ಲೇಖಕರು : ಪ್ರಕಾಶ ಗಿರಿಮಲ್ಲನವರ

ಮಡಿವಾಳ ತಂದೆಗಳ ಬಟ್ಟೆಗಳ ನಾನೊಗೆವೆ

ಹಡಪದಪ್ಪಣ್ಣಗಳ ಕ್ಷೌರವನು ನಾಗೈವೆ

ಡೋಹರ ಕಕ್ಕಯ್ಯಂಗೆ ತೊಗಲ ಹದ ಮಾಡುವೆ

ವೀರ ಹರಳೇಶಂಗೆ ಜೋಡ ನಾ ಮಾಡಿಡುವೆ

ಮಾರಯ್ಯ ತಂದೆಗಳ ಕಟ್ಟಿಗೆಯ ನಾ ಹೊರುವೆ

ಧೀರ ಕೇತಯ್ಯಗಳ ಬುಟ್ಟಿಯನು ನಾ ಮಾಳ್ಪೆ

ನುಲಿಯ ಚಂದಯ್ಯಗಳ ಹಗ್ಗ ಕಣಿಯಗೈವೆ

ಸಲೆ ಮಾದಾರ ಚೆನ್ನಂಗಳಂಬಲಿಯ ಮಾಡಿಡುವೆ

ಶಿವದಾಸಮಯ್ಯಗಳ ಬಟ್ಟೆಗಳ ನಾ ಮಾಳ್ಪೆ

ತವೆ ಶಂಕರಯ್ಯಗಳ ಕಪನಿಯನು ನಾ ಹೊಲಿವೆ

ಅಮುಗೆ ಸಿದ್ಧೇಶಂಗೆ ಪಾಕವನು ನಾಗೈವೆ

ಕುಂಬಾರ ಗುಂಡಯ್ಯ ನಾಂ ಮಡಿಕೆಯಂಗೈವೆ

ಸಂಭ್ರಮದಿ ಪ್ರಭುವಿಂಗೆ ಮದ್ದಳೆಯ ಬಾರಿಸುವೆ

ಆವಾವ ಕಾಯಕವ ಮಾಡಿದೊಡು ಬಸವೇಶ

ಆವಗಂ ಶರಣರು ಸೇವಿಪೆನು ಬಸವೇಶ

-ಅಥಣಿ ಶಿವಯೋಗಿಗಳು

               ಇದು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳು ರಚಿಸಿದ ಪದ್ಯ. ಈ ಪದ್ಯವನ್ನು ಸಿದ್ಧಗಂಗಾಮಠದ ಲಿಂ. ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಪ್ರತಿನಿತ್ಯ ಬೆಳಗಿನ ಲಿಂಗಪೂಜಾ ಸಮಯದಲ್ಲಿ ಈ ಹಾಡನ್ನು ಹಾಡುತ್ತಿದ್ದರು. ತಮ್ಮ ಶ್ರೀಮಠದ ಸಿದ್ಧಗಂಗಾ ಮಾಸಪತ್ರಿಕೆಯ ಪ್ರಾರಂಭದ ಪುಟದಲ್ಲಿ ‘ಆವಾವ ಕಾಯಕವ ಮಾಡಿದಡೆಯೂ ಬಸವೇಶ | ಆವಗಂ ಶರಣರನು ಸೇವಿಪೆನು ಬಸವೇಶ’ ಎಂಬ ಶಿವಯೋಗಿಗಳ ಹಾಡಿನ ಸಾಲನ್ನು ಘೋಷವಾಕ್ಯವಾಗಿ ಪ್ರಕಟಿಸುತ್ತ ಬಂದಿರುವುದು ಗಮನಾರ್ಹ ಸಂಗತಿ.

               12ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು, ಅವುಗಳಿಗೆ ಜೀವಂತಿಕೆ ಕೊಟ್ಟ ಪ್ರಾತಃಸ್ಮರಣೀಯರಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಅಗ್ರಗಣ್ಯರು. ಶಿವಯೋಗಿಗಳಿಂದ ಅಥಣಿ ಭೂಕೈಲಾಸವೆನಿಸಿತು, ತಪೋಭೂಮಿಯೆನಿಸಿತು. ಅಭಿನವ ಕಾಶಿ, ದಕ್ಷಿಣದ ಕಾಶಿ ಎನಿಸಿತು. ಶ್ರೀ ಮುರುಘೇಂದ್ರ ಶಿವಯೋಗಿಗಳು ನಡೆದಾಡುವ ದೇವರು, ಸುಳಿದಾಡುವ ಧರ್ಮ ಎಂದು ಜನಮಾನಸದಲ್ಲಿ ಖ್ಯಾತರಾಗಿದ್ದರು. ಇಂಥ ಶಿವಯೋಗಿಗಳನ್ನು ನೆನೆಯುವುದೇ ಈ ಸಮಾಜಕ್ಕೆ ಉದಯ, ಅವರನ್ನು ಮರೆಯುವುದೇ ಅಸ್ತಮಾನ!

               ಅಥಣಿ ತಾಲೂಕಿನ ಕೃಷ್ಣಾನದಿ ತೀರದಲ್ಲಿರುವ ‘ಇಂಗಳಗಾಂವಿ’ ಗ್ರಾಮದ ಭಾಗೋಜಿಮಠದ ಶ್ರೀ ರಾಚಯ್ಯ-ನೀಲಮ್ಮ ದಂಪತಿಗಳ  ಪುತ್ರರಾಗಿ ಮುರುಘೇಂದ್ರ ಶಿವಯೋಗಿಗಳು ಶಾಲಿವಾಹನ ಶಕೆ 1758 ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ 11ನೇ ಶುಭೋದಯದಂದು (ಕ್ರಿ.ಶ.1836) ಜನಿಸಿದರು. ರಾಚಯ್ಯನವರ ಧರ್ಮಪತ್ನಿ ನೀಲಮ್ಮನವರ ತವರು ಮನೆ ಜಮಖಂಡಿ ತಾಲೂಕಿನ ಮೈಗೂರು ಹಿರೇಮಠ. ಈ ಮೈಗೂರು ಹಿರೇಮಠದ ಮನೆತನದಲ್ಲಿ ಜನಿಸಿದ ಐದು ಜನ ವ್ಯಕ್ತಿಗಳು ಅಥಣಿ ಮೋಟಗಿಮಠದ ಅಧಿಪತಿಗಳಾಗಿದ್ದು ಒಂದು ಸುಯೋಗ. ರಾಚಯ್ಯ-ನೀಲಮ್ಮ ದಂಪತಿಗಳಿಗೆ ಒಟ್ಟು ಐದು ಜನ ಗಂಡು ಮಕ್ಕಳು. ಅವರಲ್ಲಿ ಮೂರನೆಯವರೇ ಶಿವಯೋಗಿಗಳು. ಹುಟ್ಟಿದಾಗ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಶಿವನ ತೇಜವೇ ಭೂಮಿಗಿಳಿದಂತಿದ್ದ ಗುರುಲಿಂಗಯ್ಯನವರು ಬಾಲ್ಯದಲ್ಲಿಯೇ ಧಾರ್ಮಿಕ ಸಂಸ್ಕಾರದ ಜಗತ್ತಿನಲ್ಲಿ ಬೆಳೆದರು.

               ಗುರುಲಿಂಗಯ್ಯನವರು ಏಳುವರ್ಷದವರಿದ್ದಾಗ ಅಥಣಿ ಮೋಟಗಿಮಠದ ಶ್ರೀಗಳು ಇವರನ್ನು ಶ್ರೀಮಠಕ್ಕೆ ಒಪ್ಪಿಸಿರಿ ಎಂದು ರಾಚಯ್ಯನವರಿಗೆ ಹೇಳಿದರು. ಕ್ರಿ.ಶ.  1843 ರಲ್ಲಿ ಗುರುಲಿಂಗಯ್ಯನವರು ಅಥಣಿ ಗಚ್ಚಿನಮಠದ ಎರಡನೆಯ ಶ್ರೀ ಮರುಳಶಂಕರ ಮಹಾಸ್ವಾಮಿಗಳ ಸನ್ನಿಧಾನಕ್ಕೆ ಬಂದರು.

               ಗಚ್ಚಿನಮಠದಲ್ಲಿಯೇ ಇದ್ದುಕೊಂಡು ಗುರುಲಿಂಗಯ್ಯನವರು ವಿದ್ಯಾರ್ಜನೆ ಮಾಡತೊಡಗಿದರು. ಮರುಳಶಂಕರ ಸ್ವಾಮಿಗಳು ಗುರುಲಿಂಗಯ್ಯನವರ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇವರನ್ನು ಪರೀಕ್ಷೆ ಮಾಡಬೇಕೆಂಬ ಉದ್ದೇಶಕ್ಕಾಗಿ ಒಂದು ದಿನ ಕರೆದು ತೆಲಸಂಗಕ್ಕೆ ಹೋಗಿ ಅಲ್ಲಿಯ ಶಿವಬಸವ ದೇಶಿಕರ ಸೇವೆ ಮಾಡಲು ಅಪ್ಪಣೆ ನೀಡಿದರು. ತೆಲಸಂಗದ ಶಿವಬಸವ ದೇಶಿಕರು ಕುಷ್ಟರೋಗದಿಂದ ಬಳಲುತ್ತಿದ್ದರು. ಗುರುಲಿಂಗಯ್ಯನವರು ಗುರುಗಳ ಆಜ್ಞೆಯನ್ನು ಶಿರೋಧಾರೆಯೆಂದು ಭಾವಿಸಿ ತಕ್ಷಣ ತೆಲಸಂಗಕ್ಕೆ ಬಂದರು. ಕುಷ್ಟರೋಗದಿಂದ ಬಳಲುತ್ತಿದ್ದ ಗುರುಸ್ವರೂಪರಾದ ಶಿವಬಸವ ದೇಶಿಕರ ಸೇವೆಯನ್ನು ಮನಮುಟ್ಟಿ ಮಾಡಿದರು. ಅವರಿಗೆ ಸ್ನಾನಪೂಜಾದಿ ವ್ಯವಸ್ಥೆ ಜೊತೆಗೆ ಸರಿಯಾದ ಔಷಧೋಪಚಾರ ಮಾಡಿದರು. ಕೆಲವೇ ದಿನಗಳಲ್ಲಿ ಶಿವಬಸವ ದೇಶಿಕರ ಕುಷ್ಟರೋಗ ಕಡಿಮೆಯಾಗಿ ಮೊದಲಿನಂತಾದರು. ಈ ವಿಷಯ ತಿಳಿದ ಗಚ್ಚಿನಮಠದ ಮರುಳಶಂಕರ ಸ್ವಾಮಿಗಳು ಮನದಲ್ಲಿ ಸಂತೋಷಪಟ್ಟರು. ತಮ್ಮ ಶಿಷ್ಯ ಗುರುಲಿಂಗಯ್ಯ ‘ಸೇವಾಜೀವಿ’ ಎಂಬುದನ್ನು ಮನಗಂಡರು. ನಂತರ ಗುರುಲಿಂಗಯ್ಯನವರು ಇನ್ನಷ್ಟು ಅಧ್ಯಯನ ಮಾಡಬೇಕೆಂದು ಮಮದಾಪುರ ಗ್ರಾಮಕ್ಕೆ ಬಂದರು. ಅಷ್ಟರಲ್ಲಿ ಗುರುಗಳೂ ಮಾರ್ಗದರ್ಶಕರೂ ಆದ ಪೂಜ್ಯ ಶ್ರೀ ಮರುಳಶಂಕರ ಸ್ವಾಮಿಗಳು ಲಿಂಗೈಕ್ಯರಾದ ವಿಷಯ ತಿಳಿದು ಅಥಣಿಗೆ ಧಾವಿಸಿ ಬಂದರು. ಗುರುಗಳನ್ನು ಸ್ಮರಿಸಿಕೊಂಡು ದುಃಖಿತರಾದರು. ಇದೇ ಸಂದರ್ಭದಲ್ಲಿ ಗಚ್ಚಿನಮಠದ ಪೀಠಾಧಿಪತಿಗಳಾಗಿ ಎರಡನೆಯ ಗುರುಶಾಂತ ಸ್ವಾಮಿಗಳು ಪೀಠಾರೋಹಣಗೈದರು. ಗುರುಲಿಂಗಯ್ಯನವರು ಗುರುಶಾಂತ ಶ್ರೀಗಳ ಹತ್ತಿರ ಬಂದು ತಮಗೆ ಅನುಗ್ರಹ ದೀಕ್ಷೆ ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಗುರುಶಾಂತ ಸ್ವಾಮಿಗಳು ಗುರುಲಿಂಗಯ್ಯನವರಿಗೆ ನಿರಂಜನ ದೀಕ್ಷೆ ನೀಡಿ ಪರಶಿವನ ಮಗನಾದ ಮುರುಘನ್ ಹೆಸರಿನ ನೆನಪಿಗಾಗಿ ‘ಮುರುಘೇಂದ್ರ’ ಎಂದು ನಾಮಕರಣ ಮಾಡಿದರು. ಗುರುಲಿಂಗಯ್ಯ ಎಂಬ ಪೂರ್ವಾಶ್ರಮದ ಹೆಸರು ಮಾಯವಾಗಿ, ಈಗ ‘ಮುರುಘೇಂದ್ರ ಎಂಬ ನಾಮದಿಂದ ಬೆಳಗತೊಡಗಿದರು.

ಲೋಕಸಂಚಾರ

               ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳಿಂದ ಶಿವಯೋಗದೀಕ್ಷೆ ಸಂಪಾದಿಸಿದ ಮುರುಘೇಂದ್ರ ಶ್ರೀಗಳು ಕ್ರಿ.ಶ. 1856ರಲ್ಲಿ ಲೋಕಸಂಚಾರ ಕೈಕೊಂಡರು. ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಲೋಕಾನುಭವ ಪಡೆಯಲು ಜಗವ ಸುತ್ತಲು ಪ್ರಾರಂಭಿಸಿದರು. ದೇಶದ ಪವಿತ್ರ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದರು. ಕೂಡಲಸಂಗಮ, ಹಂಪಿ, ಶ್ರೀಶೈಲ, ಕಾಳಹಸ್ತಿ, ಬಸವಕಲ್ಯಾಣ, ಸೊಲ್ಲಾಪುರ, ಹರಿಹರ, ದಾವಣೆಗೆರೆ, ಚಿತ್ರದುರ್ಗ, ಗವಿಪುರ, ಶಂಭುಲಿಂಗನ ಬೆಟ್ಟ, ತಲಕಾಡು, ಗೋಕರ್ಣ, ಉಳವಿ, ಬನವಾಸಿ, ಕಂಚಿ, ರಾಮೇಶ್ವರ ಮೊದಲಾದ ಕ್ಷೇತ್ರಗಳಲ್ಲಿ ಸತತ 12 ವರ್ಷಗಳ ಕಾಲ ಸಂಚರಿಸಿದರು. ಪೂಜ್ಯ ಶಿವಯೋಗಿಗಳು ಸಮಸ್ತ ದಕ್ಷಿಣ ಭಾರತವನ್ನು ಸುತ್ತಿದರು.

ಪೀಠತ್ಯಾಗ

               ಶ್ರೀ ಮುರುಘೇಂದ್ರ ಶಿವಯೋಗಿಗಳು ಸತತ 12 ವರುಷಗಳ ಕಾಲ ಲೋಕಸಂಚಾರ ಮಾಡಿ ತಿರುಗಿ ಅಥಣಿ ಗಚ್ಚಿನಮಠಕ್ಕೆ ಬರುವಷ್ಟರಲ್ಲಿ ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾಗಿದ್ದರು. ಮೂರನೆಯ ಚನ್ನಬಸವ ಸ್ವಾಮಿಗಳು ಗಚ್ಚಿನಮಠದ ಅಧಿಕಾರ ಸೂತ್ರ ಹಿಡಿದುಕೊಂಡಿದ್ದರು. ಮುರುಘೇಂದ್ರ ಶ್ರೀಗಳು ಚನ್ನಬಸವ ಸ್ವಾಮಿಗಳನ್ನು ಭೇಟಿ ಮಾಡಿದರು. ಆಗಲೇ ವಯೋವೃದ್ಧರಾಗಿದ್ದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಮುರುಘೇಂದ್ರ ಶ್ರೀಗಳಿಗೆ ‘ನೀವು ಗಚ್ಚಿನಮಠದ ಪೀಠಾಧಿಪತ್ಯ ವಹಿಸಿಕೊಳ್ಳಬೇಕೆಂದು’ ಹೇಳಿದರು.  ಆದರೆ ಮಠಾಧಿಪತ್ಯ ಸ್ವೀಕರಿಸುವ ಯಾವ ವಾಂಛೆಯು ಮುರುಘೇಂದ್ರ ಶ್ರೀಗಳಲ್ಲಿ ಇರಲಿಲ್ಲ. ಅದಕ್ಕಾಗಿ ಗುಹೇಶ್ವರ ಗುಹೆಯಲ್ಲಿ ತಪೋನುಷ್ಠಾನ ಮಾಡಲು ನಿರ್ಧರಿಸಿದರು. ನಲವತ್ತು ವಯಸ್ಸಿನ ಮುರುಘೇಂದ್ರ ಶ್ರೀಗಳಲ್ಲಿ  ‘ಮಠಾಧಿಪತ್ಯ ಸ್ವೀಕರಿಸಲು’ ಮತ್ತೊಮ್ಮೆ ಚನ್ನಬಸವ ಸ್ವಾಮಿಗಳು ವಿನಂತಿಸಿಕೊಂಡರು. ಆದರೆ ಶಿವಯೋಗಾನಂದದಲ್ಲಿ ಸಮರಸ ಸ್ಥಿತಿಯನ್ನು ಅನುಭವಿಸುತ್ತಿದ್ದ ಮುರುಘೇಂದ್ರ ಶ್ರೀಗಳಿಗೆ ಪೀಠದ ಯಾವುದೇ ಅಧಿಕಾರ ಬೇಕಾಗಿರಲಿಲ್ಲ. ತಾವು ಇಷ್ಟಲಿಂಗಪೂಜೆ-ಶಿವಯೋಗ ಸಾಧನೆಯಲ್ಲಿ ಕಾಲಕಳೆಯುತ್ತೇವೆ. ನನ್ನ ಬದಲಾಗಿ ಸಿದ್ಧಲಿಂಗ ಚರವರೇಣ್ಯರನ್ನು ಮಠಾಧಿಕಾರಿಗಳನ್ನಾಗಿ ಮಾಡಿ ಎಂದು ಚನ್ನಬಸವ ಶ್ರೀಗಳಲ್ಲಿ ವಿನಂತಿಸಿಕೊಂಡರು. ಭಕ್ತ ಸಮುದಾಯದ ಶ್ರೀ ಸಿದ್ಧಲಿಂಗ ಚರವರೇಣ್ಯರು ಗಚ್ಚಿನಮಠದ ಅಧಿಪತಿಗಳಾಗಿ ನಿಯುಕ್ತಿಯಾದರು. ಶಿವಯೋಗಿಗಳು ನಿರಾಳರಾದರು.

ಬಸವ ಪ್ರಜ್ಞೆಯ ಸಾಕಾರ ಮೂರ್ತಿ

               ಶ್ರೀ ಮುರುಘೇಂದ್ರ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಪ್ರತಿನಿತ್ಯ ಚಿಂತನೆಗೈಯುತ್ತಿದ್ದರು. ‘ಅಪ್ಪನ ವಚನಗಳೆಂದು’ ಗೌರವದಿಂದ ಕಾಣುತ್ತಿದ್ದರು. ಸದಾಕಾಲ ತಮ್ಮ ಜೊತೆಯಲ್ಲಿ ವಚನ ಕಟ್ಟುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಒಬ್ಬ ಕಾಶಿ ಪಂಡಿತ ಶಿವಯೋಗಿಗಳ ಹತ್ತಿರ ಬಂದು ‘ತಾನೊಂದು ಬೃಹತ್ ಧಾರ್ಮಿಕ ಗ್ರಂಥ ರಚಿಸಿರುವೆ, ಅದನ್ನು ತಾವು ಓದಬೇಕೆಂದು’ ಶಿವಯೋಗಿಗಳಲ್ಲಿ ವಿನಂತಿಸಿಕೊಂಡ. ಆಗ ಶಿವಯೋಗಿಗಳು ತಾವು ಈಗಾಗಲೇ ಒಂದು ಗ್ರಂಥವನ್ನು ಓದುತ್ತಿರುವೆ ಅದಕ್ಕಾಗಿ ನಿಮ್ಮ ಗ್ರಂಥ ಓದಲು ಸಮಯವಿಲ್ಲ ಎನ್ನುತ್ತಾರೆ. ಆಗ ಆ ಪಂಡಿತ, ಇದನ್ನು ನಿಮ್ಮ ಹತ್ತಿರವೇ ಇಟ್ಟು ಹೋಗುವೆ, ತಾವು ಆ ಗ್ರಂಥ ಓದಿ ಮುಗಿಸಿದ ನಂತರ ಓದಿರಿ ಎನ್ನುತ್ತಾನೆ. ಆಗ ಶಿವಯೋಗಿಗಳು ‘ಅದು ಜೀವನಪರ್ಯಂತ ಓದುವ ಪುಸ್ತಕ’ ಎನ್ನುತ್ತಾರೆ. ಅಂಥ ಕೃತಿ ಯಾವುದು? ಎಂದು ಪಂಡಿತ ಆಶ್ಚರ್ಯದಿಂದ ಕೇಳುತ್ತಾನೆ. ಆಗ ಶಿವಯೋಗಿಗಳು ‘ಅದು ಅಪ್ಪನ ವಚನಗಳ ಕಟ್ಟು. ಬಸವಣ್ಣನವರ ವಚನಗಳ ಕಟ್ಟು. ಅವುಗಳನ್ನು ಓದುವುದೇ ನಮ್ಮ ಬದುಕಿನ ಬಹುದೊಡ್ಡ ಕರ್ತವ್ಯ. ಅದನ್ನು ಓದಿ ಅದರಲ್ಲಿಯ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಕ್ಷರಶಃ ಅನುಷ್ಠಾನಕ್ಕೆ ತಂದು, ಆಚರಿಸಲು ಈ ಜನ್ಮ ಸಾಕಾಗಲ್ಲ, ಅದಕ್ಕಾಗಿ ನಿಮ್ಮ ಕೃತಿ ಓದಲು ನಮಗೆ ಸಮಯವಿಲ್ಲ, ದಯವಿಟ್ಟು ತೆಗೆದುಕೊಂಡು ಹೋಗಿ’ ಎಂದು ಹೇಳುತ್ತಾರೆ. ಬಸವಣ್ಣನವರ ವಚನಗಳೆಂದರೆ ತಮ್ಮ ಪ್ರಾಣವೆಂದು ಶಿವಯೋಗಿಗಳು ಭಾವಿಸುತ್ತಾರೆ.

               ಹಳ್ಳಿ ಜನರಲ್ಲಿ ಆಗ ಇನ್ನೂ ವಚನಗಳು ಅಷ್ಟು ಪ್ರಚಾರದಲ್ಲಿ ಇರಲಿಲ್ಲ. ಆದರೆ ಅವರಲ್ಲಿ ಬಸವಣ್ಣನವರ ಕುರಿತು ಭಕ್ತಿ ಭಾವ ಮೂಡಿಸಬೇಕೆಂದು ಶಿವಯೋಗಿಗಳು ನೂರಾರು ಹಳ್ಳಿಗಳಲ್ಲಿ ‘ಬಸವ ಪುರಾಣ’ ಏರ್ಪಡಿಸುತ್ತಾರೆ. 1884ರಲ್ಲಿ ಒಮ್ಮೆ ತೇರದಾಳದ ಪ್ರಭುದೇವರ ದೇವಸ್ಥಾನದಲ್ಲಿ ಒಂಬತ್ತು ತಿಂಗಳವರೆಗೆ ಬಸವಪುರಾಣ  ಆಯೋಜಿಸುತ್ತಾರೆ. ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು  ಬಸವ ಪುರಾಣ ಹೇಳುವಲ್ಲಿ ಅಪ್ರತಿಮ ಪಾಂಡಿತ್ಯವುಳ್ಳವರು. ಅವರನ್ನು ಅಥಣಿಗೆ ಕರೆಯಿಸಿಕೊಂಡು, ಅವರಿಂದ ಅನೇಕ ಕಡೆ ಬಸವ ಪುರಾಣ ನೆರವೇರುವಂತೆ ಮಾಡುತ್ತಾರೆ. ಇದು ಸಾಮಾನ್ಯ ಜನರಲ್ಲಿ ಬಸವ ಪ್ರಜ್ಞೆಯನ್ನು ಶಿವಯೋಗಿಗಳು ಜಾಗೃತಗೊಳಿಸಿದ ಪರಿ.

ಹಾನಗಲ್ಲ ಗುರು ಕುಮಾರ ಶಿವಯೋಗಿಗಳಿಗೆ ಪ್ರೇರಣೆ

               ಕ್ರಿ.ಶ. 1903ರಲ್ಲಿ ಸವದತ್ತಿಯಲ್ಲಿ ಮೂರು ತಿಂಗಳ ಕಾಲ ಬಸವ ಪುರಾಣ ನೆರವೇರಿತು. ಈ ಪುರಾಣ ಮಂಗಲೋತ್ಸವಕ್ಕೆ ಅಥಣಿ ಶಿವಯೋಗಿಗಳು ದಯಮಾಡಿಸಿದ್ದರು. ಇದೇ ಸಂದರ್ಭದಲ್ಲಿ ಅನೇಕ ಹರಗುರು ಚರಮೂರ್ತಿಗಳು ಆಗಮಿಸಿದ್ದರು. ಅವರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಒಬ್ಬರು. ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ಈ ಸಮಾಜವನ್ನು ಹೇಗಾದರೂ ಮುಂದೆ ತರಬೇಕೆಂಬ ಬಲವಾದ ಬಯಕೆ. ಈ ಬಯಕೆಯನ್ನು ಶಿವಯೋಗಿಗಳಲ್ಲಿ ವಿನಂತಿಸಿಕೊಂಡರು. ಆ ಕಾಲದಲ್ಲಿದ್ದ ಸಮಯಭೇದಗಳು ಅಳಿಯಬೇಕು. ಸ್ವಾಮಿಗಳಲ್ಲಿ ಮೊದಲು ಏಕತೆ ಮೂಡಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ವಿನಂತಿಸಿಕೊಂಡರು. ಅಖಿಲ ಭಾರತ ವೀರಶೈವ ಮಹಾಸಭೆ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಆಲೋಚನೆಯೂ ಈ ಸಂದರ್ಭದಲ್ಲಿ ಮೂಡಿತು ಎನ್ನುವುದು ಸಮಸ್ತ ಸಮಾಜ ಬಾಂಧವರು ಅಭಿಮಾನ ಪಡುವ ಸಂಗತಿಯಾಗಿದೆ. ಅಥಣಿ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳು ಮಹಾಸಭೆಯ ಸ್ಥಾಪನೆಗೆ ರೂಪರೇಷೆಗಳನ್ನು ಸಿದ್ಧಪಡಿಸಿದರು. ಸಮಯಭೇದ ನಿವಾರಣೆಯಲ್ಲಿ ಉಭಯ ಪೂಜ್ಯರು ಅಹರ್ನಿಶಿ ಶ್ರಮಿಸಿದರು. ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಶ್ರೀ ಕುಮಾರ ಶಿವಯೋಗಿಗಳು ಅಥಣಿಗೆ ಧಾವಿಸಿ ಬಂದರು. ಶಿವಯೋಗಿಗಳ ಕರ್ತೃಗದ್ದುಗೆ ಮುಂದೆ ನಿಂತು ಭಾವಪರವಶರಾಗಿ ಮಂಗಳಾರತಿ ಹಾಡಿದರು. ಸ್ವತಃ ಕುಮಾರ ಶಿವಯೋಗಿಗಳೇ ರಚಿಸಿದ ಆ ಪದ್ಯ ಹೃದಯಸ್ಪರ್ಶಿಯಾಗಿದೆ. 

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ                  ||ಪ||

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

ಚೆಂದವನರಿದನುಷ್ಠಾನಿಪ ಶಿವಸ್ವಯಗೆ                      ||1||

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ-

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ              ||2||

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ                    ||3||

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ               ||4||

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‍ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರುಘ ಶಿವಯೋಗಿಗೆ                  ||5||

               ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ ದೃಷ್ಟಿಯಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಸ್ವಯ ಜಂಗಮ, ಚರ ಜಂಗಮ, ಪರ ಜಂಗಮ ಮೂರೂ ಬಗೆಯ ಜಂಗಮ ಅವಸ್ಥೆಯನ್ನು ತಲುಪಿದ ಮಹಾ ಶಿವಯೋಗಿಗಳು ಎಂಬುದನ್ನು ಮೇಲಿನ ಮಂಗಳಾರತಿ ಪದ್ಯದಲ್ಲಿ ಕಾಣಬಹುದಾಗಿದೆ.

ಮೃತ್ಯುಂಜಯ ಅಪ್ಪಗಳಿಗೆ ಮಾರ್ಗದರ್ಶನ

               ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಆಶೀರ್ವಾದಿಂದ  ಬೆಳೆದವರು. ಬಾಲ್ಯದಲ್ಲಿ ಒಮ್ಮೆ ಅಂಕಲಗಿ ಅಡವಿ ಸ್ವಾಮಿಗಳ ಹತ್ತಿರ ಬಂದು ‘ತಾವು ಹೆಚ್ಚಿನ ಅಧ್ಯಯನಕ್ಕೆ ಕಾಶಿಗೆ ಹೋಗಬೇಕು, ಆಶೀರ್ವದಿಸಿ’ ಎಂದು ಕೇಳಿಕೊಂಡರು. ಆಗ ಅಂಕಲಗಿ ಅಡವಿ ಸ್ವಾಮಿಗಳು ‘ನಿನಗೆ ಮಾತನಾಡುವ ಕಾಶಿ ವಿಶ್ವನಾಥ ಬೇಕೋ, ಮಾತನಾಡದ ವಿಶ್ವನಾಥ ಬೇಕೋ?’ ಎಂದು ಕೇಳಿದರು. ಆಗ ಮೃತ್ಯುಂಜಯ ಅಪ್ಪಗಳು ‘ನನಗೆ ಮಾತನಾಡುವ ದೇವರು ಬೇಕು’ ಎಂದರು. ಅಂಕಲಗಿ ಅಡಿವೆಪ್ಪನವರು ‘ನೀನು ಕಾಶಿಗೆ ಹೋಗುವ ಬದಲು, ಅಥಣಿಗೆ ಹೋಗು, ಅಲ್ಲಿ ಮುರುಘೇಂದ್ರ ಶಿವಯೋಗಿಗಳು ಕಾಶಿ ವಿಶ್ವನಾಥನ ಪ್ರತಿರೂಪವೇ ಆಗಿದ್ದಾರೆ. ಅವರ ಆಶೀರ್ವಾದ ಪಡೆದುಕೊ’ ಎಂದು ಹೇಳಿದರು. ಮೃತ್ಯುಂಜಯ ಅಪ್ಪಗಳು ನೇರವಾಗಿ ಅಥಣಿಗೆ ಬಂದು, ಗಚ್ಚಿನಮಠದಲ್ಲಿ ಸೇವೆ ಮಾಡತೊಡಗಿದರು. ಇವರ ಸೇವೆಯನ್ನು ಮೆಚ್ಚಿ ಶಿವಯೋಗಿಗಳು ತಮ್ಮ ಆಪ್ತ ವಲಯದಲ್ಲಿ ಸೇರಿಸಿಕೊಂಡರು. ಒಂದು ದಿನ ಮೃತ್ಯುಂಜಯ ಅಪ್ಪಗಳು ಒಂದು ರೂಪಾಯಿ ನಾಣ್ಯವನ್ನು ಶಿವಯೋಗಿಗಳು ಕೂಡ್ರುವ ಸ್ಥಾನದಲ್ಲಿ ಇಟ್ಟಿದ್ದರು. ಇದನ್ನು ಕಂಡು ಶಿವಯೋಗಿಗಳು ‘ಚೇಳು ಚೇಳು’ ಎಂದು ಕೂಗಿದರು. ಮೃತ್ಯುಂಜಯಪ್ಪಗಳು ಓಡಿ ಬಂದು, ಎಲ್ಲಿ ಚೇಳು ಎಂದು ಕೇಳಿದರು. ಆಗ ಶಿವಯೋಗಿಗಳು ಒಂದು ರೂಪಾಯಿ ನಾಣ್ಯ ತೋರಿಸಿ ಅದೇ ಚೇಳು ಎಂದರು. ಈ ಘಟನೆಯಿಂದ ವಿರಕ್ತನಾದವನು ಯಾವುದೇ ವಸ್ತು ವಿಷಯಗಳಿಗೆ ವ್ಯಾಮೋಹಗೊಳ್ಳಬಾರದೆಂದು ಮೃತ್ಯುಂಜಯ ಅಪ್ಪಗಳು ಅರಿತುಕೊಂಡರು. ನಂತರ ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿ ಬಂದರು. ಮುರುಘಾಮಠದಿಂದ ಸಾಹಿತ್ಯ ಪ್ರಕಟಿಸುವ ಸಲುವಾಗಿ ಬಾಲಲೀಲಾ ಮಹಾಂತ ಶಿವಯೋಗಿ ಗ್ರಂಥಮಾಲೆ ಪ್ರಾರಂಭಿಸಿದರು. ಮುರುಘಾಮಠದಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನು ಅಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಅರ್ಪಿಸಿದರು. ‘ತಾನು ಭೂಮಿಗವಸಾನಂ, ಭೂಮಿತನಗವಸಾನಂ ಎಂಬಂತೆ ಬಾಳಿ ಬದುಕಿದ ಮುರುಘೇಂದ್ರ ಶಿವಯೋಗಿಗಳ ಸನ್ನಿಧಾನಕ್ಕೆ’ ಎಂಬ ವಾಕ್ಯವನ್ನು ಪ್ರತಿ ಪುಸ್ತಕದಲ್ಲಿ ಮುದ್ರಿಸಿದರು. ಇದು ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಮೇಲಿಟ್ಟ ಭಕ್ತಿ ಶ್ರದ್ಧೆಗೆ ನಿದರ್ಶನ.

ಲೋಕಮಾನ್ಯರೊಂದಿಗೆ ಶಿವಯೋಗಿಗಳು

ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರು, ಕೇಸರಿ ಪತ್ರಿಕೆ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುತ್ತಿದ್ದರು. ಅವರೊಮ್ಮೆ ಶಿವಯೋಗಿಗಳ ದರ್ಶನ ಪಡೆಯಲು ಬಯಸಿದರು. ದಿನಾಂಕ 15-11-1917ರಂದು ಕಾರ್ತಿಕ ಮಾಸದ ಗುರುವಾರ ದಿನ ತಿಲಕರು ಅಥಣಿಗೆ ಆಗಮಿಸಿದರು. ವಿಭೂತಿ ಗಟ್ಟಿ, ಗಂಧದ ಕೊರಡು, ರುದ್ರಾಕ್ಷಿಮಾಲೆ ಮತ್ತು ಹಣ್ಣು ಹಂಪಲಗಳನ್ನು ಕಾಣಿಕೆಯಾಗಿ ಶಿವಯೋಗಿಗಳಿಗೆ ಅರ್ಪಿಸಿ, ಶಿರಬಾಗಿ ನಮಸ್ಕರಿಸಿದರು. ಉಭಯ ಮಹಾನುಭಾವರು ದೇಶದ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿದರು. ಕೊನೆಗೆ ತಿಲಕರು ನಮಗೆ ಸ್ವಾತಂತ್ರ್ಯ ದೊರೆಯುವುದು ಯಾವಾಗ ಎಂದು ಕೇಳಿದರು. ಆಗ ಶಿವಯೋಗಿಗಳು ‘ಸ್ವಾತಂತ್ರ್ಯದ ಫಲವನ್ನು ಅನುಭವಿಸಲು ನಾವು ನೀವು ಇರುವುದಿಲ್ಲ. ನಾವು ಹಚ್ಚಿಟ್ಟ ಮರಗಳ ಫಲವನ್ನು ಮುಂದಿನ ಪೀಳಿಗೆಯವರು ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು. ಮುಂದೆ ಶಿವಯೋಗಿಗಳ ಕೃಪಾಶೀರ್ವಾದದಂತೆ ದಿ. 1-8-1920ರಂದು ತಿಲಕರು ಮುಂಬೈಯಲ್ಲಿ ಪರಂಧಾಮ ಪಡೆದರು. ಶಿವಯೋಗಿಗಳ ವಾಣಿ ಸತ್ಯವಾಯಿತು. ಒಬ್ಬರು ರಾಜಕೀಯ ಪಟು, ಇನ್ನೊಬ್ಬರು ಅಧ್ಯಾತ್ಮದ ಮೇರು. ಇವರಿಬ್ಬರ ಸಮಾಗಮದಲ್ಲಿ ಭಾರತದ ಭವಿಷ್ಯವಾಣಿ ಅಡಗಿತ್ತು. ಶ್ರೀ ಶಿವಯೋಗಿಗಳ ಘನವ್ಯಕ್ತಿತ್ವವನ್ನು ಕುರಿತು ತಿಲಕರು ಗೀತೆಯೊಂದನ್ನು ಮರಾಠಿಯಲ್ಲಿ ರಚಿಸಿದರು. ಅದನ್ನು ನಲವಡಿ ಶ್ರೀಕಂಠಶಾಸ್ತ್ರಿಗಳು ಅನುವಾದಿಸಿದರು. ಪದ್ಯ ಹೀಗಿದೆ:

ನೋಡಿ ಧನ್ಯನಾದೆ ನಾನೀಗ

ನೋಡಿ ಪಾದವ ಮಾಡಿ ಸ್ತೋತ್ರವ

ಕೂಡಿ ಧ್ಯಾನದಿಂ ಬೇಡಿ ಮೋಕ್ಷವ                 ||1||

ತೂರಿ ಮಾಯಾ ಜಾಲವನ್ನು

ಹಾರಿ ನಿತ್ಯ ತತ್ವ ಸುಖಕ್ಕೆ

ಸೇರಿ ಬ್ರಹ್ಮವನ್ನು ಮೀರಿ ರಾರಾಜಿಪುದರಿಂದ     ||2||

ಭಾಸುರ ತನಯ ನಾಮ ಪತ್ತಣ

ವಾಸ ರುಚಿರ ಗಚ್ಚಿನಮಠ

ದೀಶ ಮುಕ್ತಿಕೋಶ ಮುರುಘೇಶನೆಂದು

ನೋಡಿ ಧನ್ಯನಾದೆ ನಾನೀಗ                     ||3||

ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರು ಕನ್ನಡದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿದ ಪ್ರಾತಃಸ್ಮರಣೀಯರಲ್ಲಿ ಒಬ್ಬರು. ಅವರು ದೇವದಾಸಿ ಮಗ ಎನ್ನುವ ಕಾರಣಕ್ಕೆ ಯಾರೂ ಲಿಂಗದೀಕ್ಷೆಯನ್ನು ಅವರಿಗೆ ನೀಡಿರಲಿಲ್ಲ. ಮಂಜಪ್ಪನವರು ಕೊನೆಗೆ ಅಥಣಿ ಶಿವಯೋಗಿಗಳಲ್ಲಿ ದೀಕ್ಷೆ ನೀಡಲು ವಿನಂತಿಸಿಕೊಂಡರು. ಬಸವಣ್ಣನವರ ವಚನಗಳನ್ನು ನಿತ್ಯ ಪಾರಾಯಣ ಮಾಡುತ್ತಿದ್ದ ಶಿವಯೋಗಿಗಳಿಗೆ ‘ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪರಿಭಾವಿಸಬೇಕು’ ಎಂಬ ನುಡಿ ನೆನಪಿಗೆ ಬಂದಿತು. ಪ್ರೀತಿಯಿಂದ ಕರೆದು ಗಚ್ಚಿನಮಠದಲ್ಲಿ ಲಿಂಗದೀಕ್ಷೆಯನ್ನು ದಯಪಾಲಿಸಿದರು. ಮಂಜಪ್ಪನವರು ಶಿವಯೋಗಿಗಳಿಂದ ತುಂಬ ಪ್ರಭಾವಿತರಾಗಿ, ಶಿವಯೋಗಿಗಳನ್ನು ಕುರಿತು ‘ಪ್ರಥಮಾಚಾರ ದೀಪಿಕೆ’ ಎಂಬ ಪುಸ್ತಕವನ್ನು ರಚಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ.

ದಾನವೀರ ಶಿರಸಂಗಿ ಲಿಂಗರಾಜರಿಗೆ ಮಾರ್ಗದರ್ಶನ

               ಲಿಂಗಾಯತ ಸಮಾಜದಲ್ಲಿ ತ್ಯಾಗವೀರ ಎನಿಸಿಕೊಂಡ ಶಿರಸಂಗಿ ಲಿಂಗರಾಜರು ದೊಡ್ಡ ಸಂಸ್ಥಾನಿಕರು. ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಮಾನಸಿಕವಾಗಿ ಬಹಳ ನೊಂದುಕೊಂಡರು. ಆಗ ಶಿವಯೋಗಿಗಳು ಲಿಂಗರಾಜರಿಗೆ ದರ್ಶನ ನೀಡಿ, ಮಕ್ಕಳಿಲ್ಲವೆಂದು ಕೊರಗದಿರಿ. ಸಮಾಜದ ಮಕ್ಕಳನ್ನೇ ನಿಮ್ಮ ಮಕ್ಕಳೆಂದು ಭಾವಿಸಿ, ಅವರ ಶಿಕ್ಷಣಕ್ಕಾಗಿ ನಿಮ್ಮ ಸಂಸ್ಥಾನ ಸದುಪಯೋಗವಾಗಲಿ ಎಂದು ಆಶೀರ್ವದಿಸಿದರು. ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಸಮಾಜಕ್ಕೆ ಮೀಸಲಿಟ್ಟರು ಎಂಬುದು ಈಗ ಇತಿಹಾಸ.

ಜಗದ್ಗುರುಗಳಿಗೆ ಆಶೀರ್ವಾದ

               ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಯಾವುದೇ ಮಠದ ಅಧಿಪತಿಯಾಗಲಿಲ್ಲ. ಆದರೆ ಯೋಗ್ಯಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಬರಬೇಕೆಂಬ ಕಳಕಳಿ ಅವರಲ್ಲಿತ್ತು. 1903ರಲ್ಲಿ ಸವದತ್ತಿಯಲ್ಲಿ ಜರುಗಿದ ಬಸವ ಪುರಾಣ ಕಾರ್ಯಕ್ರಮಕ್ಕೆ ಸಹಜವಾಗಿ ಜಯದೇವ ಪಂಡಿತರು ಆಗಮಿಸಿದ್ದರು. ಅದೇ ಆಗ ಕಾಶಿಯಿಂದ ಪಂಡಿತ ಪದವಿಯಿಂದ ವಿಭೂಷಿತರಾಗಿ ಬಂದಿದ್ದ ಜಯದೇವ ಪಂಡಿತರನ್ನು ಶಿವಯೋಗಿಗಳು ಕಾರುಣ್ಯದೃಷ್ಟಿಯಿಂದ ನೋಡಿದರು. ಜಯದೇವ ಪಂಡಿತರಲ್ಲಿ ಸಮಾಜವನ್ನು ಮುನ್ನಡೆಸುವ ಅತುಲ ಸಾಮರ್ಥ್ಯವಿರುವುದನ್ನು ಗಮನಿಸಿದರು. ಇವರು ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿಗಳಾಗಲಿ ಎಂದು ಆಶೀರ್ವದಿಸಿದರು. ಜಯದೇವ ಜಗದ್ಗುರುಗಳು ಮಾಡಿದ ಸೇವೆ ನಾಡವರಿಗೆ ವೇದ್ಯವಾಗಿರುವುದನ್ನು ಮತ್ತೆ ಹೇಳಬೇಕಾಗಿಲ್ಲ.

               ಹಾಗೆಯೇ ಗಚ್ಚಿನಮಠದಲ್ಲಿ ವಾಗೀಶ ಎಂಬ ಸಾಧಕರು ಶಿವಯೋಗಿಗಳವರ ಸೇವೆಯನ್ನು ಮನಮುಟ್ಟಿ ಮಾಡುತ್ತಿದ್ದರು. ಒಂದು ದಿನ ಶಿವಯೋಗಿಗಳ ಲಿಂಗಪೂಜೆಗೆ ಬಿಲ್ವ ಸಂಗ್ರಹಿಸಲು ಹೋದಾಗ ಬಿಲ್ವಪತ್ರೆಯೊಂದು ಸಾಧಕರ ತಲೆ ಮೇಲೆ ಬಿತ್ತು. ಅದನ್ನು ಗಮನಿಸಿದ ಶಿವಯೋಗಿಗಳು ‘ನೀನು ಪರ್ವತಪೀಠದ ಒಡೆಯನಾಗುವಿ’ ಎಂದು ಆಶೀರ್ವದಿಸಿದರು. ಶಿವಯೋಗಿಗಳ ವಾಣಿಯಂತೆ 1941ರಲ್ಲಿ ವಾಗೀಶ ಪಂಡಿತಾರಾಧ್ಯರು ‘ಶ್ರೀಶೈಲ ಪೀಠ’ದ ಜಗದ್ಗುರುಗಳಾದರು.

               ಬಂಥನಾಳ ಶಿವಯೋಗಿಗಳು, ಬೀಳೂರು ಗುರುಬಸವ ಸ್ವಾಮಿಗಳು ಮೊದಲಾದ ಸಮಾಜಸೇವಾಸಕ್ತ ಶ್ರೀಗಳಿಗೆ ಮುರುಘೇಂದ್ರ ಶಿವಯೋಗಿಗಳು ಮಾರ್ಗದರ್ಶಕರಾಗಿದ್ದರು. ಜಾತಿಮತ ಪಂಥಗಳನ್ನು ಮೀರಿದ್ದ ಶಿವಯೋಗಿಗಳು ಭಕ್ತವರ್ಗದ ಅನೇಕ ಸಾಧಕರನ್ನು ವಿರಕ್ತಮಠಗಳಿಗೆ ಸ್ವಾಮಿಗಳನ್ನಾಗಿ ಮಾಡುವಲ್ಲಿ ಪ್ರಯತ್ನಿಸಿದ್ದರು. ಇಂದು ನಾವೆಲ್ಲ ಜಾತಿ ಜಾತಿಗಳ ನಡುವೆ ಗೋಡೆ ಕಟ್ಟಿಕೊಂಡಿರುವಂಥ ಸಂದರ್ಭದಲ್ಲಿ ಅಂದು ಶಿವಯೋಗಿಗಳು ಅದೆಲ್ಲವನ್ನು ಮೀರಿ ನಿಂತಿದ್ದರು. ತಮ್ಮ ಗಚ್ಚಿನಮಠಕ್ಕೆ ಭಕ್ತವರ್ಗದ ಸಿದ್ಧಲಿಂಗ ಸ್ವಾಮಿಗಳನ್ನು ಅಧಿಪತಿಗಳನ್ನಾಗಿ ಮಾಡಿದರು. ಬೀಳೂರು ಗುರುಬಸವ ಸ್ವಾಮಿಗಳು ಭಕ್ತವರ್ಗದವರು. ಹೀಗೆ ಅನೇಕ ಶ್ರೀಗಳನ್ನು ಶಿವಯೋಗಿಗಳು ಸಮಾಜಸೇವೆಗೆ ಸಿದ್ಧಗೊಳಿಸಿದ್ದರು.

ಲಿಂಗೈಕ್ಯ

               ಲಿಂಗವಿಡಿದು ಲಿಂಗಸಿದ್ಧಿಯ ಬದುಕು ಬದುಕಿದ ಶಿವಯೋಗಿಗಳು ತಮ್ಮ 85ನೇ ವಯಸ್ಸಿನಲ್ಲಿ ದಿನಾಂಕ 23-4-1921ರಂದು ಲಿಂಗೈಕ್ಯರಾದರು. ಶಿವಯೋಗ ಚೇತನವೊಂದರ ದಿವ್ಯ ಅಧ್ಯಾಯ ಮುಕ್ತಾಯವಾದಂತಾಯಿತು.

ರಚನೆ:  ದ್ಯಾಂಪುರ ಶ್ರೀಚನ್ನಕವಿಗಳು

 

ಶ್ರೀ ಗುರು ಕುಮಾರ ಪರಶಿವ

ಯೋಗಿಯ ನೂರೆಂಟು ನಾಮಗಳನನವರತಂ

ರಾಗಂಮಿಗೆ ಪಠಿಪಾತಂ

ಗಾಗುವವಖಿಲಾರ್ಥ ಸಿದ್ಧಿ ಮುಕ್ತಿ ಗಳಿಳೆಯೋಳ್

ಶ್ರೀ ವಿರಾಟ್ ಪುರಾಧಿವಾಸ ಯತಿಕುಲೇಶ ಗುರುಕುಮಾರ

ಭಾವಭೇದವರಿದ ಮಹಿತ ಚಿತ್ಪ್ರಕಾಶ ಗುರುಕುಮಾರ

ಲಿಂಗಸಂಗ ಮದನ ಮದವಿಭಂಗತುಂಗ ಗುರುಕುಮಾರ

ಮಂಗಲಾಂಗ ಜಂಗಮಾದಿನಾಥವರದ ಗುರುಕುಮಾರ

ಯೋಗಶೀಲ ಭಕ್ತಪಾಲ ವಿರತಿಲೋಲ ಗುರುಕುಮಾರ

ರಾಗರಹಿತ ಸುಕೃತಚರಿತ ಸುಗುಣಭರಿತ ಗುರುಕುಮಾರ

ನಿನ್ನ ಪಾಲಿನನ್ನವತಿಥಿಗುಣಿಸಿ ತಣಿದೆ ಗುರುಕುಮಾರ

ಮನ್ನಣೆಯನು ಪಡೆದೆ ಬಾಲ್ಯದಲ್ಲಿ ನೀನು ಗುರುಕುಮಾರ

ಗಳಿಸಿದೆಲ್ಲ ಹಣವ ತಾಯಿಗೊಲಿದು ಕೊಟ್ಟೆ ಗುರುಕುಮಾರ

ಸಲಹಿದೊಂದು ಋಣಕೆ ಸಲ್ಲಿತೆಂದು ಪೇಳ್ದೆ  ಗುರುಕುಮಾರ  

ಮಗನ ಮೋಹವಳಿಯಲೆಂದು ತಾಯ್ಗೆ ಪೇಳ್ದೆ  ಗುರುಕುಮಾರ

ಬಗೆಯ ಮಾತ್ರ ಮೋಹವೆನ್ನೊಳಿಲ್ಲವೆಂದೆ ಗುರುಕುಮಾರ

ನಿಜಗುಣಾರ್ಯ ಸುಗಮಶಾಸ್ತ್ರವರಿಯಲೆಂದು ಗುರುಕುಮಾರ

ಸುಜನರೊಡನೆ ಚಿಂತನವನು ಮಾಡಲಾದೆ ಗುರುಕುಮಾರ

ಜಡೆಯಸಿದ್ಧರಿಂದ ಸಂಶಯವನು ನೀಗಿ ಗುರುಕುಮಾರ

ಪಡೆದೆ ವೀರಶೈವ ಮಾರ್ಗ ನಿಶ್ಚತೆಯನು ಗುರುಕುಮಾರ

ಭವ ವಿಮೋಚನಕ್ಕೆ ಗುರುವನರಸಲಾದೆ ಗುರುಕುಮಾರ

ತವಕದಿಂದ ಬಸವಲಿಂಗ ಯತಿಯ ಕಂಡೆ ಗುರುಕುಮಾರ

ಎನಗೆ ನೀನೆ ಗುರುವರೇಣ್ಯನೆಂದು ನಂಬಿ ಗುರುಕುಮಾರ

ವಿನಯದಿಂದ ತತ್ಪದಾಶ್ರಯದೋಳ್ ನಿಂದೆ ಗುರುಕುಮಾರ

ಅತುಲ ಶೀಲ ಸತ್ಕ್ರಿಯಾಚರಣೆಯ ಪಿಡಿದೆ ಗುರುಕುಮಾರ

ಮತಿಯೊಳಲಸದದನು ಬಿಡದೆ ನಡೆಸಲಾದೆ ಗುರುಕುಮಾರ

ಯೋಗಶಾಸ್ತ್ರದಲ್ಲಿ ನಿಪುಣನಾದೆ ಕಲಿತು ಗುರುಕುಮಾರ

ಆಗಮಾರ್ಥ ತತ್ತ್ವಕುಶಲನೆನಿಸಿದಯ್ಯ ಗುರುಕುಮಾರ

ಮೊದಲು ಮನೆಯ ಜನರ ಹೊರಳಿ ನೋಡಲಿಲ್ಲ ಗುರುಕುಮಾರ

ಪುದಿದ ಶರಣರೆನ್ನ ಬಳಗವೆಂದು ತಿಳಿದೆ ಗುರುಕುಮಾರ

ಶಂಭುಲಿಂಗಶೈಲಕಾತನೊಡನೆ ಪೋದೆ ಗುರುಕುಮಾರ

ಶಂಭುಲಿಂಗವೀತನೆಂದು ಸೇವೆಗೈದೆ ಗುರುಕುಮಾರ

ಗುರುವಿನೊಲುಮೆಯಿಂದ ಚಿದುಪದೇಶವಾಂತೆ ಗುರುಕುಮಾರ

ಗುರುಸಮಾನ ಯೋಗ್ಯತೆಯನು ಪಡೆದು ಮೆರೆದೆ ಗುರುಕುಮಾರ

ಗುರುವಿನೊಡನೆ ದೇಶಪರ್ಯಟನವಗೈದೆ ಗುರುಕುಮಾರ

ಶರಣಗಣಕೆ ಪರಮತತ್ತ್ವದಿರವನೊರೆದೆ ಗುರುಕುಮಾರ

ಬಿದರಿಯೂರು ಕುಮಾರ ಶಂಭುಯೋಗಿಯಿಂದ ಗುರುಕುಮಾರ

ಸದಯಜಂಗಮಾಶ್ರಮವನು ಪೊಂದಿದಯ್ಯ ಗುರುಕುಮಾರ

ಹಾನಗಲ್ಲ ಮಠಕೆ ಸ್ವಾಮಿಯಾಗಿ ಮೆರೆದೆ ಗುರುಕುಮಾರ

ದಾನಧರ್ಮ ಶೀಲನೆನಿಸಿ ಪೆಸರ ಪಡೆದೆ ಗುರುಕುಮಾರ

ಸ್ಥಾಪಿಸಿದೆ ಮಹಾಸುಸಭೆಯನೆಮ್ಮಮತದೆ ಗುರುಕುಮಾರ

ರೂಪುಗೊಳ್ಳಲಾದುದೆಮ್ಮ ಧರ್ಮದೇಳ್ಗೆ ಗುರುಕುಮಾರ

ವರವಿರಾಗದಸಮ ಮಲ್ಹಣಾರ್ಯನೊಪ್ಪಿ ಗುರುಕುಮಾರ

ನೆರವನರ್ಥಿಸಿದನು ನಿನ್ನೊಳೀ ಮತಕ್ಕೆ ಗುರುಕುಮಾರ

ಗುರುಚರಾಧಿಕಾರಿಗಳನು ತಿದ್ದಲೆಂದು ಗುರುಕುಮಾರ

ಪರಮಯೋಗಶಾಲೆಯಾಗಲೆಂದು ಬಗೆದೆ ಗುರುಕುಮಾರ

ಚರಮಹಾಂತ ಯೋಗಿ ತೋರಿದೆಡೆಯೊಳೊಪ್ಪಿ ಗುರುಕುಮಾರ

ಹರನ ಯೋಗಮಂದಿರವನು ವಿರಚಿಸಿರ್ದೆ ಗುರುಕುಮಾರ

ಪಂಚಪೀಠದವರನಾದರಿಸಿದೆ ನೀನು ಗುರುಕುಮಾರ

ಪಂಚಸೂತ್ರ ಲಿಂಗರಚನೆಗೊಳಿಸಿದಯ್ಯ ಗುರುಕುಮಾರ

ಗೋಮಯವನು ಸುಟ್ಟ ಬೂದಿಯಿಂದ ಪಡೆದು ಗುರುಕುಮಾರ

ನೇಮವಿಡಿದು ಮಾಡಿಸಿದೆ ವಿಭೂತಿಯನು ಗುರುಕುಮಾರ

ಧರ್ಮದಿರವನಖಿಲ ಜನಕೆ ತಿಳಿಸಿ ಪೇಳ್ದೆ ಗುರುಕುಮಾರ

ಧರ್ಮದೇಳ್ಗೆಗಾಗಿ ಸವೆಸಿದಯ್ಯ ತನುವ ಗುರುಕುಮಾರ

ಪಿರಿದೆನಿಪ್ಪ ಗ್ರಂಥ ಸಂಗ್ರಹವ ನೆಗಳ್ದೆ ಗುರುಕುಮಾರ

ಹರುಷದಿಂದ ಯೋಗಸಾಧಕರನು ಪೊರೆದೆ ಗುರುಕುಮಾರ

ನಿತ್ಯ ದಾಸೋಹವಾಗಲೆಸಗಿದಯ್ಯ ಗುರುಕುಮಾರ

ಸತ್ಯವಾದಿಗಳಿಗೆ ಮೆಚ್ಚಿ ಹಿಗ್ಗುತಿರ್ದೆ ಗುರುಕುಮಾರ

ಅಂದಣದೊಳು ಜಂಗಮವನು ಮೆರೆಸಿದಯ್ಯ ಗುರುಕುಮಾರ

ಅಂದವೆನಿಸಿ ನೀನು ಏರಿ ಮೆರೆಯಲಿಲ್ಲ ಗುರುಕುಮಾರ

ಮೇಲಗದ್ದುಗೆಯನು ಬಯಸಿ ಬೇಡಲಿಲ್ಲ ಗುರುಕುಮಾರ

ಕೀಳುತಾಣವೆಂದು ಮನದಿ ಕುಗ್ಗಲಿಲ್ಲ ಗುರುಕುಮಾರ

ಪರತರ ಪ್ರಮಾಣದಂತೆ ನಡೆದು ಬಾಳ್ದೆ ಗುರುಕುಮಾರ

ಹರನ ಶಾಸ್ತ್ರ ವಚನಗಳನು ಮೀರಲಿಲ್ಲ ಗುರುಕುಮಾರ

ಅಂಗ-ಲಿಂಗ ಸಾಮರಸ್ಯ ಸುಖವನುಂಡೆ ಗುರುಕುಮಾರ

ಲಿಂಗಭೋಗ ಭೋಗಿಯೆಂದು ಕೀರ್ತಿ ಪಡೆದೆ ಗುರುಕುಮಾರ

ವೀರಶೈವ ಸಮಯ ಘನಧ್ವಜವನೆತ್ತಿ ಗುರುಕುಮಾರ

ಧಾರುಣಿಯೊಳು ಪಿಡಿದು ಮೆರೆಸಿದಯ್ಯ ವೀರ ಗುರುಕುಮಾರ

ಮುಕ್ತಿಗಿಂ ಸಮಾಜ ಸೇವೆಯಧಿಕವೆಂದೆ ಗುರುಕುಮಾರ

ಭಕ್ತಿ ಹೀನರನ್ನು ನೋಡಿ ಮನದಿ ನೊಂದೆ ಗುರುಕುಮಾರ

ಕುರುಡಗತುಲ ಗಾನಕುಶಲತೆಯನು ಕೊಡಿಸಿ ಗುರುಕುಮಾರ

ಧರೆಯೊಳಾತನಿಂದ ಪರ್ಬಲೆಸಗಿದಯ್ಯ ಗುರುಕುಮಾರ

ಪ್ರಮಥವರ್ತನವನು ತಕ್ಕುದೆಂದು ತಿಳಿದೆ ಗುರುಕುಮಾರ

ಪ್ರಮಥನಿಂದೆಗಿನಿಸು ತಡೆಯಲಿಲ್ಲ ನೀನು ಗುರುಕುಮಾರ

ಬಳಸಿದಯ್ಯ ಕೈಯ್ಯನೂಲಿನರಿವೆಗಳನು ಗುರುಕುಮಾರ

ಗಳಿಸಿದಯ್ಯ ಭಕ್ತಿ ಚಿದ್ ವಿರಕ್ತಿಗಳನು ಗುರುಕುಮಾರ

ತೆತ್ತೆ ಸ್ವಮತ ಸೇವೆಗಾಗಿ ಜನ್ಮವಿದನು ಗುರುಕುಮಾರ

ಮತ್ತೆ ಬರುವೆನೆಂದು ಕೊನೆಗೆ ಪೇಳಿ ಪೊದೆ ಗುರುಕುಮಾರ

ಅಂಗ ಭೋಗದಿಚ್ಛೆಗಾಡಲಿಲ್ಲ ದೇವ ಗುರುಕುಮಾರ

ಲಿಂಗದಿಚ್ಛೆಗಾಡ ನೆಚ್ಚಿ ಶಾಂತಿಪಡೆದೆ ಗುರುಕುಮಾರ

ಶಿವನ ಯೋಗಮಂದಿರಕ್ಕೆ ದುಡಿದು ದಣಿದೆ ಗುರುಕುಮಾರ

ಶಿವಸಮರ್ಚನಾನುಭವವ ಮಾಡಿ ತಣಿದೆ ಗುರುಕುಮಾರ

ಬೆಳೆದುದೀ ಸಮಾಜದಲ್ಲಿ ಬೋಧಕಾಳಿ ಗುರುಕುಮಾರ

ಬೆಳೆದರಭವಕಥಿಕರಿದುವೆ ನಿನ್ನ ಪುಣ್ಯ ಗುರುಕುಮಾರ

ನಿನ್ನ ಮಠವ ಮರೆದು ಮತವೆ ನನ್ನದೆಂದು ಗುರುಕುಮಾರ

ಮನ್ನಿಸಿದೆ ವಿಶಾಲ ದೃಷ್ಟಿಯಿಂದ ನೋಡಿ ಗುರುಕುಮಾರ

ಸಮಯ ಭೇದಗಳನ್ನು ಹೇಳಿ ಕೇಳಿ ಮುರಿದೆ ಗುರುಕುಮಾರ

ಸಮಯಭೇದವಪ್ರಮಾಣವೆಂದು ತಿಳಿದೆ ಗುರುಕುಮಾರ

ಭೂತ ಚೇಷ್ಟೆಗಳಿಗೆ ಲಿಂಗಪೂಜೆಯಿಂದ ಗುರುಕುಮಾರ

ಭೀತಿಗೆಡಿಸಿದಯ್ಯ ಮಠದೊಳಿರುವ ಜನದ ಗುರುಕುಮಾರ

ಪರಳಿಯಾ ವಿವಾದದಲ್ಲಿ ಜಯವ ಪಡೆದೆ ಗುರುಕುಮಾರ

ಧರೆಯ ಸುರರಿಗಾಯ್ತು ಮಾನಹಾನಿಯಂದು ಗುರುಕುಮಾರ

ಶರಣು ಹೊಕ್ಕವರ ಕಾಯ್ದೆ ಕರುಣದಿಂದ ಗುರುಕುಮಾರ

ನರರಿಗಾದ ಕಷ್ಟವೆನ್ನದೆಂದು ಅರಿತೆ ಗುರುಕುಮಾರ

ಪೋದ ಬಂದ ಗ್ರಾಮದಲ್ಲಿ ಸಭೆಯ ಕರೆದು ಗುರುಕುಮಾರ

ವೇದ ಮಂತ್ರ ಧರ್ಮಬೋಧೆಗೈದೆ ನೋಡಿ ಗುರುಕುಮಾರ

ಸೊನ್ನಲಿಗೆಯ ಶರಣರೊಪ್ಪಿ ಭಕ್ತಿಯಿಂದ ಗುರುಕುಮಾರ

ನಿನ್ನನಂತ್ಯದಲ್ಲಿ ಬಯಸಿ ಕಂಡರಂದು ಗುರುಕುಮಾರ

ತಿಳಿದೆ ಮಲ್ಲಿಕೆರೆಯ ಸ್ವಾಮಿಯಲ್ಲಿ ನೀನು ಗುರುಕುಮಾರ

ಸಲೆ ಶಿವಾನುಭವ ಸುಶಾಸ್ತ್ರದಿರವನೊಪ್ಪಿ ಗುರುಕುಮಾರ

ಕೊನೆಯೊಳೀ ಸಮಾಜಮತ ಸಮಾಜವೆಂದು ಗುರುಕುಮಾರ

ಕನವರಿಸುತ ಲಿಂಗದಲ್ಲಿ ಬೆರೆದೆ ನೀನು ಗುರುಕುಮಾರ

ಸಲಹು ತಂದೆ ತಾಯಿ ಬಂಧು ಬಳಗ ನೀನೆ ಗುರುಕುಮಾರ

ಸಲಹು ಬಸವ ಚನ್ನಬಸವ ಪ್ರಭುವೆ ನೀನು ಗುರುಕುಮಾರ

ತಿರುಗಲಾರೆನಖಿಲ ಯೋನಿಗಳೊಳು ನಾನು ಗುರುಕುಮಾರ

ಶರಣು ಹೊಕ್ಕೆನಯ್ಯ ನೋಡಿ ಕರುಣಿಸಯ್ಯ ಗುರುಕುಮಾರ

ಬಾರೋ ನನ್ನ ಕಲ್ಪತರುವೆ ತೋರು ಮುಖವ ಗುರುಕುಮಾರ

ಬಾರೊ ಪರಮಮೋಕ್ಷ ಗುರುವೆ ನಿಜದ ಕುರುಹು ಗುರುಕುಮಾರ

ಬಿಡದಿರೆನ್ನ ಕರವ ಭವಭವಂಗಳಲ್ಲಿ ಗುರುಕುಮಾರ

ನಡೆಸು ವೀರಶೈವ ಮಾರ್ಗದಲ್ಲಿ ಮುದದೆ ಗುರುಕುಮಾರ

ಶರಣು ಗುರುವೆ ಶರಣು ಲಿಂಗವೇ ಚರಾರ್ಯ ಗುರುಕುಮಾರ

ಶರಣು ಶರಣು ಚೆನ್ನಕವಿವರೇಣ್ಯ ವಂದ್ಯ ಗುರುಕುಮಾರ

ಇಂತೀ ಶುಭನಾಮಂಗಳಂ

ಸಂತಸದಿಂ ಜಪಿಸುತಿರ್ಪ ಘನಸುಕೃತಿಗಳಂ

ಕಂತುಹರ ಪಾಲಿಸುವನನಂತ ಸಮಾಧಾನ ಸುಖ ಸಮೃದ್ಧಿಯನಿತ್ತು.

ಶ್ರೀಕಂಠ.ಚೌಕೀಮಠ

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಸಹೃದಯರ ಅಕ್ಷಿ ಪಟಲ ದ ಮೇಲೆ ಅಂತರ್ಜಾಲ ದ ಮೂಲಕ  ಮೂಡುತ್ತಿರುವ  ಹೊಸಹುಟ್ಟು ಪಡೆದ ಈ “ ಸುಕುಮಾರ  “ಪತ್ರಿಕೆಗೆ ಉಜ್ವಲ ಇತಿಹಾಸವಿದೆ .

ಆ ಇತಿಹಾಸದ ಒಂದು ನೋಟವನ್ನು ಹೀಗೆ ಅವಲೋಕಿಸಬಹುದು : ಲಿಂಗೈಕ್ಯ  ಪರಮ ಪೂಜ್ಯಶ್ರೀ ಕುಮಾರ  ಶಿವಯೋಗಿಗಳವರಿಂದ ಸ್ಥಾಪನೆಗೊಂಡ ಶ್ರೀ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಸಾಧಕರ ಶಿಕ್ಷಣಕ್ಕೆ ನೆರವಾಗಲೆಂಬ ಸದುದ್ದೇಶದಿಂದ ಆಗ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ನವಲಗುಂದದ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳವರು “ ಶ್ರೀ ರೇವಣಸಿದ್ದೇಶ್ವರ ವಾಚನಾಲಯ ” ವನ್ನು ಗ್ರಂಥಾಲಯದಲ್ಲಿ ಆರಂಭಿಸಿದರು . ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಲಭ್ಯವಿದ್ದ ಅಮೂಲ್ಯ ಪುಸ್ತಕ ಮತ್ತು ಉನ್ನತ ಮಟ್ಟದ ಪತ್ರಿಕೆಗಳು ಓದಿನಲ್ಲಿ ಸಾಧಕರು ತಮ್ಮನ್ನು ತಾವು ತೊಡಗಿಸಿಕೊಂಡರು . ಇದಲ್ಲದೆ ನಾಡಿನ ಹಿರಿಯ ಸಾಹಿತಿಗಳ ಮತ್ತು ವಿದ್ವಾಂಸರ ಪಾಂಡಿತ್ಯಪೂರ್ಣ , ವೈಚಾರಿಕ ಉಪನ್ಯಾಸ ಕೇಳುವ ಅವಕಾಶವೂ ಸಾಧಕರಿಗೆ ಆಗಾಗ ದೊರೆಯುತ್ತಿತ್ತು . ತತ್ಪಲವಾಗಿ ತಾವೂ ಏನನ್ನಾದರೂ ಬರೆಯಬೇಕೆಂಬ ಉತ್ಸುಕತೆ ಸಾಧಕರಲ್ಲಿ ಉಂಟಾಗುವುದು ಸಹಜ . ಅದನ್ನು ಗುರುತಿಸಿದ ಪೂಜ್ಯ ಶ್ರೀಗಳು , ಆ ಉತ್ಸಾಹ ಕಾರ್ಯರೂಪಕ್ಕಿಳಿಯಲೆಂದು ಹಾರೈಸಿ , ಆಹೊತ್ತಿಗಾಗಲೇ ಸ್ಥಾಪನೆಗೊಂಡಿದ್ದ “ ಶಿವಯೋಗಿ ಸಂಘ ‘ ದ ಹಿರಿಯ ಸದಸ್ಯರ ಬೆನ್ನು ತಟ್ಟಿದರು . ಅರ್ಥಪೂರ್ಣ ಹೆಸರು ಹೊತ್ತ “ ಸುಕುಮಾರ ‘ ಪತ್ರಿಕೆಯನ್ನು ಅವರು ಹೊರತಂದೇ ಬಿಟ್ಟರು (  ಯುಗಾದಿ ಕ್ರಿ.ಶ. 1933 ) , ಪತ್ರಿಕೆಯ ಉತ್ತಮಿಕೆಗಾಗಿ , ಅದರ ಶ್ರೇಯೋಭಿವೃದ್ಧಿಗಾಗಿ ಶಿವಯೋಗಿ ಸಂಘದ ಸದಸ್ಯರು ಒಮ್ಮನದಿಂದ ದುಡಿದರು . ಆಗ “ ಸುಕುಮಾರ ‘ ಪತ್ರಿಕೆ ಇದ್ದುದು ಕೈಬರಹದಲ್ಲಿ , ಅದನ್ನು ತಮ್ಮ ಮುತ್ತಿನಂತಹ ಅಕ್ಷರಗಳಿಂದ ಬರೆಯುತ್ತಿದ್ದವರು ಶ್ರೀ ಚಂದ್ರಶೇಖರ ದೇವರು ಅಡೂರ ( ಮುಂದೆ ಜ . ಚ . ನಿ . ) , ಅದರ ಮುಖಪುಟವನ್ನು ತಮ್ಮ ಭಾವದುಂಬಿದ ಚಿತ್ರಗಳಿಂದ ವಿನ್ಯಾಸಗೊಳಿಸುತ್ತಿದ್ದವರು , ಅಂದಿನ ಹಿರಿಯ ಸಾಧಕರೂ ಹುಟ್ಟು ಕಲಾವಿದರೂ ಆಗಿದ್ದ ಶ್ರೀ ರೇವಣಸಿದ್ಧ ದೇವರು ( ಮುಂದೆ ಹಾನಗಲ್ ಸದಾಶಿವ ಸ್ವಾಮಿಗಳು ) , ಪತ್ರಿಕೆಯ ಸಂಪಾದಕರು ಶ್ರೀ ಬಸವಲಿಂಗದೇವರು ಗುತ್ತಲ ( ಮುಂದೆ ಬಸವಲಿಂಗ ಪಟ್ಟಾಧ್ಯಕ್ಷರು , ತೆಲಸಂಗ ) , ಹೀಗೆ ಅತ್ಯಂತ ಹುರುಪಿನಿಂದ ಆರಂಭಗೊಂಡ ಪತ್ರಿಕೆ ತದನಂತರದ

ವರ್ಷಗಳಲ್ಲಿ ಏಳು – ಬೀಳುಗಳನ್ನು ಕಂಡರೂ ನಿಲ್ಲದೆ ಕೈಬರಹ ರೂಪದಲ್ಲಿಯೇ ಮುಂದುವರಿದುಕೊಂಡು ಬಂದಿತು . ಹುಬ್ಬಳ್ಳಿಯ ಮೂರುಸಾವಿರ ಮಠದ ಅಂದಿನ ಪೂಜ್ಯ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳವರ ಉದಾರ ಕೃಪೆ ಮತ್ತು ಅಂದು ಸಂಸ್ಥೆಯ ಅಧ್ಯಕ್ಷರಾಗಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರ ಪ್ರೋತ್ಸಾಹದಿಂದ ಸುಕುಮಾರ ‘ ಪತ್ರಿಕೆ ಶ್ರೀ ಶಿವಯೋಗ ಮಂದಿರದ * ಸದಾಶಿವ ಮುದ್ರಣಾಲಯ ‘ ದಲ್ಲಿಯೇ ಅಚ್ಚಾಗಿ ಹೊರಬರಲಾರಂಭಿಸಿತು ( ೧-೧೦-೧೯೫೦ ವಿಜಯದಶಮಿ ) . ಆಗ ಅದರ ಸಂಪಾದಕರಾಗಿದ್ದವರು ಶ್ರೀ ಜಿ . ಎಂ . ಉಮಾಪತಿ ಶಾಸ್ತ್ರಿಗಳು . ಅದನ್ನು ಉದ್ಘಾಟಿಸಿದವರು ಪೂಜ್ಯ ಹಾನಗಲ್ ಸದಾಶಿವ ಮಹಾಸ್ವಾಮಿಗಳವರು . ಅವರು ಪತ್ರಿಕೆ ಬಿಡುಗಡೆಯ ಭಾಷಣದಲ್ಲಿ “ ವಿನಾಶದತ್ತ ನಡೆದಿರುವ ಸಮಾಜದ ಸುಧಾರಣೆಗಾಗಿ ಕರುಣಾಳು ಪರಮಪೂಜ್ಯ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರು ಈ ಮಂದಿರವನ್ನು ಕಟ್ಟಿದರು . ಶರಣರ ವ್ಯಾಪಕ ತತ್ವಗಳ ಪ್ರಚಾರದ ಮೂಲಕ ವಿಶ್ವಧರ್ಮ ಪ್ರಸಾರದ ಸದುದ್ದೇಶದಿಂದ ಪತ್ರಿಕೆಯೊಂದನ್ನು ಪ್ರಕಟಿಸಲು ಈ ಅಚ್ಚುಕೂಟವನ್ನು ಏರ್ಪಡಿಸಿದ್ದರು . ಇಂದು ಆ ಅಚ್ಚಿನಮನೆಯಿಂದಲೇ ಅವರ ಸತ್ಸಂಕಲ್ಪವು ಅಂಕುರಿತವಾಗಿದೆ . ಅದು ಚಿಗುರಿ ಫಲಿಸಿ ಆ ಫಲದ ಸುಸ್ವಾದವನ್ನು ಸಮಾಜದ ಜನರೆಲ್ಲ ಉಣ್ಣುವಂತಾಗಲಿ ” ಎಂದು ಅಪ್ಪಣೆ ಕೊಡಿಸುವುದರ ಜೊತೆಗೆ “ ಸುಪ್ತ ಸಮಾಜವನ್ನು ಎಚ್ಚರಿಸಿ , ಸನ್ಮಾರ್ಗದಲ್ಲಿ ಪ್ರವೃತ್ತಿಯನ್ನುಂಟುಮಾಡುವಂತಹ ಲೇಖನಗಳು ಪತ್ರಿಕೆಗಳಿಗೆ ಭೂಷಣಪ್ರಾಯವಾದವು . ಪತ್ರಿಕೆಯ ಉದ್ಯಮವು ಅರ್ಥಾಗಮದ ಸಾಧನವಾಗಬಾರದು . ಹಾಳು ಹರಟೆಯ ನೋಟೀಸುಗಳಿಂದ ಅಶೋಭನೀಯವಾಗಬಾರದು . ಸಮಾಜದ ಪ್ರಗತಿಯ ಸಾಮಯಿಕ ಸಮಸ್ಯೆಗಳನ್ನು ಕುರಿತು ವಿವೇಚಿಸಿದ ಪ್ರೌಢಲೇಖನಗಳು ಬೇಕು . ಮಾನವನ ನೈತಿಕಮಟ್ಟವನ್ನು ಉನ್ನತಗೊಳಿಸುವ ನೈತಿಕ ನಿಬಂಧ ಮತ್ತು ಪ್ರಬಂಧಗಳು ಪ್ರಕಟವಾಗಬೇಕು ….. ಸಮಾಜಸೇವೆಯೊಂದಿಗೆ ಕನ್ನಡ ನುಡಿ ಮತ್ತು ಸಾಹಿತ್ಯ ಸೇವೆಗಾಗಿ ಪ್ರಕಟವಾದ ಚೆನ್ನಿಗ “ ಸುಕುಮಾರ ‘ ನು ಕನ್ನಡಿಗರ ಹೃದಯವನ್ನು ಬೆಳಗಿ ಕನ್ನಡ ಮಾತೆಗೆ ಉನ್ನತ ಕೀರ್ತಿಯನ್ನು ತರಲಿ ” ಎಂದು ಹಾರೈಸಿದರು . ಪೂಜ್ಯರ ಈ ಮಾತುಗಳಲ್ಲಿ ಲಿಂ . ಶ್ರೀ ಕುಮಾರ ಸ್ವಾಮಿಗಳವರ ಸತ್ಸಂಕಲ್ಪ , ಅವರ ಸದುದ್ದೇಶ , ಸಮಾಜ ಸುಧಾರಣೆಯ ಬಗ್ಗೆ ಅವರಿಗಿದ್ದ ಕಾಳಜಿ , ಕಳಕಳಿಗಳನ್ನು ಗುರುತಿಸಬಹುದಾಗಿದೆ . ಅವರ ಮಾತುಗಳಲ್ಲಿರುವ ಇನ್ನೊಂದು ಮಹತ್ವದ ಅಂಶವೆಂದರೆ ಪತ್ರಿಕೆಯಲ್ಲಿ ಎಂತಹ ಲೇಖನಗಳಿರಬೇಕು , ಎಂತಹ ಲೇಖನಗಳಿರಬಾರದು , ಅದರ ಧೈಯೋದ್ದೇಶಗಳೆಂಥವಿರಬೇಕು ಎಂಬುದರ ವಿವೇಚನೆ . ಇವು ಅಂದಿನ ಸಂಪಾದಕರನ್ನು ಕುರಿತು ಹೇಳಿರುವ ಮಾತುಗಳಾದರೂ ಇಂದಿನ ಸಂಪಾದಕರಿಗೂ ಅನ್ವಯಿಸುತ್ತವೆ .

ಹೀಗೆ ಕ್ರಿ . ಶ . ೧೯೫೦ ರಿಂದ ಪ್ರೊ . ಜಿ . ಎಂ . ಉಮಾಪತಿ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಮುದ್ರಣರೂಪದಲ್ಲಿ ಪ್ರಕಟವಾಗುತ್ತ ಬಂದ ಸುಕುಮಾರ ‘ ಪತ್ರಿಕೆ ಹಲವಾರು ವರ್ಷ ಸರಾಗವಾಗಿ ನಡೆದುಕೊಂಡು ಬಂದು , ಮುಂದೆ ನಿಂತು ಹೋಯಿತು .

ಶಿವಯೋಗ ಮಂದಿರ , ಒಂದು ವಿಶಿಷ್ಟ ಧಾರ್ಮಿಕ ಸಂಸ್ಥೆ . ಇಲ್ಲಿ ತರಬೇತಿ ಹೊಂದಿದ ಸಾವಿರಾರು ಸಾಧಕರು ನಾಡಿನ ತುಂಬ ಹರಡಿರುವ ಮಠಗಳ ಮಠಾಧಿಪತಿಗಳಾಗಿ ಧರ್ಮ , ಶಿಕ್ಷಣ , ಸಾಹಿತ್ಯ , ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ . ಮಠಾಧಿಪತಿಗಳ ಟಂಕಸಾಲೆಯಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಹಾಗೂ ಧೈಯೋದ್ದೇಶಗಳನ್ನು ಪ್ರಚುರಪಡಿಸುವಲ್ಲಿ ಸಂಸ್ಥೆಯ ಮುಖಪತ್ರಿಕೆಯ ಅವಶ್ಯಕತೆಯನ್ನರಿತು  ದಿನಾಂಕ ೭-೫-೨೦೦೨ ರಂದು ಸಭೆ ಸೇರಿದ ಶಿವಯೋಗಮಂದಿರ ಸಂಸ್ಥೆಯ ಗೌರವಾನ್ವಿತ ಸದಸ್ಯರು ನಿಂತು ಹೋಗಿರುವ “ ಸುಕುಮಾರ ‘ ಪತ್ರಿಕೆಯನ್ನು ಪುನಃ ಪ್ರಕಟಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಉಪಾಧ್ಯಕ್ಷರಾದ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು  ಡಾ. ಬಿ.ವಿ.ಮಲ್ಲಾಪುರ ಮತ್ತು ಡಾ. ಬಿ.ಆರ್.ಹಿರೇಮಠ  ಅವರಿಗೆ ವಹಿಸಿದರು . ಪುನರ್ಜನ್ಮ ಗೊಂಡ ಪತ್ರಿಕೆ ಉತ್ತಮ ಕಾರ್ಯನಿರ್ವಹಿಸಿತು.

ದಿ.08-04-2021 ರಂದು  ಪೂಜ್ಯ ಮುಪ್ಪಿನ ಬಸವಲಿಂಗ ದೇವರು  ,ಉತ್ತರಾಧಿಕಾರಿ ಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರಿ,  ಅವರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಉದಯೋನ್ಮುಖ  ಲೇಖಕರ ಲೇಖನ ಗಳ ಕುರಿತು ಚರ್ಚೆ ಮಾಡುವಾಗ , ಪೂಜ್ಯರು ”  ಸುಕುಮಾರ” ಪತ್ರಿಕೆಯ ಪುನರಾಂಬರದ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಆಗ ಹೊಳದಿದ್ದೇ  ಆಧುನಿಕ ತಂತ್ರಜ್ಞಾನದ ಮೂಲಕ ಅಂತರ್ಜಾಲ ದ ಪತ್ರಿಕೆ.

ಶ್ರೀಮದ್ವೀ ರಶೈವ ಶಿವಯೋಗ ಮಂದಿರದ ಅಧ್ಯಕ್ಷರಾದ ಶ್ರೀ.ಮ.ನಿ.ಪ್ರ. ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ  ಆಶೀರ್ವಾದ ಮತ್ತು ಅನುಮತಿ ಗಳ ಜೊತೆಗೆ “ಸುಕುಮಾರ” ಪತ್ರಿಕೆಯ ಮೌಲ್ಯ ಮತ್ತು ಹಿರಿಮೆಗಳಿಗೆ ಧಕ್ಕೆಯಾಗದಂತೆ  ಪತ್ರಿಕೆ ಮುನ್ನೆಡೆಯಬೇಕು ಎಂಬ ಕಳಕಳಿಯ ಎಚ್ಚರಿಕೆ ಯ ಮಾರ್ಗದರ್ಶನ ದೊಂದಿಗೆ  “ಸುಕುಮಾರ” ಪ್ರಕಾಶಗೊಳ್ಳುತ್ತಲಿದೆ.

ಇಂಥ ಗುರುತರ ಕಾರ್ಯವನ್ನು  ಸಾಧ್ಯ ಮಾಡುವುದಕ್ಕೆ  ಶ್ರೀಕುಮಾರೇಶನ ಕೃಪೆ ಬೇಕು . ಹಾಗೆಯೇ ವಿದ್ವಾಂಸರ , ಸಂಶೋಧಕರ , ಸಾಹಿತಿಗಳ ಸಮಯೋಚಿತ ಸಹಾಯ ಸಹಕಾರಗಳೂ ಬೇಕು . ಮೌಲಿಕ , ವೈಚಾರಿಕ ಹಾಗೂ ಸಂಶೋಧನಾತ್ಮಕ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ . ಕಾರಣ ಅಂಥ ಲೇಖನಗಳನ್ನು ನಾವು ನಿರೀಕ್ಷಿಸುತ್ತೇವೆ .

ಹೊಸಹುಟ್ಟು , ಹೊಸರೂಪ ಪಡೆದು ಹೊರಬರುತ್ತಿರುವ ಸುಕುಮಾರ ‘ ಪತ್ರಿಕೆಯನ್ನು ಸಹೃದಯರು ತುಂಬು ಹೃದಯದಿಂದ ಸ್ವಾಗತಿಸುವರೆಂದು ಭಾವಿಸಿದ್ದೇವೆ .

ಶ್ರೀಕಂಠ.ಚೌಕೀಮಠ

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ಸೌಜನ್ಯ:  ಡಾ. ಬಿ.ವಿ.ಮಲ್ಲಾಪುರ ಲೇಖನಗಳು .)

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ

ಪೂಜ್ಯರ ಆಶೀರ್ವಚನ

     ಕೈಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು. ೧೯೩೩ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾ ಸ್ವಾಮಿಗಳವರ ಅಮೃತ ನುಡಿಗಳು ಹೀಗಿವೆ

 “ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕ ಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡ ಪ್ರೇಮ ಮತ್ತು ವಿದ್ಯಾ ನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣ ಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”

ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಅಚ್ಚಿನ ಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವ ಧರ್ಮಕ್ಕೆ ಸಮ್ಮಂದಿಸಿದ ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯ ಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.

     ಈ ಸುಕುಮಾರ ಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀ ಹಾನಗಲ್ಲ ಕುಮಾರಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀ ಕುಮಾರೇಶನ ತತ್ವಗಳನ್ನು ದೇಶ ವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯ ಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಗಳಸಲೆಂದು ಹಾರೈಸುತ್ತೇವೆ.

ಸಂಗ್ರಹ -ಸೌಜನ್ಯ -ಮಹಾಜಂಗಮ

(ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಒಂದು ಅಧ್ಯಯನ ಡಾ.ಜಿ.ಕೆ.ಹಿರೇಮಠ)

  1. ಮೋಹಕ್ಕಿಂತ ಸುಡುವ ಬೆಂಕಿಯಿಲ್ಲ ,
  2. ದ್ವೇಷಕ್ಕಿಂತ ಚುಚ್ಚುವ ಅಲಗಿಲ್ಲ .
  3. ಭ್ರಾಂತಿಗಿಂತ ಬೇರೆ ಪಾಶವಿಲ್ಲ .
  4. ದುರಾಸೆಗಿಂತ ಬೇರೆ ಶತ್ರುವಿಲ್ಲ
  5. ಕಲ್ಲಿನಲ್ಲಿರುವ ನಿರಾಶೆ ಕನಕದಲ್ಲಿಯೂ ಬರಬೇಕು .
  6. ಪರಮತದ ಅಪಚಾರಕ್ಕೆ ಕೈ ಹಾಕಬಾರದು . ಸ್ವಮತದ ಅಪಜಯಕ್ಕೆ ಕೈಕಟ್ಟಿಕೊಂಡು ಕೂಡ್ರಬಾರದು .
  7. ಜಾತ್ರೆಗಳಲ್ಲಿ ಜರಗುವ ಜೀವವಧೆಯನ್ನು ನಿಲ್ಲಿಸಬೇಕು
  8. ಜೀವದಯಾ ಸಂಘಕ್ಕೆ ಸಹಾಯ ನೀಡಬೇಕು .
  9. ಗೋಲಿಯಾಟದಲ್ಲಿ ಗುರಿಯಿಡುವದರ ಮೂಲಕ ದೃಷ್ಟಿಶುದ್ಧಿ ಮಾಡಿಕೊಳ್ಳಬೇಕು .
  10. ಡೊಂಬರಾಟದಿಂದ ಹಟಯೋಗದ ಮರ್ಮವರಿಯಬೇಕು .
  11. ನಿಜಗುಣರ ಷಟ್‌ಶಾಸ್ತ್ರದ ಅಧ್ಯಯನ ಮಾಡಬೇಕು .
  12. ಅರ್ಚನ , ಅರ್ಪಣ , ಅನುಭಾವಗಳು ನಿತ್ಯವೂ ನಡೆಯಬೇಕು .
  13. ದೃಷ್ಟಿಯನ್ನು ಒಂದೇ ಕಡೆಗೆ ನಿಲ್ಲಿಸುವುದು ಯೋಗ ಸಾಧನೆಯಿಂದ ಸಾಧ್ಯ .
  14. ಒಳ್ಳೇ ಧೈಯವನ್ನು ಸಾಧಿಸಲು ಸದಾ ಪ್ರಯತ್ನಿಸುತ್ತಿರಬೇಕು .
  15. ಧರ್ಮದಿಂದ ಸದಾಚಾರದಿಂದ ನಡೆಯುವವನೇ ಮಾನವ .
  16. ಸಾಧಕರಾದವರು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು .
  17. ನಿತ್ಯವೂ ಪ್ರಾತಃಕಾಲದಲ್ಲಿ ಆಸನ ಹಾಕಬೇಕು .
  18. ಪ್ರಾಣಾಯಾಮ ಮಾಡಬೇಕು .
  19. ಪರಮಾತ್ಮನನ್ನು ಧ್ಯಾನಿಸಿ ಮಲಗಬೇಕು .
  20. ಬಾಹ್ಯಾದ್ವೈತಕ್ಕೆ ಮನಸ್ಸು ಹಾಕಬಾರದು .
  21. ಗುರುವಚನವನ್ನು ಮೀರಬಾರದು .
  22. ಆಹಾರ – ಶುದ್ಧಿಯೇ ಸತ್ವಶುದ್ಧಿ .
  23. ಜಗದ್ಗುರುತ್ವ ಪಡೆದವರು ಸಮಾಜ – ಸೇವಾಕಾರ್ಯನಿರತರಾಗಬೇಕು .
  24. ಮಠಾಧಿಕಾರಿಗಳ ಆಚಾರ ವಿಚಾರಗಳನ್ನು ಸುಧಾರಿಸುವುದೇ ಶಿವಯೋಗ ಮಂದಿರದ ಮೂಲೋದ್ದೇಶ .
  25. ಶಕ್ತಿ ವಿಶಿಷ್ಟಾದ್ವೈ ತ ಸಿದ್ಧಾಂತವನ್ನು ತುಲನಾತ್ಮಕವಾಗಿ ವಿವೇಚಿಸಿ ಶಿಕ್ಷಣವನ್ನು ನೀಡುವುದು ಶಿವಯೋಗಮಂದಿರದ ಮುಖ್ಯೋದ್ದೇಶ .
  26. ಭಾರತದ ಎಲ್ಲ ವೀರಶೈವಮಠಗಳು ‘ ‘ ಶಿವಯೋಗ ಮಂದಿರ ‘ ‘ ಗಳಾಗಬೇಕು .
  27. ದೇಶ ವಿದೇಶಗಳಲ್ಲಿ ಶಕ್ತಿವಿಶಿಷ್ಟಾದ್ವೈ ತ ಪ್ರಚಾರ ಮಾಡಬೇಕು .
  28. ವಿರಕ್ತರಾದವರು ಕಾಮ , ಕ್ರೋಧ , ಲೋಭ , ಮೋಹ , ಮದ , ಮತ್ಸರ ತೊರೆಯಬೇಕು .
  29. ಸತ್ಯಕ್ಕಾಗಿ ಮಿತಭಾಷಿಯಾಗಿರಬೇಕು .
  30. ದುರ್ಗುಮ ತುಂಬಿರುವ ಮೌನ ಅಪಾಯಕಾರಿ .
  31. ಗುರು – ವಿರಕ್ತರು ಸಮಾಜಸೇವೆ ಮಾಡಬೇಕು .
  32. ದ್ವಿತೀಯ ಶಂಭು ಬಸವಣ್ಣನ ತತ್ವ ಪ್ರಚಾರ ಮಾಡಬೇಕು
  33. ಸಮಾಜಕ್ಕಾಗಿ ದೇಹ ಸವೆಯಿಸಬೇಕು
  34. ಘಟದಿಂದ ಮಠ ಬೆಳಗಬೇಕಲ್ಲದೆ ಮಠದಿಂದ ಘಟ ಬೆಳಗಬಾರದು .
  35. ಗೋಸಂರಕ್ಷಣೆಯನ್ನು ಮಠಾಧಿಪತಿಗಳು ಮಾಡಬೇಕು .
  36. ವಿಭೂತಿಯ ಮಹಿಮೆಯನ್ನು ತಿಳಿಯಬೇಕು

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )ಮೇ ೨೦೨೧ ರ ಸಂಚಿಕೆ

ಪ್ರಸ್ತಾವನೆ

‘ ‘ ತಮೇವ ವಿದಿತ್ವಾತಿಮೃತ್ಯುಮೇತಿ

ನಾನ್ಯ : ಪಂಥಾ ವಿದ್ಯತೇ ಅಯನಾಯ ‘ ||

ಆತ್ಮತತ್ತ್ವವನ್ನು ಅರಿತು ಮೃತ್ಯುವನ್ನು ಮೀರಬಹುದು . ಇದಕ್ಕಿಂತಲೂ ಭಿನ್ನವಾದ ಬೇರೊಂದು ಮೋಕ್ಷದ ಮಾರ್ಗವಿಲ್ಲವೆಂದು ಉಪನಿಷತ್ಕಾರರು ಸ್ವಾನುಭಾವವನ್ನು ಸೂಚಿಸಿದರೆ ; ಅಣ್ಣ ಬಸವಣ್ಣನವರು

 ……. ತಾನಾರೆಂಬುದ ಸಾಧಿಸಲಾಗದು ಕೂಡಲ ಸಂಗಮದೇವರ ಕರುಣವುಳ್ಳವಂಗಲ್ಲದೆ ”

ಎಂದಿದ್ದಾರೆ . ಸದ್ಗುರುವಿನ ಸತ್ಕೃಪೆಯಿಲ್ಲದೆ ತಾನಾರು ? ತನ್ನ ಗುರಿಯೇನು ? ಎಂಬುದನ್ನು ಸಾಧಿಸಲಿಕ್ಕಾಗದು . ಎಂಭತ್ನಾಲ್ಕು ಲಕ್ಷ ಜೀವಿಗಳಲ್ಲಿ ಮಾನವನು ಮಿಗಿಲಾಗಿದ್ದಾನೆ . ಮಾನವಕುಲ ಭಿನ್ನಕಾರಣಗಳಿಂದ ವಿಭಿನ್ನತೆಯನ್ನು ಹೊಂದಿದ್ದರೂ ಎಲ್ಲರ ಗಮ್ಯಸ್ಥಾನ ಒಂದೇ ಆಗಿದೆ . ಆತ್ಮದರ್ಶನ ಮಾಡಿಸುವ , ಮಾಡಿಕೊಳ್ಳುವ ಪ್ರವೃತ್ತಿ ಬಹು ಪುರಾತನವಾದುದು . ಜೀವ – ಜಗತ್ತು – ಈಶ್ವರ , ಈ ತ್ರಿಪುಟಿಯ ಯಥಾರ್ಥತೆಯನ್ನು ತಿಳಿಸಿಕೊಡುವ ದರ್ಶನ ಶಾಸ್ತ್ರಗಳು ವಿಭಿನ್ನ ಮಾರ್ಗವನ್ನು ಅನುಸರಿಸಿ , ಮುಖ್ಯವಾಗಿ ಷಡ್ದರ್ಶನಗಳಾದವು , ನ್ಯಾಯ , ವೈಶೇಷಿಕ , ಸಾಂಖ್ಯ , ಯೋಗ , ಪೂರ್ವಮೀಮಾಂಸೆ ಉತ್ತರಮೀಮಾಂಸೆಗಳೆಂದು ಷಡ್ದರ್ಶನ ಖ್ಯಾತಿಯಿದ್ದರೂ , ಶಿವಾದ್ವೈತಿಗಳು ಕಂಡ ವೀರಶೈವ ದರ್ಶನ ಅಮೂಲ್ಯವಾಗಿದೆ . ಉತ್ತರ ಮೀಮಾಂಸೆಯು ಅದ್ವೈತವನ್ನು ಹೇಳುತ್ತಿದ್ದರೆ ; ವೀರಶೈವ ದರ್ಶನವು ಶಕ್ತಿವಿಶಿಷ್ಟಾದ್ವೈತವನ್ನು ಪ್ರದಿಪಾದಿಸುತ್ತದೆ .

ಶಕ್ತಿ ವಿಶಿಷ್ಟಾದ್ವೈತದಲ್ಲಿ ಮುಖ್ಯವಾಗಿ , ಅಷ್ಟಾವರಣ , ಪಂಚಾಚಾರ , ಷಟ್ ಸ್ಥಲಗಳ ಸಮನ್ವಯವಿದೆ . ಇಲ್ಲಿ ವೈಚಾರಿಕತೆಯೊಡನೆ ಸತ್ಕ್ರಿಯೆಗಳ ಸಂಗಮವಿದೆ . ಅಂತೆಯೇ ಸತ್ಕ್ರಿಯಾ – ಸುಜ್ಞಾನಗಳ ಸಮಸಮುಚ್ಚಯದಲ್ಲಿ ಷಟ್‌ಸ್ಥಲ ಸಿದ್ಧಾಂತವು ರೂಪುಗೊಂಡಿದೆ . ಶುದ್ಧಾಂತಃಕರಣಿಯಾದ ಜೀವನು ಅಷ್ಟಾವರಣಾಂಗಿಯಾಗಿ , ಪಂಚಾಚಾರ ಪ್ರಾಣಿಯೆನಿಸಿ , ಷಟ್‌ಸ್ಥಲ ಮಾರ್ಗದಲ್ಲಿ ಮುನ್ನಡೆದು ಶೂನ್ಯ ಸಂಪಾದನೆಯನ್ನು ಸಾಧಿಸುವನು . ಅಂಗನು ಜಗತ್ತಿನ ಪ್ರತಿಯೊಂದು ಪದಾರ್ಥ ( ಗಂಧ – ರಸ – ರೂಪ – ಸ್ಪರ್ಶ – ಶಬ್ದ ) ಗಳನ್ನು ಪ್ರಸಾದಗೊಳಿಸಿ ಲಿಂಗದೇವನಿಗೆ ಸಮರ್ಪಿಸಿ ಅಂಗಲಿಂಗಗಳ ಸಮರಸವನ್ನು ಸಾಧಿಸುತ್ತಾನೆ . ನಿರ್ವಿಕಲ್ಪ ಸಮಾಧಿ ಗಿಂತಲೂ ಮೇಲ್ಮಟ್ಟದ ಸ್ಥಿತಿಯಾದ ಐಕ್ಯಸ್ಥಲದಲ್ಲಿ ಶೂನ್ಯವನ್ನು ಹೊಂದುತ್ತಾನೆ . ಅರ್ಥಾತ್ ಸಂಪಾದಿಸುತ್ತಾನೆ . ಇಲ್ಲಿ ಶೂನ್ಯವೆಂದರೆ ನಿಷೇಧವಲ್ಲ . ಎಲ್ಲವನ್ನು ಒಳಗೊಂಡ ಮಹಾಚೈತನ್ಯವೆಂದೇ ಅರ್ಥವಾಗುವದು . ಇಂಥ ಶೂನ್ಯವನ್ನು ಸಂಪಾದಿಸಿದವನಿಗೆ ಕಾಲ – ಕರ್ಮ – ಮಾಯೆಗಳ ಬಾಧೆಯಾಗುವದಿಲ್ಲ . ಅವನು ಸದ್ಯೋನ್ಮುಕ್ತನಾಗುವನು . ಆತನಿಗೆ ಪೂರ್ಣಾನುಭೂತಿಯಾಗಿ ಪೂರ್ಣಾನಂದ ಪ್ರಾಪ್ತಿಯಾಗುವದು . ಮಾನವೀಯ ಪರಿಪೂರ್ಣ ವಿಕಾಸ ಲಭ್ಯವಾಗಿ ದೇವತ್ವವನ್ನು ಅರ್ಥಾತ್ ಶಿವತ್ವವನ್ನು ಹೊಂದುವನು .

 ಈ ವೀರಶೈವ ದರ್ಶನವು ಆಗಮಗಳಲ್ಲಿ ಉಕ್ತವಾಗಿದ್ದು , ಸಿದ್ಧಾಂತ ಶಿಖಾಮಣಿ ಹಾಗೂ ೧೨ ನೆಯ ಶತಮಾನದ ಶರಣರ ವಚನ ಸಾಹಿತ್ಯದಲ್ಲಿ ಪರಿಷ್ಕಾರಗೊಂಡಿದೆ . ಬಸವಣ್ಣ , ಚನ್ನಬಸವಣ್ಣನವರು ಷಟ್‌ಸ್ಥಲಸಿದ್ಧಾಂತಕ್ಕೆ ಹೊಸರೂಪು ಕೊಟ್ಟರು . ಆಚರಣೆಯಲ್ಲಿ ತತ್ವವನ್ನು ಆಚರಿಸುವ ಬಗೆಯನ್ನು ಕಂಡರು . ೧೫ ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗಯತಿಗಳು ‘ ಷಟ್‌ಸ್ಥಲ ಜ್ಞಾನಸಾರಾಮೃತ’ವನ್ನು ರಚಿಸಿ ಷಟ್‌ಸ್ಥಲ ಮಾರ್ಗವನ್ನು ಪುನರುಜೀವನಗೊಳಿಸಿದರು . ಜನಸಾಮಾನ್ಯರ ನಡೆನುಡಿಯಲ್ಲಿ ಈ ತತ್ವವನ್ನು ಮೈಗೂಡಿಸಿಕೊಳ್ಳುವ ದಿವ್ಯದರ್ಶನ ಮಾಡಿಸಿದವರು ೧೮ ನೆಯ ಶತಮಾನದಲ್ಲಿ ಬಳ್ಳಾರಿ ಜಿಲ್ಲೆಯ ಹಾಲವರ್ತಿ ಶಿವಾನುಭವ ಚರವರ್ಯರಾದ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಶಿವಯೋಗಿಗಳು , ಅಷ್ಟಾವರಣ – ಪಂಚಾಚಾರ – ಷಟ್‌ಸ್ಥಲಗಳನ್ನು ಸ್ವತಃ ತಾವು ಅಳವಡಿಸಿಕೊಂಡು ಶಿವಭಕ್ತರಿಗೂ ಸಾಧನೆಯ ಸುಲಭ ಮಾರ್ಗವನ್ನು ಬೋಧಿಸಿದರು . ಶಿವಾನುಭವ ಕೇಂದ್ರವನ್ನು ಸ್ಥಾಪಿಸಿ ಅನೇಕರ ಬಾಳನ್ನು ಬೆಳಗಿಸಿದ ಪರಂಜ್ಯೋತಿಗಳು ; ಇಂಥ ಸ್ವಯಂ ಜ್ಯೋತಿಯ ದಿವ್ಯಪ್ರಕಾಶದಲ್ಲಿ ಬೆಳಗಿದ ಶರಣಪುಂಗವ ಮೈಲಾರ ಬಸವಲಿಂಗ ಶರಣರು .

 ಹರಭಕ್ತರಾದ ಬಸವಲಿಂಗ ಶರಣರು ಹರದ ವೃತ್ತಿಯನ್ನು ಕೈಕೊಂಡು ಗುರು ಲಿಂಗ – ಜಂಗಮ ದಾಸೋಹಿಗಳಾಗಿ ಶಿವಾನುಭವವನ್ನು ಚನ್ನವೀರೇಶ್ವರರಿಂದ ಪಡೆದರು . ಅಚ್ಚ ವೀರಶೈವ ಸಂಸ್ಕೃತಿ ಇವರ ಕೃತಿಗಳಲ್ಲಿ ನಿರರ್ಗಳವಾಗಿ ಮೂಡಿ ಬಂದಿದೆ . ಶಿವನಿಗಿಂತಲೂ ಶಿವಭಕ್ತನೇ ಶ್ರೇಷ್ಠನೆಂಬುದನ್ನು ನಿರ್ಭಿತಿಯಿಂದ ವೈಚಾರಿಕವಾಗಿ ಪ್ರತಿಪಾದಿಸಿದ ಶರಣರಿವರು . ನ್ಯಾಯನಿಷ್ಟುರರಾಗಿ ಯಾವ ದಾಕ್ಷಿಣ್ಯಕ್ಕೆ ಒಳಗಾಗದ ಧೀರರು , ನಿಜವೀರಶೈವನ ನೈಜಾಚರಣೆಯನ್ನು ತತ್ವಬದ್ಧವಾಗಿ ತಿಳಿಸಿದ್ದಾರೆ . ಇವರು , ೧. ಷಟ್ಸ್ಥಲ ನಿರಾಭಾರಿ ವೀರಶೈವ ಸಿದ್ದಾಂತ , ೨ ಗುರುಕರುಣ ತ್ರಿವಿಧಿ ೩. ಶಿವಾನುಭವ ದರ್ಪಣ , ೪ , ಲಿಂಗಪೂಜಾ ವಿಧಾನಗಳು ಎಂಬ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ . ಮೊದಲನೆಯದರಲ್ಲಿ – ಅಷ್ಟಾವರಣದ ಮಹತ್ವ , ಪಂಚಾಚಾರ ಹಾಗೂ ಧರ್ಮಾಚಾರಗಳನ್ನು ವಿವರಿಸಿದ್ದಾರೆ . “ ಗುರುಕರುಣ ತ್ರಿವಿಧಿ ‘ ಯಲ್ಲಿ ಮೇಲಿನ ಮೂರು ತತ್ತ್ವಗಳನ್ನು ಮನೋಜ್ಞವಾಗಿ ತುಂಬಿರಿಸಿದ್ದಾರೆ . ವಸ್ತುತಃ ಈ ತ್ರಿವಿಧಿಯ ಶಾಪವಿಮೋಚನೆಗಾಗಿ ರಚಿಸಿದ ಕೃತಿಯಲ್ಲ . ಜನ ವದಂತಿಯ ಮೂಲಕ ಬೆಳೆದ ಶಾಪದ ಸಂಗತಿ ಸತ್ಯಕ್ಕೆ ದೂರವಾಗಿದೆ , ಏಕೆಂದರೆ ಈ ಶಿವಕವಿಯ ವೈಚಾರಿಕತೆ , ಆಳವಾದ ಅನುಭವ , ತರ್ಕಬದ್ಧವಾದ ವಿಚಾರ , ವಿಮರ್ಶೆಗಳು ಮತ್ತು ಶಾಸ್ತ್ರೀಯ ಸಿದ್ಧಾಂತಗಳ ಪ್ರತಿಪಾದನೆ ಇದರಲ್ಲಿ ಮುಪ್ಪರಿಗೊಂಡಿವೆ .

ಈ ದಿಶೆಯಲ್ಲಿ ಗುರುಕರುಣ ತ್ರಿವಿಧಿಯು ಬಸವಲಿಂಗ ಶರಣರ ಅತ್ಯುತ್ತಮ ಕೃತಿಯೆಂದೇ ಹೇಳಬೇಕು . ಇದರಲ್ಲಿ ಸಮಗ್ರ ವೀರಶೈವ ದಾರ್ಶನಿಕ ಸಿದ್ಧಾಂತವು ಪ್ರತಿಪಾದಿತವಾಗಿದೆ . ವೀರಶೈವರ ಅಷ್ಟಾವರಣ , ಪಂಚಾಚಾರ ಷಟ್‌ಸ್ಥಲಗಳು ಒಂದಕ್ಕೊಂದು ಆಚರಣೆಯಲ್ಲಿ ಹೇಗೆ ಸಮನ್ವಯಗೊಳ್ಳುತ್ತವೆಂಬ ಪರಿಯನ್ನು ಬಹು ಸುಂದರವಾಗಿ ಈ ಚಿಕ್ಕ ಕೃತಿಯಲ್ಲಿ ವರ್ಣಿಸಿದ್ದು , ಅದರಿಂದ ಶಿವಕವಿಯ ಸ್ವಾನುಭಾವ ಹಾಗೂ ವಿಚಕ್ಷಣಮತಿಯ ಪರಿಚಯವಾಗುವದು . ತ್ರಿವಿಧಿಯಲ್ಲಿ ಕೇವಲ ೩೩೩ ತ್ರಿಪದಿಗಳಿದ್ದು , ಎರಡೇ ಸಾಲಿನಲ್ಲಿ ಅಪಾರವಾದ ತತ್ತ್ವವನ್ನು ಹಿಡಿದಿರಿಸಿರುವ ಸಾಹಸ ಶರಣರದು .

 ಆಲದ ಮರದ ಬೀಜ ಬಹು ಚಿಕ್ಕದಾಗಿದ್ದರೂ ಮರ ಅದೆಷ್ಟು ವಿಸ್ತಾರವಾಗಿರುವುದೋ ಅದರಂತೆ ಈ ತ್ರಿವಿಧಿಯಲ್ಲಿ ಸಮಗ್ರ ವೀರಶೈವ ಸಿದ್ಧಾಂತದ ದರ್ಶನವನ್ನೇ ಮಾಡಿಕೊಳ್ಳಬಹುದು . ಬಹುಶಃ ಇದು ಗುರುಸ್ತುತಿಗೈದ ಪಾರಾಯಣ ತ್ರಿವಿಧಿಯೆಂಬುದಾಗಿಯೇ ಬಹುಜನರ ತಿಳುವಳಿಕೆಯಾಗಿತ್ತು . ಇಂಥ ಮಹತ್ವಪೂರ್ಣ ಕೃತಿಯ ಅಧ್ಯಯನ ಮಾಡುವ ಸದವಕಾಶ ದೊರೆತುದು , ಮಹಾಶಿವಯೋಗಿಗಳ ಸತ್ಪ್ರೇರಣೆಯೇ ಇರಬೇಕು . ಪೂಜ್ಯ ಗುರುವರ್ಯರ ಅಪ್ಪಣೆಯಂತೆ ಮುಂಡರಗಿಯ ಕೆಲವು ಸದ್ಭಕ್ತರ ಮನೆಗಳಲ್ಲಿ ಶ್ರಾವಣ ಮಾಸದ ಪ್ರಯುಕ್ತ ಈ ‘ ಗುರುಕರುಣ ತ್ರಿವಿಧಿ’ಯು ಪಾರಾಯಣಗೈಯ್ಯಲ್ಪಡುತ್ತದೆ . ಆ ಭಕ್ತರ ಪಾರಾಯಣವೇ ಈ ಕೃತಿ ರಚನೆಗೆ ಕಾರಣ . ಈ ತ್ರಿವಿಧಿ ಚಿಕ್ಕದಾಗಿದ್ದರೂ ಅದನ್ನು ಅರ್ಥೈಸುವದು ಸುಲಭ ಸಾಧ್ಯವಲ್ಲ . ಸಂಸಾರ ಹೇಯಸ್ಥಲದಲ್ಲಿ ಬರುವ ಬೆಡಗಿನ ತ್ರಿಪದಿಗಳಾಗಲಿ , ಸ್ವಾನುಭಾವಾಚರಣೆಯನ್ನು ಸೂಚಿಸುವ ತ್ರಿಪದಿಗಳಾಗಲಿ ಅರ್ಥಪೂರ್ಣವಾಗಿವೆ . ಅನೇಕಾರ್ಥಗಳನ್ನು ವ್ಯಕ್ತಗೊಳಿ ಸುವಲ್ಲಿ ಶಿವಕವಿಯ ಪ್ರತಿಭೆ ಘನವಾದುದು . ಈ ಶರಣರಿಗಿರುವ ಬಹುಗ್ರಂಥಗಳ ಅಧ್ಯಯನ ಫಲವಾಗಿ ಶಿವಾನುಭವವನ್ನು ಕೇಳಿದ ಪರಿ ( ಶಾಸ್ತ್ರಶ್ರವಣ ) ಸತ್ಕ್ರಿಯ ಸುಜ್ಞಾನಗಳಾಚರಣೆಯಲ್ಲಿಯ ಸ್ವಾನುಭವವು ಈ ಕೃತಿಯಲ್ಲಿ ವ್ಯಕ್ತವಾಗಿವೆ .

ಇಂಥ ಮಹತ್ವದ ಕೃತಿಯನ್ನು ಅಭ್ಯಸಿಸಿ , ಅನುಭವಿಸುವಲ್ಲಿ ಅಂತಃಪ್ರೇರಣೆ ಯಾದುದು ನಿರಾಭಾರಿ ಗುರುವಿನದೆಂಬುದರಲ್ಲಿ ಸಂಶಯವಿಲ್ಲ . ಸುಜ್ಞಾನ ಜಂಗಮನ ಸರಣೆಯೇ ಹಿನ್ನೆಲೆಯಾಗಿ ವೀರಶೈವ ದಾರ್ಶನಿಕ ಸಿದ್ಧಾಂತ ಮೂಡಿ ಬಂದಿದೆ . ಎರಡು ಸಲದ ಅನುಷ್ಠಾನದ ಫಲವೇ ಈ ಕೃತಿ , ಮೌನಾನುಷ್ಠಾನ ಮಾಡಿ ಅರ್ಚನ ಅರ್ಪಣಗಳನ್ನು ಪೂರೈಸಿ , ಗುರುಕರುಣ ತ್ರಿವಿಧಿಯ ತಿರುಳನ್ನು ಅನುಭವ ಮಾಡಿಕೊಳ್ಳಲು ಪ್ರಯತ್ನಿಸಲಾಯಿತು . ಸನ್ ೧೯೭೫ ರ ಶ್ರಾವಣ ಮಾಸದಲ್ಲಿ ಪ್ರಾರಂಭವಾಗಿ ಕೇವಲ ೧೩೦ ತ್ರಿಪದಿಗಳ ವಿವರಣೆ ನೀಡಿಯಾಯಿತು . ಪ್ರಥಮ ಪ್ರಯತ್ನದಲ್ಲಿ ಅತಿ ಕಠಿಣವಾದ ವಿಷಯಗಳನ್ನು ಹೇಗೆ ವಿಮರ್ಶಿಸಬೇಕೆಂದು ವಿಚಾರಿಸುತ್ತ ಪೂಜೆಯನ್ನು ಪೂರೈಸಿ , ಶ್ರೀಗುರು ಕುಮಾರೇಶ್ವರನ ಗ್ರಂಥಾಲಯದಲ್ಲಿ ಮಂಡಿಸುತ್ತಿದ್ದಂತೆ ಚಿದ್ಗುರು ಕುಮಾರ ಶಿವಯೋಗಿ ಹಾಗೂ ಅನ್ನದಾನೀಶ್ವರರು ಅದೆಂತು ಬರೆಯಿಸಿದರೊ ಅರಿಯದ ವಿಷಯ . ೬೦೦ ಪುಟದ ಈ ಹೆಬ್ಬೊತ್ತಿಗೆಯನ್ನು ೧೯೭೫-೭೯ರಲ್ಲಿ ೩೦ + ೨೧ ಒಟ್ಟು ದಿನಗಳ ಅನುಷ್ಠಾನ ಕಾಲದಲ್ಲಿ ಪ್ರತಿ ಪಾದಿಸುವ ಪ್ರಸಂಗ ಕೇವಲ ೫೧ ಆಶ್ಚರ್ಯಕರವೆಂದೇ ಹೇಳಬೇಕು . ಕಾರ್ಯ ಬಾಹುಳ್ಯದಿಂದ ಎರಡನೆಯ ಸಲು ಅನುಷ್ಠಾನ ವಿಲಂಬವಾದರೂ ‘ ಗುರುಕರುಣ ತ್ರಿವಿಧಿ’ಯ ಯಥಾರ್ಥ ದರ್ಶನವಾಯಿತು . ಇದು ಕೇವಲ ತ್ರಿವಿಧಿಯಲ್ಲ ; ಇದರಲ್ಲಿ ‘ ವೀರಶೈವ ದಾರ್ಶನಿಕ ಸಿದ್ಧಾಂತವೇ ತುಂಬಿದೆಯಲ್ಲ . ೧೫ ನೆಯ ಶತಮಾನದಲ್ಲಿ ರೂಪುಗೊಂಡ ಶೂನ್ಯ ಸಂಪಾದನೆ ಗ್ರಂಥಗಳ ಫಲಶೃತಿಯೆಂಬುದು ಇಲ್ಲಿ ಪ್ರಾಪ್ತವಾಯಿತು . ಆ ಶೂನ್ಯ ಸಂಪಾದನೆಗಳು ಶೂನ್ಯಸಂಪಾದನೆ ಮಾಡಿಕೊಂಡ ಮಹಾನುಭಾವಿಗಳ ದಿವ್ಯ ನಿಲುವನ್ನು ಎತ್ತಿ ತೋರಿಸುವ ಪ್ರಸಂಗಗಳನ್ನು ನಿರೂಪಿಸಿದೆ . ಅವುಗಳನ್ನು ಅರ್ಥೈಸುವದು ಸಾಮಾನ್ಯರ ಮಾತಲ್ಲ . ಅಲ್ಪರ ತುತ್ತಲ್ಲ . ಅವುಗಳನ್ನು ಅರ್ಥೈಸುವದು ಸುಲಭದ ಮಾತಲ್ಲ . ಅದು ಕಬ್ಬಿಣದ ಕಡಲೆ ಮಾತ್ರವಲ್ಲ . ಅದು ಉಕ್ಕಿನ ಕಡಲೆ ‘ ಎಂಬುದಾಗಿ ಪಂಡಿತರೇ ಅಭಿಪ್ರಾಯ ಪಡುತ್ತಿರುವಾಗ ಸಾಮಾನ್ಯರ ಮಾತೇನು ?

ಬಸವಲಿಂಗ ಶರಣರು ನಿರಾಭಾರಿ ಗುರುಗಳಾದ ಶ್ರೀ ಚನ್ನವೀರ ಶಿವಯೋಗಿ ಗಳಿಂದ ಚಿನ್ಮಯಾನುಗ್ರಹವನ್ನು ಹೊಂದಿದವರು . ವೀರಶೈವರಲ್ಲಿ ಸಾಭಾರಿ ಗುರು ದೀಕ್ಷೆಗೈದು ಲಿಂಗವನ್ನು ಕರುಣಿಸಿದರೂ ಆಗದು . ಪ್ರಾಥಮಿಕ , ಮಾಧ್ಯಮಿಕ , ಹಾಗೂ ಮಹಾವಿದ್ಯಾಲಯಗಳಲ್ಲಿ ಅಭ್ಯಸಿಸಿದರೂ ಪೂರ್ಣವಿದ್ಯೆ ಪ್ರಾಪ್ತವಾಗುವದಿಲ್ಲ . ಪುನಃ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕಾಗುತ್ತದೆ . ಅದರ ಮೇಲೆ ಸ್ವಾಧ್ಯಾಯ – ಸ್ವಾನುಭಾವಗಳು ತನ್ನ ವ್ಯಕ್ತಿತ್ವವನ್ನು ರೂಪಿಸಬಲ್ಲವು . ಅದರಂತೆ ಹಿರಿಯ ಮಠದವರಾಗಲಿ , ಸಾಭಾರಿಗುರು ( ಪಟ್ಟಾಧಿಕಾರಿ , ಉಪಾಚಾರ್ಯ ) ಗಳಾಗಲಿ ಸಂಸ್ಕರಿಸಿದರೆ ಆಗುವದಿಲ್ಲ . ಅನುಗ್ರಹವನ್ನು ನಿರಾಭಾರಿ ಜಂಗಮ ದೇವನಿಂದಲೇ ಹೊಂದಬೇಕೆಂಬುದು ಈ ತ್ರಿವಿಧಿಯಲ್ಲಿ ಸ್ಪಷ್ಟವಾದ ವಿವರಣೆ ನೀಡಿದೆ . ಲಿಂಗದೀಕ್ಷೆ ಮಾಡಿದ ಗುರು ಲಿಂಗದಪ್ರಾಣನಾಗುವದಿಲ್ಲ . ಸೂರ್ಯ – ಚಂದ್ರರಿಬ್ಬರೂ ಆತ್ಮ ಪ್ರಕಾಶದಿಂದ ಬೆಳಗುತ್ತಿದ್ದಂತೆ ಗುರು – ಲಿಂಗಗಳೆರಡೂ ಜಂಗಮ ಪ್ರಕಾಶದಿಂದಲೇ ಬೆಳಗಬಲ್ಲವೆಂಬುದು ಬಸವಲಿಂಗ ಶರಣರ ಈ ಕೃತಿಯಲ್ಲಿ ಪ್ರಮಾಣ ಪೂರ್ವಕ ಪ್ರತಿಪಾದಿತವಾಗಿದೆ . ಜಂಗಮಸ್ಥಲದ ಮಹತ್ವ ಹಾಗೂ ಜಂಗಮಾಧಿಕಾರದ ಘನತೆಗಳು ಇಲ್ಲಿ ಮೂಡಿಬಂದಿವೆ . ತತ್ತ್ವ ಸಮನ್ವಯ ಚನ್ನಾಗಿ ವಿಕಾಸ ಹೊಂದಿದೆ . ‘ ಶಿವಾನುಭವ ದರ್ಪಣ ” ದಲ್ಲಿ ತಾತ್ವಿಕ ಅನುಭಾವ ಪದ್ಯಗಳಿವೆ .

 “ ಗುರುಕರುಣ ತ್ರಿವಿಧಿ’ಯ ಸ್ಥೂಲ ನೋಟ ಕೆಳಗಿನಂತಿದೆ . ಶಿವಕವಿಗಳು ಅಷ್ಟಾವರಣವನ್ನು ಪ್ರಾಮುಖ್ಯವಾಗಿಟ್ಟುಕೊಂಡು ಪಂಚಾಚಾರಗಳನ್ನು ಮತ್ತು ಷಟ್‌ಸ್ಥಲಗಳನ್ನು ಅದರಲ್ಲಿಯೇ ಅಡಕಗೊಳಿಸಿದ್ದಾರೆ . ಏಕೆಂದರೆ , ಜೀವಾತ್ಮನ ಅಷ್ಟಾಂಗಗಳು ವ್ಯಕ್ತವಾಗಿರುವಂತೆ , ಅಷ್ಟಾವರಣವು ಸ್ಪುಟವಾಗಿದೆ . ಪಂಚಪ್ರಾಣಗಳು ಶರೀರದಲ್ಲಿ ಅವ್ಯಕ್ತವಾಗಿರುವಂತೆ , ಪಂಚಾಚಾರಗಳು ಅಳವಟ್ಟಿವೆ . ಷಟ್‌ಸ್ಥಲಾತ್ಮವು ಅಷ್ಟಾವರಣಾಚರಣೆಯಿಂದ ವ್ಯಕ್ತವಾಗುತ್ತದೆ . ಪ್ರಥಮತಃ ನಿರಾಭಾರಿ ಗುರುವಿನ ಸ್ತುತಿಗೈದು ಸಾಭಾರಿ ಸದ್ಗುರುವಿನ ಸ್ವರೂಪವನ್ನು , ಮಹತ್ವವನ್ನು ತಿಳಿಸಿ ಈ ಗುರುವಿನ ಅವಶ್ಯಕತೆಯೇನೆಂಬುದನ್ನು ವಿವರಿಸಿದ್ದಾನೆ . ಅವಶ್ಯಕತೆಯ ಅರಿವಾಗುತ್ತಿದ್ದಂತೆ ಆತನನ್ನು ಹೃದಯ ತುಂಬಿ ಹಾಡಿದ್ದಾನೆ . ಗುರುದೀಕ್ಷೆ ಪಡೆದವನು ಲೌಕಿಕ ತಂದೆ – ತಾಯಿ ಬಂಧುಬಳಗವನ್ನು ತ್ಯಜಿಸಿ ಗುರುವಿನಲ್ಲಿಯೇ ಎಲ್ಲವನ್ನು ಕಾಣಬೇಕು . ಸದ್ಗುರುವನ್ನೇ ಸರ್ವಸ್ವವೆಂದು ಆರಾಧಿಸಿದರೆ ಗುರು ಕೃಪೆ ತೀವ್ರ ಲಭಿಸುವದೆಂಬುದು ಸ್ಪಷ್ಟವಾಗುತ್ತದೆ . ಯುಗಪ್ರಜ್ಞೆಯುಳ್ಳ ಗುರು ಶಿಷ್ಯನ ಯೋಗಕ್ಷೇಮವನ್ನು ಚಿಂತಿಸುತ್ತಾನೆ . ತನ್ನ ನಂಬಿದ ಶಿಷ್ಯನ ಬಗೆಗೆ ಕನಿಕರವಾಗುತ್ತದೆ . ಸಂವೇದನೆಯಾಗುತ್ತದೆ . ಅದು ಅವಶ್ಯ . ಅವನೇ ಸದ್ಗುರು !

ಗುರುವಿನ ಸಂವೇದನೆಯ ನಗುವೆ ಈ ದಾರ್ಶನಿಕ ಸಿದ್ಧಾಂತದ ಬೀಜವನ್ನ ಬಹುದು . ಜೀವಕೋಟಿ ಹುಟ್ಟಿ ಎಡರು ಕಂಟಕಗಳಲ್ಲಿ ಬಳಲಿ ವ್ಯರ್ಥವಾಗಿ ಸಾಯುವದು ಯಾವ ಹಿತೈಷಿಗೆ ನೆಮ್ಮದಿಯಾದೀತು ! ಸಾವಿನ ಅಧಿಪತಿಯಾದ ಯಮನು ಕೋಣನ ಸವಾರಿ ಮಾಡುವಲ್ಲಿ ಸಾಂಕೇತಿಕತೆಯನ್ನು ಇರಿಸಿ ಶಿವಕವಿಯು ಸಾವಿನ ಕಾರಣವನ್ನು ಮುಂದೆ ಸೂಚಿಸುತ್ತಾನೆ . ಕಾಮಕೇಳಿಯಲ್ಲಿ ಮೈಮರೆತ ಮಾನವನು ಮಾಯಾ ಬಂಧನದಲ್ಲಿ ಸಿಲುಕುತ್ತಾನೆ . ಶರಣ ಸಿದ್ದಾಂತದಂತೆ ಮಾಯೆ ಹೊರಗಿನದಲ್ಲ . ಮನದ ಮುಂದಣ ಆಶೆಯೇ ಮಾಯೆಯಾಗಿ ಮನುಷ್ಯನನ್ನು ಕಾಡುತ್ತದೆ . ಕಾಮನ ಉರವಣಿಗೆಯಲ್ಲಿ ಮಹಾಮಾರಿ ಮಾಯೆಯ ಉಪಟಳಕ್ಕೆ ಬಲಿಯಾಗುವ ಈ ಕಾಯದ ಉತ್ಪತ್ತಿಯ ಬಗೆಯನ್ನು ಮಾರ್ಮಿಕವಾಗಿ ತಿಳಿಸುತ್ತಾನೆ ಪಂಚಭೂತಗಳ ಭಯಾನಕತೆಯನ್ನು ತಿಳಿಸುತ್ತ ಪಂಚಭೂತಗಳ ಪಂಚೀಕರಣದ ಕಾರಣದಿಂದಲೇ ಶರೀರವಾಯಿತೆಂದು ವಿವರಿಸುವನು . ಪಂಚಭೂತಮಯವಾದ ದೇಹವಿಕಾರದ ಅರಿವನ್ನು ಬಹುಸುಂದರವಾಗಿ ನೀಡುತ್ತಾನೆ . ಅಜ್ಞಾನಿಯಾದ ಜೀವಿಯು ಅಷ್ಟಮದಗಳಿಂದ ಸಪವ್ಯವಸನಗಳನ್ನು ಅನುಭವಿಸುವದು ಗಾಳಿಗಿಕ್ಕಿದ ಸೊಡರೆಂಬುದನ್ನು ಸೂಚಿಸುತ್ತಾನೆ . ಮತ್ತೆ ಒಂದೊಂದಾಗಿ ಪಂಚೇಂದ್ರಿಯಗಳ ಪಂಚವಿಷಯಗಳ ಪ್ರಸ್ತಾಪ ಮಾಡುವಲ್ಲಿ ಶಿವಕವಿಯ ಐತಿಹಾಸಿಕ ಪ್ರಜ್ಞೆ , ತೀರ್ಥಕ್ಷೇತ್ರಗಳ ಪರಿಚಯ , ವ್ಯವಹಾರಿಕ ಜ್ಞಾನ , ಯೌಗಿಕ ಪ್ರತಿಭೆಗಳು ವ್ಯಕ್ತವಾಗಿವೆ . ಪಂಚವಿಷಯಗಳ ಪರಿಚಯ ನೀಡಿ ಅಂತಃಕರಣ ಚತುಷ್ಟಯ ಹಾಗೂ ಗುಣತ್ರಯ ಪ್ರಸ್ತಾಪ ಮಾಡಿದ್ದಾನೆ . ಈ ಎಲ್ಲ ವಿಚಾರಗಳನ್ನು ತಿಳಿಯುತ್ತಿರಲು ಸಂಸಾರ ಹೇಯವೆನಿಸುವದು ಸಹಜ . ಸಂಸಾರ ಬಂಧನದಿಂದ ತನು ತಾಪಗಳಿಂದ ಮುಕ್ತನಾಗಲು ಗುರುವಿನಲ್ಲಿ ಶಿಷ್ಯನು ಪ್ರಾರ್ಥಿಸುತ್ತಾನೆ . ಗುರುಕರುಣ ತ್ರಿವಿಧಿಯ ನಿರೂಪಣೆ ಕ್ರಮಬದ್ಧ ಕಥಾನಕದಂತೆ ಸಾಗಿದೆ . ತ್ರಿಪದಿಯ ಯಾವ ಪದಗಳೂ ವ್ಯರ್ಥವಾಗಿ ಪ್ರಯೋಗಿಸಲ್ಪಟ್ಟಿಲ್ಲ . ಪ್ರತಿ ಶಬ್ದಗಳು ತನ್ನ ವೈಶಿಷ್ಟ್ಯವನ್ನು ಪಡೆದಿವೆ . ಸಂಸಾರಹೇಯಸ್ಥಲದ ತ್ರಿಪದಿಗಳು ಶ್ಲೇಷವಾಗಿವೆ . ೩-೪ ಅರ್ಥಗಳನ್ನು ಅಭಿವ್ಯಂಜಿಸಿವೆ . ೫೦ ನೆಯ ತ್ರಿಪದಿಯಂತೂ ವೀರಶೈವ ಸಿದ್ದಾಂತವನ್ನು ಬೋಧಿಸುವ ಪರಿಣಿತ ಪ್ರಜ್ಞೆಯ ದ್ಯೋತಕವಾಗಿದೆ . ಅದೆಷ್ಟು ಅರ್ಥಗಳನ್ನು ಮಾಡಿದರೂ ತ್ರಿಪದಿಯ ಅಂತಃಸತ್ವ ವ್ಯಕ್ತವಾಗುತ್ತದೆ .

 ಶಿಷ್ಯನ ಪ್ರಾರ್ಥನೆಯಂತೆ ಗುರುಕಾರುಣ್ಯದಿಂದ ದೊರೆಯುವದೇ ಲಿಂಗ , ನುಡಿಯ ಬ್ರಹ್ಮವು ನಡೆಗೆ ಬಂದು ಇಷ್ಟಲಿಂಗವೆನಿಸುವದು . ಈ ಲಿಂಗ ಹೊರಗಿನದಲ್ಲ ; ಶಿಷ್ಯನ ಚಿಚ್ಛೈತನ್ಯವೇ ಸದ್ಗುರುವಿನ ಯೋಗಶಕ್ತಿಯಿಂದ ಅರುಹಿನ ಕುರುಹಾಗಿ ಕಾಣಿಸಿಕೊಂಡುದೇ ಇಷ್ಟಲಿಂಗ ದೇಹದ ನವಚಕ್ರಗಳಲ್ಲಿಯ ನವಬ್ರಹ್ಮರು ಇಷ್ಟಲಿಂಗದಲ್ಲಿ ನವಲಿಂಗಗಳಾಗಿ ರೂಪುಗೊಳ್ಳುವ ವಿಧಾನ ಅದ್ಭುತವಾದುದು . ಇಂಥ ಲಿಂಗಯೋಗಕ್ಕಿಂತ ಅಷ್ಟಾಂಗಯೋಗ ಕಷ್ಟ ಸಾಧ್ಯವೆಂತಲೂ ಶಾಂಭವ್ಯಾದಿ ಮುದ್ರೆಗಳೂ , ಹಠಯೋಗವೂ ಸಂಕಟದ ಮಾರ್ಗವೆಂದು ವಿಡಂಬಿಸಿ ಸುಲಭ ಸಾಧ್ಯವಾದ ಶಿವಯೋಗದ ಮರ್ಮವನ್ನು ತಿಳಿಸುತ್ತಾನೆ . ಲಿಂಗಾಂಗಯೋಗಕ್ಕೆ ಮೂಲವಾದ ಲಿಂಗದ ಲಕ್ಷಣ ಹಾಗೂ ವ್ಯಾಪ್ತಿಯನ್ನು ವಿವೇಚಿಸಿ ಈ ಲಿಂಗ ಮೂಲ ಪ್ರಣವರೂಪಿಯಾಗಿದೆಯೆಂದು ಪ್ರತಿಪಾದಿಸುತ್ತಾನೆ . ಲಿಂಗಷಟ್‌ಸ್ಥಲಗಳಲ್ಲಿ ಷಣ್ಮಂತ್ರದ ಸಂಬಂಧ ಮಾಡಿದಂತೆ ; ಅಂಗಸ್ಥಲಗಳಲ್ಲಿ ಲಿಂಗಧಾರಣ ಚಾರಿತ್ರವನ್ನು ವಿವೇಚಿಸುವಲ್ಲಿ ವೀರಶೈವ ಸಂಸ್ಕೃತಿ ಪ್ರಕಟವಾಗಿದೆ . ಲಿಂಗವಂತನ ಶ್ರೇಷ್ಠತೆಯ ಮರ್ಮ ವ್ಯಕ್ತವಾಗುವದು . ಈ ಇಷ್ಟಲಿಂಗವನ್ನು ಆಧಾರಾದಿ ಚಕ್ರಗಳಲ್ಲಿ ಅರ್ಚಿಸಿ ಮಹಾಲಿಂಗವನ್ನು ಬೆರೆಯುವ ಕ್ರಮವನ್ನು ತಿಳಿಸುತ್ತ ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗ ಸಂಬಂಧವನ್ನು ಜ್ಞಾನೇಂದ್ರಿಯಗಳಲ್ಲಿ ಪ್ರಾಣಲಿಂಗ ಸಂಬಂಧವನ್ನು , ಕರಣೇಂದ್ರಿಯಗಳಲ್ಲಿ ಭಾವಲಿಂಗ ಸಂಬಂಧವನ್ನು ತೋರಿಸಲಾಗಿದೆ . ಮೂರು ವಿಧದಲ್ಲಿ ತ್ರಿವಿಧ ಸಂಬಂಧ ಹಾಗೂ ತ್ರಿವಿಧಾಂಗದ ತ್ರಿವಿಧತೆಯನ್ನು ಹೇಳುವಲ್ಲಿ ಶಿವಕವಿಯ ಲಿಂಗತತ್ತ್ವದ ವ್ಯಾಪಕತೆ ಅವರ್ಣನೀಯವಾಗಿದೆ .

 ಲಿಂಗವು ಸರ್ವಾಂಗಗಳಲ್ಲಿ ಚೇತನಗೊಳ್ಳಲು ಜಂಗಮ ಕೃಪೆ ಅತ್ಯವಶ್ಯ , ಲಿಂಗದ ಪ್ರಾಣ ಜಂಗಮ . ಲಿಂಗದಮುಖ ಜಂಗಮವೆಂಬುದನ್ನು ಸಿದ್ಧಾಂತಗೊಳಿಸಿ ಜ್ಞಾನ ಜಂಗಮನ ನಿಲವನ್ನು ತಿಳಿಸುತ್ತ ಜಂಗಮನ ತ್ರಿವಿಧ ಸ್ವರೂಪವನ್ನು ಬಿತ್ತರಿಸುತ್ತಾನೆ . ಜಂಗಮದೇವನ ಕರ್ತವ್ಯವನ್ನು ಸೂಚಿಸುವವನಾಗಿ ನುಡಿದಂತೆ ನಡೆವ ಷಟ್‌ಸ್ಥಲದಿರವನ್ನು ಪ್ರತಿಪಾದಿಸುತ್ತಾನೆ . ಷಟ್‌ಸ್ಥಲವು ಜೀವನ ಸಿದ್ಧಾಂತವೆನಿಸಿದೆ . ಅನುಗ್ರಹವನ್ನು ಪಡೆದ ಶರಣನು ಈ ಮಾರ್ಗದಲ್ಲಿ ಮುನ್ನಡೆಯಬಲ್ಲನು . ಗುರುವಿನ ಗುರು ಜಂಗಮನಾಗಿರುವದರಿಂದ ಆತನ ಮಹತ್ವ ಅತಿಶಯವಾಗಿದೆ . ಜಂಗಮನು ಸಹಜಾಚರಣೆಯಿಂದಲೇ ಭಕ್ತೊದ್ಧಾರಗೈಯಬೇಕು . ಗುರು ಧರ್ಮ – ಕರ್ತೃವಾದರೆ ; ಜಂಗಮ ಧರ್ಮಸಂಶೋಧಕನೆಂಬುದನ್ನು ಶಿವಕವಿಯು ಸ್ಪಷ್ಟ ಪಡಿಸಿದ್ದಾನೆ . ಸಾರಾಯಸಂಪತ್ತಿನಲ್ಲಿ ಗುರು – ಲಿಂಗ – ಜಂಗಮ – ಪ್ರಸಾದಗಳು ಹೇಳಲ್ಪಡುವದರಿಂದ ತ್ರಿವಿಧ ವಸ್ತುಗಳ ಆರಾಧನೆ ಅವಶ್ಯವೆಂಬುದು ತಿಳಿಯುತ್ತದೆ . ಪೂಜ್ಯವಸ್ತುಗಳ ಪೂಜೆಯಲ್ಲಿ ಪಾದೋದಕ ಪ್ರಸಾದಗಳು ಪ್ರಾಪ್ತವಾಗುವವು . ಪ್ರಸಾದದಲ್ಲಿ ಪಾದೋದಕ , ಮಂತ್ರ , ಭಸ್ಮ , ರುದ್ರಾಕ್ಷಗಳು ಒಳಗೊಳ್ಳುವಂತೆ , ಜಂಗಮನಲ್ಲಿಯೂ ಗುರು – ಲಿಂಗಗಳು ಪರಿಪೂರ್ಣವಾಗಿರುತ್ತವೆ . ಅಂತೆಯೇ ಜಂಗಮಾರಾಧನೆಯೇ ಮುಖ್ಯವಾದುದು . ಪಾದೋದಕವು ಚಿದಮೃತವೆಂದು ವರ್ಣಿಸಲಾಗಿದೆ . ಇದರ ಮಹತ್ವವನ್ನು ತಿಳಿಸಿ ಪ್ರಸಾದವೇ ಸದ್ಭಕ್ತರನ್ನು ಪೊರೆವ ಮಹಾತಾಯಿಯೆಂದು ಪ್ರತಿಪಾದಿಸಲಾಗಿದೆ . ಚತುರ್ವಿಧ ಸಾರಾಯ ಸಂಪತ್ತನ್ನು ಮೈಗೂಡಿಸಿ ಕೊಂಡರೆ ಧ್ಯಾನ – ಮೌನ ನೇಮ – ನಿತ್ಯಗಳೆಂಬ ಪರಿಣಾಮ ಪ್ರಾಪ್ತವಾಗುವ ಬಗೆ ಮಾರ್ಮಿಕವಾಗಿದೆ .

 ಅಷ್ಟಾವರಣದ ಸಾಧನಗಳಾದ ವಿಭೂತಿ – ರುದ್ರಾಕ್ಷ – ಮಂತ್ರಗಳ ಬಾಹ್ಯ ಸ್ವರೂಪ ವಿವರಣೆಗಿಂತ ಅಂತರಿಕವಾಗಿ ಧರಿಸಿಕೊಳ್ಳುವ ರೀತಿಯನ್ನು ಬಹುಸುಂದರವಾಗಿ ವರ್ಣಿಸಿದ್ದಾನೆ . ಅಂತರಂಗದ ಅಷ್ಟಾವರಣವನ್ನು ಮೈಗೂಡಿಸಿಕೊಳ್ಳುವಲ್ಲಿಯೇ ಶೂನ್ಯ ಸಂಪಾದನೆಯಾಗುವದೆಂಬ ಸಮಾರೋಪವಾಗಿದೆ . ಕೊನೆಗೆ ನಿರಾಭಾರಿ ಜಂಗಮನ ಕೃಪೆಯಿಂದ ಶರಣನು ತಾನು ಸಾಧಿಸಿದ ನಿಲವನ್ನು ಸೂಚಿಸುತ್ತ ಪರಮ ಪೂಜ್ಯ ಚನ್ನವೀರ ಮಹಾಶಿವಯೋಗಿಗಳ ಘನವ್ಯಕ್ತಿತ್ವವನ್ನು ಚಿತ್ರಿಸಿ ಮಂಗಲಗೈದಿದ್ದಾನೆ . ಹೀಗೆ ಗುರುಕರುಣ ತ್ರಿವಿಧಿಯಲ್ಲಿ ಸಂಪೂರ್ಣವಾಗಿ ಕ್ರಮ ಬದ್ಧವಾದ ವೀರಶೈವ ದಾರ್ಶನಿಕ ಸಿದ್ದಾಂತವು ಪ್ರತಿಪಾದಿಸಲ್ಪಟ್ಟಿದೆ . ಶೂನ್ಯ ಸಂಪಾದನೆಯನ್ನು ಸಾಧಿಸಬಯಸುವ ಸಾಧಕರಿಗೆ ಅತ್ಯುತ್ತಮ ಸಾಧನವಾಗಬಹುದೆಂಬುದನ್ನು ಬೇರೆ ಹೇಳಬೇಕಿಲ್ಲ . ಕೃತಿ ರಚನೆಯ ಸ್ವಾನುಭಾವದ ಪರಿಣಾಮ ಹೇಳಿದರಾಗದು . ಅದನ್ನು ಸ್ವಾಧ್ಯಾಯ ಸದಾಚರಣೆಗಳಿಂದ ಸ್ವಾನುಭಾವದಲ್ಲಿ ತಂದುಕೊಳ್ಳಲೆಂದು ಹಾರೈಸಲಾಗಿದೆ .

 ಮೃಡಗಿರಿ ಶ್ರೀ ಜಗದ್ಗುರು ಅನ್ನದಾನೀಶ್ವರನ ಮಹಾಪೀಠದ ದಶಮಾಧಿಕಾರಿ ಗಳಾಗಿ ದ್ವಾದಶ ವರ್ಷಂಗಗಳಲ್ಲಿ ಸದ್ಭಕಸಂತತಿಗೆ ನೀಡುವ ಮಹಾಕೃತಿ ಶ್ರೀ ಜಗದ್ಗುರು ಅನ್ನದಾನೀಶ್ವರ ಗ್ರಂಥಮಾಲೆಯ ರಜತೋತ್ಸವದ ಸ್ಮಾರಕ ಸಂಥ . ಸ್ಥಾವರ ಕೃತಿಗಳಿಗೆ ಅಳಿವಿದ್ದರೂ , ಅಳಿವಿಲ್ಲದ ಜಂಗಮಕೃತಿಯಿದು . ಕನ್ನಡಮ್ಮನ ಮುಕುಟಕ್ಕಿರಿಸಿದ ಮಹಾಮಣಿ .

ಗುರುಕರುಣ ತ್ರಿವಿಧಿಯ ವ್ಯಾಖ್ಯಾನ

ಶ್ರೀ ಲಿಂಗನಾಯಕನಹಳ್ಳಿಯ ಶಿವಾನುಭವಚರವರ ಹಾಲವರ್ತಿ ಶ್ರೀ ಮನ್ನಿರಂಜನ ಪ್ರಣವರೂಪ ಚನ್ನವೀರಮಹಾ ಶಿವಯೋಗಿಗಳವರ ಕರಸಂಜಾತರೂ , ಮಹಾಶಿವಾನುಭಾವಿಗಳೂ , ಕಾಯಕನಿರತರೂ , ಶಿವಕವಿಪುಂಗವರೂ ಆದ ಮೈಲಾರದ ಬಸವಲಿಂಗ ಶರಣರಿಗೂ ಒಮ್ಮೆ ಮತಿಯು ಅಮಂಗಳವಾಯಿತು . ಅಮಂಗಲದಿಂದ ಮಂಗಲ ಮೈದೋರದು . ಅದು ಕಾರಣ ಸಹಾಧ್ಯಾಯಿಗಳಾದ ಮುಳಗುಂದದ ಬಾಲಲೀಲಾ ಮಹಾಂತರ ಸಲಹೆಯಂತೆ , “ ಹರ ಮುನಿದರೆ ಗುರು ಕಾಯ್ವನು ; ಗುರು ಮುನಿದರೆ ಕಾವರಾರಿಲ್ಲವೆಂಬುದನ್ನರಿತು ಬಸವಲಿಂಗ ಶರಣರು – ಕರುಣ , ಸ್ಕಲೆ , ಶಾಸ್ತ್ರಪರಿಣತಿ , ಸೌಂದರತೆ , ನಿರಾಶೆಗಳಿಂದ ಶೋಭಾಯಮಾನನಾದ ಜ್ಞಾನ , ಐಶ್ವರ್ಯ , ಯಶಸ್ಸು , ಧರ್ಮ , ವೀರ್ಯ , ತೇಜಸ್ಸುಗಳೆಂಬ ಷಡ್ಗುಣೈಶ್ವರ್ಯ ಭರಿತನಾದ ನಿರಾಭಾರಿ ಸದ್ಗುರುವಿನ ಕೃಪೆ ಪಡೆಯಲು ಮತಿಗೆ ಮಂಗಳವನ್ನು ಮುಮ್ಮೊದಲು ಪ್ರಾರ್ಥಿಸುತ್ತಾರೆ

 ಮತಿ ವಿಕೃತವಾದರೆ ಗುರು ಕೃಪೆಯಾಗದು . ಗುರು ಕೃಪೆಗೆ ಸುಮತಿಯೇ ಮೂಲ , ಅದನ್ನರಿತ ಶರಣರು ಸುಮತಿಯನ್ನು ಮತ್ತು ಮಂಗಳವನ್ನು ಬೇಡುವ ಜೊತೆಗೆ ಗುರು ಕರುಣೆಯನ್ನು ಯಾಚಿಸಿದ್ದಾರೆ . ಪ್ರಾರ್ಥನೆಯು ವ್ಯಕ್ತಿಗತವಾಗಿದ್ದರೂ ಸಮಾಜದ ಕಲ್ಯಾಣಕ್ಕೆ ಕಾರಣವಾಗಿದೆ . ಶಿವಾನುಭವದ ಅರುವಿಗೆ ಆಶ್ರಯವಾಗಿದೆ . ಸ್ವಾನುಭಾವದ ನಿಲುವಿಗೆ ಆಧಾರವೆನಿಸಿದೆ . ಇಲ್ಲಿ ಅಷ್ಟಾವರಣವೆ ಅಂಗ ಎಂಬ ವೀರಶೈವ ತತ್ತ್ವವನ್ನು ಮೈಗೂಡಿಸಿಕೊಳ್ಳಲು ಅನುವಾಗಿದೆ . ಅಂಗನೊಡನೆ ಪ್ರಾಣ ಮತ್ತು ಆತ್ಮಗಳು ಒಡಗೂಡಿರುವಂತೆ ಅಷ್ಟಾವರಣ ತತ್ತ್ವದೊಡನೆಯೇ ಪಂಚಾಚಾರ ಪ್ರಾಣಗಳು , ಷಟ್‌ಸ್ಥಲ ಆತ್ಮವೂ ಅನುಗೂಡಿದೆ .

ಈ ಶರಣ ಕವಿಯನ್ನು ಕುರಿತು ಹೇಳುವ ಕಥಾನಕವು ಯಥಾರ್ಥವಾಗಿಲ್ಲ . ಯಾಕಂದರೆ ಜನವದಂತಿಗಳು ಕಾಲಾಂತರದಲ್ಲಿ ವಿಪರ್ಯಾಸಗೊಳ್ಳುವದು ಸಹಜ . ಶಿವಕವಿಯ ಅಸಾಧಾರಣವಾದ ಸ್ವಾನುಭಾವದ ರಸಘಟ್ಟಿಯನ್ನು ಅರ್ಥೈಸಿಕೊಳ್ಳದೆ

ಅಪಚಾರ ನುಡಿಗಳನ್ನಾಡುವದು ಸಮಂಜಸವೆನಿಸುವುದಿಲ್ಲ . ಜೀವನದಲ್ಲಿ ಎಂಥ ಜ್ಞಾನಿಯಾದರೂ ಎಡಹುತ್ತಾನೆ . ಭಕ್ತಿಭಾಂಡಾರಿ ಬಸವಣ್ಣನವರ ಜೀವನದಲ್ಲಿಯೂ ಅಂಥ ಸನ್ನಿವೇಶಗಳಿಗೆ ಕೊರತೆಯಿಲ್ಲ . ಬಸವಲಿಂಗ ಶರಣರು ಆಕಸ್ಮಿಕವಾಗಿ ಪೂಜ್ಯ ತನ್ಮೂಲಕ ಜಂಗಮ ಪುಂಗವನಿಂದ ಪಡೆದ ಸ್ವಾನುಭವದ ಸುಧೆಯನ್ನು ಕ್ರಮಬದ್ಧವಾಗಿ ಗುರುವರರಿಗೆ ಪ್ರತ್ಯುತ್ತರ ನೀಡಿದ ತಪ್ಪಿಗಾಗಿಯೇ ಗುರು ಕೃಪೆಯನ್ನು ಯಾಚಿಸಿದ್ದಾರೆ . ವೀರಶೈವ ಸಿದ್ದಾಂತವನ್ನಾಗಿ ಹೆಣೆದಿರುವುದು ಸಾಧಕರ ಸೌಭಾಗ್ಯವೇ ಸರಿ .

೧. ಶ್ರೀ ಗುರು

೧. ಶ್ರೀ ಗುರು ಪ್ರಾರ್ಥನೆ

ಶ್ರೀ ಗುರುವೆ ಸತ್ಕ್ರಿಯೆಯ  | ಆಗರವೆ ಸುಜ್ಞಾನ

ಸಾಗರವೆ ಎನ್ನಮತಿಗೆ ಮಂಗಳವಿತ್ತು

ರಾಗದಿಂ ಬೇಗ ಕೃಪೆಯಾಗು

ಶ್ರೀ ಗುರುವೆ ಷಡ್ಗುಣೈಶ್ವರ್ಯ ಸಂಪದ್ಯುಕ್ತನಾದ ಗುರುವೆ ! ಶ್ರೀ ಕಾರವು ನಾನಾರ್ಥಗಳಲ್ಲಿ ಪ್ರಯೋಗವಾಗಿದೆ . ಶಬ್ದಕೋಶವು ೧೬-೧೭ ಅರ್ಥಗಳನ್ನು ಸೂಚಿಸಿದೆ . ಅಮರಕೋಶದಲ್ಲಿ   “ಸಂಪತ್ತಿಃ  ಶ್ರೀಶ್ಚ ಲಕ್ಷ್ಮೀಶ್ಚ “ ಈ ಶಬ್ದವು ಮುಖ್ಯವಾಗಿ ಸಂಪತ್ತಿ ಲಕ್ಷ್ಮಿ ಅರ್ಥಗಳನ್ನು ಹೊಂದಿದೆ . ಶ್ರೀಕಾರವು ಮಂಗಲ ಸೂಚಕವಾಗಿ ರುವದರಿಂದ ಇಲ್ಲಿ ಈ ಕೃತಿಗೆ ಆದಿ ಮಂಗಲವಾಗಿ ಘಟಿಸಿದೆ .

ಶ್ರೀ ಗುರುರಾಯನು ಸಂಪದ್ಭರಿತನು . ಸಂಪತ್ತು ಲೌಕಿಕ ಮತ್ತು ಪಾರಮಾರ್ಥಿಕ ವೆಂದು ಇಬ್ಬಗೆಯಾಗಿದೆ . ಸತಿ – ಪುತ್ರ – ಧನ – ಧಾನ್ಯ – ಕರಿ- ತುರಗಾದಿಗಳು ಲೌಕಿಕ ಸಂಪತ್ತೆನಿಸಿದರೆ ; ಭಕ್ತಿ – ಜ್ಞಾನ – ವೈರಾಗ್ಯಾದಿಗಳು ಪಾರಮಾರ್ಥಿಕ ಸಂಪತ್ತು . ಶ್ರೀ ಗುರುವಿನಲ್ಲಿ ಪಾರಮಾರ್ಥಿಕ ಸಂಪತ್ತು ವಿಪುಲವಾಗಿದ್ದರೂ ಭೌತಿಕ ಸಂಪತ್ತನ್ನೂ ಕರುಣಿಸಬಲ್ಲವನಾಗಿದ್ದಾನೆ . ಅಜ್ಞಾನ ನಿವಾರಣೆಯೇ ಗುರು ಶಬ್ದದ ಅರ್ಥ , ಅಜ್ಞಾನವನ್ನು ಕಳೆಯಬಲ್ಲವನೆ ಗುರುವೆನಿಸುವನು . ಜ್ಞಾನಿಗಳು ಗುರು ಶಬ್ದ ನಿರ್ವಚನವನ್ನು – ಗುಕಾರ ಸ್ತ್ರಂಧಕಾರಃ ಸ್ಯಾತ್ ರುಕಾರಸ್ತನ್ನಿರೋಧಕಃ | ಅಂಧಕಾರ ನಿರೋಧಿತ್ವಾತ್ ಗುರುರಿತ್ಯಭಿಧೀಯತೇ || ಈ ರೀತಿ ಮಾಡಿರುವರು . ‘ ಗುರುರ್ನಾಮ ಗೃಣಾತಿ – ಉಪದಿಶತಿ ತಾತ್ವಿಕಮರ್ಥಮ್ ? ಗುರುವಾದವನು ಶಿಷ್ಯನನ್ನು ಪರಿಗ್ರಹಿಸಿ ತಾತ್ವಿಕ ವಿಷಯಗಳನ್ನು ಉಪದೇಶಿಸು ತಾನೆ . ಶ್ರೀಗುರು ತನ್ನನ್ನು ಮೊರೆ ಹೊಕ್ಕವರ ಅಜ್ಞಾನವನ್ನು ನಾಶ ಮಾಡಿ ಜನನ ಮರಣಗಳನ್ನು ಕಳೆದು ಅರ್ಥಾತ್ ದೂರ ಮಾಡಿ ಸಕಲ ದುಃಖಗಳನ್ನು ನಿವೃತ್ತ. ಗೊಳಿಸುವನಲ್ಲದೆ ನಿತ್ಯಾನಂದ ಪದ ಪ್ರಾಪ್ತಿ ರೂಪ ಮುಕ್ತಿಯನ್ನು ಕರುಣಿಸ ಬಲ್ಲನು . ಅದು ಕಾರಣ ಬ್ರಹ್ಮ ವಿಷ್ಣು ಮಹೇಶ ಈ ತ್ರಿಮೂರ್ತಿಗಳಿಗಿಂತಲೂ ಶ್ರೀ ಗುರು ಮಿಗಿಲಾಗಿದ್ದಾನೆ.

 ಗುರುವಾದರೂ ಸತ್ಯ ಶುದ್ಧಕಾಯಕ , ನಿತ್ಯ ಶಿವಾರ್ಚನೆ ಧರ್ಮೋಪದೇಶಾದಿ ಸತ್ಕ್ರಿಯೆಗಳಿಗೆ ಆಶ್ರಯ ಸ್ವರೂಪನಾಗಬೇಕು . ಅಂದರೆ ಸತ್ಯಶುದ್ಧ ಕಾಯಕ ಮಾಡುವ ಶಿವಭಕ್ತರಲ್ಲಿ ಶಿವಾರ್ಚನೆ ಮಾಡಬೇಕು . ಅಂಥ ಸದ್ಭಕ್ತರಿಗೆ ಧರ್ಮೋಪದೇಶ ಗೈಯ್ಯಬೇಕು . ಸದ್ಗುರು ಲಿಂಗಾಂಗಸಾಮರಸ್ಯ ರೂಪ ಶಿವಜ್ಞಾನಕ್ಕೆ ಸಾಗರವಾಗಿರ ಬೇಕು . ಇಂಥ ಪರಮ ಗುರುವಿನ ಉಪದೇಶ ಶಿಷ್ಯನ ಹೃದಯವನ್ನು ಪ್ರವೇಶಿಸಿ ಬಲ್ಲುದು . ಮತಿಗೆ ಮಂಗಲವನ್ನೀಯಬಲ್ಲುದು . ಪ್ರೇಮದಿಂದ ತೀವ್ರವಾಗಿ ಕರುಣೆ ದೊರೆಯಬಲ್ಲುದು .

 ವೀರಶೈವರಿಗೆ ಪೂಜ್ಯರೆನಿಸಿದವರು ಮೂವರು ; ಗುರು – ಲಿಂಗ – ಜಂಗಮರೇ ಆರಾಧ್ಯರು ಗುರುವಿನ ಗುರುವೇ ಶ್ರೀಗುರು . ನಿರಾಭಾರಿ ಗುರು . ಈ ಕೃತಿಯಲ್ಲಿ ಶಿವಕವಿಯು ನಿರಂಜನ ಜಂಗಮ ದೇವನ ಸತ್ಕೃಪೆಯನ್ನೇ ಪ್ರತಿ ನುಡಿಗೂ ಪ್ರಾರ್ಥಿಸಿ ದ್ದಾನೆ . ಪರಮ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳು ನಿರಾಭಾರಿ ಗುರುಗಳು . ನಿರಾಭಾರಿ ಜಂಗಮ ಲಕ್ಷಣವನ್ನು ಪರಿಪೂರ್ಣವಾಗಿ ಮೈಗೂಡಿಸಿಕೊಂಡಿದ್ದರು . ಬಸವ ಲಿಂಗ ಶರಣರು ಸತ್ಯಶುದ್ಧ ಕಾಯಕ ತತ್ಪರತೆಯನ್ನು ಅಳವಡಿಸಿಕೊಳ್ಳುವ ಜೊತೆಗೆ ಅಷ್ಟಾವರಣವನ್ನು ಆಚರಣೆಯಲ್ಲಿ ಅನುಸರಿಸಿದವರು . ಅಂತೆಯೇ ಈ ಶರಣರು ನಿರಾಭಾರಿ ಗುರುತ್ವದ ಗರಿಮೆಯನ್ನು ಪಡೆದ ಪರಮ ಗುರುಗಳಲ್ಲಿ ತಮ್ಮ ಮತಿಯ ಅಮಂಗಳತೆಯನ್ನು ಹೋಗಲಾಡಿಸಿಕೊಳ್ಳಲು ತಾತ್ವಿಕ ಪ್ರಾರ್ಥನೆಯನ್ನು ಮಾಡಿದರು . ನಿರಾಭಾರಿ ಗುರುಗಳೇ ಭಕ್ತನನ್ನು ಅನುಗ್ರಹಿಸಿ ಮುಕ್ತನನ್ನಾಗಿಸುತ್ತಾರೆ . ನಿರಾಭಾರಿ ನಿರಂಜನ ಜಂಗಮನಿಲ್ಲದೆ ಭಕ್ತನಿಗೆ ಐಕ್ಯಸ್ಥಲ ಅಳವಡುವದಿಲ್ಲ . ಅಂತೆಯೇ ಲಿಂಗನಾಯಕನಹಳ್ಳಿಯ ಪೂಜ್ಯರಲ್ಲಿ ಶಿವಕವಿಗಳು ಅನುಗೃಹೀತರಾಗಿದ್ದರು . ಈ ಗುರುಕರುಣ ತ್ರಿವಿಧಿಯಲ್ಲಿ ಪ್ರತಿಪಾದಿಸಲ್ಪಟ್ಟ ಶ್ರೀಗುರು ನಿರಾಭಾರಿ ಗುರುವೆಂಬು ದರಲ್ಲಿ ಯಾವ ಸಂಶಯವಿಲ್ಲ .

 ಮತಿ ಮಲಿನವಾಗುವದು ಮಾನವ ಸಮಾಜಕ್ಕೆ ಸಹಜವಾದುದು . ಮಲಿನ ವಾದ ಮತಿಯನ್ನು ಗುರು ಸನ್ನಿಧಿಯಲ್ಲಿ ಮಂಗಳಮಯಗೊಳಿಸುವದೇ ಮಾನವನ ಕರ್ತವ್ಯ , ಸುಮತಿಯನ್ನು ಸಾಧಿಸುವುದೇ ಶರಣ ತತ್ತ್ವದ ಜೀವಾಳ , ಅರಿವು ಆಚಾರ ಗಳಲ್ಲಿಯೇ ಶರಣಧರ್ಮ ಹುದುಗಿಕೊಂಡಿದೆಯೆಂಬುದು ಈ ಚಿಕ್ಕ ಕೃತಿಯಲ್ಲಿ ವ್ಯಕ್ತ ವಾಗುವದು . ಭಕ್ತನನ್ನು ಮುಕ್ತನನ್ನಾಗಿಸುವದು ಈ ಮೇರು ಕೃತಿ

 ಗುರುಕರುಣ ತ್ರಿವಿಧಿಯು ಕೇವಲ ಪಾರಾಯಣ ಮಾಡುವ ಸ್ತೋತ್ರ ಕೃತಿಯಲ್ಲ . ವೀರಶೈವ ಸಿದ್ದಾಂತವನ್ನು ದರ್ಶನ ಮಾಡಿಸುವ ದಿವ್ಯತೆ – ಭವ್ಯತೆ ಈ ಕೃತಿಯಲ್ಲಿದೆ ಯೆಂದರೆ ಅಚ್ಚರಿಪಡಬೇಕಾಗಿಲ್ಲ . ಶಾಸ್ತ್ರಕಾರರು ನಿರೂಪಿಸುವ ಅನುಬಂಧ

ಚತುಷ್ಟಯವು ಇಲ್ಲಿ ಸುಬಂಧುರವಾಗಿ ನಿಂತಿದೆ . ಸತ್ಯ ಶುದ್ಧ ಕಾಯಕ ತತ್ಪರನು , ಸತ್ಕ್ರಿಯಾ ಸುಜ್ಞಾನದಿಂದ ಲಿಂಗಾಂಗ ಸಾಮರಸ್ಯ ಸೌಖ್ಯಾಕಾಂಕ್ಷಿಯಾದ ಸದ್ಭಕ್ತನು ಇದಕ್ಕೆ ಅಧಿಕಾರಿಯಾಗಿದ್ದಾನೆ . ಅಷ್ಟಾವರಣಾಂಗ – ಪಂಚಾಚಾರ ಪ್ರಾಣ – ಷಟ್ ಸ್ಥಲಾತ್ಮ ತತ್ತ್ವಪ್ರಧಾನವಾದ ವೀರಶೈವ ದಾರ್ಶನಿಕ ಸಿದ್ಧಾಂತವೇ ಇಲ್ಲಿಯ ವಿಷಯ ವಾಗಿದೆ . ಅಂಗನನ್ನು ಲಿಂಗನನ್ನಾಗಿಸಬಲ್ಲ ಸದ್ಗುರು ಶಿಷ್ಯನಿಗೆ ಸಂಬಂಧಿಯಾಗಿದ್ದಾನೆ . ಅರ್ಥಾತ್ ಬೋಧ್ಯ – ಬೋಧಕ ಭಾವ ಸಂಬಂಧವಿದೆ . ಲಿಂಗಾಂಗ ಸಾಮರಸ್ಯ ರೂಪ ಮಹಾ ಮಂಗಳವೇ ಪ್ರಯೋಜನವಾಗಿದೆ . ಅಥವಾ ಶರಣನ ಶೂನ್ಯ ಸಂಪಾದನೆಯೇ ಮಹಾ ಪ್ರಯೋಜನವೆಂತಲೂ ಹೇಳಬಹುದು . ಇಂಥ ಸತಿಯಿಂದ ಲಿಂಗಾಂಗ ಸಾಮರಸ್ಯವೆಂಬ ಸೌಖ್ಯ ಸಾಧ್ಯವಾಗುವದಲ್ಲದೆ ಮಹಾಮಂಗಳವು ಮೈದೋರುವದು . (ಮುಂದುವರೆಯುವದು)

ಲೇಖಕರು :ಲಿಂ ..ನಿ.ಪ್ರಸದಾಶಿವಸ್ವಾಮಿಗಳು ,ವಿರಕ್ತಮಠ  ಹಾನಗಲ್ಲ .

ಅಧ್ಯಕ್ಷರುಶ್ರೀಮದ್ವೀರಶೈವಶಿವಯೋಗಮಂದಿರ

—————————————————————————————————————————————————

ಭಾರತವು ಪುರಾತನ ಕಾಲದಿಂದಲೂ ಯೋಗಭೂಮಿ ಎನಿಸಿದೆ . ಆದ್ದರಿಂದಲೆ ಜಗತ್ತಿನಲ್ಲಿಯೇ ಯೋಗ ಮಾರ್ಗವನ್ನು ಕಂಡುಕೊಂಡು ಅದರಿಂದ ಆಗತಕ್ಕ ಫಲವನ್ನು ಅನುಭವಿಸಿ ಜಗತ್ತಿಗೆ ಯೋಗ ತತ್ವವನ್ನು ಅರುಹಿದ ಕೀರ್ತಿ ಭಾರತೀಯರಿಗೆ ಸಲ್ಲತಕ್ಕದ್ದಾಗಿದೆಯೆಂದು ಹೇಳಿದರೆ ತಪ್ಪಾಗಲಾರದು . ಆದ್ದರಿಂದ ಭಾರತದಲ್ಲಿ ಯೋಗಿಗಳು ಆಯಾಯ ಕಾಲದಲ್ಲಿ ಅವತಾರ ಮಾಡುತ್ತ ಬಂದಿರುವುದು ಪ್ರಸಿದ್ಧವಾಗಿದೆ . ಈಗಲೂ ಕೂಡಾ ಹಿಮಾಲಯ , ಕೇದಾರ , ಕಾಶೀ , ಶ್ರೀಶೈಲ ಮೊದಲಾದ ಪುಣ್ಯಕ್ಷೇತ್ರಗಳಲ್ಲಿ ಶೈವಯೋಗಿಗಳು ವಾಸಮಾಡಿ , ಹಠಯೋಗಾದಿಗಳಿಂದ ಶರೀರವನ್ನು ವಜ್ರದಂತೆ ಕಠಿಣವನ್ನಾಗಿ ಮಾಡಬಹುದು . ಅಣಿಮಾದಿ ಅಷ್ಟಸಿದ್ಧಿಗಳನ್ನು ಹೊಂದಬಹುದು , ಆಕಾಶದಲ್ಲಿ ಸಂಚರಿಸಬಹುದು . ಇವೆಲ್ಲ ಸಿದ್ಧಿಗಳು ನಶ್ವರವಾದವುಗಳು . ಇವುಗಳಿಂದ ಅಮೃತತ್ವ ಸಿದ್ದಿಸಲಾರದು . ಶಿವಯೋಗ ಶಕ್ತಿಯ ಮುಂದೆ ಈ ಸಿದ್ಧಿಗಳು ಕಃಪದಾರ್ಥವು . ಶಿವಯೋಗಿಗಳು ಕಾಶೀ ಮೊದಲಾದ ಕ್ಷೇತ್ರಗಳನ್ನು ಅರಸುತ್ತ ಹೋಗಲಾರರು . ಅವರಿಗೆ ಪುಣ್ಯಕ್ಷೇತ್ರಗಳ ಅವಶ್ಯಕತೆಯಿಲ್ಲ . “ ಶಿವಯೋಗಿಯಿರ್ದ ನೆಲವೇ ಕ್ಷೇತ್ರಂ ಪವಿತ್ರಂ ಪರಂ ” ಎಂಬಂತೆ ಶಿವಯೋಗಿಯು ಪಾದವಿಟ್ಟ ನೆಲವೇ ಕ್ಷೇತ್ರವು , ಜಲವೇ ಪಾವನ ತೀರ್ಥವೆನಿಸುವುದು . ಶಿವಯೋಗದಿಂದ ಅಧ್ಯಾತ್ಮಿಕ ಶಕ್ತಿಯು ಉಂಟಾಗುವುದು . ಅದರಿಂದ ಜಗತ್ತನ್ನೇ ಉದ್ಧಾರ ಮಾಡಬಹುದು . ಈ ಶಕ್ತಿಯನ್ನು ಸಾಧಿಸಿಕೊಂಡ ಶಿವಯೋಗಿಯೇ ಜಗದ್ಗುರು ಎನಿಸಿಕೊಳ್ಳುವನು . ಆ ಶಿವಯೋಗಿಯಿಂದ ಜಗತ್ತು ಪಾವನಮಯವಾಗುತ್ತದೆ . ಈ ಹಿಂದೆ ಅಲ್ಲಮಪ್ರಭು , ತೋಂಟದ ಸಿದ್ಧಲಿಂಗ ಯತಿಗಳೂ ಮೊದಲಾದ ಅನೇಕ ಶಿವಯೋಗಿವರ್ಯರು ಅವತರಿಸಿ ಜಗದೋದ್ದಾರ ಮಾಡಿ ಹೋಗಿದ್ದಾರೆ .ಹಿಂದೊಂದು ಕಾಲದಲ್ಲಿ ಗೋರಕ್ಷನಾಥನೆಂಬ ಹಠಯೋಗಿಯು  ಪ್ರಾಣಾಯಾಮಾದಿ ಹಠಯೋಗವನ್ನು ಸಾಧಿಸಿ ಶರೀರವನ್ನು ವಜ್ರದಂತೆ ಕಠಿಣವನ್ನಾಗಿ ಮಾಡಿಕೊಂಡಿದ್ದನು . ತನಗೆ ಸಮಾನವಾದ ಯೋಗಿಗಳೇ ಇಲ್ಲವೆಂದು ಭಾವಿಸಿ ಆಹಂಕಾರಗಿರಿಯನ್ನು ಏರಿದ್ದನು . ಈ ವಿಷಯವನ್ನರಿತ ಅಲ್ಲಮಪ್ರಭುದೇವರು ಗೋರಕ್ಷಯೋಗಿಯು ಗರ್ವಭಂಗ ಮಾಡುವ ಉದ್ದೇಶದಿಂದ ಅವನೆಡೆಗೆ ಹೋದರು . ಗೋರಕ್ಷನಾಥನು ಪ್ರಭುದೇವರನ್ನು ಕಂಡು ಅವರ ಮುಂದೆ ತನ್ನ ಯೋಗಶಕ್ತಿಯ ಪ್ರತಾಪವನ್ನು ತೋರಿಸಬೇಕೆಂದೆ ಹಮ್ಮಿನಿಂದ ಖಡ್ಗವನ್ನು ಪ್ರಭುದೇವರ ಕೈಯಲ್ಲಿ ಕೊಟ್ಟು , ಆ ಖಡ್ಗದಿಂದ ತನ್ನ ಶರೀರಕ್ಕೆ ಹೊಡೆಯಬೇಕೆಂದು ಕೇಳಿಕೊಳ್ಳುತ್ತಾನೆ . ಅದರಂತೆ ಪ್ರಭುದೇವರು ಹೊಡೆಯಲು ಖಡ್ಗವು ಎರಡು ತುಂಡಾಗಿ ಬೀಳುವುದು . ಅದರಿಂದ ಗೋರಕ್ಷನಾಥನಿಗೆ ಆನಂದವೇ ಆನಂದವು . ಪ್ರಭುದೇವರು ಅದರಿಂದ ಆಶ್ಚರ್ಯ ಪಡದೆ ತಮ್ಮ ಶರೀರವನ್ನು ಖಡ್ಗದಿಂದ ಹೊಡೆಯಬೇಕೆಂದು ಗೋರಕ್ಷನಿಗೆ ಆಜ್ಞಾಪಿಸಿದರು . ಅದರಂತೆ ಅವನು ಪ್ರಭುದೇವರ ಶರೀರಕ್ಕೆ ಖಡ್ಗದಿಂದ ಹೊಡೆಯಲು ಆಕಾಶದಲ್ಲಿ ಬೀಸಿದಂತಾಯಿತು . ಖಡ್ಗವು ಶರೀರವನ್ನೇ ತಾಗಲಿಲ್ಲ . ಅವರ ಶರೀರವು ಲಿಂಗಕಾಯವಾಗಿತ್ತು . ಗೋರಕ್ಷನಾಥನು ಪ್ರಭುದೇವರ ಸ್ವರೂಪವನ್ನು ನೋಡಿ ಅತ್ಯಂತ ವಿಸ್ಮಿತನಾಗಿ ಮುಖ ಭಂಗಿತನಾಗುತ್ತಾನೆ . 

ಶಿವಯೋಗದ ಸಾಮರ್ಥ್ಯವು ಆಪಾರವಾದದ್ದು . ಶಿವಯೋಗವನ್ನು ಸಾಧಿಸಿದ ಅಲ್ಲಮಪ್ರಭುವಿನ ವ್ಯಕ್ತಿತ್ವವು “ ನಡೆದರೆ ನಿರ್ಗಮನಿ , ಸುಳಿದಡೆ ಗತಿರಹಿತ ಅಘಟಿತ ಘಟಿತನೇನೆಂಬೆ ” ಎಂಬ ವಚನದಂತೆ ಅವನ ಕಾಯವು ಲಿಂಗಕಾಯವಾಗಿತ್ತು .

 ಇನ್ನು ಯೋಗವೆಂದರೆ ಎರಡು ವಸ್ತುಗಳು ಕೂಡುವಿಕೆ ಎಂದು ಅರ್ಥವಾಗುತ್ತದೆ . ಬಹುಕಾಲದಿಂದ ಅಗಲಿದ ಎರಡು ವಸ್ತುಗಳು ಕೂಡಿದವೆಂದರೆ ಅಲ್ಲಿ ಆನಂದವು ತೋರುತ್ತದೆ . ಆ ಎರಡು ವಸ್ತುಗಳಲ್ಲಿ ಪರಸ್ಪರ ಪ್ರೇಮವಿದ್ದಾಗ ಮಾತ್ರ ಯೋಗ ಉಂಟಾಗುತ್ತದೆ . ಅಂದ ಮೇಲೆ ಈ ಯೋಗಕ್ಕೆ ಪ್ರೇಮ ಅಥವಾ ಭಕ್ತಿಯೇ ಕಾರಣವಾಗುತ್ತದೆ . ಹೇಗೆಂದರೆ ಆಗಲಿದ ದಂಪತಿಗಳು ಕೂಡಿದಾಗ ಒಂದು ತರಹದ ಆನಂದವು . ತಂದೆ ಮಕ್ಕಳು ಕೂಡಿದಾಗ ಒಂದು ತರಹದ ಆನಂದವು . ಗುರು – ಶಿಷ್ಯರು ಕೂಡಿದಾಗ ಒಂದು ತರಹದ ಆನಂದವು ಉಂಟಾಗುತ್ತದೆ . ಈ ಕೂಡುವಿಕೆ ಮತ್ತು ಆನಂದವು ನಶ್ವರವಾದವುಗಳು . ನಿಜವಾದ ಶಾಶ್ವತ ಆನಂದ ಉಂಟಾಗ ಬೇಕಾದರೆ ಶಿವಯೋಗವು ಮುಖ್ಯವಾಗಿದೆ . ಜಗತ್ತಿಗೆ ಕಾರಣೀಭೂತನಾದ ಶಿವನಿಂದ ಬಹು ದಿವಸಗಳ ಜೀವಾತ್ಮನು ಪುನಃ ಶಿವನಲ್ಲಿ ಕೂಡುವದರಿಂದ ನಿತ್ಯಾನಂದ ಉಂಟಾಗಿ ಅಮೃತನಾಗುವನು , ಪುನಃ ಅವನಿಗೆ ಜನನ ಮರಣಗಳಿಲ್ಲ . ಇದೇ ವಿಷಯವನ್ನು ಶಿವಾನುಭಾವಿಗಳು ವಿಸ್ತಾರ ರೀತಿಯಿಂದ ವಿವೇಚನೆ ಮಾಡಿದ್ದಾರೆ . ಅದು ಹೇಗೆಂದರೆ “ ಶಿವಯೋಃ ಶಿವರೂಪ ಲಿಂಗಾಂಗಯೋಃ ಯೋಗ ಶಿವಯೋಗಃ ” . ಎಂಬಂತೆ ಬ್ರಹ್ಮ ಸ್ವರೂಪನಾದ ಶಿವನೇ ಲಿಂಗಾಂಗವೆಂದು ಎರಡು ರೂಪ ತಾಳಿದ್ದಾನೆ . ಕ್ಷೀರವು ಕ್ಷೀರದಲ್ಲಿ ಬೆರೆಸಿದಂತೆ ಶುದ್ಧರಾದ ಲಿಂಗಾಂಗಗಳ ನೋಟವೇ ಶಿವಯೋಗವೆಂದೆನಿಸುವುದು . ಲಿಂಗವೆಂದರೆ ಶಿವ , ಅಂಗನೆಂದರೆ ಶುದ್ಧ ಜೀವನು . ಈ ಶಿವಜೀವರ ಸಮ್ಯಕ್ ಸಂಬಂಧವೇ ಸುಯೋಗವೆಂದೆನಿಸುವದು . ಲಿಂಗವು ಶಕ್ತಿಯಿಂದ ಕೂಡಿದೆ . ಅಂಗನು ಭಕ್ತಿಯಿಂದ ಕೂಡಿರುವನು . ಈ ಪೂಜ್ಯ ಪೂಜ್ಯಕರ ಸಂಯೋಗ ಸದ್ಭಾವವೇ ಸಾಮರಸ್ಯವು . ಈ ಸಾಮರಸ್ಯವೇ ಸಾಯುಜ್ಯ ರೂಪವಾದ ಮುಕ್ತಿಯೆನಿಸುವುದು . ಆದಕಾರಣ ಲಿಂಗಾಂಗ ಸಾಮರಸ್ಯಕ್ಕಿಂತಲೂ ಪರತರವಾದ ಮುಕ್ತಿಯು ಬೇರೊಂದಿಲ್ಲ . ಸದ್ಗುರು ಅವಿದ್ಯಾನಾಶ ಮಾಡಿ ಶಿವವಿದ್ಯಾದಾನ ಮಾಡುವನು . ಮುಮುಕ್ಷುವಾದ ವೀರಶೈವನು ಗುರುವಿನ ಬಳಿಗೆ ಹೋಗಿ ತನ್ನನ್ನು ಉದ್ಧಾರ ಮಾಡಬೇಕೆಂದು ಕೇಳಿಕೊಳ್ಳುವನು . ಗುರುವು ಶಿಷ್ಯನ ಅವಿದ್ಯಾಭೇದಕವಾದ ಶಿವದೀಕ್ಷೆಯನ್ನು ಮಾಡುವನು . ಆ ದೀಕ್ಷೆಯಿಂದ ಶಿಷ್ಯನ ಸ್ಥೂಲ, ಸೂಕ್ಷ್ಮ , ಕಾರಣಗಳೆಂಬ ಶರೀರತ್ರದಲ್ಲಿರುವ ಆಣವ , ಮಾಯಾ , ಕಾರ್ಮಿಕಗಳೆಂಬ ಮಲತ್ರಯವನ್ನು ವೇಧಾ , ಮಂತ್ರ , ಕ್ರಿಯಾಗಳೆಂಬ ಮೂರು ದೀಕ್ಷೆಗಳಿಂದ ನಾಶಮಾಡಿ ತ್ರಿವಿಧ ಲಿಂಗಗಳನ್ನು ಸ್ಥಾಪಿಸುವನು . ಹೇಗೆಂದರೆ ತ್ಯಾಗಾಂಗ ನಾಮಕವಾದ  ಸ್ಥೂಲ ಶರೀರದಲ್ಲಿ ಕ್ರಿಯಾ ದೀಕ್ಷೆಯಿಂದ ಇಷ್ಟಲಿಂಗವನ್ನು ಭೋಗಾಂಗ ನಾಮಕವಾದ ಸೂಕ್ಷ್ಮ ಶರೀರದಲ್ಲಿ ಮಂತ್ರ ದೀಕ್ಷಾ ಬಲದಿಂದ ಪ್ರಾಣಲಿಂಗವನ್ನು , ಯೋಗಾಂಗ ನಾಮಕವಾದ ಕಾರಣ ಶರೀರದಲ್ಲಿ ವೇಧಾ ದೀಕ್ಷೆಯಿಂದ ಭಾವಲಿಂಗವನ್ನು ಸ್ಥಾಪಿಸಿ ಕೊಡುವನು . ಈ ಉಪಾಸನೆಯೇ ಸಂಯೋಗವೆಂದೆನಿಸುವುದು . ಸಂಯೋಗವೆಂದರೆ ದ್ವೈ ತಭಾವನಾಶವು . ಆ ನಾಶವೇ ನಿವೃತ್ತಿಯು . ನಿವೃತ್ತಿಯೇ ವಿಶ್ರಾಂತಿಯು . ಅದುವೇ ಪರಮ ಪದವಿಯು . ಅರ್ಥಾತ್ ಶಿವಯೋಗವು . ಸ್ಪಟಿಕಕ್ಕೂ ಅದರ ಸ್ವಚ್ಛತೆಗೂ , ದೀಪಕ್ಕೂ ಕಾಂತಿಗೂ , ಆಲಿಕಲ್ಲಿಗೂ ನೀರಿಗೂ , ಕರ್ಪೂರಕ್ಕೂ ವಾಸನೆಗೂ ಮತ್ತು ಪುಷ್ಪಕ್ಕೂ ಗಂಧಕ್ಕೂ ಇರುವ ಭೇದವು ಇರುತ್ತದೆ . 

ಮೂರು ಲಿಂಗಗಳು ಮೂರು ಶರೀರಗಳಲ್ಲಿ ಸಂಬಂಧ ಮಾಡುವಂತೆ ಆ ಮೂರು ಲಿಂಗಗಳು ಆಚಾರಲಿಂಗ , ಗುರುಲಿಂಗ , ಶಿವಲಿಂಗ , ಜಂಗಮಲಿಂಗ , ಪ್ರಸಾದಲಿಂಗ , ಮಹಾಲಿಂಗವೆಂದು ಆರು ಲಿಂಗಗಳಾಗಿ ನಾಸಿಕದಲ್ಲಿ ಆಚಾರಲಿಂಗ , ಜಿಹ್ವೆಯಲ್ಲಿ ಗುರುಲಿಂಗ , ನೇತ್ರದಲ್ಲಿ ಶಿವಲಿಂಗ , ತ್ವಕ್ ನಲ್ಲಿ ಚರಲಿಂಗ , ಶ್ರೋತ್ರದಲ್ಲಿ ಪ್ರಸಾದಲಿಂಗ , ಹೃದಯದಲ್ಲಿ ಮಹಾಲಿಂಗ ರೀತಿಯಾಗಿ ಲಿಂಗಗಳನ್ನು ಸಂಬಂಧ ಮಾಡುವನು . ಹೀಗೆ ಸರ್ವಾಂಗದಲ್ಲಿ ಲಿಂಗ ಸಂಬಂಧವಾದುದರಿಂದ ವೀರಶೈವನು ಶಿವಯೋಗವನ್ನು ಸಹಜವಾಗಿ ಆಚರಿಸಬಲ್ಲನು . ಶಿವಯೋಗವನ್ನು ಆಚರಿಸಬೇಕೆಂಬ ವೀರಶೈವನ್ನು ಸಂಸಾರವನ್ನು ತ್ಯಾಜ್ಯಮಾಡಿ ಅರಣ್ಯವನ್ನು ಸೇರಬೇಕಾಗಿಲ್ಲ ಮತ್ತು “ ನ ಕಾಯ ಶೋಷಣಂ ತಪಃ “ ಎಂಬಂತೆ ದೇಹವನ್ನು ನಾನಾ ರೀತಿಯಾಗಿ ದಂಡಿಸಬೇಕಾಗಿಲ್ಲ . ಸಂಸಾರಿಗಳ ಮಧ್ಯದಲ್ಲಿದ್ದುಕೊಂಡೆ ಪ್ರತಿಯೊಂದು ಆಚರಣೆಗಳನ್ನು ಲಿಂಗಮುಖವಾಗಿ ಆಚರಿಸುತ್ತ ಶಿವಯೋಗವನ್ನು ಸಾಧಿಸಬಲ್ಲನು , ಪಾಪವರ್ಜಿತವಾದ , ಕ್ಷಮಾಶೀಲವಾದ , ಪರಮಕಾರುಣ್ಯ ಪೂರ್ಣವಾದ , ಕೇವಲ ಅನುಗ್ರಹಕ್ಕೆ ಕಾರಣವಾದ ಗುಣವು ಶಿವಯೋಗದ ಮುಖ್ಯ ಲಕ್ಷಣವಾಗಿದೆ . ಯಾಕೆಂದರೆ – ಶಿವಯೋಗಿಗಳು ಯಾವಾಗಲೂ ಸಕಲ ಜೀವಾತ್ಮರ ಲೇಸನೇ ಬಯಸತಕ್ಕವರು . ಇದು ವೀರಶೈವ ಸಿದ್ಧಾಂತವು . ಈ ಸಿದ್ಧಾಂತವು ಸೃಷ್ಟಿಯು ಮಿಥ್ಯವೆಂದು , ಸಂಸಾರವು ಮಾಯೆಯೆಂದು ತ್ಯಾಜ್ಯವೆಂದು ಪ್ರತಿಪಾದಿಸುವದಿಲ್ಲ . ಸೃಷ್ಟಿಯು ಶಿವಸ್ವರೂಪವೆಂದು ಬೋಧಿಸುತ್ತದೆ . ಅಣುರೇಣುತೃಣಕಾಷ್ಟಗಳಲ್ಲಿ ಶಿವನನ್ನೇ ಕಾಣುವ ಶಿವಯೋಗಿಗಳ ಹೃದಯವು ಕ್ಷಮೆ , ಶಾಂತಿ , ದಯೆ ಮೊದಲಾದ ಸಾತ್ವಿಕ ಗುಣಗಳಿಂದ ಕೂಡಿದ್ದಾಗಿದೆ . ಆ ಹೃದಯದಲ್ಲಿ ಕೋಪ , ತಾಪ , ಶಾಪಗಳಿಗೆ ಎಂದೂ ಸ್ಥಾನವಿಲ್ಲ . ಹೀಗೆ ಶುದ್ಧಗುಣಗಳಿಂದ ಕೂಡಿದ ಶಿವಯೋಗಿಯು ಶಿವಯೋಗವನ್ನು ಸಾಧಿಸುತ್ತ ಹೋದರೆ , ಅವನಿಗೆ ಐಕ್ಯಸ್ಥಿತಿಯು ಘಟಿಸುವುದು . ಪರಶಿವನಿಗಿಂತಲೂ ತಾನು ಬೇರೆಯಲ್ಲ , ಎಲ್ಲವೂ ಪರಶಿವ ಸ್ವರೂಪವೆಂಬ ಅತ್ಯಂತ ಪರಿಪಕ್ವವಾದ ಜ್ಞಾನದಿಂದ ತಾನು ಸತಿ , ಲಿಂಗಪತಿ ಎಂಬ ಭಿನ್ನಭಾವವನ್ನಳಿದು , ಎಲ್ಲವೂ ಶಿವಾತ್ಮಕವೆಂಬ ಏಕೋಭಾವವು ಬಲಿದು , ಉರಿಯು ಬೇರೆ ಕರ್ಪುರವು ಬೇರೆ ಎಂಬ ಆಕಾರವು ಅಡಗಿ ಮೂಲ ತತ್ವದಲ್ಲಿ ಅಡಕವಾಗುವಂತೆ ಐಕ್ಯವನ್ನು ಪಡೆಯುವದೇ ಐಕ್ಯಸ್ಥಲವು . ಈ ಐಕ್ಯ ಸ್ಥಿತಿಯಲ್ಲಿ ಸಾಧಕನು ಬಯಲು ಬಯಲಿನಲ್ಲಿ ಕೂಡುವಂತೆ , ಜ್ಯೋತಿ ಜ್ಯೋತಿ ಒಂದಾದಂತೆ ದೇವನಲ್ಲಿ ಐಕ್ಯ ಸ್ಥಿತಿಯನ್ನು ಹೊಂದುತ್ತಾನೆ . ಈ ಐಕ್ಯಸ್ಥಿತಿಯನ್ನು ಹೊಂದಬೇಕಾದರೆ ಶುದ್ಧ ಜೀವಾತ್ಮನು ಅಂದರೆ ಅಂಗನು ಮನಸ್ಸಿನ ಹರಿದಾಟವನ್ನು ಪ್ರಯತ್ನದಿಂದ ತಡೆದು , ಭಕ್ತಿಯಿಂದ ಲಿಂಗದಲ್ಲಿ ದೃಷ್ಟಿಯನ್ನಿಟ್ಟು , ಸ್ವರೂಪ ಚಿಂತನೆಯನ್ನು ಮಾಡುತ್ತ , ಲಿಂಗವನ್ನು ಪೂಜಿಸುವದರಿಂದ ಶಿವಯೋಗವು ಸಿದ್ಧಿಸುವುದು . ಕಾರಣ ಈ ಶಿವಯೋಗಕ್ಕೆ ಮನಸ್ಸಿನ ನಿರೋಧವೇ ಮುಖ್ಯ ಕಾರಣವಾಗಿದೆ . “ ಯೋಗಶ್ಚಿತ್ತವೃತ್ತಿನಿರೋಧಃ ” ಎಂಬಂತೆ ಮನಸ್ಸಿನ ವೃತ್ತಿಗಳು ಶಬ್ದಾದಿ ವಿಷಯಗಳಲ್ಲಿ ವ್ಯಾಪಿಸಿ ದುಃಖವನ್ನುಂಟು ಮಾಡುತ್ತವೆ . “ ಚಿತ್ತೇ ಚಲತಿ ಸಂಸಾರಃ ” ಎಂಬಂತೆ ಮನಸ್ಸು ಚಂಚಲವಾದರೆ ಸಂಸಾರವು , “ ನಿಶ್ಚಲೇ ಮೋಕ್ಷ ಏವಚ ” ಎಂಬಂತೆ ಮನಸ್ಸು ಸ್ಥಿರವಾದರೆ ಮುಕ್ತಿಯು ಉಂಟಾಗುವುದು . ಮನಸ್ಸನ್ನು ತಡೆಯಲು ಸುಲಭಸಾಧ್ಯವಲ್ಲ . “ ಕಶ್ಚಿತ್ ಧೀರಃ ಪ್ರತ್ಯಗಾತ್ಮಾನ ಮೈಕ್ಷತ್ ” ಎಂಬಂತೆ ಧೀರನಾದವನು ಮನಸ್ಸನ್ನು ತಡೆಯುತ್ತಾನೆ . ಅವನಿಗೆ ಶಿವಯೋಗವು ಪ್ರಾಪ್ತಿಯಾಗುತ್ತದೆ .

“ ಆಲಿನಿಂದೊಡೆ ಸುಳಿದು ಸೂಸುವ ಗಾಳಿ ನಿಲುವದು , 

ಗಾಳಿ ನಿಲೆ ಮನ ಮೇಲೆ ನಿಲುವದು , 

ಮನವು ನಿಂದೊಡೆ ಬಿಂದು ನಿಲ್ಲುವದು , 

ಬಿಂದು ನಿಂದೊಡೆ ಕಾಮಕಾಲರ ಗೆದ್ದು ,

 ಮಾಯೆ ಹೇಳ ಹೆಸರಿಲ್ಲ ಎನಿಸಬಹುದೈ ಬಸವ ಕೇಳೆಂದ ”

 ಎಂಬ ಪ್ರಭುದೇವರ ಉಕ್ತಿಯಂತೆ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಲಿಂಗದಲ್ಲಿ ದೃಷ್ಟಿಯನ್ನಿಟ್ಟು , ಮನಸ್ಸಿನ ಚಂಚಲತ್ವವನ್ನು ತಡೆದು , ತದೈಕ ಧ್ಯಾನದಿಂದ ಲಿಂಗಪೂಜೆಯನ್ನು ಬಾಹ್ಯದ ಎಚ್ಚರವಿಲ್ಲದೆ ಆರು ತಿಂಗಳವರೆಗೆ ಮಾಡುವಂತವರಾಗಿದ್ದರು . ಅವರ ಶರೀರದ ಮೇಲೆ ಹುತ್ತ ಆವರಿಸಿತು . ಇದರಿಂದ ಸಿದ್ಧಲಿಂಗನು ಮರಣ ಗೆಲಿದ ಮಹಾಂತನಾಗಿ ಈಗಲೂ ಅವನು ಸಮಾಧಿಸ್ಥಿತಿಯಲ್ಲಿದ್ದು , ಮಾನವರ ಕಲ್ಯಾಣ ಮಾಡುತ್ತಿರುವುದು ಪ್ರತ್ಯಕ್ಷ ಕಾಣುತ್ತಲಿದ್ದೇವೆ . ಇದೇ ಐಕ್ಯಸ್ಥಿತಿಯ ಲಕ್ಷಣವು . ಇದನ್ನು ಸಾಧಿಸುವದೇ ಶಿವಯೋಗಿಯ ಕರ್ತವ್ಯವು .

ಲೇಖಕರು: ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ :ಬೆಳಗು

ಶ್ರೀ ಶಿವಯೋಗಮಂದಿರದ ಸಂಸ್ಥಾಪಕರಾದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ನೆರವೇರಿಸಿದ ಕಾರ್ಯಗಳು ಬಹುಮುಖವಾಗಿವೆ . ಅವುಗಳನ್ನು ಸವಿಸ್ತಾರವಾಗಿ ವಿವೇಚಿಸುವದೆಂದರೆ ಒಂದು ಸ್ವತಂತ್ರ ದೊಡ್ಡ ಗ್ರಂಥವನ್ನೆ ಬರೆದಂತೆ . ಆದುದರಿಂದ , ಶ್ರೀಗಳವರ ಬಗೆಗೆ ನನ್ನ ಲಕ್ಷ್ಯದಲ್ಲಿ ಈಗ ಉಳಿದ ಕೆಲವು ವಿಷಯಗಳನ್ನು ಕುರಿತು ನಾನು ಇಲ್ಲಿ ನಿರ್ದೇಶಿಸುತ್ತೇನೆ.

 ನನಗೆ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರ ಮೊದಲು ಪರಿಚಯವಾದುದು ಧಾರವಾಡದಲ್ಲಿಯ ೧ ನೆಯ ವೀರಶೈವ ಮಹಾಸಭೆಯ ಅಧಿವೇಶನದ ಕಾಲದಲ್ಲಿ , ಅದರ ಹಿಂದಿನ ವರುಷ , ಅಂದರೆ ೧೯೦೩ ಇಸ್ವಿಯಲ್ಲಿ ಧಾರವಾಡದಲ್ಲಿ ಒಂದು ರಾಜಕೀಯ ಪ್ರಾಂತಿಕ ಪರಿಷತ್ತು ಶ್ರೀಯುತ ಖರೆ ಇವರ ಅಧ್ಯಕ್ಷತೆಯಲ್ಲಿ ಸೇರಿತ್ತು ಈ ಸಭೆಗೆ ಕೈ . ವಾ . ಬಾಲಗಂಗಾಧರ ಟಿಳಕ , ನಾ . ಗೋಖಲೆ ಮೊದಲಾದ ಅನೇಕ ರಾಜಕೀಯ ಪಟುಗಳು ಆಗಮಿಸಿದ್ದರು . ಈ ಕಾಲದಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಖ್ಯ ಗ್ರಾಮಗಳಲ್ಲಿಯ ನೂರಾರು ಜನ ವೀರಶೈವ ವ್ಯಾಪಾರಸ್ಥರೂ ವಿದ್ಯಾವಂತರೂ ಸೇರಿದ್ದರು . ಅವರೆಲ್ಲರೂ ಇರಲಿಕ್ಕೆ ಒಂದು ವಿಶಾಲವಾದ ಮಂದಿರವನ್ನು ಸತ್ಕಾರಕ ಸಂಘದವರು ಧಾರವಾಡದಲ್ಲಿಯೇ ಏರ್ಪಡಿಸಿದ್ದರು . ಆಗ ನಾಡಿನ ಹಿತಾಹಿತಗಳ ಸಂಬಂಧವಾಗಿ ಚರ್ಚೆಗಳು ಕೂಡಿದ ವೀರಶೈವರಲ್ಲಿ ಉದ್ಭವಿಸುತ್ತಿದ್ದವು . ಇವುಗಳಲ್ಲಿ ಮುಖ್ಯ ಭಾಗವನ್ನು ವಹಿಸಿದವರು ಶ್ರೀಯುತ ಗದಿಗೆಯ್ಯ ಹೊನ್ನಾಪುರಮಠ  ಧಾರವಾಡ , ಬನಹಟ್ಟಿಯ ತಮ್ಮಣ್ಣಪ್ಪ ಸತ್ಯಪ್ಪ ಚಿಕ್ಕೋಡಿ , ಧಾರವಾಡದ ಮೂಗಪ್ಪ ಸವದತ್ತಿ ಈ ಮೊದಲಾದವರು ಇರುತ್ತಿದ್ದರು . ಈ ಚರ್ಚೆಗಳ ಪರಿಣಾಮವಾಗಿ , ಹೇಗೆ ರಾಜಕೀಯ ಪ್ರಾಂತಿಕ ಪರಿಷತ್ತು ಸೇರಿದೆಯೋ ಹಾಗೆಯೇ ವೀರಶೈವರ ಹಿತಾಹಿತಗಳನ್ನು ವಿಚಾರಿಸಲು ಒಂದು ವೀರಶೈವ ಪರಿಷತ್ತನ್ನು ಸೇರಿಸುವದು ಅಗತ್ಯವೆಂದು ತೋರಿ ಬಂದಿತು . ಆ ಮೇಲೆ ಒಂದು ವಾರದಲ್ಲಿಯೇ ಪಟ್ಟಣದಲ್ಲಿಯ ೨೦-೩೦ ಪ್ರಮುಖರ ಒಂದು ಚಿಕ್ಕ ಸಭೆಯನ್ನು ಧಾರವಾಡದಲ್ಲಿ ಸೇರಿಸಲಾಗಿ , ಅವರು ವೀರಶೈವ ಮಹಾಸಭೆಯನ್ನು ಕೂಡಿಸಲೇಬೇಕೆಂದು ನಿರ್ಧರಿಸಿದರು . ಇದರಲ್ಲಿ ವಿಶೇಷ ಪ್ರೋತ್ಸಾಹವನ್ನು ಕೊಟ್ಟವರು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ; ಅವರಿಗೆ ಬೆಂಬಲವಾಗಿ ಕೈ . ವಾ , ರೇವಣಸಿದ್ದಪ್ಪ ಕಿತ್ತೂರು , ಕೈ , ವಾ , ಕೊಂಗವಾಡ ಮೊದಲಾದವರೂ ಇದ್ದರು . 

ಮುಂದೆ ಕೆಲವು ದಿವಸಗಳಾದ ಮೇಲೆ ಆ ಸಮಾಜದವರು ಒಂದು ಗುರುಕುಲವನ್ನು ನಾಡಿನಲ್ಲಿ ಸ್ಥಾಪಿಸಿ ಅದಕ್ಕೋಸ್ಕರ ಅದ್ಭುತವಾಗಿ ಪ್ರಯತ್ನ ಮಾಡುತ್ತಿರುವ ವಾರ್ತೆಗಳು ವೃತ್ತ ಪತ್ರಿಕೆಗಳಲ್ಲಿ ಪ್ರಸಿದ್ಧವಾಗ ಹತ್ತಿದವು . ೧೯೦೭ ನೇ ಇಸ್ವಿಯಲ್ಲಿ ಸೊಲ್ಲಾಪುರದಲ್ಲಿ ೩ ನೇ ಮಹಾಸಭೆಯು ಜರುಗಿತು . ಈ ಸಭೆಗೆ ಹಾನಗಲ್ಲ ಮಹಾಸ್ವಾಮಿಗಳವರು ಕಾಲು ಮಾರ್ಗದಿಂದ ಸೊಲ್ಲಾಪುರ ಪಟ್ಟಣಕ್ಕೆ ಆಗಮಿಸಿದರು . ಮಹಾತ್ಮಾ ಗಾಂಧಿಯವರು ಜನತೆಯಲ್ಲಿ ಒಂದು ಮಹತ್ವದ ಸಂದೇಶವನ್ನು ಬೀರಲು ಪಾದಚಾರಿಗಳಾಗಿ ಹೇಗೆ ಮಾರ್ಗ ಕ್ರಮಣ ಮಾಡುತ್ತಿದ್ದರೋ ಅದೇ ಮೇರೆಗೆ ಹಾನಗಲ್ಲ ಕುಮಾರ ಸ್ವಾಮಿಗಳವರು ತಾವು ಇಳಿದ ಗ್ರಾಮದಲ್ಲೆಲ್ಲ ವೀರಶೈವರಿಗೋಸ್ಕರ ಒಂದು ಗುರುಕುಲವನ್ನು ಒಂದು ಕಡೆಗೆ ಸ್ಥಾಪಿಸಬೇಕೆಂಬ ವಿಚಾರಗಳನ್ನು ವಿಶದಪಡಿಸುತ್ತಲೇ ಬಂದರು . 

ಮುಂದೆ ೧೯೦೮ ರಲ್ಲಿ ಬಾಗಲಕೋಟೆಯಲ್ಲಿ ವೀರಶೈವಮಹಾಸಭೆಯು ಶ್ರೀಮಂತ ರಾಜಾ ಲಖಮಗೌಡ ಸರದೇಸಾಯಿ ವಂಟಮುರಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು . ಈ ಸಭೆಯಲ್ಲಿ ಆದ ನಿರ್ಣಯಗಳಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಬೇಕೆಂಬ ನಿರ್ಣಯವು ಮಹತ್ವವಾದದ್ದು , ಈ ನಿರ್ಣಯವಾದ ಬಳಿಕ ಮರುವರ್ಷವೇ ಈಗಿನ ಬದಾಮಿಯ ನೆರೆಯಲ್ಲಿ ಮಹಾಕೂಟ ಪುಣ್ಯಕ್ಷೇತ್ರದ ಸಮೀಪವಾಗಿ . ಮಲಾಪಹಾರಿ ನದೀ ತೀರದಲ್ಲಿ ಶಿವಯೋಗ ಮಂದಿರವು ಸ್ಥಾಪಿತವಾಯಿತು . ಅಂದಿನಿಂದ ಈ ವರೆಗೆ ಈ ಸಂಸ್ಥೆಯ ಮೂಲಕ ವೀರಶೈವ ಅನೇಕ ಮಠಾಧಿಪತಿಗಳೂ ಯೋಗ್ಯ ಶಿಕ್ಷಣವನ್ನು ಹೊಂದಿ ವೀರಶೈವ ಧರ್ಮದ ಮಹತ್ವವನ್ನು ಎಲ್ಲ ಕಡೆಗೂ ಈ ವರೆಗೆಯೂ ಬೀರುತ್ತ ಬಂದಿದ್ದಾರೆ .

 ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರು ಹೇಗೆ ಧನ ಸಂಚಯ ಮಾಡುತ್ತ ಬಂದರೋ ಹಾಗೆಯೇ ಅವರು ಗ್ರಂಥ ಸಂಚಯವನ್ನು ಸಹ ಮಾಡುತ್ತ ಬಂದರು . ಅವರ ಈ ಕಾರ್ಯವು ಅತ್ಯಂತ ಮಹತ್ತರವಾದುದು . ಶ್ರೀ ಸ್ವಾಮಿಗಳವರ ದರ್ಶನ ಹೊಂದಲು ಎಲ್ಲ ಕಡೆಯಿಂದಲೂ ಪ್ರಮುಖ ವ್ಯಕ್ತಿಗಳು ಈ ಮಂದಿರಕ್ಕೆ ಬರುವದು ರೂಢಿಯಾಗಿತ್ತು . ಅವರನ್ನು ಶ್ರೀ ಸ್ವಾಮಿಗಳು ಕಂಡು ಅವರ ಗ್ರಾಮದಲ್ಲಿ ತಾಡವೋಲೆಯ ಗ್ರಂಥಗಳು ಇವೆಯೋ ಹೇಗೆ ಎಂಬುದನ್ನು ಪ್ರಶ್ನೆ ಮಾಡದೇ ಬಿಡುತ್ತಿದ್ದಿಲ್ಲ . ಯಾರಾದರೂ ತಮ್ಮಲ್ಲಿ ಇಂಥ ಗ್ರಂಥಗಳು ಇವೆ ಎಂದು ಉತ್ತರ ಕೊಟ್ಟಲ್ಲಿ ಅವುಗಳನ್ನು ಮಂದಿರಕ್ಕೆ ಕಳಿಸಬೇಕೆಂದು ಶ್ರೀಸ್ವಾಮಿಗಳು ತಪ್ಪದೆ ಹೇಳುವರು ಅವರನ್ನು ಕಾಣ ಬಂದವರಲ್ಲಿ ಯಾರೂ ತಾವು ಕಳಿಸುವದಿಲ್ಲ ಎಂದು ಅನ್ನುತ್ತಿದ್ದಿಲ್ಲ . ಎಲ್ಲರೂ ಭಕ್ತಿಯಿಂದ ತಮ್ಮಲ್ಲಿಯ ಗ್ರಂಥಗಳನ್ನು ಅವರ ಕಡೆಗೆ ಸಮರ್ಪಿಸುತ್ತಿದ್ದರು . ಈ ಪ್ರಕಾರ ಮಂದಿರದಲ್ಲಿ ವೀರಶೈವ ಗ್ರಂಥಗಳ ಒಂದು ದೊಡ್ಡ ಸಂಗ್ರಹವು ಸ್ವಲ್ಪ ದಿವಸಗಳಲ್ಲಿ ಉಂಟಾಯಿತು .

 ಶ್ರೀ ಸ್ವಾಮಿಗಳವರು ಮಂದಿರದ ಒಂದು ದೊಡ್ಡ ನಿಧಿಯನ್ನು ಕೂಡಿಸಿದ್ದೂ , ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೂ ಮಹತ್ವದ ಕಾರ್ಯಗಳೆಂಬುದು ನಿಃಸಂದೇಹವಾದದ್ದು , ಆದರೆ ಹಣಕ್ಕಿಂತಲೂ ಮಹತ್ವವೆನಿಸಿಕೊಳ್ಳುವ ಗ್ರಂಥಗಳ ಸಂಗ್ರಹ ಮಾಡುವದು ಅಷ್ಟೇ ಶ್ರೇಯಸ್ಕರವಾದದ್ದು ಇರುತ್ತದೆ . ಇಂಥ ಗ್ರಂಥಗಳು ಸಮಾಜದಲ್ಲಿ ಇರದಿದ್ದರೆ ಸಂಸ್ಕೃತಿಯು ಬಾಳುವ ಸಂಭವವೇ ಇಲ್ಲ .

 ಇದೇ ಕಾಲದಲ್ಲಿ ನಾನು ವಚನಶಾಸ್ತ್ರದ ಉಕ್ತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೆನು . ಈ ಸಂಗತಿಯನ್ನು ನಾನು ಸ್ವಾಮಿಗಳವರ ನಿದರ್ಶನಕ್ಕೆ ಆಗಿಂದಾಗ್ಗೆ ತರುತ್ತಿದ್ದೆನು . ಅವರು ಇದನ್ನು ನೋಡಿ ಬಹಳ ಸಂತೋಷಿಸುತ್ತಿದ್ದರು ಮತ್ತು ನನಗೆ ಅದರಲ್ಲಿ ಪ್ರೋತ್ಸಾಹವನ್ನೂ ಕೊಡುತ್ತಿದ್ದರು .

 ಮುಂದೆ ನಾನು ‘ ವಚನಶಾಸ್ತ್ರಸಾರ ‘ ಎಂಬ ಗ್ರಂಥವನ್ನು ನಿರ್ಮಾಣ ಮಾಡಿ ಅದರಲ್ಲಿ ನಾಲ್ಕು ಭಾಗಗಳನ್ನು ತಯಾರಿಸಿದ್ದೆನು . ಮೊದಲನೆಯ ಭಾಗವು ಪೂರ್ಣವಾದುದನ್ನು ಬಾಗಲಕೋಟೆಯ ಕೆಲ ಮಹನೀಯರು ಸ್ವಾಮಿಯವರಿಗೆ ಹೇಳಲು ಅವರು ಖುದ್ದಾಗಿ ನಾನಿದ್ದ ಮನೆಯ ಸಮೀಪದಲ್ಲಿ ಸೊನ್ನದ ಶ್ರೀಮಂತ ಗಂಗಪ್ಪ ದೇಸಾಯಿಯವರ ಕಟ್ಟಡವು ಪ್ರಾರಂಭವಾಗಿದ್ದು ಅದೇ ಮನೆಯಲ್ಲಿ ಅವರು ಇಳಿದರು . ಆಗ ನಾನು ವಿಷಮಜ್ವರ ಪೀಡಿತನಾಗಿದ್ದೆ ; ಚನ್ನಾಗಿ ಕುಳ್ಳಿರಲಿಕ್ಕೆ ಬರುತ್ತಿದ್ದಿಲ್ಲ , ಆದರೂ ಶ್ರೀ ಸ್ವಾಮಿಗಳು ನನ್ನ ಅನುಕೂಲತೆಗಾಗಿ ಈ ಗೃಹದಲ್ಲಿ ಇಳಿದು ಕೆಲವು ದಿವಸಗಳವರೆಗೆ ನಾನು ಸಂಗ್ರಹಿಸಿದ ಉಕ್ತಿಗಳನ್ನು ನನ್ನ ಕಡೆಯಿಂದ ಓದಿಸಿಕೊಳ್ಳುತ್ತಿದ್ದರು . ಅವುಗಳಲ್ಲಿರುವ ವಚನಗಳಲ್ಲಿಯ ಉಚ್ಛ ವಿಚಾರ ಮತ್ತು ಸುಂದರ ನುಡಿಗಳನ್ನು ಕೇಳಿ ಅವರು ಹರ್ಷಿಸುತ್ತಿದ್ದರು ಮತ್ತು ನನಗೆ ಈ ಗ್ರಂಥವನ್ನು ಅಚ್ಚು ಹಾಕಲಿಕ್ಕೆ ಪ್ರೋತ್ಸಾಹಿಸಿದರು . ಈ ಅಚ್ಚು ಹಾಕುವ ಕಾವ್ಯದಲ್ಲಿ ನನಗೆ ಶ್ರೀಮಂತ ಗಂಗಪ್ಪ ದೇಸಾಯಿಯವರು ಧನ ಸಹಾಯವನ್ನು ಮಾಡಲು ಒಪ್ಪಿದರು . ಶ್ರೀ ಸ್ವಾಮಿಗಳು ಅದನ್ನು ಕೇಳಿ ಸಂತೋಷ ಪ್ರದರ್ಶನವನ್ನು ಮಾಡಿದರು . ಗ್ರಂಥದ ಮುದ್ರಣವನ್ನು ಬೆಳಗಾವಿಯಲ್ಲಿ ಮುಗಿದ ಬಳಿಕ ನಾನು ಅದನ್ನು ಅವರಿಗೆ ಅರ್ಪಿಸಿದೆನು . 

ಸ್ವಾಮಿಗಳವರ ಹಸ್ತದಲ್ಲಿ ಈ ಗ್ರಂಥವು ಬಂದ ಬಳಿಕ ಅವರು ತಮ್ಮ ಭೋಜನೋತ್ತರ ಕಾಲದಲ್ಲಿ ಅದರಲ್ಲಿಯ ಶ್ರೇಷ್ಠ ಉಕ್ತಿಗಳನ್ನು ತಮ್ಮನ್ನು ಕಾಣಲಿಕ್ಕೆ ಬಂದ ಜನರಿಗೆ ತಿಳಿಸಿ ಹೇಳುವರು . ಈ ಕಾರ್ಯವನ್ನು ಅವರು ಬಹುದಿನ ಮಾಡುತ್ತ ಬಂದರು . ಹೀಗೆ ತಾವಷ್ಟೇ ಅಲ್ಲ , ಮಂದಿರಕ್ಕೆ ಬಂದ ಮಠಾಧಿಕಾರಿಗಳಿಗೂ ಶಾಸ್ತ್ರಿಗಳಿಗೂ ‘ ಶಿವಶರಣರು ಎಂಥ ಮಹತ್ವದ ಕಾರ್ಯವನ್ನು ಮಾಡಿದ್ದಾರೆ . ನೋಡಿರಿ ‘ ಎಂದು ತಿಳಿಸಿ ಹೇಳುವರು .

 ಮುಂದೆ ಶ್ರೀಯುತ ರಂಗರಾವ ದಿವಾಕರ , ಶ್ರೀಯುತ ಬಿ . ಎಂ . ಶ್ರೀಕಂಠಯ್ಯ , ಶ್ರೀಯುತ ಎಮ್ . ಆರ್ , ಶ್ರೀ ನಿವಾಸಮೂರಿ ಮೊದಲಾದ ಮಹನೀಯರು ಶಿವಶರಣರ ಬಗ್ಗೆ ಬಹಳ ಉಚ್ಚತರದ ಲೇಖ – ಗ್ರಂಥಗಳನ್ನು ಬರೆದು ಪ್ರಕಟಿಸಿದರು . ಹೀಗೆ ಶಿವಶರಣರ ವಚನಗಳನ್ನು ಮೊದಲು ಪ್ರಸಾರ ಮಾಡಿದವರು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳೇ ಆಗಿದ್ದಾರೆ . ಅವರು ಹೋದಲ್ಲೆಲ್ಲ ಶಿವಶರಣರ ವಿಚಾರಗಳನ್ನು ತಮ್ಮ ಅಧಿಕಾರ ವಾಣಿಯಿಂದ ಜನರ ಮುಂದೆ ಪ್ರಸ್ತಾಪಿಸಿ ಅವುಗಳನ್ನು ಮುಂದಕ್ಕೆ ತಂದರು .

 ಶ್ರೀ ಸ್ವಾಮಿಗಳು ನಿಜಗುಣರ ಶಾಸ್ತ್ರವನ್ನು ಚನ್ನಾಗಿ ಪರಿಶೀಲಿಸಿದ್ದರು . ಈ ಗ್ರಂಥಗಳಲ್ಲಿ ಯೋಗಾಭ್ಯಾಸದ ತತ್ವಗಳು ವಿಸ್ತಾರವಾಗಿ ಬಂದಿರುತ್ತವೆ . ಶಿವಶರಣರ ಗ್ರಂಥಗಳಲ್ಲಿ ಬರುವ ಕ್ಲಿಷ್ಟ ಆಂತರಂಗಿಕ ವಿಚಾರಗಳನ್ನು ಶ್ರೀ ಸ್ವಾಮಿಗಳವರು ಬಹಳ ಹಗುರಾಗಿ ಜನರಿಗೆ ತಿಳಿಸಿ ಹೇಳುವರು . ಇದರಿಂದ ವಚನ ವಾಜ್ಯದ ಮಹತ್ವವು ಅವರಿಗೆ ಚನ್ನಾಗಿ ಬಿಂಬಿಸುತ್ತಿತ್ತು ಮುಂದೆ ಇದರ ಪ್ರಭಾವವು ಬೆಳೆಯುತ್ತಲೇ ಬಂದಿತು . ಈ ಪ್ರಭಾವವು ಬೆಳೆಯುತ್ತ ಇನ್ನೂ ವಿಶಾಲ ಸ್ಥಿತಿಯನ್ನು ಹೊಂದುವದರಲ್ಲಿ ಇದೆ . ಇದು ಪೂರತೆಗೆ ಬರಲಿಕ್ಕೆ ಇನ್ನೂ ಕೆಲಕಾಲವು ಬೇಕಾಗಬಹುದು . ಈ ಮಹತ್ವದ ಕಾರ್ಯವು ಶ್ರೀ ಶಿವಯೋಗ ಮಂದಿರದ ಸ್ಥಾನದಲ್ಲಿಯೇ ಸ್ವಲ್ಪ ಕಾಲದಲ್ಲಿ ಪೂರತೆಗೆ ಬರಬಹುದೆಂದು ನಿರೀಕ್ಷಿಸಲ್ಪಟ್ಟಿದೆ . 

ಶಿವಶರಣರ ವಾಙ್ಮಯದಲ್ಲಿ ಸಂಕುಚಿತ ಭಾವನೆಗಳು ಎಷ್ಟು ಮಾತ್ರವೂ ಇರುವದಿಲ್ಲ . ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳಲ್ಲಿ ಯಾವಾಗಲೂ ಶಿವಶರಣರ ಉದಾರ ಭಾವವು ಹೊರ ಹೊಮ್ಮುತ್ತಿತ್ತು . ಅವರನ್ನು ಕಾಣಬಂದವರು ಯಾವ ಜಾತಿಯವರಿದ್ದರೂ ಅವರನ್ನು ಅವರು ಆದರಿಸದೆ ಇರುತ್ತಿದ್ದಿಲ್ಲ . 

ಸ್ವಾಮಿಗಳವರು ಒಕ್ಕಲುತನ , ಪಶುಸಂಗೋಪನ , ಈ ಮೊದಲಾದ ಕಾರ್ಯಗಳಿಗೆ ಉತ್ತೇಜನ ಕೊಡುತ್ತಿದ್ದರು . ಇಂಥ ಕಾರ್ಯಗಳಲ್ಲಿ ಅವರು ಸ್ವತಃ ಲಕ್ಷ್ಯ ಹಾಕುತ್ತಿದ್ದರು . ಮಂದಿರದಲ್ಲಿ ಅನೇಕ ಜನ ವಟುಗಳು ಇರುತ್ತಿದ್ದರು . ಅವರೆಲ್ಲರಿಗೆ ಧಾರಿಕ ಶಿಕ್ಷಣ ಕೊಡಲಿಕ್ಕೆ ಅವರು ತಕ್ಕ ಏರ್ಪಾಡುಗಳನ್ನು ಮಾಡಿದ್ದ ರು . ಹೀಗೆ ಶಿಕ್ಷಣ ಹೊಂದಿದವರಲ್ಲಿ ಅನೇಕರು ನಾಡಿನಲ್ಲಿ ಇದ್ದು ಅವರು ಈಗ ಉಚ್ಚಪೀಠಗಳಿಗೆ ಅಧಿಕಾರಿ ಗಳಾಗಿದ್ದಾರೆ . ಇವರು ಯಾವಾಗಲೂ ಸಮಾಜ ಸೇವೆಯಲ್ಲಿರುವಂತೆ ಕಂಡು ಬರುತ್ತದೆ . 

ಸ್ವಾಮಿಗಳವರು ಇಂಗ್ಲೀಷ ಭಾಷೆಯು ಪರಕೀಯ ಭಾಷೆಯೆಂದು ತಿಳಿದು ಎಂದೂ ಅದನ್ನು ತಿರಸ್ಕರಿಸಲಿಲ್ಲ . ಮಂದಿರದಲ್ಲಿ ಇಂಗ್ಲೀಷಿನ ಶಿಕ್ಷಣಕ್ಕೋಸ್ಕರವೂ ಅವರು ಕೆಲವು ಕಾಲ ಒಂದು ಶಾಲೆಯನ್ನು ಸ್ಥಾಪಿಸಿದ್ದರು . ಅವರು ಸಾಕಷ್ಟು ನಿಧಿ ಕೂಡಿದ ಕೂಡಲೇ ಬಾಗಲಕೋಟೆಯಲ್ಲಿ ಒಂದು ಕಾರ್ಯಾಲಯವನ್ನು ಅಥವಾ ಗಿರಣಿಯನ್ನು ಸ್ಥಾಪಿಸಿದರು . ಅವರು ಮಂದಿರದ ಸುತ್ತಲೂ ಕೃಷಿಯನ್ನು ಹೆಚ್ಚಿಸಿದರು ; ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿ ನಡೆಯಬೇಕೆಂದು ಯೋಗ್ಯ ವ್ಯವಸ್ಥೆ ಮಾಡಿದರು . ಅವರ ಈ ಎಲ್ಲ ಯೋಜನೆಗಳು ಈಗಲೂ ಉತ್ತಮ ಸ್ಥಿತಿಯಲ್ಲಿ ಇರುತ್ತವೆ . 

ಲೇಖಕರು: ಲಿಂ. ಡಾ , . ಗು . ಹಳಕಟ್ಟಿ : ಬಿ..ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ :ಬೆಳಗು

ಲೇಖಕರು. ಲಿಂ. ಶ್ರೀಹರ್ಡೆಕರ ಮಂಜಪ್ಪನವರು ಸೌಜನ್ಯ: ಬೆಳಗು

ವೀರಶೈವ ಸಮಾಜದಲ್ಲಿ ಈಗ ತೋರುತ್ತಿರುವ ಶೈಕ್ಷಣಿಕ , ಧಾರ್ಮಿಕ ಮೊದಲಾದ ಎಲ್ಲ ಚಟುವಟಿಕೆಗಳಿಗೆ ವೀರಶೈವ ಮಹಾಸಭೆಯು ಬಹುಮಟ್ಟಿಗೆ ಕಾರಣವಾಗಿದೆಯೆಂದು ಧಾರಾಳವಾಗಿ ಹೇಳಬಹುದು . ಈ ಸಭೆಯು ಕಳೆದ ೨೫ ವರ್ಷಗಳಿಂದ ಅವಿಚ್ಛಿನ್ನವಾಗಿ , ಸಕ್ರಮವಾಗಿ ಜರುಗುತ್ತ ಬಂದಿದ್ದರೆ , ವೀರಶೈವ ಸಮಾಜವು ಇನ್ನೂ ಎಷ್ಟೋ ಮಟ್ಟಿಗೆ ಊರ್ಜಿತ ಸ್ಥಿತಿಯನ್ನು ಹೊಂದಿ ಇದೊಂದು ಆದರ್ಶಪ್ರಾಯವಾದ ಜನಾಂಗವೆ ಆಗುತ್ತಿದ್ದಿತು .

 ಇಂತಹ ಸಮರ್ಥ ಮಹಾಸಭೆಯನ್ನು ಪಾಶ್ಚಾತ್ಯ ಶಿಕ್ಷಣ ವಿಶಾರದರು , ಅಥವಾ ಆಧುನಿಕ ರಾಜಕಾರಣ ದಲ್ಲಿ ನುರಿತವರು ಸ್ಥಾಪಿಸಿದರೆ ಅದೇನೂ ಕೌತುಕಾಸ್ಪದವೆನಿಸುತ್ತಿರಲಿಲ್ಲ ಈಗಿನಂತೆ ಜನಜಾಗೃತಿಯುಂಟಾದ ಕಾಲದಲ್ಲಿ ಅದನ್ನು ಯಾರಾದರೂ ಏರ್ಪಡಿಸಿದ್ದರೆ ಅದೇನೂ ಆಶ್ಚರ್ಯಕರವಾಗಿ ತೋರುತ್ತಿರಲಿಲ್ಲ . 

ಆದರೆ , ಪಾಶ್ಚಾತ್ಯ ಶಿಕ್ಷಣದ ಗಾಳಿಯನ್ನು ಕೂಡ ಸೋಂಕಿಸಿಕೊಂಡಿರದ ಮತ್ತು ಆಧುನಿಕ ರಾಜಕಾರಣದ ಸಂಬಂಧವಿಲ್ಲದ ಪರಮಪೂಜ್ಯ ಹಾನಗಲ್ಲ ಮಹಾಸ್ವಾಮಿಗಳವರು ಕರ್ನಾಟಕದಲ್ಲಿಯೆ ಯಾವ ಸಮಾಜದವರ ಯಾವ ವಿಧವಾದ ಸಾರ್ವಜನಿಕ ಸಮ್ಮೇಲನಗಳು ಜರುಗದಿದ್ದ ಕಾಲದಲ್ಲಿ , ೨೫ ವರ್ಷಗಳ ಹಿಂದೆ (೧೯೦೪) ಜನಾಂಗವು ನಿದ್ದೆ ಹೋಗಿದ್ದ ಕಾಲದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದುದು ನಿಜವಾಗಿಯೂ ಕೌತುಕಾಸ್ಪದವಾದುದು ; ಆ ಮಹಾಸ್ವಾಮಿಗಳವರಲ್ಲಿದ್ದ ಅದ್ವಿತೀಯವಾದ ಮುಂದಾಲೋಚನೆಯ ದ್ಯೋತಕವಾದುದು .

 ಕ್ರಿ.ಶ. ೧೯೦೪ ರಲ್ಲಿ ಮಹಾಸಭೆಯನ್ನು ಧಾರವಾಡದಲ್ಲಿ ಸ್ಥಾಪಿಸುವ ಮುಂಚೆಯೇ ೧೯೦೩ ರಲ್ಲಿ ಒಂದು ಆಲೋಚನಾ ಸಭೆಯನ್ನು ಕೂಡಿಸಿ ಸಮಾಜದ ಪ್ರಮುಖರ ಸಲಹೆ ಸೂಚನೆಗಳನ್ನು ತಿಳಿದುಕೊಂಡುದು ಸ್ವಾಮಿಗಳವರಲ್ಲಿದ್ದ ಅಸಾಧಾರಣವಾದ ಕಾರ್ಯ – ಚಾತುರ್ಯವನ್ನು ವ್ಯಕ್ತಗೊಳಿಸುತ್ತದೆ . ಈ ಮಹಾಸ್ವಾಮಿ ಗಳವರ ನೇತೃತ್ವದಲ್ಲಿಯೇ ಮೊದಲಿನ ಆರೇಳು ಮಹಾಸಭೆಗಳು ಜರುಗಿದವು . ಆ ಕಾಲದಲ್ಲಿಯೇ ವೀರಶೈವರಲ್ಲಿ ಮಹಾಸಭೆಯಿಂದ ಅತ್ಯಂತ ಪರಿಣಾಮಕಾರಿಯಾದ ಜಾಗ್ರತಿಯುಂಟಾಯಿತು . 

ಧಾರವಾಡದ ಮೊದಲನೆಯ ಸಭೆಯ ಕಾಲದಲ್ಲಿಯೇ ವಿದ್ಯಾಭಿವೃದ್ಧಿ ನಿಧಿಯ ಯೋಜನೆಯುಂಟಾಗಿ “ ಲಿಂಗಾಯತ ವಿದ್ಯಾವರ್ಧಕ ಫಂಡು ‘ ಏರ್ಪಟ್ಟು ವೀರಶೈವರಲ್ಲಿ ಇಂಗ್ಲೀಷ ವಿದ್ಯಾಪ್ರಸಾರಕ್ಕೆ ಬಹು ಸಹಾಯವಾಯಿತು . ಅದರಂತೆಯೆ ಎರಡನೆಯ ಮಹಾಸಭೆಯು ಬೆಂಗಳೂರಲ್ಲಿ ಕೂಡಿದಾಗ ಮೈಸೂರು ಪ್ರಾಂತದ ವೀರಶೈವರ ವಿದ್ಯಾಭಿವೃದ್ಧಿಗಾಗಿ ಒಂದು ಧನ ನಿಧಿ ಏರ್ಪಟ್ಟಿತು . 

ಬಾಗಲಕೋಟೆಯಲ್ಲಿ ಕೂಡಿದ ನಾಲ್ಕನೆಯ ವೀರಶೈವ ಮಹಾಸಭೆಯ ಕಾಲದಲ್ಲಿಯೇ ಶಿವಯೋಗ ಮಂದಿರದ ಯೋಜನೆಯುಂಟಾಗಿ ಆರ್ಯ ಸಮಾಜದವರ ಗುರುಕುಲ ಪದ್ಧತಿಯ ಮೇರೆಗೆ ವೀರಶೈವ ಸಂಸ್ಕೃತಿಯ ಸಂವರ್ಧನೆಗೆ ಏರ್ಪಟ್ಟ ಈ ಶಿವಯೋಗ ಮಂದಿರವು ವೀರಶೈವರಲ್ಲಿಯೇ ಅಲ್ಲ ಕರ್ನಾಟಕದಲ್ಲಿಯೇ ಹೊಸ ಸಂಸ್ಥೆಯೆಂದು ನಿಃಸಂಶಯವಾಗಿ ಹೇಳಬಹುದು . ಈ ಶಿವಯೋಗ ಮಂದಿರವು ಶ್ರೀ ಹಾನಗಲ್ಲ ಮಹಾಸ್ವಾಮಿಗಳ ಪ್ರಾಣಸ್ವರೂಪವಾದುದು . ಬಾಗಲಕೋಟೆಯ ಮಹಾಸಭೆಯಲ್ಲಿ ಗೊತ್ತಾದ ಮೇರೆಗೆ ಸ್ವಾಮಿಗಳೇನೋ ಶಿವಯೋಗ ಮಂದಿರದ ಕಾರ್ಯವನ್ನು ನೆರವೇರಿಸಿಯೇ ಬಿಟ್ಟರು.

 ಅದೇ ಪ್ರಕಾರ ಆ ಮಹಾಸಭೆಯಲ್ಲಿ ವೀರಶೈವರ ಬಟ್ಟೆಯ ಗಿರಣಿಯನ್ನು ಸ್ಥಾಪಿಸಬೇಕೆಂದು ತೀರ್ಮಾನ ವಾದಂತೆ ಆ ಕಾಲದ ಪ್ರಮುಖ ವರ್ತಕರು ಪ್ರಯತ್ನಿಸಿ ಶ್ರೀಗಳವರಂತೆಯೆ ತಾವೂ ಆ ಕಾರ್ಯವನ್ನು ಮಾಡಿದ್ದರೆ ವೀರಶೈವರಿಗೂ ಆ ಮೂಲಕ ಕರ್ನಾಟಕಕ್ಕೂ ಆರ್ಥಿಕ ದೃಷ್ಟಿಯಿಂದ ಎಷ್ಟೋ ಪ್ರಯೋಜನವಾಗುತ್ತಿದ್ದಿತು . ಮಹಾಸ್ವಾಮಿಗಳಂತೆ ಕೈಕೊಂಡ ಕಾರ್ಯವನ್ನು ಏಕ ನಿಷ್ಠೆಯಿಂದ ಈ ಪರಿಶ್ರಮಪಟ್ಟು ಮಾಡುವ ಮಹನೀಯರು ವಿರಳ.

ವೀರಶೈವ ಮಹಾಸಭೆಯಿಂದ ೩-೪ ವರ್ಷಗಳಲ್ಲಿಯೇ ಆದ ಮಹಾಪ್ರಯೋಜನಗಳನ್ನು ಸ್ವಾಮಿಗಳವರು ನೋಡಿ ಮಹಾಸಭೆಯ ವಿಷಯದಲ್ಲಿ ವಿಶೇಷವಾದ ಪ್ರೇಮಾದರಗಳುಳ್ಳವರಾಗಿದ್ದರು .ಈ ಮಹಾಸಭೆಯನ್ನು ಸಮಾಜಕ್ಕೆ ಅತ್ಯಂತ ಹಿತಕಾರಿಯಾದುದೆಂದು ದೃಢವಾಗಿ ನಂಬಿದ್ದರು . ಅಂತೆಯೇ ಅದಕ್ಕೆ ಲೋಪವುಂಟಾಗುವದು ಅವರಿಗೆ ಮಹಾವಿಷಾದಕರವಾದುದಾಗಿ ಪರಿಣಮಿಸುತ್ತಿದ್ದಿತು . ಬಳ್ಳಾರಿಯ ಮಹಾಸಭೆಯ ಕಾಲಕ್ಕೆ ( ಕ್ರಿ.ಶ .೧೯೦೯ ರಲ್ಲಿ ಅದಕ್ಕುಂಟಾದ ವಿಘ್ನದಿಂದ ಮಹಾಸ್ವಾಮಿಗಳು ಪೂಜಾದಿ ನಿತ್ಯಕ್ರಿಯೆಗಳನ್ನು ಬಿಟ್ಟು ವಿಷಾದ ಪಡುತ್ತಿದ್ದ ದೃಶ್ಯವು ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ . 

ಮಹಾಸ್ವಾಮಿಗಳ ಕೆಲವು ಧಾರ್ಮಿಕ ವಿಚಾರಗಳು ಭಿನ್ನಾಭಿಪ್ರಾಯಕ್ಕೆ ಆಸ್ಪದವಾಗಿದ್ದರೂ ವೀರಶೈವ ಸಮಾಜವು ಸಕಲ ಸಂಗತಿಗಳಲ್ಲಿಯೂ ಅಭಿವೃದ್ಧಿ ಹೊಂದಬೇಕೆಂಬ ವಿಷಯದಲ್ಲಿ ಅವರಲ್ಲಿದ್ದ ಅಭಿಮಾನ ಆಕಾಂಕ್ಷೆ ಪರಿಶ್ರಮಗಳು ಆಸಾಧಾರಣವಾದವುಗಳೆಂಬುದು ನಿರ್ವಿವಾದದ ಸಂಗತಿ . ಅಂತೆಯೆ ಬಳ್ಳಾರಿ ಮಹಾಸಭೆಯನ್ನು ಮಹಾಸ್ವಾಮಿಗಳವರು ಕೊನೆಗೆ ಸಮಾಧಾನಕರವಾಗಿ ಜರುಗಿಸಲು ಸಮರ್ಥರಾದರು . 

ಮುಂದೆ ಮಹಾಸಭೆಯ ಕಾರ್ಯಕಲಾಪಗಳ ರೀತಿ ನೀತಿಗಳು ಮಹಾಸ್ವಾಮಿಗಳಿಗೆ ತೃಪ್ತಿಕರವಾಗಿ ತೋರದಿದ್ದುದರಿಂದ ವೀರಶೈವ ಧರ್ಮೊತ್ತೇಜಕ ಸಭೆ’ಯನ್ನು ಸ್ಥಾಪಿಸಿ ಆ ಮೂಲಕ ಧಾರ್ಮಿಕ ಜಾಗೃತಿಯನ್ನು ಮಾಡಲುಪಕ್ರಮಿಸಿದರು . ತಾವು ಧಾರ್ಮಿಕ ಚಟುವಟಿಕೆಗೆ ಅದೊಂದು ಬೇರೆ ಸಂಸ್ಥೆಯನ್ನು ಮಾಡಿಕೊಂಡರೆ ವಿನಹ , ಲೌಕಿಕ ಸುಧಾರಣೆಗಳಿಗೆ ಮಹಾಸಭೆಯು ಅಗತ್ಯವೆಂದೆ ಅವರು ತಿಳಿದಿದ್ದರು .

 ಮಹಾಸಭೆಯಿಂದಾದ ಸಕಲ ಶ್ರೇಯಸ್ಸುಗಳಿಗೂ ಶ್ರೀಮನ್ನಿರಂಜನ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೆ ಕಾರಣರು . ರಾಜಕೀಯ ವಿಷಯವೊಂದನ್ನು ಬಿಟ್ಟು ಇನ್ನಿತರ ಧಾರ್ಮಿಕ , ಸಾಮಾಜಿಕ , ಶೈಕ್ಷಣಿಕ , ಸಾಲಪತ್ರಿಕ ಮತ್ತು ಸಾಹಿತ್ಯ ಸಂಬಂಧವಾದ ವೀರಶೈವರ ಅನೇಕ ಉನ್ನತಿಯ ಪ್ರಯತ್ನಗಳಿಗೆ ವೀರಶೈವ ಮಹಾಸಭೆಯು ಈಗಲೂ ಅತ್ಯಗತ್ಯವಾಗಿದೆ . ಆ ಮಹಾಸಭೆಯ ಕಡೆಗೆ ಸಮಾಜದ ಪ್ರಮುಖರು ಈಗಲಾದರೂ ಲಕ್ಷಿಸಿ ಅದರಿಂದ ಸಮಾಜೋನ್ನತಿಯ ಕಾರ್ಯಗಳನ್ನು ಮಾಡಿಕೊಳ್ಳುವದೆ ಹಾನಗಲ್ಲ ಮಹಾಸ್ವಾಮಿಗಳಲ್ಲಿರತಕ್ಕ ಭಕ್ತಿವಿಶ್ವಾಸ ಗಳನ್ನು ಪ್ರದರ್ಶಿಸುವ ಶ್ರೇಷ್ಠವಾದ ಮಾರ್ಗವು . ಆ ಮಹಾಸ್ವಾಮಿಗಳು ಸ್ಥಾಪಿಸಿದ ಈ ದಿವ್ಯ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಿ ಆ ಮೂಲಕ ಸಮಾಜ ಹಿತವನ್ನು ಮಾಡುವದೆ ಶ್ರೀ ಹಾನಗಲ್ಲ ಮಹಾಸ್ವಾಮಿಗಳ ಸಜೀವ ಸ್ಮಾರಕವು . ಆ ಪರಮಪೂಜ್ಯರ ಸ್ಮರಣೆಯ ಈ ಪುಣ್ಯ ಕಾಲದಲ್ಲಿಯಾದರೂ ಅವರು ಸ್ಥಾಪಿಸಿದ ವೀರಶೈವ ಮಹಾಸಭೆಯ ಕಡೆಗೆ ಸಮಾಜದ ಲಕ್ಷವು ಹೋಗಿ ಅದು ಫಲಕಾರಿಯಾಗಲಿ . 

ಲೇಖಕರು. ಲಿಂ. ಶ್ರೀಹರ್ಡೆಕರಮಂಜಪ್ಪನವರುಸೌಜನ್ಯ: ಬೆಳಗು

ಲೇಖಕರು :ಪೂಜ್ಯಶ್ರೀಮುಪ್ಪಿನಬಸವಲಿಂಗದೇವರು, ಉತ್ತರಾಧಿಕಾರಿಗಳು,

ಶ್ರೀಅನ್ನದಾನೇಶ್ವರಸಂಸ್ಥಾನಮಠ, ಹಾಲಕೆರೆ

ವೀರಶೈವ-ಲಿಂಗಾಯತ ಸಮಾಜ ತನ್ನನ್ನು ಸದಾಚಾರ, ಸದ್ವಿಚಾರ, ಸಮಭಾವಗಳಿಂದ ಒಟ್ಟುಗೂಡಿಸಲು ಹೊರಟು ತನ್ನಲ್ಲಿಯೇ ಆ ತಾತ್ವಿಕ ನೆಲೆಯನ್ನೆ ಮರೆಮಾಡಿಕೊಂಡಿತ್ತು. ಇಂಥ ಸಾಮಾಜಿಕ ಹೊಯ್ದಾಟದ ಕಾಲದಲ್ಲಿ ಹಲವು ಚೇತನಗಳು ಅಪೂರ್ವಕಾರ್ಯ ನಡೆಸಲು ಅವತರಿಸಿದ್ದವು. ಇಂಥವರಲ್ಲಿ ಒರ್ವರು, ವಿರತಿ ತೇಜ ತುಂಬಿದ ಬಾಗಲಕೋಟೆಯ ಶ್ರೀ ವೈರಾಗ್ಯದ ಮಲ್ಹಣಾರ್ಯರು. ಸಂಚಾರ ಮೂರ್ತಿಗಳಾಗಿದ್ದ ಅವರು ತಮ್ಮಂತೆಯೆ ಸಾಮಾಜಿಕ ಕಳಕಳಿವುಳ್ಳ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಧರ್ಮ ಪೀಠದಲ್ಲಿರುವ ತಮ್ಮಂಥವರು ನಡೆಸುವ ಕಾರ್ಯಗಳು ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯಬೇಕು. ಈ ಸಮಾಜದ ಗುರು-ವಿರಕ್ತ ಪೀಠಗಳಿಗೆ ಏರುವವರು ಶಿಕ್ಷಣ ಪಡೆಯುವ ಸಂಸ್ಥೆಯೊಂದು ಸ್ಥಾಪನೆಯಾಗಬೇಕು ಎಂದು ಪೀಠಿಕೆ ಹಾಕಿದ್ದರು. ಈ ಪೀಠಿಕೆಯೇ ಕುಮಾರ ಮಹಾಸ್ವಾಮಿಗಳವರ ಮನದಲ್ಲಿ ಹೆಮ್ಮರವಾಗಿ ಬೆಳೆದು, ಮುಂದೆ ಶಿವಯೋಗಮಂದಿರ ಸಂಸ್ಥೆಯನ್ನು ಸಾಕಾರಗೊಳಿಸಿತು. ಬಾಗಲಕೋಟೆಯ ೪ನೇ ವೀರಶೈವ ಮಹಾಅಧಿವೇಶನದಲ್ಲಿ ಅಂದಿನ ಸಮಾಜ ಪ್ರಮುಖರಲ್ಲಿ ಓರ್ವರಾದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಶ್ರೀ ಶಿವಯೋಗಮಂದಿರ ಸ್ಥಾಪನೆಗೆ ನಿರ್ಣಯ ಮಂಡಿಸಿತು. ಪರಮ ತಪೋನಿಧಿಗಳಾದ ಇಲಕಲ್ಲ ಶ್ರೀ ವಿಜಯ ಮಹಾಂತ ಶಿವಯೋಗಿಗಳು ತೋರಿದ ಸ್ಥಳದಲ್ಲಿ, ಮಲಪಹಾರಿಣಿ ತಟದಲ್ಲಿ ೧೯೦೯ರ ರಥಸಪ್ತಮಿಯಂದು ಸ್ಥಾಪನೆಯಾಯಿತು. ಒಮ್ಮೆ ಶ್ರೀ ವಿಜಯಮಹಾಂತ ಶಿವಯೋಗಿಗಳು ತಾಡೋಲೆಗಳನ್ನು ಅಭ್ಯಸಿಸುವಾಗ ೭೦೦ ವರ್ಷಗಳ ಹಿಂದಿನ ಘಟ್ಟಿವಾಳ ಮುದ್ದಣ್ಣಗಳ ಕಾಲಜ್ಞಾನ ವಚನ ಕಣ್ಸೆಳೆಯಿತು. ಮುಂದೊಂದುದಿನ ದಿಟ ಜಂಗಮನೋರ್ವ ಶಿವಯೋಗ ಸಂಸ್ಥೆಯೊಂದನ್ನು ಹುಟ್ಟು ಹಾಕುವನೆಂಬ ಉಲ್ಲೇಖ ಆ ಕಾಲಜ್ಞಾನದಲ್ಲಿತ್ತು. ಘಟ್ಟಿವಾಳಯ್ಯ ಪರಮ ವೈರಾಗ್ಯಶಾಲಿ, ಇಂದ್ರಿಯಗಳನ್ನು ತೃಣೀಕರಿಸಿ ನಿರ್ಮೋಹಿತನಾಗಿದ್ದ. ‘ಸುವರ್ಣ ಎಂದರೆ ಕಲ್ಲು, ಮನೆಯೆಂದರೆ ಸಂತೆ ಗುಡಿಸಲು’ ಎಂದು ಭಾವಿಸಿ ಸಕಲರಲ್ಲಿ ವಿಶ್ವಬಂದುತ್ವ ಕಾಣುವ ದೃಷ್ಟಿಉಳ್ಳವನಾಗಿದ್ದ. ಅವನು ಯಾರನ್ನೂ ಪೀಡಿಸುತ್ತಿರಲಿಲ್ಲ, ಯಾರ ಮನಸ್ಸನ್ನು ನೋಯಿಸುತ್ತಿರಲಿಲ್ಲ. ಅಹಿಂಸಾ ಧರ್ಮ ಪಾಲಕನಾಗಿದ್ದ. ಈ ಕಡುತರವಾದ ಆಚರಣಾ ಪ್ರವೃತ್ತಿಯನ್ನು ಕಂಡೇ ಜನರು ಘಟ್ಟಿವಾಳಯ್ಯನೆಂದು ಈ ಮುದ್ದಣ್ಣನನ್ನು ಕರೆಯುತ್ತಿದ್ದರು. ಮುದ್ದಣನೆಂಬುದು ಮರೆಯಾಗಿ ಘಟ್ಟಿವಾಳಯ್ಯನೆಂದೇ ಈತ ಪ್ರಸಿದ್ಧನಾಗಿದ್ದ.

ಬಸವಣ್ಣನವರು ನಡೆಸುವ ಅನುಭವ ಮಂಟಪದ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಬಂದಿದ್ದ ಈ ಘಟ್ಟಿವಾಳಯ್ಯ. ಬಸವಣ್ಣನವರ ಮಹಾಮನೆಯ ಮುಂದೆ ಜಾಗಟೆಯ ನಾದ ಕೇಳಿದಾಗ ಪ್ರಸಾದಕ್ಕೆ ಸಾಲು ಹಿಡಿದು ಹೋಗುವ ಜಂಗಮರನ್ನು ಕಂಡು ಘಟ್ಟಿವಾಳಯ್ಯ ‘ಇವರು ಉಪಾದಿಯಿಂದ ಶರೀರ ಪೋಷಕರು ಜ್ಞಾನ ಜಂಗಮ ಸ್ಥಲಕ್ಕೆ ಸಲ್ಲರು’ ಎಂದು ವಿಡಂಬಿಸಿದ್ದ.

“ತನುವ ಮರೆಯ ಬೇಕೆಂದು ಗುರುವ ತೋರಿ

ಮನವ ಮರೆಯ ಬೇಕೆಂದು ಲಿಂಗವ ತೋರಿ

ಧನವ ಮರೆಯ ಬೇಕೆಂದು ಜಂಗಮವ ತೋರಿ

ಲೇಸ ಮರೆದು ಕಷ್ಟಕ್ಕೆ ಕಡಿದಾದುವ ಭಾಷೆಹೀನರ ಕಂಡು

ನಾಚಿಕೆಯಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”

ಘಟ್ಟಿವಾಳಯ್ಯಗಳ ವಿಡಂಬನೆ ಹೀಗೆ ಮುಂದುವರೆದಿತ್ತು.

” ಕಾಯ ಜೀವವನರಿದೆನೆಂಬುವವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ!

ಹೊನ್ನು ಹೆಣ್ಣು ಮಣ್ಣಿಗಾಗಿ ಹೊರೆಯಾಡುವವರೆಲ್ಲರು

ಬಸವಣ್ಣನ ಬಾಗಿಲಲ್ಲಿ ಬಂದಿತರಾಗಿ ನೊಂದವರಿಗೇಕೆ

ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ “

ಹೀಗೆ ಘಟ್ಟಿವಾಳಯ್ಯ ಜಂಗಮ ಸಮೂಹವನ್ನು ವಿಡಂಬಿಸಿದಾಗ ಆ ಜಂಗಮದೇವರುಗಳು ಘಟ್ಟಿವಾಳಯ್ಯನನ್ನು ನೋಯಿಸಿ ಆತನ ಕೊರಳ ಇಷ್ಟಲಿಂಗವನ್ನು ಕಸಿದುಕೊಂಡರು ಆಗಲೂ ಘಟ್ಟಿವಾಳಯ್ಯ ವಚನದಲ್ಲೆ ನುಡಿದಿದ್ದ,

“ಗೋಕುಲರೆಲ್ಲರು ಕೂಡಿ ಗೋಪತಿಯಣ್ಣನ ಮನೆಗೆ ಉಣಬಂದರೆಲ್ಲರು,

ನಾ ನೀಸಕ್ಕಿ ಕೂಳ ಕೇಳಿದರೆ ವೇಷದಾರಿಗಳು

ಘಾಸಿಯ ಮಾಡಿದರೆನ್ನುವ ಜಗದೀಶ ನೀನೆ ಬಲ್ಲೆ

ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”

ಹೀಗೆ ಘಟ್ಟಿವಾಳಯ್ಯನ ಲಿಂಗದೇವನನ್ನು ಜಂಗಮದೇವರುಗಳು ತೆಗೆದುಕೊಂಡ ಮೇಲೆ, ಆತ ಗುಡ್ಡಕ್ಕೆ ಹೋಗಿ ಒಂದು ದೊಡ್ಡ ಗುಂಡಕಲ್ಲಿಗೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕೊರಳಿಗೆ ಆ ಹಗ್ಗವನ್ನು ಶಿವದಾರದಂತೆ ಸುತ್ತಿಕೊಂಡು ಬಸವಣ್ಣನವರ ಮಹಾಮನೆಯತ್ತ ಬಂದಿದ್ದ. ಆ ದೊಡ್ಡ ಗುಂಡಕಲ್ಲು ಮಹಾಮನೆಯ ಬಾಗಿಲಿಗೆ ಅಡ್ಡವಾಗಿ ನಿಂತಿತ್ತು. ಒಳಗಿದ್ದವರು ಹೊರಗೆ; ಹೊರಗಿದ್ದವರು ಒಳಗೆ ಬರಲಾಗದೆ ಆ ಗುಂಡಕಲ್ಲು ದ್ವಾರವನ್ನು ಬಂದಿಸಿತ್ತು. ಶಿವಶರಣೆ ನಿಲಾಂಬಿಕೆಯವರು ಲಿಂಗದಲ್ಲಿ ಈ ಚೋದ್ಯವನ್ನು ಕಂಡು ಬಿಜ್ಜಳನ ಆಸ್ಥಾನದಲ್ಲಿರುವ ಬಸವಣ್ಣನವರಿಗೆ ಹೇಳಿ ಕಳುಹಿಸಿದ್ದರು. ಬಸವಣ್ಣ, ಅಲ್ಲಮ ಪ್ರಭುಗಳು, ಚನ್ನಬಸವಣ್ಣ, ಮಡಿವಾಳ ತಂದೆಗಳು ಮಹಾಮನೆಯತ್ತ ಬಂದಿದ್ದರು. ಘಟ್ಟಿವಾಳಯ್ಯನ ಜಂಗಮರ ವಿಡಂಬನೆ ಹೀಗೆ ಮುಂದುವರೆದಿತ್ತು.

“ಅಂಡಜ ಮುಗ್ದೆಯ ಮಕ್ಕಳಿರಾ, ಕೆಂಡದ ಮಳೆ ಕರೆವಲ್ಲಿ

ನಿಮ್ಮ ಹಿಂಡಿರು ಹಳುಹೊಕ್ಕು ಹೋದಿರಲ್ಲಾ! ಜಂಗಮವೆಂಬುದಕ್ಕೆ

ನಾಚಿರಿ, ನಿಮ್ಮ ಕಂಗಳ ಹಿಂಡಿರ ತಿಂಬಳೆಯನ್ನರಿಯಿರಿ, ಅವಳು

ಒಮ್ಮೆ ತಿಂಬಳು ಒಮ್ಮೆ ಕರುಣಿಸಿ ಬಿಡುವಳು

ಅವಳು ತಿಂದು ತಿಂದು ಉಗುಳುವ ಬಾಯೊಳಗಣದೆಲ್ಲಾ

ಜಂಗಮವೇ? ಲೋಕವೇಲ್ಲಾ ಅವಳು, ಅವಳು ವಿರಹಿತವಾದ

ಜಂಗಮರಾರೈ ಬಸವಣ್ಣ? ಅವಳು ವಿರಹಿತವಾದ

ಭಕ್ತರಾರೈ ಬಸವಣ್ಣ? ಅವಳ ಮಕ್ಕಳು ನಿನ್ನ ಕೈಯಲ್ಲಿ

ಆರಾಧಿಸಿಕೊಂಬ ಜಂಗಮಕಾಣೈ ಬಸವಣ್ಣ!

ಅವಳು ವಿರಹಿತವಾದ ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ನಲ್ಲದಿಲ್ಲನಿಲ್ಲು ಮಾಣು”

ಹೀಗೆ ಘಟ್ಟಿವಾಳಯ್ಯನ ವಿಡಂಬನೆ ಸಾಗಿದ್ದಾಗ ಅಲ್ಲಮ ಪ್ರಭುಗಳು ಶಿವಾನುಭವ ನಡೆಸಿದ್ದರು. ಜಂಗಮರಿಗೆ  ಹಾಗೂ ಘಟ್ಟಿವಾಳಯ್ಯನಿಗೆ ತಿಳಿಹೇಳಿ ಘಟ್ಟಿವಾಳಯ್ಯನ ಲಿಂಗವನ್ನು ಜಂಗಮರಿಂದ ಮರಳಿ ಕೊಡಿಸಿದ್ದರು. ಆಗ ಜಂಗಮದೇವರುಗಳು ಘಟ್ಟಿವಾಳಯ್ಯನನ್ನು ಅಣಕಿಸಿದ್ದರು. ‘ಏನು ಘಟ್ಟಿವಾಳಯ್ಯನವರೆ, ನಿಮಗೆ ಇಬ್ಬರು ಗಂಡಂದಿರೇನು.? ನಾವು ಕಟ್ಟಿದವನೊಬ್ಬ ನೀವು ಕಟ್ಟಿಕೊಂಡವನೊಬ್ಬ’. ಆಗ ಘಟ್ಟಿವಾಳಯ್ಯನವರು ತಮ್ಮ ಲಿಂಗಲೀಲೆ ಮೆರೆದಿದ್ದರು.

“ಲೀಲೆಗೊಳಗಾದ ಲಿಂಗವೇ, ಬಾರಯ್ಯ ಎನ್ನಂಗದೊಳಗಾಗು

ಶೃತ, ದೃಷ್ಟ, ಅನುಮಾನದಲ್ಲಿ ನೋಡುವವರೆಲ್ಲರಿಗೂ

ಅತೀತವಾಗು ಹಾಗೆಂಬುದಕ್ಕೆ ಮುನ್ನವೇ ಆ ಗುಂಡು

ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ ಕಾಯವಡಗಿ ಭಾವವೆಂಬ

ಭಾವಬಯಲಾಯಿತ್ತು ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ”

ಘಟ್ಟಿವಾಳಯ್ಯನವರು ಆ ಗುಂಡನ್ನು ಪರಬ್ರಹ್ಮವೆಂದು ತನ್ನ ಕಾಯದ ಕರಸ್ಥಲದ ಇಷ್ಟಲಿಂಗದಲ್ಲಿ ಅಡಗಿಸಿದ್ದರು. ಘಟ್ಟಿವಾಳಯ್ಯನವರು ಕಲ್ಯಾಣದ ಬೀದಿ ಬೀದಿಗಳಲ್ಲಿ ತಮ್ಮ ದೇಹವನ್ನು ಕೈಮಾಡಿ ತೋರಿಸುತ್ತ ‘ಇದು ಲಿಂಗಕಾಯ ಯಾರೂ ಸಮಾದಿ ಮಾಡ ಬೇಕಿಲ್ಲ, ಇದು ಲಿಂಗದಲ್ಲಿ ಐಕ್ಯವಾಗುತ್ತೆ’. ಎಂದು ನುಡಿಯುತ್ತಿದ್ದರು. ಇಂಥ ಘಟ್ಟಿವಾಳಯ್ಯನವರು ತಮ್ಮ ಲಿಂಗೈಕ್ಯ ಸಮಿಪಿಸಿದಾಗ ಕಲ್ಯಾಣದ ರಾಜ ಬೀದಿಯಲ್ಲಿ ದೇಹವನ್ನು ತ್ಯಜಿಸಿದರು. ಈ ಸುದ್ದಿಯನ್ನು ಚಾರರಿಂದ ತಿಳಿದ ಬಿಜ್ಜಳನು ಬಸವಣ್ಣನವರಿಗೆ ‘ನಿಮ್ಮ ಶರಣರಿಗೆ ನುಡಿದಂತೆ ನಡೆಯುವ ನಡೆಯಿಲ್ಲ, ಯಾರೋ ಒಬ್ಬ ತನ್ನ ಕಾಯಕ್ಕೆ ಸಮಾದಿ ಮಾಡ ಬೇಕಿಲ್ಲ ಎನ್ನುತ್ತಿದ್ದವನು ರಾಜ ಬೀದಿಯಲ್ಲಿ ಬಿದ್ದು ಸತ್ತಿರುವನಂತೆ ಅವನ ನುಡಿ ನಡೆಯಾಗಿಲ್ಲವಲ್ಲ?’ ಎಂದಿದ್ದನ್ನು ಕೇಳಿದ ಬಸವಣ್ಣನವರು ತಮ್ಮ ಶರಣ ಬಳಗದವರೊಂದಿಗೆ ಘಟ್ಟಿವಾಳಯ್ಯನವರು ಜೀವಬಿಟ್ಟ ರಾಜ ಬೀದಿಯಲ್ಲಿ ಬಂದಿದ್ದರು. ಘಟ್ಟಿವಾಳಯ್ಯನ ಲಿಂಗಕಾಯವನ್ನು ಸುತ್ತುವರೆದು ಸಮಾಧಿ ಕ್ರಿಯೆಗೆಂದು ಹೊತ್ತೊಯ್ಯಲು ಆ ಮಹಾಶಿವಶರಣನ ಕಾಯವನ್ನು ಮೇಲೆತ್ತುತ್ತಿದ್ದರು, ಹಾಗೆ ಎತ್ತಿದ ಬಸವಾದಿ ಶಿವಶರಣರ ಕರದಲ್ಲಿಯೇ ಅಡಗಿದಂತೆ ಘಟ್ಟಿವಾಳಯ್ಯನ ಲಿಂಗಕಾಯ ಬಯಲಾಗಿತ್ತು. ಈ ಸುದ್ದಿ ಚಾರರಿಂದ ಬಿಜ್ಜಳಗೆ ತಲುಪಿತ್ತು, ಆತ ಓಡೋಡಿ ಬಂದಿದ್ದ. ಈ ಮಹಾ ಶರಣನ ದರ್ಶನವಾಗಲಿಲ್ಲವಲ್ಲ ಎಂದು ಖಿನ್ನನಾಗಿದ್ದ. ಘಟ್ಟಿವಾಳಯ್ಯನ ಮಹಿಮೆಯನ್ನು ಶರಣರು ಕೊಂಡಾಡಿದ್ದರು.

ಘಟ್ಟಿವಾಳಯ್ಯನವರ ಈ ದೃಷ್ಟಾಂತದಲ್ಲಿ ‘ಶರಣ ಜ್ಞಾನದನಿಧಿ, ಜಂಗಮವೆಂಬುದು ಜ್ಞಾನದ ಸಂಖೇತ’ ಎಂಬುದನ್ನು ಜಂಗಮ ಸಮೂಹದಲ್ಲಿ ಮೂಡಿಸಲು ಯತ್ನಿಸಿರುವರು. ಕರದಿಷ್ಟಲಿಂಗದಲ್ಲಿ ಬೃಹದಾಕಾರದ ಕಲ್ಲುಗುಂಡನ್ನಡಗಿಸಿ ಲಿಂಗಮಹಾತ್ಮೆ ಮೆರೆದ ಮಹಾಮಹಿಮನಾಗಿದ್ದುದು ಮಿಂಚಿನಂತೆ ಹೊಳೆಯುತ್ತದೆ. ಇಂಥ ಘಟ್ಟಿವಾಳಯ್ಯ ಮುಂದೊಂದು ದಿನ ದಿಟ ಜಂಗಮನೊರ್ವ ಈ ಭುವಿಯಲ್ಲಿ ಉದಯಿಸುವನೆಂಬ ಕಾಲಜ್ಞಾನ ವಚನವನ್ನು ಹೇಳಿದ್ದ,

     “ಗಿಡಮಾಗಡಿ ಎಂಬ ಪುರದ ಜಂಗಮದೇವ

         ಮೃಡಕಣಾ ಭಿಕ್ಷವ ಬೇಡ್ಯಾನು!

ಪೊಡವಿಗೆ ಬಾಗಿ ನೀಡಲು ದೃಢದಿಂದ

ನೀಡಿಸಿಕೊಂಡಾನು !

ಮಲಪುರಿಯ ತೀರದಿ ವಿರಕ್ತಜಂಗಮನೊಬ್ಬ

ನಲವಿಂದ ಹುಚ್ಚನೆನಿಸ್ಯಾನು !

ಲೋಲ ಜನಗಳು ಹೆಸರನೇ ಇಟ್ಟಾರು ಆ

ಸ್ಥಳದಲ್ಲಿಯೇ ಹೂಳಿಸಿಕೊಂಡಾನು”     

                                                            (ಹಳ್ಳೂರು ಕಾಲಜ್ಞಾನ)

ತಮ್ಮ ಅಂತಃ ಚಕ್ಷುವಿನಲ್ಲಿ ಭೂತ-ಭವಿಷತ್-ವರ್ತಮಾನ ತ್ರಿಕಾಲದ ಆಗುಹೋಗುಗಳನ್ನು ಶಿವಶರಣರು ಕಾಣುತ್ತಿದ್ದರು. ಕಂಡದನ್ನು ಬೆಡಗಿನಲ್ಲಿ ನುಡಿಯುತ್ತಿದ್ದರು. ಈ ಕಾಲಜ್ಞಾನ ವಚನ ಅಂತಹದು. ಮಲಪುರಿ ಎನ್ನುವದೇ ಮಲಪಹಾರಿಣಿ ನದಿತೀರ. ಇಲ್ಲಿಯ ವಿರಕ್ತಜಂಗಮ ಬೇರಾರು ಅಲ್ಲ, ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು. ೭೦೦ ವರ್ಷಗಳ ಹಿಂದೆಯೇ ನುಡಿದ ಈ ಕಾಲಜ್ಞಾನ ವಚನ ಇಂದು ತಮ್ಮ ಪಾರಾಯಣ ಸಂದರ್ಭದಲ್ಲಿ ಕಂಡು ವಿವೇಚಿಸಲಾಗಿ ಅದು ದಿಟವಾದುದ್ದನ್ನು ಕಂಡು ಶ್ರೀ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳಿಗೆ ಘಟ್ಟಿವಾಳಯ್ಯನ ಕಾಲಜ್ಞಾನ ಆಶ್ಚರ್ಯ ಮೂಡಿಸಿತ್ತು. ತಮ್ಮ ಸುತ್ತಮುತ್ತ ಇದ್ದವರಿಗೆ ಈ ವಚನ ತೋರಿಸಿ ಎಂಥ ವಿರಕ್ತ ಜಂಗಮನೀತನೆಂದು ಕೊಂಡಾಡಿದ್ದರು. ಇದು ಬೇರಾರು ಅಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಎಂದಾಗ ಶ್ರೀಗಳು ಮುದಡಿಕೊಂಡಿದ್ದರು. ಆತ್ಮಸ್ತುತಿಗೆ ತಮ್ಮ ಜೀವಿತಾವದಿಯಲ್ಲಿ ಎಂದೂ ಅನುಗೊಡದ ಶ್ರೀ ಕುಮಾರ ಮಹಾಸ್ವಾಮಿಗಳಿಗೆ ತಮ್ಮ ಬಗ್ಗೆ ಯಾರಾದರೂ ಬರೆದಿದ್ದು ತಿಳಿದರೆ ಅದನ್ನು ಹರಿದು ಹಾಕುತ್ತಿದ್ದರು. ‘ಬರೆಯುವುದಾದರೆ ಬಸವಾದಿ ಪ್ರಮಥರನ್ನು, ಬಿದರಿ ಕುಮಾರ ಶಿವಯೋಗಿಗಳನ್ನು, ಅಥಣಿ ಶಿವಯೋಗಿಗಳನ್ನು ಕುರಿತು ಬರೆಯಿರಿ’ ಎನ್ನುತ್ತಿದ್ದರಂತೆ. ಇಂಥ ಮಹಾಮಹಿಮರಿಂದ ಸ್ಥಾಪನೆಗೊಂಡ ಶಿವಯೋಗ ಮಂದಿರ ೧೦೦ ಸಂವತ್ಸರಗಳನ್ನು ಪೂರೈಸಿದೆ. ಕಾಲದ ಪರೀಕ್ಷೆಯಲ್ಲಿ ಶಿವಯೋಗದ ಅಂತಃ ಸತ್ವವನ್ನು ಗುಪ್ತವಾಗಿರಿಸಿಕೊಂಡ ೧೧೧ರ ಬೆಳಗನ್ನು ಜಗತ್ತಿಗೆ ಬೆಳಗುತ್ತಿದೆ. ನಾಡಿನ ಹಲವೆಡೆ ಹಲವಾರು ಸಂಘ ಸಂಸ್ಥೆಗಳು ಸ್ಥಾಪನೆಗೊಳ್ಳುತ್ತವೆ. ಕೆಲವು ಅಲ್ಪಾವದಿಯಲ್ಲಿಯೆ ಅಳಿಯುತ್ತವೆ ಆದರೆ ಶ್ರೀ ಕುಮಾರ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ಶಿವಯೋಗ ಮಂದಿರ ಸಂಸ್ಥೆ ಶತಮಾನದಾಟಿ ಮತ್ತೊಂದು ಶತಮಾನ ಉರುಳಿಸಲು ಹೆಜ್ಜೆ ಇರಿಸಿದೆ. ಈ ಶಿವಯೋಗ ಪರಂಪರೆಯಲ್ಲಿ ಈ ಹಿಂದೆ ಶಿವಶರಣರ ಕಾಲಕ್ಕೆ ಶ್ರೀಶೈಲ, ಕೊಟ್ಟೂರು, ಲಿಂಗನಾಯಕನಹಳ್ಳಿ, ಬಳ್ಳಾರಿಯಲ್ಲಿ ಇಂಥ ಶಿವಯೋಗ ಶಿಕ್ಷಣ ಕೇಂದ್ರಗಳು ಇದ್ದ ದಾಖಲೆಗಳಿವೆ. ಆದರೆ ಇಷ್ಟುವರ್ಷದ ಪ್ರಮಾಣದಲ್ಲಿ ಶಿವಯೋಗದ ಬೆಳಗನ್ನು ಲೋಕಕ್ಕೆ ತೋರಿದ ತೋರುತ್ತಿರುವ ಶ್ರೇಯಸ್ಸು ಶಿವಯೋಗಮಂದಿರ ಸಂಸ್ಥೆಗೆ ಮಾತ್ರ ಸಲ್ಲುವಂತೆ ನಮ್ಮ ಕಣ್ಣೆದುರಿಗೆ ಚರಿತ್ರೆ ನಿರ್ಮಿಸಿದೆ. ಈ ಸಂಸ್ಥೆಯಿಂದ ಹೊರಹೊಮ್ಮಿದವರಲ್ಲಿ ಕಪನಳ್ಳಿಯ ರುದ್ರಮುನಿ ಶಿವಯೋಗಿಗಳಂಥ ಕಾಯಕ ಯೋಗಿಗಳಾಗಿದ್ದಾರೆ, ಶ್ರೀ ಜಚನಿಯವರಂಥ ವಿದ್ವತ್ ಕಲೆಮೆಳೈಸಿದವರಿದ್ದಾರೆ, ನಿಡಗುಂದಿಕೊಪ್ಪದ ಚನ್ನವೀರಸ್ವಾಮಿಗಳಂಥ ದೇಸಿ ಚಿಕಿತ್ಸಾಯೋಗಿಗಳದ್ದಾರೆ, ಗಡಿನಾಡಿನಲ್ಲಿ ಸಾಹಿತ್ಯ ಸಂಸ್ಕೃತಿಗಾಗಿ ನಾಗನೂರಿನ ಶ್ರೀ ಶಿವಬಸವ ಸ್ವಾಮಿಗಳು ಭಾಲ್ಕಿಯ ಚನ್ನಬಸವ ಪಟ್ಟಾಧ್ಯಕ್ಷರು ಹಾಗೂ ಪ್ರಭುಕುಮಾರ ಪಟ್ಟಾಧ್ಯಕ್ಷರಂಥ ಯೋಗಿಗಳಾಗಿದ್ದಾರೆ. ಇವರೆಲ್ಲರು ಶಿವಯೋಗ ಮಂದಿರ ಸಂಸ್ಥೆಯಲ್ಲಿ ತಮ್ಮ ವೈಶಿಷ್ಟತೆ ಮೆರೆಯುವ ಹಾದಿಹಿಡಿದರು. ಶ್ರೀ ಪಂ ಪಂಚಾಕ್ಷರಗವಾಯಿಗಳು ಪುಟ್ಟರಾಜಗವಾಯಿಗಳಂಥವರು ಅಪರೂಪದ ಸಂಗೀತ ಪ್ರತಿಭೆ ಮೆರೆಯಲು ಶ್ರೀ ಕುಮಾರ ಮಹಾ ಸ್ವಾಮಿಗಳವರ ಕೃಪಾಶಿರ್ವಾದವೇ ಮೂಲವಾಗಿದೆ.

ಈ ಮೇಲಿನ ಪರಮ ಪೂಜ್ಯರೆಲ್ಲಾ ಶ್ರೀಕುಮಾರಸ್ವಾಮಿಗಳವರ ಒಡನಾಟದಲ್ಲಿದ್ದು ತಮ್ಮ ಪ್ರತಿಭೆ ಮೆರೆದಿರುವಂತವರು. ಶ್ರೀ ಕುಮಾರಮಹಾಸ್ವಾಮಿಗಳವರ ಲಿಂಗೈಕ್ಯವಾದನಂತರ ಅವರ ಕಾರ್ಯವನ್ನು ಹಲವರು ಮುನ್ನೆಡೆಸುತ್ತ ಪ್ರಸಿದ್ದರಾಗಿದ್ದಾರೆ.ಅಂತವರಲ್ಲಿ ಹೊಸಪೇಟೆ, ಹಾಲಕೆರೆ ಪೀಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಶ್ರೀಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಎರಡು ದಶಕದಿಂದ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾವಯವ ಕೃಷಿಯಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ತಮ್ಮ ಮಠಗಳಲ್ಲಿ ಹಾಗೂ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯಲ್ಲಿ ಮಾಡಿ; ಮಾಡುತ್ತಲಿದ್ದಾರೆ. ಮುಂಡರಗಿ ಜಗದ್ಗುರುಗಳು, ಮೂರುಸಾವಿರಮಠದ ಲಿಂ.ಮೂಜಗಂ ಮೊದಲು ಮಾಡಿ ಅನೇಕರಿರುವರು. ಶ್ರೀ ಕುಮಾರ ಶಿವಯೋಗಿಗಳ ಮಹಾ ಚೇತನ ಸಮಾಜಕ್ಕೆ ಹೇಗೆ ಅಂತಃಶಕ್ತಿ ತುಂಬುತ್ತಿದೆ ಎಂಬುದನ್ನು ಅವಲೋಕಿಸಿದರೆ ಅವರ ಕಾರಣಿಕತನ ಗೋಚರಿಸುತ್ತದೆ.

       ಶ್ರೀ ಕುಮಾರ ಮಹಾಸ್ವಾಮಿಗಳು ನಮ್ಮ ಸಂಸ್ಕೃತಿಯೊಳಗಣ ಲೋಕಧರ್ಮಿಣಿ ಹಾಗೂ ಶಿವಧರ್ಮಿಣಿ ವಿದ್ಯೆಯ ಅರಿವುಳ್ಳವರು. ಲೋಕಧರ್ಮಿಣಿ ವಿದ್ಯೆ ಇಹಬಾಳಿನ ಸಾಫಲ್ಯಕಷ್ಟೇ, ಶಿವಧರ್ಮಿಣಿ ವಿದ್ಯೆ ಭವಚಕ್ರದಿಂದ ಪಾರುಗಾಣುವತ್ತಲೂ ಹಾದಿ ತೋರುವಂತಹದ್ದು. ಶಿವಧರ್ಮಿಣಿ ವಿದ್ಯೆ ಕಾಲ ಪ್ರವಾಹದಲ್ಲಿ ಕೊಚ್ಚಿಹೋಗುವಂತಹದ್ದಲ್ಲ. ಅಂತಃ ಶಿವಧರ್ಮಿಣಿ ವಿದ್ಯೆ ನೀಡುವುದು ಶಿವಯೋಗ ಮಂದಿರದ ಗುರಿಯಾಗಿದೆ. ಮಾನವ ಹುಟ್ಟಿನ ನಿಗೂಢ ಶಿವಧರ್ಮಿಣಿಯಲ್ಲಿ ಮಾತ್ರ  ಗೋಚರಿಸುವಂತಹದ್ದು. ಶಿವಧರ್ಮಿಣಿಯ ಸರಳೀಕೃತ ವಿಚಾರದಲ್ಲಿ ಆತ್ಮದ ನಂಬುಗೆಯಲ್ಲಿ ಬ್ರಹ್ಮಾಂಡದಾಚೆಗಿನ ರುದ್ರಾಂಡದಲ್ಲಿಯ ಅತೀತ ನಿಗೂಢಗಳತ್ತ ಸಾಗುವಂತಹದ್ದು .ಅಗೆದಷ್ಟು ನವನವೋನ್ಮೇಶಾಲಿನಿ ಯಾಗುತ್ತದೆ. ನೂರ ಹನ್ನೊಂದು ವರ್ಷಗಳ ದಾಟಿದ ಶ್ರೀಶಿವಯೋಗಮಂದಿರ ಸಂಸ್ಥೆಯಲ್ಲಿ ಈ ಶಿವಧರ್ಮಿಣಿ ಶಿಕ್ಷಣ, ವಿಭೂತಿ ನಿರ್ಮಾಣ,  ಗೋ ಪಾಲನೆ, ದಾಸೋಹ, ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಮುಂತಾದ ಧರ್ಮೋತ್ತೇಜಕ ಕಾರ್ಯಗಳು ಲೀಲಾತ್ಮಕವಾಗಿ ನಿರಂತರವಾಗಿ ನಡೆಯುತ್ತಲಿವೆ. ಅಂತಃಚಕ್ಷುವುಳ್ಳವರಿಗೆ ಶ್ರೀ ಕುಮಾರ ಶಿವಯೋಗಿಗಳ ಚಿನ್ಮಯ ನಿರಂಜನ ಜ್ಯೋತಿ ಅವರ ಗದ್ದುಗೆಯಲ್ಲಿ ದರ್ಶನಗೊಂಡೀತು. ಆ ಕಾರಣಿಕ ಶಿವಯೋಗಿಯ ಅನುಗ್ರಹ ಸರ್ವಜೀವರ ಆತ್ಮ ಆ ಶಿವಯೋಗಿ, ಶಿವಶರಣರ ಹಾದಿಯಲ್ಲಿ ಮುನ್ನಡೆಯಲಿ ಎಂದು ಆಶಿಸುವೆ.

                      ಲೇಖಕರು :ಪೂಜ್ಯಶ್ರೀ ಮುಪ್ಪಿನಬಸವಲಿಂಗ ದೇವರು, ಉತ್ತರಾಧಿಕಾರಿಗಳು,

ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ, ಹಾಲಕೆರೆ