ಶಿವಯೋಗಮಂದಿರ ನಿರೀಕ್ಷಣೆ

                                                     – ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು, ಚಿಕ್ಕೋಡಿ

ಬದಾಮಿಯಿಂದ ೭ ಮೈಲಿನ ಅಂತರದಲ್ಲಿ ಶಿವಯೋಗಮಂದಿರವು ಮಲಪ್ರಭೆಯ ಎಡದಂಡೆಯಲ್ಲಿ ಪುಣ್ಯ ಭೂಮಿಯಾಗಿ ತೋರುತ್ತಿರುವದು. ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ನೂರಾರು ಎಕರೆ ಭೂಮಿ ಭಕ್ತರಿಂದ ದಾತೃಗಳಿಂದ ಸಂಸ್ಥೆಗೆ ದಾನವಾಗಿ ಬಂದಿದೆ. ವಿಶಾಲ ನಿರ್ಜನಾರಣ್ಯವಿಂದು ಪ್ರಶಾಂತ ಮಂಗಲಮಯ ಭೂಕೈಲಾಸವಾಗಿ ಪರಿಣಮಿಸಿದೆ. ಸಮಾಜ ನೌಕೆಯನ್ನು ನಡೆಯಿಸುವ ಸಮರ್ಥ ಧರ್ಮಗುರುಗಳ ಜನ್ಮಭೂಮಿಯೆಂದು ಸುಪ್ರಸಿದ್ಧವಾಗಿದೆ.

ನಾನಾ ದಿಗ್ಗೇಶಗಳಿಂದ ಅತಿಥಿ-ಅಭ್ಯಾಗತರು ಶಿವಯೋಗಮಂದಿರವನ್ನು ನಿರೀಕ್ಷಿಸಲು ಕುತೂಹಲದಿಂದ ಆಗಮಿಸುತ್ತಾರೆ. ಇಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳನ್ನು ಕಂಡು ಮನವಾರೆ ಹಾಡಿ ಹರಸುತ್ತಿರುವರು.

ಗೋರಕ್ಷಣೆ ಶಾಲೆಯತ್ತ ಗಮನಿಸಿದರೆ ಸುಮಾರು ೨೦೦ ಆಕಳುಗಳು ಇರುವವು, ಒಕ್ಕಲುತನವಿದ್ದು ಅವುಗಳ ಉಪಯೋಗ ಬಹುವಿಧವಾಗಿ ಆಗುತ್ತಿರುವದು. ಇಲ್ಲಿ ಶುದ್ಧ ವಿಭೂತಿಗಳನ್ನು ಮಾಡುವ ಕಾರ್ಯಾಲಯವು ಇದೆ. ಅದರ ಮುಖಾಂತರ ನಾಡಿನಲ್ಲಿ ಶಾಸ್ತ್ರೋಕ್ತ ವಿಭೂತಿಗಟ್ಟಿಗಳೂ ಪ್ರಚಾರದಲ್ಲಿ ಬಂದಿವೆ. ಪಂಚಸೂತ್ರಕ್ಕೆ ಸರಿಯಾದ ಲಿಂಗಗಳನ್ನು ಇಲ್ಲಿ ತಯಾರಿಸುತ್ತಾರೆ. ಈ ತೆರನಾಗಿ ಸ್ವಾತಿಕ ಕಲೆಗಳಿಗೆ ಉತ್ತೇಜನವನ್ನು ಈ ಸಂಸ್ಥೆಯು ಕೊಡುತ್ತಿರುವದು ತುಂಬಾ ಸ್ತುತ್ಯವಾದುದು.

ಶೈಕ್ಷಣಿಕ ದೃಷ್ಟಿಯಿಂದಲೂ ಈ ಸಂಸ್ಥೆಯು ಮುಂದುವರಿಯುತ್ತಿದೆ. ಇಲ್ಲಿ ರೇವಣಸಿದ್ದೇಶ್ವರ ವಾಚನಾಲಯವೂ ಇದೆ. ಅದರೊಂದಿಗೆ ಒಂದು ದೊಡ್ಡ ಗ್ರಂಥಾಲಯವೂ ಇದೆ. ಅದರಲ್ಲಿ ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲೀಷ ಭಾಷೆಯ ಪ್ರೌಢಸಾಹಿತ್ಯ ಗ್ರಂಥಗಳ ಅಪೂರ್ವ ಮತ್ತು ಅಮೂಲ್ಯ ಸಂಗ್ರಹವು ಇದೆ. ಅಲ್ಲಿರುವ ಸಾವಿರಾರು ತಾಡವೋಲೆ ಮತ್ತು ಕೈಬರಹದ ಗ್ರಂಥ  ಭಾಂಡಾರವು ಕರ್ನಾಟಕದಲ್ಲಿಯೇ ಅದ್ವಿತೀಯವಾಗಿದೆ. ಅವುಗಳನ್ನು ಪರಿಶೋಧಿಸಿ ಅಚ್ಚುಗೊಳಿಸಲು ‘ಸುಕುಮಾರ’ವೆಂಬ ಮಾಸ ಪತ್ರಿಕೆಯು ಪ್ರಕಟವಾಗುತ್ತಿದೆ. ಅದು ನಾಡಿನ ಪ್ರಗತಿಪರ ಪತ್ರಿಕೆಯಾಗಿ ಪ್ರಚಾರ ಹೊಂದುತ್ತಿದೆ. ‘ಸುಕುಮಾರ’ ಪತ್ರಿಕೆ ಮತ್ತು ಗ್ರಂಥಮಾಲೆಯ ಪ್ರಕಟನೆಗಾಗಿ ಉದಾರ ಹೃದಯರಾದ ಮಹಾಸ್ವಾಮಿಗಳವರೂ ಮತ್ತು ಭಕ್ತಾದಿಗಳೂ ಅನೇಕ ಮುಖವಾಗಿ ಸಹಾಯ ಸಲ್ಲಿಸಿದ್ದಾರೆ. ಗ್ರಂಥ ಸಂಶೋಧನಾಕಾರ್ಯವು ಚಿರಸ್ಥಾಯಿ ಯಾಗಿ ನಡೆಯುವಂತೆ ಒಂದು ಭಾವೀ ಯೋಜನೆಯು ಕ್ಷಿಪ್ರದಲ್ಲಿಯೇ ಕಾರ್ಯಗತವಾಗಲಿರುವದೆಂದು ತಿಳಿಯುತ್ತದೆ.

ದರ್ಶನಾರ್ಥವಾಗಿ ಬಂದ ಭಕ್ತಾದಿಗಳಿಗೆ ದಾಸೋಹಮಠವಿದೆ. ಅಲ್ಲಿ ಅರ್ಚನ ಮತ್ತು ಅರ್ಪಿತಕ್ಕೆ ಅನುಕೂಲತೆಯಿದೆ. ಸಂಸ್ಥೆಯ ಅನುಕೂಲತೆಗಾಗಿ ಸರಕಾರದವರು ಒಂದು ಬ್ರಾಂಚ್ ಪೋಷ್ಟ ಆಫೀಸನ್ನು ಚಿರಸ್ಥಾಯಿಯಾಗಿ ಮಾಡಿದ್ದಾರೆ.

ಅಲ್ಲಿ ಮುಖ್ಯವಾಗಿ ವಟುಗಳು ಶಿವಯೋಗಿಗಳು ಧಾರ್ಮಿಕ ಶಿಕ್ಷಣವನ್ನು ಹೊಂದುತ್ತಲಿರುವರು. ಸಾಧಕರು ಪ್ರತಿನಿತ್ಯವೂ ಮುಂಜಾನೆ ಯೋಗಾಸನಗಳ ಸಾಧನೆಯನ್ನು ಮಾಡುತ್ತಾರೆ. ಯೋಗದಲ್ಲಿ ತಜ್ಞತೆಯನ್ನು  ಪಡೆಯುತ್ತಾರೆ. ಪ್ರತಿನಿತ್ಯದ ಕಾಠ್ಯಕ್ರಮದಲ್ಲಿ ಅದಕ್ಕೆ ಪ್ರಾಧಾನ್ಯವನ್ನು ಕೊಟ್ಟಿದ್ದಾರೆ. ತ್ರಿಕಾಲದಲ್ಲಿಯೂ ಲಿಂಗಾರ್ಚನೆ, ಪುರಾಣ, ಪ್ರವಚನ, ಭಾಷಣ,  ಸಂಗೀತಕಲೆ ಮುಂತಾದ ಸಮಾಜ ಸುಧಾರಣೆಯ ಶಿಕ್ಷಣವು ಕೊಡಲಾಗುತ್ತಿದೆ. ಮಂದಿರದಲ್ಲಿಯೇ ಶಿಕ್ಷಣ ಪಡೆದ ಸ್ವಾಮಿಗಳು ಮತ್ತು ಶಾಸ್ತ್ರಿಗಳು ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ದುಡಿಯುತ್ತಾರೆ. ಈಗಾಗಲೇ ಇಲ್ಲಿಂದ ಶಿಕ್ಷಣ ಪಡೆದ ಶಿವಯೋಗಿಗಳು ಕರ್ನಾಟಕ, ಮಹಾರಾಷ್ಟ್ರ ಹೈದರಾಬಾದ ಮತ್ತು ಮೈಸೂರು ಪ್ರಾಂತಗಳಲ್ಲಿಯ ಸುಪ್ರಸಿದ್ಧ ಮಠಗಳ ಅಧಿಪತಿಗಳಾಗಿ ಸಮಾಜ ಕಾರ್ಯ ಧುರಂಧರರಾಗಿದ್ದಾರೆ. ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು ಕಾಲೇಜುಗಳನ್ನು ಅಲ್ಲದೆ ಫ್ರೀ ಬೋರ್ಡಿಂಗು ಗಳನ್ನೂ, ದಾಸೋಹ ಮಂದಿರಗಳನ್ನೂ, ಅನುಭವಮಂಟಪಗಳನ್ನು ಮಾಡಿಯೂ ಮಾಡುತ್ತಲೂ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಸ್ವಯಂಸೇವಕರಾಗಿ ಸಮಾಜ ಸುಧಾರಣೆಯ ಮುಖದಿಂದ ರಾಷ್ಟ್ರೋದ್ದಾರ ಕಾರ್ಯದಲ್ಲಿ ಹೇಗೆ ಇಂದಿಗೂ  ನೆರವಾಗುತ್ತಾರೆಂಬುದು ನಿರ್ವಿಕಾರ ಮನಸ್ಸಿನಿಂದ ವಿಚಾರಿಸಿದರೆ ಹೊಳೆಯದಿರದು.

ಧರ್ಮ-ನೀತಿಗಳ ಜೀವಾಳಗಳನ್ನಿಟ್ಟುಕೊಂಡು ಕೊನೆಯ ರಾಜಕಾರಣವನ್ನು ಯಾವ ರೀತಿಯಿಂದ ನಡೆಸುತ್ತಾರೆಂಬುದು ವಿಚಕ್ಷಣಮತಿಗಳಿಗೆ ತಿಳಿಯದಿರದು. ಇಂದು ರಾಷ್ಟ್ರೀಯ ಕಾರ್ಯಗಳು ಧರ್ಮದಿಂದಲೇ ನಡೆಯಬೇಕಾಗಿದೆ. ಧರ್ಮವಿಲ್ಲದಿದ್ದರೆ ಮೃತದೇಹದಂತೆ ನಾಡು ನಿರ್ವೀರ್ಯವಾಗುವಲ್ಲಿ ಯಾವ ಸಂದೇಹವೂ ಇಲ್ಲ

ಮಠಾಧಿಪತಿಗಳು ಶಿಕ್ಷಣದ ಸತ್ರವನ್ನು ಪ್ರಾರಂಭಮಾಡದಿದ್ದರೆ ಸಮಾಜವು ಇಷ್ಟೊಂದು ಉನ್ನತಾವಸ್ಥೆಗೆ ಬರುತ್ತಿರಲಿಲ್ಲ. ಈ ಎಲ್ಲ ಮುಂದಿನ ಹೊಣೆಗಾರಿಕೆಯನ್ನರಿತು ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಶಿವಯೋಗಮಂದಿರವನ್ನು ಸ್ಥಾಪಿಸಿ  ಸಮಾಜಕ್ಕೆ ಹೇಳ ತೀರದಷ್ಟು ಉಪಕಾರ ಮಾಡಿದ್ದಾರೆ.

ಇಂಥ ಪವಿತ್ರ ಸಂಸ್ಥೆಗೆ ಸಹಾಯ ಸಹಕಾರ ಮತ್ತು ಸಹಾನುಭೂತಿಗಳನ್ನು ನೀಡುವದು ಸಕಲರ ಆದ್ಯ ಕರ್ತವ್ಯವಾಗಿದೆ. ನಿಮ್ಮ ಇರುವನ್ನು ಅರಿವನ್ನು ತಂದುಕೊಟ್ಟ ಸಂಸ್ಥೆಯ ಬಗ್ಗೆ ಆದರ ಅನುತಾಪಗಳು ಬೇಡವೇ ?

ಶಿವಯೋಗಮಂದಿರವು ಇಂದು ವಿಶ್ವವಿದ್ಯಾಲಯವಾಗಬೇಕಾಗಿದೆ. ಕರ್ನಾಟಕದ ಕತ್ತಲೆಯು ಬಯಲಾಗಿ ಪ್ರಚಂಡ ಪ್ರಕಾಶಮಯ ರವಿ ಶಿವಯೋಗಿ ಪುಂಗವರು ಉದಯಿಸಬೇಕಾಗಿದೆ. ಜ್ಞಾನಭಂಡಾರದ ಸೂರೆಯಾಗಲಿ, ಸಮಾಜಗಳು ವಿಕಾಸ ಹೊಂದಲಿ, ರಾಷ್ಟ್ರೋದ್ದಾರ ವಾಗಲಿ, ಅಖಿಲರಿಗೂ ಸುಖವಾಗಿ ಇದಕ್ಕಾಗಿಯೆ ಶಿವಯೋಗ ಮಂದಿರದ ನಿರೀಕ್ಷಣೆಯನ್ನು ಮಾಡಿರಿ.

ಜಾತೀಯತೆಯ ಭಾವನೆಯಿಂದ ಪ್ರೇರಿತವಾಗಿ ನೋಡಕೂಡದು. ಜಾತ್ಯಾತೀತ ತತ್ತ್ವವನ್ನವಲಂಬಿಸಿ ದವರಿಗೂ ಸಹ  ಜಾತಿಯನ್ನು ಬಿಟ್ಟರೆ ಗತಿಯಿಲ್ಲ, ಜಾತಿ ಮತ ಪಂಥಗಳ ಬುರುಕೆಗೆ ಯಾರೂ ಹೆದರಬೇಕಾಗಿಲ್ಲ, ಆದರೂ ಜಾತ್ಯಾಂಧರಾಗಬಾರದು. ವಿಶ್ವವ್ಯಾಪಿ ತತ್ತ್ವಗಳು ಎಲ್ಲಿದ್ದರೇನು ? ಅವೆಲ್ಲವೂ ಸ್ವಾಗತಾರ್ಹವೆಂದು ಭಾವಿಸಿ ಒಳಗಣ್ಣ ತೆರೆದು ನೋಡಬೇಕೆಂದು ಬೇಡಿಕೊಳ್ಳುತ್ತೇನೆ.

Related Posts