• ಬಿ. ಶಿವಮೂರ್ತಿ ಶಾಸ್ತ್ರಿ

(ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ  ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ,  1968ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿತು. ಕರ್ನಾಟಕ ಏಕೀಕರಣಕ್ಕೆ ದುಡಿದವರು,

ಕೃತಿಗಳು:  ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.  ಕನ್ನಡ ನಿಘಂಟು ಕಾರ್ಯ (1964) ಪೂರ್ಣಗೊಳಿಸಿದರು.  ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅವರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದ್ದು.  ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು 4000  ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 6 ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು. ಬಿ. ಶಿವಮೂರ್ತಿ ಶಾಸ್ತ್ರಿಗಳು 15-01-1976 ರಲ್ಲಿ ಲಿಂಗೈಕ್ಯರಾದರು.

)

ಚಂ| ವೃ| ಉರಿಯೊಳಗೈದೆ ಕರ್ಪೂರದವೊಲ್ ನಿಜಲಿಂಗದ ಸುಪ್ರಭಾತದೊಳ್ |

 ಬೆರೆದು ತದೇಕರೂಪವನೆ ತಾಳ್ದ ಮಹಾತ್ಮನ ಹಾನಗಲ್ಲಸ|

 ಚ್ಚರವರನಾ ಕುಮಾರ ಶಿವಯೋಗಿವರೇಣ್ಯನ ಪಾದಪಂಕಜಂ |

ನೆರೆನೆಲೆಸುತ್ತೆರಾಜಿಸುಗೆ ಸಂತತವೆನ್ನಯ ಹೃತ್ಸರಸಿನೊಳ್|

 ಕನ್ನಡ ನಾಡಿನಲ್ಲಿ ಇಂದಿನವರೆಗೆ ಆಗಿಹೋದ ಅನಂತ ಮಹಾನುಭಾವರು ಒಂದೊಂದು ಕಲೆಗಳಿಂದ ತಂತಮ್ಮ ಜೀವನವನ್ನು ರಮ್ಯಗೊಳಿಸಿಕೊಂಡಿದ್ದಾರೆ. ಅವರಲ್ಲಿ ಹಲವಾರು ಯೋಗಿಗಳಾಗಿ, ತ್ಯಾಗಿಗಳಾಗಿ, ಗ್ರಂಥಕಾರರಾಗಿ, ಮತೋದ್ಧಾರಕರಾಗಿ, ದೇಶಭಕ್ತರಾಗಿ ಬಾಳಿ ಬೆಳಕಿಗೆ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಸಂಪಾದಿಸುವ ಶ್ರೇಷ್ಠ ಮಹಾನುಭಾವರೆಂದರೆ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು, ಅವರ ಇಡೀಯ ಜೀವನವು ಕಾವ್ಯಮಯವಾದ ಒಂದು ಐತಿಹ್ಯವಾಗಿದೆ. ಅವರಲ್ಲಿ ರಾಜಕೀಯ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಸಾಮರ್ಥ್ಯಗಳೂ ಗುಂಘಿತವಾಗಿದ್ದುವು ವಿಚಾರ ಸ್ವಾತಂತ್ರ್ಯ, ವಿಶಾಲ ವೈರಾಗ್ಯ, ವ್ಯಾಪಕ ಭಾವನೆ, ಜೀವ ಕಾರುಣ್ಯ, ಸಮಾಜ ಕಳಕಳಿ, ಸಂಸ್ಕೃತಿಯ ಅಭಿಮಾನ, ಕಾರ್ಯ ಕುಶಲತೆ ಮೊದಲಾದ ಅಮೋಘ ಗುಣಗಳು ಅವರಲ್ಲಿ ನೆಲೆಗೊಂಡಿದ್ದುವು. ಮತ್ತು ಅಸದೃಶವಾದ ಸ್ವಾರ್ಥತ್ಯಾಗ ಅಚಲಿತವಾದ ಧೈರ್ಯ, ಅಖಂಡವಾದ ಸಾಹಸ, ಅಪಾರವಾದ ಕಷ್ಟಸಹಿಷ್ಣುತೆ, ಅಗಣಿತವಾದ ಗುಣಗ್ರಾಹಕತೆ, ಮುಂತಾದವುಗಳು ಅವರಲ್ಲಿ ಮೂರ್ತಿಮಂತವಾಗಿದ್ದವು. ಉದಾರ ಉದ್ದೇಶ, ಅತ್ಯಧಿಕ ಉತ್ತೇಜನ, ಪ್ರಚಂಡವಾದ ಆಸಕ್ತಿ, ಕೊನೆಯಿಲ್ಲದ ಕುತೂಹಲ ಇವೆಲ್ಲ ಅವರ ಹುಟ್ಟು ಗುಣವಾಗಿದ್ದುವು. ಇವೆಲ್ಲ ಸದ್ಗುಣಗಳಿಂದ ಶ್ರೀ ಕುಮಾರ ಶಿವಯೋಗಿಯು ತನ್ನ ಹೆಸರಿಗೆ ತಕ್ಕಂತೆ ತನ್ನ ಜೀವನದಲ್ಲಿ ಇಡಿಯ ಕನ್ನಡ ನಾಡಿನ ಕುವರನಾಗಿ, ವೀರಶೈವರ ಉದ್ಧಾರಕನಾಗಿ ಬಾಳಿದನು. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜನಿಸುವ ಕುಮಾರನು ತಮ್ಮ ತಂದೆತಾಯಿಗಳಿಗೆ ಮಾತ್ರ ಮುದ್ದಾಗಬಹುದು. ಆದರೆ ಒಂದು ಜನಾಂಗಕ್ಕೆ ಮುದ್ದುಗುವರನಾಗುವುದು ಕಷ್ಟ. ಬಾಲ ಕೇಳಿಗಳಿಂದ ತಂತಮ್ಮ ತಂದೆತಾಯಿಗಳನ್ನು ಪ್ರೀತಿಗೊಳಿಸಬಹುದು. ಆದರೆ, ಅಸಾಧಾರಣವಾದ ಪ್ರೌಢಲೀಲೆಗಳಿಂದ ಇಡೀ ಜನಾಂಗವನ್ನೇ ಪ್ರೇಮಗೊಳಿಸುವುದು ಸಾಹಸದ ಮಾತು. ಈ ಕಾರ್ಯವನ್ನು ಕುಮಾರ ಶಿವಯೋಗಿಯು ಮಾಡಿದನು. ಮಹಾನುಭಾವನಾದನು. ಆತನ ಸಹಜವಾದ ಕಿರುನಗೆ, ನನ್ನು ವಾತುಗಳು ಪುಣ್ಯಕಳೆಗಳನ್ನು ಕಂಡು ಕೇಳಿ, ಆನಂದವಶರಾಗದ ವ್ಯಕ್ತಿಗಳಿಲ್ಲ. ಅವರ ಮೃದುವಾದ  ಮಿತವಾದ, ಅನುಭವಪೂರ್ಣವಾದ ಮಾತುಗಳಿಗೆ ಮನಸೋಲದ ಪಂಡಿತರಿಲ್ಲ. ಅವರು ಚಿತ್ತಸ್ಥೈರ್ಯದಿಂದ ವಜ್ರಕ್ಕಿಂತಲೂ ಕಠೋರವಾಗಿ ಕಂಡರೂ ಕರುಳಿನಿಂದ ಕುಸುಮಕ್ಕಿಂತಲೂ ಮೃದುವಾಗಿದ್ದರು. ಅವರು ಉಕ್ಕುವ ತಮ್ಮ ತಾರುಣ್ಯದಲ್ಲಿಯೇ ಸಂಸಾರಕ್ಕೆ ತಿಲಾಂಜಲಿಯನ್ನು ತೆತ್ತರು. ಅನುಭವದ ಅಧ್ಯಾತ್ಮಿಕ ಜೀವನದಲ್ಲಿ ನಿಂತರು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಡಿಯನ್ನಿಟ್ಟರು. ಆ ಕಾರ್ಯಗಳಲ್ಲಿ ಒದಗುವ ಯಾವ ಭಯಭೀತಿಗಳಿಗೂ ಅಂಜಲಿಲ್ಲ, ಅಳುಕಲಿಲ್ಲ, ದೊಡ್ಡ ನದಿಯ ಪ್ರವಾಹವು, ಎದುರಾಗುವ ಕಾಡು ಗಿಡಮರಗಳನ್ನು ತನ್ನ ಸೆಳವಿನಿಂದ ಭೇದಿಸಿ ದೊಡ್ಡ ದೊಡ್ಡ ಗುಂಡುಬಂಡೆಗಳ ಮೇಲೆ ನೆಗೆದು ಮುದಕ್ಕೆ ಸಾಗುವಂತೆ ಅವರು ತಮ್ಮ ಕಾರ್ಯಸಾಧನದಲ್ಲಿ ಎಡಬಿಡದೆ ಅಡ್ಡಬರುವ ದುರಂತವಾದ ಎಡರುಗಳನ್ನೂ ಸಹ ತಮ್ಮ ವೈರಾಗ್ಯಾದ ವಜ್ರಮುಷ್ಟಿಯಿಂದ ಹೊಡೆದು ಪುಡಿಮಾಡಿ ತಮ್ಮ ಧೈಯದತ್ತ ವಾಯುವೇಗದಿಂದ ಸಾಗುತ್ತಿದ್ದರು. ಸತ್ಯವನ್ನು ಎತ್ತಿ ಹಿಡಿಯಲು ಸ್ವಲ್ಪವೂ ಹೆದರದೆ ಸೆಣಸಿದರು. ಅವರು ಮಾಡಿದ ಆ ಕಾರ್ಯ ಪಟುತ್ವದ ಓಜಸ್ಸು ಇಡೀ ಕರ್ನಾಟಕವನ್ನೇ ಬೆಳಗಿತು. ಆ ಪುಣ್ಯ ಪುರುಷನ ಪ್ರತಿಬಿಂಬವು ಪ್ರತಿಯೊಬ್ಬ ಕನ್ನಡಿಗನ ಕಣ್ಣಲ್ಲಿ ತೋರಿ ಮಿಂಚಿತು. ಇದಲ್ಲದೆ ಆ ಮಹಾತ್ಮನು ವೀರಶೈವ ಸಮಾಜದಲ್ಲಿ ಬಸವಣ್ಣನಂತೆ ತನ್ನದೇ ಆದ ಒಂದು ಉಚ್ಚಸ್ಥಾನವನ್ನು ಗಳಿಸಿಕೊಂಡನಲ್ಲದೆ, ಪ್ರತಿಯೊಬ್ಬ ಸಮಾಜಾಭಿಮಾನಿಯ-ಸಂಸ್ಕೃತಾಭಿಮಾನಿಯ ಹೃದಯ ಮಂದಿರದ ಮಾನ್ಯ ಮೂರ್ತಿಯಾದನು. ವಿರಕ್ತಚಕ್ರವರ್ತಿಯಾದನು.

ಜನನ ಮತ್ತು ಬಾಲ್ಯ

ಧಾರವಾಡ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ‘ಜೋಯಿಸರ ಹರಳಹಳ್ಳಿ’ ಎಂಬುದೊಂದು ಗ್ರಾಮವುಂಟು, ಆ ಗ್ರಾಮದಲ್ಲಿ ‘ಬಸವಯ್ಯ ಮತ್ತು ನೀಲಮ್ಮ ಎಂಬ ಹೆಸರಿನ ಧಾರ್ಮಿಕ ಭಾವನೆಯ ದಂಪತಿಗಳು, ಧಾರ್ಮಿಕಕ್ಕೂ ದಾರಿದ್ರಕ್ಕೂ ಅನಾದಿ ಕಾಲದಿಂದಲೂ ಅತ್ಯಂತ ಸ್ನೇಹವಿದ್ದಂತೆ ಅವರ ಮನೆಯಲ್ಲಿಯೂ ಇತ್ತು. ಹೀಗಿರಲು ಕೆಲವು ಕಾಲದ ಮೇಲೆ ಆ ಧಾರ್ಮಿಕ ದಂಪತಿಗಳ ಉದರದಲ್ಲಿ  ಕ್ರಿ. ಶ. ೧೮೬೭ರಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಜನ್ಮತೊಟ್ಟರು. ಈ ಶಿಶುವು ಹಲವು ದಿನ ಹಣೆಯಲ್ಲಿ ಭಸ್ಮಧಾರಣವಿಲ್ಲದೆ ಹಾಲು ಕುಡಿಯದ್ದರಿಂದ ಈ ಶಿಶುವಿಗೆ ‘ಹಾಲಯ್ಯ’ ಎಂದು ಹೆಸರನ್ನಿಟ್ಟರೆಂದು ಜನ ಹೇಳುತ್ತಾರೆ. ಈ ಶಿಶುವು ಆ ದಂಪತಿಗಳಿಗೆ ಎರಡನೇ ಮಗನು. ಇವನು ಮುಂದೆ ಕ್ರಮವಾಗಿ ಬೆಳೆದು ಅಕ್ಷರಾಭ್ಯಾಸವನ್ನು ಆರಂಭಿಸಿದನು. ಹೀಗಿರುವಾಗ ಮೊದಲೇ ಮನೆಯಲ್ಲಿ ಬಡತನ; ಅದರಲ್ಲಿ ಮನೆಯನ್ನು ತೂಗಿಸಿಕೊಂಡು ಹೋಗುವ ಅಜ್ಜ-ಅಪ್ಪಗಳ ವಿಯೋಗ, ಹೀಗಾಗಿ ಇವರ ವಿದ್ಯಭ್ಯಾಸಕ್ಕೆ ಅನೇಕ ಅಡಚಣೆಗಳು ಅಡ್ಡವಾದುವು. ಮನೆಯ ಅಡಚಣೆಗಳಿಗಾಗಿ ಊರನ್ನೇ ಬಿಟ್ಟು ಅಲ್ಲೇ ಸಮೀಪದಲ್ಲಿರುವʼ ಕಜ್ಜರಿ ʼಎಂಬ ಗ್ರಾಮಕ್ಕೆ ಬಂದು, ಅಲ್ಲಿಯ ಒಬ್ಬ ಮಾನ್ಯಗೃಹಸ್ಥರ ಆಶ್ರಯದಿಂದ ಆತಂಕವಿಲ್ಲದೆ ವಿದ್ಯಾಭ್ಯಾಸವನ್ನು ಆರಂಭಿಸಿದರು. ‘ಬಡವರ ಮಕ್ಕಳು ಬುದ್ಧಿವಂತರುʼ ಎಂಬ ಮಾತು ಇವರಲ್ಲಿಯೂ ಸಾರ್ಥಕವಾಗಿತ್ತು, ತಮ್ಮ ಬುದ್ಧಿ ಕೌಶಲ್ಯದಿಂದ ಬೇಗಬೇಗ ಮಾಧ್ಯಮಿಕ ಪರೀಕ್ಷೆಯವರೆಗೆ ವಿದ್ಯಾರ್ಜನೆಯನ್ನು ಮಾಡಿದರು. ಆದರೆ ಪರೀಕ್ಷೆಯಲ್ಲಿ ಮಾತ್ರ ಉತ್ತೀರ್ಣರಾಗಲಿಲ್ಲ. ಆಮೇಲೆ ಲಿಂಗದಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಿಕ್ಷಣದ ಕನ್ನಡ ಶಾಲೆಯನ್ನು ಪ್ರಾರಂಭಮಾಡಿ, ತಾವು ಶಿಕ್ಷಕರಾದರು. ಬಾಲಕರಿಗೆ ಪಾಠ ಹೇಳುತ್ತಲೇ ತಾವು ನಿಜಗುಣರ ಅಧ್ಯಾತ್ಮಿಕ ಗ್ರಂಥಗಳನ್ನು ನೋಡುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಲು ಇಲ್ಲಿರುವ ಸುದ್ದಿಯನ್ನು ಕೇಳಿ ಅವರ ತಾಯಿಯಾದ ನೀಲಮ್ಮನವರು ಅವರ ವಿವಾಹವನ್ನು ಮಾಡಬೇಕೆಂದು ಮಗನ ಮೇಲಿನ ಮಮತೆಯಿಂದ ಬಂದು ಮನೆಗೆ ಕರೆದು ತಮ್ಮ ಹೃದ್ಗತವನ್ನು ಹೇಳಿದರು. ಆ ಮಾತನ್ನು ಕೇಳಿ ಶ್ರೀಗಳು-ಅಮ್ಮಾ! ಆದಾಗದು. ಅದು ಮೂರು ದಿನದ ಸಂಸಾರ ನಾಲ್ಕನೆಯ ದಿನಕ್ಕೆ ದುಃಖದ ಸಾಗರ, ಅದರಲ್ಲಿ ನನ್ನನ್ನು ಕೆಡುಹಬೇಡ. ಈ ನಶ್ವರವಾದ ಶರೀರದಿಂದ ಸತ್ಯ ಶಾಂತಿಯನ್ನು ಸಂಪಾದಿಸಬೇಕಾಗಿದೆ. ಈ ಕಾಯವೆಂಬ ಕಾಡಿನಲ್ಲಿ ಕಾಲನು ಶಾರ್ದೂಲ ವಿಕ್ರೀಡತವನ್ನೂ, ಕಾಮನು ಮತ್ತೇ ಭವಿಕ್ರೀಡಿತವನ್ನೂ ಮಾಡುತ್ತಿದ್ದಾರೆ. ಇವರನ್ನು ಸದೆಬಡಿಯಲು ಕಾಲಾರಿಯೂ ಕಾಮಾರಿಯೂ ಆದ ಶಿವನನ್ನು ಆರಾಧಿಸಬೇಕಾಗಿದೆ. ಅದಕ್ಕಾಗಿ ನನ್ನ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಪೂಜ್ಯಳಾದ ತಾಯಿಯೆ ! ನಿನ್ನ ರಕ್ಷಣೆಯ ಋಣ ವಿಮೋಚನೆಗಾಗಿ ಶಿಕ್ಷಕ ವೃತ್ತಿಯಿಂದ ಸಂಪಾದಿಸಿ ಈ ಮುನ್ನೂರು ರೂಪಾಯಿಗಳನ್ನು ನಿನ್ನ ಉಡಿಯಲ್ಲಿ ಹಾಕುತ್ತೇನೆ ಇಷ್ಟರಿಂದ ತೃಪ್ತಳೂ ಶಾಂತಳೂ ಆಗು. ಇನ್ನು ಮೇಲೆ ನೀ ತಾಯಿಯೆಂಬ ಭಾವನೆಯು ನನ್ನಲ್ಲಿಯೂ, ನಾನು ಮಗನೆಂಬ ಮೋಹವು ನಿನ್ನಲ್ಲಿಯೂ ಖಂಡಿತವಾಗಿ ಇರಕೂಡದು’ ಎಂದು ಹೇಳಿ ನಮಸ್ಕರಿಸಿ ಹಾಗೆಯೇ ವೀರವಿರತಿಯಿಂದ ಹುಬ್ಬಳ್ಳಿಗೆ ಬಂದು ಸೇರಿದರು. ಅಲ್ಲಿ ಆಗ ಪ್ರಸಿದ್ಧ ವೇದಾಂತಿಗಳೆನಿಸಿದ್ದ ಸಿದ್ಧಾರೂಢರಲ್ಲಿ ಒಳ್ಳೇ ಜಾಣ್ಮೆಯಿಂದ ನಿಜಗುಣರ ಗ್ರಂಥಗಳನ್ನು ಅಧ್ಯಯನ ಮಾಡಿದವರಾದರೂ ಅಲ್ಲಿ ನಿಜವಾದ ಶಾಂತಿಯನ್ನು ಹೊಂದಲಿಲ್ಲ. ಅವರ ಇಷ್ಟಲಿಂಗ ತ್ಯಾಗವೇ ಮುಂತಾದ ಕೆಲವು ಆಚರಣೆಗಳು ಇವರಿಗೆ ಮೆಚ್ಚುಗೆಯಾಗಲಿಲ್ಲ. ಆದಕಾರಣ ಅಲ್ಲಿಂದ ಶ್ರೀ ಜಡೆ ಸಿದ್ಧರಿದ್ದಲ್ಲಿಗೆ ಹೋಗಿ ಅವರಿಂದ ಇಷ್ಟಲಿಂಗದ ಅವಶ್ಯಕತೆಯನ್ನು ಅದರ ನೆಲೆ ಕಲೆಗಳನ್ನೂ ಅರಿತುಕೊಂಡು ಬಂದು ಮನಃ ಅವರ ಅಪ್ಪಣೆಯಂತೆ ಆರೂಢರಲ್ಲಿಯೇ ಇರಹತ್ತಿದರು.

ಯೋಗ್ಯ ಗುರುವನ್ನು ಹೊಂದುವ ಭಾಗ್ಯ

ಹೀಗೆ ಕೆಲವು ದಿನ ಕಳೆದ ಮೇಲೆ ಯೋಗಪಿತಾಮಹರೂ ಘನವೈರಾಗ್ಯ ಸಂಪನ್ನರೂ ಆದ ಶ್ರೀ ಎಳಂದೂರು ಬಸವಲಿಂಗಸ್ವಾಮಿಗಳು ದೇಶ ಸಂಚಾರಮಾಡುತ್ತಾ ಆರೂಢರಲ್ಲಿಗೆ ದಯಮಾಡಿಸಿದರು. ವೇದಾಂತದಲ್ಲಿಯೂ ಅಧ್ಯಾತ್ಮ ಅನುಭವದಲ್ಲಿಯೂ, ಯೌಗಿಕ ವಿದ್ಯೆಯಲ್ಲಿಯೂ ಇವರಿಗೆ ಇರುವ  ಅಪಾರವಾದ ವೈದುಷ್ಯವನ್ನು ಅಸದೃಶವಾದ ವೈರಾಗ್ಯವನ್ನೂ ಕಂಡು ಆರೂಢರ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ನಮ್ಮ ಕುಮಾರಸ್ವಾಮಿಗಳು ಮೆಚ್ಚಿ ಇವರೇ ನನಗೆ ಸದ್ಗುರುಗಳೆಂದು ನಂಬಿ ಅವರ ಬೆಂಬತ್ತಿದರು. ಅವರ ಆ ಜನ್ಮದವರೆಗೂ ಗುರುಸನ್ನಿಧಿಯಲ್ಲಿದ್ದು ಸೇವೆಗೆಯ್ಯುತ್ತ ಅವರ ಕೃಪೆಗೆ ಪಾತ್ರರಾಗಿ ಅವರಿಂದ ಶಿವಯೋಗ, ಶಿವಾನುಭವಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಹೀಗೆ ಹಲವು ದಿನ ಗುರುಕುಲವಾಸದಲ್ಲಿರುತ್ತಿರಲು ಮುಂದೆ ಶ್ರೀ ಬಸವಲಿಂಗ ಸ್ವಾಮಿಗಳವರ ಅಂತ್ಯ ಸಮಯವು ಸಮೀಪಿಸಿತು. ಆಗ ಅವರು ಕುಮಾರನನ್ನು ಕರೆದು ತಮ್ಮ ಸಾಧನ ಸಾಮಗ್ರಿಗಳನ್ನೂ ಕೊಟ್ಟು ಅನುಗ್ರಹಿಸಿ ಲಿಂಗೈಕ್ಯರಾದರು. ಕುಮಾರನಾದರೂ ಗುರುವಿತ್ತುದನ್ನೆ ತನ್ನ ಜೀವನದ ಪರಮ ಸಂಪತ್ತೆಂದು ಸ್ವೀಕರಿಸಿ ಸಂತೋಷಚಿತ್ತನಾದರೂ ಗುರುವಿನ ವಿರಹದ ವ್ಯಥೆಯನ್ನು ಕೊಂಚಕಾಲ ಅನುಭವಿಸದೆ ಇರಲಿಲ್ಲ.

ತಷೋಭೂಮಿ !

ಅನಂತರ ಏಕಾಂಗಿಯಾಗಿದ್ದು ಪ್ರಶಾಂತ ಚಿತ್ತದಿಂದ ತಪಸ್ಸನ್ನಾಚರಿಸಿ ಭಾವೀ ಸಮಾಜ ಮತ್ತು ಸಂಸ್ಕೃತಿಗಳ ಸೇವೆಗೆ ಆತ್ಮಶಕ್ತಿಯನ್ನು ಸಂಪಾದಿಸಲು ಯೋಗ ಯೋಗ್ಯವಾದ ತಪೋಭೂಮಿಯಾದ ನಿಜಗುಣರಿಗೆ ನಿಜ ನೆಲೆಯಾದ ಶಂಭುಲಿಂಗನ ಬೆಟ್ಟಕ್ಕೆ ಬಂದರು. ಅಲ್ಲಿ ಅನಂತಕಾಲವಿದ್ದು ಅತ್ಯುಗ್ರತಪವನ್ನಾಚರಿಸಿ ಅಚ್ಚಳಿಯದ ಶಾಂತಿ ದಾಂತಿಗಳನ್ನು ಸಂಪದಿಸಿದರು. ಆತನಲ್ಲಿ ವಿಲಕ್ಷಣವಾದ ಆತ್ಮ ತೇಜಸ್ಸು ಅಲ್ಲಿ ಹೊರಹೊಮ್ಮಿತು. ಅಂತರಾತ್ಮನಲ್ಲಿ ಆತನಿಗೆ ಆಳವಾದ ನೆಮ್ಮಿಗೆಯು ಚಿಮ್ಮಿತು. ಆದ್ದರಿಂದ ಅವನು ಅಲ್ಲಿಂದ ಹೊರಟು ಸೊರಬ ಪ್ರಾಂತದ ಕ್ಯಾಸನೂರು ಷಟ್ಕಾವ್ಯದ ಗುರುಬಸವಸ್ವಾಮಿಗಳ ಗದ್ದಿಗೆಯಲ್ಲಿ ಕೆಲವು ದಿನ ನಿಂತು ಅನುಷ್ಠಾನವನ್ನು ಆಚರಿಸತೊಡಗಿದನು. ಅಲ್ಲಿ ಸ್ವಯಂಪ್ರಕಾಶದ ದಿವ್ಯಜ್ಞಾನವು ಆತನಲ್ಲಿ ಮೈದೋರಿತು. ಸಾಮಾನ್ಯವಾಗಿ ಮನುಷ್ಯಮಾತ್ರರಿಗಿರುವ ಮಾನ, ಮಾಯಾ, ಲೋಭಗಳು ನಷ್ಟವಾದವು. ರತಿ, ಭಯ, ಶೋಕಗಳು ನಿರ್ಮೂಲವಾದವು ಹೀಗಿರಲು ಇವರ ಈ ಕೀರ್ತಿಯು ನಾಡಿನ ನಾಲ್ಕೂ ಕಡೆಗೆ ಹಬ್ಬತೊಡಗಿತು.

ಹಾನಗಲ್ಲ ಮಠಾಧಿಕಾರ

ಅದೇ ಸಮಯದಲ್ಲಿ ಧಾರವಾಡ ಜಿಲ್ಲಾ ಹಾನಗಲ್ಲ ವಿರಕ್ತಮಠಕ್ಕೆ ಒಬ್ಬ ಒಳ್ಳೇ ಮೂರ್ತಿಗಳು ಬೇಕಾದುದರಿಂದ ಕೀರ್ತಿವೆತ್ತ ಇವರನ್ನೇ ಮಾಡಬೇಕೆಂದು ಭಕ್ತರಲ್ಲಿ ಯೋಚನೆಯು ಹುಟ್ಟಿತು. ಅದರಂತೆ ಎಲ್ಲರೂ ಸೇರಿ ಇವರ ಬಳಿಗೆ ಬಂದು ವಿಷಯವನ್ನು ಭಿನ್ನವಿಸಿದರು. ಅದಕ್ಕೆ ಇವರು ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಅವರ ಆಗ್ರಹಾತಿಶಯಕ್ಕೆ ಮಠದ ಸ್ವಾಮಿಗಳಾದರೂ ಮಠದ ಮೋಹವನ್ನಿಟ್ಟುಕೊಳ್ಳಲಿಲ್ಲ. ಭೂಮಿ ಕಾಣಿಕೆಗಳ ಸಂಪಾದನೆಯ ಲೋಭವನ್ನು ಹಚ್ಚಿಕೊಳ್ಳಲಿಲ್ಲ. ಮಠದಲ್ಲಿಯೇ ಒಂದು ಪಾಠಶಾಲೆಯನ್ನು ಸ್ಥಾಪಿಸಿ ಅನ್ನದಾನವನ್ನೂ ಜ್ಞಾನ ಬೋಧೆಯನ್ನೂ ಪ್ರಾರಂಭಿಸಿದರು.

ಮಹಾಸಭೆಯ ಸಂಸ್ಥಾಪನೆ

 ಇಡಿಯ ಸಮಾಜವೇ  ಅಜ್ಞಾನಾಂಧಕಾರದಲ್ಲಿರುವಾಗ, ಅನೈಕ್ಯದ ಕಾಡುಸ್ಥಿತಿಯಲ್ಲಿರುವಾಗ, ಇದೊಂದು ಪಾಠಶಾಲೆಯಿಂದ ಅದಕ್ಕೆ ಏನಾಗಬೇಕು? ಹಿರಿಯ ಮನೆಯ ಕತ್ತಲನ್ನೆಲ್ಲಾ ಒಂದೇ ಒಂದು ಮಿಣುಕುವ ಸೊಡರು ಹೇಗೆ ಕಳೆಯಬಲ್ಲುದು? ಎಂದು ಯೋಚಿಸಿ ಇದಕ್ಕಿಂತಲೂ ಮಿಗಿಲಾದ ಕಾರ್ಯವನ್ನು ಕೈಗೊಳ್ಳಬೇಕು, ಸಮಾಜದ ಪ್ರತಿಯೊಂದು ವ್ಯಕ್ತಿಯೂ ಸುಧಾರಣೆಯನ್ನು ಹೊಂದಬೇಕು. ಸಾಂಪತ್ತಿಕ, ಶೈಕ್ಷಣಿಕ, ನೈತಿಕ ಮೊದಲಾದ ಸಲಕರಣೆಗಳನ್ನು ಊರ್ಜಿತ ಸ್ಥಿತಿಗೆ ಬರಬೇಕು ಎಂಬ ಉದಾತ್ತವಾದ ಯೋಚನೆಯನ್ನು ಮಾಡಿ ಅದಕ್ಕಾಗಿ ಅಲ್ಲಿಲ್ಲಿ ಸಂಚರಿಸುತ್ತ ಬೋಧಿಸುತ್ತ ಹುರಿದುಂಬಿಸುತ್ತ ಧಾರವಾಡಕ್ಕೆ ಬಂದು ಅಲ್ಲಿಯ ಹಲವು ಪ್ರಮುಖರೊಡನೆ ಪರ್ಯಾಲೋಚಿಸಿ ಕ್ರಿ.ಶ.೧೯೦೪ರಲ್ಲಿ ತಮ್ಮ ದೀರ್ಘ ಸಾಹಸದಿಂದ ಶ್ರೀಮದ್ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಜನ ಜಾಗ್ರತೆಯಿಲ್ಲದ ವಿಜ್ಞಾನ ಯುಗದ ಗಾಳಿಯಿಲ್ಲದ ಆ ಕಾಲದಲ್ಲಿ ಇಂತಹದೊಂದು ಮಹಾಸಭೆಯನ್ನು ಸ್ಥಾಪಿಸಿದ್ದು ಶ್ರೀಗಳಲ್ಲಿರುವ ಅದ್ವೀತಿಯವಾದ ಬುದ್ಧಿಸಾಮರ್ಥ್ಯವನ್ನು ವ್ಯಕ್ತಮಾಡುವುದಿಲ್ಲವೇ? ಆ ಸಭೆಯು ಆರೆಳು ವರ್ಷಗಳ ವರೆಗೆ ತಪ್ಪದೇ ಅವರ ನೇತೃತ್ವದಲ್ಲಿಯೇ ನಡೆಯಿತು. ಅದು ಈಗ ಕುಂಟುತ್ತಿರುವುದು ಲಿಂಗವಂತ ಸಮಾಜದ ದುರ್ದೈವವೇ ಸರಿ. ಆ ಸಭೆಯಿಂದ ಸಮಾಜದಲ್ಲಿ ಆದ ಕ್ರಾಂತಿಗಳು ಅನಿತಿನಿತಲ್ಲ. ಸಾಮಾಜಿಕ, ಶೈಕ್ಷಣಿಕ, ಸಾಂಪತ್ತಿಕ, ಸಾಹಿತ್ಯ ಮುಂತಾದ ಕಾರ್ಯಗಳು ಆ ಸಭೆಯ ಮುಖದಿಂದಲೇ ಸಾಗಹತ್ತಿದವು. ಅವು ಇಂದು ಈ ಸ್ಥಿತಿಯಲ್ಲಿರುವುದಾದರೂ ಆ ಮಹಾಸಭೆಯ ಬಲದಿಂದಲೇ. ಆ ಮೇಲೆ ಶ್ರೀಗಳು ಧರ್ಮೋತೇಜಕ ಸಭೆ, ಶಿವ ಪೋಷಿಣೀಸಭೆ ಮುಂತಾದವುಗಳನ್ನು ಸ್ಥಾಪಿಸಿ ಅಲ್ಲಲ್ಲಿ ನೆರವೇರಿಸಿದರು. ಅವುಗಳ ಮುಖದಿಂದ ಧಾರ್ಮಿಕ ನೈತಿಕ ವಿಚಾರಗಳನ್ನು ಹರಡಿದರು. ಆ ಕಾಲವು ವೀರಶೈವರ ಉತ್ಕ್ರಾಂತಿಯ ಕಾಲವಾಯಿತು.

ಸಂಸ್ಕೃತಿಯ ಸಂರಕ್ಷಣ

ಇವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನೂ ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ನಿಧಿ’ ಕೂಡಿಸಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿಆಲೂರು, ರೋಣ, ಇಳಕಲ್ಲ, ನೀರಡಗುಂಭ, ಅನಂತಪುರ, ಕೆಳದಿ ಚಿತ್ತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದಲೂ ಕೆಲವು ಪರಪ್ರೇರಣೆಯಿಂದಲೂ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ, ನಿಂತುಹೋಗಿವೆ. ಮೊಟ್ಟಮೊದಲು ಸ್ವಾಮಿಗಳವರ ಉಪದೇಶದಿಂದಲೇ ವೀರಶೈವರಲ್ಲಿ ವಾಚನ ಮಂದಿರಗಳು ಸ್ಥಾಪಿತವಾದುವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಲವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನ ಮಾಡಿದರು.  ಆದರೆ ಜನ-ಧನ ಸಹಾಯವು ಸಾಕಷ್ಟಾಗದ ಮೂಲಕ ಅದು ಸಂಪೂರ್ಣ ಸಿದ್ಧಿಗೆ ಹೋಗಲಿಲ್ಲ. ಹಾಗಾದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತಂಜಾವೂರು, ತ್ರಾವಣಕೋರ ಮೊದಲಾದ ಸ್ಥಳಗಳಿಗೆ ಕಳಿಸಿ, ಕೆಲವು ಮಹತ್ವದ ವೀರಶೈವ ಮತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿದರು ಮತ್ತು ಶಿವಯೋಗ ಮಂದಿರದಲ್ಲಿ ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದರು. ಆದರೆ ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೊಲ್ಲಾಪುರದ ಕೈ ವೀರಬಸವಶ್ರೇಷ್ಠಿ ಬಿ. ಎ. ಅವರನ್ನು ಪಾಶ್ಚಾತ್ಯದೇಶಗಳಿಗೆ ವೀರಶೈವ ಪ್ರಚಾರಕ್ಕೆ ಕಳಿಸಬೇಕೆಂದು ಶ್ರೀಗಳವರು ಸಾಹಸಮಾಡಿದರು.  ಕಾರಣಾಂತರಗಳಿಂದ ಈ ಕಾರ್ಯವು ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೇ ಹುಳದ ಬಾಯಿಗೆ ಬಿದ್ದು ಹಾಳಾಗಿಹೋಗುತ್ತಿದ್ದ ಎಷ್ಟೋ ವಚನ ಗ್ರಂಥಗಳು ಪ್ರಸಾರಕ್ಕೆ ಬಂದವು. ಹೊಸಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೂ ಹಲವು ವಿಧವಾಗಿ ಸಹಾಯ ಮಾಡಿದರು. ಕಾಶಿಯಲ್ಲಿ ಅಭ್ಯಾಸ ಮಾಡುವಾಗ ಶ್ರೀ ಮ.ನಿ.ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೂ, ಲಿಂಗೈಕ್ಯ ಶ್ರೀ ಬಾಳೇಹಳ್ಳಿ ಶ್ರೀ ಜಗದ್ಗುರು ಶಿವಾನಂದ ಶಿವಾಚಾರ ಮಹಾಸ್ವಾಮಿಗಳಿಗೂ ಶ್ರೀಗಳು ಧನಸಹಾಯ ಮಾಡಿದರೆಂದು ತಿಳಿದುಬರುತ್ತದೆ. ಧರ್ಮತರಂಗಿಣಿ, ಶಿವಪ್ರತಾಪ ಮೊದಲಾದ ಮಾಸ ಮತ್ತು ವಾರ ಪತ್ರಿಕೆಗಳು ಶ್ರೀಗಳವರ ಕೃಪೆಯಿಂದಲೇ ಹೊರಡುತ್ತಿದ್ದುವು. ಹೀಗೆ ಹಲವು ವಿಧವಾಗಿ ಶ್ರೀಗಳವರು ಲಿಂಗವಂತ ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

  ಸಮಾಜದ ಸಂಸ್ಕರಣ

 ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಶ್ರೀಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ಕಲೆಗಳೂ ಹೇಗೆ ಮುಂದಕ್ಕೆ ಬರುವುವೆಂದು ಸದಾ ಯೋಚಿಸುತ್ತಿದ್ದರು. ಸಮಾಜದೇಳ್ಗೆಯ ಆಸಕ್ತಿಯು ಅವರ ರಕ್ತದ ಪ್ರತಿಕಣದಲ್ಲಿಯೂ ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಊಹಿಸುವುದೇ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಅವರು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನೂ ಶ್ರಮವನ್ನೂ ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯೂ, ಉಪವಾಸವು ಊಟವಾಗಿಯೂ, ಯೋಚನೆಯೇ ಜಪವಾಗಿಯೂ ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಶ್ರೀಗಳು ವೀರಶೈವರ ಪರವಾಗಿ ಪ್ರಬಲವಾಗಿ ಹೋರಾಡಿ ಜಯಶೀಲರಾದ ವಿಷಯವು ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ  ಫಂಡಿನಂತೆ ಆಗುವುದರ ಸಲುವಾಗಿ ಶ್ರೀಗಳು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸ ಮಾಡಿದ್ದನ್ನು ವೀರಶೈವ ಸಮಾಜವು  ಎಂದಿಗೂ ಮರೆಯುವಂತಿಲ್ಲ. ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳಿಂದ ಸಿದ್ಧಾಪುರದ ಸಾಧು ನಿರಸನ’ ಎಂಬ ತಲೆ ಬರೆಹದ ಲೇಖನವನ್ನು ‘ಮೈಸೂರು ಸ್ಟಾರ್’ ಪತ್ರಿಕೆಯಲ್ಲಿ ಓದಿದ್ದು ಜನರ ನೆನಪಿನಲ್ಲಿದೆ. ಜನರ ವ್ಯಾಜ್ಯಗಳನ್ನು ತಮ್ಮ ಬುದ್ಧಿ ಬಲದಿಂದ ಬಗೆಹರಿಸಿ ಅವರು ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು, ಮೆರವಣಿಗೆ ಮೊದಲಾದವುಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆ ಮಾಡಿದರು. ಹೀಗೆ ಒಂದಲ್ಲ ಎರಡಲ್ಲ ಅನಂತ ಬಗೆಯಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ‘ಕಾಯಕವೇ ಕೈಲಾಸ’ ಎಂಬ ಶರಣರ ದಿವ್ಯ ಬೋಧನೆಯನ್ನು ಜನರಿಗೆ ಸಾರಿದರು. ಪ್ರತಿಕ್ಷಣದಲ್ಲಿಯೂ ಜನಜೀವನದಲ್ಲಿ ಬೆರೆತು ತಿಳಿವನ್ನು ಬೋಧಿಸಿದರು.

ಶಿವಯೋಗ ಮಂದಿರದ ಸ್ಥಾಪನೆ

ಈ ರೀತಿಯಾಗಿ ಅವರೊಬ್ಬರೇ ಸಮಾಜದಲ್ಲಿ ಸಂಚರಿಸಿ ಈ ಸುಧಾರಣೆಯ ಕಾರ್ಯವನ್ನು ಮಾಡುವುದಕ್ಕಿಂತಲೂ ಇಡಿಯ ಗುರುವರ್ಗವೇ ಸುಧಾರಿಸಿ ಈ ಕಾರ್ಯಕ್ಕೆ ಬೆಂಬಲಿಗರಾದರೆ ಪ್ರಗತಿಯ ಇನ್ನೂ ಹೆಚ್ಚು ಹೆಚ್ಚಾಗಿ ಸಾಗಿ ಶೀಘ್ರದಲ್ಲಿ ಸಮಾಜವು ಸುಧಾರಣೆಯ ಶಿಖರವನ್ನೇರುವುದೆಂದು ಮನಸ್ಸಿನಲ್ಲೇ ಯೋಚಿಸತೊಡಗಿದರು. ಅದೇ ಸಮಯಕ್ಕೆ ವೈರಾಗ್ಯಮೂರ್ತಿಯಾದ ಬಾಗಲಕೋಟೆಯ ಮಲ್ಲಣಾರ್ಯರ ಸಮಾಗಮವಾಯಿತು. ಬೆಂಕಿಯು ಗಾಳಿಯ ಸಂಪರ್ಕದಿಂದ ಪ್ರಜ್ವಲಿಸುವಂತೆ ಅವರ ಉತ್ತೇಜನ ಸಂಭಾಷಣೆಯಿಂದ ಇವರಲ್ಲಿ ಮೊಳೆತ ಯೋಜನೆಯು ಪಲ್ಲವಿಸಿ ಪ್ರಫುಲ್ಲವಾಯಿತು. ಕೂಡಲೇ ತಮ್ಮ ವಿಚಾರವನ್ನು ತಾವೇ ಸ್ಥಾಪಿಸಿದ ಬಾಗಲಕೋಟೆಯ ನಾಲ್ಕನೆಯ ವೀರಶೈವ ಮಹಾಸಭೆಯ ಮುಂದಿರಿಸಿ ನಿರ್ಧರಿಸಿದರು. ಆ ನಿರ್ಧಾರದಂತೆ ಕ್ರಿ.ಶ.೧೯೦೯ರಲ್ಲಿ ಬಿಜಾಪುರ ಜಿಲ್ಲಾ ಬಾದಾಮಿ ಸಮೀಪದ ಈಗಿರುವ ಸ್ಥಳದಲ್ಲಿ ‘ಶ್ರೀ ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಆ ಸಂಸ್ಥೆಯ ದಕ್ಷಿಣಕ್ಕೆ ಬನಶಂಕರಿ, ನಾಗನಾಥ, ಮಹಾಕೂಟ, ವಾತಾಪಿಪುರ (ಬಾದಾಮಿ) ಉತ್ತರ ಪಟ್ಟದಕಲ್ಲು, ಐಹೊಳೆ ಶಂಕರ ಲಿಂಗ ದೇವಾಲಯ, ಸಿದ್ಧನಾಥಾಶ್ರಮಗಳು ಶೋಭಿಸುತ್ತಿವೆ. ಕ್ರೂರ ಮೃಗಗಳ ವಾಸದಿಂದಲೂ, ಕಳ್ಳಕಾಕರ ಭಯದಿಂದಲೂ ಭೀಕರವಾದ ಆ ಅರಣ್ಯವು ಇಂದು ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ಮಗ್ಗುಲಲ್ಲಿಯೇ ತಿಳಿತಿಳಿಯಾಗಿ ಹರಿಯುವ ಮಲಪ್ರಭಾನದಿಯ ನೀರು, ಹಚ್ಚಗೆ ಹಸುರುಮುಡಿದು ಹೂತು ಕಾತು ಕಂಗೊಳಿಸುವ ತರುಲತೆಗಳು, ಆ ಹೂ ಗಂಪನ್ನು ಹೊತ್ತು ಹಗುರಾಗಿ ತೀಡುವ ತಂಗಾಳಿ ಪಾಂಥಸ್ಥರ ಪರಿಶ್ರಮವನ್ನು ಪರಿಹರಿಸುವುವು. ಅಲ್ಲಿ ಕುಕಿಲ್ವ ಕೋಗಿಲೆಗಳು, ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು; ಓಡಾಡುವ ಮೊಲ ಅಳಿಲುಗಳು ನೋಡುವವರ ಕಣ್ಮನಗಳನ್ನು ತಣಿಸುವುವು. ಅನುಷ್ಠಾನಕ್ಕೆಂದು ಕಟ್ಟಿಸಿದ ಹಸರು ಹುಲ್ಲಿನ ಗುಡಿಸಲುಗಳು, ಕಲ್ಲುಬಂಡೆಗಳಿಂದ ಕಟ್ಟಿದ ಗವಿಗಳು ತಾವಾಗಿ ಹಟ್ಟಿ ಹೆಣೆದು ನಿಂತ ಲತಾ ಮಂಟಪಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನೂ ಸೆಳೆದು ಶಾಂತಿಗೊಳಿಸುವುವು, ಅದರಲ್ಲಿಯೂ ಚೈತ್ರ ಮಾಸದ ಹುಣ್ಣಿಮೆಯ ತಿಳಿಯಾದ ಬೆಳುದಿಂಗಳಲ್ಲಿ ನಿಂತು ಸುತ್ತಮುತ್ತಿನ ಆ ನೈಸರ್ಗಿಕ ವನ ಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ ಆನಂದವುಂಟಾಗುತ್ತದೆ. ಅಷ್ಟೇ ಅಲ್ಲ, ನೋಡುವವನ ಹೃದಯವೂ ಸಹ ಆ ಕಾಡಿನ ಚೆಲುವಿನಲ್ಲಿ ತಲ್ಲೀನವಾಗಿಬಿಡುತ್ತದೆ. ಇಂತಹ ಪ್ರಾಕೃತಿಕ ಸೌಂದಯ್ಯದಿಂದ ಕೂಡಿದ ಆ ಸಂಸ್ಥೆಯ ಸ್ಥಿರಜೀವಿತಕ್ಕೆ ಶ್ರೀಗಳವರು ಸುಮಾರು ೪-೫ ಲಕ್ಷ ರೂಪಾಯಿಗಳನ್ನು ಕೂಡಿಸಿದರು. ಸುಮಾರು ೪-೫ ಮೈಲಿನ ಭೂಮಿಯ ಸ್ವಾಮಿತ್ವವನ್ನು ಸತ್ಕಾರದಿಂದ ಸಂಪಾದಿಸಿದರು. ೧೦೦-೨೦೦ ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ೫೦ ಎಕರೆ ಗುಡ್ಡವನ್ನುಸರಕಾದವರಿಂದ ಇನಾಮನ್ನಾಗಿ ಪಡೆದರು. ಸದ್ಭಕ್ತರು ಬೇರೆಬೇರೆ ಕಡೆಗೆ ನೂರಾರು ಕೂರಿಗೆ ಭೂಮಿಯನ್ನು (೧ ಕೂರಿಗೆಗೆ ೪ ಎಕರೆ) ಭಕ್ತಿಯಿಂದ ಅರ್ಪಿಸಿದರು. ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯನ್ನು ಬಾಗಿಲು ಕೋಟೆಯಲ್ಲಿ ಸ್ಥಾಪಿಸಿದರು. ಶಿವಯೋಗ ಮಂದಿರದಲ್ಲಿಯೇ ಒಂದು ದೊಡ್ಡ ಗ್ರಂಥಾಲಯವನ್ನು ರಚಿಸಿದರು. ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶೇಖರಿಸಿದರು. ಇದಲ್ಲದೆ ತಾಳೆಯೋಲೆಗಳನ್ನು ಕೈಬರೆಹದ ಕಡತಗಳನ್ನೂ ೩೦೦-೪೦೦ಕ್ಕೆ ಕಡಿಮೆಯಿಲ್ಲದಷ್ಟು ಕೂಡಹಾಕಿದ್ದಾರೆ. ಪರಿಶುದ್ಧವಾದ ಭಸ್ಮ, ಪಂಚಸೂತ್ರದ ಶಿವಲಿಂಗಗಳನ್ನು ತಯಾರಿಸುವ ಏರ್ಪಾಡನ್ನು ಮಾಡಿದರು. ವೈದ್ಯರ ಸಂಶೋಧನವನ್ನು ಮಾಡಿದರು. ಹಲವು ದಿವ್ಯೌಷಧಿಗಳನ್ನು ತಯಾರಿಸಿದರು. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ದೌಷಧಿಯು ಅಲ್ಲಿ ಈಗಲೂ ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣ ಹೊಂದುತ್ತಲಿದ್ದಾರೆ. ಶಿವರಾತ್ರಿಯ ಜಾತ್ರೆಯ ಕಾಲಕ್ಕೆ ಹಲವು ಪರಿಷತ್ತು ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆಗೆ ಸುಮಾರು ೩೦೦-೩೫೦ಕ್ಕೆ ಕಡಿಮೆಯಿಲ್ಲದಷ್ಟು ಸಾಧಕರು ಅಧ್ಯಯನ ಮಾಡಿ ತಯಾರಾಗಿದ್ದಾರೆ. ಕನ್ನಡ, ಸಂಸ್ಕೃತ, ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗ ಯೋಗವನ್ನೂ ಇಷ್ಟ ಲಿಂಗದ ವಿಚಾರವನ್ನೂ ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನೂ ಪ್ರಾಣಲಿಂಗದ ನೆಲೆ ಕಲೆಗಳನ್ನೂ  ಗುರ್ತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆ ಸಂಸ್ಥೆಯಿಂದ ಭಾಷಣಕಾರರು, ಕೀರ್ತನಕಾರರು, ಪೌರಾಣಿಕರು, ಲೇಖಕರು, ಯೋಗಿಗಳು, ಅನುಭವಿಗಳು, ಸಂಗೀತಜ್ಞರು ಮುಂತಾಗಿ ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ, ಕೋಡಿಕೊಪ್ಪ, ಬಾದಾಮಿ ಮೊದಲಾದ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ, ಬೋರ್ಡಿಂಗುಗಳನ್ನು ಸ್ಥಾಪಿಸಿದ್ದಾರೆ. ಆದುದರಿಂದ ವೀರಶೈವ  ಸಮಾಜಕ್ಕೂ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಕೆಲಸವಾಗಿದೆ. ಈ ದೃಷ್ಟಿಯಿಂದ ವೀರಶೈವ ಸಮಾಜಕ್ಕೆ ಉಪಕಾರಮಾಡಿದ ಈ ಸಂಸ್ಥೆಯು ಆರ್ಯ ಸಮಾಜಕ್ಕೆ ‘ಕಾಂಗಡಿ ಗುರುಕುಲ’ವಿದ್ದಂತೆ ಇದೆಯೆನ್ನಬಹುದು. ಸಾಹಿತ್ಯಸೇವೆಗೆ, ಅನುಭವ ವಿಚಾರಕ್ಕೆ ೨೦ನೇ ಶತಮಾನದ ಅನುಭವ ಮಂಟಪವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ದ್ವೀತಿಯ ಬಸವಣ್ಣನೆನಿಸಿದರು.

ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಎತ್ತರವೂ ತೆಳುವೂ ಆದ ಮೈಕಟ್ಟು, ಹೊಳೆಯುವ ಕಣ್ಣುಗಳು, ಮಿಗಿಲಾದ ಕಾರ್ಯ ಶ್ರದ್ಧೆ, ನೈಜವಾದ ವೈರಾಗ್ಯ, ದೂರದೃಷ್ಟಿಯಿಂದ ಕೂಡಿದ ಕಾರ್ಯಪಟುತ್ವ, ಮಿಗಿಲಾದ ವಿದ್ಯಾಭಿಮಾನ, ಅತಿಶಯವಾದ ಜ್ಞಾನಾಭಿರುಚಿ, ಚೊಕ್ಕವಾದ ಸತ್ಯಸಂಧತೆ, ಗಂಭೀರವಾದ ಮಾತುಕತೆ ಇತ್ಯಾದಿ ಸದ್ಗುಣಗಳಿಂದ ಕೂಡಿದ್ದರು, ಆದುದರಿಂದ ಅವರನ್ನು ನಿಜವಾಗಿಯೂ ಆಧುನಿಕ ಕಾಲದ ಮಹಾನುಭಾವರೆನ್ನಬಹುದು. ಈ ಮಹಾತ್ಮರನ್ನು ಕುರಿತು ಕನ್ನಡದಲ್ಲಿ ಸ್ಮಾರಕ ಸಂಚಿಕೆ’ ‘ಕಾರಣಿಕ ಕುಮಾರಶಿವಯೋಗಿ’ ಎಂಬ ಗ್ರಂಥಗಳು ಹುಟ್ಟಿವೆ. ಶಿವಯೋಗ ಮಂದಿರದ ಇತ್ತೀಚೆಗೆ ‘ಸುಕುಮಾರ’ ಎಂಬ ಒಂದು ಮಾಸ ಪತ್ರಿಕೆ ಕೂಡ ಪ್ರಕಟವಾಗುತ್ತಿದೆ. ಹೀಗೆ ಶ್ರೀಗಳ ಚರಿತ್ರೆಯು ಪ್ರಭಾವಪೂರ್ಣವಾಗಿದೆ.

(ಆಕರ : ವೀರಶೈವ ಮಹಾಪುರುಷರು ಲೇ:ಬಿ. ಶಿವಮೂರ್ತಿಶಾಸ್ತ್ರಿ)

ಡಾ. ಬಸವರಾಜ ಜಗಜಂಪಿ

(ಸಾಹಿತಿ ಬಸವರಾಜ ಜಗಜಂಪಿ ಅವರು 1950 ಮೇ 25ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಕಲ್ಲಪ್ಪನವರ, ತಾಯಿ ಈರವ್ವ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರರು. ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ,ಪ್ರಸ್ತುತ ಗ್ರಂಥಾಲಯ ಆಡಳಿತ ನಿರ್ದೇಶಕರಾಗಿ ಕೆ.ಎಲ್.ಇ. ಮಹಾವಿದ್ಯಾಲಯ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಚನ ಸಾಹಿತ್ಯ, ಜನಪದ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಪ್ರಮುಖ ಕೃತಿಗಳೆಂದರೆ ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯಗಳು, ಬಸವಪ್ರಭಪ್ಪನವರು ಹಂಪಣ್ಣವರ, ಮಲ್ಲಿಕಾರ್ಜುನ ದರ್ಶನ, ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮಿಜಿ, ಕವಿ ಸಿದ್ದೇನಂಜೇಶ, ಕೆ.ಎಲ್.ಇ. ಸೊಸೈಟಿ, ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಬೆಳಗಲಿ ಬಯಲ ಸಿರಿ, ರಸಾಯನ, ಸ್ಪಂದನ, ಶ್ರೀಗುರು, ಬಸವಪ್ರಸಾದ ಮುಂತಾದವು.)

ಉಚ್ಚ-ನೀಚ ಭಾವನೆಯನ್ನು ತೊಡೆದುಹಾಕಿ, ಸರ್ವಸಮಾನತೆಯನ್ನು ಮೆರೆದು, ಮನುಕುಲವನ್ನೇ ಪ್ರೀತಿಸುತ್ತ, ಪ್ರತಿಯೊಬ್ಬ ಮನುಷ್ಯನ ಉದ್ಧಾರಕ್ಕಾಗಿ ಶ್ರಮಿಸುತ್ತ, ತನ್ನ ವಿಶಿಷ್ಟ ಗುಣಗಳಿಂದ ಲಿಂಗಾಯತಧರ್ಮ ವಿಶ್ವವೆನಿಸಿದೆ. ಲಿಂಗಾಯತಧರ್ಮ ಸಮಾಜ-ಸಾಹಿತ್ಯ-ಸಂಸ್ಕೃತಿಗಳು ಗಮನಾರ್ಹ ಸ್ಥಾನ ಪಡೆಯುವಲ್ಲಿ ಹಲವಾರು ಪುಣ್ಯಪುರುಷರ ಅನನ್ಯ ದುಡಿಮೆಯೇ ಕಾರಣವಾಗಿದೆ. ಬಸವಾದಿ ಪ್ರಮಥರ ಬಳಿವಿಡಿದು ಬಂದ ನೂರೊಂದು ವಿರಕ್ತರು, ಶಿವಯೋಗಿಗಳು, ಆಚಾರ ಪುರುಷರು ಹಾಗೂ ಆಧುನಿಕ ಕಾಲದ ಮಹಾಪುರುಷರು, ಸರ್ವಾಂಗ ಪರಿಪೂರ್ಣ ಲಿಂಗಾಯತ ಸಮಾಜ ನಿರ್ಮಾಣಕ್ಕೆ ಹೆಣಗಿದ್ದು ಇಂದು ಇತಿಹಾಸ.

ಆದರೆ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಂಗಾಯತ ಧರ್ಮ ಸಮಾಜಗಳಿಗೆ ಒಂದು ಸಂಧಿಕಾಲ ಪ್ರಾಪ್ತವಾಗಿತ್ತು. ಪರಂಪರಾಗತ ಸಮಾಜದ ಸಾಮಾಜಿಕ, ಧಾರ್ಮಿಕ ರೀತಿನೀತಿಗಳು, ಕಟ್ಟುಪಾಡುಗಳು ಕಾಲಪ್ರಭಾವದಿಂದ ಶಿಥಿಲಗೊಂಡಿದ್ದವು. ಪಂಚಾಚಾರಗಳ ಪರಿಚಯವಿಲ್ಲದೆ, ಅಷ್ಟಾವರಣಗಳ ಅರಿವಿಲ್ಲದೆ, ಷಟ್‌ಸ್ಥಲಗಳ ಜ್ಞಾನವಿಲ್ಲದೆ ಲಿಂಗಾಯತ ಸಮಾಜ ಅಂಧಕಾರದಲ್ಲಿ ತೊಳಲಾಡುತ್ತಿತ್ತು. ಲಿಂಗಾಯತಕ್ಕೆಯೇ ಒಂದರ್ಥದಲ್ಲಿ ಅದು ಗ್ಲಾನಿಯ ಸಮಯ. ವ್ಯಾಪಾರ-ಉದ್ದಿಮೆಗಳು ಲಿಂಗಾಯತರ ಕೈಬಿಟ್ಟು; ಸಾಹಸಶೀಲ ಮನೋಭಾವದ ಪರಕೀಯರ ಕೈಸೇರಲಾರಂಭಿಸಿದವು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಹಾಗೂ ಸಮರ್ಥ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು.

ಅನೀತಿ-ಅನ್ಯಾಯ-ಅನಾಚಾರ ಹಾಗೂ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಸಿಡಿಲಿನಂತೆ ಸ್ಫೋಟಗೊಂಡು ಆವಿರ್ಭವಿಸಿದ ವಿಭೂತಿ ಪುರುಷರು ಅಜ್ಞಾನಾಂಧಕಾರದಲ್ಲಿ ಮುಳುಗಿದ ಜನತೆಯನ್ನು ಮೇಲೆತ್ತಲೆತ್ನಿಸಿ, ನೂತನ ಪ್ರಜ್ಞಾವಂತ ಸಮಾಜವೊಂದರ ರೂವಾರಿಗಳೆನಿಸುತ್ತಾರೆ. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಜನಸಾಮಾನ್ಯರ ನೋವನ್ನು ಕಂಡು, ಮರುಗಿ ಸುಮ್ಮನಾಗದೆ, ಅದರಿಂದ ಕಳವಳಗೊಂಡು, ಸಂತಾಪವನ್ನು ತೋಡಿಕೊಂಡು, ತಮ್ಮ ಸಾತ್ವಿಕ ಶಕ್ತಿಯಿಂದ ಅದಕ್ಕೆ ಪರಿಹಾರ ಹುಡುಕಲು ಶ್ರಮಿಸುತ್ತಾರೆ; ಸಮಾಜದಲ್ಲಿ ಧರ್ಮವನ್ನು ನೆಲೆಗೊಳಿಸಿ, ಶೈಕ್ಷಣಿಕ ಕ್ರಾಂತಿಯನ್ನು ಗೈದು ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗುತ್ತಾರೆ.

ಸೈಪಿನ ಆಗರವೆನಿಸಿದ ಭರತಭೂಮಿಯಲ್ಲಿ ಅವತರಿಸಿದಷ್ಟು ವಿಭೂತಿ ಪುರುಷರು ಜಗತ್ತಿನ ಮತ್ತಾವ ದೇಶದಲ್ಲೂ ಕಾಣಸಿಗುವುದಿಲ್ಲ. ಭಾರತಾಂಬೆಯ ಜೇಷ್ಠ ಸುಪುತ್ರಿಯೆನಿಸಿದ ಕನ್ನಡಾಂಬೆಯ ಪುಣ್ಯೋದರದಲ್ಲಂತೂ ಅಸಂಖ್ಯ ಶರಣ-ದಾಸ-ಸಂತ-ಮಹಂತರು ಉದಯಿಸಿದ್ದಾರೆ. ಅವರಲ್ಲಿ ಹಾನಗಲ್ಲ ವಿರಕ್ತಮಠದ ಪೀಠಾಧ್ಯಕ್ಷರಾದ ಲಿಂ. ಶ್ರೀ ಮ. ನಿ. ಪ್ರ ಕುಮಾರ ಮಹಾಸ್ವಾಮಿಗಳು  ಈ ಮಾಲಿಕೆಯೊಳಗಿನ ದಿವ್ಯರತ್ನವೆನ್ನಬೇಕು.

ವೀರವಿರಾಗಿಗಳಾಗಿ ಕೆಲವರು, ಶಾಲೆ-ಪಾಠಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರಕೈಕೊಂಡು ವಿದ್ಯಾಪ್ರೇಮಿಗಳಾಗಿ ಮತ್ತೆ ಕೆಲವರು, ತತ್ವಜ್ಞಾನ ತತ್ವೋಪದೇಶದ ಬೋಧನೆಯ ಪುಣ್ಯಕಾರದಿಂದ ಇನ್ನು ಕೆಲವರು, ಪರಧರ್ಮೀಯರೊಂದಿಗೆ ವಾದಕ್ಕಿಳಿದು ಗೆದ್ದು ಪರವಾದಿಗಳೆನಿಸಿ ಹಲವರು, ಸಮಾಜವನ್ನು ಸಮರ್ಪಕವಾಗಿ ಸಂಘಟಿಸಿ ಯಶಸ್ವಿಯಾದ ಕೆಲವರು ನಮ್ಮಲ್ಲಿದ್ದಾರೆ, ಬಿಡಿಬಿಡಿಯಾಗಿ ಈ ಎಲ್ಲ ಕಾರ್ಯಗಳನ್ನು ಕೈಕೊಂಡು, ಇಡಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ನಿಷ್ಠೆಯಿಂದ ದುಡಿದೂ, ಅಪರೂಪವಾದುದನ್ನೇ ಸಾಧಿಸಿದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ -ಲಿಂಗಾಯತರೆಲ್ಲರಿಗೂ  ಪರಮಾರಾಧ್ಯರು. ಅವರು ವಟುವತ್ಸಲರು, ಕಲಾಯೋಗಿಗಳು, ಕಾಯಕಪ್ರೇಮಿಗಳು, ನಮಗೆ ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯ ತುಂಬ ಮುಖ್ಯ.

ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ಹುಟ್ಟುತ್ತಲೇ ಎಷ್ಟೋ ಋಣಗಳನ್ನು ಹೊತ್ತುಕೊಂಡೇ ಹುಟ್ಟಿ ಬರುತ್ತಾನೆ. ಮಾತಾಪಿತರ ಋಣ, ಮಾತೃಭೂಮಿಯ ಋಣ, ಗುರು ಋಣ, ಪರಿವಾರದ ಋಣ, ಅನ್ನದ ಋಣ, ಧರ್ಮದ ಋಣ, ಸಮಸ್ತ ಸಮಾಜದ ಋಣ-ಹೀಗೆ ಋಣದ ಜಾಲವು ಅನಂತವಾಗಿದೆ. ಡಿ.ವಿ.ಜಿ.ಯವರು ಹೇಳುವ-

ಋಣವ ತೀರಿಸಬೇಕು ಋಣವ ತೀರಿಸಬೇಕು

ಋಣವ ತೀರಿಸುತ ಜಗದಾದಿ ಸತ್ವವನು

ಜನದಿ ಕಾಣುತ್ತದರೊಳ್ ಒಂದುಗೂಡಬೇಕು.

ಎಂಬ ಮಾತು ಅತ್ಯಂತ ಗಮನಾರ್ಹವಾಗಿದೆ. ವ್ಯಕ್ತಿ ತಾನು ಹೊತ್ತು ತಂದ ಹಲವು ಹತ್ತು ಋಣಗಳನ್ನು ಹೊತ್ತು ಹೊತ್ತಿಗೆ ತೀರಿಸಿ ಋಣಮುಕ್ತನಾಗ ಬೇಕಾಗುತ್ತದೆ. ಹೀಗೆ ಸಕಾಲಕ್ಕೆ ಸಮಸ್ತ ಋಣಗಳನ್ನು ಅರ್ಥಪೂರ್ಣವಾಗಿ ತೀರಿಸಿ ಋಣವಿಮುಕ್ತರೆನಿಸಿದವರು ಹಾನಗಲ್ಲ ಶ್ರೀ ಗುರು ಕುಮಾರೇಶರು.

ಧಾರವಾಡ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಪುಟ್ಟಗ್ರಾಮ ಜೋಯಿಸರ ಹರಳಳ್ಳಿ, ಶೀಲಸಂಪತ್ತಿನ ತವರೂರೆನಿಸಿತ್ತು. ಅಲ್ಲಿನ ಸಾಲಿಮಠದ ಬಸವಯ್ಯ ನೀಲಮ್ಮ ಎಂಬ ದಂಪತಿಗಳು ಅತ್ಯಂತ ಸುಶೀಲರು, ಶಿವಪೂಜಾನಿಷ್ಠರು. ಊರಲ್ಲಿನ ಮಕ್ಕಳಿನ ಅಕ್ಷರಾಭ್ಯಾಸ ಮಾಡಿಸುತ್ತಿದ್ದರಾದರೂ ಅವರು ತುಂಬ ದರಿದ್ರಾವಸ್ಥೆಯಲ್ಲಿದ್ದರು. ತಮಗೆ ಹುಟ್ಟಿದ ಮೊದಲ ಗಂಡು ಮಗು, ಶಿವಬಸಯ್ಯನ ಲಾಲನೆ ಪಾಲನೆಗಳಲ್ಲಿ ಅವರು ಸಂತಸದಿಂದ ದಿನಗಳೆಯುತ್ತಿದ್ದ ಸಂದರ್ಭ.ಸಾದ್ವಿ ಶಿರೋಮಣಿ ನೀಲಮ್ಮನ ಕನಸಿನಲ್ಲಿ ಕಾಣಿಸಿಕೊಂಡ ಜಂಗಮರೊಬ್ಬರು ಸುಗಂಧಭರಿತ ಸುಂದರ ಪುಷ್ಪವೊಂದನ್ನು ಆಶೀರ್ವದಿಸಿ, ‘ಅಮ್ಮಾ ನಮಗೋರ್ವ ಪುತ್ರನನ್ನು ಕೊಡು’ ಎಂದರು. ಅದನ್ನು ಕೇಳಿ ಶಿವಭಕ್ತ ನೀಲಮ್ಮ; ‘ತಮ್ಮ ಅನುಗ್ರಹದಿಂದ ಇನ್ನೊಬ್ಬ ಮಗ ಹುಟ್ಟಿದರೆ ಅವನನ್ನು ತಮಗೆ ಅಗತ್ಯವಾಗಿ ನೀಡುವೆನು’ ಎನ್ನುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು.

ಲಿಂಗದಳ್ಳಿ ನೀಲಮ್ಮನವರ ತವರೂರು. ಅದರ ಪಕ್ಕದ ನಂದಿಹಳ್ಳಿಯಲ್ಲಿ ಬಸವೇಶ್ವರನ ಜಾತ್ರೆ ನಡೆದಿತ್ತು. ಜನನೋಪಚಾರಕ್ಕೆಂದು ತವರಿಗೆ ಹೋಗಿದ್ದ ನೀಲಮ್ಮ, ನಂದಿಹಳ್ಳಿ ಬಸವಣ್ಣನ ಜಾತ್ರೆಗೆ ಹೋದಳು. ಜನಸಾಗರದ ‘ಹರಹರ ಮಹಾದೇವ’ ಎಂಬ ಜಯಘೋಷದ ಮಧ್ಯೆ ನಂದೀಶನ ತೇರು ಸಾಗಿತ್ತು. ಕೂಡಿದ ಭಕ್ತರು ರಥದ ಶಿಖರದತ್ತ ಉತ್ತತ್ತಿ-ಬಾಳೆಹಣ್ಣುಗಳನ್ನು ತೂರುತ್ತಿದ್ದ ಹೊತ್ತಿನಲ್ಲಿ ಶಿಖರಕ್ಕೆ ಬಡಿದ ಉತ್ತತ್ತಿಯೊಂದು ನೀಲಮ್ಮನ ಉಡಿಯಲ್ಲೇ ಬಂದು ಬಿದ್ದಿತು. ಅದರಿಂದ ಪುಳುಕಿತಳಾದ ಸಾದ್ವಿ ನೀಲಮ್ಮ, ಪ್ರಸಾದೋಪಾದಿ ಪ್ರಾಪ್ತವಾದ ಉತ್ತತ್ತಿಯನ್ನು ಜೋಪಾನವಾಗಿಟ್ಟುಕೊಂಡು ಸಂತಸದಿಂದ ಮನೆಗೆ ತೆರಳಿ, ಸ್ನಾನ ಪೂಜೆಗಳನ್ನು ಪೂರೈಸಿ ಶಿವಧ್ಯಾನ ಮಾಡುತ್ತ ಅದನ್ನು ಭಕ್ತಿಯಿಂದ ಸ್ವೀಕರಿಸಿದಳು. ನವಮಾಸ ತುಂಬುತ್ತಲೇ ಶಾಲಿವಾಹನ ಶಕೆ ೧೭೮೮ನೆಯ ಪ್ರಭವ ಸಂವತ್ಸರದ ಬ್ರಾಹೀ ಮುಹೂರ್ತದಲ್ಲಿ ಕಾರಣಿಕ ಪುತ್ರರತ್ನವೊಂದನ್ನು ಪಡೆದಳು.

ಶಿಶುವಿಗೆ ಲಿಂಗಧಾರಣೆಯ ಸಿದ್ಧತೆ ನಡೆದಿತ್ತು. ಸಂಭ್ರಮದಿಂದ ಓಡಾಡುತ್ತಿದ್ದ ವೃದ್ಧೆಯೊಬ್ಬಳನ್ನು ಕರೆದ ವೃದ್ಧ ಜಂಗಮರು, ‘ಪುತ್ರೋತ್ಸವವನ್ನು ಸಿಹಿ ಹಂಚಿ ಆಚರಿಸಬೇಕು’ ಎನ್ನುತ್ತಾರೆ. ಆಗ ಅವಳು ಏನೂ ಮಾಡದೆ ದೇವರು ಬಡವರಿಗೆ ಸಾಕೆನಿಸುವಷ್ಟು ಮಕ್ಕಳನ್ನು ಕೊಡುತ್ತಿರುವಾಗ, ಸಿಹಿ ಹಂಚಿ ದಾನ ಧರ್ಮ ಮಾಡಿದರೆ ಇನ್ನಷ್ಟು ಧಾರಾಳವಾಗಿ ಕೊಡಬಹುದು’ ಎಂದು ನಗುತ್ತಾಳೆ. ‘ಮಕ್ಕಳು ಅಷ್ಟು ಬೇಸರವಾಗಿದ್ದರೆ ನಮಗೆ ಕೊಟ್ಟು ಬಿಡಿರಿ’ ಎಂದ ಜಂಗಮರ ಮಾತಿಗೆ ಅವಳು

‘ಅಗತ್ಯವಾಗಿ ತೆಗೆದುಕೊಂಡು ಹೋಗಿರಿ’ ಎಂದು ಹಾಸ್ಯವಾಡುವಳು. ‘ಹಾಗೆಯೇ ಆಗಲಿ’ ಎಂದು ಜಂಗಯ್ಯ ಹೊರಟುಹೋದರು. 

ಮಗು ಹುಟ್ಟಿ ಐದಾರು ದಿನಗಳಾದರೂ ಮೊಲೆಹಾಲನ್ನೂ ಕುಡಿಯದೆ, ಎಲ್ಲರನ್ನೂ ಚಿಂತೆಗೀಡು ಮಾಡಿತು. ಸದ್ಭಕ್ತಿ ಸದಾಚಾರ ಸಂಪನ್ನಳೂ ಗುರುಲಿಂಗ ಜಂಗಮರಲ್ಲಿ ನಿಷ್ಠೆಯುಳ್ಳವಳೂ ಆದ ನೀಲಮ್ಮ, ಭವಹರ ಭಸ್ಮಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆಂದು ಅರಿತವಳು ಶಿಶುವನ್ನು ಚೆನ್ನಾಗಿ ಎರೆದು, ಎರಡೂ ಹೊತ್ತು ಭಸ್ಮವನ್ನು ಧರಿಸುತ್ತಿದ್ದಂತೆಯೇ ಕ್ರಮೇಣವಾಗಿ ಶಿಶು ಮೊಲೆಯುಣ್ಣಲು ಪ್ರಾರಂಭಿಸಿತು. ‘ಹಾಲಯ್ಯ’ ಎಂಬ ಅನ್ವರ್ಥಕ ಹೆಸರನ್ನು ಹೊಂದಿದ ಹಾಲಿನಂಥ ಮಧುರ ಗುಣದ ಬಾಲಕ. ಆರು ವರ್ಷ ತುಂಬುತ್ತಲೆ ಹರಳಳ್ಳಿಯ ಗಾವ. ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ತೊಡಗಿದನು. ಹಾಲಯ್ಯನ ಅಜ್ಜ, ಶತಾಯುಷಿ  ಕೊಟ್ಟೂರಪ್ಪಯ್ಯ ನವರದೂ ಕಲಿಸುವ ಕಾಯಕವಾಗಿತ್ತು. ಹಾಲಯ್ಯನಿಗೆ ಅಜ್ಜನಿಂದ ವಿಶೇಷ ಅಭ್ಯಾಸದ ಸೌಲಭ್ಯ ಸಿಕ್ಕಿತು. ಎಂಟು ವರುಷದ ಹಾಲಯ್ಯ ಲಿಂಗದೀಕ್ಷೆಯನ್ನು ಪಡೆದನು.

ಹತ್ತು ಹನ್ನೆರಡು ಜನರಿಂದ ಕೂಡಿದ ದೊಡ್ಡ ಕುಟುಂಬದ ಉದರ ನಿರ್ವಹಣೆ, ಇಬ್ಬರು ಮೂವರ ಭಿಕ್ಷೆಯಿಂದಲೇ ಸಾಗುತ್ತಿತ್ತು. ತಂದೆ ಬಸವಯ್ಯ ಅಕಾಲದಲ್ಲೇ ಲಿಂಗೈಕ್ಯರಾದ ಕಾರಣ ಭಿಕ್ಷೆ ಮಾಡುವುದು ಹಾಲಯ್ಯನಿಗೂ ಅನಿವಾರ ವಾಯಿತು. ದಂಡ ಜೋಳಿಗೆಗಳನ್ನು ಹಿಡಿದು ಸಮೀಪದ ಹಳ್ಳಿಗೆ ಭಿಕ್ಷೆ ಹೋದ ಸಂದರ್ಭ, ಹಾಲಯ್ಯನ ಜೀವನದಲ್ಲಿ ಮಹತ್ವದ ತಿರುವನ್ನು ತಂದಿತು. ‘ಏನು ಅಯ್ಯಪ್ಪ! ಭಿಕ್ಷೆ ಬೇಡಾಕ ಮುದುಕ ಆಗೀಯೇನು? ಇನ್ನೂ ಹೀಗೆ ಎಷ್ಟು ದಿನ ಬೇಡುವುದಪ್ಪ? ವಯಸ್ಸು ಸಣ್ಣದು, ಕಲಿಯುವ ಅವಕಾಶವಿದೆ, ಕಲಿತು ವಿದ್ಯಾವಂತನಾಗಿ ಸಮಾಜದ ಋಣ ತೀರಿಸು’ ಎಂದು ಒಬ್ಬ ಹಿರಿಯರು ಹಾಲಯ್ಯನನ್ನು ಕುರಿತು ಮನೋವೇಧಕ ಮಾತುಗಳನ್ನಾಡಿದರು. ಹಿರಿಯರ ಕಳಕಳಿಯ ಮಾತು, ಮುಗ್ಧ ಮನದ ಹಾಲಯ್ಯನಿಗೆ ಚಿಂತೆಗೆ ಬದಲು ಚಿಂತನೆಗೆ ಹಚ್ಚಿತು. ಭಿಕ್ಷೆ ಬೇಡುವುದಕ್ಕೂ ಅಂದೇ ಕೊನೆಯಾಯ್ತು ಹೀಗೆ ಅಪರಿಚಿತ ಹಿರಿಯರಾಡಿದ ಮಾತು, ಸಮಾಜದ ಋಣದಿಂದ ವಿಮುಕ್ತರಾಗಲು ಪ್ರೇರಣೆ ನೀಡಿತು.

ಊರಲ್ಲಿ ಶಾಲೆಯಿರುವುದು ಕೇವಲ ಮೂರನೆಯ ವರ್ಗದ ವರೆಗೆ ಮಾತ್ರ. ಜ್ಞಾನದ ತೃಷೆಯಿದ್ದರೂ ಬೇರೆ ಊರಿಗೆ ಹೋಗಿ ಕಲಿಯುವ ಸಾಮರ್ಥ್ಯವಿಲ್ಲ. ಇದೇ ಚಿಂತೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗಲಿಲ್ಲ. ಮನೆಯವರ ಒತ್ತಾಯಕ್ಕೆ ಭಿಕ್ಷೆ ಬೇಡಲು ಹೋದರೂ ಬಂದದ್ದು ಮಾತ್ರ ಖಾಲಿ ಜೋಳಿಗೆಯೊಂದಿಗಷ್ಟೇ, ಏನು ಮಾಡಲೂ ತೋಚದೆ ಅಣ್ಣನ ಮಾತಿನಂತೆ ಬಟ್ಟೆ ತೊಳೆಯಲು ಊರ ಹೊರಗಿನ ಬಾವಿಗೆ ಹೊರಟ ಹಾಲಯ್ಯ, ವಿದ್ಯೆಯನ್ನು ಕಲಿಯದೆ ಮರ್ಯಾದೆ ಇಲ್ಲ’ ಎಂಬ ನಿರ್ಧಾರಕ್ಕೆ ಬಂದು, ತೊಳೆದ ಬಟ್ಟೆಯ ಗಂಟನ್ನು ಮನೆಗೆ ಮುಟ್ಟಿಸುವಂತೆ ಒಬ್ಬನ ಕೈಲಿ ಕೊಟ್ಟು, ದಿಟದ ಬಟ್ಟೆಯನ್ನು ಹಿಡಿದು, ದೇವರಗುಡ್ಡದ ಪಕ್ಕದಲ್ಲಿರುವ ಕಜ್ಜರಿ ಎಂಬ ಗ್ರಾಮಕ್ಕೆ ಬಂದನು. ಕಜ್ಜರಿಯ ಶಾಲೆಯಂತೆಯೇ ಅಲ್ಲಿನ ಮಹಾದೇವ ಪಂತ ಜೋಗಳೇಕರ ಎಂಬ ಶಿಕ್ಷಕರೂ ತುಂಬ ಪ್ರಸಿದ್ಧರಾದವರು. ಅದೇ ಶಾಲೆಯಲ್ಲಿ ಓದಬೇಕೆಂಬ ಅದಮ್ಯ ಹಂಬಲದ ಹಾಲಯ್ಯ ಒಂದು ಗಿಡದಡಿ ಕುಳಿತು ಬಿಟ್ಟ, ದಿವ್ಯತೇಜದ ಅವನನ್ನು ನೋಡಿದ ಆ ಗ್ರಾಮದ ಹಿರೇಮಠ ರಾಚಯ್ಯನವರು ಸಹಾನುಭೂತಿಯ  ಮಾತುಗಳನ್ನಾಡಿ ಪ್ರೀತಿಯಿಂದ ಮಠಕ್ಕೆ ಕರೆತಂದು ಉಪಚರಿಸಿ, ಶಾಲೆಗೆ ಸೇರಿಸಿದರು.

ಜಾಣ ವಿದ್ಯಾರ್ಥಿಯಾಗಿದ್ದ ಹಾಲಯ್ಯ, ಶ್ರೀ ಜೋಗಳೇಕರ ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಓದತೊಡಗಿದನು. ಮುಲ್ಕಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ, ಪರೀಕ್ಷೆಗೆ ಕೂಡ್ರಲು ಸಹಪಾಠಿ ಅಸುಂಡಿ ಶಿವನಗೌಡನೊಡನೆ ನಡೆದುಕೊಂಡೇ ಧಾರವಾಡಕ್ಕೆ ಹೋದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಶಿವಸಂಕಲ್ಪವೇ ಹಾಗಿರಲು ಮಾಡುವುದೇನು?

 ಲೌಕಿಕದಿಂದ ಎರವಾಗುತ್ತ ಅಧ್ಯಾತ್ಮದತ್ತ ಮನವನ್ನು ತಿರುಗಿಸಲು ಯೋಗ್ಯ ಸಂದರ್ಭ ಪ್ರಾಪ್ತವಾಯ್ತು. ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವ ಹೊಣೆ ಅವರ ಮೇಲಿತ್ತು. ಶಿವಶರಣರ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ನಿಜಗುಣರ ಷಟ್‌ಶಾಸ್ತ್ರಗಳ ಪ್ರಚಾರವಿದ್ದ ಕಾಲವದು. ತಾಯಿಯ ತವರೂರು ಲಿಂಗದಳ್ಳಿಯ ಸಮಾಳದೆ ಬಸವಯ್ಯನವರು ನಿಜಗುಣರ ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ್ದರು. ಅವರೊಂದಿಗೆ ಅಭ್ಯಾಸಕ್ಕೆ ತೊಡಗಿದ ಹಾಲಯ್ಯನವರ ಅಧ್ಯಾತ್ಮದ ಹಂಬಲಕ್ಕೆ ಕೈವಲ್ಯ ಪದ್ಧತಿಯ ವಿಶೇಷ ಬೆಂಬಲವೂ ದೊರೆಯಿತು.

ಕಲಿಕೆಯೊಂದಿಗೆ ಗಳಿಕೆಯೂ ನಡೆಯಬೇಕು. ತಾವು ತಮ್ಮ ಜೀವನ ನಿರ್ವಹಣೆಯ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸದಂತಿರಬೇಕು. ತಾವೊಬ್ಬರು ವಿದ್ಯಾವಂತರಾದರೆ ಸಾಲದು. ಊರಿನ ಮಕ್ಕಳೂ ಓದಬೇಕು ಎಂಬ ಆಲೋಚನೆಯಿಂದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡತೊಡಗಿದರು. ಶಾಸ್ತ್ರಚಿಂತನೆಯಿಂದ ಪಡೆದ ವೇದಾಂತ ಜ್ಞಾನವನ್ನು ಜನತೆಗೆ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಸಾಲಿಮಠದ ಅಜ್ಜನವರ ಕಾಯಕವನ್ನು ಮುಂದುವರಿಸಿದರು.

ಆಗಲೆ ಅವರಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳು ಮುಪ್ಪುರಿಗೊಂಡವು. ತಾಯಿ ನೀಲಮ್ಮನಿಗೂ ಮುಪ್ಪು ಆವರಿಸತೊಡಗಿತ್ತು. ಮಗನ ಮದುವೆ ಮಾಡಿ ಜವಾಬ್ದಾರಿ ಯಿಂದ ಮುಕ್ತಳಾಗಬೇಕೆಂದು, ಒಂದು ದಿನ ಹಾಲಯ್ಯನನ್ನು ಕಂಡ ನೀಲಮ್ಮನವರು, ನಿನಗೋಸ್ಕರ ಕನೈಯನ್ನು ಗೊತ್ತು ಮಾಡಿದ್ದೇನೆ, ವಿವಾಹ ಮಾಡಿಕೊಂಡು ನನ್ನನ್ನು ಜೋಪಾನ ಮಾಡು’ ಎನ್ನುತ್ತಾಳೆ. ಆಗ ಅವರು ಒಂದು ವರ್ಷದ ಅವಧಿಯನ್ನು ಪಡೆದು, ಅಧ್ಯಾಪನದೊಂದಿಗೆ ಅಧ್ಯಾತ್ಮ ಚಿಂತನೆಯನ್ನೂ ಮುಂದುವರಿಸಿದರು. ನೋಡು ನೋಡುವುದರಲ್ಲಿ ಮೂರು ವರುಷ ಕಳೆದವು. ಈ ಸಂಸಾರ ತುಂಬ ಮೋಹಕ, ಆಕರ್ಷಕ. ಆದರೆ ಅಷ್ಟೇ ನಿಸ್ಸಾರವೂ ಹೌದು. ಅದನ್ನರಿತ ಹಾಲಯ್ಯನವರು ಬ್ರಹ್ಮಚರದ ಕಠಿಣ ವ್ರತವನ್ನು ಕೈಕೊಂಡರು. ಹೆಣ್ಣು-ಹೊನ್ನು ಮಣ್ಣುಗಳ ಮೋಹ-ಮಾಯೆಗಳಿಂದ ದೂರವಿದ್ದು, ಜಿತೇಂದ್ರಿಯರಾಗಿ, ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ತಿಳಿದು, ಹಗಲಿರುಳು ಸಮಾಜ ಕಲ್ಯಾಣಕ್ಕಾಗಿ ದುಡಿಯುವ ನಿರ್ಧಾರ ತಾಳಿದರು.

ಒಂದು ಕ್ಷಣ ಮಾತ್ರದಲ್ಲಿ ಭೌತಿಕ ಭೂತವನ್ನು ಹಿಡಿಸಬಲ್ಲ ಹೆಣ್ಣಿನ ಮಾಯೆ ಅದ್ಭುತ. ಅಂತೆಯೇ “ನಾಣು ಲಗ್ನವಾಗಲಾರೆ, ಸಂಸಾರ ಮಗ್ನನಾಗಲಾರೆ’ ಎಂದು ಶಮೆ-ದಮೆಗಳು ಗಟ್ಟಿಗೊಂಡ ಹಾಲಯ್ಯ ದೃಢನಿರ್ಧಾರ ಮಾಡಿದರು; ಉಕ್ತಿ ಬರುತ್ತಿರುವ ಯೌವ್ವನವನ್ನು ಕಠಿಣ ವೈರಾಗ್ಯಕ್ಕೆ ತೊಡಗಿಸಿದರು. ತಮ್ಮ ಬಳಿ ಬಂದ ತಾಯಿಯನ್ನು ನಿರಾಶೆ ಮಾಡಲು ಸಾಧ್ಯವಾಗದೆ ‘ಅಮ್ಮಾ! ಎಲ್ಲರಂತೆ ನನ್ನನ್ನು ಹೆತ್ತು ಹೊತ್ತು ರಕ್ಷಿಸಿರುವಿ. ನಿನ್ನ ಋಣ ದೊಡ್ಡದು. ನಿನ್ನ ಬಯಕೆಯನ್ನು ಪೂರೈಸುವ ಶಕ್ತಿ ನನ್ನಲ್ಲಿಲ್ಲ. ಸಂಸಾರದ ಆಶೆ ನನಗಿಲ್ಲ. ಕ್ಷಣಿಕವಾದ ಈ ಎಲ್ಲ  ಭೋಗ ಲಾಲಸೆಗಳನ್ನು ಧಿಕ್ಕರಿಸಿ, ಅನಿರ್ವಚನೀಯವು, ಶಾಂತಿದಾಯಕವೂ ಸರ್ವದಾ ಆನಂದಮಯವೂ ಆದ ಪರಮಾತ್ಮನ ಸಾನಿಧ್ಯವನ್ನು ಹೊಂದುವ ಅಪೇಕ್ಷೆಯುಳ್ಳವನಿಗೆ ವಿಷಯವೆಂಬ ವಿಷವನ್ನು ಕುಡಿಸಬೇಡ’ ಎಂದು ತುಂಬು ಸೌಜನ್ಯದಿಂದಲೇ ಒಲಿಸಿದರು. ತಾಯಿಯ ಋಣವನ್ನು ಅಷ್ಟು ಸುಲಭವಾಗಿ ತೀರಿಸುವುದು ಸಾಧ್ಯವಿಲ್ಲವೆಂದ ಅವರು, ಮೂರು ವರುಷಗಳಲ್ಲಿ ಗಳಿಸಿದ ಮುನ್ನೂರು ರೂಪಾಯಿಗಳನ್ನು ತಾಯಿಗೆ ಅರ್ಪಿಸಿ, ಮಾತೃಋಣದಿಂದ ಮುಕ್ತರಾದರು. ಸಮಾಜ ಸೇವೆಯನ್ನು ಕೈಕೊಂಡು, ಪವಿತ್ರ ಧೈಯವನ್ನು ಹೊಂದಿ ಸಾಗಿರುವ ತಮ್ಮ ಮಾರ್ಗದಲ್ಲಿ ಅಡ್ಡಿ ಒಡ್ಡದೆ ಸಂತೋಷದಿಂದ ಆಶೀರ್ವದಿಸಿ ಬೀಳ್ಕೊಡುವಂತೆ ಪ್ರಾರ್ಥಿಸಿ, ಅಂದೇ ತಾಯಿ-ಮಕ್ಕಳ ಸಂಬಂಧಕ್ಕೆ ತಿಲಾಂಜಲಿಯನ್ನಿತ್ತರು; ಹೆಣ್ಣನದ ವ್ಯಾಮೋಹವನ್ನೂ ಅಳಿದರು.

ಆರು ಶಾಸ್ತ್ರಗಳನ್ನು ಬಲ್ಲ, ಜ್ಞಾನಿಗಳಾದ ಹುಬ್ಬಳ್ಳಿಯ ಸಿದ್ಧಾರೂಢರಲ್ಲಿ ವೇದಾಂತದ ಆಳವಾದ ಅಧ್ಯಯನವನ್ನು ನಡೆಸಿದ ಹಾಲಯ್ಯನವರು, ಸುವಿಚಾರದಿಂದ ಸ್ವಾನುಭವದಿಂದ ಚಿಂತನೆಗೈದರು. ಸತ್ಯ ಸಿದ್ಧಾಂತವನ್ನರಿಯಲು ಎಮ್ಮಿಗನೂರಿನ ಜಡೆಯಸಿದ್ದರಲ್ಲಿಗೆ ಹೋಗಿ, ತಮ್ಮ ಸ್ವಾಗತಕ್ಕೆ ಮೊದಲೇ ಸಿದ್ಧತೆ ನಡೆಸಿದ ಅವರನ್ನು ವಿಚಕ್ಷಣ ಮತಿಯಿಂದ ಪರೀಕ್ಷಿಸಿ, ಅವರಿಂದಲೇ ‘ಶಿವಯೋಗಿ ‘ಎಂಬ ಅಭಿದಾನವನ್ನೂ ಹೊಂದಿದರು.

 ತಾಯಿಯೆದುರು ಪ್ರತಿಜ್ಞೆಗೈದುದನ್ನು ಪರೀಕ್ಷಿಸಲೆಂಬಂತೆ ಹುಬ್ಬಳ್ಳಿಯಲ್ಲಿ ಘಟನೆಯೊಂದು ನಡೆಯಿತು. ಹಾಲಯ್ಯನವರ ಪರಿಪೂರ್ಣ ವಿರತಿ ತಾಳಲು ಅದೊಂದೇ ಘಟನೆ ಸಾಕಾಯಿತು. ಒಂದು ದಿನ ಹಾಲಯ್ಯನವರು ಭಿಕ್ಷಾನ್ನಕ್ಕಾಗಿ ಸಂಚರಿಸುತ್ತ ಒಂದು ಮನೆಗೆ ಬಂದರು. ಒಬ್ಬಳೇ ಇದ್ದ ಯುವತಿ. ಹಾಲಯ್ಯನವರ ತೇಜಃಪುಂಜ ರೂಪಕ್ಕೆ ಮನಸೋತು, ಜೋಳಿಗೆಯನ್ನು ಗಟ್ಟಿಯಾಗಿ ಹಿಡಿದು, ಬಲವಾಗಿ ಎಳೆದು ಮನೆಯೊಳಗೆ ಆಹ್ವಾನಿಸಿದಳು. ಅದರಿಂದ ತೀವ್ರವಾಗಿ ಜಿಗುಪ್ಸೆಗೊಂಡ ವೀರವಿರಾಗಿ ಹಾಲಯ್ಯನವರು ಜೋಳಿಗೆಯನ್ನು ಅವಳ ಕೈಯಲ್ಲೇ ಬಿಟ್ಟು, ಇನ್ನೆಂದೂ ಆ ಪಾಪಿ ಹೆಂಗಸನ್ನು ನೋಡಬಾರದೆಂದು ಆತುರಾತುರವಾಗಿ ಹಿಂದಕ್ಕೆ ಬಂದರು. ‘ತಿನದೆ ಕೊಲ್ಲದು  ಹು ಮಾತ್ರದೆ ಕೊಲ್ವುದು’ ಎಂಬ ಅಧ್ಯಾತ್ಮ ಗುರುವಿನ ನೈಜಜ್ಞಾನ ಪಡೆಯುವ ಹಂಬಲ ಹೆಚ್ಚಿತು. ಶಂಭುಲಿಂಗ ಬೆಟ್ಟದಲ್ಲಿ ಉಗ್ರತಪಗೈದು, ನಿಜಗುಣರನ್ನು ಸಾಕ್ಷಾತ್ಕರಿಸಿಕೊಂಡು, ಷಟ್‌ಶಾಸ್ತ್ರಗಳಲ್ಲಿ ಬಲ್ಲಿದರೆನಿಸಿದ ಎಳಂದೂರು ಬಸವಲಿಂಗ ಮಹಾಸ್ವಾಮಿಗಳು ಅದೇ ಸಂದರ್ಭದಲ್ಲಿ ಸಿದ್ಧಾರೂಢ ಮಠಕ್ಕೆ ಆಗಮಿಸಿದರು. ಜ್ಞಾನಪಿಪಾಸುಗಳಾದ ಹಾಲಯ್ಯನವರು ಸಿದ್ಧಾರೂಢರ ಆಣತಿಯಂತೆ ಬಸವಲಿಂಗ  ಸ್ವಾಮಿಗಳೊಂದಿಗೆ ಚರ್ಚಿಸುತ್ತ  ಅವರ ಘನವ್ಯಕ್ತಿತ್ವಕ್ಕೆ ಮನಸೋತರು.ಬಯಸದ ಸದ್ಗುರು ತಾವಾಗಿಯೇ ದೊರೆತುದಕ್ಕೆ ಸಂತುಷ್ಟಗೊಂಡರು. ಅವರನ್ನೇ ಪರಮಗುರುವೆಂದರು.  , ಆಚಾರದ ಅರಕೆಯನ್ನು ತುಂಬಿಕೊಳ್ಳುವುದಕ್ಕಾಗಿ ಶ್ರೀಗುರುವಿನ ಅಪಣೆಯಂತೆ ಶಂಭುಲಿಂಗ ಬೆಟ್ಟದಲ್ಲಿ ನೆಲೆನಿಂತು, ನಿಜಗುಣರ ಆರು ಶಾಸ್ತ್ರಗಳನ್ನು ನಿಷ್ಠೆಯಿಂದ ಅಭ್ಯಸಿಸಿ ‘ಹಾಲಯ್ಯ  ದೇಶಿಕರೆನಿಸಿದರು.

ಬಸವಲಿಂಗ ಸ್ವಾಮಿಗಳ ಕೇವಲ ಶಿಷ್ಯರಾಗಿ ನಿಜಗುಣರ ಷಟ್‌ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡ ಹಾಲಯ್ಯದೇಶಿಕರು ಹಳ್ಳಿಹಳ್ಳಿಗೆ ಹೋಗಿ ಅನುಭವ ಸಾರವನ್ನು ಬೋಧಿಸಿದರು. ಅವರ ಪ್ರಭಾವಯುತವಾದ ವಾಣಿಗೆ ಹಾಗೂ ನಿರೂಪಣೆಯ ವಿಧಾನಗಳಿಗೆ ಪಾಮರರೂ ಆಕರ್ಷಿತರಾದರು. ಬಸವಲಿಂಗ ಶ್ರೀಗಳ ಆದೇಶದಂತೆ ಗುರುವಿರಕ್ತರ ಸಂಬಂಧ ಸುಧಾರಣೆಗೆ ಹಾಲಯ್ಯದೇಶಿಕರು ನಿಷ್ಠೆಯಿಂದ ಪ್ರಯತ್ನಿಸಿದರು. ಹೀಗೆ ಯಳಂದೂರಿನ ಬಸವಲಿಂಗ ಸ್ವಾಮಿಗಳ ಸಂಕಲ್ಪವನ್ನು ಶ್ರದ್ಧೆ-ನಿಷ್ಠೆಗಳಿಂದ ಪೂರೈಸಿ ಗುರುಋಣಮುಕ್ತರಾದರು. ಗುರುಗಳೊಂದಿಗೆ ಸಂಚಾರ ಕೈಗೊಂಡರು. ಅಕಸ್ಮಾತ್ತಾಗಿ ಶ್ರೀಗಳ ದೇಹಸ್ಥಿತಿ ಕೆಟ್ಟು, ಅಣ್ಣಿಗೇರಿಯಲ್ಲಿ ಅವರು ಲಿಂಗದಲ್ಲಿ ಬೆರೆದ ಮೇಲೆ ತಾಯನಗಲಿದ ಶಿಶುವಿನಂತಾದ ಹಾಲಯ್ಯ ದೇಶಿಕರು, ಆತ್ಮಶಾಂತಿ ಪಡೆಯಲು ಸೊರಬದ ಸಪ್ತಕಾವ್ಯದ ಗುರುಬಸವಾರ್ಯರ ಗದ್ದುಗೆಯಲ್ಲಿ ಅನುಷ್ಠಾನಗೈದರು.

ಧಾರವಾಡ ಜಿಲ್ಲೆಯ ಹಾನಗಲ್ಲಿನ ವಿರಕ್ತ, ಲಿಂಗಾಯತ ಮಠಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅದರ ಪೀಠಾಧಿಪತಿಗಳಾದ ಶ್ರೀ ಫಕೀರ ಮಹಾಸ್ವಾಮಿಗಳಿಗೆ ತುಂಬ ವಯಸ್ಸಾಗಿತ್ತು. ಅವರು ತಮ್ಮ ಉತ್ತರಾಧಿಕಾರಿಯ ಶೋಧದಲ್ಲಿದ್ದರು. ಅದೇ ಸಂದರ್ಭದಲ್ಲಿ ಹಾಲಯ್ಯ ದೇಶಿಕರು ಮಳಗದ್ದಿಯ ಶ್ರೀ ಕೆಂಡಪ್ಪಗೌಡರೆಂಬ ಹಿರಿಯರ ದೃಷ್ಟಿಗೆ ಬಿದ್ದರು. ಅವರ ವಿವೇಕ, ಆಚಾರನಿಷ್ಠೆ, ಸದ್ಬೋಧಶಕ್ತಿ, ದಿವ್ಯತೇಜ, ಹರಳು ಗೊಳ್ಳುತ್ತಿರುವ ವೈರಾಗ್ಯ ಮೊದಲಾದ ಸಲ್ಲಕ್ಷಣಗಳನ್ನು ಕಂಡು ಕೆಂಡಪ್ಪಗೌಡರಿಗೆ ಸಂತೋಷವಾಯಿತಷ್ಟೇ ಅಲ್ಲ, ಹಾನಗಲ್ಲ ಮಠಕ್ಕೆ ಸುಯೋಗ್ಯ ಉತ್ತರಾಧಿಕಾರಿಗಳನ್ನು ಹುಡುಕಿದುದಕ್ಕೆ ಸಮಾಧಾನವೂ ಆಯಿತು.

ಮೂರು ವರುಷ ಮೌನವ್ರತ-ಅನುಷ್ಠಾನಗಳನ್ನು ಕೈಕೊಳ್ಳುವ ಸಂಕಲ್ಪಕೈಕೊಂಡ ಹಾಲಯ್ಯನವರು ಕೆಂಡಪ್ಪಗೌಡರ ಸೂಚನೆಯಂತೆ ಶ್ರೀ ಫಕೀರ ಮಹಾ ಸ್ವಾಮಿಗಳನ್ನು ಕಾಣಗಲು ಹಾನಗಲ್ಲಿಗೆ ಹೋದರು. ಸಮಾಜ ಸೇವೆಯನ್ನು ಮಾಡಬೇಕೆಂಬ ತಮ್ಮ ಪ್ರಬಲ ಹಂಬಲವನ್ನು ಸ್ವಾಮಿಗಳೆದುರು ಅರಿಕೆ ಮಾಡಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಆಗ ಫಕೀರೇಶರು ‘ತಮ್ಮಾ, ಒಂದು ಸ್ಥಾನದ ಅಧಿಕಾರಿಯಾಗುವ ವರೆಗೆ ಬೋಧನಾಧಿಕಾರ ಬರಲಾರದು. ಹಾಗೂ ಸಮಾಜ ಸೇವೆ ಮಾಡುವ ಅವಕಾಶ ದೊರೆಯದು. ಅಂತೆಯೇ ಹಾನಗಲ್ಲ ಪೀಠಕ್ಕೆ ಅಧಿಕಾರಿಯಾಗು’ ಎಂದರು. ಅದಕ್ಕೆ ಅಲ್ಲಿ ಸೇರಿದ ಭಕ್ತ ಸಮೂಹವೂ ಒಪ್ಪಿ, ಹಾಲಯ್ಯನವರಲ್ಲಿ ಒತ್ತಾಯದ ಅರಿಕೆ ಮಾಡಿಕೊಳ್ಳಲು, ಅವರೂ ಆಗಲೆಂದು ಸಮ್ಮತಿಸಿದರು. ಅದು ಹಾನಗಲ್ಲ ಪೀಠದ ಸೌಭಾಗ್ಯವೆನ್ನಬೇಕು.

ಮಠಾಧಿಕಾರವನ್ನು ಅವರೆಂದೂ  ಬಯಸಿದವರಲ್ಲ. ಅದು ತಾನಾಗಿಯೇ ಹುಡುಕಿಕೊಂಡು ಬಂದುದು. ಅಂತೆಯೇ, ಫಕೀರ ಮಹಾಸ್ವಾಮಿಗಳ ಸೇವೆ, ದಾಸೋಹದ ವ್ಯವಸ್ಥೆ, ಸಂಚಾರ, ಜನಜಾಗೃತಿ-ಹೀಗೆ ಎಲ್ಲವನ್ನೂ ಹಾಲಯ್ಯ ನಿಷ್ಠೆಯಿಂದ ಮಾಡತೊಡಗಿದರು. ಒಮ್ಮೆ ಅವರು ಭಕ್ತರ  ಬಯಕೆಯಂತೆ ಮಲಸೀಮೆಯತ್ತ ಹೋದಾಗ ಫಕೀರಸ್ವಾಮಿಗಳ ಆರೋಗ್ಯ ತುಂಬ ವಿಷಮಿಸಿತು. ಅಕಸ್ಮಾತ್ತಾಗಿ ಹಾನಗಲ್ಲಿಗೆ ದಯಮಾಡಿಸಿದ ಮಹಾಮಹಿಮರೂ ಸವದತ್ತಿ ಶ್ರೀ ಕಲ್ಮಠದ ಅಧಿಪತಿಗಳೂ ಆದ ಬಿದರಿಯ ಕುಮಾರ ಮಹಾಸ್ವಾಮಿಗಳಿಗೆ ವಿಷಯ ತಿಳಿಸಿ, ಶ್ರೀಮಠಕ್ಕೆ ಹಾಲಯ್ಯನವರನ್ನು ಪಟ್ಟಾಧಿಕಾರಿಗಳನ್ನಾಗಿಸುವ ಗುರುತರ ಹೊಣೆಯನ್ನು ಹೊರಿಸಿ ಫಕೀರಸ್ವಾಮಿಗಳು ಲಿಂಗೈಕ್ಯರಾದರು.

ಮಲೆನಾಡ ಸೀಮೆಯಿಂದ ಹಾಲಯ್ಯ ದೇಶಿಕರನ್ನು ಕರೆಸಿ, ಸಮಸ್ತ ಸದ್ಭಕ್ತರ ಸಮಕ್ಷಮದಲ್ಲಿ ಅನ್ನಸಂತರ್ಪಣೆ ಮಾಡಿಸಿ, ಅವರನ್ನು ‘ಸದಾಶಿವ ಸ್ವಾಮಿಗಳು’ ಎಂಬ ನೂತನ ಅಭಿದಾನದಿಂದ ಫಕೀರಸ್ವಾಮಿಗಳ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಬಿದರಿ ಕುಮಾರ ಶಿವಯೋಗಿಗಳಂಥ ಮಹಾತಪಸ್ವಿಗಳ ಮಂತ್ರಹಸ್ತದಿಂದ ಅಧಿಕಾರ ಸ್ವೀಕರಿಸಿದ ಸದಾಶಿವ ಸ್ವಾಮಿಗಳು ಶ್ರೀಮಠದ ಜೀರ್ಣೋದ್ಧಾರಕ್ಕಾಗಲಿ, ಹೊಲ ಗದ್ದೆಗಳ ಸುಧಾರಣೆಗಾಗಲಿ ಚಿಂತಿಸದೆ, ಅತ್ಯಂತ ಅಧೋಗತಿಗಿಳಿದಿದ್ದ ಲಿಂಗಾಯತ ಸಮಾಜದ ಪುನರುದ್ಧಾರದ ಗಂಭೀರ ಚಿಂತನೆಗೆ ತೊಡಗಿದರು. ಪ್ರಾಚೀನ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದ ಲಿಂಗಾಯತ ಧರ್ಮ-ಸಮಾಜಗಳ ದುರವಸ್ಥೆಯನ್ನು ಕಂಡು ಕಳವಳಗೊಂಡರು. ಧರ್ಮ-ಸಂಸ್ಕೃತಿಗಳ ಪರಿಜ್ಞಾನ ಪಡೆಯಲು ಸಂಸ್ಕೃತ ಭಾಷಾಭ್ಯಾಸದ ಅಗತ್ಯವನ್ನರಿತು, ಕನ್ನಡ ನಾಡಿನ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿದರು. ಪರಿವ್ರಾಜಕರಾಗಿ ಹಾನಗಲ್ಲ ಪರಿಸರದ ಹಳ್ಳಿಗಳಗನ್ನು ಸುತ್ತಿದ ಶ್ರೀಗಳು ಜನಜೀವನವನ್ನು ನಿಕಟದಿಂದ ನೋಡಿದರು. ಸಮಾಜವನ್ನು ಅರ್ಥಪೂರ್ಣವಾಗಿ ಅಭ್ಯಸಿಸಿದರು. ಧರ್ಮಜಾಗೃತಿಯ ಕಾರ್ಯವನ್ನು ಕೈಕೊಂಡರು. ಲಿಂಗವಿಲ್ಲದ ಭವಿಗಳಿಗೆ ಸದ್ಬೋಧೆಯನ್ನು ನೀಡಿದರು. ಲಿಂಗಾಯತ ಧರ್ಮ, ಸಂಸ್ಕೃತಿ, ಸಾಹಿತ್ಯಗಳನ್ನು ಪೂಜ್ಯರು ಚೆನ್ನಾಗಿ ಅರಿತಿದ್ದರಷ್ಟೇ ಅಲ್ಲ, ಧರ್ಮ ತತ್ವಗಳನ್ನು ಕೂಡ ಅರ್ಥಪೂರ್ಣವಾಗಿ ಅಳವಡಿಸಿಕೊಂಡಿದ್ದರು.

 ಶ್ರೀಗಳ ದೂರದರ್ಶಿತ್ವ ತುಂಬ  ವಿಲಕ್ಷಣವಾದುದು. ಅಂದಿನ ಲಿಂಗಾಯತ ಸಮಾಜದಲ್ಲಿ ವಿದ್ಯಾವಂತರು ತುಂಬ ವಿರಳರಾಗಿದ್ದರು. ಹಳ್ಳಿಗಳಲ್ಲಿನ ನಮ್ಮ ಸಮಾಜ ಬಾಂಧವರಂತೂ ದುರಭ್ಯಾಸಗಳಿಗೆ ದಾಸರಾಗಿ, ಕಾಯಕವನ್ನು ಕೈಬಿಟ್ಟು ಸೋಮಾರಿಗಳಾಗಿದ್ದರು. ಅದನ್ನು ಕಂಡು ಮರುಗಿದ ಶ್ರೀಗಳು ಹಳ್ಳಿಗಳಿಂದಲೇ ಸುಧಾರಣೆಯ ಕಾರ್ಯವನ್ನು ಆರಂಭಿಸಿದರು. ಬಲವಾದ ಸಂಘಟನೆಯಿಂದ ಮಾತ್ರ  ಸಮಾಜದ ಉದ್ಧಾರ ಸಾಧ್ಯವೆಂಬುದನ್ನು ತಿಳಿದು, ಪ್ರಸ್ತುತ ಮಹತ್ಕಾರ್ಯದ ಸಾಧನೆಗೆ ಸಮಾನ ಮನಸ್ಕರನ್ನು ಕಲೆಹಾಕುವ ತುರ್ತು ಅಗತ್ಯವನ್ನು ಅರಿತರು. ಲಿಂಗಾಯತ ಸಮಾಜದಲ್ಲಿ ನವಚೈತನ್ಯವನ್ನು ತುಂಬಿ ಒಕ್ಕಟ್ಟನ್ನುಂಟು ಮಾಡಿ, ಆತ್ಮಗೌರವವನ್ನು  ಕಾಯ್ದುಕೊಳ್ಳಲು ಸಮರ್ಥ ಸಾಧನವೊಂದನ್ನು ಕಲ್ಪಿಸಬೇಕಾಗಿತ್ತು. ಅಂತೆಯೇ, ಇದ್ದ ಕೆಲವೇ ಕೆಲವು ಸುಶಿಕ್ಷಿತರನ್ನು ಕರೆಸಿ ಸಭೆ ಸೇರಿಸಿ, ಸಮಾಜ  ಸುಧಾರಣೆಯಾಗಬೇಕಾದರೆ ಶಿಕ್ಷಣದ ಅಗತ್ಯವಿದೆ, ಅದಕ್ಕೂ ಮೊದಲು ನಾವು ಸಂಘಟಿತರಾಗಬೇಕು. ಅದಕ್ಕಾಗಿ ನಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಳ್ಳಬೇಕೆಂದು ಹೇಳಿದರು . ಲಿಂಗಾಯತ ಸಮಾಜದ ಶ್ರೀಮಂತರನ್ನು ಗಣ್ಯರನ್ನು ಪ್ರತಿಭಾವಂತರನ್ನು ಬರಮಾಡಿಕೊಂಡು ಅವರೊಂದಿಗೆ ಆಲೋಚನೆ ನಡೆಸಿದರು. ೧೯೦೪ರಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜ ಬಾಂಧವರೆಲ್ಲ ಒಂದಾಗಿ ಮಹಾಸಭೆಯ ಸಕ್ರಿಯ ಸದಸ್ಯರಾದರು. ಸಮಾಜದಲ್ಲಿ ವಿಲಕ್ಷಣ ಜೀವಂತಿಕೆ ಮೂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಾಯತರು ಮೆಲ್ಲನೆ ಪ್ರಗತಿಪಥದಲ್ಲಿ ಮುನ್ನಡೆ ಸಾಧಿಸತೊಡಗಿದರು

. ಶ್ರೀಗಳು ನಡೆಸಿದ ಪ್ರಯತ್ನದ ಫಲವಾಗಿ ಜನರಲ್ಲಿ ವಿಶ್ವಾಸ ಮೂಡಿತಷ್ಟೇ ಅಲ್ಲ, ನಿರೀಕ್ಷೆಗೆ ಮೀರಿ ಧನಸಂಚಯವಾಯಿತು. ವಿದ್ಯಾಪ್ರಸಾರದೊಂದಿಗೆ ಧರ್ಮ ಗ್ರಂಥಗಳ ಪಟಕಣೆಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಿದ್ಯಾವಂತರನ್ನೂ ಪಂಡಿತರನ್ನೂ ಕವಿ-ಕಲೆಗಾರ-ಸಂಗೀತಗಾರರನ್ನೂ ಪೋಷೊಸಲಾಯಿತು.

ತತ್ವಾಧಿಕ್ಯ ಹಾಗೂ ತಪೋಬಲದ ಆಧಾರದ ಮೇಲೆ ರಚಿತವಾದ ಧರ್ಮಕ್ಕೆ ಶಾಶ್ವತತೆ ಇದೆಯೆಂಬುದನ್ನರಿತು, ಬಸವಾದಿ ಪ್ರಮಥರಿಂದ ಪ್ರಚುರಗೊಂಡ ಲಿಂಗಾಯತ ಧರ್ಮಕ್ಕೆ ಚಿರಕಾಲ ಬಾಳುವ ಶಕ್ತಿಸಾಮರ್ಥ್ಯಗಳಿವೆಯೆಂಬುದನ್ನು ಮನವರಿಕೆ ಮಾಡಿಕೊಂಡು ಅದಕ್ಕೆ ಇನ್ನೂ ಹೆಚ್ಚಿನ ಕಾಂತಿಯನ್ನೀಯಬೇಕೆಂಬ ಸಂಕಲ್ಪ ತಾಳಿದರು. ಯೋಗವಿದ್ಯಾನ್ವೇಷಕರೂ ಪರಮ ವೈರಾಗ್ಯ ಶಾಲಿಗಳೂ ಮಹಾಮಹಿಮರೂ ಆದ ಬಾಗಲಕೋಟೆಯ ಮಲ್ಲಣಾರ್ಯರ ಸೂಚನೆಯಂತೆ ಹಾಗೂ ಯಳಂದೂರ ಬಸವಲಿಂಗ ಯತಿಗಳ ಸತ್ಸಂಕಲ್ಪದಂತೆ ಯೋಗ್ಯ ಧಾರ್ಮಿಕ ಗುರುಗಳನ್ನೂ ಆಚಾರನಿಷ್ಠ ಶಿವಾನುಭವಿಗಳನ್ನೂ ತರಬೇತಿಗೊಳಿಸುವ ಬೃಹತ್ ಯೋಗ ಸಂಸ್ಥೆಯನ್ನು ನಿರ್ಮಿಸುವ ಹೊಣೆಹೊತ್ತ ಶ್ರೀಗಳು ಬಾಗಲಕೋಟೆಯಲ್ಲಿ ೧೯೦೮ರಲ್ಲಿ ನಾಲ್ಕನೆಯ ವೀರಶೈವ ಮಹಾಸಭೆಯನ್ನು ಏರ್ಪಡಿಸಿದರು. ಇಳಕಲ್ಲಿನ ಮಹಾತ್ವಸ್ವಿ ಮಹಾಂತ ಸ್ವಾಮಿಗಳು ತೋರಿದ ಸ್ಥಾನದಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು. ಮೂರೇ ಮೂರು ವಾರಗಳಲ್ಲಿ ಇಳಕಲ್ಲ ಶ್ರೀಗಳಿಂದ ಶಿವಯೋಗಮಂದಿರದ ಸ್ಥಳಕ್ಕೆ ಲಿಂಗಮುದ್ರೆ ಬಿದ್ದಿತು. ಕೇವಲ ಏಳು ಜನ ಸಾಧಕ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಯೊಂದಿಗೆ ಅಧ್ಯಾತ್ಮ ಉನ್ನತಿ ಸಾಧಿಸುವ ವಿದ್ಯೆ ನೀಡುವ ಏರ್ಪಾಡಾಯಿತು. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರಗಳೆರಡೂ ಕುಮಾರೇಶರ ಎರಡು ಕಣ್ಣುಗಳೆನಿಸಿದವು.

ಸಮಾಜದ ಬಗೆಗೆ ಪೂಜ್ಯರಿಗಿದ್ದ ಪ್ರೇಮ ಉಜ್ವಲವಾದುದು. ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ಪ್ರಗತಿಪರ ಜೀವಿಯೆನಿಸಿದ ಮಾನವನ ಸರ್ವಾಂಗೀಣ ವಿಕಾಸವು ಸಮಾಜವನ್ನೇ ಅವಲಂಬಿಸಿದೆ. ಅಂತೆಯೇ ಶ್ರೀಗಳು ಸದಾವಕಾಲ ಸಮಾಜದ ಹಿತಚಿಂತನೆಯನ್ನೇ ಮಾಡುತ್ತಿದ್ದರು. ‘ಎದ್ದರೆ ಸಮಾಜ, ಕುಳಿತರೆ ಸಮಾಜ’ ಎನ್ನುವಂತೆ ಯಾವಾಗಲೂ ‘ಸಮಾಜ ಸಮಾಜ’ ಎಂದು ಸಮಾಜದ ಉತ್ಕರ್ಷಕ್ಕಾಗಿ ಅವರು ಟೊಂಕಕಟ್ಟಿ ನಿಂತರು. ನಾವು ಸಾಧಿಸುವ ಸಾಮಾಜಿಕ ಪ್ರಗತಿಯೇ ದೇಶದ ಬೆಳವಣಿಗೆಯ ಅಡಿಗಲ್ಲು. ನೀತಿಯುತ ಸಮಾಜದ ನಿರ್ಮಾಣದಿಂದ ರಾಜಕೀಯಕ್ಕೂ ಭದ್ರವಾದ ಹಿನ್ನೆಲೆಯೊದಗುತ್ತದೆ. ಮಾನವನ ಪ್ರಕೃತಿಯ ರಹಸ್ಯ ಅಡಗಿರುವುದೇ ಸಾಮಾಜಿಕ ಜೀವನದಲ್ಲಿ ಎಂದು ತಿಳಿಸಿದರು. ಏರ್ಪಡಿಸಿದ ಶಿವಾನುಭವ ಗೋಷ್ಠಿಗಳಲ್ಲಿ ಆಡಿದ ಮಾತುಗಳಲ್ಲಿ, ನೀಡಿದ ಉಪನ್ಯಾಸಗಳಲ್ಲಿ, ನಡೆಸಿದ ಸಹಜ ಸಮಾಲೋಚನೆಯಲ್ಲಿ ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗೆಗೆ ಶ್ರೀಗಳು ನಡೆಸಿದ ಚಿಂತನೆ ಅನನ್ಯವಾದುದು. ಸಮಸ್ತ ಲಿಂಗಾಯತ ಸಮಾಜವೇ ಪೂಜ್ಯರ ಬೆಂಬಲವಾಗಿ ನಿಂತಿತು. ಅಂತೆಯೇ ಅವರು ಸಮಾಜದ ಸ್ವಾಮಿಗಳಾಗಿ ಆದರ್ಶ ಮಾರ್ಗದರ್ಶಕರೆನಿಸಿದರು. ‘ಸಮಾಜ ಸೇವೆಗೆ ಮತ್ತೊಮ್ಮೆ ಹುಟ್ಟಿ ಬರುತ್ತೇವೆ’ ಎಂದು ಹೇಳಿದ ಮಹಾತ್ಮರವರು.

ʼಸರಳ ಜೀವನ-ಉದಾತ್ತ ಚಿಂತನ’ ಎಂಬ ಸೂಕ್ತಿಯನ್ನರಿತು, ಅದನ್ನು ಅಚ್ಚುಕಟ್ಟಾಗಿ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಮಹಂತರವರು. ಅವರೆ೦ದೂ ಪಲ್ಲಕ್ಕಿಯನ್ನೇರಿದವರಲ್ಲ. ಸಿಂಹಾಸನದ ಮೇಲೆ ವಿರಾಜಮಾನರಾದವರಲ್ಲ. ಏನಿದ್ದರೂ ಅವರು ಭಕ್ತರ ಹೃದಯದಲ್ಲಿ ಭದ್ರವಾದ ಸ್ಥಾನ ಪಡೆದವರು. ಬರಿ ವಿದ್ವತ್ತು-ಬುದ್ಧಿವಂತಿಕೆಗಳಿಂದಷ್ಟೇ ಅಲ್ಲ,  ಅನುಪಮ ತ್ಯಾಗ ಮತ್ತು ಸೇವಾ ಭಾವನೆಗಳಿಂದ ಅವರು ನಿಷ್ಕಾಮ ಸೇವೆಗೈದರು. ಮಠಕ್ಕಾಗಿ ಸಂಗ್ರಹಗೊಂಡ ಧನಧಾನ್ಯಗಳನ್ನು ಬರಗಾಲ ಪೀಡಿತರಿಗೆ, ರೋಗಿಗಳಿಗೆ ವಿನಯೋಗಿಸಿದ ತ್ಯಾಗಿಗಳವರು.

ಇಂದು ನಮ್ಮ ಸಮಾಜ ಶೈಕ್ಷಣಿಕಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾಧಿಸುವಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಪರಿಶ್ರಮ ಗಮನಾರ್ಹ ವಾಗಿದೆ. ಇಂದಿನ ಸುಶಿಕ್ಷಿತ ಲಿಂಗಾಯತ ಬಾಂಧವರು, ಮಹಾತಪಸ್ವಿ ಕುಮಾರೇಶರು ನಿರ್ದೇಶಿಸಿದ ದಾರಿಯಲ್ಲಿ ಸಾಗಿ, ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನಮ್ಮ ಸಮಾಜದ ಕಲ್ಯಾಣ ಸಾಧ್ಯ.

ಪೂಜ್ಯ ಕುಮಾರೇಶರು ಋಣದ ಬಗೆಗೆ ಮಾಡಿಕೊಂಡಿದ್ದ ಪರಿಕಲ್ಪನೆಯೇ ಅದ್ಭುತವಾದುದು. ಋಣದ ಕಲ್ಪನೆ- ಪರಿಕಲ್ಪನೆಗಳಿಲ್ಲದೆ, ಯಾವುದೇ ಗೊತ್ತುಗುರಿಯಿಲ್ಲದೆ ಸಾಗುತ್ತಿರುವ ಇಂದಿನ ಯುವಜನಾಂಗವನ್ನು ಕಂಡರೆ ಕನಿಕರ ಪಡಬೇಕಾಗುತ್ತದೆ. ಯಾವ ಜವಾಬ್ದಾರಿಯೂ ಇಲ್ಲದ ಇಂದಿನ ಯುವಕರಿಗೆ ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ. ತಮ್ಮ ತುಂಬು ತಾರುಣ್ಯದಲ್ಲಿಯೇ ಎಲ್ಲ ರೀತಿಯ ಹೊಣೆಗಾರಿಕೆಯನ್ನು ನಿರ್ವಹಿಸತೊಡಗಿದ್ದ ಕುಮಾರೇಶರ ಋಣಮುಕ್ತ ಬದುಕು, ಯುವಕರಿಗೆ ಅನುಕರಣೀಯ ಆದರ್ಶ; ವಿರಕ್ತರಿಗೆ ಆದರ್ಶ ಮಾರ್ಗದರ್ಶಿ, ತಾಯಿ-ತಂದೆ-ಗುರು-ಧರ್ಮ-ಸಮಾಜಗಳ ಋಣವನ್ನು ಅರಿತು, ಅರ್ಥಪೂರ್ಣವಾಗಿ ತೀರಿಸಿದ ಕುಮಾರೇಶರ ರೀತಿಯಂತೂ ಹೊಸಪೀಳಿಗೆಯ ನವಯುವಕರಿಗೆ ವಿಶೇಷ ಮಾದರಿ, ಒಬ್ಬರ ಋಣದಾಗ ಇರಬಾರದು,  ಋಣಗೇಡಿಯಾಗಿ ಹೋಗಬಾರದು’ ಎಂಬ ಜನಪದರ ಮಾತು ಕೂಡ ಋಣವಿಮುಕ್ತಿಯ ಸಂದೇಶವನ್ನೇ ನೀಡುತ್ತದೆ:

೧೮೬೭ರಿಂದ ೧೯೩೦ರ ವರೆಗೆ ಅರವತ್ತೂರು ವರ್ಷ, ಸಾರ್ಥಕ ಬದುಕನ್ನು ಬದುಕಿ, ‘ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು’ ಎಂಬಂತೆ ಶಿವಯೋಗಿಗಳಾಗಿ, ಕಾಯಕಯೋಗಿಗಳಾಗಿ, ಸಮಾಜದ ಉದ್ಧಾರಕ್ಕಾಗಿ ದಣಿವರಿಯದೆ ದುಡಿದು, ತಮ್ಮ ಬದುಕನ್ನೇ ಸಮಾಜಕ್ಕಾಗಿ ಮುಡಿಪಿಟ್ಟು ಸಮಾಜ ಸಂಜೀವಿ’ ಯೆನಿಸಿದರು. ಅನ್ವರ್ಥಕವಾಗಿಯೂ, ಸಾರ್ಥಕವಾಗಿಯೂ ಋಣಮುಕ್ತರೆನಿಸಿದರು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ಪ್ರಸ್ತುತ ಪಡಿಸಿದ  ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ  ಜೀವನ ಚರಿತ್ರೆ ಆಧಾರಿತ ಸಾಕ್ಷ್ಯಚಿತ್ರ “ಯುಗ ಪುರುಷ ಮರಾಠಿ ಭಾಷೆಯ ಆವೃತ್ತಿ ದಿ. ೨೧-೦೭-೨೦೨೩”ಲೋಕಾರ್ಪಣೆ

ಶ್ರೀ.ಶ್ರೀ.ಶ್ರೀ.೧೦೦೮ ಜಗದ್ಗುರು.ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಗಿರಿರಾಜ ಸೂರ್ಯಸಿಂಹಾಸನ ಪೀಠ.ಶ್ರೀಶೈಲ  ಅವರ ಅಮೃತಹಸ್ತದಿಂದ  ಪರಳಿ ವೈದ್ಯನಾಥ ಜ್ಯೋತಿರ್ಲಿಂಗ ಮಂದಿರ ಮಹಾರಾಷ್ಟ್ರ ದಲ್ಲಿ ಜರುಗಿತು.

 ಪರಳಿಯ ಮಹತ್ವ :

     ಹೈದ್ರಾಬಾದ್ ಸಂಸ್ಥಾನದಲ್ಲಿದ್ದ ಪರಳಿ ವೈಜ್ಯನಾಥ ಹನ್ನೆರಡು ಜ್ಯೋರ್ತಿಲಿಂಗಗಳಲ್ಲೊಂದು. ಆ ಲಿಂಗದ ಪೂಜೆಯನ್ನು ಮೊದಲು ವೀರಶೈವರೇ ಮಾಡುತ್ತಿದ್ದರು. 1925ನೇ ಸಾಲಿನಲ್ಲಿ ವೈಜ್ಯನಾಥನನ್ನು ಬ್ರಾಹ್ಮಣರೇ ಪೂಜಿಸಬೇಕು. ವೀರಶೈವರು, ಶೂದ್ರರು ಇವರಿಗೆ ಲಿಂಗವನ್ನು ಪೂಜಿಸಲು ಹಕ್ಕಿಲ್ಲವೆಂದು ವೀರಶೈವ-ಲಿಂಗಾಯತರನ್ನು ಅಪಮಾನಮಾಡಿದ ಘಟನೆಯೊಂದು ಮಹಾರಾಷ್ಟ್ರ ದಲ್ಲಿ ಜರುಗಿತು. ಅದನ್ನು  ಕೇಳಿದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳಿಗೆ ತಡೆಯಲಿಕ್ಕಾಗಲಿಲ್ಲ.

ಹಾನಗಲ್ಲ ಮಹಾಸ್ವಾಮಿಗಳವರು ಶೀಲಾಚಾರದಲ್ಲಿದ್ದರೂ ಅನ್ಯಾಯವನ್ನು ಸಹಿಸುತ್ತಿರಲಿಲ್ಲ. ಪಂ.ಸೋಮನಾಥ ಶಾಸ್ತ್ರೀಗಳು ಬಸವಲಿಂಗ ಶಾಸ್ತ್ರಿಗಳು ಮೊದಲಾದವರನ್ನು ಕೂಡಿಕೊಂಡು ಹೈದ್ರಾಬಾದಿಗೆ ದಯಮಾಡಿಸಿದರು. ಅಲ್ಲಿ ಒಂದು ಮನೆಯನ್ನು ಬಾಡಿಗೆ ಹಿಡಿದು ಅನುಕೂಲಮಾಡಿಕೊಳ್ಳಲು ಮೂರು ದಿನ ಉಪವಾಸವಿದ್ದು ವ್ಯವಸ್ಥೆಮಾಡಿಕೊಂಡರು.  ಸುಪ್ರಸಿದ್ದ ವಕೀಲರು, ಪಂ.ಬಾಪಟರನ್ನು ಕರೆಸಿದ್ದರು. ಪಂ.ಸೋಮನಾಥ ಶಾಸ್ತ್ರಿಗಳ ಸಂಸ್ಕೃತ ದಲ್ಲಿ ಅಪಾರ ವಿದ್ವಾಂಸರು. ಆದರೆ ವಕೀಲ ಸನದು ಇಲ್ಲದ ಕಾರಣಕ್ಕೆ ಕೋರ್ಟಿನಲ್ಲಿ ವ್ಯಾಜ್ಯ ನಡೆಸಲು ಅನುಮತಿ ಸಿಗಲಿಲ್ಲ. ನವಾಬರ ಸರಕಾರದ ಒಬ್ಬ ವಕೀಲರನ್ನು ನೇಮಿಸಿಕೊಂಡು ಅವರಿಗೆ ಶಾಸ್ತ್ರೀಗಳವರೇ ಎಲ್ಲಾ ವಿಷಯ ತಿಳಿಸಿ ವ್ಯಾಜ್ಯ ನಡೆಸಲು     ಬಗೆಯನ್ನು ಹೇಳುತ್ತಿದ್ದರು.

           ಬ್ರಾಹ್ಮಣರು ತಂದ ಆಗಮಗಳಲ್ಲಿ ನಾಲ್ಕಾರು ಕಡೆ ‘ಶೂದ್ರ’ ಶಬ್ದ ದೊರೆಯಿತು. ಶಿವಯೋಗ ಮಂದಿರದಲ್ಲಿರುವಾಗಲೇ ಆಗಮಗಳನ್ನು ಅಭ್ಯಸಿಸಿ ಟಿಪ್ಪಣಿ ಮಾಡಿದ್ದು ಉಪಯೋಗವಾಯಿತು. ಮಂದಿರದಿಂದ ಆ ಆಗಮಗಳನ್ನು ತರಿಸಿದರು ಆ ಗ್ರಂಥಗಳಲ್ಲಿ ‘ಶೂದ್ರ’ ವಿದ್ದ ಸ್ಥಳಗಳಲ್ಲಿ ‘ರುದ್ರ’ ವಿರುವುದನ್ನು ಶಾಸ್ತ್ರಿಗಳು ಎಲ್ಲರಿಗೂ ತೋರಿಸಿ ಆಗಮಗಳನ್ನು ತಿದ್ದುಪಡಿ ಮಾಡಿರುವುದನ್ನು ತಿಳಿಸಿದರು. “ವೀರಶೈವರು ರುದ್ರಗಣಾಧೀಶರು” ರುದ್ರವಂಶಜರು ಹೀಗಿರುವಾಗ ‘ಶೂದ್ರ’ರೆಂತಾಗುವರು? ರುದ್ರ ಗಣಾದೀಶರು, ಪೂಜ್ಯರೂ ಉಚ್ಚಕುಲದವರು, ನಿತ್ಯ ಇಷ್ಟಲಿಂಗ ಪೂಜಕರು ಎಂಬುದನ್ನು  ತಿಳಿಸಿ ಹೇಳಲು ಶಾಸ್ತ್ರಿಗಳು ಮೂರು ತಿಂಗಳ ಕಾಲ ಅಲ್ಲಿ ಉಳಿದರು. ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳವರು  ಈ ವ್ಯಾಜ್ಯಕ್ಕಾಗಿ 1925ರಲ್ಲಿ ಸುಮಾರು 30000 ರೂಗಳ ಸಂಗ್ರಹಿಸಿ ಕೊಟ್ಟರು. ಪಂ.ಸೋಮನಾಥಶಾಸ್ತ್ರಿಗಳು ಅಷ್ಟುಕಾಲ ಹೆಂಡರು ಮಕ್ಕಳನ್ನು ಮರೆತು ಕಾರ್ಯ ಮಾಡಿದ್ದರು. ಹೈದ್ರಾಬಾದ್ ಹೈಕೋರ್ಟಿನಿಂದ ತೀರ್ಮಾನ ಬಂದಿತು. ಜಯಶಾಲಿಗಳಾದರು.

ಈ ಜಯ “ಸ್ಥಾವರ ಲಿಂಗ” ದ ಪೂಜೆ ಗಾಗಿ ಅಲ್ಲ.

ಅದು ಅಖಂಡ ವೀರಶೈವ-ಲಿಂಗಾಯತ ಧರ್ಮೀಯರಿಗೆ ಆದ ಸಾರ್ವಜನಿಕ ಅವಮಾನಕ್ಕೆ ಸ್ವಾಭಿಮಾನದ ಜಯ. ಆ ಜಯವನ್ನು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ   ತಂದು ಕೊಟ್ಟಿದ್ದರು ೧೯೨೫-೨೯ ರಲ್ಲಿಯೇ ತಂದುಕೊಟ್ಟಿದ್ದರು. ಆ ಕಾರಣಕ್ಕಾಗಿ ಪರಳಿಯಲ್ಲಿ ಮರಾಠಿ ಭಾಷೆಯ “ಯುಗ ಪುರುಷ” ಲೋಕಾರ್ಪಣೆಯಾಯಿತು.

ಜೊತೆಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ಪ್ರಸ್ತುತ ಪಡಿಸಿದ “ಶ್ರೀ ಕುಮಾರೇಶ್ವರ ಅಭಂಗ” ಲೋಕಾರ್ಪಣೆ ಕಾರ್ಯಕ್ರಮ ಜರುಗಿತು

ಮಳೆಗಾಗಿ ನಿತ್ಯ ಜಲಾಭಿಷೇಕ ಪೂಜೆಯ ಒಂದು ತಿಂಗಳು ನಡೆದ ಪ್ರಾರ್ಥನೆ ಯ ಮಂಗಲ ಕಾರ್ಯಕ್ರಮ ದಿ.17 ಜುಲೈ 2023 ಖಡಕಲಾಟ ಗ್ರಾಮ (ನಿಪ್ಪಾಣಿ ತಾಲೂಕು)
ಶ್ರೀ ಕುಮಾರೇಶ್ವರರ ವಿರಕ್ತಮಠ
ಮಳೆಯಿಂದಲೇ ಸ್ವಾಗತಿಸಿ
ಮಳೆಯಿಂದಲೇ ಕಾರ್ಯಕ್ರಮ ದ ಸ್ಥಳ ಬದಲಿಸಿ
ಅಭೂತಪೂರ್ವ ಸನ್ನಿವೇಶದಲ್ಲಿ
ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ಪ್ರಸ್ತುತ ಪಡಿಸಿದ
“ಶ್ರೀಕುಮಾರೇಶ್ವರ ಅಭಂಗ” ಲೋಕಾರ್ಪಣೆ ಸಮಾರಂಭ ಖಡಕಲಾಟ ಅಪ್ಪನವರ ಕುಮಾರೇಶ್ವರ ವಿರಕ್ತಮಠದಲ್ಲಿ ಅದ್ದೂರಿಯಾಗಿ ಜರುಗಿತು ಹಿರಿಯ ಶ್ರೀಗಳಾದ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳ ಅಮೃತ ಲಿಂಗಹಸ್ತದಿಂದ ಅಭಂಗ ಲೋಕಾರ್ಪಣೆಗೊಂಡಿತು ಸಮ್ಮುಖವನ್ನು ಬಸವನಬಾಗೆವಾಡಿ ಹುಣಶ್ಯಾಳ ಹಿರೇಮಠದ ಪೂಜ್ಯ ಆನಂದ ದೇವರು ವಹಿಸಿದ್ದರು ಅಭಂಗ ಕುರಿತು ಪ್ರೊ ಮಿಥುನ ಅಂಕಲಿ ಪರಿಚಯಿಸಿದ

ಶ್ರೀಕುಮಾರ ತರಂಗಿಣಿ  ೨೦೨೩ ಅಗಸ್ಟ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಿವಮೂರ್ತಿಯೆ ತವೆ ಪೂಜಿಸುವೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೭ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೫: ವಿದ್ಯಾಶಿಕ್ಷಣ, ವೇದಾಂತ ನಿರೀಕ್ಷಣಲೇಖಕರು: ಪೂಜ್ಯ ಜ.ಚ.ನಿ
  4. ನಯ-ವಿನಯ:ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
  5. ಕಾವ್ಯ: ಶಿವಯೋಗಿ ಕುಮಾರಯೋಗಿ ರಚನೆ: ಪೂಜ್ಯ ಶಿವಬಸವ ದೇವರು ಧಾರವಾಡ
  6. ಸಾಧಕರ ಶಿವಯೋಗ ಮಂದಿರದ  ಸೇವಾ ಸಂಕಲ್ಪ ಯಾತ್ರೆಯ ಕಿರುವರದಿ.
  7. ವಿಶಿಷ್ಠ ವ್ಯಕ್ತಿತ್ವದ ಶ್ರೀ ಆರ್.ಎಸ್.ಕಲ್ಯಾಣಶೆಟ್ಟರು. (ಮಮದಾಪೂರ) .ಆಯ್.ಪಿ.ಎಸ್.(ನಿ) ಲೇಖಕ: ಶ್ರೀಕಂಠ.ಚೌಕೀಮಠ.
  • ಆಡಿಯೋ೧ : ಮರಾಠಿ ಭಾಷಾ ಆವೃತ್ತಿ “ ಯುಗ ಪುರುಷ” ಸಾಕ್ಷ್ಯ ಚಿತ್ರ
  • ಆಡಿಯೋ ೨ : ಶ್ರೀಕುಮಾರೇಶ್ವರ ಅಭಂಗ

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

(ರಾಗ – ಭೈರವಿ)

ಶಿವಮೂರ್ತಿಯೆ | ತವೆ ಪೂಜಿಸುವೆ || ಪ ||

ತರು ವಿಸ್ತಾರವನಿರದೈಕ್ಯಗೊಂಡ |

ನೆರೆ ಬೀಜದ ಪರಿ |

ಶರೀರಾದಿ ಜಗವ ಮೀರಿ ತೋರ್ಪ || 1 ||

ತವೆ ಇಷ್ಠಾರ್ಥವ ಭುವಿಯೊಳು ಕೊಡುವ |

ಭವದೋಷದರತಿ |

ಜವದೊಳ್ ನಾಶಿಪ ದೇವದೇವಾ || 2 ||

ಲಿಂಗರೂಪದ ಜಂಗಮಾರ್ಯಗೆ |

ಮಂಗಲ ಗುರುವರ |

ಕಂಗಳಾಲಯ ಶಿವಯೋಗದೇವಾ || 3 |

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಪರಮ ಕಟಯೊಳಗಿರ್ದ | ಗುರುಲಿಂಗದೊಳಗೆ ಮಾ-

ಕ್ಷರವೆ ಮೊದಲಾದವರವರ ಷಡಕ್ಷರ ಮಂತ್ರ

ವೊರೆದ ಶ್ರೀಗುರುವೆ ಕೃಪೆಯಾಗು     I ೧೨೧ |

ಲಿಂಗದ ಎರಡನೆಯ ಅವಯವ ಕಟಿ, ಇದು ಪರಮವೆನಿಸಿದೆ. ಅರ್ಥಾತ್ ಶ್ರೇಷ್ಠವೆನಿಸಿದೆ. ಕಟಿಭಾಗವು ಸಣ್ಣಾಗಿರುವದರಿಂದ ಅಂದವಾಗಿ ಕಾಣುವದು. ಮೃಗ ರಾಜವೆನಿಸಿದ ಸಿಂಹದ ನಡುವು ಸಾಮಾನ್ಯವಾಗಿ ಸಣ್ಣದಾಗಿರುತ್ತದೆ. ಕುಲವಧುವಿನ ಕಟಿಭಾಗವೂ ಸಣ್ಣದಾಗಿರುವದೆಂಬ ವರ್ಣನೆಯು ಕಾವ್ಯಗಳಲ್ಲಿ ಕಾಣ ಸಿಕ್ಕುವದು. ಶಕ್ತಿ ಸೂಚಕವಾದ ಲಿಂಗ ಪೀಠದ ಮಧ್ಯಭಾಗವೂ ಚಿಕ್ಕದಾಗಿರುವಲ್ಲಿ ವಿಶೇಷತೆಯಿದೆ. ಲೋಕ ವ್ಯವಹಾರಕ್ಕೆ ಯಥೋಚಿತವೆನಿಸಿದೆ.

ಕ್ರಿಯಾಲಿಂಗವೆನಿಸಿದ ಇಷ್ಟಲಿಂಗದ ಎರಡನೆಯ ಲಿಂಗವೇ ಗುರುಲಿಂಗವೆನಿಸಿದೆ. ಈ ಗುರುಲಿಂಗವು ಕಟಿಭಾಗದಲ್ಲಿದೆ. ಗುರುಲಿಂಗದಲ್ಲಿ ‘ಮಃ’ ಪ್ರಣವವಿದೆ. ಇಲ್ಲಿ ಮಾಕ್ಷರ (ಮಕಾರ) ವೆ ಮೊದಲಾಗಿ ಷಡಕ್ಷರ ಮಂತ್ರವು ಅಡಕವಾಗಿದೆ. ಅಂದರೆ ಈ ಗುರುಲಿಂಗ ಷಟ್‌ಸ್ಥಲದಲ್ಲಿ “ಮಃ” ಪ್ರಣವದ ಶ್ರೇಷ್ಠ ಷಡಕ್ಷರ ಮಂತ್ರದ ಇರುವು ಗುಪ್ತವಾಗಿರುತ್ತದೆಂದು ಗುರುವು ಪ್ರಿಯ ಶಿಷ್ಯನಿಗೆ ಲಿಂಗಸ್ಥಾನದಲ್ಲಿಯ ಮಂತ್ರರೂಪವನ್ನು ಬೋಧಿಸುತ್ತಾನೆ. ಮಕಾರ ಮಂತ್ರದ ಸ್ತೋತ್ರ ಕೆಳಗಿನಂತಿದೆ-

ಮಂದಾಕಿನಿ-ಸಲಿಲ-ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ-ಮಹೇಶ್ವರಾಯ |

ಮಂದಾರಪುಷ್ಪ-ಬಹುಪುಷ್ಪ-ಸುಪೂಜಿತಾಯ

ಸ್ಮೈ ಮಕಾರಾಯ ನಮಃ ಶಿವಾಯ (೨) (ಬ್ರಹತ್ ಸ್ತೋತ್ರ ರತ್ನಾಕರ)

ಶ್ರೀರುದ್ರಯಾಮಲ ತಂತ್ರದಲ್ಲಿ ‘ಮ’ಕಾರ ಮಂತ್ರದ ಮಹಿಮೆ

ಮಹಾದೇವಂ ಮಹಾತ್ಮಾನಂ

ಮಹಾಧ್ಯಾನಪರಾಯಣಮ್ |

ಮಹಾಪಾಪಹರಂ ದೇವಂ

ಮಕಾರಾಯ ನಮೋ ನಮಃ (೨)

ಎಂದಿದೆ. ಮಕಾರವು ಮಹಾಧ್ಯಾನ ಪರಾಯಣ ಮಹಾದೇವನ ಸ್ವರೂಪದ್ದಾಗಿದೆ. ಪಾಪನಾಶಕವಾದ ಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲದಲ್ಲಿ ಅವಶ್ಯ ನುತಿಸಬಹುದು.

ಅವಿರಳದ ವರ್ತುಳದ | ಶಿವಲಿಂಗದೊಳು ಶಿಕಾ-

ರವೇ ಮೊದಲಾಗಿರ್ದ – ತವೆ ಷಣ್ಮಂತ್ರವ ತೋ-

ರ್ದವಿರಳ ಗುರುವೆ ಕೃಪೆಯಾಗು     | ೧೨೨||

ಲಿಂಗ ಪೀಠದ ಮೇಲಿನ ಸುತ್ತಳತೆಯೇ ವರ್ತುಳವು. ಇದು ಅವಿರತವಾದುದು. ವಿರಾಮವಿಲ್ಲದೆ ದುಂಡಾದ ಪೂರ್ಣಗೊಂಡ ರೇಖೆಯೇ (ಪರಿಘವೆ) ವರ್ತುಳವು. ಇಲ್ಲಿ ಶಿವಲಿಂಗದ ವಾಸ. ಶಿವಲಿಂಗಕ್ಕೆ ‘ಶಿ’ ಕಾರ ಪ್ರಣವಾಕ್ಷರ ಸಂಬಂಧವಿರುವದು. ಹೀಗೆ ‘ಶಿ’ ಕಾರ ಷಣ್ಮಂತ್ರವನ್ನು ಜ್ಞಾನನಿಬಿಡವಾದ (ಅವಿರಳನೆನಿಸಿದ) ಗುರುನಾಥನು  ತೋರಿಸಿ ರಕ್ಷಿಸುತ್ತಾನೆ. ಇದು ಸದ್ಗುರುವಿನ ಕರ್ತವ್ಯ.

 ‘ಶಿ’ ಕಾರದಲ್ಲಿಯ ‘ಇ’ಕಾರವೇ ಶಕ್ತಿಯು. ʼʼಇಕಾರಃ ಶಕ್ತಿರುಕ್ತಾʼ’ ಎಂದು ಶಾಸ್ತ್ರಕಾರರು ನಿರ್ವಚಿಸಿದ್ದಾರೆ. ವೃತ್ತ, ಕಟಿ, ವರ್ತುಳದಿಂದ ಕೂಡಿದ ಪೀಠವೇ ಲಿಂಗದ ಆಧಾರ ಸ್ಥಾನವಾಗಿದೆ. ಪೂರ್ಣತೆಯನ್ನು ಪಡೆದ ವಸ್ತುವಿನಲ್ಲಿ ಶಕ್ತಿಯ ಆವಿರ್ಭಾವವಾಗುವಂತೆ ಈ ವರ್ತುಳದಲ್ಲಿ ಶಿಕಾರ ಪ್ರಣವವು ಶಕ್ತಿಯ ವೈಶಿಷ್ಟ್ಯತೆ ಯನ್ನು ಸೂಚಿಸುತ್ತದೆ. ಇಂಥ ಶಿಕಾರ ಪ್ರಣವಕ್ಕೆ ಜಗದ್ಗುರು ಶಂಕರಾಚಾರ್ಯರು ವಂದಿಸಿದ್ದಾರೆ.

 ಶಿವಾಯ ಗೌರೀವದನಾಬ್ಜ-ವೃಂದ-

ಸೂರ್ಯಾಯ ದಕ್ಷಾಧ್ವರ ನಾಶಕಾಯ  |

ಶ್ರೀ ನೀಲಕಂಠಾಯ ವೃಷಭ ಧ್ವಜಾಯ

 ಸ್ಮೈ ಶಿಕಾರಾಯ ನಮಃ ಶಿವಾಯ

ಪಾರ್ವತಿಯ ಮುಖಕಮಲವನ್ನು ಅರಳಿಸುವಲ್ಲಿ ಸೂರ್ಯಸದೃಶನಾದ, ದಕ್ಷನ ಯಜ್ಞವನ್ನು ನಾಶಮಾಡಿದ, ವಿಷವನ್ನು ಧರಿಸಿ ನೀಲಕಂಠನೆನಿಸಿದ, ವೃಷಭ ವಾಹನನೆನಿಸಿದ ಶಿವನಿಗೆ ಹಾಗೂ ಶಿವನ ಸ್ವರೂಪವೆನಿಸಿದ ಶಿಕಾರ ಪ್ರಣವಕ್ಕೆ ನಮಸ್ಕಾರವು. ಇದರಂತೆ ಶಿವಷಡಕ್ಷರ ಸ್ತೋತ್ರದಲ್ಲಿ ‘ಶಿ’ ಕಾರ ಮಂತ್ರದ ವರ್ಣನೆ ಕೆಳಗಿನಂತಿದೆ.

ಶಿವಂ ಶಾಂತಂ ಜಗನ್ನಾಥಂ ಲೋಕಾನುಗ್ರಹಕಾರಕಂ |

ಶಿವಮೇಕಪದಂ ನಿತ್ಯಂ ಶಿಕಾರಾಯ ನಮೋ ನಮಃ” ||

ಮಂಗಲಕರನೂ, ಶಾಂತನೂ, ಜಗದೊಡೆಯೆನಿಸಿ ಲೋಕಕ್ಕೆ ಅನುಗ್ರಹಿಸ ತಕ್ಕವನೂ, ನಿತ್ಯನೂ, ಆದ ಶಿವ ಪದದ ಏಕಾಕ್ಷರವೆನಿಸಿದ ‘ಶಿ’ ಕಾರ ಪ್ರಣವಕ್ಕೆ ಅನಂತ ವಂದನೆಗಳು.

*

ಇಂತು ಗೋಮುಖದೊಳಗಿ | ಪ್ಪಂಥ ಜಂಗಮ ಲಿಂಗ

ಮಂತ್ರ ವಾಕಾರ-ಮುಂತಾದ ಷಣ್ಮಂತ್ರ

ಮಂ ತೋರ್ದ ಗುರುವೆ ಕೃಪೆಯಾಗು   || ೧೨೩ ||

ಇನ್ನು ಕ್ರಮಪ್ರಾಪ್ತವಾದ ಸ್ಥಾನ ಗೋಮುಖವು. ಎಲ್ಲ ಅವಯವಗಳಲ್ಲಿ ಮುಖ ಮುಖ್ಯವಾಗಿರುವಂತೆ ಲಿಂಗಕ್ಕೆ ಗೋಮುಖವು ಸುಂದರ ಅವಯವವಾಗಿದೆ. ಗೋಮುಖಕ್ಕೆ ಜಲಹರಿಯೆಂತಲೂ ಕರೆಯುತ್ತಾರೆ. ಸ್ಥಾವರಲಿಂಗದ ಮೇಲೆ ಅಭಿಷೇಕ ಮಾಡಿದ ಅಭಿಷೇಕವು ಜಲಹರಿಯ ಮುಖಾಂತರವೇ ಹರಿದು ಹೋಗುವದು. ಇಷ್ಟಲಿಂಗದ ಮೇಲೆ ಅಭಿಷೇಕ ಮಾಡಿದರೂ ಜಲಹರಿಯ ಭಾಗದ ಮೂಲಕವೇ ಹೋಗುವದು. ಶಿವನ ಎಡಭಾಗದಲ್ಲಿ ಶಕ್ತಿಯು ಇರುವಂತೆ ಈ ಗೋಮುಖವು ಲಿಂಗದ ಎಡಭಾಗದಲ್ಲಿ ಇರುವದು.

ಈ ಗೋಮುಖದಲ್ಲಿ ಜಂಗಮಲಿಂಗವಿರುತ್ತದೆ. ಅಂತೆಯೇ ಲಿಂಗಕ್ಕರ್ಪಿಸಿದ ಅಭಿಷೇಕಾದಿಗಳು ಗೋಮುಖದಲ್ಲಿ ಸಮರ್ಪಿತಗೊಳ್ಳುವವು. ಜಂಗಮಲಿಂಗಕ್ಕೆ ‘ವಾ’ ಕಾರ ಪ್ರಣವವು ಸಂಬಂಧಗೊಳ್ಳುವದು. ಈ ಜಂಗಮ ಲಿಂಗದಲ್ಲಿ ‘ವಾ’ ಕಾರ

ಮುಖ್ಯವಾದ ಷಣ್ಮಂತ್ರವು ನೆಲೆಗೊಂಡಿರುತ್ತದೆ. ಗುರುದೇವನು ಈ ಗೋಮುಖದಲ್ಲಿ ‘ವಾ’ ಕಾರ ಮಂತ್ರವನ್ನು ಸಂಬಂಧಗೊಳಿಸಿ ಲಿಂಗವನ್ನು ಶಕ್ತಿಯುಕ್ತವನ್ನಾಗಿ ಕರುಣಿಸುತ್ತಾನೆ. ಇಲ್ಲಿ ಲಿಂಗದ ಮುಖವೇ ಜಂಗಮವಾಗಿರುವ ಅನ್ಯೋನ್ಯ ಸಂಬಂಧವೂ

ವ್ಯಕ್ತವಾಗುವದು.

ವಶಿಷ್ಠ ಕಂಭೋದ್ಭವ ಗೌತಮಾರ್ಯ

ಮುನೀಂದ್ರ ದೇವಾರ್ಚಿತ ಶೇಖರಾಯ |

ಚಂದ್ರಾರ್ಕ ವೈಶ್ವಾನರ ಲೋಚನಾಯ

ಸ್ಮೈ ವಕಾರಾಯ ನಮಃ ಶಿವಾಯ (೪) ||

ಎಂದು ಶಂಕರ ಭಗವತ್ಪಾದರು ‘ವಾ’ ಕಾರ ಪ್ರಣವವನ್ನು ನುತಿಸಿದರೆ  ಶಿವಷಡಕ್ಷರ ಸ್ತೋತ್ರದಲ್ಲಿ

ವಾಹನಂ ಋಷಭೋ ಯಸ್ಯ

ವಾಸುಕಿಃ ಕಂಠಭೂಷಣಮ್ |

ವಾಮೇ ಶಕ್ತಿಧರಂ ದೇವಂ

ವ ಕಾರಾಯ ನಮೋ ನಮಃ ||

ಯಾವಾತನಿಗೆ ಋಷಭವು ವಾಹನವೋ, ಸರ್ಪವು ಕಂಠಾಭರಣವೋ, ವಾಮಭಾಗದಲ್ಲಿ ಶಕ್ತಿಸಮೇತನೋ ಅಂಥ ವಾಕಾರ ಮಂತ್ರ ಮೂರ್ತಿಗೆ ನಮಸ್ಕಾರವು.

ನಾದನಾಳದ ಸುಪ್ರ | ಸಾದ ಲಿಂಗದೊಳು ನಿ

ರ್ಭೇದವಹ ಯಕಾ ರಾದಿ ಷಣ್ಮಂತ್ರಗಳ

ಬೋಧಿಸಿದ ಗುರುವೆ ಕೃಪೆಯಾಗು   || ೧೨೪ ||

ಲಿಂಗದ ಐದನೆಯ ಅವಯವ ನಾಳ, ಇದು ನಾದ ರೂಪಾಗಿದೆ. ನಾದವು ಕಳಾಲಿಂಗ ಸ್ವರೂಪವು. ಲಿಂಗಪೀಠದ ಮಧ್ಯ ತಗ್ಗು ಪ್ರದೇಶವೇ ನಾಳವು; ಅಥವಾ ರಂಧ್ರವು. ಪೀಠರಂಧ್ರದ ಸ್ಥಾನವೇ ಲಿಂಗಕ್ಕೆ ಆಶ್ರಯಸ್ಥಾನ. ಈ ನಾದಮಯ (ಕಳಾಮಯ) ನಾಳದಲ್ಲಿರುವದು ಪ್ರಸಾದಲಿಂಗವು. ಅದರೊಳು ಭೇದವಳಿದ ‘ಯ’ ಕಾರ ಪ್ರಣವಾಕ್ಷರವುಂಟು. ಇಲ್ಲಿ ನಾಳಕ್ಕೂ ಮತ್ತು ಅದರೊಳಡಗಿದ ಚಿತ್ಪೀಠವಾದ ಲಿಂಗಕ್ಕೂ ಅಭೇದವಿರುತ್ತದೆ. ಪೀಠ ಹಾಗೂ ಚಿತ್ಪೀಠಗಳೆರಡೂ ಭಿನ್ನವಾಗಿ ಕಂಡರೂ ಶಕ್ತಿವಿಶಿಷ್ಟಾದ್ವೈತ ತತ್ತ್ವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ.

ಪ್ರಸಾದ ಲಿಂಗಕ್ಕೆ ಮುಖ್ಯವಾದ ‘ಯ’ ಕಾರಾದಿ ಬೀಜಾಕ್ಷರವುಳ್ಳ ಷಣ್ಮಂತ್ರವು ಅಲ್ಲಿ ಸಂಬಂಧವಾಗುತ್ತದೆ. ಎಂದು ಮುಂತಾಗಿ ಬೋಧಿಸುವನು ಗುರುದೇವನು. ಪಂಚಾಕ್ಷರಿಯ ಅಂತಿಮ ಪ್ರಣವದ ವರ್ಣನೆಯನ್ನು ಶಂಕರಾಚಾರ್ಯರು ಹೀಗೆ ನುತಿಸಿದ್ದಾರೆ.

ಯಕ್ಷಸ್ವರೂಪಾಯ ಜಟಾಧರಾಯ

ಪಿನಾಕ ಹಸ್ತಾಯ ಸನಾತನಾಯ |

ದಿವ್ಯಾಯ ದೇವಾಯ ದಿಗಂಬರಾಯ

ಸ್ಮೈಯ’ ಕಾರಾಯ ನಮಃ ಶಿವಾಯ (೫)

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿದೌ

ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ (೬)

ಪುಣ್ಯಪ್ರದವಾದ ಪಂಚಾಕ್ಷರ ಮಹಾಮಂತ್ರದ ಸ್ತೋತ್ರವನ್ನು ಶಿವಪೂಜೆಯ ಕಾಲಕ್ಕೆ ಪಠಿಸುವವನು ಶಿವಲೋಕವನ್ನು ಹೊಂದಿ ಶಿವನೊಡನೆ ಆನಂದದಿಂದಿರುವ ಸೌಭಾಗ್ಯವನ್ನು ಪಡೆಯುವನು. ಶಿವಷಡಕ್ಷರ ಸ್ತೋತ್ರದಲ್ಲಿ ಯಕಾರ ಪ್ರಣವದ ಸ್ತುತಿ ಕೆಳಗಿನಂತಿದೆ.

ಯತ್ರ ಯತ್ರ ಸ್ಥಿತೋ ದೇವಃ ಸರ್ವವ್ಯಾಪೀ ಮಹೇಶ್ವರಃ

ಯೋ ಗುರುಃ ಸರ್ವ ದೇವಾನಾಂ ಯಕಾರಾಯ ನಮೋ ನಮಃ

ಬಹು ಮೇಲು ಪೀಠದಾ | ಮಹಲಿಂಗದೊಳಗೆ ತಾ

ನಿಹ ಓಂಕಾರಾದಿ ಸಹಜ ಷಣ್ಮಂತ್ರವನ-

ರುಹಿದೆಯೈ ಗುರುವೆ ಕೃಪೆಯಾಗು   | ೧೨೫ |

ಲಿಂಗಷಟ್‌ಸ್ಥಲದಲ್ಲಿ ಬಹು ಮೇಲಾದುದು ಚಿತ್ಪೀಠವು . ಚಿಚ್ಛಕ್ತಿಮಯ ವಾದುದೇ ಚಿತ್ಪೀಠವೆನಿಸುವದು. ಚಿಚ್ಛಕ್ತಿಭರಿತನಾದ ಐಕ್ಯನು ಮಹಾಲಿಂಗದಲ್ಲಿ ಸಮರಸನಾಗಿರುವಂತೆ, ಚಿತ್ಪೀಠದಲ್ಲಿರುವುದು ಮಹಾಲಿಂಗವು. ಈ ಮಹಾಲಿಂಗದಲ್ಲಿ ಮಹವಾದುದು (ಶ್ರೇಷ್ಠವಾದುದು) ಓಂಕಾರ ಪ್ರಣವವು. ಇದು ಸಹಜವೆನಿಸಿದೆ. ಯಾಕಂದರೆ ಓಂಕಾರವು ಷಣ್ಮಂತ್ರವನ್ನು ಸಂಪೂರ್ಣವಾಗಿ ಹುದುಗಿಸಿಕೊಂಡಿದೆ. ಓಂಕಾರದಿಂದಲೇ ಪಂಚ ಪ್ರಾಣಗಳು ಪ್ರಕಟಗೊಳ್ಳುವದರಿಂದ ಸಹಜ ಷಣ್ಮಂತ್ರವೆನಿಸುವದು. ಇಂಥ ಓಂಕಾರದ ಚಿಂತನ ಸಮರಸವಾದ ಚೇತನವಾಗಿದೆ. ಷಡಕ್ಷರ ಸ್ತೋತ್ರದಲ್ಲಿ-

ಓಂಕಾರಂ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ |

ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ ||

ಬಿಂದು ಸಹಿತವಾದ ಓಂಕಾರವನ್ನು ಯೋಗಿಗಳು ಹೃದಯದಲ್ಲಿ ಸದಾಕಾಲವೂ ಧ್ಯಾನಿಸುತ್ತಾರೆ. ಈ ಓಂಕಾರವು ಕಾಮ (ಬಯಸಿದ್ದ)ವನ್ನು ಮೋಕ್ಷವನ್ನುಕೊಡುವಂಥಹ ದಾಗಿದೆ. ʼʼಶಿವತತ್ತ್ವ ರತ್ನಾಕರ’ದ ಪ್ರಥಮ ಕಲ್ಲೋಲದ ಐದನೆಯ ತರಂಗದಲ್ಲಿ

ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಃ ಸ್ವರಾಃ |

ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ||

ಪ್ರಣವೋ ಹಿ ಪರಂ ಬ್ರಹ್ಮ ಪ್ರಣವಃ ಪರಮಂ ಪದಮ್ |

ತಸ್ಮಾದುಚ್ಚಾರಣಾತ್ ಸಮ್ಯಕ್ ಪ್ರಣವಸ್ಯ ಶಿವಾತ್ಮನಃ |

ಪಾತಕಾನಿ ವಿನಶ್ಯಂತಿ ಹೃದಿಧ್ಯಾತೇ ಪರೇ ಶಿವೇ |

ವೇದಗಳು, ಸ್ವರಗಳು ಓಂಕಾರದಿಂದ ಪ್ರಾದುರ್ಭವಿಸಿವೆ. ತ್ರೈಲೋಕದ ಸಕಲ ಸಚರಾಚರ ಪ್ರಾಣಿಗಳಿಗೂ ಓಂಕಾರವೇ ಆಶ್ರಯವಾಗಿದೆ. ಇಂಥ ಓಂಕಾರ ಪ್ರಣವವು ಪರಬ್ರಹ್ಮವೂ, ಪರಮಪದವೂ ಆಗಿದೆ. ಆದ್ದರಿಂದ ಶಿವನ ಆತ್ಮವೇ ಓಂಕಾರ ಪ್ರಣವವು. ಇದನ್ನು ಧ್ಯಾನಪೂರ್ವಕ ಜಪಿಸುವದರಿಂದ ಸಕಲ ಪಾತಕಗಳು ನಾಶವಾಗುತ್ತವೆ. ಎಂದು ಓಂಕಾರದ ಅಪಾರ ಮಹಿಮೆಯನ್ನು ಬಣ್ಣಿಸಿದ್ದಾರೆ. ಇಂಥ ಓಂಕಾರದ ಉಪದೇಶವನ್ನು ಕರುಣಿಸುವ ಗುರುನಾಥನು ಕೃತಕೃತ್ಯನು. ಉಪದೇಶ ಪಡೆಯುವ ಶಿಷ್ಯನೂ ಧನ್ಯನು.

ಚಿತ್ಪೀಠದ ಮಹಾಲಿಂಗ ಮತ್ತು ಓಂಕಾರ ಪ್ರಣವವು ಒಂದಾಗಿದೆ. ಅಂತೆಯೇ ಓಂಕಾರದಲ್ಲಿ ಪಂಚಪ್ರಣವಗಳು ಕೂಡಿಕೊಂಡಿವೆ. ಮತ್ತು ಮಹಾಲಿಂಗದ ಸುನಾಮವೇ ಷಣ್ಮಂತ್ರವು. ಆದ್ದರಿಂದ ಅದು ಸಾರ್ಥಕವಾಗಿದೆ.

ಕಾರುಣಿಕ ಯುಗಪುರುಷ ಧಾರವಾಹಿ : ಭಾಗ 5

ಜ.ಚ.ನಿ

ಊಟ ಮಾಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿ ಅವರದಾಗಿರಲಿಲ್ಲ, ಅವರ ಅಜ್ಜಂದಿರವರ ಕಾಯಕಕ್ಕೆ ಕೈ ಹಾಕಿದರು. ಅದೇ ಲಿಂಗದಹಳ್ಳಿಯಲ್ಲಿಯೇ ಒಂದು ಸ್ವತಂತ್ರ ಪ್ರಾಥಮಿಕ ಶಾಲೆಯನ್ನು ಪ್ರಾರಂಭ ಮಾಡಿದರು. ಅನೇಕ ಬಾಲಕರು

ಕೂಡಿದರು. ವಿದ್ಯಾಶಿಕ್ಷಣವು ಆರಂಭವಾಯಿತು.

ಇಷ್ಟರಿಂದಲೆ ಅವರ ಮನಸ್ಸು ತೃಪ್ತಿಯಾಗಲಿಲ್ಲ. ತಮ್ಮ ಆತ್ಮಶಿಕ್ಷಣವೂ ಆಗಬೇಕೆಂದು ಆಲೋಚಿಸಿದರು. ಅದಕ್ಕೆ ತಕ್ಕಂತೆ ಅದೇ ಊರಿನಲ್ಲಿ ವೇದಾಂತವಿದ್ಯೆಯಲ್ಲಿ ಬಲ್ಲಿದರಾದ ಸಮಾಳದ ಬಸವಪ್ಪಯ್ಯನವರೆಂಬುವರಿದ್ದರು. ಅವರಲ್ಲಿಗೆ ಹೋಗಿ ತಮ್ಮ ಕೋರಿಕೆಯನ್ನು ಅರಿಕೆ ಮಾಡಿದರು. ಅವರು ಸಂತೋಷದಿಂದ ಒಪ್ಪಿದರು. ಅದರಿಂದಾಗಿ ಅವರಲ್ಲಿ ಕನ್ನಡ ಕಾವ್ಯಗಳನ್ನು, ನಿಜಗುಣರ ಕನ್ನಡ ಷಟ್‌ಶಾಸ್ತ್ರಗಳನ್ನು ನೋಡಲಾರಂಭಿಸಿದರು.

ವೇದಾಂತದ ರುಚಿ ಅವರ ಮನಸ್ಸಿಗೆ ಹಿಡಿಯಿತು. ಸಿದ್ಧಾಂತದ ಅರಿವು ಅವರ ಕಣ್ಣನ್ನು ತೆರೆಯಿಸಿತು. ಇಷ್ಟ-ಪ್ರಾಣ-ಭಾವಲಿಂಗಗಳ ಬಣ್ಣನೆಯ ‘ಕೈವಲ್ಯ ಪದ್ಧತಿಯ ಪದ್ಯಗಳು ಅವರ ಬಾಳನ್ನು ಭಾವರಾಜ್ಯಕ್ಕೇರಿಸಿದವು. ಭಕ್ತಿಪಂಥಕ್ಕೆ ಹಚ್ಚಿತು. ಲಿಂಗಪೂಜೆಯಲ್ಲಿ ಅವರಿಗೆ ಅಮಿತವಾದ ಪ್ರೇಮ ಹುಟ್ಟಿತು. ಒಮ್ಮೊಮ್ಮೆ ಆ ಪೂಜಾ ವೈಭವದಲ್ಲಿ ಆನಂದಪರವಶತೆಯಲ್ಲಿ ಬೆರೆದು ಬಾಹ್ಯವ ಮರೆದು ಶಾಲೆಗೆ ಹೋಗುವುದನ್ನೇ ಮರೆಯುತ್ತಿದ್ದರು, ವೇಳೆಯನ್ನೇ ಮೀರುತ್ತಿದ್ದರು. ನಿಜಗುಣರ ಗ್ರಂಥಗಳ ಅಭ್ಯಾಸದಲ್ಲಿ ಅವರಿಗೆ ದಿನೇ ದಿನೇ ಅಭಿರುಚಿ ಹೆಚ್ಚಿತು. ಆ ಓದಿನ ಮುಂದೆ ಅವರಿಗೆ ಮತ್ತೊಂದು ಬೇಕಾಗದಾಯಿತು. ಇದರಿಂದಾಗಿ ಮೆಲ್ಲಮೆಲ್ಲನೆ ಅವರ ಮನಸ್ಸು ವೈರಾಗ್ಯದ ಒಂದೊಂದೆ ಹಂತಗಳನ್ನು ಏರಹತ್ತಿತು. ಬರಬರುತ್ತ ಸಂಸಾರದ ಕಹಿರಸವು ಅವರ ಅನುಭವಕ್ಕೆ ಬರಹತ್ತಿತು. ದಿನೇ ದಿನೇ ಶರೀರದ ಅಸಾರತೆ ಅಶಾಶ್ವತತೆ ಅವರಿಗೆ ವೇದ್ಯವಾಗತೊಡಗಿತು.

ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

ನಯ-ವಿನಯ ಸಂಪನ್ನನಾದ ವ್ಯಕ್ತಿ ಸಹಜವಾಗಿ ಎಲ್ಲರ ಗಮನ ಸೆಳೆಯುತ್ತಾನೆ. ಜನರ ಪ್ರೀತಿ-ವಿಶ್ವಾಸಗಳಿಗೂ ಪಾತ್ರನಾಗುತ್ತಾನೆ. ಸಮಾಜದಲ್ಲಿ ಸದ್ಗುಣಶೀಲನೆನಿಸಿ ಬಾಳುತ್ತಾನೆ. ಬಾಳು ಬೆಳಗುತ್ತಾನೆ. ವ್ಯಕ್ತಿಯಲ್ಲಿರುವ ಧನ, ಯೌವ್ವನ, ಅಧಿಕಾರ, ವಿದ್ಯೆ ಮೊದಲಾದವುಗಳಿಗೆ ಬೆಲೆ ಬರುವುದು ಆ ವ್ಯಕ್ತಿಯ ನಯ-ವಿನಯ ಹಾಗು ಸರಸ ಸಜ್ಜನಿಕೆಗಳಿಂದ. ಈ ಕಾರಣಕ್ಕಾಗಿಯೇ ‘ವಿದ್ಯಾ ವಿನಯೇನ ಶೋಭತೆ” ಎಂದು ಹೇಳಿರುವುದು.

ದ್ವೇಷಾಸೂಯೆಗಳಿಲ್ಲದ, ಮೋಸ ವಂಚನೆಗಳಿಲ್ಲದ, ಪರಿಶುದ್ಧ ಹೃದಯದ ಸಂಯಮಶೀಲ ವ್ಯಕ್ತಿಗಳಲ್ಲಿ ನಯ-ವಿನಯಗಳು ಮನೆ ಮಾಡಿಕೊಂಡಿರುತ್ತವೆ. ನಯವಿನಯದಿಂದ ಸಜ್ಜನಿಕೆ, ಸಜ್ಜನಿಕೆಯಿಂದ ಮೃದು ವಚನಗಳು ಲಭ್ಯವಾಗುತ್ತವೆ. ಈ ಮೃದು ವಚನಗಳ ಸಕಲ ಜಪತಪಂಗಳು. ಸರ್ವಾರ್ಪಣ ಮನೋಭಾವದಿಂದ ಜನಸೇವೆ ಮಾಡುವ ಮೃದು ವಚನದ ಸದ್ಗುಣಶೀಲರಲ್ಲಿ ವಿನಯಗುಣ ಭಗವಂತನ ಒಲವನ್ನು ಗಳಿಸುವ ಸಾಧನವಾಗಿರುತ್ತದೆ. ಸದುವಿನಯವೇ ಸದಾಶಿವನ ಒಲುಮೆಯಯ್ಯ ಎಂಬ ಬಸವವಾಣಿ ಈ ಮಾತಿಗೊಂದು ನಿದರ್ಶನ.

ವಿದ್ಯಾರ್ಜನೆಯ ಸಂದರ್ಭದಲ್ಲಿ ಸದ್ವಿನಯ ಸದಾಚಾರಗಳು ಅತ್ಯವಶ್ಯವಾಗಿದ್ದರೂ ಆ ವಿದ್ಯೆಯೇ ವ್ಯಕ್ತಿಯನ್ನು ನಯವಿನಯ ಸಂಪನ್ನನಾಗಿಸುತ್ತದೆ.

 ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್

ಪಾತ್ರತ್ವಾತ್ ಧನಮಾಮ್ನೋತಿ ಧನಾದ್ಧರ್ಮಃ ತತಃ ಸುಖಮ್

 ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ಗೌರವಾದರಗಳನ್ನು ಪಡೆದ ವ್ಯಕ್ತಿ ಶ್ರೀಮಂತನಾಗುತ್ತಾನೆ. ತನ್ನಲ್ಲಿರುವ ಧನದಿಂದ ಧರ್ಮಕಾರ್ಯಗಳನ್ನು ನೆರವೇರಿಸುತ್ತ ಸುದೀರ್ಘ ಕಾಲ ಸುಖಿಯಾಗಿ ಬಾಳುತ್ತಾನೆ ಎಂದು ಸುಭಾಷಿತವೊಂದು ಹೇಳುತ್ತದೆ. ಕಾರಣ ಸದಾ ಗರ್ವದಿಂದ ಬೀಗದೆ ನಮ್ರರಾಗಿ ಬಾಗುವುದೇ ವಿಹಿತ.

 ಚೀನ ದೇಶದ ಅತ್ಯಂತ ವೃದ್ಧನಾದ ಸಂತನೊಬ್ಬ ತನ್ನೆಲ್ಲ ಭಕ್ತರನ್ನು ಶಿಷ್ಯರನ್ನು ಕರೆದು ‘ನನ್ನ ಬಾಯಿಯಲ್ಲಿ ಏನಿದೆ? ಎಷ್ಟು ಹಲ್ಲುಗಳಿವೆ? ಹೇಳಿರಿ’ ಎಂದು ಬಾಯಿತೆರೆದು ತೋರಿಸಿದ. ಬಾಯಿಯಲ್ಲಿ ಇಣುಕಿ ನೋಡಿದ ಎಲ್ಲರೂ ‘ಹಲ್ಲುಗಳೆಲ್ಲ ಬಿದ್ದುಹೋಗಿವೆ ಒಂದೂ ಉಳಿದಿಲ್ಲ’ ಎನ್ನುತ್ತಾರೆ. ನಾಲಿಗೆಯಾದರೂ ಇದೆಯಲ್ಲವೇ? ಎಂದು ಸಂತನು ಮರುಪ್ರಶ್ನಿಸುತ್ತಾನೆ. ಎಲ್ಲರೂ ‘ಇದೆ’ ಎನ್ನುತ್ತಾರೆ. ಆಗ ಸಂತನು ‘ನೋಡಿ! ನಾಲಿಗೆಯಾದರೂ ಜನ್ಮದಾರಬ್ದದಿಂದಲೇ ಇದೆ. ಹಲ್ಲುಗಳು ನಂತರ ಬಂದವುಗಳು, ನಂತರ ಹೋಗಬೇಕಾಗಿತ್ತು. ಹಲ್ಲುಗಳೇ ಮೊದಲು ಹೋಗಲು ಕಾರಣವೇನು?’ ಶಿಷ್ಯರೆಲ್ಲರೂ ಕಾರಣವೇನೆಂದು ತಿಳಿಯದೆ ‘ಗೊತ್ತಿಲ್ಲ’ ಎಂದು ಹೇಳಿದರು. ಆಗ ಸಂತನು ನಿಧಾನವಾಗಿ ಇದನ್ನೇ ಹೇಳಲು ನಿಮ್ಮನ್ನೆಲ್ಲ ಕರೆದಿರುವೆ. ನೋಡಿ! ನಾಲಿಗೆ ಈವರೆಗೂ ಇರಲು ಕಾರಣವೆಂದರೆ ಅದರ ಮೃದುತ್ವ ಹಲ್ಲುಗಳು ನಂತರ ಬಂದು ಮೊದಲು ಹೋಗಲು ಕಾರಣ ಅದರ ಕಠಿಣತೆ(ಬಿರುಸುತನ) ಹಾಗು ಕಠಿಣತೆಯ ಬಗ್ಗೆ ಅವುಗಳಿಗಿರುವ ಅಭಿಮಾನವೇ ಕಾರಣ. ಆದ್ದರಿಂದ ನನ್ನ ಪ್ರೀತಿಯ ಶಿಷ್ಯರೇ! ಸುದೀರ್ಘ ಕಾಲ ಬದುಕುವುದಾದರೆ ನಮ್ರರಾಗಿರಿ, ವಿನಯಶಾಲಿಗಳಾಗಿರಿ, ಅಹಂಕಾರ, ಅಭಿಮಾನದಿಂದ ಮುಕ್ತರಾಗಿರಿ ಎಂದು ಉಪದೇಶಿಸುತ್ತಾನೆ.

 ನಯ-ವಿನಯ ನಮ್ಮ ಹೃದಯ ಶ್ರೀಮಂತಿಕೆಯ ಪ್ರತೀಕ. ಅದು ಏತ ತಲೆ ಬಾಗಿದಂತೆ. ಇಕ್ಕುಳ ಕೈ ಮುಗಿದಂತೆ, ಕೃತ್ರಿಮವಾಗಿರದೆ ಗೊನೆಬಿಟ್ಟ ಬಾಳೆಯಂತೆ ನೈಜವಾಗಿರಬೇಕು. ಆಗ ಬದುಕು ಸುಂದರವಾಗುತ್ತದೆ; ಬಂಧುರವಾಗುತ್ತದೆ.

ರಚನೆ: ಪೂಜ್ಯ ಶಿವಬಸವ ದೇವರು ಧಾರವಾಡ

ಶಿವಯೋಗಿ ಕುಮಾರಯೋಗಿ

ಬಂದೆನು ನಿನ್ನಡಿ ಶಿರಬಾಗಿ

ಸಮಾಜಯೋಗಿ ಸಂಜೀವಿನಿಯಾಗಿ || ೧ ||

ಸ್ವಾಮಿ ಸಂಕುಲ ನಿನ್ನಯ ಮಂದಿರ

ಸೇರಿದೆ ನಾನು ಕುಮಾರನ ಹಂದರ

ಮೂಡಿತು ಮನದಿ ಯೋಗದ ಡಂಗುರ

ಆಗಸದಲ್ಲಿ ಕುಮಾರನೇ ಚಂದಿರ || ೨ ||

ಜ್ಯೋತಿಯ ಬೆಳಗುವೆ ನಿನ್ನಯ ಪಾದಕೆ

ಸೇವೆಯ ಮಾಡುವೆ ಬದುಕಿನ ಪುಣ್ಯಕೆ

ತೋರಿಸು ಜ್ಞಾನವ ಅರಿಯದ ಮನಕೆ

ನಿನ್ನಯ ನಾಮವು ನನ್ನಯ ಬಾಳಿಗೆ || ೩ ||

ಶಿವನೇ ನೀನು,  ಬಸವನೇ ನೀನು

ಸಮಾಜ ನೀನು, ಸ್ಮರಣೆಯು ನೀನು

ಭಾಗ್ಯವು ನೀನು ಭಕುತಿಯು ನೀನು

ಧ್ಯಾನವು ನೀನು ಹರಸು ನಮ್ಮನು || ೪ ||

ವರದಿ ನಿರೂಪಕರು.

ಪೂಜ್ಯ ಶಿವಬಸವ ದೇವರು ಧಾರವಾಡ

ಪೂಜ್ಯ ಅಡವೀಶ ದೇವರು ತಾರಿಹಾಳ

ಪೂಜ್ಯ ಆನಂದ ದೇವರು ಹುಣಶ್ಯಾಳ (ಚಿತ್ರಗಳ ಸಂಗ್ರಹ)

 

(ಸುಮಾರು ೪೦ ಸಾಧಕರು ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದವರು ಅನೇಕ ಮಠಗಳಿಗೆ ಉತ್ತರಾಧಿಕಾರಿಗಳಾದವರು, ಹಾಗೂ ಪಟ್ಟಾಧಿಕಾರಿಗಳಾದವರು  ಎಲ್ಲರೂ ಸೇರಿಕೊಂಡು 5 ದಿವಸ ಶಿವಯೋಗ  ಮಂದಿರದಲ್ಲಿ ಇದ್ದುಕೊಂಡು ಗೋಶಾಲೆ ಸ್ವಚ್ಛತೆ ,ಎಲ್ಲ ಗೋಡೆಗಳಿಗೂ ಬಣ್ಣ ಹಚ್ಚುದ ಕೆಲಸ, ನದಿಯ ಪಕ್ಕದಲ್ಲಿರುವ ಸ್ವಚ್ಛತೆ, ಭಸ್ಮ ತಯಾರಿಸುವ ಕಟ್ಟಡದ ಸ್ವಚ್ಛತೆ , ಬಣ್ಣ ಹಚ್ಚುವ ಕೆಲಸ ಜೊತೆಗೆ ಗುರು ಕುಮಾರೇಶ್ವರ ಗದ್ದುಗೆ ಸ್ವಚ್ಛತೆ ಮತ್ತು  ವಾಟರ್ ಫ್ರೆಶರ್‌ ಮಶಿನ್ ಕೊಡುಗೆಯ ಸೇವೆ ಮಾಡಿದ ಯುವ ಯತಿಗಳ ಸೇವೆ ಅನನ್ಯವಾದುದು.

”ಶ್ರೀಕುಮಾರ ತರಂಗಿಣಿ” ಬ್ಲಾಗ್‌ ವರದಿ ರೂಪದಲ್ಲಿ ಪ್ರಕಟಿಸಲು ಹಲವು ಬಾರಿ ಕೇಳಿಕೊಂಡರೂ ಬಹಳ ಸಂಕೋಚಪಟ್ಟುಕೊಂಡ ಯುವಯತಿಗಳ ಪ್ರಚಾರಪ್ರಿಯವಲ್ಲದ ಅನುಪಮ ಸೇವೆ ಮುಂದಿನ ತಲೆಮಾರಿನ ಯುವ ಯತಿಗಳಿಗೆ ದಿಕ್ಸೂಚಿಯಾಗಲೆಂಬ ಒಂದೇ ಒಂದು ಆಶಯದೊಂದಿಗೆ ಒತ್ತಾಯಪೂರ್ವಕ ಈ ವರದಿಯನ್ನು ಸಿದ್ದಪಡಿಸಲಾಗಿದೆ.

ಈ ಸೇವೆಯ ಉದ್ದೇಶವೇನು ಎಂದು ಕೇಳಿದಾಗ ,ಸಾಧಕರ ಈ ಪ್ರಾಮಾಣಿಕ ಮತ್ತು ಪ್ರಾಂಜಲ ಅಂತರಾಳದ ನುಡಿಗಳು ಹೀಗೆ ವ್ಯಕ್ತವಾಗಿವೆ

“ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಸಂಪಾದಕ-”ಶ್ರೀಕುಮಾರ ತರಂಗಿಣಿ” ಬ್ಲಾಗ್‌)

ಸಮಾಜ ಸೇವಾ ದೀಕ್ಷೆ ತೊಟ್ಟಿರುವ ಅಧ್ಯಾತ್ಮ  ಸಾಧಕರಿಗೆ ಒಂದು ಸೇವಾ  ಕಲ್ಪನೆ ಮೂಡಿತು.ಅದು ಎಲ್ಲ ಸಾಧಕರ  ಮನಸ್ಸಿನಲ್ಲಿ  ವಿಚಾರವಾಗಿ ತೋರಿದಾಗ ಅದನ್ನು ಎಲ್ಲ ಮರೀದೇವರುಗಳು ಮನಸಾ ಪೂರ್ವಕವಾಗಿ ಒಪ್ಪಿಕೊಂಡರು. ಆ ಸೇವಾ ತೃಪ್ತಿ ಕಾಯಕವೇ ಪರಮಪೂಜ್ಯ ಶ್ರೀ ಹಾನಗಲ್ಲ ಗುರು ಕುಮಾರೇಶನ ಶಿವಯೋಗ ತಾಣ  ಶಿವಯೋಗ ಮಂದಿರ. ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪ ದಿನಗಳವರೆಗೆ ಸೇವೆ ಮಾಡುವುದಾಗಿ  ನಿರ್ಣಯ ಮಾಡಲಾಯತು.

ಗುರು ಕುಮಾರ ಶಿವಯೋಗಿಗಳು   ಪರಿಸರ ಪ್ರೇಮಿಗಳು ಹಾಗೂ  ಕೃಷಿ ಆಸಕ್ತಿ  ಪ್ರೇರಣಾದಾಯಕರು, ತತ್ ಕಾರಣ ಎಲ್ಲ ಸಾಧಕರು 2022 ರ ಆಷಾಢ ಮಾಸದಲ್ಲಿ  ಶಿವಯೋಗ ಮಂದಿರದಲ್ಲಿ ಸುಮಾರು ಒಂದು ಸಾವಿರ (1000) ಸಸಿ ನೆಡುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು. ಸಸಿಗಳನ್ನ ನೆಟ್ಟೆವು.

ಅದೇ ರೀತಿಯಾಗಿ ಈ ವರ್ಷದ 2023 ರ ಆಷಾಢ ಮಾಸದ ಸೇವಾ ಕೈಂಕರ್ಯ.

ಶ್ರೀ ಶಿವಯೋಗ ಮಂದಿರದಲ್ಲಿ ಶತಮಾನದ ಹಿಂದೆ ಸ್ಥಾಪಿಸಿದ.ಸುಮಾರು 500ಕ್ಕೂ ಹೆಚ್ಚು ದೇಶಿ ಹಸುಗಳನ್ನು  ಪಾಲನೆ ಮಾಡಿರುವ  ಗೋಶಾಲೆ ಅಲ್ಲಿನ ಪ್ರಕೃತಿ  ವೈಭವಕ್ಕೆ ಸಾಕ್ಷಿಯಾಗಿದೆ .

ಆ ಗೋಶಾಲೆ ಸ್ವಚ್ಛಗೊಳಿಸುವುದು ಮೊದಲ ಸೇವಾ ಕಾಯಕವಾಯಿತು. ಜೊತೆಗೆ ಎಲ್ಲ ಗೋಶಾಲೆಗಳ ಗೋಡೆಗಳಿಗೆ ಹಾಗೂ ಕಂಬಗಳಿಗೆ ಬಣ್ಣ ಲೇಪನ ಮಾಡುವ  ಕೆಲಸವನ್ನು ಸ್ವತಃ ಎಲ್ಲ ಸಾಧಕರೇ ಮಾಡಿದರು. ಅದೊಂದು  ಸಾಧಕರ ಆತ್ಮ ತೃಪ್ತಿ ಸೇವೆ ಎಂದಿನಿಸಿತ್ತು.

ಹಸುಗಳಿಂದ ದೊರೆತ ಪವಿತ್ರ ಗೋಮಯದಿಂದ (ಸಗಣಿ)  ತಯಾರಾಗುವ ಶುದ್ಧ ಭಸ್ಮ ತಯಾರಿಕಾ ಕೇಂದ್ರವನ್ನು ನಾವು ಶಿವಯೋಗ ಮಂದಿರದಲ್ಲಿ ನೋಡಬಹುದು. ಆ ಭಸ್ಮ ತಯಾರಿಕ ಕೇಂದ್ರ ಕಟ್ಟಡದ  ಗೋಡೆಗಳಿಗೂ ಬಣ್ಣ ಲೇಪನ ಮಾಡುವ ಸೇವೆ ನಮ್ಮ ಸಾಧಕರಾದ್ದಾಗಿತ್ತು.

ಶಿವಯೋಗ ಮಂದಿರದಲ್ಲಿ ಉಳಿದ ಎಲ್ಲ ಕೆಲಸಗಳನ್ನು ಮಾಡುವುದಾಗಿ ನಿರ್ಣಯಿಸಿದೆವು.

ಸೇವಾ ಕಾರ್ಯಕ್ಕೆ ಬೇಕಾದ ಎಲ್ಲ ಹೊಸ ಸಾಮಗ್ರಿಗಳನ್ನು ಸಾಧಕರು  ನೀಡಿರುವಂತಹ ಹಣದಿಂದ ಕೊಂಡು ತರಲಾಯಿತು.

ಎಲ್ಲ ಸಾಧಕರು ತಮ್ಮ ವಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಒಂದು ವಾರ ಶಿವಯೋಗಮಂದಿರದಲ್ಲಿ ಇದ್ದುಕೊಂಡು ಸೇವೆ ಮಾಡುವುದು ಎಂದು ನಿರ್ಣಯಿಸಿ ಸೇವೆ ಸಲ್ಲಿಸಿದರು.

ಸಾಧಕರ ಸೇವೆಯ ಹಿನ್ನಲೆ

ಹಿಂದಿನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಸೇವೆ ಮಾಡುವುದು ಒಂದು ಪ್ರತಿತಿ ಇದೆ ಸೇವೆ ಎಂದರೆ ಪೂಜಿಸು ಎಂದರ್ಥ ಪೂಜಿಸು ಎಂದರೆ ಗಂಧ ಅಕ್ಷತೆ ದೂಪದೀಪಾರತಿಗಳಿಂದ ಪೂಜಿಸುವದಷ್ಟೇ ಅಲ್ಲ..

ತಂದೆ ತಾಯಿಯನ್ನು ಮಕ್ಕಳಂತೆ ಉಪಚರಿಸುವುದು, ಭಕ್ತಿಯಿಂದ ಗುರು ಸೇವೆ ಮಾಡುವುದು ಮತ್ತು ಮೂಕ ಪ್ರಾಣಿಗಳನ್ನು ಉಪಚರಿಸುವುದು  ಒಂದು ಪುಣ್ಯದ ಕೆಲಸವೇ.

ರಾಮಾಯಣದಲ್ಲಿ ರಾಮನ ಅಜ್ಜ ದಿಲೀಪ ಮಹಾರಾಜನು ಕೂಡ ಗೋಸೇವೆಯನ್ನು ಮಾಡಿ ಸದ್ಗತಿ ಹೊಂದಿದ್ದನ್ನು ನೋಡಬಹುದು. ಸೇವೆ ಮಾಡುವುದು ಎಂದರೆ ಏನನ್ನು ಅಪೇಕ್ಷೆ ಪಡದೆ ನಿಸ್ವಾರ್ಥವಾಗಿ ಉಪಚರಿಸುವುದೇ ಸೇವೆ.ಸೇವೆ  ಮಾಡುವುದರಿಂದ ತನುಮನ ಶುದ್ಧಗೊಳ್ಳುವವು.

ಈ ನಮ್ಮ ಅಂದ ಬದುಕಿಗೆ  ಜ್ಞಾನದ  ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ  ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ  ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.

ಕುಮಾರೇಶ್ವರ ಸೇವೆಯು ಪುಣ್ಯ ಪವಿತ್ರವಾದದ್ದು. ಶ್ರೀ ಶಿವಯೋಗ ಮಂದಿರಕ್ಕೆ ಸುಮಾರು 40  ಸಾಧಕರು ಸೇವೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದರು ಸೇವೆ ಮಾಡಲು ಬಂದಿರುವ ಸಾಧಕರಲ್ಲಿ ಸೇವೆಯ ಉತ್ಸಾಹ, ಸಂತೋಷ  ಎದ್ದು ಕಾಣುತ್ತಿತ್ತು.

ಲಿಂ.ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಕನಸಿನ ಶ್ರೀ ಮದ್ವಿರಶೈವ ಶಿವಯೋಗ ಮಂದಿರ 1909 ರಲ್ಲಿ ನಾಡಿನ ಹಲವು ಮಹಾತ್ಮರ ಸಾಕ್ಷಿ ಸಾನಿಧ್ಯದಲ್ಲಿ ಶಿವಯೋಗಿಗಳ ಅಮೃತ ಹಸ್ತದಿಂದ ಸ್ಥಾಪಿಸಲಾಯಿತು.

ಶಿವಯೋಗ ಮಂದಿರದ ಗೋಶಾಲೆ ಮತ್ತು ಪೂಜ್ಯ ಯಳಂದೂರು ಬಸವಲಿಂಗ ಮಹಾಶಿವಯೋಗಿಗಳ ಗೋಶಾಲೆ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡೆವು,ಗೋವುಗಳನ್ನು ಕಾಳಜಿಯಿಂದ,ಪ್ರೀತಿಯಿಂದ ಮುದ್ದಿಸುವುದು ಸಾಧಕರಾದಂತಹ ನಮಗೆಲ್ಲ ಒಂದು ಸವಿನೆನಪು. ಗೋಶಾಲೆಯ ಗೋವುಗಳು ಮೇಯಲು ಹೊರಗಡೆ ಹೋದಮೇಲೆ ಗೋಶಾಲೆಯಲ್ಲಿರುವಂತಹ ಸಗಣಿಯನ್ನು ಒಂದು ಕಡೆ ಗೂಡಿಸಿ ಅದನ್ನು ಭಸ್ಮ ತಯಾರಿಕಾ ಕೇಂದ್ರಕ್ಕೆ ಕಳಿಸಿಕೊಟ್ಟೆವು ತದನಂತರ ಸಾಧಕರಿಂದ ಕೊಡುಗೆಯಾಗಿ ತೆಗೆದುಕೊಂಡು ಬಂದಿರುವಂತಹ ಸುಮಾರು 48000 ರೂ ವೆಚ್ಚದ ಫ್ರೆಶರ್ ಕ್ಲಿನಿಂಗ ಮಷೀನ್ ಮೂಲಕ ಗಟ್ಟಿಯಾದಂತಹ ಸಗಣಿ ಮತ್ತು ಗೋಶಾಲೆಯನ್ನು ಶುಚಿಗೋಳಸಿ ಔಷದ ಉಪಕರಣಗಳಿಂದ ಗೋಶಾಲೆಯಲ್ಲಿ ಹುಳಗಳು ಆಗದಂತೆ ಗೋಶಾಲೆಯನ್ನು ಶುಚಿ ಗೊಳಿಸಿದೆವು.

  ಕುಮಾರೇಶ್ವರ ಶ್ರೀ ಗದ್ದುಗೆಯ ಗೋಡೆಗಳು ಹಾಗೂ ಸದಾಶಿವ ಮಹಾಸ್ವಾಮಿಗಳ ಗದ್ದುಗೆಯ ಭವನದ ಶಿಲಾಮಂಟಪವನ್ನು ಸ್ವಚ್ಛಗೊಳಿಸಿದೆವು. ಕಲ್ಲುಗಳಿಗೆ ಅಂಟಿಕೊಂಡಿರುವಂತಹ ಕಪ್ಪು ಕಲೆ ಮತ್ತು ಪಾಚಿಯನ್ನು ಸ್ವಚ್ಛಗೊಳಿಸಿದೆವು.

ವಿಶೇಷವಾಗಿ ಎಲ್ಲ ಸಾಧಕರು ತಮ್ಮ ಶ್ರೀ ಮಠಗಳ ಗ್ರಾಮದಿಂದ ಭಕ್ತಜನರನ್ನು ಕರೆದುಕೊಂಡು ಬಂದು ಒಂದು ಪೂರ್ಣ ದಿನದ ಸೇವೆಯನ್ನು ಭಕ್ತರಿಂದ ಸೇವೆ ಸಲ್ಲಿಸಲಾಯಿತು.

ತೋಟಗಳ ಸ್ವಚ್ಛತೆ ನದಿ ದಡದಲ್ಲಿ ಬಿದ್ದಿರುವ ಹೂಳು ತೆಗಿಸುವ ಸೇವೆ,ಗೋಶಾಲೆ ಗೋಡೆಗಳಿಗೆ ಬಣ್ಣ ಲೇಪಿಸುವ ಕೆಲಸ ಇನ್ನಿತರ  ಕೆಲಸಗಳನ್ನ  ಭಕ್ತರು ಶ್ರದ್ಧೆಯಿಂದ, ಭಕ್ತಿಯಿಂದ  ಮಾಡಿದರು.

ಭಕ್ತರ ಒಂದು ದಿನದ ಕುಮಾರೇಶ್ವರ ಸೇವೆಯು ಬಹಳ ಭಕ್ತಿ ಭಾವದಿಂದ ನೆರವೇರಿತು.

ಸೇವಾರ್ಥಿಗಳಿಗೆ  ಶಿವಯೋಗ ಮಂದಿರ ವತಿಯಿಂದ ಭಸ್ಮ ರುದ್ರಾಕ್ಷಿ ಹಾಗೂ ಕುಮಾರೇಶ್ವರ ಭಾವಚಿತ್ರವನ್ನು ಆಶೀರ್ವಾದ ರೂಪದಲ್ಲಿ ನೀಡಲಾಯಿತು.

ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷರಾದ ಹಾವೇರಿಯ ಪೂಜ್ಯ ಸದಾಶಿವ ಸ್ವಾಮಿಗಳವರ ಪರವಾನಿಗೆ ಪಡೆದು ಎಲ್ಲ ಸೇವೆ ಸಲ್ಲಿಸಲಾಯಿತು.

 ಶಿವಯೋಗ ಮಂದಿರದ   ಮಡಿಲಿನಲ್ಲಿ ಬೆಳೆದಂತಹ ನಮಗೆಲ್ಲ ಶ್ರೀ  ಕುಮಾರ ಶಿವಯೋಗಿಗಳ ಶಿವಯೋಗತಾಣದ  ಸೇವೆ ಮಾಡುವುದೇ  ಪುಣ್ಯ.ನಮ್ಮ ಜೀವನವೇ ಧನ್ಯ.

ಕುಮಾರೇಶನ ಸೇವೆ ನಮ್ಮ ಬದುಕಿನುದ್ದಕ್ಕೂ  ಮಾಡಿದರು ಸಾಕೇನಿಸದು.ಕುಮಾರೇಶನ ಸೇವೆ ಅದು ಸಾಮಾಜದ ಸೇವೆ ಅದು ಸ್ವಾಮಿ ಸಂಕುಲದ ಏಳಿಗೆ.ಸಮಾಜ ಸೇವಾ ದೀಕ್ಷಾ ತೊಟ್ಟಿರುವ ನಮಗೆ  ಕುಮಾರೇಶನೆ ದಾರಿ ದೀಪ.

ಶಿವಯೋಗ ಮಂದಿರದಲ್ಲಿ ಪ್ರತಿ ನಿತ್ಯ ಮಾಡುವ ಸೇವಾ ಕಾಯಕದಲ್ಲಿ ಒಂದು ವಾರ ನಾವು ಸೇವಾ ಕಾಯಕಕ್ಕೆ ಸಾಕ್ಷಿ  ಆದೆವು

ಗುರುಮಾರೇಶ್ವರ ವಾಣಿ:

ಸ್ವಾಮಿ ಎಂದರೆ.. ಒಡೆಯನಲ್ಲ ಸಮಾಜದ ನಿಷ್ಠಾವಂತ ಸೇವಕ…

ಇಡೀ ಸಮಾಜಕ್ಕೆ  ಗುರುಕುಮಾರೇಶ್ವರ ಸಮಾಜ ಶಕ್ತಿ

🌹 ಸಾಧಕರ ಸಮಾಜ ಸೇವಾ ಸಂಕಲ್ಪ ಯಾತ್ರ🌹

ಲೇಖಕ: ಶ್ರೀಕಂಠ.ಚೌಕೀಮಠ

ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

೨೦೦೭ರಲ್ಲಿ ನಾನು ಬೆಂಗಳೂರಿನಲ್ಲಿದ್ದಾಗ ಬಸವಣ್ಣನವರ ಕುರಿತು ಒಂದು ವಿವಾದಾತ್ಮಕ ಪುಸ್ತಕ “ಆನುದೇವಾ ಹೊರಗಣದವನು” ಪ್ರಕಟಣೆಯ ವಿರುದ್ದ ಹೋರಾಟದಲ್ಲಿ ಭಾಗಿಯಾಗಿದ್ದೆ. ನಾನು ಬರೆದ ಒಂದು ಲೇಖನ “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಲೇಖನದಲ್ಲಿ ನಾನು ತೋಡಿಕೊಂಡ ಅಳಲು ಮತ್ತು ಬಹಿರಂಗದ ಅಕ್ರೋಶಗಳನ್ನು  ಓದಿದವರೆಲ್ಲ ಆ ಲೇಖನದ ಪರ-ವಿರೋದದ ನಿಲುವು ವ್ಯಕ್ತಪಡಿಸಿ ಪ್ರತಿಕ್ರಿಯಿಸಿದರು .ಆ ಸಂದರ್ಭದಲ್ಲಿ ಬಸವಸಮಿತಿಯ ಕಾರ್ಯಗಳಲ್ಲಿ ಸಕ್ರೀಯರಾಗಿದ್ದ ಶ್ರೀಕಲ್ಯಾಣಶೆಟ್ಟರು ನನಗೆ ದೂರವಾಣಿ ಕರೆಮಾಡಿ ನನ್ನ ಲೇಖನಕ್ಕೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿ ನನ್ನ ಪೂರ್ವಾಪೂರ್ವಗಳನ್ನು ವಿಚಾರಿಸಿದರು.ಮಾತಿನ ಮಧ್ಯದಲ್ಲಿ ನಾನು ಬಾಗಲಕೋಟ ತಾಲೂಕಿನ ಹಳ್ಳೂರು ಗ್ರಾಮದವನು ಎಂದು ಹೇಳಿದಾಗ ಅವರು ತಕ್ಷಣ ಗುರುಲಿಂಗಯ್ಯಾ ಚೌಕೀಮಠ ನಿಮಗೇನಾಬೇಕು ಅಂದರು.ಆಶ್ಚರ್ಯಗೊಂಡೆ, ನಾನು ಅವರ ಮಗ ಎಂದು ಹೇಳಿದಕೂಡಲೇ ಬಹಳ ಸಂತೋಷಪಟ್ಟರು ಅವರಿಬ್ಬರೂ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದವರು ಮತ್ತು ಇಬ್ಬರೂ ಹಾಕಿ ಮತ್ತು ಫೂಟ್ಬಾಲ್‌ ಕ್ರೀಡೆಗಳನ್ನು ಕೂಡಿ ಆಡಿದವರಾಗಿದ್ದರು. ಅವರಿಬ್ಬರ ನಡುವೆ ದೂರವಾಣಿ ಸಂಪರ್ಕವನ್ನು ಮಾಡಿಕೊಟ್ಟಾಗ ತಾಸಿಗೂ ಹೆಚ್ಚು ಮಾತನಾಡಿಕೊಂಡಿದ್ದು ಮತ್ತು ಅವರೀರ್ವರ ಬಾಲ್ಯ ಜೀವನವನ್ನು ಮೆಲಕು ಹಾಕಿದ್ದು ನನ್ನ ಕಣ್ಣೆದುರು ಈಗಲೂ ಹಚ್ಚ ಹಸಿರಾಗಿದೆ.

ಈ ಪರಿಚಯದ ನಂತರ ಶ್ರೀಕಲ್ಯಾಣಶೆಟ್ಟರು ನನಗೆ ಬಹಳ ಆತ್ಮೀಯರಾದರು ಮತ್ತು ನಾನು ಕಂಡಾಗಲೆಲ್ಲ ನನ್ನನ್ನು ಅತ್ಯಂತ ಅಂತಃಕರುಣದಿಂದ ಮತ್ತು ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದ ಎದರು ಅವ್ಯಾಹತವಾಗಿ ವಿವಾದಿತ ಪುಸ್ತಕದ ವಿರುದ್ಧದ ಪ್ರತಿಭಟನೆಯಲ್ಲಿ ಯಾವಾಗಲೂ ತಮ್ಮ ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದರು.ಒಂದು ದಿನ ನನ್ನನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ವಿವಾದಿತ ಪುಸ್ತಕ ಕುರಿತಾದ ಚರ್ಚೆಗೆ ಕರೆದೊಯ್ದಿದ್ದರು. ಆ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕ.ಸಾ.ಪ ಅಂದಿನ ಅಧ್ಯಕ್ಷರೂ ಹಾಗು ಬಂಡಾಯ ಸಾಹಿತಿಗಳಾದ ಶ್ರೀ.ಚಂಪಾ (ಡಾ. ಚಂದ್ರಶೇಖರ ಪಾಟೀಲ) ಅವರು ಮಾತಿನಮಧ್ಯದಲ್ಲಿ ನಾನು ಬರೆದ ವಿಜಯಕರ್ನಾಟಕ ಪತ್ರಿಕೆಯ ಲೇಖನವನ್ನು ಉಲ್ಲೇಖಿಸಿ ಟೀಕೆಮಾಡಿದರು, ಯಾವನೋ ಒಬ್ಬ ಒಂದು ಲೇಖನ ಬರೆದು ಪತ್ರಿಕೆಯಲ್ಲಿ ಬರೆದರೆ ಅದನ್ನು ಸಮಾಜದ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವದಿಲ್ಲ.ಅಂತಹ ಲೇಖನಗಳನ್ನು ಕಸದತೊಟ್ಟಿಗೆ ಬೀಸಾಕಬೇಕು ಎಂದು ವೀರಾವೇಷದಿಂದ ಮಾತನಾಡತೊಡಗಿದರು. ಶ್ರೀಕಲ್ಯಾಣಶೆಟ್ಟರು ತಕ್ಷಣ ಎದ್ದು ನಿಂತು ಚಂಪಾ ಮಾತಿಗೆ ಪ್ರತಿರೋಧವ್ಯಕ್ತಪಡಿಸಿ “ಆ ಲೇಖನಾ ಬರದ ಹುಡುಗ ನನ್ನ ಜೊತಿ ಕುಂತಾನ,ಚರ್ಚೆ ಮಾಡೂದಿದ್ರ ಆರೋಗ್ಯಪೂರ್ಣ ಚರ್ಚಾ ಮಾಡ್ರಿ,ಇಲ್ಲದಿದ್ರ ನಿಲ್ಲಿಸಿರಿ” ಅಂದರು ಅವರು ಹಾಗೆ ಅಂದದ್ದೇ ತಡ ಚರ್ಚೆಯಲ್ಲಿ ಭಾಗವಹಿಸಿದ ಬಸವದಳದ ಶ್ರೀ ದಯಾನಂದಸ್ವಾಮಿಗಳು ವೇದಿಕೆಯತ್ತ ನುಗ್ಗಿ ಕಾಗದಗಳನ್ನು ಹರಿದು ಚಂಪಾ ಅವರ ಮೇಲೆ ತೂರಿ ಪ್ರತಿಭಟಿಸಿದರು.ಸಭೆ ನಿಂತು ಗದ್ದಲ ಶುರುವಾಯಿತು. ತಳ್ಳಾಟ ಮತ್ತು ನೂಕಾಟಗಳ ಸುದ್ದಿತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಚಾಮರಾಜಪೇಟೆಯ ಪೋಲಿಸರು ಗದ್ದಲ ನಿಲ್ಲಿಸಲು ಕ್ರಮಕೈಗೊಂಡರು.ನಿವೃತ್‌ ಪೋಲಿಸ್‌ ವರಿಷ್ಠಾಧಿಕಾರಿಗಳಾಗಿದ್ದ ಶ್ರೀಕಲ್ಯಾಣಶೆಟ್ಟರು ಪೋಲಿಸ್‌ ಜೀಪಿನಲ್ಲಿ ನನ್ನನ್ನು ವಸಂತನಗರದ ತಮ್ಮ ಮನೆಗೆ ಕರೆದೊಯ್ದರು.

ಅನೀರಿಕ್ಷಿತ ಗದ್ದಲಕ್ಕೆ ನಾನು ಬಳಲಿಕೊಂಡಿದ್ದೆ, ಶ್ರೀಕಲ್ಯಾಣಶೆಟ್ಟರು ನನಗೆ ಧೈರ್ಯತುಂಬಿ ಮುಖ ತೊಳಿಸಿ ವಿಭೂತಿ ಹಚ್ಚಿಕೊಳ್ಳಲು ನನ್ನನ್ನು ತಮ್ಮ ದೇವರಕೋಣೆಗೆ ಕರೆದೊಯ್ದರು. ದೇವರಕೋಣೆಯಲ್ಲಿ  ಅವರು ನಿತ್ಯಪೂಜಿಸುತ್ತಿದ್ದ ನನ್ನ ಆರಾಧ್ಯದೈವ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ ನನ್ನ ಗಮನ ಸೆಳೆಯಿತು.ಅಲ್ಲಿಯವರೆಗೆ ನಾನು ನೋಡಿದ ಗುರುಗಳ ಚಿತ್ರಗಳು ವಿವಿದ ಕಲಾವಿದರು ಚಿತ್ರಿಸಿದ ಚಿತ್ರಗಳಾಗಿದ್ದವು.ಆದರೆ ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಗುರುಗಳ ಭಾವಚಿತ್ರ ವಿಭಿನ್ನವಾಗಿತ್ತು ಮತ್ತು ನೈಜವಾಗಿತ್ತು.ನೋಡಿದಷ್ಟೂ ಮತ್ತೆ ನೋಡಿಸಿಕೊಳ್ಳುವ ಚಿತ್ರವನ್ನು ಕಣ್ತುಂಬಿಸಿಕೊಂಡು ಚಿತ್ರದ ವಿಶೇಷತೆಯ ಕುರಿತು ಶ್ರೀಕಲ್ಯಾಣಶೆಟ್ಟರಲ್ಲಿ ಪ್ರಶ್ನಿಸಿದೆ.

(ಶ್ರೀಕಲ್ಯಾಣಶೆಟ್ಟರು ನಿತ್ಯ ಪೂಜಿಸುತ್ತಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಅಪರೂಪದ ಚಿತ್ರ)

 ಅಲ್ಲಿಯವರೆಗೆ ಆತಂಕಕ್ಕೆ ಒಳಗಾಗಿದ್ದ ನನ್ನನ್ನು ಸಂತೈಸಿದ್ದ ಶ್ರೀಕಲ್ಯಾಣಶೆಟ್ಟರು ನನ್ನ ಪ್ರಶ್ನೆಗೆ ಭಾವೊದ್ವೇಗಕ್ಕೊಳಗಾದರು.ಅವರ ಕಣ್ಣಂಚುಗಳು ಮಿಂಚತೊಡಗಿದವು. “೧೯೨೭ ರಲ್ಲಿ ನಾನು ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ನನ್ನನ್ನು ನನ್ನ ತಂದೆ ಶ್ರೀ ಸಿದ್ದರಾಮಪ್ಪ ಮಮದಾಪೂರ ಅವರು ನನ್ನೂರು ಬದಾಮಿಯ ಶಾಖಾ ಶಿವಯೋಗಮಂದಿರಕ್ಕೆ ದಯಮಾಡಿಸಿದ್ದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರಂತೆ, ಹಸುಗೂಸು ನನ್ನನ್ನು ಪೂಜ್ಯ ಕುಮಾರ ಶಿವಯೋಗಿಗಳು ಎತ್ತಿಕೊಂಡು ಅವರ ಲಿಂಗದಹಸ್ತವನ್ನು ನನ್ನ ಮಸ್ತಕದ ಮೇಲಿಟ್ಟು ಆಶಿರ್ವದಿಸಿದ್ದನ್ನು ನನ್ನ ತಂದೆ ಯಾವಗಲೂ ಹೇಳುತ್ತಿದ್ದರು” ಎಂದು ಹೇಳುತ್ತ ತಮ್ಮ ಎರಡೂ ಕೈಗಳನ್ನು ಕೂಡಿಸಿ ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು. ಕೈಮುಗಿದ ಅವರ ಎರಡೂ ಹಸ್ತಗಳನ್ನು ನನ್ನ ಹಣೆಗೆ ಹಚ್ಚಿಕೊಂಡೆ !. ಕಾರುಣಿಕ ಯುಗಪುರುಷ,ಸಮಾಜ ಸಂಜೀವಿನಿಯಾದ,ವಿಭೂತಿಪುರುಷರ ಪರುಷಹಸ್ತದ ಸ್ಪರ್ಷಆಶೀರ್ವಾದದವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರು ಭಾಗ್ಯಶಾಲಿಗಳೂ,ಪುಣ್ಯವಂತರೂ ಆಗಿದ್ದರು.

ದೆಹಲಿಯ ನಿವೃತ್‌ ಹಿರಿಯ ಕಮಾಂಡ್ಯಂಟ.(ಸಿ.ಆರ್.ಪಿ.ಎಫ್.)‌ , ಮಾಜಿ ಗ್ರುಪ್‌ ಕಮಾಂಡರ್.ಎನ್.ಎಸ್.ಜಿ.(ಬ್ಲ್ಯಾಕ್‌ ಕ್ಯಾಟ್ಸ) ಹಾಗು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತ್ವರಿತ ನ್ಯಾಯಾಲಯದ ನಿವೃತ್‌ ನಾಯಾಧೀಶರಾದ

ಶ್ರೀ.ಬಿ,ಎಸ್.ಕಲ್ಲೂರ ಅವರು ವರ್ಣಿಸಿದಂತೆ “ಶ್ರೀಕಲ್ಯಾಣಶೆಟ್ಟರದು ಕಟ್ಟುಮಸ್ತಾದ ಶರೀರದ ಆಕರ್ಷಕ ವ್ಯಕಿತ್ವವುಳ್ಳವರಾಗಿದ್ದವರು ೧೯೫೦ರ ದಶಕದಲ್ಲಿ ಅವರ ತಂದೆಯವರಾದ ಶ್ರೀ ಎಸ್.ಜಿ.ಕಲ್ಲೂರ ಅವರು ಬೆಳಗಾವಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡ್ ಆಗಿದ್ದ ಸಂಧರ್ಭದಲ್ಲಿ ಬಾಂಬೆ ಪೋಲಿಸ್‌ ಇಲಾಖೆಯಲ್ಲಿ ಸಬ್‌ ಇನೆಸ್ಪೆಕ್ಟರ್‌ ಆಗಿದ್ದ ಶ್ರೀಕಲ್ಯಾಣಶೆಟ್ಟರು,ಶ್ರೀ ನಾಗನೂರ ಮತ್ತು ಶ್ರೀ ಹಸಬಿಯವರು ಶ್ರೀ.ಬಿ,ಎಸ್.ಕಲ್ಲೂರ ಅವರ ಮನೆಗೆ ಬರುತ್ತಿದ್ದರಂತೆ ಶ್ರೀ ಕಲ್ಲೂರ ಅವರು ಶ್ರೀಕಲ್ಯಾಣಶೆಟ್ಟರನ್ನು “ಕಾಕಾ” ಎಂದು ಸಂಬೋಧಿಸುತ್ತಿದ್ದನ್ನು,ಹಾಗು ಶ್ರೀಕಲ್ಯಾಣಶೆಟ್ಟರು ಕಲ್ಲೂರು ಅವರಿಗೆ ವ್ಯಾಯಾಮಗಳ ಬಗ್ಗೆ ಸಲಹೆ ಕೊಡುತ್ತಿದ್ದನ್ನು ಶ್ರೀ ಕಲ್ಲೂರು ಅವರು ತುಂಬ ಆತ್ಮೀಯವಾಗಿ  ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಶ್ರೀಕಲ್ಯಾಣಶೆಟ್ಟರು ಧರಿಸುತ್ತಿದ್ದ ಪೋಲಿಸ್‌ ಹ್ಯಾಟ್‌ ಆಕರ್ಷಕವಾಗಿಯೂ ಮತ್ತು ಬೇರೆಯವರಿಗಿಂತ ಭಿನ್ನವಾಗಿಯೂ ಇರುತ್ತಿತ್ತು ಎಂದು ಜ್ಷಾಪಿಸಿಕೊಳ್ಳುತ್ತಾರೆ.

ರಾಷ್ರಪತಿಗಳ ಶೌರ್ಯ ಪ್ರಶಸ್ತಿ ಪಡೆದಿದ್ದ ಶ್ರೀಕಲ್ಯಾಣಶೆಟ್ಟರು ಬಾಂಬೆ ಪೋಲಿಸ್‌ ಇಲಾಖೆ,ಮೈಸೂರು ಪೋಲಿಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಪೊಲೀಸ್ ತರಬೇತಿ ಕೇಂದ್ರ ಕೆ.ಎಸ್.ಪಿ.ಟಿ.ಎಸ್, ಚನ್ನಪಟ್ಟಣದ ಪ್ರಾಂಶುಪಾಲರಾಗಿ,ಆಯ್.ಪಿ.ಎಸ್.‌ ಭಡ್ತಿ ಪಡೆದು ಬೆಂಗಳೂರು ಗ್ರಾಮೀಣ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿಗಳಾಗಿ ೧೯೮೫ ರಲ್ಲಿ ನಿವೃತ್ತಿ ಹೊಂದಿದರು.

ಕರ್ನಾಟಕದ ರಾಜ್ಯ ಸರಕಾರದ  ದಕ್ಷ ಆದಿಕಾರಿಗಳಾಗಿ ಸೇವೆಸಲ್ಲಿಸಿದ ನಂತರ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಶ್ರೀಕಲ್ಯಾಣಶೆಟ್ಟರು ೯೬ ವರ್ಷಗಳ ತುಂಬು ಜೀವನ ನಡೆಸಿ ೦೧ ಮಾರ್ಚ ೨೦೨೩ ರಂದು ಲಿಂಗೈಕ್ಯರಾಗುವ ಸಂಧರ್ಭವನ್ನು ನೆನಪಿಸಿಕೊಂಡ ಅವರ ಪುತ್ರ ಶ್ರೀ ಅಶೋಕ ಅವರು ಹೇಳಿದ್ದು ವಿಶೇಷ ವಾಗಿತ್ತು.

ಶ್ರೀಕಲ್ಯಾಣಶೆಟ್ಟರ ಧರ್ಮಪತ್ನಿಯವರು ಫೆ.೨೮, ೨೦೨೩ರಂದು ಲಿಂಗದೊಳಗಾದರಂತೆ ,ಅವರ ಅಂತ್ಯಕ್ರಿಯೆ ಸಂಧರ್ಭದಲ್ಲಿ ಶ್ರೀಕಲ್ಯಾಣಶೆಟ್ಟರು ನಿರ್ಲಿಪ್ತ ಭಾವವನ್ನು ಹೊಂದಿದ್ದರಂತೆ, “ಹೋದರಾ ?” ಎಂಬ ಒಂದೇ ಒಂದು ವಾಕ್ಯವನ್ನು ಹೇಳಿ ತಮ್ಮ ದೈನಿಂದಿನ ಚಟುವಟಿಕೆಯಲ್ಲಿದ್ದು ದಿ.೦೧ ಮಾರ್ಚ ೨೦೨೩ ರಂದು ಪುಣ್ಯದ ಸಾವನ್ನು ಪಡೆದುಕೊಂಡ ಶ್ರೀಕಲ್ಯಾಣಶೆಟ್ಟರನ್ನು ನಾನು ಕೊನೆಯದಾಗಿ ಮಾತನಾಡಿಸಿದ್ದು ೨೦೨೨ ಅಗಸ್ಟ ತಿಂಗಳಲ್ಲಿ. ನಾನು ಅವರನ್ನು ಭೇಟಿಯಾಗಬೇಕಿತ್ತು, ಆಗಲಿಲ್ಲ.

ಶ್ರೀಕಲ್ಯಾಣಶೆಟ್ಟರ ವಿವಾಹ ವಾರ್ಷಿಕೋತ್ಸವದ ವಜ್ರ ಮಹೋತ್ಸವದ ಚಿತ್ರ

“ ಅವರ ಧರ್ಮಪತ್ನಿಯ ಅಗಲಿಕೆಯಿಂದ ಸರ್‌ ಅವರು  ಮಾನಸಿಕವಾಗಿ ನೊಂದುಕೊಂಡಿದ್ದರೇ ?” ಎಂದು ಕೇಳಿದೆ.        ಶ್ರೀ ಅಶೋಕ ಅವರು ತುಂಬ ಮಾರ್ಮಿಕವಾದ ಉತ್ತರ ಕೊಟ್ಟರು “ ಧೀರ್ಘ ಇನ್ನಿಂಗ್ಸ ಆಡಿದ ಆಟಗಾರರಲ್ಲೊಬ್ಬ ಔಟಾದಾಗ, ಜೊತೆಯಾಟಗಾರನೂ ಫೆವಿಲಿಯನ್ನಗೆ ಹೋದಂತೆ “ , “ ನಮ್ಮ ತಂದೆ ಎಂದೂ ಮಾನಸಿಕವಾಗಿ ಕುಗ್ಗಿದವರಲ್ಲ ಅಂತಿಮ ಕ್ಷಣದವರೆಗೂ ಸದೃಡವಾಗಿದ್ದವರು” ಈ ಮಾತುಗಳನ್ನು ಕೇಳುತ್ತ ಆಕರ್ಷಕ ತೇಜಸ್ಸಿನಿಂದ ಕೂಡಿದ ಮಂದಸ್ಮಿತ ಅಂತಃಕರಣದ ಶ್ರೀಕಲ್ಯಾಣಶೆಟ್ಟರ ವ್ಯಕ್ತಿತ್ವ ಜೊತೆಗೆ  ಅಂದು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಆ ಹಸ್ತಗಳು ನನ್ನ ಕಣ್ಣೆದರು ಬಂದುನಿಂತವು.

ನಮ್ಮ ಸಂಬಂಧಗಳು, ಪೂರ್ವಜನ್ಮದ ಸಂಬಂಧಗಳೆಂಬ ಭಾವನೆ ನನ್ನಲ್ಲಿ ಮೂಡಿತು.