ಅಧ್ಯಾತ್ಮವಿರಲಿ ಬಾಳಲಿ

ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ನಮ್ಮ ಭರತ ಭೂಮಿಯು ಅಧ್ಯಾತ್ಮದ ತವರೂರೆಂಬುದು ಎಲ್ಲರಿಗೂ ತಿಳಿದ ವಿಷಯ.ಬೇರೆ ದೇಶದಲ್ಲಿ ಎಲ್ಲವು ಇದೆ.ಅದರೆ  ಅಧ್ಯಾತ್ಮದ ಸುಳಿವು ಅಲ್ಲಿ ಕಾಣಸಿಗುವುದಿಲ್ಲ.ಎಲ್ಲಿ ಅಧ್ಯಾತ್ಮವಿರುವದಿಲ್ಲವೋ ಅಲ್ಲಿ ಏನೇಲ್ಲವಿದ್ದರು ಏನು ಎಲ್ಲದಂತೆ.ಏನೇಲ್ಲ ಸಾಧಿಸಿದರೂ ಜೀವನದೊಳಗೆ ಅದನ್ನು ಅನುಭವಿಸುವ ಸ್ವಭಾವ ಮತ್ತು ಶಾಂತಿ ,ನೆಮ್ಮದಿಯ ಬದುಕು ಸಾಗಿಸಲು ಅಧ್ಯಾತ್ಮ ಬೇಕು.

ಅಧ್ಯಾತ್ಮವೆಂದಾಕ್ಷಣ ಪ್ರತಿಯೊಬ್ಬರ ಮನದಲ್ಲುಂಟಾಗುವುದು ಧರ್ಮ-ಮತಗಳ ವಿಚಾರವಲ್ಲವೆ? ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ ,ಜೈನ, ಸಿಖ್‌, ಧರ್ಮಗಳನ್ನು ಆಚರಿಸಿದರೆ ಮಾತ್ರ ಅದು ಅಧ್ಯಾತ್ಮವೆಂದು ತಿಳಿಯಬಾರದು . ಧರ್ಮ-ಅಧ್ಯಾತ್ಮ ಕೂಡಿಕೊಂಡಿವೆ. ಆದರೆ ಅಧ್ಯಾತ್ಮ  ಧರ್ಮದಿಂದಲ್ಲ. ಅಧ್ಯಾತ್ಮ ಅದ್ಬುತವಾದ ಒಂದು ತತ್ತ್ವ, ಅದು ಪ್ರತಿಯೊಬ್ಬರ ಜೀವನಕ್ಕೂ ಅವಶ್ಯವಾಗಿರುವಂತಹದು.ನಾವುಗಳು ಜೀವನದಲ್ಲಿ ಏನನ್ನೇ ಸಾದಿಸಿದರೂ ಸಹ ಆ ಸಾಧನೆಯು ಸಾರ್ಥಕವಾಗಬೇಕಾದರೆ ನಮ್ಮಲ್ಲಿ  ಅಧ್ಯಾತ್ಮದ ಅನುಭೂತಿಯಿದ್ದಾಗ ಮಾತ್ರ ಸಾಧನೆಯನ್ನ ಸರಿಯಾಗಿ ಅನುಭವಿಸಲು ಸಾಧ್ಯ.

ಜನರಿಲ್ಲದೂರು ರಣಹದ್ದುಗಳ

ತಾಣವಾಗುವುದು|                                                           

ವಿದ್ಯೆಯಿಲ್ಲದ ಬುದ್ಧಿ

ಲದ್ದಿಯಾಗರವಾಗುವುದು|

ಭಾವನೆಯಿರದ ಮನವು

ಭೂತದಾಗರವಾಗುವಂತೆ

ಆಧ್ಯಾತ್ಮವಿರದ ಬದುಕು

ಬಂಜರ ಭೂಮಿಯಂತೆಂದ ನಮ್ಮ ಚೆನ್ನ.||

ಅಧ್ಯಾತ್ಮವಿಲ್ಲದ ಬದುಕು ಬೆಳೆಯದೆ ಬಂಜರ ಭೂಮಿಯಂತೆ. ಏನೂ ಬೆಳೆಯಲು ಯೋಗ್ಯವಾಗಿರುವುದಿಲ್ಲ. ಅಧ್ಯಾತ್ಮದಿಂದ ಕೂಡಿದ ಬದುಕು ಏನನ್ನಾದರೂ ಸಾಧಿಸಲು ಸಮರ್ಥವಾಗಿರುತ್ತದೆ ಮತ್ತು ಶಾಂತಿ ನೆಮ್ಮದಿಯನ್ನು ಗಳಿಸುವ ಸಾಮರ್ಥ್ಯ  ಹೊಂದಿರುತ್ತದೆ. ಜಗತ್ತಿನಲ್ಲಿ  ಪಾಶ್ಚಾತ್ಯ ದೇಶದವರು ಏನೆಲ್ಲಾ ಸಾಧಿಸಿದ್ಧಾರೆ,ಯಾವುದು  ಅಸಾಧ್ಯವೆನ್ನುತ್ತೇವೆಯೋ ಅದನ್ನೆಲ್ಲಾ ಸಾಧಿಸಿ ತೋರಿಸಿದ್ದಾರೆ ಅದರೂ ಸಹ ನಮ್ಮ ದೇಶದ ಕಡೆ ಒಲವನ್ನು ತೋರಿ ,ಅಧ್ಯಾತ್ಮವನ್ನು ಹುಡುಕಿಕೊಂಡು ಭಾರತದತ್ತ ಹೆಚ್ಚು ಜನ ಆಕರ್ಷಣೆಯನ್ನು ಪಡೆಯುತ್ತಿರುವರು. ಬೇರೆಯವರು ನಮ್ಮಲ್ಲಿರುವ ಅಗಾಧವಾದ ಶಕ್ತಿಗೆ ಆಕರ್ಷಣೆಯಾಗುತ್ತಿರುವಾಗ,ಇಲ್ಲಿಯೇ ಹುಟ್ಟಿ ಬೆಳೆದು ನಮಗೆ ಅದರ ಬಗ್ಗೆ ಅಸಡ್ಡೆ ಭಾವನೆಯನ್ನು ತಾಳುವುದು ಉಚಿತವೆ? ಬದುಕಿನಲ್ಲಿ  ಶಾಂತಿ ನೆಮ್ಮದಿಯನ್ನು ಅನುಭವಿಸಲು ಅಧ್ಯಾತ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.| ಮತ್ತೊಮ್ಮೆ ಸ್ಪಷ್ಟಪಡಿಸುವೆ ಅಧ್ಯಾತ್ಮವನ್ನು ಅಳವಡಿಸಿಕೊಳ್ಳೋಣವೆಂದರೆ ಧರ್ಮವನ್ನು ಆಚರಿಸೋಣ ಎಂದು ಅರ್ಥವಲ್ಲ. ಮೇಲೆ ಹೇಳಿರುವಂತೆ ಧರ್ಮ ಮತ್ತು ಅಧ್ಯಾತ್ಮ ಭಿನ್ನವಾದುವುಗಳು.ಆದ್ದರಿಂದ ಜಂಜಾಟದಿಂದ  ಕೂಡಿದ ಬದುಕಿನಲ್ಲಿ ಶಾಂತಿ ನೆಮ್ಮದಿಗೆ ಅಧ್ಯಾತ್ಮ ಅವಶ್ಯವಾಗಿರುವಂತಹದು.ಜೀವನದಲ್ಲಿ ಅಧ್ಯಾತ್ಮವನ್ನಳವಡಿಸಿಕೊಂಡು ಅರಿವಿನ ಮೆಟ್ಟಲನ್ನೇರೋಣ.

Related Posts