ಶ್ರೀ ಕುಮಾರೇಶ್ವರರ ದಿವ್ಯ ಭೋದನೆಯ ಲೇಖನ ಮಾಲೆ-1 ಅರ್ಚನೆ

ಲೇಖಕರು : ಪೂಜ್ಯಶ್ರೀಮರಿಕೊಟ್ಟೂರುದೇವರು, ಶ್ರೀಜಗದ್ಗುರುಕೊಟ್ಟೂರುಸ್ವಾಮಿಶಾಖಾಮಠ, ಶ್ರೀಧರಗಡ್ಡೆ

 “मनुष्याणां सहस्रेषु कश्चिद्यतति सिद्धये, यततानामपि सिद्धानां कश्चिन् मांम् वेत्ति तत्त्वतः”

                   (ಸಾವಿರಾರು ಜನರಲ್ಲಿ ಎಲ್ಲೋ ಒಬ್ಬರು ಆತ್ಮ ಸಿದ್ಧಿಗಾಗಿ ಶ್ರಮಿಸುತ್ತಾರೆ. ಹೀಗೆ ಆತ್ಮಸಿದ್ಧಿಗಾಗಿ ಶ್ರಮಿಸುವವ ರಲ್ಲಿ ಯಾರೋ ಒಬ್ಬರು ಮಾತ್ರ ತತ್ವತಃ ನನ್ನನ್ನು ತಿಳಿಯುತ್ತಾರೆ ಮತ್ತು ಹೊಂದುತ್ತಾರೆ). = Gita.

                12ನೇ ಶತಮಾನದ ಬದಲಾವಣೆಯು  ಮಾನವ ಇತಿಹಾಸದಲ್ಲಿಯೇ ಮಹತ್ವದ ಘಟ್ಟವಾಗಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು  ತಾತ್ವಿಕವಾಗಿ ಜನಸಾಮಾನ್ಯರಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರಿದೆ. ಶರಣರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳು ಅಗೆದಷ್ಟು ಆಳ, ತರ್ಕಿಸಿದಷ್ಟು ಘಹನ ಮತ್ತು ಉಹೆಗೆ ನಿಲುಕದಷ್ಟು ವಿಶಾಲವಾಗಿವೆ. ಶರಣರೆಲ್ಲರೂ ಶರಣಾಗತಿಯ ಭಾವದಿಂದ ಭಗವಂತನನ್ನು ಆರಾಧಿಸಿ, ಅರ್ಚಿಸಿ ಮಾನವನು ಭಗವಂತನಲ್ಲಿ ಒಂದಾಗುವ ಪ್ರಕ್ರಿಯೆಯನ್ನು ಲೋಕಕ್ಕೆ ಅರುಹಿದರು.

                   ಕಾಯದ ಪರಿಶುದ್ಧತೆಗಾಗಿ ಕಾಯಕವನ್ನು ಕಲಿಸಿ, ಧನದ ಪರಿಶುದ್ಧತೆಗಾಗಿ ದಾಸೋಹವನ್ನು ನೀಡಿ, ಆತ್ಮದ ಪರಿಶುದ್ಧತೆಗಾಗಿ ಶಿವಯೋಗವನ್ನು ಕಲಿಸಿ,  ಜಾತಿ-ಮತ- ಪಂಥ ಗಳೆನ್ನದೆ ಎಲ್ಲರ ಮನೆ-ಮನಗಳಲ್ಲಿ  ಶಿವಯೋಗದ ಜ್ಯೋತಿಯನ್ನು ಬೆಳಗಿದವರು ಬಸವಾದಿ ಪ್ರಮಥರು.

                        ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣಗಳು – ಅರ್ಚನೆ, ಅರ್ಪಣೆ ಮತ್ತು ಅನುಭಾವ. ಈ ಮೂರು ಪ್ರಕ್ರಿಯೆ ಗಳು ಸಾಧಕನಲ್ಲಿ ವಿಶೇಷವಾದಂತಹ ಪ್ರಭಾವವನ್ನು ಬೀರುತ್ತವೆ. ಮೊದಲು ಭಗವಂತನನ್ನು ಪರಿಶುದ್ಧ ಭಾವದಿಂದ ಪೂಜಿಸುವುದು. ಆ ಭಗವಂತನಿಂದ ಬಂದ ಪದಾರ್ಥಗಳನ್ನು ಭಗವತ್ ಪ್ರಸಾದವೆಂದು ಸ್ವೀಕರಿಸುವುದು ಮತ್ತು ಭಗವಂತನನ್ನು ಕುರಿತು ಚಿಂತನೆಗೈಯುವದು. ಭೂಟಾಟಿಕೆಗಾಗಿ, ತೋರಿಕೆಯಾಗಿ ಮಾಡುವ ಭಕ್ತಿ ಕಲ್ಮಶಯುಕ್ತ ವಾದದ್ದು, ಇದರಿಂದ ಯಾವ ಪ್ರಯೋಜನವೂ ಇಲ್ಲ ಅಂತರಂಗದಲ್ಲಿ ಆತನನ್ನು ಅರ್ಚಿಸಬೇಕು ಎಂಬುವುದನ್ನು ಮೋಳಿಗೆ ಮಾರಯ್ಯನವರು ತಮ್ಮ ನುಡಿಗಳಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.

        ನಿನಗೆ ಮಜ್ಜನವ ಮಾಡುವಲ್ಲಿ ನಾ ಮಲದೇಹಿ

        ನೀ ನಿರ್ಮಲದೇಹಿ.

        ನಿನಗೆ ಪೂಜೆಯ ಮಾಡುವಲ್ಲಿ ನಾ ಕರ್ಮಜೀವಿ

        ನೀ ಪುಣ್ಯಜೀವಿ.

        ನಿನಗೆ ಗಂಧವ ಪೂಸುವಲ್ಲಿ ನಾನು ದುರ್ಗಂಧಜೀವಿ

        ನೀನು ಸುಗಂಧಜೀವಿ.

        ನಿನಗೆ ಅಕ್ಷತೆಯ ನಿಕ್ಕುವಲ್ಲಿ ನಾ ಲಕ್ಷಿತ

        ನೀ ಅಲಕ್ಷಿತ.

        ನಿನಗೆ ಧೂಪವನಿಕ್ಕುವಲ್ಲಿ ನಾ ಭಾವಿತ

        ನೀ ನೀರ್ಭಾವಿತ

        ನಿನಗೆ ದೀಪವನ್ನೆತ್ತುವಲ್ಲಿ ನಾ ಜ್ಯೋತಿ

        ನೀ ಬೆಳಗು

        ಇಂತಿ ಭಾವಂಗಳಲ್ಲಿ ಭಾವಿಸಿ ಕಂಡಿಹೆನೆಂದಡೆ ನೀ

        ಭಾವಕೆ ಅಗೋಚರನಾಗಿಪ್ಪೆ.

 ನಿನ್ನನ್ನರಿವುದಕ್ಕೆ ತೆರನಾವುದೆಂದಡೆ ಗುರುವಿಂಗೆ ತನು,

ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು ದಗ್ದಪಟದಂತೆ ರೂಪಿಂಗೆ ಹೊದ್ದಿಗೆಯಾಗಿದ್ದ ಭಕ್ತನಲ್ಲಿ ತಪ್ಪದೇ ಇಪ್ಪೆಯಯ್ಯಾ ನಿಃಕಳಂಕ ಮಲ್ಲಿಕಾರ್ಜುನ..

          ದೇವರ ಪೂಜೆಯನ್ನು ಮಾಡಲು ಭಕ್ತನು ದೇವರಿಗೆ ಮಜ್ಜನ ಮಾಡಿಸುವುದು ಅವಶ್ಯಕವೇ? ಮಜ್ಜನ ಮಾಡಲು ಅವನೇನು ಮೈಲಿಗೆಯಾಗಿರುವನೇ? ಎಂದು ಕೇಳುತ್ತಾ ಕಲ್ಮಶ ಹೊಂದಿದ ಮನುಷ್ಯನು ಮೊದಲು ತನ್ನ ಮನಸ್ಸನ್ನು ತೊಳೆದುಕೊಳ್ಳಬೇಕು. ದೇವರ ಪೂಜೆಯಿಂದ ತನ್ನ ಕರ್ಮವನ್ನು ಮರೆತು ಬಿಟ್ಟರೆ ಪುಣ್ಯಜೀವಿ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ದುರ್ಗಂಧ ವಾಸನೆ ಹೋಗಿಸಲು ದೇವರ ಹೆಸರಿನಲ್ಲಿ ಧೂಪವನ್ನು ಹಾಕುವದಕ್ಕಿಂತ ತನ್ನಲ್ಲಿರುವ ದುರ್ಗಂಧ ತನುವನ್ನು ತೊಳೆದುಕೊಳ್ಳಬೇಕೆ ವಿನಃ ದೇವರಿಗಾಗಿ ಸುಗಂಧವನ್ನು ಲೇಪಿಸುವುದಲ್ಲ. ಅರ್ಚನೆ ಅಕ್ಷತೆಯನ್ನು ಹಾಕುತ್ತಾ ನೇಮವನ್ನು ಮಾಡುತ್ತಾನೆ ಹೊರತು ತಾನು ನಿಯಮಗಳನ್ನು ಪಾಲಿಸುವುದಿಲ್ಲ. ಜಗತ್ತಿಗೆ ಬೆಳಕನ್ನು ಕೊಡುವ ದೇವರಿಗೆ ದೀಪ ಹಚ್ಚುವ ಮನುಜ ಮೊದಲು ತನ್ನ ಅಂಧಕಾರವನ್ನು ಕಳೆದುಕೊಳ್ಳಬೇಕು. ಇದನ್ನು ಬಿಟ್ಟು ಕೇವಲ  ಭೂಟಾಟಿಕೆಗಾಗಿ ಡಂಬಾಚಾರಗಳಿಂದ ದೇವನನ್ನು ಅರ್ಚಿಸುವುದು ವ್ಯರ್ಥವೇ ಸರಿ. ಅವನನ್ನು ಪಡೆದುಕೊಳ್ಳಬೇಕಾದರೆ ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ಜಂಗಮಕ್ಕೆ ಧನವನ್ನು ಅರ್ಪಿಸುವುದರ ಮೂಲಕ ತನ್ನನ್ನು ತಾನು ಸಮರ್ಪಿಸಿ ಕೊಂಡಾಗ ಮಾತ್ರ ದೇವರ ಇರುವಿಕೆ ಅರಿಯಲು ಸಾಧ್ಯವೆಂಬುದನ್ನು ತಿಳಿಸುತ್ತಾ ಅಂತರಂಗದ ಪೂಜೆಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ.

     “”ಸುಪ್ರಭಾತ ಸಮಯದ ಅರ್ತಿಯಲ್ಲಿ ಲಿಂಗವ ನೆನೆದರ

       ತಪ್ಪುವವಯ್ಯ ಅಪಮೃತ್ಯು ಕಾಲಕರ್ಮಂಗಳು””-

              ಎಂಬ ಬಸವ ವಾಣಿಯಂತೆ ಬಾಳಿ ಬದುಕಿರುವವರು ನಮ್ಮ ನಾಡಿನ ಸಂತರು ಶರಣರು. ಈ ನಾಡಿನಲ್ಲಿ ಆಗಿಹೋದ ಸಿದ್ದರು ಸಾಧಕರು ಬೈರಾಗಿಗಳು ಶರಣರು ತಾಂತ್ರಿಕರು ತಮ್ಮ ತಮ್ಮದೇ ಆದ ವಿಶಿಷ್ಟ ಮಾರ್ಗಗಳಿಂದ ದಿವ್ಯತೆಯನ್ನು ಹೊಂದಿದರು. ಪ್ರಾಣದ ಚಲನೆಯನ್ನು ನಿರ್ದಿಷ್ಟ ಗೊಳಿಸಿ, ಅದರ ಓಡಾಟದಿಂದ ಆತ್ಮನ ನೆಲೆ ಸೇರುವ ಸೂಕ್ಷ್ಮ ದಾರಿಯನ್ನು ಕಂಡುಕೊಂಡರು. ವೇದ ಉಪನಿಷತ್ತುಗಳ ಕಾಲದಲ್ಲಿ ನಮ್ಮ ಋಷಿಮುನಿಗಳಿಗೆ ತಿಳಿದಿದ್ದ ಈ ಉಪಾಸನಾ ಮಾರ್ಗ ಬಹುದಿನಗಳವರೆಗೆ ಮಾಯವಾಗಿ ಈಚೆಗೆ 12ನೇ ಶತಮಾನದಲ್ಲಿ ತನ್ನ ದಿಟ್ಟ ನೆಲೆಯೂರಿತು. ನಂತರದ ಕಾಲದಲ್ಲಿ 15ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗೇಶ್ವರ, ಪ್ರೌಢದೇವರಾಯನ ಕಾಲದಲ್ಲಿ ಮತ್ತು 19ನೇ ಶತಮಾನದಲ್ಲಿ ಅಥಣಿ ಮುರಿಗೇಂದ್ರ ಶಿವಯೋಗಿಗಳ ಹಾನಗಲ್ ಕುಮಾರ ಶಿವಯೋಗಿಗಳ ಕಾಲದಲ್ಲಿ ತನ್ನ ಅಸ್ತಿತ್ವ ಪಡೆಯಿತು. ಎಳಂದೂರು ಬಸವಲಿಂಗ ಶಿವಯೋಗಿಗಳ ತಪೋ ಶಕ್ತಿಯಲ್ಲಿ ಮಿಂದ ಶ್ರೀಕುಮಾರ ಮಹಾಶಿವಯೋಗಿಗಳು ಗುರುಗಳ ಆಣತಿಯಂತೆ ಅನುಷ್ಠಾನವನ್ನು ಕೈಗೊಂಡರು ಆತ್ಮಶಕ್ತಿಯನ್ನು ಸಾಧಿಸಿದರು

        “ಸಮಾಜ ಸೇವೆಗಿಂತ ಅಧಿಕ ತಪವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಯೋಗವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಪುಣ್ಯವಿಲ್ಲ,

         ಸಮಾಜ ಸೇವೆಗಿಂತ ಅಧಿಕ ಆನಂದವಿಲ್ಲ” ಇದು ಕಾರಣ “ಜನಸೇವೆಯೇ ಜನಾರ್ದನ ಸೇವೆ” ಎಂದು ನಂಬಿ ಒಂದು ಕೈಯಲ್ಲಿ ಲಿಂಗಪೂಜೆ ಇನ್ನೊಂದು ಕೈಯಲ್ಲಿ ಸಮಾಜ ಸೇವೆ ಯನ್ನು ಕೈಗೊಂಡು ತಮ್ಮ ಜೀವನದುದ್ದಕ್ಕೂ ಅರ್ಚನೆ ಅರ್ಪಣೆ ಮತ್ತು ಅನುಭಾವಗಳ ಸಮ್ಮಿಶ್ರಣವಾದ ಬದುಕನ್ನು ಬಾಳುತ್ತಾ ನಿಜ ಚರಜಂಗಮರಾಗಿ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬ ತತ್ವದಡಿಯಲ್ಲಿ ನಿರಂತರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಶಿವಯೋಗದ ಶಕ್ತಿಯನ್ನು ಧಾರೆ ಎರೆದರು.   ಈ  ಶಿವಯೋಗದ ಶೆಲೆ ನಾಡಿನಲ್ಲಿ ಎಂದೂ ಬತ್ತದ ಶೆಲೆಯಾಗಿ ತನ್ನ ಅಂತಃಸತ್ವವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾ ಶಿವಯೋಗಿಗಳು ಶಿವಯೋಗಮಂದಿರವೆಂಬ ಮಹಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ತಪಃಶಕ್ತಿಯನ್ನು ಸಮಾಜಕ್ಕೆ ನಿರಂತರವಾಗಿ ನೀಡುತ್ತಿದ್ದಾರೆ. ನಾವೆಲ್ಲರೂ ಸಹ ಈ ಪುಣ್ಯಮಯ ಪರಿಸರದಲ್ಲಿ ಒಂದಾಗಿ ಅದರ ಸವಿಯನ್ನು ಸವಿಯೋಣ.

                 ಹೀಗೆ ಎಲ್ಲದಕ್ಕೂ ಮೂಲ ಭಗವದನುಗ್ರಹ. ಇದನ್ನು ಪಡೆಯಲು ಮಾರ್ಗಗಳು ಹಲವಾರು, ಹತ್ತಾರು ಆದರೆ ಆತ್ಯಂತಿಕ ಗುರಿ ಮಾತ್ರ ಒಂದೇ.ಆ ದಿವ್ಯತೆಯನ್ನು ಕಂಡುಕೊಳ್ಳುವ ಶಕ್ತಿಯನ್ನು ಮಹಾಗುರುಗಳು ನಮಗೆಲ್ಲರಿಗೂ ದಯಪಾಲಿಸಲಿ ಎಂಬ ಪ್ರಾರ್ಥನೆಯೊಂದಿಗೆ ನನ್ನ ಅನಿಸಿಕೆಗಳು ಗುರು ಪಾದಂಗಳಿಗೆ ಸಮರ್ಪಣೆ, ತಮಗೆಲ್ಲರಿಗೂ ಶರಣು ಶರಣಾರ್ಥಿಗಳು..

 ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು  ನಿಂದಾತನೆ ಸುಖಿ, ಪಂಚೇಂದ್ರಿಯಗಳಿಚ್ಚೆಯಲ್ಲಿ ಕೀಳು ಮನಂಗೊಟ್ಟು ಸುಳಿವಾತನೆ ದುಃಖಿ, ಮನವು ಬಹಿರ್ಮುಖ ವಾಗಲು ಮಾಯಾ ಪ್ರಪಂಚಿ, ಮನವು ಅಂತರ್ಮುಖವಾದೊಡೆ ಅವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಿರಲಾತ ಮುಕ್ತನು, ಮನೋರ್ಲಯವಾದೊಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು.

Related Posts