ಯೋಗ ಸಾಧನೆ

ಲಿಂ. ಪೂಜ್ಯ ಶ್ರೀ ಸಂಗನಬಸವಸ್ವಾಮಿಗಳು, ಬಂಥನಾಳ

ಯೋಗ ಶಬ್ದವು ಯುಜ್ ಧಾತುವಿನಿಂದ ಹುಟ್ಟಿದ್ದು ಇದರ ಅರ್ಥವು ಜೋಡಿಸುವದು ಅಥವಾ  ಕೂಡಿಸುವದು ಎಂಬುದಾಗಿ ಆಗುವದು, ಯಾಜ್ಞವಲ್ಕ ಮಹರ್ಷಿಗಳು ”ಸಂಯೋಗೋ  ಗಯುತ್ಯುಕೋ ಜೀವಾತ್ಮ ಪರಮಾತ್ಮನೋಃ” ಎಂಬುದಾಗಿ ಹೇಳಿದ್ದಾರೆ. ಅಂದರೆ ಜೀವ ಶಿವರ ನಡುವಿರುವ ಅಜ್ಞಾನ ಪರದೆಯನ್ನು ಹರಿದು ಮಠಾಕಾಶದಲ್ಲಿ ಘಟವನೊಡಿದು ಘಟಾಕಾಶವನ್ನು ಕೂಡಿಸುವಂತೆ ಜೀವಾತ್ಮನನ್ನು ಪರಮಾತ್ಮನಲ್ಲಿ ಬೆರೆಸುವದೇ ಯೋಗವೆಂದು ಹೇಳಿದ್ದಾರೆ. ಇದೇ ವಿಷಯವನ್ನೇ ವಿಶೇಷ ವಿವರಣೆಯಾಗಿ ಯೋಗಶಾಸ್ತ್ರದ ಆದ್ಯಪ್ರವರ್ತಕರಾದ ಪಾತಂಜಲಿ ಮಹರ್ಷಿಗಳು “ಯೋಗಶ್ಚಿತ್ತ ವೃತ್ತಿಃ ನಿರೋಧಃ’ ಎಂಬುದಾಗಿ ಹೇಳಿದ್ದಾರೆ. ಅಂದರೆ ಪ್ರಕ್ಷುಬ್ದ ಮತ್ತು ಮಲಿನವಾದಂಥ ಸರೋವರದಲ್ಲಿಯ ನೀರು ಶಾಂತವಾದುದಾಗಿ ಸ್ವಚ್ಛವಾದುದಾಗಿ ಸ್ಥಿರವಾದದ್ದಾದರೆ ಮಾತ್ರ ಅರ್ಥಾತ್ ಕ್ಷುಬ್ದಾವಸ್ಥೆಯು ನಷ್ಟವಾಗಿ ಶಾಂತತಾವಸ್ಥೆಯು ಪ್ರಾಪ್ತವಾದದ್ದಾದರೆ ಹೇಗೆ ಸರೋವರದ ತಳವು ಅಥವಾ ನೆಲೆಯು ಸ್ಪಷ್ಟವಾಗಿ ಕಾಣುತ್ತದೆಯೋ ಹಾಗೆಯೇ ಮನುಷ್ಯನ ಚಿತ್ತವೆಂಬ ಸರೋವರವು ಮನಸ್ಸಿನ ಆಲೋಚನೆಗಳೆಂಬ ತೆರೆಗಳಿಂದ ಮತ್ತು ವಿಷಯವಾಸನೆ ಯೆಂಬ ಮಲಿನದಿಂದ ಕೂಡಿದ್ದಾಗಿರುವದರಿಂದ ಚಿತ್ರದ ನೆಲೆಯು ಅಂದರೆ ಪರಮಾತ್ಮನ ಸ್ವರೂಪವು ಕಾಣುತ್ತಿರುವುದಿಲ್ಲ, ಆದ್ದರಿಂದ ಈ ಚಿತ್ರವೆಂಬ ಸರೋವರದಲ್ಲಿಯ ತೆರೆಗಳನ್ನು ಶಾಂತಮಾಡಿ ವಿಷಯವಾಸನೆಯೆಂಬ ಹೊಲಸನ್ನುದೂರಮಾಡಿ ಚಿತ್ತವನ್ನು ಸ್ಥಿರವಾಗಿಟ್ಟರೆ ಮಾತ್ರ ನೆಲೆಯು ಕಾಣುವದು. ಈ ನೆಲೆಯನ್ನುಅಥವಾ ಪರಮಾತ್ಮನನ್ನು ತೋರಿಸುವ ಸಾಧನೆಯು ಯಾವದುಂಟೋ, ಅದಕ್ಕೆ ಯೋಗವೆಂದು ಹೇಳಿದ್ದಾರೆ.

ಆದರೆ ಯೋಗವು ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ,ಶಿವಯೋಗವೆಂದು ಈ ತರಹವಾಗಿರುವದು. ಗುರೂಪದಿಷ್ಟವಾದ ಪ್ರಣವ, ಹಂಸ’ಪಂಚಾಕ್ಷರಿ, ಷಡಕ್ಷರಿ ಮೊದಲಾದ ಮಂತ್ರಗಳನ್ನು ಋಷಿ, ಛಂದಸ್ಸು, ದೇವತೆ,ಬೀಜ, ಕೀಲಕ ಮೊದಲಾದವುಗಳಿಂದ ೩೩ ದೋಷಗಳಿಲ್ಲದೆ ಸಂಖ್ಯಾಪೂರ್ವಕವಾಗಿ ಜಪಾನುಷ್ಠಾನಂಗೈಯುವದೇ ಮಂತ್ರಯೋಗವು.

ದಶವಿಧಾನುಸಂಧಾನದಲ್ಲಾಗಲಿ ಚಿದ್ಬಿಂದು,ವಿನ ಮನೋಹರವಾದ ನವರತ್ನಪ್ರಕಾಶದಲ್ಲಾಗಲಿ ಮನವನಡಗಿಸಿ ಭೇದವಳಿದಿರುವುದೇ ಲಯಯೋಗವೆನಿಸುವುದು.

ಶರೀರಕ್ಕೆ ಶ್ರಮಕೊಟ್ಟು ಮದೋನ್ನತವಾದ ಗಜದಂತಿರುವ ಬಲವಾದ ಇಂದ್ರಿಯಗಳನ್ನು ಪ್ರಾಣಾಯಾಮವೆಂಬ ಅಂಕುಶದಿಂದ ಸ್ವಾಧೀನಕ್ಕೆ ತರುವ ಯಾವ ಸಾಧನೆಯುಂಟೋ ಅದಕ್ಕೆ ಹಠಯೋಗವೆಂದೆನ್ನುವರು.  ಹಠ ಈ ಶಬ್ದದಲ್ಲಿ

ಹ ಕಾರವು ಸೂರ್ಯನ ಸಂಜ್ಞೆಯು ; ಠ ಕಾರವು ಚಂದ್ರನ ಸಂಖ್ಯೆಯು ಈ ಎರಡರ ಯೋಗವೆಂದರೆ ಐಶ್ವವು ಅರ್ಥಾತ್ ಪ್ರಾಣವಾಯು ಮತ್ತು ಅಪಾನವಾಯುಗಳ ಐಕ್ಯವೇ ಹಠಯೋಗವು

“ಸ ಯಥಾ ಶಕುನೀ ಸೂತ್ರೇಣ ಪ್ರಭುದ್ಧೋ  ದಿಶಾಂದಿಶಂ ಪತಿತ್ವಾನ್ಯತ್ರಾಯತನಂ ಲಬ್ಧ್ವಾ ನಂಧನಮೇವೋಪಶ್ಚಯತೆ  ಏವಮೇವ ಖಲು ಸೋಮ್ಯ ತನ್ಮನೋದಿಶಂದ  

ಶಾಂಪತಿತ್ಸಾ ನ್ಯತ್ರಾಯತನಂ ಲಬ್ಧ್ವಾ ಪ್ರಾಣಮೇವೋಪಶ್ಚಯತೆ ಪ್ರಾಣಬಂಧನಂ ಹಿ

ಸೋಮ್ಯಮಿಸವ ಇತಿ’

ಎಂಬ ಛಾಂದೋಗ್ಯೋಪನಿಷತ್ತಿನ ವಚನದಂತ ಸೂತ್ರದಿಂದ  ಬಂಧಿಸಲ್ಪಟ್ಟಂಥ ಪಕ್ಷಿಯು ಬೇರೆ ಬೇರೆ ದಿನ ಕಡೆಗೆ ಹಾರಿಹೋಗಲಿಕ್ಕೆ ಪ್ರಯತ್ನಮಾಡಿ ಕಡೆಗೆ ಎಲ್ಲಿ ಆಶ್ರಯ ದೊರೆಯದೆ ನಿರುಪಾಯದಿಂದ ಬಂಧನದ ಕಡೆಗೆ ಬರುವಂತೆ ಮನಸ್ಸು ಸಹ ಬೇರೆ ಬೇರೆ ವಿಷಯಗಳ ಕಡೆಗೆ ಹೋದರೂ ಕಡೆಗೆ ಬೇರೆ ಆಶ್ರಯ ದೊರೆಯದ್ದರಿಂದ ಪ್ರಾಣವನ್ನೇ ಆಶ್ರಯ ಮಾಡುತ್ತದೆ. ಆದಕಾರಣ ಪ್ರಾಣವೇ ಮನಸ್ಸಿನ ಬಂಧನವಾಗಿದೆ, ಆದರೆ ಈ ವಿಷಯವಾಗಿ ಎರಡು ವಿಧವಾದ ಮತಗಳಿವೆ.

ಹಠದಿಂದ ಪ್ರಾಣವಾಯುವನ್ನು ಸ್ವಾಧೀನ ತೆಗೆದುಕೊಂಡು ತನ್ಮೂಲಕ ಮನಸ್ಸನ್ನು ವಶಮಾಡಿಕೊಳ್ಳುವದು ಒಂದು ಮತ ಇಬ್ಬರ ಭಕ್ತಿಯಿಂದ ಮನಸ್ಸನ್ನುಸ್ವಾಧೀನ ಮಾಡಿಕೊಳ್ಳುವದು

‘ಮನೋ ಯತ್ರ ವಿಲೀಯತೇ ಪ್ರಾಣಸ್ತತ್ರ ವಿಲೀಯತೆ”

ಎಂಬ ವಚನದಂತೆ ಮನಸ್ಸಿನ  ಸ್ವಾಧೀನತೆಯಿಂದ ಪ್ರಾಣವು ತಾನಾಗಿಯೇ ಸ್ವಾಧೀನವಾಗುವದು. ಮನಸ್ಸು ಗಾಬರಿಯಾದರೆ ಪ್ರಾಣವು ಗಾಬರಿಯಾಗುವದು ಮನಸ್ಸು ನಿರ್ಭಯವಾದರೆ ಪ್ರಾಣವು ನಿರ್ಭಯವುಳ್ಳದ್ದಾಗುವದು. ಪ್ರಯುಕ್ತ ಮೊದಲು ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳಬೇಕು. ಆ ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳುವದಕ್ಕಾಗಿ ಕ್ರಿಯಾ ಯೋಗವನ್ನಾಚರಿಸಬೇಕು ‘ತಪಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾಯೋಗಃ’

ಅಂದರೆ ತಪಸ್ಸು, ಶಾಸ್ತ್ರ ಚಿಂತನೆ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡುವದೇ ಕ್ರಿಯಾಯೋಗವು ಈ ಸುಲಭೋಪಾಯದಿಂದಲೇ ಮನಸ್ಸಿನ ಸ್ವಾಧೀನತೆಯು ಉಂಟಾಗುವದು. ಇದು ಎರಡನೆಯ ಮತ .

ಪ್ರಾಣ ಮತ್ತು ಮನಸ್ಸು ಈ ಎರಡೂ ಸಮಾನವಾದಂಥ ಪ್ರೇಮ ಬಂಧುಗಳೆಂಬ ವಿಷಯವು ನಿಷ್ಚಯಾತ್ಮಕವಾದದ್ದಿದೆ  ಚಂಚಲವಾದ ಮನಸ್ಸನ್ನುಸ್ವಾಧೀನದಲ್ಲಿ ತೆಗೆದುಕೊಳ್ಳಬೇಕಾದರೆ ಮೊದಲು ಪ್ರಾಣವಾಯುವನ್ನು ಹಠದಿಂದ ಸ್ವಾಧೀನಪಡಿಸಿಕೊಳ್ಳುವದು ಅಗತ್ಯವಾಗಿದೆಯೆಂದು ಈ ಹಠಯೋಗ ಪ್ರವರ್ತಕರಾದ ಮತ್ಸೇಂದ್ರನಾಥ, ಗೋರಖನಾಥ, ಭರ್ತೃಲಹರಿ, ಗೋಪಿನಾಥ, ವಿರೂಪಾಕ್ಷನಾಥ, ವಿಲಯನಾಥ, ಜಲಂದರನಾಥ ಮೊದಲಾದ ನಾಥ ಪಂಥದೊಳಗಿನ ಜನರ ನಿಶ್ಚಯವು. ಇವರು ಪ್ರಾಣನಿರೋಧವೇ ಮನಸ್ಸಿನ ಸ್ವಾಧೀನತೆಗೆ ಮುಖ್ಯ ಉಪಾಯವೆಂದು ಅಭಿಪ್ರಾಯಪಡುತ್ತಾರೆ. ಎರಡನೇ ಪಂಥದ ಪತಂಜಲಿ ಋಷಿ ಮೊದಲಾದವರು ಪರಮಾತ್ಮನ ಭಕ್ತಿಯೇ ಮನಸ್ಸಿನ ಸ್ವಾಧೀನತೆಗೆ ಮುಖ್ಯ ಕಾರಣವೆಂದು ಅಭಿಪ್ರಾಯಪಡುತ್ತಾರೆ. ಹಠಯೋಗ ಮತ್ತು ರಾಜಯೋಗ ಇವುಗಳ ಧ್ಯೇಯವು ಸಮಾಧಿ ಪ್ರಾಪ್ತಿಯೇ ಆದರೂ ಮಾರ್ಗಗಳು ಮಾತ್ರ ಭಿನ್ನವಾಗಿವೆ.

ನಾಥ ಪಂಥದೊಳಗಿನ ಗೋರಕ್ಷನಾಥ ಸ್ವಾಮಿ ಮೊದಲಾದವರು  ಸದೃಢವಾದ ಮಲರಹಿತವಾದ ನಿರೋಗವುಳ್ಳ ಶರೀರವೇ ಪ್ರಾಣಸಂಚಯಕ್ಕೆ ಯೋಗ್ಯವಾಗಿರುತ್ತದೆ. ಆ ಶರೀರದಲ್ಲಿ ಅಧಿಕವಾಗಿ ಪ್ರಾಣಶಕ್ತಿಯನ್ನು ಸಂಗ್ರಹಮಾಡಲಿಕ್ಕೆ ಬರುತ್ತದೆ. ಪ್ರಾಣಶಕ್ತಿಯ ಸಾಮರ್ಥ್ಯದ ಮೇಲೆಯೇ ಶರೀರಕ್ಕೆಲ್ಲ ಸ್ಥಿರತ್ವವನ್ನುಂಟುಮಾಡಲಿಕ್ಕೆ ಬರುತ್ತದೆ. ಆಮೇಲೆ ಸುಲಭೋಪಾಯದಿಂದ ತನ್ನಿಚ್ಛೆಯಂತೆ ಶರೀರವನ್ನು ನಡೆಸಿಕೊಳ್ಳಬಹುದು. ಶರೀರವನ್ನು ಮಲರಹಿತವಾದದ್ದನ್ನಾಗಿ ಮಾಡಿ ವಿಶೇಷ ಪ್ರಾಣ ಸಂಚಯವನ್ನು ಮಾಡದಿದ್ದರೆ ಆ ಶರೀರಕ್ಕೆ ಸ್ಥಿರತ್ವವುಂಟಾಗುವದು ಕಠಿಣವಾಗುತ್ತದೆ. ಅಸ್ಥಿರತೆಯಿಂದ ಜ್ಞಾನತಂತುಗಳು ಕ್ಷೋಭೆಯುಳ್ಳವುಗಳಾಗಿ ಯಾವ ವಸ್ತುವಿನ ಮೇಲೆಯೂ ಏಕಾಗ್ರತೆ ಮಾಡಲು ಶಕ್ಯವಾಗುವದಿಲ್ಲ. ಅನೇಕ ವಾಸನೆಗಳಿಂದ ಮನಸ್ಸು ತುಂಬಿಹೋಗುತ್ತದೆ. ಮನಸ್ಸು ವಾಸನೆಗಳಿಂದ ಪ್ರಾಣವು ಮನಸ್ಸಿನಿಂದ ಕುಣಿಯುತ್ತಿರುವದರಿಂದ ಪ್ರಾಣವನ್ನು ಸ್ವಾಧೀನಮಾಡಿಕೊಂಡಿದ್ದೇ ಆದರೆ ಮನಸ್ಸು ಸ್ವಾಧೀನವಾದಂತೆಯೇ ಸರಿ. ಮನಸ್ಸು ಪ್ರಾಣಶಕ್ತಿಯ ದಾಸನಂತಿದೆ. ಯಾರಿಗೆ ಪ್ರಾಣಶಕ್ತಿಯ ಉಪಯೋಗದ ಅಭ್ಯಾಸವುಂಟೋ ಅವರಿಗೆ ಮನಸ್ಸು ಕವಡಿಗಿಂತ ಕಡಿಮೆ ಬೆಲೆಯುಳ್ಳದ್ದಾಗಿದೆ. ಪ್ರಯುಕ್ತ ಹಠಯೋಗವು ಶರೀರ ಮತ್ತು ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳಲು ಅತಿ ಪ್ರಾಮುಖ್ಯವಾದ ಸಾಧನವೆಂಬುದಾಗಿ ಹೇಳುತ್ತಾರೆ.

ಮೂಲ ಪ್ರಣವ ಮೊದಲಾದ ಮಹಾಮಂತ್ರಗಳ ಜಪಾನುಷ್ಠಾನ ಅಥವಾ ಸ್ವಾಧ್ಯಾಯಸ್ತೋತ್ರ ಮೊದಲಾದ ಸಾಧನಗಳಿಂದ ಈಶ್ವರ ಭಕ್ತಿಯಲ್ಲಿ ನಾವು ಮನಃಪೂರ್ವಕ ತೊಡಗಿದ್ದಾದರೆ ನಮ್ಮ ಅಂತಃಕರಣವು ಆ ಭಕ್ತಿಯಲ್ಲಿ ತಲ್ಲೀನವಾಗಿ ಹೋಗುತ್ತದೆ. ಆಮೇಲೆ ಶರೀರದ ಪ್ರತಿಯೊಂದು ಭಾಗದ ದೇವತೆಯು ಸಂತುಷ್ಟಳಾಗಿ ಶರೀರದ ಪ್ರತ್ಯೇಕ ಭಾಗದ ಪರಮಾಣುಗಳು ಸ್ಥಿರವುಳ್ಳವುಗಳೂ ಶಾಂತಾದವುಗಳೂ ಆಗುತ್ತವೆ. ಆ ಕಾರಣದಿಂದ ಮನಸ್ಸಿಗೆ ಪ್ರಸನ್ನತೆಯುಂಟಾಗುತ್ತದೆ. ”ಪ್ರಸನ್ನ ಚೇತಸೋ ಹ್ಯಾಸು ಬುದ್ಧಿ: ಪಠ್ಯವತಿಷ್ಠತೆ’  ಎಂಬ ಭಗವದ್ಗೀತೋಕ್ತಿಯಂತೆ ಮನಸ್ಸಿಗೆ ಪ್ರಸನ್ನತಾ ಸ್ಥಿರತಾ ಏಕಾಗ್ರತಾ ಮೊದಲಾದವುಗಳುಂಟಾಗಿ ಮುಂದೆ ಸಹಜ ಸಮಾಧಿಯು ದೊರೆಯುತ್ತದೆ. ಆದ್ದರಿಂದ ರಾಜಯೋಗವೇ ಸರ್ವಯೋಗಗಳ ರಾಜನೆಂಬುದಾಗಿ ಋಷಿಪಂಥಿಗಳ ಅಭಿಪ್ರಾಯವಿರುತ್ತದೆ.

ಯೋಗಶಾಸ್ತ್ರ ಪ್ರವರ್ತಕರಾದ ಪತಂಜಲಿ ಮಹರ್ಷಿಗಳ ಕಾಲದಕಡಗೆ ಲಕ್ಷ್ಯಕೊಟ್ಟಿದ್ದಾದರೆ ಆ ಕಾಲದಲ್ಲಿ ಜನರು ಒಳ್ಳೇ ಬಲಶಾಲಿಗಳೂ ನಿರೋಗಿಗಳೂ,ವ್ಯಸನರಹಿತರೂ, ಮನೋಧೈರ್ಯ ಆತ್ಮವಿಶ್ವಾಸಿಗಳೂ ಆಗಿದ್ದುದರಿಂದ ಅವರಿಗೆ ಹಠಯೋಗದ ಅವಶ್ಯಕತೆಯೇ ಇರಲಿಕ್ಕಿಲ್ಲ. ಆದರೆ ಈಗಿನ ಪರಿಸ್ಥಿತಿಯಕಡೆಗೆ ನೋಡಿದರೆ ಜನರು ದುರ್ಬಲರೂ ಡಾಂಭಿಕರೂ ದುರ್ವ್ಯಸನಿಗಳೂ ಶಿಶ್ನೋದರ ಪರಾಯಣರೂ ಅವಿಶ್ವಾಸ ಅಸ್ಥಿರತೆಗಳಿಂದ ಕೂಡಿದವರಾಗಿರುವದರಿಂದ ಇವರಿಗೆ ಸುಲಭವಾಗಿ ಮನೋನಿಗ್ರಹವಾಗುವದು ಶಕ್ಯವಿಲ್ಲ. ಪ್ರಯುಕ್ತ ಹಠಯೋಗದ ಮೂಲಕವಾಗಿಯೇ ರಾಜಯೋಗವನ್ನು ಪ್ರಾಪ್ತಮಾಡಿಕೊಳ್ಳುವದು ಅವಶ್ಯವಾದ ಹಾಗೂ ಅಗತ್ಯವಾದ ಕರ್ತವ್ಯವಾಗಿದೆ.

ಹಠಯೋಗವು : ‘ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾದಯೋಷ್ಟಾಂಗಾನಿ’  ಅಂದರೆ ಯಮ, ನಿಯಮ, ಆಸನ,ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬುದಾಗಿ ಎಂಟು ಪ್ರಕಾರವಾಗಿದೆ. ಇವುಗಳಲ್ಲಿ ಯಮವು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,ಕ್ಷಮಾ, ಧೃತಿ, ದಯಾ, ಆರ್ಜವ, ಮಿತಾಹಾರ, ಶೌಚ ಎಂದು ಹತ್ತು ಪ್ರಕಾರದ್ದಾಗಿದೆ.

೧. ಕಾಯಾವಾಚಾ ಮನಸ್ಸುಗಳಿಂದ ಯಾವ ಪ್ರಾಣಿಗೂ ಯಾವ ಕಾಲದಲ್ಲಿಯೂ

ಹಿಂಸೆಯನ್ನು ಮಾಡದಿರುವದು ಅಹಿಂಸೆಯು,

೨. ‘ಯಥಾತಥ್ಯವಾಕ್ಯಂ ಸತ್ಯಂ’ ಅಂದರೆ ಇದ್ದುದನ್ನು ಇದ್ದಂತೆಯೇ ನುಡಿಯುವದೇ ಸತ್ಯವು ಅಥವಾ ಕಾಲಾನುಸಾರವಾಗಿ ಪ್ರಾಣಿಗೆ ಹಿತವಾಗುವಂತೆ ಮಾತಾಡುವದು ಸತ್ಯವು,

೩.ಪದಾರ್ಥವನ್ನೂ ಅಪಹರಿಸದಿರುವದು ಅಸ್ತೇಯವು,

೪, ‘ಬ್ರಹ್ಮಣೇ ವೇದವಿದ್ಯಾಯ್ಕೆ ಕಸ್ಯೈ ವಿದ್ಯಾಯ್ ವಾಚರ್ಯತೆ ಇತಿ ಬ್ರಹ್ಮಚರ್ಯಂ’ ಅಂದರೆ ವೇದವಿದ್ಯೆಯಾಗಲೀ ಅಥವಾ ಬೇರೊಂದು ವಿದ್ಯೆಯನ್ನಾಗಲೀ ಕಲಿಯುವದರ ಸಲುವಾಗಿ ಯಾವ ವ್ರತವನ್ನು ಧಾರಣ ಮಾಡಬೇಕಾಗುತ್ತದೆಯೋ ಆ ವ್ರತಕ್ಕೆ ಬ್ರಹ್ಮಚರ್ಯವೆಂದು ಹೇಳಲ್ಪಡುತ್ತದೆ.

ಶರೀರ ಸಂಪತ್ತನ್ನು ಮೇಧಾಶಕ್ತಿಯನ್ನು ಚನ್ನಾಗಿ ಇಡುವದರ ಸಲುವಾಗಿ ಶಾಸ್ತ್ರದಲ್ಲಿ ವೀರ್ಯ ನಿರೋಧದ ಸಂಬಂಧವಾಗಿ ಯಾವ ನಿಯಮವನ್ನು ಹಾಕಿಕೊಟ್ಟಿರುವರೋ ಅದನ್ನೇ ಕ್ರಮಬದ್ಧವಾಗಿ ಪಾಲನೆ ಮಾಡುವದೇ ಬ್ರಹ್ಮಚರ್ಯವ್ರತವು. ಸ್ಪಷ್ಟವಾಗಿ ‘ಗುಪ್ತೇಂದ್ರಿಯಸ್ಯೊಪಸ್ಥಸ್ಯ ಸಂಯಮಃ’ ಅಂದರೆ ಜನನೇಂದ್ರಿಯದ ದಮನವೇ ಬ್ರಹ್ಮಚರ್ಯ ವ್ರತದೊಳಗಿನ ಮುಖ್ಯ ವಿಷಯವಾಗಿರುತ್ತದೆ. ಕಂಬದ ಆಧಾರದ ಮೇಲಿಂದ ಮನೆಯು ಹ್ಯಾಗೆ ನಿಲ್ಲುವದೋ ಹಾಗೆಯೇ ಶರೀರದ ಸುಸ್ಥಿತಿಯು ಸ್ವಚ್ಛತೆ, ಹಿತಕಾರಕ ಅನ್ನ, ನಿಯಮಿತ ನಿದ್ರೆ, ದೃಢವಾದ ಬ್ರಹ್ಮಚರ್ಯ ಮೊದಲಾದವುಗಳನ್ನೇ ಅವಲಂಬಿಸಿರುತ್ತದೆ. ಬ್ರಹ್ಮಚರ್ಯವು ಸರ್ವ ಆಯಷ್ಯದ ಮತ್ತು ಪರುಷಾರ್ಥದ ತಳಹದಿಯಾಗಿರುತ್ತದೆ. ತಳಹದಿಯು ದೃಢವಾದದ್ದಿದ್ದರೆ ಮಾತ್ರ ಕಟ್ಟಡವು ಸಡಲುವುದಿಲ್ಲ. ಹಾಗೆಯೇ ಬ್ರಹ್ಮಚರ್ಯವೊಂದನ್ನು ಸಾಧಿಸಿದರೆ ಪುರುಷಾರ್ಥವು ಕೈ ಸೇರಲು ಅವಕಾಶವು ಇಲ್ಲದಿಲ್ಲ. ಆದ ಪ್ರಯುಕ್ತ ಬ್ರಹ್ಮಚರ್ಯದ ಅವಶ್ಯವು ಇಹಪರಗಳೆರಡಕ್ಕೂ ಮುಖ್ಯವಾಗಿದೆ.

ಅನ್ನದಿಂದ ರಕ್ತವಾಗುತ್ತಿದೆ. ಆ ರಕ್ತದಿಂದ ವೀರ್ಯವುಂಟಾಗುವದು. ಅನ್ನದಲ್ಲಿ ಯಾವ ಗುಣಧರ್ಮಗಳುಂಟೋ ಆ ಗುಣಧರ್ಮಗಳು ರಕ್ತದಲ್ಲಿ ಉಂಟಾಗುತ್ತವೆ. ರಕ್ತದಲ್ಲಿಯ ಗುಣಧರ್ಮಗಳು ವೀರ್ಯ ದಲ್ಲಿ ಉಂಟಾಗುತ್ತವೆ. “ಅನ್ನಮಯ ಹಿಸೋಮ್ಯರ್ಮಃ ಎಂಬ  ಶ್ರುತಿವಚನದಂತೆ ಅನ್ನದ ಸೂಕ್ಷಾ ೦ಶದಿಂದ ಮನಬುದ್ದಿಗಳು ಹುಟ್ಟುತ್ತಿರುವುದರಿಂದ ಉದ್ದೀಪಕ ಆಹಾರದಿಂದ ಮನಬುದ್ದಿಗಳು ಕೂಡ ಉದ್ದೀಪಕಗಳಾಗಿ ಕೆಟ್ಟ ಕೃತಿ ಉಂಟಾಗುವಂತೆ ಮಾಡುತ್ತವೆ. ಆದ್ದರಿಂದ ವೃತ್ತಿಗಳು ಸೌಮ್ಯವಾಗಿರಲಿಕ್ಕೆ ಬ್ರಹ್ಮಚರ್ಯವು ಸಂರಕ್ಷಣವಾಗಲಿಕ್ಕೆ ಯೋಗ್ಯವಾದಂಥ ಆಹಾರವನ್ನೇ ಬ್ರಹ್ಮಚಾರಿಯು ಸೇವಿಸಬೇಕು. ಯಾವ ಪ್ರಾಣಿಯು ಕೇವಲ ಮಾಂಸಾಹಾರವನ್ನೇ ಮಾಡುವದಾಗಿರುವದೋ ಆ ಪ್ರಾಣಿಯ ವೃತ್ತಿಯು ಯಾವಾಗಲೂ ಕ್ರೂರ ಹಾಗೂ ಅವಿಚಾರ ತರದ್ದಾಗಿರುತ್ತದೆ. ಯಾವ ಪ್ರಾಣಿಯು ಆಹಾರವು ಸಾತ್ವಿಕತೆಯುಳ್ಳದ್ದಾಗಿರುವದೋ ಆ ಪ್ರಾಣಿಯ ವೃತ್ತಿಯು ಸಾತ್ವಿಕತೆಯುಳ್ಳದ್ದಾಗಿರುತ್ತದೆ. ಉದಾಹರಣೆ ಸಿಂಹ, ಹುಲಿ, ಚಿರತೆ  ಮೊದಲಾದ ಹಿಂಸ್ರ ಪ್ರಾಣಿಗಳು ಕ್ರೂರ ವೃತ್ತಿಯುಳ್ಳವಾಗಿರುತ್ತವೆ. ಆನೆ, ಆಕಳು, ಹರಿಣ ಮೊದಲಾದ ವನಸ್ಪತ್ಯಾಹಾರ ಮಾಡುವ ಪ್ರಾಣಿಗಳು ಸಾತ್ವಿಕ ವೃತ್ತಿಯುಳ್ಳವುಗಳಾಗಿವೆ. ಯಾರ ವೃತ್ತಿಯು ಸಾತ್ವಿಕವಿಲ್ಲವೋ ಅವರ ಸ್ಫೂರ್ತಿಯು ಕೂಡ ಸಾತ್ವಿಕವಿರುವದಿಲ್ಲ. ಆಮೇಲೆ ಅವರ ಕೃತಿಯು ಸಾತ್ವಿಕವಿರುವದೆಂತು? ಸಾತ್ವಿಕ ಸ್ಫೂರ್ತಿ ಸಾತ್ವಿಕ ಕೃತಿಯು ಬ್ರಹ್ಮಚರ್ಯದ ಮುಖ್ಯಾಂಗವಾಗಿವೆ. ಆದ್ದರಿಂದ ಬ್ರಹ್ಮಚರ್ಯ  ವ್ರತ ಕಾಪಾಡಬೇಕೆಂಬುವವರ ಕಾಮೇಚ್ಛಾ ಉತ್ಪನ್ನ ಮಾಡತಕ್ಕಂಥಾ ಉತ್ತೇಜಕವಾದಂಥಾ ಆಹಾರವನ್ನು ತಕ್ಕೊಳ್ಳಬಾರದು. ಖಾರ, ಉಪ್ಪು, ಉರಳೀಗಡ್ಡೆ ಬೆಳ್ಳುಳ್ಳಿ, ಮಸಾಲೆ ಪದಾರ್ಥ ಕರಿದ ಪದಾರ್ಥ, ಮದ್ಯ,ಚಹಾ, ತಂಬಾಕು, ಕಾಫಿ ಮೊದಲಾದ ಮಾದಕ ಪದಾರ್ಥಗಳನ್ನು ಅವಶ್ಯವಾಗಿ ಬಿಡಲೇಬೇಕು. ಸಾರಾಂಶ ಮನಸ್ಸಿನಿಂದ ಮಾತಿನಿಂದ ಕೃತಿಯಿಂದ ವೀರ್ಯ ವನ್ನು ಸಂರಕ್ಷಿಸುವದೇ ಬ್ರಹ್ಮಚರ್ಯವು

೫. ಅನಿಷ್ಟವನ್ನುಂಟು ಮಾಡಿದವರಿಗೆ ತಾನು ಪ್ರತಿಯಾಗಿ ಅನಿಷ್ಟವನ್ನುಮಾಡುವ ಶಕ್ತಿಯಿದ್ದರೂ, ತಡೆಯುವದೇ ಕ್ಷಮೆಯು.

೬. ಸಂಕಟ ದುಃಖ ಮೊದಲಾದ ಪ್ರಸಂಗಗಳಲ್ಲಿ ಎದೆಗುಂದದೆ ಹಾಗೆಯೇ ತನ್ನಕಾರ್ಯವನ್ನು ನಡಿಸುವದೇ ಧೈರ್ಯವು,

೭. ಸರ್ವ ಪ್ರಾಣಿಗಳೂ ತನ್ನಂತೆಯೇ ಇವೆಯೆಂಬ ಬುದ್ದಿಯನ್ನಿಟ್ಟು ವರ್ತಿಸುವದೇ ದಯೆಯು.

೮. ಕುಟಿಲತನವಿಲ್ಲದೆ ಸರಳ ಹೃದಯನಾಗಿರುವದೇ ಅರ್ಜವವು.

೯. ಹಸಿವೆಯನ್ನಿಟ್ಟುಕೊಂಡೇ ಭೋಜನವನ್ನು ಪೂರೈಸುವದು ಮಿತಾಹಾರವು.

೧೦. ಅಂತರಂಗವನ್ನು ನೇತಿ, ಧೌತಿ, ಬಸ್ತಿ, ತ್ರಾಟಕ, ಕಪಾಲಭಾತಿ ಮೊದಲಾದವುಗಳಿಂದ ಶುದ್ಧ ಮಾಡುವದೂ ಬಹಿರಂಗವನ್ನು ಮಣ್ಣು ನೀರು ಮೊದಲಾದವುಗಳಿಂದ ಸ್ವಚ್ಛ ಮಾಡುವದಕ್ಕೆ ಶೌಚವು. ಈ ಪ್ರಕಾರವಾಗಿ ಯಮವು ಹತ್ತು ಅಂಗಗಳಿಂದ ಕೂಡಿದ್ದಾಗಿದೆ.

ನಿಯಮವು ತಪಸ್ಸು, ಸಂತೋಷ, ಆಸ್ತಿ, ದಾನ, ಈಶ್ವರಪೂಜನ, ಸಿದ್ಧಾಂತ

ವಾಕ್ಯಶ್ರವಣ, ಹ್ರೀ, ಮತಿ, ಜಪ, ಹುತ ಎಂದು ಹತ್ತು ಪ್ರಕಾರವದೆ.

೧. ‘ತಪ್ಯಂತೀತಿ ತಪಃ’ ಅಂದರೆ ಸ್ರಕ್ ಚಂದ್ರಾಯಣಾದಿ ವ್ರತಗಳಿಂದ ಶರೀರಕ್ಕೆ ಕಷ್ಟ ಕೊಡುವದು ತಪಸ್ಸು.

೨. ಇಷ್ಟಾನಿಷ್ಟ ಪ್ರಸಂಗಗಳೊದಗಿದರೂ ಆನಂದವಾಗಿರುವದು ಸಂತೋಷವು.

೩. ಧರ್ಮ, ಮೋಕ್ಷ, ಈಶ್ವರ ಮೊದಲಾದವುಗಳ ಕೃತಜ್ಞತೆಯುಳ್ಳವನಾಗಿ ಸದ್ಭಾವದಿಂದಿರುವದೇ ಆಸ್ತಿಕ್ಯವು.

೪. ಯೋಗ್ಯ ಕಾಲದಲ್ಲಿ ಸುಪಾತ್ರದಲ್ಲಿ ಯಥಾಶಕ್ತಿ ಸಹಾಯ ಮಾಡುವದೇ ದಾನವು.

೫. ಸದ್ಭಾವನೆಯಿಂದ ತನ್ನಿಷ್ಟ ದೇವತೆಯನ್ನು ಅರ್ಚಿಸುವುದೇ ಈಶ್ವರ ಪೂಜನವು.

೬. ಯಥಾರ್ಥವನ್ನು ಹೇಳುವ ಪುರುಷರ ಮತ್ತು ವೇದಾಂತ ಸಿದ್ಧಾಂತ ಶಾಸ್ತ್ರಗಳ ವಚನಗಳನ್ನು ಕೇಳುವದು ಸಿದ್ಧಾಂತ ವಾಕ್ಯಶ್ರವಣವು.

೭. ಧರ್ಮಾಚರಣೆಯ ವಿರುದ್ಧ ಪ್ರವೃತ್ತಿ ಉಂಟಾದುದಕ್ಕೆ ಲಜ್ಜೆ ಬರುವದು ಹ್ರೀ

೮. ದೃಢವಾದ ವಿಶ್ವಾಸವೇ ಮತಿಯು.

೯. ಕ್ರಮಪ್ರಕಾರವಾಗಿ ಈಶ್ವರನ ನಾಮೋಚ್ಛಾರಣೆ ಮಾಳ್ಪುದೇ ಜಪವು.

೧೦. ವೇದಾಜ್ಞೆಯ ಪ್ರಕಾರ ಹವನ ಮಾಡುವದೇ ಅರ್ಥಾತ್ ಸ್ವಾರ್ಥತ್ಯಾಗವೇ ಹುತವಹುದು.

 ಈ ಪ್ರಕಾರವಾಗಿ ನಿಯಮಾಂಗಳೂ ಈ ಯಮ ನಿಯಮಗಳೂ ನಡೆನುಡಿಗಳ ತಿದ್ದುಪಾಟವನ್ನು ಮಾಡಿ ಕೊಡುತ್ತವೆ. ಇವುಗಳ ಸಹಾಯವಿಲ್ಲದಿದ್ದರೆ ಯೋಗವು ಸಿದ್ಧಿಸುವದಿಲ್ಲ, ಆದ್ದರಿಂದ ಯೋಗಿಯಾಗಬೇಕೆಂಬುವವರು ಯಮ ನಿಯಮಗಳು ಅಳವಡವಂತೆ ಪ್ರಯತ್ನ ಮಾಡಬೇಕು.

ಯೋಗದ ಮೂರನೇ ಅಂಗವು ಆಸನವು ‘ಸುಖೇನ ಆಸ್ಯತೆ ಇತಿ ಆಸನಂ’ ಅಂದರೆ ತೊಂದರೆ ಪಡದೆ ಸುಖವಾಗಿ ಒಂದೇ ರೀತಿ ಕುಳಿತುಕೊಳ್ಳುವದಕ್ಕೆ ಆರೋಗ್ಯವೂ ಲಘುತ್ವವೂ ಪ್ರಾಪ್ತವಾಗಿ ಚಂಚಲತೆಯು ನಷ್ಟವಾಗುತ್ತದೆ. ಪ್ರಯುಕ್ತ ಅಭ್ಯಾಸಿಗೆ ಸ್ಥಿರವಾದ ಆಸನವನ್ನು ಸಾಧಿಸುವದು ಅಗತ್ಯವಾಗಿರುತ್ತದೆ. ಆಸನ ಜಯವಾದ ವಿನಹ ಪ್ರಾಣಾಯಾಮವೇ ಮೊದಲಾದ ಮುಂದಿನ ಯೋಗಾಂಗಗಳು  ಎಂದೂ ಸಾಧಿಸಲು ಶಕ್ಯವಿಲ್ಲ. ಒಂದು ತಾಸಿನಿಂದ ಮೂರು ತಾಸುಗಳವರೆಗೂ ಒಂದೇ ಸ್ಥಾನದಲ್ಲಿ ತನಗೆ ಸರಿದೋರಿದ ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳುವದೇ ಆಸನ ಜಯವು. ಇದರಿಂದ ತತೋ ದ್ವಂದ್ವಾನಭಿಘಾತ!’ ಅಂದರೆ ಶೀತೋಷ್ಣ ದ್ವಂದ್ವಗಳ ಬಾಧೆಯುಂಟಾಗುವದಿಲ್ಲ, ಆಸನಗಳನ್ನು ನಿತ್ಯಾನಿಯಮಿತ ಹಾಕುವುದರಿಂದ ಶರೀರದ ನಿರುಪಯೋಗಿ ಪರಮಾಣುಗಳು ಹೋಗಿ ಅವುಗಳ ಸ್ಥಾನದಲ್ಲಿ ಹೊಸ ಪರಮಾಣುಗಳು ವ್ಯಾಪಿಸುತ್ತವೆ.ಪ್ರಾಣಶಕ್ತಿಯನ್ನು ಹೆಚ್ಚಾಗಿ ಸಂಗ್ರಹಿಸಲಿಕ್ಕೆ ಯೋಗ್ಯತೆಯುಂಟಾಗುತ್ತದೆ. ಆಸನ ಹಾಕುವಾಗ ಶ್ವಾಸೋಚ್ಛಾಸವನ್ನು ಬಾಯಿಯಿಂದ ನಡಿಸದೆ ಮೂಗಿನಿಂದಲೇ ನಡಿಸಬೇಕು. ಈ ಜಗತ್ತಿನಲ್ಲಿ ಎಷ್ಟು ಜೀವರಾಶಿಗಳುಂಟೋ ಅಷ್ಟು ಪ್ರಕಾರದ ಆಸನಗಳುಂಟು. ಅವುಗಳಲ್ಲಿ ಎಂಬತ್ತುನಾಲ್ಕು ಆಸನಗಳು ಮುಖ್ಯವಾದವುಗಳೆಂದು ಘೇರಂಡ ಸಂಹಿತೆಯಲ್ಲಿ ಹೇಳಿರುತ್ತದೆ. ಅವುಗಳಲ್ಲಿಯೂ ಕೂಡ ಮೂವತ್ತೆರಡು ಆಸನಗಳು ಮುಖ್ಯಾದವುಗಳೆಂದೂ ಸಿದ್ಧಾಸನ ಪದ್ಮಾಸನ ಮತ್ತು ಸ್ವಸ್ತಿಕಾಸನಗಳೇ ಸರ್ವ ಸಿದ್ಧಿಗೂ ಮೋಕ್ಷಕ್ಕೂ ಸಾಧಕಗಳೆಂದು ಯೋಗಿಗಳ ಅಭಿಪ್ರಾಯವಿದೆ.

ಆಸನ ಜಯವಾದ ಮೇಲೆ ಮುಂದಿನ ಅಂಗವು ಪ್ರಾಣಾಯಾಮವು, ಯೋಗ ಸಾಧನದ ಅತ್ಯಂತ ಮಹತ್ವವಾದ ಅಂಗವೆಂದರೆ ಪ್ರಾಣಾಯಾಮವೇ ಸರಿ. ಪ್ರಾಣಾಯಾಮದಿಂದ ಮನಸ್ಸು ಇಂದ್ರಿಯಗಳು ಶುದ್ಧ ನಿರ್ದೋಷವುಳ್ಳವುಗಳಾಗಿ ಬಲವುಳ್ಳವುಗಳಾಗುವವು. ದೀರ್ಘಾಯುಷ್ಯ ಪ್ರಾಪ್ತವಾಗುವದರ ಸಲುವಾಗಿ ಅನೇಕ ಉಪಾಯಗಳೇನುಂಟೋ ಅವುಗಳಲ್ಲಿ ಪ್ರಾಣಾಯಾಮವು ಅತಿ ಶ್ರೇಷ್ಟವಾದ ಉಪಾಯವಾಗಿದೆ. ಪ್ರಾಣಾಯಾಮದಿಂದಲೇ ವೀರ್ಯವು ಸ್ಥಿರವುಳ್ಳದ್ದಾಗಿ ಮನುಷ್ಯನು ಊರ್ಧ್ವರೇತಸ್ಸುವುಳ್ಳವನಾಗುವನು. ಮನಸ್ಸಿನ ಸ್ಥಿರತ್ವ, ಧ್ಯಾನಸಿದ್ದಿ, ಸಮಾಧಿ ಪ್ರಾಪ್ತಿಗಳನ್ನುಂಟುಮಾಡುವ ಸಮಸ್ತ ಸಾಧನಗಳಲ್ಲಿ ಪ್ರಾಣಾಯಾಮವೇ ಅಗ್ರಪೀಠವನ್ನಲಂಕರಿಸಿದೆ. ಪ್ರಾಣಾಯಾಮವೆಂದರೆ ಪ್ರಾಣಶಕ್ತಿಯ ಜಯವು. ಈ ಜಯವುಂಟಾದವನ ಶರೀರದಲ್ಲಿ ಒಂದು ಪ್ರಕಾರದ ದೈವೀ ಶಕ್ತಿಯು ಸಂಚಾರ ಮಾಡುತ್ತದೆ.

ಕೇವಲ ಶ್ವಾಸವನ್ನು ಒಳಗೆ ಹಿಡಿಯುವದೇ ಪ್ರಾಣಾಯಾಮವೆಂದು ಕೆಲವರ ತರ್ಕವಿದೆ. ಶ್ವಾಸವನ್ನು ಒಳಗೆ ತೆಗೆದುಕೊಳ್ಳುವದು ಕೆಲವು ವೇಳೆ ಅಲ್ಲಿಯೇ ತಡೆಯುವದು ಆಮೇಲೆ ಹೊರಗೆ ಬಿಡುವದು ಇತ್ಯಾದಿ ಕ್ರಿಯೆಗಳನ್ನು ಪ್ರಾಣಾಯಾಮ ಮಾಡುವವರೇನೋ  ನಿಜ .ಆದರೆ ಕೇವಲ ವಾಯುವೇ ಪ್ರಾಣಾಯಾಮವಲ್ಲ. ಸೂರ್ಯನಿಂದ ವಾಯುನಲ್ಲಿರುವಂಥಾ ಪರಮಾತ್ಮನ ವಿಶ್ವವ್ಯಾಪಕ ಪ್ರಾಣಶಕ್ತಿಯನ್ನು ಶರೀರದಲ್ಲಿ ತೆಗೆದುಕೊಳ್ಳುವದೇ ಪ್ರಾಣಾಯಾಮದ ಮುಖ್ಯೋದ್ದೇಶವದೆ. ಈ ವಿಷಯದ ಜ್ಞಾನವು ಯಾರಿಗಿಲ್ಲವೋ ಅವರಿಗೆ ಪ್ರಾಣಾಯಾಮದಿಂದಾಗತಕ್ಕಷ್ಟು ಲಾಭವಾಗಲಿಕ್ಕಿಲ್ಲ, ಪ್ರಾಣಾಯಾಮ ಮಾಡುವವರು ಕೆಳಗಿನ ಭಾವನೆಯನ್ನು ಮನಸ್ಸಿನಲ್ಲಿ ಮಾಡಬೇಕು.

ವಿಶ್ವವ್ಯಾಪಕ ಪ್ರಾಣಶಕ್ತಿಯನ್ನುನಾನು ನನ್ನ ಶರೀರದಲ್ಲಿ ಧಾರಣ ಮಾಡಿದ್ದೇನೆ. ಸರ್ವಾವಯವಗಳಲ್ಲಿ ಆ ಶಕ್ತಿಯು ಮುಟ್ಟಿ ನವ ಚೈತನ್ಯವನ್ನುಂಟು ಮಾಡಿದೆ. ಆ ಶಕ್ತಿಯಿಂದ ನನ್ನ ಸರ್ವದೋಷಗಳು ನಷ್ಟವಾಗಿ ಪವಿತ್ರತೆಯುಂಟಾಗಿದೆ.

ಭಾವನೆಯನ್ನು ಮನಸ್ಸಿನಲ್ಲಿದೃಢಪಡಿಸಿದ್ದಾದರೆ ಪ್ರಾಣಾಯಾಮವು ವಿಶೇಷ ಫಲಕಾರಿಯಾಗುವದು.ಶ್ವಾಸತಕ್ಕೊಳ್ಳುವದು ಶ್ವಾಸ ತಡೆಯುವದು ಶ್ವಾಸವನ್ನು ಬಿಡುವದು ಹೀಗೆ ಪ್ರಾಣಾಯಾಮದ ಮೂರು ಭಾಗಗಳಿವೆ. ನಾಶಿಕವು ಪ್ರಾಣದ ಸ್ಥಾನವಿದ್ದದ್ದರಿಂದ ಶ್ವಾಸೋಚ್ಛಾಸದ ಕಾರ್ಯವನ್ನು ನಾಶೀಕದಿಂದಲೇ ಮಾಡಬೇಕು. ಪ್ರಮಾದದಿಂದಲೂ ಸಹ ಮುಖದಿಂದ ಮಾಡಬಾರದು. ಪ್ರಾಣಾಯಾಮದ ಕೆಲವು ನೇಮಗಳ ಹೊರ್ತು ಉಳಿದ ಸರ್ವಶ್ವಾಸೋಚ್ಛಾಸದ ಕರ್ಮವನ್ನು ನಾಶಕದಿಂದಲೇ ಮಾಡಬೇಕು. ಮೂಗಿನಿಂದ ನಡೆಯುವ ಶ್ವಾಸೋಚ್ಛಾಸವು ಆಯುಷ್ಯವನ್ನೂ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಮುಖದಿಂದ ನಡೆಯುವ ಶ್ವಾಸೋಚ್ಛಾಸವು ಆಯುಷ್ಯವನ್ನುಕ್ಷೀಣಮಾಡಿ ರೋಗಗಳನ್ನುಂಟು ಮಾಡುತ್ತದೆ. ಈ ಪ್ರಕಾರ ನಾಶಿಕವು ಮಹತ್ವದ ಇಂದ್ರಿಯವಿದ್ದು ಅದನ್ನು ನಿರ್ಮಲವಾಗಿಡುವದು ಯೋಗಾಭ್ಯಾಸಿಯ ಪ್ರಥಮ ಕರ್ತವ್ಯವಾಗಿರುತ್ತದೆ. ಅನೇಕ ಜನರು ಈ ವಿಷಯವಾಗಿ ತೆಗೆದುಕೊಳ್ಳಬೇಕಾದಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳುವದಿಲ್ಲ. ಕೆಲವು ಜನರ ನಾಶಿಕವಂತೂ ಹೊಲಸಿನಿಂದ ತುಂಬಿಹೋಗಿ ಶ್ವಾಸಕರವು ಮುಖದಿಂದಲೇ ನಡೆದಿರುತ್ತದೆ. ಈ ಕೆಟ್ಟ ಚಟವನ್ನುದೂರಮಾಡಲು ನಾಶಿಕವನ್ನು ಸ್ವಚ್ಛವಾಗಿಡುವದೇ ಕಾರಣವಾಗಿದೆ.

ಬಾವಿಯಲ್ಲಿಯ ಸ್ವಚ್ಛವಾದ ನೀರನ್ನು ತಂದು ಥಾಲಿಯಲ್ಲಿ ಸೋಸಿಟ್ಟುಕೊಂಡು ಮೂಗಿನ ಒಂದು ಹೊರಳೆಯನ್ನು ಮುಚ್ಚಿ ಎರಡನೇ ಹೊರಳಿಯಿಂದ ಸಾವಕಾಶವಾಗಿ ಆ ನೀರನ್ನು ಸೇದಬೇಕು. ಹೀಗೆ ಎರಡೂ ಹೊರಳಿಗಳಿಗೆ ಮಾಡುವದರಿಂದ ಮೂಗು ಸ್ವಚ್ಛವಾಗುವದು. ಆ ಥಾಲಿಯಲ್ಲಿಯ ಸ್ವಚ್ಛ ನೀರಿನಲ್ಲಿ ಉಪ್ಪು ಹಾಕಿ ಉಪಯೋಗ ಮಾಡಿದರಂತೂ ಅಧಿಕ ಗುಣಕಾರಿಯಾದದ್ದಾಗುತ್ತದೆ. ನೀರನ್ನು ಮಾತ್ರ ಬಹುವೇಗದಿಂದ ಎಳೆದುಕೊಳ್ಳಬಾರದು. ಹಾಗೆ ಮಾಡುವದರಿಂದ ಮಿದುಳುಗಳಿಗೆ ಅಪಾಯವಾಗುವ ಸಂಭವವಿರುತ್ತದೆ. ಈ ಪ್ರಯೋಗವು ಅತಿ ಸುಲಭವಾಗಿರುವದರಿಂದ ಸಣ್ಣ ಸಣ್ಣ ಬಾಲಕರು ಸಹ ಮಾಡಬಹುದು.

ಮೂಗಿನ ಸರ್ವ ವಿಕಾರದ ಮೇಲೆ ಈ ಜಲಪಾನವಿಧಿಯು ಅತ್ಯಂತ ಗುಣಕಾರಿಯಾಗಿದೆ. ಮೂಗಿನ ರಕ್ತ ಬೀಳುವದಕ್ಕೂ ಮೂಗಿನಿಂದ ಹುಟ್ಟುವ ಬೊಕ್ಕೆಗಳಿಗೂ ಮೂಗಿನ ದುರ್ಗಂಧ ನಿವಾರಣೆಗೂ ತಲೆನೋವಿಗೂ ಬದ್ದಕೋಷ್ಟತೆಗೂ ಮುಖರೋಗಕ್ಕೂ ಈ ಜಲನೇತಿವಿಧಿಯು ಅತಿ ಉಪಯೋಗವುಳ್ಳದ್ದಾಗಿದೆ.

ಪ್ರಾಣಾಯಾಮವನ್ನು ಮಾಡುವದಕ್ಕಾಗಿ ಸೂರ್ಯನ ಕೋಮಲ ಕಿರಣಗಳು ಎಷ್ಟು ಪ್ರಾಪ್ತವಾಗುತ್ತವೆಯೋ ಅಷ್ಟು ಉತ್ತಮವು ಯಾಕಂದರೆ ಈ ಮುಂಚೆಯೇ ಹೇಳಿದಂತೆ ಸೂರ್ಯನ ಕಿರಣಗಳಿಂದ ಪ್ರಾಣ ಶಕ್ತಿಯು ವಿಶೇಷ ದೊರೆಯುತ್ತದೆ. ಮುಂಜಾನೆ ಸ್ನಾನ ಮಾಡಿ ಎಳೆಬಿಸಿಲಿನಲ್ಲಿ, ಮಧ್ಯಾನಕ್ಕೆ ಊಟಕ್ಕಿಂತ ಮೊದಲು ಒಂದು ತಾಸು, ಸಾಯಂಕಾಲಕ್ಕೆ ಸೂರ್ಯಾಸ್ತಕ್ಕಿಂತ ಪೂರ್ವದಲ್ಲಿ ಪ್ರಾಣಾಯಾಮವನ್ನುಮಾಡಬೇಕು. ಪ್ರಾಣಾಯಾಮವನ್ನು ಮಾಡುವ ಸ್ಥಾನವನ್ನು ಶ್ರೀ ಸ್ವಾಮಿ ವಿವೇಕಾನಂದರು ಹೇಳುವಂತೆ ಒಂದು ಏಕಾಂತವಾಗಿರುವ ಕೋಣೆಯನ್ನು ಗೊತ್ತುಮಾಡಬೇಕು. ಆ ಕೋಣೆಯಲ್ಲಿ ಯಾರೂ ಮಲಗಬಾರದು. ಅದನ್ನು ಶುದ್ಧವಾಗಿಟ್ಟಿರಬೇಕು. ಸ್ನಾನಮಾಡದೆ ಅಲ್ಲಿಗೆ ಹೋಗಬಾರದು. ಆ ಕೋಣೆಯಲ್ಲಿ ಯಾವಾಗಲೂ ಸುಗಂಧಪುಷ್ಪಗಳನ್ನಿಟ್ಟಿರಬೇಕು ಮತ್ತು ಸಾಧು ಸತ್ಪುರುಷರ ಉತ್ತಮೋತ್ತಮ ಚಿತ್ರಗಳನ್ನು ಹಚ್ಚಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ ಸುಗಂಧ ರೂಪಗಳನ್ನು ಸುಡುತ್ತಿರಬೇಕು. ರಾಗದ್ವೇಷ ಮೊದಲಾದ ಹೊಲಸು ವಿಚಾರಗಳನ್ನು ಆ ಸ್ಥಾನದಲ್ಲಿದ್ದಾಗ್ಗೆ ಮನಸ್ಸಿನಲ್ಲಿ ಸಹ ತರಕೂಡದು. ಹೀಗೆ ಮಾಡೋಣದರಿಂದ ಕಾಲಾಂತರದಲ್ಲಿ ಅಲ್ಲಿಯ ವಾತಾವರಣವು ಪವಿತ್ರತೆಯುಳ್ಳದ್ದಾಗುವದು. ಯಾವಾಗ್ಗೆ ಮನಸ್ಸಿಗೆ ಉದಾಸೀನತೆ, ದುಃಖ ಸಂಶಯ, ಚಂಚಲತಾ ಮೊದಲಾದವುಗಳು ತೊರುತ್ತವೆಯೋ ಆವಾಗ್ಗೆ ಆ ಕೋಣೆಯಲ್ಲಿ ಸಹಜವಾಗಿ ಹೋಗೋಣದರಿಂದ ಮನಸ್ಸಿಗೆ ನಿಶ್ಚಯವಾಗಿ ಶಾಂತತೆ ದೊರೆಯುತ್ತದೆ. ಈ ಉದ್ದೇಶದಿಂದಲೇ ನಮ್ಮದೇಶದಲ್ಲಿ ದೇವರಮನೆಗಳೆಂದು, ಗುಡಿಗಳೆಂದು ಮಠಗಳೆಂದು ಉಂಟಾದದ್ದು.ಆದರೆ ಕಿವಿಯೊಳಗಿನ ಮುರು ಹೋಗಿ ಕೇವಲ ರಂಧ್ರವೇ ಉಳಿಯುವಂತೆ ಉದ್ದೇಶವು ನಷ್ಟವಾಗಿ ಅದರ ಕಾರ್ಯವು ಮಾತ್ರ ಈಗ ನಮ್ಮಲ್ಲಿ ಉಳಿದಿರುತ್ತದೆ.

ಇಂಥ ಪವಿತ್ರವಾದ ಕೋಣೆಯಲ್ಲಿ ಒಂದು ಮೊಳ ಎತ್ತರ ಕಟ್ಟೆಯನ್ನು ಹಾಕಿ ಸಣ್ಣಕ್ರಿಮಿಗಳ ಹಾಗೂ ಸರ್ದಿಯ ಬಾಧೆಯಾಗದಂತೆ ವ್ಯವಸ್ಥೆ ಮಾಡಿ ಅದರ ಮೇಲೆ ದರ್ಭಾಸನ ಕಂಬಳಾಸನ ಮೊದಲಾದ ಆಸನಗಳನ್ನು ಹಾಕಿಕೊಂಡು ಸಮಕಾಯ ಶಿರೋಗ್ರೀವನಾಗಿ ಅದರ ಮೇಲೆ ಕುಳಿತು ಪ್ರಾಣಾಯಾಮವನ್ನು ಪ್ರಾರಂಭಿಸಬೇಕು.ಪ್ರಾಣಾಯಾಮವನ್ನು ಪ್ರಾರಂಭಿಸುವದಕ್ಕಿಂತ ಮೊದಲು ಪರಮಾತ್ಮನಿಗೂ ಸರ್ವಯೋಗಿಗಳಿಗೂ ಮನಃಪೂರ್ವಕವಾಗಿ ನಮಸ್ಕರಿಸಬೇಕು. ಗುರು ಮುಖದಿಂದ ತಿಳಿದು ಪ್ರಾಣಾಯಾವಯನ್ನು ನಿಯಮಬದ್ಧವಾಗಿ ರೇಚಕ ಪೂರಕ, ಕುಂಭಕಗಳನ್ನುಮಾಡಬೇಕು, ಅಂದರೆ ಪುಪ್ಪುಸದಲ್ಲಿ ಮೂಗಿನಿಂದ ಪೂರ್ಣವಾಗಿ ವಾಯುವನ್ನುತೆಗೆದುಕೊಳ್ಳುವದು ಪೂರಕವು, ತೆಗೆದುಕೊಂಡ ವಾಯುವನ್ನು ಕೆಲವು ಕಾಲ ಅಲ್ಲಿಯೇ ತಡಿಯುವದೇ ಕುಂಭಕವು. ಆ ತಡೆದ ವಾಯುವನ್ನು ಹೊರಗೆ ಬಿಡುವದೇ ರೇಚಕವು.ಈ ಪೂರಕ, ಕುಂಭಕ, ರೇಚಕಗಳ ಕಾಲ ಪ್ರಮಾಣವನ್ನು ಯೋಗಿಗಳು ನಿಶ್ಚಯ ಮಾಡಿರುತ್ತಾರೆ. ಪೂರಕವನ್ನು ಎಷ್ಟು ಕಾಲದವರೆಗೆ ಮಾಡುವರೋ ಅದರ ನಾಲ್ಕುಪಟ್ಟು ಕಾಲ ಕುಂಭಕವನ್ನು ಮಾಡಬೇಕು ಮತ್ತು ಪೂರಕದ ಎರಡು ಪಟ್ಟು ಕಾಲ ರೇಚಕವನ್ನು ಮಾಡಬೇಕು. ಅಂದರೆ ಎಂಟು ಅಂಕಿ ಪೂರಕ ಮಾಡಿದರೆ ಮೂವತ್ತೆರಡು ಅಂಕಿ ಕುಂಭಕ ಮಾಡಬೇಕು: ಹದಿನಾರು ಅಂಕಿ ರೇಚಕ ಮಾಡಬೇಕು.ಈ ಕ್ರಮಕ್ಕೆಯೇ ನಿಯಮ ಬದ್ಧಪೂರಕ, ಕುಂಭಕ, ರೇಚಕಗಳೆನ್ನುವರು. ಈ ಕ್ರಮಬದ್ದವಾದ ಪೂರಕ, ಕುಂಭಕ, ರೇಚಕದಿಂದ ಕೂಡಿದ ಪ್ರಾಣಾಯಮ ಸಂಖ್ಯೆಯನ್ನು ತಮಗೆ ಸಾಧ್ಯವಾದ ಮೇರೆಗೆ ಹೆಚ್ಚಿಸುತ್ತ ಹೋಗಬೇಕು.

ಪ್ರಾಣಾಯಾಮಾಭ್ಯಾಸಿಯು ನೆನಪಿಡತಕ್ಕ ಸಂಗತಿಗಳು

(೧) ಸಾಧಕನು ಅಗ್ನಿಸೇವನೆಯನ್ನು ಮಾಡಬಾರದು. ಯಾಕಂದರೆ ಅಗ್ನಿಯಿಂದ ಪ್ರಾಣಶಕ್ತಿಯು ನಷ್ಟವಾಗುತ್ತದೆ.

(೨) ಸಹಿಸುತ್ತಿದ್ದರೆ ಪ್ರಾತಃಕಾಲದಲ್ಲಿ ತಣ್ಣೀರಿನಿಂದಲೇ ಸ್ನಾನ ಮಾಡತಕ್ಕದ್ದು.

(೩) ಪ್ರಾಣಾಯಾಮ ಮಾಡುವಾಗ್ಗೆ ಗುಹ್ಯಸ್ಥಾನಕ್ಕೆ ಮತ್ತು ನಡುವಿಗೆ ಬಂಧನ ವಿರಬೇಕು. ಪ್ರಯುಕ್ತ ಲಂಗೋಟಿಯನ್ನು ಹಾಕಬೇಕು.

(೪) ಭೋಜನದಲ್ಲಿ ಸಾತ್ವಿಕ ಆಹಾರವಾದ ಹಾಲು ತುಪ್ಪ ಮೊದಲಾದ ಸ್ನಿಗ್ಧಪದಾರ್ಥಗಳನ್ನೂ, ಜವೆ ಗೋದಿ, ಹೆಸರು ಬೇಳೆ, ಅಕ್ಕಿ ಮೊದಲಾದವುಗಳನ್ನೂ ಉಪಯೋಗಿಸಬೇಕು. ಅಪಚನವಾಗುವವರೆಗೆ ಊಟಮಾಡಬಾರದು. ಹಸಿವೆ ಇಟ್ಟು ಕೊಂಡೇ ಊಟವನ್ನು ಮುಗಿಯಿಸಬೇಕು. ಹೊಟ್ಟೆಯು ಜಡವಿದ್ದಾಗ ಮತ್ತು ಊಟ ಮಾಡಿದಾಗ ಪ್ರಾಣಾಯಾಮವನ್ನು ಮಾಡಬಾರದು, ಅದರಂತೆ ಪ್ರಾಣಾಯಾಮವನ್ನು ಮಾಡಿದ ಕೂಡಲೇ ಭೋಜನವನ್ನು ಮಾಡಬಾರದು.

(೫) ಅತಿಶ್ರಮವನ್ನು ಎಂದೂ ಮಾಡಬಾರದು. ವಾರಕ್ಕೊಮ್ಮೆ ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು. ಹಾಗೆಯೇ ತಿಂಗಳಿಗೊಮ್ಮೆಪ್ರಖರವಾದ ಬಿಸಿಲಿನಲ್ಲಿ ಲಂಗೋಟಿಯನ್ನು ಹಾಕಿಕೊಂಡು ಮೂಗು, ಬಾಯಿ,ಮಸ್ತಕಗಳ ಮೇಲೆ ನಾಲ್ಕು ಪದರಿನ ವಸ್ತ್ರವನ್ನು ಹಾಕಿಕೊಂಡು ಸೂರ್ಯ ಕಿರಣ ಸ್ನಾನವನ್ನು ಮಾಡಿ ಬೆವರನ್ನು ತೆಗೆಯಬೇಕು.

ಪ್ರಾಣಾಯಾಮದ ಮುಂದಿನ ಅಂಗವು ಪ್ರತ್ಯಾಹಾರವು ಅಂದರೆ ಇಂದ್ರಿಯಗಳು ಮತ್ತು ಮನಸ್ಸು ಯಾವಾಗಲೂ ವಿಷಯಗಳಲ್ಲಿಯೇ ಸಂಬಂಧವಾಗಿರುತ್ತವೆ. ಆ ಸಂಬಂಧವಾದವುಗಳಲ್ಲಿ ಪ್ರತಿಬಂಧ ಮಾಡುವದೇ ಅರ್ಥಾತ್ ಬಹಿರ್ಮುಖವಾದ ಇಂದ್ರಿಯಗಳನ್ನು ಅಂತರ್ಮುಖ ಮಾಡುವದೇ ಪ್ರತ್ಯಾಹಾರವು. ಈ ಪ್ರತ್ಯಾಹಾರವು ಸಾಧಿಸಿದರೆ ಮನಸ್ಸು ಚಿತ್ತಾಕಾರವಾಗುತ್ತದೆ. ಆಮೇಲೆ ಇಂದ್ರಿಯಗಳ ನಿರೋಧವು ತಾನಾಗಿಯೇ ಪೂರ್ಣವಾಗುತ್ತದೆ. ಪ್ರತ್ಯಾಹಾರದ ಮುಂದಿನ ಅಂಗವು ಧಾರಣೆಯು. ದೇಹದ ಒಳಗಾಗಲೀ ಅಥವಾ ಹೊರಗಾಗಲೀ ಇಲ್ಲವೆ ಬೇರೆ ಯಾವುದಾದರೂ ಒಂದು ಪವಿತ್ರ ವಸ್ತುವಿನಲ್ಲಿ ಯಾಗಲೀ ಚಿತ್ರವನ್ನು ನಿಲ್ಲಿಸಲಿಕ್ಕೆ ಪ್ರಯತ್ನಿಸುವದೇ ಧಾರಣೆಯು, ಉದಾಹರಣೆ. ದೇಹದ ಒಳಗೆ ಅಂದರೆ ನವಚಕ್ರಗಳಲ್ಲಿರುವ ನವಲಿಂಗಗಳಲ್ಲಿ ಹೊರಗೆ ಅಂದರೆ, ಭೂಮಧ್ಯೆ, ನಾಶಿಕಾಗೋ, ಇಷ್ಟದೇವತೆ ಮೊದಲಾದವುಗಳು ಪವಿತ್ರವಾದ ಯಾವ ವಸ್ತುವಿನಲ್ಲಿಯಾದರೂ ಚಿತ್ತವನ್ನು ನಿಲ್ಲಿಸಲೆತ್ನಿಸುವದೇ ಧಾರಣೆಯು.  ಧಾರಣೆಯು ಸಿದ್ಧಿಸಿದ ಮೇಲೆ ಧ್ಯಾನವು, ಧಾರಣೆಯಲ್ಲಿ ಒಂದು ವಸ್ತುವಿನ ಮೇಲೆ ಇಟ್ಟ ಚಿತ್ರವು ಕ್ಷಣಕ್ಷಣಕ್ಕೆ ಚಂಚಲ ವಾಗಿರುತ್ತದೆ. ಆದರೆ ಯಾವಾಗ ಚಿತ್ತ ಚಂಚಲತೆಯನ್ನು ಬಿಟ್ಟು ತೈಲಧಾರೆಯಂತೆ ಒಂದೇ ಸವನೆ ಆ ವಸ್ತುವಿನಲ್ಲಿ ನಿಲ್ಲಲಿಕ್ಕೆ ಪ್ರಾರಂಭವಾಗುವದೋ ಆವಾಗ್ಗೆ ಅದಕ್ಕೆ ಧ್ಯಾನವೆನ್ನುತ್ತಾರೆ. ಒಂದೇ ವಿಷಯದ ಸಾಧನೆಗೆ ಧಾರಣೆ; ಸಾಧ್ಯಕ್ಕೆ ಧ್ಯಾನವೆನ್ನುವರು.

ಧ್ಯಾನವು ಸಿದ್ದಿದ ಮೇಲೆ ಪ್ರಾಪ್ತವಾಗುವ ಸ್ಥಿತಿಯೇ ಸಮಾಧಿಯು.

“ಸಮ್ಯಕ್ ಆಧೀಯತೇ ಮನಃ ಸಮಾಧಿಃ “ ಅಂದರೆ ಮನಸ್ಸಿನ ಆಚಂಚಲ ಸ್ಥಿತಿಯೇ ಸಮಾಧಿಯು, ಬಾಹ್ಯ ಸ್ವರೂಪವನ್ನು ಬಿಟ್ಟು ಅಂತಃ ಸ್ವರೂಪದಲ್ಲಿ ಮನಸ್ಸು ತದಾಕಾರವಾಗುವದೇ ಸಮಾಧಿಯು.

ಜ್ಞಾತಾ, ಜ್ಞಾನ, ಜ್ಙೇಯ ಅಂದರೆ ಧ್ಯಾನಿಸುವವನು, ಧ್ಯಾನಿಸುವ ಸಾಧನೆ, ಧ್ಯಾನಿಸುವ ವಸ್ತು ಇವುಗಳ ಜ್ಞಾನವಿರುವದೇ ಧ್ಯಾನವು. ಈ ತ್ರಿಪುಟಿಗಳ ಎಚ್ಚರಿಕೆ ಇಲ್ಲದಿರುವದೇ ಸಮಾಧಿಯು.

ತನ್ನನ್ನು ತಾನು ಮರೆತು ಚಿತ್ತವು ಪರಮಾತ್ಮನಲ್ಲಿ ಏಕಾಕಾರವಾಗುವದೇ ಸಮಾಧಿಯು, ಇಂಥ ಸಮಾಧಿ ಸ್ಥಿತಿಯನ್ನು ಅಥವಾ ಕೈವಲ್ಯವನ್ನು ಹೊಂದುವದೇ ಹಠಯೋಗಿಗಳ ಮತ್ತು ರಾಜಯೋಗಿಗಳ ಧೈಯವಾಗಿರುತ್ತದೆ.

ಇಲ್ಲಿಯವರೆಗೂ ಸಂಕ್ಷಿಪ್ತವಾಗಿ ವಿವರಿಸಿದ ಯೋಗಾಂಗಗಳಲ್ಲದೆ ಶಿವಲಿಂಗಪೂಜೆ, ಶಿವಾನುಸಂಧಾನ, ಶಿವಭಕ್ತಿ ವಿಜ್ಞಾನ, ಶಿವವ್ರತವೆಂಬೈದು ಹೆಚ್ಚಾದಂಗಗಳಿಂದ ಕೂಡಿ ಅಂಗತ್ರಯಗಳೆ ಲಿಂಗತ್ರಯ ಸಂಬಂಧಮಾಡಿ  ಲಿಂಗಭೋಗೋಪ ಭೋಗವುಳ್ಳ ತತ್ವವನ್ನೊಳಗೊಂಡ ಲಿಂಗಾಂಗ ಸಾಮರಸ್ಯ ಜ್ಞಾನವೇನುಂಟೋ ಅದುವೇ ಶಿವಯೋಗವು ಇಂಥ ಶಿವಯೋಗ ಸುಖವು ನಮ್ಮೆಲ್ಲರಿಗೂ ಸುಲಭವಾಗಿಸಾಧಿಸಲೆಂದೆಣಿಸಿ ಶಿವಯೋಗ ಮಂದಿರವೆಂಬ ಸಂಸ್ಥೆಯನ್ನೇರ್ಪಡಿ: ಶಿವಯೋಗ ತತ್ವವನ್ನುರುಹಿ ಶಿವನೊಳ್ ಬೆರೆದ ಪರಮ ಶಿವಯೋಗಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಿಗೆ ನನ್ನ ಅನೇಕ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ.

Related Posts