ಶಿವಯೋಗಮಂದಿರದ ನಿಸರ್ಗ ಸೌಂದರ್ಯ

ಡಿ. ಎಸ್. ಕರ್ಕಿ

ಇದೋ ಮಂದಿರ ಶಿವಮಂದಿರ

ಶಿವಯೋಗದ ಮಂದಿರ

ಪ್ರಕೃತಿಯ ಪರಮಾನಂದದ

ಸುಧೆ ಸೂಸುವ ಚಂದಿರ

ಹೊಳೆಗೆ ತನ್ನದೇ ಆದ ಚೆಲವು ಉಂಟು. ಗುಡ್ಡಕ್ಕೆ ಅದರದೇ ಆದ ಚೆಲವು ಇರುತ್ತದೆ. ಹೊಳೆಯ ಚೆಲುವೂ ಗುಡ್ಡದ ಚೆಲುವೂ ಕೂಡಿದ ಸ್ಥಳದಲ್ಲಂತೂ ಚೆಲುವು ಚೆಲ್ಲವರಿಯದಿರದು. ಜಲಶ್ರೀ ವನಶ್ರೀಗೆ ಸನ್ನಿಹಿತವಾದಾಗ ಸೌಂದರ್ಯಕ್ಕೆ ಸಾಕಾರದ ರೂಪ ಪ್ರಾಪ್ತವಾಗದಿದ್ದೀತೇ ? ಅವೆರಡರ ಯೋಗ ನಿಜವಾಗಿಯೂ ಸೌಂದರ್ಯ ಯೋಗ ಶಿವಯೋಗಮಂದಿರವು ಇಂಥ ಸೌಂದರ್ಯ ಯೋಗದ ಒಂದು ಸ್ಥಳ; ಉತ್ತರ ಕನ್ನಡ ನಾಡಿನ ನದಿಗಳಲ್ಲಿ ಮಲಪ್ರಭೆ ಹಿರಿಹೊಳೆಯೇನೂ ಅಲ್ಲ. ಆದರೂ ಅದರ ತೀರದಲ್ಲಿ ಸೌಂದರ್ಯಸ್ಥಾನಗಳು ಪ್ರವಾಸಿಯ ಕಣ್ಣನ್ನು ಅಲ್ಲಲ್ಲಿ ಕುಣಿಸುತ್ತವೆ. ಆದುದರಿಂದಲೇ ಅದರ ತೀರದಲ್ಲಿ ಕನ್ನಡಿಗರು ಅನೇಕ ಕ್ಷೇತ್ರಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬಾದಾಮಿಯ ಬನಶಂಕರಿ, ಮಹಾಕೂಟ ಮೊದಲಾದವುಗಳು ಮಲಪ್ರಭೆಯ ತೀರದ ಸಮೀಪದಲ್ಲಿ ನೆಲಸಿವೆ. ಕನ್ನಡ ನಾಡಿನ ಅತ್ಯಂತ ಮಹತ್ವದ ಪುರಾತನ ಐತಿಹಾಸಿಕ ಪಟ್ಟಣಗಳಲ್ಲಿ ಕೆಲವು ಮ ಲಪ್ರಭೆಯ ತೀರದಲ್ಲಿ ನೆಲಸಿವೆ. ಅವುಗಳಲ್ಲಿ ಐಹೊಳಿ, ಪಟ್ಟದಕಲ್ಲು ಮೊದಲಾದವುಗಳನ್ನು ಹೆಸರಿಸಬಹುದು. ಅಂತೂ ಕನ್ನಡ ನಾಡಿನ ಕ್ಷೇತ್ರಗಳ ದೃಷ್ಟಿಯಿಂದ ಹಾಗು ಪ್ರಕೃತಿ ಸೌಂದರ್ಯದ ದೃಷ್ಟಿಯಿಂದ ಮಲಾಪಹಾರಿಗೆ ಒಂದು ವೈಶಿಷ್ಟ್ಯವಿದೆ. ಸೌಂದರ್ಯವೆಂಬ ಅಂಜನದಿಂದ ಕಣ್ಣಿನ ಮಲವನ್ನು ತೊಳೆಯುವ ಗಣ್ಯತೆ ಮಲಪ್ರಭೆಗೆ ಇರುವುದರಿಂದಲೇ ಮಲಾಪಹಾರಿ ಎಂಬ ಅನ್ವರ್ಥಕ ನಾಮ ಅದಕ್ಕೆ ರೂಢವಾಗಿರಬಹುದೇನೋ ! ಈಚೆಗೆ ಮಲಪ್ರಭೆಯ ತೀರದಲ್ಲಿ ಶಿವಯೋಗಮಂದಿರವು ಈ ಊಹೆಯನ್ನು  ಸಮರ್ಥವಾದ ರೀತಿಯಲ್ಲಿ ಮನಗಾಣಿಸುವಂತಿದೆ.

ಶಿವಯೋಗಮಂದಿರ ! ಸುಂದರವಾದ ಸ್ಥಳಕ್ಕೆ ತುಂಬಾ ಸಮಂಜಸವಾದ ಹೆಸರು, ಶಿವ, ಯೋಗ, ಮಂದಿರ- ಈ ಮೂರರಲ್ಲಿ ನಮಗೆ ಮೂರೂ ಬೇಕು. ಮಹೇಶ್ವರನ ಹೆಸರುಗಳಲ್ಲಿ ‘ಶಿವ’ ಎಂಬ ಹೆಸರು ಎಷ್ಟು ಚಿಕ್ಕದೋ ಅಷ್ಟೇ ಅರ್ಥಪೂರ್ಣವಾದುದು. ಸತ್ಯಂ, ಶಿವಂ ಸುಂದರಂ-ಎಂಬ ಜೀವನದ ಸರ್ವೋತ್ಕೃಷ್ಟ ತತ್ವಗಳಲ್ಲಿ ‘ಶಿವ’ ಶಬ್ದವು ಮಧ್ಯವರ್ತಿಯಾಗಿ, ಎಂದರೆ ಸತ್ಯವನ್ನು ಸೌಂದರ್ಯವನ್ನು ಸಮರಸಗೊಳಿಸುವ ಶುಭ ಸತ್ವವಾಗಿ ಸಮಾವೇಶವಾಗಿದೆಯೆಂಬುದನ್ನು ನೆನೆಯಬೇಕು. ಮಹಾದೇವನ ಮಂಗಲಮಯವಾದ, ಕರುಣಾ ಪೂರ್ಣವಾದ ಮಹೋನ್ನತವಾದ ಸ್ವರೂಪವನ್ನು ‘ಶಿವ’ ಶಬ್ದವು ಎರಡೆಂದರೆ ಎರಡೇ ಅಕ್ಷರಗಳಲ್ಲಿ ನಿರೂಪಿಸುತ್ತದೆ. ‘ಶಿವ’ ಶಬ್ದಕ್ಕೆ ‘ಶುಭ’ ಎಂಬ ಅರ್ಥವೂ ಉಂಟು. ಹೀಗೆ ಶುಭದಿಂದ ಪ್ರಾರಂಭವಾಗುತ್ತದೆ ‘ಶಿವಯೋಗಮಂದಿರದ ಹೆಸರು ಶುಭಕ್ಕೆ ‘ಯೋಗ’ದ ಯೋಗ ದೊರೆತು ಆನಂದದ ಆಗರವಾದಂತಿದೆ ಶಿವಯೋಗಮಂದಿರ.

ಶಿವಯೋಗಮಂದಿರದ ರಚನೆಗಾಗಿ ಸುಂದರವಾದ ಸನ್ನಿವೇಶವನ್ನು ಆಯ್ದ ಪ್ರತಿಭೆ ಸಾಮಾನ್ಯವಾದುದಲ್ಲ. 

ಸೌಂದರ್ಯರ್ಯಾನುಭವವನ್ನು ಶಿವಾನುಭವವನ್ನು ತನ್ನಲ್ಲಿ ಸಮರಸಗೊಳಿಸಿಕೊಂಡ ಪ್ರತಿಭೆಯದು. ಅದು  ಹಾನಗಲ್ಲ ಕುಮಾರ ಸ್ವಾಮಿಗಳಮಹಾ ವ್ಯಕ್ತಿತ್ವವನ್ನು ಬೆಳಗಿದ ಪ್ರತಿಭೆ.ಲಿಂಗೈಕ್ಯ ಹಾನಗಲ್ಲ ಕುಮಾರ ಶ್ರೀಗಳವರು ತಾವು ತಮ್ಮ ಚಿತ್ತದಲ್ಲಿ ಕಲ್ಪಿಸಿದ ಶಿವಯೋಗಮಂದಿರಕ್ಕಾಗಿ ಒಂದು ಅಂದವಾದ ಸ್ಥಳವನ್ನು ಅರಸುವ ಹೊಣೆಯನ್ನು ಲಿಂಗೈಕ್ಯ ಇಲಕಲ್ಲ ಮಹಾಂತ ಶಿವಯೋಗಿಗಳಿಗೆ ಒಪ್ಪಿಸಿದರು.ಇಲಕಲ್ಲ ಶ್ರೀಗಳವರ ಆಕಳು ಅಲೆಯುತ್ತ,ಅಲೆಯುತ್ತ ಈಗ ರಚಿತವಾಗಿರುವ ಶಿವಯೋಗಮಂದಿರದ ಸ್ಥಳದಲ್ಲಿ  ಒಮ್ಮಲೇ ಬಂದು ನಿಂತಿತಂತೆ ಆಗ ಆ ಸ್ಥಳ ಜನರ ಸಂಪರ್ಕ ದಿಂದ ಅತೀ ದೂರವಾಗಿ ಕಾಡಿನಲ್ಲಿ ಅಡಗಿಹೋದ ಸ್ಥಳ .ಶ್ರೀಗಳವರ ಘನವ್ಯಕ್ತಿತ್ವದ ಪ್ರಭಾವದಲ್ಲಿ  ಅದು ಶಿವಯೋಗಮಂದಿರವಾಗಿ ರಚನೆಗೊಂಡಿತು. ಪರಮಾತ್ಮನ ಕೃಪೆಯಿಂದಾಗಿ ಪ್ರಕೃತಿಗೆ ಪುಳಕವೇರಿದಂತಾಯ್ತು

ಮಂದಿರದ ಸ್ಥಳವು ಸೌಂದರ್ಯ ಯೋಗಕ್ಕೂ, ಶಿವಯೋಗಕ್ಕೂ. ತುಂಬಾ ಯೋಗ್ಯವಾದುದು, ಮಲಪ್ರಭೆಯ ತಟದಲ್ಲಿ ಮಂದಿರ ಮೂಡಿ ನಂದಾದೀಪವನ್ನು ಬೆಳಗುತ್ತಲಿದೆ. ಒಂದು ಬದಿಯಲ್ಲಿ ಮಲಪ್ರಭೆ ಪ್ರವಹಿಸುತ್ತಿದ್ದರೆ ಇನ್ನೊಂದು ಬದಿಗೆ ಎತ್ತರವಲ್ಲದ ಗುಡ್ಡಗಳು ತಮ್ಮ ತೋಳುಗಳನ್ನು ಚಾಚಿವೆ. ಗುಡ್ಡದ ಗಿಡಗಳು ಎತ್ತರವಾದವುಗಳಲ್ಲ ಪ್ರಕೃತಿ ಇಲ್ಲಿ ನಿಂತು ರಮಣೀಯ ದೃಶ್ಯ ಕಾವ್ಯವನ್ನು ರಚಿಸಿದುದಲ್ಲದೆ ಶ್ರಾವ್ಯಕಾವ್ಯವನ್ನೂ ರಚಿಸಿದ್ದಾಳೆ. ಎತ್ತರ ಎತ್ತರ ಬಂಡೆಗಲ್ಲುಗಳಿಂದ ಪ್ರಕೃತಿ ರಚಿಸಿದ  ಸೋಪಾನಗಳನ್ನು ಮಲಪ್ರಭೆ ಉತ್ಸಾಹದಿಂದ  ಇಳಿದು ಮುಂದುವರಿಯುವಾಗ ಅವಳ ಉತ್ಸಾಹದ ನಡೆ ನಾದವಾಗಿ ಪರಿಣಮಿಸಿದೆ, ಅದುವೆ ಇಲ್ಲಿ ನಿನದಿಸುವ ದಿಗುಡು.

ನಾದಯೋಗ : ಜೋಗವನ್ನು ನೆನೆದಾಗ ನನಗೆ ಯೋಗದ ನೆನಪು ಬರುತ್ತದೆ. ಅಲ್ಲಿ ನಾಟ್ಯವಾಡುವ ಶರಾವತಿ ಯೋಗದಲ್ಲಿ ತೊಡಗಿದಂತೆ ಭಾಸವಾಗುತ್ತದೆ. ಈ ಯೋಗದಿಂದಾಗಿಯೇ ಜೋಗಕ್ಕೆ ಜೋಗವೆಂಬ ಹೆಸರು ಬಂದಿರಬಹುದೇ ? ಅದೇನೇ ಇರಲಿ ಶಿವಯೋಗಮಂದಿರದ ಸ್ಮರಣೆ ಬಂದಾಗ ನನಗೆ ಮಲಪ್ರಭೆಯ ನಾದಯೋಗದ ನೆನಪು ಬರುತ್ತದೆ. ಒಂದೇ ಸವನೆ ನಿನದಿಸುವ ಮಲಾಪಹಾರಿಯ ದನಿ ಚಿತ್ತವನ್ನು ಒಂದಿಷ್ಟೂ ಕದಡದೆ ಅದರ ಏಕಾಗ್ರತೆಗೆ ಸಹಾಯಕವಾಗುವುದೆಂಬುದನ್ನು ಶಿವಯೋಗಮಂದಿರಕ್ಕೆ ಹೋಗಿ ಮನಗಾಣಬೇಕು. ನಾದ ಅಲ್ಲಿ ಧ್ಯಾನದ ಕಲ್ಪನೆಯನ್ನು ದೃಢೀಕರಿಸುತ್ತದೆ. ಪ್ರಶಾಂತವಾದ ಆ ಸ್ಥಳದಲ್ಲಿ ಪವಿತ್ರವಾದ ಆ ಎಡೆಯಲ್ಲಿ ತಾಳಲಯದೊಡನೆ ಹೊಮ್ಮುವ ಆ ನಾದವು ಅಲ್ಲಿ ನಾದಬ್ರಹ್ಮವಾಗಿದೆ.

ಸಲಿಲಯೋಗ : ಈ ಸ್ಥಳದ ಸೌಂದರ್ಯಕ್ಕೆ ಕಾರಣವಾದ ಇನ್ನೊಂದು ಮಹತ್ವದ ಸಂಗತಿಯೆಂದರೆ  ಅದಕ್ಕೆ ಒದಗಿದ  ಸಲಿಲಯೋಗ, ಹಳ್ಳವಾಗಿ, ಹೊಳೆಯಾಗಿ, ಕೊಳವಾಗಿ, ಕಾಲುವೆಯಾಗಿ ಸಲಿಲವು ಶಿವಯೋಗ ಮಂದಿರವನ್ನು  ಸಮೀಪವರ್ತಿಯಾಗಿ ಬಳಸಿದೆ. ಮಲಪ್ರಭೆಯ ಮಾತನ್ನಂತೂ ಈ ಮೊದಲೆ ಹೇಳಲಾಗಿದೆ. ಶಿವಯೋಗ ಮಂದಿರದಿಂದ ಎರಡು ಮೈಲು ಗುಡ್ಡದ ಓರೆಯ ಚೆಲುವನ್ನು ನೋಡುತ್ತ ಸಾಗುವುದರೊಳಗಾಗಿ “ಮಹಾಕೂಟ’ವು ನೋಟವನ್ನು ಸೆಳೆಯುತ್ತದೆ. ಅದನ್ನು ಸುತ್ತುವರಿದ ಜಲ ಅಲ್ಲಿ ಚೆಲುವನ್ನು ಚಿಗುರಿಸಿದೆ. ಶಿವಯೋಗ ಮಂದಿರದಿಂದ ಬಾದಾಮಿಯ ದಿಕ್ಕಿನಲ್ಲಿ ಸಾಗಿದರೆ ಮಧ್ಯದಲ್ಲಿ ಬನಶಂಕರಿಯ ಬನ ನಮ್ಮ ಕಣ್ಮನಗಳನ್ನು ಸೆಳೆಯುತ್ತದೆ. ಸುತ್ತಲಿನ ಪ್ರಶಸ್ತ ಸನ್ನಿವೇಶದಲ್ಲಿ ಸರಸ್ವತೀ ಹಳ್ಳದ

ಪಕ್ಕದಲ್ಲಿ ಹಳ್ಳದ ಜಲ ಕಾಲುವೆಗಳಲ್ಲಿ ಹರಿದು ತೆಂಗು, ಬಾಳೆಗಳ ಬನಗಳಿಗೆ ನೀರು ನೀಡಿ ತಂಪು ಮಾಡಿದೆ. ಸೊಗಸಾದ ತಾಣದಲ್ಲಿ ಸುವಿಶಾಲ ಕೊಳ್ಳವೊಂದರ ತಡಿಯಲ್ಲಿ ಬನಶಂಕರಿ ತಣಿದ ಮನಶಂಕರಿಯಾಗಿ ಅಲ್ಲಿ ನೆಲೆಸಿದ್ದಾಳೆ. ಸೊಗಸಾಗಿ ಹರಿಯುವ ಸರಸ್ವತಿಯ ಹಳ್ಳ ಶಂಕರಿಯ ಬನಕ್ಕೆ ನೀರ ನೀಡಿ ಕೃತಾರ್ಥವಾಗಿದ್ದಂತೆ ಅದರ ಸಮೀಪದಲ್ಲಿಯೇ ಮಲಪ್ರಭಾ ನದಿ ಶಿವನಯೋಗಕ್ಕೆ ಯೋಗ್ಯ ಸನ್ನಿವೇಶವನ್ನು ಶಿವಯೋಗಮಂದಿರದ ರೂಪದಲ್ಲಿ ಕಲ್ಪಿಸಿದೆ. ಅಂತೂ ಶಿವ  ಸರ್ವಮಂಗಳೆಯರಿಬ್ಬರೂ ಸಲಿಲ ಸೌಂದರ್ಯದ ಮಧ್ಯದಲ್ಲಿ ಮನೆ ಮಾಡಿದ ರಸಿಕರು ! ಶಿವಯೋಗ ಮಂದಿರದಲ್ಲಿ ಒಂದೆಡೆಗೆ ಜಲ ಸೋಪಾನಗಳನ್ನಿಳಿಯುವಂತೆ – ಜಲ ಜಲನೆ ಇಳಿದು ಹರಿಯುತ್ತಿದ್ದರೆ ಇನ್ನೊಂದೆಡೆಗೆ ಲತಾಮಂಟಪದ ಹತ್ತಿರ  ಮಡುಗಟ್ಟಿ ಗಂಭೀರವಾಗಿರುವುದು ಕಂಡು  ಬರುತ್ತದೆ. ಒಂದೊಂದು ಚೆಲುವಿನ ಒಂದು ಬಗೆ. ಶಿವಯೋಗ ಮಂದಿರಕ್ಕೆ ವ್ಯಾಸಂಗಕ್ಕಾಗಿ ಬರುವ, ಬಂದ ವಟುಗಳ ಸಲುವಾಗಿ ಏರ್ಪಡಿಸಿದ ನಿವಾಸ ಸ್ಥಾನದ ಮುಂದುಗಡೆಯಲ್ಲಿ ಲತಾಮಂಟಪ ತನ್ನ ನೆಳಲ ಬಲೆಯನ್ನು ಹರಡಿದೆ; ಬಳಿಲು ಬಳಿಲಿನ ಚೆಲುವನ್ನು ಹೆಣೆದಿದೆ. ಬೇಸಗೆಯಲ್ಲಿ ಲತಾ ಮಂಟಪದಲ್ಲಿ ಕುಳಿತು  ನೋಡಬೇಕು; ತೃಪ್ತಿಯಾಗದಿದ್ದರೆ ಒರಗಿ ನೋಡಬೇಕು. ಆಗ ಅದರ ಸೊಂಪಿನ ಕಲ್ಪನೆಯಾಗುವುದು. ಅದರ ಅಡಿಯಲ್ಲಿ ಹರಿಯುವ ಹೊಳೆಯ ತಂಪು ತೇಲಿ ತೇಲಿ ಬರುತ್ತಿರುವಾಗ ಅದಕ್ಕೆ ಮೈಯೊಡ್ಡಿ ಆನಂದದ ಅನುಭವವನ್ನು ಪಡೆಯಬೇಕು. ಬೆಳುದಿಂಗಳಲ್ಲಿ ಅಲ್ಲಿ ಎಡೆಯಾಗುವ ಭಾಗ್ಯ ದೊರೆತರಂತೂ ಆಗುವ ಆನಂದವನ್ನು ಏನೆಂದು ಹೇಳಬೇಕು ?

ಜಲ ಮಡುಗಟ್ಟಿದ ಈ ದಡ

ದಲಿ ನೆಲಸಿದ ಸೌಂಧರ

ಲತ ಲತೆ ಜತೆಗೂಡಿ ನೆಳಲ

ನೆಯ್ದಕ್ಕಿದೆ ಹಂದರ

ಕುಳ್ಳಿರು ಈ ತಂಪಿನಲ್ಲಿ

ಒಂದಾಗುವ ಸೋಂಪಿನಲ್ಲಿ

ತೇಲಲಿ ಎದೆ ತಂಪಿನಲ್ಲಿ

ನೈರ್ಮಲ್ಯದ ಸಂಗಕೆ

ಕರ್ಕಶ ಕಾರ್ಶ್ಯವೆಲ್ಲ

ಕರಗುವ ರಸರಂಗಕ್ಕೆ

ಸಂಸ್ಕೃತಿಯೋಗ : ಪ್ರಕೃತಿ ಸೌಂದರ್ಯಕ್ಕೂ ಶಾಂತಿಗೂ ಒಂದು ನಿಕಟ ಸಂಬಂಧವುಂಟೆಂದು ಹೇಳಬಹುದು. ಪ್ರಕೃತಿಯ ಲೀಲಾ ವಿಲಾಸ ಜನದಟ್ಟಣೆಯಿಂದ ದೂರವಾದಷ್ಟೂ ಅದರ ಶಾಂತಿಯ ಸ್ವರೂಪ ನಿಚ್ಚಳವಾಗುತ್ತದೆ. ಆದುದರಿಂದಲೇ ಪ್ರಕೃತಿಯ ಆವರಣದಲ್ಲಿ ತೆರೆದ ತಮ್ಮ ಸಂಸ್ಕೃತಿ ಶಿಕ್ಷಣ ಕೇಂದ್ರವನ್ನು ರವೀಂದ್ರರು ಶಾಂತಿನಿಕೇತನ’ವೆಂದು ಕರೆದುದು. ಪ್ರಕೃತಿ ಶಾಂತ ರೀತಿಯಲ್ಲಿ ಸಂಸ್ಕೃತಿ ಶಿಕ್ಷಣವನ್ನು ಒದಗಿಸುತ್ತದೆ. ಪ್ರಕೃತಿಯ ಯೋಗ ಚಿತ್ತಕ್ಕೆ ಒದಗಿದಾಗ ಅದು  ಶಾಂತಿಯಲ್ಲಿ ಹಾಗೂ ಸಂಸ್ಕೃತಿಯಲ್ಲಿ ಪರಿಣಮಿಸುತ್ತದೆ. ಪ್ರಕೃತಿಯ ಪ್ರಭಾವಕ್ಕೆ ಪಡಿನುಡಿಯುವ ಚಿತ್ತವಿದ್ದರಂತೂ ಅದು ಉಂಟು ಮಾಡುವ ಪರಿಣಾಮವನ್ನು ಏನೆಂದು ಉಪಮಿಸಬೇಕು.?

ಶಿವಯೋಗ ಮಂದಿರದ ಪ್ರಶಾಂತ ವಾತಾವರಣದಲ್ಲಿ ಸುಳಿದು ಕಣ್ಣನ್ನು ತಣಿಸುವ ಇನ್ನೊಂದು ನೋಟವೆಂದರೆ ಅಲ್ಲಿಯ ಶಾಂತಿಯೊಡನೆ ಸಮರಸವಾಗಿ ಮೇಯುವ ಗೋವುಗಳು, ಶಿವಯೋಗಮಂದಿರಕ್ಕೆ ಹಾಲಿನ ಪೂರೈಕೆಯಾಗುವುದು ಆ ಗೋವುಗಳಿಂದ, ಶಿವಯೋಗಮಂದಿರ ಶಾಂತಿಯನ್ನು ಮೌನವನ್ನು ಮಲಪ್ರಭೆಯ ದಿಡುಗು ಹೆಚ್ಚಿಸಿ ಧ್ಯಾನಾಸಕ್ತವಾಗಬಲ್ಲ ಮನಕ್ಕೆ ಅದೊಂದು ಸಂಗೀತದ ಹಿನ್ನೆಲೆಯಾಗಿ ಪರಿಣಮಿಸುತ್ತದೆ.

ಇದೋ ಹಗಲಿನ ಮಾತಾಯಿತು. ಸಂಜೆಯಾಗಿ ಧರೆಯ ಮೇಲೆ ಇರುಳಿಸಿ ನೆರಳು ಕವಿಯುತ್ತ ಹೋದಂತೆ ಶಿವಯೋಗಮಂದಿರದ ಮೌನ ಇನ್ನು ಗಂಭೀರವಾಗುತ್ತದೆ. ಆಕಾಶದ ನೀಲದಲ್ಲಿ ಆ ಮೌನ ವ್ಯಾಪಿಸಿ ಚಿಕ್ಕೆ ಚಂದ್ರರನೆಲ್ಲ ಮೌನ ಧ್ಯಾನದಲ್ಲಿ ಲೀನಗೊಳಿಸುತ್ತದೆ. ಇಂಥ ವಾಗ್ವಿಲಾಸಮಯ ಮೌನದ ತಾಣದಲ್ಲಿ ಇರುಳನ್ನು ಕಳೆದು ನೋಡಬೇಕು ಚಿಕ್ಕೆ ಚಂದ್ರರೊಡನೆ ಶಿವಯೋಗದ ಹಾಗು ಸೌಂದರ್ಯ ಯೋಗದ ಕಲ್ಪನೆಯಾಗಬೇಕಾದರೆ, ಸರಿ, ಲಿಂಗೈಕ್ಯ ಹಾನಗಲ್ಲ ಶ್ರೀಗಳವರ ಸೌಂದರ್ಯದೃಷ್ಟಿಗೆ ಶಿವಯೋಗ ಭಾವಕ್ಕೆ, ಸಕಲರಿಗೆ ಲೇಸನೆ ಬಯಸುವ ಸಮಾಜೋದ್ದಾರ ಬುದ್ದಿಗೆ ಅವರಿಂದ ನಿರ್ಮಿತವಾದ ಶಿವಯೋಗಮಂದಿರದ ಸುಂದರ ಸನ್ನಿವೇಶ ಸಾಕ್ಷಿಯಾಗಿ ನಿಂತಿದೆ.

ಒಂದು ಬದಿಗೆ ಹೊಳೆ; ಇನ್ನೊಂದು ಬದಿಗೆ ಎತ್ತರವಲ್ಲದ ಗುಡ್ಡದ ಸಾಲು, ನಡುವೆ ಸೊಗಸಾದ ಪ್ರಾಂಗಣ; ಪ್ರಕೃತಿಯ ಲೀಲಾರಂಗವಾಗಿದೆ ಶಿವಯೋಗಮಂದಿರ, “ಬನ್ನಿ, ಮೈಯೊಡ್ಡಿ ದಣಿವನ್ನು ಪರಿಹಾರ ಮಾಡಿಕೊಳ್ಳಿ.?” ಎಂದು ಕರೆಯುತ್ತಿದೆ ಚಿಕ್ಕ ಚಿಕ್ಕ ಜಲಪಾತದೊಡನೆ ನಕ್ಕು ನಲಿಯುವ ಹೊಳೆ;

ನಿರಿ ನೂಂಕಿ ಮಲಾಪಹಾರಿ ಶತಹಾಸದ ಗತಿಯಲ್ಲಿ;

ಹಾಡುವಳು ವಿಲಾಸ ಬೀರಿ ಮಾಧುರ್ಯದ ಮಿತಿಯಲ್ಲಿ.

Related Posts