ಲೇಖಕರು : ಜ.ಚ.ನಿ.
(ಜ.ಚ.ನಿ ಎಂತಲೇ ಪರಿಚಿತರಾಗಿರುವ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಸಾಹಿತ್ಯ ಕ್ಷೇತ್ರವೂ ಸೇರಿದಂತೆ ವಿಜ್ಞಾನ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ದುಡಿದವರು. 1909 ಅಕ್ಟೋಬರ್ 20 ರಂದು ಜನಿಸಿದ ಇವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಜನಿಸಿದರು. ತಂದೆ ದುಂಡಯ್ಯ, ತಾಯಿ ತಾಯವ್ವ. ನವಲಗುಂದದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಶಿವಮೊಗ್ಗದ ಶಿವಯೋಗ ಮಂದಿರದಲ್ಲಿ ಶಿವಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಬಾಲ್ಯದ ದಿನಗಳಲ್ಲಿಯೇ ಸುಕುಮಾರ ಪತ್ರಿಕೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ಸಮಯದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಜೀವನ ಸಿದ್ಧಾಂತ-ಆರು ಬೃಹತ್ ಸಂಪುಟಗಳು, ಶೂನ್ಯ ಸಂಪಾದನೆಯನ್ನಾಧರಿಸಿದ ಸಂಪಾದನೆಯ ಸೊಂಪು-4 ಸಂಪುಟಗಳು ‘ಪ್ರಾಚೀನ ಮಹಾ ವ್ಯಕ್ತಿತ್ವ’ಗಳು ‘ಶತಕ ತ್ರಯ ಪ್ರವಚನ’, ‘ಕೈವಲ್ಯ ಪದ್ಧತಿ’ ಇವರ ಪ್ರಮುಖ ಕೃತಿಗಳು )
ಸಂಗ್ರಹ ಸಹಾಯ : ಪೂಜ್ಯ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳು .
ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ ನಿಡಸೋಸಿ.


ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಜೀವಿಗಳು, ಯೋಗಕ್ಕಾಗಿ ತಮ್ಮ ತ್ರಿಕರಣಗಳನ್ನು ಮೀಸಲಿಕ್ಕಿದವರು. ಅವರಿಗೆ ಯೋಗದ ಹೊರತು ಬೇರೊಂದು ಬದುಕಿಲ್ಲ; ಬೇರೊಂದು ಬಾಳಿಲ್ಲ.ಯೋಗನೆ ಅವರ ಜೀವನ ಸರ್ವಸ್ವ. ಯೋಗವೇ ಅವರ ಜೀವಿತ ಲಕ್ಷ. ಅವರು ಪರಮಯೋಗಿ;ಪರಮಾವತಾರಿ.ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಶ್ರೀಗಳವರಿಗೆ ಯೋಗದಲ್ಲಿ ಪ್ರಭುಕುಮಾರ ಪಟ್ಟಾಧ್ಯಕ್ಷರು ಪ್ರಮುಖ ಶಿಷ್ಯರು. ಶ್ರೀಗಳವರ ಯೋಗಶಕ್ತಿ ಯೋಗಸಿದ್ಧಿ ಅವರಲ್ಲಿ ಸಂಪೂರ್ಣ ಕೂಡಿ ಬಂದಿತ್ತು; ಮೂಡಿ ನಿಂದಿತ್ತು.ಹಾನಗಲ್ಲ ಕುಮಾರಯೋಗಿಗಳ ಯೋಗವಿದ್ಯೆಯನ್ನೆಲ್ಲ ಆರ್ಜಿಸಿ ಅಧಿಕಗೊಳಿ ಸಿದ ಮಹನೀಯರು; ಮಹಿತಾತ್ಮರು, ಶಿವಯೋಗಮಂದಿರದಲ್ಲಿ ಯೋಗಕ್ಕೆ ಮೈಲುಗಲ್ಲಿನಂತಿದ್ದರು. ಶಿಷ್ಠಾದಿಚ್ಛೇತ್ ಪರಾಜಯಂ’ ಎಂಬ ಮಾತನ್ನು ಹಾನಗಲ್ಲಶ್ರೀಗಳವರು ಪ್ರಭುಕುಮಾರ ಪಟ್ಟಾಧ್ಯಕ್ಷರ ವಿಷಯದಲ್ಲಿ ಹೃದಯಾರೆ ಒಪ್ಪಿದ್ದರು; ಎದೆಯಾರೆ ಅಪ್ಪಿದ್ದರು. ಪ್ರಭುಕುಮಾರ ಪಟ್ಟಾಧ್ಯಕ್ಷರು ಶ್ರೀಗಳವರ ಕೃಪೆಯಿಂದ ಯೋಗಾಚಾರ್ಯರಾಗಿದ್ದರು; ಯೋಗಿರಾಜರೆನಿಸಿದ್ದರು.
ಪ್ರಭುಕುಮಾರ ಪಟ್ಟಾಧ್ಯಕ್ಷರು ಹಾನಗಲ್ಲ ಕುಮಾರಯೋಗಿಗಳ ಯೋಗ ವಿದ್ಯೆಯನ್ನು ನಿರ್ವಿಶೇಷವಾಗಿ ವ್ಯಾಸಂಗ ಮಾಡಿ ವಿಶಿಷ್ಟ ಶಕ್ತಿಯನ್ನುಸಂಪ್ರೀತಿಯನ್ನು ಸಂಗಳಿಸಿದ್ದರು. ಯೋಗಪ್ರವಾಹವು ಹಾನಗಲ್ಲ ಶ್ರೀಗಳವರಲ್ಲಿ ಹುಟ್ಟಿ ಹರಿದು ಪ್ರಭುಕುಮಾರ ಪಟ್ಟಾಧ್ಯಕ್ಷರಲ್ಲಿ ಸಂಗಮವಾಗಿತ್ತು.ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಸಾಗರವಾಗಿ ಉಕ್ಕಿದರು: ಉತ್ತೇಜಗೊಂಡರು.ಆ ಸಾಗರಗರ್ಭದಲ್ಲಿ ಅಮೋಘವಾದ ಯೋಗ-ನಿರಾಗ ರತ್ನಗಳಿದ್ದವು. ಶಮೆ ದಮೆ ಶಾಂತಿ ದಾಂತಿ ಮುಂತಾದ ಅನರ್ಘ್ಯ ಮುಕ್ತಾಫಲಗಳಿದ್ದವು. ಅವರೊಂದು ಸದ್ಗುಣ-ಸಂಪತ್ ಶಾಲಿಯಾದ ಯೋಗ-ಸಾಗರ; ಸತ್ಯ ಸುಖದ ಆಗರ.
ಪ್ರಭುಕುಮಾರ ಪಟ್ಟಾಧ್ಯಕ್ಷರು ತಮ್ಮ ಯೋಗವಿದ್ಯೆಯನ್ನು ತಮ್ಮಲ್ಲಿಯೆ ಇರಿಸಿಕೊಂಡು ಕುಳಿತವರಲ್ಲ. ಸೂರ್ಯನು ತನ್ನ ಪ್ರಕಾಶವನ್ನು ಪ್ರಪಂಚಕ್ಕೆ ಹರಡುವಂತೆ, ಸಮುದ್ರವು ತನ್ನ ಜಲವನ್ನು ಮೇಘಗಳ ಮುಖಾಂತರ ಭೂವಲಯಕ್ಕೆ ಹಂಚುವಂತೆ ಅವರು ತಮ್ಮ ಯೋಗತೇಜವನ್ನು ಯೋಗ ಸಾರವನ್ನು ಬೆಳಗಿದರು, ಬೀರಿದರು. ನಾಡಿನಲ್ಲಿ ಅಲ್ಲಲ್ಲಿ ಪ್ರಾಯೋಗಿಕವಾಗಿ ಪ್ರಸಿದ್ಧಿಸಿದರು; ವ್ಯಾಪ್ತಿಗೊಳಿಸಿದರು. ಹಾನಗಲ್ಲ ಶ್ರೀಗಳ ಉತ್ಸವಮೂರ್ತಿಯಂತೆ ಯೋಗ ತೇಜದಿಂದ ಅಲ್ಲಲ್ಲಿ ಮೆರಿಸಿದರು, ಮೆರೆದರು. ಎಲ್ಲೆಡೆಯಲ್ಲಿಯೂ ಭಾರತದ ಪ್ರತಿಷ್ಠಿತ ಯೋಗಿಗಳಿಂದ ಅಹುದೆನಿಸಿಕೊಂಡರು.ಯೋಗಿಗಳ ಹೃದಯ ಕಮಲಗಳನ್ನು ಅರಳಿಸಿದರು. ಯೋಗವಿದ್ಯೆಯಲ್ಲಿ ಅವರದೇ ಒಂದು ವಿಶಿಷ್ಟ ಪ್ರತಿಭೆ. ಅವರದೇ ಒಂದು ಪ್ರಾಮುಖ್ಯತೆ. ಅವರು ಯೋಗವಿದ್ಯೆಯ ಪುನರುದ್ಧಾರಕ್ಕಾಗಿ ಅವತರಿಸಿದ ಪ್ರಭು; ಕುಮಾರ ಯೋಗಿ ಗಾಗಿ ಕುಮಾರನಾಗಿ ಅವತರಿಸಿದ ಶಿವಯೋಗಿ.
ಧ್ಯಾನ, ಧಾರಣ, ತಪಸ್ಸುಗಳೆಂದರೆ ಅವರ ಮನ ಉಲ್ಲಸಿತವಾಗುತ್ತಿತ್ತು.ಅವರ ಶಿವಪೂಜಾ ವ್ರತಗಳೆ ವ್ರತಗಳು. ದಿನಕ್ಕೆ ಮೂರು ವೇಳೆ ಪೂಜಿಸದೆ ಇರುತ್ತಿರಲಿಲ್ಲ. ಕುಳಿತು ಎಷ್ಟು ಹೊತ್ತಾದರೂ ಪೂಜಿಸುತ್ತಿದ್ದರು, ಕದಲದೆ ಜಪ-ಧ್ಯಾನಾಸಕ್ತರಾಗಿರುತ್ತಿದ್ದರು. ಅವರು ಪೂಜೆಯಲ್ಲಿ ಬೇಸರಿಸುತ್ತಿರಲಿಲ್ಲ;ಅವಸರಿಸುತ್ತಿರಲಿಲ್ಲ. ಯಥಾಕಾಲಕ್ಕೆ ಯಥಾವಿಧಿಯಾಗಿ ಪೂಜಿಸುತ್ತಿದ್ದರು.ಒಲಿದು ಪೂಜಿಸುತ್ತಿದ್ದರು. ಭಸ್ಮ, ರುದ್ರಾಕ್ಷಿಗಳಲ್ಲಿ ಅವರಿಗಿದ್ದ ನಿಷ್ಠೆ ಅಪಾರವಾಗಿತ್ತು. ಎರಡು ಮುಖದಿಂದ ಹದಿನಾಲ್ಕು ಮುಖದ ವರೆವಿಗೂ ಒ೦ದೊ೦ದು ರುದ್ರಾಕ್ಷಿಗಳನ್ನು ಕೂಡಿಸಿ ಪವಣಿಸಿ ಕಂಠದಲ್ಲಿ ಧರಿಸುತ್ತಿರುವುದು ಅವರದೇ ಒಂದು ಮಾರ್ಗ; ಅವರದೇ ಒಂದು ವೈಶಿಷ್ಟ್ಯ .ಸರಳ ಶರೀರಿಗಳಾಗಿ, ನಿರಾಳ ಮನಸ್ಸಿನವರಾಗಿ ಪೂಜಿಸುತ್ತಿದ್ದ ಅವರನ್ನು ನಿರೀಕ್ಷಿಸುವುದೇ ಕಣ್ಣಿಗೆ ಒಂದು ಹಬ್ಬ. ಅವರು ನಿಷ್ಠೆಯಿಂದ ನುಡಿವ ರುದ್ರಾಧ್ಯಯನದಲ್ಲಿ ನಾದಬ್ರಹ್ಮವು ಹೊರಹೊಮ್ಮಿ ಬರುವಂತಿರುತ್ತಿದ್ದಿತು. ಅವರು ಮಾಡುವ ರುದ್ರಾಭಿಷೇಕದಲ್ಲಿ ನಾದಬ್ರಹ್ಮವು ಮಿಂದು ಹಾಲಿನಂತೆ ಶುಭ್ರನಾಗಿ, ಮಧುಪರ್ಕದಂತೆ ಮಧುರನಾಗಿ, ಅರ್ಘ್ಯಾದಿಗಳಂತೆ ಸುವಾಸಿತನಾಗಿ, ನಾರಿಕೇಳದಂತೆ ಶಾಂತನಾಗಿ ಶೋಭಿಸುತ್ತಿದ್ದನು. ಅವರ ರೂಪದಲ್ಲಿ ಬಿಂದು ಕಲಾತ್ಮಕವಾಗಿ ಕಂಗೊಳಿಸುತ್ತಿದ್ದನು.
ಪ್ರಭುಕುಮಾರ ಪಟ್ಟಾಧ್ಯಕ್ಷರು ಪ್ರಾಣಾಯಾಮವನ್ನು ಪೂರ್ಣವಾಗಿ ಮಾಡುತ್ತಿದ್ದರು. ಪ್ರಾಣವಾಯುಗಳನ್ನು ಮೂಲಾಧಾರದಿಂದ ಮೇಲಕೆತ್ತಿ ಸ್ವಾಧಿಷ್ಟಾನದಲ್ಲಿ ಸ್ವಲ್ಪ ಹೊತ್ತು ಇರಿಸಿ, ಮಣಿಪೂರಕದಲ್ಲಿ ತುಂಬಿ, ಅನಾಹತವನ್ನು ದಾಟಿಸಿ, ವಿಶುದ್ಧದಲ್ಲಿ ಶುದ್ಧಗೊಳಿಸಿ, ಆಜ್ಞಾ ಚಕ್ರದಲ್ಲಿ ಸ್ವಾಧೀನಪಡಿಸಿಕೊಂಡು, ಬ್ರಹ್ಮರಂಧ್ರದಲ್ಲಿ ನೆಲೆ ನಿಲ್ಲಿಸಿ, ಧ್ಯಾನಿಸಿ ತಲ್ಲೀನ ಗೊಳ್ಳುತಿದ್ದರು, ಅವರ ರುದ್ರಾಭಿಷೇಕದಲ್ಲಿ ಆಹತ ಬ್ರಹ್ಮೋಪಾಸನೆ ನಡೆದಂತೆ ಪ್ರಾಣಾಯಾಮದಲ್ಲಿ ಅನಾಹತ ಬ್ರಹ್ಮೋಪಾಸನೆ ನಡೆದಿರುತ್ತಿತ್ತು.
ಪೂಜೆಗೊಂಡ ಕರಸ್ಥಲದ ಲಿಂಗಮೂರ್ತಿಯನ್ನು ತಮ್ಮ ತೇಜಃಪುಂಜ ವಾದ ಕಣ್ಣುಗಳಿಂದ ನಿರೀಕ್ಷಿಸುತ್ತ ಜಪಯೋಗದಲ್ಲಿ ಗಂಟೆ ಗಂಟೆಗಳ ಕಾಲ ಮಗ್ನರಾಗಿರುತ್ತಿದ್ದರು. ಆಗ ಅವರು ಲಿಂಗದಲ್ಲಿ ದೃಷ್ಟಿಯಿಟ್ಟು, ದೃಷ್ಟಿಯಲ್ಲಿ ಮನವಿಟ್ಟು, ಮನದಲ್ಲಿ ಭಾವ ನಟ್ಟು, ತ್ರಿಪುಟಿಯಳಿಯುತ್ತಿದ್ದರು. ಲಿಂಗವೆ ತಾವಾಗಿರುತ್ತಿದ್ದರು. ಒಟ್ಟಿನಲ್ಲಿ ಅವರು ಮಾಡುವ ಪೂಜೆಯೇ ಪೂಜೆ, ಅದರಲ್ಲಿ ಅವರಿಗೆ ಅವಿರಳ ನಿಷ್ಠೆಯಿತ್ತು; ಅಪಾರ ಸಂತುಷ್ಟಿಯಿತ್ತು. ಅವರ ಪೂಜೆಗೆ ತುಂಬಿಯು ಹೂವಿದ್ದರೆ ಅವರ ಹೃದಯ ಲಿಂಗದಲ್ಲಿ ತುಂಬಿ ಹರಿಯುತ್ತಿತ್ತು. ನೆರೆ ನಂಬಿ ನಿಲ್ಲುತ್ತಿತ್ತು ,
ಪೂಜ್ಯ ರಾದ ಪ್ರಭುಕುಮಾರ ಪಟ್ಟಾಧ್ಯಕ್ಷರು ಹೆಸರಿಗೆ ತಕ್ಕ ಪಕ್ಷಿಗಳ ಅವರ ಹೆಸರು ಅವರನ್ನು ಆಶ್ರಯಿಸಿ ಸಾರ್ಥಕವಾಗಿತ್ತು. ಅವರು ಪ್ರಭುಗಳಿಗೆ ಪ್ರಭುವಾಗಿದ್ದರು.ಕುಮಾರರಿಗೆ ಕುಮಾರರಾಗಿದ್ದರು.ಯೋಗವಿದ್ಯೆಯಲ್ಲಿ ರೀತಿಯಲ್ಲಿ ಅವರನ್ನು ಳಿದರೆ ಪ್ರಭುಗಳಿರಲಿಲ್ಲ. ಮಾರ್ದವತೆಯಲ್ಲಿ ಸರಳತೆಯಲ್ಲಿ ಅವರು ಗುಣಕುಮಾರ; ಘನಕುಮಾರ. ಅವರದು ಮಕ್ಕಳಂತಹ ಮನಸು, ಮಕ್ಕಳೆಂದರೆ ಅವರಿಗೆ ಅತಿ ಹರುಷ.
ಕೌಮಾರಾವಸ್ಥೆಯಲ್ಲಿದ್ದ ವಟುಗಳ ಮನಸ್ಸನ್ನು ನಡೆ-ನುಡಿಗಳನ್ನು ತಿದ್ದು ವದರಲ್ಲಿ ಅವರನ್ನುಳಿದರೆ ಇನ್ನಿಲ್ಲ. ಕುಮಾರರಲ್ಲಿ ತಾವೂ ಕುಮಾರರಾಗಿ ಬೆರೆದು ಹಿತವನ್ನು ಬೋಧಿಸುತ್ತಿದ್ದರು. ಆಚಾರವನ್ನು ಅರುಹುತ್ತಿದ್ದರು.ಅವರದು ಮಧುರವಾದ ಮಾತು. ಮೇಣಿನಂತಹ ಮನಸ್ಸು, ಯಾವಾಗಲೂ ನಗೆಮೊಗ, ಸರಳ ಹೃದಯ, ಸೌಮ್ಯ ರೂಪು, ಸಹಜ ವರ್ತನೆ; ವಟುಗಳನ್ನು ಲಾಲಿಸುತ್ತಿದ್ದರು, ಪಾಲಿಸುತ್ತಿದ್ದರು. ತಮ್ಮ ನಡೆನುಡಿಗಳಿಂದ ನಲಿಸುತ್ತಿದ್ದರು. ಯೋಗತೇಜದಿಂದ ಆಕರ್ಷಿಸುತ್ತಿದ್ದರು. ನೀತಿನುಡಿಗಳಿಂದ ತಿದ್ದುತ್ತಿದ್ದರು. ವಟುಗಳಲ್ಲಿ ಸುಪ್ತವಾಗಿದ್ದ ಯೋಗಶಕ್ತಿಯನ್ನು ಹೊಮ್ಮಿಸುತ್ತಿದ್ದರು. ಆಸನಗಳನ್ನು ಹಾಕಿಸಿ, ಪಳಗಿಸುತ್ತಿದ್ದರು. ಸಾಧಕರಿಗೆ ಷಟ್ಕರ್ಮಗಳಿಂದ ಸುಧಾರಿಸುವುದು ಅವರಿಗೇ ಸೇರಿದ ಭಾಗ. ಅದರಲ್ಲಿ ಅವರದೇ ಒಂದು ಘನತೆ !
ಅವರ ಆ ತಿಳಿಯಾದ ನಗೆಯಲ್ಲಿ ಹೃದಯ ಪ್ರಚೋದಿಸುವ ಗುರುತರವಾದ ಗುಣವಿತ್ತು. ಅವರ ಕರುಣಾದ್ರವಾದ ಆ ನೋಟದಲ್ಲಿ ಪವಿತ್ರವಾದ ಪ್ರಭಾವವಿತ್ತು. ಅವರ ಆ ಅನುಭವದ ಅಮೃತೋಕ್ತಿಗಳಲ್ಲಿ ನಡೆ ಹೇಳುವ ಔದಾರ್ಯದ ಔಚಿತ್ಯವಿತ್ತು. ಅವರು ಸ್ಪರ್ಶಿಸುವ ಅಮೃತಹಸ್ತದಲ್ಲಿ ದೇಹವನ್ನೇ ಪಾವನಗೊಳಿಸುವ ದಿವ್ಯ ಸ್ಪರ್ಶ ಶಕ್ತಿಯಿತ್ತು.ಅವರ ಯೋಗ ತೇಜದಿಂದೊಡಗೂಡಿದ ಆ ಮುಖಮಂಡಲದಲ್ಲಿ ಮನ ಅರಳಿಸುವ ಪ್ರಶಾಂತಕಾಂತಿಯಿತ್ತು. ಅವರು ಆಚಲದೆ ಆತ್ಮಾನಂದದ ಅಮರಲೀಲೆಯಿಂದ ಮನಮುಟ್ಟಿ ಮಾಡುವ ಶಿವಯೋಗದಲ್ಲಿ ಸಮಾಧಿಗೊಳ್ಳುವ ಸುಖಸಂಪತ್ತಿಯಿತ್ತು.
ಶಿವಯೋಗಮಂದಿರದಲ್ಲಿ ಯೋಗದ ಕಲೆಯನ್ನು ಬೆಳಸಿ ಬೆಳಗಿಸಿದ ಶ್ರೇಯಸ್ಸು ಪ್ರಭುಕುಮಾರ ಪಟ್ಟಾಧ್ಯಕ್ಷರದು. ಯೋಗಶಿಕ್ಷಕರಾಗಿ ಬಹುದಿವಸ ಅವರು ಕೆಲಸ ಮಾಡಿದರು. ಪ್ರತಿ ಫಲಾಕಾಂಕ್ಷೆಯಿಲ್ಲದೆ ತ್ಯಾಗದಿಂದ ತಮ್ಮ ಸೇವೆಯನ್ನು ಸಂಸ್ಥೆಗೆ ಸಲ್ಲಿಸಿದರು. ವಟುಗಳಿಗೆ ಆಸನಗಳನ್ನು ಕಲಿಸುತ್ತಿದ್ದರು. ಸಾಧಕರಿಗೆ ಷಟ್ಕರ್ಮಗಳ ಮರ್ಮವನ್ನು ಹೇಳುತ್ತಿದ್ದರು.
ಮೇಲಿನ ಯೋಗಗಳನ್ನು ತಾವು ಮಾಡುತ್ತಿದ್ದರು. ಯೋಗವಿದ್ಯೆಯ ಶಿಕ್ಷಣದ ಹೆಚ್ಚಿನ ಹೊಣೆಗಾರಿಕೆ ಅವರದಾಗಿತ್ತು. ಅದನ್ನು ಅವರು ತೃಪ್ತಿಕರವಾಗಿ ನೆರವೇರಿಸುತ್ತಿದ್ದರು. ಆಸನಗಳಿಂದ ಆಶ್ರಮದಲ್ಲಿರುವವರ ಶರೀರವನ್ನು ಆರೋಗ್ಯವಾಗಿರಿಸುವ ಪ್ರಾಣಾಯಾಮದಿಂದ ಪ್ರಾಣಶಕ್ತಿಯನ್ನು ಹೆಚ್ಚಿಸುವಯೋಗದಿಂದ ಚಿತ್ತವೃತ್ತಿಗಳನ್ನು ನಿರೋಧಿಸುವ, ದೀಕ್ಷೆಯಿಂದ ಆತ್ಮವನ್ನು
ಅರಳಿಸುವ ಈ ಎಲ್ಲ ಸತ್ಕಾರ್ಯ ಗಳನ್ನು ಅವರೊಬ್ಬರು ಮಾಡಿ ನೆರವೇರಿಸುತ್ತಿದ್ದರೆಂದರೆ ಆ ಮಹಾವ್ಯಕ್ತಿಯ ಆ ಯೋಗಿರಾಜನ ವೈಶಿಷ್ಟ ಎಂತಹದೆಂಬುದನ್ನು ಓದುಗರೇ ಊಹಿಸಿಕೊಳ್ಳಬೇಕು.
ಯೋಗ-ಶಿವಯೋಗಗಳಿಂದ ಅವರು ಶ್ರೀಗುರುವಿನ ಶಕ್ತಿಯನ್ನುಸಂಗಳಿಸಿದ್ದರು. ಅವುಗಳ ಬಲದಿಂದ ಅನೇಕರಿಗೆ ಶಿವದೀಕ್ಷೆಯ ಮಾಡಿ,ಅವರ ಮಾಂಸಪಿಂಡಗಳನ್ನು ಕಳೆದು ಮಂತ್ರಪಿಂಡಿಗಳನ್ನಾಗಿ ಮಾಡಿ,ಶಿಷ್ಯ ಸಮುದಾಯವನ್ನು ಅಸಂಖ್ಯಾತವಾಗಿ ಸಂಪಾದಿಸಿದ ಭಾಗ್ಯ ಅವರದು. ಅವರ ಆ ಕೃಪೆಗೆ ಪಾತ್ರರಾದ ಸೌಭಾಗ್ಯ ಅವರ ಶಿಷ್ಯರದು. ಅವರ ಕರೆಕಂಜಾತರಿಗೆ ಲೆಕ್ಕವಿಲ್ಲ. ಅವರನ್ನು ಶಿಷ್ಯ ಸಂಪತ್ತನ್ನು ಗಳಿಸಿದವರು ಮತ್ತೊಬ್ಬರಿಲ್ಲ.ಬರೀ ಶಿವದೀಕ್ಷೆ ಒಂದರಿಂದಲ್ಲ ಯೋಗಶಿಕ್ಷಣ ದಿಂದಲೂ ಅವರಿಗೆ ಶಿಷ್ಯರಾಗದವರು ತೀರ ಅಪರೂಪ. ಇದರಿಂದಲೂ ಸಹ ಅವರದೇ ಪ್ರಭುರೂಪ; ಅವರೇ ಪ್ರಭುಕುಮಾರ !.
ಅವರು ಹೆಚ್ಚಾಗಿ ಓದಿದವರಲ್ಲ. ಓದಿದವರೆಲ್ಲರಿಂದಲೂ ಅಷ್ಟೊಂದು ಕಾರ್ಯಗಳಾಗುವದಿಲ್ಲ. ನಾವು ಬಲ್ಲವರೆಂಬ ಅಭಿಮಾನ ಮಾತ್ರ ತುಂಬಿಕೊಂಡಿರುತ್ತದೆ. ವಿನಯಾದಿಗಳಿಗೆ ಅಲ್ಲಿ ಅವಕಾಶವಿರುವುದು ತೀರ ಕಡಿಮೆ. ಓದಿದವರ ಬುದ್ದಿ ವಿಶಾಲವಾದುದರ ಫಲವೆಂದರೆ ಬುದ್ಧಿ ವಿಚಲವಾಗುವುದೆ ಸ್ಥಿತಪ್ರಜ್ಞರಾಗಿರುವವರು ತೀರ ವಿರಳ ! “ಓದಿ ಕೆಟ್ಟ ಕೂಚ ಭಟ್ಟ’ ಎಂಬಂತೆ ಅರಿತವರೆಂಬ ಹುಚ್ಚು ಹಿಡಿಯುವವರೆ ಹೆಚ್ಚು.ಅ೦ತಹ ಓದಿನಿಂದೇನು ? ಪರರ ಜೀವನಕ್ಕೆ ಜ್ವಲಂತವಾದ ಉಪಕಾರವನ್ನು ಸರ್ವತೋಮುಖವಾಗಿ ಮಾಡುವದಕ್ಕಿಂತಲೂ ಬೇರೆ ಓದಿಲ್ಲ. ಓದಿಗೆ ಇದುವೇ ಚರನು ಫಲ, ಈ ಗುಣವುಳ್ಳವರು ಓದಿದರೂ ಸರಿಯೆ ! ಓದದಿದ್ದರೂ ಸರಿಯೇ ! ಬರೀ ಒಂದು ಅಕ್ಷರಾಭ್ಯಾಸ ಮಾಡಿದರೆ ಹೆಚ್ಚಲ್ಲ. ‘ಸಾಕ್ಷರಾ ವಿಪರೀತಾಶ್ವೇತೆ ರಾಕ್ಷಸಾ ಏವ ಕೇವಲಂ’ ಎಂಬ ಮಾತು ತುಂಬಾ ಅನುಭವ ಪೂರ್ಣವಾದ ಮಾತು.ಇದಕ್ಕೆ ನಿದರ್ಶನವಾಗಿ ನೂರಕ್ಕೆ ಎಂಭತ್ತು ಸಿಕ್ಕುವಲ್ಲಿ ಸಂಶಯವಿಲ್ಲ.ಸ್ಥಿತಪ್ರಜ್ಞರಾಗಿರಲು ಹೆಚ್ಚು ಓದಿದವರೇ ಬೇಕೆಂಬ ನಿಯಮವೇನೂ ಇಲ್ಲ.ರಾಮಕೃಷ್ಣ ಪರಮಹಂಸರು ಅದೆಷ್ಟು ಓದಿದ್ದರು ? ಅವರ ಸ್ಥಿತ ಪ್ರಜ್ಞತೆ ಯೇನು ? ಅವರ ಶಕ್ತಿ ಸಾಕ್ಷಾತ್ಕಾರ ಸಂಪತ್ತಿಯೇನು ? ಅವರ ಶಿಷ್ಯೋದ್ಧಾರ ಪ್ರಭಾವವೇನು ? ವಿವೇಕಾನಂದರಂತಹ ವಿಚಾರಪರರೂ ಸಹ ಅವರ ಆತ್ಮಶಕ್ತಿಗೆ ಬಾಗಿ ಶಿಷ್ಯರಾಗಲಿಲ್ಲವೆ ? ಅದರಂತೆ ಶರೀರದಿಂದ ಆತ್ಮನವರೆವಿಗೂ ಯೋಗಶಿಕ್ಷಣಕೊಡುವ ಶಕ್ತಿಯುಳ್ಳ ಆ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಬೇರೆ ಪುಸ್ತಕಗಳ ಓದು ಬೇಕಾಗಿರಲಿಲ್ಲ. ಅವರ ಯೋಗಾನುಭವವೇ ಹಿರಿದಾದ ಓದಾಗಿತ್ತು. ಯೋಗದ ಸರ್ವಾಂಗ ಶಿಕ್ಷಣವೇ ಮಿಗಿಲಾದ ಶಿಕ್ಷಣ ವಾಗಿತ್ತು. ಶಾರೀರಿಕ ಮಾನಸಿಕ ಆಧ್ಯಾತ್ಮಿಕ-ಶಿಕ್ಷಣ ಅವರದು. ಇದರಿಂದ ಅವರ ಅದ್ವಿತೀಯ ಶಿಕ್ಷಕರಾಗಿದ್ದರೆಂದರೆ ಹೆಚ್ಚಲ್ಲ; ಔಚಿತ್ಯಕ್ಕೆ ಹೊರತಲ್ಲ.
ಓದಿದವರು ಬೌದ್ಧಿಕ ಶಿಕ್ಷಣವೊಂದನ್ನು ಮಾತ್ರ ಕೊಡಬಲ್ಲರು. ಹೆಚ್ಚಾದರೆ ಆರ್ಥಿಕ ಶಿಕ್ಷಣ ಕೊಡಬಲ್ಲರು.ನೈತಿಕ ಶಿಕ್ಷಣವೂ ಸಹ ಅವರಿಂದ ಸಾಧ್ಯವಿಲ್ಲೆಂಬುದಕ್ಕೆ ಇಂದಿನ ಶಿಕ್ಷಣವೇ ಸಾಕ್ಷಿ!
ಪ್ರಭುಕುಮಾರ ಪಟ್ಟಾಧ್ಯಕ್ಷರಲ್ಲಿ ಸರಳತೆ ಮನೆ ಮಾಡಿಕೊಂಡಿತ್ತು,ಹೆಚ್ಚು ಓದಿದವರಿಗೂ ಸರಳತೆಗೂ ಹಾವು ಮುಂಗಸಿಯ ಸ್ನೇಹ, ಪ್ರಭುಕುಮಾರ ಪಟ್ಟಾಧ್ಯಕ್ಷರು ಮಾತ್ರ ಹಾಗಿರಲಿಲ್ಲ.ಎಂತಹ ಕಷ್ಟ ಬಂದರೂ ಎಷ್ಟು ಮಂದಿ ಎದುರಾಳಿಗಳಾಗಿ ನಿಂತರೂ ಅವರು ತಮ್ಮ ಸರಳತೆಯನ್ನು ಬಿಟ್ಟು ಕೊಡುತ್ತಿರಲಿಲ್ಲ. ‘ಸರಸೋ ವಿಪರೀತಶ್ಚೇತ್ ಸರಸತ್ವಂ ನ ಮುಂಚತಿ’ ಎಂಬ ಮಾತಿಗೆ ಅವರು ಸತ್ಯ ಸಾಕ್ಷಿಯಾಗಿದ್ದರು.ಸರಳತೆ ಅವರ ರಕ್ತದ ಪ್ರತಿ ಕಣದಲ್ಲಿಯೂ ಬೆರತು ಹೆಪ್ಪುಗಟ್ಟಿತ್ತು. ಊಟ-ಉಡಿಗೆ, ಗುಣಸ್ವಭಾವ ಎಲ್ಲದರಲ್ಲಿಯೂ ಅವರಿಗೆ ಸರಳತೆಯಿತ್ತು. ಯತಿಯತ್ನ ಅವರ ಜೀವನೋದ್ಯಮ; ಯಥೋಚಿತವಾದ ಜೀವನಕ್ರಮ, ಯಥಾರ್ಥ, ಯಥಾಸ್ಥಿತಿ, ಯಥಾಶಕ್ತಿ- ಅವರ ಜೀವನ ಪಲ್ಲವಿ. ಯದೃಚ್ಛೆಯಾಗಿ ಅವರು ಎಂದೂ ವರ್ತಿಸಿದವರಲ್ಲ. ಮಾತಿನಲ್ಲಿ ಮತ್ತೊಂದರಲ್ಲಿ ಅವರು ತಮ್ಮ ಶಕ್ತಿಮೀರಿ ಹೋಗುವವರಲ್ಲ ಯಮ-ನಿಯಮಗಳಲ್ಲಿ ಅವರಿಗೆ ಅಪಾರ ಪ್ರೇಮ. ಆಸನ-ಪ್ರಾಣಾಯಾಮಗಳಲ್ಲಿ ಅವರಿಗೆ ಅತ್ಯಂತ ಆಸಕ್ತಿ.ಅವುಗಳಲ್ಲಿಯೇ ಅವರು ತಮ್ಮ ಕಾಲವನ್ನು ಕಳೆಯುತ್ತಿದ್ದರು. ಯಾವ ವೈಭವದಲ್ಲಿಯ ಯಾವ ಭೋಗಭಾಗ್ಯದಲ್ಲಿಯೂ ಅವರಿಗೆ ಆಶೆಯಿರಲಿಲ್ಲ. ಯಾವ ಸುಭೋಜನದಲ್ಲಿಯೂ ಅವರಿಗೆ ಬಯಕೆಯಿರಲಿಲ್ಲ. ಪೂಜಾಸಾಮಗ್ರಿ ಯೋಗಸಾಧನ ಸಾಹಿತ್ಯ ಇವುಗಳೇ ಅವರ ಸಂಪತ್ತು. ಹಸುವಿನ ಹಾಲು-ಅಂಜೂರಿಹಣ್ಣು ಇವೇ ಅವರ ಆಹಾರ. ಮತ್ತೊಂದನ್ನು ಅವರು ಸ್ವೀಕರಿಸುತಿರಲಿಲ್ಲ. ಹಾಲುಂಡೆ ಮಾಡಿದರೆ ಅಲ್ಲಿಗೆ ಹೆಚ್ಚು, ಬಿದರೆಯಲ್ಲಿ ಅವರ ಮಠವಿದ್ದರೂ ಅದರ ಆಗು ಹೋಗುಗಳನ್ನು ಅವರು ತಮ್ಮ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಅದಕ್ಕಾಗಿ ಶ್ರಮಿಸುತ್ತಿರಲಿಲ್ಲ ಶಿವಯೋಗಮಂದಿರವೇ ಅವರ ಮಠ, ಲತಾಮಂಟಪವೆ ಅವರ ವಾಸಸ್ಥಳ. ಊಟದಂತೆ ಉಡಿಗೆಯಲ್ಲಿಯೂ ಸಹ ಅವರು ತೀರ ಸರಳ. ತೊಡಲು ಒಂದು ಸಣ್ಣ ಅಂಗಿ, ಅದರ ಮೇಲೆ ಅಂಗದಟ್ಟು, ಕಟ್ಟ ಲು ಒಂದು ದೊಡ್ಡ ಪಂಜೆ. ಮಸ್ತಕಕ್ಕೆ ಸುತ್ತಲೂ ಒಂದು ಪೇಟ ಈ ಮೂರಾದರೆ ಅವರ ಉಡುಪು ಮುಗಿಯಿತು.ಹೆಚ್ಚಿನದನ್ನು ಅವರು ಅಪೇಕ್ಷಿಸುತ್ತಿರಲಿಲ್ಲ.
ಉಡುಪಿನಲ್ಲಿ ಊಟದಲ್ಲಿ ಉತ್ತಮಿಕೆಯಲ್ಲಿ ಅವರದೇ ಒಂದು ಪೆಂಪು, ಅವರದೇ ಒಂದು ಮುಡಿಪು; ಅವರದೇ ಒಂದು ಮುನ್ನಡೆ..
ಪ್ರಭುಕುಮಾರ ಪಟ್ಟಾಧ್ಯಕ್ಷರು ಯೋಗಪ್ರೇಮಿ; ಆತ್ಮಸಂಯಮಿ, ಅವರು ಎಲ್ಲವನ್ನೂ ನಿರೋಧಿಸಿದ್ದರು ಅವರ ಅರ್ಪಿತ (ಊಟ) ಎಷ್ಟು ಪರಿಮಿತವೋ ಅವರ ನಿದ್ರೆಯೂ ಅಷ್ಟೇ ಪರಿಮಿತ, ಶಿವಯೋಗಮಂದಿರದಲ್ಲಿ ಸಾಧಕರೆಲ್ಲರು ಮಲಗಿದ ಮೇಲೆ ಅವರು ಪವಡಿಸುತ್ತಿದ್ದರು. ಮರಳಿ ಬೆಳಗಿನ ಜಾವಕ್ಕೆ ಯಾರೂ ಏಳದ ಮೊದಲು ಅವರು ನಿತ್ಯದಲ್ಲಿ ಏಳುತ್ತಿದ್ದರು.ಎದ್ದು ತಾವೇ ಸ್ವತಃ ಉಳಿದವರೆಲ್ಲರನ್ನು ಎಬ್ಬಿಸುತ್ತಿದ್ದರು. ಅಹಂಕಾರ ಅವರಲ್ಲಿರಲಿಲ್ಲ. ಒಬ್ಬರಿಂದ ಮನ್ನಣೆಯನ್ನಾಗಲಿ ,ಬಣ್ಣನೆಯನ್ನಾಗಲಿ ಅವರುಎಂದಿಗೂ ಎಷ್ಟು ಮಾತ್ರಕ್ಕೂ ಅಪೇಕ್ಷಿಸಿದವರಲ್ಲ. ಯಾವ ವಿಧವಾದ ಜನ ಗುಣಗಳಿಗೆ ಜೋಲು ಬಿದ್ದವರಲ್ಲ.ಜೀವನ ಜಂಜಾಟಕ್ಕೆ ಸಿಕ್ಕುಬಿದ್ದವರಲ್ಲ.ಯಾವಜ್ಜೀವವೂ ಅವರು ಯೋಗ-ಶಿವಯೋಗಗಳಲ್ಲಿಯೇ ಪರವಶರಾದವರು.ಅವರ ನಿದ್ದೆಯ ಸಹ ತೀರ ಸೂಕ್ಷ್ಮ ವಾಗಿತ್ತು. ಸಾತ್ವಿಕಾಹಾರದಲ್ಲಿದ್ದ ಅವರ ನಿದ್ದೆ ಗಾಢವಾಗಿರಲು ಸಾಧ್ಯವಿಲ್ಲ; ಇರಲಿಲ್ಲ. ಸ್ವಲ್ಪ ಶಬ್ದವಾದರೆ ಎಚ್ಚರಾಗುತ್ತಿದ್ದರು. ಇರುಳೆಲ್ಲ ನಿದ್ದೆ ಮಾಡದಿದ್ದರೂ ಅವರ ಆರೋಗ್ಯ ಕೆಡುತ್ತಿರಲಿಲ್ಲ ಪರ್ವದಿನಗಳಲ್ಲಿ ಗ್ರಹಣ ದಿನಗಳಲ್ಲಿ ಅವರು ರಾತ್ರಿ ಮಲಗುತಿರಲಿಲ್ಲ. ಪರ್ವದಿನಗಳಲ್ಲಿ ಇರುಳೆಲ್ಲ ಪೂಜೆಯನ್ನೂ ಗ್ರಹಣ ದಿನಗಳಲ್ಲಿ ಆಸನ, ಜಲಸ್ತಂಭನ, ಧ್ಯಾನ ಮೊದಲಾದವುಗಳನ್ನು ಮಾಡುವದರಲ್ಲಿ ಮಗ್ನರಾಗಿರುತ್ತಿದ್ದರು , ‘ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ “ ಎಂಬ ಗೀತೋಕ್ತಿ’ಯನ್ನು ಅವರು ಪರಿಪಾಲಿಸುತ್ತಿದ್ದರು.ಅದೇ ರೀತಿ ಅವರು ಅವರು ಇರುತ್ತಿದ್ದರು.ಆ ಗೀತಾವಾಣಿಯಲ್ಲಿ ಅವರಿಗೆ ಸಂಪೂರ್ಣ ಶ್ರದ್ಧೆಯಿತ್ತು. ಅದರ ಮುಂದಿನ ಪಂಕ್ತಿಯಲ್ಲಿ ಹೇಳಿದಂತೆ ಅವರಿಗೆ ಹಗಲು ರಾತ್ರಿಯಾಗಿ ಪರಿಣಮಿಸಿತ್ತು. ಅವರು ತಮ್ಮ ದೃಷ್ಟಿಯನ್ನು ಮನಸ್ಸನ್ನು ಸೃಷ್ಟಿಯಿಂದ- ಸೃಷ್ಟಿ ಸುಖದಿಂದ ಹಿಂದಕ್ಕೆ ಸೆಳೆದು ಆತ್ಮನಲ್ಲಿ ಅಳವಡಿಸಿದ್ದರು; ಆನಂದ ಪರವಶರಾಗಿದ್ದರು.
ಯೋಗಿರಾಜರಾದ ಅವರು ಯುಕ್ತಿ-ಕುಯುಕ್ತಿಗಳನ್ನು ಕಂಡವರಲ್ಲ;ಬಳಸಿದವರಲ್ಲ. ಜಾಗತಿಕ ಜೀವನದ-ಭೌತಿಕ ಭೋಗದ ಹಂಗಿದ್ದರಲ್ಲವೇ ಅವರು ಅವುಗಳಿಗೆ ಪಾಲು ಮಾರುವುದು? ಮೋಸ ಅವರ ಮುಂದೆ ಸುಳಿಯಬಾರದು.ಹಗೆತನ ಮಾಡಿದವರಲ್ಲ. ಮನ ನೋಯುವ ಮಾತು ಗಳನ್ನು ಆಡಿದವರಲ್ಲ. ಒಂದು ವೇಳೆ ತಮ್ಮ ಮೇಲೆ ಯಾರಾದರು ಅಸೂಯಾಂಧರು ಕಕ್ಷಿಗಳಾಗಿ ಏರ್ಪಟ್ಟರೆ ಅವರ ಮೇಲೆ ಪ್ರತಿಕಕ್ಷಿಗಳಾಗಿ ಹೋರಾಡುವವರಲ್ಲ. ಮೌನದಿಂದ ಮೈತ್ರಿಭಾವದಿಂದ ಹಗೆತನವನ್ನು ಜಯಿಸುತ್ತಿದ್ದರು. ಶತ್ರುಗಳನ್ನು ಮಿತ್ರರನ್ನಾಗಿಸುತ್ತಿದ್ದರು. ಕಪಟಾತ್ಮರು ಯಾರಾದರು ಹಾಗೆ ಮಿತ್ರರಾಗಿ ಮಾರ್ಪಡದಿದ್ದರೆ ಅವರ ವಿಷಯದಲ್ಲಿ ತಟಸ್ಥರಾಗಿರುತ್ತಿದ್ದರು. ಅವರ ವಿಷಯದಲ್ಲಿ ಅವರು ಅದೆಂದಿಗೂ ಪ್ರತೀಕಾರ ಪ್ರತಿಕ್ರಿಯೆಗಳನ್ನು ತೋರಿಸುವವರಲ್ಲ. ಪ್ರತಾಪ ಪ್ರತಿಭಟನೆ ಮಾಡುವವರಲ್ಲ.ಪ್ರತಿಷ್ಠೆ ಪ್ರತಿಷೇಧಗಳಿಗೆ ಹೋಗುವವರಲ್ಲ. ರಾಗದ್ವೇಷಗಳನ್ನು ಜಯಿಸಿದ ಯೋಗಿರಾಜರು ಅವರು.: ಮದ ಮತ್ಸರಗಳನ್ನು ಗೆದ್ದ ಗುರುವರ್ಯರು ಅವರು.
ಶಿಷ್ಯ ವಾತ್ಸಲ್ಯ ಅವರಲ್ಲಿ ವಿಶೇಷವಾಗಿತ್ತು. ತಮ್ಮ ಶಿಷ್ಯರ ಸಾಧಕರ ಯೋಗಕ್ಷೇಮವನ್ನು ಹೃದಯಾರೆ ನೋಡಿಕೊಳ್ಳುತ್ತಿದ್ದರು. ಯಾರಾದರು ಕಾಯಿಲೆಯಿಂದ ಮಲಗಿದರೆ ಸ್ವತಃ ಉಪಚರಿಸುತ್ತಿದ್ದರು; ವಿಚಾರಿಸುತ್ತಿದ್ದರು. ತಾವೇ ನಿಂತು ಅವರ ಪಥ್ಯವನ್ನು ನೋಡಿಕೊಳ್ಳುತ್ತಿದ್ದರು. ರೋಗಿಗಳ ಎದುರಿನಲ್ಲಿಯೇ ಕುಳಿತು ಉಚಿತವಾದುದನ್ನೆ ಊಟ ಮಾಡಿಸುತ್ತಿದ್ದರು. ಮಿತಿಮೀರಿ ಉಣ್ಣು ವದು, ಅಗಿಯದೆ ಬೇಗ ಬೇಗ ಉಣ್ಣುವುದು ಅವರಿಗೆ ಆಗದ ವಿಷಯ.ಅಂಥವರನ್ನು ಲಕ್ಷಿಸಿ ನೋಡಿ ಅವರಿಗೆ ಬುದ್ದಿ ಹೇಳುತ್ತಿದ್ದರು. ಊಟಕ್ಕೆ ಮೊದಲೆ ಹೆಚ್ಚಾಗಿ ನೀರು ಕುಡಿಯಕೂಡದೆಂದು ಅದರಿಂದ ಜೀರ್ಣಶಕ್ತಿ ಕುಂದಿ ಪಿತ್ತ ಉದ್ರೇಕವಾಗುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು ಹಲ್ಲಲ್ಲಿ ಅಗಿದಷ್ಟೂ ಒಳಿತು,ಅದರಿಂದ ಲಾಲಾರಸ ಅನ್ನದಲ್ಲಿ ಸಮರಸವಾಗಿ ರುಚಿಯ ಜೀರ್ಣಶಕ್ತಿಯೂ ಹೆಚ್ಚುತ್ತದೆಯೆಂದು ತಿಳಿಹೇಳುತ್ತಿದ್ದರು,ಹತ್ತು ಮಂದಿ ಹೆಚ್ಚಾಗಿ ಕೂಡಿ ಉಂಬುವದನ್ನು ಕಂಡು ಹರಷಿಸುತ್ತಿದ್ದರು,ಪರ್ವ ದಿನಗಳಲ್ಲಿ ಹಬ್ಬದೌತಣವಾದರೆ ಆ ದಿನ ತಮ್ಮ ಪೂಜೆಯನ್ನಾದರು ನಿಯಮಿತವೇಳೆಗೆ ನಿಲ್ಲಿಸಿ ವಟುಗಳ ಪಂಕ್ತಿ ಆಗುವ ವರೆವಿಗೂ ಇದ್ದು, ಉಣ್ಣುವವರ ಪ್ರೀತಿಯನ್ನನುಸರಿಸಿ ಉಣ್ಣಿಸಿ ಉಲ್ಲಾಸಪಡುತ್ತಿದ್ದರು,ಇಲ್ಲದಿದ್ದರೆ ಮುಂದಾಗಿಯೇ ತಮ್ಮ ಪೂಜೆಯನ್ನು ಪೂರೈಸಿಕೊಂಡು ಬಂದು ಪಂಕ್ತಿಯ ಮೇಲಿರುತ್ತಿದ್ದರು. ಒಟ್ಟಿನಲ್ಲಿ ಆ ದಿನದ ಆ ಸಂದರ್ಭವನ್ನು ಅವರು ಕಳೆದು ಕೊಳ್ಳುತ್ತಿರಲಿಲ್ಲ, ಅದರಲ್ಲಿ ಅವರಿಗೆ ಅಷ್ಟೊಂದು ಪ್ರೇಮವಿತ್ತು.
ಬೈಗಿನಲ್ಲಿ ದೀಪಾರಾಧನೆಯಾದೊಡನೆ ಭಜನಾಸ್ಥಳಕ್ಕೆ ತಾವೇ ಮುಂದಾಗಿ ಆಗಮಿಸುತ್ತಿದ್ದರು. ಅವರನ್ನು ನೋಡಿ ಬಿಟ್ಟು ಉಳಿದ ವಟುಗಳೆಲ್ಲ ಬೇಗ ಬರುತ್ತಿದ್ದರು. ಅವರಿರುವಾಗ ಒಂದು ಕ್ರಮದಿಂದ ಭಕ್ತಿಭಾವದಿಂದ ಭಜನೆ ಸಾಗುತ್ತಿತ್ತು. ಮೊದಲು ಹಿರಿಯರು ಅವರ ಪಕ್ಕದಲ್ಲಿ ಕಿರಿಯರು ಹೀಗೆ ಪರಿವಿಡಿದು ಕುಳಿತುಕೊಳ್ಳಬೇಕು, ಪಂಕ್ತಿಯಾಗಿಯೋ ಮಂಡಲಾಕಾರ ವಾಗಿಯೋ ಸ್ವಸ್ತಿಕಾಸನ ಹಾಕಿ ಕುಳಿತು ಕೊಳ್ಳಬೇಕು. ಎಲ್ಲರೂ ಕೈಗಳನ್ನು ಎದೆಯಮೇಲೆ ಜೋಡಿಸಿರಬೇಕು, ಅತ್ತಿತ್ತ ನೋಡಕೂಡದು. ಎಲ್ಲರೂ ಸ್ತೋತ್ರವನ್ನು ತಪ್ಪದೇ ಹೇಳಬೇಕು. ಎಲ್ಲರ ಹಣೆಯಲ್ಲಿ ವಿಭೂತಿ ಧಾರಣವಿರಬೇಕು. ಒಂದೇ ಸ್ವರದಲ್ಲಿ ಪ್ರಾರ್ಥಿಸಬೇಕು. ಇದಿಷ್ಟು ಅವರಿರುವಾಗ ಚಾಚೂ ತಪ್ಪದೆ ನಡೆವ ಕ್ರಮ. ಈ ಕ್ರಮದಿಂದ ಮಾಡುವ ಪ್ರಾರ್ಥನೆಯನ್ನು ಹರ್ಷಚಿತ್ತದಿಂದ ಕೇಳುತ್ತಿದ್ದರು. ಏಕಾಗ್ರತೆಯನ್ನು ತಾಳುತ್ತಿದ್ದರು,
ಅನಂತರ ಅವರವರ ಅಭ್ಯಾಸವನ್ನು ಅವರವರು ಓದಿಕೊಳ್ಳ ಬೇಕು.ಚನ್ನಾಗಿ ಓದುವವರನ್ನು, ಓದಿ ಮುಂದುವರಿವವರನ್ನು ಕಂಡು ಅವರನ್ನು ಆದರಿಸುತ್ತಿದ್ದರು; ಪ್ರೋತ್ಸಾಹಿಸುತ್ತಿದ್ದರು. ಉಳಿದವರಿಗೆ ಅವರನ್ನು ಆದರ್ಶವನ್ನಾಗಿ ತೋರಿಸಿ ಅವರಂತೆ ಓದಲು ಬುದ್ದಿವಾದವನ್ನು ಹೇಳುತಿದ್ದರು. ಮನಸ್ಸಿಗೆ ಬಂದಂದು ಅವರವರು ಓದುತ್ತಿರುವ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುತ್ತಿದ್ದರು. ಸರಿಯಾಗಿ ಒಂದಕ್ಕೂ ಉತ್ತರ ಕೊಡದವರಿಗೆ ಬುದ್ಧಿವಂತರೆ, ಹೀಗೆ ಓದಿದರೆ ಹೇಗೆ ?” ಎಂದು ಮನ ಮುಟ್ಟುವಂತೆ ಆತ್ಮೀಯತೆಯಿಂದ ತಿಳಿ ಹೇಳುತ್ತಿದ್ದರು. ವಿದ್ಯೆಯಲ್ಲಿ ವಕ್ಷ್ಯತ್ವದಲ್ಲಿ ಕುಶಲರಾದವರನ್ನು ಕಂಡರೆ ಅವರಿಗೆ ತುಂಬಾ ಸಂತೋಷ.ಆಗಾಗ ಸಭೆಗಳನ್ನು ಕರೆದು ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಭಾಷಣದ ವಿಷಯವನ್ನು ತಾವೇ ಸೂಚಿಸುತ್ತಿದ್ದರು, ಆ ವಿಷಯದಲ್ಲಿ ಯಾರು ಚನ್ನಾಗಿ ಹೇಳುವರೋ ನೋಡಬೇಕೆಂಬುದೇ ಅವರ ಅಂತರಂಗದ ಆಕಾಂಕ್ಷೆ! ಚನ್ನಾಗಿ ಹೇಳಿದವರನ್ನು ತಮ್ಮ ಅಮರವಾಣಿಯಿಂದ ಹರಸಿ ಹುರುಪಿಸುತ್ತಿದ್ದರು. ತಪ್ಪು ಹೇಳಿದವರನ್ನು ತಿದ್ದುತ್ತಿದ್ದರು. ಪ್ರತಿ ದಿನವೂ ನಡೆಯುವ ಪುರಾಣಕ್ಕೆ ಬಿಡದೆ ದಯಮಾಡಿಸುತ್ತಿದ್ದರು. ಪುರಾಣ ಮುಗಿದ ಮೇಲೆ ಪುರಾಣದಲ್ಲಿ ಬಂದ ವಿಷಯದ ಸಾರಾಂಶವನ್ನು ಹೇಳಲು ತಮ್ಮ ಚಿತ್ತ ಬಂದವರಿಗೆ ಅಪ್ಪಣೆ ಮಾಡುತ್ತಿದ್ದರು. ಚಿತ್ರಗೊಟ್ಟು ಪುರಾಣವನ್ನು ಕೇಳುವರೋ ಇಲ್ಲೋ ಎಂಬುದನ್ನು ಅರಿಯುವುದೇ ಅವರ ಅಂತರಂಗ. ಅಷ್ಟು ದೂರದ ವರೆವಿಗೂ ವಟುಗಳ ಸಾಧಕರ ಜ್ಞಾನಾರ್ಜನೆಯ ಮುನ್ನಡೆಯಲ್ಲಿ ಅವರ ಅಭಿಲಾಷೆ;ಅವರ ಮುನ್ನಿರೀಕ್ಷಣೆ !
ಬೈಗಿನಲ್ಲಿ ಬಾಲಕರೆಲ್ಲ ಹೂವಿನ ಗಿಡಗಳಿಗೆ ನೀರು ಹಾಕಬೇಕು.ಹಾಕುವರೋ ಇಲ್ಲವೋ ಎಂದು ತಾವೇ ಆಗಮಿಸಿ ನಿರೀಕ್ಷಿಸುತ್ತಿದ್ದರು.ಕಡಿಮೆ ಹಾಕಿದರೂ ಅವರಿಗೆ ಆಗುತ್ತಿರಲಿಲ್ಲ. ಅವರಿಂದ ಮರಳಿ ಹಾಕಿಸುತ್ತಿದ್ದರು. ಒಬ್ಬೊಬ್ಬರಿಗೆ ಇಷ್ಟಿಷ್ಟು ಗಿಡಗಳೆಂದು ಹಂಚಿಕೊಡುತ್ತಿದ್ದರು.ಹೂವಿನ ಗಿಡಬಳ್ಳಿಗಳ ಮೇಲೆ ಅವರಿಗೆ ಮೀರಿದ ಪ್ರೇಮ. ಗಿಡಬಳ್ಳಿಗಳು ಹೂವು ಬಿಟ್ಟಂತೆ ಅವರ ಹೃದಯಕಮಲ ಅರಳುತ್ತಿತ್ತು. ಆಕಸ್ಮಿಕವಾಗಿ ಯಾರಾದರೂ ನೀರು ಹಾಕದೆ ಯಾವುದಾದರೂ ಗಿಡ ಬಾಡಿ ನಿಂತಿದ್ದರೆ ಅವರ ಮನಸ್ಸು ಮುಖಗಳೂ ಸಹ ಅಷ್ಟೆ ಬಾಡುತ್ತಿದ್ದವು. ತೊರೆಯನ್ನು ಕಂಡರೆ ಅವರಿಗೆ ತೀರದ ಆನಂದ. ಅದರ ತೀರದಲ್ಲಿಯೆ ಯಾವಾಗಲು ತಂಗಿರುತ್ತಿದ್ದರು. ತೊರೆಯ ನೀರಿನಲ್ಲಿಯೆ ಮಿಂದು ತೃಪ್ತಿ ಪಡುತ್ತಿದ್ದರು. ಈಜುವವರನ್ನು ಕಂಡರೆ ಅವರಿಗೆ ತುಂಬಾ ಇಷ್ಟ.ಅದರಲ್ಲಿಯೂ ನೀರ ಮೇಲೆ ಪದ್ಮಾಸನ ಹಾಕಿ ತೇಲುವವರನ್ನು ಕಂಡು ಮತ್ತೂ ಸಂತೋಷಿಸುತ್ತಿದ್ದರು. ಅದರಂತೆ ಮಾಡಲು ಅನೇಕರಿಗೆ ಕಲಿಸಿದ್ದರು. ಕೊರಳುದ್ದ ನೀರಲ್ಲಿ ಅದೆಷ್ಟೋ ಗಂಟೆಗಳ ಕಾಲ ಕದಲದೆ ಸ್ವತಃ ನಿಲ್ಲುವ ಅಭ್ಯಾಸ ಅವರಿಗಿತ್ತು. ಜಲದ ಮೇಲೆ ಎಷ್ಟು ಹೊತ್ತಾದರೂ ಲೀಲಾಜಾಲ ವಾಗಿ ತೇಲುತ್ತಿದ್ದರು,
ರಾತ್ರಿ ಶಿವಪೂಜೆ ತೀರಿದ ಮೇಲೆ ಸಾಧಕರು ವಟುಗಳು ೧೦ ಗಂಟೆಯ ವರೆವಿಗೂ ಓದಬೇಕಾದ ನಿಯಮ. ತಾವೂ ಸಹ ಆ ವೇಳೆಯೊಳಗೆ ಪವಡಿಸುತ್ತಿರಲಿಲ್ಲ. ತಮ್ಮ ಮನಸ್ಸಿಗೆ ಬಂದವರನ್ನು ತಮ್ಮ ಬಳಿಗೆ ಕರೆಯಿಸಿಕೊಂಡು ಹಠಯೋಗ ಪ್ರದೀಪಿಕೆಯೋ ಯೋಗಸೂತ್ರವೋ ಇಲ್ಲವೆ ಇನ್ನಾವುದನ್ನಾದರೋ ಓದಿಸಿ ಅರ್ಥವನ್ನು ವಿವರಿಸಲು ಹೇಳುತ್ತಿದ್ದರು.ಅವರು ಸಂಸ್ಕೃತ ಓದಿ ಬಲ್ಲವರಾಗದಿದ್ದರೂ ತಪ್ಪು ಹೇಳಿದ್ದನ್ನು ತಕ್ಷಣವೇ ಗುರುತಿಸುತ್ತಿದ್ದರು. ಆ ಶಬ್ದಕ್ಕೆ ಆ ಅರ್ಥ ಸರಿಯಾದುದಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. “ಓದು ಒಕ್ಕಾಲು, ಬುದ್ಧಿ ಮುಕ್ಕಾಲು”-ಎಂಬ ನಾಣ್ಣುಡಿ ಯನ್ನು ಅವರಲ್ಲಿ ಪ್ರತ್ಯಕ್ಷ ಮಾಡಿಕೊಂಡಿದ್ದೇವೆ. – ಯೋಗದಿಂದ ಅವರ ಬೌದ್ದಿಕ ಶಕ್ತಿ ಬಲಗೊಂಡಿತ್ತು.
ಯೋಗಾಸನಗಳನ್ನು ಹಾಕುವವರ ಮೇಲೆ, ಯೋಗಸಾಧನೆಯನ್ನು ಮಾಡುವವರ ಮೇಲೆ ಅವರ ಕೃಪಾದೃಷ್ಟಿಯು ಅಮೃತವನ್ನು ಸುರಿಯುತಿತ್ತು, ಯೋಗಾಭ್ಯಾಸದಲ್ಲಿ ಆಸಕ್ತರಾದವರನ್ನು ಕಂಡರೆ ಅವರಿಗೆ ಹಿಡಿಸಲಾರದ ಹರುಷ; ಹೇಳಬಾರದ ಸಂತೋಷ.
ಯೋಗಿರಾಜರಾದ ಅವರು ತಮ್ಮ ಜೀವಿತದಲ್ಲಿ ಅದೆಂದಿಗೂ ಯೋಚಿಸಿದವರಲ್ಲ; ಯಾಚಿಸಿದವರಲ್ಲ, ಅವನ್ನು ಅವರು ಮಾಡುವ ಪ್ರಮೇಯವಿರಲಿಲ್ಲ. ಪ್ರಮೇಯವನ್ನು ತಂದು ಕೊಂಡವರೂ ಅಲ್ಲ; ಕೊಳ್ಳುವವರೂ ಅಲ್ಲ.
ವಿಷಯ ಸುಖ ಬೇಕೆಂದು ಸಂಪತ್ತು ಬೇಕೆಂದು ಅವರೆಂದಿಗೂ ಆಶಿಸಿದವರಲ್ಲ. ಅವುಗಳ ವ್ಯಾಮೋಹಕ್ಕೆ ಅವರು ಒಳಗಾದವರಲ್ಲ.ಅವು ಅವರಿಗೆ ಬೇಕಾಗಿರಲಿಲ್ಲ. ಹಣ ಗಳಿಸಬೇಕೆಂದರೆ ಬೇಕಾದಷ್ಟು ಗಳಿಸಬಹುದಾಗಿತ್ತು.ಹಣ ಅವರಿಗೆ ತೃಣ. ಅದಕ್ಕಾಗಿ ಅವರು ಮನಸ್ಸು ಮಾಡಲಿಲ್ಲ. ಹಣವಂತರು ಅವರ ಯೋಗಕ್ಕೆ ಬೇಕಾದಷ್ಟು ಜನ ಒಲಿದಿದ್ದರು.ಬಿಡಿ ಕಾಸನ್ನೂ ಅಪೇಕ್ಷಿಸಿದವರಲ್ಲ. ಅಯಾಚಿತವಾಗಿ ಅವರಿಂದ ಬಂದುದನ್ನೂ ಸಹ ಅವರು ಮುಟ್ಟುತ್ತಿರಲಿಲ್ಲ. ಸಂಸ್ಥೆಗೋ ಶಿಷ್ಯರಿಗೋ ಕೊಟ್ಟು ಬಿಡುತ್ತಿದ್ದರು. ನಿಜವಾದ ವಿಷಯ ವಿರತಿ ಅವರಲ್ಲಿತ್ತು. ಅದರಿಂದಾಗಿ ಅವರಲ್ಲಿ ಆಶೆ ಆಸಕ್ತಿ ಮೋಹ ಮಮತೆಗಳು ಅವರಲ್ಲಿರಲಿಲ್ಲ. ತೇಜದ ಮುಂದೆ ಯೋಚನೆ ಯಾಚನೆಗಳೆಂಬ ಕಾಳ ತಲೆ ನಿಲ್ಲುವ ಬಗೆ ಹೇಗೆ? ನೀಲಾಕಾಶದಲ್ಲಿ ತೇಲುವ ಮೋಡವನ್ನು ಚಿಂತಾಕ್ರಾಂತರಾಗಿ ಅವರೆಂದಿಗೂ ನೋಡಿದವರಲ್ಲ. ಅವರ ಜೀವನ ಅದೊಂದು ಹೂವಿನ ಬಾಳು.ಹೂವು ದಿನಾಂತ್ಯದಲ್ಲಿ ಹಟಾತ್ತಾಗಿ ಬಾಡುವಂತೆ ಅವರು ಒಮ್ಮಿಗೆ ತಮ್ಮ ಜೀವನಾಂತ್ಯದಲ್ಲಿ ನಗುನಗುತ್ತ ಬಾಡಿದರು. ಮಧ್ಯದಲ್ಲಿ ಬಾಡಿದ ಜೀವನವಲ್ಲ. ಬೇಡಿಬಾಗಿದ ಜೀವನವಲ್ಲ.ಜೀವನಾಂತ್ಯದಲ್ಲಿ ಬಾಡಿದರೆಂಬುದೂ ಸಹ ನಮ್ಮ ದೃಷ್ಟಿಯಲ್ಲಿ; ನಮ್ಮ ದೈಹಿಕ ದೃಷ್ಟಿಯಲ್ಲಿ; ಭೌತಿಕ ಬಗೆಯಲ್ಲಿ.ಅವರ ದೃಷ್ಟಿಯಲ್ಲಿ ಅದೂ ಇಲ್ಲ. ಅದು ಕಂದದ ಹೂವು. ಅದು ತನಗಿರಬೇಕೆಂದು ಆ ಪರಮಾತ್ಮನು ಹೆಬ್ಬಯಕೆಯಿಂದ ಅದನ್ನು ಎತ್ತಿ ತನ್ನಲ್ಲಿರಿಸಿಕೊಂಡನು. ತನ್ನಂತರಂಗದಲ್ಲಿ ಧರಿಸಿಕೊಂಡನು.
ಯೋಗಶಕ್ತಿಯಿಂದ ರಾಜಿಸುವ ಅವರು ರೋಗ ರುಜಿನಗಳಿಂದ ಒಂದು ದಿನವೂ ಸಹ ನೆರಳಿದವರಲ್ಲ. ಯೋಗಿರಾಜರಾದ ಅವರ ಮುಂದೆ ರೋಗಮೃಗಗಳು ಸುಳಿಯುತ್ತಿರಲಿಲ್ಲ; ಸುಳಿಯಲಿಲ್ಲ. ಕೊನೆಯ ವರೆವಿಗೂ ಅವರು ಕಾಯಿಲೆ ಬಂದು ಮಲಗಿದವರಲ್ಲ. ರಸನೇಂದ್ರಿಯವನ್ನು ತಡೆದ ಅವರಿಗೆ ರೋಗಗಳ ಮಾತೆಲ್ಲಿ? ರುಚಿ ರೂಪುಗಳಿಗೆ ಅವರು ಅದೆಂದಿಗೂ ಬಾಯ್ನೀರು ಕರೆದವರಲ್ಲ; ಕಣ್ಣು ಬಿಟ್ಟವರಲ್ಲ. ರೋಗ ರುಜಿನಗಳನ್ನು ರಜೋಗುಣಗಳನ್ನು ಗೆದ್ದ ಋಷಿ ವರ್ಯರು ಅವರು.ರುಜುಕಾಯ ರುಜು ಮಾತುಗಳನ್ನು ಕಾಪಾಡಿದ ಯೋಗಿವರ್ಯರು ಅವರು.
ಕೀರ್ತಿವಾರ್ತೆಗಾಗಿ ಅವರು ಯೋಗಕಲೆಯನ್ನು ಅಭ್ಯಸಿಸಿದವರಲ್ಲ.ಕೀರ್ತಿಯ ಬೆನ್ನು ಬಿದ್ದು ಬಳಲಿದವರಲ್ಲ. ಕರ್ತವ್ಯವೆಂದು ಭಾವಿಸಿ ಅವರು ಯೋಗವನ್ನು ಅಳವಡಿಸಿಕೊಂಡರು. ಕೊನೆಯ ವರೆವಿಗೂ ಅವರು ಅದರಂತೆ ನಡೆದುಕೊಂಡು ಬಂದರು. ಕೀರ್ತಿಗಾಗಿ ಹೆಣಗಿದ್ದರೆ ಅವರು ಕರ್ನಾಟಕದಲ್ಲಿ ಅದ್ವಿತೀಯ ಯೋಗಿಗಳಾಗಿ ಹೆಸರುಗಳಿಸುತ್ತಿದ್ದರು; ಒಸಗೆ ಗೊಳ್ಳುತ್ತಿದ್ದರು.ತಾನಾಗಿಯೆ ತುಂಬಿಕೊಂಡು ಬಂದ ‘ಯೋಗಿರಾಜ” ಎಂಬ ಬಿರುದನ್ನು ಸಹ ಅವರು ಅದೆಂದೂ ಬಳಸಿದವರಲ್ಲ; ಬರೆದವರಲ್ಲ. ಕರ್ತವ್ಯಶೀಲರಾಗಿದ್ದರೆ ವಿನಹ ಕೀರ್ತಿಲೋಲರಾಗಿರಲಿಲ್ಲ. ಕೀರ್ತಿಕಾಂಕ್ಷೆ ಅವರಲ್ಲಿರಲಿಲ್ಲ. ಅವರೊಬ್ಬ ಈ ಕಾಲದ ಗುಪ್ತ ಯೋಗಿಗಳು: ನಿರ್ಲಪ್ತರಾಗಿಗಳು.
ಪ್ರಭುಕುಮಾರ ಪಟ್ಟಾಧ್ಯಕ್ಷರು ಯಾವಾಗಲು ಯೋಗದಕ್ಷರು; ಭೋಗ ನಿರಪೇಕ್ಷರು. ಅವರ ಪುಣ್ಯ ಕಾರ್ಯದಲ್ಲಿ ಕರಣಗಳಲ್ಲಿ ಕಣ್ಣಲ್ಲಿ ಮೊಗದಲ್ಲಿ ಯೋಗದ ಯಥೇಷ್ಟ ಕಳೆ ತುಂಬಿ ತುಳುಕುತ್ತಿತ್ತು. ಯೋಗ ಯೋಗ್ಯವಾದ ಅಂಗರಚನೆ ಅವರದು. ಅವರ ಪ್ರತ್ಯಂಗದಲ್ಲಿಯು ಯೋಗಲಕ್ಷಣವಿತ್ತು;ಯೋಗ ತೇಜವಿತ್ತು. ಈ ಅವರ ಅಂಗದಲ್ಲಿ ಕಾಂತಿ, ಅಂತರಂಗದಲ್ಲಿ ಶಾಂತಿ ಮನೆ ಮಾಡಿದ್ದವು. ಹಟಯೋಗದಿಂದ ಅವರ ಅಂಗವೆಲ್ಲ ಸೌಷ್ಟವಗೊಂಡಿತ್ತು, ಸತ್ಯ ಸುಂದರವಾಗಿತ್ತು. ಅವರ ಹಸ್ತಗಳು ನೀಳವಾಗಿದ್ದವು ಹಣೆ ವಿಶಾಲವಾಗಿತ್ತು. ಎದೆ ಅಗಲಾಗಿತ್ತು. ಮುಖ ಚಂದ್ರಬಿಂಬದಂತಿತ್ತು. ನಿಲುವು ತೀರ ಎತ್ತರಲ್ಲ- ತೀರ ಕುಳ್ಳಾದುದಲ್ಲ. ಶರೀರಕ್ಕೆ ತಕ್ಕದಾಗಿತ್ತು. ಅವರ ಶರೀರ ಹಗುರಾಗಿ ಲವಲವಿಕೆಯಿಂದಿತ್ತು. ಅವರ ಶರೀರ ಅತಿ ಸ್ಥೂಲವಲ್ಲ-ಅತಿ ಕೃಶವಲ್ಲ. ಅವರ ಆ ಅಂಗರಚನೆ ಯೋಗಕ್ಕಾಗಿಯೇ ರಚಿತವಾದುದು. ಸೃಷ್ಟಿಕರ್ತನು ಆ ಮೂರ್ತಿಯ ಚಿತ್ರಣಕಲೆಯಲ್ಲಿ ತನ್ನ ಕುಶಲತೆಯನ್ನೆಲ್ಲ ಬಳಸಿ ಚಿತ್ರಕಲಾಯೋಗಿಯೆಂದೆನಿಸಿದನೆಂದರೆ ಅತಿಶಯೋಕ್ತಿಯಲ್ಲ. ಲಯ ಯೋಗದಿಂದ ಅವರ ಮನಸ್ಸು ಅಂತರಾತ್ಮನಲ್ಲಿ ಲಯವಾಗಿತ್ತು. ಸಂಕಲ್ಪ ವಿಕಲ್ಪ ವಿರಹಿತವಾಗಿತ್ತು. ವೃತ್ತಿ ಶೂನ್ಯವಾಗಿತ್ತು. ಪಂಚಕೋಶಗಳನ್ನು ಪರಿಹರಿಸಿತ್ತು.
ಮಂತ್ರಯೋಗದಿಂದ ಅವರ ಚಿತ್ತ ನಿಶ್ಚಂಚಲವಾಗಿತ್ತು. ಬುದ್ಧಿ ಸ್ಥಿರವಾಗಿತ್ತು. ಅರುವಿನ ಬೆಳಗನೊಳಗೊಂಡಿತ್ತು. ರಾಜಯೋಗದಿಂದ ಅವರ ಅಹಂಕಾರವಳಿದು ನಿರಹಂಕಾರ ನೆಲೆಗೊಂಡಿತು, ಜೀವಗುಣ, ಜೀವಭಾವಗಳು ಜಾರಿಹೋಗಿದ್ದವು. ಶಿವಯೋಗದಿಂದ ಅವರು ಶಿವಯೋಗಿಯೆ ಆಗಿದ್ದರು. ಶಿವಸ್ವರೂಪರೇ ಆಗಿದ್ದರು. ಜೀವಿಸಿಯೂ ಮುಕ್ತರಾಗಿದ್ದರು.ಲೋಕವಾರ್ತೆಯ ಲೋಕಕೀರ್ತಿಯ ಹಂಗು ಹರಿದಿದ್ದರು.ಲೋಕೋತ್ತರ ಲೀಲಾಮೂರ್ತಿಗಳಾಗಿದ್ದರು.