ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ
ಇಬ್ಬರೂ ಕುಮಾರ ಸ್ವಾಮಿಗಳೇ. ಆದರೆ ಒಬ್ಬರು ಗುರು ; ಇನ್ನೊಬ್ಬರು ಶಿಷ್ಯರು.ಹಾನಗಲ್ಲ ಕುಮಾರ ಮಹಾಸ್ವಾಮಿಗಳಿಗೆ ಲಿಂಗೈಕ್ಯ ಬಿದರಿ ಕುಮಾರ ಶಿವಯೋಗಿಗಳೇ ಗುರುಗಳೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾನಗಲ್ಲಿನ ಫಕೀರ ಸ್ವಾಮಿಗಳು ಅಂತಿಮ ದಿನಗಳನ್ನು ಲಿಂಗ ಪೂಜೆಯಲ್ಲಿ ಕಳೆಯುತ್ತಾ ಬಿದರಿಯ ಕುಮಾರ ಶಿವಯೋಗಿಗಳನ್ನು ಕರೆಯಿಸಿ ತಮ್ಮ ಪೀಠಕ್ಕೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ನಿಯಮಿಸಬೇಕೆಂದು ಅವರಿಂದ ಸಮ್ಮತಿ ಪಡೆದು ಕೆಲವೇ ದಿನಗಳಲ್ಲಿ ಲಿಂಗೈಕ್ಯವಾದರು.
ಪೂಜ್ಯರ ದೃಷ್ಟಿಗೆ, ಹಾಲಯ್ಯ ದೇಶಿಕೋತ್ತಮರೆ ಆಗ ಹೃದ್ಗೋಚರವಾದರು. ತಪಸ್ಸು, ಸಮಾಜಸೇವೆ ಎಂಬ ದೈತದಲ್ಲಿ ಅದ್ವೈತ ಸಾಧಿಸಲು, ಅಲ್ಲಲ್ಲಿ ಅನುಷ್ಠಾನ ಗಳನ್ನು ಕೈಗೊಳ್ಳುವಲ್ಲಿ ತತ್ಪರರಾಗಿದ್ದ ಅವರನ್ನು ಹಾನಗಲ್ಲಿನ ಮಠಾಧಿಕಾರದಂತಹ ಉಪಾಧಿಗೆ ಹಚ್ಚುವುದು ಸರಳವಾದ ಮಾತಾಗಿರಲಿಲ್ಲ!
ಪೀಠ ಒಂದು ಉಪಾದಿಯಾದರೂ ಅದಕ್ಕೆ ತಮ್ಮ ಅಗತ್ಯವಿದೆ, ತಮ್ಮಿಂದಾಗಿ ಅದು ಒಂದು ಘನತೆಯನ್ನು ; ತಮ್ಮಂತಹ ಸಾಧಕರಿಗೆ ಬೇಡವೆಂಬುದು ಭವಕ್ಕೆ ಬೀಜ ಎನ್ನುವುದನ್ನು ; ಷಟ್ ಶಾಸ್ತ್ರ ಬಲ್ಲವರಿಗೆ ನಾನು ವಿವರಿಸುವುದು ಅಷ್ಟು
ಉಚಿತವಾಗುವುದಿಲ್ಲ! ಎಂದೆಲ್ಲ ; ನುಡಿದು ಅವರ ಮನವಲಿಸಲು ಯಶಸ್ವಿಗಳಾದ ಅಂದು ಕುಮಾರಶ್ರೀಗಳು.
ವೈರಾಗ್ಯದ ಮಲ್ಲಣಾರ್ಯರು ಬಂದು ಒರಟು ಮಾತುಗಳನ್ನಾಡಿದರೂ ನಗುನಗುತ್ತಾ ಆಗಿಂದಾಗಲೆ ಮಠವನ್ನು ತೊರೆದು, ಅವರ ಸದಾಪೇಕ್ಷೆಯನ್ನು ಎರಡು ಬೃಹತ್ತ ಸಂಸ್ಥೆಗಳನ್ನು ಕಟ್ಟುವದರ ಮೂಲಕ ಈಡೇರಿಸಿದುದು ಈಗ ಇತಿಹಾಸ ಸೇರಿಹೋದ ಮಾತು, ಸಮಾಜ ಉಳಿಸಬಲ್ಲಂತಹ ಯೋಗ್ಯತೆಯನ್ನು ಶ್ರೀಗಳು ಆಗಲೆ ಅವರಲ್ಲಿ ಕಂಡುಕೊಂಡಿದ್ದರು.
ಅಂದಿನ ಅವರ ವಯಕ್ತಿಕ ತ್ಯಾಗವು ಸಾಮೂಹಿಕವಾಗಲು ಹಂಬಲಿಸಿದುದರ ಫಲವಾಗಿಯೇ ಇಂದು ಸಮಾಜವು, ಮೇಲೆ ನಿರೂಪಿಸಿದ ಆ ಎರಡು ಸಂಸ್ಥೆಗಳ ಬೆಳವಣಿಗೆಯ ಪರಿಣಾಮವನ್ನು ಹಲವಾರು ರೀತಿಯಲ್ಲಿ ಬಳಸಿಕೊಂಡಿದೆ. ಈ ಎರಡು ಸಂಸ್ಥೆಗಳು ಲಿಂಗಾಯತವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿವೆಯನ್ನುವ ಅನುಭವ ಎಲ್ಲರಿಗೂ ಅವಗತವಾದ ವಿಷಯ.
ಬಸವಣ್ಣ ಎಲ್ಲರಿಗೂ ಒಂದೊಂದು ಕಾಯಕವನ್ನು, ವ್ಯಕ್ತಿ ಗೌರವವನ್ನು ಪ್ರತಿಪಾದಿಸಿದರು. ತನ್ಮೂಲಕ ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆಲ್ಲ ಸರಿ ! “ಕುರುಡರಿಗೆ ಕಾಗತಿ ?” ಎಂದು ಕೇಳಿದರೆ ! ?
“ಮೌನವೇ ಉತ್ತರ’ವಾಗಬಾರದೆಂದು ಉದ್ದೇಶದಿಂದಲೋ ಏನೋ ! ಗದುಗಿನಲ್ಲಿ “ವೀರೇಶ್ವರ ಪುಣ್ಯಾಶ್ರಮ’ವು ಅಸ್ತಿತ್ವಕ್ಕೆ ಬಂದಿತು.
“ನೀನೊಲಿದರೆ ಕೊರಡು ಕೊನರುವುದಯ್ಯ ;
ನೀನೊಲಿದರೆ ಬರಡು ಹಯನಹುದಯ್ಯ’
ಎಂಬುದು ಆಶ್ರಮದ ಉಗಮದಿಂದ ಬಸವನಂಬಿಕೆಗೊಂದು ಬಲ ಬಂದಂತಾಯಿತು. “ಹಣಮುಟ್ಟದವರೆ ಇಂದು ಮಹಾತ್ಮಾ’ ಎಂದು ಜನರ ಮನದಲ್ಲಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಹಾಗಾಗಿ ನಿಂತವರು ಹಣದ ಸಂದರ್ಭದಲ್ಲಿ, ಚರ್ಚೆಗೂ ಗ್ರಾಸವಾಗಬಾರದು. ಏಕೆಂದರೆ ನಿಜವಾದ ಆಧ್ಯಾತ್ಮಿಕ : ಬೇಡವೆಂಬುದು ಭವಕ್ಕೆ ಬೀಜ“ ಬಿಡಬೇಕು ಬಲುಹಿಂದೆ ಬರಿದೆ ತನ್ನಿರವನು” ಎನ್ನುತ್ತಾರೆ ನಿಜಗುಣರು ಈ ಮೇಲಿನ ಭೂಮಿಕೆಯು ಲಿಂಗೈಕ್ಯ ಹಾನಗಲ್ಲ ಶ್ರೀಗಳಿಗೆ ಸಂಬಂಧಿಸುದುದರಿಂದ ಅವರ ಘನವಾದವ್ಯಕ್ತಿತ್ವವು ಹಣವೆಂಬುದನ್ನು ಹೇಗೆ ? ಅದನ್ನು ಮುಟ್ಟದ ಸದ್ವಿನ ಯೋಗಿಸಬೇಕೆಂಬುದರಲ್ಲಿ ವ್ಯಕ್ತವಾಗುತ್ತದೆ. ಶ್ರೀಗಳ ದೂರದೃಷ್ಟಿಕೋನಕ್ಕೆ ಅವರಿಂದ ಸ್ಥಾಪಿತವಾದ ಹಿಂದೆ ವಿವರಿಸಿದ ಸಂಸ್ಥೆಗಳು ; ನಿಸ್ಪೃಹತ್ವದ ಬಿಕ್ಷೆಯ ಅಲೆದಾಟಗಳು ವಿವೇಚಕರಿಗೆ ಗೌರವಪಡುವಂತಹ ಸಂಗತಿಗಳಾಗಿದ್ದವು ; ಈಗಲೂ ಅವು ಯತಿಗಳಾದವರಿಗೆಲ್ಲ ಮಾದರಿಯಾದವುಗಳೆಂಬುದನ್ನು ಯಾರೂ ಮರೆಯಬಾರದು
. ಕೇವಲ ಧರ್ಮದ, ಶಾಸ್ತ್ರದ ಭೀಕರ ಪ್ರವಚನಗಳನ್ನು ಉದುರಿಸಿ, ಕಪ್ಪು ಕಾಣಿಕೆ ಯನ್ನು ಪಡೆದು ಮಾಯವಾಗಿಬಿಡುವ ಸ್ವಾಮಿಗಳವರಾಗಿರಲಿಲ್ಲಾ.
ಕರ್ನಾಟಕ ಯಾವ ಮೂಲೆಯಲ್ಲೂ ಅವರಿಗೆ ಜನ ತೊಂದರೆ ಪಡುವುದನ್ನು ಕೇಳಲಾಗುತ್ತಿರಲಿಲ್ಲ. ಕಾಲ್ನಡಿಗೆಯಿಂದಲೂ ತಮ್ಮ ಮಡಿಗೆಬಾಧ್ಯವಾಗದ ಚಕ್ಕಡಿ ಏರಿಯೊ, ಅಂಥಲ್ಲಿಗೆ ಹೋಗಿ ಜನರಲ್ಲಿ ಸಾಮರಸ್ಯ ಬರುವವರೆಗೆ, ಆ ಊರನ್ನು ಬಿಟ್ಟು ಕದಲುತ್ತಿರಲಿಲ್ಲವೆಂದು ಹಳಕಟ್ಟಿಯವರು ಶಿವಯೋಗಮಂದಿರದ ಬೆಳಗೆನಲ್ಲಿ ಸ್ಮರಿಸುತ್ತಾರೆ. ಜನತೆ, ಶ್ರೀಗಳು ವಿಶಾಲಮನೋಭಾವವರಿತು ಊರಲ್ಲಿ ಮತ್ತೆಂದೂ ಜಗಳ ಕಾಯಲು ಹೋಗುತ್ತಿರಲಿಲ್ಲ,
ಹೀಗೆ ಶ್ರೀಗಳ ಬಗೆಗೆ ಬರೆಯುತ್ತ ಹೋದರೆ, ಅವರದು ಮುಗಿಯದ ಚರಿತ್ರೆ. ನಾವಾಗಿಯೇ ಅವರ ಚರಿತ್ರೆಯ ಬರಹಕ್ಕೆ ಅನಿವಾರ್ಯವಾಗಿ ಒಂದು ಸೀಮೆಯನ್ನು ಕೊರೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ ವಿಷಯಕ್ಕೆ ಬರುತ್ತೇನೆ : ಶ್ರೀಗಳು ಹಲವಾರು ಸುಂದರ-ತಾತ್ವಿಕ ಪದಪದ್ಯ ಮಂಗಳಾರುತಿ ಪದಗಳನ್ನು ರಚಿಸಿದುದು ಧರ್ಮ ಜಿಜ್ಞಾಸುಗಳಿಗೆಲ್ಲ ಗೊತ್ತಿರುವ ಸಂಗತಿ. ಲಿ೦. ಬಿದರಿ ಕುಮಾರಶಿವಯೋಗಿಗಳನ್ನು ಕೊಂಡಾಡುತ್ತ ರಚಿಸಿದ ಮಂಗಲಗೀತೆಗಳು ಬಹಳ ಯೋಗಿಕ ಅನುಭಾವದ ಮೌಲ್ಯವನ್ನು ಹೊಂದಿವೆ. ನಮ್ಮ ಜಮಖಂಡಿಯ ಬೇರೊಬ್ಬ ದಾರ್ಶನಿಕನ ಅವುಭವದ ನಿಲಸುವಿಗೆ ಸಮದಂಡಿಯಾಗಿ ನಿಂತು, ನಮ್ಮ ಸಮಕಾಲೀನ ಒಬ್ಬ ಮಹಾಶಿವಯೋಗಿಯ ಅನುಭಾವಸಂಪತ್ತನ್ನು ಕೂಡಿಸಿ ಓದುವ ಸೌಭಾಗ್ಯದ ಆನಂದ ಬೇರೆಯೇ ಆಗಿರುತ್ತಿತ್ತು ಎಂದು, ರಾನಡೆ ಸಾಹಿತ್ಯ ಓದಿದವರಿಗೆಲ್ಲ ಅನ್ನಿಸುವುದು ಸಹಜ. ಒಂದು ವೇಳೆ ಡಿ.ಸಿ. ಪಾವಟೆಯ
ವರಂತಹವರು ಶ್ರೀಯುತರ ಕೈಗೆ ಇಂತಹ ಪದ್ಯವೊಂದನ್ನು ತಲುಪಿಸಿದ್ದರೆ, ಅಲ್ಲವೆ !ಇದೆಲ್ಲ ಸಾಧ್ಯವಾಗಬಹುದಿತ್ತು.
ಇದು ಆ ಮಂಗಲ ಪದ್ಯ
ಯೋಗಿರಾಡ್ಜಯ ಮಂಗಲಂ|| ಪರತರಶಿವ||
ಯೋಗಿರಾಡ್ಜಯ ಯ ಮಂಗಲಂ
ಲಿಂಗಾಂಗೊಭಯಸಂಗ ಶರಣರಪುಂಗಾ||
ಅಂಗಜಭವಭಂಗ!!
ಮಂಗಲಾತ್ಮಕ ಭಕ್ತ ಜನ ಜನ ಹೃದ್ವಾಸನೇ? ಶ್ರೇಷನೇ!!
ಜಂಗಮಾರ್ಪಿತ ಸತ್ಕ್ರಿಯಂಗಳ ದಕ್ಷನೇ ನಿರ್ಪೆಕ್ಷನೇ!!
ಯೋಗಿರಾಡ್ಜಯ ಮಂಗಲಂ ||ಪರತಿರತಿವ!!
ಯೋಗಿರಾಡ್ಜಯ ಮಂಗಲಂ
ಈಡಪಿಂಗಳ ಜೋಡಿಸಿ ಹರಿದಾಡುವ 11
ಜೋಡಕ್ಕರವ ಕೂಡಿಸಿ
ಕೂಡಿನಡುನಾಡಿಯೊಳಡರ್ದತಿ ಶಾಂತನೇ! ಕಾಂತನೇ!!
ನಾಡದಶವಿಧ ನಾದದೊಳಗತಿ! ಗುಪ್ತನೇ! ಪರಮುಕ್ತನೇ!!
ಯೋಗಿರಾಡ್ಜಯ ಮಂಗಲಂ 11ಪರತರಶಿವ||
ಯೋಗಿರಾಡ್ಜಯ ಮಂಗಲಂ
ಮಂಡಲತ್ರಯದಗ್ರದಗ್ರದಿ ದೀಪಿಸುತಿಹ| ಅಖಂಡ ಜ್ಯೋತೆಯ ತೆರದಿ||
ಮಂಡಿಸಿಹಕುಮಾರಗುರು ಶಿವಯೋಗಿಯೇ। ತ್ಯಾಗಿಯೆ!ಅ
ಖಂಡ ವಿಷಯವನೈಕ್ಯಗೊಂಡಿಹು ದಾನಿಯೇ! ಸುಯ್ಡಾನಿಯೇ!!
ಯೋಗಿರಾಡ್ಜಯ ಮಂಗಲಂ ||ಪರತರಪಶಿವ||
ಯೋಗಿರಾಡ್ಜಯ ಮಂಗಲಂ
ಈ ಮಂಗಲಪದ್ಯ ಬಿದರಿ ಕುಮಾರ ಶಿವಯೋಗಿಗಳ ಅಮೋಘ ವ್ಯಕ್ತಿತ್ವವನ್ನು ಪ್ರತಿಪಾದಿಸಿದೆ. ಹಾನಗಲ್ಲ ಲಿಂll ಕುಮಾರಶಿವಯೋಗಿಗಳು ಶ್ರೀಗಳ ಆಪ್ತ ಶಿಷ್ಯರಲ್ಲಿ ಒಬ್ಬರು, ಅವರಲಿಂಗೈಕ್ಯದ ಸಂದರ್ಭದಲ್ಲಿ ತಾವೇ ರಚಿಸಿ ಹಾಡಿದುದಾಗಿ ಹಿರಿಯ ಸ್ವಾಮಿಗಳೊಬ್ಬರು ಹೇಳಿದ ನೆನಪು. ಈ ಪದ್ಯವನ್ನು ಈಗಲೂ ಶಿವಯೋಗ ಮಂದಿರದಲ್ಲಿ, ತುಂಬ ಚನ್ನಾಗಿ ವಟುಸಾಧಕರು ದಿನನಿತ್ಯ ಹಾಡುತ್ತಾರೆ. ಕರ್ನಾಟಕ ಸಂಗೀತದಲ್ಲಿ ಹಾಡಲಾಗುವ ಈ ಮಂಗಲಕ್ಕೆ ವಿಶಿಷ್ಟವಾದ ಏರು ಇಳುವುಗಳಿವೆ ಕೇಳುತ್ತ ಹೋದಂತೆ ಹಾಡುತ್ತಾ ಹೋದಂತೆ, ಹಾಡುವವರನ್ನು ಕೇಳುವವರನ್ನು ತೂರ್ಯಾವಸ್ಥೆಗೆ ಒಯ್ಯುವ ಮಾಂತ್ರಿಕತೆಯು, ಈ ಮಂಗಲ ಪದ್ಯಕ್ಕಿದೆ.
“ಶಿವಮಂಗಲವನ್ನು ಕೊಡುಬೇಗ ಭವದುಃಖದಿ ಬಳಲುವೆವೀಗ” ಎಂಬ ಮಂಗಲಪದ್ಯವೂ ತುಂಬ ಪ್ರಾಖ್ಯಾತ. ಜನಸಾಮಾನ್ಯರ ತುದಿ ನಾಲಗೆಯಲ್ಲಿ ಈ ಪದ್ಯ ರಾರಾಜಿಸುತ್ತಿರುತ್ತದೆ. ಈ ಪದ್ಯವು ಹಾನಗಲ್ಲ ಕಮಾರಶಿವಯೋಗಿಗಳದ್ದೆಂದು ನನಗೆ ತಡವಾಗಿ ತಿಳಿಯಿತು. ಇರಲಿ ! ತಮಗೆ ಚಿನ್ಮಯಾನುಗ್ರಹದೀಕ್ಷೆನೀಡಿದ ಗುರುಗಳ ಯೋಗಿಕ ಸಾಮರ್ಥ್ಯವು ಈ ಪದ್ಯದತುಂಬೆಲ್ಲ ಚೆಲ್ಲುವರೆದಿದೆ. ಇವರಿಂದ ರಚಿತವಾದ ಎಲ್ಲ ಪದ್ಯಗಳಿಗಿಂತ, ಈ ಪದ್ಯ ಕಾರಣದಿಂದಾಗಿ ಇರಬಹುದು ಇದಕ್ಕೆ ಇದರದೆ ಆದ.,ವೈಶಿಷ್ಟ್ಯವಿದೆ. ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ’ ಎಂಬ ತಾತ್ವಿಕ ಮಂಗಲವು ವೇದಾಂತಿಗಳಿಗೂ, ವೀರಶೈವ-ಲಿಂಗಾಯತರಿಗೂ, ತುಂಬ ಪರಿಚಯದ ಮಂಗಲಪದ್ಯವದು. ದರ್ಶನದ ಹಿನ್ನೆಲೆ ಆ ಮಂಗಲಕ್ಕಿದೆ. ‘ಜಯಮಂಗಲಂ ನಿತ್ಯಶುಭಮಂಗಲಂ’ ಎಂಬ ಬಾಲಲೀಲಾ ಮಹಾಂತ ಶಿವಯೋಗಿಗಳು, ತಮ್ಮನ್ನು ಬಸವಾದಿಪ್ರಮಥರ ಮಗು, ಎಂದು ವೀರಶೈವ- ಲಿಂಗಾಯತದ ಶುದ್ಧಮಾರ್ಗಾವಲಂಬಿಗಳಾಗಿ ತಾವೇ ರಚಿಸಿ ಹಾಡಿದ ಮಂಗಲಪದ್ಯ ಅದಾಗಿದೆ.
ಆದರೆ ಈ “ಯೋಗಿರಾಡ್ಜಯ ” ಎಂಬ ಮಂಗಲಪದ್ಯವು ಒಬ್ಬ ಜಂಗಮ ಮೂರುತಿ ಗೈದ ಸಾಧನೆ, ಸಿದ್ದಿ-ಎಲ್ಲ ಜಂಗಮರೂ ಸಾಧಿಸಲೇಬೇಕಾದ ಸಾಧ್ಯತೆಯ ದಿಗ್ದರ್ಶನವನ್ನು ಏಕಕಾಲಕ್ಕೆ ಮಾಡಿಸುತ್ತದೆ.
‘ಲಿಂಗಾಂಗಗಳ ಸಂಗದಲ್ಲಿ, ಅಂಗಗುಣಗಳನ್ನು ಅತಿಗಳೆಂದು, ಶರಣರಿಗೆ ಪುಂಗಜಂಗಮನೆನಿಸಿ, ಅಂಗದಿಂದ ಹುಟ್ಟುವ ಕಾಯವಿಕಾರ ಮನೋ ವಿಕಾರಗಳೆಂಬ ಭವತಾಪಗಳನ್ನು ಲಿಂಗ ನೆನಹಿನಿಂದ ಭಂಗಗೊಳಿಸಿ,ಮಂಗಲಾತ್ಮಕನಾಗಿ ಭಕ್ತ ಜನರ ಹೃದಯದಲ್ಲಿ ವಾಸವಾಗಿರುವಂತಹ, ಶ್ರೇಷ್ಠ ಮಹಾಯೋಗಿಯೇ ! ಪರತರ ಶಿವಯೋಗಿಯೇ! ಎಂದು ಮಹಾಗುರವರ್ಯರನ್ನು ಹೃದಯದುಂಬಿ ಬಣ್ಣಿಸುತ್ತಾರಿಲ್ಲಿ ಪಲ್ಲವೀ ಹಾಗೂ ಪದ್ಯದ, ಒಂದನೆಯ ಭಾಗದಲ್ಲಿ ಇದು ಬಾಲಲೀಲಾ ಮಹಾಂತ ಶಿವಯೋಗಿಗಳು
“ಜಯಮಂಗಲಡಿ” ಎಂಬ ಮಂಗಲದ ದಾರ್ಶನಿಕ ನಿಲುವನ್ನು ಒಳಗೊಂಡಂತಹ ಮಂಗಲಪದ್ಯಇದಾಗಿರುವುದು ಮನವರಿಕೆ ಆಗಲಿರುವುದು,
ಅಂದಹಾಗೆ, ಬಾಲಲೀಲಾಮಹಾಂತ ಶಿವಯೋಗಿಗಳು, ತಮ್ಮನ್ನು ತಾವು :
“ಧರೆಯ ಭಕ್ತರು ಮಾಹೇಶ್ವರರಗಳ ಪುತ್ರನಿಗೆ |
ಶರಣ ಬಸವಾದಿ ಪ್ರಮಥರ ಕಂದಗೆ ||’
ಎಂಬುದಾಗಿ ಕರೆದುಕೊಳ್ಳುತ್ತಾರೆ .ಈ ಮಂಗಲಪದ್ಯದಲ್ಲಿಯೂ, “ಶರಣರಪುಂಗಾ”ಎಂಬಲ್ಲಿ ಅದು ಧ್ವನಿತವಾಗಿದೆ. ‘ಪೂರ್ವಾಶ್ರಮ ನಿರಸನಸ್ಥಲದಲ್ಲಿ ಎಲ್ಲ ಲಿಂಗಧಾರಿಗಳು ಬಸವಾದಿ ಶಿವಶರಣರ ಮಕ್ಕಳೆ, ಲಿಂಗ ಹಾಗೂ ಅಂಗ-ಇವೆರಡು, ಇಲ್ಲಿ ವಿಶ್ಲೇಷಣಾರ್ಹ ಪದಗಳಾಗಿ ನನಗೆ ಕಂಡಿವೆ. (ಈ ವಿಷಯದ ವಿವೇಚನೆಯು ಟಿ.ಎನ್. ಮಲ್ಲಪ್ಪನವರು ಬರೆದ ವಚನೋಪನಿಷತ್ತಿನಲ್ಲಿ ವಿಸ್ತಾರವಾಗಿರುವದನ್ನು ಗಮನಿಸಬಹುದು.) ಉಭಯಸಂಗ ಎಂಬಲ್ಲಿ ಇದು ವ್ಯಕ್ತವಾಗಲಿದೆ. ಅವುಗಳಲ್ಲಿ, ಕಾಣದ ಯಾವುದೋ ಜಂಗಮ ವ್ಯಕ್ತಿತ್ವವನ್ನು ಕೊಂಡಾಡುತ್ತಿಲ್ಲ. ಅವರ ಒಡನಾಡಿಗಳಾದ ಓರ್ವ ಸಾಕ್ಷಾತ್ ತಮ್ಮ ಗುರುವರರನ್ನು ಈ ಸಂದರ್ಭದಲ್ಲಿ ಕೊಂಡಾಡುತ್ತಿದ್ದಾರೆಂಬುದನ್ನು ಮರೆಯುವಂತಿಲ್ಲ.
ಅಂಗವೇ + ಲಿಂಗವಾಯಿತು ಲಿಂಗವೇ + ನಡೆಲಿಂಗವಾಗಿ = ಜಂಗಮ ವೆನ್ನಿಸುವುದು. ಇದು ಮುಂದಿನ ಯೋಗಿಕ ಸತ್ಕ್ರಿಯೆಗಳಿಂದ ಪ್ರಾಪ್ತವಾಗುವಂತಹದು.
“ಇಡಾಪಿಂಗಳಜೋಡಿಸಿ” ಎಂಬ ಈ ಪದ್ಯದಲ್ಲಿ ಅಂಗ ಹಾಗೂ ಲಿಂಗ ಎರಡೂ ಜಂಗಮನಲ್ಲಿ ಹೇಗೆ ಕೆಲಸಮಾಡಬಲ್ಲವು ಎಂಬುದಕ್ಕೆ ವಿವರಣೆಯಾಗಿವೆ. ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಗತಿಗೆ ಆರು ನಿಲ್ದಾಣಗಳುಂಟು. ಅವು ಷಟ್ ಚಕ್ರಗಳೆಂದು ಕರೆಯಲಾಗಿದೆ. ಈ ಬಗೆಗೆ ಗುರುದೇವ ರಾನಡೆ ಅವರ, ‘ಕನ್ನಡ ಸಂತರ ಪಾರಮಾರ್ಥ ಪಥ’ದಲ್ಲಿಯ ಮಾತುಗಳನ್ನು ಓದಬೇಕು : “ನೀವು ಆ ಚಕ್ರಗಳನ್ನು ಸೇರಿ ಅವುಗಳೊಳಗಿಂದ ಮೇಲಕ್ಕೇರಬೇಕು. ಅಂದರೆ ನೀವು ಮಿದುಳಿನ ಶಿಖರವನ್ನು ಮುಟ್ಟುವಿರಿ. ಅಲ್ಲಿ ನಾಲ್ಕು ದಾರಿಗಳುಂಟು ; ಒಂದು ಮುಂಭಾಗದ ಕುಹರ, ಒಂದು ಹಿಂಭಾಗದ ಕುಹರ, ಎರಡು ಪಾರ್ಶ್ವದ ಕುಹರಗಳು. ನೀವು ಸುಷುಮ್ಮೆಯೊಳಗಿಂದ ಹಾದು, ಈ ನಾಲ್ಕು ದಾರಿಗಳು ಕೂಡುವಸ್ಥಳಕ್ಕೆ ಹೋಗಬೇಕು. ಈ ಸ್ಥಳವು ಬೇರೆಡೆ ಶೃಂಗಾಟಕವೆಂದು ಹೆಸರಿಸಲಾಗಿದೆ. ಈ ರೀತಿ ನೀವು ಸುಷುಮ್ಮಯೊಳಗಿಂದ ಏರಿ, ಮಿದುಳಿನಲ್ಲಿಯ ಈ ನಾಲ್ಕು ದಾರಿಗಳನ್ನು ಸೇರಿದರೆಂದರೆ, ನಿಮಗೆ ಭಗವಂತನ ದರ್ಶನವು ಲಭಿಸುವುದು” ಎಂಬುದಾಗಿ ವಿವರಿಸುತ್ತಾರೆ. (ಪು, ೨೩೦).
ಇಲ್ಲಿ, ಇಡಾ ಹಾಗೂ ಪಿಂಗಳ ಎಂಬನಾಡಿಗಳೇ, ಎರಡು ಕೈಗಳು, ಅವುಗಳನ್ನು ಕೂಡಿಸುವದು ಹರಿದಾಡುವ ಕೈಗಳನ್ನು ಕೂಡಿಸಿದಷ್ಟೇ ಸರಳವಾದುದು ಯೋಗಿಗಳಿಗೆ, ನಡುನಾಡಿಯೋಳು, ಕೂಡಿ ಅಡರಿದ ಅತೀ ಶಾಂತಯುತವಾದ ಕಾಂತಿಯು,
ನಿಜಗುಣರ,-“ಜ್ಯೋತಿ ಬೆಳಗುತಿದೆ” ಎಂಬ ಪದ್ಯದ ಗುಣ ಲಕ್ಷಣಗಳೆನ್ನೆಲ್ಲ ಪ್ರಕಾಶಿಸುತ್ತದೆ. ಜ್ಞಾನೇಶ್ವರರು ಕುಂಡಲಿನಿಯ ಬಗೆಗೆ ಹೇಳುತ್ತಾ ಅದರ ಬಣ್ಣವು ಕುಂಕುಮ ಬಣ್ಣದಂತಿರುತ್ತದೆ ಎನ್ನುತ್ತಾರೆ. ನಾಭಿಯ ಕೆಳಭಾಗದಲ್ಲಿ ಅದು ದುಂಡಾದ ಸಣ್ಣ ಹಾವಿನಂತೆ ಇರುವುದಾಗಿ ಹೇಳುತ್ತಾರೆ. ಡಾ. ರಾಯರವರ ಪ್ರಕಾರ ಅದು ಮೆದುಳುಬಳ್ಳಿಯಲ್ಲಿರದೆ, ಮಿದುಳಿನಲ್ಲಿಯೆ ಚಕ್ರದಂತಿರುತ್ತದೆ. ಅದು ಮಿದುಳು ಕೋಶದ ಹತ್ತನೆಯ ನರದಂತಿರುತ್ತದೆ ಎಂದು ಡಾ. ರೇಳೆ ಅವರು ವಾದಿಸುತ್ತಾರೆ. ಇದೇನೇ ಇರಲಿ ! ಕುಮಾರ ಶ್ರೀಗಳು ಅನಾಹತನಾದದಲ್ಲಿ ಗುಪ್ತವಾಗಿ ಇರುವ ಪರದಿಂದಲೂ ಮುಕ್ತರಾಗಿರುವರಾಗಿ ಕವಿಗಳಾದ ಕುಮಾರಪ್ರಭುಗಳು ತಮ್ಮ ಗುರುಗುಣ ಸಾಮರ್ಥ್ಯವನ್ನು ಬಣ್ಣಿಸುತ್ತಾರೆ.
“ಮಂಡಲತ್ರಯದಗ್ರದಿ’ ಎಂಬ ಕೊನೆಯ ಸಾಲುಗಳಲ್ಲಿ,
“ಗಂಗೆ-ಯಮುನೆಗಳ ಸಂಗಮದೊಳುಮಿಂದು |
ಶೃಂಗಾಟದುಪರಿಯ ರಂಗಮಂಟಪದೊಳು ||
ಲಿಂಗಪೂಜೆಯಮಾಡಿರೋ ನಿಮ್ಮೊಳಿ ಪ್ರಾಣ ||
ಲಿಂಗಪೂಜೆಯಮಾಡಿರೋ ||”
ಎಂಬ ಹೋಲಿಕೆಯು ಕೊಂಚಭಿನ್ನವಾಗಿ, ಮೂರುಮಂಡಲಗಳ ಮದ್ಯದಲ್ಲಿ, ದೀಪಿಸುತ್ತಿರುವ ಅಖಂಡ ಜ್ಯೋತಿ ಸ್ವರೂಪರು, ಬಿದರಿ ಕುಮಾರಶಿವಯೋಗಿಗಳು ; ಅಖಂಡ ವಿಷಯಗಳನ್ನು ಲಿಂಗಮುಖವಾಗಿಸಿಕೊಂಡು, ಐಕ್ಯತ್ವದ ಆನಂದದಲ್ಲಿ ಮೂಹೂರ್ತ ಮಾಡಿದ ಭಾವ ಭಂಗಿಯನ್ನು ನೆನಪಿಗೆ ತಂದುಕೊಂಡು, ಭಾವದುಂಬಿ, ಭಕ್ತಿಪರವಶರಾಗಿ, ಹಾಡಿದ ಹಾಡಿನ ಹಿನ್ನೆಲೆಗೆ, ಹಿರಿಯಸ್ವಾಮಿಗಳೊಬ್ಬರು, ಬಹಳ ಮಹತ್ವದ ಸನ್ನಿವೇಶವನ್ನು ನಿರೂಪಿಸಿದ ನೆನಪು. “ಅಪಗೋಳ ಬಿದರಿ ಕುಮಾರ ಸ್ವಾಮಿಗಳು ಲಿಂಗೈಕ್ಯರಾದಾಗ ಆಶು ಕವಿಗಳಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ದುಃಖ ತಡಿಯಲಾಗದೆ ಬಿಕ್ಕಿ ಬಿಕ್ಕಿ ಕಳೆಬರಹದ ಮುಂದೆ ಅಳುತ್ತ ಹಾಡಿದ ಹಾಡಿದು’, ಎಂದಿದ್ದರು.
ಮೇನೇದ ಕೋಲಿಯಲ್ಲಿ ಬಿದರಿಕುಮಾರಶ್ರೀಗಳು ಅಂತಿಮ ಕ್ಷಣಗಳನ್ನು ಇಷ್ಟಲಿಂಗದಲ್ಲಿ ಅರ್ಪಿಸುತ್ತಿದ್ದ ಸಂದರ್ಭವದು : ಯಾರೋ “ಕುಮಾರಸ್ವಾಮಿಗೋಳ ನೀವು ಎರಡು ಸಾರೆ ಗುರುಗಳ ಪುಣ್ಯತಿಥಿ ಅಚರಿಸಬೇಕಾಗುವುದು’ ಎಂದರಂತೆ ಇದು ಬಿದರಿ ಕುಮಾರಶ್ರೀಗಳಿಗೆ ಕೇಳಿಸಿ, ಕೊಲಿಯಮುಂದೆ ಕುಳಿತವರಲ್ಲಿ ಒಬ್ಬರನ್ನು ಕರೆಯಿಸಿ : ‘ತಮ್ಮಾ ಯಳಂದೂರಿನ ಬಸವಲಿಂಗಸ್ವಾಮಿಗಳು ಲಿಂಗೈಕ್ಯ ದಿನವೆ ಬಿದರಿ ಕುಮಾರಶ್ರೀಗಳು ಲಿಂಗೈಕ್ಯವಾದರೆಂದು ಅಪ್ಪಣೆಕೊಡಿಸುತ್ತಿರುತ್ತಿದ್ದರು. ಈಗಲೂ ಶಿವಯೋಗ ಮಂದಿರದಲ್ಲಿ ಲಿಂ, ಬಿದರಿ ಕುಮಾರ ಶ್ರೀ ಗಳ ಹಾಗೂ ಯಳಂದೂರ ಲಿಂ, ಬಸವಲಿಂಗ ಶ್ರೀಗಳ ಸ್ಮರಣೋತ್ಸವವನ್ನು ಪುಷ್ಯ ಶುದ್ಧ ಪಂಚಮಿಯಂದೇ ಏಕಕಾಲದಲ್ಲಿ ಆಚರಿಸಲಾಗುತ್ತಿದೆ. ಈ ಆಚರಣೆಗೆಂದೇ ಶಿವಯೋಗ ಮಂದಿರಕ್ಕೆ ಸವದತ್ತಿಯ, ಶ್ರೀಮಾನ್, ನಾರಾಯಣಪ್ಪ, ಮೊರಬದ ದಂಪತಿಗಳ ವತಿಯಿಂದ ೫೦,೦೦೦ ರೂಪಾಯಿಗಳನ್ನು ಈ ಲೇಖಕನ ಸಲಹೆ ಸದಾಶಯದಮೇರೆಗೆ ಫಿಕ್ಸ್ ಡಿಪಾಸಿಟ ಇರಿಸಲಾಗಿದೆ. ಇಂತಹ ಮಹಿಮಾಶಾಲಿಗಳಗಿದ್ದರು ಉಭಯ ಯತೀಂದ್ರರು ಇವರಿಬ್ಬರ ವ್ಯಕ್ತಿತ್ವವನ್ನು ಎಷ್ಟು ಬಣ್ಣಿಸಿಯೇನು ? ಇದೆಲ್ಲ, ನಮ್ಮ ನೆಮ್ಮದಿಗಷ್ಟೆ !