ಲೇಖಕರು : ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮೋಟಗಿಮಠ, ಅಥಣಿ

ಶಿವಯೋಗಿಗಳ ಶಿವಾವತಾರ ಅದು ಮನುಕುಲ ಸೂರ್ಯನ ಅವತಾರ. ಬದುಕು ವಿರಕ್ತಿಯ ಸಂವಿಧಾನ; ಬಾಳು ಸಮತೆಯ ಸುವಿಧಾನ! ನೆನಹು ಶರಣ ಜೀವನ, ನಡೆ ಬಸವಭಾವ, ಹೊರಗೆ ಬಯಲಬಿಂಬ. ಒಳಗೆ ಲಿಂಗಾಂಗಯೋಗ. ಮಾತು ವಚನದ ಒಲವಿನೋಂಕಾರ! ಈ ಅವತಾರ ಅಲ್ಲಮನ ಪೂರ್ಣಾವತಾರ!! ಶಿವಯೋಗಿ ಎಂದರೆ ಶಿವಯೋಗ. ಶಿವಯೋಗ ಎಂದರೆ; ಅಥಣಿಯ ಮುರುಘೇಂದ್ರ ಶಿವಯೋಗಿ!!

                              ಧರ್ಮಗುರು ಬಸವಣ್ಣನವರು ಶರಣರನ್ನು ಅಪ್ಪ ಬೊಪ್ಪ-ಅಯ್ಯ ಎಂದು ಅಪ್ಪಿ ಒಪ್ಪಿಕೊಂಡರು. ಅಂತಹ ಶರಣರ ಸೇವೆಯನ್ನು ಪೂರೈಸುವುದೇ ನನ್ನ ಕಾಯಕವೆಂದು ಭಾವಿಸಿಕೊಂಡಿದ್ದರು ಶಿವಯೋಗಿಗಳವರು. ಹೀಗಾಗಿ ಅವರು ಪ್ರೀತಿ ಅಂತಃಕರಣದಿಂದ ಈ ಹಾಡು ಹಾಡುತ್ತ ತಮ್ಮ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದರು.

ಶಿವಯೋಗ ಶಿವನಿಧಿ

               ಭಾರತದ ಋಷಿ-ಮುನಿಗಳ ಅನಂತಯೋಗ, ಅಲ್ಲಮನ ಅನಿಮಿಷಯೋಗ, ಅರವಿಂದರ ಪೂರ್ಣಯೋಗ, ರಮಣರ ಭಾವಯೋಗ, ಚಿನ್ಮಯಾನಂದರ ಧ್ಯಾನಯೋಗ, ನಾಥಪಂಥೀಯರ ಸಿದ್ಧಿಯೋಗ, ಸಿದ್ಧರ ಸಂತರ ಶಾಂಭವೀಯೋಗ, ತೋಂಟದ ಸಿದ್ಧಲಿಂಗರ ಮಹಾಲಿಂಗಯೋಗ, ಚಿತ್ತರಗಿ, ಮಲೆಯ ಮಹಾದೇಶ್ವರ, ಬಿದರಿ, ಬೀಳೂರು, ಹಾನಗಲ್ಲ ಯತಿವರ್ಯರ ಸಮಾಜಯೋಗ-ಹೀಗೆ ಎಲ್ಲ ಯೋಗಗಳ ಯೌಗಿಕ ಸತ್‍ಕ್ರಿಯೆಗಳ ಸಂಗಮವಾಗಿದ್ದರು ‘ಶಿವಯೋಗ’ ಶಿವನಿಧಿ ಶ್ರೀ ಮುರುಘೇಂದ್ರ ಶಿವಯೋಗಿಗಳು.

ಗುರುಲಿಂಗದೇವ

               ಅಥಣಿ ತಾಲೂಕು ನದಿ ಇಂಗಳಗಾವಿ ಭಾಗೋಜಿಮಠದ ಆದರ್ಶ ಶರಣ ದಂಪತಿಗಳಾದ ಶ್ರೀ ರಾಚಯ್ಯನವರು ಮಾತೋಶ್ರೀ ನೀಲಮ್ಮತಾಯಿಯವರ ಪುಣ್ಯಗರ್ಭದಲ್ಲಿ(ಶಾ.ಶ. 1758 ದುರ್ಮುಖಿ ಸಂವತ್ಸರ ವೈಶಾಖಮಾಸ) ಕ್ರಿ.ಶ. 1836ರಂದು ಅಪ್ಪಗಳು ಜನ್ಮ ತಾಳಿದರು. ಶಿವಯೋಗಿಗಳ ಜನ್ಮದಾತೆ ನೀಲಮ್ಮನವರು ಮೈಗೂರು(ಜಮಖಂಡಿ ತಾಲೂಕು) ಹಿರೇಮಠದ ಮಗಳು (ಮೈಗೂರು ಹಿರೇಮಠ ನಾಡಿಗೆ ಅನೇಕ ಜನ ಸ್ವಾಮಿಗಳನ್ನು, ತಪಸ್ವಿಗಳನ್ನು ನೀಡಿದ ಒಂದು ಶ್ರೇಷ್ಠ ಮನೆತನವಾಗಿದೆ. ಈ ಮನೆತನದಲ್ಲಿ ಜನಿಸಿದ ಐದು ಜನರು ಮೋಟಗಿಮಠದ ಪೀಠಾಧಿಪತಿಗಳಾಗಿರುವುದು ವಿಶೇಷ). ರಾಚಯ್ಯನವರು ರಾಮದುರ್ಗ ತಾಲೂಕು ಭಾಗೋಜಿ ಊರಿನಿಂದ ಪಾದಯಾತ್ರೆಯ ಮೂಲಕ ಇಂಗಳಗಾವಿಗೆ ಆಗಮಿಸಿ, ಗ್ರಾಮಸ್ಥರಿಗೆ ಗುರುಗಳಾಗಿ ಇಂಗಳಗಾವಿಯಲ್ಲಿ ನೆಲೆ ನಿಂತರು. ಇಂತಹ ಆದರ್ಶ ದಂಪತಿಗಳ ಸತ್ಪುತ್ರರೇ ಈ ಯೋಗಿ. ಹುಟ್ಟಿದ ಮಗುವಿಗೆ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಇಂಗಳಗಾವಿ ಭಾಗೋಜಿಮಠದ ಪೂರ್ವಾಶ್ರಮ ಬಂಧುಗಳಾದ ಅಥಣಿ ಮೋಟಗಿಮಠದ ಯಜಮಾನರಾದ ಮುರುಘೇಂದ್ರ ಅಪ್ಪಗಳ ಹತ್ತಿರ ‘ಗುರುಲಿಂಗ ದೇವರ’ನ್ನು ಕರೆದುಕೊಂಡು ಬಂದರು. ಗುರುಗಳು ಗುರುಲಿಂಗಯ್ಯನನ್ನು ಹರಸಿ ಹಾರೈಸಿದರು. ಅವರ ಪ್ರೇರಣೆಯಂತೆ ಗಚ್ಚಿನಮಠದಲ್ಲಿ ಈರ್ವರು ಪೂಜ್ಯರು ಅದಾಗಲೆ ಅನೇಕ ಸಾಧಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಅಧ್ಯಾತ್ಮದ ಬಳ್ಳಿಯೊಳಗೆ ಸೇರಿಕೊಂಡ ಗುರುಲಿಂಗರು ಕೆಲವೇ ದಿನಗಳಲ್ಲಿ ಅಪರೂಪದ ಸಾಧಕರಾದರು.

               ತೆಲಸಂಗ ಪಟ್ಟದ್ದೇವರು, ಮಮದಾಪುರ ಶ್ರೀಗಳಿಂದ ಅಧ್ಯಯನ ಪೂರೈಸಿ ಗುರುಲಿಂಗಾರ್ಯರಾದರು. ಅಥಣಿ ಗಚ್ಚಿನಮಠದ ಶ್ರೀ ಮರುಳಶಂಕರ ಸ್ವಾಮಿಗಳು, ಶ್ರೀ ಗುರುಶಾಂತ ಮಹಾಸ್ವಾಮಿಗಳವರಿಂದ ಅನುಗ್ರಹ ಆಶೀರ್ವಾದ ಪಡೆದರು. ಮುಂದೆ ಶ್ರೀ ನಿರಂಜನಪ್ರಭು ಮುರುಘೇಂದ್ರ ಶಿವಯೋಗಿಗಳು ಎನ್ನುವ ನೂತನ ಅಭಿದಾನ ದಯಪಾಲಿಸಿದರು.

               1852ರಿಂದ ಶಿವಯೋಗದ ಅನುಸಂಧಾನ ಆರಂಭವಾಗಿ ಸತತ 20 ವರ್ಷಗಳ ಕಾಲ ಇಷ್ಟಲಿಂಗಯೋಗದ ಶಿವಯೋಗ ಸಾಧನೆ ಕೈಗೊಂಡರು. ಜಮಖಂಡಿ ತಾಲೂಕಿನ ಗುಹೇಶ್ವರ ಗಡ್ಡಿಯಲ್ಲಿ, ಯೋಗಮಂಟಪ, ಹಲವು ಕಡೆ ಏಕಾಂತ ಧ್ಯಾನ ಕೈಕೊಂಡು ಅಪ್ಪಗಳು ಸಿದ್ಧಿಯ ಶೃಂಗವನ್ನೇರಿದರು.

               ಲೋಕಸಂಚಾರ ಕೈಗೊಂಡು ಮರಳಿ ಮಠಕ್ಕೆ ಬಂದರು. ಹಿರಿಯ ಗುರುಗಳು ಅಧಿಕಾರ ಸ್ವೀಕರಿಸಿಕೊಳ್ಳಲು ಹೇಳಿದಾಗ, ನನಗೆ ಯಾವ ಅಧಿಕಾರಿಗಳೂ ಬೇಡ. ನಾನು ಈ ಮಠದ ಸೇವಕ ಎಂದರು. ಮಠದೊಳಗಿದ್ದೂ ಮಠಾಧಿಪತಿಯಾಗಲಿಲ್ಲ. ಒಮ್ಮೆಯೂ ಪೀಠ-ಪಲ್ಲಕ್ಕಿ ಹತ್ತಲಿಲ್ಲ. ಬಂಗಾರ ಧರಿಸಲಿಲ್ಲ. ಬೇಕೆಂದು ಏನನ್ನೂ- ಯಾರನ್ನೂ ಕೈ ಒಡ್ಡಲಿಲ್ಲ. ಇದ್ದೂ ಇಲ್ಲದಂತೆ ಮೌನಿಯಾಗಿದ್ದರು ಶಿವಯೋಗಿಗಳು.

               ಶ್ರೀಮಠದ ಹಿರಿಯ ಗುರುಗಳಾದ ಗುರುಶಾಂತ ಮಹಾಸ್ವಾಮಿಗಳು ಇರುವಾಗಲೇ ಶಿವಯೋಗಿಗಳು ತಮ್ಮ ಉತ್ತರಾಧಿಕಾರಿಯನ್ನು ಬಹುಬೇಗನೇ ಸ್ವೀಕರಿಸಿದರು. ಅವರಿಗೆ ‘ಮಠಾಧಿಪತಿ ಆಗುವ ಅಂತಹ ಯಾವ ಕರ್ಮಠ ಮಠೀಯ ವ್ಯವಸ್ಥೆಯಲ್ಲಿ ಮುಂದುವರಿಯುವ ಆಸೆ ಇರಲೇ ಇಲ್ಲ. ಹೀಗಾಗಿ ಅಥಣಿಯ ಬಣಜಿಗ ಮನೆತನದ ‘ಸಿದ್ಧಲಿಂಗ ದೇವರ’ನ್ನು ಉತ್ತರಾಧಿಕಾರಿಯನ್ನು ಸ್ವೀಕರಿಸಿ ಅವರಿಗೆ ಎಲ್ಲ ಜವಾಬ್ದಾರಿ ವಹಿಸಿ ನಿರ್ಲಿಪ್ತರಾದರು.

ಬಂಗಾರದ ತಂಬಿಗೆ

               ಒಮ್ಮೆ ಶ್ರೀಮಂತ ವಾರದ ಮಲ್ಲಪ್ಪನವರು ಸೊಲ್ಲಾಪುರದಲ್ಲಿ ಬಂಗಾರದ ಬಿಂದಿಗೆ ಅರ್ಪಿಸಿದರು. ಆಗ ಶಿವಯೋಗಿಗಳು ಬೇಡ ಎಂದು ಅಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಅವರಿಗೆ ಗೊತ್ತಿಲ್ಲದಂತೆ ಸೇವಕರು ಅದನ್ನು ತೆಗೆದುಕೊಂಡು ಬಂದಿದ್ದರು. ಈ ವಿಷಯ ತಿಳಿದು ನಾಲ್ಕು ದಿನಗಳ ಕಾಲ ಪ್ರಸಾದ ಸ್ನಾನ ಎಲ್ಲವನ್ನೂ ಬಿಟ್ಟು ಮೌನಿಯಾಗಿದ್ದರು. ‘ಯಾಕ್ರೀ ಬುದ್ಧಿ ಹೀಗ್ಯಾಕ ಮಾಡತೀರಿ’ ಎಂದು ಸೇವಕರು ಕೇಳಿದಾಗ ‘ಮಲವು ಸಂಗಡವಿರಲು ಸ್ನಾನ ಯಾಕಯ್ಯಾ?’ ಎಂದರು. ಬಂಗಾರದ ತಂಬಿಗೆಯನ್ನು ಮರಳಿ ವಾರದ ಮಲ್ಲಪ್ಪನವರಿಗೆ ಕೊಟ್ಟು ಬಂದು ಸೇವಕ ತಪ್ಪಾಯಿತು, ಎಂದಾಗ ಮಾತ್ರ ಶಿವಯೋಗಿಗಳು ಸ್ನಾನ ಪೂಜೆ ಪೂರೈಸಿದರು.

               ಭಕ್ತರೋರ್ವರು ಮಠದ ಜಗುಲಿಗೆ(ಹೊರಸಕ್ಕೆ) ಬೆಳ್ಳಿನಾಣ್ಯ ಬಡಿದಾಗ ಯಾರೋ ಖುಷಿಯಿಂದ ಓಡಿ ಬಂದು ಹೇಳಿದರು. ಶಿವಯೋಗಿಗಳು ಸುಮ್ಮನಿದ್ದರು. ಮರಳಿ ಮರುದಿನ ಗಾಬರಿಯಿಂದ ಭಕ್ತನೋರ್ವ ‘ಅಪ್ಪಾವರೇ… ಬೆಳ್ಳಿ ನಾಣ್ಯ ಯಾರೋ ಕಿತಗೊಂಡ ಹೋಗ್ಯಾರೀ’ ಅಂದಾಗ ‘ಇದ್ದವನು ಬಡದ, ಇಲ್ಲದವನು ವೈದಾನ, ನೀ ಯಾಕ ಇಷ್ಟ ಚಿಂತಿ ಮಾಡಾಕಹತ್ತೀ’ ಅಂದರು.

ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ನಾನೊಬ್ಬ ದಾಸಿಪುತ್ರ. ನನಗೆ ಲಿಂಗದೀಕ್ಷೆ ನೀಡಿ ಅನುಗ್ರಹಿಸಬೇಕೆಂದು ಒಬ್ಬ ಸಮಾಜಸೇವಾಸಕ್ತ ವ್ಯಕ್ತಿ ಬಂದು ಕೇಳಿದಾಗ, ತುಂಬು ಅಂತಃಕರಣದಿಂದ ಯಾರೂ ಆ ನಿಟ್ಟಿನಲ್ಲಿ ಆಲೋಚಿಸದ ಸಂದರ್ಭದಲ್ಲಿ(1918ರಲ್ಲಿ) ಲಿಂಗದೀಕ್ಷೆ ನೀಡಿ ಆಶೀರ್ವದಿಸಿದರು. ‘ತಮ್ಮಾ ನೀನು ‘ಕರ್ನಾಟಕ ಗಾಂಧಿ’ ಆಗುತಿ’ ಎಂದು ಮನಸಾರೆ ಹಾರೈಸಿದರು. ಅವರು ಅದರಂತೆ ಕರ್ನಾಟಕ ಗಾಂಧಿಯಾಗಿ ಶರಣ ಶ್ರೇಷ್ಠರಾಗಿ ಬದುಕಿದರು, ಅವರೇ ‘ಹರ್ಡೇಕರ ಮಂಜಪ್ಪನವರು’. ಶಿವಯೋಗಿಗಳ ಮೇಲಿನ ಭಕ್ತಿ ಗೌರವಕ್ಕಾಗಿ ‘ಪ್ರಮಥಾಚಾರ ದೀಪಿಕೆ’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದರು. ಮುಂದೆ ಇದೇ ಮಂಜಪ್ಪನವರು 1911ರಲ್ಲಿ ಬಸವ ಜಯಂತಿ ಆಚರಣೆಯನ್ನು ಪ್ರಥಮವಾಗಿ ಆಚರಿಸಿದ ಸತ್ಕೀರ್ತಿಗೆ ಭಾಜನರಾದರು.

ಲಿಂಗರಾಜರಿಗೆ ಮಾರ್ಗದರ್ಶನ

               ದಾನವೀರ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಶಿವಯೋಗಿಗಳ ಪದತಲಕ್ಕೆ ಅರ್ಪಿಸಲು ಬಂದಾಗ, ಶಿವಯೋಗಿಗಳು ‘ಇದನ್ನು ಸಮಾಜಕ್ಕೆ ಬಳಸಿರಿ, ನಿಮ್ಮ ಸಂಪತ್ತು ತೆಗೆದುಕೊಂಡು ನಾನೇನು ಮಾಡಲಿ’ ಎಂದು ಹೇಳಿ, ಲಿಂಗರಾಜರಿಗೆ ಮಾರ್ಗದರ್ಶನ ಮಾಡಿದರು. ಶಿವಯೋಗಿಗಳ ಆಶಯದಂತೆ  1906ರಲ್ಲಿ ಲಿಂಗರಾಜರು ತಮ್ಮ ಸಮಸ್ತ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿ, ಕರ್ನಾಟಕದ ತ್ಯಾಗವೀರ ಎಂಬ ಖ್ಯಾತಿಗೆ ಪಾತ್ರರಾದರು. ಲಿಂಗರಾಜರ ಉದಾರ ದಾನದ ಫಲವಾಗಿ ಶಿಕ್ಷಣ ವಂಚಿತರು ವಿದ್ಯಾವಂತರಾಗಿ ಬದುಕು ಕಟ್ಟಿಕೊಂಡರು. 1916ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭಿಸಿತು. ಸಾವಿರಾರು ಕಲಿಕಾಸಕ್ತರಿಗೆ ಅದರಿಂದ ಅನುಕೂಲವಾಯಿತು.

ಲೋಕಮಾನ್ಯರೊಂದಿಗೆ

               5 ಜನವರಿ 1917ರಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ಅಥಣಿಗೆ ಬಂದು ಶಿವಯೋಗಿಗಳ ದರ್ಶನ ಪಡೆದರು, ‘ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಆಶೀರ್ವದಿಸಿರಿ’ ಎಂದು ಕೇಳಿಕೊಂಡರು. ಆಗ ಶಿವಯೋಗಿಗಳು ‘ಖಂಡಿತ ಸ್ವಾತಂತ್ರ್ಯ ಲಭಿಸುತ್ತದೆ, ಆದರೆ ಅದರ ಫಲವನ್ನು ನಾವು ನೀವು ಪಡೆಯುವುದಿಲ್ಲ, ಮುಂದಿನವರು ಶ್ರೀಫಲ ಪಡೆಯುತ್ತಾರೆ’ ಎಂದರು. ಶಿವಯೋಗಿಗಳ ತ್ಯಾಗ ಹಾಗು ಘನವ್ಯಕ್ತಿತ್ವದ ಕುರಿತು ಟಿಳಕರು ತಮ್ಮ ಚರಿತ್ರೆಯಲ್ಲಿ ಬರೆಯುತ್ತಾರೆ.

ಬಸವ ಬೆಳಗು

               ಬಿದರಿ ಕುಮಾರ ಶ್ರೀಗಳು, ಬಿಳ್ಳೂರು ಗುರುಬಸವರು, ಬಂಥನಾಳ ಸಂಗನಬಸವರು, ಬಬಲೇಶ್ವರ ಶಾಂತವೀರರು, ಗರಗದ ಮಡಿವಾಳೇಶ್ವರರು, ಧಾರವಾಡ ಮುರುಘಾಮಠದ ಮೃತ್ಯುಂಜಯಪ್ಪಗಳು, ಮೋಟಗಿಮಠದ ಚನ್ನಬಸವರು, ಹಾವೇರಿ ಶಿವಬಸವ ಸ್ವಾಮಿಗಳು, ಚಿತ್ರದುರ್ಗದ ಜಯದೇವ ಜಗದ್ಗುರುಗಳು ಹೀಗೆ ಅನೇಕ ಯತಿಪುಂಗವರಿಗೆ ಶ್ರೀಹರಕೆ ನೀಡಿದರು. ಶಿವಯೋಗಿಗಳು ಎನ್ನುವ ಪರುಷ ಸೋಂಕಲು ಅಧ್ಯಾತ್ಮದ ಬಂಗಾರದ ಭುವಿಯು ತುಂಬಿತು.

ಪೊಡಮಡುವೆ

ಅಣ್ಣನ ಭಕ್ತಿ, ಅಕ್ಕನ ವಿರಕ್ತಿ, ಪ್ರಭುವಿನ ಪರಮಜ್ಞಾನ

ಸಂಗಮಿಸಿದುವಿಲ್ಲಿ ನಡೆಯಲ್ಲಿ ನುಡಿಯಲ್ಲಿ

ಇಡಿಯ ಬೆಳಕಿನ ಬಾಳಿನಲ್ಲಿ ದೃಷ್ಟಿ ಕೃಪಾದೃಷ್ಟಿ;

ವಾಣಿ ಶುಭಸೃಷ್ಟಿ; ಅಮೃತಸ್ಮಿತ, ಕಂಡವ ಪುನೀತ;

ಸರ್ವಾಂಗಲಿಂಗ ಮಂಗಲ ತರಂಗ; ಮಹಾಜೀವನ,

ಭುವನ ಪಾವನ, ನಿತ್ಯನೂತನ ಶಿವಚೇತನ;

ಅರ್ಚನವಾವುದೊ ಅರ್ಪಿತವಾವುದೊ ಎಲ್ಲ ಅನುಭಾವ

ಜಾಗೃತವಾವುದೊ ಸ್ವಪ್ನವಾವುದೊ ಎಲ್ಲ ತುರೀಯ

ಇಹವಾವುದೊ ಪರವಾವುದೊ ಎಲ್ಲ ಜೀವನ್ಮುಕ್ತಿ

ಜನನವಾವುದೊ ಮರಣವಾವುದೊ ಎಲ್ಲ ಶಿವಶಕ್ತಿ!

ತೆರೆದೆದೆಗಳ ಸಿಂಪುಗಳಿಗೆ ಶಿವ-ಸ್ವಾತಿ

ಪರಂಜ್ಯೋತಿ ದಿವ್ಯ ಪ್ರೀತಿ ಆತ್ಮ ದಿಧೀತಿ

ಪೊಡಮಡುವೆನು ನಿನ್ನ ಅಡಿಗೆ ಅದರ ಹುಡಿಗೆ

ಧರ್ಮ ಮೂರುತಿ ದೇಹ ಧರಿಸಿ ಮೆರೆದ ಪರಮ ಶರಣ ಸಂಸ್ಕೃತಿ

                                             -ಡಾ. ಸಿದ್ಧಯ್ಯ ಪುರಾಣಿಕ

ಅಪ್ಪನ ವಚನಗಳು

               ಶಿವಯೋಗಿಗಳಿಗೆ ಬಸವಣ್ಣನವರು ಎಲ್ಲ ವಿಧದಲ್ಲಿಯೂ ಮೇಲ್ಪಂಕ್ತಿ ಆಗಿದ್ದರು. ಶರಣರ ವಿಚಾರಗಳನ್ನು ಹೇಳುವುದು ಸರಳ, ಆದರೆ ಆಚರಿಸುವುದು ಕಷ್ಟ. ಆದರೆ ಶಿವಯೋಗಿಗಳಿಗೆ ಬಸವತತ್ವ ಆಚರಣೆ ಕಷ್ಟವಾಗಿರಲಿಲ್ಲ. ಇಷ್ಟವಾಗಿತ್ತು. ಕಾಶಿಯಿಂದ ಬಂದ ಸಂಸ್ಕೃತ ಪಂಡಿತ ಬೃಹತ್ತಾದ ಸಂಸ್ಕೃತ ಗ್ರಂಥ ತಂದುಕೊಟ್ಟ. ತಾವು ಇದನ್ನು ಓದಬೇಕೆಂದು ಒತ್ತಾಯಿಸುತ್ತಾನೆ. ನಾನು ಈಗಾಗಲೇ ಒಂದು ಗ್ರಂಥ ಓದುತ್ತಿದ್ದೇನೆ. ನಿಮ್ಮ ಹತ್ತಿರವೇ ಇರಲಿ ಎಂದು ನಯವಾಗಿ ಗುರುಗಳು ನಿರಾಕರಿಸಿದರು. ಮತ್ತೆ ಆ ಪಂಡಿತ ಬುದ್ಧೀ ಅದು ಮುಗಿದ ಮೇಲಾದರೂ ಇದನ್ನು ಓದಲೇಬೇಕೆಂದು ಒತ್ತಾಯಿಸಿದಾಗ, ‘ಈ ಜನ್ಮ ಮುಗಿಯುವವರೆಗೆ ಅದು ಸಾಧ್ಯವಿಲ್ಲಪ್ಪಾ ಅದು ಮುಗಿಯದ ಮಾಣಿಕ್ಯದೀಪ್ತಿ’ ಎನ್ನುತ್ತಾರೆ. ಯಾವುದದು ಬುದ್ಧಿ ಎಂದ. ಅದು ಶರಣರ ‘ವಚನ ಸಾಹಿತ್ಯ ದರ್ಶನ’. ನಮಗೆಲ್ಲ ಅದೇ ದಾರಿದೀಪ ಶಾಸ್ತ್ರಿಗಳೆ ಎಂದು ವಚನಗಳ ಮನ್ನಣೆಯನ್ನು ಎತ್ತಿ ತೋರಿಸುತ್ತಾರೆ.

               ಮೈಸೂರಿನ ಕಡ್ಲಿಪುರಿ ನಂಜುಂಡಪ್ಪನವರು ಸೊಗಸಾದ ಮಂಚ ತಂದು, ಗಾದಿ-ಕುತನಿ ಅರಿವೆ ಹಾಸಿ, ಅಪ್ಪಾ„ ತಾವು ಇದರ ಮೇಲೆ ನಿತ್ಯವೂ ಪವಡಿಸಬೇಕು ಎಂದು ಪ್ರಾರ್ಥಿಸುತ್ತಾರೆ. ‘ಹೌದಪ್ಪಾ„„ ಇದು ನಮ್ಮ ಅಪ್ಪನ ವಚನಗಳು ಇರಬೇಕಾದ ಸ್ಥಳ’ ಎಂದು ಬಸವಣ್ಣನವರ ವಚನಗ್ರಂಥಗಳನ್ನು ಇಟ್ಟು ಸಾಷ್ಟಾಂಗವೆರಗುತ್ತಾರೆ. ಎಂತಹ ಸೇವಾಭಾವ ಶಿವಯೋಗಿಗಳದು.

               ‘ಈಶನ ಮೀಸಲಪ್ಪ ಭಕ್ತ’ ಎಂದು ಹರಿಹರ ಬಸವಣ್ಣನವರನ್ನು ಬಣ್ಣಿಸುತ್ತಾನೆ. ಅದರಂತೆ ಬಸವಣ್ಣನವರ ಮೀಸಲು ಭಕ್ತಿ ಶಿವಯೋಗಿಗಳದು. ಬಸವಣ್ಣನವರನ್ನು ಅಪ್ಪಾ ಎಂದೇ ಕರೆಯುತ್ತಿದ್ದರು. ಅಪ್ಪನ ವಚನಗಳು ಎಂದೇ ಸಂಬೋಧಿಸುತ್ತಿದ್ದರು. ಅವರಿಗೆ ವಚನಗಳೇ ಮಂತ್ರಗಳು, ಬಸವಣ್ಣನೇ ಬಾಳಜ್ಯೋತಿ, ಸಮತೆಯೇ ಕಂತೆ, ದಾಸೋಹವೇ ದೀಪ್ತಿ, ಸಹಜ-ಸರಳ ಜೀವನವೇ ಶಿವಯೋಗದ ಶಿವಸಿದ್ಧಿ ಯಾಗಿತ್ತು.

ಬದುಕು ಪವಾಡಗಳ ಪರುಷಮಣಿ!

               ಜಮಖಂಡಿ ತಾಲೂಕಿನ ‘ಗುಹೇಶ್ವರಗವಿ’(ಗಡ್ಡಿ)ಯೊಳಗೆ ಅನುಷ್ಠಾನನಿರತರಾದ ಶಿವಯೋಗಿಗಳು ಹತ್ತು ವರುಷಗಳ ಕಾಲ ಏಕಾಂತದೊಳಗೆ ತಪಸ್ಸನ್ನಾಚರಿಸಿದರು. ನದಿ, ಪ್ರಕೃತಿ, ಬಿಲ್ವ-ಬನ್ನಿ, ಹೂವು ಮತ್ತು ಸಂಕುಲಜೀವಿಗಳೇ ಸಂಗಾತಿಗಳಾದವು. ನಾಗರಾಜ(ಸರ್ಪ)ವು ನಿತ್ಯವು ಗುರುಗಳ ಮಂಗಲದ ಸಂದರ್ಭ ಬಂದು ತಲೆದೂಗುತ್ತ ಇರುತ್ತಿದ್ದ. ಮುಂಗೂಸಿ ಕೂಡಾ ಮುಂದೆ ಕುಳಿತಿರುತ್ತಿತ್ತು.  ಪರಸ್ಪರ ದ್ವೇಷ ಸಾಧಿಸುವ ಪ್ರಾಣಿಗಳು ಒಂದಾಗಿರುತ್ತಿದ್ದವು.

               ಅಂಕಲಗಿಯ ಅಡವಿಸಿದ್ಧೇಶ್ವರರ ದರ್ಶನಕ್ಕೆ ಹೊರಟಾಗ ಕಾಡಿನೊಳಗೆ ಹುಲಿ ಬಂದು ಶರಣಾಯಿತು. ಅದಕ್ಕೆ ಉತ್ತತ್ತಿ ನೀಡಿದರು. ಕ್ರೂರ ಪ್ರಾಣಿ ಯೌಗಿಕ ಶಕ್ತಿಗೆ ತಲೆಬಾಗಿತು.

               ಅಥಣಿಯಲ್ಲಿರುವಾಗ ಲಿಂಗಾರ್ಚನೆ ಮುಗಿಸಿ ಬಕುಲವೃಕ್ಷದ ಮುಂದೆ ಬಂದು ಕುಳಿತಾಗ ನಿತ್ಯವೂ ಎರಡು ‘ಶ್ವೇತವರ್ಣದ ಪಕ್ಷಿಗಳು’ ಬಂದು ದರ್ಶನ ನೀಡುತ್ತಿದ್ದವು. ‘ಬುದ್ಧೀ, ಏನಿದರ ಅರ್ಥ’ ಎಂದು ಭಕ್ತರು ಕೇಳಿದಾಗ, ‘ನನ್ನ ಈರ್ವರು ಗುರುವರ್ಯರು ದರ್ಶನ ನೀಡುತ್ತಾರೆ’ ಎಂದರು. ಪ್ರತಿನಿತ್ಯ ಆ ಪಕ್ಷಿಗಳಿಗೆ ಮೌನಿಗಳಾಗಿ ಶರಣು ಸಲ್ಲಿಸುತ್ತಿದ್ದರು.

               ಸಕಲಜೀವ ಸಂಕುಲಗಳಲ್ಲಿ ಶಿವನಿದ್ದಾನೆ ಎಂದು ಪರಿಭಾವಿಸುತ್ತಿದ್ದ ಶಿವಯೋಗಿಗಳು, ಪತ್ರಿಯ ಗಿಡದಿಂದ ಒಂದು ದಿನವೂ ದಳಗಳನ್ನು ಹರಿಯದೆ ಕೆಳಗೆ ನೆಲವನ್ನು ಸಾರಣಿ ಮಾಡಿ, ಕೆಳಗೆ ಬಿದ್ದ ಪತ್ರಿಗಳನ್ನು ಲಿಂಗಕ್ಕೆ ಧರಿಸುತ್ತಿದ್ದರು.

               ಗುರುಗಳ ಬದುಕು ಮೌಲ್ಯಗಳ ಮುತ್ತಿನ ಹಾರವಾಗಿತ್ತು. ಹೆಜ್ಜೆ-ಹೆಜ್ಜೆಗೂ ನೂರೊಂದು ಪವಾಡಗಳು ಜರುಗುತ್ತವೆ. ಅವುಗಳೆಲ್ಲ ಸಹಜವಾಗಿ ಜರುಗಿದ ಲೀಲಾಯೋಗ!

ಶಿವಯೋಗಿ

               ಹುಬ್ಬಳ್ಳಿಯ ಕೈಲಾಸ ಮಂಟಪದಲ್ಲಿ ಕುಳಿತು ಜಗದ್ಗುರು ಸಿದ್ಧಾರೂಢರು ಭಕ್ತಿ, ಹಠ, ರಾಜ, ಮಂತ್ರಯೋಗಗಳ ಕುರಿತು ಪ್ರವಚನ ನೀಡುತ್ತಾರೆ. ಓರ್ವ ಭಕ್ತ ಕೇಳುತ್ತಾನೆ. ನಾಲ್ಕು ಯೋಗಗಳ ಕುರಿತು ಹೇಳಿದಿರಿ. ‘ಶಿವಯೋಗ’ ಕುರಿತು ತಾವು ಹೇಳಲೇ ಇಲ್ಲ ಎಂದರು. ಆಗ ಅವರು ‘ಅದನ್ನು ಹೇಳುವುದಲ್ಲ, ನೋಡಿ ತಿಳಿಯಬೇಕು, ಅರಿತು ಆಚರಿಸಬೇಕು. ಅದನ್ನು ನೋಡಲು ನೀವು ಅಥಣಿಗೆ ಹೋಗಿರಿ. ಅಲ್ಲಿ ಗಚ್ಚಿನಮಠದಲ್ಲಿ ಮುರುಘೇಂದ್ರ ಶಿವಯೋಗಿಗಳಿದ್ದಾರೆ. ಅವರ ‘ಶಿವಯೋಗ’ ಸಾಧನೆ ನೋಡಿದರೆ ಎಲ್ಲವನ್ನೂ ತಿಳಿದಂತೆ ಎಂದು ಅಪ್ಪಣೆ ಕೊಡಿಸುತ್ತಾರೆ. ಅಂತಹ ಅಪರೂಪದ ‘ಶಿವಯೋಗ ಸಾಧನೆಯ’ ಸೀಮಾಪುರುಷರು ಶಿವಯೋಗಿಗಳು.

               ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಅಪ್ಪನ ವಚನಗಳೆಂದು ಅಪ್ಪಿ-ಒಪ್ಪಿ ಬಸವತತ್ವದಲ್ಲಿಯೇ ಬದುಕಿದರು. ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ ಎಂದು ಬಾಗಿದ ತಲೆ, ಮುಗಿದ ಕೈಯಾಗಿ ಬಾಳಿದ ಯುಗಪುರುಷರು. ಶಿವನ ಆಜ್ಞೆ ಆಗಿದೆ ನಾನು ಬರುತ್ತೇನೆ. ನೀವೆಲ್ಲ ಬಸವ ಭಕ್ತಿ ಮಾರ್ಗದಲ್ಲಿ ನಡೆಯಿರಿ ಎಂದು ಅಪ್ಪಣೆ ಮಾಡಿ 23-4-1921ರಂದು ಶನಿವಾರ ಶಿವಯೋಗದ ಬಯಲಿನಲ್ಲಿ ಬಯಲಾದರು.

ಲೇಖಕರು :ಪೂಜ್ಯ ಮುಪ್ಪಿನ ಬಸವಲಿಂಗ ದೇವರು, ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ

‘ಸುಕುಮಾರ ಶಿವಯೋಗ ಮಂದಿರ ಬ್ಲಾಗ್’ ಸಂಚಿಕೆ-2 ಅಥಣಿ ಮುರುಘೇಂದ್ರ ಶಿವಯೋಗಿಗಳ  ಪುಣ್ಯತಿಥಿ ಯ ಶತಮಾನೋತ್ಸವದ ವಿಶೇಷ ಸಂಚಿಕೆಯಾಗಿ ಹೊರಬರುತ್ತಿರುವುದು ಸಂತಸದ ಸಂಗತಿ.

       ಶ್ರೀ ಕುಮಾರ ಮಹಾಸ್ವಾಮಿಗಳು ಸಮದರ್ಶಿತ್ವದ ಪೂರ್ಣ ರೂಪ. ಶಿವಯೋಗ ಮಂದಿರ ಸಂಸ್ಥೆಯಲ್ಲಿ ಗುರು-ವಿರಕ್ತ ಪೀಠಗಳ ಯೋಗ್ಯ ಉತ್ತರಾಧಿಕಾರಿಗಳಿಗೆ ಶಿಕ್ಷಣ ಕೊಟ್ಟು, ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ, ಐಕ್ಯತೆ ಬೆಳೆಯುವಲ್ಲಿ ಬಹು ಶ್ರಮಿಸಿದರು.

       ಗುರು ಪೀಠಗಳಲ್ಲಿ ಆದರದ ಭಾವನೆಗಳನ್ನಿಟ್ಟುಕೊಂಡಿದ್ದ ಶ್ರೀಗಳು ಉಜ್ಜಯನಿ ಪೀಠದ ಕಲಹವನ್ನು ಬಗೆಹರಿಸುವಲ್ಲಿ ಬಹಳ ಶ್ರಮಪಟ್ಟರು. ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಶ್ರೀಗಳವರನ್ನು ಗೌರವಾಭಿಮಾನದಿಂದ ಕಂಡು ಶ್ರೀ ಶಿವಯೋಗ ಮಂದಿರಕ್ಕೆ ಆರ್ಥಿಕ ಸಹಾಯ ಮಾಡಿದ್ದನ್ನು ಕಾಣುತ್ತೇವೆ, ಮೇಲಾಗಿ ಹಲವು ಬಾರಿ ಶಿವಯೊಗ ಮಂದಿರಕ್ಕೆ ದಯಮಾಡಿಸಿದ್ದು ದಾಖಲೆಯಲ್ಲಿದೆ. ಶ್ರೀಗಳವರು ಬಸವಾದಿಶರಣರ ವಿಚಾರಗಳನ್ನು ಬಹುವಿಧವಾಗಿ ಒಪ್ಪಿ, ಅಪ್ಪಿರುವಂಥವರು.

 

ಲಿಂಗೈಕ್ಯ ಮಹಾತಪಸ್ವಿ ಶ್ರೀ ಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು

       ವಿರಕ್ತರಲ್ಲಿರುವ ಸಮಯ ಭೇದಗಳಿಗೆ ಶ್ರೀಗಳು ಅವಕಾಶ ಕೊಡಲಿಲ್ಲ. ಎಲ್ಲ ವಿರಕ್ತ ಪೀಠಗಳಿಗೆ ಪ್ರಭು ಸಂಪ್ರದಾಯವೆ ಮೂಲವೆಂದು ಹಾನಗಲ್ಲ ಪೀಠಕ್ಕೆ ಬೇಕಾದಷ್ಟು ಬಿರುದಾವಳಿಗಳಿದ್ದರೂ ಸ್ವಪ್ರತಿಷ್ಠೆ ನಿರಪೇಕ್ಷಿತರಾದ ಶ್ರೀಗಳು ತಮ್ಮ ಬರವಣಿಗೆಗಳಲ್ಲಿ, ಪತ್ರಗಳಲ್ಲಿ ‘ಶ್ರೀನಿರಾಭಾರಿ ದೇಶಿಕವರೇಣ್ಯ ಶ್ರೀ ಅಲ್ಲಮಪ್ರಭು ಸ್ವಾಮ್ಯನ್ವಯಗತ ಹಾನಗಲ್ಲ ಕುಮಾರ ಸ್ವಾಮಿಗಳು’ ಎಂದು ಬರೆದು; ಬರೆಯಿಸುತ್ತಿದ್ದನ್ನು ಕಾಣುತ್ತೇವೆ.

       ಮದನಾದಿ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ತರುವಾಯ ಅವರ ಏಳನೇಯ ಪರಂಪರೆಯ ಬಾಚನಹಳ್ಳಿ ಕೌದಿ ಮಹಾಂತ ಸ್ವಾಮಿಗಳು ಶ್ರೀ ಅರ್ಧನಾರೀಶ್ವರರೆಂಬುವವರಿಗೆ ಅಧಿಕಾರ ಅನುಗ್ರಹವನ್ನು ನೀಡಿ ಬಾಚನಹಳ್ಳಿಯಲ್ಲಿ ಲಿಂಗೈಕ್ಯರಾಗುವರು. ಅವರಲ್ಲಿದ್ದ ಚರಮೂರ್ತಿಗಳಿಂದ ಕುಮಾರ, ಮುರುಘ, ಚಿಲ್ಲಾಳ, ಕೆಂಪಿನ ಎಂಬ ಶಾಖೆಗಳು ಸಮಯಭೇದಗಳಾಗುವವು. ಸಮಯಗಳೆಂದರೆ ಗುರುಗಳ ಆಚಾರ ಭೇದದಿಂದ ಈ ಕಲ್ಪನೆ ಉಂಟಾಯಿತೆ ಹೊರತು ತಾತ್ವಿಕ ಆಧಾರದಿಂದಲ್ಲ. ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಸ್ವಾಮಿಗಳನ್ನು ಕಂಡರೆ, ಸಂಪರ್ಕಿಸಿದರೆ ಮಹಾ ಮೈಲಿಗೆ ಎಂಬ ಭಾವ ಎಲ್ಲರಲ್ಲಿಯು ಮೂಡಿ, ಒಂದು ಸಮಯದ ಸ್ವಾಮಿಗಳು ಇನ್ನೊಂದು ಸಮಯದ ಮಠಕ್ಕೆ ಬಂದರೆ ಮಠ ತೊಳೆಯುವ ಪದ್ಧತಿ ಜಾರಿಯಲ್ಲಿತ್ತು.

‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಬಹುದೆ’  ಮರ್ತ್ಯದ ಮೈಲಿಗೆ ತೊಳೆಯಬೇಕಾದವರಲ್ಲಿಯೇ ಈ ಭಾವವಿದ್ದರೆ ಹೇಗೆ? ಹೀಗಾದಲ್ಲಿ ಸಮಾಜ ಅಭಿವೃದ್ದಿ ಕಾಣುವುದೆಂತು? ಎಂದು ವಿಚಾರಿಸಿ; ಮನನೊಂದರು. ಸಮಾಜದಲ್ಲಿರುವ  ಅಸ್ಪೃಶ್ಯತೆ ನಿವಾರಣೆಗೆ ಮಹತ್ಮಾ ಗಾಂಧೀಜಿಯವರು

ಹೋರಾಡಿದಂತೆ ಶ್ರೀಗಳವರು ಶಾಸ್ತ್ರಸಮ್ಮತವಲ್ಲದ, ಸಮಾಜದ ಸಮಗ್ರತೆಗೆ ಮಾರಕವಾದ ಈ ಸಮಯಭೇದ ನಿವಾರಣೆಗೆ ಅಷ್ಟೆ ಪರಿಣಾಮಕಾರಿಯಾದ ಯೋಜನೆ ಮಾಡಿ ಹೋರಾಟ ಮಾಡಿದರು.

ಸಮಯಭೇದದ ನಿವಾರಣೆಯ ಕುರಿತು ಮಲ್ಲನಕೆರೆ ಶ್ರೀಗಳೊಂದಿಗೆ ಚರ್ಚಿಸಿ,ಮದನಾದಿ ನಿರಂಜನ ತೋಂಟದ ಸಿದ್ಧಲಿಂಗ ಶಿವಯೋಗಿಗಳ ದರ್ಶನ ಮಾಡಬೇಕೆಂದು ತಿರ್ಮಾನಿಸಿದರು. ಗದುಗಿನ ತೋಂಟದ ಜಗದ್ಗುರುಗಳನ್ನು ಶಿವಯೋಗಮಂದಿರಕ್ಕೆ ವೈಭವದಿಂದ ಬರಮಾಡಿಕೊಂಡರು. ಶ್ರೀ ಶಿವಯೋಗ ಮಂದಿರದ ಎಲ್ಲ ಪರಿವಾರದೊಂದಿಗೆ ಯಡಿಯೂರಿಗೆ ದಯಮಾಡಿಸಿದಾಗ ಗದುಗಿನ ತೋಂಟದ ಜಗದ್ಗುರುಗಳು ಅಷ್ಟೇ ಪ್ರಿತ್ಯಾದಾರದಿಂದ ಬರಮಾಡಿಕೊಂಡರು. ಶ್ರೀಗಳವರು ಶಿವಯೋಗ ಸಾಮ್ರಾಟ್ ತೋಂಟದ ಸಿದ್ಧಲಿಂಗ ಗುರುಗಳಲ್ಲಿ ಧ್ಯಾನಸ್ಥ ರಾಗಿ ತಮಗಿರುವ ಸಂಶಯಕ್ಕೆ ಪರಿಹಾರ ಕಂಡುಕೊಂಡರು.

ಲಿಂ. ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಜೊತೆಗೆ  ಪಾದಯಾತ್ರೆ ೧೯೧೨ ರಲ್ಲಿ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಸುಕ್ಷೇತ್ರ ಯಡೆಯೂರು

ಲಿಂ. ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಜೊತೆಗೆ  ಪಾದಯಾತ್ರೆ ೧೯೧೨ ರಲ್ಲಿ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಸುಕ್ಷೇತ್ರ ಯಡೆಯೂರು         ಶ್ರೀಗಳವರು ನಾಲ್ಕು ಸಮಯದ ಜಗದ್ಗುರುಗಳು ಇದ್ದಲ್ಲಿಯೇ ದಯಮಾಡಿಸಿ ಐಕ್ಯಮತ ತರುವಲ್ಲಿ ಬಹು ಹೆಣಗಾಡಿದರು

ಲಿಂ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಿತ್ರದುರ್ಗ

ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರಿಗೆ ಕಾಶಿಯಲ್ಲಿ ಅಧ್ಯಯನ ಮಾಡುವಾಗ ಆರ್ಥಿಕ ಸಹಾಯ ಮಾಡಿ; ಬೃಹನ್ಮಠ ಚಿತ್ರದುರ್ಗದ ಜಗದ್ಗುರು ಪೀಠಕ್ಕೆ ಶ್ರೀಗಳವರೇ ಬರಮಾಡಿಕೊಂಡಿದ್ದು ಇತಿಹಾಸ. ಅನಂತಪುರದ ಬೆಕ್ಕಿನಕಲ್ಮಠದ ಲಿಂಗಮಹಾಸ್ವಾಮಿಗಳನ್ನು ಶಿವಯೋಗ ಮಂದಿರದ ಪ್ರಥಮ ಜಾತ್ರಾಮಹೋತ್ಸವಕ್ಕೆ ಬರಮಾಡಿಕೊಂಡರು.

ಅನಂತಪುರದ ಬೆಕ್ಕಿನಕಲ್ಮಠದ ಪೂಜ್ಯ ಜಗದ್ಗುರು ಶ್ರೀ ಲಿಂಗಮಹಾಸ್ವಾಮಿಗಳ ಜೊತೆಗೆ ಪೂಜ್ಯ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು

.  ಪೂಜ್ಯರ ಸಮಾಜ ಪ್ರೇಮ ಕಂಡ ಲಿಂಗಮಹಾಸ್ವಾಮಿಗಳು ಮಲೆನಾಡಿನಲ್ಲಿ ಶಾಖಾ ಶಿವಯೋಗ ಮಂದಿರವಾಗ ಬೇಕೆಂಬ ಇಚ್ಛೆಯಂತೆ   ಕಪನಹಳ್ಳಿ (ಕಾಳೇನಹಳ್ಳಿ) ಶಾಖಾಶಿವಯೋಗ ಮಂದಿರ ಸ್ಥಾಪನೆಮಾಡಿದರು. ಕುಮಾರಸಮಯದ ಮೂರುಸಾವಿರ ಮಠದ ಗಂಗಾಧರ ಜಗದ್ಗುರುಗಳನ್ನು ಆದರದಿಂದ ಕಂಡು ಅವರ ಸಾನಿಧ್ಯದಲ್ಲಿ ಬಂಕಾಪುರದಲ್ಲಿ ಧರ್ಮೋತ್ತೇಜಕ ಸಭೆಯನ್ನು ಸ್ಥಾಪಿಸಿ ಹಲವು ಸಮಾಜೋಧಾರ್ಮಿಕ ಕಾರ್ಯಗಳನ್ನು ಕೈಕೊಂಡು ಸಮಯಭೇದ ಜಗದ್ಗುರುಗಳಿಗೆಲ್ಲಾ ಆದರ್ಶರಾದರು.

         ಪೂಜ್ಯ ಶ್ರೀಗಳವರು ಅಥಣಿ ಮುರುಘೇಂದ್ರ ಶಿವಯೋಗಿಗಳನ್ನ ಬಹಳ ಗೌರವಿಸುತ್ತಿದ್ದರು. ಮಂದಿರದ ವಟುಗಳನ್ನ, ಸಾಧಕರನ್ನ, ಸ್ವಾಮಿಗಳನ್ನ ಶಿವಯೋಗಿಗಳ ಸಾತ್ವಿಕ ತಪಶಕ್ತಿಯ ದರ್ಶನ ಪಡೆಯಲು ಕಳುಹಿಸುತ್ತಿದ್ದರು.

ಪೂಜ್ಯ ಲಿಂ. ಅಥಣಿ  ಮುರುಘೇಂದ್ರ ಶಿವಯೋಗಿಗಳು

         ನಾನು ಶಿವಯೋಗ ಮಂದಿರದಲ್ಲಿ ಓದುವಾಗ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಅಪ್ಪಣೆ ಪಡಿಸಿದ್ದು ನೆನಪುಂಟು ‘ ಒಮ್ಮೆ ಜಯದೇವ ಜಗದ್ಗುರುಗಳು ಶ್ರೀಗಳವರ ಬೇಟಿ ಸಂದರ್ಭದಲ್ಲಿ ಶಿವಯೋಗ ಮಂದಿರದ ಕಾರ್ಯೋದ್ಯೇಶಗಳ ಪ್ರಗತಿಯ ಕುರಿತು ಮಾತನಾಡುತ್ತಿರುವಾಗ ಶ್ರೀಗಳವರು ನಮ್ಮ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಅಥಣಿ ಶಿವಯೋಗಿಗಳಂಥ ಶಿವಯೋಗಿಗಳು ತಯಾರಾಗಬೇಕು ಇದೆ ನಮ್ಮ ಘನ ಉದ್ದೇಶವೇಂದರಂತೆ ಆಗ ಜಯದೇವ ಜಗದ್ಗುರುಗಳು ನಮ್ಮ ಬೃಹನ್ಮಠದ ಪರಂಪರೆಯಲ್ಲಿ ತಮ್ಮಂಥ ಸಮಾಜ ಕಳಕಳಿಯುಳ್ಳ ಸಮಾಜಪ್ರೇಮಿ ಸ್ವಾಮಿಗಳು ಬರಬೇಕು’ ಎಂದು ಪರಸ್ಪರ ಗೌರವ ಮಾತುಗಳಾಡಿದ್ದನ್ನ ಸ್ಮರಿಸಬಹುದು.

ಪೂಜ್ಯ ಶ್ರೀಗಳು ಅಥಣಿ ಶಿವಯೋಗಿಗಳಲ್ಲಿ ಬಹು ಭಕ್ತಿಯಿಂದ

                  ಮಂಗಳಾರತಿ ದೇವಗೆ ಶಿವಯೋಗಿಗೆ | ಕಂಗಳಾಲಯ ಸಂಗಗೆ |

                 ಜಂಗಮಲಿಂಗಬೇದದ   ಸ್ವಯಚರಪರ |

                 ದಿಂಗಿತವರುಪಿದರಿತಾಚರಿಸಿದ ಮಹಿಮಗೆ           ಎಂದು ಭಾವ ತುಂಬಿ ಸ್ಮರಿಸಿರುವರು. ಶ್ರೀಗಳವರು ಶಿವಯೋಗ ಮಂದಿರದ ಪರಿಸರದಲ್ಲಿ ಗುರು-ವಿರಕ್ತ ಮತ್ತು ವಿರಕ್ತರಲ್ಲಿನ ಸಮಯಭೇದದ ಸಂಕುಚಿತ ಭಾವನೆಗೆ ಅವಕಾಶಕೊಡದೆ ಸಮದರ್ಶಿತ್ವವನ್ನು ಮೆರೆದಿರುವರು

ಲೇಖಕರು : ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

“…… ಈ ಮೊದಲು ಹೇಳಿದಂತೆ ನಾನು ನನ್ನ ತಂದೆತಾಯಿಗಳಿಗೆ ಮೊದಲನೆಯ ಮಗ , ನಾನು ನಮ್ಮ ಊರಲ್ಲಿಯೇ ಇರುವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ , ಆ ಕಾಲಕ್ಕೆ ನನ್ನ ತಂದೆ ವ್ಯಾಪಾರದ ಸಲುವಾಗಿ ಅಥಣಿಗೆ ಪದೇ ಪದೇ ಹೋಗುತ್ತಿದ್ದರು . ಅಲ್ಲಿಗೆ ಹೋದಾಗ ತಪ್ಪದೇ ಅಲ್ಲಿಯ ಗಚ್ಚಿನ ಮಠಕ್ಕೆ ಹೋಗಿ ಅಲ್ಲಿ ಇದ್ದ ಶಿವಯೋಗಿ  ಶ್ರೀ ಮುರುಘೇಂದ್ರ ಸ್ವಾಮಿಗಳ ದರ್ಶನ ತೆಗೆದುಕೊಂಡು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು . ಒಂದು ಸಲ ಶಿವಯೋಗಿಗಳು ಪೂಜಾವಿಧಿಗಳನ್ನು ಮುಗಿಸಿ ಕುಳಿತಿದ್ದರು . ಆಗ ಅವರು ನನ್ನ ತಂದೆಗೆ ಮಕ್ಕಳು ಎಷ್ಟು ? ಎಂದು ಕೇಳಿದರು . ಅದಕ್ಕೆ ನನ್ನ ತಂದೆಯವರು ಒಬ್ಬಾಕೆ ಮಗಳು , ಒಬ್ಬ ಮಗ ಎಂದು ಹೇಳಿದರು . ಆಗ ಶಿವಯೋಗಿಗಳು ಅವನ ಹೆಸರು ಏನು ? ಅವನು ಹೇಗಿದ್ದಾನೆ ? ಎಂದು ಕೇಳಿದುದ್ದಕ್ಕೆ ಅವನ ಹೆಸರು ಬಸಪ್ಪ , ಸ್ವಲ್ಪ ತುಂಟ , ಹಿಡಿಯುವುದು ಕಷ್ಟವಾಗಿದೆ ” ಎಂದು ಹೇಳಿದರು . ಅದಕ್ಕೆ ಶಿವಯೋಗಿಗಳು “ ಹಾಗೆ ಹೇಳಬೇಡಪ್ಪ , ಮುಂದೆ ಅವನು ರಾಜನಾಗುತ್ತಾನೆ ” ಎಂದು ಹೇಳಿದರು . ಇಷ್ಟು ಶಿವಯೋಗಿಗಳ ಆಶೀರ್ವಾದ ಕೇಳಿಕೊಂಡು ತಮ್ಮ ಕೆಲಸಕ್ಕೆ ತೆರಳಿದರು “

ಮಾನ್ಯ ಶ್ರೀ ಬಿ,ಡಿ,ಜತ್ತಿ ಪ್ರಮಾಣವಚನ

ಲೇಖಕರು ಡಾ . ಪಂಚಾಕ್ಷರಿ ಹಿರೇಮಠ

(ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಮೊಗ್ಗೆಯ ಮಾಯಿದೇವರು ‘ ಶಿವಾನುಭವಸೂತ್ರ’ದಲ್ಲಿ

ಉಪಾಸನೈವ ಸುಯೋಗಃ  ಸಂಯೋಗೋದ್ಯ್ವತ ಸಂಲಯಃ

ದ್ವ್ಯತಸ್ಯ ವಿಲಶ್ಚೈ ವ ನಿವೃತ್ತಿಃ  ಪರಿಕೀರ್ತಿತಾ |

ನಿವೃತ್ತಿರೇವ ವಿಶ್ರಾಂತಿಃ , ವಿಶ್ರಾಂತಿಃ  ಪರಮಂ ಪದಂ  ||

ಲಿಂಗೋಪಾಸನೆಯೇ ಲಿಂಗಾಂಗಗಳ ಸಂಯೋಗವೆಂದೆನಿಸುವುದು . ಆ ಸಂಯೋಗವೇ ದ್ವ್ಯತವಿಲಯವು , ಆ ದ್ವ್ಯತವಿಲಯವೇ ನಿವೃತ್ತಿ ( ಶಿವತ್ವದ ಪ್ರಾಪ್ತಿಯಿಂದ ಉಂಟಾದ ಜೀವತ್ವದ ಬಿಡುಗಡೆ ) ಆ ನಿವೃತ್ತಿಯೇ ವಿಶ್ರಾಂತಿಯು , ಈ ವಿಶ್ರಾಂತಿಯೇ ವೀರಶೈವರ ಮೋಕ್ಷರೂಪವಾದ ಪರಮಪದವು – ಎಂದು ಅಪ್ಪಣೆ ಕೊಡಿಸಿದ್ದಾರೆ . ಇಲ್ಲಿ ಉಪಾಸನೆಯ ಅರ್ಥ ಸ್ವಸ್ವರೂಪಾನುಸಂಧಾನವೆಂದೇ ಅರ್ಥ .

 ಇಂಥ ಶಿವಯೋಗಸಿದ್ದರು ಹೇಗೆ ಬರುತ್ತಾರೆ ; ಹೇಗೆ ಶಿವನಲ್ಲಿ ಅಂದರೆ ಲಿಂಗದಲ್ಲಿ ಒಂದಾಗುತ್ತಾರೆಂಬುದನ್ನು ಉರಿಲಿಂಗಪೆದ್ದಿಗಳ ಈ ವಚನ ವಿವರಿಸುತ್ತದೆ-

 ಲೋಕದಂತೆ ಬಾರರು , ಲೋಕದಂತೆ ಇರರು

 ಲೋಕದಂತೆ ಹೋಗರು  ನೋಡಯ್ಯ

ಪುಣ್ಯದಂತೆ ಬಪ್ಪರು , ಜ್ಞಾನದಂತೆ ಇಪ್ಪರು

ಮುಕ್ತಿಯಂತೆ ಹೋಹರು ನೋಡಯ್ಯ

ಉರಿಲಿಂಗದೇವಾ ನಿಮ್ಮ ಶರಣರು

ಉಪಮಾತೀತರಾಗಿ ಉಪಮಿಸಬಾರದು .

  ಇಂಥ ಉಪಮಿಸಬಾರದ ಪರಮಚೈತನ್ಯ , ಚಿತ್ಸ್ವರೂಪ , ಅಖಂಡ ತೇಜೋಮೂರ್ತಿ , ಚಿದ್ವಿಲಾಸಾನಂದಸ್ವರೂಪ , ಲಿಂಗಾನಂದಲೀಲಾಲೋಲ , ಚಿದ್ಘನಪ್ರಣವಸ್ವರೂಪಿ , ಚಿನ್ಮಯ ಮಂತ್ರಮೂರ್ತಿ , ಮಹಾಜಂಗಮ ಶ್ರೀಮದಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು . ಅಂತರಂಗದಲ್ಲಿ ಅರಿವು , ಬಹಿರಂಗದಲ್ಲಿ ಶಮೆ , ದಯೆ , ಸರ್ವಶಾಂತಿ , ನಂಬಿದ ಸಜ್ಜನ ಸದ್ಭಕ್ತರ ರಕ್ಷಕ , ಭಾವಕ್ಕೆ ಜಂಗಮವಾಗಿ , ಪ್ರಾಣಕ್ಕೆ ಲಿಂಗವಾಗಿ , ಕಾರ್ಯಕ್ಕೆ ಗುರುವಾಗಿ ಬಂದ ಪದಾರ್ಥವ ಲಿಂಗಾರ್ಪಿತವ ಮಾಡುತ್ತ , ಬಾರದ ಪದಾರ್ಥವ ಮನದಲ್ಲಿ ನೆನೆಯದೆ , ಮಾನವರ ಬೇಡದೆ , ಭಕ್ತರ ಕಾಡದೆ , ನಿರ್ಗಮನಿಯಾಗಿ ಸುಳಿವ ಆತ ಮಹಾಲಿಂಗ ಜಂಗಮನಾಗಿದ್ದಾತ . ಆತನ ನೆನಹೇ ಪ್ರಾಣಜೀವಾಳವೆನಗೆ .

ಆತನ ನಡೆ ಇಷ್ಟಲಿಂಗ , ಆತನ ಮಾರ್ನುಡಿ ಪ್ರಾಣಲಿಂಗ , ನಡೆ – ನುಡಿಗಳ ಒಂದಾಗಿಸಿ ಭಾವಲಿಂಗ ಮಾಡಿಕೊಂಡ , ಮಹಾ ಮಹಿಮರು ಶ್ರೀಮದಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು .

 ಶಿವಯೋಗಿಗಳಿಗೆ ಧ್ಯಾನವೇ ಅಂತರಂಗದ ಪ್ರಾಣಲಿಂಗ ಪೂಜೆಯಾಗಿತ್ತು ಧಾರಣವೇ ಬಹಿರಂಗದ ಇಷ್ಟಲಿಂಗ ಪೂಜೆಯಾಗಿತ್ತು ; ಸಮಾಧಿಯೇ ಭಾವಲಿಂಗದ ಸಂಧಾನಕ್ರಿಯೆಯಾಗಿತ್ತು .

 ಶಿವಯೋಗಿಗಳಿಗೆ ನಿಜಪದವಿ , ಅವರ ಆರಾಧ್ಯಮೂರ್ತಿ ಅಪ್ಪ ಬಸವಣ್ಣ ವರ್ಣಿಸಿದ “ಜಗದಗಲ , ಮುಗಿಲಗಲ , ಮಿಗೆಯಗಲ ನಿಮ್ಮಗಲ , ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ , ಅಗಮ್ಯ ಅಗೋಚರ , ಅಪ್ರತಿಮಲಿಂಗ ‘ ದಲ್ಲಿ ದೃಗ್ಗೋಚರವಾಗುತ್ತಿತ್ತು .

ನನ್ನ ಪರಮಾರಾಧ್ಯ ಮೃತ್ಯುಂಜಯ ಅಪ್ಪಗಳು ತಮ್ಮ ಆಶೀರ್ವಚನದ ಕಾಲದಲ್ಲಿ ಶ್ರೀ ಶಿವಯೋಗಿಗಳ ಜೀವಿತ ಕಾಲದಲ್ಲಿ ನಡೆದ ಒಂದಲ್ಲ ಒಂದು ಘಟನೆಯನ್ನು ಆನಂದತುಂದಿಲರಾಗಿ ಭಕ್ತ ತಿಂಥಿಣಿಗೆ ಬೋಧಿಸುತ್ತ ತನ್ಮಯರಾಗುತ್ತಿದ್ದರು . ಒಮ್ಮೆ ಶಿವಯೋಗಿಗಳು ಸದಾ ಲಿಂಗಧ್ಯಾನದಲ್ಲಿ ಲಿಂಗಪೂಜೆಯಲ್ಲಿ ರುತ್ತಿದ್ದರು ಎಂಬುದನ್ನು ಅಪ್ಪಣೆ ಕೊಡಿಸಿದರು . ಅಥಣಿ ಗಚ್ಚಿನಮಠದಲ್ಲಿ ಶಿವಯೋಗಿಗಳ ಸೇವೆಯಲ್ಲಿ ಪೂಜ್ಯ ಅಪ್ಪಗಳಿದ್ದಾರೆ . ಅವರ ಭಾಗ್ಯವೇ ಭಾಗ್ಯ , ಸುತ್ತಲೂ ಎತ್ತರದ ಪ್ರಾಕಾರ , ಬಕುಲ , ಆಕಾಶ ಮಲ್ಲಿಗೆಗಳು ಅವುಗಳ ಮಧ್ಯೆ ಶಿವಯೋಗಿಗಳ ಪೂಜಾಕೋಣೆ , ವಿಶ್ರಾಂತಿಧಾಮ . ಶಿವಯೋಗಿಗಳ ಲಿಂಗಾರ್ಚನೆಗೆ ಅಣಿಮಾಡಿ , ಲಿಂಗಾರ್ಚನೆಗೆ ದಯಮಾಡಿಸಬೇಕೆಂದು ಬಿನ್ನಹ ಮಾಡಲು ಅಪ್ಪಗಳು ಶಿವಯೋಗಿಗಳಿದ್ದಲ್ಲಿಗೆ ಬಂದಿದ್ದಾರೆ . ಆಗ ಶಿವಯೋಗಿಗಳು ಎಡಗೈ ಮುಂದೆ ಚಾಚಿ ಬಲಹಸ್ತದಿಂದ ಪತ್ರಿ ಪುಷ್ಪ ಏರಿಸುತ್ತಿದ್ದಾರೆ . ಅಪ್ಪಗಳಿಗೆ ಅಲ್ಲಿ ಲಿಂಗ ಕಾಣಿಸುತ್ತಿಲ್ಲ . ಬಲಗೈಯಲ್ಲಿ ಪತ್ರಿಪುಷ್ಟಗಳಿಲ್ಲ . ಆದರೂ ಲಿಂಗಪೂಜೆ ನಡೆದಿದೆ . ಅಪ್ಪಗಳು ‘ ಮಾತು ಅಲ್ಲಿ ಮೈಲಿಗೆ ‘ ಎಂಬುದನರಿತು ಮೌನವಾಗಿದ್ದಾರೆ . ಇದ್ದಕ್ಕಿದ್ದಂತೆ ಶಿವಯೋಗಿಗಳು ‘ ಆಹಾ ಆಹಾ … ಏನು ಬೆಳಕು ಓ ಮಹಾಬೆಳಕು …. ಎಂಬ ಉದ್ಗಾರ ತೆಗೆಯುತ್ತಾರೆ . ಆಗ ಅಪ್ಪಗಳು ಮಂತ್ರಮುಗ್ಧರಾಗಿ ಸಾಷ್ಟಾಂಗ ಹಾಕುತ್ತಾರೆ . ಈ ಕ್ರಿಯೆ ಅದೆಷ್ಟೋ ಕಾಲ ನಡೆಯುತ್ತದೆ . ಹೀಗೆ ಲಿಂಗದೊಂದಿಗೆ ಲಿಂಗವಾಗಿದ್ದರು ಶ್ರೀಮದಥಣಿ ಶಿವಯೋಗಿಗಳು .

 ಶ್ರೀ ಮುರುಘೇಂದ್ರ ಶಿವಯೋಗಿಗಳು ತಮ್ಮ ಇರುವಿಕೆಯಿಂದ , ಲಿಂಗ ನಿಷ್ಠೆಯಿಂದ ಅಥಣಿಯನ್ನು ಸುಕ್ಷೇತ್ರವನ್ನಾಗಿ ಮಾಡಿದರು . ಅಥಣಿಯ ಗಚ್ಚಿನಮಠದಲ್ಲಿ ಶ್ರೀ ಶಿವಯೋಗಿಗಳು ಸಮಗ್ರ ನಲವತ್ತು ವರ್ಷಗಳ ಕಾಲ ತಮ್ಮ ಗುರುಗಳ ಅಪ್ಪಣೆಯ ಪ್ರಕಾರ ನೆಲೆಸಿದ್ದರು . ಅಲ್ಲಿ ಹಾಗೆ ನೆಲೆಸುವ ಪೂರ್ವದಲ್ಲಿ ನಲವತ್ತೈದು ವರ್ಷಗಳ ಕಾಲ ದೇಶಸಂಚಾರಗೈದರು . ಹೀಗೆ ಎಂಬತ್ತೈದು ವರ್ಷಗಳ ತಮ್ಮ ಜೀವಿತ ಕಾಲದಲ್ಲಿ ಶ್ರೀ ಶಿವಯೋಗಿಗಳು ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳಿಗೆ ತಮ್ಮ ಆಚರಣೆಯಿಂದ ವ್ಯಾಖ್ಯೆ ಬರೆದರು . ವೀರಶೈವ ಶಾಸ್ತ್ರಕ್ಕೂ , ಅನುಭಾವಕ್ಕೂ , ಶಿವಯೋಗಕ್ಕೂ , ಸಂಕೇತವಾದರು . ಲಿಂಗಾಂಗ ಸಾಮರಸ್ಯವೆಂಬುದು ಅವರಿಗೆ ಸಹಜ ಕ್ರಿಯೆಯಾಗಿತ್ತು . ಮುಪ್ಪಿನ ಷಡಕ್ಷರದೇವರು ನುಡಿದಂತೆ ‘ ಎನ್ನ ಕರದೊಳಗಿರ್ದು ಎನ್ನೊಳೇತಕೆ ನುಡಿಯೆ , ಎನ್ನ ಭವಭವದಲ್ಲಿ ಬಿಡದಾಳ್ದನೇ ‘ ಎಂದು ನಿತ್ಯವೂ ಅಂಗೈಯ ಲಿಂಗಯ್ಯನನ್ನು ಕೇಳಿ ಕೇಳಿ – ಭಕ್ತಿಯಿಂದ ಒಲಿಸಿಕೊಂಡು , ಆತನೊಂದಿಗೆ ಮಾತನಾಡಿ , ಆತನನ್ನು ಅಪಾರವಾಗಿ , ಒಲಿದು ರಮಿಸಿದರು . ‘ ಎನ್ನ ಭಾಗ್ಯದ ಸುಧೆಯೇ ‘ ಎನ್ನ ಭಕ್ತಿಯ ನಿಧಿಯೇ ಎನ್ನ ಮನವೆಂಬ ವನಿತೆಯ ತಿಲಕವೇ ಎಂದು ಲಿಂಗಯ್ಯನನ್ನು ಕೊಂಡಾಡಿ ‘ ಎನ್ನನಗಲದೆ ಕೂಡಿ ಬಿಡದಾಳ್ತನೇ ಎಂದು ಓಲೈಸಿದರು .

ಶಿವಯೋಗಿಗಳು ಲಿಂಗವ ಪೂಜಿಸಿ , ಲಿಂಗವ ಒಲಿಸಿಕೊಂಡು ತಾವೇ ಲಿಂಗವಾಗಿ ಪೂಜೆಗೊಂಡರು . ಲಿಂಗ ವ್ರತದಿಂದ ಲಿಂಗ ಸ್ವರೂಪರಾದ ಶಿವಯೋಗಿಗಳು ಓಂಕಾರವೇ ಕಾಯವಾಗಿ , ಪಂಚಾಕ್ಷರಗಳೇ ಪಂಚೇಂದ್ರಿಯಗಳಾಗಿ , ಅಂಗವೆಲ್ಲ ಮಂತ್ರ ಪಿಂಡವೆನಿಸಿ , ಮಂತ್ರ ಮೂರುತಿಗಳಾದರು . ಇದರಿಂದಾಗಿ ಅವರು ಸತ್ ಚಿತ್ ಆನಂದಸ್ವರೂಪೆನ್ನಿಸಿಕೊಂಡರು . ಹೊಳೆ ಹೊಳೆವ ಚಿಚ್ಚೈತನ್ಯ  ಕಳಾಕೀರ್ತಿ ಶಿವಯೋಗಿಗಳ ಪದತಲದಲ್ಲಿ ಬಂದು ನೆಲೆಸಿತು .

 ಅಥಣಿಯ ಸುಕ್ಷೇತ್ರಕ್ಕೆ ಸಮೀಪದ ನಯನ ಮನೋಹರವಾದ ಕೃಷ್ಣಾ ನದಿಯ ದಂಡೆಯ ಮೇಲೆ ಸ್ಥಿತಗೊಂಡಿರುವ ಇಂಗಳಗಾವಿ , ಅಲ್ಲಿಯ ಮಠದೊಡೆಯ ವೇ . ಮೂ . ರಾಚಯ್ಯನವರು . ಅವರಿಗೆ ಮಹಾಸಾದ್ವಿಶಿರೋಮಣಿ ನಿಜಸತಿ ನೀಲಾಂಬಿಕಾದೇವಿ . ಇಬ್ಬರೂ ಮಹಾಜಂಗಮ ಪ್ರೇಮಿಗಳು , ಅವರ ಪುತ್ರ ಗುರುಲಿಂಗಯ್ಯ , ದಿವ್ಯಲಿಂಗದ ಘನತೇಜೋಮೂರ್ತಿ ತಾನೇ ಆಗಬೇಕೆಂದು ಅಥಣಿಯ ಗಚ್ಚಿನ ಮಠಕ್ಕೆ ಬಂದ ಬಾಲಕ ಗುರುಲಿಂಗಯ್ಯ , ಪರಮ ತಪಸ್ವಿ ಶ್ರೀ ಗುರುಶಾಂತ ಮಹಾಸ್ವಾಮಿಗಳ ಕೃಪೆಯಿಂದ ಗುರುಲಿಂಗ ಮರಿದೇವರಾದರು . ಮಮದಾಪುರದ ಶ್ರೀ ಮುರುಘೇಂದ್ರ ಸ್ವಾಮಿಗಳಲ್ಲಿ ಶಾಸ್ತ್ರಾಭ್ಯಾಸ ಮಾಡಿದರು . ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಜಂಗಮ ಸಂಸ್ಕಾರ ಪಡೆದು ನಿರಂಜನಮೂರ್ತಿಯಾಗಿ ಶ್ರೀ ನಿ.ಪ್ರ.ಶ್ರೀ ಮುರುಘೇಂದ್ರ ಸ್ವಾಮಿಗಳಾಗಿ , ನಿರಂತರ ಅಂತರಂಗದ ಬದುಕನ್ನು ಉದ್ದೀಪನಗೊಳಿಸಿಕೊಳ್ಳುತ್ತ ಲಿಂಗನಿಷ್ಠೆ , ಲಿಂಗಾರ್ಚನೆ , ಲಿಂಗಧ್ಯಾನವೇ ವ್ರತಗಳಾಗುವಂತೆ ತಪಃ ಕೈಕೊಂಡು ಶಿವಯೋಗ ಸಿದ್ಧಿ ಸಾಧಿಸಿ , ಶ್ರೀಮದಥಣಿ ಶಿವಯೋಗಿಗಳೆಂದೇ ಕೀರ್ತಿ ಪಡೆದರು- ಈ ಎಲ್ಲ ಅವಸ್ಥೆಗಳನ್ನು ಮುಗಿಸಿ ಈಗ ಕೇವಲ – ದಿವ್ಯಲಿಂಗದ ಘನತೇಜೋಮೂರ್ತಿ .

 ಇಂಥ ಚಿನ್ಮಯ ಮೂರ್ತಿಯನ್ನು ಬಸವಣ್ಣ ನುಡಿದಂತೆ ಶಿವ , ಭಕ್ತಿ ಕಂಪಿತ ‘ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮೃತ್ಯುಂಜಯ ಅಪ್ಪಗಳು ತಮ್ಮ ಅತುಲ ಭಕ್ತಿಯ ಶಕ್ತಿಯಿಂದ ಲಿಂಗಸ್ವರೂಪಿಯಾದ ಶಿವಯೋಗಿಯನ್ನು ಅಥಣಿಯಿಂದ ಧಾರವಾಡದ ಶ್ರೀ ಮುರುಘಾಮಠಕ್ಕೆ ಕರೆತಂದು , ನೆಲೆಗೊಳಿಸಿದರು . ಆ ಪರಮ ಶಿವಯೋಗಿಯ ಪುಣ್ಯನಾಮದಲ್ಲಿ ಜಾತ್ರೆ ಆರಂಭಿಸಿದರು . ಸಾವಿರದೊಂಬೈನೂರ ಇಪ್ಪತ್ತೊಂಬತ್ತರಲ್ಲಿ ಆರಂಭವಾದ ಈ ಜಾತ್ರೆ ವೈಭವದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಲಿದೆ . ಅಂದು ಮೃತ್ಯುಂಜಯ ಅಪ್ಪಗಳು , ಮಹಾಂತ ಅಪ್ಪಗಳು ಇಂದು ಶಿವಯೋಗಿ ಅಪ್ಪಗಳು . ಭಕ್ತಿಯ ಸಂಕೇತವಾಗಿ ಲಿಂಗದ ಸಂಕೇತವಾಗಿ , ಜಂಗಮದ ಸಂಕೇತವಾಗಿ ಶಿವಯೋಗಿಯ ತೇರು ಸಾಗುತ್ತಲಿದೆ . ಲಿಂಗದ ನೃತ್ಯಕ್ಕೆ ಕೊನೆಯೆಲ್ಲಿ ? ಓ ! ಗುರುವೆ , ಪರಮ ಕಲ್ಪತರುವೆ ಸಾಗಲಿ ಹೀಗೆಯೇ ನಿನ್ನ ದಿವ್ಯನಾಮಸ್ಮರಣೆಯ ತೇರು ಲೋಕದಲ್ಲಿ ಶಾಂತಿ ನೆಲೆಸಲು , ಸಕಲ ಜೀವಾವಳಿಯ ಲೇಸಾಗಲು .

 ಇಂಥ ಶಿವಯೋಗಿಗಳು-

ಕಂಡುದೆಲ್ಲ ಪಾವನ , ಕೇಳಿತ್ತೆಲ್ಲ ಪರಮಬೋಧೆ

ಮುಟ್ಟಿತ್ತೆಲ್ಲವು ಪರುಷದ ಸೋಂಕು

ಒಡನೆ ಕೂಡಿದರೆಲ್ಲರು ಸದ್ಯೋನ್ಮುಕ್ತರು

ಸುಳಿದ ಸುಳುಹೆಲ್ಲ ಜಗತ್ಪಾವನ

ಮೆಟ್ಟಿದ ಧರೆಯಲ್ಲವು ಅವಿಮುಕ್ತಕ್ಷೇತ್ರ

ಸೋಂಕಿದ ಜಲವೆಲ್ಲವು ಪುಣ್ಯತೀರ್ಥಂಗಳು

 ಶರಣೆಂದು ಭಕ್ತಿಯ ಮಾಡಿದವರೆಲ್ಲರೂ ಸಾಯುಜ್ಯರು .

ಗುಹೇಶ್ವರ , ನಿಮ್ಮ ಸುಳುಹಿನ ಸೊಗಸ ಉಪಮಿಸಬಾರದು .

ಅಂತೆಯೇ ಶ್ರೀಮದಥಣಿ ಶಿವಯೋಗಿಗಳು ಉಪಮಾತೀತರು . ಶಿವಯೋಗಿಗಳ ಕೃಪೆ ಅನುಪಮವಾದುದು . ಅವರ ಕೃಪೆಯಿಂದ ಕೊರಡು ಕೊನರಿತು , ಬರಡು ಹಯನಾಯಿತು , ಅವರ ಕಾರುಣ್ಯ ದೃಷ್ಟಿಯಿಂದ ಪೆರ್ಬುಲಿಯು ಯೆರಳೆಯಾಗಿ ಶ್ರೀಚರಣಕ್ಕೆರಗಿತು , ಉರಿವಕಿಚ್ಚು ಸೀತಳವಾಯಿತು . ಸವದತ್ತಿಯ ಕಲ್ಲುಮಠದಲ್ಲಿ ನಡೆದ ಬಸವ ಪುರಾಣದ ಮಹಾಗಣಾರಾಧನೆಯ ಕಾಲದಲ್ಲಿ ಜಡಿಮಳೆ ಸುರಿದರೂ ಶಿವಯೋಗಿಗಳ ಅಪ್ಪಣೆಯಿಂದ ಶ್ರೀ ಮಠದ ಆವರಣದಲ್ಲಿ ಮಳೆ ಸುರಿಯದೇ ಹೋಯಿತು . ಭಯವಳಿದು ನಯವಾಯಿತು . ಚಕ್ಕಡಿಯ ಗಾಲಿ ಹಾಯ್ದರೂ ಶಿವಯೋಗಿಗಳ ಪಾದಸ್ಪರ್ಶವಾದ ಕೂಡಲೇ ಭಕ್ತ ಮಲಗಿದವನು ಎದ್ದಂತೆ ಎದ್ದು ಕುಳಿತ . ಹೆಚ್ಚೇನು ಆ ಮಹಾಮಹಿಮನ ಕರುಣೆಯಿಂದ ಕಲ್ಲೆಲ್ಲ ಕುಣಿದವು , ಭೂವಳಯ ಸೌಭಾಗ್ಯದ ಸೊಂಪನ್ನು ತಂಪನ್ನು ತಳೆಯಿತು . ಅಂತೇ ಶ್ರೀಮದಥಣಿ ಶಿವಯೋಗಿ – ಲೋಕದೊಳ್ ಈಶ್ವರನೆನಿಸಿ ಮೆರೆದ .

ಮೃತ್ಯುಂಜಯ ಅಪ್ಪಗಳ ದಿವ್ಯ ಸಾನ್ನಿಧ್ಯದಲ್ಲಿ ಕೈಂಕರ್ಯ ಕೈಕೊಂಡ ಮಹಾಭಾಗ್ಯ ಈ ತೊತ್ತಿನದು . ಅಂತೆಯೇ ಅಂದೇ ಹೀಗೆ ಹಾಡಿದ್ದೆ-

ನನ್ನ ಗುರುವೆ

ನಿಮ್ಮ ಗುರು ಶಿವಯೋಗಿಯ

 ಇರುವ ನಿಮ್ಮಲ್ಲಿ ಕಂಡೆನಯ್ಯಾ !

ನೀವಲ್ಲದೆ ಶಿವಯೋಗಿಗೆ

 ಬೇರೆ ಠಾವಿಲ್ಲ ಎನ್ನ ಮನದಾಳ್ದನೆ .

ಲೇಖಕರು :ಡಾ . ಬಿ . ಆರ್ . ಹಿರೇಮಠ

(ಸುಕುಮಾರ : ಅಗಸ್ಟ ೨೦೦೨)

ಕರ್ನಾಟಕದ ವೀರಶೈವ ಮಠಗಳು ನಾಡಿಗೆ ಸಲ್ಲಿಸಿದ ಸೇವೆ . ಮಾಡಿದ ಸಾಧನೆಗಳು ಅನುಪಮವಾದವುಗಳಾಗಿರುತ್ತವೆ . ಮಠ ಮತ್ತು ಸಮಾಜಗಳಲ್ಲಿ ಲಿಂಗಾಂಗ ಸಾಮರಸ್ಯ’ದಂಥ ಅನ್ಯೋನ್ಯತೆ ಇದೆ . ಇಂಥ ವೀರಶೈವ ಮಠಗಳ ಭವ್ಯ ಹಾಗೂ ಪುಣ್ಯ ಪರಂಪರೆಯ ಸಾಕಾರ ರೂಪವೇ ಧಾರವಾಡದ ಶ್ರೀಮುರುಘಾಮಠ . ಇದು ಧಾರ್ಮಿಕ ವಿಶ್ವವಿದ್ಯಾಲಯದಂತಿದೆ .

 ಧಾರವಾಡದ ಶ್ರೀಮುರುಘಾಮಠವು ‘ ‘ ಅಪ್ಪ’ಗಳ ಪರಂಪರೆಯನ್ನು ನಾಡಿಗೆ ನೀಡಿರುವುದು ಒಂದು ಪುಣ್ಯವಿಶೇಷ . ಶ್ರೀಮಠದ ಪರಂಜ್ಯೋತಿ , ಪುಣ್ಯ ಮೂರುತಿ , ಪರಮಪೂಜ್ಯ ಮೃತ್ಯುಂಜಯ ಅಪ್ಪಗಳು ತಮ್ಮ ಸಮಾಜೋ – ಧಾರ್ಮಿಕ ಕಾವ್ಯಗಳ ಮೂಲಕ ನಾಡಿನಲ್ಲಿ ನವಜಾಗೃತಿಯನ್ನು ಉಂಟು ಮಾಡಿದ್ದಾರೆ . ತಮ್ಮ ಮಹಾಚೈತನ್ಯ ಹಾಗೂ ಪವಿತ್ರ ಸಂಕಲ್ಪಗಳ ಮೂಲಕ ಮೃತ್ಯುಂಜಯ ಅಪ್ಪಗಳು ನಾಡಿನ ಜನರ ಜೀವನ ಪಾವನವಾಗುವಂತೆ , ಸಮಾಜ ಸಂವರ್ಧನಗೊಳ್ಳುವಂತೆ ಮಾಡಿದ್ದಾರೆ . ಅಪ್ಪಗಳು ಧರ್ಮದ ಮೇರುವಾಗಿ , ಸಮಾಜ ಸೂರ್ಯರಾಗಿ , ಭಕ್ತರ ಕಲ್ಪವೃಕ್ಷವಾಗಿ ಅಮೃತಮಯ ಕಾರ್ಯ ಮಾಡಿದ್ದಾರೆ . ಅವರ ನಡೆ ಪರುಷ , ನುಡಿ ಪರುಷ . ಪೂಜ್ಯರು ಪುಣ್ಯದಂತೆ ಬಂದು , ಜ್ಞಾನದಂತೆ ಇದ್ದು , ಮುಕ್ತಿಯಂತೆ ಹೋದರು . ಮೃತ್ಯುಂಜಯ ಅಪ್ಪಗಳು ವೀರಶೈವ ಧರ್ಮಕ್ಕೆ ಧರ್ಮವಾಗಿ , ದರ್ಶನಕ್ಕೆ ದರ್ಶನವಾಗಿ , ತತ್ವಕ್ಕೆ ತತ್ವವಾಗಿದ್ದರು . ಅವರದು ‘ ಲಿಂಗಲೀಲೆ ‘ . ಪ್ರಸಾದಕಾಯರಾಗಿದ್ದ ಅವರದು ಲಿಂಗ ನುಡಿ , ಲಿಂಗ ನಡೆ . ಅವರು ಮನದೆರೆದು ಮಾತನಾಡಿದರೆ ಲಿಂಗದರುಶನ ಆಗುತ್ತಿದ್ದಿತು . ಇಂಥ ಮಹಾಬೆಳಗು ಅವರಾಗಿದ್ದರು . ಈ ಮಹಾಬೆಳಗಿನಲ್ಲಿ ಲೋಕದ ಜನರ ಜೀವನ ಪಾವನವಾಯಿತು .

ಪೂಜ್ಯಅಪ್ಪಗಳು , ವೀರಶೈವ ಮಠಗಳು ಸಮಾಜಪರ , ಜನಪರವಾಗುವಂತೆಯೂ ಮಠಾಧೀಶರು ಆತ್ಮಕಲ್ಯಾಣದಲ್ಲಿ ಮಾತ್ರ ನಿರತರಾಗಿರದೆ ಲೋಕಕಲ್ಯಾಣ ಕಾವ್ಯದಲ್ಲಿ ತೊಡಗಿಕೊಳ್ಳುವಂತೆಯೂ ಪ್ರೇರೇಪಿಸಿದರು . ಅವರ ಅಂದಿನ ಆ ಪ್ರೇರಣೆಯ ಪುಣ್ಯದ ಫಲವೇ ಇಂದಿನ ವೀರಶೈವ ಮಠಗಳು .

 ಪರಮಪೂಜ್ಯ ಮೃತ್ಯುಂಜಯ ಅಪ್ಪಗಳು ಶ್ರೀಮುರುಘಾಮಠದ ಕಾರುಣ್ಯ ಮೂರುತಿಗಳಾಗಿದ್ದರು . ಪೂಜ್ಯರು ಶ್ರೀಮಠದ ಅಧಿಪತಿಗಳಾಗಿ , ವೈರಾಗ್ಯನಿಧಿಯಾಗಿ , ಮಾನವತೆಯ ಆರಾಧಕರಾಗಿ , ಸಮಾಜೋದ್ದಾರಕರಾಗಿ , ಮಾನವ ಧರ್ಮದ ಪ್ರತಿ ಪಾದಕರಾಗಿ , ಸಾಹಿತ್ಯ – ಸಂಸ್ಕೃತಿಗಳ ಸಂರಕ್ಷಕರಾಗಿ , ಮಾನವೀಯ ಮೌಲ್ಯಗಳ ಪ್ರಸಾರಕರಾಗಿ ಮಾಡಿದ ಕಾರ್ಯ ಅನನ್ಯ ಹಾಗೂ ಅನುಪಮವಾದುದಾಗಿದೆ .

 ಪೂಜ್ಯರದು ಸ್ವಭಾವ ವೈರಾಗ್ಯ , ಸಹಜ ವೈರಾಗ್ಯ . ಇಂಥ ಸ್ವಭಾವ ವೈರಾಗ್ಯದ ಮಠಾಧೀಶರನ್ನು ಪಡೆಯುವುದು ಸಮಾಜದ ಸೌಭಾಗ್ಯ . ಇದು ನಾಡಿನ ಜನರ ಅನಂತ ಕಾಲದ ಪುಣ್ಯದ ಫಲ . ಸಹಜ ವೈರಾಗ್ಯ ಅಷ್ಟು ಸರಳವಾದುದಲ್ಲ . ಅದು ದಿವ್ಯ ತಪಸ್ಸು , ಜೀವನವ್ರತ , ಶ್ರೀಗಳ ಗುರುಸೇವೆ , ಲಿಂಗ ಪೂಜೆ , ಜಂಗಮ ದಾಸೋಹಗಳು ಆದಿ ಸ್ಮರಣೀಯವಾದವುಗಳಾಗಿರುತ್ತವೆ . ಮೃತ್ಯುಂಜಯ ಅಪ್ಪಗಳು ಸಕಲರಿಗೂ ಸಕಲಕ್ಕೂ ಒಳ್ಳೆಯದನ್ನೇ ಮಾಡಿದವರು . ಒಳ್ಳೆಯದನ್ನೇ ಬಯಸಿದವರು . ಯಾರಿಗೂ ಯಾವುದಕ್ಕೂ ಎಂದೂ ಕೆಟ್ಟದ್ದನ್ನು ಬಯಸಿದವರಲ್ಲ , ಕೆಟ್ಟದ್ದನ್ನು ಮಾಡಿದವರಲ್ಲ . ಪ್ರತಿಯೊಂದು ವಸ್ತು – ವ್ಯಕ್ತಿಯಲ್ಲಿಯೂ ` ಶಿವಸ್ವರೂಪ’ವನ್ನು ಕಂಡವರು . ಅಂಗಕ್ರಿಯೆಗಳನ್ನು ಲಿಂಗಕ್ರಿಯೆಗಳನ್ನಾಗಿಸಿಕೊಂಡಿದ್ದ ಅವರಿಗೆ ಬಡವ ಶ್ರೀಮಂತ , ಅಧಿಕಾರಿ -ಸೇವಕ , ದೊಡ್ಡವ – ಸಣ್ಣವ ಎಂಬ ವರ್ಗಭೇದವಾಗಲೀ , ಮೇಲುವರ್ಗ – ಕೆಳವರ್ಗ , ಶ್ರೇಷ್ಠ ಕನಿಷ್ಠ ಎಂಬ ವರ್ಣಭೇದವಾಗಲೀ , ಪುರುಷರು ಸ್ತ್ರೀಯರು , ಹಿರಿಯರು – ಕಿರಿಯರು ಲಿಂಗಭೇದವಾಗಲೀ ಇರಲಿಲ್ಲ . ಮಠಾಧೀಶರಿಗೆ ಇಂಥ ಸಾಮಾಜಿಕ ಸೂತಕಗಳಿರಬಾರದೆಂದು ಹೇಳುತ್ತಿದ್ದರು . ವ್ಯಕ್ತಿ ನಿರ್ಮಾಣ , ಸಮಾಜ ನಿರ್ಮಾಣಗಳು ಶ್ರೀಮಠಗಳ ಪರಮ ಕರ್ತವ್ಯವಾಗಿರಬೇಕೆಂದು ಬಲವಾಗಿ ಪ್ರತಿಪಾದಿಸುತ್ತಿದ್ದರು .

 ಕೇವಲ ಅಧಿಕಾರ- ಅಂತಸ್ತುಗಳು ದೊಡ್ಡವಿದ್ದರೆ ಸಾಲದು , ಭಾವ ಮನಸ್ಸುಗಳೂ ದೊಡ್ಡವಾಗಿರಬೇಕು . ಶ್ರೀಮಂತಿಕೆ , ಅಧಿಕಾರ , ಅಂತಸ್ತು , ಹುದ್ದೆ , ವೃತ್ತಿಗಳಲ್ಲಿ ಯಾವಾಗಲೂ ‘ ಶುಚಿತ್ವ ‘ ವಿರಬೇಕು . ಪ್ರೀತಿ , ವಾತ್ಸಲ್ಯ , ಅನುಕಂಪ , ಅಂತಃಕರಣ ಮೊದಲಾದ ಮಾನವೀಯ ಗುಣಗಳನ್ನು ಆರಾಧಿಸಬೇಕು . ಮನುಷ್ಯ ಪ್ರೀತಿ , ಸಮಾಜ ಪ್ರೀತಿಗಳನ್ನು ಬೆಳೆಸಿಕೊಳ್ಳಬೇಕು . ವ್ಯಕ್ತಿ ದ್ವೀಪವಾಗಿ ಬಾಳಬಾರದು , ದೀಪವಾಗಿ ಬೆಳಗಬೇಕೆಂದು ಪೂಜ್ಯ ಅಪ್ಪಗಳು ಗಟ್ಟಿಯಾಗಿ ಹೇಳುತ್ತಿದ್ದರು . ಅವರ ಅಂದಿನ ಈ ಅಮೃತನುಡಿಗಳು ಇಂದಿನ ಸಮಾಜಕ್ಕೆ ಸಂಜೀವಿನಿಯಂತಿವೆ . ಅಪ್ಪಗಳ ಈ ನುಡಿಗಳು ಇಂದು ಹೆಚ್ಚು ಪ್ರಸ್ತುತವಾಗಿದ್ದು , ವ್ಯಕ್ತಿಯ ಶುದ್ಧೀಕರಣ ಹಾಗೂ ಎಂದೂ ಸಮಾಜದ ಶುದ್ಧೀಕರಣ ಕ್ಕೆ ಅವಶ್ಯಕವಾದವುಗಳಾಗಿರುತ್ತವೆ .

ಬೇಕೆಂಬುದು ಕಾಯಗುಣ , ಬೇಡೆಂಬುದು ವೈರಾಗ್ಯ , ಆಶೆ ಇಲ್ಲದುದೆ ವೈರಾಗ್ಯ , ತನ್ನ ಅರಿದವಂಗೆ ಇದಿರೆಂಬುದಿಲ್ಲ , ದಯವೇ ಧರ್ಮದ ಮೂಲ . ನಾನು ಮಾಡಿದೆನು ಎನ್ನದಿರು – ಈ ಮೊದಲಾದ ವಚನೋಕ್ತಿಗಳಿಗೆ ಪೂಜ್ಯರು ಉಜ್ವಲ ದೃಷ್ಟಾಂತ ಎನಿಸಿದ್ದರು .

ಅವರು ತಮಗಾಗಿಯಾಗಲೀ , ಶ್ರೀಮಠಕ್ಕಾಗಿಯಾಗಲೀ ಜನರಿಂದ ಕಾಡಿಸಿ ಪೀಡಿಸಿ ಪಡೆದವರಲ್ಲ . ಯಾವುದೇ ಸ್ವಾರ್ಥಕ್ಕಾಗಿಯಾಗಲೀ , ಆಶೆ – ಆಮಿಷಗಳಿಂದಾಗಲೀ ಯಾವ ವಸ್ತುವನ್ನೂ ಅವರು ತೆಗೆದುಕೊಂಡವರಲ್ಲ . ಅಗ್ಗದ ಪ್ರಚಾರ , ಕೀರ್ತಿ ಪ್ರಕೀರ್ತನೆ , ಪ್ರಸಿದ್ಧಿ -ಪ್ರಲೋಭನೆ – ಪ್ರಶಸ್ತಿಗಳಿಗಾಗಿ ಅವರು ಹಾತೊರೆದವರಲ್ಲ . ಅವೆಲ್ಲವುಗಳನ್ನು ಮೀರಿನಿಂತ ವೀರ ವಿರಾಗಿಗಳು ಅವರಾಗಿದ್ದರು .

ಪೂಜ್ಯರು ಆಚಾರದ , ಅರಿವಿನ ಅನರ್ಘ್ಯರತ್ನವೆನಿಸಿದ್ದರು . ತಮ್ಮ ಆಚಾರಶೀಲತೆಯಿಂದ ಶ್ರೀಮಠದ ವಿದ್ಯಾರ್ಥಿಗಳನ್ನು , ಶ್ರೀಮಠದ ಪರಮ ಭಕ್ತರನ್ನು “ ಆಚಾರವಂತರನ್ನಾಗಿ ರೂಪಗೊಳಿಸಿದ ಶ್ರೇಯಸ್ಸಿಗೆ ಪಾತ್ರರಾದರು . ಜನರು ಕೇವಲ ವಿಚಾರವಂತರಾದರೆ ಸಾಲದು , ಅವರು ಆಚಾರವಂತರೂ ಆಗಿರಬೇಕೆಂದು ಪೂಜ್ಯರು ಮೇಲಿಂದ ಮೇಲೆ ಹೇಳುತ್ತಿದ್ದರು . ಅವರು ಆಚಾರವಂತ ಜನರನ್ನು , ಆಚಾರವಂತ ಮಠಾಧಿಪತಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು . ಸದಾಚಾರವಿಲ್ಲದ ವಿರಕ್ತರು , ಮಠಾಧೀಶರು ಸಮಾಜವನ್ನು ಎಂದೂ ತಿದ್ದಲಾರರು . ಇಂಥವರಿಂದ ಮಠಗಳು ಬೆಳೆಯುವುದಿಲ್ಲ ; ಲೋಕ ಕಲ್ಯಾಣ , ವ್ಯಕ್ತಿ ಕಲ್ಯಾಣ ಕಾರ್ಯಗಳು ನೆರವೇರಲಾರವೆಂದು ಅಪ್ಪಗಳು ಪದೇಪದೇ ನುಡಿಯುತ್ತಿದ್ದರು . ಅವರ ಈ ದಾರ್ಶನಿಕ ನುಡಿಗಳನ್ನು ಇಂದಿನ ಸಮಾಜ ಮತ್ತು ಮಠಾಧೀಶರು ಗಮನಿಸುವುದು ಅವಶ್ಯವಿದೆ . ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳದು ಆಚಾರ – ವಿಚಾರಗಳ ಸಂಗಮ ವ್ಯಕ್ತಿತ್ವ : ಜ್ಞಾನ – ಕ್ರಿಯೆಗಳ ಸಾಮರಸ್ಯದ ಮಹಾಚೈತನ್ಯ .

ಹೀಗೆ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಸಮಾಜಪ್ರೀತಿ , ಮನುಷ್ಯ ಪ್ರೀತಿ , ಸದಾಚಾರ , ಸಹಜತೆ , ಸರಳತೆ , ಧರ್ಮನಿಷ್ಠೆ , ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ದಿವ್ಯಮೂರುತಿಯೆನಿಸಿದ್ದರು . ಪೂಜ್ಯ ಅಪ್ಪಗಳು ವೈರಾಗ್ಯಕ್ಕೆ , ವಿರಕ್ತತ್ವಕ್ಕೆ , ಮಠಾಧೀಶ ಪದಕ್ಕೆ ವಿಶೇಷ ಅರ್ಥ ತುಂಬಿದರು . ಪೂಜ್ಯರು ತಮ್ಮ ವ್ಯಕ್ತಿತ್ವದ ಮೂಲಕ ವಿರಾಗಿಗಳಿಗೆ , ವಿರಕ್ತರಿಗೆ , ಮಠಾಧೀಶರಿಗೆ , ವೀರಶೈವ ಮಠಗಳಿಗೆ ಹೆಚ್ಚಿನ ಬೆಲೆ ತಂದು ಕೊಟ್ಟಿದ್ದಾರೆ .

ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಟಾಪಿಸಿದುದು ಮಹತ್ತರ ಪುಣ್ಯಮಯ ಕಾರ್ಯವೆನಿಸಿದೆ . ಪರಮ ಪೂಜ್ಯ ಮಹಾಂತ ಅಪ್ಪಗಳನ್ನು ರೂಪಿಸಿ , ಶ್ರೀಮಠಕ್ಕೆ ಧಾರೆಯೆರೆದುದು ಇನ್ನೊಂದು ಅವಿಸ್ಮರಣೀಯ ಸಾಧನೆಯೆನಿಸಿದೆ , ಈ ಉಭಯ ಶ್ರೀಗಳ ಭವ್ಯ ಪರಂಪರೆಯಲ್ಲಿ ಶ್ರೀಮ.ನಿ.ಪ್ರ . ಶಿವಯೋಗೀಶ್ವರ ಮಹಾಸ್ವಾಮಿಗಳು ಮುನ್ನಡೆದಿದ್ದಾರೆ . ಮಹಾಚೈತನ್ಯ ಸ್ವರೂಪಿಗಳೂ ಸಾಹಿತ್ಯ – ಸಮಾಜ – ಸಂಸ್ಕೃತಿಯ ಪರಮ ಆರಾಧಕರೂ ಆಗಿದ್ದ ಪರಮಪೂಜ್ಯ ಮೃತ್ಯುಂಜಯ ಅಪ್ಪಗಳನ್ನು ನೆನೆವುದೇ ಹರುಷ , ಪರುಷ , ಗತಿ , ಮತಿ , ತಪ , ಜಪ , ಸತ್ಯ , ನಿತ್ಯ ,

ಲೇಖಕರು :ಡಾ . ಸಿದ್ದಣ್ಣ .ಬ . ಉತ್ನಾಳ

(ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಹನ್ನೆರಡನೆಯ ಶತಮಾನದಲ್ಲಿ ಗಟ್ಟಿಗೊಂಡು ೧೯ ನೆಯ ಶತಮಾನದಲ್ಲಿ ಸವಕಲಾದ ವೀರಶೈವ ದಾರ್ಶನಿಕ ಪದಗಳಿಗೆ ಹೊಸ ಶಕ್ತಿ ತುಂಬಿ ; ಜಗಕ್ಕೆಲ್ಲ ಜಂಗಮಜ್ಯೋತಿಯಾಗಿ ಬೆಳಗಿದವರು ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು .

 ಜ್ಯೋತಿ ಕತ್ತಲೆಯಲ್ಲಿ ಭಾತಿಯಿಂದುರಿವಂತೆ

ಪ್ರೀತಿಯಿಂದೆಸೆವ ಶಿವಯೋಗಿ ಜಗಕ್ಕೆಲ್ಲ

 ಜ್ಯೋತಿ ತಾನಕ್ಕು ಸರ್ವಜ್ಞ

ಜಗವೆಲ್ಲ ಶಿವಾನುಭವ ಸೌರಭದಿಂದ ಹನ್ನೆರಡನೆಯ ಶತಮಾನಶಕ್ತಿ ಮರುಕಳಿಸಿತು . ಶಿವಯೋಗದ ಸ್ವರೂಪವು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿ ಗಳ ಯೋಗಮಯ ಜೀವನದಲ್ಲಿ ಬೆಳಗುತ್ತಿದ್ದಿತು . ಆ ಬೆಳಕಿನ ಸಹಾಯದಿಂದ ಸಹಸ್ರಾರು ಮಹಾತ್ಮರು ಇಂದು ನಡೆದು ನುಡಿದು ನಾಡ ಪಾವನ ಮಾಡುತ್ತಿ ದ್ದಾರೆ . “ ಶಿವಯೋಗಿಗಳು ಚುಂಬಕವಾಗಿ ಸಮಾಜವನ್ನು ಆಕರ್ಷಿಸಿದರು : ಪರುಷರಾಗಿ ಹಲವರನ್ನು ಪರಿವರ್ತನಗೊಳಿಸಿದರು ; ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು . ಅವರ ಪ್ರಸಾದ ವಾಣಿಯ ಪ್ರಭಾವದಿಂದ , ಅವರ ಕೃಪಾದೃಷ್ಟಿಯ ಬಲದಿಂದ , ಅವರ ಆಶೀರ್ವಾದದ ಪರಿಣಾಮವಾಗಿ ಆತ್ಮ ಶಕ್ತಿಯನ್ನು ಅರಳಿಸಿಕೊಂಡವರ ಸಂಖ್ಯೆ ಅಸಂಖ್ಯ . ಇಂದಿಗೂ ಈ ಪ್ರಕಾಶ ಪರಂಜ್ಯೋತಿ ಸ್ವರೂಪವಾಗಿ ಪ್ರಕಾಶ ಪಸರಿಸುತ್ತಿದೆ ” .

ಈ ಪ್ರಕಾಶದ ಪೂರ್ವದಿಗಂತವೇ ನದಿ ಇಂಗಳಗಾವಿ , ಅಲ್ಲಿ ಶಾಲಿವಾಹನ ಶಕೆ ೧೭೫೮ ರ ವೈಶಾಖ ಮಾಸದ ಶುಕ್ಲಪಕ್ಷ ೧೧ , ಬೆಳಕು ಉದಯವಾಯಿತು . ಈ ಮಹಿಮರಿಗೆ ಜನ್ಮದಾತರಾಗುವ ಪುಣ್ಯ ರಾಚಯ್ಯ – ನೀಲಾಂಬಿಕೆಯರದು .

ಆರಾಜಿಸುವ ಪರಬ್ರಂಹ ತೇಜಃ ಕಲಾ |

 ಕೌರವಾರಂಗೊಂಡು ಪುಟ್ಟ ತೆನೆಪದಿನೆಂಟು |

 ನೂರ ಮೂವತ್ಪಾದನೆಯ ಶಕ ವರ್ಷದೊಳ್ಗುರುಲಿಂಗ ನಾಮಾಂಕಿತ

ಧಾರಣಿಯೊಳವತರಿಸಿ ಬಾಲಲೀಲೆಗಳಿಂದ

ಮಾರ ಸೌಂದರ್ಯಮಂ ಜರೆಯುವಾ ಕೃತಿಯನುಂ

 ಸಾರುತಾಪುತ್ರರೋಳೀತನಧಿಕ ಪ್ರೇಮ ಜೀವಿಯೆನೆ ರಂಜಿಸಿರ್ದಂ ||

ಗುರುಲಿಂಗಯ್ಯನ ಆಚಾರ – ವಿಚಾರ ಸಾಮಾನ್ಯ ಮಕ್ಕಳಂತಿರದೆ ಅಸಾಮಾನ್ಯವಾಗಿ ಕಾಣತೊಡಗಿದವು . ಆಗ ಈ ಬಾಲಕನನ್ನು ಅಥಣಿಯ ಗಚ್ಚಿನಮಠಕ್ಕೆ ಕರೆದುಕೊಂಡು ಬಂದರು . ಪೀಠಾಧಿಪತಿಗಳಾಗಿದ್ದ ಎರಡನೆಯ ಮರುಳ ಶಂಕರಸ್ವಾಮಿಗಳು ಗುರುಲಿಂಗಯ್ಯನನ್ನು ಗುರುದೃಷ್ಟಿಯಿಂದ ಕಂಡು ‘ ಸಾಕ್ಷಾತ್ ಶಿವನೇ ಆಗಮಿಸಿದ’ನೆಂದು ಅಂತಃಕರಣದಿಂದ ಬರಮಾಡಿಕೊಂಡರು . ಅಧ್ಯಯನಕ್ಕಾಗಿ ತೆಲಸಂಗದ ಶಿವಬಸವ ದೇವರಲ್ಲಿ ಹಾಗೂ ಮಮದಾಪುರದ ಮಹಾಯೋಗಿಗಳಲ್ಲಿ ವ್ಯವಸ್ಥೆ ಮಾಡಿದರು . ಅಭ್ಯಾಸ ಮುಗಿಸಿಕೊಂಡು ಮರಳಿ ಅಥಣಿಗೆ ಆಗಮಿಸಿದರು . ಮರುಳಶಂಕರರು ಮುರುಘೇಂದ್ರ ಎಂದು ಹೊಸ ನಾಮಕರಣ ಮಾಡಿದರು . ಗುರುಶಾಂತಸ್ವಾಮಿಗಳಿಂದ ಷಟಸ್ಥಲ ಬ್ರಹ್ಮೋಪದೇಶವನ್ನು ಪಡೆದು ಮುಂದೆ ಸಂಚಾರ ಕೈಕೊಂಡರು . ಹಳ್ಳಿಯಲ್ಲಿ ಏಕರಾತ್ರಿ , ಪಟ್ಟಣದಲ್ಲಿ ಪಂಚರಾತ್ರಿಗಳಂತೆ ವಾಸ್ತವ್ಯ ಮಾಡುತ್ತ ನಡೆದರು , ಚರಜಂಗಮಾಚರಣೆಯ ಪಾಲನೆಗಾಗಿ ಪುಣ್ಯಸ್ಥಳಗಳ ದರ್ಶನ ಕೈಕೊಂಡರು .

ನಂತರ ಅಥಣಿ ತಾಲೂಕಿನ ಶೂರಪಾಲಿ ಗ್ರಾಮದ ಹತ್ತಿರ ” ಗುಹೇಶ್ವರ ಗಡೆ’ಯಲ್ಲಿ ಆರು ವರುಷ ಶಿವಯೋಗಾನುಸಂಧಾನಕ್ಕೋಸ್ಕರ ಏಕಾಂತ ವಾಸ ದಲ್ಲಿದ್ದರು . ಇದೇ ಸಂದರ್ಭದಲ್ಲಿ ಶಿವಯೋಗಿಗಳು ಲಿಂಗಾರ್ಚನೆಗೆ ಕುಳಿತಾಗ ಶಿವಯೋಗ ಸಾಧನೆ ನಾಗರಹಾವೊಂದು ದಿನಾಲು ತೂಗಿ ತೊನೆಯುತ್ತಿತ್ತು .ಶಿವಯೋಗ ಸಾಧನೆ ಯನ್ನು ಮುಗಿಸಿ ಶಿವಯೋಗ ಸಿದ್ದರಾಗಿ ಹೊರಬಿದ್ದರು ಶ್ರೀ ಮುರುಘೇಂದ್ರ ದೇವರು .

 ಗಚ್ಚಿನ ಮಠಕ್ಕೆ ಆಗಮಿಸಿದಾಗ ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಚೆನ್ನಬಸವಸ್ವಾಮಿಗಳು ಹಾಗೂ ಭಕ್ತರು ವಿನಯದಿಂದ ಕೇಳಿಕೊಂಡರು . “ ಈ ಮಠ – ಮಾನ್ಯಗಳ ಅಧಿಕಾರ ಬೇಡ , ಗುರು – ಲಿಂಗ – ಜಂಗಮ ಸೇವೆಯಂತೆ ಶರಣರ ಸೇವೆಯೇ ಸಾಕು . ನಾ ನಿರಾಭಾರಿ ಜಂಗಮ , ನನಗೆ ಲಿಂಗಯ್ಯನ ಸಂಗೊಂದು ಸಾಕು ” . ಶ್ರೀ ಸಿದ್ದಲಿಂಗ ದೇವರನ್ನು ಮಠದ ಅಧಿಪತಿಯನ್ನಾಗಿ ಮಾಡಿದರು . ಶ್ರೀಗಳು ಹಾಗೂ ಭಕ್ತರು ಶ್ರೀ ಮುರುಘಂದ್ರ ಮಹಾಸ್ವಾಮಿ ಗಳಿಗೆ ಈ ಮಠದಲ್ಲಿಯೇ ಇರಲು ಕೇಳಿಕೊಂಡಾಗ ಗಚ್ಚಿನ ಮಠವು ಗಟ್ಟಿ ಯಾಯಿತು , ಯೋಗ ಮಂಟಪವೇ ಶಿವಯೋಗಿಗಳ ಶಿವಾಲಯವಾಯ್ತು .

 ಮುಂದೆ ಶ್ರೀ ಮುರುಘಂದ್ರ ಶಿವಯೋಗಿಗಳ ಜೀವನವು “ ಬಿಂದು ನಾದವ ನುಂಗಿ , ಇಂದು ರವಿಯನು ನುಂಗಿ , ಸಂದಿರ್ದ ಮನವ ನಿಜ ನುಂಗಿದಾ ಯೋಗಿ ಇಂದುಧರನಕ್ಕು ” ಎಂಬ ಸರ್ವಜ್ಞನ ಮಾತಿನ ಮೂರ್ತಿಯಾದರು . ಯತಿಗಳಿಗೆ ಶಿವಯೋಗ ಸಾಮ್ರಾಜ್ಯದ ಸಾಮ್ರಾಟರಾದರು .

 ಈ ಜೀವ ಶಿವನಾಗುವುದೇ ಶಿವಯೋಗ . ನಿಜಗುಣ ಶಿವಯೋಗಿಗಳು ಕಾಯ ಪಿಡಿದಾತ್ಮರಾಶಿಗೆ ಪರತರ ಮುಕ್ತಿಗುಪಾಯವಿದು ; ನಿಜ ಶಿವ ಮಂತ್ರ ವಣ್ಣ ” ಎಂದು ವಿವರಿಸಿದ್ದಾರೆ . ಪರಶಿವನನ್ನು ಅರಿತು ಅರಿವಿನಲ್ಲಿ ಬೆರೆಯು ವುದೇ ಮುಕ್ತಿ , ಜೀವ ಶಿವನೆಂದು ತಿಳಿದು , ತಳೆದು ತಾನೊಂದಾದಾಗ ಆಗುವ ಆನಂದ ಸ್ವರೂಪವೇ ಶಿವಸ್ವರೂಪ . ಇದೇ ಲಿಂಗಾಂಗ ಸಾಮರಸ್ಯ ಅರ್ಥಾತ್ ಶಿವಯೋಗ ‘ . “ ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಃ ಶಿವ ” ಸದುಕ್ತಿಯಂತೆ ತಮ್ಮಲ್ಲಿ ಶಿವನನ್ನು ,ಶಿವನಲ್ಲಿ ತಮ್ಮನ್ನು ಕಂಡು ಸದಾಶಿವ ಸ್ವರೂಪದಲ್ಲಿ ಬಾಳುವವರೇ ಶಿವಯೋಗಿಗಳು .

 ನೆನಹ ಮನದಲ್ಲಿ ಕಟ್ಟಿ , ಮನವ ಘನದಲ್ಲಿ ಕಟ್ಟಿ

ಮನವನ್ನಪಾನಕೆಳಸದೆ ಯೋಗಿಗೆ

ವನವಾಸವೇಕೆ ಸರ್ವಜ್ಞ .

“ ಲಿಂಗಾಂಗ ಯೋಗಾಚರಣೆಗೆ ಪ್ರಸಾದ ಭೋಗವು , ಅದರಿಂದುಂಟಾಗುವ ತೃಪ್ತಿ ಇವೆರಡೇ ಮುಖ್ಯ ಫಲಗಳೆನಿಸುವವು , ಜಗತ್ತಿನ ಸತ್ಪದಾರ್ಥಗಳೆಲ್ಲವೂ ಶಿವಪ್ರಸಾದವಾಗಿ ಪರಿಣಮಿಸಬೇಕು . ಆತ್ಮನು ಆ ಪ್ರಸಾದಭೋಗಿಯಾಗಿ ತೃಪ್ತನಾಗಬೇಕು . ಆ ತೃಪ್ತಿಯು ನಿತ್ಯವಾದುದು , ಲಿಂಗಾನಂದರೂಪ ವಾದುದು . ಇದೇ ಲಿಂಗೋಪಭೋಗ – ಜನ್ಯವಾದ ಶಿವಸುಖವು . ಇದನ್ನು ಪಡೆದವನು ( ಶಿವಯೋಗಿ ) ಮುಕ್ತ ಜೀವಿಯು , ಶಿವಯೋಗಿಯು ಈ ಸ್ಥಿತಿ ಯನ್ನು ಪಡೆಯುವುದೇ ಲಿಂಗಾಂಗ ಯೋಗದ ಸಹಚಾಚರಣೆಯ ಗುರಿ ” .

ಈ ಮಹಾಲಿಂಗ ( ತೃಪ್ತಿ ) ದಲ್ಲಿ ಬೆರೆತ ಲಿಂಗಾಂಗ ಯೋಗಿಯು ಷಟ್‌ಸ್ಥಲ ಬ್ರಹ್ಮಮೂರ್ತಿಯಾಗಿ ಕಂಗೊಳಿಸುವನು . ಇದೇ ಲಿಂಗಾಂಗ  ಯೋಗರೂಪವಾದ ಶಿವಯೋಗದ ನಿಜಸ್ಥಿತಿಯು , ಶ್ರೀ ಮುರುಘೇಂದ್ರ ಶಿವಯೋಗಿಗಳು ಸರ್ವಾಂಗಲಿಂಗ ಸ್ಥಿತಿಯನ್ನು ಪಡೆದವರಾಗಿದ್ದರು .

ಜೀವ ಶಿವನಾಗುವತ್ತ ಮಾಡುವ ಸಾಧನೆಯೇ ಯೋಗ . ಇದರಲ್ಲಿ ಮಂತ್ರ ಯೋಗ , ಲಯಯೋಗ , ಹಠಯೋಗ , ರಾಜಯೋಗ ಹಾಗೂ ಶಿವಯೋಗ ಎಂದು ಐದು ಪ್ರಕಾರಗಳುಂಟು . ‘ ಪರಿಪೂರ್ಣಯೋಗ ‘ ವೆಂದು ಪರಿಪೂರ್ಣ ಯೋಗವೇ ಮುಖ್ಯವೆಂದು ಭಾವಿಸುವವರುಂಟು , ಆದರೆ ” ಶಿವಯೋಗ’ವೇ ಪರಿಪೂರ್ಣ ಅರ್ಥಾತ್ ಪೂರ್ಣ ಯೋಗ .

ಹಲವು ಯೋಗವ ಮಾಡಿ  ಫಲವೇನು ಮಗನೆ

ಎಂದೊಲಿದು ಲಿಂಗಾಂಗ ಸುಲಭ ಯೋಗವನೊಡನೆ

ಕಲಿಸಿದ ಗುರುವೇ ಕೃಪೆಯಾಗು ||

ಎಂದು ಮೈಲಾರ ಬಸವಲಿಂಗ ಶರಣರು ಹೇಳಿದ್ದಾರೆ . ಶ್ರೀ ಮುರುಘೇಂದ್ರ ಶಿವಯೋಗಿಗಳು ಷಟಸ್ಥಲಾಚರಣೆಯಲ್ಲಿ ಬಲ್ಲಿದ ರಾಗಿ , ಶಿವಯೋಗಿ ಚಕ್ರವರ್ತಿಗಳೆನಿಸಿಕೊಂಡಿದ್ದರು . ಈ ಷಟ್‌ಸ್ಥಲದಲ್ಲಿ ಇಹ – ಪರ ಶಕ್ತಿ ಒಂದಾಗಿದೆಂದಾಗ ಈ ಶಿವಯೋಗದ ಮುಂದೆ ಮತ್ತಾವ ಯೋಗ ? ಜೀವವೇ ದೇವರಲ್ಲಿ ಒಂದಾಗುವ ಶಕ್ತಿ ಸಮ್ಮಿಳಿತವಾದಾಗ ಮತ್ತಾ ವುದರಲ್ಲಿ ಒಂದಾಗುವುದು ! ದೇಹ ಕಠಿಣದಿಂದ ಮಾಡುವ ಯೋಗ ಶೈವ ಮತದಲ್ಲಿ ಪ್ರಾಮುಖ್ಯತೆಹೊಂದಿದೆ . ವೀರಶೈವದಲ್ಲಿ ‘ ಷಟ್‌ಸ್ಥಲ ಮಾರ್ಗದಿಂದ ಸಾಧಿಸುವ ಲಿಂಗಾಂಗ ಸಂಯೋಗವೇ ವೀರಶೈವದ ಶಿವಯೋಗವಾಗಿರುವುದು , ಲಿಂಗಾಂಗಗಳ ಸಾಮರಸ್ಯವೇ ಸಂಯೋಗವೆನಿಸುವುದು .

ಸಮ್ಯಗೊಗೋ ಹಿ ಸಂಯೋಗೋಭವೇಲ್ಲಿಂಗಾಂಗಯೋಃ

 ಸದಾ ಸಂಯೋಗ ಏವ ಸಾಯುಜ್ಯರೂಪ ಮುಕ್ತಿರ್ನ ಚಾಪರಾ

 ಎಂದು ಮೊಗ್ಗೆಯ ಮಾಯಿದೇವರು ತಮ್ಮ ಶಿವಾನುಭವ ಸೂತ್ರದಲ್ಲಿ ಹೇಳಿದ್ದಾರೆ ,

ಆ ಪರಶಿವನಲ್ಲಿ ಮನವನ್ನು ಲೀನಗೊಳಿಸಿ ಧ್ಯಾನಿಸುವುದೇ ಮಂತ್ರಯೋಗ , ಕರಣೇಂದ್ರಿಯ ಭೋಗದಿಂದ ಬಿಡುಗಡೆ ಹೊಂದಿ , ಪರಶಿವನಲ್ಲಿ ಚಿತ್ರವನ್ನು ಲಯಗೊಳಿಸುವದೇ ಲಯಯೋಗ – ಸರಾಗವಾಗಿ ಸಂಚರಿಸುತ್ತಿರುವ ಪ್ರಾಣ ವಾಯುವನ್ನು ಮೂಗಿನ ರಂಧ್ರದ ಮೂಲಕ ತಡೆಹಿಡಿದು ತೂಬಿಸಿ ಹಣೆಯಲ್ಲಿ ಹೊಳೆಯುವ ಪ್ರಕಾಶವನ್ನೇ ತದೇಕ ಚಿತ್ತದಿಂದ ನೋಡುವುದೇ ಹಠಯೋಗ . ಈ ಜಗತ್ತಿನಲ್ಲಿ ಒಳ – ಹೊರಗೆಲ್ಲಾ ತುಂಬಿರುವ ಪ್ರಕಾಶವೇ ( ಪರತತ್ವವೆ ) ತಾನೆಂದು ತಿಳಿದು , ಆ ಅರಿವನ್ನೂ ಮೀರಿ ನಿಲ್ಲುವುದೇ ರಾಜಯೋಗ , ಒಂಭತ್ತು ಚಕ್ರಗಳಲ್ಲಿ ಒಂದು ಮಹಾಜ್ಯೋತಿ ಸಂಚರಿಸುವುದು . ಆ ಜ್ಯೋತಿಯೇ ಗುರುಸಿದ್ಧ ಮೂರ್ತಿ : ಗುರುಸಿದ್ಧ ನೇ ಶಿವಸ್ವರೂಪಿ ಎಂದು ಎರಡಿಲ್ಲದೇ ಭಾವಿಸಿ ನಂಬಿ ಧ್ಯಾನಿಸುವುದೇ ಶಿವಯೋಗ . ಪರತತ್ವವು ತನಗೆ ತಾನೇ ಗೋಚರಿಸು ವುದು . ಶರೀರದಲ್ಲಿ ಪರಂಜ್ಯೋತಿಯಿದೆ , ಪರತತ್ವವೂ ಇದೆ . ಆ ಜ್ಯೋತಿಯೇ ಮೂಲಸ್ವರೂಪ ; ಇದನ್ನೇ ಪರಬ್ರಹ್ಮ ಸ್ವರೂಪವೆನ್ನುತ್ತಾರೆ . ಈ ದೇಹದಲ್ಲಿ ಇರುವ ನವಚಕ್ರಗಳನ್ನು ಸಂಧಿಸಿ ಚಿಜ್ಯೋತಿಯನ್ನು ಕಾಣಬಹುದು . ಇದುವೇ ಪರಿಪೂರ್ಣ‌ ಲಿಂಗ , ಪರಶಿವತತ್ವ , ಹೀಗೆ ಪರಶಿವತತ್ವ ಕಂಡು ಶಿವಯೋಗಿ ಗಳಾದರು . ಆಗ ಭಕ್ತರು

ಪರಮಾತ್ಮನಿವನೆಂದು ನಿರುಕಿಸಲ್ಕೆಲರಂತು |

ಪರಮಸದ್ಗುರುವೆಂದು ಪೂಜಿಸಲ್ಕೆಲರಂತು |

ಹರಶರಣನೆಂದು ಸಲೆಪಾಡಲ್ಕೆಲರಂತು ಭೂರಿಸಂತೋಷವಾಂತು |

ಪರವಸ್ತುವೆಂದು ನೆರೆನುತಿಸಲ್ಕೆಲರಂತು |

ಚರಣಸನ್ನಿಧಿ ದರ್ಶನಕ್ಕೆಂದು ಕೆಲರಂತು |

ತರತರಗೊಳ್ಳುತಂ ಬರುತಿರ್ಪರನುದಿನಂ ಭಕ್ತಿಭಾವಾಸಕ್ತರು ||

 ನವಚಕ್ರಗತ ತೇಜೋಮಯ ಗುರುಸಿದ್ದನೆ

ಶಿವಲಿಂಗನಾಗಿಹನಿದನೊಂದಿ |

ಅವಿರಳನಾಗಿರಲಪವರ್ಗವಹುದೆಂದು

 ಶಿವಯೋಗವನು ಕಾಣಿಸಿದರಿಂದೆ

ಎಂದು ಸರ್ಪಭೂಷಣ ಶಿವಯೋಗಿಗಳು ಶಿವಯೋಗ ಕುರಿತು ಹೇಳಿದ್ದಾರೆ .

ಶಿವಾನುಭವ ದರ್ಪಣದಲ್ಲಿ :

 ಶಿವಯೋಗೀಶಂ ಸದಾಪಶ್ಚಿಮವಿತಥ ಪದ್ಮಾಸನಾಸೀನನಾಗು |

ತ್ತವ ನೀಲಜ್ಯೋತಿ ಕಾಂತ್ಯದ್ವಯ ಮಿಡಿದರೆ ಯೋಗಾನುಭವ ಪ್ರಕಾಶಂ |

 ತವೆ ಕುಂಡಗ್ನಿಯೊಳ್ ಚಲ್ಲುತಿರೆ ವಿಮಳಷಟ್ಚ್ಕ್ರ ಪದ್ಮಂಗಳೆಲ್ಲಂ |‌

 ರವಿ ಚಂದ್ರಾಗ್ನಿ ಪ್ರಭಾ ಕೋಟಿ ಕಿರಣಮಯವಾಗಲ್

ತ್ರಿಲೋಕಾಂತ ತೇಜಂ |

ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಶಿವಯೋಗ ಸಾಮ್ರಾಜ್ಯದ ಸಾರ್ವಭೌಮರಾದರು . ಅವರ ಜೀವನವೇ ಶಿವಯೋಗ ; ಶಿವಯೋಗವೇ ಅವರ ಜೀವನ .

 ಶ್ರೀ ರಮಣ ಮಹರ್ಷಿಗಳು ಹೇಳುತ್ತಾರೆ , ನಾನು ಎಲ್ಲ ಯೋಗಗಳನ್ನು ಅರಿತುಕೊಂಡೆ ಆದರೆ ‘ ನಾದಯೋಗ ‘ ಎಷ್ಟು ಪ್ರಯತ್ನಿಸಿದರೂ ತಿಳಿಯಲಿಲ್ಲ . ಇದರಿಂದ ತಿರುಗಾಟದಲ್ಲಿ ನಿರತನಾದೆ . ಆಗ ಮುಂಬೈಯಲ್ಲಿ ಒಬ್ಬ ವಕೀಲರು ಶ್ರೀಮದಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳಿದ್ದಾರೆ . ಅವರನ್ನು ಕಂಡರೆ ಸಾಧ್ಯವಾಗುತ್ತದೆಂದು ಹೇಳಿದಾಗ ರಮಣ ಮಹರ್ಷಿಗಳು ಅಥಣಿಗೆ ಬಂದು ಶ್ರೀ ಮುರುಘಂದ್ರ ಶಿವಯೋಗಿಗಳಿಂದ ನಾದಯೋಗ ( ಕಿವಿಯಲ್ಲಿ ಅರುಹಿದರು ) ವನ್ನು ತಿಳಿಸಿಕೊಟ್ಟರೆಂದು ಹೇಳಿದ್ದಾರೆ . ನಿಜವಾಗಿ ಶಿವಯೋಗದ ರಹಸ್ಯವನ್ನರಿತು ಶಿವಯೋಗ ಸಂಪತ್ತಿನಲ್ಲಿ ಸಾಕ್ಷಾತ್ ಶಿವನೆನಿಸಿಕೊಂಡರು .

 ಕರ್ನಾಟಕದ ಗಾಂಧೀಯೆಂದೇ ಖ್ಯಾತರಾಗಿದ್ದ ಲಿಂ . ಹರ್ಡೆಕರ ಮಂಜಪ್ಪ ನವರು , ರಾಷ್ಟ್ರಪುರುಷ ದಿ . ಲೋಕಮಾನ್ಯ ತಿಲಕರು ( ಚಿತ್ರದುರ್ಗದ ಮಠದಲ್ಲಿ ) ಕೂಡಿ ಚರ್ಚಿಸುವಾಗ ಯೋಗಿಯ ಲಕ್ಷಣಗಳೇನು ? ಎಂದು ತಿಲಕರು ಕೇಳಿದಾಗ , ಮಂಜಪ್ಪನವರು ಮಂಡಿಸಿದಾಗ ಇಂಥವರು ಇಂದುಂಟೆ ? ಎಂದು ಶ್ರೀ ತಿಲಕರು ಕೇಳಿದರು , ತಾವುಗಳು ಅಥಣಿಗೆ ಹೋಗಿ ಶ್ರೀ ಮುರುಘೇಂದ್ರ ಸ್ವಾಮಿಗಳನ್ನು ಕಾಣಬಹುದು ಎಂದು ಹೇಳಿದರು , ನಂತರ ಶ್ರೀ ಲೋಕಮಾನ್ಯ ತಿಲಕರು ಅಥಣಿಗೆ ಬಂದು ಮಠಕ್ಕೆ ಹೋಗುವಷ್ಟರಲ್ಲಿ ಶ್ರೀ ಶಿವಯೋಗಿಗಳು ಬಾಗಿಲಿಗೆ ಬಂದು ನಿಂತಿದ್ದರು . ಪಾದದಿಂದ ಮಸ್ತಕದವರೆಗೆ ತದೇಕ ದೃಷ್ಟಿಯಿಂದ ನೋಡಿ  ಕಣ್ಣಿಗೆ ಕಾಣದವರ ಕುರಿತು ಜಿಜ್ಞಾಸೆಗೈದು ಟೀಕೆ ಬರೆದೆ ; ನಿಮ್ಮಂತಹ ಮಹಾ ತ್ಮರ ಕುರಿತು ಬರೆಯಬೇಕಾಗಿತ್ತೆನ್ನು ವಷ್ಟರೊಳಗಾಗಿಯೇ ಶ್ರೀ ಶಿವಯೋಗಿ ಗಳು ಅವರು ಮಹಾತ್ಮರಪಾ ! ಶಿವಸ್ವರೂಪಿಗಳ್ರೆಪಾ ಹಾಗ ನುಡಿಬಾರದೆಂದು  ಹೇಳಿದಾಗ ಶ್ರೀ ತಿಲಕರು ಆನಂದತುಂದಿಲರಾಗಿ ನಿಂತುಬಿಟ್ಟಿದ್ದರು . ನಂತರ ಶ್ರೀ ಶಿವಮಾರ್ಗ ಸಂದರ್ಶಿಸಿ ದರ್ಶನಾಶೀರ್ವಾದ ಪಡೆದು ಪುನೀತರಾದರು . ಇದೇ ಸಂದರ್ಭದಲ್ಲಿ ಶ್ರೀ ತಿಲಕರು ‘ ನಾನು ಇಟ್ಟುಕೊಂಡ ಗುರಿ ಕಾಣಲು ಎಂದು ಪ್ರಶ್ನೆ [ ಭಾರತ ಸ್ವಾತಂತ್ರ್ಯ ಕುರಿತು ] ಕೇಳಿದಾಗ ಶ್ರೀಗಳು ಸಾವಕಾಶವಾಗಿ ‘ ನಿನ್ನ ಗುರಿ ಸಾಧಿಸುತ್ತದೆ, ನೀನು ಕಾಣುವುದಿಲ್ಲ ‘ ಎಂದು ಹೇಳಿದರು [ ೧೯೪೭ ರಲ್ಲಿ ಸ್ವಾತಂತ್ರ್ಯ ದೊರಕಿತು ; ಪೂರ್ವದಲ್ಲಿಯೇ ಶ್ರೀ ತಿಲಕರು ಸ್ವರ್ಗಸ್ಥರಾದರು ] .

ಅದ್ವೈತ ಸಿದ್ದಾಂತದ ಸಾಕಾರರೂಪಿಗಳಾದ ಶ್ರೀ ಸಿದ್ಧಾರೂಢರು ದೇಶ ಸಂಚಾರ ಕೈಕೊಂಡು ಕಾಶಿಗೆ ಹೋದರು . ಅಲ್ಲಿದ್ದ ಪಂಡಿತರನ್ನು ಕಂಡು ಚರ್ಚಿಸಿ ಅದ್ವೈತ ಸಿದ್ದಾಂತದ ಹಿರಿಮೆಯನ್ನು ಎತ್ತಿ ತೋರಿದರು . ನಂತರ ಹುಬ್ಬಳ್ಳಿಗೆ ಆಗಮಿಸಿದರು . ಅಲ್ಲಿದ್ದ ಪಂಡಿತರಲ್ಲಿ ಇಬ್ಬರು ಊರಿಗೆ ಹೋಗಿದ್ದರು . ಇವರು ಕಾಶಿಗೆ ಬರುವಷ್ಟರಲ್ಲಿ ಶ್ರೀ ಸಿದ್ಧಾರೂಢರ ಸಿದ್ದಾಂತ ಸಾಧನೆ ಕುರಿತು ದಿನನಿತ್ಯ ಚರ್ಚೆ , ಇದನರಿತು ಅದೇ ತಾನೇ ಊರಿಂದ ಬಂದವರು ಗಾಬರಿಯಾಗಿ ಕೇಳಲು ನಡೆದ ವಿಷಯ ವಿಸ್ತರಿಸಿದರು . ನೀವು ಮುಖ್ಯ ಪ್ರಶ್ನೆಯನ್ನೇ ಕೇಳಿಲ್ಲ , ಶಿವಯೋಗಿ ಅಥವಾ ಯತಿಯ ಕುರಿತು ಲಕ್ಷಣವೇನೆಂದು ಕೇಳಬೇಕಾಗಿತ್ತು . ಉತ್ತರ ಹೇಳಿ ನೋಡೋಣವೆಂದು ಹೇಳಿದಾಗ , ಎಲ್ಲರೂ ಗಾಬರಿಯಾಗಿ ನೀವು ಹುಬ್ಬಳ್ಳಿಗೆ ಹೋಗಿ ಈ ಪ್ರಶ್ನೆ ಕೇಳಿ ಬರ್ರಿ ಎಂದು ಹೇಳಿದಾಗ ಇವರಿಬ್ಬರು ಹುಬ್ಬಳ್ಳಿಗೆ ಬಂದರು . ಶ್ರೀ ಸಿದ್ಧಾರೂಢರನ್ನು ಕಂಡು ಪ್ರಶ್ನೆ ಕೇಳಲಾಗಿ ‘ ಪಂಡಿತರೇ ತಮ್ಮಲ್ಲಿಗೆ ಬಂದಾಗ್ಗೆ ಉತ್ತರ ಹೇಳಬಹುದಿತ್ತು . ಆದರೆ ತಾವುಗಳು ಅಥಣಿಗೆ ಹೋಗಿರಿ , ಶ್ರೀ ಮುರಿಗೆಪ್ಪನೆಂಬ ಶಿವಯೋಗಿಗಳಿದ್ದಾರೆ ಈ ಪ್ರಶ್ನೆಗೆ ಸರಿಯಾದ ಉತ್ತರ ತೋರಿಸುತ್ತಾರೆ ‘ ಎಂದು ಹೇಳಿದರು . ಆಗ ಪಂಡಿತರು ಅಥಣಿಗೆ ಆಗಮಿಸಿದರು .

 ಸದರದಲ್ಲಿ ಆಸೀನರಾಗಿದ್ದ ಶ್ರೀ ಶಿವಯೋಗಿಗಳು ಈ ಪಂಡಿತರನ್ನು ಕಂಡ ಕೂಡಲೆ ‘ ಬರ್ರೆಪಾ ಬರ್ರಿ  ವೇಳೆ ಬಹಳಾಗಿ ದೆ , ಸ್ನಾನ ಮಾಡಿ , ಪೂಜೆ ಮಾಡಿ , ಪ್ರಸಾದ ಸ್ವೀಕರಿಸಬೇಕೆಂದು ಹೇಳಿದರು . ಹೀಗೆ ದಿನಾಲು ` ಎದ್ರೆಪಾ , ಸ್ನಾನ , ಪೂಜೆ , ಪ್ರಸಾದ ಮಾಡ್ರಿ ‘ ಎಂದು ಹೇಳುತ್ತಾ ನಡೆದರು . ಬಂದ ಪಂಡಿತರು ತಮ್ಮಲ್ಲಿಯೇ ಚರ್ಚಿಸಿದರು . ನಾವು ಗಾಡಿಗಟ್ಟಲೆ ಗ್ರಂಥಗಳನ್ನು ಅಭ್ಯಾಸ ಮಾಡಿದರೂ ಈ ಪ್ರಶ್ನೆಗೆ ಉತ್ತರ ದೊರೆತಿಲ್ಲ . ಈತ ಏನೇನು ಓದಿದ್ದಾನೆ ; ಏನೋ ! ಅಪ್ಪನವರ ವಚನಗಳಂತೆ , ತೊಡಿಯ ಮೇಲಿಟ್ಟುಕೊಂಡು ಓದುತಾ ರೆ . ಇವರಿಗೆ ಈ ಪ್ರಶ್ನೆ ಕೇಳಿ ಅವಮಾನ ಮಾಡುವುದರಲ್ಲಿ ಅರ್ಥ ವಿಲ್ಲವೆಂದು ತಿಳಿದು ಮರುದಿನ ಹೋಗಲು ಅಪ್ಪಣೆ ಪಡೆದುಕೊಂಡರು .

ಹುಬ್ಬಳ್ಳಿಗೆ ಬಂದು ಅಪಹಾಸ್ಯದಿಂದ ನುಡಿದರು ‘ ಸ್ವಾಮಿ ನಿಮಗೆ ಉತ್ತರ ಕೊಡದಾಗದಿದ್ದರೆ ಅವರ ಹತ್ತಿರ ನಮ್ಮನ್ನು ಕಳಿಸುವ ಕಾರಣವಿರಲಿಲ್ಲ . ಅವರೇನು ಪಂಡಿತರೇ ? ಶಾಸ್ತ್ರ ಓದಿದವರೇ ? ಅವರಿಗೇನು ಕೇಳುವುದು ? ನಿಮಗೆ ಉತ್ತರ ದೊರೆಯದಿದ್ದರೆ ನಾವು ಕಾಶಿಗೆ ಹೋಗುತ್ತೇವೆ ‘ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು .

ಶ್ರೀ ಸಿದ್ಧಾರೂಢರು ತಮಗಾದ ಅನುಭವವೇನು ? ಎಂದು ಕೇಳಲು ಬರ್ರೆಪಾ ಬರ್ರಿ  , ಸ್ನಾನ ಪೂಜೆ ಪ್ರಸಾದ ಸ್ವೀಕರಿಸಿರಿ  ಎಂದು ದಿನನಿತ್ಯ ಕೇಳುತ್ತಾ ಹಾಗೂ ವ್ಯವಸ್ಥೆ ಪೂರೈಸುತ್ತಾ ಸಾಗಿದರು . ನಮ್ಮ ಪರಿಚಯ ಕೂಡ ಅರಿಯಲಿಲ್ಲ . ಆಗ ಶ್ರೀ ಸಿದ್ಧಾರೂಢರು ನಸುನಕ್ಕು ‘ ಹುಚ್ಚಪ್ಪಗಳಿರಾ ! ನಿಮ್ಮ ಪೂರ್ವಾಶ್ರಮ ವಿಚಾರಿಸದೆ ನಿಮಗೆ ಮಾಡಿದ ಈ ಆತಿಥ್ಯವೇ ನಿಜವಾದ ಶಿವಯೋಗಿ ಲಕ್ಷಣ ‘ ಎಂದು ಹೇಳಿದಾಗ ತಬ್ಬಿಬ್ಬಾಗಿ ತಲೆದೂಗಿ ಹೊರಟು ಹೋದರು .

ಶ್ರೀ ಶಿವಯೋಗಿಗಳು ಸದಾ ಶಿವಭಾವದಲ್ಲಿದ್ದವರು . ಬಂದವರೆಲ್ಲರೂ ಶಿವಸ್ವರೂಪಿಗಳೆ . ಇವರಿಗೆ ಮಾಡುವ ಆತಿಥ್ಯ ಶಿವನಿಗೆ ಸಲ್ಲುತ್ತದೆಂದು ಸದಾ ಸರ್ವರನ್ನು ಶಿವಸ್ವರೂಪದಲ್ಲಿ ಕಂಡ ಮಹಾಬೆಳಗು . ಶ್ರೀಗಳ ಜೀವನವೇ ಪವಾಡಮಯವಾಗಿತ್ತು , ಹೊರತು ಅವರು ಎಂದೂ ಪವಾಡಗಳನ್ನು ಮಾಡಲು ಹೋಗಲಿಲ್ಲ .

ವೀರಶೈವ ಧರ್ಮದ ಶ್ರೇಷ್ಟ ಸಿದ್ದಾಂತವೇ ಶಿವಯೋಗ . ತಲುಪಿದಾಗ ಸಮಸ್ತ ಬ್ರಹ್ಮಾಂಡವೇ ಲಿಂಗಮಯ . ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತು ಲಿಂಗಸ್ವರೂಪವಾಗಿ ಕಾಣುತ್ತವೆ . ಇಂತಹ ಸ್ವರೂಪ ಸ್ಥಿತಿಯೇ ಶಿವಯೋಗ ಸ್ಥಿತಿ , ಎಲ್ಲದರ ಸಂಬಂಧವು ಶಿವಸ್ವರೂಪವೇ ಶಿವಯೋಗ ಸ್ವರೂಪ .

ಶ್ರೀ ಶಿವಯೋಗಿಗಳು ಲಿಂಗೈಕ್ಯರಾಗುವುದು ಇನ್ನೂ ಆರು ತಿಂಗಳಿರಲು ಪ್ರಭುದೇವರ ಮಾನಸ ಪೂಜೆ ಪ್ರಾರಂಭವಾಯಿತು . ಹಸ್ತದಲ್ಲಿಯ ಲಿಂಗಯ್ಯ ಶರೀರದಲ್ಲಿ ಒಂದಾಗಿಬಿಡುತ್ತಿದ್ದ . ಶ್ರೀಗಳ ಕೈಯಲ್ಲಿ ಲಿಂಗವೇ ಇರುತ್ತಿರಲಿಲ್ಲ . ಆದರೆ ಪೂಜಾಸ್ಥಿತಿ ಪ್ರಾರಂಭವಾಗಿ ವಿಶ್ವ ಪೂಜೆಗೊಳ್ಳುತ್ತಿತ್ತು . ಇಂತಹ ಸ್ವಲೀಲಾ ಆನಂದಲಿಂಗ ಸ್ವರೂಪರೇ ಆದರೂ ಅದು ಲಿಂಗಪೂಜೆ ತಂತಾನೆ ನೆರವೇರುತ್ತಿತ್ತು . ಸಿದ್ಧಯ್ಯ ಪುರಾಣಿಕರು “ ಶಿವಯೋಗಿಗಳು ಸಂಪೂರ್ಣವಾಗಿ ಅಂತರ್ಮುಖಿಗಳಾದರು . ಆಗಾಗ ಬಾಲಲೀಲೆ , ಮರುಕ್ಷಣ ದಲ್ಲಿ ಯೋಗಲೀಲೆ , ಒಮ್ಮೆ ಪೂರ್ಣ ಪ್ರಜ್ಞಾವಸ್ಥೆ , ಒಮ್ಮೆ ಅರೆ ಪ್ರಜ್ಞಾವಸ್ಥೆ , ಒಮ್ಮೆ ಅಂತಃಪ್ರಜ್ಞಾವಸ್ಥೆ ; ಜಾಗೃತ – ಸ್ವಪ್ನ – ಸುಷುಪ್ತಿಗಳಲ್ಲಿಯೂ ಶಿವಧ್ಯಾನ , ಶಿವಚಿಂತನ , ಶಿವಾನುಭವ ; ಕಾಳರಾತ್ರಿಯಲ್ಲಿ ಕುಳಿತು , ” ಆಹಾ , ಲಿಂಗಪೂಜೆ ಎಷ್ಟು ಚೆನ್ನಾಗಿ ನಡೆದಿದೆ ‘ ಎಂದು ಉದ್ಗರಿಸುತ್ತಿದ್ದರು ; ಪರಿಚಿತರನ್ನೂ ಸಹ “ ನೀವಾರು ಎಲ್ಲಿಂದ ಬಂದಿರಿ ? ‘ ಎಂದು ಕೇಳುತ್ತಿದ್ದರು . ಯೋಗ ಮಂಟಪವನ್ನು ನೋಡಿ ‘ ಇದಾರ ಮನೆ ? ” ಎಂದು ಪ್ರಶ್ನಿಸುತ್ತಿದ್ದರು ; ಹಸ್ತದಲ್ಲಿ ಲಿಂಗದೇವ ನ್ಯಸ್ತವಾಗಿರದಿದ್ದರೂ ಜಲವನೆರೆ ದಂತೆ , ಭಸ್ಮ ಧರಿಸಿದಂತೆ , ಪತ್ರಿ ಪುಷ್ಪಗಳನ್ನರ್ಪಿಸಿದಂತೆ , ನೈವೇದ್ಯವನ್ನು ತೋರಿಸಿದಂತೆ ಲಿಂಗಪೂಜೆ ಮಾಡುತ್ತಿದ್ದರು . ಅದು ಲಿಂಗವೇ ಲಿಂಗಾರ್ಚನೆ ಯನ್ನು ಮಾಡುತ್ತಿದ್ದ ಮಹಾಪೂಜೆ ” ಎಂದು ವಿವರಿಸಿದ್ದಾರೆ .

 ಒಂದು ದಿನ ಶ್ರೀ ಶಿವಯೋಗಿಗಳು ಭಕ್ತರಿಗೆ “ ಶಿವರಾತ್ರಿ ಎಂದಿದೆ ? ಕೇಳಿದರು . ಎಲ್ಲರೂ ಸೋಮವಾರ ಎಂದರು . ಶಿವಯೋಗಿಗಳು ಅಂತರ್ಮುಖಿಯಾಗಿ ‘ ಶನಿವಾರ ‘ ಎಂದರು . ಆಗ ಎಲ್ಲರೂ ಗಾಬರಿಯಾದರು ಅಂದೇ  ಶಾ.ಶ. ೧೮೪೩ ನೆಯ ದುರ್ಮುಖಿ ಸಂವತ್ಸರದ ಚೈತ್ರ ಮಾಸ ಕೃಷ್ಣ ಪಕ್ಷ ಪ್ರತಿಪದ ಶನಿವಾರ ಹನ್ನೊಂದು ಘಂಟೆಗೆ ಲಿಂಗಾರ್ಚನೆ ಮಾಡುತ್ತಾ ಮಹಾ ಬೆಳಕಿನೊಳಗೆ ಬೆಳಕಾದರು . ನಿಜವಾಗಿ ಅಂದೇ ನಿಜ ಶಿವರಾತ್ರಿ ಆಯಿತು . ಶಿವಯೋಗಿವರೇಣ್ಯರಾದ ಶ್ರೀ ಮುರುಘೇಂದ್ರ ಶಿವಯೋಗಿಗಳ ಜೀವನವೇ ವೀರಶೈವ ಧರ್ಮದ ನಿಜಸ್ವರೂಪ .

 “ ವಿಜ್ಞಾನದ ಬಿರುಗಾಳಿಯಲ್ಲಿ ಕಣ್ಣು ಮುಚ್ಚಿದ ಮಾನವರಿಗೆ ಇಂದು ಸುಜ್ಞಾನ ಕಾಣದಂತಾಗಿದೆ . ಅಂತಹವರು ಅನುಭಾವದ ಹಿರಿಮೆಯನ್ನೇ ಅರಿಯದಾಗಿದ್ದಾರೆ . ಇಂದಿನ ವೈಜ್ಞಾನಿಕ ಯುಗದಲ್ಲಿಯೇ ಇಂತಹ ವಿಜ್ಞಾನಿ ಗಳನ್ನು ಬೆರಗುಗೊಳಿಸುವಂತೆ ಶ್ರೀ ಮದಥಣಿಯ ಶಿವಯೋಗಿವರ್ಯರು ದೇಹವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿ ವೀರ , ವೈರಾಗ್ಯ , ಸದ್ಭಕ್ತಿ , ಸತ್ಕ್ರಿಯೆ , ಸದಾಚಾರಗಳೆಂಬ ಸಾಧನ ಸಂಪತ್ತಿನಿಂದ ಸುಜ್ಞಾನದ ಫಲವನ್ನು ಪಡೆದರು . ಇಂತಹ ಮಹಾನುಭಾವರೆದುರು ವಿಜ್ಞಾನವಷ್ಟೇ ಏಕೆ ಸಮಸ್ತ ವಿಶ್ವವೂ ಮಣಿಯಬಲ್ಲದು ” ಎಂದು ವಿದ್ವಾನರಾದ ಡಾ . ಆರ್ . ಸಿ . ಹಿರೇಮಠರು ಅಥಣಿ ಶಿವಯೋಗಿಗಳ ಕುರಿತು ಉದ್ಗಾರವೆತ್ತಿದ್ದಾರೆ .

ಅಥಣಿ ಭೂಕೈಲಾಸವಾಯಿತು . ಶಿವಾನುಭವ ಸೌರವ್ಯೂಹದಲ್ಲಿ ಅನೇಕ ಗ್ರಹಗಳಿದ್ದಂತೆ ಶಿವಯೋಗಿಗಳ ಶಕ್ತಿಯ ಸುತ್ತ ತಿರುಗಿ ಆ ಕಿರಣ ಕಂಡು ಆನಂದಿಸಿದವರ ಸಂಖ್ಯೆ ಅಸಂಖ್ಯಾತವಾದುದು . ಇಂದಿಗೂ ಕರ್ತೃ ಗದ್ದುಗೆಗೆ ಭಕ್ತಿಯಿಂದ ಬಾಗಿದವನಿಗೆ ಬೇಡಿದ್ದನ್ನು ಕೊಡುವ ಕಾಮಧೇನು .

ಲೇಖಕರು : ಪ್ರಕಾಶ ಗಿರಿಮಲ್ಲನವರ

ಮಡಿವಾಳ ತಂದೆಗಳ ಬಟ್ಟೆಗಳ ನಾನೊಗೆವೆ

ಹಡಪದಪ್ಪಣ್ಣಗಳ ಕ್ಷೌರವನು ನಾಗೈವೆ

ಡೋಹರ ಕಕ್ಕಯ್ಯಂಗೆ ತೊಗಲ ಹದ ಮಾಡುವೆ

ವೀರ ಹರಳೇಶಂಗೆ ಜೋಡ ನಾ ಮಾಡಿಡುವೆ

ಮಾರಯ್ಯ ತಂದೆಗಳ ಕಟ್ಟಿಗೆಯ ನಾ ಹೊರುವೆ

ಧೀರ ಕೇತಯ್ಯಗಳ ಬುಟ್ಟಿಯನು ನಾ ಮಾಳ್ಪೆ

ನುಲಿಯ ಚಂದಯ್ಯಗಳ ಹಗ್ಗ ಕಣಿಯಗೈವೆ

ಸಲೆ ಮಾದಾರ ಚೆನ್ನಂಗಳಂಬಲಿಯ ಮಾಡಿಡುವೆ

ಶಿವದಾಸಮಯ್ಯಗಳ ಬಟ್ಟೆಗಳ ನಾ ಮಾಳ್ಪೆ

ತವೆ ಶಂಕರಯ್ಯಗಳ ಕಪನಿಯನು ನಾ ಹೊಲಿವೆ

ಅಮುಗೆ ಸಿದ್ಧೇಶಂಗೆ ಪಾಕವನು ನಾಗೈವೆ

ಕುಂಬಾರ ಗುಂಡಯ್ಯ ನಾಂ ಮಡಿಕೆಯಂಗೈವೆ

ಸಂಭ್ರಮದಿ ಪ್ರಭುವಿಂಗೆ ಮದ್ದಳೆಯ ಬಾರಿಸುವೆ

ಆವಾವ ಕಾಯಕವ ಮಾಡಿದೊಡು ಬಸವೇಶ

ಆವಗಂ ಶರಣರು ಸೇವಿಪೆನು ಬಸವೇಶ

-ಅಥಣಿ ಶಿವಯೋಗಿಗಳು

               ಇದು ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳು ರಚಿಸಿದ ಪದ್ಯ. ಈ ಪದ್ಯವನ್ನು ಸಿದ್ಧಗಂಗಾಮಠದ ಲಿಂ. ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಪ್ರತಿನಿತ್ಯ ಬೆಳಗಿನ ಲಿಂಗಪೂಜಾ ಸಮಯದಲ್ಲಿ ಈ ಹಾಡನ್ನು ಹಾಡುತ್ತಿದ್ದರು. ತಮ್ಮ ಶ್ರೀಮಠದ ಸಿದ್ಧಗಂಗಾ ಮಾಸಪತ್ರಿಕೆಯ ಪ್ರಾರಂಭದ ಪುಟದಲ್ಲಿ ‘ಆವಾವ ಕಾಯಕವ ಮಾಡಿದಡೆಯೂ ಬಸವೇಶ | ಆವಗಂ ಶರಣರನು ಸೇವಿಪೆನು ಬಸವೇಶ’ ಎಂಬ ಶಿವಯೋಗಿಗಳ ಹಾಡಿನ ಸಾಲನ್ನು ಘೋಷವಾಕ್ಯವಾಗಿ ಪ್ರಕಟಿಸುತ್ತ ಬಂದಿರುವುದು ಗಮನಾರ್ಹ ಸಂಗತಿ.

               12ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು, ಅವುಗಳಿಗೆ ಜೀವಂತಿಕೆ ಕೊಟ್ಟ ಪ್ರಾತಃಸ್ಮರಣೀಯರಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಅಗ್ರಗಣ್ಯರು. ಶಿವಯೋಗಿಗಳಿಂದ ಅಥಣಿ ಭೂಕೈಲಾಸವೆನಿಸಿತು, ತಪೋಭೂಮಿಯೆನಿಸಿತು. ಅಭಿನವ ಕಾಶಿ, ದಕ್ಷಿಣದ ಕಾಶಿ ಎನಿಸಿತು. ಶ್ರೀ ಮುರುಘೇಂದ್ರ ಶಿವಯೋಗಿಗಳು ನಡೆದಾಡುವ ದೇವರು, ಸುಳಿದಾಡುವ ಧರ್ಮ ಎಂದು ಜನಮಾನಸದಲ್ಲಿ ಖ್ಯಾತರಾಗಿದ್ದರು. ಇಂಥ ಶಿವಯೋಗಿಗಳನ್ನು ನೆನೆಯುವುದೇ ಈ ಸಮಾಜಕ್ಕೆ ಉದಯ, ಅವರನ್ನು ಮರೆಯುವುದೇ ಅಸ್ತಮಾನ!

               ಅಥಣಿ ತಾಲೂಕಿನ ಕೃಷ್ಣಾನದಿ ತೀರದಲ್ಲಿರುವ ‘ಇಂಗಳಗಾಂವಿ’ ಗ್ರಾಮದ ಭಾಗೋಜಿಮಠದ ಶ್ರೀ ರಾಚಯ್ಯ-ನೀಲಮ್ಮ ದಂಪತಿಗಳ  ಪುತ್ರರಾಗಿ ಮುರುಘೇಂದ್ರ ಶಿವಯೋಗಿಗಳು ಶಾಲಿವಾಹನ ಶಕೆ 1758 ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ 11ನೇ ಶುಭೋದಯದಂದು (ಕ್ರಿ.ಶ.1836) ಜನಿಸಿದರು. ರಾಚಯ್ಯನವರ ಧರ್ಮಪತ್ನಿ ನೀಲಮ್ಮನವರ ತವರು ಮನೆ ಜಮಖಂಡಿ ತಾಲೂಕಿನ ಮೈಗೂರು ಹಿರೇಮಠ. ಈ ಮೈಗೂರು ಹಿರೇಮಠದ ಮನೆತನದಲ್ಲಿ ಜನಿಸಿದ ಐದು ಜನ ವ್ಯಕ್ತಿಗಳು ಅಥಣಿ ಮೋಟಗಿಮಠದ ಅಧಿಪತಿಗಳಾಗಿದ್ದು ಒಂದು ಸುಯೋಗ. ರಾಚಯ್ಯ-ನೀಲಮ್ಮ ದಂಪತಿಗಳಿಗೆ ಒಟ್ಟು ಐದು ಜನ ಗಂಡು ಮಕ್ಕಳು. ಅವರಲ್ಲಿ ಮೂರನೆಯವರೇ ಶಿವಯೋಗಿಗಳು. ಹುಟ್ಟಿದಾಗ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಶಿವನ ತೇಜವೇ ಭೂಮಿಗಿಳಿದಂತಿದ್ದ ಗುರುಲಿಂಗಯ್ಯನವರು ಬಾಲ್ಯದಲ್ಲಿಯೇ ಧಾರ್ಮಿಕ ಸಂಸ್ಕಾರದ ಜಗತ್ತಿನಲ್ಲಿ ಬೆಳೆದರು.

               ಗುರುಲಿಂಗಯ್ಯನವರು ಏಳುವರ್ಷದವರಿದ್ದಾಗ ಅಥಣಿ ಮೋಟಗಿಮಠದ ಶ್ರೀಗಳು ಇವರನ್ನು ಶ್ರೀಮಠಕ್ಕೆ ಒಪ್ಪಿಸಿರಿ ಎಂದು ರಾಚಯ್ಯನವರಿಗೆ ಹೇಳಿದರು. ಕ್ರಿ.ಶ.  1843 ರಲ್ಲಿ ಗುರುಲಿಂಗಯ್ಯನವರು ಅಥಣಿ ಗಚ್ಚಿನಮಠದ ಎರಡನೆಯ ಶ್ರೀ ಮರುಳಶಂಕರ ಮಹಾಸ್ವಾಮಿಗಳ ಸನ್ನಿಧಾನಕ್ಕೆ ಬಂದರು.

               ಗಚ್ಚಿನಮಠದಲ್ಲಿಯೇ ಇದ್ದುಕೊಂಡು ಗುರುಲಿಂಗಯ್ಯನವರು ವಿದ್ಯಾರ್ಜನೆ ಮಾಡತೊಡಗಿದರು. ಮರುಳಶಂಕರ ಸ್ವಾಮಿಗಳು ಗುರುಲಿಂಗಯ್ಯನವರ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇವರನ್ನು ಪರೀಕ್ಷೆ ಮಾಡಬೇಕೆಂಬ ಉದ್ದೇಶಕ್ಕಾಗಿ ಒಂದು ದಿನ ಕರೆದು ತೆಲಸಂಗಕ್ಕೆ ಹೋಗಿ ಅಲ್ಲಿಯ ಶಿವಬಸವ ದೇಶಿಕರ ಸೇವೆ ಮಾಡಲು ಅಪ್ಪಣೆ ನೀಡಿದರು. ತೆಲಸಂಗದ ಶಿವಬಸವ ದೇಶಿಕರು ಕುಷ್ಟರೋಗದಿಂದ ಬಳಲುತ್ತಿದ್ದರು. ಗುರುಲಿಂಗಯ್ಯನವರು ಗುರುಗಳ ಆಜ್ಞೆಯನ್ನು ಶಿರೋಧಾರೆಯೆಂದು ಭಾವಿಸಿ ತಕ್ಷಣ ತೆಲಸಂಗಕ್ಕೆ ಬಂದರು. ಕುಷ್ಟರೋಗದಿಂದ ಬಳಲುತ್ತಿದ್ದ ಗುರುಸ್ವರೂಪರಾದ ಶಿವಬಸವ ದೇಶಿಕರ ಸೇವೆಯನ್ನು ಮನಮುಟ್ಟಿ ಮಾಡಿದರು. ಅವರಿಗೆ ಸ್ನಾನಪೂಜಾದಿ ವ್ಯವಸ್ಥೆ ಜೊತೆಗೆ ಸರಿಯಾದ ಔಷಧೋಪಚಾರ ಮಾಡಿದರು. ಕೆಲವೇ ದಿನಗಳಲ್ಲಿ ಶಿವಬಸವ ದೇಶಿಕರ ಕುಷ್ಟರೋಗ ಕಡಿಮೆಯಾಗಿ ಮೊದಲಿನಂತಾದರು. ಈ ವಿಷಯ ತಿಳಿದ ಗಚ್ಚಿನಮಠದ ಮರುಳಶಂಕರ ಸ್ವಾಮಿಗಳು ಮನದಲ್ಲಿ ಸಂತೋಷಪಟ್ಟರು. ತಮ್ಮ ಶಿಷ್ಯ ಗುರುಲಿಂಗಯ್ಯ ‘ಸೇವಾಜೀವಿ’ ಎಂಬುದನ್ನು ಮನಗಂಡರು. ನಂತರ ಗುರುಲಿಂಗಯ್ಯನವರು ಇನ್ನಷ್ಟು ಅಧ್ಯಯನ ಮಾಡಬೇಕೆಂದು ಮಮದಾಪುರ ಗ್ರಾಮಕ್ಕೆ ಬಂದರು. ಅಷ್ಟರಲ್ಲಿ ಗುರುಗಳೂ ಮಾರ್ಗದರ್ಶಕರೂ ಆದ ಪೂಜ್ಯ ಶ್ರೀ ಮರುಳಶಂಕರ ಸ್ವಾಮಿಗಳು ಲಿಂಗೈಕ್ಯರಾದ ವಿಷಯ ತಿಳಿದು ಅಥಣಿಗೆ ಧಾವಿಸಿ ಬಂದರು. ಗುರುಗಳನ್ನು ಸ್ಮರಿಸಿಕೊಂಡು ದುಃಖಿತರಾದರು. ಇದೇ ಸಂದರ್ಭದಲ್ಲಿ ಗಚ್ಚಿನಮಠದ ಪೀಠಾಧಿಪತಿಗಳಾಗಿ ಎರಡನೆಯ ಗುರುಶಾಂತ ಸ್ವಾಮಿಗಳು ಪೀಠಾರೋಹಣಗೈದರು. ಗುರುಲಿಂಗಯ್ಯನವರು ಗುರುಶಾಂತ ಶ್ರೀಗಳ ಹತ್ತಿರ ಬಂದು ತಮಗೆ ಅನುಗ್ರಹ ದೀಕ್ಷೆ ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಗುರುಶಾಂತ ಸ್ವಾಮಿಗಳು ಗುರುಲಿಂಗಯ್ಯನವರಿಗೆ ನಿರಂಜನ ದೀಕ್ಷೆ ನೀಡಿ ಪರಶಿವನ ಮಗನಾದ ಮುರುಘನ್ ಹೆಸರಿನ ನೆನಪಿಗಾಗಿ ‘ಮುರುಘೇಂದ್ರ’ ಎಂದು ನಾಮಕರಣ ಮಾಡಿದರು. ಗುರುಲಿಂಗಯ್ಯ ಎಂಬ ಪೂರ್ವಾಶ್ರಮದ ಹೆಸರು ಮಾಯವಾಗಿ, ಈಗ ‘ಮುರುಘೇಂದ್ರ ಎಂಬ ನಾಮದಿಂದ ಬೆಳಗತೊಡಗಿದರು.

ಲೋಕಸಂಚಾರ

               ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳಿಂದ ಶಿವಯೋಗದೀಕ್ಷೆ ಸಂಪಾದಿಸಿದ ಮುರುಘೇಂದ್ರ ಶ್ರೀಗಳು ಕ್ರಿ.ಶ. 1856ರಲ್ಲಿ ಲೋಕಸಂಚಾರ ಕೈಕೊಂಡರು. ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಲೋಕಾನುಭವ ಪಡೆಯಲು ಜಗವ ಸುತ್ತಲು ಪ್ರಾರಂಭಿಸಿದರು. ದೇಶದ ಪವಿತ್ರ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದರು. ಕೂಡಲಸಂಗಮ, ಹಂಪಿ, ಶ್ರೀಶೈಲ, ಕಾಳಹಸ್ತಿ, ಬಸವಕಲ್ಯಾಣ, ಸೊಲ್ಲಾಪುರ, ಹರಿಹರ, ದಾವಣೆಗೆರೆ, ಚಿತ್ರದುರ್ಗ, ಗವಿಪುರ, ಶಂಭುಲಿಂಗನ ಬೆಟ್ಟ, ತಲಕಾಡು, ಗೋಕರ್ಣ, ಉಳವಿ, ಬನವಾಸಿ, ಕಂಚಿ, ರಾಮೇಶ್ವರ ಮೊದಲಾದ ಕ್ಷೇತ್ರಗಳಲ್ಲಿ ಸತತ 12 ವರ್ಷಗಳ ಕಾಲ ಸಂಚರಿಸಿದರು. ಪೂಜ್ಯ ಶಿವಯೋಗಿಗಳು ಸಮಸ್ತ ದಕ್ಷಿಣ ಭಾರತವನ್ನು ಸುತ್ತಿದರು.

ಪೀಠತ್ಯಾಗ

               ಶ್ರೀ ಮುರುಘೇಂದ್ರ ಶಿವಯೋಗಿಗಳು ಸತತ 12 ವರುಷಗಳ ಕಾಲ ಲೋಕಸಂಚಾರ ಮಾಡಿ ತಿರುಗಿ ಅಥಣಿ ಗಚ್ಚಿನಮಠಕ್ಕೆ ಬರುವಷ್ಟರಲ್ಲಿ ಪೂಜ್ಯ ಶ್ರೀ ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾಗಿದ್ದರು. ಮೂರನೆಯ ಚನ್ನಬಸವ ಸ್ವಾಮಿಗಳು ಗಚ್ಚಿನಮಠದ ಅಧಿಕಾರ ಸೂತ್ರ ಹಿಡಿದುಕೊಂಡಿದ್ದರು. ಮುರುಘೇಂದ್ರ ಶ್ರೀಗಳು ಚನ್ನಬಸವ ಸ್ವಾಮಿಗಳನ್ನು ಭೇಟಿ ಮಾಡಿದರು. ಆಗಲೇ ವಯೋವೃದ್ಧರಾಗಿದ್ದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಮುರುಘೇಂದ್ರ ಶ್ರೀಗಳಿಗೆ ‘ನೀವು ಗಚ್ಚಿನಮಠದ ಪೀಠಾಧಿಪತ್ಯ ವಹಿಸಿಕೊಳ್ಳಬೇಕೆಂದು’ ಹೇಳಿದರು.  ಆದರೆ ಮಠಾಧಿಪತ್ಯ ಸ್ವೀಕರಿಸುವ ಯಾವ ವಾಂಛೆಯು ಮುರುಘೇಂದ್ರ ಶ್ರೀಗಳಲ್ಲಿ ಇರಲಿಲ್ಲ. ಅದಕ್ಕಾಗಿ ಗುಹೇಶ್ವರ ಗುಹೆಯಲ್ಲಿ ತಪೋನುಷ್ಠಾನ ಮಾಡಲು ನಿರ್ಧರಿಸಿದರು. ನಲವತ್ತು ವಯಸ್ಸಿನ ಮುರುಘೇಂದ್ರ ಶ್ರೀಗಳಲ್ಲಿ  ‘ಮಠಾಧಿಪತ್ಯ ಸ್ವೀಕರಿಸಲು’ ಮತ್ತೊಮ್ಮೆ ಚನ್ನಬಸವ ಸ್ವಾಮಿಗಳು ವಿನಂತಿಸಿಕೊಂಡರು. ಆದರೆ ಶಿವಯೋಗಾನಂದದಲ್ಲಿ ಸಮರಸ ಸ್ಥಿತಿಯನ್ನು ಅನುಭವಿಸುತ್ತಿದ್ದ ಮುರುಘೇಂದ್ರ ಶ್ರೀಗಳಿಗೆ ಪೀಠದ ಯಾವುದೇ ಅಧಿಕಾರ ಬೇಕಾಗಿರಲಿಲ್ಲ. ತಾವು ಇಷ್ಟಲಿಂಗಪೂಜೆ-ಶಿವಯೋಗ ಸಾಧನೆಯಲ್ಲಿ ಕಾಲಕಳೆಯುತ್ತೇವೆ. ನನ್ನ ಬದಲಾಗಿ ಸಿದ್ಧಲಿಂಗ ಚರವರೇಣ್ಯರನ್ನು ಮಠಾಧಿಕಾರಿಗಳನ್ನಾಗಿ ಮಾಡಿ ಎಂದು ಚನ್ನಬಸವ ಶ್ರೀಗಳಲ್ಲಿ ವಿನಂತಿಸಿಕೊಂಡರು. ಭಕ್ತ ಸಮುದಾಯದ ಶ್ರೀ ಸಿದ್ಧಲಿಂಗ ಚರವರೇಣ್ಯರು ಗಚ್ಚಿನಮಠದ ಅಧಿಪತಿಗಳಾಗಿ ನಿಯುಕ್ತಿಯಾದರು. ಶಿವಯೋಗಿಗಳು ನಿರಾಳರಾದರು.

ಬಸವ ಪ್ರಜ್ಞೆಯ ಸಾಕಾರ ಮೂರ್ತಿ

               ಶ್ರೀ ಮುರುಘೇಂದ್ರ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಪ್ರತಿನಿತ್ಯ ಚಿಂತನೆಗೈಯುತ್ತಿದ್ದರು. ‘ಅಪ್ಪನ ವಚನಗಳೆಂದು’ ಗೌರವದಿಂದ ಕಾಣುತ್ತಿದ್ದರು. ಸದಾಕಾಲ ತಮ್ಮ ಜೊತೆಯಲ್ಲಿ ವಚನ ಕಟ್ಟುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಒಬ್ಬ ಕಾಶಿ ಪಂಡಿತ ಶಿವಯೋಗಿಗಳ ಹತ್ತಿರ ಬಂದು ‘ತಾನೊಂದು ಬೃಹತ್ ಧಾರ್ಮಿಕ ಗ್ರಂಥ ರಚಿಸಿರುವೆ, ಅದನ್ನು ತಾವು ಓದಬೇಕೆಂದು’ ಶಿವಯೋಗಿಗಳಲ್ಲಿ ವಿನಂತಿಸಿಕೊಂಡ. ಆಗ ಶಿವಯೋಗಿಗಳು ತಾವು ಈಗಾಗಲೇ ಒಂದು ಗ್ರಂಥವನ್ನು ಓದುತ್ತಿರುವೆ ಅದಕ್ಕಾಗಿ ನಿಮ್ಮ ಗ್ರಂಥ ಓದಲು ಸಮಯವಿಲ್ಲ ಎನ್ನುತ್ತಾರೆ. ಆಗ ಆ ಪಂಡಿತ, ಇದನ್ನು ನಿಮ್ಮ ಹತ್ತಿರವೇ ಇಟ್ಟು ಹೋಗುವೆ, ತಾವು ಆ ಗ್ರಂಥ ಓದಿ ಮುಗಿಸಿದ ನಂತರ ಓದಿರಿ ಎನ್ನುತ್ತಾನೆ. ಆಗ ಶಿವಯೋಗಿಗಳು ‘ಅದು ಜೀವನಪರ್ಯಂತ ಓದುವ ಪುಸ್ತಕ’ ಎನ್ನುತ್ತಾರೆ. ಅಂಥ ಕೃತಿ ಯಾವುದು? ಎಂದು ಪಂಡಿತ ಆಶ್ಚರ್ಯದಿಂದ ಕೇಳುತ್ತಾನೆ. ಆಗ ಶಿವಯೋಗಿಗಳು ‘ಅದು ಅಪ್ಪನ ವಚನಗಳ ಕಟ್ಟು. ಬಸವಣ್ಣನವರ ವಚನಗಳ ಕಟ್ಟು. ಅವುಗಳನ್ನು ಓದುವುದೇ ನಮ್ಮ ಬದುಕಿನ ಬಹುದೊಡ್ಡ ಕರ್ತವ್ಯ. ಅದನ್ನು ಓದಿ ಅದರಲ್ಲಿಯ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಕ್ಷರಶಃ ಅನುಷ್ಠಾನಕ್ಕೆ ತಂದು, ಆಚರಿಸಲು ಈ ಜನ್ಮ ಸಾಕಾಗಲ್ಲ, ಅದಕ್ಕಾಗಿ ನಿಮ್ಮ ಕೃತಿ ಓದಲು ನಮಗೆ ಸಮಯವಿಲ್ಲ, ದಯವಿಟ್ಟು ತೆಗೆದುಕೊಂಡು ಹೋಗಿ’ ಎಂದು ಹೇಳುತ್ತಾರೆ. ಬಸವಣ್ಣನವರ ವಚನಗಳೆಂದರೆ ತಮ್ಮ ಪ್ರಾಣವೆಂದು ಶಿವಯೋಗಿಗಳು ಭಾವಿಸುತ್ತಾರೆ.

               ಹಳ್ಳಿ ಜನರಲ್ಲಿ ಆಗ ಇನ್ನೂ ವಚನಗಳು ಅಷ್ಟು ಪ್ರಚಾರದಲ್ಲಿ ಇರಲಿಲ್ಲ. ಆದರೆ ಅವರಲ್ಲಿ ಬಸವಣ್ಣನವರ ಕುರಿತು ಭಕ್ತಿ ಭಾವ ಮೂಡಿಸಬೇಕೆಂದು ಶಿವಯೋಗಿಗಳು ನೂರಾರು ಹಳ್ಳಿಗಳಲ್ಲಿ ‘ಬಸವ ಪುರಾಣ’ ಏರ್ಪಡಿಸುತ್ತಾರೆ. 1884ರಲ್ಲಿ ಒಮ್ಮೆ ತೇರದಾಳದ ಪ್ರಭುದೇವರ ದೇವಸ್ಥಾನದಲ್ಲಿ ಒಂಬತ್ತು ತಿಂಗಳವರೆಗೆ ಬಸವಪುರಾಣ  ಆಯೋಜಿಸುತ್ತಾರೆ. ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು  ಬಸವ ಪುರಾಣ ಹೇಳುವಲ್ಲಿ ಅಪ್ರತಿಮ ಪಾಂಡಿತ್ಯವುಳ್ಳವರು. ಅವರನ್ನು ಅಥಣಿಗೆ ಕರೆಯಿಸಿಕೊಂಡು, ಅವರಿಂದ ಅನೇಕ ಕಡೆ ಬಸವ ಪುರಾಣ ನೆರವೇರುವಂತೆ ಮಾಡುತ್ತಾರೆ. ಇದು ಸಾಮಾನ್ಯ ಜನರಲ್ಲಿ ಬಸವ ಪ್ರಜ್ಞೆಯನ್ನು ಶಿವಯೋಗಿಗಳು ಜಾಗೃತಗೊಳಿಸಿದ ಪರಿ.

ಹಾನಗಲ್ಲ ಗುರು ಕುಮಾರ ಶಿವಯೋಗಿಗಳಿಗೆ ಪ್ರೇರಣೆ

               ಕ್ರಿ.ಶ. 1903ರಲ್ಲಿ ಸವದತ್ತಿಯಲ್ಲಿ ಮೂರು ತಿಂಗಳ ಕಾಲ ಬಸವ ಪುರಾಣ ನೆರವೇರಿತು. ಈ ಪುರಾಣ ಮಂಗಲೋತ್ಸವಕ್ಕೆ ಅಥಣಿ ಶಿವಯೋಗಿಗಳು ದಯಮಾಡಿಸಿದ್ದರು. ಇದೇ ಸಂದರ್ಭದಲ್ಲಿ ಅನೇಕ ಹರಗುರು ಚರಮೂರ್ತಿಗಳು ಆಗಮಿಸಿದ್ದರು. ಅವರಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳು ಒಬ್ಬರು. ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ಈ ಸಮಾಜವನ್ನು ಹೇಗಾದರೂ ಮುಂದೆ ತರಬೇಕೆಂಬ ಬಲವಾದ ಬಯಕೆ. ಈ ಬಯಕೆಯನ್ನು ಶಿವಯೋಗಿಗಳಲ್ಲಿ ವಿನಂತಿಸಿಕೊಂಡರು. ಆ ಕಾಲದಲ್ಲಿದ್ದ ಸಮಯಭೇದಗಳು ಅಳಿಯಬೇಕು. ಸ್ವಾಮಿಗಳಲ್ಲಿ ಮೊದಲು ಏಕತೆ ಮೂಡಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ವಿನಂತಿಸಿಕೊಂಡರು. ಅಖಿಲ ಭಾರತ ವೀರಶೈವ ಮಹಾಸಭೆ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವ ಆಲೋಚನೆಯೂ ಈ ಸಂದರ್ಭದಲ್ಲಿ ಮೂಡಿತು ಎನ್ನುವುದು ಸಮಸ್ತ ಸಮಾಜ ಬಾಂಧವರು ಅಭಿಮಾನ ಪಡುವ ಸಂಗತಿಯಾಗಿದೆ. ಅಥಣಿ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳು ಮಹಾಸಭೆಯ ಸ್ಥಾಪನೆಗೆ ರೂಪರೇಷೆಗಳನ್ನು ಸಿದ್ಧಪಡಿಸಿದರು. ಸಮಯಭೇದ ನಿವಾರಣೆಯಲ್ಲಿ ಉಭಯ ಪೂಜ್ಯರು ಅಹರ್ನಿಶಿ ಶ್ರಮಿಸಿದರು. ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಶ್ರೀ ಕುಮಾರ ಶಿವಯೋಗಿಗಳು ಅಥಣಿಗೆ ಧಾವಿಸಿ ಬಂದರು. ಶಿವಯೋಗಿಗಳ ಕರ್ತೃಗದ್ದುಗೆ ಮುಂದೆ ನಿಂತು ಭಾವಪರವಶರಾಗಿ ಮಂಗಳಾರತಿ ಹಾಡಿದರು. ಸ್ವತಃ ಕುಮಾರ ಶಿವಯೋಗಿಗಳೇ ರಚಿಸಿದ ಆ ಪದ್ಯ ಹೃದಯಸ್ಪರ್ಶಿಯಾಗಿದೆ. 

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ                  ||ಪ||

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

ಚೆಂದವನರಿದನುಷ್ಠಾನಿಪ ಶಿವಸ್ವಯಗೆ                      ||1||

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ-

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ              ||2||

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ                    ||3||

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ               ||4||

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‍ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರುಘ ಶಿವಯೋಗಿಗೆ                  ||5||

               ಪೂಜ್ಯ ಶ್ರೀ ಕುಮಾರ ಶಿವಯೋಗಿಗಳ ದೃಷ್ಟಿಯಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಸ್ವಯ ಜಂಗಮ, ಚರ ಜಂಗಮ, ಪರ ಜಂಗಮ ಮೂರೂ ಬಗೆಯ ಜಂಗಮ ಅವಸ್ಥೆಯನ್ನು ತಲುಪಿದ ಮಹಾ ಶಿವಯೋಗಿಗಳು ಎಂಬುದನ್ನು ಮೇಲಿನ ಮಂಗಳಾರತಿ ಪದ್ಯದಲ್ಲಿ ಕಾಣಬಹುದಾಗಿದೆ.

ಮೃತ್ಯುಂಜಯ ಅಪ್ಪಗಳಿಗೆ ಮಾರ್ಗದರ್ಶನ

               ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಆಶೀರ್ವಾದಿಂದ  ಬೆಳೆದವರು. ಬಾಲ್ಯದಲ್ಲಿ ಒಮ್ಮೆ ಅಂಕಲಗಿ ಅಡವಿ ಸ್ವಾಮಿಗಳ ಹತ್ತಿರ ಬಂದು ‘ತಾವು ಹೆಚ್ಚಿನ ಅಧ್ಯಯನಕ್ಕೆ ಕಾಶಿಗೆ ಹೋಗಬೇಕು, ಆಶೀರ್ವದಿಸಿ’ ಎಂದು ಕೇಳಿಕೊಂಡರು. ಆಗ ಅಂಕಲಗಿ ಅಡವಿ ಸ್ವಾಮಿಗಳು ‘ನಿನಗೆ ಮಾತನಾಡುವ ಕಾಶಿ ವಿಶ್ವನಾಥ ಬೇಕೋ, ಮಾತನಾಡದ ವಿಶ್ವನಾಥ ಬೇಕೋ?’ ಎಂದು ಕೇಳಿದರು. ಆಗ ಮೃತ್ಯುಂಜಯ ಅಪ್ಪಗಳು ‘ನನಗೆ ಮಾತನಾಡುವ ದೇವರು ಬೇಕು’ ಎಂದರು. ಅಂಕಲಗಿ ಅಡಿವೆಪ್ಪನವರು ‘ನೀನು ಕಾಶಿಗೆ ಹೋಗುವ ಬದಲು, ಅಥಣಿಗೆ ಹೋಗು, ಅಲ್ಲಿ ಮುರುಘೇಂದ್ರ ಶಿವಯೋಗಿಗಳು ಕಾಶಿ ವಿಶ್ವನಾಥನ ಪ್ರತಿರೂಪವೇ ಆಗಿದ್ದಾರೆ. ಅವರ ಆಶೀರ್ವಾದ ಪಡೆದುಕೊ’ ಎಂದು ಹೇಳಿದರು. ಮೃತ್ಯುಂಜಯ ಅಪ್ಪಗಳು ನೇರವಾಗಿ ಅಥಣಿಗೆ ಬಂದು, ಗಚ್ಚಿನಮಠದಲ್ಲಿ ಸೇವೆ ಮಾಡತೊಡಗಿದರು. ಇವರ ಸೇವೆಯನ್ನು ಮೆಚ್ಚಿ ಶಿವಯೋಗಿಗಳು ತಮ್ಮ ಆಪ್ತ ವಲಯದಲ್ಲಿ ಸೇರಿಸಿಕೊಂಡರು. ಒಂದು ದಿನ ಮೃತ್ಯುಂಜಯ ಅಪ್ಪಗಳು ಒಂದು ರೂಪಾಯಿ ನಾಣ್ಯವನ್ನು ಶಿವಯೋಗಿಗಳು ಕೂಡ್ರುವ ಸ್ಥಾನದಲ್ಲಿ ಇಟ್ಟಿದ್ದರು. ಇದನ್ನು ಕಂಡು ಶಿವಯೋಗಿಗಳು ‘ಚೇಳು ಚೇಳು’ ಎಂದು ಕೂಗಿದರು. ಮೃತ್ಯುಂಜಯಪ್ಪಗಳು ಓಡಿ ಬಂದು, ಎಲ್ಲಿ ಚೇಳು ಎಂದು ಕೇಳಿದರು. ಆಗ ಶಿವಯೋಗಿಗಳು ಒಂದು ರೂಪಾಯಿ ನಾಣ್ಯ ತೋರಿಸಿ ಅದೇ ಚೇಳು ಎಂದರು. ಈ ಘಟನೆಯಿಂದ ವಿರಕ್ತನಾದವನು ಯಾವುದೇ ವಸ್ತು ವಿಷಯಗಳಿಗೆ ವ್ಯಾಮೋಹಗೊಳ್ಳಬಾರದೆಂದು ಮೃತ್ಯುಂಜಯ ಅಪ್ಪಗಳು ಅರಿತುಕೊಂಡರು. ನಂತರ ಧಾರವಾಡ ಮುರುಘಾಮಠದ ಪೀಠಾಧಿಪತಿಗಳಾಗಿ ಬಂದರು. ಮುರುಘಾಮಠದಿಂದ ಸಾಹಿತ್ಯ ಪ್ರಕಟಿಸುವ ಸಲುವಾಗಿ ಬಾಲಲೀಲಾ ಮಹಾಂತ ಶಿವಯೋಗಿ ಗ್ರಂಥಮಾಲೆ ಪ್ರಾರಂಭಿಸಿದರು. ಮುರುಘಾಮಠದಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನು ಅಥಣಿ ಮುರುಘೇಂದ್ರ ಶಿವಯೋಗಿಗಳಿಗೆ ಅರ್ಪಿಸಿದರು. ‘ತಾನು ಭೂಮಿಗವಸಾನಂ, ಭೂಮಿತನಗವಸಾನಂ ಎಂಬಂತೆ ಬಾಳಿ ಬದುಕಿದ ಮುರುಘೇಂದ್ರ ಶಿವಯೋಗಿಗಳ ಸನ್ನಿಧಾನಕ್ಕೆ’ ಎಂಬ ವಾಕ್ಯವನ್ನು ಪ್ರತಿ ಪುಸ್ತಕದಲ್ಲಿ ಮುದ್ರಿಸಿದರು. ಇದು ಮೃತ್ಯುಂಜಯ ಅಪ್ಪಗಳು ಶಿವಯೋಗಿಗಳ ಮೇಲಿಟ್ಟ ಭಕ್ತಿ ಶ್ರದ್ಧೆಗೆ ನಿದರ್ಶನ.

ಲೋಕಮಾನ್ಯರೊಂದಿಗೆ ಶಿವಯೋಗಿಗಳು

ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರು, ಕೇಸರಿ ಪತ್ರಿಕೆ ಮೂಲಕ ಭಾರತೀಯರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುತ್ತಿದ್ದರು. ಅವರೊಮ್ಮೆ ಶಿವಯೋಗಿಗಳ ದರ್ಶನ ಪಡೆಯಲು ಬಯಸಿದರು. ದಿನಾಂಕ 15-11-1917ರಂದು ಕಾರ್ತಿಕ ಮಾಸದ ಗುರುವಾರ ದಿನ ತಿಲಕರು ಅಥಣಿಗೆ ಆಗಮಿಸಿದರು. ವಿಭೂತಿ ಗಟ್ಟಿ, ಗಂಧದ ಕೊರಡು, ರುದ್ರಾಕ್ಷಿಮಾಲೆ ಮತ್ತು ಹಣ್ಣು ಹಂಪಲಗಳನ್ನು ಕಾಣಿಕೆಯಾಗಿ ಶಿವಯೋಗಿಗಳಿಗೆ ಅರ್ಪಿಸಿ, ಶಿರಬಾಗಿ ನಮಸ್ಕರಿಸಿದರು. ಉಭಯ ಮಹಾನುಭಾವರು ದೇಶದ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿದರು. ಕೊನೆಗೆ ತಿಲಕರು ನಮಗೆ ಸ್ವಾತಂತ್ರ್ಯ ದೊರೆಯುವುದು ಯಾವಾಗ ಎಂದು ಕೇಳಿದರು. ಆಗ ಶಿವಯೋಗಿಗಳು ‘ಸ್ವಾತಂತ್ರ್ಯದ ಫಲವನ್ನು ಅನುಭವಿಸಲು ನಾವು ನೀವು ಇರುವುದಿಲ್ಲ. ನಾವು ಹಚ್ಚಿಟ್ಟ ಮರಗಳ ಫಲವನ್ನು ಮುಂದಿನ ಪೀಳಿಗೆಯವರು ಅನುಭವಿಸುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು. ಮುಂದೆ ಶಿವಯೋಗಿಗಳ ಕೃಪಾಶೀರ್ವಾದದಂತೆ ದಿ. 1-8-1920ರಂದು ತಿಲಕರು ಮುಂಬೈಯಲ್ಲಿ ಪರಂಧಾಮ ಪಡೆದರು. ಶಿವಯೋಗಿಗಳ ವಾಣಿ ಸತ್ಯವಾಯಿತು. ಒಬ್ಬರು ರಾಜಕೀಯ ಪಟು, ಇನ್ನೊಬ್ಬರು ಅಧ್ಯಾತ್ಮದ ಮೇರು. ಇವರಿಬ್ಬರ ಸಮಾಗಮದಲ್ಲಿ ಭಾರತದ ಭವಿಷ್ಯವಾಣಿ ಅಡಗಿತ್ತು. ಶ್ರೀ ಶಿವಯೋಗಿಗಳ ಘನವ್ಯಕ್ತಿತ್ವವನ್ನು ಕುರಿತು ತಿಲಕರು ಗೀತೆಯೊಂದನ್ನು ಮರಾಠಿಯಲ್ಲಿ ರಚಿಸಿದರು. ಅದನ್ನು ನಲವಡಿ ಶ್ರೀಕಂಠಶಾಸ್ತ್ರಿಗಳು ಅನುವಾದಿಸಿದರು. ಪದ್ಯ ಹೀಗಿದೆ:

ನೋಡಿ ಧನ್ಯನಾದೆ ನಾನೀಗ

ನೋಡಿ ಪಾದವ ಮಾಡಿ ಸ್ತೋತ್ರವ

ಕೂಡಿ ಧ್ಯಾನದಿಂ ಬೇಡಿ ಮೋಕ್ಷವ                 ||1||

ತೂರಿ ಮಾಯಾ ಜಾಲವನ್ನು

ಹಾರಿ ನಿತ್ಯ ತತ್ವ ಸುಖಕ್ಕೆ

ಸೇರಿ ಬ್ರಹ್ಮವನ್ನು ಮೀರಿ ರಾರಾಜಿಪುದರಿಂದ     ||2||

ಭಾಸುರ ತನಯ ನಾಮ ಪತ್ತಣ

ವಾಸ ರುಚಿರ ಗಚ್ಚಿನಮಠ

ದೀಶ ಮುಕ್ತಿಕೋಶ ಮುರುಘೇಶನೆಂದು

ನೋಡಿ ಧನ್ಯನಾದೆ ನಾನೀಗ                     ||3||

ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರು ಕನ್ನಡದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿದ ಪ್ರಾತಃಸ್ಮರಣೀಯರಲ್ಲಿ ಒಬ್ಬರು. ಅವರು ದೇವದಾಸಿ ಮಗ ಎನ್ನುವ ಕಾರಣಕ್ಕೆ ಯಾರೂ ಲಿಂಗದೀಕ್ಷೆಯನ್ನು ಅವರಿಗೆ ನೀಡಿರಲಿಲ್ಲ. ಮಂಜಪ್ಪನವರು ಕೊನೆಗೆ ಅಥಣಿ ಶಿವಯೋಗಿಗಳಲ್ಲಿ ದೀಕ್ಷೆ ನೀಡಲು ವಿನಂತಿಸಿಕೊಂಡರು. ಬಸವಣ್ಣನವರ ವಚನಗಳನ್ನು ನಿತ್ಯ ಪಾರಾಯಣ ಮಾಡುತ್ತಿದ್ದ ಶಿವಯೋಗಿಗಳಿಗೆ ‘ದಾಸಿ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಲಿಂಗದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪರಿಭಾವಿಸಬೇಕು’ ಎಂಬ ನುಡಿ ನೆನಪಿಗೆ ಬಂದಿತು. ಪ್ರೀತಿಯಿಂದ ಕರೆದು ಗಚ್ಚಿನಮಠದಲ್ಲಿ ಲಿಂಗದೀಕ್ಷೆಯನ್ನು ದಯಪಾಲಿಸಿದರು. ಮಂಜಪ್ಪನವರು ಶಿವಯೋಗಿಗಳಿಂದ ತುಂಬ ಪ್ರಭಾವಿತರಾಗಿ, ಶಿವಯೋಗಿಗಳನ್ನು ಕುರಿತು ‘ಪ್ರಥಮಾಚಾರ ದೀಪಿಕೆ’ ಎಂಬ ಪುಸ್ತಕವನ್ನು ರಚಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ.

ದಾನವೀರ ಶಿರಸಂಗಿ ಲಿಂಗರಾಜರಿಗೆ ಮಾರ್ಗದರ್ಶನ

               ಲಿಂಗಾಯತ ಸಮಾಜದಲ್ಲಿ ತ್ಯಾಗವೀರ ಎನಿಸಿಕೊಂಡ ಶಿರಸಂಗಿ ಲಿಂಗರಾಜರು ದೊಡ್ಡ ಸಂಸ್ಥಾನಿಕರು. ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಮಾನಸಿಕವಾಗಿ ಬಹಳ ನೊಂದುಕೊಂಡರು. ಆಗ ಶಿವಯೋಗಿಗಳು ಲಿಂಗರಾಜರಿಗೆ ದರ್ಶನ ನೀಡಿ, ಮಕ್ಕಳಿಲ್ಲವೆಂದು ಕೊರಗದಿರಿ. ಸಮಾಜದ ಮಕ್ಕಳನ್ನೇ ನಿಮ್ಮ ಮಕ್ಕಳೆಂದು ಭಾವಿಸಿ, ಅವರ ಶಿಕ್ಷಣಕ್ಕಾಗಿ ನಿಮ್ಮ ಸಂಸ್ಥಾನ ಸದುಪಯೋಗವಾಗಲಿ ಎಂದು ಆಶೀರ್ವದಿಸಿದರು. ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಸಮಾಜಕ್ಕೆ ಮೀಸಲಿಟ್ಟರು ಎಂಬುದು ಈಗ ಇತಿಹಾಸ.

ಜಗದ್ಗುರುಗಳಿಗೆ ಆಶೀರ್ವಾದ

               ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಯಾವುದೇ ಮಠದ ಅಧಿಪತಿಯಾಗಲಿಲ್ಲ. ಆದರೆ ಯೋಗ್ಯಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಬರಬೇಕೆಂಬ ಕಳಕಳಿ ಅವರಲ್ಲಿತ್ತು. 1903ರಲ್ಲಿ ಸವದತ್ತಿಯಲ್ಲಿ ಜರುಗಿದ ಬಸವ ಪುರಾಣ ಕಾರ್ಯಕ್ರಮಕ್ಕೆ ಸಹಜವಾಗಿ ಜಯದೇವ ಪಂಡಿತರು ಆಗಮಿಸಿದ್ದರು. ಅದೇ ಆಗ ಕಾಶಿಯಿಂದ ಪಂಡಿತ ಪದವಿಯಿಂದ ವಿಭೂಷಿತರಾಗಿ ಬಂದಿದ್ದ ಜಯದೇವ ಪಂಡಿತರನ್ನು ಶಿವಯೋಗಿಗಳು ಕಾರುಣ್ಯದೃಷ್ಟಿಯಿಂದ ನೋಡಿದರು. ಜಯದೇವ ಪಂಡಿತರಲ್ಲಿ ಸಮಾಜವನ್ನು ಮುನ್ನಡೆಸುವ ಅತುಲ ಸಾಮರ್ಥ್ಯವಿರುವುದನ್ನು ಗಮನಿಸಿದರು. ಇವರು ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿಗಳಾಗಲಿ ಎಂದು ಆಶೀರ್ವದಿಸಿದರು. ಜಯದೇವ ಜಗದ್ಗುರುಗಳು ಮಾಡಿದ ಸೇವೆ ನಾಡವರಿಗೆ ವೇದ್ಯವಾಗಿರುವುದನ್ನು ಮತ್ತೆ ಹೇಳಬೇಕಾಗಿಲ್ಲ.

               ಹಾಗೆಯೇ ಗಚ್ಚಿನಮಠದಲ್ಲಿ ವಾಗೀಶ ಎಂಬ ಸಾಧಕರು ಶಿವಯೋಗಿಗಳವರ ಸೇವೆಯನ್ನು ಮನಮುಟ್ಟಿ ಮಾಡುತ್ತಿದ್ದರು. ಒಂದು ದಿನ ಶಿವಯೋಗಿಗಳ ಲಿಂಗಪೂಜೆಗೆ ಬಿಲ್ವ ಸಂಗ್ರಹಿಸಲು ಹೋದಾಗ ಬಿಲ್ವಪತ್ರೆಯೊಂದು ಸಾಧಕರ ತಲೆ ಮೇಲೆ ಬಿತ್ತು. ಅದನ್ನು ಗಮನಿಸಿದ ಶಿವಯೋಗಿಗಳು ‘ನೀನು ಪರ್ವತಪೀಠದ ಒಡೆಯನಾಗುವಿ’ ಎಂದು ಆಶೀರ್ವದಿಸಿದರು. ಶಿವಯೋಗಿಗಳ ವಾಣಿಯಂತೆ 1941ರಲ್ಲಿ ವಾಗೀಶ ಪಂಡಿತಾರಾಧ್ಯರು ‘ಶ್ರೀಶೈಲ ಪೀಠ’ದ ಜಗದ್ಗುರುಗಳಾದರು.

               ಬಂಥನಾಳ ಶಿವಯೋಗಿಗಳು, ಬೀಳೂರು ಗುರುಬಸವ ಸ್ವಾಮಿಗಳು ಮೊದಲಾದ ಸಮಾಜಸೇವಾಸಕ್ತ ಶ್ರೀಗಳಿಗೆ ಮುರುಘೇಂದ್ರ ಶಿವಯೋಗಿಗಳು ಮಾರ್ಗದರ್ಶಕರಾಗಿದ್ದರು. ಜಾತಿಮತ ಪಂಥಗಳನ್ನು ಮೀರಿದ್ದ ಶಿವಯೋಗಿಗಳು ಭಕ್ತವರ್ಗದ ಅನೇಕ ಸಾಧಕರನ್ನು ವಿರಕ್ತಮಠಗಳಿಗೆ ಸ್ವಾಮಿಗಳನ್ನಾಗಿ ಮಾಡುವಲ್ಲಿ ಪ್ರಯತ್ನಿಸಿದ್ದರು. ಇಂದು ನಾವೆಲ್ಲ ಜಾತಿ ಜಾತಿಗಳ ನಡುವೆ ಗೋಡೆ ಕಟ್ಟಿಕೊಂಡಿರುವಂಥ ಸಂದರ್ಭದಲ್ಲಿ ಅಂದು ಶಿವಯೋಗಿಗಳು ಅದೆಲ್ಲವನ್ನು ಮೀರಿ ನಿಂತಿದ್ದರು. ತಮ್ಮ ಗಚ್ಚಿನಮಠಕ್ಕೆ ಭಕ್ತವರ್ಗದ ಸಿದ್ಧಲಿಂಗ ಸ್ವಾಮಿಗಳನ್ನು ಅಧಿಪತಿಗಳನ್ನಾಗಿ ಮಾಡಿದರು. ಬೀಳೂರು ಗುರುಬಸವ ಸ್ವಾಮಿಗಳು ಭಕ್ತವರ್ಗದವರು. ಹೀಗೆ ಅನೇಕ ಶ್ರೀಗಳನ್ನು ಶಿವಯೋಗಿಗಳು ಸಮಾಜಸೇವೆಗೆ ಸಿದ್ಧಗೊಳಿಸಿದ್ದರು.

ಲಿಂಗೈಕ್ಯ

               ಲಿಂಗವಿಡಿದು ಲಿಂಗಸಿದ್ಧಿಯ ಬದುಕು ಬದುಕಿದ ಶಿವಯೋಗಿಗಳು ತಮ್ಮ 85ನೇ ವಯಸ್ಸಿನಲ್ಲಿ ದಿನಾಂಕ 23-4-1921ರಂದು ಲಿಂಗೈಕ್ಯರಾದರು. ಶಿವಯೋಗ ಚೇತನವೊಂದರ ದಿವ್ಯ ಅಧ್ಯಾಯ ಮುಕ್ತಾಯವಾದಂತಾಯಿತು.

ರಚನೆ:  ದ್ಯಾಂಪುರ ಶ್ರೀಚನ್ನಕವಿಗಳು

 

ಶ್ರೀ ಗುರು ಕುಮಾರ ಪರಶಿವ

ಯೋಗಿಯ ನೂರೆಂಟು ನಾಮಗಳನನವರತಂ

ರಾಗಂಮಿಗೆ ಪಠಿಪಾತಂ

ಗಾಗುವವಖಿಲಾರ್ಥ ಸಿದ್ಧಿ ಮುಕ್ತಿ ಗಳಿಳೆಯೋಳ್

ಶ್ರೀ ವಿರಾಟ್ ಪುರಾಧಿವಾಸ ಯತಿಕುಲೇಶ ಗುರುಕುಮಾರ

ಭಾವಭೇದವರಿದ ಮಹಿತ ಚಿತ್ಪ್ರಕಾಶ ಗುರುಕುಮಾರ

ಲಿಂಗಸಂಗ ಮದನ ಮದವಿಭಂಗತುಂಗ ಗುರುಕುಮಾರ

ಮಂಗಲಾಂಗ ಜಂಗಮಾದಿನಾಥವರದ ಗುರುಕುಮಾರ

ಯೋಗಶೀಲ ಭಕ್ತಪಾಲ ವಿರತಿಲೋಲ ಗುರುಕುಮಾರ

ರಾಗರಹಿತ ಸುಕೃತಚರಿತ ಸುಗುಣಭರಿತ ಗುರುಕುಮಾರ

ನಿನ್ನ ಪಾಲಿನನ್ನವತಿಥಿಗುಣಿಸಿ ತಣಿದೆ ಗುರುಕುಮಾರ

ಮನ್ನಣೆಯನು ಪಡೆದೆ ಬಾಲ್ಯದಲ್ಲಿ ನೀನು ಗುರುಕುಮಾರ

ಗಳಿಸಿದೆಲ್ಲ ಹಣವ ತಾಯಿಗೊಲಿದು ಕೊಟ್ಟೆ ಗುರುಕುಮಾರ

ಸಲಹಿದೊಂದು ಋಣಕೆ ಸಲ್ಲಿತೆಂದು ಪೇಳ್ದೆ  ಗುರುಕುಮಾರ  

ಮಗನ ಮೋಹವಳಿಯಲೆಂದು ತಾಯ್ಗೆ ಪೇಳ್ದೆ  ಗುರುಕುಮಾರ

ಬಗೆಯ ಮಾತ್ರ ಮೋಹವೆನ್ನೊಳಿಲ್ಲವೆಂದೆ ಗುರುಕುಮಾರ

ನಿಜಗುಣಾರ್ಯ ಸುಗಮಶಾಸ್ತ್ರವರಿಯಲೆಂದು ಗುರುಕುಮಾರ

ಸುಜನರೊಡನೆ ಚಿಂತನವನು ಮಾಡಲಾದೆ ಗುರುಕುಮಾರ

ಜಡೆಯಸಿದ್ಧರಿಂದ ಸಂಶಯವನು ನೀಗಿ ಗುರುಕುಮಾರ

ಪಡೆದೆ ವೀರಶೈವ ಮಾರ್ಗ ನಿಶ್ಚತೆಯನು ಗುರುಕುಮಾರ

ಭವ ವಿಮೋಚನಕ್ಕೆ ಗುರುವನರಸಲಾದೆ ಗುರುಕುಮಾರ

ತವಕದಿಂದ ಬಸವಲಿಂಗ ಯತಿಯ ಕಂಡೆ ಗುರುಕುಮಾರ

ಎನಗೆ ನೀನೆ ಗುರುವರೇಣ್ಯನೆಂದು ನಂಬಿ ಗುರುಕುಮಾರ

ವಿನಯದಿಂದ ತತ್ಪದಾಶ್ರಯದೋಳ್ ನಿಂದೆ ಗುರುಕುಮಾರ

ಅತುಲ ಶೀಲ ಸತ್ಕ್ರಿಯಾಚರಣೆಯ ಪಿಡಿದೆ ಗುರುಕುಮಾರ

ಮತಿಯೊಳಲಸದದನು ಬಿಡದೆ ನಡೆಸಲಾದೆ ಗುರುಕುಮಾರ

ಯೋಗಶಾಸ್ತ್ರದಲ್ಲಿ ನಿಪುಣನಾದೆ ಕಲಿತು ಗುರುಕುಮಾರ

ಆಗಮಾರ್ಥ ತತ್ತ್ವಕುಶಲನೆನಿಸಿದಯ್ಯ ಗುರುಕುಮಾರ

ಮೊದಲು ಮನೆಯ ಜನರ ಹೊರಳಿ ನೋಡಲಿಲ್ಲ ಗುರುಕುಮಾರ

ಪುದಿದ ಶರಣರೆನ್ನ ಬಳಗವೆಂದು ತಿಳಿದೆ ಗುರುಕುಮಾರ

ಶಂಭುಲಿಂಗಶೈಲಕಾತನೊಡನೆ ಪೋದೆ ಗುರುಕುಮಾರ

ಶಂಭುಲಿಂಗವೀತನೆಂದು ಸೇವೆಗೈದೆ ಗುರುಕುಮಾರ

ಗುರುವಿನೊಲುಮೆಯಿಂದ ಚಿದುಪದೇಶವಾಂತೆ ಗುರುಕುಮಾರ

ಗುರುಸಮಾನ ಯೋಗ್ಯತೆಯನು ಪಡೆದು ಮೆರೆದೆ ಗುರುಕುಮಾರ

ಗುರುವಿನೊಡನೆ ದೇಶಪರ್ಯಟನವಗೈದೆ ಗುರುಕುಮಾರ

ಶರಣಗಣಕೆ ಪರಮತತ್ತ್ವದಿರವನೊರೆದೆ ಗುರುಕುಮಾರ

ಬಿದರಿಯೂರು ಕುಮಾರ ಶಂಭುಯೋಗಿಯಿಂದ ಗುರುಕುಮಾರ

ಸದಯಜಂಗಮಾಶ್ರಮವನು ಪೊಂದಿದಯ್ಯ ಗುರುಕುಮಾರ

ಹಾನಗಲ್ಲ ಮಠಕೆ ಸ್ವಾಮಿಯಾಗಿ ಮೆರೆದೆ ಗುರುಕುಮಾರ

ದಾನಧರ್ಮ ಶೀಲನೆನಿಸಿ ಪೆಸರ ಪಡೆದೆ ಗುರುಕುಮಾರ

ಸ್ಥಾಪಿಸಿದೆ ಮಹಾಸುಸಭೆಯನೆಮ್ಮಮತದೆ ಗುರುಕುಮಾರ

ರೂಪುಗೊಳ್ಳಲಾದುದೆಮ್ಮ ಧರ್ಮದೇಳ್ಗೆ ಗುರುಕುಮಾರ

ವರವಿರಾಗದಸಮ ಮಲ್ಹಣಾರ್ಯನೊಪ್ಪಿ ಗುರುಕುಮಾರ

ನೆರವನರ್ಥಿಸಿದನು ನಿನ್ನೊಳೀ ಮತಕ್ಕೆ ಗುರುಕುಮಾರ

ಗುರುಚರಾಧಿಕಾರಿಗಳನು ತಿದ್ದಲೆಂದು ಗುರುಕುಮಾರ

ಪರಮಯೋಗಶಾಲೆಯಾಗಲೆಂದು ಬಗೆದೆ ಗುರುಕುಮಾರ

ಚರಮಹಾಂತ ಯೋಗಿ ತೋರಿದೆಡೆಯೊಳೊಪ್ಪಿ ಗುರುಕುಮಾರ

ಹರನ ಯೋಗಮಂದಿರವನು ವಿರಚಿಸಿರ್ದೆ ಗುರುಕುಮಾರ

ಪಂಚಪೀಠದವರನಾದರಿಸಿದೆ ನೀನು ಗುರುಕುಮಾರ

ಪಂಚಸೂತ್ರ ಲಿಂಗರಚನೆಗೊಳಿಸಿದಯ್ಯ ಗುರುಕುಮಾರ

ಗೋಮಯವನು ಸುಟ್ಟ ಬೂದಿಯಿಂದ ಪಡೆದು ಗುರುಕುಮಾರ

ನೇಮವಿಡಿದು ಮಾಡಿಸಿದೆ ವಿಭೂತಿಯನು ಗುರುಕುಮಾರ

ಧರ್ಮದಿರವನಖಿಲ ಜನಕೆ ತಿಳಿಸಿ ಪೇಳ್ದೆ ಗುರುಕುಮಾರ

ಧರ್ಮದೇಳ್ಗೆಗಾಗಿ ಸವೆಸಿದಯ್ಯ ತನುವ ಗುರುಕುಮಾರ

ಪಿರಿದೆನಿಪ್ಪ ಗ್ರಂಥ ಸಂಗ್ರಹವ ನೆಗಳ್ದೆ ಗುರುಕುಮಾರ

ಹರುಷದಿಂದ ಯೋಗಸಾಧಕರನು ಪೊರೆದೆ ಗುರುಕುಮಾರ

ನಿತ್ಯ ದಾಸೋಹವಾಗಲೆಸಗಿದಯ್ಯ ಗುರುಕುಮಾರ

ಸತ್ಯವಾದಿಗಳಿಗೆ ಮೆಚ್ಚಿ ಹಿಗ್ಗುತಿರ್ದೆ ಗುರುಕುಮಾರ

ಅಂದಣದೊಳು ಜಂಗಮವನು ಮೆರೆಸಿದಯ್ಯ ಗುರುಕುಮಾರ

ಅಂದವೆನಿಸಿ ನೀನು ಏರಿ ಮೆರೆಯಲಿಲ್ಲ ಗುರುಕುಮಾರ

ಮೇಲಗದ್ದುಗೆಯನು ಬಯಸಿ ಬೇಡಲಿಲ್ಲ ಗುರುಕುಮಾರ

ಕೀಳುತಾಣವೆಂದು ಮನದಿ ಕುಗ್ಗಲಿಲ್ಲ ಗುರುಕುಮಾರ

ಪರತರ ಪ್ರಮಾಣದಂತೆ ನಡೆದು ಬಾಳ್ದೆ ಗುರುಕುಮಾರ

ಹರನ ಶಾಸ್ತ್ರ ವಚನಗಳನು ಮೀರಲಿಲ್ಲ ಗುರುಕುಮಾರ

ಅಂಗ-ಲಿಂಗ ಸಾಮರಸ್ಯ ಸುಖವನುಂಡೆ ಗುರುಕುಮಾರ

ಲಿಂಗಭೋಗ ಭೋಗಿಯೆಂದು ಕೀರ್ತಿ ಪಡೆದೆ ಗುರುಕುಮಾರ

ವೀರಶೈವ ಸಮಯ ಘನಧ್ವಜವನೆತ್ತಿ ಗುರುಕುಮಾರ

ಧಾರುಣಿಯೊಳು ಪಿಡಿದು ಮೆರೆಸಿದಯ್ಯ ವೀರ ಗುರುಕುಮಾರ

ಮುಕ್ತಿಗಿಂ ಸಮಾಜ ಸೇವೆಯಧಿಕವೆಂದೆ ಗುರುಕುಮಾರ

ಭಕ್ತಿ ಹೀನರನ್ನು ನೋಡಿ ಮನದಿ ನೊಂದೆ ಗುರುಕುಮಾರ

ಕುರುಡಗತುಲ ಗಾನಕುಶಲತೆಯನು ಕೊಡಿಸಿ ಗುರುಕುಮಾರ

ಧರೆಯೊಳಾತನಿಂದ ಪರ್ಬಲೆಸಗಿದಯ್ಯ ಗುರುಕುಮಾರ

ಪ್ರಮಥವರ್ತನವನು ತಕ್ಕುದೆಂದು ತಿಳಿದೆ ಗುರುಕುಮಾರ

ಪ್ರಮಥನಿಂದೆಗಿನಿಸು ತಡೆಯಲಿಲ್ಲ ನೀನು ಗುರುಕುಮಾರ

ಬಳಸಿದಯ್ಯ ಕೈಯ್ಯನೂಲಿನರಿವೆಗಳನು ಗುರುಕುಮಾರ

ಗಳಿಸಿದಯ್ಯ ಭಕ್ತಿ ಚಿದ್ ವಿರಕ್ತಿಗಳನು ಗುರುಕುಮಾರ

ತೆತ್ತೆ ಸ್ವಮತ ಸೇವೆಗಾಗಿ ಜನ್ಮವಿದನು ಗುರುಕುಮಾರ

ಮತ್ತೆ ಬರುವೆನೆಂದು ಕೊನೆಗೆ ಪೇಳಿ ಪೊದೆ ಗುರುಕುಮಾರ

ಅಂಗ ಭೋಗದಿಚ್ಛೆಗಾಡಲಿಲ್ಲ ದೇವ ಗುರುಕುಮಾರ

ಲಿಂಗದಿಚ್ಛೆಗಾಡ ನೆಚ್ಚಿ ಶಾಂತಿಪಡೆದೆ ಗುರುಕುಮಾರ

ಶಿವನ ಯೋಗಮಂದಿರಕ್ಕೆ ದುಡಿದು ದಣಿದೆ ಗುರುಕುಮಾರ

ಶಿವಸಮರ್ಚನಾನುಭವವ ಮಾಡಿ ತಣಿದೆ ಗುರುಕುಮಾರ

ಬೆಳೆದುದೀ ಸಮಾಜದಲ್ಲಿ ಬೋಧಕಾಳಿ ಗುರುಕುಮಾರ

ಬೆಳೆದರಭವಕಥಿಕರಿದುವೆ ನಿನ್ನ ಪುಣ್ಯ ಗುರುಕುಮಾರ

ನಿನ್ನ ಮಠವ ಮರೆದು ಮತವೆ ನನ್ನದೆಂದು ಗುರುಕುಮಾರ

ಮನ್ನಿಸಿದೆ ವಿಶಾಲ ದೃಷ್ಟಿಯಿಂದ ನೋಡಿ ಗುರುಕುಮಾರ

ಸಮಯ ಭೇದಗಳನ್ನು ಹೇಳಿ ಕೇಳಿ ಮುರಿದೆ ಗುರುಕುಮಾರ

ಸಮಯಭೇದವಪ್ರಮಾಣವೆಂದು ತಿಳಿದೆ ಗುರುಕುಮಾರ

ಭೂತ ಚೇಷ್ಟೆಗಳಿಗೆ ಲಿಂಗಪೂಜೆಯಿಂದ ಗುರುಕುಮಾರ

ಭೀತಿಗೆಡಿಸಿದಯ್ಯ ಮಠದೊಳಿರುವ ಜನದ ಗುರುಕುಮಾರ

ಪರಳಿಯಾ ವಿವಾದದಲ್ಲಿ ಜಯವ ಪಡೆದೆ ಗುರುಕುಮಾರ

ಧರೆಯ ಸುರರಿಗಾಯ್ತು ಮಾನಹಾನಿಯಂದು ಗುರುಕುಮಾರ

ಶರಣು ಹೊಕ್ಕವರ ಕಾಯ್ದೆ ಕರುಣದಿಂದ ಗುರುಕುಮಾರ

ನರರಿಗಾದ ಕಷ್ಟವೆನ್ನದೆಂದು ಅರಿತೆ ಗುರುಕುಮಾರ

ಪೋದ ಬಂದ ಗ್ರಾಮದಲ್ಲಿ ಸಭೆಯ ಕರೆದು ಗುರುಕುಮಾರ

ವೇದ ಮಂತ್ರ ಧರ್ಮಬೋಧೆಗೈದೆ ನೋಡಿ ಗುರುಕುಮಾರ

ಸೊನ್ನಲಿಗೆಯ ಶರಣರೊಪ್ಪಿ ಭಕ್ತಿಯಿಂದ ಗುರುಕುಮಾರ

ನಿನ್ನನಂತ್ಯದಲ್ಲಿ ಬಯಸಿ ಕಂಡರಂದು ಗುರುಕುಮಾರ

ತಿಳಿದೆ ಮಲ್ಲಿಕೆರೆಯ ಸ್ವಾಮಿಯಲ್ಲಿ ನೀನು ಗುರುಕುಮಾರ

ಸಲೆ ಶಿವಾನುಭವ ಸುಶಾಸ್ತ್ರದಿರವನೊಪ್ಪಿ ಗುರುಕುಮಾರ

ಕೊನೆಯೊಳೀ ಸಮಾಜಮತ ಸಮಾಜವೆಂದು ಗುರುಕುಮಾರ

ಕನವರಿಸುತ ಲಿಂಗದಲ್ಲಿ ಬೆರೆದೆ ನೀನು ಗುರುಕುಮಾರ

ಸಲಹು ತಂದೆ ತಾಯಿ ಬಂಧು ಬಳಗ ನೀನೆ ಗುರುಕುಮಾರ

ಸಲಹು ಬಸವ ಚನ್ನಬಸವ ಪ್ರಭುವೆ ನೀನು ಗುರುಕುಮಾರ

ತಿರುಗಲಾರೆನಖಿಲ ಯೋನಿಗಳೊಳು ನಾನು ಗುರುಕುಮಾರ

ಶರಣು ಹೊಕ್ಕೆನಯ್ಯ ನೋಡಿ ಕರುಣಿಸಯ್ಯ ಗುರುಕುಮಾರ

ಬಾರೋ ನನ್ನ ಕಲ್ಪತರುವೆ ತೋರು ಮುಖವ ಗುರುಕುಮಾರ

ಬಾರೊ ಪರಮಮೋಕ್ಷ ಗುರುವೆ ನಿಜದ ಕುರುಹು ಗುರುಕುಮಾರ

ಬಿಡದಿರೆನ್ನ ಕರವ ಭವಭವಂಗಳಲ್ಲಿ ಗುರುಕುಮಾರ

ನಡೆಸು ವೀರಶೈವ ಮಾರ್ಗದಲ್ಲಿ ಮುದದೆ ಗುರುಕುಮಾರ

ಶರಣು ಗುರುವೆ ಶರಣು ಲಿಂಗವೇ ಚರಾರ್ಯ ಗುರುಕುಮಾರ

ಶರಣು ಶರಣು ಚೆನ್ನಕವಿವರೇಣ್ಯ ವಂದ್ಯ ಗುರುಕುಮಾರ

ಇಂತೀ ಶುಭನಾಮಂಗಳಂ

ಸಂತಸದಿಂ ಜಪಿಸುತಿರ್ಪ ಘನಸುಕೃತಿಗಳಂ

ಕಂತುಹರ ಪಾಲಿಸುವನನಂತ ಸಮಾಧಾನ ಸುಖ ಸಮೃದ್ಧಿಯನಿತ್ತು.

ಶ್ರೀಕಂಠ.ಚೌಕೀಮಠ

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಸಹೃದಯರ ಅಕ್ಷಿ ಪಟಲ ದ ಮೇಲೆ ಅಂತರ್ಜಾಲ ದ ಮೂಲಕ  ಮೂಡುತ್ತಿರುವ  ಹೊಸಹುಟ್ಟು ಪಡೆದ ಈ “ ಸುಕುಮಾರ  “ಪತ್ರಿಕೆಗೆ ಉಜ್ವಲ ಇತಿಹಾಸವಿದೆ .

ಆ ಇತಿಹಾಸದ ಒಂದು ನೋಟವನ್ನು ಹೀಗೆ ಅವಲೋಕಿಸಬಹುದು : ಲಿಂಗೈಕ್ಯ  ಪರಮ ಪೂಜ್ಯಶ್ರೀ ಕುಮಾರ  ಶಿವಯೋಗಿಗಳವರಿಂದ ಸ್ಥಾಪನೆಗೊಂಡ ಶ್ರೀ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಸಾಧಕರ ಶಿಕ್ಷಣಕ್ಕೆ ನೆರವಾಗಲೆಂಬ ಸದುದ್ದೇಶದಿಂದ ಆಗ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ನವಲಗುಂದದ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳವರು “ ಶ್ರೀ ರೇವಣಸಿದ್ದೇಶ್ವರ ವಾಚನಾಲಯ ” ವನ್ನು ಗ್ರಂಥಾಲಯದಲ್ಲಿ ಆರಂಭಿಸಿದರು . ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಲಭ್ಯವಿದ್ದ ಅಮೂಲ್ಯ ಪುಸ್ತಕ ಮತ್ತು ಉನ್ನತ ಮಟ್ಟದ ಪತ್ರಿಕೆಗಳು ಓದಿನಲ್ಲಿ ಸಾಧಕರು ತಮ್ಮನ್ನು ತಾವು ತೊಡಗಿಸಿಕೊಂಡರು . ಇದಲ್ಲದೆ ನಾಡಿನ ಹಿರಿಯ ಸಾಹಿತಿಗಳ ಮತ್ತು ವಿದ್ವಾಂಸರ ಪಾಂಡಿತ್ಯಪೂರ್ಣ , ವೈಚಾರಿಕ ಉಪನ್ಯಾಸ ಕೇಳುವ ಅವಕಾಶವೂ ಸಾಧಕರಿಗೆ ಆಗಾಗ ದೊರೆಯುತ್ತಿತ್ತು . ತತ್ಪಲವಾಗಿ ತಾವೂ ಏನನ್ನಾದರೂ ಬರೆಯಬೇಕೆಂಬ ಉತ್ಸುಕತೆ ಸಾಧಕರಲ್ಲಿ ಉಂಟಾಗುವುದು ಸಹಜ . ಅದನ್ನು ಗುರುತಿಸಿದ ಪೂಜ್ಯ ಶ್ರೀಗಳು , ಆ ಉತ್ಸಾಹ ಕಾರ್ಯರೂಪಕ್ಕಿಳಿಯಲೆಂದು ಹಾರೈಸಿ , ಆಹೊತ್ತಿಗಾಗಲೇ ಸ್ಥಾಪನೆಗೊಂಡಿದ್ದ “ ಶಿವಯೋಗಿ ಸಂಘ ‘ ದ ಹಿರಿಯ ಸದಸ್ಯರ ಬೆನ್ನು ತಟ್ಟಿದರು . ಅರ್ಥಪೂರ್ಣ ಹೆಸರು ಹೊತ್ತ “ ಸುಕುಮಾರ ‘ ಪತ್ರಿಕೆಯನ್ನು ಅವರು ಹೊರತಂದೇ ಬಿಟ್ಟರು (  ಯುಗಾದಿ ಕ್ರಿ.ಶ. 1933 ) , ಪತ್ರಿಕೆಯ ಉತ್ತಮಿಕೆಗಾಗಿ , ಅದರ ಶ್ರೇಯೋಭಿವೃದ್ಧಿಗಾಗಿ ಶಿವಯೋಗಿ ಸಂಘದ ಸದಸ್ಯರು ಒಮ್ಮನದಿಂದ ದುಡಿದರು . ಆಗ “ ಸುಕುಮಾರ ‘ ಪತ್ರಿಕೆ ಇದ್ದುದು ಕೈಬರಹದಲ್ಲಿ , ಅದನ್ನು ತಮ್ಮ ಮುತ್ತಿನಂತಹ ಅಕ್ಷರಗಳಿಂದ ಬರೆಯುತ್ತಿದ್ದವರು ಶ್ರೀ ಚಂದ್ರಶೇಖರ ದೇವರು ಅಡೂರ ( ಮುಂದೆ ಜ . ಚ . ನಿ . ) , ಅದರ ಮುಖಪುಟವನ್ನು ತಮ್ಮ ಭಾವದುಂಬಿದ ಚಿತ್ರಗಳಿಂದ ವಿನ್ಯಾಸಗೊಳಿಸುತ್ತಿದ್ದವರು , ಅಂದಿನ ಹಿರಿಯ ಸಾಧಕರೂ ಹುಟ್ಟು ಕಲಾವಿದರೂ ಆಗಿದ್ದ ಶ್ರೀ ರೇವಣಸಿದ್ಧ ದೇವರು ( ಮುಂದೆ ಹಾನಗಲ್ ಸದಾಶಿವ ಸ್ವಾಮಿಗಳು ) , ಪತ್ರಿಕೆಯ ಸಂಪಾದಕರು ಶ್ರೀ ಬಸವಲಿಂಗದೇವರು ಗುತ್ತಲ ( ಮುಂದೆ ಬಸವಲಿಂಗ ಪಟ್ಟಾಧ್ಯಕ್ಷರು , ತೆಲಸಂಗ ) , ಹೀಗೆ ಅತ್ಯಂತ ಹುರುಪಿನಿಂದ ಆರಂಭಗೊಂಡ ಪತ್ರಿಕೆ ತದನಂತರದ

ವರ್ಷಗಳಲ್ಲಿ ಏಳು – ಬೀಳುಗಳನ್ನು ಕಂಡರೂ ನಿಲ್ಲದೆ ಕೈಬರಹ ರೂಪದಲ್ಲಿಯೇ ಮುಂದುವರಿದುಕೊಂಡು ಬಂದಿತು . ಹುಬ್ಬಳ್ಳಿಯ ಮೂರುಸಾವಿರ ಮಠದ ಅಂದಿನ ಪೂಜ್ಯ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳವರ ಉದಾರ ಕೃಪೆ ಮತ್ತು ಅಂದು ಸಂಸ್ಥೆಯ ಅಧ್ಯಕ್ಷರಾಗಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯಶ್ರೀ ಶಿವಬಸವ ಸ್ವಾಮಿಗಳವರ ಪ್ರೋತ್ಸಾಹದಿಂದ ಸುಕುಮಾರ ‘ ಪತ್ರಿಕೆ ಶ್ರೀ ಶಿವಯೋಗ ಮಂದಿರದ * ಸದಾಶಿವ ಮುದ್ರಣಾಲಯ ‘ ದಲ್ಲಿಯೇ ಅಚ್ಚಾಗಿ ಹೊರಬರಲಾರಂಭಿಸಿತು ( ೧-೧೦-೧೯೫೦ ವಿಜಯದಶಮಿ ) . ಆಗ ಅದರ ಸಂಪಾದಕರಾಗಿದ್ದವರು ಶ್ರೀ ಜಿ . ಎಂ . ಉಮಾಪತಿ ಶಾಸ್ತ್ರಿಗಳು . ಅದನ್ನು ಉದ್ಘಾಟಿಸಿದವರು ಪೂಜ್ಯ ಹಾನಗಲ್ ಸದಾಶಿವ ಮಹಾಸ್ವಾಮಿಗಳವರು . ಅವರು ಪತ್ರಿಕೆ ಬಿಡುಗಡೆಯ ಭಾಷಣದಲ್ಲಿ “ ವಿನಾಶದತ್ತ ನಡೆದಿರುವ ಸಮಾಜದ ಸುಧಾರಣೆಗಾಗಿ ಕರುಣಾಳು ಪರಮಪೂಜ್ಯ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರು ಈ ಮಂದಿರವನ್ನು ಕಟ್ಟಿದರು . ಶರಣರ ವ್ಯಾಪಕ ತತ್ವಗಳ ಪ್ರಚಾರದ ಮೂಲಕ ವಿಶ್ವಧರ್ಮ ಪ್ರಸಾರದ ಸದುದ್ದೇಶದಿಂದ ಪತ್ರಿಕೆಯೊಂದನ್ನು ಪ್ರಕಟಿಸಲು ಈ ಅಚ್ಚುಕೂಟವನ್ನು ಏರ್ಪಡಿಸಿದ್ದರು . ಇಂದು ಆ ಅಚ್ಚಿನಮನೆಯಿಂದಲೇ ಅವರ ಸತ್ಸಂಕಲ್ಪವು ಅಂಕುರಿತವಾಗಿದೆ . ಅದು ಚಿಗುರಿ ಫಲಿಸಿ ಆ ಫಲದ ಸುಸ್ವಾದವನ್ನು ಸಮಾಜದ ಜನರೆಲ್ಲ ಉಣ್ಣುವಂತಾಗಲಿ ” ಎಂದು ಅಪ್ಪಣೆ ಕೊಡಿಸುವುದರ ಜೊತೆಗೆ “ ಸುಪ್ತ ಸಮಾಜವನ್ನು ಎಚ್ಚರಿಸಿ , ಸನ್ಮಾರ್ಗದಲ್ಲಿ ಪ್ರವೃತ್ತಿಯನ್ನುಂಟುಮಾಡುವಂತಹ ಲೇಖನಗಳು ಪತ್ರಿಕೆಗಳಿಗೆ ಭೂಷಣಪ್ರಾಯವಾದವು . ಪತ್ರಿಕೆಯ ಉದ್ಯಮವು ಅರ್ಥಾಗಮದ ಸಾಧನವಾಗಬಾರದು . ಹಾಳು ಹರಟೆಯ ನೋಟೀಸುಗಳಿಂದ ಅಶೋಭನೀಯವಾಗಬಾರದು . ಸಮಾಜದ ಪ್ರಗತಿಯ ಸಾಮಯಿಕ ಸಮಸ್ಯೆಗಳನ್ನು ಕುರಿತು ವಿವೇಚಿಸಿದ ಪ್ರೌಢಲೇಖನಗಳು ಬೇಕು . ಮಾನವನ ನೈತಿಕಮಟ್ಟವನ್ನು ಉನ್ನತಗೊಳಿಸುವ ನೈತಿಕ ನಿಬಂಧ ಮತ್ತು ಪ್ರಬಂಧಗಳು ಪ್ರಕಟವಾಗಬೇಕು ….. ಸಮಾಜಸೇವೆಯೊಂದಿಗೆ ಕನ್ನಡ ನುಡಿ ಮತ್ತು ಸಾಹಿತ್ಯ ಸೇವೆಗಾಗಿ ಪ್ರಕಟವಾದ ಚೆನ್ನಿಗ “ ಸುಕುಮಾರ ‘ ನು ಕನ್ನಡಿಗರ ಹೃದಯವನ್ನು ಬೆಳಗಿ ಕನ್ನಡ ಮಾತೆಗೆ ಉನ್ನತ ಕೀರ್ತಿಯನ್ನು ತರಲಿ ” ಎಂದು ಹಾರೈಸಿದರು . ಪೂಜ್ಯರ ಈ ಮಾತುಗಳಲ್ಲಿ ಲಿಂ . ಶ್ರೀ ಕುಮಾರ ಸ್ವಾಮಿಗಳವರ ಸತ್ಸಂಕಲ್ಪ , ಅವರ ಸದುದ್ದೇಶ , ಸಮಾಜ ಸುಧಾರಣೆಯ ಬಗ್ಗೆ ಅವರಿಗಿದ್ದ ಕಾಳಜಿ , ಕಳಕಳಿಗಳನ್ನು ಗುರುತಿಸಬಹುದಾಗಿದೆ . ಅವರ ಮಾತುಗಳಲ್ಲಿರುವ ಇನ್ನೊಂದು ಮಹತ್ವದ ಅಂಶವೆಂದರೆ ಪತ್ರಿಕೆಯಲ್ಲಿ ಎಂತಹ ಲೇಖನಗಳಿರಬೇಕು , ಎಂತಹ ಲೇಖನಗಳಿರಬಾರದು , ಅದರ ಧೈಯೋದ್ದೇಶಗಳೆಂಥವಿರಬೇಕು ಎಂಬುದರ ವಿವೇಚನೆ . ಇವು ಅಂದಿನ ಸಂಪಾದಕರನ್ನು ಕುರಿತು ಹೇಳಿರುವ ಮಾತುಗಳಾದರೂ ಇಂದಿನ ಸಂಪಾದಕರಿಗೂ ಅನ್ವಯಿಸುತ್ತವೆ .

ಹೀಗೆ ಕ್ರಿ . ಶ . ೧೯೫೦ ರಿಂದ ಪ್ರೊ . ಜಿ . ಎಂ . ಉಮಾಪತಿ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಮುದ್ರಣರೂಪದಲ್ಲಿ ಪ್ರಕಟವಾಗುತ್ತ ಬಂದ ಸುಕುಮಾರ ‘ ಪತ್ರಿಕೆ ಹಲವಾರು ವರ್ಷ ಸರಾಗವಾಗಿ ನಡೆದುಕೊಂಡು ಬಂದು , ಮುಂದೆ ನಿಂತು ಹೋಯಿತು .

ಶಿವಯೋಗ ಮಂದಿರ , ಒಂದು ವಿಶಿಷ್ಟ ಧಾರ್ಮಿಕ ಸಂಸ್ಥೆ . ಇಲ್ಲಿ ತರಬೇತಿ ಹೊಂದಿದ ಸಾವಿರಾರು ಸಾಧಕರು ನಾಡಿನ ತುಂಬ ಹರಡಿರುವ ಮಠಗಳ ಮಠಾಧಿಪತಿಗಳಾಗಿ ಧರ್ಮ , ಶಿಕ್ಷಣ , ಸಾಹಿತ್ಯ , ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ . ಮಠಾಧಿಪತಿಗಳ ಟಂಕಸಾಲೆಯಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಹಾಗೂ ಧೈಯೋದ್ದೇಶಗಳನ್ನು ಪ್ರಚುರಪಡಿಸುವಲ್ಲಿ ಸಂಸ್ಥೆಯ ಮುಖಪತ್ರಿಕೆಯ ಅವಶ್ಯಕತೆಯನ್ನರಿತು  ದಿನಾಂಕ ೭-೫-೨೦೦೨ ರಂದು ಸಭೆ ಸೇರಿದ ಶಿವಯೋಗಮಂದಿರ ಸಂಸ್ಥೆಯ ಗೌರವಾನ್ವಿತ ಸದಸ್ಯರು ನಿಂತು ಹೋಗಿರುವ “ ಸುಕುಮಾರ ‘ ಪತ್ರಿಕೆಯನ್ನು ಪುನಃ ಪ್ರಕಟಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಉಪಾಧ್ಯಕ್ಷರಾದ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು  ಡಾ. ಬಿ.ವಿ.ಮಲ್ಲಾಪುರ ಮತ್ತು ಡಾ. ಬಿ.ಆರ್.ಹಿರೇಮಠ  ಅವರಿಗೆ ವಹಿಸಿದರು . ಪುನರ್ಜನ್ಮ ಗೊಂಡ ಪತ್ರಿಕೆ ಉತ್ತಮ ಕಾರ್ಯನಿರ್ವಹಿಸಿತು.

ದಿ.08-04-2021 ರಂದು  ಪೂಜ್ಯ ಮುಪ್ಪಿನ ಬಸವಲಿಂಗ ದೇವರು  ,ಉತ್ತರಾಧಿಕಾರಿ ಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರಿ,  ಅವರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಉದಯೋನ್ಮುಖ  ಲೇಖಕರ ಲೇಖನ ಗಳ ಕುರಿತು ಚರ್ಚೆ ಮಾಡುವಾಗ , ಪೂಜ್ಯರು ”  ಸುಕುಮಾರ” ಪತ್ರಿಕೆಯ ಪುನರಾಂಬರದ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಆಗ ಹೊಳದಿದ್ದೇ  ಆಧುನಿಕ ತಂತ್ರಜ್ಞಾನದ ಮೂಲಕ ಅಂತರ್ಜಾಲ ದ ಪತ್ರಿಕೆ.

ಶ್ರೀಮದ್ವೀ ರಶೈವ ಶಿವಯೋಗ ಮಂದಿರದ ಅಧ್ಯಕ್ಷರಾದ ಶ್ರೀ.ಮ.ನಿ.ಪ್ರ. ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ  ಆಶೀರ್ವಾದ ಮತ್ತು ಅನುಮತಿ ಗಳ ಜೊತೆಗೆ “ಸುಕುಮಾರ” ಪತ್ರಿಕೆಯ ಮೌಲ್ಯ ಮತ್ತು ಹಿರಿಮೆಗಳಿಗೆ ಧಕ್ಕೆಯಾಗದಂತೆ  ಪತ್ರಿಕೆ ಮುನ್ನೆಡೆಯಬೇಕು ಎಂಬ ಕಳಕಳಿಯ ಎಚ್ಚರಿಕೆ ಯ ಮಾರ್ಗದರ್ಶನ ದೊಂದಿಗೆ  “ಸುಕುಮಾರ” ಪ್ರಕಾಶಗೊಳ್ಳುತ್ತಲಿದೆ.

ಇಂಥ ಗುರುತರ ಕಾರ್ಯವನ್ನು  ಸಾಧ್ಯ ಮಾಡುವುದಕ್ಕೆ  ಶ್ರೀಕುಮಾರೇಶನ ಕೃಪೆ ಬೇಕು . ಹಾಗೆಯೇ ವಿದ್ವಾಂಸರ , ಸಂಶೋಧಕರ , ಸಾಹಿತಿಗಳ ಸಮಯೋಚಿತ ಸಹಾಯ ಸಹಕಾರಗಳೂ ಬೇಕು . ಮೌಲಿಕ , ವೈಚಾರಿಕ ಹಾಗೂ ಸಂಶೋಧನಾತ್ಮಕ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ . ಕಾರಣ ಅಂಥ ಲೇಖನಗಳನ್ನು ನಾವು ನಿರೀಕ್ಷಿಸುತ್ತೇವೆ .

ಹೊಸಹುಟ್ಟು , ಹೊಸರೂಪ ಪಡೆದು ಹೊರಬರುತ್ತಿರುವ ಸುಕುಮಾರ ‘ ಪತ್ರಿಕೆಯನ್ನು ಸಹೃದಯರು ತುಂಬು ಹೃದಯದಿಂದ ಸ್ವಾಗತಿಸುವರೆಂದು ಭಾವಿಸಿದ್ದೇವೆ .

ಶ್ರೀಕಂಠ.ಚೌಕೀಮಠ

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

(ಸೌಜನ್ಯ:  ಡಾ. ಬಿ.ವಿ.ಮಲ್ಲಾಪುರ ಲೇಖನಗಳು .)

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ

ಪೂಜ್ಯರ ಆಶೀರ್ವಚನ

     ಕೈಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು. ೧೯೩೩ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾ ಸ್ವಾಮಿಗಳವರ ಅಮೃತ ನುಡಿಗಳು ಹೀಗಿವೆ

 “ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕ ಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡ ಪ್ರೇಮ ಮತ್ತು ವಿದ್ಯಾ ನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣ ಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”

ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಅಚ್ಚಿನ ಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವ ಧರ್ಮಕ್ಕೆ ಸಮ್ಮಂದಿಸಿದ ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯ ಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.

     ಈ ಸುಕುಮಾರ ಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀ ಹಾನಗಲ್ಲ ಕುಮಾರಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀ ಕುಮಾರೇಶನ ತತ್ವಗಳನ್ನು ದೇಶ ವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯ ಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಗಳಸಲೆಂದು ಹಾರೈಸುತ್ತೇವೆ.