General

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಓದುಗ ಶರಣರೇ.

ಒಬ್ಬ ಮಹಾತ್ಮರ ಜೀವನ ಚರಿತ್ರೆಯನ್ನು ವೀಕ್ಷಿಸಿದರೆ ನಮ್ಮ ಅಂತರಂಗದ ವಿಕಾಸದ, ಅವರ ವ್ಯಕ್ತಿತ್ವ ಸಮಾಜದ ಮೇಲೆ ಪ್ರಭಾವ ಬೀರುವ ಘಟನೆಯನ್ನು ಚರಿತ್ರೆಯಲ್ಲಿ ಕಾಣುತ್ತೇವೆ.

ಶ್ರೀ ಗುರು ಕುಮಾರೇಶ್ವರರ ಜೀವನವನ್ನು ವೀಕ್ಷಿಸಿದಾಗ ನಮ್ಮ ಅಂತರಂಗ ಶುದ್ಧವಾಗಲು ಶ್ರೀ ಶಿವಯೋಗ ಮಂದಿರ, ಬಹಿರಂಗದ ಸಮಾಜ ಶುದ್ಧಿಗೊಳ್ಳಲು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ನಿರ್ಮಿಸಿ ಇಡೀ ಭರತ ಖಂಡಕ್ಕೆ ಭವ್ಯ ಕಾಣಿಕೆಯನ್ನು ನೀಡಿರುವರು.

 •   ನಾಡಿನ ಹಲವಾರು ಮಠಗಳು ಅಸ್ತಿತ್ವ ಕಳೆದುಕೊಂಡು ಅವುಗಳೆಲ್ಲಾ ಸಂಸಾರಿಗಳ ಛತ್ರಗಳಾದ ಸಂದರ್ಭದಲ್ಲಿ,

 •  ಗುರುಗಳಾದವರು ತಮ್ಮ ತಮ್ಮ ಧರ್ಮದ ತಿಳುವಳಿಕೆ  ಆಚಾರ ವಿಚಾರಗಳ ನೀತಿ ನಿಯಮಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ,

 •  ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರಗಳ ತಿಳುವಳಿಕೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ,

 •  ಷಟ್ಸ್ಥಲಗಳು, ಪಂಚಾಚಾರಗಳು ಏನು? ಯಾವುವು?  ಎಂಬುವುದನ್ನು ಮರೆಯುತ್ತಿರುವ ಸಂದರ್ಭದಲ್ಲಿ ಜನಿಸಿದವರು, ಹಾನಗಲ್ಲ ಶ್ರೀ ಗುರು ಕುಮಾರ ಮಹಾಶಿವಯೋಗಿಗಳು.

ಎಲ್ಲ ಧರ್ಮಗಳಲ್ಲಿ  ಎರಡು ಕವಲುಗಳಿವೆ, ಜೈನ ಧರ್ಮದಲ್ಲಿ ದಿಗಂಬರ- ಶ್ವೇತಾಂಬರ. ಕ್ರೈಸ್ತ ಧರ್ಮದಲ್ಲಿ ಪ್ರಾಟೆಸ್ಟೆಂಟ್- ಕ್ಯಾಥೋಲಿಕ್. ಬೌದ್ಧಧರ್ಮದಲ್ಲಿ ಹೀನಾಯಾನ-ಮಹಾಯಾನ. ಇಸ್ಲಾಂ ಧರ್ಮದಲ್ಲಿ ಸೂಯಾ- ಸೂನ್ನಿ, ಕವಲುಗಳಿರುವ ಹಾಗೆ ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು-ವಿರಕ್ತ ಪಂಥಗಳಿವೆ ಆದರೆ ಅವೆರಡು ಒಂದೆ ಎಂದು ಬೋಧಿಸಿದವರು  ಶ್ರೀ ಗುರು ಕುಮಾರ ಮ‌ಹಾಶಿವಯೋಗಿಗಳು.

‘ಅತ್ಕೇ ಚೇತನ್ ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್’.

ಸಮೀಪದಲ್ಲಿ ಜೇನುತುಪ್ಪ ಸಿಗುವದಾದರೇ  ಪರ್ವತದವರೆಗೆ ಏಕೆ ಹೋಗಬೇಕು.      ಎಂಬ ನ್ಯಾಯದಂತೆ.

 ಶಿವಯೋಗ ಮಂದಿರದ ಎಲ್ಲಾ ಮಹಾ ಮಹಾಸ್ವಾಮಿಗಳು, ಶಿವಯೋಗಿಗಳು ಅವರ ವಿದ್ಯೆಯನ್ನು ಶಿವಯೋಗ ಮಂದಿರದಲ್ಲಿಯೇ ಕಲಿತರೇ ವಿನಃ ಮತ್ತೆ ಯಾವ ಕ್ಷೇತ್ರಕ್ಕೆ ಹೋಗಲಿಲ್ಲಾ. ಆ ಶಿವಯೋಗ ಮಂದಿರದಲ್ಲಿ ತಮ್ಮ ಜೀವನದಲ್ಲಿ ಸಾಧಿಸಿರುವ ಸಾಧನೆಯ ಕೆಲವೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಾಶಿವಯೋಗಿಗಳನ್ನು ಈ ಕೆಳಗೆ ತಿಳಿಸಿದೆ.

1  ವಿದ್ವತ್ ಮತ್ತು. ಲೇಖನಕಲೆಯ ಪ್ರತಿಭಾವಂತರು – ಶ್ರೀ ಜ.ಚ.ನಿಯವರು.

2   ಶಿವಯೋಗ  ಮತ್ತು ಕೃಷಿಯಲ್ಲಿ ಬಲ್ಲಿದವರು – ಶ್ರೀ ರುದ್ರಮುನಿ ಶಿವಯೋಗಿಗಳು.

3  ಆಯುರ್ವೇದ ಹಾಗೂ ಭಕ್ತರ ಭವರೋಗನಿವಾರಣೆಯಲ್ಲಿ ತೊಡಗಿದವರು –  ಶ್ರೀ ಚನ್ನಬಸವ ಮಹಾಸ್ವಾಮಿಗಳು.

4 ಕನ್ನಡದ ಗಡಿ ಭಾಗದಲ್ಲಿ ಕನ್ನಡ ಶಿಕ್ಷಣಕ್ಕೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಆಧ್ಯತೆ ಕೊಟ್ಟವರು -ಡಾ. ಶ್ರೀ ಶಿವಬಸವ ಮಹಾಸ್ವಾಮಿಗಳು ಮತ್ತು ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು.

5 ಕೀರ್ತನೆ ಮತ್ತು ಪುರಾಣಕತೃಗಳಲ್ಲಿ ಶ್ರೀ ಚೆನ್ನಕವಿಗಳು.

6 ಅಂಧರ ತಾಯಿಯಾಗಿ, ಗಾಯನದಲ್ಲಿ ನಿಪುಣರು – ಗಾನಯೋಗಿ ಪಂಚಾಕ್ಷರಿ ಗವಾಯಿಗಳು.

ಕುಮಾರೇಶನ ಸಾಮಿಪ್ಯದಲ್ಲಿ.

1) ಬೈಲಹೊಂಗಲ ತಾಲೂಕಿನ ಅಂಬರಗದ್ದೆಯ ಶಿವಭಕ್ತರಾದ ಹಿರೇಮಠ ಮನೆತನದಲ್ಲಿ ಜನಿಸಿದ ಕೂಸು, ಹನ್ನೆರಡನೆಯ ವಯಸ್ಸಿಗೆ ಶಿವಯೋಗ ಮಂದಿರಕ್ಕೆ ಸೇರಿ ಅಲ್ಲಿನ ನಿಯಮಪಾಲನೆ ಮಾಡುತ್ತಾ , ಪೂಜೆ, ಯೋಗ, ಸಾಹಿತ್ಯ, ವೇದಾಂತ, ಶಿವಯೋಗ, ಅಧ್ಯಾತ್ಮವಿದ್ಯೆಯಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದು ಶ್ರೇಷ್ಠ ಜ್ಞಾನಿಗಳಾದರು.  ಒಮ್ಮೆ ಮಹಾಶಿವಯೋಗಿಗಳು ” ನೀನು ವಿದ್ವತ್ತಿನಲ್ಲಿ ಪ್ರಾವಿಣ್ಯತೆ ಪಡೆದು ಉತ್ತಮ ಲೇಖನ ಕಾರ್ಯ ನಡೆಸುವೆ” ಎಂದು ಆಶೀರ್ವಾದ ಮಾಡಿದ್ದರು. ಅದೇ ರೀತಿಯಲ್ಲಿ ಶಿವಯೋಗ ಮಂದಿರದಲ್ಲಿ ಪ್ರಥಮ ಬಾರಿಗೆ ‘ಸುಕುಮಾರ’ ಪತ್ರಿಕೆಯನ್ನು ಪ್ರಾರಂಭಿಸಿ ಉತ್ತಮ ಲೇಖಕರಾಗಿ ಶಿವಯೋಗ ಮಂದಿರದಿಂದ ಹೊರಬಂದಿರುವರು. ನಿಡುಮಾಮಿಡಿ ಪೀಠದ ಅಧಿಕಾರ ಸ್ವಿಕರಿಸಿ ಶ್ರೀ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯರು ಎಂಬ ಹೆಸರನ್ನು ಪಡೆದರು ಮುಂದೆ ಜ.ಚ.ನಿ ಎಂಬ ಹೆಸರಿನಿಂದ ಪ್ರಖ್ಯಾತರಾಗಿವರು.  ತಾವೇ ಸ್ವತಃ ಪ್ರಬುದ್ಧ ಲೇಖಕರಾದ ಕಾರಣ  ಸಾವಿರಾರು ಪುಸ್ತಕಗಳನ್ನು ಹೊರತಂದಿರುವರು. ವೀರಶೈವರ ಆತ್ಮ ಆಗಿರುವ ಷಟ್ಸ್ಥಲದ ಬಗ್ಗೆ ಜೀವನ ಸಿದ್ಧಾಂತ ಎಂಬ ಮಹಾ ಗ್ರಂಥಗಳನ್ನು ರಚಿಸಿದ್ದಾರೆ. ಅಧ್ಯಾತ್ಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜ.ಚ.ನಿಯವರು ಸಾವಿರಾರು ವಚನಗಳನ್ನು ಸಹ ಬರೆದಿದ್ದಾರೆ. ವಿದ್ವತ್ ಲೋಕದಲ್ಲಿ ಸೈ ಎನ್ನುವ ಹಾಗೆ ಕೆಲಸ ಮಾಡಿರುವ ಲೇಖಕರಲ್ಲಿ ಪ್ರಬುದ್ಧತೆಯೊಂದಿಗೆ ಶಿವಯೋಗ ಮಂದಿರದಿಂದ ಹೊರಹೊಮ್ಮಿದವರು ಶ್ರೀ. ಜ.ಚ.ನಿಯವರು ಕೂಡಾ ಒಬ್ಬರು.

2) ಮಹಾಗುರುಗಳಿಂದ  ‘ಖರೆಮರಿ’ ಎಂದು ಕರೆಸಿಕೊಂಡಿದ್ದ ರುದ್ರಮುನಿ ಸ್ವಾಮಿಗಳು.

ಹಾವೇರಿ ಜಿಲ್ಲಾ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಎಣ್ಣೆ ಮನೆತನದ ನೀಲಮ್ಮ ಮತ್ತು ವೀರಪ್ಪ ಶಿವಭಕ್ತರ ಮಗು,  ಶಿವಯೋಗ ಮಂದಿರದಲ್ಲಿ ಕಲಿಯಲು ಬಂದಾಗ ಟ್ರಸ್ಟ್ ಬೋರ್ಡಿನ ಆಯ್ಕೆಯಲ್ಲಿ ಬರದಿದ್ದರೂ ಶ್ರೀ ಕುಮಾರ ಶಿವಯೋಗಿಗಳು ಹಾನಗಲ್ಲ ವಿರಕ್ತಮಠದ ವೆಚ್ಚದಿಂದ ವಟುವಿನ  ಅಭ್ಯಾಸಕ್ಕೆ ಅನುವು ಮಾಡುವರು, ಮಂದಿರದ ಗುರುಕುಲ ಶಿಕ್ಷಣದೊಂದಿಗೆ ಸರ್ವಜೀವಿಯಲ್ಲಿ ದಯೆ, ಗೋಪಾಲನೆ ಅಲ್ಲದೆ ಆಚಾರ-ವಿಚಾರದಲ್ಲಿ ಬಲ್ಲಿದರಾಗಿ, ಕೃಷಿ, ಕಾಯಕದಲ್ಲಿ, ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾಧಕನನ್ನು, ನಯಾ-ವಿನಯದಲ್ಲಿ ಉತ್ತಮಗತಿಯನ್ನು ಪಡೆದ ರುದ್ರಮುನಿ ದೇವರನ್ನು ಶಿಕಾರಿಪುರ ಸಮೀಪದ ಕಪನಳ್ಳಿ ಶಾಖಾ ಮಂದಿರಕ್ಕೆ ತಕ್ಕವನೆಂದು ಶಿವಯೋಗಿಗಳು ತಿಳಿದಿದ್ದರು. ಅದೇ ಸಮಯಕ್ಕೆ ಆ ಭಾಗದ ಭಕ್ತಮಹಾಶಯರು ನಮ್ಮಲ್ಲಿ ಒಬ್ಬ ಶಿವಯೋಗಿಯನ್ನು ಕಳುಹಿಸಿಕೊಡಿ ಎಂದು ಶಿವಯೋಗಿಗಳಲ್ಲಿ ಭಿನ್ನವಿಸಿದಾಗ, ರುದ್ರಮುನಿ ದೇವರನ್ನು ಸೂಚಿಸಿ ಅವರ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ. “ನಿನ್ನಿಂದ ಆ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ, ಕಾಯಕದೊಂದಿಗೆ ಅಲ್ಲಿ ಸೇವೆ ಮಾಡಿಕೊಂಡಿರು”. ಎಂದು ಶಿವಯೋಗಿಗಳು ಆಶೀರ್ವಾದ ಮಾಡುದರು. ಕಾಡಿನ ಮಧ್ಯದಲ್ಲಿ ಶಿವಯೋಗ ಸಾಧನೆಯ ಮೂಲಕ ಕಾಯಕವನ್ನು ನಡೆಸಿದರು. ಪಂಚಸಿದ್ಧಿಗೊಂಡ ಶಿವಯೋಗಿಗಳು ಸುತ್ತಲಿನ ಭಕ್ತಜನರಿಗೆ ತಮ್ಮ ತಪೋಶಕ್ತಿಯನ್ನು ಧಾರೆ ಎರೆಯುತ್ತಾ ಬಂದರು. ಮಂದಿರದ ಆಚಾರವನ್ನು ಬಿಡದೆ ಶೀಲಾ ಬಳಕೆಯ ಪಕ್ಕಾ ಮಡಿಯನ್ನು ಅಂತ್ಯದವರೆಗೂ ನಡೆಸಿದರು. ಮಹಾಶಿವಯೋಗಿಗಳ ಆಶೀರ್ವಾದದ ಹಾಗೆ ಕಾಯಕ ಯೋಗಿಯಾಗಿ ಶತಾಯುಷಿಗಳಾದರು. ಹಲವಾರು ಪೂಜ್ಯರಿಗೆ ಚಿನ್ಮಯ ದೀಕ್ಷೆ ಹಾಗೂ ನಿರಂಜನ ದೀಕ್ಷೆಯನ್ನು ಕರುಣಿಸಿರುವ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಎಲ್ಲಾ ಭಕ್ತರ ಮನೆ ಮನದಲ್ಲಿ ಪೂಜ್ಯ ಭಾವದಿಂದ ಇರುವವರು.

3) ಶಾಖ ಶಿವಯೋಗ ಮಂದಿರದ ಆಯುರ್ವೇದದ ಖಣಿ.

ಬೈಲಹೊಂಗಲ ತಾಲೂಕಿನ ಮರಡಿನಾಗಲಾಪುರದಲ್ಲಿ ಜನಿಸಿದ ಆರ್ಯ, ಶಿವಯೋಗ ಮಂದಿರಕ್ಕೆ ಬಂದು ಯೋಗ, ಶಿವಯೋಗ, ಅಧ್ಯಾತ್ಮವಿದ್ಯೆ, ಸೇವಾಕಾರ್ಯ, ಆಯುರ್ವೇದದ ಔಷಧಿ, ಕೃಷಿ-ಕಾಯಕ, ದಾಸೋಹದ ಬಗ್ಗೆ ತಿಳಿದುಕೊಂಡಿರುವ ದೇವರು ನಂತರದ ದಿನಗಳಲ್ಲಿ ನಿಡಗುಂದಿ ಕೊಪ್ಪಕ್ಕೆ ಶ್ರೀ ಚೆನ್ನಬಸವ ಮಹಾಸ್ವಾಮಿಗಳಾಗುವರು. ಅವರ ಹತ್ತಿರ ಎಂಥಹ ರೋಗಿಗಳು ಬರುತ್ತಿದ್ದರು ಅಂದರೇ ದೊಡ್ಡ ದೊಡ್ಡ ವೈದ್ಯರು ನಮ್ಮ ಕೈಯಲ್ಲಿ ಈ ರೋಗ ಅಸಾಧ್ಯವೆಂದು ವೈದ್ಯರು ಕೈಚೆಲ್ಲಿದಾಗ , ಕೊನೆಗೆ ಇವರ  ಹತ್ತಿರ ರೋಗಿಗಳು ಬರುತ್ತಿದ್ದರು ಅಂಥಾ ರೋಗವನ್ನು ಇವರು ನಿವಾರಣೆಮಾಡುತ್ತಿದ್ದರು, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶ್ನೆಯಾಗಿ ಇರುವ ರೋಗವನ್ನು ಇವರು ನಿವಾರಿಸುತ್ತಿದ್ದರು, ಇವರು ಕೇವಲ  ಶ್ರೀ ಗುರು ಕುಮಾರೇಶ್ವರರನ್ನು ನೆನೆದು ಶಿವಯೋಗಿಗಳ ಭಾವಚಿತ್ರವನ್ನು ನೋಡುತ್ತಾ ಕೊಡುತ್ತಿದ್ದ ಚೂರ್ಣವು ಕುಷ್ಠರೋಗ-ಕ್ಷಯರೋಗ, ನಾನಾ ವಿಧ ಕಷ್ಟಗಳನ್ನು ಗುಣಪಡಿಸುವ ಶಕ್ತಿ ಇವರದ್ದಾಗಿತ್ತು. ಶ್ರೀ ಗುರು ಕುಮಾರೇಶ್ವರರು ಮೇಲೆ ಅಷ್ಟೊಂದು ನಂಬಿಕೆಯನ್ನು ಇಟ್ಟಿದ್ದ ಮಹಾಸ್ವಾಮಿಗಳು ಎಂಥ ಭಕ್ತರ ಸಮಸ್ಯೆಗಳಿದ್ದರು ಮಹಾಶಿವಯೋಗಿಗಳನ್ನು ನೆನೆಸಿ ಭಕ್ತರ ನೋವಿನ ಮನವನ್ನು ಅವರು ಶಾಂತಚಿತ್ತದಿಂದ ಪ್ರಪುಲ್ಲಗೊಳಿಸುತ್ತಿದ್ದರು. ಆಯುರ್ವೇದದ ಜೊತೆಗೆ ಕೃಷಿ ಕಾಯಕದಲ್ಲಿ ನಿರತರಾಗಿ ಸ್ವತಃ ತಾವೇ ಕಾಯಕಮಾಡುತ್ತಿದ್ದರು. ಸಂಗೀತ, ಶಿವಾನುಭವ ಕಾರ್ಯಕ್ರಮವನ್ನು ಮತ್ತು ಮಹಾದಾಸೋಹವನ್ನು ನಿರಂತರವಾಗಿ ಸಾಗಿಸಿ ಬಂದಿರುವ ಮಠವಾಗಿದೆ. ಈಗಲೂ ಸಹ ಆಯುರ್ವೇದದ ಮೂಲಕ ಭಕ್ತರ ಕಷ್ಟ ಪರಿಹರಿಸುವರು. ಭಕ್ತರ ಆಯುರ್ವೇದ ದಾಸೋಹಿಮೂರ್ತಿಗಳಾಗಿದ್ದವರು ಶ್ರೀ ಚನ್ನಬಸವ ಮಹಾಸ್ವಾಮಿಗಳು.

4) ನಾಗನೂರಿನಲ್ಲಿ ಜನಿಸಿದ ಶಿವಬಸವ ಆರ್ಯರು ನಾಗನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಹನ್ನೆರಡನೇ ವಯಸ್ಸಿಗೆ ಮಂದಿರಕ್ಕೆ ಬಂದು. ಮಂದಿರದ ಆಚಾರ ವಿಚಾರಗಳನ್ನು, ಕನ್ನಡ – ಸಂಸ್ಕೃತ ಭಾಷೆಯನ್ನು ಕರಗತ ಮಾಡಿಕೊಂಡು, ತ್ರಿಕಾಲ ಲಿಂಗಪೂಜೆಯೊಂದಿಗೆ ಶಿವಯೋಗದೊಳಗಿನ ತತ್ವವನ್ನು ಅರಗಿಸಿ ದೇವರಾದರು. ಮುಂದೆ ಶ್ರೀ ಗುರು ಕುಮಾರ ಶಿವಯೋಗಿಗಳ ಸೇವಾ ಕಾರ್ಯಗಳಲ್ಲಿ ಬಹಳ ಕಾಲ ಇರುತ್ತಿದ್ದರಿಂದ “ಮಾನವ ಹುಟ್ಟಿನ ಅರ್ಥವು ಅಧ್ಯಾತ್ಮದಲ್ಲಿ ಮಾತ್ರಾ ತಿಳಿಯುತ್ತೇ, ದೇಹ ಅಳಿದರೂ ಆತ್ಮದ ಆಧಾರದಲ್ಲಿ ನೆಲೆಗೊಳ್ಳುವುದೇ ನಿಜವಾದ ಅಧ್ಯಾತ್ಮ”. ಎಂದು ಬೋಧಿಸುತ್ತಿದ್ದ ಶ್ರೀ ಕುಮಾರ ಶಿವಯೋಗಿಗಳ ವಿಶೇಷ ವ್ಯಕ್ತಿತ್ವ ಹೊಂದಿರುವ ಶಿವಬಸವ ದೇವರಲ್ಲಿ ಮಹತ್ವದ ಕಾಳಜಿ ವಹಿಸಿದ್ದರು, ಮಹಾಗುರುಗಳು ಹೇಳುವ ಯಾವ ಮಾತನ್ನು ಯಾವ ಕಾಲದಲ್ಲಿಯೂ ತಪ್ಪುತ್ತಿರಲಿಲ್ಲಾ. ನಂತರದ ಕಾಲದಲ್ಲಿ ಬೆಳಗಾವಿ ನಾಗನೂರ ಮಠದ ಅಧಿಕಾರವನ್ನು ವಹಿಸಿಕೊಂಡು ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡಿ, ಗಡಿಭಾಗದಲ್ಲಿ ನಶಿಸಿ ಹೋಗುತ್ತಿದ್ದ ಕನ್ನಡಸಂಸ್ಕೃತಿಯನ್ನು ಪುನಃಶ್ಚೇತನ ಮಾಡಿ ಧಾರ್ಮಿಕ ಕಾರ್ಯಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಂಡು ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಹಾಗೇ ವಿದ್ಯಾರ್ಥಿನಿಲಯ ಸ್ಥಾಪಿಸಿದ್ದಾರೆ. ಮಹತ್ವಪೂರ್ಣ ಗ್ರಂಥಗಳ, ವೀರಶೈವ ಧರ್ಮದ ತಾಡೆಯೋಲೆ – ಕೈಬರಹ ಮೊದಲಾದ ಅಮೂಲ್ಯ ಕೃತಿಗಳನ್ನು ಸಂಗ್ರಹಿಸಿ ಶ್ರೀ ಫ.ಗು.ಹಳಕಟ್ಟಿಯಂತಹ ದೊಡ್ಡ ದೊಡ್ಡ ಸಾಹಿತಿಗಳಿಗೆ, ಲೇಖಕರಿಗೆ, ಸಾಹಿತ್ಯಕ್ಕೆ ನೆರವಾಗಿ ಗ್ರಂಥಾಲಯದ ಮೂಲಕ ಸಹಾಯಹಸ್ತ ನೀಡಿದ್ದಾರೆ. ತಮ್ಮದೇ ಪ್ರಕಟನೆಯಲ್ಲಿ ನೂರಾರು ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ. ಶ್ರೀ ಗುರು ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರದ ಎಲ್ಲ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿ ಸುಧೀರ್ಘ ಅಧ್ಯಕ್ಷರಾಗಿದ್ದಾರೆ. ಪೂಜ್ಯ ಶ್ರೀ ಡಾ.ಶಿವಬಸವ ಮಹಾಸ್ವಾಮಿಗಳು ಶತಾಯುಷಿಗಳಾಗಿ ಮಂದಿರದ ಮೇಲೆ ಅತ್ಯಂತ ನಿಷ್ಠಾವಂತರಾಗಿ ಸೇವಾ ಕೈಂಕರ್ಯ ಪೋರೈಸಿದ್ದಾರೆ.

5) ಬೀದರ್ ಜಿಲ್ಲೆಯ ಕಮಲಾನಗರದಲ್ಲಿ ಜನಿಸಿದ ಚೆನ್ನಬಸವ ವಟು ಶಿವಯೋಗ ಮಂದಿರಕ್ಕೆ ಬಂದು ಅಲ್ಲಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕನ್ನಡ ಮತ್ತು ಸಂಸ್ಕೃತ ಅಧ್ಯಯನ, ಯೋಗ, ಶಿವಾನುಭವ ಅಭ್ಯಾಸ ಮಾಡಿರುವ ಚೆನ್ನಬಸವ ದೇವರು. ಕೆಲವು ವರ್ಷಗಳ ಕಾಲ ಶಿವಯೋಗಿಗಳ ಸೇವೆಯನ್ನು ಮಾಡುವರು, ಶಿವಯೋಗಿಗಳು ಬಿಡುವಿನಲ್ಲಿ ಪಾಠದ ಜೊತೆ ಅನುಭವ ಹೇಳುತ್ತಿದ್ದರು. “ಗುರು ಮತ್ತು ವಿರಕ್ತರು ಸಮಾಜದ ಎರಡು ಕಣ್ಣುಗಳು ಅವರಲ್ಲಿ ಮನಸ್ತಾಪಗಳು ಬರಬಾರದು ಅವರೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ತಿದ್ದುವ, ನಮ್ಮ ಧರ್ಮವನ್ನು ಆಚರಿಸಿ ತಿಳಿಹೇಳುವ, ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕು” ಎಂದು ತಿಳಿಸುತ್ತಿದ್ದರು. ಅದನೆಲ್ಲಾ ಆಲಿಸಿ, ತಿಳಿದು ಅದರ ಹಾಗೆ ಆಚರಿಸಬೇಕು ಎಂಬ ಹಂಬಲದಿಂದ ಇರುತ್ತಿದ್ದ ಚೆನ್ನಬಸವ ದೇವರು, ಕನ್ನಡದ ಗಡಿಭಾಗದ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ  ಕ್ರಿ.ಶ. ೧೯೨೪ರಲ್ಲಿ ಅಧಿಕಾರವನ್ನು ವಹಿಸಿಕೊಂಡು ಚೆನ್ನಬಸವ ಪಟ್ಟಾಧ್ಯಕ್ಷರಾದರೂ. ಅದು ಗುರುಪರಂಪರೆ ಮಠವಾದರೂ ಅಲ್ಲಿ ಬಸವಾದಿ ಶರಣರ ಸಂಸ್ಕ್ರತಿಯನ್ನು, ವಚನಶಾಸ್ತ್ರವನ್ನು ಬಿತ್ತರಿಸಿದರು. ಗಡಿಭಾಗದಲ್ಲಿ ಕನ್ನಡ ಸಂಸ್ಕೃತಿ ಕಡಿಮೆಯಾಗುವ ಅಂಚಿನಲ್ಲಿ ಇದ್ದಾಗ ಹೊರಗಡೆ ಉರ್ದು ಭಾಷೆಯ ಫಲಕಹಾಕಿ ಒಳಗಡೆ ಕನ್ನಡ ಭಾಷೆಯನ್ನು ಬೋಧಿಸಿ ಕನ್ನಡವನ್ನು ಉಳಿಸಿದರು. ಅನೇಕ ಕಡೆ ಶಾಲಾ ಕಾಲೇಜು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಒಂದು ಕೊಡುಗೆಯನ್ನು ನೀಡಿದ್ದಾರೆ. ಅದರ ಜೊತೆಗೆ ಬಸವಾದಿ ಶರಣರ ತತ್ವದ ದಾಸೋಹ ನಿಲಯವನ್ನು ಸ್ಥಾಪಿಸಿದ್ದಾರೆ.  ಶ್ರೀ ಮಠದ ಜೀರ್ಣೋದ್ಧಾರದೊಂದಿಗೆ ಮಠವನ್ನು ಸುಸ್ಥಿತಿಗೆ ತಂದಿರುವ  ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರು ಗಡಿಭಾಗದ ದೇವರಾಗಿ  ಶಿವಯೋಗ ಮಂದಿರಕ್ಕೆ ಗೌರವದಿಂದ ಬಾಳುತ್ತಿದ್ದ ಮಹಾತ್ಮರು.

6) ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮಕ್ಕೆ ಮಹಾಶಿವಯೋಗಿಗಳು ಮಂದಿರದ ಭಿಕ್ಷೆಗೆ ದಯಾಮಾಡಿಸಿದಾಗ. ಶ್ರೀಗಳ ಸಮಾಜಸೇವಾಕಾರ್ಯ, ಗುರುಗಳು ದೂರದೃಷ್ಟಿಯುಳ್ಳವರು ಎಂದು ತಿಳಿದಿದ್ದ, ಕಳಕೆ ಒಡೆಯರ್ ಮಠದ ಚನ್ನಯ್ಯನವರು (ಚನ್ನಕವಿ) ಪೂಜ್ಯರನ್ನು ತಮ್ಮ ಮನೆಗೆ ಬರಮಾಡಿಕೊಂಡು ಪಾದಪೂಜೆಯನ್ನು ಮಾಡಿ ಮಂಗಳಾರತಿಯನ್ನು ಹೇಳುವ ಸಂದರ್ಭದಲ್ಲಿ ಅವರೇ ಸ್ವತಃ ಶಿವಯೋಗಿಗಳ ಮೇಲೆ ರಚಿಸಿರುವ ಪದವನ್ನು ಹೇಳಿದಾಗ, ಆಗ ಪೂಜ್ಯ ಶಿವಯೋಗಿಗಳು ಕೋಪದಿಂದ ” ನಮ್ಮನ್ನು ಹೊಗಳುವಿರಾ ನಾವೇನು ಬಸವಾಲ್ಲಮರಂತೆ ಘನವಂತರೆ? ಅಥಣಿ ಶಿವಯೋಗಿಗಳಂತೇ ತಪೋನಿಧಿಗಳೇ? ವಿಜಯ ಮಹಾಂತ ಯತಿಗಳ, ಅನಂತಪುರದ ಗುರುಬಸವ ಶಿವಯೋಗಿಗಳ ಸುಚರಿತ್ರೆಗಳನ್ನು ಬರೆಯಿರಿ, ಬಿಡದೆ ಬರೆಯಿರಿ” ಎಂದು ನಮ್ಮ ನಾಡಿನಲ್ಲಿ ಅನೇಕ ಮಹಾಶಿವಯೋಗಿಗಳು ಆಗಿಹೋಗಿದ್ದಾರೆ ಅವರ ಪುರಾಣವನ್ನು ರಚಿಸಿ ಎಂದು ಅಪ್ಪಣೆ ಮಾಡಿದರು.

ಶಿವಯೋಗಿಗಳ ಸತ್ಯ ಸಂಕಲ್ಪದಂತೆ ಚನ್ನಕವಿಗಳು ಒಂಭತ್ತು ಪುರಾಣವನ್ನು ರಚಿಸಿದರು.

1- ಹಾಲಕೇರಿ ಅನ್ನದಾನಿಶ್ವರ ಪುರಾಣ.

2- ಹೇಮರೆಡ್ಡಿ ಮಲ್ಲಮ್ಮನ ಪುರಾಣ.

3-ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಪುರಾಣ.

4-ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಚರಿತ್ರೆ.

5-ನಾಲವತ್ವಾಡ ಶ್ರೀ ವೀರೇಶ್ವರ ಪುರಾಣ.

6-ಕಂಬಳಿಹಾಳ ಶ್ರೀ ದೊಡ್ಡ ಬಸವೇಶ್ವರ ಪುರಾಣ.

7-ಬಾಲಲೀಲ ಮಹಾಂತ ಸ್ವಾಮಿಗಳ ಪುರಾಣ.

8-ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ.

9- ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ.

ಒಮ್ಮೆ ಮಹಾ ಶಿವಯೋಗಿಗಳು ” ಜನನಾದಿಯಿಂದ ಲಿಂಗೈಕ್ಯಾಂತಮಾಗಿ ಸಮಸ್ತ ವೀರಶೈವರಿಗೆ ಬೇಕಾಗುವ ಸಂಸ್ಕಾರ, ಆಚಾರ, ಷಟಸ್ಥಲ ವಿಚಾರಕ್ರಮಗಳೆಲ್ಲ ಸಪ್ರಮಾಣವಾಗಿ ಬೇರೆ ಗ್ರಂಥಗಳನ್ನು ನೋಡುವ ಅವಶ್ಯವಿಲ್ಲದೇ ಇದೇ ಪುರಾಣದಲ್ಲಿ ಬರುವಂತೆ ಮಾಡಿದರೇ ಇದೊಂದು ದೊಡ್ಡಕೆಲಸವೆನಿಸುವುದು. ಆದ್ದರಿಂದ ನಾವು ಶಿವಮಂದಿರದಲ್ಲಿದ್ದಾಗ ನೀನು ಬಂದು ಕೆಲವು ದಿವಸದಲ್ಲಿ ನಿಂತು, ತಕ್ಕ ಪ್ರಮಾಣಗಳನ್ನು ಸೋಮನಾಥ ಶಾಸ್ತ್ರಿಗಳ ಸಹಾಯದಿಂದ ಹುಡುಕಿಕೊಂಡು ಬರೆ” ಎಂದಿರುವುನ್ನು ಚನ್ನಕವಿಗಳೂ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಪುರಾಣದ ಮುನ್ನುಡಿಯಲ್ಲಿ ಸ್ಮರಿಸಿದ್ದಾರೆ. ಹೀಗೆ ಶಿವಯೋಗಿಗಳು ಚನ್ನಕವಿಗಳ ಕವಿತ್ವವನ್ನು ಕಂಡು ಉನ್ನತ ಮಟ್ಟಕ್ಕೆ ಏರಲು ಪ್ರೇರಣಾದಾಯಕವಾಗಿ ಆಶೀರ್ವದಿಸಿರುವರು.

ಈಗಿನ ಕಾಲದಲ್ಲಿ  ಪುರಾಣ ಪ್ರವಚನಗಳಿಗೆ ಆಧಾರವೆಂದರೆ ಚನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳೇ ಎಲ್ಲಕ್ಕೂ  ಮೂಲಗಳು ಎಂದರೇ ಅತಿಶಯೋಕ್ತಿಯಲ್ಲ ಎನಿಸುತ್ತದೆ ಅಂತಾ ಮೌಲ್ಯಯುತವಾದ ಪುರಾಣಗಳನ್ನು ಶಿವಯೋಗಿಗಳ ಆಶೀರ್ವಾದದಿಂದ ರಚಿಸಿರುವವರು ಚೆನ್ನಕವಿಗಳು.

7) ಸಂಗೀತದ ದೇವರ ಪುರುಷರು.

ಕಾಡಶೆಟ್ಟಿಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಕ್ಕಲ ಬಸವೇಶ್ವರರ ಜಾತ್ರೆಗೆ ದಯಮಾಡಿಸಿದಾಗ ಅಲ್ಲಿ ಎಳೆಯ ಕಂಠದಿಂದ ಹಾಡುತ್ತಿದ್ದ ಎರಡು ಅಂಧ ಮಕ್ಕಳನ್ನು ದತ್ತು ಪಡೆದು ಹಾನಗಲ್ಲಿನಲ್ಲಿ ಪ್ರಾಥಮಿಕ ಸಂಗೀತ ಶಿಕ್ಷಣ ಕೊಡಿಸಿ. ಕೆಲ ವರ್ಷಗಳ ನಂತರ ಇವರನ್ನು ಹೆಚ್ಚಿನ ಅಭ್ಯಾಸಕ್ಕೆ ಮೈಸೂರಿಗೆ ಕಳುಹಿಸಬೇಕು ಎಂದು ಯೋಚಿಸುತ್ತಿರುವಾಗ ಕಾಲರಾ ರೋಗ ಬಂದು ಹಿರಿಯ ಗುರುಬಸಯ್ಯ ತೀರಿಕೊಳ್ಳುವನು, ಗದುಗಯ್ಯನನ್ನು ಸಮಾಧಾನಿಸಿ ಮೈಸೂರಿಗೆ ಕಳುಹಿಸಿ ಸಂಗೀತ ಶಿಕ್ಷಣ ಕೊಡಿಸುವರು,  ಅದರ ಜೊತೆ ದೇಶದ ಹಿರಿಯ ಸಂಗೀತಗಾರರಿಂದ ಕರ್ನಾಟಕ ಸಂಗೀತ ಹಾಗೂ ಲಾಹೋರ್ ನ ಉಸ್ತಾದ ವಹೀದಖಾನರಿಗೆ ತಿಂಗಳಿಗೆ ನೂರೈವತ್ತು ರೂಪಾಯಿ ಸಂಭಾವನೆ ಕೊಟ್ಟು ಹಿಂದೂಸ್ತಾನಿ ಸಂಗೀತ,  ಪಿಟೀಲು, ವಿಶೇಷವಾಗಿ ಬಲಗೈಯಿಂದ ಡಗ್ಗಾ ಎಡಗೈಯಿಂದ ತಬಲಾ ಬಾರಿಸುವುದು, ಸಾರಂಗಿ, ಕೊಳಲು, ಹಾರ್ಮೋನಿಯಂ, ಶಹನಾಯಿ ಹೀಗೆ ಹಲವು ವಾದ್ಯಗಳ ವಿದ್ಯೆಯನ್ನು ಕೊಡಿಸಿದರು.  ಮುಂದೆ ಇವರು ಪಂಚಾಕ್ಷರಿಗವಾಯಿ ಎಂಬ ಹೆಸರನ್ನು ಪಡೆಯುವರು.  ಬಾಗಲಕೋಟೆಯಲ್ಲಿ ನಡೆದ ಮಹಾಸಭೆಯಲ್ಲಿ ತಮ್ಮ ಸುಮಧುರವಾದ ಸಿರಿಕಂಠದಿಂದ ಸಂಗೀತವನ್ನು ನುಡಿದು ಪಂಚಾಕ್ಷರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಾಗೆ ಅವರು ಎಂದೂ ತ್ರಿಕಾಲ ಲಿಂಗಪೂಜೆ ಬಿಡುತ್ತಿರಲಿಲ್ಲ.

ಮುಂದೆ ಮಂದಿರವು ಸ್ಥಾಪನೆ ಆದ ನಂತರ, ಶಿವಯೋಗಿಗಳು “ಪಂಚಾಕ್ಷರಿ, ನಿನ್ನ ಶಿಷ್ಯರೊಂದಿಗೆ ಸಂಗೀತಯಾತ್ರೆ ಆರಂಭಿಸು . ನಿನ್ನ ಸಂಗೀತ ಹಾಗೂ ಸಂಗೀತ ಶಿಕ್ಷಣ ಲೋಕಾರ್ಪಣೆಯಾಗಲಿ. ಯಾವುದಕ್ಕೂ ಧೃತಿಗೆಡದೆ ಸಂಚಾರಿಶಾಲೆಯಾಗಿ ಸಂಗೀತ ಶಿಕ್ಷಣ ಮುನ್ನೆಡೆಸು‌. ನಿನ್ನ ಶಾಲೆಯ ಕೀರ್ತಿ ನಾಡಿನಲ್ಲೆಲ್ಲಾ ಹರಡಲಿ, ಶಿವ ಕೃಪೆಯಿಂದ ಎಲ್ಲವೂ ಸೌಖ್ಯವಾಗುವುದು‌.” ಎಂದು ಶ್ರೀ ಗುರು ಕುಮಾರ ಶಿವಯೋಗಿಗಳು ಆಶೀರ್ವದಿಸುವರು. ಅಲ್ಲಲ್ಲಿ ಸಂಗೀತ ಶಿಕ್ಷಣ, ಭಜನೆ, ಕೀರ್ತನೆ ನಡೆಸುತ್ತಾ, ಶ್ರೀ ಸಿದ್ಧರಾಮೇಶ್ವರ – ಶ್ರೀ ಹೇಮರೆಡ್ಡಿ ಮಲ್ಲಮ್ಮನ ನಾಟಕವನ್ನು ಪ್ರದರ್ಶಿಸುತ್ತಾ ಗದುಗಿಗೆ ಬಂದು ಶ್ರೀ ಕುಮಾರ ಶಿವಯೋಗಿಗಳ ಸದಿಚ್ಛೆಯಂತೆ ಬಸರೀಗಿಡದ ವೀರಪ್ಪನವರ ಸಹಕಾರದಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿದರು. ಮುಂದೆ ಇದು ದೇಶದ ಅಪರೂಪದ ಸಂಗೀತ ಗುರುಕುಲವಾಗಿ ಬೆಳೆಯಿತು. ಜಾತಿ – ಕುಲರಹಿತ ಶಿಕ್ಷಣದಿಂದ ಸಾವಿರಾರು ಸಂಗೀತಗಾರರು, ಕೀರ್ತನಕಾರರು, ದೇಶದಾದ್ಯಂತ ಬೆಳೆದಿರುವರು. ಹೀಗೆ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿ ಪಂಚಾಕ್ಷರಿ ಗವಾಯಿಗಳು ಖ್ಯಾತಿ ಪಡೆಯುವಲ್ಲಿ ಶ್ರೀ ಕುಮಾರ ಶಿವಯೋಗಿಗಳು ವಹಿಸಿದ ಕಾರ್ಯ ಅವಿಸ್ಮರಣೀಯವಾದುದು.

ಶ್ರೀಗಂಧದ ಸಂಪರ್ಕದಲ್ಲಿ ಇರುವ ಸಾಣಿಕಲ್ಲು ಸದಾ ಸುಗಂಧಯುಕ್ತವಾದಂತೇ ಶ್ರೀ ಗುರು ಕುಮಾರ ಮಹಾಶಿವಯೋಗಿಗಳ ಸಾಮಿಪ್ಯದಲ್ಲಿ ಇರುತಿದ್ದ ಮಹಾ ಸಾಧಕರು ತಮ್ಮ ಬದುಕನ್ನು ಸವಿಸಿ  ಶಿವಯೋಗಿಗಳಾದರು.

ಕಲ್ಲು, ಕಂಬವೇ ದೇವರೆಂದು ಪೂಜಿಸುವ ಮುಗ್ಧ ಭಕ್ತರಿಗೆ ನಡೆದಾಡುತ್ತಾ ಮಾತನಾಡುವ ದೇವರನ್ನು ತೋರಿಸಿರುವವರು. ಸಮಾಜದಲ್ಲಿ ಕುದೃಷ್ಟಿಗೆ ಗುರಿಯಾಗಿದ್ದ ಅಂಧರು-ಅನಾಥರು ಸಂಗೀತದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವವರು. ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಹಾಯಹಸ್ತನೀಡಿ ಪ್ರೇರೇಪಿಸಿದವರು. ಸಂಶೋಧನಾ ಕಾರ್ಯದಲ್ಲಿ ಮಹಾನುಭಾವಿ ಚೆನ್ನಮಲ್ಲಿಕಾರ್ಜುನನವರಿಗೆ ಅನುಗ್ರಹ ನೀಡಿರುವವರು. ಶಿರಸಂಗಿ ಲಿಂಗರಾಜರಿಗೆ ಆಶೀರ್ವದಿಸಿ ಕೆ.ಎಲ್.ಇ. ಸಂಸ್ಥೆಗೆ ಪ್ರೇರಣೆಯಿತ್ತವರು. ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿರುವರು. ವಿಜಯಪುರದ ಬಿ.ಎಲ್.ಡಿ. ಸಂಸ್ಥೆಗೆ ಪ್ರೇರಣೆಯಿತ್ತವರು. ಸಾಹಿತ್ಯದಲ್ಲಿ ಜ.ಚ.ನಿಯವರನ್ನು, ಯೋಗದಲ್ಲಿ ಕಂಚುಗಲ್ಲ ಬಿದರಿ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು, ವಿದ್ವತ್-ಭಾಷಣದಲ್ಲಿ ನವಲಗುಂದದ ಶ್ರೀ ಬಸವಲಿಂಗ ಸ್ವಾಮಿಗಳನ್ನು, ಕಾಯಕದಲ್ಲಿ ಕಪನಳ್ಳಿ ರುದ್ರಮುನಿ ಶಿವಯೋಗಿಗಳನ್ನು, ವೈದಿಕ ಶಿವಪೂಜೆಯಲ್ಲಿ ಸಿಂಧಗಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಮತ್ತು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಭಾಷ್ಯಕಾರರಾದ ಸಖರಾಯಪಟ್ಟಣದ  ಶ್ರೀ ಸದಾಶಿವ ಶಿವಾಚಾರ್ಯರನ್ನು, ಆಯುರ್ವೇದದಲ್ಲಿ ತುಪ್ಪದ ಕುರಹಟ್ಟಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರನ್ನು ಮತ್ತು ನಿಡಗುಂದಿ ಕೊಪ್ಪದ ಶ್ರೀ ಚೆನ್ನಬಸವ ಮಹಾಸ್ವಾಮಿಗಳನ್ನು, ಶಿಕ್ಷಣ ವಿದ್ಯಾಸಂಸ್ಥೆ-ಮಹಾದಾಸೋಹದಲ್ಲಿ ಶ್ರೀ ಶಿವಬಸವ ಮಹಾಸ್ವಾಮಿಗಳನ್ನು ಹಾಗೂ ಶ್ರೀ ಚೆನ್ನಬಸವ ಪಟ್ಟಾಧ್ಯಕ್ಷರನ್ನು, ಸಂಗೀತ ಕ್ಷೇತ್ರದಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಪುಟ್ಟರಾಜ ಗವಾಯಿಗಳನ್ನು, ಹೀಗೆ ವಾಕ್ ಸಿದ್ಧಿ, ಹಸ್ತಶುದ್ಧಿ, ಮನಶುದ್ಧಿ, ಭಾವಶುದ್ಧಿ, ದೃಷ್ಟಿಶುದ್ಧಿ ಇಂತಿ ಸಮಾಜ ಸೇವಾ ಸಮೂಹವನ್ನು, ಮಹಿಳೆಯರ ವಿದ್ಯಾಭ್ಯಾಸಕ್ಕೆ ಪಾಠ ಶಾಲೆಯನ್ನು, ದೇಶಿಗೋವುಗಳನ್ನು ಸಂರಕ್ಷಿಸಿದವರು ಅದರ ಗೋಮಯದಿಂದ ಪರಿಶುದ್ಧ ವಿಭೂತಿಯನ್ನು ತಯಾರಿಸಲು ಕಲಿಸಿದವರು. ಹೀಗೆ ಸರ್ವ ಕಾರ್ಯಗಳಲ್ಲಿಯು ಸಮಾಜಕ್ಕೆ ಕೊಟ್ಟ ಕಾಣಿಕೆಯನ್ನು ನೀಡಿರುವ ಹಾನಗಲ್ಲ ಶ್ರೀ ಗುರು ಕುಮಾರ ಮ‌ಹಾಶಿವಯೋಗಿಗಳನ್ನು ನಮ್ಮ ಸಮಾಜವು ಸದಾ ಸ್ಮರಿಸಬೇಕು.

ಪೂಜ್ಯ ಲಿಂ. ಶಿವಬಸವ ಮಹಾಸ್ವಾಮಿಗಳು ನಾಗನೂರ – ಬೆಳಗಾವಿ.

ಮನುಷ್ಯರೊಳ್‌ ನಿರುಪಮ ಲಿಂಗ ಶಿವಯೋಗಿ

ಮಹಾ ಹಿರಿಯಂ ಗುರುಶಂಕರೇಶ್ವರಾ

ಶಂಕರದೇವಕವಿಯ ಈ ಉಕ್ತಿ ಜೀವಭಾವವಳಿದು ಶಿವಭಾವವಾಗಿ ಪರಿಣಮಿಸಿ ಲಿಂಗಭೋಗೋಪಭೋಗಿಯಾಗಿರುವ ಶಿವಯೋಗಿಯ ಮಹತಿಯನ್ನು ಸಾರಿ ಹೇಳುತ್ತದೆ. ಭಾರತೀಯ ಯೋಗಪರಂಪರೆಯಲ್ಲಿ ಶಿವಯೋಗಕ್ಕೆ ಅಗ್ರಪಟ್ಟ. ಇದು ಮಂತ್ರ, ಲಯ,. ಹಠ ಮತ್ತು ರಾಜಯೋಗಗಳಿಗಿಂತಲೂ ಅತ್ಯಂತ ಪ್ರಗತಿಪರ. ಸಂಸಾರಿಗಳಿಗೂ ಸುಲಭಸಾಧ್ಯ. ಈ ಅಪೂರ್ವ ಯೋಗವನ್ನು ಉಳಿಸಿ ಬೆಳಿಸಿಕೊಂಡು ಬಂದವರು ನಾಡಿನ ಹಲವಾರು ಶರಣರು ಹಾಗೂ ಶಿವಯೋಗಿಗಳು. ಶಿವಯೋಗ ಸಾಧನೆಗಾಗಿ ಶಿವಯೋಗಮಂದಿರವನ್ನು ಸ್ಥಾಪಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಅವರಲ್ಲಿ ಅಗ್ರಗಣ್ಯರು. ಶಿವಯೋಗವನ್ನಾಚರಿಸಿ ಶಿವಸ್ವರೂಪಿಗಳಾದವರು. ಶಿವಯೋಗದ ತುತ್ತತುದಿಯನ್ನೇರಿ  ನಿಜಾನಂದಲೋಲರಾಗಿಯೂ ಸಮಾಜದತ್ತ ಲಕ್ಷ್ಯ ಪೂರೈಸಿ ಅದರ ಶ್ರೇಯೋಭಿವೃದ್ದಿಗೆ ನಿರಂತರ ಪರಿಶ್ರಮಿಸಿದ ಪುಣ್ಯಪುರುಷರು. ಇಂಥ ಮಹಾನ್‌ ಶಿವಯೋಗಿಯ ಆದರ್ಶ ಕ್ರಿಯಾಶೀಲತೆಯಲ್ಲಿ ಭಾಗವಹಿಸುತ್ತ ತಮ್ಮದೇ ಆದ ಸ್ವಂತ ವ್ಯಕ್ತಿತ್ವದಿಂದ ಬಾಳಿಬೆಳಗಿದ ವಿರಳ ಸ್ವಾಮಿಗಳಲ್ಲಿ ಹಾಲಕೆರೆಯ ಪೂಜ್ಯ  ಶ್ರೀ ಅನ್ನದಾನ ಮಹಾಸ್ವಾಮಿಗಳವರೂ ಒಬ್ಬರು.

ಎತ್ತರದ ನಿಲವಿನ, ಭಸ್ಮಭರಿತ ನಗೆಮುಖದ, ಪ್ರಸನ್ನ ಹೃದಯದ ಪರಮ ಪೂಜ್ಯ ಅನ್ನದಾನಶಿವಯೋಗಿಗಳು ಪರಿಶುದ್ದಶೀಲದ ಘನವಿರಕ್ತರು. ಅವರ ಹಸ್ತ, ನೇತ್ರ, ವಾಕ್‌ಗಳೆಲ್ಲವೂ ಪರುಷಮಯ. ಅವರು ನಡೆದರೆ ಭೂಮಿ ಪಾವನ; ಸಹಜವಾಗಿ ನುಡಿದರೆ ಸರ್ವಜೀವಿಗಳ ದುಃಖನಿವಾರಣ. ಕಣ್ತೆರೆದು ನೋಡಿದರೆ ಜನಮನ ಬೆಳಗುವ ಶಿವಬೆಳಕೇ ಹೊರಸೂಸಿದಂತಾಗುತ್ತಿತ್ತು. ಪೂಜೆ, ಜಪ-ತಪಾದಿಗಳಲ್ಲಿ ಅವರಿಗೆ ಅಚಲವಾದ ನಿಷ್ಠೆ. ಅನವರತ ಸಾಧನೆಯಿಂದ ದೇವಮಾನವರಾಗಿ ನಾಡವರನ್ನುದ್ಧರಿಸಿದ ಅವರು ಆಚಾರ-ವಿಚಾರಗಳ ಸಮನ್ವಯಮೂರ್ತಿ. ಶಿವಯೋಗ ಸಾಧನೆಯಿಂದ ಸಿದ್ಧಿಸಿದ ಆತ್ಮಶಕ್ತಿಯೇ ಅವರಲ್ಲಿತ್ತು, ತಮ್ಮ ಜೀವನದುದ್ದಕ್ಕೂ ಆತ್ಮವಿಕಾಸದ ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮುಂದುವರೆಸಿ ಲೋಕಕಲ್ಯಾಣಗೈದವರು. ಸಮಸ್ತ ಮಾನವ ಜನಾಂಗದ ತಾತ್ವಿಕ ಮತ್ತು ನೈತಿಕಮಟ್ಟವನ್ನು ಮೇಲೆತ್ತಲು ಜೀವವನ್ನೇ ಸವೆಸಿದ ಅಪೂರ್ವ ತ್ಯಾಗಿಗಳು. ಅವರ ದಿವ್ಯ ಸಂರ್ಪಕದಿಂದ ತಮ್ಮ ಬಾಳು ಬೆಳಗಿಸಿಕೊಂಡವರು ಸಾವಿರಾರು ಜನ.  ಆದ್ಯಾತ್ಮೀಕ ರಂಗದಲ್ಲಿ ವ್ಯಕ್ತಿಯೊಬ್ಬರ ಸಾಧನೆ ಎಂತಹ ಲೋಕಜಾಗೃತಿಯನ್ನು ಸಾಧಿಸಬಹುದೆಂದುದಕ್ಕೆ ಪರಮಪೂಜ್ಯರ ಜೀವನವೇ ಒಂದು ನಿದರ್ಶನ. ಅಹಂಕಾರದ ಲವಲೇಶವೂ ಇಲ್ಲದ ಅವರ ಸರಳ ನಡೆ, ಸರಳ ನುಡಿ, ನಿರಾಡಂಬರ ಜೀವನ ನಿಜಕ್ಕೂ ಅನುಕರಣೀಯವಾದುದು.

ಕಾರಣಿಕ ದಿವ್ಯಪುರುಷ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳೆಂದರೆ ಪೂಜ್ಯ ಶ್ರೀ ಅನ್ನದಾನಸ್ವಾಮಿಗಳವರಿಗೆ ಎಲ್ಲಿಲ್ಲದ ಭಕ್ತಿ. ಅವರ ಪಡಿನೆಳಲಾಗಿ ಲಿಂಗಾನು ಸಂಧಾನ ಸಾಧಕರಾಗಿ ಜೀವನ ಸಾಗಿಸುತ್ತಿದ್ದರು. ಒಮ್ಮೆ ಶ್ರೀ ಕುಮಾರಶಿವಯೋಗಿಗಳು ಪ್ರೀತಿಯಿಂದ ಶ್ರೀಗಳ ಮೈದಡವಿ ತೆಲೆಯಮೇಲೆ ಹಸ್ತವನ್ನಿಟ್ಟು ಆತ್ಮೀಯವಾಗಿ ಆಶೀರ್ವದಿಸುತ್ತ ಮೂರು ವರ್ಷಗಳವರೆಗೆ ಅನುಷ್ಠಾನಗೈಯಲು ಅಪ್ಪಣೆ ಕೊಡಿಸಿದರು. ಅನ್ನದಾನಶ್ರೀಗಳು ಅವರ ಕೃಪಾಶೀರ್ವಾದವನ್ನೇ ಶಿರೋಧಾರ್ಯವಾಗಿಸಿ ಕೊಂಡು ನರೇಗಲ್ಲದಲ್ಲಿ ಮೂರು ವರ್ಷಗಳವರೆಗೆ ಕಠಿಣ ತಪವನ್ನಾಚರಿಸಿದರು. ಪೂಜ್ಯರ ಜೊತೆಗಿರಲು ಹಾನಗಲ್ಲ ಶ್ರೀಗಳು ನಮ್ಮನ್ನೇ ಕಳುಹಿಸಿದ್ದರು. ಮತ್ತು ತಾವು ಸ್ವತಃ ಆಗಾಗ್ಗೆ ನರೇಗಲ್ಲಿಗೆ ದಯಮಾಡಿಸಿ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗೆಯೇ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅನ್ನದಾನ ಶ್ರೀಗಳು ಅವರ ಅಪ್ಪಣೆಯನ್ನು ಎಳ್ಳಷ್ಟೂ ಅತಿಕ್ರಮಿಸುವವರಲ್ಲ. ಅವರು ವಿಧಿಸಿದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅವರ ಆಜ್ಞೆಯನ್ನು ಮೈಮನಗಳಲ್ಲಿ ತುಂಬಿಕೊಂಡು ಜೀವನ ಸಾಧನೆ ಮಾಡುತ್ತಿದ್ದ ಶ್ರೀಗಳ ಶ್ರದ್ಧೆ ಅಪೂರ್ವವಾದುದು. ಮನೋನಿಗ್ರಹ, ಸಂಯಮನ ಶಕ್ತಿಗಳಿಂದೊಡಗೂಡಿದ ಪೂಜ್ಯ ಅನ್ನದಾನಶ್ರೀಗಳ ತಪೋಜೀವನ ಅದ್ಭುತವಾಗಿತ್ತು. ಇವರ ಶುದ್ಧ ಮನಸ್ಕತೆ, ಸತ್‌ಸಂಕಲ್ಪ, ಶ್ರಧ್ಧಾನ್ವಿತ ಜೀವನವನ್ನು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಬಹುವಾಗಿ ಮೆಚ್ಚಿ ಕೊಂಡಿದ್ದರು. ಹಾನಗಲ್ಲ ಶ್ರೀಗಳ ಮೆಚ್ಚುಗೆಯನ್ನು ಪಡೆಯುವುದು ಎಲ್ಲರಿಗೂ ಸಾಧ್ಯವಿರಲಿಲ್ಲ ಎಂಬುದು ಅವರ ಸಮಕಾಲೀನರಿಗೆಲ್ಲಾ ಗೊತ್ತು ಅವರ ಪ್ರೇರಣೆ ಯಂತೆಯೇ ಈಗಿರುವ ಹಾಲಕೆರೆಯ ಮಠವನ್ನು ಪೂಜ್ಯ ಶ್ರೀಗಳು ಕಟ್ಟಿಸಿ ಆಧ್ಯಾತ್ಮ ಕೇಂದ್ರವನ್ನಾಗಿಸಿದರು. ಪೂಜ್ಯರ ಪವಿತ್ರ ಪಾದಸ್ಪರ್ಶದಿಂದ ಹಾಳಕೇರಿಯೊಂದು ಹಾಲಕರೆಯಾಗಿ ಪರಿವರ್ತಿತವಾದುದು ಅದ್ಭುತ ಪವಾಡವೇ ಸರಿ. ಸಾರ್ವಜನಿಕರ ಪ್ರೀತಿ-ವಿಶ್ವಾಸ,  ಸಹಾಯ- ಸಹಕಾರಗಳನ್ನು ಪಡೆದು ಉಚಿತ ಪ್ರಸಾದನಿಲಯ, ಶಾಲೆ – ಕಾಲೇಜುಗಳನ್ನು ಸ್ಥಾಪಿಸಿ ಶೈಕ್ಷಣಿಕ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿದರು; ಸಾವಿರಾರು ಬಡ ಮಕ್ಕಳಿಗೆ ತಾಯಿ ತಂದೆಯಾದರು.

ಶಿವಯೋಗಮಂದಿರ ಆದರ್ಶ ಧರ್ಮಗುರುಗಳನ್ನು ಸಮಾಜ ಸೇವೆಗೆ ಸಿದ್ದಗೊಳಿಸುವ ವಿನೂತನ ಸಂಸ್ಥೆ. ಅದೊಂದು ಶುದ್ಧ ಆಧ್ಯಾತ್ಮಿಕ ಕೇಂದ್ರ. ಭಕ್ತಜನಕೋಟಿಗೆ ಹಾನಗಲ್ಲ ಶ್ರೀಗಳು ದಯಪಾಲಿಸಿದ ಅನುಪಮ ಕಾಣಿಕೆ. ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ತನ್ಮೂಲಕ ನಾಡಿಗೆ ಸತ್ಪಲಗಳನ್ನು ನೀಡುವಂತಾಗಬೇಕೆಂದು ಪೂಜ್ಯ ಶ್ರೀ ಅನ್ನದಾನಶ್ರೀಗಳವರು ಸದಾ ಚಿಂತಿಸುತ್ತಿದ್ದರು. ಹಾವೇರಿಯ ಪೂಜ್ಯರಾದ ಶ್ರೀ ಶಿವಬಸವಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಅನಾಥವಾಗಿದ್ದ ಶಿವಯೋಗಮಂದಿರಕ್ಕೆ ಶ್ರೀರಕ್ಷೆಯನ್ನೊದಗಿಸಿದರು. ಮಂದಿರದ ವಟುಸಾಧಕರಿಗೆ ತಾಯಿಯಾಗಿ ನಿಂತರು. ವಾತ್ಸಲ್ಯವನ್ನು ಧಾರೆಯೆರೆದರು. ಅವರಿಗೆ ನಡೆ-ನುಡಿಗಳನ್ನು ಕಲಿಸಿದರು. ಅವರವರ ಕರ್ತವ್ಯಗಳ ಬಗ್ಗೆ ನಿಷ್ಠುರವಾಗಿ ತಿಳಿಹೇಳಿ ಅವರ ವ್ಯಕ್ತಿತ್ವ ವಿಕಾಸಕ್ಕೆ ಅನುವು ಮಾಡಿಕೊಡುತ್ತಿದ್ದರು. ಅಂತಃ ಕರುಣದಿಂದ ಬಂದ ಅವರ ಮಾತುಗಳು ವಟುಸಾಧಕರ ಹೃದಯಕ್ಕೆ ಸ್ಪಂದಿಸುತ್ತಿದ್ದವು. ಮಂದಿರದ ಸಾಧಕರು ತಮ್ಮೆಲ್ಲ ದೌರ್ಬಲ್ಯಗಳನ್ನು ಕಳೆದುಕೊಂಡು ಶಕ್ತಿಸಂಪನ್ನರಾಗಿ ತೇಜೋವಂತರಾಗಿ ಹೊರಬರಬೇಕು; ತಪೋನಿಷ್ಠರೂ  ಜ್ಞಾನಿಗಳೂ ಆಗಿರಬೇಕು; ಅವರು ಅಲಂಕರಿಸುವ ಗುರುಪೀಠಗಳು ಪರಿಶುದ್ಧವಾಗಿರಬೇಕು; ತಪೋಭೂಮಿಗಳಾಗಿರಬೇಕು ಎಂಬುದು ಶ್ರೀ ಅನ್ನವಾನ ಶ್ರೀಗಳ ಮನೀಷೆಯಾಗಿತ್ತು ನೈತಿಕ ಅದಃಪತನದಿಂದ, ಜಾತೀಯ ಭಾವನೆಗಳಿಂದ, ಬಡತನ ಅನಕ್ಷರತೆಯ ರೋಗರುಜಿನಗಳಿಂದ ಪರಿತಪಿಸುತ್ತಿರುವ ಇಂದಿನ ಸಮಾಜಕ್ಕೆ ಮಂದಿರದ ಸಾಧಕರು ಹೊಸ ಚೇತನ, ಹೊಸ ಆಯಾಮಗಳನ್ನುಕಲ್ಲಿಸಿಕೊಡಬಲ್ಲರೆಂದು ಅವರ ದೃಢವಾದ ನಂಬಿಕೆಯಾಗಿತ್ತು, ಹಸಿದ, ಅಜ್ಞಾನದಲ್ಲಿ ಬಳಲುತ್ತಿರುವ ಜನರ ಸೇವೆಗೆ ವಟು-ಸಾಧಕರನ್ನು ಸಿದ್ಧಗೊಳಿಸಲು ಅವರಲ್ಲಿ ವೀರಚೇತನವನ್ನು ತುಂಬಿದರು. ಅವರ ಹೃದಯ ಮನಸ್ಸುಗಳನ್ನು ಹದಗೊಳಿಸಿ ಅಲ್ಲಿ ಹೊಂಬೆಳಕಿನ ಹಣತೆಯನ್ನು ಹೊತ್ತಿಸಿದರು. ಪೂಜ್ಯ ಶ್ರೀಗಳ ಉನ್ನತ ದೃಷ್ಟಿ, ವಿಶಾಲ ಮನೋಭಾವನೆ, ಕಠೋರ ಬ್ರಹ್ಮಚರ್ಯ, ಪರಿಶುದ್ಧ ಶೀಲಗಳೆಲ್ಲವೂ ಮಂದಿರದ ಸಾಧಕರಿಗೆ ಮಾರ್ಗದರ್ಶೀಯಾಗಿದ್ದವು. ಹಾನಗಲ್ಲ ಶ್ರೀಗುರುಕುಮಾರನ ಕೃಪೆ ಅನ್ನದಾನ ಶ್ರೀಗಳ ಮೂಲಕ ಮಂದಿರದ ಸೇವೆಗಾಗಿ ಹರಿದುಬರುತ್ತಿರುವಂತೆ ನಮಗೆಲ್ಲಾ ಅನಿಸುತ್ತಿತ್ತು. ಶಿವಯೋಗಮಂದಿರದ  ಆರ್ಥಿಕ ದುಸ್ಥಿತಿಯಲ್ಲಿದ್ದಾಗ ಶ್ರೀಗಳೆಂದೂ ಕುಗ್ಗಲಿಲ್ಲ. ಅವರ ಜೀವನೋತ್ಸಾಹ ಕಡಿಮೆಯಾಗಲಿಲ್ಲ. ಬದಲಾಗಿ ಅದರ ಅಭ್ಯುದಯಕ್ಕಾಗಿ ಹಗಲಿರುಳೂ ಶ್ರಮಿಸಿದರು.ಶಿವಯೋಗಮಂದಿರದ ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ವ್ಯಾಜ್ಯ ಕೋರ್ಟಿಗೆ ಹೋದಾಗ ಶ್ರೀಗಳು ಮೂರುವರ್ಷ ಅಲ್ಲಿಗೆ ಹೋಗಲೇಯಿಲ್ಲ. ವ್ಯಾಜ್ಯ ಮುಗಿದ ನಂತರ ಶ್ರಾವಣ ಮಾಸದಲ್ಲಿ ಶಿವಯೋಗಮಂದಿರಕ್ಕೆ ದಯಮಾಡಿಸಿ ಪ್ರತಿನಿತ್ಯ ಗಣಾರಾಧನೆಯನ್ನು ನೆರವೇರಿಸಿದರು. ಜೋಳ, ಗೋಧಿ ಅಕ್ಕಿ, ಮೆಣಸಿನಕಾಯಿ ಮೊದಲಾದವುಗಳನ್ನೆಲ್ಲಾ ಭಿಕ್ಷೆ ಮಾಡಿ  ಮಂದಿರಕ್ಕೆ ಕಳುಹಿಸಿಕೊಡುತ್ತಿದ್ದರು. ಮಂದಿರದಲ್ಲಿ ಶಿವಯೋಗ ಸಾಧಕರ, ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದರು. ಇನ್ನೂ ಹಲವಾರು ಕಟ್ಟಡಗಳನ್ನು ಕಟ್ಟಿಸುವ ಇಚ್ಛೆ ಅವರಿಗಿತ್ತು. ಆದರೆ ಅವರ ಕರ್ತೃತ್ವ ಶಕ್ತಿಗೆ ತಕ್ಕ ಪರಿಸರ ಅಲ್ಲಿ ಸಿಕ್ಕದೇ ಹೋದುದು ಸಮಾಜದ ದುರ್ದವ್ಯವೆಂದೇ ಹೇಳಬೇಕು.

ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ; “ಆತ್ಮನೋ ಮೋಕ್ಷಾರ್ಥಂ ಜಗದ್ದಿ ತಾಯ ಚ’’  ಎಂಬಂತೆ ಸರ್ವವನ್ನು ಲೋಕಕಲ್ಯಾಣಕ್ಕಾಗಿ ತ್ಯಾಗ ಮಾಡಿದ; ಧರ್ಮಾಚರಣೆ, ಸಾದಾ ಜೀವನ, ಉದಾತ್ತವಿಚಾರ ಸರಣಿಗಳನ್ನು ಮೈಗೂಡಿಸಿಕೊಂಡಿದ್ದ ಪೂಜ್ಯ ಅನ್ನದಾನ ಶ್ರೀಗಳಂತಹ ಜಗತ್‌ ಪೂಜ್ಯರು ಲೋಕದಲ್ಲಿ ಹುಟ್ಟುವುದು ತುಂಬಾ ವಿರಳ. ಮರ್ತ್ಯಲೋಕದ ಮಹಂತರಾಗಿ, ವಿಷಯ ವಿರಾಗಿಯಾಗಿ ಮಾನವತೆಯ ಮೇಲ್ಮೆಯನ್ನು ಮೆರೆದ ಶ್ರೀಗಳು ತಮ್ಮ ಜೀವಾನಾಂತ್ಯದವರೆಗೂ ಶಿವಯೋಗ ಮಂದಿರದ ಅಭ್ಯುದಯವನ್ನೇ ಬಯಸಿದರು. ಇಂದು ಮಂದಿರದ ಕಲ್ಲು ಕಂಬ, ಗಿಡ-ಮರ-ಬಳ್ಳಿಗಳೆಲ್ಲ ಅನ್ನದಾನ ಶ್ರೀಗಳ ಪ್ರಾಮಾಣಿಕ ಸೇವೆಯನ್ನು ಮಂದಿರದ ಏಳ್ಗೆಗಾಗಿ ಅವರು ವಹಿಸಿದ ಶ್ರಮವನ್ನು ಸುರಿಸಿದ ಬೆವರನ್ನು ಪಟ್ಟ ಪಾಡನ್ನು ಸಹೃದಯರಲ್ಲಿ ತೋಡಿಕೊಳ್ಳುತ್ತಿವೆ. ಅವು ತಮ್ಮ ತಂದೆ ನಿಜವಾದ ಅನ್ನದಾನಿ ಯಾವಾಗ ಬಂದಾನೆಂದು ಮಾರ್ಗನಿರೀಕ್ಷಣೆಯಲ್ಲಿದ್ದಂತೆ ಸಹೃದಯರಿಗೆ ಭಾಸವಾಗದೇ ಇರದು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಸೆಪ್ಟಂಬರ ೨೦೨೧ ರ ಸಂಚಿಕೆ

೫. ಸದ್ಗುರುವಿನ ಮಹಿಮಾತಿಶಯ

ಪರಕೆ ಪರವಾಗಿರ್ದ | ಪರತತ್ವ ಮೂರ್ತಿಯ ನಿಜ

ದಿರವೆ ರೂಪಾಗಿ ಧರೆಯೊಳಗೆ ಚರಿಸುತಿಹ

ಪರಮ ಶ್ರೀಗುರುವೆ ಕೃಪೆಯಾಗು  || ೧೬ ||

ಗುರುಕೃಪೆಯ ಅವಶ್ಯಕತೆಯನ್ನು ನಿರೂಪಿಸಿ ಸಂತೃಪ್ತನಾಗದ ಶಿವಕವಿಯು ಸದ್ಗುರುವಿನ ಮಹಿಮಾತಿಶಯವನ್ನು ಹನ್ನೊಂದು ನುಡಿಗಳಲ್ಲಿ ವಿಶದೀಕರಿಸುತ್ತಾನೆ.

ಪರಶಬ್ದದ ಅರ್ಥ ಅನಂತ ಇವೆ. ಪರಶಬ್ದವು ವಿಶೇಷಣವಾಗಿ ನಾಮಪದವಾಗಿ, ಅವ್ಯಯವಾಗಿ ಪ್ರಯೋಗವಾಗಿ ವಿಭಿನ್ನ ಅರ್ಥಗಳನ್ನು ಕೊಡುತ್ತದೆ. ಇಲ್ಲಿ’ಪರ’ ಅಂದರೆ ದೂರದ, ಆಚೆಯ ಮೇಲಿನ ಎಂಬರ್ಥವನ್ನು ಮಾಡುವದೇ ವಿಹಿತ.

ಪರತತ್ವಮೂರ್ತಿಯು ಪರಕ್ಕೆ ಪರವಾಗಿದೆ. ಪರಮಾತ್ಮನು ಕಾಣದ ನಿರ್ಗುಣನು.ಪರತತ್ವಮೂರ್ತಿಯ ಇರುವಿಕೆಯನ್ನು ತಿಳಿಯುವದು ಸುಲಭವಲ್ಲ. ಅಂಥ ಪರ ವಸ್ತುವಿನ ಸ್ವರೂಪವನ್ನು ಕಠೋಪನಿಷತ್ತಿನಲ್ಲಿ ಯಮರಾಜನು ನಚಿಕೇತನಿಗೆ ಬೋಧಿಸಿದ್ದುಉಲ್ಲೇಖನೀಯವಾಗಿದೆ.

ನ ಜಾಯತೇ  ಮ್ರಿಯತೇ ವಾ ವಿಪಶ್ಚಿತ್

ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್ |

ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ

ನ ಹನ್ಯತೇ ಹನ್ಯಮಾನೇ ಶರೀರೇ ||

ಹುಟ್ಟುವದು, ಸಾಯುವದು ಶರೀರವಲ್ಲದೆ; ನಿತ್ಯನೂ, ಪುರಾಣ ಪುರುಷನೂ,ಶಾಶ್ವತನೂ ಎಂದು ಪ್ರಸಿದ್ಧನಾದ ಆತ್ಮನಲ್ಲ. ಆತ್ಮವು ನಿತ್ಯವಾದ ವಸ್ತು . ಅದಕ್ಕೆಯಾವಾಗಲೂ ಮರಣವಿಲ್ಲ. ಮತ್ತು ಅವಸ್ಥಾಧಿಕೃತ ದೋಷಗಳು ಅದಕ್ಕೆ ಅಂಟುವದಿಲ್ಲ. ಅದು ನಮ್ಮ ಇಂದ್ರಿಯ, ಮನ, ಬುದ್ಧಿ, ಪ್ರಾಣಕ್ಕಿಂತಲೂ ಬೇರೆಯಾಗಿರುತ್ತದೆ. ಉಪನಿಷತ್ತುಗಳಲ್ಲಿ ಆತ್ಮತತ್ತ್ವವನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ.ನಮ್ಮ ಶರಣರು ಉಪನಿಷತ್ ವಿಚಾರಕ್ಕಿಂತಲೂ ಆತ್ಮವಸ್ತುವನ್ನು ಬಹು ಸೂಕ್ಷ್ಮವಾಗಿಯೂ, ವಿಚಾರಪೂರ್ವಕವಾಗಿಯೂ ಮಂಡಿಸಿದ್ದಾರೆ.

ಪ್ರಭುದೇವರು :

ಆದಿಯಾಧಾರವಿಲ್ಲದಂದು ಹಮ್ಮಬಿಮ್ಮುಗಳಿಲ್ಲದಂದು,

ಶೂನ್ಯನಿಶ್ಯೂನ್ಯವಿಲ್ಲದಂದು ಸುರಾಳ-ನಿರಾಳವಿಲ್ಲದಂದು

ಸಚರಾಚರವೆಲ್ಲ ರಚನೆಗೆ ಬಾರದಂದು,

ಗುಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ

ಚನ್ನಬಸವಣ್ಣನವರು :

ಕಾಲ ಕಲ್ಪಿತಂಗಳಿಲ್ಲದೆ ನಿಮ್ಮಿಂದ ನೀವೆ

ಸ್ವಯಂಭು ವಾಗಿರ್ದಿರಯ್ಯಾ !

ನಿಮ್ಮ ಪರಮಾನಂದ ಪ್ರಭಾವದ ಪರಿಣಾಮದಲ್ಲಿ

ಅನಂತಕಾಲ ವಿರ್ದಿರಲ್ಲಾ!

ನಿಮ್ಮ ಆದ್ಯಂತವ ನೀವೆ ಅರಿವುತಿದ್ದಿರಲ್ಲಾ !

ನಿಮ್ಮ ನಿಜಭಾವವ ನೀವೆ ಬಲ್ಲಿರಿ

ಕೂಡಲ ಚನ್ನಸಂಗಮದೇವಾ.

ಮಡಿವಾಳ ಮಾಚರಸ :

ಆದಿಯನಾದಿಯಿಲ್ಲದಂದು, ಮಹಾಶೂನ್ಯವಿಲ್ಲದಂದು,

ಸಾಧ್ಯ ಅಸಾಧ್ಯವಿಲ್ಲದಂದು, ರೂಪು ನಿರೂಪಿಲ್ಲದಂದು

ಸ್ಕೂಲ-ಸೂಕ್ಷ್ಮವಿಲ್ಲದಂದು

ಸಾಕಾರ-ನಿರಾಕಾರವೆಂಬ ವಾಕು ಹುಟ್ಟದಂದು

ದ್ವ್ಯತಾದ್ವ್ಯೆತವಾಗದಂದು

ಶಂಕರ-ಶಶಿಧರ, ಈಶ್ವರರೆಂಬ ಗಣಾಧೀಶ್ವರರಿಲ್ಲದಂದು

ವರ್ತನೆ ನಿರ್ವತ್ರನೆಯಿಲ್ಲದಂದು,

ಉಮೆಯ ಕಲ್ಯಾಣವಾಗದಂದು

ಇವರಾರೂ ಒಬ್ಬರ ನಾಮ ಸೀಮೆಯಿಲ್ಲದಂದು

ನೀನು ಉಲುಹಡಗಿರ್ದೆಯಲ್ಲಾ

ಕಲಿದೇವರ ದೇವಯ್ಯಾ !

ಬಸವಣ್ಣನವರು :

ಅಮೂಲ್ಯನು, ಅಪ್ರಮಾಣನು, ಅಗೋಚರ ಲಿಂಗವು

ಆದಿ ಮಧ್ಯ, ಅಂತ್ಯವಿಲ್ಲದ ಲಿಂಗವು

ಸ್ವತಂತ್ರ ಲಿಂಗವು, ನಿತ್ಯನಿರ್ಮಲ ಲಿಂಗವು,

ಅಯೋನಿ ಸಂಭವನಯ್ಯಾ ನಮ್ಮ ಕೂಡಲಸಂಗಮದೇವಯ್ಯ

ಈ ಎಲ್ಲ ವಚನಗಳಿಂದ ಪರಕ್ಕೆ ಪರವಾದ ಪರವಸ್ತುವಿನ ನಿಜರೂಪವು ಗೋಚರಿಸದೆ ಇರದು. ಯಾವ ಲೀಲೆಯಿಲ್ಲದೆ ಸ್ವಯಂಭುವಾದುದೇ ಪರಾತ್ಪರ ಪರವಸ್ತು. ಷಟ್‌ಸ್ಥಲಜ್ಞಾನಿಗಳಾದ ಚನ್ನಬಸವಣ್ಣನವರು ತಮ್ಮ ಅನುಭವ ಗೀತೆಯಲ್ಲಿ

ರೂಪು ರೂಪಿನೊಳಡಗಿ ರೂಪಿಸದೆ ನಿಂದ ನಿಜ

ರೂಪು ನಿಶ್ಚಲವಾಗಿ ಸಂಚಲಿಸದೆ |

ತಾ ಪರಾತ್ಪರವಾಗಿ ನಿಂದ ನಿಜಪದವು ಚಿ-

ದ್ರೂಪ ಕೂಡಲ ಚನ್ನ ಸಂಗಯ್ಯನು ||

ಪರಾತ್ಪರ ಪರವಸ್ತುವಿನ ಯಥಾರ್ಥರೂಪವನ್ನು ಚಿತ್ರಿಸಿದ್ದಾರೆ.

ಕಲ್ಲುಮಠದ ಪ್ರಭುದೇವರು ತಮ್ಮ ‘ಲಿಂಗಲೀಲಾ-ವಿಲಾಸಚಾರಿತ್ರ’ದಲ್ಲಿ ಈ ಪರವಸ್ತು ಅಥವಾ ನಿಷ್ಕಲ ಲಿಂಗದ ವಿಲಾಸವನ್ನು ಕುರಿತು ‘ವಾಙ್ಮನಕ್ಕೆ ಬಾರದ ಅಖಂಡಾದ್ವಯ ನಿತ್ಯ-ನಿರವಯ ಪರಿಪೂರ್ಣ ಚೈತನ್ಯಜ್ಞಾನಪ್ರಭಾ ಬೆಳಗಿ ನಿಂದೊಪ್ಪುತಿಪ್ಪುದು ನಿಷ್ಕಲ ಪರಶಿವಲಿಂಗವು…. ಸುಚಿತ್ರಾನಂದಮಯವಾಗಿ ತನ್ನ ಜ್ಞಾನವಿಲಾಸಾನಂದ ಲೀಲೆಯಿಂದ ಅಖಂಡ ತೇಜೋ ಮೂರ್ತಿಯಾದ ಮಹಾಲಿಂಗವಾಯಿತ್ತು’ ಎಂದು ವರ್ಣಿಸಿ ಈ ಮಹಾಲಿಂಗದ ಚಿದ್ವಿಲಾಸ ಲೀಲೆಯಿಂದಲೆ ಸಮಸ್ತ ಜಗತ್ತಿನ ಉದಯವಾಯಿತೆಂದು ವರ್ಣಿಸಿದ್ದಾರೆ. ಜೀವನಿಗೆ ದೇಹ ಧರ್ಮದ ಸಂಬಂಧವಾಗಿ ಅಹಂ ಮಮತೆಯಿಂದ ಅಜ್ಞಾನವು ಉದ್ಭವಿಸುವದು.

ಅಜ್ಞಾನವೆಂಬ ಕತ್ತಲೆಯಿಂದ ಪಾರಾಗದ ಜೀವನನ್ನು ಉದ್ಧರಿಸಲು ಆ ಪರಾತ್ಪರ ವಸ್ತುವೇ ಸದ್ಗುರುವಾಗಿ ಉದಯವಾಯಿತು. ಕಾಣದ ಕೇಳದ ಪರವಸ್ತುವಿನಿಂದ ಪ್ರಯೋಜನವಿಲ್ಲ. ಜಗತ್ತಿನ ಜನಗಳನ್ನು ಉದ್ಧರಿಸಲು ಸಾಕಾರ ಮೂರ್ತಿಯಾಗಿ ಉದ್ಭವಿಸಿ, ಅಲ್ಲಲ್ಲಿ ಸಂಚರಿಸುವ ಗುರುದೇವನು ಸಾಮಾನ್ಯನಲ್ಲ. ಈ ಬಗ್ಗೆ ವಚನಕಾರರ ವಚನಗಳು ವಿಪುಲವಾಗಿವೆ. ಸ್ವತಂತ್ರ ಸಿದ್ಧಲಿಂಗೇಶ್ವರರು –

ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ

ಅಂಧಕಾರದ ಗುಹೆಯೊಳಗಿದ್ದವರಂತೆ ಇದ್ದರಯ್ಯಾ ಜೀವರೆಲ್ಲಾ

ಹೊಲಬುದಪ್ಪಿ ತಿಳವಿಲ್ಲದೆ ಕಳವಳಗೊಳ್ಳುತ್ತಿದ್ದರಯ್ಯ

ಅಡವಿಯ ಹೊಕ್ಕ ಶಿಶುವಿನಂತೆ

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ !

ನಿಮ್ಮ ಕರುಣವಾಗದನ್ನಕ್ಕ ಬಳಲುತ್ತಿದ್ದರಯ್ಯಾ ಹೊಲಬನರಿಯದೆ

ಗುರು ಕರುಣೆಯಿಂದಲ್ಲದೆ ಜಗದ ಅಜ್ಞಾನ ಹರಿಯದು ಜೀವಿಗಳ ಬದ್ಧತನವಳಿಯದು. ಹೊಲಬು ದೊರೆಯದು. ಸದ್ಗುರುವೇ ದಾರಿತೋರುವವನು, ಸೂರ್ಯನು ಬ್ರಹ್ಮಾಂಡವನ್ನು ಬೆಳಗಿದರೆ ಗುರುವರನು ಪಿಂಡಾಂಡವನ್ನು ಬೆಳಗುವನು.

ಬ್ರಹ್ಮಾಂಡಗತ ಕತ್ತಲೆಯ ಕಳೆಯುವನು ದಿನಕರನು.

ಪಿಂಡಾಂಡಗತ ಕತ್ತಲೆಯ ಕಳೆಯುವನು ಗುರುವರನು.

ನಿರಾಕಾರ ಶಿವನು ಭಕ್ತನಿಗೆ ತೋರುವವನಲ್ಲ.

ಸಾಕಾರ ಗುರುದೇವ ಭಕ್ತಹಿತ ಕೋರುವನೆಂದ

ನಮ್ಮ ಮೃಡಗಿರಿಯ ಅನ್ನದಾನೀಶ (ವ. ವ. ೧೧)

ಭಕ್ತ ಹಿತಕ್ಕಾಗಿ ಬಾಳುವವನೇ ಪರಮ ಗುರು. ಇಂಥವನೆ ಜಗದ ಜೀವಿಗಳ ಜಂಜಡವನ್ನು ನೀಗಿಸಿ ಸನ್ಮಾರ್ಗವನ್ನು ತೋರಬಲ್ಲನು.

ಪಿಂಡವಧರಿಸಿ ಬ್ರ |  ಹ್ಮಾಂಡವನೊಳಕೊಂಡು

ಪಿಂಡಬ್ರಹ್ಮಾಂಡ | ಪರಿಪೂರ್ಣವೆನಿಸಿದ್ದ (ಅ)

ಖಂಡ ಶ್ರೀಗುರುವೇ ಕೃಪೆಯಾಗು || ೧೭ ||

ಪರಿಶುದ್ಧವಾದ ಅಂತಃಕರುಣವುಳ್ಳ ಜೀವನಿರುವ ಈ ಶರೀರವು ಪಿಂಡವನಿಸುವದು. ಬ್ರಹ್ಮಾಂಡವೆಂದರೆ ಶಿವನ ಮಹಾಕಾರ್ಯ ; ಈ ಜಗತ್ತು. ಪಿಂಡವು ಬ್ರಹ್ಮಾಂಡದ ಒಂದಂಶ, ಬ್ರಹ್ಮಾಂಡವು ಅಸಂಖ್ಯ ಪಿಂಡಾಂಡಗಳ ಸಮೂಹ. ಪಿಂಡವು ವ್ಯಷ್ಟಿಯಾದರೆ ಬ್ರಹ್ಮಾಂಡವು ಸಮಷ್ಟಿಯಾಗಿದೆ. ಎಲ್ಲವುಗಳನ್ನು ಒಳಗೊಂಡಿದೆ.ಪಿಂಡಾಂಡ ಮತ್ತು ಬ್ರಹ್ಮಾಂಡಗಳು ಒಂದಕ್ಕೊಂದು ಬೀಜವೃಕ್ಷ ನ್ಯಾಯದಂತೆ ಅನ್ನೋನ್ಯ ಸಂಬಂಧವನ್ನು ಹೊಂದಿವೆ. ಬೀಜದಲ್ಲಿ ವೃಕ್ಷವಿರುವಂತೆ, ವೃಕ್ಷದಲ್ಲಿ ಬೀಜವಿರುವದು. ಹಾಗೇ ಶರೀರದಲ್ಲಿ ಶಿವನ ಚೈತನ್ಯವಿದೆ. ಶಿವನಲ್ಲಿ ಈ ಜಗವೆಲ್ಲ ಅಡಗಿದೆ. ಆ ಶಿವನು ನಿಷ್ಕಲನಾಗಿರುವದರಿಂದ ಕಣ್ಣಿಗೆ ಕಾಣುವದಿಲ್ಲ. ಗುರುವು ಸಕಲ ನಾಗಿ, ಕಾಯವನ್ನು ಧರಿಸಿ ಬ್ರಹ್ಮಾಂಡವನ್ನು ವ್ಯಾಪಿಸಿದ್ದಾನೆ. ಅದಕ್ಕಾಗಿ ಪಿಂಡಾಂಡ ಮತ್ತು ಬ್ರಹ್ಮಾಂಡಗಳಲ್ಲಿ ಪರಿಪೂರ್ಣನಾಗಿದ್ದಾನೆ. ಅಖಂಡನೆನಿಸಿ ಮೆರೆಯುತ್ತಿದ್ದಾನೆ.

ಗುರುವರನು ವ್ಯಷ್ಟಿಗತನಾದ ಶಿಷ್ಯನ ಪಿಂಡಾಂಡವನ್ನು ಪರಿಶುದ್ಧ ಗೊಳಿಸುತಿದ್ದರೂ ಬ್ರಹ್ಮಾಂಡದ (ಜಗತ್ತಿನ) ಪರಿಶೋಧಕನೂ ಆಗಿದ್ದಾನೆ. ಅದಕ್ಕಾಗಿ ಅವನು ಪರಿಪೂರ್ಣ ಸ್ವರೂಪನೆನಿಸುವನು. ಯಾಕೆಂದರೆ ಛಾಂದೋಗ್ಯೂಪನಿಷತ್ತಿನಲ್ಲಿ ಪ್ರತಿಪಾದಿಸಿದಂತೆ “ಏಕೇನ ವಿಜ್ಞಾನೇನ ಸರ್ವ೦ ವಿಜ್ಞಾತಂ ಭವತಿ |’ ಏಕೈಕನಾದ ಪರಶಿವನ (ಪರವಸ್ತುವಿನ) ಜ್ಞಾನವನ್ನು ಪಡೆದರೆ ತನ್ಮಯವಾದ ಸಕಲ ಜಗತ್ತಿನ ಜ್ಞಾನವಾಗುವದು. ಸದ್ಗುರುನಾಥನು ಪರವಸ್ತುವನ್ನು ಅರಿತು ಪರವಸ್ತುವೇ ತಾನಾಗಿರುತ್ತಾನೆ. ಪರವಸ್ತು ಪರಿಪೂರ್ಣ ಮತ್ತು ಅಖಂಡ ಸ್ವರೂಪವಲ್ಲವೆ ?

ಹದಿನಾಲ್ಕು ಭುವನ ತುಂ | ಬಿದುದೊಂದು ಬ್ರಹ್ಮಾಂಡ

ವದರಂತೆ ತೋರ-ಅಗಣಿತ ಬ್ರಹ್ಮಾಂಡ

ಕ್ಕಧಿಕಾರಿ ಗುರುವೆ ಕೃಪೆಯಾಗು  || ೧೮ ||

ಬೃಹತ್ತೆಂದರೆ ದೊಡ್ಡದು. ಬೃಹತ್ತತೆಯುಳ್ಳುದೆ ಬ್ರಹ್ಮ ಅಂಡವೆಂದರೆ ತತ್ತಿ.ಬ್ರಹ್ಮಾಂಡವು ದೊಡ್ಡ ತತ್ತಿಯಾಕಾರದ್ದೆಂದು ಅನುಭವಿಗಳು ಹೇಳುತ್ತಾರೆ. ಈ ಬ್ರಹ್ಮಾಂಡವು ಅತಳ, ವಿತಳ, ಸುತಳ, ನಿತಳ, ತಳಾತಳ, ರಸಾತಳ, ಪಾತಾಳ (ಇವು ಏಳು ಕೆಳಗಿವೆ)

ಭೂಲೋಕ, ಭುವರ್ಲೋಕ, ಸುವರ್ಲೋಕ, ಸತ್ಯಲೋಕ, ಜನಲೋಕ, ತಪೋಲೋಕ,ಮಹಾಲೋಕ (ಇವು ಏಳು ಮೇಲಿನವು) ಹೀಗೆ ಹದಿನಾಲ್ಕು ಭುವನಗಳಿಂದ ತುಂಬಿದೆ. ಹದಿನಾಲ್ಕು ಲೋಕಗಳಿಂದ ತುಂಬಿದುದೇ ಬ್ರಹ್ಮಾಂಡವೆಂದು ಹೆಸರು.ಶಿವನ ಉದರದಲ್ಲಿ ಅಸಂಖ್ಯ ಲೋಕಗಳು ಇರುವದರಿಂದ ವಿಷಪಾನ ಮಾಡದೇ ವಿಷಕಂಠನೆನಿಸಿದ ಪೌರಾಣಿಕ ಕಥೆ ಪ್ರಸಿದ್ಧವಿದೆ.

ಬ್ರಹ್ಮಾಂಡದಂತೆ ತೋರುವ, ಲೆಖವಿಲ್ಲದ ಸಮಸ್ತ ಬ್ರಹ್ಮಾಂಡಗಳಿಗೂ ಒಡೆಯನಾದವನು ಗುರುದೇವನೆ. ಗುರುವಿಲ್ಲದೆ ಮಾರ್ಗದರ್ಶನ ದೊರೆಯದು. ಯಾವ ಲೋಕದಲ್ಲಿಯಾದರೂ ಸದ್ಗುರುವು ಮಾರ್ಗದರ್ಶನ ಮಾಡಿದ ನಿದರ್ಶನಗಳು ಸಿಕ್ಕುತ್ತಿವೆ. ದೇವತೆಗಳ ಲೋಕದಲ್ಲಿ ಬೃಹಸ್ಪತಿಯು ಗುರುವಾದರೆ ರಾಕ್ಷಸ ಲೋಕದಲ್ಲಿ ಶುಕ್ರಾಚಾರ್ಯನು ಗುರುವಾಗಿದ್ದಾನೆ.

“ವರ್ಣ ಮಾತ್ರಂ ಕಲಿಸಿದಾತಂ ಗುರು” ಎಂದು ಕನ್ನಡ ಗಾದೆ ಗುರುವಿನ ಗುರುತನ್ನು ಸಾರುತ್ತಿದೆ. ಗುರುವಿಲ್ಲದೆ ಯಾವ ಜ್ಞಾನ ಸಿಕ್ಕಲಾರದು. “ಆಚಾರ್ಯ ದೇವೋ ಭವ’ವೆಂದು ವೇದವು ಸದ್ಗುರುವಿನ ವಿಭುತ್ವವನ್ನು ಉದ್ಘೋಷಿಸಿದೆ. ಸಕಲ ಲೋಕಂಗಳಿಗೆ ಪ್ರಭುವಾದ ಗುರುವಿನ ಕೃಪೆಯಾದವನಿಗೆ ಯಾವ ಕೊರತೆಯೂ ಆಗಲಾರದೆಂಬುದೇ ಶಿವಕವಿಯ ಆಶಯವಾಗಿದೆ.

ನಾದ-ಬಿಂದುಗಳೇಕ | ವಾದ ವಸ್ತುವಿಗೆ ನೀ-

ನಾದಿ ಚೈತನ್ಯನಾಗಿ ಶೋಭಿಸುತಿಪ್ಪಾ

ನಾದಿ ಶ್ರೀಗುರುವೆ ಕೃಪೆಯಾಗು || ೧೯ ||

ಬಸವಲಿಂಗಶರಣರು ನಿಷ್ಕಲನಾದ ಪರಶಿವನ ನಾದಬಿಂದು-ಕಲಾರೂಪ ವಾದ ಸ್ವರೂಪ ಲಕ್ಷಣವನ್ನು ಶ್ರೀಗುರುವಿನಲ್ಲಿ ಸಮನ್ವಯಗೊಳಿಸಿದ್ದಾರೆ. ಅನುಭವಿಗಳು ಪರಶಿವನನ್ನು ಶೂನ್ಯ ಸ್ವರೂಪದಲ್ಲಿ ಕಂಡು ಶೂನ್ಯಕ್ಕೂ ಚೇತನವಾದ ನಿಶೂನ್ಯವನ್ನು ಪರಿಶೋಧಿಸಿರುವರು. ನಾದವೆಂದರೆ ಧ್ವನಿ ; ಪ್ರಣವನಾದ. ಬಿಂದುವೆಂದರೆ ಪ್ರಕಾಶ, ಕಲೆಯೆಂದರೆ ಚೈತನ್ಯ, ನಾದ ಹೊರಹೊಮ್ಮಿದಾಗ ಪ್ರಣವ ಸ್ವರೂಪವು ಪ್ರಕಾಶಗೊಳ್ಳುವದು.ಮುಂದೆ ಪ್ರಕಾಶಕ್ಕೆ ಚೈತನ್ಯ ತುಂಬಲು ಕಲೆಯಾಗಿ ವ್ಯಕ್ತವಾಗುವದು. ಅಂದರೆ ಓಂಕಾರದ ನಾದ ಪ್ರಾರಂಭವಾಗಲು ಅದನ್ನು ಪ್ರಕಾಶಗೊಳಿಸಲು ಕಲೆಯಾಗಿ ಅಭಿವ್ಯಕ್ತವಾಗುವದು. ಅದು ಅಕ್ಷರ ವ್ಯಕ್ತರೂಪವನ್ನು ಹೊಂದುವದು. ಈ ನಾದ-ಬಿಂದು-ಕಲೆಗಳು ಒಂದಾದ ಆದಿ ಪರವಸ್ತುವಿಗೆ (ಶೂನ್ಯ ಶಿವನಿಗೆ) ಅನಾದಿ ಚೈತನ್ಯನಾಗಿ ಪರಿಶೋಭಿಸುವವನು ಶ್ರೀಗುರುವು. ಗುರುವು ಪರಾತ್ಪರ ಪರವಸ್ತುವಿನ ಪ್ರತಿರೂಪ. ನಿಶೂನ್ಯದ ಪ್ರತೀಕ.

ಪರ ಶಬ್ದವು ಪರಜಂಗಮನ ಬೋಧಕವಾಗಿದೆ. ಅನಾದಿ ವಸ್ತುವೇ ಜಂಗಮ ತತ್ತ್ವವು. ಅಂಥ ಜಂಗಮನ ಅಥವಾ ನಿರಾಭಾರಿ ಗುರುವಿನ ಪರಮ ಗುರುತ್ವದ ಕಲ್ಪನೆ ಅನಾದಿಯಾಗಿದೆ. ಗುರುತ್ವವನ್ನು ನೀಡುವ ಚೇತನ ಮತ್ತೊಂದಿಲ್ಲ. ಅದು ಅನಾದಿ ಸಂಸಿದ್ಧವಾಗಿದೆ. ಸ್ವಯಂ ಚೇತನವಾಗಿದೆ. ಅಂಥ ಶ್ರೀಗುರುವೆ ! ನಿನ್ನ ಶಿಷ್ಯನಲ್ಲಿಯೂ ನಾದಬಿಂದು-ಕಲೆಗಳನ್ನು ಜಾಗೃತಗೊಳಿಸು.

ಗುರುವು ಮಂತ್ರೋಪದೇಶಮಾಡಿ ಪ್ರಣವ ಪಂಚಾಕ್ಷರಿಯನ್ನು ತುಂಬುವನು.ಅರ್ಥಾತ್ ಸರ್ವಾಂಗದಲ್ಲಿ ಮಂತ್ರನ್ಯಾಸಗೊಳಿಸುವನು. ಇಷ್ಟಲಿಂಗವನ್ನು ಕರುಣಿಸಿ ಬಿಂದುವನ್ನು ನಿಲ್ಲಿಸಲು ಕಲಿಸುವನು. ಶ್ರೀ ಜ.ಚ.ನಿ. ಯವರು ಬಿಂದುವೆಂದರೆ ರಸವೆಂದೂ ಅರ್ಥೈಸಿರುವರು. ಲಿಂಗ ಪೂಜೆಯ ಫಲವಾಗಿ ಗುರುಚರಣದ ಕರುಣ ರಸಾಸ್ವಾದವೂ ಒಂದಲ್ಲವೆ ! ಲಿಂಗದಲ್ಲಿ ಬಿಂದು ನಿಂದೊಡೆ ಚೈತನ್ಯ ಬೆಳಗುವದು. ಇದೆಲ್ಲದಕ್ಕೂ ಶ್ರೀಗುರುವೇ ಕಾರಣನು. ಆ ಗುರುಚೈತನ್ಯವೇ ಎಲ್ಲಕ್ಕೂ ಚೇತನವಾಗಿದೆ.

ವಸುಧಾಕೃತ್ಯವ ಮಾಳ್ವ | ಶಶಿಭಾನು ಜ್ಯೋತಿಯಿಂ

ದೆಸೆವ ಬೆಳಗಿಂಗೆ ಮೂಲಕಳೆಯಾಗಿ ಶೋ-

ಭಿಸುವ ಶ್ರೀಗುರುವೆ ಕೃಪೆಯಾಗು || ೨೦ ||

ಮೇಲೆ ಶ್ರೀಗುರು ನಾದ-ಬಿಂದು-ಕಲಾಸ್ವರೂಪನೆಂದು ಪ್ರತಿಪಾದಿಸಿ ಇಲ್ಲಿ ಸ್ವಯಂಜ್ಯೋತಿ ಸ್ವರೂಪನೆಂದು ನಿರೂಪಿಸಿದ್ದಾನೆ. ವೀರವಿರಾಗಿಣಿ, ಜ್ಞಾನದಖಣಿ ಅಕ್ಕಮಹಾದೇವಿಯ ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ” ಎನ್ನುವ ವಚನದಲ್ಲಿ ಲೋಕವ್ಯವಹಾರಕ್ಕೆ ಸೂರ್ಯಚಂದ್ರರ ಬೆಳಕೇ ಕಾರಣವಾಗಿದೆ. ಸೂರ್ಯನು ಉದಯಿಸಿದಾಗ ಜೀವಿಗಳಲ್ಲಿ ನವಚೈತನ್ಯ ಜಾಗ್ರತವಾಗುತ್ತದೆ. ದಿನವೆಲ್ಲ ದುಡಿದು ದಣಿದ ಮಾನವರಿಗೆ ಇರುಳಿನಲ್ಲಿ ಚಂದ್ರನು ತನ್ನ ಆಹ್ಲಾದಕರ ಕಿರಣಗಳಿಂದ ಸಂತೃಪ್ತಿಯನ್ನು ನೀಡುತ್ತಾನೆ. ಅಗ್ನಿಯು ಆಹಾರವನ್ನು ಬೇಯಿಸುವದು, ಕತ್ತಲೆಯಲ್ಲಿ ಬೆಳಕನ್ನು ನೀಡುವದು. ಈ ಅಗ್ನಿಯು ಉರುವಲದ ಸಹಾಯದಿಂದ ವ್ಯಕ್ತವಾದರೆ ಚಂದ್ರನು ಸೂರ್ಯನ ಪ್ರಕಾಶವನ್ನು ಪಡೆದುಕೊಂಡೇ ಬೆಳಕನ್ನು ಬೀರುವನು. ವಿಜ್ಞಾನಿಗಳು ಶಶಿಯನ್ನು ಪರಪ್ರಕಾಶಿಯೆಂದು ಕಂಡು ಹಿಡಿದಿರುವರು. ಚಂದ್ರನಿಗೆ ಪ್ರಕಾಶವನ್ನು ಕೊಡುವ ರವಿಯಾದರೂ ಸ್ವಯಂಪ್ರಕಾಶ ವುಳ್ಳವನಲ್ಲ, ಇವೆಲ್ಲ ಬೆಳಕುಗಳಿಗೆ ಮೂಲಕಳೆಯಾಗಿ, ಚೈತನ್ಯವಾಗಿ ಪರಿಶೋಭಿಸುವ ವಸ್ತು ಮತ್ತೊಂದಿದೆ. ಈ ಮಾತನ್ನು ಶ್ವೇತಾಶ್ವತರ ಕೃತಿಯು ವ್ಯಕ್ತಗೊಳಿಸಿದೆ.

‘ನ ತತ್ರ ಸೂರ್ಯೋ ಭಾತಿ, ನ ಚಂದ್ರ ತಾರಕಾಃ |

ನೇಮಾ ವಿದ್ಯುತೋ ಭಾತಿ, ಕುತೋಯಮಗ್ನಿ: ||

ತಮೇವ ಬಾಂತಮನುಭಾತಿ ಸರ್ವಂ |

ತಸ್ಯ ಭಾಸಾ ಸರ್ವಮಿದಂ ವಿಭಾತಿ  ||

ಸ್ವಯಂಜ್ಯೋತಿ ಪರಶಿವನ ಪ್ರಕಾಶದಿಂದಲೇ ಸೂರ್ಯ, ಚಂದ್ರ, ನಕ್ಷತ್ರ, ವಿದ್ಯುತ್ ಮತ್ತು ಅಗ್ನಿ ಇವೆಲ್ಲವುಗಳು ಬೆಳಗುತ್ತವೆ. ಆದರೆ ಇವುಗಳು ಮಹಾಪ್ರಕಾಶದೆದುರು ಏನೂ ಅಲ್ಲ. ಆ ಸ್ವಯಂಜ್ಯೋತಿಯ ಪ್ರಕಾಶವನ್ನು ಪಡೆದುಕೊಂಡೇ ಸೂರ್ಯಾದಿ ಗ್ರಹಗಳು ಬೆಳಗುತ್ತವೆ. ಪರಶಿವನ ಪ್ರಕಾಶವೇ ಎಲ್ಲಕ್ಕೂ ಕಾರಣವಾಗಿದೆ.

ಸ್ವಯಂಜ್ಯೋತಿ ಸ್ವರೂಪನಾದ ಪರಶಿವನೇ ಭಕ್ತೋದ್ಧಾರಕ್ಕಾಗಿ ಸಕಲ ರೂಪನಾಗಿ ಮೆರೆಯುತ್ತಿರುವವನು ಗುರುವೆಂಬುದು ಸ್ಪಷ್ಟವಾಗಿದೆ. ಸದ್ಗುರುನಾಥನು ಸ್ವಯಂಜ್ಯೋತಿಸ್ವರೂಪನು. ಸದ್ಗುರುವಿನ ಸನ್ನಿಧಿಯನ್ನು ಪಡೆದುಕೊಂಡರೆ ಅಜ್ಞಾನಾಂಧಕಾರದ ಸುಳಿವೂ ತೋರಲಾರದು. ಅಂತೆಯೇ ಕವಿಗಳು ಸದ್ಗುರುವಿನ ಸನ್ನಿಧಿಯಲ್ಲಿ ಅತ್ಯಂತ ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.

ಜಾತಿಭೇದವನಳಿದು | ನೀತಿಮಾರ್ಗವ ಪೇಳಿ

ಓತು ತ್ರೈಭುವನ-ದಾರಾಧ್ಯ ನೆನಿಸಿದ ಅ-

ಜಾತ ಶ್ರೀ ಗುರುವೆ ಕೃಪೆಯಾಗು || ೨೧ ||

“ಚಾತುರ್ವಣ್ಯ್ರಂ ಮಯಾ ಸೃಷ್ಟಂ

ಗುಣಕರ್ಮ ವಿಭಾಗಶಃ’ || ಭ. ಗೀತೆ ||

ಗುಣ ಮತ್ತು ಕರ್ಮಭೇದದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಣಗಳು ನನ್ನಿಂದ ನಿರ್ಮಿತವಾಗಿವೆಯೆಂದು ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ. ವೇದವನ್ನು ಓದಿ ಬ್ರಾಹ್ಮಣನಾದರೆ, ಕತ್ತಿ ಹಿಡಿದು ಯುದ್ಧಮಾಡಿ ರಾಜ್ಯಗಳಿಸಿ ಕ್ಷತ್ರಿಯನೆನಿಸುವನು. ವ್ಯಾಪಾರಮಾಡಿ ವೈಶ್ಯನಾಗಿದ್ದರೆ, ಸೇವೆಗೈದು ಶೂದ್ರನೆನಿಸಿರುವನು.

ಇಂದಿನ ವೈಜ್ಞಾನಿಕಯುಗದ ಮಾನವನು ಈ ಚಾತುರ್ವಣ್ಯ್ರವನ್ನು ಒಪ್ಪುವ ದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಂದ, ಸ್ವಾರ್ಥಪೂರ್ವಕವಾಗಿ ಮಾನವ ಸಮಾಜದಲ್ಲಿ ಜಾತಿಭೇದಗಳನ್ನು ಕಲ್ಪಿಸಿ ವಿಭಿನ್ನತೆಯನ್ನುಂಟುಮಾಡಲ್ಪಟ್ಟಿದೆ.

ವಸ್ತುತಃ ಮಾನವಕುಲವು ಸಮಾನವಾದುದು. ಮೂಲಭೂತ ಹಕ್ಕುಗಳು ಸಕಲರಿಗೂ ಸೇರಿವೆ. ಆದರೆ ಜಾತಿ ವರ್ಣಾಶ್ರಮಗಳ ಸಂಕೋಲೆಯು ಮಾನವ ಕುಲವನ್ನು ಛಿದ್ರ ಛಿದ್ರಗೊಳಿಸಿದೆ. ಕಾಯಕಗಳಿಂದ ಬೆಳೆದುಬಂದ ವರ್ಗಗಳು ಜಾತಿಗಳಾಗಿ ಪರಿಣಮಿಸಿವೆ. ಶಿಕ್ಷಣಶೂನ್ಯ ಜನತೆಯನ್ನು ಬುದ್ಧಿವಂತನಾದವನು ದೂರ ದೂರ ಸರಿಸಿದನು. ವೇದಗಳನ್ನು ಕಲಿತು ಬಲ್ಲಿದನಾದವನು ಬ್ರಾಹ್ಮಣ ನೆನಿಸಿದನು.

ಬ್ರಾಹ್ಮಣನಾದವನು ಬ್ರಹ್ಮಜ್ಞಾನಿಯಾಗಿ ಸಮದರ್ಶಿತ್ವವನ್ನು ಪಡೆಯದೆ, ವೈದಿಕ ವೃತ್ತಿಯನ್ನು ಕೈಕೊಂಡು ಸರ್ವರಿಗೂ ಅಧಿಕನೆಂದೇ ಸಾರಿದನು. “ರಾಜಾ ಪ್ರತ್ಯಕ್ಷ ದೇವತಾ”ಯೆಂದು ಹೊಗಳಿ ಶರೀರ ಬಲದಿಂದ ಸದೃಢರಾದವರನ್ನು ಮೇಲೆತ್ತಿದನು. ಈ ಬಾಹುಬಲವುಳ್ಳವರನ್ನು ಕ್ಷತ್ರಿಯರನ್ನಾಗಿಸಿದನು. ವ್ಯಾವಹಾರಿಕ ಬುದ್ಧಿಯುಳ್ಳವರನ್ನು ವೈಶ್ಯರನ್ನಾಗಿ ಪರಿಗಣಿಸಿದನು, ವ್ಯಾಪಾರದಿಂದ ಬಂದ ಲಾಭದಲ್ಲಿ ಭೂಸುರನೆನಿಸಿದ ಬ್ರಾಹ್ಮಣನ ಹೊಟ್ಟೆ ಸುಖವಾಗಿ ತುಂಬುತ್ತ ಬಂದಿತು. (ಮಾನವಧರ್ಮ ಪುಟ ೧೧೩ ರಲ್ಲಿ) ಒಟ್ಟಿನ ಮೇಲೆ ಸ್ವಾರ್ಥ ಸಾಧನೆಯಿಂದಲೇ ಮಾನವ ಸಮಾಜವು ಭಿನ್ನ ಭಿನ್ನವಾಯಿತು.

ಅಣ್ಣ ಬಸವಣ್ಣನವರು “ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಅಕ್ಕಸಾಲಿಗನಾದ.” ಎಂದು ಮುಂತಾಗಿ ಕಟುವಾಗಿ ತಿಳಿಸಿ ಜಾತಿಯ ಜಾಡ್ಯವನ್ನು ದೂರಮಾಡಿದರು. ಜಾತಿ ಮಾನವ ನಿರ್ಮಿತವಾದುದು. ಕಾಯಕದಿಂದ ಬರುವ ಜಾತಿಗಳು ಮಹತ್ವದವುಗಳಲ್ಲ. ದೇವನಿರ್ಮಿತ ಮಾನವಕುಲವೊಂದೇ ವಿಶಿಷ್ಟವಾಗಿದೆ. ಮನುಷ್ಯನಿರ್ಮಿತ ಕಾಯಕಗತ ಜಾತಿಗಳು ಅನಂತನಾಗಿರಬಹುದು. ಮಾನವ ಜಾತಿಯು ನೀತಿ ಭರಿತವಾಗಬೇಕು. ದೇವನ ಕೃಪೆಗೆ ಕಾರಣವಾಗಬೇಕು. ಆಗ ದೇವನೊಲಿದಾತನೇ ನಿಜವಾದ ಜಾತನೆಂದು ಶಿವಶರಣರು ಸಿದ್ಧಮಾಡಿದರು. ಜ್ಞಾನಿ ಗಳಾದವರಿಗೆ ಯಾವ ಜಾತಿಯ ಸೋಂಕಿರುವದಿಲ್ಲ. ಜ್ಞಾನಿಗಳಾದ ಕಬೀರದಾಸರು –

ಜಾತಿ ನ ಪೂಛೋ ಸಾಧೂಕಿ, ಪೂಛ ಲೀಜೀಯೇ ಜ್ಞಾನ |

ಮೌಲ ಕರೋ ತಲವಾರಕೀ, ರಹನೇ ದೋ ಮ್ಯಾನ ||

ಸತ್ಪುರುಷರ ಜಾತಿಯನ್ನು ಕೇಳಬೇಡ, ಜ್ಞಾನವನ್ನು ಕೇಳಿ ತಿಳಿದುಕೊ ಯಾಕಂದರೆ (ಖಡ) ಕತ್ತಿಗೆ ಬೆಲೆಯನ್ನು ಕಟ್ಟುವರಲ್ಲದೆ, ಕತ್ತಿಯ ಮೇಲಿನ ಒರೆಗೆ ಯಾರೂ ಬೆಲೆ ಕಟ್ಟುವದಿಲ್ಲವೆಂದು ಜಾತಿಯ ಜಾಡ್ಯವನ್ನು ಖಂಡಿಸಿರುವರು.

ವೀರಶೈವ ಸಿದ್ಧಾಂತದಲ್ಲಿ ಸದ್ಗುರುನಾಥನು ಶಿವದೀಕ್ಷೆಗೈದನೆಂದರೆ ಶಿಷ್ಯನ ಪೂರ್ವಾಶ್ರಮ ನಿರಸನವಾಗುವದು. “ಜನ್ಮನಾ ಜಾಯತೇ ಶೂದ್ರ: ಕರ್ಮಣಾ ದ್ವಿಜ ಉಚ್ಯತೇ ।” ಬ್ರಾಹ್ಮಣನ ಹೊಟ್ಟೆಯಲ್ಲಿ ಹುಟ್ಟಿದ ಶಿಶುವಿಗಾದರೂ ಶೂದ್ರತ್ವ ಬಿಡುವ ದಿಲ್ಲ, ಉಪನಯನ ಸಂಸ್ಕಾರದಿಂದಲೇ ದ್ವಿಜತ್ವ (ಬ್ರಾಹ್ಮಣ್ಯತ್ವ)ವು ಪ್ರಾಪ್ತವಾಗುತ್ತದೆ. ವೀರಶೈವಧರ್ಮದಲ್ಲಿ ಜಾತಿಸೂತಕವಿಲ್ಲ. ಇದು ತಮ್ಮ ಸೂಚಕವಾಗಿದೆ. ವೀರಶೈವನು ಗರ್ಭಾಷ್ಟಮಿಯಲ್ಲಿಯೇ ಗುರುವಿನಿಂದ ಗರ್ಭಸ್ಥ ಶಿಶುವಿಗೆ ಲಿಂಗಸಂಸ್ಕಾರ ಮಾಡಿಸಿ ಶೂದ್ರತ್ವವನ್ನು ಕಳೆಯುತ್ತಾನೆ. ಇಲ್ಲಿ ಶೂದ್ರತ್ವಕ್ಕೆ ಅವಕಾಶವೇ ಇಲ್ಲ. ಸಾಮಾನ್ಯವಾಗಿ ಎಲ್ಲ ಧರ್ಮಿಯರಲ್ಲಿ ಸ್ತ್ರೀಯರಿಗೆ ಸಂಸ್ಕಾರಗಳಿಲ್ಲ. ಆದರೆ ವೀರಶೈವರಲ್ಲಿ ಸ್ತ್ರೀಪುರುಷರೆಂಬ ಭೇದವಿಲ್ಲದೆ ಧರ್ಮಸಂಸ್ಕಾರ ನಡೆಯುವದು.

ಈ ಜಾತಿ ಸೂತಕವನ್ನು ಕಳೆಯುವ ಸಾಮರ್ಥ್ಯ ಸದ್ಗುರುವಿನಲ್ಲಿದೆ. ಗುರುವರನು ದೀಕ್ಷಾಸಂಸ್ಕಾರಗಳಿಂದ ಶಿಷ್ಯರ ಜಾತಿಭೇದಗಳನ್ನೆಲ್ಲ ಕಳೆದುಹಾಕುತ್ತಾನೆ. ಮಹಾಮಾನವ ಧರ್ಮದ ನೀತಿಯನ್ನು ಪ್ರೀತಿಯಿಂದ ಕಲಿಸುತ್ತ ಶರಣಕುಲದವನನ್ನಾಗಿ ಮಾಡುವನು. ನಿಜಗುಣರು ಕೈವಲ್ಯ ಪದ್ಧತಿಯಲ್ಲಿ –

“ದುರಿತಕರ್ಮವನೊಲ್ಲದಿರು, ಪುಣ್ಯವನೆ ಮಾಡು |

ಹರನಡಿವಿಡಿ, ಶಾಂತರೊಡನಾಡು ||

ಕರುಣವಿರಲಿ ಜೀವರೂಳು, ನೀತಿವಿದನಾಗು |

ಪೊರೆ ಪೊರ್ದಿದರನೆಂದು ಬೆಸಸುವ ||

ನಿಂದಿಸಿ ನುಡಿಯದಿರಾರನು ಮನಸಿಗೆ

ಬಂದತೆ ನಡೆಯದಿರಿಹದಲ್ಲಿ ||

ಕುಂದುವಡೆಯದಿರು ಕಾಮಾದಿಗಳನು ಜಯಿ

ಸೆಂದು ಕೈವಿಡಿದನುಗ್ರಹಿಸುವ ||”

ಎಂದು ಗುರುಬೋಧಿಸುವ ನೀತಿಮಾರ್ಗವನ್ನು ಸುಂದರವಾಗಿ ತಿಳಿಸಿರುವರು.ಗುರುನಾಥನು ಶಾಂತಿ, ಸಮಾಧಾನ, ಶಮ, ದಮ, ಸತ್ಯ, ಶೌಚ, ಅಸ್ತೇಯ, ಅಕ್ರೋಧ ಸದ್ಭಕ್ತಿ ಮೊದಲಾದ ನೈತಿಕ ಉಪದೇಶಾಮೃತವನ್ನು ಪ್ರೀತಿಯಿಂದ ಶಿಷ್ಯನಿಗಿತ್ತು ಶರಣ ಮಾರ್ಗದಲ್ಲಿ ಮುನ್ನಡೆಯಿಸುವನು. ಆದುದರಿಂದಲೇ ಗುರುವು ಮೂರುಲೋಕಗಳಿಗೂ ಪೂಜ್ಯನೆನಿಸುವನು. ತಾನು ಎಲ್ಲಜಾತಿಯ ಸಂಕೋಲೆಯನ್ನು ಬಿಡಿಸುವದರಿಂದಲೇ ಅಜಾತನು. ಜಾತಿಯ ಸೋಂಕು ಸದ್ಗುರುವಿಗಿಲ್ಲ. ಮಾಂಸಮಯ ಶರೀರ ಗುರುವಿನದಲ್ಲ. ಮಂತ್ರ ಮೂರಿಯೆನಿಸಿರುವನು. ಅಂಥವನೇ ಅಜಾತನು.

ಶ್ರೀಗುರುವೇ ! ನೀನೊಲಿದು ಎನ್ನನ್ನು ಸುಜಾತನನ್ನಾಗಿ ಮಾಡು. ಶಿಷ್ಯನು ಗುರುಕರಜಾತನಾಗಬೇಕಾದುದೇ ಮುಖ್ಯಗುರಿ. “ಜಾತಿಮತಗಳೆಷ್ಟಾದರೇನು ? ಸದ್ಗುರುವಿನ ನೀತಿಯೊಂದಲ್ಲವೆ !”

ಜೀವಜಾಲಗಳೊಳಗೆ | ಅವನಾದರೂ ನೀನು

ಕೈವಿಡಿದವನೆ-ಪಾವನಾತ್ಮಕ, ಗುರು

ದೇವ ನೀನೆನಗೆ ಕೃಪೆಯಾಗು II ೨೨ II

ಸಕಲಜೀವಿಗಳಿಗೆ ಲೇಸನ್ನು ಬಯಸುವದೇ ಅಚಾತನ ಕರ್ತವ್ಯ, ಗುರುರಾಯನು ಎಲ್ಲ ಜೀವಿಗಳಿಗೂ ಅಂತಃಕರಣವನ್ನು ನೀಡುತ್ತಾನೆ. ಸ್ವರ್ಗ ಮರ್ತ್ಯ-ಪಾತಾಳಗಳಲ್ಲಿಯ ದೇವತೆಗಳಿಗೆ ಮಾನವರಿಗೆ, ದಾನವರಿಗೆ ಸನ್ಮಾರ್ಗವನ್ನು ತೋರುತ್ತಾನೆ. ದೇವತೆಗಳಲ್ಲಿ ವಿಷಯಲೋಲುಪತೆ ಅಧಿಕವಾಗುತ್ತದೆ. ಅದಕ್ಕೆ ಅವರಿಗೆ ಶಮೆದಮೆಯನ್ನು ತಿಳಿಸಿ ದೇವತ್ವವನ್ನು ಉಳಿಸುತ್ತಾನೆ. ಮಾನವರಲ್ಲಿ ಸಂಕೋಚ ಸ್ವಭಾವ ವನ್ನು ಕಳೆದು ಮಾನವೀಯತೆಯನ್ನು ತುಂಬುತ್ತಾನೆ. ಕ್ರೂರರಾದ ದಾನವರಿಗೆ ದಯಾ ಧರ್ಮವನ್ನು ತಿಳಿಸಿ ಉದ್ಧರಿಸುತ್ತಾನೆ. ಗುರುವಿನಲ್ಲಿ ಭೇದ ಭಾವವಿರದು. ಜೀವಿಗಳಲ್ಲಿ ಯಾವಪ್ರಾಣಿಯಾದರೂ ಗುರುಸಾನ್ನಿಧ್ಯವನ್ನು ಬಯಸಿದರೆ ಅದಕ್ಕೆ ಗುರುಕೃಪೆಯಾಗದೇ ಇರದು. ಗುರುಕೃಪೆಯಾಗದೇ ಯಾವನೂ ಪಾವನನಾಗಲಾರನು. ಅದು ಕಾರಣ ಸದ್ಗುರುದೇವನನ್ನು ಶರಣು ಹೋಗಬೇಕು. ಚನ್ನಾಗಿ ನೆರೆನಂಬಬೇಕು ನಮ್ಮ ವಚನವಲ್ಲರಿಯಲ್ಲಿ –

ಆವಲೋಹವಾದಡೇನು ಪರುಷಕ್ಕೆ ಸಮಭಾವ;

ಆವ ಕಟ್ಟಿಗೆಯಾದಡೇನು ಅನಲಕ್ಕೆ ಸಮಭಾವ;

ಆವ ಕುಲದವನಾದಡೇನು ಸದ್ಗುರುವಿಗೆ ಸಮಭಾವ;

ಸಂಸಾರಸಾಗರವ ದಾಟಿಸದೇ ಬಿಡನು

ಇಂಥವನೇ ಗುರುದೇವ, ಅವನ ನೀನಂಬೆಂದ

ನಮ್ಮ ಮೃಡಗಿರಿ ಅನ್ನದಾನೀಶ (ವ.ವ. ೧೭)

ಸದ್ಗುರುವಿನ ಸಮದೃಷ್ಟಿ ವ್ಯಕ್ತವಾಗಿದೆ. ಪರುಷಮಣಿ ಸಾಮೀಪ್ಯಕ್ಕೆ ಬಂದ ಲೋಹವಾದರೂ ಹೊನ್ನಾಗದೇ ಬಿಡದು. ಬೆಂಕಿಯಲ್ಲಿ ಬಿದ್ದ ಯಾವ ಕಟ್ಟಿಗೆ ಯಾದರೂ ತತ್ಸ್ವರೂಪವನ್ನೇ ಹೊಂದುವದು, ಸದ್ಗುರುವಿನ ಸಾನಿಧ್ಯ ಇವಕ್ಕಿಂತಲೂ ಮಿಗಿಲಾಗಿದೆ. ಗುರುವಿನ ಕೈ ಬರಿಗೈಯಲ್ಲ. ಅದು ಪರುಷ ಹಸ್ತ, ಅಲ್ಲಲ್ಲ ! ಪರುಷಮಣಿಯನ್ನೇ ನಿರ್ಮಿಸುವ ಅಮೃತ ಹಸ್ತ, ದೇವರದಾಸಿಮಾರ್ಯರು-

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗಕಾಣಾ ರಾಮನಾಥ,

ಎಂದು ಗುರುವಿನ ಹಸ್ತದಂತೆ ಚರಣದ ಮಹತ್ವವನ್ನು ಬಿತ್ತರಿಸಿದ್ದಾರೆ. ಗುರು ಕೃಪಾಸ್ಪರ್ಶದಿಂದ ಶಿಷ್ಯನೂ ಗುರುತ್ವವನ್ನು ಪಡೆಯುವನು. ಓಗುರುವೆ ! ಗುರುದೇವ ! ನೀನೆನಗೆ ತಡಮಾಡದೆ ಕೃಪೆ ಮಾಡು.

ಹಲವು ಮಾತೇನು ನೀ | ನೊಲಿದು ಪಾದವನಿಟ್ಟ

ನೆಲವೆ ಸುಕ್ಷೇತ್ರ-ಜಲವೆ ಪಾವನ ತೀರ್ಥ

ಸುಲಭ ಶ್ರೀ ಗುರುವೆ ಕೃಪೆಯಾಗು || ೨೩ ||

ಶಿವಕವಿಗಳು ಗುರುಹಸ್ತ ಸ್ಪರ್ಶಪಡೆದ ಜೀವಿಯು ಪಾವನವಾಗುವಂತೆ ಗುರುಪಾದಸ್ಪರ್ಶಪಡೆದ ನೆಲ-ಜಲಗಳೂ ಕ್ಷೇತ್ರತೀರ್ಥಗಳಾಗುವವೆಂದು ಪ್ರತಿಪಾದಿಸಿದ್ದಾರೆ. ಗುರುಪಾದಸ್ಪರ್ಶದಿಂದ ಜಡವೂ ಚೈತನ್ಯಮಯವಾಗುವದೆಂಬುದನ್ನು ತಿಳಿಸಿದ್ದಾರೆ.

ಹಲವು ಗೊಳ್ಳು ಮಾತುಗಳಿಂದೇನು ? ಎಂದು ಅನುಭವಿಗಳಾದ ಶರಣರು ತಾವೇ ಪ್ರಶ್ನಿಸಿ ಉತ್ತರಿಸುತ್ತಾರೆ. ಗುರುವೆ ! ನೀನು ಕರುಣೆಯಿಂದ ಒಲಿದು ಪಾದವಿಟ್ಟ ಭೂಮಿಯು ಪರಮಕ್ಷೇತ್ರವಾಗುವದು. ನೀ ನಿಂದ, ಮಿಂದ ಜಲ ಪರಮ ಪಾವನ ತೀರ್ಥವಾಗುವದು. ಇಂಥ ಉದಹಾರಣೆಗಳು ಅನಂತವಾಗಿ ಕಾಣಬರುತ್ತಿವೆ. ಇದೇ ಮಾತನ್ನು ಮೊಗ್ಗೆಯ ಮಾಯಿದೇವರು ತಮ್ಮ ಶತಕತ್ರಯದಲ್ಲಿ

ಶರಣಂ ಶಾಂಭವಯೋಗಿ ಇದ್ದ ನೆಲನೇ ಕ್ಷೇತ್ರಂ ಪವಿತ್ರಂ ಪರಂ |

……ಡಿಸಲೆಂದು ಪೊಕ್ಕ ಜಲಮೇ ತೀರ್ಥಂ ಮಹಾಪಾವನಂ || ೧೮ ||

ಎಂದು ಶಿವಯೋಗಿ ಮೆಟ್ಟಿದ ನೆಲ, ಪೊಕ್ಕ ಜಲ ಪಾವನವಾಗುವವೆಂದು ತಿಳಿಸಿದ್ದಾರೆ. ಹೀಗೆ ಜಡವಾದ ನೆಲ-ಜಲಗಳನ್ನು ಸುಲಭವಾಗಿ ಪವಿತ್ರಗೊಳಿಸುವ ಶಕ್ತಿಯನ್ನು ಹೊಂದಿದ ಸದ್ಗುರುವೇ ನನ್ನನ್ನು ಪುನೀತನನ್ನಾಗಿ ಮಾಡೆಂದು ಬೇಡಿಕೊಂಡಿದ್ದಾರೆ.

ಇನ್ನುಳಿದ ಮಾತೇನು | ಮುನ್ನನೀನೊಲಿದು ನೀ-

ಮನ್ನಿಸಿದವನ-ಧನ್ಯನಾಗುವನು ಪ್ರ-

ಸನ್ನ ಶ್ರೀಗುರುವೆ ಕೃಪೆಯಾಗು || ೨೪ ||

ಸದ್ಗುರುವಿನ ಮಹಿಮಾತಿಶಯವನ್ನು ಮತ್ತೆ ಮತ್ತೆ ಎತ್ತಿ ತೋರಿಸಿದ್ದಾರೆ. ಬೇರೆ ಉದಾಹರಣೆಗಳನ್ನು ಉದಹರಿಸಿ ಪ್ರಯೋಜನವಿಲ್ಲ. ಗುರು ಕೃಪೆಗೆ ಯಾವ ದೃಷ್ಟಾಂತವೂ ಸರಿಬಾರದು. ಗುರುಕರುಣೆ ಸಣ್ಣದಲ್ಲ. ಗುರುಕರುಣೆಗೆ ಯಾವುದೂ ಸಮವಾಗದು. ಅದಕ್ಕಾಗಿ ಇನ್ನುಳಿದ ಮಾತೇನು” ಎಂದು ಪ್ರಸ್ತಾಪ ಮಾಡಿದ್ದಾರೆ.

ಗುರುಪ್ರಸನ್ನತೆ ಪ್ರಾಮುಖ್ಯ, ಸದ್ಗುರುವು ಸದಾಕಾಲವೂ ಪ್ರಸನ್ನನಾಗಿದ್ದರೂ ಶಿಷ್ಯನೂ ಸೇವೆಯನ್ನು ಸಲ್ಲಿಸಬೇಕಾಗುವದು. ಗೀತೆಯು ‘ಗುರು ಶುಶ್ರೂಷಯಾ ವಿದ್ಯಾ.” ಗುರುಸೇವೆಯ ಬಲದಿಂದಲೇ ಆತ್ಮವಿದ್ಯೆಯು ಲಭ್ಯವಾಗುವದು. ಸೇವೆ ಗುರುವಿನನ್ನು ತೀವ್ರವಾಗಿ ಪ್ರಸನ್ನನನ್ನಾಗಿಸುತ್ತದೆ. ಗುರು ಪ್ರಸನ್ನನಾಗಿ ಕರುಣೆ ದೋರಿದರೆ ಆ ಶಿಷ್ಯನು ಧನ್ಯನಾಗುವನು. ಗುರುಮನ್ನಣೆಗಿಂತ ಇನ್ನಾವ ಪದವಿಯಿದೆ?

ಗುರುಪಾದ ಸೇವೆ ಮಾಡುವ ಭಾಗ್ಯವನ್ನು ಬೇಡಿದ ಮಹಾನುಭಾವಿಗಳ ಉದಾಹರಣೆ ಗಳು ಅನಂತವಾಗಿವೆ. ಗುರು ಮನ್ನಣೆಯಲ್ಲಿ ಎಲ್ಲ ಗೌರವಗಳುಂಟು. ಗುರುವಿನ ಅನುಗ್ರಹವು ಭಕ್ತಿಯಿಂದಲ್ಲದೇ ಬೇರೆ ಯಾವ ಪ್ರಭಾವದಿಂದಲೂ ದೊರೆಯಲಾರದು. ಶಿಷ್ಯನ ಪರಿಶುದ್ಧ ಹೃದಯಕ್ಕೆ, ನಿರ್ಮಲಭಾವಕ್ಕೆ, ನಿಷ್ಕಾಮ ಭಕ್ತಿಗೆ ಗುರು ಕರುಣೆ ಕರಗಿ ಹರಿದುಬರುತ್ತದೆ. ಅಂತೆಯೇ ಶರಣರು ಯಾವ ಪದವಿಗೂ ಆಶೆಮಾಡದೇ ಗುರುಪಾದ ಸೇವೆಯನ್ನು ಬಯಸಿದರು. ಹಾವಿನಾಳ ಕಲ್ಲಯ್ಯ ಶರಣನು –

ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.

ಪರಮ ಪದವಿಯ ನಿಮ್ಮೆದೆಯಲ್ಲಿ ಇರಿದುಕೊಳ್ಳಿ.

ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು.

ಮಹಾಲಿಂಗ ಕಲ್ಲೇಶ್ವರ ದೇವಾ,

ಪರಮ ಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.

ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿ ಸತಿಶಿರೋಮಣಿ ಲಕ್ಕಮ್ಮನು-

ಮಾಡುವ ಮಾಟವುಳ್ಳನ್ನಕ್ಕ ಬೇರೊಂದು

ಪದವನರಸಲೇತಕ್ಕೆ ?

ದಾಸೋಹವೆಂಬ ಸೇವೆಯ ಬಿಟ್ಟು

ನೀಸಲಾರದೆ ಕೈಲಾಸವೆಂಬ ಆಸೆಬೇಡ

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವ ಕೈಲಾಸ

ಜಗದಣ್ಣ ಬಸವಣ್ಣನವರು –

ಬ್ರಹ್ಮಪದವಿಯನೊಲ್ಲೆ

ವಿಷ್ಣು ಪದವಿಯನೊಲ್ಲೆ

ರುದ್ರ ಪದವಿಯನೊಲ್ಲೆ

ಮತ್ತಾವ ಪದವಿಯನೊಲ್ಲೆನಯ್ಯಾ !

ಕೂಡಲಸಂಗಮದೇವಾ ! ನಿಮ್ಮ ಸದ್ಭಕ್ತರ

ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ

ಎಂದು ಮುಂತಾಗಿ ಶರಣರು ಸೇವಾಭಾವನೆಯಲ್ಲಿಯೇ ಶಿವನನ್ನು ಕಂಡಿದ್ದಾರೆ. ಗುರು ಪಾದ ಸೇವೆಯೇ ಸಾರ ಸರ್ವಸ್ವವಾಗಿದೆ. ಸದ್ಗುರು ಮನ್ನಣೆಯೇ ಜೀವನದ ಧೈಯವಾಗಿದೆ.

ದೊರೆಯೊಲಿದ ಬಡವಂಗೆ | ಧರೆಯ ಮನ್ನಣೆಯುಂಟು

ಗುರುವೆ ನೀನೊಲಿದ – ಶರಣಂಗೆ ಸರಿಯುಂಟೆ

ಕರುಣಿ ಶ್ರೀಗುರುವೆ ಕೃಪೆಯಾಗು || ೨೫ ||

ಮೇಲೆ ವಿವರಿಸಿದ ಗುರು ಮನ್ನಣೆಯ ಭಾಗ್ಯವನ್ನು ಲೌಕಿಕ ಉದಾಹರಣೆ ಯಿಂದ ಶಿವಕವಿಯು ಪುಷ್ಟಿಕರಿಸುತ್ತಾನೆ. ದೊರೆಯು ಧರೆಯ ಪಾಲಕ, ದೀನದಲಿತ ರಕ್ಷಕ. ನಿಷ್ಠಾವಂತ ಸೇವಕನು ಅರಸನ ಒಲುಮೆಯನ್ನು ಪಡೆದರೆ ರಾಜ್ಯದ ಜನರೆಲ್ಲ ಸೇವಕನಿಗೆ ಗೌರವ ನೀಡುತ್ತಾರೆ. ಅಂತೆಯೇ “ಅರಸು ಒಲಿದರೆ ಅರ್ಧರಾಜ್ಯ” ವೆಂಬ ನಾಣ್ಣುಡಿಯು ಪ್ರಸಿದ್ಧವಾಗಿದೆ. ಅರಸು ಕೆಲವು ಸ್ಥಾನಗಳ ಒಡೆಯ. ತನ್ನ ಪ್ರದೇಶದ ಅಧಿಕಾರಿಯು, ಆತನ ಒಲುಮೆಗೆ ಪಾತ್ರನಾದವನು ಸೀಮಿತ ಗೌರವ ಪಡೆಯಬಲ್ಲನು. ಆದರೆ-ಗುರುರಾಯ ತ್ರಿಲೋಕದೊಡೆಯ. ಜಗತ್ತಿಗೆಲ್ಲ ಗುರು, ಜಗದ್ಗುರುವೆನಿಸಿದ್ದಾನೆ. ಅವನು ಬ್ರಹ್ಮಾಂಡ ನಾಯಕನೆಂದು ಈ ಹಿಂದೆ ಹೊಗಳಿಸಿಕೊಂಡಿದ್ದಾನೆ. ಅಂಥ ಗುರುವಿನ ಕೃಪೆಗೆ ಒಳಗಾದ ಶರಣನಿಗೆ ಯಾರು ಸರಿಯಾಗಬಹುದು? ನೀತಿಕಾರರು.

“ಗುರುತ್ವಂ ನೃಪತ್ವಂ ಚ ನೈವ ತುಲ್ಯಂ ಕದಾಚನ |

ಸ್ವದೇಶೇ ಪೂಜ್ಯತೇ ರಾಜಾ ಗುರುಃ ಸರ್ವತ್ರ ಪೂಜ್ಯತೇ ||’

ಗುರುತ್ವವು ಮತ್ತು ನೃಪತ್ವವು ಎಂದೂ ಸರಿಬರಲಾರವು. ನೃಪನಾದರೂ ಗುರುವಿಗೆ ಮನ್ನಣೆ ನೀಡುತ್ತಾನೆ; ನೀಡಲೇಬೇಕು. ತನ್ನ ರಾಜ್ಯದಲ್ಲಿ ರಾಜನು ಗೌರವ ಪಡೆದರೆ ಜಗತ್ತಿನಲ್ಲೆಲ್ಲ ಗುರುರಾಯನು ಗೌರವ ಹೊಂದುತ್ತಾನೆಂದು ತಿಳಿಸಿದ್ದಾರೆ.ಅಸದೃಶನಾದ ಕರುಣಾಮಯ ಗುರುವೆ ! ನೀನೊಲಿದು ಗೌರವಕ್ಕೆ ಯೋಗ್ಯನನ್ನಾಗಿಸು.

ಕೊರಡು ಕೊನರುವದು ಬಲು | ಬರಡು ಹಯನಾಗುವದು

ಕುರುಡಂಗೆ ಕಣ್ಣು ಬಹುದು, ನಿನ್ನೊಲುಮೆ ಎಂ-

ದರಿದೆನೈ ಗುರುವೇ ಕೃಪೆಯಾಗು || ೨೬ ||

ಗುರುದೇವ ! ನಿನ್ನ ಒಲುಮೆಯ ಮಹತ್ವವು ಅನುಪಮವಾಗಿದೆ. ಅಸದೃಶವಾಗಿದೆ. ಮಾತಿಗೆ ಮೀರಿದೆ. ವರ್ಣನೆಗೆ ನಿಲುಕದಾಗಿದೆ. ನಿನ್ನ ಅಂತಃಕರುಣದ ಒಲುಮೆಯೆಂಬ ಅಮೃತ ಸಿಂಚನದಿಂದ ಒಣಗಿದ ಮರದ ತುಂಡು ಚಿಗುರುತ್ತದೆ.ಗೊಡ್ಡಾಕಳು ಚನ್ನಾಗಿ ಹಾಲು ಕರೆಯಬಲ್ಲುದು. ಕಣ್ಣಿಲ್ಲದ ಕುರುಡನು ಎಲ್ಲವನ್ನು ನೋಡಬಹುದು. ಎಲ್ಲದಕ್ಕೂ ನಿನ್ನ ಒಲುಮೆಯೆ ಮೂಲ ಕಾರಣವಾಗಿದೆ. ಹಾಲಕೆರೆ ಅನ್ನದಾನ ಸ್ವಾಮಿಗಳು ಹಿಮಾಲಯಕ್ಕೆ ಪ್ರಯಾಣ ಬೆಳಸಿದಾಗ ಅವರಪ್ಪಣೆಯಂತೆ ಪುರಾಣ ಶ್ರವಣಕ್ಕಾಗಿ ಹಾಕಿದ ಹಂದರ ಕಟ್ಟಿಗೆಗಳು ಚಿಗುರಿದ ಘಟನೆ ಅವರ ಪುರಾಣದಿಂದ ತಿಳಿದು ಬರುತ್ತದೆ. ಹಾವೇರಿ ಶಿವಬಸವ ಶ್ರೀಗಳ ಪುರಾಣ ಹಾಗೂ ಮೃಡಗಿರಿ ಅನ್ನದಾನೀಶ್ವರ ಲೀಲಾಮೃತಗಳಲ್ಲಿ ಆ ಪೂಜ್ಯರ ಕೃಪಾಶೀರ್ವಾದದಿಂದ ಬರಡಾಕಳುಗಳು ಹಾಲು ಕರೆದ ಸಂಗತಿಯು ವೇದ್ಯವಾಗುತ್ತದೆ. ಹಾನಗಲ್ಲ ಕುಮಾರ ಮಹಶಿವಯೋಗಿಯ ಧ್ಯಾನದಿಂದ ಕಣ್ಣಿಲ್ಲದ ಮುದಕಿಯು ಕಣ್ಣು ಪಡೆದ ಪವಾಡ ಬಹಳ ಹಿಂದಿನದಲ್ಲ.

ನೀನೊಲಿದರೆ ಕೊರಡು ಕೊನರುವದಯ್ಯಾ

ನೀನೊಲಿದರೆ ಬರಡು ಹಯನಹುದಯ್ಯಾ

ನೀನೊಲಿದರೆ ವಿಷವೆಲ್ಲ ಅಮೃತವಹುದಯ್ಯಾ

ನೀನೊಲಿದರೆ ಸಕಲ ಪಡಿ ಪದಾರ್ಥಗಳು

ಇದರಲ್ಲಿರ್ಪ್ಪವು ಕೂಡಲಸಂಗಮದೇವಾ !

ಎಂದು ಅಣ್ಣನವರು ಗುರುಸಂಗಮನಾಥನ ಒಲುಮೆಯ ಗರಿಮೆಯನ್ನು ಗುರುತಿಸಿದ್ದಾರೆ.

ಗುರುವೇ ! ಏನೆಲ್ಲವನ್ನು ಕೊಡಬಲ್ಲೆ. ನಿನ್ನ ಒಲುಮೆ ಎನ್ನ ಮೇಲಾಗಲಿ, ಎನ್ನಮತಿಯ ಅಮಂಗಲವು ದೂರಾಗಲಿ ಎಂಬ ಶಿವಕವಿಯ ಹೃದಯ ಧ್ವನಿ ಇಲ್ಲಿ ವ್ಯಕ್ತವಾಗುತ್ತದೆ. ಈ ರೀತಿ ಗುರುವಿನ ಮಹಿಮಾತಿಶಯನ್ನು ಪರಿಪರಿಯಾಗಿ ವರ್ಣಿಸುತ್ತಾನೆ.

ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ

ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು. ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.

ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು. ಹಿಂದೊಮ್ಮೆ ಸರ್ವಾಂಗ ಸುಂದರವಾಗಿ ಮೆರೆದ ಲಿಂಗಾಯತ ಸಮಾಜವು ಇಂದು, ಧಾರ್ಮಿಕ, ನೈತಿಕ ಅಧಃಪತನದಿಂದ ರುದ್ರರೂಪವನ್ನು ಧರಿಸಿ ಹುಚ್ಚೆದ್ದು ಕುಣಿಯುವುದನ್ನು ಕಂಡು ಮಮ್ಮಲ ಮರುಗಿ ಕರಗಿದರು. ಅದರ ಉಳಿಮೆಗಾಗಿ, ಉನ್ನತಿಗಾಗಿ ತಮ್ಮ ತನು ಮನಧನವನ್ನೇ ಅರ್ಪಿಸಿದರು; ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಇದೇನಿಜವಾದ ಸ್ವಾಮಿಯ ಕುರುಹು ಅಲ್ಲವೆ? ಇಂತಹ ಸ್ವಾಮಿಗಳಿಂದಲೇ ಜಗದೋದ್ಧಾರ ಕಾರ್ಯವು ನೆರವೇರಬೇಕಾದುದು ಸಹಜ. ಆದರೆ ಭಕ್ತರ ಪ್ರಸಾದದಿಂದ ಪುಷ್ಟಗೊಂಡು ಬೆಳೆಯುತ್ತರಲಿರುವ ಸ್ವಾಮಿಗಳು ಶ್ರೀಗಳವರಿಂದ ಪಾಠ ಕಲಿಯುವುದು ಅವಶ್ಯವಲ್ಲವೆ? ಸ್ವಾಮಿಗಳಾದವರು ಸಮಾಜಕ್ಕೆ ಹೆತ್ತ ತಾಯಿಯಂತೆ ಇರಬೇಕು.ಅವರು ಸನ್ಮಾರ್ಗದ ಶಿಕ್ಷಣವನ್ನು ಪಡೆದು, ಸಮಾಜ ಬಂಧುಗಳಿಗೆ ಆಸರದ ಕೈಯನ್ನು ನೀಡಬೇಕಾದುದು ಅತ್ಯಾವಶ್ಯಕ.

ಹಾನಗಲ್ಲ ಶ್ರೀಗಳವರ ಜೀವಿತ ಕಾಲದಲ್ಲಿ ಒದಗಿದ ಸಮಾಜ ಸನ್ನಿವೇಶಗಳು ಅವರ ಎದೆಯೊಳಗಿನ ಬತ್ತಿಯನ್ನು ಹೊತ್ತಿಸದೇ ಇರಲಿಲ್ಲ. ಬಂದ ಪರಿಸ್ಥಿತಿಯನ್ನು ಸಮಾಜದ ನಡತೆಯಲ್ಲಿ ಮೈಗೂಡಿಸುವ ಜಾಣೆಯು ಶ್ರೀಗಳವರಲ್ಲಿ ಸ್ವಾಭಾವಿಕವಾಗಿತ್ತು. ಎಂತೆಂತಹ ಭೀಷ್ಮಸನ್ನಿವೇಶಗಳು ಒದಗಿದರೂ ‘ಸಾಕು ಮಾಡೋ ದೇವಾ’ ಎಂದು ಕೂಗದೆ, ಹಣೆಗೆ ಕೈಹಚ್ಚಿಕೊಂಡು ಕೂಡ್ರದೆ,

ಶಾಸ್ತ್ರೀಯವಾದ, ಸರ್ವಸಮ್ಮತವಾದ, ವ್ಯವಹಾರಿಕ ಉಪಾಯವನ್ನು ಹುಡುಕಿ ತೆಗೆಯುತ್ತಿದ್ದರು, ಅವರ ನಿರ್ಮಲವಾದ ಅಂತಃಕರಣವ್ಯಾಪ್ತಿಯ ನೇಸರನ ಬೆಳಗಿನಂತೆ ಧನಿಕ-ದರಿದ್ರ, ಜಾಣ ಮೂಢ, ಉಚ್ಛ-ನೀಚ , ಸ್ತ್ರೀ-ಪುರುಷ ಎಂಬ ಭೇದಭಾವನೆಯಿಲ್ಲದೆ ಸರ್ವರಿಗೂ ‘ಜ್ಞಾನಾಮೃತವನ್ನು ಬಯಸುತ್ತಿತ್ತು. ಅವರು ಸುಖವನ್ನು ಕಾಣುತ್ತಿದ್ದುದು ಸ್ವಾರ್ಥಮಯ ಕ್ರಿಮಿಜೀವನದಲ್ಲಲ್ಲ, ನಿಸ್ವಾರ್ಥಮಯವಾದ ಘನಜೀವನದಲ್ಲಿ, ಇಂತಹ ಘನಜೀವಿಗೆ ಮಠಮಾನ್ಯಗಳು ಹಕ್ಕಿಯ ಗೂಡಿನಂತೆ ಸಣ್ಣದಾಗಿ ಕಂಡರೂ ಆಶ್ಚರ್ಯವೇನಲ್ಲ. ಶ್ರೀಗಳವರು ಲಿಂಗಾಯತ ಸಮಾಜದ ವಳಬೇನೆಯನ್ನರಿತು, ಅದರ ನಿವಾರಣೆಗೆ ಗುರು ಜ೦ಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು, ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು, ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೆ ಅವರ ಲಕ್ಷ್ಯ ಹರಿದಿತ್ತು.

ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಕೇಳುತ್ತಿದ್ದರು, ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮಂದಿಗೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಘಲವಕ್ಕು  ಸ್ವಾಮಿ ಕಾರ್ಯಕ್ಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು, ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಗೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭವಿಸುತ್ತಿದ್ದರು, ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಎಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು.

ಶ್ರೀಗಳವರು ಹಮ್ಮಿಕೊಂಡ ಕಾರ್ಯಕ್ರಮವು ವಿಶಾಲವೂ ಬಹುಮುಖವುಳ್ಳದಾಗಿದೆ, ಅವ್ರಗಳಲ್ಲಿ ಶಿವಯೋಗಮಂದಿರ ಮತ್ತು ವೀರಶೈವ ಮಹಾಸಭೆಗಳು ಬಹುಮುಖ್ಯವಾದವು. ಇವೆರಡೂ ಅವಳಿಜವಳಿ ಸಂಸ್ಥೆಗಳು,ಒಂದರಲ್ಲಿ ಲೌಕಿಕ ಮುಖ್ಯವಾದರೆ ಇನ್ನೊಂದರಲ್ಲಿ ಪಾರಮಾರ್ಥ ಗಣ್ಯವಾಗಿದೆ.ಇವೆರಡ ನಾಣ್ಯದ ಎರಡು ಮಗ್ಗುಲದಂತೆ ಇವೆ, ಇವೆರಡಕ್ಕೂ ಮೂಲಕಾರಣರು ಶ್ರೀ ಶಿವಯೋಗಿಗಳು, ಸಮಾಜದ ಹಿತಕ್ಕಾಗಿ ನಿರ್ಮಿಸಲ್ಪಟ್ಟ ಈ ಎರಡೂ ಸಂಸ್ಥೆಗಳಲ್ಲಿ ಶ್ರೀಗಳವರ ಬುದ್ಧಿ, ಸಾಹಸ, ತಪಸ್ಸು ಮನೆ ಮಾಡಿಕೊಂಡಿವೆ, ಅವರ ಪ್ರಭುದ್ಧಾವಸ್ಥೆಯ ಘಟನೆಗಳನ್ನು ಕಣ್ಣಿಟ್ಟು ಅವಲೋಕಿಸಿದರೆ ಅವರು ಅತಿಮಾನವರೆಂಬ ಮಾತು ದಿಟಪೂವಾಗಿ ನಿಲ್ಲುವುದು, ಲಿಂಗಾಯತ ಸಂಸ್ಕೃತಿಯ ಪುನರುದ್ಧಾರಕ್ಕಾಗಿ, ಸಾಮಾನ್ಯ ಜನತೆಯ ಉದ್ಧಾರಕ್ಕಾಗಿ ಇವೆರಡೂ ಸಂಸ್ಥೆಗಳನ್ನು ಕಟ್ಟಿ, ಅವು ಸರಿಯಾಗಿ ನಡೆಯಲೆಂದು ತಮ್ಮ ಶರೀರವನ್ನು ಚಂದನದಂತೆ ಸವೆಸಿ ದುಡಿದರು. ತಮ್ಮ ಜೀವನವನ್ನು ದೀವಿಗೆಯಂತೆ ಉರಿಸಿ, ಸಮಾಜದ ಕತ್ತಲೆಯನ್ನು ಹೋಗಲಾಡಿಸಲು ಯತ್ನಿಸಿದರು. ಬತ್ತಿ ತಾನು ಸುಟ್ಟುಕೊಂಡಾಗಲ್ಲವೆ ಇನ್ನೊಬ್ಬರಿಗೆ ಬೆಳಕಿನ ಸಹಾಯ ಸಿಗುವುದು? ಮಠಾಧಿಪತಿಗಳು ಲೋಕ ಸೇವೆಯನ್ನು ಕೈಕೊಂಡು, ತಮ್ಮ ಉದ್ಧಾರದೊಡನೆ ಜಗತ್ತನ್ನು ಸಹ ಉದ್ಧಾರ ಮಾಡಬಲ್ಲವರೆಂಬುದನ್ನು ಶ್ರೀಗಳು ತಮ್ಮ ಕರ್ತವ್ಯದಕ್ಷತೆಯಿಂದ ಸಿದ್ಧ ಮಾಡಿ ತೋರಿಸಿದರು. ಅರ್ಧ ಶತಮಾನದ ಹಿಂದೆ ಲಿಂಗಾಯತರು, ತಾವು ಲಿಂಗಾಯತರೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಿಂದೂ ಧರ್ಮದಲ್ಲಿ ತಮ್ಮ ಸ್ಥಾನವಾವುದು? ತಮ್ಮ ತತ್ವ ಸಂಸ್ಕೃತಿಗಳ ನೆಲೆಬೆಲೆಯೇನು? ತಮ್ಮ ಸಮಾಜ ಎತ್ತ ಸಾಗಿದೆ? ತಮ್ಮ ಭವ್ಯಭವಿಷ್ಯವೇನು?- ಎಂಬ ಕಲ್ಪನೆಯಿಲ್ಲದೆ ಸಮಾಜಬಂಧುಗಳು ಅರೆನಿದ್ರೆಯಲ್ಲಿದ್ದಾಗ, ಬಡಿದೆಬ್ಬಿಸಿ ಕಣ್ಣು ತೆರೆಯಿಸಿದವರು ಪೂಜ್ಯ ಹಾನಗಲ್ಲ ಶ್ರೀಗಳವರು. ಸಮಾಜದ ಯಾವ ಭಾಗದಲ್ಲಿಯೇ ಆಗಲಿ,ಕೊರತೆಯಾದುದನ್ನು ಕಂಡರೆ, ಅದು ತಮ್ಮ ಶರೀರದಲ್ಲಿಯ ನೋವೆಂದು ಅವರು ಬಗೆಯುತ್ತಿದ್ದರು. ತಮ್ಮ ಶರೀರದ ಪಂಚಪ್ರಾಣಗಳ ಪ್ರಯೋಜನವು ಸಮಾಜದ ಸ್ವಾಸ್ಥ್ಯಕ್ಕೆ ಆಗಲೆಂದು ಬಗೆದು, ತಮ್ಮ ಆತ್ಮಬಲವನ್ನು ತಪೋನಿಗ್ರಹದಿಂದ ಬೆಳೆಯಿಸಿಕೊಂಡರು. ಪಾವನತಮವಾದ ಶಂಭುಲಿಂಗನ ಬೆಟ್ಟದಲ್ಲಿ ಬಹುಕಾಲ ಅನುಷ್ಠಾನ ಮಾಡಿದರು. ಮುಂದೆ ಮಧುಕರ ವೃತ್ತಿಯನ್ನು ತಳೆದು, ಮಹಾತ್ಮರಿದ್ದೆಡೆಗೆ ಹೋಗಿ, ಅವರಿಂದ ಅನುಭಾವ ಸಂಪತ್ತನ್ನು ಪಡೆದರು. ತಪೋಭೂಮಿಯಾದ ಶ್ರೀ ಎಡೆಯೂರು ಕ್ಷೇತ್ರಕ್ಕೆ ಹೋಗಿ ಪ್ರಸಾದ ಸಿದ್ಧಿಯನ್ನು ಪಡೆದುಕೊಂಡರು.

ಇಷ್ಟಕ್ಕೆ ತೃಪ್ತರಾಗಲಿಲ್ಲ ಶ್ರೀ ಹಾನಗಲ್ಲ ಶ್ರೀಗಳು; ಲೋಕಸೇವೆ ಒಬ್ಬ ವ್ಯಕ್ತಿಯಿಂದ ಪರಿಪೂರ್ಣವಾಗಿ ನಡೆಯಲಾರದೆಂದು ಬಗೆದು, ಚರ ತಿಂಥಿಣಿಯೊಂದನ್ನುತಮ್ಮ ವಲಯವನ್ನಾಗಿರಿಸಿಕೊಂಡು, ಸಮಾಜದ ಅಭ್ಯುದಯ ಕಾರ್ಯಕ್ಕೆ ಕೈಹಾಕಿದರು. ಧರ್ಮಾಚರಣೆಯಲ್ಲಿಯೇ ಸತ್ಯ ಸೌಂದರ್ಯಗಳ ಸ್ವಾರಸ್ಯವಿದೆಯೆಂದು ಬೋಧೆ ಮಾಡುತ್ತ ಜನಾಂಗದಲ್ಲಿ ಆಸ್ತಿಕ್ಯ, ಔತ್ಸುಕ್ಯಗಳನ್ನು ಹುಟ್ಟಿಸಿದವರು. ಶ್ರೀಗಳವರ ಪ್ರಯತ್ನದಿಂದ ಲಿಂಗಾಯತರು ಲಿಂಗಧಾರಣದ ಮಹತಿಯನ್ನು ತಿಳಿದರು;ಉಪಟಳದಿಂದ ಪಾರಾದರು. ವೀರಶೈವ ಮಹಾಸಭೆಯನ್ನು ಶ್ರೀಗಳವರು ಕೂಡಿಸಿ ಧರ್ಮಪ್ರಸಾರ ಮಾಡಿದರು. ಶಿವಯೋಗ ವಿದ್ಯೆಯ ಪ್ರಸಾರಕ್ಕಾಗಿ ಶಿವಯೋಗಮಂದಿರವನ್ನು ಭದ್ರಗೊಳಿಸಿದರು. ಅವರ ಧಾರ್ಮಿಕ ಆಂದೋಲನವು ಸಾರ್ವಜನಿಕ ಪ್ರೇಮ ಮತ್ತು ಹಿರಿಯರ ಬುದ್ದಿವಂತಿಕೆಯಿಂದ ಸಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರ ಪರಿಶ್ರಮದ ಫಲವಾಗಿ, ಅಲ್ಪದಿನಗಳಲ್ಲಿಯೇ ಅಲ್ಲಲ್ಲಿ, ಕೀರ್ತನಕಾರಿಗಳು, ಧರ್ಮಬೋಧಕರು, ಸಂಗೀತ ಕಲಾವಿದರು ನಿಸ್ವಾರ್ಥ ಬುದ್ಧಿಯಿಂದ ಸಮಾಜ ಸೇವೆ ಮಾಡುತ್ತಿರುವುದು ಗೋಚರವಾಯಿತು. ಶಾಸ್ತ್ರೋಕ್ತ ರೀತಿಯಲ್ಲಿ ನಿರ್ಮಿತವಾದ ಲಿಂಗಭಸ್ಮಗಳು ಶಿವಯೋಗಮಂದಿರದ ಮುಖಾಂತರ ಸದ್ಭಕ್ತರ ನಿಜಾಚರಣೆಗೆ ದೊರೆಯತೊಡಗಿದವು. ಈ ಮಂದಿರದಲ್ಲಿ ನುರಿತ ಯೋಗಸಾಧಕರು ಶಿವಯೋಗದಲ್ಲಿ ಮಹಾಸಿದ್ಧಿಯನ್ನು ಪಡೆದರು. ಇಲ್ಲಿ ಸಾಧನೆ ಮಾಡಿದ ಹರಗುರು ಚರಮೂರ್ತಿಗಳು ನಾಡಿನಲ್ಲಿ ಹಬ್ಬಿ, ಬೀಳು ಬಿದ್ದಿರುವ ಮಠಗಳನ್ನಾಶ್ರಯಿಸಿ ಧರ್ಮಬೋಧೆಗೆ ಸಿದ್ಧರಾದರು. ನಾಡು ಚೇತರಿಸಿಕೊಂಡಿತು; ನುಡಿ ಮೈಮುರಿಯ ತೊಡಗಿತು. ಶಿವಯೋಗಮಂದಿರದ ದೀಪಗಳು ಎಲ್ಲೆಡೆಯಲ್ಲಿ ಪಸರಿಸಿ ನಾಡು ಬೆಳಗುವಂತಾಯಿತು. ಶ್ರೀಗಳವರ ಉನ್ನತ ದೃಷ್ಟಿ, ಉನ್ನತ ಧ್ಯೇಯಗಳ ಸಮನ್ವಯದಿಂದ ಅವರ ಜೀವನದ ದಾರಿ ಹೆದ್ದಾರಿಯಾಯಿತು. ಆನೆ ನಡೆದುದೇ ದಾರಿಯಲ್ಲವೆ?

ಹೀಗೆ, ಬಹುಮುಖದ ವ್ಯಕ್ತಿತ್ವವನ್ನು ಪಡೆದ ಶ್ರೀಗಳವರು ಲಿಂಗಾಯತ ಸಮಾಜವನ್ನು ಆದರ್ಶಪ್ರಾಯವಾಗಿ ಮೂಡಿಸುವ ಕಾರ್ಯದಲ್ಲಿದ್ದಾಗಲೇ ಸಂಜೆಯಾಯಿತು. ಕರ್ಮಸಾಕ್ಷಿಯಾದ ಆತ್ಮರವಿಯು ಕಣ್ಮರೆಯಾದನು. ಗುರುವು ಅಗೋಚರನಾದನು. ಅವನು ಇನ್ನೆಲ್ಲಿ ದರ್ಶನ ನೀಡುವನು? ಅವನ ಪ್ರಯತ್ನರೂಪೀ ಸಂಧ್ಯಾಕಿರಣಗಳು ನಮಗೆ ಮಾರ್ಗದರ್ಶನ ಮಾಡಿಸುತ್ತಲಿವೆ. ಅಂತಹ ಕಾರಣಪುರುಷನು ಇನ್ನೊಮ್ಮೆ ಮೂಡಿ ಬಾರದೆ ಇರನೆಂದು ನಮ್ಮ ನಂಬಿಗೆ.

(ಆಕರ : ನುಡಿಲಿಂಗ-ಲೇ: ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು, ನವಲಗುಂದ)

ಪೂಜ್ಯ ಶ್ರೀ ಲಿಂ. ಡಾ. ಶಿವಬಸವ ಸ್ವಾಮಿಗಳು,ರುದ್ರಾಕ್ಷಿಮಠ ನಾಗನೂರ

ಶಿವಯೋಗಿ ಗುರುವು ಪರುಷಮಣಿ ಇದ್ದಂತೆ. ಗುರುವಿನ ಕೃಪೆಯಿಂದ-ಕರುಣಾಕಟಾಕ್ಷದಿಂದ ಶಿಷ್ಯನು ಪುನೀತನಾಗುತ್ತಾನೆ. ಗುರುಕರುಣೆಯಿಂದ ಅಲೌಕಿಕ ಆತ್ಮಶಕ್ತಿಯನ್ನು ಶಿಷ್ಯನು ಪಡೆಯಬಲ್ಲ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಅಂತಹ ಕರುಣಾಳು ಗುರುದೇವರು. ಅವರ ಅಮಿತ ಕರುಣೆಯ ನೆರಳಿನಲ್ಲಿ ಅನೇಕ ಸಾಧಕರು ಸಿದ್ಧಿಯನ್ನು ಪಡೆದವರುಂಟು. ಅವರ ಸೇವೆಯನ್ನುಮಾಡುವ ಭಾಗ್ಯ ಅನೇಕ ಸಾಧಕರಿಗೆ ಲಭಿಸಿತ್ತು. ಅಂತಹ ಪರಮ ಭಾಗ್ಯ ನಮ್ಮ ಪಾಲಿಗೂ ಬಂದಿತ್ತು.

ಹದಿನೈದು ವರ್ಷಗಳವರೆಗೆ ಪೂಜ್ಯರ ಶೀಲಾಚರಣೆಯಲ್ಲಿ ಸೇವೆಯ ಲಾಭ.ಈ ಅವಧಿಯಲ್ಲಿ ಪೂಜ್ಯರನ್ನು ಬಹಳ ಹತ್ತಿರದಿಂದ ಕಾಣುವ ಸುಯೋಗ ಒದಗಿತ್ತು.ನಾವು ಹೆಚ್ಚಾಗಿ ಸೇವೆಯಲ್ಲಿಯೇ ಇರುತ್ತಿದ್ದೆವು. ಆದುದರಿಂದ ಹೆಚ್ಚು ವಿದ್ಯಾವ್ಯಾಸಂಗಮಾಡುವುದು ಸಾಧ್ಯವಾಗಲಿಲ್ಲ. ಆದರೆ ಪೂಜ್ಯರ ಸೇವೆಯಲ್ಲಿ ದೊರೆತ ಅನುಭಾವಎಂತಹ ಪಾಂಡಿತ್ಯಕ್ಕೂ ಎಟುಕದು. ಈ ಸೇವಾ ಪ್ರಸಂಗದಲ್ಲಿ ಅನೇಕ ಘಟನೆಗಳು ನಡೆದು ಹೋಗಿವೆ ಅವೆಲ್ಲವುಗಳಲ್ಲಿ ಸ್ಪುಟವಾದ ಪೂಜ್ಯರ ಘನವಾದ ದಿವ್ಯ ವ್ಯಕ್ತಿತ್ವದ ಕೆಲವು ಅಂಶಗಳನ್ನು ಮಾತ್ರ ಈ ಸಂಸ್ಕರಣೆಯಲ್ಲಿ ಮೂಡಿಸಲಾಗಿದೆ.

ಸ್ವಾತ್ವಿಕ ಮತ್ತು ಸರಳ ಜೀವನ

ಪೂಜ್ಯ ಶ್ರೀಗಳವರ ಜೀವನದ ಪ್ರತಿನಿತ್ಯದ ಆಚರಣೆಯಲ್ಲಿ ಸಾತ್ವಿಕತೆ ಮತ್ತು ಸರಳತೆ ಎದ್ದು ಕಾಣುತ್ತಿದ್ದವು. ಅವರು ಮಿತಾಹಾರಿಗಳು. ಅವರ ಪ್ರಸಾದದಲ್ಲಿ ಸಾತ್ವಿಕತೆ ಮತ್ತು ನಿರ್ಮಲತೆ ಎರಕಗೊಂಡಿದ್ದವು. ಅವರು ಎಂದೂ ನಾಲಿಗೆಯ ರುಚಿಗೆ ಮಾರುಹೋಗಲಿಲ್ಲ. ಖಾರ, ಉಪ್ಪು, ಹುಳಿಯನ್ನು ಕೊನೆಯವರೆಗೂ ಮುಟ್ಟಲಿಲ್ಲ.ಸೈಂಧವ ಲವಣವನ್ನು ಮಾತ್ರ ಅಲ್ಪ ಮಾತ್ರೆಯಲ್ಲಿ ಸೇವಿಸುತ್ತಿದ್ದರು. ಅವರ ಸಪ್ಪೆ ಸಾರಿನ ಮಸಾಲೆಯಲ್ಲಿ ಜೀರಿಗೆ ಮತ್ತು ಹವೀಜ (ಧನಿಯಾ)ದ ಪುಡಿ ಮಾತ್ರ ಸೇರುತ್ತಿತ್ತು.

ಶ್ರೀಗಳವರು ಹೆಚ್ಚಾಗಿ ತಪ್ಪಲುಪಲ್ಯವನ್ನು ತುಸು ಕುದಿಸಿ ತೆಗೆದುಕೊಳ್ಳುತ್ತಿದ್ದರು.ಕಿರುಕಸಾಲೆ ಅವರ ನೆಚ್ಚಿನ ತಪ್ಪಲು ಪಲ್ಯ ಬಿಳಿಯ ಕಣಜಗಲಿ, ಬೇವು, ಕಕ್ಕಿ ಮತ್ತುಅಮೃತ ಬಳ್ಳಿಯ ಚಿಗುರೆಲೆ, ನೆಗ್ಗಲಿ ಮತ್ತು ಉತ್ತರಾಣಿಯ ಮುಗುಳುಗಳನ್ನು ಅವರು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಋತು ಮಾಸಕ್ಕೆ ತಕ್ಕಂತೆ ಇವನ್ನು ಅವರು ಬಳಸಿಕೊಳ್ಳುತ್ತಿದ್ದರು. ಮಾಗಣಿ ಬೇರಿನ ಉಪ್ಪಿನಕಾಯಿ ಅವರ ಮೆಚ್ಚಿನ ನೆಂಚಿಗೆ ಅವರು ಹುರಿದ ಹೆಸರು ಬೇಳೆ, ಆಕಳ ಹಾಲು ಮತ್ತು ತುಪ್ಪವನ್ನೇ ಯಾವಾಗಲೂ ಪ್ರಸಾದದಲ್ಲಿ ವಿನಿಯೋಗಿ ಸುತ್ತಿದ್ದರು. ಅವರ ಪಾಕ ಸಾತ್ವಿಕ, ಅವರ ಪ್ರಸಾದ ಬಹು ಮಿತ ಮತ್ತು ಹಿತ.

ನಿಯಮಿತ ಕಾರ್ಯಕ್ರಮ

ಶ್ರೀಗಳವರು ಸದಾ ಜಾಗ್ರತರಾಗಿರುತ್ತಿದ್ದರು. ಅವರ ಪ್ರತಿ ನಿತ್ಯದ ಕಾರಗಳು ಗಡಿಯಾರದಂತೆ ನಿಯಮಿತವಾಗಿ ಚಾಚೂ ತಪ್ಪದೆ ನಡೆಯುತ್ತಿದ್ದವು. ಪ್ರತಿದಿನವೂ ಮುಂಜಾನೆ ೪ಗಂಟೆಗೆ ಎದ್ದು, ಅರ್ಧ ಗಂಟೆ ಧ್ಯಾನಸ್ಥರಾಗಿ ಕುಳಿತು ಆ ಮೇಲೆ ತಾವೇ ಗಂಟೆ ಬಾರಿಸಿ ಸಾಧಕರನ್ನೂ ಸೇವಕರನ್ನೂ ಎಚ್ಚರಿಸುತ್ತಿದ್ದರು; ಅನಂತರ ಮುಖ ತೊಳೆದು, ಭಸ್ಮಧಾರಣ ಮಾಡಿಕೊಂಡು ಶಿವಾನುಭವ ಪ್ರವಚನವನ್ನು ೬ಗಂಟೆಯ ವರೆಗೂ ನಡೆಯಿಸುತ್ತಿದ್ದರು. ಮಗ್ಗೆಯ ಮಾಯಿದೇವರ ‘ಶತಕತ್ರಯ ಅವರ ಅಚ್ಚುಮೆಚ್ಚಿನ ಅನುಭವ ಗ್ರಂಥ.

ಶ್ರೀಗಳವರು ಪ್ರತಿನಿತ್ಯ ಮುಂಜಾನೆ ಪ್ರಾತರ್ವಿಧಿ ಗಳಿಗಾಗಿ ಊರ ಹೊರಗೆ (ಶಿವಯೋಗಮಂದಿರದಲ್ಲಿದ್ದರೆ ಗುಡ್ಡಗಳಲ್ಲಿ) ಮೈಲುಗಟ್ಟಲೆ ಪಾದಚಾರಿಗಳಾಗಿ ನಡೆಯುತ್ತಿದ್ದರು. ಎತ್ತರದ ನಿಲುವು, ಖಡ ಖಡ ಕಾಯ, ನಿರ್ಮಲ ನೇತ್ರ, ಆಜಾನುಬಾಹು, ಹಸ್ತದಲ್ಲಿ ತಮ್ಮ ಎತ್ತರದ ಬೆತ್ತ ಸಾಕ್ಷಾತ್ ಜಂಗಮದ ರೂಪಾಗಿರುತ್ತಿದ್ದರು. ಎಂತಹ ಪಾಮರ-ಪತಿತನನ್ನೂ ಉದ್ಧರಿಸೇವೆಂಬ ಅನುಗ್ರಹಭಾವ ಅವರ ಈ ಭವ್ಯರೂಪದಲ್ಲಿ ಮೈದಾಳಿ ನಡೆಯುವಂತಿತ್ತು.

ನಿತ್ಯದ ಈ ಸಂಚಾರದ ಕಾಲದಲ್ಲಿ ಮರಡಿಯೇ ಆಗಲಿ, ಕಾಡೇ ಆಗಲಿ ಅಲ್ಲಿ ದೊರೆತ ವನಸ್ಪತಿಗಳನ್ನು ಸಂಗ್ರಹಿಸುವುದು, ಅವುಗಳ ಪರಿಜ್ಞಾನವನ್ನು ಜೊತೆಯಲ್ಲಿದ್ದ ಸೇವಕರಿಗೆ ಮಾಡಿಕೊಡುವುದು ಅವರ ನಿತ್ಯನೇಮವಾಗಿದ್ದಿತು. ಅವರ ಆಯುರ್ವೇದ ಪ್ರೇಮ, ವನಸ್ಪತಿ ವಿಜ್ಞಾನ ಅಪರಿಮಿತ ಮತ್ತು ಅನುಕರಣೀಯವಾಗಿದ್ದವು.

ಪ್ರಾತಃಸಂಚಾರವಾದ ಮೇಲೆ ಸ್ನಾನ-ಶಿವಪೂಜೆ ಗಳನ್ನು ಮುಗಿಸಿಕೊಂಡು ಶ್ರೀಗಳವರು ಭಿಕ್ಷೆಗೆ ದಯಮಾಡಿಸುವುದು ನಿತ್ಯದ ಪದ್ಧತಿಯಾಗಿದ್ದಿತು. ಜನಸೇವೆಯೇ ಅವರಿಗೆ ಈಶಸೇವೆಯಾಗಿದ್ದಿತು. ಎಲ್ಲ ಕಾರ್ಯಗಳಿಗೂ ಹೊತ್ತಿಗೆ ಸರಿಯಾಗಿ ನಿಯಮಿತವಾಗಿ ಅಚ್ಚುಕಟ್ಟಾಗಿ ನಡೆಯಬೇಕು. ಅಂದರೆ ಅವರಿಗೆ ಸಮಾಧಾನ. ಒಮ್ಮೊಮ್ಮೆ ಭಿಕ್ಷೆಯ ಕಾರ್ಯದಲ್ಲಿ ಶಿವಪೂಜೆ ಅರ್ಪಿತಕ್ಕೆ ವ್ಯತ್ಯಯವೂ ಬರುತ್ತಿತ್ತು. ಆದರೆ ಅವರು ಪೂಜೆಗೆ ತಡವಾಯಿತೆಂದು ಅವಸರ ಮಾಡುತ್ತಿರಲಿಲ್ಲ. ಸಭೆಯ ಭಾಷಣ, ಪ್ರವಚನ ಮತ್ತು ಶಿವಕೀರ್ತನ ಮೊದಲಾದ ಬೋಧೆಯ ಕಾರ್ಯಕ್ರಮಗಳನ್ನು ಕ್ರಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಿಸಿ ಸಂತೋಷಪಡುತ್ತಿದ್ದರು. ಅವರೆಂದೂ ಶರೀರ ಸೌಖ್ಯವನ್ನು ಕನಸು-ಮನಸಿನಲ್ಲಿಯೂ ಬಯಸಿದವರಲ್ಲ. ಅವರ ವಿರಕ್ತಿ ಕಡು ಕಠೋರರೀತಿಯದು. ಶ್ರೀಗಳವರು ಹಸಿವು-ತೃಷೆಗಳನ್ನು ಗೆದ್ದ ಮಹಾಂತರೆಂದರೆ ಸರಿಯಾದೀತು.

ಸಾಧಕರ ನಡೆನುಡಿಯನ್ನು ತಿದ್ದುವ ಹಂಬಲ

ಶ್ರೀಗಳವರು ಶಿವಯೋಗಮಂದಿರವನ್ನು ಸ್ಥಾಪಿಸಿ ಚಿಕ್ಕ ವಟುಗಳನ್ನು ಎಳೆಯ ಸಾಧಕರನ್ನೂ ಅಲ್ಲಿ ತಂದಿಟ್ಟರು. ಅವರನ್ನು ತಮ್ಮ ಕರಸಂಜಾತರೆಂದು ಬಗೆದು ವಾತ್ಸಲ್ಯದಿಂದ ಸಾಕಿ ಸಲುಹಿದರು. ಅವರಿಗೆ ಸರಿಯಾದ ಶಿಕ್ಷಣ ದೊರೆಯುವಂತೆ ಎಲ್ಲ ಏರ್ಪಾಡುಗಳನ್ನು ಮಾಡಿದರು. ಯೋಗ-ಶಾಸ್ತ್ರಗಳ ವ್ಯಾಸಂಗದ ಜೊತೆಗೆ ಪ್ರತಿಯೊಬ್ಬ ವಟುವಿನ ಸಾಧಕನ ನಡೆ-ನುಡಿಗಳನ್ನು ತಿದ್ದುವ ಹೊಸ ಕ್ರಮಗಳನ್ನೇ ಅನುಸರಿಸಿ ಪ್ರಯೋಗಿಸಿದರು. ಏಕಾಂತದಲ್ಲಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ಆದ ಸ್ವಪ್ನಗಳನ್ನು, ಮಾಡಿದ ತಪ್ಪುಗಳನ್ನು ಕೇಳಿ ತಿಳಿದು ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು. ಸಾಧಕರು ಬರಿಯ ಆಸ್ತಿವಂತ ಶ್ರೀಮಂತ ಮಠಗಳಿಗೆ ಅಧಿಕಾರಿಗಳಾಗಿ ಹೋದರೆ ಆಗಲಿಲ್ಲ. ಅವರು ತಮ್ಮ ಇಡಿಯ ಜೀವನವನ್ನೇ ಸಮಾಜ ಸೇವೆಗೆಂದು ಧಾರೆಯೆರೆಯಬೇಕು ಎಂಬುದು ಶ್ರೀಗಳವರ ಬಯಕೆ ಯಾಗಿದ್ದಿತು. ಕೆಲವು ಸಾಧಕರು ತಾವು ಮಠ-ಮಾನ್ಯಗಳಿಗೆ ಅಧಿಕಾರಿಗಳಾಗದೆ ಆಜೀವ ದೇಶಿಕರಾಗಿದ್ದು ಸಮಾಜಸೇವೆ ಮಾಡುವ ಪ್ರತಿಜ್ಞೆಯನ್ನು ಪೂಜ್ಯರ ಮುಂದೆ ಸಾಷ್ಟಾಂಗಪ್ರಣತರಾಗಿ ಕೈಕೊಂಡವರೂ ಉಂಟೂ. ಅವರು ಅಂತಹ ತ್ಯಾಗ ಭಾವನೆಯಿಂದ ಪ್ರೇರಿತರಾದ ಸಾಧಕರನ್ನು ಕಂಡು ಪರಿಶ್ರಮ ಸಾರ್ಥಕವಾದೀತೆಂದು ಆನಂದ ಪಡುತ್ತಿದ್ದರು. ಸಮಾಜಸೇವೆಯ ವ್ರತದಲ್ಲಿ ದೀಕ್ಷಿತರಾದ ಸುಶಿಕ್ಷಿತ ಮತ್ತು ಸಮರ್ಥ ಸಾಧಕರನ್ನೇ ಅವರು ಶಿವಯೋಗಮಂದಿರದ ಸ್ಥಿರವಾದ ಆಸ್ತಿಯೆಂದು ಬಗೆದಿದ್ದರು.

ಸಂಸ್ಥೆಯ ಪ್ರೇಮ

ಶಿವಯೋಗಮಂದಿರವೆಂಬ ಸಂಸ್ಥೆ ಶ್ರೀಗಳವರ ಉದಾತ್ತ ಧೈಯಗಳ ಸಾಕಾರ ರೂಪವಾಗಿದ್ದಿತು. ಆ ಮಹಾಸಂಸ್ಥೆ ಅವರ ಸಮಾಜ ಸುಧಾರಣೆಯ ಬೃಹದ್ ಯೋಜನೆಗಳ ಪ್ರಯೋಗ ಕ್ಷೇತ್ರವಾಗಿದ್ದಿತು. ಅದನ್ನು ಪೂರ್ಣ ಉನ್ನತಿಗೆ ಉಚ್ಛ್ರಾಯ ಸ್ಥಿತಿಗೆ ಒಯ್ಯುವ ಹಂಬಲ ಅವರಲ್ಲಿ ಪ್ರಬಲವಾಗಿತ್ತು, ಹಗಲಿರುಳು ಅವರು ಅದರ ಸುಧಾರಣೆಯ ಚಿಂತೆ ಮಾಡಿದರು. ಅದೇ ಅವರ ಮಠವಾಗಿದ್ದಿತು. ಅವರು ಹಾನಗಲ್ಲ ವಿರಕ್ತಮಠಕ್ಕೆ ಅಧಿಕಾರಿಗಳಾಗಿದ್ದರೂ ಅದರ ಚಿಂತೆ ಮಾಡಲಿಲ್ಲ. ತಾವಿರುವಾಗಲೇ ಮತ್ತೊಬ್ಬ ಯೋಗ್ಯ ಸಾಧಕರಿಗೆ ಅಧಿಕಾರ ಪಟ್ಟಿ ಮಾಡಿ ನಿಶ್ಚಿಂತರಾಗಿದ್ದರು. ಶ್ರೀಗಳವರು ಹಾನಗಲ್ಲ ಮಠದಲ್ಲಿ ವಾಸ್ತವ್ಯವಿದ್ದಾಗ ಮಲೆ ನಾಡಿನ ಸಾವಿರಾರು ಜನ ಭಕ್ತರು ಪ್ರತಿನಿತ್ಯ ದರ್ಶನಾಶೀರ್ವಾದ ಪಡೆಯಲು ಬರುತ್ತಿದ್ದರು. ಕಾಣಿಕೆ ಕಾಯಿ-ಕರ್ಪುರಗಳು ರಾಶಿಯಾಗಿ ಒಟ್ಟಿರುತ್ತಿದ್ದವು. ಶ್ರೀಗಳವರು ಆವೆಲ್ಲವನ್ನು ಲೆಕ್ಕ ಮಾಡಿಸಿ ನೇರವಾಗಿ ಶಿವಯೋಗಮಂದಿರಕ್ಕೆ ಕಳಿಸಿಕೊಡುತ್ತಿದ್ದರು.

ಒಮ್ಮೆ ಅಕ್ಕಿಆಲೂರಿನ ಒಬ್ಬ ಸಿರಿವಂತ ತಾಯಿ ಹಾನಗಲ್ಲ ಮಠಕ್ಕೆಂದು ತನ್ನಆಸ್ತಿಯನ್ನು ಭಕ್ತಿಯಿಂದ ದಾನವಾಗಿ ಬರೆದು ಅರ್ಪಿಸಿದಳು. ಶ್ರೀಗಳವರು ಅದೆಲ್ಲವನ್ನುಮಂದಿರದ ಹೆಸರಿಗೆ ಬರೆಯಿಸಿದರು. ಅವರು ಸ್ವಂತಕ್ಕಾಗಿ ಒಂದು ಚಿಕ್ಕಾಸನ್ನೂ ಮುಟ್ಟಲಿಲ್ಲ, ಬಳಸಲಿಲ್ಲ. ತಮಗೆ ಬೇಕಾದ ಖಾದಿಯ ಬಟ್ಟೆಗಳನ್ನು ಭಕ್ತರೇ ಕೊಡಿಸಿದವನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅದಕ್ಕಾಗಿ ಹಾನುಗಲ್ಲ ಮಠ ಇಲ್ಲವೆ ಶಿವಯೋಗಮಂದಿರ ಸಂಸ್ಥೆಯ ಒಂದು ಪೈಸೆಯನ್ನೂ ಮುಟ್ಟುತ್ತಿರಲಿಲ್ಲ.  ಸಂಸ್ಥೆಯ ಆಡಳಿತವನ್ನು ಅಭಿಮಾನಿ ಸ್ವಾಮಿಗಳಿಗೆ-ಭಕ್ತರಿಗೆ ಒಪ್ಪಿಸಿ ನಿಶ್ಚಿಂತರಾಗಿದ್ದರು.

ಶ್ರೀಗಳವರು ಧನದಾಶೆ-ಅಧಿಕಾರಲಾಲಸೆಗಳನ್ನು ಮೆಟ್ಟಿ ವೀರವಿರತಿಯ ತುತ್ತತುದಿಯನ್ನು ಏರಿ ನಿರ್ಭಯರಾಗಿದ್ದರು.

ನಿರಹಂಕಾರ ವೃತ್ತಿ

ನಿರಂಜನ-ನಿರಾಭಾರಿ ವೀರಶೈವ ವಿರಕ್ತರ ಸಂಪ್ರದಾಯದಲ್ಲಿ ನಿರಹಂಕಾರ ವೃತ್ತಿಗೆ ಬಹಳ ಪ್ರಾಶಸ್ಯವಿದೆ. ಮೂರ್ತಿಗಳು ಒಬ್ಬರನೊಬ್ಬರು ಕಂಡಾಗ ಪರಸ್ಪರ ಸಾಷ್ಟಾಂಗ ಪ್ರಣತರಾಗುವುದು ವಿರಕ್ತರ ಸಮಯಾಚಾರವಾಗಿದೆ. ಅವರಲ್ಲಿ ಹಿರಿಯ-ಕಿರಿಯ ಎಂಬ ವಯೋಮಾನ-ಸ್ಥಾನಮಾನಗಳ ಭೇದಭಾವ ಎಳ್ಳಷ್ಟೂ ಬರಕೂಡದು. ವಿರಕ್ತರ ಈ ನಿರಹಂಕಾರ ವೃತ್ತಿಯನ್ನು ಶ್ರೀಗಳವರಲ್ಲಿ ಅನೇಕ ಸಲ ಪ್ರತ್ಯಕ್ಷ ಕಂಡಿದ್ದೇವೆ.

ಶ್ರೀಗಳವರು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದರು. ಪರಳಿಯ ಪ್ರಕರಣದಲ್ಲಿ ವಿಜಯ ಸಂಪಾದಿಸಿದ್ದರು, ಶಿವಯೋಗಮಂದಿರವೆಂಬ ಆದರ್ಶ ಯೋಗಾಶ್ರಮವನ್ನು ಕಟ್ಟಿ ಬೆಳೆಸಿದ್ದರು. ಇಡಿಯ ನಾಡಜನರು ಅವರನ್ನು ತೋಂಟದ ಶ್ರೀ ಸಿದ್ಧಲಿಂಗಯತಿಯ ಅವತಾರವೆಂದು ಬಗೆದು ಪೂಜಿಸುತ್ತಿದ್ದರು. ಆದರೆ ಶ್ರೀಗಳವರಿಗೆ ಈ ವಿಶಾಲಕೀರ್ತಿಯ ಸೋಂಕು ತಗುಲಲಿಲ್ಲ. ಅವರು ತಮ್ಮನ್ನು ಹಿರಿಯರೆಂದು ಎಂದೂ ಬಗೆಯಲಿಲ್ಲ. ಅವರು ವಿನಯದ ಸಾಕಾರ ಮೂರ್ತಿಯಾಗಿದ್ದರು.

ವಿರಕ್ತ ಸಮಯಾಚಾರದಲ್ಲಿ ಇನ್ನೊಂದು ಆಚರಣೆ ಆದರ್ಶವಾಗಿದೆ. ಶಿವಪೂಜೆಯಾದ ನಂತರ ಮೂರ್ತಿಗಳ ಪಾದಪೂಜೆ ಮಾಡಿ ಪಾದೋದಕ ಪಡೆದು ಪ್ರಸಾದವನ್ನು ಸ್ವೀಕರಿಸುವುದು ವಿಶಿಷ್ಟವಾಗಿದೆ. ಶ್ರೀಗಳವರು ಎಂದೂ ತಮ್ಮ ಪಾದಪೂಜೆಯನ್ನು ಮಾಡಿಸಿಕೊಳ್ಳಲಿಲ್ಲ.

ಒಂದು ಸಲ ಶ್ರೀಗಳವರು ಮುಂಡರಗಿಯಿಂದ ಹೂವಿನಹಡಗಲಿಗೆ ದಯಮಾಡಿಸುವ ತಯಾರಿಯಲ್ಲಿದ್ದರು ಸ್ನಾನವಾಯಿತು ನೆರೆಯಲ್ಲಿ ಮೂರ್ತಿಗಳೊಬ್ಬರ ಪಾದಪೂಜೆ ನಡೆಯುತ್ತಿತ್ತು. ಶ್ರೀಗಳವರು ಕೂಡಲೇ ಅಲ್ಲಿಗೆ ದಯಮಾಡಿಸಿ ಸಾಷ್ಟಾಂಗವೆರಗಿ ಪಾದೋದಕ ಸ್ವೀಕರಿಸಿ ಬಂದರು. ಮೂರ್ತಿಗಳು ಯಾರೇ ಇರಲಿ, ಭೇದಭಾವ ಮಾಡುತ್ತಿರಲಿಲ್ಲ. ಲಾಂಛನಕ್ಕೆ ಶರಣೆನ್ನುತ್ತಿದ್ದರು. ಪೂಜ್ಯರು ನಿರಂಹಕಾರ ವೃತ್ತಿಗೆ ಇದೊಂದು ಜ್ವಲಂತ ಉದಾಹರಣೆ.

ಪವಾಡ ಪುರುಷರು

ಶಿವಯೋಗಿಗಳಲ್ಲಿ ಅಣಿಮಾದಿ ಅಷ್ಟಸಿದ್ಧಿಗಳು ತಾವಾಗಿಯೇ ಬಂದು ನೆಲೆಸಿರುತ್ತವೆ. ಅವರ ಆತ್ಮಬಲ ಅಂತಹುದು. ಆದರೆ ನಿಜವಾದ ಯೋಗಿಯೂ ಅವನ್ನು ತೋರಗೊಡುವುದಿಲ್ಲ. ತೋರಗೊಡಲು ಬಾರದು. ಸಿದ್ಧಿಗಳನ್ನು ಪ್ರಕಟವಾಗಿ ಪ್ರಯೋಗಿಸಿ ಧರೆ ಯೋಗಿಯೂ ಒಬ್ಬ ಮಾಟಗಾರನಂತೆಯೇ ಸರಿ. ಈ ಮಾಟವೂ ಮಾಯೆಯೇ. ಈ ಮಾಯೆಯನ್ನು ಪ್ರದರ್ಶಿಸಿ ನಾವು ಜನರನ್ನು ಮರುಳುಮಾಡಿ ಬೇಕಾದಷ್ಟು ಕೀರ್ತಿಯನ್ನು ಸಂಪತ್ತನ್ನೂ ಪಡೆಯಬಹುದು ಆದರೆ ಕೊನೆಗೆ ಯೋಗಿಯು ಈ ಮಾಯೆಯ ಮಾಟಕ್ಕೆ ತಾನೇ ಎರವಾಗಿ ವಿನಾಶಕ್ಕೆ ಗುರಿಯಾಗಬೇಕಾಗುತ್ತದೆ. ಇದು ಶಾಶ್ವತವಾದ ಅನುಭವದ ಮಾತು.

ದ್ಯಾಂಪುರದ ಶ್ರೀ ಚನ್ನಕವಿಗಳು ರಚಿಸಿದ ಶ್ರೀಗಳವರ ಪುರಾಣದಲ್ಲಿ ನಾವೆಲ್ಲಿಯೂ ಪವಾಡಗಳನ್ನು ಕಾಣುವುದಿಲ್ಲ ಆದುದರಿಂದ ಅವರು ಪವಾಡ ಪುರುಷರಲ್ಲವೆನ್ನಬಹುದೇ? ಅವರ ಅನೇಕ ಪವಾಡಗಳು ಅಜ್ಞರನ್ನು ಎಚ್ಚರಿಸುವುದಕ್ಕಾಗಿ ಲೋಕಹಿತಕ್ಕಾಗಿ ತಾವಾಗಿಯೇ ಘಟಿಸುತ್ತಿದ್ದವು. ಅಂತಹ ಸನ್ನಿವೇಶಗಳನ್ನು ನಾವು ಪ್ರತ್ಯಕ್ಷ ಕಂಡಿದ್ದೇವೆ.

ಒಮ್ಮೆ ಅನಿರೀಕ್ಷಿತವಾಗಿ ಸೊಲ್ಲಾಪುರಕ್ಕೆ ದಯಮಾಡಿಸುವ ಪ್ರಸಂಗ ಬಂದಿತು.ಆಗ ಶ್ರೀಗಳವರು ರೇಲ್ವೆಯಲ್ಲಿ ಪ್ರವಾಸ ಮಾಡುತ್ತಿರಲಿಲ್ಲ. ಅಂದು ಈ ನಿಯಮವನ್ನು ಮುರಿಯಲೇಬೇಕಾಯಿತು. ಸೊಲ್ಲಾಪುರದ ಶ್ರೀ ವೀರೇಶ್ವರ ಶಿವಶರಣವೆಂದರೆ ಶ್ರೀಗಳವರಿಗೆ ಬಹಳ ಗೌರವ ಮತ್ತು ಅಭಿಮಾನ, ಶರಣರ ಆರೋಗ್ಯ ಚಿಂತಾಜನಕವೆಂದು ತಾರು ಬಂದಿತ್ತು. ಶ್ರೀಗಳವರ ಆರೋಗ್ಯವು ಚೆನ್ನಾಗಿರಲಿಲ್ಲ ಆದರೂ ಶರಣರ ಯೋಗಕ್ಷೇಮವನ್ನು ವಿಚಾರಿಸುವ ಆತುರತೆಯಿಂದ ರೇಲ್ವೆ ಪ್ರವಾಸಕ್ಕೆ ಸಿದ್ಧರಾದರು. ಟಾಂಗಾ ಬಂದಿತು ಸ್ಟೇಶನ್ನಿಗೆ ಬಂದೆವು (ಬಹುಶಃ ಆಗ ಗದಗಿನಲ್ಲಿ ಮುಕ್ಕಾಮು ಮಾಡಿದ್ದರು) ಗಾಡಿ ಹೊರಡುವುದರಲ್ಲಿತ್ತು ಗಡಿಬಿಡಿಯಿಂದ ಓಡಾಡಿದೆವು ಎಲ್ಲಿಯೂ ಸೀಟು ಸಿಗಲಿಲ್ಲ ಕೊನೆಗೆ ಅವಸರ ಮಾಡಿ ಬ್ರೆಕ್ಕಿನ ಡಬ್ಬಿಯಲ್ಲಿ ಹತ್ತಿ ಕುಳಿತೆವು.

ಟಿಕೆಟ್ ಚೆಕ್ಕರನು ಬಂದು ನಮಗೆ ಮನಬಂದಂತೆ ಅಂದನು, ಬಹಳ ತಾಸು ಕೊಟ್ಟನು.ಇಷ್ಟೆಲ್ಲ ಆದರೂ ಶ್ರೀಗಳವರು ಮೌನವಾಗಿಯೇ ಇದ್ದರು. ಮುಂದಿನ ಸ್ಟೇಶನ್ನು ಬರುವಷ್ಟರಲ್ಲಿ ಟಿಕೆಟ್ ಚೆಕ್ಕರನಿಗೆ ವಿಪರೀತವಾಗಿ ಹೊಟ್ಟೆಕಡಿತ ಬಂದಿತ್ತು ಅವನು ‘ಸ್ವಾಮಿ ಕ್ಷಮಿಸಿ’ ಎಂದು ಗೋಗರೆದನು ಅವನಿಗೆ ಶ್ರೀಗಳವರು ಅಭಯಹಸ್ತ ತೋರಿದರು. ಅವನು ತುಸು ಹೊತ್ತಿನಲ್ಲಿ ಸ್ವಸ್ಥನಾಗಿ ಬಂದು ಮತ್ತೆ ಶ್ರೀಗಳವರಿಗೆ ನಮಸ್ಕರಿಸಿ ಯೋಗ್ಯವಾದ ಕಂಪಾರ್ಟಮೆಂಟನಲ್ಲಿ ನಮಗೆ ಸ್ಥಳ ಮಾಡಿಕೊಟ್ಟನು. ಶ್ರೀಗಳವರನ್ನು ಪವಾಡ ಪುರುಷರೆಂದು ಕಾಣುವುದಕ್ಕಿಂದ ಅವರೊಬ್ಬ ಸತ್ಕ್ರಿಯಾನಿಷ್ಠ ವಿರಕ್ತಸ್ವಾಮಿ ಮತ್ತು ನಿಸ್ವಾರ್ಥ ಸಮಾಜೋದ್ಧಾರಕ ಕಾರಕರ್ತರೆಂದು ಬಗೆಯುವಲ್ಲಿಯೇ ಅವರ ವ್ಯಕ್ತಿತ್ವದ ಘನತೆ-ಗೌರವ ಮೆರಗು ಮೂಡಿ ಮಿಂಚುತ್ತದೆ

ಲೇಖಕರು: ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ : ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦.

ಸಂಗ್ರಹ ಸಹಕಾರ

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ೧೯-೨-೩೦ ನೇ ದಿವಸ ಸಂಜೆಯ ೬ ವರೆ ಗಂಟೆಗೆ ಶಿವಯೋಗಮಂದಿರದಲ್ಲಿ ಲಿಂಗೈಕ್ಯರಾದದ್ದಕ್ಕೆ ನಾವು ಅತ್ಯಂತ ವಿಷಾದಪಡುತ್ತೇವೆ. ಕರ್ನಾಟಕದಲ್ಲಿ ಆಗಿ ಹೋದ ಮಹಾಪುರುಷರಲ್ಲಿ ಇವರನ್ನು ನಾವು ಅವಶ್ಯವಾಗಿ ಗಣಿಸಬಹುದಾಗಿದೆ. ಇವರು ಜೀವಿತಕಾಲದಲ್ಲಿ ಸಾರ್ವಜನಿಕ ಹಿತಕ್ಕಾಗಿ ಎಡೆಬಿಡದೆ ದುಡಿದರು. ಅವರು ಅನೇಕ ಮಹತ್ವದ ಕಾರ್ಯಗಳನ್ನು ಮಾಡುತ್ತ ಬಂದರು. ಇಡೀ ಕರ್ನಾಟಕವು ಅದರಲ್ಲಿ ವಿಶೇಷವಾಗಿ ವೀರಶೈವ ಸಮಾಜವು ಇವರಿಗೆ ಅತ್ಯಂತ ಋಣಿಯಾಗಿರುವದು.

ಸಮಾಜವು ಹಿಂದೆ ಬಿದ್ದ ಕಾಲಕ್ಕೆ ಅದನ್ನು ಮುಂದಕ್ಕೆ ದೂಡಲು ಒಬ್ಬಾನೊಬ್ಬನು ಮೊದಲು ಪ್ರವೃತ್ತನಾಗುತ್ತಾನೆ. ಅವನು ಈ ಪ್ರಕಾರ ಉದ್ಭವಿಸಿ ಅದಕ್ಕೆ ಯೋಗ್ಯ ದಾರಿಯನ್ನು ತೋರಿಸಿಕೊಡುತ್ತಾನೆ. ಆ ಮೇಲೆ ಅವನ ತರುವಾಯ ಅವನು ಹಾಕಿಕೊಟ್ಟ ಹಾದಿಯಂತೆ ಸಮಾಜವು ಕೆಲದಿವಸ ಹೋದ ಬಳಿಕ ಅದು ಪುನಃ ಸ್ತಬ್ಧವಾಗುವ ಪ್ರಸಂಗವು ಬರಲು ಮತ್ತೊಬ್ಬರು ಉತ್ಪನ್ನರಾಗಿ ಅದರಲ್ಲಿ ಹೊಸ ಚೈತನ್ಯವನ್ನು ಹುಟ್ಟಿಸುತ್ತಾರೆ. ಇಂಥವರೆಲ್ಲರೂ ಮಹಾವಿಭೂತಿಗಳೇಸರಿ. ಇಂಥವರ ವರ್ಗ ದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಇರುತ್ತಾರೆ. ಹೋದ ಶತಮಾನದ ಮಧ್ಯದಲ್ಲಿ ಬರೇ ಲಿಂಗಾಯತರಿಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಯೋಗ್ಯ ಹಾದಿಯನ್ನು ತೋರಿಸಿ ಕೊಟ್ಟವರು ಕೈ ನಾ. ಚನಬಸಪ್ಪ ಧಾರವಾಡ ಇರುತ್ತಾರೆ. ಕರ್ನಾಟಕತ್ವದ ಬೀಜಾರೋಪಣವನ್ನು ಕನ್ನಡ ನಾಡಿನಲ್ಲಿ ಮೊದಲು ಊರಿದವರು ಇವರೇ ಇದ್ದಾರೆ. ಇವರ ಕಾಲಕ್ಕೆ ಅನೇಕ ವಿದ್ವಾಂಸರು ಹುಟ್ಟಿ ಕನ್ನಡವನ್ನು ಬೆಳಕಿಗೆ ತಂದರು.ಆ ಮೇಲೆ ಕೈ. ವಾ. ಗುರುಸಿದ್ಧಪ್ಪ ಗಿಲಗಂಚಿ ಮತ್ತು ರಾ ಬ ರುದ್ರಗೌಡ ಅರಟಾಳ ಇವರು ವೀರಶೈವ ಸಮಾಜದಲ್ಲಿ ಉತ್ಪನ್ನರಾಗಿ ಆಧುನಿಕ ಸಂಸ್ಕೃತಿಯ ಜ್ಞಾನವನ್ನು ಹಬ್ಬಿಸಲಿಕ್ಕೆ ಪ್ರಯತ್ನಿಸಿದರು. ಈ ಮಹನೀಯರು ತಮ್ಮ ಪ್ರಯತ್ನಗಳನ್ನು ೧೫-೨೦ ವರ್ಷ ನಡಿಸುವಷ್ಟರಲ್ಲಿಯೇ ಶ್ರೀ, ಹಾನಗಲ್ಲ ಕುಮಾರ ಸ್ವಾಮಿಗಳು ಮುಂದಕ್ಕೆ ಬಂದು ವೀರಶೈವ ಸಮಾಜದಲ್ಲಿ ಧರ್ಮದ ನಿಜವಾದ ಸಂಸ್ಕೃತಿಯನ್ನು ಹಬ್ಬಿಸಲಿಕ್ಕೆ ಕಾರಣವಾದರು. ಧರ್ಮ ಸಂಸ್ಕೃತಿಯೇ ಸಮಾಜದ ತಳಹದಿಯಾಗಿರುತ್ತದೆಂದು ಭಾವಿಸಿ ಅದಕ್ಕೋಸ್ಕರವೇ ಅವರು ತಮ್ಮ ಇಡೀ ಆಯುಷ್ಯವನ್ನೇ ಅರ್ಪಿಸಿದರು.

ವೀರಶೈವ ಮಹಾಸಭೆಯು ಇರುವ ವರೆಗೆ ವೀರಶೈವ ಜನ ಸಮುದಾಯದಲ್ಲಿ ಅದು ವಿಶೇಷ ಚಳವಳಿಯನ್ನು ಹಬ್ಬಿಸಲಿಕ್ಕೆ ಸಾಧನೀಭೂತವಾಯಿತು. ಅದರ ಮೂಲಕ ಸಾರ್ವಜನಿಕ ಕಾರ್ಯ ಮಾಡಲಿಚ್ಛಿಸುವವರಿಗೆ ತಮ್ಮ ಚಳವಳಿಗಳನ್ನು ಸಾಗಿಸಲಿಕ್ಕೆ ಬಹಳ ಉಪಯೋಗವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಮಹಾಸಭೆಯನ್ನು ಆರಂಭಿಸಿ, ಅದರ ೭-೮ ಅಧಿನಿವೇಶನಗಳಲ್ಲಿ ಪ್ರತ್ಯಕ್ಷ ಕಾರ್ಯ ಮಾಡಿ.ಜನರಲ್ಲಿ ಜಾಗ್ರತೆಯನ್ನು ಹುಟ್ಟಿಸಿದರು. ಇದು ಅವರು ಮಾಡಿದ ಮಹತ್ವದ ಕಾರ್ಯವಾಗಿದೆ. ಶ್ರೀ ಸ್ವಾಮಿಗಳು ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಉತ್ಸುಕರಾದ್ದರಿಂದ ಮಹಾಸಭೆಯು ಜಾಗ್ರತೆಯ ಮೂಲಕ ಅವರು ಬದಾಮಿ ಮಹಾಕೂಟದಲ್ಲಿ ಶಿವಯೋಗಮಂದಿರವೆಂಬ ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಅವರು ಮಾಡಿದ ಎರಡನೇ ಮಹತ್ವದ ಕಾರ್ಯವಾಗಿದೆ.

 

ಶಿವಯೋಗವು ವೀರಶೈವ ಧರ್ಮದಲ್ಲಿ ಒಂದು ವಿಶಿಷ್ಟ ಯೋಗಪದ್ಧತಿಯಾಗಿರುತ್ತದೆ. ಇದನ್ನು ಪ್ರಸಾರಗೊಳಸಬೇಕೆಂಬುದೇ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಮುಖ್ಯ ಧ್ಯೇಯವಾಗಿತ್ತು. ಇದಕ್ಕೋಸ್ಕರವಾಗಿಯೇ ಅವರು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಹೀಗೆ ಶಿವಯೋಗ ಮಂದಿರದಲ್ಲಿ ಶಿಕ್ಷಣಹೊಂದಿ ಮಠಾಧಿಕಾರಿಗಳು ಮಠಗಳಲ್ಲಿ ಪಟ್ಟಾಧ್ಯಕ್ಷರಾಗುವದರಿಂದ ಸಮಾಜದ ಪ್ರಗತಿಯು ಬಹು ಬೇಗನೆ ಆಗುವದೆಂದು ಅವರ ಪೂರ್ಣ ತಿಳುವಳಿಕೆಯಾಗಿತ್ತು. ಈ ದೃಷ್ಟಿಯಿಂದಲೇ ಅವರು ಈ ೨೨ ವರ್ಷಗಳ ವರೆಗೆ ಈ ಸಂಸ್ಥೆಯನ್ನು ನಡೆಸುತ್ತ ಬಂದರು.

ಈ ಶಿವಯೋಗ ಸಾಧನೆಗೋಸ್ಕರ, ಅತ್ಯಂತ ಬಿಗಿತರವಾದ ವರ್ತನೆಯು ಅವಶ್ಯವೆಂದು ಅವರ ಭರವಸೆ ಇದ್ದ ದರಿ೦ದ ಅವರು ಅಲ್ಲಿ ಶಿಕ್ಷಣ ಹೊಂದುವವರಿಗೆ ಬಹು ಕಟ್ಟಾಚರಣೆಗಳನ್ನು ಕಲ್ಪಿಸಿದರುಆ ಪ್ರಕಾರ ಈ ಆಚರಣೆಗೆ ಒಳಗಾಗಿ ಈ ಸಂಸ್ಥೆಯಿಂದ ಅನೇಕರು ಹೊರಬಿದ್ದು ಬಹುಕಡೆಗೆ ಮಠಾಧಿಕಾರಿಗಳಾಗಿದ್ದದ್ದೂ ಅವರು ಅನೇಕ ಬಗೆಯ ಸಮಾಜ ಕಾರ್ಯಗಳಲ್ಲಿ ತೊಡಗಿದ್ದೂ ತೋರಿಬರುತ್ತಿದೆ. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದ ಈ ಕಾರ್ಯವು ಸಾಮಾನ್ಯವಾದುದಲ್ಲ.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಪ್ರಕಾರ ಕೇವಲ ಧಾರ್ಮಿಕ ಭಾವನೆಯುಳ್ಳವರಾಗಿದ್ದರೂ ಅವರು ವ್ಯವಹಾರವನ್ನು ತಿರಸ್ಕರಿಸಿಬಿಡಲಿಲ್ಲ. ಅವರು ಆಧುನಿಕ ಸುಧಾರಣೆಗಳನ್ನು ಕೈಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು. ಅವರು ಅಸಂಖ್ಯ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ದೊರಕಿಸಲು ಬಹಳ ಸಹಾಯ ಮಾಡಿದರು. ಮತ್ತು ತಮ್ಮ ಶಿವಯೋಗಮಂದಿರದಲ್ಲಿಯೇ ಒಂದು ಇಂಗ್ಲಿಷ್ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದರು. ಅವರು ಶಿವಯೋಗಮಂದಿರದ ಹಣದಿಂದಲೇ ಗಿರಣಿಯನ್ನು ಸ್ಥಾಪಿಸಿದ್ದು ಅದು ಯಾವಾಗಲೂ ಊರ್ಜಿತ ಸ್ಥಿತಿಯಲ್ಲಿಯೇ ಇದೆ. ಅವರು ಶಿವಯೋಗಮಂದಿರದ ಜಮೀನುಗಳಲ್ಲಿ ಹೊಸ ತರದ ಒಕ್ಕಲುತನ ಸುಧಾರಣೆಗಳನ್ನು ಕೈಕೊಳ್ಳಲು ಬಹಳ ಆತುರ ಪಡುತ್ತಿದ್ದರು. ಮತ್ತು ಈ ದೃಷ್ಟಿಯಿಂದಲೇ ಅವರು ಅನೇಕ ಕಡೆಗೆ ಶಿವಯೋಗಮಂದಿರಕ್ಕೋಸ್ಕರ ಜಮೀನುಗಳನ್ನು ಸಂಪಾದಿಸಿರುವರು. ಅವರ ಮನಸ್ಸಿನಲ್ಲಿ ಶಿವಯೋಗ ಮಂದಿರದ ಮುಖಾಂತರ ಇಡೀ ದೇಶದಲ್ಲಿ ಧಾರ್ಮಿಕ ಪ್ರಚಾರ ಕಾರ್ಯಮಾಡಬೇಕೆಂದು ಬಹಳ ಇದ್ದ ದರಿಂದ ಅವರು ಅನೇಕ ಕಡೆಗೆ ಕೀರ್ತನಕಾರರೂ ಉಪನ್ಯಾಸಕರೂ ಹೋಗಿ ಉಪದೇಶ ಮಾಡಲು ಬಹಳ ಪ್ರೋತ್ಸಾಹಿಸುತಿದ್ದರು. ಹಾಗೆಯೇ ಅವರು ಗವಾಯಿಗಳಿಗೂ ಉತ್ತೇಜನ ಕೊಡುತ್ತಿದ್ದರು. ಎಲ್ಲಿಯಾದರೂ ಸಭೆಗಳಾಗುತ್ತಿದ್ದರೆ, ಅವರಿಗೆ ಆಮಂತ್ರಣ ಬರುವದೇ ತಡ, ಅವರು ಅವುಗಳಿಗೆ ತಪ್ಪದೇ ಹೋಗುತ್ತಿದ್ದರು. ಮತ್ತು ಅವರು ಹೋದಲ್ಲಿ ಬಂದ ಜನರಿಗೆ ಉಚ್ಚ ತರದ ಸಮಾಜ ಸುಧಾರಣೆಯ ವಿಚಾರಗಳನ್ನೇ ಹೇಳುವರು. ಅವರ ಈ ಶ್ರೇಷ್ಠ ವರ್ತನೆಗೆ ಜನರು ಅತ್ಯಂತ ಪೂಜ್ಯಭಾವವನ್ನು ತಾಳಿದವರಾಗಿ ಅವರ ನುಡಿಗಳನ್ನು ಅತ್ಯಾದರದಿಂದ ಆದರಿಸುವರು. ಅವರ ಸಾನ್ನಿಧ್ಯದಲ್ಲಿ ಯಾವಾಗಲೂ ಉಚ್ಚ ವಿಚಾರತರಂಗಗಳೇ ಹೊರಡುತ್ತಿದ್ದವು. ಕೆಡಕಿಗೆ ಅದರಲ್ಲಿ ಆಸ್ಪದವಿರಲಿಲ್ಲ.

ನಮ್ಮ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಈಗಿನ ಕಾಲಕ್ಕೆ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಂತೆ ವರ್ತಿಸಿ ಹೋದರು.(ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈಗಿನ ಕಾಲದಲ್ಲಿ ಷಟ್ಸ್ಥಲ ಶಾಸ್ತ್ರದಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು.ಅವರ ಮರ್ಮಗಳು ಅವರಿಗೆ ಗೊತ್ತಿದ್ದಷ್ಟು ಬೇರೆ ಯಾರಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ. ವಚನ ಶಾಸ್ತ್ರದಲ್ಲಿ ಅವರು ಪಾರಂಗತರಾದ್ದರಿಂದಲೇ ಆಗ.ಅವರು ಈ ಸಂಗತಿಗಳು ಅವರಿಗೆ ಪೂರ್ಣ ಮನವರಿಕೆಯಾಗಿದ್ದವು. ಅವರ ಬಗ್ಗೆ ಈ ಸಂಗತಿಯನ್ನು ನಾವು ಸ್ವತಃ ಬಲ್ಲೆನು. ನಾನು ವಚನ ಶಾಸ್ತ್ರಸಾರ ೧ ನೇ ಭಾಗವನ್ನು ರಚಿಸಿದ ಕಾಲಕ್ಕೆ ಈ ಸಂಗತಿಯನ್ನು ಅವರು ಕೇಳಿದ ಕೂಡಲೆ ಅವರು ಕೆಲವು ಶಾಸ್ತ್ರಿಗಳನ್ನು ಕರೆದುಕೊಂಡು ವಿಜಾಪುರಕ್ಕೆ ಸಮಕ್ಷಮ ಬಂದು ಆ ಗ್ರಂಥದ ಬಹು ಭಾಗವನ್ನು ನನ್ನಿಂದ ಓದಿಸಿದರು.ನಾನು ವಿಷಮಜ್ವರದಿಂದ ಅಶಕ್ತನಾಗಿದ್ದ ಕಾರಣ ತಾವೇ ವಿಜಾಪುರಕ್ಕೆ ಹೀಗೆ ಕೇಳಲಿಕ್ಕೆ ಬಂದಿದ್ದರ ಮೇಲಿಂದ ಅವರು ಈ ವಿಷಯದ ಬಗ್ಗೆ ಎಷ್ಟು ಮಹತ್ತರ ಪ್ರೀತಿಯುಳ್ಳವರಾಗಿದ್ದರೆಂಬುದು ಯಾರಾದರೂ ಊಹಿಸಬಹುದಾಗಿದೆ. ಮತ್ತು ಅವರೇ ಈ ಗ್ರಂಥವನ್ನು ಅಚ್ಚುಹಾಕಲು ನನಗೆ ಉತ್ತೇಜನ ಕೊಟ್ಟರು. ಅವರು ಶಿವಯೋಗಮಂದಿರದಲ್ಲಿ ಅಸಂಖ್ಯ ಪುರಾತನ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿರುವರು. ಅವುಗಳಲ್ಲಿ ಅನೇಕವುಗಳು ಬಹಳ ಬೆಲೆಯುಳ್ಳ ಗ್ರಂಥಗಳಾಗಿವೆ. ನನಗೆ ಬೇಕಾಗುವ ಗ್ರಂಥಗಳ ಬಗ್ಗೆ ಶಿವಯೋಗಮಂದಿರಕ್ಕೆ ನಾನು ಬರೆದ ಕೂಡಲೇ ಅವರು ಅವುಗಳನ್ನ ನನ್ನ ಕಡೆಗೆ ತಪ್ಪದೆ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದರು. ಇದರ ಮೇಲಿಂದ ಧಾರ್ಮಿಕ ಶೋಧ ಮಾಡುವವರಿಗೆ ಅವರು ಎಷ್ಟು ಪ್ರೋತ್ಸಾಹಿಸುತ್ತಿದ್ದರೆಂಬದು ತಿಳಿದು ಬರುತ್ತದೆ.

ಶ್ರೀ ಸ್ವಾಮಿಗಳು ಸಮಾಜದಲ್ಲಿ ರೂಢವಾಗಿರುವ ಭೇದಗಳನ್ನು ಮುರಿಯಲಿಕ್ಕೆ ಯಾವಾಗಲೂ ಬಹಳ ಪ್ರಯತ್ನಿಸುತ್ತಿದ್ದರು. ಇದಕ್ಕೋಸ್ಕರ ಅವರು ಕರ್ನಾಟಕದಲ್ಲೆಲ್ಲ ಬಹಳ ಸುಚಾರಮಾಡುತ್ತ ಬಂದರು. ಯಾವ ಊರಲ್ಲಾದರೂ ಏನಾದರೂ ತಂಟೆಗಳು ಉತ್ಪನ್ನನಾದರೆ ಸಾಕು, ಅವರನ್ನು ಕರೆಯಲಿಕ್ಕೆ ಯಾರಾದರೂ ಬಂದರೆ ಅವರು ತಟ್ಟನೇ ಅಲ್ಲಿಗೆ ಹೋಗಿಎಲ್ಲ ಜನರಿಗೂ ಸಮಾಧಾನ ಹೇಳಲು ಸಿದ್ಧರಾಗಿರುತ್ತಿದ್ದರು. ಈ ವಿಷಯದಲ್ಲಿ ಅವರು ತೋರಿ ಸುತ್ತಿನ ಚಟುವಟಿಕೆಗಳು ಅವರ್ಣನೀಯವಾಗಿರುತ್ತವೆ. ಇದರಲ್ಲಿ ಅವರು ಜನರು ಸರಿಯಾಗಿ ನಡೆಯಬೇಕೆಂದು ಅಭಿಲಾಷೆಯೇ ಹೊರ್ತು ಬೇರೆ ಯಾವ ಉದ್ದೇಶವೂ ಇರಲಿಲ್ಲ. ಇದರಿಂದ ಅವರು ಎಲ್ಲರಿಗೂ ಬೇಕಾಗಿದ್ದರು. ಅವರು ಮಾಡಿದ ಮತ್ತೊಂದು ಮಹತ್ವದ ಕಾರ್ಯವೆಂದರೆ, ಸಮಯ ಭೇದಗಳನ್ನು ಮುರಿದದ್ದು, ವಿರಕ್ತ ವರ್ಗದವರಲ್ಲಿರುವ ಈ ಭೇದಗಳ ಮೂಲಕ ದೇಶದಲ್ಲಿ ಅನೇಕ ಮನಸ್ತಾಪಗಳು ಬಹು ದಿವಸಗಳಿಂದಲೂ ನಡೆದಿದ್ದವು. ಆದರೆ ಶ್ರೀ ಸ್ವಾಮಿಗಳವರು ಈ ಸಮಯಗಳನ್ನು ಸಂಪೂರ್ಣ ಮುರಿದುಹಾಕಿದರು. ಇದರ ಶ್ರೇಯಸ್ಸು ಇವರಿಗೇ ಇರುತ್ತದೆ. ಇವರಿಂದ ಈಗ ಮುರಿಗೀ, ಕುಮಾರ, ಕೆಂಪಿನ,ಚಿಲ್ಲಾಳ ಎಂಬ ಸಮಯ ಭೇದಗಳು ಬಹಳ ಕಡಿಮೆಯಾಗಿವೆ. ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಈ ಪ್ರಕಾರ ಒಂದು ಮಹತ್ತರವಾದ ಕಾರ್ಯವನ್ನು ಸಮಾಜಕ್ಕೆ ಮಾಡಿರುವರು.

ಶ್ರೀ ಸ್ವಾಮಿಗಳು ದೀರ್ಘೋದ್ಯೋಗಿಗಳು, ಸ್ವಲ್ಪ ತೊಂದರೆ ಬಂದ ಕೂಡಲೇ ಅವರು ಎಂದೂ ಹಿಂದೆಗೆಯುವವರಲ್ಲ. ಮಹಾಕೂಟ ಸ್ಥಾನದಲ್ಲಿ ಮಂದಿರವನ್ನು ಸ್ಥಾಪಿಸಿದ ವರುಷ ಅವರಿಗೆ ಅನೇಕ ತೊಂದರೆಗಳು ಉತ್ಪನವಾದವು. ಈ ಪ್ರದೇಶವು ವನ್ಯಮೃಗಗಳಿ೦ದ ತುಂಬಿದ ಅರಣ್ಯ ಭಾಗವು.ಆಗ ಅಲ್ಲಿ ಇರಲಿಕ್ಕೆ ಸ್ಥಳವಿಲ್ಲ. ಅಲ್ಲಿ ಇದ್ದವರಿಗೆ ಭಯಂಕರ ಮಲೇರಿಯ ಜ್ವರವು ವ್ಯಾಪಿಸಿತು. ಆಗ ಆನೇಕರು ಶ್ರೀ ಸ್ವಾಮಿಗಳಿಗೆ ಈ ಕಾರ್ಯವನ್ನು ಬಿಟ್ಟು ಕೊಡಲು ಉಪದೇಶಿಸಿದರು.ಆದರೆ ಶ್ರೀ ಸ್ವಾಮಿಗಳು ಅಚಲವಾದ ಧೈರ್ಯದಿಂದ ಆ ಸ್ಥಳದಲ್ಲಿಯೇ ಇದ್ದುಕೊಂಡು ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಹಣವನ್ನು ಶೇಖರಿಸಿ ಇರಲಿಕ್ಕೆ ಕಟ್ಟಡ ಗಳನ್ನೂ ಯೋಗ್ಯ ಜಲಾಶಯವನ್ನೂ ಬೇಕಾದ ವ್ಯವಸ್ಥೆಗಾರರನ್ನೂ ಏರ್ಪಡಿಸಿಕೊಂಡು ಆ ನಿರ್ಜನ ಪ್ರದೇಶವನ್ನು ಊರ್ಜಿತಸ್ಥಿತಿಗೆ ತಂದರು. ಒ೦ದುಸಂಸ್ಥೆಯನ್ನು ಸ್ಥಾಪಿಸುವದು ದುಸ್ತರವು. ಆದರೆ ಅದನ್ನು ಕೈಕೊಂಡು ಶಾಶ್ವತ ತಳಹದಿಯ ಮೇಲೆ ಹಾಕುವದು ಎಲ್ಲಕ್ಕೂ ದುಸ್ತರವಾದ ಕೆಲಸವು. ಈ ಕಾರ್ಯವು ಒಬ್ಬ ಯೋಜಕನ ಹೊರ್ತು ಯಾರಿಗೂ ಆಗಲಾರದು. ಇಂಥ ಯೋಜನಾ ಸಾಮರ್ಥ್ಯವನ್ನು ಶ್ರೀ ಹಾನಗಲ್ಲ ಕುಮಾರ ಸ್ವಾಮಿ ಗಳು ಪಡೆದದ್ದರಿಂದಲೇ ಅವರಿ೦ದ ಈ ಮಹತ್ಕಾರ್ಯವು ಸಿದ್ಧಿಸಿತು.) ಶ್ರೀ ಸ್ವಾಮಿಗಳು ಧರ್ಮದ ಮತ್ತು ಸಮಾಜದ ಯೋಗ್ಯತೆಗೆ ಕುಂದು ಬರುವ ಪ್ರಸಂಗಗಳು ಬಂದ ಕೂಡಲೇ ಅವರಲ್ಲಿ ಒಂದು ವಿಲಕ್ಷಣ ಶಕ್ತಿಯೇ ಉತ್ಪನ್ನವಾಗುತ್ತಿತ್ತು. ಅವರ ಆಯುಷ್ಯದಲ್ಲಿ ಈ ಬಗೆಯ ಅನೇಕ ಪ್ರಸಂಗಗಳು ಒದಗಿದವು. ೧೯೦೨ ರಲ್ಲಿ ಹುಬ್ಬಳ್ಳಿಯಲ್ಲಿ ಶ್ರೀಜಗದ್ಗುರು ಗುರುಸಿದ್ಧ ಮಹಾಸ್ವಾಮಿಗಳವರ ಆಂದೋಲನೋತ್ಸವಕೆ ಆತಂಕ ಬರಲು ಅದರಲ್ಲಿ ಅವರು ಬಹಳ ಸಾಹಸಮಾಡಿದರು. ೧೯೧೯ ನೇ ಇಸ್ವಿಯಲ್ಲಿ ಮಹಾಸಭೆಯನ್ನು ಮಾಡುವ ಕಾಲಕ್ಕೆ ಶ್ರೀ ಉಜ್ಜಿನಿ ಮಹಾ ಪೀಠದಲ್ಲಿದ್ದ ವ್ಯಾಜ್ಯಗಳು ಅಡ್ಡ ಬರುವವೆಂದು ತಿಳಿದ ಕೂಡಲೆ ಅವರು ಅನೇಕ ಮಹನೀಯರನ್ನು ಕರೆದುಕೊಂಡು ಹೋಗಿ ಅವುಗಳನ್ನು ಸರಿಪಡಿಸಲು ಪ್ರಯತ್ನಿಸಿದರು. ಪರಳೀವ್ಯಾಜ್ಯದಲ್ಲಿ ಅವರು ಮಾಡಿದ ದೀರ್ಘೋದ್ಯೋಗಗಳು ಎಲ್ಲರಿಗೂ ಗೊತ್ತೇ ಇವೆ. ಆ ಕಾಲಕ್ಕೆ ಅವರು ಅನೇಕ ಶಾಸ್ತ್ರಿಗಳನ್ನು ಬರಮಾಡಿಕೊಂಡು ವ್ಯಾಜ್ಯಕ್ಕೆ ಬೇಕಾಗುವ ಎಲ್ಲ ಸಲಹೆಗಳನ್ನು ಒದಗಿಸಿ ಕೊಟ್ಟರು. ಇಷ್ಟೇ ಅಲ್ಲ, ಅದಕ್ಕೆ ಹಣದ ಅಡಚಣಿಯಾಗಲು ದೇಶ ಮಧ್ಯದಲ್ಲಿ ಹೋಗಿ ಬಹಳ ಶ್ರಮಪಟ್ಟು ಹಣವನ್ನು ಕೂಡಿಸಿ ಕಾರ್ಯಕ್ಕೆ ವಿಶೇಷ ಸಹಾಯವಾದರು. ಈ ಬಗೆಯ ಉದಾಹರಣೆಗಳು ಅವರ ಆಯುಪ್ಯದಲ್ಲಿ ಅಸಂಖ್ಯಾತವಾಗಿರುತ್ತವೆ.

ಈ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ತಮ್ಮ ಆಯುವ್ಯವನ್ನೆಲ್ಲ ಧರ್ಮ ಜಾಗ್ರತಿ, ಸಮಾಜ ಸುಧಾರಣೆಗೋಸ್ಕರ – ವೆಚ್ಚ ಮಾಡಿ ದರು. ಅವರು ೧೮೬ ೭ ನೇ ಇಸ್ವಿಯಲ್ಲಿ ಜನಿಸಿ ತಮ್ಮ ಆಯ ವ್ಯವ ೬೩ ನೇ ವರ್ಷದಲ್ಲಿ ಲಿಂಗೈಕ್ಯರಾದರು. ಅವರು ಸಮಾಜ ಕಾರ್ಯಗಳನ್ನು ತಮ್ಮ ವಯಸ್ಸಿನ ೨೨ ನೇ ವರ್ಷದಲ್ಲಿ ಆರಂಭಿಸಿ ಅವುಗಳಲ್ಲಿಯೇ ತಮ್ಮ ದೇಹವನ್ನು ಸವಿಸಿದರು.ಇಂಥ ಮಹಾನುಭಾವರಿಗೋಸ್ಕರ ಸಮಾಜ ವೆಲ್ಲವು ಚಿರಋಣಿಯಾಗಿರುತ್ತದೆ. ಈಗಿನ ಕಾಲಕ್ಕೆ ಶಿವಯೋಗಮಂದಿರದಲ್ಲಿಯೇ ಶ್ರೀ ಸ್ವಾಮಿಗಳವರು ಲಿಂಗೈಕ್ಯರಾಗಿದ್ದು ಈ ಸಂಸ್ಥೆಯನ್ನು ಅತ್ಯುತ್ಕೃಷ್ಟ ರೀತಿಯಿಂದ ನಡಿಸುವದರಲ್ಲಿಯೇ ಅವರ ನಿಜವಾದ ಸ್ಮಾರಕವಿರುತ್ತದೆ. ಇದು ಉಚ್ಚ ತಮಸ್ಥಿತಿಗೆ ಬರಲಿಕ್ಕೆ ಅವಶ್ಯವಾಗಿರುವ ಎಲ್ಲ ಸಾಮಗ್ರಿಗಳನ್ನು ಅವರು ಏರ್ಪಡಿಸಿರುವರು, ಈ ಸಾಮಗ್ರಿಗಳನ್ನು ಸರಿಯಾಗಿ ಉಪಯೋಗಿಸುವದರಲ್ಲಿಯೇ ಸಮಾಜದ ಉತ್ಕೃಷ್ಟತೆ ಮತ್ತು ಯೋಗ್ಯತೆಯು ಇರುತ್ತದೆ. ಈ ಬಗ್ಗೆ ಅದರ ಟ್ರಸ್ಟಿಗಳು ಜಾಗರೂಕರಾಗಿರಬೇಕೆಂದು ಅವರಿಗೆ ನಮ್ಮ ಸವಿನಯ ಸೂಚನೆಯಿದೆ. ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿದ ಈ ಮಂದಿರ ವನ್ನು ಈ ಪ್ರಕಾರ ಅತ್ಯುನ್ನತಸ್ಥಿತಿಗೆ ಒಯ್ದು ಅವರ ಕೀರ್ತಿಯನ್ನು ಇನ್ನು ಹೆಚ್ಚಾಗಿ ಬೆಳೆಯುವಂತೆ ಇವರು ಮಾಡಲೆಂದು ಹಾರೈಸಿ ನಾವು ನಮ್ಮ ಲೆಕ್ಕಣಿಕೆಯನ್ನು ಇಲ್ಲಿಯೇ ನಿಲ್ಲಿಸುತ್ತೇವೆ.

ಲೇಖಕರು :ಪೂಜ್ಯ ವಿಜಯಪ್ರಭು ದೇವರು ಬೂದಗುಂಪ

                    ಪ್ರಿಯ ಸಹೃದಯರೆ ಭವ್ಯ ಭಾರತದ ದಿವ್ಯ    ಪರಂಪರೆಯಲ್ಲಿ ಹಲವಾರು ಋಷಿ ಮುನಿಗಳು, ಸಂತ ಮಹಾಂತರು ಉದಯಿಸಿ ಈ ನೆಲವನ್ನು ಪಾವನ ಗೊಳಿಸಿದರು. ಅಂತಹ ಮಹಾತ್ಮರ ಮಾರ್ಗದರ್ಶನ ,  ದೇಶದಸಂಸ್ಕೃತಿ,ಮಾತೃಭಾಷೆಯನ್ನು ಮರೆತು ಆಂಗ್ಲರ ಆಳ್ವಿಕೆಗೆ ಒಳಪಟ್ಟು ಕೇವಲ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ತಮ್ಮನ್ನೇ ತಾವು ಮರೆತಿರುವ ದುರಂತದ ಸನ್ನಿವೇಶ ಅದು 19ನೇ ಶತಮಾನ. ವಿದೇಶಿಯ ಜೀವನ ಕೇವಲ ”ಲರ್ನಿಂಗ್” ಮತ್ತು ”ಅರ್ನಿಂಗ್” ಕಲಿಸುತ್ತೆ. ಆದರೆ ಭಾರತೀಯ ಸಂಸ್ಕೃತಿ ಇವೆರಡರ ಜೊತೆ “ಲಿವಿಂಗ್” ಸಹ ಕಲಿಸುತ್ತೆ.

ಈ ಸಾಂಸ್ಕೃತಿಕ ಶ್ರೀಮಂತ ದೇಶವನ್ನು ಆರ್ಥಿಕವಾಗಿ ಉನ್ನತ ಗೊಳಿಸಬೇಕಾದರೆ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣ, ಧರ್ಮವಂತ, ಸಂಸ್ಕಾರವಂತ, ವಿಚಾರವಂತ ನಾಗಬೇಕು. ಇಲ್ಲಿನ ಬಡತನ ಹಾಗೂ ನಿರಕ್ಷರತೆ ಇವೆರಡನ್ನು ಮುಕ್ತ ಗೊಳಿಸಿದಾಗ ಮತ್ತೆ ಜಗದ್ಗುರು ಭಾರತವನ್ನು ಕಾಣಲು ಸಾಧ್ಯ. ಹೀಗೆ ಸದೃಢ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಸಾಕ್ಷರರಾಗಬೇಕು,ಧರ್ಮವಂತ ರಾಗಬೇಕು, ಅಂತಹ ಮಾರ್ಗದರ್ಶನ ತೋರಲು ಸಮಾಜೋದ್ಧಾರದ ಸತ್ಯ ಸಂಕಲ್ಪವನ್ನು ಹೊತ್ತು ಅವತರಿಸಿದ ಶಿವಾವತಾರಿಗಳೇ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು.                                                                                                                        19ನೇ  ಶತಮಾನ ಉತ್ತರಾರ್ಧದ ಸಮಾಜದ  ಸರ್ವತೋಮುಖ ಅಭಿವೃದ್ಧಿಗೆ   ಹಲವಾರು ಯೋಜನೆಗಳನ್ನು ರೂಪಿಸಲು ಭಕ್ತರ  ಬಾಳಿನ ಸಂಕಷ್ಟ ಪರಿಹರಿಸಲು, ದೀನ-ದಲಿತರಿಗೆ, ಅಂಧ-ಅನಾಥರಿಗೆ ದಾರಿ ತೋರಲು, ಸ್ವಾಮಿತ್ವದ ಘನತೆ ಹೆಚ್ಚಿಸಲು, ನಾಡು-ನುಡಿ-ಭಾಷೆಯ ಮರ್ಮ  ತಿಳಿಯದೆ ಅಂಧಕಾರದಲ್ಲಿ ಮುಳುಗಿ ಬಾಡಿಹೋಗಿರುವ ಸಮಾಜಕ್ಕೆ ಶಿಕ್ಷಣ, ಅಧ್ಯಾತ್ಮ, ಶಿವಯೋಗ  ಎಂಬ ನೀರು ಗೊಬ್ಬರ ಎರೆದು ಮತ್ತೆ  ನವಸಮಾಜವನ್ನು ನಿರ್ಮಿಸಿ ಸಮಾಜಕ್ಕೆ ಚೈತನ್ಯ ತುಂಬಿ,

“ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂಬ ಶರಣರ ವಾಣಿಗೆ ವ್ಯಾಖ್ಯಾನವಾಗಿ ಬಂದವರು ಶ್ರೀ ಕುಮಾರ ಶಿವಯೋಗಿಗಳು.

                ಮುಖ್ಯವಾಗಿ ಶಿವಮತ ಅವನತಿಯತ್ತ ಸಾಗುತ್ತಿರುವಾಗ,   ಲಿಂಗತತ್ವವ ಮರೆತು ಅಲೌಕಿಕ ವ್ಯವಹಾರದಲ್ಲಿ ಮುಳುಗಿ, ಬಸವಾದಿ ಪ್ರಮಥರ ಅನುಭಾವದ ವಚನಗಳು ಹುಳುಹತ್ತಿ ಹಾಳಾಗುತ್ತಿದ್ದ  ಸಂದರ್ಭದಲ್ಲಿ ಅಂತಹ ವಿಚಾರವನ್ನು ಭಕ್ತ ಸಮುದಾಯಕ್ಕೆ ವೀರಶೈವ ಮತದ ಆಚರಣೆಗಳನ್ನು ತಿಳಿಸುತ್ತ , ಪರಮತದ ಪ್ರಭಾವಕ್ಕೆ ಒಳಗಾಗಿ ಶಿವಮತದ ಜನರು ತಮ್ಮ ಮತ-ಧರ್ಮದ ಮಹತ್ತನ್ನ ಗೌಣವಾಗಿಸಿಕೊಂಡು, ವಿದ್ಯೆಯನ್ನು ಕಲಿಯದೆ ವಂಚಿತರಾಗಿ, ಭಕ್ತ ಸಮುದಾಯ ಲಿಂಗಧಾರಣೆ ಹೊರತಾಗುತ್ತ ತಮ್ಮ ಬಾಳನ್ನೇ ಸಂಕಷ್ಟದಲ್ಲಿ ಮುಳುಗಿಸಿಕೊಂಡಿರುವ ಇಂತಹ ಸಮಾಜವನ್ನುದ್ಧರಿಸುವುದು ವೀರಶೈವ ಮತದ ಕೇಂದ್ರಗಳಾದ ಮಠಗಳ ಕಾರ್ಯ ಬಹಳ ಪ್ರಮುಖವಾಗಿದ್ದು ಎಂದು ತಿಳಿದು ಸಮಾಜದ, ಶಿವಮತದ ಏಳಿಗೆಗಾಗಿ ಅವಿರತ ಶ್ರಮಿಸಿದ ಶ್ರೇಯಸ್ಸು ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.

                ಯಾವುದೇ ಒಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ಕಾರ್ಯ, ಜಾಗೃತಗೊಳಿಸುವ ಕಾರ್ಯದಲ್ಲಿ ನಿಸ್ವಾರ್ಥ ಸೇವೆ, ಲೋಕ ಹಿತದೃಷ್ಠಿ, ಉನ್ನತಾದರ್ಶದ ಮೌಲ್ಯಗಳು ಇದ್ದಾಗ ಮಾತ್ರ ಆ ಕಾರ್ಯ ಫಲಕಾರಿಗುತ್ತದೆ ಎಂದು ಮನಗಂಡ ಶಿವಯೋಗಿಗಳು, ಒಂದು ಸಮಾಜದ ಧಾರ್ಮಿಕತೆ ಬೆಳೆದು ತಲೆಯೆತ್ತಿ ಹೆಮ್ಮರವಾಗ ಬೇಕಾದರೆ ಅಧ್ಯಾತ್ಮಿಕತೆ, ಶಿಕ್ಷಣ,ಧರ್ಮದ ತಿಳುವಳಿಕೆ ಇದ್ದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವೆಂದು ಅರಿತ ಶ್ರೀಗಳು ತಮ್ಮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ತೆರೆದರು., ಗುಲಾಮಗಿರಿಯಿಂದ ಬದುಕುತ್ತಿದ್ದ ಸಮಾಜವನ್ನು ಜಾಗೃತಗೊಳಿಸುವತ್ತ ಶ್ರೀಗಳು ಗಮನ ಹರಿಸಿದಿದ್ದರು.

               .

              ಶ್ರೀಮಠದಲ್ಲಿ ಬಡಮಕ್ಕಳಿಗೆ, ವಿದ್ಯಾಕಾಂಕ್ಷಿಗಳಿಗೆ ಒಳ್ಳೆಯ ಮಾರ್ಗದರ್ಶನ ಹಾಗೂ ವಿದ್ಯೆಯನ್ನು ನೀಡುವಂತಹ ಉಪಾಧ್ಯಾಯರನ್ನು ನಿಯಮಿಸಿದರು. ಅಷ್ಟೇ ಅಲ್ಲದೇ ಸ್ವತ: ಶ್ರೀಗಳೇ ಆ ಶಿಕ್ಷಕರಿಗೆ ಬೋಧನಾ ವಿಚಾರದ ಮಾರ್ಗದರ್ಶನ ನೀಡುತ್ತಿದ್ದರು.

                ಪ್ರಾಥಮಿಕ ಶಿಕ್ಷಣವಿಲ್ಲದೆ ಪರಕೀಯರ ಆಳ್ವಿಕೆಯ ತೊಳಲಾಟದಲ್ಲಿ ಸಿಲುಕಿ ವಿದೇಶಿ ಕಾಲಮಾನದ ಶಿಕ್ಷಣಕ್ಕೆ ಒಳಗಾಗಿ ನಮ್ಮ ಜನ  ಸಂಸ್ಕೃತಿಯನ್ನು ಮರೆತಿದ್ದಾರೆ. ಇಂತಹ ಮಕ್ಕಳಿಗೆ ಮಾತೃಭಾಷೆ, ದೇವಭಾಷೆಯಾದ ಸಂಸ್ಕೃತ ಶಿಕ್ಷಣ ಮುಖ್ಯವಾಗಿ ನೀಡಿಸಬೇಕು. ವಿದೇಶಿಗರ ದಿನಾಂಕ, ತಿಂಗಳುಗಳನ್ನು ಮರೆಸಿ ಭವ್ಯ ಭಾರತದ ಪರಂಪರೆಯಂತೆ ವಾರ-ತಿಥಿ-ನಕ್ಷತ್ರ-ಯೋಗ-ಕರಣದಂತ ಪಂಚಾಂಗ ಮರ್ಮ ಹಾಗೂ ಸಂವತ್ಸರ-ಮಾಸ-ಋತುಚಕ್ರ-ಪಕ್ಷಗಳ ಬಗ್ಗೆ ಹೀಗೆ ನಮ್ಮ ದೇಶಿ  ಪರಂಪರೆಯ ಶಿಕ್ಷಣ ನೀಡಲು ಶ್ರೀಗಳು ಶ್ರಮಿಸಿದರು. ಅಷ್ಟೇ ಅಲ್ಲದೆ ಒಳ್ಳೆ ವಿದ್ಯಾವಂತರನ್ನು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿ, ಕೊಲ್ಕತ್ತಾ ಇಂತಹ ಬೇರೆ ಬೇರೆ ಕಡೆ ಕಳಿಸಿಕೊಟ್ಟು ಅವರಿಗೆಲ್ಲ ಹಣದ ವ್ಯವಸ್ಥೆಯನ್ನು ಸಹಿತ ಶ್ರೀಗಳೇ ನೋಡಿಕೊಳ್ಳುತ್ತಿದ್ದರು. ಕೇವಲ ಶಿಕ್ಷಣವಲ್ಲದೆ ಸಂಗೀತ, ಕಲೆ ಹೀಗೆ ಮುಂತಾದ ವಿಷಯಗಳ ಕುರಿತು ತಮ್ಮ ಶ್ರೀಮಠದಲ್ಲಿ ಜ್ಞಾನದಾಸೋಹ ಮಾಡುತ್ತಿದ್ದರು.

                  ಒಂದು ದಿನ  ಕಾಡಶೆಟ್ಟಿ ಹಳ್ಳಿಯ ಹಕ್ಕಲ ಬಸವೇಶ್ವರ ಜಾತ್ರೆಗೆ ಭಕ್ತರ ಬಿನ್ನಹದಂತೆ ಕುಮಾರ ಶ್ರೀಗಳು ದಯಮಾಡಿಸಿರುತ್ತಾರೆ. ಅಲ್ಲಿನ ಕಾರ್ಯಕ್ರಮದಲ್ಲಿ ಹಾಡಿದ ಗುರುಬಸವಯ್ಯ ಮತ್ತು ಗದಿಗೆಯ್ಯ ಎಂಬ ಇಬ್ಬರು ಅಂಧ ಮಕ್ಕಳನ್ನು ಕಂಡು ಇಂತಹ ಮಧುರ ಕಂಠದಿಂದ ಹಾಡಿದ ಈ ಮಕ್ಕಳಿಗೆ ಸಂಗೀತ ಶಿಕ್ಷಣ ಕೊಡಿಸಿ ಒಳ್ಳೆಯ ಗಾಯಕರನ್ನಾಗಿಸಬೇಕೆಂದು ಶ್ರೀಗಳು ಇರ್ವರನ್ನು ನಮಗೆ ಕೊಡಿ ಇವರ ಭವಿಷ್ಯವನ್ನು ನಾವು ರೂಪಿಸುತ್ತೇವೆ ಎಂದು ಅಂಧ ಮಕ್ಕಳನ್ನ ತಮ್ಮ ಜೋಳಿಗೆಗೆ ಹಾಕಿಸಿಕೊಂಡು ತಮ್ಮ ಶ್ರೀ ಮಠದಲ್ಲಿಯೇ ಅವರಿಗೆ ಸಂಗೀತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು. ಸಂಸ್ಕೃತ, ವೇದ,ಉಪನಿಷತ್ತು,ಶಾಸ್ತ್ರಗಳ ಜೊತೆ ಸಂಗೀತ ಶಿಕ್ಷಣವು ಪ್ರಾರಂಭವಾಯಿತು.

               ಈ ಇರ್ವ ಅಂಧ ಬಾಲಕರಿಗೆ ಕರ್ನಾಟಕ ಸಂಗೀತ ಕಲಿಸಲು ತಂಜಾವೂರು ಗಾಯಕರನ್ನ ನೇಮಿಸಿದರು. ನಂತರ ಹೊಸಪೇಟೆಯ ಭೀಮರಾಯರೆಂಬ ಗಾಯಕರಿಂದ, ಶಿರಾಳಕೊಪ್ಪದಲ್ಲಿದ್ದ ಗದಿಗೆಯ್ಯರೆಂಬ ಗಾಯಕರಿಂದ ತಿಂಗಳಿಗೆ 25 ರುಪಾಯಿ ಬತ್ತೆ ನೀಡಿ ಶಿಕ್ಷಣ ಕೊಡಿಸಿದರು. ಕೇವಲ ಕರ್ನಾಟಕ ಸಂಗೀತವಷ್ಟೇ ಅಲ್ಲ ಭಾರತೀಯ ಸಂಗೀತದ ರಸ ಭಂಡಾರವಾದ ಹಿಂದೂಸ್ತಾನಿ ಸಂಗೀತವನ್ನು ಉಸ್ತಾದ ವಹಿದ್ ಖಾನರಂತ ಸಂಗೀತಗಾರರಿಗೆ ತಿಂಗಳಿಗೆ 150 ರೂಪಾಯಿ ಸಂಭಾವನೆ ಕೊಟ್ಟು ಹೀಗೆ ಹಲವಾರು ಸಂಗೀತ ವಿದ್ವಾಂಸರಿಂದ ಸಂಗೀತ ಶಿಕ್ಷಣ ನೀಡಿಸಿದರು. ಕುಮಾರ ಶ್ರೀಗಳಿಂದ ಆಶೀರ್ವಾದ ಹಾಗೂ ಎಲ್ಲ ವ್ಯವಸ್ಥೆ ಪಡೆದು ಜಗತ್ತಿಗೆ ಉಭಯ ಗಾನವಿಶಾರದ ನೆಂಬ ಅಭಿದಾನವನ್ನು ಪಡೆದು ಸಂಗೀತ ಲೋಕಕ್ಕೆ ಮೆರಗು ತಂದವರೇ ಶ್ರೀ ಪಂಚಾಕ್ಷರ ಗವಾಯಿಗಳು. ಅವರನ್ನು ಹರಸಿ ಆಶೀರ್ವದಿಸಿದವರೇ ಮಾತೃ ಮಮತೆಯ ಹೃದಯವಂತಿಕೆಯ ಮಹಾಶಿವಯೋಗಿಗಳು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಎಂಬುದನ್ನು ಮರೆಯುವಂತಿಲ್ಲ.

               ಹೀಗೆ ಎಲ್ಲದರ ಶಿಕ್ಷಣವನ್ನು ಅನಕ್ಷರಸ್ಥರಿಗೆ ದೀನ-ದಲಿತರಿಗೆ ಅಂಧ-ಅನಾಥರಿಗೆ ನೀಡುವುದರ ಮುಖಾಂತರ, ಕೇವಲ “ಮಠಗಳಿರುವುದು ಸ್ವಾಮಿಗಳ ಆಶ್ರಯತಾಣಕ್ಕಲ್ಲ, ದೇಹಿ ಎಂದು ಬಂದವರ ಕಷ್ಟವನ್ನು ದೂರಮಾಡಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ವಿದ್ಯಾ ಕೇಂದ್ರಗಳಾಗಬೇಕು. ” ಎಂದು ತಿಳಿದು ನಡೆದು ತೋರಿದ ಜಂಗಮ ಪುಂಗವರು.

            ಕೇವಲ ಜ್ಞಾನದಾಸೋಹ ಅಷ್ಟೇ ಅಲ್ಲ ಅನ್ನದಾಸೋಹಕ್ಕೂ ಪ್ರೇರಣೆಯಾದವರು ಶ್ರೀಗಳು. ಭಕ್ತ ಸಮುದಾಯದ ಶ್ರೇಯೋಭಿವೃದ್ಧಿಯತ್ತ ಗಮನಹರಿಸಿದ ಶ್ರೀಗಳು ಕ್ರಿ.ಶ.1896 ರಲ್ಲಿ ಹಾನಗಲ್ಲ ಪೀಠಾಧಿಕಾರಿ ವಹಿಸಿ ಒಂದೇ ವರ್ಷದಲ್ಲಿ ಕ್ರಿ.ಶ. 1897ರಲ್ಲಿ ಪ್ರಕೃತಿ ವಿಕೋಪದಿಂದ ಈ ನಾಡು ಬರಗಾಲದ ಬವಣೆಯಲ್ಲಿ ಸಿಲುಕಿತ್ತು. ತಮ್ಮ ತಮ್ಮ ಹತ್ತಿರವಿದ್ದ ಕಾಳು-ಕಡಿ ಅಂತಹ ದವಸ-ಧಾನ್ಯಗಳನ್ನು ಖಾಲಿಯಾಗಿ ಬಡವರು ಹಸಿವಿನಿಂದ ಕಂಗೆಟ್ಟಿದ್ದರು. ಹಸಿವಿನಿಂದ ಬಳಲುತ್ತಿದ್ದವರ ನೋವು ಕಂಡು ಶ್ರೀಗಳು ತಮ್ಮ ಮಠದಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆಗೊಳಿಸಿದ್ದರು. ಹೀಗೆ ಕೆಲವು ದಿನಗಳು ಉರುಳಿದವು. ಶ್ರೀಮಠದಲ್ಲಿ ಅನ್ನ ದಾಸೋಹಕ್ಕೆ ಹಣದ ಕೊರತೆ ಎದುರಾಗಿತ್ತು ಇಂತಹ ಸಂದರ್ಭದಲ್ಲಿ ಹಳೆಕಾಲದ ಮಠದ ಜೀರ್ಣೋದ್ಧಾರಕ್ಕಾಗಿ ಕೂಡಿಟ್ಟ ಮೂರು ಸಾವಿರ ರೂಪಾಯಿಗಳನ್ನು ಅಂದರೆ ಈಗಿನ ಕಾಲಕ್ಕೆ 3ಕೋಟಿ ಬೆಲೆ ಇಷ್ಟೆಲ್ಲ ಹಣವನ್ನು ಭಕ್ತರ ಹಸಿವನ್ನು ನಿವಾರಿಸಲು ಶ್ರೀಗಳು ವಿನಿಯೋಗಿಸಿದರು. ಅಷ್ಟೇ ಅಲ್ಲದೆ ಮಠದಲ್ಲಿ ಸಂಗ್ರಹವಾಗಿದ್ದ 800 ಚೀಲ ಭತ್ತವು ದಾಸೋಹಕ್ಕಾಗಿ ವಿನಿಯೋಗಿಸಿದ್ದರು. ಮಠದ ಹಣ, ದವಸಧಾನ್ಯಗಳು ಮುಗಿದಿದ್ದವು. ನಾಡಿಗೆಲ್ಲ ದಾಸೋಹ ಮಾಡುವುದು ಸಾಧ್ಯವಾಗದ ಮಾತು ಇದನ್ನು ಇಲ್ಲಿಗೆ ನಿಲ್ಲಿಸೋಣವೆಂದು ಭಕ್ತರು ಶ್ರೀಗಳಿಗೆ ಭಿನ್ನಹವಿರಿಸಿದಾಗ ಆರಂಭಿಸಿದ ಅನ್ನದಾಸೋಹ ನಿಲ್ಲಿಸಬಾರದು, ಹೀಗೆ ಮಧ್ಯದಲ್ಲಿ ನಿಲ್ಲಿಸಿದರೆ ಆ ಶಿವ ಮೆಚ್ಚೋದಿಲ್ಲವೆಂದು ಶ್ರೀಗಳು ಸಮಾಧಾನದಿಂದ ಭಕ್ತರಿಗೆ ಬೋಧಿಸಿದರು. “ಬಡವರು ಹಸಿವಿನಿಂದ ಸಾಯುವುದನ್ನು ನೋಡಿ ಸುಮ್ಮನಿರಬೇಕೆ ? ಹಸಿದವರ ಜೊತೆ ನಾವು ಸಾವಿಗೆ ಸಾಗುವ ತನಕ ಈ ದಾಸೋಹ ನಿಲ್ಲಬಾರದು” ಎಲ್ಲವೂ ಶಿವನಿಚ್ಚೆ ಎಂದು ನುಡಿದ ಶ್ರೀಗಳ ಮಾತು ಒಂದು ಕ್ಷಣ ರೋಮಾಂಚನವಾಗುವಂತಹದ್ದು. ಶಿವನ ಆಶೀರ್ವಾದವೇನು ಅನ್ನುವ ಹಾಗೆ ಶ್ರೀಮಠದ ಪರಮಭಕ್ತರಾದ ಅಣ್ಣಿಗೇರಿ ಶಂಕರಪ್ಪನವರು ತಮ್ಮ ಹೊಲವನ್ನು 7000 ರೂಪಾಯಿಗೆ ಮಾರಿ ದಾಸೋಹ ವ್ಯವಸ್ಥೆಗೆ ಹಣವನ್ನು ನೀಡಿದ್ದರು. ಇದರ ಜೊತೆಗೆ ಶ್ರೀಗಳು ತಮ್ಮ ಮಠದ ಒಂದು ದೊಡ್ಡ ಭಾಗವನ್ನು ಮೂರು ಸಾವಿರ ರೂಪಾಯಿಗೆ ಮಾರಿ ಶ್ರೀಮಠದಲ್ಲಿ ದಾಸೋಹ ನಿಲ್ಲದಂತೆ ಮುಂದುವರಿಸಲಾಗಿತ್ತು. ಹೀಗೆ ಮಠದ ಎಲ್ಲ ಕಾರ್ಯ ನೋಡಿ   ಆ ಶಿವ ಕೃಪೆತೋರಿ ಮರುವರ್ಷವೇ ಭುವಿಗೆ ಮಳೆಗರೆದ, ಹೊಲ-ಗದ್ದೆಗಳು ಬೆಳೆ ತುಂಬಿ ನಿಂತವು, ಬರಗಾಲದ ಬವಣೆ ದೂರಾಗಿ ಎಲ್ಲ ಭಕ್ತರ ಮನದಲ್ಲಿ ನವೋಲ್ಲಾಸ ತುಂಬಿತು.

                   ಇಂತಹ ಸಂಕಷ್ಟದಲ್ಲಿ ಆ ಶಿವರೂಪವೇ ಧರೆಗಿಳಿದು, ಶ್ರೀ ಕುಮಾರ ಶಿವಯೋಗಿಗಳ ರೂಪದಲ್ಲಿ ನಮ್ಮನ್ನು ಕಾಪಾಡಿತು. ಅಂತಹ ಕರುಣಾಳು ಗುರುವರರನ್ನ ಪಡೆದ ನಾವೇ ಧನ್ಯರು, ಎಂದು ಎಲ್ಲ ಭಕ್ತರು ಶ್ರೀಮಠದ ಶಿವಯೋಗಿಗಳ ದರ್ಶನ ಪಡೆದು ಹರ್ಷಭರಿತರಾದರು. ಮರುವರ್ಷ ಶ್ರೀಮಠದ ದಾಸೋಹಕ್ಕೆಂದು ಭಿಕ್ಷೆಗೆ ಹೋದ ಶ್ರೀಗಳಿಗೆ ಎಲ್ಲ ಭಕ್ತರು ಸೇರಿ ಬುದ್ಧಿ ನಾವೇ ನಮಗೆ ಎಷ್ಟೆಷ್ಟು ಸಾಧ್ಯವಾಗುತ್ತೋ ಅಷ್ಟು ದವಸ-ಧಾನ್ಯಗಳನ್ನು ಕೂಡಿಸಿಕೊಂಡು ಮಠಕ್ಕೆ ತಂದು ಅರ್ಪಿಸುತ್ತೇವೆ ಎಂದರು.”ಬೇಡಿಸಿಕೊಂಬಾತ ಭಕ್ತನಲ್ಲ” ಎಂಬ ಶರಣ ವಾಣಿಯಂತೆ ಎಲ್ಲ ಭಕ್ತರು ಶ್ರೀಮಠಕ್ಕೆ ದವಸ-ಧಾನ್ಯಗಳನ್ನು ಅರ್ಪಿಸಿದರು. ಸಂಕಷ್ಟದ ದಿನಗಳಲ್ಲಿ, ಆಪತ್ತಿನ ಕಾಲದಲ್ಲಿ ತಮ್ಮ ಹೊಲವನ್ನು ಮಾರಿ ದಾಸೋಹದ ಸೇವೆಗೆ ಮುಂದಾದ ಅಣ್ಣಿಗೇರಿ ಶಂಕ್ರಪ್ಪನವರಿಗೆ ಮತ್ತೆ ಹೊಲವನ್ನು ಆ ಭಕ್ತರಿಗೆ ಮರಳಿಸಿದ ಭಕ್ತವತ್ಸಲ, ಮಮತಾಮಯಿ ಶ್ರೀ ಕುಮಾರ ಶಿವಯೋಗಿಗಳು. ಜ್ಞಾನ ದಾಸೋಹ, ಅನ್ನ ದಾಸೋಹ ಮಾಡುತ್ತಾ ಸಮಾಜ ಸೇವೆಗೆ ಕಟಿಬದ್ಧರಾಗಿ ನಿಂತರು ಶ್ರೀಗಳು.

                 ಶ್ರೀಗಳ ಪಾಲಿಗೆ ಮತ್ತೊಂದು ಜನಸೇವೆ ಕಾದು ನಿಂತಿತ್ತು. ಹೇಗೆ ಇಂದಿನ ದಿನಮಾನದಲ್ಲಿ ವೈರಸ್ಸಿನ ರೌದ್ರಾವತಾರ ಹೇಗೆ ಎಲ್ಲೆಡೆ ತಾಂಡವವಾಡುತ್ತಿದೆ, ಹಾಗೆ ಅಂದಿನ ಕಾಲದಲ್ಲಿಯೂ ಕೂಡಾ ‘ಕಾಲರಾ’ ರೋಗ ತಾಂಡವವಾಡುತ್ತಾ ಹಾನಗಲ್ಲ ಗ್ರಾಮವನ್ನು ತಲುಪಿತ್ತು. ಇಂತಹ ಸಮಯದಲ್ಲಿ ಆ ರೋಗಕ್ಕೆ ಹಲವಾರು ಜನ ಬಲಿಯಾಗುತ್ತಿರುವುದನ್ನು ನೋಡಿ ಸ್ವತ: ಶ್ರೀಗಳೇ ರೋಗಕ್ಕೆ ಸಿಲುಕಿಕೊಂಡವರ ಮನೆಮನೆಗಳಿಗೆ ಭೇಟಿ ನೀಡಿ, “ಎಲ್ಲಿ ಆ ಸೋಂಕು ತಮಗೆ ಸೋಂಕಿತು ಎನ್ನುವ ಭಯದ ಭಾವವನ್ನು ತೊಡೆದು ಹಾಕಿ” ಸ್ವತ: ತಾವೇ ಔಷಧೋಪಚಾರ ಚಿಕಿತ್ಸೆ ನೀಡಿ, ಗಂಜಿ ಕೇಂದ್ರವನ್ನು ತೆರೆದು ಮನೆಮನೆಗೆ ಗಂಜಿ ನೀಡುವ ಕಾರ್ಯದಲ್ಲಿ ತೊಡಗಿದರು. ಮೈಲಾರದ ಬಸವಲಿಂಗ ಶರಣರ ವಾಣಿಯಂತೆ:-

             ” ಹಲವು ಮಾತೇನು ನೀನೊಲಿದು ಪಾದವನಿಟ್ಟ

           ನೆಲವೆ ಸುಕ್ಷೇತ್ರ ಜಲವೆ ಪಾವನ ತೀರ್ಥ

            ಸುಲಭ ಶ್ರೀ ಗುರುವೇ ಕೃಪೆಯಾಗು”

ಎನ್ನುವಂತೆ ಕುಮಾರ ಶಿವಯೋಗಿಗಳ ಪಾದ ಸ್ಪರ್ಶದಿಂದ ಮನೆಗಳಲ್ಲಿ ಅಡಿಯಿರಿಸಿದ್ದ ಕಾಲರಾ ರೋಗ  ಕಾಲ್ಕಿತ್ತಿತ್ತು. ಸಂಜೀವಿನಿಯಂತ ಶ್ರೀಗಳ ಪಾದಸ್ಪರ್ಶದಿಂದ ಸೋಂಕು ದೂರವಾಗಿತ್ತು.

                 ಮಠದ ಪೀಠಾಧಿಕಾರವನ್ನು ವಹಿಸಿಕೊಂಡು ಸಮಾಜದ ಈಗಿನ ಸ್ಥಿತಿಗತಿಗಳನ್ನು ತಮ್ಮ ಅರಿವಿನಲ್ಲಿ ಕಂಡು ತಾವು ಮಾಡಬೇಕಾದ ಸಮಾಜೋದ್ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.ಒಂದೆಡೆ ಜ್ಞಾನದಾಸೋಹ ಮತ್ತೊಂದೆಡೆ ಅನ್ನದಾಸೋಹ ಹಾಗೂ ಆರೋಗ್ಯ ದಾಸೋಹ ಹೀಗೆ ಬಳಲಿ ಬಂದ ಭಕ್ತರ ಕಣ್ಣೀರನ್ನು ಒರೆಸಿ ಸಾಂತ್ವನ ನೀಡಿದ ದಾಸೋಹ ಮೂರ್ತಿ ಶ್ರೀ ಕುಮಾರ ಶಿವಯೋಗಿಗಳು.

               “ವಿದ್ಯೆ ಕಲಿಸಿದರೆಮಗೆ ಯಾರೋ ಅಕ್ಕರೆಯಿಂದ

           ಅನ್ನವಿತ್ತರು ಯಾರೋ ಅತಿ ಮಮತೆಯಿಂದ

           ಯಾರು ತಿದ್ದಿದರೆಮ್ಮ ದಿನ ದಿನ ನಡೆ ನುಡಿಯ

            ನಮಿಸೊ ಆ ಚೇತನಕೆ – ಮುದ್ದುರಾಮ”

                ಅಂತಹ ಆ ಚೈತನ್ಯ ಶಕ್ತಿ ,ಮಹಾನ್ ಚೇತನ ಶ್ರೀ ಕುಮಾರ ಶಿವಯೋಗಿಗಳಿಗೆ ನೂರು ನಮನ. ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ  ಆಶೀರ್ವಾದ ಸದಾ ಇರಲೆಂದು ಪ್ರಾರ್ಥಿಸುತ್ತೇನೆ

ಲೇಖಕರು : ಆಸ್ಥಾನ ವಿದ್ವಾನ್, ಪಂಡಿತರತ್ನ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು

(ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ  ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ,  1968ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿತು. ಕರ್ನಾಟಕ ಏಕೀಕರಣಕ್ಕೆ ದುಡಿದವರು,

ಕೃತಿಗಳು:  ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.  ಕನ್ನಡ ನಿಘಂಟು ಕಾರ್ಯ (1964) ಪೂರ್ಣಗೊಳಿಸಿದರು.  ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅವರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದ್ದು.  ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು 4000  ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 6 ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು. ಬಿ. ಶಿವಮೂರ್ತಿ ಶಾಸ್ತ್ರಿಗಳು 15-01-1976 ರಲ್ಲಿ ಲಿಂಗೈಕ್ಯರಾದರು.

)

ವೀರಶೈವ ಸಂಸ್ಕೃತಿಯು ಇಂದಿನ ಪರಿಪಾಕ ಸ್ಥಿತಿಗೆ ಬರಬೇಕಾದರೆ, ಇದಕ್ಕೆ ಬಹುಕಾಲದಿಂದ ಬಹು ಜನ ಮಹಾಪುರುಷರು ಮಹಾತ್ಮರು ಮಾಡಿದ ಕಾರ್ಯಗಳು ಸೇವೆಯೂ ಕಾರಣವಾಗಿವೆ. ವೀರಶೈವ ಧರ್ಮ,ಸಾಹಿತ್ಯ, ಸಮಾಜಗಳ ಅಭಿವೃದ್ಧಿಗಾಗಿ ಸಾವಿರಾರು ವರ್ಷಗಳಿಂದ ಹಲವು ವಿಭೂತಿಗಳು ನಾನಾ ಬಗೆಯಾಗಿ ಹೆಣಗಿದ್ದಾರೆ. ಅವರೆಲ್ಲರ ತಪಸ್ಸಿನ, ತ್ಯಾಗದ, ಪ್ರತಿಭೆಯ, ಸಾಹಸದ ಫಲವೇ ಇಂದಿನ ವೀರಶೈವ ಸಮಾಜ. ಶ್ರೀ ರೇಣುಕಾದಿ ಆಚಾರ್ಯರು, ಶ್ರೀ ಬಸವಾದಿ ಪ್ರಮಥರು, ನೂರೊಂದು ಜನ ವಿರಕ್ತರು, ಮೊನೆ ಮೊನ್ನೆ ಆಗಿ ಹೋದ ತ್ಯಾಗವೀರ ಶಿರಸಂಗಿ ಲಿಂಗರಾಜ, ದಾನಶೂರ ವಾರದ ಮಲ್ಲಪ್ಪ, ಧರ್ಮಪ್ರಾಣ ಸಕ್ಕರೆ ಕರಡೆಪ್ಪ, ಧರ್ಮನಿಷ್ಕ ಯಜಮಾನ ವೀರಸಂಗಪ್ಪ ಮೊದಲಾದ ಆಧುನಿಕ ಮಹಾಪುರುಷರು ಲಿಂಗವಂತ ಸಮಾಜಕ್ಕಾಗಿ ಸರ್ವಾರ್ಪಣ ಮಾಡಿದ ಪುಣ್ಯಕ್ಕೆ ಭಾಗಿಗಳಾಗಿದ್ದಾರೆ.

ಇಂತಹ ಪುಣ್ಯ ಶ್ಲೋಕರ ಪಂಕ್ತಿಯಲ್ಲಿ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಗಣನಾರ್ಹರು.ಹಾನಗಲ್ಲ ಶ್ರೀಗಳು ವೀರಶೈವ ಮತದ ಸರ್ವತೋಮುಖವಾದ ಅಭಿವೃದ್ಧಿಗೆ ಬಹಳವಾಗಿ ಶ್ರಮಿಸಿದ ಮಹಾವಿರಕ್ತರು.

ವೀರಶೈವ ಸಮಾಜವು ಭಾರತ ದೇಶದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ತನ್ನದೆ ಆದ ಮಹದ್ಗುಣಗಳಿಂದ ಹಲವಾರು ಶತಮಾನಗಳಿಂದ ಪರಿಶೋಭಿಸುತ್ತಿದೆ. ವೀರಶೈವ ದರ್ಶನವು ಜ್ಞಾನ, ಕರ್ಮ, ಯೋಗ,ಭಕ್ತಿಗಳ ಸಮನ್ವಯದಿಂದ ಪರಿಪೂರ್ಣವೆನಿಸಿ ಮುಮುಕ್ಷುಗಳ ಮನ್ನಣೆಗೆ ಪಾತ್ರವಾಗಿದೆ. ವೀರಶೈವ ರಾಜರ ಸೌಜನ್ಯ ಮತ್ತು ಪರಾಕ್ರಮಗಳ ಫಲವಾಗಿ, ವೀರಶೈವ ಕವಿಗಳ ಪ್ರತಿಭೆ ಮತ್ತು ಪಾಂಡಿತ್ಯಗಳ ಪರಿಣಾಮವಾಗಿ,ವೀರಶೈವ ಮಠಾಧಿಪತಿಗಳ ಕಾರ್ಯದಕ್ಷತೆ ಮತ್ತು ‘ದಾಸೋಹಂಭಾವ’ಗಳಿಂದಾಗಿ, ಈ ಸಮಾಜಕ್ಕೆ ಹೆಚ್ಚಿನ ಮಾನ ಮನ್ನಣೆಗಳು ದೇಶದ ಇತಿಹಾಸದಲ್ಲಿ ಪ್ರಾಪ್ತವಾಗಿವೆ.

ವ್ಯಕ್ತಿಗಳು ಸಮಾಜ ಜೀವಿಗಳು, ಸಮಾಜವನ್ನು ಅವಲಂಬಿಸಿ ವಿಕಾಸಗೊಳ್ಳುವದು ಮನುಷ್ಯನ ಹುಟ್ಟು ಗುಣವಾಗಿದೆ. ಸಂಘ ಜೀವನವು ಪ್ರಾಣಿಗಳಿಗೂ ಅನಿವಾರ್ಯವಾಗಿರುವಾಗ ಪ್ರಗತಿಪರ ಮಾನವನಿಗೂ ಅದು ಅನಿವಾರ್ಯವಾಗಿದೆ. ಸಮಾಜ ಶಾಸ್ತ್ರದ ಈ ವಿಕಾಸ ತತ್ತ್ವವನ್ನರಿತ ಲಿಂ. ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ವೀರಶೈವ ಸಮಾಜದ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳ ರಕ್ಷಣೆಯ ಉದ್ದೇಶದಿಂದ ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಈ ಮಹತ್ಕಾರ್ಯ ಸಾಧನೆಗೆ ಸಮಾಜದ ಸಮಕಾಲೀನ ಮಹಾ ಪುರುಷರ ಮತ್ತು ಪ್ರತಿಭಾಶಾಲಿಗಳ ಬೆಂಬಲವನ್ನು ಪಡೆದರು. ಜನಸಾಮಾನ್ಯರಿಗೆ ಸಂಘಟನೆಯ ಮಂತ್ರವನ್ನು ಉಪದೇಶಿಸಿದರು; ಅವರ ಗಮನವನ್ನು ಮಹಾಸಭೆಯತ್ತ ಸೆಳೆದರು. ಈ ಮಹಾಸಭೆಯ ಚಟುವಟಿಕೆಗಳಿಂದ ವೀರಶೈವ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯಗಳ ಬೆಳವಣಿಗೆಗೆ ಮಾರ್ಗವಾಯಿತು.

ಇದುವರೆಗೆ ೧೯೦೪ ರಿಂದ ೧೯೫೯ರ ವರೆಗೆ ೫೫ ವರ್ಷಗಳ ಸುದೀರ್ಘವಾದ ಅವಧಿಯಲ್ಲಿಸಮಾಜದ ಗಣ್ಯ ಮಹನೀಯರ ಅಧ್ಯಕ್ಷತೆಯಲ್ಲಿ ನಾಡಿನ ಪ್ರಮುಖ ಸ್ಥಳಗಳಲ್ಲಿ ಹದಿನಾರು ಅಧಿವೇಶನಗಳು ನಡೆದಿವೆ. ೧೯೦೪ ಮತ್ತು ೧೯೦೫ರಲ್ಲಿ ಧಾರವಾಡ, ಬೆಂಗಳೂರಲ್ಲಿ ದಾನಶೂರ ಸಿರಸಂಗಿ ಲಿಂಗರಾಜರು;೧೯೦೭ರಲ್ಲಿ ಸೊಲ್ಲಾಪುರದಲ್ಲಿ ಸರ್ ಪುಟ್ಟಣ್ಣ ಶೆಟ್ಟರು; ೧೯೦೮ರಲ್ಲಿ ಬಾಗಿಲುಕೋಟೆಯಲ್ಲಿ ರಾಜ ಲಖಮನಗೌಡ ಒಂಟಮುರಿ ದೇಸಾಯಿ ಅವರು; ೧೯೦೯ರಲ್ಲಿ ಬಳ್ಳಾರಿಯಲ್ಲಿ ಪುಣ್ಯಶ್ಲೋಕ ಶ್ರೀವಾರದ ಮಲ್ಲಪ್ಪನವರು; ೧೯೧೦ರಲ್ಲಿ ಬೆಳಗಾಂವಿಯಲ್ಲಿ ಶ್ರೀ ಬುಳ್ಳಪ್ಪ ಬಸವಂತರಾಯರು; ೧೯೧೩ ರಲ್ಲಿ ನಿಪ್ಪಾಣಿಯಲ್ಲಿ ಶ್ರೀ ಅರಟಾಳ ರುದ್ರಗೌಡರು; ೧೯೧೭ರಲ್ಲಿ ದಾವಣಗೆರೆಯಲ್ಲಿ ಸರ್ ಪುಟ್ಟಣಶೆಟ್ಟರು; ೧೯೧೯ರಲ್ಲಿ ಬೀರೂರಿನಲ್ಲಿ ಶ್ರೀ ಮೆಣಸಿನಕಾಯಿ ಶಾಂತವೀರಪ್ಪನವರು; ೧೯೨೭ ರಲ್ಲಿ ಬೆಂಗಳೂರಿನಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು; ೧೯೩೩ರಲ್ಲಿ ಧಾರವಾಡದಲ್ಲಿ ಡಾ. ಫ.ಗು.ಹಳಕಟ್ಟಿ ಅವರು; ೧೯೩೪ರಲ್ಲಿ ರಾಯಚೂರಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು; ೧೯೩೮ರಲ್ಲಿ ಹುಬ್ಬಳ್ಳಿಯಲ್ಲಿ ಪ್ರೊ. ಎಸ್. ಎಸ್. ಬಸವನಾಳ ಅವರು; ೧೯೪೦ ರಲ್ಲಿ ಕುಂಭಕೋಣದಲ್ಲಿ ಬ್ಯಾರಿಸ್ಟರ್ ಎಂ.ಎಸ್.ಸರದಾರ ಅವರು; ೧೯೪೫ ರಲ್ಲಿ ತುಮಕೂರಿನಲ್ಲಿ ಶ್ರೀ ಸಿ. ಸಿ. ಹುಲಕೋಟಿ ಅವರು; ೧೯೫೫ರಲ್ಲಿ ಬಸವಕಲ್ಯಾಣದಲ್ಲಿ ಶ್ರೀ ಬಂಥನಾಳ ಶಿವಯೋಗಿಗಳವರ ಅಧ್ಯಕ್ಷತೆಯಲ್ಲಿ ಹದಿನಾರು ಅಧಿವೇಶನಗಳು ನಡೆದಿವೆ.

ಈ ಅವಧಿಯಲ್ಲಿ ಸಮಾಜದ ಅನೇಕ ಮಹತ್ಕಾರ್ಯಗಳು ನಡೆದಿವೆ. ಈ ಮಹಾಸಭೆಯ ಅಧಿವೇಶನಗಳು ನಡೆಯಲು ಆರ್ಥಿಕ ಸಹಾಯವನ್ನು ಕೊಡುವದಕ್ಕಾಗಿ ೧೯೧೭ರಲ್ಲಿ ಚಿತ್ರದುರ್ಗದ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಪ್ರಯತ್ನದ ಫಲವಾಗಿ ‘ಚಿರಸ್ಥಾಯಿ ನಿಧಿ’ಯ ಸ್ಥಾಪನೆಯಾಯಿತು.

ವ್ಯಕ್ತಿಯು ಸಮಾಜದ ಅಂಗ, ಸಮಾಜವು ರಾಷ್ಟ್ರದ ಒಂದು ಭಾಗ. ಕಾರಣ, ವ್ಯಕ್ತಿಯ ಉನ್ನತಿಯು ಸಮಾಜಕ್ಕೂ, ಸಮಾಜದ ಅಭ್ಯುದಯವು ದೇಶಕ್ಕೂ ಪರಸ್ಪರ ಪೂರಕವಾದುದು. ಈ ಅರ್ಧ ಶತಮಾನದಲ್ಲಿಆಗಿರುವ ಎಲ್ಲ ಸಾಮಾಜಿಕ ಮಹತ್ಕಾರ್ಯಗಳಿಗೆ ವೀರಶೈವ ಮಹಾಸಭೆಯು ಎಲ್ಲ ರೀತಿಯಲ್ಲಿ ಮೂಲವಾಗಿದೆ.ಮಹಾಸಭೆಯಿಂದ ಅಷ್ಟೇನು ಕಾರ್ಯ ಸಾಧನೆಯಾಗಿಲ್ಲವೆಂದು ಗೊಣಗುಟ್ಟುವ ಜನ ‘ಮಹಾಸಭೆಗಾಗಿ ನಾವೆಲ್ಲರೂ ಒಂದಾಗಿ ಶ್ರಮಿಸಬೇಕು.’ ಎಂಬ ಭಾವನೆಯನ್ನು ಬೆಳೆಸಿಕೊಳ್ಳಲಿ. ದೇಶದಲ್ಲಿ ಕಂಗೊಳಿಸುವ ವೀರಶೈವ ವಿದ್ಯಾರ್ಥಿನಿಲಯಗಳು, ವಿದ್ಯಾರ್ಥಿವೇತನ ನಿಧಿಗಳು, ಸ್ಕೂಲು-ಕಾಲೇಜುಗಳು, ಶಿವಯೋಗಮಂದಿರದಂಥ ಮಹಾ ಸಂಸ್ಥೆಗಳೂ ಜನ್ಮ ತಾಳಿರುವದಕ್ಕೆ ವೀರಶೈವ ಮಹಾಸಭೆಯು ಮೂಲವಾಗಿದೆ.ಇಂದಿನ ಶಿಕ್ಷಿತ ವೀರಶೈವರ ಮನಸ್ಸು ತಪೋಧನರಾದ, ಕರ್ಮಯೋಗಿಗಳಾದ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ತೋರಿದ ದಾರಿಯಲ್ಲಿ ಮುಂದುವರಿದಾಗಲೇ ಸಮಾಜದ ಕಲ್ಯಾಣ ಸಾಧ್ಯ.

ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭೆ, ಶಿವಯೋಗಮಂದಿರಗಳ ಸಂಸ್ಥಾಪಕರೆಂದು ಮಾತ್ರ ಅವರನ್ನು ನಾವು ಗೌರವಿಸಬೇಕಾಗಿಲ್ಲಅವರ ಧೈಯ-ಧೋರಣೆಗಳು ಉದಾತ್ತವಾದವು ವಿಧಾಯಕವಾದವು. ವೀರಶೈವ ಸಮಾಜವನ್ನು ಸರ್ವಾಂಗ ಸುಂದರವನ್ನಾಗಿ ಮಾಡಬೇಕೆಂಬುದೇ ಅವರ ಜೀವಿತದ ಪರಮಧ್ಯೇಯವಾಗಿದ್ದಿತು. ವೀರಶೈವ ಸಿದ್ಧಾಂತ, ಸಾಹಿತ್ಯ, ಸಂಸ್ಕೃತಿಗಳನ್ನು ಅವರು ಚೆನ್ನಾಗಿ ತಿಳಿದುಕೊಂಡು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ವೀರಶೈವ ಸಂಸ್ಕೃತಿಯೇ ಅವರ ರೂಪದಲ್ಲಿಸಾಕಾರವಾದಂತಿತ್ತು ಹಗಲಿರುಳು ಅವರು ವೀರಶೈವ ಸಮಾಜದ ಅಭಿವೃದ್ಧಿ ಚಿಂತನೆಯನ್ನು ಮಾಡುತ್ತಿದ್ದರು.

ಸಮಾಜದ ಸುಖ ದುಃಖಗಳು, ಮಾನಾಪಮಾನಗಳು ತಮ್ಮವೆಂದು ಭಾವಿಸಿದ್ದರು. ಸಮಾಜವೇ ತಾವು, ತಾವೇ ಸಮಾಜವಾಗಿದ್ದರು.ಶ್ರೀಗಳವರು ಪಂಡಿತರ ತಂಡವನ್ನು ನಿರ್ಮಿಸಿದರು, ಸಂಗೀತ ಕಲೆಯನ್ನು ಬೆಳಗಿಸಿದರು, ಕವಿಗಳಿಗೆ ಮಾರ್ಗದರ್ಶನ ಮಾಡಿದರು, ಸಂಸ್ಕೃತ ಭಾಷೆಯ ಪ್ರಚಾರ ಕೈಗೊಂಡರು. ಅವರು ಕೀರ್ತಿಯನ್ನು ತಿರಸ್ಕರಿಸಿದರು. ಕೀರ್ತಿಯು ಮಾತ್ರ ಅವರನ್ನು ಪುರಸ್ಕರಿಸಿತು. ಅವರು ಪಲ್ಲಕ್ಕಿಯನ್ನು ಹತ್ತಿದವರಲ್ಲ. ಆದರೆ ಪಲ್ಲಕಿಯವರು ಅವರ ಸನ್ನಿಧಿಗೆರಗದಿರಲಿಲ್ಲ !

ವೀರಶೈವ ಸಮಾಜದಲ್ಲಿ ಗ್ರಂಥಪ್ರಚಾರ ಮಾಡಿದ ಮಹನೀಯರು ಕೆಲವರು, ವಿದ್ಯಾಪ್ರಚಾರ ಮಾಡಿದ ಪುಣ್ಯಾತ್ಮರು ಕೆಲವರು. ತತ್ವೋಪದೇಶ ಮಾಡಿದವರು ಕೆಲವರು. ಪಾಠಶಾಲೆಗಳನ್ನು ಸ್ಥಾಪಿಸಿದವರು ಕೆಲವರು.ಯೋಗವಿದ್ಯೆಯನ್ನು ಕಲಿಸಿದವರು ಕೆಲವರು, ಪರವಾದಿಗಳ ಕೂಡ ವಾದಿಸಿದವರು ಕೆಲವರು. ಸದಾಚಾರಕ್ಕೆ ಮಾರ್ಗದರ್ಶಕರಾದವರು ಕೆಲವರು, ಸಮಾಜ ಸಂಘಟನೆಗಾಗಿ ಪ್ರಯತ್ನಿಸಿದವರು ಕೆಲವರು.ಇವೆಲ್ಲವನ್ನೂ ಸಾಧಿಸಿದ ಒಬ್ಬರೇ ಒಬ್ಬ ಮಹಾತ್ಮರೆಂದರೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.

ಒಟ್ಟಿನಲ್ಲಿ ವೀರಶೈವ ಸಮಾಜಕ್ಕಾಗಿ ತಮ್ಮ ಜೀವಿತವನ್ನು ಧಾರೆಯೆರೆದವರು ಹಾನಗಲ್ಲ ಶ್ರೀಗಳು.ಭಾರತದ ಕಲ್ಯಾಣಕ್ಕಾಗಿ ಮಹಾತ್ಮಾ ಗಾಂಧಿಯವರು, ಹಿಂದೂ ಧರ್ಮದ ಉದ್ಧಾರಕ್ಕಾಗಿ ಪಂಡಿತ ಮಾಲವೀಯರು, ಬಡಜನರ ದುಃಖನಿವಾರಣೆಗಾಗಿ ಪಂಡಿತ ನೆಹರೂಜಿಯವರು ತೋರಿದ ತೋರುತ್ತಿರುವ ತ್ಯಾಗವನ್ನೆ ಶ್ರೀಗಳು ವೀರಶೈವರ ಅಭ್ಯುದಯಕ್ಕಾಗಿ ತೋರುತ್ತಿದ್ದರು. ಈ ಎಲ್ಲ ಕಾರಣಗಳಿಂದ ವೀರಶೈವ ಚರಿತ್ರೆಯಲ್ಲಿ ಶ್ರೀಗಳು ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಬಸವೇಶ್ವರ ಮೊದಲಾದ ಮಹಾತ್ಮರಂತೆ ಯುಗಾವತಾರಿಗಳಾಗಿದ್ದಾರೆ. ವಂದನೀಯರಾಗಿದ್ದಾರೆ. ಇಂದಿನ ಯುಗದಲ್ಲಿ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ರಾಂತಿಯನ್ನು ಮಾಡಿ ಪ್ರಗತಿಯನ್ನು ಸಾಧಿಸಿದ ಶ್ರೇಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲಬೇಕು.

ಡಾ. ಸಿದ್ಧಯ್ಯ ಪುರಾಣಿಕ

(ಸಿದ್ಧಯ್ಯ ಪುರಾಣಿಕ (ಜೂನ್ ೧೮೧೯೧೮ – ಸೆಪ್ಟೆಂಬರ್ ೫, ೧೯೯೪) ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ.ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು.

ಗುಲ್ಬರ್ಗದಲ್ಲಿ ನಡೆದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಿದ್ಧಯ್ಯ ಪುರಾಣಿಕರನ್ನು ಅರಸಿಬಂದಿವೆ.

ಸಿದ್ಧಯ್ಯ ಪುರಾಣಿಕರು ಉರ್ದು, ಇಂಗ್ಲಿಷ್, ಸಂಸ್ಕೃತಗಳಲ್ಲೂ ಪಾಂಡಿತ್ಯ ಹೊಂದಿದ್ದವರು. ಕನ್ನಡದಲ್ಲಂತೂ ಉದ್ಧಾಮ ವಾಗ್ಮಿಗಳು. ‘ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ’ ಎಂಬ ಅವರ ಆತ್ಮಕಥೆ ಅನೇಕ ಕಾರಣಗಳಿಗಾಗಿ ಪ್ರಮುಖವಾದ ಸಾಹಿತ್ಯಕ ದಾಖಲೆಯಾಗಿದೆ. ಕುವೆಂಪು ಅವರು ಸಿದ್ಧಯ್ಯ ಪುರಾಣಿಕರನ್ನು ಕುರಿತು ಹೇಳಿರುವ ಮಾತುಗಳನ್ನು ಗಮನಿಸಿ: “ಜ್ಞಾನ, ಅಧಿಕಾರ, ವಿನಯ, ಸೌಜನ್ಯ, ಸೃಜನಶೀಲತೆಗಳು ಏಕತ್ರ ಸಮಾವೇಶಗೊಳ್ಳುವುದು ತುಂಬಾ ಅಪರೂಪ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದ ವಿಷಯವಾಗಿದೆ. ಇದಕ್ಕೆ ಅಪರೂಪವಾಗಿ ನಿಂತ ಪ್ರತಿಭಾಶೀಲ ಸತ್ಪುರುಷ ವಿರಳ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಪುರಾಣಿಕರು)

ವಿರಾಗವಿಭು ಹಾನಗಲ್ಲ ಕುಮಾರ ಸ್ವಾಮಿಗಳವರು ರಾಣೇಬೆನ್ನೂರ ತಾಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಕ್ರಿ.ಶ. ೧೮೬೭ರಲ್ಲಿ ಜನ್ಮವೆತ್ತಿದರು. ತಂದೆ ತಾಯಿಗಳು ಬಸವಯ್ಯ-ನೀಲಮ್ಮನವರು, ಸುಶೀಲರು, ಸದಾಚಾರಿಗಳು, ಧರ್ಮ ಪರಾಯಣರು.ಆದರೆ ಬಡವರು. ಬಡತನದ ಮೂಲಕ ಶ್ರೀಗಳವರ ವಿದ್ಯಾಭ್ಯಾಸ ಸರಿಯಾಗಿ ಸಾಗಲಿಲ್ಲ.ಆದರೆ ಅವರ ಅದಮ್ಯವಾದ ಅರಿವಿನ ಹಂಬಲ ಆರಲಿಲ್ಲ. ಅವರು ಪ್ರಬುದ್ಧರಾದ ಮೇಲೆ ಸ್ವಾಧ್ಯಾಯದಿಂದಲೇ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡು ಮಹಾಶಿವಾನುಭವಿ ಗಳಾದರು, ತತ್ವವೇತ್ತರಾದರು.

ಅವರ ತೆಳುವಾದ, ಎತ್ತರವಾದ ಮೈಕಟ್ಟಿನಲ್ಲಿ ತಾರುಣ್ಯವು ತುಳುಕಿತು; ಅವರ ಹೊಳೆವ ಕಣ್ಣುಗಳು ಇನ್ನೂ ಪ್ರಕಾಶಪೂರ್ಣವಾಗಿ ಮಿಂಚಿದುವು; ಆದೇದೀಪ್ಯಮಾನ ಮುಖಮಂಡಲ ಇನ್ನೂ ತೇಜೋಮಯವಾಗಿ ರಾರಾಜಿಸಿತು. ಅವರ ತಾಯಿ ನೀಲಮ್ಮನವರಿಗೆ ಅವರಿಗೆ ಮದುವೆ ಮಾಡಬೇಕೆಂಬ ಮಾತೃಸಹಜವಾದ ಆಸೆ ಉದಿಸಿತು. ಆಗ ಲಿಂಗದಹಳ್ಳಿಯಲ್ಲಿ ಹಗಲು ಶಿಕ್ಷಕರಾಗಿ ಹಗಲಿರುಳೂ ಉಜ್ವಲ ವ್ಯಾಸಂಗಿಗಳಾಗಿ ಜೀವನರಥವನ್ನು ಶಿವಪಥದಲ್ಲಿ ನಡೆಸಿಕೊಂಡು ಹೊರಟಿದ್ದರು ಹಾಲಯ್ಯನವರು ಮುಂದೆ ಕುಮಾರ ಸ್ವಾಮಿಗಳಂದು ಅಮರರಾದ ಅಮೃತಪುತ್ರರು.ತಾಯಿಯು ಮದುವೆಯ ಮಾತೆತ್ತಲು ನಕ್ಕು ನುಡಿದರು, ‘ತಾಯೆ, ನಾನಿದಾಗಲೇ ಸಂಸಾರಿಯಾಗಿ ಬಿಟ್ಟಿದ್ದೇನೆ. ಆದರೆ ಈ ಸಂಸಾರದ ಪರಿಯೇ ಬೇರೆ. ಇದನ್ನು ನಿಜಗುಣ ಶಿವಯೋಗಿಗಳು ಇಂತು ಬಣ್ಣಿಸಿದ್ದಾರೆ:

ಯೋಗಿಗೆ ಸಕಲ ಸಂಸಾರ ಸಂಗವದಿಲ್ಲ

ವಾಗಿ ತಿಳಿವರದು ಮುಸಿನೋಡು ತಾಯೇ!

ವರವಿದ್ಯೆಯೆಂಬ ಕುಲವನಿತೆಯುಂಟು, ಅಗಲದ

ಪರಿತೋಷವೆಂಬ ಮೋಹದಣಗನುಂಟು

ವಿರತಿಯೆಂಬನುಕೂಲ ಜನಮುಂಟು, ಕ್ಷಮೆಯೆಂಬ

ಚರನುಂಟು, ಶಾಂತಿಯೆಂಬ ಸಖನ ಸರಸಮುಖ!!

ನುತಭಕ್ತಿಯೆಂಬ ಮಾತೆಯುಂಟು, ಸುಚರಿತ್ರವೆಂಬ

ಪಿತನುಂಟು ಸತ್ಯವೆಂಬ ಕುವರಿಯುಂಟು

ಹಿತವಾದ ನಂಬಿಗೆಯೆಂಬಾಪ್ತ ಜನರ ಸೇವೆಯುಂಟು

ಮತಿಯೆಂಬ ಗೇಹ ಮುಂಟು, ಆಚಾರವೆಂಬ ಕ್ಷೇತ್ರಮುಂಟು!

ದಾಸಿಯುಂಟು ಅಹಿಂಸೆಯಂಬ, ದಾಸನುಂಟು ಅಸ್ತೇಯವೆಂಬ

ಲೇಸನೀವ ಮೈತ್ರಾದಿಯೆಂಬ ಪೌತ್ರರುಂಟು,

ಮುಕ್ತಿಯೆಂಬದೇಶಮುಂಟು, ಗುರು ಶಂಭುಲಿಂಗವೆಂಬ ಗುರುತನಗುಂಟು!

ಇಂಥ ಸಂಸಾರವನ್ನು ಇದಾಗಲೇ ಸ್ವೀಕರಿಸಿ ಬಿಟ್ಟಿರುವೆ ತಾಯೆ-ಮತ್ತೊಂದು ಸಂಸಾರವನ್ನು ಎಲ್ಲಿ ಕಟ್ಟಿಕೊಳ್ಳಲಿ? ಇದೊ, ನಾನು ಶಿಕ್ಷಕನಾಗಿ ಸಂಪಾದಿಸಿದ ಮುನ್ನೂರು ರೂಪಾಯಿಗಳಿವೆ. ಇವುಗಳನ್ನು ಮಗನ ಕಿರಿಯ ಕಾಣಿಕೆಯೆಂದು ಸ್ವೀಕರಿಸಿ ಸಂತುಷ್ಟಳಾಗಿ ಹೋಗು. ಇನ್ನು ಮುಂದೆ ಮಗನೆಂಬ ಮೋಹದಿಂದ ಮತ್ತೆ ನನ್ನ ಹತ್ತಿರ ಬರಬೇಡ!’

ನೀಲಮ್ಮನವರು ನಿರುಪಾಯರಾಗಿ ಹೊರಟು ಹೋದರು. ಹಾಲಯ್ಯನವರು ಜ್ಞಾನಭಿಕ್ಷುಗಳಾಗಿ ಹೊರಟರು. ಆಗ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳವರ ಯಶೋದುಂದುಭಿ ಮೊಳಗುತ್ತಿದ್ದಿತು. ಅಲ್ಲಿಗೆ ಹೋದರು. ಸಿದ್ಧಾರೂಢರ ಸನ್ನಿಧಿಯಲ್ಲಿ ತಮಗೆ ಅತ್ಯಂತ ಪ್ರಿಯವಾಗಿದ್ದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರಗಳ ಆಳವಾದ ಅಧ್ಯಯನ ನಡೆಸಿದರು. ಸಿದ್ಧಾರೂಢರ ವೇದಾಂತ ಪ್ರವಚನ ವೈಖರಿ ಅವರ ಚಿತ್ತವನ್ನು ಆಕರ್ಷಿಸಿತಾದರೂ ಅವರ ಇಷ್ಟಲಿಂಗ ತ್ಯಾಗವು ಇವರಿಗೆ ಒಪ್ಪಿಗೆಯಾಗಲಿಲ್ಲ.ಆದುದರಿಂದ ಅಲ್ಲಿಯ ರುದ್ರಾಕ್ಷಿಮಠದಲ್ಲಿ ಸ್ನಾನ ಲಿಂಗಾರ್ಚನಾದಿಗಳನ್ನು ಪೂರೈಸುತ್ತ, ಭಿಕ್ಷಾನ್ನದಿಂದ ಜೀವಿಸುತ್ತ, ಪಾಠ ಪ್ರವಚನಗಳಿಗಾಗಿ ಮಾತ್ರ ಸಿದ್ಧಾರೂಢರ ಮಠಕ್ಕೆ ಬರುತ್ತ ಕಾಲ ಕಳೆಯತೊಡಗಿದರು. ಹೀಗೆ ಬಾಳು ಸಾಗಿರಲು ಒಂದು ದುರ್ಘಟನೆ ನಡೆಯಿತು. ಎಂದಿನಂತೆ ಅವರು ಭಿಕ್ಷಾನ್ನಕ್ಕಾಗಿ ಭಕ್ತರ ಮನೆಗೆ ಹೋದಾಗ ಮನೆಯೊಂದರಲ್ಲಿ ಕಾಮಿನಿಯೊಬ್ಬಳು ಅವರ ಗಂಡುಗಾಡಿಯನ್ನು ಕಂಡು ಮನಸೋತು ಲಜ್ಜೆಗೆಟ್ಟು ಅವರ ಜೋಳಿಗೆಯನ್ನೇ ಹಿಡಿದು ಒಳಗೆಳೆದಳು. ಶ್ರೀಗಳವರು ಅವಳ ಕಾಮ ಪಿಪಾಸೆಗೆ ಹೇಸಿ ಆ ಜೋಳಿಗೆಯನ್ನು ಅವಳ ಕೈಯಲ್ಲಿಯೇ ಬಿಟ್ಟು ಹಿಂದಿರುಗಿದರು. ಅನಿರೀಕ್ಷಿತವಾಗಿ ನಡೆದ ಆ ಸತ್ವಪರೀಕ್ಷೆಯಲ್ಲಿ ತೇರ್ಗಡೆಯಾದರು, ವೈರಾಗ್ಯ ವಿಜಯವನ್ನು ಮೆರೆದರು.

ಮೊದಲೇ ಸಿದ್ಧಾರೂಢರ ಇಷ್ಟಲಿಂಗವಿರಹಿತ ಆಚರಣೆಯನ್ನು ಒಪ್ಪದೆ ಮನಸ್ಸಿಲ್ಲದ ಮನಸ್ಸಿನಿಂದ ಹುಬ್ಬಳ್ಳಿಯಲ್ಲಿದ್ದ ಅವರಿಗೆ ಈ ಘಟನೆಯಿಂದ ಇನ್ನೂಬೇಸರವೆನಿಸಿತು. ಅಲ್ಲಿಯ ಎರಡೆತ್ತಿನ ಮಠಾರ್ಯರ ಸಲಹೆಯ ಮೇರೆಗೆ ಆಗ ಶರಣವರೇಣ್ಯರೆಂದು ಹೆಸರಾಗಿದ್ದ ಎಮ್ಮಿಗನೂರ ಜಡೆಯಸಿದ್ಧರ ದರ್ಶನಕ್ಕೆ ಹೊರಟರು. ದಾರಿಯುದ್ದಕ್ಕೂ ಅವರ ಪಾವನಮೂರ್ತಿಯನ್ನು ಕಂಡು ಧನ್ಯರಾಗದವರಿಲ್ಲ.

ಬಿಳಿಗಂಬಳಿಯ ಕೊಪ್ಪೆಯಿಂದ ಕೌಪೀನದಿಂ

ತಿಳಿಗಾವಿಯಂಗಿಯಿಂ ಶಾಟಿ ಪಾವುಟಗಳಿಂ

ಹೊಳೆವ ತಂಬಿಗೆಯಿಂದ ಭೂತಿರುದ್ರಾಕ್ಷಮಾಲೆಗಳಿಂದ ಬೆತ್ತದಿಂದ

ಬಲಿದ ತೋಳಾಧಾರದಿಂದ ರಾಜಿಸಿ ಪೋಪ

ಚೆಲುವ ಹರೆಯದ ಸತ್ಯಶೋಧಕನ ವೇಷಮಂ

ನೆಲದೊಳೀಕ್ಷಿಪರ ಕಂಗಳಣಿಯವೇ ಸತ್ವಭಾವವನವರ್ಮೊಂದರೇ?

(ಚೆನ್ನಕವಿ ಕೃತ ಹಾನಗಲ್ಲ ಕುಮಾರೇಶ್ವರ ಪುರಾಣ, ಸಂ. ೪, ಪ. ೨೦)

ಜಡೆಯಸಿದ್ಧರ ದರ್ಶನವಾಯಿತು. ಅವರ ನಿರಂಕುಶ ಸದ್ವೃತ್ತಿಯನ್ನೂ, ವಿಶೇಷ ವೈರಾಗ್ಯಮಯ ಲಕ್ಷಣಗಳನ್ನೂ, ಬಾಹ್ಯಕ್ರಿಯಾನಿವಹ ವಿಸ್ಕೃತಿಯನ್ನೂ ನಿಜಾನಂದಭಾವವನ್ನೂ ನೋಡಿ ಹಾಲಯ್ಯನವರ ಹರುಷ ಹಾಲುಗಡಲಾಗಿ ಉಕ್ಕಿ ಹರಿಯಿತು. ಅವರ ಅನುಗ್ರಹವನ್ನು ಪಡೆದು ಸಂಕೇತರೂಪವಾಗಿ ಸಂಶಯ ನಿವಾರಣೆಯನ್ನೂ ಪಡೆದರು. ತರುವಾಯ ಪರಮ ತಪಸ್ವಿಗಳೂ, ಶಿವಯೋಗಸಿದ್ಧರೂ ಶಿವಾನುಭವಸಾಗರರೂ ಆಗಿದ್ದ ಎಳಂದೂರಿನ ಬಸವಲಿಂಗ ಸ್ವಾಮಿಗಳವರ ಶಿಷ್ಯತ್ವವನ್ನು ವಹಿಸಿದರು. ಎಳಂದೂರ ಬಸವಲಿಂಗ ಸ್ವಾಮಿಗಳು ಮೊದಲು ಗದಗಿನ ಜಗದ್ಗುರು ಶ್ರೀ ತೋಂಟದಾರ್ಯಮಠದ ಮರಿದೇವರು. ವೈರಾಗ್ಯದ ಕರೆಗೆ ಓಗೊಟ್ಟು ಶ್ರೀ ನಿಜಗುಣ ಶಿವಯೋಗಿಗಳ ತಪೋಭೂಮಿಗೆ ಬಂದು ತಿರುಮಕೂಡಲ ನರಸೀಪುರದ ಕಪಿಲಾ-ಕಾವೇರಿ ಸಂಗಮದಲ್ಲಿ ಅನುಷ್ಠಾನ ಮಾಡಿದರು. ನಿಜಗುಣರ ಕೃತಿಗಳ ಆಳವಾದ ಅಭ್ಯಾಸ ಮಾಡಿದರು. ಅವುಗಳನ್ನು ಆಚರಣೆಯಲ್ಲಿ ತಂದು ಶಿವಯೋಗ ಸಿದ್ಧರಾದರು.

ಇಂಥ ಸದ್ಗುರು ಕುಮಾರೇಶನಂಥ ಶಿಷ್ಯರ ಸಮಾಗಮವಾದುದು ಕಬ್ಬಿಗೆ ಜೇನು ಇಟ್ಟಂತಾಯಿತು. ಗುರೂಪದೇಶವನ್ನು ಹೊಂದಿ ಕುಮಾರೇಶರು ಶಂಭುಲಿಂಗನಬೆಟ್ಟದ ನಿಜಗುಣರ ಗವಿಯಲ್ಲಿ ಅನುಷ್ಠಾನ ಮಾಡಿ ಆತ್ಮಸಾಕ್ಷಾತ್ಕಾರ ಮಾಡಿಕೊಂಡರು.ಗುರು ಬಸವಲಿಂಗ ಸ್ವಾಮಿಗಳು ಶಿಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ನೋಡಿ ಹಿರಿಹಿರಿ ಹಿಗ್ಗಿ ಕ್ರಿಯೋಪದೇಶವನ್ನು ಮಾಡಿ ಲಿಂಗೈಕ್ಯರಾದರು. ಕುಮಾರೇಶರು ತಾಯಿಯಿಲ್ಲದ ತಬ್ಬಲಿಗಳಂತಾಗಿ ಸೊರಬ ಪ್ರಾಂತದಲ್ಲಿರುವ ಷಟ್‌ಕಾವ್ಯಕರ್ತೃ ಗುರುಬಸವ ಸ್ವಾಮಿಗಳವರ ಕ್ಯಾಸನೂರಲ್ಲಿರುವ ಗದ್ದಿಗೆಯ ಬಳಿ ಅನುಷ್ಠಾನ ಮಾಡುತ್ತ ಕುಳಿತರು.

ಅತ್ತ ಹಾನಗಲ್ಲಿನ ವಿಖ್ಯಾತ ವಿರಕ್ತಾಶ್ರಮವಾದ ಕುಮಾರ ಸ್ವಾಮಿಗಳ ಮಠದಲ್ಲಿದ್ದ ಶ್ರೀ ಫಕೀರಸ್ವಾಮಿಗಳು ತಪೋನಿಷ್ಠರೂ ವಾಕ್ಸಿದ್ಧಿಯುಳ್ಳವರೂ ಎನಿಸಿ ಅನೇಕರ ಉದ್ಧಾರ ಮಾಡಿ ವೃದ್ಧಾಪ್ಯ ಆವರಿಸಲು ಒಬ್ಬ ಯೋಗ್ಯ ಉತ್ತರಾಧಿಕಾರಿಯ ಶೋಧನೆಯಲ್ಲಿದ್ದರು. ಶ್ರೀ ಕುಮಾರೇಶನ ಕೀರ್ತಿಯನ್ನು ಸೊರಬ ಪ್ರಾಂತದ ಸದ್ಭಕ್ತರಿಂದ ತಿಳಿದು ಕುಮಾರೇಶರನ್ನು ಕರೆಸಿಕೊಂಡು ತಮ್ಮ ಉತ್ತರಾಧಿಕಾರಿಗಳಾಗಲು ಒಡಂಬಡಿಸಿದರು. ಶ್ರೀ ಫಕೀರಸ್ವಾಮಿಗಳವರು ಲಿಂಗೈಕ್ಯರಾಗಲು ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಯ ತೀರದಲ್ಲಿರುವ ಬಿದರಿಯ ಮುಧೋಳ ಮಠದ ಚೆನ್ನಬಸವಯ್ಯ-ಶಿವಲಿಂಗಮ್ಮನವರಿಗೆ ಪುತ್ರರಾಗಿ ಜನಿಸಿ, ಸವದತ್ತಿಯ ಚೌಕೀಮಠದ ಶ್ರೀ ಶಿವಲಿಂಗ ಸ್ವಾಮಿಗಳವರ ಕೃಪಾದೃಷ್ಟಿಗೆ ಪಾತ್ರರಾಗಿ, ಬಂದರದ ರುದ್ರಪ್ಪನವರಲ್ಲಿ ಶಿವಾನುಭವಶಾಸ್ತ್ರ ನಿಷ್ಣಾತರಾಗಿ, ಅಥಣಿಯ ಶೆಟ್ಟರಮಠದ ಶ್ರೀ ಮರುಳಸಿದ್ಧಶಿವಯೋಗಿಗಳಿಂದ ಅನುಗ್ರಹ ಅಧಿಕಾರ ಪಡೆದು, ನವಿಲುತೀರ್ಥದಲ್ಲಿ ತಪಸ್ಸು ಮಾಡಿಪರಮ ತಪಸ್ವಿಗಳಾಗಿ ಅಥಣಿ ಶಿವಯೋಗಿಗಳ ವಿಶ್ವಾಸದ ಸಂಗಡಿಗರಾಗಿ ವಿಖ್ಯಾತರಾಗಿದ್ದ ಬಿದರಿ ಕುಮಾರ ಸ್ವಾಮಿಗಳಿಂದ ಕುಮಾರೇಶರಿಗೆ ಹಾನಗಲ್ಲ ಮಠದ ಅಧಿಕಾರ ಪ್ರಧಾನ ಜರುಗಿತು. ಆಗ ಸದಾಶಿವಸ್ವಾಮಿಗಳೆಂಬ ಅಭಿದಾನ ಪ್ರಾಪ್ತವಾದರೂ ಹಾನಗಲ್ಲ ಕುಮಾರ ಸ್ವಾಮಿಗಳೆಂಬ ಹೆಸರೇ ಕೊನೆಯವರೆಗೆ ಜನರ ರಸನೆಯಲ್ಲಿ ಉಳಿಯಿತು.

ಶ್ರೀಗಳವರ ಅಂತವಿಲ್ಲದ ಕರ್ತೃತ್ವಶಕ್ತಿಗೆ ಮಹಾಪೂರ ಬಂದಿತು. ಮೊದಲು ಹಾನಗಲ್ಲ ಮಠದಲ್ಲಿಯೇ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ೧೯೦೪ರಲ್ಲಿ ಅವರ ದೂರದರ್ಶಿತ್ವ ಹಾಗೂ ಅದ್ವಿತೀಯ ಕರ್ತೃತ್ವಗಳಿಂದ ಧಾರವಾಡದಲ್ಲಿ ವೀರಶೈವ ಮಹಾಸಭೆ ತ್ಯಾಗವೀರ ಲಿಂಗರಾಜ ಸಿರಸಂಗಿ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.ಅಲ್ಲಲ್ಲಿ ವಿದ್ಯಾಸಂಸ್ಥೆಗಳೂ, ವೀರಸನ್ಯಾಸಿಗಳೂ, ಸಮಾಜ ಸಂಸ್ಕರಣ ಕಾರ್ಯಗಳೂ ಅತ್ಯಂತ ಉತ್ಸಾಹದಿಂದ ಉದಯವಾದವು. ಸಮಾಜದ ಉದ್ಧಾರಕ್ಕಾಗಿಯೇ ತಮ್ಮನ್ನು ಮುಡಿಪಾಗಿಡಬಲ್ಲ ಶಿವಯೋಗಸಿದ್ಧರ ಸಮೂಹ ವೊಂದು ಸಿದ್ಧವಾಗುವವರೆಗೆ ಸಮಾಜದ ಉದ್ಧಾರ ಸಾಧ್ಯವಿಲ್ಲವೆಂಬುದನ್ನು ಮನಗಂಡ ಕುಮಾರೇಶರು ಅಂಥ ಸಾಧಕರನ್ನು ಸಿದ್ಧಗೊಳಿಸುವ ಸಂಸ್ಥೆಯೊಂದನ್ನು ಸ್ಥಾಪಿಸಲು ಮನಸ್ಸು ಮಾಡಿದರು.ಪಟ್ಟದಕಲ್ಲಿನ ಹತ್ತಿರ ಭದ್ರನಾಯಕನ ಜಾಲಿಹಾಳೆಂಬ ಸಣ್ಣ ಗ್ರಾಮದಲ್ಲಿ ಬಡ ಭಕ್ತನೊಬ್ಬನ ಮಗನಾಗಿ ಹುಟ್ಟಿ, ಬಾಗಲಕೋಟೆಯ ಮನಗೂಳಿ ವಿರೂಪಾಕ್ಷಯ್ಯನವರ ಸಾಕುಮಗನಾಗಿ ಬೆಳೆದು, ಅಲ್ಲಿಯ ಪ್ರಸಿದ್ಧ ಶಿವಾನುಭವಿಗಳಾಗಿದ್ದ ಕಿಣಗಿ ಬಸವಲಿಂಗಪ್ಪನವರ ಪ್ರಭಾವದಿಂದ ಅಧ್ಯಾತ್ಮದತ್ತ ಒಲಿದು, ಇಳಕಲ್ಲ ಹತ್ತಿರದ ಕೊಡಗಲಿಯ ವಿರಕ್ತಮಠದಲ್ಲಿದ್ದ ಮಹಾತಪಸ್ವಿ ಮಹಾಲಿಂಗ ಸ್ವಾಮಿಗಳವರಿಂದ ಉಪದೇಶ ಪಡೆದು, ನಾಡಿನಲ್ಲಿ ಸಂಚರಿಸಿ ತಮ್ಮ ಅಸ್ಖಲಿತ ವಾಣಿಯಿಂದ ಅದ್ಭುತವಾದ ಪುರಾಣ ಪ್ರವಚನ ಕೀರ್ತನ ಕಲೆಯಿಂದ ಸ್ವಮತ ಪರಮತಗಳ ಆಸ್ತಿಕರೆಲ್ಲ ಆದರಕ್ಕೆ ಪಾತ್ರರಾಗಿ ವಿರಾಗವಿಭುವೆಂದು ಹೆಸರಾಗಿದ್ದ ವೈರಾಗ್ಯದ ಮಲ್ಲಣಾರ್ಯರಿಂದ ಶ್ರೀಗಳವರ ಈ ಯೋಜನೆಗೆ ಬೆಂಬಲ ಸಿಕ್ಕಿತು. ೧೯೦೮ರಲ್ಲಿ ಬಾಗಲಕೋಟೆಯಲ್ಲಿ ಕೀರ್ತಿಶೇಷ ರಾಜಾ ಲಖಮನಗೌಡಾ ಬಸವಪ್ರಭು ಸರದೇಸಾಯಿ ಒಂಟಮುರಿ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ನಾಲ್ಕನೆಯ ವೀರಶೈವ ಮಹಾಸಭಾಧಿವೇಶನದ ಕಾಲಕ್ಕೆ ಧರ್ಮಾವತಾರಿಗಳಾದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಆಲೋಚನಾ ಸಭೆ ಸೇರಿ ಆ ಬಗ್ಗೆ ಅಂತಿಮ ನಿರ್ಣಯವನ್ನು ಅಂಗೀಕರಿಸಲಾಯಿತು. ಆಗ ಮಹಾತಪಸ್ವಿಗಳೆನಿಸಿದ್ದ ಇಳಕಲ್ಲ ಮಹಾಂತ ಸ್ವಾಮಿಗಳವರು ತೋರಿಸಿದ ಸ್ಥಳದಲ್ಲಿ “ಶಿವಯೋಗಮಂದಿರ’ವೆಂಬ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ನಿರ್ಣಯವಾಯಿತು.

ಅರಸೀಕೆರೆ ತಾಲೂಕಿನ ಸಸಿವಾಳ ಗ್ರಾಮದಲ್ಲಿ ಹಿರಿಯಮಠದ ವೀರಯ್ಯ-ಗೌರಮ್ಮರಿಗೆ ಮಳೆಯಪ್ಪಾರ್ಯನೆಂಬ ನಾಮದಿಂದ ಮಗನಾಗಿ ಶಾ.ಶ. ೧೭೭೨ರಲ್ಲಿ ಜನಿಸಿ, ಬಳ್ಳಾರಿಯ ಸಕ್ಕರಿ ಕರಡೆಪ್ಪನವರ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ, ಹುನಗುಂದ ತಾಲೂಕಿನ ಚಿತ್ತರಗಿಯ ಶಿವಯೋಗ ಪೀಠವನ್ನೇರಿ ವಿಜಯಮಹಾಂತ ಶಿವಯೋಗಿಗಳಾಗಿ ಮಹಾತ್ಮರಾದವರು ಇಳಕಲ್ಲ ಮಹಾಂತ ಸ್ವಾಮಿಗಳವರು. ‘ಶಮೆ, ದಯೆ, ವಿವೇಕ, ವೈರಾಗ್ಯ, ಪರಿಪೂರ್ಣ ಭಾವ, ಶಾಂತಿ,ಕಾರುಣ್ಯ, ಶ್ರದ್ಧೆ, ಸತ್ಯ, ಸದ್ಭಕ್ತಿ, ಶಿವಜ್ಞಾನ, ಶಿವಾನಂದ’ಗಳೇ ಸಾಕಾರವಾಗಿದ್ದ ಮಹಾತ್ಮರವರು. ಮಠದ ಆಳುಗಳು ಪ್ರಮಾದವಶದಿಂದ ಸರಕಾರದ ಮರಗಳನ್ನು ಕಡಿದು ದಂಡನೆಗೆ ಗುರಿಯಾಗುವ ಪರಿಸ್ಥಿತಿಯಲ್ಲಿರುವಾಗ ತಾವೇ ತಾಲೂಕು ಆಫೀಸಿಗೆ ಹೋಗಿ ತಮ್ಮ ತಮ್ಮದೇ, ಶಿಕ್ಷೆ ತಮಗೆ ವಿಧಿಸಬೇಕೆಂದು’ ಹೇಳಿದ ಮಹಾನುಭಾವರವರು.

ವಾರದ ಮಲ್ಲಪ್ಪನವರು ಕಾಣಿಕೆಯೆಂದು ಹಣತುಂಬಿದ ತಾಟನ್ನು ಎದುರಿಗಿರಿಸಿದಾಗ ಹಣವನ್ನು ತೃಣವೆಂದು ಕಂಡು, `ಬಸವಣ್ಣನವರ ವಚನಗಳ ತಿರುಳನ್ನು ತಿಳಿದು ನಡೆಯುತ್ತೇನೆ’ ಎಂಬ ವಚನಭಿಕ್ಷೆಯನ್ನು ನೀಡೆಂದು ಅವರನ್ನು ಕೇಳಿದ ಆಶಾರಹಿತ ಅಧ್ಯಾತ್ಮವೀರರವರು. ಸರ್ವಧರ್ಮ ಸಮನ್ವಯ ದೃಷ್ಟಿಯನ್ನಿರಿಸಿಕೊಂಡು ಸಕಲ ಮತದವರಿಗೂ ಶ್ರೇಯ ಪ್ರೇಯಗಳನ್ನು ಅನುಗ್ರಹಿಸಿ ಅಮರರಾದ ಅನುಭಾವಿಗಳವರು.ಅಂಥ ಮಹಾತ್ಮರು ತೋರಿಸಿದ, ಹಿಂದೆ ಮಹಾಮಹಿಮ ಕೊಟ್ಟೂರು ಬಸವೇಶ್ವರರ ತಪೋವನವಾಗಿದ್ದ, ಇಂದು ಬನಶಂಕರಿನಾಗನಾಥ ಮಹಾಕೂಟ, ವಾತಾಪಿಪುರ (ಬಾದಾಮಿ) ಪಟ್ಟದಕಲ್ಲು ಮತ್ತು ಐಹೊಳೆಗಳ ಮಧ್ಯದಲ್ಲಿರುವ ಪವಿತ್ರ ಸ್ಥಾನದಲ್ಲಿ ಶಿವಯೋಗಮಂದಿರ ಸಂಸ್ಥೆಯು ಕ್ರಿ.ಶ. ೧೯೦೯ರಲ್ಲಿ ಸ್ಥಾಪಿತವಾಯಿತು.ಸ್ವತಃ ಇಳಕಲ್ಲ ಮಹಾಂತ ಸ್ವಾಮಿಗಳವರೇ ವೈ, ಶು. ೭ಗೆ ಲಿಂಗಮುದ್ರೆಗಳನ್ನು ಸ್ಥಾಪಿಸಿದರು. ವಟುಗಳು ಬಂದರು. ಯೋಗಪಟು ಗಳಾಗತೊಡಗಿದರು. ಶಾಸ್ತ್ರಕಾರರು,ಕಲೆಗಾರರು, ಕವಿಗಳು, ವೈದ್ಯರು, ಸಿದ್ಧರು, ಸಾಧಕರು, ಭಕ್ತರು, ಮುಕ್ತರು ಸಾಲುಸಾಲಾಗಿ ಶಿವಯೋಗಮಂದಿರಕ್ಕೆ ಬರತೊಡಗಿದರು. ಶಿವಯೋಗ ಮಂದಿರವು ಶಿವಜೀವೈಕ್ಯ ವಿದ್ಯೆಯ ಕೇಂದ್ರವಾಯಿತು. ಗ್ರಂಥಸಂಗ್ರಹ-ಸಂಶೋಧನ-ಪ್ರಕಾಶನ ಕಾರ್ಯ ನಡೆಯಿತು; ಉಪದೇಶಕರು, ಸಂಗೀತಕಾರರು, ಕವಿಗಳು, ಕೀರ್ತನಕಾರರು ಸಿದ್ಧರಾಗತೊಡಗಿದರು. ಸಮಾಜ ಜಾಗೃತಿಗಾಗಿ, ಪುನರುಜೀವನಕ್ಕಾಗಿ, ವೈದ್ಯಶಾಸ್ತ್ರದ ವ್ಯಾಸಂಗ ಸಂಶೋಧನೆಗಳು ನಡೆದುವು; ಭಸ್ಮ-ಲಿಂಗಗಳ ನಿರ್ಮಾಣ, ಕೃಷಿ ಸಂವರ್ಧನ,ಪಶು ಸಂಗೋಪನ, ಗ್ರಾಮೋದ್ಯೋಗಗಳ ಪುನರುತ್ಥಾನ, ಗೋಸಂವರ್ಧನ, ಖಾದಿ ಪ್ರೋತ್ಸಾಹನ-ಹೀಗೆ ಹಲವು ಮುಖವಾಗಿ ರಾಷ್ಟ್ರ ನಿರ್ಮಾಣಕಾರ್ಯ ಭರದಿಂದ ಸಾಗಿತು; ಶಿಕ್ಷಣ ಪ್ರಸಾರ, ಸಾಹಿತ್ಯ ಪ್ರಚಾರಗಳಿಗೆ ನರೆಬಂದಿತು; ವಾಣಿಜ್ಯ ವ್ಯಾಪಾರಗಳಿಗೂ ಉತ್ತೇಜನ ದೊರೆಯಿತು. ಪತ್ರಿಕೆಗಳೂ ಪ್ರಕಟವಾಗತೊಡಗಿದವು.ಒಟ್ಟಿನಲ್ಲಿ ಹೊಸ ಹುಟ್ಟೊಂದು ತಲೆದೋರಿತು.

ಎಂಥ ಹೊಸಹುಟ್ಟದು! ಎಳಂದೂರ ಬಸವಲಿಂಗ ಸ್ವಾಮಿಗಳು, ಬಿದರಿ ಕುಮಾರ ಸ್ವಾಮಿಗಳು, ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು, ಚಿತ್ತರಗಿಯ ಮಹಾಂತಶಿವಯೋಗಿಗಳು, ಮಲ್ಲನಕೆರೆಯ ಚನ್ನಬಸವ ಸ್ವಾಮಿಗಳು, ಹುಬ್ಬಳ್ಳಿಯ ಮೂರುಸಾವಿರಮಠದ ಗಂಗಾಧರ ಮಹಾಸ್ವಾಮಿಗಳವರು, ಅನಂತಪುರದ ಜಗದ್ಗುರು ಗುರುಬಸವ ಮಹಾಸ್ವಾಮಿಗಳು ಮತ್ತು ಜ. ಲಿಂಗ ಮಹಾಸ್ವಾಮಿಗಳು, ಗದಗಿನ ತೋಂಟದಾರ್ಯ ಮಠದ ಜ. ಸಿದ್ದೇಶ್ವರ ಸ್ವಾಮಿಗಳು, ಹಾವೇರಿಯ ಹುಕ್ಕೇರಿಮಠದ

ಶಿವಬಸವ ಮಹಾಸ್ವಾಮಿಗಳು, ಶಾಂತವೀರ ಸ್ವಾಮಿಗಳು ಕರವೀರಮಠ ಬಾಗಲಕೋಟೆ. ಕೆಳದಿಯ ಹಿರಿಯಮಠದ ರೇವಣಸಿದ್ಧ ಪಟ್ಟಾಧ್ಯಕ್ಷರು, ಸೊಲ್ಲಾಪುರದ ವೀರೇಶ್ವರ ಶರಣರು, ಕಲ್ಲೂರ ಶರಣರು, ಹಾಲಕೆರೆಯ ಅನ್ನದಾನ ಸ್ವಾಮಿಗಳು, ಗುತ್ತಲದ ರುದ್ರಸ್ವಾಮಿಗಳು, ಸೂಡಿಯ ಪಟ್ಟಾಧ್ಯಕ್ಷರು ಮೊದಲಾದ ಶರಣ ಕುಲದೀಪಕರ ಸಂಯುಕ್ತ ಪ್ರಭಾವಲಯದಲ್ಲಿ ಉದ್ಭವಿಸಿ ಕುಮಾರ ಸ್ವಾಮಿಗಳ ಆತ್ಮತೇಜದಲ್ಲಿ ತೊಳಗಿ ಬೆಳಗಿದ ಆ ಹೊಸಹುಟ್ಟು ಅವಿಸ್ಮರಣೀಯವಾದುದು. ಅದು ಇತ್ತ ಅಮೃತ ಫಲಗಳಾದರೂ ಎಂಥವು! ಬಾಗಲಕೋಟೆಯ ಶಿವಮೂರ್ತಿ ಸ್ವಾಮಿಗಳು, ಕಂಚುಕಲ್ಲ.ಬಿದರೆ ‘ಯೋಗಿರಾಜ’ ಪ್ರಭುಕುಮಾರ ಪಟ್ಟಾಧ್ಯಕ್ಷರು, ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು, ನವಿಲುಗುಂದದ ಗವಿಮಠದ ಬಸವಲಿಂಗ ಶಿವಯೋಗಿಗಳು.ನಿಡುಮಾಮಿಡಿ ಜಗದ್ಗುರುಗಳು (ಜ.ಚ.ನಿ), ಬಂಥನಾಳ ಶಿವಯೋಗಿಗಳು,ಕುರವತ್ತಿಯ ತೋಂಟದಾರ್ಯ (ಮಹಾದೇವ) ಸ್ವಾಮಿಗಳು, ಐಹೊಳೆಯ ಸದಾಶಿವದೇವರು, ಚಿತ್ತರಗಿ ಇಳಕಲ್ಲ ಪೀಠದ ಗುರು ಮಹಾಂತ ಸ್ವಾಮಿಗಳು,ಸಂಪಗಾವಿಯ ನೀಲಕಂಠ ಶಿವಾಚಾರ್ಯರು, ಹಾನಗಲ್ಲ ಮಹೇಶ್ವರ ಸ್ವಾಮಿಗಳು, ಹಾಲಕೆರೆಯ ಅನ್ನದಾನ ಸ್ವಾಮಿಗಳು, ಜಡೆಯ ಸಿದ್ಧಬಸವ ಸ್ವಾಮಿಗಳು, ಕಲ್ಯಾಣದ ಸಿದ್ಧಲಿಂಗ ಸ್ವಾಮಿಗಳು, ಬನವಾಸಿಯ ಸಿದ್ಧವೀರ ಸ್ವಾಮಿಗಳು, ಕುಷ್ಟಗಿಯ ಪಟ್ಟದ ಕರಿಬಸವ ಶಿವಾಚಾರ್ಯರು, ಸಖರಾಯಪಟ್ಟಣದ ಸದಾಶಿವ ಪಟ್ಟಾಧ್ಯಕ್ಷರು,ಹುಬ್ಬಳ್ಳಿಯ ಮೂರುಸಾವಿರಮಠದ ಹಿಂದಿನ ಜಗದ್ಗುರುಗಳವರು, ಅನಂತಪುರದ ಜ, ಸಚ್ಚಿದಾನಂದ ಮುರುಘರಾಜೇಂದ್ರ ಸ್ವಾಮಿಗಳು, ಹಾನಗಲ್ಲ ಸದಾಶಿವ ಸ್ವಾಮಿಗಳು,ಅಂಕಲಗಿಯ ಸಿದ್ಧರಾಮ ಸ್ವಾಮಿಗಳು, ಮುಂಡರಗಿಯ ಅನ್ನದಾನ ಸ್ವಾಮಿಗಳು, ಹಾರಹಳ್ಳಿ, ತಾವಕೆರೆ, ತೆಲಸಂಗ, ಬೇವಿನಕಟ್ಟೆ, ಖೆಳಗಿ, ನಿಡಗುಂದಿಕೊಪ್ಪ, ಮೊರಬ,ಕಪನಳ್ಳಿ, ನಾಗನೂರು, ಕೆರೂರು, ರಾವೂರು, ಗುಳೇದಗುಡ್ಡ, ಸಾಲೂರು, ಭಾಲ್ಕಿ,ಬಾರಂಗಿ ಕೂಡ್ಲಿ, ಮುಳ್ಳಳ್ಳಿ, ಕಡಕೋಳ, ಹೊಸಳ್ಳಿ, ಅಮೀನಗಡ, ಸಿಂದಗಿ, ಶಿರ್ಶಿ,ನೀಲಗುಂದ, ಹಾಸನ, ಸವದತ್ತಿ, ಪಡುಸಲಗಿ, ಗುಡಗೇರಿ, ಚಿಕ್ಕಸುಗೂರ, ತುಪ್ಪದ ಕುರಹಟ್ಟಿ, ಕನ್ನೂರು, ಚಿಂಚಣಿ, ಗುಳೇದಗುಡ್ಡ, ಗೊಗ್ಗಿಹಳ್ಳಿ, ಕಾಪನಹಳ್ಳಿ, ಬೇನಾಳ,ರಾಮಗಡ್ಡಿ, ಬಾಣಾವರ, ಬೀಳಗಿ, ದೊಡ್ಡಮೇಟಿ ಕುರಿಕೆ, ಹಾಲ್ಟಿ, ಗೌರಿಕೆರೆ, ಬಬಲೇಶ್ವರ.ಸವಣೂರು, ತಡಸ ಮೊದಲಾದ ಸ್ಥಳಗಳ ಶ್ರೀಗಳವರು, ಉಭಯಗಾನವಿಶಾರದ ಪಂಚಾಕ್ಷರ ಗವಾಯಿಗಳು ಅವರ ಪಟ್ಟಶಿಷ್ಯರಾದ ಪುಟ್ಟಯ್ಯನವರು, ಸಂಗೀತ ಸುಧಾಕರ ಬಸವರಾಜ ರಾಜಗುರು, ಸಂಗೀತ ವಿದ್ವಾನ್ ಕರೂರು ಗುರುಬಸವಾರ್ಯ ಹಿರೇಮಠರು, ಸಂಗೀತ ಸುಧಾಕರ ಸಿದ್ಧರಾಮ ಜಂಬಲದಿನ್ನಿ ಮೊದಲಾದ ಸಂಗೀತವಿದ್ವಾಂಸರು, ಕವಿರತ್ನ ಚೆನ್ನಕವಿಗಳು ದ್ಯಾಂಪುರ, ಪಂ. ಕಲ್ಲಿನಾಥ ಶಾಸ್ತ್ರಿಗಳು ಪುರಾಣಿಕ, ಮಹಾಲಿಂಗ ವೀರಾರ್ಯ ಹಿರೇಮಠ ದ್ಯಾಂಪುರ, ಗಂಗಾಧರ ಶಾಸ್ತ್ರಿಗಳು ಚಿತ್ತರಗಿ, ಬಸವಲಿಂಗ ಶಾಸ್ತಿಗಳಂಥ ಕೀರ್ತನಾಚಾರ್ಯರು-ಹೀಗೆ ಎಣಿಕೆಗೆ ಎಟುಕದಷ್ಟು ಅಮೃತಫಲಗಳನ್ನು ಕೊಟ್ಟಿತು ಕುಮಾರೇಶನು ತಂದ ಹೊಸಹುಟ್ಟು,

ವೀರವೈರಾಗ್ಯವನ್ನಪ್ಪಿದರೂ ಕುಮಾರೇಶರು ಕರುಣರಸಭರಿತರು, ಉದಾರ ಚರಿತರು. ಅವರ ವಟುವಾತ್ಸಲ್ಯ, ದೀನಬಂಧುತ್ವ, ಸರ್ವಧರ್ಮ ಸಮನ್ವಯ ದೃಷ್ಟಿ,“ಸರ್ವೇಜನಾಸ್ಸುಖಿನೋ ಭವಂತು’ ಎಂಬ ವಿಶ್ವವಿಶಾಲ ಹೃದಯ ಇತ್ಯಾದಿಗಳು ಅವರ್ಣನೀಯವಾದವುಗಳು. ಶಿವಯೋಗ ಮಂದಿರದಲ್ಲಿ ಒಮ್ಮೆ ನವಿಲುಗುಂದದ ಬಸವಲಿಂಗ ಸ್ವಾಮಿಗಳವರು ಭಾಷಣ ಮಾಡುತ್ತ ‘ಜಗತ್ತಿನಲ್ಲಿ ವೀರಶೈವ ಮತವೇ ಶ್ರೇಷ್ಠ’ವೆಂದು ಸಾರಲು ಶ್ರೀ ಕುಮಾರ ಯೋಗಿಗಳು ಅವರನ್ನು ‘ಜಗತ್ತಿನ ಯಾವ ಯಾವ ಧರ್ಮಗಳ ಬಗೆಗೆ ಓದಿಕೊಂಡಿರುವೆ?’ ಎಂದು ಕೇಳಿದರಂತೆ. ಬಸವಲಿಂಗ ಸ್ವಾಮಿಗಳವರಿಂದ ‘ಇಲ್ಲ’ವೆಂಬ ಉತ್ತರಬರಲು, ‘ಕೇವಲ ನಿನ್ನ ಧರ್ಮದ ಬಗ್ಗೆ ಮಾತ್ರ ಓದಿಕೊಂಡು ಜಗತ್ತಿನ ಎಲ್ಲ ಧರ್ಮಗಳಿಗಿಂತ ನಿನ್ನ ಧರ್ಮವೇ ಶ್ರೇಷ್ಠವಾದುದೆಂದು ಹೇಗೆ ಹೇಳಿದೆ? ಅದಕ್ಕೆ ಆಧಾರವೇನು? ಎಲ್ಲರಿಗೂ ತಮ್ಮ ಧರ್ಮ ಪ್ರಿಯವಾಗುತ್ತದೆ. ನಮ್ಮ ಧರ್ಮವೇ ಶ್ರೇಷ್ಠವೆಂದು ಸಾರಿ ಅನ್ಯರ ಮನ ನೋಯಿಸುವುದು ಉಚಿತವೆ? ಎಲ್ಲ ಧರ್ಮಗಳನ್ನೂ ತುಲನಾತ್ಮಕ ದೃಷ್ಟಿಯಿಂದ ಅರಿತುಕೊಳ್ಳಬೇಕು.ಎಲ್ಲ ಧರ್ಮಗಳ ಬಗೆಗೂ ಸಹಿಷ್ಣುತೆ ಇರಬೇಕು. ಸ್ವಮತ ಶ್ರದ್ಧೆಯು ಅನ್ಯಮತಗಳ ಅವಹೇಳನೆಗೆ ಆಸ್ಪದವೀಯ ಬಾರದು!’ ಎಂದು ಶ್ರೀಗಳವರ ಉದಾರವಾಣಿ ವಚಿಸಿತಂತೆ. ಅವರ ಪ್ರಭಾವದಿಂದಲೇ ಇಂದಿಗೂ ನವಿಲುಗುಂದದ ಗವಿಮಠದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯುತ್ತಿದೆ.

ಅಸ್ಪೃಶ್ಯತೆಯ ನಿವಾರಣೆಗಾಗಿ ಹೆಣಗಿದರವರು. ಶ್ರೀಮಂತರ ಸೌಧಗಳಿಗೆ ಹೋಗುವುದನ್ನು ಬಿಟ್ಟಾದರೂ ಬಡವರ ಮನೆಗಳಿಗೆ ಹೋಗುತ್ತಿದ್ದರವರು. ಸರಳ ಜೀವನ ಉನ್ನತ ಆದರ್ಶಗಳೇ ಉಸಿರಾಗಿದ್ದವರವರು. ಖಾದಿಗೆ ಪ್ರೋತ್ಸಾಹವನ್ನಿತ್ತರವರು. ಅನೇಕ ಹೃದಯಸ್ಪರ್ಶಿಯಾದ ಭಾವಗೀತೆಗಳನ್ನು ರಚಿಸಿ ನವೀನ ನಿಜಭಕ್ತಿ ತರಂಗಿಣಿಯನ್ನು ಹರಿಸಿದವರು ಅವರು. ಶುದ್ಧ ಭಕ್ತಿಯಿಂದ ಬಡ ಕುರಬನೊಬ್ಬನು ತಂದಿದ್ದ ಹಾಲನ್ನು ಸ್ವೀಕರಿಸುವುದೋ ಬಿಡುವುದೋ ಎಂದು ಉಳಿದವರು ವಿವೇಚನೆಗೆ ಒಳಗಾಗಿದ್ದಾಗ ನಿಜಭಕ್ತಿ ಬೆರೆತ ಆ ಹಾಲೇ ಅಮೃತವೆಂದು ಅದನ್ನು ಸ್ವೀಕರಿಸಿದವರು ಆ ಮಹಾತ್ಮರು. ಸೊಲ್ಲಾಪುರದ ವೀರೇಶ್ವರ ಶಿವಶರಣರು ಲಿಂಗೈಕ್ಯರಾಗಲಿರುವರೆಂಬ ಸುದ್ದಿ ತಿಳಿಯುತ್ತಲೆ ವ್ರತಭಂಗವನ್ನೂ ಗಮನಿಸದೆ ಉಗಿಬಂಡಿಯಲ್ಲಿ ಪ್ರವಾಸ ಮಾಡಿದವರು ಆ ಕೃಪಾಸಿಂಧುಗಳು. ಅವರು ಏನು ಅಹುದು? ಏನು ಅಲ್ಲ?

ಭಕ್ತಿಯಲ್ಲಿ ಬಸವ ನೀನಯ್ಯ ಜ್ಞಾನದಲ್ಲಿ ಚನ್ನಬಸವ ನೀನಯ್ಯ!

ವಿರತಿಯಲ್ಲಿ ಅಲ್ಲಮಪ್ರಭು ನೀನಯ್ಯ! ಶಿವಯೋಗದಲ್ಲಿ ಸಿದ್ಧರಾಮ ನೀನಯ್ಯ!

ಐಕ್ಯದಲ್ಲಿ ಅಜಗಣ್ಣ ನೀನಯ್ಯ! ಉಳಿದ ಕಾಯಕಂಗಳಲ್ಲಿ

ಎಲ್ಲ ಶಿವಶರಣರಂಶ ನೀನಯ್ಯ! ಶ್ರೀ ನಿಡುಮಾಮಿಡಿ ಶ್ರೀಗಿರಿ

ಸೂರ್ಯ ಸಿಂಹಾಸನಾಧೀಶವಾಸ ಕುಮಾರೇಶ್ವರ

ಜಚನಿ

ಕಾಯವಿಕಾರವಿಲ್ಲ ಮನದುಣಮಿಲ್ಲ ಮದಾಳಿಯಿಲ್ಲವಾ

ವಾಯು ಗುಣಂಗಳಿಲ್ಲ ನಿಖಿಲೇಂದ್ರಿಯ ಚೇಷ್ಟೆಗಳಿಲ್ಲ ವಾನಗಂ

ಮಾಯೆಯ ಕಾಟವಿಲ್ಲ ವಿಷಯಂಗಳ ಲಾಲಸೆಯಿಲ್ಲ ಜೀವನಾ

ಪಾಯಮದಿಲ್ಲ ನಿನ್ನೊಳ ಮಹಾ ಪ್ರಭುಲಿಂಗ ಕುಮಾರಯೋಗಿಯೆ||

ಲಿಂ, ಕವಿರತ್ನ ಚೆನ್ನಕವಿಗಳು

ಎಂಬ ಜ.ಚ.ನಿಯವರ ವಚನ ರತ್ನವನ್ನು ಮತ್ತು ಕವಿರತ್ನ ಚೆನ್ನಕವಿಗಳ ನುಡಿಯೊಂದನ್ನು ಉದ್ಧರಿಸಿಬಿಟ್ಟರೆ ಸಾಕೆಂದು ತೋರುತ್ತದೆ.

( ಆಕರ : ಸಿದ್ಧಯ್ಯ ಪುರಾಣಿಕರ ‘ಶರಣ ಚರಿತಾಮೃತ’ ಪು. ೮೨೧-೮೩೨)

• ಡಾ. ಹಿರೇಮಲ್ಲೂರ ಈಶ್ವರನ್

(ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ.  ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. ‘ಹರಿಹರ ಕವಿಯ ಕೃತಿಗಳು – ಒಂದು ಸಂಖ್ಯಾನಿರ್ಣಯವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್‌ ನಲ್ಲಿ ನೆಲೆಸಿದರು. ಮನುಸ್ಮೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ಗ್ರಂಥಗಳ ಸಂಪಾದಕರಾಗಿದ್ದರು. ಎರಡು ದಶಕಗಳ ಕಾಲ ಮೂರು ಅಂತಾರಾಷ್ಟ್ರೀಯ ತ್ರೈಮಾಸಿಕಗಳನ್ನು ಪ್ರಕಟಿಸುತ್ತಿದ್ದರು. 1998ರ ಜೂನ್ 23 ರಂದು ಹಾಲೆಂಡ್ ನಲ್ಲೇ ನಿಧನರಾದರು.)

ಬಾದಾಮಿಯ ಚಾಲುಕ್ಯರ ನಾಡಿನಲ್ಲಿ ಗುಳೇದಗುಡ್ಡದ ಜಟಕಾಸಾಬಿಯ ಕುದುರೆಓಡುತ್ತಿತ್ತು. ಗುಳೇದಗುಡ್ಡದ ಗೆಳೆಯರ ಔದಾರೆ. ನಾಡಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಶಿವಯೋಗಮಂದಿರದ ಕಡೆಗೆ ಹೊರಟಿದ್ದೆವು. ದಾರಿಯಲ್ಲಿ ಹಂಸನೂರು, ದೇವದಾಸಿಯರ ಊರು ಅದು: ತೋಗಣಸಿ ಮಾಂತ್ರಿಕರ ವಾಸಸ್ಥಾನ. ಕೆಂದೂರು ಅಂದವಾದ ಹಳ್ಳಿ, ಕುಟುಗನ ಕೆರೆ ಬಂದಿತು, ಗೆಳೆಯರು ಒತ್ತಾಯ ಮಾಡಿದರು. ಗಾಡಿಯಿಂದಿಳಿದವು. ದಾರಿಯ ಹತ್ತಿರವೇ ಉಪಾಹಾರ ಮಂದಿರ.ಗಾಳಿಗೆ ಮೈಯೊಡ್ಡಿ ಕುಟುಗನ ಕೆರೆಯ ಆತಿಥ್ಯ ಪಡೆದು ಮುಂದೆ ಸಾಗಿದಾಗ ಸುಮಾರು  ಹೊತ್ತೇರಿದ್ದಿತು.

ಲೈನದಾರಿಯ ಇಕ್ಕೆಲದಲ್ಲಿ ತರುಮರಾದಿಗಳು ಹಸಿರು ಮುಡಿದು ನಿಂತಿದ್ದವು. ಗಿಡಮರಗಳಿಂದಾಚೆಗೆ ಮೇರೆ ಮೀರಿ ಹಬ್ಬಿದ ಹೊಲಗದ್ದೆಗಳಲ್ಲಿ ಸಜ್ಜೆ ಜೋಳಗಳು ಚವರಿ ಬೀಸುತ್ತಿದ್ದವು. ಅಷ್ಟು ಬಿಸಿಲೂ ಅಲ್ಲ. ಅಷ್ಟು ನೆಳಲೂ ಅಲ್ಲ, ಅಂತಹ ಹೊತ್ತಿನಲ್ಲಿ ಗಾಳಿ ಸುಯ್ಕೆಂದು ಬೀಸಿ ಕಣ್ಮನಗಳಲ್ಲಿ ಕಾರ್ಯ ನಿಮಗ್ನರಾದ ರೈತಕುಲ, ದಾರಿಯಲ್ಲಿ ಅಡ್ಡಬರುವ ಜನ; ಈ ದೃಶ್ಯವನ್ನು, ಈ ನಾಡನ್ನು ಈ ಜನತೆಯನ್ನು ಎಲ್ಲಿಯೋ ಕಂಡ ನೆನಪು. ಇದಕ್ಕೂ ಮೊದಲು ಎಲ್ಲಿಯೋ ನೋಡಿದಂತೆ ಅನುಭವ.

ಹೌದೌದು. ಏಳನೆಯ ಶತಮಾನದಲ್ಲಿ ಇತ್ತ ಕಡೆ ಬಂದ ನೆನಪು. ಅದು ಎರಡನೆಯ ಪುಲಕೇಶಿಯ ಕಾಲ. ಹುವೆನ್ ಚಿಂಗನೊಡನೆ ಬಂದುದು ನಿಜ. ನಮ್ಮನಾಳುವ ದೊರೆ ಪುಲಕೇಶಿ, ಅವನ ಅಭಿಮಾನ ನಮ್ಮ ಅಭಿಮಾನ. ಅವನ ಕ್ಷಾತ್ರತೇಜ ಕನ್ನಡದ ಕ್ಷಾತ್ರತೇಜ, ಸ್ನೇಹ ಬೇಡಿದವರು ಧನ್ಯರು. ವೈರ ಬಗೆದವರು ಸತ್ತರು. ಛಲ ಛಲ, ಹಟ ಹಟ, ಪ್ರೇಮ ಪ್ರೇಮ. ಅರಸನಂತೆ ಪ್ರಜೆಗಳು. ಸುಭಟರ್ಕಳ್,ಕಲಿಗಳ, ಸುಪ್ರಭುಗಳ, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ  ಗಂಭೀರಚಿತ್ತರ್, ವಿವೇಕಿಗಳೇ, ಇವರೇ ಹರ್ಷವರ್ಧನನನ್ನು ಸೋಲಿಸಿದವರು. ಹರವಾದ ಎದೆ. ನೀಳವಾದ ತೋಳು, ಹೊಳೆವ ಕಂಗಳು, ದುಂಡು ಮೊಗ, ನುಡಿದಂತೆ ನಡೆ. ವಿಚಾರದಂತೆ ಆಚಾರ.

ದಾರಿ ದಾರಿಗುಂಟ ಭೀಕರವಾದ ಬಂಡೆಗಲ್ಲುಗಳು ಒಂದರಮೇಲೊಂದು ಒರಗಿಕೊಂಡಿದ್ದವು. ಕಾಲಕ್ಕೆ ಸಾಕ್ಷಿ ಹೇಳುತ್ತ ಮಲಗಿಕೊಂಡಂತೆ ತೋರುತ್ತಿದ್ದವು.ಶರಪಂಜರದ ಮೇಲೊರಗಿದ ಭೀಷ್ಮಾಚಾರ್ಯರಂತೆ ಎದೆಯೊಡ್ಡಿ ಮಲಗಿ ಕೊಂಡಿವೆ.ಎದೆಯ ಮೇಲೆ ಹದಿಮೂರುನೂರು ವರುಷ ಅಡ್ಡಾಡಿವೆ. ಹೆಜ್ಜೆ ಮೂಡಿವೆ. ಆದರೆ ಎದೆ ಹಣ್ಣಾಗಿಲ್ಲ. ಆತ್ಮಶ್ರೀ ಕಾಂತಿಗುಂದಿಲ್ಲ. ‘ಏನು ಬರುವುದೋ ಬರುವ ಕಾಲಕ್ಕೊಮ್ಮೆ ಬಂದು ಬಿಡಲಿ’ ಎಂದೆನ್ನುತ್ತ ಅಬ್ಬರದ ಆಶಾವಾದವನ್ನು ತಳೆದು ಇವು ಹೆಜ್ಜೆ ಕಿತ್ತಿಲ್ಲ ನಿಂತ ಜಾಗ ಬಿಟ್ಟಿಲ್ಲ. ಸ್ವಾಭಿಮಾನದ ವಜ್ರಕವಚ ಧರಿಸಿಕೊಂಡು ದಾರಿ ದಾರಿಗೆ ನಿಂತ ಶಿಲಾತಪಸ್ವಿಗಳಿಗೆ ಕೈಮುಗಿದು ಮುಂಬಂದರೆ ಮಹಾಕೂಟ, ದಕ್ಷಿಣ ಕಾಶಿ ಇದು, ಉತ್ತರ ಕಾಶಿ ಅದು, ಎರಡು ಸಾವಿರ ಲಿಂಗಗಳು ಮಹಾಕೂಟದ ಮಹೋನ್ನತಿಗೆಂದು ದಿವಾರಾತ್ರಿ ಕಾವಲುಗೆಯ್ಯುತ್ತಿವೆ. ಗರ್ಭಗುಡಿಯ ಶಿವಲಿಂಗದ ಎದುರು ಹಸಾದ ಬೇಡಿ ನಿಂತಿರುವ ಭಕ್ತಿ ಭಾಂಡಾರಿ ಬಸವಣ್ಣನಿಗೆ ನಮಸ್ಕಾರ ಮಾಡಿ ಎದುರಿನ ಮುಷ್ಕರಣಿಯ ತೀರ್ಥದ ಒಂದು ಹನಿ ಬಾಯಲ್ಲಿ ಹಾಕಿಕೊಂಡರೆ ಬದುಕೆಲ್ಲ ಅಮೃತ.

ಮುಂದೆ ಮೂರು ಮೈಲುಗಳ ದಾರಿ, ಶಿವಯೋಗ ಮಂದಿರದ ದಾರಿ. ದಾರಿಯುದ್ದಕ್ಕೂ ನಿಶ್ಚಲ ನೀರವತೆ. ಮಹಾಮೌನ, ತಪಸ್ವಿಗಳ ಕಡೆಗೆ ಹೋಗಬೇಕು. ಸಪ್ಪಳ ಮಾಡಿದರೆ ಶಿವಯೋಗಿಗಳ ನಿದ್ರಾಭಂಗವಾದೀತು. ಅವರು ಸಿಟ್ಟಾದರು. ಮುನಿಗಳ ಮುನಿಸು ಮೂಗುದುದಿಯೊಳಕ್ಕೆ! ಗಿಡ ಮರಗಳಿಗೂ ಈ ಮಾತು ತಿಳಿದಿದೆ.ಎಂತೆಯೇ ಗಾಳಿ ಬೀಸಿದರೂ ಎಲೆ ಅಲುಗಾಡದೆ ಹಾಗೆಯೇ ನಿಂತಿವೆ. ಪ್ರಕೃತಿ ಪ್ರೇಯಸಿ. ಆದರೂ ಹಕ್ಕಿ ಕಲರವಗೈಯದಿವೆ. ಈ ನಾಡಿನ ಅಣುರೇನು ತ್ರಣ ಕಾಷ್ಠ ಗಳಿಗೂ ಶಿವಯೋಗಮಂದಿರದ ಕತೆ ಗೊತ್ತಿದೆ. ಶಿವಯೋಗಮಂದಿರದ ಕತೆ…..?

ನನ್ನ ಮನಸ್ಸು ಎಂಟು ವರುಷಗಳ ಹಿಂದೆ ಓಡಿತು. ಹಿರೇಮಲ್ಲೂರಿಗೆ ಹೊರಟು ಹೋಯಿತು. ಮುಚ್ಚಂಜೆಯಾಗಿದೆ. ನಮ್ಮ ಶಿವು ಪಾಠ ಓದುತ್ತಿದ್ದಾನೆ. ನಾನು ಇಲ್ಲಿ ಕುಳಿತಿದ್ದೇನೆ. ನನ್ನ ತಾಯಿ ಅಲ್ಲಿ ಇದ್ದಾಳೆ. ನಮ್ಮ ಶಂಕರಿ ಇನ್ನೂ ಸಣ್ಣವಳು. ಶಿವು ಓದುತ್ತಿರುವುದನ್ನು ತಾಯಿ ಮಕ್ಕಳು ಕೇಳುತ್ತಿದ್ದಾರೆ. ಶಿವುನ ವಾಚನ ನಡೆದಿದೆ.

ರಾಣೆಬೆನ್ನೂರು ತಾಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದೊಂದು ಊರು.ನೀಲಮ್ಮ ಬಸವಯ್ಯನವರಿಗೆ ಬಹಳ ದಿನದ ಮೇಲೆ ಗಂಡು ಮಗುವೊಂದು ಜನಿಸಿತು.ಜನನವಾದ ಮೇಲೆ ಮಗು ಎರಡು ದಿನಗಳವರೆಗೂ ತಾಯಿಯ ಎದೆಯ ಹಾಲನ್ನೇ ಉಣಲಿಲ್ಲ. ಎಲ್ಲರಿಗೂ ಅಚ್ಚರಿ. ಬಂಧು ಬಾಂಧವರಿಗೆ ಗಾಬರಿ. ಆದರೂ ಸಾಧ್ಯೆ ಶಿವನನ್ನು ಸ್ಮರಿಸಿ ಶಿಶುವಿಗೆ ಭಸಿತವನ್ನು ಪೂಸಿ ಮುದ್ದಿಟ್ಟಳು. ಶಿಶು ನಕ್ಕು ನಲಿದು ಹಾಲು ಕುಡಿಯಲು ಮೊದಲು ಮಾಡಿತು. ಅಂದು ನಾಮಕರಣದ ದಿನ; ಹಾಲಯ್ಯ ಎಂದು ಕೂಸಿಗೆ ಹೆಸರಿಟ್ಟು ಜೋಗುಳ ಹಾಡಿದರು. ಹೂ ಬೆಳೆದಂತೆ ಹಾಲಯ್ಯ ಬೆಳೆದನು. ಕೋಕಿಲ ಕುಕಿಲುವದ ಕಲಿವಂತೆ ಹಾಲಯ್ಯ ಪಾಠ ಕಲಿತ, ಸಾಲೆಯಿಂದೊಂದು ದಿನ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ತಾಯಿ ಕೊಟ್ಟ ರೊಟ್ಟಿಯನ್ನು ಮಗನು ತಿನ್ನುತ್ತಿರುವ ಹೊತ್ತಿನಲ್ಲಿ ಹೊಸ್ತಿಲದ ಬಳಿ ಭಿಕ್ಷುಕನೊಬ್ಬನು ನಿಂತು ‘ಅವ್ವಾ! ಹಸಿವೆ. ಒಂದು ತುತ್ತು ರೊಟ್ಟಿ ಕೊಡು’ ಎಂದು ಬೇಡಿದನು. ‘ಇಗೋ’ ಎಂದೆನ್ನುತ್ತ ಹಾಲಯ್ಯ ಕೈಯಲ್ಲಿಯ ರೊಟ್ಟಿಯನ್ನು ಭಿಕ್ಷುಕನಿಗೆ ಕೊಟ್ಟನು. ತಾಯಿ ಅದನ್ನೆಲ್ಲ ನೋಡಿ ಹರ್ಷಿತಳಾದಳು.

ಓಡಿ ಬಂದು ಮಗನನ್ನು ಮುದ್ದಿಟ್ಟು, ‘ದಯಾಳು ಹಾಲಯ್ಯ’ ಎಂದಳು.ಹಾಲಯ್ಯ ಹೀಗೆ ‘ದಯಾಳು ಹಾಲಯ್ಯ’ನಾದ, ಹಳ್ಳಿಯ ಜಂಗಮರಂತೆ ದಯಾಳು ಹಾಲಯ್ಯನಿಗೂ ‘ಭವತಿ ಭಿಕ್ಷಾಂ ದೇಹಿ’ ಕೋರಾನ್ನ ಬೇಡುವ ಸರತಿ ಬರದೇ ಇರಲಿಲ್ಲ. ಜೋಯಿಸರ ಹರಳಳ್ಳಿ ಒಂದೇ ಅಲ್ಲ, ಹತ್ತಿರದ ಹಳ್ಳಿಗಳಿಗೂ ಹೋಗುವ ರೂಢಿ, ಮೊದಲೇ ಬಡತನ, ತಾಯಿಯ ಅಪ್ಪಣೆ ದಯಾಳು ಹಾಲಯ್ಯನಿಗೆ ದೇವಾಜ್ಞೆ, ಅದೊಂದು ದಿನ ಮುಂಜಾವಿನಲ್ಲಿ ಹತ್ತಿರದ ಹಳ್ಳಿಯಲ್ಲಿ ಹಾಲಯ್ಯನ ಕೋರಾನ್ನ ಭಿಕ್ಷೆ ನಡೆದಿತ್ತು.

“ಅಯ್ಯಪ್ಪ, ಪರಾನ್ನಭುಂಜಿಸುವವನು ಇದ್ದರೂ ಸತ್ತಂತೆ! ಓದು, ಓದಿ ಬುದ್ಧಿವಂತನಾಗು, ಅನ್ನಸಂಪಾದನೆ ಮಾಡು’, ಎಂದು ಯಾರೋ ಅಂದರು.ಭಿಕ್ಷೆಗೆಂದು ಹೋದ ಹಾಲಯ್ಯ ಅಳುತ್ತ ಬಂದ. ತಾಯಿಗೆ ಕಾರಣ ತಿಳಿಯಲಿಲ್ಲ.ಓದಬೇಕು. ಬುದ್ಧಿವಂತನಾಗಬೇಕು. ಮನುಷ್ಯನಾಗಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಮಾಡಬೇಕು. ತಾಯಿಗೆ ಹೇಳಲಿಲ್ಲ. ತಂದೆಗೆ ಹೇಳಲಿಲ್ಲ. ಯಾರಿಗೂ ಹೇಳದೇ ಕೇಳದೇ ಮುದ್ದಿನ ಜೋಯಿಸರ ಹಳ್ಳಿಯ ಕಡೆಗೆ ಹನಿಗಣ್ಣಿನಿಂದ ನೋಡುತ್ತ,ಹರಳಳ್ಳಿಯ ತಾಯಿಗೊಂದು ನಮಸ್ಕಾರ ಮಾಡಿ ಹಾಲಯ್ಯನು ಮನೆ ಬಿಟ್ಟು ಹೊರಟನು,ತೊಡಲು ಅಂಗಿಯಿಲ್ಲ. ಉಡಲು ಬಟ್ಟೆಯಿಲ್ಲ. ಒಂದು ಕಾವೀ ರುಮಾಲು, ಎರಡು ಕಾವೀ ಧೋತರ, ಕಜ್ಜರಿಗೆ ಓಡಿಬಂದ. ಹಾಲಯ್ಯನ ಹತ್ತಿರ ಇರುವ ಸಂಪತ್ತು ಅಷ್ಟೆ ಮುಲಕೀ ಓದಿದ. ಧಾರವಾಡಕ್ಕೆ ಕಾಲುನಡಿಗೆಯಿಂದ ಹೋಗಿ ಮುಲಕೀ ಪರೀಕ್ಷೆಗೆ ಕೂತರೆ ನಪಾಸು! ದಯಾಳು ಹಾಲಯ್ಯ! ಮುಲಕೀ ಪಾಸಾಗಿ ಮಾಸ್ತರನಾಗಬೇಕೆ? ಕಾಲ ಬರೆದ ದೈವಲೀಲೆಯೇ ಬೇರೆಯಾಗಿತ್ತು. ಅಷ್ಟೊತ್ತಿಗೆ ಕನ್ನಡದ ಪ್ರತಿಭಾವಂತ ತತ್ವಜ್ಞಾನಿ, ದಾರ್ಶನಿಕ, ಕಾವ್ಯಯೋಗಿ ನಿಜಗುಣಾಢ್ಯರ ಯೋಗದ ಗರಡಿಮನೆಯಲ್ಲಿ ಹಾಲಯ್ಯನವರು ಇಳಿದಿದ್ದರು.

ಲಿಂಗದ ಹಳ್ಳಿ ಹಾಲಯ್ಯನ ತಾಯಿಯ ತವರೂರು. ಅಲ್ಲಿ ಬಂದು ಕನ್ನಡ ಶಾಲೆಯ ಶಿಕ್ಷಕರಾಗಿ ನಿಂತರು. ಹಾಲುಗಲ್ಲದ ಹುಡುಗರು. ಕುಸುಮ ಕೋಮಲ ಗುರು, ಓದು, ಬೋಧನೆ ಆವ್ಯಾಹತವಾಗಿ ನಡೆಯಿತು. ತಾಯಿಗೆ ಸುದ್ದಿ ಹತ್ತಿತು.ಹುಡುಕುತ್ತ ಬಂದರು. ‘ಹಾಲಯ್ಯ! ಮದುವೆ ಮಾಡಿಕೋ ಬಾ, ನಮ್ಮ ಮನೆಯ ದೀಪ ನೀನು’ ಎಂದಳು.’ಒಂದು ವರುಷ ಬಿಟ್ಟು ಉತ್ತರ ಹೇಳುತ್ತೇನೆ’ ಎಂದು ಮಗನ ಉತ್ತರ, ಒಂದುವರುಷದ ಮೇಲೆ ಮತ್ತೆ ತಾಯಿ ಬಂದಾಗ ಮುನ್ನೂರು ರೂಪಾಯಿಗಳನ್ನು ತಾಯಿಯ ಉಡಿಯಲ್ಲಿ ಹಾಕಿ, ‘ಇದು ಕಂದನ ಭಕ್ತಿ, ನನ್ನ ಆಶೆ ಬಿಡು’ ಎಂದು ದಯಾಳು ಹಾಲಯ್ಯ ಹೇಳಿ ತಾಯ ಹರಕೆ ಪಡೆದು ಲಿಂಗದ ಹಳ್ಳಿ ಬಿಟ್ಟರು.

ಹುಬ್ಬಳ್ಳಿಗೆ ಬಂದು ಆರೂಢರಲ್ಲಿ ನಿಂತರು. ಎಮ್ಮಿಗನೂರಿಗೆ ಹೋಗಿ ಜಡೆಯ ಸಿದ್ಧರನ್ನೊಲಯಿಸಿದರು. ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ತೆರಳಿ ಎಳಂದೂರು ಬಸವಲಿಂಗ ಸ್ವಾಮಿಗಳ ಸೇವಾನುರಾಗಕ್ಕೆಳಸಿದರು. ಅಲ್ಲಿಯ ತಪಸ್ಸು ಕಠೋರವಾದ ತಪಸ್ಸು! ಇಂದ್ರಿಯ ನಿಗ್ರಹ, ಒಡಲ ದಂಡನೆ, ಜ್ಞಾನ, ಕರ್ಮ, ಭಕ್ತಿಯೋಗಗಳು ಬದುಕಿನಲ್ಲಿ ಒಂದೆಡೆ ಸಂಚಯಿಸತೊಡಗಿದವು. ಬದುಕು ಪರಿಪಕ್ವತೆಯ ದಾರಿಯಲ್ಲಿ ನಡೆಯ ಹತ್ತಿತು!

ಅಷ್ಟೊತ್ತಿಗೆ ವಿರಾಟರಾಯನ ರಾಜಧಾನಿ ಹಾನಗಲ್ಲಿನಿಂದ ಶಂಭುಲಿಂಗನ ಬೆಟ್ಟಕ್ಕೆ ಪ್ರಾರ್ಥನೆಯೊಂದು ಹೋಯಿತು. ದಯಾಳು ಹಾಲಯ್ಯನವರು ಹಾನಗಲ್ಲಿನ ಮಠದ ಅಧಿಕಾರ ವಹಿಸಬೇಕು! ಅಧಿಕಾರ? ಆಸ್ತಿ? ಒಡೆತನ? ಸನ್ಯಾಸವಿತ್ತ,ವ್ಯಾಮೋಹವತ್ತ? ಬಂಧನವಿತ್ತ, ಬಿಡುಗಡೆಯತ್ತ? ಯೋಚಿಸಿದರು. ದೀರ್ಘಾಲೋಚನ ಮಾಡಿ ಅವರು ಬಂದರು. ಹಾನಗಲ್ಲಿನ ಕುಮಾರ ಸ್ವಾಮಿಗಳಾದರು. ಕುಮಾರಸ್ವಾಮಿಗಳನ್ನು ಮಠದ ಆಸ್ತಿ ವಂಚಿಸಲಿಲ್ಲ. ಇಲ್ಲಿ ಲಕ್ಷ್ಮೀ ಸೋತಳು. ಚಂಚಲೆಯ ಆಟ ಬೈರಾಗಿಯ ಮುಂದೆ ನಡೆಯಲಿಲ್ಲ.

ಜನ ಬದುಕಬೇಕು. ಬಿದ್ದ ಸಮಾಜ ಏಳಬೇಕು. ದಾರಿದ್ರ್ಯ ಅಳಿಯಬೇಕು,ಎಂತಹ ದಾರಿದ್ರ? ಅಂತಃಸತ್ವದ ದಾರಿದ್ರ, ಆತ್ಮಬಲವಿಲ್ಲದೆ ಸಮಾಜ ಕುರುಡಾಗಿ ಗಾಢಾಂಧತಮದತ್ತ ಬಟ್ಟೆದೋರದೆ ತಡಬಡಗೊಳ್ಳುತ್ತಿತ್ತು. ಅದರ ದಾರಿದ್ರವಳಿದು ದಾರಿದೋರಬೇಕಾದರೆ ಅಧ್ಯಾತ್ಮ ಶಿಕ್ಷಣ ಸಾರ್ವತ್ರಿಕವಾಗಿ ಒದಗಬೇಕು. ಅಂತಹ ಶಿಕ್ಷಣ ಸಂಸ್ಥೆ ನಾಡಿನಲ್ಲಿ ಮೂಡದೆ ಗತಿಯಿಲ್ಲವೆಂದು ಹಾನಗಲ್ ಕುಮಾರ ಸ್ವಾಮಿಗಳು ಯೋಚಿಸಿದರು. ಅವರ ಯೋಚನೆಯನ್ನು ಕಾರ್ಯರಂಗಕ್ಕಿಳಿಸುವಲ್ಲಿ ಶಿರಸಂಗಿಯಲ್ಲಿ ಲಿಂಗಪ್ಪನವರಿದ್ದರು, ಅರಟಾಳದಲ್ಲಿ ರುದ್ರಗೌಡರು, ಬಾಗಲಕೋಟೆಯಲ್ಲಿ ಮಲ್ಲಪ್ಪನವರು ಇದ್ದರು. ಮತ್ತೆ ಇಳಕಲ್ಲಿನ ಮಹಾಂತ ಶಿವಯೋಗಿಗಳ ಮಾರ್ಗದರ್ಶನ ಬೇರೆ?

ಮಲಾಪಹಾರೀ ನದಿಯ ದಂಡೆಯ ಮೇಲೆ ಸುಂದರವಾದ ಬಿಲ್ವವೃಕ್ಷದ ತೋಟ. ತಪಸ್ವಿಗಳು ಬಂದು ನಿಲ್ಲುವುದಕ್ಕೆ ತಕ್ಕ ಭೂಮಿ, ಮೀಸಲು ಭೂಮಿ, ಗಿಡಮರಗಳು,ಕಂಟಿಕಾವಲುಗಳು ಸುತ್ತಲೂ ನಿಂತು ಮನುಷ್ಯ ಸಂಚಾರಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ.ವನ್ಯಮೃಗಗಳು ದಿವಾರಾತ್ರಿ ಆ ಭೂಮಿಯ ನೈರ್ಮಲ್ಯವನ್ನು ರಕ್ಷಿಸುತ್ತಿದ್ದವು.

ಅಲ್ಲಿಗೆ ಕುಮಾರ ಸ್ವಾಮಿಗಳವರು ಬಂದು ಧರ್ಮದಂಡವನ್ನು ಊರಿದರು.ಪಾದರಕ್ಷೆ ಕಳೆದರು. ಪೇಳ ಬಯಲಾಯಿತು. ಆ ಭೂಮಿಯಲ್ಲಿ ಮಂದಿರವೊಂದು ಏರಿತು. ಶಿಕ್ಷಣಾಲಯವೊಂದರ ಸಂಸ್ಥಾಪನೆಯಾಯಿತು. ಆಚೆಗೆ ಐಹೊಳೆಯ ಆದರ್ಶ ಮಹಾವಿದ್ಯಾಲಯ, ಈಚೆಗೆ ಬದಾಮಿಯ ಮೇಣ ಬಸತಿಗಳು. ಅಲ್ಲಿ ಮಹಾಕೂಟ.ಇಲ್ಲಿ ಬನಶಂಕರಿ, ನಟ್ಟನಡುವೆ ಕುಮಾರ ಸ್ವಾಮಿಗಳ ಶಿಕ್ಷಣಾಲಯ!

ಅಲ್ಲಿ ಸತ್ಯದ ಪೂಜೆ, ಸೌಂದರದ ಶಿವನ ಪೂಜೆ, ಅಂತಹ ಪೂಜೆಯ “ಶಿವಯೋಗಮಂದಿರ’ವೆಂದು ನಾಮಕರಣ ಮಾಡಲಾಯಿತು.

ಶಿಕ್ಷಕರು ಬಂದರು. ವಿದ್ಯಾರ್ಥಿಗಳು ಬಂದು ನಿಂತರು. ನಾಡಿನ ತುಂಬ ಶಿವಯೋಗಮಂದಿರದ ಹೆಸರು ಸಂಚರಿಸಿ ಬಂದಿತು, ತಾಡವೋಲೆಗಳ ಸಂಪಾದನಾಕಾರ, ಚಿಂತನೆ, ಶಿಕ್ಷಣ ಪ್ರಸಾರ, ಸಮಾಜ ದರ್ಶನದ ಕಾರ್ಯ ಭರದಿಂದ ನಡೆದವು.ಶಿವಯೋಗಮಂದಿರದ ಆವರಣದಲ್ಲಿ ಬದ್ಧಪದ್ಮಾಸನರಾಗಿ ತದೇಕ ಚಿತ್ತದಿಂದ ಧ್ಯಾನಾಸಕ್ತರಾದ ಶಿವಯೋಗಿಗಳು ಜನಪದದ ಸ್ಫೂರ್ತಿಯಾದರು. ಗುಡಿಗುಡಾರಗಳಲ್ಲಿ,ದೇವಮಂದಿರಗಳಲ್ಲಿ ಹಾನಗಲ್ಲಿನ ಕುಮಾರ ಸ್ವಾಮಿಗಳು ಭಜನೆಯ ವಸ್ತುವಾದರು.ಪಠಣದ ಸಾಮಗ್ರಿಯಾದರು.

ಐಹೊಳೆಯ ದಾರಿಯಲ್ಲಿ, ನಳಂದಾ ತಕ್ಷಶಿಲೆಯ ದಾರಿಯಲ್ಲಿ ಶಿವಯೋಗ ಮಂದಿರವು ಹೆಜ್ಜೆ ಇಡುತ್ತಿರುವ ಕಾಲದಲ್ಲಿ ಶಿವಯೋಗಿಗಳು ಕುಳಿತಲ್ಲಿಂದಲೇ ಜೋಯಿಸರ ಹರಳಳ್ಳಿಯ ಕಡೆಗೊಮ್ಮೆ ನೋಡಿದರು. ಲಿಂಗದಹಳ್ಳಿಯ ಕಡೆಗೊಮ್ಮೆ ದಿಟ್ಟಿಸಿದರು. ಜೀವನದ ಮಾಯೆಯನ್ನು ಗೆಲಿದ ಶಿವಯೋಗಿಯ ಕಂಗಳು ಲಿಂಗದಲ್ಲಿ ನಟ್ಟು ನಿಬ್ಬೆರಗಾದವು, ಎಲ್ಲವೂ ಬಯಲು.

ನೆನಹು ಸತ್ತಿತ್ತು. ಭ್ರಾಂತಿ ಬೆಂದಿತು. ಅರಿವು ಮರೆಯಿತ್ತು.

ಕುರುಹುಗೆಟ್ಟಿತು. ಗತಿಯನರಸಲುಂಟೆ? ಮತಿಯರನಸಲುಂಟೆ?

ಅಂಗವೆಲ್ಲ ನಷ್ಟವಾಗಿ ಲಿಂಗಹೀನವಾಯಿತ್ತು

ಕಂಗಳದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ

ಅಲ್ಲಿಗೆ ಶಿವುನ ವಾಚನ ಮುಗಿಯಿತು. ಎಂಟು ವರುಷಗಳ ಹಿಂದೆ ಶಿವು ಓದುನಿಲ್ಲಿಸಿದ. ಪುನಃ ಆ ಪಾಠ ಓದಲಿಲ್ಲ. ಮನೆ ಬಿಟ್ಟು ಹೊರಟನು. ‘ನನ್ನ ಆಶೆ ಬಿಡು’ಎಂದು ತಾಯಿಗೆ ಹೇಳಿ ಶಿವು ‘ಶಿವಯೋಗಮಂದಿರ’ಕ್ಕೆ ಹೊರಟು ಹೋದನು.

ಹತ್ತಿರ ಹತ್ತಿರ ಶಿವಯೋಗಮಂದಿರವು ಬರುತ್ತಿದ್ದಿತು. ಗಿಡಮರಗಳ ನಡುವೆ,ಹಚ್ಚ ಹಸುರಿನ ಮಧ್ಯೆ, ಪ್ರಶಾಂತ ವಾತಾವರಣದ ನಟ್ಟನಡುವೆ ಅಡಗಿಸಿಕೊಂಡ ಶಿವಯೋಗಮಂದಿರವು ನೋಟಕ್ಕೆ ಸಮೀಪಿಸುತ್ತಿದ್ದಿತು.

“ಗುಹೇಶ್ವರಾ’ ಎಂದು ಹಕ್ಕಿಯೊಂದು ಹಾಡಿದಂತಾಯಿತು. ನಿಜ.ಶಿವಯೋಗಮಂದಿರವು ಬಂದುದೇ ನಿಜ!

ಗಾಡಿಯಿಂದಿಳಿದು ನೆಲದ ಮೇಲೆ ಕಾಲಿಟ್ಟಾಗ ಮೈಯಲ್ಲಿ ಮಿಂಚಿನ ಹೊಳೆ ತುಳುಕಾಡುತ್ತಿದ್ದಿತು. ಇಲ್ಲಿ ನಮ್ಮ ಶಿವು ಇರಬೇಕು. ಶಿವಯೋಗಿಯ ಸನ್ನಿಧಿಯ ಬಳಿ ನಮ್ಮ ಶಿವು ಇರಬೇಕು, ಸಿರಿಬಡತನಗಳ ಮಧ್ಯದಲ್ಲಿ ಸ್ಥಿತಪ್ರಜ್ಞನಾಗಿ ನಿಂತುಕೊಂಡು ಲೋಕಸಂಗ್ರಹಕ್ಕಾಗಿ ಬಾಳನ್ನೇ ಮೀಸಲಾಗಿರಿಸಿದ ಕಾರುಣ್ಯಮೂರ್ತಿಯ ಹತ್ತಿರ ನಮ್ಮಶಿವು ಇದ್ದಿರಬೇಕು ಎಂದೆನ್ನುತ್ತ ಶಿವಯೋಗಮಂದಿರದ ಆಶ್ರಯದಲ್ಲಿ ಕಾಲಿರಿಸಿದಾಗ ಕಂಡ ನೋಟ ಇನ್ನೂ ಅಚ್ಚಳಿಯದಿದೆ.ವಾಚನಾಲಯ, ತಾಡವೋಲೆಗಳ ಸಂಗ್ರಹಾಲಯಗಳನ್ನು ಸಂದರ್ಶಿಸಿ,

ಯೋಗಸಾಧನಯ ನೆಲೆಮನೆಯನ್ನು ಕಂಡು ಶಿವಯೋಗಿಗಳ ಸಮಾಧಿಯ ಹತ್ತಿರ ಬಂದಾಗ ಜೋಯಿಸರ ಹರಳಳ್ಳಿಯ ಹಾಲಯ್ಯನ ಚಿತ್ರ ಕಣ್ಮುಂದೆ ನಿಂತಿತ್ತು!

ಅವರು ಯಾವಾಗಲೂ ಒಮ್ಮೊಮ್ಮೆ ಬರುತ್ತಾರೆ. ಅಂತಹ ಕಾಲ ನೆಲದ ಪುಣ್ಯದಿಂದ ಬರುತ್ತದೆ. ನಮ್ಮ ಜೈನ ದಾರ್ಶನಿಕರು, ಲಿಂಗಾಯತ ದಾರ್ಶನಿಕರು. ವೈಷ್ಣವ ಭಕ್ತರು ಅವರದೊಂದು ಕಾಲ. ಆ ಕಾಲ ತಿರುಗಿ ಹೋಯಿತು. ಇನ್ನು ಅವರು ತಿರುಗಿ ಬಾರದೇ? ಎಂದು ಈ ನಮ್ಮ ಹೊಸಗಾಲದ ಜನತೆ ಹಾರಯಿಸಿ ನಿಂತ ಹೊತ್ತಿನಲ್ಲಿ ಯಾರಿಗೂ ತಿಳಿಯಗೊಡದಂತೆ ಅವರು ಬಂದರು, ಹೋದರು. ನಾವು ಗುರುತಿಸದಿದ್ದರೆ ಅದು ಯಾರ ತಪ್ಪು?

ಶಿವಯೋಗಿಗಳ ಸನ್ನಿಧಿಯಲ್ಲಿ ನಿಂತು ಹರಕೆ ಬೇಡಿ ಮಲಾಪಹಾರಿಯ ಕಡೆಗೆ ತಿರುಗಿದಂದು ಹತ್ತಿರದಲ್ಲೇ ಒಂದು ಬಾವಿ, ಬಾವಿಯ ಕಟ್ಟೆಯ ಮೇಲೆ ಯಾರೋ ನಿಂತಂತೆ ತೋರಿತು. ಗೆಳೆಯರನ್ನು ಹಿಂದೆ ಬಿಟ್ಟು ಮುಂದಕ್ಕೆ ಹೋಗಿ ನೋಡಿದಾಗ ಕಂಡವು ಇಬ್ಬರಲ್ಲಿ ಒಬ್ಬ ಹುಡುಗ, ಇನ್ನೊಬ್ಬ ಮುದುಕ.

ಹುಡುಗ ಅದೇ ಮುಖ, ಅದೇ ನಿಲುವು, ಅದೇ ಆಕಾರ, ಅದೇ ರೂಪ ಕಿವಿ ಟೊಪ್ಪಿಗೆ ಹಾಕಿಕೊಂಡಿದ್ದಾನೆ. ನಿಲುವಂಗಿ ತೊಟ್ಟಿದ್ದಾನೆ. ಬರಿಗಾಲು ನೊಂದಿಲ್ಲ,ಬೆಂದಿಲ್ಲ. ಆದರ್ಶದ ಕನಸ ಕನಸು; ಬದುಕ ಬದುಕು, ನಮ್ಮ ಶಿವು!

ಮುದುಕ ತಪಸ್ಸಿನ ಅಗ್ನಿಯಲ್ಲಿ ಬೆಂದ ಜೀವ, ಅಪ್ಪಟ ಚಿನ್ನ, ಹೊಳೆವ ಕಂಗಳು.ಮೊಗದ ತೇಜ, ಕಂಗಳ ನಿಶ್ಚಲ ನೋಟ, ಶಿವಯೋಗ ನಿದ್ರೆಯಲ್ಲಿ ನಿರತರಾಗಿರುವರೋ ಎಂಬ ಆಕೃತಿ, ಹಾನಗಲ್ಲ ಕುಮಾರ ಸ್ವಾಮಿಗಳು!

ಹಿರೇಮಲ್ಲೂರಿನ ಶಿವು ಶಿವಯೋಗಮಂದಿರದ ಶಿವಯೋಗಿಗಳ ಸನ್ನಿಧಿಯಲ್ಲಿ ಬಂದು ನಿಂತಿದ್ದಾನೆ.

ಮಲಪ್ರಭಾ ಪಕ್ಕದಲ್ಲಿ ವಿಶಾಲವಾದ ನದಿಯ ಹರವು. ಒಮ್ಮೆ ದುಡುಕು.ಇನ್ನೊಮ್ಮೆ ತಾಳ್ಮೆ. ಅಲ್ಲಿ ಏಳು, ಇಲ್ಲಿ ಬೀಳು. ಆ ಮೇಲೆ ಎಲ್ಲವೂ ಮೌನ, ಸಲಿಲವಾಗಿ,ಪ್ರಶಾಂತವಾಗಿ, ಮನೋಹರವಾಗಿ ಮಲಪ್ರಭೆ ಸನಿಹದಲ್ಲಿಯೇ ಹರಿಯುತ್ತಿದ್ದಳು.

ನಾನು ಹಾಗೆಯೇ ನಿಂತಿದ್ದೆ. ದಾರ್ಶನಿಕ ಕಂಡ ಆ ನಾಡಿನಲ್ಲಿ ನಾನು ಈಗಲೂ ಎವಯಿಕ್ಕದ ಹಾಗೆಯೆ ನಿಂತಿದ್ದೇನೆ.

ಆಕರ: ಹಿರೇಮಲ್ಲೂರ ಈಶ್ವರನ್ ಅವರ ಕವಿಕಂಡ ನಾಡು ಕೃತಿಯಿಂದ