ಲೇಖಕರು : ಪೂಜ್ಯ  ವೀರಬಸವ ದೇವರುಆಸಂಗಿ

ಭಾರತ ಇತಿಹಾಸದಲ್ಲಿ ಯೋಗ ಒಂದು ದೊಡ್ಡ ವಿಜ್ಞಾನವೇ ಹೌದು. ಮನುಷ್ಯ ಯಾವಾಗಲೂ ನಿದ್ರೆ-ಕನಸುಗಳ ಹಿಂದೆ ಬಿದ್ದು ತನ್ನ ನಿಜ ಜೀವನವನ್ನು ಮರೆತು ಬದುಕುತ್ತಿರುವನು. ಆದರೆ ಯೋಗ ನಿಜವಾದ ಜೀವನವನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ.

ಯೋಗ ಎಂದರೆ? ತನ್ನನ್ನು ತಾನು ತಿಳಿಯುವ ಸ್ಥಿತಿಯೇ ಯೋಗ. ವಿಷಯೇಂದ್ರಿಗಳ ನಿವೃತ್ತಿಯೇ ಯೋಗ, ಅಂತರಂಗದ ಅರಿವೇ ಯೋಗ.

ಮನುಷ್ಯನು ತನ್ನ ದೀರ್ಘಾಯುಷ್ಯದಲ್ಲಿ ಅರ್ಧ ಆಯುಷ್ಯವನ್ನು ನಿದ್ರೆಗೆ, ವ್ಯಸನಕ್ಕೆ, ಹಗಲು ಕನಸುಗಳಿಗೆ ಕಳೆದು ತನ್ನ ತಾ ಮರೆತು ಹೋಗುತ್ತಾನೆ. ಆದರೆ ಯೋಗ ಸಾಧಕನನ್ನು ಈ ಸ್ಥಿತಿಯಿಂದ ಜಾಗೃತಗೊಳಿಸಿ ಸ್ಥಿರ ರೂಪವನ್ನಾಗಿಸಿ ಸಾಧನಾ ಪಥದತ್ತ ಕೊಂಡೊಯ್ಯುತ್ತದೆ. ಸಾಧಕನಲ್ಲಿ ಅಚಲವಾದ ಧೈರ್ಯ ವಿಚಲವಾಗದ ಬುದ್ಧಿ ಅರಿತುಕೊಳ್ಳುವ ಜ್ಞಾನ ಸ್ಥಿರವುಳ್ಳ ಮನಸ್ಸನ್ನು ಕೊಟ್ಟು ಸಾಧಕನನ್ನು ಯಾವಾಗಲೂ ಎಚ್ಚರದಿಂದಿರಿಸುತ್ತದೆ.

ಈಗಿನ ಯೋಗ ಬರಿ ವ್ಯಾಯಾಮವಲ್ಲ. ಶರೀರ ದಂಡನೆಯಲ್ಲಿ ಇದು ಜಾಗೃತಿಯ ದಾರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಪೂರ್ಣಗೊಳಿಸುವ ದಾರಿ. ಯೋಗ ಒಂದು ಶಕ್ತಿಯಾಗಿ ಸಾಧಕನ ದಾರಿಯನ್ನು ಸರಳಗೊಳಿಸುತ್ತದೆ.

ಒಂದೊಂದು ಯೋಗವೂ ಒಂದೊಂದು ರೀತಿಯಲ್ಲಿ ಸಾಧಕನ ಮೇಲೆ ಪ್ರಭಾವ ಬೀರುತ್ತದೆ. ಭಕ್ತಿ ಯೋಗ ಮನಸ್ಸಿಗೆ, ಜ್ಞಾನ ಯೋಗ ಬುದ್ಧಿಗೆ, ಕರ್ಮಯೋಗ ಇಂದ್ರಿಯಕ್ಕೆ, ಹಠ ಯೋಗ ಶರೀರಕ್ಕೆ ಹೀಗೆ ಯೋಗಗಳು ಸಾಧಕನ ಮೇಲೆ ಪ್ರಭಾವಿತಗೊಳಿಸಿ ಸಾಧಕನಲ್ಲಿ ಶಕ್ತಿಯನ್ನು ತುಂಬುತ್ತವೆ.

ಅಷ್ಟಾಂಗ ಯೋಗಗಳು ಸಾಧಕನಿಗೆ ಸೋಪಾನವಾಗಿವೆ. ಅಂದರೆ ಮೆಟ್ಟಿಲುಗಳಾಗಿವೆ. ಸಾಧನೆಯ ಪ್ರಾರಂಭ ಸ್ಥಿತಿ ಹೇಗಿರಬೇಕು, ಮಧ್ಯಮ ಸ್ಥಿತಿ ಹೇಗೆ, ಕೊನೆಯ ಸ್ಥಿತಿ ಯಾವುದು? ಎಂದು ಸೂಚಿಸುತ್ತವೆ. ಯಮ, ನಿಯಮ, ಆಸನ, ಪ್ರಾಣಾಯಾಮಗಳು ಆರಂಭ ಸ್ಥಿತಿಯಾಗಿ, ಪ್ರತ್ಯಾಹಾರ, ಧಾರಣಗಳು ಮಧ್ಯಮ ಸ್ಥಿತಿಯಾಗಿ, ಧ್ಯಾನ, ಸಮಾಧಿ, ಕೊನೆಯ ಸ್ಥಿತಿಯಾಗಿ ಸಾಧಕನಲ್ಲಿ ಬದಲಾವಣೆ ತರುತ್ತಾ ಹೋಗುತ್ತವೆ.

ಯೋಗ ಸಾಧನೆಯಲ್ಲಿ ಸಾಧಕನ ಅವಸ್ಥೆಗಳು ಹೇಗಿರಬೇಕೆಂಬ ವಿಷಯದ ಕುರಿತು ಪತಂಜಲಿ ಯೋಗ ಸೂತ್ರಗಳಲ್ಲಿ ಬಹಳ ಅದ್ಭುತವಾಗಿ ತಿಳಿಸಿದ್ದಾರೆ. ಮಾನಸಿಕ ರೋಗಗಳಿಂದ ಹೇಗೆ ನಿವೃತ್ತಿ ಹೊಂದಬಹುದು ಎಂದು ಹೇಳಿದ್ದಾರೆ. ಪತಂಜಲಿಯ ಎರಡನೇ ಸೂತ್ರದಂತೆ “ಯೋಗಶ್ಚಿತ್ತವೃತ್ತಿ ನಿರೋಧಃ” ಎನ್ನುವಂತೆ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದೇ ಯೋಗವೆಂದು ಹೇಳುತ್ತಾರೆ. ಏಕೆಂದರೆ ಮನಸ್ಸು ಎಲ್ಲದಕ್ಕೂ ಕಾರಣವಾಗಿರುವುದರಿಂದ ಮನಸ್ಸಿನ ಕೆಲಸಗಳನ್ನು ನಿಗ್ರಹಿಸುವುದಾಗಿದೆ. ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ “ಮನೇವ ಮನುಷ್ಯಾನಂ ಕಾರಣಂ ಬಂಧ ಮೋಕ್ಷಯೋ” ಎನ್ನುವ ಹಾಗೆ ಮನಸ್ಸು ಸಾಧಕನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗಿರುವುದರಿಂದಲೇ ಪತಂಜಲಿ ಮಹರ್ಷಿಗಳು ಈ ಸೂತ್ರವನ್ನು ಹೇಳಿದ್ದಾರೆ.

ಸಾಧಕ ಯಾವಾಗಲೂ ಅಭ್ಯಾಸದಲ್ಲಿ ಇರಬೇಕು. ಅಭ್ಯಾಸ ಇರಬೇಕು. ಅಭ್ಯಾಸದಲ್ಲಿ ನಿರತನಾದ ಸಾಧಕ ಕ್ರಿಯಾಶೀಲತೆಯಿಂದ ಇರುತ್ತಾನೆ. ಅದಕ್ಕೆ ಪತಂಜಲಿ ಮಹರ್ಷಿಗಳು “ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ” ನಿರಪೇಕ್ಷತವಾದ ಅಭ್ಯಾಸ ವಿರತವಾದ ಅಭ್ಯಾಸದಿಂದ ತನ್ನನ್ನು ತಾನು ಅರಿಯಲು ಸಾಧ್ಯ. ಅಪೇಕ್ಷೆಯಿಂದ ಮಾಡಿದ ಅಭ್ಯಾಸ ವ್ಯರ್ಥವಾದಲ್ಲಿ ಕೋಪ ಹುಟ್ಟುತ್ತದೆ. ಕೋಪದಿಂದ ಸಾಧಕನ ಮನ ವಿಚಲಿತವಾಗುತ್ತದೆ. ಅದಕ್ಕೆ ನಿರಪೇಕ್ಷಿತ ಅಭ್ಯಾಸ ಬಹಳ ಮುಖ್ಯವೆಂದು ತಿಳಿಸುತ್ತಾರೆ.

ಯೋಗವೆಂದರೆ ಕೂಡುವಿಕೆ, ಒಂದಾಗುವಿಕೆ. ಆತ್ಮ-ಪರಮಾತ್ಮನನ್ನು ಕೂಡುವುದು ಎಂದರ್ಥ. ಧ್ಯಾನದಿಂದ ತನ್ನೊಳಗೆ ಇರುವ ದೇವರನ್ನು ಕೂಡುವುದಾಗಿದೆ. ಇಂದ್ರಿಯಗಳನ್ನು ಭಾವನೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಜ್ಞಾನವನ್ನು ಹೊಂದಿ ಪರಮ ಮುಕ್ತಿಯನ್ನು ಹೊಂದುವ ದಾರಿ ಇದಾಗಿದೆ.

   ಶರಣರೊಬ್ಬರು ಹೇಳಿರುವ ಹಾಗೆ,

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ

ಚಿತ್ತದಲ್ಲಿ ನಿರಪೇಕ್ಷೆ, ವಿಷಯಗಳಲ್ಲಿ ಉದಾಸಿನ

ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ

ನೆಲೆಗೊಂಡ ಬಳಿಕ ಸೌರಷ್ಟ್ರ ಸೋಮೇಶ್ವರ ಲಿಂಗ ಬೇರಿಲ್ಲ ಕಾಣಿರೊ.

ಆದಯ್ಯ ಶರಣರು ತನ್ನ ತಾನರಿದವನೆ ತಾನೆ ದೇವರಾಗುತ್ತಾನೆ. ಎಂಬುದನ್ನು ತಿಳಿಸಿದ್ದಾರೆ.

ಈಗಿನ ದಿನಮಾನದಲ್ಲಿ ಯೋಗವು ಬಹಳ ಮುಖ್ಯವಾದ ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಕರೋನಾ ಎನ್ನುವ ರೋಗದಿಂದ ಬಾಧಿತನಾಗಿ ಖಿನ್ನನಾಗುತ್ತಿದ್ದಾನೆ. ಇಂತಹ ರೋಗಗಳಿಂದ ಮುಕ್ತವಾಗಲು ಆಸನ ಪ್ರಾಣಾಯಾಮಗಳು ಬಹಳ ಮುಖ್ಯವಾಗಿವೆ. ಜೊತೆಗೆ ಮಾನಸಿಕ ಸ್ಥೈರ್ಯ ಶಾರೀರಿಕ ಸದೃಢತೆಯನ್ನು ಯೋಗ ಕೊಡುತ್ತದೆ. ಆದಕಾರಣ ಪ್ರತಿಯೊಬ್ಬರೂ ಯೋಗ ಮಾಡಿರಿ ರೋಗ ದೂರ ಮಾಡಿರಿ ಎನ್ನುವುದೇ ನಮ್ಮ ಪ್ರಾರ್ಥನೆ.

ನಾನು ಶಿವಯೋಗಮಂದಿರದ ಒಬ್ಬ ಸಾಧಕನಾಗಿ ನನಗೆ ಯೋಗವನ್ನು ಅರಿಯಲು ಸಾಧ್ಯವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಕೃಪೆಯಿಂದ ಕನ್ನಡ ನಾಡಿನಲ್ಲಿ ಯೋಗವನ್ನು ಮಹತ್ವವಾದ ಆರೋಗ್ಯ ನಿಧಿಯನ್ನು ಈ ನಾಡಿಗೆ ಪರಿಚಯಿಸಿದರು. ಶ್ರೀ ಶಿವಯೋಗಮಂದಿರದಲ್ಲಿ ಹಠಯೋಗ ಮತ್ತು ಶಿವಯೋಗವನ್ನು ಮತ್ತು ಷಟ್ ಕ್ರಿಯಾದಿಗಳನ್ನು ಹೇಳುವ ಮುಖಾಂತರ ಈ ನಾಡಿಗೆ ಅನೇಕ ಶಿವಯೋಗಿ ಸಾಧಕರನ್ನು ಕೊಟ್ಟ ಮಹಾಸಂಸ್ಥೆ ಶ್ರೀ ಶಿವಯೋಗಮಂದಿರ. ಈ ನಾಡಿಗೆ ಯೋಗವನ್ನು ಪರಿಚಯಿಸಿದ ಮಹಾ ಚೇತನಕ್ಕೆ ಅನಂತ ಅನಂತ ಶರಣುಗಳು.

ಶ್ರೀ ಶಿವಯೋಗಮಂದಿರದ ಯೋಗ ಸಾಧನೆಗೈದ ಶಿವಯೋಗ ಸಿದ್ಧರು.

ಹಠಯೋಗ         –         ಪೂಜ್ಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು  ಕಂಚಗಲ್ ಬಿದರಿ

ರಾಜಯೋಗ       –         ಶ್ರೀ ಮ.ನಿ.ಪ್ರ ಲಿಂ. ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ                                   

ಕರ್ಮಯೋಗ-                 ಪೂಜ್ಯ ಶ್ರೀ ರುದ್ರಮುನಿ ಶಿವಯೋಗಿಗಳು   ಕಪನಳ್ಳಿ  ಶಾಖಾ ಶಿವಯೋಗಮಂದಿರ

ಜ್ಞಾನಯೋಗ       –         ಪೂಜ್ಯ ಶ್ರೀ ಜ.ಚ.ನಿ. ಮತ್ತು ಗಿರಿಯಾಪುರದ ಪೂಜ್ಯ ಶ್ರೀ ಸದಾಶಿವ ಶಿವಾಚಾರ್ಯರು

ಶಿವಯೋಗ         –         ಶ್ರೀ ಮ.ನಿ.ಪ್ರ. ಸದಾಶಿವ ಸ್ವಾಮಿಗಳು ವಿರಕ್ತಮಠ ಹಾನಗಲ್ಲ

                                         ಮತ್ತು  ಶ್ರೀ ಮ.ನಿ.ಪ್ರ.  ಅನ್ನದಾನ ಸ್ವಾಮಿಗಳು ಹಾಲಕೇರಿ

ಭಕ್ತಿಯೋಗ         –         ಪೂಜ್ಯ ಶ್ರೀ ನಾಲ್ವತವಾಡದ ವೀರೇಶ್ವರ ಶರಣರು ಸೋಲ್ಲಾಪೂರ

ನಾದಯೋಗ       –         ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳು ಮತ್ತು ಪೂಜ್ಯ ಶ್ರೀ ಪುಟ್ಟರಾಜ ಗವಾಯಿಗಳು

                                      ವೀರೇಶ್ವರ ಪುಣ್ಯಾಶ್ರಮ ಗದಗ

                              –             

ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ

(ಲೇಖಕರ ಕುರಿತು……..

ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.

ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.

೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ  ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು )

“Each soul is potentially divine. The goal is to manifest this divine within, by controlling nature, external and internal. Do this either by work, or worship, or psychic control, or by philosophy, or by one, or more, or all of these-and be free.”  – Swami Vivekananda

ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲಿ ಯೋಗವು ಒಂದು. ಯೋಗಶಬ್ದದ ವ್ಯಾಖ್ಯೆಯನ್ನು ಬೇರೆ ಬೇರೆ ಜನರು ಬೇರೆ ಬೇರೆ ಪ್ರಕಾರ ಮಾಡಿರುವರು. ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಅದನ್ನು ಸ್ಥಿರಪಡಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತುಬಿಡುವುದೂ ಮತ್ತು ಧ್ಯಾನವನ್ನೂ ವಿಷಯ ತನ್ಮಯತೆಯನ್ನೂ ಬಲಿಸುವುದಕ್ಕಾಗಿ ಕುಂಭಕ, ಪೂರಕ, ರೇಚಕಗಳ ದ್ವಾರಾ ಸ್ಥೂಲ ಶರೀರದೊಳಗಿನ ಮಲಿನತೆಯನ್ನು ನಾಶಮಾಡಿ ವ್ಯಾಧಿಗಳನ್ನು ಗೆಲಿಯುವುದೂ ಯೋಗದ ಉದ್ದೇಶಗಳು. ಮೇಲಾಗಿ ಯೋಗದಿಂದ ಅಂತರಂಗ ಬಹಿರಂಗಗಳ ಶುದ್ಧಿಯಾಗುವದಲ್ಲದೆ ಈಶ್ವರ ಧ್ಯಾನವು ಬಲಪಡುವುದು.

ಆವಕಾಲದಲ್ಲಿ ಯೋಗವು ಉದ್ಭವಿಸಿತೆಂಬುದನ್ನು ಅದರ ಉತ್ಪಾದಕ ರಾರೆಂಬುದನ್ನು ಖಂಡಿತವಾಗಿ ಈಗ ಹೇಳಲು ಸಾಧ್ಯವಿಲ್ಲ. ಪ್ರಾಚೀನ ಗ್ರಂಥಗಳಾದ ಉಪನಿಷತ್ತುಗಳಲ್ಲಿ ಅಲ್ಲಲ್ಲಿ ಯೋಗಕ್ಕೆ  ಸಂಬಂಧಿಸಿದ ವಾಕ್ಯಗಳು ಕಂಡುಬರುವವು. ಬೌದ್ಧರ ಪ್ರಾಚೀನ ಮತ್ತು ಪವಿತ್ರವಾದ ಪುಸ್ತಕಗಳಲ್ಲಿ ಅನೇಕ ಕಡೆಗೆ ಯೋಗಶಾಸ್ತ್ರದ ವರ್ಚಸ್ವವೂ ಅನುಕರಣೆಯೂ ಕಂಡುಬರುವವು .ಭಗವಾನ್ ಬುದ್ಧದೇವನು ಪೂರ್ವಾಶ್ರಮದಲ್ಲಿ ಅತಿ ಕಠೋರವಾದ ಯೋಗಸಾಧನೆಯನ್ನೇ ಮಾಡಿದನೆಂದು ಪ್ರತೀತಿಯಿದೆ. ಇಷ್ಟೇ ಅಲ್ಲ ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ,ಕೇವಲ ಅಸ್ತಿಪಂಜರಮಯವೂ   ಆದ ಆತನ ಶಿಲಾ ಪ್ರತಿಮೆಗಳೂ ಇನ್ನೂ ಅನೇಕ ಕಡೆಗೆ ದೊರೆಯುವವು.’ ಗ್ರೀಕ ಅರಸನಾದ ಅಲೆಕ್ಸಾಂಡರನು ಸಮಗ್ರ ದೃಷ್ಟಿಯನ್ನು ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ಕ್ರಿ.ಶ.ಪೂ. ೩.೨೬ರಲ್ಲಿ ನಮ್ಮ ದೇಶವನ್ನೊಳ ನುಗ್ಗಿದಾಗ ಅನೇಕ ಯೋಗಿಗಳನ್ನು ಕಂಡಿದ್ದನಂತೆ. ಇವೆಲ್ಲ ಕಾರಣಗಳಿಂದ ಯೋಗವು ಪ್ರಾಚೀನತಮವೆಂಬುದು ನಿರ್ವಿವಾದವಾದ ಮಾತು.

ಆದರೂ ಆಯಾ ಕಾಲಗಳಲ್ಲಿ ಅಂದರೆ ಉಪನಿಷತ್ ಮತ್ತು ಬೌದ್ಧಕಾಲಗಳಲ್ಲಿಯೋಗವು ಅಸ್ತಿತ್ವದಲ್ಲಿದ್ದರೂ ಅನಿಶ್ಚಿತ ಸ್ವರೂಪ (Unsystematised form) ದಲ್ಲಿಯೇ ಇತ್ತೆಂದೂ, ಅದಕ್ಕೆ ನಿಶ್ಚಿತಸ್ವರೂಪವನ್ನು ಕೊಟ್ಟು, ಷಡ್‌ದರ್ಶನಗಳಲ್ಲೊಂದಾಗುವಂತೆ ಮಾಡಲು ಯತ್ನಿಸಿದವರಲ್ಲಿ ಯೋಗ ಸೂತ್ರಕಾರರೇ ಮೊದಲನೆಯವರೆಂದೂ ಕೆಲವು ವಿದ್ವಾಂಸರ ಮತವು. ಯೋಗಸೂತ್ರಕ್ಕೂ ಮೊದಲಿನವೆಂದು ಗಣಿಸಲ್ಪಡುವ ಗ್ರಂಥಗಳಲ್ಲಿ ಯೋಗ ಶಬ್ದವನ್ನು ನಿಯಮಿತವಾದ ಒಂದೇ ಅರ್ಥದಲ್ಲಿ ಉಪಯೋಗಿಸಿಲ್ಲವೆಂದೂ, ಯೋಗವು ಷಡ್‌ದರ್ಶನಗಳಲ್ಲೊಂದು ಮಹತ್ವದ ಸ್ಥಾನವನ್ನಾಕ್ರಮಿಸಿದ ನಂತರವೇ “ಯೋಗಶ್ಚಿತ್ತವೃತ್ತಿ ನಿರೋಧಃ’ ಎಂಬ ವ್ಯಾಖ್ಯೆಯು ಸರ್ವತ್ರ ಪ್ರಚಲಿತವಾಯಿತೆಂದೂ ಅವರ ಹೇಳಿಕೆಯು, ಪ್ರಸ್ಥಾನತ್ರಯಗಳಲ್ಲೊಂದಾದ ಭಗವದ್ಗೀತೆ ಯಲ್ಲಿಯೂ ಕೂಡ ಯೋಗ ಶಬ್ದವನ್ನು ಭಕ್ತಿ, ಜ್ಞಾನ, ಕರ್ಮ ಮೊದಲಾದ ಶಬ್ದಗಳೊಡನೆ ಜೋಡಿಸಿ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗವೆಂಬುದಾಗಿ ಉಪಯೋಗಿಸಿರುವುದು ಅರಿದಾದ ಮಾತಲ್ಲ.” ಯೋಗದರ್ಶನದ ಅನೇಕಾಂಶಗಳು ಭಗವದ್ಗೀತಾಕಾರರಿಗೆ ಗೊತ್ತಿದ್ದವೆಂಬುದು ನಿಜವು; ಆದುದರಿಂದ ಮೇಲೆ ಸೂಚಿಸಿದ ಕೆಲವು ವಿದ್ವಾಂಸರ ಮತವು ತೀರ ಅನಾದರಣೀಯವಲ್ಲ.

ಯೋಗ ದರ್ಶನದ ಪಿತರೆಂದು ಹೆಸರಾದ ಪತಂಜಲ ಮಹರ್ಷಿಗಳಿಂದತ್ತಿತ್ತಲಾಗಿ ಯೋಗಶಾಸ್ತ್ರವು ಬಲು ವಿಪುಲವಾಗಿ ಬೆಳೆದು, ಅಣಿಮಾ, ಗರಿಮಾ,ಲಘಿಮಾ, ಮಹಿಮಾ ಮೊದಲಾದ ಅಷ್ಟಸಿದ್ಧಿಗಳನ್ನು ಸಂಪಾದಿಸುವ ವಿದ್ಯೆಯೆಂದೂ, ಸಿದ್ದಿಗಳನ್ನು ತಿರಸ್ಕರಿಸಿದರೆ ಈಶ್ವರ ಸಿದ್ಧಿಯ ಮಾರ್ಗವೆಂದೂ ಗಣಿಸಲ್ಪಡಹತ್ತಿತ್ತು. ಅದರ ಓಘವು ಇಷ್ಟಕ್ಕೆ ನಿಲ್ಲಲಿಲ್ಲ ಅನುಭವದಿಂದ ಕಂಡುಹಿಡಿಯಲಸಾಧ್ಯವಾದ

ಅನೇಕ ವಿಷಯಗಳು ಬರಬರುತ್ತ ಅದರಲ್ಲಿ ಸೇರಿ ಯೋಗವೆಂದರೆ ಆರಿಗೂ ತಿಳಿಯದಂಥ ಮತ್ತು ತಿಳಿಹೇಳದಂಥ ಒಂದು ವಿದ್ಯೆ (Mysticism)ಯಾಯಿತು. ಇತ್ತಿತ್ತಲಾಗಿ ಆಗಿ ಹೋದ ಗ್ರಂಥಕಾರರಂತೂ ತಮ್ಮ ಅಸಂಗತ ಮತ್ತು ಅಸಂದಿಗ್ಧವಾದ ಬರಹಗಳಿಂದ ಯೋಗ ವಿದ್ಯೆಯಲ್ಲಿದ್ದ ಅಲ್ಪ ಸ್ವಲ್ಪ ನಿಷ್ಠೆಯನ್ನೂ ನಂಬುಗೆಯನ್ನೂ ಕಳೆದುಬಿಟ್ಟಿರುವರು. ಸ್ವಾಮಿ ವಿವೇಕಾನಂದರ ಆರೋಪವಾದರೂ ಹೀಗೆ ಇರುವುದು. ಗ್ರಂಥಕಾರರು ಹೆಚ್ಚು ಹಳಬರಿದ್ದಷ್ಟು ಹೆಚ್ಚು ತಥ್ಯಾಂಶಗಳು ಅವರ ಗ್ರಂಥಗಳಲ್ಲಿ ಕಂಡುಬರುವವು.

ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ,ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಗಳೆಂದು ಎಂಟು ಅಂಗಗಳಿರುವವು. ಇವುಗಳಲ್ಲಿ ಮೊದಲಿನವೆರಡು ಸದಾಚಾರ ಮತ್ತು ನೀತಿಯನ್ನು ಬೆಳೆಯಿಸುವ ಮಾರ್ಗಗಳು. ಅಧ್ಯಾತ್ಮಿಕೋನ್ನತಿಗೆ ನೀತಿಯೇ ತಳಹದಿಯು, ನಮ್ಮಭೌತಿಕ ವ್ಯವಹಾರದಲ್ಲಿಯೂ ಕೂಡ ನೀತಿಯನ್ನು ಬಿಟ್ಟರೆ ಬಾಳುವೆಯೇ ಹಾಳು. ಮೂರನೆಯಾದದ ಆಸನವು ಶಾರೀರಿಕ ಮತ್ತು ಮಾನಸಿಕ ಚಲನವಲನಗಳನ್ನು ಸರಿಯಾಗಿ ಕಾಯ್ದಿಡಲು ಅನುಕೂಲವಾಗುವುದು. ಯೋಗವನ್ನು ಬಲಿಸುತ್ತಹೋದಂತೆ ಸಾಕಷ್ಟು ಕಾಲ ಪರಿಶ್ರಮವಿಲ್ಲದೆ ಒಂದೇ ಸ್ಥಿತಿಯಲ್ಲಿರುವುದಕ್ಕೋಸುಗ ಇದರ ಉಪಯೋಗವು ಪ್ರಾಣಾಯಾಮದಿಂದ ಶರೀರದೊಳಗಿನ ಮಲಿನತೆಯನ್ನು ಶ್ವಾಸೋಚ್ಛಾಸದ ದ್ವಾರಾ ಹೊರಗೆ ಹಾಕಲು ಸಹಾಯವಾಗುವುದು. ಶರೀರದಲ್ಲಿ ಮಲಿನತೆಯನ್ನಿರಗೊಟ್ಟರೆ ವ್ಯಾಧಿಗಳಿಗೀಡಾಗುವದಲ್ಲದೆ ಮನಸ್ಸು ಮಲಿನವಾಗುವುದು. ಮನಸ್ಸು ಮಲಿನವಾಗಿದ್ದರೆ ಯೋಗವು ಎಂದಿಗೂ ಸಾಧ್ಯವಾಗಲಾರದು. ಪ್ರತ್ಯಾಹಾರ ದಿಂದ ಶರೀರವು ಬಲು ಸ್ಥೂಲವಾಗದಂತೆಯೂ ಬಲು ಕ್ಷೀಣವಾಗದಂತೆಯೂ ಇಡಲು ಬರುವುದು. ಉಳಿದ ಅಂಗಗಳಾದ ಧಾರಣ, ಧ್ಯಾನ, ಸಮಾಧಿಗಳು ಮನಸ್ಸಿಗೆ ಹೆಚ್ಚಾಗಿ ಸಂಬಂಧಿಸಿರುವವು. ಯೋಗ ಶಾಸ್ತ್ರಜ್ಞರು ಅಷ್ಟಾಂಗಗಳಲ್ಲಿ ಅನೇಕ ಭಾಗಗಳನ್ನು ಮಾಡಿ ಯೋಗದರ್ಶನವನ್ನು ಅತಿ ವಿಸ್ತಾರವಾದ ಶಾಸ್ತ್ರಗಳ ಲ್ಲೊಂದನ್ನಾಗಿ ಮಾಡಿರುವರು. ಪತಂಜಲ ಮಹರ್ಷಿಗಳು ಇವುಗಳ ವ್ಯಾಖ್ಯೆಯನ್ನುಹೇಗೆ ಮಾಡಿರುವರೆಂಬುದನ್ನು ಕೆಳಗಿನ ಟಿಪ್ಪಣಿಗಳಿಂದ ಕಂಡುಕೊಳ್ಳಬಹುದು. ಈ ಎಂಟು ಅಂಗಗಳು ಅತಿ ಮಹತ್ವವಾದವು. ಇವು ಯೋಗ ಸಾಧನೆಯ ಎಂಟು ಪಾವಟಿಗೆಗಳೆಂದರೂ ಅಡ್ಡಿಯಿಲ್ಲ. ಇವುಗಳ ಸಿದ್ದಿಯಿಂದಲೇ ಶಾರೀರಕ ಮತ್ತು ಮಾನಸಿಕ ವೃತ್ತಿಗಳನ್ನು ಸ್ವಾಧಿನದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.

ಯೋಗವೇತೃಗಳು ಯೋಗವನ್ನು ಮಂತ್ರಯೋಗವೆಂದೂ ಲಯಯೋಗ ವೆಂದೂ, ಹಠಯೋಗವೆಂದೂ, ರಾಜಯೋಗವೆಂದೂ ನಾಲ್ಕು ವಿಧವಾಗಿ ಹೇಳುವರು. ಓಂಕಾರ ಮೊದಾಲದ ಮಂತ್ರಗಳನ್ನು ಜಪಿಸುವವರು ಮಂತ್ರಯೋಗಿಗಳೆಂದೂ, ಮನೋಮಾರುತನೊಡನೆ ಕೂಡಿದ ಚಿತ್ರವನ್ನು ಆತ್ಮಧೇಯದಲ್ಲಾಗಲೀ ಅಥವಾ ನಾದದಲ್ಲಾಗಲೀ ತಲ್ಲೀನವನ್ನಾಗಿ ಮಾಡುವವರು  ಲಯಯೋಗಿಗಳೆಂದೂ, ಅಷ್ಟಾಂಗ ಮಾರ್ಗಗಳಿಂದಲೂ, ಮುದ್ರಾಕರಣ ಬಂಧುಗಳಿಂದ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿ ಗಳೆಂದೂ, ಮನೋವೃತ್ತಿಯಿಲ್ಲದವರೂ ಜ್ಞಾನದಿಂದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದವರೂ ರಾಜಯೋಗಿಗಳೆಂದೂಸಿ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ರಾಜಯೋಗವೇ ಮಿಗಿಲಾದುದೆಂದು ಎಲ್ಲರ ಮತವು. ಎಲ್ಲದರ್ಶನಗಳು ಅಂತಿಮ ಧೈಯವಾದ ಸತುವನ್ನು ಕಂಡು ಹಿಡಿಯಲು ಸರಿಯಾದ ಮತ್ತು ಸುಲಭಸಾಧ್ಯವಾದ ಮಾರ್ಗವನ್ನೂ ಮತ್ತು ಜೀವಿಯ ಅಂತರಂಗದ ಪರೀಸ್ಥಿತಿಯನ್ನೂ, ಮತ್ತು ಅಂತಃ ಕರಣಗಳನ್ನೂ ಪರಿಶೋಧಿಸುವ ಹಾದಿಯನ್ನೂರಾಜಯೋಗವು ತೋರಿಸುವುದು, ಲಯ, ಹಠ ಮೊದಲಾದವುಗಳಂತೆ ಶರೀರವನ್ನು ವಿಶೇಷವಾಗಿ ಸಣ್ಣಿಸದೆ ಮನೋವೃತ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದೇ ರಾಜಯೋಗದ ಬೀಗದ ಕೈಯು, ಮನಸ್ಸೇ ಮನುಷ್ಯನ ಬಂಧಕ್ಕೂ ಮೋಕ್ಷಕ್ಕೂ ಕಾರಣವಾದುದರಿಂದ ಅದನ್ನು ಆಧೀನದಲ್ಲಿಟ್ಟು ಕೊಳ್ಳುವುದರಿಂದಲೇ ರಾಜಯೋಗದ ಹೆಚ್ಚಳವು. ರಾಜಯೋಗದಲ್ಲಿ ಸಾಂಖ್ಯ, ತಾರಕ, ಮತ್ತು ಅಮನಸ್ಕಗಳೆಂದು ಮೂರು ಭಾಗಗಳು.

ಆದಿಯಿಂದಲೂ ಶೈವಶಾಸ್ತ್ರಗಳು ಯೋಗಕ್ಕೆ ಅತಿಮಹತ್ವದ ಸ್ಥಾನವನ್ನು ಕೊಟ್ಟಿರುವವು. ಯೋಗ ಸೂತ್ರಕಾರರಾದ ಪತಂಜಲ ಮಹರ್ಷಿಗಳು ಶೈವರೇ ಇದ್ದರೆಂದು ಪ್ರತೀತಿ. ಹಾಗಿದ್ದ ಪಕ್ಷದಲ್ಲಿ ಯೋಗದರ್ಶನದ ವರ್ಚಸ್ವವು, ಶೈವರ ಮೇಲಾದುದು ಅರಿದಲ್ಲ, ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ ಮತ್ತು ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಬರುತ್ತದೆ. ದುರ್ದೈವದಿಂದ ಮಹತ್ವದ ಶೈವಾಮಗಮಗಳ ಅಭಾವದ ಮೂಲಕ ಶೈವಾಗಮಗಳಲ್ಲಿ ಪ್ರತಿಪಾದಿತವಾದ ಯೋಗಕ್ಕೂ ಯೋಗದರ್ಶನಕ್ಕೂ ಇರುವ ಸಾಮ್ಯವೈಷಮ್ಯಗಳನ್ನು ಕಂಡುಹಿಡಿಯುವುದು ಈಗ ಸಾಧ್ಯವಿಲ್ಲದಿದ್ದರೂ ಈಗ ದೊರೆಯುವ ಆಗಮಗಳ ತುಂಡುಗಳಿಂದ ಅವುಗಳಲ್ಲಿ ಯೋಗಕ್ಕಿರುವ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಸುಪ್ರಭೇದಾಗಮ ಮತ್ತು ಈಶಾನ-ಶಿವಯೋಗಿಗಳ “ಈಶಾನ ಶಿವ ಗುರುದೇವ ಪದ್ಧತಿ’ ಗಳಲ್ಲಿ ವರ್ಣಿತವಾದ ಯೋಗವು ಯೋಗದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ, ಆದರೂ ಸ್ವಲ್ಪ ಪ್ರಮಾಣದಿಂದಾದರೂ ವ್ಯತ್ಯಾಸವಿಲ್ಲದೆ ಇಲ್ಲ, ಈಶ್ವರನ ಪ್ರತಿಬಿಂಬವ (ಮೂರ್ತಿಯನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರಿಕರಿಸಿ, ಧ್ಯಾನವನ್ನು ಬಲಿಸಿ, ಸಮಾಧಿಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುವುದು. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವುದೊಂದು ಅದರ ವೈಶಿಷ್ಟ

ವೀರಶೈವರಿಗೂ ಯೋಗಕ್ಕೂ ಅತಿನಿಕಟ ಸಂಬಂಧವಿದೆಯೆಂಬುದನ್ನು ವೀರಶೈವರಲ್ಲಿಈಗಲೂ ರೂಢಿಯಲ್ಲಿರುವ ಅನೇಕ ವಿಷಯಗಳಿಂದ ಕಂಡುಕೊಳ್ಳಬಹುದು.ವೀರಶೈವರ ತತ್ವಜ್ಞಾನ (Philosophy) ದಲ್ಲಿ ಷಟಸ್ಥಲ ಸಿದ್ದಾಂತವು ಅತಿ ಮಹತ್ವವಾದುದೆಂಬುದು ವೀರಶೈವ ತತ್ವಾದ್ವೇಷಿಗಳಿಗೆ ಅರಿದಾದ ಮಾತಲ್ಲ. ಅದರಲ್ಲಿ ಹೆಜ್ಜೆ ಹೆಜ್ಜೆಗೂ ಯೋಗದ ತತ್ವಗಳು ಅಡಕವಾಗಿವೆ. ವೀರಶೈವ ಧಾರ್ಮಿಕ ವಾಙ್ಮಯದಲ್ಲಿ ಅತಿ ಮಹತ್ವವಾದುವು ವಚನಶಾಸ್ತ್ರಗಳು, ಅವುಗಳಲ್ಲಿ ಯೋಗಾಂಗಗಳ ವರ್ಣನೆಯು ವೀರಶೈವ ಪರವಾಗಿ ವಿಪುಲವಾಗಿರುವುದು. ಪ್ರಾಣಲಿಂಗಿಸ್ಥಲದ ವಚನಗಳೆಲ್ಲವೂ ಯೋಗಮಯವಾಗಿವೆಯೆಂದರೂ ಅಡ್ಡಿಯಿಲ್ಲ. ಆದರೂ ಕೆಲವು ಕಡೆಗೆ ಯೋಗದ ಮೇಲೆ ಕಟುತರವಾದ ಟೀಕೆಯು ಕಂಡು ಬರುವುದು. ಇಂಥವುಗಳ ಆಧಾರದಿಂದ ವಚನಶಾಸ್ತ್ರಕಾರರು ಯೋಗ ವಿರೋಧಿಗಳೆಂದು ಮಾತ್ರ ಕಲ್ಪಿಸಬಾರದು. ಅವರ ಟೀಕೆಯು ಯೋಗದ ಮುಖ್ಯಧೈಯವಾದ ಅಂತರಂಗ ಶುದ್ಧಿಯನ್ನೂ ಈಶ್ವರ ಸಿದ್ಧಿಯನ್ನೂ ಮರೆತು ಕೇವಲ ಬಾಹ್ಯ ಶರೀರ ಚಮತ್ಕಾರ (Feats) ಗಳನ್ನು ಸಾಧಿಸಿದ ಹಠಯೋಗಿಗಳನ್ನುದ್ದೇಶಿಸಿ ಮಾಡಲ್ಪಟ್ಟಿದೆಯೆಂಬುದನ್ನು ಲಕ್ಷ್ಯದಲ್ಲಿಡಬೇಕು. ಶಿವಶರಣರು ಅಡ್ಡಮಾರ್ಗದಿಂದ ಹೋಗುವವರನ್ನು ಹಾದಿಗೆ ತರಲು ಹಿಂದೆಮುಂದೆ ನೋಡುವವರಲ್ಲ, ಅರಿಯದೆ ಶಿವಪೂಜೆ ಮಾಡುವವರನ್ನು ಹೀಗೆ ಬಯ್ದಿರುವರು.

ನಮ್ಮ ವೀರಶೈವ ಗುರುಗಳು ಯೋಗ ವಿದ್ಯೆಯಲ್ಲಿ ಒಳ್ಳೆ ನಿಪುಣರಾಗಿದ್ದರು. ಯೋಗದ ಗುಟ್ಟನ್ನು ಕಂಡು ಹಿಡಿದು ಅದು ಸರ್ವರಿಗೂ ಸಾಧ್ಯವಾಗುವಂತೆ ತಮ್ಮ ಸ್ವಾನುಭವದಿಂದ ಅದರಲ್ಲಿ ತಿದ್ದುಪಡೆಯನ್ನು ಮಾಡಿ ಅದಕ್ಕೆ ಶಿವಯೋಗವೆಂದು ಹೆಸರಿಟ್ಟರು. ಶಿವಯೋಗವನ್ನು ತಿಳಿದು ಆಚರಿಸುವವರಿಗೆ ಶಿವಯೋಗಿಗಳೆಂದು ಹೆಸರು. ಶಿವಯೋಗದ ಸ್ವರೂಪವನ್ನು ವಚನಕಾರರು ವಿಪುಲವಾಗಿ ತಮ್ಮ ವಚನಗಳಲ್ಲಿಯೂ, ಚನ್ನ ಸದಾಶಿವಯೋಗಿಗಳು ತಮ್ಮ ಶಿವಯೋಗಪ್ರದೀಪಿಕೆ’ ಯಲ್ಲಿಯೂ ವರ್ಣಿಸಿರುವರು. ಇವೆಲ್ಲವುಗಳ ಮಥಿತಾರ್ಥವು ತೋಂಟದ ಸಿದ್ಧಲಿಂಗ ಯತಿಗಳ ಒಂದೇ ವಚನದಲ್ಲಿ ಬಂದಿದೆಯೆಂದರೆ ವಿಶೇಷ ತಪ್ಪಾಗದು. ಅವರು ಯೋಗದ ಅಷ್ಟಾಂಗಗಳನ್ನು ಶಿವಯೋಗಕ್ಕನುಸರಿಸಿ ಹೇಳಿ, ಶಿವಯೋಗದಲ್ಲಿ ಹೆಜ್ಜೆ ಹೆಜ್ಜೆಗೂ ಲಿಂಗದ ಅವಶ್ಯಕತೆಯಿದೆಯೆಂದು, ಲಿಂಗಾಂಗ ಯೋಗದ ಧ್ಯಯವು ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೆಂದೂ ಅಭಿಪ್ರಾಯ ಪಟ್ಟಿದ್ದಾರೆ. ನಂತರ

‘ಇನ್ನು ವೀರಮಾಹೇಶ್ವರರುಗಳ ಲಿಂಗಾನುಸಂಧಾನವೆಂತೆಂದೊಡೆ ಬ್ರಹ್ಮರಂಧ್ರದಲ್ಲಿಪ್ಪ ಚೈತನ್ಯವಪ್ಪ ಪರಮ ಚಿತ್ಕಳೆಯೇ ಭಾವಮನಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದವನಾಗಿ, ಭಾವವಲ್ಲಿ ಸತ್ಸ್ವ ರೂಪವಪ್ಪಇಷ್ಟಲಿಂಗವೆಂದೆನಿಸಿ, ಒಂದೇ ವಸ್ತು ತನು ಮನ ಭಾವಂಗಳಲ್ಲಿ ಇಷ್ಟಪ್ರಾಣ ಭಾವವಾದ ಭೇದವನರಿಯದೆ, ಒ೦ ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ, ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ, ತೃಪ್ತಿ ಲಿಂಗವ ಭಾವಜ್ಞಾನದಿಂದ ಗ್ರಹಿಸಿ, ಈ ಲಿಂಗತ್ರಯವಿಡಿದು ಆಚರಿಸಿ, ಲಿಂಗದೊಡನೆ ಕೂಡಿ, ಲಿಂಗವೇ ತಾನು ತಾನಾಗಿ, ವಿರಾಜಿಸುತಿರ್ಪುದೀಗ ಶಿವಯೋಗ ನೋಡಾ, ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ “ ಎಂದು ಶಿವಯೋಗವನ್ನು ವರ್ಣಿಸಿರುವರು. ಅವರ ಈ ವಾಕ್ಯವನ್ನುಸ್ವಲ್ಪ ವಿವೇಚಿಸಿದರೆ ಕೆಳಗಿನಂತೆ ಅದರ ಅರ್ಥವು ಹೊರಡುವುದು.

ಜೀವಿಗಳಿಗೆ ಸ್ಥೂಲ, ಸೂಕ್ಷ್ಮ ಕಾರಣಗಳೆಂದು ಮೂರು ಶರೀರಗಳು, ಒಂದರೊಳಗೊಂದು ಅಡಕವಾಗಿರುವುವೆಂದೂ, ಮೂರು ಶರೀರಗಳಲ್ಲಿರುವ ಮಲಿನತೆಯು ಹೋದಾಗಲೇ ಜೀವಿಯು ಶುದ್ದನಾಗುವನೆಂದೂ ವೀರಶೈವರ ನಂಬುಗೆ, ಯೋಗದ ಮುಖ್ಯ ಧೈಯವು ಬಾಹ್ಯಾಭ್ಯಂತರ ಶುದ್ಧಿಯೆಂಬುದನ್ನು ಮೇಲೆಯೇ ಸೂಚಿಸಿರುವುದಷ್ಟೇ. ಅದಕ್ಕೋಸುಗ ಗುರುವು ದೀಕ್ಷಾಕಾಲದಲ್ಲಿ ತನ್ನ ಯೋಗಬಲದಿಂದ ಶಿಷ್ಯನ ಚೈತನ್ಯವನ್ನು ಗಟ್ಟಿಗೊಳಿಸಿ ಹೊರಗೆ ಇಷ್ಟಲಿಂಗವೆಂದೂ ಸ್ಥೂಲಶರೀರಕ್ಕೂ, ಒಳಗೆ ಪ್ರಾಣಲಿಂಗವೆಂದು ಸೂಕ್ಷ್ಮ ಶರೀರಕ್ಕೂ, ಭಾವಲಿಂಗವೆಂದು ಕಾರಣ ಶರೀರಕ್ಕೂ ಜೋಡಿಸಿ, ಅವುಗಳ ಅನುಸಂಧಾನ ಕ್ರಮವನ್ನು ತೋರಿಸಿಕೊಡುವನು. ಅದೇ ಮಾರ್ಗದಿಂದ ಶಿಷ್ಯನು ತನ್ನ ಎಡ ಹಸ್ತದ ಅಂಗೈಯೊಳಗೆ ಇಷ್ಟಲಿಂಗವನ್ನು ಭದ್ರಪಡಿಸಿ, ಉಳಿದ ಅವಯವಗಳ ವ್ಯಾಪಾರವನ್ನು ತಡೆದು, ಪ್ರಾಣಾಯಾಮದಿಂದ ಶ್ವಾಸೋಚ್ಛಾಸವನ್ನು ಸರಿಪಡಿಸಿ, ಮನಸ್ಸಿನ ಚಲನವಲನವನ್ನು ತಡೆದು, ಸ್ಥೂಲ ದೃಷ್ಠಿ ಯನ್ನು ಇಷ್ಟಲಿಂಗದ ಮೇಲೂ, ಸೂಕ್ಷ್ಮ ದೃಷ್ಟಿಯನ್ನು ಪ್ರಾಣಲಿಂಗದಮೇಲೂ, ಭಾವದೃಷ್ಟಿಯನ್ನು ಭಾವಲಿಂಗದ ಮೇಲೂ ಚಲ್ಲಿ ಲಿಂಗದೊಡನೆ ಕೂಡಿ ಲಿಂಗತ್ರಯವನ್ನು ಏಕಾಕಾರಮಾಡಿ, ಲಿಂಗವೇ ತಾನಾಗಿರುವನು. ಇದೇ ಶಿವಯೋಗ,ಈ ವಚನದಮೇಲಿಂದಲೂ ಮತ್ತು ಇಂಥ ಅನೇಕ ವಚನಗಳಿಂದಲೂ ಶಿವಯೋಗದ ತತ್ವವು ಲಿಂಗ ಪೂಜೆಯಲ್ಲಿ ಅಡಕವಾಗಿರಬೇಕಿಷ್ಟೇ ಅಲ್ಲ ಲಿಂಗಪೂಜೆಯು ಶಿವಯೋಗದ ಮುಖ್ಯಾಂಗವಾಗಿರ ಬೇಕೆಂದು ಊಹಿಸಲವಕಾಶವಿದೆ.

ವೀರಶೈವನಾಗಿರತಕ್ಕ ಪ್ರತಿಯೊಬ್ಬ ವ್ಯಕ್ತಿಯು ಶಿವಯೋಗಸಾಧಕನಾಗಿರಬೇಕೆಂದು ವೀರಶೈವ ಮತಸ್ಥಾಪಕರ ಅಪೇಕ್ಷೆ. ಅಂತೇ ಅವರು ಶಿವಯೋಗಸಾಧನೆಯನ್ನು ಅಷ್ಟು ಸುಲಭವಾಗಿ ಸರ್ವರಿಗೂ ಸಾಧ್ಯವಾಗುವಂತೆ ಮಾಡಿರಲೇಬೇಕು. ಮೇಲೆ ಯೋಗದ ಒಳಭೇದಗಳನ್ನು ಹೇಳುವಾಗ ರಾಜಯೋಗವು ಉತ್ಕೃಷ್ಟವಾದುದೆಂದು ಸೂಚಿಸಿರುವುದಷ್ಟೇ. ಅಂಥ ರಾಜಯೋಗಕ್ಕೂ ಶಿವಯೋಗಕ್ಕೂನಿಜವಾಗಿ ಭೇದವಿಲ್ಲವೆಂದೂ ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಗಾಗಿ ಭೇದವು ಹೇಳಲ್ಪಟ್ಟಿದೆಯೆಂದೂ ಚನ್ನ ಸದಾಶಿವಯೋಗಿಗಳ ಮತ ಸೂಕ್ಷ್ಮ ವಾಗಿ ವಿಚಾರಿಸಿದರೆ ರಾಜಯೋಗಕ್ಕೂ ಶಿವಯೋಗಕ್ಕೂ ಭೇದವಿಲ್ಲೆಂಬುದು ನಿಜ; ಆದರೆ ಸ್ವಲ್ಪ ಸ್ಥೂಲ ಮಾನದಿಂದ ನೋಡಿದರೆ ಶಿವಯೋಗದಲ್ಲಿ ರಾಜಯೋಗದಲ್ಲಿಲ್ಲದ ಒಂದು ವೈಶಿಷ್ಟ್ಯ ವುಂಟೆಂಬುದೂ, ಆ ವೈಶಿಷ್ಟ್ಯವು ಇಷ್ಟಲಿಂಗದ ಅವಶ್ಯಕತೆ ಯೆಂಬುದೂ ಮೇಲಿನ ವಚನಗಳಿಂದ ಸ್ಪಷ್ಟವಾಗುವುದು. ಇನ್ನು ವೀರಶೈವ ಗುರುಗಳು ಇಷ್ಟಲಿಂಗದ ಅವಶ್ಯಕತೆಯನ್ನು ಸಾರಲು ಕಾರಣವೇನೆಂಬುದನ್ನು ಹುಡುಕಲು ನಾವು ದೂರಹೋಗುವ ಕಾರಣವಿಲ್ಲ,

ಈಶ್ವರ ಧ್ಯಾನವನ್ನು ಬಲಪಡಿಸಲಿಕ್ಕೂ ಮನಸ್ಸಿನ ಚಲನವಲನವನ್ನು ತಡೆದು ಈಶ್ವರಮಯವಾಗಿ ಮಾಡುವುದಕ್ಕೂ ಬಾಹ್ಯದಲ್ಲಿ ಈಶ್ವರ ಪ್ರತಿಬಿಂಬವು ಬೇಕೆಂದು ಶೈವಾಗಮಗಳು ಸಾರುವುದೆಂದು ಮೇಲೆ ಸೂಚಿಸಿದೆಯಷ್ಟೇ. ಅದರ ಗುಟ್ಟನ್ನುನಮ್ಮಾದ್ಯರಾದ ವೀರಶೈವ ಮತಸ್ಥಾಪಕರು ಅರಿತಿದ್ದರು. ಆದರೂ ಅವರು ಮೂರ್ತಿ ಪೂಜಕರಲ್ಲ ಮೂರ್ತಿ ಪೂಜೆಯನ್ನು ಅತಿ ಕಠೋರವಚನಗಳಿಂದ ವಚನಶಾಸ್ತ್ರಕಾರರು ನಿರಾಕರಿಸಿರುವರು.* ಸ್ವಪ್ರತಿಬಿಂಬವನ್ನು ಕಾಣಲು ದರ್ಪಣವು ಹೇಗೆ ಅಗತ್ಯವಿದೆಯೋ ಹಾಗೆ ಮನಸ್ಸಿನ ಚಲನವಲನವನ್ನು ತಡೆದು ಒಂದೇ ವಸ್ತುವಿನ ಮೇಲೆ ಅದನ್ನು ಕೇಂದ್ರಿಕರಿಸಿ, ನಿಜಾತ್ಮನ ಪ್ರತಿಬಿಂಬವನ್ನು ಕಾಣಲು ದರ್ಪಣದಂಥ ಒಂದು ವಸ್ತುವನ್ನು ಅವರು ಸ್ವೀಕರಿಸಲೇಬೇಕಾಗಿತ್ತು ಅಂತೆಯೇ ಸ್ಥಾವರಮೂರ್ತಿಗಳಿಗೆ ಬದಲಾಗಿ ಈ ಉದ್ದೇಶವನ್ನಿಡೇರಿಸುವಂಥ ಅತಿ ಪ್ರಾಚೀನವಾದ ಶಿವಲಿಂಗವನ್ನು ಧರಿಸಲು ಪ್ರೇರೇಪಿಸಿರಬಹುದೆಂದು ತೋರುವುದು. ಮಗ್ಗೆಯ ಮಾಯಿದೇವರು ತಮ್ಮೊಂದು ಪದ್ಯದಲ್ಲಿ ಶರಣನು ಲಿಂಗವೆಂಬ ದರ್ಪಣದಲ್ಲಿ ಸ್ವಸ್ವರೂಪವನ್ನೇ ನೋಡುವನೆಂದು ಹೇಳಿದ್ದಾರೆ. ಬೌದ್ಧ ಭಿಕ್ಷುಗಳೂ ಕೂಡ ಧ್ಯಾನದಲ್ಲಿ ತಮ್ಮ ದೇಹಾಕೃತಿಯನ್ನು ಮನದೊಳಗೆ ಗುರಿಯಾಗಿಟ್ಟುಕೊಳ್ಳುತ್ತಿದ್ದರೆಂದೂ ಮತ್ತು ನೀಲಿ, ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳ ದ್ವಾರಾ ಧ್ಯಾನಿಸುತ್ತಿದ್ದರೆಂದೂ ಪ್ರತೀತಿಯಿದೆ. ಬಾಹ್ಯ ಪ್ರಪಂಚವನ್ನೂ ತನ್ನನ್ನೂ ಮರೆದು ಸಮಾಧಿಯನ್ನು ಹೊಂದಲು ಬಾಹ್ಯ ವಸ್ತುವಿನ ಅಗತ್ಯವಿದೆಯೆಂದು ಪಾಶ್ಚಾತ್ಯರಲ್ಲನೇಕ ಮಾನಸಶಾಸ್ತ್ರವೇತ್ತರು (Psychologists) ಅಭಿಪ್ರಾಯಪಡುವರು. ಇವೆಲ್ಲ ಕಾರಣಗಳಿಂದ ಲಿಂಗವು ಧ್ಯಾನವನ್ನು ಬಲಿಸಲು ಕರಣವೂ ಸಮಾಧಿಯನ್ನು ಸಾಧಿಸಲು ಸಾಧನವೂ ಆಗಿರುವದೆಂದು ತೋರುವುದು.ಆದುದರಿಂದ ವೀರಶೈವ ಗುರುಗಳು ಇಷ್ಟಲಿಂಗದ ಅಗತ್ಯವನ್ನು ಸಾರಿರಬಹುದು.

ಇನ್ನು ಯೋಗದ ತತ್ವಗಳನ್ನು ಅನುಭವಕ್ಕನುಸರಿಸಿ ವಿವೇಚಿಸಲು ಅವು ಸರ್ವರಿಗೂ  ಸಾಧ್ಯವಿರುವುದೆಂದೂ, ಸರ್ವರೂ ಸಾಧಿಸಿ ಇಹದಲ್ಲಿಯೇ ಪರದ ಸುಖವನ್ನನುಭವಿಸಬೇಕೆಂದು ಮಾಡಲ್ಪಟ್ಟಿರುವುವೆಂದೂ ಕಂಡು ಬರುವುದು. ಅದು ಹೇಗೆಂಬುದನ್ನು ನೋಡುವಾ-

ಇನ್ನು ಬಾಹ್ಯ ಶರೀರ ಶುದ್ಧಿಗಾಗಿ ಸ್ನಾನವನ್ನು ಮಾಡಬೇಕೆಂಬುದೂ,ಶರೀರದೊಳಗಿನ ರಕ್ತ ಮೊದಲಾದ ಧಾತುಗಳಲ್ಲಿ ಮಲಿನತೆಯಿದ್ದರೆ ಶರೀರದ ಮೇಲ್ಬಾಗವಾದ ತ್ವಚವನ್ನು ಎಷ್ಟು ತೊಳೆದರೂ ಶುದ್ಧಿಯಾಗಿ ಮನುಷ್ಯನು ನಿರೋಗಿಯಾಗಿರಲಾರನೆಂದೂ ಸರ್ವರಿಗೂ ಗೊತ್ತಿದ್ದ ಮಾತೇ. ಹೊರಗಿನ ಮಲಿನತೆಯನ್ನು ಸ್ನಾನದಿಂದ ತೊಳೆಯುವಂತೆ ಒಳಗಿನ ಮಲಿನತೆಯನ್ನು ಸರಿಯಾದ ಆಹಾರವಿಹಾರದಿಂದಲೂ ವ್ಯಾಯಾಮಾದಿ ಪರಿಶ್ರಮಗಳಿಂದಲೂ ತೊಳೆಯಲು ಬರುವುದೆಂಬುದು ಅನುಭವಸಿದ್ಧವಾದ ಮಾತು. ಯೋಗಶಾಸ್ತ್ರಜ್ಞರಾದ ಪೂರ್ವದ ಮಹರ್ಷಿಗಳು ಶರೀರದೊಳಗಿನ ಮಲಿನತೆಯನ್ನು ತೊಳೆಯಲು ಯಮ, ನಿಯಮ,ಆಸನ, ಪ್ರಾಣಾಯಾಮ ಪ್ರತ್ಯಾಹಾರಗಳೆಂಬ ಯೋಗಾಂಗಗಳನ್ನು ಮಾಡಿ ಅದಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿರುವರು. ಶರೀರದಲ್ಲಿಯ ಸರ್ವ ವ್ಯಾಧಿಗಳನ್ನು ಹೊರದೂಡಿ ಅದನ್ನು ಬಹುಕಾಲ ಆರೋಗ್ಯದಿಂದಿಡಬೇಕಾದರೆ ಈ ಯೋಗಾಂಗ ಗಳನ್ನು ಸಾಧಿಸುವುದು ಬಲು ನೆಟ್ಟಗೆ, ಇವು ಮುಖ್ಯವಾಗಿ ಆರೋಗ್ಯದೃಷ್ಟಿಯಿಂದ (from hyginic point of view) ಬಲು ಉಪಯುಕ್ತವಾದವುಗಳು. ಒರೆಗೆ ಹಚ್ಚಿನೋಡಬೇಕೆನ್ನುವರು ಅಭ್ಯಾಸಮಾಡಿ ಅನುಭವ ಪಡೆದುಕೊಳ್ಳಬಹುದು. ಇನ್ನುಶರೀರದ ಒಳಹೊರಗಿನ ಭಾಗಗಳು ಶುದ್ಧವಾದವುಗಳೆಂದೂ, ಸರ್ವ ರೋಗಾದಿಗಳು ಹೇಳ ಹೆಸರಿಲ್ಲದಂತಾದವೆಂದೂ ಗ್ರಹಿಸುವಾ ! ಆದರೂ ಇಷ್ಟರಿಂದಲೇ ಮನುಷ್ಯನು ಶುದ್ದನಾದನೆಂದು ಹೇಳಲಾಗದು. ಏಕೆಂದರೆ ಬರೇ ಶರೀರವೇ ಮನುಷ್ಯನಲ್ಲ.ಚೈತನ್ಯದಿಂದೊಡಗೂಡಿದ ಶರೀರಕ್ಕೆ ಮನುಷ್ಯನೆನ್ನಬಹುದು. ಚೈತನ್ಯಮಯನೇ ಆತ್ಮನು. ಆತ್ಮನಿಗೆ ಬುದ್ದಿ, ಮನಸ್ಸು, ಅಹಂಕಾರಾದಿ ಅಂತಃಕರಣಗಳುಂಟು. ಅವುಗಳ ಶುದ್ಧಿಯಾಗದ ವಿನಾ ಮನುಷ್ಯನು ಶುದ್ಧನಾಗಲಾರನು. ಬುದ್ಧಿ, ಮನಸ್ಸು,ಅಹಂಕಾರಾದಿಗಳ ಶುದ್ಧಿಗಾಗಿ ಧಾರಣ, ಧ್ಯಾನ, ಸಮಾಧಿಗಳೆಂಬ ಯೋಗಾಂಗಗಳ ಅಗತ್ಯ, ತತ್ವಶಾಸ್ತ್ರಜ್ಞರು ಸೂಕ್ಷ್ಮ ದೃಷ್ಟಿಯಿಂದ ಅಂತರಂಗದ ವೃತ್ತಿಗಳನ್ನು ವಿಭಾಗಿಸಿ ಪ್ರತಿಯೊಂದು ವೃತ್ತಿಯನ್ನೇ ನಡೆಯಿಸುವುದಕ್ಕದೊಂದು ಕರಣವನ್ನು ನಿರ್ಮಿಸಿರುವರು.ತಾತ್ಮಕ ದೃಷ್ಟಿಯಿಂದ ಅಷ್ಟೇನೂ ಸರಿಯಾಗಿಲ್ಲದಿದ್ದರೂ ನಮ್ಮ ಅನುಕೂಲತೆಗಾಗಿ ಸ್ಥೂಲಮಾನದಿಂದ ಆ ಎಲ್ಲ ವೃತ್ತಿಗಳನ್ನು ಮನಸ್ಸೆಂಬ ಶಬ್ದದಲ್ಲಿ ಸಮಾವೇಶ ಮಾಡುವಾ, ಮೇಲಿನ ವಿಷಯವನ್ನೇ ಸ್ವಲ್ಪದರಲ್ಲಿ ಹೇಳುವುದಾದರೆ ಮನಸ್ಸು ಶುದ್ಧಿಯಾಗದ ಹೊರತು ಶರೀರವು  ಶುದ್ದಿಯಾಗಲಾರದೆಂದೂ, ಮನಶುದ್ಧಿಗಾಗಿಯೇ ಕಡೆಯ ಮೂರು ಯೋಗಾಂಗಗಳು ನಿರ್ಮಿಸಲ್ಪಟ್ಟಿರುವವೆಂದೂ ಹೇಳಬಹುದು. ಮನಶುದ್ಧಿಯನ್ನು ಮಾಡಬೇಕಾದರೆ ಬಾಹ್ಯವಸ್ತುವಾದ ಶರೀರ ಶುದ್ಧಿಯು ಮೊದಲು ಬೇಕೆಂದು ಪತಂಜಲ ಮಹರ್ಷಿಗಳಂಥ ಯೋಗಶಾಸ್ತ್ರಜ್ಞರ ಮತವು. ಇದು ಒಂದು ಪಕ್ಷ, ಮನಶುದ್ಧಿಗಾಗಿ ಬಾಹ್ಯ ಶರೀರ ಶುದ್ಧಿಯಿಂದ ಹೊರಡುವ ಕಾರಣವಿಲ್ಲೆಂದೂ, ಮನಶುದ್ದಿಯನ್ನು ಮನಸ್ಸಿನಿಂದಲೇ ಮಾಡುವುದು ಸಾಧ್ಯವಿದೆಯೆಂದೂ,ಮನಸೊಂದು ಶುದ್ಧಿಯಾದರೆ ಸರ್ವವೂ ತಮ್ಮಿಂದ ತಾವೇ ಶುದ್ಧಿಯಾಗುವುವೆಂದೂ ಕೆಲವರ ಮತ. ಇದು ಮತ್ತೊಂದು ಪಕ್ಷ ಅರ್ವಾಚೀನ ಸಾಧುಗಳಾದ ರಾಮಕೃಷ್ಣಪರಮಹಂಸ ಮತ್ತು ಅರವಿಂದ ಘೋಷ ಮೊದಲಾದವರು ಎರಡನೆಯ ಪಕ್ಷಕ್ಕೆ ಸೇರಿದವರು. ನಮ್ಮ ವೀರಶೈವ ಗುರುಗಳಾದರೂ ದ್ವಿತೀಯ ಪಕ್ಷವನ್ನವಲಂಬಿಸಿದವರೆಂದು ನಿರ್ಧರಿಸಲು ಸಾಕಷ್ಟು ಸಾಧನಗಳಿವೆ. ಶಿವಯೋಗದ ವಿವರಣೆಯೂ ಲಿಂಗಪೂಜೆಯ ಅಗತ್ಯವೂ ನಮ್ಮಿ ಅಭಿಪ್ರಾಯವನ್ನು ಬಲಪಡಿಸುವವು.

ಶುದ್ಧ ವಾತಾವರಣದಲ್ಲಿ ಕುಳಿತು ಮನಸ್ಸಿನ ಸಾಂಸಾರಿಕ ಮಂಡಿಗೆಗಳನ್ನೆಲ್ಲ ಮರೆತು  ಕೆಲಕಾಲವಾದರೂ ನಿಶ್ಚಿಂತ ಮನಸ್ಕರಾಗುವುದು ಅಧ್ಯಾತ್ಮಿಕ ದೃಷ್ಟಿಯಿಂದ ಉತ್ತಮವೆಂದು ಬಲ್ಲವರ ನಂಬುಗೆ .ವೀರಶೈವರಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಶಿವಪೂಜಾಗೃಹ ಅಥವಾ ದೇವರ ಮನೆಯೆಂದು ಕೋಣೆಗಳಿರುವವು. ಅವುಗಳನ್ನು ರೂಢಿಯಲ್ಲಿ ತಂದವರ ಉದ್ದೇಶವು ಸ್ವಾಮೀಜಿಯವರ ಮೇಲೆ ಹೇಳಿದ ಉದ್ದೇಶದಂತಿರಬಹುದೇನು?. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ವಿಶ್ರಾಂತಿಯು ಬೇಕೆ ಬೇಕು. ಅದರಂತೆ ಮನಸ್ಸಿಗಾದರೂ ವಿಶ್ರಾಂತಿಯ ಅಗತ್ಯವಿದೆ; ಆದುದರಿಂದಲೇ ಶರೀರದ ಮತ್ತು ಮನಸ್ಸಿನ ವಿಶ್ರಾಂತಿಗಾಗಿ ನಿದ್ರೆಯು ಸ್ವಾಭಾವಿಕವಾಗಿ ಕಲ್ಪಿಸಲ್ಪಟ್ಟಿದೆ. ಆದರೂ ನಮ್ಮೆಲ್ಲನೇಕರಿಗೆ ನಿದ್ರೆಯಲ್ಲೂ ಕೂಡ ಮನಸ್ಸಿಗೆ ವಿಶ್ರಾಂತಿ (Sub-consious state) ಕೊಡಲು ಬರುವುದೆಂದು ಯೋಗವೂ ಮತ್ತು ಅನುಭವಿಕರಾದ ಮಾನಸ ಶಾಸ್ತ್ರಜ್ಞರೂ ತೋರಿಸಿಕೊಡುವರು. ಇತ್ತಿತ್ತಲಾಗಿ ಪಾಶ್ಚಾತ್ಯ ದೇಶಗಳಲ್ಲಿ ಮಾನಸ ಶಾಸ್ತ್ರಕ್ಕೆ ಬಲು ಮಹತ್ವ ಕೊಡಹತ್ತಿರುವರು. ಅದರ ಅಭ್ಯಾಸವು ಒಳ್ಳೆ ಸರಿಯಾಗಿ ನಡೆದಿದೆಯೆಂಬುದಕ್ಕೆ ಇತ್ತಿತ್ತಲಾಗಿ ಬೈಲಿಗೆ ಬರಹತ್ತಿದ ಅಂಗಗಳಾದ Psycho-analysis, Hypnotism, Mesmerism ಮೊದಲಾದವುಗಳೇ ಸಾಕ್ಷಿ, ‘ಮೆಸ್ಮೇರಿಝಮ್’ವೆಂಬ ವಿದ್ಯೆಯಿಂದ ಅನ್ಯರ ಮಾನಸ ವ್ಯವಹಾರವನ್ನು ತಡೆದು ಅವರನ್ನು ನಮ್ಮಂತೆಯೇ ಕಾಯಾ ವಾಚಾ ಮನಸ್ಸಿನಿಂದ ನಡೆಯ ಹಚ್ಚಲು ಬರುವುದೆಂದು ಪ್ರಯೋಗದಿಂದ ಸಿದ್ಧಮಾಡಲ್ಪಟ್ಟಿದೆ. ಈ ವಿದ್ಯೆಯ ಸ್ವರೂಪವು ಬೇರೆ ರೀತಿಯಿಂದಾದರೂ ನಮ್ಮ ಪೂರ್ವಜರಿಗೆ ಗೊತ್ತಿತ್ತೆಂಬಂತೆ ತೋರುವುದು. ಬೇರೆ ಜನರ ವಿಚಾರಗಳು ಬೇರೆ ಬೇರೆಯಾಗಿರುವಂತೆ ಒಬ್ಬ ವ್ಯಕ್ತಿಯಲ್ಲಿಯು ಕೂಡ ಬೇರೆ ಬೇರೆ ಅಸಂಗತ ವಿಚಾರಗಳು ಉದ್ಭವಿಸುವುದುಂಟು. ಮಾನವಲ್ಲಿ ಪುಣ್ಯ ಮತ್ತು ಪಾಪ (good and evil) ಇವುಗಳ ನಡುವೆ ಸತತ ಕದನವು ನಡೆದೇ ಇರುವುದು. ಮೆಸ್ಮೇರಿಝಮ್ ಪ್ರಯೋಗದಿಂದ ಅನ್ಯರನ್ನು ನಮ್ಮಂತೆ ಮಾಡಿಕೊಳ್ಳಲು ಹೇಗೆ ಬರುವುದೋ ಹಾಗೇ ಅಂಥದೊಂದು ವಿದ್ಯೆಯ ಪ್ರಯೋಗವನ್ನು ಪುಣ್ಯಮಯವಾದ ವಿಚಾರಗಳ ಪರವಾಗಿ ನಮ್ಮ ಮೇಲೆಯೇ ಮಾಡಿಕೊಳ್ಳುವುದರಿಂದ ನಮ್ಮಲ್ಲಿರುವ ಪಾಪಮಯವಾದ ವಿಚಾರಗಳು ಪುಣ್ಯಮಯ ವಾದವುಗಳಾಗುವವೆಂದು ನಮ್ಮ ಪೂರ್ವಜರಿಗೆ ಗೊತ್ತಿದ್ದಂತೆ ತೋರುವುದು. ಆದುದರಿಂದಲೇ ಪವಿತ್ರ ಮಂತ್ರಗಳ ಜಪವನ್ನಾಗಲೀ ಈಶ್ವರ ಧ್ಯಾನವನ್ನಾಗಲೀ ಮಾಡಲು ಅವರು ಪ್ರೇರೇಪಿಸಿರಬಹುದು. ಇಷ್ಟಲಿಂಗ ಪೂಜೆಯಲ್ಲಿ ಈ ತತ್ವಗಳು ಅಡಗಿರುವುದರಿಂದಲೂ ಇಷ್ಟಲಿಂಗವು ಪಾಪಗಳನ್ನು ತೊಳೆಯುವುದೆಂದು ಈಗಲೂ ವೀರಶೈವರು ಶ್ರದ್ಧೆಯಿಂದ ನಂಬುವುದರಿಂದಲೂ ಇಷ್ಟಲಿಂಗವು ಇಂಥದೊಂದು ವಿದ್ಯೆಯನ್ನು ಸಾಧಿಸುವ ಕರಣವೆಂದೂ ಶಿವಪೂಜೆಯು ಅಂಥ ವಿದ್ಯೆಯ ಸಾಧನ ಮಾರ್ಗವೆಂದೂ ಊಹಿಸಲವಕಾಶವಿದೆ. ಆದುದರಿಂದ ವೀರಶೈವ ಶರಣರು ತಮ್ಮ ಆಧ್ಯಾತ್ಮಿಕೋನ್ನತಿಯನ್ನು ಅನುಭವದಿಂದಲೇ ಸಾಧಿಸುತ್ತಿದ್ದರೆಂದು ತರ್ಕಿಸಬಹುದು.

ಇಂಥ ಅಧ್ಯಾತ್ಮಿಕೋನ್ನತಿಯನ್ನು ‘ಶಿವಯೋಗ’ ದಿಂದ ಸಾಧಿಸಲು ಸಾಧ್ಯವಾಗಲೆಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಶಿವಯೋಗ ಮಂದಿರವನ್ನು ಸಂಸ್ಥಾಪಿಸಿದ್ದು ಸ್ಮರಣೀಯವಾಗಿದೆ.

.

ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು. ಇವರ ಕಣ್ಣಿನಲ್ಲಿ ಬೆಳೆದ ಅನೇಕ  ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು. ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರು-ಬಾಲ್ಯ: ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ. ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು. ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ. ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು. ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು. ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು. ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು. ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು. ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ. ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ. ಆ ಮಠದ ಸ್ವಾಮಿಗಳು ರೇವಣಸಿದ್ಧರು. ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು. ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು. ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು. 21.08.1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು. ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ. ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ. ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಆದರೂ ಬಡತನ ಹಾಸಿಕೊಂಡಿತ್ತು. ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ. ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು. ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು. ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು. ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು. ಆಗ ಲಿಂಗಯ್ಯನಿಗೆ ಎಳೆಹರೆಯ. ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು. ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ. ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು. ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ. ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ. ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು. ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು. ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

 ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು. ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು. ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು. ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು. ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು. ಶಾಂತವೀರದೇವರ ಪೂಜೆ ವಿಶಿಷ್ಟವಾದುದು. ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು. ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು. 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು. ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು. ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು. ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು.ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು. ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ. ನೀವು ಚಿಂತಿ ಮಾಡಬ್ಯಾಡ್ರಿ. ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ. ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ.ಎಂ.ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು. ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು.ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು. ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು. ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು. ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು. 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ: ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು. ಒಮ್ಮೆ ಸಭೆ ಸೇರಿತ್ತು. ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ. ಇಲ್ಲವಾದರೆ ಪಟ್ಟವೇ ಬೇಡ’ ಎಂದರು. ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ  ಮಳೆ ಸುರಿಯಿತು. ಊರೆಂಬೋ ಊರು ಕತ್ತಲ ಗವಿಯಾಯಿತು. ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ. ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು.ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು. ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು. ಆದರೆ, ಊರಿನ ಜನ ಸ್ಪಂದಿಸಲಿಲ್ಲ. ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು. ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು. ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು. ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ. ಅವರ ಉಪಚಾರಕ್ಕೆ ನಿಂತರು. ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು. ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು. ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು. ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ. ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು. 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು.ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ. ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ: ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು. ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು. ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು. ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು. ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು. ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು. ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು. ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು. ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು.ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ. ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು. ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು. ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ. ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು. ಅವುಗಳ ಮೇಲೆ ಕರುಣೆ ತೋರ್ರಪಾ. ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು. ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು. ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು. ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು. ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು. ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆಗೆ ಔಷಧಕೊಟ್ಟು ಕಳಿಸಿದರು.

ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರ ಹಸ್ತಾಕ್ಷರ ದಲ್ಲಿ ಔಷಧಿ

ಮುಂದೆ ತಿಂಗಳಿಗೆ ಕಣ್ಣು ನಿಚ್ಚಳವಾಗಿ ಕಾಣತೊಡಗಿತು. 1969ನೆಯ ಇಸ್ವಿ, ಹಾವೇರಿಯ ದ್ಯಾವಪ್ಪಶೆಟ್ಟರ ಮನೆಯಲ್ಲಿ ಶ್ರೀಗಳ ಪೂಜೆ. ಆ ಮನೆಯ ತಾಯಿಗೆ ಸಂಕಟ. ಆಕೆಯ ಕೂಸಿಗೆ ಆರೋಗ್ಯ ಸರಿಯಿರಲಿಲ್ಲ. ಸ್ವಾಮಿಗಳು ಆ ಮಗುವನ್ನು ಕರೆಸಿದರು. ಅದು ಶವದಂತೆ ಇತ್ತು. ಎಲ್ಲರನ್ನೂ ಹೊರಗೆ ಕಳುಹಿಸಿದರು. ಸ್ವಾಮಿಗಳು ಅದೇನು ವೈದ್ಯ ಮಾಡಿದರೆ ಮಗು ಕಿಲಕಿಲನೆ ನಗುತ್ತಿತ್ತು. ಇಂಥ ಘಟನೆಗಳು ಸಹಸ್ರಾರು. ಒಮ್ಮೆ ಗದುಗಿನ ಪುಟ್ಟರಾಜ ಗವಾಯಿಗಳೊಂದಿಗೆ ಸ್ವಾಮಿಗಳು ಮದರಾಸಿಗೆ ಹೋಗಿದ್ದರು.

ನಟಸಾರ್ವಭೌಮ ರಾಜಕುಮಾರರಿಗೆ ಪುಟ್ಟರಾಜ ಗವಾಯಿಗಳಲ್ಲಿ ಅಪರಿಮಿತ ಭಕ್ತಿ, ರಾಜಕುಮಾರ್ ಲಿಂಗಪೂಜೆ ನೋಡಬೇಕೆಂದು ಅಪೇಕ್ಷೆಪಟ್ಟರು. ಆದರೆ,ಲಿಂಗದೀಕ್ಷೆಯಿಲ್ಲದವರಿಗೆ ಅದು ಸಾಧ್ಯವಿಲ್ಲವೆಂದು ಸ್ವಾಮಿಗಳು ತಿಳಿಸಿದರು.

 ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು. ರಾಜಕುಮಾರ್ ಒಪ್ಪಿದರು. ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು. ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು. ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು. ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ. ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು. ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು. ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು. 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ. ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು. ಹುಬ್ಬಳ್ಳಿಯ ಬಿ.ಆರ್.ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು. ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು. 1980ನೆಯ ಇಸವಿ ಮಾರ್ಚ್ 16. ಮಹಾಶಿವರಾತ್ರಿಯ ದಿನ. ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು. ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು. ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು. ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು. ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು. ಅವರ ಬದುಕನ್ನು ನೆನೆಯುವುದೇ ಪೂಜೆ. ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

ಲೇಖಕರು : ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ

 

Rtd. Professor and Chairman Institute of Kannada Studies and

Former Hon. Professor Institute of Yoga Studies

Karnatak University, Dharwad

ಪ್ರಾಚೀನ ಕಾಲದಿಂದಲೂ ಭಾರತ ದೇಶವು ಅನೇಕ ಸಾಧು, ಸತ್ಪುರುಷರ ಜನ್ಮಭೂಮಿಯಾಗಿದೆ. ಜ್ಯೋತಿಯು ಸುತ್ತಲಿನ ಕತ್ತಲೆಯನ್ನೊಡಿಸಿ ಬೆಳಕನ್ನುಬೀರುವಂತೆ ಅವರು ತಮ್ಮ ದಿವ್ಯ ಜ್ಞಾನ ಬಲದಿಂದ ತಮ್ಮ ಸುತ್ತಮುತ್ತಲಿನಜನರಿಗೆಲ್ಲ ಜ್ಞಾನೋಪದೇಶ ನೀಡಿ ಅಜ್ಞಾನವನ್ನು ಕಳೆದು ಅವರನ್ನು ಉದ್ಧಾರ ಮಾಡಿದರು. ಇಂಥ ಪುಣ್ಯ ಪುರುಷರಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೂ ಒಬ್ಬರು. ಅವರು ಮಾನವನ ವ್ಯಕ್ತಿತ್ವದ ಸರ್ವಾಂಗ ಉನ್ನತಿಗೆ ಸಹಕಾರವಾಗುವ ಸರ್ವಕ್ಷೇತ್ರಗಳನ್ನೂ ಸುಧಾರಿಸಿದರು. ಅದರಲ್ಲಿಯ ಶ್ರೀಗಳವರು ಭಾರತದ ಸರ್ವ ಶಾಸ್ತ್ರಗಳು ಬೋಧಿಸುವ ಆತ್ಮೋನ್ನತಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಅದಕ್ಕೆ ಸಾಧನೆಯಾದ ಯೋಗಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟರು. ಸರ್ವರು ಶಿವಯೋಗಿ

ಗಳಾಗಬೇಕೆಂಬುದು ಅವರ ಹಂಬಲವಾಗಿತ್ತು.

ಶ್ರೀಗಳವರು ಸ್ವತಃ ಮೊದಲು ತಾವು ಶಿವಯೋಗಿಗಳಾಗಿದ್ದು, ಉಳಿದವರನ್ನು ಶಿವಯೋಗದ ದಿವ್ಯಾನಂದದತ್ತ ಒಯ್ಯಲು ಸಾಕಷ್ಟು ಶ್ರಮಿಸಿ ಯಶಸ್ವಿಯಾದರು.ಸಮಾಜ ಸೇವೆಯಲ್ಲಿ ಅಪಾರ ನಿಷ್ಠೆಯುಳ್ಳ ಶಿವಾನುಭವಿಗಳನ್ನೂ, ಯೋಗ್ಯಧರ್ಮಗುರುಗಳನ್ನೂ, ಪ್ರತಿಭಾಶಾಲಿ ಪಂಡಿತರನ್ನೂ, ಭಕ್ತರನ್ನು ಬೆಳೆಯಿಸಲು ಒಂದು ಯೋಗ ಸಂಸ್ಥೆಯ ಅವಶ್ಯಕತೆಯನ್ನರಿತ ಶ್ರೀಗಳವರು ಶಿವಯೋಗವನ್ನು ಸರ್ವರೂ ಸಾಧಿಸಲೆಂದು ಅದೇ ಹೆಸರಿನಿಂದ ಶಿವಯೋಗ ಮಂದಿರವನ್ನು ೧೯೦೯ ನೇ ಇಸ್ವಿಯಲ್ಲಿ ಸ್ಥಾಪಿಸಿದರು. ಈ ಶಿವಯೋಗದ ತಳಹದಿ ಮತ್ತು ಮನೋನಿಗ್ರಹ ಸಾಧನವಾದ ಹಠಯೋಗಕ್ಕೂ ಶ್ರೀಗಳವರು ಶಿವಯೋಗದಷ್ಟೇ ಪ್ರಾಮುಖ್ಯತೆ-ಯನ್ನು ಕೊಟ್ಟಿದ್ದರು. ಕಾರಣ ಶ್ರೀಗಳವರು ಹಠಯೋಗವನ್ನು ತಾವು ಯಾವ ರೀತಿ ಸಾಧಿಸಿ ತಮ್ಮ ಶಿಷ್ಯ ಬಳಗಕ್ಕೆ ಬೋಧಿಸಿದರೆಂಬುದನ್ನು ತಿಳಿಯೋಣ.

ಪರಮಪೂಜ್ಯ ಲಿಂ . ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು

ಶ್ರೀಗಳವರ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು ವೀರಶೈವ ತತ್ತ್ವಜ್ಞರೂ, ಆಚಾರ-ವಿಚಾರನಿಷ್ಠರೂ, ಯೋಗಪಿತಾಮಹರೂ, ಮಹಾತಪಸ್ವಿಗಳೂ ಆಗಿದ್ದರು, ಅವರು ಬಹುಕಾಲ ಪರಂಪರೆಯಿಂದ ಬಂದ ಶಿವಯೋಗ ಸಂಪತ್ತನ್ನುಳಿಸಲು ತಕ್ಕ ಅಧಿಕಾರಿಯನ್ನು ಹುಡುಕಾಡುತ್ತಿದ್ದಾಗ ಪಾರಮಾರ್ಥ ವಿದ್ಯೆಯ ಭಿಕ್ಷುಕನಾಗಿ ಬಂದ ಈ ಹಾನಗಲ್ಲ ಸದಾಶಿವ(ಶ್ರೀಗಳವರ ಬಾಲ್ಯದ ಹೆಸರು ) ನನ್ನು ನೋಡಿ ಆನಂದಪಟ್ಟರು. ಅವರು ಶ್ರೀ ನಿಜಗುಣರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸಮಾಡಿ, ಹಠಯೋಗ ಸಿದ್ದಿಯನ್ನು ಪಡೆದಿದ್ದರು. ಪಾತಂಜಲ ಯೋಗವು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಬಲ್ಲದೆಂಬುದನ್ನು ಆಚರಣೆಯಲ್ಲಿ ತಂದುಕೊಂಡು ಮಹಾಶಿವಯೋಗಿಗಳಾಗಿದ್ದರು. ತಮ್ಮ ಅನುಭವವನ್ನು ಯೋಗ ವಿದ್ಯೆಯನ್ನು ಪಡೆದು ಸಾರ್ಥಕಗೊಳಿಸಬಲ್ಲ ಸಮರ್ಥ ಶಿಷ್ಯನ ಶೋಧನೆಯಲ್ಲಿದ್ದಾಗ ಅವರಿಗೆ ಹಾನಗಲ್ಲ ಶ್ರೀಗಳವರು ಯೋಗ್ಯವಾಗಿ ಕಂಡರು.

ನಂತರ, ಪರಮಯೋಗಿ ಯಳಂದೂರ ಶ್ರೀಗಳವರ ಕೃಪೆಗೆ ಹಾನಗಲ್ಲ ಶ್ರೀಗಳವರು ಪಾತ್ರರಾಗಿ ಶಿವಯೋಗ ದೀಕ್ಷೆಯನ್ನು ಪಡೆದು, ಶಿವಯೋಗದ ನಿಜಸ್ವರೂಪ ವನ್ನರಿತುಕೊಂಡು ಹಠಯೋಗ ವಿದ್ಯೆಯನ್ನು ಪಡೆದರು. ಈ ಗುರುವರ್ಯರ ಪ್ರೇರಣೆಯಿಂದಲೇ ಶ್ರೀಗಳವರು ಹನ್ನೆರಡು ವರ್ಷಗಳವರೆಗೆ ನೈಷ್ಠಿಕ ತಪವನ್ನು ಅವರ ಅನುಜ್ಞೆಯಂತೆ ಶೀಲಾಚರಣೆಯೊಂದಿಗೆ ಆಚರಿಸಿ ಯೋಗಸಿದ್ಧಿಯನ್ನು, ಆತ್ಮಬಲವನ್ನು ಸಂಪಾದಿಸಿದರು. ನಂತರ ಆಜನ್ಮ ಸನ್ಯಾಸ, ಬ್ರಹ್ಮಚಚರ್ಯ ವ್ರತವನ್ನು ಕೈಗೊಂಡರು. ಹಲವು ವರ್ಷಗಳ ತರುವಾಯ ಗುರುಗಳು ಶಿವಸಾಯುಜ್ಯವನೈದುವ ಪ್ರಸಂಗ ಬಂದಾಗ ಇವರನ್ನು ಹತ್ತಿರದಲ್ಲಿ ಕರೆದು ಮಸ್ತಕದ ಮೇಲೆ ಹಸ್ತ ವನ್ನಿಟ್ಟು “ಕುಮಾರ ಮುಂದೆ ನೀನು ಕುಮಾರನೇ ಆಗುವೆ. ಆದರ್ಶ’ ವಿರತಿಯನ್ನು ತಳಿಯುವೆ. ಶಿವಯೋಗಿ ಕುಲತಿಲಕನಾಗುವೆ. ವತ್ಸ, ಶಿವಯೋಗ ವಿದ್ಯಾ ಪಾರಂಪರ್ಯವನ್ನು ಜಗತ್ತಿನಲ್ಲಿ ಬಿತ್ತಿ, ಬೆಳೆಯಿಸಿ ಧನ್ಯನಾಗು ಎಂದು ತಮ್ಮ ಯೋಗ ದಂಡವನ್ನು, ಯೋಗಸಾಧನ ಸಾಮಗ್ರಿಗಳನ್ನು ನೀಡಿ ಆಶೀರ್ವದಿಸಿದರು.

ಆ ಕ್ಷಣದಲ್ಲಿಯೇ ಸದಾಶಿವಯತಿಯು ಶ್ರೀ ಗುರುವಿನ ಮನದಾಸೆಯಂತೆ ಶಿವಯೋಗಾಲಯದ ಮಂದಿರವನ್ನು ತನ್ನ ಮನೋಭೂಮಿಯಲ್ಲೇ ಕಟ್ಟಿಸಿದನು.ಕಲ್ಪನೆಯ ಸೃಷ್ಟಿಯಲ್ಲಿ ಬಂದದ್ದು ಕಾರ್ಯಸೃಷ್ಟಿಯಲ್ಲಿ ಬರಬೇಕಾದರೆ ಅನುಕೂಲ ಪರಿಸ್ಥಿತಿಯಲ್ಲಿ ಒದಗಿ ಬರಬೇಕು. ಅದನ್ನು ತಂದುಕೊಳ್ಳುವದಕ್ಕಾಗಿ ಹಾನಗಲ್ಲ ಶ್ರೀಗಳವರು ಸ್ವಯೋಗಸಾಧನಕ್ಕೆ ಯೋಗ್ಯವಾದ ಏಕಾಂತ ಸ್ಥಾನವನ್ನು ಸಂಶೋಧಿಸುತ್ತ ಕಡೆಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ, ಅಲ್ಲೇ ಯೋಗಾಭ್ಯಾಸವನ್ನು ಮಾಡಿ-“ಉದಾರ ಚರಿತಾನಾಂತು ವಸುದೈವ ಕುಟುಂಬಕಮ್ ” ಎಂಬ ಉಕ್ತಿಯಂತೆ ಸದಾಶಿವಯೋಗಿಯು ಸದಾಕಾಲ ಯೋಗಾನಂದವನ್ನು ಅನುಭವಿಸದೆ ವೀರಶೈವರಿಗೆ ಶಿವಯೋಗವನ್ನು ಮತ್ತು ಇತರರಿಗೆ ಅಷ್ಟಾಂಗಯೋಗವನ್ನು ಬೋಧಿಸಬೇಕೆಂದು ಶಂಭುಲಿಂಗನ ಬೆಟ್ಟದಿಂದ ಪುನಃ ಸಂಚಾರಕ್ಕೆ ಹೊರಟರು. ನಾಡಿನಲ್ಲೆಲ್ಲ ಸಂಚರಿಸಿ ಮಹಾತ್ಮರನ್ನು, ಅನುಭವಿಗಳನ್ನೂ ಸಂದರ್ಶಿಸಿ ಶಿವಯೋಗಾಚರಣೆಯ ಅನುಭವವನ್ನು ಪಡೆದುಕೊಂಡರು, ಶಿವತತ್ತ್ವವೇತ್ತರಾದರು.

ಚಂಚಲ ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರಿಕರಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತು ಬಿಡುವುದು ಯೋಗಸಾಧನೆಯಿಂದ ಸಾಧ್ಯ, ಪ್ರಾಣಾಯಾಮದ ಅಂಗಗಳಾದ ಪೂರಕ, ಕುಂಭಕ, ರೇಚಕಗಳ ಸ್ಥೂಲ ಶರೀರದ ವ್ಯಾಧಿ-ಗಳನ್ನು ನಾಶಮಾಡಿ, ಚಿತ್ತಸ್ಥಿರತೆ ಮತ್ತು ಧ್ಯಾನವನ್ನು ಬಲಿಸುತ್ತವೆ. ಯೋಗದಿಂದ ಅಂತರಂಗ ಬಹಿರಂಗಗಳ ಶುದ್ದಿ ಯಾಗುವುದು, ಅಂತೆಯೇ ಯಮ, ನಿಯಮ,ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳಾದ ಅಷ್ಟಾಂಗಯೋಗದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರು ನಿಶ್ಚಲವಾದ ನಂಬಿಕೆಯನ್ನಿಟ್ಟಿದ್ದರು.

ಹಾನಗಲ್ಲ ಶ್ರೀಗಳವರ ಕರ್ಮೇಂದ್ರಿಯಗಳ ಶೀಲಾಚರಣೆಯು ಶಾಸ್ತ್ರದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಯಮಾಂಗದ ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಪಂಚ ಸದ್ವೃತ್ತಿಗಗಳನ್ನುಳ್ಳದ್ದು.ಶ್ರೀಗಳವರ ಜ್ಞಾನೇಂದ್ರಿಯಗಳಿಗೆ ನಿಯಮಾದಿಗಳು ನಿಷ್ಠುರ ಶೀಲಾಚರಣೆಗಳಾಗಿದ್ದವು. ದಶೇಂದ್ರಿಯಗಳನ್ನೊಳಗೊಂಡ ಅವರ ಅಂಗವು ಆಸನರೂಪ ಅಪ್ಪುವಿನಲ್ಲಿ ಮಿಂದು ಸ್ವಚ್ಛವೂ ಸರಳವೂ ಆಗಿತ್ತು. ಅವರು ಸಿದ್ಧಾಸನ-ಸುಖಾಸನಗಳನ್ನು ಹಾಕಿಕೊಂಡು ಅದೆಷ್ಟು ಹೊತ್ತಾದರೂ ಸ್ಥಿರವಾಗಿ ಸುಖಿಯಾಗಿ, ರುಜುವಾಗಿ ಕುಳಿತುಕೊಳ್ಳುತ್ತಿದ್ದರು. ಅಂಗ ಚಲನವೇ ಅರುಚಿ, ಅಂಗ ಅಚಲವಾಗುವದೇ ಶುಚಿ,

ಇದುವೇ ಶ್ರೀಗಳವರ ಶೀಲಾಚರಣೆ. ದೇಹಾಂತರ್ಗತವಾಯು ದೋಷಯುಕ್ತವಾಗಿರುತ್ತದೆ. ಈ ದೋಷವನ್ನು ಪ್ರಾಣಾಯಾಮ ಮೂಲಕ ಕಳೆಯಲು ಸಾಧ್ಯ.

ರೇಚಕ, ಪೂರಕ, ಕುಂಭಕ ಪ್ರಾಣಾಯಾಮಗಳಿಂದ ಪ್ರಾಣಾದಿ-ವಾಯುಗಳು ಪರಿಶುದ್ಧವಾಗುತ್ತವೆ. ಪ್ರಾಣಾದಿ-ವಾಯು ವಿರುದ್ದಿ ಯಿಂದ ಅಂತರ್ಗತ ಚಕ್ರಗಳು ಜಾಗ್ರತವಾಗುತ್ತವೆ. ಶ್ರೀಗಳವರು ಇವನ್ನೆಲ್ಲ ರೂಢಿಸಿಕೊಂಡಿದ್ದರು. ಇದು ಅವರ ಬಾಹ್ಯಶೀಲಾಚರಣೆಯಾದರೆ ಆಂತರಿಕ ಶೀಲಾಚರಣೆಯ ರೀತಿ ಇಂತಿದೆ ಅಂತರಿಂದ್ರಿಯಗಳ , ಸಂಯಮವೆ ಆಂತರಿಕ ಶೌಚ, ಚಿತ್, ಮನ, ಬುದ್ದಿ,ಅಹಂಕಾರಗಳೆಂಬ ಅಂತರಿಂದ್ರಿಯಗಳನ್ನು ಕ್ರಮವಾಗಿ ಪ್ರತ್ಯಾಹಾರ ಧಾರಣ,ಧ್ಯಾನ, ಸಮಾಧಿಗಳು ಶುಚಿಗೊಳಿಸಬಲ್ಲವು. ಚಿತ್ತವನ್ನು ವೃತ್ತಿಗಳಿಂದ ಹಿಂದಿರುಗಿಸುವುದೆ ಪ್ರತ್ಯಾಹಾರ, ಚಲಿಸುವ ಮನವನ್ನು ಆತ್ಮವೊಂದರಲ್ಲಿ ನೆಲೆನಿಲ್ಲಿಸುವುದೇ ಧಾರಣ, ಮತಿಯ ಮತ್ತೊಂದನ್ನು ಚಿಂತಿಸದೆ ಸೂಕ್ಷಾಹಂಕಾರಗಳನ್ನು ಬಿಟ್ಟು ಚಿದಹಂಭಾವದಲ್ಲಿ ಮಿಂದು ಮಡಿಯಾಗುವುದೇ ಸಮಾಧಿ. ಇವೆಲ್ಲವನ್ನು ಶ್ರೀಗಳವರು ಸಂಪಾದಿಸಿಕೊಂಡಿದ್ದರು,

ಹಠಯೋಗ (ಮನೋನಿಗ್ರಹ ಸಾಧನ) ವು ಶಿವಯೋಗಕ್ಕೆ ಸಹಕಾರಿಯೆಂದರಿತ ಪರಮಪೂಜ್ಯ ಲಿಂ. ಹಾನಗಲ್ಲ ಶ್ರೀಗಳವರು ಶಿವಯೋಗಮಂದಿರದಲ್ಲಿಯ ಶಿವಯೋಗಸಾಧಕರ ನಿತ್ಯದ ಕಾರ್ಯಕ್ರಮಗಳಲ್ಲಿ ಯೋಗಾಸನಗಳಿಗೆ ಪ್ರಥಮಸ್ಥಾನವನ್ನು ಕಲ್ಪಿಸಿದರು. ಆಸನಗಳನ್ನು ಕ್ರಮಬದ್ಧವಾಗಿ ಸಾಧನೆ ಮಾಡಿಸುವ ಯೋಜನೆಯನ್ನೂ ಮಾಡಿರುವರು. ಆದ್ದರಿಂದ ಮಂದಿರದಲ್ಲಿ ಶಿವಯೋಗ ಸಾಧಕರು ಮತ್ತು ವಟುಗಳು ಪ್ರತಿನಿತ್ಯ ಮುಂಜಾನೆ ಯೋಗಾಸನಗಳನ್ನು ಹಾಕಿಯೇ ಮುಂದಿನ ಪಾಠ ಪ್ರವಚನಾದಿ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.

ಶ್ರೀಗಳವರು ಸಾಧಕರನ್ನು ಮೊದಲು ಹಠಯೋಗ ಮಾರ್ಗದಲ್ಲಿ ಪಳಗಿಸುತಿದ್ದರು. ಅಷ್ಟಾಂಗಯೋಗದ ಮಹತ್ವವನ್ನೂ ಅವರಿಗೆ ಮನವರಿಕೆಯಾಗುವಂತೆ ಹೇಳಿಕೊಡುತ್ತಿದ್ದರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಇವು ಐದು ಬಾಹ್ಯಾಂಗಗಳು.ಧಾರಣ, ಧ್ಯಾನ, ಸಮಾಧಿ ಇವು ಮೂರು ಅಂತರಂಗಗಳು. ಈ ಹಠಯೋಗದಿಂದ ಸಾಧಕನ ಮೈ-ಮನ ಪ್ರಾಣಗಳ ಶುದ್ದಿಯಾಗುತ್ತದೆ. ನಿರೋಗವಾದ ಶರೀರವೇ ಧರ್ಮಕ್ಕೆ ಮೊದಲ ಸಾಧನ, ರೋಗದಿಂದ ಚಿತ್ತವಿಕ್ಷೇಪ ಉಂಟಾಗುತ್ತದೆ. ಅದನ್ನು ಕಳೆದು ಶರೀರವನ್ನು ಸ್ವಸ್ಥವಾಗಿಡಲು ಯೋಗಾಸನಗಳು ಪರಮೋಪಾಯ. ಆಸನಗಳು ಸಾತ್ವಿಕ ಅಂಗಸಾಧನೆಗಳು.

ಶರೀರದ ಅಂಗಾಂಗಗಳಿಗೆಲ್ಲ ಸಮನಾದ ವ್ಯಾಯಾಮವು ಆಸನಗಳಿಂದ ದೊರೆಯುತ್ತವೆ, ನಾಡಿಗಳು ಪರಿಶುದ್ಧವಾಗಿ ಶರೀರವು ಹಗುರಾಗುತ್ತದೆ. ಹಸಿವೆ ಸರಿಯಾಗಿ ಆಗಿ, ಲವಲವಿಕೆ ಮೂಡಿ ಜಾಡ್ಯವು ದೂರಾಗುತ್ತದೆ. ಆದ್ದರಿಂದ ಶ್ರೀಗಳವರು ಸಾಧಕರಿಗೆ ಈ ಹಠಯೋಗವನ್ನು ಶಿವಯೋಗಕ್ಕೆ ಪೂರಕವಾಗಿ ಯೋಜಿಸಿರುವರು.ಶಿವಯೋಗ ಮಂದಿರದಲ್ಲಿ ಮುಂಜಾನೆ ೬ಗಂಟೆಗೆ ಪ್ರಾರ್ಥನೆಯ ನಂತರ ಯೋಗಾಸನಗಳು ಆರಂಭವಾಗುತ್ತವೆ, ವಟುಗಳು ಮತ್ತು ಸಾಧಕರು ತಮ್ಮ ತಮ್ಮ ಆಸನ-ಯೋಗ ಸಾಧನೆಯ ಹಾಸಿಗೆಗಳೊಂದಿಗೆ ಕಲ್ಲುಮಠದ ಪಟಾಂಗಣದಲ್ಲಿ ಬಂದು ಸಾಲಾಗಿ ನಿಂತು ವಂದನೆಯ ಮುದ್ರೆಯೊಂದಿಗೆ ಶಿವಯೋಗಮಂದಿರದ ಗೀತೆಗಳನ್ನು ಹಾಡಿದ ಮೇಲೆ

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವ

ಗುರುದೇವಾತ್ಪರಂ ನಾಸ್ತಿ ತಸ್ಮಿ ಶ್ರೀ ಗುರುವೇನಮಃ

ಎಂದು ಶ್ರೀ ಸದಾಶಿವ ಗುರುದೇವನನ್ನು ಭಕ್ತಿಭಾವದಿಂದ ಸ್ಮರಿಸಿ ಹಿರಿಯಸಾಧಕರೊಬ್ಬರ ನೇತೃತ್ವದಲ್ಲಿ ಯೋಗಾಸನಗಳನ್ನು ಹಾಕಲಾರಂಭಿಸುವರು.

ಅರಂಭದಲ್ಲಿ ಶ್ರೀಗಳವರು, ಯೋಗಾಸನಗಳನ್ನು ಮಾಡುವ ವಿಧಾನವನ್ನು ಸಾಧಕರಿಗೆ ತೋರಿಸಿಕೊಡುತ್ತಿದ್ದರು. ಆಸನಗಳೊಂದಿಗೆ ಬಂಧ ಮುದ್ರೆ, ದೃಷ್ಟಿಗಳನ್ನೂ ತೋರಿಸಿ ಅವುಗಳ ಮಹತ್ವವನ್ನು ಸಾಧಕರಿಗೆ ಮನದಟ್ಟಾಗುವಂತೆ ವಿವರಿಸುತ್ತಿದ್ದರು. ಯೋಗಾಸನಗಳಲ್ಲಿ ಅವರು ಹೊಸ ಪ್ರಯೋಗಗಳನ್ನು ಮಾಡಿದರು. ಅವರು ಹೊಸ ಉತ್ತಮ ಆಸನಗಳನ್ನು ಕಲ್ಪಿಸಿ ಯೋಗಾಸನಗಳ ಸಂಖ್ಯೆಯನ್ನು ನೂರೆಂಟಕ್ಕೆ ಮುಟ್ಟಿಸಿದರು. ಇವುಗಳಲ್ಲಿ ಸಿದ್ಧಾಸನ ಸರ್ವಶ್ರೇಷ್ಠ ವಾದುದು. ಸಿದ್ಧಾಸನದ ಅಭ್ಯಾಸದಿಂದ ಯೋಗಿಯು ಸಿದ್ಧಿಯನ್ನು ಪಡೆಯುತ್ತಾನೆ.ಆಸನಗಳಿಂದ ಕೆಲವು ರೋಗಗಳು ಗುಣಹೊಂದುತ್ತವೆ. ಶೀರ್ಷಾಸನವು ತಲೆನೋವು,ದೃಷ್ಟಿಮಾಂದ್ಯವನ್ನು ದೂರಗೊಳಿಸಿದರೆ, ಮಯೂರಾಸನ ಸರ್ವಾಂಗಾಸನಗಳು ಮಲಬದ್ಧತೆಯನ್ನು ಕಳೆಯುತ್ತವೆಂಬುದು ಶ್ರೀಗಳವರ ಸಂಶೋಧನೆಯಾಗಿತ್ತು.ಅವರು ಯಾವ ಆಸನಗಳಿಗೂ ತಮ್ಮ ಸಂಕೇತವನ್ನಿಡಲಿಲ್ಲ. ಅದೆಲ್ಲ ಗುರುವಿನ ಕೃಪೆ ಎಂದು ಹೇಳುತ್ತಿದ್ದರು.

ಒಮ್ಮೆ ಶಿವಯೋಗ ಮಂದಿರದಲ್ಲಿಯ ವಟುಗಳು ಗೋಲಿಯಾಟ ಆಡುತಿದ್ದಾಗ, ಶ್ರೀಗಳವರು ಅಲ್ಲಿಗೆ ಬಂದು ವಟುಗಳಿಗೆ “ಗುರಿ ತಪ್ಪದೆ ಗೋಲಿ ಹೊಡೆಯಿರಿ” ಎಂದರು. ಆಗ ವಟುವೊಬ್ಬ ಗುರಿ ತಪ್ಪದೆ ಹೊಡೆಯುವುದರಿಂದ ಏನು ಒಳ್ಳೆಯದಾಗುವುದೆಂದು ಕೇಳಿದ್ದಕ್ಕೆ ಶ್ರೀಗಳವರು “ ಗುರಿಯಿಟ್ಟು ಹೊಡೆಯುವುದರಿಂದ ದೃಷ್ಟಿ ಒಂದೇ ಕಡೆಗೆ ನಿಲ್ಲುವುದು. ಇದು ಯೋಗಸಾಧನೆಗೆ ಅತ್ಯವಶ್ಯವಾದುದು. ಗೊಲಿಯನ್ನು ಎದುರಿಟ್ಟು ನೋಡುತ್ತ, ನೋಡುತ್ತ ದೃಷ್ಟಿಯನ್ನು ಅನಿಮಿಷವಾಗಿ ನಿಲ್ಲಿಸಬೇಕು. ಇದು ಮನದ ಚಂಚಲತೆಯನ್ನು ಕಳೆಯುವ ಪರಮೋಪಾಯವಾಗಿದೆ” ಎಂದು ವಿವರಣೆಯಿತ್ತು ಅವರು ಮಕ್ಕಳ ಆಟವು ಯೋಗಕ್ಕೆ ಹೇಗೆ ಪರೋಕ್ಷವಾಗಿ ಸಹಾಯವಾಗುತ್ತದೆಂಬುದನ್ನು ತೋರಿಸಿಕೊಟ್ಟರು.

ಶಿವಯೋಗಮಂದಿರಕ್ಕೆ ಡೊಂಬರು ಬಂದಾಗ ಅವರ ಆಟವನ್ನು ಶ್ರೀಗಳ ವರು ವಟುಗಳಿಗೆ ತಪ್ಪದೆ ತೋರಿಸುತ್ತಿದ್ದರು. ಅದರಿಂದ ಅವರಿಗೆ ಮನೋರಂಜನೆ ಯಾಗಲಿ ಎಂದಲ್ಲ, ವಟುಗಳಿಗೆ ಆಸನಗಳನ್ನು ಹಾಕುವ ಅಭಿರುಚಿ ಬೆಳೆಯಲೆಂದು ಮತ್ತು ಸಾಧಕರು ತಮ್ಮ ಯೋಗಾಸನಗಳ ಹಾಗೂ ಡೊಂಬರ ಮೈ ಮಣಿತಗಳಲ್ಲಿಯ ವ್ಯತ್ಯಾಸವನ್ನು ಕಂಡುಕೊಳ್ಳಲೆಂದು. ಯೋಗಾಸನಗಳನ್ನು ದೃಷ್ಟಿ, ಬಂಧ ಮುದ್ರೆ-ಗಳಿಲ್ಲದೆ ಹಾಕಿದರೆ ಅವು ಡೊಂಬರಾಟವಾಗಿಯೇ ಉಳಿಯುವವು ಎಂದು ಸಾಧಕರ ಮನದಲ್ಲಿ ನಾಟುವಂತೆ ಹೇಳುತ್ತಿದ್ದರು. ನೇತಿ, ದೌತಿ, ಬಸ್ತಿ ಮುಂತಾದ ಷಟ್ಕರ್ಮಗಳ ಪ್ರಯೋಗ ಸಾಧನೆಯನ್ನು ಶ್ರೀಗಳವರು ಕೆಲವು ಸಾಧಕರಿಗೆ ಕಲಿಸಿ

ಅವರನ್ನು ನಿಪುಣರನ್ನಾಗಿ ಮಾಡಿದರು.

ಈ ರೀತಿ ಶ್ರೀಗಳವರು ವಟುಗಳಿಗೆ, ಸಾಧಕರಿಗೆ ಯೋಗಾಸನಗಳನ್ನು ತಾವೇಹಾಕಿಸಿ, ಅವರ ಮೈಮಣಿತವನ್ನು ಕಂಡು ಸಂತಸಪಟ್ಟ ಮೇಲೆ ಹಸುವಿನ ನೊರೆ ಹಾಲನ್ನು ಅವರಿಗೆ ಕುಡಿಯಲು ಕೊಡುತ್ತಿದ್ದರು ಆಹಾರ ಶುದ್ಧಿಯಿಂದ ಸ್ವಭಾವ ಶುದ್ದಿ ಯಾಗುವದೆಂದರಿತ ಶ್ರೀಗಳವರು ತಮ್ಮ ಶಿವಯೋಗ ಸಾಧಕರಿಗೆ ಸತ್ವಾಹಾರದ ಮಹತ್ವವನ್ನು ತಾವು ಸ್ವತಃ ಆಚರಿಸಿ ತೋರಿಸಿಕೊಡುತ್ತಿದ್ದರು. ಹೀಗೆ ಶ್ರೀಗಳವರು ಹಠಯೋಗಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಸಾಧಕರಿಗೆ ಆಸಕ್ತಿಯಿಂದ ಬೋಧಿಸು

ತಿದ್ದುದನ್ನು ಕಂಡು ಆಗಿನ ಕೆಲವು ಮಂದಮತಿಗಳು “ ವಚನಕಾರರು ಶಿವಯೋಗಕ್ಕೆ ಹಠಯೋಗ ಅವಶ್ಯವಿಲ್ಲ. ಪ್ರಮಥರು ವಚನಗಳಲ್ಲಿ ಹಠಯೋಗವನ್ನು ಕಟುವಾಗಿ ಟೀಕಿಸಿ, ವೀರಶೈವರಿಗೆ ಆ ಯೋಗವು ಬೇಕಿಲ್ಲವೆಂದು ಅವರು ಹೇಳಿರುವಾಗ, ಈ

ಹಠಯೋಗ ಶಿಕ್ಷಣ ನಮಗೇಕೆ ಬೇಕು? ಮುಂದೆ ಶಿವಯೋಗಿಗಳಾಗುವವರಿಗೆ ಶಾಲೆಯನ್ನಿಟ್ಟು ಕಲಿಸಿದರೆ ಮಾತ್ರ ಶಿವಯೋಗಿಗಳಾಗುವರೆ ? ಆಗುವುವದಿದ್ದರೆ ಸಹಜವಾಗಿ ತಾವೇ ಅವರು ಆಗುವರು ಎಂದು ತಟ್ಟನೆ ನುಡಿದರಲ್ಲದೆ”. ವಚನದಲ್ಲಿ ಎಂಥ ಯೋಗವು ಅನಾದರಣೀಯವಾಗಿದೆ. ಯಾವುದು ಎಷ್ಟು ಅವಶ್ಯವಾಗಿದೆ ಎಂಬುದನ್ನು ಕರೆದು ನೋಡಲಿಲ್ಲ. ಈ ಆಕ್ಷೇಪಣಿಯರಿಗೆ ಶ್ರೀಗಳವರು ಮಂತ್ರಯೋಗ, ಹಠಯೋಗ ಮುಂತಾದ ಯೋಗಗಳು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಿವೆಯೆಂಬುದನ್ನು ವಿವರಿಸಿ, ಶಿವಯೋಗದ ಗುರಿಯಿಲ್ಲದ ಹಠಯೋಗ ಮಾತ್ರ ಶುಷ್ಕವಾದುದು,ನಿಷ್ಟ್ರಯೋಜಕವಾದುದು ಎಂಬ ಹೇಳಿಕೆಯನ್ನು ಕೊಟ್ಟರು.

ಒಮ್ಮೆ ಪರಮ ವೈರಾಗ್ಯಶಾಲಿಗಳಾದ ಬಾಗಲಕೋಟೆಯ ಶ್ರೀ ಮಲ್ಲಣಾರ್ಯರು ಯೋಗವಿದ್ಯಾನ್ವೇಷಣ ಮಾಡುತ್ತ ಬಂದು ಹಾನಗಲ್ಲ ಶ್ರೀಗಳವರನ್ನು ಭೆಟ್ಟಿಯಾಗಿ ಯೋಗ ವಿಷಯ ಕುರಿತು ಚರ್ಚೆ ನಡೆಸಿದರು. ಶ್ರೀಗಳವರು ಮಲ್ಲಣಾರ್ಯರಿಗೆ ಯೋಗದ ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಾಗ ಮಲ್ಲಣಾರ್ಯರು ಯೋಗ ಸಾಧನವನ್ನು ಮಾಡಿ, ಅದರ ಮಹಿಮೆಯನ್ನು ಮನ

ಗಂಡರು. ಮತ್ತೊಮ್ಮೆ, ಸರ್ವಜ್ಞ ಮೂರ್ತಿಯ ವಚನಗಳನ್ನು ಸಂಶೋಧಿಸಿ ಪ್ರಕಟಸಿದ ಶ್ರೀ ಉತ್ತಂಗಿ ಚೆನ್ನಪ್ಪನವರು ಸರ್ವಜ್ಞನ ಗಡುಚಾದ ಯೋಗಪರಬೆಡಗಿನ ವಚನಗಳ ಅರ್ಥವನ್ನು ಅನುಭವದೊಂದಿಗೆ ಶ್ರೀಗಳವರಿಂದಲೇ ಅರಿತುಕೊಂಡರು. ಹೀಗೆ ಶ್ರೀಗಳು ಶಿವಯೋಗಮಂದಿರದಲ್ಲಿ ಮುಕ್ತಿಗಾಮಿಗಳಾದ ಗೃಹಸ್ಥರಿಗೂ ಸಮಾನವಾದ ಯೋಗ ಶಿಕ್ಷಣವನ್ನು ಪಡೆಯಲು ಸದಾವಕಾಶ ದೊರಕಿಸಿಕೊಟ್ಟರು,

ಹಾನಗಲ್ಲ ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಸ್ವಾಮಿಗಳಂತೆ ಶ್ರೀ ನಿಜಗುಣ ಶಿವಯೋಗಿಗಳಲ್ಲಿ ಅಪಾರವಾದ ಶ್ರದ್ಧೆಯನ್ನಿಟ್ಟು,ಅವರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ನಿಜಗುಣರ ‘ಪಾರಮಾರ್ಥ ಪ್ರಕಾಶಿಕೆ’ಯನ್ನು ಶ್ರೀಗಳವರು ‘ ಶಿವಯೋಗದ ಕೈಪಿಡಿ ‘ ಎಂದು ಭಾವಿಸಿದ್ದರು. ‘ಪಾರಮಾರ್ಥ ಪ್ರಕಾಶಿಕೆ’ಯಲ್ಲಿ ತಿಳಿಸಿರುವಂತೆ ಶ್ರೀಗಳವರು ಶಿವಯೋಗಸಾಧನೆಗೆ ಪವಿತ್ರ ಪ್ರಶಾಂತ ನದಿಯ ವನಪ್ರದೇಶದಲ್ಲಿ ಯೋಗ-ಮಂದಿರವನ್ನುಕಟ್ಟಿಸಿದರು.

ಬದಾಮಿ ತಾಲೂಕಿನ ಮಲಪ್ರಭಾ ನದಿಯ ದಂಡೆಯ ಮೇಲೆ ಶ್ರೀ ಶಿವಯೋಗಮಂದಿರ ಸ್ಥಾಪನೆ

ಶಿವಯೋಗಮಂದಿರದ ವಟುಗಳು ಮತ್ತು ಸಾಧಕರ ಶರೀರ ಶುದ್ಧಿಗಾಗಿ ಯೋಗಾಸನ, ಪ್ರಾಣಾಯಾಮ ಮತ್ತು ಷಟ್ಕರ್ಮಗಳನ್ನು ಕಲಿಸಿದರು. ಒಟ್ಟಿನಲ್ಲಿ ಶ್ರೀಗಳವರು ನಿಜಗುಣರ ಯೋಗದ ಬಗೆಗಿನ ಸರ್ವ ಆದರ್ಶವನ್ನು ಚಾಚೂ ತಪ್ಪದೆ ನಡೆಯಿಸಿಕೊಂಡು ಬಂದರು, ಮತ್ತು ಅವರ ಶಿವರಾತ್ರಿಯ ಉತ್ಸವ ಕಾಲದಲ್ಲಿ ಸಾಧಕರಿಗಾಗಿ ಧರ್ಮ ಮತ್ತು ಯೋಗಗಳ ಬಗೆಗೆ ವ್ಯಾಖ್ಯಾನವನ್ನು ನಡೆಸುತ್ತಿದ್ದರು.ಈ ಪರಂಪರೆ ಇಂದಿನವರೆಗೂ ಅಲ್ಲಿ ನಡೆದುಕೊಂಡು ಬಂದಿದೆ.

ಇನ್ನು ಶಿವಯೋಗ ಮಂದಿರದಲ್ಲಿ ಶ್ರೀಗಳವರ ನೇತೃತ್ವದಲ್ಲಿ ಯೋಗ ವಿದ್ಯೆಯನ್ನು ಪಡೆದು ಶಿವಯೋಗಿಗಳಾದ ಅನೇಕ ಶಿಷ್ಯರಲ್ಲಿ ಕೆಲವರ ಪರಿಚಯ ಹೀಗಿದೆ

“ಯೋಗಿರಾಜ” ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.

ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಗುರುವರ್ಯರಿಂದ ಪಡೆದ ಹಠಯೋಗ ವಿದ್ಯೆಯನ್ನೆಲ್ಲ ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಕೊಟ್ಟು ಅವರನ್ನು ಆದರ್ಶ ಹಠಯೋಗಿಗಳನ್ನಾಗಿ ಮಾಡಿದರು.ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಷಟ್ಕರ್ಮಗಳಲ್ಲಿ ನಿಪುಣರಾಗಿ, ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ನೇ ಇಸ್ವಿಯಲ್ಲಿ ನಾಸಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ಥಾನದ ಯೋಗಿಗಳೆಲ್ಲ ಸೇರಿದ್ದರು.ಶ್ರೀಗಳವರು ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ದಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ ಯೋಗಸಾಧನೆಯನ್ನು ಕಂಡು ಅಪ್ರತಿಭರಾಗಿ, ಅವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು. ಅವರಯೋಗದ ವಿಶೇಷ ಸಾಧನೆಗಳನ್ನು ಕಂಡು ‘ಯೋಗಿರಾಜ’ ಎಂಬ ಬಿರುದನ್ನು ಅವರಿಗೆ

ಕೊಟ್ಟು ಮನ್ನಿಸಿದರು. ಶಿವಯೋಗ ಮಂದಿರದ ಸಾಧಕರು ಯೋಗಸಿದ್ಧ ರಾಗ ಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲುವುದು, ಬಿದರಿ ಪಟ್ಟಾಧ್ಯಕ್ಷರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಸಹ ಆಶ್ಚರ್ಯಪಡುತ್ತಿದ್ದರು. ಬಿದರಿ ಪಟ್ಟಾಧ್ಯಕ್ಷರು ಶಿವಯೋಗದಲ್ಲಿಯೂ ಸಿದ್ಧಿ ಪಡೆದಿದ್ದರು.

ಮತ್ತೊಬ್ಬ ಶಿಷ್ಯರಾದ ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಯೋಗ ಸಾಧನೆಯಲ್ಲಿ ಪರಿಣಿತರಾಗಿದ್ದು, ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯರಿಗೆ ಯೋಗಸಾಧನೆಯನ್ನು ಬೋಧಿಸುವಷ್ಟು ದಕ್ಷರಾಗಿದ್ದರು.

ಅಲ್ಲದೆ ಸಂಪಗಾವಿಯ ಶ್ರೀ ಶಿವಾಚಾರ್ಯ ಚರಮೂರ್ತಿಗಳು, ಬನವಾಸಿಯ ಶ್ರೀ.ಮ. ನಿ: ಪ್ರ. ಸಿದ್ಧ ವೀರಸ್ವಾಮಿಗಳು, ಶ್ರೀ ಮನ್ಮಹಾರಾಜ ನಿರಂಜನ ಜಗದ್ಗು ರು ಗುರು ಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೋಡಿಮಠದ ಅಧಿಪತಿಗಳಾದ ಹಾರಹಳ್ಳಿಯ ಶ್ರೀ.ಮ. ನಿ. ಪ್ರ. ಗುರುಲಿಂಗ ಸ್ವಾಮಿಗಳು, ಕಪನಹಳ್ಳಿಯ ಶ್ರೀ ನಿ. ಪ್ರ.ರುದ್ರವುನಿ ಸ್ವಾಮಿಗಳು, ವಿರಕ್ತಮಠದ ಅಧಿಕಾರಿ ಹಾನಗಲ್ಲ ಶ್ರೀ.ಮ. ನಿ. ಪ್ರ. ಸದಾಶಿವ ಸ್ವಾಮಿಗಳು, ಶಾಖಾ ಶಿವಯೋಗ ಮಂದಿರದ ಅಧಿಕಾರಿ ನಿಡಗುಂದಿ-ಕೊಪ್ಪದ ಶ್ರೀ.ಮ. ನಿ.ಪ್ರ. ಚೆನ್ನಬಸವ ಸ್ವಾಮಿಗಳು, ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು, ಹಾರಹಳ್ಳಿಯ ನೀಲಲೋಚನ ಸ್ವಾಮಿಗಳು, ಸಾಲೂರ ಶ್ರೀ ಘ.ಚ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಭಾಲ್ಕಿ ಶ್ರೀ ಘ, ಚ, ಚನ್ನಬಸವ ಸ್ವಾಮಿ ಪಟ್ಟದ್ದೇವರು, ಬಾರಂಗಿ ಕೂಡ್ತಿ ಯ  ಶ್ರೀ.ಮ. ನಿ. ಪ್ರ, ಸದಾನಂದ ಸ್ವಾಮಿಗಳು,ಸಿಂದಗಿಯ ಶ್ರೀ ಘ, ಚ, ಶಾಂತವೀರ ಪಟ್ಟಾಧ್ಯಕ್ಷರು, ನೀಲಗುಂದ ಶ್ರೀ ಘ, ಚ,

ವಿರುಪಾಕ್ಷ ಶಿವಾಚಾರ್ಯರು, ಸವದತ್ತಿಯ ಶ್ರೀ.ಮ.ನಿ.ಪ್ರ. ಕುಮಾರ ಸ್ವಾಮಿಗಳು, ಈ ಎಲ್ಲ ಧರ್ಮ ಗುರುಗಳು ಹಾನಗಲ್ಲ ಶ್ರೀಗಳವರು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಯೋಗಾಸನ, ಯೋಗಕ್ರಿಯೆಗಳು ಸಾಧನೆಯಲ್ಲಿ ಹಾಗೂ ನಿಷ್ಣಾತರಾದರು.

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಮೂರುಸಾವಿರಮಠ, ಹುಬ್ಬಳ್ಳಿ ಇವರು ಸಹ ಬಾಲ್ಯದಲ್ಲಿಯೇ ಪವಿತ್ರಾಶ್ರಮವಾದ ಶಿವಯೋಗ ಮಂದಿರಕ್ಕೆ ಆಗಮಿಸಿ ವಿದ್ಯಾಭ್ಯಾಸ ಮತ್ತು ಯೋಗಾಭ್ಯಾಸವನ್ನು ಪ್ರಾರಂಭಿಸಿದರು. ಒಟ್ಟಿನಲ್ಲಿ ಶ್ರೀಗಳವರು, ಮತ್ತು ಅವರ ಶಿಷ್ಯರು ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ.

ವಿಶಾಲಬುದ್ದಿ , ಬ್ರಹ್ಮ-ತೇಜೋವೃದ್ಧಿ ಮುಂತಾದ ಬಗೆಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿದ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಲೋಕದ ಬಂಧನ ಮಾಯೆಯನ್ನು ಒದ್ದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸಿದರು.

ಈ ರೀತಿ ಹಾನಗಲ್ಲ ಶ್ರೀಗಳವರು ಸ್ವತಃ ಯೋಗಸಾಧಕರಾಗಿ ಮತ್ತು ಇನ್ನುಳಿದ ಯೋಗಸಾಧಕರಿಗೆ ಬೋಧಕರಾಗಿ ಅವರನ್ನು ಸಮಾಜದ ಸಮರ್ಥ ಧರ್ಮಗುರುಗಳನ್ನಾಗಿ ಮಾಡಿದರು. ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲೊಂದಾದ ಯೋಗಶಾಸ್ತ್ರವನ್ನು ಬೆಳಕಿಗೆ ತಂದರು, ಹೀಗೆ ಶ್ರೀಗಂಧದಂತೆ ಜೀವನವನ್ನು ಸವೆಸಿ ವಿಶ್ವ ಕುಟುಂಬಿಗಳಾದ ಹಾನಗಲ್ಲ ಶ್ರೀಗಳವರ ಪುಣ್ಯಶರೀರದಲ್ಲಿಯೇ ಇದ್ದಕ್ಕಿದ್ದಂತೆ ಒಂದುದಿನ ಅಸ್ವಸ್ಥತೆ ಆವಿರ್ಭವಿಸಿ, ಅತಿಶಯಕ್ಕಿಟ್ಟಿತು  ಆ ಕ್ಷಣದಲ್ಲಿಯೂ ಅವರು ಸಮಾಜದೇಳ್ಗೆಗಾಗಿ, ಸಮಾಜದ ಐಕ್ಯತೆಗಾಗಿ ಚಿಂತಿಸುತ್ತಿದ್ದರು. ಕೊನೆಗೆ ಅವರು ಮಾಘ ಬಹುಳ ಸಪ್ತಮಿ ೧೯೩೦ ನೇ ಇಸ್ವಿಯ

ಗುರುವಾರ ಸಂಜೆಯ ಹೊತ್ತಿಗೆ ಶಿವೈಕ್ಯರಾಗಿ, ತಮ್ಮ ಬಳಗವನ್ನೆಲ್ಲಾ ತಬ್ಬಲಿಯಾಗಿ ಮಾಡಿದರು. ಇಂತಹ ಮಹಾಶಿವಯೋಗಿಗಳು ಇನ್ನೊಮ್ಮೆ ಇಳೆಗೆ ಅವತರಿಸಿ ಬರಲೆಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.

 (ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)

ಲೇಖಕರು ; ಕೆ. ಎಸ್. ಪಲ್ಲೇದ

ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ

ಯೋಗವು ವಿಶ್ವಕಲ್ಯಾಣಕ್ಕಾಗಿ ಮತ್ತು ಮಾನವನ ಶ್ರೇಯೋಭಿವೃದ್ಧಿಗಾಗಿ ನಮ್ಮ ಪೂರ್ವಜರು ನೀಡಿದ ಮಹಾನ್ ಕೊಡುಗೆಯಾಗಿದೆ. ಈ ಕೊಡುಗೆಯನ್ನು ಆದಿಶಿವನಿಂದ ಮೊದಲ್ಗೊಂಡು ವಶಿಷ್ಠ, ಪತಂಜಲಿ, ಸ್ವಾತ್ಮಾರಾಮ ಇನ್ನಿತರೆ ಋಷಿಮುನಿಗಳಾದಿಯಾಗಿ, ಅಲ್ಲಮ, ಬಸವಾದಿ ಶಿವಶರಣರು ಮನುಕುಲಕ್ಕೆ ಕರುಣಿಸಿದ ವರಪ್ರಸಾದವಾಗಿದೆ. ಮುಖ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.

ಇತ್ತೀಚೆಗೆ ವಿಶ್ವಸಂಸ್ಥೆಯು “ಜೂನ್ 21 ಅಂತರಾಷ್ಟ್ರೀಯ ಯೋಗ ದಿನ” ಎಂದು ಘೋಷಿಸಿದ ಮೇಲಂತೂ “ಯೋಗ ಎಲ್ಲರಿಗಾಗಿ, ಎಲ್ಲರೂ ಯೋಗಕ್ಕಾಗಿ, ಯೋಗದಲ್ಲಿ ಎಲ್ಲಾ ಐತಿ “ ಎಂಬ ಹೆಗ್ಗಳಿಕೆಯಿಂದ ಯೋಗವು ಜಗತ್ಪ್ರಸಿದ್ಧಿಯಾಗಿದೆ. ಅಂದು ಅಧ್ಯಾತ್ಮ ಸಾಧನೆಗೆ ಮೋಕ್ಷ ಸಂಪಾದನೆಗೆ ಸೀಮಿತವಾಗಿದ್ದ ಯೋಗ ಇಂದು ಕೊರೋನಾ ಕಾಯಿಲೆಯಂತ ಮಾರಕ ಕಾಯಿಲೆಗಳಿಗೆ ಮಹಾಮದ್ದಾಗಿ ಮಾನವನ ನೆಮ್ಮದಿಯ ಬದುಕಿಕೊಂದು ಆಧಾರಸ್ತಂಭವಾಗಿದೆ. ವಿಶ್ವಶಾಂತಿ ಸ್ಥಾಪನೆಗೆ ಅಡಿಪಾಯವಾಗಿದೆ. ಹಾಗೆಯೇ ಯೋಗವು ಒಂದು ವಿಸ್ಮಯ ವಿಜ್ಞಾನವೂ ಆಗಿದ್ದು, ಪ್ರಸ್ತುತ ದಿನಮಾನಕ್ಕೆ ಕಾಮಧೇನು, ಕಲ್ಪವೃಕ್ಷ ಸ್ವರೂಪದಲ್ಲಿದೆ.

ಇಷ್ಟೆಲ್ಲ ಶ್ರೇಷ್ಠತೆ ಹೊಂದಿರುವ ಯೋಗವು ಋಷಿಮುನಿಗಳಿಂದ ಪರಂಪರಾಗತವಾಗಿ ಗುರು-ಶಿಷ್ಯ ಬಳಗದಿಂದ ಬೆಳೆದು ಬಂದಿದೆ. ಈಗ ಬಾಬಾ ರಾಮದೇವ, ರವಿಶಂಕರ ಗುರೂಜಿ ಮತ್ತು ಅನೇಕ ಯೋಗ ಕೇಂದ್ರಗಳು ಯೋಗ ಪ್ರಸಾರ ಸೇವೆಯಲ್ಲಿ ಇರುವರು. ಈ ನಿಟ್ಟಿನಲ್ಲಿ ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ ವಿಶಿಷ್ಟ ರೀತಿಯಲ್ಲಿ ನಿರತವಾಗಿರುವುದು.

ಪೂರ್ವ ಕಾಲದಿಂದಲೂ ಮಠಗಳು ಅನ್ನ, ಆಶ್ರಯಗಳಿಗೆ ಹೆಸರುವಾಸಿಯಾಗಿದ್ದರೆ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠವು ಅನ್ನ, ಅಕ್ಷರ, ಆರೋಗ್ಯ ಸೇವೆಗಳಿಗೆ ಪ್ರಸಿದ್ಧಿಯಾಗಿದೆ. ಆರೋಗ್ಯ ಸೇವೆಗಾಗಿಯೇ ಈ ಮಠದ 19 ನೆಯ ಪೀಠಾಧಿಪತಿಗಳಾದ ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ ಎಂಬ ನಾಮೆಯಿಂದ ಯೋಗ ಪಾಠಶಾಲೆ ಸ್ಥಾಪಿಸಿದರು (19-05-1975). ಯೋಗ ಶಬ್ದವೇ ಕೇಳರಿಯದ ವಾತಾವರಣವಿದ್ದಾಗ ಗದುಗಿನ ಯೋಗ ಪಾಠಶಾಲೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಉದಯವಾಗಿರುವದು ಸೋಜಿಗ ಮತ್ತು ನಮ್ಮ ಸೌಭಾಗ್ಯವಾಗಿದೆ. ಈಗ ಇದು ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆ ಎಂದು ಪ್ರಚಲಿತದಲ್ಲಿದೆ.

ಯೋಗ ಪಾಠಶಾಲೆ ಯೋಗ ಪ್ರಸಾರ ಸೇವೆಗಾಗಿ ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ವ್ಯಕ್ತಿಯ ಆರೋಗ್ಯ ಮತ್ತು ಸಮಾಜ ಸ್ವಾಸ್ಥ್ಯಯ ಸಂರಕ್ಷಣೆ ಪ್ರಮುಖವಾಗಿದ್ದು, ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ, ಆರೋಗ್ಯವಂತನಾಗಿರುವುದೇ ಆರೋಗ್ಯ. ಈ ಆರೋಗ್ಯ ಶ್ರೀಸಾಮಾನ್ಯರೆಲ್ಲರಿಗೂ ದೊರೆಯಬೇಕೆಂಬುದು ಮೂಲ ಧ್ಯೇಯವಾಗಿದೆ. ಅಂತೆಯೇ ಯೋಗ ಪಾಠಶಾಲೆಯು ಸ್ಥಾಪನೆಯಾದಂದಿನಿಂದ ಈ ತನಕ ಯೋಗದ ಮುಂಚೂಣಿಯಲ್ಲಿ ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ, ರಾಷ್ಟ್ರ ಸೇವಾ ಕಾರ್ಯಗಳಲ್ಲಿ ನಿರತವಾಗಿರುವುದು.

ಆರೋಗ್ಯ ಸೇವೆ : “ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಸಾಮಾಜಿಕ ಮತ್ತು ಅಧ್ಯಾತ್ಮಿಕ ಯೋಗ ಕ್ಷೇಮದ ಸ್ಥಿತಿಯಾಗಿದೆ ಹಾಗೂ ಕೇವಲ ರೋಗ ಅಥವಾ ದುರ್ಬಲತೆಯ ಅನುಪ ಸ್ಥಿತಿಯಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಆರೋಗ್ಯವೇ ನಮ್ಮೆಲ್ಲರಿಗೆ ಭಾಗ್ಯವಾಗಿದೆ. ನಾವೆಲ್ಲ ಆರೋಗ್ಯವಾಗಿದ್ದರೆ ಮಾತ್ರ ನಮಗೆ ಎಲ್ಲ ಭಾಗ್ಯ (ಸಂಪತ್ತು) ಗಳು ದೊರೆಯುವವು. ಆರೋಗ್ಯವಿಲ್ಲದ ಬಾಳು ಬರಿಗೋಳು. ಪ್ರಸ್ತುತದಲ್ಲಿ ಕೊರೋನಾ ಕಾಯಿಲೆಯಿಂದ, ವೈಯ್ಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಇನ್ನಿತರೆ ಸರ್ವ ಕ್ಷೇತ್ರಗಳಲ್ಲಿ ಅನಾರೋಗ್ಯ, ಅವ್ಯವಸ್ಥೆಗಳಿಂದ ಜನತೆ ನಾನಾ ಸಂಕಷ್ಟಗಳಿಗೆ ಬಲಿಯಾಗಿದ್ದಾರೆ. ವ್ಯಕ್ತಿ ಆರೋಗ್ಯವಂತನಾಗಿದ್ದರೆ ಇವೆಲ್ಲ ಸಂಕಷ್ಟಗಳು ಇಲ್ಲದಾಗುವವು. ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪರಿಣಾಮಕಾರಿ ಸಾಧನೆ ಮಾರ್ಗವಾಗಿದೆ. ಆದ್ದರಿಂದಲೇ ಯೋಗ ಪಾಠಶಾಲೆಯು ಪ್ರತಿದಿನ ಬೆಳಿಗ್ಗೆ ಜಾತಿ, ಮತ, ಪಂಥ, ಸ್ತ್ರೀ-ಪುರುಷ ವಯೋಮಿತಿಗಳ ಭೇದವಿಲ್ಲದೆ ಆಸಕ್ತರಿಗೆ ಯೋಗ ಸಾಧನೆ, ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಹಾಗೆಯೇ ಸಾಯಂಕಾಲ ಮಹಿಳಾ ಶಿಕ್ಷಕಿಯರಿಂದ ಮಹಿಳೆಯರಿಗಾಗಿ ಯೋಗ ತರಬೇತಿ ವರ್ಗಗಳನ್ನು ನಡೆಸುತ್ತಿದೆ. ಇದಲ್ಲದೆ ದಸರಾ ಬೇಸಿಗೆ ರಜಾ ದಿನಗಳಲ್ಲಿ ಶಾಲಾ ಮಕ್ಕಳಿಗೆ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಬೇಡಿಕೆ ಇದ್ದಲ್ಲಿ ಸಾರ್ವಜನಿಕವಾಗಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸಿ ಜನತೆಯಲ್ಲಿ ಆರೋಗ್ಯ ಯೋಗದ ಅರಿವು ಮೂಡಿಸುತ್ತಿದೆ. ಜನತೆಯ ಆರೋಗ್ಯ ಭಾಗ್ಯವೇ ದೇಶದ ನಿಜವಾದ ಸಂಪತ್ತಾಗಿದೆ.

ಶಿಕ್ಷಣ ಸೇವೆ : ಶಕ್ತಿಗಳಲ್ಲಿ ಯಾಂತ್ರಿಕ ಶಕ್ತಿ, ವಿದ್ಯುತ್ ಶಕ್ತಿ, ಸಂಘಟನಾ ಶಕ್ತಿ, ದೈವ ಶಕ್ತಿ ಮುಂತಾದ ಶಕ್ತಿಗಳಿಗಿಂತ ಯೋಗ ಶಿಕ್ಷಣ ಶಕ್ತಿ ಹೆಚ್ಚಿನದಾಗಿದೆ. ಕಾರಣ ಯೋಗ ಶಿಕ್ಷಣ ಶಕ್ತಿಯಿಂದ ನಾವು ಇನ್ನುಳಿದ ಸರ್ವ ಶಕ್ತಿಗಳನ್ನು ಪಡೆಯಬಹುದು. ಇಂದು ದೇಶಕ್ಕೆ ಬೇಕಾಗಿರುವುದು ಯುವಶಕ್ತಿ. ಈ ಯುವಶಕ್ತಿ ಬಲಗೊಳಿಸಲು ಮತ್ತು ಯುವಕರಲ್ಲಿ ಯೋಗಾಸಕ್ತಿ ಬೆಳೆಸಲು ಯೋಗ ಪಾಠಶಾಲೆಯು ತನ್ನ ಅಂಗ ಸಂಸ್ಥೆಯಾದ ಬಸವ ಯೋಗ ಕೇಂದ್ರದಿಂದ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆಯಲ್ಲಿ ಒಂದು ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಜ್ ಮತ್ತು ಪಿ.ಜಿ. ಡಿಪ್ಲೋಮಾ ಇನ್ ಯೋಗ ಸ್ಟಡೀಜ್ ಕೋರ್ಸ್‍ಗಳನ್ನು ನಡೆಸುತ್ತಿದೆ. ಪ್ರತಿವರ್ಷ 50-60 ವಿದ್ಯಾರ್ಥಿಗಳು ಯೋಗ ಪದವಿ ಪಡದು ಯೋಗ ಶಿಕ್ಷಣ ಪ್ರಸಾರಕ್ಕೆ ಸಿದ್ಧರಾಗುತ್ತಿದ್ದಾರೆ. ಯೋಗ ವಿಷಯವಾಗಿ ಉಪನ್ಯಾಸ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಯೋಗ ಶಿಕ್ಷಣ ಸೇವೆ ಸಲ್ಲಿಸುತ್ತಿದೆ.

ಸಾಂಸ್ಕೃತಿಕ ಸೇವೆ : ಇಂದು ನಮ್ಮ ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಭಾರತೀಯರಾದ ನಾವು ನಮ್ಮ ಸಂಸ್ಕೃತಿ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿ ಗೆ ಮರುಳಾಗುತ್ತಿದ್ದೇವೆ. ಇದು ಹೀಗೆಯೇ ಮುಂದುವರಿಯಬಾರದೆಂಬ ಅಭಿಲಾಷೆಯಿಂದ ಯೋಗ ಪಾಠಶಾಲೆಯು ಸಾಂದರ್ಭಿಕವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನತೆಯ ಮನ ಪರಿವರ್ತನಗೊಳಿಸುತ್ತಲಿದೆ. ಉದಾಹರಣೆಯಾಗಿ ಹೇಳುವುದಾದರೆ-

ದಸರಾ, ಬೇಸಿಗೆ ರಜಾ ದಿನಗಳಲ್ಲಿ ಪ್ರತಿವರ್ಷ ಶಾಲಾ ಮಕ್ಕಳಿಗಾಗಿ “ ಸಂಸ್ಕೃತಿ -ಸಂಸ್ಕಾರ” ಶಿಬಿರ ನಡೆಸುತ್ತಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಭಾರತೀಯ ಕ್ರೀಡೆ, ಕಲೆ, ಸಾಹಿತ್ಯ, ಆದರ್ಶ ಮಹಾತ್ಮರ ಪರಿಚಯ, ಪರಂಪರೆ, ಸಂಸ್ಕಾರಗಳ ತರಬೇತಿ ನೀಡಲಾಗುತ್ತಿದೆ. ಇವುಗಳ ಜೊತೆಯಲ್ಲಿ ನೀಡುವ ಯೋಗ ತರಬೇತಿಯು ಮಕ್ಕಳಲ್ಲಿ ಆತ್ಮಸ್ಥೈರ್ಯ, ನೈತಿಕ ಬಲಗಳನ್ನು ಹೆಚ್ಚಿಸಿ ಅವರು ಸುಸಂಸ್ಕೃತರಾಗಿ ಬೆಳೆಯಲು ಸಹಾಯಕವಾಗುತ್ತದೆ. ಹೀಗೆ ಯೋಗ ಪಾಠಶಾಲೆಯು ಸಾಂಸ್ಕೃತಿಕವಾಗಿ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೋಳಿಸುತ್ತಿದೆ.

ಧ್ಯಾತ್ಮ ಸೇವೆ : ಇಂದು ನಾವು ವೈಜ್ಞಾನಿಕವಾಗಿ ಮುಂದುವರೆದು ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದರೂ ಅಧ್ಯಾತ್ಮ ಕೊರತೆಯಿಂದ ಹೆಚ್ಚಿನ ಪ್ರಯೋಜನ ಇಲ್ಲವಾಗಿದೆ. ಆಧ್ಯಾತ್ಮ ಎಂದರೆ ನಂಬಿಗೆ, ಒಳ್ಳೆಯದು ಎಂದು ಅರ್ಥೈಸಬಹುದು. ವ್ಯಕ್ತಿಯಲ್ಲಿ ವಿಶ್ವಾಸ ಮತ್ತು ಒಳ್ಳೆಯದನ್ನು ಗುರುತಿಸುವ ಮನೋಭಾವ ಹೆಚ್ಚಿಸಲು ಯೋಗ ಪಾಠಶಾಲೆಯು ತನ್ನ ಸಮೂಹ ಸಂಸ್ಥೆಗಳ ಜೊತೆಯಲ್ಲಿ ಪ್ರತಿ ತಿಂಗಳಿನ ಕೊನೆಯ ಬುಧವಾರದಂದು “ಮಾಸಿಕ ವಚನ ಶ್ರವಣ” ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಶಿವಶರಣರ ವಚನ ಮತ್ತು ಮಹಾತ್ಮರು, ಸಾಧು ಸತ್ಪುರುಷರು ತಿಳಿಸಿದ ಮಾತುಗಳ ಕುರಿತು ಅನುಭವಿಕರು ಉಪನ್ಯಾಸ ನೀಡುತ್ತಾರೆ. ಈಗಾಗಲೇ 47 ಮಾಸಿಕ ವಚನ ಶ್ರವಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೇಯೆ ಧರ್ಮ ಭಾವ ಬೆಳೆಸಲು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ವಾರ ಕಾಲ “ಸಾಪ್ತಾಹಿಕ ವಚನ ಶ್ರಾವಣ” (ವಚನ ಸಪ್ತಾಹ) ಕಾರ್ಯಕ್ರಮ ನಡೆಸಿ ಆ ಕಾರ್ಯಕ್ರಮದಲ್ಲಿ ಒಂದು ವಾರ ಕಾಲ ದಿನಕ್ಕೊಂದು ವಚನ ವಿಶ್ಲೇಷಣೆಯನ್ನು ಬಲ್ಲಿದವರಿಂದ ತಿಳಿಸಲಾಗುತ್ತದೆ ಇಂತಹ ಕಾರ್ಯಕ್ರಮಗಳಿಂದ ವ್ಯಕ್ತಿಯಲ್ಲಿ `ಸ್ವಧರ್ಮ ರಕ್ಷಣೆ ಪರಧರ್ಮ ಸಂಹಿಷ್ಣುತೆ’ ಭಾವ ಮೂಡಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು.

ರಾಷ್ಟ್ರ ಸೇವೆ : ರಾಷ್ಟ್ರ ಸೇವೆ ಎಂದರೆ ರಾಷ್ಟ್ರೋನ್ನತಿಗಾಗಿ ಸಮಾಜ ಅಭಿವೃದ್ಧಿಗಾಗಿ ಸರಕಾರ ಕೈಕೊಂಡ ಯೋಜನೆ ಯೋಚನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು. ಇಲ್ಲವೆ ಸ್ವತಃ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವದು ರಾಷ್ಟ್ರ ಸೇವೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪಾಠಶಾಲೆಯು ರಾಷ್ಟ್ರ ಪ್ರಗತಿಗಾಗಿ ಪೂರಕವಾಗುವ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಅವುಗಳನ್ನು ರಾಷ್ಟ್ರೀಯ ಹಬ್ಬ, ನಾಡ ಹಬ್ಬ, ದಿನಾಚರಣೆ, ಜಯಂತ್ಯೋತ್ಸವ,  ಸ್ಮರಣೋತ್ಸವ, ಮುಂತಾದ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಾರ್ಯಗತಗೊಳಿಸುವದು ಉದಾಹರಣೆಗಾಗಿ ಹೊಸ ವರ್ಷಾಚರಣೆಯನ್ನು ಹರ್ಷೋತ್ಸವ ಎಂದು, ಮಕರ ಸಂಕ್ರಾಂತಿಯನ್ನು ಸಂಕ್ರಾಂತಿ ಸಂಭ್ರಮ ಎಂದು ವಿಶ್ವ ಪರಿಸರ ದಿನದಂದು ವನಮಹೋತ್ಸವ ಆಚರಿಸುವುದು. ಅಂತರಾಷ್ಟ್ರೀಯ ಯೋಗ ದಿನ ನಿಮಿತ್ತ ಯೋಗ ಸಪ್ತಾಹ ಕಾರ್ಯಕ್ರಮ ಆಚರಿಸುವುದು ಶಿಕ್ಷಕರ ದಿನಾಚರಣೆ ದಿನ ಯೋಗ ಕೋರ್ಸ್, ವರ್ಗಗಳ ಪ್ರಾರಂಭೋತ್ಸವ, ಪ್ರಕೃತಿ ಚಿಕಿತ್ಸಾ ದಿನಾಚರಣೆ ಮುಂತಾದವುಗಳು.

ವಿಶೇಷವಾಗಿ ರಾಷ್ಟ್ರ ಸೇವೆ ಸಲ್ಲಿಸುವುದಕ್ಕೋಸ್ಕರ ಪ್ರತಿ ತಿಂಗಳಿನ ಪ್ರತಿ ರವಿವಾರ ದಿನ ಯೋಗ ತರಬೇತಿ ನಂತರ “ಅನ್ವೇಷಣೆ” ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಚಲಿತ ವಿಷಯ, ಸಮಸ್ಯೆ-ಸಮಾಧಾನಗಳ ಕುರಿತು ಚರ್ಚೆ ಮಾಡಲಾಗುವುದು. ಅಂದರೆ 12 ನೇ ಶತಮಾನದ ಅನುಭವ ಮಂಟಪ ಮಾದರಿಯಲ್ಲಿ `ಅನ್ವೇಷಣ’ ಕಾರ್ಯಕ್ರಮ ನಡೆಸುವುದು. ಈಗಾಗಲೆ 381 “ಅನ್ವೇಷಣೆ” ಕಾರ್ಯಕ್ರಮಗಳು ನಡೆದಿವೆ.

ಇಷ್ಟೆಲ್ಲ ಸೇವೆಗಳ ಸಫಲತೆಗೆ ಯೋಗ ಪಾಠಶಾಲೆಯ ಸಮೂಹ ಸಂಸ್ಥೆಗಳಾದ ಬಸವ ಯೋಗ ಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಬಸವ ಯೋಗ ಚಿಂತನ ಕೂಟ, ಕುಮಾರೇಶ್ವರ ಯೋಗ ಜಿಮ್, ಹಳೆಯ ವಿದ್ಯಾರ್ಥಿಗಳ ಸಂಘ ಇವುಗಳ ಸಹಕಾರ ಮತ್ತು ಪ್ರಸ್ತುತ ಶ್ರೀಮಠದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳವರ ಕೃಪಾಶೀರ್ವಾದ, ಸಾರ್ವಜನಿಕರ ಪ್ರೋತ್ಸಾಹಗಳು ಯೋಗ ಪಾಠಶಾಲೆಗೆ ಮೂಲ ಬಂಡವಾಳಗಳಾಗಿವೆ. ಇನ್ನೂ ತನಕ ಸರಕಾರದಿಂದ ಯಾವದೇ ರೀತಿಯ ಅನುದಾನ ಮೊತ್ತವನ್ನು ಪಡೆಯದಿರುವುದು ವಿಶೇಷವಾಗಿದೆ.

ಯೋಗ ಪಾಠಶಾಲೆಯು ಮುಂಬರುವ 2025 ಕ್ಕೆ ತನ್ನ ಸುವರ್ಣೋತ್ಸವ (1975-2025) ಆಚರಣೆಯ ಸವಿನೆನಪಿಗಾಗಿ ಸುಸಜ್ಜಿತ ಯೋಗ ಮಂದಿರ, ಯೋಗ ಗ್ರಂಥಾಲಯ, ಯೋಗ ವಸ್ತು ಸಂಗ್ರಹಾಲಯ, ಯೋಗ ಉದ್ಯಾನವನ, ಯೋಗ ಚಿಕಿತ್ಸಾಲಯ ಯೋಗ ಸಂಶೋಧನಾಲಯಗಳನ್ನು ನಿರ್ಮಿಸುವ ಯೋಜನೆಗಳ ಸಿದ್ಧತೆ ನಡೆಸಿದೆ. ಇದಕ್ಕಾಗಿ ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆಯ ಅಭಿವೃದ್ಧಿ ಸೇವಾ ಸಮಿತಿ ಸ್ಥಾಪಿಸಲಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯು ಯೋಗ ಪ್ರಸಾರ ಸೇವೆಯನ್ನು ಯೋಗ ಶಿಬಿರ, ಸ್ಪರ್ಧೆ, ತರಬೇತಿವರ್ಗ, ಉಪನ್ಯಾಸ, ಕಾರ್ಯಾಗಾರ, ವಿಚಾರ ಸಂಕಿರಣ, ಸಮ್ಮೇಳನ, ಉತ್ಸವಗಳ ಮೂಲಕ ಕಳೆದ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಉಚಿತವಾಗಿ ನಿತ್ಯ ನಿರಂತರವಾಗಿ ಎಲೆಮರೆಯ ಕಾಯಿಯಂತೆ ಯೋಗ ಪ್ರಸಾರ ಸೇವೆಯಲ್ಲಿ ನಿರತವಾಗಿರುವದು ಶ್ಲಾಘನೀಯ ವಿಷಯವಾಗಿದೆ.

ಯೋಗ ಪ್ರಸಾರ ಸೇವೆಗೆ ಸರಕಾರ ಮತ್ತು ಸಾರ್ವಜನಿಕರ ಪ್ರೋತ್ಸಾಹ ದೊರೆತರೆ ಸದೃಢ, ಸಮೃದ್ಧ ಭಾರತ ನಿರ್ಮಾಣವಾಗುವಲ್ಲಿ ಸಂದೇಹವಿಲ್ಲ. ಈ ಕಾರ್ಯ ಯಶಸ್ಸಿಗೆ ನಾವೆಲ್ಲರೂ ಕೈಜೋಡಿಸೋಣ. ಯೋಗ ಕಲಿಯೋಣ-ಕಲಿಸೋಣ. `ಯೋಗದಿಂದ ಆರೋಗ್ಯ-ಆರೋಗ್ಯದಿಂದ ಅಭಿವೃದ್ಧಿ’ ವಾಣಿ ಸಾರ್ಥಕಗೊಳಿಸೋಣ.

ಶ್ರೀಕಂಠ.ಚೌಕೀಮಠ.ವ್ಯವಸ್ಥಾಪಕ -ಸಂಪಾದಕ.

ಸಹೃದಯರಿಗೆ ನನ್ನ ನಮಸ್ಕಾರಗಳು.

ಬಸವ ಜಯಂತಿಯ ಪವಿತ್ರ ದಿನದಂದು (೧೪ -೦೫-೨೦೨೧) “ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ , ಅಂತರ್ಜಾಲದ ಮೂಲಕ ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.

“ ಸುಕುಮಾರ” ಶ್ರೀ ಶಿವಯೋಗಮಂದಿರ ಬ್ಲಾಗ್‌ ನ್ನು ಅಂತರ್ಜಾಲದ ಮೂಲಕಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಶ್ರೀ ಸನ್ನಿಧಿ ಯವರ ಅಮೃತ ಹಸ್ತದಿಂದ ,ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ ಯಲ್ಲಿ ಲೋಕಾರ್ಪಣೆಗೊಂಡಿತು.
ಅಪೂರ್ವ ಸಂದರ್ಭದಲ್ಲಿ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ , ಪೂಜ್ಯ ಕೊಟ್ಟೂರು ದೇಶಿಕರು ದರೂರ, ಪೂಜ್ಯ ನಾಗಭೂಷಣ ದೇವರು ಅಡವಿಅಮರೇಶ್ವರ ಪೂಜ್ಯರು ಉಪಸ್ಥಿತರಿದ್ದರು .

 

ಸುಕುಮಾರ ಬ್ಲಾಗ್‌ ನ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿ ,ಸಲಹೆ ,ಪ್ರತಿಕ್ರಿಯೆ ,ಪ್ರಶಂಸೆ ಮತ್ತು ಪ್ರೋತ್ಸಾಹದಾಯಕ ಸಂದೇಶಗಳ ಮಹಾಪೂರದಲ್ಲಿ ಮಿಂದೆದ್ದು,ತಪ್ಪುಗಳನ್ನುತಿದ್ದಿಕೊಳ್ಳುತ್ತ ,ಹೊಸ ರೂಪದ ಸುಕುಮಾರ ಬ್ಲಾಗ್‌ ನ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇನೆ.

ಪ್ರಸ್ತುತ ೨೦೨೧ನೇ ವರ್ಷ, ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳ ಪುಣ್ಯತಿಥಿ ಶತಮಾನೋತ್ಸವ .ತಮ್ಮ ಭೌತಿಕ ಶರೀರದ ಅಂತಿಮ ದಿನವನ್ನು “ಶಿವರಾತ್ರಿ” ಎಂದು ಸ್ವತಃ ಶಿವಯೋಗಿಗಳೇ ಮುನ್ಸೂಚನೆ ನೀಡಿದ ಪವಿತ್ರ ದಿನ ಕ್ಕೆ ನೂರು ವಸಂತಗಳ ಸಂಸ್ಮರಣೆ ಯಾಗಿರುತ್ತದೆ.

ಪೂಜ್ಯರ ಸ್ಮರಣೆ  ಮತ್ತು ಸುಕುಮಾರ ಬ್ಲಾಗ್‌ ನ ವಿಶೇಷ ಸಂಚಿಕೆಯ ಅರ್ಪಣೆ  ಪೂಜ್ಯದ್ವಯರ ಅವಿನಾಭಾವ ಸಂಬಂಧದ ಫಲಶೃತಿಗಳು.

ಪರಮ ಪೂಜ್ಯ ಲಿಂ.ಅಥಣಿ ಮುರುಘೇಂದ್ರ ಶಿವಯೋಗಿಗಳು ,ಪೂಜ್ಯ ಹಾನಗಲ್ಲ ಕುಮಾರಶಿವಯೋಗಿಗಳಿಗೆ  ಆದರ್ಶಪ್ರಾಯವಾದವರು . ಅಥಣಿ ಶಿವಯೋಗಿಗಳ ಮೇಲಿನ ಶ್ರೀ ಕುಮಾರ ಶಿವಯೋಗಿಗಳ ಗೌರವಕ್ಕೆ ಒಂದು ಘಟನೆಯನ್ನು  ಸ್ಮರಿಸಿಕೊಳ್ಳುತ್ತೇನೆ. ಕವಿರತ್ನ ದ್ಯಾಂಪುರ ಚೆನ್ನ ಕವಿಗಳು ಒಂದೊಮ್ಮೆ ಶ್ರೀ ಕುಮಾರ ಶಿವಯೋಗಿಗಳನ್ನು ಹೊಗಳಿ ಬರೆದ ಪದ್ಯವನ್ನು ಶ್ರೀ ಕುಮಾರ ಶಿವಯೋಗಿಗಳ ಮುಂದೆ ವಾಚನ ಮಾಡಿದರು.ಹೊಗಳಿಕೆಯ ಹಾಡನ್ನು ಕೇಳಿ ಪ್ರಚಾರ ಪ್ರಿಯರಲ್ಲದ ಶ್ರೀ ಕುಮಾರ ಶಿವಯೋಗಿಗಳು ಕೋಪಿಸಿಕೊಂಡು “ಚೆನ್ನಯ್ಯ !! ಇದೇ ಎನು ನಿನ್ನ ಕವಿತ್ವದ ಸದುಪಯೋಗ ? ಸಾಮಾನ್ಯ ವ್ಯಕ್ತಿಯನ್ನು ಹೊಗುಳುವುದೆ? ಕೀರ್ತಿಸಲು ನಿನಗೆ ಶಿವಶರಣರಿಲ್ಲವೆ ? ಅಥಣಿ ಶಿವಯೋಗಿಗಳಂತಃ ಮಹಾತ್ಮರಿಲ್ಲವೆ ?  ಎಂದು ನುಡಿದ ಸನ್ನಿವೇಶ .ಕವಿಗಳು “ಎನ್ನೊಡೆಯ ತಪ್ಪಾಯ್ತು ಮನ್ನಿಸಬೇಕೆಂದು ಎಂದು ಕ್ಷಮೆಯಾಚಿಸಿದ ಪ್ರಸಂಗ ವನ್ನು ಸ್ವತಃ ದ್ಯಾಂಪುರ ಚೆನ್ನ ಕವಿಗಳು ೫-೩-೧೯೪೬ರಂದು ಶಿವಯೋಗಮಂದಿರದ ಜಾತ್ರೆಯ ಸಮಾರಂಭದಲ್ಲಿ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ  ಪ್ರಾಣ ಬಿಡುವ ಕೊನೆಯ ಕ್ಷಣದಲ್ಲಿ ಹೇಳಿದ ಮಾತುಗಳು.

ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದ ವಾತಾವರಣದಲ್ಲಿ ಬೆಳೆಯುವ ಪ್ರತಿಯೊಬ್ಬ ಸಾಧಕರಲ್ಲಿ ಅಥಣಿ ಶಿವಯೋಗಿಗಳ ವೈರಾಗ್ಯ ಮತ್ತು ಶಿವಯೋಗ ಸಾಧನೆ ಯನ್ನು ಕಾಣಲು ಅಪೇಕ್ಷೆಪಟ್ಟವರು ಮತ್ತು ಆ ಅಪೇಕ್ಷೆಯನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದೂ ಉಂಟು.

ಪೂಜ್ಯ ಅಥಣಿ ಶಿವಯೋಗಿಗಳು ಲಿಂಗೈಕ್ಯರಾದ (೧೯೨೧)ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಹಾಡಿದ ಮಂಗಳಾರತಿ ಹಾಡು  “ಕಂಗಳಾಲಯ ಸಂಗಗೆ “ ಹೃದಯದ ಹಾಡಾಗಿ ಪ್ರಸಿದ್ಧಿಯಾಗಿದೆ .

೧೯೨೮  ರಲ್ಲಿ ಧಾರವಾಡ ಮುರುಘಾಮಠ ದ ಲಿಂಗೈಕ್ಯ ಮೃತ್ಯುಂಜಯ ಅಪ್ಪಗಳು ಅಥಣಿಯ ಶಿವಯೋಗಿಗಳ ಪ್ರಾಣ ಕಳೆಯನ್ನು ಶಿಲಾಮೂರ್ತಿಯ ರೂಪದಲ್ಲಿ ಶ್ರೀಮುರುಘಾಮಠದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಮಯ-ಸಮನ್ವಯದ ಸಂಕೇತವಾಗಿ ಶಿವಯೋಗಮಂದಿರದಿಂದ  ಶ್ರೀ ಕುಮಾರ ಶಿವಯೋಗಿಗಳನ್ನು ಆಮಂತ್ರಿಸಿ ಶ್ರೀ ಕುಮಾರ ಶಿವಯೋಗಿಗಳ ಹಸ್ತದಿಂದ ಪೂಜ್ಯ ಅಥಣಿ ಶಿವಯೋಗಿಗಳ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿದ್ದು ಒಂದು ಐತಿಹಾಸಿಕ ಘಟನೆ.

 

( ಧಾರವಾಡ ಮುರುಘಾಮಠದಲ್ಲಿರುವ  ಪೂಜ್ಯ  ಅಥಣಿಯ ಶಿವಯೋಗಿಗಳ ಶಿಲಾಮೂರ್ತಿ )

ಇಂದಿಗೂ ಧಾರವಾಡದ ಶ್ರೀ ಮುರುಘಾಮಠ ದಲ್ಲಿ ಪೂಜ್ಯ ಅಥಣಿ ಶಿವಯೋಗಿಗಳು ಜಪ ಮಾಡಲು ಬಳಸಿದ ರುದ್ರಾಕ್ಷಿ ಸರದ ಜೊತೆಗೆ ,ಚಿತ್ರದುರ್ಗದ ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರಿಸಿದ ವಿಭೂತಿ ಮತ್ತು ಶ್ರೀ ಕುಮಾರ ಶಿವಯೋಗಿಗಳು ಧರಿಸಿದ ವಿಭೂತಿಯನ್ನು ಸಂಗ್ರಹಿಸಿ ಜತನದಿಂದ ಕಾಪಾಡಿಕೊಂಡು ಬಂದಿರುವದು ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳೆಂದೇ ಎಂದು ಭಾವಿಸುತ್ತೇನೆ

 

.

(ವಿಭೂತಿಪುರುಷರ ಅವಿನಾಭಾವ ಸಂಬಂಧದ ಸಂಕೇತದ ಕುರುಹುಗಳು)

ಪೂಜ್ಯ ಅಥಣಿ ಶಿವಯೋಗಿಗಳ ಸ್ಮರಣೋತ್ಸವ ವಿಶೇಷ ಸಂಚಿಕೆಗೆ ತಮ್ಮ ಅಮೂಲ್ಯ ಲೇಖನಗಳನ್ನು ಕೊಟ್ಟ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ (ಸಂಗ್ರಹ ಸಹಾಯ: ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ ಲೇಖನ).

ಪೂಜ್ಯ ಪ್ರಭು ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ

ಶ್ರೀ  ಡಾ.ಪಂಚಾಕ್ಷರಿ ಹಿರೇಮಠ  (ಗ್ರಂಥ ಋಣ : ಕೈವಲ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ  ಸ್ಮರಣ ಸಂಪುಟ)

ಶ್ರೀ ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

ಶ್ರೀ ಡಾ . ಬಿ . ಆರ್ . ಹಿರೇಮಠ (ಸುಕುಮಾರ : ಅಗಸ್ಟ ೨೦೦೨)

ಶ್ರೀ  ಡಾ . ಸಿದ್ದಣ್ಣ .ಬ . ಉತ್ನಾಳ (ಗ್ರಂಥ ಋಣ :ಚಿನ್ಮಯ ಚೇತನ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗಿಗಳು)

ಶ್ರೀ ಪ್ರಕಾಶ ಗಿರಿಮಲ್ಲನವರ,

ಭಕ್ತಿಗೀತೆಯನ್ನು ಸಮರ್ಪಿಸಿದ ಚಿತ್ರದುರ್ಗದ ಕುಮಾರಿ ಚಿನ್ಮಯಿ ರೇವಣಸಿದ್ದಪ್ಪ ಹೆಗಡಾಳ ಹಾಗು ಮಂಗಳಾರತಿ ಯನ್ನು ಸಮರ್ಪಿಸಿದ ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ ತುಮುಕೂರ ಅವರಿಗೆ,

ಪೂಜ್ಯರಿಗೆ ಮತ್ತು ಮಹನಿಯರಿಗೆ ತುಂಬು ಹೃದಯದ ಕೃತಜ್ಞತೆಗಳು.

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

 

 

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

 

   

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಜೂನ ೨೦೨೧ ರ ಸಂಚಿಕೆ

೨. ಸದ್ಗುರುವಿನ ಸ್ವರೂಪ

ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ

ಹರವೆ ನಿಜ ಭಕ್ತಿ – ಜ್ಞಾನ ವೈರಾಗ್ಯ ಮಂ

ದಿರವೆ ಮದ್ಗುರವೆ ಕೃಪೆಯಾಗು || ||

ಶಿವಕವಿಯು ಇಲ್ಲಿಂದ ನಾಲ್ಕು ನುಡಿಗಳಲ್ಲಿ ಅಷ್ಟಾವರಣದಲ್ಲಿ ಮೊದಲನೆಯ ದೇವರೆನಿಸಿದ ಸದ್ಗುರು ಸ್ವರೂಪವನ್ನು ಬಣ್ಣಿಸಿದ್ದಾನೆ . ಶಿಷ್ಯನ ಹೃತ್ತಾಪವನ್ನು ಹರಣಮಾಡಿ ಬೇಡಿದ ಬಯಕೆಗಳನ್ನು ಪೂರ್ಣಗೊಳಿಸಬಲ್ಲವನೇ ಸದ್ಗುರು . ಈ ಲೋಕದಲ್ಲಿ ಅನಂತ ಗುರುಗಳಿದ್ದಾರೆ . ಅವರೆಲ್ಲರೂ ಸದ್ಗುರುಗಳಲ್ಲ . ಎಲ್ಲರೂ ಶಿಷ್ಯನ ಹೃತ್ತಾಪವನ್ನು ಕಳೆಯಲು ಸಮರ್ಥರಲ್ಲ .

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |

ಗುರವೋ ವಿರಲಾಃ ಸಂತಿ ಶಿಷ್ಯ ಹೃತಾಪಹಾರಕಾಃ ||

ಶಿಷ್ಯರ ಧನವನ್ನು ಸೂರೆಮಾಡುವ ಗುರುಗಳೇ ಬಹಳ . ಭಕ್ತರ ತಾಪತ್ರಯ ಗಳನ್ನು ದೂರಮಾಡಿ ಸದ್ಗತಿಯನ್ನು ದಯಪಾಲಿಸಬಲ್ಲ ಸದ್ಗುರುಗಳು ವಿರಳವಾಗಿದ್ದಾರೆ . ಅಂತೆಯೇ ಶರಣಕವಿಯು ಪ್ರಥಮತಃ ಸದ್ಗುರುವಿನ ಸ್ವರೂಪವನ್ನು ಕಂಡುಕೊಂಡಿದ್ದಾನೆ . ಸಾಧಕರಿಗೆ ಮಾರ್ಗದರ್ಶನವನ್ನು ಮಾಡಿದ್ದಾನೆ . ಸದ್ಗುರುವಾದವನು ಸಾಮಾನ್ಯನಲ್ಲ , ಸದ್ಗುರುವಿನಲ್ಲಿ ಶಿಷ್ಯರನ್ನು ಉದ್ಧರಿಸುವ ಮಹಾಕಾಂಕ್ಷೆ ಮನೆ ಮಾಡಿಕೊಂಡಿರುತ್ತದೆ . ಭಕ್ತರನ್ನು ಲೌಕಿಕ ಹಾಗೂ ಪಾರಮಾರ್ಥಿಕ ಸಿರಿಸಮನ್ವಿತರನ್ನಾಗಿ ಮಾಡಬಲ್ಲನು . ತನಗಾಗಿ ಯಾವುದನ್ನೂ ಬಯಸದ ಮಹಾತ್ಯಾಗಿ ಯಾಗಿರುತ್ತಾನೆ . ಅದಕ್ಕಾಗಿ ಗುರುವರನು ಭಕ್ತ ಸಮುದಾಯಕ್ಕೆ ಕಲ್ಪತರುವಾಗಿದ್ದಾನೆ . ಸಾಮಾನ್ಯ ತರು ಕಟ್ಟಿಗೆಯ ಕೊರತೆಯನ್ನು ಮಾತ್ರ ನೀಗಿಸಬಲ್ಲುದು ಕಲ್ಪತರು ಬೇಡಿದ ಬಯಕೆಯನ್ನೆಲ್ಲ ನಿವಾರಿಸುತ್ತದೆ . ಸದ್ಗುರುವು ಭಕ್ತನಿಗೆ ಸತ್ಕಾಯಕವನ್ನು ನಿರೂಪಿಸಿ ಸಕಲೈಶ್ವರ್ಯವನ್ನು ದಯಪಾಲಿಸುತ್ತಾನೆ . ಸುಜ್ಞಾನವನ್ನು ಉಪದೇಶಿತ ಲಿಂಗಾಂಗಸಮರಸಾನಂದದ ಸವಿಯನ್ನು ಕರುಣಿಸುತ್ತಾನೆ . ಇಂಥ ಸದ್ಗುರುದೇವನೇ ಸದ್ಭಕ್ತರ ಮನವನ್ನು ಆಕರ್ಷಿಸುವಲ್ಲಿ ಸಮರ್ಥನಾಗುತ್ತಾನೆ . ಸದ್ಗುರುವು ಬಾಹ್ಯ ಮತ್ತು ಆಂತರಿಕವಾಗಿಯೂ ಮನೋಹರನಾಗಿರುತ್ತಾನೆ . ಸೌಂದರ್ಯಕ್ಕೆ ತಕ್ಕ ಶಿವತ್ವವೂ ತುಂಬಿ ತುಳುಕುತ್ತದೆ . ಮಂಗಲ ಮಯವಾದ ಸುಂದರತೆಯಲ್ಲಿ ಅವಶ್ಯವಾಗಿ ಸತ್ಯವಿರುತ್ತದೆ . “ ಸತ್ಯಂ ಶಿವಂ ಸುಂದರಂ ‘ ತತ್ತ್ವ ಓತಪ್ರೋತವಾಗಿರುತ್ತದೆ . ಅದುಕಾರಣ ಸದ್ಗುರುನಾಥನು ನೈಜವಾದ ಭಕ್ತಿ – ಜ್ಞಾನ – ವೈರಾಗ್ಯಗಳಿಗೆ ಆಶ್ರಯ ಸ್ವರೂಪನಾಗಿರುತ್ತಾನೆ . ಸದ್ಗುರುವಿನ ಭಕ್ತಿ – ಜ್ಞಾನ – ವೈರಾಗ್ಯಗಳಲ್ಲಿ ಅಸಹಜತೆಯಿರುವದಿಲ್ಲ . ಮೂರೂ ಸತ್ಯ ಸ್ವರೂಪವಾಗಿರುತ್ತವೆ . ಯಥಾರ್ಥವಾಗಿ ಸದ್ಗುಣಭರಿತನಾದವನೇ ಇನ್ನಿತರರಿಗೆ ಸದ್ಗುಣಗಳನ್ನು ಕಲಿಸಬಲ್ಲನು . ಡಾಂಭಿಕ ಮನೋಭಾವದವನಿಂದ ನೈಜ ಭಕ್ತಿ – ಜ್ಞಾನವೈರಾಗ್ಯಗಳು ಹರಿದು ಬರಲಾರವು . ಭಕ್ತರ ಮನೋಭೂಮಿಕೆಯಲ್ಲಿ ಬೆಳೆದು ಫಲ ನೀಡಲಾರವು . ಸದ್ಗುರುವು ನಿರ್ವಂಚನೆಯಿಲ್ಲದೆ ಭಕ್ತಿಯಿಂದ ಬಂದ ಭಕ್ತರಿಗೆ ಕಲ್ಪತರುವಿನಂತೆ ಭಕ್ತಿ – ಜ್ಞಾನ ವೈರಾಗ್ಯಗಳನ್ನು ನೀಡುತ್ತಿದ್ದರೆ ಆತ್ಮೀಯತೆ ಬೆಳೆದು ಬರುತ್ತದೆ . ಬಸವಲಿಂಗ ಶರಣರಿಗೆ ಇಂಥ ಸದ್ಗುರುಗಳು ದೊರೆತಿದ್ದರೆಂಬುದು ಸ್ಪಷ್ಟವಾಗುತ್ತದೆ . ಅವರು ಆತ್ಮೀಯವಾಗಿ ಮದ್ಗುರುವೆ ! ಕೃಪೆಯಾಗಬೇಕೆಂದು ಪ್ರಾರ್ಥಿಸಿದ್ದಾರೆ . ಶಿಷ್ಯನು ಗುರುವನ್ನು ತನ್ನವನನ್ನಾಗಿ ಮಾಡಿಕೊಂಡರೆ ಗುರುವು ತನ್ನವರ್ಗೆ ತಾನು ಅವಶ್ಯವಾಗಿ ಸುಖವನ್ನು ಕರುಣಿಸುತ್ತಾನೆ .

**********

  ದೇಶಿಕನೆ ಅನುಭಾವೋ | ಲ್ಲಾಸಕನೆ ಸಂಕಲ್ಪ

 ನಾಶಕನೆ ಣವಾದಿ  ತ್ರೈಮಲದೊಳ್ನಿ

 ರಾಶಕನೆ ಎನಗೆ ಕೃಪೆಯಾಗು || ||

“ಆಣವಾದಿ  ತ್ರೈಮಲಮಂ ನಿರಾಶಕನೆ “ ಎನ್ನುವ ಪಾಠಾಂತರವೂ ಇದೆ . ಗೋವು ಅಡವಿಯಲ್ಲಿ ಚೆನ್ನಾಗಿ ಹುಲ್ಲು ಮೇಯ್ದು ತೃಪ್ತವಾಗಿ ತನ್ನ ಕರುವಿಗೆ ಹಾಲುಣಿಸಲು ಹಾತೊರೆಯುವಂತೆ ; ಸದ್ಗುರುವಾದವನು ಸದ್ಭಕ್ತ ಶಿಶುಗಳಿಗೆ ಅನುಭವಾಮೃತವನ್ನು ನೀಡಿ ತಣಿಸುತ್ತಿರಬೇಕು . ಇದು ಸದ್ಗುರುವಿನ ಕರ್ತವ್ಯವನ್ನು ಸೂಚಿಸುತ್ತದೆ . ಅದಕ್ಕಾಗಿ ಶಿವಕವಿಯು ದೇಶಿಕನೇ ಎಂಬ ಸಂಬೋಧನೆಯನ್ನು ಮಾಡಿದ್ದಾನೆ .

ನಿತ್ಯಲಿಂಗಾರ್ಚನೆಯನ್ನು ಮಾಡಿ ಭಕ್ತರ ಕಲ್ಯಾಣಕ್ಕಾಗಿ ದೇಶವನ್ನು ಸಂಚರಿಸುವ ಗುರುವರನೇ ದೇಶಿಕನೆನಿಸಿಕೊಳ್ಳುವನು . ಅವನು ಶಿವಾನುಭವಾನಂದದಲ್ಲಿ ತಲ್ಲೀನನಾಗಿ ತನ್ನ ಅನುಭವೋಪದೇಶದಿಂದ ಶಿಷ್ಯರನ್ನು ಉಲ್ಲಾಸಗೊಳಿಸುವನು . ಮನಸ್ಸಿನ ಸಂಕಲ್ಪ – ವಿಕಲ್ಪಗಳನ್ನು ನಾಶಮಾಡುವನು . ಫಲಾಪೇಕ್ಷೆಯಿಂದ ಮಾಡುವ ಕಾರ್ಯ ಗಳು ಸಂಕಲ್ಪಿತಗಳೆನಿಸುವವು . ಅಂಥ ಸಂಕಲ್ಪಗಳನ್ನು ನಾಶಮಾಡಿ ನಿಷ್ಕಾಮಭಕ್ತಿ ಯನ್ನು ಬೆಳೆಸುವನು . ನಿಷ್ಕಾಮ ಭಕ್ತಿಯು ಅಳವಡಲೆಂದು ಶಿಷ್ಯನ ಆಣವಮಲ , ಮಾಯಾಮಲ , ಕಾರ್ಮಿಕಮಲಗಳೆಂಬ ತ್ರಿದೋಷಗಳನ್ನು ಕಳೆದು ತನು – ಮನ – ಧನ ಗಳನ್ನು ಪರಿಶುದ್ಧಗೊಳಿಸುವನು . ಸ್ವತಃ ತಾನು ಹೊನ್ನು ಹೆಣ್ಣು – ಮಣ್ಣುಗಳೆಂಬ . ತ್ರಿಮಲಗಳನ್ನು ನಿರಾಕರಿಸುವಲ್ಲಿ ಯೋಗ್ಯತೆಯುಳ್ಳವನಾಗಿರುವನೆಂಬುದು ಶರಣ ಕವಿಯ ಆಶಯವಾಗಿದೆ . ಯಾರು ಹೊನ್ನು – ಹೆಣ್ಣು – ಮಣ್ಣುಗಳಲ್ಲಿ ನಿರಾಶೆಯುಳ್ಳವರಾಗಿ ಮಲತ್ರಯ ವನ್ನು ದೂರಮಾಡಿಕೊಂಡಿರುತ್ತಾರೆಯೋ ಅಂಥವರು ಮಾತ್ರ ಭಕ್ತರ ಸಂಕಲ್ಪ ವಿಕಲ್ಪಗಳನ್ನು ದೂರಮಾಡಿ ಮಲತ್ರಯಗಳಿಂದ ಮುಕ್ತರನ್ನಾಗಿ ಮಾಡಬಲ್ಲರು . ಓ ಗುರುವೇ ! ನೀನು ಸಮರ್ಥನಾಗಿರುವಿ . ಕಾರಣ ನನ್ನ ತ್ರಿಮಲಗಳನ್ನು ನಿವಾರಿಸಿ ಕೃಪೆದೋರು

***********

ಕಾರ್ಯ ಕಾರಣ ಭಕ್ತಿ | ತುರ್ಯ ತಾಮಸದ ಚಿತ್

ಸೂರ್ಯ ಎಡರಿಂಗೆ ಧೈರ್ಯವಾಗಿಹ ಗುರು

ರ್ಯ ನೀನೆನಗೆ ಕೃಪೆಯಾಗು  || ||

 ಗುರುದೇವರು ಗುರುವರನಾಗಬೇಕಾದರೆ ಗುರುತ್ವದ ಗರಿಮೆಯನ್ನು ಹೊಂದಿರಬೇಕಾಗುವುದು . ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ ಮತ್ತು ಧೈರ್ಯಗಳಿಗೆ ಆಶ್ರಯನಾದವನೇ ಗುರುವರನು .

 ಸಕಲ ಶುಭಕಾರ್ಯಗಳಿಗೆ ಗುರುವರನೇ ಕಾರಣ . ಗುರುವಿಲ್ಲದೆ ಸಂಸ್ಕಾರ ಕಾರ್ಯಗಳು ಘಟಿಸಲಾರವು . ಶಿಷ್ಯನಲ್ಲಿಯ ತ್ರಿಮಲಗಳನ್ನು ಕಳೆದು ತ್ರಿವಿಧಾಂಗಗಳಲ್ಲಿ ಲಿಂಗಗಳ ಸಂಬಂಧವೆಂಬ ಶುಭಕಾರ್ಯಗಳಿಗೆ ಗುರುವೇ ಮೊದಲಿಗನು , ವಿವಾಹಾದಿ ಲೌಕಿಕ ಕಾರ್ಯಗಳಿಗೂ ಗುರು ಬೇಕು . ಗುರುವಿಲ್ಲದೆ ಅವು ಫಲಿಸಲಾರವು . ಗುರುವಾದರೂ ಭಕ್ತಿಯಲ್ಲಿ ಮಿಗಿಲಾಗಿರಬೇಕು . ಭಕ್ತಿಯೇ ಮುಕ್ತಿಯ ಸಾಧನ . ಭಕ್ತಿಯೇ ಷಟ್‌ಸ್ಥಲಾಚರಣೆಯ ಕೀಲು , ಭಕ್ತಿಯ ಪರಾಕಾಷ್ಠತೆಯನ್ನು ಸಾಧಿಸಿದ ಸದ್ಗುರು ಭಕ್ತರಿಗೆ ಕಿಂಕರತನವನ್ನು ಕಲಿಸಬಲ್ಲನು . ಅಂದರೆ ಅಹಂಕಾರವು ಎಳ್ಳಿನ ಮೊನೆಯಷ್ಟಾದರೂ ಇರಕೂಡದು ಅಹಂಕಾರವು ನಾಶವಾದರೇನೇ ಭಕ್ತಿಯು ನೆಲೆಸುವದು , ಭಕ್ತಿಯ ಸೌಜನ್ಯತೆಯಿಂದಲೇ ಸದ್ಗುರುನಾಥನು ಉನ್ನತ ಸ್ಥಾನದಲ್ಲಿರು ತಾನೆ , ಮತ್ತು ಭಕ್ತಿಯುಳ್ಳ ಭಕ್ತರ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವಲ್ಲಿ ಜ್ಞಾನ ಸೂರ್ಯನಾಗಿರುತ್ತಾನೆ . ಅದಕ್ಕಾಗಿ ಅನುಭವಿಗಳು,

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನ ಕತ್ತಲೆಯಿಂದ ಕುರುಡನಾದವನ ಕಣ್ಣುಗಳು ಜ್ಞಾನವೆಂಬ ಕುಂಚಿನಿಂದ ಯಾವಾತನಿಂದ ತಗೆಯಲ್ಪಡುವವೋ ಅವನೇ ಸದ್ಗುರು . ಅಂಥ ಸದ್ಗುರುವಿಗೆ ಶರಣು ಮಾಡಿರುವರು , ಗುರುವರನು ಎಡರು ಕಂಟಕಗಳನ್ನು ನಿವಾರಿಸುವಲ್ಲಿ ಧೈರ್ಯದ ಮೂರ್ತಿಯೇ ಆಗಿರುತ್ತಾನೆ . ಎಲ್ಲ ಭೀತಿಗಳಲ್ಲಿ ಭವಭೀತಿ ಬಲುದೊಡ್ಡದು . ಇದನ್ನು ನಿವಾರಿಸುವವನೇ ಸದ್ಗುರುವು . ಗುರುಕೃಪೆಯಿಂದಲೇ ಭಕ್ತನಲ್ಲಿ ಧೃತಿ ದೃಢವಾಗುತ್ತದೆ . ಧೈರ್ಯ ವಂತನಿಗೆ ಸಕಲಕಾರ್ಯಗಳಲ್ಲಿ ಜಯ ಖಂಡಿತ ಸಿಕ್ಕುವದು , ಗುರುಕೃಪೆಯಿಂದ ಧೃತಿವಂತ ನಾಗಿ ಶಿವಸಂಸ್ಕಾರಗಳನ್ನು ಪಡೆದು ಭಕ್ತಿಯಿಂದ ಸುಜ್ಞಾನವನ್ನು ಪಡೆಯಬೇಕು . ಇದೆಲ್ಲವೂ ಸದ್ಗುರುಕೃಪೆಯಿಂದ ಸಾಧ್ಯ , ಓ ಗುರುವೇ !

ಅಸತೋ ಮಾ ಸದ್ಗಮಯ

ತಮಸೋ ಮಾ ಜ್ಯೋತಿರ್ಗಮಯ

ಮೃತ್ಯೋರ್ಮಾ ಅಮೃತಂ ಗಮಯ

ಅಸತ್ಯದಿಂದ ಸತ್ಯದೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ , ಮೃತ್ಯುವಿನಿಂದ ಅಮೃತತ್ವದೆಡೆಗೆ ಕರೆದೊಯ್ದು ಕಾಪಾಡು . ಅಮರತ್ವವನ್ನು ಸಾಧಿಸಬಲ್ಲ ಶಕ್ತಿಯನ್ನು ದಯಪಾಲಿಸು .

***********

ಸಾಧ್ಯ ಸದ್ಭಕ್ತರ್ಗೆ | ವೇದ್ಯ ಲಿಂಗೈಕ್ಯರ್ಗೆ

ಭೇದ್ಯ ಸತ್ಪ್ರಮಥ ಗಣನಿಕರವೆಲ್ಲಕ್ಕಾ

ರಾಧ್ಯ ನೀನೆನಗೆ ಕೃಪೆಯಾಗು || ||

ಮೇಲಿನ ಮೂರು ನುಡಿಗಳಲ್ಲಿ ಸದ್ಗುರುವಿನ ಸ್ವರೂಪವನ್ನು ವರ್ಣಿಸಿ ಅಂಥ ಗುರುವನ್ನು ಅರಿಯಲು ಯೋಗ್ಯರಾದ ಶಿಷ್ಯರನ್ನೂ ನಿರೂಪಿಸಿದ್ದಾನೆ . ಇಲ್ಲಿ ಭಕ್ತನ ಯಥಾರ್ಥತೆಯ ಅರಿವೂ ಕಾಣಬರುತ್ತದೆ . ಸದ್ಗುರುನಾಥನು ಕಾರಣತ್ವ , ತುರ್ಯತ್ವ , ಚಿತ್ಸೂರ್ಯತ್ವ , ಧೈರ್ಯತ್ವಗಳನ್ನು ಸಾಕ್ಷಾತ್ಕರಿಸಿಕೊಂಡಂತೆ , ಶಿಷ್ಯನು ಸದ್ಭಕ್ತನೂ , ಲಿಂಗೈಕ್ಯ ಸ್ಥಿತಿಗೇರಿದವನೂ ಸತ್ಪ್ರ ಮಥರಿಗೆ ಮಾನ್ಯನೂ ಆಗಬೇಕಾಗುತ್ತದೆ . ನೈಜಭಕ್ತಿಯುಳ್ಳ ಸದ್ಭಕ್ತರಿಗೆ ಮಾತ್ರ ಗುರುವು ಸಾಧಿಸಲು ಯೋಗ್ಯನಾಗುವನು . ಅಂದರೆ ನಿಜವಾದ ಭಕ್ತಿಯಿಂದ ಮಾತ್ರ ಗುರು ಸಾಕ್ಷಾತ್ಕಾರವಾಗುವದು .

 ಲಿಂಗದ ನೆಲೆಕಲೆಗಳನ್ನು ಗುರುಮುಖದಿಂದ ಅರಿತು ತನ್ನ ಅಂಗಾಂಗಗಳಲ್ಲಿ ಅಳವಡಿಸಿಕೊಂಡಾಗ ಲಿಂಗಮಯನಾಗುವನು . ಲಿಂಗೈಕ್ಯನೆನಿಸುವನು . ಇಂಥವನು ಮಾತ್ರ ಗುರುಮಹತಿಯನ್ನು ಗುರುತಿಸಬಲ್ಲನು . ಲಿಂಗಾಂಗ ಸಾಮರಸ್ಯ ಸುಖವನ್ನು ಅನುಭವಿಸಬಲ್ಲ ಪ್ರಮಥ ಪುಂಗವರು ಗುರುತತ್ವದ ಆಳವನ್ನು ಅಳೆಯಬಲ್ಲರು . ಮಹಿಮಾಶೀಲನಾದ ಸದ್ಗುರು ಯೋಗ್ಯತೆಯುಳ್ಳ ಎಲ್ಲರಿಂದಲೂ ಪೂಜೆಗೊಳ್ಳಲು ಇಲ್ಲಿ ಸಾಧಕ , ಸಿದ್ಧ , ಪರಿಪೂರ್ಣ ( ಸ್ವತಃಸಿದ್ದ ) ಈ ಮೂವರ ಅರಿವಾಗುತ್ತದೆ . ಸಾಧಕನಾದ ಭಕ್ತನಿಗೆ ಗುರು ಲಿಂಗವನ್ನು ಕರುಣಿಸುತ್ತಾನೆ . ಭಕ್ತನಾಗಿ ಲಿಂಗವನ್ನು ಆಯತ ಮಾಡಿಕೊಳ್ಳುವವನೇ ಸಾಧಕನು , ಲಿಂಗ ಗುಣಗಳನ್ನು ಸ್ವಾಯತ್ತೀಕರಿಸಿ ಕೊಂಡವನೇ ಲಿಂಗೈಕ್ಯನು . ಅವನೇ ಸಿದ್ಧನು . ಲಿಂಗವನ್ನು ಸನ್ನಿಹಿತಮಾಡಿ ಕೊಂಡು ತಾನೇ ಲಿಂಗನಾದವನು ; ಪರಿಪೂರ್ಣನು ಅಥವಾ ಸ್ವತಃಸಿದ್ಧನೆನ್ನಬಹುದು . ಅವನೇ ಪ್ರಮಥ ಪುಂಗವ , ಲಿಂಗ ಪರಿಪೂರ್ಣ , ಶಿವಪಥವನರಿಯಲು ಗುರುಪಥ ಮುಮ್ಮೊದಲು ಶಿವಪಥವನರಿಯಲು ಶಿವಶರಣರ ಸಂಗ ಮುಖ್ಯವಾಗಿದೆ .

 ಶ್ರೀ ಚನ್ನಬಸವೇಶ್ವರ ದೇವರು ತಮ್ಮ ಮಂತ್ರಗೋಪ್ಯದಲ್ಲಿ ಶಿವನ ಸಾಕಾರ ಮೂರ್ತಿಯೇ ಸದ್ಗುರುವೆಂದು ಗುರುಸ್ತೋತ್ರವನ್ನು ಮಾಡಿದ್ದಾರೆ .

 ಗುರುವೆ ಪರಶಿವನೆ | ಸಕಲಾಗಮಂಗಳ ಮೂರ್ತಿ

 ಗುರುವೆ ಅಜ್ಞಾನ ತಿಮಿರಕ್ಕಂಜನ

ಗುರುವಿಗೂ ಪರಶಿವನಿಗೂ ಭಿನ್ನತೆಯಿಲ್ಲ . ಶಿವನ ಸಾಕಾರ ಮೂರ್ತಿಯೇ ಸದ್ಗುರುವು . ಗುರುಸಾಕ್ಷಾತ್ಕಾರವೇ ಶಿವಸಾಕ್ಷಾತ್ಕಾರವಾಗಿದೆ . ಅದುಕಾರಣ ಗುರು ದೇವನು ಸದ್ಭಕ್ತರ್ಗೆ ಸಾಧ್ಯನಾಗುತ್ತಾನೆ . ಲಿಂಗೈಕ್ಯರ್ಗೆ ವೇದ್ಯನಾಗುತ್ತಾನೆ . ಸತ್ಪ್ರಮಥರಿಗೆ ಭೇದ್ಯನೂ , ಬೋಧ್ಯನೂ ಆಗುತ್ತಾನೆ . ಅಂಥ ಸದ್ಗುರು ಸರ್ವರಿಗೆ ಆರಾಧ್ಯನಾಗುವದ ರಲ್ಲಿ ಸಂಶಯವೇನಿದೆ ? ಭೋ ಗುರುವೆ ! ನಿನ್ನ ಕೃಪೆ ಬಯಸಿ ಬಂದ ನನಗೂ ಆಶ್ರಯನೀಡೆಂದು ಪ್ರಾರ್ಥಿಸಿದ್ದಾರೆ .

ಲೇಖಕರು : ಲಿಂಗೈಕ್ಯ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮುರುಘಾಮಠ ಚಿತ್ರದುರ್ಗ.

ಸಂಗ್ರಹ ಸಹಾಯ : ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ

ಸತ್ಯ-ಶುದ್ಧ-ಸಾಧನೆಯ ಸೂತ್ರವಿಡಿದು, ಪರಮಾರ್ಥದಲ್ಲಿ ಯಥಾರೀತಿಯಾಗಿ ನಡೆದು, ಷಟ್‌ಸ್ಥಲ ಸಿದ್ಧಿಯನ್ನು ಪಡೆದ, ಮಾನವತೆಯ ಪರಮಾವಧಿ ವಿಕ್ರಮದ ಮಹಾನುಭಾವರ ಮಾಲಿಕೆಯಲ್ಲಿ, ಮಹಾಮಹಿಮರಾದ ಶ್ರೀಮದಥಣಿ ತಪಸ್ವಿಗಳವರು

ಒಂದು ದಿವ್ಯ ತೇಜೋರತ್ನ! ಅವರ ಲೋಕೋತ್ತರ ವ್ಯಕ್ತಿತ್ವವು, ಅನೇಕ ವಿಧದಲ್ಲಿ ವ್ಯಕ್ತವಾಗಿ, ಮಾನವ ಕೋಟಿಯನ್ನು ಪಾವನಗೊಳಿಸಿದೆ. ಲೋಕ-ಲೌಕಿಕರ ಸಂಪರ್ಕವನ್ನು ಕೋರದೆ, ನಿರಾಭಾರಿ ಜೀವನದ ಏಕಾಂತದಲ್ಲಿ, ಆತ್ಮಸಾಧನೆಯ ಮುಖವಾಗಿ ಅವರು ಸಾಧಿಸಿದ ಲೋಕ ಸಾಧನೆಯು ಅನ್ಯಾದೃಶವಾಗಿದೆ; ಅಸದೃಶವಾಗಿದೆ. ಪರಮಾರ್ಥವೇ ಪ್ರಾಣವಾಗಿದ್ದ ಅವರು, ನೋಟದಲ್ಲಿ, ಮಾಟ-ಕೂಟದಲ್ಲಿ, ಪರಮಾರ್ಥವನ್ನೇ ತುಂಬಿಕೊಂಡರು; ಪರಮಾರ್ಥವನ್ನೇ ಪ್ರಸಾದವೆಂದು ನಂಬಿಕೊಂಡರು.

ಪ್ರಪಂಚದ ಯೋಗ-ಕ್ಷೇಮಗಳು, ಸುಖ-ಶಾಂತಿ-ಸಮೃದ್ಧಿಗಳು ಪರಮಾರ್ಥ ಪ್ರವಣತೆಯನ್ನೇ ಅವಲಂಬಿಸಿದೆ. ಪರಮಾರ್ಥವೆಂದರೆ ಪ್ರಪಂಚದ ತಿರುಳು. ಪ್ರಪಂಚ ಪ್ರೇಮಿಗಳು ಪರಮಾರ್ಥನಿಷ್ಠೆಯನ್ನು ಮರೆಯಲಾಗದು, ತೊರೆಯಲಾಗದು-ಎಂಬೀ ವಿಚಾರವನ್ನು ಅವರು ತಮ್ಮ ಸಹಜ ವರ್ತನೆಯಿಂದ ಜನತೆಗೆ ನಿರೂಪಿಸಿದರು. ಅವರ ಆತ್ಮಶಕ್ತಿಯನ್ನು, ಗುಣ-ಶೀಲ-ಸ್ವಭಾವಗಳನ್ನು ಬಲ್ಲವರು ಅವರನ್ನು ಶಿವಯೋಗಿಗಳೆಂದು ಕರೆದರು. ಅದು ಅವರಿಗೆ ಸಲ್ಲುವ ಹೆಸರಾಯಿತು; ಅವರ ಅಂತರಂಗವನ್ನು ಹೇಳುವ ಹೆಸರಾಯಿತು! ಸರ್ವರೂ ಅದನ್ನು ಶ್ರದ್ಧೆಯಿಂದ ಉಚ್ಚರಿಸಿದರು; ‘ಶಿವಯೋಗಿ ಕೃಪೆಮಾಡು’ ಎಂದು ಶಿರಬಾಗಿ, ಕರಮುಗಿದು ಕೋರಿದರು.

ಅಮೃತಾಂಕುರದ ಬೆಳಕು ಬೆಳವಣಿಗೆ :

ಮಾವಿನ ಸಸಿಯು ಮಾವಿನ ಮರವಾಗುವಂತೆ, ಬೇವಿನ ಸಸಿಯು ಮಾವಿನ ಮರವಾಗಲಾರದು. ರಸ-ರುಚಿಗಳಿಂದಾಗಿ ಹೀಚು ಹಣ್ಣೆನಿಸುವುದು. ಆದರೆ, ಹೀಚಿನಲ್ಲಿ ಹಣ್ಣಾಗುವ ಶಕ್ತಿ ಮೊದಲು ಅಗತ್ಯ. ಶಿವಯೋಗಿಗಳು ಬಾಲ್ಯದಲ್ಲಿಯೇ ಶಿವಶಕ್ತಿಯ

ಸಂಕೇತವಾಗಿದ್ದರು; ಪರಿಪೂರ್ಣತೆಯ ಸಂಕ್ಷೇಪವಾಗಿದ್ದರು.

ಬಾಲಕ ಗುರುಲಿಂಗದೇವ, ಗುರುಕೃಪೆಯಾಂತು, ಮುರುಘದೇವನಾಗಿ, ನಿಜಾಚರಣೆಯಿಂದ ಶಿವಯೋಗಿಯಾದುದು ಸರಿಯಷ್ಟೆ? ಗುರುಲಿಂಗದೇವನಿಗೆ,ತೆಲಸಂಗದ ಶಿವಬಸವದೇಶಿಕರು ವಿಶ್ವಾಸದಿಂದ ಅಕ್ಷರಾಭ್ಯಾಸವನ್ನು ಮಾಡಿಸಿ, ದುರ್ಧರವಾದ, ದುಃಸಾಧ್ಯವಾದ ತಮ್ಮ ಕುಷ್ಠರೋಗವನ್ನು ನೀಗಿದರು. ಗುರುಗಳ ಆರೋಗ್ಯ, ಶಿವಯೋಗಿಗಳ ಪವಾಡಗಳಿಗೆ ನಾಂದಿಯಾಯಿತು! ಮಹಾತ್ಮರು ಕರುಣಿಸುವ ಪ್ರತಿಫಲವು ಎಂತಹುದು ಎಂಬುದನ್ನು ನಾವು ಇಲ್ಲಿ ನೋಡಬಹುದು. ಶಿವಯೋಗಿಗಳು ಗುರುಗಳ ರೋಗವನ್ನು ಕಳೆದರು; ಅನೇಕರ ಮನದ ಮಲಿನತೆಯನ್ನು ತೊಳೆದರು.ಭವರೋಗ ವೈದ್ಯನಿಗೆ ಅಸಾಧ್ಯವೇನಿದೆ? ಅವರ ಪ್ರಸನ್ನತೆಯು, ಸಮಸ್ತ ಆಧಿ-ವ್ಯಾಧಿಗಳಿಗೆ ಸಿದ್ಧೌಷಧ! ಅವರು ಅಮೃತವಾಗಿ ಬೆಳೆದರು; ಸಂಜೀವನವಾಗಿ ಸಮಾಜವನ್ನು ಬೆಳೆಯಿಸಿದರು.

ಜಂಗಮದ ಸುಳಿವು ವಸಂತದ ತಂಗಾಳಿ:

ಶಿವಯೋಗಿಗಳಿಗೆ ೫ ವರ್ಷದ ಬಾಲ್ಯ, ತಾಯಿ ತಂದೆಗಳು ಅಥಣಿಗೆ ಬಂದು,ಮರುಳ ಶಂಕರಸ್ವಾಮಿಗಳಿಗೆ ಅವರನ್ನು ಒಪ್ಪಿಸಿದರು. ಅಂದು ಗಚ್ಚಿನಮಠದ ಭಾಗ್ಯೋದಯವಾಯಿತು! ಮುಂದೆ ಸುಮಾರು ೧೫ ವರುಷ, ಶಿವಯೋಗಿಗಳು ವಿದ್ಯಾಭ್ಯಾಸದಲ್ಲಿ ಕಳೆದರು. ವಿವಿಧ ದರ್ಶನಗಳನ್ನು, ಶಿವಾನುಭವ ಸಾಹಿತ್ಯವನ್ನು ಆಮೂಲವಾಗಿ ಪರಿಶೀಲಿಸಿದರು. ೨೦ನೆಯ ವರುಷದಲ್ಲಿ ಅನುಗ್ರಹಗುರುಗಳಾದ ಗುರುಶಾಂತಸ್ವಾಮಿಗಳವರಿಂದ ಅಪ್ಪಣೆ ಪಡೆದು, ದೇಶಾಟನೆಗೆ ಹೊರಟರು. ನಿಯತ-ಭಿಕ್ಷಾನ್ನದಿಂದ ೨೦ ವರುಷ, ಅವ್ಯಾಹತವಾಗಿ, ಪಾದಚಾರಿಯಾಗಿ ಸಂಚರಿಸಿದರು.ಆಧ್ಯಾತ್ಮಿಕ ಆರೋಗ್ಯ ಸಂವರ್ಧನೆಗಾಗಿ, ಹಲವು ತೀರ್ಥಕ್ಷೇತ್ರಗಳನ್ನು, ಶಿವಶರಣರ ನಿವಾಸಗಳನ್ನು, ನಿಸರ್ಗಸುಂದರ-ನಿವಾಹತ ಪ್ರದೇಶಗಳನ್ನು ನಿರೀಕ್ಷಿಸಿದರು; ಅಲ್ಲಿಯ ಪವಿತ್ರ, ಪರಮಾಣುಗಳನ್ನು, ಅನುಭವ ವಿಶೇಷಗಳನ್ನು, ವಿಪುಲವಾಗಿ ಹೃದಯದಲ್ಲಿ ಶೇಖರಿಸಿದರು.

ಶಿವಯೋಗಿಗಳು ದೇಶಸಂಚಾರವನ್ನು ಪೂರೈಸಿದಾಗ ನಲವತ್ತು ವರುಷದವರಾಗಿದ್ದರು. ಸಂಚಾರದಲ್ಲಿ ಚರಜಂಗಮದ ಆಚರಣೆಯನ್ನು, ಅವರು ಬಹು ಜಾಗರೂಕತೆಯಿಂದ ಸಾಗಿಸಿದರು. ತ್ರಿಕಾಲ ಲಿಂಗಪೂಜೆ, ಶಿವಭಕ್ತರ ಒಂದು ಮನೆಯ ಭಿಕ್ಷಾನ್ನ, ಒಂದು ಸಲ ಪ್ರಸಾದ, ಶಿವಾನುಭವ ಸಂಪಾದನೆ, ಜಿಜ್ಞಾಸುಗಳಿಗೆ ಮಾರ್ಗದರ್ಶನ ಸಾಮಾನ್ಯವಾಗಿ ಇದುವೇ ಶಿವಯೋಗಿಗಳ ದಿನಚರಿ, ಶಿವಯೋಗಿಗಳು,ದಾರಿಯಲ್ಲಿ ಭಕ್ತರು ನೀಡಬಯಸಿದ ಸುಖ-ಸೌಕರ್ಯಗಳನ್ನು, ಎಷ್ಟು ಪ್ರಾರ್ಥಿಸಿದರೂ ಸ್ವೀಕರಿಸಲಿಲ್ಲ. ತಾರುಣ್ಯದ ಭರದಲ್ಲಿ, ತನು-ಮನಗಳನ್ನು ತಣಿಸುವುದಾಗಲಿ,ಕೋಮಲಗೊಳಿಸುವುದಾಗಲಿ ಸ೦ಯಮಿಗಳಿಗೆ ಸೇರುವ ವಿಷಯವಲ್ಲ.ಶಿವಯೋಗಿಗಳು ನೆಟ್ಟನೆ ಜಂಗಮವಾಗಿ ಸುಳಿದರು; ಜನಜೀವನವು ಪರಿಮಳ ಪೂರ್ಣವಾಗಿ ಅರಳುವಂತೆ, ತಂಗಾಳಿಯಾಗಿ ತೀಡಿದರು.

ಸೃಷ್ಟಿಯಲ್ಲಿ ಕಂಡುದನ್ನು ದೃಷ್ಟಿಯಲ್ಲಿ ಉಂಡರು :

ಗುಹೇಶ್ವರನ ಗಡ್ಡೆ, ಪ್ರಶಾಂತ ವಾತಾವರಣದ ಒಂದು ಪರಮ ಪಾವನ ತಪೋವನ, ಶಿವಯೋಗಿಗಳು ಆತ್ಮಚಿಂತನೆಯ ವಿಶ್ರಾಂತಿಯ ಆತುರದಲ್ಲಿ ಅಲ್ಲಿಗೆ ದಯಮಾಡಿದರು. ಅಲ್ಲಿ ಅವರು ಬಹುಕಾಲ ಅಂತರ್ಮುಖವಾಗಿದ್ದು, ಶಿವಯೋಗ ಬಲದಿಂದ ಪಿಂಡದಲ್ಲಿ ಪರವಸ್ತುವನ್ನು ಕಂಡು, ಪ್ರಸಾದಪಿಂಡವಾದರು; ಪ್ರಕಾಶಪಿಂಡವಾದರು. ವಿಶ್ವಚೇತನವು ವ್ಯಕ್ತಿಯಲ್ಲಿ ಹೇಗೆ ಅನುಗತವಾಗಿದೆ ಅಂತರ್ಗತವಾಗಿದೆ ಎಂಬುದನ್ನು ಅವರು ಅನುಭವದಲ್ಲಿ ತಂದುಕೊಂಡರು. ಅವರ  ದೃಷ್ಟಿ ಶಿವದೃಷ್ಟಿಯಾಯಿತು; ಶುಭದೃಷ್ಟಿಯಾಯಿತು.

ಇಂತು ಜಂಗಮ ಜ್ಯೋತಿಯಾಗಿ, ಪರತತ್ತ್ವದ ಅಧಿಕೃತ ಪ್ರತಿನಿಧಿಯಾಗಿ,೨೬ ವರುಷಗಳ ಸುದೀರ್ಘ ಪ್ರವಾಸ ಮತ್ತು ಏಕಾಂತವಾಸದಿಂದ ಮತ್ತೆ ಅಥಣಿಗೆಆಗಮಿಸಿದರು. ನಾಡಿನ ಸುಕೃತವೇ ನಡೆದು ಬಂದಿತೆಂದು ಜನರು ಕೊಂಡಾಡಿದರು.ಮೂರನೆಯ ಗುರುಗಳಾದ ಚೆನ್ನಬಸವಸ್ವಾಮಿಗಳಿಗೆ ಅತ್ಯಂತ ಸಂತೋಷವಾಯಿತು.ಗುರುಗಳು ತಮ್ಮ ಮನೋಗತವನ್ನು ವಿವರಿಸಿದರು. ಶಿವಯೋಗಿಗಳು ‘ಶಿವನಾಣತಿ’ಎಂದು ಇನ್ನು ಗಚ್ಚಿನಮಠದಲ್ಲಿಯೇ ನೆಲೆಸುವುದಾಗಿ ಆಶ್ವಾಸನವಿತ್ತರು. ಅಂದಿನಿಂದ ಗಚ್ಚಿನಮಠದ ಯೋಗಮಂಟಪದಲ್ಲಿ, ಕೇವಲ ನಿರ್ಲಿಪ್ತರಾಗಿ, ನಿಸ್ಪೃಹರಾಗಿ ಲಿಂಗ ಲೀಲಾವಿಲಾಸದಲ್ಲಿದ್ದು, ಲೋಕೋದ್ಧಾರದ ಅನೇಕ ಕಾರ್ಯಗಳನ್ನು ಜರುಗಿಸಿದರು.ನಡೆನುಡಿಗಳಲ್ಲಿ ಮೃಡನು, ಪವಾಡಗಳಿಗೆ ಒಡೆಯನು.

ಸಾತ್ವಿಕ-ತಾತ್ವಿಕ ವೃತ್ತಿಯ ಸಂಯಮಶೀಲರು, ಲೋಕೋದ್ಧಾರದ ಉದಾರ ಬುದ್ಧಿಯಿಂದ, ತಮ್ಮ ತಪಃಶಕ್ತಿಯನ್ನು ಪವಾಡಗಳ ರೂಪದಲ್ಲಿ ವ್ಯಕ್ತಗೊಳಿಸುವರು.ಪ್ರತಿಷ್ಠೆ, ಪೌರುಷ, ಪ್ರತಿಶೋಧ ಈ ಮೊದಲಾದ ವಿಕಾರಗಳಿಂದ ಕೂಡಿದ ಪವಾಡಗಳು,ಹಠಯೋಗದ ಚಮತ್ಕಾರಗಳಲ್ಲದೆ, ಶಿವಯೋಗದ ಸಿದ್ಧಿಗಳಲ್ಲ. ನಿರಹಂಭಾವ ನಿರೀಹಂಭಾವದ ಶಿವಯೋಗ ಸಿದ್ಧಿಗಳು, ಉಳಿದ ಸಿದ್ಧಿಗಳಂತೆ, ಆತ್ಮ ಸಾಕ್ಷಾತ್ಕಾರದಲ್ಲಿ ಬಾಧಕವಲ್ಲ; ಬಂಧನವಲ್ಲ.

ಶಿವಯೋಗಿಗಳು ಸಿದ್ಧಪುರುಷರು; ಶಿವಯೋಗಸಿದ್ಧರು. ಅವರ ಮಹಿಮೆಗಳು ಅನಂತ; ಅನುಪಮ, ಚರಿತ್ರೆಯಲ್ಲಿ ಸಂಕ್ಷೇಪವಾಗಿ ಕೆಲವು ಬಂದಿವೆ:

ಶಿವಯೋಗಿಗಳ ಸನ್ನಿಧಿಯಲ್ಲಿ ಸರ್ಪ ಸೌಮ್ಯವಾಯಿತು, ಹುಲಿಯು ಹುದ್ದೆಯಾಯಿತು, ಅವರು ಪಕ್ಷಿಗಳಲ್ಲಿ ಗುರುದರ್ಶನ ಮಾಡಿದರು, ಧಾರಾಕಾರವಾಗಿ ಸುರಿವ ಅಕಾಲ ವೃಷ್ಟಿಯನ್ನು ಪರುಷ ದೃಷ್ಟಿಯಿಂದ ತಡೆದು, ಗಣ ಸಂತರ್ಪಣವನ್ನು ಸಾಂಗಗೊಳಿಸಿದರು; ಸಂಗಮನಾಥನಿಗೆ ಇಚ್ಛಾಭೋಜನ ಮಾಡಿಸಿದರು; ಶರಣಾಗತರಿಗೆ,ಸಿದ್ಧಿಗಳು, ಶಿವಯೋಗಿಗಳ ಸಮೃದ್ಧ ಜೀವನದ ಸಂಕೇತಗಳಾಗಿವೆ.ಶ್ರದ್ಧಾಜೀವಿಗಳಿಗೆ ಅವರವರ ಬಯಕೆಗಳನ್ನು ದಯಪಾಲಿಸಿದರು. ಈ ತೆರನಾದ ಎಲ್ಲ ವಸ್ತುತಃ ಶಿವಯೋಗಿಗಳವರ ಜೀವನವೇ ಒಂದು ಮಹಾಸಿದ್ದಿ, ಶಿವಯೋಗಿಗಳ ಪವಾಡಗಳು; ಪವಾಡಗಳೇ ಶಿವಯೋಗಿಗಳಲ್ಲ! ಪವಾಡಗಳಿಂದಾಚೆ, ನಿತ್ಯ ಜೀವನದ ನಡೆನುಡಿಗಳಲ್ಲಿ, ಎಲ್ಲರಿಗೂ ಅರ್ಥವಾಗುವಂತೆ, ಶಿವಯೋಗಿಗಳ ವ್ಯಕ್ತಿತ್ವವು ಆದರ್ಶಪೂರ್ಣವಾಗಿ ವಿಜೃಂಭಿಸಿದೆ.

ವೀರವಿರತಿಯ ಮಹಂತ, ನೃತ್ಯಾಚಾರದ ಭಗವಂತ :

ಸಂಕಲ್ಪ-ವಿಕಲ್ಪಗಳ ಬಲೆಯಲ್ಲಿ ಬಿದ್ದವರನ್ನು, ಆಶೆ-ಆಮಿಷಗಳು, ಲಾಭ-ಲೋಭಗಳು, ಮಾನ-ಸನ್ಮಾನಗಳು, ಕೀರ್ತಿ-ವಾರ್ತೆಗಳು ಅತಿ ತೀವ್ರವಾಗಿ ಪರಾಧೀನಗೊಳಿಸುವವು. ಪರತಂತ್ರನಿಗೆ ಸತ್ಯವಿದೆಯೆ? ಶಾಂತಿಯಿದೆಯೆ? ಲೌಕಿಕ ರೀತಿ-ನೀತಿಯಾದರೂ ಇದೆಯೆ? ಅವನಿಗೆ ಏನೂ ಇಲ್ಲ; ತಾನೂ ಇಲ್ಲ! ಶಿವಯೋಗಿಗಳು ಸಂಕಲ್ಪ-ವಿಕಲ್ಪಶೂನ್ಯರು; ಸರ್ವಥಾ ಸಮರ್ಥರು; ಸ್ವತಂತ್ರರು.ಆಶೆಗೆ ದಾಸರಾಗಿ ಅವರು ಏನನ್ನೂ ಬೇಡಲಿಲ್ಲ; ಬಯಸಲಿಲ್ಲ, ಆಶೆಯೇ ದಾಸಿಯಾಗಿ ತಮ್ಮೆಡೆಗೆ ಬಂದರೂ ಅವಕಾಶನೀಡಲಿಲ್ಲ. ಹೊನ್ನು-ಹೆಣ್ಣು-ಮಣ್ಣುಗಳಿಗೆ ಎಂದೂ ಹಣ್ಣಾಗದ ನಿರ್ವಿಷಯ-ನಿರ್ವಿಕಾರ ಚಿತ್ತರು ಅವರು. ವಾಸನೆಗಳನ್ನೆಲ್ಲ ಸಮೂಲವಾಗಿ ನಾಶಗೊಳಿಸಿದ ವೈರಾಗ್ಯದ ಸೀಮಾಪುರುಷರು ಅವರು. ಅವರಿಗೆ ದೇಹಭಾವದ ಮಮತೆ-ಮೋಹಗಳಿಲ್ಲ; ಜೀವಭಾವದ ದುಃಖ-ದುಮ್ಮಾನಗಳಿಲ್ಲ. ಅವರ ವಿರಕ್ತಿಯ ದೇಹದಲ್ಲಿ ಭಕ್ತಿಯೇ ಪ್ರಾಣ, ಸೇವೆ-ಸದಾಚಾರಗಳೇ ಪಾದಗಳು, ನಿಗ್ರಹಾನುಗ್ರಹಗಳೇ ಹಸ್ತಗಳು, ಪ್ರಸನ್ನತೆ-ಪವಿತ್ರತೆಗಳೇ ನೇತ್ರಗಳು, ಇದು ಶಿವಯೋಗಿಗಳವರ ದಿವ್ಯ ದೇಹ! ನಿತ್ಯಾಚರಣೆಯಲ್ಲಿ ನೃತ್ಯಾಚಾರವನ್ನು ಪಾಲಿಸಿದ ಪರಮಾತ್ಮನ ಪುಣ್ಯರೂಪ! ವಿರಕ್ತಿಯ ಪೂರ್ಣರೂಪ!!!

ಸಮಾಜ ಜೀವನದಲ್ಲಿ ಸಾಂಸ್ಕೃತಿಕ ನವಚೇತನ :

ಸಾಹಿತ್ಯ ಸಂಸ್ಕೃತಿಗಳ ಉದಾತ್ತ ಪರಂಪರೆಯ ಪರಿಚಯವಿಲ್ಲದ ಜನಾಂಗ ಸಮಾಜವಲ್ಲ; ಅದೊಂದು ಜನಜಂಗುಳಿ ಮಾತ್ರ ಸಾಹಿತ್ಯದ ಒಲವೂ, ಸಂಸ್ಕೃತಿಯ ನಿಲವೂ, ಸಮಾಜಜೀವನದಲ್ಲಿ ಅಗತ್ಯ. ಆ ದಿಶೆಯಲ್ಲಿ ಅಜ್ಞ ಜನತೆಯನ್ನು ರೂಪಿಸುವುದು ಮಹಾಪುರುಷರ ಆದ್ಯ ಕರ್ತವ್ಯ ಅವರ ಅವತಾರ ಕಾರ್ಯವೂ ಅದೇ.ಬಸವಾದಿ ಪ್ರಮಥರ ಜೀವನ ಸಾಹಿತ್ಯ ಸಂಸ್ಕೃತಿಯ ಕೋಶವಾಗಿದೆ.ಜೀವನಸಾಹಿತ್ಯವೆಂದರೆ ಸಾಮಾನ್ಯವಾಗಿ ವಚನ ಸಾಹಿತ್ಯ ಮತ್ತು ಪುರಾಣಸಾಹಿತ್ಯ ತನ್ಮೂಲಕ, ಸಂಸ್ಕೃತಿಯು ಸರ್ವರಿಗೂ ಸುಲಭ ಸಾಧ್ಯ. ಈ ಕಾರಣದಿಂದಲೇ ಪುರಾಣಪ್ರವಚನಗಳು ಇಂದಿಗೂ ನಡೆಯುತ್ತಲಿವೆ.

ಶಿವಯೋಗಿಗಳು ಅನುಭವದ ಅಕ್ಷಯನಿಧಿಯಾಗಿದ್ದರೂ, ಬಸವಣ್ಣನವರ ವಚನಗಳನ್ನು ನಿತ್ಯದಲ್ಲಿ ಓದುತ್ತಿದ್ದರು; ಬರೆಯುತ್ತಿದ್ದರು. ಅಪ್ಪನವರ ವಚನಗಳೆಂದರೆ ಅವರಿಗೆ ಅಚ್ಚುಮೆಚ್ಚು ಅನುಭವ ಸಂಪಾದನೆಯಲ್ಲಿ ‘ಸಾಕು’ ಎನ್ನುವ ಭಾವನೆ ಅವರಿಗೆ ಬರಲಿಲ್ಲ! ಅವರ ಸನ್ನಿಧಿಯಲ್ಲಿ ಪುರಾಣ, ಪ್ರವಚನ, ಕೀರ್ತನ, ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ತೆರಪಿಲ್ಲದೆ ಜರುಗುತ್ತಿದ್ದವು. ಅನುಭವದ ಅಮೃತಾನ್ನವು ಎಲ್ಲರಿಗೂ ಯಥೇಷ್ಟವಾಗಿ ದೊರೆಯುತ್ತಿದ್ದಿತು. ಅನುಭವಿಗಳು, ಶಾಸ್ತ್ರಜ್ಞರು, ಕುಶಲಕಲಾವಿದರು ಎಲ್ಲರೂ ಅಲ್ಲಿಗೆ ಬಂದು ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆ ಮಲ್ಲಣಾರ್ಯರು, ದಾವಣಗೆರೆ ಚಂದ್ರಶೇಖರಶಾಸ್ತ್ರಿಗಳು ಮೊದಲಾದವರು ಪುರಾಣಪ್ರವಚನಗಳನ್ನು ಒಳ್ಳೆ ಹೃದಯಂಗಮವಾಗಿ ಹೇಳಿದರು. ಗಚ್ಚಿನಮಠವು ಅನುಭವಮಂಟಪವಾಗಿ ಮಾರ್ಪಟ್ಟಿತು. ಅನ್ನದಾಸೋಹದ ಜೊತೆಯಲ್ಲಿ ಜ್ಞಾನದಾಸೋಹವೂ ತಪ್ಪದೆ ಅಲ್ಲಿ ನಡೆಯಿತು. ಬಸವಪುರಾಣಮಹೋತ್ಸವ, ಏಕಾದಶ ರುದ್ರ ಪೂಜೆ, ಅರವತ್ತುಮೂರು ಪುರಾತನರ ಪೂಜೆ ಇನ್ನೂ ಎಷ್ಟೋ ವಿಶಿಷ್ಟ ಸಮಾರಂಭಗಳು, ಅತ್ಯಂತ ಯಶಸ್ವಿಯಾಗಿ, ಅತೀವ ಆದರ್ಶವಾಗಿ ಜರುಗಿದವು. ಈ ಎಲ್ಲ ಸಮಾರಂಭಗಳ ಫಲವಾಗಿ ಭಕ್ತ ವೃಂದದಲ್ಲಿ ಒಂದು ಅಪೂರ್ವ ಚೇತನ ಜಾಗೃತವಾಯಿತು! ಸಮಾರಂಭದ ವಿತರಣ ವಿನಿಯೋಗದ ವಿಚಾರವಾಗಿ, ಯಾರೂ ಯಾರನ್ನೂ ಕಾಡಲಿಲ್ಲ; ಬೇಡಲಿಲ್ಲ. ಶಿವಯೋಗಿಯ ತಪಃಪ್ರಭಾವದಿಂದ, ಎಲ್ಲ ಅನುಕೂಲತೆಗಳು ಎಲ್ಲಿಂದಲೋ ಬಂದು, ಎಲ್ಲವೂ ಸರಾಗವಾಗಿ ಸಾಗುತ್ತಿದ್ದಿತು.ಸಂಕಲ್ಪಸಿದ್ಧಿ-ಸಂಕಲ್ಪಶುದ್ಧಿ-ಸಂಕಲ್ಪ ಶೂನ್ಯತೆಯಿದ್ದಲ್ಲಿ ಕೊರತೆಯೆಲ್ಲಿಯದು?

ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯಪ್ಪುದು :

ಶಿವಯೋಗಿಗಳ ವ್ಯಕ್ತಿತ್ವದಲ್ಲಿ, ಚುಂಬಕದ ಆಕರ್ಷಣ ಗುಣವೂ, ಪರುಷದ ಪರಿವರ್ತನಗುಣವೂ, ಪ್ರದೀಪದ ಸ್ವರೂಪ ನಿರ್ಮಾಣಗುಣವೂ ಮಿಲಿತವಾಗಿದ್ದವು.ಅವರು ಚುಂಬಕವಾಗಿ ಸಮಾಜವನ್ನು ಆಕರ್ಷಿಸಿದರು; ಪರುಷವಾಗಿ ಹಲವರನ್ನು ಪರಿವರ್ತನಗೊಳಿಸಿದರು; ಪ್ರದೀಪವಾಗಿ ಕೆಲವರನ್ನು ಪ್ರಕಾಶಗೊಳಿಸಿದರು. ಅವರ ಪ್ರಸಾದವಾಣಿಯ ಪ್ರಭಾವದಿಂದ, ಆದರ್ಶಗುರುಗಳಾಗಿ ಅಪಾರಕೀರ್ತಿಯನ್ನು ಗಳಿಸಿದ,ಲಿಂಗೈಕ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು,ಒಂದು ಚಿರಸ್ಮರಣೀಯ ಇತಿಹಾಸವಾಗಿ ಪರಿಣಮಿಸಿದರು. ಅವರ ವಾತ್ಸಲ್ಯದಲ್ಲಿ ಬೆಳೆದ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಶಾಂತಮನೋವೃತ್ತಿಯ ಜನಪ್ರಿಯ ಜಗದ್ಗುರುಗಳಾಗಿ ಕಂಗೊಳಿಸುತ್ತಿರುವರು. ಅವರ ಕಾರುಣ್ಯದ ಮೂರ್ತಿ, ಪೂಜ್ಯಪಾದ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು,ಶರಣಸಂಸ್ಕೃತಿಯ ಅಮೃತ ಕಿರಣವಾಗಿ ಸಮಾಜವನ್ನು ತಣಿಸುತ್ತಿರುವರು.

ಪ್ರಾತಃಸ್ಮರಣೀಯರಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಹಾಗೂ ಬೀಳೂರು ಗುರುಬಸವಸ್ವಾಮಿಗಳು ಶಿವಯೋಗಿಗಳ ಅಧ್ಯಾತ್ಮ ಜೀವನದ ಬಾಹ್ಯರೂಪವಾಗಿದ್ದರು.ಪರಮಪೂಜ್ಯ ಬಿದರಿ ಕುಮಾರ ಸ್ವಾಮಿಗಳು ಮತ್ತು ಹಾನಗಲ್ಲ ಕುಮಾರಸ್ವಾಮಿಗಳು ಶಿವಯೋಗಿಗಳ ಜೀವನ ವೈಖರಿಯನ್ನು ನೋಡಿ, ಶಿವಯೋಗದ ಸ್ಫೂರ್ತಿಯನ್ನು ಪಡೆದರು. ಅಥಣಿ, ಐನಾಪುರ, ತೆಲಸಂಗ, ಕೋಹಳ್ಳಿ ಮೊದಲಾದ ಗ್ರಾಮದ ತತ್ವನಿಷ್ಠರಾದ ಪಟ್ಟಾಧ್ಯಕ್ಷರೆಲ್ಲರೂ ಶಿವಯೋಗಿಗಳಲ್ಲಿ ಕೇವಲ  ವಿಶ್ವಾಸವುಳ್ಳವರಾಗಿದ್ದರು.

ಶಿವಯೋಗಿಗಳು, ಅನೇಕ ಜನ ಗುರು ವಿರಕ್ತಮೂರ್ತಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು; ಗುರು-ವಿರಕ್ತರಲ್ಲಿ, ವಿರಕ್ತ-ವಿರಕ್ತರಲ್ಲಿ ಪರಸ್ಪರ ಸಹಕಾರವನ್ನು ಕುದುರಿಸುವ, ಪಕ್ಷಾತೀತ ಪ್ರವೃತ್ತಿಯ ಮಹಾಚೇತನವಾಗಿದ್ದರು. ಅವರು ಪರಂಜ್ಯೋತಿಯಾಗಿ, ಅನೇಕ ಜ್ಯೋತಿಗಳನ್ನು ನಿರ್ಮಾಣ ಮಾಡಿದರು;ಮಹಾಸಿಂಧುವಾಗಿ, ಅನೇಕ ಜೀವನ ಬಿಂದುಗಳನ್ನು ನಿರ್ಮಾಣ ಮಾಡಿದರು!ಇಪ್ಪತ್ತನೆಯ ಶತಮಾನದ ಆದಿಭಾಗ, ಶಿವಯೋಗಿಗಳ ಸಹಸ್ರ ಕಿರಣಗಳಿಗೆ ಆಗರವಾಗಿದ್ದಿತು!

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು :

ಶಿವಯೋಗಿಗಳು, ಶಾಲಿವಾಹನ ಶಕ ೧೭೫೮ ರಲ್ಲಿ ಜನಿಸಿ, ೧೮೪೩ರ ವರೆಗೆ (ಕ್ರಿ. ಶ.೧೮೩೬-೧೯೨೧), ಅಂದರೆ ೮೫ ವರುಷ, ಮಿತವಾಗಿ, ಹಿತವಾಗಿ ಬಾಳಿದರು. ಈ ಅವಧಿಯಲ್ಲಿ ಅವರು ಏನು ಸಾಧಿಸಿದರು? ಎಂತು ಸಾಧಿಸಿದರು?ಎಷ್ಟು ಸಾಧಿಸಿದರು? ಎಂಬುದನ್ನು ಅವರ ಚರಿತ್ರೆಯಿಂದ ಚೆನ್ನಾಗಿ ಮನಗಾಣಬಹುದು.ಅವರು ಸಾಧನೆಯ ಬಲದಿಂದ, ತನು-ಮನ-ಭಾವಗಳಲ್ಲಿ ಲಿಂಗವಾಗಿದ್ದರು. ಅವರ ಕರಣಹರಣಗಳು ಲಿಂಗದ ಕಿರಣಗಳು. ಅವರ ಹೃದಯ ಅನುಭವದ ನಿಲಯ.ಅವರು ಪ್ರಭುವಿನ ಅಪರಾವತಾರ; ಪೂರ್ಣಾವತಾರ! ತಮ್ಮ ಅವತಾರ ಕಾರ್ಯವನ್ನು,ಅವರು ತಮ್ಮದೇ ಆದ ರೀತಿಯಲ್ಲಿ ಪೂರೈಸಿದರು.

ಶಾಲಿವಾಹನ ಶಕ ೧೮೪೨ನೆಯ (ಕ್ರಿ. ಶ. ೧೯೨೦) ರೌದ್ರಿ ಸಂವತ್ಸರದ ಕಾರ್ತಿಕ ಮಾಸ ಶಿವಯೋಗಿಗಳಿಗೆ ತುಂಬ ವೃದ್ಧಾಪ್ಯ. ಒಂದು ದಿನ ಪ್ರಾತಃಕಾಲ ಎಂದಿನಂತೆ ಅವರು, ಶಿವಾರ್ಚನೆಗೆ ಪುಷ್ಪಗಳನ್ನು ಮೆಲ್ಲನೆ ಎತ್ತುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಸ್ವಲ್ಪ ಜೋಲಿ ಹೋಯಿತು. ಅಂದಿನಿಂದ ಅವರು, ಶಿವನ ಕಡೆಗೆ ಇನ್ನೂ ವಿಶೇಷವಾಗಿ ವಾಲಿದರು. ‘ಶಿವನ ಅಪ್ಪಣೆಯಾಗಿದೆ; ಇನ್ನು ಆರು ತಿಂಗಳಿಗೆ ಮಹಾಪ್ರಯಾಣ’ ಎಂದು ನೆರೆಯವರಿಗೆ ತಿಳಿಸಿದರು. ಆ ಬಳಿಕ ಅವರ ತುರೀಯಾ ವಸ್ಥೆಯ ಪರಜಂಗಮಲೀಲೆಗಳು ಪ್ರಾರಂಭವಾದುವು. ಅವರು ಒಂದೊಂದು ಸಲ ಮಕ್ಕಳಂತೆ ಮುದ್ದುಮಾತುಗಳನ್ನಾಡುತ್ತ, ಬಾಲಲೀಲೆಗಳನ್ನು ಮಾಡುತ್ತಿದ್ದರು; ಮುಗ್ಧ ಮನೋವೃತ್ತಿಯನ್ನು ತಾಳುತ್ತಿದ್ದರು. ಕತ್ತಲೆ ಕವಿದ ರಾತ್ರಿಗಳಲ್ಲಿ, ಆ ಪರವಸ್ತುವಿನ ಪ್ರಕಾಶವನ್ನೇ ನೋಡುತ್ತ, ನಲಿಯುತ್ತ, ಏನು ಬೆಳಕು! ಏನು ಹೊಳಪು! ಎಷ್ಟು ಬೆಳ್ಳಗಿದೆ’ ಎಂದು ನುಡಿಯುತ್ತಿದ್ದರು. ಅರಳಿದ ಹೂಗಳನ್ನು ನೋಡಿದಾಗ, ಅವರ ಹೃದಯವೂ ಅರಳುತ್ತಿದ್ದಿತು; “ಆಹಾ! ಲಿಂಗಪೂಜೆ ಎಷ್ಟು ಚೆನ್ನಾಗಿ ನಡೆದಿದೆ’ ಎಂದು ಅವುಗಳಿಗೆ ಕೈ ನೀಡುತ್ತಿದ್ದರು. ಪರಿಚಿತರನ್ನು ಸಹ, ನೀವು ಯಾರು? ಎಲ್ಲಿಂದ ಬಂದಿರಿ? ಎಂದು ವಿಚಾರಿಸುತ್ತಿದ್ದರು. ತಮ್ಮ ಪೂಜಾಗೃಹವಾದ ಯೋಗ ಮಂಟಪವನ್ನು ನೋಡಿ, ಇದು ಯಾರ ಮನೆ? ಯೋಗಮಂಟಪ ಎಲ್ಲಿದೆ? ಎಂದು ಕೇಳುತ್ತಿದ್ದರು.ಈ ತೆರನಾದ ಸ್ಥಿತಿಯು ಯೋಗಿಗಳಿಗೆ ಅರ್ಧಪ್ರಜ್ಞಾವಸ್ಥೆಯಲ್ಲಿ ಬರುವುದುಂಟು.ಶಿವಯೋಗಿಗಳು, ಅಂತಃಪ್ರಜ್ಞಾವಸ್ಥೆಯ ನಿರ್ವಿಕಲ್ಪ ಸಮಾಧಿಯಿಂದ ಅರ್ಧ ಪ್ರಜ್ಞಾವಸ್ಥೆಗೆ ಬಂದು, ನಿಮಿಷಾರ್ಧದಲ್ಲಿ ಪ್ರಜ್ಞಾವಸ್ಥೆಗೆ ಬರುತ್ತಿದ್ದರು. ಅವರು ಪ್ರಜ್ಞಾವಸ್ಥೆಯಲ್ಲಿ ಸಹಜವಾಗಿಯೂ, ಅರ್ಧ ಪ್ರಜ್ಞಾವಸ್ಥೆಯಲ್ಲಿ ಲೋಕವಿಲಕ್ಷಣವಾಗಿಯೂ, ಅಂತಃಪ್ರಜ್ಞಾವಸ್ಥೆಯಲ್ಲಿ ನಿಸ್ತರಂಗ ಸಮುದ್ರದಂತೆ ನಿಶ್ಚಲವಾಗಿಯೂ ತೋರುತ್ತಿದ್ದರು.ಅವರ ಲಿಂಗಾನಂದದ ಕೊನೆಯ ದಿನಗಳನ್ನು ಶಬ್ದಗಳಿಂದ ತಿಳಿಯಲು ಸಾಧ್ಯವಿಲ್ಲ! ಅವರು ಕುಳಿತರೂ, ನಿಂತರೂ, ನಡೆದರೂ, ಮಲಗಿದರೂ ಯಾವಾಗಲೂ ಲಿಂಗಪೂಜೆಯ ವಿಚಾರದಲ್ಲಿರುತ್ತಿದ್ದರು. ‘ಲಿಂಗ ಪೂಜೆಗೆ ಹೊತ್ತಾಯಿತು, ಸ್ನಾನಕ್ಕೆ ಹೋಗಬೇಕು’ ಎನ್ನುತ್ತಿದ್ದರು. ಅವರ ಕ್ರಿಯೆಗಳೆಲ್ಲವೂ ಲಿಂಗದಲ್ಲಿ ಎರಕವಾಗಿದ್ದವು.ಬಲವತ್ತರವಾದ ಸಂಸ್ಕಾರವೇ ಪೂಜಾಪದಾರ್ಥವಾಗಿ, ಅವರ ಲಿಂಗಪೂಜೆ ನಿರಾತಂಕವಾಗಿ ನಡೆಯುತ್ತಿದ್ದಿತು. ಇಷ್ಟೊಂದು ಪರಿಪಕ್ವ ಸ್ಥಿತಿಯನ್ನು ಸಂಪಾದಿಸಿ,ಅವರ ಸಾಧನೆ ಸಫಲವಾಯಿತು. ಈಗ ಅವರು ಸದೇಹ ಮುಕ್ತಿಯಿಂದ ವಿದೇಹ ಮುಕ್ತಿಗೆ ಸಾಗಿದ್ದರು; ಪ್ರಕಾಶದಿಂದ ಲೋಕ ಚೇತನವನ್ನು ಜಾಗೃತಗೊಳಿಸಿ,ಅಸ್ತಂಗತನಾಗುವ ಸೂರ್ಯನಂತೆ, ತಮ್ಮ ಸ್ಥಾನವನ್ನು ಕುರಿತು ಪ್ರಯಾಣೋನ್ಮುಖ ರಾಗಿದ್ದರು.

ಶಿವಯೋಗಿಗಳು ಲಿಂಗೈಕ್ಯರಾಗುವ ಸಮಯ ಸನ್ನಿಹಿತವಾಯಿತು. ಮಠದ ಮೂರ್ತಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳಿಗೆ, ದಾಸೋಹಂಭಾವದ ಕೊನೆಯ ಸಂದೇಶವನ್ನು ದಯಪಾಲಿಸಿದರು ಮತ್ತು ತಮ್ಮ ಉತ್ತರಕ್ರಿಯೆಗಳನ್ನು ನಿರಾಡಂಬರವಾಗಿ,ಯಥಾರೀತಿ ಜರುಗಿಸಬೇಕೆಂದು ಕಟ್ಟಪ್ಪಣೆ ಮಾಡಿದರು. ಶಾ.ಶ.೧೮೪೩ನೆಯ (ಕ್ರಿ.ಶ. ೧೯೨೧) ದುರ್ಮತಿ ಸಂವತ್ಸರದ ಚೈತ್ರ ಬಹುಳ ಪಾಡ್ಯ ಶನಿವಾರ ಸಂಜೆ ೪ ಘಂಟೆಗೆ, ಶಿವಯೋಗಿಗಳು ಕೊನೆಯ ಸಾರೆ ಶಿವಾರ್ಚನೆಗೆಂದು ಸ್ನಾನ ಮಾಡಿದರು;ಪೂಜಾಗೃಹಕ್ಕೆ ಬಂದರು; ಲಿಂಗಪೂಜೆಗೆ ಕುಳಿತರು; ಪದ್ಧತಿಯಂತೆ ಲಿಂಗಪೂಜೆಯನ್ನುಮಾಡಿದರು; ಕಣ್ತುಂಬ ಲಿಂಗವನ್ನು ನೋಡಿದರು; ಲಿಂಗದಲ್ಲಿ ಕೂಡಿದರು; ಲಿಂಗವಾದರು!ಬ್ರಹ್ಮರಂಧ್ರದ ಊರ್ಧ್ವಮಾರ್ಗದಿಂದ, ಅವರ ದಿವ್ಯಾತ್ಮವು ಪರಮಾತ್ಮನನ್ನು ಸೇರಿ ಸಮರಸವಾಯಿತು. ಒಡಲುಗೊಂಡು, ಒಡಲುವಿಡಿಯದೆ, ಒಡಲಿಲ್ಲದ ನಿಜವ ಬೆರಸಿ ಅವರು ಬಯಲಾದರು! ನಿಜವನರಿದ ನಿಶ್ಚಿಂತನೂ, ಮರಣವ ಗೆಲಿದ ಮಹಂತನೂ, ಘನವ ಕಂಡ ಮಹಿಮನೂ, ಪರವನೊಳಕೊಂಡ ಪರಿಣಾಮಿಯೂ, ಬಯಲ ಒದಗಿದ ಭರಿತನೂ, ನಿರಾಳವನೊಳಕೊಂಡ ಸಹಜನೂ ಆದ ಮುರುಘ ಮಹಾಶಿವಯೋಗಿಯು ಬಯಲಾದನು! ಭರಿತನಾದನು!! ಆ ಮಹಾವಿಭೂತಿಯ ಅಸಾಧಾರಣ ಸತ್ವವನ್ನು ನೋಡಿ ಕೃತಾರ್ಥನಾದ ಸೂರ್ಯದೇವನು, ಅಸ್ತಾಚಲಕ್ಕೆ ನಡೆದನು .

ಶಿವಯೋಗಿಗಳ ಚರಿತ್ರೆ, ಕಲ್ಪನಾ ವಿಲಾಸದ ಕಟ್ಟು ಕತೆಯಲ್ಲ; ಅದೊಂದು ಪರಿಪೂರ್ಣಜೀವನದ ಬೃಹದ್ದರ್ಶನ, ಪ್ರತ್ಯಕ್ಷದರ್ಶನ. ಅದನ್ನು, ಎಲ್ಲರೂ ತಮ್ಮ ತಮ್ಮ ಅಂತರಂಗದ ಆರೋಗ್ಯವನ್ನು ಸರಿಗೊಳಿಸಲು ಓದುವುದು ಅವಶ್ಯವಿದೆ. ಮಹಾತ್ಮರ ಚರಿತ್ರೆಗಳು, ಮಾನವನ ಅಂತರಂಗವನ್ನು ತಿದ್ದಿ, ಆರೋಗ್ಯವೃದ್ಧಿಯನ್ನುಂಟು ಮಾಡುವ ಅಮೂಲ್ಯ ಸಾಧನಗಳು, ಅಂತರಂಗದಲ್ಲಿ ಆರೋಗ್ಯವಿಲ್ಲದ ನರನು ಪಶುಪ್ರಾಣಿ.ಅಂತರಂಗದ ಆರೋಗ್ಯವೇ ಅಂತರಂಗದ ಕಾಂತಿ ಮತ್ತು ಶಾಂತಿ. .

ಸಂಗ್ರಹ ಸಹಾಯ : ಪರಮಪೂಜ್ಯ .ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮರುಘಾಮಠ ಧಾರವಾಡ

 

ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಸಮಾಜದ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿದ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ನಮ್ಮ ನಾಡಿನ ಶ್ರೇಷ್ಠ ಪದಕಾರರಲ್ಲಿ ಒಬ್ಬರಾಗಿದ್ದರು . ಸಮಾಜದ ಸೇವೆಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದ ಅವರು ಬರೆದುದು ತುಂಬ ಕಡಿಮೆ. ನಂತರದ ಪೀಳಿಗೆಯವರು ಅವುಗಳನ್ನು  ಸಂಗ್ರಹಿಸಿ ಉಳಿಸಿಕೊಂಡಿರುವುದು ಇನ್ನೂ ಕಡಿಮೆ.  ಆದರೆ ಬರೆದಷ್ಟು ಮಾತ್ರ ಅರ್ಥಪೂರ್ಣ ಹಾಗು ಸತ್ವಪೂರ್ಣ . ಅವರು ಬರೆದ, ಪದ್ಯಗಳಲ್ಲಿ ಪ್ರಮಥರನ್ನು ಮಹಾತ್ಮರನ್ನು ಕುರಿತು ಬರೆದ ಸ್ತುತಿ ಪರ ಪದ್ಯಗಳೇ ಅಧಿಕ . ಶಿವಯೋಗ ಅಥವಾ ಶಿವಯೋಗಿ ಅಂಕಿತದಲ್ಲಿ ತಮ್ಮ ಪದ್ಯಗಳನ್ನು ನಾಡಿಗೆ ನುಡಿಕಾಣಿಕೆಯಾಗಿ ಸಮರ್ಪಿಸಿದ್ದ ಅವರು ಆಶು ಕವಿತ್ವ ಹೊಂದಿದ್ದರು . ಹಾಗೆಯೇ ಅವರು ತಮ್ಮ ಪದ್ಯಗಳಲ್ಲಿ ಬಸವಾದಿ ಪ್ರಮಥರ ತತ್ವ ಮತ್ತು ಮೌಲ್ಯಗಳನ್ನು ತುಂಬಿ ಅವುಗಳನ್ನು ಸತ್ವಪೂರ್ಣವಾಗಿಸಿರುವುದು ಬಹು ವಿಶೇಷ. ಪ್ರಸ್ತುತ ಅವರ ಆಶು ಕವಿತ್ವದ ನಿಷ್ಪತ್ತಿಯಾಗಿರುವ ಒಂದು ಪದ್ಯವನ್ನು ಕುರಿತು ಇಲ್ಲಿ  ವಿವೇಚಿಸಲಾಗಿದೆ . ಜಂಗಮ ಶ್ರೇಷ್ಠರು , ಶಿವಯೋಗಿ ನಾಮಾಂಕಿತರೂ ಆಗಿದ್ದ  ಅಥಣಿ ಗಚ್ಚಿನಮಠದ ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಲಿಂಗದೇಹಕ್ಕೆ ಮಂಗಳ ಸ್ತುತಿ – ಗೈದ ಸಂದರ್ಭದ ಪದ್ಯವಿದು .

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

ನಾಲ್ಕು ನಾಲ್ಕು ಸಾಲುಗಳ ಒಂದು ಪಲ್ಲವಿ ಮತ್ತು ಐದು ನುಡಿಗಳ ಒಟ್ಟು ಇಪ್ಪತ್ನಾಲ್ಕು ಸಾಲುಗಳಲ್ಲಿ ರಚಿತವಾದ ಈ ಪದ್ಯದ ಪ್ರತಿಯೊಂದು ನುಡಿಯಲ್ಲಿರುವ ಸಾಲುಗಳ ಎರಡನೆಯ ಅಕ್ಷರ ಪ್ರಾಸದಿಂದ ಕೂಡಿದೆ . ಹಾಗೆಯೇ ಇಡೀ ಪದ್ಯವು ಛಂದೋಲಯ ಬದ್ಧವಾಗಿದೆ . ಪದ್ಯದ ಪಲ್ಲವಿಯಲ್ಲಿ ದೃಷ್ಟಿಯೋಗದ ಮೂಲಕ ಶಿವಯೋಗವನ್ನು ಸಾಧಿಸಿದ ಪರಮ ಶಿವಯೋಗಿಗೆ ಮಂಗಲವಾಗಲಿ ಎಂದು ಹೇಳುತ್ತಾ ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಾಮಹಿಮರು ಪೂಜ್ಯಶ್ರೀ ಮುರುಘೇಂದ್ರ ಶಿವಯೋಗಿಗಳು ಎಂಬ ತಮ್ಮ ಭಾವವನ್ನು ಅಭಿವ್ಯಕ್ತಗೊಳಿಸಿದ್ದಾರೆ . ನಂತರದ ಮೂರು ನುಡಿಗಳಲ್ಲಿ ಸ್ವಯ , ಚರ ಮತ್ತು ಪರ ಜಂಗಮದ ಲಕ್ಷಣಗಳನ್ನು ವಿವರಿಸುತ್ತ ನಾಲ್ಕು ಮತ್ತು ಐದನೆಯ ನುಡಿಗಳಲ್ಲಿ ಅಥಣಿಯ ಶಿವಯೋಗಿಗಳು ಲಿಂಗಾಯತ ಧರ್ಮದ ಮತ್ತು ಬಸವಾದಿ ಪ್ರಮಥರು ಆಚರಿಸಿ ತೋರಿದ ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳನ್ನು ಸಾಧಿಸಿ ತಮ್ಮಲ್ಲಿರುವ ಅನುಪಮ ಸದ್ಭಕ್ತಿಯ ಫಲವಾಗಿ ಜಂಗಮ ಶ್ರೇಷ್ಠರಾದ ಬಗೆಯನ್ನು , ಎಲ್ಲದಕ್ಕೂ ರಾಮಬಾಣದಂತಿರುವ ಬಸವಾದಿ ಪ್ರಮಥರ ನಾಮವನ್ನು ಪರಮ ಪ್ರೇಮದಿಂದ ಉಚ್ಚರಿಸುತ್ತ ಗೆಲ್ಲಲು ಕಷ್ಟ   ಸಾಧನವಾದ ಮಾಯೆಯನ್ನು ಗೆಲಿದ ಬಗೆಯನ್ನು ಹೃದಯಂಗಮವಾಗಿ  ಬಣ್ಣಿಸಿದ್ದಾರೆ .ಭಕ್ತಾದಿ ಐಕ್ಯ ಸ್ಥಲ ದ ವರೆಗಿನ ಅಧ್ಯಾತ್ಮ ಸಾಧನೆಯನ್ನು ಪೂರ್ಣಗೊಳಿಸಿ ಷಟ್ಸ್ಥಲ ಬ್ರಹ್ಮಿ ಗಳೇ ತಾವಾದ ಮತ್ತು ಪರಶಿವನಲ್ಲಿ ಬೆರೆಸಿ ಬೇರಾಗದ ಸ್ಥಿತಿ ಯನ್ನು   ಹೊಂದಿದ ಮುರುಘ ಶಿವಯೋಗಿಗೆ . ಮಂಗಲವಾಗಲಿ ಎಂದು ಪದ್ಯವನ್ನು ಪೂರ್ಣಗೊಳಿಸಿದ್ದಾರೆ .

ಪ್ರಸ್ತುತ ನಾವು ಇಲ್ಲಿ ವಿವರಿಸಬೇಕಾಗಿರುವುದು ಪೂಜ್ಯಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ ಎಂಬ ವಿಷಯವನ್ನು ಕುರಿತು , ಜಂಗಮ ತತ್ವದ ಸ್ವಯ , ಚರ ಮತ್ತು ಪರ ಎಂಬ ಪ್ರಮುಖ ಭೇದಗಳು ಪ್ರಸ್ತುತ ಪದ್ಯದ ಮೊದಲಿನ ಮೂರು ನುಡಿಗಳಲ್ಲಿ ಸುಭಗ ಸುಂದರವಾಗಿ , ಅರ್ಥಪೂರ್ಣವಾಗಿ ಮೂಡಿಬಂದಿವೆ . ಈ ಮೂರು ಭೇದಗಳನ್ನು ಅರಿಯುವ ಮತ್ತು ವಿಶ್ಲೇಷಿಸುವ ಮೊದಲು ಲಿಂಗಾಯತ ಧರ್ಮದ ತತ್ವವಾಚಕ ಪದಗಳಲ್ಲಿ ಒಂದಾಗಿರುವ ‘ ಜಂಗಮ’ದ ಬಗ್ಗೆ ಸ್ಕೂಲವಾಗಿಯಾದರೂ ತಿಳಿದುಕೊಳ್ಳುವುದು ಅತ್ಯವಶ್ಯವೆನಿಸುತ್ತದೆ .

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಕ್ಕೆ ವಿಶಿಷ್ಟ ಸ್ಥಾನವಿದೆ . ಗುರು , ಲಿಂಗ ,  ಜಂಗಮ , ವಿಭೂತಿ , ರುದ್ರಾಕ್ಷಿ , ಮಂತ್ರ , ಪಾದೋದಕ ಮತ್ತು ಪ್ರಸಾದ ಎಂಬ   ಎಂಟು ತತ್ವಗಳೇ ಅಷ್ಟಾವರಣಗಳು . ಇವುಗಳಲ್ಲಿ ‘ ಗುರು , ಲಿಂಗ , ಜಂಗಮ ‘ ಗಳು ಲಿಂಗಾಯತ ಉಪಾಸಕನ ಉಪಾಸ್ಯ ಮೂರ್ತಿಗಳು , ವಿಭೂತಿ , ರುದ್ರಾಕ್ಷಿ ಮತ್ತು ಮಂತ್ರ ಇವು ಉಪಾಸನೆಯ ಸಾಧನಗಳಾದರೆ ಪಾದೋದಕ , ಪ್ರಸಾದಗಳು ಉಪಾಸನೆಯ ಫಲಗಳೆಂದು ಕೀರ್ತಿತವಾಗಿವೆ . ಇವು ಕೇವಲ ಬಹಿರಾಡಂಬರದ ವಸ್ತುಗಳಲ್ಲ , ಲಿಂಗಾಯತ ಸಾಧಕನನ್ನು ಲೌಕಿಕ ವಿಷಯ ವ್ಯಾಮೋಹಗಳಿಂದ ರಕ್ಷಿಸುವ ಕವಚ ( ಆವರಣ ) ಗಳಾಗಿವೆ . ಇವುಗಳಲ್ಲಿ ಗುರು ಲಿಂಗ ಜಂಗಮ ಈ ಮೂರು ಒಬ್ಬನೇ ಪರಶಿವನ ಭೇದಗಳೇ ಆಗಿದ್ದರೂ ಕರ್ತವ್ಯ ಭೇದದಿಂದ ಪ್ರತ್ಯೇಕತೆಯನ್ನು ಹೊಂದಿದ ವಿಶಿಷ್ಟ ತತ್ವಗಳಾಗಿವೆ . ಗುರು ಸಾಧಕನ ಅಜ್ಞಾನವನ್ನು ಕಳೆದು , ಅವನದೇ ಚೈತನ್ಯವಾದ ಪರಶಿವ ಕಳೆಯನ್ನು ಇಷ್ಟಲಿಂಗ ರೂಪದಲ್ಲಿ ಸಾಧಕನ ಕೈಗಿತ್ತು ಮಾರ್ಗದರ್ಶಕನೆನಿಸುತ್ತಾನೆ . ಕರಸ್ಥಲದಲ್ಲಿ ವಿರಾಜಮಾನವಾದ ಇಷ್ಟಲಿಂಗ ( ಲಿಂಗ ) ವು ದೃಷ್ಟಿಯೋಗ ಮತ್ತು ಶಿವಯೋಗದ ಸಾಧನವಾಗಿ ಅದರಲ್ಲೂ ವಿಶೇಷವಾಗಿ ಸಾಧಕನ ಆರಾಧ್ಯ ಮೂರ್ತಿಯಾಗಿ ಪೂಜೆಗೊಳ್ಳುತ್ತದೆ . ಇನ್ನು ಜಂಗಮದ ಕರ್ತವ್ಯ ತುಂಬ ವಿಶಿಷ್ಟ.‌ “ ಗುರುವಿನ ಗುರು ಜಂಗಮ ಇಂತೆಂದುದು ಕೂಡಲಸಂಗನ ವಚನ “  ಎಂದು ಧರ್ಮಗುರು ಬಸವಣ್ಣನವರು ಹೇಳುವ ಮೂಲಕ ಜಂಗಮದ ಸ್ಥಾನವನ್ನು ನಿರ್ದೇಶಿಸಿದ್ದಾರೆ . ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವುದು , ಭಕ್ತರ ಭಕ್ತಿಯನ್ನು ಪರೀಕ್ಷಿಸಿ ತಪ್ಪಿದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಸುವುದು ಜಂಗಮನ ಕರ್ತವ್ಯ , ಜಂಗಮ ಎಂಬುದು ಮಾರ್ಗದರ್ಶನ ಮಾಡುವುದು , ಸಂದರ್ಭ ಬಂದರೆ ದಂಡಿಸಿಯಾದರೂ ಸನ್ಮಾರ್ಗದಲ್ಲಿ ಮುನ್ನೆಡೆಸುವದು ಜಂಗಮನ ಕರ್ತವ್ಯ. ಜಂಗಮ ಎಂಬುದು ಇಂದಿನ ಜಾತಿವಾಚಕ ಪದವಲ್ಲ , ಅದೊಂದು ಆಧ್ಯಾತ್ಮಿಕ ನಿಲವು , ಅನುಭಾವದ ಉನ್ನತಾವಸ್ಥೆ ಎಂದು ಹೇಳಬಹುದು . ಜಾತಿ , ಕುಲ , ದೇಶ , ಕಾಲಗಳ ಯಾವ ಪರಿಮಿತಿಗೂ ಸೀಮಿತವಾಗದೆ ತನ್ನ ಸಾಧನೆಯಿಂದ ಜಗದ್ಭರಿತನಾಗಿ ಬೆಳೆದ ಚೇತನವೇ ಜಂಗಮ , ಭಕ್ತೋದ್ದಾರ ಮತ್ತು ಸಮಾಜ ಕಲ್ಯಾಣ ಇವು ಜಂಗಮನ ಕಾಯಕಗಳು . ಚಲನಶೀಲತೆ ಅರ್ಥಾತ್ ಕ್ರಿಯಾಶೀಲತೆ ಜಂಗಮನ ಪ್ರಮುಖ ಲಕ್ಷಣಗಳಲ್ಲೊಂದು . ಅವನಿಗೆ ಅಂಗವಿದ್ದರೂ ಅಂಗದ ಬಯಕೆಗಳಿಲ್ಲ . ಆಶೆ ಆಮಿಷಗಳಿಲ್ಲ . ಅವನು ಜ್ಞಾನ ಆನಂದಗಳ ಮೂರ್ತಿಯಾಗಿರುವನು . ಕೇವಲ ಕಾವಿಬಟ್ಟೆ , ವಿಭೂತಿ , ರುದ್ರಾಕ್ಷಿಮಾಲೆ ಧರಿಸಿದವರು , ಕೈಯಲ್ಲಿ ಜೋಳಿಗೆ ದಂಡ ಹಿಡಿದವರು ಜಂಗಮರಲ್ಲ . ಅವರು ಕೇವಲ ವೇಷಧಾರಿಗಳಷ್ಟೆ, ದೇಹಭಾವವನ್ನಳಿದು ಪರಮಾತ್ಮನಲ್ಲಿ ಸಾಮರಸ್ಯ ಹೊಂದಿದವನು , ಲಿಂಗಮೂರ್ತಿಯೇ ತಾನಾಗಿ ನಿಂದವನು , ನಡೆ ನುಡಿಗಳಲ್ಲಿ ಸತ್ಯವನ್ನೂ , ಅಂತರಂಗದಲ್ಲಿ ಶಿವಭಾವವನ್ನೂ ಹೊಂದಿದವನು ಮಾತ್ರ ಜಂಗಮನೆನಿಸಿಕೊಳ್ಳಲು ಅರ್ಹನಾಗುತ್ತಾನೆ . ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿರುವ ಇಂತಹ ಜಂಗಮದ ಸುಳುಹು ಜಗತ್ಪಾವನ , ಅವನ ನುಡಿ ಪರಮ ಬೋಧೆ , ದರ್ಶನ ಸ್ಪರ್ಶನ ಮಹಾಪುಣ್ಯ . ಇಂತಹ ಜಂಗಮನನ್ನು ಪ್ರಾಣವಾಗಿಸಿಕೊಂಡ ಭಕ್ತನ ಸರ್ವಾಂಗವೆಲ್ಲವೂ ಶುದ್ಧವಾಗುತ್ತದೆ . ಕಾರಣವೆಂದರೆ ಜಂಗಮನು ಭಕ್ತನ ಭವರೋಗವನ್ನು ಕಳೆದು ಅವನನ್ನು ಮುಕ್ತನನ್ನಾಗಿಸುತ್ತಾನೆ . ` ಭವರೋಗವ ಕಳೆವ ಪರಿಯ ನೋಡಾ ಮಡಿವಾಳನ ಕಾಯಕದಂತೆ ‘ ಎಂದು ವಚನಗಳಲ್ಲಿ ಉಕ್ತವಾಗಿರುವುದು ಯಥೋಚಿತವಾಗಿದೆ . ಏಕೆಂದರೆ ಮಡಿವಾಳನು ಬಟ್ಟೆಗಳನ್ನು ಎತ್ತಿ ಎತ್ತಿ ಒಗೆದು ಹಿಂಡಿ ಅದರ ಕೊಳೆಯನ್ನು ತೆಗೆಯುವಂತೆ ಜಂಗಮನು ಭಕ್ತನ ಭವರೋಗದ ಕೊಳೆಯನ್ನು ತೆಗೆದು ಪರಿಶುದ್ಧವಾಗಿಸುತ್ತಾನೆ . ಒಟ್ಟಾರೆ ಸಮಾಜ ಕಲ್ಯಾಣವನ್ನೇ ಗುರಿಯಾಗಿಸಿಕೊಂಡ ಜಂಗಮನು ಸಮಾಜ ಕಲ್ಯಾಣಕ್ಕಾಗಿ ಧನಧಾನ್ಯಗಳನ್ನು ಸಂಗ್ರಹಿಸಬಹುದು . ಆದರೆ ಅಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ . ಆದ್ದರಿಂದ ಭಕ್ತನಾದವನೂ ಕೂಡ ಇಂತಹ ಜಂಗಮವೇ ತನ್ನ ಪ್ರಾಣವೆಂದರಿದು ತನು ಮನ ಧನಗಳನ್ನು ಸಮರ್ಪಿಸಬೇಕು . ‘ ಜಾಣನು ಜಾಣನು ಆತ ಜಾಣನು ಜಂಗಮಕ್ಕೆ ಸವೆಸುವಾತ ಜಾಣನು ‘ , ಕನ್ನಡಿಯ ನೋಡುವ ಅಣ್ಣಗಳಿರಾ , ಜಂಗಮವ ನೋಡಿರೆ , ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ , ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿ ಮುಂತಾದ ಶರಣರ ವಚನಗಳನ್ನು ಗಮನಿಸಿದರೆ ಜಂಗಮಸೇವೆ ಇಲ್ಲದೆ ಭಕ್ತನ ಆಧ್ಯಾತ್ಮ ಸಾಧನೆ ಅಪೂರ್ಣವೆನಿಸುತ್ತದೆ . ಅಗ್ನಿಯಾಧಾರದಲ್ಲಿ ಕಬ್ಬಿಣ ನೀರುಂಬುವಂತೆ , ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುವಂತೆ ಲಿಂಗದ ಮುಖ ಜಂಗಮವೆಂದು ತಿಳಿದು ಜಂಗಮಕ್ಕೆ ಸಕಲ ಪಡಿಪದಾರ್ಥಗಳನ್ನು ಸಮರ್ಪಿಸಬೇಕೆಂಬುದು ಧರ್ಮಗುರು ಬಸವಣ್ಣನವರ ಆದೇಶ . ಆದರೆ ಇಲ್ಲಿ ‘ ಬೇಡುವಾತ ಜಂಗಮನಲ್ಲ , ಬೇಡಿಸಿಕೊಂಬಾತ ಭಕ್ತನಲ್ಲ ‘ ನಿಯಮವು ಭಕ್ತ ಜಂಗಮರಲ್ಲಿ ಪರಿಪಾಲನೆಯಾಗಬೇಕಾದುದು ಮಾತ್ರ ಅತ್ಯವಶ್ಯವಾಗಿದೆ . ‘ ಜಂಗಮದರಿವು     ಬೇಡಿದಲ್ಲಿ ಹೋಯಿತು ‘ ಎಂಬಂತೆ ಜಂಗಮ  ಬೇಡಿ ಹಾಳಾದರೆ ಭಕ್ತನು ಬೇಡಿಸಿಕೊಂಡು ತನ್ನ ಸಾಧನೆಯಿಂದ ಚ್ಯುತನಾಗುತ್ತಾನೆ . ಆದ್ದರಿಂದ ಭಕ್ತನು

ಬೇಡಿಸಿಕೊಳ್ಳದೆ   ಸರ್ವಾರ್ಪಣ ಭಾವದಿಂದ ಜಂಗಮಕ್ಕೆ ಸಮರ್ಪಿಸಬೇಕು . ಜಂಗಮನಾದರೂ ಸಮಾಜ ಕಲ್ಯಾಣಕ್ಕಾಗಿ ಅದನ್ನು ನಿಸ್ವಾರ್ಥ ಮನೋಭಾವದಿಂದ ಸ್ವೀಕರಿಸಿ ತೃಪ್ತಿ ಹೊಂದಬೇಕು . ಹೀಗೆ ಜಂಗಮ ತೃಪ್ತಿ ನಡೆದರೆ ಜಗತ್ತಿನ

ತೃಪ್ತಿಯಾಗುವುದು .

ಶಿವಯೋಗಿನಿ ಸಂತೃಪ್ತೇ   ತೃಪ್ತೋಭವತಿ ಶಂಕರ : |

 ತತ್‌ ತೃಪ್ತ್ಯಾ ತನ್ಮಯಂ ವಿಶ್ವಂ ತೃಪ್ತಿಮೇತಿ ಚರಾಚರಂ

ಎಂಬಂತೆ ಶಿವಸ್ವರೂಪಿ , ಶಿವಯೋಗಿಯಾಗಿರುವ ಜಂಗಮನು ತೃಪ್ತನಾದರೆ ಪರಶಿವನೇ ತೃಪ್ತನಾದಂತೆ . ಪರಶಿವನ ತೃಪ್ತಿಯಾದರೆ ಅವನ ಅಂಶದಿಂದ ಕೂಡಿ ಸಕಲ ಚರಾಚರಗಳಿಂದ ಯುಕ್ತವಾಗಿರುವ ವಿಶ್ವವೂ ತೃಪ್ತಿಯಾದಂತೆಯೆ ,

ಹೀಗೆ ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ . ಹಾನಗಲ್ಲ ಕುಮಾರ ಸ್ವಾಮಿಗಳವರು ಮೇಲೆ ಉಲ್ಲೇಖಿಸಿದ ಪದ್ಯದ ಮೊದಲನೆಯ ನುಡಿಯಲ್ಲಿ ಸ್ವಯ ಜಂಗಮದ ಲಕ್ಷಣವನ್ನು ಹೀಗೆ ಹೇಳುತ್ತಾರೆ ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು . ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು . ಅದನ್ನು ಹಾನಗಲ್ಲ ಕುಮಾರಸ್ವಾಮಿಗಳವರು ತಮ್ಮ ಪದ್ಯದ ಎರಡನೆಯ ನುಡಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ . ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮನೆಂದು ಹೇಳುತ್ತ ಅಂತಹ ಚರ ಜಂಗಮ ಸಮೂಹದಲ್ಲಿ ಗುರುಸ್ಥಾನವನ್ನು ಅಥಣಿಯ ಶಿವಯೋಗಿಗಳು ಹೊಂದಿದ್ದರು ಎಂಬುದನ್ನು ಅವರು ಸ್ಮರಿಸಿಕೊಳ್ಳುತ್ತಾರೆ . ಲಿಂಗಾಯತ ಧರ್ಮದಲ್ಲಿ ಚರಜಂಗಮನ ಸ್ಥಾನ ಬಹಳ ಮಹತ್ವದ್ದು .

ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ |

ಚರತ್ಯತಿಥಿ ರೂಪೇಣ ನಮಸ್ತೇ ಜಂಗಮಾತ್ಮನೇ  ॥

ಎಂಬ ಮಾತಿನಲ್ಲಿಯೂ ಕೂಡ ಸಾಕ್ಷಾತ್ ಪರಶಿವನೇ ಜನಕಲ್ಯಾಣ ದೃಷ್ಟಿಯಿಂದ ಚರಜಂಗಮನಾಗಿ ಲೋಕದಲ್ಲಿ ಸುಳಿಯುತ್ತಾನೆ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ . ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು . ಇದೇ ಭಾವವನ್ನು ಇದಕ್ಕಿಂತಲೂ ಸ್ಪಷ್ಟವಾಗಿ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಮೇಲಿನ ಪದ್ಯದ ಮೂರನೆಯ ನುಡಿಯಲ್ಲಿ ತಿಳಿಯಪಡಿಸುತ್ತಾರೆ . ಅವರ ದೃಷ್ಟಿಯಲ್ಲಿ ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು . ಹೀಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಮೂರು ರೀತಿಯ ಭೇದಗಳಿಂದ ಕೂಡಿದ ಜಂಗಮ ತತ್ವದ ಸ್ವರೂಪವನ್ನು ಮೂರು ನುಡಿಗಳಲ್ಲಿ ಕರಿಯು ಕನ್ನಡಿಯೊಳಡಗಿದಂತೆ ಹಿಡಿದಿರಿಸಿದ ಪರಿ ತುಂಬ ಮನೋಜ್ಞವಾಗಿದೆ .