• ಡಾ. ಹಿರೇಮಲ್ಲೂರ ಈಶ್ವರನ್

(ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ.  ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. ‘ಹರಿಹರ ಕವಿಯ ಕೃತಿಗಳು – ಒಂದು ಸಂಖ್ಯಾನಿರ್ಣಯವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್‌ ನಲ್ಲಿ ನೆಲೆಸಿದರು. ಮನುಸ್ಮೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ಗ್ರಂಥಗಳ ಸಂಪಾದಕರಾಗಿದ್ದರು. ಎರಡು ದಶಕಗಳ ಕಾಲ ಮೂರು ಅಂತಾರಾಷ್ಟ್ರೀಯ ತ್ರೈಮಾಸಿಕಗಳನ್ನು ಪ್ರಕಟಿಸುತ್ತಿದ್ದರು. 1998ರ ಜೂನ್ 23 ರಂದು ಹಾಲೆಂಡ್ ನಲ್ಲೇ ನಿಧನರಾದರು.)

ಬಾದಾಮಿಯ ಚಾಲುಕ್ಯರ ನಾಡಿನಲ್ಲಿ ಗುಳೇದಗುಡ್ಡದ ಜಟಕಾಸಾಬಿಯ ಕುದುರೆಓಡುತ್ತಿತ್ತು. ಗುಳೇದಗುಡ್ಡದ ಗೆಳೆಯರ ಔದಾರೆ. ನಾಡಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಶಿವಯೋಗಮಂದಿರದ ಕಡೆಗೆ ಹೊರಟಿದ್ದೆವು. ದಾರಿಯಲ್ಲಿ ಹಂಸನೂರು, ದೇವದಾಸಿಯರ ಊರು ಅದು: ತೋಗಣಸಿ ಮಾಂತ್ರಿಕರ ವಾಸಸ್ಥಾನ. ಕೆಂದೂರು ಅಂದವಾದ ಹಳ್ಳಿ, ಕುಟುಗನ ಕೆರೆ ಬಂದಿತು, ಗೆಳೆಯರು ಒತ್ತಾಯ ಮಾಡಿದರು. ಗಾಡಿಯಿಂದಿಳಿದವು. ದಾರಿಯ ಹತ್ತಿರವೇ ಉಪಾಹಾರ ಮಂದಿರ.ಗಾಳಿಗೆ ಮೈಯೊಡ್ಡಿ ಕುಟುಗನ ಕೆರೆಯ ಆತಿಥ್ಯ ಪಡೆದು ಮುಂದೆ ಸಾಗಿದಾಗ ಸುಮಾರು  ಹೊತ್ತೇರಿದ್ದಿತು.

ಲೈನದಾರಿಯ ಇಕ್ಕೆಲದಲ್ಲಿ ತರುಮರಾದಿಗಳು ಹಸಿರು ಮುಡಿದು ನಿಂತಿದ್ದವು. ಗಿಡಮರಗಳಿಂದಾಚೆಗೆ ಮೇರೆ ಮೀರಿ ಹಬ್ಬಿದ ಹೊಲಗದ್ದೆಗಳಲ್ಲಿ ಸಜ್ಜೆ ಜೋಳಗಳು ಚವರಿ ಬೀಸುತ್ತಿದ್ದವು. ಅಷ್ಟು ಬಿಸಿಲೂ ಅಲ್ಲ. ಅಷ್ಟು ನೆಳಲೂ ಅಲ್ಲ, ಅಂತಹ ಹೊತ್ತಿನಲ್ಲಿ ಗಾಳಿ ಸುಯ್ಕೆಂದು ಬೀಸಿ ಕಣ್ಮನಗಳಲ್ಲಿ ಕಾರ್ಯ ನಿಮಗ್ನರಾದ ರೈತಕುಲ, ದಾರಿಯಲ್ಲಿ ಅಡ್ಡಬರುವ ಜನ; ಈ ದೃಶ್ಯವನ್ನು, ಈ ನಾಡನ್ನು ಈ ಜನತೆಯನ್ನು ಎಲ್ಲಿಯೋ ಕಂಡ ನೆನಪು. ಇದಕ್ಕೂ ಮೊದಲು ಎಲ್ಲಿಯೋ ನೋಡಿದಂತೆ ಅನುಭವ.

ಹೌದೌದು. ಏಳನೆಯ ಶತಮಾನದಲ್ಲಿ ಇತ್ತ ಕಡೆ ಬಂದ ನೆನಪು. ಅದು ಎರಡನೆಯ ಪುಲಕೇಶಿಯ ಕಾಲ. ಹುವೆನ್ ಚಿಂಗನೊಡನೆ ಬಂದುದು ನಿಜ. ನಮ್ಮನಾಳುವ ದೊರೆ ಪುಲಕೇಶಿ, ಅವನ ಅಭಿಮಾನ ನಮ್ಮ ಅಭಿಮಾನ. ಅವನ ಕ್ಷಾತ್ರತೇಜ ಕನ್ನಡದ ಕ್ಷಾತ್ರತೇಜ, ಸ್ನೇಹ ಬೇಡಿದವರು ಧನ್ಯರು. ವೈರ ಬಗೆದವರು ಸತ್ತರು. ಛಲ ಛಲ, ಹಟ ಹಟ, ಪ್ರೇಮ ಪ್ರೇಮ. ಅರಸನಂತೆ ಪ್ರಜೆಗಳು. ಸುಭಟರ್ಕಳ್,ಕಲಿಗಳ, ಸುಪ್ರಭುಗಳ, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ  ಗಂಭೀರಚಿತ್ತರ್, ವಿವೇಕಿಗಳೇ, ಇವರೇ ಹರ್ಷವರ್ಧನನನ್ನು ಸೋಲಿಸಿದವರು. ಹರವಾದ ಎದೆ. ನೀಳವಾದ ತೋಳು, ಹೊಳೆವ ಕಂಗಳು, ದುಂಡು ಮೊಗ, ನುಡಿದಂತೆ ನಡೆ. ವಿಚಾರದಂತೆ ಆಚಾರ.

ದಾರಿ ದಾರಿಗುಂಟ ಭೀಕರವಾದ ಬಂಡೆಗಲ್ಲುಗಳು ಒಂದರಮೇಲೊಂದು ಒರಗಿಕೊಂಡಿದ್ದವು. ಕಾಲಕ್ಕೆ ಸಾಕ್ಷಿ ಹೇಳುತ್ತ ಮಲಗಿಕೊಂಡಂತೆ ತೋರುತ್ತಿದ್ದವು.ಶರಪಂಜರದ ಮೇಲೊರಗಿದ ಭೀಷ್ಮಾಚಾರ್ಯರಂತೆ ಎದೆಯೊಡ್ಡಿ ಮಲಗಿ ಕೊಂಡಿವೆ.ಎದೆಯ ಮೇಲೆ ಹದಿಮೂರುನೂರು ವರುಷ ಅಡ್ಡಾಡಿವೆ. ಹೆಜ್ಜೆ ಮೂಡಿವೆ. ಆದರೆ ಎದೆ ಹಣ್ಣಾಗಿಲ್ಲ. ಆತ್ಮಶ್ರೀ ಕಾಂತಿಗುಂದಿಲ್ಲ. ‘ಏನು ಬರುವುದೋ ಬರುವ ಕಾಲಕ್ಕೊಮ್ಮೆ ಬಂದು ಬಿಡಲಿ’ ಎಂದೆನ್ನುತ್ತ ಅಬ್ಬರದ ಆಶಾವಾದವನ್ನು ತಳೆದು ಇವು ಹೆಜ್ಜೆ ಕಿತ್ತಿಲ್ಲ ನಿಂತ ಜಾಗ ಬಿಟ್ಟಿಲ್ಲ. ಸ್ವಾಭಿಮಾನದ ವಜ್ರಕವಚ ಧರಿಸಿಕೊಂಡು ದಾರಿ ದಾರಿಗೆ ನಿಂತ ಶಿಲಾತಪಸ್ವಿಗಳಿಗೆ ಕೈಮುಗಿದು ಮುಂಬಂದರೆ ಮಹಾಕೂಟ, ದಕ್ಷಿಣ ಕಾಶಿ ಇದು, ಉತ್ತರ ಕಾಶಿ ಅದು, ಎರಡು ಸಾವಿರ ಲಿಂಗಗಳು ಮಹಾಕೂಟದ ಮಹೋನ್ನತಿಗೆಂದು ದಿವಾರಾತ್ರಿ ಕಾವಲುಗೆಯ್ಯುತ್ತಿವೆ. ಗರ್ಭಗುಡಿಯ ಶಿವಲಿಂಗದ ಎದುರು ಹಸಾದ ಬೇಡಿ ನಿಂತಿರುವ ಭಕ್ತಿ ಭಾಂಡಾರಿ ಬಸವಣ್ಣನಿಗೆ ನಮಸ್ಕಾರ ಮಾಡಿ ಎದುರಿನ ಮುಷ್ಕರಣಿಯ ತೀರ್ಥದ ಒಂದು ಹನಿ ಬಾಯಲ್ಲಿ ಹಾಕಿಕೊಂಡರೆ ಬದುಕೆಲ್ಲ ಅಮೃತ.

ಮುಂದೆ ಮೂರು ಮೈಲುಗಳ ದಾರಿ, ಶಿವಯೋಗ ಮಂದಿರದ ದಾರಿ. ದಾರಿಯುದ್ದಕ್ಕೂ ನಿಶ್ಚಲ ನೀರವತೆ. ಮಹಾಮೌನ, ತಪಸ್ವಿಗಳ ಕಡೆಗೆ ಹೋಗಬೇಕು. ಸಪ್ಪಳ ಮಾಡಿದರೆ ಶಿವಯೋಗಿಗಳ ನಿದ್ರಾಭಂಗವಾದೀತು. ಅವರು ಸಿಟ್ಟಾದರು. ಮುನಿಗಳ ಮುನಿಸು ಮೂಗುದುದಿಯೊಳಕ್ಕೆ! ಗಿಡ ಮರಗಳಿಗೂ ಈ ಮಾತು ತಿಳಿದಿದೆ.ಎಂತೆಯೇ ಗಾಳಿ ಬೀಸಿದರೂ ಎಲೆ ಅಲುಗಾಡದೆ ಹಾಗೆಯೇ ನಿಂತಿವೆ. ಪ್ರಕೃತಿ ಪ್ರೇಯಸಿ. ಆದರೂ ಹಕ್ಕಿ ಕಲರವಗೈಯದಿವೆ. ಈ ನಾಡಿನ ಅಣುರೇನು ತ್ರಣ ಕಾಷ್ಠ ಗಳಿಗೂ ಶಿವಯೋಗಮಂದಿರದ ಕತೆ ಗೊತ್ತಿದೆ. ಶಿವಯೋಗಮಂದಿರದ ಕತೆ…..?

ನನ್ನ ಮನಸ್ಸು ಎಂಟು ವರುಷಗಳ ಹಿಂದೆ ಓಡಿತು. ಹಿರೇಮಲ್ಲೂರಿಗೆ ಹೊರಟು ಹೋಯಿತು. ಮುಚ್ಚಂಜೆಯಾಗಿದೆ. ನಮ್ಮ ಶಿವು ಪಾಠ ಓದುತ್ತಿದ್ದಾನೆ. ನಾನು ಇಲ್ಲಿ ಕುಳಿತಿದ್ದೇನೆ. ನನ್ನ ತಾಯಿ ಅಲ್ಲಿ ಇದ್ದಾಳೆ. ನಮ್ಮ ಶಂಕರಿ ಇನ್ನೂ ಸಣ್ಣವಳು. ಶಿವು ಓದುತ್ತಿರುವುದನ್ನು ತಾಯಿ ಮಕ್ಕಳು ಕೇಳುತ್ತಿದ್ದಾರೆ. ಶಿವುನ ವಾಚನ ನಡೆದಿದೆ.

ರಾಣೆಬೆನ್ನೂರು ತಾಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದೊಂದು ಊರು.ನೀಲಮ್ಮ ಬಸವಯ್ಯನವರಿಗೆ ಬಹಳ ದಿನದ ಮೇಲೆ ಗಂಡು ಮಗುವೊಂದು ಜನಿಸಿತು.ಜನನವಾದ ಮೇಲೆ ಮಗು ಎರಡು ದಿನಗಳವರೆಗೂ ತಾಯಿಯ ಎದೆಯ ಹಾಲನ್ನೇ ಉಣಲಿಲ್ಲ. ಎಲ್ಲರಿಗೂ ಅಚ್ಚರಿ. ಬಂಧು ಬಾಂಧವರಿಗೆ ಗಾಬರಿ. ಆದರೂ ಸಾಧ್ಯೆ ಶಿವನನ್ನು ಸ್ಮರಿಸಿ ಶಿಶುವಿಗೆ ಭಸಿತವನ್ನು ಪೂಸಿ ಮುದ್ದಿಟ್ಟಳು. ಶಿಶು ನಕ್ಕು ನಲಿದು ಹಾಲು ಕುಡಿಯಲು ಮೊದಲು ಮಾಡಿತು. ಅಂದು ನಾಮಕರಣದ ದಿನ; ಹಾಲಯ್ಯ ಎಂದು ಕೂಸಿಗೆ ಹೆಸರಿಟ್ಟು ಜೋಗುಳ ಹಾಡಿದರು. ಹೂ ಬೆಳೆದಂತೆ ಹಾಲಯ್ಯ ಬೆಳೆದನು. ಕೋಕಿಲ ಕುಕಿಲುವದ ಕಲಿವಂತೆ ಹಾಲಯ್ಯ ಪಾಠ ಕಲಿತ, ಸಾಲೆಯಿಂದೊಂದು ದಿನ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ತಾಯಿ ಕೊಟ್ಟ ರೊಟ್ಟಿಯನ್ನು ಮಗನು ತಿನ್ನುತ್ತಿರುವ ಹೊತ್ತಿನಲ್ಲಿ ಹೊಸ್ತಿಲದ ಬಳಿ ಭಿಕ್ಷುಕನೊಬ್ಬನು ನಿಂತು ‘ಅವ್ವಾ! ಹಸಿವೆ. ಒಂದು ತುತ್ತು ರೊಟ್ಟಿ ಕೊಡು’ ಎಂದು ಬೇಡಿದನು. ‘ಇಗೋ’ ಎಂದೆನ್ನುತ್ತ ಹಾಲಯ್ಯ ಕೈಯಲ್ಲಿಯ ರೊಟ್ಟಿಯನ್ನು ಭಿಕ್ಷುಕನಿಗೆ ಕೊಟ್ಟನು. ತಾಯಿ ಅದನ್ನೆಲ್ಲ ನೋಡಿ ಹರ್ಷಿತಳಾದಳು.

ಓಡಿ ಬಂದು ಮಗನನ್ನು ಮುದ್ದಿಟ್ಟು, ‘ದಯಾಳು ಹಾಲಯ್ಯ’ ಎಂದಳು.ಹಾಲಯ್ಯ ಹೀಗೆ ‘ದಯಾಳು ಹಾಲಯ್ಯ’ನಾದ, ಹಳ್ಳಿಯ ಜಂಗಮರಂತೆ ದಯಾಳು ಹಾಲಯ್ಯನಿಗೂ ‘ಭವತಿ ಭಿಕ್ಷಾಂ ದೇಹಿ’ ಕೋರಾನ್ನ ಬೇಡುವ ಸರತಿ ಬರದೇ ಇರಲಿಲ್ಲ. ಜೋಯಿಸರ ಹರಳಳ್ಳಿ ಒಂದೇ ಅಲ್ಲ, ಹತ್ತಿರದ ಹಳ್ಳಿಗಳಿಗೂ ಹೋಗುವ ರೂಢಿ, ಮೊದಲೇ ಬಡತನ, ತಾಯಿಯ ಅಪ್ಪಣೆ ದಯಾಳು ಹಾಲಯ್ಯನಿಗೆ ದೇವಾಜ್ಞೆ, ಅದೊಂದು ದಿನ ಮುಂಜಾವಿನಲ್ಲಿ ಹತ್ತಿರದ ಹಳ್ಳಿಯಲ್ಲಿ ಹಾಲಯ್ಯನ ಕೋರಾನ್ನ ಭಿಕ್ಷೆ ನಡೆದಿತ್ತು.

“ಅಯ್ಯಪ್ಪ, ಪರಾನ್ನಭುಂಜಿಸುವವನು ಇದ್ದರೂ ಸತ್ತಂತೆ! ಓದು, ಓದಿ ಬುದ್ಧಿವಂತನಾಗು, ಅನ್ನಸಂಪಾದನೆ ಮಾಡು’, ಎಂದು ಯಾರೋ ಅಂದರು.ಭಿಕ್ಷೆಗೆಂದು ಹೋದ ಹಾಲಯ್ಯ ಅಳುತ್ತ ಬಂದ. ತಾಯಿಗೆ ಕಾರಣ ತಿಳಿಯಲಿಲ್ಲ.ಓದಬೇಕು. ಬುದ್ಧಿವಂತನಾಗಬೇಕು. ಮನುಷ್ಯನಾಗಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಮಾಡಬೇಕು. ತಾಯಿಗೆ ಹೇಳಲಿಲ್ಲ. ತಂದೆಗೆ ಹೇಳಲಿಲ್ಲ. ಯಾರಿಗೂ ಹೇಳದೇ ಕೇಳದೇ ಮುದ್ದಿನ ಜೋಯಿಸರ ಹಳ್ಳಿಯ ಕಡೆಗೆ ಹನಿಗಣ್ಣಿನಿಂದ ನೋಡುತ್ತ,ಹರಳಳ್ಳಿಯ ತಾಯಿಗೊಂದು ನಮಸ್ಕಾರ ಮಾಡಿ ಹಾಲಯ್ಯನು ಮನೆ ಬಿಟ್ಟು ಹೊರಟನು,ತೊಡಲು ಅಂಗಿಯಿಲ್ಲ. ಉಡಲು ಬಟ್ಟೆಯಿಲ್ಲ. ಒಂದು ಕಾವೀ ರುಮಾಲು, ಎರಡು ಕಾವೀ ಧೋತರ, ಕಜ್ಜರಿಗೆ ಓಡಿಬಂದ. ಹಾಲಯ್ಯನ ಹತ್ತಿರ ಇರುವ ಸಂಪತ್ತು ಅಷ್ಟೆ ಮುಲಕೀ ಓದಿದ. ಧಾರವಾಡಕ್ಕೆ ಕಾಲುನಡಿಗೆಯಿಂದ ಹೋಗಿ ಮುಲಕೀ ಪರೀಕ್ಷೆಗೆ ಕೂತರೆ ನಪಾಸು! ದಯಾಳು ಹಾಲಯ್ಯ! ಮುಲಕೀ ಪಾಸಾಗಿ ಮಾಸ್ತರನಾಗಬೇಕೆ? ಕಾಲ ಬರೆದ ದೈವಲೀಲೆಯೇ ಬೇರೆಯಾಗಿತ್ತು. ಅಷ್ಟೊತ್ತಿಗೆ ಕನ್ನಡದ ಪ್ರತಿಭಾವಂತ ತತ್ವಜ್ಞಾನಿ, ದಾರ್ಶನಿಕ, ಕಾವ್ಯಯೋಗಿ ನಿಜಗುಣಾಢ್ಯರ ಯೋಗದ ಗರಡಿಮನೆಯಲ್ಲಿ ಹಾಲಯ್ಯನವರು ಇಳಿದಿದ್ದರು.

ಲಿಂಗದ ಹಳ್ಳಿ ಹಾಲಯ್ಯನ ತಾಯಿಯ ತವರೂರು. ಅಲ್ಲಿ ಬಂದು ಕನ್ನಡ ಶಾಲೆಯ ಶಿಕ್ಷಕರಾಗಿ ನಿಂತರು. ಹಾಲುಗಲ್ಲದ ಹುಡುಗರು. ಕುಸುಮ ಕೋಮಲ ಗುರು, ಓದು, ಬೋಧನೆ ಆವ್ಯಾಹತವಾಗಿ ನಡೆಯಿತು. ತಾಯಿಗೆ ಸುದ್ದಿ ಹತ್ತಿತು.ಹುಡುಕುತ್ತ ಬಂದರು. ‘ಹಾಲಯ್ಯ! ಮದುವೆ ಮಾಡಿಕೋ ಬಾ, ನಮ್ಮ ಮನೆಯ ದೀಪ ನೀನು’ ಎಂದಳು.’ಒಂದು ವರುಷ ಬಿಟ್ಟು ಉತ್ತರ ಹೇಳುತ್ತೇನೆ’ ಎಂದು ಮಗನ ಉತ್ತರ, ಒಂದುವರುಷದ ಮೇಲೆ ಮತ್ತೆ ತಾಯಿ ಬಂದಾಗ ಮುನ್ನೂರು ರೂಪಾಯಿಗಳನ್ನು ತಾಯಿಯ ಉಡಿಯಲ್ಲಿ ಹಾಕಿ, ‘ಇದು ಕಂದನ ಭಕ್ತಿ, ನನ್ನ ಆಶೆ ಬಿಡು’ ಎಂದು ದಯಾಳು ಹಾಲಯ್ಯ ಹೇಳಿ ತಾಯ ಹರಕೆ ಪಡೆದು ಲಿಂಗದ ಹಳ್ಳಿ ಬಿಟ್ಟರು.

ಹುಬ್ಬಳ್ಳಿಗೆ ಬಂದು ಆರೂಢರಲ್ಲಿ ನಿಂತರು. ಎಮ್ಮಿಗನೂರಿಗೆ ಹೋಗಿ ಜಡೆಯ ಸಿದ್ಧರನ್ನೊಲಯಿಸಿದರು. ಮೈಸೂರು ಪ್ರಾಂತದ ಶಂಭುಲಿಂಗನ ಬೆಟ್ಟಕ್ಕೆ ತೆರಳಿ ಎಳಂದೂರು ಬಸವಲಿಂಗ ಸ್ವಾಮಿಗಳ ಸೇವಾನುರಾಗಕ್ಕೆಳಸಿದರು. ಅಲ್ಲಿಯ ತಪಸ್ಸು ಕಠೋರವಾದ ತಪಸ್ಸು! ಇಂದ್ರಿಯ ನಿಗ್ರಹ, ಒಡಲ ದಂಡನೆ, ಜ್ಞಾನ, ಕರ್ಮ, ಭಕ್ತಿಯೋಗಗಳು ಬದುಕಿನಲ್ಲಿ ಒಂದೆಡೆ ಸಂಚಯಿಸತೊಡಗಿದವು. ಬದುಕು ಪರಿಪಕ್ವತೆಯ ದಾರಿಯಲ್ಲಿ ನಡೆಯ ಹತ್ತಿತು!

ಅಷ್ಟೊತ್ತಿಗೆ ವಿರಾಟರಾಯನ ರಾಜಧಾನಿ ಹಾನಗಲ್ಲಿನಿಂದ ಶಂಭುಲಿಂಗನ ಬೆಟ್ಟಕ್ಕೆ ಪ್ರಾರ್ಥನೆಯೊಂದು ಹೋಯಿತು. ದಯಾಳು ಹಾಲಯ್ಯನವರು ಹಾನಗಲ್ಲಿನ ಮಠದ ಅಧಿಕಾರ ವಹಿಸಬೇಕು! ಅಧಿಕಾರ? ಆಸ್ತಿ? ಒಡೆತನ? ಸನ್ಯಾಸವಿತ್ತ,ವ್ಯಾಮೋಹವತ್ತ? ಬಂಧನವಿತ್ತ, ಬಿಡುಗಡೆಯತ್ತ? ಯೋಚಿಸಿದರು. ದೀರ್ಘಾಲೋಚನ ಮಾಡಿ ಅವರು ಬಂದರು. ಹಾನಗಲ್ಲಿನ ಕುಮಾರ ಸ್ವಾಮಿಗಳಾದರು. ಕುಮಾರಸ್ವಾಮಿಗಳನ್ನು ಮಠದ ಆಸ್ತಿ ವಂಚಿಸಲಿಲ್ಲ. ಇಲ್ಲಿ ಲಕ್ಷ್ಮೀ ಸೋತಳು. ಚಂಚಲೆಯ ಆಟ ಬೈರಾಗಿಯ ಮುಂದೆ ನಡೆಯಲಿಲ್ಲ.

ಜನ ಬದುಕಬೇಕು. ಬಿದ್ದ ಸಮಾಜ ಏಳಬೇಕು. ದಾರಿದ್ರ್ಯ ಅಳಿಯಬೇಕು,ಎಂತಹ ದಾರಿದ್ರ? ಅಂತಃಸತ್ವದ ದಾರಿದ್ರ, ಆತ್ಮಬಲವಿಲ್ಲದೆ ಸಮಾಜ ಕುರುಡಾಗಿ ಗಾಢಾಂಧತಮದತ್ತ ಬಟ್ಟೆದೋರದೆ ತಡಬಡಗೊಳ್ಳುತ್ತಿತ್ತು. ಅದರ ದಾರಿದ್ರವಳಿದು ದಾರಿದೋರಬೇಕಾದರೆ ಅಧ್ಯಾತ್ಮ ಶಿಕ್ಷಣ ಸಾರ್ವತ್ರಿಕವಾಗಿ ಒದಗಬೇಕು. ಅಂತಹ ಶಿಕ್ಷಣ ಸಂಸ್ಥೆ ನಾಡಿನಲ್ಲಿ ಮೂಡದೆ ಗತಿಯಿಲ್ಲವೆಂದು ಹಾನಗಲ್ ಕುಮಾರ ಸ್ವಾಮಿಗಳು ಯೋಚಿಸಿದರು. ಅವರ ಯೋಚನೆಯನ್ನು ಕಾರ್ಯರಂಗಕ್ಕಿಳಿಸುವಲ್ಲಿ ಶಿರಸಂಗಿಯಲ್ಲಿ ಲಿಂಗಪ್ಪನವರಿದ್ದರು, ಅರಟಾಳದಲ್ಲಿ ರುದ್ರಗೌಡರು, ಬಾಗಲಕೋಟೆಯಲ್ಲಿ ಮಲ್ಲಪ್ಪನವರು ಇದ್ದರು. ಮತ್ತೆ ಇಳಕಲ್ಲಿನ ಮಹಾಂತ ಶಿವಯೋಗಿಗಳ ಮಾರ್ಗದರ್ಶನ ಬೇರೆ?

ಮಲಾಪಹಾರೀ ನದಿಯ ದಂಡೆಯ ಮೇಲೆ ಸುಂದರವಾದ ಬಿಲ್ವವೃಕ್ಷದ ತೋಟ. ತಪಸ್ವಿಗಳು ಬಂದು ನಿಲ್ಲುವುದಕ್ಕೆ ತಕ್ಕ ಭೂಮಿ, ಮೀಸಲು ಭೂಮಿ, ಗಿಡಮರಗಳು,ಕಂಟಿಕಾವಲುಗಳು ಸುತ್ತಲೂ ನಿಂತು ಮನುಷ್ಯ ಸಂಚಾರಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ.ವನ್ಯಮೃಗಗಳು ದಿವಾರಾತ್ರಿ ಆ ಭೂಮಿಯ ನೈರ್ಮಲ್ಯವನ್ನು ರಕ್ಷಿಸುತ್ತಿದ್ದವು.

ಅಲ್ಲಿಗೆ ಕುಮಾರ ಸ್ವಾಮಿಗಳವರು ಬಂದು ಧರ್ಮದಂಡವನ್ನು ಊರಿದರು.ಪಾದರಕ್ಷೆ ಕಳೆದರು. ಪೇಳ ಬಯಲಾಯಿತು. ಆ ಭೂಮಿಯಲ್ಲಿ ಮಂದಿರವೊಂದು ಏರಿತು. ಶಿಕ್ಷಣಾಲಯವೊಂದರ ಸಂಸ್ಥಾಪನೆಯಾಯಿತು. ಆಚೆಗೆ ಐಹೊಳೆಯ ಆದರ್ಶ ಮಹಾವಿದ್ಯಾಲಯ, ಈಚೆಗೆ ಬದಾಮಿಯ ಮೇಣ ಬಸತಿಗಳು. ಅಲ್ಲಿ ಮಹಾಕೂಟ.ಇಲ್ಲಿ ಬನಶಂಕರಿ, ನಟ್ಟನಡುವೆ ಕುಮಾರ ಸ್ವಾಮಿಗಳ ಶಿಕ್ಷಣಾಲಯ!

ಅಲ್ಲಿ ಸತ್ಯದ ಪೂಜೆ, ಸೌಂದರದ ಶಿವನ ಪೂಜೆ, ಅಂತಹ ಪೂಜೆಯ “ಶಿವಯೋಗಮಂದಿರ’ವೆಂದು ನಾಮಕರಣ ಮಾಡಲಾಯಿತು.

ಶಿಕ್ಷಕರು ಬಂದರು. ವಿದ್ಯಾರ್ಥಿಗಳು ಬಂದು ನಿಂತರು. ನಾಡಿನ ತುಂಬ ಶಿವಯೋಗಮಂದಿರದ ಹೆಸರು ಸಂಚರಿಸಿ ಬಂದಿತು, ತಾಡವೋಲೆಗಳ ಸಂಪಾದನಾಕಾರ, ಚಿಂತನೆ, ಶಿಕ್ಷಣ ಪ್ರಸಾರ, ಸಮಾಜ ದರ್ಶನದ ಕಾರ್ಯ ಭರದಿಂದ ನಡೆದವು.ಶಿವಯೋಗಮಂದಿರದ ಆವರಣದಲ್ಲಿ ಬದ್ಧಪದ್ಮಾಸನರಾಗಿ ತದೇಕ ಚಿತ್ತದಿಂದ ಧ್ಯಾನಾಸಕ್ತರಾದ ಶಿವಯೋಗಿಗಳು ಜನಪದದ ಸ್ಫೂರ್ತಿಯಾದರು. ಗುಡಿಗುಡಾರಗಳಲ್ಲಿ,ದೇವಮಂದಿರಗಳಲ್ಲಿ ಹಾನಗಲ್ಲಿನ ಕುಮಾರ ಸ್ವಾಮಿಗಳು ಭಜನೆಯ ವಸ್ತುವಾದರು.ಪಠಣದ ಸಾಮಗ್ರಿಯಾದರು.

ಐಹೊಳೆಯ ದಾರಿಯಲ್ಲಿ, ನಳಂದಾ ತಕ್ಷಶಿಲೆಯ ದಾರಿಯಲ್ಲಿ ಶಿವಯೋಗ ಮಂದಿರವು ಹೆಜ್ಜೆ ಇಡುತ್ತಿರುವ ಕಾಲದಲ್ಲಿ ಶಿವಯೋಗಿಗಳು ಕುಳಿತಲ್ಲಿಂದಲೇ ಜೋಯಿಸರ ಹರಳಳ್ಳಿಯ ಕಡೆಗೊಮ್ಮೆ ನೋಡಿದರು. ಲಿಂಗದಹಳ್ಳಿಯ ಕಡೆಗೊಮ್ಮೆ ದಿಟ್ಟಿಸಿದರು. ಜೀವನದ ಮಾಯೆಯನ್ನು ಗೆಲಿದ ಶಿವಯೋಗಿಯ ಕಂಗಳು ಲಿಂಗದಲ್ಲಿ ನಟ್ಟು ನಿಬ್ಬೆರಗಾದವು, ಎಲ್ಲವೂ ಬಯಲು.

ನೆನಹು ಸತ್ತಿತ್ತು. ಭ್ರಾಂತಿ ಬೆಂದಿತು. ಅರಿವು ಮರೆಯಿತ್ತು.

ಕುರುಹುಗೆಟ್ಟಿತು. ಗತಿಯನರಸಲುಂಟೆ? ಮತಿಯರನಸಲುಂಟೆ?

ಅಂಗವೆಲ್ಲ ನಷ್ಟವಾಗಿ ಲಿಂಗಹೀನವಾಯಿತ್ತು

ಕಂಗಳದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ

ಅಲ್ಲಿಗೆ ಶಿವುನ ವಾಚನ ಮುಗಿಯಿತು. ಎಂಟು ವರುಷಗಳ ಹಿಂದೆ ಶಿವು ಓದುನಿಲ್ಲಿಸಿದ. ಪುನಃ ಆ ಪಾಠ ಓದಲಿಲ್ಲ. ಮನೆ ಬಿಟ್ಟು ಹೊರಟನು. ‘ನನ್ನ ಆಶೆ ಬಿಡು’ಎಂದು ತಾಯಿಗೆ ಹೇಳಿ ಶಿವು ‘ಶಿವಯೋಗಮಂದಿರ’ಕ್ಕೆ ಹೊರಟು ಹೋದನು.

ಹತ್ತಿರ ಹತ್ತಿರ ಶಿವಯೋಗಮಂದಿರವು ಬರುತ್ತಿದ್ದಿತು. ಗಿಡಮರಗಳ ನಡುವೆ,ಹಚ್ಚ ಹಸುರಿನ ಮಧ್ಯೆ, ಪ್ರಶಾಂತ ವಾತಾವರಣದ ನಟ್ಟನಡುವೆ ಅಡಗಿಸಿಕೊಂಡ ಶಿವಯೋಗಮಂದಿರವು ನೋಟಕ್ಕೆ ಸಮೀಪಿಸುತ್ತಿದ್ದಿತು.

“ಗುಹೇಶ್ವರಾ’ ಎಂದು ಹಕ್ಕಿಯೊಂದು ಹಾಡಿದಂತಾಯಿತು. ನಿಜ.ಶಿವಯೋಗಮಂದಿರವು ಬಂದುದೇ ನಿಜ!

ಗಾಡಿಯಿಂದಿಳಿದು ನೆಲದ ಮೇಲೆ ಕಾಲಿಟ್ಟಾಗ ಮೈಯಲ್ಲಿ ಮಿಂಚಿನ ಹೊಳೆ ತುಳುಕಾಡುತ್ತಿದ್ದಿತು. ಇಲ್ಲಿ ನಮ್ಮ ಶಿವು ಇರಬೇಕು. ಶಿವಯೋಗಿಯ ಸನ್ನಿಧಿಯ ಬಳಿ ನಮ್ಮ ಶಿವು ಇರಬೇಕು, ಸಿರಿಬಡತನಗಳ ಮಧ್ಯದಲ್ಲಿ ಸ್ಥಿತಪ್ರಜ್ಞನಾಗಿ ನಿಂತುಕೊಂಡು ಲೋಕಸಂಗ್ರಹಕ್ಕಾಗಿ ಬಾಳನ್ನೇ ಮೀಸಲಾಗಿರಿಸಿದ ಕಾರುಣ್ಯಮೂರ್ತಿಯ ಹತ್ತಿರ ನಮ್ಮಶಿವು ಇದ್ದಿರಬೇಕು ಎಂದೆನ್ನುತ್ತ ಶಿವಯೋಗಮಂದಿರದ ಆಶ್ರಯದಲ್ಲಿ ಕಾಲಿರಿಸಿದಾಗ ಕಂಡ ನೋಟ ಇನ್ನೂ ಅಚ್ಚಳಿಯದಿದೆ.ವಾಚನಾಲಯ, ತಾಡವೋಲೆಗಳ ಸಂಗ್ರಹಾಲಯಗಳನ್ನು ಸಂದರ್ಶಿಸಿ,

ಯೋಗಸಾಧನಯ ನೆಲೆಮನೆಯನ್ನು ಕಂಡು ಶಿವಯೋಗಿಗಳ ಸಮಾಧಿಯ ಹತ್ತಿರ ಬಂದಾಗ ಜೋಯಿಸರ ಹರಳಳ್ಳಿಯ ಹಾಲಯ್ಯನ ಚಿತ್ರ ಕಣ್ಮುಂದೆ ನಿಂತಿತ್ತು!

ಅವರು ಯಾವಾಗಲೂ ಒಮ್ಮೊಮ್ಮೆ ಬರುತ್ತಾರೆ. ಅಂತಹ ಕಾಲ ನೆಲದ ಪುಣ್ಯದಿಂದ ಬರುತ್ತದೆ. ನಮ್ಮ ಜೈನ ದಾರ್ಶನಿಕರು, ಲಿಂಗಾಯತ ದಾರ್ಶನಿಕರು. ವೈಷ್ಣವ ಭಕ್ತರು ಅವರದೊಂದು ಕಾಲ. ಆ ಕಾಲ ತಿರುಗಿ ಹೋಯಿತು. ಇನ್ನು ಅವರು ತಿರುಗಿ ಬಾರದೇ? ಎಂದು ಈ ನಮ್ಮ ಹೊಸಗಾಲದ ಜನತೆ ಹಾರಯಿಸಿ ನಿಂತ ಹೊತ್ತಿನಲ್ಲಿ ಯಾರಿಗೂ ತಿಳಿಯಗೊಡದಂತೆ ಅವರು ಬಂದರು, ಹೋದರು. ನಾವು ಗುರುತಿಸದಿದ್ದರೆ ಅದು ಯಾರ ತಪ್ಪು?

ಶಿವಯೋಗಿಗಳ ಸನ್ನಿಧಿಯಲ್ಲಿ ನಿಂತು ಹರಕೆ ಬೇಡಿ ಮಲಾಪಹಾರಿಯ ಕಡೆಗೆ ತಿರುಗಿದಂದು ಹತ್ತಿರದಲ್ಲೇ ಒಂದು ಬಾವಿ, ಬಾವಿಯ ಕಟ್ಟೆಯ ಮೇಲೆ ಯಾರೋ ನಿಂತಂತೆ ತೋರಿತು. ಗೆಳೆಯರನ್ನು ಹಿಂದೆ ಬಿಟ್ಟು ಮುಂದಕ್ಕೆ ಹೋಗಿ ನೋಡಿದಾಗ ಕಂಡವು ಇಬ್ಬರಲ್ಲಿ ಒಬ್ಬ ಹುಡುಗ, ಇನ್ನೊಬ್ಬ ಮುದುಕ.

ಹುಡುಗ ಅದೇ ಮುಖ, ಅದೇ ನಿಲುವು, ಅದೇ ಆಕಾರ, ಅದೇ ರೂಪ ಕಿವಿ ಟೊಪ್ಪಿಗೆ ಹಾಕಿಕೊಂಡಿದ್ದಾನೆ. ನಿಲುವಂಗಿ ತೊಟ್ಟಿದ್ದಾನೆ. ಬರಿಗಾಲು ನೊಂದಿಲ್ಲ,ಬೆಂದಿಲ್ಲ. ಆದರ್ಶದ ಕನಸ ಕನಸು; ಬದುಕ ಬದುಕು, ನಮ್ಮ ಶಿವು!

ಮುದುಕ ತಪಸ್ಸಿನ ಅಗ್ನಿಯಲ್ಲಿ ಬೆಂದ ಜೀವ, ಅಪ್ಪಟ ಚಿನ್ನ, ಹೊಳೆವ ಕಂಗಳು.ಮೊಗದ ತೇಜ, ಕಂಗಳ ನಿಶ್ಚಲ ನೋಟ, ಶಿವಯೋಗ ನಿದ್ರೆಯಲ್ಲಿ ನಿರತರಾಗಿರುವರೋ ಎಂಬ ಆಕೃತಿ, ಹಾನಗಲ್ಲ ಕುಮಾರ ಸ್ವಾಮಿಗಳು!

ಹಿರೇಮಲ್ಲೂರಿನ ಶಿವು ಶಿವಯೋಗಮಂದಿರದ ಶಿವಯೋಗಿಗಳ ಸನ್ನಿಧಿಯಲ್ಲಿ ಬಂದು ನಿಂತಿದ್ದಾನೆ.

ಮಲಪ್ರಭಾ ಪಕ್ಕದಲ್ಲಿ ವಿಶಾಲವಾದ ನದಿಯ ಹರವು. ಒಮ್ಮೆ ದುಡುಕು.ಇನ್ನೊಮ್ಮೆ ತಾಳ್ಮೆ. ಅಲ್ಲಿ ಏಳು, ಇಲ್ಲಿ ಬೀಳು. ಆ ಮೇಲೆ ಎಲ್ಲವೂ ಮೌನ, ಸಲಿಲವಾಗಿ,ಪ್ರಶಾಂತವಾಗಿ, ಮನೋಹರವಾಗಿ ಮಲಪ್ರಭೆ ಸನಿಹದಲ್ಲಿಯೇ ಹರಿಯುತ್ತಿದ್ದಳು.

ನಾನು ಹಾಗೆಯೇ ನಿಂತಿದ್ದೆ. ದಾರ್ಶನಿಕ ಕಂಡ ಆ ನಾಡಿನಲ್ಲಿ ನಾನು ಈಗಲೂ ಎವಯಿಕ್ಕದ ಹಾಗೆಯೆ ನಿಂತಿದ್ದೇನೆ.

ಆಕರ: ಹಿರೇಮಲ್ಲೂರ ಈಶ್ವರನ್ ಅವರ ಕವಿಕಂಡ ನಾಡು ಕೃತಿಯಿಂದ

ಲೇಖಕರು : ಶ್ರೀ ಡಾ. ಜಿ.ವೆಂಕಟೇಶ ಮಲ್ಲೇಪುರಂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಹುಬ್ಬಳ್ಳಿಯ ಸಿದ್ಧಾರೂಢರು ಜ್ಞಾನಯೋಗಕ್ಕೆ, ಎಮ್ಮಿಗನೂರಿನ ಜಡೆಯ ಸಿದ್ಧರು ಭವದ ಬೆಳಗು ಕ್ರಿಯಾಯೋಗಕ್ಕೆ, ಎಳಂದೂರು ಬಸವಲಿಂಗ ಶಿವಯೋಗಿಗಳು ಭಕ್ತಿಯೋಗಕ್ಕೆ ಕಾರಣವಾಗಿ ಪ್ರಸಿದ್ಧರಾಗಿದ್ದಾರೆ. ಈ ಮೂರು ಯೋಗಗಳೂ ಮುಪ್ಪುರಿಗೊಂಡದ್ದನ್ನು ಹಾನಗಲ್ಲ ಕುಮಾರಸ್ವಾಮಿಗಳಲ್ಲಿ ಕಾಣುತ್ತೇವೆ. ಈ ನಾಲ್ವರು ಆಧುನಿಕ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಕಾರಣರಾದವರು! ಹಾನಗಲ್ಲ ಕುಮಾರಸ್ವಾಮಿಗಳು ಹಲವು ಹೊಸತುಗಳ ಪ್ರಕಲ್ಪಕ್ಕೆ ಕಾರಣರಾದದ್ದು ಚರಿತ್ರಾರ್ಹ ಸಂಗತಿ. ನೂರು ವರ್ಷಗಳ ಹಿಂದೆ ವೀರಶೈವ ಸಮಾಜ ಮಹಾಂಧಕಾರದಲ್ಲಿ ಮುಳುಗಿತ್ತು; ಆಗ ಕಾರಣಿಕಪುರುಷರಾಗಿ ಒದಗಿ ಬಂದವರೇ ಹಾನಗಲ್ಲ ಶ್ರೀಕುಮಾರಸ್ವಾಮಿಗಳು.

ಬಾಲ್ಯ-ವಿದ್ಯಾಭ್ಯಾಸ:

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ಜೋಯಿಸರ ಹರಳಳ್ಳಿ ಎಂಬುದು ಪುಟ್ಟಗ್ರಾಮ. ಆ ಗ್ರಾಮದಲ್ಲಿ ವೃಷ್ಟಿ ಶಾಖಾನುವರ್ತಿಗಳಾದ ಸಾಲೀಮಠದ ಬಸವಯ್ಯ ಮತ್ತು ಆತನ ಮಡದಿ ನೀಲಮ್ಮ ಇದ್ದರು. ಇವರ ಮಗನೇ ಸದಾಶಿವಕುಮಾರಸ್ವಾಮಿ). ಇವರು ಲೀಲಾವತರಣಗೊಂಡ ವರ್ಷ 1867.

ಸದಾಶಿವನ ಜನನ ಒಂದು ವಿಸ್ಮಯಕಾರಿಯೇ. ಅದೊಂದು ದಿನ ನಿಶೀಥ ಸಮಯ. ತಾಯಿ ನೀಲಮ್ಮ ನಿದ್ದೆಯಲ್ಲಿದ್ದಾರೆ.ಆಕೆಗೊಂದು ಸ್ವಪ್ನ ಬಿದ್ದಿದೆ. ಒಬ್ಬ ಜಂಗಮವೇಷಧಾರಿ ಕನಸಿನಲ್ಲಿ ಕಾಣಿಸಿಕೊಂಡಿದ್ದಾನೆ. ಅವನು ‘ಮಗನೊಬ್ಬ ಜನಿಸುತ್ತಾನೆ. ಅವನ ಬದಲು ಮತ್ತೊಬ್ಬ ಮಗನನ್ನು ಕೊಡು’ ಎಂದು ಹೇಳಿ ಆಶೀರ್ವದಿಸುತ್ತಾನೆ. ತಾಯಿ ನೀಲಮ್ಮ ಒಪ್ಪಿಗೆ ನೀಡುತ್ತಾರೆ. ನಂತರ ಶುಭಮುಹೂರ್ತದಲ್ಲಿ ಕಾರಣಿಕ ಮಗು ಜನಿಸುತ್ತದೆ. ಸದಾಶಿವ ಜನಿಸಿದ ದಿನ ಜಂಗಮನೊಬ್ಬ ಬಂದು ಊರಿಗೆ ಕಾರಣಿಕ ಮಗು ಜನಿಸಿದೆಯೆಂದು ಸಾರಿ ಹೋಗುತ್ತಾನೆ. ನಂತರ ಜಂಗಮನೊಬ್ಬ ಬಂದು ಜನ್ಮಲಿಂಗಧಾರಣೆ ಮಾಡಿ ಹೋಗುತ್ತಾನೆ. ಮಗುವನ್ನು ಹಾಲಯ್ಯನೆಂದೂ ಸದಾಶಿವನೆಂದೂ ಜನ ಕರೆಯುತ್ತಾರೆ. ಆರನೆಯ ವಯಸ್ಸಿಗೆ ಅಕ್ಷರಭ್ಯಾಸ ಪ್ರಾರಂಭವಾಯಿತು. ಊರಲ್ಲಿದ್ದ ಗಾಂವಟಿಶಾಲೆಗೆ ಸದಾಶಿವ ಹೋದ. ಅವನ ಅಜ್ಜಂದಿರಾದ ಕೊಟ್ರಪ್ಪಯ್ಯ ಆ ಶಾಲೆಯನ್ನು ತೆರೆದಿದ್ದರು. ಅಲ್ಲಿ 1872 ರಿಂದ 1875ರವರೆಗೆ ಮೂರನೆಯ ತರಗತಿ ತನಕ ವಿದ್ಯಾಭ್ಯಾಸ ಜರುಗಿತು. ಸಾಲೀಮಠದ ಬಸವಯ್ಯನವರದ್ದು ಸಾಮಾನ್ಯ ಮನೆತನ.ಧನ-ಧಾನ್ಯಕ್ಕೆ ಸದಾ ತತ್ವಾರ. ಆದರೆ, ಬಂದುಹೋಗುವ ಜನ ಅಪಾರ. ಮನೆಯಲ್ಲೂ ಹತ್ತು-ಹನ್ನೆರಡು ಜನ ಸದಾ ಇರುತ್ತಿದ್ದರು.ಶಾಲೆಯಿಂದ ಬರುತ್ತಿದ್ದ ವಾರ್ಷಿಕ ವರಮಾನ ಅಷ್ಟಕಷ್ಟೆ. ಪ್ರತಿನಿತ್ಯ ಭಿಕ್ಷೆ ಬೇಡಬೇಕಾಗುತ್ತಿತ್ತು. ಈ ನಡುವೆ ತಂದೆ ನಿಧನರಾದರು.

ಸದಾಶಿವನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಮನೆಗೆ ಬಂದಾಗ ಅಣ್ಣನ ಚಾಟಿಮಾತು, ಅಮ್ಮನ ಆರ್ಭಟ ಕಂಡು ಅವನಿಗೆದಿಕ್ಕುತೋಚದಂತಾಯಿತು. ಮುಂದೇನು ಮಾಡಬೇಕೆಂದು ಯೋಚಿಸಿದ. ಇದಕ್ಕೆಲ್ಲ ವಿದ್ಯಾಭ್ಯಾಸವೇ ಕೊನೆಯೆಂದು ಅರಿತು,ಕಜ್ಜರಿಗ್ರಾಮಕ್ಕೆ ಹೊರಟು ಬಂದ. 1876ರಿಂದ 1880ರವರೆಗೆ ನಾಲ್ಕುವರ್ಷ ಮುಲಕೀ ಪರೀಕ್ಷೆಗೆ ಅಭ್ಯಾಸ ಮಾಡಿದ.ಸದಾಶಿವಯ್ಯ ಜ್ಞಾನಾಕಾಂಕ್ಷಿ. ಅವರು ಲಿಂಗದಹಳ್ಳಿಯಲ್ಲಿ ಪ್ರಾಥಮಿಕಶಾಲೆ ಆರಂಭಿಸಿದರು. ಅನೇಕರು ಬಂದು ಶಾಲೆಗೆ ಸೇರಿದರು. ವಿದ್ಯಾಶಿಕ್ಷಣ ಪ್ರಾರಂಭವಾಯಿತು. ಆದರೆ, ತನಗೆ ‘ಆತ್ಮಶಿಕ್ಷಣ’ ಬೇಕೆಂದೆನಿಸಿತು. ಆ ಊರಿನ, ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯ ಬಳಿ ಆಸೆ ಹೇಳಿಕೊಂಡರು. ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ತಿಳಿದುಕೊಳ್ಳಲು ಅವರೊಡನೆ ನೆಲೆನಿಂತರು. ವೇದಾಂತದ ರುಚಿ ಮನಸ್ಸಿಗೆ ಹಿಡಿಸಿತು. ಲಿಂಗಪೂಜೆಯಲ್ಲಿ ಅಪರಿಮಿತ ಪ್ರೇಮಹುಟ್ಟಿತು! ತಾಯಿಗೆ ತನ್ನ ಮಗ ತವರುಮನೆಯಲ್ಲಿ ಇರುವುದು ತಿಳಿಯಿತು. ತಾಯಿ-ಮಗನ ಸಮಾಗಮವೇನೋ ಆಯಿತು. ಮದುವೆ ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಬೇಕೆಂಬ ಕಾತರ ತಾಯಿಯದು. ಆದರೆ, ಆಕೆಯ ಹಂಬಲಕ್ಕೆ ಸದಾಶಿವ ಕಡಿವಾಣ ಹಾಕಿ ಒಂದೆರಡು ವರ್ಷ ಕಳೆಯಲೆಂದು ಸಮಾಧಾನ ಮಾಡಿ ಊರಿಗೆ ಕಳಿಸಿದರು. ಇತ್ತ ನಿಜಗುಣರ ‘ಕೈವಲ್ಯಪದ್ಧತಿ’ ಅವರ ಮನಸ್ಸನ್ನು ತಟ್ಟಿತು.ವೈರಾಗ್ಯ ದೇಹ-ಮನಸ್ಸನ್ನು ಆವರಿಸಿತು.

ಅವರು ಲಿಂಗದಹಳ್ಳಿ ತೊರೆದು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರ ಬಳಿ ನೆಲೆನಿಂತರು. ಹುಬ್ಬಳ್ಳಿಯಲ್ಲಿ ವಾಸ, ರುದ್ರಾಕ್ಷಿ ಮಠದಲ್ಲಿ ವಾಸ್ತವ್ಯ. ಭಿಕ್ಷಾಟನೆಯಿಂದ ಪ್ರಸಾದ ಅರ್ಪಿತ. ಪ್ರತಿನಿತ್ಯ ಅಧ್ಯಾತ್ಮಪ್ರವಚನದ ಶ್ರವಣಕ್ಕೆ ಸಿದ್ಧಾರೂಢರ ಬಳಿ ಹೋಗುತ್ತಿದ್ದರು.ಅವರು ಅಲ್ಲಿರುವಾಗ ‘ಇಷ್ಟಲಿಂಗ’ದ ಜಿಜ್ಞಾಸೆ ಬೆಳೆಯಿತು! ಇಷ್ಟಲಿಂಗದ ಅವಶ್ಯಕತೆ ಇಲ್ಲವೆಂದು ಸಿದ್ಧಾರೂಢರಿಂದ ತಿಳಿಯಿತು.ಆಗ ಎಮ್ಮಿಗನೂರು ಶ್ರೀಜಡೆಸಿದ್ಧರ ದರ್ಶನಕ್ಕಾಗಿ ಬಳ್ಳಾರಿಗೆ ಪಾದಯಾತ್ರೆ ಬೆಳೆಸಿದರು. ಅದು 1885ನೇ ವರ್ಷ, ಜಡೆಸಿದ್ಧರ ದರ್ಶನ ವಾಯಿತು . ಇಷ್ಟಲಿಂಗದ ಜಿಜ್ಞಾಸೆ ಅವರಿಂದ ಪರಿಹಾರ ಆಯಿತು. ಅವರು ಹುಬ್ಬಳ್ಳಿಗೆ ಬಂದು ಬಸವಲಿಂಗ ಸ್ವಾಮಿಗಳ ದರ್ಶನ ಪಡೆದರು. ಎಳಂದೂರು ಬಸಲಿಂಗ ಸ್ವಾಮಿಗಳಲ್ಲಿ ಶಿಷ್ಯವೃತ್ತಿ ಪ್ರಾರಂಭಿಸಿದರು. 1885 ರಿಂದ 1895ರ ವರೆಗೆ ಹತ್ತು ಗಳ ಕಾಲ ಶಿಷ್ಯವೃತ್ತಿ ಕೈಗೊಂಡು ಅವರೊಡನೆ ದೇಶಸಂಚಾರ ಮಾಡಿದರು. ಬಸವಲಿಂಗಸ್ವಾಮಿಗಳು ಯೋಗಧುರಂಧರರು. ಜೀವನದಲ್ಲಿ ಸದಾಚಾರ, ಶಿವಪೂಜೆ ಮತ್ತು ಶಿವಾನುಭವಗಳನ್ನು ಕಲಿತರು. ಸ್ವಾಮಿಗಳಿಂದ ಕ್ರಿಯೋಪದೇಶ ಪಡೆದರು. ಅವರಿಬ್ಬರು ಪ್ರಯಾಣದಲ್ಲಿ ಇರುವಾಗಲೇ ಸ್ವಾಮಿಗಳು ತಮ್ಮೆಲ್ಲ ವಿದ್ಯೆಯನ್ನು ಶಿಷ್ಯನಿಗೆ ಧಾರೆಎರೆದರು. ಅಣ್ಣಿಗೆರೆ ಗ್ರಾಮದಲ್ಲಿರುವಾಗ ಎಳಂದೂರು ಶ್ರೀಗಳಿಗೆ ದೇಹಾಲಸ್ಯ ಉಂಟಾಯಿತು. ಸದಾಶಿವ ಸ್ವಾಮಿಗಳನ್ನು ಕರೆದು ಅಸಾಧಾರಣ ಶಿವಯೋಗಿ ಆಗೆಂದು ಅನುಗ್ರಹ ದೀಕ್ಷೆಕೊಟ್ಟು ಅವರು ಲಿಂಗೈಕ್ಯರಾದರು. ಸದಾಶಿವಸ್ವಾಮಿಗಳಿಗೆ ಗುರುಬಸವರ ಗದ್ದುಗೆಯಲ್ಲಿ ಅನುಷ್ಠಾನ ಮಾಡುವ ಅಪೇಕ್ಷೆ ಉಂಟಾಯಿತು. ಅವರು ಕ್ಯಾಸನೂರಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿಂದ ಹಾನಗಲ್ ಶ್ರೀಮಠದ ಫಕೀರಸ್ವಾಮಿಗಳ ದರ್ಶನಕ್ಕೆ ಹೋದರು. ಆ ಕಾಲಕ್ಕೆ ಫಕೀರಸ್ವಾಮಿಗಳು ಸಿದ್ಧಿಪುರುಷರೆಂದು ಖ್ಯಾತಿ ಪಡೆದಿದ್ದರು. ಸದಾಶಿವ ಸ್ವಾಮಿಗಳ ಶಿವಯೋಗಾನುಷ್ಠಾನ, ಜ್ಞಾನಾಭಿಲಾಷೆ ನೋಡಿದ ಫಕೀರಸ್ವಾಮಿಗಳಿಗೆ ಶ್ರೀಮಠದ ಪೀಠಾಧಿಕಾರ ಸ್ವೀಕರಿಸುವಂತೆ ಪ್ರಸ್ತಾಪ ಮಾಡಿದರು. ಈ ಪ್ರಸ್ತಾಪ ನಡೆದದ್ದು 1895ನೆಯ ಇಸವಿಯಲ್ಲಿ. ನಂತರ ಫಕೀರಸ್ವಾಮಿಗಳು ಲಿಂಗೈಕ್ಯರಾದರು. ಬಿದರಿ ಶ್ರೀಕುಮಾರಸ್ವಾಮಿಗಳಿಂದ ‘ನಿರಂಜನಸ್ಥಲ’ ದೀಕ್ಷೆಯೊಂದಿಗೆ ಶ್ರೀಮಠದ ಪಟ್ಟಾಧಿಕಾರವನ್ನು ಸದಾಶಿವಸ್ವಾಮಿಗಳು ಸ್ವೀಕರಿಸಬೇಕಾಯಿತು. ಹಾನಗಲ್ ಶ್ರೀಕುಮಾರ ಸ್ವಾಮಿಗಳು ಎಂಬ ಅಭಿದಾನವನ್ನು ನೀಡಲಾಯಿತು.

ವೀರಶೈವ ಮಹಾಸಭೆ: ದಕ್ಷಿಣ ಭಾರತದಲ್ಲಿ ವೀರಶೈವ ಸಮಾಜ ಎಂದಿನಿಂದಲೂ ತನ್ನದೇ ಆದ ವೈಶಿಷ್ಟ್ಯದಿಂದ ಬೆಳೆದು ಬಂದಿತ್ತು.ಇಂಥ ಸಮಾಜವು ಕಳೆಗುಂದಿ ‘ಕೃಷ್ಣಪಕ್ಷದಲ್ಲಿ ಕಾಲಿಟ್ಟಿತ್ತು. ಇದಲ್ಲದೆ, ಇಪ್ಪತ್ತನೆಯ ಶತಮಾನದ ಸುಧಾರಣೆಯನ್ನು ಸಮಾಜ ತಕ್ಕಷ್ಟು ಬಳಸಿಕೊಂಡಿರಲಿಲ್ಲ. ಇಂಥ ಸಮಾಜವನ್ನು ಸುಧಾರಿಸಲು ಯಾವ ಮಹಾಪುರುಷನೂ ಮುಂದೆ ಬಂದಿರಲಿಲ್ಲ. ಆಗ ಕಾರಣಿಕಪುರುಷ ಕುಮಾರಸ್ವಾಮಿಗಳ ಅಂತರ್‌ನೇತ್ರವು ಇತ್ತ ಹೊರಳಿತು! ಈ ನಡುವೆ ಅನೇಕ ಕಡೆಗಳಲ್ಲಿ ಸಂಚರಿಸುತ್ತ ಧಾರವಾಡಕ್ಕೆ ಬಂದರು. ಕುಮಾರಸ್ವಾಮಿಗಳು ಪಟ್ಟಾಧಿಕಾರಕ್ಕೆ ಬಂದಾಗ ನಾಡಿನಲ್ಲಿ ಬರಗಾಲದ ಬಿಸಿಗಾಳಿ ಬೀಸಿತ್ತು. ಆಗ ಬರಪೀಡಿತರಿಗೆ ದಾಸೋಹಸೇವೆ ಕೈಗೊಂಡರು. 1898ರಲ್ಲಿ ಹಾನಗಲ್ಲಿನ ಶ್ರೀಮಠದಲ್ಲಿ ಪಾಠಶಾಲೆ ಪ್ರಾರಂಭಿಸಿದರು. ಅವರು ಸಮಾಜದ ಜಾಗೃತಿಗಾಗಿ ಹಲವಾರು ಸಮಾಲೋಚನ ಸಭೆಗಳನ್ನು ನಡೆಸಿದರು. ಅನೇಕ ಪ್ರಮುಖರ ಜತೆಗೂಡಿ ಮಹಾಸಭೆಯ ಸ್ಥಾಪನೆ ವಿಷಯವನ್ನು ಸಮಾಲೋಚನೆ ಮಾಡಿದರು. ಇದೆಲ್ಲದರ ಫಲವಾಗಿ 1904 ಮೇ ತಿಂಗಳಲ್ಲಿ ‘ಶ್ರೀಮದ್ವೀರಶೈವ ಮಹಾಸಭೆ’ ಅಸ್ತಿತ್ವಕ್ಕೆ ಬಂದಿತು. ಸ್ವಾಮಿಗಳು ಆವರೆಗೂ ಸಂಗ್ರಹಿಸಿದ್ದ ಒಂದುಲಕ್ಷ ರೂಪಾಯಿಗಳನ್ನು ‘ಲಿಂಗಾಯತ ಎಜುಕೇಷನ್ ಫಂಡ್’ ಆಗಿ ಇರಿಸಿದರು. ಅದರಿಂದ ಬರುವ ಬಡ್ಡಿ ಹಣವನ್ನು ಬಡವಿದ್ಯಾರ್ಥಿಗಳಿಗಾಗಿ ವಿನಿಯೋಗಿಸತೊಡಗಿದರು. ವೀರಶೈವ ಸಂಸ್ಕೃತಿಯ ಸಂರಕ್ಷಣೆಗಾಗಿಯೂ ಅವರು ಕಟಿಬದ್ಧರಾದರು. ಅಲ್ಲಲ್ಲಿ ಧನಸಂಗ್ರಹ ಮಾಡಿ ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ರೋಣ, ಇಳಕಲ್ಲ, ಅನಂತಪುರ, ಕೆಳದಿ, ಚಿತ್ತಾಪುರ-ಹಲವಾರು ಕಡೆ ನೂತನ ಪಾಠಶಾಲೆಗಳನ್ನು ಸ್ಥಾಪಿಸಿದರು. ನೂರು ವರ್ಷಗಳ ಹಿಂದೆ ಹಾನಗಲ್ಲು ಕುಮಾರಸ್ವಾಮಿಗಳ ದೂರದೃಷ್ಟಿಯಿಂದ ಹತ್ತಾರು ಶಾಲೆಗಳು ಸ್ಥಾಪನೆಗೊಂಡವು. ಇವುಗಳಿಗೆ ಹೊಂದಿಕೊಂಡಂತೆ ‘ವಾಚನ ಮಂದಿರಗಳನ್ನು ತೆರೆದರು. ಪ್ರಾಚೀನ ಗ್ರಂಥಗಳ ಅಧ್ಯಯನಕ್ಕೂ ಸಂಶೋಧನೆಗೂ ‘ಸಂಶೋಧನ ಮಂಡಳ’ವನ್ನು ಸ್ಥಾಪಿಸಿದರು. ಹೊರರಾಜ್ಯಗಳಿಗೆ ವಿದ್ವಾಂಸರನ್ನು ಕಳಿಸಿ ಕೆಲವು ಮಹತ್ವದ ವಿಷಯಗಳನ್ನು  ಸಂಗ್ರಹಿಸಿದರು.

ಶಿವಯೋಗ ಮಂದಿರ: 1908ನೆಯ ಇಸವಿಯಲ್ಲಿ ಶಿವಯೋಗಮಂದಿರ ಸ್ಥಾಪಿಸುವ ಯೋಜನೆ ಅವರ ಮನಸ್ಸಿನಲ್ಲಿ ರೂಪುಪಡೆಯುತ್ತಿತ್ತು. ಅದೇ ಕಾಲಕ್ಕೆ ಬಾಗಲಕೋಟೆಯ ವೈರಾಗ್ಯದ ಮಲ್ಲಣಾರ್ಯರು ಇವರ ಬಳಿಗೆ ಬಂದರು. ಅವರು “ಧರ್ಮೋನ್ನತಿಗೆ ಬ್ರಹ್ಮಬಲ ಮತ್ತು ಕ್ಷಾತ್ರಬಲ ಎರಡೂ ಬೇಕೆಂದು ಪ್ರಸ್ತಾಪಿಸುತ್ತ-‘ಕ್ಷಾತ್ರಬಲ’ ಈಗ ಸಮಾಜದಲ್ಲಿ ರೂಪು ಪಡೆಯುತ್ತಿದೆ. ಆದರೆ, ‘ಬ್ರಹ್ಮಬಲ’ವನ್ನು ರೂಪಿಸಬೇಕಾಗಿದೆ. ಇದರಿಂದ ಶಿವಯೋಗಧರ್ಮಕ್ಕೆ ಮೆರುಗು ನೀಡಬೇಕಾಗಿದೆ.ಇದಕ್ಕಾಗಿ ಸರ್ವಸಮನ್ವಯದ ಒಂದು ದೊಡ್ಡಯೋಗಸಂಸ್ಥೆಯ ಅವಶ್ಯಕತೆಯಿದೆ. ಅದು ನಿಮ್ಮಿಂದ ನೆರವೇರಬೇಕು’ ಎಂದು ಆಗ್ರಹಿಸಿದರು. ಅವರು ಆ ಕಾಲಕ್ಕೆ 14 ಸಾವಿರ ಧನಸಂಗ್ರಹ ಮಾಡಿದರು. ಬಾಗಲಕೋಟೆಯಲ್ಲಿ ನಡೆದ ವೀರಶೈವ ಮಹಾಸಭೆಯಲ್ಲಿ ‘ಶಿವಯೋಗಮಂದಿರ’ ಸ್ಥಾಪನೆಗೆ ಒಪ್ಪಿಗೆ ದೊರೆಯಿತು. ಹುನಗುಂದ ಮಾರ್ಗವಾಗಿ ಐಹೊಳೆ-ಪಟ್ಟದಕಲ್ಲುಗಳನ್ನು ಸ್ಥಳಪರಿಶೀಲನೆ ಮಾಡಿ ಮಲಾಪಹಾರಿಣಿ ನದಿಯ ದಂಡೆಯಲ್ಲಿದ್ದ ಜಾಗವೊಂದಿತ್ತು. ಗಮನಿಸಿದರು. ಸುತ್ತ-ಮುತ್ತ ಪಾಪಾಸುಕಳ್ಳಿ ಬೆಳೆದಿತ್ತು. ಆದರೆ, ಒಂದೆಡೆ ಬಿಲ್ವಪತ್ರೆಯ ವನವಿತ್ತು. ಅದರ ಪಕ್ಕದಲ್ಲಿ ಹೊಳೆ ಹರಿಯುತ್ತಿತ್ತು.ಮುರಿದುಬಿದ್ದ ಸಣ್ಣಗುಡಿಯನ್ನು ಇಳಕಲ್ಲ ಸ್ವಾಮಿಗಳು ಕಂಡರು. ಆಗ ‘ಶಿವಯೋಗಮಂದಿರ’ಕ್ಕೆ ಇದೇ ಪ್ರಶಸ್ತವಾದ ಸ್ಥಳವೆಂದು ಹೇಳಿ ತೀರ್ಮಾನಿಸಿದರು. ಆಗ ಪುಷ್ಯಮಾಸ. ಅದು ಕಳೆದು ಮಾಘಮಾಸದ ಬೆಳಗಿನಲ್ಲಿ ಐದಾರು ಪರ್ಣಕುಟೀರಗಳು ನಿರ್ಮಾಣಗೊಂಡವು. ಶ್ರೀಕುಮಾರಸ್ವಾಮಿಗಳ ಪರಿಶ್ರಮದ ಫಲವಾಗಿ ಹತ್ತು-ಹನ್ನೆರಡು ಭವ್ಯ ಕಟ್ಟಡಗಳಾದುವು. ಮಂದಿರದ ಸುತ್ತ-ಮುತ್ತ ಇದ್ದ ಐವತ್ತು ಎಕರೆಗಳನ್ನು ಸರ್ಕಾರದಿಂದ ಇನಾಮಾಗಿ ಪಡೆದರು. ಗೋವುಗಳನ್ನು ಸಂರಕ್ಷಿಸಿದರು. ದೊಡ್ಡ ಪುಸ್ತಕಾಲಯ ಸ್ಥಾಪಿಸಿದರು. ಶಿವಯೋಗಮಂದಿರವು ವೀರಶೈವ ಸಮಾಜದ ಕಣ್ಣಾಗಿ ಕಾಲಕ್ರಮೇಣ ರೂಪಿತಗೊಂಡಿತು. ಅಲ್ಲಿ ಕನ್ನಡ-ಸಂಸ್ಕೃತ-ಸಂಗೀತ ಕ್ಷೇತ್ರಗಳಲ್ಲಿ ಸಹಸ್ರಾರು ಜನ ಜ್ಞಾನ ಸಂಪಾದಿಸಿಕೊಂಡರು. ಈ ಮಂದಿರದಿಂದ ಭಾಷಣಕಾರರು, ಕೀರ್ತನಕಾರರು,ಪೌರಾಣಿಕರು, ಲೇಖಕರು, ಯೋಗಿಗಳು ಅನುಭಾವಿಗಳು, ಸ್ವಾಮಿಗಳು, ಸಂಗೀತಜ್ಞರು ತಯಾರಾಗಿ ಕೀರ್ತಿಗಳಿಸಿದರು. ಇಲ್ಲಿ ಪಂಚಸೂತ್ರಗಳಿಗೆ ಅನುಗುಣವಾಗಿ ಲಿಂಗಗಳು ತಯಾರಾಗುತ್ತವೆ. 1914ರಲ್ಲಿ ಬಸವಜಯಂತಿ ದಿನದಂದು ರೋಣ ತಾಲೂಕು ನಿಡಗುಂದಿಕೊಪ್ಪದಲ್ಲಿ ಶಾಖಾ ಶಿವಯೋಗಮಂದಿರದ ಸ್ಥಾಪನೆಯನ್ನು ಶ್ರೀಗಳು ನೆರವೇರಿಸಿದರು. ನಂತರ 1917ರಲ್ಲಿ ಶಿಕಾರಿಪುರ ‘ಪ ಕಾಳೇನಹಳ್ಳಿಯ ಕುಮುದ್ವತಿ-ವೃಷಭ ನದಿ ಸಂಗಮದಲ್ಲಿ ಮತ್ತೊಂದು ಶಾಖಾ ಶಿವಯೋಗಾಶ್ರಮ ಸ್ಥಾಪನೆಗೊಂಡಿತು.

ಅಂತಿಮ ದಿನಗಳು: ಸ್ವಾಮೀಜಿ ಸ್ತ್ರೀಶಿಕ್ಷಣಕ್ಕೆ ಆದ್ಯತೆ ನೀಡಿದರು. ವ್ಯವಸಾಯ, ವಾಣಿಜ್ಯಕ್ಕೆ ಬೆಲೆಕೊಟ್ಟರು. ಪ್ರತಿಯೊಬ್ಬರೂ ಶಿಕ್ಷಣ’ ಪಡೆಯಬೇಕೆಂದು ಸೂಚಿಸುತ್ತಿದ್ದರು. ಶಿವಯೋಗ ಮಂದಿರದಲ್ಲಿ ಅದನ್ನು ಜಾರಿಗೆ ತಂದರು. ಇವರ ಸಂಪತ್ತು ಅಗಣ್ಯ. ಗದಗಿನ ಪಂಚಾಕ್ಷರಿ ಗವಾಯಿಗಳು ಸ್ವಾಮಿಗಳ ಆಶ್ರಯದಲ್ಲಿ ಬೆಳೆದು ಕೀರ್ತಿತರಾದರು. ದೇವಲಾಪುರದ  ‘ಲಿಂಗಶಾಸ್ತ್ರಿ ಕೀರ್ತನಕಲೆಯಲ್ಲಿ ಬೆಳೆದರು. ದ್ಯಾಂಪೂರದ ಚನ್ನಕವಿಗಳು ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು! ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಸರಳಜೀವನ ನಡೆಸುತ್ತಿದ್ದರು. ದಪ್ಪಾದ ಕಾವಿಯ ಕಪನೆ, ಮಸ್ತಕಕ್ಕೆ ಒಂದು ಚೌಕಪಾವುಡ, ಲಿಂಗಮೂರ್ತಿಗೆ ವಸ್ತ್ರ, ಹಸ್ತಕ್ಕೊಂದು ಬೆತ್ತ, ಪಾದಗಳಿಗೆ ಪಾದುಕೆ. ಇದಿಷ್ಟೆ ಅವರ ದಿರಿಸು, ಸ್ವಾಮಿಗಳವರ ವಾಕ್ಸಿದ್ಧಿ ಅಪೂರ್ವವಾದುದೇ.ಅವರ ಪ್ರತಿಮಾತಿನಲ್ಲೂ ಓಂಕಾರದ ಮಹತ್ತು ಸದಾ ಇರುತ್ತಿತ್ತು. ಅವರು ಬಿಡುವಿಲ್ಲದೆ ನಾಡನ್ನೆಲ್ಲ ಸುತ್ತಿದರು. 1930ರಲ್ಲಿ ಕುಮುದ್ವತಿ-ತುಂಗಭದ್ರಾ ಸಂಗಮಸ್ಥಳ ಸಂಗಮೇಶ್ವರ ದೇವಾಲಯದಲ್ಲಿ ಇಪ್ಪತ್ತೊಂದು ದಿನ ಅನುಷ್ಠಾನ ಮಾಡಿದರು. ಆ ಅನುಷ್ಠಾನದ ಕೊನೆಗೆ ಅವರಿಗೆ ಅಸ್ವಸ್ಥತೆ ಉಂಟಾಯಿತು. ಅಂದು ಮಾಘ ಬಹುಳ ಸಪ್ತಮಿ 1930ನೆಯ ಇಸವಿ ಗುರುವಾರ ಸಂಜೆ ಸ್ನಾನ ಮಾಡಿ, ಶಿವಪೂಜೆಯಲ್ಲಿ ತಲ್ಲೀನರಾದರು. ಸಂಜೆ ಏಳುಗಂಟೆಯ ಸಮಯದಲ್ಲಿ ಲಿಂಗದಲ್ಲಿ ಬೆರೆತರು. ಅವರ ಕಣ್ಣುಗಳು ತೆರೆದಂತೆಯೇ ಇತ್ತು. ಶಿವಲಿಂಗದಲ್ಲಿ ಅವರು ಶಿವೈಕ್ಯರಾದರು. ಅವರ ಮಹಾಸಮಾಧಿಯನ್ನು ಶಿವಯೋಗಮಂದಿರದಲ್ಲಿ ನೆರವೇರಿಸಲಾಯಿತು. ವೀರಶೈವ ಸಮಾಜದ ಮಹಾಸೂರ್ಯ ಅಸ್ತಂಗತವಾದರೂ ಆ ‘ಶಿವಪ್ರಭೆ’ ನೂರಾರು ವರ್ಷಗಳ ಕಾಲ ಬೆಳಗುತ್ತ, ಬೆಳೆಯುತ್ತಲೇ ಇದೆ.

ಡಾ.ಜಿ.ಕೆ.ಹಿರೇಮಠ

          ಕಾಲದ ಕೂಗು, ಜನಾಂಗದ ಕರುಳಿನ ಕರೆ, ನೊಂದವರ ನಿಟ್ಟುಸಿರು, ಬೆಂದವರ ಬೇಗೆಯ ಫಲರೂಪವಾಗಿ ಮಹಾಪುರುಷರೊಬ್ಬರ ಜನನ ಆಗುತ್ತದೆ ಎಂಬುದು ಜನತೆಯ ನಂಬಿಕೆ. ಸಾಮಾಜಿಕ, ಧಾರ್ಮಿಕ ಸ್ಥೀತ್ಯಂತರಗಳು ವೈಪರಿತ್ಯಕ್ಕೆ ಮುಟ್ಟಿದಾಗ ಒಂದು ಮಹಾನ್ ಆತ್ಮವು ಉಗಮಿಸಿ ಸಮಾಜ ಸುಧಾರಣೆಯ ಹಾಗೂ ಮಾನವ ಜನಾಂಗದ ಮೌಲ್ಯಗಳನ್ನು ಬಿತ್ತಿ ಮೇಲೆತ್ತಿ ತರುವ ಮಹಾಹೊಣೆಯನ್ನು ಹೊತ್ತು ನಿಲ್ಲುತ್ತದೆ. ಬುದ್ಧ, ಬಸವ, ಏಸು, ಪೈಗಂಬರ, ಮಹಾವೀರರಂಥವರು ಹೊಸಬೆಳಗು ಮೂಡಿಸಿದ ಮಹಾತ್ಮರುಗಳು.      ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಅದರಲ್ಲೂ ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಸಮಾಜ ಕಟ್ಟುವ ಕ್ರಾಂತಿಯಲ್ಲಿ ಮಿಂಚಿನಂತೆ ಪ್ರಜ್ವಲವಾಗಿ ಪ್ರಕಾಶಿಸಿ ಸ್ವಾಮಿತ್ವಕ್ಕೆ ಮುಕುಟಮಣಿಯಾಗಿ ಶೋಭಿಸಿದ ಕುಮಾರಯೋಗಿ ಒಬ್ಬ ಅಪೂರ್ವ ಅನುಭಾವಿ, ಅಪೂರ್ವ ಶಿವಯೋಗಿ, ನಿರ್ಲಿಪ್ತ, ನಿರ್ಮೋಹಿ, ನಿರಹಂಕಾರಿಗಳಾಗಿ ಬೆಳಗಿದ ಮಾನವಿಕ ವ್ಯಕ್ತಿತ್ವ ಅವರದು. ತಮ್ಮ ಸುತ್ತ ಏನಿತ್ತೊ ಅದೆಲ್ಲಕ್ಕೂ ಬದುಕುಕೊಟ್ಟ ಪ್ರಬುದ್ಧ ಮಹಾಜಂಗಮರು. ಹನಿಯಾಗಿ, ಹಳ್ಳವಾಗಿ, ಹೊಳೆಯಾಗಿ ಮಹಾನದಿಯಾಗಿ ಪ್ರವಹಿಸಿದ ಕುಮಾರಯೋಗಿಯು ಅಳಿಯದ ವಿಭೂತಿಯಾಗಿದ್ದಾರೆ. ಮಾನವೇತಿಹಾಸದಲ್ಲಿ ಅಚ್ಚುಗೊಂಡ ಪ್ರಭಾವ ಮುದ್ರೆಯ ನಿಜಶಾಸನವಾಗಿದ್ದಾರೆ. ಕನ್ನಡ ನಾಡಿನ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದ ಸಾಲಿಮಠ ಮನೆತನ ಧರ್ಮ-ಸಂಸ್ಕøತಿಗಳ ತಾಣ. ಆಗ ಬಳ್ಳಾರಿ ಭಾಗದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿದ್ದರಿಂದ ಮೂಲತಃ ಈ ಮನೆತನದವರು ಬಳ್ಳಾರಿ ಜಿಲ್ಲೆ ಕೊಟ್ಟೂರಿನಿಂದ ವಲಸೆ ಬಂದು ನೆಲೆಸಿದವರು ದರಿಹಂಚಿನ ಚಿಕ್ಕ ಮನೆಯನ್ನು ನಿರ್ಮಿಸಿಕೊಂಡು, ಒಂದು ನೂರಾ ಐದು ವರ್ಷ ಬಾಳಿದ ಕೊಟ್ಟೂರು ಬಸವಾರ್ಯರು ಈ ಗ್ರಾಮಕ್ಕೆ ಬಂದು ನೆಲೆಸಿದ ಮೇಲೆ ಕೈಕೊಂಡ ವೃತ್ತಿಯೆಂದರೆ ‘ಅಕ್ಷರದೀಕ್ಷೆ’. ಸುಶಿಕ್ಷಿತರೂ, ಓದು-ಬರಹ ಬಲ್ಲವರೂ ಆಗಿದ್ದ ಬಸವಾರ್ಯರು ಗ್ರಾಮದ ಮನೆಮನೆಗೆ ಹೋಗಿ ಪಾಲಕರಲ್ಲಿ ಖುದ್ದಾಗಿ ಮಕ್ಕಳು ಅಕ್ಷರ ಕಲಿಯಲು ಕಳುಹಿಸಿಕೊಡುವಂತೆ ವಿನಂತಿಸುತ್ತಾರೆ. ಊರಿನ ಎಲ್ಲ ಮಕ್ಕಳನ್ನು ತಮ್ಮ ಮನೆಯ ಶಾಲಾ ತೆಕ್ಕೆಗೆ ತರುತ್ತಾರೆ. ಮಕ್ಕಳಿಗೆಲ್ಲ ಅಕ್ಷರ ತೀಡಿಸಿ, ರೂಢಿಸಿ ‘ಕನ್ನಡ ಅಕ್ಷರದೀಕ್ಷೆ’ ನೀಡಿ ಶಿಕ್ಷಕ ವೃತ್ತಿಗೆ ಆದರ್ಶಪ್ರಾಯರಾದ ಅವರು ವೃತ್ತಿಯ ಘನತೆಯಿಂದಾಗಿ ಸಾಲಿಮಠ ಬಸವಾರ್ಯರು ಎಂಬುದಾಗಿ ಗ್ರಾಮ ಜನರಲ್ಲಿ ಮನೆಮಾತಾದರು. ಅಕ್ಷರ ಸಂಸ್ಕøತಿಯ ಕಾರಣವಾಗಿ ಈ ಮನೆತನಕ್ಕೆ ‘ಸಾಲಿಮಠ’ ಎಂಬ ಹೆಸರು ಅಡ್ಡ ಹೆಸರಾಗಿ ಬಂದಿತು.      ಸಾಲಿಮಠ ಬಸವಾರ್ಯರ ಮಗನಾದ ಬಸಯ್ಯನವರು ಹಿರಿಯರ ಆದರ್ಶಗಳನ್ನು ಅಚ್ಚೊತ್ತಿಕೊಂಡವರು. ನೀಲಮ್ಮನವರನ್ನು ಧರ್ಮಪತ್ನಿಯಾಗಿ ಪಡೆದ ಮೇಲಂತೂ ಸಾಲಿಮಠ ಮನೆತನ ಸಂಸ್ಕಾರದ ಕಣಜವಾಯಿತು. ಬಸಯ್ಯ-ನೀಲಮ್ಮರ ಎರಡನೆಯ ಪುತ್ರನಾಗಿ 11-09-1867 ರಂದು ಬುಧವಾರ ಬೆಳಗ್ಗೆ ಸೂರ್ಯೋದಯದ ಸಮಯಕ್ಕೆ ಜನಿಸಿದ ಮಗುವೇ ‘ಹಾಲಯ್ಯ’. ಈ ಬಾಲಕನು ನೆರೆಯವರ ನೇಹದ ಶಿಶುವಾಗಿ, ಮುದ್ದಿಸುವವರ ಮುಂಗೈ ಮಗುವಾಗಿ, ಎತ್ತಿಕೊಳ್ಳುವವರ ಎದೆಗೂಸಾಗಿ, ತೂಗುವವರ ತೊಟ್ಟಿಲ ಕಂದನಾಗಿ ಸಕಲರ ಅಕಳಂಕ ವಾತ್ಸಲ್ಯದ ಕುಡಿಯಾಗಿ ಬೆಳೆದನು. ವಯೋವೃದ್ಧ ಬಸವಾರ್ಯರ ‘ಅಕ್ಷರ ದೀಕ್ಷೆ’ಯು ಶುಭ್ರಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ನಾಂದಿಯಾಯಿತು.      ಆಟದ ವಯಸ್ಸಿನಲ್ಲಂತೂ ಗೋಲಿಗುಂಡ, ಬುಗುರಿ, ಚಿಣ್ಣಿದಾಂಡು, ಚಕ್ರಬಿಡುವುದು ಮೊದಲಾದ ಆಟಗಳನ್ನು ಆಡುವುದರ ಜೊತೆಗೆ ಈ ಆಟಗಳ ವಸ್ತುಗಳನ್ನು ಸಂಗ್ರಹಿಸುವುದು, ಜೊತೆ ಗೆಳೆಯರೊಡನೆ ಈಜಲು ಹೋಗುವುದು, ಪಾಠಗಳನ್ನು ಏಕಚಿತ್ತದಿಂದ ಆಲಿಸುವುದು. ಪಟಪಟನೆ ಲೆಕ್ಕ ಬಿಡಿಸಿ ಅರಳು ಹುರಿದಂತೆ ಹೇಳುವದು, ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ದುಂಡಾಗಿ ಬರೆಯುವುದು, ಪದ್ಯಗಳನ್ನು ರಾಗಬದ್ಧವಾಗಿ ಕಂಠಪಾಠ ಮಡುವುದು, ಗದ್ಯಪಾಠಗಳನ್ನು ಮನನ ಮಾಡಿಕೊಳ್ಳುವಲ್ಲಿ ತನ್ನ ಪ್ರತಿಭೆಯನ್ನು ಮೆರೆದು ಶಿಕ್ಷಕರಿಂದ ‘ಜಾಣ ವಿದ್ಯಾರ್ಥಿ’ ಎನಿಸಿಕೊಂಡನು. ಗೋಲಿಗುಂಡ ಹಿಡಿದಿದ್ದರೂ ಇನ್ನೇನನ್ನೋ ಮೆಲಕು ಹಾಕುತ್ತಿದ್ದ ಹಾಲಯ್ಯನ ಮನಸ್ಸು ತುಂಭ ಕಿರಿಯ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಚಿಂಥನ, ತಾರ್ಕಿಕತೆ, ಏಕಾಗ್ರತೆ, ಬಡತನ, ಬವಣೆ, ಸಮಾಜ-ಶಿಕ್ಷಣ ಜನರ ನೋವು-ನಲಿವು, ದೇಶ-ಭಾಷೆ, ಹೀಗೆ ಮನ ಆಲಿಯುತ್ತ ಒಮ್ಮೊಮ್ಮೆ ಪಾಪ-ಪೂಣ್ಯ ದೇವರು, ಜಗಸೃಷ್ಠಿಯಂತಹ ತುಂಬ ಗಹನವೂ, ಉನ್ನತವೂ ಆದ ವಿಚಾರಗಳ ಕಡೆಗೂ ಏರಿಳಿಯುತ್ತಿತ್ತು.      ಕನ್ನಡ ಮುಲ್ಕೀ ತರಗತಿಯವರೆಗೂ ಓದಿದ ಹಾಲಯ್ಯ ಮುಲ್ಕೀ ಪರೀಕ್ಷೆ ಬರೆಯಲು ರಾಣೀಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದುಕೊಂಡು ಬಂದು ಪರೀಕ್ಷೆ ಬರೆದರು. ಸಾಕಷ್ಟು ಓದಿಯೇ ಪರೀಕ್ಷೆ ಬರೆದಿದ್ದರೂ ಪರೀಕ್ಷೆಯ ಫಲಿತಾಂಶ ಅನುತ್ತೀರ್ಣವೆಂದು ಗೊತ್ತಾದಾಗ ಬಾಲಕ ಹಾಲಯ್ಯನಿಗೆ ನಿರಾಶೆಯಾದರೂ ಎದೆಗುಂದಲಿಲ್ಲ. “ವಿದ್ಯಾಬಲ ಉಡುಗಿದರೂ ಚಿಂತೆಯಿಲ್ಲ ಛಲ ಉಡುಗದು” ಎಂಬಂತೆ ಮುಂದಿನ ವೀರ ಸಂಕಲ್ಪದ ದೀರ್ಘಾಲೋಚನೆ ಮಾಡುತ್ತ “ಬಟ್ಟೆ-ಹಿಟ್ಟು ಕೊಡುವ ವಿದ್ಯೆ ನನಗೆ ಬೇಡ” ಎಂದು ಗಟ್ಟಿ ನಿಲುವು ಮಾಡದನು. ತಾಯಿಯ ತವರೂರಾದ ಲಿಂಗದಳ್ಳಿಯಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಿ ತಾವೆ ಶಿಕ್ಷಕರಾಗಿ ಅನೇಕರ ಬಾಳನ್ನು ಬೆಳಗಿದರು. ಆಗ ಹಾಲಯ್ಯ ಮಾಸ್ತರರಿಗೆ ವರ್ಷಕ್ಕೆ ಒಂದು ನೂರು ರೂಪಾಯಿ ಸರಕಾರದ ಸಂಬಳವಿತ್ತು. ನಿಸ್ಪøಹ ಭಾವನೆಯ ಶಿಕ್ಷಕ ವೃತ್ತಿ, ವೈರಾಗ್ಯದ ಜೀವನ ಅಧ್ಯಾತ್ಮ ಮನೋಧರ್ಮ, ಸಾತ್ವಿಕತೆಯ ಸ್ವಭಾವ ಎಲ್ಲವೂ ತಾವಿದ್ದ ಗ್ರಾಮೀಣ ಪರಿಸರದ ಮೇಲೆ ಪ್ರಭಾವ ಬೀರಿದವು.      ಹೀಗಿರುವಾಗ ತಾಯಿ ನೀಲಮ್ಮಳು ಮದುವೆಯ ಪ್ರಸ್ತಾಪ ಮಾಡಿದಾಗ ಆ ಮಾತಿಗೆ ತಡೆಹಾಕಿ ‘ಇಕೋ! ಈ ನಿನ್ನ ಉದರದಲ್ಲಿ ಜನಿಸಿದ ಋಣಭಾರವನ್ನು ಸ್ವಲ್ಪು ಮಟ್ಟಿಗಾದರೂ ಇಳಿಸಿಕೊಳ್ಳಬಹುದೆಂದು ಭಾವಿಸಿ ಮೂರು ವರ್ಷ ಸಂಪಾದಿಸಿದ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತಿದ್ದೇನೆ. ನನ್ನದೇ ಆದ ದಾರಿಯಲ್ಲಿ ನಾನು ಸಾಗುತ್ತಿರುವಾಗ ಇನ್ನು ಮೇಲೆ ತಾಯಿ ಎಂಬ ಮೋಹವು ನನ್ನಲ್ಲಿಯೂ; ಮಗನೆಂಬ ಮೋಹವು ನಿನ್ನಲ್ಲಿಯೂ ಇರಕೂಡದು! ಎಂದು ಹೇಳಿ ಮದುವೆಯ ವಿಚಾರ ಸ್ಪಷ್ಟವಾಗಿ ತಳ್ಳಿಬಿಡುತ್ತಾರೆ. ತಾಯಿ ನೀಲಮ್ಮ ಮಗನ ಸಹಜ ಹಾಗೂ ವೀರ ವೈರಾಗ್ಯಗಳನ್ನು ತಿಳಿದು ಗಟ್ಟಿ ಮನಸ್ಸು ಮಾಡಿದಳು.      ‘ವೈರಾಗ್ಯ’ ಇದೊಂದು ಅಗ್ನಿದಿವ್ಯ. ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ ಜೀವ-ಭಾವಗಳ ನಿರಸನ ಸಾಧಿಸಿ ಇಷ್ಟ ದೈವದ ಉಪಾಸಣೆಯಿಂದ ಸರ್ವಾರ್ಪಣ ಸಿದ್ಧಿಯನ್ನು ಸಂಪಾದಿಸಿದವರೇ ವಿರಾಗಿಗಳು. ಸಾಹಸ ಪ್ರವೃತ್ತಿಯ ಸಾಧಕರ ಅಂತಶಕ್ತಿಗೆ ವೈರಾಗ್ಯ ಒಂದು ಸವಾಲು. ಅಲ್ಲಮಪ್ರಭುದೇವ, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದರಂತಹ ವೀರವಿರಾಗಿಗಳ ವೈರಾಗ್ಯವೇ ಹಾಲಯ್ಯನವರದಾಗಿತ್ತು. ವೈರಾಗ್ಯದ ಜೊತೆಗೆ ‘ಶೀಲ’ವೂ ಅವರ ಆಂತರಿಕ ಬದುಕಿನ ಮೌಲ್ಯವಾಗಿತ್ತು. ಜೀವಧನವಾಗಿತ್ತು. ಸತ್ಯದಲ್ಲಿ ನಡೆಯುವುದು, ಸತ್ಯದಲ್ಲಿ ನುಡಿಯುವುದು, ಆಚಾರ-ವಿಚಾರಗಳಲ್ಲಿ ಗಟ್ಟಿತನ, ಅಂತರಂಗ-ಬಹಿರಂಗಗಳಲ್ಲಿ ಶುದ್ಧಿ, ಯೋಚನೆಗಳು-ಯೋಜನೆಗಳಾಗಿ ಸಾಕಾರಗೊಳಿಸುವುದು ಇವುಗಳ ಜೊತೆಗೆ ಮಾನವನ ಏಳ್ಗೆಯೇ ಶೀಲ, ಜಾತಿ-ಮತಗಳ ವಿಷ ಬೀಜ ಬಿತ್ತದಿರುವುದೆ ಶೀಲ, ಮೇಲು-ಕೀಳುಗಳ ಭಾವನೆ ತಂದುಕೊಳ್ಳದಿರುವುದೇ ಶೀಲ, ಸಮಾಜದ ಸಂಸ್ಕರಣೆಯೇ ಶೀಲ, ಸಕಲ ಜೀವರಾಶಿಗಳ ಸಂರಕ್ಷಣೆಯೇ ಶೀಲ, ಈ ಬಗೆಯ ಗಟ್ಟಿಗೊಂಡ ವ್ಯಕ್ತಿತ್ವ ಹಾಲಯ್ಯನವರದಾಗಿತ್ತು. ಹಾಲಯ್ಯ ಬೆಳೆದಂತೆ ಹಾಲಯ್ಯ ಮಾಸ್ತರರಾಗಿ, ಹಾಲಯ್ಯ ದೇಶಿಕರಾಗಿ, ಹಾನಗಲ್ಲ ವಿರಕ್ತಮಠದ ಅಧಿಕಾರ ಹೊಂದಿ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವಸ್ವಾಮಿಗಳಾಗಿ ನಾಮಕರಣಗೊಂಡು, ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಕುಮಾರ ಸ್ವಾಮಿಗಳೆಂದು ನಂತರ ಗುರುಗಳ ಅಭಿಧಾನರಾಗಿ ಸಮಾಜೋದ್ಧಾರದ ಕ್ರಾಂತದರ್ಶಿ ಕುಮಾರ ಯೋಗಿಯಾಗಿ ಯುಗಪುರುಷರೆಂದೆನಿಸಿದರು. ಅವರ ಬದುಕು ಆತ್ಮಸಂಸ್ಕಾರದ ಪ್ರತಿಬಿಂಬ. ಮಾನವ ಕಲ್ಯಾಣ ಸಾಧನೆಯ ಮಹಾಮಾರ್ಗ. ವಿದ್ಯೆ, ಸಂಸ್ಕøತಿ, ಸಮಾಜ, ಧರ್ಮ, ಸಾಹಿತ್ಯ, ಸಂಗೀತ ಕಲೆಗಳ ಸಂಚ ಲನ ಮಹಾಕಾವ್ಯವಾಗಿದೆ. ದೀನ-ದುರ್ಬಲರ, ದಲಿತ-ದರಿದ್ರರ, ಅನಾಥ-ಅಂಧರ ಏಳ್ಗೆಗಾಗಿ ಸ್ವಾತಂತ್ರ್ಯದ ಪೂರ್ವದ ದಿನಗಳಲ್ಲಿ ಸ್ಥಾಪನೆ ಮತ್ತು ಸುಧಾರಣೆಗಳ ಕ್ರಾಂತಿಯೆನ್ನಸಗಿದವರು. 1903ರ ವೇಳೆಗಾಗಲೇ ಹಾನಗಲ್ಲು, ಹಾವೇರಿ, ಶೆಲವಡಿ, ರಾಣೆಬೆನ್ನೂರು, ಸಂಶಿ, ಅಬ್ಬಿಗೇರಿ ಆಮೇಲೆ ಹುಬ್ಬಳ್ಳಿ, ರೋಣ, ಮುಂಡರಗಿ, ಬದಾಮಿ, ಬಗಲಕೋಟೆ ಹೀಗೆ ಅನೇಕ ಕಡೆಗಳಲ್ಲಿ ಸಂಸ್ಕøತ ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾ ಸಂಚಲನಗೈದರು. ಪಾಠಶಾಲೆಗಳಲ್ಲಿ ಅಭ್ಯಾಸ ಮಾಡಿ ಪಂಡಿತರಾಗುವ, ಮಠಾಧಿಪತಿಗಳಾಗುವ ಘನ ಕಾರ್ಯಗಳು ನಡೆದವು. ಕಬ್ಬಿಣ ಕಡಲೆಯಾಗಿದ್ದ ಸಂಸ್ಕøತವನ್ನು ತಿಳಿಯುವ ಮತ್ತು ಆ ಭಾಷೆಯ ಧಾರ್ಮಿಕ ತತ್ವಗಳನ್ನು ಕನ್ನಡಕ್ಕೆ ತರುವ ತೀವ್ರತರ ಚಟುವಟಿಕೆಗಳು ಉಂಟಾದವು. ಯಾವುದೇ ಭಾಷೆಯು ಎಲ್ಲರಿಗೂ ಎಂಬುದನ್ನು ಮನದಟ್ಟು ಮಾಡಿಕೊಡಲು ಸತತ ಶ್ರಮಿಸಿದರು. ಬಸವಣ್ಣನವರ ಅನುಭವ ಮಂಟಪ ಸಂಸ್ಕøತಿಯನ್ನು ಸಜೀವಗೊಳಿಸುವ ಸಾಧನೆಯಾಗಿ ‘ಐತಿಹಾಸಿಕ ಅಗತ್ಯದ ಸೃಷ್ಟಿ’ ಎಂಬಂತೆ 1904ರಲ್ಲಿ ಶ್ರೀಮದ್ವೀರಶೈವ ಮಹಾಸಭೆ ಸ್ಥಾಪಿಸಿದರು. ದೀನರ, ದುರ್ಬಲರ, ಮಕ್ಕಳ, ಮಹಿಳೆಯರ ಏಳ್ಗೆಗಾಗಿ ದುಡಿಯುವುದು, ವಿವಿಧ ಧರ್ಮಗಳ ಮಧ್ಯೆ ಸೌಹಾರ್ದ ಮತ್ತು ಸಾಮರಸ್ಯ ಬೆಸೆಯುವುದು. ಧರ್ಮ, ಸಾಹಿತ್ಯ, ಸಂಸ್ಕøತಿ, ಸಂಶೋಧನೆಗಳು ನಡೆಯುವಂತೆ ಮಾಡುವುದು ಮಹಾಸಭೆಯ ಉದ್ಧೇಶವಾಗಿದೆ. ಸಾಮಾಜಿಕ ಕುಂದು-ಕೊರತೆಗಳನ್ನು ದೂರಮಾಡಿ ಸಮಾನತೆಯನ್ನು ಸಾರುವ ಧಾರ್ಮಿಕ ಸಂವಿಧಾನವೂ ಹೌದು. ವಿಶ್ವದ ಮಾನವೀಯತೆಯ ಮಹಾಪುರುಷರಲ್ಲೊಬ್ಬರಾದ ಕುಮಾರ ಶಿವಯೋಗಿಗಳು ಮಾನವ ಕುಲದ ಸಮಗ್ರ ಉನ್ನತಿಗಾಗಿ ಅಧ್ಯಾತ್ಮ ಸಾಧನೆಯ ತರಬೇತಿ ನೀಡುವ ಅಗತ್ಯತೆಯನ್ನು ಮನಗಂಡಿದ್ದರು. ಸ್ವಾತಂತ್ರ್ಯಪೂರ್ವ, ಕರ್ನಾಟಕ ಏಕೀಕರಣ ಪೂರ್ವ ಕಾಲದಲ್ಲಿ 1909ರಲ್ಲಿ ಶ್ರೀಮದ್ವೀರಶೈವ ಶಿವಯೋಗಮಂದಿರ ಎಂಭ ಧಾರ್ಮಿಕ ಸಂಸ್ಥೆಯನ್ನು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನಲ್ಲಿ ಸ್ಥಾಪಿಸಿದರು. ಧರ್ಮಗುರುಗಳಾಗುವ ಮುನ್ನ ಧಾರ್ಮಿಕ, ನೈತಿಕ, ಯೌಗಿಕ, ಶಿಕ್ಷಣದ ಸಂಸ್ಕಾರ ಕೊಡುವ ಸಾಂಸ್ಕøತಿಕ ಹೆದ್ದಾರಿಯೊಂದು ತೆರೆದುಕೊಂಡಿತು. ಧಾರ್ಮಿಕ ಹೆಗ್ಗುರುತು ಈ ಸಂಸ್ಥೆಯದಾಗಿದೆ. ವ್ಯಷ್ಟಿಯಿಂದ ಸಮಷ್ಟಿ ಬದಕಿಗೆ ಹೊಸರೂಪ ನೀಡಲು ಮುಂದಾದ ಶಿವಯೋಗಮಂದಿರವು ಇಂದು ನಾಡಿನ ನಾನಾ ಮಠಗಳಿಗೆ ಮಠಾಧಿಪತಿಗಳನ್ನು ಕೊಟ್ಟಿದೆ. ಶಿಕ್ಷಣ, ಉಚಿತ ಪ್ರಸಾದ ನಿಲಯಗಳ ಮೂಲಕ ಸಹಸ್ರಾರು ಮಠಗಳು ಘನಕಾರ್ಯ ಮಾಡುತ್ತಿರುವುದು ನಾಡಿನ ಶೈಕ್ಷಣಿಕ ಇತಿಹಾಸದಲ್ಲಿ ಬಹುಮಹತ್ವವಾಗಿದೆ. ಗದಗನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕರಾದ ಕುಮಾರ ಶಿವಯೋಗಿಗಳು ಅಂಧರ, ಅನಾಥರ, ಅಂಗವಿಕಲರ ಬಾಳಿಗೆ ಬೆಳಕು ನೀಡಿದವರು. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳಿಗೆ ಸಂಗೀತದ ಶಿಕ್ಷಣ ಕೊಡಿಸಿ ಅವರಂಥ ಸಹಸ್ರಾರು ಅಂಧರು ಒಳಗಣ್ಣಿನಿಂದ ಲೋಕ ಅರಿತರು. ಸಂಗೀತ, ಕೀರ್ತನ, ಪ್ರವಚನಗಳ ಮುಖಾಂತರ ಜ್ಞಾನದ ಬೆಳಕು ನೀಡಿದರು. ಭಕ್ತರ ಮನೆಗೆ ಹೋದಾಗ ಭಕ್ತರು ಕೊಟ್ಟ ಕಾಣಿಕೆಯನ್ನು ಭಕ್ತರಿಗೇ ಮರಳಿಸಿ ಅವರ ಮನೆಗಳ ಗೋಡೆ-ಗದ್ದುಗೆಗಳಲ್ಲಿ ಹುದುಗಿ ಪೂಜಿಸಲ್ಪಡುತ್ತಿದ್ದ ಕೈಬರಹ, ತಾಳೆಗರಿ ತಾಡೋಲೆಗಳನ್ನು ಸಂಗ್ರಹಿಸಿದರು. ಫ.ಗು.ಹಳಕಟ್ಟಿಯವರನ್ನು ಜೊತೆಗೆ ಕರೆದುಕೊಂಡು ಮುದ್ರಣಕ್ಕೆ ಮುಂದಾದರು. ಹೋದ ಹೋದಲ್ಲೆಲ್ಲ ಶರಣರ ವಚನಗಳನ್ನು ಪ್ರಸಾರ ಮಾಡಿದರು. ಪತ್ರಕೆಗಳನ್ನು ಆರಂಭಿಸಿ ಸಾಹಿತ್ಯ ಪ್ರಸಾರ ಮಾಡಿದವರು. ಉದ್ಧರಣೆಗಳನ್ನು ಪೋಷಿಸಿದರು. ಅನೇಕ ಗ್ರಂಥಗಳ ಸಂಶೋಧನೆಗೆ ಪ್ರೋತ್ಸಾಹ ನೀಡಿದರು. ಅನುಭಾವದ ಹಾಡುಗಬ್ಬಗಳನ್ನು ರಚಿಸಿದವರು ತಾವಾಗಿದ್ದರೂ ಎಲ್ಲಿಯೂ ತಮ್ಮ ಹೆಸರನ್ನು ನಮೂದಿಸಿಕೊಂಡವರಲ್ಲ. ಗೋಶಾಲೆಯನ್ನು ಸ್ಥಾಪಿಸಿ ಲಕ್ಷಲಕ್ಷ ಗೋವುಗಳನ್ನು ಸಂರಕ್ಷಿಸಿ ಪ್ರಾಣಿಪ್ರೇಮಕ್ಕೆ ಸಾಕ್ಷಿಯಾದವರು. ಪಕ್ಷಿ, ಪರಿಸರ, ಗಿಡ, ಬಳ್ಳಿ ಒಟ್ಟಾರೆ ತಮ್ಮ ಸುತ್ತಮುತ್ತ ಏನಿತ್ತೊ ಅದೆಲ್ಲವನ್ನು ತಮ್ಮಂತೆ ಬದುಕಿಸಿದ ಬೆಳೆಯಲು ಆಶ್ರಯವನ್ನಿತ್ತವರದು ಅಂತಃಕರಣದ ಹೃದಯ! ದಯಾಭಾವದ ಹೃದಯ! ತಮ್ಮ ಜೀವಿತಾವಧಿಯ ಅರವತ್ಮೂರು ವರ್ಷಗಳನ್ನು ಕಾಲ್ನಡಿಗೆಯಲ್ಲೆ ಕಳೆದವರು. ಸಮಯದ ಅಪವ್ಯಯ ಎಂದರೆ ಅಪರಾಧ ಎಂದು ನಂಬಿದವರು. ಅವರ ವ್ಯಕ್ತಿತ್ವದ ಪ್ರಭಾವ ಮುದ್ರೆ ಇಂದಿನ ವರೆಗೂ ಜನತೆಯ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರಿದೆ ಎನ್ನುವುದಕ್ಕೆ ಅವರ ಹೆಸರನ್ನು ತಂದೆ-ತಾಯಿಗಳು ತಮ್ಮ ಮಕ್ಕಳಿಗೆ, ಭಕ್ತರು ಮಠಾಧಿಪತಿಗಳಿಗೆ ನಾಮಕರಣಗೊಳಿಸುತ್ತಿರುವುದು. ಅವರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣಗೊಳ್ಳುತ್ತಿರುವುದು. ಅಲ್ಲದೆ ಅವರನ್ನು ಕುರಿತ ಕಾವ್ಯ-ಸಾಹಿತ್ಯ, ಸಂಶೋಧನಾ ಸಾಹಿತ್ಯ ನಿರ್ಮಾಣವಾಗುತ್ತಿರುವುದೇ ಪ್ರತ್ಯಕ್ಷ ನಿದರ್ಶನವಾಗಿದೆ. ಕುಮಾರ ಶಿವಯೋಗಿಗಳ ಕ್ರಾಂತದರ್ಶಿತ್ವವು ಆ ಒಂದು ಯುಗಕ್ಕೂ ಸೀಮಿತಗೊಳ್ಳುವಂತಹದ್ದಲ್ಲ. ಅವರ ಅಧ್ಯಾತ್ಮ ಅನುಭಾವ ಸಾಧನೆಗಳ ಔನ್ನತ್ಯವು ಯುಗ-ಯುಗಗಳಿಗೆ ಪ್ರಭಾವ ಬೀರಬಹುದಾದುದು. ಕಾರಣ ಜಾತಿ, ಕುಲ, ಭಾಷೆ, ದೇಶಗಳನ್ನು ಮೀರಿದ ವ್ಯಕ್ತಿತ್ವ ಅವರದು. 19-02-1930 ನೇ ಇಸ್ವಿ ಗುರುವಾರ ದಿವಸ ಸಂಜೆ 7 ಗಂಟೆಗೆ ಕುಮಾರ ಶಿವಯೋಗಿಗಳ ಉಸಿರು ಲಿಂಗದಲ್ಲಿ ಲೀನವಾದಾಗ ನಾಡಿನ ಹೃದಯಗಳು ಮಮ್ಮಲ ಮರಗಿದವು. ಧರ್ಮಸ್ತಂಭದ ಮೇಲೆ ಹೃದಯದ ಹಣತೆಯನ್ನಿರಿಸಿ ಧ್ಯಾನತೈಲವನ್ನೆರೆದು ಕ್ರಿಯಾಬತ್ತಿವಿಡಿದ ಅವರ ಜ್ಞಾನಜ್ಯೋತಿ ಉರಿಯುತ್ತಲೇ ಇದೆ. ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಲೇ ಇದೆ. ವಿಶ್ವದ ಕಲ್ಯಾಣದ ಬಯಕೆ ಬಯಸಿ ಬಂದ ಸಮರ್ಥ ವ್ಯಕ್ತಿ-ಶಕ್ತಿಗಳ ಮನದ ತಂತಿಗಳನ್ನು ಮೀಟುತ್ತಲೇ ಇದೆ. “ಆಚಾರದಲ್ಲಿ ತಪ್ಪಿದರೆ ನಮ್ಮ ದೋಷ; ಅನಾಚಾರದಲ್ಲಿ ನಡೆದರೆ ನಿಮ್ಮ ದೋಷ ಇವೇ ನಮ್ಮ-ನಿಮ್ಮ ಹೊಣಾಗಾರಿಕೆ” ಎಂದು ಅಳಿಸಲಾರದ ವಿಭೂತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವ ಸಾಧಕರಲ್ಲಿಯೂ, ಸಂಸ್ಕøತಿಯಲ್ಲಿ ನಿರತರಾಗಿರುವ ಮಠಾಧಿಪತಿಗಳಲ್ಲಿಯೂ ಗಟ್ಟಿಗೊಂಡಿದ್ದಾರೆ.    

ರಚನೆ: ಗುರು ಪಾದ ಸೇವಕ

ಶ್ರೀ ರೇವಣಸಿದ್ದಯ್ಯ ಹಿರೇಮಠ

ಆಕಾಶವಾಣಿ ಕಲಾವಿದರು ಚಿಂಚೋಳಿ

ಕಲಿಯುಗದಿ ಸತ್ಯ ಸಾರಿದ ಕಾರಣಿಕ ಶಿವಯೋಗಿ |

ಕಾವಿ ಲಾಂಛನಕ್ಕೆ ಬೆಲೆ ತಂದ ಸಮರ್ಥ ಗುರುವಾಗಿ |

ಅರಿವು ಆಚಾರ ಶುಚಿಯಾಗಿಸಿದ ಸಮಾಜ ಜಾಗ್ರತೆಗಾಗಿ |

ವಿಶ್ವಮಾನ್ಯ ವ್ಯಕ್ತಿತ್ವದ ವೀರಶೈವ ಧರ್ಮದ ನಿಜಯೋಗಿ ||||

ಭರತ ಖಂಡದಲ್ಲಿ ಅಧ್ಯಾತ್ಮ ನಕ್ಷತ್ರದ ಜೊತಿಯಾಗಿ|

ಆಧ್ಯಾತ್ಮಿಕ ಸಿರಿಯಲ್ಲಿ ವಿಶ್ವದೆತ್ತರಕ್ಕೆ ತಾ ಬೆಳಗಿ|

ಘನವಂತ ಗುಣವಂತ ದಯಾವಂತ ಸ್ವಾಮಿಯಾಗಿ|

ಜನ ಮನ ಕೊಟಿಯ ಸತ್ಯಯುಗದ ಶ್ರೇಷ್ಠಯೋಗಿ ||||

ಜಗದ ಲೇಸನೆ ಬಯಸಿದ ವಿರಾಟ್ಟುರದ ಯತಿಯಾಗಿ |

ಬರದ ಭವಣೆ ನೀಗುವರೆಗೆ ಲೋಟ ಗಂಜಿ ಕುಡಿದ ಹಠಯೋಗಿ |

ಪೂರ್ಣ ಬ್ರಹ್ಮ ನಿರಾಕಾರ ಮೂರ್ತಿ ಲಿಂಗವೆಂದರುಹಿದ ಲಿಂಗಾಗಿ |

ವೀರಶೈವ ವಿಶ್ವಧರ್ಮವೆಂಬ ಸತ್ಯ ಸಾರಿದ ಕುಮಾರ ಶಿವಯೋಗಿ ||||

ಧರ್ಮತತ್ವ ಭೋಧೆಗೈವ ಧರ್ಮಸಭೆ ರಚಿಸಿದ ಶಿವಯೋಗಿ |

ವೀರ ವೈರಾಗ್ಯದ ಅಪರಂಜಿ ರನ್ನ ಜೊತಿ ನಿಜ ವಿರಕ್ತನಾಗಿ |

ಗುರುವಿರಕ್ತರ ಹೃದಯದಿ ಬೆಳಗುತ್ತಿದೆ ನಿರಂಜನ ನಂದಾದೀಪವಾಗಿ |

ಕರ ಮುಗಿದು ಬರೆದನು ಪುಟ್ಟ ರಸಿಕನು ಮಂದಿರದ ಶಿಶುವಾಗಿ ||||

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಮಶಿಷ್ಯ ರಾದ ಪೂಜ್ಯ ಲಿಂ. ಪಂಚಾಕ್ಷರಿ ಗವಾಯಿಗಳ ಪುಣ್ಯ ತಿಥಿ ಮತ್ತು ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ “ಸುಕುಮಾರ” ಸಂಗೀತ ವಿಶೇಷ ಸಂಚಿಕೆಯನ್ನು ಪ್ರಕಟಿಸಲು ಹೆಮ್ಮೆಯೆನಿಸುತ್ತದೆ.

ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ. ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ, ಕಿವಿ ತುಂಬ ಕೇಳಿ ,ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಪಂಚಾಕ್ಷರಿ ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

ಈ ಪಾವನ ಸಮಯದಲ್ಲಿ  ನವದೆಹಲಿಯ ಹಾನಗಲ್ಲ ಶ್ರಿ ಕುಮಾರ ಶಿವಯೋಗಿ ಸೇವಾ ಸಮಿತಿ ಅರ್ಪಿಸಿದ ಕವಿರತ್ನ ಚನ್ನಕವಿಗಳು ವಿರಚಿತ ಶ್ರೀಕುಮಾರೇಶ್ವರ ನಾಮಾವಳಿ  ಸಂಗೀತ ಧ್ವನಿ ಸುರಳಿಯನ್ನು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ. ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತ ದಿಂದ ಶ್ರೀ ಶಿವಯೋಗಮಂದಿರದಲ್ಲಿ ಲೋಕಾರ್ಪಣೆ ಗೊಂಡಿದ್ದು ವಿಶೇಷ ವಾಗಿತ್ತು.

ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

  1. ಕಾವ್ಯ  ಚಿತ್ತದ ರಾಗ ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ..
  3. ಸಂಗೀತ ಕ್ಷೇತ್ರಕ್ಕೆ ಶಿವಯೋಗಮಂದಿರದ ಕೊಡುಗೆಗಳು : ಆಕರ ಗ್ರಂಥ : ಶಿವಯೋಗಮಂದಿರ ಶತ ಸಂವತ್ಸರ  ಸಂಪಾದಕರು ಡಾ. ಮೃತ್ಯುಂಜಯ ರುಮಾಲೆ
  4. ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶ್ರೀಗಳವರ ಸಂಗೀತ ಸಂಪ್ರೀತಿ. ಲೇಖಕರು :ಲಿಂ. – ಪಂ. ಪುಟ್ಟರಾಜ ಗವಾಯಿಗಳು
  5. ಪುಣ್ಯಸ್ಮರಣೆ ಪೂಜ್ಯ ಪಂಚಾಕ್ಷರಿ ಗವಾಯಿಗಳು .ಲೇಖಕರು ಶ್ರೀ ಶಿರೀಷ ಜೋಶಿ  ಸೌಜನ್ಯ: ಸುಕುಮಾರ ದೀಪ್ತಿ .ಸಂಪಾದಕರು ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ
  6. ಕಲಾಯೋಗಿ ಲೇಖಕರು : – ಶ್ರೀ ಗಂಗಾಧರ ಶಾಸ್ತ್ರಿಗಳು, ಚಿತ್ತರಗಿ.
  7. ನಾದ-ಲೇಖಕರು : ಶ್ರೀ ರಾಮೇಶ್ವರ ಬಿಜ್ಜರಗಿ ಸೊಲ್ಲಾಪುರ
  8. Guru – Supriya Antin Kaddargi Vice President, JP Morgan Chase Bank Greater Chicago.USA
  9. ಸಂಗೀತವೆಂಬ ಜೀವನ ಚೈತನ್ಯ ಲೇಖಕರು :  ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ
  10. ನೆನಪು : ಶಿವಯೋಗಮಂದಿರದ ತೆಂಗಿನ ಗಿಡಗಳು ಮತ್ತು  ಲಿಂ. ಪೈಲವಾನ ವೀರಭದ್ರಪ್ಪನವರು ಮೂಲ ಲೇಖಕರು ಶ್ರೀ ಕಿಶನ್.ಕುಲಕರಣಿ ಕುಷ್ಟಗಿ ಸಂಗ್ರಹ : ಶ್ರೀ ಕುಮಾರ ಹಿರೇಮಠ  ಮತ್ತು ಶ್ರೀ ರವಿ ಹುಲಕೋಟೆ
  11. ಸಂಗೀತ ಸಂಚಿಕೆಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವಿರಚಿತ ಕಾವ್ಯಗಳನ್ನು ಸುಶ್ರಾವ್ಯ ವಾಗಿ ಹಾಡಿದ ತುಮಕೂರಿನ ಶ್ರೀ ಸಿದ್ದೇಂದ್ರಕುಮಾರ ಹಿರೇಮಠ ಅವರಿಗೆ ಕೃತಜ್ಞತೆಗಳು

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ದೇವಪೊರೆಯೊ  ಭವಮಾಲೆಯಜಿತ |

ಭಾವಜಮದಹತ  ಈ ವಸುಜಾತ  ||||

ಚಿತ್ತದ ರಾಗ  ಭ್ರಾಂತಿಯ ಪೂಗ ಗುಹೇಶ್ವರ

ಜೊತೆಗೂಡಿ ಅತಿಬೇಗ  || ||

ವೃತ್ತಿಯ ಜಾಲ  ಚಿಂತೆಯ ಮೂಲ  ಚರೇಶ್ವರ

ಹತಮಾಡಿ ಘನಲೀಲ  || ||

ನಿನ್ನಯ ಸಂಗ ಬನ್ನದ ಭಂಗ ಪರೇಶ್ವರ

ಆನುಗೈದು ಶಿವಯೋಗ || ||

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಅಗಸ್ಟ ೨೦೨೧ ರ ಸಂಚಿಕೆ

೪. ಗುರು ಕೃಪೆಯ ಅವಶ್ಯಕತೆ

ಘಂಟೆಯನು ಪಿಡಿದೋರ್ವ | ಟೆಂಟೆಣಿಸಲು ನಾದ

ಮುಂಟಲ್ಲದುಳಿದು ತಾನಾಗಿಯೇ ನುಡಿಯುವ

ದುಂಟೆ ಶ್ರೀ ಗುರುವೆ ಕೃಪೆಯಾಗು  || ೧೧ ||

ಗುರುಮಹತ್ವವನ್ನು ಗುರುಪಾದಪದ್ಮ ಸನ್ನಿಧಿಯ ಮಹಿಮೆಯನ್ನು ಅರಿತ ಮೇಲೆ, ಗುರುಕೃಪೆಯ ಅವಶ್ಯಕತೆಯು ಸ್ಪಷ್ಟವಾಗುತ್ತದೆ. ಜೀವನು ಸ್ವತಂತ್ರನಲ್ಲ.ಒಂದಿಲ್ಲೊಂದು ರೀತಿಯ ಅಪ್ಪಣೆಯನ್ನು ಪಾಲಿಸಲೇ ಬೇಕಾಗುವದು. ಗೃಹಸ್ಥನಾದವನು ಗುರು-ಹಿರಿಯರ ಮಾತನ್ನು ಕೇಳಬೇಕು. ಹೆಂಡತಿಯಾದವಳು ಪತಿಯಿಚ್ಛೆಯಂತೆ ನಡೆಯಬೇಕು. ಪುತ್ರನಾದವನು ಮಾತಾ-ಪಿತೃಗಳ  ಅನುಜ್ಞೆಯನ್ನು ಪಾಲಿಸಬೇಕು. ‘ತೇನ ವಿನಾ ತೃಣಮಪಿ ನ ಚಲತಿ” ಪರಮಾತ್ಮನ ಅಪ್ಪಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯಾದರೂ ಅಲುಗಾಡದೆಂಬ ಉಪನಿಷದ್ವಾಕ್ಯವು ಮಹತ್ವಪೂರ್ಣವಾಗಿದೆ. ಯಾವುದಕ್ಕಾದರೂ ಪ್ರೇರಣೆ ಅವಶ್ಯಬೇಕು.

ದೇವರ ದರ್ಶನಕ್ಕಾಗಿ ಬಂದ ಭಕ್ತನು ಘಂಟೆಯನ್ನು ಬಾರಿಸುತ್ತಿರಲು ಅದು ನಾದಗೈಯುತ್ತಿದೆ. ಘಂಟೆಯನ್ನು ಟೆಂಟೆಣಿಸದೆ ಇದ್ದರೆ ನಾದ ಹೊರ ಹೊಮ್ಮದು. ತಾನಾಗಿ ಅದು ಎಂದೂ ನುಡಿಯುವದಿಲ್ಲ. ಘಂಟೆಗೊಬ್ಬ ಪ್ರೇರಕ ಬೇಕೇ ಬೇಕು.ಪ್ರೇರಕನಿಲ್ಲದೆ ಘಂಟೆ ಸಾರ್ಥಕವಾಗದು. ಅದರಂತೆ ಈ ದೇಹವೆಂಬುದೊಂದು ಘಂಟೆ. ಇದರಲ್ಲಿ ನಾದವುಂಟಾದರೂ ಸ್ವತಃ ನುಡಿಯದು, ನುಡಿಸುವ ಕರ್ತನು ಬೇಕು.ಅವನೇ ಸದ್ಗುರು. ಗುರುನಾಥನು ಸಂಸ್ಕಾರಮಾಡಿ ಕರುಣೆಯಿಂದ ಮಂತ್ರೋಪದೇಶ ಮಾಡಿದಲ್ಲದೆ ಪ್ರಣವನಾದವು ಹೊರಹೊಮ್ಮದು. ಗುರೂಪದೇಶ ಮಾಡಿದ ಮಂತ್ರವು ಜಪಕ್ಕೆ ಯೋಗ್ಯವಾಗುವದು. ಅಂದಮೇಲೆ ಗುರುಕೃಪೆ ಅವಶ್ಯವಾಗಿಬೇಕು.

ದೇವಾಲಯದೊಳಗಿನ ಘಂಟೆಯನ್ನು ದೇವರು ನುಡಿಸಲಾರ. ನುಡಿಸಿದರೆ ಮಾತ್ರ ನಾದವನ್ನು ಕೇಳಬಲ್ಲ, ಹಾಗೇ ಶ್ರೀ ಗುರುವೆ ! ನೀನು ಶರಣಕರ್ತನು. ನನ್ನ ದೇಹ ಘಂಟೆಯನ್ನು ನುಡಿಯುವಂತೆ ಮಾಡು. ಯಾಕೆಂದರೆ ಅದು ತಾನಾಗಿಯೇ ನುಡಿಯ ಲಾರದು. ನುಡಿಸುವದು ನಿನ್ನ ಧರ್ಮ. ನೀನುಡಿಸಿದಂತೆ ನುಡಿಯುವದು ನನ್ನ ಧರ್ಮ,ಈ ವಿಚಾರವನ್ನೇ ಇನ್ನೂ ನಾಲ್ಕು ನುಡಿಗಳಿಂದ ವಿಸ್ತಾರಗೊಳಿಸಿದ್ದಾನೆ. ಸಮಂಜಸವಾದ ಉದಾಹರಣೆಗಳಿಂದ ತನ್ನ ವಾದವನ್ನು ಸಮರ್ಥನಗೊಳಿಸುತ್ತಾನೆ.

ವೀಣಾನೂತನ ಶಬ್ದ | ಪಾಣಿಯಿಂದೊಗೆವಂತೆ

ಜಾಣ ಶ್ರೀ ಗುರುವೆ ನೀಂ ನುಡಿಸಿದಂತೆ ನಾಂ

ಮಾಣದಲೆ ನುಡಿವೆ ಕೃಪೆಯಾಗು   || ೧೨ ||

ಸಜ್ಜುಗೊಳಿಸಿದ ವೀಣೆಯನ್ನು ಬೆರಳಿನಿಂದ ಮಿಡಿದರೆ ತಂತಿಯ ಇಂಚರ ಇಂಪುಗೊಡುವದು. ವೀಣೆಯನ್ನು ನುಡಿಸಲು ಎಲ್ಲರಿಗೂ ಬಾರದು. ಜಾಣನು ಮಾತ್ರ ವೀಣೆಯನ್ನು ತಕ್ಕಂತೆ ನಿನದಿಸಬಲ್ಲ. ವೀಣೆಯು ಸ್ವಂತವಾಗಿ ನುಡಿಯುವದಿಲ್ಲ.ವೀಣಾವಾದಕನಿಂದಲೇ ವೀಣೆಯ ಯೋಗ್ಯತೆ ವ್ಯಕ್ತವಾಗುವದು. ಕಾಯವೆಂಬುದೊಂದು ವೀಣೆ. ಇದು ಜೀವಂತ ತಂಬೂರಿ. ಇದನ್ನು ಶೃತಿ ಗೊಳಿಸಬಲ್ಲ ಜಾಣನು ಗುರುದೇವನೇ, ಸದ್ಗುರುನಾಥನು ಕೆಡುವ ಕಾಯವನ್ನು ಸಂಸ್ಕಾರದಿಂದ ಕಾಯಕಲ್ಪ ಮಾಡಬಲ್ಲನು, ನಾದವನ್ನು ಹೊರಡಿಸಬಲ್ಲನು. ಶರಣಕವಿಯು ಕುಪಿತನಾದ ಗುರುನಾಥನನ್ನು ‘ಜಾಣಶ್ರೀಗುರುವೆ’ಯೆಂದು ನುಡಿಸಿ ಪ್ರಸನ್ನಗೊಳಿಸಲು ಪ್ರಯತ್ನಿಸಿದ್ದು ಧ್ವನಿತವಾಗುತ್ತದೆ. ಹೇ ಗುರುವೆ ! ನೀನು ಸಮರ್ಥನು ಮತ್ತು ಜಾಣನು. ನಾನು ತಪ್ಪಿರಬಹುದು. ಇನ್ನು ಮುಂದೆ ನೀನು ನುಡಿಸಿದಂತೆ ನಾನು ತಪ್ಪದಲೆ ನುಡಿಯುವೆನೆಂದು ಕೃಪೆ ಕೇಳಿದ್ದಾನೆ. ಕಾಯವನ್ನು ದಂಡಿಗೆಯನ್ನಾಗಿಸಿ ನರಗಳನ್ನು ತಂತಿಯನ್ನು ಮಾಡಿ ಓಂಕಾರ ನಾದವನ್ನು ಝೇಂಕರಿಸುವಂತೆ ಪ್ರಾರ್ಥಿಸಿದ್ದಾನೆ.

ಅಣ್ಣ ಬಸವಣ್ಣನವರು ತಮ್ಮ ವಚನದಲ್ಲಿ –

ಎನ್ನ ಕಾಯವ ದಂಡಿಗೆಯ ಮಾಡಯ್ಯಾ !

ಎನ್ನ ಶಿರವ ಸೋರೆಯ ಮಾಡಯ್ಯಾ |

ಎನ್ನ ನರವ ತಂತಿಯ ಮಾಡಯ್ಯ

ಎನ್ನ ಬೆರಳ ಕಡ್ಡಿಯ ಮಾಡಯ್ಯಾ

ಬತ್ತೀಸ ರಾಗವ ಹಾಡಯ್ಯಾ

ಉರದಲೊತ್ತಿಬಾರಿಸು ಕೂಡಲ ಸಂಗಮದೇವಾ (೪೯೮)

ಎಂದು ಅನನ್ಯವಾಗಿ ಬೇಡಿಕೊಂಡಿದ್ದಾರೆ. ಭಕ್ತಶಿರೋಮಣಿ ರಾವಣನು ಈ ರೀತಿ ಮಾಡಿ ಪರಮಾತ್ಮನ ಕೃಪೆ ಪಡೆದು ಆತ್ಮಲಿಂಗವನ್ನು ಪಡೆದ ವೃತ್ತಾಂತ ಪುರಾಣ ಗಳಿಂದ ವೇದ್ಯವಾಗುತ್ತದೆ.

ಗುಡಿಮಾತಿಗೊಮ್ಮೆ ಮಾ | ರ್ನುಡಿಯ ತಾ ಕೊಡುವಂತೆ

ಒಡೆಯ ನೀ ಹೊಕ್ಕು ನುಡಿಗೊಟ್ಟ ಪರಿಯೊಳಾಂ

ನುಡಿವೆನೈ ಗುರುವೆ ಕೃಪೆಯಾಗು || ೧೩ ||

ಗುಡಿ-ಗುಂಡಾರಗಳು ಬಂದ ಭಕ್ತರ ಮಾತು ಮಾತಿಗೊಮ್ಮೆ ಮರುಧ್ವನಿಯನ್ನು ಮಾಡುತ್ತವೆ. ಮಾತನಾಡದಿದ್ದರೆ ಪ್ರತಿಧ್ವನಿ ಕೇಳಿಸಲಾರದು. ಗುಡಿಗೆ ಯಾರೂ ಬಾರದಿದ್ದಾಗ ದೇವಮಂದಿರವು ಶಾಂತವಾಗಿರುತ್ತದೆ. ಸಾಮಾನ್ಯವಾಗಿ ದೇವಮಂದಿರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಗಳು ಪ್ರತಿಧ್ವನಿಸುವಂತೆ; ಮಣ್ಣಿನ ಮನೆಗಳಾಗಲಿ, ಗುಡಿಸಲಗಳಾಗಲಿ, ಮರುಧ್ವನಿ ಯನ್ನು ಕೊಡಲಾರವು. ಪ್ರತಿಧ್ವನಿಸುವದಕ್ಕೂ ಯೋಗ್ಯತೆಬೇಕು.

ದೇಹ ದೇಗುಲವಾಗಬೇಕು. ದೇಗುಲದಲ್ಲಿ ದೇವನ ಪ್ರತಿಷ್ಠೆಯಾಗಬೇಕು. ಅಲ್ಲಿ ಮಾರ್ನುಡಿ ಕೇಳಬರುತ್ತದೆ. ದೇಹವು ದೇಗುಲವಾಗದಿದ್ದರೆ ಮಾರ್ನುಡಿಗೆ ಅವಕಾಶವಿಲ್ಲ.ಗುಡಿಯಲ್ಲಿ ಒಡೆಯನ ವಾಸವಿರದಿದ್ದರೆ ಮಾರ್ನುಡಿಯ ಮಹತ್ವ ವೆನಿಸಲಾರದು.ಹೊರಗಿನ ಗುಡಿ ನಿರ್ಜಿವವಾದುದು, ಜಡವಾದುದು. ಆದರೂ ಅದು ಪ್ರತಿಧ್ವನಿ ಸುತ್ತದೆ. ಈ ದೇಹ ಗುಡಿ ಸಜೀವವಾದುದು, ಅದು ನಿನ್ನಿಂದ ಮಾತ್ರ ಸಾಧ್ಯ. ಗುರು ಕೃಪೆಯಿಂದಲೇ ದೇಹವು ಸಜೀವವಾಗುವದು. ಲಿಂಗಸಂಸ್ಕಾರದಿಂದ ದೇಹದ ಜಡತ್ವವು ದೂರವಾಗುವದು. ಅಂಗವೆನಿಸಿ ಲಿಂಗವಾಗಲು ಯೋಗ್ಯವಾಗುವದು. ಗುರುಕೃಪೆಯ ಬಲದಿಂದ ಬಂದ ಲಿಂಗವು ಗುರುರೂಪಲ್ಲದೆ ಬೇರಲ್ಲ. ಪುತ್ರನಲ್ಲಿ ಪಿತನ ಪ್ರತಿರೂಪವಿರುವಂತೆ ಲಿಂಗದಲ್ಲಿ ಗುರುವಿನ ಶಕ್ತಿ ಅಡಕವಾಗಿರುತ್ತದೆ. ಅಂಗಕ್ಕೂ ಮತ್ತು ಲಿಂಗಕ್ಕೂ ಒಡೆಯನು ಸದ್ಗುರುವು. ಓ ಗುರುವೆ ! ಒಡೆಯನೆ ನನ್ನ ದೇಹಗುಡಿಯಲ್ಲಿ ನೀನು ವಾಸವಾಗಿ ಶಿವಧ್ಯಾನವನ್ನು ಪ್ರತಿಧ್ವನಿಸುವಂತೆ ಮಾಡು. ನೀನು ನುಡಿದಂತೆ ನಾನು ಅವಶ್ಯವಾಗಿ ಪಡಿನುಡಿಯುವೆ; ಕೃಪೆಮಾಡು.

ಇಲ್ಲಿ ಶಿವಕವಿಯು ಶಿಷ್ಯನ ಅರ್ಹತೆಯನ್ನು ವ್ಯಕ್ತಮಾಡಿದ್ದಾನೆ. ನಾನು ನಿನ್ನ ಕೃಪೆಗೆ ಪಾತ್ರನಾಗಲು ಯೋಗ್ಯನಾಗಿದ್ದೇನೆಂಬುದನ್ನು ಅಭಿವ್ಯಂಜಿಸಿದ್ದಾನೆ. ನಿನ್ನ ಕೃಪಾ ಬಲದಿಂದ ನನ್ನ ದೇಹ ದೇವಾಲಯವಾಗಿದೆ. ಅಲ್ಲದೆ ನೀನು ನುಡಿದಂತೆ ಅನುಸರಿಸಬಲ್ಲೆನೆಂಬುದನ್ನು ತೋರಿಸಿಕೊಟ್ಟಿದ್ದಾನೆ.ಗುರು ಹೇಳಿಕೊಟ್ಟಿದ್ದನ್ನು ಗ್ರಹಿಸದ ಶಿಷ್ಯನು ಮುಂದುವರೆಯಲಾರನು. ಮುನ್ನಡೆಯದಿದ್ದರೆ ಗುರಿ ದೊರಕದು. ಗುರುವಾಕ್ಯವನ್ನು ಗ್ರಹಿಸುವ ಅಧಿಕಾರಿಯಾಗುವದು ಅವಶ್ಯವಿದೆ. ಗುರೂಪದೇಶವನ್ನು ಅರ್ಥೈಸಿಕೊಂಡು ಅನುಸರಿಸುವಲ್ಲಿಯೇ ಗುರುಕೃಪೆ ಇದೆ. ನಚಿಕೇತನಿಗೆ ಯಮನು ತಿಳಿಸಿದ ಈ ಮಾತು ಗಮನಾರ್ಹವಾಗಿದೆ. ಪರಮಾತ್ಮ ತತ್ವವನ್ನು ಹೇಳುವ ಗುರುಗಳು ದುರ್ಲಭ, ಹೇಳಿದರೂ ಕೇಳಿ ತಿಳಿದುಕೊಳ್ಳುವ ಶಿಷ್ಯರೂ ದುರ್ಲಭವೇ.” ಶಿಷ್ಯನ ಗ್ರಹಣ ಶಕ್ತಿ ಸ್ತುತ್ಯವಾಗಿದೆ.

ಯಂತ್ರವಾಹಕನ ಹ | ಸ್ತಾಂತ್ರಬೊಂಬೆಯದು ಪರ

ತಂತ್ರದಿಂದಾಡುವಂತೆನ್ನಾಡಿಸುವ ಸ್ವ-

ತಂತ್ರ ಶ್ರೀಗುರುವೆ ಕೃಪೆಯಾಗು || ೧೪||

ಜಗತ್ತಿನಲ್ಲಿ ಸ್ವತಂತ್ರವಾದುದು ಯಾವುದೂ ಇಲ್ಲವೆಂದು ಈಗಾಗಲೇ ನಿರೂಪಿಸ ಲಾಗಿದೆ. ಎಲ್ಲವೂ ಪರತಂತ್ರವನ್ನು ಹೊಂದಿದ್ದರೆ, ಗುರುದೇವನು ಮಾತ್ರ ಸರ್ವತಂತ್ರ ಸ್ವತಂತ್ರನಾಗಿದ್ದಾನೆ. ಗುರುವು ತನ್ನ ಶಿಷ್ಯರಿಗೆ ಚಾಲನೆ ಕೊಡಬಲ್ಲನು. ಕೈಯೊಳಗಿನ ಕೀಲುಗೊಂಬೆಯು ಯಂತ್ರವಾಹಕನ (ಚಾಲಕನ) ಅಧೀನದಲ್ಲಿ ಕುಣಿಯುವದು.ಅವನ ಚಾಲನೆಯಂತೆ ತನ್ನ ಆಟವನ್ನು ತೋರಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಬಲ್ಲುದು. ಯಂತ್ರವಾಹಕನಂತೆ ಗುರುದೇವನು ಶಿಷ್ಯರೆಂಬ ಗೊಂಬೆಗಳನ್ನು ಆಡಿಸುತಾನೆ. ಸದ್ಗುರುವಿನ ಸೂತ್ರವನ್ನು ಹೊಂದಿದವರು ತಮ್ಮ ಸಮೀಚೀನವಾದ ಆಟವನ್ನುಪ್ರದರ್ಶಿಸಿ ಪ್ರಶಂಸೆಯನ್ನು ಪಡೆಯಬಹುದು. ಇಹಲೋಕದಲ್ಲಿ ಸಲ್ಲಿ ಪರಲೋಕದಲ್ಲಿಯೂ ಮನ್ನಣೆ ಪಡೆಯಬಹುದು.

ಓ ಗುರುವೇ! ನೀನು ಸ್ವತಂತ್ರನು, ನಾನು ನಿನ್ನ ತಂತ್ರದಲ್ಲಿ ನಡೆಯುವವನು.ನಿನ್ನ ನುಡಿಯೇ ನನ್ನ ನುಡಿಯಾಗಬೇಕು. ನಿನ್ನ ನಡೆಯೇ ನನ್ನ ನಡೆಯಾಗಬೇಕು.“ಮಹಾಜನೋ ಯೇನ ಗತ: ಸಃ ಪಂಥಾಃ?” ಮಹಾತ್ಮರು ನಡೆದುಹೋದ ಬಟ್ಟೆಯೇ ನಮ್ಮದಾಗಬೇಕು.

ನೀತಿಕಾರರು –

ಅನುಗಂತುಂ ಸತಾಂ ವರ್ತ್ಮ

ಕೃತ್ಸ್ನಂ ಯದಿನ ಶಕ್ಯತೇ |

ಸ್ವಲ್ಪಮಪ್ಯನುಗಂತವ್ಯೋ

ಮಾರ್ಗಸ್ಥೋ ನಾವಸೀದತಿ ||

ಮಹಾತ್ಮರ ಸನ್ಮಾರ್ಗವನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೆ ಸ್ವಲ್ಪಾದರೂ ಅನುಸರಿಸುವ ವ್ಯಕ್ತಿಯು ಮುಗ್ಗರಿಸಲಾರನು ಕ್ಲೇಶವನ್ನು ಹೊಂದುವದಿಲ್ಲವೆಂದು ಹೇಳಿದ್ದಾರೆ.

ಬಸವಲಿಂಗ ಶರಣರು ಮೊದಲಿನ ಪದ್ಯದಲ್ಲಿ ನುಡಿ ನಿರಹಂಕಾರವನ್ನು ನಿರ್ವಚಿಸಿ ಇಲ್ಲಿ ನಡೆಯ ನಿರಭಿಮಾನವನ್ನು ನಿರ್ವಚನ ಮಾಡಿದ್ದಾರೆ. ಶಿಷ್ಯನಾದವನು ಸದ್ಗುರುವಿನ ನುಡಿ-ನಡೆಯನ್ನು ಚಾಚೂ ತಪ್ಪದಂತೆ ಅನುಸರಿಸಬೇಕೆಂಬುದು ಸ್ಪಷ್ಟವಾಗುತ್ತಿದೆ. ಓ ಗುರುತಂದೆಯೇ ! ನಿನ್ನ ನುಡಿ-ನಡೆಯನ್ನು ಅನುಸರಿಸುವಂತೆ ಅನುಗ್ರಹಿಸು.

ಸ್ವಾನುಭಾವದ ನೆಲೆಯ | ನಾನೇನ ಬಲ್ಲೆನೈ

ನೀನೆ ಒಳಪೊಕ್ಕು ಏನ ನುಡಿಸಿದೊಡದನೆ

ನಾ ನುಡಿವೆ ಗುರುವೆ ಕೃಪೆಯಾಗು || ೧೫ ||

ನುಡಿ ಮತ್ತು ನಡೆಯ ಸಮನ್ವಯವನ್ನು ಪ್ರತಿಪಾದಿಸುತ್ತಾರೆ. ಸಮನ್ವಯ ಸಿದ್ಧಾಂತವು ಸುಖದಾಯಕವಾಗಿರುತ್ತದೆ. ಬಸವಾದಿ ಪ್ರಮಥರು ತೋರಿದ ಸಿದ್ಧಾಂತ ಸಮನ್ವಯ ಪೂರಕವಾದುದು. “ನುಡಿದಂತೆ ನಡೆ; ಇದೇ ಜನ್ಮ ಕಡೆ” ಎಂದು ತಮ್ಮ ಸ್ವಾನುಭಾವದ ಸವಿಯನ್ನು ಸೂರೆಗೊಳಿಸಿದರು. ಉತ್ತಮ ತಿಳುವಳಿಕೆಯಂತೆ ಆಚರಿಸುವದೇ ಅನುಭವ. ತನ್ನ ಅರುವಿನಂತೆ ಆಚರಿಸಿ  ಆನಂದಪಡುವದೇ ಸ್ವಾನುಭಾವ, ನಡೆನುಡಿಯೊಂದಾಗುವದೇ ಅಥವಾ ನುಡಿ-ನಡೆಯೊಂದಾಗುವದೇ ಸ್ವಾನುಭಾವ. ತನ್ನ ಸ್ವರೂಪವನ್ನು ಸತ್ಯ ಶಿವ-ಸ್ವರೂಪವಾಗಿ ತಿಳಿದು ಸುಂದರವಾಗಿ ನಡೆಯುವದೇ ಸ್ವಾನುಭವವೆಂದು ಹೇಳಬಹುದು.ನಿಜಗುಣಾರ್ಯರು ”ಶಾಂತರೊಸೆದಹುದೆಂದು ಬಣ್ಣಿಸುವ ವರ್ತನೆ” ಎಂಬುದಾಗಿ ಸ್ವಾನುಭವದ ವ್ಯಾಖ್ಯೆಯನ್ನು ಮಾಡಿರುವರು.

ಗುರುವೆ ! ಇಂಥ ಸ್ವಾನುಭವದ ನೆಲೆಯನ್ನು ನಾನರಿಯೆ. ಅರಿವು ಆಚರಣೆ ರೂಪ ಅನುಭವವೇ ನೀನಾಗಿರುವೆ, ಸ್ವಾನುಭವವೇ ನಿನ್ನ ನಿಜರೂಪ. ನಿನ್ನ ನುಡಿ ಮತ್ತು ನಡೆಯಲ್ಲಿ ಸಮನ್ವಯವಿದೆ. ಸಾಮಾನ್ಯ ಜೀವನಾದ ನನಗೆ ಅದು ಹೇಗೆ ಸಾಧ್ಯ ? ನೀನು ನನ್ನ ಒಳಹೊಕ್ಕು ಏನನ್ನಾದರೂ ನುಡಿಸು, ನುಡಿಸಿದಂತೆ ನುಡಿಯಬಲ್ಲೆ. ಗುರುವಚನದಿಂದಧಿಕ ಸುಧೆಯಿಲ್ಲ. ನಿನ್ನ ವಚನಾಮೃತದಲ್ಲಿ ಮಿಂದು ಮರಣ ವನ್ನು ಗೆಲ್ಲಬಲ್ಲೆ. ನಿನ್ನ ಆಶೀರ್ವಾಣಿ ಪರುಷಮಯವಾದುದು. ಸದ್ಗುರುವೆ ! ನಿನ್ನ ಶಕ್ತಿಪಾತವನ್ನುಂಟು ಮಾಡಿ ನನ್ನ ನಡೆ-ನುಡಿಗಳನ್ನು ಉತ್ತಮಗೊಳಿಸು ; ಸಮನ್ವಯ ಗೊಳಿಸುವಂತೆ ಕರುಣಿಸು.

ಲೇಖಕರು ಶ್ರೀ  ಶಿರೀಷ ಜೋಶಿ, ಬೆಳಗಾವಿ ಸೌಜನ್ಯ : ಸುಕುಮಾರ ದೀಪ್ತಿ ಸಂಪಾದಕರು : ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ

ಕಾಡಶೆಟ್ಟಿಹಳ್ಳಿ ಹಾವೇರಿ ಜಿಲ್ಲೆಯಲ್ಲಿರುವ ಚಿಕ್ಕ ಹಳ್ಳಿ ಈ ಊರಿನ ಬಡ ದಂಪತಿಗಳು ಗುರುಪಾದಯ್ಯ – ನೀಲಮ್ಮನವರು,ಇವರಿಗೆ ಜನಿಸಿದ ಮಗು (2ನೆಯ ಫೆಬ್ರುವರಿ, 1892) ಹುಟ್ಟಿನಿಂದಲೆ ಕುರುಡು ಇವರಿಗೆ ಜನಿಸಿದ ಮೊದಲ ಮಗ ಗುರುಬಸವಯ್ಯನಿಗೂ ಹುಟ್ಟುಕುರುಡು ದಂಪತಿಗಳಿಗೆ ಎರಡನೆಯ ಮಗನೂ ಕುರುಡಾಗಿರುವುದು ತೀವ್ರ ನಿರಾಸೆಯನ್ನು ತಂದಿತು. ಮಗುವಿಗೆ ಗದಿಗೆಯ್ಯನೆಂದು ಹೆಸರಿಟ್ಟರು. ಮಗುವಿಗೆ ಬಾಲ್ಯದಿಂದಲೇ ಸಂಗೀತವೆಂದರೆ ಪ್ರಾಣ. ಎಲ್ಲರ ಅನುಕಂಪವನ್ನು ಉಂಡು ಬೆಳೆಯುತ್ತಿದ್ದ ಗದಿಗೆಯ್ಯ ಸಂಗೀತದಲ್ಲಿ ತನ್ನ ಪ್ರಾಣವನ್ನೇ ಇಟ್ಟುಕೊಂಡವನು. ಗುರಬಸವಯ್ಯ ಹಾಗೂ ಗದಿಗೆಯ್ಯ ಒಟ್ಟಿಗೆ ಹಾಡುತ್ತಿದ್ದರೆ ಅದನ್ನು ಕೇಳಿ ಊರ ಜನ ಸಂತೋಷ ಪಡುತ್ತಿದ್ದರು.

ಇದೇ ಸುಮಾರಿಗೆ ಹಾನಗಲ್ಲ ಕುಮಾರಸ್ವಾಮಿಗಳು ಊರೂರಿಗೆ ಸಂಚರಿಸಿ ವೀರಶೈವ ಧರ್ಮದ ಪ್ರಚಾರ ಕಾರ್ಯ ಹಾಗೂ ಜನರಲ್ಲಿ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಕಾಡಶೆಟ್ಟಿಹಳ್ಳಿಗೆ ಹೆಕ್ಕಲು ಬಸವೇಶ್ವರ ಜಾತ್ರೆಗೆ ಬಿಜಯಂಗೈಯಲಿರುವ ಸುದ್ದಿ ಪ್ರಾಪ್ತವಾಯಿತು. ಹಳ್ಳಿ ಜಾತ್ರೆಯ ನಿರೀಕ್ಷೆಯಲ್ಲಿ ಸಡಗರದಿಂದ ತುಂಬಿತ್ತು. ಸ್ವಾಮಿಗಳ ಆಗಮನದ ವಾರ್ತೆ ಆ ಸಡಗರವನ್ನು ಇಮ್ಮಡಿಸಿತು. ಊರು ತನ್ನಷ್ಟಕ್ಕೆ ತಾನೇ ಶೃಂಗಾರಗೊಂಡಿತು. ಸ್ವಾಮಿಗಳು ದಯಮಾಡಿಸಿದರು. ಅವರ ಸ್ವಾಗತಕ್ಕೆ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗುರುಬಸವಯ್ಯ ಹಾಗೂ ಗದಿಗೆಯ್ಯ ಉತ್ತಮವಾಗಿ ಹಾಡಿ ಸ್ವಾಮಿಗಳ ಮನಸೆಳೆದರು!

ಬಾಲಕರೀರ್ವರ ಸಂಗೀತಾಸಕ್ತಿಯನ್ನು ಕಂಠಸಿರಿಯನ್ನು ಭಾವಪರವಶತೆಯನ್ನು ಗಮನಿಸಿದ ಶ್ರೀಗಳು ಮಕ್ಕಳ ಬಗೆಗೆ ವಿಚಾರಿಸಿ ವಿಷಯವನ್ನರಿತರು. ತಂದೆ ತಾಯಿಗಳನ್ನು ಕರೆಸಿ ಹೇಳಿದರು-

‘ಈ ಮಕ್ಕಳನ್ನು ನಮಗೆ ಕೊಡಿ. ಅವರ ಭವಿಷ್ಯವನ್ನು ನಾವು ರೂಪಿಸುತ್ತೇವೆ

ಹೆತ್ತ ಕರುಳು ಚುರ್ರೆಂದಿತು. ಗುರುಪಾದಯ್ಯನವರು ಧೈರ್ಯದಿಂದ ಮಕ್ಕಳನ್ನು ಶ್ರೀಗಳ ಉಡಿಯಲ್ಲಿ ಹಾಕುವ ನಿರ್ಧಾರ ಕೈಕೊಂಡರು. ಈಗಾಗಲೇ ಗುರುಬಸವಯ್ಯನಿಗೆ ಬಾಲ್ಯ ವಿವಾಹವಾಗಿರುವುದನ್ನು ಅರಿತ ಶ್ರೀಗಳು ಅವನನ್ನು ತಿರುಗಿ ಕಳುಹಿಸುವುದಾಗಿ ಹೇಳಿ ಮಕ್ಕಳನ್ನು ಶಿವಯೋಗಮಂದಿರಕ್ಕೆ ಕರೆದೊಯ್ದರು.

ಹಾನಗಲ್ಲಿನ ಶಿವಯೋಗ ಮಂದಿರದ ಕಟ್ಟುನಿಟ್ಟಿನ ಜೀವನಕ್ಕೆ ಹೊಂದಿಕೊಳ್ಳುವುದು ಬಾಲಕರೀರ್ವರಿಗೂ ಮೊದಮೊದಲು ತೊಂದರೆದಾಯಕವೆನಿಸಿತು. ಮಂದಿರದ ತ್ರಿಕಾಲ ಪೂಜಾ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸುವ ಭಾಗ್ಯ ಇಬ್ಬರಿಗೂ ದೊರಕಿತು.ಕುಮಾರ ಸ್ವಾಮಿಗಳ ಉದ್ದೇಶ ಬೇರೆಯೇ ಆಗಿತ್ತು. ಇಬ್ಬರೂ ಸಹೋದರರು ಒಳ್ಳೆಯ ಶರೀರವನ್ನು ಹೊಂದಿದ ಪ್ರಯುಕ್ತ ಅವರು ಸಂಗೀತಗಾರರಾಗಿ ರೂಪುಗೊಳ್ಳಬೇಕೆಂದು ಅಪೇಕ್ಷಿಸಿದರು. ಇದೇ ಸಮಯಕ್ಕೆ ತಂಜಾವೂರಿನಲ್ಲಿ ಸಂಗೀತ ಕಲಿತ ಗವಾಯಿಗಳೊಬ್ಬರು ಅಕಸ್ಮಾತ್ತಾಗಿ ಹಾನಗಲ್ಲಿಗೆ ಆಗಮಿಸಿದರು. ತಂಜಾವೂರಿನ ಗವಾಯಿಗಳು ಒಳ್ಳೆಯ ಸಂಗೀತಗಾರರಾಗಿದ್ದಂತೆ ಉತ್ತಮ ಶಿಕ್ಷಕರೂ ಆಗಿದ್ದರು. ಅವರು ಬಾಲಕದ್ವಯರಿಗೆ ಕರ್ನಾಟಕಿ ಸಂಗೀತವನ್ನು ಹೇಳಿಕೊಡಲಾರಂಭಿಸಿದರು.

ಪಂಚಾಕ್ಷರಿ ಗವಯಿಗಳು ಕಲಿಯುವ ಸಮಯದಲ್ಲಿ ಉತ್ತರಕರ್ನಾಟಕವೂ ಕರ್ನಾಟಕಿ ಸಂಗೀತದ ಕಂಪನ್ನೇ ಹೊಂದಿತ್ತು. ಇಲ್ಲಿ ಹಿಂದುಸ್ತಾನಿ ಸಂಗೀತ ಅದೇ ತಾನೆ ಕಾಲಿಡುತ್ತಿದ್ದರಿಂದ ಮತ್ತು ಆ ಕಾಲಕ್ಕೆ ಅದರ ವ್ಯಾಪ್ತಿ ಕೇವಲ ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿಗಳಿಗೆ ಸೀಮಿತವಾದ್ದರಿಂದ ಹಾನಗಲ್‌ಗಳಂಥ ಊರುಗಳಲ್ಲಿ ಹಿಂದುಸ್ತಾನಿ ಸಂಗೀತ ಇನ್ನೂ ಪ್ರವೇಶ ಮಾಡಿರಲಿಲ್ಲ!.  ನಲ್ವಡಿ ಕೃಷ್ಣರಾಜ ಒಡೆಯರರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿಯಿದ್ದ ಕಾರಣವಾಗಿ ಉತ್ತರ ಭಾರತದಿಂದ ಅಥವಾ ಪುಣೆ ಮುಂಬಯಿಗಳಿಂದ ಮೈಸೂರಿಗೆ ಹೋಗುತ್ತಿದ್ದ ಗವಾಯಿಗಳು ಹುಬ್ಬಳ್ಳಿ ಧಾರವಾಡ ಬೆಳಗಾವಿಗಳಲ್ಲಿ ಕೆಲವು ಕಾಲ ತಂಗಿ, ಇಲ್ಲಿ ತಮ್ಮ ಕಚೇರಿಗಳನ್ನು ನೀಡಿ ಮುಂದೆ ಸಾಗುತ್ತಿದ್ದರು. ಹೀಗಾಗಿ ಈ ಭಾಗದ ಜನರಿಗೆ ಹಿಂದುಸ್ತಾನಿ ಸಂಗೀತ ಪ್ರಿಯವಾಗತೊಡಗಿತು. ಪಿತ್ರೆ ವಕೀಲರಂಥ ಕೆಲವು ಉತ್ಸಾಹಿ ಯುವಕರು ಕಲಿಯಲು ಸನ್ನದ್ಧರಾದರು. ಹೀಗೆ ಹಿಂದುಸ್ತಾನಿ ಸಂಗೀತ ಉತ್ತರಕರ್ನಾಟಕದಲ್ಲಿ ಪ್ರವೇಶ ಪಡೆಯಿತು. ಇತರ ಅನೇಕ ವಿದ್ವಾಂಸರು, ಗವಾಯಿಗಳು ಈ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ಬೆಳೆಯಲು ಕಾರಣರಾದರು. ನತ್ಥನಖಾನ ಭಾಸ್ಕರ ಭುವಾ ,ಬಖಲೆ, ಉಸ್ತಾದ ಅಬ್ದುಲ್ ಕರೀಂಖಾನ, ಸಿತಾರಿಯಾ ರೆಹಮತ್‌ಖಾನ್ ಮೊದಲಾದವರು ಈ ಕಾರ್ಯವನ್ನು ಸಮರ್ಗವಾಗಿ ಮಾಡಿದರು. ಮುಂದೆ ಸವಾಯಿಗಂಧರ್ವರಂಥ ಅನೇಕ ಪಭೃತಿಗಳು ಅದನ್ನು ಬೆಳೆಸಿದರು.

ಆ ಕಾಲದಲ್ಲಿ ಕೆಲವು ಸಂಸ್ಥೆಗಳೂ ಉತ್ತರಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ನೆಲೆಗೊಳ್ಳಲು ಕಾರಣವಾದವು. ಉತ್ತರಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಮರಾಠಿ ನಾಟಕ ಕಂಪನಿಗಳು, ಇಲ್ಲಿಯ ಹುಟ್ಟಿ ಬೆಳೆದ ಕನ್ನಡ ನಾಟಕ ಕಂಪನಿಗಳು ತಮ್ಮ ರಂಗಗೀತೆಗಳ ಮುಖಾಂತರ ಇಲ್ಲಿನ ಜನರಲ್ಲಿ ಹಿಂದುಸ್ತಾನಿ ಸಂಗೀತದ ಅಭಿರುಚಿಯನ್ನೂ ಆಸಕ್ತಿಯನ್ನೂ ಬೆಳೆಸಿದುವು. ಪಂ.ಭಾಸ್ಕರ್ ಬುವಾ ಬಖಲೆಯವಗೆ ಎಂಟು ವರ್ಷಗಳ ಕಾಲ ಆಶ್ರಯ ನೀಡಿದ ಧಾರವಾಡದ ಟ್ರೈನಿಂಗ್ ಕಾಲೇಜು ಹಾಗೂ ಭೂಗಂಧರ್ವ ರೆಹಮತ್‌ಖಾನ್ ಮತ್ತು ಕಬೀರದಾಸರಿಗೆ ಆಶ್ರಯ ನೀಡಿದ ಸಿದ್ದಾರೂಢ ಶ್ರೀಮಠಗಳೂ ಹಿಂದುಸ್ತಾನಿ ಸಂಗೀತ ಇಲ್ಲಿ ಬೆಳೆಯಲು ಕಾರಣವಾದವು.

ಪಂಚಾಕ್ಷರಿಗವಾಯಿಗಳು ಕಲಿಯುವ ಸಮಯದಲ್ಲಿ ಹಿಂದುಸ್ತಾನಿ ಸಂಗೀತ ಹಾನಗಲ್ಲನ್ನು ಪ್ರವೇಶಿಸಿರಲಿಲ್ಲವಾಗಿ ಮತ್ತು ಅದನ್ನು ಕಲಿಸುವವರು ದುರ್ಮಿಳರಾದ್ದರಿಂದ ಅವರು ತಂಜಾವೂರಿನ ಗವಾಯಿಗಳಲ್ಲಿ ಕರ್ನಾಟಕ ಸಂಗೀತವನ್ನು ಕಲಿಯುವುದು ಅನಿವಾರ್ಯವಾಗಿತ್ತು,ಅವರು ಬಾಲಕರಿಗೆ ಮೊದಲು ಶೃತಿ ಪರಿಚಯವನ್ನು ಮಾಡಿಕೊಟ್ಟರು. ಸ್ವರ ಲಯಗಳ ಬಗೆಗೆ ತಿಳಿಸಿದರು. ಕರ್ನಾಟಕಿ ಸಂಗೀತವು ತಾಲ ಪ್ರಧಾನವಾದ್ದರಿಂದ ತಾಲ ಜ್ಞಾನ ಅತ್ಯಂತ ಮಹತ್ವದ ಸಂಗತಿಯಾಗಿದೆ. ತಾಲ ಬದ್ಧವಾಗಿ ಹಾಡುವುದು ಅಲ್ಲಿ ಅತ್ಯಂತ ಮುಖ್ಯವಾಗುತ್ತದೆ.ಮಕ್ಕಳಿಬ್ಬರೂ ತೊಡೆ ತಟ್ಟಿಕೊಂಡು ಚಪ್ಪಾಳೆ ತಟ್ಟಿಕೊಂಡು ತಾಲ ಬದ್ಧವಾಗಿ ಹಾಡುವುದನ್ನು ಮೊದಲು ಕಲಿತರು. ನಂತರ ಪ್ರಾರಂಭವಾದದ್ದು ಜಂಟಿ ಸ್ವರಗಳನ್ನು ಹೇಳುವುದು. ಅವುಗಳನ್ನು ತಾಲಬದ್ಧವಾಗಿ ಪ್ರಸ್ತುತ ಪಡಿಸುವುದನ್ನು ರೂಢಿಸಿಕೊಂಡರು. ಈಗಲೂ ಜಂಟಿ ಸ್ವರಗಳನ್ನು ಹೇಳುವುದು ಅತ್ಯಂತ ಕಠಿಣವೆಂದೇ ಭಾವಿಸಲಾಗುತ್ತದೆ. ಅಂಥದನ್ನು ಬಾಲಕರಿಬ್ಬರೂ ಸುಲಭವಾಗಿ ಕಲಿತರು. ಸ್ವರ, ಸಂಗತಿ,ಜಟಿಲ ತಾಳ, ಲಯಗಳ ಗತಿ, ಗಮನಗಳನ್ನು ಆತ್ಮಸಾತ್ ಮಾಡಿಕೊಂಡರು. ತಂಜಾವೂರಿನ ಗವಾಯಗಳು ಗದಿಗೆಯ್ಯ ಹಾಗೂ ಗುರುಬಸವಯ್ಯನವರಿಗೆ ಕರ್ನಾಟಕ ಸಂಗೀತದ ಭದ್ರ ಬುನಾದಿಯನ್ನು ಹಾಕಿದರು. ಅವರ ಕಲಿಕೆ ಎಷ್ಟು ಕ್ಷಿಪ್ರವಾಗಿತ್ತೆಂದರೆ ಒಂದೆರಡು ವರ್ಷಗಳಲ್ಲಿ ಕಲಿಯಬೇಕಾದುದನ್ನು ಕೇವಲ ಆರು ತಿಂಗಳಲ್ಲಿ ಮುಗಿಸಿದರು. ಮುಂದೆ ಕೆಲವು ದಿನಗಳ ತರುವಾಯ ಅನಿವಾರ್ಯ ಕಾರಣಗಳಿಂದ ತಂಜಾವೂರಿನ ಗವಾಯಿಗಳು ಮರಳಿದರು. ಇವರ ಪ್ರಗತಿಯನ್ನು ಗಮನಿಸುತ್ತಿದ್ದ ಹಾನಗಲ್ ಕುಮಾರಸ್ವಾಮಿಗಳಿಗೆ ಸಂತೃಪ್ತಿಯಾಗಿತ್ತು. ಬಾಲಕರ ಸಂಗೀತ ಶಿಕ್ಷಣ ಮುಂದುವರಿಯಬೇಕೆಂದು ಅವರು ಅಪೇಕ್ಷಿಸಿದರು.

ಹೊಸಪೇಟೆಯಲ್ಲಿ ಒಬ್ಬ ಗವಾಯಿ ಇರುವುದು ಕುಮಾರಸ್ವಾಮಿಗಳಿಗೆ ತಿಳಿಯಿತು. ಹೊಸಪೇಟೆಯ ಗವಾಯಿ ಭೀಮರಾಯರನ್ನುಹಾನಗಲ್ಲಿಗೆ ಬರಮಾಡಿಕೊಂಡು ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಮಕ್ಕಳಿಗೆ ಸಂಗೀತ ಕಲಿಸುವಂತೆ ಸೂಚಿಸಿದರು. ಬಾಲಕರಿಬ್ಬರ ಸಂಗೀತ ಶಿಕ್ಷಣ ಮತ್ತೆ ಮುಂದಡಿಯಿಟ್ಟಿತು. ಭೀಮರಾಯರು ಮಕ್ಕಳ ಪ್ರತಿಭೆಯನ್ನು ಕಂಡು ಸಂತಸ ಪಟ್ಟರು. ಆತ್ಮೀಯತೆಯಿಂದ ಅವರಿಗೆ ಸಂಗೀತವನ್ನು ಹೇಳಿಕೊಡಲು ಉಪಕ್ರಮಿಸಿದರು. ಆದರೆ, ಇವರಿಗೂ ಬಹುಕಾಲ ಕಲಿಸುವ ಯೋಗವಿರಲಿಲ್ಲ, ಹಾನಗಲ್ಲಿನ ಹವೆಯು ಆಗಿ ಬರದ ಕಾರಣದಿಂದ ಭೀಮರಾಯರು ಹೊಸಪೇಟೆಗೆ ಮರಳಿದರು.

ಶಿರಾಳಕೊಪ್ಪದಲ್ಲಿ ಗದಿಗೆಯ್ಯನೆಂಬ ಸಂಗೀತಗಾರರಿದ್ಧ ವಾರ್ತೆ ತಿಳಿಯುತ್ತಲೇ ಅಲ್ಲಿಗೆ ಧಾವಿಸಿದ ಕುಮಾರಸ್ವಾಮಿಗಳು ಮಕ್ಕಳಿಗೆ ಸಂಗೀತ ಹೇಳಿಕೊಡಲು ಅವರನ್ನು ಒಪ್ಪಿಸಿದರು. ಮಕ್ಕಳಿಬ್ಬರೂ ಶಿರಾಳಕೊಪ್ಪದಲ್ಲಿಯೇ ಉಳಿಯಲು ವಸತಿಯ ಹಾಗೂ ಊಟದ ವ್ಯವಸ್ಥೆ ಮಾಡಿದರು. ಗದಿಗೆಯ್ಯನವರು ಮಕ್ಕಳಿಗೆ ಎಂಟು ವರ್ಷಗಳ ಕಾಲ ಸಂಗೀತವನ್ನು ಕಲಿಸಿದರು. ತಮ್ಮಲ್ಲಿದ್ದ ವಿದ್ಯೆಯನ್ನೆಲ್ಲ ಮಕ್ಕಳಿಗೆ ನಿರ್ವಂಚನೆಯಿಂದ ಧಾರೆ ಎರೆದರು. ಎಂಟು ವರ್ಷಗಳ ಅವಧಿಯಲ್ಲಿ ಮಕ್ಕಳಿಬ್ಬರೂ ಸಾಕಷ್ಟು ಸಾಧನೆಯನ್ನು ಮಾಡಿದರು.ಸ್ವತಂತ್ರವಾಗಿ ಕಚೇರಿಗಳನ್ನು ಮಾಡುವಷ್ಟು ಸಂಗೀತವನ್ನು ಸಿದ್ಧಿಸಿಕೊಂಡರು.ಗದಿಗೆಯ್ಯನವರು ಪ್ರಾಮಾಣಿಕವಾಗಿ ಒಂದು ಅಭಿಪ್ರಾಯವನ್ನು ಕುಮಾರಸ್ವಾಮಿಗಳ ಮುಂದಿಟ್ಟರು. ಅವರೆಂದರು, ‘ಬುದ್ಧಿ ನಾನು ಕಲಿಸುವುದೆಲ್ಲವೂ ಮುಗಿದಿದೆ. ಮಕ್ಕಳ ಬುದ್ದಿ ಎಂದಿಗೂ ತುಂಬಲಾರದ ಇಂಗು ಭೂಮಿ. ನಾನು ಹಾಕಿದ್ದೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅವರ ಜ್ಞಾನ ತೃಷೆ ಹಿಂಗಲಾರದು. ಅವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮೈಸೂರಿಗೆ ಕಳಿಸುವುದು ವಾಸಿ, ನಾನು ಮಕ್ಕಳನ್ನು ಮರಳಿ ತಮ್ಮ ಸಾನಿಧ್ಯಕ್ಕೆ ಒಪ್ಪಿಸುತ್ತಿದ್ದೇನೆ’ ಕುಮಾರಸ್ವಾಮಿಗಳು ಮಕ್ಕಳನ್ನು ಮೈಸೂರಿಗೆ ಕಳಿಸುವಲ್ಲಿ ಕೆಲವು ಕಾಲಾವಕಾಶ ಬೇಕಾಗುತ್ತದೆ ಎಂದು ಯೋಚಿಸಿ ಅವರನ್ನು ನೆಲವಿಗಿಹಳ್ಳಿಗೆ ಕಳುಹಿದರು. ಅಲ್ಲಿ ಕಾಲರಾ ಬೇನೆಗೆ ತುತ್ತಾದ  ಗುರುಬಸವಯ್ಯ ಕೊನೆಯುಸಿರೆಳೆದರು. ಇದರಿಂದ ಗದಿಗಯ್ಯನಿಗೆ ಬಹು ದುಃಖವಾಯಿತು. ಶ್ರೀಗಳು ಬಂದು ಸಾಂತ್ವನವನ್ನು ಕೇಳಿದರು.

ಮುಂದೆ ಕೆಲವೇ ದಿನಗಳಲ್ಲಿ ಗದಿಗೆಯ್ಯನನ್ನು ಮೈಸೂರಿಗೆ ಉನ್ನತ ಸಂಗೀತ ಶಿಕ್ಷಣಕ್ಕಾಗಿ ಕಳುಹಿಸುವ ಏರ್ಪಾಟು ಮಾಡಿದರು.ಮೈಸೂರಿನಲ್ಲಿ ಗದಿಗಯ್ಯನ ಜೀವನ ಸುಖದ ಸುಪ್ಪತ್ತಿಗೆಯನೂ ಆಗಿರಲಿಲ್ಲ, ಮನಿಪ್ತ ಗೌರಿಶಂಕರ ಸ್ವಾಮಿಗಳಲ್ಲಿ  ಉಳಿದುಕೊಂಡು ಸಂಗೀತ ಕಲಿಯುತ್ತಿದ್ದರೂ ಅವರಿಗೆ ಭಾರವಾಗದೆಂಬ ಕಾರಣದಿಂದ ತಂಬೂರಿ ಸಾಥಿ ಮಾಡಿ, ಭಜನೆಗಳನ್ನು ಹಾಡಿ, ಕೀರ್ತನೆಗಳನ್ನುಹೇಳಿ ಚರಿತಾರ್ಥದ ವ್ಯವಸ್ಥೆ ಮಾಡಿಕೊಂಡರು.

ಶ್ರೀ.ಮ.ನಿ.ಪ್ರ. ಗೌರಿಶಂಕರ ಸ್ವಾಮಿಗಳು ಗದಿಗೆಯ್ಯನ ವ್ಯಕ್ತಿತ್ವದಿಂದ ತುಂಬ ಪ್ರಭಾವಿತರಾದರು. ಆತನ ನಡೆ, ನುಡಿ, ಚಿತ್ತಾಕರ್ಷಕ ವ್ಯಕ್ತಿತ್ವ ಮನೋಭೂಮಿಕೆ, ಸಾತ್ವಿಕತೆ ಇವೆಲ್ಲವೂ ಅವರ ಮೇಲೆ ಪ್ರಭಾವ ಬೀರಿದವು. ಅವನ ಮೇಲೆ ಇನ್ನಿಲ್ಲದ ವಾತ್ಸಲ್ಯ ಮೂಡಿತು.ಸಂಗೀತದಲ್ಲಿ ಸಿದ್ಧಿ ಪಡೆಯಲು ಬಂದಿರುವ ಈತನಿಗೆ ಗದಿಗೆಯ್ಯನೆಂಬ ಅಭಿಧಾನ ಸಲ್ಲದು, ಶಿವನು ಸಂಗೀತ ಪ್ರಿಯನಾದ್ದರಿಂದ ಶಿವನ ಹೆಸರೇ ಇವನಿಗೆ ಯೋಗ್ಯವೆಂದು ಭಾವಿಸಿ `ಪಂಚಾಕ್ಷರಿ’ ಎಂದು ಕರೆದರು. ಮೊದಲ ಸಲ ಗದಿಗೆಯ್ಯನನ್ನು ಹಾಗೆ ಕರೆದಾಗ ಅವನಿಗೂ ಅರ್ಥವಾಗಲಿಲ್ಲ. ನಂತರ, ಶ್ರೀಗಳೇ ತಿಳಿಸಿ ಹೇಳಿದಾಗ ಆತ ಅನಂದಗೊಂಡ. ಅಂದಿನಿಂದ ಗದಿಗೆಯ್ಯ ಎಂಬುದು ಮರೆಯಾಗಿ ಪಂಚಾಕ್ಷರಿ’ ಎಂಬುದು ಹೆಸರಾಯಿತು.

ಹೊಟ್ಟೆಯ ಹಸಿವು ಪಂಚಾಕ್ಷರಿಯನ್ನು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಆದರೆ ಸಂಗೀತದ ಹಸಿವು ಮಾತ್ರ ತಡೆಯಲಾರದಂತಿತ್ತು,ಪಂಚಾಕ್ಷರಿಯ ವ್ಯಕ್ತಿತ್ವದಿಂದ, ಹಾಡುಗಾರಿಕೆಯಿಂದ ಪ್ರಭಾವಿತರಾದ ಬಿಡಾರಂ ಕೃಷ್ಣಪ್ಪನವರು ಸಂಗೀತ ಕಲಿಸಲು ಒಪ್ಪಿಕೊಂಡರು.ಕಲವು ಕಾಲ ಅವರಲ್ಲಿ ಸಂಗೀತದ ಅಧ್ಯಯನ ನಡೆಯಿತಾದರೂ ಅವರಿಗೆ ಬಂದ ಕೌಟುಂಬಿಕ ತೊಂದರೆಗಳಿಂದಾಗಿ ಪಿಟೀಲು ವೆಂಕಟರಮಣಯ್ಯನವರಲ್ಲಿ ಪಂಚಾಕ್ಷರಿಯ ಸಂಗೀತದ ತಾಲೀಮು ಮುಂದುವರಿಯಿತು. ಸ್ವತಃ ಬಿಡಾರಂ ಕೃಷ್ಣಪ್ಪನವರು ಮುಂದೆ ನಿಂತು ಪಂಚಾಕ್ಷರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿದರು. ವೆಂಕಟರಮಣಯ್ಯನವರು ಅತ್ಯಂತ ಮುತುವರ್ಜಿಯಿಂದ ಸಂಗೀತ ಶಿಕ್ಷಣ ನೀಡಿದರು. ವೆಂಕಟರಮಣಯ್ಯನವರಲ್ಲಿ ಕಲಿಯಲಾರಂಭಿಸಿದ ನಂತರ ಪಂಚಾಕ್ಷರಿಗೆ ಕರ್ನಾಟಕಿ ಸಂಗೀತದ ಉನ್ನತ ಮಟ್ಟದ ಜ್ಞಾನವು ಪ್ರಾಪ್ತಿಯಾಯಿತು. ಪಂಚಾಕ್ಷರಿ ಶ್ರಮ ವಹಿಸಿ ಕಲಿತನು. ಮೈಸೂರಿನಲ್ಲಿದ್ದ ನಾಲ್ಕು ವರ್ಷಗಳ ಕಾಲ ತಪಸ್ಸಿನಂತೆ ಕಳೆದು ಸಂಗೀತದಲ್ಲಿ ಸ್ವತಃ ಉನ್ನತ ಮಟ್ಟವನ್ನು ತಲುಪಿದ್ದು ಸಾಮಾನ್ಯ ಸಾಧನೆಯೇನಲ್ಲ

ಈ ನಾಲ್ಕು ವರ್ಷಗಳು ಪಂಚಾಕ್ಷರಿಯ ಜೀವನದಲ್ಲಿ ಸಂಗೀತದ ಸಾಧನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲ ಘಟ್ಟ.ಈ ಕಾಲಾವಧಿಯಲ್ಲಿ ಗುರುವಿನ ಮುಖದಿಂದ ನೇರವಾಗಿ ಸಂಗೀತವನ್ನು ಕಲಿತದ್ದು ಒಂದು ಭಾಗ, ಇನ್ನೊಂದು ಮಹತ್ವದ ಭಾಗವೆಂದರೆ, ಮೈಸೂರಿನಲ್ಲಿ ಇರುವಷ್ಟು ಕಾಲವೂ ಉನ್ನತ ಮಟ್ಟದ ಅನೇಕ ಕಲಾವಿದರ ಸಂಗೀತವನ್ನು ಕೇಳುವ ಸದಾವಕಾಶ ಪಂಚಾಕ್ಷರಿಗೆ ಲಭ್ಯವಾಯಿತು. ಇದರಿಂದಾಗಿ ಅವನ ಸಂಗೀತಕ್ಕೆ ಒಂದು ಹೊಸ ಆಯಾಮ, ಮೆರಗು ಬಂದಿತು. ಕರ್ನಾಟಕಿ ಸಂಗೀತದ ಅನೇಕ ಮಹತ್ವದ ಸೂಕ್ಷ್ಮ ಸಂಗತಿಗಳು ಹೊಳೆದುದು ಇದೇ ಅವಧಿಯಲ್ಲಿ ವಿವಿಧ ಕಲಾವಿದರಿಂದ ಅನೇಕ ಮಹತ್ವದ ಕೀರ್ತನೆಗಳನ್ನು ಸಂಗ್ರಹಿಸಿದ್ದಲ್ಲದೇ ಹಾಡುಗಾರಿಕೆಯ ಮರ್ಮವನ್ನು ತಿಳಿಯಲು ಸಾಧ್ಯವಾಯಿತು.

ಮೈಸೂರಿನಲ್ಲಿರುವಾಗ ಅನೇಕ ಕಡೆಗಳಲ್ಲಿ ಸಂಗೀತ ಕಚೇರಿಗಳನ್ನು ಮಾಡುವ ಅವಕಾಶ ಪಂಚಾಕ್ಷರಿಗೆ ಲಭಿಸಿತು. ಹೀಗೆ ಅವಕಾಶ ದೊರೆತ ಎಲ್ಲ ಸಂದರ್ಭಗಳಲ್ಲೂ ತಾನೊಬ್ಬ ಪ್ರಬುದ್ಧ ಕಲಾವಿದನೆಂಬುದನ್ನು ಸಾಬೀತುಪಡಿಸಿದ. ಮೈಸೂರಿನ ಜನತೆ ಪಂಚಾಕ್ಷರಿಯನ್ನು ಸಂಗೀತದ ಘನ ವಿದ್ವಾಂಸನೆಂದು ಮನ್ನಿಸಿತು. ವಿದ್ಯಾರ್ಥಿಯಾಗಿ ಮೈಸೂರು ನಗರಕ್ಕೆ ಕಾಲಿಟ್ಟ ಗದಿಗೆಯ್ಯ ಪಂಚಾಕ್ಷರಿ ಎನಿಸಿಕೊಂಡು,ವಿದ್ವಾಂಸನಾಗಿ ರೂಪುಗೊಂಡ

ಉಸ್ತಾದ ವಹೀದಖಾನರು ಕಿರಾಣಾ ಘರಾಣೆಯವರು. ಉಸ್ತಾದ ಅಬ್ದುಲ್ ಕರೀಂಖಾನರ ನಂತರ ಮೇರುಖಂಡದ ಗಾಯಕರು ಎಂದು ಹೆಸರುವಾಸಿಯಾದವರು. ಇವರ ಶಿಷ್ಯ ಉಸ್ತಾದ ಅಮೀರಖಾನರು ಸಹ ಅದೇ ಖ್ಯಾತಿಯನ್ನು ಪಡೆದರು. ಇವರ ಶಿಷ್ಯರಲ್ಲಿ  ಹೀರಾಬಾಯಿ ಬಡೋದೇಕರ್, ಶ್ರೀಮತಿ ಬೇಗಂ ಆಖೈರಿ, ಮುನ್ನಿಭಾಯಿ, ಹಾಗೂ ಪ. ಬಸವರಾಜ ರಾಜಗುರು ಪ್ರಸಿದ್ಧರಾಗಿದ್ದಾರೆ. ಇಂಥ ಶ್ರೇಷ್ಠ ತರಗತಿಯ ಗವಾಯಿಯನ್ನು ಹುಡುಕಿ ಹಾನಗಲ್ ಕುಮಾರಸ್ವಾಮಿಗಳು ಶಿವಯೋಗಮಂದಿರಕ್ಕೆ ಬರಮಾಡಿಕೊಂಡರು. ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಕುಮಾರಸ್ವಾಮಿಗಳು ಉಸ್ತಾದ ವಹೀದಖಾನರು ಸದಾಕಾಲ ಹರ್ಷಚಿತ್ತರಾಗಿರುವಂತೆ ನಿಗಾ ವಹಿಸಿದರು. ಅವರಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನೂ ಒದಗಿಸಿದರು. ಅವರಿಗೆ ಪ್ರತಿತಿಂಗಳೂ ನೂರೈವತ್ತು ರೂಪಾಯಿಗಳ ಸಂಬಳ ನಿಗದಿಯಾಯಿತು.

ಒಂದು ಶುಭದಿನ ಉಸ್ತಾದ ವಹೀದಖಾನರು ಪಂಚಾಕ್ಷರಿಗವಯಿಗಳಿಗೆ ಸಂಗೀತದ ತಾಲೀಂನ್ನು ಪ್ರಾರಂಭಿಸಿದರು. ಈಗಾಗಲೇ ಹಿಂದುಸ್ತಾನಿ ಸಂಗೀತದಲ್ಲಿ ಸ್ವಪ್ರಯತ್ನದಿಂದ ಒಂದಿಷ್ಟು ಕೃಷಿ ಮಾಡಿಕೊಂಡಿದ್ದ ಪಂಚಾಕ್ಷರಿಗಮಯಿಗಳಿಗೆ ಕಲಿಸುವ ವಹೀದಖಾನರಿಗೆ ಯಾವ ತೊಂದರೆಯೂ ಆಗಲಿಲ್ಲ. ಪಂಚಾಕ್ಷರಿಗವಾಯಿಗಳು ಸೂಕ್ಷ್ಮ ಗ್ರಾಹಿಗಳು. ಗುರುವಿನ ಮುಖೇನ ಪ್ರಾಪ್ತವಾದ ಸಂಗೀತದ ಸುಧಾರಸವನ್ನು ಆನಂದದಿಂದ ಸ್ವೀಕರಿಸಿದರು. ನಾಲ್ಕುವರುಷಗಳ ಅವಿರತ ತಾಲೀಮಿನಲ್ಲಿ ಅವರೊಬ್ಬ ಪ್ರಬುದ್ಧ ಹಿಂದುಸ್ತಾನಿ ಗಾಯಕರಾಗಿ ರೂಪುಗೊಂಡರು.

ಇಷ್ಟೆಲ್ಲ ಉನ್ನತಿಗೇರಿದ್ದರೂ ಪಂಚಾಕ್ಷರಿಗವಯಿಗಳಿಗೆ ಮಾತ್ರ ಹಿಂದುಸ್ತಾನಿ ಸಂಗೀತದಲ್ಲಿ ತಾವು ಸಾಧಿಸಬೇಕಾದುದು ಇನ್ನೂ ಇದೆ ಎಂದೇ ಅನ್ನಿಸತೊಡಗಿತು. ಹೀಗಾಗಿ ಕೆಲವು ಕಾಲ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಆಗ ಸಂಗೀತಗಾರರಿಂದ ತುಂಬಿ ತುಳುಕುತ್ತಿತ್ತು. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಅನೇಕ ಸಂಗೀತಗಾರರು ಇಲ್ಲಿ ನೆಲೆಸಿದ್ದರು. ಸವಾಯಿಗಂಧರ್ವರ ಶಿಷ್ಯ ಕಾಗಲಕರಬುವಾ, ಗಾಯಕರಾದ ಉಮಾಮಹೇಶ್ವರಬುವಾ, ಉತ್ತರಕರಬುವಾ, ಬಾಬೂರಾವ ರಾಣೆ, ಹಾರ್ಮೋನಿಯಂ ಶಿಕ್ಷಕರಾದ ರಾಜವಾಡೆಬುವಾ, ಗೋವಿಂದರಾವ ಗಾಯಕವಾಡ, ವಿಟ್ಠಲರಾವ ಕೋರಗಾಂವಕರ ಮೊದಲಾದವರಿದ್ದರು. ಶಿವರಾಮಬುವಾ ವಝೆ ಎಂಬ ಅಪ್ರತಿಮ ಗಾಯಕ ಕೂಡ ಆಗ ಬೆಳಗಾವಿಯಲ್ಲಿಯೇ ನೆಲೆಸಿದ್ದರು. ಇವರೆಲ್ಲರಿಗೂ ಕಳಶಪ್ರಾಯರಾಗಿ ರಾಮಕೃಷ್ಣಬುವಾ ವಝೆ ಬೆಳಗಾವಿಯಲ್ಲಿದ್ದರು. ಇಂಥ ನಗರಕ್ಕೆ ಪಂಚಾಕ್ಷರಿ ಗವಾಯಿಗಳು ಕಲಿಯಲು ಬರುವ ವ್ಯವಸ್ಥೆ ಆಯಿತು. ನಾಗನೂರು ಶಿವಬಸವಸ್ವಾಮಿಗಳ ಶ್ರೀಮಠದಲ್ಲಿ ಪಂಚಾಕ್ಷರಿಗವಾಯಿಗಳ ವಾಸ್ತವ್ಯದ ವ್ಯವಸ್ಥೆಯಾಯಿತು. ಗ್ವಾಲಿಯರ್ ಘರಾಣೆಯ ಅಧ್ವರ್ಯು ಎನಿಸಿದ ಪಂ.ರಾಮಕೃಷ್ಣಬುವಾ ವಝೆಯವರಲ್ಲಿ ಹಾಗೂ ಪ್ರೌಢ ದರ್ಜೆಯ ಗಾಯಕರೆನಿಸಿದ ಬಾಬೂರಾವ ರಾಣೆಯವರಲ್ಲಿ ಪಂಚಾಕ್ಷರಿಗವಾಯಿಗಳು ಕೆಲವು ಕಾಲ ಸಂಗೀತಾಧ್ಯಯನ ಮಾಡಿದರು.

ಪಂಚಾಕ್ಷರಿಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮೀಸಲಾಯಿತು. ಒಂದು ಜನ್ಮದಲ್ಲಿ ಯಾರೂ ಪೂರ್ತಿಯಾಗಿ ಸಂಗೀತ ಕಲಿಯುವುದು ಸಾಧ್ಯವಿಲ್ಲವೆಂದು ಅವರು ಧೃಡವಾಗಿ ನಂಬಿದ್ದರು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಪೂರ್ತಿಕಲಿತು ಬಿಡಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿತ್ತು. ಹೀಗಾಗಿ ಅವರು ಸುರೇಶಬಾಬು ಮಾನೆಯವರಲ್ಲಿಯೂ ಸಂಗೀತ ಕಲಿತರು.ಇದಿಷ್ಟೇ ಸಾಲದೆಂಬಂತೆ ವಾದನಗಳ ಕಡೆಗೂ ವಾಲಿದರು. ಬಳ್ಳಾರಿ ರಾಘವಾಚಾರ್ಯರಲ್ಲಿ ಪಿಟೀಲು ನುಡಿಸುವದನ್ನು ಕಲಿತರು.

ವಾದನವನ್ನು ಕಲಿಯಲು ಪಂಚಾಕ್ಷರಿಗವಾಯಿಗಳಿಗೆ ಸೂಚಿಸಿದವರು ಹಾನಗಲ್ಲ ಕುಮಾರಸ್ವಾಮಿಗಳೇ! ಒಮ್ಮೆ ಅವರು ಹೇಳಿದರು-ನೀನು ಈಗಾಗಲೇ ಉಭಯಗಾನ ವಿಶಾರದನೆನಿಸಿರುವೆ. ಇವುಗಳ ಜೊತೆಗೆ ವಾದನದಲ್ಲಿಯೂ ಒಂದಿಷ್ಟು ಸಾಧಿಸು.’ ಅಂದಿನಿಂದ ಅವರು ವಾದನಕಲೆಯತ್ತಲೂ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಪಿಟೀಲು, ಹಾರ್ಮೋನಿಯಂ, ತಬಲಾ ನುಡಿಸುವುದನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸತೊಡಗಿದರು. ತಬಲಾ ಕಲಿಯುವ ಬಗೆಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಆದರೆ ತಬಲಾವಾದನವನ್ನು ಕಲಿಸುವ ಗುರು ದೊರೆಯಬೇಕಲ್ಲ! ಆಗ ಬೆಳಗಾವಿಯಲ್ಲಿ ಶಹಾಪೂರ ಮಲ್ಲೇಶಪ್ಪನೆಂಬುವವರು ಶ್ರೇಷ್ಠ ತಬಲಾವಾದಕರೆಂದು ಹೆಸರುವಾಸಿಯಾಗಿದ್ದರು. ತಮ್ಮ ದಿನನಿತ್ಯದ ಸಂಗೀತ ಪಾಠ ನಡೆಯುವಾಗ ಗವಾಯಿಗಳ ಶಿಷ್ಯರಲ್ಲಿ ಒಬ್ಬರಾದ ಶ್ರೀ ಶಿವಯ್ಯನವರು ತಬಲಾ ಸಾಥಿ ನೀಡುತ್ತಿದ್ದರು. ಗವಾಯಿಗಳು ಅವರನ್ನೇ ಬೆಳಗಾವಿಗೆ ಕಳುಹಿಸಿ ಶಹಾಪುರದ ಮಲ್ಲೇಶಪ್ಪನವರಲ್ಲಿ ತಬಲಾವಾದನ ಕಲಿಯುವಂತೆ ಕಳುಹಿಸಿದರು. ಜೇಕಿನಕಟ್ಟೆಯ ಶಿವಯ್ಯನವರು ವ್ಯವಸ್ಥಿತವಾಗಿ ತಬಲಾ ಕಲಿತುಬಂದ ನಂತರ ಪಂಚಾಕ್ಷರಿಗವಯಿಗಳು ಅವನನ್ನ ತಮ್ಮ ಗುರುವೆಂದು ಭಾವಿಸಿ ತಬಲಾವಾದನವನ್ನು ಅಧ್ಯಯನ ಮಾಡಿದರು. ತಮ್ಮ ಶಿಷ್ಯನನ್ನೇ ಗುರುವೆಂದು ಭಾವಿಸುವ ಹೃದಯವಂತಿಕೆ ಸಂಗೀತಗಾರರಲ್ಲಿ ಕಂಡು ಬರುವುದು ವಿರಳವೇ ಸರಿ!

ಪಂಚಾಕ್ಷರಿಗಳು ತಮ್ಮ ತಬಲಾವಾದನದಲ್ಲಿಯೂ ವಿಶಿಷ್ಟತೆಯನ್ನು ಮೆರೆಯುತ್ತಿದ್ದು, ಎಲ್ಲರೂ ಬಲಗೈಯಿಂದ ತಬಲಾ ನುಡಿಸಿದರೆ,ಇವರು ಎಡಗೈಯಿಂದ ನುಡಿಸುತ್ತಿದ್ದರು. ಬಲಗೈ ಡಗ್ಗಾ ನುಡಿಸುತ್ತಿತ್ತು. ಸಾಮಾನ್ಯವಾಗಿ ಬಲಗೈಯನ್ನು ಸಂಗೀತಗಾರರು ಜತನವಾಗಿರಿಸಿ ಕೊಳ್ಳುತ್ತಾರೆ. ಆ ಕೈ ತಂಬೂರಿ ಮೀಟಲು, ಹಾರ್ಮೋನಿಯಂನ ಸ್ವರಗಳನ್ನು ನುಡಿಸಲು, ಪಿಟೀಲಿನ ಕಮಾನು ತೀಡಲು ಪ್ರಯೋಜನ ಕಾರಿಯಾಗುತ್ತದೆ. ಆದರೆ, ತಬಲಾವಾದನದಲ್ಲಿಯೂ ಬಲಗೈಯನ್ನೇ ಪ್ರಧಾನವಾಗಿ ಬಳಸಿದರೆ, ತಬಲಾವಾದನದಲ್ಲಿ ಹೆಚ್ಚಿನ ಮಾತ್ರೆಗಳು ತಬಲಾದ ಮೇಲೆಯೇ ನುಡಿಸಲ್ಪಡುವುದರಿಂದ ಅದಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಪಂಚಾಕ್ಷರಿಗವಾಯಿಗಳು ಎಡಗೈಯಿಂದ ತಬಲಾ ನುಡಿಸುವುದನ್ನು ರೂಢಿಸಿಕೊಂಡರು. ಪಂಚಾಕ್ಷರಿಗವಾಯಿಗಳ ಸಾಧನ ಎಂಥಹದ್ದೆಂದರೆ, ಅವರು ಕೆಲವೇ ದಿನಗಳಲ್ಲಿ ತಬಲಾ,ಪಿಟೀಲು, ಹಾರ್ಮೊನಿಯಂ, ಪಖಾವಜ್, ಸಾರಂಗಿ, ದಿಲ್‌ರುಬಾ, ಕೊಳಲು, ಹಾಯಿವಾದನಗಳನ್ನು ನುಡಿಸುವಲ್ಲಿ ನಿಷ್ಣಾತರೆನಿಸಿದರು.

ಆಗ ಪಂಚಾಕ್ಷರಿ ಗವಾಯಿಗಳಿಗೆ ಸುಮಾರು ಐವತ್ತು ಜನ ಶಿಷ್ಯರಿದ್ದರು. ಅವರಲ್ಲಿ ಕೆಲವರು ಸಂಸಾರಿಯಾಗುವ ತಯಾರಿಯಲ್ಲಿದ್ದವರು.ಮತ್ತು ಇನ್ನು ಕೆಲವರು ಆಗಲೇ ಸಂಸಾರಿಯಾದವರು. ಶಿವಯೋಗಮಂದಿರವು ವೀರಶೈವ ಮಠಾಧೀಶರಾಗುವವರಿಗೆ ಯೋಗ್ಯ ಶಿಕ್ಷಣ ನೀಡುವ ಕೇಂದ್ರವಾದ್ದರಿಂದ ಅಲ್ಲಿ ಸಂಸಾರಸ್ಥರಿಗೆ ತಂಗಲು ಅವಕಾಶವಿರಲಿಲ್ಲ. ಅಲ್ಲದೆ ಶಿವಯೋಗಮಂದಿರದಲ್ಲಿದ್ದು ಪಂಚಾಕ್ಷರಿಗವಾಯಿಗಳು ಸಂಗೀತಪಾಠ ಮಾಡುವುದು ಕೆಲವರಿಗೆ ಸರಿ ಬರಲಿಲ್ಲ.ಕೆಲವರು ಹಾನಗಲ್ಲ ಕುಮಾರಸ್ವಾಮಿಗಳವರೆಗೂ ದೂರನ್ನು ಒಯ್ದರು. ಈ ಸಂಗತಿ ಅವರನ್ನು ಚಿಂತೆಗೀಡುಮಾಡಿತು. ಇದುವರೆಗೂ ಮಗನಂತೆ ಜೋಪಾನ ಮಾಡಿದ ಪೂಚಾಕ್ಷರಿಯನ್ನು ಇದ್ದಕ್ಕಿದ್ದ ಹಾಗೆ ಶಿವಯೋಗಮಂದಿರದಿಂದ ಹೊರಗೆ ಕಳಿಸುವುದು ಮಾನಸಿಕವಾಗಿ ಸಹಿಸಲಸಾಧ್ಯವಾದ ವಿಷಯವಾಗಿತ್ತು. ಆದರೆ, ಶಿವಯೋಗಮಂದಿರದ ವಟುಗಳು ನೀಡಿದ ದೂರಿನಲ್ಲಿಯೂ ತಥ್ಯವಿತ್ತು. ಇದು ಹಾನಗಲ್ಲ ಕುಮಾರಸ್ವಾಮಿಗಳಿಗೆ ಧರ್ಮಸಂಕಟದ ವಿಷಯವಾಗಿತ್ತು. ಕೊನೆಗೆ ಅವರು ಪಂಚಾಕ್ಷರಿಗವಾಯಿಗಳನ್ನು ಹಾರೈಸಿ ಬೀಳ್ಕೊಡುವ ನಿರ್ಧಾರಕ್ಕೆ ಬಂದರು. ಒಂದು ದಿನ ಪಂಚಾಕ್ಷರಿಗವಾಯಿಗಳನ್ನು ಕರೆದು ಹೇಳಿದರು- ‘ಪಂಚಾಕ್ಷರಿ, ನೀನು ಕೇವಲ ಕೆಲವರಿಗೆ ಸೀಮಿತವಾಗಬಾರದು. ನಿನ್ನ ಸಂಗೀತ ಲೋಕಾರ್ಪಣವಾಗಬೇಕು. ನೀನು ಸಮಾಜದ ಮಗನಾದ್ದರಿಂದ ಸಮಸ್ತ ಸಮಾಜಕ್ಕೂ ನಿನ್ನ ಸಂಗೀತ ಸಲ್ಲತಕ್ಕದ್ದು. ಆದ್ದರಿಂದ ನೀನು ನಿನ್ನ ಶಿಷ್ಯರೊಂದಿಗೆ ಸಂಗೀತ ಯಾತ್ರೆಯನ್ನು ಪ್ರಾರಂಭಿಸು. ಯಾವುದಕ್ಕೂ ಧೃತಿಗೆಡುವ ಕಾರಣವಿಲ್ಲ. ನಿನ್ನ ಬೆಂಬಲಕ್ಕೆ ನಾವಿದ್ದೇವೆ.’

ಓರ್ವ ಅಂಧ ಕಲಾವಿದ, ಜಗತ್ತನ್ನೇ ನೋಡದೆ, ಕುಮಾರಸ್ವಾಮಿಗಳ ಅಕ್ಕರೆಯಲ್ಲಿ ಬೆಳೆದ ಕೂಸು. ಇದ್ದಕ್ಕಿದ್ದ ಹಾಗೆ ಸಮಾಜದ ದಾರುಣ ಹೊಡೆತಕ್ಕೆ ತೆರೆದುಕೊಳ್ಳುವುದು ಕಲ್ಪಿಸಿಕೊಳ್ಳಲಾರದ ಸಂಗತಿಯಾಗಿತ್ತು. ಶಿವಯೋಗಮಂದಿರದಲ್ಲಿಯೇ ಉಳಿಸಿಕೊಳ್ಳುವಂತೆ ಗುರುಗಳನ್ನು ಪರಿಪರಿಯಾಗಿ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಆದರೆ, ಅದು ಅನಿವಾರ್ಯವೂ ಆಗಿತ್ತು, ಪಂಚಾಕ್ಷರಿಗವಾಯಿಗಳು ಕುಮಾರಸ್ವಾಮಿಗಳ ಆಶೀರ್ವಾದದ ಅಕ್ಷಯನಿಧಿಯೊಂದಿಗೆ ತಮ್ಮ ಶಿಷ್ಯರನ್ನು ಕಟ್ಟಿಕೊಂಡು ಶಿವಯೋಗಮಂದಿರದಿಂದ ಹೊರಬಿದ್ದರು.

ಹಾನಗಲ್ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿಯನ್ನು ಬೀಳ್ಕೊಡುವಾಗ ಮಾರ್ಗದರ್ಶನ ಪರವಾದ ಕೆಲವು ಮಾತುಗಳನ್ನು ಹೇಳಿದರು. ಸಂಗೀತವನ್ನು ಸಮಾಜ ಸೇವೆಯ ಮಂತ್ರವನ್ನಾಗಿ ಉಪಯೋಗಿಸುವಂತೆಯೂ, ಸರ್ವಧರ್ಮದ ವಿದ್ಯಾರ್ಥಿಗಳಿಗೆ ಅದರಲ್ಲೂ ಅಂಧ ಮತ್ತು ವಿಕಲಾಂಗ ಮಕ್ಕಳಿಗೆ ಅಕ್ಕರತೆಯಿಂದ ಸಂಗೀತವನ್ನು ಕಲಿಸುವಂತೆಯೂ ಉಪದೇಶಿಸಿದರು. ಸಮಾಜಕಲ್ಯಾಣಕ್ಕಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮಗಳಿಗೆ ಹಣ ಕೇಳದಿರುವಂತೆ ಸೂಚಿಸಿದರು. ‘ಇಷ್ಟೇ ಹಣವನ್ನು ಕೊಡಬೇಕೆಂದು ಕರಾರು ಹಾಕಬೇಡ, ನಿನಗೆ ಹಣದ ಅಡಚಣೆಯಿದ್ದಾಗ ನನ್ನನ್ನು ನೆನಪಿಸಿಕೋ. ನಿನ್ನ ಸದ್ಭಕ್ತರ ನೆರವಿನಿಂದ, ಅವರ ಸಹಾಯ ಸಹಕಾರದಿಂದ ಸಂಗೀತ ಶಾಲೆಯನ್ನು ನಡೆಸು ಕುಮಾರಸ್ವಾಮಿಗಳ ಈ ಮಾತಿಗೆ ಪಂಚಾಕ್ಷರಿಗವಾಯಿಗಳು ಪ್ರತಿಯಾಗಿ ಏನನ್ನೂ ಹೇಳದೇ, ಅವರ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸುವುದಾಗಿ ವಚನವಿತ್ತರು. ಮತ್ತು ತಾವಿತ್ತ ವಚನದಂತೆ ನಡೆದುಕೊಂಡರು.

ಪಂಚಾಕ್ಷರಿ ಗವಾಯಿಗಳು ಮೊದಲಿನಿಂದಲೂ ರಂಗಭೂಮಿಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡವರು, ನಾಟಕಗಳ ಬಗೆಗೆ ವಿಶೇಷ ಪ್ರೀತಿಯಿದ್ದವರು, ನಾಟಕಗಳ ಮೂಲಕವೇ ಹಿಂದುಸ್ತಾನಿ ಸಂಗೀತದ ಒಳತಿರುಳನ್ನು ಅರಿಯಲು ಪ್ರಯತ್ನಿಸಿದವರು. ಲಿಂಗದಳ್ಳಿಯಲ್ಲಿ ಗವಾಯಿಗಳ ಸಂಗೀತಶಾಲೆ ಬೀಡು ಬಿಟ್ಟಾಗ ನಾಟಕ ಕಂಪನಿಯೊಂದನ್ನು ಪ್ರಾರಂಭಿಸುವ ವಿಚಾರ ಸುಳಿಯಿತು. ಲಿಂಗದಳ್ಳಿಯ ಭಕ್ತರು. ಕಲಾಪ್ರೇಮಿಗಳು, ಎಲ್ಲ ಬಗೆಯ ಸಹಾಯವನ್ನೂ ನೀಡಲು ಸಿದ್ಧರಾದರು. ಇದಕ್ಕೆ ಹಾನಗಲ್ಲ ಕುಮಾರಸ್ವಾಮಿಗಳ ಕೃಪಾಶೀರ್ವಾದವೂ ದೊರೆಯಿತು. ಹೀಗೆ ಪಂಚಾಕ್ಷರಿಗವಯಿಗಳ ನೇತೃತ್ವದಲ್ಲಿ ‘ಶ್ರೀ ಮಳೇಮಲ್ಲೇಶ್ವರ ಸಂಗೀತ ನಾಟಕ ಮಂಡಳಿ’ ಉದಯಿಸಿತು.

ಪ್ರಾರಂಭದಲ್ಲಿ ನಾಟಕ ಕಂಪನಿಗೆ ಒಳ್ಳೆಯ ಉತ್ತೇಜನ ದೊರೆಯಿತು. ಆಗಿನ ನಾಟಕಗಳಲ್ಲಿ ಸಂಗೀತಕ್ಕೆ ಒಳ್ಳೆಯ ಮಹತ್ವವಿದ್ದುದರಿಂದ, ಗವಾಯಿಗಳ ಕಂಪನಿಯಲ್ಲಿ ಒಳ್ಳೆಯ ಸಂಗೀತಗಾರರಿದ್ದುದರಿಂದ ನಾಟಕಗಳು ಆರ್ಥಿಕವಾಗಿಯೂ ಯಶಸ್ವಿಯಾದುವು.ಗವಾಯಿಗಳ ಕಂಪನಿಯು ಡಾ.ಪುಟ್ಟರಾಜ ಗವಯಿಗಳು ರಚಿಸಿದ ನಾಟಕಗಳನ್ನೇ ಹೆಚ್ಚಾಗಿ ಆಡುತ್ತಿತ್ತು. ಗವಾಯಿಗಳ ಕಂಪನಿಯು ಅಧ್ಯಾತ್ಮಿಕ ಮಹತ್ವವುಳ್ಳ ನಾಟಕಗಳೆಡೆಗೆ ಹೆಚ್ಚಿನ ಮಹತ್ವ ನೀಡಿತು. ಗವಾಯಿಗಳ ಕಂಪನಿಯಲ್ಲಿ ಸ್ತ್ರೀಯರಿಗೆ ಅವಕಾಶವಿರಲಿಲ್ಲ, ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ಕಂಪನಿಗೆ ಪ್ರಾರಂಭದಲ್ಲಿ ಒಳ್ಳೆಯ ಆದಾಯ ಪ್ರಾಪ್ತವಾದರೂ ಕುರವತ್ತಿ ಕ್ಯಾಂಪಿನಲ್ಲಿರುವಾಗ ಪರಿಕರಗಳನ್ನು ಒತ್ತೆಯಿಡುವ ಪ್ರಸಂಗ ಬಂತು. ಬೇರೆ ಕಂಪನಿಗಳು ಭರ್ಜರಿ ಸೆಟ್ಟುಗಳೊಂದಿಗೆ ನಾಟಕಗಳನ್ನು ಪ್ರದರ್ಶಿಸುತ್ತಿರುವಾಗ ಅವುಗಳೆಡಗೆ ಜನತೆ ಆಕರ್ಷಿತವಾಗುವುದು ಸಾಮಾನ್ಯವಾಗಿತ್ತು. ಗವಾಯಿಗಳ ಕಂಪನಿಯಲ್ಲಿ ಅಭಿನಯ ಹಾಗೂ ಸಂಗೀತವೇ ಪ್ರಧಾನವಾದ ಕಾರಣದಿಂದ ಭರ್ಜರಿ ಸೆಟ್ಟುಗಳಿಗೆ ಮಹತ್ವವಿರಲಿಲ್ಲ. ಕಂಪನಿಗಾದ ನಷ್ಟವನ್ನು ಗವಾಯಿಗಳು ಸಂಗೀತ ಕಚೇರಿಗಳಲ್ಲಿ ಹಾಡಿ ತುಂಬಿಕೊಟ್ಟರು. ಒತ್ತೆಯಿಟ್ಟ ಪರಿಕರಗಳನ್ನು ಬಿಡಿಸಿಕೊಂಡರು. ಅಲ್ಲಿಂದ ಮುಂದೆ ಅವರು ನಾಟಕದ ಉಸಾಬರಿ ಸಾಕೆಂದು ಬಿಟ್ಟುಬಿಟ್ಟರು. ಮತ್ತೆ ತಮ್ಮ ಸಾಧನೆಯನ್ನು ಸಂಗೀತದಲ್ಲಿಯೇ ಕೇಂದ್ರೀಕರಿಸಿದರು.

ನರಗುಂದದ ನಾಗರಿಕರು ಗವಾಯಿಗಳಿಗೆ ಮತ್ತೊಮ್ಮೆ ನಾಟಕ ಕಂಪನಿಯನ್ನು ಸ್ಥಾಪಿಸುವಂತೆ ಒತ್ತಾಯಿಸತೊಡಗಿದರು. ಗವಾಯಿಗಳಿಗೆ ನಾಟಕ ಕಂಪನಿ ಸ್ಥಾಪಿಸುವ ಮನಸ್ಸು ಎಳ್ಳಷ್ಟೂ ಇರಲಿಲ್ಲ. ಆದರೆ, ನರಗುಂದದ ಜನರ ಒತ್ತಾಯಕ್ಕೆ ಅವರು ಮಣಿಯಲೇಬೇಕಾಯಿತು.ಈ ಕಂಪನಿಯ ಸ್ಥಾಪನೆಯಲ್ಲಿ ನರಗುಂದದ ನಾಗಭೂಷಣ ಶ್ರೀಗಳು ಮಹತ್ತರ ಪಾತ್ರವನ್ನು ವಹಿಸಿದರು. ಕಂಪನಿಯ ಮೊದಲ ನಾಟಕವಾಗಿ ಪುಟ್ಟರಾಜ ಗವಾಯಿಗಳು ಬರೆದ ‘ಶ್ರೀ ಸಿದ್ಧರಾಮೇಶ್ವರ’ ನಾಟಕವನ್ನು 1940ರ ವಿಜಯ ದಶಮಿಯಂದು ಪ್ರಯೋಗಿಸಲಾಯಿತು.

ಪಂಚಾಕ್ಷರಿಗವಾಯಿಗಳ ಕಂಪನಿಯಲ್ಲಿ ಗದಿಗೆಯ್ಯ ಬೀಳಗಿ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ದೊಡ್ಡಬಸವಾರ್ಯ ಆರಿಬೆಂಚಿ, ಚೆನ್ನಬಸವಯ್ಯ ನರೇಗಲ್ ಮೊದಲಾದವರು ತಮ್ಮ ಸಮರ್ಥ ಅಭಿನಯ ಹಾಗೂ ಸುಮಧುರ ಸಂಗೀತದಿಂದ ನಾಟಕದ ಯಶಸ್ಸಿಗೆ ಕಾರಣರಾದರು. ಸ್ವತಃ ಪಂಚಾಕ್ಷರಿ ಗವಾಯಿಗಳು ತಬಲಾ ಹಾಗೂ ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ನುಡಿಸಿ ಹೆಚ್ಚಿನ ಮೆರಗು ತುಂಬುತ್ತಿದ್ದರು. ನಾಟಕ ಎಷ್ಟು ಸೊಗಸಾಗಿತ್ತೆಂದರೆ, ಜನ ಮತ್ತೆ ಮತ್ತೆ ನಾಟಕ ನೋಡಿದರು. ನಾಟಕ ಕಂಪನಿಯಿಂದಾಗಿ ಗವಾಯಿಗಳು ಋಣ ಮುಕ್ತರಾದರು.

ಪಂಚಾಕ್ಷರಿ ಗವಾಯಿಗಳ ವಿದ್ವತ್ತನ್ನು ಮನ್ನಿಸಿ ಅನೇಕರು ಅವರಿಗೆ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ‘ಉಭಯಗಾನ ವಿಶಾರದ’ ಎಂಬುದು ಅವರ ಜನಪ್ರಿಯ ಬಿರುದು. ಈ ಬಿರುದನ್ನು ಹಾನಗಲ್ ಕುಮಾರಸ್ವಾಮಿಗಳೇ ಪಂಚಾಕ್ಷರಿ ಗವಾಯಿಗಳಿಗೆ ಕರುಣಿಸಿದರು. ಈ ಬಿರುದನ್ನು ದಯಪಾಲಿಸಿದ್ದರ ಹಿಂದೆ ಒಂದು ಕತೆಯಿದೆ. ಕೆಲವರು ಗವಯಗಳ ವಿಷಯದಲ್ಲಿ ವಿನಾಕಾರಣ ಮಾತ್ಸರ್ಯವನ್ನು ತಾಳಿದ್ದರು. ಅವರಿಗೆ ದೊರೆಯುತ್ತಿದ್ದ ಮನ್ನಣೆ, ಗೌರವಗಳನ್ನು ಕಂಡು ಸಹಿಸದ ಕೆಲವರು ಇಲ್ಲಸಲ್ಲದ ಟೀಕೆಗಳನ್ನು ಪ್ರಾರಂಭಿಸಿದರು.

ಇದನ್ನು ತೊಡೆಯುವುದಕ್ಕಾಗಿ ಹಾನಗಲ್ ಕುಮಾರಸ್ವಾಮಿಗಳು 1915ರಲ್ಲಿ ಒಂದು ಸಂಗೀತ ವಿದ್ವದ್ ಗೋಷ್ಠಿಯನ್ನು ಕರೆದರು. ಇದಕ್ಕಾಗಿ ನಾಡಿನ ಶ್ರೇಷ್ಠ ಸಂಗೀತಗಾರರೆಲ್ಲ ಆಮಂತ್ರಿತರಾದರು. ಮೂರುದಿನಗಳ ಕಾಲ ನಡೆದ ಈ ಗೋಷ್ಠಿಯಲ್ಲಿ ಸಂಗೀತದ ಅತ್ಯಂತ ಜಟಿಲ ವಿಷಯಗಳನ್ನು ಚರ್ಚಿಸಲಾಯಿತು. ಎಲ್ಲದಕ್ಕೂ ಗವಾಯಿಗಳು ಸಮರ್ಥ ಉತ್ತರಗಳನ್ನು ದಯಪಾಲಿಸಿದರು. ಗೋಷ್ಠಿಯ ಕೊನೆಗೆ ಗವಾಯಿಗಳು ಸಂಗೀತದ ಅತ್ಯಂತ ಕ್ಲಿಷ್ಟಕರ ರಾಗಗಳನ್ನು, ಸ್ವರಮಾಲಿಕೆಗಳನ್ನು ಮೂರುದಿನವೂ ಪ್ರಸ್ತುತ ಪಡಿಸಿದರು. ಗೋಷ್ಠಿಯ ಕೊನೆಗೆ ಎಲ್ಲರೂ ಗವಾಯಿಗಳ ಪಾಂಡಿತ್ಯವನ್ನು ಹೊಗಳಿದರು. ಮತ್ಸರ ಪಟ್ಟು ಅಪಪ್ರಚಾರ ಮಾಡುತ್ತಿದ್ದವರಿಗೆ ಮುಖಭಂಗವಾಯಿತು. ಇದೇ ಸಂದರ್ಭದಲ್ಲಿ ಅವರಿಗೆ ‘ ಉಭಯಗಾನ ವಿಶಾರದ’ ಎಂಬ ಬಿರುದನ್ನು ದಯಪಾಲಿಸಲಾಯಿತು. ‘ಸಂಗೀತ ರತ್ನ’, ‘ಸಂಗೀತ ಸಾಮ್ರಾಟ’, ‘ಗಾನಯೋಗಿ’ ಭೂ ಗಂಧರ್ವಚಂದ್ರ’ ಮೊದಲಾದ ಬಿರುದುಗಳಿಂದ ಗವಾಯಿಗಳು ಅಲಂಕೃತರಾದರು.

1929ರಲ್ಲಿ ವಿಜಾಪುರದ ಸಿದ್ದೇಶ್ವರ ಸಂಸ್ಥೆಯು ಗವಾಯಿಗಳಿಗೆ ‘ಗಾನಕಲಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು. 1935ರಲ್ಲಿ ರಂಭಾಪುರಿ ಪೀಠಾಧೀಶ್ವರ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರು ಸಂಗೀತ ಸಾಗರ’ ಎಂಬ ಬಿರುದನ್ನಿತ್ತು ಗೌರವಿಸಿದರು.1938ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರೈವ ಮಹಾಸಮ್ಮೇಳನದಲ್ಲಿ ಗಾಯನಾಚಾರ್ಯ’ ಎಂಬ ಬಿರುದನ್ನಿತ್ತು ಗೌರವಿಸಲಾಯಿತು. 1939ರಲ್ಲಿ ಹೊಂಬಳದ ಜ್ಞಾನವರ್ಧಕ ವಾಚನಾಲಯ ಮಂಡಳಿಯು ಗವಾಯಿಗಳಿಗೆ ಸಂಗೀತ ಸುಧಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು.

ಹೀಗೆ ಅನೇಕ ಮಾನಸಮ್ಮಾನಗಳನ್ನು ಪಡೆದ ಗವಾಯಿಗಳು ಸಂಗೀತ ಸಾಧನೆ ಮತ್ತು ಬೋಧನೆಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಂಗೀತ ಅವರ ಜೀವನದ ಉಸಿರಾಗಿತ್ತು. ಈ ಪ್ರಸಂಗವನ್ನು ಗಮನಿಸಿ,ಗವಾಯಿಗಳಿಗೆ ನೆಚ್ಚಿನ ಕೆಲವು ವಸ್ತುಗಳಿದ್ದವು. ಅವುಗಳಲ್ಲಿ ದೊಡ್ಡ ಗಾತ್ರದ ತಾಮ್ರದ ತಂಬಿಗೆಯೂ ಒಂದು. ಅವರು ಸಂಚಾರ ದಲ್ಲಿದ್ದಾಗಲೂ ಕೂಡ ಅದವರ ಜೊತೆ ಇರಲೇ ಬೇಕಿತ್ತು. ಒಮ್ಮೆ ಯಾರದೋ ಅಚಾತುರ್ಯದಿಂದ ಈ ತಂಬಿಗೆ ಕಳೆದು ಹೋಯಿತು. ಗವಯಿಗಳು ತೀರ ಹಳಹಳಿಸಿದರು. ಅನೇಕ ವರ್ಷಗಳಿಂದ ಜೊತೆಗಿದ್ದ ತಂಬಿಗೆ ಇಲ್ಲವಾದುದು ಗವಾಯಿಗಳ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿತು. ಗುರುಗಳ ಈ ಅವಸ್ಥೆಯನ್ನು ಕಂಡು ಶಿಷ್ಯರು ವಾರಪೂರ್ತಿ ಅದಕ್ಕಾಗಿ ಹುಡುಕಾಟ ನಡೆಸಿದರು. ತಂಬಿಗೆ ಪತ್ತೆಯಾಗಲಿಲ್ಲ. ಆದರೂ ಮನದ ಮೂಲೆಯೊಂದರಲ್ಲಿ ಅದಿಲ್ಲವೆಂಬ ಭಾವ ಮನೆಮಾಡಿಕೊಂಡೇ ಇತ್ತು.

ಕೆಲವು ದಿನಗಳ ತರುವಾಯ ಒಮ್ಮ ಗುರುಗಳು ತಮ್ಮ ಸಂಚಾರವನ್ನು ಮುಗಿಸಿಕೊಂಡು ಬರುವಾಗ ಇದ್ದಕ್ಕಿದ್ದ ಹಾಗೆ ಒಂದು ನಾದ ಅವರನ್ನು ತಡೆದು ನಿಲ್ಲಿಸಿತು. ಮತ್ತೊಮ್ಮೆ ಗಮನವಿಟ್ಟು ಆ ನಾದವನ್ನು ಆಲಿಸಿದರು. ಹೌದು ಅದು ತಮ್ಮ ತಂಬಿಗೆಯ ನಾದವೇ ಸಂಶಯವಿಲ್ಲ! ಕೂಡಲೇ ಶಿಷ್ಯರನ್ನು ಕರೆದು ಅದನ್ನು ತರುವಂತೆ ಹೇಳಿದರು. ಮನೆಯೊಂದರಲ್ಲಿ ಅಳುತ್ತಿದ್ದ ಮಗುವನ್ನು ರಮಿಸಲು ಓರ್ವ ಅಜ್ಜಿ ಗವಾಯಿಗಳ ತಂಬಿಗೆಯನ್ನು ಬಾರಿಸಿ ಆಟವಾಡಿಸುತ್ತಿದ್ದಳು. ಶಿಷ್ಯರು ಆ ತಂಬಿಗೆಯ ವಿಚಾರ ಹೇಳಲು ಅಜ್ಜಿ ಗವಾಯಿಗಳಲ್ಲಿಗೆ ಬಂದು ತಂಬಿಗೆಯನ್ನು ಒಪ್ಪಿಸಿ ಕ್ಷಮೆಯಾಚಿಸಿದಳು.

ಗವಾಯಿಗಳ ನಾದಗ್ರಹಣ ಶಕ್ತಿ ಇಷ್ಟೊಂದು ಸೂಕ್ಷ್ಮವಾಗಿತ್ತು.

ಸಂಗೀತವನ್ನೇ ಅವರು ಬದುಕಿದರು. ಬದುಕಿನ ಕೊನೆಯಕ್ಷಣದವರೆಗೂ ಸಂಗೀತಕ್ಕಾಗಿ ಅವರ ಜೀವನ ತುಡಿಯುತ್ತಲೇ ಇತ್ತು.1944ರಲ್ಲಿ ಮೃತ್ಯುಂಜಯ ಶ್ರೀಗಳ ಅಪ್ಪಣೆಯ ಮೇರೆಗೆ ಧಾರವಾಡ ಮುರುಘಾಮಠದಲ್ಲಿ ಶ್ರಾವಣ ಮಾಸದ ಸಂಗೀತ ಸೇವೆಯನ್ನು ಸಲ್ಲಿಸಿದರು. ಅಂದು ಮಿಯಾ ಮಲ್ದಾರ ರಾಗದಲ್ಲಿ ಕರೀಮ ನಾಮ ತೇರೋ’ ಬಡಾಖ್ಯಾಲ್ ಬಂದಿಶ್‌ನ್ನು ಹಾಗೂ ‘ಉಮಢಫುಮಢ ಘನ ಗರಜೆ’ ಬಂದಿಶ್ಯದಲ್ಲಿ ಛೋಟಾಖ್ಯಾಲ್‌ನ್ನು ಹಾಡಿದರು. ಅಲ್ಲಿಂದ ಬರುವಾಗ ಶ್ರೀಗಳಲ್ಲಿ ಅವರು ವಿನಂತಿಸಿ ಕೊಂಡರು ಈ ಜೀವನದಲ್ಲಿ ಇಷ್ಟು ಸಾಕು. ನನ್ನನ್ನು ತಮ್ಮ ಪಾದಗಳಲ್ಲಿ ಕರೆದುಕೊಳ್ಳಿ’ ಶ್ರೀಗಳು ಅವರ ಈ ಬೇಡಿಕೆಯಿಂದ ಗಂಭೀರರಾದರು ಮತ್ತು ಹೇಳಿದರು

‘ಗವಾಯಿಗಳೇ, ಕುಮಾರೇಶನ ಕರೆ ಇನ್ನೂ ಬಂದಿಲ್ಲ. ನೀವಿನ್ನೂ ಬಾಳಿ, ಸಂಗೀತವನ್ನು ಬೆಳಗಬೇಕಾದವರು

ಬಹುಶಃ ಅದೇ ಅವರ ಕೊನೆಯ ಸಂಗೀತ ಕಚೇರಿ,

ಗದುಗಿಗೆ ಬರುತ್ತಲೇ ನಾಟಕ ಕಂಪನಿಯೊಂದಿಗಿದ್ದ ಪುಟ್ಟರಾಜ ಗವಾಯಿಗಳನ್ನು ಕರೆಸಿದರು. ಅವರು ಬರುವುದರೊಳಗಾಗಿ ಮೃತ್ಯುಪತ್ರ ಸಿದ್ಧವಾಗಿತ್ತು. ವೀರೇಶ್ವರ ಪುಣ್ಯಾಶ್ರಮವನ್ನು ಪುಟ್ಟರಾಜ ಗವಾಯಿಗಳ ಹೆಸರಿಗೆ ವರ್ಗಾಯಿಸಿಯಾಗಿತ್ತು. ಎಲ್ಲವನ್ನೂ ಅವರಿಗೆ ತಿಳಿಸಿ ಹೇಳಿದರು.

ಗವಾಯಿಗಳು ತಮಗಿರುವ ಅನಾರೋಗ್ಯದಿಂದ ಹೊರಬರುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ್ದರು. ಡಾ.ಮುನ್ಶಿಯವರು ಶಸ್ತ್ರ ಚಿಕಿತ್ಸೆಯಾದರೆ ಗವಾಯಿಗಳು ಬದುಕುವರೆಂದರು. ಆದರೆ ಗವಾಯಿಗಳು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ತಮ್ಮ ಅವತಾರವನ್ನು ಸಮಾಪ್ತಿ ಮಾಡುವ ಸಂಕಲ್ಪ ಮಾಡಿಯಾಗಿತ್ತು. 1944, ಜೂನ್ 14ನೆಯ ದಿನ, ಪಂಚಾಕ್ಷರಿ ಗವಾಯಿಗಳು ಕುಮಾರೇಶ್ವರನಲ್ಲಿ ಲೀನವಾದರು.ಅವರ ಗಂಧರ್ವಗಾನ ಈಗಲೂ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೇಳಿ ಬರುತ್ತಲೇ ಇದೆ!

ಆಕರ ಗ್ರಂಥ : ಶಿವಯೋಗಮಂದಿರ ಶತ ಸಂವತ್ಸರ  ಸಂಪಾದಕರು ಡಾ. ಮೃತ್ಯುಂಜಯ ರುಮಾಲೆ

ಶಿವಯೋಗ ಶಾಖಾಮಂದಿರದಲ್ಲಿ ೧೯೧೪ರಲ್ಲಿ ಸ್ಥಾಪನೆಯಾದ ಸಂಗೀತಶಾಲೆಯು ಶಿವಯೋಗಮಂದಿರದ ಉದ್ದೇಶವನ್ನು ಮತ್ತು ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಆಶಯವನ್ನು ಪರಿಣಾಮಕಾರಿಯಾಗಿ ಪೂರೈಸಿದ ಅಂಗಸಂಸ್ಥೆಯಾಗಿದೆ. ಸಂಗೀತದಂಥ ಪ್ರಭಾವಪೂರಿತ ಅಂಶಗಳನ್ನುತನ್ನೊಂದಿಗಿರಿಸಿಕೊಂಡಿದ್ದ ಈ ಸಂಸ್ಥೆಯು ಲೋಕವಿಖ್ಯಾತವಾಗಿದ್ದು ಇದರ ಬಹುಮುಖ್ಯಶಕ್ತಿಯಾದರೆ ನಿಡಗುಂದಿಕೊಪ್ಪ ಶಾಖಾಮಠದಲ್ಲಿ ಸ್ಥಾಪನೆಯಾಗಿ, ಅಲ್ಲಿಯೇ ಸ್ಥಾಯಿಯಾಗಿ ಉಳಿಯದೇ ಸಂಚಾರಿಯಾಗಲು ಒಂದು ನೇತ್ಯಾತ್ಮಕ ಕಾರಣವೂ ಇದೆ. ಶಿವಯೋಗ, ಆಧ್ಯಾತ್ಮಸಾಧನೆ, ವಿರಕ್ತಿ, ತುಂಬು ವಿರ್ನಿಪ್ತತೆ, ಸಾಮುದಾಯಕ ತೊಡಗಿಸಿಕೊಳ್ಳುವಿಕೆಯಲ್ಲಿ ತೋರಿಸುವ ಸಮತೋಲನ- ‘ಇಂಥ ಅಂತರಂಗ ಸಾಧನೆಯ ಶಿವಯೋಗಮಂದಿರ ಕೇಂದ್ರದಲ್ಲಿ ವಿಲಾಸಿಗಳಿಗೆ ಪ್ರಿಯವಾದ ಸಂಗೀತದಂಥ ಅಭಿರುಚಿಯು ಎಂಬ ಅಭಿಪ್ರಾಯ ಮೂಡಿ ಬಂದಾಗ ಸಂಗೀತಶಾಲೆಯು ಸ್ಥಾಯಿಸಮಿತಿಯೊಂದನ್ನು ರಚಿಸಿಕೊಂಡು ಸಂಚಾರಿ ಸಂಗೀತಶಾಲೆಯನ್ನು ಪುನರ್ಸ್ಥಾಪಿಸಿಕೊಂಡಿತು.

ಗದಿಗೆಯ್ಯನು ತನ್ನ ಗುರುಗಳಾದ ಎಮ್ಮಿಗನೂರಮಠದ ಗದಿಗೆಯ್ಯನವರಿಂದ ಸಂಗೀತವನ್ನು ಕಲಿತು ಪಂಚಾಕ್ಷರಿ’ ನಾಮಕರಣಗೊಂಡು, ಪೂಜ್ಯ  ಹಾನಗಲ್ಲ ಕುಮಾರಸ್ವಾಮಿಗಳ ‘ಜೋಳಿಗೆ’ ಅಭಿವೃದ್ಧಿ ಕಂಡು ೧೯೦೮ ಬಾಗಲಕೋಟೆಯ ನಾಲ್ಕನೆಯ ಶ್ರೀ ಮದ್ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಪಾಲ್ಗೊಂಡು ‘ಗವಾಯಿ’ ಎಂಬ ಅಭಿಧಾನವನ್ನು ಹೊಂದಿ ಸಂಗೀತದ ಹೊಸಅಲೆಯನ್ನೇ ಹರಿಸಿದ ಕೀರ್ತಿ “ಪಂಚಾಕ್ಷರಿಗವಾಯಿ’ಗಳಿಗೆ ಸಲ್ಲುತ್ತದೆ. ೧೯೨೯ರಲ್ಲಿ ವಿಜಾಪುರ ಸಿದ್ದೇಶ್ವರ ಸಂಸ್ಥೆ ನೀಡಿದ ‘ಗಾನಕಲಾನಿಧಿ’, ೧೯೩೫ರಲ್ಲಿ ಬಾಳೇಹಳ್ಳಿಯ ರಂಭಾಪುರಿ ವೀರಸಿಂಹಾಸನ ಸಂಸ್ಥಾನದ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ನೀಡಿದ ‘ಸಂಗೀತಸಾಗರ’, ೧೯೩೮ರಲ್ಲಿ ಎಸ್. ಎಸ್. ಬಸವನಾಳರ ಅಧ್ಯಕ್ಷತೆಯಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಅವರಿಗೆ ಸಿಕ್ಕ ಗಾಯನಾಚಾರ್ಯ’, ಈ ಗೌರವ ಪುರಸ್ಕಾರಗಳು ಪಂಚಾಕ್ಷರಿ ಗವಾಯಿಗಳಿಗೆ ಲಭಿಸಿದ ಗೌರವಗಳಷ್ಟೇ ಅಲ್ಲ ; ಅವು ಕರ್ನಾಟಕ ಸಂಗೀತ ಚರಿತ್ರೆ ಹರಿದು ಬಂದ ಚಾರಿತ್ರಿಕ ಕಾಲಘಟ್ಟದ ಅಭಿಜ್ಞೆಗಳು ! ೧೯೪೪ರ ಜೂನ್ ೧೧ರಂದು ಲಿಂಗೈಕ್ಯರಾದ ಗವಾಯಿಗಳು ಜಾತ್ಯತೀತರಾಗಿ ಸಂಗೀತಜ್ಞಾನವುಂಟು ಮಾಡಿದ್ದು ಶಿವಯೋಗಮಂದಿರದ ಶ್ರೇಷ್ಠ ಉತ್ಪಾದನೆಗಳಲ್ಲಿ ಒಂದು ಎಂಬುದಕ್ಕೆ ನಿದರ್ಶನವಾಗಿದೆ.

ಸಂಗೀತಶಾಲೆಯ ಶಿಷ್ಯ ಬಳಗವೂ ಶ್ರೇಷ್ಟ ಮಟ್ಟದ್ದೇ ! ಪಂಚಾಕ್ಷರಿ ಗವಾಯಿಗಳ ಆಪ್ತ ಮತ್ತು ಪಟ್ಟದ ಶಿಷ್ಯರಲ್ಲಿ ಒಬ್ಬರಾದ ಪುಟ್ಟರಾಜ ಗವಾಯಿಗಳು ; ಅವರ ಸಂಗೀತ ಪರಂಪರೆಯನ್ನು ಗೌರವಾನ್ವಿತವಾಗಿಮುಂದುವರೆಸಿದವರು. ೩ ನೇ ಮಾಚ್ ೧೯೧೪ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನ್ಮ ತಾಳಿದ ಇವರು ಜನ್ಮಾಂಧರು. ತಮ್ಮ ಹತ್ತನೆಯ ವರ್ಷ ವಯಸ್ಸಿನಲ್ಲಿ ಶಿವಯೋಗಮಂದಿರ ಸಂಗೀತಶಾಲೆಯಲ್ಲಿ ಪ್ರವೇಶ ಪಡೆದು ತಮ್ಮ ಗುರುಗಳ ಕೃಪಾಪೋಷಣೆಯಲ್ಲಿ ಉತ್ತರಾದಿ, ದಕ್ಷಿಣಾದಿ ಸಂಗೀತ ವಿದ್ಯೆಗಳಲ್ಲಿ ನಿಷ್ಣಾತರಾದರು. ಪಂ. ರೇವಣಸಿದ್ದ ಶಾಸ್ತ್ರಿಗಳವರಿಂದ ಸಂಸ್ಕೃತ ಕಲಿತು ಸಾಹಿತ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಆಸಕ್ತಿ ಹೊಂದಿದರು. ಪಂಚಕಾವ್ಯಗಳು, ಶಾಕುಂತಲಾದಿ ನಾಟಕಗಳು, ಮೊದಲಾದ ಸಾಹಿತ್ಯಕೃತಿಗಳು ಕಂಠಸ್ಥವಾಗಿದ್ದವು. ರಾಜಶೇಖರವಿಳಾಸ ಮೊದಲಾದ ಕಾವ್ಯಗಳನ್ನು ಓದಿಸಿ, ಕೇಳಿ ಮನನ ಮಾಡಿಕೊಂಡಿದ್ದರು. ಅವರ ಧಾರಣಶಕ್ತಿ ಅದ್ಭುತವಾದುದು. ಸಂಗೀತ ಸಾಹಿತ್ಯಗಳಲ್ಲದೆ ಕವಿತ್ವವನ್ನು ಹೊಂದಿದ್ದ ಇವರು ಪಂಚಾಕ್ಷರಿ ಗವಾಯಿಗಳ ನಿಜವಾರಸುದಾರರು.

ಗದಿಗೆಪ್ಪ ಗವಾಯಿಗಳ (ಕಮತಗಿ) – ಪಂಚಾಕ್ಷರ ಗವಾಯಿಗಳ ಪ್ರೀತಿಯ ಶಿಷ್ಯರು, ದಕ್ಷಿಣಾದಿ -ಉತ್ತರಾದಿ ಸಂಗೀತಗಳೆರಡನ್ನು ಸಾಧಿಸಿದವರು. ಸ್ಥಾನಿಕ ಸಂಗೀತ ಶಾಲೆಯಲ್ಲಿದ್ದು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ತಮ್ಮ ಗುರುಗಳ ಕೃಪಾಶ್ರಯದಲ್ಲಿದ್ದು ಸಂಗೀತಕಲೆಯ ಪ್ರಸಾರಕ್ಕಾಗಿ ನಿರಪೇಕ್ಷರಾಗಿ ದುಡಿದ ಆದರ್ಶಸಂಗೀತಶಿಕ್ಷಕರು.

ಬಂಕಾಪುರದ ಶಂಕರರಾವ್ ದೀಕ್ಷಿತ – ತಮ್ಮ ಗುರುಗಳಿಂದ ದಕ್ಷಿಣಾದಿ ಉತ್ತರಾದಿ ಸಂಗೀತ ಶಿಕ್ಷಣ ಪಡೆದು ಆಕಾಶವಾಣಿ ಕಲಾವಿದರಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿ, ಸಂಗೀತ ಕಲಾರಾಧನೆಯನ್ನು ಮಾಡಿ ಗುರುವಿಗೂ ಮಂದಿರಕ್ಕೂ ಕೀರ್ತಿ ತಂದವರು.

 ಹಾಲಗಿ ಮರುಳ ಸದಾಶಿವಯ್ಯ – ಪಿಟೀಲು ವಾದಕರೂ ಕವಿಗಳೂ ಆಗಿದ್ದ ಇವರು ‘ಶಿವಯೋಗ ಮಂದಿರ’ ಕುರಿತು ‘ವರಮಠಾಧೀಶ’ ಮುದ್ರಿಕೆಯಲ್ಲಿ ಭಜನೆ ಪದಗಳನ್ನು ರಚಿಸಿದ್ದರು.ಹಾವೇರಿಯ ಹುಕ್ಕೇರಿ ಮಠದಲ್ಲಿ ಸಂಗೀತ ಶಿಕ್ಷಕರಾಗಿದ್ದರು.

ಲಕಮಾಪುರದ ಜಯದೇವ ಗವಾಯಿಗಳು ಹಿರೇಮಠ ಒಂಭತ್ತು ವರ್ಷಗಳವರೆಗೆ (೧೯೧೫-೧೯೨೪) ಶಿವಯೋಗಮಂದಿರ ಸಂಗೀತಶಾಲೆಯಲ್ಲಿ ತಮ್ಮ ಗುರುಗಳಿಂದ ದಕ್ಷಿಣಾದಿ ಸಂಗೀತದಲ್ಲಿ ನೈಪುಣ್ಯಹೊಂದಿದ್ದರು. ವೀಣೆ, ಸಿತಾರ, ಪಿಟೀಲು, ಜಲತರಂಗ ಮೊದಲಾದ ವಾದ್ಯಗಳಲ್ಲಿಪರಿಣಿತರಾಗಿದ್ದ ಇವರು ಕೆಲವು ವರ್ಷ ಬ್ಯಾಡಗಿಯಲ್ಲಿಯೂ ನಂತರ ಹಾವೇರಿಯಲ್ಲಿಯೂ ಸಂಗೀತ ಶಿಕ್ಷಕರಾಗಿ ನೂರಾರು ಜನ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದರು. ಇವರ ಶಿಷ್ಯರಾಗಿದ್ದ ಗುರುಶಾಂತಯ್ಯ ಗವಾಯಿಗಳು ಮೈಸೂರಿನಲ್ಲಿ ಆಸ್ಥಾನ ಸಂಗೀತ ಕಛೇರಿ ನಡೆಸಿ ಬಹುಮಾನಿತರಾಗಿದ್ದರು. ೧೯೩೬ ರಿಂದ ೧೯೫೬ರ ವರೆಗೆ ದಾವಣಗೆರೆಯಲ್ಲಿ ಶಾರದಾ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಸಂಗೀತ ವಿದ್ಯಾದಾನವನ್ನು ಮುಂದುವರೆಸಿದರು.

ಮರೋಳ ಹಿರೇಮಠದ ಸದಾಶಿವಾಚಾರ್ಯ ಗವಾಯಿಗಳು – ಪಂಚಾಕ್ಷರಿ ಗವಾಯಿಗಳವರಲ್ಲಿಹತ್ತು ವರ್ಷ ಸಂಗೀತಾಭ್ಯಾಸ ಕೈಗೊಂಡು ಸಂಗೀತಕಲೆಯನ್ನು ಸಾಧಿಸಿದವರು. ತಮ್ಮ ಗುರುಗಳಿಂದ ‘ಗಾಯನಕುಶಲ’ ರೆಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರಶೈವ ಮಹಾಸಭೆಯಲ್ಲಿ ಮನ್ನಣೆ, ಎಡೆಹಳ್ಳಿಯ ಮಲ್ಲಪ್ಪ ದೇಸಾಯ ಮತ್ತು ಸೊನ್ನದ ದೇಸಾಯಿಯವರ ಮನೆಗಳಲ್ಲಿ ಸಂಗೀತ ಗೋಷ್ಠಿ ನಡೆಸಿದ್ದು ಪ್ರಮುಖ ಘಟನೆಗಳು, ಶಿರಿಯಾಳಕೊಪ್ಪದಲ್ಲಿ ಸಂಗೀತಶಾಲೆ ಸಂಗೀತ ಶಾಲೆಯ ಬಳಗ ಸ್ಥಾಪಿಸಿ, ಉತ್ತರಾದಿ-ದಕ್ಷಿಣಾದಿ ಸಂಗೀತ ಶಾಸ್ತ್ರಿಗಳನ್ನು ಶೋಧಿಸಿ ವಿಷ್ಣು ನಾರಾಯಣ, ಭಾತಖಂಡೆ ಮತ್ತು ನಾರದಮುನಿ ‘ಸ್ವರಪ್ರಸ್ತಾರಸಾಗರ’ ಮುಂತಾದ ಗ್ರಂಥಗಳ ಸಾರವನ್ನು ಕುರಿತ ಕನ್ನಡದಲ್ಲಿ ಸಂಗ್ರಹ ಕೃತಿರಚಿಸಿದ್ದರು.

ಆನ್ನದಾನಯ್ಯಸ್ವಾಮಿ ಹಿರೇಮಠ – ತಮ್ಮ ಗುರುಗಳಿಂದ ಕರ್ನಾಟಕೀ ಸಂಗೀತವನ್ನು ಕಲಿತವರು ಸಾಹಿತ್ಯ ಮತ್ತು ಕೀರ್ತನೆಗಳಲ್ಲಿ ನೈಪುಣ್ಯ ಪಡೆದಿದ್ದ ಇವರು ಗದಗಿನ ‘ವೀರಶೈವ ಪುಣ್ಯಾಶ್ರಮ ಸಂಗೀತ ವಿದ್ಯಾಲಯ’ದ ವ್ಯವಸ್ಥಾಪಕರಾಗಿ ಪುಟ್ಟರಾಜಗವಾಯಿಗಳವರಿಗೆ ನೆರವಾಗಿದ್ದರು. ಗವಾಯಿಗಳ ನಾಟಕ ಮಂಡಳಿಯನ್ನು ದಕ್ಷತೆಯಿಂದ ನಡೆಯಿಸಿಕೊಂಡು ಬಂದಿದ್ದರು.

ಹುಬ್ಬಳ್ಳಿಯ ಶಿವಲಿಂಗಯ್ಯ ಗವಾಯಿಗಳು – ಪಂಚಾಕ್ಷರಿ ಗವಾಯಿಗಳಲ್ಲಿ ದಕ್ಷಿಣಾದಿ ಸಂಗೀತವನ್ನುಅಭ್ಯಾಸ ಮಾಡಿದ್ದು, ಇವರು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರಮಠದ ಸಂಗೀತವಿದ್ಯಾಲಯದಲ್ಲಿಕೆಲವು ವರ್ಷ ಸಂಗೀತ ಅಧ್ಯಾಪಕರಾಗಿದ್ದರು. ಶಿವಶರಣರ ವಚನಗಳಿಗೆ ರಾಗ ಪ್ರಸ್ತಾರ ಹಾಕಿ ಸುಕುಮಾರ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.

ರುದ್ರಪ್ಪ ಗವಾಯಿ ಕುರ್ತುಕೋಟಿ ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕ ಸಂಗೀತಾಭ್ಯಾಸ ಮಾಡಿ ನಿಪುಣರಾಗಿದ್ದರು. ಶಿವಯೋಗಮಂದಿರಕ್ಕೆ ಸಂಬಂಧಿಸಿದಂತೆ ಭಜನೆ, ಲಾವಣಿಗಳನ್ನು ರಚಿಸಿ,ಮಂದಿರದ ಜಾತ್ರೆಯಲ್ಲಿ ಕ್ರಿಯಾಶೀಲರಾಗಿರುತ್ತಿದ್ದರು.

ಬಸವರಾಜ ರಾಜಗುರು ಪಂಚಾಕ್ಷರ ಗವಾಯಿಗಳ ಮತ್ತೊಬ್ಬ ಪರಮಾಪ್ತ ಶಿಷ್ಯ.ಆನುವಂಶಿಕವಾಗಿದ್ದ ಸಂಗೀತಕಲೆಯನ್ನು ವಿಕಾಸಗೊಳಿಸಲೆಂದು ಎಳೆಯ ವಯಸ್ಸಿನಲ್ಲಿಯೇ ತಂದೆಯ ಪ್ರೇರಣೆಯಂತೆ ಶಿವಯೋಗಮಂದಿರದ ಸಂಗೀತಶಾಲೆಯಲ್ಲಿ ಪ್ರವೇಶ ಪಡೆದು ಪಂಚಾಕ್ಷರ ಗವಾಯಿಗಳ ನೆಚ್ಚಿನ ಶಿಷ್ಯರಾದರು. ಹನ್ನೆರಡು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ಮೊದಲು ದಕ್ಷಿಣಾದಿಯಲ್ಲಿಆನಂತರ ಉತ್ತರಾದಿಯಲ್ಲಿ ಅಧಿಕಾರ ಪಡೆದರು. ‘ಗಾಯನಕೋಕಿಲ’, ‘ಸಂಗೀತಸುಧಾರಕ’, ‘ಸಂಗೀತ ರತ್ನ’ ಇವರಿಗೆ ಲಭಿಸಿದ ಪ್ರಮುಖ ಪುರಸ್ಕಾರಗಳು.

ಹಾವೇರಿಯ ಮೃತ್ಯುಂಜಯ ಪುರಾಣಿಕಮಠ- ಗುರುಗಳಲ್ಲಿ ಹನ್ನೆರಡು ವರ್ಷಗಳ ಕಾಲ ಉತ್ತರಾದಿ ಸಂಗೀತಶಿಕ್ಷಣ ಪಡೆದು ನಿಷ್ಣಾತರಾದರು. ಹಾವೇರಿಯಲ್ಲಿ ಸಂಗೀತಶಾಲೆ ಆರಂಭಿಸಿ, ಶರಣರ ವಚನಗಳನ್ನುಸಂಗೀತಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದರು.

ಬಸವರಾಜ ಪುರಾಣಿಕ – ಗುರುಗಳಲ್ಲಿ ಹತ್ತು ವರ್ಷಗಳ ಸಂಗೀತಾಭ್ಯಾಸ, ಗುರುಬಸವಾರ್ಯಹಿರೇಮಠ – ೧೯೨೦ ರಿಂದ ೧೯೩೦ ರ ವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತಾಭ್ಯಾಸ.ಗ್ವಾಲಿಯರ್ ಫರಾಣೆಯ ನೀಲಕಂಠ ಬುವಾ ಅವರಲ್ಲಿ ಶಿಕ್ಷಣ ಪಡೆದು ಭಾರತದ ಪ್ರಮುಖ ಪಟ್ಟಣಗಳಲ್ಲಿಸಂಗೀತ ಕಛೇರಿಗಳನ್ನು ನಡೆಸಿ ‘ಸಂಗೀತ ರತ್ನ’, ‘ಸಂಗೀತ ವಿಶಾರದ’ ಪುರಸ್ಕಾರ ಪಡೆದರು. ಇವರೂ ಶರಣರ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದೂ ಅಲ್ಲದೇ ಉತ್ತರಾದಿ ಸಂಗೀತದಲ್ಲಿ ಜನಪ್ರಿಯ ಅನೇಕ ರಾಗಗಳನ್ನು ಸಂಗೀತ ವಿದ್ಯೆ’ ಕೃತಿ ರಚಿಸಿ ನಿರೂಪಿಸಿದ್ದಾರೆ.

ಸಿದ್ದರಾಮ ಜಂಬಲದಿನ್ನಿ ಪಂಚಾಕ್ಷರ ಗವಾಯಿಗಳಲ್ಲಿ ಎಂಟು ವರ್ಷ ಸಂಗೀತಾಭ್ಯಾಸ ಮಾಡಿದವರು. ಹಲವು ವರ್ಷ ಅಲ್ಲಿಯೇ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದವರು. ತಬಲಾ ಹಾರ್ಮೋನಿಯಂ ವಾದ್ಯಗಳಲ್ಲಿ ನಿಪುಣರಾಗಿದ್ದ ಇವರು ನಿಜಗುಣಶಿವಯೋಗಿಗಳ, ಶರೀಫರ ತತ್ತ್ವಪದಗಳನ್ನು ವಚನಗಳನ್ನು ಗಾಯನ ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ಚಿತ್ತರಗಿ ಗಂಗಾಧರ ಶಾಸ್ತ್ರಿಗಳು – “ಕೀರ್ತನಾಚಾರ್ಯ’ ವಿಶೇಷಣದಲ್ಲಿಯೇ ಗುರುತಿಸಲ್ಪಡುತ್ತಿದ್ದ ಕನ್ನಡಭಾಷೆಗಳಲ್ಲಿ ಅಭ್ಯಾಸ ಮಾಡಿ, ಪಂಚಾಕ್ಷರಿ ಗವಾಯಿಗಳವರಲ್ಲಿ ಶಿಷ್ಯತ್ವ ಪಡೆದು ಉತ್ತರಾದಿ ಸಂಗೀತವನ್ನು ಸಾಹಿತ್ಯವನ್ನು ಪಡೆದ ಕೀರ್ತನ-ಪುರಾಣ- ಪ್ರವಚನಗಳಲ್ಲಿ ನೈಪುಣ್ಯ ಸಂಪಾದಿಸಿದರು.

 ಚಿತ್ತರಗಿಯ ಮುಪ್ಪಯ್ಯಸ್ವಾಮಿ-ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರವೇ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡ ಕಲಾವಂತರು. ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ದಲ್ಲಿ ಬಲಗೈಯಂತೇ ಇದ್ದವರು.

ಹಾವೇರಿಯ ಚಂದ್ರಶೇಖರಸ್ವಾಮಿ ಪುರಾಣಿಕಮಠ – ಎಂಟು ವರ್ಷ ಶಿವಯೋಗಮಂದಿರದ ಸಂಗೀತಶಾಲೆಯಲ್ಲಿ ಅಭ್ಯಾಸ ಮಾಡಿದ್ದ ಇವರು, ಇಂಪಾದ ಕಂಠಕ್ಕೆ ಅನುರೂಪವಾದ ಶಾಸ್ತ್ರಾಭ್ಯಾಸ ಮಾಡಿದವರು.ಭೈರಾಪುರದ ರುದ್ರಮುನಿ ಸಾಲಿಮಠ ಮಂದಿರದ ಪಾಠಶಾಲೆಯಲ್ಲಿ ಉತ್ತರಾದಿ ಶಾಸ್ತ್ರೀಯ ಸಂಗೀತವನ್ನು ಕಲಿತವರು. ಹಾರ್ಮೋನಿಯಂ, ಪಿಟೀಲು ವಾದ್ಯಗಳಲ್ಲಿ ನೈಪುಣ್ಯ ಪಡೆದವರು. ಗಮಕ ಕಲೆಯಲ್ಲಿ ನಿಷ್ಣಾತರಾಗಿದ್ದ ಇವರು, ವಚನಗಳಲ್ಲಿ ಭಾವಗೀತೆಗಳ ಧಾಟಿಯಲ್ಲಿ ಪ್ರಯೋಗಾತ್ಮಕವಾಗಿ ಹಾಡಿ ಹೆಸರು ಮಾಡಿದ್ದರು.

ಜಾಲಿಬೆಂಚಿಯ ದೊಡ್ಡಬಸವಾರ್ಯ ೧೯೩೮ ರಿಂದ ೧೯೪೮ ವರೆಗೆ ಪಂಚಾಕ್ಷರ ಗವಾಯಿಗಳವರಲ್ಲಿ ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದವರು. ಮಧುರ ಕಂಠದ ಇವರು ಪ್ರಸಿದ್ಧ ಪಿಟೀಲು ವಾದಕರು ; ವಚನಗಾಯನದಲ್ಲಿ ಹೆಸರು ಮಾಡಿದ್ದ ಇವರು, ಬಾಗಲಕೋಟೆಯ ‘ಶಾರದಾ ಸಂಗೀತವಿದ್ಯಾಲಯ ಸಂಚಾಲಕರು ಗಂಗಾಧರ ಸ್ವಾಮಿಗವಾಯಿ ಜುಕ್ತಿಮಠ ಪಂಚಾಕ್ಷರ ಗವಾಯಿಗಳಿಂದ ಉತ್ತರಾದಿಸಂಗೀತವನ್ನು ಅಭ್ಯಾಸ ಮಾಡಿ, ವಿಜಾಪುರದ ಬಾಲಕಿಯರ ಸರಕಾರಿ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಉತ್ಸಾಹಿ ಕಾರ್ಯಕರ್ತರು ಆಗಿದ್ದ ಇವರು ‘ಕರ್ನಾಟಕ ಪ್ರಾದೇಶಿಕ ಸಂಗೀತ ಸೇವಾಸಮಿತಿ’ ಸಂಸ್ಥೆಯ ಸಂಚಾಲಕರಾಗಿ ಕೆಲವು ಯೋಜನಾಬದ್ಧ ಕಾರ್ಯಗಳನ್ನು ಮಾಡಿದರು.

ದೇವಗಿರಿಯ ಶಿವಮೂರ್ತಿ ಶಾಸ್ತ್ರಿಗಳು ಪಂಚಾಕ್ಷರ ಗವಾಯಿಗಳಿಂದ ಉತ್ತರಾದಿ ಗಾಯನ ಸಂಗೀತ ಮತ್ತು ಹಾರ್ಮೋನಿಯಂ ವಾದನ ಸಂಗೀತದಲ್ಲಿ ಸಾಧನೆ ಮಾಡಿದರು. ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಘ’ ದಲ್ಲಿ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.

ಮುರುಡಯ್ಯಸ್ವಾಮಿ ಗವಾಯಿ ಹಿರೇಮಠ ಗಾಯನ, ಹಾರ್ಮೋನಿಯಂ, ನಾಟ್ಯಕಲೆಯಲ್ಲಿಯೂ, ಬಸವಲಿಂಗಪ್ಪ ಗವಾಯಿ ಹೂಗಾರ – ಸಂಗೀತ ವಾದ್ಯಗಳಲ್ಲಿ ನೈಪುಣ್ಯ ಪಡೆದಿದ್ದರು.

ಆರ್. ವಿ. ಶೇಷಾದ್ರಿ ಗವಾಯಿಗಳು – ೧೯೪೦ ರಿಂದ ಪಂಚಾಕ್ಷರ ಗವಾಯಿಗಳ ಶಿಷ್ಯರಾಗಿದ್ದಇವರು, ಹಾರ್ಮೊನಿಯಂ, ತಬಲಾ, ಗಾಯನ ಕಲೆಗಳಲ್ಲಿ ಹೆಸರು ಮಾಡಿದ್ದರು. ಮೈಸೂರು, ಬೆಂಗಳೂರು ಭಾಗಗಳಲ್ಲಿ ವಚನ ಗಾಯನ ಕಲೆಗಳಲ್ಲಿ ಹೆಸರು ಮಾಡಿದ್ದರು. ಮೈಸೂರು, ಬೆಂಗಳೂರು ಭಾಗಗಳಲ್ಲಿ ವಚನ ಗಾಯನ ಪ್ರಚಾರಮಾಡಿದ್ದರು. ಬೆಂಗಳೂರು ನಗರದಲ್ಲಿ ತಮ್ಮ ಗುರುಗಳಾದ ‘ಪಂಚಾಕ್ಷರ ಗವಾಯಿಗಳವರ ಕೃಪಾಪೋಷಿತ ಶ್ರೀ ಅರವಿಂದ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಸಂಗೀತ ವಿದ್ಯೆಯ ಪ್ರಚಾರವನ್ನು ಕೈಗೊಂಡರು. ‘ಗಾಯನಗಂಗಾ’ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿ ಅದರ ಮುಖಾಂತರ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ವಿದ್ಯೆಯ ಬಗ್ಗೆ ಅಭಿರುಚಿಯುಂಟಾಗುವಂತೆ ಮಾಡಿದ್ದರು.

ರಂಗಪ್ಪ ಮಾಸ್ತರ ಗುಡೂರು ಪಂಚಾಕ್ಷರ ಗವಾಯಿಗಳಲ್ಲಿ ಒಂಭತ್ತು ವರ್ಷಗಳವರೆಗೆ (೧೯೩೫-೧೯೪೪) ಶಿಕ್ಷಣ ಪಡೆದು ಶಹನಾಯಿ, ಕೊಳಲು, ಸುಂದರಿ, ಕ್ಲಾರೋನೆಟ್, ಹಾರ್ಮೋನಿಯಂ ಮತ್ತು ತಬಲಾ ವಾದ್ಯಗಳಲ್ಲಿ ನಿಪುಣತೆಯನ್ನು ಸಂಪಾದಿಸಿದರು. ಅವರ ಶಿಷ್ಯರಾದ ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ನಾಡಿನಾದ್ಯಂತ ಸಂಚರಿಸಿ ಅನೇಕ ಕಲಾಪ್ರೇಮಿಗಳಿಂದ ಪ್ರಶಸ್ತಿಸಂಪಾದಿಸಿದರು. ಗುಡೂರಿನಲ್ಲಿ (ಹುನಗುಂದ ತಾಲೂಕು) ಸಂಗೀತಶಾಲೆಯನ್ನು ಸ್ಥಾಪಿಸಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಉದ್ದೇಶವನ್ನು ಮುಂದುವರೆಸಿದರು.

ಮಲ್ಕಾಪುರದ ದೊಡ್ಡಬಸವಾರ್ಯಗವಾಯಿಗಳು ಪಂಚಾಕ್ಷರ ಗವಾಯಿಗಳಲ್ಲಿ ಒಂಭತ್ತುವರ್ಷಗಳವರೆಗೆ ಸಂಗೀತ ಶಿಕ್ಷಣ ಪಡೆದ ಇವರು ಪುಟ್ಟರಾಜ ಗವಾಯಿಗಳಿಂದ ಹಾರ್ಮೋನಿಯಂ ಮತ್ತು ತಬಲಾ ವಾದ್ಯಗಳ ಅಭ್ಯಾಸ ಮಾಡಿದರು. ಆದವಾನಿ ಪ್ರಾಂತದಲ್ಲಿ ಸಂಗೀತ ಪ್ರಚಾರ ಮಾಡಿದರು.

ಪಂಚಾಕ್ಷರಸ್ವಾಮಿ ಪಂಚಾಕ್ಷರ ಮಠ ಮತ್ತಿಗಟ್ಟಿ – ಸಂಗೀತ ವಾತಾರಣದಲ್ಲಿಯೇ ಹುಟ್ಟಿ ಬೆಳೆದ ಇವರು ತಂದೆ ಮತ್ತು ಚಿಕ್ಕಪ್ಪಂದಿರ ಪ್ರೇರಣೆಯಿಂದ ೧೯೩೮ ರಿಂದ ಪಂಚಾಕ್ಷರ ಗವಾಯಿಗಳವರ ಆಶ್ರಯ ಪಡೆದರು. ಏಕನಿಷ್ಠೆ ಸತತ ಪರಿಶ್ರಮಗಳಿಗೆ ಹೆಸರು ಮಾಡಿದ್ದ ಇವರು ಪುಟ್ಟರಾಜ ಗವಾಯಿಗಳಲ್ಲಿಯೂ ಏಳು ವರ್ಷಗಳವರೆಗೆ ಉತ್ತರಾದಿ ಸಂಗೀತ ಅಭ್ಯಾಸ ಮಾಡಿ, ಗುರುಗಳ ಅಪ್ಪಣೆಯಂತೆ ಸಂಗೀತ ಶಾಲೆಯ ಶಿಕ್ಷಕರಾಗಿದ್ದರು.

ಪ್ರಭಯ್ಯ ಅಡಿವೆಯ್ಯ ಸಾಲಿಮಠ, ದಾಟನಾಳ ೧೯೩೮ ರಿಂದ ಪಂಚಾಕ್ಷರ ಗವಾಯಿಗಳಲ್ಲಿ ಉತ್ತರಾದಿ ಸಂಗೀತವನ್ನು ಅಭ್ಯಾಸಿಸಿದ ಇವರು, ಪುಣೆಯ ‘ಅಖಿಲಭಾರತ ಗಾಂಧರ್ವ ಮಹಾಮಂಡಲದ “ಸಂಗೀತ ವಿಶಾರದ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಕರಿಯಪ್ಪ ಶಿವಪ್ಪ ಮಲ್ಲಾಪುರ ಇವರು ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ಪಂಚಾಕ್ಷರ ಗವಾಯಿಗಳ ಶಿಷ್ಯತ್ವವನ್ನು ಪಡೆದು ತಮ್ಮ ತಾತನ ಚರ್ಮವಾದ್ಯದ ಪರಿಣತಿಯಲ್ಲಿ ನಿಪುಣರಾದರು. ಅನುವಂಶಿಕ ಸಂಸ್ಕಾರದ ಜೊತೆಗೆ ಗವಾಯಿಗಳ ಶಿಕ್ಷಣವೂ ಗಟ್ಟಿಗೊಳಿಸಿದ್ದರ ಪರಿಣಾಮವಾಗಿ ಕಾಶಿಯಲ್ಲಿ ಭಾರತದ ಸುಪ್ರಸಿದ್ಧ ತಬಲಾವಾದಕರಾಗಿದ್ದ ಅನೋಖಿಲಾಲ್ ಅವರಲ್ಲಿ ನಾಲ್ಕು ವರ್ಷ ವಾದನಕಲೆಯನ್ನು ಸುಧಾರಿಸಿಕೊಂಡರು.

ಕೊಟ್ಟೂರುಸ್ವಾಮಿ ಗವಾಯಿಗಳು, ಚಿಗಟೇರಿ-ಗವಾಯಿಗಳಲ್ಲಿ ಹತ್ತುವರ್ಷ ಗಾಯನ, ವಾದ್ಯ,ಜ್ಯೋತಿಷ್ಯವನ್ನು ಕುರಿತು, ‘ಪಂಚಾಕ್ಷರ ಸಂಗೀತ ವಿದ್ಯಾಲಯ ಸ್ಥಾಪನೆ ಬಳ್ಳಾರಿ ಭಾಗದಲ್ಲಿ ಸಂಗೀತದ ಅಭಿರುಚಿಯನ್ನುಂಟು ಮಾಡಿದರು.

ಸಿದ್ದೇಶಕುಮಾರ ತೆಲಗಿ-ಪಂಚಾಕ್ಷರ ಗವಾಯಿಗಳ ಪ್ರತಿಭಾವಂತ ಶಿಷ್ಯರಲ್ಲಿ ಒಬ್ಬರಾದ ಇವರು ತಮ್ಮ ಗುರುಗಳಲ್ಲಿ ಹತ್ತುವರ್ಷಗಳ ನಿರಂತರ ಈ ವಿದ್ಯೆಯ ಸಾಧನೆ ಮಾಡಿದ್ದರು. ಬಿ. ಮರಿಯಪ್ಪ,ರೋಣ-ಪ್ರಸಿದ್ಧ ಭಜಂತ್ರಿ ಮನೆತನದ ಇವರು, ತಮ್ಮ ಆನುವಂಶಿಕಕಲೆಯನ್ನು ಅಳವಡಿಸಿಕೊಂಡಿದ್ದರು. ಗವಾಯಿಗಳಲ್ಲಿ ಶಹನಾಯಿ, ಕೊಳಲು ವಾದ್ಯಗಳಲ್ಲಿ ಪರಿಣತಿಯಿತ್ತು ಪಂಚಾಕ್ಷರ ಗವಾಯಿಗಳ ನಿತ್ಯದ ಬೆಳಗಿನ ಶಿವಪೂಜೆಯ ವೇಳೆಯಲ್ಲಿ ಶಹನಾಯಿ, ಕೊಳಲುಗಳನ್ನು ಇಂಪಾಗಿಯೇ ನುಡಿಸುತ್ತಿದ್ದರು. ಗುರುವಿನ ಅನುಗ್ರಹವಾಗಿ ಸಾಕಷ್ಟು ಪಾಂಡಿತ್ಯ ಮತ್ತು ಕಲೆಯನ್ನು ಸಂಪಾದಿಸಿದ್ದರು. ಕೆಲವು ವರ್ಷಗಳ ಕಾಲ ಗುರುಗಳ ಸಂಗೀತ ವಿದ್ಯಾಲಯದಲ್ಲಿಯೆ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.

ಸಿದ್ದರಾಮಸ್ವಾಮಿ ಕೊರವಾರ-ಪಂಚಾಕ್ಷರ ಗವಾಯಿಗಳ ಕೃಪೆಯಲ್ಲಿಯೇ ಬೆಳೆದವರು ತಮ್ಮದೈವದತ್ತವಾದ ಪ್ರತಿಭೆಯನ್ನು ಪುಟ್ಟರಾಜ ಗವಾಯಿಗಳ ತಾರುಣ್ಯದಲ್ಲಿ ಮತ್ತಷ್ಟ ಸುಧಾರಿಸಿಕೊಂಡರು.ಎಲ್ಲಪ್ಪ ಅಮರಗೋಳ-ಕರ್ನಾಟಕದ ಪ್ರಸಿದ್ಧ ಶಹನಾಯಿ ವಾದನ ಪಟುಗಳಾಗಿ ಹೆಸರು ಮಾಡಿದ ಇವರು ಪಂಚಾಕ್ಷರಿ ಗವಾಯಿಗಳ ಮತ್ತು ಪುಟ್ಟರಾಜ ಗವಾಯಿಗಳಲ್ಲಿ ವಾದನಕಲೆಯಲ್ಲಿ ಪರಿಣಿತ ಪಡೆದರು. ಆನಂತರ ಕಾಶಿಗೆ ಹೋಗಿ ಭಾರತದ ಪ್ರಸಿದ್ಧ ಶಹನಾಯಿವಾದಕರಾಗಿದ್ದ ಉಸ್ತಾದ ಬಿಸ್ಮಿಲ್ಲಾಖಾನ್ ಅವರಲ್ಲಿಶಹನಾಯಿವಾದನ ಕಲೆಯನ್ನು ವಿಶೇಷವಾಗಿ ಅಭ್ಯಾಸ ಮಾಡಿದ್ದರು.

ಅರ್ಜುನಸಾ ವೆಂಕೋಸಾ ನಾಕೋಡ-೧೯೪೧ ರಿಂದ ೧೯೪೭ ರವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಕಿರಾಣಾ ಘರಾಣೆಯ ಶೈಲಿಯಲ್ಲಿ ಒಳ್ಳೆಯ ಸಂಗೀತಗಾರರೆಂದು ಹೆಸರು ಮಾಡಿದರು.

ಬಸವರಾಜ ತಾಳಕೇರಿ-ಚಿಕ್ಕಂದಿನಲ್ಲಿಯೇ ತನ್ನ ಸಂಗೀತದ ಆಸಕ್ತಿ-ಪ್ರತಿಭೆಯನ್ನು ತೋರಿಸಿದ್ದ ಇವರು ಮೃತ್ಯುಂಜಯಸ್ವಾಮಿ ಪುರಾಣಿಕಮಠ ಇವರ ನೆರವಿನಿಂದ ೧೯೪೧ರಲ್ಲಿ ಮಂದಿರದ ಸಂಗೀತ ಶಾಲೆಗೆ ಸೇರಿದರು.

ಸಂಗಮೇಶ್ವರ ಪಾಟೀಲ ಗೂಡೂರು-ಪಂಚಾಕ್ಷರ ಗವಾಯಿಗಳಲ್ಲಿ ಹತ್ತು ವರ್ಷ ಸಂಗೀತ, ವಾದ್ಯಶಿಕ್ಷಣ ಅಭ್ಯಾಸ ಮಾಡಿ ಆನಂತರ ಹೈದರಾಬಾದಿನ ‘ವಿವೇಕ ವರ್ಧಿನಿ ಸಂಗೀತಶಾಲೆ’ಯಲ್ಲಿ ಸಿತಾರ ಶಿಕ್ಷಕರಾಗಿದ್ದರು. ಚನ್ನಬಸವಯ್ಯ ಜೇಕಿನಕಟ್ಟೆ, ಬೊಮ್ಮನ ಹಳ್ಳಿ-ಪಂಚಾಕ್ಷರ ಗವಾಯಿಗಳ ನೆಚ್ಚಿನ ತಬಲಾ ವಾದನದ ಶಿಷ್ಯರಲ್ಲಿ ಇವರೂ ಒಬ್ಬರು. ತಮ್ಮ ಗುರುಗಳ ಸೇವೆಯನ್ನು ಮಾಡುತ್ತಲೇ ತಬಲ ವಾದನ ಕಲೆಯನ್ನು ಸತತ ಹನ್ನೆರಡು ವರ್ಷಗಳವರೆಗೆ ಸಾಧಿಸಿದರು. ಪ್ರತಿವರ್ಷದ ಶಿವರಾತ್ರಿಯ ಕಾಲಕ್ಕೆ ಮಂದಿರದ ಸಂಗೀತ ಕಾರ್ಯಕ್ರಮಗಳಲ್ಲಿ ತಪ್ಪದೇ ಸೇವೆ ಸಲ್ಲಿಸುತ್ತಿದ್ದ ಇವರು ಒಬ್ಬ ಸಾತ್ವಿಕ ಕಲಾವಂತರು.

ಪಂಪಾಪತಿಸ್ವಾಮಿ ಗವಾಯಿ ಒಡೆಯರ ಗೋವಿಂದವಾಡ-ಪಂಚಾಕ್ಷರ ಗವಾಯಿಗಳಲ್ಲಿ ಹಿಂದೂಸ್ಥಾನಿ ಸಂಗೀತಾಭ್ಯಾಸ ಮಾಡಿ ತಮ್ಮ ಶಿಷ್ಯವೃತ್ತಿಯನ್ನು ಪುಟ್ಟರಾಜಗಳವರಲ್ಲಿಯೂ ಮುಂದುವರೆಸಿದರು.

ನಂಜುಂಡಯ್ಯ ಗಿರಿಯಾಪುರ-ಪಂಚಾಕ್ಷರ ಗವಾಯಿಗಳಲ್ಲಿ ತಬಲವಾದನ ಕುರಿತು ಚಿಕ್ಕಮಂಗಳೂರಿನಲ್ಲಿದ್ದುಕೊಂಡು ಮಲೆನಾಡು ಪರಿಸರದಲ್ಲಿ ಸಂಗೀತಕಲೆಯನ್ನು ಬೆಳೆಸಿದರು. ಬಸವಲಿಂಗ ಭೀಮರಾವ್ ಪೂಜಾರಿ-ಗವಾಯಿಗಳ ಸನ್ನಿಧಿಯಲ್ಲಿದ್ದು ತಮ್ಮ ಕಲಾಭಿರುಚಿಯಂತೆ ಹಿಂದೂಸ್ಥಾನೀ-ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ, ತಮ್ಮ ಗುರುಗಳ ಅಪ್ಪಣೆಯಂತೆ ನಾಡಿನಾದ್ಯಂತ ಸಂಚರಿಸಿ ಸಂಗೀತ ಪ್ರಸಾರ ಕಾರ್ಯವನ್ನು ಕೈಗೊಂಡರು. ಆಲಮೋಲದಲ್ಲಿ ಬಸವೇಶ್ವರ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಮುಂದಿನ ಜನಾಂಗಕ್ಕೆ ಸಂಗೀತಾಭಿರುಚಿಯನ್ನು ಬೆಳೆಸಿದರು.

ವೆಂಕಪ್ಪ ರೋಣ-ಪಂಚಾಕ್ಷರ ಗವಾಯಿಗಳ ಬದುಕಿನ ಕೊನೆಯ ಘಟ್ಟದಲ್ಲಿ ಸಂಗೀತನಾಟ್ಯಕಲೆಗಳ ಅಧ್ಯಯನ ಮಾಡಿದವರು. ೧೯೪೩ ರಲ್ಲಿ ಕೊಪ್ಪಳದಲ್ಲಿ ಗರೂಡ ಸದಾಶಿವರಾಯರೊಂದಿಗೆ ‘ಸತ್ಯಸಂಕಲ್ಪ’ ನಾಟಕದಲ್ಲಿ ಹಿರಣ್ಯಗರ್ಭಾಚಾರ್ಯರ ಪಾತ್ರವನ್ನು ಅಭಿನಯಿಸದಾಗ ಇವರ ಹಾಸ್ಯಾಭಿನಯವನ್ನು ಬಹುವಾಗಿ ಮೆಚ್ಚಿದ ಗರೂಡರು ‘ನಟಶ್ರೇಷ್ಠ’ ಎಂದು ಉದ್ಗಾರ ತೆಗೆದು ಪ್ರೋತ್ಸಾಹಿಸಿದ್ದರು. ಪಂಚಾಕ್ಷರ ಗವಾಯಿಗಳ ಸಮ್ಮುಖದಲ್ಲಿಯೇ ಆದ ಈ ಅನುಭವ ಗುರು-ಶಿಷ್ಯರಿಬ್ಬರಿಗೂ ಆನಂದ ಅತಿರೇಕವನ್ನುಂಟು ಮಾಡಿತ್ತು

ವೀರಭದ್ರಯ್ಯ ರಾಜಶೇಖರಯ್ಯ ಶಾಸ್ತ್ರಿ ಹಿರೇಮಠ-ತಮ್ಮ ಗುರುಗಳಿಂದ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದು ನಿಪುಣರಾಗಿದ್ದರು.

ಚನ್ನಬಸರಾಯನ ಬಸವಾರ್ಯ ಚಿಕ್ಕಮಠ, ಕಿರೇಸೂರು-೧೯೩೯–೧೯೪೪ ರವರೆಗೆ ಪಂಚಾಕ್ಷರ ಗವಾಯಿಗಳಲ್ಲಿ ತಬಲಾವಾದನ ಕುರಿತು ನಾಡಿನ ಶ್ರೇಷ್ಠ ತಬಲಾವಾದಕರೆಂದು ಹೆಸರು ಮಾಡಿದ್ದರು.

ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಸಂಗೀತಕ್ಕೆ ಮಹತ್ವ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಧರ್ಮಪ್ರಸಾರಕ್ಕೆ ಇದು ಒಂದು ಪ್ರಮುಖ ಅಂಗವಾಗುತ್ತದೆ ಎಂಬುದರಲ್ಲಿದೆ. ಶಿವಯೋಗಮಂದಿರ ಸ್ಥಾಪನೆಯಾದ ಕೆಲವೇ ತಿಂಗಳುಗಳಲ್ಲಿ ಸಂಗೀತ ಮತ್ತು ಶಿವಕೀರ್ತನೆಕಾರರು ಮಂದಿರದ ಒಂದು ಯೋಜನಾಬದ್ಧಕಾರ್ಯಕ್ರಮಗಳಲ್ಲಿ ಒಂದಾಗಬೇಕೆಂದು ಯೋಚಿಸಿದ್ದರು. ವಚನ, ಶಾಸ್ತ್ರ, ಆಗಮ, ಉಪನಿಷತ್ತು ಭಾಷ್ಯ,ಸಾಹಿತ್ಯ-ನೀತಿಶಾಸ್ತ್ರಿಗಳು ಸಂಗೀತದ ಮೂಲಕ ಸಮ್ಮಿಳಿತವಾದರೆ ಧರ್ಮಪ್ರಸಾರದ ಬಹುಮುಖ್ಯ ಕಾರ್ಯವಾಗುತ್ತದೆ ಎಂಬ ವಿಚಾರ ಮಾಡಿದ್ದು ಸಹಜವಾಗಿದೆ. ಆದ್ದರಿಂದ ಶಿವಯೋಗಮಂದಿರದಲ್ಲಿ ಶಿವಕೀರ್ತನಕಾರರನ್ನು ತರಬೇತಿಗೊಳಿಸಿ ಅವರಿಂದ ನಾಡಿನ ಮೂಲೆ ಮೂಲೆಗಳಲ್ಲಿಯೂ ಧಾರ್ಮಿಕ ಪ್ರಸಾರವಾಗಿ ಭಕ್ತಜನರ ಬದುಕನ್ನು ಹಸನುಮಾಡುವಂತೆ ಅಣಿಗೊಳಿಸುವುದು. ಶಿವಯೋಗಮಂದಿರದಲ್ಲಿಪ್ರಮುಖವಾಗಿ ತರಬೇತಿ ಪಡೆದ ಶಿವಕೀರ್ತನಕಾರರೆಂದರೆ, ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳು,ಮಲ್ಲಿಕಾರ್ಜುನ ಶಾಸ್ತ್ರಿಗಳು, ಶಿವಣಗಿ; ಬಸವಲಿಂಗ ಶಾಸ್ತ್ರಿಗಳು, ಮತ್ತಿಕಟ್ಟೆ; ಇಂದುಧರ ಶಾಸ್ತ್ರಿಗಳು;ಶ್ರೀಕಂಠಶಾಸ್ತ್ರಿಗಳು, ನಲವಡಿ; ಸದಾಶಿವಶಾಸ್ತ್ರಿಗಳು, ಹುಕ್ಕೇರಿ; ಮಹಾಲಿಂಗಪ್ಪನವರು, ದಾವಣಗೆರೆ;ವೀರಯ್ಯ ಶಾಸ್ತ್ರಿಗಳು-ಹಿರೇಹಾಳ-ಪ್ರತಿವರ್ಷದ ಶಿವರಾತ್ರಿ ಉತ್ಸವಕಾಲಕ್ಕೆ ಶಿವಯೋಗಮಂದಿರಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದರು.

ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳ ಹೆಸರು-ಶಿವಯೋಗಮಂದಿರದ ಸಂಗೀತ ಶಾಲೆ, ಕೀರ್ತನೆಗೆ ಸಂಬಂಧಿಸಿದಂತೆ ಮರೆಯಲಾಗದ ಹೆಸರು. ಅವರು ಸೊನ್ನದ ದೇಸಾಯಿಯವರಲ್ಲಿ ಪುರಾಣಿಕರಾಗಿದ್ದವರು.ಭಾವುಕ ರಸಿಕರು; ಸಂಗೀತದಲ್ಲಿ ನಿಷ್ಣಾತರು, ಮಧುರ ಕಂಠದ ಅವರು ಹಾನಗಲ್ಲ ಕುಮಾರಸ್ವಾಮಿಗಳ ಸನ್ನಿಧಿಯಲ್ಲಿದ್ದುಕೊಂಡು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಸಂಗ್ರಹಿಸಿ ತಿಳಿದುಕೊಂಡಿದ್ದರು. ಅವರು ಅಪ್ಪಣೆಯಂತೆ ಕೀರ್ತನ ರೂಪವಾಗಿ ಶಿವಧರ್ಮ ತತ್ವಗಳನ್ನು ಸಮಸ್ತ ಸಮಾಜಕ್ಕೆ ಮನವರಿಕೆಯಾಗುವಂತೆ ಬೋಧಿಸುತ್ತಿದ್ದರು. ಮೈಸೂರು, ಬೆಂಗಳೂರು, ಬಳ್ಳಾರಿ ಮೊದಲಾದ ಕಡೆಗಳಲ್ಲಿ ಸಂಚರಿಸಿ ಧರ್ಮಬೋಧೆ ಮಾಡಿದ್ದರು. (ಕೀರ್ತನವಿಶಾರದ’ರೆಂದು ಪ್ರಸಿದ್ದಿ ಪಡೆದರು. ೧೯೧೯ ರಲ್ಲಿ ಗದುಗಿನ ಧರ್ಮಭಿಮಾನಿಗಳ ಅಪೇಕ್ಷೆಯ ಮೇರೆಗೆ ರಾಚೋಟಿ ದೇವಸ್ಥಾನದಲ್ಲಿ ಶ್ರಾವಣಮಾಸದ ಶಿವಕೀರ್ತನಗಳನ್ನು ಮಾಡಿದರು. ಅವರ ಕೀರ್ತನಗಳನ್ನು ಕೇಳಲು ಜನಸಮೂಹವೇ ಬರುತ್ತಿತ್ತುಉತ್ತಮಸಂಗೀತ, ತಿಳಿಹಾಸ್ಯ ಮತ್ತು ತತ್ವಿವೇಚನೆಗಳಿಂದ ಅವರ ಕೀರ್ತನೆಗಳು ಮನಕ್ಕೆ ಆಕರ್ಷಕವೆನಿಸುತ್ತಿದ್ದವು. ಬ್ಯಾಡಗಿ, ಕೊಲ್ಲಾಪುರ ಗಡಹಿಂಗ್ಲಜ, ಸಂಕೇಶ್ವರ, ಸೋಲಾಪುರ ಮೊದಲಾದ ಗಡಿನಾಡಿನಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ದಿವ್ಯಸಾನಿಧ್ಯದಲ್ಲಿದ್ದು ಶಿವಕೀರ್ತನರೂಪದಿಂದ ಧರ್ಮಬೋಧೆ ಮಾಡುತ್ತಿದ್ದರು.

೧೯೨೮ ರಲ್ಲಿ ಶಿವಯೋಗಮಂದಿರದಲ್ಲಿ ಶಿವನ ಧ್ಯಾನವನ್ನು ಮಾಡುತ್ತ ‘ಬೇರೊಂದು ಪದವಿಯನೊಲ್ಲೆ…’ ಎಂಬ ನಿಜಗುಣರ ಆಧ್ಯಾತ್ಮಪದವನ್ನು ವಟುಗಳಿಂದ ಹಾಡಿಸಿ ಕೇಳುತ್ತಲೇ ಲಿಂಗೈಕ್ಯರಾದರು. ಶರಣರಂತೆ ಬದುಕಿದ್ದ ಬಸವಲಿಂಗಶಾಸ್ತ್ರಿಗಳ ಬದುಕು ಒಂದು ನಿದರ್ಶನ.

ವೀರಯ್ಯ ಶಾಸ್ತ್ರಿಗಳು ಹಿರೇಹಾಳ-ಇಲಕಲ್ಲಿನ ಚಿತ್ತರಗಿ ಸಂಸ್ಥಾನಮಠದ ವಿಜಯಮಹಾಂತ ಮಹಾಸ್ವಾಮಿಗಳು ಲಿಂಗೈಕ್ಯರಾದ ನಂತರ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಮಠದ ವ್ಯವಸ್ಥೆಗಾಗಿ ಇಲಕಲ್ಲಿಗೆ ಆಗಮಿಸಿದ್ದರು. ಅಮರಾವತಿಯ ದೇಸಾಯಿಯವರ ಮನೆಯಲ್ಲಿ ವೀರಯ್ಯಶಾಸ್ತ್ರಿಗಳ ಮೊದಲ ಭೇಟಿಯಾದ ನಂತರ ಅವರ ಅಪ್ಪಣೆಯಂತೆ ಶಿಕ್ಷಕರಾಗಿದ್ದು ಶಾಸ್ತ್ರಿಗಳು ಆ ವೃತ್ತಿಯನ್ನು ಬಿಟ್ಟುಶಿವಕೀರ್ತನಕಾರರಾದರು. ಹಾನಗಲ್ಲ ಕುಮಾರ ಸ್ವಾಮಿಗಳೊಂದಿಗಿದ್ದಾಗ ಸಾಕಷ್ಟು ಮಾಹಿತಿ, ಧಾರ್ಮಿಕ ಜ್ಞಾನವನ್ನು ಸಂಪಾದಿಸಿ ಉತ್ತಮ ಶಿವಕೀರ್ತನಕಾರರಾದರು. ಬಿಡುವಿದ್ದಾಗ ಶಿವಯೋಗಮಂದಿರದಲ್ಲಿ ಅವರ ಸನ್ನಿಧಿಯಲ್ಲಿಯೇ ವೀರಶೈವಧರ್ಮ, ಸರ್ವಧರ್ಮ ಸಮನ್ವಯ ದೃಷ್ಟಿ, ಕನ್ನಡ ಸಂಸ್ಕೃತ ಗ್ರಂಥಗಳ ಅಭ್ಯಾಸ, ಇತ್ಯಾದಿಗಳಿಂದ ತಮ್ಮ ವಚನಶಕ್ತಿಯನ್ನು ಹೆಚ್ಚಿಸಿಕೊಂಡಿದ್ದರು. ತಮ್ಮ ಕೀರ್ತನಗಳಲ್ಲಿ ಪೂಜ್ಯ  ಹಾನಗಲ್ಲ ಕುಮಾರಸ್ವಾಮಿಗಳು ಬೋಧಿಸಿದ್ದ ವೀರಶೈವ ಅಧ್ಯಾತ್ಮ ವಿದ್ಯೆಯನ್ನು ಸಾಮಾನ್ಯ ಜನಮನಸ್ಸಿಗೆ ಹಿಡಿಸುವಂತೆ ತಿಳಿಹಾಸ್ಯದಲ್ಲಿ ವಿವೇಚಿಸುತ್ತಿದ್ದರು. ಅವರು ದ್ಯಾವಾಪುರದ ಮಹಾಲಿಂಗಯ್ಯ, ದ್ಯಾವಾಪುರದ ಬಸವಲಿಂಗಶಾಸ್ತ್ರಿ, ದ್ಯಾಂಪುರದ ಚೆನ್ನಕವಿ, ಪಂಚಾಕ್ಷರ ಗವಾಯಿಗಳು- ಇವರ ಸತ್ಸಂಗದಲ್ಲಿರುತ್ತಿದ್ದರು.

ಜಿ. ವೀರಾರ್ಯ ಶಾಸ್ತ್ರಿ ಹಿರೇಮಠ, ಸುರಕೋಡ– ಕನ್ನಡವ್ಯಾಸಂಗವನ್ನು ಪೂರೈಸಿ, ಗದಗಿನ ತೋಂಟದಾರ್ಯಮಠದ ಸಂಸ್ಕೃತಪಾಠಶಾಲೆಯಲ್ಲಿ ಸಂಸ್ಕೃತನಾಟಕ, ಶ್ರಾವ್ಯಗಳ ಅಭ್ಯಾಸ ಮಾಡಿ, ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತವನ್ನು ಮತ್ತು ದ್ಯಾವಾಪುರದ ಬಸವಲಿಂಗಶಾಸ್ತ್ರಿಗಳಲ್ಲಿ ಕೀರ್ತನ ಕಲೆಯನ್ನು, ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳವರಿಂದ ಕೃಪಾಬಲದ ಉತ್ತಮ ಕೀರ್ತನ-ಸಂಗೀತಶಕ್ತಿಯನ್ನು ಪಡೆದ ಇವರು ಶಿವಯೋಗಮಂದಿರದಲ್ಲಿ ಶ್ರೇಷ್ಟಕೀರ್ತನಕಾರರಾಗಿ ಗುರುತಿಸಿಕೊಂಡಿದ್ದರು.

ಕಲ್ಲಿನಾಥ ನಾಥಶಾಸ್ತ್ರಿ ಹಿರೇಮಠ- ಪಂಚಾಕ್ಷರಗವಾಯಿಗಳಿಂದ ಸಂಗೀತವನ್ನು, ಪೂಜ್ಯ  ಹಾನಗಲ್ಲ ಕುಮಾರಸ್ವಾಮಿಗಳಿಂದ ಪ್ರೇರಣೆಯನ್ನು ಪಡೆದು ಶಿವಕೀರ್ತನಕಾರರೆನಿಸಿಕೊಂಡವರು. ಗುರುಲಿಂಗಶಾಸ್ತ್ರಿಗಳು,ಸಾಲಿಮಠ- ಪಂಚಾಕ್ಷರ ಗವಾಯಿಗಳಿಂದ ಮೂರುವರ್ಷಗಳ ಕಾಲ ಕೀರ್ತನ ಪುರಾಣ ಪ್ರವಚನ ಶಿಕ್ಷಣವನ್ನು ಪಡೆದು ನರಗುಂದ, ಹಾನಗಲ್ಲ ನೀಲಗುಂದ, ನಿಡಗುಂದಿಕೊಪ್ಪ, ಬಿದರಿ, ಬಾಗಲಕೋಟೆ, ಕೊತಬಾಳ, ಕೊಪ್ಪಳ, ಸೂಡಿ ಮೊದಲಾದ ಗ್ರಾಮಗಳಲ್ಲಿ ಕೀರ್ತನಕಾರರೆಂದು ಮನ್ನಣೆ, ಗೌರವ ಪಡೆದಿದ್ದರು. ಮಹಾದೇವಶಾಸ್ತ್ರಿಗಳು ಹಿರೇಮಠ, ಕೃಷ್ಣಪುರ-ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಪಂಚಾಕ್ಷರ ಗವಾಯಿಗಳವರಲ್ಲಿ ಪ್ರವೇಶ ಪಡೆದು ಹತ್ತುವರ್ಷಗಳ ಕಾಲ ಸಂಗೀತ-ಕೀರ್ತನಕಲೆಯನ್ನು ಕಲಿತು ‘ಕೀರ್ತನರತ್ನ’ ಎಂದು ಖ್ಯಾತಿ ಹೊಂದಿದ್ದರು.

ಸಿರಿಗೆರೆಯ ಶ್ರೀವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು-ಆರಂಭದಲ್ಲಿ ಕಂಪ್ಲಿಯ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ- ಕನ್ನಡ ಅಭ್ಯಾಸ ಮಾಡಿ, ಕೆಲವು ವರ್ಷಗಳ ಕಾಲ ಪೂಜ್ಯ  ಹಾನಗಲ್ಲ ಕುಮಾರ ಸ್ವಾಮಿಗಳ ಪ್ರೇರಣೆಯಂತೆ, ಪಂಚಾಕ್ಷರ ಗವಾಯಿಗಳ ಸಂಗೀತಶಾಲೆಯಲ್ಲಿ ಸಂಗೀತ-ಕೀರ್ತನ ಕಲೆಗಳನ್ನು ಕುರಿತು ಶಿವಕೀರ್ತನಕಾರರೆಂದೂ ಹೆಸರು ಮಾಡಿದರು. ಅವರ ಪೂಜಾನಿಷ್ಠೆ, ಸಾತ್ವಿಕ ಸ್ವಭಾವ, ಪುರಾಣ ಪ್ರವಚನದಿಂದ ಪ್ರಭಾವ ಶಾಲಿಗಳಾಗಿದ್ದರು.

ಶ್ರೀಪವಾಡಬಸವೇಶ್ವರ ಪಟ್ಯಾಧ್ಯಕ್ಷರು, ನಾಗಠಾಣ-೧೯೧೪ರಿಂದಲೇ ಸಂಗೀತ ಸಾಹಿತ್ಯಗಳೊಂದಿಗೆ ಪಂಚಾಕ್ಷರ ಗವಾಯಿಗಳಲ್ಲಿಗೆ ಸೇರಿಕೊಂಡವರು. ಶಿವಪೂಜಾನಿಧ್ಯರು ಸರಳ ವೃತ್ತಿಯ ಪ್ರಭಾವಿ ಕೀರ್ತನಕಾರರು, ಪಂಚಾಕ್ಷರ ಗವಾಯಿಗಳು ಇವರನ್ನು ತಮ್ಮ ಕ್ರಿಯಾಮೂರ್ತಿಗಳು’ ಎಂದು ಮಾನಿಸುತ್ತಿದ್ದರು. ಪಂಚಾಕ್ಷರ ಗವಾಯಿಗಳು ಗದಗಿನಲ್ಲಿ ಲಿಂಗೈಕ್ಯರಾದಾಗ ಇವರು ಹಾಲಕೆರೆಯ ಶ್ರೀ ಅನ್ನದಾನಿ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಗವಾಯಿಗಳ ಕ್ರಿಯಾಸಮಾಧಿಯನ್ನು ವಿಧಿಪ್ರಕಾರವಾಗಿ ನೆರವೇರಿಸಿದರು.

ಶಿವಯೋಗಮಂದಿರದಲ್ಲಿ ಸಂಗೀತದಂಥ ತನ್ಮಯತೆ ಹಾಗೂ ಭಾವುಕತೆಗೊಳಗಾಗುವ ಕಲೆಯ ಚಟುವಟಿಕೆಗಳನ್ನು ಪಂಚಾಕ್ಷರ ಗವಾಯಿಗಳು ಮತ್ತು ಅವರ ಬಳಗದ ಮೂಲಕ ಶಿವಧರ್ಮಪ್ರಸಾರಕ್ಕೆ ಬಳಸಿಕೊಂಡು ಕನ್ನಡನಾಡಿನಚರಿತ್ರೆಯಲ್ಲಿ ಒಂದು ಅಧ್ಯಾಯಕ್ಕೆ ಕಾರಣರಾದರು;  ಪೂಜ್ಯ ಹಾನಗಲ್ಲಕುಮಾರಸ್ವಾಮಿಗಳು.ಧರ್ಮಪ್ರಸಾರವನ್ನು ಶಿವಕೀರ್ತನೆಯ ಮೂಲಕ ಸಮಸ್ತಸಮಾಜಕ್ಕೆ ಪ್ರಭಾವಶಾಲಿಯಾಗಿ ಮುಟ್ಟಿಸಿದ್ದು ಒಂದು ಪ್ರಯೋಗವಾಗಿದ್ದರೆ, ವೀರಶೈವಧರ್ಮದ ಶ್ರೇಷ್ಠತೆಯನ್ನು ಈ ಶತಮಾನದಲ್ಲಿಮತ್ತೊಂದು ವಿಭಿನ್ನ ಪರಿಣಾಮಕಾರಿ ಪ್ರಯೋಗ ಮೂಲಕ ಸಂವಹನಗೊಳಿಸಿದ್ದು ಇನ್ನೊಂದು ಕಾರ್ಯವಾಗಿದೆ.

ಲೇಖಕರು : – ಶ್ರೀ ಗಂಗಾಧರ ಶಾಸ್ತ್ರಿಗಳು, ಚಿತ್ತರಗಿ

ಶ್ರೀ ಹಾನಗಲ್ಲ ಕುಮಾರ ಶ್ರೀಗಳವರ ಬಾಹ್ಯ ಪ್ರಕೃತಿಯನ್ನು ಕಂಡು ಅವರಿಗೆ ಎರಡು ಕಣ್ಣುಗಳೆಂದು ಯಾರಾದರೂ ಹೇಳುವಂತೆ ಅವರ ಆತ್ಮವನ್ನು ಕಂಡವರು ಮೂರು ಕಣ್ಣುಳ್ಳವರೆಂದು ಹೇಳುತ್ತಿದ್ದರು. ಅವರ ದೃಷ್ಟಿ ವೈಶಾಲ್ಯ, ಕಾರ್ಯಬಾಹುಳ್ಯ, ಪ್ರಚಾರ ಪ್ರಾಚುರ್ಯಗಳನ್ನು ಕಂಡು ‘ಸಹಸ್ರಾಕ್ಷಃ ಸಹಸ್ರಪಾತ್’ ಎಂದು ಪುರುಷ ಸೂಕ್ತದಲ್ಲಿ ವರ್ಣಿತವಾಗಿರುವ ‘ವಿರಾಟ್’ ರೂಪವನ್ನು ನೆನೆದವರುಂಟು. ಅಂತೆಯೆ ಅವರನ್ನು “ವಿರಾಟ್‌ಪುರವರ ನಿವಾಸ’ ಎಂದು ಕವಿಗಳು ಅನ್ವರ್ಥಕವಾಗಿ ನುತಿಸಿದಂತಿದೆ. ಒಳಗಿನ ಒಂದು ಕಣ್ಣಿನಿಂದ ಗ್ರಹಿಸಿ, ಸಹಸ್ರ ದೃಷ್ಟಿಯಿಂದ ಸಮಾಲೋಚಿಸಿ ಕಾರ್ಯವನ್ನು ಕಾಯಕವನ್ನಾಗಿ ಮಾರ್ಪಡಿಸುವ ದಿವ್ಯ ಕರ್ತೃತ್ವ ಶಕ್ತಿ ಶ್ರೀಗಳವರು ಜೀವನ ವ್ಯವಹಾರಕ್ಕೆ ಬೇಕಾಗುವ ಕಣ್ಣುಗಳೆರಡು ಪ್ರಕೃತಿದತ್ತವಾಗಿ ಸಿಕ್ಕರೂ ಜೀವನೋದ್ದಾರಕ್ಕೆ ಬೇಕಾದ ಒಳಗಣ್ಣು ಎಲ್ಲರಿಗೂ ಇಲ್ಲದಿರುವದನ್ನು ಅರಿತೇ ಹಾನಗಲ್ಲ ಶ್ರೀಗಳವರು ವೈರಾಗ್ಯ ಮಲ್ಹಣಾರ್ಯರ ಸಂಕೇತವನ್ನು ಮನ್ನಿಸಿ ವೀರಶೈವ ಮಹಾಸಭೆಯನ್ನು ಕರೆದರು ; ಮತ್ತು ಶಿವಯೋಗಿ ಚಿತ್ತರಗಿ ಮಹಂತರ ಸೂಚನೆಯಂತೆ ಶಿವಯೋಗಮಂದಿರವನ್ನು ಬಹು ಎದೆಗಾರಿಕೆಯಿಂದ ಕಟ್ಟಿದರು. ಅದರಿಂದ ನಾಡಿನ ಬಹು ಭಾಗದ ಗುರು ಜಂಗಮರು ಶ್ರೀಗಳವರ ಗರಡಿಯ ಶಿಷ್ಯರಾಗಿ ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ, ವಿಶಾಲಬುದ್ದಿ, ಬ್ರಹ್ಮತೇಜೋವೃದ್ಧಿ ಮುಂತಾದ ಬಗೆ ಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಮೃತ್ಯುವನ್ನು ಒಡೆದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸುತ್ತಿದ್ದರು. ಸಮಾಜದ ಗುರುಗಳನ್ನು ತಯಾರಿಸಿದರೆ ಸಮಾಜವೇ ಮುಂದುವರಿಯುವದೆಂಬ ಶ್ರೀಗಳವರ ವಿಚಾರ ಕರಗತವಾಯಿತು.

ಇದು ಒಂದು ದೃಷ್ಟಿ. ಇನ್ನು ವಿಶಾಲದೃಷ್ಟಿ ಇದ್ದವರಿಗೆ ವಿಶಾಲಕ್ಷೇತ್ರ ಬೇಕು. ವಿಶ್ವವೇ ಪಾವನವಾಗಲೆಂಬ ಪರಮಾದರ್ಶದ ಅರುವಿದ್ದ ವಿಶ್ವಕುಟುಂಬಿ ಶ್ರೀಗಳವರಿಗೆ ಇಷ್ಟರಿಂದಲೇ ತೃಪ್ತಿಯಾಗಿರಲಿಲ್ಲ. ಗುರುಗಳ ಉಪದೇಶ ಬೀಜ ಸಾಮಾನ್ಯರ ಮನದಲ್ಲಿ ನಾಟಬೇಕಾದರೆ ರಸಾತ್ಮಕ ಸಾಹಿತ್ಯದ ಸಹಕಾರ ಬೇಕು ‘ಕಾಂತಾ ಸಮ್ಮಿತತಯಾ’ ಉಪದೇಶ ಸಾಹಿತ್ಯದ ಉದ್ದೇಶಗಳಲ್ಲಿ ಒಂದು. ಅದು ಫಲಕಾರಿಯಾಗಲು ಸಾಹಿತ್ಯ ಸಂಗೀತ ಸಮ್ಮಿಳಿತವಾಗಿರಬೇಕು. ಇದನ್ನರಿತ ಶ್ರೀಗಳವರು ಸಾಧಕರ ಯೋಗ ಶಿಕ್ಷಣದೊಂದಿಗೆ ಸಾಹಿತ್ಯ ಸಂಗೀತಗಳ ಪಾಠಕ್ರಮವನ್ನು ಯೋಜಿಸಿದರು.

ಶ್ರೀಗಳವರು ವೀರ ವಿರಕ್ತರಾಗಿಯೂ ಸಂಗೀತರಸದ ಮಧುರವನ್ನು ಸವಿದಿದ್ದರು. ನಿಜಗುಣರ ಪದಗಳನ್ನಷ್ಟೆ ಅಲ್ಲ, ಪ್ರಮಥರ ವಚನಗಳನ್ನು ಸಂಗೀತದಲ್ಲಿ ಸರಿಗೊಳಿಸಿ ನುಡಿಯಬೇಕೆಂಬುದು ಶ್ರೀಗಳವರ ಬಯಕೆಯಾಗಿದ್ದಿತು. ‘ಕೀರ್ತನಾಚಾರ್ಯ’ ಲಿಂ. ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳವರು ಶ್ರೀಗಳವರ ಪ್ರೇರಣೆಯಂತೆ ಈ ದಿಶೆಯಲ್ಲಿ ಅಪಾರ ಸೇವೆ ಸಲ್ಲಿಸಿದರು.

ಹೊರಗಣ್ಣಿಲ್ಲದ, ಆದರೆ ಕಂಚುಕಂಠದ ಮಿಂಚುಮೊಗದ ಕಾಡಶೆಟ್ಟಿಹಳ್ಳಿಯ ಗದಿಗೆಯ್ಯನವರಿಗೆ ಒಳಗಣ್ಣನಿತ್ತು ಅಪಾರ ಧನರಾಶಿ ಸುರಿದು ಸಂಗೀತ ಶಿಕ್ಷಣ ಕೊಡಿಸಿದವರು ಶ್ರೀಗಳವರ ಗದಿಗೆಯ್ಯನವರು ದಕ್ಷಿಣಾದಿ-ಉತ್ತರಾದಿ ಉಭಯ ಸಂಗೀತದಲ್ಲಿ ನೈಪುಣ್ಯ ಪಡೆದಿದ್ದರು ; ಬಾಗಿಲಕೋಟೆಯಲ್ಲಿ ಕೂಡಿದ ವೀರಶೈವ ಮಹಾಸಭೆಯಲ್ಲಿ ತತ್ತ್ವವನ್ನು ಸಂಗೀತಕ್ಕೆ ಮೇಳಯಿಸಿ ಹಾಡಿದಾಗ ಗದಿಗೆಯ್ಯನವರ ಪಾಂಡಿತ್ಯಕ್ಕೆ ಎಲ್ಲರೂ ತಲೆದೂಗಿದರು ; ಅಂದಿನಿಂದ ಅವರನ್ನು ‘ಪಂಚಾಕ್ಷರ ಗವಾಯಿ’ಗಳೆಂದು ಕರೆದು ಸಂತೋಷದಿಂದ ಸನ್ಮಾನಿಸಿದರು.

ನಾದ ಲಯಮುಖವಾಗಿ ಅಂತರಂಗವೆ ಬಹಿರಂಗವಾಗಿ ಪರಿಣಮಿಸುತ್ತದೆ, ವಿಕಾಸಗೊಳ್ಳುತ್ತದೆ.ಕಲೆ-ಸಾಹಿತ್ಯ-ಸಂಸ್ಕೃತಿಗಳ ಸಾರವೆ ಸಂಗೀತ. ಅದು ಹೃದಯಲ್ಲಿ ಜನಿಸಿ, ಕಂಠದಲ್ಲಿ ರೂಪುಗೊಂಡು ಮುಖದಿಂದ ಹೊರಸೂಸಿ ಬರುತ್ತದೆ. ಅದುವೆ ಸತ್ಯ-ಶಿವ ಸುಂದರಮಯ ಸಂಗೀತವನ್ನು ವಿಲಾಸಸಾಧನವೆಂದು ಬಗೆಯದೆ ಬರಿಯ ಮನರಂಜನೆಗೆ ಬಳಸದೆ ಮನಸ್ಸಿನ ಶುದ್ದಿಗಾಗಿ ಚಿತ್ತವೃತ್ತಿನಿರೋಧಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದು ಶ್ರೀಗಳವರು ಪಂಚಾಕ್ಷರ ಗವಾಯಿಗಳಿಗೆ ಉಪದೇಶಿಸುತ್ತಿದ್ದರು. ಅಂತೆಯೆ ಗವಾಯಿಗಳು ಪ್ರಪಂಚದ ವ್ಯಾಮೋಹಕ್ಕೆ ಬಲಿಬೀಳದೆ ಆಜನ್ಮ ನೈಷ್ಠಿಕ ಬ್ರಹ್ಮಚರವನ್ನು ಪರಿಪಾಲಿಸಲು ಸಮರ್ಥರಾದರು. ಅವರ ಜೀವನ ಸಂಗೀತಶಾಸ್ತ್ರದ ಉದಾತ್ತತೆಯನ್ನು ಪಾವಿತ್ರ್ಯವನ್ನು ಅಳಿಯದಂತೆ ಉಳಿಸಿ ಬೆಳೆಸಲು ಮೀಸಲಾಗಿದ್ದಿತು.ಧರ್ಮೋಪದೇಶಕ್ಕೆ ಸಾಧನಪ್ರಾಯಗಳಾದ ಕೀರ್ತನ-ಪುರಾಣ-ಪ್ರವಚನಗಳೆಲ್ಲ ಸಂಗೀತಮಯವಾಗಿರ ಬೇಕೆಂದು ಹೇಳಿ ಶ್ರೀಗಳವರು ಸಾಧಕರಿಗೆ ಅಂತಹ ಶಿಕ್ಷಣವನ್ನೇ ರೂಪಿಸಿದ್ದರು. ಶಿವಯೋಗಮಂದಿರದಲ್ಲಿಇಂದಿಗೂಅದು ನಡೆದು ಬಂದಿದೆ.

ಸಾಹಿತ್ಯವು ತತ್ರ್ಯಮಯವಾಗಿರಬೇಕು, ಸಂಗೀತವು ಭಕ್ತಿ ರಸಪೂರಿತವಾಗಿರಬೇಕು. ಶಿವಯೋಗಕ್ಕೆಶಿವಸಾಕ್ಷಾತ್ಕಾರಕ್ಕೆ ಸಾಹಿತ್ಯ ಸಂಗೀತಗಳೆರಡೂ ಸಾಧನವಾಗಬೇಕೆಂಬುದು ಶ್ರೀಗಳವರ ಮನೀಷೆಯಾಗಿದ್ದಿತು.ರಾಗದ ಸಂಕಣ್ಣ, ನಿಜಗುಣ ಶಿವಯೋಗಿ, ಬಾಲಲೀಲಾ ಮಹಾಂತ ಶಿವಯೋಗಿ, ಸರ್ಪಭೂಷಣಯೋಗಿ,ಪುರಂದರದಾಸ ಮತ್ತು ಮೀರಾಬಾಯಿ ಮೊದಲಾದ ಸಂತರು ಸಾಹಿತ್ಯವನ್ನು ಸಂಗೀತಕ್ಕೆ ಇಳಿಸಿ ಭಕ್ತಿರಸವನ್ನಾಗಿ ಹರಿಸಿ ಮುಕ್ತಿಗೆ ಮಾರ್ಗ ಮಾಡಿಕೊಟ್ಟರು. ಅಂತೆಯೆ ಶ್ರೀಗಳವರು ಭಾಕಿಕ ಗೀತಗಳನ್ನುರಚಿಸಿ ಗವಾಯಿಗಳಿಂದ ಹಾಡಿಸಿದರು. ಅವುಗಳಿಗೆ ‘ಶಿವಯೋಗ’ದ ಅಚ್ಚಳಿಯದ ಮುದ್ರಿಕೆಯನ್ನೊತ್ತಿದರು.ಅವರೊಬ್ಬ ‘ರಸಋಷಿ’ ಎಂದು ಹೇಳಿದರೆ ಅತಿಶಯೋಕ್ತಿ ಎನಿಸದು.

“ಯೋಗಿ ನಿಜಾನಂದದೋಳು ನುಡಿಸುವ ವೀಣೆ ರಾಗರಸದ ತರಂಗಿಣಿ’ ಎಂದು ನಿಜಗುಣರು ಹಾಡಿದಂತೆ ನಾದಯೋಗಿಗಳಾದ ಹಾನಗಲ್ಲ ಶ್ರೀಗಳವರು ನಾಟ್ಯ-ಸಂಗೀತಕ್ಕೆ ಮಹತ್ವ ಕೊಟ್ಟು ಅದನ್ನುಬೆಳೆಸಿ ಉಳಿಸಿದರು. ಶ್ರೀಗಳವರು ಒಮ್ಮೆ ತಮ್ಮ ಮೆಚ್ಚುಗೆಯ ಶಿಷ್ಯರಾದ ನವಿಲುಗುಂದ ಶ್ರೀಗಳವರನ್ನು ನಾಟಕವನ್ನು ಕಲಿಸಲು ಹೋಗುವೆಯಾ?’ ಎಂದು ಕೇಳಿದ್ದರಂತೆ ; ಕಾವ್ಯಗಳಲ್ಲಿ ನಾಟಕವು ರಮಣೀಯವಾದುದು ; ನಾಟಕವೊಂದೆ ಭಿನ್ನಭಿನ್ನರುಚಿವುಳ್ಳ ರಸಿಕ ಜನರಿಗೆ ನಾನಾ ಬಗೆಯ ರಸದೂಟವನ್ನು ಬಡಿಸುವ ಸಾಧನವೆಂದು ಹೇಳಿದ ಮಹಾಕವಿ ಕಾಳಿದಾಸನ ಉಕ್ತಿಗಳನ್ನು ನೆನಪಿಗೆ ತಂದು ಕೊಡುತ್ತಿದ್ದರಂತೆ.ಸಾಮಾನ್ಯರು ನಾಟಕ ರಂಗವನ್ನು ಜೀವನೋಪಾಯವೆಂದು ಬಗೆದಿದ್ದಾರೆ. ಅದು ಜ್ಞಾನದಾಸೋಹವಾಗಿ ಸಾಗಿದರೆ ಸಮಾಜ ಹೊಸ ಬೆಳಗು ಕಂಡು ಪರಿಶುದ್ಧವಾಗುವದೆಂಬ ಶ್ರೀಗಳವರ ವಿಚಾರಸರಣಿ ತಾತ್ವಿಕ ಮತ್ತು ತಾರಕವಾಗಿದ್ದಿತು. ಅದಕಾಗಿಯೆ ಶ್ರೀಗಳವರು ಹಿತಮಿತವಾದ ಸಾಹಿತ್ಯರೂಪಕಗಳಲ್ಲಿ ಶರಣರ ಜೀವನ ಸಂದೇಶವನ್ನು ಜಗತ್ತಿನಲ್ಲಿ ಬೀರಬೇಕೆಂದು ಕವಿಗಳಿಗೆ ಪ್ರೇರಣೆಯನ್ನಿತ್ತರು.

ಎಲ್ಲರನ್ನೂ ಆಕರ್ಷಿಸಬಲ್ಲ ನಾಟಕ ರಂಗಭೂಮಿಯು ಶಿವಾನುಭವ ಮಂಟಪವಾದರೆ ಆಯುಷ್ಯದಲ್ಲಿಸಾಧಿಸುವ ಸಿದ್ಧಿಯನ್ನು ಆರು ತಿಂಗಳಲ್ಲಿ ಸಾಧಿಸಬಹುದೆಂದು ಶ್ರೀಗಳವರು ಬರೆದಿದ್ದರು. ಜಾತಿ-ವಯೋಮಾನಗಳನ್ನು ಮೇಲು-ಕೀಳುಗಳನ್ನು ಎಣಿಸದೆ ಎಲ್ಲರ ಮನವನ್ನು ಸೆಳೆದು ಜ್ಞಾನವನ್ನು ಸರಳವಾಗಿ ದಾನಮಾಡುವ ನಾಟಕ ಮಂಡಳಿಯೆ ಸಂಚಾರಿ ಪಾಠಶಾಲೆಯಾಗಬಹುದೆಂದು ತಿಳಿದು ಶ್ರೀಗಳು ಅದನ್ನುಕಾರ್ಯರೂಪಕ್ಕೆ ತರಲು ಅನೇಕ ಪ್ರಯತ್ನಗಳನ್ನು ನಡೆಸಿದರು. ಆದರೆ ಹಳೆಯ ಮನ್ವಂತರದ ಪೀಳಿಗೆಗೆ ಅದು ಸರಿ ಕಾಣದಾಗಿತ್ತು. ನಾಟಕ ನೋಡುವದೇ ಪಾಪ, ಗೌರವಕ್ಕೆ ಕುಂದೆಂದು ಭಾವಿಸಿದ್ದ ಅಂದಿನ ಜಗತ್ತಿನಲ್ಲಿ ಶ್ರೀಗಳ ಬಯಕೆ ಬೇಗ ಫಲಿಸಲಿಲ್ಲವಾದರೂ ಅದು ಬರಡಾಗಲ್ಲ. ಮುಂದೆ ಕೆಲವು ವರುಷಗಳಲ್ಲಿಯೆ ಶ್ರೀ ಗವಾಯಿಗಳ ಸಂಗೀತ ಶಾಲೆಯು ಗದುಗಿನಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಚಾರಿ ನಾಟಕ ಸಂಸ್ಥೆಯಾಗಿ ಕವಲೊಡೆಯಿತು. ಅದರ ಫಲವಾಗಿ ಸಿದ್ದರಾಮೇಶ, ನಂಬಿಯಕ್ಕ ಶಿವಶರಣಿ ಮಲ್ಲಮ್ಮ, ಧನೇಶ ಚರಿತ್ರೆ, ಘಷ್ಯಾ ಮಂತ್ರಮಹ ರಾಜಶೇಖರ ಮೊದಲಾದ ತಾತ್ವಿಕ ಸಂಗೀತ ರೂಪಕಗಳನ್ನು ಶ್ರೀ ಗವಾಯಿಗಳ ಪಟ್ಟ ಶಿಷ್ಯರಾದ ಕನ್ನಡ-ಸಂಸ್ಕೃತ-ಹಿಂದಿ ಭಾಷೆಗಳಲ್ಲಿ ಪಂಡಿತರೂ ಉಭಯಗಾನವಿಶಾರದರೂ ಆದ ಶ್ರೀ ಪುಟ್ಟರಾಜ ಗವಾಯಿಗಳವರು ರಚಿಸಿ ಪ್ರಚುರಪಡಿಸಿದರು ;ಶ್ರೀಗಳವರ ಆಶೆಯನ್ನು ಫಲಿಸುವಂತೆ ಮಾಡಿದರು. ಅದರ ಪ್ರತಿಬಿಂಬವಾಗಿಯೆ ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ವು ಹೊರಬಿದ್ದು ನಾಡಿನ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ಶ್ರೀಗಳ ಸಂದೇಶವನ್ನೇ ಬೀರುತ್ತಿದೆ. ಈ ನಾಟ್ಯ ಸಂಸ್ಥೆಯು ಬಗೆ ಬಗೆಯ ರೂಪಕಗಳಿಂದ ನೀತಿ-ಭಕ್ತಿ-ಧರ್ಮಜ್ಞಾನದ ತಿಳಿರಸವನ್ನೆ ಪ್ರೇಕ್ಷಕರಿಗೆ ಉಣಿಸಿ ಹದಿನಾಲ್ಕು ವರುಷಗಳಿಂದ ಅಖಂಡ ಕೀರ್ತಿಯನ್ನು ಸಂಪಾದಿಸಿದೆ, ರಂಗಭೂಮಿಯಲ್ಲಿ ಅಪೂರ್ವವಿಕ್ರಮವನ್ನು ಗಳಿಸಿದೆ. ಇದೆಲ್ಲಕ್ಕೆ ಪೂಜ್ಯ ಹಾನಗಲ್ಲ ಶ್ರೀಗಳವರ ಪ್ರೇರಣೆಯ ಕಾರಣ. ಶ್ರೀಗಳವರು ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಾರಣಿಕ ಶಿವಯೋಗಿಗಳಾಗಿದ್ದರು. ಅಂದು ಶ್ರೀಗಳವರ ಚಿತ್ತಭಿತ್ತಿಯಲ್ಲಿಮೂಡಿದ ಕಲೆಯು ಇಂದು ಬಹಿರಂಗವಾಗಿ ರಂಗಭೂಮಿಗಿಳಿದು ಜನಮನವನ್ನು ಪರಿಶುದ್ಧಗೊಳಿಸುತ್ತಿದೆ.