಳಿಯೆನಿಸುವದು. ಈ ಗಾಳಿರೂಪಿ ಮನವು ಗಾಳಿಯ ಕೂಡಿ=ಪ್ರಾಣವಾಯುವನ್ನು ಬೆರೆತು ಸಂಚರಿಸುತ್ತದೆ. ಶರೀರದ ಸಂಚಲನೆಗೆ ಐದು ವಾಯುಗಳು ಮುಖ್ಯ. ಪ್ರಾಣ, ಅಪಾನ, ವ್ಯಾನ,   ದಾನ,ಸಮಾನಗಳೆಂದು.  ಇವಕ್ಕೇನೆ _ ಪ್ರಾಣಪಂಚಕವೆನ್ನುವರು ಅಮರಸಿಂಹನು ಅಮರಕೋಶ’ದಲ್ಲಿ –   |

“ಪ್ರಾಣೋSಪಾನಃ ಸಮಾನಶ್ಚೋದಾನವ್ಯಾನೌ ಚ ವಾಯವಃ !

ಹೃದಿ ಪಾಣೋ ಗುದೆ…ಪಾನಃ ಸಮಾನೋ ನಾಭಿಮಂಡಲೇ|

ಉದಾನಃ ಕಂಠದೇಶ ಸ್ಯಾತ್ ವ್ಯಾನಃ ಸರ್ವಶರೀರಗಃ ||

ಹೃದಯದಲ್ಲಿ ಪ್ರಾಣವಾಯು, ಗುದದಲ್ಲಿ ಅಪಾನವಾಯು, ನಾಭಿಯಲ್ಲಿ ಸಮಾನ ವಾಯು, ಕಂಠದಲ್ಲಿ ಉದಾನವಾಯು ಮತ್ತು ಸಂಪೂರ್ಣಶರೀರದಲ್ಲಿ ವ್ಯಾನವಾಯು ವ್ಯಾಪಿಸಿರುತ್ತವೆಂದು ಈ ಐದು ವಾಯುಗಳು ಇರುವ ಸ್ಥಾನಗಳನ್ನು ನಿರ್ದೇಶಿಸಿದ್ದಾನೆ. ಈ ಐದಲ್ಲದೆ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ವೆಂದು ಮತ್ತೆ ಐದು ಉಪವಾಯುಗಳಿವೆ. ಇವುಗಳಿಗೆ  ನಾಗಪಂಚಕವೆನ್ನುತ್ತಾರೆ.

ಮಾನವನು ಅನ್ನ ನೀರುಗಳಿಲ್ಲದೇ ಕೆಲವು ಕಾಲ ಬದುಕಬಹುದು. ಆದರೆ ಗಾಳಿಯಿಲ್ಲದೆ ಬದುಕಲಾರನು. ವಾಯುಗಳು ಜೀವಾತ್ಮನಿಗೆ ಬಹುಮುಖ್ಯವಾಗಿವೆ. ಈ ವಿಷಯವನ್ನು ಷಟ್‌ಸ್ಥಲ ಜ್ಞಾನಿ ಚನ್ನಬಸವಣ್ಣನವರು ಕರಣ ಹಸಿಗೆಯಲ್ಲಿ ವಿವರ ವಾಗಿ ತಿಳಿಪಡಿಸಿದ್ದಾರೆ. ಒಂದೊಂದೆ ವಾಯುವಿನ ಗುಣಧರ್ಮವನ್ನು ಪ್ರತ್ಯೇಕವಾಗಿ ವಿವೇಚಿಸಿದ್ದಾರೆ.

೧) ಪ್ರಾಣವಾಯು : ಇಂದ್ರ ನೀಲವರ್ಣ, ಹೃದಯಸ್ಥಾನದಲ್ಲಿರ್ದು, ಅಂಗುಷ್ಠ ತೊಡಗಿ ಘ್ರಾಣಾಗ್ರಪರಿಯಂತರ ಸಪ್ರಾಣಿಸಿಕೊಂಡು ಉಚ್ಛ್ವಾಸ ನಿಶ್ವಾಸನಂಗೈಸಿ ಅನ್ನಜೀರ್ಣಿಕರಣಮಂ ಮಾಡಿಸುತ್ತಿಹುದು.

೨) ಅಪಾನವಾಯು : ಹರಿತವರ್ಣ, ಗುದಸ್ಥಾನದಲ್ಲಿರ್ದು, ಮಲಮೂತ್ರಂಗಳ ವಿಸರ್ಜನವಂ ಮಾಡಿಸಿ ಅಧೋದ್ವಾರವಂ ಬಲಿದು ಅನ್ನರಸ ವ್ಯಾಪ್ತಿಯ ಮಾಡಿಸುತ್ತಿಹುದು.

೩) ವ್ಯಾನವಾಯು : ಗೋಕ್ಷೀರವರ್ಣ, ಸರ್ವಸಂಧಿಯಲ್ಲಿರ್ದು ನೀಡಿಕೊಂಡಿ ಹುದನು, ಮುದುಡಿಕೊಂಡಿಹುದನು ಅನುಮಾಡಿ ಅನ್ನಪಾನಮಂ ತುಂಬಿಸುತ್ತಿಹುದು.

೪) ಉದಾನವಾಯು : ಎಳೆಮಿಂಚಿನ ವರ್ಣ, ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸು ಕಾಣುವ, ಏಳಿಸುವ, ಛರ್ಧಿಸುವ (ವಮನ) ರೋದನಂಗಳ ಮಾಡಿಸಿ ಅನ್ನರಸ ಆಹಾರ ಸ್ಥಾಪನಂಗೈಸುತ್ತಿಹುದು.

೫) ಸಮಾನವಾಯು : ನೀಲವರ್ಣ, ನಾಭಿಸ್ಥಾನದಲ್ಲಿರ್ದು ಅಪಾದಮಸ್ತಕ

ಪರಿಯಂತರ ಸಪ್ರಾಣಸಿಕೊಂಡ ಅನ್ನರಸಮಂ ಎಲ್ಲ ರೋಮನಾಳಂಗಳಿಗೆ ಹಂಚಿಕ್ಕುತ್ತಿಹುದು ” ಇವು ಪ್ರಾಣಪಂಚಕದ ಕೆಲಸಗಳು. ಇನ್ನು ನಾಗಪಂಚಕದ ಕಾರ್ಯವನ್ನು  ಸಂಕ್ಷಿಪ್ತದಲ್ಲಿ ನೋಡುವಾ

೬) ನಾಗವಾಯು : ಪೀತವರ್ಣ, ವಾಗಿಂದ್ರಿಯ (ಬಾಯಿ)ಕ್ಕೆ ಕಾರಣವಾಗಿ ಸುವಾಕ್ಯ ದುರ್ವಾಕ್ಯಗಳನ್ನು ನುಡಿಸುವದು.

೭) ಕೂರ್ಮವಾಯು : ಶ್ವೇತವರ್ಣ ಪಾಣೀಂದ್ರಿಯ (ಕೈ)ದಿಂದ ಆದಾನ- ಪ್ರದಾನಗಳನ್ನು ಮಾಡಿಸುತ್ತಿಹುದು.

೮) ಕೃಕರ ವಾಯು : ಅಂಜನವರ್ಣ ಪಾದೇಂದ್ರಿಯವು ಗಮನಾಗಮನಗಳನ್ನು ಹೊಂದುವದು.

೯) ದೇವದತ್ತ ವಾಯು : ಸ್ಪಟಿಕವರ್ಣ ಪಾಯ್ವಿಂದ್ರಿಯವು (ಗುಹ್ಯ) ಕುಳಿತಲ್ಲಿ ಮಲಗಿಸಿ, ಮಲಗಿದಲ್ಲಿ ಏಳಿಸಿ, ನಿಂದಿರಿಸಿ, ಚೇತರಿಸಿ, ಒರಲಿಸುತ್ತ ಸರ್ಜನ ವಿಸರ್ಜನ ಗಳನ್ನು ಮಾಡಿಸುವದು.

೧೦) ಧನಂಜಯ ವಾಯು : ನೀಲವರ್ಣ ಗುದೇಂದ್ರಿಯವು. ಆನಂದಾದಿ ವಿಷಯದ ಅನುಭವವನ್ನು ಹೊಂದುವದು. ಈ ವಾಯುವು ಕರ್ಣದಲ್ಲಿ ಸಮುದ್ರ ಘೋಷವನ್ನು ಘೋಷಿಸಿ ಮರಣಕಾಲಕ್ಕೆ ನಿರ್ಘೋಷವನ್ನು ಪಡೆಯುವದು. ಈ ಎಲ್ಲ ವಾಯುಗಳಲ್ಲಿ ಪ್ರಾಣವಾಯುವೇ ಶರೀರದ ಜೀವಾಳವಾಗಿದೆ. ಆದರೂ ಎಲ್ಲ ವಾಯುಗಳ ಸಂಚಲನವು ಕ್ರಮಬದ್ಧವಾಗಿದ್ದರೆ ಮಾತ್ರ ಶಾರೀರಿಕ ವ್ಯವಹಾರವು ಸುಗಮವೂ, ಸುಲಲಿತವೂ ಆಗುವದು. ಈ ಶರೀರದ ಸುಸ್ಥಿತಿಗೆ ದಶವಾಯುಗಳೂ ಅವಶ್ಯವೆಂದಂತಾಯಿತು. ಚನ್ನಬಸವಣ್ಣನವರು ವಿವರಿಸಿದ ದಶವಾಯುಗಳ ವಿಚಾರ ವನ್ನು ೮೪೪ ನೆಯ ವಚನದಿಂದಲೂ ಅರಿಯಬಹುದು.

ವಾಯುತತ್ತ್ವದ ಮನವು ಪ್ರಾಣವಾಯುವಿನ ಸಂಚಲನೆಯಿಂದ ಶರೀರದಲ್ಲಿ ಚಂಚಲತನವನ್ನು ಹೊಂದುತ್ತದೆ. ಅಷ್ಟೇ ಅಲ್ಲದೆ ಗಾಳಿಯು ಜಾಳಂದ್ರ ಗಿರಿಗಳ ಮೇಲೆ ದಾಳಿಮಾಡಿ ದೇಹವನ್ನು ದಣಿಸಿ ಆಳುವ ರೀತಿಯನ್ನು ಕೇಳಿದೆನೆಂದು ಕವಿಯು ಚಕಿತನಾಗಿ ಶ್ರೀಗುರುಕೃಪೆಯನ್ನು ಯಾಚಿಸಿದ್ದಾನೆ. ಈ ಗಾಳಿಯ ದಾಳಿಯು ಪ್ರತ್ಯಕ್ಷವಾಗಿಯೂ ಕಾಣಬರುತ್ತದೆ. ಇಲ್ಲಿ ಜಾಳಂದ್ರ ಗಿರಿಗಳೆಂದರೆ ಕೆಲವರು ಈಡಾ- ಪಿಂಗಳ ನಾಡಿಗಳೆಂತಲೂ, ಎರಡೂ ಕಣ್ಣುಗಳೆಂತಲೂ ಅರ್ಥೈಸುತ್ತಾರೆ. ಪ್ರಾಣವಾಯು ಸೂರ್ಯನಾಡಿಯಾದ ಪಿಂಗಳೆಯ (ಮೂಗಿನ ಬಲರಂಧ್ರದ) ಲ್ಲಿ ಹಾಗೂ ಚಂದ್ರನಾಡಿ ಯಾದ ಈಡೆಯ (ಎಡರಂಧ್ರದ) ಲ್ಲಿ ಸಂಚರಿಸುತ್ತ ಅಂಗುಷ್ಠದಿಂದ ನೇತ್ರದವರೆಗೆ ಹರಿದಾಡುತ್ತದೆ. ಮತ್ತು ಎಲ್ಲ ವಾಯುಗಳಿಗೆ ಚೇತನವನ್ನು ಕೊಡುತ್ತದೆ. ಈ ಗಾಳಿಯ ಹರಿದಾಡುವಿಕೆಯು ಸಕ್ರಮವಾಗಿದ್ದರೆ ದೇಹಕ್ಕೆ ತೊಂದರೆಯಾಗುವದಿಲ್ಲ. ಶರೀರದಲ್ಲಿ   ಜಾಲದಂತೆ ಹಬ್ಬಿರುವ ನರಗಳಲ್ಲಿ ಮತ್ತು ಸಂಧಿ ಸ್ಥಾನಗಳಲ್ಲಿ ವಾಯುವಿಕಾರವಾದರೆ ಆಯಾಸವಾಗುವದು. ಅದಕ್ಕೋಸುಗ ಜಾಳಂದ್ರಗಿರಿಗಳೆಂದರೆ ನರಗಳ ಕೂಡುವಿಕೆ ಹಾಗೂ ಸಂಧಿಸ್ಥಾನಗಳೆಂದು ಭಾವಿಸಬಹುದು. ಈ ಜಾಳಂದ್ರಗಿರಿಗಳಲ್ಲಿ ದಾಳಿಮಾಡಿ ವಾಯು ತನ್ನ ಶಕ್ತಿಯನ್ನು ತೋರಿಸಿ ಶರೀರವನ್ನು ಆಳತಕ್ಕ ರೀತಿಯು ಕಂಡುಬರುತ್ತದೆ. ಕಾರಣ ವಾಯುವಿನ ಅಭಿಮಾನವನ್ನು ಕಳೆದುಕೊಂಡಾಗ ಶರೀರಕ್ಕೆ ಬಾಧಕವಾಗು ವದಿಲ್ಲ. ವಾಯುವಿಕಾರದ ರೀತಿಯನ್ನು ಅರಿಯದಿದ್ದರೆ ವಾಯುಮಯ ಮನಸ್ಸಿನ ಹರಿದಾಟವೂ ನಿಲ್ಲುವದಿಲ್ಲ. ಅದಕ್ಕಾಗಿ ಮನವನ್ನು ನಿಲ್ಲಿಸುವದಕ್ಕಾಗಿ ಪ್ರಾಣಾಯಾಮ ದಿಂದ ವಾಯು ಶುದ್ಧಿಯನ್ನು ಮಾಡುವರು. ಶಿವಪೂಜೆಯನ್ನು ಪ್ರಾರಂಭಿಸುತ್ತಿರಲು ರೇಚಕ ಪೂರಕ ಕುಂಭಕಗಳಿಂದ ವಾಯುವಿನ ಪರಿಶುದ್ಧತೆ ಹಾಗೂ ಚಲನೆಯನ್ನು ಸ್ಥಿರಗೊಳಿಸುವರು. ಇದರಿಂದ ಮನಸ್ಸಿನ ಸ್ಥಿರತೆಯುಂಟಾಗುವದು. ಈ ವಿಚಾರವನ್ನು ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಮಾಯಾಕೋಲಾಹಲ ಅಲ್ಲಮ ಪ್ರಭುದೇವರು (ಸಾಧಕರಿಗಾಗಿ) ಬಸವಣ್ಣನವರಿಗೆ ಬೋಧಿಸಿದ್ದಾರೆ (ಸಾಧಕಾಂಗ ಗತಿಯಲ್ಲಿ)

“ಮಾಯೆಯೆಂಬುದು ಮನವು ಮನವೇ

ವಾಯುವಾಗಿಹುದಾ ಮನಸ್ಸೇ

ವಾಯುರೂಪಾಗಿರುತಲಿಹುದಾ ವಾಯು ಹರಿದಾಡಿ |

ಕಾಯವನು ಕಂಗೆಡಿಸಿ ಭಕ್ತಿಯ

ಬಾಯ ಕಾಣಿಸಲೀಯದಂತಾ

ವಾಯುವನೆ ಗೆಲುವವನೆ ಭಕ್ತನು ಬಸವ ಕೇಳೆಂದ” || ೨೦ ||

“ಮನದ ಮುಂದಣ-ಬಯಕೆಯೇ ಮಾಯೆಯಾಗಿರುವದು. ಅಂಥಾ ಮಾಯಾಮಯ ಮನವು ವಾಯುಮಯವಾಗಿದೆ. ವಾಯುವು ಶರೀರದಲ್ಲಿ ಸಂಚರಿಸಿ ಭಕ್ತಿಯ ಬಟ್ಟೆಯನ್ನು ಕಂಗೆಡಿಸುತ್ತದೆ. ಆದ್ದರಿಂದ ಈ ವಾಯುವನ್ನು ಗೆಲ್ಲಬಲ್ಲವನೇ ಭಕ್ತನು’ ಎಂದು ಹೇಳಿ ವಾಯುವನ್ನು ನಿಲ್ಲಿಸುವ ಪರಿಯನ್ನು ಮುಂದಿನ ಮಾತಿನಲ್ಲಿ ತಿಳಿಸುತ್ತಾರೆ, ಪ್ರಭುಗಳು –

ಆಲಿ ನಿಂದೊಡೆ ಸುಳಿದು ಸೂಸುವ

ಗಾಳಿ ನಿಲುವುದು ಗಾಳಿ ನಿಲೆ ಮನ

ಮೇಲೆ ನಿಲುವುದು ಮನವು ನಿಂದೊಡೆ ಬಿಂದು ನಿಂದಿಹುದು |

ಲೀಲೆಯಿಂದಾ ಬಂದು ನಿಂದೊಡೆ

ಕಾಲ ಕರ್ಮವ ಗೆದ್ದು ಮಾಯೆಯ

ಹೇಳ ಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ || ೨೨ ||

ಕಣ್ಣಿನ ರೆಪ್ಪೆಯ ಬಡಿದಾಟ ನಿಂತರೆ ಗಾಳಿನಿಲ್ಲುವದು. ಅಂದರೆ ಲಿಂಗದಲ್ಲಿ ಆನಿಮಿಷ ದೃಷ್ಟಿಯನ್ನು ನಿಲ್ಲಿಸಿ ದೃಷ್ಟಿಯೋಗವನ್ನು ಸಾಧಿಸಬೇಕು. ಆಗ ವಾಯುವಿನ ಸಂಚಾರ ಸ್ಥಿರಗೊಂಡು ಮನಸ್ಸು ನಿಲ್ಲುವದು. ಮನವು ನಿಶ್ಚಂಚಲವಾದರೆ ಲಿಂಗದಲ್ಲಿ  ಬಿಂದುವನ್ನು ಕಾಣುತ್ತೇವೆ. ಬಿಂದು (ಪ್ರಕಾಶ)ವನ್ನು ನಿಲ್ಲಿಸುತ್ತಿರಲು ಕಾಲ-ಕರ್ಮ- ಮಾಯೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಬಹುದು.. ಹೀಗೆ ವಾಯುವನ್ನು ಹಿಡಿತದಲ್ಲಿ ತಂದರೆ ಅದರ ದಾಳಿಯು ನಿಲ್ಲುವದು

 ಪ್ರಾಣವಾಯುವನ್ನು ಶರೀರದಲ್ಲಿ ತೆಗೆದುಕೊಳ್ಳುವುದಕ್ಕೆ ಶ್ವಾಸವೆಂತಲೂ, ಹೊರಕ್ಕೆ ಬಿಡುವದಕ್ಕೆ ನಿಃಶ್ವಾಸವೆಂತಲೂ ಕರೆಯುವರು. ಈ ಶ್ವಾಸ-ವಿಶ್ವಾಸಗಳು ಒಂದು ನಿಮಿಷಕ್ಕೆ ೧೫ ಸಲ ಜರುಗುವವು. ಅಷ್ಟೇ ಸಲ ನಡೆಯಬೇಕು. ಅಂದರೆ ಅದು ಕ್ರಮಬದ್ಧವಾದುದು. ಅವು ಒಂದು ತಾಸಿಗೆ ೯೦೦ ಆಗುತ್ತವೆ. ೨೪ ತಾಸು (ಒಂದು ದಿನ)ಗಳಲ್ಲಿ ೨೧,೬೦೦ ಶ್ವಾಸ ನಿಃಶ್ವಾಸಗಳು ಉಂಟಾಗುತ್ತವೆಂದು  ಶಿವಾನುಭವಿಗಳು ಹೇಳುತ್ತಾರೆ. ಈ ಸಂಖ್ಯೆಗೆ ಅನುಗುಣವಾಗಿ ಶ್ವಾಸ ನಿಶ್ವಾಸದಲ್ಲಿ ಪ್ರಣವ ಪಂಚಾಕ್ಷರಿ ಯನ್ನು ತುಂಬಬೇಕು. ವಾಯು ಪ್ರಣವನಾದದೊಡನೆ ಬೆರೆಯಬೇಕು. ಆಗ ಮನ ಘನವಾಗುವದು. ಇದನ್ನು ಶಿಕ್ಷಿಸಬಲ್ಲವನು ಗುರುವು

. ಓ ಮಹಾಗುರುವೆ ! ಎನ್ನ ಮನವನ್ನು ಶಿಕ್ಷಿಸಿ ಘನ-ಮನವಾಗುವಂತೆ ಮಾಡು. ಪ್ರಾಣವು ಪ್ರಣವ ನಾದದಲ್ಲಿ ಬೆರೆಯುವಂತೆ ಕೃಪೆಮಾಡು. ಇದರಿಂದ ವಾಯು ವಿಕಾರದ ಭಯಾನಕತೆ ದೂರವಾಗಿ ಕಾಯವು ಪ್ರಸಾದಕಾಯವಾಗುವದು. ಇಂಥ ಸದ್ಭಕ್ತನಿಗೆ ಮಾತ್ರ ವಾಯುವು ಏನನ್ನೂ ಮಾಡಲಾರದು.

ಬಯಲೊಳಗೆ ಬಯಲೊಗೆದು | ಬಯಲೊಳಗೆ ಸಂಚರಿಸಿ

ಬಯಲೊಳಗೆ ಬಯಲು-ಲಯವಾಗುತಿರೆ ಕಂಡು

ಭಯಗೊಂಡೆ ಗುರುವೆ ಕೃಪೆಯಾಗು | ೬೦ |

ಪಂಚ ಮಹಾಭೂತಗಳಲ್ಲಿ ನೆಲ-ಜಲ-ಅನಲ ಅನಿಲ ನಾಲ್ಕನ್ನು ಪ್ರತಿಪಾದಿಸಿ  ಐದನೆಯ ಆಕಾಶದ ಇರುವನ್ನು ಬಿತ್ತರಿಸುತ್ತಾನೆ.  

 ಸಾಮಾನ್ಯವಾಗಿ ತೋರುವ ಈ ಮಹಾಬಯಲೊಳಗೆ ಒಂದು ಮನೆಯು ನಿರ್ಮಾಣವಾದರೆ ಅದಕ್ಕೆ ಮನೆಯ ಬಯಲೆನ್ನುವರು. ಅಂದರೆ ವಿಸ್ತಾರವಾದ ಬಯಲಿನಲ್ಲಿ ಮನೆಯಷ್ಟೇ ವಿಸ್ತಾರವಾದ ಸೀಮಿತವಾದ ಅವಕಾಶ ಕಂಡು ಬರುವದು. ಅರ್ಥಾತ್ ಹಿರಿದಾದುದು ಕಿರಿದಾಗುವದು. ಇಂಥ ಮನೆಯ ಒಳಬಯಲು ಹಾಗೂ ಹೊರ ಬಯಲುಗಳಲ್ಲಿ ಜೀವಾತ್ಮನು  ಸಂಚರಿಸುತ್ತಾನೆ. ಕಾಲಾಂತರದಲ್ಲಿ ಆ ಮನೆಯು  ನಾದುರಸ್ಥವಾಗಿ ಬಿದ್ದರೆ ಅದರ ಬಯಲು ಪುನಃ ಮೊದಲಿನ ಮಹಾ ಬಯಲಿನಲ್ಲಿ ಸೇರುತ್ತದೆ .ಜೀವಾತ್ಮನು ನಾಶವಾಗುವನು. ಆಗ ಎಲ್ಲವು ಮಹಾ ಬಯಲೇ ಆಗುವದು .ಇದು ಜಗದ ವಿಚಿತ್ರ ಗತಿಯಾಗಿದೆ.

 ಅಧ್ಯಾತ್ಮ ವಿಚಾರದಲ್ಲಿ ಬಯಲೆಂದರೆ ಮಹಾ ಚೈತನ್ಯಮಯವಾದ ಪರಾತ್ಪರ ವಸ್ತು.

 “ಯತೋ ವಾ ಇಮಾನಿ ಭೂತಾನಿ ಜಾಯಂತೇ

 ಯೇನ ಜಾತಾನಿ ಜೀವಂತಿ ಯತ್ ಪ್ರಯಂತ್ಯಭಿಸಂವಿಶಂತಿ |

ತೈತ್ತರೀಯೋಪನಿಷತ್ತು || ೩-೧

ಎಂಬುವ ಶೃತಿಯಂತೆ ಆ ಪರವಸ್ತುವಿನಿಂದ ಹುಟ್ಟಿದ ಭೂತಗಳು (ಪ್ರಾಣಿಗಳು) ಬದುಕುತ್ತವೆ. ಕೊನೆಗೊಮ್ಮೆ ಸಾಯುತ್ತವೆ. ಬ್ರಹ್ಮಾಂಡ ಬಯಲು ರೂಪಿನ ಶಿವನಿಂದ ಪಿಂಡಾಂಡ ಬಯಲನ್ನು ಹೊಂದಿದ ಜೀವನು ಸಂಜನಿಸಿ ನವದ್ವಾರಮಯವಾದ ದೇಹವೆಂಬ ಬಯಲಿನಲ್ಲಿ ಹಾಗೂ ಹೊರ ಬಯಲಿನಲ್ಲಿ ಸಂಚರಿಸುತ್ತಾನೆ. ಕೊನೆಗೆ ಶರೀರವು ನಾಶವಾಗಲು ಅದರ ನವದ್ವಾರಗಳೂ ಮಹಾ ಬಯಲಿನಲ್ಲಿ ಕೂಡಿ ಜೀವಾತ್ಮನೂ ಕಾಣದಂತಾಗುವನು. ಈ ಎಲ್ಲದರ ವೈಚಿತ್ರ್ಯತೆಯನ್ನು ಕಾಣುತ್ತಿರಲು ಭಯ ಬರುವದು ಸಹಜ. ಜೀವನದ ಆಶಾಪಾಶಗಳಲ್ಲಿ ಬಿದ್ದ ಜೀವನಿಗೆ ಸಾಯುವದೆಂದರೆ ಬಲುಕಷ್ಟ. ಈ ಸಾವನ್ನು ಗೆಲ್ಲಬೇಕಾದರೆ ಬಯಲಾತ್ಮನಾದ ಶಿವನನ್ನು ಅರಿಯಲೇಬೇಕು. ಶಿವನೇ ತಾನಾಗಿ ಶಿವನಲ್ಲಿ ಬೆರೆತರೆ ಭಯ ದುಃಖಗಳು ಹುಟ್ಟಲಾರವು. ಸಕಲ ಶಾರೀರಿಕ ಉಪಾಧಿಗಳು ಬಿಟ್ಟು ಹೋಗುತ್ತವೆ.

 ಶರಣರ ಸಾಧನೆಯಾದರೂ ಬಯಲುಗಳಿಕೆಯಲ್ಲಿಯೇ ಪರಿಸಮಾಪ್ತಿಯಾಗುತ್ತದೆ. ಶೂನ್ಯ ಸಂಪಾದನೆಯು ಶರಣತತ್ತ್ವದ ಮಹಾಮಣಿಹ. ಅದಕ್ಕಾಗಿ ಎಲ್ಲ ಶಿವಶರಣರು ಬಯಲು ಗಳಿಕೆಯ ಪರಿಯನ್ನು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಬಯಲು ಗಳಿಕೆಯೇ  ಐಕ್ಯಸ್ಥಿತಿಯೆನಿಸಿರುವದು. ಈ ಬಯಲುಗಳಿಕೆಯ ಸುಲಭ ಮಾರ್ಗವನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯು –

“ವೇದಶಾಸ್ತ್ರಾಗಮಂಗಳೆಂಬ ಕೊಟ್ಟಣವ ಕುಟ್ಟುತ್ತ

ನುಚ್ಚು ತೌಡು ಕಾಣಿಭೋ ! ಇವ ಕುಟ್ಟಲೇಕೋ ?

ಅತ್ತಲಿತ್ತ ಹರಿವ ಮನದ ಶಿರವನರಿಯಬಲ್ಲಡೆ

ಬಟ್ಟಬಯಲು ಕಾಣಾ ಚೆನ್ನಮಲ್ಲಿಕಾರ್ಜುನಾ !”

ಎಂದು ಸೂತ್ರರೂಪವಾಗಿ ಮಹದರ್ಥವನ್ನು ತಿಳಿಸಿದ್ದಾಳೆ. ವೇದಶಾಸ್ತ್ರ ಆಗಮಂಗಳವಾದ-ವಿವಾದ-ಜಂಜಾಟದಿಂದ ಬಯಲಾತ್ಮನನ್ನು ಕಾಣಲು ಸಾಧ್ಯವಿಲ್ಲ. ಅತ್ತಲಿತ್ತ ಹರಿವ ಚಂಚಲ ಮನಸ್ಸಿನ ಜುಟ್ಟವನ್ನು ಹಿಡಿದರೆ ಬಟ್ಟ ಬಯಲು ದೊರಕೊಳ್ಳುವದು. ಪ್ರಭುದೇವರೂ ಸಹ –

“ಬಯಲು ಬಯಲನೆ ಬಿತ್ತಿ,

ಬಯಲು ಬಯಲನೆ ಬೆಳೆದು ;

ಬಯಲು ಬಯಲಾಯಿತ್ತಯ್ಯಾ ;

 ಬಯಲು ಜೀವನ-ಬಯಲಭಾವನೆ,

ಬಯಲು ಬಯಲಾಗಿ ಬಯಲಾಯಿತ್ತಯ್ಯ.

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು.

ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ !’

ಬಯಲಿನಲ್ಲಿ ಬಯಲನ್ನು ಬಿತ್ತಿ, ಅದನ್ನೇ ಬೆಳೆದು ಅದರಲ್ಲಿಯೇ ಜೀವನ ಸಾಗಿಸಿ ಕೊನೆಗೊಮ್ಮೆಆ ಬಯಲಿನಲ್ಲಿ ಬೆರೆಯಬೇಕಾದರೆ ಗುಹೇಶ್ವರನ ಪೂಜೆ ಅವಶ್ಯವೆಂದು ನಾನೂ ಆ ರೀತಿ ಆತನನ್ನು ಪೂಜಿಸಿ ಬಯಲಾಗಿದ್ದೇನೆಂದು ತಿಳಿಸಿದ್ದಾರೆ. ಈ ಬಯಲ ತತ್ತ್ವವನ್ನರಿಯಬೇಕಾದರೆ ಗುರುಕರುಣೆ ಅತ್ಯವಶ್ಯ. ಗುರುಕೃಪೆಯಿಂದ ಇಷ್ಟಲಿಂಗವನ್ನು ಪಡೆದು ಲಿಂಗಪ್ರಾಣಿಯಾಗಿ ಸರ್ವಾಂಗ-ಲಿಂಗಮಯನಾದವನು ಬಯಲಾಗುವನು. ಇಥವರಿಗೆ ಭಯವೆಂಬುದೇ ಇಲ್ಲ. ಈ ವಿಷಯವನ್ನು ಮಹಾ ಶರಣ ಹಡಪದಪ್ಪಣ್ಣಗಳು-

ಬಯಲಿಂದಲೇ ಹುಟ್ಟಿ ಬಯಲಿಂದಲೇ ಬೆಳೆದು,

ಬಯಲಾಮೃತವನೆ ಉಂಡು ಬಯಲನೆ ಉಟ್ಟು

ಬಯಲನೆ ತೊಟ್ಟು ಬಯಲು ಬಯಲೊಳಗೆ ಬೆರೆದ ಭೇದವ

ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು

ಭವವಿರಹಿತ ಶರಣರ ನಿಲವ ?

ಬಸವಪ್ರಿಯ ಕೂಡಲಚೆನ್ನಬಸವಣ್ಣ (೧೧೭ ವ.ಸಾ.ಸಂ.)

ಬಯಲಾತ್ಮರಾದ ಭವಭಯವಿರಹಿತ ಶರಣರ ನಿಲುವನ್ನು ಭವಭಾರಿಗಳು ಎಂದೂ ತಿಳಿಯಲಾರರೆಂದು ತಿಳಿಸಿದ್ದಾರೆ.

ಜಾನಪದ ಕವಿ ಹಾಗೂ ಸಂತ ಶಿಶುನಾಳ ಶರೀಫ ಸಾಹೇಬರು ಸಹ ಬಯಲು ತತ್ತ್ವವನ್ನು ಕುರಿತು ಸುಂದರವಾಗಿ ಹಾಡಿದ್ದಾರೆ.

ಬಯಲೊಳು ಬಯಲು ಪುಟ್ಟಿಸಿದಾ ನಿ-

ರ್ಭಯಲಿನೊಳಗೆ ತನ್ನ ಆಲಯವ ಕಟ್ಟಿಸಿದ !

ಭವನಿವಾರಣ ಭಕ್ತರಕ್ಷಕ ಹೌದೆನುತ ನಿಶ್ಚಯಿಸಿ ಮನದೊಳು |

ತವಕ ತೂರ್ಯದಿಂದ ಲಕ್ಷಿಸಿ ಭವ ಸಮುದ್ರವ ದಾಂಟು, ದಾಂಟುತ |

ನಡೆಯೋ ಖಾದರಲಿಂಗ ನೆಲಸಿರ್ಪ ಗುಡಿಗೆ ನಡಿಯೋ ದೇವರ ಚಾಕರಿಗೆ II

ಖಾದರಲಿಂಗನೂ ಬಯಲಾತ್ಮನೇ, ಭವಸಮುದ್ರವನ್ನು ದಾಟಲು ಬಯಲಾಗಿ ಬಯಲಾತ್ಮನನ್ನು ಪೂಜಿಸಬೇಕು.

ಅಭಯಸ್ವರೂಪಿಯಾದ ಸದ್ಗುರುವೆ ! ಈ ಭವದ ಭಯವನ್ನು ನೀಗಿಸಲು ಶರಣರ ಪರಿಯನ್ನು ತಿಳಿಸು. ಶೂನ್ಯ ಸಂಪಾದನೆಯನ್ನು ಮಾಡುವ ಸುಜ್ಞಾನವನ್ನಿತ್ತು ಕರುಣಿಸಿ ಕಾಪಾಡು. ಅಂದರೆ ಬಯಲುಗಳಿಕೆಯನ್ನು ಸಾಧಿಸಬಲ್ಲೆನು.

ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ

ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಹಾನಗಲ್ಲ ವಿರಕ್ತಮಠ ಕರ್ನಾಟಕದಲ್ಲಿಯ ಪ್ರಸಿದ್ದಿಯನ್ನು ಪಡೆದ ಧರ್ಮಪೀಠ, ಅದರ ಪರಂಪರೆ ಘನವಾದುದು. ಹಿಂದಿನ ಮಹಾಸ್ವಾಮಿಗಳವರೆಲ್ಲರು ಪರಮ ತಪಸ್ವಿಗಳು, ಪಂಡಿತರು, ಕಾವ್ಯ ಪರಿಣತರ ಆಗಿದ್ದರು. ಸುಮಾರು ಒಂದು ನೂರ ಹದಿನೈದು ವರ್ಷಗಳ ಕುಮಾರಾರ್ಯರೆಂಬವರು ಈ ಪೀಠವನ್ನಲಂಕರಿಸಿದ್ದರು. ಅವರು ತಪೋನಿಷ್ಠರಾಗಿದ್ದಂತೆ ಪ್ರತಿಭಾವಂತ ಕವಿಗಳೂ ಆಗಿದ್ದರು. ಅವರು ‘ಕುಮಾರೇಶ್ವರ ಪುರಾಣ’ವೆಂಬ ಕಾವ್ಯವನ್ನು ವಾರ್ಧಿಕಷಟ್ಪದಿಯಲ್ಲಿ ಬರೆದಿದ್ದಾರೆ. ಅದು ರಸಾತ್ಮಕವಾದ ಪ್ರೌಢ ಕಾವ್ಯವಾಗಿದೆ. ‘ಭಿಕ್ಷಾಟನ ಲೀಲೆ’ ಯನ್ನು ಕುರಿತು ಬರೆದ ಅವರ ಇನ್ನೊಂದು ಕಿರುಗಾವ್ಯ ದೊರೆತಿಲ್ಲ.

ಇವರ ತರುವಾಯದ ಪರಂಪರೆಯಲ್ಲಿ ಶ್ರೀ ಫಕೀರ ಮಹಾಸ್ವಾಮಿಗಳು ಶಿವಪೂಜಾನಿಷ್ಠರು, ಶಿವಾನುಭವಿಗಳು. ಇಂತಹ ಉಜ್ವಲ ಪರಂಪರೆಯುಳ್ಳ ಮಹಾಪೀಠವನ್ನು ಅಲಂಕರಿಸಿದರೂ, ಮೇಣೆ ಪಲ್ಲಕ್ಕಿಗಳಲ್ಲಿ ಕುಳಿತು ಮೆರೆದಾಡುವ ಆ ಮಠದ ವೈಭವವು ಶ್ರೀಗಳವರನ್ನು ಸ್ವಾಗತಿಸಿ ಬಂದರೂ ಅದಕ್ಕವರು ಮಾರುವೋಗಲಿಲ್ಲ. ಈ ವೀರ ವಿರಾಗಿಗಳ ವೈರಾಗ್ಯದ ರನ್ನದೀವಿಗೆಯು ವೈಭವಾಡಂಬರಗಳ ಬಿರುಗಾಳಿಗೆ ಹೊಯ್ದಾಡದೆ ಅಚಲವಾಗಿತ್ತು. ಶ್ರೀಗಳವರು ತಮ್ಮ ಪೀಠದ ಘನವಾದ ಪರಂಪರೆಯನ್ನು ಉಳಿಸಿಕೊಂಡು ಬಂದುದಲ್ಲದೆ ಅದು ಮತ್ತಿಷ್ಟು ಉಜ್ಜಲವಾಗಿ ಬೆಳಗುವಂತೆ ಕಾರ್ಯವೆಸಗಿದರು. ಶ್ರೀಗಳವರು ಮಾಡಿದ ತ್ಯಾಗಮಯ ಕೃತಿಗಳಿಂದಾಗಿ ಹಾನಗಲ್ಲ ವಿರಕ್ತಮಠದ ಹೆಸರು ಅಜರಾಮರವಾಗಿ ಉಳಿಯುವಂತಾಯಿತು.

೧. ಸಮಾಜ ಸುಧಾರಣೆಯಾಗಬೇಕಾದರೆ ಸಮಾಜದ ಭಕ್ತೋದ್ಧಾರ ಕಾರ್ಯವಾಗಬೇಕಾದರೆ ಮಠಾಧಿಕಾರಿಗಳ ಸುಧಾರಣೆಯಾಗುವದು ಅತ್ಯಗತ್ಯವೆಂದು ವಿಚಾರಿಸಿ ಸಮಾಜದ ಮುಖ್ಯ ಗುರು- ವಿರಕ್ತ ಪೀಠಗಳಿಗೆ ವಿದ್ಯಾವಂತರಾದವರನ್ನೇ ಚುನಾಯಿಸಿ ಕಳಿಸಿದರು. ಹುಬ್ಬಳ್ಳಿಯ ಜಗದ್ಗುರು ಪೀಠಕ್ಕೆ ಲಿಂಗೈಕ್ಯ ಶ್ರೀ ಗಂಗಾಧರ ಮಹಾ ಸ್ವಾಮಿಗಳನ್ನು, ನಂತರ ಲಿಂ. ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳನ್ನು ಮತ್ತು ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಲಿಂ. ಶ್ರೀ ಜಯದೇವ ಮಹಾಸ್ವಾಮಿಗಳವರನ್ನು ಚುನಾಯಿಸಿದವರು ಶ್ರೀಗಳವರೆ, ಈ ಮೂವರು ಜಗದ್ಗುರುಗಳವರಿಂದ ಸಮಾಜಕ್ಕೆ ಅನೇಕ ಮುಖವಾಗಿ ಸಹಾಯ ಸಂದಿದೆ.

೨. ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಶ್ರೀಗಳವರು ಈ ಐದು ಮಹತ್ವದ ಉದ್ದೇಶಗಳ ಪೂರ್ತಿಗಾಗಿ ಸಂಸ್ಥಾಪಿಸಿದರು :

(ಕ) ವೀರಶೈವರಲ್ಲಿ ಸಾರ್ವತ್ರಿಕ ಸಂಘಟನೆಯಾಗಿ, ಅದರ ಮುಖಾಂತರ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಔದ್ಯೋಗಿಕ ಪ್ರಗತಿಯಾಗಬೇಕು ;

(ಚ) ಗುರು ಮತ್ತು ವಿರಕ್ತ ಪೀಠಗಳಲ್ಲಿ ಐಕ್ಯತೆಯುಂಟಾಗಬೇಕು. ಮಹಾಸಭೆಯ ಕಾರ್ಯಕಲಾಪಗಳೆಲ್ಲ ಅವರಿಬ್ಬರ ಪರಸ್ಪರ ಸಹಕಾರದಿಂದ ನಡೆಯಬೇಕು; 

(ಟ) ಪೀಠಾಧಿಪತಿಗಳು ಜಾಗ್ರತರಾಗಿ ಸಮಾಜದ ಪ್ರಗತಿಯ ಕಾರ್ಯದಲ್ಲಿ ವಿಧಾಯಕವಾಗಿ ಭಾಗವಹಿಸಬೇಕು; ಭಕ್ತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ;

(ತ) ದೊಡ್ಡ ದೊಡ್ಡ ನಗರಗಳಲ್ಲಿ ಮಹಾಸಭೆಯ ಅಧಿವೇಶನಗಳು ನೆರೆದು ಜನತೆಯಲ್ಲಿ ಒಕ್ಕಟ್ಟು ಕಾರ್ಯೋತ್ಸಾಹ ಮೂಡಿ ಬರುವಂತಾಗಬೇಕು ; ಧಾರವಾಡ, ಬೆಂಗಳೂರು, ಸೊಲ್ಲಾಪುರ, ಬಾಗಲಕೋಟೆ, ಬಳ್ಳಾರಿ, ಬೆಳಗಾಂವಿ, ನಿಪ್ಪಾಣಿ ಈ ಏಳು ನಗರಗಳಲ್ಲಿ ನಡೆದ ಮಹಾಸಭೆಯ ಅಧಿವೇಶನಗಳಿಗೆ ಬೇಕಾಗುವ ಧನಸಂಚಯವು ಹಾನಗಲ್ಲ ಶ್ರೀಗಳವರಿಂದಲೇ ಆಯಿತು. ನಾಡಿನ ಮೂಲೆ ಮೂಲೆಯಲ್ಲಿಯೂ ಈ ಅಧಿವೇಶನಗಳು ನಡೆದು ಜನರಲ್ಲಿ ನವಚೈತನ್ಯ ಬರುವಂತಾಗಬೇಕೆಂದು ಶ್ರೀಗಳವರು ಬಯಸಿದ್ದರು. ಹರಿದು ಹಂಚಿ ಹೋದ ನಾಡಲ್ಲಿ ಐಕ್ಯತೆ ಬರುವಂತೆ ಯೋಜನೆ ಮಾಡಿದ್ದರು. ಮೊದಲಿನ ಈ ಅಧಿವೇಶನಗಳೆಲ್ಲ ಶ್ರೀಗಳವರ ಕೃಪೆಯಿಂದಲೇ ಯಶಸ್ವಿಯಾಗಿ ನೆರವೇರಿದವು.

(ಪ) ‘ಅಖಿಲ ಭಾರತೀಯ ವೀರಶೈವ ವಿದ್ಯಾವರ್ಧಕ ನಿಧಿ’ಯನ್ನು ಶೇಖರಿಸಲು ಶ್ರೀಗಳವರೇ ಪ್ರೇರಣೆಯನ್ನಿತ್ತರು ; ಧಾರವಾಡದ ಮೊದಲನೆಯ ಅಧಿವೇಶನದ ಕಾಲಕ್ಕೆ ಅದಕ್ಕಾಗಿ ನಿಧಿಯನ್ನು ಸಂಗ್ರಹಿಸಿ ಅದನ್ನು ಧಾರವಾಡದ ‘ಲಿಂಗಾಯತ ಎಜ್ಯುಕೇಶನ್ ಫಂಡ’ ಸಂಸ್ಥೆಯಲ್ಲಿ ಜಮೆ ಮಾಡಿಸಿದರು.

೩ ವೀರಶೈವ ಮಹಾಸಭೆಯಲ್ಲಿ ಕೇವಲ ಧಾರ್ಮಿಕ ವಿಚಾರಗಳಿಗೆ ಅವಕಾಶವಿಲ್ಲದಿರುವಾಗ ಶ್ರೀಗಳವರು ‘ಧರ್ಮೋತ್ತೇಜಕ ಸಭೆ’ಯನ್ನು ಸ್ಥಾಪಿಸಿ ಅದರ ಮುಖಾಂತರ ವೀರಶೈವ ಧರ್ಮ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಧಾರವಾಡದಿಂದ ‘ಧರ್ಮತರಂಗಿಣಿ’ ಮಾಸಪತ್ರಿಕೆಯು ಈ ಸಭೆಯ ಮುಖಾಂತರವಾಗಿ ಶ್ರೀಗಳವರ ಕೃಪೆಯಿಂದಲೇ ಪ್ರಕಟವಾಯಿತು. ಈ ಪತ್ರಿಕೆಯ ಸಂಚಿಕೆಗಳಲ್ಲಿ ಶಿವಯೋಗ ಮಂದಿರದ ಚಟುವಟಿಕೆಗಳ ಸವಿಸ್ತಾರ ಇತಿಹಾಸವನ್ನು ಕಾಣಬಹುದಾಗಿದೆ. ಅಲ್ಲದೆ, ಕೆಲವು ದೈನಿಕ ಮತ್ತು ವಾರಪತ್ರಿಕೆಗಳಿಗೂ ಶ್ರೀಗಳವರು ಆರ್ಥಿಕವಾಗಿ ಉತ್ತೇಜನವಿತ್ತರು. ನಾಡಿನಲ್ಲಿ ಮೂಲೆ ಮೂಲೆಯಲ್ಲಿಯ ಹಳ್ಳಿಗಳಿಗೂ ಬರಹಗಳ ಮೂಲಕ ಧಾರ್ಮಿಕ ವಿಚಾರಗಳು ಹೋಗಿ ಮುಟ್ಟಿ, ಜನಸಾಮಾನ್ಯರಲ್ಲಿಯೂ ವಿಚಾರ ಕ್ರಾಂತಿಯಾಗಬೇಕು, ಧರ್ಮಬುದ್ಧಿ ಜಾಗ್ರತವಾಗಬೇಕು ಎಂಬ ಮಹೋದ್ದೇಶ ಶ್ರೀಗಳವರದಾಗಿತ್ತು.

೪. ಕನ್ನಡ-ಸಂಸ್ಕೃತ ಭಾಷೆಗಳಲ್ಲಿರುವ ಪ್ರಾಚೀನ ವೀರಶೈವ ವಾಙ್ಮಯವನ್ನು ಶೋಧಿಸಿ ಪ್ರಕಟಿಸುವದಕ್ಕಾಗಿ ಮೊಟ್ಟ ಮೊದಲು ಓಲೆಗರಿ ಗ್ರಂಥಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಿದವರು ಶ್ರೀಗಳವರೆ ಈ ಸಂಶೋಧನೆಯ ಮಹಾ ಕಾರ್ಯಕ್ಕೆ ಒಂದು ವಿದ್ವನ್ಮಂಡಲಿಯನ್ನು ನಿಯಮಿಸಿ ತನ್ಮೂಲಕ ಅನೇಕ ಮಹತ್ವದ ಪರಿಷ್ಕೃತ ಗ್ರಂಥಗಳು ಪ್ರಕಟವಾಗಿ ಜಿಜ್ಞಾಸುಗಳ ಕೈಗೆ ಸುಲಭವಾಗಿ ದೊರೆಯುವಂತೆ ಮಾಡಿದರು.

೫. ಆಯುರ್ವೇದದ ಔಷಧೋಪಚಾರಗಳಿಂದಲೆ ರೋಗ ನಿವಾರಣೆಯನ್ನು ಮಾಡುವ ಧೈಯವನ್ನು ಇಟ್ಟುಕೊಂಡು ತಜ್ಞ ವೈದ್ಯರ ಸಮ್ಮೇಲನವನ್ನು ಕರೆದು ಅವರಿಗೆ ತಕ್ಕ ಅನುಕೂಲತೆಗಳನ್ನು ಶ್ರೀಗಳು ಮಾಡಿ ಕೊಟ್ಟರು. ಎಷ್ಟೋ ವನಸ್ಪತಿಗಳಿಂದ ವಿವಿಧ ರೋಗಗಳ ನಿವಾರಣೆಗೆ ಸ್ವತಂತ್ರ ಸುಲಭವಾದ ಮತ್ತು ಉತ್ಕೃಷ್ಟವಾದ ಔಷಧಗಳನ್ನು ಮಾಡಿಸುತ್ತಿದ್ದರು. ಎಷ್ಟೋ ಹೊಸ ಅಮೂಲ್ಯ ಔಷಧಗಳನ್ನು ಸಂಶೋಧಿಸಿ ತಯಾರಿಸಿ ಜನರ ಅಸಾಧ್ಯ ರೋಗಗಳನ್ನು ಕಳೆದರು. ಶಿವಯೋಗಮಂದಿರದಲ್ಲಿ ಒಂದು ವೈದ್ಯಾಲಯವನ್ನು ತೆಗೆದು ಅಲ್ಲಿ ಚಾಣಾಕ್ಷ ಸಾಧಕರಿಗೆ ವೈದ್ಯಕೀಯ ಶಿಕ್ಷಣವನ್ನು ಕೊಡುತ್ತಿದ್ದರು, ಕೊಡಿಸುತ್ತಿದ್ದರು.

೬ ಕೈ. ವಾ. ‘ತ್ಯಾಗರಾಜ’ ಶಿರಸಂಗಿ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದ ತಮ್ಮ ಇಡಿ ಸಂಸ್ಥಾನವನ್ನೇ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆಂದು ದಾನವಾಗಿ ಬರೆದುಕೊಟ್ಟರು. ಅದರ ಬಗ್ಗೆ ನಡೆದ ಸುಪ್ರೀಮ್‌ ಕೋರ್ಟಿನ ವ್ಯಾಜ್ಯದಲ್ಲಿ ಶ್ರೀಗಳವರೆ ಆರ್ಥಿಕ ನೆರವು ನೀಡಿದರು ; ಕೊನೆಯವರೆಗೂ ಹೋರಾಡಿ ಅದರಲ್ಲಿ ವಿಜಯ ಗಳಿಸಿದರು. ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರವಾದ ಸಂಪತ್ತಿಯನ್ನು ಉಳಿಸಿ ಕೊಟ್ಟರು.

ಶ್ರೀಗಳವರು ಸಮಾಜ ಪುರುಷನ ಸರ್ವತೋಮುಖ ಉನ್ನತಿಗೆ ತಮ್ಮ ಜೀವಿತವನ್ನೇ ಮುಡುಪಾಗಿಟ್ಟ ಮಹಾತ್ಯಾಗಿಗಳು ; ಮೇಲಾದ ಹಠಯೋಗಿಗಳಾಗಿ, ಆದರ್ಶ ಕರ್ಮಯೋಗಿಗಳಾಗಿ, ಮಹಾ ಶಿವಯೋಗಿಗಳಾಗಿ ರಾರಾಜಿಸಿದರು. ಸಮಾಜ ಭೂಮಿಯಲ್ಲಿ ಅವರು ಬಿತ್ತಿದ ಜಾಗೃತಿ ಬೀಜವ ಹೆಮ್ಮರವಾಗಿ ನಾಡಿಗೆ ಸಿಹಿಹಣ್ಣುಗಳನ್ನು ಕೊಡಲೆಂದು ಅವರಡಿಗೆ ಮಣಿಯೋಣ ; ಅವರು ತೋರಿಸಿದೆ. ದಾರಿಯಲ್ಲಿ ನಡೆಯೋಣ. ಸರ್ವರೂ ಸುಖಶಾಂತಿಗಳನ್ನು ಪಡೆಯೋಣ.

ಲೇಖಕರು :ಶ್ರೀ ಕೊಟ್ಟೂರಸ್ವಾಮಿಗಳು ಜಡೆ ( ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು)

                                 ( ಪರಂಜ್ಯೊತಿ ಪತ್ರಿಕೆಯಿಂದ)

ಸಂಗ್ರಹ : ಶ್ರೀ ಕೆ.ಹೆಚ್.ಮಲ್ಲನಗೌಡರು ಗದಗ

“ಯೋಗಶ್ಚಿತ್ ವೃತ್ತಿ ನಿರೋಧಃ”योग श्चित्तवृत्ति निरोधः   ಇದು ಪಾತಂಜಲಿ ಋಷಿಯ ವಾಣಿ.  ಈ ವಾಣಿ ಯೋಗಾಭ್ಯಾಸಗಳಿಗೆ ಧೈರ್ಯ ಹಾಗೂ ಉತ್ಸಾಹವನ್ನುಂಟು ಮಾಡುತ್ತದೆ. ಯೋಗಾಭ್ಯಾಸದಿಂದ (ಯೋಗಾಸನಗಳನ್ನು ಹಾಕುನದರಿಂದ) ನಮಗುಂಟಾಗುವ ಲಾಭವೇನು? ಅದರ ಪ್ರಯೋಜನವೇನು? ಏಕೆ ಹಾಕಬೇಕು? ಹೀಗೆ ಹಲವಾರು ರೀತಿಯಿಂದ ಪ್ರಶ್ನೆಗಳ ಸುರಿಮಳೆಯೇ ಈ ವೈಜ್ಞಾನಿಕ ಯುಗದಲ್ಲಿ ಪ್ರಾರಂಭವಾಗುತ್ತವೆ. ಈ ಪ್ರಶ್ನೆಗಳ ಸುರಿಮಳೆಗೆ ಉತ್ತರವಾಗಿ ಯೋಗಾಸನಗಳಿಂದ ಆರೋಗ್ಯ ಸಂಪತ್ತು ಹೆಚ್ಚುತ್ತದೆ ಈ ಸಂಪತ್ತಿಗಿಂತಲೂ ಹೆಚ್ಚಿನ ಸಂಪತ್ತು ಜಗತ್ತಿನಲ್ಲಿ ಯಾವದೂ ಇಲ್ಲ, ಅಲ್ಲದೇ ಆರೋಗ್ಯದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ ಎಂಬುದಾಗಿ ಹೇಳಿದರೂ ಅದು ಸಮಾಧಾನವಾಗಲಾರದು ಮತ್ತೆ ಶುಷ್ಕವಾದವೇ ವಾಗುತ್ತದೆ. ಕೊನೆಯದಾಗಿ ಉತ್ತರ ಹೇಳಬೇಕೆಂದರೆ ಮೇಲ್ಕಾಣಿಸಿದ ಪಾತಂಜಲಿ ಋಷಿಯ ಸೂತ್ರವೇ ಪ್ರತ್ಯುತ್ತರವಾಗಿ ನನಗೆ ತೋರುತ್ತದೆ.

ಈ ಸೂತ್ರಾಧಾರದಂತೆ ಎಷ್ಟುಜನ ಯೋಗಾಭ್ಯಾಸಿಗಳು ಯೋಗಸಾಧನೆ ಮಾಡಿ ಈ ಕಾಲದಲ್ಲಿ ಚಿತ್‌ ವೃತ್ತಿಯನ್ನು ವಿರೋಧಿಸಿದ್ದಾರೆ? ಬೆರಳಿನಲ್ಲಿ ಎಣಿಸುವಷ್ಟು ಜನರೆಂದರೆ ಮಾತ್ರ ತಪ್ಪಾಗಲಾರದು. ಯೋಗಾಭ್ಯಾಸದಿಂದ ಚಿತ್ (ಮನಸ್ಸಿನ) ವೃತ್ತಿ (ಚಂಚಲತೆ) ನಿರೋಧ (ನಿಲ್ಲುವದು ಹೇಗೆ? ಇದು ಎಷ್ಟೋಜನ ಯೋಗಾಭ್ಯಾಸಿಗಳಿಗೆ ಬಿಡಿಸಲಾರದ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಪರಿಹಾರದ ದಾರಿಯೇ ಕಾಣದಾಗಿದೆ. ಇದರ ಪರಿಹಾರದ ಉಪಾಯ ಕಾಣಬೇಕಾದರೆ ಯೋಗವನ್ನು ಆಳವಾಗಿ ಅಭ್ಯಾಸಿಸಬೇಕು. ವಿಜಯಶಾಲಿ ಯಾಗಬಯಸುವ ಸೈನಿಕರು ಸೈನಿಕ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮರೀತಿಯ ಶಿಕ್ಷಣ ಪಡೆದ ಮಾತ್ರಕ್ಕೆ ಆತ ವಿಜಯಶಾಲಿಯಾಗಲಾರ ವಿಜಯಶಾಲಿಯಾಗಬೇಕಾದರೆ ರಣಾಂಗಣ (ಯುದ್ಧರಂಗ) ಕ್ಕೆ ಹೋಗಿ ಎದುರಾಳಿಯೊಡನೆ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳೆನ್ನದೇ ಹೋರಾಡಿದಾಗ ಮಾತ್ರ ವಿಜಯಶಾಲಿಯಾಗಬಹುದು ಅದರಂತೆ ಅಭ್ಯಾಸಿಸಿದ ಯೋಗದಿಂದ ಚಿತ್ತಚಂಚಲತೆ ದೂರಾಗದು. ಅಭ್ಯಸಿಸಿದುದನ್ನು ಚೆನ್ನಾಗಿ ಅನುಭವಿಸಕೊಳ್ಳಬೇಕು. ಕೆಲವೊಂದು ಆಸನಗಳನ್ನು ಹಾಕುವ ದನ್ನು ಕಲಿತು, ಇಂತಿಂಥ ಆಸನದಿಂದ ಇಂತಿಂಥ ರೋಗಗಳು ಹೋಗುತ್ತವೆಯಂತೆ ಎಂದು ಯಾವಕಾಲದಲ್ಲೋ ಯಾರೋ ಹೇಳಿದ ಮಾತನ್ನೇ ಹೇಳುತ್ತಾ ಹೋಗುವದು ಈಗಿನ ಹಲವಾರುಜನ ಯೋಗಾಭ್ಯಾಸಿಗಳ ಕರ್ತವ್ಯವಾಗಿದೆ. ಉದಾ! ಮಯೂರಾಸನದಿಂದ ಗುಮ್ಮಿಸಂಬಂಧವಾದ ಮತ್ತು ಅಗ್ನಿ ಮಾಂದ್ಯ ಮುಂತಾದ ರೋಗಗಳು ನಿವಾರಣೆಯಾಗುತ್ತದೆಂಬ ಮಾತನ್ನು ಯಾವ ಕಾಲದಿಂದಲೋ ಕೇಳುತ್ತಾ ಬಂದಿದ್ದೇವೆ. ಆದರೆ ಪ್ರತಿನಿತ್ಯ ಯೋಗಾಸನಗಳನ್ನು ಹಾಕುವ ಎಷ್ಟೋಜನ ಯೋಗಾಭ್ಯಾಸಿಗಳು ಬೆಳಗಾದಾಕ್ಷಣ ಹೊಟ್ಟೆ ಹಿಡಿದಿದೆ ಎಂಬ ನರಳುವಿಕೆಯನ್ನು ಕೇಳುತ್ತಲಿದ್ದೇವೆ.

 ಅಂದಮೇಲೆ ಇಷ್ಟಕ್ಕೆ ಹೀಗಾದರೆ ಇನ್ನು ಯೋಗಾಭ್ಯಾಸದಿಂದ ಚಿತ್ರ ಚಾಂಚಲ್ಯತೆ ಎಷ್ಟರಮಟ್ಟಿಗೆ ನಿಲ್ಲುವದೆಂಬ ವಿಷಯ ಜನಸಾಮಾನ್ಯರಿಗೂ ಗೊತ್ತಾಗುತ್ತದೆ. ಪಾತಂಜಲಿ ಋಷಿಯ ಸೂತ್ರ ಕೇವಲ ಬಾಯಾತಾಗಿ ನಿಂತಿದೆಯೇ ವಿನಃ ಅದರ ಅನುಭವ ನಮಗಿಂದು ಇಲ್ಲದಾಗಿದೆ. ಅಭ್ಯಸಿಸಿದುದನ್ನು ಅನುಭವಿಸಬೇಕಾದರೆ ಅವಿರತವಾಗಿ ಅನುಷ್ಠಾನ ಗೈಯಬೇಕು ಆಗ ಅದರ ಅನುಭವ ವುಂಟಾಗುತ್ತದೆ. ಪೂರ್ವಜರು ಹೇಳಿದ ಮಾತುಗಳನ್ನು ಇಂದು ನಾವು ಪುನಃ ವಿಮರ್ಶಿಸಬೇಕಾಗಿದೆ. ಆ ಬುದ್ಧಿ ಆಶಕ್ತಿ ನಮ್ಮಲ್ಲಿದೆ. ಅವುಗಳನ್ನು ಅಲ್ಲಗಳೆಯುವದರಲ್ಲಿಅರ್ಥವಿಲ್ಲ. ಅಲ್ಲಗಳೆದವರು ಅಧ: ಪತನ ವಾಗುವಲ್ಲಿ ಸಂದೇಹವಿಲ್ಲ. ಪೂರ್ವಾಚರಣೆಗಳನ್ನು ಪುನರ್ವಿಮರ್ಶೆ ಮಾಡಿ ಅವುಗಳಿಗೊಂದು ಹೊಸತನವನ್ನು ಕೊಟ್ಟು ಸರಿಯಾದ ರೀತಿ ನೀತಿಯಿಂದ ಕಾಲಕ್ಕೆ ಹೊಂದಾಣಿಕೆ ಮಾಡಿಕೊಂಡಾಗ ಅವುಗಳ ಪರಿಣಾಮ ಆಗ ಆರ್ಯ ಸಂಸ್ಕೃತಿ ಉಳಿಯುತ್ತದೆ, ಬೆಳೆಯುತ್ತದೆ. ಅಲ್ಲದೆ ಆಧುನಿಕ ಕಾಲದಲ್ಲಿ ಯೋಗಾಭ್ಯಾಸಕ್ಕೊಂದು ಹೊಸಕಳೆ ಬರುತ್ತದೆ. ಬೆಲೆ ಬಾಳುತ್ತದೆ. ಯೋಗಾಭ್ಯಾಸ ಸರ್ವಾದರಣೀಯವಾಗುತ್ತವೆ. ಇದು ನಿಸ್ಸಂದೇಹ

“ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ” ಇದು ವೈರಾಗ್ಯ ಶಿಖರದ ತುತ್ತುದಿಯ ಮೇಲೇರಿದ ಮಹಾದೇವಿಯಕ್ಕನ ಮಹಾವಾಣಿ. ಇದು ಸಮಂಜಸವಾದುದು, ಸತ್ಯವಾದುದು. ಜನಸಾಮಾನ್ಯರಿಗೂ ತಿಳಿಯುತ್ತದೆ. ಕಾಯದಲ್ಲಿರುವ ಕರಣಂಗಳ ಚೇಷ್ಟೆಗೆ ಮನವೇ ಮೂಲಕಾರಣ. ಆ ಮನದ ಚೇಷ್ಟೆಗೆ ಪ್ರಾಯೋದಾನವೇ ಕಾರಣ. ಈ ಉದಾನವಾಯು ಮಾನವನ ಶರೀರದಲ್ಲಿ ಉಂಟಾಗುವ ಬಗೆ ಹೇಗೆಂದರೆ ಪ್ರತಿಯೊಬ್ಬ ಮಾನವನ ಶರೀರದಲ್ಲಿ ೭೨ ಕೋಟಿ ೭೨ ಲಕ್ಷ ೧೦ ಸಾವಿರ ೨೦೧ ನಾಡಿಗಳುಂಟು. ಈ ಎಲ್ಲ ನಾಡಿಗಳಲ್ಲಿ ಶ್ರೇಷ್ಠವಾದುದು ಸುಷುಮ್ಮೆ ನಾಡಿ ಈ ನಾಡಿಯಲ್ಲಿ ಹರಿದಾಡುವದು ಉದಾನವಾಯು. ಊರ್ಧ್ವನವಾಗಿ ಹರಿದಾಡುವದರಿಂದ ಉದಾನವಾಯು ಎಂದು ಹೆಸರು.

ತೇಜೋ ರೂಪವೇ ಉದಾನವಾಯು ಆ ತೇಜೋರೂಪ ಉದಾನವು ತಣ್ಣಗಾದಲ್ಲಿಮರಣ ವೊದಗಿ ಮರಣ ಹುಟ್ಟು ಒದಗುವದು. ಇದು ಕಾರಣ ಮೈ ಬಿಸಿಯೇ ಉದಾನ ಪ್ರಾಣ ಕಾಣಾ” ಎಂಬುದಾಗಿ ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುತ್ತದೆ. ಇದಲ್ಲದೆ “ಪ್ರಾಣಾ ಪಾನಾದಿಗಳಿಂದ ವೃತ್ತಿ, ಸಮಾನ ವ್ಯಾನಗಳಿಂದ ಶಾಂತಿ, ಉದಾನೋಪಾಸನೆ ಯಿಂದ ಉತ್ಕಾಂತಿ, ಉದಾನ ಸಾಕ್ಷಾತ್ಕಾರದಿಂದ ಅವಿಚ್ಛತ್ತಿ ಅಮೃತೋತ್ಪತ್ತಿ.”

ಎಂಥ ಸುಂದರವಾಣಿ ಅಭಯವಾಗಿದೆ ಉದಾನವಾಯುವಿನ ಕೇವಲ ಉಪಾಸನೆ ಮಾತ್ರದಿಂದ ಉತ್ಕಾಂತಿಯಂತೆ ಅದರ ಸಾಕ್ಷಾತ್ಕಾರದಿಂದ ಅವಿಚ್ಚೆತ್ತಿ ಅಷ್ಟೆ ಅಲ್ಲ ಅಮೃತದ ಉತ್ಪತ್ತಿಯಂತೆ ಈ ಅಮೃತದ ಉತ್ಪತ್ತಿಗೆ ಕಾರಣವಾದ ಉದಾನ ವಾಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ಸುಷುಮ್ಮೆಯಿಂದ ಕಾರ್ಯ ನಡೆಯಬೇಕು. ಈ ಸುಷುಮ್ಮೆ ಕಾರ್ಯ ನಡೆಯಬೇಕಾದರೆ, ಯೋಗಾಸನಗಳಲ್ಲಿ ಒಂದಾದ ಸರ್ವಾಂಗಾಸನ” ವನ್ನು ಸತತವಾಗಿ ನಿಯಮಿತ ತನದಿಂದ ಶ್ರಮವರಿತು (ಪ್ರತಿನಿತ್ಯ) ಸಾಧಿಸುವದರಿಂದ ಸುಷುಮ್ಮೆ (ಉದಾನವಾಯು) ಕಾರ್ಯ ಪ್ರಾರಂಭವಾಗುತ್ತದೆ ಕ್ರಮೇಣ ಸಾಕ್ಷಾತ್ಕರಿಸಿಕೊಂಡಾಗ ನಿಜವಾಗಿ ಅಮೃತೋತ್ಪತ್ತಿಯಾಗುವಲ್ಲಿ ಸಂದೇಹವಿಲ್ಲ.

ಕನಸಿನಲ್ಲಿ ಕಾಯಕರಣಗಳು ನಿದ್ರಿಸುತ್ತಿದ್ದರೂ, ಮನ ಪ್ರಾಣಗಳು ಎದ್ದಿರುತ್ತವೆ.ಅಂದಿನ ಇಂದಿನ ಹಿಂದಿನ ಜನ್ಮ ಜನ್ಮಾಂತರದ ಸಂಸಾರಗಳು ವಾಸನೆಗಳು ಮನದಮೇಲೆ ಮೂಡುತ್ತವೆ. ಆದರೆ ಸುಷುಮ್ಮೆ ಕಾರ್ಯ ನಡೆದಾಗ ಮನಸ್ಸಿನ ಓಡಾಟಕ್ಕೆ ಎಡೆಯಿಲ್ಲ.ಶ್ರೀ ಜ. ಚ. ನಿ. ಯವರ ಅಭಯವಾಣಿ ಸಾರುವಂತೆ,

“ಸುಷುಪ್ತಿಯಲ್ಲಿ ಮನಸ್ಸು ಮಲಗುತ್ತದೆ. ಪಿತ್ತದ ಪ್ರಭೆಯು ಆತ್ಮನ ಎಲ್ಲಾ ನಾಡಿ ಗಳನ್ನು ಮುಚ್ಚುತ್ತದೆ. ಆಗ ಮನದ ಕಿರಣಗಳು ಕರಣಗಳೊಡನೆ ಹೃದಯದಲ್ಲಿ ಹುದುಗುತ್ತವೆ. ಆಗ ವಿಜ್ಞಾನಾತ್ಮನು ಮಾತ್ರ ತುಂಬಾ ಎಚ್ಚೆತ್ತಿರುತ್ತಾನೆ. ತನು ಮನ ಗಳಿರುವದಿಲ್ಲ. ಕರಣಂಗಳಿರುವದಿಲ್ಲ. ವಾಸನಾದಿಗಳಿರುವದಿಲ್ಲ. ದರ್ಶನಾದಿ ಕಾರ್ಯಗಳಿರುವದಿಲ್ಲ.ಎಲ್ಲೆಲ್ಲಿಯೂ ಸುಪ್ತಸುಖ, ಪ್ರಸನ್ನ ಭಾವಗಳು ಮಾತ್ರ ಇರುತ್ತವೆ. ಹಗಲು ಮುಳಗಲು ಹಕ್ಕಿಗಳು ಹೇಗೆ ಗೂಡು ಸೇರುತ್ತವೆಯೋ ಹಾಗೆ ತನು, ಮನ, ಕರಣ, ಹರಣಾದಿಗಳೆಲ್ಲವೂ ಆ ಆತ್ಮನಲ್ಲಿ ಸೇರಿಕೊಳ್ಳುತ್ತವೆ. ಸುಪ್ತವಾಗುತ್ತವೆ.”

ಅಂದಮೇಲೆ ಯೋಗಾಸನಗಳಲ್ಲಿಯ ಒಂದು ಆಸನವನ್ನು ಸಾಧಿಸುವದರಿಂದ ತನು, ಮನ,ಕರಣಾದಿ ಕ್ರೀಯೆಗಳೆಲ್ಲವೂ ಹೇಳ ಹೆಸರಿಲ್ಲದಂತಾಗಿ, ಅಮೃತೋತ್ಪತ್ತಿ ಯಾಗುತ್ತದೆಂದಮೇಲೆ ಪರಿಪೂರ್ಣವಾದ ಯೋಗಾಭ್ಯಾಸ ಸಾಧನೆಯಿಂದ ಮನಸ್ಸಿನ ಚಂಚಲತೆಯನ್ನು ನಿಲ್ಲಿಸುವದಷ್ಟೇ ಅಲ್ಲ; ಸಾಕ್ಷಾತ್ ಪರಮಾತ್ಮನ ಸ್ವರೂಪರಾಗಲೂ ಕೂಡ ಸಾಧ್ಯವಾಗುತ್ತದೆಂದು ನಿಸ್ಸಂದೇಹವಾಗಿ ಹೇಳಬಹುದು.

ಆದ್ದರಿಂದ ಈಗ ಯೋಗಾಭ್ಯಾಸವೆಂದರೆ ನಿರುದ್ಯೋಗಿಗಳಾದವರು ಮಾಡುವಂಥ ಕೆಲಸ ಉದರ ಪೋಷಣೆಗಾಗಿ ಹಾಕುವಂಥ ವೇಷ ಎಂಬ ದುರ್ಭಾವನೆ ಸಾಮಾನ್ಯ ಜನರಲ್ಲಿಯೂ,ಬೇರೂರಿದೆ. ಕಾರಣ ಯೋಗಾಭ್ಯಾಸಿಗಳು. ಇದನರಿತು ಸತತ ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾದರೆ ಈ ಯೋಗಾಭ್ಯಾಸಕ್ಕಂಟಿರುವ ಕಲಂಕಹೋಗಿ, ಜನತೆಯಲ್ಲಿ ಉಂಟಾಗಿರುವ ದುರ್ಭಾವನೆ ದೂರಾಗಿ ಹೊಸಕಳೆ ಬರುತ್ತದೆ. ಅಲ್ಲಗಳೆಯುವವರ ಮೇಲೂ ಕೂಡ ಹೊಸ ಬೆಳಕನ್ನುಬೀರುವದರಲ್ಲಿ ಸಂದೇಹವಿಲ್ಲ.

ಲೇಖಕರು : ಪೂಜ್ಯಶ್ರೀಮರಿಕೊಟ್ಟೂರುದೇವರು, ಶ್ರೀಜಗದ್ಗುರುಕೊಟ್ಟೂರುಸ್ವಾಮಿಶಾಖಾಮಠ, ಶ್ರೀಧರಗಡ್ಡೆ

 “मनुष्याणां सहस्रेषु कश्चिद्यतति सिद्धये, यततानामपि सिद्धानां कश्चिन् मांम् वेत्ति तत्त्वतः”

                   (ಸಾವಿರಾರು ಜನರಲ್ಲಿ ಎಲ್ಲೋ ಒಬ್ಬರು ಆತ್ಮ ಸಿದ್ಧಿಗಾಗಿ ಶ್ರಮಿಸುತ್ತಾರೆ. ಹೀಗೆ ಆತ್ಮಸಿದ್ಧಿಗಾಗಿ ಶ್ರಮಿಸುವವ ರಲ್ಲಿ ಯಾರೋ ಒಬ್ಬರು ಮಾತ್ರ ತತ್ವತಃ ನನ್ನನ್ನು ತಿಳಿಯುತ್ತಾರೆ ಮತ್ತು ಹೊಂದುತ್ತಾರೆ). = Gita.

                12ನೇ ಶತಮಾನದ ಬದಲಾವಣೆಯು  ಮಾನವ ಇತಿಹಾಸದಲ್ಲಿಯೇ ಮಹತ್ವದ ಘಟ್ಟವಾಗಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು  ತಾತ್ವಿಕವಾಗಿ ಜನಸಾಮಾನ್ಯರಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರಿದೆ. ಶರಣರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳು ಅಗೆದಷ್ಟು ಆಳ, ತರ್ಕಿಸಿದಷ್ಟು ಘಹನ ಮತ್ತು ಉಹೆಗೆ ನಿಲುಕದಷ್ಟು ವಿಶಾಲವಾಗಿವೆ. ಶರಣರೆಲ್ಲರೂ ಶರಣಾಗತಿಯ ಭಾವದಿಂದ ಭಗವಂತನನ್ನು ಆರಾಧಿಸಿ, ಅರ್ಚಿಸಿ ಮಾನವನು ಭಗವಂತನಲ್ಲಿ ಒಂದಾಗುವ ಪ್ರಕ್ರಿಯೆಯನ್ನು ಲೋಕಕ್ಕೆ ಅರುಹಿದರು.

                   ಕಾಯದ ಪರಿಶುದ್ಧತೆಗಾಗಿ ಕಾಯಕವನ್ನು ಕಲಿಸಿ, ಧನದ ಪರಿಶುದ್ಧತೆಗಾಗಿ ದಾಸೋಹವನ್ನು ನೀಡಿ, ಆತ್ಮದ ಪರಿಶುದ್ಧತೆಗಾಗಿ ಶಿವಯೋಗವನ್ನು ಕಲಿಸಿ,  ಜಾತಿ-ಮತ- ಪಂಥ ಗಳೆನ್ನದೆ ಎಲ್ಲರ ಮನೆ-ಮನಗಳಲ್ಲಿ  ಶಿವಯೋಗದ ಜ್ಯೋತಿಯನ್ನು ಬೆಳಗಿದವರು ಬಸವಾದಿ ಪ್ರಮಥರು.

                        ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣಗಳು – ಅರ್ಚನೆ, ಅರ್ಪಣೆ ಮತ್ತು ಅನುಭಾವ. ಈ ಮೂರು ಪ್ರಕ್ರಿಯೆ ಗಳು ಸಾಧಕನಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರುತ್ತವೆ. ಮೊದಲು ಭಗವಂತನನ್ನು ಪರಿಶುದ್ಧ ಭಾವದಿಂದ ಪೂಜಿಸುವುದು. ಆ ಭಗವಂತನಿಂದ ಬಂದ ಪದಾರ್ಥಗಳನ್ನು ಭಗವತ್ ಪ್ರಸಾದವೆಂದು ಸ್ವೀಕರಿಸುವುದು ಮತ್ತು ಭಗವಂತನನ್ನು ಕುರಿತು ಚಿಂತನೆಗೈಯುವದು. ಭೂಟಾಟಿಕೆಗಾಗಿ, ತೋರಿಕೆಯಾಗಿ ಮಾಡುವ ಭಕ್ತಿ ಕಲ್ಮಶಯುಕ್ತ ವಾದದ್ದು, ಇದರಿಂದ ಯಾವ ಪ್ರಯೋಜನವೂ ಇಲ್ಲ ಅಂತರಂಗದಲ್ಲಿ ಆತನನ್ನು ಅರ್ಚಿಸಬೇಕು ಎಂಬುವುದನ್ನು ಮೋಳಿಗೆ ಮಾರಯ್ಯನವರು ತಮ್ಮ ನುಡಿಗಳಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

        ನಿನಗೆ ಮಜ್ಜನವ ಮಾಡುವಲ್ಲಿ ನಾ ಮಲದೇಹಿ

        ನೀ ನಿರ್ಮಲದೇಹಿ.

        ನಿನಗೆ ಪೂಜೆಯ ಮಾಡುವಲ್ಲಿ ನಾ ಕರ್ಮಜೀವಿ

        ನೀ ಪುಣ್ಯಜೀವಿ.

        ನಿನಗೆ ಗಂಧವ ಪೂಸುವಲ್ಲಿ ನಾನು ದುರ್ಗಂಧಜೀವಿ

        ನೀನು ಸುಗಂಧಜೀವಿ.

        ನಿನಗೆ ಅಕ್ಷತೆಯ ನಿಕ್ಕುವಲ್ಲಿ ನಾ ಲಕ್ಷಿತ

        ನೀ ಅಲಕ್ಷಿತ.

        ನಿನಗೆ ಧೂಪವನಿಕ್ಕುವಲ್ಲಿ ನಾ ಭಾವಿತ

        ನೀ ನೀರ್ಭಾವಿತ

        ನಿನಗೆ ದೀಪವನ್ನೆತ್ತುವಲ್ಲಿ ನಾ ಜ್ಯೋತಿ

        ನೀ ಬೆಳಗು

        ಇಂತಿ ಭಾವಂಗಳಲ್ಲಿ ಭಾವಿಸಿ ಕಂಡಿಹೆನೆಂದಡೆ ನೀ

        ಭಾವಕೆ ಅಗೋಚರನಾಗಿಪ್ಪೆ.

 ನಿನ್ನನ್ನರಿವುದಕ್ಕೆ ತೆರನಾವುದೆಂದಡೆ ಗುರುವಿಂಗೆ ತನು,

ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು ದಗ್ದಪಟದಂತೆ ರೂಪಿಂಗೆ ಹೊದ್ದಿಗೆಯಾಗಿದ್ದ ಭಕ್ತನಲ್ಲಿ ತಪ್ಪದೇ ಇಪ್ಪೆಯಯ್ಯಾ ನಿಃಕಳಂಕ ಮಲ್ಲಿಕಾರ್ಜುನ..

          ದೇವರ ಪೂಜೆಯನ್ನು ಮಾಡಲು ಭಕ್ತನು ದೇವರಿಗೆ ಮಜ್ಜನ ಮಾಡಿಸುವುದು ಅವಶ್ಯಕವೇ? ಮಜ್ಜನ ಮಾಡಲು ಅವನೇನು ಮೈಲಿಗೆಯಾಗಿರುವನೇ? ಎಂದು ಕೇಳುತ್ತಾ ಕಲ್ಮಶ ಹೊಂದಿದ ಮನುಷ್ಯನು ಮೊದಲು ತನ್ನ ಮನಸ್ಸನ್ನು ತೊಳೆದುಕೊಳ್ಳಬೇಕು. ದೇವರ ಪೂಜೆಯಿಂದ ತನ್ನ ಕರ್ಮವನ್ನು ಮರೆತು ಬಿಟ್ಟರೆ ಪುಣ್ಯಜೀವಿ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ದುರ್ಗಂಧ ವಾಸನೆ ಹೋಗಿಸಲು ದೇವರ ಹೆಸರಿನಲ್ಲಿ ಧೂಪವನ್ನು ಹಾಕುವದಕ್ಕಿಂತ ತನ್ನಲ್ಲಿರುವ ದುರ್ಗಂಧ ತನುವನ್ನು ತೊಳೆದುಕೊಳ್ಳಬೇಕೆ ವಿನಃ ದೇವರಿಗಾಗಿ ಸುಗಂಧವನ್ನು ಲೇಪಿಸುವುದಲ್ಲ. ಅರ್ಚನೆ ಅಕ್ಷತೆಯನ್ನು ಹಾಕುತ್ತಾ ನೇಮವನ್ನು ಮಾಡುತ್ತಾನೆ ಹೊರತು ತಾನು ನಿಯಮಗಳನ್ನು ಪಾಲಿಸುವುದಿಲ್ಲ. ಜಗತ್ತಿಗೆ ಬೆಳಕನ್ನು ಕೊಡುವ ದೇವರಿಗೆ ದೀಪ ಹಚ್ಚುವ ಮನುಜ ಮೊದಲು ತನ್ನ ಅಂಧಕಾರವನ್ನು ಕಳೆದುಕೊಳ್ಳಬೇಕು. ಇದನ್ನು ಬಿಟ್ಟು ಕೇವಲ  ಭೂಟಾಟಿಕೆಗಾಗಿ ಡಂಬಾಚಾರಗಳಿಂದ ದೇವನನ್ನು ಅರ್ಚಿಸುವುದು ವ್ಯರ್ಥವೇ ಸರಿ. ಅವನನ್ನು ಪಡೆದುಕೊಳ್ಳಬೇಕಾದರೆ ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ಜಂಗಮಕ್ಕೆ ಧನವನ್ನು ಅರ್ಪಿಸುವುದರ ಮೂಲಕ ತನ್ನನ್ನು ತಾನು ಸಮರ್ಪಿಸಿ ಕೊಂಡಾಗ ಮಾತ್ರ ದೇವರ ಇರುವಿಕೆ ಅರಿಯಲು ಸಾಧ್ಯವೆಂಬುದನ್ನು ತಿಳಿಸುತ್ತಾ ಅಂತರಂಗದ ಪೂಜೆಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ.

     “”ಸುಪ್ರಭಾತ ಸಮಯದ ಅರ್ತಿಯಲ್ಲಿ ಲಿಂಗವ ನೆನೆದರ

       ತಪ್ಪುವವಯ್ಯ ಅಪಮೃತ್ಯು ಕಾಲಕರ್ಮಂಗಳು””-

              ಎಂಬ ಬಸವ ವಾಣಿಯಂತೆ ಬಾಳಿ ಬದುಕಿರುವವರು ನಮ್ಮ ನಾಡಿನ ಸಂತರು ಶರಣರು. ಈ ನಾಡಿನಲ್ಲಿ ಆಗಿಹೋದ ಸಿದ್ದರು ಸಾಧಕರು ಬೈರಾಗಿಗಳು ಶರಣರು ತಾಂತ್ರಿಕರು ತಮ್ಮ ತಮ್ಮದೇ ಆದ ವಿಶಿಷ್ಟ ಮಾರ್ಗಗಳಿಂದ ದಿವ್ಯತೆಯನ್ನು ಹೊಂದಿದರು. ಪ್ರಾಣದ ಚಲನೆಯನ್ನು ನಿರ್ದಿಷ್ಟ ಗೊಳಿಸಿ, ಅದರ ಓಡಾಟದಿಂದ ಆತ್ಮನ ನೆಲೆ ಸೇರುವ ಸೂಕ್ಷ್ಮ ದಾರಿಯನ್ನು ಕಂಡುಕೊಂಡರು. ವೇದ ಉಪನಿಷತ್ತುಗಳ ಕಾಲದಲ್ಲಿ ನಮ್ಮ ಋಷಿಮುನಿಗಳಿಗೆ ತಿಳಿದಿದ್ದ ಈ ಉಪಾಸನಾ ಮಾರ್ಗ ಬಹುದಿನಗಳವರೆಗೆ ಮಾಯವಾಗಿ ಈಚೆಗೆ 12ನೇ ಶತಮಾನದಲ್ಲಿ ತನ್ನ ದಿಟ್ಟ ನೆಲೆಯೂರಿತು. ನಂತರದ ಕಾಲದಲ್ಲಿ 15ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗೇಶ್ವರ, ಪ್ರೌಢದೇವರಾಯನ ಕಾಲದಲ್ಲಿ ಮತ್ತು 19ನೇ ಶತಮಾನದಲ್ಲಿ ಅಥಣಿ ಮುರಿಗೇಂದ್ರ ಶಿವಯೋಗಿಗಳ ಹಾನಗಲ್ ಕುಮಾರ ಶಿವಯೋಗಿಗಳ ಕಾಲದಲ್ಲಿ ತನ್ನ ಅಸ್ತಿತ್ವ ಪಡೆಯಿತು. ಎಳಂದೂರು ಬಸವಲಿಂಗ ಶಿವಯೋಗಿಗಳ ತಪೋ ಶಕ್ತಿಯಲ್ಲಿ ಮಿಂದ ಶ್ರೀಕುಮಾರ ಮಹಾಶಿವಯೋಗಿಗಳು ಗುರುಗಳ ಆಣತಿಯಂತೆ ಅನುಷ್ಠಾನವನ್ನು ಕೈಗೊಂಡರು ಆತ್ಮಶಕ್ತಿಯನ್ನು ಸಾಧಿಸಿದರು

        “ಸಮಾಜ ಸೇವೆಗಿಂತ ಅಧಿಕ ತಪವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಯೋಗವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಪುಣ್ಯವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಆನಂದವಿಲ್ಲ” ಇದು ಕಾರಣ “ಜನಸೇವೆಯೇ ಜನಾರ್ದನ ಸೇವೆ” ಎಂದು ನಂಬಿ ಒಂದು ಕೈಯಲ್ಲಿ ಲಿಂಗಪೂಜೆ ಇನ್ನೊಂದು ಕೈಯಲ್ಲಿ ಸಮಾಜ ಸೇವೆ ಯನ್ನು ಕೈಗೊಂಡು ತಮ್ಮ ಜೀವನದುದ್ದಕ್ಕೂ ಅರ್ಚನೆ ಅರ್ಪಣೆ ಮತ್ತು ಅನುಭಾವಗಳ ಸಮ್ಮಿಶ್ರಣವಾದ ಬದುಕನ್ನು ಬಾಳುತ್ತಾ ನಿಜ ಚರಜಂಗಮರಾಗಿ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬ ತತ್ವದಡಿಯಲ್ಲಿ ನಿರಂತರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಶಿವಯೋಗದ ಶಕ್ತಿಯನ್ನು ಧಾರೆ ಎರೆದರು.   ಈ  ಶಿವಯೋಗದ ಶೆಲೆ ನಾಡಿನಲ್ಲಿ ಎಂದೂ ಬತ್ತದ ಶೆಲೆಯಾಗಿ ತನ್ನ ಅಂತಃಸತ್ವವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾ ಶಿವಯೋಗಿಗಳು ಶಿವಯೋಗಮಂದಿರವೆಂಬ ಮಹಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ತಪಃಶಕ್ತಿಯನ್ನು ಸಮಾಜಕ್ಕೆ ನಿರಂತರವಾಗಿ ನೀಡುತ್ತಿದ್ದಾರೆ. ನಾವೆಲ್ಲರೂ ಸಹ ಈ ಪುಣ್ಯಮಯ ಪರಿಸರದಲ್ಲಿ ಒಂದಾಗಿ ಅದರ ಸವಿಯನ್ನು ಸವಿಯೋಣ.

                 ಹೀಗೆ ಎಲ್ಲದಕ್ಕೂ ಮೂಲ ಭಗವದನುಗ್ರಹ. ಇದನ್ನು ಪಡೆಯಲು ಮಾರ್ಗಗಳು ಹಲವಾರು, ಹತ್ತಾರು ಆದರೆ ಆತ್ಯಂತಿಕ ಗುರಿ ಮಾತ್ರ ಒಂದೇ.ಆ ದಿವ್ಯತೆಯನ್ನು ಕಂಡುಕೊಳ್ಳುವ ಶಕ್ತಿಯನ್ನು ಮಹಾಗುರುಗಳು ನಮಗೆಲ್ಲರಿಗೂ ದಯಪಾಲಿಸಲಿ ಎಂಬ ಪ್ರಾರ್ಥನೆಯೊಂದಿಗೆ ನನ್ನ ಅನಿಸಿಕೆಗಳು ಗುರು ಪಾದಂಗಳಿಗೆ ಸಮರ್ಪಣೆ, ತಮಗೆಲ್ಲರಿಗೂ ಶರಣು ಶರಣಾರ್ಥಿಗಳು..

 ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು  ನಿಂದಾತನೆ ಸುಖಿ, ಪಂಚೇಂದ್ರಿಯಗಳಿಚ್ಚೆಯಲ್ಲಿ ಕೀಳು ಮನಂಗೊಟ್ಟು ಸುಳಿವಾತನೆ ದುಃಖಿ, ಮನವು ಬಹಿರ್ಮುಖ ವಾಗಲು ಮಾಯಾ ಪ್ರಪಂಚಿ, ಮನವು ಅಂತರ್ಮುಖವಾದೊಡೆ ಅವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಿರಲಾತ ಮುಕ್ತನು, ಮನೋರ್ಲಯವಾದೊಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು.