General

ಲೇಖಕರು :  ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ

ಅಸ್ತಿತ್ವದ ಶ್ರೇಷ್ಠ ಅಭಿವ್ಯಕ್ತಿಯೇ ಕಲೆಯಾಗಿದೆ. ಈ ಅಭಿವ್ಯಕ್ತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ವ್ಯಕ್ತಿಯ ಸ್ವಭಾವ, ಸಂಸ್ಕೃತಿ, ಬೆಳೆದುಬಂದ ರೀತಿ ಮತ್ತು ಜಗತ್ತನ್ನು ಗ್ರಹಿಸುವ ಪರಿ ಇವೆಲ್ಲವುಗಳೂ ಆತನ ಅಭಿವ್ಯಕ್ತಿಯ ಮೇಲೆ ಪ್ರಭಾವ ಹೊಂದಿರುತ್ತವೆ.

ವಾಸ್ತವವಾಗಿ ಈ ಜೀವನವು ಕಲೆಗೆ ಆಧಾರವಾಗಿದ್ದರೆ, ಕಲೆಯು ಜೀವನವನ್ನು ಶ್ರೀಮಂತಗೊಳಿಸುತ್ತದೆ. ಈ ಕಾರಣದಿಂದಲೇ ಜೀವನ ಮತ್ತು ಕಲೆ ಒಂದಕ್ಕೊಂದು ಪೂರಕವಾಗಿವೆ.

ಕಲೆಗಳಲ್ಲಿಯೇ ಸಂಗೀತವು ಅತ್ಯಂತ ಉತ್ಕೃಷ್ಟವಾದದ್ದು.ಏಕೆಂದರೆ ಧರ್ಮಕ್ಕೆ ಮೂಲ ಮತ್ತು ಆಧಾರವಾದದ್ದು ‘ಕರುಣೆ’,ಇದೇ ನಮ್ಮ ಮೂಲ ಸ್ವಭಾವ, ಇದು ತೀವ್ರವಾಗಿ ಪ್ರಕಟಗೊಳ್ಳುವುದೇ ಸಂಗೀತದ ಮೂಲಕ. ಒಂದು ಹಂತದಲ್ಲಿ ಪ್ರೀತಿಯು ಮೊಗ್ಗಿನಂತೆ ಕಂಡುಬಂದರೆ ಕಾರುಣ್ಯವೆನ್ನುವುದು ಪರಿಪೂರ್ಣ ಅರಳುವಿಕೆಯಾಗಿದೆ. ಈ ಪ್ರೀತಿ ಮತ್ತು ಕಾರುಣ್ಯಗಳ ಹಾಗು ನಮ್ಮ ಎಲ್ಲ ಬಗೆಯ ಭಾವಗಳ ಪರಿಪೂರ್ಣ ಅಭಿವ್ಯಕ್ತಿಯ ಸಾಧ್ಯತೆ ಇರುವುದು ಸಂಗೀತ ದಲ್ಲಿ ಮಾತ್ರ. ಸಂಗೀತದ ಅಗಾಧತೆ ಅರ್ಥಮಾಡಿಕೊಳ್ಳುವಂಥದ್ದಲ್ಲ, ಬದಲಾಗಿ ಭಾವಿಸುವಂಥದ್ದು, ಅನುಭವಿಸುವಂಥದ್ದು ಹಾಗೆಯೇ ನಮ್ಮಲ್ಲಿ ನಾವು ಒಂದಾಗುವಂಥದ್ದು. ಇದೇ ನೈಜ ಜೀವನವಾಗಿದೆ.

ಸಂಗೀತವು ಕೇವಲ ಒಂದು ಕಲೆ ಅಷ್ಟೇ ಅಲ್ಲ, ಅದು ವಿಜ್ಞಾನವೂ ಆಗಿದೆ.ಏಕೆಂದರೆ ಅದನ್ನು ನಾವು ಪ್ರಯೋಗಕ್ಕೆ ಮತ್ತು ಸಂಶೋಧನೆಗೆ ಒಳಪಡಿಸಬಹುದು. ಸಂಗೀತ ಚಿಕಿತ್ಸೆ ಮೂಲಕ ಎಷ್ಟೊಂದು ರೋಗಿಗಳ ಕಾಯಿಲೆಗಳು ವಾಸಿಯಾಗಿರುವುದನ್ನು ನಾವು ದಿನ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ.

                   ಸಂಗೀತವು ಅತ್ಯಂತ ಶ್ರೇಷ್ಠ ಶಿಕ್ಷಣವಾಗಿದ್ದು ವ್ಯಕ್ತಿಗೆ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತದೆ. ಈ ಸಾಧ್ಯತೆ ಇರುವುದು ಬಹುಷಹ ಸಂಗೀತಕ್ಕೆ ಮಾತ್ರ. ನಾವು ದಿನನಿತ್ಯ ಎಷ್ಟೊಂದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಆದರೆ ನಾವು ಯಾವುದೇ ಕೆಲಸ ಅಥವಾ ಕ್ರಿಯೆಯನ್ನು ಅಖಂಡವಾಗಿ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ದೇಹದ ಅಂಗಾಂಗಗಳು ಕೆಲಸದಲ್ಲಿ ನಿರತವಾದಾಗ ಮನಸ್ಸು ಬೇರೊಂದನ್ನು ವಿಚಾರ ಮಾಡುತ್ತದೆ, ಅಲ್ಲಿ  ಭಾವವೆಂಬುದು ಇರುವುದೇ ಇಲ್ಲ. ಇನ್ನು ಇವೆಲ್ಲವುಗಳಿಗೆ ಸಾಕ್ಷೀಭೂತವಾಗಿ ನಿಲ್ಲುವ ಪ್ರಜ್ಞೆ ಬಹಳ ದೂರದ ಮಾತು.                           

                 ಸಂಗೀತ ಒಂದೇ ನಮ್ಮ ಎಲ್ಲ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ವಲಯಗಳಲ್ಲಿ ಒಂದು ಸಾಮರಸ್ಯವನ್ನು ಸೃಷ್ಟಿಸುತ್ತದೆ. ಈ ಒಂದು ಸಾಮರಸ್ಯ ಅಥವಾ ಒಂದು ಅಖಂಡ ಸ್ಥಿತಿಯು ವ್ಯಕ್ತಿಯಲ್ಲಿ ಅಮಿತವಾದ ಆನಂದವನ್ನು ಉಂಟುಮಾಡುತ್ತದೆ. ಏಕೆಂದರೆ ಅದೇ ಆತನ ಮೂಲ ಸ್ಥಿತಿಯಾಗಿದೆ. ಯಾವ ಪ್ರೀತಿ ಮತ್ತು ಶಾಂತಿಗಾಗಿ ಜಗತ್ತು ಹಾತೊರೆಯುತ್ತದೆಯೋ, ಹೋರಾಡುತ್ತದೆಯೋ ಅದು ಸಂಗೀತದ ಮೂಲಕ ತನಗೆ ಸುಮ್ಮನೆ ಲಭಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ‘ ಸಬ್ ಹೈ ಅಪೂರ್ಣ ಸಂಗೀತ ಬಿನಾ ‘ ಎಂಬ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

                   ನಾವೆಲ್ಲ ಅಸ್ತಿತ್ವವಿಲ್ಲದ ಸತ್ಯಗಳನ್ನು ಸತ್ಯವೆಂದು ಭಾವಿಸಿ ಒಂದು ಸೀಮಿತ ಜಗತ್ತಿನಲ್ಲಿ ಬದುಕುತ್ತೇವೆ. ಜಾತಿ, ಧರ್ಮ, ದೇಶ, ಭಾಷೆ, ನೆಲ, ಜಲ ಮೊದಲಾದ ಸೀಮಿತ ಚೌಕಟ್ಟಿನೊಳಗೆ ಬದುಕುವ ವಿಭಜಿತ ಮನಸ್ಥಿತಿಗೆ ಸಂಗೀತವು ಎಲ್ಲರನ್ನೂ ಒಂದುಗೂಡಿಸುವ ಒಂದು ಸೇತುವೆಯಾಗಿ ಕೆಲಸ ಮಾಡುತ್ತದೆ. ಏಕೆಂದರೆ ಸಂಗೀತವೆನ್ನುವುದು ಒಂದು ವಿಶ್ವಭಾಷೆ.

                  ಜೀವನವನ್ನು ಸಚೇತನಗೊಳಿಸುವ ಸೃಜನಶೀಲತೆ ಸಂಗೀತದ ಮೂಲಕ ಹೊರಹೊಮ್ಮುತ್ತದೆ. ಸಂಗೀತವು ಭಾಷಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಗ್ರಹಿಕೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಸಾಮಾಜಿಕ ಗುಂಪಿನಲ್ಲಿ ಸಾಮರಸ್ಯ ಉಂಟುಮಾಡಿ, ಸಾಮಾಜಿಕ ಕೌಶಲಗಳನ್ನು ಕಲಿಸುತ್ತದೆ ಹಾಗೆ ಮನಸ್ಸಿನ ಒತ್ತಡ ನಿವಾರಿಸಿ ಒಳ್ಳೆಯ ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ.

ಹಾಗಾದರೆ ನಮಗೆ ಇಲ್ಲೊಂದು  ಪ್ರಶ್ನೆ ಮೂಡುತ್ತದೆ, ಅದೇನೆಂದರೆ ಎಲ್ಲ ಪ್ರಕಾರದ ಸಂಗೀತವು ಶ್ರೇಷ್ಠತೆಯುಳ್ಳದ್ದಾಗಿದೆಯೇ? ಎಂಬುದು. ಇಲ್ಲ, ಏಕೆಂದರೆ ಯಾವ ಸಂಗೀತದಿಂದ ಮನಸ್ಸು ವ್ಯಾಕುಲತೆಗೆ,  ಪ್ರಕ್ಷುಬ್ಧತೆಗೆ, ಚಿಂತೆಗೆ, ಬಯಕೆಗೆ, ಅಸಮಧಾನಕ್ಕೆ ಒಳಗಾಗುತ್ತದೆಯೋ ಅದು ಅತ್ಯಂತ ಕೀಳುಮಟ್ಟದ್ದಾಗಿರುತ್ತದೆ.ಈ ತೆರನಾದ ಸಂಗೀತವು ತಿರಸ್ಕಾರ್ಹವಾದುದು. ಯಾವ ಸಂಗೀತವನ್ನು ಹಾಡುವುದರಿಂದ, ನುಡಿಸುವುದರಿಂದ, ಆಲಿಸುವುದರಿಂದ, ಮನಸ್ಸು ಪ್ರಸನ್ನಗೊಳ್ಳುತ್ತದೆಯೋ, ಆನಂದ ಪಡೆಯುತ್ತದೆಯೋ, ಹಾಗೆಯೇ ಮನಸು, ಭಾವ, ಬುದ್ಧಿ, ಶುದ್ಧತೆಗೆ ಒಳಗಾಗುತ್ತವೆಯೋ ಅದು ಮಾತ್ರ ಉತ್ಕೃಷ್ಟ ಮಟ್ಟದ ಸಂಗೀತವಾಗಿರುತ್ತದೆ.

                         ಒಟ್ಟಾರೆಯಾಗಿ ವ್ಯಕ್ತಿಯನ್ನು ಪೂರ್ಣತ್ವದೆಡೆಗೆ ಮುನ್ನಡೆಸುವಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ಪ್ರಕಾರಗಳು ಬಹಳ ಪ್ರಮುಖ ಪಾತ್ರವಹಿಸಿರುವದನ್ನು ನಾವು ಇಲ್ಲಿ ಸ್ಮರಿಸಬಹುದು.

ಮೂಲ ಲೇಖಕರು  ಶ್ರೀ ಕಿಶನ್.ಕುಲಕರಣಿ ಕುಷ್ಟಗಿ

ಸಂಗ್ರಹ : ಶ್ರೀ ಕುಮಾರ ಹಿರೇಮಠ  ಮತ್ತು ಶ್ರೀ ರವಿ ಹುಲಕೋಟೆ

ಹಸಿರೆ ಉಸಿರೆಂದು ತಿಳಿದಿದ್ದ ಶರಣ ಈ ಸ್ವಾಮಿಗೆ ಹಗಲಿರುಳೂ ಹಸಿರಿನದೇ ಧ್ಯಾನ!

 

ಈ ಕರ್ಮಯೋಗಿ ಸ್ವಾಮಿ ಐದು ಸಾವಿರಕ್ಕೂ ಹೆಚ್ಚು ತೆಂಗಿನ ಮರ, ಸಾವಿರಾರು ಗಿಡಬಳ್ಳಿಗಳನ್ನು ನೆಟ್ಟು ಪೋಷಿಸಿದ್ದಾರೆ. ಕರ್ಮ ಇವರ ಗುರಿ. ಫಲ ಬೇಡುವುದಲ್ಲ. ಈತನೊಬ್ಬ ನಡೆದಾಡುವ ಬೇಲಿ. ಇಡೀ ಜಗತ್ತಿಗೇ ಹಸಿರು ತುಂಬುವ ಹುಮ್ಮಸ್ಸಿನ ಜೀವಿ. ಫಲ ಯಾರಿಗೇ ಸಿಗಲಿ, ಇಡೀ ಭೂಮಿಗೆ ಅದು ಸತ್ಫಲ ಎನ್ನುವ ಯೋಗಿ.

ಬಾದಾಮಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ‘ಶಿವಯೋಗಮಂದಿರ’ಕ್ಕೆ ನೀವು ಬಂದಿರಲಿಕ್ಕಿಲ್ಲ. ಬಂದರೂ ಇಲ್ಲಿ ವೀರಭದ್ರಪ್ಪ ದೇಸಾಯಿ ಎಂಬ ಎಂಬತ್ತು ವರ್ಷದ ಯಜಮಾನನ ಕರ್ಮಯೋಗವನ್ನು ನೋಡಿರಲಿಕ್ಕಿಲ್ಲ, ಕೇಳಿರಲಿಕ್ಕಿಲ್ಲ.

ಕಳೆದ ಸುಮಾರು ಐವತ್ತು ವರ್ಷದ ಹಿಂದೆ ಯಾವ ಆಸೆಯಿಲ್ಲದೇ ಈತ ಸಾವಿರಾರು ತೆಂಗಿನ ಗಿಡ, ಸಾವಿರಾರು ಹಣ್ಣಿನ ಗಿಡ, ಸಾವಿರಾರು ಹೂ ಬಳ್ಳಿಗಳನ್ನು ನೆಟ್ಟು ಬೆಳೆಸಿ ಪೋಷಿಸಿದ್ದಾರೆ. ಅದೂ ಒಬ್ಬಂಟಿಯಾಗಿ.

ವೀರಭದ್ರಪ್ಪ ಆಗಿನ್ನೂ ಯುವಕ. ಎಲ್ಲ ಭಕ್ತರಂತೆ ತಾನು ಶಿವಯೋಗಮಂದಿರ ನೋಡಲು ಬೆಳವಡಿಯಿಂದ ಬಂದವನು. ಎಲ್ಲರಂತೆ ಈತ ತಿರುಗಿ ಹೋಗಲಿಲ್ಲ. ಪಟ್ಟದಕಲ್ಲಿನ ಸಮೀಪದ ಕುಮಾರ ಸ್ವಾಮಿಗಳ ಈ ‘ನಿಸರ್ಗಧಾಮ’ ಈತನನ್ನು ಇಲ್ಲಿಯೇ ಕಟ್ಟಿ ಹಾಕಿತು. ಕುಮಾರೇಶನ ಈ ಪವಿತ್ರ ಸ್ಥಾನ ಇವರನ್ನು ‘ನಿನ್ನ ಸೇವೆ ಇಲ್ಲಿ ಅವಶ್ಯ’ವಿದೆ, ಎನ್ನುವ ಹಾಗೆ ಇವರನ್ನು ಇಲ್ಲಿಯೇ ಇರಿಸಿಕೊಂಡಿತು

.

ಸದಾ ದೇವರ ಸ್ಮರಣೆ, ಬಾಯಿ ತೆರೆದರೆ ವಚನ ಸಾಹಿತ್ಯ ತುಂಬಿಕೊಂಡ ಇವರಿಗೆ ಸುತ್ತಮುತ್ತಲಿನ ಜನರು ‘ಶರಣರೆ’ ಎಂದು ಕರೆಯುತ್ತಿದ್ದರು.

ಗೇಣು ಲಂಗೋಟಿ, ಹಣೆಯಲ್ಲಿ ವಿಭೂತಿ, ಮಧ್ಯದಲ್ಲಿ ಕುಂಕುಮ, ಕೊರಳಲ್ಲಿ ರುದ್ರಾಕ್ಷಿಮಾಲೆ ಅದರಲ್ಲೊಂದು ಜಪಮಾಲೆ. ಕೈಯಲ್ಲೊಂದು ಸದಾ ಕೆಲಸಕ್ಕೆ ಸಿದ್ದವಿರುವ ಕುಡುಗೋಲು. ಹೀಗೆ ಮಠದ ತೋಟದಲ್ಲಿ ಹಗಲು ರಾತ್ರಿ ಎನ್ನದೇ ಸಸ್ಯ ಸಂಪತ್ತು ಬೆಳೆಸುವಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು

.

ಇಲ್ಲೀಗ ಅವರು ಬೆಳಸಿದ ಐದು ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಬೆಳೆದು ನಿಂತಿವೆ. ಇದರಲ್ಲಿ ಈಗ ನಾಲ್ಕು ಸಾವಿರಕ್ಕೂ ಮಿಕ್ಕು ಫಲ ನೀಡುತ್ತಿವೆ. ಇದರಿಂದ ಬಂದ ಆದಾಯ ಸಂಪೂರ್ಣ ಮಠಕ್ಕೆ. ವೀರಭದ್ರಪ್ಪನವರು ಆಗಿನ ಸಮಯದಲ್ಲಿ ಕಾಯಿ ಕೀಳಲು ಸ್ವತಃ ಮರ ಹತ್ತುತ್ತಿದ್ದರು.  ವಯಸ್ಸಾದಂತೆಲ್ಲ ಮರ ಹತ್ತುವದನ್ನು ಬಿಟ್ಟು, ಉದ್ದನೆಯ ದೋಟಿ, ಮೂಟೆ ಗಟ್ಟಲೆ ತೆಂಗು ತುಂಬಿದ ಚೀಲಗಳನ್ನು ಹೊರುವುದು, ಸುಲಿಯುವುದು ಗಿಡಗಳಿಗೆ ರಾತ್ರಿ, ಹಗಲು ನೀರುಣಿಸುವುದು, ಇಂತಹ ಎಲ್ಲ ಕೆಲಸ ಮಾಡುತ್ತಿದ್ದರು. ಇವೆಲ್ಲವೂ ಅವರ ಭಕ್ತಿ ಸೇವೆ ಹಾಗೂ ಪರಿಸರದ ಮೇಲಿರುವ ಅವರ ಅಪಾರ ಪ್ರೀತಿ. ‘ಶರಣರೇ, ಈ ವಯಸ್ಸಿನಲ್ಲಿ ಯಾರಿಗಾಗಿ ಈ ಸೇವೆ?’ ಎಂದು ಕೇಳಿದರೆ ತುಟಿ ಪಿಟಕ್ಕೆಂದು ವಚನವೊಂದು ಅವರ ಬಾಯಿಂದ ಹೊಮ್ಮುತ್ತಿತ್ತು.

‘ಆವ ಲೋಹವಾದರೇನು? ಪೌರುಷಕ್ಕೆ ಸಮಭಾವ

                ಆವ ಕಾಷ್ಠವಾದರೇನು? ಅನಲಕ್ಕೆ ಸಮಭಾವ

                ಆವ ಕುಲವಾದರೇನು? ಸದ್ಗುರುವಿಗೆ ಸಮಭಾವ…’

ಸ್ವಾತಂತ್ರ್ಯದ ಪೂರ್ವ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ ಇವರು ಬೆಳಗಾವಿ ಜಿಲ್ಲೆಯ ಬೆಳವಡಿಯಲ್ಲಿ ಸ್ವಾತಂತ್ರ್ಯದ ಚಳುವಳಿಯಲ್ಲಿ ಭಾಗವಹಿಸಿದ ಸನ್ನಿವೇಶಗಳನ್ನು ವಿವರಿಸುತ್ತಿದ್ದರು. ನೀವೇಕೆ ಸರಕಾರದಿಂದ ಮಾಶಾಸನ ತೆಗೆದುಕೊಳ್ಳಬಾರದೆಂದು ಪ್ರಶ್ನಿಸಿದರೆ….. ‘ಕೆಲಸ ಮಾಡಿದ್ದಕ್ಕೆ ಕೂಲಿ ತೊಗೊಂಡ್ರ ಕೆಲಸ ಮಾಡಿದ ಹೆಮ್ಮೆ ನಮ್ಮತಾಕ ಉಳೀಂಗಿಲ್ರಿ ಬುದ್ದಿ!’ ಎಂದು ನಿರಹಂಕಾರ ಉತ್ತರ ಬರುತ್ತಿತ್ತು. ‘ಬಟ್ಟೆ ಮ್ಯಾಲಾಗಲಿ, ಹೊಟ್ಟೆ ಮ್ಯಾಲಾಗಲಿ ಆಶಾ ಇಲ್ಲದ ಈ ದೇಹಕ್ಕೆ ಮಾಶಾಸನ ಯಾಕೆ ಬೇಕ್ರಿ ಬುದ್ದಿ?’ ಎಂದು ಆ ಸೌಮ್ಯ ಮುಖ ಕಿರುನಗೆ ಬೀರುತ್ತಿತ್ತು.

ಪೂಜ್ಯ ಕುಮಾರ ಸ್ವಾಮಿ ಗಳು  ಲಿಂಗೈಕ್ಯರಾದ ನಂತರ ಮಠಕ್ಕೆ ಸೇರಿದ 60 ಎಕರೆ ಸ್ಥಳದ ನಿರ್ವಹಣೆ ಮಾಡುವವರು ಯಾರೂ ಇರಲಿಲ್ಲ. ಬೇಲಿಯೂ ಇರಲಿಲ್ಲ. ಈತನೇ ನಡೆದಾಡುವ ಬೇಲಿ. ಈಗಿನ ಹಾಗೆ ಆ ಸಮಯದಲ್ಲಿ ಸುತ್ತ ಐದಾರು ಕಿ.ಮೀ ದೂರದಲ್ಲಿ ಯಾವ ಊರೂ ಇಲ್ಲದ ಕಾರಣ, ಇಲ್ಲಿಗೆ ಕಳ್ಳಕಾಕರು ಬರುತ್ತಿರಲಿಲ್ಲ.

ಪಕ್ಕದ ಮಲಪ್ರಭ ನದಿಗೆ ವಿದ್ಯುತ್ ಪಂಪ್ ಅಳವಡಿಸಿ, ಆಗಾಗ ಅದನ್ನು ಚಾಲೂ ಮಾಡುವುದು, ಬೀಜ ನೆಡುವುದು ಈತನ ಕೆಲಸ. ಗಿಡಗಳಿಗೆ ರಸಗೊಬ್ಬರವಿಲ್ಲ. ಎಲ್ಲಾ ನೈಸರ್ಗಿಕ. ಇದು ಅವರ ಭೂಮಿ ಹಾಗೂ ಪರಿಸರದ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಅಲ್ಲವೇ? ತನ್ನಷ್ಟೇ ತನ್ಮಯವಾಗಿ ದುಡಿಯುವ ಆಳುಗಳು ಸಿಕ್ಕರೆ ಉತ್ತಮವೆಂದು ಈತನ ಬಯಕೆ. ಆದರೆ ಎಲ್ಲಿ ಸಿಗುತ್ತಾರೆ ಅಂಥವರು?

ಒಂದೇ ವರ್ಷದಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ತೆಂಗಿನ ಕಾಯಿಗಳನ್ನು ಇವರು ಸಂಗ್ರಹಿಸುತ್ತಿದ್ದರು. ಅದರಲ್ಲೂ ಕೆಲವು ಸಸಿ ಮಾಡಲಿಕ್ಕಂತೆ.

ಮತ್ತಷ್ಟು ಸಸಿಗಳೆ? ಯಾವಾಗ ನಿಮಗೆ ವಿಶ್ರಾಂತಿ? ಎಂದು ಕೇಳಿದರೆ,

ಆ ಮುಗ್ದ ಮನಸ್ಸಿನ ಉತ್ತರ ಹೀಗಿತ್ತು ‘ಸ್ವಾಮಿ, ಜಗ ಭಾಳ ದೊಡ್ಡದೈತ್ರಿ, ಇನ್ನೂ ಅದರ ತುಂಬ ತೆಂಗಿನ ಗಿಡ, ಹಣ್ಣಿನ ಗಿಡ, ಹೂವಿನ ಗಿಡ ಹಾಕಬೇಕ್ರಿ. ಇದನ್ನ ಲತಾ ಮಂಟಪ ಮಾಡಬೇಕಾಗೈತ್ರಿ, ಎಷ್ಟು ಹಾಕಿದ್ರೂ ಮುಗೀವಲ್ದು ಎನ್ನುತ್ತಿತ್ತು.

ತೋಟದಲ್ಲಿ ಅಷ್ಟೆಲ್ಲ ದಾಳಿಂಬೆ, ಚಿಕ್ಕು, ಪೇರಲ, ಗಿಡಗಳು ಹಣ್ಣು ನೀಡುತ್ತಿವೆ ‘ಇವುಗಳನ್ನು ಯಾಕೆ ಮಾರೋದಿಲ್ಲ’ ಎಂದು ಕೇಳಿದರೆ,

ಆ ನಿರ್ಮಲ ಮನದ ವೀರಭದ್ರಪ್ಪ ಹೇಳುತ್ತಿದ್ದರು ‘ಹಣ್ಣು ಮಾರಬೇಕಂತ ಗಿಡ ಹಚ್ಚಿಲ್ರೀ ಶಿವಾ! ಇಲ್ಲಿದಾರಲ್ರೀ ಗುರುವಿನ ಗಿಣಿಗಳು, ಇವರು ತಿಂದು ಶಾಂತಿಯಿಂದ ಇರ್ಲಿ ಅಂತಾ ಹಚ್ಚೇನ್ರಿ’ ಎಂದು ನಗುತ್ತಾ ಅಲ್ಲಿ ವಿದ್ಯಾಭ್ಯಾಸ ಮಾಡುವ ಸಾಧಕರನ್ನು ಹಾಗೂ ವಟುಗಳನ್ನು ತೋರಿಸುತ್ತಿದ್ದರು.

ಹಸಿರೆ ಉಸಿರೆಂದು ತಿಳಿದ ಈ ವೀರಭದ್ರಪ್ಪ ಶರಣರು ಈ ಶಿವನ ಮಂದಿರವಾದ ಶಿವಯೋಗಮಂದಿರಕ್ಕೆ ತಮ್ಮ ಜೀವಿತಾವಧಿಯ ಸೇವೆಯನ್ನು ಸಲ್ಲಿಸಿ, ತಮ್ಮ 85-86 ವಯಸ್ಸಿನಲ್ಲಿ ಈಹಲೋಕ ತ್ಯಜಿಸಿದರು.

                                                            .

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಜುಲೈ ೨೦೨೧ ರ ಸಂಚಿಕೆ

ಗುರುವಿನ ಮಹತ್ವ

ನ ಗುರೋರಧಿಕವೆಂದು | ಜಗದಲ್ಲಿ ಸಾರುತಿಹ

ನಿಗಮ ಶೃತಿಗೇಳಿ-ಗುರುವೆ ನಾ ನಿಮ್ಮ ಪದ

ಯುಗವ ಬಣ್ಣಿಪೆನು ಕೃಪೆಯಾಗು     ||೬||

ಶಿವ ಕವಿಯು ಮೇಲೆ ಹೇಳಿದ ಸಾಧ್ಯ, ವೇಧ್ಯ, ಭೇಧ್ಯ ಸ್ವರೂಪನಾದ ಗುರುವು ಅನುಪಮನಾಗಿದ್ದಾನೆಂಬುದ ಕುರಿತು ಶೃತಿ ಮಾತನ್ನು ಎತ್ತಿಹೇಳುತ್ತಾನೆ. ‘ನ ಗುರೋರಧಿಕಂ, ನ ಗುರೋರಧಿಕಂ” ಗುರುವಿಗಿಂತ ಮಿಗಿಲಾದ ವಸ್ತು ಜಗತ್ತಿನಲ್ಲೇ ಇಲ್ಲ. ಗುರು ಮಹತ್ವವು  ಅಸದಳವಾಗಿದೆ, ಅಗಣಿತವಾಗಿದೆ.

ಸದ್ಭಕ್ತಿಯಿಲ್ಲದವರಿಗೆ ಸದ್ಗುರು ಸಾಧ್ಯವಾಗುವದಿಲ್ಲ. ಲಿಂಗಾಂಗ ಸಾಮರಸ್ಯವನ್ನು ಪಡೆಯದವರಿಗೆ ವೇದ್ಯನಾಗುವದಿಲ್ಲ. ಸತ್ಪ್ರಮಥರಲ್ಲದವರಿಗೆ ಭೇದ್ಯನಾಗುವದಿಲ್ಲ.ಇಂಥ ಗುರುವಿನ ಗರಿಮೆಯನ್ನು ಹೇಳಿದರಾಗದು. ಲಿಖಿಸಿದರಾಗದು. ಗುರುವಿಗೆ ಸಮನಾದ ಬೇರೊಂದು ಉಪಮಾನವೂ ಇಲ್ಲ. ಅಂತೆಯೇ ಆದಿ ಶಂಕರಾಚಾರ್ಯರು.

ದೃಷಾಂತೋ ನೈವ ದೃಷ್ಟಃ ತ್ರಿಭುವನಜಠರೇ

ಸದ್ಗುರೋಃ  ಜ್ಞಾನಧಾತುಃ |

ಜ್ಞಾನಪ್ರದಾಯಕನಾದ ಸದ್ಗುರುವಿಗೆ ಸದೃಶವಾದ ದೃಷ್ಟಾಂತವು ಮೂರು ಲೋಕದಲ್ಲಿಲ್ಲವೆಂದು ಗುರು ಗರಿಷ್ಕತೆಯನ್ನು ಹೃದಯ ತುಂಬಿ ಹಾಡಿದ್ದಾರೆ. ಇದನ್ನೆಲ್ಲಕೇಳಿ ತಿಳಿದು ಓ ಗುರುವೆ ! ನಾನು ನಿನ್ನ ಪಾದದ್ವಯವನ್ನು ನುತಿಸುವೆನು. ಎನ್ನ ಮೇಲೆ ನಿನ್ನ ಕೃಪಾಮೃತವನ್ನು ಸಿಂಚಿಸಿ ತಣಿಸಲಾರೆಯಾ ?

ಹರನಿಂದಲಧಿಕ ಸ | ದ್ಗುರುವೆಂಬುದನು ಕೇಳಿ

ಗುರುವೆ ನಾ ನಿನ್ನ ಚರಣವನು ನುತಿಸುವೆನು

ಕರುಣದಿಂದೆನಗೆ ಕೃಪೆಯಾಗು  II ೭ II

ಗುರುವಿನ ಆಧಿಕ್ಯತೆ ಅಧಿಕವಾಗಿದೆ. ಶಿವನಿಗಿಂತಲೂ ಸದ್ಗುರು ಮಿಗಿಲಾಗಿದ್ದಾನೆ.

ಶಿವನು ನಿರಾಕಾರ ನಿರ್ಗುಣನು.

ವಾ ಙ್ಮನಕ್ಕಗೋಚರನು, ಅದು ಕಾರಣ

ಭಕ್ತಹಿತಕಾಗಿ ಗುರುರೂಪವ ಧರಿಸಿ ಧರೆಗಿಳಿದು ಬಂದವನು

ಶಿವನಲ್ಲದೆ ಗುರು ಬೇರಲ್ಲವೆಂದ

ನಮ್ಮ ಮೃಡಗಿರಿ ಅನ್ನದಾನೀಶ | (ವ.ವ. ೧೧)

ಮತ್ತು-

ಹರನಿಗಿಂತಲೂ ಗುರುವಧಿಕ,

ಹರ ಮುನಿದರೂ ಗುರು ಕಾಯುವನು

ಗುರು ಮುನಿದರೆ ಹರಕಾಯನೆಂಬುದನರಿದು

ಗುರು ವಚನದಂತೆ ನಡೆವವಗೆ ದುಃಖವಿಲ್ಲೆಂದ

ನಮ್ಮ ಮೃಡಗಿರಿ ಅನ್ನದಾನೀಶ (ವ. ವ. ೧೩)

ಅಪ್ರತ್ಯಕ್ಷನಾದ ಶಿವನಿಗಿಂತಲೂ ಸದ್ರೂಪನಾಗಿ ಸದ್ಭಕ್ತರಿಗೆ ಪ್ರತ್ಯಕ್ಷವಾಗಿ ಸಂದರ್ಶನವನ್ನೀಯುವ ಸದ್ಗುರುವು ಶ್ರೇಷ್ಠವೆಂಬುದರಲ್ಲಿ ಯಾವ ಸಂಶಯವಿಲ್ಲ. ಹರ ಕಾಣನು. ಗುರು ದರ್ಶನವಿತ್ತು ಕೃಪೆ ದೋರುತ್ತಾನೆ. ಹರ ಮುನಿದರೂ ಗುರು ರಕ್ಷಿಸಬಲ್ಲನು. ಗುರು ಮುನಿದರೆ ಕಾವ ಶಕ್ತಿಹರನಲ್ಲಿಲ್ಲ. ಅಂತೆಯೇ ನಿರ್ಗುಣ-ಸಗುಣ ಭಕ್ತಿಮಾರ್ಗದ ಹಿಂದೀ ಕವಿಗಳೂ ಸಹ ಗುರುಮಹತ್ವವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಕಬೀರದಾಸರು :

ಸತಗುರು ಕೀ ಮಹಿಮಾ ಅನಂತ, ಅನಂತ, ಕಿಯಾ ಉಪಗಾರ

ಗುರು-ಗೋವಿಂದ ದೋನೋಂ ಖಡೆ, ಕಾಕೆ ಲಾಗೂ೦ ಪಾಯೀ |

ಬಲಿಹಾರೀ ಯಾ ಗುರುಕೀ, ಗೋವಿಂದ ದಿಯಾ ಬತಾಯೀ |

ಸೂರದಾಸರು :

ಗುರು ಬಿನಾ ಐಸೀ ಕೌನ ಕರೈ ?

ಮಾಲಾತಿಲಕ ಮನೋಹರ ಬಾನೀ, ಲೈ ಸಿರ ಛಟಾ ಧರೆ |

ಭವಸಾಗರತೆಂ  ಬೂಢತ ರಾಖ್ಯೆ, ದೀಪಕ ಹಾಥ ಧರೈ |

ಸೂರದಾಸ ಗುರು ಐಸಾ ಸಮರಥ ಛಿನ ಮೈಂ ಲೆ ಊಧರೈ |

ನಿರ್ಗುಣ ಭಕ್ತಿಮಾರ್ಗಿಗಳಾದ ಕಬೀರದಾಸರು ಸದ್ಗುರುವಿನ ಮಹಿಮೆ ಅನಂತ ಅನಂತವೆಂದು ಹೇಳಿದ್ದಾರೆ. ಯಾಕೆಂದರೆ ಗುರುಕರುಣೆ ದೋರುತ್ತಾನೆ. ಆಕಸ್ಮಾತ್ತಾಗಿ ಗುರು ಮತ್ತು ಹರ ಏಕಕಾಲಕ್ಕೆ ಬಂದರೆ ನಾನು ಸದ್ಗುರುವಿಗೇನೆ ಮೊದಲು ಮಣಿಯುತ್ತೇನೆಂದು ತಮ್ಮ ಗುರು ಭಕ್ತಿಯನ್ನು ನಿರೂಪಿಸಿದ್ದಾರೆ. ಸಗುಣಭಕ್ತಿ ಮಾರ್ಗಿಗಳಾದ ಸೂರದಾಸರು ಗುರು ಮಹಿಮೆಯನ್ನು ವಿಚಾರಪೂರ್ವಕವಾಗಿ ಮಂಡಿಸಿದ್ದಾರೆ. ಮಾಲಾ ತಿಲಕವನ್ನು, ಜಟಾಜೂಟವನ್ನು ಧರಿಸಿ, ಮನೋಹರವಾದ ಮಾತುಳ್ಳ ಸದ್ಗುರುನಾಥನು ಜ್ಞಾನದೀಪವನ್ನು ಕೈಯಲ್ಲಿ ಹಿಡಿದು ಭವಸಾಗರದಲ್ಲಿ ಮುಳುಗುವ ನಮ್ಮನ್ನು ಉದ್ಧರಿಸುತ್ತಾನೆ. ಇಂಥ ಗುರು ಸಮರ್ಥನಾಗಿದ್ದಾನೆ. ಮನಸ್ಸು ಮಾಡಿದರೆ ಭಕ್ತನನ್ನು ಕ್ಷಣದಲ್ಲಿ ಉದ್ಧರಿಸಬಲ್ಲನೆಂದು ಗುರು ಗರಿಮೆಯನ್ನು ವಿಶದೀಕರಿಸಿದ್ದಾರೆ.

ಕವಿಗಳು ಸ್ವತಃ ಜ್ಞಾನಿಗಳಾಗಿದ್ದರು. ಅನುಭಾವಿಗಳಾಗಿದ್ದರು. ಗುರುಚರಣ ಮಹಿಮೆಯನ್ನು ನುತಿಸುವಲ್ಲಿ ಅಪಾರ ಪ್ರೇಮವನ್ನು ವ್ಯಕ್ತಮಾಡಿದ್ದಾರೆ. ಗುರುಸ್ತುತಿಗೈಯ್ಯುವದು ಶಿಷ್ಯನ ಗುರಿಯಾದರೆ, ಕರುಣೆ ದೋರುವದು ಗುರುವಿನ ಅಗ್ಗಳಿಕೆ ಯಾಗಿದೆ. ಗುರುಕರುಣೆಯೇ ಮಾನವ ಜೀವನದ ಸಾರಸರ್ವಸ್ವವೆಂಬುದು ಶರಣರ ಸಂದೇಶವಾಗಿದೆ.

ಗುರು ಕೃಪಾಬಲವೇ ಶಿಷ್ಯರಿಗೆ ಜೀವಾಳ ;

ಗುರು ಕೃಪಾಬಲವೇ ಲಿಂಗಾಂಗ ಸಮರಸದ ಮುಂಬೆಳಗು ;

ಗುರು ಕೃಪಾಬಲವೇ ವೀರಶೈವನ ಒಳಬೆಳಗು,

ಗುರು ಸೇವೆಯ ಮಾಡಿ ಗುರು ಕೃಪೆಯ ಪಡೆಯೆಂದ

ನಮ್ಮ ಮೃಡಗಿರಿ ಅನ್ನದಾನೀಶ (ವ.ವ. ೧೬)

********

ಎಲ್ಲ ದೈವಕೆ ನಿಮ್ಮ | ಮೆಲ್ಲಡಿಯೇ ಘನವೆಂದು

ಸೊಲ್ಲಿಗೊಮ್ಮೊಮ್ಮೆ ನುತಿಪೆನಾಂ ಗುರುರಾಯ

ಸಲ್ಲೀಲೆಯಿಂದ ಕೃಪೆಯಾಗು         || ೮ ||

ಈ ಜಗತ್ತಿನಲ್ಲಿ ದೇವತೆಗಳ ಸಂಖ್ಯೆ ಹೇಳತೀರದಷ್ಟಿದೆ. ಶಿವನ ಸೃಷ್ಟಿ ಮಾನವ.ಮಾನವನ ಸೃಷ್ಟಿ ದೇವತೆಗಳಾಗಿವೆ. ”ನಾ ಮಾಡಿದಲ್ಲದೆ ನೀ ದೇವನಲ್ಲ’ವೆಂಬ ಅಲ್ಲಮಪ್ರಭುಗಳ ವಾಣಿ ನಿದರ್ಶನವಾಗಿದೆ. ಮಾನವನು ಭಿನ್ನ ಭಿನ್ನ ವಸ್ತುಗಳನ್ನುದೇವರನ್ನಾಗಿಸಿದ್ದಾರೆ. ಅಣ್ಣ ಬಸವಣ್ಣನವರು ಈ ಬಹು ದೇವತಾ ವಾದವನ್ನು ಚನ್ನಾಗಿ ಖಂಡಿಸಿದ್ದಾರೆ.

ಮಡಕೆ ದೈವ, ಮೊರದೈವ, ಬೀದಿಯ ಕಲ್ಲುದೈವ

ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ

ಕೋಳಗ ದೈವ, ಗಿಣ್ಣಿಲು ದೈವ ಕಾಣಿರೋ

ದೈವ ದೈವವೆಂದು ಕಾಲಿಡಲಿಂಬಿಲ್ಲ.

ದೈವನೊಬ್ಬನೆ ಕೂಡಲ ಸಂಗಮದೇವ.

ಅರಗು ತಿಂದು ಕರಗುವ ದೈವವ

ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯಂಬೆನಯ್ಯಾ

ಅವಸರ ಬಂದಡೆ ಮಾರುವ ದೈವವನೆಂತು ಸರಿಯಂಬೆನಯ್ಯಾ ?

ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯಂಬೆನಯ್ಯಾ ?

ಸಹಜಭಾವ ನಿಜೈಕ್ಯ ಕೂಡಲಸಂಗಮನೊಬ್ಬನೆ ದೇವ.

ಪ್ರತಿಯೊಂದು ವಸ್ತುವಿಗೆ ದೇವರೆಂದು ಕರೆದರೆ ಕಾಲಿಡಲೂ ಸ್ಥಳವಿಲ್ಲವಾಗುವದು. ತನ್ನನ್ನು ತಾನು ರಕ್ಷಿಸಿಕೊಳ್ಳದ ವಸ್ತುವು ದೇವರಾಗದು. ಜನರು ನೀರಕಂಡಲ್ಲಿಮುಳುಗಿ, ಮರವ ಕಂಡಲ್ಲಿ ಸುತ್ತುತ್ತ ಮೌಢ್ಯರಾಗಿದ್ದಾರೆ. ಒಣಗುವ ಗಿಡವನ್ನುನಂಬುವ ಜನರು ನಿಜವಾದ ದೇವರನ್ನು ನಂಬಲಾರರು. ಕಲ್ಲ ಮನೆಯಮಾಡಿ, ಕಲ್ಲದೇವರನ್ನು ಪ್ರತಿಷ್ಠಿಸಿ, ಆಕಸ್ಮಿಕವಾಗಿ ಗುಡಿ ಮೇಲಿನ ಕಲ್ಲು ಕೆಳಗೆ ಬಿದ್ದರೆ ದೇವರೆ ಹೊದನೆಂದು ಪ್ರಭುದೇವರು ವಿಡಂಬಿಸಿದ್ದಾರೆ.ಪ್ರತಿಷ್ಠಾಪನೆ ಹೊಂದುವ ಪ್ರತಿಯೊಂದು  ದೇವತೆಯಾದರೂ ನಾಶ ಹೊಂದುವದು. ಅಲ್ಲದೆ ಪ್ರತಿಷ್ಠಾಪನೆಯಾಗುವ ಕಾಲಕ್ಕೆ ಗುರುಚರಣವೇ ಸಕಲ ದೇವತೆಗಳಿಗೆ ಘನವಾಗಿದೆ. ಸದ್ಗುರುವಿನ ಮೆಲ್ಲಡಿಯ ಮಹಿಮೆ ಅಪಾರವಾದುದು.

ಗುರು ಚರಣಂ ಭವಹರಣಂ

ಶರಣಜನ ಹೃದಾಭರಣಮಾತ್ಮ ಸುಖಕರಣಂ ||

ಮರಣ ಭಯಾದುತ್ತರಣಂ

ತರುಣಾರುಣಕಿರಣವರ್ಣಮಹಮೀಡೇ ||

ಭವಹರಣಕ್ಕೆ ಕಾರಣವಾದ ಗುರುಚರಣವು ಶರಣ ಜನರ ಹೃದಯಾಭರಣವಾಗಿದೆ. ಗುರುಚರಣ ಗಾನವು ಆತ್ಮಕ್ಕೆ ಸುಖವನ್ನು ನೀಡುವದು. ಮರಣ ಭಯವನ್ನುನಿವಾರಿಸುವದು. ಬಾಲಸೂರ್ಯನ ಕಿರಣಕ್ಕೆ ಸಮನಾದ ಗುರುಚರಣವನ್ನುನುಡಿ-ನುಡಿಗೊಮ್ಮೆ ಉಸುರಿಗೊಮ್ಮೆ ನುಡಿಸಿ ಧನ್ಯರಾಗುವದೇ ಮಾನವನ ಕರ್ತವ್ಯ.ಶರಣನ ನಿಜನಿಷ್ಠೆ, ನೈಜವಾದ ಗುರುನುಡಿಯು ಗುರುಕೃಪೆಗೆ ಕಾರಣವಾಗುವದು.ಇಂಥ ನುಡಿಗೆ ಗುರುತಂದೆಯು ಸಲೀಲೆಯಿಂದ ಕೃಪೆದೋರುವನು. ಪೂರ್ವಜರು ಏಳುವಾಗ, ಮಲಗುವಾಗ, ಪೂಜೆ ಮೊದಲಾದ ಶುಭ ಪ್ರಸಂಗಗಳಲ್ಲಿಯೂ ಗುರು ಸ್ತುತಿಯನ್ನು ತಪ್ಪದೇ ಮಾಡುತ್ತ ಬಂದಿರುವರು.

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ |

ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||

ಗುರುಬ್ರ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |

ಗುರುಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀಗುರವೇ ನಮಃ |

ಆವಾಚ್ಯಾತ್ಮ ಸ್ವರೂಪಾಯ ಶಿವಭಾವಪ್ರದಾಯಿನೇ |

ನಮಸ್ಸದ್ಗುರುನಾಥಾಯ ಷಟ್‌ಸ್ಥಲಬ್ರಹ್ಮಮೂರ್ತಯೇ ||

**********

ನರಜೀವಿಗಳಿಗೋರ್ವ | ಹರನೆ ಕಾರಣಕರ್ತ

ಶರಣ ಸಂತತಿಗೆ ಗುರುವೆ ನೀಕರ್ತನೆಂ

ದೆರಗಿರ್ವನಡಿಗೆ ಕೃಪೆಯಾಗು  || ೯ ||

ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಎಂಬತ್ನಾಲ್ಕು ಲಕ್ಷ ಜೀವಿಗಳನ್ನುನಿರ್ಮಿಸಿದನು ಹರನು. ಎಲ್ಲ ಜೀವಿಗಳಿಗಿಂತ ನರಜೀವಿಯೇ ಮಿಗಿಲು. ಆದರೆ ಈ ನರನು ಹುಟ್ಟು ಸಾವುಗಳ ಮಧ್ಯದಲ್ಲಿ ಸಿಕ್ಕು ಬಳಲಿ ತೊಳಲಾಡುತ್ತಿದ್ದಾನೆ. ಹರನ ಸೃಷ್ಟಿಯ ನರನು ಕಷ್ಟಜೀವಿಯಾಗಿದ್ದಾನೆ. ಭವ-ಭವಾಂತರಗಳಲ್ಲಿ ಹುಟ್ಟಿ ಹುಟ್ಟಿ ಮಾನವನು ಸಾಯುತ್ತಾನೆ. ಜಗತ್ತಿನಲ್ಲಿ ಅತ್ಯಂತ ಭಯಾನಕವಾದ ವಸ್ತುವೇ ಸಾವು.ಸಾವಿಗಂಜದ ಮಾನವರಿಲ್ಲ. ಶಿವನು ತನ್ನ ಲೀಲೆಗೋಸ್ಕರ ಜೀವಿಗಳನ್ನು ಭವಚಕ್ರ ದಲ್ಲಿ ತಿರುಗಿಸುತ್ತಾನೆ.

ಗುರುದೇವನು ಕರುಣಾಮಯನು. ಭವಬಂಧನದಲ್ಲಿ ಬಿದ್ದು ದುಃಖಿಯಾಗುತಿರುವ ಮಾನವರನ್ನು ಉದ್ಧರಿಸುತ್ತಾನೆ. ಮಾಂಸಮಯ ಶರೀರವನ್ನು ಮಂತ್ರ ಮಯವನ್ನಾಗಿಸುತ್ತಾನೆ. ಶಿಷ್ಯನಿಗೆ ತನ್ನ ಹಸ್ತಕಮಲದಲ್ಲಿ ಪುನರ್ಜನ್ಮವನ್ನೀಯುತ್ತಾನೆ.ಅದುಕಾರಣವೇ ಶರಣರು ಗುರುಕರಸಂಜಾತರೆಂದು ಹೆಸರು ಪಡೆಯುತ್ತಾರೆ. ಶರಣನಿಗೆ ಹುಟ್ಟು-ಸಾವಿನ ಕೀಲವನ್ನು ತಿಳಿಸಿ ಮುಕ್ತನಾಗುವ ಮಾರ್ಗವನ್ನು

ತಿಳಿಸುತ್ತಾನೆ. ತನುತ್ರಯಗಳನ್ನು ಪಾವನಗೊಳಿಸಿ ಲಿಂಗತ್ರಯವನ್ನು ಕರುಣಿಸುತ್ತಾನೆ. ಮಹಾಮಂತ್ರವನ್ನು ಬೋಧಿಸಿ ಶರಣ ಮಾರ್ಗವನ್ನು ತಿಳಿಸುತ್ತಾನೆ. ಮರವೆಯನ್ನುದೂರಗೊಳಿಸಿ ಅರಿವನ್ನು ಜಾಗೃತಗೊಳಿಸುತ್ತಾನೆ. ಅರಿವಿನ ಕುರುಹೇ ಲಿಂಗವೆಂದು ಮನವರಿಕೆ ಮಾಡಿಕೊಡುತ್ತಾನೆ. ಇಂಥ ಶರಣನು ಭವಚಕ್ರವನ್ನು ದಾಟಿ ಮುಕ್ತ ನಾಗುತ್ತಾನೆ. ಪುನರ್ಜನ್ಮವನ್ನು ಕಳೆದುಕೊಳ್ಳುತ್ತಾನೆ. ಶಿವನ ದೃಷ್ಟಿಯಿಂದ ಪಾರಾಗುತಾನೆ. ಪ್ರಭುಲಿಂಗಲೀಲೆಯಲ್ಲಿ ಶಿವನಿಗೆ ಪಾರ್ವತಿಯು ‘ಹೇ ದೇವಾ ನಾಮ-ರೂಪಕ್ರಿಯೆಗಳನ್ನು ಗೆಲ್ಲಬಲ್ಲ ನಿತ್ಯ ಮುಕ್ತನಾಗುವ ನಿರ್ಮಲವಾದ ಉದ್ಯೋಗವಾವುದು??ಎಂದು ಕೇಳಲು ಆಗ ಶಿವನು “ಭೋಗ ಭೂಮಿಯಾದ ಭೂತಲದಲ್ಲಿ ಮಾನವ ಶರೀರಿಯಾಗಿ ಹುಟ್ಟಿ ಶರಣನಾಗಿ ಶಿವಯೋಗ ಮಾರ್ಗದಿಂದ ನಿಜವನ್ನು ಸಾಧಿಸಿ ಮುಕ್ತರಾಗಬಹುದು” ಎಂದು ತಿಳಿಸಿದ ಮಾತುಗಳು ಮನನೀಯವಾಗಿವೆ.

ಶಿವಕವಿಯು ‘ಓರ್ವಹರ’ನೆಂಬ ಪದಪ್ರಯೋಗದಲ್ಲಿಯೂ ವಿಶೇಷತೆಯನ್ನುತುಂಬಿದ್ದಾನೆ. ಈ ಜಗತ್ತನ್ನು ಹಾಗೂ ಸಕಲ ಜೀವಜಂತುಗಳನ್ನು ನಿರ್ಮಾಣ ಮಾಡುವ ಶಿವನು ಒಬ್ಬನೇ ಇದ್ದಾನೆ. ಶಿವನು ಎಷ್ಟೇ ಜೀವಗಳನ್ನು ಹುಟ್ಟಿಸಿದರೂ ಅವೆಲ್ಲಅವನಿಗಿಂತ ಭಿನ್ನವಾಗಿವೆ. ಕುಂಬಾರನು ಎಷ್ಟೇ ಗಡಿಗೆ ಮಡಿಕೆಗಳನ್ನು ತಯಾರಿಸಿದರೂ ಅವು ಅವನಿಗಿಂತ ಭಿನ್ನವಾಗಿರುವದಿಲ್ಲವೇ ! ಹಾಗೆ ಶಿವನು ತನ್ನಂತೆ ಮಾಡಿಕೊಳ್ಳುವದಿಲ್ಲ. ಜೀವನು ಶಿವನಾದ ಮೇಲೆಯೇ ದುಃಖದಿಂದ ಮುಕ್ತ ನಾಗುವನು. ಈ ದುಃಖಿಯಾದ ಜೀವನನ್ನು ಶಿವನನ್ನಾಗಿ ಮಾಡುವ ಮಹಾಶಕ್ತಿ ಸದ್ಗುರುವಿನಲ್ಲಿದೆ. ದೀಪದಿಂದ ಮತ್ತೊಂದು ದೀಪ ಬೆಳಗುವಂತೆ ಗುರುವರನು ಸಚಿಷ್ಯರನ್ನು ತನ್ನಂತೆ ಮಾಡಿಕೊಳ್ಳುತ್ತಾನೆ. ಅನೇಕ ಗುರುಬಳಗವನ್ನೇ ತಯಾರಿಸುವನು. ಒಬ್ಬ ಶರಣನನ್ನಲ್ಲ.ಶರಣ ಸಂತತಿಗೇನೇ ಕಾರಣ ಕರ್ತನಾಗುವನು.

ಇಂಥ ಅಪಾರಶಕ್ತಿಯನ್ನು ಪಡೆದ ಓ ಗುರುವೆ ! ನಿನ್ನಡಿಯ ಬಯಸಿ ಬಂದಿರುವೆ, ನಿನ್ನ ಸಿರಿಯಡಿಗೆ ಮುಡಿಯಿಡುವೆ. ಪಿಡಿದೆತ್ತಿ ಬಿಡೆದಲೆ ನೀ ಕಾಪಾಡು.

********

ಶಿವನ ಸನ್ನಿಧಿಯರ್ಗೆ| ಭವ ಮರಣವುಂಟೆಂದು

ತವಪಾದ ಪದ್ಮ ಸನ್ನಿಧಿಯ ಬಯಸಿ ಬಂ-

ದವನೆನಗೆ ಗುರುವೆ ಕೃಪೆಯಾಗು II ೧O II

ಶಿವಕವಿಯು ಮೇಲಿನ ಅರ್ಥವನ್ನೇ ಪುಷ್ಟಿಗೊಳಿಸುತ್ತಾನೆ. ಶಿವನಸನ್ನಿಧಿ ಹಾಗೂ ಗುರುಸನ್ನಿಧಿಯ ಮರ್ಮವನ್ನು ತಿಳಿಸುತ್ತಾನೆ. ಪುಣ್ಯವನ್ನು ಗಳಿಸಿದ ಮಾನವರು ಚತುರ್ವಿಧ ಮೋಕ್ಷಗಳಾದ ಸಾಲೋಕ್ಯ,ಸಾಮೀಪ್ಯ, ಸಾರೂಪ್ಯ, ಸಾಯುಜ್ಯಗಳನ್ನು ಸಂಪಾದಿಸುತ್ತಾರೆ.

“”ಕ್ಷೀಣೇ ಪುಣ್ಯೇ ಮರ್ಥ್ಯಲೋಕಂ ವಿಶಂತಿ.”

ಸ್ವರ್ಗಲೋಕದಲ್ಲಿ ಪುಣ್ಯವಿರುವವರೆಗೆ ಅನಂತ ಸುಖಗಳನ್ನು ಅನುಭವಿಸಿದ ಮಾನವರು ಪುಣ್ಯತೀರಲು ಪುನಃ ಮರ್ತ್ಯಲೋಕಕ್ಕೆ ಬರಬೇಕಾಗುವದು. ಶಿವನ ಸನ್ನಿಧಿಯು ಸ್ಥಿರವಾದುದಲ್ಲ. ಚುನಾವಣೆಯಲ್ಲಿ ಜನಮತವನ್ನು ಪಡೆದ ವ್ಯಕ್ತಿಯು ಆ ಅವಧಿ ಮುಗಿಯುವ ವರೆಗೆ ರಾಜಕೀಯ ಅಧಿಕಾರದ ಸುಖವನ್ನು ಅನುಭವಿಸಿ ಸಮಯ ಮುಗಿದ ಬಳಿಕ ಪುನಃ ತನ್ನ ನೆಲೆಗೆ ಬರುವಂತೆ, ಮಾನವನು ಪುಣ್ಯ ಮುಗಿದ ಬಳಿಕ ಭೂಲೋಕದಲ್ಲಿ ಹುಟ್ಟಬೇಕಾಗುವದು. ಪಾಪಮಾಡಿದವನು ರೌರವ ನರಕ ಗಳಲ್ಲಿ ಬೀಳಬೇಕಾಗುವದು. ಪುಣ್ಯವೆಂಬುದು ಬೆಲೆಯಿದ್ದಂತೆ. ಬೆಲೆತೆತ್ತು ಅನೇಕ ಲೌಕಿಕ ಭೋಗಗಳನ್ನು ಭೋಗಿಸುವಂತೆ ಪುಣ್ಯವೆಂಬ ಬೆಲೆಯಿಂದ ಸ್ವರ್ಗಲೋಕದ ಸುಖವನ್ನು ಅನುಭೋಗಿಸುವನು.

ಇಂದಿನ ವೈಜ್ಞಾನಿಕ ಯುಗದಲ್ಲಿ ಪುಣ್ಯ-ಪಾಪಗಳ ಸ್ವರ್ಗ-ನರಕ ಲೋಕಗಳ ಕಲ್ಪನೆ ಸ್ಥಿರವಾಗದಿದ್ದರೂ, “ಪುಣ್ಯಪಾಪವೆಂಬುದು ನಿಮ್ಮಿಷ್ಟ ಕಾಣಿರೆ” “ಅಯ್ಯಾ ಎಂದಡೆ ಸ್ವರ್ಗ, ಎಲ್ಲವೋ ಎಂದಡೆ ನರಕ’ ಎನ್ನುವ ಶರಣವಾಣಿಗೆ ಚ್ಯುತಿಯಿಲ್ಲ. ಮಾನವನ ನಡತೆಗೆ ತಕ್ಕಂತೆ ಗುಣಾವಗುಣಗಳು ಲಭ್ಯವಾಗುತ್ತವೆ. ಒಟ್ಟಿನ ಮೇಲೆ ಪುಣ್ಯದ ದಾರಿಯಲ್ಲಿ ನಡೆವವಗೆ ಪುನರ್ಜನ್ಮವಿದೆ. ಯಾಕೆಂದರೆ ಪುಣ್ಯದಲ್ಲಿ ಸಕಾಮ ಕರ್ಮವಿದೆ. ಅಂತೆಯೇ ವೀರಶೈವ ಸಂಸ್ಕೃತಿಯು ಪುಣ್ಯಪಾಪಗಳನ್ನು ಮೀರಿನಿಂತಿದೆ. “ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿ ಸತ್ಯವಾಗಿದೆ. ಪ್ರತಿಯೊಬ್ಬನೂ ಗುರುಪಾದಪದ್ಮ ಸೇವೆಯನ್ನು ಬಯಸಬೇಕು. ಗುರುಪಾದ ಸನ್ನಿಧಿಯು ಭವರೋಗವನ್ನು ಕಳೆಯುವದು. ಭೌತಿಕದ ಆಶೆಯನ್ನುಬಿಡಿಸುವದು. ಭವ-ಮರಣವನ್ನು  ನಿವಾರಿಸುವದು. ಗುರುಪಾದ ಸನ್ನಿಧಿಯು ಚಿನ್ನಿಧಿಯಂತೆ ಸದಾ ಬೆಳಗಿಸಬಲ್ಲದು. ಪರಮ ಪೂಜ್ಯ ಗುರುವರರು ಅರಸರ ಹಿಂದೆ, ಗುರುಗಳ ಮುಂದೆ” ಇರಬೇಕೆಂದು ಅಪ್ಪಣೆ ಮಾಡುತ್ತಿದ್ದರು. ಅರಸ ಕ್ಷಣಚಿತ್ತದವ; ಯಾವಕಾಲಕ್ಕೆ ಏನು ಆಜ್ಞೆಯನ್ನುಮಾಡುವನೋ ತಿಳಿಯದು. ಒಮ್ಮೆ ಲಾಭವಾಗಬಹುದು, ಮತ್ತೊಮ್ಮೆ ಹಾನಿಯಾಗಬಹುದು. ಅದಕ್ಕಾಗಿ ಅವರು ನಡೆದಂತೆ ಹಿಂಬಾಲಿಸುವದೇ ಸುಗಮದಾರಿ. ಆದರೆ ಗುರುಗಳ ಮುಂದೆ ಸೇವಾತತ್ಪರರಾಗಿದ್ದರೆ; ಗುರುಸನ್ನಿಧಿಯಲ್ಲಿ ಕಾಯಕ ತತ್ಪರನಾಗಿದ್ದರೆ ಗುರುಕೃಪೆ ಅವಶ್ಯವಾಗಿ ಘಟಿಸುವದು. ಗುರು ಕೃಪಾದೃಷ್ಟಿ ಹರಿದುಬರುವದು. ಆದ್ದರಿಂದ ಗುರುಸನ್ನಿಧಿಯ ಮಹತ್ವ ಅಪಾರವಾಗಿದೆ, ಅನುಪಮವಾಗಿದೆ. ಇದನ್ನರಿತ ಶಿವಕವಿಗಳು ಗುರುಪಾದಪದ್ಮ ಸನ್ನಿಧಿಯನ್ನು ಬಯಸಿದರು. ಕರುಣಾಮಯ ಗುರುವು ಪಾದಸನ್ನಿಧಿಯನ್ನು ಬಯಸಿಬಂದ ಭಕ್ತನನ್ನು ಉದ್ಧರಿಸದೇ ಬಿಡನೆಂಬ ದೃಢ ವಿಶ್ವಾಸವೂ ಅವರಲ್ಲಿ ವ್ಯಕ್ತವಾಗುತ್ತದೆ

ಲೇಖಕರು : ಪೂಜ್ಯ ಲಿಂ.ವ್ಯಾಕರಣಾಳು ಸಿದ್ಧಲಿಂಗ ಪಟ್ಟಾಧ್ಯಕ್ಷರು

ಬೆಳಗಿನ ೬-೩೦ ರ ಗಂಟೆಯಾಗುತ್ತಲೆ ವಟುಗಳು ಮತ್ತು ಸಾಧಕರು ತಮ್ಮ ತಮ್ಮ ಆಸನಗಳೊಂದಿಗೆ

ಕಲ್ಲುಮಠದ ಪಟಾಂಗಣದಲ್ಲಿ ಬಂದು ಸಾಲಾಗಿ ನಿಂತು ವಂದನೆಯ ಮುದ್ರೆಯೊಂದಿಗೆ ಶಿವಯೋಗ

ಮಂದಿರದ ಗೀತೆಗಳನ್ನು ಹಾಡಿದ ನಂತರ

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ

ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮಃ,

ಎಂದು ಶ್ರೀ ಸದಾಶಿವ ಗುರುದೇವವನ್ನು ಭಕ್ತಿ ಭಾವದಿಂದ ಸ್ಮರಿಸಿ ಸೆಕ್ರೆಟರಿ ಸಾಧಕರೊಬ್ಬರ ಹಿರಿಯತನದಲ್ಲಿ ಯೋಗಾಸನಗಳನ್ನು ಹಾಕಲು ಪ್ರಾರಂಭಿಸುತ್ತಾರೆ.

ಹಠಯೋಗವು ಶಿವಯೋಗಕ್ಕೆ ಸಹಕಾರಿಯಾಗಿದೆ. ಆದುದರಿಂದ ಪರಮ ಪೂಜ್ಯ ಲಿಂ. ಹಾನಗಲ್ಲ

ಕುಮಾರ ಮಹಾಸ್ವಾಮಿಗಳವರು ಶಿವಯೋಗಮಂದಿರದಲ್ಲಿಯ ಶಿವಯೋಗಸಾಧಕರ ನಿತ್ಯದ ಕಾರ್ಯಕ್ರಮ ಗಳಲ್ಲಿ ಯೋಗಾಸನಗಳಿಗೆ ಪ್ರಥಮ ಸ್ಥಾನವನ್ನು ಕಲ್ಪಿಸಿದ್ದಾರೆ. ಇಲ್ಲಿ ಶಿವಯೋಗ ಸಾಧಕರು ಮತ್ತು ವಟುಗಳು ಪ್ರತಿನಿತ್ಯ ಮುಂಜಾನೆ ಯೋಗಾಸನಗಳನ್ನು ಮಾಡಿಯೇ ಮುಂದಿನ ಪಾಠಪ್ರವಚನಾದಿ ಕಾರ್ಯಗಳನ್ನು  ಪ್ರಾರಂಭಿಸುತ್ತಾರೆ.

ಪಾತಂಜಲಯೋಗದ ಯಮಾದಿ ಅಷ್ಟಾಂಗಗಳಲ್ಲಿ ಆಸನವು ಮೂರನೆಯದು, ನಿರೋಗವಾದ ಶರೀರವೆ ಧರ್ಮಕ್ಕೆ ಮೊದಲ ಸಾಧನ. ರೋಗದಿಂದ ಚಿತ್ತ ವಿಕ್ಷೇಪ ಉಂಟಾಗುತ್ತದೆ. ಅದನ್ನು ಕಳೆದು ಶರೀರವನ್ನು ಸ್ವಸ್ಥವನ್ನಾಗಿಡಲು ಯೋಗಾಸನಗಳು ಪರಮೋಪಾಯ, ಆಸನಗಳು ಸಾತ್ವಿಕ ಅಂಗಸಾಧನೆಗಳು.ಶರೀರದ ಅಂಗಾಂಗಗಳಿಗೆಲ್ಲ ಸಮನಾದ ವ್ಯಾಯಾಮವು ಆಸನಗಳಿಂದ ದೊರೆಯುತ್ತದೆ.

ಆಸನಗಳ ಮಹತ್ವವನ್ನು ಗುರು ಮುಖದಿಂದ ತಿಳಿದು ನಿತ್ಯವೂ ನಿಯಮಿತವಾಗಿ ಅಭ್ಯಾಸ ಮಾಡಬೇಕು. ಅದರಿಂದ ನಾಡಿಗಳು ಪರಿಶುದ್ಧವಾಗಿ ಶರೀರವು ಹಗುರಾಗುತ್ತದೆ; ಹಸಿವೆ ಹೆಚ್ಚುತ್ತದೆ; ಜಾಡ್ಯವು ದೂರಾಗುತ್ತದೆ. ಹಠಯೋಗದಲ್ಲಿ ಆಸನವೆ ಪ್ರಥಮಾಂಗ (ಹ.ಪ್ರ. ಪ್ರಥಮ ಉಪದೇಶ) ವಸಿಷ್ಠ ಮತ್ಸೇಂದ್ರ ಮೊದಲಾದ ಮುನಿಗಳು ಅನೇಕ ಆಸನಗಳನ್ನು ಕಂಡುಹಿಡಿದು ಅವುಗಳ ಸಾಧನೆಯಿಂದ ಸಿದ್ಧಿಯನ್ನು ಪಡೆದಿದ್ದಾರೆ. ಪ್ರಾಣಾಯಾಮ

ಸಾಧನೆಗೆ ಆಸನ ಪ್ರಥಮೋಪಾಯ, ಈ ಯೋಗಾಸನಗಳು ೮೪ ಎಂದು ಪರಿಗಣಿತವಾಗಿವೆ.

(೧) ಸಿದ್ಧಾಸನ,

(೨) ಮತಾಂತರ ಸಿದ್ಧಾಸನ,

(೩) ಶಿರಸಿದ್ಧಾಸನ,

(೪) ಸ್ವಸ್ತಿಕಾಸನ,

 (೫) ವೀರಾಸನ,

(೬) ಸುಖಾಸನ,

(೭) ಪದ್ಮಾಸನ,

(೮) ಬದ್ಧಪದ್ಮಾಸನ,

(೯) ಕುಕ್ಕುಟಾಸನ,

(೧೦) ಗರ್ಭಾಸನ,

(೧೧) ಟಿಟ್ಟಿಭಾಸನ

(೧೨) ಗ್ರಂಥಿಕಾಸನ,

(೧೩) ಮತ್ಸ್ಯಾಸನ,

(೧೪) ಮತಾಂತರ ಮಾಸನ,

(೧೫) ಕೂರ್ಮಾಸನ,

(೧೬) ವೃಕ್ಷಾಸನ,

(೧೭) ಹಸ್ತ ವೃಕ್ಷಾಸನ,

(೧೮) ಮುಕ್ತ ಹಸ್ತ ವೃಕ್ಷಾಸನ,

(೧೯) ಶಲಭಾಸನ,

(೨೦) ಶ್ರೀ ಪಾದಧನುರಾಸನ,

 (೨೧) ಏಕ ಪಾದ ದೀರ್ಘಾಸನ,

(೨) ದೀರ್ಘಪಾದ ಅಂಗುಷ್ಠಾಸನ,

(೨೩) ಪಶ್ಚಿಮೋತ್ಥಾನಾಸನ

 (೨೪) ಉಭಯಪಾದ ಶಿರಾಸನ,

 (೨೫) ಉತ್ಥಾನ ವಿಶಾಲ ಪಾದಾಸನ,

(೨೬) ಏಕಪಾದ ಭುಜಾಸನ,

(೨೭) ಉಭಯಪಾದ ಶಿರಾಸನ,

 (೨೮) ಉತ್ಥಾನ ಪಾದ ಶಿರಾಸನ,

(೨೯) ಸುಪ್ತಶಿರಾಸನ

(೩೦) ಗರುಡಾಸನ

(೩೧) ಭುಜಂಗಾಸನ

 (೩೨) ಹಂಸಾಸನ

 (೩೩) ಸರ್ವಾಂಗಾಸನ,

(೩೪) ಹಲಾಸನ,

(೩೫) ಪ್ರಾಣಾಸನ,

(೩೬) ಶ್ವಾಸಗಮನಾಸನ,

(೩೭) ಅಂಗುಷ್ಠಾಸನ,

(೩೮) ವಾತಾಯನಾಸನ,

 (೩೯) ಗೋಮುಖಾಸನ,

(೪೦) ಜಾನ್ಸಾಸನ,

(೪೧) ಅರ್ಧ ಶವಾಸನ,

(೪೨) ಊರ್ಧ್ವಪದ್ಮಾಸನ,

 (೪೩) ಪವನಮುಕ್ತಾಸನ,

 (೪೪) ಸಿಂಹಾಸನ,

 (೪೫) ಚಕ್ರಾಸನ,

(೪೬) ದೃಢಾಸನ,

(೪೭) ಶವಾಸನ,

(೪೮) ವಜ್ರಾಸನ,

 (೪೯) ಸುಪ್ತವಜ್ರಾಸನ,

 (೫೦) ಉಷ್ಟ್ರಾಸನ,

 (೫೧) ಗೋರಕ್ಷಾಸನ,

(೫೨) ಭದ್ರಾಸನ,

(೫೩) ಮಂಡೂಕಾಸನ,

 (೫೪) ತಾಡಾಸನ,

 (೫೫) ಉತ್ಥಾನತಾಡಾಸನ,

(೫೬) ತೋಲಾಸನ,

(೫೭) ಅರ್ಧಪಾದಾಸನ,

 (೫೮) ಮಯೂರಾಸನ,

(೫೯) ಪದ್ಮಾಸನಯುಕ್ತ ಮಯೂರಾಸನ,

(೬೦) ಉತ್ಕಟಾಸನ,

(೬೧) ಮತಾಂತರ

(೬೧) ಮತಾಂತರ ಶಲಭಾಸನ,

(೬೨) ಧನುರಾಸನ,

(೬೩) ಊರ್ಧ್ವಧನುರಾಸನ,

(೬೪) ಯೋಗ ನಿದ್ರಾಸನ,

(೬೫) ಅಪಾನಪಾದಾಸನ,

(೬೬) ಧ್ಯಾನಾಸನ,

(೬೭) ಪ್ರಾರ್ಥನಾಸನ,

 (೬೮) ಭೇಕಾಸನ,

(೬೯) ವೃಶ್ಚಿಕಾಸನ,

 (೭೦) ಪಾರ್ಶ್ವಾಸನ,

(೭೧) ದಕ್ಷಿಣಪಾದ ಪಾರ್ಶ್ವಾಸನ,

(೭೨) ವಾಮಪಾದ ಪಾರ್ಶ್ವಾಸನ

(೭೩) ತ್ರಿಕೋಣಾಸನ,

(೭೪) ದಕ್ಷಿಣಪಾದ ತ್ರಿಕೋಣಾಸನ,

(೭೫) ವಾಮಪಾದ ತ್ರಿಕೋಣಾಸನ,

 (೭೬) ಮತ್ಸೆಂದ್ರಾಸನ,,

 (೭೭) ವಾಮಪಾದ ಮತ್ಸೆಂದ್ರಾಸನ,,

(೭೮) ಭುಜಾಸನ,

 (೭೯) ವಾಮಪಾದ ಭುಜಾಸನ,

(೮೦) ದಕ್ಷಿಣಪಾದ ಭುಜಾಸನ,

(೮೧) ಉಭಯಪಾದ ಭುಜಾಸನ,

 (೮೨) ಉತ್ಥಾನ ಭುಜಾಸನ,

 (೮೩) ಕಂದಪೀಡಾಸನ,

(೮೪) ಮತಾಂತರ ಕಂದಪೀಡಾಸನ.

ಪ್ರತಿನಿತ್ಯ ಆಸನಗಳನ್ನು ಹಾಕುವ ಕ್ರಮವು ಕೆಳಗಿನಂತಿದೆ :

ಸೋಮವಾರ ಹಾಕುವ ಆಸನಗಳು :

೧ ಸಿದ್ಧಾಸನ, ೨. ಶಿರಸಿದ್ಧಾಸನ, ೩ ಬದ್ಧಪದ್ಮಾಸನ, ೪. ಊರ್ಧ್ವಪದ್ಮಾಸನ, ೫ ಗರ್ಭಾಸನ; ಮಂಗಳವಾರ :

೧. ಕುಕ್ಕುಟಾಸನ, ೨. ಗ್ರಂಥಿಕಾಸನ, ೩ ಉತ್ಕಟಾಸನ, ೪, ಗೋಮುಖಾಸನ, ೫. ಕೂರ್ಮಾಸನ, ಬುಧವಾರ

೧ ಭುಜಾಸನ, ೨. ತೋಲಾಸನ, ೩. ಗೋರಕ್ಷಾಸನ, ೪. ವೃಕ್ಷಾಸನ, ೫. ವಜ್ರಾಸನ,

 ಗುರುವಾರ :

೧ ಟಿಟ್ಟಿಭಾಸನ ೨. ವಾತಾಯನಾಸನ, ೩ ಗೋರಕ್ಷಾಸನ, ೪, ವೃಕ್ಷಾಸನ, ೫. ಶಿರಾಸನ;

 ಶುಕ್ರವಾರ:

೧. ಸ್ವಸ್ತಿಕಾಸನ, ೨. ಹಸ್ತವೃಕ್ಷಾಸನ, ೩. ದೀರ್ಘಪಾದಾಸನ, ೪. ಉತ್ಥಾನ ಶಿರಾಸನ, ೫. ಚಕ್ರಾಸನ;

ಶನಿವಾರ :

೧. ಧನುರಾಸನ, ೨. ಹಂಸಾಸನ, ೩. ಪಶ್ಚಿಮೊತ್ಥಾನಾಸನ, ೪ ಮತ್ಸ್ಯಾಸನ, ೫ ಅಂಗುಷ್ಠಾಸನ;

೧ ಗರುಡಾಸನ, ೨. ಊರ್ಧ್ವಧನುರಾಸನ, ೩. ಸರ್ವಾಂಗಾಸನ, ೪. ಉಷ್ಟ್ರಾಸನ,

೫. ಶಲಭಾಸನ, ಇವೆಲ್ಲ ಆಸನಗಳನ್ನು ಎರಡು ಮಿನಿಟಿಗೊಂದರಂತೆ ಹಾಕಬೇಕು. ಇವಲ್ಲದೆ ಪ್ರತಿನಿತ್ಯವೂ

೧. ವೃಶ್ಚಿಕಾಸನ, ೨. ಮಯೂರಾಸನ, ೩. ತ್ರಿಕೋಣಾಸನ, ೪, ಪಾರ್ಶ್ವಾಸನ, ೫, ಮತ್ಸೇಂದ್ರಾಸನ ಮತ್ತು

೬ ಕಂದಪೀಡಾಸನ, ಈ ಆರು ಆಸನಗಳನ್ನು ಮೂರು ಮಿನಿಟಿಗೊಂದರಂತೆ ತಪ್ಪದೇ ಹಾಕುವ ಕ್ರಮವಿದೆ.

ಈ ಆಸನಗಳನ್ನು ಹಾಕುವಾಗ ನಾಸಿಕಾಗ್ರ, ಊರ್ಧ್ವ, ಪೌರ್ಣಿಮೆ, ಮತ್ತು ಅಮಾವಾಸ್ಯೆ ದೃಷ್ಟಿಗಳು; ಜಿಹ್ವಾ ಮತ್ತು ಮೂಲ ಮೊದಲಾದ ಬಂಧಗಳು; ವಂದನಾದಿ ಮುದ್ರೆಗಳೂ ಅನಿವಾರ್ಯವಾಗಿ ಬೇಕು. ಅದೆಲ್ಲ ಕ್ರಮವನ್ನು ಗುರುಮುಖವಾಗಿ ತಿಳಿದು ಸಾಧನೆ ಮಾಡಬೇಕು. ವಾರದಲ್ಲಿ ೮೪ ಆಸನಗಳನ್ನು ಹಾಕಿ ಮುಗಿಸುವ ಕ್ರಮವರಿತ ಯೋಜನೆಯಿದೆ.

ಇವುಗಳಲ್ಲಿ ಸಿದ್ಧಾಸನವು ಬಹಳ ಶ್ರೇಷ್ಠವಾದುದು. ಸಿದ್ಧಾಸನದ ಅಭ್ಯಾಸದಿಂದ ಯೋಗಿಯು ಸಿದ್ಧಿಯನ್ನು ಪಡೆಯುತ್ತಾನೆ. ‘ಏತನ್ಮೋಕ್ಷಕವಾಟ ಭೇದಜನಕಂ ಸಿದ್ಧಾಸನಂ ಪ್ರೋಚ್ಯತೆ ‘ ಎಂದು ಹಠಯೋಗ ಪ್ರದೀಪಿಕೆಯಲ್ಲಿ (ಹ. ಪ್ರ. ಉ. ೧, ೩೫) ಇದರ ಸತತ ಮತ್ತು ನಿಯಮಿತ ಸಾಧನೆಯಿಂದ ಚಿತ್ತಚಾಪಲ್ಯವು ನಿಂತು ಹೋಗುತ್ತದೆ. ಇದೊಂದು ಆಸನವನ್ನು ಬಿಟ್ಟು ಉಳಿದ ಹಗುರಾದ ಆಸನಗಳನ್ನು ಗೃಹಸ್ಥರೂ ಹಾಕಬಹುದು.

ಶೀರ್ಷಾಸನವು ತಲೆನೋವು, ದೃಷ್ಟಿಮಾಂದ್ಯವನ್ನು ಕಳೆಯುತ್ತದೆ. ಮಯೂರಾಸನ, ಸರ್ವಾಂಗಾಸನಗಳು ಮಲಬದ್ಧತೆಯನ್ನು ಕಳೆಯುತ್ತವೆ. ಲಿಂ. ಪೂಜ್ಯಪಾದರು ೧೦೮ ಆಸನಗಳನ್ನು ಕಲ್ಪಿಸಿ ಸಾಧಕರಿಂದ ಹಾಕಿಸುತ್ತಿದ್ದರು.

ಲಿಂ. ಪೂಜ್ಯ ಶ್ರೀ ಸಂಗನಬಸವಸ್ವಾಮಿಗಳು, ಬಂಥನಾಳ

ಯೋಗ ಶಬ್ದವು ಯುಜ್ ಧಾತುವಿನಿಂದ ಹುಟ್ಟಿದ್ದು ಇದರ ಅರ್ಥವು ಜೋಡಿಸುವದು ಅಥವಾ  ಕೂಡಿಸುವದು ಎಂಬುದಾಗಿ ಆಗುವದು, ಯಾಜ್ಞವಲ್ಕ ಮಹರ್ಷಿಗಳು ”ಸಂಯೋಗೋ  ಗಯುತ್ಯುಕೋ ಜೀವಾತ್ಮ ಪರಮಾತ್ಮನೋಃ” ಎಂಬುದಾಗಿ ಹೇಳಿದ್ದಾರೆ. ಅಂದರೆ ಜೀವ ಶಿವರ ನಡುವಿರುವ ಅಜ್ಞಾನ ಪರದೆಯನ್ನು ಹರಿದು ಮಠಾಕಾಶದಲ್ಲಿ ಘಟವನೊಡಿದು ಘಟಾಕಾಶವನ್ನು ಕೂಡಿಸುವಂತೆ ಜೀವಾತ್ಮನನ್ನು ಪರಮಾತ್ಮನಲ್ಲಿ ಬೆರೆಸುವದೇ ಯೋಗವೆಂದು ಹೇಳಿದ್ದಾರೆ. ಇದೇ ವಿಷಯವನ್ನೇ ವಿಶೇಷ ವಿವರಣೆಯಾಗಿ ಯೋಗಶಾಸ್ತ್ರದ ಆದ್ಯಪ್ರವರ್ತಕರಾದ ಪಾತಂಜಲಿ ಮಹರ್ಷಿಗಳು “ಯೋಗಶ್ಚಿತ್ತ ವೃತ್ತಿಃ ನಿರೋಧಃ’ ಎಂಬುದಾಗಿ ಹೇಳಿದ್ದಾರೆ. ಅಂದರೆ ಪ್ರಕ್ಷುಬ್ದ ಮತ್ತು ಮಲಿನವಾದಂಥ ಸರೋವರದಲ್ಲಿಯ ನೀರು ಶಾಂತವಾದುದಾಗಿ ಸ್ವಚ್ಛವಾದುದಾಗಿ ಸ್ಥಿರವಾದದ್ದಾದರೆ ಮಾತ್ರ ಅರ್ಥಾತ್ ಕ್ಷುಬ್ದಾವಸ್ಥೆಯು ನಷ್ಟವಾಗಿ ಶಾಂತತಾವಸ್ಥೆಯು ಪ್ರಾಪ್ತವಾದದ್ದಾದರೆ ಹೇಗೆ ಸರೋವರದ ತಳವು ಅಥವಾ ನೆಲೆಯು ಸ್ಪಷ್ಟವಾಗಿ ಕಾಣುತ್ತದೆಯೋ ಹಾಗೆಯೇ ಮನುಷ್ಯನ ಚಿತ್ತವೆಂಬ ಸರೋವರವು ಮನಸ್ಸಿನ ಆಲೋಚನೆಗಳೆಂಬ ತೆರೆಗಳಿಂದ ಮತ್ತು ವಿಷಯವಾಸನೆ ಯೆಂಬ ಮಲಿನದಿಂದ ಕೂಡಿದ್ದಾಗಿರುವದರಿಂದ ಚಿತ್ರದ ನೆಲೆಯು ಅಂದರೆ ಪರಮಾತ್ಮನ ಸ್ವರೂಪವು ಕಾಣುತ್ತಿರುವುದಿಲ್ಲ, ಆದ್ದರಿಂದ ಈ ಚಿತ್ರವೆಂಬ ಸರೋವರದಲ್ಲಿಯ ತೆರೆಗಳನ್ನು ಶಾಂತಮಾಡಿ ವಿಷಯವಾಸನೆಯೆಂಬ ಹೊಲಸನ್ನುದೂರಮಾಡಿ ಚಿತ್ತವನ್ನು ಸ್ಥಿರವಾಗಿಟ್ಟರೆ ಮಾತ್ರ ನೆಲೆಯು ಕಾಣುವದು. ಈ ನೆಲೆಯನ್ನುಅಥವಾ ಪರಮಾತ್ಮನನ್ನು ತೋರಿಸುವ ಸಾಧನೆಯು ಯಾವದುಂಟೋ, ಅದಕ್ಕೆ ಯೋಗವೆಂದು ಹೇಳಿದ್ದಾರೆ.

ಆದರೆ ಯೋಗವು ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ,ಶಿವಯೋಗವೆಂದು ಈ ತರಹವಾಗಿರುವದು. ಗುರೂಪದಿಷ್ಟವಾದ ಪ್ರಣವ, ಹಂಸ’ಪಂಚಾಕ್ಷರಿ, ಷಡಕ್ಷರಿ ಮೊದಲಾದ ಮಂತ್ರಗಳನ್ನು ಋಷಿ, ಛಂದಸ್ಸು, ದೇವತೆ,ಬೀಜ, ಕೀಲಕ ಮೊದಲಾದವುಗಳಿಂದ ೩೩ ದೋಷಗಳಿಲ್ಲದೆ ಸಂಖ್ಯಾಪೂರ್ವಕವಾಗಿ ಜಪಾನುಷ್ಠಾನಂಗೈಯುವದೇ ಮಂತ್ರಯೋಗವು.

ದಶವಿಧಾನುಸಂಧಾನದಲ್ಲಾಗಲಿ ಚಿದ್ಬಿಂದು,ವಿನ ಮನೋಹರವಾದ ನವರತ್ನಪ್ರಕಾಶದಲ್ಲಾಗಲಿ ಮನವನಡಗಿಸಿ ಭೇದವಳಿದಿರುವುದೇ ಲಯಯೋಗವೆನಿಸುವುದು.

ಶರೀರಕ್ಕೆ ಶ್ರಮಕೊಟ್ಟು ಮದೋನ್ನತವಾದ ಗಜದಂತಿರುವ ಬಲವಾದ ಇಂದ್ರಿಯಗಳನ್ನು ಪ್ರಾಣಾಯಾಮವೆಂಬ ಅಂಕುಶದಿಂದ ಸ್ವಾಧೀನಕ್ಕೆ ತರುವ ಯಾವ ಸಾಧನೆಯುಂಟೋ ಅದಕ್ಕೆ ಹಠಯೋಗವೆಂದೆನ್ನುವರು.  ಹಠ ಈ ಶಬ್ದದಲ್ಲಿ

ಹ ಕಾರವು ಸೂರ್ಯನ ಸಂಜ್ಞೆಯು ; ಠ ಕಾರವು ಚಂದ್ರನ ಸಂಖ್ಯೆಯು ಈ ಎರಡರ ಯೋಗವೆಂದರೆ ಐಶ್ವವು ಅರ್ಥಾತ್ ಪ್ರಾಣವಾಯು ಮತ್ತು ಅಪಾನವಾಯುಗಳ ಐಕ್ಯವೇ ಹಠಯೋಗವು

“ಸ ಯಥಾ ಶಕುನೀ ಸೂತ್ರೇಣ ಪ್ರಭುದ್ಧೋ  ದಿಶಾಂದಿಶಂ ಪತಿತ್ವಾನ್ಯತ್ರಾಯತನಂ ಲಬ್ಧ್ವಾ ನಂಧನಮೇವೋಪಶ್ಚಯತೆ  ಏವಮೇವ ಖಲು ಸೋಮ್ಯ ತನ್ಮನೋದಿಶಂದ  

ಶಾಂಪತಿತ್ಸಾ ನ್ಯತ್ರಾಯತನಂ ಲಬ್ಧ್ವಾ ಪ್ರಾಣಮೇವೋಪಶ್ಚಯತೆ ಪ್ರಾಣಬಂಧನಂ ಹಿ

ಸೋಮ್ಯಮಿಸವ ಇತಿ’

ಎಂಬ ಛಾಂದೋಗ್ಯೋಪನಿಷತ್ತಿನ ವಚನದಂತ ಸೂತ್ರದಿಂದ  ಬಂಧಿಸಲ್ಪಟ್ಟಂಥ ಪಕ್ಷಿಯು ಬೇರೆ ಬೇರೆ ದಿನ ಕಡೆಗೆ ಹಾರಿಹೋಗಲಿಕ್ಕೆ ಪ್ರಯತ್ನಮಾಡಿ ಕಡೆಗೆ ಎಲ್ಲಿ ಆಶ್ರಯ ದೊರೆಯದೆ ನಿರುಪಾಯದಿಂದ ಬಂಧನದ ಕಡೆಗೆ ಬರುವಂತೆ ಮನಸ್ಸು ಸಹ ಬೇರೆ ಬೇರೆ ವಿಷಯಗಳ ಕಡೆಗೆ ಹೋದರೂ ಕಡೆಗೆ ಬೇರೆ ಆಶ್ರಯ ದೊರೆಯದ್ದರಿಂದ ಪ್ರಾಣವನ್ನೇ ಆಶ್ರಯ ಮಾಡುತ್ತದೆ. ಆದಕಾರಣ ಪ್ರಾಣವೇ ಮನಸ್ಸಿನ ಬಂಧನವಾಗಿದೆ, ಆದರೆ ಈ ವಿಷಯವಾಗಿ ಎರಡು ವಿಧವಾದ ಮತಗಳಿವೆ.

ಹಠದಿಂದ ಪ್ರಾಣವಾಯುವನ್ನು ಸ್ವಾಧೀನ ತೆಗೆದುಕೊಂಡು ತನ್ಮೂಲಕ ಮನಸ್ಸನ್ನು ವಶಮಾಡಿಕೊಳ್ಳುವದು ಒಂದು ಮತ ಇಬ್ಬರ ಭಕ್ತಿಯಿಂದ ಮನಸ್ಸನ್ನುಸ್ವಾಧೀನ ಮಾಡಿಕೊಳ್ಳುವದು

‘ಮನೋ ಯತ್ರ ವಿಲೀಯತೇ ಪ್ರಾಣಸ್ತತ್ರ ವಿಲೀಯತೆ”

ಎಂಬ ವಚನದಂತೆ ಮನಸ್ಸಿನ  ಸ್ವಾಧೀನತೆಯಿಂದ ಪ್ರಾಣವು ತಾನಾಗಿಯೇ ಸ್ವಾಧೀನವಾಗುವದು. ಮನಸ್ಸು ಗಾಬರಿಯಾದರೆ ಪ್ರಾಣವು ಗಾಬರಿಯಾಗುವದು ಮನಸ್ಸು ನಿರ್ಭಯವಾದರೆ ಪ್ರಾಣವು ನಿರ್ಭಯವುಳ್ಳದ್ದಾಗುವದು. ಪ್ರಯುಕ್ತ ಮೊದಲು ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳಬೇಕು. ಆ ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳುವದಕ್ಕಾಗಿ ಕ್ರಿಯಾ ಯೋಗವನ್ನಾಚರಿಸಬೇಕು ‘ತಪಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾಯೋಗಃ’

ಅಂದರೆ ತಪಸ್ಸು, ಶಾಸ್ತ್ರ ಚಿಂತನೆ ಪರಮಾತ್ಮನಿಗೆ ಆತ್ಮಾರ್ಪಣೆ ಮಾಡುವದೇ ಕ್ರಿಯಾಯೋಗವು ಈ ಸುಲಭೋಪಾಯದಿಂದಲೇ ಮನಸ್ಸಿನ ಸ್ವಾಧೀನತೆಯು ಉಂಟಾಗುವದು. ಇದು ಎರಡನೆಯ ಮತ .

ಪ್ರಾಣ ಮತ್ತು ಮನಸ್ಸು ಈ ಎರಡೂ ಸಮಾನವಾದಂಥ ಪ್ರೇಮ ಬಂಧುಗಳೆಂಬ ವಿಷಯವು ನಿಷ್ಚಯಾತ್ಮಕವಾದದ್ದಿದೆ  ಚಂಚಲವಾದ ಮನಸ್ಸನ್ನುಸ್ವಾಧೀನದಲ್ಲಿ ತೆಗೆದುಕೊಳ್ಳಬೇಕಾದರೆ ಮೊದಲು ಪ್ರಾಣವಾಯುವನ್ನು ಹಠದಿಂದ ಸ್ವಾಧೀನಪಡಿಸಿಕೊಳ್ಳುವದು ಅಗತ್ಯವಾಗಿದೆಯೆಂದು ಈ ಹಠಯೋಗ ಪ್ರವರ್ತಕರಾದ ಮತ್ಸೇಂದ್ರನಾಥ, ಗೋರಖನಾಥ, ಭರ್ತೃಲಹರಿ, ಗೋಪಿನಾಥ, ವಿರೂಪಾಕ್ಷನಾಥ, ವಿಲಯನಾಥ, ಜಲಂದರನಾಥ ಮೊದಲಾದ ನಾಥ ಪಂಥದೊಳಗಿನ ಜನರ ನಿಶ್ಚಯವು. ಇವರು ಪ್ರಾಣನಿರೋಧವೇ ಮನಸ್ಸಿನ ಸ್ವಾಧೀನತೆಗೆ ಮುಖ್ಯ ಉಪಾಯವೆಂದು ಅಭಿಪ್ರಾಯಪಡುತ್ತಾರೆ. ಎರಡನೇ ಪಂಥದ ಪತಂಜಲಿ ಋಷಿ ಮೊದಲಾದವರು ಪರಮಾತ್ಮನ ಭಕ್ತಿಯೇ ಮನಸ್ಸಿನ ಸ್ವಾಧೀನತೆಗೆ ಮುಖ್ಯ ಕಾರಣವೆಂದು ಅಭಿಪ್ರಾಯಪಡುತ್ತಾರೆ. ಹಠಯೋಗ ಮತ್ತು ರಾಜಯೋಗ ಇವುಗಳ ಧ್ಯೇಯವು ಸಮಾಧಿ ಪ್ರಾಪ್ತಿಯೇ ಆದರೂ ಮಾರ್ಗಗಳು ಮಾತ್ರ ಭಿನ್ನವಾಗಿವೆ.

ನಾಥ ಪಂಥದೊಳಗಿನ ಗೋರಕ್ಷನಾಥ ಸ್ವಾಮಿ ಮೊದಲಾದವರು  ಸದೃಢವಾದ ಮಲರಹಿತವಾದ ನಿರೋಗವುಳ್ಳ ಶರೀರವೇ ಪ್ರಾಣಸಂಚಯಕ್ಕೆ ಯೋಗ್ಯವಾಗಿರುತ್ತದೆ. ಆ ಶರೀರದಲ್ಲಿ ಅಧಿಕವಾಗಿ ಪ್ರಾಣಶಕ್ತಿಯನ್ನು ಸಂಗ್ರಹಮಾಡಲಿಕ್ಕೆ ಬರುತ್ತದೆ. ಪ್ರಾಣಶಕ್ತಿಯ ಸಾಮರ್ಥ್ಯದ ಮೇಲೆಯೇ ಶರೀರಕ್ಕೆಲ್ಲ ಸ್ಥಿರತ್ವವನ್ನುಂಟುಮಾಡಲಿಕ್ಕೆ ಬರುತ್ತದೆ. ಆಮೇಲೆ ಸುಲಭೋಪಾಯದಿಂದ ತನ್ನಿಚ್ಛೆಯಂತೆ ಶರೀರವನ್ನು ನಡೆಸಿಕೊಳ್ಳಬಹುದು. ಶರೀರವನ್ನು ಮಲರಹಿತವಾದದ್ದನ್ನಾಗಿ ಮಾಡಿ ವಿಶೇಷ ಪ್ರಾಣ ಸಂಚಯವನ್ನು ಮಾಡದಿದ್ದರೆ ಆ ಶರೀರಕ್ಕೆ ಸ್ಥಿರತ್ವವುಂಟಾಗುವದು ಕಠಿಣವಾಗುತ್ತದೆ. ಅಸ್ಥಿರತೆಯಿಂದ ಜ್ಞಾನತಂತುಗಳು ಕ್ಷೋಭೆಯುಳ್ಳವುಗಳಾಗಿ ಯಾವ ವಸ್ತುವಿನ ಮೇಲೆಯೂ ಏಕಾಗ್ರತೆ ಮಾಡಲು ಶಕ್ಯವಾಗುವದಿಲ್ಲ. ಅನೇಕ ವಾಸನೆಗಳಿಂದ ಮನಸ್ಸು ತುಂಬಿಹೋಗುತ್ತದೆ. ಮನಸ್ಸು ವಾಸನೆಗಳಿಂದ ಪ್ರಾಣವು ಮನಸ್ಸಿನಿಂದ ಕುಣಿಯುತ್ತಿರುವದರಿಂದ ಪ್ರಾಣವನ್ನು ಸ್ವಾಧೀನಮಾಡಿಕೊಂಡಿದ್ದೇ ಆದರೆ ಮನಸ್ಸು ಸ್ವಾಧೀನವಾದಂತೆಯೇ ಸರಿ. ಮನಸ್ಸು ಪ್ರಾಣಶಕ್ತಿಯ ದಾಸನಂತಿದೆ. ಯಾರಿಗೆ ಪ್ರಾಣಶಕ್ತಿಯ ಉಪಯೋಗದ ಅಭ್ಯಾಸವುಂಟೋ ಅವರಿಗೆ ಮನಸ್ಸು ಕವಡಿಗಿಂತ ಕಡಿಮೆ ಬೆಲೆಯುಳ್ಳದ್ದಾಗಿದೆ. ಪ್ರಯುಕ್ತ ಹಠಯೋಗವು ಶರೀರ ಮತ್ತು ಮನಸ್ಸನ್ನು ಸ್ವಾಧೀನ ತೆಗೆದುಕೊಳ್ಳಲು ಅತಿ ಪ್ರಾಮುಖ್ಯವಾದ ಸಾಧನವೆಂಬುದಾಗಿ ಹೇಳುತ್ತಾರೆ.

ಮೂಲ ಪ್ರಣವ ಮೊದಲಾದ ಮಹಾಮಂತ್ರಗಳ ಜಪಾನುಷ್ಠಾನ ಅಥವಾ ಸ್ವಾಧ್ಯಾಯಸ್ತೋತ್ರ ಮೊದಲಾದ ಸಾಧನಗಳಿಂದ ಈಶ್ವರ ಭಕ್ತಿಯಲ್ಲಿ ನಾವು ಮನಃಪೂರ್ವಕ ತೊಡಗಿದ್ದಾದರೆ ನಮ್ಮ ಅಂತಃಕರಣವು ಆ ಭಕ್ತಿಯಲ್ಲಿ ತಲ್ಲೀನವಾಗಿ ಹೋಗುತ್ತದೆ. ಆಮೇಲೆ ಶರೀರದ ಪ್ರತಿಯೊಂದು ಭಾಗದ ದೇವತೆಯು ಸಂತುಷ್ಟಳಾಗಿ ಶರೀರದ ಪ್ರತ್ಯೇಕ ಭಾಗದ ಪರಮಾಣುಗಳು ಸ್ಥಿರವುಳ್ಳವುಗಳೂ ಶಾಂತಾದವುಗಳೂ ಆಗುತ್ತವೆ. ಆ ಕಾರಣದಿಂದ ಮನಸ್ಸಿಗೆ ಪ್ರಸನ್ನತೆಯುಂಟಾಗುತ್ತದೆ. ”ಪ್ರಸನ್ನ ಚೇತಸೋ ಹ್ಯಾಸು ಬುದ್ಧಿ: ಪಠ್ಯವತಿಷ್ಠತೆ’  ಎಂಬ ಭಗವದ್ಗೀತೋಕ್ತಿಯಂತೆ ಮನಸ್ಸಿಗೆ ಪ್ರಸನ್ನತಾ ಸ್ಥಿರತಾ ಏಕಾಗ್ರತಾ ಮೊದಲಾದವುಗಳುಂಟಾಗಿ ಮುಂದೆ ಸಹಜ ಸಮಾಧಿಯು ದೊರೆಯುತ್ತದೆ. ಆದ್ದರಿಂದ ರಾಜಯೋಗವೇ ಸರ್ವಯೋಗಗಳ ರಾಜನೆಂಬುದಾಗಿ ಋಷಿಪಂಥಿಗಳ ಅಭಿಪ್ರಾಯವಿರುತ್ತದೆ.

ಯೋಗಶಾಸ್ತ್ರ ಪ್ರವರ್ತಕರಾದ ಪತಂಜಲಿ ಮಹರ್ಷಿಗಳ ಕಾಲದಕಡಗೆ ಲಕ್ಷ್ಯಕೊಟ್ಟಿದ್ದಾದರೆ ಆ ಕಾಲದಲ್ಲಿ ಜನರು ಒಳ್ಳೇ ಬಲಶಾಲಿಗಳೂ ನಿರೋಗಿಗಳೂ,ವ್ಯಸನರಹಿತರೂ, ಮನೋಧೈರ್ಯ ಆತ್ಮವಿಶ್ವಾಸಿಗಳೂ ಆಗಿದ್ದುದರಿಂದ ಅವರಿಗೆ ಹಠಯೋಗದ ಅವಶ್ಯಕತೆಯೇ ಇರಲಿಕ್ಕಿಲ್ಲ. ಆದರೆ ಈಗಿನ ಪರಿಸ್ಥಿತಿಯಕಡೆಗೆ ನೋಡಿದರೆ ಜನರು ದುರ್ಬಲರೂ ಡಾಂಭಿಕರೂ ದುರ್ವ್ಯಸನಿಗಳೂ ಶಿಶ್ನೋದರ ಪರಾಯಣರೂ ಅವಿಶ್ವಾಸ ಅಸ್ಥಿರತೆಗಳಿಂದ ಕೂಡಿದವರಾಗಿರುವದರಿಂದ ಇವರಿಗೆ ಸುಲಭವಾಗಿ ಮನೋನಿಗ್ರಹವಾಗುವದು ಶಕ್ಯವಿಲ್ಲ. ಪ್ರಯುಕ್ತ ಹಠಯೋಗದ ಮೂಲಕವಾಗಿಯೇ ರಾಜಯೋಗವನ್ನು ಪ್ರಾಪ್ತಮಾಡಿಕೊಳ್ಳುವದು ಅವಶ್ಯವಾದ ಹಾಗೂ ಅಗತ್ಯವಾದ ಕರ್ತವ್ಯವಾಗಿದೆ.

ಹಠಯೋಗವು : ‘ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾದಯೋಷ್ಟಾಂಗಾನಿ’  ಅಂದರೆ ಯಮ, ನಿಯಮ, ಆಸನ,ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬುದಾಗಿ ಎಂಟು ಪ್ರಕಾರವಾಗಿದೆ. ಇವುಗಳಲ್ಲಿ ಯಮವು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,ಕ್ಷಮಾ, ಧೃತಿ, ದಯಾ, ಆರ್ಜವ, ಮಿತಾಹಾರ, ಶೌಚ ಎಂದು ಹತ್ತು ಪ್ರಕಾರದ್ದಾಗಿದೆ.

೧. ಕಾಯಾವಾಚಾ ಮನಸ್ಸುಗಳಿಂದ ಯಾವ ಪ್ರಾಣಿಗೂ ಯಾವ ಕಾಲದಲ್ಲಿಯೂ

ಹಿಂಸೆಯನ್ನು ಮಾಡದಿರುವದು ಅಹಿಂಸೆಯು,

೨. ‘ಯಥಾತಥ್ಯವಾಕ್ಯಂ ಸತ್ಯಂ’ ಅಂದರೆ ಇದ್ದುದನ್ನು ಇದ್ದಂತೆಯೇ ನುಡಿಯುವದೇ ಸತ್ಯವು ಅಥವಾ ಕಾಲಾನುಸಾರವಾಗಿ ಪ್ರಾಣಿಗೆ ಹಿತವಾಗುವಂತೆ ಮಾತಾಡುವದು ಸತ್ಯವು,

೩.ಪದಾರ್ಥವನ್ನೂ ಅಪಹರಿಸದಿರುವದು ಅಸ್ತೇಯವು,

೪, ‘ಬ್ರಹ್ಮಣೇ ವೇದವಿದ್ಯಾಯ್ಕೆ ಕಸ್ಯೈ ವಿದ್ಯಾಯ್ ವಾಚರ್ಯತೆ ಇತಿ ಬ್ರಹ್ಮಚರ್ಯಂ’ ಅಂದರೆ ವೇದವಿದ್ಯೆಯಾಗಲೀ ಅಥವಾ ಬೇರೊಂದು ವಿದ್ಯೆಯನ್ನಾಗಲೀ ಕಲಿಯುವದರ ಸಲುವಾಗಿ ಯಾವ ವ್ರತವನ್ನು ಧಾರಣ ಮಾಡಬೇಕಾಗುತ್ತದೆಯೋ ಆ ವ್ರತಕ್ಕೆ ಬ್ರಹ್ಮಚರ್ಯವೆಂದು ಹೇಳಲ್ಪಡುತ್ತದೆ.

ಶರೀರ ಸಂಪತ್ತನ್ನು ಮೇಧಾಶಕ್ತಿಯನ್ನು ಚನ್ನಾಗಿ ಇಡುವದರ ಸಲುವಾಗಿ ಶಾಸ್ತ್ರದಲ್ಲಿ ವೀರ್ಯ ನಿರೋಧದ ಸಂಬಂಧವಾಗಿ ಯಾವ ನಿಯಮವನ್ನು ಹಾಕಿಕೊಟ್ಟಿರುವರೋ ಅದನ್ನೇ ಕ್ರಮಬದ್ಧವಾಗಿ ಪಾಲನೆ ಮಾಡುವದೇ ಬ್ರಹ್ಮಚರ್ಯವ್ರತವು. ಸ್ಪಷ್ಟವಾಗಿ ‘ಗುಪ್ತೇಂದ್ರಿಯಸ್ಯೊಪಸ್ಥಸ್ಯ ಸಂಯಮಃ’ ಅಂದರೆ ಜನನೇಂದ್ರಿಯದ ದಮನವೇ ಬ್ರಹ್ಮಚರ್ಯ ವ್ರತದೊಳಗಿನ ಮುಖ್ಯ ವಿಷಯವಾಗಿರುತ್ತದೆ. ಕಂಬದ ಆಧಾರದ ಮೇಲಿಂದ ಮನೆಯು ಹ್ಯಾಗೆ ನಿಲ್ಲುವದೋ ಹಾಗೆಯೇ ಶರೀರದ ಸುಸ್ಥಿತಿಯು ಸ್ವಚ್ಛತೆ, ಹಿತಕಾರಕ ಅನ್ನ, ನಿಯಮಿತ ನಿದ್ರೆ, ದೃಢವಾದ ಬ್ರಹ್ಮಚರ್ಯ ಮೊದಲಾದವುಗಳನ್ನೇ ಅವಲಂಬಿಸಿರುತ್ತದೆ. ಬ್ರಹ್ಮಚರ್ಯವು ಸರ್ವ ಆಯಷ್ಯದ ಮತ್ತು ಪರುಷಾರ್ಥದ ತಳಹದಿಯಾಗಿರುತ್ತದೆ. ತಳಹದಿಯು ದೃಢವಾದದ್ದಿದ್ದರೆ ಮಾತ್ರ ಕಟ್ಟಡವು ಸಡಲುವುದಿಲ್ಲ. ಹಾಗೆಯೇ ಬ್ರಹ್ಮಚರ್ಯವೊಂದನ್ನು ಸಾಧಿಸಿದರೆ ಪುರುಷಾರ್ಥವು ಕೈ ಸೇರಲು ಅವಕಾಶವು ಇಲ್ಲದಿಲ್ಲ. ಆದ ಪ್ರಯುಕ್ತ ಬ್ರಹ್ಮಚರ್ಯದ ಅವಶ್ಯವು ಇಹಪರಗಳೆರಡಕ್ಕೂ ಮುಖ್ಯವಾಗಿದೆ.

ಅನ್ನದಿಂದ ರಕ್ತವಾಗುತ್ತಿದೆ. ಆ ರಕ್ತದಿಂದ ವೀರ್ಯವುಂಟಾಗುವದು. ಅನ್ನದಲ್ಲಿ ಯಾವ ಗುಣಧರ್ಮಗಳುಂಟೋ ಆ ಗುಣಧರ್ಮಗಳು ರಕ್ತದಲ್ಲಿ ಉಂಟಾಗುತ್ತವೆ. ರಕ್ತದಲ್ಲಿಯ ಗುಣಧರ್ಮಗಳು ವೀರ್ಯ ದಲ್ಲಿ ಉಂಟಾಗುತ್ತವೆ. “ಅನ್ನಮಯ ಹಿಸೋಮ್ಯರ್ಮಃ ಎಂಬ  ಶ್ರುತಿವಚನದಂತೆ ಅನ್ನದ ಸೂಕ್ಷಾ ೦ಶದಿಂದ ಮನಬುದ್ದಿಗಳು ಹುಟ್ಟುತ್ತಿರುವುದರಿಂದ ಉದ್ದೀಪಕ ಆಹಾರದಿಂದ ಮನಬುದ್ದಿಗಳು ಕೂಡ ಉದ್ದೀಪಕಗಳಾಗಿ ಕೆಟ್ಟ ಕೃತಿ ಉಂಟಾಗುವಂತೆ ಮಾಡುತ್ತವೆ. ಆದ್ದರಿಂದ ವೃತ್ತಿಗಳು ಸೌಮ್ಯವಾಗಿರಲಿಕ್ಕೆ ಬ್ರಹ್ಮಚರ್ಯವು ಸಂರಕ್ಷಣವಾಗಲಿಕ್ಕೆ ಯೋಗ್ಯವಾದಂಥ ಆಹಾರವನ್ನೇ ಬ್ರಹ್ಮಚಾರಿಯು ಸೇವಿಸಬೇಕು. ಯಾವ ಪ್ರಾಣಿಯು ಕೇವಲ ಮಾಂಸಾಹಾರವನ್ನೇ ಮಾಡುವದಾಗಿರುವದೋ ಆ ಪ್ರಾಣಿಯ ವೃತ್ತಿಯು ಯಾವಾಗಲೂ ಕ್ರೂರ ಹಾಗೂ ಅವಿಚಾರ ತರದ್ದಾಗಿರುತ್ತದೆ. ಯಾವ ಪ್ರಾಣಿಯು ಆಹಾರವು ಸಾತ್ವಿಕತೆಯುಳ್ಳದ್ದಾಗಿರುವದೋ ಆ ಪ್ರಾಣಿಯ ವೃತ್ತಿಯು ಸಾತ್ವಿಕತೆಯುಳ್ಳದ್ದಾಗಿರುತ್ತದೆ. ಉದಾಹರಣೆ ಸಿಂಹ, ಹುಲಿ, ಚಿರತೆ  ಮೊದಲಾದ ಹಿಂಸ್ರ ಪ್ರಾಣಿಗಳು ಕ್ರೂರ ವೃತ್ತಿಯುಳ್ಳವಾಗಿರುತ್ತವೆ. ಆನೆ, ಆಕಳು, ಹರಿಣ ಮೊದಲಾದ ವನಸ್ಪತ್ಯಾಹಾರ ಮಾಡುವ ಪ್ರಾಣಿಗಳು ಸಾತ್ವಿಕ ವೃತ್ತಿಯುಳ್ಳವುಗಳಾಗಿವೆ. ಯಾರ ವೃತ್ತಿಯು ಸಾತ್ವಿಕವಿಲ್ಲವೋ ಅವರ ಸ್ಫೂರ್ತಿಯು ಕೂಡ ಸಾತ್ವಿಕವಿರುವದಿಲ್ಲ. ಆಮೇಲೆ ಅವರ ಕೃತಿಯು ಸಾತ್ವಿಕವಿರುವದೆಂತು? ಸಾತ್ವಿಕ ಸ್ಫೂರ್ತಿ ಸಾತ್ವಿಕ ಕೃತಿಯು ಬ್ರಹ್ಮಚರ್ಯದ ಮುಖ್ಯಾಂಗವಾಗಿವೆ. ಆದ್ದರಿಂದ ಬ್ರಹ್ಮಚರ್ಯ  ವ್ರತ ಕಾಪಾಡಬೇಕೆಂಬುವವರ ಕಾಮೇಚ್ಛಾ ಉತ್ಪನ್ನ ಮಾಡತಕ್ಕಂಥಾ ಉತ್ತೇಜಕವಾದಂಥಾ ಆಹಾರವನ್ನು ತಕ್ಕೊಳ್ಳಬಾರದು. ಖಾರ, ಉಪ್ಪು, ಉರಳೀಗಡ್ಡೆ ಬೆಳ್ಳುಳ್ಳಿ, ಮಸಾಲೆ ಪದಾರ್ಥ ಕರಿದ ಪದಾರ್ಥ, ಮದ್ಯ,ಚಹಾ, ತಂಬಾಕು, ಕಾಫಿ ಮೊದಲಾದ ಮಾದಕ ಪದಾರ್ಥಗಳನ್ನು ಅವಶ್ಯವಾಗಿ ಬಿಡಲೇಬೇಕು. ಸಾರಾಂಶ ಮನಸ್ಸಿನಿಂದ ಮಾತಿನಿಂದ ಕೃತಿಯಿಂದ ವೀರ್ಯ ವನ್ನು ಸಂರಕ್ಷಿಸುವದೇ ಬ್ರಹ್ಮಚರ್ಯವು

೫. ಅನಿಷ್ಟವನ್ನುಂಟು ಮಾಡಿದವರಿಗೆ ತಾನು ಪ್ರತಿಯಾಗಿ ಅನಿಷ್ಟವನ್ನುಮಾಡುವ ಶಕ್ತಿಯಿದ್ದರೂ, ತಡೆಯುವದೇ ಕ್ಷಮೆಯು.

೬. ಸಂಕಟ ದುಃಖ ಮೊದಲಾದ ಪ್ರಸಂಗಗಳಲ್ಲಿ ಎದೆಗುಂದದೆ ಹಾಗೆಯೇ ತನ್ನಕಾರ್ಯವನ್ನು ನಡಿಸುವದೇ ಧೈರ್ಯವು,

೭. ಸರ್ವ ಪ್ರಾಣಿಗಳೂ ತನ್ನಂತೆಯೇ ಇವೆಯೆಂಬ ಬುದ್ದಿಯನ್ನಿಟ್ಟು ವರ್ತಿಸುವದೇ ದಯೆಯು.

೮. ಕುಟಿಲತನವಿಲ್ಲದೆ ಸರಳ ಹೃದಯನಾಗಿರುವದೇ ಅರ್ಜವವು.

೯. ಹಸಿವೆಯನ್ನಿಟ್ಟುಕೊಂಡೇ ಭೋಜನವನ್ನು ಪೂರೈಸುವದು ಮಿತಾಹಾರವು.

೧೦. ಅಂತರಂಗವನ್ನು ನೇತಿ, ಧೌತಿ, ಬಸ್ತಿ, ತ್ರಾಟಕ, ಕಪಾಲಭಾತಿ ಮೊದಲಾದವುಗಳಿಂದ ಶುದ್ಧ ಮಾಡುವದೂ ಬಹಿರಂಗವನ್ನು ಮಣ್ಣು ನೀರು ಮೊದಲಾದವುಗಳಿಂದ ಸ್ವಚ್ಛ ಮಾಡುವದಕ್ಕೆ ಶೌಚವು. ಈ ಪ್ರಕಾರವಾಗಿ ಯಮವು ಹತ್ತು ಅಂಗಗಳಿಂದ ಕೂಡಿದ್ದಾಗಿದೆ.

ನಿಯಮವು ತಪಸ್ಸು, ಸಂತೋಷ, ಆಸ್ತಿ, ದಾನ, ಈಶ್ವರಪೂಜನ, ಸಿದ್ಧಾಂತ

ವಾಕ್ಯಶ್ರವಣ, ಹ್ರೀ, ಮತಿ, ಜಪ, ಹುತ ಎಂದು ಹತ್ತು ಪ್ರಕಾರವದೆ.

೧. ‘ತಪ್ಯಂತೀತಿ ತಪಃ’ ಅಂದರೆ ಸ್ರಕ್ ಚಂದ್ರಾಯಣಾದಿ ವ್ರತಗಳಿಂದ ಶರೀರಕ್ಕೆ ಕಷ್ಟ ಕೊಡುವದು ತಪಸ್ಸು.

೨. ಇಷ್ಟಾನಿಷ್ಟ ಪ್ರಸಂಗಗಳೊದಗಿದರೂ ಆನಂದವಾಗಿರುವದು ಸಂತೋಷವು.

೩. ಧರ್ಮ, ಮೋಕ್ಷ, ಈಶ್ವರ ಮೊದಲಾದವುಗಳ ಕೃತಜ್ಞತೆಯುಳ್ಳವನಾಗಿ ಸದ್ಭಾವದಿಂದಿರುವದೇ ಆಸ್ತಿಕ್ಯವು.

೪. ಯೋಗ್ಯ ಕಾಲದಲ್ಲಿ ಸುಪಾತ್ರದಲ್ಲಿ ಯಥಾಶಕ್ತಿ ಸಹಾಯ ಮಾಡುವದೇ ದಾನವು.

೫. ಸದ್ಭಾವನೆಯಿಂದ ತನ್ನಿಷ್ಟ ದೇವತೆಯನ್ನು ಅರ್ಚಿಸುವುದೇ ಈಶ್ವರ ಪೂಜನವು.

೬. ಯಥಾರ್ಥವನ್ನು ಹೇಳುವ ಪುರುಷರ ಮತ್ತು ವೇದಾಂತ ಸಿದ್ಧಾಂತ ಶಾಸ್ತ್ರಗಳ ವಚನಗಳನ್ನು ಕೇಳುವದು ಸಿದ್ಧಾಂತ ವಾಕ್ಯಶ್ರವಣವು.

೭. ಧರ್ಮಾಚರಣೆಯ ವಿರುದ್ಧ ಪ್ರವೃತ್ತಿ ಉಂಟಾದುದಕ್ಕೆ ಲಜ್ಜೆ ಬರುವದು ಹ್ರೀ

೮. ದೃಢವಾದ ವಿಶ್ವಾಸವೇ ಮತಿಯು.

೯. ಕ್ರಮಪ್ರಕಾರವಾಗಿ ಈಶ್ವರನ ನಾಮೋಚ್ಛಾರಣೆ ಮಾಳ್ಪುದೇ ಜಪವು.

೧೦. ವೇದಾಜ್ಞೆಯ ಪ್ರಕಾರ ಹವನ ಮಾಡುವದೇ ಅರ್ಥಾತ್ ಸ್ವಾರ್ಥತ್ಯಾಗವೇ ಹುತವಹುದು.

 ಈ ಪ್ರಕಾರವಾಗಿ ನಿಯಮಾಂಗಳೂ ಈ ಯಮ ನಿಯಮಗಳೂ ನಡೆನುಡಿಗಳ ತಿದ್ದುಪಾಟವನ್ನು ಮಾಡಿ ಕೊಡುತ್ತವೆ. ಇವುಗಳ ಸಹಾಯವಿಲ್ಲದಿದ್ದರೆ ಯೋಗವು ಸಿದ್ಧಿಸುವದಿಲ್ಲ, ಆದ್ದರಿಂದ ಯೋಗಿಯಾಗಬೇಕೆಂಬುವವರು ಯಮ ನಿಯಮಗಳು ಅಳವಡವಂತೆ ಪ್ರಯತ್ನ ಮಾಡಬೇಕು.

ಯೋಗದ ಮೂರನೇ ಅಂಗವು ಆಸನವು ‘ಸುಖೇನ ಆಸ್ಯತೆ ಇತಿ ಆಸನಂ’ ಅಂದರೆ ತೊಂದರೆ ಪಡದೆ ಸುಖವಾಗಿ ಒಂದೇ ರೀತಿ ಕುಳಿತುಕೊಳ್ಳುವದಕ್ಕೆ ಆರೋಗ್ಯವೂ ಲಘುತ್ವವೂ ಪ್ರಾಪ್ತವಾಗಿ ಚಂಚಲತೆಯು ನಷ್ಟವಾಗುತ್ತದೆ. ಪ್ರಯುಕ್ತ ಅಭ್ಯಾಸಿಗೆ ಸ್ಥಿರವಾದ ಆಸನವನ್ನು ಸಾಧಿಸುವದು ಅಗತ್ಯವಾಗಿರುತ್ತದೆ. ಆಸನ ಜಯವಾದ ವಿನಹ ಪ್ರಾಣಾಯಾಮವೇ ಮೊದಲಾದ ಮುಂದಿನ ಯೋಗಾಂಗಗಳು  ಎಂದೂ ಸಾಧಿಸಲು ಶಕ್ಯವಿಲ್ಲ. ಒಂದು ತಾಸಿನಿಂದ ಮೂರು ತಾಸುಗಳವರೆಗೂ ಒಂದೇ ಸ್ಥಾನದಲ್ಲಿ ತನಗೆ ಸರಿದೋರಿದ ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳುವದೇ ಆಸನ ಜಯವು. ಇದರಿಂದ ತತೋ ದ್ವಂದ್ವಾನಭಿಘಾತ!’ ಅಂದರೆ ಶೀತೋಷ್ಣ ದ್ವಂದ್ವಗಳ ಬಾಧೆಯುಂಟಾಗುವದಿಲ್ಲ, ಆಸನಗಳನ್ನು ನಿತ್ಯಾನಿಯಮಿತ ಹಾಕುವುದರಿಂದ ಶರೀರದ ನಿರುಪಯೋಗಿ ಪರಮಾಣುಗಳು ಹೋಗಿ ಅವುಗಳ ಸ್ಥಾನದಲ್ಲಿ ಹೊಸ ಪರಮಾಣುಗಳು ವ್ಯಾಪಿಸುತ್ತವೆ.ಪ್ರಾಣಶಕ್ತಿಯನ್ನು ಹೆಚ್ಚಾಗಿ ಸಂಗ್ರಹಿಸಲಿಕ್ಕೆ ಯೋಗ್ಯತೆಯುಂಟಾಗುತ್ತದೆ. ಆಸನ ಹಾಕುವಾಗ ಶ್ವಾಸೋಚ್ಛಾಸವನ್ನು ಬಾಯಿಯಿಂದ ನಡಿಸದೆ ಮೂಗಿನಿಂದಲೇ ನಡಿಸಬೇಕು. ಈ ಜಗತ್ತಿನಲ್ಲಿ ಎಷ್ಟು ಜೀವರಾಶಿಗಳುಂಟೋ ಅಷ್ಟು ಪ್ರಕಾರದ ಆಸನಗಳುಂಟು. ಅವುಗಳಲ್ಲಿ ಎಂಬತ್ತುನಾಲ್ಕು ಆಸನಗಳು ಮುಖ್ಯವಾದವುಗಳೆಂದು ಘೇರಂಡ ಸಂಹಿತೆಯಲ್ಲಿ ಹೇಳಿರುತ್ತದೆ. ಅವುಗಳಲ್ಲಿಯೂ ಕೂಡ ಮೂವತ್ತೆರಡು ಆಸನಗಳು ಮುಖ್ಯಾದವುಗಳೆಂದೂ ಸಿದ್ಧಾಸನ ಪದ್ಮಾಸನ ಮತ್ತು ಸ್ವಸ್ತಿಕಾಸನಗಳೇ ಸರ್ವ ಸಿದ್ಧಿಗೂ ಮೋಕ್ಷಕ್ಕೂ ಸಾಧಕಗಳೆಂದು ಯೋಗಿಗಳ ಅಭಿಪ್ರಾಯವಿದೆ.

ಆಸನ ಜಯವಾದ ಮೇಲೆ ಮುಂದಿನ ಅಂಗವು ಪ್ರಾಣಾಯಾಮವು, ಯೋಗ ಸಾಧನದ ಅತ್ಯಂತ ಮಹತ್ವವಾದ ಅಂಗವೆಂದರೆ ಪ್ರಾಣಾಯಾಮವೇ ಸರಿ. ಪ್ರಾಣಾಯಾಮದಿಂದ ಮನಸ್ಸು ಇಂದ್ರಿಯಗಳು ಶುದ್ಧ ನಿರ್ದೋಷವುಳ್ಳವುಗಳಾಗಿ ಬಲವುಳ್ಳವುಗಳಾಗುವವು. ದೀರ್ಘಾಯುಷ್ಯ ಪ್ರಾಪ್ತವಾಗುವದರ ಸಲುವಾಗಿ ಅನೇಕ ಉಪಾಯಗಳೇನುಂಟೋ ಅವುಗಳಲ್ಲಿ ಪ್ರಾಣಾಯಾಮವು ಅತಿ ಶ್ರೇಷ್ಟವಾದ ಉಪಾಯವಾಗಿದೆ. ಪ್ರಾಣಾಯಾಮದಿಂದಲೇ ವೀರ್ಯವು ಸ್ಥಿರವುಳ್ಳದ್ದಾಗಿ ಮನುಷ್ಯನು ಊರ್ಧ್ವರೇತಸ್ಸುವುಳ್ಳವನಾಗುವನು. ಮನಸ್ಸಿನ ಸ್ಥಿರತ್ವ, ಧ್ಯಾನಸಿದ್ದಿ, ಸಮಾಧಿ ಪ್ರಾಪ್ತಿಗಳನ್ನುಂಟುಮಾಡುವ ಸಮಸ್ತ ಸಾಧನಗಳಲ್ಲಿ ಪ್ರಾಣಾಯಾಮವೇ ಅಗ್ರಪೀಠವನ್ನಲಂಕರಿಸಿದೆ. ಪ್ರಾಣಾಯಾಮವೆಂದರೆ ಪ್ರಾಣಶಕ್ತಿಯ ಜಯವು. ಈ ಜಯವುಂಟಾದವನ ಶರೀರದಲ್ಲಿ ಒಂದು ಪ್ರಕಾರದ ದೈವೀ ಶಕ್ತಿಯು ಸಂಚಾರ ಮಾಡುತ್ತದೆ.

ಕೇವಲ ಶ್ವಾಸವನ್ನು ಒಳಗೆ ಹಿಡಿಯುವದೇ ಪ್ರಾಣಾಯಾಮವೆಂದು ಕೆಲವರ ತರ್ಕವಿದೆ. ಶ್ವಾಸವನ್ನು ಒಳಗೆ ತೆಗೆದುಕೊಳ್ಳುವದು ಕೆಲವು ವೇಳೆ ಅಲ್ಲಿಯೇ ತಡೆಯುವದು ಆಮೇಲೆ ಹೊರಗೆ ಬಿಡುವದು ಇತ್ಯಾದಿ ಕ್ರಿಯೆಗಳನ್ನು ಪ್ರಾಣಾಯಾಮ ಮಾಡುವವರೇನೋ  ನಿಜ .ಆದರೆ ಕೇವಲ ವಾಯುವೇ ಪ್ರಾಣಾಯಾಮವಲ್ಲ. ಸೂರ್ಯನಿಂದ ವಾಯುನಲ್ಲಿರುವಂಥಾ ಪರಮಾತ್ಮನ ವಿಶ್ವವ್ಯಾಪಕ ಪ್ರಾಣಶಕ್ತಿಯನ್ನು ಶರೀರದಲ್ಲಿ ತೆಗೆದುಕೊಳ್ಳುವದೇ ಪ್ರಾಣಾಯಾಮದ ಮುಖ್ಯೋದ್ದೇಶವದೆ. ಈ ವಿಷಯದ ಜ್ಞಾನವು ಯಾರಿಗಿಲ್ಲವೋ ಅವರಿಗೆ ಪ್ರಾಣಾಯಾಮದಿಂದಾಗತಕ್ಕಷ್ಟು ಲಾಭವಾಗಲಿಕ್ಕಿಲ್ಲ, ಪ್ರಾಣಾಯಾಮ ಮಾಡುವವರು ಕೆಳಗಿನ ಭಾವನೆಯನ್ನು ಮನಸ್ಸಿನಲ್ಲಿ ಮಾಡಬೇಕು.

ವಿಶ್ವವ್ಯಾಪಕ ಪ್ರಾಣಶಕ್ತಿಯನ್ನುನಾನು ನನ್ನ ಶರೀರದಲ್ಲಿ ಧಾರಣ ಮಾಡಿದ್ದೇನೆ. ಸರ್ವಾವಯವಗಳಲ್ಲಿ ಆ ಶಕ್ತಿಯು ಮುಟ್ಟಿ ನವ ಚೈತನ್ಯವನ್ನುಂಟು ಮಾಡಿದೆ. ಆ ಶಕ್ತಿಯಿಂದ ನನ್ನ ಸರ್ವದೋಷಗಳು ನಷ್ಟವಾಗಿ ಪವಿತ್ರತೆಯುಂಟಾಗಿದೆ.

ಭಾವನೆಯನ್ನು ಮನಸ್ಸಿನಲ್ಲಿದೃಢಪಡಿಸಿದ್ದಾದರೆ ಪ್ರಾಣಾಯಾಮವು ವಿಶೇಷ ಫಲಕಾರಿಯಾಗುವದು.ಶ್ವಾಸತಕ್ಕೊಳ್ಳುವದು ಶ್ವಾಸ ತಡೆಯುವದು ಶ್ವಾಸವನ್ನು ಬಿಡುವದು ಹೀಗೆ ಪ್ರಾಣಾಯಾಮದ ಮೂರು ಭಾಗಗಳಿವೆ. ನಾಶಿಕವು ಪ್ರಾಣದ ಸ್ಥಾನವಿದ್ದದ್ದರಿಂದ ಶ್ವಾಸೋಚ್ಛಾಸದ ಕಾರ್ಯವನ್ನು ನಾಶೀಕದಿಂದಲೇ ಮಾಡಬೇಕು. ಪ್ರಮಾದದಿಂದಲೂ ಸಹ ಮುಖದಿಂದ ಮಾಡಬಾರದು. ಪ್ರಾಣಾಯಾಮದ ಕೆಲವು ನೇಮಗಳ ಹೊರ್ತು ಉಳಿದ ಸರ್ವಶ್ವಾಸೋಚ್ಛಾಸದ ಕರ್ಮವನ್ನು ನಾಶಕದಿಂದಲೇ ಮಾಡಬೇಕು. ಮೂಗಿನಿಂದ ನಡೆಯುವ ಶ್ವಾಸೋಚ್ಛಾಸವು ಆಯುಷ್ಯವನ್ನೂ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಮುಖದಿಂದ ನಡೆಯುವ ಶ್ವಾಸೋಚ್ಛಾಸವು ಆಯುಷ್ಯವನ್ನುಕ್ಷೀಣಮಾಡಿ ರೋಗಗಳನ್ನುಂಟು ಮಾಡುತ್ತದೆ. ಈ ಪ್ರಕಾರ ನಾಶಿಕವು ಮಹತ್ವದ ಇಂದ್ರಿಯವಿದ್ದು ಅದನ್ನು ನಿರ್ಮಲವಾಗಿಡುವದು ಯೋಗಾಭ್ಯಾಸಿಯ ಪ್ರಥಮ ಕರ್ತವ್ಯವಾಗಿರುತ್ತದೆ. ಅನೇಕ ಜನರು ಈ ವಿಷಯವಾಗಿ ತೆಗೆದುಕೊಳ್ಳಬೇಕಾದಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳುವದಿಲ್ಲ. ಕೆಲವು ಜನರ ನಾಶಿಕವಂತೂ ಹೊಲಸಿನಿಂದ ತುಂಬಿಹೋಗಿ ಶ್ವಾಸಕರವು ಮುಖದಿಂದಲೇ ನಡೆದಿರುತ್ತದೆ. ಈ ಕೆಟ್ಟ ಚಟವನ್ನುದೂರಮಾಡಲು ನಾಶಿಕವನ್ನು ಸ್ವಚ್ಛವಾಗಿಡುವದೇ ಕಾರಣವಾಗಿದೆ.

ಬಾವಿಯಲ್ಲಿಯ ಸ್ವಚ್ಛವಾದ ನೀರನ್ನು ತಂದು ಥಾಲಿಯಲ್ಲಿ ಸೋಸಿಟ್ಟುಕೊಂಡು ಮೂಗಿನ ಒಂದು ಹೊರಳೆಯನ್ನು ಮುಚ್ಚಿ ಎರಡನೇ ಹೊರಳಿಯಿಂದ ಸಾವಕಾಶವಾಗಿ ಆ ನೀರನ್ನು ಸೇದಬೇಕು. ಹೀಗೆ ಎರಡೂ ಹೊರಳಿಗಳಿಗೆ ಮಾಡುವದರಿಂದ ಮೂಗು ಸ್ವಚ್ಛವಾಗುವದು. ಆ ಥಾಲಿಯಲ್ಲಿಯ ಸ್ವಚ್ಛ ನೀರಿನಲ್ಲಿ ಉಪ್ಪು ಹಾಕಿ ಉಪಯೋಗ ಮಾಡಿದರಂತೂ ಅಧಿಕ ಗುಣಕಾರಿಯಾದದ್ದಾಗುತ್ತದೆ. ನೀರನ್ನು ಮಾತ್ರ ಬಹುವೇಗದಿಂದ ಎಳೆದುಕೊಳ್ಳಬಾರದು. ಹಾಗೆ ಮಾಡುವದರಿಂದ ಮಿದುಳುಗಳಿಗೆ ಅಪಾಯವಾಗುವ ಸಂಭವವಿರುತ್ತದೆ. ಈ ಪ್ರಯೋಗವು ಅತಿ ಸುಲಭವಾಗಿರುವದರಿಂದ ಸಣ್ಣ ಸಣ್ಣ ಬಾಲಕರು ಸಹ ಮಾಡಬಹುದು.

ಮೂಗಿನ ಸರ್ವ ವಿಕಾರದ ಮೇಲೆ ಈ ಜಲಪಾನವಿಧಿಯು ಅತ್ಯಂತ ಗುಣಕಾರಿಯಾಗಿದೆ. ಮೂಗಿನ ರಕ್ತ ಬೀಳುವದಕ್ಕೂ ಮೂಗಿನಿಂದ ಹುಟ್ಟುವ ಬೊಕ್ಕೆಗಳಿಗೂ ಮೂಗಿನ ದುರ್ಗಂಧ ನಿವಾರಣೆಗೂ ತಲೆನೋವಿಗೂ ಬದ್ದಕೋಷ್ಟತೆಗೂ ಮುಖರೋಗಕ್ಕೂ ಈ ಜಲನೇತಿವಿಧಿಯು ಅತಿ ಉಪಯೋಗವುಳ್ಳದ್ದಾಗಿದೆ.

ಪ್ರಾಣಾಯಾಮವನ್ನು ಮಾಡುವದಕ್ಕಾಗಿ ಸೂರ್ಯನ ಕೋಮಲ ಕಿರಣಗಳು ಎಷ್ಟು ಪ್ರಾಪ್ತವಾಗುತ್ತವೆಯೋ ಅಷ್ಟು ಉತ್ತಮವು ಯಾಕಂದರೆ ಈ ಮುಂಚೆಯೇ ಹೇಳಿದಂತೆ ಸೂರ್ಯನ ಕಿರಣಗಳಿಂದ ಪ್ರಾಣ ಶಕ್ತಿಯು ವಿಶೇಷ ದೊರೆಯುತ್ತದೆ. ಮುಂಜಾನೆ ಸ್ನಾನ ಮಾಡಿ ಎಳೆಬಿಸಿಲಿನಲ್ಲಿ, ಮಧ್ಯಾನಕ್ಕೆ ಊಟಕ್ಕಿಂತ ಮೊದಲು ಒಂದು ತಾಸು, ಸಾಯಂಕಾಲಕ್ಕೆ ಸೂರ್ಯಾಸ್ತಕ್ಕಿಂತ ಪೂರ್ವದಲ್ಲಿ ಪ್ರಾಣಾಯಾಮವನ್ನುಮಾಡಬೇಕು. ಪ್ರಾಣಾಯಾಮವನ್ನು ಮಾಡುವ ಸ್ಥಾನವನ್ನು ಶ್ರೀ ಸ್ವಾಮಿ ವಿವೇಕಾನಂದರು ಹೇಳುವಂತೆ ಒಂದು ಏಕಾಂತವಾಗಿರುವ ಕೋಣೆಯನ್ನು ಗೊತ್ತುಮಾಡಬೇಕು. ಆ ಕೋಣೆಯಲ್ಲಿ ಯಾರೂ ಮಲಗಬಾರದು. ಅದನ್ನು ಶುದ್ಧವಾಗಿಟ್ಟಿರಬೇಕು. ಸ್ನಾನಮಾಡದೆ ಅಲ್ಲಿಗೆ ಹೋಗಬಾರದು. ಆ ಕೋಣೆಯಲ್ಲಿ ಯಾವಾಗಲೂ ಸುಗಂಧಪುಷ್ಪಗಳನ್ನಿಟ್ಟಿರಬೇಕು ಮತ್ತು ಸಾಧು ಸತ್ಪುರುಷರ ಉತ್ತಮೋತ್ತಮ ಚಿತ್ರಗಳನ್ನು ಹಚ್ಚಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ ಸುಗಂಧ ರೂಪಗಳನ್ನು ಸುಡುತ್ತಿರಬೇಕು. ರಾಗದ್ವೇಷ ಮೊದಲಾದ ಹೊಲಸು ವಿಚಾರಗಳನ್ನು ಆ ಸ್ಥಾನದಲ್ಲಿದ್ದಾಗ್ಗೆ ಮನಸ್ಸಿನಲ್ಲಿ ಸಹ ತರಕೂಡದು. ಹೀಗೆ ಮಾಡೋಣದರಿಂದ ಕಾಲಾಂತರದಲ್ಲಿ ಅಲ್ಲಿಯ ವಾತಾವರಣವು ಪವಿತ್ರತೆಯುಳ್ಳದ್ದಾಗುವದು. ಯಾವಾಗ್ಗೆ ಮನಸ್ಸಿಗೆ ಉದಾಸೀನತೆ, ದುಃಖ ಸಂಶಯ, ಚಂಚಲತಾ ಮೊದಲಾದವುಗಳು ತೊರುತ್ತವೆಯೋ ಆವಾಗ್ಗೆ ಆ ಕೋಣೆಯಲ್ಲಿ ಸಹಜವಾಗಿ ಹೋಗೋಣದರಿಂದ ಮನಸ್ಸಿಗೆ ನಿಶ್ಚಯವಾಗಿ ಶಾಂತತೆ ದೊರೆಯುತ್ತದೆ. ಈ ಉದ್ದೇಶದಿಂದಲೇ ನಮ್ಮದೇಶದಲ್ಲಿ ದೇವರಮನೆಗಳೆಂದು, ಗುಡಿಗಳೆಂದು ಮಠಗಳೆಂದು ಉಂಟಾದದ್ದು.ಆದರೆ ಕಿವಿಯೊಳಗಿನ ಮುರು ಹೋಗಿ ಕೇವಲ ರಂಧ್ರವೇ ಉಳಿಯುವಂತೆ ಉದ್ದೇಶವು ನಷ್ಟವಾಗಿ ಅದರ ಕಾರ್ಯವು ಮಾತ್ರ ಈಗ ನಮ್ಮಲ್ಲಿ ಉಳಿದಿರುತ್ತದೆ.

ಇಂಥ ಪವಿತ್ರವಾದ ಕೋಣೆಯಲ್ಲಿ ಒಂದು ಮೊಳ ಎತ್ತರ ಕಟ್ಟೆಯನ್ನು ಹಾಕಿ ಸಣ್ಣಕ್ರಿಮಿಗಳ ಹಾಗೂ ಸರ್ದಿಯ ಬಾಧೆಯಾಗದಂತೆ ವ್ಯವಸ್ಥೆ ಮಾಡಿ ಅದರ ಮೇಲೆ ದರ್ಭಾಸನ ಕಂಬಳಾಸನ ಮೊದಲಾದ ಆಸನಗಳನ್ನು ಹಾಕಿಕೊಂಡು ಸಮಕಾಯ ಶಿರೋಗ್ರೀವನಾಗಿ ಅದರ ಮೇಲೆ ಕುಳಿತು ಪ್ರಾಣಾಯಾಮವನ್ನು ಪ್ರಾರಂಭಿಸಬೇಕು.ಪ್ರಾಣಾಯಾಮವನ್ನು ಪ್ರಾರಂಭಿಸುವದಕ್ಕಿಂತ ಮೊದಲು ಪರಮಾತ್ಮನಿಗೂ ಸರ್ವಯೋಗಿಗಳಿಗೂ ಮನಃಪೂರ್ವಕವಾಗಿ ನಮಸ್ಕರಿಸಬೇಕು. ಗುರು ಮುಖದಿಂದ ತಿಳಿದು ಪ್ರಾಣಾಯಾವಯನ್ನು ನಿಯಮಬದ್ಧವಾಗಿ ರೇಚಕ ಪೂರಕ, ಕುಂಭಕಗಳನ್ನುಮಾಡಬೇಕು, ಅಂದರೆ ಪುಪ್ಪುಸದಲ್ಲಿ ಮೂಗಿನಿಂದ ಪೂರ್ಣವಾಗಿ ವಾಯುವನ್ನುತೆಗೆದುಕೊಳ್ಳುವದು ಪೂರಕವು, ತೆಗೆದುಕೊಂಡ ವಾಯುವನ್ನು ಕೆಲವು ಕಾಲ ಅಲ್ಲಿಯೇ ತಡಿಯುವದೇ ಕುಂಭಕವು. ಆ ತಡೆದ ವಾಯುವನ್ನು ಹೊರಗೆ ಬಿಡುವದೇ ರೇಚಕವು.ಈ ಪೂರಕ, ಕುಂಭಕ, ರೇಚಕಗಳ ಕಾಲ ಪ್ರಮಾಣವನ್ನು ಯೋಗಿಗಳು ನಿಶ್ಚಯ ಮಾಡಿರುತ್ತಾರೆ. ಪೂರಕವನ್ನು ಎಷ್ಟು ಕಾಲದವರೆಗೆ ಮಾಡುವರೋ ಅದರ ನಾಲ್ಕುಪಟ್ಟು ಕಾಲ ಕುಂಭಕವನ್ನು ಮಾಡಬೇಕು ಮತ್ತು ಪೂರಕದ ಎರಡು ಪಟ್ಟು ಕಾಲ ರೇಚಕವನ್ನು ಮಾಡಬೇಕು. ಅಂದರೆ ಎಂಟು ಅಂಕಿ ಪೂರಕ ಮಾಡಿದರೆ ಮೂವತ್ತೆರಡು ಅಂಕಿ ಕುಂಭಕ ಮಾಡಬೇಕು: ಹದಿನಾರು ಅಂಕಿ ರೇಚಕ ಮಾಡಬೇಕು.ಈ ಕ್ರಮಕ್ಕೆಯೇ ನಿಯಮ ಬದ್ಧಪೂರಕ, ಕುಂಭಕ, ರೇಚಕಗಳೆನ್ನುವರು. ಈ ಕ್ರಮಬದ್ದವಾದ ಪೂರಕ, ಕುಂಭಕ, ರೇಚಕದಿಂದ ಕೂಡಿದ ಪ್ರಾಣಾಯಮ ಸಂಖ್ಯೆಯನ್ನು ತಮಗೆ ಸಾಧ್ಯವಾದ ಮೇರೆಗೆ ಹೆಚ್ಚಿಸುತ್ತ ಹೋಗಬೇಕು.

ಪ್ರಾಣಾಯಾಮಾಭ್ಯಾಸಿಯು ನೆನಪಿಡತಕ್ಕ ಸಂಗತಿಗಳು

(೧) ಸಾಧಕನು ಅಗ್ನಿಸೇವನೆಯನ್ನು ಮಾಡಬಾರದು. ಯಾಕಂದರೆ ಅಗ್ನಿಯಿಂದ ಪ್ರಾಣಶಕ್ತಿಯು ನಷ್ಟವಾಗುತ್ತದೆ.

(೨) ಸಹಿಸುತ್ತಿದ್ದರೆ ಪ್ರಾತಃಕಾಲದಲ್ಲಿ ತಣ್ಣೀರಿನಿಂದಲೇ ಸ್ನಾನ ಮಾಡತಕ್ಕದ್ದು.

(೩) ಪ್ರಾಣಾಯಾಮ ಮಾಡುವಾಗ್ಗೆ ಗುಹ್ಯಸ್ಥಾನಕ್ಕೆ ಮತ್ತು ನಡುವಿಗೆ ಬಂಧನ ವಿರಬೇಕು. ಪ್ರಯುಕ್ತ ಲಂಗೋಟಿಯನ್ನು ಹಾಕಬೇಕು.

(೪) ಭೋಜನದಲ್ಲಿ ಸಾತ್ವಿಕ ಆಹಾರವಾದ ಹಾಲು ತುಪ್ಪ ಮೊದಲಾದ ಸ್ನಿಗ್ಧಪದಾರ್ಥಗಳನ್ನೂ, ಜವೆ ಗೋದಿ, ಹೆಸರು ಬೇಳೆ, ಅಕ್ಕಿ ಮೊದಲಾದವುಗಳನ್ನೂ ಉಪಯೋಗಿಸಬೇಕು. ಅಪಚನವಾಗುವವರೆಗೆ ಊಟಮಾಡಬಾರದು. ಹಸಿವೆ ಇಟ್ಟು ಕೊಂಡೇ ಊಟವನ್ನು ಮುಗಿಯಿಸಬೇಕು. ಹೊಟ್ಟೆಯು ಜಡವಿದ್ದಾಗ ಮತ್ತು ಊಟ ಮಾಡಿದಾಗ ಪ್ರಾಣಾಯಾಮವನ್ನು ಮಾಡಬಾರದು, ಅದರಂತೆ ಪ್ರಾಣಾಯಾಮವನ್ನು ಮಾಡಿದ ಕೂಡಲೇ ಭೋಜನವನ್ನು ಮಾಡಬಾರದು.

(೫) ಅತಿಶ್ರಮವನ್ನು ಎಂದೂ ಮಾಡಬಾರದು. ವಾರಕ್ಕೊಮ್ಮೆ ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು. ಹಾಗೆಯೇ ತಿಂಗಳಿಗೊಮ್ಮೆಪ್ರಖರವಾದ ಬಿಸಿಲಿನಲ್ಲಿ ಲಂಗೋಟಿಯನ್ನು ಹಾಕಿಕೊಂಡು ಮೂಗು, ಬಾಯಿ,ಮಸ್ತಕಗಳ ಮೇಲೆ ನಾಲ್ಕು ಪದರಿನ ವಸ್ತ್ರವನ್ನು ಹಾಕಿಕೊಂಡು ಸೂರ್ಯ ಕಿರಣ ಸ್ನಾನವನ್ನು ಮಾಡಿ ಬೆವರನ್ನು ತೆಗೆಯಬೇಕು.

ಪ್ರಾಣಾಯಾಮದ ಮುಂದಿನ ಅಂಗವು ಪ್ರತ್ಯಾಹಾರವು ಅಂದರೆ ಇಂದ್ರಿಯಗಳು ಮತ್ತು ಮನಸ್ಸು ಯಾವಾಗಲೂ ವಿಷಯಗಳಲ್ಲಿಯೇ ಸಂಬಂಧವಾಗಿರುತ್ತವೆ. ಆ ಸಂಬಂಧವಾದವುಗಳಲ್ಲಿ ಪ್ರತಿಬಂಧ ಮಾಡುವದೇ ಅರ್ಥಾತ್ ಬಹಿರ್ಮುಖವಾದ ಇಂದ್ರಿಯಗಳನ್ನು ಅಂತರ್ಮುಖ ಮಾಡುವದೇ ಪ್ರತ್ಯಾಹಾರವು. ಈ ಪ್ರತ್ಯಾಹಾರವು ಸಾಧಿಸಿದರೆ ಮನಸ್ಸು ಚಿತ್ತಾಕಾರವಾಗುತ್ತದೆ. ಆಮೇಲೆ ಇಂದ್ರಿಯಗಳ ನಿರೋಧವು ತಾನಾಗಿಯೇ ಪೂರ್ಣವಾಗುತ್ತದೆ. ಪ್ರತ್ಯಾಹಾರದ ಮುಂದಿನ ಅಂಗವು ಧಾರಣೆಯು. ದೇಹದ ಒಳಗಾಗಲೀ ಅಥವಾ ಹೊರಗಾಗಲೀ ಇಲ್ಲವೆ ಬೇರೆ ಯಾವುದಾದರೂ ಒಂದು ಪವಿತ್ರ ವಸ್ತುವಿನಲ್ಲಿ ಯಾಗಲೀ ಚಿತ್ರವನ್ನು ನಿಲ್ಲಿಸಲಿಕ್ಕೆ ಪ್ರಯತ್ನಿಸುವದೇ ಧಾರಣೆಯು, ಉದಾಹರಣೆ. ದೇಹದ ಒಳಗೆ ಅಂದರೆ ನವಚಕ್ರಗಳಲ್ಲಿರುವ ನವಲಿಂಗಗಳಲ್ಲಿ ಹೊರಗೆ ಅಂದರೆ, ಭೂಮಧ್ಯೆ, ನಾಶಿಕಾಗೋ, ಇಷ್ಟದೇವತೆ ಮೊದಲಾದವುಗಳು ಪವಿತ್ರವಾದ ಯಾವ ವಸ್ತುವಿನಲ್ಲಿಯಾದರೂ ಚಿತ್ತವನ್ನು ನಿಲ್ಲಿಸಲೆತ್ನಿಸುವದೇ ಧಾರಣೆಯು.  ಧಾರಣೆಯು ಸಿದ್ಧಿಸಿದ ಮೇಲೆ ಧ್ಯಾನವು, ಧಾರಣೆಯಲ್ಲಿ ಒಂದು ವಸ್ತುವಿನ ಮೇಲೆ ಇಟ್ಟ ಚಿತ್ರವು ಕ್ಷಣಕ್ಷಣಕ್ಕೆ ಚಂಚಲ ವಾಗಿರುತ್ತದೆ. ಆದರೆ ಯಾವಾಗ ಚಿತ್ತ ಚಂಚಲತೆಯನ್ನು ಬಿಟ್ಟು ತೈಲಧಾರೆಯಂತೆ ಒಂದೇ ಸವನೆ ಆ ವಸ್ತುವಿನಲ್ಲಿ ನಿಲ್ಲಲಿಕ್ಕೆ ಪ್ರಾರಂಭವಾಗುವದೋ ಆವಾಗ್ಗೆ ಅದಕ್ಕೆ ಧ್ಯಾನವೆನ್ನುತ್ತಾರೆ. ಒಂದೇ ವಿಷಯದ ಸಾಧನೆಗೆ ಧಾರಣೆ; ಸಾಧ್ಯಕ್ಕೆ ಧ್ಯಾನವೆನ್ನುವರು.

ಧ್ಯಾನವು ಸಿದ್ದಿದ ಮೇಲೆ ಪ್ರಾಪ್ತವಾಗುವ ಸ್ಥಿತಿಯೇ ಸಮಾಧಿಯು.

“ಸಮ್ಯಕ್ ಆಧೀಯತೇ ಮನಃ ಸಮಾಧಿಃ “ ಅಂದರೆ ಮನಸ್ಸಿನ ಆಚಂಚಲ ಸ್ಥಿತಿಯೇ ಸಮಾಧಿಯು, ಬಾಹ್ಯ ಸ್ವರೂಪವನ್ನು ಬಿಟ್ಟು ಅಂತಃ ಸ್ವರೂಪದಲ್ಲಿ ಮನಸ್ಸು ತದಾಕಾರವಾಗುವದೇ ಸಮಾಧಿಯು.

ಜ್ಞಾತಾ, ಜ್ಞಾನ, ಜ್ಙೇಯ ಅಂದರೆ ಧ್ಯಾನಿಸುವವನು, ಧ್ಯಾನಿಸುವ ಸಾಧನೆ, ಧ್ಯಾನಿಸುವ ವಸ್ತು ಇವುಗಳ ಜ್ಞಾನವಿರುವದೇ ಧ್ಯಾನವು. ಈ ತ್ರಿಪುಟಿಗಳ ಎಚ್ಚರಿಕೆ ಇಲ್ಲದಿರುವದೇ ಸಮಾಧಿಯು.

ತನ್ನನ್ನು ತಾನು ಮರೆತು ಚಿತ್ತವು ಪರಮಾತ್ಮನಲ್ಲಿ ಏಕಾಕಾರವಾಗುವದೇ ಸಮಾಧಿಯು, ಇಂಥ ಸಮಾಧಿ ಸ್ಥಿತಿಯನ್ನು ಅಥವಾ ಕೈವಲ್ಯವನ್ನು ಹೊಂದುವದೇ ಹಠಯೋಗಿಗಳ ಮತ್ತು ರಾಜಯೋಗಿಗಳ ಧೈಯವಾಗಿರುತ್ತದೆ.

ಇಲ್ಲಿಯವರೆಗೂ ಸಂಕ್ಷಿಪ್ತವಾಗಿ ವಿವರಿಸಿದ ಯೋಗಾಂಗಗಳಲ್ಲದೆ ಶಿವಲಿಂಗಪೂಜೆ, ಶಿವಾನುಸಂಧಾನ, ಶಿವಭಕ್ತಿ ವಿಜ್ಞಾನ, ಶಿವವ್ರತವೆಂಬೈದು ಹೆಚ್ಚಾದಂಗಗಳಿಂದ ಕೂಡಿ ಅಂಗತ್ರಯಗಳೆ ಲಿಂಗತ್ರಯ ಸಂಬಂಧಮಾಡಿ  ಲಿಂಗಭೋಗೋಪ ಭೋಗವುಳ್ಳ ತತ್ವವನ್ನೊಳಗೊಂಡ ಲಿಂಗಾಂಗ ಸಾಮರಸ್ಯ ಜ್ಞಾನವೇನುಂಟೋ ಅದುವೇ ಶಿವಯೋಗವು ಇಂಥ ಶಿವಯೋಗ ಸುಖವು ನಮ್ಮೆಲ್ಲರಿಗೂ ಸುಲಭವಾಗಿಸಾಧಿಸಲೆಂದೆಣಿಸಿ ಶಿವಯೋಗ ಮಂದಿರವೆಂಬ ಸಂಸ್ಥೆಯನ್ನೇರ್ಪಡಿ: ಶಿವಯೋಗ ತತ್ವವನ್ನುರುಹಿ ಶಿವನೊಳ್ ಬೆರೆದ ಪರಮ ಶಿವಯೋಗಿ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳಿಗೆ ನನ್ನ ಅನೇಕ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ.

ಲೇಖಕರು : ಜ.ಚ.ನಿ.

 

(ಜ.ಚ.ನಿ ಎಂತಲೇ ಪರಿಚಿತರಾಗಿರುವ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಸಾಹಿತ್ಯ ಕ್ಷೇತ್ರವೂ ಸೇರಿದಂತೆ ವಿಜ್ಞಾನ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ದುಡಿದವರು. 1909 ಅಕ್ಟೋಬರ್‌ 20 ರಂದು ಜನಿಸಿದ ಇವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಜನಿಸಿದರು. ತಂದೆ ದುಂಡಯ್ಯ, ತಾಯಿ ತಾಯವ್ವ. ನವಲಗುಂದದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಶಿವಮೊಗ್ಗದ ಶಿವಯೋಗ ಮಂದಿರದಲ್ಲಿ ಶಿವಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಬಾಲ್ಯದ ದಿನಗಳಲ್ಲಿಯೇ ಸುಕುಮಾರ ಪತ್ರಿಕೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ಸಮಯದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಜೀವನ ಸಿದ್ಧಾಂತ-ಆರು ಬೃಹತ್ ಸಂಪುಟಗಳು, ಶೂನ್ಯ ಸಂಪಾದನೆಯನ್ನಾಧರಿಸಿದ ಸಂಪಾದನೆಯ ಸೊಂಪು-4 ಸಂಪುಟಗಳು ‘ಪ್ರಾಚೀನ ಮಹಾ ವ್ಯಕ್ತಿತ್ವ’ಗಳು ‘ಶತಕ ತ್ರಯ ಪ್ರವಚನ’, ‘ಕೈವಲ್ಯ ಪದ್ಧತಿ’ ಇವರ ಪ್ರಮುಖ ಕೃತಿಗಳು )

ಸಂಗ್ರಹ ಸಹಾಯ : ಪೂಜ್ಯ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳು .

ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ  ನಿಡಸೋಸಿ.

ಯೋಗಿರಾಜ ಶ್ರೀ ಪ್ರಭು ಕುಮಾರ ಪಟ್ಟಾಧ್ಯಕ್ಷರು

ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಜೀವಿಗಳು, ಯೋಗಕ್ಕಾಗಿ ತಮ್ಮ ತ್ರಿಕರಣಗಳನ್ನು ಮೀಸಲಿಕ್ಕಿದವರು. ಅವರಿಗೆ ಯೋಗದ ಹೊರತು ಬೇರೊಂದು ಬದುಕಿಲ್ಲ; ಬೇರೊಂದು ಬಾಳಿಲ್ಲ.ಯೋಗನೆ ಅವರ ಜೀವನ ಸರ್ವಸ್ವ. ಯೋಗವೇ ಅವರ ಜೀವಿತ ಲಕ್ಷ. ಅವರು ಪರಮಯೋಗಿ;ಪರಮಾವತಾರಿ.ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶ್ರೀಗಳವರಿಗೆ ಯೋಗದಲ್ಲಿ ಪ್ರಭುಕುಮಾರ ಪಟ್ಟಾಧ್ಯಕ್ಷರು ಪ್ರಮುಖ ಶಿಷ್ಯರು. ಶ್ರೀಗಳವರ ಯೋಗಶಕ್ತಿ ಯೋಗಸಿದ್ಧಿ ಅವರಲ್ಲಿ ಸಂಪೂರ್ಣ ಕೂಡಿ ಬಂದಿತ್ತು; ಮೂಡಿ ನಿಂದಿತ್ತು.ಹಾನಗಲ್ಲ ಕುಮಾರಯೋಗಿಗಳ ಯೋಗವಿದ್ಯೆಯನ್ನೆಲ್ಲ ಆರ್ಜಿಸಿ ಅಧಿಕಗೊಳಿ ಸಿದ ಮಹನೀಯರು; ಮಹಿತಾತ್ಮರು, ಶಿವಯೋಗಮಂದಿರದಲ್ಲಿ ಯೋಗಕ್ಕೆ ಮೈಲುಗಲ್ಲಿನಂತಿದ್ದರು. ಶಿಷ್ಠಾದಿಚ್ಛೇತ್ ಪರಾಜಯಂ’ ಎಂಬ ಮಾತನ್ನು ಹಾನಗಲ್ಲಶ್ರೀಗಳವರು ಪ್ರಭುಕುಮಾರ ಪಟ್ಟಾಧ್ಯಕ್ಷರ ವಿಷಯದಲ್ಲಿ ಹೃದಯಾರೆ ಒಪ್ಪಿದ್ದರು; ಎದೆಯಾರೆ ಅಪ್ಪಿದ್ದರು. ಪ್ರಭುಕುಮಾರ ಪಟ್ಟಾಧ್ಯಕ್ಷರು ಶ್ರೀಗಳವರ ಕೃಪೆಯಿಂದ ಯೋಗಾಚಾರ್ಯರಾಗಿದ್ದರು; ಯೋಗಿರಾಜರೆನಿಸಿದ್ದರು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಹಾನಗಲ್ಲ ಕುಮಾರಯೋಗಿಗಳ ಯೋಗ ವಿದ್ಯೆಯನ್ನು ನಿರ್ವಿಶೇಷವಾಗಿ ವ್ಯಾಸಂಗ ಮಾಡಿ ವಿಶಿಷ್ಟ ಶಕ್ತಿಯನ್ನುಸಂಪ್ರೀತಿಯನ್ನು ಸಂಗಳಿಸಿದ್ದರು. ಯೋಗಪ್ರವಾಹವು ಹಾನಗಲ್ಲ ಶ್ರೀಗಳವರಲ್ಲಿ ಹುಟ್ಟಿ ಹರಿದು ಪ್ರಭುಕುಮಾರ ಪಟ್ಟಾಧ್ಯಕ್ಷರಲ್ಲಿ ಸಂಗಮವಾಗಿತ್ತು.ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಸಾಗರವಾಗಿ ಉಕ್ಕಿದರು: ಉತ್ತೇಜಗೊಂಡರು.ಆ ಸಾಗರಗರ್ಭದಲ್ಲಿ ಅಮೋಘವಾದ ಯೋಗ-ನಿರಾಗ ರತ್ನಗಳಿದ್ದವು. ಶಮೆ ದಮೆ ಶಾಂತಿ ದಾಂತಿ ಮುಂತಾದ ಅನರ್ಘ್ಯ ಮುಕ್ತಾಫಲಗಳಿದ್ದವು. ಅವರೊಂದು ಸದ್ಗುಣ-ಸಂಪತ್‌ ಶಾಲಿಯಾದ  ಯೋಗ-ಸಾಗರ; ಸತ್ಯ ಸುಖದ ಆಗರ.

ಪ್ರಭುಕುಮಾರ ಪಟ್ಟಾಧ್ಯಕ್ಷರು ತಮ್ಮ ಯೋಗವಿದ್ಯೆಯನ್ನು ತಮ್ಮಲ್ಲಿಯೆ ಇರಿಸಿಕೊಂಡು ಕುಳಿತವರಲ್ಲ. ಸೂರ್ಯನು ತನ್ನ ಪ್ರಕಾಶವನ್ನು ಪ್ರಪಂಚಕ್ಕೆ ಹರಡುವಂತೆ, ಸಮುದ್ರವು ತನ್ನ ಜಲವನ್ನು ಮೇಘಗಳ ಮುಖಾಂತರ ಭೂವಲಯಕ್ಕೆ ಹಂಚುವಂತೆ ಅವರು ತಮ್ಮ ಯೋಗತೇಜವನ್ನು ಯೋಗ ಸಾರವನ್ನು ಬೆಳಗಿದರು, ಬೀರಿದರು. ನಾಡಿನಲ್ಲಿ ಅಲ್ಲಲ್ಲಿ ಪ್ರಾಯೋಗಿಕವಾಗಿ ಪ್ರಸಿದ್ಧಿಸಿದರು; ವ್ಯಾಪ್ತಿಗೊಳಿಸಿದರು. ಹಾನಗಲ್ಲ ಶ್ರೀಗಳ ಉತ್ಸವಮೂರ್ತಿಯಂತೆ ಯೋಗ ತೇಜದಿಂದ ಅಲ್ಲಲ್ಲಿ ಮೆರಿಸಿದರು, ಮೆರೆದರು. ಎಲ್ಲೆಡೆಯಲ್ಲಿಯೂ ಭಾರತದ ಪ್ರತಿಷ್ಠಿತ ಯೋಗಿಗಳಿಂದ ಅಹುದೆನಿಸಿಕೊಂಡರು.ಯೋಗಿಗಳ ಹೃದಯ ಕಮಲಗಳನ್ನು ಅರಳಿಸಿದರು. ಯೋಗವಿದ್ಯೆಯಲ್ಲಿ ಅವರದೇ ಒಂದು ವಿಶಿಷ್ಟ ಪ್ರತಿಭೆ. ಅವರದೇ ಒಂದು ಪ್ರಾಮುಖ್ಯತೆ. ಅವರು ಯೋಗವಿದ್ಯೆಯ ಪುನರುದ್ಧಾರಕ್ಕಾಗಿ ಅವತರಿಸಿದ ಪ್ರಭು; ಕುಮಾರ ಯೋಗಿ ಗಾಗಿ ಕುಮಾರನಾಗಿ ಅವತರಿಸಿದ ಶಿವಯೋಗಿ.

ಧ್ಯಾನ, ಧಾರಣ, ತಪಸ್ಸುಗಳೆಂದರೆ ಅವರ ಮನ ಉಲ್ಲಸಿತವಾಗುತ್ತಿತ್ತು.ಅವರ ಶಿವಪೂಜಾ ವ್ರತಗಳೆ ವ್ರತಗಳು. ದಿನಕ್ಕೆ ಮೂರು ವೇಳೆ ಪೂಜಿಸದೆ ಇರುತ್ತಿರಲಿಲ್ಲ. ಕುಳಿತು ಎಷ್ಟು ಹೊತ್ತಾದರೂ ಪೂಜಿಸುತ್ತಿದ್ದರು, ಕದಲದೆ ಜಪ-ಧ್ಯಾನಾಸಕ್ತರಾಗಿರುತ್ತಿದ್ದರು. ಅವರು ಪೂಜೆಯಲ್ಲಿ ಬೇಸರಿಸುತ್ತಿರಲಿಲ್ಲ;ಅವಸರಿಸುತ್ತಿರಲಿಲ್ಲ. ಯಥಾಕಾಲಕ್ಕೆ ಯಥಾವಿಧಿಯಾಗಿ ಪೂಜಿಸುತ್ತಿದ್ದರು.ಒಲಿದು ಪೂಜಿಸುತ್ತಿದ್ದರು. ಭಸ್ಮ, ರುದ್ರಾಕ್ಷಿಗಳಲ್ಲಿ ಅವರಿಗಿದ್ದ ನಿಷ್ಠೆ ಅಪಾರವಾಗಿತ್ತು. ಎರಡು ಮುಖದಿಂದ ಹದಿನಾಲ್ಕು ಮುಖದ ವರೆವಿಗೂ ಒ೦ದೊ೦ದು ರುದ್ರಾಕ್ಷಿಗಳನ್ನು ಕೂಡಿಸಿ ಪವಣಿಸಿ ಕಂಠದಲ್ಲಿ ಧರಿಸುತ್ತಿರುವುದು ಅವರದೇ ಒಂದು ಮಾರ್ಗ; ಅವರದೇ ಒಂದು ವೈಶಿಷ್ಟ್ಯ .ಸರಳ ಶರೀರಿಗಳಾಗಿ, ನಿರಾಳ ಮನಸ್ಸಿನವರಾಗಿ ಪೂಜಿಸುತ್ತಿದ್ದ ಅವರನ್ನು ನಿರೀಕ್ಷಿಸುವುದೇ ಕಣ್ಣಿಗೆ ಒಂದು ಹಬ್ಬ. ಅವರು ನಿಷ್ಠೆಯಿಂದ ನುಡಿವ ರುದ್ರಾಧ್ಯಯನದಲ್ಲಿ ನಾದಬ್ರಹ್ಮವು ಹೊರಹೊಮ್ಮಿ ಬರುವಂತಿರುತ್ತಿದ್ದಿತು. ಅವರು ಮಾಡುವ ರುದ್ರಾಭಿಷೇಕದಲ್ಲಿ ನಾದಬ್ರಹ್ಮವು ಮಿಂದು ಹಾಲಿನಂತೆ ಶುಭ್ರನಾಗಿ, ಮಧುಪರ್ಕದಂತೆ ಮಧುರನಾಗಿ, ಅರ್ಘ್ಯಾದಿಗಳಂತೆ ಸುವಾಸಿತನಾಗಿ, ನಾರಿಕೇಳದಂತೆ ಶಾಂತನಾಗಿ ಶೋಭಿಸುತ್ತಿದ್ದನು. ಅವರ ರೂಪದಲ್ಲಿ ಬಿಂದು ಕಲಾತ್ಮಕವಾಗಿ ಕಂಗೊಳಿಸುತ್ತಿದ್ದನು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಪ್ರಾಣಾಯಾಮವನ್ನು ಪೂರ್ಣವಾಗಿ ಮಾಡುತ್ತಿದ್ದರು. ಪ್ರಾಣವಾಯುಗಳನ್ನು ಮೂಲಾಧಾರದಿಂದ ಮೇಲಕೆತ್ತಿ ಸ್ವಾಧಿಷ್ಟಾನದಲ್ಲಿ ಸ್ವಲ್ಪ ಹೊತ್ತು ಇರಿಸಿ, ಮಣಿಪೂರಕದಲ್ಲಿ ತುಂಬಿ, ಅನಾಹತವನ್ನು ದಾಟಿಸಿ, ವಿಶುದ್ಧದಲ್ಲಿ ಶುದ್ಧಗೊಳಿಸಿ, ಆಜ್ಞಾ ಚಕ್ರದಲ್ಲಿ ಸ್ವಾಧೀನಪಡಿಸಿಕೊಂಡು, ಬ್ರಹ್ಮರಂಧ್ರದಲ್ಲಿ ನೆಲೆ ನಿಲ್ಲಿಸಿ, ಧ್ಯಾನಿಸಿ ತಲ್ಲೀನ ಗೊಳ್ಳುತಿದ್ದರು, ಅವರ ರುದ್ರಾಭಿಷೇಕದಲ್ಲಿ ಆಹತ ಬ್ರಹ್ಮೋಪಾಸನೆ ನಡೆದಂತೆ ಪ್ರಾಣಾಯಾಮದಲ್ಲಿ ಅನಾಹತ ಬ್ರಹ್ಮೋಪಾಸನೆ ನಡೆದಿರುತ್ತಿತ್ತು.

ಪೂಜೆಗೊಂಡ ಕರಸ್ಥಲದ ಲಿಂಗಮೂರ್ತಿಯನ್ನು ತಮ್ಮ ತೇಜಃಪುಂಜ ವಾದ ಕಣ್ಣುಗಳಿಂದ ನಿರೀಕ್ಷಿಸುತ್ತ ಜಪಯೋಗದಲ್ಲಿ ಗಂಟೆ ಗಂಟೆಗಳ ಕಾಲ ಮಗ್ನರಾಗಿರುತ್ತಿದ್ದರು. ಆಗ ಅವರು ಲಿಂಗದಲ್ಲಿ ದೃಷ್ಟಿಯಿಟ್ಟು, ದೃಷ್ಟಿಯಲ್ಲಿ ಮನವಿಟ್ಟು, ಮನದಲ್ಲಿ ಭಾವ ನಟ್ಟು, ತ್ರಿಪುಟಿಯಳಿಯುತ್ತಿದ್ದರು. ಲಿಂಗವೆ ತಾವಾಗಿರುತ್ತಿದ್ದರು. ಒಟ್ಟಿನಲ್ಲಿ ಅವರು ಮಾಡುವ ಪೂಜೆಯೇ ಪೂಜೆ, ಅದರಲ್ಲಿ ಅವರಿಗೆ ಅವಿರಳ ನಿಷ್ಠೆಯಿತ್ತು; ಅಪಾರ ಸಂತುಷ್ಟಿಯಿತ್ತು. ಅವರ ಪೂಜೆಗೆ ತುಂಬಿಯು ಹೂವಿದ್ದರೆ ಅವರ ಹೃದಯ ಲಿಂಗದಲ್ಲಿ ತುಂಬಿ ಹರಿಯುತ್ತಿತ್ತು. ನೆರೆ ನಂಬಿ ನಿಲ್ಲುತ್ತಿತ್ತು ,

ಪೂಜ್ಯ ರಾದ ಪ್ರಭುಕುಮಾರ ಪಟ್ಟಾಧ್ಯಕ್ಷರು ಹೆಸರಿಗೆ ತಕ್ಕ ಪಕ್ಷಿಗಳ ಅವರ ಹೆಸರು ಅವರನ್ನು ಆಶ್ರಯಿಸಿ ಸಾರ್ಥಕವಾಗಿತ್ತು. ಅವರು ಪ್ರಭುಗಳಿಗೆ ಪ್ರಭುವಾಗಿದ್ದರು.ಕುಮಾರರಿಗೆ ಕುಮಾರರಾಗಿದ್ದರು.ಯೋಗವಿದ್ಯೆಯಲ್ಲಿ ರೀತಿಯಲ್ಲಿ ಅವರನ್ನು ಳಿದರೆ ಪ್ರಭುಗಳಿರಲಿಲ್ಲ. ಮಾರ್ದವತೆಯಲ್ಲಿ ಸರಳತೆಯಲ್ಲಿ ಅವರು ಗುಣಕುಮಾರ; ಘನಕುಮಾರ. ಅವರದು ಮಕ್ಕಳಂತಹ ಮನಸು, ಮಕ್ಕಳೆಂದರೆ ಅವರಿಗೆ ಅತಿ ಹರುಷ.

ಕೌಮಾರಾವಸ್ಥೆಯಲ್ಲಿದ್ದ ವಟುಗಳ ಮನಸ್ಸನ್ನು ನಡೆ-ನುಡಿಗಳನ್ನು ತಿದ್ದು ವದರಲ್ಲಿ ಅವರನ್ನುಳಿದರೆ ಇನ್ನಿಲ್ಲ. ಕುಮಾರರಲ್ಲಿ ತಾವೂ ಕುಮಾರರಾಗಿ ಬೆರೆದು ಹಿತವನ್ನು ಬೋಧಿಸುತ್ತಿದ್ದರು. ಆಚಾರವನ್ನು ಅರುಹುತ್ತಿದ್ದರು.ಅವರದು ಮಧುರವಾದ ಮಾತು. ಮೇಣಿನಂತಹ ಮನಸ್ಸು, ಯಾವಾಗಲೂ ನಗೆಮೊಗ, ಸರಳ ಹೃದಯ, ಸೌಮ್ಯ ರೂಪು, ಸಹಜ ವರ್ತನೆ; ವಟುಗಳನ್ನು ಲಾಲಿಸುತ್ತಿದ್ದರು, ಪಾಲಿಸುತ್ತಿದ್ದರು. ತಮ್ಮ ನಡೆನುಡಿಗಳಿಂದ ನಲಿಸುತ್ತಿದ್ದರು. ಯೋಗತೇಜದಿಂದ ಆಕರ್ಷಿಸುತ್ತಿದ್ದರು. ನೀತಿನುಡಿಗಳಿಂದ ತಿದ್ದುತ್ತಿದ್ದರು. ವಟುಗಳಲ್ಲಿ ಸುಪ್ತವಾಗಿದ್ದ ಯೋಗಶಕ್ತಿಯನ್ನು ಹೊಮ್ಮಿಸುತ್ತಿದ್ದರು. ಆಸನಗಳನ್ನು ಹಾಕಿಸಿ, ಪಳಗಿಸುತ್ತಿದ್ದರು. ಸಾಧಕರಿಗೆ ಷಟ್ಕರ್ಮಗಳಿಂದ ಸುಧಾರಿಸುವುದು ಅವರಿಗೇ ಸೇರಿದ ಭಾಗ. ಅದರಲ್ಲಿ ಅವರದೇ ಒಂದು ಘನತೆ !

ಅವರ ಆ ತಿಳಿಯಾದ ನಗೆಯಲ್ಲಿ ಹೃದಯ ಪ್ರಚೋದಿಸುವ ಗುರುತರವಾದ ಗುಣವಿತ್ತು. ಅವರ ಕರುಣಾದ್ರವಾದ ಆ ನೋಟದಲ್ಲಿ ಪವಿತ್ರವಾದ ಪ್ರಭಾವವಿತ್ತು. ಅವರ ಆ ಅನುಭವದ ಅಮೃತೋಕ್ತಿಗಳಲ್ಲಿ ನಡೆ ಹೇಳುವ ಔದಾರ್ಯದ ಔಚಿತ್ಯವಿತ್ತು. ಅವರು ಸ್ಪರ್ಶಿಸುವ ಅಮೃತಹಸ್ತದಲ್ಲಿ ದೇಹವನ್ನೇ ಪಾವನಗೊಳಿಸುವ ದಿವ್ಯ ಸ್ಪರ್ಶ ಶಕ್ತಿಯಿತ್ತು.ಅವರ ಯೋಗ ತೇಜದಿಂದೊಡಗೂಡಿದ ಆ ಮುಖಮಂಡಲದಲ್ಲಿ ಮನ ಅರಳಿಸುವ ಪ್ರಶಾಂತಕಾಂತಿಯಿತ್ತು. ಅವರು ಆಚಲದೆ ಆತ್ಮಾನಂದದ ಅಮರಲೀಲೆಯಿಂದ ಮನಮುಟ್ಟಿ ಮಾಡುವ ಶಿವಯೋಗದಲ್ಲಿ ಸಮಾಧಿಗೊಳ್ಳುವ ಸುಖಸಂಪತ್ತಿಯಿತ್ತು.

ಶಿವಯೋಗಮಂದಿರದಲ್ಲಿ ಯೋಗದ ಕಲೆಯನ್ನು ಬೆಳಸಿ ಬೆಳಗಿಸಿದ ಶ್ರೇಯಸ್ಸು ಪ್ರಭುಕುಮಾರ ಪಟ್ಟಾಧ್ಯಕ್ಷರದು. ಯೋಗಶಿಕ್ಷಕರಾಗಿ ಬಹುದಿವಸ ಅವರು ಕೆಲಸ ಮಾಡಿದರು. ಪ್ರತಿ ಫಲಾಕಾಂಕ್ಷೆಯಿಲ್ಲದೆ ತ್ಯಾಗದಿಂದ ತಮ್ಮ ಸೇವೆಯನ್ನು ಸಂಸ್ಥೆಗೆ ಸಲ್ಲಿಸಿದರು. ವಟುಗಳಿಗೆ ಆಸನಗಳನ್ನು ಕಲಿಸುತ್ತಿದ್ದರು. ಸಾಧಕರಿಗೆ ಷಟ್ಕರ್ಮಗಳ ಮರ್ಮವನ್ನು ಹೇಳುತ್ತಿದ್ದರು.

ಮೇಲಿನ ಯೋಗಗಳನ್ನು ತಾವು ಮಾಡುತ್ತಿದ್ದರು. ಯೋಗವಿದ್ಯೆಯ ಶಿಕ್ಷಣದ ಹೆಚ್ಚಿನ ಹೊಣೆಗಾರಿಕೆ ಅವರದಾಗಿತ್ತು. ಅದನ್ನು ಅವರು ತೃಪ್ತಿಕರವಾಗಿ ನೆರವೇರಿಸುತ್ತಿದ್ದರು. ಆಸನಗಳಿಂದ ಆಶ್ರಮದಲ್ಲಿರುವವರ ಶರೀರವನ್ನು ಆರೋಗ್ಯವಾಗಿರಿಸುವ ಪ್ರಾಣಾಯಾಮದಿಂದ ಪ್ರಾಣಶಕ್ತಿಯನ್ನು ಹೆಚ್ಚಿಸುವಯೋಗದಿಂದ ಚಿತ್ತವೃತ್ತಿಗಳನ್ನು ನಿರೋಧಿಸುವ, ದೀಕ್ಷೆಯಿಂದ ಆತ್ಮವನ್ನು

ಅರಳಿಸುವ ಈ ಎಲ್ಲ ಸತ್ಕಾರ್ಯ ಗಳನ್ನು ಅವರೊಬ್ಬರು ಮಾಡಿ ನೆರವೇರಿಸುತ್ತಿದ್ದರೆಂದರೆ ಆ ಮಹಾವ್ಯಕ್ತಿಯ ಆ ಯೋಗಿರಾಜನ ವೈಶಿಷ್ಟ ಎಂತಹದೆಂಬುದನ್ನು ಓದುಗರೇ ಊಹಿಸಿಕೊಳ್ಳಬೇಕು.

ಯೋಗ-ಶಿವಯೋಗಗಳಿಂದ ಅವರು ಶ್ರೀಗುರುವಿನ ಶಕ್ತಿಯನ್ನುಸಂಗಳಿಸಿದ್ದರು. ಅವುಗಳ ಬಲದಿಂದ ಅನೇಕರಿಗೆ ಶಿವದೀಕ್ಷೆಯ ಮಾಡಿ,ಅವರ ಮಾಂಸಪಿಂಡಗಳನ್ನು ಕಳೆದು ಮಂತ್ರಪಿಂಡಿಗಳನ್ನಾಗಿ ಮಾಡಿ,ಶಿಷ್ಯ ಸಮುದಾಯವನ್ನು ಅಸಂಖ್ಯಾತವಾಗಿ ಸಂಪಾದಿಸಿದ ಭಾಗ್ಯ ಅವರದು. ಅವರ ಆ ಕೃಪೆಗೆ ಪಾತ್ರರಾದ ಸೌಭಾಗ್ಯ ಅವರ ಶಿಷ್ಯರದು. ಅವರ ಕರೆಕಂಜಾತರಿಗೆ ಲೆಕ್ಕವಿಲ್ಲ. ಅವರನ್ನು ಶಿಷ್ಯ ಸಂಪತ್ತನ್ನು ಗಳಿಸಿದವರು ಮತ್ತೊಬ್ಬರಿಲ್ಲ.ಬರೀ ಶಿವದೀಕ್ಷೆ ಒಂದರಿಂದಲ್ಲ ಯೋಗಶಿಕ್ಷಣ ದಿಂದಲೂ ಅವರಿಗೆ ಶಿಷ್ಯರಾಗದವರು ತೀರ ಅಪರೂಪ. ಇದರಿಂದಲೂ ಸಹ ಅವರದೇ ಪ್ರಭುರೂಪ; ಅವರೇ ಪ್ರಭುಕುಮಾರ !.

ಅವರು ಹೆಚ್ಚಾಗಿ ಓದಿದವರಲ್ಲ. ಓದಿದವರೆಲ್ಲರಿಂದಲೂ ಅಷ್ಟೊಂದು ಕಾರ್ಯಗಳಾಗುವದಿಲ್ಲ. ನಾವು ಬಲ್ಲವರೆಂಬ ಅಭಿಮಾನ ಮಾತ್ರ ತುಂಬಿಕೊಂಡಿರುತ್ತದೆ. ವಿನಯಾದಿಗಳಿಗೆ ಅಲ್ಲಿ ಅವಕಾಶವಿರುವುದು ತೀರ ಕಡಿಮೆ. ಓದಿದವರ ಬುದ್ದಿ ವಿಶಾಲವಾದುದರ ಫಲವೆಂದರೆ ಬುದ್ಧಿ ವಿಚಲವಾಗುವುದೆ ಸ್ಥಿತಪ್ರಜ್ಞರಾಗಿರುವವರು ತೀರ ವಿರಳ ! “ಓದಿ ಕೆಟ್ಟ ಕೂಚ ಭಟ್ಟ’ ಎಂಬಂತೆ ಅರಿತವರೆಂಬ ಹುಚ್ಚು ಹಿಡಿಯುವವರೆ ಹೆಚ್ಚು.ಅ೦ತಹ ಓದಿನಿಂದೇನು ? ಪರರ ಜೀವನಕ್ಕೆ ಜ್ವಲಂತವಾದ ಉಪಕಾರವನ್ನು ಸರ್ವತೋಮುಖವಾಗಿ ಮಾಡುವದಕ್ಕಿಂತಲೂ ಬೇರೆ ಓದಿಲ್ಲ. ಓದಿಗೆ ಇದುವೇ ಚರನು ಫಲ, ಈ ಗುಣವುಳ್ಳವರು ಓದಿದರೂ ಸರಿಯೆ ! ಓದದಿದ್ದರೂ ಸರಿಯೇ ! ಬರೀ ಒಂದು ಅಕ್ಷರಾಭ್ಯಾಸ ಮಾಡಿದರೆ ಹೆಚ್ಚಲ್ಲ. ‘ಸಾಕ್ಷರಾ ವಿಪರೀತಾಶ್ವೇತೆ ರಾಕ್ಷಸಾ ಏವ ಕೇವಲಂ’ ಎಂಬ ಮಾತು ತುಂಬಾ ಅನುಭವ ಪೂರ್ಣವಾದ ಮಾತು.ಇದಕ್ಕೆ ನಿದರ್ಶನವಾಗಿ ನೂರಕ್ಕೆ ಎಂಭತ್ತು ಸಿಕ್ಕುವಲ್ಲಿ ಸಂಶಯವಿಲ್ಲ.ಸ್ಥಿತಪ್ರಜ್ಞರಾಗಿರಲು ಹೆಚ್ಚು ಓದಿದವರೇ ಬೇಕೆಂಬ ನಿಯಮವೇನೂ ಇಲ್ಲ.ರಾಮಕೃಷ್ಣ ಪರಮಹಂಸರು ಅದೆಷ್ಟು ಓದಿದ್ದರು ? ಅವರ ಸ್ಥಿತ ಪ್ರಜ್ಞತೆ ಯೇನು ? ಅವರ ಶಕ್ತಿ ಸಾಕ್ಷಾತ್ಕಾರ ಸಂಪತ್ತಿಯೇನು ? ಅವರ ಶಿಷ್ಯೋದ್ಧಾರ ಪ್ರಭಾವವೇನು ? ವಿವೇಕಾನಂದರಂತಹ ವಿಚಾರಪರರೂ ಸಹ ಅವರ ಆತ್ಮಶಕ್ತಿಗೆ ಬಾಗಿ ಶಿಷ್ಯರಾಗಲಿಲ್ಲವೆ ? ಅದರಂತೆ ಶರೀರದಿಂದ ಆತ್ಮನವರೆವಿಗೂ ಯೋಗಶಿಕ್ಷಣಕೊಡುವ ಶಕ್ತಿಯುಳ್ಳ ಆ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಬೇರೆ ಪುಸ್ತಕಗಳ ಓದು ಬೇಕಾಗಿರಲಿಲ್ಲ. ಅವರ ಯೋಗಾನುಭವವೇ ಹಿರಿದಾದ ಓದಾಗಿತ್ತು. ಯೋಗದ ಸರ್ವಾಂಗ ಶಿಕ್ಷಣವೇ ಮಿಗಿಲಾದ ಶಿಕ್ಷಣ ವಾಗಿತ್ತು. ಶಾರೀರಿಕ ಮಾನಸಿಕ ಆಧ್ಯಾತ್ಮಿಕ-ಶಿಕ್ಷಣ ಅವರದು. ಇದರಿಂದ ಅವರ ಅದ್ವಿತೀಯ ಶಿಕ್ಷಕರಾಗಿದ್ದರೆಂದರೆ ಹೆಚ್ಚಲ್ಲ; ಔಚಿತ್ಯಕ್ಕೆ ಹೊರತಲ್ಲ.

ಓದಿದವರು ಬೌದ್ಧಿಕ ಶಿಕ್ಷಣವೊಂದನ್ನು ಮಾತ್ರ ಕೊಡಬಲ್ಲರು. ಹೆಚ್ಚಾದರೆ ಆರ್ಥಿಕ ಶಿಕ್ಷಣ ಕೊಡಬಲ್ಲರು.ನೈತಿಕ ಶಿಕ್ಷಣವೂ ಸಹ ಅವರಿಂದ ಸಾಧ್ಯವಿಲ್ಲೆಂಬುದಕ್ಕೆ ಇಂದಿನ ಶಿಕ್ಷಣವೇ ಸಾಕ್ಷಿ!

ಪ್ರಭುಕುಮಾರ ಪಟ್ಟಾಧ್ಯಕ್ಷರಲ್ಲಿ ಸರಳತೆ ಮನೆ ಮಾಡಿಕೊಂಡಿತ್ತು,ಹೆಚ್ಚು ಓದಿದವರಿಗೂ ಸರಳತೆಗೂ ಹಾವು ಮುಂಗಸಿಯ ಸ್ನೇಹ, ಪ್ರಭುಕುಮಾರ ಪಟ್ಟಾಧ್ಯಕ್ಷರು ಮಾತ್ರ ಹಾಗಿರಲಿಲ್ಲ.ಎಂತಹ ಕಷ್ಟ ಬಂದರೂ ಎಷ್ಟು ಮಂದಿ ಎದುರಾಳಿಗಳಾಗಿ ನಿಂತರೂ ಅವರು ತಮ್ಮ ಸರಳತೆಯನ್ನು ಬಿಟ್ಟು ಕೊಡುತ್ತಿರಲಿಲ್ಲ. ‘ಸರಸೋ ವಿಪರೀತಶ್ಚೇತ್ ಸರಸತ್ವಂ ನ ಮುಂಚತಿ’ ಎಂಬ ಮಾತಿಗೆ ಅವರು ಸತ್ಯ ಸಾಕ್ಷಿಯಾಗಿದ್ದರು.ಸರಳತೆ ಅವರ ರಕ್ತದ ಪ್ರತಿ ಕಣದಲ್ಲಿಯೂ ಬೆರತು ಹೆಪ್ಪುಗಟ್ಟಿತ್ತು. ಊಟ-ಉಡಿಗೆ, ಗುಣಸ್ವಭಾವ ಎಲ್ಲದರಲ್ಲಿಯೂ ಅವರಿಗೆ ಸರಳತೆಯಿತ್ತು. ಯತಿಯತ್ನ ಅವರ ಜೀವನೋದ್ಯಮ; ಯಥೋಚಿತವಾದ ಜೀವನಕ್ರಮ, ಯಥಾರ್ಥ, ಯಥಾಸ್ಥಿತಿ, ಯಥಾಶಕ್ತಿ- ಅವರ ಜೀವನ ಪಲ್ಲವಿ. ಯದೃಚ್ಛೆಯಾಗಿ ಅವರು ಎಂದೂ ವರ್ತಿಸಿದವರಲ್ಲ. ಮಾತಿನಲ್ಲಿ ಮತ್ತೊಂದರಲ್ಲಿ ಅವರು ತಮ್ಮ ಶಕ್ತಿಮೀರಿ ಹೋಗುವವರಲ್ಲ ಯಮ-ನಿಯಮಗಳಲ್ಲಿ ಅವರಿಗೆ ಅಪಾರ ಪ್ರೇಮ. ಆಸನ-ಪ್ರಾಣಾಯಾಮಗಳಲ್ಲಿ ಅವರಿಗೆ ಅತ್ಯಂತ ಆಸಕ್ತಿ.ಅವುಗಳಲ್ಲಿಯೇ ಅವರು ತಮ್ಮ ಕಾಲವನ್ನು ಕಳೆಯುತ್ತಿದ್ದರು. ಯಾವ ವೈಭವದಲ್ಲಿಯ ಯಾವ ಭೋಗಭಾಗ್ಯದಲ್ಲಿಯೂ ಅವರಿಗೆ ಆಶೆಯಿರಲಿಲ್ಲ. ಯಾವ ಸುಭೋಜನದಲ್ಲಿಯೂ ಅವರಿಗೆ ಬಯಕೆಯಿರಲಿಲ್ಲ. ಪೂಜಾಸಾಮಗ್ರಿ ಯೋಗಸಾಧನ ಸಾಹಿತ್ಯ ಇವುಗಳೇ ಅವರ ಸಂಪತ್ತು. ಹಸುವಿನ ಹಾಲು-ಅಂಜೂರಿಹಣ್ಣು ಇವೇ ಅವರ ಆಹಾರ. ಮತ್ತೊಂದನ್ನು ಅವರು ಸ್ವೀಕರಿಸುತಿರಲಿಲ್ಲ. ಹಾಲುಂಡೆ ಮಾಡಿದರೆ ಅಲ್ಲಿಗೆ ಹೆಚ್ಚು, ಬಿದರೆಯಲ್ಲಿ ಅವರ ಮಠವಿದ್ದರೂ ಅದರ ಆಗು ಹೋಗುಗಳನ್ನು ಅವರು ತಮ್ಮ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಅದಕ್ಕಾಗಿ ಶ್ರಮಿಸುತ್ತಿರಲಿಲ್ಲ ಶಿವಯೋಗಮಂದಿರವೇ ಅವರ ಮಠ, ಲತಾಮಂಟಪವೆ ಅವರ ವಾಸಸ್ಥಳ. ಊಟದಂತೆ ಉಡಿಗೆಯಲ್ಲಿಯೂ ಸಹ ಅವರು ತೀರ ಸರಳ. ತೊಡಲು ಒಂದು ಸಣ್ಣ ಅಂಗಿ, ಅದರ ಮೇಲೆ ಅಂಗದಟ್ಟು, ಕಟ್ಟ ಲು ಒಂದು ದೊಡ್ಡ ಪಂಜೆ. ಮಸ್ತಕಕ್ಕೆ ಸುತ್ತಲೂ ಒಂದು ಪೇಟ ಈ ಮೂರಾದರೆ ಅವರ ಉಡುಪು ಮುಗಿಯಿತು.ಹೆಚ್ಚಿನದನ್ನು ಅವರು ಅಪೇಕ್ಷಿಸುತ್ತಿರಲಿಲ್ಲ.

 ಉಡುಪಿನಲ್ಲಿ ಊಟದಲ್ಲಿ ಉತ್ತಮಿಕೆಯಲ್ಲಿ ಅವರದೇ ಒಂದು ಪೆಂಪು, ಅವರದೇ ಒಂದು ಮುಡಿಪು; ಅವರದೇ ಒಂದು ಮುನ್ನಡೆ..

ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಪ್ರೇಮಿ; ಆತ್ಮಸಂಯಮಿ, ಅವರು ಎಲ್ಲವನ್ನೂ ನಿರೋಧಿಸಿದ್ದರು ಅವರ ಅರ್ಪಿತ (ಊಟ) ಎಷ್ಟು   ಪರಿಮಿತವೋ ಅವರ ನಿದ್ರೆಯೂ ಅಷ್ಟೇ ಪರಿಮಿತ, ಶಿವಯೋಗಮಂದಿರದಲ್ಲಿ ಸಾಧಕರೆಲ್ಲರು ಮಲಗಿದ ಮೇಲೆ ಅವರು ಪವಡಿಸುತ್ತಿದ್ದರು. ಮರಳಿ ಬೆಳಗಿನ ಜಾವಕ್ಕೆ ಯಾರೂ ಏಳದ ಮೊದಲು ಅವರು ನಿತ್ಯದಲ್ಲಿ ಏಳುತ್ತಿದ್ದರು.ಎದ್ದು ತಾವೇ ಸ್ವತಃ ಉಳಿದವರೆಲ್ಲರನ್ನು ಎಬ್ಬಿಸುತ್ತಿದ್ದರು. ಅಹಂಕಾರ ಅವರಲ್ಲಿರಲಿಲ್ಲ. ಒಬ್ಬರಿಂದ ಮನ್ನಣೆಯನ್ನಾಗಲಿ ,ಬಣ್ಣನೆಯನ್ನಾಗಲಿ ಅವರುಎಂದಿಗೂ ಎಷ್ಟು ಮಾತ್ರಕ್ಕೂ ಅಪೇಕ್ಷಿಸಿದವರಲ್ಲ. ಯಾವ ವಿಧವಾದ ಜನ ಗುಣಗಳಿಗೆ ಜೋಲು ಬಿದ್ದವರಲ್ಲ.ಜೀವನ ಜಂಜಾಟಕ್ಕೆ ಸಿಕ್ಕುಬಿದ್ದವರಲ್ಲ.ಯಾವಜ್ಜೀವವೂ ಅವರು ಯೋಗ-ಶಿವಯೋಗಗಳಲ್ಲಿಯೇ ಪರವಶರಾದವರು.ಅವರ ನಿದ್ದೆಯ ಸಹ ತೀರ ಸೂಕ್ಷ್ಮ ವಾಗಿತ್ತು. ಸಾತ್ವಿಕಾಹಾರದಲ್ಲಿದ್ದ ಅವರ ನಿದ್ದೆ ಗಾಢವಾಗಿರಲು ಸಾಧ್ಯವಿಲ್ಲ; ಇರಲಿಲ್ಲ. ಸ್ವಲ್ಪ ಶಬ್ದವಾದರೆ ಎಚ್ಚರಾಗುತ್ತಿದ್ದರು. ಇರುಳೆಲ್ಲ ನಿದ್ದೆ ಮಾಡದಿದ್ದರೂ ಅವರ ಆರೋಗ್ಯ ಕೆಡುತ್ತಿರಲಿಲ್ಲ ಪರ್ವದಿನಗಳಲ್ಲಿ ಗ್ರಹಣ ದಿನಗಳಲ್ಲಿ ಅವರು ರಾತ್ರಿ ಮಲಗುತಿರಲಿಲ್ಲ. ಪರ್ವದಿನಗಳಲ್ಲಿ ಇರುಳೆಲ್ಲ ಪೂಜೆಯನ್ನೂ ಗ್ರಹಣ ದಿನಗಳಲ್ಲಿ ಆಸನ, ಜಲಸ್ತಂಭನ, ಧ್ಯಾನ ಮೊದಲಾದವುಗಳನ್ನು ಮಾಡುವದರಲ್ಲಿ ಮಗ್ನರಾಗಿರುತ್ತಿದ್ದರು , ‘ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ “  ಎಂಬ ಗೀತೋಕ್ತಿ’ಯನ್ನು ಅವರು ಪರಿಪಾಲಿಸುತ್ತಿದ್ದರು.ಅದೇ ರೀತಿ ಅವರು ಅವರು ಇರುತ್ತಿದ್ದರು.ಆ ಗೀತಾವಾಣಿಯಲ್ಲಿ ಅವರಿಗೆ ಸಂಪೂರ್ಣ ಶ್ರದ್ಧೆಯಿತ್ತು. ಅದರ ಮುಂದಿನ ಪಂಕ್ತಿಯಲ್ಲಿ ಹೇಳಿದಂತೆ ಅವರಿಗೆ ಹಗಲು ರಾತ್ರಿಯಾಗಿ ಪರಿಣಮಿಸಿತ್ತು. ಅವರು ತಮ್ಮ ದೃಷ್ಟಿಯನ್ನು ಮನಸ್ಸನ್ನು ಸೃಷ್ಟಿಯಿಂದ- ಸೃಷ್ಟಿ ಸುಖದಿಂದ ಹಿಂದಕ್ಕೆ ಸೆಳೆದು ಆತ್ಮನಲ್ಲಿ ಅಳವಡಿಸಿದ್ದರು; ಆನಂದ ಪರವಶರಾಗಿದ್ದರು.

ಯೋಗಿರಾಜರಾದ ಅವರು ಯುಕ್ತಿ-ಕುಯುಕ್ತಿಗಳನ್ನು ಕಂಡವರಲ್ಲ;ಬಳಸಿದವರಲ್ಲ. ಜಾಗತಿಕ ಜೀವನದ-ಭೌತಿಕ ಭೋಗದ ಹಂಗಿದ್ದರಲ್ಲವೇ ಅವರು ಅವುಗಳಿಗೆ ಪಾಲು ಮಾರುವುದು? ಮೋಸ ಅವರ ಮುಂದೆ ಸುಳಿಯಬಾರದು.ಹಗೆತನ ಮಾಡಿದವರಲ್ಲ. ಮನ ನೋಯುವ ಮಾತು ಗಳನ್ನು ಆಡಿದವರಲ್ಲ. ಒಂದು ವೇಳೆ ತಮ್ಮ ಮೇಲೆ ಯಾರಾದರು ಅಸೂಯಾಂಧರು ಕಕ್ಷಿಗಳಾಗಿ ಏರ್ಪಟ್ಟರೆ ಅವರ ಮೇಲೆ ಪ್ರತಿಕಕ್ಷಿಗಳಾಗಿ ಹೋರಾಡುವವರಲ್ಲ. ಮೌನದಿಂದ ಮೈತ್ರಿಭಾವದಿಂದ ಹಗೆತನವನ್ನು ಜಯಿಸುತ್ತಿದ್ದರು. ಶತ್ರುಗಳನ್ನು ಮಿತ್ರರನ್ನಾಗಿಸುತ್ತಿದ್ದರು. ಕಪಟಾತ್ಮರು ಯಾರಾದರು ಹಾಗೆ ಮಿತ್ರರಾಗಿ ಮಾರ್ಪಡದಿದ್ದರೆ ಅವರ ವಿಷಯದಲ್ಲಿ ತಟಸ್ಥರಾಗಿರುತ್ತಿದ್ದರು. ಅವರ ವಿಷಯದಲ್ಲಿ ಅವರು ಅದೆಂದಿಗೂ ಪ್ರತೀಕಾರ ಪ್ರತಿಕ್ರಿಯೆಗಳನ್ನು ತೋರಿಸುವವರಲ್ಲ. ಪ್ರತಾಪ ಪ್ರತಿಭಟನೆ ಮಾಡುವವರಲ್ಲ.ಪ್ರತಿಷ್ಠೆ ಪ್ರತಿಷೇಧಗಳಿಗೆ ಹೋಗುವವರಲ್ಲ. ರಾಗದ್ವೇಷಗಳನ್ನು ಜಯಿಸಿದ ಯೋಗಿರಾಜರು ಅವರು.: ಮದ ಮತ್ಸರಗಳನ್ನು ಗೆದ್ದ ಗುರುವರ್ಯರು ಅವರು.

ಶಿಷ್ಯ ವಾತ್ಸಲ್ಯ ಅವರಲ್ಲಿ ವಿಶೇಷವಾಗಿತ್ತು. ತಮ್ಮ ಶಿಷ್ಯರ ಸಾಧಕರ ಯೋಗಕ್ಷೇಮವನ್ನು ಹೃದಯಾರೆ ನೋಡಿಕೊಳ್ಳುತ್ತಿದ್ದರು. ಯಾರಾದರು ಕಾಯಿಲೆಯಿಂದ ಮಲಗಿದರೆ ಸ್ವತಃ ಉಪಚರಿಸುತ್ತಿದ್ದರು; ವಿಚಾರಿಸುತ್ತಿದ್ದರು. ತಾವೇ ನಿಂತು ಅವರ ಪಥ್ಯವನ್ನು ನೋಡಿಕೊಳ್ಳುತ್ತಿದ್ದರು. ರೋಗಿಗಳ ಎದುರಿನಲ್ಲಿಯೇ ಕುಳಿತು ಉಚಿತವಾದುದನ್ನೆ ಊಟ ಮಾಡಿಸುತ್ತಿದ್ದರು. ಮಿತಿಮೀರಿ ಉಣ್ಣು ವದು, ಅಗಿಯದೆ ಬೇಗ ಬೇಗ ಉಣ್ಣುವುದು ಅವರಿಗೆ ಆಗದ ವಿಷಯ.ಅಂಥವರನ್ನು ಲಕ್ಷಿಸಿ ನೋಡಿ ಅವರಿಗೆ ಬುದ್ದಿ ಹೇಳುತ್ತಿದ್ದರು. ಊಟಕ್ಕೆ ಮೊದಲೆ ಹೆಚ್ಚಾಗಿ ನೀರು ಕುಡಿಯಕೂಡದೆಂದು ಅದರಿಂದ ಜೀರ್ಣಶಕ್ತಿ ಕುಂದಿ ಪಿತ್ತ ಉದ್ರೇಕವಾಗುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು ಹಲ್ಲಲ್ಲಿ ಅಗಿದಷ್ಟೂ ಒಳಿತು,ಅದರಿಂದ ಲಾಲಾರಸ ಅನ್ನದಲ್ಲಿ ಸಮರಸವಾಗಿ ರುಚಿಯ ಜೀರ್ಣಶಕ್ತಿಯೂ ಹೆಚ್ಚುತ್ತದೆಯೆಂದು ತಿಳಿಹೇಳುತ್ತಿದ್ದರು,ಹತ್ತು ಮಂದಿ ಹೆಚ್ಚಾಗಿ ಕೂಡಿ ಉಂಬುವದನ್ನು ಕಂಡು ಹರಷಿಸುತ್ತಿದ್ದರು,ಪರ್ವ ದಿನಗಳಲ್ಲಿ ಹಬ್ಬದೌತಣವಾದರೆ ಆ ದಿನ ತಮ್ಮ ಪೂಜೆಯನ್ನಾದರು ನಿಯಮಿತವೇಳೆಗೆ ನಿಲ್ಲಿಸಿ ವಟುಗಳ ಪಂಕ್ತಿ ಆಗುವ ವರೆವಿಗೂ ಇದ್ದು, ಉಣ್ಣುವವರ ಪ್ರೀತಿಯನ್ನನುಸರಿಸಿ ಉಣ್ಣಿಸಿ ಉಲ್ಲಾಸಪಡುತ್ತಿದ್ದರು,ಇಲ್ಲದಿದ್ದರೆ ಮುಂದಾಗಿಯೇ ತಮ್ಮ ಪೂಜೆಯನ್ನು ಪೂರೈಸಿಕೊಂಡು ಬಂದು ಪಂಕ್ತಿಯ ಮೇಲಿರುತ್ತಿದ್ದರು. ಒಟ್ಟಿನಲ್ಲಿ ಆ ದಿನದ ಆ ಸಂದರ್ಭವನ್ನು ಅವರು ಕಳೆದು ಕೊಳ್ಳುತ್ತಿರಲಿಲ್ಲ, ಅದರಲ್ಲಿ ಅವರಿಗೆ ಅಷ್ಟೊಂದು ಪ್ರೇಮವಿತ್ತು.

ಬೈಗಿನಲ್ಲಿ ದೀಪಾರಾಧನೆಯಾದೊಡನೆ ಭಜನಾಸ್ಥಳಕ್ಕೆ ತಾವೇ ಮುಂದಾಗಿ ಆಗಮಿಸುತ್ತಿದ್ದರು. ಅವರನ್ನು ನೋಡಿ ಬಿಟ್ಟು ಉಳಿದ ವಟುಗಳೆಲ್ಲ ಬೇಗ ಬರುತ್ತಿದ್ದರು. ಅವರಿರುವಾಗ ಒಂದು ಕ್ರಮದಿಂದ ಭಕ್ತಿಭಾವದಿಂದ ಭಜನೆ ಸಾಗುತ್ತಿತ್ತು. ಮೊದಲು ಹಿರಿಯರು ಅವರ ಪಕ್ಕದಲ್ಲಿ ಕಿರಿಯರು ಹೀಗೆ ಪರಿವಿಡಿದು ಕುಳಿತುಕೊಳ್ಳಬೇಕು, ಪಂಕ್ತಿಯಾಗಿಯೋ ಮಂಡಲಾಕಾರ ವಾಗಿಯೋ ಸ್ವಸ್ತಿಕಾಸನ ಹಾಕಿ ಕುಳಿತು ಕೊಳ್ಳಬೇಕು. ಎಲ್ಲರೂ ಕೈಗಳನ್ನು ಎದೆಯಮೇಲೆ ಜೋಡಿಸಿರಬೇಕು, ಅತ್ತಿತ್ತ ನೋಡಕೂಡದು. ಎಲ್ಲರೂ ಸ್ತೋತ್ರವನ್ನು ತಪ್ಪದೇ ಹೇಳಬೇಕು. ಎಲ್ಲರ ಹಣೆಯಲ್ಲಿ ವಿಭೂತಿ ಧಾರಣವಿರಬೇಕು. ಒಂದೇ ಸ್ವರದಲ್ಲಿ ಪ್ರಾರ್ಥಿಸಬೇಕು. ಇದಿಷ್ಟು ಅವರಿರುವಾಗ ಚಾಚೂ ತಪ್ಪದೆ ನಡೆವ ಕ್ರಮ. ಈ ಕ್ರಮದಿಂದ ಮಾಡುವ ಪ್ರಾರ್ಥನೆಯನ್ನು ಹರ್ಷಚಿತ್ತದಿಂದ ಕೇಳುತ್ತಿದ್ದರು. ಏಕಾಗ್ರತೆಯನ್ನು ತಾಳುತ್ತಿದ್ದರು,

ಅನಂತರ ಅವರವರ ಅಭ್ಯಾಸವನ್ನು ಅವರವರು ಓದಿಕೊಳ್ಳ ಬೇಕು.ಚನ್ನಾಗಿ ಓದುವವರನ್ನು, ಓದಿ ಮುಂದುವರಿವವರನ್ನು ಕಂಡು ಅವರನ್ನು ಆದರಿಸುತ್ತಿದ್ದರು; ಪ್ರೋತ್ಸಾಹಿಸುತ್ತಿದ್ದರು. ಉಳಿದವರಿಗೆ ಅವರನ್ನು ಆದರ್ಶವನ್ನಾಗಿ ತೋರಿಸಿ ಅವರಂತೆ ಓದಲು ಬುದ್ದಿವಾದವನ್ನು ಹೇಳುತಿದ್ದರು. ಮನಸ್ಸಿಗೆ ಬಂದಂದು ಅವರವರು ಓದುತ್ತಿರುವ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುತ್ತಿದ್ದರು. ಸರಿಯಾಗಿ ಒಂದಕ್ಕೂ ಉತ್ತರ ಕೊಡದವರಿಗೆ ಬುದ್ಧಿವಂತರೆ, ಹೀಗೆ ಓದಿದರೆ ಹೇಗೆ ?” ಎಂದು ಮನ ಮುಟ್ಟುವಂತೆ ಆತ್ಮೀಯತೆಯಿಂದ ತಿಳಿ ಹೇಳುತ್ತಿದ್ದರು. ವಿದ್ಯೆಯಲ್ಲಿ ವಕ್ಷ್ಯತ್ವದಲ್ಲಿ ಕುಶಲರಾದವರನ್ನು ಕಂಡರೆ ಅವರಿಗೆ ತುಂಬಾ ಸಂತೋಷ.ಆಗಾಗ ಸಭೆಗಳನ್ನು ಕರೆದು ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಭಾಷಣದ ವಿಷಯವನ್ನು ತಾವೇ ಸೂಚಿಸುತ್ತಿದ್ದರು, ಆ ವಿಷಯದಲ್ಲಿ ಯಾರು ಚನ್ನಾಗಿ ಹೇಳುವರೋ ನೋಡಬೇಕೆಂಬುದೇ ಅವರ ಅಂತರಂಗದ ಆಕಾಂಕ್ಷೆ! ಚನ್ನಾಗಿ ಹೇಳಿದವರನ್ನು ತಮ್ಮ ಅಮರವಾಣಿಯಿಂದ ಹರಸಿ ಹುರುಪಿಸುತ್ತಿದ್ದರು. ತಪ್ಪು ಹೇಳಿದವರನ್ನು ತಿದ್ದುತ್ತಿದ್ದರು. ಪ್ರತಿ ದಿನವೂ ನಡೆಯುವ ಪುರಾಣಕ್ಕೆ ಬಿಡದೆ ದಯಮಾಡಿಸುತ್ತಿದ್ದರು. ಪುರಾಣ ಮುಗಿದ ಮೇಲೆ ಪುರಾಣದಲ್ಲಿ ಬಂದ ವಿಷಯದ ಸಾರಾಂಶವನ್ನು ಹೇಳಲು ತಮ್ಮ ಚಿತ್ತ ಬಂದವರಿಗೆ ಅಪ್ಪಣೆ ಮಾಡುತ್ತಿದ್ದರು. ಚಿತ್ರಗೊಟ್ಟು ಪುರಾಣವನ್ನು ಕೇಳುವರೋ ಇಲ್ಲೋ ಎಂಬುದನ್ನು ಅರಿಯುವುದೇ ಅವರ ಅಂತರಂಗ. ಅಷ್ಟು ದೂರದ ವರೆವಿಗೂ ವಟುಗಳ ಸಾಧಕರ ಜ್ಞಾನಾರ್ಜನೆಯ ಮುನ್ನಡೆಯಲ್ಲಿ ಅವರ ಅಭಿಲಾಷೆ;ಅವರ ಮುನ್ನಿರೀಕ್ಷಣೆ !

ಬೈಗಿನಲ್ಲಿ ಬಾಲಕರೆಲ್ಲ ಹೂವಿನ ಗಿಡಗಳಿಗೆ ನೀರು ಹಾಕಬೇಕು.ಹಾಕುವರೋ ಇಲ್ಲವೋ ಎಂದು ತಾವೇ ಆಗಮಿಸಿ ನಿರೀಕ್ಷಿಸುತ್ತಿದ್ದರು.ಕಡಿಮೆ ಹಾಕಿದರೂ ಅವರಿಗೆ ಆಗುತ್ತಿರಲಿಲ್ಲ. ಅವರಿಂದ ಮರಳಿ ಹಾಕಿಸುತ್ತಿದ್ದರು. ಒಬ್ಬೊಬ್ಬರಿಗೆ ಇಷ್ಟಿಷ್ಟು ಗಿಡಗಳೆಂದು ಹಂಚಿಕೊಡುತ್ತಿದ್ದರು.ಹೂವಿನ ಗಿಡಬಳ್ಳಿಗಳ ಮೇಲೆ ಅವರಿಗೆ ಮೀರಿದ ಪ್ರೇಮ. ಗಿಡಬಳ್ಳಿಗಳು ಹೂವು ಬಿಟ್ಟಂತೆ ಅವರ ಹೃದಯಕಮಲ ಅರಳುತ್ತಿತ್ತು. ಆಕಸ್ಮಿಕವಾಗಿ ಯಾರಾದರೂ ನೀರು ಹಾಕದೆ ಯಾವುದಾದರೂ ಗಿಡ ಬಾಡಿ ನಿಂತಿದ್ದರೆ ಅವರ ಮನಸ್ಸು ಮುಖಗಳೂ ಸಹ ಅಷ್ಟೆ ಬಾಡುತ್ತಿದ್ದವು. ತೊರೆಯನ್ನು ಕಂಡರೆ ಅವರಿಗೆ ತೀರದ ಆನಂದ. ಅದರ ತೀರದಲ್ಲಿಯೆ ಯಾವಾಗಲು ತಂಗಿರುತ್ತಿದ್ದರು. ತೊರೆಯ ನೀರಿನಲ್ಲಿಯೆ ಮಿಂದು ತೃಪ್ತಿ ಪಡುತ್ತಿದ್ದರು. ಈಜುವವರನ್ನು ಕಂಡರೆ ಅವರಿಗೆ  ತುಂಬಾ ಇಷ್ಟ.ಅದರಲ್ಲಿಯೂ ನೀರ ಮೇಲೆ ಪದ್ಮಾಸನ ಹಾಕಿ ತೇಲುವವರನ್ನು ಕಂಡು ಮತ್ತೂ ಸಂತೋಷಿಸುತ್ತಿದ್ದರು. ಅದರಂತೆ ಮಾಡಲು ಅನೇಕರಿಗೆ ಕಲಿಸಿದ್ದರು. ಕೊರಳುದ್ದ ನೀರಲ್ಲಿ ಅದೆಷ್ಟೋ ಗಂಟೆಗಳ ಕಾಲ ಕದಲದೆ ಸ್ವತಃ ನಿಲ್ಲುವ ಅಭ್ಯಾಸ ಅವರಿಗಿತ್ತು. ಜಲದ ಮೇಲೆ ಎಷ್ಟು ಹೊತ್ತಾದರೂ ಲೀಲಾಜಾಲ ವಾಗಿ ತೇಲುತ್ತಿದ್ದರು,

ರಾತ್ರಿ ಶಿವಪೂಜೆ ತೀರಿದ ಮೇಲೆ ಸಾಧಕರು ವಟುಗಳು ೧೦ ಗಂಟೆಯ ವರೆವಿಗೂ ಓದಬೇಕಾದ ನಿಯಮ. ತಾವೂ ಸಹ ಆ ವೇಳೆಯೊಳಗೆ ಪವಡಿಸುತ್ತಿರಲಿಲ್ಲ. ತಮ್ಮ ಮನಸ್ಸಿಗೆ ಬಂದವರನ್ನು ತಮ್ಮ ಬಳಿಗೆ ಕರೆಯಿಸಿಕೊಂಡು ಹಠಯೋಗ ಪ್ರದೀಪಿಕೆಯೋ ಯೋಗಸೂತ್ರವೋ ಇಲ್ಲವೆ ಇನ್ನಾವುದನ್ನಾದರೋ ಓದಿಸಿ ಅರ್ಥವನ್ನು ವಿವರಿಸಲು ಹೇಳುತ್ತಿದ್ದರು.ಅವರು ಸಂಸ್ಕೃತ  ಓದಿ ಬಲ್ಲವರಾಗದಿದ್ದರೂ ತಪ್ಪು ಹೇಳಿದ್ದನ್ನು ತಕ್ಷಣವೇ ಗುರುತಿಸುತ್ತಿದ್ದರು. ಆ ಶಬ್ದಕ್ಕೆ ಆ ಅರ್ಥ ಸರಿಯಾದುದಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. “ಓದು ಒಕ್ಕಾಲು, ಬುದ್ಧಿ ಮುಕ್ಕಾಲು”-ಎಂಬ ನಾಣ್ಣುಡಿ ಯನ್ನು ಅವರಲ್ಲಿ ಪ್ರತ್ಯಕ್ಷ ಮಾಡಿಕೊಂಡಿದ್ದೇವೆ. – ಯೋಗದಿಂದ ಅವರ ಬೌದ್ದಿಕ ಶಕ್ತಿ ಬಲಗೊಂಡಿತ್ತು.

ಯೋಗಾಸನಗಳನ್ನು ಹಾಕುವವರ ಮೇಲೆ, ಯೋಗಸಾಧನೆಯನ್ನು ಮಾಡುವವರ ಮೇಲೆ ಅವರ ಕೃಪಾದೃಷ್ಟಿಯು ಅಮೃತವನ್ನು ಸುರಿಯುತಿತ್ತು, ಯೋಗಾಭ್ಯಾಸದಲ್ಲಿ ಆಸಕ್ತರಾದವರನ್ನು ಕಂಡರೆ ಅವರಿಗೆ ಹಿಡಿಸಲಾರದ ಹರುಷ; ಹೇಳಬಾರದ ಸಂತೋಷ.

ಯೋಗಿರಾಜರಾದ ಅವರು ತಮ್ಮ ಜೀವಿತದಲ್ಲಿ ಅದೆಂದಿಗೂ ಯೋಚಿಸಿದವರಲ್ಲ; ಯಾಚಿಸಿದವರಲ್ಲ, ಅವನ್ನು ಅವರು ಮಾಡುವ ಪ್ರಮೇಯವಿರಲಿಲ್ಲ. ಪ್ರಮೇಯವನ್ನು ತಂದು ಕೊಂಡವರೂ ಅಲ್ಲ; ಕೊಳ್ಳುವವರೂ ಅಲ್ಲ.

ವಿಷಯ ಸುಖ ಬೇಕೆಂದು ಸಂಪತ್ತು ಬೇಕೆಂದು ಅವರೆಂದಿಗೂ ಆಶಿಸಿದವರಲ್ಲ. ಅವುಗಳ ವ್ಯಾಮೋಹಕ್ಕೆ ಅವರು ಒಳಗಾದವರಲ್ಲ.ಅವು ಅವರಿಗೆ ಬೇಕಾಗಿರಲಿಲ್ಲ. ಹಣ ಗಳಿಸಬೇಕೆಂದರೆ ಬೇಕಾದಷ್ಟು ಗಳಿಸಬಹುದಾಗಿತ್ತು.ಹಣ ಅವರಿಗೆ ತೃಣ. ಅದಕ್ಕಾಗಿ ಅವರು ಮನಸ್ಸು ಮಾಡಲಿಲ್ಲ. ಹಣವಂತರು ಅವರ ಯೋಗಕ್ಕೆ ಬೇಕಾದಷ್ಟು ಜನ ಒಲಿದಿದ್ದರು.ಬಿಡಿ ಕಾಸನ್ನೂ ಅಪೇಕ್ಷಿಸಿದವರಲ್ಲ. ಅಯಾಚಿತವಾಗಿ ಅವರಿಂದ ಬಂದುದನ್ನೂ ಸಹ ಅವರು ಮುಟ್ಟುತ್ತಿರಲಿಲ್ಲ. ಸಂಸ್ಥೆಗೋ ಶಿಷ್ಯರಿಗೋ ಕೊಟ್ಟು ಬಿಡುತ್ತಿದ್ದರು. ನಿಜವಾದ ವಿಷಯ ವಿರತಿ ಅವರಲ್ಲಿತ್ತು. ಅದರಿಂದಾಗಿ ಅವರಲ್ಲಿ ಆಶೆ ಆಸಕ್ತಿ ಮೋಹ ಮಮತೆಗಳು ಅವರಲ್ಲಿರಲಿಲ್ಲ. ತೇಜದ ಮುಂದೆ ಯೋಚನೆ ಯಾಚನೆಗಳೆಂಬ ಕಾಳ ತಲೆ ನಿಲ್ಲುವ ಬಗೆ ಹೇಗೆ? ನೀಲಾಕಾಶದಲ್ಲಿ ತೇಲುವ ಮೋಡವನ್ನು ಚಿಂತಾಕ್ರಾಂತರಾಗಿ ಅವರೆಂದಿಗೂ ನೋಡಿದವರಲ್ಲ. ಅವರ ಜೀವನ ಅದೊಂದು ಹೂವಿನ ಬಾಳು.ಹೂವು ದಿನಾಂತ್ಯದಲ್ಲಿ ಹಟಾತ್ತಾಗಿ ಬಾಡುವಂತೆ ಅವರು ಒಮ್ಮಿಗೆ ತಮ್ಮ ಜೀವನಾಂತ್ಯದಲ್ಲಿ ನಗುನಗುತ್ತ ಬಾಡಿದರು. ಮಧ್ಯದಲ್ಲಿ ಬಾಡಿದ ಜೀವನವಲ್ಲ. ಬೇಡಿಬಾಗಿದ ಜೀವನವಲ್ಲ.ಜೀವನಾಂತ್ಯದಲ್ಲಿ ಬಾಡಿದರೆಂಬುದೂ ಸಹ ನಮ್ಮ ದೃಷ್ಟಿಯಲ್ಲಿ; ನಮ್ಮ ದೈಹಿಕ ದೃಷ್ಟಿಯಲ್ಲಿ; ಭೌತಿಕ ಬಗೆಯಲ್ಲಿ.ಅವರ ದೃಷ್ಟಿಯಲ್ಲಿ ಅದೂ ಇಲ್ಲ. ಅದು ಕಂದದ ಹೂವು. ಅದು ತನಗಿರಬೇಕೆಂದು ಆ ಪರಮಾತ್ಮನು ಹೆಬ್ಬಯಕೆಯಿಂದ ಅದನ್ನು ಎತ್ತಿ ತನ್ನಲ್ಲಿರಿಸಿಕೊಂಡನು. ತನ್ನಂತರಂಗದಲ್ಲಿ ಧರಿಸಿಕೊಂಡನು.

ಯೋಗಶಕ್ತಿಯಿಂದ ರಾಜಿಸುವ ಅವರು ರೋಗ ರುಜಿನಗಳಿಂದ ಒಂದು ದಿನವೂ ಸಹ ನೆರಳಿದವರಲ್ಲ. ಯೋಗಿರಾಜರಾದ ಅವರ ಮುಂದೆ ರೋಗಮೃಗಗಳು ಸುಳಿಯುತ್ತಿರಲಿಲ್ಲ; ಸುಳಿಯಲಿಲ್ಲ. ಕೊನೆಯ ವರೆವಿಗೂ ಅವರು ಕಾಯಿಲೆ ಬಂದು ಮಲಗಿದವರಲ್ಲ. ರಸನೇಂದ್ರಿಯವನ್ನು ತಡೆದ ಅವರಿಗೆ ರೋಗಗಳ ಮಾತೆಲ್ಲಿ? ರುಚಿ ರೂಪುಗಳಿಗೆ ಅವರು ಅದೆಂದಿಗೂ ಬಾಯ್ನೀರು ಕರೆದವರಲ್ಲ; ಕಣ್ಣು ಬಿಟ್ಟವರಲ್ಲ. ರೋಗ ರುಜಿನಗಳನ್ನು ರಜೋಗುಣಗಳನ್ನು ಗೆದ್ದ ಋಷಿ ವರ್ಯರು ಅವರು.ರುಜುಕಾಯ ರುಜು ಮಾತುಗಳನ್ನು ಕಾಪಾಡಿದ ಯೋಗಿವರ್ಯರು ಅವರು.

ಕೀರ್ತಿವಾರ್ತೆಗಾಗಿ ಅವರು ಯೋಗಕಲೆಯನ್ನು ಅಭ್ಯಸಿಸಿದವರಲ್ಲ.ಕೀರ್ತಿಯ ಬೆನ್ನು ಬಿದ್ದು ಬಳಲಿದವರಲ್ಲ. ಕರ್ತವ್ಯವೆಂದು ಭಾವಿಸಿ ಅವರು ಯೋಗವನ್ನು ಅಳವಡಿಸಿಕೊಂಡರು. ಕೊನೆಯ ವರೆವಿಗೂ ಅವರು ಅದರಂತೆ ನಡೆದುಕೊಂಡು ಬಂದರು. ಕೀರ್ತಿಗಾಗಿ ಹೆಣಗಿದ್ದರೆ ಅವರು ಕರ್ನಾಟಕದಲ್ಲಿ ಅದ್ವಿತೀಯ ಯೋಗಿಗಳಾಗಿ ಹೆಸರುಗಳಿಸುತ್ತಿದ್ದರು; ಒಸಗೆ ಗೊಳ್ಳುತ್ತಿದ್ದರು.ತಾನಾಗಿಯೆ ತುಂಬಿಕೊಂಡು ಬಂದ ‘ಯೋಗಿರಾಜ” ಎಂಬ ಬಿರುದನ್ನು ಸಹ ಅವರು ಅದೆಂದೂ ಬಳಸಿದವರಲ್ಲ; ಬರೆದವರಲ್ಲ. ಕರ್ತವ್ಯಶೀಲರಾಗಿದ್ದರೆ ವಿನಹ ಕೀರ್ತಿಲೋಲರಾಗಿರಲಿಲ್ಲ. ಕೀರ್ತಿಕಾಂಕ್ಷೆ ಅವರಲ್ಲಿರಲಿಲ್ಲ. ಅವರೊಬ್ಬ ಈ ಕಾಲದ ಗುಪ್ತ ಯೋಗಿಗಳು: ನಿರ್ಲಪ್ತರಾಗಿಗಳು.

ಪ್ರಭುಕುಮಾರ ಪಟ್ಟಾಧ್ಯಕ್ಷರು ಯಾವಾಗಲು ಯೋಗದಕ್ಷರು; ಭೋಗ ನಿರಪೇಕ್ಷರು. ಅವರ ಪುಣ್ಯ ಕಾರ್ಯದಲ್ಲಿ ಕರಣಗಳಲ್ಲಿ ಕಣ್ಣಲ್ಲಿ ಮೊಗದಲ್ಲಿ ಯೋಗದ ಯಥೇಷ್ಟ ಕಳೆ ತುಂಬಿ ತುಳುಕುತ್ತಿತ್ತು. ಯೋಗ ಯೋಗ್ಯವಾದ ಅಂಗರಚನೆ ಅವರದು. ಅವರ ಪ್ರತ್ಯಂಗದಲ್ಲಿಯು ಯೋಗಲಕ್ಷಣವಿತ್ತು;ಯೋಗ ತೇಜವಿತ್ತು. ಈ ಅವರ ಅಂಗದಲ್ಲಿ ಕಾಂತಿ, ಅಂತರಂಗದಲ್ಲಿ ಶಾಂತಿ ಮನೆ ಮಾಡಿದ್ದವು. ಹಟಯೋಗದಿಂದ ಅವರ ಅಂಗವೆಲ್ಲ ಸೌಷ್ಟವಗೊಂಡಿತ್ತು, ಸತ್ಯ ಸುಂದರವಾಗಿತ್ತು. ಅವರ ಹಸ್ತಗಳು ನೀಳವಾಗಿದ್ದವು ಹಣೆ ವಿಶಾಲವಾಗಿತ್ತು. ಎದೆ ಅಗಲಾಗಿತ್ತು. ಮುಖ ಚಂದ್ರಬಿಂಬದಂತಿತ್ತು. ನಿಲುವು ತೀರ ಎತ್ತರಲ್ಲ- ತೀರ ಕುಳ್ಳಾದುದಲ್ಲ. ಶರೀರಕ್ಕೆ ತಕ್ಕದಾಗಿತ್ತು. ಅವರ ಶರೀರ ಹಗುರಾಗಿ ಲವಲವಿಕೆಯಿಂದಿತ್ತು. ಅವರ ಶರೀರ ಅತಿ ಸ್ಥೂಲವಲ್ಲ-ಅತಿ ಕೃಶವಲ್ಲ. ಅವರ ಆ ಅಂಗರಚನೆ ಯೋಗಕ್ಕಾಗಿಯೇ ರಚಿತವಾದುದು. ಸೃಷ್ಟಿಕರ್ತನು ಆ ಮೂರ್ತಿಯ ಚಿತ್ರಣಕಲೆಯಲ್ಲಿ ತನ್ನ ಕುಶಲತೆಯನ್ನೆಲ್ಲ ಬಳಸಿ ಚಿತ್ರಕಲಾಯೋಗಿಯೆಂದೆನಿಸಿದನೆಂದರೆ ಅತಿಶಯೋಕ್ತಿಯಲ್ಲ. ಲಯ ಯೋಗದಿಂದ ಅವರ ಮನಸ್ಸು ಅಂತರಾತ್ಮನಲ್ಲಿ ಲಯವಾಗಿತ್ತು. ಸಂಕಲ್ಪ ವಿಕಲ್ಪ ವಿರಹಿತವಾಗಿತ್ತು. ವೃತ್ತಿ ಶೂನ್ಯವಾಗಿತ್ತು. ಪಂಚಕೋಶಗಳನ್ನು ಪರಿಹರಿಸಿತ್ತು.

ಮಂತ್ರಯೋಗದಿಂದ ಅವರ ಚಿತ್ತ ನಿಶ್ಚಂಚಲವಾಗಿತ್ತು. ಬುದ್ಧಿ ಸ್ಥಿರವಾಗಿತ್ತು. ಅರುವಿನ ಬೆಳಗನೊಳಗೊಂಡಿತ್ತು. ರಾಜಯೋಗದಿಂದ ಅವರ ಅಹಂಕಾರವಳಿದು ನಿರಹಂಕಾರ ನೆಲೆಗೊಂಡಿತು, ಜೀವಗುಣ, ಜೀವಭಾವಗಳು ಜಾರಿಹೋಗಿದ್ದವು. ಶಿವಯೋಗದಿಂದ ಅವರು ಶಿವಯೋಗಿಯೆ ಆಗಿದ್ದರು. ಶಿವಸ್ವರೂಪರೇ ಆಗಿದ್ದರು. ಜೀವಿಸಿಯೂ ಮುಕ್ತರಾಗಿದ್ದರು.ಲೋಕವಾರ್ತೆಯ ಲೋಕಕೀರ್ತಿಯ ಹಂಗು ಹರಿದಿದ್ದರು.ಲೋಕೋತ್ತರ ಲೀಲಾಮೂರ್ತಿಗಳಾಗಿದ್ದರು.

ಲೇಖಕರು : ಪೂಜ್ಯ ಶ್ರೀ ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ

“ತತ್ವ” ಎಂಬ ಸಂಸ್ಕೃತ ಪದಕ್ಕೆ ಬೇರೆ ಬೇರೆ ಅರ್ಥಗಳನ್ನು ಕೊಡುತ್ತೇವೆ. ಉದಾಹರಣೆಗೆ ಸಾಂಖ್ಯರ ಪ್ರಕಾರ ತತ್ವ ಎಂದರೆ ಮನಸ್ಸು ಬುದ್ಧಿ ಮುಂತಾದ 25 ತತ್ವಗಳು. ವಿಶಿಷ್ಠಾದ್ವೈತದ ಪ್ರಕಾರ ತತ್ವಗಳು ಮೂರು (ತತ್ವತ್ತಯ) ಬ್ರಹ್ಮನ್, ಚಿತ್, ಮತ್ತು ಅಚಿತ್, ಹೀಗೆ ಭಾರತೀಯರ ಪ್ರಕಾರ ತತ್ವಜ್ಞಾನ ಅಥವಾ ತತ್ವಶಾಸ್ತ್ರವೆಂದರೆ ಅಂತಿಮ ತತ್ವಗಳ ಜ್ಞಾನ ಎಂದಾಗುತ್ತದೆ. ಪಾಶ್ಚಾತ್ಯ ತತ್ವಶಾಸ್ತ್ರಜ್ಞರು ಅಂಥ ತತ್ವಗಳ ಬಗ್ಗೆ ಚರ್ಚಿಸಿದರೂ, ಅವು ಇರಲು ಸಾಧ್ಯವೇ ಎಂದೂ, ಒಂದು ವೇಳೆ ಇದ್ದರೆ ಅವುಗಳನ್ನು ಕುರಿತು ಚರ್ಚಿಸುವುದು ವಿಜ್ಞಾನದ ಕರ್ತವ್ಯವೇ ಹೊರತು, ತತ್ವಶಾಸ್ತ್ರದ ಕರ್ತವ್ಯವಲ್ಲ ಎಂದು ಅಭಿಪ್ರಾಯಪಡುತ್ತಾರೆ. ಪಾಶ್ಚಾತ್ಯರಿಗೆ ತತ್ವಶಾಸ್ತ್ರ ಕೇವಲ ಒಂದು ಬೌದ್ಧಿಕ ಚಟುವಟಿಕೆಯೇ ಹೊರತು ಜೀವನವನ್ನು ರೂಪಿಸುವ ವಿದ್ಯೆಯಲ್ಲ, ಅದರ ಬಗ್ಗೆ ಚಿಂತಿಸಬಹುದು, ಅದರ ಬಗ್ಗೆ ವಿಫುಲವಾಗಿ ಬರೆಯಬಹುದು. ಆದರೆ ಭಾರತೀಯರ ಪ್ರಕಾರ ತತ್ವಶಾಸ್ತ್ರವು ನಮ್ಮ ಜೀವನವನ್ನು ರೂಪಿಸುವ ಮುಕ್ತಿಗೆ ಮಾರ್ಗದರ್ಶನ ನೀಡುವ ವಿದ್ಯೆ, ಅದು ಮೋಕ್ಷಶಾಸ್ತ್ರ ಅದಕ್ಕೂ ಸೈದ್ದಾಂತಿಕ (Theoretical) ಪ್ರಾಮುಖ್ಯವಿದೆ, ಆದರೆ ಅದಕ್ಕಿರುವ ಅನುಷ್ಠಾನಿಕ (Practical) ಪ್ರಾಮುಖ್ಯ ಹೆಚ್ಚು ಇದೆ. ತತ್ವಜ್ಞಾನವನ್ನು ಪಡೆಯುವುದು ಮುಕ್ತಿ ಪಡೆಯುವುದಕ್ಕೆ ಹೊರತು, ಕೇವಲ ಕುತೂಹಲವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಅಲ್ಲ.

“ತತ್ವಪದಗಳನ್ನು ಸ್ವರವಚನಗಳು ಎಂತಲೂ ಕರೆಯುತ್ತಾರೆ. ಈ ಸ್ವರವಚಗಳು 12ನೇಯ ಶತಮಾನದ ಶಿವಶರಣರ ಕಾಲಕ್ಕಿಂತಲೂ ಪೂರ್ವದಲ್ಲಿ ಇದ್ದಿರಬಹುದು ಎಂದು ಹೇಳಬಹುದು. ಅಕ್ಕ–ಅಲ್ಲಮ ಪ್ರಭುವಿನಂಥವರ ಹಾಡುಗಳನ್ನು ನೋಡುವಾಗ, ಇಂತ ಪ್ರಕಾರ ಒಮ್ಮಗೇ ಹುಟ್ಟಿಕೊಂಡಿತೇ? ಎಂಬ ಬೆರಗು ಮೂಡಿಸುತ್ತದೆ. ಬೆಡಗಿನ ಹಾಡುಗಳು ಹುದುಗಿಕೊಂಡಿರುವ ರಹಸ್ಯಾರ್ಥ, ಅವುಗಳ ಆಕರ್ಷಕ ಬರವಣಿಗೆ ಇವಕ್ಕೂ ಪೂರ್ವದಲ್ಲಿ ಇದ್ದಿರಬಹುದಾದ ಹಾಡುಗಳ ಸಾಧ್ಯತೆಯತ್ತ ಬೆರಳು ಮಾಡಿ ತೋರಿಸುತ್ತದೆ.”

ತತ್(ಪದ) ಎಂದರೆ- ಪರಮಾತ್ಮ, ‘ತ್ವ’ ಎಂದರೆ-ಜೀವಾತ್ಮ. ಜೀವಾತ್ಮ ಮತ್ತು ಪರಮಾತ್ಮಗಳ ತಾದ್ಯಾತ್ಮವೇ ‘ತತ್ವ’ವೆಂದು ಶರಣ ಉರಿಲಿಂಗಪೆದ್ದಿ ಹೇಳುತ್ತಾರೆ. ಮಾನವ ಚರಿತ್ರೆಯ ಉಗಮದ ಜೊತೆಗೆ ದೈವಿಕ ಭಾವನೆ ಕೂಡ ಕಾಣಿಸಿಕೊಂಡಿತೆನ್ನಬೇಕು. ಜಗತ್ತಿನಲ್ಲಿ ಮೊಟ್ಟ ಮೊದಲು ಆದಿತತ್ವ ಮೂಲವಾದ ‘ವಾಕ್’ ಹೊರಹೊಮ್ಮಿತು. ಈ ವಾಕ್‍ರೂಪಿಗಳು ಮಧುರವಾಗಿದ್ದರಿಂದ ಶ್ರುತಿಗಳು ಎನಿಸಿಕೊಂಡವು. ಇವು ಅಪೌರುಷೇಯವಾಗಿ ದೈವ, ಆತ್ಮ ಮುಂತಾದ ವಿಷಯಗಳಿಗೆ ಸಂಬಂಧಿತವಾದ ಈ ಅರಿವು ದರ್ಶಿತವಾದದ್ದು. ಈ ದೈವ ಆತ್ಮಗಳನ್ನು ಕುರಿತು ತಿಳಿಸಿಕೊಡುವ ತತ್ವಗಳೇ ವಚನಗಳು, ಹಾಗೂ ತತ್ವಪದಗಳಾಗಿ ರೂಡಿಯಾಗಿವೆ. ಇವುಗಳನ್ನು ಅರಿತುಕೊಂಡು ನಡೆಯುವುದೇ ಪುರುಷಾರ್ಥಗಳಲ್ಲಿ ಶ್ರೇಷ್ಠವಾದ ಮೋಕ್ಷ/ಮುಕ್ತಿ ದೊರೆಯಲು ಸಾಧ್ಯ. ಭರ್ತೃಹರಿ ಹೇಳಿದಂತೆ, ‘ಲೌಕಿಕ ಭೋಗಗಳು ಕಾಲಕ್ರಮೇಣ ನಮ್ಮನ್ನು ಬಿಟ್ಟು ಹೋಗುತ್ತವೆ. ಅವು ನಮ್ಮನ್ನು ತ್ಯಜಿಸಿದರೆ ನಮಗೆ ದುಃಖವಾಗುತ್ತದೆ. ನಾವೇ ಅವುಗಳನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ.’ ಎಲ್ಲ ಬಗೆಯ ಭೋಗಗಳಿಂದ ಮುಕ್ತವಾದ, ಪರಿಶುದ್ಧವಾದ ನಿರ್ವಿಕಲ್ಪ ಸ್ಥಿತಿಯೇ ಮುಕ್ತಿ, ಶಿವಯೋಗ, ಲಿಂಗಾಂಗ ಸಾಮರಸ್ಯ, ಅನುಭಾವ, ಅದ್ವೈತ, ಕೈವಲ್ಯ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ಮುಕ್ತಿ ಸ್ಥಿತಿಯನ್ನು ಕುರಿತು ತತ್ವಪದ(ಸ್ವರವಚನ)ಗಳು ಹಾಗೂ ವಚನಗಳು ವಿಶಾಲಾರ್ಥದಲ್ಲಿ ಭಿನ್ನಭಿನ್ನವಾಗಿ ಹೇಳಿರುವುದನ್ನು ಕಾಣುತ್ತೇವೆ.

ಶರಣೆ ನೀಲಮ್ಮ ರಚಿಸಿದ ತತ್ವಭರಿತವಾದ ಜೋಗುಳು ಪದ್ಯದಲ್ಲಿ ಅಳಿಯನಾದ ಚನ್ನಬಸವಣ್ಣನ ಮೇಲೆ ಶಿಶುಗಳು ಸಾಕ್ಷತ್ ಶಿವನ ಸ್ವರೂಪದಲ್ಲಿರುವ ಪರಂಜ್ಯೋತಿಗಳು, ಮುಕ್ತಿಯನ್ನು ಹೊಂದಲು ಯೋಗದಲ್ಲಿ ಬರುವ ಕಂಡಲಿನಿ ಶಕ್ತಿಯನ್ನು ಜಾಗೃತ ಮಾಡಿಕೊಳ್ಳುವ ಬಗೆಯನ್ನು ಕುರಿತು ಹೇಳಿ, ಶಿಶುಗಳು ಯಾವುದನ್ನು ಅರಿಯದೇ ಮುಗ್ದತೆಯಿಂದ ಇರುವ ಹಾಗೆ ಮುಕ್ತಿಯನ್ನು ಪಡೆದವರು ಎಲ್ಲವನ್ನು ಅರಿತು ಅರಿಯದವರಂತೆ  ಇರುತ್ತಾರೆ. ಅಂತಹ ಅಳಿಯ ಶಿಶುವಿನ ಮೇಲೆ ಯೋಗದಿಂದ ಮುಕ್ತಿಯನ್ನು ಹೊಂದುವ ಕುರಿತು ರಚಿಸಿದ ಪದ್ಯ,

                              “ಜೋ ಜೋ ಎನ್ನ ಪರಮಹಂಸ

                              ಜೋ ಜೋ ಎನ್ನ ಪರಂಜ್ಯೋತಿ||ಪ||

                              ಗುದವ ಬಿಗಿದೊತ್ತಿ ಅನಲಜ್ವಾಲೆ ಪಲ್ಲವಿಸಿ

                              ಮುದುಡಿಕೊಂಡಿಹ ಸರ್ಪ ಹೆಡೆಯನೆತ್ತಿ

                              ಗದಗದಿಪ ಪವನ ಗ್ರಂತಿಯನೊಡೆದು ಪಶ್ಚಿಮದ

                              ಕದವ ತೆಗೆದೊಳಗೆ ಜ್ಯೋತಿಯ ಕಂಡ ಶಿಶುವೆ||1||”

               ಇಲ್ಲಿ ಯೋಗದಲ್ಲಿ ಬರುವ ಕುಂಡಲಿನ ಶಕ್ತಿಯನ್ನು ಜಾಗೃತ ಪಡಿಸಿಕೊಂಡ ಶಿಶುವಿನ ಕುರಿತು ಹೇಳಿದ ನುಡಿ. ಗುದವ ಬಿಗಿದೊತ್ತಿ ಸಿದ್ದಾಸನ ಹಾಕಿ, ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಿಕೊಂಡು, ವಾಯು ಕುಂಭಕವಾದಾಗ ಅನಲಜ್ವಾಲೆ ಅಂದರೆ ಬಿಸಿಯ ಅಗ್ನಿರೂಪದ ಗಾಳಿ ಮೇಲೆದ್ದಾಗ, ಸರ್ಪಾಕಾರದ ಕುಂಡಲಿನಿ ಜಾಗೃತವಾಗಿ ಸ್ವಾಧಿಷ್ಠಾನ, ಮನಿಪೂರಕ, ಅನಾಹತ, ವಿಶುದ್ಧಿ, ಆಜ್ಞೆಯ, ಬ್ರಹ್ಮರಂದ್ರ ಶಿಖಾಚಕ್ರ, ಪಶ್ಚಿಮ ಹೀಗೆ ಒಂಬತ್ತು ಚಕ್ರಗಳ ಮುಖಾಂತರ ವಾಯು ಎಲ್ಲ ಚಕ್ರಗಳಲ್ಲಿ ಹರಿದಾಡಿದಾಗ ಎಲ್ಲ ಗ್ರಂಥಿಗಳು ತೆಗೆದು ಪಶ್ಚಿಮ ಚಕ್ರದಲ್ಲಿರುವ ಜ್ಯೋತಿಯನ್ನು ಕಾಣುವುದಾಗಿದೆ. ಅಂದರೆ ಮನಸ್ಸನ್ನು ಸಂಪೂರ್ಣವಾಗಿ ಪರಮಾತ್ಮನಲ್ಲಿ ಒಂದಾಗಿಸುವ ಶಿವಯೋಗದ ಸ್ಥಿತಿಯನ್ನು ಮುಕ್ತಿ ಎಂದು ಹೆಳುತ್ತಾರೆ. ಅಂತಹ ಮುಕ್ತಿಯನ್ನು ಕಂಡಿರುವ ಶಿಶುವೆ ಎಂದು ಹೇಳುತ್ತಿದ್ದಾಳೆ. ಈ ವಿಧಾನವು ಮುಕ್ತಿಯನ್ನು ಪಡೆಯುವಲ್ಲಿ ಯೋಗ ದರ್ಶನದಲ್ಲಿ ಹೇಳಿರುವ ಒಂದು ಕ್ರಿಯೆ ಎಂದು ಹೇಳಿದ್ದಾರೆ. ಮುಂದೆ ಈ ಯೋಗ ಜಾಗೃತಿಯ ಕುರಿತು ಹೇಳುತ್ತಿದ್ದಾರೆ.

                              “ಅಂಬೆಗಾಲಡಿಯಿಟ್ಟು ಆಧಾರಮಂ ಬಲಿದು

                              ಅಂಬುಜಾರ ತಾಣದಲ್ಲಿ ನಿಂದು

                              ಕಂಭವನೆ ದಾಟಿ ಮೇಲಣ ಬಾಗಿಲನೆ ಹಾಯ್ದು

                              ಕುಂಭಿನಿಯ ಮೊಲೆವಾಲನುಂಡು ದಣಿಯದ ಶಿಶುವೆ||2||

               ಮುಂದಿನ ನುಡಿಯಲ್ಲಿ ಮಗು ಹೇಗೆ ಅಂಬೆಗಾಲಡಿಯಿಟ್ಟು ನಡಿದಾಡುವಂತೆ ಮುಮುಕ್ಷು ಆಧಾರ ಚಕ್ರಕ್ಕೆ ಜಾಗೃತಗೊಳಿಸಿ, ಎಲ್ಲ ಚಕ್ರಗಳಲ್ಲಿ ಲಿಂಗವನ್ನು ನಿಲ್ಲಿಸುತ್ತ, ಮೇಲೆರಿ ಆಜ್ಞಾ ಚಕ್ರವೆಂಬ ಕಂಬವನ್ನು ದಾಟಿ, ಮೇಲಿನ ಬಾಗಿಲಿನಿಂದ ಅಂದರೆ ಬ್ರಹ್ಮರಂಧ್ರದಲ್ಲಿ ಹಾಯ್ದು ಈ ಬ್ರಹ್ಮರಂಧ್ರದಲ್ಲಿರುವ ಅಮೃತ ಸೇವನೆ ಮಾಡಿದರೆ ದಣಿವು, ಆಯಾಸ, ಹುಟ್ಟು-ಸಾವುಗಳನ್ನು ದೂರ ಮಾಡಿದ ಸ್ಥಿತಿಯನ್ನು  ಪಡೆದವನು ಚೆನ್ನಬಸವಣ್ಣ ಎಂದು ಶಿಶುವಿನ ಮೇಲೆ ಹೇಳಿದ್ದಾಳೆ. ಇಲ್ಲಿ ಕುಂಡಲಿನಿ ಶಕ್ತಿಯನ್ನು ಜಾಗೃತಿಗೊಳಿಸಿ ಮುಕ್ತಿಯನ್ನು ಪಡೆಯುವುದರ ಕುರಿತು ಹೇಳಿದರೆ, ಗುರುವಿನಿಂದ ಅನುಗ್ರಹ ಪಡೆದು ಇಷ್ಟಲಿಂಗಾರಾಧನೆಯ ಮುಂದೆ ಬೇರೆ ಯಾವ ಅಮೃತವು ಸಮಬಾರದೆಂದು ಉರಿಲಿಂಗಪೆದ್ದಿಯು ತಮ್ಮ ವಚನದಲ್ಲಿ,

“ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ?

               ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ?

               ಸದ್ಗುರು ಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ

               ಮಹಾ ಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ?

               ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ.

               ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ?

               ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.||”

               ಗುರುವಿನಿಂದ ಪಡೆದ ಇಷ್ಟಲಿಂಗ ಪೂಜೆಯೆ ಮುಕ್ತಿಯಾಗಿದೆ. ಈ ಮುಕ್ತಿಯನ್ನುವಂತಹ ಅಮೃತವನ್ನು ಸವಿದ ಮೇಲೆ ಬೇರೆ ಯಾವುದೆ ಮುಕ್ತಿಯ ಕುರಿತು ಬಯಸುವುದಿಲ್ಲ. ಗುರುವಿನಿಂದ ಜ್ಞಾನ ಪಡೆದ ಆ ಮಾರ್ಗದಲ್ಲಿ ನಡೆಯುವುದೇ ಮುಕ್ತಿ ಎಂದು ಉರಿಲಿಂಗಪೆದ್ದಿಗಳು ಅನೇಕ ರೂಪಕಗಳನ್ನು ಕೊಟ್ಟು  ಹೇಳಿದರೆ, ಅಲ್ಲಮಪ್ರಭುಗಳು ಜ್ಞಾನ ಸಂಪಾದನೆ ಮತ್ತು ಅದರ ರಕ್ಷಣೆ, ತತ್ವಜ್ಞಾನದ ಹಾಗೂ ಮುಕ್ತಿಯ ವಿವರಣೆಯನ್ನು ಕುರಿತು ತ್ರಿಕರಣಂಗಳು ಬಂಧನವನ್ನುಂಟುಮಾಡಬಲ್ಲವು. ಸಾಧಕನಾದವನು ಅವುಗಳಿಂದ ಮುಕ್ತನಾಗಬೇಕೆಂದು, ತಮ್ಮ ತತ್ವಪದದಲ್ಲಿ:

“ಅಲ್ಲೆ ಬಿದ್ದಿದೆ ಮೂಕುತಿ ಅದ

ಬಲ್ಲಡರಸಿ ತಾರೆ ನಲ್ಲರ ಜಾಣೆ||ಪ||”

ಈ ಪಲ್ಲವಿಯಲ್ಲಿ ಯೋಗಿಯಾದವನ ಅನುಭವ ಜ್ಞಾನದಿಂದ ಮೂಡಿ ಬಂದುದು. ಮೂಕುತಿ-ಮುಕುತಿ, ಮುಕ್ತಿಯೆಂಬ ಮಾನಿಕ್ಯವು ಶರೀರದಲ್ಲಿಯೆ ಇರಲು ಅಲ್ಲಿ ಇಲ್ಲಿ ಎಲ್ಲೆಲ್ಲಿ ಏಕೆ ಹುಡುಕುತ್ತಿರುವಿ. ಅಂಗದಲ್ಲಿಯೇ ಲಿಂಗದೇವನಿದ್ದಾನೆ. ಅರಸಿರಿ, ಹುಡುಕಿರಿ ಜ್ಞಾನಿಗಳ, ಗುರುವಿನ ಸಾನಿಧ್ಯದಿಂದ ಮಾರ್ಗದರ್ಶನ ಪಡೆದು ಮುಕ್ತಿ ಹೊಂದುವಂತವರಾಗಿರೆಂಬುದನ್ನು ಪಲ್ಲವಿ ಮಾತುಗಳು ಸೂಚಿಸುತ್ತವೆ. ಇದೇ ರೀತಿ ಬಸವಣ್ಣನವರು ಸಹ ಮುಕ್ತಿಯನ್ನು ಅರಿಸಿಕೊಂಡು ಬೇರೆ ಕಡೆ ಹೊಗಬೇಡಿ ನಿಮ್ಮಲ್ಲಿಯೇ ಇದೆ. ಎಂದು ತಮ್ಮ ಒಂದು ವಚನದಲ್ಲಿ,

“ಹೊಲಬುಗೊಂಡರಸಬೇಡ, ಬಲಿತು ತರಬೇಡ,

ಒಲಿದೊಮ್ಮೆ ಶಿವಶರಣೆನ್ನಿರಯ್ಯಾ

ಒಂದು ಸೊಲ್ಲಿಗೆ ಮುಕ್ತಿ ಸಿದ್ಧಿ,

ಕೂಡಲಸಂಗಮದೇವಾ ಭಕ್ತಿಲಂಪಟನಾಗಿ.”

ಕಾಯಾ-ವಾಚಾ-ಮನಸಾ ತ್ರಿಕರಣ ಶುದ್ಧಿಯಿಂದ, ಭಕ್ತಿಯಿಂದ ಶಿವನ ಕುರಿತು ಜ್ಞಾನ ಪಡೆದುಕೊಂಡು ಆ ಶಿವನಿಗೆ ಶರಣು ಹೇಳಿ ಶರಣಾದರೆ ಮುಕ್ತಿಯಾಗಲು ಸಾಧ್ಯ. ಈ ಸರಳ ಮಾರ್ಗವನ್ನು ಬಿಟ್ಟು ಮುಕ್ತಿಗಾಗಿ ಸುತ್ತಾಡದೆ, ಯೋಗ್ಯ ಗುರುವಿನ ಮಾರ್ಗದರ್ಶನವನ್ನು ಪಡೆದು ಮುಕ್ತಿಯನ್ನು ಪಡೆದುಕೊ ಎಂದು ‘ಜ್ಞಾನವೇ’ ಮುಕ್ತಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಮುಂದೆ ಅಲ್ಲಮಪ್ರಭುಗಳು ತಮ್ಮ ಸ್ವರವಚನದ ಒಂದನೆ ಚರಣದಲ್ಲಿಯು ಸಹ ಜ್ಞಾನದ ಬಗೆಯನ್ನು ಕುರಿತು, ಲಿಂಗವೇ ಜ್ಞಾನದ ಸಂಕೇತವಾಗಿ ಅದನ್ನು ಮಾನಿಕ್ಯವೆಂದು ರೂಪಕ ಕೊಟ್ಟು ಹೇಳುತ್ತಿದ್ದಾರೆ,

“ಕುಂಭದೊಳಗೊಂದು ಮಾಣಿಕ್ಯ

ಅದು ಬಲೆಯ ಬೀಸಿದಡೆ ಸಿಕ್ಕದು

ಕುಂಭ ಒಡೆಯಿತು, ಬಲೆ ಬರುದಾಯಿತು

ಮಾನಿಕ್ಯ ಗುಹೇಶ್ವರಂಗಾಯಿತಮ್ಮ||1||”

ಈ ಶರೀರ ಅಂಗ, ಇದು ದೇವನ ಅಂಗವೇ! ಅಂಗದೊಳಗೆ ಲಿಂಗವಿದೆ(ಮಾಣಿಕ್ಯವೆಂದರೆ ಲಿಂಗ). ಅದು ಬರಿ ಕ್ರಿಯೆಯಿಂದ ಸಿಗುವಂತಹದ್ದಲ್ಲ. ಅದಕ್ಕೆ ಸತತಾಭ್ಯಾಸ, ತತ್ವಗಳ ಅರಿವು, ಯೋಗಸಿದ್ಧಾಂತದ ತಿಳುವಳಿಕೆ ಸಾಧನೆ ಇವೆಲ್ಲವೂ ಅಂತರಂಗದಲ್ಲಿ ತಗ್ದತವಾಗಿರಬೇಕು. ಆಗ ಒಳಗಿರುವ ಲಿಂಗವು ಕಂಗೊಳಿಸುವುದು. ಮನಸ್ಸಿನ ಕಳವಳವ ನಿಲಿಸಿ ಕರಣಾದಿಗಳನ್ನು(ಕಾಯಾ-ವಾಚಾ-ಮನಸಾ) ವಿಕಾರಗಳೆಡೆಗೆ ಹರಿಯದಂತೆ ತಡೆದು, ಲಿಂಗಗುಣಗಳು ತುಂಬಿ ಕ್ರಿಯೆಯಲ್ಲಿ ತೊಡಗಬೇಕು. ಇಲ್ಲವಾದರೆ ಮಾಡಿದ ಕ್ರಿಯೆಯೇ ಹುಸಿಯಾಗಿ ಸಾಧಕನ ಸಾಧನೆ ವ್ಯರ್ಥವಾಗುತ್ತದೆಯೆನ್ನುತ್ತಾರೆ ಪ್ರಭುದೇವರು. ಸುಜ್ಞಾನವಿಡಿದು ಸತ್ಕ್ರೀಯನ್ನಾಚರಿಸಿದಾಗ ದೇಹಭಾವವಳಿದು, ದೇಹದಲ್ಲಿನ ಲಿಂಗಕಳೆ, ಮುಕ್ತಿ ಮಾಣಿಕ್ಯವಾಗಿ ತೋರುವುದು.

ಶರಣ ಸೊಡ್ಡಳ ಬಾಚರಸ ಮುಕ್ತಿ ದೊರೆಯಬೇಕಾದರೆ ಮನಸ್ಸು ನಿರ್ಮಲವಾಗಿರಬೇಕು ಎಂಬುದರ ಕುರಿತು,

“ಚಿತ್ತದಲ್ಲಿ ನಿರ್ಮಲನಾಗಿಪ್ಪಡೆ

ಮುಕ್ತಿ ಬೇರುಂಟೇ ಹೇಳಾ?”

ಎಂದು ಪ್ರಶ್ನೆಯನ್ನು ಕೇಳುವುದರ ಮುಖಾಂತ ಬುದ್ಧಿಯಲ್ಲಿ, ಮನಸ್ಸಿನಲ್ಲಿ ನಿರ್ಮಲವಾಗಿದ್ದರೇನೇ ಮುಕ್ತಿ. ಮತ್ತೊಂದು ’ಮುಕ್ತಿ’ ಬೇರೆ ಇಲ್ಲವೇ ಇಲ್ಲ ಎನ್ನುತ್ತಾನೆ. ಚಿತ್ತವನ್ನು ನಿರ್ಮಲವಾಗಿಟ್ಟುಕೊಳ್ಳುವುದೆಂದರೆ ಹೇಗೆ? ಅಂತರಂಗ ಬಹಿರಂಗಗಳೆರಡೂ ನಿರ್ಮಲವಾಗಿರಬೇಕು. ಬಹಿರಂಗವನ್ನು ನಿರ್ಮಲವಾಗಿಟ್ಟುಕೊಳ್ಳುವುದು ಸರಳ, ಹೊರಗಿನ ದೇಹದ ಮಲವ ತೊಳೆಯಬಹುದಲ್ಲದೆ ಮನವ ತೊಳೆಯಬಹುದೇ ಒಳಗಿನ ಮನಸ್ಸಿನ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳವುದು ಹೇಗೆ? ಹೇಳುವ  ಎಲ್ಲ ಆಚಾರಗಳನ್ನು ಗುರುಕೃಪಾಮುಖದಿಂದ ಅಷ್ಟಾವರಣಗಳನ್ನು(ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ)ಗಳನ್ನಾಗಿ, ಪಂಚಾಚಾರಗಳನ್ನು(ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಹಾಗೂ ಭೃತ್ಯಾಚಾರ)ವನ್ನಾಗಿಯೂ ಷಟ್‍ಸ್ಥಲವನ್ನು (ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಹಾಗೂ ಐಕ್ಯಸ್ಥಲ)ವನ್ನಾಗಿಯೂ ಮಾಡಿಕೊಂಡು ಆಚರಣೆಯಲ್ಲಿ ತರುವುದು. ಇನ್ನೂ ಸರಳವಾಗಿ ಪ್ರಯೋಗದ ಮೂಲಕ ಹೇಳುವುದಾದರೆ- ಒಂದು ಬಾಟಲಿ(ದೇಹ)ಯಲ್ಲಿ ಮಸಿ(ಹೊಲಸು)ತುಂಬಿದೆ. ಆ ಬಾಟಲಿಯಲ್ಲಿ ಮಸಿಯನ್ನು ತೆಗೆದು ಶುದ್ಧ ನೀರನ್ನು ತುಂಬಬೇಕಾಗಿದೆ, ನಳದ ಮುಖಾಂತರ ನೀರಿನ ಧರೆಯನ್ನು ಹರಿಸುವುದು. ಮಸಿಯೆಲ್ಲ ಹೊರಹೋಗುತ್ತದೆ. ಹೀಗೆಯೇ ನೀರಿನ ಧಾರೆ ಹೆಚ್ಚಾದಂತೆ- ಮಸಿಯೆಲ್ಲ ಹೊರಹೋಗಿ ಶುದ್ಧ ನೀರಿನಿಂದ ತುಂಬುತ್ತದೆ. ಹೀಗೆಯೇ ಗುರುವಿನ ಜ್ಞಾನ(ಅರಿವಿನ)ದ ಧಾರೆಯೇ ಶುದ್ಧನೀರು. ಮನಸ್ಸಿನ (ಅಂತರಂಗದ ಕಲ್ಮಶ) ಅಶುದ್ಧತೆಯೆಲ್ಲ ಹೊರಹೋಗಿ ಚಿತ್ತ ಶುದ್ಧಿಯಾಗುತ್ತದೆ. ಅದಕ್ಕೆ ಈ ಜ್ಞಾನವನ್ನು ದೊರಕಿಸುವ ಮೂಲ ವ್ಯಕ್ತಿಯಾದ ಗುರುವಿನ ಸೇವೆ ಮಾಡಬೇಕು ಎಂದು ಮುಕ್ತಾಯಕ್ಕನ ವಚನ,

“ಜ್ಞಾನಮೂಲ ಗುರುಸೇವೆ ಎಂಬೆನು.

ಐಶ್ವರ್ಯಮೂಲ ಲಿಂಗಾರ್ಚನೆ ಎಂಬೆನು.

ಮೋಕ್ಷ ಮೂಲ ಘಟಸಂತೃಪ್ತಿ ಎಂಬೆನು ಅಜಗಣ್ಣ ಲಿಂಗವೆ.”

ಈ ಮೇಲೆ ತಿಳಿಸಿದ ಸೊಡ್ಡಳ ಬಾಚರಸನ ಸ್ವರವಚನದಂತೆ ಮುಕ್ತಿ ದೊರೆಯಲು ಚಿತ್ತ ಶುದ್ಧವಾಗಿರಬೇಕು. ಆ ಚಿತ್ತ ಶುದ್ಧವಾಗಿರಬೇಕೆಂದರೆ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕು. ಅದಕ್ಕೆ ಜ್ಞಾನದ ಅವಶ್ಯಕತೆ ಇದೆ. ಈ ಜ್ಞಾನವನ್ನು ಕೊಡುವ ಗುರುವಿನ ಸೇವೆಯನ್ನು ಕಾಯಾ, ವಾಚಾ, ಮನಸಾ ಮಾಡಿದಾಗ ಮಾತ್ರ ಜ್ಞಾನದ ಕುರುಹು ಆಗಿರುವ ಇಷ್ಟಲಿಂಗವನ್ನು ಕರುಣಿಸುವನು. ಆ ಇಷ್ಟಲಿಂದ ಅರ್ಚನೆಯಿಂದ ದೈಹಿಕವಾಗಿ, ಮಾನಸಿಕವಾಗಿ ಐಶ್ವರ್ಯ ವೆಂಬ ಆರೋಗ್ಯ ಶಾಂತಿ ಸಿಗುವುದು. ಇದುವೇ ಮೋಕ್ಷ/ಮುಕ್ತಿ ಎಂದು ಮುಕ್ತಾಯಕ್ಕ ಹೇಳುತ್ತದ್ದಾಳೆ.

ಈ ಮುಕ್ತಿ ದೊರೆಯಬೇಕಾದರೆ ಸದಾವಕಾಲ ಭಗವಂತನ ನಾಮಸ್ಮರಣೆ ಮಾಡುತ್ತ ಸ್ವತಃ ಭಗವಂತನಾಗುವನು ಎಂದು ಅಲ್ಲಮಪ್ರಭುಗಳು ತಮ್ಮ ಒಂದು ತತ್ವಪದದಲ್ಲಿ,

“ಭೂತದ ಕೈಯಲೊಂದರುವೆ! ಅದು

ವೇತಾಳನುದ್ದಕ್ಕೆ ನಿಂದಿತು!

ಭೂತ ಸತ್ತಿತು ವೇತಾಳನತ್ತಿತ್ತು!!

ಅರುವೆ ಗುಹೇಶ್ವರನೊಳಗಾಯಿತಮ್ಮ|”

ಇಲ್ಲಿ ಬರುವ ಭೂತ ಪದವೆಂದರೆ ಆತ್ಮ(ದೆವ್ವವಲ್ಲ) ವೆಂದರ್ಥ! ಆತ್ಮವೇ ಪರಮಾತ್ಮ!. ಪರಮಾತ್ಮನ ಭಾವವನ್ನು ಮನದಲ್ಲಿ ಮೂಡಿಸಿಕೊಂಡಲ್ಲಿ ಪರಮಾತ್ಮನ ಭಾವವೇ ತೋರುವುದು. ಕನಸಿನಲ್ಲೂ ಮನಸ್ಸಿನಲ್ಲೂ ಆತನ ನಾಮಸ್ಮರಣೆ ಮಾಡುತ್ತಿದ್ದರೆ, ಆತನ ಗುಣಗಾನ ಮಾಡುತ್ತಿದ್ದರೆ ಸಾಕ್ಷಾತ ಶಿವನೇ ಪ್ರತ್ಯಕ್ಷನಾಗುತ್ತಾನೆ. ‘ಯದ್ಭಾವಂ ತದ್ಭವತಿ’ ಎಂಬಂತೆ ನಾವು ಯಾವ ರೀತಿಯಲ್ಲಿ ವಿಚಾರ ಮಾಡುತ್ತೇವೆಯೋ ಆ ರೀತಿ ನಾವಾಗುತ್ತೇವೆ. ‘ವಿಚಾರ’ ಮತ್ತು ‘ಆಚಾರ’ ಒಂದಾಗಿರುವುದೇ ಲಿಂಗಧಾರಿಯಾದವನ ನಿಜ ನಡವಳಿಕೆ. ನಿರ್ಮಲ ಮನಸ್ಸಿನಿಂದ ಆತನನ್ನು ನೆನೆದರೆ ಆತ ನಮ್ಮನ್ನೆತ್ತಿಕೊಳ್ಳಬಲ್ಲ. ಜೀವಭಾವ ಅಳಿದಾಗ ಪರಮಾತ್ಮನುಳಿಯುತ್ತಾನೆ. ಪರಮಾತ್ಮನೆಂದರೆ ಅರಿವು, ಸುಜ್ಞಾನ, ತತ್ವಜ್ಞಾನದ ಪ್ರತೀಕ. ಇದುವೇ ಒಂದರ್ಥದಲ್ಲಿ ಪರತತ್ವವು. ಇದನ್ನೇ ಅಲ್ಲಮನು ವೇತಾಳ(ಪರಮಾತ್ಮ) ಅಥವಾ ಪರಮಾತ್ಮ ಶಾಶ್ವತನು. ಆತ್ಮ ಬೇರೆಯಲ್ಲ, ಪರಮಾತ್ಮ ಬೇರೆಯಲ್ಲ, ಎಂಬ ಅರಿವೇ ಗುರುವಾಗಿದ್ದಾನೆ. ಆ ಅರಿವೇ ಗುಹೇಶ್ವರನೊಳಗಾಯಿತ್ತೆಂಬುದೆ ಮುಕ್ತಿ ಸ್ಥಿತಿಯಾಗಿದೆ.

ಇದೇ ರೀತಿ ವೈರಾಗ್ಯದ ನಿಧಿ ಅಕ್ಕ ಮಹಾದೇವಿಯು ಪರಮಾತ್ಮನ ನಾಮಸ್ಮರಣೆ ಮಾಡಿದವರೆಲ್ಲರೂ ಮುಕ್ತಿ ಹೊಂದಿದರು ಎನ್ನುವುದಕ್ಕೆ, ವಚನ:

“ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,

ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ

ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ ಜನ್ಮ ಬಳಿಕಿಲ್ಲ.

ಚನ್ನಮಲ್ಲಿಕಾರ್ಜುನದೇವರದೇವನ ನೆನೆದು

ಪಂಚಮಹಾಪಾತಕರೆಲ್ಲರು ಮುಕ್ತಿವಡೆದರೆಂದು !”

ಎಷ್ಟೋ ಜನ್ಮದ ಪುಣ್ಯದ ಫಲದಿಂದ ಮಾನವ ಜನ್ಮಕ್ಕೆ ಬಂದಿದ್ದೇವೆ, ಅಕ್ಕ ಹೇಳುವ ಹಾಗೆ 84 ಲಕ್ಷ ಯೋನಿಗಳಲ್ಲಿ ಹುಟ್ಟಿ, ಸತ್ತು, ಹುಟ್ಟಿ ಶ್ರೇಷ್ಟವಾದ ಮಾನವ ಜನ್ಮ ಇದಾಗಿದೆ. ಆದ್ದರಿಂದ ಶಿವನಾಮಸ್ಮರಣೆಯನ್ನು ನೆನೆಯುವುದರಿಂದ ಎಷ್ಟೋ ಜನ ಮುಕ್ತಿಯನ್ನು ಪಡೆದಿದ್ದಾರೆ. ಆದ್ದರಿಂದ ಶಿವನ ಕುರಿತು ನೆನೆಯಿರಿ, ಎಂದು ಅದನ್ನು ಬಿಟ್ಟು ಹಗಲು ರಾತ್ರಿಯನ್ನದೆ ಹಲವು ಚಿಂತೆಗಳಲ್ಲಿ ಕಳೆದರೆ ಜೀವನ ವ್ಯರ್ಥವಾಗಿ ಹೋಗುವುದು ಎಂದು  ಆಯುಷ್ಯ ತೀರುವ ಮುನ್ನ ಶಿವನಾಮಸ್ಮರಣೆ ಎಂಬ ಬುತ್ತಿ ಕಟ್ಟಿಕೊಂಡು ಇರುವ ಜೀವಿತಾವಧಿಯಲ್ಲಿಯೇ ಮುಕ್ತಿಯನ್ನು ಸಾಧಿಸುವುದಾಗಿದೆ.

ಮುಕ್ತಿಯನ್ನು ಶಿವಯೋಗವೆಂತಲು ಕರೆಯುತ್ತಾರೆ, ಈ ಶಿವಯೋಗದ ಕುರಿತು 14-15ನೇ ಶತಮಾನದ ಶ್ರೀ ಮನ್ ನಿಜಗುಣಶಿವಯೋಗಿಗಳು ಸಹ ಕೈವಲ್ಯ ಪದ್ಧತಿಯ “ಯೋಗ ಪ್ರತಿಪಾದನ ಸ್ಥಲ”ದ ಕೊನೆಯ ಭಾಗದಲ್ಲಿ ಹೇಳಿದ “ಶಿವಯೋಗ” ವಿಷಯಕ ಪದ್ಯಗಳಲ್ಲಿ ಕ್ರಮವಾಗಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಪೂಜಾಕ್ರಮಗಳನ್ನೇ ಮೂರು ಹಾಡುಗಳಲ್ಲಿ ಹೇಳಲಾಗಿದೆ.

“ಪರತರ ಶಿವಲಿಂಗವೆಳಸಿ ನಿನಗಾಗಿ |

ಕರಕಂಜದೊಳು ಕಾಣಿಸಿತು ಯೋಗಿ ಯುಜಿಸು||ಪ||”

ನಿನ್ನ ಉದ್ಧಾರಕ್ಕಾಗಿ ಗುರುಕಾರುಣ್ಯದಿಂದ ಪರತರವಾದ ಶಿವಲಿಂಗವು ಬಯಸಿ ನಿನಗಾಗಿ ಹಸ್ತಾರವಿಂದದಲ್ಲಿ ಕಾಣಿಸಿರುವುದು ಅರ್ಚಿಸಿ, ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ಹೊಂದು ಎಂದು ಶಿವಯೋಗಿಗಳು ಶಿವಯೋಗ(ಮುಕ್ತಿ)ದ ಸ್ಥಿತಿಯನ್ನು ಕುರಿತು ಹೇಳಿದ್ದಾರೆ. ಮುಂದಿನ ಪದ್ಯದಲ್ಲಿ,

“ಪ್ರಾಣಲಿಂಗವಿದನು ಗುರುವಿ | ನಾಣತಿಯೊಳು ಕೇಳಿ ನೋಡಿ |

ಮಾಣದೇಕ ಚಿತ್ತದಿಂದ ಧ್ಯಾನಿಪನೆ ಕೃತಾರ್ಥನು||ಪ||”

ಸದೃಪು ಇಷ್ಟ(ಕ್ರೀಯಾ) ಲಿಂಗವಾದರೆ, ಚಿದೃಪವು ಪ್ರಾಣ(ಜ್ಞಾನ) ಲಿಂಗ. ಇಷ್ಟಲಿಂಗವನ್ನಿತ್ತ ದೀಕ್ಷಾಗುರುವೆ ಶಿಕ್ಷಾಗುರುವಾಗಿ ಪ್ರಾಣಲಿಂಗವನ್ನು ಕರುಣಿಸುತ್ತಾನೆ. ಇದರಿಂದಾಗಿ ಗುರುವಿನ ಆಜ್ಞೆಗೆ ಲಿಂಗಾರಾಧಕನು ಬದ್ಧನಾಗಿರಬೇಕು. ಇಲ್ಲವಾದರೆ ಪ್ರಾಣಲಿಂಗದ ನೆಲೆಕಲೆಗಳು ತಿಳಿಯವು.

“ಭಾವಲಿಂಗವನೆ ಬಿಡದೆ ನೀನು ಪರಿ

ಭಾವಿಸು ಭೇದವಿಲ್ಲದೆ ಯೋಗಿ||ಪ||”

ಶ್ರೀ ಗುರು ತನ್ನ ವೇಧಾ ದೀಕ್ಷೆಯಿಂದ ಕರುಣಿಸಿದ ಭಾವ(ತೃಪ್ತಿ) ಲಿಂಗವನ್ನು ತಪ್ಪದೆ ನಿತ್ಯತೃಪ್ತನಾದ ನಿಜಗುರುದೇವನಲ್ಲಿ ಸಹಜಸಿದ್ಧವಾಗಿದ್ದ ಪರಮಾನಂದ ಸ್ವರೂಪ ಭಾವಲಿಂಗವು. ಹಸ್ತಮಸ್ತಕ ಸಂಯೋಗ ಮಾತ್ರದಿಂದ ತಾನೆ ತಾನಾಗಿ ಪ್ರಾಣಲಿಂಗಯೋಗಿಯಾಗಿ ಆವಿಷ್ಕರಿಸುತ್ತದೆ. ಅದನ್ನು ಪರಿಭಾವಿಸುವುದೆ ಪ್ರಾಣಲಿಂಗಯೋಗಿಯ ಕರ್ತವ್ಯವಾಗಿದೆ. ಮುಂದೆ 38ನೆಯ ಪದ್ಯದಲ್ಲಿ “ಶರಣಸ್ಥಲ”ದ ವರ್ಣನೆಯು ಸ್ಪಷ್ಟವಾಗಿ ಬಂದಿದೆ.

“ಸತಿಪತಿಗಳೀವರ ಸಮರತಿ ಸುಖದ ಬಾಳುವೆಗೆ|

ಪ್ರತಿಯುಂಟೆ ಲೋಕದೊಳು ನೋಡೆ ಲಲಿತಾಂಗಿ||ಪ||

ಬೆರಸಿ ಬೇರೆನಿಸದೆರಡಾಲಿ ಕಲ್ಲುಗಳೇಕ|

ಸುರಸವಾದಂತೆ ಪತಿ ಶಂಭುಲಿಂಗ||

ಶರಣ ಸತಿಯ ಕೂಡಿ ಪರತರಾನಂದದೊಳು|

ಪರವಶನೈದಿಹುದನುಪಮಿಸಲು ಬಹುದೆ?||3||”

ಸತಿಪತಿಗಳಿವರ ಸಮಪ್ರೀತಿಯ ಕೂಟದ ಆನಂದದ ಬಾಳಿಗೆ ಜಗತ್ತಿನಲ್ಲಿ ಹೋಲಿಕೆಯಿರುವುದೇ? ಹಾಗೆ ಆಧ್ಯಾತ್ಮದಲ್ಲಿ ಅಂಗಸತಿ ಲಿಂಗಪತಿ ಎಂಬ ಇವರಿಬ್ಬರ ಸುಖಕ್ಕಿಂತ ಬೇರೆ ಸುಖ ಇನ್ನಾವುದು. ಎಂದು ಪ್ರಶ್ನಿಸಿ ವಿಚಾರಿಸು. ಎಂದು ಶಿವಸುಂದರಾಂಗಿಯಾದ ಸಂವಿತ್ ಶಕ್ತಿಯನ್ನು ಕೇಳುತ್ತಿದ್ದಾರೆ. ಮುಂದೆ ಕೊನೆಯ ನುಡಿಯಲ್ಲಿ  ಎರಡು ಆಲಿಕಲ್ಲುಗಳು ಕರಗಿ ಏಕವಾದಂತೆ ಬೆರಸಿ ಬೇರಾಗದಂತಿರುವ ಪತಿ ಶಂಭುಲಿಂಗನು, ಸತಿ ಶರಣಾಂಗನು ಕೂಡಿ ಅಂದರೆ ಏಕರಸವಾಗಿ ಪರಮ ಪರಿಣಾಮದಲ್ಲಿ ಪರವಶರಾಗುವರು. ಇದುವೆ ಶಿವಯೋಗ(ಮುಕ್ತಿ)ವಾಗಿದೆ. ಅದನ್ನೆ ಬೇರೊಂದಕ್ಕೆ ಉಪಮಿಸಿ ಹೇಳಲು ಸಾಧ್ಯವಿಲ್ಲ.

ಇದೆಲ್ಲದರ ಮೇಲಿಂದ ಶ್ರೀಮನ್ನಿಜಗುಣ ಶಿವಯೋಗಿಗಳ “ಕೈವಲ್ಯ ಪದ್ಧತಿ”ಯೆಂಬ ಉದ್ಗ್ರಂಥದಲ್ಲಿ ಹೇಳಿದ “ಶಿವಯೋಗವು” ಶಿವಶರಣರ “ಷಟ್‍ಸ್ಥಲ” ಮಾರ್ಗವೇ ಅಹುದೆಂದು ಸಿದ್ಧವಾಗುವುದು. ಆದರೆ ಶಿವಯೋಗಕ್ಕೂ ಇನ್ನುಳಿದ ಬೇರೆ ಯೋಗಗಳಿಗೂ ಭೇದವೇನು? ಎಂಬ ಪ್ರಶ್ನೆಯು ಮನದಲ್ಲೇಳುವುದ ಸಹಜ. ಮಾನವ ದೇಹದೊಳಗಿರುವ ಆತ್ಮವನ್ನು ಒಂದಿಲ್ಲೊಂದು ಬಗೆಯಿಂದ ಪ್ರಕಟಿಸಿಕೊಳ್ಳವುದೇ ಪ್ರತಿಯೊಂದು ಯೋಗದ ಉದ್ದೇಶವಾಗಿದೆ. ಆದರೆ ಆ ಆತ್ಮನು ಪರಮಾತ್ಮನದೇ ಒಂದು ಅಂಶವಾಗಿದ್ದಾನೆಂದು, ಅಥವಾ ಪರಮಾತ್ಮನೇ ಪ್ರಾಣಿಗಳ ಹೃದಯದಲ್ಲಿ ಆತ್ಮರೂಪದಿಂದ ಕುಳಿತಿದ್ದಾನೆಂದು ತಿಳಿದು ಆತ್ಮನಲ್ಲಿ ಪರಮಾತ್ಮನನ್ನು ಭಾವಿಸಿ ಧ್ಯಾನಿಸುವದೇ “ಶಿವಯೋಗ”ದ ಮುಖ್ಯ ರಹಸ್ಯವಾಗಿದೆ. ಹೀಗೆ ಶಿವಯೋಗ(ಮುಕ್ತಿ)ವು ಮುಖ್ಯವಾಗಿ ಸಗುಣ-ನಿರ್ಗುಣ ತತ್ವಗಳೆರಡರ ಸಮನ್ವಯವನ್ನು ಸಾಧಿಸುತ್ತದೆ.

               ನೇತ್ರ, ಶ್ರೋತ್ರ, ಘ್ರಾಣ, ಜಿಹ್ವೆ, ಸ್ಪರ್ಶನಗಳು ಲಿಂಗಮುಖವಾಗಿ, ಲಿಂಗತನುಗಳಾಗಿ ಅಂಗನಲ್ಲಿ ಲಿಂಗ ಸನ್ನಿಹಿತವಾಗಿ ಲಿಂಗದಲ್ಲಿ ಅಂಗವಾಗಿರ್ದ ಪ್ರಾಣಲಿಂಗಿ ಪರಮ ಸುಖಿಯೆಂದು ವಚನಿಸಿದ ಚೆನ್ನಬಸವಣ್ಣನವರ ವಚನ-

                              ‘’ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖಿ

                              ಅಂಗಲಿಂಗ ಸಂಗದಿಂದ ಪರಮಸುಖ ನೋಡಯ್ಯಾ

                              ಅಂಗಲಿಂಗ ಸಂಗ ಸುಖವನೂ

                              ಕೂಡಲಚನ್ನಸಂಗಯ್ಯಲ್ಲಿ ಲಿಂಗೈಕ್ಯನೆ ಬಲ್ಲ||”

ಪರಮಪಾವನವಾದ ಪ್ರಾಣಲಿಂಗವು, ಪರಬ್ರಹ್ಮವು ಮುಕ್ತಿದಾಯಕವು, ಜಗದಾಧಾರವು, ಅನಾಧಿ, ಅನಂತ ಅಖಂಡ ಸೃಷ್ಟಿಗೆ ಕಾರಣವೆಂಬುದನ್ನು ಅರಿತು. ಗುರುಕರುಣೆ ಸಾಧನೆಯಿಂದ ಸಾಕ್ಷಾತ್ಕರಿಸಿಕೊಂಡು ಸದ್ಭಾವದಿಂದ ಪೂಜಿಸುವವನು ಪ್ರಾಣಲಿಂಗಿಯು ಅವನೇ ಅಂಗಲಿಂಗಿಯು. ಅದುವೇ ಮುಕ್ತಿಸ್ಥಿತಿಯಾಗುವುದು.

—–

ಪರಾಮರ್ಶನ ಗ್ರಂಥಗಳು

•             ಡಾ.ಎಲ್.ಬಸವರಾಜು. ‘ಶಿವದಾಸ ಗೀತಾಂಜಲಿ’ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು.1990

•             ಡಾ.ವೀರಣ್ಣ. ರಾಜೂರ(ಸಂ), ‘ಶಿವಶರಣೆಯರ ವಚನ ಸಂಪುಟ’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1993, ಪು-30. ವ.82

•             ಡಾ.ವೀರಣ್ಣ ರಾಜೂರ(ಸಂ) ‘ಕೈವಲ್ಯ ಸಾಹಿತ್ಯ ಸಂಪುಟ’ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಮುರುಘಾಮಠ ಧಾರವಾಡ. 2019

•             ಡಾ. ವೀರಣ್ಣ ರಾಜೂರ(ಸಂ), ‘ಸ್ವರವಚನ ನಿರ್ವಚನ’ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ, ಮುರುಘಾಮಠ ಧಾರವಾಡ. 2019

•             ಡಾ.ಎಂ.ಎಂ.ಕಲಬುರ್ಗಿ, ‘ಸಂಕೀರ್ಣ ವಚನ ಸಂಪುಟ-1’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 1993.

•             ಡಾ. ವೀರಣ್ಣ ರಾಜೂರ ‘ಶಿವಯೋಗ ಪ್ರಥೀಪಿಕೆ: ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ 1981,

•             ಡಾ.ಎಸ್.ಆರ್. ಚೆನ್ನವೀರಪ್ಪ, ‘ಮುಕ್ತಿಯ ಪರಿಕಲ್ಪನೆ’ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ -2006

•             ತಿ.ಸ್ವಾಮಿ ಹರ್ಷಾನಂದ, ‘ಜೀವನ್ಮುಕ್ತಿ ವಿವೇಕ’, ಶ್ರೀ ರಾಮಕೃಷ್ಣಾಶ್ರಮ, ಮೈಸೂರು-1980

•             ಲಿಂಗರಾಜು(ಸಂ), ‘ಅನಾದಿಯ ಅನುಭಾವದ ಸೆಲೆ’, ತತ್ವಪದ ಪ್ರವೇಶಿಕೆ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯಮಾಲೆ ಸಂ-01, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.2017

ಲೇಖಕರು : ಪೂಜ್ಯ  ವೀರಬಸವ ದೇವರುಆಸಂಗಿ

ಭಾರತ ಇತಿಹಾಸದಲ್ಲಿ ಯೋಗ ಒಂದು ದೊಡ್ಡ ವಿಜ್ಞಾನವೇ ಹೌದು. ಮನುಷ್ಯ ಯಾವಾಗಲೂ ನಿದ್ರೆ-ಕನಸುಗಳ ಹಿಂದೆ ಬಿದ್ದು ತನ್ನ ನಿಜ ಜೀವನವನ್ನು ಮರೆತು ಬದುಕುತ್ತಿರುವನು. ಆದರೆ ಯೋಗ ನಿಜವಾದ ಜೀವನವನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ.

ಯೋಗ ಎಂದರೆ? ತನ್ನನ್ನು ತಾನು ತಿಳಿಯುವ ಸ್ಥಿತಿಯೇ ಯೋಗ. ವಿಷಯೇಂದ್ರಿಗಳ ನಿವೃತ್ತಿಯೇ ಯೋಗ, ಅಂತರಂಗದ ಅರಿವೇ ಯೋಗ.

ಮನುಷ್ಯನು ತನ್ನ ದೀರ್ಘಾಯುಷ್ಯದಲ್ಲಿ ಅರ್ಧ ಆಯುಷ್ಯವನ್ನು ನಿದ್ರೆಗೆ, ವ್ಯಸನಕ್ಕೆ, ಹಗಲು ಕನಸುಗಳಿಗೆ ಕಳೆದು ತನ್ನ ತಾ ಮರೆತು ಹೋಗುತ್ತಾನೆ. ಆದರೆ ಯೋಗ ಸಾಧಕನನ್ನು ಈ ಸ್ಥಿತಿಯಿಂದ ಜಾಗೃತಗೊಳಿಸಿ ಸ್ಥಿರ ರೂಪವನ್ನಾಗಿಸಿ ಸಾಧನಾ ಪಥದತ್ತ ಕೊಂಡೊಯ್ಯುತ್ತದೆ. ಸಾಧಕನಲ್ಲಿ ಅಚಲವಾದ ಧೈರ್ಯ ವಿಚಲವಾಗದ ಬುದ್ಧಿ ಅರಿತುಕೊಳ್ಳುವ ಜ್ಞಾನ ಸ್ಥಿರವುಳ್ಳ ಮನಸ್ಸನ್ನು ಕೊಟ್ಟು ಸಾಧಕನನ್ನು ಯಾವಾಗಲೂ ಎಚ್ಚರದಿಂದಿರಿಸುತ್ತದೆ.

ಈಗಿನ ಯೋಗ ಬರಿ ವ್ಯಾಯಾಮವಲ್ಲ. ಶರೀರ ದಂಡನೆಯಲ್ಲಿ ಇದು ಜಾಗೃತಿಯ ದಾರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಪೂರ್ಣಗೊಳಿಸುವ ದಾರಿ. ಯೋಗ ಒಂದು ಶಕ್ತಿಯಾಗಿ ಸಾಧಕನ ದಾರಿಯನ್ನು ಸರಳಗೊಳಿಸುತ್ತದೆ.

ಒಂದೊಂದು ಯೋಗವೂ ಒಂದೊಂದು ರೀತಿಯಲ್ಲಿ ಸಾಧಕನ ಮೇಲೆ ಪ್ರಭಾವ ಬೀರುತ್ತದೆ. ಭಕ್ತಿ ಯೋಗ ಮನಸ್ಸಿಗೆ, ಜ್ಞಾನ ಯೋಗ ಬುದ್ಧಿಗೆ, ಕರ್ಮಯೋಗ ಇಂದ್ರಿಯಕ್ಕೆ, ಹಠ ಯೋಗ ಶರೀರಕ್ಕೆ ಹೀಗೆ ಯೋಗಗಳು ಸಾಧಕನ ಮೇಲೆ ಪ್ರಭಾವಿತಗೊಳಿಸಿ ಸಾಧಕನಲ್ಲಿ ಶಕ್ತಿಯನ್ನು ತುಂಬುತ್ತವೆ.

ಅಷ್ಟಾಂಗ ಯೋಗಗಳು ಸಾಧಕನಿಗೆ ಸೋಪಾನವಾಗಿವೆ. ಅಂದರೆ ಮೆಟ್ಟಿಲುಗಳಾಗಿವೆ. ಸಾಧನೆಯ ಪ್ರಾರಂಭ ಸ್ಥಿತಿ ಹೇಗಿರಬೇಕು, ಮಧ್ಯಮ ಸ್ಥಿತಿ ಹೇಗೆ, ಕೊನೆಯ ಸ್ಥಿತಿ ಯಾವುದು? ಎಂದು ಸೂಚಿಸುತ್ತವೆ. ಯಮ, ನಿಯಮ, ಆಸನ, ಪ್ರಾಣಾಯಾಮಗಳು ಆರಂಭ ಸ್ಥಿತಿಯಾಗಿ, ಪ್ರತ್ಯಾಹಾರ, ಧಾರಣಗಳು ಮಧ್ಯಮ ಸ್ಥಿತಿಯಾಗಿ, ಧ್ಯಾನ, ಸಮಾಧಿ, ಕೊನೆಯ ಸ್ಥಿತಿಯಾಗಿ ಸಾಧಕನಲ್ಲಿ ಬದಲಾವಣೆ ತರುತ್ತಾ ಹೋಗುತ್ತವೆ.

ಯೋಗ ಸಾಧನೆಯಲ್ಲಿ ಸಾಧಕನ ಅವಸ್ಥೆಗಳು ಹೇಗಿರಬೇಕೆಂಬ ವಿಷಯದ ಕುರಿತು ಪತಂಜಲಿ ಯೋಗ ಸೂತ್ರಗಳಲ್ಲಿ ಬಹಳ ಅದ್ಭುತವಾಗಿ ತಿಳಿಸಿದ್ದಾರೆ. ಮಾನಸಿಕ ರೋಗಗಳಿಂದ ಹೇಗೆ ನಿವೃತ್ತಿ ಹೊಂದಬಹುದು ಎಂದು ಹೇಳಿದ್ದಾರೆ. ಪತಂಜಲಿಯ ಎರಡನೇ ಸೂತ್ರದಂತೆ “ಯೋಗಶ್ಚಿತ್ತವೃತ್ತಿ ನಿರೋಧಃ” ಎನ್ನುವಂತೆ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದೇ ಯೋಗವೆಂದು ಹೇಳುತ್ತಾರೆ. ಏಕೆಂದರೆ ಮನಸ್ಸು ಎಲ್ಲದಕ್ಕೂ ಕಾರಣವಾಗಿರುವುದರಿಂದ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ “ಮನೇವ ಮನುಷ್ಯಾನಂ ಕಾರಣಂ ಬಂಧ ಮೋಕ್ಷಯೋ” ಎನ್ನುವ ಹಾಗೆ ಮನಸ್ಸು ಸಾಧಕನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗಿರುವುದರಿಂದಲೇ ಪತಂಜಲಿ ಮಹರ್ಷಿಗಳು ಈ ಸೂತ್ರವನ್ನು ಹೇಳಿದ್ದಾರೆ.

ಸಾಧಕ ಯಾವಾಗಲೂ ಅಭ್ಯಾಸದಲ್ಲಿ ಇರಬೇಕು. ಅಭ್ಯಾಸ ಇರಬೇಕು. ಅಭ್ಯಾಸದಲ್ಲಿ ನಿರತನಾದ ಸಾಧಕ ಕ್ರಿಯಾಶೀಲತೆಯಿಂದ ಇರುತ್ತಾನೆ. ಅದಕ್ಕೆ ಪತಂಜಲಿ ಮಹರ್ಷಿಗಳು “ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ” ನಿರಪೇಕ್ಷತವಾದ ಅಭ್ಯಾಸ ವಿರತವಾದ ಅಭ್ಯಾಸದಿಂದ ತನ್ನನ್ನು ತಾನು ಅರಿಯಲು ಸಾಧ್ಯ. ಅಪೇಕ್ಷೆಯಿಂದ ಮಾಡಿದ ಅಭ್ಯಾಸ ವ್ಯರ್ಥವಾದಲ್ಲಿ ಕೋಪ ಹುಟ್ಟುತ್ತದೆ. ಕೋಪದಿಂದ ಸಾಧಕನ ಮನ ವಿಚಲಿತವಾಗುತ್ತದೆ. ಅದಕ್ಕೆ ನಿರಪೇಕ್ಷಿತ ಅಭ್ಯಾಸ ಬಹಳ ಮುಖ್ಯವೆಂದು ತಿಳಿಸುತ್ತಾರೆ.

ಯೋಗವೆಂದರೆ ಕೂಡುವಿಕೆ, ಒಂದಾಗುವಿಕೆ. ಆತ್ಮ-ಪರಮಾತ್ಮನನ್ನು ಕೂಡುವುದು ಎಂದರ್ಥ. ಧ್ಯಾನದಿಂದ ತನ್ನೊಳಗೆ ಇರುವ ದೇವರನ್ನು ಕೂಡುವುದಾಗಿದೆ. ಇಂದ್ರಿಯಗಳನ್ನು ಭಾವನೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಜ್ಞಾನವನ್ನು ಹೊಂದಿ ಪರಮ ಮುಕ್ತಿಯನ್ನು ಹೊಂದುವ ದಾರಿ ಇದಾಗಿದೆ.

   ಶರಣರೊಬ್ಬರು ಹೇಳಿರುವ ಹಾಗೆ,

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ

ಚಿತ್ತದಲ್ಲಿ ನಿರಪೇಕ್ಷೆ, ವಿಷಯಗಳಲ್ಲಿ ಉದಾಸಿನ

ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ

ನೆಲೆಗೊಂಡ ಬಳಿಕ ಸೌರಷ್ಟ್ರ ಸೋಮೇಶ್ವರ ಲಿಂಗ ಬೇರಿಲ್ಲ ಕಾಣಿರೊ.

ಆದಯ್ಯ ಶರಣರು ತನ್ನ ತಾನರಿದವನೆ ತಾನೆ ದೇವರಾಗುತ್ತಾನೆ. ಎಂಬುದನ್ನು ತಿಳಿಸಿದ್ದಾರೆ.

ಈಗಿನ ದಿನಮಾನದಲ್ಲಿ ಯೋಗವು ಬಹಳ ಮುಖ್ಯವಾದ ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕರೋನಾ ಎನ್ನುವ ರೋಗದಿಂದ ಬಾಧಿತನಾಗಿ ಖಿನ್ನನಾಗುತ್ತಿದ್ದಾನೆ. ಇಂತಹ ರೋಗಗಳಿಂದ ಮುಕ್ತವಾಗಲು ಆಸನ ಪ್ರಾಣಾಯಾಮಗಳು ಬಹಳ ಮುಖ್ಯವಾಗಿವೆ. ಜೊತೆಗೆ ಮಾನಸಿಕ ಸ್ಥೈರ್ಯ ಶಾರೀರಿಕ ಸದೃಢತೆಯನ್ನು ಯೋಗ ಕೊಡುತ್ತದೆ. ಆದಕಾರಣ ಪ್ರತಿಯೊಬ್ಬರೂ ಯೋಗ ಮಾಡಿರಿ ರೋಗ ದೂರ ಮಾಡಿರಿ ಎನ್ನುವುದೇ ನಮ್ಮ ಪ್ರಾರ್ಥನೆ.

ನಾನು ಶಿವಯೋಗಮಂದಿರದ ಒಬ್ಬ ಸಾಧಕನಾಗಿ ನನಗೆ ಯೋಗವನ್ನು ಅರಿಯಲು ಸಾಧ್ಯವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಕೃಪೆಯಿಂದ ಕನ್ನಡ ನಾಡಿನಲ್ಲಿ ಯೋಗವನ್ನು ಮಹತ್ವವಾದ ಆರೋಗ್ಯ ನಿಧಿಯನ್ನು ಈ ನಾಡಿಗೆ ಪರಿಚಯಿಸಿದರು. ಶ್ರೀ ಶಿವಯೋಗಮಂದಿರದಲ್ಲಿ ಹಠಯೋಗ ಮತ್ತು ಶಿವಯೋಗವನ್ನು ಮತ್ತು ಷಟ್ ಕ್ರಿಯಾದಿಗಳನ್ನು ಹೇಳುವ ಮುಖಾಂತರ ಈ ನಾಡಿಗೆ ಅನೇಕ ಶಿವಯೋಗಿ ಸಾಧಕರನ್ನು ಕೊಟ್ಟ ಮಹಾಸಂಸ್ಥೆ ಶ್ರೀ ಶಿವಯೋಗಮಂದಿರ. ಈ ನಾಡಿಗೆ ಯೋಗವನ್ನು ಪರಿಚಯಿಸಿದ ಮಹಾ ಚೇತನಕ್ಕೆ ಅನಂತ ಅನಂತ ಶರಣುಗಳು.

ಶ್ರೀ ಶಿವಯೋಗಮಂದಿರದ ಯೋಗ ಸಾಧನೆಗೈದ ಶಿವಯೋಗ ಸಿದ್ಧರು.

ಹಠಯೋಗ         –         ಪೂಜ್ಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು  ಕಂಚಗಲ್ ಬಿದರಿ

ರಾಜಯೋಗ       –         ಶ್ರೀ ಮ.ನಿ.ಪ್ರ ಲಿಂ. ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ                                   

ಕರ್ಮಯೋಗ-                 ಪೂಜ್ಯ ಶ್ರೀ ರುದ್ರಮುನಿ ಶಿವಯೋಗಿಗಳು   ಕಪನಳ್ಳಿ  ಶಾಖಾ ಶಿವಯೋಗಮಂದಿರ

ಜ್ಞಾನಯೋಗ       –         ಪೂಜ್ಯ ಶ್ರೀ ಜ.ಚ.ನಿ. ಮತ್ತು ಗಿರಿಯಾಪುರದ ಪೂಜ್ಯ ಶ್ರೀ ಸದಾಶಿವ ಶಿವಾಚಾರ್ಯರು

ಶಿವಯೋಗ         –         ಶ್ರೀ ಮ.ನಿ.ಪ್ರ. ಸದಾಶಿವ ಸ್ವಾಮಿಗಳು ವಿರಕ್ತಮಠ ಹಾನಗಲ್ಲ

                                         ಮತ್ತು  ಶ್ರೀ ಮ.ನಿ.ಪ್ರ.  ಅನ್ನದಾನ ಸ್ವಾಮಿಗಳು ಹಾಲಕೇರಿ

ಭಕ್ತಿಯೋಗ         –         ಪೂಜ್ಯ ಶ್ರೀ ನಾಲ್ವತವಾಡದ ವೀರೇಶ್ವರ ಶರಣರು ಸೋಲ್ಲಾಪೂರ

ನಾದಯೋಗ       –         ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳು ಮತ್ತು ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳು

                                      ವೀರೇಶ್ವರ ಪುಣ್ಯಾಶ್ರಮ ಗದಗ

                              –             

ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ

(ಲೇಖಕರ ಕುರಿತು……..

ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.

ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.

೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ  ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು )

“Each soul is potentially divine. The goal is to manifest this divine within, by controlling nature, external and internal. Do this either by work, or worship, or psychic control, or by philosophy, or by one, or more, or all of these-and be free.”  – Swami Vivekananda

ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲಿ ಯೋಗವು ಒಂದು. ಯೋಗಶಬ್ದದ ವ್ಯಾಖ್ಯೆಯನ್ನು ಬೇರೆ ಬೇರೆ ಜನರು ಬೇರೆ ಬೇರೆ ಪ್ರಕಾರ ಮಾಡಿರುವರು. ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಅದನ್ನು ಸ್ಥಿರಪಡಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತುಬಿಡುವುದೂ ಮತ್ತು ಧ್ಯಾನವನ್ನೂ ವಿಷಯ ತನ್ಮಯತೆಯನ್ನೂ ಬಲಿಸುವುದಕ್ಕಾಗಿ ಕುಂಭಕ, ಪೂರಕ, ರೇಚಕಗಳ ದ್ವಾರಾ ಸ್ಥೂಲ ಶರೀರದೊಳಗಿನ ಮಲಿನತೆಯನ್ನು ನಾಶಮಾಡಿ ವ್ಯಾಧಿಗಳನ್ನು ಗೆಲಿಯುವುದೂ ಯೋಗದ ಉದ್ದೇಶಗಳು. ಮೇಲಾಗಿ ಯೋಗದಿಂದ ಅಂತರಂಗ ಬಹಿರಂಗಗಳ ಶುದ್ಧಿಯಾಗುವದಲ್ಲದೆ ಈಶ್ವರ ಧ್ಯಾನವು ಬಲಪಡುವುದು.

ಆವಕಾಲದಲ್ಲಿ ಯೋಗವು ಉದ್ಭವಿಸಿತೆಂಬುದನ್ನು ಅದರ ಉತ್ಪಾದಕ ರಾರೆಂಬುದನ್ನು ಖಂಡಿತವಾಗಿ ಈಗ ಹೇಳಲು ಸಾಧ್ಯವಿಲ್ಲ. ಪ್ರಾಚೀನ ಗ್ರಂಥಗಳಾದ ಉಪನಿಷತ್ತುಗಳಲ್ಲಿ ಅಲ್ಲಲ್ಲಿ ಯೋಗಕ್ಕೆ  ಸಂಬಂಧಿಸಿದ ವಾಕ್ಯಗಳು ಕಂಡುಬರುವವು. ಬೌದ್ಧರ ಪ್ರಾಚೀನ ಮತ್ತು ಪವಿತ್ರವಾದ ಪುಸ್ತಕಗಳಲ್ಲಿ ಅನೇಕ ಕಡೆಗೆ ಯೋಗಶಾಸ್ತ್ರದ ವರ್ಚಸ್ವವೂ ಅನುಕರಣೆಯೂ ಕಂಡುಬರುವವು .ಭಗವಾನ್ ಬುದ್ಧದೇವನು ಪೂರ್ವಾಶ್ರಮದಲ್ಲಿ ಅತಿ ಕಠೋರವಾದ ಯೋಗಸಾಧನೆಯನ್ನೇ ಮಾಡಿದನೆಂದು ಪ್ರತೀತಿಯಿದೆ. ಇಷ್ಟೇ ಅಲ್ಲ ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ,ಕೇವಲ ಅಸ್ತಿಪಂಜರಮಯವೂ   ಆದ ಆತನ ಶಿಲಾ ಪ್ರತಿಮೆಗಳೂ ಇನ್ನೂ ಅನೇಕ ಕಡೆಗೆ ದೊರೆಯುವವು.’ ಗ್ರೀಕ ಅರಸನಾದ ಅಲೆಕ್ಸಾಂಡರನು ಸಮಗ್ರ ದೃಷ್ಟಿಯನ್ನು ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ಕ್ರಿ.ಶ.ಪೂ. ೩.೨೬ರಲ್ಲಿ ನಮ್ಮ ದೇಶವನ್ನೊಳ ನುಗ್ಗಿದಾಗ ಅನೇಕ ಯೋಗಿಗಳನ್ನು ಕಂಡಿದ್ದನಂತೆ. ಇವೆಲ್ಲ ಕಾರಣಗಳಿಂದ ಯೋಗವು ಪ್ರಾಚೀನತಮವೆಂಬುದು ನಿರ್ವಿವಾದವಾದ ಮಾತು.

ಆದರೂ ಆಯಾ ಕಾಲಗಳಲ್ಲಿ ಅಂದರೆ ಉಪನಿಷತ್ ಮತ್ತು ಬೌದ್ಧಕಾಲಗಳಲ್ಲಿಯೋಗವು ಅಸ್ತಿತ್ವದಲ್ಲಿದ್ದರೂ ಅನಿಶ್ಚಿತ ಸ್ವರೂಪ (Unsystematised form) ದಲ್ಲಿಯೇ ಇತ್ತೆಂದೂ, ಅದಕ್ಕೆ ನಿಶ್ಚಿತಸ್ವರೂಪವನ್ನು ಕೊಟ್ಟು, ಷಡ್‌ದರ್ಶನಗಳಲ್ಲೊಂದಾಗುವಂತೆ ಮಾಡಲು ಯತ್ನಿಸಿದವರಲ್ಲಿ ಯೋಗ ಸೂತ್ರಕಾರರೇ ಮೊದಲನೆಯವರೆಂದೂ ಕೆಲವು ವಿದ್ವಾಂಸರ ಮತವು. ಯೋಗಸೂತ್ರಕ್ಕೂ ಮೊದಲಿನವೆಂದು ಗಣಿಸಲ್ಪಡುವ ಗ್ರಂಥಗಳಲ್ಲಿ ಯೋಗ ಶಬ್ದವನ್ನು ನಿಯಮಿತವಾದ ಒಂದೇ ಅರ್ಥದಲ್ಲಿ ಉಪಯೋಗಿಸಿಲ್ಲವೆಂದೂ, ಯೋಗವು ಷಡ್‌ದರ್ಶನಗಳಲ್ಲೊಂದು ಮಹತ್ವದ ಸ್ಥಾನವನ್ನಾಕ್ರಮಿಸಿದ ನಂತರವೇ “ಯೋಗಶ್ಚಿತ್ತವೃತ್ತಿ ನಿರೋಧಃ’ ಎಂಬ ವ್ಯಾಖ್ಯೆಯು ಸರ್ವತ್ರ ಪ್ರಚಲಿತವಾಯಿತೆಂದೂ ಅವರ ಹೇಳಿಕೆಯು, ಪ್ರಸ್ಥಾನತ್ರಯಗಳಲ್ಲೊಂದಾದ ಭಗವದ್ಗೀತೆ ಯಲ್ಲಿಯೂ ಕೂಡ ಯೋಗ ಶಬ್ದವನ್ನು ಭಕ್ತಿ, ಜ್ಞಾನ, ಕರ್ಮ ಮೊದಲಾದ ಶಬ್ದಗಳೊಡನೆ ಜೋಡಿಸಿ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗವೆಂಬುದಾಗಿ ಉಪಯೋಗಿಸಿರುವುದು ಅರಿದಾದ ಮಾತಲ್ಲ.” ಯೋಗದರ್ಶನದ ಅನೇಕಾಂಶಗಳು ಭಗವದ್ಗೀತಾಕಾರರಿಗೆ ಗೊತ್ತಿದ್ದವೆಂಬುದು ನಿಜವು; ಆದುದರಿಂದ ಮೇಲೆ ಸೂಚಿಸಿದ ಕೆಲವು ವಿದ್ವಾಂಸರ ಮತವು ತೀರ ಅನಾದರಣೀಯವಲ್ಲ.

ಯೋಗ ದರ್ಶನದ ಪಿತರೆಂದು ಹೆಸರಾದ ಪತಂಜಲ ಮಹರ್ಷಿಗಳಿಂದತ್ತಿತ್ತಲಾಗಿ ಯೋಗಶಾಸ್ತ್ರವು ಬಲು ವಿಪುಲವಾಗಿ ಬೆಳೆದು, ಅಣಿಮಾ, ಗರಿಮಾ,ಲಘಿಮಾ, ಮಹಿಮಾ ಮೊದಲಾದ ಅಷ್ಟಸಿದ್ಧಿಗಳನ್ನು ಸಂಪಾದಿಸುವ ವಿದ್ಯೆಯೆಂದೂ, ಸಿದ್ದಿಗಳನ್ನು ತಿರಸ್ಕರಿಸಿದರೆ ಈಶ್ವರ ಸಿದ್ಧಿಯ ಮಾರ್ಗವೆಂದೂ ಗಣಿಸಲ್ಪಡಹತ್ತಿತ್ತು. ಅದರ ಓಘವು ಇಷ್ಟಕ್ಕೆ ನಿಲ್ಲಲಿಲ್ಲ ಅನುಭವದಿಂದ ಕಂಡುಹಿಡಿಯಲಸಾಧ್ಯವಾದ

ಅನೇಕ ವಿಷಯಗಳು ಬರಬರುತ್ತ ಅದರಲ್ಲಿ ಸೇರಿ ಯೋಗವೆಂದರೆ ಆರಿಗೂ ತಿಳಿಯದಂಥ ಮತ್ತು ತಿಳಿಹೇಳದಂಥ ಒಂದು ವಿದ್ಯೆ (Mysticism)ಯಾಯಿತು. ಇತ್ತಿತ್ತಲಾಗಿ ಆಗಿ ಹೋದ ಗ್ರಂಥಕಾರರಂತೂ ತಮ್ಮ ಅಸಂಗತ ಮತ್ತು ಅಸಂದಿಗ್ಧವಾದ ಬರಹಗಳಿಂದ ಯೋಗ ವಿದ್ಯೆಯಲ್ಲಿದ್ದ ಅಲ್ಪ ಸ್ವಲ್ಪ ನಿಷ್ಠೆಯನ್ನೂ ನಂಬುಗೆಯನ್ನೂ ಕಳೆದುಬಿಟ್ಟಿರುವರು. ಸ್ವಾಮಿ ವಿವೇಕಾನಂದರ ಆರೋಪವಾದರೂ ಹೀಗೆ ಇರುವುದು. ಗ್ರಂಥಕಾರರು ಹೆಚ್ಚು ಹಳಬರಿದ್ದಷ್ಟು ಹೆಚ್ಚು ತಥ್ಯಾಂಶಗಳು ಅವರ ಗ್ರಂಥಗಳಲ್ಲಿ ಕಂಡುಬರುವವು.

ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ,ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಗಳೆಂದು ಎಂಟು ಅಂಗಗಳಿರುವವು. ಇವುಗಳಲ್ಲಿ ಮೊದಲಿನವೆರಡು ಸದಾಚಾರ ಮತ್ತು ನೀತಿಯನ್ನು ಬೆಳೆಯಿಸುವ ಮಾರ್ಗಗಳು. ಅಧ್ಯಾತ್ಮಿಕೋನ್ನತಿಗೆ ನೀತಿಯೇ ತಳಹದಿಯು, ನಮ್ಮಭೌತಿಕ ವ್ಯವಹಾರದಲ್ಲಿಯೂ ಕೂಡ ನೀತಿಯನ್ನು ಬಿಟ್ಟರೆ ಬಾಳುವೆಯೇ ಹಾಳು. ಮೂರನೆಯಾದದ ಆಸನವು ಶಾರೀರಿಕ ಮತ್ತು ಮಾನಸಿಕ ಚಲನವಲನಗಳನ್ನು ಸರಿಯಾಗಿ ಕಾಯ್ದಿಡಲು ಅನುಕೂಲವಾಗುವುದು. ಯೋಗವನ್ನು ಬಲಿಸುತ್ತಹೋದಂತೆ ಸಾಕಷ್ಟು ಕಾಲ ಪರಿಶ್ರಮವಿಲ್ಲದೆ ಒಂದೇ ಸ್ಥಿತಿಯಲ್ಲಿರುವುದಕ್ಕೋಸುಗ ಇದರ ಉಪಯೋಗವು ಪ್ರಾಣಾಯಾಮದಿಂದ ಶರೀರದೊಳಗಿನ ಮಲಿನತೆಯನ್ನು ಶ್ವಾಸೋಚ್ಛಾಸದ ದ್ವಾರಾ ಹೊರಗೆ ಹಾಕಲು ಸಹಾಯವಾಗುವುದು. ಶರೀರದಲ್ಲಿ ಮಲಿನತೆಯನ್ನಿರಗೊಟ್ಟರೆ ವ್ಯಾಧಿಗಳಿಗೀಡಾಗುವದಲ್ಲದೆ ಮನಸ್ಸು ಮಲಿನವಾಗುವುದು. ಮನಸ್ಸು ಮಲಿನವಾಗಿದ್ದರೆ ಯೋಗವು ಎಂದಿಗೂ ಸಾಧ್ಯವಾಗಲಾರದು. ಪ್ರತ್ಯಾಹಾರ ದಿಂದ ಶರೀರವು ಬಲು ಸ್ಥೂಲವಾಗದಂತೆಯೂ ಬಲು ಕ್ಷೀಣವಾಗದಂತೆಯೂ ಇಡಲು ಬರುವುದು. ಉಳಿದ ಅಂಗಗಳಾದ ಧಾರಣ, ಧ್ಯಾನ, ಸಮಾಧಿಗಳು ಮನಸ್ಸಿಗೆ ಹೆಚ್ಚಾಗಿ ಸಂಬಂಧಿಸಿರುವವು. ಯೋಗ ಶಾಸ್ತ್ರಜ್ಞರು ಅಷ್ಟಾಂಗಗಳಲ್ಲಿ ಅನೇಕ ಭಾಗಗಳನ್ನು ಮಾಡಿ ಯೋಗದರ್ಶನವನ್ನು ಅತಿ ವಿಸ್ತಾರವಾದ ಶಾಸ್ತ್ರಗಳ ಲ್ಲೊಂದನ್ನಾಗಿ ಮಾಡಿರುವರು. ಪತಂಜಲ ಮಹರ್ಷಿಗಳು ಇವುಗಳ ವ್ಯಾಖ್ಯೆಯನ್ನುಹೇಗೆ ಮಾಡಿರುವರೆಂಬುದನ್ನು ಕೆಳಗಿನ ಟಿಪ್ಪಣಿಗಳಿಂದ ಕಂಡುಕೊಳ್ಳಬಹುದು. ಈ ಎಂಟು ಅಂಗಗಳು ಅತಿ ಮಹತ್ವವಾದವು. ಇವು ಯೋಗ ಸಾಧನೆಯ ಎಂಟು ಪಾವಟಿಗೆಗಳೆಂದರೂ ಅಡ್ಡಿಯಿಲ್ಲ. ಇವುಗಳ ಸಿದ್ದಿಯಿಂದಲೇ ಶಾರೀರಕ ಮತ್ತು ಮಾನಸಿಕ ವೃತ್ತಿಗಳನ್ನು ಸ್ವಾಧಿನದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.

ಯೋಗವೇತೃಗಳು ಯೋಗವನ್ನು ಮಂತ್ರಯೋಗವೆಂದೂ ಲಯಯೋಗ ವೆಂದೂ, ಹಠಯೋಗವೆಂದೂ, ರಾಜಯೋಗವೆಂದೂ ನಾಲ್ಕು ವಿಧವಾಗಿ ಹೇಳುವರು. ಓಂಕಾರ ಮೊದಾಲದ ಮಂತ್ರಗಳನ್ನು ಜಪಿಸುವವರು ಮಂತ್ರಯೋಗಿಗಳೆಂದೂ, ಮನೋಮಾರುತನೊಡನೆ ಕೂಡಿದ ಚಿತ್ರವನ್ನು ಆತ್ಮಧೇಯದಲ್ಲಾಗಲೀ ಅಥವಾ ನಾದದಲ್ಲಾಗಲೀ ತಲ್ಲೀನವನ್ನಾಗಿ ಮಾಡುವವರು  ಲಯಯೋಗಿಗಳೆಂದೂ, ಅಷ್ಟಾಂಗ ಮಾರ್ಗಗಳಿಂದಲೂ, ಮುದ್ರಾಕರಣ ಬಂಧುಗಳಿಂದ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿ ಗಳೆಂದೂ, ಮನೋವೃತ್ತಿಯಿಲ್ಲದವರೂ ಜ್ಞಾನದಿಂದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದವರೂ ರಾಜಯೋಗಿಗಳೆಂದೂಸಿ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ರಾಜಯೋಗವೇ ಮಿಗಿಲಾದುದೆಂದು ಎಲ್ಲರ ಮತವು. ಎಲ್ಲದರ್ಶನಗಳು ಅಂತಿಮ ಧೈಯವಾದ ಸತುವನ್ನು ಕಂಡು ಹಿಡಿಯಲು ಸರಿಯಾದ ಮತ್ತು ಸುಲಭಸಾಧ್ಯವಾದ ಮಾರ್ಗವನ್ನೂ ಮತ್ತು ಜೀವಿಯ ಅಂತರಂಗದ ಪರೀಸ್ಥಿತಿಯನ್ನೂ, ಮತ್ತು ಅಂತಃ ಕರಣಗಳನ್ನೂ ಪರಿಶೋಧಿಸುವ ಹಾದಿಯನ್ನೂರಾಜಯೋಗವು ತೋರಿಸುವುದು, ಲಯ, ಹಠ ಮೊದಲಾದವುಗಳಂತೆ ಶರೀರವನ್ನು ವಿಶೇಷವಾಗಿ ಸಣ್ಣಿಸದೆ ಮನೋವೃತ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದೇ ರಾಜಯೋಗದ ಬೀಗದ ಕೈಯು, ಮನಸ್ಸೇ ಮನುಷ್ಯನ ಬಂಧಕ್ಕೂ ಮೋಕ್ಷಕ್ಕೂ ಕಾರಣವಾದುದರಿಂದ ಅದನ್ನು ಆಧೀನದಲ್ಲಿಟ್ಟು ಕೊಳ್ಳುವುದರಿಂದಲೇ ರಾಜಯೋಗದ ಹೆಚ್ಚಳವು. ರಾಜಯೋಗದಲ್ಲಿ ಸಾಂಖ್ಯ, ತಾರಕ, ಮತ್ತು ಅಮನಸ್ಕಗಳೆಂದು ಮೂರು ಭಾಗಗಳು.

ಆದಿಯಿಂದಲೂ ಶೈವಶಾಸ್ತ್ರಗಳು ಯೋಗಕ್ಕೆ ಅತಿಮಹತ್ವದ ಸ್ಥಾನವನ್ನು ಕೊಟ್ಟಿರುವವು. ಯೋಗ ಸೂತ್ರಕಾರರಾದ ಪತಂಜಲ ಮಹರ್ಷಿಗಳು ಶೈವರೇ ಇದ್ದರೆಂದು ಪ್ರತೀತಿ. ಹಾಗಿದ್ದ ಪಕ್ಷದಲ್ಲಿ ಯೋಗದರ್ಶನದ ವರ್ಚಸ್ವವು, ಶೈವರ ಮೇಲಾದುದು ಅರಿದಲ್ಲ, ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ ಮತ್ತು ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಬರುತ್ತದೆ. ದುರ್ದೈವದಿಂದ ಮಹತ್ವದ ಶೈವಾಮಗಮಗಳ ಅಭಾವದ ಮೂಲಕ ಶೈವಾಗಮಗಳಲ್ಲಿ ಪ್ರತಿಪಾದಿತವಾದ ಯೋಗಕ್ಕೂ ಯೋಗದರ್ಶನಕ್ಕೂ ಇರುವ ಸಾಮ್ಯವೈಷಮ್ಯಗಳನ್ನು ಕಂಡುಹಿಡಿಯುವುದು ಈಗ ಸಾಧ್ಯವಿಲ್ಲದಿದ್ದರೂ ಈಗ ದೊರೆಯುವ ಆಗಮಗಳ ತುಂಡುಗಳಿಂದ ಅವುಗಳಲ್ಲಿ ಯೋಗಕ್ಕಿರುವ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಸುಪ್ರಭೇದಾಗಮ ಮತ್ತು ಈಶಾನ-ಶಿವಯೋಗಿಗಳ “ಈಶಾನ ಶಿವ ಗುರುದೇವ ಪದ್ಧತಿ’ ಗಳಲ್ಲಿ ವರ್ಣಿತವಾದ ಯೋಗವು ಯೋಗದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ, ಆದರೂ ಸ್ವಲ್ಪ ಪ್ರಮಾಣದಿಂದಾದರೂ ವ್ಯತ್ಯಾಸವಿಲ್ಲದೆ ಇಲ್ಲ, ಈಶ್ವರನ ಪ್ರತಿಬಿಂಬವ (ಮೂರ್ತಿಯನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರಿಕರಿಸಿ, ಧ್ಯಾನವನ್ನು ಬಲಿಸಿ, ಸಮಾಧಿಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುವುದು. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವುದೊಂದು ಅದರ ವೈಶಿಷ್ಟ

ವೀರಶೈವರಿಗೂ ಯೋಗಕ್ಕೂ ಅತಿನಿಕಟ ಸಂಬಂಧವಿದೆಯೆಂಬುದನ್ನು ವೀರಶೈವರಲ್ಲಿಈಗಲೂ ರೂಢಿಯಲ್ಲಿರುವ ಅನೇಕ ವಿಷಯಗಳಿಂದ ಕಂಡುಕೊಳ್ಳಬಹುದು.ವೀರಶೈವರ ತತ್ವಜ್ಞಾನ (Philosophy) ದಲ್ಲಿ ಷಟಸ್ಥಲ ಸಿದ್ದಾಂತವು ಅತಿ ಮಹತ್ವವಾದುದೆಂಬುದು ವೀರಶೈವ ತತ್ವಾದ್ವೇಷಿಗಳಿಗೆ ಅರಿದಾದ ಮಾತಲ್ಲ. ಅದರಲ್ಲಿ ಹೆಜ್ಜೆ ಹೆಜ್ಜೆಗೂ ಯೋಗದ ತತ್ವಗಳು ಅಡಕವಾಗಿವೆ. ವೀರಶೈವ ಧಾರ್ಮಿಕ ವಾಙ್ಮಯದಲ್ಲಿ ಅತಿ ಮಹತ್ವವಾದುವು ವಚನಶಾಸ್ತ್ರಗಳು, ಅವುಗಳಲ್ಲಿ ಯೋಗಾಂಗಗಳ ವರ್ಣನೆಯು ವೀರಶೈವ ಪರವಾಗಿ ವಿಪುಲವಾಗಿರುವುದು. ಪ್ರಾಣಲಿಂಗಿಸ್ಥಲದ ವಚನಗಳೆಲ್ಲವೂ ಯೋಗಮಯವಾಗಿವೆಯೆಂದರೂ ಅಡ್ಡಿಯಿಲ್ಲ. ಆದರೂ ಕೆಲವು ಕಡೆಗೆ ಯೋಗದ ಮೇಲೆ ಕಟುತರವಾದ ಟೀಕೆಯು ಕಂಡು ಬರುವುದು. ಇಂಥವುಗಳ ಆಧಾರದಿಂದ ವಚನಶಾಸ್ತ್ರಕಾರರು ಯೋಗ ವಿರೋಧಿಗಳೆಂದು ಮಾತ್ರ ಕಲ್ಪಿಸಬಾರದು. ಅವರ ಟೀಕೆಯು ಯೋಗದ ಮುಖ್ಯಧೈಯವಾದ ಅಂತರಂಗ ಶುದ್ಧಿಯನ್ನೂ ಈಶ್ವರ ಸಿದ್ಧಿಯನ್ನೂ ಮರೆತು ಕೇವಲ ಬಾಹ್ಯ ಶರೀರ ಚಮತ್ಕಾರ (Feats) ಗಳನ್ನು ಸಾಧಿಸಿದ ಹಠಯೋಗಿಗಳನ್ನುದ್ದೇಶಿಸಿ ಮಾಡಲ್ಪಟ್ಟಿದೆಯೆಂಬುದನ್ನು ಲಕ್ಷ್ಯದಲ್ಲಿಡಬೇಕು. ಶಿವಶರಣರು ಅಡ್ಡಮಾರ್ಗದಿಂದ ಹೋಗುವವರನ್ನು ಹಾದಿಗೆ ತರಲು ಹಿಂದೆಮುಂದೆ ನೋಡುವವರಲ್ಲ, ಅರಿಯದೆ ಶಿವಪೂಜೆ ಮಾಡುವವರನ್ನು ಹೀಗೆ ಬಯ್ದಿರುವರು.

ನಮ್ಮ ವೀರಶೈವ ಗುರುಗಳು ಯೋಗ ವಿದ್ಯೆಯಲ್ಲಿ ಒಳ್ಳೆ ನಿಪುಣರಾಗಿದ್ದರು. ಯೋಗದ ಗುಟ್ಟನ್ನು ಕಂಡು ಹಿಡಿದು ಅದು ಸರ್ವರಿಗೂ ಸಾಧ್ಯವಾಗುವಂತೆ ತಮ್ಮ ಸ್ವಾನುಭವದಿಂದ ಅದರಲ್ಲಿ ತಿದ್ದುಪಡೆಯನ್ನು ಮಾಡಿ ಅದಕ್ಕೆ ಶಿವಯೋಗವೆಂದು ಹೆಸರಿಟ್ಟರು. ಶಿವಯೋಗವನ್ನು ತಿಳಿದು ಆಚರಿಸುವವರಿಗೆ ಶಿವಯೋಗಿಗಳೆಂದು ಹೆಸರು. ಶಿವಯೋಗದ ಸ್ವರೂಪವನ್ನು ವಚನಕಾರರು ವಿಪುಲವಾಗಿ ತಮ್ಮ ವಚನಗಳಲ್ಲಿಯೂ, ಚನ್ನ ಸದಾಶಿವಯೋಗಿಗಳು ತಮ್ಮ ಶಿವಯೋಗಪ್ರದೀಪಿಕೆ’ ಯಲ್ಲಿಯೂ ವರ್ಣಿಸಿರುವರು. ಇವೆಲ್ಲವುಗಳ ಮಥಿತಾರ್ಥವು ತೋಂಟದ ಸಿದ್ಧಲಿಂಗ ಯತಿಗಳ ಒಂದೇ ವಚನದಲ್ಲಿ ಬಂದಿದೆಯೆಂದರೆ ವಿಶೇಷ ತಪ್ಪಾಗದು. ಅವರು ಯೋಗದ ಅಷ್ಟಾಂಗಗಳನ್ನು ಶಿವಯೋಗಕ್ಕನುಸರಿಸಿ ಹೇಳಿ, ಶಿವಯೋಗದಲ್ಲಿ ಹೆಜ್ಜೆ ಹೆಜ್ಜೆಗೂ ಲಿಂಗದ ಅವಶ್ಯಕತೆಯಿದೆಯೆಂದು, ಲಿಂಗಾಂಗ ಯೋಗದ ಧ್ಯಯವು ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೆಂದೂ ಅಭಿಪ್ರಾಯ ಪಟ್ಟಿದ್ದಾರೆ. ನಂತರ

‘ಇನ್ನು ವೀರಮಾಹೇಶ್ವರರುಗಳ ಲಿಂಗಾನುಸಂಧಾನವೆಂತೆಂದೊಡೆ ಬ್ರಹ್ಮರಂಧ್ರದಲ್ಲಿಪ್ಪ ಚೈತನ್ಯವಪ್ಪ ಪರಮ ಚಿತ್ಕಳೆಯೇ ಭಾವಮನಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದವನಾಗಿ, ಭಾವವಲ್ಲಿ ಸತ್ಸ್ವ ರೂಪವಪ್ಪಇಷ್ಟಲಿಂಗವೆಂದೆನಿಸಿ, ಒಂದೇ ವಸ್ತು ತನು ಮನ ಭಾವಂಗಳಲ್ಲಿ ಇಷ್ಟಪ್ರಾಣ ಭಾವವಾದ ಭೇದವನರಿಯದೆ, ಒ೦ ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ, ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ, ತೃಪ್ತಿ ಲಿಂಗವ ಭಾವಜ್ಞಾನದಿಂದ ಗ್ರಹಿಸಿ, ಈ ಲಿಂಗತ್ರಯವಿಡಿದು ಆಚರಿಸಿ, ಲಿಂಗದೊಡನೆ ಕೂಡಿ, ಲಿಂಗವೇ ತಾನು ತಾನಾಗಿ, ವಿರಾಜಿಸುತಿರ್ಪುದೀಗ ಶಿವಯೋಗ ನೋಡಾ, ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ “ ಎಂದು ಶಿವಯೋಗವನ್ನು ವರ್ಣಿಸಿರುವರು. ಅವರ ಈ ವಾಕ್ಯವನ್ನುಸ್ವಲ್ಪ ವಿವೇಚಿಸಿದರೆ ಕೆಳಗಿನಂತೆ ಅದರ ಅರ್ಥವು ಹೊರಡುವುದು.

ಜೀವಿಗಳಿಗೆ ಸ್ಥೂಲ, ಸೂಕ್ಷ್ಮ ಕಾರಣಗಳೆಂದು ಮೂರು ಶರೀರಗಳು, ಒಂದರೊಳಗೊಂದು ಅಡಕವಾಗಿರುವುವೆಂದೂ, ಮೂರು ಶರೀರಗಳಲ್ಲಿರುವ ಮಲಿನತೆಯು ಹೋದಾಗಲೇ ಜೀವಿಯು ಶುದ್ದನಾಗುವನೆಂದೂ ವೀರಶೈವರ ನಂಬುಗೆ, ಯೋಗದ ಮುಖ್ಯ ಧೈಯವು ಬಾಹ್ಯಾಭ್ಯಂತರ ಶುದ್ಧಿಯೆಂಬುದನ್ನು ಮೇಲೆಯೇ ಸೂಚಿಸಿರುವುದಷ್ಟೇ. ಅದಕ್ಕೋಸುಗ ಗುರುವು ದೀಕ್ಷಾಕಾಲದಲ್ಲಿ ತನ್ನ ಯೋಗಬಲದಿಂದ ಶಿಷ್ಯನ ಚೈತನ್ಯವನ್ನು ಗಟ್ಟಿಗೊಳಿಸಿ ಹೊರಗೆ ಇಷ್ಟಲಿಂಗವೆಂದೂ ಸ್ಥೂಲಶರೀರಕ್ಕೂ, ಒಳಗೆ ಪ್ರಾಣಲಿಂಗವೆಂದು ಸೂಕ್ಷ್ಮ ಶರೀರಕ್ಕೂ, ಭಾವಲಿಂಗವೆಂದು ಕಾರಣ ಶರೀರಕ್ಕೂ ಜೋಡಿಸಿ, ಅವುಗಳ ಅನುಸಂಧಾನ ಕ್ರಮವನ್ನು ತೋರಿಸಿಕೊಡುವನು. ಅದೇ ಮಾರ್ಗದಿಂದ ಶಿಷ್ಯನು ತನ್ನ ಎಡ ಹಸ್ತದ ಅಂಗೈಯೊಳಗೆ ಇಷ್ಟಲಿಂಗವನ್ನು ಭದ್ರಪಡಿಸಿ, ಉಳಿದ ಅವಯವಗಳ ವ್ಯಾಪಾರವನ್ನು ತಡೆದು, ಪ್ರಾಣಾಯಾಮದಿಂದ ಶ್ವಾಸೋಚ್ಛಾಸವನ್ನು ಸರಿಪಡಿಸಿ, ಮನಸ್ಸಿನ ಚಲನವಲನವನ್ನು ತಡೆದು, ಸ್ಥೂಲ ದೃಷ್ಠಿ ಯನ್ನು ಇಷ್ಟಲಿಂಗದ ಮೇಲೂ, ಸೂಕ್ಷ್ಮ ದೃಷ್ಟಿಯನ್ನು ಪ್ರಾಣಲಿಂಗದಮೇಲೂ, ಭಾವದೃಷ್ಟಿಯನ್ನು ಭಾವಲಿಂಗದ ಮೇಲೂ ಚಲ್ಲಿ ಲಿಂಗದೊಡನೆ ಕೂಡಿ ಲಿಂಗತ್ರಯವನ್ನು ಏಕಾಕಾರಮಾಡಿ, ಲಿಂಗವೇ ತಾನಾಗಿರುವನು. ಇದೇ ಶಿವಯೋಗ,ಈ ವಚನದಮೇಲಿಂದಲೂ ಮತ್ತು ಇಂಥ ಅನೇಕ ವಚನಗಳಿಂದಲೂ ಶಿವಯೋಗದ ತತ್ವವು ಲಿಂಗ ಪೂಜೆಯಲ್ಲಿ ಅಡಕವಾಗಿರಬೇಕಿಷ್ಟೇ ಅಲ್ಲ ಲಿಂಗಪೂಜೆಯು ಶಿವಯೋಗದ ಮುಖ್ಯಾಂಗವಾಗಿರ ಬೇಕೆಂದು ಊಹಿಸಲವಕಾಶವಿದೆ.

ವೀರಶೈವನಾಗಿರತಕ್ಕ ಪ್ರತಿಯೊಬ್ಬ ವ್ಯಕ್ತಿಯು ಶಿವಯೋಗಸಾಧಕನಾಗಿರಬೇಕೆಂದು ವೀರಶೈವ ಮತಸ್ಥಾಪಕರ ಅಪೇಕ್ಷೆ. ಅಂತೇ ಅವರು ಶಿವಯೋಗಸಾಧನೆಯನ್ನು ಅಷ್ಟು ಸುಲಭವಾಗಿ ಸರ್ವರಿಗೂ ಸಾಧ್ಯವಾಗುವಂತೆ ಮಾಡಿರಲೇಬೇಕು. ಮೇಲೆ ಯೋಗದ ಒಳಭೇದಗಳನ್ನು ಹೇಳುವಾಗ ರಾಜಯೋಗವು ಉತ್ಕೃಷ್ಟವಾದುದೆಂದು ಸೂಚಿಸಿರುವುದಷ್ಟೇ. ಅಂಥ ರಾಜಯೋಗಕ್ಕೂ ಶಿವಯೋಗಕ್ಕೂನಿಜವಾಗಿ ಭೇದವಿಲ್ಲವೆಂದೂ ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಗಾಗಿ ಭೇದವು ಹೇಳಲ್ಪಟ್ಟಿದೆಯೆಂದೂ ಚನ್ನ ಸದಾಶಿವಯೋಗಿಗಳ ಮತ ಸೂಕ್ಷ್ಮ ವಾಗಿ ವಿಚಾರಿಸಿದರೆ ರಾಜಯೋಗಕ್ಕೂ ಶಿವಯೋಗಕ್ಕೂ ಭೇದವಿಲ್ಲೆಂಬುದು ನಿಜ; ಆದರೆ ಸ್ವಲ್ಪ ಸ್ಥೂಲ ಮಾನದಿಂದ ನೋಡಿದರೆ ಶಿವಯೋಗದಲ್ಲಿ ರಾಜಯೋಗದಲ್ಲಿಲ್ಲದ ಒಂದು ವೈಶಿಷ್ಟ್ಯ ವುಂಟೆಂಬುದೂ, ಆ ವೈಶಿಷ್ಟ್ಯವು ಇಷ್ಟಲಿಂಗದ ಅವಶ್ಯಕತೆ ಯೆಂಬುದೂ ಮೇಲಿನ ವಚನಗಳಿಂದ ಸ್ಪಷ್ಟವಾಗುವುದು. ಇನ್ನು ವೀರಶೈವ ಗುರುಗಳು ಇಷ್ಟಲಿಂಗದ ಅವಶ್ಯಕತೆಯನ್ನು ಸಾರಲು ಕಾರಣವೇನೆಂಬುದನ್ನು ಹುಡುಕಲು ನಾವು ದೂರಹೋಗುವ ಕಾರಣವಿಲ್ಲ,

ಈಶ್ವರ ಧ್ಯಾನವನ್ನು ಬಲಪಡಿಸಲಿಕ್ಕೂ ಮನಸ್ಸಿನ ಚಲನವಲನವನ್ನು ತಡೆದು ಈಶ್ವರಮಯವಾಗಿ ಮಾಡುವುದಕ್ಕೂ ಬಾಹ್ಯದಲ್ಲಿ ಈಶ್ವರ ಪ್ರತಿಬಿಂಬವು ಬೇಕೆಂದು ಶೈವಾಗಮಗಳು ಸಾರುವುದೆಂದು ಮೇಲೆ ಸೂಚಿಸಿದೆಯಷ್ಟೇ. ಅದರ ಗುಟ್ಟನ್ನುನಮ್ಮಾದ್ಯರಾದ ವೀರಶೈವ ಮತಸ್ಥಾಪಕರು ಅರಿತಿದ್ದರು. ಆದರೂ ಅವರು ಮೂರ್ತಿ ಪೂಜಕರಲ್ಲ ಮೂರ್ತಿ ಪೂಜೆಯನ್ನು ಅತಿ ಕಠೋರವಚನಗಳಿಂದ ವಚನಶಾಸ್ತ್ರಕಾರರು ನಿರಾಕರಿಸಿರುವರು.* ಸ್ವಪ್ರತಿಬಿಂಬವನ್ನು ಕಾಣಲು ದರ್ಪಣವು ಹೇಗೆ ಅಗತ್ಯವಿದೆಯೋ ಹಾಗೆ ಮನಸ್ಸಿನ ಚಲನವಲನವನ್ನು ತಡೆದು ಒಂದೇ ವಸ್ತುವಿನ ಮೇಲೆ ಅದನ್ನು ಕೇಂದ್ರಿಕರಿಸಿ, ನಿಜಾತ್ಮನ ಪ್ರತಿಬಿಂಬವನ್ನು ಕಾಣಲು ದರ್ಪಣದಂಥ ಒಂದು ವಸ್ತುವನ್ನು ಅವರು ಸ್ವೀಕರಿಸಲೇಬೇಕಾಗಿತ್ತು ಅಂತೆಯೇ ಸ್ಥಾವರಮೂರ್ತಿಗಳಿಗೆ ಬದಲಾಗಿ ಈ ಉದ್ದೇಶವನ್ನಿಡೇರಿಸುವಂಥ ಅತಿ ಪ್ರಾಚೀನವಾದ ಶಿವಲಿಂಗವನ್ನು ಧರಿಸಲು ಪ್ರೇರೇಪಿಸಿರಬಹುದೆಂದು ತೋರುವುದು. ಮಗ್ಗೆಯ ಮಾಯಿದೇವರು ತಮ್ಮೊಂದು ಪದ್ಯದಲ್ಲಿ ಶರಣನು ಲಿಂಗವೆಂಬ ದರ್ಪಣದಲ್ಲಿ ಸ್ವಸ್ವರೂಪವನ್ನೇ ನೋಡುವನೆಂದು ಹೇಳಿದ್ದಾರೆ. ಬೌದ್ಧ ಭಿಕ್ಷುಗಳೂ ಕೂಡ ಧ್ಯಾನದಲ್ಲಿ ತಮ್ಮ ದೇಹಾಕೃತಿಯನ್ನು ಮನದೊಳಗೆ ಗುರಿಯಾಗಿಟ್ಟುಕೊಳ್ಳುತ್ತಿದ್ದರೆಂದೂ ಮತ್ತು ನೀಲಿ, ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳ ದ್ವಾರಾ ಧ್ಯಾನಿಸುತ್ತಿದ್ದರೆಂದೂ ಪ್ರತೀತಿಯಿದೆ. ಬಾಹ್ಯ ಪ್ರಪಂಚವನ್ನೂ ತನ್ನನ್ನೂ ಮರೆದು ಸಮಾಧಿಯನ್ನು ಹೊಂದಲು ಬಾಹ್ಯ ವಸ್ತುವಿನ ಅಗತ್ಯವಿದೆಯೆಂದು ಪಾಶ್ಚಾತ್ಯರಲ್ಲನೇಕ ಮಾನಸಶಾಸ್ತ್ರವೇತ್ತರು (Psychologists) ಅಭಿಪ್ರಾಯಪಡುವರು. ಇವೆಲ್ಲ ಕಾರಣಗಳಿಂದ ಲಿಂಗವು ಧ್ಯಾನವನ್ನು ಬಲಿಸಲು ಕರಣವೂ ಸಮಾಧಿಯನ್ನು ಸಾಧಿಸಲು ಸಾಧನವೂ ಆಗಿರುವದೆಂದು ತೋರುವುದು.ಆದುದರಿಂದ ವೀರಶೈವ ಗುರುಗಳು ಇಷ್ಟಲಿಂಗದ ಅಗತ್ಯವನ್ನು ಸಾರಿರಬಹುದು.

ಇನ್ನು ಯೋಗದ ತತ್ವಗಳನ್ನು ಅನುಭವಕ್ಕನುಸರಿಸಿ ವಿವೇಚಿಸಲು ಅವು ಸರ್ವರಿಗೂ  ಸಾಧ್ಯವಿರುವುದೆಂದೂ, ಸರ್ವರೂ ಸಾಧಿಸಿ ಇಹದಲ್ಲಿಯೇ ಪರದ ಸುಖವನ್ನನುಭವಿಸಬೇಕೆಂದು ಮಾಡಲ್ಪಟ್ಟಿರುವುವೆಂದೂ ಕಂಡು ಬರುವುದು. ಅದು ಹೇಗೆಂಬುದನ್ನು ನೋಡುವಾ-

ಇನ್ನು ಬಾಹ್ಯ ಶರೀರ ಶುದ್ಧಿಗಾಗಿ ಸ್ನಾನವನ್ನು ಮಾಡಬೇಕೆಂಬುದೂ,ಶರೀರದೊಳಗಿನ ರಕ್ತ ಮೊದಲಾದ ಧಾತುಗಳಲ್ಲಿ ಮಲಿನತೆಯಿದ್ದರೆ ಶರೀರದ ಮೇಲ್ಬಾಗವಾದ ತ್ವಚವನ್ನು ಎಷ್ಟು ತೊಳೆದರೂ ಶುದ್ಧಿಯಾಗಿ ಮನುಷ್ಯನು ನಿರೋಗಿಯಾಗಿರಲಾರನೆಂದೂ ಸರ್ವರಿಗೂ ಗೊತ್ತಿದ್ದ ಮಾತೇ. ಹೊರಗಿನ ಮಲಿನತೆಯನ್ನು ಸ್ನಾನದಿಂದ ತೊಳೆಯುವಂತೆ ಒಳಗಿನ ಮಲಿನತೆಯನ್ನು ಸರಿಯಾದ ಆಹಾರವಿಹಾರದಿಂದಲೂ ವ್ಯಾಯಾಮಾದಿ ಪರಿಶ್ರಮಗಳಿಂದಲೂ ತೊಳೆಯಲು ಬರುವುದೆಂಬುದು ಅನುಭವಸಿದ್ಧವಾದ ಮಾತು. ಯೋಗಶಾಸ್ತ್ರಜ್ಞರಾದ ಪೂರ್ವದ ಮಹರ್ಷಿಗಳು ಶರೀರದೊಳಗಿನ ಮಲಿನತೆಯನ್ನು ತೊಳೆಯಲು ಯಮ, ನಿಯಮ,ಆಸನ, ಪ್ರಾಣಾಯಾಮ ಪ್ರತ್ಯಾಹಾರಗಳೆಂಬ ಯೋಗಾಂಗಗಳನ್ನು ಮಾಡಿ ಅದಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿರುವರು. ಶರೀರದಲ್ಲಿಯ ಸರ್ವ ವ್ಯಾಧಿಗಳನ್ನು ಹೊರದೂಡಿ ಅದನ್ನು ಬಹುಕಾಲ ಆರೋಗ್ಯದಿಂದಿಡಬೇಕಾದರೆ ಈ ಯೋಗಾಂಗ ಗಳನ್ನು ಸಾಧಿಸುವುದು ಬಲು ನೆಟ್ಟಗೆ, ಇವು ಮುಖ್ಯವಾಗಿ ಆರೋಗ್ಯದೃಷ್ಟಿಯಿಂದ (from hyginic point of view) ಬಲು ಉಪಯುಕ್ತವಾದವುಗಳು. ಒರೆಗೆ ಹಚ್ಚಿನೋಡಬೇಕೆನ್ನುವರು ಅಭ್ಯಾಸಮಾಡಿ ಅನುಭವ ಪಡೆದುಕೊಳ್ಳಬಹುದು. ಇನ್ನುಶರೀರದ ಒಳಹೊರಗಿನ ಭಾಗಗಳು ಶುದ್ಧವಾದವುಗಳೆಂದೂ, ಸರ್ವ ರೋಗಾದಿಗಳು ಹೇಳ ಹೆಸರಿಲ್ಲದಂತಾದವೆಂದೂ ಗ್ರಹಿಸುವಾ ! ಆದರೂ ಇಷ್ಟರಿಂದಲೇ ಮನುಷ್ಯನು ಶುದ್ದನಾದನೆಂದು ಹೇಳಲಾಗದು. ಏಕೆಂದರೆ ಬರೇ ಶರೀರವೇ ಮನುಷ್ಯನಲ್ಲ.ಚೈತನ್ಯದಿಂದೊಡಗೂಡಿದ ಶರೀರಕ್ಕೆ ಮನುಷ್ಯನೆನ್ನಬಹುದು. ಚೈತನ್ಯಮಯನೇ ಆತ್ಮನು. ಆತ್ಮನಿಗೆ ಬುದ್ದಿ, ಮನಸ್ಸು, ಅಹಂಕಾರಾದಿ ಅಂತಃಕರಣಗಳುಂಟು. ಅವುಗಳ ಶುದ್ಧಿಯಾಗದ ವಿನಾ ಮನುಷ್ಯನು ಶುದ್ಧನಾಗಲಾರನು. ಬುದ್ಧಿ, ಮನಸ್ಸು,ಅಹಂಕಾರಾದಿಗಳ ಶುದ್ಧಿಗಾಗಿ ಧಾರಣ, ಧ್ಯಾನ, ಸಮಾಧಿಗಳೆಂಬ ಯೋಗಾಂಗಗಳ ಅಗತ್ಯ, ತತ್ವಶಾಸ್ತ್ರಜ್ಞರು ಸೂಕ್ಷ್ಮ ದೃಷ್ಟಿಯಿಂದ ಅಂತರಂಗದ ವೃತ್ತಿಗಳನ್ನು ವಿಭಾಗಿಸಿ ಪ್ರತಿಯೊಂದು ವೃತ್ತಿಯನ್ನೇ ನಡೆಯಿಸುವುದಕ್ಕದೊಂದು ಕರಣವನ್ನು ನಿರ್ಮಿಸಿರುವರು.ತಾತ್ಮಕ ದೃಷ್ಟಿಯಿಂದ ಅಷ್ಟೇನೂ ಸರಿಯಾಗಿಲ್ಲದಿದ್ದರೂ ನಮ್ಮ ಅನುಕೂಲತೆಗಾಗಿ ಸ್ಥೂಲಮಾನದಿಂದ ಆ ಎಲ್ಲ ವೃತ್ತಿಗಳನ್ನು ಮನಸ್ಸೆಂಬ ಶಬ್ದದಲ್ಲಿ ಸಮಾವೇಶ ಮಾಡುವಾ, ಮೇಲಿನ ವಿಷಯವನ್ನೇ ಸ್ವಲ್ಪದರಲ್ಲಿ ಹೇಳುವುದಾದರೆ ಮನಸ್ಸು ಶುದ್ಧಿಯಾಗದ ಹೊರತು ಶರೀರವು  ಶುದ್ದಿಯಾಗಲಾರದೆಂದೂ, ಮನಶುದ್ಧಿಗಾಗಿಯೇ ಕಡೆಯ ಮೂರು ಯೋಗಾಂಗಗಳು ನಿರ್ಮಿಸಲ್ಪಟ್ಟಿರುವವೆಂದೂ ಹೇಳಬಹುದು. ಮನಶುದ್ಧಿಯನ್ನು ಮಾಡಬೇಕಾದರೆ ಬಾಹ್ಯವಸ್ತುವಾದ ಶರೀರ ಶುದ್ಧಿಯು ಮೊದಲು ಬೇಕೆಂದು ಪತಂಜಲ ಮಹರ್ಷಿಗಳಂಥ ಯೋಗಶಾಸ್ತ್ರಜ್ಞರ ಮತವು. ಇದು ಒಂದು ಪಕ್ಷ, ಮನಶುದ್ಧಿಗಾಗಿ ಬಾಹ್ಯ ಶರೀರ ಶುದ್ಧಿಯಿಂದ ಹೊರಡುವ ಕಾರಣವಿಲ್ಲೆಂದೂ, ಮನಶುದ್ದಿಯನ್ನು ಮನಸ್ಸಿನಿಂದಲೇ ಮಾಡುವುದು ಸಾಧ್ಯವಿದೆಯೆಂದೂ,ಮನಸೊಂದು ಶುದ್ಧಿಯಾದರೆ ಸರ್ವವೂ ತಮ್ಮಿಂದ ತಾವೇ ಶುದ್ಧಿಯಾಗುವುವೆಂದೂ ಕೆಲವರ ಮತ. ಇದು ಮತ್ತೊಂದು ಪಕ್ಷ ಅರ್ವಾಚೀನ ಸಾಧುಗಳಾದ ರಾಮಕೃಷ್ಣಪರಮಹಂಸ ಮತ್ತು ಅರವಿಂದ ಘೋಷ ಮೊದಲಾದವರು ಎರಡನೆಯ ಪಕ್ಷಕ್ಕೆ ಸೇರಿದವರು. ನಮ್ಮ ವೀರಶೈವ ಗುರುಗಳಾದರೂ ದ್ವಿತೀಯ ಪಕ್ಷವನ್ನವಲಂಬಿಸಿದವರೆಂದು ನಿರ್ಧರಿಸಲು ಸಾಕಷ್ಟು ಸಾಧನಗಳಿವೆ. ಶಿವಯೋಗದ ವಿವರಣೆಯೂ ಲಿಂಗಪೂಜೆಯ ಅಗತ್ಯವೂ ನಮ್ಮಿ ಅಭಿಪ್ರಾಯವನ್ನು ಬಲಪಡಿಸುವವು.

ಶುದ್ಧ ವಾತಾವರಣದಲ್ಲಿ ಕುಳಿತು ಮನಸ್ಸಿನ ಸಾಂಸಾರಿಕ ಮಂಡಿಗೆಗಳನ್ನೆಲ್ಲ ಮರೆತು  ಕೆಲಕಾಲವಾದರೂ ನಿಶ್ಚಿಂತ ಮನಸ್ಕರಾಗುವುದು ಅಧ್ಯಾತ್ಮಿಕ ದೃಷ್ಟಿಯಿಂದ ಉತ್ತಮವೆಂದು ಬಲ್ಲವರ ನಂಬುಗೆ .ವೀರಶೈವರಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಶಿವಪೂಜಾಗೃಹ ಅಥವಾ ದೇವರ ಮನೆಯೆಂದು ಕೋಣೆಗಳಿರುವವು. ಅವುಗಳನ್ನು ರೂಢಿಯಲ್ಲಿ ತಂದವರ ಉದ್ದೇಶವು ಸ್ವಾಮೀಜಿಯವರ ಮೇಲೆ ಹೇಳಿದ ಉದ್ದೇಶದಂತಿರಬಹುದೇನು?. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ವಿಶ್ರಾಂತಿಯು ಬೇಕೆ ಬೇಕು. ಅದರಂತೆ ಮನಸ್ಸಿಗಾದರೂ ವಿಶ್ರಾಂತಿಯ ಅಗತ್ಯವಿದೆ; ಆದುದರಿಂದಲೇ ಶರೀರದ ಮತ್ತು ಮನಸ್ಸಿನ ವಿಶ್ರಾಂತಿಗಾಗಿ ನಿದ್ರೆಯು ಸ್ವಾಭಾವಿಕವಾಗಿ ಕಲ್ಪಿಸಲ್ಪಟ್ಟಿದೆ. ಆದರೂ ನಮ್ಮೆಲ್ಲನೇಕರಿಗೆ ನಿದ್ರೆಯಲ್ಲೂ ಕೂಡ ಮನಸ್ಸಿಗೆ ವಿಶ್ರಾಂತಿ (Sub-consious state) ಕೊಡಲು ಬರುವುದೆಂದು ಯೋಗವೂ ಮತ್ತು ಅನುಭವಿಕರಾದ ಮಾನಸ ಶಾಸ್ತ್ರಜ್ಞರೂ ತೋರಿಸಿಕೊಡುವರು. ಇತ್ತಿತ್ತಲಾಗಿ ಪಾಶ್ಚಾತ್ಯ ದೇಶಗಳಲ್ಲಿ ಮಾನಸ ಶಾಸ್ತ್ರಕ್ಕೆ ಬಲು ಮಹತ್ವ ಕೊಡಹತ್ತಿರುವರು. ಅದರ ಅಭ್ಯಾಸವು ಒಳ್ಳೆ ಸರಿಯಾಗಿ ನಡೆದಿದೆಯೆಂಬುದಕ್ಕೆ ಇತ್ತಿತ್ತಲಾಗಿ ಬೈಲಿಗೆ ಬರಹತ್ತಿದ ಅಂಗಗಳಾದ Psycho-analysis, Hypnotism, Mesmerism ಮೊದಲಾದವುಗಳೇ ಸಾಕ್ಷಿ, ‘ಮೆಸ್ಮೇರಿಝಮ್’ವೆಂಬ ವಿದ್ಯೆಯಿಂದ ಅನ್ಯರ ಮಾನಸ ವ್ಯವಹಾರವನ್ನು ತಡೆದು ಅವರನ್ನು ನಮ್ಮಂತೆಯೇ ಕಾಯಾ ವಾಚಾ ಮನಸ್ಸಿನಿಂದ ನಡೆಯ ಹಚ್ಚಲು ಬರುವುದೆಂದು ಪ್ರಯೋಗದಿಂದ ಸಿದ್ಧಮಾಡಲ್ಪಟ್ಟಿದೆ. ಈ ವಿದ್ಯೆಯ ಸ್ವರೂಪವು ಬೇರೆ ರೀತಿಯಿಂದಾದರೂ ನಮ್ಮ ಪೂರ್ವಜರಿಗೆ ಗೊತ್ತಿತ್ತೆಂಬಂತೆ ತೋರುವುದು. ಬೇರೆ ಜನರ ವಿಚಾರಗಳು ಬೇರೆ ಬೇರೆಯಾಗಿರುವಂತೆ ಒಬ್ಬ ವ್ಯಕ್ತಿಯಲ್ಲಿಯು ಕೂಡ ಬೇರೆ ಬೇರೆ ಅಸಂಗತ ವಿಚಾರಗಳು ಉದ್ಭವಿಸುವುದುಂಟು. ಮಾನವಲ್ಲಿ ಪುಣ್ಯ ಮತ್ತು ಪಾಪ (good and evil) ಇವುಗಳ ನಡುವೆ ಸತತ ಕದನವು ನಡೆದೇ ಇರುವುದು. ಮೆಸ್ಮೇರಿಝಮ್ ಪ್ರಯೋಗದಿಂದ ಅನ್ಯರನ್ನು ನಮ್ಮಂತೆ ಮಾಡಿಕೊಳ್ಳಲು ಹೇಗೆ ಬರುವುದೋ ಹಾಗೇ ಅಂಥದೊಂದು ವಿದ್ಯೆಯ ಪ್ರಯೋಗವನ್ನು ಪುಣ್ಯಮಯವಾದ ವಿಚಾರಗಳ ಪರವಾಗಿ ನಮ್ಮ ಮೇಲೆಯೇ ಮಾಡಿಕೊಳ್ಳುವುದರಿಂದ ನಮ್ಮಲ್ಲಿರುವ ಪಾಪಮಯವಾದ ವಿಚಾರಗಳು ಪುಣ್ಯಮಯ ವಾದವುಗಳಾಗುವವೆಂದು ನಮ್ಮ ಪೂರ್ವಜರಿಗೆ ಗೊತ್ತಿದ್ದಂತೆ ತೋರುವುದು. ಆದುದರಿಂದಲೇ ಪವಿತ್ರ ಮಂತ್ರಗಳ ಜಪವನ್ನಾಗಲೀ ಈಶ್ವರ ಧ್ಯಾನವನ್ನಾಗಲೀ ಮಾಡಲು ಅವರು ಪ್ರೇರೇಪಿಸಿರಬಹುದು. ಇಷ್ಟಲಿಂಗ ಪೂಜೆಯಲ್ಲಿ ಈ ತತ್ವಗಳು ಅಡಗಿರುವುದರಿಂದಲೂ ಇಷ್ಟಲಿಂಗವು ಪಾಪಗಳನ್ನು ತೊಳೆಯುವುದೆಂದು ಈಗಲೂ ವೀರಶೈವರು ಶ್ರದ್ಧೆಯಿಂದ ನಂಬುವುದರಿಂದಲೂ ಇಷ್ಟಲಿಂಗವು ಇಂಥದೊಂದು ವಿದ್ಯೆಯನ್ನು ಸಾಧಿಸುವ ಕರಣವೆಂದೂ ಶಿವಪೂಜೆಯು ಅಂಥ ವಿದ್ಯೆಯ ಸಾಧನ ಮಾರ್ಗವೆಂದೂ ಊಹಿಸಲವಕಾಶವಿದೆ. ಆದುದರಿಂದ ವೀರಶೈವ ಶರಣರು ತಮ್ಮ ಆಧ್ಯಾತ್ಮಿಕೋನ್ನತಿಯನ್ನು ಅನುಭವದಿಂದಲೇ ಸಾಧಿಸುತ್ತಿದ್ದರೆಂದು ತರ್ಕಿಸಬಹುದು.

ಇಂಥ ಅಧ್ಯಾತ್ಮಿಕೋನ್ನತಿಯನ್ನು ‘ಶಿವಯೋಗ’ ದಿಂದ ಸಾಧಿಸಲು ಸಾಧ್ಯವಾಗಲೆಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಶಿವಯೋಗ ಮಂದಿರವನ್ನು ಸಂಸ್ಥಾಪಿಸಿದ್ದು ಸ್ಮರಣೀಯವಾಗಿದೆ.

.

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರ ಹಸ್ತಾಕ್ಷರ ದಲ್ಲಿ ಔಷಧಿ

ಮುಂದೆ ತಿಂಗಳಿಗೆ ಕಣ್ಣು ನಿಚ್ಚಳವಾಗಿ ಕಾಣತೊಡಗಿತು. 1969ನೆಯ ಇಸ್ವಿ, ಹಾವೇರಿಯ ದ್ಯಾವಪ್ಪಶೆಟ್ಟರ ಮನೆಯಲ್ಲಿ ಶ್ರೀಗಳ ಪೂಜೆ. ಆ ಮನೆಯ ತಾಯಿಗೆ ಸಂಕಟ. ಆಕೆಯ ಕೂಸಿಗೆ ಆರೋಗ್ಯ ಸರಿಯಿರಲಿಲ್ಲ. ಸ್ವಾಮಿಗಳು ಆ ಮಗುವನ್ನು ಕರೆಸಿದರು. ಅದು ಶವದಂತೆ ಇತ್ತು. ಎಲ್ಲರನ್ನೂ ಹೊರಗೆ ಕಳುಹಿಸಿದರು. ಸ್ವಾಮಿಗಳು ಅದೇನು ವೈದ್ಯ ಮಾಡಿದರೆ ಮಗು ಕಿಲಕಿಲನೆ ನಗುತ್ತಿತ್ತು. ಇಂಥ ಘಟನೆಗಳು ಸಹಸ್ರಾರು. ಒಮ್ಮೆ ಗದುಗಿನ ಪುಟ್ಟರಾಜ ಗವಾಯಿಗಳೊಂದಿಗೆ ಸ್ವಾಮಿಗಳು ಮದರಾಸಿಗೆ ಹೋಗಿದ್ದರು.

ನಟಸಾರ್ವಭೌಮ ರಾಜಕುಮಾರರಿಗೆ ಪುಟ್ಟರಾಜ ಗವಾಯಿಗಳಲ್ಲಿ ಅಪರಿಮಿತ ಭಕ್ತಿ, ರಾಜಕುಮಾರ್ ಲಿಂಗಪೂಜೆ ನೋಡಬೇಕೆಂದು ಅಪೇಕ್ಷೆಪಟ್ಟರು. ಆದರೆ,ಲಿಂಗದೀಕ್ಷೆಯಿಲ್ಲದವರಿಗೆ ಅದು ಸಾಧ್ಯವಿಲ್ಲವೆಂದು ಸ್ವಾಮಿಗಳು ತಿಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!