ಯೋಗಿವರೇಣ್ಯ ನಾನಪರಾಧಿ

(ರಾಗ – ಭೈರವಿ)

ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

 

 

 

ಯೋಗಿವರೇಣ್ಯ ನಾನಪರಾಧಿ | ಭೋಗ ಭವಾಂಬುಧಿ

ನೀಗಿದ ಮಹಿಮ || ಪ ||

ಮಾಯವಿದೂರ | ಮೋಹಕೆಪಾರ |

ಕಾಯ ವಿಷಯ ಪರಿಪಕ್ವ ವಿಚಾರ || 1 ||

ನಾಶಿಕ ತ್ರ್ಯಂಬಕ ಈಶನ ವಚನದಿ |

ಕಾಸಿನಿವಾಶಿಗಳ್ ತೋಷ ಮಾಗಿರುವ || 2 ||

ಶುದ್ಧಶಿಲಾಗ್ರದೊಳಿದ್ದು ತಪವಮಾಡಿ |

ಸಿದ್ಧಗಂಗೆಯ ತೋರಿ ಸಿದ್ಧನಾಗಿರುವ || 3 ||

ನಿಜಗುಣರ ವೇದಾಂತ ಗ್ರಂಥಗಳಲ್ಲಿಯೆ ಅದರಲ್ಲಿಯು ಕೈವಲ್ಯ ಪದ್ಧತಿಯಲ್ಲಿಯ ತಲ್ಲೀನರಾಗಿದ್ದ ಹುಬ್ಬಳ್ಳಿಯ ಸಿದ್ಧಾರೂಢರವರು ಅವರ ಈ ಇಷ್ಟಲಿಂಗದ ಮಹಿಮೆ ಹಿರಿಮೆಗಳ ಹಿತೋಪದೇಶವನ್ನೆ ಲೆಕ್ಕಿಸಿರಲಿಲ್ಲ. ಆತ್ಮಲಿಂಗವಿದ್ದ ಆರೂಢನಿಗೆ ಬಾಹ್ಯಲಿಂಗವೇಕೆ ಎಂದು ಅವರ ಗ್ರಹಿಕೆ. ಆದರೆ ತಮ್ಮ ಗ್ರಹಿಕೆಯಲ್ಲಿ ಗಂಧವಿಲ್ಲೆಂಬುದು ಅವರಿಗೆ ತಿಳಿದಿರಲಿಲ್ಲ. ಅಂತರ್ಲಿಂಗಧಾರಣ ಸಮರ್ಥನಿಗೂ ಬಾಹ್ಯಲಿಂಗದ ಅಗತ್ಯವಿದೆಯೆಂಬುದನ್ನು ಅವರು ಕಂಡುಕೊಂಡಿರಲಿಲ್ಲ. ನಿಜಗುಣರೆ ಮತ್ತೊಂದೆಡೆಯಲ್ಲಿ ಸೊಗಸಾದ ಇಸಾದೃಶ್ಯಕೊಟ್ಟು ಹೇಳಿದ್ದಾರೆ; ಇಷ್ಟ-  ಪ್ರಾಣ-ಭಾವಲಿಂಗಗಳು ಕ್ರಮವಾಗಿ ದೀಪ-ದೀಪದ ಕಿರಣ- ದೀಪದ ಪ್ರಕಾಶಗಳಂತೆ ಅವಿನಾಭಾವ ಸಂಬಂಧದಿಂದ ಇವೆಯೆಂದು ಇನಿದಾಗಿ ಬಿತ್ತರಿಸಿದ್ದಾರೆ. ಕತ್ತಲೆಯ ಮನೆಯಲ್ಲಿ ಹಣತೆ ಹಚ್ಚಿದ ಮೇಲೆ ಬೆಳಕು ಬಿತ್ತೆಂದು ದೀವಿಗೆಯನ್ನು ಆರಿಸಿದರೆ, ಎತ್ತಿ ಬಿಸುಡಿದರೆ ಬೆಳಗು ಉಳಿಯುತ್ತದೆಯೊ? ಉಳಿದಿರಲು ಸಾಧ್ಯವೊ? ಹಾಗೆಯೇ  ದೀಪದಂತಿದ್ದ ಇಷ್ಟಲಿಂಗ ಇಲ್ಲದಿರಲು ಪ್ರಾಣಕಿರಣವು ಇಲ್ಲ, ಭಾವ ಬೆಳಗು ಇಲ್ಲ. ಅನ್ನದ ಅವಶ್ಯಕತೆ ಇರುವವರೆವಿಗು ಇಷ್ಟಲಿಂಗದ ಅವಶ್ಯಕತೆ ಅನಿವಾರ್ಯ. ಸ್ಥೂಲ  ಶರೀರ ಹೊದ್ದಿರುವವರೆವಿಗು ಸ್ಥೂಲಲಿಂಗದ ಸಂಬಂಧ ಅಪರಿಹಾರ. ಈ ನಿಜವನರಿಯದವ ನಿಜವಾದ ಆರೂಢನಲ್ಲ, ಆರೂಢಪತಿತ. ಈ ತತ್ವವ ತಿಳಿಯದೆ ಸಿದ್ಧಾರೂಢರು ಅವರ ಕೆಲವು ಶಿಷ್ಯರು ಇಷ್ಟಲಿಂಗವನ್ನು ಬಿಟ್ಟುಬಿಟ್ಟಿದ್ದರು. ಅವರು ವೇದಾಂತಬಲ್ಲಿದರಾಗಿದ್ದರು. ಈ ಒಂದು ಕೊರತೆಯಿಂದ ಸ್ವಾಮಿಗಳವರು ಯೋಚನಾಕ್ರಾಂತರಾಗಿದ್ದರು. ಅವರ ಮನಸ್ಸು ಅಲ್ಲಿಂದ ಹಿಂಜರಿಯುತ್ತಿತ್ತು. ಯೋಗ್ಯಗುರುವಿನ ಬರುವನ್ನು ಹಾರೈಸುತ್ತಿತ್ತು. ಇಲ್ಲಿಯೇ ಇರು’ ಎಂದರ್ಥದ ಜಡೆಸಿದ್ದರ ಅಮೃತವಾಣಿಯಿಂದ ಇಲ್ಲಿಯೆ ನನಗೆ ಸದ್ಗುರುವಿನ ಸಂದರ್ಶನ ಭಾಗ್ಯಲಭಿಸಬಹುದೆಂದು ನಚ್ಚಿ ವಿಧಿಯಿಲ್ಲದೆ ಅಲ್ಲಿಯೆ ವಾಸವಾಗಿದ್ದರು.

 

ಹೀಗಿರಲು ಒಂದು ದಿನ ಆಕಸ್ಮಿಕವಾಗಿ ಮಹಾಮಹಿಮರಾದ ವೀರವೈರಾಗ್ಯ ಸಂಪನ್ನರಾದ ಎಳಂದೂರು ಬಸವಲಿಂಗಸ್ವಾಮಿಗಳವರು ಆ ಪ್ರಾಂತದಲ್ಲಿ ಪ್ರಯಾಣ ಮಾಡುತ್ತ ಹುಬ್ಬಳ್ಳಿಗೆ ಬಂದರು. ಅದೇ ಊರಿನಲ್ಲಿಯೇ ಪ್ರಸಿದ್ಧರಾದ ಆರೂಢರಿಗೆ ನಿಜಗುಣರ ಕೃತಿಗಳಲ್ಲಿರುವ ಪರಿಣತಿಯನ್ನು ಕೇಳಿ ನೋಡಿ ಸಂತೋಷಿಸಬೇಕೆಂದು ಆರೂಢರಲ್ಲಿಗೆ ಆಗಮಿಸಿದರು. ಆರೂಢರೊಡನೆ ಆಧ್ಯಾತ್ಮಜಿಜ್ಞಾಸೆ ಆರಂಭವಾಯಿತು.   ಶ್ರೀಗಳ ಅಸ್ಖಲಿತವಾದ ಅನನ್ಯ ಸಾಧಾರಣವಾದ ಅನುಭವವನ್ನು ಕಂಡು ಆರೂಢರಿಗೆ ಅಚ್ಚರಿಯಾಯಿತು. ತಾವು ಮೌನತಾಳಿ ತಮ್ಮ ಶಿಷ್ಯರನ್ನು ವಾದಕ್ಕೆ ಮುಂದುಮಾಡಿದರು. ಶಿಷ್ಯರಲ್ಲಿ ಅಗ್ರಗಣ್ಯರಾಗಿದ್ದ ಸದಾಶಿವ ಸ್ವಾಮಿಗಳವರು ಚುರುಕಾಗಿ ಚರ್ಚೆಮಾಡಿದರು. ಏನು ಮಾಡಿದರೇನು ? ಅಪಕ್ವತೆಯನ್ನು ಶ್ರೀಗಳು ಕಂಡುಕೊಂಡರು. ಬರೀ ವಾದವಿಮರ್ಶೆಯ ಹೊರತು ಆಳ ಅನುಭವದ ಹುರುಳಿಲ್ಲ. ಕೇವಲ ಬೌದ್ಧಿಕವಾದವು ಆತ್ಮಶಾಂತಿಗೆ ಕಾರಣವಲ್ಲ ಎಂದು ಹೇಳಿ ಹೊರಗೆ ಬಂದು ಒಂದು ತಂಬಿಗೆಯನ್ನು ಕೇಳಿದರು. ಶ್ರೀಗಳ ಅನುಭವಕ್ಕೆ ಮೆಚ್ಚಿದ ಸದಾಶಿವಸ್ವಾಮಿಗಳವರೆ ತಂಬಿಗೆಯನ್ನು ತೆಗೆದುಕೊಂಡು ಬಂದರು. ಅವರೊಡನೆ ಬಹಿರ್ದೆಶಕ್ಕೆ ತೆರಳುತ್ತ ತಮ್ಮ ಹಿಂದೆ ಬರುತ್ತಲಿದ್ದ ಶಿಷ್ಯನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಅಷ್ಟರಲ್ಲಿ ಜಲಾಶಯವೊಂದು ಹತ್ತಿರ ಕಂಡಿತು. ಶ್ರೀಗಳು ತಂಬಿಗೆಯನ್ನು ತೆಗೆದುಕೊಂಡು ಹೋಗಿ ಬಂದು ಹಸ್ತ ತೊಳೆದರು. ಹಲ್ಲುಜ್ಜಲು ಕಡ್ಡಿಯೊಂದನ್ನು ತರಹೇಳಿದರು. ಆರೂಢರ ಶಿಷ್ಯವೃತ್ತಿಯಲ್ಲಿದ್ದ ಸದಾಶಿವ ಸ್ವಾಮಿಗಳಿಗೆ ಹಲ್ಲುಕಡ್ಡಿಯ ಪರಿಚಯವಿರಲಿಲ್ಲ. ಅನುಮಾನಿಸುತ್ತ ನಾಲ್ಕು ಬೆರಳುದ್ದದ ಒಂದು ಕಡ್ಡಿಯನ್ನು ತಂದುಕೊಟ್ಟರು. ಅದನ್ನು ಶ್ರೀಗಳು ನೋಡಿ ‘ತಮ್ಮಾ ನಿನ್ನ ಬುದ್ಧಿಯೂ ಸಹ ಇಷ್ಟೇ ಉದ್ದಿದೆ. ಅದ್ವೈತದಲ್ಲಿ ಮುಳುಗಿದ್ದ ನಿಮಗೆ ಬಾಹ್ಯಶೀಲಾಚರಣೆಯ ಅರಿವಿಲ್ಲ. ಬಾಹ್ಯ ಶೌಚಾಚರಣೆಯ ಮಾಡದವನು ಆತ್ಮನನ್ನು ಅರಿತು ಫಲವಿಲ್ಲ. ತಾನು ಶುಚಿಯಾಗಿದ್ದು ಮನೆ ಮೂಲೆಗಳಲ್ಲಿ ಅಶುಚಿಯಾಗಿದ್ದರೆ ಸಾಕೇನು? ತನ್ನ ಮನೆ ಶುಚಿಯಾಗಿರಬೇಡವೆ? ತಾನು ಶುಚಿಯಾಗಿದ್ದರೆ ಆರೋಗ್ಯ ಬರುವುದೇನು? ತಾನು ತನ್ನ ಮೈತೊಳೆದು ಬಿಳಿಯ ಬಟ್ಟೆಯನ್ನು ತೊಡುವಂತೆ ಮನೆಯ ಶುಭ್ರತೆಮಾಡಿ ಸುಣ್ಣ ಬಣ್ಣ ಬಳಿದರಲ್ಲವೆ? ಹಾಗೆ ಆತ್ಮನಿಗೆ ಅರಿವಿನ ಬೆಳಗು ಒಂದಿದ್ದರೆ ಸಾಲದು. ಶರೀರೇಂದ್ರಿಯಗಳೂ ಶುಭ್ರವಾಗಿರಬೇಕು. ಸುಣ್ಣ ಬಣ್ಣ ಬಳಿವ ಕುಂಚು ಎಷ್ಟುದ್ದವಿದ್ದರೆ ಲೇಸೆಂಬುದನ್ನು ತಿಳಿಯಬೇಡವೆ ? ಹಾಗೆ ಹಲ್ಲುಜ್ಜುವ ಕಡ್ಡಿ ಹನ್ನೆರಡು ಅಂಗುಲ ಉದ್ದಿರಬೇಕು ಇದು ಶಾಸ್ತ್ರ, ಆತ್ಮವಿಚಾರ ಮಾತ್ರ ಹೇಳುವುದೇ ಶಾಸ್ತ್ರವಲ್ಲ, ದೇಹಾತ್ಮಗಳ ಆಚಾರ ವಿಚಾರಗಳೆರಡನ್ನು ಹೇಳುವುದೇ ಶಾಸ್ತ್ರ, ಶರೀರೇಂದ್ರಿಯ ಮೋಹ ತ್ಯಜಿಸುವುದೆಂದರೆ ನೀವೆಲ್ಲ ತಿಳಿದಿರುವಂತೆ ಶರೀರೇಂದ್ರಿಯಗಳನ್ನು ಕೊಳೆಯಾಗಿ ಇರಿಸುವದಲ್ಲ. ಶೌಚ-ಸ್ನಾನ, ಹಲ್ಲುಜ್ಜುವಿಕೆ ಮುಂತಾದ ಬಾಹ್ಯ ಶೌಚಾಚಾರಗಳನ್ನು ಯಥಾವಿಧಿಯಾಗಿ ಆಚರಿಸಲೇ ಬೇಕು. ಆಚರಿಸದೆ ಇರುವದರಿಂದ ನಿಮಗೆಲ್ಲ ಹಲ್ಲುಜ್ಜುವ ಕಡ್ಡಿ ಎಷ್ಟಿರಬೇಕೆಂಬುದೇ ಗೊತ್ತಿಲ್ಲ. ಹೊರಗೆ ಹೋಗಿ ಬಂದಾದ ಮೇಲೆ  ತೊಳೆವುದೂ ಸಹ ನಿಮಗೆ ಗೊತ್ತಿದೆಯೊ ಇಲ್ಲೊ. ಹೊರಗಿನದನ್ನೆ ಅರಿಯದವನು ಒಳಗಿನದನ್ನು ಇನ್ನೆಷ್ಟು ಅರಿತಿರಬೇಕು? ಎಂದು ಚೆನ್ನಾಗಿ ಬುದ್ಧಿವಾದ ಹೇಳಿದರು.

 

ಇದನ್ನು ಕೇಳಿ ಸದಾಶಿವ ಸ್ವಾಮಿಗಳವರ ಮನಸ್ಸು ಪರಿವರ್ತನವಾಯಿತು. ಶಾರೀರಿಕ ಶೌಚವಿಧಾನವನ್ನೇ ಅರಿಯದ ಆತ್ಮವಿಚಾರದಿಂದ ಏನೂ ತಿರುಳಿಲ್ಲ ಎಂಬ  ವಾದ ಅವರ ಮನಸ್ಸಿಗೆ ಆಚ್ಚೊತ್ತಿದಂತಾಯಿತು. ಅದನರಿಯಲು ಮನಸ್ಸು ಉತ್ಸುಕಗೊಂಡಿತು. ಮೊದಲೆ ಆರೂಢರ ಕ್ರಿಯಾಲೋಪವನ್ನು ಒಪ್ಪದ ಸ್ವಾಮಿಗಳಿಗೆ ಇದನ್ನೆಲ್ಲ ಕಂಡಮೇಲೆ ಮತ್ತೂ ಮನಸ್ಸು ಅಲ್ಲಿರಲು ಹಿಮ್ಮೆಟ್ಟಿತು. ಶ್ರೀಗಳೊಡನೆ ಹೋಗಲು ಅಭಿಲಾಷೆಯಾಗಿ ಅವಾಗಳೆ ಅಪ್ಪಣೆ ಕೇಳಿದರು

 

ಯೋಗಧುರಂಧರರಾದ ಶ್ರೀಗಳವರು ‘ತಮ್ಮಾ ನಮ್ಮ ಸೇವೆ ಕಠಿಣವಾದುದು. ನೀನಾದರೊ ಆರೂಢರ ಶಿಥಿಲಾಚಾರ ಶಿಕ್ಷಣದಲ್ಲಿದ್ದವನು. ಕಷ್ಟದ ಸೇವೆಗೆ ಒಳಪಟ್ಟು ತೊಳಲಬೇಕಾದೀತು ? ತುಂಬಾ ವಿಚಾರಿಸಿ ಹೇಳು. ಎನ್ನಲು ಸ್ವಾಮಿಗಳ ಕಣ್ಣಲ್ಲಿ ನೀರೂರಿ ‘ಮಹಿಮರೆ, ಶಿವಯೋಗದ ಕಟ್ಟುಗಳು ಎಷ್ಟೇ ಕಷ್ಟದಾಯಕಗಳಾಗಿದ್ದರು ಸಹಿಸಬಲ್ಲೆನು, ಸೇವಿಸಬಲ್ಲೆನು. ತಮ್ಮೊಡನೆ ಬರಲು ತಮ್ಮ ಶಿಷ್ಯನಾಗಿರಲು ಅಪ್ಪಣೆ ಆಗಿಯೇ ತೀರಬೇಕೆಂದು ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರ ದೃಢನಿಶ್ಚಯವನ್ನು ಸತ್ಯಸಂಕಲ್ಪವನ್ನು ಕಂಡು ಶ್ರೀಗಳವರು ಶಿಷ್ಯನನ್ನಾಗಿ ಪರಿಗ್ರಹಿಸಿದರು.

ಸದಾಶಿವ ಸ್ವಾಮಿಗಳವರ ಸಂತೋಷಕ್ಕೆ ಪಾರವೆ ಇಲ್ಲದಾಯಿತು. ಬಹುದಿನಗಳ ನಿರೀಕ್ಷಣೆ ಇಂದು ಫಲಿಸಿತು; ಅಭೀಷ್ಟವು ತಾನೇ ಪ್ರಾಪ್ತಿಯಾಯಿತು; ತಾನಿದ್ದಲ್ಲಿಗೆ ಬಂದೊದಗಿತು. ವಿವೇಕಾನಂದರು ಪರಮಾತ್ಮನ ಪಿಪಾಸುಗಳಾಗಿ ದಕ್ಷಿಣೇಶ್ವರಕ್ಕೆ ಹೋದರೆ ನಮ್ಮ ಕಥಾನಾಯಕರಲ್ಲಿಗೆ ಶಿವನನ್ನು ಕಂಡ ಸದ್ಗುರುಗಳು ತಾವಾಗಿಯೇ ಆಗಮಿಸಿದರು; ಅನುಗ್ರಹಿಸಿದರು. ಭಾಗ್ಯವಿಶೇಷವಲ್ಲವೆ? ತಾನು ಹಂಬಲಿಸುತ್ತಿರುವ ವಸ್ತು ಅಥವಾ ಮಹಾವ್ಯಕ್ತಿ ತನ್ನಲ್ಲಿಗೆ ಬರುವುದೆಂದರೆ ಪುಣ್ಯದ ಪ್ರಭಾವ ಎಷ್ಟಿರಬೇಕು?

 

ಗುರುಗಳು ಬದುಕಿರುವವರೆವಿಗೂ ಅವರ ಸನ್ನಿಧಿಯಲ್ಲಿದ್ದು ಸೇವೆಗೈಯುತ್ತಾ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಶಿವಾನುಭವ ಸಾರಸವಿಯ ಸವಿದರು. ಅದಕ್ಕೆ ಮುಗ್ಧರಾದರು. ಪ್ರತಿದಿನ ರಾತ್ರಿ ನಿದ್ರೆ ಬರುವವರೆವಿಗು ಶಿವಾನುಭವ ಗ್ರಂಥಗಳನ್ನು ಓದುತ್ತಿದ್ದರು. ಹಗಲು ಗುರುಗಳ ಸಕಲವಿಧ ಸೇವೆಯಲ್ಲಿ ತೊಡಗಿರುತ್ತಿದ್ದರು. ಸೇವೆಯಲ್ಲಿ ಮೇಲು ಕೀಳೆಂಬ ಭಾವನೆಯಿರಲಿಲ್ಲ. ಯಾವ ಕೆಲಸವೆ ಆಗಲಿ ಗುರುಸೇವೆಯೆಂದು ಹರುಷದಿಂದ ಉಲ್ಲಾಸದಿಂದ ಮಾಡುತ್ತಿದ್ದರು. ಗುರುಗಳು ಶಿವಪೂಜೆಗೆ ಕುಳಿತಾಗ ಅದನ್ನು ತದೇಕ ಧ್ಯಾನದಿಂದ ತಲ್ಲೀನ ಮನಸ್ಸಿನಿಂದ ನಿರೀಕ್ಷಿಸುತ್ತಿದ್ದರು. ಆಗ ಬಾಹ್ಯ ಜಗತ್ತನ್ನು ಮರೆತಿರುತ್ತಿದ್ದರು. ಅವರಂತೆ ಅಂತರಾತ್ಮನ ಸಮರಸಕ್ಕೆ ಹಂಬಲಿಸುತ್ತಿದ್ದರು. ಗುರುಗಳ ಪೂಜೆಯ ಪ್ರಭಾವವು ಅವರ ಕಣ್ಣುಗಳ ಹೊಲಬಿನಿಂದ ಹೋಗಿ ಮನೋಮಂದಿರದಲ್ಲಿ ನಿಂದು ಅಂತರಂಗದಾದ್ಯಂತವನ್ನು ವ್ಯಾಪಿಸುತ್ತಿತ್ತು.  ಹೀಗೆ ಗುರುಗಳವರಲ್ಲಿ ಸದಾಚಾರ ಶಿವಪೂಜೆ ಶಿವಾನುಭವಗಳನ್ನು ಕಲಿತುದಲ್ಲದೆ ಯೋಗವಿದ್ಯೆಯನ್ನು ಅಭ್ಯಸಿಸಿದರು. ಕ್ರಿಯೋಪದೇಶವನ್ನು ಪಡೆದರು. ಗುರುಶಿಷ್ಯ ಸಂಬಂಧ ತೀರ ಹತ್ತಿರದ್ದಾಯಿತು; ತಾದಾತ್ಮ್ಯಭಾವದ್ದಾಯಿತು.

 

ಗುರುಶಿಷ್ಯರಿಬ್ಬರು ಸೇರಿ ಪ್ರಾಂತ ಪ್ರಯಾಣವನ್ನು ಕೈಕೊಂಡರು. ಅಲ್ಲಲ್ಲಿ ಸಂಚರಿಸುತ್ತ ಭಕ್ತಸಮೂಹಕ್ಕೆ ಸದ್ಬೋಧೆಯನ್ನು ಮಾಡುತ್ತ ಧಾರವಾಡ ಜಿಲ್ಲೆಯ ಅಣ್ಣಿಗೆರೆ ಗ್ರಾಮಕ್ಕೆ ಆಗಮಿಸಿದರು.  ಅಲ್ಲಿರುವಾಗಲೆ ಎಳಂದೂರು ಶ್ರೀಗಳವರಿಗೆ ದೇಹಾಲಸ್ಯವಾಯಿತು. ದಿನದಿನಕ್ಕೆ ದೇಹಾಲಸ್ಯವು ಉಲ್ಬಣಾವಸ್ಥೆಗೆ ಹೋಗಹತ್ತಿತು. ಇದನ್ನು ಕಂಡು ಸದಾಶಿವ ಸ್ವಾಮಿಗಳವರು ಚಿಂತಿಸತೊಡಗಿದರು. ಇದನ್ನು ಕಂಡು ಗುರುವರ್ಯರು ಹತ್ತಿರಕ್ಕೆ ಕರೆದು ನೇವರಿಸಿ ಕುಮಾರಾ! ನಿನ್ನಲ್ಲಿ ಯೋಗವಿದೆ; ತ್ಯಾಗವಿದೆ. ವಿರತಿಯಿದೆ ಉಪರತಿಯಿದೆ. ಕಾರ್ಯದಕ್ಷತೆಯಿದೆ; ಅಧ್ಯಾತ್ಮಿಕ ಬಲವಿದೆ. ಇನ್ನೇನಾಗಬೇಕು? ಸುಮ್ಮನೆ ಅಂಜದಿರು, ಅಳುಕದಿರು. ಧೈರ್ಯಗುಂದದೆ ಸತ್ಕಾರ್ಯ ತತ್ಪರನಾಗು. ಸಮಾಜಸೇವೆಯನೆಸಗು. ಸಮಾಜವು ಯೋಗಬಲ ಹೀನವಾಗಿದೆ. ತ್ಯಾಗಗುಣ ರಹಿತವಾಗಿದೆ. ವಿದ್ಯೆ-ಧರ್ಮಗಳಿಲ್ಲದೆ ಕುರುಡಾಗಿದೆ. ನಿರ್ವೀರ್ಯವಾದ ಸಮಾಜಕ್ಕೆ ಕಳೆತುಂಬಿ ಕಣ್ಣರಳಿಸಲು ನೀನು ಮುಂದೆ ಬರಬೇಕು.ಕೇವಲ ಯೋಗಿಯಾಗಿ ವಿರಾಗಿಯಾಗಿ ಕಣ್ಮುಚ್ಚಿ ಕುಳಿತರೆ ಸುಖವಿಲ್ಲ. ಸಮಾಜವು ಶಕ್ತಿಗುಂದಿ ಸಣ್ಣಾಗುತ್ತಿರುವಾಗ ಒಬ್ಬನೆ ಮುಕ್ತನಾಗಲು ಹವಣಿಸುವುದು ಹೆಚ್ಚಿನ ಸ್ವಾರ್ಥ. ಸಮಾಜ ಸೇವೆಯ ಯುಕ್ತಯೋಗ, ಅದೇ ತಾತ್ವಿಕ ತಪಸ್ಸು, ಸಮಾಜವೇ ನಿನ್ನ ಜೀವನ.  ಸಮಾಜಸೇವೆಯೆ ನಿನಗೆ ಪಾವನ, ಸಮಾಜದ ಮಕ್ಕಳೆ ನಿನ್ನ ಮಕ್ಕಳು. ಸಮಾಜದೇಳ್ಗೆಯೆ ನಿನ್ನ ಏಳ್ಗೆ.  ಸಮಾಜ ಮುಕ್ತಿಯೆ ನಿನ್ನ ಮುಕ್ತಿ .  ಯೋಚಿಸಬೇಡ. ಯೋಧನಂತೆ ಧೈರ್ಯತಾಳು. ನಿನಗೆ ದೇವನ ಬೆಂಬಲವಿದೆ. ಆಯುಷ್ಯರೇಖೆಯಿದೆ. ಸಮಾಜವೇ ನಾನೆಂದು ಭಾವಿಸಿ ಸೇವಿಸು. ಇದರಿಂದ ನೀನು ಆದರ್ಶಜೀವಿಯಾಗುವೆ. ಅಸಾಧಾರಣ ಶಿವಯೋಗಿಯಾಗುವೆ ಎಂದು ಹೇಳಿ ತಮ್ಮ ಯೋಗದ ಸಾಧನ ಸಾಮಗ್ರಿಗಳನ್ನು ಪೂರ್ಣ ಕೃಪಾ ಪ್ರಸಾದಾನುಗ್ರಹ ದೀಕ್ಷೆಯಿತ್ತು ಶುಭಾಶೀರ್ವಾದವನ್ನು ಕೊಟ್ಟು, ಲಿಂಗೈಕ್ಯರಾಗುವರು. ಸ್ವಾಮಿಗಳಾದರೊ ಗುರು ಅನುಗ್ರಹಿಸಿದುದನ್ನೆ ತಮ್ಮ ಭಾವೀ ಜೀವನದ ಪರಮ ಸಂಪತ್ತೆಂದು ಪರಮಾರ್ಥ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತರಾದರು. ಆದರೂ ಗುರುವಿರಹದ ವ್ಯಥೆಯನ್ನು ಕೆಲವು ಕಾಲ ಅನುಭವಿಸದೆ ಇರಲಿಲ್ಲ.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

 

 

 

ಗ್ರಹಗೋಂಕಿದವ ತಾನೆ | ಗ್ರಹವಾಗುತಿಹನಂತೆ

ಮಹಲಿಂಗವ ನೀ | ವಹಿಸಲ್ಕೆ ನೀ ಲಿಂಗ

ವಹೆಯೆಂದ ಗುರುವೆ ಕೃಪೆಯಾಗು   || ೧೩೬ ॥

 

ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕರು ಭೂತ-ಪ್ರೇತ-ಪಿಶಾಚಿಗಳನ್ನು ನಂಬುವದಿಲ್ಲ. ಹಲವರು ಹೆಚ್ಚಾಗಿ ನಂಬುತ್ತಾರೆ. ಕೆಲವರಂತೂ ಅತ್ಯಂತ ಭಯ ಪಡುತ್ತಾರೆ. ಆದರೆ ಅವುಗಳ ಯಥಾರ್ಥತೆಯನ್ನರಿತರೆ ಅಧೈರ್ಯಪಡಲೇಬೇಕಾಗುವದಿಲ್ಲ. ಮಾನವನ ಅತ್ಯಧಿಕವಾದ ದುರಾಶೆಯು ಶಾಂತವಾಗದೆ ದುರ್ಮರಣ ವನ್ನಪ್ಪಿದರೆ ಅವನ ಕಾರಣ ಶರೀರಗತವಾದ ಅತೃಪ್ತವಾಸನೆಯು ದುರ್ಬಲ ಮನಸ್ಸಿನ ಮಾನವರಲ್ಲಿ ಪ್ರವೇಶಿಸಿ ತನ್ನ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೇನೆ ಗ್ರಹಬಡಿಯುವದೆಂಬ ವಾಡಿಕೆ ಬೆಳೆದು ಬಂದಿದೆ. ವಾಸನಾಮಯೀ ಜೀವಿಯು ಪರಕಾಯವನ್ನು ಪ್ರವೇಶಿಸಿ ವಿವಿಧ ರೀತಿಯಲ್ಲಿ ತನ್ನ ಬಯಕೆಯನ್ನು ತೀರಿಸಿಕೊಳ್ಳಲು ಪ್ರಯತ್ನಸುತ್ತದೆ. ಆದ್ದರಿಂದ ಗ್ರಹಹೊಡೆದವನು ಆ ಪಿಶಾಚಿಯ ನಡೆ-ನುಡಿಯನ್ನು ಅವಶ್ಯ ಅನುಸರಿಸುವನು. ಹೆಣ್ಣುಗಂಡಿನಂತೆ ವರ್ತಿಸುವದು ಅಥವಾ ಗಂಡು ಹೆಣ್ಣಿನಂತೆ ವರ್ತಿಸುವದು ಕಾಣಬರುತ್ತದೆ.

 

ಗ್ರಹಸೋಂಕಿದವನು ಗ್ರಹದಂತಾಗುತ್ತಿರುವಾಗ ಪರಮ ಪವಿತ್ರವಾದ ಮಹಾಲಿಂಗದ ಸಂಬಂಧದಿಂದ ಜೀವಾತ್ಮನು ಲಿಂಗಮಯನಾಗುವದು ಸಾಧ್ಯವಿದೆ. ಶಿವಯೋಗಿ ಶಿವಾಚಾರ್ಯರು ತಮ್ಮ ಸಿದ್ಧಾಂತ ಶಿಖಾಮಣಿ’ಯಲ್ಲಿ

 

 ಇಷ್ಟಲಿಂಗಮಿದಂ ಸಾಕ್ಷಾದನಿಷ್ಟ – ಪರಿಹಾರಕಮ್ |

ಧಾರಯೇದವಧಾನೇನ ಶರೀರೇ ಸರ್ವದಾ ಬುಧಃ  || ೬-೫೦ ||

 

ಸುಜ್ಞಾನಿಯಾದವನು ಪ್ರತ್ಯಕ್ಷವಾಗಿ ಸಾಂಸಾರಿಕ ಅನಿಷ್ಟವನ್ನು ಪರಿಹರಿಸಬಲ್ಲ. ಈ ಇಷ್ಟಲಿಂಗವನ್ನು ತ್ರಿಕಾಲದಲ್ಲಿಯೂ ಶರೀರದ ಮೇಲೆ ಸಾವಧಾನದಿಂದ ಧರಿಸಬೇಕೆಂದು ಶ್ರೀ ರೇಣುಕಾಚಾರ್ಯರ ವಾಣಿಯಲ್ಲಿ ತಿಳಿಸಿದ್ದಾರೆ.

 

ಹಿಂದೆ ವಿವರಿಸಿದ ಆರೂ ಸ್ಥಾನಗಳನ್ನು ಹೊರತುಪಡಿಸಿ ಕೆಲವರು ಲಿಂಗವನ್ನು ನಡದಲ್ಲಿ ಹಾಕುವರು .. ಕೆಲವರಿಗಂತೂ ಇದೊಂದು ಹೊಸಬಗೆಯಾಗಿದೆ. ಆದರೆ ಇದು ಶುದ್ಧತಪ್ಪು. ಯಾಕಂದರೆ-

 

ನಾಭೇರಧಸ್ತಾತ್ ಲಿಂಗಸ್ಯ ಧಾರಣಂ ಪಾಪಕಾರಣಮ್ || ಸಿ. ಶ. ೬-೫೨ ||

 

ನಾಭಿಯ ಕೆಳಗೆ ಲಿಂಗವನ್ನು ಧರಿಸುವದರಿಂದ ಪಾಪ ಭಾಗಿಗಳಾಗಬೇಕಾಗುವದು. ಅಗಸ್ತ್ಯರಿಗೆ ರೇಣುಕರು ಎಚ್ಚರಿಕೆಯನ್ನಿತ್ತಿದ್ದಾರೆ. ಇಷ್ಟಲಿಂಗವು ಸಾಮಾನ್ಯವಾದುದಲ್ಲ. ನಮ್ಮ ಸಕಲ ಅನಿಷ್ಟಗಳನ್ನು ಕಳೆಯಬಲ್ಲ ಮಹಾಸಾಧನವಾಗಿದೆ. ಜ.ಚ.ನಿ. ಯವರು ಸಿದ್ಧಾಂತ ಶಿಖಾಮಣಿಯ ಅನುವಾದ ಕಾವ್ಯವೆನಿಸಿದ ‘ಮಣಿ ಮುಕುರ’ದಲ್ಲಿ

 

ಇಷ್ಟಲಿಂಗವಿದು ತಾಂ ಸಾಕ್ಷಾದನಿಷ್ಟ ಪರಿ-

ಹಾರಕಮಿದನಂ ಬಲ್ಲಿದರಾವಾಗಳುಂ

ಶರೀರದೊಳವಧಾನದಿಂದಗಲದಂತೆವೊಲ್

ಧರಿಸಿರ್ಪುಳ್ಕರಿಂ ಸುಕ್ಷೇಮ ಕಾರಣಂ || ಪು ೫೬ ||

 

ಇಷ್ಟಲಿಂಗವನ್ನು ಅವಧಾನಪೂರ್ವಕ ಸದಾ ಶರೀರದ ಮೇಲೆ ಧರಿಸಿಕೊಂಡಿರ ಬೇಕೆಂದು ಹೇಳಿದ್ದಾರೆ. ಆದರೆ ಇಂದಿನ ವೀರಶೈವ ಧರ್ಮಾನುಯಾಯಿಗಳು – ಲಿಂಗವನ್ನು ಹಾಕಿಕೊಳ್ಳುವದೇ ಬೇಡವಾಗಿದೆ. ಹಾಕಿದರೆ ನಾಚಿಕೆ, ಅದನ್ನು ದೇವರ ಜಗುಲಿಯ ಮೇಲೋ, ಮನೆಯಗೂಟಕ್ಕೂ ಹಾಕುತ್ತಾರೆ. ಹಲವರಿಗೆ ದೇವರೂ ಇರುವದಿಲ್ಲ. ಕೆಲವರು ಸ್ನಾನ ಮಾಡಿದಾಗ ಪೂಜಿಸಿ ಪುನಃ ಜಗುಲಿಗೆ ಕಳಿಸುತ್ತಾರೆ. ಜಗುಲಿಯ ಮೇಲೆ ಇಡುವದರಿಂದ ಅದು ಇಷ್ಟಲಿಂಗವೆನಿಸುವದಿಲ್ಲ. ಗುರುದೀಕ್ಷೆಯ ಸಂಸ್ಕಾರದಿಂದ ಬಂದ ಲಿಂಗವೇ ಲಿಂಗಗುಣಗಳನ್ನು ಕರುಣಿಸಬಲ್ಲುದು. ಮತ್ತೆ ಕೆಲವರು ಲಿಂಗದ ಕರಡಿಗೆಯನ್ನು ಶೋಭೆಗೆಂದು ಧರಿಸುತ್ತಾರೆ. ಆದರೆ ಅದು ಖಾಲಿಯಾಗಿಯೋ ಅಥವಾ ಚಿಲ್ಲರೆ ನಾಣ್ಯಗಳನ್ನಿಡುವ ಪೆಟ್ಟಿಗೆಯಾಗಿಯೋ ಉಪಯೋಗಿಸಲ್ಪಡುತ್ತದೆ. ಇಂಥ ಲಿಂಗವಂತರಿಗೆ ಲಿಂಗವಂತಿಕೆಯಾಗಲಿ ಅಥವಾ ಲಿಂಗಗುಣಗಳಾಗಲಿ ಯಾವ ಕಾಲದಲ್ಲಿಯೂ ಬರಲಾರವು. ಅವರು ಲಿಂಗವಂತರೆಂದೆನ್ನಿಸಿಕೊಳ್ಳಲು ಯೋಗ್ಯರಲ್ಲ.

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವೆಂಬ ಭಾವ ಬಲಿಯಬೇಕು. ಆಗ ಪ್ರಾಣಲಿಂಗದ ಸಂಬಂಧವಾಗುವದು. ಇಷ್ಟಲಿಂಗವು ಅಕಸ್ಮಾತ್ ಕಳಚಿದರೆ ಪ್ರಾಣವು  ತಾನಾಗಿ ಹೋದಂತಾಗಬೇಕು. ಇಂಥ ಭಾವ ಬೆಳೆಯುವದರಿಂದ ಭಾವಲಿಂಗ ಸಂಗಿಯೆನಿಸುವನು. ಇವನಿಗೆ ಭಾವಲಿಂಗದ ಸಾಕ್ಷಾತ್ಕಾರ ಸುಲಭವಾಗುವದು. ನಿಜ ಲಿಂಗಮಯನಾಗುವನು, ಓ ಗುರುವೆ’! ಕರುಣಿಸು ನಿಜಲಿಂಗಸ್ವರೂಪಿ ನಾನಾಗುವಂತೆ

‘ಪೂಜ್ಯೇಷು ಅನುರಾಗೋ ಭಕ್ತಿಃ’ ಪೂಜ್ಯರಲ್ಲಿರುವ ಅನುರಾಗ(ಪ್ರೇಮ)ವೇ ಭಕ್ತಿ ಎಂದು ನಾರದಭಕ್ತಿಸೂತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರು, ತಂದೆ- ತಾಯಿಗಳು ನಮಗೆ ಪೂಜ್ಯರು. ಅವರಲ್ಲಿ ನಾವು ಶ್ರದ್ಧಾಪೂರ್ವಕವಾದ ಪ್ರೇಮವನ್ನು ಹೊಂದಿರುತ್ತೇವೆ. ಇದು ಭಕ್ತಿ ಎನಿಸಿದರೂ ‘ಈಶ್ವರೇ ಪರಾನುರಕ್ತಿಃ ಭಕ್ತಿ’ ಅಂದರೆ ಪರಮಾತ್ಮನಲ್ಲಿ ನಾವು ಇಡುವ ಅತಿಶಯವಾದ ಅನುರಕ್ತಿಯೆ ಭಕ್ತಿ ಎಂದು ಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪರಮಾತ್ಮನಲ್ಲಿರುವ ನಮ್ಮ ಶ್ರದ್ಧೆ, ಅನುರಕ್ತಿಗಳು ನಿಷ್ಠೆಯಾಗಿ ಮುಂದುವರೆಯಬೇಕು. ಆ ನಿಷ್ಠೆ ಏಕೋಭಾವವಾಗಿ ಸಹಜಗುಣವಾಗಿ ಬೆಳೆಯಬೇಕು. ಅಂದರೆ ಇಹಪರಗಳೆಲ್ಲವನ್ನು ಮರೆತು ಪರಮಾತ್ಮನೊಬ್ಬನನ್ನೆ ಮನದಲ್ಲಿ ನೆನೆವುದು ಅತ್ಯಂತ ಶ್ರೇಷ್ಠವಾದ ಭಕ್ತಿ ಎನಿಸುವುದು.

ಜಗತ್ತಿನಲ್ಲಿ ಅನೇಕರು ಬರೀ ಆಡಂಬರದ ಪೂಜಾದಿಗಳನ್ನು ನೆರವೇರಿಸುತ್ತ ತಾವೇ ಪರಮಭಕ್ತರೆಂದೂ, ತಾವು ಆಚರಿಸುವ ಭಕ್ತಿಯೇ ಶ್ರೇಷ್ಠ ಭಕ್ತಿ ಎಂದೂ ಗರ್ವದಿಂದ ನುಡಿಯುತ್ತಾರೆ. ಮನಸ್ಸಿನಲ್ಲಿ ಯಾವುದೇ ಶ್ರದ್ಧೆ, ನಿಷ್ಠೆ ಹಾಗು ದೃಢತೆ ಇಲ್ಲದ ಇಂತಹವರ ಭಕ್ತಿಯನ್ನು ಕಂಡು ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ’ ಎಂದು ಹೇಳುವ ಆಯ್ದಕ್ಕಿ ಲಕ್ಕಮ್ಮ. ಅದು ನಿರರ್ಥಕವಾದ ಭಕ್ತಿ, ಅದೆಂದೂ ಪರಮಾತ್ಮನಿಗೆ ಸಲ್ಲದು ಎಂದು ಸ್ಪಷ್ಟಪಡಿಸುತ್ತಾಳೆ. ನಿಜವಾದ ಭಕ್ತನು ಸದಾಚಾರವನ್ನು ಅರಿತು ಆಚರಿಸುತ್ತಾನೆ. ಸಿರಿಸಂಪತ್ತುಗಳ ವಿಷಯದಲ್ಲಿ ಅವನೆಂದೂ ಅಹಂಕಾರ, ಮಮಕಾರಗಳನ್ನು ಹೊಂದುವುದಿಲ್ಲ. ಅವೆಲ್ಲವೂ ಪರಮಾತ್ಮನ ಸೊಮ್ಮು ಎಂಬ ಭಾವ ಅವನಲ್ಲಿ ಗಟ್ಟಿಗೊಂಡಿರುತ್ತದೆ. ದಾಸೋಹಂಭಾವದಿಂದ ಶಿವನ ಸೊಮ್ಮು ಶಿವನಿಗೆ ಅರ್ಪಿಸುವ ಭಕ್ತನು ಶಿವನಿಗೆ ಪ್ರಿಯನಾಗಿರುತ್ತಾನೆ. ಭಕ್ತಿಯ ಕುರುಹಾದ ದಾಸೋಹವನ್ನು ಮಾಡುವುದು ಭಕ್ತನ ಕರ್ತವ್ಯಗಳಲ್ಲೊಂದು. ಪರಮಾತ್ಮನು ಭಕ್ತಿಪ್ರಿಯ. ಭಕ್ತಿಯಿಂದ ಸಮರ್ಪಿಸಿದ ನೀರೂ ಕೂಡ ಅವನಿಗೆ ಪ್ರಿಯವೆ.

ಭಕ್ತಿಯ ಪ್ರಾರಂಭದ ಹಂತದಲ್ಲಿ ಪೂಜ್ಯನಾದ ದೇವ ಬೇರೆ, ಪೂಜಕನಾದ ತಾನು ಬೇರೆ ಎಂಬ ಭಾವ ಇರುತ್ತದೆ. ಭಕ್ತಿವಿಕಾಸವಾದಂತೆ ಪೂಜ್ಯ ಪೂಜಕನೆಂಬ ಭೇದಭಾವ ಇಲ್ಲದಂತಾಗಿ ಭಕ್ತ ಮತ್ತು ದೇವರಲ್ಲಿ ಸಹಜ ಸಾಮರಸ್ಯ ಉಂಟಾಗುತ್ತದೆ. ಇದೇ ಭಕ್ತಿಯ ನಿಜವಾದ ಉದ್ದೇಶ ಈ ಉದ್ದೇಶ ಈಡೇರಿದಾಗ ಭಕ್ತನು ಜನನ ಮರಣಗಳಿಂದ ಮುಕ್ತನಾಗಿ ಸ್ವಸ್ವರೂಪಾನುಸಂಧಾನದಲ್ಲಿ ನಿರತನಾಗುತ್ತಾನೆ. ಅದುವೇ ಮೋಕ್ಷ ಸ್ಥಿತಿ.

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ’ ಮೋಕ್ಷ ಸಂಪಾದನೆಯ ಅನೇಕ ಮಾರ್ಗಗಳಲ್ಲಿ ಭಕ್ತಿಮಾರ್ಗದಷ್ಟು ಸರಳವಾದ, ಸುಲಭವಾದ ಮಾರ್ಗ ಬೇರೊಂದಿಲ್ಲ. ಅನನ್ಯಗತಿಕನಾಗಿ ಭಕ್ತಿಯಿಂದ ನೆನೆವ ಭಕ್ತನನ್ನು ಸರ್ವವಿಧದಿಂದಲೂ ದೇವನೆ ರಕ್ಷಿಸುವನು. ಭಕ್ತನು ಮಾತ್ರ ಸದಾ ಆನಂದಾನುಭೂತಿಯಲ್ಲಿ ಮಗ್ನನಾಗಿರುತ್ತಾನೆ. ಕೊನೆಗೆ ದೇವರಲ್ಲಿಯೇ ಲೀನನಾಗುತ್ತಾನೆ. ಆನಂದಾನುಭೂತಿಯ ಸ್ಥಿತಿಯಂತೂ ಮೋಕ್ಷಕ್ಕಿಂತಲೂ ಶ್ರೇಷ್ಠವಾದುದು. ಅದು ಭಕ್ತನಿಗೆ ಮಾತ್ರ ಸಾಧ್ಯವಾದುದು. ಅದಕ್ಕಾಗಿಯೇ ನಿಜಗುಣ ಶಿವಯೋಗಿಗಳು:

ಕರುಣಿಸೆನಗಿದನ ಬೇಡುವನಭವ ಬೇರೊಂದು

ವರವನೊಲ್ಲೆನು ಮುಕ್ತಿದೊರೆವ ಸಾಧನವ

ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತಿಯನ್ನಾಚರಿಸುವ ಸಂದರ್ಭದಲ್ಲಿ ದೊರೆವ ಸುಖ, ಆನಂದ ಮುಕ್ತಿಯ ಸ್ಥಿತಿಯಲ್ಲಿ ದೊರೆಯದು. ಮುಕ್ತಿ ಎಂಬ ಸಕ್ಕರೆಯಾಗುವುದಕ್ಕಿಂತ ಇರುವೆಯಾಗಿ ಸಕ್ಕರೆಯ ಸವಿಯನ್ನು ಸವಿಯುವುದೇ ಮೇಲು ಎಂಬುದು ಅವರ ಅಭಿಪ್ರಾಯ. ಮುಕ್ತಿಗಿಂತ ಭಕ್ತಿಯೇ ಶ್ರೇಷ್ಠ, ಭಕ್ತಿಯೇ ಮುಕ್ತಿಯ ಜನನಿ. ಭಕ್ತಿಯ ಬಲದಿಂದ ಏನೆಲ್ಲವನ್ನೂ ಭಕ್ತನು ಸಾಧಿಸುತ್ತಾನೆ. ಆದರೆ ಅವನ ಭಕ್ತಿಯಲ್ಲಿ ಶ್ರದ್ಧೆ ನಿಷ್ಠೆಗಳು ನೆಲೆಗೊಂಡಿರಬೇಕು. ಅದುವೆ ನಿಜಭಕ್ತಿ, ಅದುವೇ ಮುಕ್ತಿಗೆ ಸಾಧನ.

ವೀರಶೈವ ಸಾಧಕನು ಗುರು,ಲಿಂಗ,ಜಂಗಮರನ್ನ ವಿಭೂತಿ,ರುದ್ರಾಕ್ಷಿ,ಮಂತ್ರಗಳಿಂದ ಪೂಜಿಸಿದಾಗ ದೊರೆಯುವ ಫಲವೇ ಪಾದೋದಕ-ಪ್ರಸಾದ.

ಪದಾರ್ಥವೆಂದರೆ:- ತಾನೆ ದುಡಿದದ್ದು,ತನ್ನದು ಎಂಬ ಅಹಂಕಾರ ಮಮಕಾರಗಳಿಂದ ಭುಂಜಿಸುವ ಆಹಾರ ಅದು ಪದಾರ್ಥ.

ಪ್ರಸಾದವೆಂದರೆ:- ಅದು ಪೂಜ್ಯರ ಕೃಪೆ,ಭಗವಂತನದಯೆ, ಹಿರಿಯರಿಂದ ಪಡೆದದ್ದು ಅನ್ನುವ ಭಾವದೊಂದಿಗೆ , ದೇವರಿಗೆ ಅರ್ಪಿಸಿ ಬಂದುದ್ದನ್ನ ದಾಸೋಹಂ ಭಾವದಿಂದ ಸೇವಿಸುವ ಆಹಾರ ಅದು ಪ್ರಸಾದ.

“ಎಲ್ಲಿ ಸೋಹಂ ಭಾವವಿದೆ ಅದು ಪದಾರ್ಥ, ಎಲ್ಲಿ  ದಾಸೋಹಂ ಭಾವವಿದೆ ಅದು ಪ್ರಸಾದ”

“ಪದಾರ್ಥ ಸೇವನೆಯಿಂದ ಬಂಧನ, ಪ್ರಸಾದ ಸೇವನೆಯಿಂದ ಮುಕ್ತಿ”

ಯಾವುದನ್ನು ಸ್ವೀಕರಿಸಿದಾಗ ಪ್ರಸನ್ನತೆ ಉಂಟಾಗುವುದು ಅದುವೇ ಪ್ರಸಾದ.

ಬಾಹ್ಯ ದ್ರವ್ಯವು ಪದಾರ್ಥವಾದರೆ, ಅಂತರ್ದ್ರವ್ಯವು (ಶುದ್ಧ ಭಾವ) ಪ್ರಸಾದವಾಗುತ್ತದೆ.

ಇಷ್ಟಲಿಂಗಕ್ಕೆ ರೂಪವನ್ನು, ಪ್ರಾಣಲಿಂಗಕ್ಕೆ ರುಚಿಯನ್ನು, ಭಾವಲಿಂಗಕ್ಕೆ ತೃಪ್ತಿಯನ್ನು ನೀಡುವುದೇ ಪ್ರಸಾದ ರಹಸ್ಯ.

“ಒಲ್ಲೆನೆಂಬುದು ವೈರಾಗ್ಯ;ಒಲಿವೆನೆಂಬುದು ಕಾಯ ಗುಣ

ಆವ ಪದಾರ್ಥವಾದಡೇನು? ತನ್ನಿದ್ದೆಡೆಗೆ ಬಂದುದ

ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ

ಕೂಡಲಸಂಗಮ ದೇವರ ನೊಲಿಸ ಬಂದ ಪ್ರಸಾದ ಕಾಯವ ಕೆಡಿಸಲಾಗದು”

– ಜೀವಿಯು ದಿಕ್ಷೆಯಿಂದ ಶುದ್ಧನಾಗಿ ಗುರುಲಿಂಗ ಜಂಗಮರನ್ನ ಪೂಜಿಸಿ, ಇವರಿಗೆ ತನ್ನದೆನ್ನುವದನ್ನೆಲ್ಲವನ್ನು ಅಂದರೆ ಬರಿ ಆಹಾರವನ್ನಷ್ಟೇ ಅಲ್ಲ, ಭೋಗ್ಯ ವಿಷಯಗಳನ್ನು, ಭೋಗಸಾಧನಗಳಾದದೇಹಂದ್ರಿಯಗಳನ್ನು,

ಭೋಕೃತವಾದ ತನ್ನನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ

ಇವೆಲ್ಲವುಗಳನ್ನು ಪ್ರಸಾದ ರೂಪವಾಗಿ ಸ್ವೀಕರಿಸಬೇಕು.

ಆಗ ಜೀವಿಯು ಶಿವನಂತೆ ಪ್ರಸಾದ ರೂಪನಾಗುವನು.

:- ಪ್ರಸಾದದಲ್ಲಿ 11 ವಿಧ

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂಬರು ನೀವು ಕೇಳಿರಿ

ಶುದ್ಧ ಪ್ರಸಾದ ಗುರು ಮುಖದಿಂದ ಬಂದುದು

ಸಿದ್ಧ ಪ್ರಸಾದ ಲಿಂಗ ಮುಖದಿಂದ ಬಂದುದು

ಪ್ರಸಿದ್ಧ ಪ್ರಸಾದ ಜಂಗಮ ಮುಖದಿಂದ ಬಂದುದು

ಇದರೊಳಗೆ ಆವುದ ಘನವೆಂಬೇ? ಆವುದ ಕಿರಿದೆಂಬೇ

ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ.

ಗುರುಪ್ರಸಾದದಿಂದ ತನು ಶುದ್ಧವಾಯಿತು.

ಲಿಂಗಪ್ರಸಾದದಿಂದ ಮನಶುದ್ದವಾಯಿತು.

ಜಂಗಮಪ್ರಸಾದದಿಂದ ಭಾವ ಶುದ್ಧವಾಯಿತು.

ಶರಣ ಸಂಗದಿಂದ ಪ್ರಸಾದ ಸಾಧ್ಯವಾಯಿತು

ಕೂಡಲ ಚನ್ನಸಂಗಮದೇವಯ್ಯ ಈ ತ್ರಿವಿಧ ಪ್ರಸಾದವ ಕೊಂಡೆನ್ನ ಭವಂನಾಸ್ತಿಯಾಯಿತ್ತು.

 

1 ಶುದ್ಧ ಪ್ರಸಾದ:- ಭಸ್ಮ ಲೇಪಿತಹಸ್ತದಿಂದ ಊಟದ ಪಾತ್ರೆಯಲ್ಲಿರುವ ಭೋಜನ ಪದಾರ್ಥಗಳನ್ನು ಶುದ್ಧ ಮಾಡುವುದು ಶುದ್ಧ ಪ್ರಸಾದ.

2 ಸಿದ್ದಪ್ರಸಾದ:- ಶುದ್ಧ ಪ್ರಸಾದವನ್ನು ಲಿಂಗಕ್ಕರ್ಪಿಸಿದಾಗ  ಅಲ್ಲಿ ಪ್ರಸಾದ ಕಳೆವೇಧಿಸುವುದೇ ಸಿದ್ದ ಪ್ರಸಾದ.

3 ಪ್ರಸಿದ್ಧ ಪ್ರಸಾದ:- ಸಿದ್ದಪ್ರಸಾದವನ್ನು ಜಂಗಮಾರ್ಪಣ ಭಾವದಿಂದ ನಾಲಿಗೆಮೇಲಿಟ್ಟು ಸ್ವೀಕರಿಸುವುದೇ ಪ್ರಸಿದ್ಧ ಪ್ರಸಾದ .

4ಆಪ್ಯಾಯನ ಪ್ರಸಾದ:-ಶುದ್ಧ,ಸಿದ್ಧ,ಪ್ರಸಿದ್ಧ ಪ್ರಸಾದ ಸೇವನೆಯಿಂದಾದ ಮನೋವಿಕಾಸವೇ ಅಪ್ಯಾಯನ ಪ್ರಸಾದವೆನಿಸುತ್ತದೆ.

5 ಸಮಯ ಪ್ರಸಾದ:-ಈ ಪ್ರಸಾದ ಸೇವನೆಯ ಸಮಯದಲ್ಲಿ ಇತರ ಪದಾರ್ಥಗಳನ್ನು ಸೇವಿಸುವುದು ಅನರ್ಪಿತವೆಂದು ತಿಳಿಯುವುದು ಸಮಯಪ್ರಸಾದವಾಗಿದೆ.

6 ಪಂಚೇಂದ್ರಿಯವಿರಹಿತ ಪ್ರಸಾದ:- ಇತರ ವಿಷಯಗಳ ಕಡೆಗೆ ಪಂಚೇಂದ್ರಿಯಗಳನ್ನು ಹೋಗಗೊಡದಿರುವುದು.

7 ಅಂತಃಕರಣ ವಿರಹಿತ ಪ್ರಸಾದ:- ಇತರ ಸಂಕಲ್ಪಾದಿಗಳಿಗೆ ಅಂತಃಕರಣ ಸುಳಿಯದಂತೆಮಾಡಿ ನಿಶ್ಚಲತೆಯಿಂದ ಪ್ರಸಾದ ಸೇವಿಸುವುದು.

8 ಪ್ರಸಾದೀಯ ಪ್ರಸಾದ:- ಗುರುಲಿಂಗ ಜಂಗಮದಿಂದ ಪಡೆದ ಪ್ರಸಾದದೊಡನೆ ತನ್ನ ಪ್ರಸಾದವನ್ನು ಭುಂಜಿಸುವುದು ಪ್ರಸಾದೀಯ ಪ್ರಸಾದ.

9 ಸದ್ಭಾವ ಪ್ರಸಾದ:- ಪ್ರಸಾದದಲ್ಲಿ ಪದಾರ್ಥ ಭಾವನೆಯನ್ನಳಿದು ಸದ್ಭಾವದಿಂದ ಭೋಗಿಸುವುದು.

10 ಸಮತಾ ಪ್ರಸಾದ:- ಪ್ರಸಾದ ಸೇವನೆಯ ಸಮಯದ ಹೊರತು ಇನ್ನೇನನ್ನೂ ಸೇವಿಸದೆ ಶಾಂತಿ ಸಹನೆಗಳಿಂದ ಇರುವುದು.

11 ಜ್ಞಾನ ಪ್ರಸಾದ:- ಈ ಸಮತಾಪ್ರಸಾದದಿಂದ ಪುನಃ ಪೂಜೆ ಪ್ರಾರಂಭವಾಗುವವರೆಗೂ ಪ್ರಸಾದಕಾಯನಾಗಿರುವುದು ಜ್ಞಾನ ಪ್ರಸಾದವಾಗಿ ಕಂಗೊಳಿಸುತ್ತದೆ.

-ಗುರುವಿನ ಮುಖಾಂತರ ಬಂದ ಪ್ರಸಾದಕ್ಕೆ ಶುದ್ಧ ಪ್ರಸಾದ, ಇಷ್ಟಲಿಂಗಪ್ರಸಾದ,ರೂಪ ಪ್ರಸಾದ,ತ್ಯಾಗಾಂಗ ಪ್ರಸಾದವೆಂಬರು.

ಲಿಂಗ ಮುಖಾಂತರ ಬಂದ ಪ್ರಸಾದಕ್ಕೆ ಸಿದ್ಧ ಪ್ರಸಾದ,ಪ್ರಾಣ ಲಿಂಗಪ್ರಸಾದ, ರುಚಿ ಪ್ರಸಾದ ಭೋಗಾಂಗ ಪ್ರಸಾದವೆಂಬರು.

ಜಂಗಮನ ಮುಖಾಂತರ ಬಂದ ಪ್ರಸಾದಕ್ಕೆ ಪ್ರಸಿದ್ಧ ಪ್ರಸಾದ, ಭಾವಲಿಂಗ ಪ್ರಸಾದ,ತೃಪ್ತಿ ಪ್ರಸಾದ,ಯೋಗಾಂಗ ಪ್ರಸಾದವೆಂಬರು.

ಈ ಪ್ರಸಿದ್ಧ ಪ್ರಸಾದ ಅರ್ಥಾತ್ ಜಂಗಪ್ರಸಾದವನ್ನ ಮಹಾಮನೆಯಲ್ಲಿ ಬಸವೇಶ್ವರರು ಸ್ವೀಕರಿಸುತ್ತಿದ್ದರು

ಬಸವೇಶ್ವರರು ಮಿಗಿಸಿದ ಪ್ರಸಾದವನ್ನ ಅವರ ಸೇವಕರು ಸ್ವೀಕರಿಸುತ್ತಿದ್ದರು, ಅವರ ಸೇವಕರು ಮಿಗಿಸಿದ ಪ್ರಸಾದವನ್ನ ಕಲ್ಯಾಣದ ಅಂಗಳಕ್ಕೆ ಪ್ರಭುದೇವರ ದರ್ಶನಕ್ಕೆಂದು ಅಪಘಾನಿಸ್ತಾನದಿಂದ ಆಗಮಿಸಿದ ಮರುಳ ಶಂಕರ ದೇವ

ಚಂದ್ರಮನಿಗೆ ಚಕೋರ ಪಕ್ಷಿಯು ಹಾರೈಸಿಕೊಂಡಿರುವಂತೆ, ವಸಂತ ಋತುವನ್ನು ಕೋಗಿಲೆ ನಿರೀಕ್ಷಿಸಿದ್ದು ಕೊಂಡಿರುವಂತೆ 12 ವರ್ಷಗಳ ಕಾಲ ಮಹಾಮನೆಯ ಪ್ರಸಾದ ಕುಂಡಲದಲ್ಲಿದ್ದು ಮಿಕ್ಕ ಪ್ರಸಾದವನ್ನ ಸ್ವೀಕರಿಸಿದ.

ಆ ಶರಣರ ಮಾತನ್ನ ಕೇಳಲೇಬೇಕು

“ಜಂಗಮ ಪಾದೋದಕವ ಮಜ್ಜನವ ಮಾಡಿ,

ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ, ಶಿವ ಕಲ್ಯಾಣ ಮಾಡಿದ.

ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ.

ಲಿಂಗೈಕ್ಯ ಚೈತನ್ಯ ಪ್ರಸಾದವೆಂದು,

ತನಗೆ ಚೈತನ್ಯ ಜಂಗಮವೆಂದು,

ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.

ಜಂಗಮಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ.

ಒಡೆಯರೊಕ್ಕುದ ತಾ ಸವಿದು,

ತನ್ನೊಕ್ಕೂದ ಮಿಕ್ಕುದ ತನ್ನ ಗೃಹಚರರಂಡು,

ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕಾಯಿತ್ತು.

ಆ ಪ್ರಸಾದ ಗುಂಡವೇ ಗೃಹವಾಗಿತ್ತು.

ಆ ಪ್ರಸಾದ ಅರ್ಪಿಸುತ್ತಲೇ ಎನ್ನ ಲಿಂಗಕ್ಕೆ ಪೂಜೆ.

ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧ ಪ್ರಸಾದವಾಯಿತ್ತು, ಮನಸ್ಸಿದ್ದ ಪ್ರಸಾದವಾಯಿತ್ತು.

ಗುರುವವಿಡಿದನಾಗಿ ಆನೆ ಪ್ರಸಿದ್ಧ ಪ್ರಸಾದವಾದೆನಯ್ಯ.

ಇನ್ನು ಬದುಕಿದೆನು ಕಾಣ,

ಶುದ್ಧ ಸಿದ್ದ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಚೆನ್ನಮಲ್ಲಿಕಾರ್ಜುನ ದೇವಯ್ಯ,

ನಿಮ್ಮ ಶರಣ ಸಿದ್ದರಾಮಯ್ಯನ ಕಂಡು ಸಿಕಿಕರ್ಪೂರ ಯೋಗದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.

ನಿಜವಾಗಿಯೂ ನೋಡಿದರೆ ಮನುಷ್ಯ ಬದುಕಲಿಕ್ಕಾಗಿ ಆಹಾರ ಸೇವಿಸಬೇಕು, ಆದರೆ ಆಹಾರ ಸೇವಿಸಲಿಕ್ಕಾಗಿ ಬದುಕಿರುವವರೇ ಬಹಳಜನ ಈ ಲೋಕದಲ್ಲಿ.

ಕೇವಲ ಒಕ್ಕೂ-ಮಿಕ್ಕುದ ತೆಗೆದುಕೊಳ್ಳುವವನು ಮಾತ್ರ ಪ್ರಸಾದಿಯಲ್ಲ, ಬಂದುದನ್ನು ಬೇಕು-ಬೇಡನ್ನದೆ, ಹಿತ- ಅಹಿತವೆನ್ನದೆ, ಸ್ತುತಿ-ನಿಂದೆ ಎನ್ನದೆ ಸಮಭಾವವಾಗಿ ಸ್ವೀಕರಿಸುವುದು ಪ್ರಸಾದಿಯಾದವನ ಸಲ್ಲಕ್ಷಣವೆನ್ನುವರು ಶರಣರು.

ಅದನ್ನೇ ಷಣ್ಮುಖ ಶಿವಯೋಗಿಗಳು ವಿವರಿಸುವಂತೆ :-

ಎನ್ನ ಆಗು ಹೋಗು, ಸುಖ-ದುಃಖ,ಆನಿ-ವೃದ್ಧಿ,ಭಯ-ಭೀತಿ, ಲಜ್ಜೆ-ಮೋಹ,ಸಜ್ಜನ-ಸಮತೆ,ಸಳುವು-ಸಂಚಾರ,ಚಿತ್ತ -ಸುಚಿತ್ತ,ಬುದ್ಧಿ-ಸುಬುದ್ಧಿ,ಅಹಂಕಾರ-ನಿರಹಂಕಾರ,ಭಾವ -ಸದ್ಭಾವ, ಎಡ-ಬಲ,ಮೇಲು-ಕೀಳು ಮೊದಲಾದವುಗಳೆಲ್ಲ ಪ್ರಸಾದವೆಂಬುದು ಇಂತಾಗಿ ಅಖಂಡೇಶ್ವರ             ನೀನೆಂಬ ಪ್ರಸಾದ ಸಾಗರದಲ್ಲಿ ನಾನೆಂಬುದು ಮುಳುಗಿ ನೆಲೆದಪ್ಪಿ ಹೋದೆನಯ್ಯ.

ಹೀಗೆ ಪರಿಶುದ್ಧ ಕ್ರಿಯೆಯಿಂದ ಪ್ರಸಾದಿಯು ನಡೆದುದೆ ಶಿವಪಥವೆನಿಸುತ್ತದೆ.

:-ಗುರು ಕರುಣ ತ್ರಿವಿಧಿಯಲ್ಲಿ ಪ್ರಸಾದ ತ್ರೈವಿಧವನ್ನು ಶ್ರೀ ಗುರು ಶಿಷ್ಯನಿಗೆ ಉದ್ದರಿಸುವನು

“ಶುದ್ಧ ಶೇಷವೇ ಇಷ್ಟ, ಸಿದ್ಧವೇ ಪ್ರಾಣ,    ಪ್ರಸಿದ್ಧವೇ ಭಾವ, ನಿರ್ಧರ ತ್ರೈಲಿಂಗವ

ಸಮುದ್ದರಿಪ -ಗುರುವಿಗೆ ಕೃಪೆಯಾಗು”

ಈ ಮೂರು ಪ್ರಸಾದವ ಸ್ವೀಕರಿಸುವಲ್ಲಿ ಪ್ರಸಾದದಲ್ಲಿ ನಿರ್ಧರ (ನಿಷ್ಠೆಯ) ಭಾವವಿರಬೇಕೆನ್ನುವರು ಮೈಲಾರದ ಬಸವಲಿಂಗ ಶರಣರು.

“ನಂಬಿದರೆ ಪ್ರಸಾದ;ನಂಬದಿದ್ದರೆ ವಿಷ ವೆನಿಸುವುದು”

ದೃಢನಿಷ್ಠೆಯಿಂದಲೇ ಪದಾರ್ಥವು ಪ್ರಸಾದವೆನಿಸುವುದು, ಇಂಥ ಪ್ರಸಾದಿಕ ಕ್ರಿಯೆಗಳಿಂದ, ಪ್ರಸಾದಿಕ ಪ್ರಜ್ಞೆಯಿಂದ, ಪ್ರಸಾದಿಕಾನುಭೂತಿಯಿಂದ ಅಂಗನು  ಪ್ರಸಾದ ಕಾಯನಾಗುವನು ಜೊತೆಗೆ ಯಾವಾಗಲೂ ಪ್ರಸನ್ನ ಚಿತ್ತವುಳ್ಳವನಾಗುವನು “ಪ್ರಸಾದಸ್ತು ಪ್ರಸನ್ನತಾ”.

ಆಹಾರವನ್ನು ಭಗವಂತನ ಪ್ರಸಾದವೆಂದು ಆತನಿಗೆ ಅರ್ಪಿಸಿ ತುತ್ತಿಗೊಮ್ಮೆ ಆತನನ್ನು ನೆನೆಯುತ್ತ ಉಣ್ಣಬೇಕು,

ಇದು ದೇಹ ಭಾವವನ್ನು ಕಳೆದುಕೊಂಡು ಪ್ರಸಾದ ಭಾವವನ್ನು ಅಳವಡಿಸಿಕೊಳ್ಳುವ ಸುಂದರ ಸೂತ್ರವಾಗಿದೆ

ಅದನ್ನೇ ಬಸವಣ್ಣನವರು ತಿಳಿಸುತ್ತಾರೆ

“ಮೌನದಲುಂಬುವುದು ಆಚಾರವಲ್ಲ,

ಲಿಂಗಾರ್ಪಿತವ ಮಾಡಿದ ಬಳಿಕ

ತುತ್ತಿಗೊಮ್ಮೆ ಶಿವಾ ಶರಣೆನ್ನುತ್ತಿರಬೇಕು,

ಕರಣವೃತ್ತಿಗಳಡಗುವವು

ಕೂಡಲಸಂಗನ ನೆನೆವುತ್ತಲುಂಡಡೆ”

ಆತನ ಕರುಣೆಯ ಸ್ಮರಣೆಯಿಂದ ಕರಣವೃತ್ತಿಗಳು ಅಂದರೆ ಇಂದ್ರಿಯವಿಕಾರಗಳು ಅರ್ಥಾತ್ ಮನಸ್ಸು ಪ್ರಸನ್ನವಾಗುತ್ತದೆ.

ಹೀಗೆ ಪ್ರಸಾದ ಸ್ವೀಕರಿಸುವಲ್ಲಿ ಮನೋನೈರ್ಮಲ್ಯ ನೆಲೆಗೊಂಡು, ಮಾನಸಿಕವಾದ ಶಾಶ್ವತ ಪ್ರಸನ್ನತೆ ಅಳವಡುವುದು, ಹೀಗೆ ಸ್ವೀಕರಿಸುತ್ತಾ ಬದುಕುವಲ್ಲಿ ಸಾಧಕನು ಲಿಂಗ ಭೂಗೋಪಭೋಗಿಯಾಗಿರುತ್ತಾನೆ.

ಭಗವಂತನಿಗೆ ಅರ್ಪಿಸುವದನ್ನ ಶ್ರದ್ಧೆಯಿಂದ ಅರ್ಪಿಸಬೇಕು, ಅಟ್ಟಹಾಸದಿಂದ ಅಥವಾ ಪ್ರಸಿದ್ಧಿಗೊಸ್ಕರ,ದೇವರ ಕಾಟ ಕಳೆಯಲೆಂದು ಅರ್ಪಿಸಬಾರದು.

ಅರ್ಪಣ ಮನೋಭಾವ ಸಾಧಕನಲ್ಲಿ ನೆಲೆಗೊಳ್ಳಬೇಕು. ಅರ್ಪಿಸಿದ ಪ್ರಸಾದದಲ್ಲಿ ಒಂದು ಕಣವನ್ನು ಸಹ ಬಿಡದೆ ಉಪಯೋಗಿಸಬೇಕು ಅರ್ಥಾತ್ ಪ್ರಸಾದವನ್ನು ಕೆಡಿಸಬಾರದು

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಶ್ರೀಕುಮಾರ ತರಂಗಿಣಿ  ೨೦೨೩ ನವಂಬರ  ಸಂಚಿಕೆಯನ್ನು ಹೊಸರೂಪದಲ್ಲಿ ತಮಗೆ ಅರ್ಪಿಸಲು  ಅತ್ಯಂತ ಹರ್ಷವೆನಿಸುತ್ತದೆ.

೨೦೨೧ ಬಸವ ಜಯಂತಿ ಯಂದು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತದಿಂದ ಆರಂಭಗೊಂಡ ಶ್ರೀಕುಮಾರ ತರಂಗಿಣಿ  ಬ್ಲಾಗ ಇಂದು ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಅಮೃತಹಸ್ತದಿಂದ ಹೊಸ ರೂಪ ದೊಂದಿಗೆ ಅನಾವರಣಗೊಳ್ಳುತ್ತಿದೆ.

ಕನ್ನಡಿಗರ ಜೀವನವನ್ನೇ ತಮ್ಮ ದಿವ್ಯವಾದ ತಪೋತೇಜಸ್ಸಿನಿಂದ ಬೆಳಗಿ ಮುನ್ನಡೆಸಿ ಹೋದ ಕಾರಣಿಕ ಶ್ರೀ ಕುಮಾರಯೋಗಿಯ ಪುಣ್ಯ ಸ್ಮರಣೆಯ ನಮಗೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂದೇಹವಿಲ್ಲ.

 ನಿರುತ್ಸಾಹದ ನಿಬ್ಬೆರಗಿನಲ್ಲಿರುವ ಇಂದಿನ ಕನ್ನಡದ ಮಣ್ಣಿಗೆ ಕಾಯಕಯೋಗಿ ಕುಮಾರೇಶ್ವರನ ನೆನಹು ಆಶಾದಾಯಕವಾದ ಹೊಸ ಜೀವರಸವನ್ನು ಕರೆಯುವುದರಲ್ಲಿ ಯಾವ ಅಭ್ಯಂತರವೂ ಇಲ್ಲ.

ಇಂಥ ಮಹಾಮಹಿಮರ ಜೀವನ ಚರಿತ್ರೆಯಿಂದ ನಾವಿಂದು ಬೆಳಕನ್ನು ತುಂಬಿಕೊಳ್ಳಬೇಕಾಗಿದೆ. ಕಾರ್ಯೋತ್ಸಾಹದ ಕಿಡಿಯನ್ನು ಹೊತ್ತಿಸಿಕೊಳ್ಳಬೇಕಾಗಿದೆ.  ಅವರಿತ್ತ ಆ ದಿವ್ಯ ಸಂದೇಶವು ಇಂದಿನವರಾದ ನಮಗೆ ಬಾಳಬಟ್ಟೆಯ ಪರಮಾಗಮ ವಾಗಿದೆ.

ಅಂತೆಯೇ ಇಂದು ಶ್ರೀಗಳ ಸವಿನೆನಹು ಭಾರತ ಹುಣ್ಣಿಮೆಯ ಬೆಳದಿಂಗಳಂತೆ ನಮ್ಮ ಬುವಿ ಬಾನುಗಳನ್ನು ತುಂಬಿ ಮೈಮನಗಳನ್ನು ಅರಳಿಸಿ  ಚೇತನಕಾರಿಯಾಗಿ ತೂರಿ ಬರುತ್ತದೆ.

2023 ಸಪ್ಟಂಬರ ಮತ್ತು ಅಕ್ಟೊಬರ ತಿಂಗುಳಗಳಲ್ಲಿ ಕರ್ನಾಟಕ,ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳ ಗಡಿಪ್ರದೇಶಗಳಲ್ಲಿ ನಡೆದ ಶ್ರೀಕುಮಾರೇಶ್ವರರ ೧೫೬ನೆಯ ಜಯಂತಿ ಮಹೋತ್ಸವದ ಚಿತ್ರಸಂಪುಟ “ಶ್ರೀಕುಮಾರೇಶ್ವರ ವೈಭವ”

ಚಿತ್ರಸಂಪುಟದ ಸಂಗ್ರಹಕ್ಕೆ ಸಹಕರಿಸಿದ ಸಮಸ್ತ ಶ್ರೀಕುಮಾರೇಶ್ವರರ ಅಭಿಮಾನಿ ಭಕ್ತರಿಗೆ ತುಂಬುಹೃದಯದ ಕೃತಜ್ಞತೆಗಳು

 

ಶ್ರೀಕುಮಾರ ತರಂಗಿಣಿ  ೨೦೨೩ ನವಂಬರ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ರೇವಣಸಿದ್ಧ ಗುರುದೇವ ಭಾವಜ ಹರಜೀವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ವೇದಾಂತಾಭ್ಯಾಸ-ಸಿದ್ಧಾಂತ ಹವ್ಯಾಸ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. ನರಜನ್ಮ-ಹರಜನ್ಮ ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ

 

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

 

 

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

(ರಾಗ – ಕಾಪಿ)

ರೇವಣಸಿದ್ಧ ಗುರುದೇವ | ಭಾವಜ ಹರಜೀವ |

ಓವಿನೀ ಕೊಡು ಮಂಗಲವ | || ಪ ||

ಕಾಮವೆನ್ನನು ಕೂಡಿ ಕಾಡಿ |

ನೇಮ ಸೀಮೆಯ ಕೆಡಿಸದಾಡಿ |

ಪ್ರೇಮದಪ್ಪಿಯು ಭವದೊಳು ನೂಂಕುವ

ನೀ ಮನಸಿಜನನು ಬಿಡಿಸು ಬೇಗ || 1 ||

ದುಷ್ಟ ವಾಸನೆಗಳ ಬಲದಿಂದ |

ಭ್ರಷ್ಟ ಕಾಮನತಾಚ್ಚಲದಿಂದ |

ಮುಟ್ಟಿ ಕೊರಗಿಪೆ ದುರ್ವಾಸನೆಯ |

ಕುಟ್ಟಿ ವರಸುಖವ ಕೊಡು ಜವದಿ || 2 ||

ಅಂಗಹೀನನ ಸೇವೆಯ ಬಿಡಿಸಿ |

ಲಿಂಗದೇವನ ಪೂಜೆಯ ಹಿಡಿಸಿ |

ಕಂಗಳಾಲಯನೀಕ್ಷಿಸು ಭಾವದಿ |

ಮಂಗಲಮಯನೆನಿಸೋ ಯತಿವರ || 3

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

 

  

ಪರಮೇಷ್ಟ ಲಿಂಗವನು | ಧರಿಸಿದಾಕ್ಷಣ ನಿನ್ನ

ಶರೀರವೇ ಲಿಂಗ-ದಿರವಾಗುತಿಹುದೆಂದು

ಅರುಹಿದೈ ಗುರುವೆ ಕೃಪೆಯಾಗು       || ||

 

ಹಿಂದೆ ವಿವರಿಸಿದಂತೆ ಆರವಯವಗಳಲ್ಲಿ ಧರಿಸಬೇಕಾದ ಗುಣ ಗೌರವಗಳನ್ನು ಮೈಗೂಡಿಸಿಕೊಳ್ಳುತ್ತ ಶಿವಲಿಂಗವನ್ನು ಧರಿಸುವದೇ ಸತ್ಕ್ರಮವು. ಆಯಾ ಸ್ಥಾನಗಳಲ್ಲಿ ಲಿಂಗಧಾರಣಮಾಡಲು ಭಕ್ತನು ಆ ಯೋಗ್ಯತೆಯನ್ನು ಅಳವಡಿಸಿಕೊಳ್ಳಲೇ ಬೇಕಾಗುವದು. ಅಂದರೆ ಲಿಂಗಭಕ್ತನು ಲಿಂಗಮಯನಾಗುವನೆಂದು ಶಿವಕವಿಯು ಮುಂದಿನ ಈ ನಾಲ್ಕು ತ್ರಿಪದಿಗಳಲ್ಲಿ ಉಪಸಂಹಾರಗೊಳಿಸುತ್ತಾನೆ.

 

ಸದ್ಗುರು ಕೃಪೆ ಪಡೆದು ಲಿಂಗವನ್ನು ಪಡೆದು ಸದ್ಭಕ್ತನು  ಪರರನ್ನೆಂದೂ ಬೇಡ ಬಾರದು. ಸ್ವತಃ ಕಾಯಕಮಾಡಿ ದಾಸೋಹಿಯಾಗಬೇಕು. ಇಂದ್ರಿಯೇಚ್ಛೆಗೆ ಹರಿವ ಮಂದಬುದ್ಧಿಯನ್ನು ಕಳೆದುಕೊಳ್ಳಬೇಕು. ಇಂದ್ರಿಯಗಳ ಆಧೀನನಾಗದೇ ಅವುಗಳನ್ನು ಲಿಂಗಮುಖಗೊಳಿಸಬೇಕು.  ಸುಬುದ್ಧಿಯನ್ನು ಪಡೆದು ಸುಜ್ಞಾನಿಯಾಗಬೇಕು. ಮನಬಂದಂತೆ – ಇಂದ್ರಿಯದಾಸನಾಗದೆ ಪರಸ್ತ್ರೀಯರ ಸಂಗವನ್ನು ಸಂಪೂರ್ಣ ತ್ಯಜಿಸಬೇಕು. ಶಿವಭಕ್ತರಲ್ಲದವರಿಗೆ ಶಿರಬಾಗದಿರುವ ಛಲವುಳ್ಳವನಾಗಬೇಕು. ತಪ್ಪಿಯಾದರೂ ಹುಸಿಯನ್ನಾಡಬಾರದು. ಸತ್ಯವೇ ತನ್ನದಾಗಬೇಕು. ಲಿಂಗಪೂಜಾ ಕ್ರಮದಲ್ಲಿ ತಪ್ಪದಂತೆ ನಡೆಯಬೇಕು.  ಇದುವೇ ವೀರಶೈವರ ಅಥವಾ ಲಿಂಗಧಾರಕರ ಸತ್ಯಶುದ್ಧ ನಡೆ ಮತ್ತು ನುಡಿಯು. ಇಂಥ ನಡೆ ನುಡಿಯಿಲ್ಲದೆ ಕೇವಲ ಎದೆಯ ಮೇಲೆ ಲಿಂಗಧರಿಸಿದರೆ ಪರಿಪೂರ್ಣ ಫಲಸಿಕ್ಕದು. ಅದುಕಾರಣ ಇಂಥ ತತ್ತ್ವವನ್ನು ಚನ್ನಾಗಿ

ತಿಳಿದು ಲಿಂಗವನ್ನು ಧರಿಸಿಕೊಳ್ಳುವ ಭಕ್ತನ ಶರೀರವೆಲ್ಲ ಲಿಂಗಮಯವಾಗುವದರಲ್ಲಿ ಸಂಶಯವಿಲ್ಲ. ಅವನ ಅಂಗಾಂಗಗಳೆಲ್ಲ ಲಿಂಗಸ್ವರೂಪವನ್ನು ಹೊಂದುವವು. ಅಂಥ ಶರಣನು ಸತ್ಯವಾಗಿಯೂ ಲಿಂಗನಾಗುವನು. ಶಿವನೇ ತಾನಾಗುವನು. ಚನ್ನಬಸವಣ್ಣ

ನವರು ಇಂಥ ಶರಣನ (ವರ್ಣನೆಯ) ನ್ನು ಮನವಾರ ಹೊಗಳಿದ್ದು ಗಮನೀಯ ವಾಗಿದೆ. ನೋಡಿ-

 

ಸಜ್ಜನ ಸದ್ಭಾವಿ ಅನ್ಯರ ಕೈಯಾಂತು ಬೇಡ

ಲಿಂಗವ ಮುಟ್ಟಿದ ಕೈ ಮೀಸಲು

ಕಂಗಳಲ್ಲಿ ಒಸೆದು ನೋಡ ಪರವಧುವ.

ಮನದಲ್ಲಿ ನೆನೆಯ ಪರಹಿಂಸೆಯ

ಮಾನವರ ಸೇವೆಯ ಮಾಡ

ಲಿಂಗವ ಪೂಜಿಸಿ ಲಿಂಗವ ಬೇಡ

ಆ ಲಿಂಗದ ಹಂಗನೊಲ್ಲ

ಕೂಡಲ ಚನ್ನಸಂಗಮನೆ, ನಿಮ್ಮೊಳು

ಸಮರಸೈಕ್ಯವನರಿದ ನಿಜಶರಣನು.

 

ಲಿಂಗವೇ ತಾನಾದ ಶರಣನು ಲಿಂಗದ ಹಂಗಿನೊಳಗೂ ಇರುವದಿಲ್ಲವಾದ ಮೇಲೆ ಬಾಹ್ಯ ಪ್ರಪಂಚದ ಮಾತೇಕೆ ?

 

ಲಿಂಗಧಾರಣೆಯ ಮಹತ್ವ ಘನವಾದುದು. ಅಂತೆಯೇ ಶಿವಕವಿಯು ಈ ಲಿಂಗಧಾರಣೆಯ ಹಿರಿಮೆಯನ್ನು ಉದಾಹರಣೆಗಳಿಂದ ಮುಂದಿನ ಮೂರು ತ್ರಿಪದಿಗಳಲ್ಲಿ ವಿವರಿಸುತ್ತಾನೆ. ಅಲ್ಲದೆ ಸಚ್ಛಿಷ್ಯನಿಗೆ ಸದ್ಗುರುವು ಯಾವ ರೀತಿಯಿಂದ ವಾತ್ಸಲ್ಯ-ಪೂರ್ವಕ ತತ್ವವನ್ನು ಬೋಧಿಸುವನೆಂಬುದನ್ನು ತೋರಿಸಿಕೊಟ್ಟಿದ್ದಾನೆ.

 

ಅಡಿಯ ಸೋ೦ಕಲು ಸರ್ಪ | ಮುಡಿಗೆ ವಿಷವೇರ್ಪಂತೆ

ಮೃಡಲಿಂಗ ಸೋಂಕು-ಒಡಲ ಪರ್ಬುವುದೆಂದು

 ನುಡಿದ ಶ್ರೀಗುರುವೆ ಕೃಪೆಯಾಗು    ||  ೧೩೫ ||

 

ಒಮ್ಮೊಮ್ಮೆ ಅಡ್ಡಾಡುವ ಮಾನವನ ಅಡಿಯನ್ನು ಹಾವು ಕಡಿಯುವದು. ಆಗ ಅದರ ವಿಷವು ಕೆಲವೇ ಕ್ಷಣಗಳಲ್ಲಿ ಆತನ ಮುಡಿಯವರೆಗೂ ವ್ಯಾಪಿಸಿ ಬಿಡುವದು. ಆ ಮನುಷ್ಯನ ಮೈಯೆಲ್ಲಾ ವಿಷಮಯವಾಗುವದು. ಒಂದು ವಿಷಪ್ರಾಣಿ ಕಚ್ಚಿದರ ಪರಿಣಾಮದಿಂದ ಶರೀರವೇ ವಿಷಮಯವಾಗುವದೆಂದ ಬಳಿಕ, ಮೃಡಲಿಂಗದ ಸೋಂಕು ಒಡಲನ್ನು ಹಬ್ಬುವದರಲ್ಲಿ ಯಾವ ಸಂಶಯವಿದೆ ? ಇಷ್ಟಲಿಂಗದ ಸಂಸ್ಪರ್ಶ ವಿದ್ಯುತ್ತಿನಂತಿಹುದು. ವಿದ್ಯುತ್ ಶಾಖವು ಅಕಸ್ಮಾತ್ ಕೈಗೆ ತಗುಲಿದರೆ ಶರೀರವೇ ಕಂಪಿಸುತ್ತದೆ. ಅದರಂತೆ ಗುರುಕರುಣಿಸಿದ ಇಷ್ಟಲಿಂಗವು ಶಿಷ್ಯನ ಶರೀರವನ್ನೆಲ್ಲಾ ಆವರಿಸುವದು, ಶಾಸ್ತ್ರಕಾರರು ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಕೀಟಭೃಂಗ ನ್ಯಾಯವನ್ನು ಉದಾಹರಿಸುತ್ತಾರೆ

 

‘ʼಕೀಟೋ ಭ್ರಮರಯೋಗೇನ ಭ್ರಮರೋ ಭವತಿ ಧೃವಮ್ |

ಮಾನವಃ ಶಿವಯೋಗೇನ ಶಿವೋ ಭವತಿ ನಿಶ್ಚಯಾತ್ ||ʼʼ

 

ಮನೆಯ ಕಿಡಕಿ ಬಾಗಿಲುಗಳ ಸಂಧಿಯಲ್ಲಿ ಕುರಡೀಕುಕಾರ (ಭ್ರಮರ)ವು ಮಣ್ಣಿನಿಂದ ಚಿಕ್ಕಗೂಡನ್ನು ಮಾಡಿ ಅದರಲ್ಲಿ ಹಸಿರು ಕ್ರೀಡೆಯನ್ನು ತಂದು ಇಟ್ಟು ತನ್ನ ಭಾವನೆಯನ್ನು ಕೊಡುತ್ತದೆ. ಕೆಲವು ದಿನಗಳ ಮೇಲೆ ಆ ಕ್ರೀಡೆಯು ಕುರಡೀ ಕುಕಾರವೇ ಆಗುವದು. ಹಾಗಾದ ಬಳಿಕ ಮಾನವನು ಶಿವ (ಲಿಂಗ) ಸಂಸ್ಕಾರದಿಂದ ಹಾಗೂ ಲಿಂಗಧಾರಣದಿಂದ ಶಿವನಾಗುವದರಲ್ಲಿ ಯಾವ ಸಂಶಯವಿದೆ ? ಗುರುದೇವನು ಉಪದೇಶಿಸಿದ ಬೋಧೆ ಯಥಾರ್ಥವಾದುದು. ಶಿಷ್ಯನು ತನ್ನ ತನು-ಮನ-ಭಾವ ಗಳನ್ನು ಪರಿಶುದ್ಧಗೊಳಿಸಿಕೊಂಡು ಲಿಂಗವನ್ನು ಶ್ರದ್ಧೆಯಿಂದ ಧರಿಸಿದರೆ ನಿಶ್ಚಯವಾಗಿಯೂ ಪರಮ ಪಾವನನೆನಿಸುವನು. ಲಿಂಗರೂಪವೇ ತಾನಾಗುವನು.

ಲಿಂಗರೂಪಾಗಲು ಲಿಂಗವನ್ನು ಕೇವಲ ಆಯತ ಮಾಡಿಕೊಂಡರಾಗುವದಿಲ್ಲ. ಸುಜ್ಞಾನ-ಸತ್ಕ್ರಿಯೆಗಳ ಸತ್ಕ್ರಮದ ಸಮನ್ವಯದಲ್ಲಿ ಲಿಂಗವನ್ನು ಸ್ವಾಯತ್ತೀ ಕರಿಸಿಕೊಳ್ಳಬೇಕು. ಲಿಂಗಸನ್ನಿಹಿತನಾಗಿ ಲಿಂಗಮಯನಾಗುವನು. ಓ ಗುರುದೇವ ! ಈ ಮೃಡಲಿಂಗ ಸೋಂಕಿನ ಸೊಂಪು ಎನ್ನಂಗವನ್ನು ಸಾಕ್ಷಾತ್ಕಾರಿಸುವಂತೆ ಹೃದಯ ತುಂಬಿ  ಹರಸು, ಅನುಗ್ರಹಿಸುತ

ಮನೆ ಮಠಗಳ, ತಾಯಿ ತನ್ನವರ ಮೋಹವನ್ನು ತೊರೆದು ಬಂದ ಸದಾಶಿವಯ್ಯನವರನ್ನು ಸ್ವಾಮಿಗಳೆಂದು  ಸಂಬೋಧಿಸುತ್ತೇವೆ. ಇದಕ್ಕಿಂತಲು ಹೆಚ್ಚಿನ ಸ್ವಾಮಿತ್ವ ಬೇರಿಲ್ಲ. ಸಿದ್ಧಾರ್ಥನು ಸಂಸಾರವನ್ನು ಅನುಭವಿಸಿ ಸನ್ನಿವೇಶಗಳನ್ನು ಪರಿಣಮಿಸಿ ತನ್ನ ೨೯ನೆಯ ವಯಸ್ಸಿನಲ್ಲಿ ವಿರತನಾಗಿದ್ದರೆ ಸದಾಶಿವ ಸ್ವಾಮಿಯು ಷೋಡಶಪ್ರಾಯದಲ್ಲಿಯೆ ಸಂಸಾರಕ್ಕೆ ಸಿಕ್ಕುಬೀಳದೆ ವ್ಯಾಮೋಹಕ್ಕೆ ಬಾಯ್ನೀರು ಕರೆಯದೆ ವೀರ ವಿರಾಗಿಗಳಾಗಿ ಹೊರಟಿರುವುದರಲ್ಲಿಯೇ ಅವರ ಮನೋಧೈರ್ಯದ ಮಹತ್ತು ಸ್ಥಿರಪ್ರಜ್ಞೆತೆಯ ಸಂಪತ್ತು ಎಷ್ಟಿತ್ತೆಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ನಿರೂಹ್ಯವು ನಿರ್ವಿಷಯವೆ ! ಅದಿರಲಿ.

 

ಸದಾಶಿವ ಸ್ವಾಮಿಗಳವರು ಲಿಂಗದಹಳ್ಳಿಯಿಂದ ಹೊರಟು ಬಂದು ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆರೂಢರಲ್ಲಿ ಪಂಚದಶಿ-ವಿಚಾರ ಸಾಗರ- ಪರಮಾನುಭವ ಬೋಧೆ ಮುಂತಾದ ಗ್ರಂಥಗಳ ಅಭ್ಯಾಸವನ್ನು ಆರಂಭಿಸಿದರು. ವಿವೇಕಾನಂದರು ಒಬ್ಬ ಅಧ್ಯಾಪಕರ ಮುಖಾಂತರ ರಾಮಕೃಷ್ಣ ಪರಮಹಂಸರನ್ನು ಅರಿತರು. ಸದಾಶಿವ ಸ್ವಾಮಿಗಳವರಿಗೆ ಮಾತ್ರ ಆರೂಢರನ್ನು ಅರಿಯಲು ಯಾರ ನೆರವೂ ಬೇಕಾಗಲಿಲ್ಲ. ಅದ್ವೈತ ಸಿದ್ಧಾಂತದಲ್ಲಿ ಆರೂಢರ ಖ್ಯಾತಿ ಅಷ್ಟೊಂದು ಹಬ್ಬಿತ್ತು. ಹಬ್ಬಿಹೂವಾಗಿತ್ತು. ಹೂವಿನ ವಾಸನೆ ಎಲ್ಲೆಲ್ಲಿಯೂ ಹರಡಿತ್ತು. ವೇದಾಂತದ ವಾತ್ಸಲ್ಯ ವಿಶೇಷವಾದಾಗ ಸದಾಶಿವಸ್ವಾಮಿಗಳವರೆ ಅವರ ಪ್ರಭಾವಕ್ಕೆ ಒಳಪಟ್ಟಿರಬೇಕು; ಪಟ್ಟಿದ್ದರು.

 

ಸದಾಶಿವಸ್ವಾಮಿಗಳವರು ಆರೂಢರಲ್ಲಿ ವೇದಾಂತಾಭ್ಯಾಸ ಮಾಡುತ್ತಿದ್ದರು. ವೇದಾಂತಿಗಳಾಗಿರಲಿಲ್ಲ. ಅಲ್ಲಿ ನಡೆಯುತ್ತಿರುವ ಬಾಹ್ಯಾದ್ವೈತವು ಸ್ವಾಮಿಗಳವರ ಮನಸ್ಸಿಗೆ ಹಿಡಿಯುತ್ತಿರಲಿಲ್ಲ. ಸತ್ಯಸಿದ್ಧಾಂತದ ಹವ್ಯಾಸ ಇವರಲ್ಲಿ ಮಿಡಿಯುತ್ತಿತ್ತು. ಅದಕ್ಕಾಗಿ ಇವರು ವಾಸ ಭೋಜನಾದಿಗಳನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಸ್ವಂತ ಕಲ್ಪಿಸಿಕೊಂಡಿದ್ದರು. ಪಾಠ ಪ್ರವಚನಾದಿಗಳಿಗೆ ಮಾತ್ರ ಆರೂಢರಲ್ಲಿಗೆ ಹೋಗುತ್ತಿದ್ದರು.

 

ಹೀಗಿರಲು ಒಂದು ದಿನ ಪ್ರವಚನದಲ್ಲಿ ಇಷ್ಟಲಿಂಗವು ಬಾಹ್ಯವಸ್ತು ಅದರ ಪೂಜೆ ಮೂರ್ತಿಪೂಜೆ. ಅದರ ಪೂಜೆಯಿಂದ, ಧಾರಣೆಯಿಂದ ಪ್ರಯೋಜನವಿಲ್ಲ ಎಂದು ಮುಂತಾಗಿ ಚರ್ಚೆ ವಿಚರ್ಚೆ ನಡೆಯಿತು. ಈ ವಿಷಯದಲ್ಲಿ ಸ್ವಾಮಿಗಳವರ ಮನಸ್ಸು ಹೊಯ್ದಾಡಿತು. ಧರಿಸಿದ ಇಷ್ಟಲಿಂಗದ ವಿಷಯದಲ್ಲಿ ಸಂಶಯ ಉದಯಿಸಿತು. ಆಗ ಅವರನ್ನು ಹುಬ್ಬಳ್ಳಿಯಲ್ಲಿ ಎರಡೆತ್ತಿನ ಮಠದ ಶ್ರೀಗಳೊಬ್ಬರು ಶಿವಾನುಭವಿಗಳಿದ್ದರು. ಅವರನ್ನು ಬೆದಕಿಕೊಂಡು ಹೋಗಿ ಸ್ವಾಮಿಗಳು ಇಷ್ಟಲಿಂಗ ತ್ಯಾಗದ ವಿಷಯವಾಗಿ ಬಹುದಿನ ಚರ್ಚಿಸಿದರು. ಅವರಿಂದಲು ಸ್ವಾಮಿಗಳ ಸಂಶಯ ಪರಿಹಾರವಾಗಲಿಲ್ಲ. ಆಗ ಅದೇ ಶ್ರೀಗಳವರು ‘ತಮ್ಮಾ ನೀನು ಬಳ್ಳಾರಿ ಭಾಗದಲ್ಲಿರುವ ಎಮ್ಮಿಗನೂರು ಜಡೆಸಿದ್ದರ ಬಳಿಗೆ ಹೋಗು. ಅಲ್ಲಿ ನಿನ್ನ ಸಂಶಯ ನಿರಸನವಾಗಬಲ್ಲುದು. ಅವರನ್ನು ಸಂದರ್ಶಿಸದೆ ನೀನು ಇಷ್ಟಲಿಂಗವನ್ನು ತ್ಯಜಿಸಬೇಡ’ ಎಂದು ಹೇಳಿ ಕಳುಹಿಸಿದರು.

 

ಸದಾಶಿವ ಸ್ವಾಮಿಗಳವರು ಸಹ ಆ ಜಡೆಸಿದ್ದರ ಹೆಸರನ್ನು ಕೇಳಿದ್ದರು. ಹೆಚ್ಚಾಗಿ ಬಲ್ಲಿದರು, ನಿಚ್ಚಟದ ನಡೆಯವರು ಎಂದು ಎಲ್ಲೆಲ್ಲಿಯು ಅವರ ಪುಣ್ಯವಾರ್ತೆ ಪಸರಿಸಿತ್ತು. ಅದರಿಂದಾಗಿ ಸ್ವಾಮಿಗಳಿಗೆ ಅಲ್ಲಿಗೆ ಹೋಗುವ ಪ್ರೇಮ ಹುಟ್ಟಿತು. ಒಬ್ಬ ಭಕ್ತನನ್ನು ಜೊತೆಗೂಡಿ ಜಡೆಸಿದ್ಧರಲ್ಲಿಗೆ ಪ್ರಯಾಣವಾದರು. ಆಗ ರೈಲು ಬಸ್ಸುಗಳಿಲ್ಲ. ಅದರಿಂದಾಗಿ ದಿನವು ಎಂಟು ಹತ್ತು ಮೈಲು ಕಾಲು ನಡಿಗೆಯಿಂದ ಪ್ರಯಾಣ ಬೆಳಸಿದರು. ಅಲ್ಲಲ್ಲಿ ಕೆರೆಮಡುಗಳಲ್ಲಿ ಸ್ನಾನ ಮಾಡಿ ತರುಮೂಲಗಳಲ್ಲಿ ಶಿವಪೂಜೆಯಂ ತೀರಿಸಿ, ಕರತಲ ಭಿಕ್ಷದಿಂದ ಪ್ರಸಾದ ಪರಿಗ್ರಹಿಸುತ್ತ ಮುನ್ನಡೆದರು. ಆಗ ಸ್ವಾಮಿಗಳವರು ಧರಿಸುತ್ತಿದ್ದುದು ಒಂದೇ ಒಂದು ಕಾವಿಯ ಶಾಟಿ, ಮಸ್ತಕದ ಮೇಲೆ ಕಂಬಳಿಯ ಕೊಪ್ಪಿ, ಕೈಯಲ್ಲಿ ಒಂದು ತಂಬಿಗೆ, ತೋಳಿನಲ್ಲಿ ಒಂದು ಜೋಳಿಗೆ. ಇಷ್ಟರ ಹೊರತು ಇನ್ನೇನು ಇರಲಿಲ್ಲ.

 

ಇಷ್ಟು ಕಷ್ಟಗಳಿದ್ದರು ಅವನ್ನೆಲ್ಲ ಲೆಕ್ಕಿಸದೆ ಸಾಗಿದರು. ಸತ್ಯ ಸಿದ್ಧಾಂತದ ಹವ್ಯಾಸದ ಹೆಚ್ಚಳ ಅವರಲ್ಲಿ ಅಷ್ಟಿತ್ತು. ಅದರಿಂದಾಗಿ ಈ ಕಷ್ಟಗಳೊಂದೂ ಅವರಿಗೆ ಕಾಣಲಿಲ್ಲ. ಬಹುದೂರದ ಪ್ರಯಾಣವನ್ನು ಪ್ರಯಾಸವಿಲ್ಲದೆ ತೀರಿಸಿ ಜಡೆಸಿದ್ದರಲ್ಲಿಗೆ ಹೋದರು. ಸ್ವಾಮಿಗಳು ಬರುವ ಮೊದಲಿಗೆ ಸಿದ್ಧರು ತಮ್ಮ ಸಿದ್ಧಿಯಿಂದ ಸ್ವಾಮಿಗಳವರ ಮಹತ್ತನ್ನು ಅರಿತು ತಮ್ಮೆದುರಿನಲ್ಲಿದ್ದ ಶಿಷ್ಯರಿಗೆ ಸಂಜ್ಞೆಯಿಂದ ಕಸ ತೆಗೆಯಿರಿ, ಬರಲು ದಾರಿಮಾಡಿಕೊಡಿರಿ ಎಂದು ಹೇಳಿ ವ್ಯವಸ್ಥೆ ಮಾಡಿಸಲು ಆರಂಭಿಸಿದುದನ್ನು ಕಂಡು ಜನರು ಅದಾವ ಮಹಾತ್ಮರು ಬರುವರೋ ಎಂದು ಅಚ್ಚರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವಸ್ವಾಮಿಗಳವರು ಅಲ್ಲಿಗೆ ಆಗಮಿಸಿದರು. ಇವರ ಮನಸ್ಸಿನ ಬಯಕೆಯನ್ನು ಸಿದ್ಧರು ತಾವೇ ತಿಳಿದು ತಮ್ಮ ಪಕ್ಕದಲ್ಲಿ ಕುಳಿತಿದ್ದವರ ಹೆಗಲಮೇಲಿದ್ದ ವಸ್ತ್ರವೊಂದನ್ನು ತೆಗೆದುಕೊಂಡು ಲಿಂಗಾಕಾರದ ಸಜ್ಜಿಕೆಯನ್ನು ಮಾಡಿ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಕೈ ಜೋಡಿಸಿಕೊಂಡು ನಿಲ್ಲುವರು. ಇದನ್ನೆಲ್ಲ ಬರುತ್ತಿದ್ದ ಸದಾಶಿವ ಸ್ವಾಮಿಗಳವರು ಕಂಡು ಕಡು ಆಶ್ಚರ್ಯವನ್ನು ಆನಂದವನ್ನು ಹೊಂದಿ ಆತ್ಮತೃಪ್ತಿಯಿಂದ ಅಷ್ಟಾಂಗ ನಮಸ್ಕಾರ ಮಾಡಿದರು. ಆಗ ಸಿದ್ಧರು ಸ್ವಾಮಿಗಳನ್ನು ಶಿವಯೋಗಿ ಎಂದು ಸಂಬೋಧಿಸಿದರು.

 

ಸ್ವಾಮಿಗಳವರು ಸಿದ್ಧರಿಗಾಗಿ ತಂದಿದ್ದ ಕೆಲವು ಪದಾರ್ಥಗಳನ್ನು ಸ್ವೀಕರಿಸಲು ಕೊಟ್ಟರು. ಹಸಿ-ಬಿಸಿ ಎನ್ನದೆ ಬೇಡಿದ್ದು-ಬೇಡದ್ದು ಎನ್ನದೆ ಬೇಕು-ಬೇಡ ಎನ್ನದೆ ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುವ ಅವರ ನಿಜವಾದ ಆರೂಢಸ್ಥಿತಿಯನ್ನು ಕಂಡು ತಣಿದರು. ಮಠ ಮಾನ್ಯಗಳ ಅನ್ನ ಅರಿವೆಗಳ ಹಂಗಿಲ್ಲದೆ ಮಾನಾಪಮಾನಗಳ ಜಯಾಪಜಯಗಳ ಹಿಗ್ಗು ಕುಗ್ಗುಗಳಿಲ್ಲದೆ ಇರುವ ಸಹಜಾರೂಢಸ್ಥಿತಿಗೆ ಸ್ವಾಮಿಗಳು ತಲೆದೂಗಿದರು, ತಲೆಬಾಗಿದರು.

 

ಇದಕ್ಕೆ ವಿಪರೀತಾಚರಣೆಯುಳ್ಳ ಹುಬ್ಬಳ್ಳಿಯ ಆರೂಢರಲ್ಲಿಗೆ ತಾವಿನ್ನು ಹೋಗಬಾರದೆಂದು ಭಾವಿಸಿ ಇನ್ನೆಲ್ಲಿಗೆ ಹೋಗಬೇಕೆಂಬುದನ್ನು ಸಿದ್ಧರನ್ನೆ ಕೇಳಬೇಕೆಂದು ಆಶಿಸಿ ಇರುವಷ್ಟರಲ್ಲಿ ಇವರ ಇಂಗಿತವ ತಿಳಿದು ಸಿದ್ಧರು ‘ಎಲ್ಲಿದ್ದೆಯೋ ಅಲ್ಲಿಗೆ ಹೋದರಾಯಿತು’ ಎಂದು ಮೂರು ಸಲ ನುಡಿದರು.

 

ಜಡೆಸಿದ್ದರ ಆ ಅಪ್ಪಣೆಯನ್ನು ಮೀರದೆ ಸ್ವಾಮಿಗಳು ಮರಳಿ ಹುಬ್ಬಳ್ಳಿಗೆ ಬಂದು ಅದೇ ಆರೂಢರಲ್ಲಿಯ ವೇದಾಂತಾಭ್ಯಾಸವನ್ನು ಮಾಡಹತ್ತಿದರು. ಇಷ್ಟಲಿಂಗ ಪರಿತ್ಯಾಗದ ಸಂಶಯವನ್ನು ಹಳಚಿ ಇಷ್ಟಲಿಂಗ ಧಾರಿಗಳಾಗಿಯೇ ಇದ್ದರು. ಹೀಗೆ ವೇದಾಂತಾಭ್ಯಾಸ ನಡೆದಿದ್ದರೂ ಸಿದ್ಧಾಂತ-ಹವ್ಯಾಸವನ್ನು ಕೈ ಬಿಟ್ಟಿರಲಿಲ್ಲ. ಅವರೊಡನೆ ಕೈ ಮಾಡುತ್ತಿರಲಿಲ್ಲ.

 

ಅಂದು ತಾಯಿ ಹೇಳಿದ ಮದುವೆಯನ್ನು ಮಾಡಿಕೊಳ್ಳದ ಸದಾಶಿವಸ್ವಾಮಿಗಳವರು ಇಂದು ಜಡೆಸಿದ್ದರು ಹೇಳಿದ ಲಿಂಗಪತಿಯ ಮದುವೆಯನ್ನು ಮಾಡಿಕೊಂಡರು. ಲೌಕಿಕ ಸತಿಗೆ ಗಂಡನಾಗಿ ಬದುಕುವದಕ್ಕಿಂತ ಲಿಂಗಪತಿಗೆ ಶರಣ ಸತಿಯಾಗಿ ಬಾಳುವುದು ಲೇಸೆಂದು ಮನಗಂಡರು.

ಶರಣ ಸತಿಯ ಮದುವೆಯ ಸಂಭ್ರಮವನ್ನು ನೋಡಿರಮ್ಮ     ||ಪ||

ಪರಮಾನಂದ ಪಯೋನಿಧಿಯೊಳಗೋಲಾಡಿರಮ್ಮ

 

ಸಿಂಗರಿಸಿದ ಶುಭಮಂದಿರವಂದದ ಹಂದರವಮ್ಮ

ಮಂಗಳ ಚೌಕದ ಹಸೆಯ ಜಗುಲಿ ಹಸನಾದುದಮ್ಮ

ಕಂಗೊಳಿಸುವ ಕಲಶಗಳಿಂದೈರಣೆ ತುಂಬಿತಮ್ಮ

ಹಿಂಗದವರೊಳೊಪ್ಪುವ ತಳಿರೆಡೆವರವೆನಿಸಿತಮ್ಮ           ||೧||

 

ಕಲಶೋದಕದೊಳು ಮಿಂದು ಶುಚಿತೆಯಳವಟ್ಟುದಮ್ಮ

ತಿಳಿವಿನ ಬೆಳುವಟ್ಟೆಯನೊಲಿದುಡೆ ಚಲುವೆತ್ತುದಮ್ಮಾ

ತಿಲಕ ಭಸಿತ-ರುದ್ರಾಕ್ಷಿಮಯ ಮಣಿದೊಡವಾದುದಮ್ಮ

ವಿಳಸಿತ ಶಿವ ಹಸ್ತಬ್ಜದ ತೊಂಡಿಲು ಗಟ್ಟಿತಮ್ಮ                ||೨||

 

ನೆರೆದ ಗಣಂಗಳೊಸಗೆಯ ಸುವಾಸಿನಿಯರುಗಳಮ್ಮ

ಪರಿವಿಡಿದೊರೆವಾಗಮ ವಿಧಿವಾದ್ಯದ ರಭಸವಮ್ಮ

ವರಮಂತ್ರದ ಶೋಭಾನವಿಂಬಾಗಿರೆ ಪಾಡಿತಮ್ಮ

ಸರಿದುದು ಮಾಯಾಮಲ ಕರ್ಮದ ತೆರೆಯಾಗಳಮ್ಮ       ||೩||

 

ಭಜನೆ ಭಕುತಿಗಳಿವೆ ಜೀರಿಗೆ ಬೆಲ್ಲವಾದವಮ್ಮ

ನಿಜದೀಕ್ಷಾ ಸಮಯದ ಸುಮುಹೂರ್ತ ಸಮನಿಸಿತಮ್ಮ

ಸುಜನ ಜನದ ಕೈವಾರವೆ ಮಂಗಳಪಾಠವಮ್ಮ

ತ್ರಿಜಗನ್ನುತ ಗುರುಕರುಣ ರಸದ ಕೈಧಾರೆಯಮ್ಮ            ||೪||

 

ಮೆರೆವ ಶಿರದರಮನೆಯ ನಿಬ್ಬಣವೈತಂದುದಮ್ಮ

ಕೊರೆತರಹಿತ ಶಂಭುಲಿಂಗನೇ ಮದವಳಿಗನಮ್ಮ

ಮೆರೆದಿನಿಸಗಲದ ನೇಹವೆರಸಿ ಕೈ ವಿಡಿದನಮ್ಮ

ನೆರೆದಿಹ ಮುತ್ತೈದೆ ಶರಣವಧು ನಿಜಕಾಣಿರಮ್ಮ                ||೫||

 

ಅದಕ್ಕೆ ಸರಿಯಾಗಿ ನಿಜಗುಣರ ಈ ನಿಜಬೋಧೆಯಿಂದ ಸ್ವಾಮಿಗಳ ಮನ ಮತ್ತೂ ಗಟ್ಟಿಗೊಂಡಿತು. ಈ ಬಾಳುವೆಗೆ ಬಾಗಿದರು. ಈ ಬಳುವಳಿಗೆಯ ಕೈ ಕೊಂಡರು. ಈ ಬಳಗದಲ್ಲಿ ಕೂಡಿದ್ದರು.ʼʼ ಆವ ಪುಣ್ಯವೊ ಲಿಂಗಪೂಜಾ ವಿಧಿಯ ಅನುಭಾವವಹುದು ನರಜನ್ಮದೊಳು ಸಾವಿರ ಮುಖದೊಳರಸಿ ನೋಡಿ ನಿಗಮಾಗಮಾವಳಿ ಕಾಣದ ಸಾಧ್ಯವಿದು” ಎಂದು ಲಿಂಗಧಾರಣ ಲಿಂಗಾರ್ಚನ ಸೌಭಾಗ್ಯವನ್ನು ಸರ್ವೋತ್ಕೃಷ್ಟತೆಯನ್ನು ನಿಜಗುಣರು ಹೃದಯಾರೆ ಹಾಡಿಹರಿಸಿದಾರೆ; ಹವಣತೋರಿ ಹೆಚ್ಚಳಿಕೆ ಹೊರಗೆಡವಿದಾರೆ; ಹೆಮ್ಮೆಯ ಹಿತೋಪದೇಶ ಹೇಳಿದಾರೆ.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಮಠ ಗದಗ

 

ಜಂತೂನಾಂ ನರಜನ್ಮ ದುರ್ಲಭಂ ಅಂದರೆ ಕ್ರಿಮಿಕೀಟಾದಿ ಅನಂತ ಜೀವರಾಶಿಗಳಲ್ಲಿ ನರಜನ್ಮ ದುರ್ಲಭವಾದುದಷ್ಟೇ ಅಲ್ಲ ಶ್ರೇಷ್ಠವಾದುದೂ ಕೂಡ. ಇದು ಅರಿವಿನ ಜನ್ಮ. ಕ್ರಿಯಾಶೀಲರಾಗಿ, ಜ್ಞಾನಸಂಪನ್ನರಾಗಿ, ಭಾವಜೀವಿಗಳಾಗಿ ಈ ಜನ್ಮದಲ್ಲಿಯೇ ಭೋಗಮೋಕ್ಷಗಳೆರಡನ್ನು ಪಡೆಯಬಹುದಾಗಿದೆ. ಧರ್ಮಕಾರ್ಯಗಳನ್ನು ನೆರವೇರಿಸುತ್ತ ಇಹಪರಗಳೆರಡರಲ್ಲಿಯೂ ಸುಖವನ್ನು ಹೊಂದಲು ಈ ನರಜನ್ಮ ಸಾಧನವಾಗಿದೆ. ಆದ್ದರಿಂದಲೇ ಮಹಾಕವಿ ಕಾಳಿದಾಸನು ಶರೀರಮಾದ್ಯಂ ಖಲು ಧರ್ಮ ಸಾಧನಂ‘ ಎಂದು ಹೇಳಿರುವುದು. ಅನೇಕ ಜನ್ಮಗಳ ಪುಣ್ಯವಿಶೇಷದಿಂದ ಹಾಗೂ ಪರಮಾತ್ಮನ ವಿಶೇಷ ಕೃಪೆಯಿಂದ ಲಭ್ಯವಾಗಿರುವ ಈ ಜನ್ಮವನ್ನು

ನಿರರ್ಥಕವಾಗಿ ಹಾಳು ಮಾಡಿಕೊಳ್ಳಬೇಡಿರೆಂದು ದಾಸರು ಸಾರಿ ಸಾರಿ ಹೇಳುತ್ತಾರೆ. ತನುವಿನ ದೋಷಗಳನ್ನತಿಗಳೆದು ಲೌಕಿಕ ಸುಖಭೋಗದ ಭ್ರಾಂತಿಯಿಂದ ಮುಕ್ತನಾಗಿ, ಗುರುಬೋಧೆ ಪಡೆದು ದೈವ ನಿಷ್ಠೆ ಅಳವಡಿಸಿಕೊಂಡಾಗ ಈ ನರಜನ್ಮವನ್ನು ಹರಜನ್ಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದುವೇ ನರಜನ್ಮದ ಸಾರ್ಥಕ್ಯ .

 

ನರಜನ್ಮವನ್ನು ಹರಜನ್ಮವಾಗಿಸಿಕೊಂಡಾತ ಗುರು. ನರಜನ್ಮವನ್ನು ಹರಜನ್ಮವಾಗಿಸುವವನೂ ಗುರು. ಗುರುಕಾರುಣ್ಯ ಸಂಸ್ಕಾರಕ್ಕೆ ಒಳಗಾದ ನರರ ಕರಣೇಂದ್ರಿಯಗಳೆಲ್ಲ ಲಿಂಗೇಂದ್ರಿಯಗಳಾಗಿ ಪರಿವರ್ತನೆಗೊಳ್ಳುತ್ತವೆ. ಮಾಂಸಪಿಂಡ, ಮಂತ್ರಪಿಂಡವಾಗುತ್ತದೆ. ಜೀವ ಶಿವನಾಗುತ್ತಾನೆ. ದೇಹ ದೇಗುಲವಾಗುತ್ತದೆ. ಗುರುವಿನ ಬೋಧೆ ಎಂಬ ಅರಿವಿನ ಜ್ಯೋತಿ ಶರೀರವನ್ನೆಲ್ಲ ವ್ಯಾಪಿಸಿದಾಗ ಮರವೆಯ ಕತ್ತಲು ಸಹಜವಾಗಿಯೇ ದೂರಾಗುತ್ತದೆ. ಗುರುವಿನ ಚರಣಸ್ಪರ್ಶ ತನುಕರಣಾದಿಗಳ ದೋಷಗಳನ್ನೆಲ್ಲ ಸುಟ್ಟು ಸರ್ವಾಂಗವನ್ನು ಲಿಂಗವಾಗಿಸುವುದೆಂಬ ದಾಸಿಮಾರ್ಯರ ವಚನವೊಂದು ಹೀಗಿದೆ:

ಉರಿವ ಕೆಂಡದ ಮೇಲೆ ತೃಣವ ತಂದಿಡಲು

ಆ ತೃಣವನಾ ಕೆಂಡ ನುಂಗಿದಂತೆ

ಗುರುಚರಣದ ಮೇಲೆ ತನುವ ತಂದಿಡಲು

ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥಾ

ಗುರುವಿನ ಚರಣದಲ್ಲಿ ಅಂತಹ ಅದ್ಭುತವಾದ ಶಕ್ತಿ ಇದೆ. ಅಂಥ ಗುರುಚರಣವ ಪೂಜಿಸಿದ ಹಸ್ತ, ನೋಡಿದ ಕಣ್ಣು, ಹಾಡಿದ ನಾಲಿಗೆ, ನೆನೆದ ಮನ, ಧ್ಯಾನಿಸಿದ ಹೃದಯವೆಲ್ಲವೂ ಪರಿಶುದ್ಧವಾಗುವವು.

ಹರಜನ್ಮವನ್ನು ಸಾಧಿಸುವುದು ನರಜನ್ಮದಲ್ಲಿ ಮಾತ್ರ ಸಾಧ್ಯ. ಉಳಿದ ಯಾವ ಜನ್ಮದಲ್ಲಿಯೂ ಇದು ಸಾಧ್ಯವಿಲ್ಲ. ಹುಟ್ಟುಸಾವುಗಳೆಂಬ ಭವಚಕ್ರದಿಂದ ಮುಕ್ತನಾಗಲು ಮಾನವ ಶರೀರ ಒಂದು ಅಪೂರ್ವ ಸಾಧನ. ‘ಯೋಗ ಯೋಗ್ಯರು ಭೂ ಭಾಗದೊಳು ಮಾನವ ಶರೀರಿಗಳಾಗಿ ಸಾಧಿಸಿ ನಿಜವನ್ನರಿವರು’ ಎಂದು ಮಹಾಕವಿ ಚಾಮರಸ ಮಾನವ ಜನ್ಮದ ಪ್ರಯೋಜನವನ್ನು ಕುರಿತು ಹೇಳುತ್ತಾನೆ. ನಿಜವನ್ನರಿತು ನಿಜವೇ ತಾವಾಗಲು ನರಜನ್ಮ ಅತ್ಯಂತ ಸಹಕಾರಿ. ನರಜನ್ಮ ಪಡೆದವರು ಯೋಗ್ಯ

ಗುರುವನ್ನಾಶ್ರಯಿಸಿ ಅವರ ಬೋಧಾಮೃತದಿಂದ ದುರಿತ ದುರ್ಗುಣಗಳನ್ನು ನಿವಾರಿಸಿಕೊಂಡು ಮನಸ್ಸನ್ನು ಪರಿಶುದ್ಧಗೊಳಿಸಬೇಕು. ನರಜನ್ಮವನ್ನು ಅಹಂಕಾರ- ಮಮಕಾರಗಳಿಂದ ಬಂಧಿಸದ ಅರಿವಿನಿಂದೊಡಗೂಡಿ ಪರಮಾತ್ಮನ ನಿಲವನರಿದರೆ ಅದೇ ಹರಜನ್ಮ. ಗುರುವಿನ ಉಪದೇಶದಂತೆ ನಡೆದ ನರರು ತಮ್ಮ ನರಜನ್ಮವನ್ನು ನೀಗಿ ಹರಜನ್ಮವನ್ನು ನಿಸ್ಸಂದೇಹವಾಗಿ ಪಡೆಯುತ್ತಾರೆ. ಹಾಗೆಯೇ ಪರಿಭವದಿಂದ ಮುಕ್ತರಾಗುತ್ತಾರೆ. ಅಂಥ ಗುರುವಿಗೆ ‘ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ಶರಣು ಶರಣಾರ್ಥಿ’ ಎಂದು ಅಕ್ಕಮಹಾದೇವಿ ಹೇಳಿದಂತೆ ನಾವು ಶರಣಾರ್ಥಿಗಳನ್ನು ಹೇಳೋಣ.