“ಸದಾಶಿವ”ನ ಐದು ಸೃಷ್ಟಿಗಳು

ಶ್ರೀ ಬುದ್ಧಯ್ಯನವರು, ಪುರಾಣಿಕ

ಪುರಾಣಗಳಲ್ಲಿಯ ಸದಾಶಿವನು ತನ್ನ ವಿನೋದಕ್ಕೆಂದು ಚರಾಚರ ಸೃಷ್ಟಿಯನ್ನು ನಿರ್ಮಿಸಿದರೆ ಹಾನಗಲ್ಲ ಸದಾಶಿವ ಯೋಗಿಯು ಲೋಕದ ಜನರು ಸುಖಿಗಳಾಗಲೆಂದು ಹೊಸಯುಗವನ್ನೇ ನಿರ್ಮಿಸಿದನು. ಆ ಸದಾಶಿವನದು ಸ್ವಾರ್ಥ ಸೃಷ್ಟಿ, ಈ ಸದಾಶಿವಯತಿಯದು ಪರಾರ್ಥ ಸೃಷ್ಟಿ, ಈ ಯತಿವರನ ಜೀವನವೇ ಒಂದು ಪರಾರ್ಥ ಲೀಲೆಯಾಗಿ ಪರಿಣಮಿಸಿತು.

ಸದಾಶಿವಯತಿಯು ಅನಿಮಿತ್ತ ಬಂಧು ಶಂಭುಲಿಂಗನ ಸನ್ನಿಧಿಯಲ್ಲಿ ತಪವ ಮಾಡಿ ಲೋಕದ ಕಷ್ಟವನ್ನು ನಿರೀಕ್ಷಿಸಿದನು. ಆ ನಿರೀಕ್ಷಣೆ ಕಾರಣಿಕ ಇಚ್ಛೆಗೆ ಪ್ರೇರಣೆಯನ್ನು ನೀಡಿತು. ಆ ಇಚ್ಚೆಯೆ ಹೊಸ ಸೃಷ್ಟಿಗೆ ಚೈತನ್ಯ ಕೊಟ್ಟಿತು. ಹಾನಗಲ್ಲ ಶ್ರೀ ಸದಾಶಿವಯೋಗಿಗಳ ಪವಿತ್ರ ಇಚ್ಛಾಶಕ್ತಿಯ ಶಿವಯೋಗಮಂದಿರ ಮಹಾಸಭೆಗಳ ರೂಪದಲ್ಲಿ ಮೈದಾಳಿ ಬಂದಿತು. ದಿವ್ಯ ದೃಷ್ಟಿಯಿಂದ ದಿವ್ಯ ಸೃಷ್ಟಿಯಾಯಿತು.

ಮಾನವ ಜೀವನ ದೃಷ್ಟಿ ಲೌಕಿಕ ಪಾರಮಾರ್ಥವೆಂದು ಎರಡು ವಿಧ. ಅವೆರಡನ್ನು ಶ್ರೀಗಳವರು ಎರಡು ಸಂಸ್ಥೆಗಳಿಂದ ಸಾಧಿಸಿದರು. ಶ್ರೀಗಳ ಅಂತಃಶಕ್ತಿಯೆ ಐದು ದೃಷ್ಟಿಗಳಲ್ಲಿ ಒಡಮೂಡಿತು. ಶಿಕ್ಷಣ ,ಮುದ್ರಣ, ರಕ್ಷಣ, ಉದ್ಯಮ, ವಾಣಿಜ್ಯ, ಇವು ಶ್ರೀಗಳವರ ಐದು ದೃಷ್ಟಿಗಳು. ಅವುಗಳಿಂದ ಐದು ಸೃಷ್ಟಿಗಳಾದವು.

೧, ಶಿಕ್ಷಣ ಸೃಷ್ಟಿ

ಲೌಕಿಕ ಪಾರಮಾರ್ಥವೆಂದು ಶ್ರೀಗಳವರ ಶಿಕ್ಷಣ ಎರಡು ತೆರನಾಗಿತ್ತು. ಶಿವಯೋಗಮಂದಿರದಲ್ಲಿ ಅವೆರಡೂ ಶಿಕ್ಷಣಗಳ ಸಮನ್ವಯ ಸುಂದರವಾಗಿತ್ತು, ಮಾನವನ ವ್ಯವಹಾರವೆಲ್ಲ ಭಾಷೆಗಳ ಪರಿಜ್ಞಾನದಿಂದ ನಡೆಯಬೇಕು. ಸಮಾಜದ ಮಕ್ಕಳು ಮೊದಲು ಮಾತೃಭಾಷೆಯಾದ ಕನ್ನಡ ಕಲಿಯಲೆಂದು ಅನೇಕ ಪ್ರಾಥಮಿಕ ಶಾಲೆಗಳನ್ನು ಶ್ರೀಗಳವರು ಸ್ಥಾಪಿಸಿದರು,

ಧರ್ಮ ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷೆಯ ಶಿಕ್ಷಣ ಅವಶ್ಯಕ, ಅದನ್ನು ಕಲಿಸುವ ಪಾಠಶಾಲೆಗಳನ್ನು ನಾಡಿನಲ್ಲಿ ಮೊದಲು ಸ್ಥಾಪಿಸಿದವರು ಶ್ರೀಗಳವರೆ; ಕಾಶಿಯಲ್ಲಿ ಪ್ರೌಢ ಶಿಕ್ಷಣ ಪಡೆಯಲು ಅರ್ಥಿಕ ಸಹಾಯ ನೀಡಿ ಪಂಡಿತ ಮತ್ತು ಶಾಸ್ತ್ರಿ ವರ್ಗವನ್ನು ಮುಂದೆ ತಂದರು, ಸಮಾಜದಲ್ಲಿ ಸಂಸ್ಕೃತ ಪಂಡಿತ ವರ್ಗ ಇಲ್ಲದಿದ್ದರೆ ಪರಳಿಯ ಪ್ರಕರಣದಲ್ಲಿ ಸಮಾಜಕ್ಕೆ ವಿಜಯ ಸಿಕ್ಕುವದು ಸಾಧ್ಯವಿರಲಿಲ್ಲ, ಸಂಸ್ಕೃತ ಶಿಕ್ಷಣ ಪ್ರಸಾರಕ್ಕೆ ಶ್ರೀಗಳವರು ಕೊಟ್ಟ ಪ್ರೋತ್ಸಾಹ   ಪರಿಮಿತವಾದುದು, ಶ್ರೀಗಳವರು ‘ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ವಿಚಾರ ಮಾಡಿದರು .ಶಿವಯೋಗಮಂದಿರದಲ್ಲಿ ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರಗಳ ಕ್ರಮವಾದ ಶಿಕ್ಷಣ ನಿರಂತರವಾಗಿ ಸಾಧಕರಿಗೆ ಸಿಗುವ ವ್ಯವಸ್ಥೆಯನ್ನು ಮಾಡಿದರು. 

ಧರ್ಮಪ್ರಸಾರವನ್ನು ಜನಮನರಂಜನೆಯಾಗುವಂತೆ ನಡೆಸಬೇಕೆಂದು ಅವರು ಗಾಯನ ವಿದ್ಯೆಗೆ ಉತ್ತೇಜನಕೊಟ್ಟರು. ಅವರ ಕೃಪೆಯಿಂದಲೇ ಇಂದು ನಾಡಿನಲ್ಲಿ ಸಂಗೀತ ಕಲೆ ಉಳಿದಿರುವದು, ಪಂ. ಪಂಚಾಕ್ಷರ ಗವಾಯಿಗಳವರ ಶಿಷ್ಯಕೋಟಿ ಹೆಚ್ಚಿ ಜನತೆಯಲ್ಲಿ ಸಂಗೀತ ಕಲೆಯ ಕಡೆಗೆ ಅಭಿರುಚಿ ಹುಟ್ಟುವಂತಾಯಿತು,

ಶ್ರೀಗಳವರು ಆಂಗ್ಲಭಾಷೆಯನ್ನು ಅಲಕ್ಷಿಸಲಿಲ್ಲ. ಅವರದು ಸಂಕುಚಿತ ದೃಷ್ಟಿಯಾಗಿರಲಿಲ್ಲ. ಧರ್ಮ ನಿಷ್ಠರಾದ ಆಂಗ್ಲ ವಿದ್ಯಾವಂತರು ಪರದೇಶಗಳಿಗೆ ಹೋಗಿ ವೀರಶೈವ ಧರ್ಮದರ್ಶನಗಳ ಪ್ರಚಾರ ಮಾಡಬೇಕೆಂಬ ಅವರ ಉದ್ದೇಶ ಸಣ್ಣದಾಗಿರಲಿಲ್ಲ. ಮಂದಿರದಲ್ಲಿ ಯೋಗಸಾಧಕರಿಗೆ ಕನ್ನಡ ಮರಾಠಿ ಭಾಷೆಗಳ ಶಿಕ್ಷಣದೊಂದಿಗೆ ಇಂಗ್ಲೀಷ ಶಿಕ್ಷಣಕ್ಕೂ ಉತ್ತೇಜನ ಕೊಟ್ಟಿದ್ದರು. ಶಿವಯೋಗಮಂದಿರವನ್ನು ಒಂದು ವಿಶಾಲ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸುವಷ್ಟು ಅನುಕೂಲತೆಗಳನ್ನು ಶ್ರೀಗಳವರು ದೂರದೃಷ್ಟಿಯಿಂದ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಒಂದೊಂದೇ ವಿದ್ಯಾಲಯ ಸ್ಥಾಪಿತವಾಗಿ ಪ್ರಗತಿ ಹೊಂದುತ್ತ ಹೋದರೆ ಒಂದಿಲ್ಲ ಒಂದು ದಿನ ಅದು ಆದರ್ಶ ವಿಶ್ವವಿದ್ಯಾನಿಲಯ’ವಾಗುವಲ್ಲಿ ಸಂದೇಹವಿಲ್ಲ.

‘ತ್ಯಾಗರಾಜ’ ಶಿರಸಂಗಿಯ ಲಿಂಗರಾಜರು ಶ್ರೀಗಳವರ ಪ್ರೇರಣೆಯಿಂದಲೇ ತಮ್ಮ ಆಸ್ತಿಯನ್ನೆಲ್ಲ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸದ ಅನುಕೂಲತೆಗಾಗಿ ಧಾರೆಯೆರೆದರು. ಅವರ ಮೃತ್ಯುಪತ್ರದ ಬಗ್ಗೆ ಸುಪ್ರೀಮ್ ಕೋರ್ಟಿನಲ್ಲಿ ನ್ಯಾಯ ನಡೆದಾಗ ಶ್ರೀಗಳವರೇ ಅದಕಾಗಿ ಆರ್ಥಿಕ ಸಹಾಯವನ್ನು ದಯಪಾಲಿಸಿದರಲ್ಲದೆ ಅಭಿಮಾನಿ ಭಕ್ತರಿಂದ ಕೊಡಿಸಿದರು ಮತ್ತು ಶಿವಯೋಗಮಂದಿರ ಸಂಸ್ಥೆಯಿಂದ ಎರಡು ಸಾವಿರ ರೂಪಾಯಿಗಳನ್ನು ಕೊಡಮಾಡಿದರು. ಕೊನೆಗೆ, ಶ್ರೀಗಳವರ ಪರಿಶ್ರಮ ಮತ್ತು ಸದಿಚ್ಛೆಯ ಫಲವಾಗಿ ಸಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ ಫಂಡಿ’ಗೆ ಅನುಕೂಲವಾಗುವಂತೆ ಆಯಿತು. ಈ ಧರ್ಮ ಕಾರ್ಯದ ಗೆಲುವಿಗೆ ಶ್ರೀಗಳವರ ಶ್ರಮ ಸಾಹಸ ಮತ್ತು ನಿರ್ಮಲವಾದ ಹೃದಯವೂ ಕಾರಣವಾಗಿವೆ. ಈಗ ‘ಸಿರಸಂಗಿ ಫಂಡಿ’ ನಿಂದ ಪ್ರತಿವರ್ಷ ನೂರಾರು ಜನ ಪದವೀಧರರು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವರು. ಈ ರೀತಿಯಾಗಿ ಶ್ರೀಗಳವರು ಆಂಗ್ಲ ವಿದ್ಯೆಯ ಪ್ರಗತಿಗೆ ಪ್ರೋತ್ಸಾಹವನ್ನೇ ನೀಡುತ್ತ ಬಂದರು ; ದಯಮಾಡಿಸಿದಲೆಲ್ಲ ಸಣ್ಣ ಪುಟ್ಟ ಇಂಗ್ಲಿಷ ಶಾಲೆ (ಎ.ವ್ಹಿ ಸ್ಕೂಲು) ಗಳಿಗೆ ಧನಸಹಾಯವನ್ನು ಒದಗಿಸುತ್ತಲೆ ಇದ್ದರು. ಶ್ರೀಗಳವರು ಅವಿಶ್ರಾಂತವಾಗಿ ಶ್ರಮಿಸಿ ಸಮಾಜದಲ್ಲಿಯ ಶಿಕ್ಷಣ ಸೃಷ್ಟಿಯ ಪೂರ್ಣ ವಿಕಾಸಕ್ಕೆ ಕಾರಣ ಕರ್ತರಾದರು. ಈ ಶಿಕ್ಷಣ ಕ್ಷೇತ್ರದಲ್ಲಿ ಶ್ರೀಗಳವರು ಮಾತೆಯರನ್ನು ಮರೆತಿರಲಿಲ್ಲ,

೨. ಮುದ್ರಣ ಸೃಷ್ಟಿ

ವೀರಶೈವ ಸಾಹಿತ್ಯ ಧರ್ಮ ಸಂಸ್ಕೃತಿಗಳ ಪ್ರಸಾರವಾಗಬೇಕೆಂದು ಶ್ರೀಗಳು ಹಗಲು ರಾತ್ರಿ ಚಿಂತಿಸುತ್ತಿದ್ದರು. ಪ್ರಸಾರ ಕಾರ್ಯಕ್ಕೆ ಪತ್ರಿಕೆಗಳು ಬೇಕು. ಅಲ್ಪಬೆಲೆಯಲ್ಲಿ ಸಣ್ಣ ಸಣ್ಣ ಅಂದವಾದ ಪುಸ್ತಕಗಳು ಅಚ್ಚಾಗಿ ಜನರ ಕೈಸೇರಬೇಕು. ಪ್ರಕಟವಾಗದಿರುವ ವೀರಶೈವ ವಾಗ್ಮಯವನ್ನು ಪ್ರಕಟಿಸಿ ಪ್ರಚುರಪಡಿಸಬೇಕು. ಇವೆಲ್ಲ ‘ಬೇಕು’ಗಳ ಪರಿಪೂರ್ಣತೆಗಾಗಿ ಶ್ರೀಗಳವರು ಮುದ್ರಣ ಮಂದಿರಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಮನಸ್ಸು ಹಾಕಿದರು. ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದಲ್ಲಿದ್ದ ಮುದ್ರಣ ಯಂತ್ರವು ಧಾರವಾಡದ ಶ್ರೀ ಶಿವಲಿಂಗ ಶಾಸ್ತ್ರಿಗಳವರಿಗೆ ಶ್ರೀಗಳವರಿಂದಲೇ ದೊರೆಯಿತು. ಶ್ರೀಗಳವರ ಕೃಪಾಬಲದಿಂದ ಶಿವಲಿಂಗಶಾಸ್ತ್ರಿಗಳು ‘ಧರ್ಮತರಂಗಿಣಿ’ ಎಂಬ ಧಾರ್ಮಿಕ ಮಾಸ ಪತ್ರಿಕೆಯನ್ನು ಸಂಪಾದಿಸಿ ಸೇವೆ  ಸಲ್ಲಿಸಿದರು. ಗದುಗಿನಲ್ಲಿ ‘ಶ್ರೀಸಿದ್ಧಲಿಂಗ ವಿಜಯ ಮುದ್ರಣಾಲಯ’ವು ಶ್ರೀಗಳವರ ಸಾಹಸದಿಂದ ನೆಲೆಗೊಂಡಿತು, ಈ ಮುದ್ರಣಯಂತ್ರಕ್ಕೆ ಶಿವಯೋಗಮಂದಿರದ ಎರಡು ಸಾವಿರ ರೂಪಾಯಿಗಳು ವೆಚ್ಛವಾಗಿರುವವು. ಈ ಮುದ್ರಣಾಲಯವು ಈಗ ಧಾರವಾಡದ ಲಿಂಗಾಯತ ಹೈಸ್ಕೂಲಿನಲ್ಲಿದ್ದು ಸಮಾಜ ಸೇವೆಯ ಕಾರ್ಯಕ್ಕೆ ಅನುವಾಗಿರುವದು. ಶ್ರೀಗಳವರ  ಧ್ಯೇಯಪೂರ್ತಿಗಾಗಿ ಮಂದಿರದಲ್ಲಿರುವ ಮುದ್ರಣಾಲಯವು ಸುವ್ಯವಸ್ಥಿತವಾಗಿ ನಡೆದು, ಅದರ ಮುಖಾಂತರ ಪತ್ರಿಕೆಗಳು, ಗ್ರಂಥಗಳು ಪ್ರಕಟವಾಗಿ, ಶ್ರೀಗಳವರ ಈ ಮುದ್ರಣ ಸೃಷ್ಟಿಯ ಕಾರ್ಯವನ್ನು ಮುಂದೊಯ್ಯಬೇಕಾಗಿದೆ.

೩. ರಕ್ಷಣ ಸೃಷ್ಟಿ

ಸಾಹಿತ್ಯ ಸಂಸ್ಕೃತಿಗಳ ಜೀವಾಳವಾದ ಪ್ರಾಚೀನ ಓಲೆಗರಿ ಕೋರಿಕಾಗದದ ಹೊತ್ತಿಗೆಗಳು ಸಮಾಜದ ಮನೆ ಮಠಗಳಲ್ಲಿ ಮೂಲೆಗುಂಪಾಗಿದ್ದವು, ಅವೆಚಿ, ಹುಳುಗಳ ಆಹಾರವಾಗಿ ನಿರ್ನಾಮವಾಗಿದ್ದವು. ಶ್ರೀಗಳವರು ದಯಮಾಡಿಸಿದಲ್ಲೆಲ್ಲ ಈ ಸಂಪತ್ತನ್ನು ಹುಡುಕಿ ತೆಗೆದು ಅದನ್ನು ಮಂದಿರದಲ್ಲಿ ಸಂಗ್ರಹಿಸಿಟ್ಟರು; ಶಿವಯೋಗ ಮಂದಿರದ ಗ್ರಂಥಾಲಯದಲ್ಲಿರುವ ಈ ಗ್ರಂಥರಾಶಿಯು ಅಮೂಲ್ಯವಾಗಿದೆ. ಅದನ್ನು ಒಂದು ಮಾದರಿಯ ಸಂಶೋಧನ ಕೇಂದ್ರವ ನ್ನಾಗಿ ಬೆಳೆಯಿಸಬಹುದಾಗಿದೆ. ಅಲ್ಲಿ ಪಂಡಿತರನ್ನು ಆಂಗ್ಲವಿದ್ವಾಂಸರನ್ನೂ ನೇಮಿಸಿ ಶ್ರೀಗಳವರ ಈ ಕಾಯಕವನ್ನು ಪೂರ್ಣಗೊಳಿಸುವ ಭಾರ ಮಂದಿರದ ಸ್ವಾಮಿಗಳನ್ನ ಕೂಡಿದೆ.

ಶ್ರೀಗಳವರು ಭೂರಕ್ಷಣ ಮತ್ತು ಗೋಮಾತೆಯ ಚಾಲನೆಯಲ್ಲಿಯೂ ಲಕ್ಷ ಹಾಕಿದರು, ಒಕ್ಕಲುತನ ಮತ್ತು ದನಗಳ ಪ್ರದರ್ಶನಗಳನ್ನು ಪ್ರತಿ ವರ್ಷ ಶಿವಯೋಗಮಂದಿರದ ಜಾತ್ರೆಯಲ್ಲಿ ನಡೆಸುವ ಪ್ರೇರಣೆಯನ್ನಿತ್ತಿದ್ದರು; ನಮ್ಮ ಭಾರತದ ಯೋಜನೆಗಳು ಕೈಗೂಡಬೇಕಾದರೆ ಭೂಮಿ ಮತ್ತು ಪಶುಗಳ ಸರಿಯಾದ ರಕ್ಷಣೆಯ ಕಾರ್ಯ ನಡೆಯಬೇಕೆಂಬುದನ್ನು ತಮ್ಮ ದಿವ್ಯ ದೃಷ್ಟಿಯಿಂದ ಕಂಡು ಅದನ್ನು ಪ್ರಯೋಗಕ್ಕೆ ತಂದವರಲ್ಲಿ ಅವರೆ ಮೊದಲಿಗರು. ಬರಿಯ ಸ್ನಾನ ಪೂಜೆಗಳಲ್ಲಿಯ ಗುರುಗಳು ಹೊತ್ತು ಕಳೆಯದೆ ಸಮಾಜದ ಕಾರ್ಯಗಳಲ್ಲಿಯೂ ಸಹಕಾರ ನೀಡಿ ಸಮಾಜದ ಪ್ರಗತಿಗೆ ಮುಂದಾಗಬೇಕೆಂಬ ಆದರ್ಶವನ್ನು ಹಾಕಿಕೊಟ್ಟ ಶ್ರೀಗಳವರ ದೃಷ್ಟಿ ಎಷ್ಟು ವಿಶಾಲವಾಗಿದ್ದಿತು !

೪. ಉದ್ಯಮ ಸೃಷ್ಟಿ

ಶ್ರೀಗಳವರು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಯಾಂತ್ರಿಕ ಉದ್ಯೋಗಗಳ ಸ್ಥಾಪನೆಗೆ ಹೆಚ್ಚು ಶ್ರಮಪಟ್ಟವರು. ಶಿವಯೋಗಮಂದಿರದ ಆರ್ಥಿಕ ಭದ್ರತೆಯನ್ನು ಲಕ್ಷಿಸಿ ಶ್ರೀಗಳವರು ಬಾಗಲಕೋಟೆಯಲ್ಲಿ ‘ಶಿವಾನಂದ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ ಫ್ಯಾಕ್ಟರಿ’ಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು. ಅದು  ಶಿವಯೋಗಮಂದಿರ ಸಂಸ್ಥೆಯ ಬೆನ್ನೆಲುವಿನಂತಿದೆ. ಅದರಿಂದ ಪ್ರತಿ ವರ್ಷ’ ಇಪ್ಪತ್ತು ಮೂವತ್ತು ಸಾವಿರ ರೂಪಾಯಿಗಳ ಉತ್ಪನ್ನ ಮಂದಿರಕ್ಕೆ ತನ್ಮೂಲಕವಾಗಿ ಸಮಾಜಕ್ಕೆ ಸಲ್ಲುತ್ತಿದೆ, ಬಾಗಲಕೋಟೆಗೆ ಬಂದ ಸ್ವಾಮಿಗಳಿಗೆ ಶಿವಾನಂದ ಜಿನ್ನು ಒಂದು ಅನುಕೂಲವಾದ ಪ್ರವಾಸಿ ಮಂದಿರ’ವಾಗಿದೆ. ಒಂದು ಚಿತ್ರ ಮಂದಿರವೂ ಇದರ ಅಂಗವಾಗಿ ನಡೆದಿರುವದು, ಈ ಪ್ರೆಸ್ಸಿನಿಂದ ೨೫೦ ಬಡ ಕುಟುಂಬಗಳ ಉಪಜೀವನವಾಗುತ್ತಿರುವದು. ವಿರಕ್ತಸ್ವಾಮಿಗಳೋಬ್ಬರ ಉದ್ಯಮ ಸೃಷ್ಟಿಯ ಈ ಮಹದ್ಯೋಜನೆ ಎಂತಹ ಚಾಣಾಕ್ಷ ಸಿರಿವಂತನ ಉದ್ಯೋಗ ಪ್ರಗತಿಯ ಕಾರ್ಯದಕ್ಷತೆಯನ್ನೂ ಮೀರಿ ನಿಲ್ಲುತ್ತದೆ. ಶ್ರೀಗಳವರಲ್ಲಿಯ ಬುದ್ಧಿವೈಭವ, ದೂರದೃಷ್ಟಿ, ಅಪರಿಮಿತವಾಗಿದ್ದವು, ಅಸಾಧಾರಣ ವಾಗಿದ್ದವು. ಅವರ ದೂರದೃಷ್ಟಿಯಿಂದಾಗಿ ಅಂದಿನ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯ ನಿರ್ಮಿತವಾಗಿ ಅದು ಉಳಿದ ಉದ್ಯಮ ಪ್ರೇಮಿಗಳಿಗೂ ಕೈದೋರಿಕೆಯಾಯಿತು.

೫. ವಾಣಿಜ್ಯ ಸೃಷ್ಟಿ

ವ್ಯಾಪಾರದಲ್ಲಿಯೇ ಲಕ್ಷ್ಮಿ ಯ ವಾಸವೆಂಬುದು ಎಲ್ಲರ ಅನುಭವದ ಮಾತಾಗಿದೆ. ಶ್ರೀಗಳವರ ಪವಿತ್ರ ದೃಷ್ಟಿಯಲ್ಲಿ ವ್ಯಾಪಾರವು ದ್ರೋಹ ಚಿಂತನವಾಗಿರಲಿಲ್ಲ. ಬಾಗಲಕೋಟೆಯಲ್ಲಿ ಶಿವಯೋಗಮಂದಿರ ಸಂಸ್ಥೆಯ ವತಿಯಿಂದ ಶಿವಾನಂದ ಜಿನ್ನಿಂಗ್ ಫ್ಯಾಕ್ಟರಿಗೆ ಅಂಗವಾಗಿ ಒಂದು ಕಬ್ಬಿಣದ ಅಂಗಡಿಯನ್ನಿಕ್ಕಿಸಿದ್ದರು. ಅದರಿಂದ ಲಾಭ ಪಡೆಯಲೆಂದಲ್ಲ: ವ್ಯಾಪಾರದಿಂದ ಸ್ವಾರ್ಥ  ಪರಾರ್ಥವೆರಡನ್ನು ಪ್ರಾಮಾಣಿಕವಾಗಿ ಸಾಧಿಸಬಹುದೆಂಬುದನ್ನು ಸಮಾಜದ ವ್ಯಾಪಾರಿಗಳಿಗೆ ತೋರಲೆಂದು. ವ್ಯಾಪಾರವೂ ಒಂದು ಕಾಯಕವೆ. ಆದರೆ ಅದು ಸತ್ಯ ಶುದ್ಧವಾಗಿರಬೇಕು’ ಎಂದು ಶ್ರೀಗಳವರು ಭಕ್ತರಿಗೆ ಅಪ್ಪಣೆ ಕೊಡಿಸುತ್ತಿದ್ದರು.

ನಿರುಪಮವಾದ ವಿರಕ್ತಿ ಅಸದೃಶವಾದ ಸ್ವಾರ್ಥತ್ಯಾಗ ಬುದ್ದಿ, ಅದ್ವಿತೀಯವಾದ ಭೂತದಯೆ, ಅಚಲವಾದ ಧೈರ್ಯ, ಅಖಂಡವಾದ ಸಾಹಸ, ವಿಲಕ್ಷಣವಾದ ದೂರದರ್ಶಿತ್ವ, ಅತಿಶಯವಾದ ಶ್ರಮಸಹಿಷ್ಣುತೆ, ಕಠಿಣತರವಾದ ಮನೋನಿಗ್ರಹ, ಉಪಮಾತೀತವಾದ ಶಾಂತಿ ದಾಂತಿ ಮೊದಲಾದ ಸದ್ಗುಣಗಳು ಶ್ರೀಗಳವರಲ್ಲಿ ಮೂರ್ತಿಮಂತಾಗಿದ್ದವು, ಅದರಿಂದ ಅವರು ಹೊಸ ದೃಷ್ಟಿಯಿಂದ ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾದರು. ಆಧುನಿಕ ನವನಾಗರಿಕತೆಯ ವೀರಶೈವರನೇಕರಿಗೆ ಶ್ರೀಗಳವರ ಪ್ರಭಾವವು ಗೋಚರಿಸದೆ ಹೋದುದು ದುರ್ದೈವದ ಮಾತು. ಕೋಲ್ಮಿಂಚು ಮಿಂಚಿ ಅನಂತದಲ್ಲಿ ಅಡಗಿ ಹೋಯಿತು ! ಕಳೆದುಕೊಂಡು ಹುಡುಕಿದರೆ ಆಗುವದೇನು

ಸಮಾಜದ ಅಜ್ಞಾನವನ್ನು ಹೋಗಲಾಡಿಸುವದಕ್ಕಾಗಿ ಹಗಲಿರುಳು ನಿರುಪಾಧಿಯಿಂದ ಪ್ರಯತ್ನಿಸಿದ ನಿಜವಾದ ಸದ್ಗುರುವು; ಹೊನ್ನು ಹೆಣ್ಣು ಮಣ್ಣುಗಳೆಂಬ ತ್ರಿವಿಧ ಮೋಹಜಾಲಗಳನ್ನು ಮೆಟ್ಟಿ ಮೆರೆದ ವಿಚಿತ್ರ ವೈರಾಗ್ಯಮೂರ್ತಿಯು .ಇಂದ್ರಿಯ ವ್ಯಾಪಾರಗಳನ್ನು ವಶದಲ್ಲಿಟ್ಟುಕೊಂಡು ಬಾಹ್ಯಾಡಂಬರಗಳನ್ನೆಲ್ಲ ಬದಿಗೊತ್ತಿದ ಸತ್ಯಸ್ವಾಮಿಯು; ಕೇವಲ ಶಿವಾರ್ಪಣ ಸದ್ಭುದ್ಧಿಯಿಂದ ಸಮಾಜ ಸೇವಾಕಾರ್ಯವನ್ನು ಕೊನೆಯವರೆಗೂ ಸಾಗಿಸಿದ ನಿಸ್ಸಿಮ ಸದಾಶಿವ’ ಶಿವಯೋಗಿಯು; ಇಂಥ ಶ್ರೀಗಳವರ ದಿವ್ಯ ಪಾದಗಳಿಗೆ ನನ್ನ ಅನಂತ ಪ್ರಣಾಮಗಳನ್ನು ತದೇಕ ಧ್ಯಾನದಿಂದ ಅರ್ಪಿಸುವೆನು.

Related Posts