ಶಿವಯೋಗ ಮಂದಿರ

ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ

ಶರಣಾರ್ಥಿ ಶರಣಾರ್ಥಿ ಶರಣು ಶರಣಾರ್ಥಿ

ಎನ್ನಯ್ಯ ಗುರುರಾಯ ಗುರುದೇವ ಗುರುಕುಮಾರ

ನೀನೆನ್ನ ತಾಯ್ತಂದೆ ಗುರುದೈವ ಬಂಧುಬಳಗ

ನಿನ್ನರಸಿ ಬಂದೆನಿಲ್ಲಿಗೆ ದೇವಾ.

ಕುಲವುಳ್ಳ ನಾ ಕುಲರಹಿತ,

ಭವಿಗೇಡಿಯಾದೆನೆಲೆದೇವಾ……..೧

ಏನ ಹೇಳಲಿ ತಂದೆ ಈ ಧರೆಯ ಸೋಜಿಗವಾ!

ಎತ್ತರದ, ಬತ್ತಿರದ, ಸುತ್ತಿರದ ಈ ವನವು

ಮತ್ತಿರದ ಶಿವಯೋಗ ಮಂದಿರವು ಈ ಜಗವು.

ಮನ್ನಾಥ ಮದ್ಗುರುವು ಪರಂಜ್ಯೋತಿ ಸುಕುಮಾರ

ಜಗದಂತರಂಗ ಮಾನವನ ಹೃದಯದಲಿ ಬಿತ್ತಿದನು

ಲಿಂಗಾಂಗ ಸಂಯೋಗ ಕ್ರಿಯೆಯನು.

ಏನ ಹೇಳಲಿ ದೇವಾ ಬಯಲ ಸಡಗರವಾ!

ಕಣ್ಣಿಲ್ಲ ನೋಡಿ ಕಿವಿಯಿಲ್ಲ ಕೇಳಿ………೨

ನನ್ನವರು ನನ್ನೂರು ನನ್ನದು ನಾನೆಂಬ

ನನ್ನನ್ನು ನಾನಿನ್ನು ನನ್ನಿಂದ ಜಗವೆಂಬ

ಲೋಕದಾ ಮಾತನ್ನು ಹೊಸಕಿ ಕೊಂದಿಹಿರಿಲ್ಲಿ.

ಲೊಕದಾ ಮಾತೇನು? ಬಳುವಳಿಯ ಸೊತ್ತಿದು!

ಬಳಕುತಾ ಬಂದ ಬಳುವಳಿಯ ಕಿತ್ತ್ಹೊಸಕಿ

ಸಲುಹಿದಿರಿ ಗುರು ತಂದೆ.

ನಾ ಕಾಣೆ ಈ ಬೆಳಕಿನಾಟವನೆಂದು! …..೩

Related Posts