ಸಂಪಾದಕರು ಶ್ರೀ ಎಮ್.ಎಸ್.ಸುಂಕಾಪುರ
ಸಂಗ್ರಹ: ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
‘ರಾಜೇಂದ್ರ ವಿಜಯ’ದ ಕಥಾಸಾರ
ಪುಣ್ಯಭೂಮಿಯೆನಿಸಿದ ಕರ್ನಾಟಕ ದೇಶದ ಮಧ್ಯದಲ್ಲಿ ಮಹಿಮೆಯ ನಾಡು, ಮಂಗಳದ ಬೀಡು, ಸೌಖ್ಯದ ಸದನ, ಭೂಮಿಯ ವದನ, ಸತ್ಯದ ನೆಲೆ, ನಿತ್ಯದ ನಿಜವಾಗಿ ರಾಜೇಂದ್ರನ ರಾಜ್ಯ ಮೆರೆಯುತ್ತಿದೆ. ಅವನ ರಾಜ್ಯದಲ್ಲಿ ಪ್ರಜೆಗಳು ನಿತ್ಯ ಸುಖಿಗಳಾಗಿ ಕುಂದದೆ ಕಂದದೆ ಬಾಳುತ್ತಾರೆ. ಲಕ್ಷ್ಮಿ ಬಂದು ಅಲ್ಲಿಯೆ ಸ್ಥಿರವಾಗಿ ನಿಂತಿದ್ದಾಳೆ. ಸಕಲೈಶ್ವರ್ಯದ ನೆಲೆ ವೀಡಾಗಿ ರಾಜ್ಯ ಕಂಗೊಳಿಸುತ್ತದೆ. ಅವನ ರಾಜ್ಯದಲ್ಲಿ ಜನಸುಖಕಾರಿ, ಕುತಾಪವಿದಾರಿ, ಸಮುದ್ರದದಾರಿ, ಪಾವನಸುಶೀಲಿ, ತರಂಗವಿಲೋಲಿಯಾಗಿ ಹರಿಯುವ ಮಲಪ್ರಭಾನದಿ ಕೃಷ್ಣಾ ನದಿಗೆ ಬಂದು ಕೂಡುತ್ತದೆ. ಅವೆರಡು ಹೊಳೆಗಳ ಮಧ್ಯದಲ್ಲಿ ಮಲಪ್ರಭಾನದಿಗೆ ಸಮೀಪವಾಗಿ ಪಟ್ಟಶಿಲಾಪುರ (ಪಟ್ಟದಕಲ್ಲು) ವು ಹಮ್ಮಿರಪುರವೆಂದು ಖ್ಯಾತಿವೆತ್ತು ಶೋಭ ಸುತ್ತವೆ. ಆ ನಗರವು ಕೋಟೆಕೊತ್ತಳಗಳಿಂದ ಕೂಡಿ ಗಂಭೀರವಾಗಿ ಮೆರೆಯುತ್ತದೆ. ನಿಗಮನೂ ನಿತ್ಯನೂ ಆದ ಲೋಕನಾಥನೇ ಅಲ್ಲಿಯ ಮುಖ್ಯ ದೇವತೆ, ಶ್ರೀ ರಾಮನಿಂದ ಹಾಳಾದ ಲಂಕೆಯನ್ನು, ನೀರಿನಿಂದ ಹಾಳಾದ ದ್ವಾರಕಾ ಪಟ್ಟಣವನ್ನು ಹಮ್ಮಿರಪುರಕ್ಕೆ ತೋಡೆಂದು ಹೇಳುವದ ಮೂಕ್ತಿಯೇ ಸರಿ. ಮನುರಾಜನು ನಂದೀಶ್ವರವಂಶಜನೆಂದು ತಿಳಿಸವಂತಿರುವ ಬಿಂಕದ ಬಿರುದಿನ ನಂದಿಧ್ವಜಗಳು ಆ ಪಟ್ಟಣದಲ್ಲಿ ಚೆಲುವಾಗಿ ನೆರೆಯುತ್ತವೆ. ಈ ಪರಿಯಾಗಿ ನಾನಾವಸ್ತುವಿನ ಕೋಶದಂತೆ, ಸೌಭಾಗೈದ ಸಾರದಂತೆ, ಮನೋಹರವಾಗಿ ತೋರುವ ಹಮ್ಮಿರಪುರದ ಸಿಂಗರದ ಸಿರಿಯರಮನೆಯೊಳ್ ತ್ರೈಲೋಕ್ಯ ಚೂಡಾಮಣಿ ರಾಜನು ಸಕಲೈಶ್ವರ್ಯ ದಿಂದ ಗೌರವಾಟೋಪ ಪ್ರತಾಪದಿಂದ ಒಪ್ಪುತ್ತಾನೆ.
ಆ ತ್ರೈಲೋಕ್ಯಚೂಡಾಮಣಿರಾಜನು ವಂಶೋದ್ಧಾರಕನಾದ ಮಗನು ತನ್ನ ಬಾಳಿನಲ್ಲಿ ಬೆಳಗಲಿಲ್ಲವೆಂದು ವ್ಯಥೆಪಡುತ್ತಾನೆ. ಅವನ ಪಟ್ಟದ ರಾಣಿಯಾದ ಮಹಾದೇವಿಗೆ ಅದಕ್ಕಿಂತಲೂ ಹೆಚ್ಚಾದ ಚಿಂತೆ. ಚಿಂತೆಯ ಕಾರ್ಮೋಡದಲ್ಲಿ ಒಮ್ಮಿಂದೊಮ್ಮೆಲೆ ಆಸೆಯ ಮಿಂಚೊಂದು ಹೊಳೆದು ಹೊಳೆದಲ್ಲಿಯೇ ಮಾಯವಾಗುತ್ತದೆ. ತಪಶ್ಚರ್ಯದಿಂದ ಶಿಲಾದನು ನಂದಿಯನ್ನು ಹಿಂದೆ ಪಡೆದನು; ಹಾಗೆ ಶಂಕರಯೋಗಧ್ಯಾನದಲ್ಲಿದ್ದರೆ ನಂದನಸಿದ್ಧಿಯಾಗುವದೆಂದು ರಾಜದಂಪತಿಗಳಿಗೆ ಹೊಳೆಯುತ್ತದೆ. ರಾಜನು ಋತುಕಾಲವನರಿತು ವಿಷಮ ತಪಗೆಯ್ಯುತ್ತಾನೆ; ಶಾಂತಶಿವನನ್ನು ತನ್ನ ಹೃದಯಕಮಲದಲ್ಲಿಟ್ಟು ನೆನೆಯುತ್ತಾನೆ. ಅವನ ಮಡದಿ ಮಹಾದೇವಿ ಶಿವಲಿಂಗಾರ್ಚನೆಗೆ ತೊಡಗುತ್ತಾಳೆ. ಶಿವಯೋಗದಲ್ಲಿ ನಿರತರಾದವರಿಗೆ ಶಿವನು ಒಲಿಯದಿದ್ದಾನೆ ? ರಾಜನಿಗೆ ಶಿವದರ್ಶನವಾಗುವದು ಯೋನಿಜನಲ್ಲದ ಸಕಲಕಲಾನಿಪುಣನಾದ ಪುತ್ರನಾಗಲೆಂದು ಶಿವನು ರಾಜನಿಗೆ ಹರಸುತ್ತಾನೆ. ರಾಣಿಗೆ ಶಿವಪ್ರಸನ್ನ ವರವು ದೊರೆಯುತ್ತದೆ. ಸತಿ-ಪತಿಗಳೀರ್ವರೂ ಒಂದು ದಿನ ಮಲಗಿದ ಸಮಯದಲ್ಲಿ, ಪ್ರಣವವೇ ಕರಚರಣಾದಿ ಅವಯವಗಳನ್ನು ಧರಿಸಿ ಮಗುವಾಗಿ ಮಗ್ಗುಲದಲ್ಲಾಡುವದನ್ನು ರಾಜರಾಣಿಯರು ಕಂಡು ಹರ್ಷಭರಿತರಾಗುತ್ತಾರೆ. ಇದು ಶಿವನ ಪ್ರಸಾದವೆಂದು ಅವರು ಕೊಂಡಾಡುವರು, ತಾವೇ ಭುವನದಲ್ಲಿ ಭಾಗ್ಯ ವಂತರೆಂದು ಭಾವಿಸುವರು. ದಿನಗಳೆದಂತೆ ಮಗು ಚಂದ್ರನಂತೆ ಹಿಗ್ಗಿ ಬಾಲಲೀಲೆಯನ್ನು ತೋರಿಸುತ್ತದೆ. ಶೈಶವ ಕಳೆದು ಹರೆಯ ಕಾಲಿದ್ದೊಡನೆ ಸಕಲ ಕಲೆಗಳು ರಾಜಕುಮಾರನ ಹಸ್ತಗತವಾಗುತ್ತವೆ. ವೀರವಿಜಯನಾದ ರಾಜಕುಮಾರನಿಗೆ ಮನುರಾಜ, ರಾಜೇಂದ್ರ, ಹಮ್ಮಿರ ಎಂದು ಅಸದೃಶವಾದ ಹೆಸರುಗಳೊಪ್ಪುತ್ತವೆ. ಅವನ ಹೆಸರುಗಳು ಅಂಕಿತ ನಾದರೂ ಅನ್ವರ್ಥಕವಾಗುತ್ತವೆ.
ತ್ರೈಲೋಕ್ಯ ಚೂಡಾಮಣಿರಾಜನು ಸುಕುಮಾರನಿಗೆ ಯುವರಾಜ ಪಟ್ಟವನ್ನು ಕಟ್ಟಿ, ತದನಂತರ ರೂಪವತಿಯಾದ ಸದ್ಗುಣ ಶೀಲೆಯಾದ ಕಾಂಭೋಜರಾಜನ ಪುತ್ರಿ ಗೌರೀದೇವಿಯನ್ನು ತಂದು ಹಮ್ಮಿರನಿಗೆ ಲಗ್ನ ಮಾಡಿ ಸಂತಸಪಡುತ್ತಾನೆ. ಅನುಕೂಲದ ನೂತನ ಸತಿಪತಿಗಳಿಗೆ ತನು ಬೇರೆಯಾಗಿದ್ದರೂ ಶಿವನಲ್ಲಿಟ್ಟಿದ್ದ ನೆನಹು ವಿಚ್ಛಿನ್ನವಾಗುತ್ತದೆ. ಸತಿಪತಿಗೆಳೊಂದಾದ ಭಕ್ತಿ ಬೆಳೆಯಲಾರಂಭಿಸುವದು. ರಾಜೇಂದ್ರನು ಹೊರಗೆ ಅರಿ ಕಂಟಕರನ್ನು ಮುರಿದು, ತನ್ನೊಳಗೆ ಆರು ವೈರಿಗಳನ್ನು ಗೆದ್ದು, ಎಲ್ಲೆಲ್ಲಿಯೂ ಶಾಂತಿ ಸಾಮ್ರಾಜ್ಯ ನೆಲೆಗೊಳ್ಳುವಂತೆ ಯತ್ನಿಸುತ್ತಾನೆ. ಪರಶಿವ ಚರಣಾರವಿಂದದಲ್ಲಿ ಭ್ರಮರವಾಗಿ ಝೇಂಕರಿಸುವನು. ಒಳಹೊರಗೊಂದಾದವರಿಗೆ ಇದ್ದುದೇ ಕೈಲಾಸವಲ್ಲವೆ ? ಹಮ್ಮಿರನನ್ನು ಜನ ಹೊಗಳುತ್ತದೆ, ‘ವೀರ ವಿತರಣ ವಿದ್ಯಾಭಿಲೋಲಂ ಶಿವಗುರುಚರಲಿಂಗ ಸದ್ಭಕ್ತಿ ಸಂಪದ್ಭಾಸುರಶೀಲಂ ಸಕಲಜನ ಪರಿಪಾಲನಾನುಕೂಲಂ ವಿಲಸಿತಕೀರ್ತಿ ವಿಶಾಲ ಸುಚರಿತ್ರಂ’ ಎಂದು. ಆದರೆ ಅರಸನು ಶಿವಯೋಗ ನಿದ್ರಾಮುದ್ರಿತ ಭದ್ರಾಂಗನಾಗಲು ಯತ್ನಿಸುತ್ತಾನೆ.
ಮನುರಾಜೇಂದ್ರನ ಕೀರ್ತಿ ದಶದಿಕ್ಕುಗಳಲ್ಲಿ ಪಸರಿಸುವದನ್ನು ಕ೦ಡು ಚಂಡಕೋದಂಡನು ಮನದಲ್ಲಿಯೇ ಮಾತ್ಸರ್ಯ ತಾಳಿ ಕುದಿಯುತ್ತಾನೆ. ಮನುರಾಜನ ಶೌಯ್ಯೋನ್ನತಿಯನ್ನು ಮುರಿಯುವದಕ್ಕಾಗಿ ಸೂಕ್ಷ್ಮ ಪಾಯ ಹುಡುಕುವನು; ಮರ್ಮಸ್ಥಾನಗಳನ್ನು ಹುಡುಕಿ ಬರಲು ಬೇಹಿಗರನ್ನು
ಕಳಿಸುವನು. ಸತ್ಯದ ಮುಂದೆ ಠಕ್ಕು ನಿಲ್ಲಬಲ್ಲುದೆ ? ಕಳ್ಳಬಂಟರು ಮನು ರಾಜನ ಸೆರೆಯಾಳಾಗುವರು. ಇದನ್ನು ತಿಳಿದ ಚಂಡಕೋದಂಡನು ತನ ಗೂಢಪುರುಷರನ್ನು ಬಿಡಿಸಿಕೊಳ್ಳುವದಕ್ಕಾಗಿ ಚಂದ್ರಬುದ್ಧನೆಂಬ ನಿಜ ಮಂತ್ರಿಯನ್ನು ಕಳಿಸುತ್ತಾನೆ. ಮಹೀಶ್ವರನ ಸಭೆಯನ್ನು ನೋಡಿ ಚಂದ್ರ ಬುದ್ಧ ಮಂತ್ರಿ ವಿಸ್ಮಿತನಾಗುವನು. ಬಂದ ಕಾರ್ಯ ಮಾತ್ರ ಸಫಲವಾಗುವದಿಲ್ಲ. ಚಂಡಕೋದಂಡನ ಮನವೆಂಬ ವಿಷಭೂಮಿಯಲ್ಲಿ ಯುದ್ದವೆಂಬ ಬೇವಿನ ಬೀಜ ಮೊಳಕೆಯೊಡೆಯುವದು. ದ್ರೋಣಸಿಂಧೂರ ನಗರಿಯ ರಣಭೀಮನನ್ನು, ಪಿಂಜಿರವಾಟಿಯ ವಿಜಯ ಚೂಡನನ್ನು, ಮಹೀಂದ್ರಾ ಕರದ ಮದನ ವಿಲಾಸನನ್ನು ಮತ್ತು ಅನೇಕ ಮಂಡಲೇಶ್ವರರನ್ನು ತನ್ನ ಸಹಾಯಕ್ಕೆ ತೆಗೆದುಕೊಂಡು ಮಹಾಸೈನ್ಯವನ್ನು ನಿರ್ಮಿಸಿ, ತನ್ನ ಸೇನಾ ಪತಿಯಾದ ವೀರಜಂಭರಾಜನೊಡನೆ ವೈರಿಯನ್ನು ಮುರಿಯುವದಕ್ಕಾಗಿ ಚಂಡಕೋದಂಡನು ಹೊರಡುತ್ತಾನೆ. ಹಮ್ಮಿರನಗರದೊಡೆಯನ ಹಮ್ಮನ್ನು ಮುರಿದಿಡಲು ಹೊರಟ ಸೈನ್ಯ ಭಯಂಕರವಾದುದು. ಸೈನ್ಯ ಬಂದುದೇ ತಡ, ಮನುರಾಜನ ರಾಜ್ಯವನ್ನೇ ಮುತ್ತುತ್ತದೆ. ಬಡಗಣ ದಿಕ್ಕಿನಲ್ಲಿರುವ ವಿಡೂರಿಗೆ, ಪಡುವಣ ದಿಕ್ಕಿನಲ್ಲಿರುವ ವಸಂತಪುರಿಗೆ, ತೆಂಕಣ ದಿಕ್ಕಿನಲ್ಲಿರುವ ಲೋಕಾಪುರಕ್ಕೆ ಮಧುರಂಗರಾಜನು ಒಮ್ಮೆಲೇ ಮುಮ್ಮೊಗವಾಗಿ ಮುತ್ತಿಗೆ ಹಾಕುತ್ತಾನೆ. ಶ್ರೀ ವೀರಭದ್ರಾವತಾರನಾದ ಹಮ್ಮೀರ ಕದನಕೋಳಾಹಳನ್ನು ಇದನ್ನು ಕಂಡು ಸುಮ್ಮನಾಗುವದು ಸಾಧ್ಯವೆ? ಏರಿ ಬಂದ ವೈರಿ ಸೈನ್ಯದ ಮೇಲೆ ಸಿಡಿಲಂತೆರಗಿ ಯುದ್ಧ ಮಾಡುತ್ತಾನೆ. ಚಂಡಕೋದಂಡನು ನರಿಯಂತೆ ಓಡಿಹೋಗುವನು.. ಆ ರಣದಲ್ಲಿ ರಣ ಭೀಮನು ಪೇಣನಾದ. ಮದನವಿಲಾಸನ್ನು ಕದನದೊಳಳಿದ. ವಿಜಯ ಚೂಡನು ವಿಕಟಾರಿಗನಾದ. ಕುಂತಳದರಸು ಮುಂದಲೆ ಕೊಯ್ದಿಕೊಂಡು ಅವಮಾನಿತನಾದ. ಹಮ್ಮಿರ ಭಾಸುರ ಧಿರೋತ್ತಮ ವೀರರಾಜ ವಿಜಯನು ಸಾಮಾನ್ಯನೇ ಯುದ್ಧದೊಳ್?
ಮನುರಾಜನ ರಾಜ್ಯ ವಿಕಾಸವಾದಂತೆ ಮನವೂ ವಿಲಾಸಗೊಳ್ಳವುದು. ವಿನೋದಕ್ಕಾಗಿ ಬೇಟೆಯಾಡಬೇಕೆಂದು ಒಂದು ದಿನ ರಾಜನವಸಂತಪುರದ ಸಮೀಪದಲ್ಲಿರುವ ಕಾನನಕ್ಕೆ ಬೇಡಪಡೆಯೊಂದಿಗೆ ನಡೆಯುವನು, ನಾನಾ ರೀತಿಯಿಂದ ಬೇಟೆ ಸಾಗುತ್ತದೆ. ಮಲಪ್ರಭಾನದಿಯ ತೀರದ ವನಾಂತರವೆಂದರೆ ವೃಕ್ಷಪಕ್ಷಿಗಳಿಗಾನಂದ ಸ್ಥಳ, ಅದೇ ವಸಂತಪುರ ಪ್ರಾಂತ ಅಲ್ಲಿ ರಾಜನು ವಿಶ್ರಮಿಸುತ್ತಾನೆ. ಬೇಟೆಯ ಬಳಲಿಕೆ ನೀಗುವದಕ್ಕಾಗಿ ನೀರು ಕುಡಿಯಬೇಕೆಂದು ರಾಜನಿಗೆ ಇಚ್ಛೆಯಾಗುತ್ತದೆ. ಆದರೇನು ? ತನಗೆ ಬೇಕಾದ ವಸ್ತುಗಳನ್ನು ಶಿವಲಿಂಗಕ್ಕೆ ಕೊಟ್ಟಿಲ್ಲದೆ ಕೊಳ್ಳಲಾಗದೆಂಬ ಶೀಲವುಳ್ಳ ಪರಮ ಶಿವಭಕ್ತ ಮನುರಾಜ, ಸಮೀಪದಲ್ಲಿ ಎಲ್ಲಿ ಯಾದರೂ ಶಿವಲಿಂಗಮೂರ್ತಿ ಇದ್ದರೆ ಕಾಣಬೇಕೆಂದು ಸೇವಕರನ್ನು ಕಳಿಸುತ್ತಾನೆ. ಯಾವ ದಿಕ್ಕಿನಲ್ಲಿ ಹುಡುಕಿದರೂ ಶಿವಲಿಂಗದರ್ಶನವಾಗಲಿಲ್ಲ. ಆದರೆ ಸಮೀಪದಲ್ಲಿಯೇ ಉತ್ತರದಿಕ್ಕಿನಲ್ಲಿ ಒಂದು ಗೂಳಿ ಮಲಗಿದ್ದು ದೇಹದ ಮೇಲೆ ಲಿಂಗಮುದ್ರೆಯಿದ್ದುದು ಕಂಡು ಬಂತು. ಮೂಣ ಮುಖವಾಗಿ ಮಲಗಿದ ಗೂಳಿಯ ವೃಷಭೇಶ್ವರ, ಸಾಮಾನ್ಯರಿಗೆ ಅದು ಹೇಗೆ ತಿಳಿಯಬೇಕು? ಕಣ್ಣರಿಯದಿದ್ದರೂ ಕರುಳರಿಯದೆ ?
ವಚನ-
ಇಂತು ವಂದನಂಗೆಯ್ವುತ್ತೆ ಸಮೀಪಕ್ಕೆ ಬರಲೊಡಂ ರೌದ್ರಸಂಚಲಂಗಳೇನು ಮಿಲ್ಲದೆ ಸುಸ್ಥಿರದಿಂದಿರ್ಪ ಭದ್ರೇಶ್ವರನಂ ನೋಡಿ ಹೃದಯೋಲ್ಲಾಸವಾಗಿ ದೇವರಂ ಪೂಜಿಸಲ್ ದೇವಾಲಯಮಂ ಪ್ರದಕ್ಷಿಣಂ ಮಳ್ಪಂತೆ ಲಿಂಗ ಮುದ್ರೆಯಂ ಭಜಿಸುವದಕ್ಕೆ ಲಿಂಗಮುದ್ರೆಗಾಧಾರವಾದ ಬಸವನಂ ಪ್ರದಕ್ಷಿಣ ಮಾಡುತ್ತೆ ಮುಂದಕ್ಕೆ ಬರ್ಪ ಸಮಯದೊಳಾತನ ಚಿತ್ಕಳೆಯಂ ಬರಸೆಳೆದು ತನ್ನ ರಸನಾಗ್ರದಲ್ಲಿ ಮೂರ್ತಿಗೊಳಿಸಿ ತಳೆದಿರ್ಪಿನಂ-
ವಚನ-
ವಿಮಳ ತರದಿಷ್ಟ ಲಿಂಗಮಂ ರಸನಾಗ್ರದಲ್ಲಿ ತೋಲಾಗಿ ನಾಲಗೆಯ ಕೆಳಗಣೆ ಹಸ್ತಮಂ ನೀಡಿ ವಿಡಿದಾಲಿಂಗಮುಂ ಚಿತ್ತವೃತ್ತಿಯಿಂದರ್ಚಿಸಿ ತತ್ ಸ್ವಷ್ಟಾಚಾರ ಕ್ರಿಯಾರ್ಪಣಾನಂತರದೊಳ್ ವೃಷಭೇಶ್ವರಂ ನಾಲಗೆಯೊಳ್ ಲಿಂಗವನೆಂತು ತೆಗೆದು ಕೊಳುತ್ತಿರಲೊಡನಂತು ಮೂರ್ಛೆಯಾಗುವ ಸದ್ಭಕ್ತನಂ ನೋಡಿ ಲಿಂಗ ಪ್ರಾಣತ್ವಂ ನೆಲೆಗೊಂಡುದೆಂದಾನಂದಿಸಿ ನಂದೀಶ್ವರಾವತಾರಮಂ ತಾಳು ಪ್ರಮಥಗಣ ಪರಿವೃತವಾಗಿದೆ ದೇವತತಿ ಪೂಮಳೆಗರೆಯೆ ಸಕಲ ವೈಭವದಿಂ ಸಮಸ್ತ ದೀಕ್ಷಾ ಪ್ರಧಾನ ಕ್ರಿಯಾನುಗೃಹಂಗೆಯು ಸ್ಥಳಕುಳ ಗುರುಲಿಂಗ ಜಂಗಮ ಸಗುಣ ನಿರ್ಗುಣ ತತ್ವ ಮಂತ್ರಮೂರ್ತಿ ನಾನಾವಿಧಾನವನಳವಡಿಸಿ ಸನತ್ಕುಮಾರ ಪ್ರಬೋಧ ಪ್ರಮಥೇಂದ್ರ ಪ್ರಭು ಗುರುಸ್ವಾಮಿ ಪೋಗಲೊಡನಾ ಕಾಲದೊಳ್ ಶಿಷೋತ್ತಮಂ ಕೀರ್ತಿಸುತ್ತಿರ್ದಪಂ
ಮನುರಾಜನು, ಪುಣ್ಯದ ಪುಂಜದಂತೆ, ಶಿವನ ಸದ್ಗುಣ ರಾಶಿಯಂತೆ, ಭಕ್ತರ ಬೆಳ್ಜಸದಂತೆ, ಪರಶಿವನ ಸದ್ದರ್ಮ ಸತ್ಯಾನಂದ ವಿಮಳ ವಿಳಸಿತ ಧವಳಾತುಳಾಖಂಡ ಚಿತ್ಪಿಂಡ ವೃಷಭೇಶ್ವರನನ್ನು ಕಂಡು ವಂದಿಸುವನು. ಲಿಂಗಮುದ್ರೆಗೆ ಆಧಾರವಾದ ಬಸವನಿಗೆ ಪ್ರದಕ್ಷಿಣೆ ಹಾಕುವನು. ಮುಂದೆ ನಿಂದು ಶಿರಸಾ ವಹಿಸಿ ನಮಸ್ಕರಿಸುವಾಗ ನಂದಿಯ ರಸನಾಗ್ರದಲ್ಲಿ ಇಷ್ಟಲಿಂಗ ಕಾಣುತ್ತದೆ. ಮನುರಾಜನು ನಾಲಗೆಯ ಕೆಳಗಡೆಯಲ್ಲಿ ಕೈನೀಡಿ ಲಿಂಗವನ್ನು ಸ್ವೀಕರಿಸಿ, ಅದನ್ನು ಚಿತ್ತವೃತ್ತಿಯಿಂದ ಪೂಜಿಸುತ್ತಾನೆ. ಲಿಂಗಪ್ರಾಣತ್ವವು ಭಕ್ತನಲ್ಲಿ ನೆಲೆಗೊಳ್ಳುತ್ತದೆ. ಶಿಷೋತ್ತಮನಿಗೆ ಲಿಂಗ ನೀಡಿದ ನಂದಿ ಆನಂದದಿಂದ ಕೈಲಾಸಕ್ಕೆ ತೆರಳುವನು. ಮನುರಾಜನು ತನ್ನ ಗುರುವನ್ನೂ ಇಷ್ಟಲಿಂಗ ವನ್ನೂ ನಾನಾವಿಧವಾಗಿ ಹೊಗಳುತ್ತಾನೆ. ಅನಿಮಿಷ ದೃಷ್ಟಿಯಿಂದ ಇಷ್ಟಲಿಂಗವನ್ನು ಅವನು ನೋಡುತ್ತಿದ್ದುದರಿಂದ, ಅಂದಿನಿಂದ ಅನಿಮಿಷದೇವ ನೆಂಬ ಅಸಾಧಾರಣವಾದ ಹೆಸರು ಅವನಿಗೆ ಬರುತ್ತದೆ. ಇಷ್ಟು ದಿವಸಗಳವರೆಗೆ ಶಿವಭಕ್ತನಾಗಿದ್ದ ಅರಸನ ತನು ಲಿಂಗದೀಕ್ಷೆಯಿಂದ ಲಿಂಗಮಯವಾಗುತ್ತದೆ.
ಅವನೇ ಲಿಂಗದೇವನಾಗುವನು; ಯೋಗೀಶ್ವರನಾಗುವನು,
ಶಿವಶರಣನಾದ ಅನಿಮಿಷದೇವನು ಸ್ವಲೀಲಾನಂದ ಪರಮ ಚರಿತ ನಾಗಿ ಇಹಪರದ ಹಂಗು, ಸುಖದುಃಖ, ಪುಣ್ಯ ಪಾಪ, ಧರ್ಮಕರ್ಮಗಳನ್ನೆಲ್ಲ ನೀಗಿ, ಶಿವಸಂಸ್ಕಾರದಿಂದ ಸಕಲ ಸುಖಭೋಗಗಳನ್ನನುಭವಿಸಿ ದೇಶ ಕೋಶ ಭಾಗ್ಯಗಳನ್ನು ಬಿಟ್ಟು, ಪರತರದಿಷ್ಟಲಿಂಗ ಧ್ಯಾನವಳವಟ್ಟು, ಸಕಳದೇವತಾ ಸಾರ್ವಭೌಮ ಸಾಂಬಬ್ರಹ್ಮ ಸದಾಶಿವನಲ್ಲಿ ಸಮರಸವಾಗುತ್ತಾನೆ ಶಿವಯೋಗಸಮಾಧಿಯಲ್ಲಿ ವೇಳೆ ಕಳೆಯುತ್ತಾನೆ. ಪರಮ ನಿರಂಜನ ಲೀಲೆಯೇ ಅವನ ಕಾಯಕವಾಗುತ್ತದೆ. ಅನಂತ ವೈಭವದಿಂದೊಡಗೂಡಿ – ಮೆರೆಯುವ ಅನಿಮಿಷಾರಣ್ಯವೇ ಅವನ ತಪೋಭೂಮಿಯಾಗುವದು.
ಆ ಸಮಯದಲ್ಲಿ ನಿರ್ಮಾಯ ಗಣೇಶ್ವರನು ನಿತ್ಯನಿರ್ಮಾಯನೆಂಬ ಬಿರುದನ್ನು ಧರಿಸಿ ಕೈಲಾಸದಿಂದ ಭೂಲೋಕಕ್ಕೆ ಬರುವನು. ಅವನೇ ಶ್ರೀ ಅಲ್ಲಮ ಪ್ರಭುದೇವನು; ಬನವಸೆಯಲ್ಲಿ ಮಮಕಾರ ಭೂಪಾಲ ಮೋಹಿನೀದೇವಿಯರಿಗೆ, ಮಧುಕೇಶ್ವರನ ಪ್ರಸಾದದಿಂದ ಪಾರ್ವತಿಯ ತಾಮಸರೂಪವೇ ಮೂರ್ತಿವೆತ್ತು ಮಾಯಾದೇವಿಯಾಗಿ ಜನಿಸುತ್ತದೆ. ಆ ಕನ್ನೆ ಭಾಸುರದ ಚನ್ನೆ; ನೋಡುವರ ಕಣ್ಣಿಗೆ ಮಂಗಳವಾಗಿ, ಕಾಲ ಕಳೆದಂತೆ ಶೃಂಗಾರಾಂಗದ ಸೊಬಗನ್ನು ಸೂಸುತ್ತಾಳೆ. ಪ್ರತಿನಿತ್ಯದಲ್ಲಿ ಮಧುಕೇಶ್ವರನನ್ನು ಪೂಜಿಸಿ, ನೃತ್ಯದಿಂದ ಶಿವನನ್ನು ತೃಪ್ತಿ ಬಡಿಸುತ್ತಾಳೆ. ಮಾಯೆ ಕುಣಿಯತೊಡಗಿದರೆ ಜಗದ ತಲ್ಲಣವನ್ನು ಬಣ್ಣಿಸಬಲ್ಲವರಾರು ಒಂದು ದಿವಸ ಎಂದಿನಂತೆ ಮಧುಕೇಶ್ವರನ ಮುಂದೆ ಮಾಯೆಯ ನೃತ್ಯ, ಲಿಂಗಲೀಲಾವಿಲಾಸದಲ್ಲಿ ಮೆರೆಯುವ ಪ್ರಭು ಮದ್ದಳಿಗನಾಗಿ ಶಿವಾಲಯದ ಹೊರಗಡೆಯಲ್ಲಿ ಸುಳಿಯುತ್ತಾನೆ; ಮದ್ದಳೆಯನ್ನು ದೃತ ಮಧ್ಯ ವಿಳಂಬಿತ ಗತಿಗಮಕದಿಂದ ಬಾರಿಸುತ್ತಾನೆ. ಅದೆಂತಹ ನಾದ! ಮಾಯಾದೇವಿಯು ಮೇಘನಾದಕ್ಕೆ ಲವಲವಿಸುವ ಸೋಗೆಯಂತೆ, ಮದ್ದಳೆಯ ನಾದಕ್ಕೆ ಹುಚ್ಚೆದ್ದು ಕುಣಿಯುತ್ತಾಳೆ. ಮದ್ದಳೆಯವನನ್ನು ನೋಡುವ ಕೂಡುವ ಮಾಯೆಯ ಬಯಕೆ ಕುಡಿವರಿಯುತ್ತದೆ. ಪ್ರಭು ನಟನಾಟಕದ ವಿಟವೇಷದ ರಸಿಕರದೇವ, ಅವನಲ್ಲಿ ಮುದ್ದು ಮೊಗವನ್ನು, ಸಿಂಗರದ ಸಿರಿಯನ್ನು : ಗಾಡಿಯ ಗಾಂಭೀರ್ಯನನ್ನು ಕಂಡ ಮಾಯೆ ಅಲ್ಲಮನನ್ನೇ ತನ್ನ ನಾಟ್ಯಾಚಾರ್ಯನನ್ನಾಗಿರಿಸಿಕೊಳ್ಳುವಳು, ಏಕಾಂತದ ನಾಟಕಶಾಲೆಯೊಳೊಂದುದಿನ ಮಾಯಾದೇವಿ ಅಲ್ಲಮನನ್ನು ಹಿಡಿಯ ಹೋಗಲು, ನಿರ್ಮಾಯನೆಂಬ ಬಿರುದನ್ನು ಪಡೆದ ಪ್ರಭು ಅವಳ ಕೈಗೆ ಸಿಲುಕದೆ ಬಯಲಾಗುತ್ತಾನೆ. ಮಾಯೆ ಭಂಗಿತಳಾಗುವಳು. ಮಾಯಾ ಕೋಳಾಹಳ ಲೀಲಾನಾಟಕ ನಟನೆಯ ಅಲ್ಲಮಪ್ರಭುವೇನು ಸಾಮಾನೆ ? ಮುಂದೆ ಅವನು ಭಕ್ತರ ಉದ್ಧಾರಕ್ಕಾಗಿ ಲೋಕಸಂಚಾರ ಕೈಕೊಳ್ಳುವನು.
ಗೊಗ್ಗಯ್ಯನು ತೋಟವನ್ನು ಮಾಡುವ ಕಾಯಕದಲ್ಲಿ ನಿರತನಾಗಿ ಪ್ರಖ್ಯಾತಿಪಡೆದ ವ್ಯಕ್ತಿ, ಸಾವನ್ನು ತಿಳಿಯದೆ ಬರಿ ಗಾವದಿಗೆಲಸಕ್ಕೆ ಯೋಗ್ಯನಾದ ಭಕ್ತ; ಜೀವಾನುಕಂಪಿಯಾಗದೆ ಧಾವತಿಗೊಳಗಾದ ಜೀವಿ, ಅಂತಹನನ್ನು ಕಂಡು ಪ್ರಭು ಮರುಗುತ್ತಾನೆ; ಗೊಗ್ಗಯ್ಯನಿಗೆ ಇಷ್ಟಲಿಂಗ ಮಹಿಮೆಯನ್ನು ತಿಳಿಸಿಹೇಳಿ, ಅದಿಲ್ಲದೆ ಭವರುಜೆಯಳಿದು ನಿಜಮುಕ್ತಿ ಯಾಗದೆಂದು ಸ್ಪಷ್ಟಗೊಳಿಸುತ್ತಾನೆ: ಮತ್ತು ಶಿಷ್ಯಕಾರಣವಾಗಿ ಶಿವಯೋಗ ಸಮಾಧಿಯೊಳಿದ್ದ ಗುರುವಾದ ಅನಿಮಿಷದೇವನನ್ನು ಸ್ವಾನುಭವ ಜ್ಞಾನದಿಂದ ತಿಳಿದು, ಗೊಗ್ಗಯ್ಯನ ತೋಟದಲ್ಲಿಯೇ ಒಂದು ಕಡೆಯಲ್ಲಿ ಭೂಮಿಯನ್ನು ಅಗಿಸುವನು; ಒಳಗೆ ಕನಕಕಳಸಪರಿಮಿಳಿತ ದಿವ್ಯ ಶಿವಾ ಲಯವನ್ನು ಕಂಡು ಗೊಗ್ಗಯ್ಯನು ವಿಸ್ಮಿತನಾಗುವನು. ಇದೇನು ಚಮತ್ಕಾರವೆಂದು ಅವನು ಕೇಳಲು, ಪ್ರಭುದೇವನು ಮದ್ಗುರು ಸ್ವಾಮಿಯ ನಿಮಿಷದೇವರೆಂದು ಹೇಳಿ, ದೇವಾಲಯದೊಳಗೆ ಹೊಕ್ಕು ಚೈತನ್ಯ ವಾಗಿ ಅಸ್ತಿಮಾತ್ರ ತನುವಿನಿಂದಿದ್ದ ಗುರುಮೂರ್ತಿಯನ್ನು ಕರೆದು, ಅವನ ಕರಕಂಬದಿಷ್ಟಲಿಂಗವನ್ನು ಗ್ರಹಿಸಿ, ಇಷ್ಟ ಬ್ರಹ್ಮಳಿಂಬಿಟ್ಟು ಕೊಳ್ಳುವನು. ಗೊಗ್ಗಯ್ಯನಿಗೆ ಪ್ರಭುದೇವನು ಈ ರೀತಿ ಮೊದಲು ಅರಸರಿದ್ದು ನಂತರ ಪರಮ ಶಿವೈಕ್ಯರಾದ ಹಲವಾರು ಶಿವಭಕ್ತರ ಕಥೆಗಳನ್ನು ಹೇಳುವನು. ಕಾಂಚೀಪುರಿಯ ರಾಜೇಂದ್ರ ಚೋಳ-ಪಿಣ್ಯಾಕ ಸಿದ್ಧನ ಕಥೆ
ವಿಸ್ತಾರವಾಗಿ ಬರುತ್ತದೆ. ಧ್ರುವ, ಪ್ರಹ್ಲಾದ, ವಿಭೀಷಣರು ಶಿವಭಕ್ತರಾದುದನ್ನು ಪ್ರಭು ಹೇಳುತ್ತಾನೆ. ಹರಿಯು ಹತ್ತು ಅವತಾರಗಳಲ್ಲಿ ಹುಟ್ಟಿ ಬಂದುದು, ಮೋಕ್ಷಪಡೆದುದು, ಹರನಿಂದ ಎಂಬುದನ್ನು ಶಾಸ್ತ್ರಸಮ್ಮತವಾಗಿ ಗೊಗ್ಗಯ್ಯನಿಗೆ ತಿಳಿಸುತ್ತಾನೆ. ಶ್ರೀ ವೀರಭದ್ರನೇ ಮಾರುತಿಗೆ ಲಿಂಗಧಾರಣ ಮಾಡಿ ಮೋಕ್ಷ ಮಾರ್ಗ ತೋರಿಸಿದನೆಂದು ಹೇಳುವ ಸಂದರ್ಭ ಬರುತ್ತದೆ.
ಬೇಡರ ಸಂಕಣ್ಣನಾಯಕ, ಭದ್ರಾಯುಷ್ಯರಾಜನ ಕಥೆಗಳನ್ನು ಪ್ರಭು ಹೆಚ್ಚು ವಿಸ್ತಾರವಾಗಿ ಹೇಳಿ, ಭಕ್ತಿಯ ಪಾರಮ್ಯವನ್ನು ಗೊಗ್ಗಯ್ಯನಿಗೆ ತಿಳಿಸುತ್ತಾನೆ. ಹೀಗೆ ಅನೇಕ ಶಿವಶರಣರ ಕಥೆಗಳನ್ನು ಹೇಳಿ ಗೊಗ್ಗಯ್ಯನಿಗೆ ಸನ್ಮಾರ್ಗ ತೋರಿಸಿ ಮುಂದೆ ಸಾಗುವನು. ಕಲ್ಯಾಣ ಪಟ್ಟಣಕ್ಕೆ ಹೋಗಿ ಭಕ್ತಿಭಂಡಾರಿ ಬಸವಣ್ಣನವರಿಗೆ ದರ್ಶನವಿತ್ತು ಸಿದ್ಧರಾಮ ಬಸವಣ್ಣನವರಿಗೆ ಅನಿಮಿಷದೇವನ ಕಥೆಯನ್ನು ತಾನೇ ಹೇಳುತ್ತಾನೆ.
ಬಸವಣ್ಣನವರು ಸಾಕ್ಷಾತ್ ನಂದಿಯ ಅವತಾರವೆಂದು ವೀರಶೈವರ ನಂಬಿಕೆ. ಕಲ್ಯಾಣಕ್ಕೆ ಬಂದಾಗ ಪ್ರಭುದೇವರು ಬಸವಣ್ಣನ ಮಹಿಮೆ ಯನ್ನು ಹೊಗಳುತ್ತಾರೆ. ಬಸವಣ್ಣ ಪ್ರಭುವಿಗೆ ಮಣಿಯುತ್ತಾನೆ. ಯಾಕಂದರೆ ನಂದಿ ಅನಿಮಿಷದೇವನಿಗೆ ಲಿಂಗಕೊಟ್ಟಿದ್ದರೆ, ಅನಿಮಿಷ ದೇವನು ಪ್ರಭುವಿಗೆ ಲಿಂಗ ನೀಡಿದ್ದಾನೆ. ಪ್ರಭು ಮೇಲಾಗಿ ಕಾರಣಿಕ ಪುರುಷ, ತಪ್ಪಿದವರನ್ನು ತಿದ್ದುವದಕ್ಕಾಗಿ ಲೋಕಸಂಚಾರ ಕೈಕೊಂಡ ಸಿದ್ಧ ವ್ಯಕ್ತಿ; ವೈರಾಗ್ಯಮೂರ್ತಿ, ಹೀಗಿರಲು ಗುರುವಾರು, ಶಿಷ್ಯನಾರು ಎಂದು ಕೇಳಲೇಕೆ? ಕೆಳಗಿನಂತಿದೆ ಬಸವಣ್ಣ ಪ್ರಭುವಿನ ಸಂಬಂಧ:
” ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ, ಆ ಲಿಂಗ ನಿನಗೆ ಸೇರಿತ್ತಾಗಿ ಬಸವಣ್ಣನ ಸಾಂಪ್ರದಾಯದ ಕಂದ ನೋಡಾ ನೀನು. ಭಕ್ತಿ ದಳದುಳದಿಂದ ಚೆನ್ನ ಸಂಗಮನಾಥನೆಂಬ ಲಿಂಗವನನುಗ್ರಹಿಸಿ ಕೊಂಡೆನಾಗಿ ಬಸವಣ್ಣನ ಸಾಂಪ್ರದಾಯದ ಕಂದ ನೋಡಾ ನಾನು
ಇಂತಿಬ್ಬರಿಗೂ ಒಂದು ಕುಲಸಲವಾದ ಕಾರಣ ಕೂಡಲ ಚೆನ್ನಸಂಗಯ್ಯ ನಲ್ಲಿ ಬಸವಣ್ಣನ ಮಹಮನೆಯ ಪ್ರಸಾದ ಇಬ್ಬರಿಗೂ ಒಂದೇ ಕಾಣಾ ಪ್ರಭುವೆ.” (ಶೂ. ಸಂ. ಪು. ೫೦) ಇದೇ ರಾಜೇಂದ್ರವಿಜಯದ ಸಂಕ್ಷಿಪ್ತ ಕಥಾವಸ್ತು.
ಅನಾದಿಗಣನಾಥನ ಶಿಷ್ಯನು ಆದಿಗಣನಾಥನು. ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು. ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು. ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು. ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು. ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು. ಇಂತು ಅನಾದಿವಿಡಿದು ಬಂದ ಅನುಪಮಲಿಂಗವು, ಗುಹೇಶ್ವರನೆಂಬ ಹೆಸರನೊಳಕೊಂಡು, ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.