ಯೋಗವೂ ವೀರಶೈವರೂ

ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ

(ಲೇಖಕರ ಕುರಿತು……..

ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.

ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.

೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ  ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು )

“Each soul is potentially divine. The goal is to manifest this divine within, by controlling nature, external and internal. Do this either by work, or worship, or psychic control, or by philosophy, or by one, or more, or all of these-and be free.”  – Swami Vivekananda

ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲಿ ಯೋಗವು ಒಂದು. ಯೋಗಶಬ್ದದ ವ್ಯಾಖ್ಯೆಯನ್ನು ಬೇರೆ ಬೇರೆ ಜನರು ಬೇರೆ ಬೇರೆ ಪ್ರಕಾರ ಮಾಡಿರುವರು. ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಅದನ್ನು ಸ್ಥಿರಪಡಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತುಬಿಡುವುದೂ ಮತ್ತು ಧ್ಯಾನವನ್ನೂ ವಿಷಯ ತನ್ಮಯತೆಯನ್ನೂ ಬಲಿಸುವುದಕ್ಕಾಗಿ ಕುಂಭಕ, ಪೂರಕ, ರೇಚಕಗಳ ದ್ವಾರಾ ಸ್ಥೂಲ ಶರೀರದೊಳಗಿನ ಮಲಿನತೆಯನ್ನು ನಾಶಮಾಡಿ ವ್ಯಾಧಿಗಳನ್ನು ಗೆಲಿಯುವುದೂ ಯೋಗದ ಉದ್ದೇಶಗಳು. ಮೇಲಾಗಿ ಯೋಗದಿಂದ ಅಂತರಂಗ ಬಹಿರಂಗಗಳ ಶುದ್ಧಿಯಾಗುವದಲ್ಲದೆ ಈಶ್ವರ ಧ್ಯಾನವು ಬಲಪಡುವುದು.

ಆವಕಾಲದಲ್ಲಿ ಯೋಗವು ಉದ್ಭವಿಸಿತೆಂಬುದನ್ನು ಅದರ ಉತ್ಪಾದಕ ರಾರೆಂಬುದನ್ನು ಖಂಡಿತವಾಗಿ ಈಗ ಹೇಳಲು ಸಾಧ್ಯವಿಲ್ಲ. ಪ್ರಾಚೀನ ಗ್ರಂಥಗಳಾದ ಉಪನಿಷತ್ತುಗಳಲ್ಲಿ ಅಲ್ಲಲ್ಲಿ ಯೋಗಕ್ಕೆ  ಸಂಬಂಧಿಸಿದ ವಾಕ್ಯಗಳು ಕಂಡುಬರುವವು. ಬೌದ್ಧರ ಪ್ರಾಚೀನ ಮತ್ತು ಪವಿತ್ರವಾದ ಪುಸ್ತಕಗಳಲ್ಲಿ ಅನೇಕ ಕಡೆಗೆ ಯೋಗಶಾಸ್ತ್ರದ ವರ್ಚಸ್ವವೂ ಅನುಕರಣೆಯೂ ಕಂಡುಬರುವವು .ಭಗವಾನ್ ಬುದ್ಧದೇವನು ಪೂರ್ವಾಶ್ರಮದಲ್ಲಿ ಅತಿ ಕಠೋರವಾದ ಯೋಗಸಾಧನೆಯನ್ನೇ ಮಾಡಿದನೆಂದು ಪ್ರತೀತಿಯಿದೆ. ಇಷ್ಟೇ ಅಲ್ಲ ಆತನು ಕೈಕೊಂಡ ಅತಿ ಕಟುತರ ಯೋಗದ್ಯೋತಕವೂ,ಕೇವಲ ಅಸ್ತಿಪಂಜರಮಯವೂ   ಆದ ಆತನ ಶಿಲಾ ಪ್ರತಿಮೆಗಳೂ ಇನ್ನೂ ಅನೇಕ ಕಡೆಗೆ ದೊರೆಯುವವು.’ ಗ್ರೀಕ ಅರಸನಾದ ಅಲೆಕ್ಸಾಂಡರನು ಸಮಗ್ರ ದೃಷ್ಟಿಯನ್ನು ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ಕ್ರಿ.ಶ.ಪೂ. ೩.೨೬ರಲ್ಲಿ ನಮ್ಮ ದೇಶವನ್ನೊಳ ನುಗ್ಗಿದಾಗ ಅನೇಕ ಯೋಗಿಗಳನ್ನು ಕಂಡಿದ್ದನಂತೆ. ಇವೆಲ್ಲ ಕಾರಣಗಳಿಂದ ಯೋಗವು ಪ್ರಾಚೀನತಮವೆಂಬುದು ನಿರ್ವಿವಾದವಾದ ಮಾತು.

ಆದರೂ ಆಯಾ ಕಾಲಗಳಲ್ಲಿ ಅಂದರೆ ಉಪನಿಷತ್ ಮತ್ತು ಬೌದ್ಧಕಾಲಗಳಲ್ಲಿಯೋಗವು ಅಸ್ತಿತ್ವದಲ್ಲಿದ್ದರೂ ಅನಿಶ್ಚಿತ ಸ್ವರೂಪ (Unsystematised form) ದಲ್ಲಿಯೇ ಇತ್ತೆಂದೂ, ಅದಕ್ಕೆ ನಿಶ್ಚಿತಸ್ವರೂಪವನ್ನು ಕೊಟ್ಟು, ಷಡ್‌ದರ್ಶನಗಳಲ್ಲೊಂದಾಗುವಂತೆ ಮಾಡಲು ಯತ್ನಿಸಿದವರಲ್ಲಿ ಯೋಗ ಸೂತ್ರಕಾರರೇ ಮೊದಲನೆಯವರೆಂದೂ ಕೆಲವು ವಿದ್ವಾಂಸರ ಮತವು. ಯೋಗಸೂತ್ರಕ್ಕೂ ಮೊದಲಿನವೆಂದು ಗಣಿಸಲ್ಪಡುವ ಗ್ರಂಥಗಳಲ್ಲಿ ಯೋಗ ಶಬ್ದವನ್ನು ನಿಯಮಿತವಾದ ಒಂದೇ ಅರ್ಥದಲ್ಲಿ ಉಪಯೋಗಿಸಿಲ್ಲವೆಂದೂ, ಯೋಗವು ಷಡ್‌ದರ್ಶನಗಳಲ್ಲೊಂದು ಮಹತ್ವದ ಸ್ಥಾನವನ್ನಾಕ್ರಮಿಸಿದ ನಂತರವೇ “ಯೋಗಶ್ಚಿತ್ತವೃತ್ತಿ ನಿರೋಧಃ’ ಎಂಬ ವ್ಯಾಖ್ಯೆಯು ಸರ್ವತ್ರ ಪ್ರಚಲಿತವಾಯಿತೆಂದೂ ಅವರ ಹೇಳಿಕೆಯು, ಪ್ರಸ್ಥಾನತ್ರಯಗಳಲ್ಲೊಂದಾದ ಭಗವದ್ಗೀತೆ ಯಲ್ಲಿಯೂ ಕೂಡ ಯೋಗ ಶಬ್ದವನ್ನು ಭಕ್ತಿ, ಜ್ಞಾನ, ಕರ್ಮ ಮೊದಲಾದ ಶಬ್ದಗಳೊಡನೆ ಜೋಡಿಸಿ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗವೆಂಬುದಾಗಿ ಉಪಯೋಗಿಸಿರುವುದು ಅರಿದಾದ ಮಾತಲ್ಲ.” ಯೋಗದರ್ಶನದ ಅನೇಕಾಂಶಗಳು ಭಗವದ್ಗೀತಾಕಾರರಿಗೆ ಗೊತ್ತಿದ್ದವೆಂಬುದು ನಿಜವು; ಆದುದರಿಂದ ಮೇಲೆ ಸೂಚಿಸಿದ ಕೆಲವು ವಿದ್ವಾಂಸರ ಮತವು ತೀರ ಅನಾದರಣೀಯವಲ್ಲ.

ಯೋಗ ದರ್ಶನದ ಪಿತರೆಂದು ಹೆಸರಾದ ಪತಂಜಲ ಮಹರ್ಷಿಗಳಿಂದತ್ತಿತ್ತಲಾಗಿ ಯೋಗಶಾಸ್ತ್ರವು ಬಲು ವಿಪುಲವಾಗಿ ಬೆಳೆದು, ಅಣಿಮಾ, ಗರಿಮಾ,ಲಘಿಮಾ, ಮಹಿಮಾ ಮೊದಲಾದ ಅಷ್ಟಸಿದ್ಧಿಗಳನ್ನು ಸಂಪಾದಿಸುವ ವಿದ್ಯೆಯೆಂದೂ, ಸಿದ್ದಿಗಳನ್ನು ತಿರಸ್ಕರಿಸಿದರೆ ಈಶ್ವರ ಸಿದ್ಧಿಯ ಮಾರ್ಗವೆಂದೂ ಗಣಿಸಲ್ಪಡಹತ್ತಿತ್ತು. ಅದರ ಓಘವು ಇಷ್ಟಕ್ಕೆ ನಿಲ್ಲಲಿಲ್ಲ ಅನುಭವದಿಂದ ಕಂಡುಹಿಡಿಯಲಸಾಧ್ಯವಾದ

ಅನೇಕ ವಿಷಯಗಳು ಬರಬರುತ್ತ ಅದರಲ್ಲಿ ಸೇರಿ ಯೋಗವೆಂದರೆ ಆರಿಗೂ ತಿಳಿಯದಂಥ ಮತ್ತು ತಿಳಿಹೇಳದಂಥ ಒಂದು ವಿದ್ಯೆ (Mysticism)ಯಾಯಿತು. ಇತ್ತಿತ್ತಲಾಗಿ ಆಗಿ ಹೋದ ಗ್ರಂಥಕಾರರಂತೂ ತಮ್ಮ ಅಸಂಗತ ಮತ್ತು ಅಸಂದಿಗ್ಧವಾದ ಬರಹಗಳಿಂದ ಯೋಗ ವಿದ್ಯೆಯಲ್ಲಿದ್ದ ಅಲ್ಪ ಸ್ವಲ್ಪ ನಿಷ್ಠೆಯನ್ನೂ ನಂಬುಗೆಯನ್ನೂ ಕಳೆದುಬಿಟ್ಟಿರುವರು. ಸ್ವಾಮಿ ವಿವೇಕಾನಂದರ ಆರೋಪವಾದರೂ ಹೀಗೆ ಇರುವುದು. ಗ್ರಂಥಕಾರರು ಹೆಚ್ಚು ಹಳಬರಿದ್ದಷ್ಟು ಹೆಚ್ಚು ತಥ್ಯಾಂಶಗಳು ಅವರ ಗ್ರಂಥಗಳಲ್ಲಿ ಕಂಡುಬರುವವು.

ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ,ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಗಳೆಂದು ಎಂಟು ಅಂಗಗಳಿರುವವು. ಇವುಗಳಲ್ಲಿ ಮೊದಲಿನವೆರಡು ಸದಾಚಾರ ಮತ್ತು ನೀತಿಯನ್ನು ಬೆಳೆಯಿಸುವ ಮಾರ್ಗಗಳು. ಅಧ್ಯಾತ್ಮಿಕೋನ್ನತಿಗೆ ನೀತಿಯೇ ತಳಹದಿಯು, ನಮ್ಮಭೌತಿಕ ವ್ಯವಹಾರದಲ್ಲಿಯೂ ಕೂಡ ನೀತಿಯನ್ನು ಬಿಟ್ಟರೆ ಬಾಳುವೆಯೇ ಹಾಳು. ಮೂರನೆಯಾದದ ಆಸನವು ಶಾರೀರಿಕ ಮತ್ತು ಮಾನಸಿಕ ಚಲನವಲನಗಳನ್ನು ಸರಿಯಾಗಿ ಕಾಯ್ದಿಡಲು ಅನುಕೂಲವಾಗುವುದು. ಯೋಗವನ್ನು ಬಲಿಸುತ್ತಹೋದಂತೆ ಸಾಕಷ್ಟು ಕಾಲ ಪರಿಶ್ರಮವಿಲ್ಲದೆ ಒಂದೇ ಸ್ಥಿತಿಯಲ್ಲಿರುವುದಕ್ಕೋಸುಗ ಇದರ ಉಪಯೋಗವು ಪ್ರಾಣಾಯಾಮದಿಂದ ಶರೀರದೊಳಗಿನ ಮಲಿನತೆಯನ್ನು ಶ್ವಾಸೋಚ್ಛಾಸದ ದ್ವಾರಾ ಹೊರಗೆ ಹಾಕಲು ಸಹಾಯವಾಗುವುದು. ಶರೀರದಲ್ಲಿ ಮಲಿನತೆಯನ್ನಿರಗೊಟ್ಟರೆ ವ್ಯಾಧಿಗಳಿಗೀಡಾಗುವದಲ್ಲದೆ ಮನಸ್ಸು ಮಲಿನವಾಗುವುದು. ಮನಸ್ಸು ಮಲಿನವಾಗಿದ್ದರೆ ಯೋಗವು ಎಂದಿಗೂ ಸಾಧ್ಯವಾಗಲಾರದು. ಪ್ರತ್ಯಾಹಾರ ದಿಂದ ಶರೀರವು ಬಲು ಸ್ಥೂಲವಾಗದಂತೆಯೂ ಬಲು ಕ್ಷೀಣವಾಗದಂತೆಯೂ ಇಡಲು ಬರುವುದು. ಉಳಿದ ಅಂಗಗಳಾದ ಧಾರಣ, ಧ್ಯಾನ, ಸಮಾಧಿಗಳು ಮನಸ್ಸಿಗೆ ಹೆಚ್ಚಾಗಿ ಸಂಬಂಧಿಸಿರುವವು. ಯೋಗ ಶಾಸ್ತ್ರಜ್ಞರು ಅಷ್ಟಾಂಗಗಳಲ್ಲಿ ಅನೇಕ ಭಾಗಗಳನ್ನು ಮಾಡಿ ಯೋಗದರ್ಶನವನ್ನು ಅತಿ ವಿಸ್ತಾರವಾದ ಶಾಸ್ತ್ರಗಳ ಲ್ಲೊಂದನ್ನಾಗಿ ಮಾಡಿರುವರು. ಪತಂಜಲ ಮಹರ್ಷಿಗಳು ಇವುಗಳ ವ್ಯಾಖ್ಯೆಯನ್ನುಹೇಗೆ ಮಾಡಿರುವರೆಂಬುದನ್ನು ಕೆಳಗಿನ ಟಿಪ್ಪಣಿಗಳಿಂದ ಕಂಡುಕೊಳ್ಳಬಹುದು. ಈ ಎಂಟು ಅಂಗಗಳು ಅತಿ ಮಹತ್ವವಾದವು. ಇವು ಯೋಗ ಸಾಧನೆಯ ಎಂಟು ಪಾವಟಿಗೆಗಳೆಂದರೂ ಅಡ್ಡಿಯಿಲ್ಲ. ಇವುಗಳ ಸಿದ್ದಿಯಿಂದಲೇ ಶಾರೀರಕ ಮತ್ತು ಮಾನಸಿಕ ವೃತ್ತಿಗಳನ್ನು ಸ್ವಾಧಿನದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.

ಯೋಗವೇತೃಗಳು ಯೋಗವನ್ನು ಮಂತ್ರಯೋಗವೆಂದೂ ಲಯಯೋಗ ವೆಂದೂ, ಹಠಯೋಗವೆಂದೂ, ರಾಜಯೋಗವೆಂದೂ ನಾಲ್ಕು ವಿಧವಾಗಿ ಹೇಳುವರು. ಓಂಕಾರ ಮೊದಾಲದ ಮಂತ್ರಗಳನ್ನು ಜಪಿಸುವವರು ಮಂತ್ರಯೋಗಿಗಳೆಂದೂ, ಮನೋಮಾರುತನೊಡನೆ ಕೂಡಿದ ಚಿತ್ರವನ್ನು ಆತ್ಮಧೇಯದಲ್ಲಾಗಲೀ ಅಥವಾ ನಾದದಲ್ಲಾಗಲೀ ತಲ್ಲೀನವನ್ನಾಗಿ ಮಾಡುವವರು  ಲಯಯೋಗಿಗಳೆಂದೂ, ಅಷ್ಟಾಂಗ ಮಾರ್ಗಗಳಿಂದಲೂ, ಮುದ್ರಾಕರಣ ಬಂಧುಗಳಿಂದ ಅಥವಾ ಕುಂಭಕದಿಂದಲೂ ವಾಯುವನ್ನು ಸ್ವಾಧೀನಪಡಿಸಿಕೊಂಡವರು ಹಠಯೋಗಿ ಗಳೆಂದೂ, ಮನೋವೃತ್ತಿಯಿಲ್ಲದವರೂ ಜ್ಞಾನದಿಂದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದವರೂ ರಾಜಯೋಗಿಗಳೆಂದೂಸಿ ಚನ್ನಸದಾಶಿವಯೋಗೀಂದ್ರರು ಹೇಳುವರು. ಇವೆಲ್ಲವುಗಳಲ್ಲಿ ರಾಜಯೋಗವೇ ಮಿಗಿಲಾದುದೆಂದು ಎಲ್ಲರ ಮತವು. ಎಲ್ಲದರ್ಶನಗಳು ಅಂತಿಮ ಧೈಯವಾದ ಸತುವನ್ನು ಕಂಡು ಹಿಡಿಯಲು ಸರಿಯಾದ ಮತ್ತು ಸುಲಭಸಾಧ್ಯವಾದ ಮಾರ್ಗವನ್ನೂ ಮತ್ತು ಜೀವಿಯ ಅಂತರಂಗದ ಪರೀಸ್ಥಿತಿಯನ್ನೂ, ಮತ್ತು ಅಂತಃ ಕರಣಗಳನ್ನೂ ಪರಿಶೋಧಿಸುವ ಹಾದಿಯನ್ನೂರಾಜಯೋಗವು ತೋರಿಸುವುದು, ಲಯ, ಹಠ ಮೊದಲಾದವುಗಳಂತೆ ಶರೀರವನ್ನು ವಿಶೇಷವಾಗಿ ಸಣ್ಣಿಸದೆ ಮನೋವೃತ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದೇ ರಾಜಯೋಗದ ಬೀಗದ ಕೈಯು, ಮನಸ್ಸೇ ಮನುಷ್ಯನ ಬಂಧಕ್ಕೂ ಮೋಕ್ಷಕ್ಕೂ ಕಾರಣವಾದುದರಿಂದ ಅದನ್ನು ಆಧೀನದಲ್ಲಿಟ್ಟು ಕೊಳ್ಳುವುದರಿಂದಲೇ ರಾಜಯೋಗದ ಹೆಚ್ಚಳವು. ರಾಜಯೋಗದಲ್ಲಿ ಸಾಂಖ್ಯ, ತಾರಕ, ಮತ್ತು ಅಮನಸ್ಕಗಳೆಂದು ಮೂರು ಭಾಗಗಳು.

ಆದಿಯಿಂದಲೂ ಶೈವಶಾಸ್ತ್ರಗಳು ಯೋಗಕ್ಕೆ ಅತಿಮಹತ್ವದ ಸ್ಥಾನವನ್ನು ಕೊಟ್ಟಿರುವವು. ಯೋಗ ಸೂತ್ರಕಾರರಾದ ಪತಂಜಲ ಮಹರ್ಷಿಗಳು ಶೈವರೇ ಇದ್ದರೆಂದು ಪ್ರತೀತಿ. ಹಾಗಿದ್ದ ಪಕ್ಷದಲ್ಲಿ ಯೋಗದರ್ಶನದ ವರ್ಚಸ್ವವು, ಶೈವರ ಮೇಲಾದುದು ಅರಿದಲ್ಲ, ಶೈವರಿಗೆ ಪ್ರಮಾಣ ಗ್ರಂಥಗಳಾದ ಆಗಮಗಳಲ್ಲಿ ಪ್ರತಿಪಾದಿತವಾದ ಕ್ರಿಯಾ, ಚರ್ಯಾ, ಯೋಗ ಮತ್ತು ಜ್ಞಾನಗಳೆಂಬ ನಾಲ್ಕು ಪಾದಗಳಲ್ಲಿ ಯೋಗದ ಸ್ಥಾನವು ಜ್ಞಾನದ ನಂತರ ಬರುತ್ತದೆ. ದುರ್ದೈವದಿಂದ ಮಹತ್ವದ ಶೈವಾಮಗಮಗಳ ಅಭಾವದ ಮೂಲಕ ಶೈವಾಗಮಗಳಲ್ಲಿ ಪ್ರತಿಪಾದಿತವಾದ ಯೋಗಕ್ಕೂ ಯೋಗದರ್ಶನಕ್ಕೂ ಇರುವ ಸಾಮ್ಯವೈಷಮ್ಯಗಳನ್ನು ಕಂಡುಹಿಡಿಯುವುದು ಈಗ ಸಾಧ್ಯವಿಲ್ಲದಿದ್ದರೂ ಈಗ ದೊರೆಯುವ ಆಗಮಗಳ ತುಂಡುಗಳಿಂದ ಅವುಗಳಲ್ಲಿ ಯೋಗಕ್ಕಿರುವ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಸುಪ್ರಭೇದಾಗಮ ಮತ್ತು ಈಶಾನ-ಶಿವಯೋಗಿಗಳ “ಈಶಾನ ಶಿವ ಗುರುದೇವ ಪದ್ಧತಿ’ ಗಳಲ್ಲಿ ವರ್ಣಿತವಾದ ಯೋಗವು ಯೋಗದರ್ಶನದಿಂದ ವಿಶೇಷವಾಗಿ ಭಿನ್ನವಾಗಿಲ್ಲ, ಆದರೂ ಸ್ವಲ್ಪ ಪ್ರಮಾಣದಿಂದಾದರೂ ವ್ಯತ್ಯಾಸವಿಲ್ಲದೆ ಇಲ್ಲ, ಈಶ್ವರನ ಪ್ರತಿಬಿಂಬವ (ಮೂರ್ತಿಯನ್ನು ಮುಂದಿಟ್ಟುಕೊಂಡು ಅದರ ಮೇಲೆ ದೃಷ್ಟಿಯನ್ನು ಚೆಲ್ಲಿ ಅದರಲ್ಲಿಯೇ ಮನಸ್ಸಿನ ವ್ಯಾಪಾರವನ್ನೆಲ್ಲ ಕೇಂದ್ರಿಕರಿಸಿ, ಧ್ಯಾನವನ್ನು ಬಲಿಸಿ, ಸಮಾಧಿಯನ್ನು ಸಾಧಿಸುವ ಮಾರ್ಗಕ್ಕೆ ಶೈವಾಗಮಗಳು ಪ್ರಾಮುಖ್ಯತೆಯನ್ನು ಕೊಟ್ಟಂತೆ ತೋರುವುದು. ರಾಜಯೋಗದ ತತ್ವಗಳು ಶೈವಾಗಮಗಳ ಯೋಗದಲ್ಲಿಅಡಕವಾಗಿವೆಯಾದರೂ ಮೂರ್ತಿಯನ್ನು ಮುಂದಿಟ್ಟುಕೊಂಡು ಧ್ಯಾನಿಸುವುದೊಂದು ಅದರ ವೈಶಿಷ್ಟ

ವೀರಶೈವರಿಗೂ ಯೋಗಕ್ಕೂ ಅತಿನಿಕಟ ಸಂಬಂಧವಿದೆಯೆಂಬುದನ್ನು ವೀರಶೈವರಲ್ಲಿಈಗಲೂ ರೂಢಿಯಲ್ಲಿರುವ ಅನೇಕ ವಿಷಯಗಳಿಂದ ಕಂಡುಕೊಳ್ಳಬಹುದು.ವೀರಶೈವರ ತತ್ವಜ್ಞಾನ (Philosophy) ದಲ್ಲಿ ಷಟಸ್ಥಲ ಸಿದ್ದಾಂತವು ಅತಿ ಮಹತ್ವವಾದುದೆಂಬುದು ವೀರಶೈವ ತತ್ವಾದ್ವೇಷಿಗಳಿಗೆ ಅರಿದಾದ ಮಾತಲ್ಲ. ಅದರಲ್ಲಿ ಹೆಜ್ಜೆ ಹೆಜ್ಜೆಗೂ ಯೋಗದ ತತ್ವಗಳು ಅಡಕವಾಗಿವೆ. ವೀರಶೈವ ಧಾರ್ಮಿಕ ವಾಙ್ಮಯದಲ್ಲಿ ಅತಿ ಮಹತ್ವವಾದುವು ವಚನಶಾಸ್ತ್ರಗಳು, ಅವುಗಳಲ್ಲಿ ಯೋಗಾಂಗಗಳ ವರ್ಣನೆಯು ವೀರಶೈವ ಪರವಾಗಿ ವಿಪುಲವಾಗಿರುವುದು. ಪ್ರಾಣಲಿಂಗಿಸ್ಥಲದ ವಚನಗಳೆಲ್ಲವೂ ಯೋಗಮಯವಾಗಿವೆಯೆಂದರೂ ಅಡ್ಡಿಯಿಲ್ಲ. ಆದರೂ ಕೆಲವು ಕಡೆಗೆ ಯೋಗದ ಮೇಲೆ ಕಟುತರವಾದ ಟೀಕೆಯು ಕಂಡು ಬರುವುದು. ಇಂಥವುಗಳ ಆಧಾರದಿಂದ ವಚನಶಾಸ್ತ್ರಕಾರರು ಯೋಗ ವಿರೋಧಿಗಳೆಂದು ಮಾತ್ರ ಕಲ್ಪಿಸಬಾರದು. ಅವರ ಟೀಕೆಯು ಯೋಗದ ಮುಖ್ಯಧೈಯವಾದ ಅಂತರಂಗ ಶುದ್ಧಿಯನ್ನೂ ಈಶ್ವರ ಸಿದ್ಧಿಯನ್ನೂ ಮರೆತು ಕೇವಲ ಬಾಹ್ಯ ಶರೀರ ಚಮತ್ಕಾರ (Feats) ಗಳನ್ನು ಸಾಧಿಸಿದ ಹಠಯೋಗಿಗಳನ್ನುದ್ದೇಶಿಸಿ ಮಾಡಲ್ಪಟ್ಟಿದೆಯೆಂಬುದನ್ನು ಲಕ್ಷ್ಯದಲ್ಲಿಡಬೇಕು. ಶಿವಶರಣರು ಅಡ್ಡಮಾರ್ಗದಿಂದ ಹೋಗುವವರನ್ನು ಹಾದಿಗೆ ತರಲು ಹಿಂದೆಮುಂದೆ ನೋಡುವವರಲ್ಲ, ಅರಿಯದೆ ಶಿವಪೂಜೆ ಮಾಡುವವರನ್ನು ಹೀಗೆ ಬಯ್ದಿರುವರು.

ನಮ್ಮ ವೀರಶೈವ ಗುರುಗಳು ಯೋಗ ವಿದ್ಯೆಯಲ್ಲಿ ಒಳ್ಳೆ ನಿಪುಣರಾಗಿದ್ದರು. ಯೋಗದ ಗುಟ್ಟನ್ನು ಕಂಡು ಹಿಡಿದು ಅದು ಸರ್ವರಿಗೂ ಸಾಧ್ಯವಾಗುವಂತೆ ತಮ್ಮ ಸ್ವಾನುಭವದಿಂದ ಅದರಲ್ಲಿ ತಿದ್ದುಪಡೆಯನ್ನು ಮಾಡಿ ಅದಕ್ಕೆ ಶಿವಯೋಗವೆಂದು ಹೆಸರಿಟ್ಟರು. ಶಿವಯೋಗವನ್ನು ತಿಳಿದು ಆಚರಿಸುವವರಿಗೆ ಶಿವಯೋಗಿಗಳೆಂದು ಹೆಸರು. ಶಿವಯೋಗದ ಸ್ವರೂಪವನ್ನು ವಚನಕಾರರು ವಿಪುಲವಾಗಿ ತಮ್ಮ ವಚನಗಳಲ್ಲಿಯೂ, ಚನ್ನ ಸದಾಶಿವಯೋಗಿಗಳು ತಮ್ಮ ಶಿವಯೋಗಪ್ರದೀಪಿಕೆ’ ಯಲ್ಲಿಯೂ ವರ್ಣಿಸಿರುವರು. ಇವೆಲ್ಲವುಗಳ ಮಥಿತಾರ್ಥವು ತೋಂಟದ ಸಿದ್ಧಲಿಂಗ ಯತಿಗಳ ಒಂದೇ ವಚನದಲ್ಲಿ ಬಂದಿದೆಯೆಂದರೆ ವಿಶೇಷ ತಪ್ಪಾಗದು. ಅವರು ಯೋಗದ ಅಷ್ಟಾಂಗಗಳನ್ನು ಶಿವಯೋಗಕ್ಕನುಸರಿಸಿ ಹೇಳಿ, ಶಿವಯೋಗದಲ್ಲಿ ಹೆಜ್ಜೆ ಹೆಜ್ಜೆಗೂ ಲಿಂಗದ ಅವಶ್ಯಕತೆಯಿದೆಯೆಂದು, ಲಿಂಗಾಂಗ ಯೋಗದ ಧ್ಯಯವು ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೆಂದೂ ಅಭಿಪ್ರಾಯ ಪಟ್ಟಿದ್ದಾರೆ. ನಂತರ

‘ಇನ್ನು ವೀರಮಾಹೇಶ್ವರರುಗಳ ಲಿಂಗಾನುಸಂಧಾನವೆಂತೆಂದೊಡೆ ಬ್ರಹ್ಮರಂಧ್ರದಲ್ಲಿಪ್ಪ ಚೈತನ್ಯವಪ್ಪ ಪರಮ ಚಿತ್ಕಳೆಯೇ ಭಾವಮನಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದವನಾಗಿ, ಭಾವವಲ್ಲಿ ಸತ್ಸ್ವ ರೂಪವಪ್ಪಇಷ್ಟಲಿಂಗವೆಂದೆನಿಸಿ, ಒಂದೇ ವಸ್ತು ತನು ಮನ ಭಾವಂಗಳಲ್ಲಿ ಇಷ್ಟಪ್ರಾಣ ಭಾವವಾದ ಭೇದವನರಿಯದೆ, ಒ೦ ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ, ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ, ತೃಪ್ತಿ ಲಿಂಗವ ಭಾವಜ್ಞಾನದಿಂದ ಗ್ರಹಿಸಿ, ಈ ಲಿಂಗತ್ರಯವಿಡಿದು ಆಚರಿಸಿ, ಲಿಂಗದೊಡನೆ ಕೂಡಿ, ಲಿಂಗವೇ ತಾನು ತಾನಾಗಿ, ವಿರಾಜಿಸುತಿರ್ಪುದೀಗ ಶಿವಯೋಗ ನೋಡಾ, ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ “ ಎಂದು ಶಿವಯೋಗವನ್ನು ವರ್ಣಿಸಿರುವರು. ಅವರ ಈ ವಾಕ್ಯವನ್ನುಸ್ವಲ್ಪ ವಿವೇಚಿಸಿದರೆ ಕೆಳಗಿನಂತೆ ಅದರ ಅರ್ಥವು ಹೊರಡುವುದು.

ಜೀವಿಗಳಿಗೆ ಸ್ಥೂಲ, ಸೂಕ್ಷ್ಮ ಕಾರಣಗಳೆಂದು ಮೂರು ಶರೀರಗಳು, ಒಂದರೊಳಗೊಂದು ಅಡಕವಾಗಿರುವುವೆಂದೂ, ಮೂರು ಶರೀರಗಳಲ್ಲಿರುವ ಮಲಿನತೆಯು ಹೋದಾಗಲೇ ಜೀವಿಯು ಶುದ್ದನಾಗುವನೆಂದೂ ವೀರಶೈವರ ನಂಬುಗೆ, ಯೋಗದ ಮುಖ್ಯ ಧೈಯವು ಬಾಹ್ಯಾಭ್ಯಂತರ ಶುದ್ಧಿಯೆಂಬುದನ್ನು ಮೇಲೆಯೇ ಸೂಚಿಸಿರುವುದಷ್ಟೇ. ಅದಕ್ಕೋಸುಗ ಗುರುವು ದೀಕ್ಷಾಕಾಲದಲ್ಲಿ ತನ್ನ ಯೋಗಬಲದಿಂದ ಶಿಷ್ಯನ ಚೈತನ್ಯವನ್ನು ಗಟ್ಟಿಗೊಳಿಸಿ ಹೊರಗೆ ಇಷ್ಟಲಿಂಗವೆಂದೂ ಸ್ಥೂಲಶರೀರಕ್ಕೂ, ಒಳಗೆ ಪ್ರಾಣಲಿಂಗವೆಂದು ಸೂಕ್ಷ್ಮ ಶರೀರಕ್ಕೂ, ಭಾವಲಿಂಗವೆಂದು ಕಾರಣ ಶರೀರಕ್ಕೂ ಜೋಡಿಸಿ, ಅವುಗಳ ಅನುಸಂಧಾನ ಕ್ರಮವನ್ನು ತೋರಿಸಿಕೊಡುವನು. ಅದೇ ಮಾರ್ಗದಿಂದ ಶಿಷ್ಯನು ತನ್ನ ಎಡ ಹಸ್ತದ ಅಂಗೈಯೊಳಗೆ ಇಷ್ಟಲಿಂಗವನ್ನು ಭದ್ರಪಡಿಸಿ, ಉಳಿದ ಅವಯವಗಳ ವ್ಯಾಪಾರವನ್ನು ತಡೆದು, ಪ್ರಾಣಾಯಾಮದಿಂದ ಶ್ವಾಸೋಚ್ಛಾಸವನ್ನು ಸರಿಪಡಿಸಿ, ಮನಸ್ಸಿನ ಚಲನವಲನವನ್ನು ತಡೆದು, ಸ್ಥೂಲ ದೃಷ್ಠಿ ಯನ್ನು ಇಷ್ಟಲಿಂಗದ ಮೇಲೂ, ಸೂಕ್ಷ್ಮ ದೃಷ್ಟಿಯನ್ನು ಪ್ರಾಣಲಿಂಗದಮೇಲೂ, ಭಾವದೃಷ್ಟಿಯನ್ನು ಭಾವಲಿಂಗದ ಮೇಲೂ ಚಲ್ಲಿ ಲಿಂಗದೊಡನೆ ಕೂಡಿ ಲಿಂಗತ್ರಯವನ್ನು ಏಕಾಕಾರಮಾಡಿ, ಲಿಂಗವೇ ತಾನಾಗಿರುವನು. ಇದೇ ಶಿವಯೋಗ,ಈ ವಚನದಮೇಲಿಂದಲೂ ಮತ್ತು ಇಂಥ ಅನೇಕ ವಚನಗಳಿಂದಲೂ ಶಿವಯೋಗದ ತತ್ವವು ಲಿಂಗ ಪೂಜೆಯಲ್ಲಿ ಅಡಕವಾಗಿರಬೇಕಿಷ್ಟೇ ಅಲ್ಲ ಲಿಂಗಪೂಜೆಯು ಶಿವಯೋಗದ ಮುಖ್ಯಾಂಗವಾಗಿರ ಬೇಕೆಂದು ಊಹಿಸಲವಕಾಶವಿದೆ.

ವೀರಶೈವನಾಗಿರತಕ್ಕ ಪ್ರತಿಯೊಬ್ಬ ವ್ಯಕ್ತಿಯು ಶಿವಯೋಗಸಾಧಕನಾಗಿರಬೇಕೆಂದು ವೀರಶೈವ ಮತಸ್ಥಾಪಕರ ಅಪೇಕ್ಷೆ. ಅಂತೇ ಅವರು ಶಿವಯೋಗಸಾಧನೆಯನ್ನು ಅಷ್ಟು ಸುಲಭವಾಗಿ ಸರ್ವರಿಗೂ ಸಾಧ್ಯವಾಗುವಂತೆ ಮಾಡಿರಲೇಬೇಕು. ಮೇಲೆ ಯೋಗದ ಒಳಭೇದಗಳನ್ನು ಹೇಳುವಾಗ ರಾಜಯೋಗವು ಉತ್ಕೃಷ್ಟವಾದುದೆಂದು ಸೂಚಿಸಿರುವುದಷ್ಟೇ. ಅಂಥ ರಾಜಯೋಗಕ್ಕೂ ಶಿವಯೋಗಕ್ಕೂನಿಜವಾಗಿ ಭೇದವಿಲ್ಲವೆಂದೂ ಸಾಧಕರ ಜ್ಞಾನಶಕ್ತಿಯ ಬೆಳವಣಿಗೆಗಾಗಿ ಭೇದವು ಹೇಳಲ್ಪಟ್ಟಿದೆಯೆಂದೂ ಚನ್ನ ಸದಾಶಿವಯೋಗಿಗಳ ಮತ ಸೂಕ್ಷ್ಮ ವಾಗಿ ವಿಚಾರಿಸಿದರೆ ರಾಜಯೋಗಕ್ಕೂ ಶಿವಯೋಗಕ್ಕೂ ಭೇದವಿಲ್ಲೆಂಬುದು ನಿಜ; ಆದರೆ ಸ್ವಲ್ಪ ಸ್ಥೂಲ ಮಾನದಿಂದ ನೋಡಿದರೆ ಶಿವಯೋಗದಲ್ಲಿ ರಾಜಯೋಗದಲ್ಲಿಲ್ಲದ ಒಂದು ವೈಶಿಷ್ಟ್ಯ ವುಂಟೆಂಬುದೂ, ಆ ವೈಶಿಷ್ಟ್ಯವು ಇಷ್ಟಲಿಂಗದ ಅವಶ್ಯಕತೆ ಯೆಂಬುದೂ ಮೇಲಿನ ವಚನಗಳಿಂದ ಸ್ಪಷ್ಟವಾಗುವುದು. ಇನ್ನು ವೀರಶೈವ ಗುರುಗಳು ಇಷ್ಟಲಿಂಗದ ಅವಶ್ಯಕತೆಯನ್ನು ಸಾರಲು ಕಾರಣವೇನೆಂಬುದನ್ನು ಹುಡುಕಲು ನಾವು ದೂರಹೋಗುವ ಕಾರಣವಿಲ್ಲ,

ಈಶ್ವರ ಧ್ಯಾನವನ್ನು ಬಲಪಡಿಸಲಿಕ್ಕೂ ಮನಸ್ಸಿನ ಚಲನವಲನವನ್ನು ತಡೆದು ಈಶ್ವರಮಯವಾಗಿ ಮಾಡುವುದಕ್ಕೂ ಬಾಹ್ಯದಲ್ಲಿ ಈಶ್ವರ ಪ್ರತಿಬಿಂಬವು ಬೇಕೆಂದು ಶೈವಾಗಮಗಳು ಸಾರುವುದೆಂದು ಮೇಲೆ ಸೂಚಿಸಿದೆಯಷ್ಟೇ. ಅದರ ಗುಟ್ಟನ್ನುನಮ್ಮಾದ್ಯರಾದ ವೀರಶೈವ ಮತಸ್ಥಾಪಕರು ಅರಿತಿದ್ದರು. ಆದರೂ ಅವರು ಮೂರ್ತಿ ಪೂಜಕರಲ್ಲ ಮೂರ್ತಿ ಪೂಜೆಯನ್ನು ಅತಿ ಕಠೋರವಚನಗಳಿಂದ ವಚನಶಾಸ್ತ್ರಕಾರರು ನಿರಾಕರಿಸಿರುವರು.* ಸ್ವಪ್ರತಿಬಿಂಬವನ್ನು ಕಾಣಲು ದರ್ಪಣವು ಹೇಗೆ ಅಗತ್ಯವಿದೆಯೋ ಹಾಗೆ ಮನಸ್ಸಿನ ಚಲನವಲನವನ್ನು ತಡೆದು ಒಂದೇ ವಸ್ತುವಿನ ಮೇಲೆ ಅದನ್ನು ಕೇಂದ್ರಿಕರಿಸಿ, ನಿಜಾತ್ಮನ ಪ್ರತಿಬಿಂಬವನ್ನು ಕಾಣಲು ದರ್ಪಣದಂಥ ಒಂದು ವಸ್ತುವನ್ನು ಅವರು ಸ್ವೀಕರಿಸಲೇಬೇಕಾಗಿತ್ತು ಅಂತೆಯೇ ಸ್ಥಾವರಮೂರ್ತಿಗಳಿಗೆ ಬದಲಾಗಿ ಈ ಉದ್ದೇಶವನ್ನಿಡೇರಿಸುವಂಥ ಅತಿ ಪ್ರಾಚೀನವಾದ ಶಿವಲಿಂಗವನ್ನು ಧರಿಸಲು ಪ್ರೇರೇಪಿಸಿರಬಹುದೆಂದು ತೋರುವುದು. ಮಗ್ಗೆಯ ಮಾಯಿದೇವರು ತಮ್ಮೊಂದು ಪದ್ಯದಲ್ಲಿ ಶರಣನು ಲಿಂಗವೆಂಬ ದರ್ಪಣದಲ್ಲಿ ಸ್ವಸ್ವರೂಪವನ್ನೇ ನೋಡುವನೆಂದು ಹೇಳಿದ್ದಾರೆ. ಬೌದ್ಧ ಭಿಕ್ಷುಗಳೂ ಕೂಡ ಧ್ಯಾನದಲ್ಲಿ ತಮ್ಮ ದೇಹಾಕೃತಿಯನ್ನು ಮನದೊಳಗೆ ಗುರಿಯಾಗಿಟ್ಟುಕೊಳ್ಳುತ್ತಿದ್ದರೆಂದೂ ಮತ್ತು ನೀಲಿ, ಹಳದಿ, ಬಿಳಿ ಮತ್ತು ಕೆಂಪು ಬಣ್ಣಗಳ ದ್ವಾರಾ ಧ್ಯಾನಿಸುತ್ತಿದ್ದರೆಂದೂ ಪ್ರತೀತಿಯಿದೆ. ಬಾಹ್ಯ ಪ್ರಪಂಚವನ್ನೂ ತನ್ನನ್ನೂ ಮರೆದು ಸಮಾಧಿಯನ್ನು ಹೊಂದಲು ಬಾಹ್ಯ ವಸ್ತುವಿನ ಅಗತ್ಯವಿದೆಯೆಂದು ಪಾಶ್ಚಾತ್ಯರಲ್ಲನೇಕ ಮಾನಸಶಾಸ್ತ್ರವೇತ್ತರು (Psychologists) ಅಭಿಪ್ರಾಯಪಡುವರು. ಇವೆಲ್ಲ ಕಾರಣಗಳಿಂದ ಲಿಂಗವು ಧ್ಯಾನವನ್ನು ಬಲಿಸಲು ಕರಣವೂ ಸಮಾಧಿಯನ್ನು ಸಾಧಿಸಲು ಸಾಧನವೂ ಆಗಿರುವದೆಂದು ತೋರುವುದು.ಆದುದರಿಂದ ವೀರಶೈವ ಗುರುಗಳು ಇಷ್ಟಲಿಂಗದ ಅಗತ್ಯವನ್ನು ಸಾರಿರಬಹುದು.

ಇನ್ನು ಯೋಗದ ತತ್ವಗಳನ್ನು ಅನುಭವಕ್ಕನುಸರಿಸಿ ವಿವೇಚಿಸಲು ಅವು ಸರ್ವರಿಗೂ  ಸಾಧ್ಯವಿರುವುದೆಂದೂ, ಸರ್ವರೂ ಸಾಧಿಸಿ ಇಹದಲ್ಲಿಯೇ ಪರದ ಸುಖವನ್ನನುಭವಿಸಬೇಕೆಂದು ಮಾಡಲ್ಪಟ್ಟಿರುವುವೆಂದೂ ಕಂಡು ಬರುವುದು. ಅದು ಹೇಗೆಂಬುದನ್ನು ನೋಡುವಾ-

ಇನ್ನು ಬಾಹ್ಯ ಶರೀರ ಶುದ್ಧಿಗಾಗಿ ಸ್ನಾನವನ್ನು ಮಾಡಬೇಕೆಂಬುದೂ,ಶರೀರದೊಳಗಿನ ರಕ್ತ ಮೊದಲಾದ ಧಾತುಗಳಲ್ಲಿ ಮಲಿನತೆಯಿದ್ದರೆ ಶರೀರದ ಮೇಲ್ಬಾಗವಾದ ತ್ವಚವನ್ನು ಎಷ್ಟು ತೊಳೆದರೂ ಶುದ್ಧಿಯಾಗಿ ಮನುಷ್ಯನು ನಿರೋಗಿಯಾಗಿರಲಾರನೆಂದೂ ಸರ್ವರಿಗೂ ಗೊತ್ತಿದ್ದ ಮಾತೇ. ಹೊರಗಿನ ಮಲಿನತೆಯನ್ನು ಸ್ನಾನದಿಂದ ತೊಳೆಯುವಂತೆ ಒಳಗಿನ ಮಲಿನತೆಯನ್ನು ಸರಿಯಾದ ಆಹಾರವಿಹಾರದಿಂದಲೂ ವ್ಯಾಯಾಮಾದಿ ಪರಿಶ್ರಮಗಳಿಂದಲೂ ತೊಳೆಯಲು ಬರುವುದೆಂಬುದು ಅನುಭವಸಿದ್ಧವಾದ ಮಾತು. ಯೋಗಶಾಸ್ತ್ರಜ್ಞರಾದ ಪೂರ್ವದ ಮಹರ್ಷಿಗಳು ಶರೀರದೊಳಗಿನ ಮಲಿನತೆಯನ್ನು ತೊಳೆಯಲು ಯಮ, ನಿಯಮ,ಆಸನ, ಪ್ರಾಣಾಯಾಮ ಪ್ರತ್ಯಾಹಾರಗಳೆಂಬ ಯೋಗಾಂಗಗಳನ್ನು ಮಾಡಿ ಅದಕ್ಕೆ ಅತಿ ಮಹತ್ವದ ಸ್ಥಾನವನ್ನು ಕೊಟ್ಟಿರುವರು. ಶರೀರದಲ್ಲಿಯ ಸರ್ವ ವ್ಯಾಧಿಗಳನ್ನು ಹೊರದೂಡಿ ಅದನ್ನು ಬಹುಕಾಲ ಆರೋಗ್ಯದಿಂದಿಡಬೇಕಾದರೆ ಈ ಯೋಗಾಂಗ ಗಳನ್ನು ಸಾಧಿಸುವುದು ಬಲು ನೆಟ್ಟಗೆ, ಇವು ಮುಖ್ಯವಾಗಿ ಆರೋಗ್ಯದೃಷ್ಟಿಯಿಂದ (from hyginic point of view) ಬಲು ಉಪಯುಕ್ತವಾದವುಗಳು. ಒರೆಗೆ ಹಚ್ಚಿನೋಡಬೇಕೆನ್ನುವರು ಅಭ್ಯಾಸಮಾಡಿ ಅನುಭವ ಪಡೆದುಕೊಳ್ಳಬಹುದು. ಇನ್ನುಶರೀರದ ಒಳಹೊರಗಿನ ಭಾಗಗಳು ಶುದ್ಧವಾದವುಗಳೆಂದೂ, ಸರ್ವ ರೋಗಾದಿಗಳು ಹೇಳ ಹೆಸರಿಲ್ಲದಂತಾದವೆಂದೂ ಗ್ರಹಿಸುವಾ ! ಆದರೂ ಇಷ್ಟರಿಂದಲೇ ಮನುಷ್ಯನು ಶುದ್ದನಾದನೆಂದು ಹೇಳಲಾಗದು. ಏಕೆಂದರೆ ಬರೇ ಶರೀರವೇ ಮನುಷ್ಯನಲ್ಲ.ಚೈತನ್ಯದಿಂದೊಡಗೂಡಿದ ಶರೀರಕ್ಕೆ ಮನುಷ್ಯನೆನ್ನಬಹುದು. ಚೈತನ್ಯಮಯನೇ ಆತ್ಮನು. ಆತ್ಮನಿಗೆ ಬುದ್ದಿ, ಮನಸ್ಸು, ಅಹಂಕಾರಾದಿ ಅಂತಃಕರಣಗಳುಂಟು. ಅವುಗಳ ಶುದ್ಧಿಯಾಗದ ವಿನಾ ಮನುಷ್ಯನು ಶುದ್ಧನಾಗಲಾರನು. ಬುದ್ಧಿ, ಮನಸ್ಸು,ಅಹಂಕಾರಾದಿಗಳ ಶುದ್ಧಿಗಾಗಿ ಧಾರಣ, ಧ್ಯಾನ, ಸಮಾಧಿಗಳೆಂಬ ಯೋಗಾಂಗಗಳ ಅಗತ್ಯ, ತತ್ವಶಾಸ್ತ್ರಜ್ಞರು ಸೂಕ್ಷ್ಮ ದೃಷ್ಟಿಯಿಂದ ಅಂತರಂಗದ ವೃತ್ತಿಗಳನ್ನು ವಿಭಾಗಿಸಿ ಪ್ರತಿಯೊಂದು ವೃತ್ತಿಯನ್ನೇ ನಡೆಯಿಸುವುದಕ್ಕದೊಂದು ಕರಣವನ್ನು ನಿರ್ಮಿಸಿರುವರು.ತಾತ್ಮಕ ದೃಷ್ಟಿಯಿಂದ ಅಷ್ಟೇನೂ ಸರಿಯಾಗಿಲ್ಲದಿದ್ದರೂ ನಮ್ಮ ಅನುಕೂಲತೆಗಾಗಿ ಸ್ಥೂಲಮಾನದಿಂದ ಆ ಎಲ್ಲ ವೃತ್ತಿಗಳನ್ನು ಮನಸ್ಸೆಂಬ ಶಬ್ದದಲ್ಲಿ ಸಮಾವೇಶ ಮಾಡುವಾ, ಮೇಲಿನ ವಿಷಯವನ್ನೇ ಸ್ವಲ್ಪದರಲ್ಲಿ ಹೇಳುವುದಾದರೆ ಮನಸ್ಸು ಶುದ್ಧಿಯಾಗದ ಹೊರತು ಶರೀರವು  ಶುದ್ದಿಯಾಗಲಾರದೆಂದೂ, ಮನಶುದ್ಧಿಗಾಗಿಯೇ ಕಡೆಯ ಮೂರು ಯೋಗಾಂಗಗಳು ನಿರ್ಮಿಸಲ್ಪಟ್ಟಿರುವವೆಂದೂ ಹೇಳಬಹುದು. ಮನಶುದ್ಧಿಯನ್ನು ಮಾಡಬೇಕಾದರೆ ಬಾಹ್ಯವಸ್ತುವಾದ ಶರೀರ ಶುದ್ಧಿಯು ಮೊದಲು ಬೇಕೆಂದು ಪತಂಜಲ ಮಹರ್ಷಿಗಳಂಥ ಯೋಗಶಾಸ್ತ್ರಜ್ಞರ ಮತವು. ಇದು ಒಂದು ಪಕ್ಷ, ಮನಶುದ್ಧಿಗಾಗಿ ಬಾಹ್ಯ ಶರೀರ ಶುದ್ಧಿಯಿಂದ ಹೊರಡುವ ಕಾರಣವಿಲ್ಲೆಂದೂ, ಮನಶುದ್ದಿಯನ್ನು ಮನಸ್ಸಿನಿಂದಲೇ ಮಾಡುವುದು ಸಾಧ್ಯವಿದೆಯೆಂದೂ,ಮನಸೊಂದು ಶುದ್ಧಿಯಾದರೆ ಸರ್ವವೂ ತಮ್ಮಿಂದ ತಾವೇ ಶುದ್ಧಿಯಾಗುವುವೆಂದೂ ಕೆಲವರ ಮತ. ಇದು ಮತ್ತೊಂದು ಪಕ್ಷ ಅರ್ವಾಚೀನ ಸಾಧುಗಳಾದ ರಾಮಕೃಷ್ಣಪರಮಹಂಸ ಮತ್ತು ಅರವಿಂದ ಘೋಷ ಮೊದಲಾದವರು ಎರಡನೆಯ ಪಕ್ಷಕ್ಕೆ ಸೇರಿದವರು. ನಮ್ಮ ವೀರಶೈವ ಗುರುಗಳಾದರೂ ದ್ವಿತೀಯ ಪಕ್ಷವನ್ನವಲಂಬಿಸಿದವರೆಂದು ನಿರ್ಧರಿಸಲು ಸಾಕಷ್ಟು ಸಾಧನಗಳಿವೆ. ಶಿವಯೋಗದ ವಿವರಣೆಯೂ ಲಿಂಗಪೂಜೆಯ ಅಗತ್ಯವೂ ನಮ್ಮಿ ಅಭಿಪ್ರಾಯವನ್ನು ಬಲಪಡಿಸುವವು.

ಶುದ್ಧ ವಾತಾವರಣದಲ್ಲಿ ಕುಳಿತು ಮನಸ್ಸಿನ ಸಾಂಸಾರಿಕ ಮಂಡಿಗೆಗಳನ್ನೆಲ್ಲ ಮರೆತು  ಕೆಲಕಾಲವಾದರೂ ನಿಶ್ಚಿಂತ ಮನಸ್ಕರಾಗುವುದು ಅಧ್ಯಾತ್ಮಿಕ ದೃಷ್ಟಿಯಿಂದ ಉತ್ತಮವೆಂದು ಬಲ್ಲವರ ನಂಬುಗೆ .ವೀರಶೈವರಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಶಿವಪೂಜಾಗೃಹ ಅಥವಾ ದೇವರ ಮನೆಯೆಂದು ಕೋಣೆಗಳಿರುವವು. ಅವುಗಳನ್ನು ರೂಢಿಯಲ್ಲಿ ತಂದವರ ಉದ್ದೇಶವು ಸ್ವಾಮೀಜಿಯವರ ಮೇಲೆ ಹೇಳಿದ ಉದ್ದೇಶದಂತಿರಬಹುದೇನು?. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ವಿಶ್ರಾಂತಿಯು ಬೇಕೆ ಬೇಕು. ಅದರಂತೆ ಮನಸ್ಸಿಗಾದರೂ ವಿಶ್ರಾಂತಿಯ ಅಗತ್ಯವಿದೆ; ಆದುದರಿಂದಲೇ ಶರೀರದ ಮತ್ತು ಮನಸ್ಸಿನ ವಿಶ್ರಾಂತಿಗಾಗಿ ನಿದ್ರೆಯು ಸ್ವಾಭಾವಿಕವಾಗಿ ಕಲ್ಪಿಸಲ್ಪಟ್ಟಿದೆ. ಆದರೂ ನಮ್ಮೆಲ್ಲನೇಕರಿಗೆ ನಿದ್ರೆಯಲ್ಲೂ ಕೂಡ ಮನಸ್ಸಿಗೆ ವಿಶ್ರಾಂತಿ (Sub-consious state) ಕೊಡಲು ಬರುವುದೆಂದು ಯೋಗವೂ ಮತ್ತು ಅನುಭವಿಕರಾದ ಮಾನಸ ಶಾಸ್ತ್ರಜ್ಞರೂ ತೋರಿಸಿಕೊಡುವರು. ಇತ್ತಿತ್ತಲಾಗಿ ಪಾಶ್ಚಾತ್ಯ ದೇಶಗಳಲ್ಲಿ ಮಾನಸ ಶಾಸ್ತ್ರಕ್ಕೆ ಬಲು ಮಹತ್ವ ಕೊಡಹತ್ತಿರುವರು. ಅದರ ಅಭ್ಯಾಸವು ಒಳ್ಳೆ ಸರಿಯಾಗಿ ನಡೆದಿದೆಯೆಂಬುದಕ್ಕೆ ಇತ್ತಿತ್ತಲಾಗಿ ಬೈಲಿಗೆ ಬರಹತ್ತಿದ ಅಂಗಗಳಾದ Psycho-analysis, Hypnotism, Mesmerism ಮೊದಲಾದವುಗಳೇ ಸಾಕ್ಷಿ, ‘ಮೆಸ್ಮೇರಿಝಮ್’ವೆಂಬ ವಿದ್ಯೆಯಿಂದ ಅನ್ಯರ ಮಾನಸ ವ್ಯವಹಾರವನ್ನು ತಡೆದು ಅವರನ್ನು ನಮ್ಮಂತೆಯೇ ಕಾಯಾ ವಾಚಾ ಮನಸ್ಸಿನಿಂದ ನಡೆಯ ಹಚ್ಚಲು ಬರುವುದೆಂದು ಪ್ರಯೋಗದಿಂದ ಸಿದ್ಧಮಾಡಲ್ಪಟ್ಟಿದೆ. ಈ ವಿದ್ಯೆಯ ಸ್ವರೂಪವು ಬೇರೆ ರೀತಿಯಿಂದಾದರೂ ನಮ್ಮ ಪೂರ್ವಜರಿಗೆ ಗೊತ್ತಿತ್ತೆಂಬಂತೆ ತೋರುವುದು. ಬೇರೆ ಜನರ ವಿಚಾರಗಳು ಬೇರೆ ಬೇರೆಯಾಗಿರುವಂತೆ ಒಬ್ಬ ವ್ಯಕ್ತಿಯಲ್ಲಿಯು ಕೂಡ ಬೇರೆ ಬೇರೆ ಅಸಂಗತ ವಿಚಾರಗಳು ಉದ್ಭವಿಸುವುದುಂಟು. ಮಾನವಲ್ಲಿ ಪುಣ್ಯ ಮತ್ತು ಪಾಪ (good and evil) ಇವುಗಳ ನಡುವೆ ಸತತ ಕದನವು ನಡೆದೇ ಇರುವುದು. ಮೆಸ್ಮೇರಿಝಮ್ ಪ್ರಯೋಗದಿಂದ ಅನ್ಯರನ್ನು ನಮ್ಮಂತೆ ಮಾಡಿಕೊಳ್ಳಲು ಹೇಗೆ ಬರುವುದೋ ಹಾಗೇ ಅಂಥದೊಂದು ವಿದ್ಯೆಯ ಪ್ರಯೋಗವನ್ನು ಪುಣ್ಯಮಯವಾದ ವಿಚಾರಗಳ ಪರವಾಗಿ ನಮ್ಮ ಮೇಲೆಯೇ ಮಾಡಿಕೊಳ್ಳುವುದರಿಂದ ನಮ್ಮಲ್ಲಿರುವ ಪಾಪಮಯವಾದ ವಿಚಾರಗಳು ಪುಣ್ಯಮಯ ವಾದವುಗಳಾಗುವವೆಂದು ನಮ್ಮ ಪೂರ್ವಜರಿಗೆ ಗೊತ್ತಿದ್ದಂತೆ ತೋರುವುದು. ಆದುದರಿಂದಲೇ ಪವಿತ್ರ ಮಂತ್ರಗಳ ಜಪವನ್ನಾಗಲೀ ಈಶ್ವರ ಧ್ಯಾನವನ್ನಾಗಲೀ ಮಾಡಲು ಅವರು ಪ್ರೇರೇಪಿಸಿರಬಹುದು. ಇಷ್ಟಲಿಂಗ ಪೂಜೆಯಲ್ಲಿ ಈ ತತ್ವಗಳು ಅಡಗಿರುವುದರಿಂದಲೂ ಇಷ್ಟಲಿಂಗವು ಪಾಪಗಳನ್ನು ತೊಳೆಯುವುದೆಂದು ಈಗಲೂ ವೀರಶೈವರು ಶ್ರದ್ಧೆಯಿಂದ ನಂಬುವುದರಿಂದಲೂ ಇಷ್ಟಲಿಂಗವು ಇಂಥದೊಂದು ವಿದ್ಯೆಯನ್ನು ಸಾಧಿಸುವ ಕರಣವೆಂದೂ ಶಿವಪೂಜೆಯು ಅಂಥ ವಿದ್ಯೆಯ ಸಾಧನ ಮಾರ್ಗವೆಂದೂ ಊಹಿಸಲವಕಾಶವಿದೆ. ಆದುದರಿಂದ ವೀರಶೈವ ಶರಣರು ತಮ್ಮ ಆಧ್ಯಾತ್ಮಿಕೋನ್ನತಿಯನ್ನು ಅನುಭವದಿಂದಲೇ ಸಾಧಿಸುತ್ತಿದ್ದರೆಂದು ತರ್ಕಿಸಬಹುದು.

ಇಂಥ ಅಧ್ಯಾತ್ಮಿಕೋನ್ನತಿಯನ್ನು ‘ಶಿವಯೋಗ’ ದಿಂದ ಸಾಧಿಸಲು ಸಾಧ್ಯವಾಗಲೆಂಬ ಸದುದ್ದೇಶದಿಂದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಶಿವಯೋಗ ಮಂದಿರವನ್ನು ಸಂಸ್ಥಾಪಿಸಿದ್ದು ಸ್ಮರಣೀಯವಾಗಿದೆ.

.

Related Posts