ಕವಿ ಸಿಂಗಿರಾಜರ ಕಾಲ: ಕ್ರಿ.ಶ.ಸು.೧೫೦೦, ವೀರಶೈವ ಕವಿಗಳು.
ಸಿಂಗಿರಾಜರು ವಾರ್ಧಕಷಟ್ಪದಿಯಲ್ಲಿ ‘ಬಸವಚಾರಿತ್ರ’ (ಸಿಂಗಿರಾಜಪುರಾಣ) ಎಂಬ ಕೃತಿ ರಚಿಸಿದ್ದಾರೆ.
ಈ ಕೃತಿಯು ಬಸವಣ್ಣನವರ ಚರಿತ್ರೆಯನ್ನು ಕುರಿತದ್ದಾಗಿದೆ ಮತ್ತು ಈ ಕೃತಿಯಲ್ಲಿ ಸಿಂಗಿರಾಜನು ಪುರಾಣಕ್ಕಿಂತ ವಾಸ್ತವಕ್ಕೆ ಹತ್ತಿರವಾಗುವಂತೆ ಬರೆದಿದ್ದಾರೆ.
ಬಸವಚಾರಿತ್ರದ ವಿಶೇಷತೆಗಳು:
೧) ದೇವಾಲಯದ ರಂಗ ಮಂಟಪದಲ್ಲಿರುವ ನಂದಿಕೋಡುಗಳ ಮೂಲಕ ಶಿವಲಿಂಗವನ್ನು ನೋಡುವ ವಿಧಾನ ಸಿಂಗಿರಾಜ ಪುರಾಣ ಮತ್ತು ರಾಘವಾಂಕ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
೨) ಚೆನ್ನಬಸವಣ್ಣನವರ ತಂದೆಯ ಹೆಸರನ್ನು `ಬಸವ ಚಾರಿತ್ರ್ಯ’ (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರು ಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.
೩) ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಈ ಕೃತಿಯಿಂದ ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ ರಲ್ಲಿ ರಚನೆಯಾದ ಸಿಂಗಿರಾಜರ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜರು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟರಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.
ಸಿಂಗಿರಾಜರ ಕಾವ್ಯದ ಕೆಲವು ಸಾಲುಗಳು
ಶ್ರೀ ಷಡ್ಗುಣೈಶ್ವರ್ಯಹಸಂಪನ್ನ ಬಸವ ಗುರು
ವೇಷಮಂ ಧರಿಸಿ ಮರ್ತ್ಯದಿ ಭಕ್ತರುಗಳನುಱೆ
ಪೋಷಿಸಿದ ಕಾರಣವ ಕೃತಿಮಾಳ್ಪೆ ಸದ್ಭಕ್ತಜನರಱಿವ ಮಾಳ್ಕೆಯಿಂದ
ಶ್ರೀಮದಮರೇಂದ್ರಾರ್ಚಿತಂ ಪರಾತ್ಪರಮನಿ
ಸ್ಸೀಮನದ್ವಯನತುಳನನಘ ನಿಗಮಾಗಮ
ಸ್ತೋಮ ಸಂಸ್ತುತ್ಯಗೋಚರ ನಿರಾಲಂಬ ನಿಶ್ಚಿಂತ ನಿಜ ನಿತ್ಯಮೂರ್ತಿ
ಪ್ರೇಮದಿಜನಾರ್ದನಜ ಮನುಮುನಿಪ ಯಕ್ಷ ಖಚ
ರಾಮರಮೇಶ್ವರರ್ಗಖಿಳಸಂಪದವಿತ್ತ
ಸ್ವಾಮಿ ಕಾಶೀಪುರಾಧಿಪ ವಿಶ್ವಪತಿ ಕೂರ್ತು ನೆಲಸೆನ್ನ ಹೃದಯದೊಳಗೆ ||೧||
ಆವುದಂತಸ್ಥವೀ ಕೃತಿಮೂಲವೃತ್ತಾಂತ
ಸಾವಯವೆನಲು ಭರ್ಗನೆರಡನೆಯ ಮೂರ್ತಿ ವೃಷ
ಭಾವತಾರನು ಬಸವನಾಮದಿಂ ಜನಿಸಿ ಸದ್ಭಕ್ತಿಪಥ ತೋಱಿ ಜಗವ
ಪಾವನವ ಮಾಡಿ ಪರವೆರಸಿದ ಮಹಾ ರಹ
ಸ್ಯಾವಳಿಯ ಗಣಕುಲಕೆ ನಂದಿಮಹಕಾಳರು
ದ್ರಾವರೇಣ್ಯನೊಡರ್ಚಿದೋಜೆ ಕಲ್ಪಿತ ರಸಾಯನಸಿದ್ಧಿ ಶರಣರ್ಗಿದು ||೯||
ನಕ್ರದಿಂದವಹಾರದಿಂ ಕಮಠದಿಂ ಕದುಳಿ
ಚಕ್ರದಿಂ ತಿಮಿ ತಿಮಿಂಗಿಲ ಪ್ರೋಷ್ಠದಿಂ ಕುಳಿರ
ವಕ್ರದಿಂ ಮದ್ಗುರವಮಕರದಿಂ ಕರಿಮಕರದಿಂ ಜಳೂಕದಿ ಪುಷ್ಕರ
ಚಕ್ರನಿಚಯದಿ ಶಾಲಿಹೋತ್ರಕುಲದಿಂ ದ್ವಿರದ
ಚಕ್ರವಾಳದಿ ಕರಭದಿಂ ಜೀವ
ವಿಕ್ರಮದಿ ಮನುಜಸಂಚಯದಿ ಪೊಂಪೊಗೆದು ವಾರಾಶಿ ಕಣ್ಗೆಸೆದಿರ್ದುದು ||೧೩||
ಲೀಲೆಯಿಂದಾ ಭದ್ರಸಿಂಹವಿಷ್ಟರದಿನೊ
ಡ್ಡೋಲಗಂಗೊಟ್ಟು ಕುಳ್ಳಿರ್ದ ಪರಶಕ್ತಿಯ ಸ
ಮೇಳದಿಂ ಸ್ಕಂದ ನಂದೀಶ್ವರ ಗಣಾಧೀಶ ವೀರಭದ್ರ ಪ್ರಮುಖರ
ಸಾಲುಸಂಗಡದ ರುದ್ರಾಳಿಗಳ ತ್ರೈಜಗ
ತ್ಪಾಲಸಂಖ್ಯಾತರ್ಪುರಾತನರ್ಮಾಹೇಶ
ಜಾಲ ಸಾನಂದಾದಿ ಸಾಮೀಪ್ಯರೊಗ್ಗಿನಿಂ ಬಳಸಿರ್ದುದುಮೆವರನನು ||೨೨||
ಲಾಲಿಸುತಲಖಿಳ ಸುಖಸಂಪದುತ್ತರಪರಮ
ಲೀಲೆಯಿಂದಿರೆ ಉಮಾವರನು ದಿವಿಜಾಳಿಗಳ
ಪಾಲಿಸುತಿರಲ್ಕೆಯಂತಾಸಮಯದೊಳು ಬಸವರಾಜ ಭೂವಳಯದಲ್ಲಿ
ಭಾಳಾಕ್ಷನಪರಾವತಾರ ತಾಂ ಸದ್ಗತಿಸ
ಮೇಳಗಳ ಭಕ್ತರ್ಗೆ ತೋಱಿ ಬಂದಾ ಶಿವನ
ಓಲಗದ ಮುಂದೆ ಪುಷ್ಪಕವನಿಳಿದಾಕಥಾವೃತ್ತಾಂತಮಂ ಪೇಳ್ವೆನು ||೩೭||
ಏಕ್ಷನೆಯ ಸಂಧಿ
ಸೂಚನೆ:-
ಈಶನಟ್ಟಿದ ಕಾರಣದ ಲಿಪಿಯ ಚಪ್ಪನ್ನ
ಭಾಷೆಯವರಱಿಯದಿರಲದ ನೋಡುತೋದಿ ಭೂ
ಮೀಶಂಗೆ ತಿಳುಪಿ ಭಂಡಾರದಧ್ಯಕ್ಷಮಂ ಪಡೆದ ಸಂಗನಬಸವನು
ಶ್ರೀಮದಖಿಳಾಗಮಾರ್ಣವ ಮಥನಗೈದು ನಿ
ಸ್ಸೀಮನಂದೀಶ ಪ್ರಮಥರ್ಗಮಲವಚನರಚ
ನಾ ಮಹಾವಸ್ತುವಿಸ್ತೀರ್ಣಮಂ ಸ್ಥಲವಿಟ್ಟನಾ ಮಂತ್ರರಹಸ್ಯಾದಿಯ
ಭೂಮಿಯ ಶಿವಾರ್ಚಕರ್ಗೊರೆದಬಸವೇಶ್ವರನ
ನಾಮಾಮೃತಾಕೃತಿಯ ವಿಶ್ವೇಶನಮಲಪದ
ತಾಮರಸಷಟ್ಚರಣಷಟ್ಪದೀಗಳಿಂ ಸಿಂಗಿರಾಜಾಂಕನೆನಲದೆಂತೊ ||೧||
ಮಕುಟವರ್ಧನರೆಂಟು ಸಾವಿಲಮವರೊಳಡಸಿ
ಸಕಲರಾಜರ ರಾಜಪುತ್ರ ಸಚಿವರ ಮಾನ್ಯ
ಪ್ರಕರ ಬಾಹತ್ತರ ನಿಯೋಗ ದಂಡಾಧೀಶರಖಿಳ ಭಾಷಾಯುಕ್ತರ
ನಿಕರ ಚೌಷಷ್ಠಿ ನಾನಾಕಳಾನ್ವಿತ ಪರೀ
ಕ್ಷಕರ ನಡುವೊಡ್ಡೋಲಗದೊಳೊಪ್ಪಿರಲ್ಕಾಕ
ಸ್ಮಿಕದ ಲಿಖಿತಂಬರದಿ ಭರದಿ ಬಿದ್ದಿತು ನೃಪನ ಎಸೆವ ಸಿಂಹಾಸನದೊಳು||೪||
ಆ ಲಿಖಿತವಂ ತೆಗೆದು ಚೋದ್ಯವೆಂದೇನುತ ಭೂ
ಲೋಲ ಮೂಗಿಂಗೆ ಕೈಯಿಟ್ಟು ತಾ ನೋಡೆ ಕಣು
ಕೀಲಿಸುವೊಲಾಗತಿ ಭೀತಿಯಿಂ ಸಚಿವರ್ಗಿತ್ತರವರದನು ನೋಡೆ
ಆಲಿ ಸಿಡಿವಂತಹುದು ತುಟಿಮಿಡುಕ ತೆಱಹಿಲ್ಲ
ನಾಲಿಗೆಗೆ ಬಿಯ್ಯಗಂ ಹೂಡಿದಂತಹುದದಱ
ಮೂಲ ಲಿಪಿ ಭಾಷೆ ತಿಳಿಯದೆ ಬಳಲಿ ಬಲ್ಲವರ್ಗಳೆಲ್ಲರಂ ಕರೆಸಿ ತೋಱೆ ||೫||
ಗಣಕರಂ ಹಳಿದು ಲಿಖಿತರ ಮೀಱಿ ಮುಹೂರ್ತಕರ
ಡೊಣದು ವಿದ್ವಾಂಸರಂ ವಿಧಿಗೊಳಿಸುತಾಗಮಿಕ
ರೆಣಿಕೆಗೊಳ್ಳದೆ ಕವಿಗಮಕಿವಾದಿವಾಗ್ಮಿಗಳ ಭ್ರಮೆಗೊಳಿಸಿ ಬಲ್ಲವರನು
ತೃಣಮಾಡಿ ಸಾಮರ್ಥ್ಯ ಸಟೆಯೆನಿಸಿ ತಾರ್ಕಿಕರ
ನಣೆದು ಗಣಿತಜ್ಞರಂ ಗುಣಗೆಡಿಸಿ ಲಿಪಿಯ ಲ
ಕ್ಷಣದಕ್ಷರಂದಿಳಿಯದೆಲ್ಲರಂ ಅಲ್ಲೆನಿಸಿ ಓಡಾಡಿತೇಂ ಪೊಗಳ್ವೆನು ||೬||
ಗಗನಲಿಪಿ ಧೂಮಲಿಪಿ ಜಲಲಿಪಿ ಪಿಶಾಚಲಿಪಿ
ಖಗಲಿಪಿ ಕದಂಬಲಿಪಿ ಕಲ್ಪಲಿಪಿ ಕಾಕಲಿಪಿ
ನಿಗಮಲಿಪಿ ನೀಲಲಿಪಿ ಚಕ್ರಲಿಪಿ ಲೆಖ್ಖಲಿಪಿ ಬಿಂದುಲಿಪಿ ದರ್ಪಣಲಿಪಿ
ಭೃಗುಲಿಪಿ ಪ್ರಬಂಧಲಿಪಿ ಶಸ್ತ್ರಲಿಪಿ ಚಿತ್ರಲಿಪಿ
ವಿಗತಲಿಪಿ ರಣಲಿಪಿ ಶಿಲಾಲಿಪಿ ಶಿರೋರ್ಲಿಪಾ
ದಗಣಿತ ಮಹಾಲಿಪಿಗಳೊಳಗಱಿದು ತಿಳಿಯದಳಲುತಲಿರ್ದು ಬಳಲಿ ಮತ್ತೆ ||೮||
ಹಲವನಾಡೆಹುದಿಲ್ಲ ಕಾರ್ಯ ಹೋ ಹೋ ಸಾಕು
ಗಲಭೆಯೇಕೀ ಲಿಪಿಯನೋದಿ ತಿಳಿಪಿದಡೆಮ್ಮ
ಬಲಕೆ ರಾಜ್ಯಕ್ಕೆ ರಣಭಂಡಾರವೆಲ್ಲವಕ್ಕಧಿಕತ್ವದೊಡೆತನಕ್ಕೆ
ಸಲುಗೆ ವೇಳ್ದಂಡಾಧಿನಾಥಪದಮಂ ಕೊಟ್ಟು
ಸಲಹುವೆನೆನಲ್ಸಾಧ್ಯವಲ್ಲೆಮಗೆ ಸಾಧಿಸೀ
ಫಲವ ಪಡೆಯಲು ಬಲ್ಲಗಲದೀ ಲಿಖಿತ ದೈವಿಕಮಾರ್ಗೆ ತಿಳಿಯದೆನಲು ||೧೦||
ಸಂಗಮದೊಳಿರ್ದು ಕಾರಣದಿಂದೆ ಬಂದು ಕರ
ಣಂಗಳಾಶ್ರಯದಲ್ಲಿ ಬರೆವುತಿಹ ಬಸವೇಶ್ವ
ರಂಗೆ ಭಾವದೊಳಿರ್ದು ಶರಣನಾಕಾರದಿಂದೆಂದುದಶರೀರವಾಕ್ಕು
ಲಿಂಗಜಂಗಮದಿರವ ನೀನಱಿದು ಮಾಳ್ಪ ಲೇ
ಸಿಂಗೆ ತಕ್ಕಧಿಕ ಫಲಬೇಕೆಂದು ಲಿಖಿತಮಂ
ಸಂಗಮೇಶ್ವರಲೀಲೆಯಿಂದಟ್ಟಿದೋಲೆಯಿದು ಸಾಧ್ಯ ನಿನಗೋದೆಂದನೆ||೧೧||
ರೂಢೀಶ ನಿಮ್ಮ ಬರವೇಳ್ದನೆನೆ ಎದ್ದು ನಿಲೆ
ನೋಡಿ ಬೆಱಗಾಯ್ತು ಸಭೆ ಏನಿವನ ಮರುಳುಮಾ
ತಾಡಿಸಿತೊ ಮೇಣ್ಬಲ್ಲನೋ ದೇವತಾಕರುಣವೋ ಕಾಕುವಗರಣವನು
ಆಡುವನೊ ಯೆನುತೆಲ್ಲರಲ್ಲಲ್ಲಿ ನಿಂದು ಮಾ
ತಾಡುತಿರಲಾ ಸಭಾಶಧಿಮಥನಕ್ಕೆ ಶಿವ
ನಾಡಿಸುವ ಮಂದರದೊಲೈತಂದಬಸವರಸ ಬಿಜ್ಜಳನ ಸಮ್ಮುಖಕ್ಕೆ|| ೧೯||
ವಿಷಮದೋಲಿದು ವಿರಾಜಿತ ರಾಜಶೇಖರನ
ವಿಷಯದಿನೊಗೆದುದಿದಱ ವೃತ್ತಾಂತಮಂ ದಿಟಂ
ಬೆಸಗೊಂಬೆಯಾದಡಾದಱಂತಸ್ಥವೆಲ್ಲವಂ ತಿಳಿವೆಯಾದೊಡೆ ಪೇಳ್ವೆನು
ವಸುಧೆಗಚ್ಚರಿ ನಿನನ ಪರಮ ಸಂಪದಲಕ್ಷ್ಮಿ
ಗೆಸಕವಿದು ಬಿಜ್ಜಳನರೇಂದ್ರಯೆನೆ ಹಾರವಿಸಿ
ಬಸವ ನಮ್ಮಯ್ಯ ಪೇಳೆಂತೆನಲ್ಕೋಲೆಯನೊಡರ್ಚೋದಲುಜ್ಜುಗಿಸಿದಂ ||೨೩||
ಸ್ವಸ್ತಿ ಶ್ರೀಮನ್ಮಹಾದೇವಾಧಿದೇವಸಂ
ಸ್ತುತ್ಯ ಸಂಗಮನಾಥನನುಮತಂ ಇದು ಮಿಕ್ಕಿ
ನ ಸ್ಥಿತಿಯದೇಶ ಗಾಧೆಯಕನ್ಯವಾದ ಸಿದ್ಧಾಂತ ಬದ್ಧಾಂತವಲ್ಲ
ವಸ್ತುವಱುವತ್ತಾಱು ಕೋಟಿಯಂ ತೋಱುವ ಸು
ವಸ್ತುವಂಜನ ದೇವಲಿಪಿ ನಿನ್ನ ಭಾಗ್ಯದ ಸ
ಮಸ್ತ ಸಾರೋದ್ಧಾರ ಶಾಸನವಿದೆಂದು ಬಸವೇಶನೋದಿದನೋಲೆಯ ||೨೪||
ಭಾಪುರೆಮ್ಮಯ್ಯ ಕಿಱಿದೆನಬಹುದೆ ಪರುಷಮಂ
ಭಾಪುವೆಮ್ಮಯ್ಯಬಾಯಿತ್ತ ಬಾಯೆಂದಪ್ಪಿ
ಭೂಪ ಸಿಂಹಾಸನದ ಬಲದ ಭಾಗದೊಳಿಂಬುಗೊಟ್ಟು ಕುಳ್ಳಿರಿಸಿಕೊಂಡು
ಕೂಪ ಸಚಿವರೊಳೆಂದ ನೋಡಿರೈ ಈ ಹಿರಿಯ
ಪಾಪಿಗಳೊಳಾರುವಱಿಯದ ಲಿಪಿಯನೋದಿದ ಮ
ಹಾಪರುಷ ಕಿಱಿದೆಯೆನೆನೆರವಿ ತಲೆಗುತ್ತಿ ನೆಲನಂ ಬರೆದುದೇಂ ಪೊಗಳ್ವೆನು ||೨೫||
ಇಟ್ಟಿಮುಱಿಯಿತ್ತು ತಾರ್ಕಿಕರೊಡಲ ಶೂಲದಿಂ
ದಿಟ್ಟಂತೆಯಾ ಪ್ರಭಾಕರರ್ಗಳೆದೆ ಚಾರ್ವಾಕ ನಾನಾಭಾಷೆ ದೇಶಿಕರ
ನೆಟ್ಟನುರಿಗುತ್ತಿದಂತಾರುಹತ ಬೌದ್ಧ ಬರುಬೋಧಕರ ಬದಿಯಲಲಗ
ಹೆಟ್ಟಿದಂತಾಯ್ತು ನಾನಾಭಾಷೆ ದೇಶಿಕರ
ಕಟ್ಟೂರಿಸಿತು ಸಿದ್ಧರದ್ವೈತ ಸಮಯಿಗಳ
ಮೆಟ್ಟಿ ಸೀಳಿತು ನಿಮ್ಮ ಬಸವಣ್ಣನೋದು ವಾದಿಗಳ ಮುಂಬಲ್ಗಳೆದುದು ||೨೬||
ಬಸಿರ ಕಿಚ್ಚಿಂಗೆ ಬಣಬೆಯಂ ಸುಡುವನಂತೆ ತಾ
ಮಸಿಗರಱಿಯರ್ಭೂಪ ನಿನ್ನ ಮಹದೈಶ್ವರ್ಯ
ವಸುಮತಿಯಱಿಯೆ ಪೆರ್ಚಲೆಂದು ಶಶಿಶೇಖರಾಜ್ಞಾನುಸಾರದಿ ಬಂದುದು
ಕುಶಲತೆಯು ನಿನಗೆ ಸಂತಸದೆಸಕ ಮುಂದೆನ
ಲ್ಬಸವೇಶನೆಡೆಗೆ ಬಂದಸಮಾನ ಲಿಪಿಯ ವಾ
ಚಿಸಿದ ತೆಱತದ್ದ್ರವ್ಯಮಿಹ ತಾಣಮಂ ತೋಱಿ ಪಾಲಿಸೆನಲರ್ತಿಯಿಂದ ||೨೬||
ಚಾಳುಕ್ಯಚಕ್ರೇಶನಿದು ನಿಜದ ನಿಱಿಗೆಯೆಂ
ದೇಳಲೊಡೆ ಮುಂಕೊಂಡು ಮುಂ ಧನವ ಬೈತಿಟ್ಟ
ಮೂಲಿಗನೊಲಮ್ಮಮ್ಮ ನಡೆದು ನಿಕ್ಷೇಪದೆಡೆಗೈದಿ ಹರಶರಣೆನುತ್ತ
ಭಾಳಲೋಚನ ಶರಣು ಭರ್ಗ ಶರಣುಗ್ರ ತ್ರಿ
ಶೂಲಿ ಶರಣಂಬಿಕಾಪತಿ ಶರಣು ದುರಿತರಿಪು
ನೀಲಕಂಠನೆ ಸಂಗಮೇಶ ಶರಣೆಂದು ನಿಧಿಯಂ ಮೆಟ್ಟಿ ನಿಂದಿರ್ದನು ||೩೦||
ಇದೆಯಿಲ್ಲಿ ದಾತಾ ಮಾತಾವಯಸ್ತಂಭವಾ
ಯಿದೆಯಿಲ್ಲಿ ಇಂದಿರಾನಂದಲಾವಣ್ಯರಸ
ಮಿದೆಯಿಲ್ಲಿ ಸಂಕ್ರಂದನ ಲೋಕವಾರೂಢ ಭೋಗ ಭಾಗ್ಯಾಗಂತುಕ
ಇದೆಯಿಲ್ಲಿ ಧನದನಾಪತ್ಕೋಶ ನಿತ್ಯನಿಧಿ
ಇದೆಯಿಲ್ಲಿ ಸಕಲಸಂಪತ್ಕರನಿಧಾನಫಲ
ಇದೆಯಿಲ್ಲಿ ಭೂಪ ತೆಗೆಸೈ ತೆಗೆಸು ಲಿಪಿಯಾರ್ಥದರ್ಥದೋಱುವೆನೆಂದೆನೆ ||೩೧||
ಹಾರೆಕಾಱರು ಸಲಿಕೆಕಾರ ಗುದ್ದಲಿಕಾಱ
ಗೋರಿಕಾಱರ್ಕವಿದು ಬಂದು ತನ್ಮುಖದಿ ಹೊಡೆ
ದಾರಿಯಗೆಯಲ್ಕೊಂದು ತೆಱದ ಭೈರವ ಭೂತ ಭೇತಾಳ ಪ್ರಳಯಗ್ರಹ
ತೋಱಿ ತವದಿರ ಕಣ್ಗೆ ಉರಗ ವ್ಯಾಘ್ರತಿಚಂಡ
ಘೋರ ಭಯ ಹೊಯ್ದು ಬೊಬ್ಬಿಡುತೋಡಲೇನದಱ
ಕಾರ್ಯ ಭಿಕ್ಷವನೊಲ್ಲೆನಾಯ ತೆಗೆಯೆಂಬವೊಲಾಯ್ತಾವುದಿದಕುಪಮಾನವು ||೩೨||
ಎನಲು ಪಂಚಾಕ್ಷರಿಯ ಜಪಿಸುತನಿತಗಲದೊಳು
ಘನತ್ರಿಪುಂಡ್ರಂದಳೆವುತೆನ್ನನೀಕ್ಷಿಸುತಗೆಯಿ
ರೆನುತಭಯವಿತ್ತೆಲ್ಲರಂ ಬರಿಸಿ ತಾ ನಿಂದು ಬಳಸಗೆಸಲೊಡನೆ ಮುಗುಳೆ
ಕನಕ ಕಣ್ದೆಱೆದುದೀತನ ಭಕ್ತಿಯುನ್ನತಿಯ
ದಿನಕರ ದೆಸೆಯ ಬೆಳಗುವಂತೆ ರಾಯನ ಭಾಗ್ಯ
ವನಿತೆಯಂ ಭೂಕಾಂತೆ ಪಡೆದಳೆನೆ ನಿಧಿನಿಧಾನಂ ರೂಪು ನಿಜದೋಱಿತು ||೩೩||
ರಾಜನುತ್ಸಹದಿಂದೆ ರಾಜಿಸುತಖಿಲ ಸಭಾ
ರಾಜರಾಹಾ ವಿರಾಜಿತ ಮೌಳಿದೂಗಿದರು
ಮೂಜಗದೊಳಿಲ್ಲದಚ್ಚರಿಯೆಂದು ವಿದ್ಯಾಧಿರಾಜ ಪ್ರಮುಖರೆಲ್ಲರು
ರಾಜನಂ ರಾಜರಾಜಾಧೀಶನಂ ಬಸವ
ರಾಜನಂಗವ ರಾಜಶೇಖರನೆ ಬಲ್ಲನೆಂ
ದಾ ಜನಂ ಕೈಯೆತ್ತಿ ಪೊಡವಡುತ್ತಿರ್ದರಪ್ರತಿಮನಪ್ರತಿಮನೆಂದು ||೩೪||
ಆವ ಕಡೆ ನೋಳ್ಪಡೊಡ್ಡೈಸೆ ಬಹ ಪುರಜನಗ
ಳಾವಕಡೆ ನೋಳ್ಪೊಡೊಡ್ಡೈಸಿ ಬಹ ನಾರಿಯರ
ದಾವಕಡೆ ನೋಳ್ಪೊಡೊಡ್ಡೈಸಿ ಬಹ ಪರಿವಾರ ಪಲತೆಱದ ವಾದ್ಯಂಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ತೇಜಿಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ರಥವಾಜಿ
ಆವಕಡೆ ನೋಳ್ಪೊಡೊಡ್ಡೈಸಿ ಬಹ ಗಜಘಟಾಳಿಗಳೆಲ್ಲಂ ಸಿಂಗರದೊಳು ||೩೯||
ಆ ಪುರದೊಳೆಲ್ಲ ಮೆಱೆಸುತ್ತ ತನ್ನರಮನೆಗೆ
ಭೂಪ ಬಿಜಯಂಗೆಯ್ಸಿಕೊಂಡು ಬಂದುನ್ನತಾ
ಳಾಪ ಪ್ರಧಾನ ಪಟ್ಟಂಗಟ್ಟಿದನು ರಾಷ್ಟ್ರಪುರಕೆ ಭಂಡಾರಕ್ಕೆಲ್ಲ
ಈ ಪುರೋಹಿತರಿಗೀ ಸಚಿವ ಕರಣಕ್ಕೆಲ್ಲ
ನೀ ಪರಮಪಾಲಕಾಗ್ರಣಿಯೆಂದು ವೊರೆದು ಮ
ದ್ರೂಪ ದಂಡಾಧೀಶ ಬಸವರಸರೆಂದೊಸಗೆವಱೆಗಳಂ ಮೊಳಗಿಸಿದನು ||೪೭||
ರಾಜೋಪಚಾರ ರಚನಾಳಾಪಕೇನುಳ್ಳ
ತೇಜಸಂಪದವಿತ್ತು ಬಹಳಪ್ರಯತ್ನದಿ ವಿ
ರಾಜಿಪುನ್ನತದ ಒಂದರಮನೆಯ ಕೊಟ್ಟು ತಾ ಗೃಹಪ್ರವೇಶಂಗೆಯಿಸಲು
ಮೂಜಗಂ ಮೋಹನಂಗೊಳಲು ಮಂಗಳಕುಳಸ
ಮಾಜಗಳ ಕೈಗೊಳಿಸಿ ಕಳುಪೆ ಪುರದೊಳು ಬಸವ
ರಾಜರಾಜಿತನು ಬಂದರಮನೆಯ ಹೊಕ್ಕು ಸಂಗಮನಾಥ ಶರಣೆನುತಲೆ ||೪೮||
ಆಗಣಸಮೇಳದೊಳು ಸುಖಮಿರುತೆ ರಾಜವಿನಿ
ಯೋಗದೊಳು ಮೈದೋಱಿರಲ್ಕೆ ವಿಶ್ವಾಸ ಸ್ವಯ
ಮಾಗಿ ಮನಬೇಱಿಲ್ಲದಿರಬೇಕೆನುತ್ತರಸ ನೆನೆದನೊಂದನುಬಂಧವ
ಆಗ ತಾತನ ಪಿಂತೆ ಸಂಗೀತಚೂಡಾಮ
ಣ್ಯಾಗಳಾ ಬಲ್ಲಹನೊಳೆಮ್ಮ ತಾಯ್ಸಹಗಮನ
ವಾಗಲಾ ದಿನಕೆಮ್ಮ ತಮ್ಮ ಕರ್ನಹದೇವ ಬಾಲನಿಗಿರಲಾತನ ||೫೨||
ಲೀಲೆಯಿಂ ಮೊಲೆಯೂಡಿ ಸಲಹಿದಳು ಮಂತ್ರಿಕುಲ
ಪಾಲ ಸಿದ್ಧರಸದಣ್ಣೌಯಕರರಸಿ ಪುಣ್ಯ
ಶೀಲದೇವತೆ ಪದ್ಮಗಂಧಿಯಾಕೆಯ ಉದರದಲಿ ಬಳಿಕ ಜನಿಸಿದಾಕೆ
ನೀಲಲೋಚನೆ ಯೆಮಗೆ ತಂಗಿಯಾಗಿಹಳಾಕೆಯನು
ನೀಲಲೋಚನ ಬಸವಗೀವೆನೆನುತುತ್ಸಾಹ
ದಾಳಾಪದಲಿ ಪಟ್ಟವಧುವೆಂದು ಮದುವೆಯಂ ಮಾಡಿದಂ ನೃಪ ಬಸವಗೆ||೫೩||