ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಶ್ರೀಗುರುವಿನ ನಗುವಿಗೆ ಕಾರಣವನ್ನು ಮಾನವನು ಮೂಢನಾಗುವ ಪರಿಯನ್ನು ಶಿವಕವಿಯು ಇನ್ನು ಮುಂದೆ ನಿರೂಪಿಸುತ್ತಾನೆ. ಕಾಲ-ಕರ್ಮ ಮಾಯೆಗಳ ಬಲೆಯಲ್ಲಿ ಜೀವಾತ್ಮನು ಹೇಗೆ ತತ್ತರಿಸುತ್ತಾನೆಂಬ ವಿಚಾರವನ್ನು ಕ್ರಮೇಣ ನೋಡಿ.

ನಡುಮಧ್ಯ ಮಾವುತನು | ಎಡಬಲದೆ ಆನೆಗಳು

ಒಡಗೂಡೆ ನೋಡಿ-ಎಡರು ಕಂಟಕ ಲಿಪಿಯ

ತೊಡೆಯಯ್ಯ ಗುರುವೆ ಕೃಪೆಯಾಗು

|| ೪೧ ||

ಸಂಸಾರಹೇಯ ಸ್ಥಲವನ್ನು ನಿರೂಪಿಸುವಾಗ ಹಿಂದಿನ ಅನುಭಾವಿಗಳು ಬೆಡಗಿನ ಮಾತುಗಳಲ್ಲಿ ಬೋಧಿಸುತ್ತ ಬಂದಿರುವರು. ಶರಣರ ವಚನಗಳಲ್ಲಿ ಬೆಡಗಿನ ವಚನಗಳು ಧಾರಾಳವಾಗಿ ಸಿಕ್ಕುತ್ತವೆ. ದಾಸರೂ ಈ ಮಾತನ್ನು ಅನುಸರಿಸದೇ ಬಿಟ್ಟಿಲ್ಲ. ಕನಕದಾಸರ ಮುಂಡಿಗೆಯೆಂದು ಪ್ರಸಿದ್ಧವಾಗಿದೆ. ನಮ್ಮ ಶಿವಕವಿಗಳೂ ಕಾಲ-ಕಾಮ-ಮಾಯೆ ಜಗದುತ್ಪತ್ತಿಯ ಪರಿಯನ್ನು ವಿವರಿಸುವಲ್ಲಿ ಬೆಡಗಿನ ಮಾತನ್ನೇ ಅನುಸರಿಸಿದ್ದಾರೆ. ಬೆಡಗಿನ ವಚನಗಳು ಸಾಧಕನಿಗೆ ಹೆಚ್ಚಿನ ಶ್ರಮವನ್ನು ಹಚ್ಚುತ್ತವೆ. ಅಲ್ಲದೇ ಹೆಚ್ಚು ಶ್ರಮವಹಿಸಿ ಮಾಡಿದ ಅಧ್ಯಯನ ಮನದಟ್ಟಾಗುತ್ತದೆ. ಮತ್ತು ವಿಷಯ ಗ್ರಹಿಕೆಯಾದ ಮೇಲೆ ಮರಹು ಆವರಿಸುವದಿಲ್ಲ. ಮಾಯಾ ಮೋಹಗಳು ಮಾನವನನ್ನು ಅತಿಯಾಗಿ ಆವರಿಸುವದರಿಂದ ಬೆಡಗಿನ ವಚನಗಳ ಪಾತ್ರ ಹಿರಿದಾಗಿ ಕೆಲಸ ಮಾಡುತ್ತದೆ. ಮತ್ತು ಗೌಪ್ಯವಾದ ಆಧ್ಯಾತ್ಮ ಶಾಸ್ತ್ರದ ಘನತೆಯನ್ನು ವ್ಯಕ್ತ ಮಾಡುವಲ್ಲಿಯೂ ಬೆಡಗಿನ ವಚನಗಳು ಬೆರಗುಗೊಳಿಸಿವೆ.

ಮಾನವ ಜೀವನದಲ್ಲಿ ಸಾಂಸಾರಿಕ ವಿಷಯಗಳು ಅನಿತ್ಯವಾಗಬಹುದು. ಆದರೆ ನಿತ್ಯ-ಸತ್ಯವಾಗಿ ಬರುವದು ಮರಣ ಮಾತ್ರ. ಮರಣದ ಭಯ ಬಹಳ. ಅದಕ್ಕಾಗಿ ಶರಣ ಕವಿಗಳು ಮರಣದ ಅಧಿದೇವತೆಯಾದ ಯಮನ ವಿಷಯವನ್ನು ಪ್ರಥಮತಃ ಪ್ರತಿಪಾದಿಸಿದ್ದಾರೆ.

ಆನೆ ನಡೆಸುವ ಮಾವುತನು ಒಂದಾನೆಯನ್ನು ತನ್ನ ವಶವರ್ತಿಯನ್ನಾಗಿ ಇರಿಸ ಬಹುದು. ತಾನೊಬ್ಬನಾಗಿ ಬಹಳ ಆನೆಗಳು ಸುತ್ತುವರಿದಾಗ ಮಾವುತನ ಗತಿ ದೇವರೇ ಬಲ್ಲ. ಸಿಟ್ಟಿಗೆದ್ದ ಮದಗಜವು ಸಿಕ್ಕವನನ್ನು ತುಳಿದು ಸೀಳಿ ಹಾಕುತ್ತದೆ. ಘೀಳಿಡುವ ಆನೆಗಳ ಮಧ್ಯದಲ್ಲಿ ಸಿಕ್ಕ ಮಾವುತನಾದರೂ ಮರಣವನ್ನಪ್ಪಬೇಕಾದೀತು. ಅವನು ತನ್ನ ಎಡಬಲದ ಆನೆಗಳು ಒಡಗೂಡು (ಒಂದುಗೂಡು) ವದನ್ನು ದೂರೀಕರಿಸುತ್ತ ತನ್ನ ಆನೆಯಿಂದಲೇ ಪಾರಾಗಬೇಕು. ಮದವೇರಿದ ಆನೆಗಳನ್ನು ಪಳಗಿಸಬಲ್ಲ ಮಾವುತನೇ ಜಾಣ್ಮೆಯಿಂದ ಎಡರು-ಕಂಟಕಗಳನ್ನು ಪರಿಹರಿಸಿಕೊಳ್ಳಬಲ್ಲನು.

ಒಳಬಾಳಿನಲ್ಲಿ ಹಮ್ಮಿನ ಜೀವಾತ್ಮನೆಂಬ ಮಾವುತನು ಅಷ್ಟಮದಗಜಗಳಿಂದ ಪಾರಾಗುವದು ಸುಲಭ ಸಾಧ್ಯವಲ್ಲ. ಇದು ಗುರುಕೃಪೆಯಿಂದ ಮಾತ್ರ ಪರಿಹಾರ ವಾಗಬಹುದು. ಕುಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ಭಾರ್ಯಾಮದ, ಅಧಿಕಾರಮದ, ಹಾಗೂ ರಾಜ್ಯಮದಗಳೆಂಬ ಎಂಟು ಅಹಂಕಾರಗಳೇ ಅಷ್ಟಗಜಗಳೆನಿಸುವವು. ಆನೆಗೆ ಮದಬಂದರೆ ಹಿಡಿಯಲುಬಾರದು. ಅಹಂಕಾರ ರೂಪ ಆನೆಯು ಮದೋನ್ಮತ್ತವಾದರೆ ಹೇಳುವದೇನು ? ಎಡರು ಕಂಟಕಗಳು ಕೈಯಲ್ಲೇ ಇರುವವು. ಕಾಲ(ಯಮ)ನೆಂಬ ಕಂಟಕ ತೀವ್ರವಾಗಿ ಆವರಿಸುವನು. ಅಹಂಕಾರಿಯು ಯಮಪಾಶದಲ್ಲಿ ಸಿಕ್ಕು ರೌರವ ನರಕದಲ್ಲಿ ಕೊಳೆಯಬೇಕಾಗುವದು. ಈ ಕಾಲ ಕಂಟಕನ ಎಡರು-ಕಂಟಕ ಲಿಪಿಯನ್ನು ಕಳೆಯಬಲ್ಲವನು ಗುರುನಾಥ ನೊಬ್ಬನೇ. ಅವನೇ ಸಮರ್ಥ. ಅಂಥ ಸದ್ಗುರುವಿನಲ್ಲಿ ಶರಣಾಗತನಾಗಬೇಕು.

ನಾರಾಯಣನೆಂಬ ಹಿಂದೀ ಕವಿಯು ಜೀವನದಲ್ಲಿ ಮರೆಯದ ಎರಡು ಮಾತುಗಳನ್ನು ಹೇಳಿದ್ದಾನೆ. ಕೇಳಿ-

“ದೋ ಬಾತನ ಕೊ ಭೂಲ ಮತ, ಜೋ ಚಾಹೈ ಕಲ್ಯಾಣ |

ನಾರಾಯಣ ಇಕ ಮೌತ ದೂಜೇ ಶ್ರೀಭಗವಾನ ||”

ಕಲ್ಯಾಣವನ್ನು ಬಯಸುವ ಮಾನವನು ಈ ಎರಡು ಮಾತುಗಳನ್ನೆಂದೂ ಮರೆಯಕೂಡದು. ಒಂದನೆಯದು ಮರಣ, ಎರಡನೆಯದು ಮಹಾದೇವ. ಹುಟ್ಟಿದವನು ಮರಣವನ್ನಪ್ಪಲೇ ಬೇಕಾಗುವದು. ಜೈಮಿನಿಯು ತನ್ನ ಭಾರತ ಕಾವ್ಯದಲ್ಲಿ- ”ಮನುಜರ್ಗೆ ಮರಣಂ ಎಂದಿರ್ದೊಡಂ ತಪ್ಪದು” ಎಂದಿದ್ದಾನೆ. ಇದು ಕಾಲ ಚಕ್ರದ ನಿಯಮ. ಇದನ್ನು ಅರಿಯಲೇ ಬೇಕಾಗುವದು. ಮಾನವನು ನಾನು ನಿಶ್ಚಿತವಾಗಿ ಸಾಯುತ್ತೇನೆಂಬುದನ್ನು ಮರೆತು, ಇಳೆ-ಬೆಳೆ-ಮಳೆಗಳನ್ನಿತ್ತ ಮಹಾದೇವ ನನ್ನು ಮರೆತು ಎಲ್ಲವೂ ನಾನೇ, ನನ್ನಿಂದಲೇ ಎಲ್ಲ ನಡೆಯಬಲ್ಲುದು. ನಾನೇ ಎಲ್ಲವನ್ನು ಮಾಡುತ್ತೇನೆಂಬ ಅಹಂಕಾರದಿಂದ ಮುಂದುವರೆಯುತ್ತಾನೆ. ಸೊಕ್ಕಿದ ಆನೆಯು ವನಮಧ್ಯದ ಮರವನ್ನು ಕಿತ್ತಿಹಾಕುವಂತೆ, ಈ ಅತಿಯಾದ ಅಹಂಕಾರವು ಮಾನವನನ್ನು ಮುಗಿಸಿಬಿಡುತ್ತದೆ. ಬರುವಾಗ ಏನೂ ತರಲಿಲ್ಲ. ಹೋಗುವಾಗ ಏನೂ ಒಯ್ಯದೇ ಮರಳಬೇಕಾಗುವದು. ಕಾರಣ, ಮರಣ ಸನ್ನಿಹಿತವಾಗಿದೆಯೆಂದು ಸತ್ಕರ್ಮಗಳನ್ನು ತಪ್ಪದೇ ಮಾಡಬೇಕು. ಸದ್ಗುರುನಾಥನನ್ನು ಮೊರೆಹೊಕ್ಕು ಮಹಾ ದೇವನನ್ನು ಅರಿಯಬೇಕು.

ಗುರುವೆ ! ನಿನ್ನ ಕರುಣಾಮೃತ ಸಿಂಚನದಿಂದ ಜೀವಾತ್ಮನಾದ ನನ್ನ ಅಹಂಕಾರ ವನ್ನು ಕಳೆದು ಅದರಿಂದ ಬರುತ್ತಿದ್ದ ಎರಡು-ಕಂಟಕಗಳನ್ನು ತೊಡೆದು ಹಾಕು. ಬಾಗಿದ ಬೆತ್ತ ಪೂಜ್ಯರಿಗೆ ದಂಡಿಗೆಯಾಗುವಂತೆ ಮದವನ್ನು ಕಳೆದು ನಿನ್ನ ಪಾದತೊಡುಗೆಯನ್ನಾಗಿಸು. ಈ ಅಹಂಕಾರ ನಿರ್ಮೂಲವಾದಲ್ಲದೆ ಶರಣ ಮಾರ್ಗವು ಸಿಕ್ಕಲಾರದು. ಕರುಣಿಸು ನಿಮ್ಮ ಧರ್ಮ.

ದಾಕ್ಷಿಣ್ಯ ಪುರವರ್ಗ | ಮೋಕ್ಷಹೀನಾಚಾರ್ಯ

ಶಿಕ್ಷೆಗೊಳಗಾಗಿ ಈ ಕ್ಷಿತಿಗೆ ಬಂದನೈ

ಈ ಕ್ಷಣದಿ ಗುರುವೆ ಕೃಪೆಯಾಗು

|| ೪೨ ||

ತಾರಕಾಕ್ಷ, ಮಕರಾಕ್ಷ, ವಿದ್ಯುನ್ಮಾಲರೆಂಬ ರಾಕ್ಷಸರು; ಲೋಹ, ಬೆಳ್ಳಿ, ಬಂಗಾರದ ಮೂರು ಪಟ್ಟಣಗಳನ್ನು ಕಟ್ಟಿಕೊಂಡಿದ್ದರೂ ಕೊನೆಗೊಮ್ಮೆ ಗುರಿಯನ್ನು ಕಾಣದೆ ನಾಶವಾದರು. ಜೀವಾತ್ಮನು ನಶ್ವರವಾದ ಸ್ಫೂಲ, ಸೂಕ್ಷ್ಮ, ಕಾರಣವೆಂಬ ಮೂರು ತನುಗಳನ್ನು ಹೊಂದಿದ್ದಾನೆ. ಈ ಶರೀರಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ವರ್ಗ ಅರ್ಥಾತ್ ಅನಿಮಿತ್ತ ವೈರಿಗಳೊಡನೆ ಒಡಂಬಡಿಸುವ ದಾಕ್ಷಿಣ್ಯಕ್ಕೆ ಒಳಗಾಗಿ ಅಹಂಕಾರ, ಮಮಕಾರಗಳಿಂದ ಬಂಧಿತವಾಗುತ್ತವೆ. ಆಗ ಬಂಧನದ ಆಚಾರ್ಯನಾದ ಯಮನ ಶಿಕ್ಷೆಗೆ ಒಳಪಟ್ಟು ಮೋಕ್ಷದಿಂದ ವಂಚಿತರಾಗಬೇಕಾಗುವದು. ಕಾಲನ ಕಠಿಣ ಶಿಕ್ಷೆಯನ್ನು ತಾಳಲಾರದೆ ಈ ಇಳೆಗೆ ಇಳಿದು ಬರಬೇಕಾಗುವದು. ಯಮಯಾತನೆಗೆ ಕೊನೆಯಿಲ್ಲ. ಇದರ ಕೊನೆ ಶ್ರೀಗುರು ಸನ್ನಿಧಿಯಿಂದ ಮಾತ್ರ ಸಾಧ್ಯವಾಗಬಹುದು.

ಓ ಗುರುವೆ ! ಕಾಲನ ಕಠಿಣ ಶಿಕ್ಷೆಯಿಂದ ಬಳಲಿರುವೆ. ತಡಮಾಡದೆ ಈ ಕ್ಷಣದಲ್ಲೇ ನನ್ನನ್ನು ರಕ್ಷಿಸು. ಜನಿ ಮೃತಿಗಳಿಗೆ ಒಳಗಾಗದಂತೆ ಮಾಡು. ನೀನು ಪುರಹರನೂ, ಕಾಲಹರನೂ, ಮಾಯಾವಿದೂರನೂ ಆಗಿರುವೆ. ಕಾಲನ ಕಂಟಕವನ್ನು ಕಳೆಯಲು ನಿನ್ನಿಂದ ಮಾತ್ರ ಸಾಧ್ಯ. ನಿನ್ನ ಕೃಪಾಕಟಾಕ್ಷೇಕ್ಷಣವನ್ನು ಈ ಕ್ಷಣದಲ್ಲೇ ಬೀರು. ಈ ಕ್ಷಣದಿಂದ ನನ್ನ ಮೂರು ಶರೀರಗಳ ಜಾಡ್ಯತ್ವವು ಬಯಲಾಗಿ ಮಂತ್ರಮಯವಾಗುತ್ತದೆ. ತಂದೆಯೆ ! ತಳುವದೆ ಪರಶಿವಲಿಂಗವನ್ನು ಒಲಿಸಲು ಯೋಗ್ಯವಾದ ಪ್ರಸಾದ ಕಾಯವನ್ನಾಗಿ ಮಾಡು. ಅದರಿಂದ ಅಷ್ಟ ಮದಗಳ ಹಾಗೂ ಅರಿಷಡ್ ವೈರಿಗಳ ಉಪಟಳ ಇಲ್ಲವಾಗುತ್ತದೆ.

ಇಲ್ಲಿ ‘ಈಕ್ಷಣದಿ’ ಪದನಾಮವಾಗಿಯೂ, ಪ್ರಯೋಗಿಸಲ್ಪಟ್ಟು ಶ್ಲೇಷಾರ್ಥದ ವೈಶಿಷ್ಟ್ಯ ವ್ಯಕ್ತವಾಗಿದೆ. ಈಕ್ಷಣ (ದೃಷ್ಟಿ ಪಾತ)ವು ಈ ಕ್ಷಣದಿ (ತೀವ್ರವಾಗಿ) ಆದರೆ, ನನ್ನ ದೋಷಗಳು ದೂರವಾಗುತ್ತವೆಯೆಂದು ಅರ್ಥೈಸಿದ್ದಾನೆ.

ಧರ್ಮನಾಮವ ತಾಳಿ | ಎಮ್ಮೆ ಮಗನೊಯ್ಯಾಳಿ

ಕರ್ಮದ ಕೇಳಿಯಿಂ- ಮೆರೆವವನ ಉಪಟಳಕೆ

ಅಮ್ಮೆನೈ ಗುರುವೆ ಕೃಪೆಯಾಗು

|| 43 ||

ಶರಣಕವಿಯು ಕಾಲನ ಪೌರಾಣಿಕ ಸ್ವರೂಪ ಚಿತ್ರವನ್ನು ಶಬ್ದಗಳಿಂದ ಚಿತ್ರಿಸಿದ್ದಾನೆ. ಆತನಿಗೆ ಯಮಧರ್ಮ’ನೆಂಬ ನಾಮ. ಅವನ ಸಂಚಾರ ಎಮ್ಮೆಯ ಮಗನಾದ ಕೋಣನಮೇಲೆ, ಅವನ ಕಾರ್ಯ ಜೀವಿಗಳನ್ನು ಸಂಹಾರಮಾಡುವದು. ಈ ಸಂಹಾರ ಕರ್ಮದ ವಿಲಾಸದಿಂದ ಮೆರೆಯುತ್ತಿರುವ ಕಾಲನ ಉಪಟಳವು ಮಿತಿಮೀರಿದೆ. ಆದ್ದರಿಂದ ನಾನೂ ಅವನ ಬಾಧೆಯಿಂದ ಹೊರಗಾಗಿಲ್ಲ. ಈ ಬಾಧೆಯು ಸಹಿಸಲತಿಯಾಗಿದೆ. ಮೃತ್ಯುಂಜಯನಾದ ಸದ್ಗುರುವಿನ ಒಲುಮೆಯಿಂದ ಮೃತ್ಯುವಿನ ಬಾಧೆ ನೀಗಬಲ್ಲದು. ಮಾನವನಿಗೆ ಅತಿಭಯಾನಕವಾದುದದೆಂದರೆ ಸಾವೆ. ಈ ಸಾವಿಗೆ ಸಾವುಕೊಡುವವನು ಶಿವನು. ಶಿವರೂಪಿ ಗುರುವೆ | ಕೈಹಿಡಿದು ಕಾಪಾಡು.

ಯಮನು ಭಯಾನಕವಾಗಿದ್ದರೂ ಯಮಧರ್ಮನೆಂಬ ಹೆಸರನ್ನು ಪಡೆದಿದ್ದಾನೆ. ಅವನ ಕಾರ್ಯದಲ್ಲಿ ಧರ್ಮ ಹುದುಗಿಕೊಂಡಿದೆ. ಅವನು ಧರ್ಮವಂತರನ್ನು ದೇವರತ್ತ ಕಳಿಸುತ್ತಾನೆ. ಧರ್ಮವಂತನು ಜ್ಞಾನಿಯೂ ಆಗಿರಬೇಕು. ಅಜ್ಞಾನಿಗಳು ಧರ್ಮದ ಗುರಿಯನ್ನು ಗುರುತಿಸದೇ ಯಮನ ಭಾಧೆಗೆ ಒಳಗಾಗುವರು. ಅದಕ್ಕಾಗಿ ಕೋಣನ ವೈಹಾಳಿ ಪದವನ್ನು ಪ್ರಯೋಗಿಸಿ ಸಾಂಕೇತಿಕ ಅರ್ಥವನ್ನು ವ್ಯಕ್ತ ಮಾಡಿದ್ದಾನೆ. ಕೋಣ = ದಡ್ಡತನದ ಪ್ರತೀಕ. ಒಣಹೆಮ್ಮೆ ಹೋರಾಟಗಳ ಸಂಕೇತ. ಜ್ಞಾನವಿಲ್ಲದೆ ಹೆಮ್ಮೆಯಿಂದ ಮಾನವನು ಮೈಮರೆತು ಮರಣವನ್ನಪ್ಪುತ್ತಾನೆ. ಇಂಥ ಕೋಣನ ಸವಾರಿ ಮಾಡುವವರ ಮೇಲೆ ಕಾಲನು ಬಲು ಪ್ರೀತಿ, ಶಿವಕವಿ ಕ.ಬ. ಅಂಗಡಿಯವರು ಶ್ರೀಜಗದ್ಗುರು ಅನ್ನದಾನೀಶ್ವರ ಲೀಲಾಮೃತದಲ್ಲಿ –

“ಬುದ್ಧಿಹೀನರೆ ಕೋಣಮರಿಗಳು

ಶ್ರದ್ದೆಯಿಲ್ಲದವರು ಕುರಿಗಳೈ (೧೧-೧೪)

ಬುದ್ಧಿಹೀನರಿಗೆ ಕೋಣನೆಂದು ಅರ್ಥೈಸಿದ್ದು ಸಮಂಜಸವಾಗಿದೆ. ಡಾಂಭಿಕನು ಸುಜ್ಞಾನವಿಲ್ಲದೆ ಒಣಹೆಮ್ಮೆ ಹೋರಾಟಗಳ ಗೊಂದಲದಲ್ಲಿ ಯಮನ ಸನ್ನಿಧಿ ಸೇರುತ್ತಾನೆ. ಶ್ರದ್ದೆಯಿಲ್ಲದವರು ಕುರಿಗಳಂತೆ ಕಾಲನೆಂಬ ಕಟುಕರ ಕೈಯಲ್ಲಿ ಸಿಕ್ಕು ಮಣ್ಣು ಮುಕ್ಕುತ್ತಾರೆ.

ಶಿವಶರಣರು ಸಾವಿಗಂಜದೆ ಧೀರರಾದರು. ಮತ್ತು

“ನಾಳೆಬಪ್ಪುದು ನಮಗಿಂದೇ ಬರಲಿ,

ಇಂದು ಬಪ್ಪುದು ನಮಗೀಗಲೇ ಬರಲಿ.

ಇದಕಾರಂಜುವರು ? ಇದಕಾರಳುಕುವರು ?

‘ಜಾತಸ್ಯ ಮರಣಂ ಧೃವಂ’ ಎಂದುದಾಗಿ

ನಮ್ಮ ಕೂಡಲ ಸಂಗಮ ದೇವರು ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲಾ! ಬರುವ ಮರಣ ನಿಶ್ಚಿತ, ಅಂಜಿದರಾಗದು, ಅಳುಕಿದರಾಗದು. ಮರಣವನ್ನು ತಪ್ಪಿಸಲು ಹರಿಬ್ರಹ್ಮಾದಿಗಳಿಂದಲೂ ಸಾಧ್ಯವಿಲ್ಲವೆಂದರಿದು –

”ಮರಣವೇ ಮಹಾನವಮಿ’ ಎಂದು

ಧೀರೋದಾತ್ತತೆಯಿಂದ ಆತ್ಮಸಾಕ್ಷಾತ್ಕಾರವನ್ನು ಹೊಂದಿದರು. ಲಿಂಗಾಂಗಸಾಮರಸ್ಯವು ಬಲಹೀನನಿಂದ ಸಾಧಿಸಲು ಸಾಧ್ಯವಿಲ್ಲ. ಆತ್ಮಬಲಬೇಕು. ಯಮ ಬಾಧೆಯನ್ನು ಗೆಲ್ಲಬೇಕು, ಸುಜ್ಞಾನವನ್ನು ಸಂಪಾದಿಸಬೇಕು. ಗುರುಕೃಪೆಯನ್ನು ಪಡೆಯಬೇಕು. ಅಂತಾದರೆ ಮಾನವ ಜನ್ಮ ಸಾರ್ಥಕವಾಗುವದು.

ಓ ಗುರುವೆ ! ಮೃತ್ಯುಂಜಯನೆ ! ಕಾಲದ ಉಪಟಳವನ್ನು ನೀಗಿಸಬಲ್ಲ ಧರ್ಮ ಧೀಮಂತನನ್ನಾಗಿಸು, ಧರ್ಮಭೀರುತನವನ್ನು ಹೋಗಲಾಡಿಸು. ಸುಜ್ಞಾನಿಯನ್ನಾಗಿ ರಕ್ಷಿಸು.

ಕರಿಯ ಕಬ್ಬಿನ ಬಿಲ್ಲು | ಅರಳು ಮಲ್ಲಿಗೆ ಬಾಣ

ನುರುವಣಿಗೆ ಲೋಕ-ಉರುಳಲ್ಕೆ ನಾ ನಿಮ್ಮ

ಮೊರೆ ಹೊಕ್ಕೆ ಗುರುವೆ ಕೃಪೆಯಾಗು

11 ೪೪ ||

ಮಾನವನಿಗೆ ಮರಣದ ಭಯವಿದ್ದರೂ ಕಾಮದ ಕೇಳಿಯಲ್ಲಿ ಮೈಮರೆಯುತ್ತಾನೆ. ಇದು ಪ್ರಕೃತಿಯ ನಿಯಮ. ಪ್ರಕೃತಿ ವಿಕೃತಿಯಾದರೆ ಕಾಮನ ಕೈಯಲ್ಲಿ ಉರುಳುವದು ಸಹಜ. ಸಂಸ್ಕೃತಿಯಿಲ್ಲದೆ ವಿಕೃತಿಗೊಂಡವರ ಮೇಲೆ ಕಾಮನ ಉಪಟಳ ಹೇಳತೀರದು. ಶಿವಕವಿಯು ಇದನ್ನೇ ನಿರೂಪಿಸುವವನಾಗಿ ಮೊದಲು ಕಾಲನ ಶಬ್ದ ಚಿತ್ರವನ್ನು ಚಿತ್ರಿಸಿದಂತೆ ಇಲ್ಲಿ ಕಾಮನ ಕಮನೀಯ ರೂಪವನ್ನು ಕಾಣಿಸುತ್ತಾನೆ.

ಕಾಮನು ಅನಂಗ, ಅವನಿಗೆ ಅವಯವಗಳಿಲ್ಲ. ಶಿವನು ಕಾಮನನ್ನು ದಹಿಸಿ ಬಿಟ್ಟಿದ್ದಾನೆ. ಆದರೆ ಮನಸಿಜನಾಗಿ ಮೈದೋರಲು ಹರಸಿದ್ದಾನೆ. ಅದು ಕಾರಣ ಪ್ರಕೃತಿಯ ಸೌಂದರ್ಯದಲ್ಲಿ ಕಾಮನು ಅವತರಿಸಿ ಬರುತ್ತಾನೆ. ಪ್ರೇಮಿಗಳ ಮನಸ್ಸಿನಲ್ಲಿ ಉದ್ಭವಿಸುತ್ತಾನೆ. ಕಾಮನು ಕಬ್ಬಿನ ಬಿಲ್ಲನ್ನು ಹೆದೆಏರಿಸುತ್ತಾನಂತೆ. ಅರಳಿದ ಮಲ್ಲಿಗೆಯ ಬಾಣಗಳನ್ನು ಬಿಡುತ್ತಾನಂತೆ. ಕೈ ಮೈ ಇಲ್ಲದವನಿಂದ ಬಿಟ್ಟ ಬಾಣದ ಉರುವಣಿಗೆಗೆ ಉರುಳದ ಮರುಳರಿಲ್ಲ. ಲೋಕವೆಲ್ಲ ತತ್ತರಿಸುತ್ತದೆ.

ಗಂಡು ಹೆಣ್ಣುಗಳ ನೋಟದಲ್ಲಿ ಕಾಮ ಕಾಣಿಸಿಕೊಳ್ಳುವನು. ತನ್ನ ಚೇಷ್ಟೆಯನ್ನು ಪ್ರಾರಂಭಿಸುವನು. ಸ್ತ್ರೀಯಳ ಹುಬ್ಬೆಂಬ ಕರಿಯ ಬಿಲ್ಲಿನಿಂದ ಅಪಾಂಗ ನೋಟವೆಂಬ ಅರಳು ಮಲ್ಲಿಗೆಯ ಬಾಣವು ಪುರುಷನ ಮನಸ್ಸನ್ನು ತಲ್ಲಣಿಸುತ್ತದೆ. ಕಣ್ಣಿಗೆ ಕಾಣದ ಕಾಮನ ಬಾಣಗಳು ಅರವಿಂದ, ಆಶೋಕ, ಮಾವು, ಅರಳುಮಲ್ಲಿಗೆ ಮತ್ತು ಕನ್ನೈ ದಿಲೆಗಳೆಂದು ಐದಾಗಿವೆ ಎಂದು ಅಮರಕೋಶಕಾರನು ಬರೆದಿದ್ದಾನೆ. ಸ್ತ್ರೀಯಳ ಜೀವನದ ಮುಖವೇ ಅರವಿಂದ. ಹರ್ಷಚಿತ್ತವೇ ಅಶೋಕ, ಕೆಂದುಟಿಯೇ ಮಾವಿನಚಿಗುರು, ನಗೆಯೇ ಅರಳು ಮಲ್ಲಿಗೆ, ವಿಶಾಲ ನೀಲನೇತ್ರಗಳೇ ಕನ್ನೈದಿಲೆಗಳು. ಈ ಪಂಚಬಾಣಗಳು ಎಂಥ ಧೀರನನ್ನೂ ಚಂಚಲ ಗೊಳಿಸದೇ ಇರವು. ವಸಂತಕಾಲವು ಕಾಮನಿಗೆ ಮಂತ್ರಿಯಂತೆ ಸಹಾಯಕನಾದರೆ, ಕೋಗಿಲೆಯು ಅವನ ಜಯಗಾನವನ್ನು ಹಾಡುತ್ತಿದೆ. ವಿರಹಿಗಳ ಮನವನ್ನು ಕಲಕುತ್ತಿದೆ. ಆಗ ಕಾಮನ ಆಟವು ನಡೆಯುವದೆಂದು ಕವಿಗಳು ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ರಾಜನಿಂದ ರಂಕನ ವರೆಗೆ ಎಲ್ಲರಲ್ಲಿಯೂ ಕಾಮನ ಚೇಷ್ಟೆ. ಕೇವಲ ಮಾನವರಲ್ಲಿ ಮಾತ್ರವಲ್ಲ. ಪಶುಪಕ್ಷಿಗಳಲ್ಲಿಯೂ ಕಾಮಚೇಷ್ಟೆ ಕಾಣುತ್ತಿದೆ. ನೀತಿಕಾರರೂ –

“ಆಹಾರ-ನಿದ್ರಾ ಭಯ-ಮೈಥುನಾನಿ

ಸಾಮಾನ್ಯಮೇತತ್ ಪಶುಭಿರ್ನರಾಣಾಮ್” ||

ಆಹಾರ-ನಿದ್ರೆ ಹಾಗೂ ಭಯಗಳಂತೆ ಮೈಥುನವೂ ಪಶು ಮತ್ತು ಮಾನವರಲ್ಲಿ ಸಾಮಾನ್ಯವಾಗಿದೆಯೆಂದು ವಿಶದಪಡಿಸಿದ್ದಾರೆ. ಕಾಮನು ಅನಂಗನಾಗಿ ಇಂಥ ಅದ್ಭುತ ಕಾರ್ಯವನ್ನೆಸಗುತ್ತಿರುವದು ಪ್ರಕೃತಿಯ ಕೊಡುಗೆ. ವಯಸ್ಸಿಗೆ ಬಂದ ಗಂಡು-ಹೆಣ್ಣು

ಜೀವಿಗಳಲ್ಲಿ ಕಾಮನ ಮಧ್ಯಸ್ಥಿಕೆಯಿಲ್ಲದಿದ್ದರೆ, ಜಗತ್ತು ವಿಸ್ತಾರಗೊಳ್ಳುತ್ತಿರಲಿಲ್ಲ. ಇಂದ್ರಿಯಗಳು ಬಹಿರ್ಮುಖವಾಗಿ ಹರಿಯುತ್ತಿರುವದು ಬ್ರಹ್ಮನ ರಚನೆಯಾಗಿದೆ. ಉಪನಿಷತ್ಕಾರರು-

”ಪರಾಂಚಿಖಾನಿ ವ್ಯತೃಣತ್ ಸ್ವಯಂಭೂ: ಪರಾಜ್ ಪಶ್ಯತಿ” | ಪರಮಾತ್ಮನು ಜೀವಾತ್ಮರ ಇಂದ್ರಿಯಗಳನ್ನು ಬಹಿರ್ಮುಖವಾಗಿ ಸೃಷ್ಟಿಸಿದ್ದರಿಂದ ಅವು ಬಹಿರ್ವಿಷಯ ಗಳನ್ನು ಗ್ರಹಿಸಲು ಹಾತೊರೆಯುತ್ತವೆಯೆಂದು ನಿರೂಪಿಸಿದ್ದಾರೆ. ಇಳುಕಲು ಮುಖವಾದ ನೀರು ತೀವ್ರವಾಗಿ ಹರಿಯುವಂತೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಪಂಚ ವಿಷಯಗಳೇ ಲಕ್ಷ್ಯವಾಗಿಯುಳ್ಳ ಕಿವಿ, ತ್ವಕ್ಕು, ನೇತ್ರ, ನಾಲಿಗೆ, ಮೂಗು ಐದಿಂದ್ರಿಯಗಳು ಆ ವಿಷಯ ಸಂಪರ್ಕವಾಗುತ್ತಲೇ ಗ್ರಹಿಸುತ್ತವೆ. ಇಂದ್ರಿಯ ಗ್ರಹಿಕೆ ಬಲವತ್ತರವಾಗಿದೆ.

“ಮಾತ್ರಾ ಶ್ವಸ್ರಾ, ದುಹಿತ್ರಾ ವಾ ನೈಕಶಯ್ಯಾಸನೋ ಭೂತ್ |

ಬಲವಾನಿಂದ್ರಿಯ ಗ್ರಾಮೋ ವಿದ್ವಾಂಸಮಪಿ ಕರ್ಷತಿ ||”

ತಾಯಿ, ಅತ್ತೆ, ಸೊಸೆ, ಮಗಳು ಯಾರೇ ಇರಲಿ, ಏಕಾಂತದಲ್ಲಿ ವಯಸ್ಕರಾದ ಹೆಣ್ಣು ಮಕ್ಕಳೊಡನೆ ಏಕಾಸನನಾಗಿ ಕುಳಿತುಕೊಳ್ಳಬಾರದು. ಯಾಕೆಂದರೆ ಇಂದ್ರಿಯಗಳ ಶಕ್ತಿಯು ಅದ್ಭುತವಾಗಿದೆ. ಪಂಡಿತನನ್ನು ಸಹ ವಿಷಯದತ್ತ ಹರಿಸುವದು. ಈ ಅಭಿಪ್ರಾಯವನ್ನು ಓದಿದ ವ್ಯಾಸರ ಶಿಷ್ಯನಾದ ಜೈಮಿನಿಯು ಶ್ಲೋಕದ ನಾಲ್ಕನೆಯ ಚರಣದಲ್ಲಿ ವಿದ್ವಾಂಸಂ ನಾಪಕರ್ಷತಿ ವಿದ್ಯಾವಂತನನ್ನು ವಿಷಯವು ಎಳಸುವದಿಲ್ಲ ವೆಂದು ತಿದ್ದುವನು. ಅದನ್ನರಿತ ಗುರುಗಳು ನಾರದನನ್ನು ಕರೆಯಿಸಿ ಜೈಮಿನಿಯ

ಸತ್ಯಪರೀಕ್ಷೆಯನ್ನು ಮಾಡಲು ತಿಳಿಸುವರು. ನಾರದನ ಅಪ್ಪಣೆಯಂತೆ ಕಾಮದೇವನು ಕುದುರೆ ಸವಾರನಾಗಿ ಬಂದು ಜೈಮಿನಿಯನ್ನು ಕಂಡು ಕೆಲವು ಕ್ಷಣಗಳ ನಂತರ ಸುಂದರ ಸ್ತ್ರೀಯಾಗುತ್ತಾನೆ. ಅವನ ಆಶ್ರಮದ ಸಮೀಪಕ್ಕೆ ಬರುವನು. ಹೆಣ್ಣಿನ ಕೋಮಲ ಧ್ವನಿಯನ್ನು ಆಲಿಸಿದ ಮುನಿಯು ಹೊರಬಂದು ತೊಯ್ಸಿಸಿಕೊಳ್ಳುತ್ತಿರುವದನ್ನು ಕಾಣುತ್ತಾನೆ. ರಾಜಕುಮಾರಿಯಂತಹ ಸೌಂದರ್ಯ ವನ್ನು ಕಂಡು ಬೆರಗಾಗುತ್ತಾನೆ.

ಆಶ್ರಮದೊಳಗೆ ಕರೆಯುವನು. ಏಕಾಂತದ ವಾತಾವರಣದಲ್ಲಿ ಅವಳ ಮೋಹಕ ರೂಪವು ಮುನಿಯ ಮನವನ್ನು ಚಂಚಲಗೊಳಿಸುವದು. ಕುಮಾರಿಯ ವೃತ್ತಾಂತವನ್ನರಿತು ಲಗ್ನದ ಸಮಾಚಾರಕ್ಕೆ ಬರುವನು. ಅವಳ ಕರಾರಿನಂತೆ ಜೈಮಿನಿಯು ಆಕೆಯನ್ನು ಹೆಗಲಮೇಲೆ ಹೊತ್ತುಕೊಂಡು ಸಮೀಪದ ಅಶ್ವತ್ಥ ವೃಕ್ಷವನ್ನು ಮೂರು ಸುತ್ತು ಸುತ್ತಹೋಗುವನು. ಒಂದೆರಡು ಸುತ್ತಿನಲ್ಲಿ ಭಾರವಾಗಿ ಮೇಲೆ ನೋಡಲು, ಕನೈಯಾಗದೆ ಕುದುರೆ ಸವಾರನ ದೃಶ್ಯಕಾಣುವದು. ಆಗ ಮುನಿಯ ಮನ ನಾಚುತ್ತದೆ. ಕ್ಷಮೆ ಕೇಳಲು ಕಾಮದೇವನು ಮರದ ಮೇಲಿನ ವ್ಯಾಸರನ್ನು ತೋರಿಸುವನು. ಗುರುಗಳು ವಿದ್ವಾಂಸನಾದ ಶಿಷ್ಯನ ಹೀನಸ್ಥಿತಿಗಾಗಿ ನಗುವರು. ಗರ್ವವೆಲ್ಲ ದೂರವಾಯಿತೆಂದು ಕ್ಷಮೆಕೇಳುವನು. ವ್ಯಾಸರು ಜೈಮಿನಿಗೆ ಇಂದ್ರಿಯ ಶಕ್ತಿಯ ಸ್ವರೂಪವನ್ನು ಯಥೋಚಿತವಾಗಿ ತಿಳಿಸುವರು. (ಮಾನವ ಧರ್ಮ ಪುಟ ೬೮೯)

ಕೇವಲ ಗಾಳಿ, ನೀರು, ಒಣಗಿದ ಎಲೆಗಳನ್ನು ತಿಂದು ತಪಗೈದ ವಿಶ್ವಾಮಿತ್ರ ಪರಾಶರ-ಶಾಂಡಿಲ್ಯ ಮೊದಲಾದ ಋಷಿಗಳೂ ಸಹ ಮೇನಕಾ, ರಂಭಾ, ಸತ್ಯವತಿ ಮೊದಲಾದ ದೇವಲೋಕದ ಸುಂದರಿಯರನ್ನು ಕಂಡು ಮೋಹಿತರಾದರು. ಅಂದಮೇಲೆ ಪ್ರತಿನಿತ್ಯ ಹಾಲು-ತುಪ್ಪ ಮೊಸರು ಯುಕ್ತವಾದ ಮೃಷ್ಟಾನ್ನವನ್ನು ಉಣ್ಣುವ ಮಾನವರಿಂದ ಇಂದ್ರಿಯ ನಿಗ್ರಹಮಾಡುವದು ದುಸ್ಸಾಧ್ಯವೇ ಆಗಿದೆ. ವಿಷಯಗಳಲ್ಲಿ ಇಂದ್ರಿಯಗಳನ್ನು ಆಕರ್ಷಿಸುವ ಬಲವಿದೆ. ಅದಕ್ಕಾಗಿ ಆಕರ್ಷಣ ಶಕ್ತಿಯುಳ್ಳ ಇಂದ್ರಿಯಗಳ ಗ್ರಹಿಕೆಯು ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಧಾರ್ಮಿಕವಾಗಿ ಯಥೋಚಿತವಾಗಬೇಕು. ಅಂದರೆ ಯೋಗ್ಯ. ಇಲ್ಲವಾದರೆ ಜೀವಾತ್ಮನು ಭವಭಂಧನಕ್ಕೊಳಗಾಗುವನು. ಕಮಲದ ಎಲೆಯಂತೆ ನೀರಿನ ಲೇಪವಿಲ್ಲದೆ ಇರುವ ಹಾಗೆ, ಜ್ಞಾನಿಯು ಮಾತ್ರ ವಿಷಯವನ್ನು ಭೋಗಿಸಿಯೂ ಆದರಿಂದ ನಿರ್ಲಿಪ್ತನಾಗುತ್ತಾನೆ. ಆದರೆ ವಿಷಯವು ಕೇವಲ ಭೋಗದಿಂದ ಶಾಂತವಾಗಲಾರದು.

ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ ||

ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

ತುಪ್ಪದಿಂದ ಬೆಂಕಿಯು ಪುನಃ ಪುನಃ ಪ್ರಜ್ವಲಿಸುವಂತೆ ವಿಷಯೋಪಭೋಗವೆಂಬ ಕಾಮವನ್ನು ಭೋಗದಿಂದ ತೃಪ್ತಿಗೊಳಿಸುವದು ಎಂದೂ ಸಾಧ್ಯವಿಲ್ಲೆಂದು ಶಾಸ್ತ್ರಕಾರರು ಸಾರಿದ್ದಾರೆ.

ಭಾರತೀಯ ದಾರ್ಶನಿಕರು ಕಾಮವನ್ನು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಸೇರಿಸಿದ್ದಾರೆ. ಕಾಮವೆಂದರೆ, ಬಯಕೆ ಅಪೇಕ್ಷೆ ಅಥವಾ ಮನದ ಮುಂದಣ ಆಶೆ, ಅದು ಧರ್ಮದಿಂದ ಸಂಗ್ರಹಿಸಿದ ಧನದಿಂದ ಪೂರೈಸುವ ಅಪೇಕ್ಷೆಯಾಗಬೇಕು. ಆಗ ಕಾಮವೂ ಒಂದು ಪುರುಷಾರ್ಥವಾಗಬಹುದು. ಕಾಮವು ಕೇವಲ ಸ್ವಾರ್ಥಪರವಾದರೆ ವಾಸನೆಯೆನಿಸುವದು. ವಾಸನೆಯನ್ನು ನಿವಾರಿಸುವದು ಬಲುಕಷ್ಟ, ಧರ್ಮ ಮತ್ತು ಅರ್ಥಗಳನ್ನು ಅನುಸರಿಸಿದ ಕಾಮನೆಯಲ್ಲಿ ಪರಿಶುದ್ಧತೆ ಹಾಗೂ ಪರಿಪಕ್ವತೆಗಳು ಕಾಣುತ್ತವೆ. ಅಪಕ್ವವಾದ ಕಾಮವು ಮೋಹಕವಾಗಿ ಬಂಧನಕಾರಿಯಾಗುವುದು.

ಮನೋವಿಜ್ಞಾನಿಗಳು ಅತೃಪ್ತ ಕಾಮನೆಯಿಂದ ಮನಸ್ಸು ಮಲಿನವಾಗುವದು. ಅದು ವಿಕೃತಗೊಳ್ಳಲು ಅವಕಾಶಹೊಂದುವದು, ಆದ್ದರಿಂದ ಕಾಮನೆಯನ್ನು ಅತೃಪ್ತ (ಮೊಟಕು)ಗೊಳಿಸಬಾರದು. ಅರ್ಥಾತ್ ಇಂದ್ರಿಯಗಳನ್ನು ನಿಗ್ರಹಿಸಬಾರದು. ಎಂದು ಅಭಿಪ್ರಾಯ ಪಡುತ್ತಾರೆ. ಶಿವಶರಣರು –

”ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಗಳು,

ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು’

ಎಂದು ಮನೋವಿಜ್ಞಾನಿಗಳ ಅರ್ಥವನ್ನೇ ಅನುಸರಿಸಿದ್ದರೂ ಇಲ್ಲಿ ಕಾಮನೆಗಳನ್ನು ಪ್ರಸಾದಗೊಳಿಸಿ ಲಿಂಗೋಪಭೋಗಿಯಾಗಿ ಸ್ವೀಕರಿಸುವ ಕಲೆಯನ್ನು ಕಂಡಿದ್ದಾರೆ. ಕಾಮನೆಯಲ್ಲಿ ಭಾವ ಪರಿಶುದ್ಧವಾಗಬೇಕು. ಪರಧನ ಪರಸ್ತ್ರೀಯರಲ್ಲಿ ಕಾಮ ಬೇಡವೆಂದೂ, ಪರಸ್ತ್ರೀಯೆಂಬ ಜೂಬಿಗಂಜುವೆವೆಂದೂ ಶರಣರು ನೈತಿಕ ಹೊಣೆಯನ್ನು ಹೊತ್ತು ನಡೆದರು. ಪರಸ್ತ್ರೀಯನ್ನು ಮಹಾದೇವಿಯನ್ನಾಗಿ ಕಂಡರು. ಏಕಪತ್ನಿ ವ್ರತಸ್ಥರಾಗಿ ಪುರುಷ ಬಾಳಿದರೆ ಪ್ರತಿವೃತೆಯರಾಗಿ ಸ್ತ್ರೀಯರು ಬಾಳುವರು. ಹೀಗೆ ತನ್ನ ವಸ್ತುವಿನಲ್ಲಿ ಕಾಣುವ ಕಾಮನೆ ಪುರುಷಾರ್ಥವಾಗುವದು. ಅದರಿಂದ ಮೋಕ್ಷ ದೊರೆಯುವದು.

ಗುರುವೇ ! ಕಾಮಾರಿಯೇ ! ಇಂಥ ಕಾಮನ ಉರುವಣಿಗೆಯನ್ನು ನಿವಾರಿಸುವ ಶಕ್ತಿ ನಿನ್ನಲಿದೆ. ನಿನ್ನ ಕೃಪೆಯಲ್ಲಿದೆ. ನಾನು ನಿನ್ನ ಮೊರೆಹೊಕ್ಕಿರುವೆ. ಮನವನ್ನು ಸುಮನವನ್ನಾಗಿಸಿ ವಿಷಯಗಳನ್ನು ಶಿವಪ್ರಸಾದವನ್ನಾಗಿ ಕಾಣುವ ಕಂಗಳನ್ನಿತ್ತು ಕಾಮನಕಾಟವನ್ನು ಕಳೆ. ನೀನಲ್ಲದೆ ಎನಗೆ ಇನ್ನಾರು ರಕ್ಷಕರು

ಬೀಸಿರ್ದ ಬಲೆಯೊಳಗೆ | ಕಾಸಿ ಮೀಸೆಯ ಮೃಗವು .

ತಾಸೋತು ಬಿದ್ದು ಘಾಸಿಯಾಗಲು ನಿಮ್ಮ

ನಾಶ್ರೈಸಿದೆ ಗುರುವೆ ಕೃಪೆಯಾಗು

 ||45||       

ಬೇಟೆಗಾರನ ಬಲೆಯೊಳಗೆ ಉದ್ದಮೀಸೆಯುಳ್ಳ ಮೊಲವು ಸಿಕ್ಕು ನಾಶವಾಗು ವಂತೆ; ಮಾನವನ ಮನಸ್ಸನ್ನು ಮಥಿಸುವ ಮನ್ಮಥನು ಬೀಸಿದ ಮಾಯಾಬಲೆಯೊಳಗೆ ಅಹಂಕಾರವುಳ್ಳ ಜೀವನು ಸಿಕ್ಕು ಶರೀರದ ಶಕ್ತಿಯೆಲ್ಲ ಹ್ರಾಸವಾಗಿ ಘಾಸಿಯಾಗುವನು. ಕಾಮನ ಬಲೆ ಭದ್ರವಾದುದು. ಜೀವಾತ್ಮನು ಆ ಬಲೆಯಿಂದ ಬಿಡಿಸಿಕೊಳ್ಳಲಾರದೇ ಬಳಲಬೇಕಾಗುವದು. ಷಣ್ಮುಖಶಿವಯೋಗಿಗಳು –

‘ಕಾಮವೆಂಬ ಬೇಟೆಗಾರನು ಕಂಗಳಲೋಹಿನಿಂದ ನಿಂದು

ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ

ಸಕಲ ಪ್ರಾಣಿಗಳ ಕೆಡಹಿಕೊಂಡು ಕೊಲ್ಲುತ್ತಿದ್ದಾನೆ” ಎಂದು.

ಕಾಮನ ಕಠೋರ ಕರ್ಮವನ್ನು ವರ್ಣಿಸಿದ್ದಾರೆ. ಅಜ್ಞಜೀವಿಯು ವಿಷಯವೆಂಬ ಸುಖಕ್ಕಾಗಿ ಆಶಿಸುತ್ತದೆ. ವಿಷಕ್ಕಿಂತಲೂ ಈ ವಿಷಯವು ಘೋರವಾದುದೆಂದು ಅನುಭವಿಗಳು ಬೋಧಿಸಿದ್ದಾರೆ. ವಿಷವು ಒಂದು ಜನ್ಮವನ್ನು ಹರಣಮಾಡಿದರೆ; ವಿಷಯವಾಸನೆಯು ಜನ್ಮ ಜನ್ಮಾಂತರದಲ್ಲಿಯೂ ಕಾಡುವದು. ವಿಷಯರಹಿತನಾಗ ಬೇಕಾದರೆ ಗುರುಕಾರುಣ್ಯವೇಬೇಕು. ಅದುವೇ ಮುಖ್ಯ ಸಾಧನವಾಗಿದೆ. ಈ ಮಾತನ್ನು ಅಣ್ಣ ಬಸವಣ್ಣನವರು –

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ !

ಪಶುವೇನು ಬಲ್ಲುದು, ಹಸುರೆಂದೆಳಸುವದು.

ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ

ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯಾ

ಕೂಡಲಸಂಗಮದೇವಾ !

ಎಂದು ದೃಷ್ಟಾಂತ ಪೂರ್ವಕವಾಗಿ ತಿಳಿಸಿದ್ದಾರೆ. ಗುರುವಿನಲ್ಲಿ ವಿಷಯರಾಹಿತ್ಯವನ್ನು ಕರುಣಿಸುವ ಸುಬುದ್ಧಿಯನ್ನು ಬೇಡಿದ್ದಾರೆ. ಪಶುವು ಹಸಿಹುಲ್ಲಿಗಾಗಿ ಆಶೆ ಪಡುವಂತೆ ಜೀವಾತ್ಮನು ತನ್ನ ಸುತ್ತ ಹರಡಿದ ವಿಷಯ ಸುಖಕ್ಕಾಗಿ ಹಲುಬುತ್ತಿದ್ದಾನೆ. ಪ್ರಾಣಿಗಳು

ಕೇವಲ ಒಂದೊಂದು ವಿಷಯಕ್ಕಾಗಿ ಆಶಿಸಿ ಸಾಯುತ್ತವೆ. ಘ್ರಾಣೇಂದ್ರಿಯ ವಿಷಯವಾದ (ಸಂಪಿಗೆಯ) ಸುಗಂಧಕ್ಕಾಗಿ ಭ್ರಮರವು ಕೆಟ್ಟರೆ, ರಸನೇಂದ್ರಿಯ ವಿಷಯವಾದ ರಸಪದಾರ್ಥ (ಮೀನದ ಗಾಳಕ್ಕೆ ಹಚ್ಚಿದ್ದು)ದ ಆಶೆಗಾಗಿ ಮೀನವು ಮೀನಗಾರನ ಬಲ್ಲೆಯಲ್ಲಿ ಬಿದ್ದು ಸಾಯುತ್ತದೆ. ನಯನೇಂದ್ರಿಯ ವಿಷಯವಾದ ರೂಪವನ್ನು ಮೋಹಿಸಿ ಪತಂಗವು ದೀಪದ ಜ್ವಾಲೆಯಿಂದ ಸತ್ತರೆ, ತ್ವಗಿಂದ್ರಿಯ ವಿಷಯವಾದ ಸ್ಪರ್ಶಸುಖವನ್ನು ಬಯಸಿ ರಾಜರ ಕೃತಕದಲ್ಲಿ ಆನೆಯು ಕೆಡುವದು ಶ್ರವಣೇಂದ್ರಿಯ ವಿಷಯವಾದ ಸುಶ್ರಾವ್ಯ ಶಬ್ದವನ್ನು ಮೋಹಿಸಿ ಚಿಗುರೆಯು ಬೇಟೆಗಾರನ ಬಾಣಕ್ಕೆ ಬಲಿಯಾಗುವದು. ಆದರೆ ಪಂಚೇಂದ್ರಿಯಗಳಿಂದ ಪಂಚ ವಿಷಯಗಳನ್ನು ಊಹಿಸಲುಬಾರದು. *ವಿನಾಶ ನಿಶ್ಚಿತವೆಂಬುದು ಪ್ರತ್ಯಕ್ಷವಿದೆ.

ಗುರುವೆ ! ಈ ಕಾಮನ ಬಲೆಯಿಂದ ಪಾರಾಗುವ ಸುಬುದ್ಧಿಯನ್ನು ಕರುಣಿಸಿ ಕಾಪಾಡು. ನಿನ್ನನ್ನೇ ಆಶ್ರಯಿಸಿರುವೆ.

ಶಿವಕವಿಯ ಒಂದೊಂದು ಪದಪ್ರಯೋಗದಲ್ಲಿಯೂ ಸಾರ್ಥಕತೆಯಿದೆ, ಅರ್ಥ ಪೂರ್ಣವಾಗಿದೆ. ಕಾಸಿಮೀಸೆಯ ಮೃಗವೆಂದರೆ ಮೊಲ ಮತ್ತು ಹಮ್ಮಿನಜೀವನೆಂದೂ ಅರ್ಥೈಸಿದ್ದೇವೆ. ಮೊಲದಂತೆ ಜೀವಾತ್ಮನ ಶಕ್ತಿಯೂ ಚಿಕ್ಕದು. ಆದರೆ ಅವನಿಗೆ ಅಂಟಿರುವ ಅಜ್ಞಾನ ಮತ್ತು ಅಹಂಕಾರಗಳು ಮೀಸೆಯಂತೆ ದೊಡ್ಡದಾಗಿ ಬೆಳೆದಿವೆ. ಆಜ್ಞಾನ ಹಾಗೂ ಅಹಂಕಾರವುಳ್ಳ ಜೀವಿಯು ಕಾಮನಬಲೆಯಲ್ಲಿ ಸಿಕ್ಕು ಸೋತು ಪಾರಾಗದೆ ಘಾಸಿಯಾಗುವದು. ಕೊನೆಗೆ ಸಾಕುಸಾಕಾಗಿ ಶ್ರೀಗುರುವಿನ ಪಾದಕಮಲ ವನ್ನು ಆಶ್ರಯಿಸದೇ ಶಾಂತಿಯಿಲ್ಲವೆಂಬುದು ಈ ಶರಣನ ಬಯಕೆಯಾಗಿದೆ.

ರಚನೆ : ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ|

ಚಿನ್ಮಯ ಪ್ರಭು | ಮಾಯಾರಿ ! ಮಾರಾರಿ!! ಕಾಲಾರಿ!!! ||ಪ||೧

ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು ||೨

ನಾದಬ್ರಹ್ಮ ಭೇದವ ಶೋಧಿಸಿ ದೃಢಚಿತ್ತನಾಗಿ

ಸಾಧಿಸಿ ಶಿವಕಲೆಯನ್ನು ಮೋದಗೊಳ್ಳುವಂತೆ ಮಾಡಿ | ಚಿನ್ಮಯ ಪ್ರಭು!! ೩

ಲಿಂಗಾಂಗಸಂಗದ ಇಂಗಿತದ ಬೋಧವಿತ್ತು |

ಲಿಂಗೈಕ್ಯನ ಮಾಡುತೆ ಮಂಗಲ ಶಿವಯೋಗಿಯೆನಿಸಿ | ಚಿನ್ಮಯ ಪ್ರಭು||೪

ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ

ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ

ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ ಕುಮಾರ   || ೧||     

ಮನೆಯಬಿಟ್ಟೆ ಶಪಥವ ತೊಟ್ಟೆ ಬಂಧು ಬಳಗವಬಿಟ್ಟೆ

ಯಳಂದೂರ ಬಿದರಿ ಯತಿಗಳ ನಂಬಿದೆ ಮನಮುಟ್ಟಿ ಕುಮಾರ  || ೨ ||

ಜೋಳಿಗೆ ಬಿಟ್ಟೆ ಹಠವನು ತೊಟ್ಟೆ ಶಾಲೆ ಕಲಿಯಲೆಂದು

ಅಕ್ಷರ ಕಲಿಯುತ ಶಿಕ್ಷಣ ನೀಡಿದೆ ನಾಡಮಕ್ಕಳಿಗೆ ಕುಮಾರ  || ೩ ||

ಲಿಂಗವಿರದ ನಡೆ ಏನುಭೂಷಣ ಲಿಂಗಸಂಗವೆ ಲೇಸು

ಲಿಂಗವಿರದ ಭವಿಗಳ ಸಂಗ ಎಂದೆಂದಿಗೂ ಬೇಡ ಕುಮಾರ  || ೪ ||

ಮಠವು ಎಂದರೆ ಏನದಕರ್ಥ ಧರ್ಮ ಸಂಸ್ಕೃತಿ ಕೇಂದ್ರ

ನೊಂದ ಜೀವಕೆ ಸಾಂತ್ವನ ನೀಡುವ ನೆಮ್ಮದಿಯ ತಾಣ ಕುಮಾರ  || ೫ ||

ಅನ್ನ ಅರಿವು ಆಶ್ರಯ ನೀಡುವ ಪುಣ್ಯತಾಣ ಮಠಗಳು

 ಅನ್ನದಾಸೋಹ ಕನ್ನಡ ನಾಡಿನ ಹೆಮ್ಮೆ ನಮ್ಮ ಮಠವು ಕುಮಾರ  || ೬ ||

ಬಯಸದೆ ಬಂದಿತು ಮಠದಧಿಕಾರ ಹಾನಗಲ್ಲ ಮಠವು

ಮಲ್ಹಣಾರ್ಯನು ಕೈ ಹಿಡಿದು ಕರೆದನು ನಾಡಸೇವೆಗೆಂದು ಕುಮಾರ  || ೭ ||

ಹಳ್ಳಿ ಪಟ್ಟಣಗಳ ನಿಲ್ಲದೆ ಸುತ್ತಿದೆ ಬರಿಗಾಲಲಿ ನಡೆದೆ

ಧರ್ಮಜಾಗೃತಿಗಾಗಿ ಭಕ್ತ ಮನೆಯ ಬಾಗಿಲಿಗೆ ಕುಮಾರ  || ೮ ||

 ಶಿವಯೋಗ ಮಂದಿರ ಮಹಾಸಭೆಯನು ನಿಷ್ಠೆಯಿಂದಲಿ ಕಟ್ಟಿ

ವಚನದ ಕಟ್ಟನು ಶೋಧಿಸಿ ರಚಿಸಲು ಹಳಕಟ್ಟಿಗೆ ಕೊಟ್ಟೆ ಕುಮಾರ  || ೯ ||

ಗುರು ವಿರಕ್ತರು ನಾಡಿನ ಭಕ್ತರು ಕೂಡಿ ನಡೆಯೆ ಶಕ್ತಿ

ಸಮಯಭೇದವ ಕಳೆದು ಸಮರಸ ದಾರಿ ತೋರಿದನು ಕುಮಾರ  || ೧೦ ||

ಮಕ್ಕಳಿರದ ಶಿರಸಂಗಿ ದೊರೆಗೆ ಮನ ಒಲಿಸಿದೆ ತಿಳಿಸಿ

ನಾಡ ಮಕ್ಕಳ ಶಿಕ್ಷಣಕಾಗಿ ದಾನ ನೀಡಿಸಿದೆ ಕುಮಾರ   || ೧೧ ||

ಸ್ವಾಮಿ ಎಂದರೆ ಒಡೆಯನು ಅಲ್ಲ ನಿಜದಿ ಸೇವಕನು

 ಕಾಯ ವಾಚಾ ಮನಸ್ಸಿನಲ್ಲಿ ನಿರ್ಮೋಹಿಯು ನೀನು ಕುಮಾರ  || ೧೨ ||

ರಾಷ್ಟ್ರ ನಿಷ್ಠೆಗೆ ಖಾದಿ ಧರಿಸಿದೆ  ರೋಗಿಗಳನುಪಚರಿಸಿ

 ಬರಗಾಲದಿ ದಾಸೋಹ ಗೈದು ಜನರ ಬದುಕಿಸಿದೆ ಕುಮಾರ  || ೧೩ ||

ಅಂಧ ಅನಾಥರು ಆಶ್ರಯ ರಹಿತರು ಯಾರಿಗೂ ಬೇಡಾದವರು

 ಗಾನಯೋಗಿ ಪಂಚಾಕ್ಷರಿ ಎಂದು ನಾಡ ಬೆಳಗಿದರು ಕುಮಾರ  || ೧೪ ||

ಯಾರಿಗೆ ಯಾರು ಯಾರಿಂದೇನು ನಮಗಾದವನೆ ದೈವ

 ಹಣೆಬರಹ ಬದಲಿಸಿ ಬಾಳಲು ಕಲಿಸಿದ ಅಂಧರ ತಂದೆಯು ನೀ ಕುಮಾರ  || ೧೫ ||

 ಲಿಂಗ ವಿಭೂತಿ ರುದ್ರಾಕ್ಷಿ ರೂಪ ಮಹಾ ಜಂಗಮ ನೀನೆ

 ಅಂಧ ಅನಾಥರ ದೈವ ನೀನೆ ತಾಯಿಯ ಪ್ರತಿರೂಪ ಕುಮಾರ || ೧೬ ||

 ಇಳಕಲ್ ಪೂಜ್ಯರು ವಿಜಯ ಮಹಾಂತರು ಹಾವೇರಿಯ ಶಿವಬಸವರು

 ಎಲ್ಲ ಯತಿಗಳು ಕೂಡಿ ಬೆಳಸಿದರು ಶಿವಯೋಗ ಮಂದಿರವ ಕುಮಾರ || ೧೭ ||

ಲಿಂಗವಂತರು ಶೂದ್ರರೆಂಬ ಪರಳಿಯ ವಾದದಲಿ

 ಶಾಸ್ತ್ರಸಮ್ಮತವಾಗಿ ಮಿಗಿಲೆಂದು ವ್ಯಾಜ್ಯ ಗೆಲ್ಲಿಸಿದೆ ಕುಮಾರ || ೧೮ ||

 ಶರಣರು ಮೆಟ್ಟಿದ ಧರೆಯು ಪಾವನ ಸೊನ್ನಲಿಗೆಯ ಪುರವು

ನಾಲತವಾಡದ ವೀರೇಶ್ವರರು ಕರುಳ ಕುಡಿಯವರು ಕುಮಾರ || ೧೯ ||

 ನಂಬಿ ಕೊಂಡರೆ ಶಿವನಪ್ರಸಾದ ನಂಬದಿರ್ದೊಡೆ ವಿಷವು

 ತುತ್ತಿಗೊಮ್ಮೆ ಶರಣೆಂದು ಉಂಡರೆ ಲಿಂಗ ಪ್ರಸಾದ ಕುಮಾರ  || ೨೦ ||

 ಬಯಸಿ ಉಣಲಿಲ್ಲ ಹಬ್ಬದೂಟವ ಬಾಯ ಚಪಲಕೆ ಬೇಡಿ

 ಬಯಸದಿಹ ಲಿಗಭೋಗವು ಲಿಂಗಕರ್ಪಿತವು ಕುಮಾರ  || ೨೧ ||

 ಬಸವನ ನೆನೆಯುತ ಧರಿಸೊ ಭಸ್ಮವ ಮುಕ್ತಿಯು ನಿನಗಹುದು

ಜಾಣ ಜಾಣರು ಸಂತ ಯತಿಗಳು ಮೋಕ್ಷ ಪಡೆದಿಹರು ಕುಮಾರ  || ೨೨ ||

ಭಸ್ಮಧೂಳಿಯು ಪಾವನ ಚಿನ್ನ ಶಿವನ ಮೈ ಬೆಳಗು

 ಶರಣರ ನೆನೆಯುತ ಧರಿಸಲು ನಿತ್ಯ ಪಾಪ ನಾಶವು ಕುಮಾರ  || ೨೩||

 ಹಿಡಿದ ನೇಮವ ಬಿಡದ ಹಠವು ತ್ಯಾಗಭಾವ ಸಿರಿಯು

ಎಲ್ಲರೊಂದಿಗೆ ಬೆರೆತು ಬಾಳುವ  ಸಮತೆಯ ಸನ್ನಿಧಿಯು ಕುಮಾರ  || ೨೪ ||

 ಪೂಜಿಪೆಯಾದರೆ ಯಾವುದು ಪೂಜೆ ತಿಳಿದು ಮಾಡು ಮನುಜ

ಸಮಾಜ ಸೇವೆಯೆ ಲಿಂಗಪೂಜೆ ಮಾಡಿತೋರಿದೆ ನೀ ಕುಮಾರ  || ೨೫ ||

 ಉಳಿಯ ಮುಟ್ಟದ ಲಿಂಗವೆಂತು ಮನವ ಮುಟ್ಟುವುದು

ಕೊಟ್ಟ ಗುರುವಿನ ಕಷ್ಟವೇನು ಯಾರು ಬಲ್ಲವರು ಕುಮಾರ  || ೨೬ ||

 ಲಿಂಗ ಪ್ರಾಣ ಪ್ರಾಣವೆ ಲಿಂಗ ಇಷ್ಟಲಿಂಗದಿ ನಿಷ್ಠೆ

 ಲಿಂಗತಾನು ತಾನೆ ಲಿಂಗವು ಲಿಂಗ ರೂಪನು ಕುಮಾರ  || ೨೭ ||

 ಕಿಂಕರನಾದವ ಶಂಕರ ನೋಡು ಕಿಂಕರನಾಗಿರ ಬೇಕು

ಮೇಲು ಗದ್ದುಗೆ ಬಯಸದ ಜೀವ ದ್ವಿತಿಯ ಶಿವನಾಯ್ತು ಕುಮಾರ  || ೨೮ ||

 ಸುಖವ ಬಯಸದೆ ದುಡಿದ ಜೀವ ನಾಡಿನೇಳ್ಗೆಯ ಬಯಸಿ

ನೊವನುಂಗಿ ನಂಜನುಂಡು ನೀಡಿದೆ ಅಮೃತವ ಕುಮಾರ  || ೨೯ ||

 ಸಾವು ನೋವಿಗೆ ಹೆದರುವಿ ಯಾಕೊ ಸಾಯದವರು ಯಾರು

ಕಾಯ ಮಾಯಾ ಮೋಹನಳಿದು ಮರಣ ಗೆಲಿದವನೊ ಕುಮಾರ  || ೩೦ ||

 ಮುಕ್ತಿಯಂತೆ ಯಾವುದು ಮುಕ್ತಿ ಮೋಕ್ಷ ಅವರಿಗಿರಲಿ

ಜನ್ಮ ಜನ್ಮದಲು ಸೇವೆಗಾಗಿ ಮತ್ತೆ ಬರುವೆನೆಂದ ಕುಮಾರ  || ೩೧ ||

 ಕೋಪವಂಟಿದ ಯತಿಯ ತಪವು ಪಾಪ ಕೂಪ ಕೆಸರು

ಸಹಜ ಪ್ರವೃತ್ತಿ ಶಾಂತಮತಿ ಪಡೆವನೊ ಸದ್ಗತಿ ಕುಮಾರ  || ೩೨ ||

 ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ

ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ ಕುಮಾರ  || ೩೩ ||

 ಸಮಾಜ ಸೇವೆಯೆ ತಮ್ಮಯ ಉಸಿರು ಸಮಾಜ

ನಿಮ್ಮ ಮಠವು ಸಮಾಜ ಸಮಾಜ ಸಮಾಜವೆಂದು ಪ್ರಾಣ ನೀಗಿದೆ ನೀ ಕುಮಾರ || ೩೪ ||

 ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ

ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ಕುಮಾರ  || ೩೫ ||

 ನಿನ್ನ ಹೊರತು ಯಾರಿಲ್ಲ ಗತಿ ಮತಿ ನಾಸ್ತಿ ಅನ್ಯಥಾ ನಾಸ್ತಿ

 ನಿನ್ನ ಪಾದಕೆ ಕೋಟಿ ಕೊಟಿ ಶರಣು ಶರಣಾರ್ಥಿ ಕುಮಾರ  || ೩೬ ||

ಇಂಗ್ಲೀಷ ಮೂಲ: ಶ್ರೀಕಂಠ ಚೌಕೀಮಠ

ಕನ್ನಡ ಭಾಷಾಂತರ :ಶ್ರೀ ಎಮ್.ಎ.ಹಿರೇವಡೆಯರ

“ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ತೊರಿಸುತ್ತೇನೆ. ಸಾಧು ಪುರುಷರನ್ನು ಉದ್ಧ್ದರಿಸುವುದಕ್ಕಾಗಿ, ಪಾಪಕರ್ಮ ಮಾಡುವವರನ್ನು ವಿನಾಶಮಾಡಲಿಕ್ಕಾಗಿ ಮತ್ತು ಧರ್ಮವನ್ನು ಸದೃಢವಾಗಿ ಸ್ಥಾಪಿಸುವದಕ್ಕಾಗಿ ಸಾಕಾರ ರೂಪದಿಂದ ನಾನು ಯುಗ-ಯುಗಗಳಲ್ಲಿ ಪ್ರಕಟವಾಗುತ್ತಿರುತ್ತೇನೆ.

ಕನ್ನಡನಾಡಿನ ಇಪ್ಪತ್ತ್ತನೆಯ ಶತಮಾನದ ಅವಿಸ್ಮರಣೀಯ ಕಾಲಘಟ್ಟದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಠಿ ಯಿಂದ ಸಮುಷ್ಠಿಯುತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.

19ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿ, 20ನೇಯ ಶತಮಾನದ ಪೂರ್ವಾರ್ಧಭಾಗದವರೆಗೆ ಜೀವಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಈ ನಾಡಿನ ಯಾವದೇ ಒಂದು ಭಾಗ ಅಥವಾ ಕಾಲಕ್ಕೆ ಸಂಬಂಧ ಪಟ್ಟವರಲ್ಲ ,ಅವರು ಸಮಗ್ರ ಮನುಕುಲಕ್ಕೆ ಸಂಭಂಧ  ಪಟ್ಟವರು. ಶ್ರೀ ಕುಮಾರ ಶಿವಯೋಗಿಗಳ ಜೀವನ ಅವಿಸ್ಮರಣೀಯ, “ಸಮಾಜಸೇವೆಯೇ ಶಿವಪೂಜೆ” ಎಂಬ ಸೂಕ್ತಿ ಇವರಿಗೆ ಸಹಜವೆಂಬಂತೆ ಸಂದಿದೆ.

ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿ  ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬ ಒಂದರಲ್ಲಿ, ಆತ್ಮಬಲ ಆಧ್ಯಾತ್ಮ ಸಾಧನೆಯಲ್ಲಿ ಜೀವಿಸುತ್ತಿದ್ದ ಬಸಯ್ಯ-ನೀಲಮ್ಮ ಎಂಬ ದಂಪತಿಗಳ ಪವಿತ್ರ ಗರ್ಭದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು.

              ಅಂದೊಂದು ದಿನ ರಾತ್ರಿ ಒಬ್ಬ ಜಂಗಮ ಶಿವಯೋಗಿ ತಾಯಿ ನೀಲಮ್ಮನ ಕನಸಿನಲ್ಲಿ ಕಂಡು, ಸುಂದರವಾದ ಸುವಾಸನೆಯ ಹೂವೊಂದನ್ನು  ಕೊಟ್ಟು “ತಾಯಿ ನೀಲಮ್ಮ  ನಿನ್ನ ಗರ್ಭದಲ್ಲಿ ಶಿವನ ಅಪೇಕ್ಷೆಯ ಮೇರೆಗೆ ಕಾರಣಿಕ ಪುರುಷನ ಜನನ ವಾಗುವುದೆಂದು” ಹೇಳಿದ ವಾಣಿ ಹೊಸಯುಗದ ನಾಂದಿ ಹಾಡಿತು.

 ಪ್ರಭನಾಮ ಸಂವತ್ಸರ ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿಯ ಬುಧವಾರ ಬೆಳಗಿನಜಾವದಲ್ಲಿ ಸಪ್ಟಂಬರ 11ರಂದು, ಕ್ರಿ.ಶ, 1867ರಲ್ಲಿ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು. ಹುಟ್ಟಿದ ಮಗುವಿಗೆ ಹಾಲಯ್ಯ ನೆಂದು ನಾಮಕರಣ, ಹುಟ್ಟಿನಿಂದಲೇ ಅದ್ಭುತಗಳನ್ನು ಮೆರೆದ ಮಗು ಹುಣ್ಣಿಮೆಯ ಚಂದ್ರನಂತೆ ಅರಳಿ, ಆರುವರ್ಷಗಳು ತುಂಬಿದಾಗಲೇ ಓದು-ಬರಹಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದ ಹಾಲಯ್ಯನಿಗೆ ಅಕ್ಷರ ದೀಕ್ಷೆ ನೀಡಿದವರು ಮನೆಯನ್ನೆ ಶಾಲೆಯನ್ನಾಗಿ ಮಾಡಿದ ಅಜ್ಜ ಕೊಟ್ಟೂರು ಬಸವಾರ್ಯರು.

              ಹುಟ್ಟಿನಿಂದಲೇ ತ್ಯಾಗ ಮನೋಭಾವನೆಯನ್ನು ಹೊತ್ತು ತಂದ ಹಾಲಯ್ಯ ಸುತ್ತಲಿನ ಪ್ರಪಂಚವನ್ನು ಕರುಣೆÂ ಪ್ರೀತಿಗಳಿಂದಲೇ ಕಾಣುತ್ತ ಬೆಳೆದವರು. ವಿನಯಶೀಲತೆ ಅನುಕಂಪ ಹಾಲಯ್ಯನ ಹುಟ್ಟುಗುಣಗಳು. ಆಗಾಗ ಧ್ಯಾನಾಸಕ್ತನಾಗಿ ಮೌನದಲ್ಲಿಯೇ ಮುಳಗುತ್ತಿದ ಹಾಲಯ್ಯ ಬೆಳೆದಂತೆ ಬೇರೆಯವರೊಡನೆ ಆಡುವ ಆಟಪಾಠಗಳನ್ನು ತ್ಯಜಿಸಿ ಮೌನಿಯಾಗಿ ಜೀವಿಸಹತ್ತಿದ. ಶಾಲಾ ಅಭ್ಯಾಸದಲ್ಲಿ ಅಭಿರುಚಿ ಇದ್ದರೂ, ತ್ಯಾಗ, ಅನುಕಂಪ, ಆತ್ಮಜ್ಞಾನಗಳಕಡೆಗೆ ಬಾಲಕನ ಒಲವು ಇದ್ದಂತೆ ಭಾಸವಾಗುತ್ತಿತ್ತು.

ಹಾಲಯ್ಯ ಹುಟ್ಟಿದ ಕುಟುಂಬ ಬಡತನದಲ್ಲಿಯೇ ಮುಳುಗಿ ಏಳುವ ಆ ಕರುಣಾಜನಕ ಸ್ಥಿತಿಯಲ್ಲಿ  ಮತ್ತೊಂದು ಕರುಣಾಜನಿಕ ಘಟನೆಯನ್ನು ದೈವಿಶಕ್ತಿ ತಂದೊಡ್ಡಿತು. ತಂದೆ ಬಸಯ್ಯನವರ ಅಕಾಲಿಕ ಮರಣ, ತಾಯಿಗೆ ಸಿಡಿಲು ಬಡಿದಂತಾಯಿತು. ಇದನ್ನು ಕಂಡುಂಡ ಬಾಲಕ ಹಾಲಯ್ಯನ ಅಂತರಂಗದ ತುಡಿತ ಒóಂದು Pಡೆಯಾದರೆ ಬಡತನದ ತುಳಿತ ಮತ್ತೊಂದು ಕಡೆ.

              ಕಂತೆ ಭಿಕ್ಷವೇ ಮನೆತನದ ಬಡತನ ಕಳೆಯುವ ಜೀವನಾಧಾರ  ಮತ್ತು ಶಿವನ ಉಂಬಳಿ ಎಂಬಂತೆ, ಮನಸ್ಸ್ಸಿಲ್ಲದಿದ್ದರೂ ಮನೆ ಮನೆಯ  ಕಂತೆ ಭಿಕ್ಷಕ್ಕೆ ಹೊರಟ ಬಾಲಕ ಹಾಲಯ್ಯನಿಗೆ ಒಂದು ಘಟನೆ ಬಯಸದೆ ಬಂದ ಭಾಗ್ಯವಾಗಿ ಬಂದಿತು. ಆ ಘಟನೆ ಬಾಲಕ ಹಾಲಯ್ಯನ ಜೀವನದ ಹೊಸ ಘಟ್ಟಗಳಿಗೆ ನಾಂದಿ ಹಾಡಿತು. ಬಾಗಿಲು ಬಳಿ ನಿಂತ ಹಾಲಯ್ಯನಿಗೆ, ಭರಮಪ್ಪನೆಂಬ ಯಜಮಾನನ ಭಾರವಾದ ಮಾತುಗಳು ಹೊಸ ದಿಕ್ಕನ್ನೆ ತೋರಿಸಿತು.” ಈಗ ನಿನಗೆ 12 ವರ್ಷಗಳು ತುಂಬಿವೆ, ಇನ್ನೂ ಎಷ್ಟುದಿನ ಭಿಕ್ಷೆಬೇಡಿ ಜೋಳಿಗೆ ತುಂಬುವ ಸಾಹಸ ಮಾಡುವೆ? ಹೋಗು ಬದುಕಲು ಶಿಕ್ಷಣದ ಮೊರೆ ಹೋಗು ” ಎಂಬ ಬಿರು ನುಡಿಗಳು  ಬಾಲಕನ ಮೇಲೆ ಪರಿಣಾಮ ಬೀರಿ  ಎಚ್ಚರಗೊಳ್ಳುವಂತೆ ಮಾಡಿದವು. ಹಾಲಯ್ಯನ ಮನದಂಗಳಲ್ಲಿ ಭರಮಪ್ಪನ ಬಿರುನುಡಿಗಳು ಪ್ರತಿಧ್ವನಿಸ ತೊಡಗಿದವು.

              ಮರುದಿನ ಬಟ್ಟೆ ತೊಳೆಯಲೆಂದು ಊರಹೊರಗಿನ ಬಾವಿಗೆ ಹೋದ ಹಾಲಯ್ಯ ಮರಳಿ ಮನೆಗೆ ಬರಲಿಲ್ಲಿ. ಬಟ್ಟೆತೊಳೆಯುವ  ಕೆಲಸ ಮುಗಿಸಿ, ಅವುಗಳನ್ನು ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ಮಿತ್ರರೊಬ್ಬರಿಗೆ ಹೊರಸಿ ಹಾಲಯ್ಯ, ಕಜ್ಜರಿ ಎಂಬ ಊರಿಗೆ ಕಾಲುನಡಿಗೆಯ ಪ್ರಯಾಣ ಬೆಳೆಸಿದ. ಎಲ್ಲಿಗೆ ಹೋಗಲಿ…? ಹಾಲಯ್ಯನ ಅಂತರಂಗದ ಪ್ರಶ್ನೆ ಮೈಮನಗಳೆಲ್ಲ ತತ್ತರಿಸಿದರೂ ತಾಳ್ಮೆಗೆಡದ ಹಾಲಯ್ಯ  ಮಾರ್ಗದ ಬದಿಗಿದ್ದ ಮರದ  ಕಟ್ಟೆಯ ಮೇಲೆ ಕೈಕಟ್ಟಿಕೊಂಡು ಕುಳಿತಾಗ ರಾಚಯ್ಯ ಹಿರೇಮಠರೆಂಬ ಯಜಮಾನರು ಹಾಲಯ್ಯನ ಮೈತಟ್ಟಿ ಮಾತನಾಡಿಸಿದರು. ಆತನ ದಿವ್ಯಮುಖದ ತೇಜಸ್ಸಿಗೆ ಮಾರು ಹೋಗಿ, ಮನಕರಗಿದಂತಾಗಿ ಬಾಲಕ ಹಾಲಯ್ಯನನ್ನು ಮನೆಗೆ ಕರೆದುಕೊಂಡು ಹೋದರು, ಹಸಿದ ಹೊಟ್ಟೆಗೆ ಪ್ರಸಾದ ನೀಡಿದ ನಂತರ, ಮನದ ಹಸಿವೆಯನ್ನು ಅರ್ಥಮಾಡಿಕೊಂಡ ರಾಚಯ್ಯ ಹಾಲಯ್ಯನಿಗೆ ಪ್ರಾಥಮಿಕ ಶಿಕ್ಷಣ ಪೂರೈಸುವ ಸರ್ವಾನುಕೂಲತೆಯನ್ನು ಮಾಡಿದರು, ಹಾಲಯ್ಯನಿಗೆ ಎಂದಿಲ್ಲದ ಸಂಬ್ರಮ, ಸಮಾಧಾನ..

              ಅಂದಿನಕಾಲದಲ್ಲಿ ಕನ್ನಡ ಏಳನೆ ಇಯತ್ತೆಯ ಮೂಲ್ಕಿ ಪರೀಕ್ಷೆಯಲ್ಲಿ ಪಾಸಾದರೆ ಮಾಮಲೇದಾರನಿಗೆ ಸಿಕ್ಕಷ್ಟು ಗೌರವ, ಕಜ್ಜರಿ ಗ್ರಾಮದಿಂದ 123 ಕಿ.ಮಿ. ದೂರ ಇದ್ದ ಧಾರವಾಡ ಪಟ್ಟಣದಲ್ಲಿ ಮೂಲ್ಕಿ ಪರೀಕ್ಷೆ ಪತ್ರಿಕೆ ಬರೆಯಲು ಕಾಲುನಡಿಗೆಯಿಂದ ಸಹಚರರೊಡನೆ ಹಾಲಯ್ಯ£ವರು ಪ್ರಯಾಣಿಸಿದರು, ಬರಿಗಾಲಿನ ಹಾಲಯ್ಯ ಧಾರವಾಡ ವನ್ನು ಮುಟ್ಟಿ ಪರೀಕ್ಷೆ ಬರೆಯುವಾಗ ಹಾಲಯ್ಯನವರಿಗೆ  ಮೈತುಂಬ ಜ್ವರದ ಬಾಧೆ !!s

              ದೈವದಾಟವನ್ನು ಅರಿತವರಾರು? ಹಾಲಯ್ಯ ಮೂಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್uನಾಗಿ ಮೈಮರೆಸಿಕೊಂಡು ಕುಳಿತು ಗಾಡಾಂಧಕಾರದಲ್ಲಿಯೇ ಕಾಲ ಕಳೆಯ ಬೇಕಾಯಿತು. 15 ದಿವಸಗಳವರೆಗೆ ಹಾಲಯ್ಯನಿಗೆ ಎಕಾಂತದ ಆಶ್ರಯ,  ಶಿಕ್ಷಕರೊಬ್ಬರು ಬಂದು ಹಾಲಯ್ಯನನ್ನು ಸಂತೈಸಿ ಮೂಲ್ಕಿ ಮರು ಪರೀಕ್ಷೆಗೆ ಕಟ್ಟಲು ಮಮತೆಯಿಂದ ಮನವಲಿಸುವ ಪ್ರಯತ್ನ ಮಾಡಿದರು. ಮರು ಪರೀಕ್ಷೆಗೆ ಕಟ್ಟಲು ಮನಸ್ಸುಮಾಡದ ಹಾಲಯ್ಯನವರಿಗೆ  ತಾಯಿಯ  ಮನೆಯ  ನೆನಪಾಗಿ, ಎನಾದರೊಂದು ಕಾಯಕಮಾಡಿ ಕಾಯವನ್ನು ಕಾಪಾಡುವ ನಿರ್ಣಯದೊಂದಿಗೆ ತಾಯಿಯ ತೌರುಮನೆ ಲಿಂಗದ ಹಳ್ಳಿಗೆ ತೆರಳಿದರು.

              ಹಾಲಯ್ಯ ಲಿಂಗದ ಹಳ್ಳಿಯಲ್ಲಿ ಸಣ್ಣಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ಕೊಡುವದರ ಜೊತೆಗೆ ಸ್ವ ಅಧ್ಯಯನ ಹಂಬಲದಿಂದ ನಿಜಗುಣ ಶಿವಯೋಗಿಗಳ ತತ್ವಜ್ಞಾನ ಅರಿಯಲು, ಅಲ್ಲಿನ ಹಿರಿಯರಾದ ಬಸಯ್ಯ ನವರ ಸಂಪರ್ಕದಲ್ಲಿ ನಿಜಗುಣರ ತತ್ವ ಶಾಸ್ತ್ರದ ಕವಿತೆಗಳ ಅಧ್ಯಯನ ಪ್ರಾರಂಭಿಸಿದರು.

ಹಾಲಯ್ಯ ಲಿಂಗದ ಹಳ್ಳಿಯಲ್ಲಿರುವೆನೆಂದು ತಿಳಿದ ತಾಯಿ ನೀಲಮ್ಮ ಮಗನನ್ನು ಕಾಣಲು ಅಲ್ಲಿಗೆ ಬರುತ್ತಾರೆ. ಹರೆಯದ ಮಗನನ್ನು ಕಂಡು ಸಂತೋಷಭರಿತಳಾದ ತಾಯಿ ಮಗನ ಮದುವೆಯ  ಪ್ರಸ್ತಾಪ ಮಾಡಿದಾಗ ಮಗ ಹಾಲಯ್ಯನಿಂದ ಅತ್ಯಂತ ಅನಿರೀಕ್ಷಿತ ಉತ್ತರವಾಗಿತ್ತು.

“ಮದುವೆ ಮಾಡಿಕೊಂಡು ನಾನು ಸಂತೋಷಪಡಬೇಕಾಗಿಲ್ಲ ನಾನು ಬ್ರಹ್ಮಚಾರಿಯಾಗಿಯೇ ಜನಿಸಿದ್ದೇನೆ.  ನಿನ್ನ ಜೀವನ ಪೋಷಣೆಗಾಗಿ ಮತ್ತೊಬ್ಬ ಮಗನಿದ್ದಾನೆ ಮನೆಗೆ ಬಂದ ಸೊಸೆ ಮತ್ತು ಮಗ ನಿನ್ನ ವೃದ್ಧಾಪ್ಯ ಜೀವನಕ್ಕೆ ರಕ್ಷಣೆ ಕೊಡುತ್ತಾರೆ”. ಎಂಬ ದೃಢ ನಿರ್ಧಾರದ  ಹಾಲಯ್ಯ ನವರ ಮಾತುಗಳು ತಾಯಿಗೆ ತಡೆಯಲಾರದ ದು:ಖವನ್ನು  ತಂದೊಡ್ಡಿದವು.

ಹಾಲಯ್ಯ ತನ್ನ ಹದಿಹರೆಯದಲ್ಲಿಯೇ,ತಾನು ಇಂದ್ರಿಯ ಸುಖಕ್ಕಾಗಿ ಜನಿಸಿದವನಲ್ಲ ಎಂಬ ಕೊನೆಯ ನಿರ್ಧಾರಕ್ಕೆ ಬಂದಿದ್ದರು. ತನ್ನ ಸ್ವಸಂತೋಷದಲ್ಲಿಯೂ ಅವರ ನಂಬಿಕೆ ಇರಲಿಲ್ಲ. ಹಾಲಯ್ಯ£ವರ ಹುಟ್ಟುಗುಣ ವೆಂದರೆ ತ್ಯಾಗ, ಸುತ್ತಲಿನ ಸಮಾಜದ ಸುಖವೇ  ಅವರ ಅಂತರಂಗದ ಮೂಲಮಂತ್ರವಾಗಿತ್ತು. ಮಾತೆಯ ಮಮತೆಗೆ ಮರುಮಾತನಾಡುವವನೂ ತಾನಲ್ಲವೆಂಬ ತನ್ನ ಮಾತೃಪ್ರೇಮದ ಎಳೆಯನ್ನು ಮಾತೆಯ ಮುಂದೆ ಬಿಚ್ಚಿಟ್ಟರು.  vಮ್ಮ  ಜವಾಬ್ದಾರಿಯ ಅರಿವನ್ನು ತಾಯಿಯ ಅರಿವಿನಲ್ಲಿ ಮಾಡಿಸಿದರು. ಶಿಕ್ಷಕನ ಕಾಯಕದಿಂದ  ತಾವು ಕೂಡಿಟ್ಟ ಮುನ್ನೂರು ರೂಪಾಯಿಗಳನ್ನು ತುಂಬು ಹೃದಯದಿಂದ  ಹಾಲಯ್ಯ ಮಾತೆಯ  ಮಡಿಲಿನ ಕಂದನಾಗಿ ಉಡಿಯನ್ನು ತುಂಬಿದರು.

“ಇಂದಿನಿಂದ ನಾನು ನಿನ್ನ ಮಗನಲ್ಲ. ತಾಯಿಮಗನೆಂಬ ಕರುಳಕುಡಿ ಇಂದಿಗೆ ಹರಿಯಿತು. ಜೀವನದಲ್ಲಿ ನಾನು  ಆರಿಸಿಕೊಂಡ ಶಿವಮಾರ್ಗದಲ್ಲಿ  ಶಾಶ್ವತವಾಗಿ ಮುನ್ನಡೆಯುವಂತೆ ನನ್ನನ್ನು ಬಿಡಬೇಕು, ಇದು ನನ್ನ ಅಂತರಂಗದ ಒಲವು.”  ಎಂದು ನುಡಿದ ಹಾಲಯ್ಯ  ಕ್ಷಣಮಾತ್ರ  ನಿಲ್ಲದೆ ಅಲ್ಲಿಂದ ಹೊರಟು ಹೋದರು. ಮಗನ ನುಡಿಗಳನ್ನು ಕೇಳಿದ  ನೀಲಮ್ಮನ ಮಾತುಗಳು  ಮೌನವಾದವು,

ನಿಜಗುಣ ಶಿವಯೋಗಿಗಳ ತತ್ವ ಜ್ಞಾನದ ಸವಿಯನ್ನು  ಸವಿಯಬೇಕೆಂಬ ಉತ್ಕಟ  ಇಚ್ಛೆಯಿಂದ ಹಾಲಯ್ಯ£ವರ ಹೆಜ್ಜೆಗಳು ಹುಬ್ಬಳ್ಳಿಯ ಕಡೆಗೆ ನಡೆದವು.   ನಿಜಗುಣರ ಮಾರ್ಗದರ್ಶನ ಪಡೆಯುವುದು  ಹಾಲಯ್ಯ£ವರ  ಮನದಾಳದ ಬಯಕೆಯಾಗಿತ್ತು,  ಇದೇ ನಿನಗೆ ಮುಕ್ತಿಮಾರ್ಗವೆಂದು ಅಂತರಂಗ ಒತ್ತಿ ಒತ್ತಿ ಹೇಳುತ್ತಿತ್ತು. ಚಿಕ್ಕ ವಯಸ್ಸಿನಲ್ಲಿಯೇ  ಹಾಲಯ್ಯ£ವರ ಹೃದಯ  ಪರಿಪೂರ್ಣತೆಯನ್ನು ಹೊಂದಿ, ಭೋಗವನ್ನು ಬೀಸಾಡಿ ತ್ಯಾಗ ಮಾರ್ಗದತ್ತ ಮುನ್ನಡೆಯಲು ,  ಆರೂಢಾವಸ್ಥೆಯನ್ನು ಪಡೆದು ಭಕ್ತರಿಗೆ  ನಿಜಗುಣ ಶಿವಯೋಗಿಗಳ ಶಾಸ್ತ್ರಾಧ್ಯಯನವನ್ನು ಉಣಬಡಿಸುತ್ತಿದ್ದ ಸಿದ್ಧಾರೂಢರ ಮಠದತ್ತ ಹಾಲಯ್ಯ£ವರು  ತೆರಳಿದರು

ಸಿದ್ಧಾರೂಢರು   ಅಂದಿನಕಾಲದ  ಅತಿ ದೊಡ್ಡ ಸಿದ್ಧಿಪುರುಷರಾಗಿದ್ದರು,  ಗುರುಸಿದ್ಧಾರೂಢರ ಮಾರ್ಗದರ್ಶನದಲ್ಲಿ ಹಾಲಯ್ಯ  ಷಟ್‍ಸ್ಥಲ ಸಿದ್ಧಾಂತವನ್ನು ಅಧ್ಯಯನ ಪ್ರಾರಂಭಿಸಿ ಸಿದ್ಧಾರೂಢರ ಅಂತರಂಗವನ್ನು ಗೆದ್ದುಕೊಂಡು, ಗುರುವಿನ ಪಾದಕಮಲಗಳಡಿಯಲ್ಲಿ  ಅಧ್ಯಯನ ಮಾಡುತ್ತಿದ್ದರೂ  ಆ ಗುರು ಮಠದ   ಪರಿಸರz ಅನಾನುಕೂಲತೆಗಳಿಂದ,  ತನ್ನ  ಲಿಂಗಪೂಜೆ ಪ್ರಸಾದಕ್ಕಾಗಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಅನುಕೂಲಮಾಡಿಕೊಂಡು, ಪಾಠ ಪ್ರವಚನಕ್ಕೆ  ಮಾತ್ರ   ಸಿದ್ದಾರೂಢರ ಮoಕ್ಕೆ ಹಾಲಯ್ಯನವರು  ಹೋಗುತ್ತಿದ್ದರು.

ಧರ್ಮಗ್ರಂಥಗಳ ಅಧ್ಯಯನದಲ್ಲಿ ಮುಳುಗಿದ್ದರೂ, ಲಿಂಗಪೂಜಾ  ನಿಷ್ಥೆಗೆ ಸಂಭಂಧಪಟ್ಟಂತೆ  ಕೆಲವು ಪ್ರಶ್ನೆಗಳು ಹಾಲಯ್ಯನನ್ನು ಕಾಡುತಿದ್ದವು. ಈ ಕಳವಳದ ನಿವಾರಣೆಗಾಗಿ ಎಮ್ಮೀಗನೂರ ಜಡೇಸಿದ್ಧರನ್ನು ಸಂದರ್ಶಿಸುವ ಮಹಾಘಟನೆಯೊಂದು  ಹಾಲಯ್ಯನ ಜೀವನದಲ್ಲಿ ನಡೆಯಿತು. ಜಡೇಸಿದ್ಧರು .ಅಂದಿನ ಕಾಲದ ವಿಶಿಷ್ಟಗುಣಗಳ ಹಠಯೋಗಿಗಳೆಂದು ಹೊರಹೊಮ್ಮಿ ಸರ್ವರ ಪ್ರೀತ್ಯಾಧರಗಳಿಗೆ ಪಾತ್ರರಾಗಿದ್ದರು.ಹಾಲಯ್ಯ£ವರುÀ ಬರುವ ಮುನ್ಸೂಚನೆಯನ್ನು ಅಂತರಂಗದಲ್ಲಿ ಅನುಭವಿಸಿದ ಎಮ್ಮೀಗನೂರ ಜಡೇಸಿದ್ಧರು ಹಾಲಯ್ಯ£ವರ ಬರುವಿಕೆಗಾಗಿ ಕಾಯುತ್ತಿದ್ದರು. ಹಾಲಯ್ಯ£ವರು ಜಡೇಸಿದ್ಧರ   ಸಂದರ್ಶನದ ಸ್ಥಳ  ಮುಟ್ಟಿದಾಗ ಸಿದ್ಧರು ತಮ್ಮ ಕೊರಳಲ್ಲಿ ಲಿಂಗವನ್ನೊಳಗೊಂಡ ಲಿಂಗವಸ್ತ್ರವಂದನ್ನು ಕಟ್ಟಿಕೊಂಡು ಓಂಕಾರ ಪಠಿಸುತ್ತ ಕುಳಿತುಕೊಂಡಿದ್ದರು. ಸಿದ್ಧಿಪುರುಷರ ದಿವ್ಯದರ್ಶನ ಪಡೆದುಕೊಂಡ ಹಾಲಯ್ಯನವರಿಗೆ ಮನದ  ಸಂಧಿಗ್ಧತೆ ಮಾಯವಾಗಿ ಲಿಂಗಪೂಜೆಯ ಹಂಬಲ ಸ್ಥಿರಗೊಂಡಿತು. ಮನಸ್ಸು ಹಗುರಾಯಿತು.

              ಹಾಲಯ್ಯ£ವರ ಅಂತರಂಗ, ಯೋಗ್ಯಗುರುವಿನ ದರ್ಶನಾರ್ಶೀವಾದಕ್ಕಾಗಿ ಸದಾವಕಾಲ ಮಿಡಿಯುತ್ತಿತ್ತು. ತನ್ನರಿವೆ ತನಗೆ ಗುರುವೆಂಬಂತೆ ಕೊಳ್ಳೆಗಾಲ ತಾಲೂಕಿನ ವಿರಕ್ತಮಠದ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳ ದರ್ಶನ ಹುಬ್ಬಳ್ಳಿಯ ಸಿದ್ಧಾರೂಢರ ಮಠದದಲ್ಲಿ ಆದದ್ದು ಹಾಲಯ್ಯನ ಜೀವನಕ್ಕೆ ಹೊಸ ತಿರುವು ನೀಡಿತು. ಆರೂಢರಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ಬಂದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಹಾಲಯ್ಯನನ್ನು ಕಂಡು ಅರಸುವ ಬಳ್ಳಿ ಕಾಲ್ತೊಡಕಿದಂತಾಗಿ ತಮ್ಮ ಅಂತರಂಗದಲ್ಲಿ ಹಾಲಯ್ಯನಿಗೆ ಹಿರಿದಾದ ಸ್ಥಾನಕೊಟ್ಟರು. ಪೂರ್ವಜನ್ಮದ ಪುಣ್ಯವೆಂಬಂತೆ ಎರಡು ಆತ್ಮಗಳು ಒಂದಾಗಿ ಗುರು-ಶಿಷ್ಯರ ರೂಪದಲ್ಲಿ ಒಬ್ಬರನೊಬ್ಬರು ಕಂಡಂತಾಯಿತು. ನಿಬ್ಬೆರಗೊಂಡ ಹಾಲಯ್ಯನವರು  ಗುರುವಿನ ಪಾದಗಳಿಗೆ ತಮ್ಮನ್ನೆ ತಾವು  ಅರ್ಪಿಸಿಕೊಂಡರು.

              ಹಾಲಯ್ಯನವರು ಹಾಗೂ ಗುರುಗಳಾದ ಎಳಂದೂರ ಬಸವಲಿಂಗಸ್ವಾಮಿಗಳವರು ಹುಬ್ಬಳ್ಳಿಯ ಸಿದ್ಧಾರೂಢಮಠದಿಂದ ತಮ್ಮ ಆಧ್ಯಾತ್ಮ ಜೀವನದ ಯಾತ್ರೆಯನ್ನಾರಂಭಿಸಿ ಆತ್ಮಸಾಕ್ಷಾತ್ಕಾರದ ಹಸಿವು ಹಿಂಗಿಸಿಕೊಳ್ಳಲು ಶಪಥಮಾಡಿ ಮುಂದುವರೆದರು. ಪರಸ್ಪರರಲ್ಲಿರುವ ಸತ್ಯ ಸಂಶೋಧನೆಯ ಹಸಿವು ಇಬ್ಬರನ್ನೂ ಒಂದುಗೂಡಿಸಿತು. ದೇಹಗಳೆರಡು ಆತ್ಮ ಒಂದೇ ಎಂಬಂತೆ, ಕೊಳ್ಳೆಗಾಲದ ಶಂಭುಲಿಂಗನ ಬೆಟ್ಟದ ಗುಹೆಯೊಂದರಲ್ಲಿ ಗುರುಶಿಷ್ಯರು ಸತತ 12 ವರ್ಷ ಅನುಷ್ಠಾನ ಮಾಡಿ ಅಷ್ಟಾವರಣಗಳನ್ನು ಆತ್ಮವಾಗಿಸಿಕೊಂಡು ಲಿಂಗಾಂಗದ ಸಾಮರಸ್ಯವನ್ನು ಸವಿದರು.

ಶಿವಯೋಗ ಸಾಮರಸ್ಯವನ್ನು ಸವಿದ ನಂತರ ಗುರುಶಿಷ್ಯರ  ಆಧ್ಯಾತ್ಮ ಜೀವನದ ಯಾತ್ರ್ರೆ ಯಾವ ಆತಂಕವಿಲ್ಲದೆ ಶಿವಧ್ಯಾನದಲ್ಲಿಯೇ ಮುಂದುವರೆಯಿತು. ಪವಿತ್ರ ವಾತಾವರಣದ ದಿನವೊಂದರಂದು ಹಾಲಯ್ಯನವರಿಗೆ ಗುರೋಪದೇಶದ ದೀಕ್ಷೆಯಾಯಿತು. ಶಿವಯೋಗಿಯೆಂದರೆ ಶಿವಯೋಗದಾನಂದವನ್ನು ತನ್ನಷ್ಟಕ್ಕೆ ತಾನೆ ಸವಿಯುವಾತ£ಲ್ಲ, ಅದನ್ನು ಇತರರೆಲ್ಲರಿಗೂ ಉಣಬಡಿಸಬೇಕು. ಆಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಬೇಕು. ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಬೇಕು.

ಹೀಗೆ ಗುರುಶಿಷ್ಯರ ಜೀವನವಾಹಿನಿ ಮುಂದುವರಿಯುತ್ತಿರುವಾಗ ಅನೀರಿಕ್ಷಿತವಾಗಿ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳು ಶಿವನ ಕರೆಗೆ ಒಗೊಟ್ಟು ಲಿಂಗದೊಳಗಾದರು. ಈ ಅನಿರೀಕ್ಷಿತ ಘಟನೆ ಹಾಲಯ್ಯನವರಿಗೆ ಮಾತೆಯನ್ನೇ ಕಳೆದುಕೊಂಡ ಹಸುಗೂಸಿನ ಪರಿಸ್ಥಿತಿಯನ್ನು ತಂದೊಡ್ಡಿತು. ತಾಯಿಯನ್ನು ಕಳೆದುಕೊಂಡ ಕರುವಿನಂತಾದ ಹಾಲಯ್ಯನವರಿಗೆ, ಕಾರ್ಗತ್ತಲೆ ಆವರಿಸಿದಂತಾಗಿ ದುಖಃದ ಮಡಲಿನಲ್ಲಿ ಕಾಲಕಳೆಯಬೇಕಾಯಿತು. ಆಂತರಿಕ ದುಖಃದಿಂದ ಹೊರಗೆ ಬರುವ ಒಂದೇ ಒಂದು ಹಾದಿಯು ಅನುಷ್ಠಾನ ಎಂದು ಅರಿತ ಹಾಲಯ್ಯನವರು  ಶಿವಧ್ಯಾನದ ಮೊರೆ ಹೋಗಬೇಕಾಯಿತು.ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸೊರಬ ಪ್ರದೇಶದಲ್ಲಿ ಅನುಷ್ಠಾ£ದಲ್ಲಿ ತಲ್ಲೀನಗೊಂಡರು.

ದೇವರು ಅಗೋಚರ ಆತನ ಸ್ಪರ್ಶ – ಸಂತೊಷ ಪಡೆಯುವುದಂತೂ ಅಸಾಧ್ಯವೇ ಸರಿ. ಆದರೆ ಆತನು ಅಗೋಚರವಾಗಿದ್ದರೂ ಆತನ ದೃಷ್ಠಿ ಆತನಲ್ಲಿಯೇ ಮುಳುಗಿದವರ ಮೇಲೆ ಬೀಳುವುದು. ಆತನ ಅಸ್ತಿತ್ವದಷ್ಟೇ ಸತ್ಯ ದೇವಭಾಷೆಯನ್ನು ಅರಿತು ಅರ್ಥಮಾಡಿಕೊಳ್ಳುವುದು ಅಸಾಧ್ಯ. ದೇವವಾಣಿ ದೈವೀ ಸೂತ್ರದ ಸಂಗೀತ ಸಂಕೇತಗಳ ಅಂತ್ಯ ಆಳವನ್ನು ಅರಿಯುವುದು ಅಸಾಧ್ಯ. ಮಾನವನ ಅಳತೆ ಪ್ರಮಾಣಗಳಿಗೆ ದೈವಿಶಕ್ತಿ ಸಿಗುವುದು ಅಸಾಧ್ಯವೇ ಸರಿ.

ಹಾನಗಲ್ಲ ಕುಮಾg ಶಿವಯೋಗಿ ಎಂದು ಹೆಸರು ಗಳಿಸಿದ ಹಾಲಯ್ಯನಿಗೂ ಹಾನಗಲ್ಲ ವಿರಕ್ತ ಮಠಕ್ಕೂ ಯಾವುದೇ ಅಗೋಚರ ಸಂಬಂಧವೊಂದು ಇರಲೇಬೇಕು ಹಾನಗಲ್ಲ ಕುಮಾರಸ್ವಾಮಿಗಳೆಂದರೆ ಎಂದೂ ಮುಳಗದ ಸೂರ್ಯನಿದ್ದಂತೆ ಅಮವಾಸ್ಯೆಯನ್ನೇ ಕಾಣದ ಚಂದ್ರನಿದ್ದಂತೆ, ಹಾನಗಲ್ಲ ವಿರಕ್ತಮಠ ಹಾಗೂ ಶ್ರೀ ಕುಮಾರ ಶಿವಯೋಗಿಗಳ ಹೆಸರುಗಳು ವೀರಶೈವ ಧರ್ಮದ  ದಿಗಂತದಲ್ಲಿ ಸೂರ್ಯಚಂದ್ರರಿರುವಷ್ಟು ಕಾಲ ಅಮರ.

ಪೂಜ್ಯ ಫಕೀರಸ್ವಾಮಿಗಳವರ ವಿಶ್ವಾಸ ಅನುಕಂಪಗಳನ್ನು ಹೊತ್ತ ಹಾಲಯ್ಯ ಕುಮಾರ ಸಮಯಾಂತರ್ಗತ ಹಾನಗಲ್ಲ ವಿರಕ್ತ ಪೀಠದ ಅಧಿಪತಿಯಾಗಿ ಕುಮಾರ ಶಿವಯೋಗಿ ಎಂಬ ನಾಮಾಂಕಿತವನ್ನು ಪಡೆದರು. ಹಣತೆ ಆಧಾರದಿಂದ ಜ್ಯೋತಿ ಬೆಳಗುವಂತೆ ಹಾನಗಲ್ಲ ಮಠವನ್ನು ಆಧಾರವನ್ನಾಗಿಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವÀಯೋಗಿಗಳು

ಶ್ರೀ ಕುಮಾರ ಶಿವಯೋಗಿಗಳು ,ಹಾನಗಲ್ಲ ಪೀಠದ ಅಧಿಕಾರವಹಿಸಿಕೊಂಡಾಗ ಸಮಾಜದ ತುಂಬೆಲ್ಲಾ ಮೇಲು ಕೀಳೆಂಬ ಕಚ್ಚಾಟಗಳು, ಅಧಿಕಾರ ಅಂತಸ್ತುಗಳಿಗಾಗಿ ಕಿತ್ತಾಟಗಳು, ಧರ್ಮದ  ಸಂಕುಚಿv ಭಾವನೆಗಳು  ಜನರ ನಿತ್ಯ ಬದುಕಿನಲ್ಲಿ ಕಾಡುತ್ತಿದ್ದವು. ಬ್ರಾಹ್ಮಣ – ವೀರಶೈವ ಲಿಂಗಾಯತರ ನಡುವಿನ ಬಿರುಕು ಎದ್ದು ಕಾಣುತ್ತಿತ್ತು. ವೀರಶೈವ – ಲಿಂಗಾಯತರಿಗೆ ಆಗಿದ್ದ ಸಂಸ್ಕøತ ಪಾಠಶಾಲೆಗಳಲ್ಲಿ ಪ್ರವೇಶವಿದ್ದಿಲ್ಲ. ಇದನ್ನು ಕಂಡರಿತ ಕುಮಾರಸ್ವಾಮಿಗಳು ಹಾನಗಲ್ಲಿನಲ್ಲಿ ಪ್ರಥಮ ಸಂಸ್ಕøತ ಪಾಠಶಾಲೆಯನ್ನು ತೆರೆದು ಜಾತಿ ಭೇಧವನ್ನು ಮಾಡದೇ ಸರ್ವ ಸಮಾಜದ ವಿಧ್ಯಾರ್ಥಿಗಳಿಗೆ  ಅಧ್ಯಯನ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದರು. ಊಟ ವಸತಿ ಪಾಠಶಾಲೆಗಳು ಪ್ರಾರಂಭವಾದವು.

ಸಮುಷ್ಠ್ಟಿ ಪ್ರಜ್ಞೆಯ ಶಕ್ತಿಯನ್ನು ಅರಿತ ಸಮಾಜ, ಅವರು ಕೊಟ್ಟ ಸ್ಫೂರ್ತಿ ಶಕ್ತಿಗೆ ಸ್ಪಂಧಿಸಿತು. ಸುತ್ತಮುತ್ತಲಿನ ಗ್ರಾಮಗಳಿಗೆಲ್ಲ ಸಂಚರಿಸಿ ಸಂಕಷ್ಟದಲ್ಲಿದ್ದವರಿಗೆಲ್ಲ ಸಹಾಯ ಹಸ್ತ ನೀಡಿ ಎಲ್ಲರಿಗೂ  ಕೂಡಿ ಜೀವಿಸುವ ಹೊಸ ವಿಧಾನವನ್ನು ಕಲಿಸಿದರು. ಜನರು ಪರಸ್ಪರರನ್ನು ಅರಿತು ಜೀವಿಸಬೇಕೆಂದು ಅವರ  ಮೊದಲ ಪಾಠವಾಗಿತ್ತು. ಮಾತೃಹೃದಯದ ಶ್ರೀ ಕುಮಾರ ಶಿವಯೋಗಿಗಳು ಕೇವಲ ಹಾನಗಲ್ಲ ಮಠದ ವ್ಯಾಪ್ತಿಯಲ್ಲಿಯೇ ಉಳಿಯದೇ ಭೂಮಿಗೆ ಬೆಳಕುಕೊಡುವ ಸೂರ್ಯನೋಪಾದಿಯಲ್ಲಿ ಸಮಗ್ರ ಸಮಾಜವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಗುರುತಿಸಿಕೊಂಡರು. ಆ ಭಾಗದಲ್ಲಿ ಬರ ಆವರಿಸಿದಾಗ ಸಾರ್ವಜನಿಕ ಪ್ರಸಾದ ನಿಲಯಗಳನ್ನು ವ್ಯವಸ್ಥಿತಗೊಳಿಸಿ ಸಮಗ್ರ ಸಮಾಜದ ಹಸಿವನ್ನು ನೀಗಿಸಿದ ಕೀರ್ತಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಸಲ್ಲುತ್ತದೆ.  

ಅಂದಿನ ಕಾಲಘಟ್ಟದಲ್ಲಿ ಆ ಭಾಗದ  ಜನತೆಗೆ ಗುರುಳೆ ರೋಗವೆಂಬ ವ್ಯಾಧಿ ಆವರಿಸಿದಾಗ ಶ್ರೀ ಕುಮಾರ ಶಿವಯೋಗಿಗಳು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ತ್ಯಾಗ ಮಹಿಮಾಪುರುಷರಾಗಿ ಮನೆಯಿಂದ ಮನೆಗೆ ಹೋಗಿ ಕೈ ಮುಟ್ಟಿ ಉಪಚರಿಸಿ ಅಂದಿನ ಜನರ ದುಃಖಗಳಲ್ಲಿ ಬೆರೆತು ಅವರಲ್ಲಿ ಒಂದಾದರು.

ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಪರಿಶುದ್ಧತೆಯೇ ಶ್ರೀ ಕುಮಾರ ಶಿವಯೋಗಿಗಳ ಮುಖ್ಯ ಉದ್ಧೇಶ. ಪುರುಷನಾಗಲಿ ಮಹಿಳೆಯಾಗಲಿ ವ್ಯಕ್ತಿಯ ಬಾಹ್ಯ ಸ್ವರೂಪಕ್ಕಾಗಲಿ ಜಾತಿಗಳಿಗಾಗಲಿ ಅವರು ಮಹತ್ವ ನೀಡಲಿಲ್ಲ ಬದಲಾಗಿ ಆತ್ಮದ ಅಸ್ತಿತ್ವಕ್ಕೆ ಬೆಲೆ ಕೊಟ್ಟರು, ದೇವರು ಸೃಷ್ಟಿಸಿದ ನಿಸರ್ಗದ ಪಂಚಮಹಾಭೂತಗಳಿಗೆ ಸಮಗ್ರ ಸೃಷ್ಟಿಗೆ ಹಾನಿಯಾಗದಂತೆ ಮಾನವ ತನ್ನ ಆಂತರಿಕ ಹಾಗೂ ಬಾಹ್ಯ ಜೀವನದಲ್ಲಿ ಶುಚಿತ್ವವನ್ನು ಅಳವಡಿಸಿ ಆಂತರ್‍ಬಾಹ್ಯ ಸಮತೋಲನೆಯೊಂದಿಗೆ ಮುನ್ನಡೆಯಬೇಕು. ಶ್ರೀ ಕುಮಾರ ಶಿವಯೋಗಿಗಳಿಗೆ ನಿಸರ್ಗದ ಮೇಲೆ ಬಹಳ ಪ್ರೀತಿ, ಸಮಾಜವೇ ಅವರ ಮನೆ ,ಸಂಸ್ಕøತಿ ಅವರ ಬದುಕು, ಸಮಾಜ ಸಂಸ್ಕøತಿಗಳ ಉನ್ನತಿಯೇ ಅವರ ಭಾಗ್ಯ ತಮ್ಮ ಸರ್ವ ಸುಧಾರಣೆಗಳನ್ನು ಮೂಲತಃ ಹಾನಗಲ್ಲ ಮಠದಿಂದಲೇ ಪ್ರಾರಂಭಿಸಿದರು.

ಅಂದಿನ ಕಾಲದ ಸಾಮಾಜಿಕ ಕ್ರಾಂತಿಗೆ ಸಂಬಂಧಪಟ್ಟಂತೆ ವೀರಶೈವ ಲಿಂಗಾಯತ ಧರ್ಮದ ಒಳಿತಿಗಾಗಿ ಚರ ಜಂಗಮರಾದ  ಬಾಗಲಕೋಟೆ ಮಲ್ಲಣಾರ್ಯರು ಕುಮಾರ ಶಿವಯೋಗಿಗಳಿಗೆ ಸಕಾಲಿಕವಾಗಿ ಎಚ್ಚರಿಸಿದ ಘಟನೆ ಸಮಗ್ರ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಇದೊಂದು ರೀತಿಯ ಆಧ್ಯಾತ್ಮಿಕ ಕ್ರಾಂತಿ ವ್ಯಕ್ತಿ ಮಟ್ಟದಿಂದ ಹಿಡಿದು ಸಮಗ್ರ ಸಮಾಜಕ್ಕೆ ಇದರ ಪರಿಣಾಮವಾಯಿತು  ಕುಮಾg ಶಿವಯೋಗಿಗಳ ಪವಿತ್ರವಾದ ಸ್ವಪ್ರಜ್ಞೆಯಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟವರು. ಮಲ್ಲಣಾರ್ಯರ ಬಯಕೆಯನ್ನು ತಮ್ಮ ಕರ್ತವ್ಯವೆಂದು ತಿಳಿದು ತಮ್ಮ ಆಯುಷ್ಯವನ್ನೆಲ್ಲಾ ಧರ್ಮ ಜಾಗೃತಿ ಸಮಾಜ ಸುಧಾರಣೆಗೋಸ್ಕರ ವ್ಯಯಮಾಡಿದರು.

ನಾಡಿನುದ್ದಗಲಕ್ಕೂ ಕಾಲುನಡಿಗೆಯಿಂದ ಸಂಚರಿಸಿ ಸರ್ವ ಸಮಾಜದ ಮುಖಂಡರನ್ನು ಸಂಧಿಸಿ ಅವರೊಡನೆ ಚಿಂತನ-ಮಂಥನ ಮಾಡಿ ಹೌದು ಅಲ್ಲಗಳನ್ನು ವಿಶ್ಲೇಷಿಸಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಸದಾವಕಾಲ ಶ್ರಮಿಸಿದವರು. ಈ ನಿಟ್ಟಿನಲ್ಲಿ ಮೊದಲ ವೀರಶೈವ ಸಮ್ಮೇಳನವು ನವಲಗುಂದ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಜಾಯಪ್ಪ ಸರ್ ದೇಸಾಯಿ ಇವರ ಅಧ್ಯಕ್ಷತೆಯಲ್ಲಿ 1904 ಮೇ ತಿಂಗಳು 13,14 ಮತ್ತು 15,ರಂದು ಧಾರವಾಡದ ದರ್ಬಾರ ಹಾಲ್ ಈಗಿನ ಲಿಂಗಾಯತ ಟೌನ್ ಹಾಲ್  ದಲ್ಲಿ ವ್ಯವಸ್ಥೆಗೊಳಿಸಿದರು. ಸಮಾಜದ ಸರ್ವ ಸ್ತರಗಳ ಜನತೆ ಇಲ್ಲಿ ಸೇರಿ ಬದುಕಿನ ಸರ್ವ ಮುಖಗಳಿಗೂ ಗಮನ ಹರಿಸಿತು. ಸಮಾಜದ  ಬಡವ ಬಲ್ಲಿದರೆಂಬ ಕಂದಕವನ್ನು ಕಿತ್ತೊಗೆದು , ಶ್ರೀಮಂತರ ಮನೋಧರ್ಮದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಪ್ರಯತ್ನಿಸಿ ಸಫಲರಾದವರು ಶ್ರೀ ಕುಮಾರ ಶಿವಯೋಗಿಗಳು.

ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವÀಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.

ಶ್ರೀ ಕುಮಾರ ಶಿವಯೋಗಿಗಳು  ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು. ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ  ನಾಡಿನ ತುಂಬೆಲ್ಲ  ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.

ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದÀ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.

ಶಿವಯೋಗಮಂದಿರವನ್ನು ಸ್ಥಾಪಿಸುವ ಹಂತzಲ್ಲಿಯಾಗಲಿ ಹಾಗೂ ತದನಂತರ ಅದರ ಅಭೀವೃದ್ಧಿಗಳಿಗೆ ಚಿತ್ತರಗಿ-ಇಲಕಲ್ ಮಹಾಂತಸ್ವಾಮಿಗಳ ಮಾರ್ಗದರ್ಶನ, ಸಹಕಾರ ಪಡೆದರು, ಶ್ರೀ ವಿಜಯಮಹಾಂತ ಶಿªಯೋಗಿ ಹಾಗೂ ಅವರ ಸದ್ಭಕ್ತರೊಂದಿಗೆ ಶಿವಯೋಗಮಂದಿರದ ಸ್ಥಳದ ಆಯ್ಕೆಯ ಪ್ರಯತ್ನ ಒಂದು ಇತಿಹಾಸವಾಗಿ ಹೋಯಿತು.

ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು  ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ   ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ  ಮಾತೃ ಪ್ರೇಮವನ್ನು ತೋರಿಸಿದವರು.  ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ.  ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ  ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.

              ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ  ಇವೆಲ್ಲವೂ  ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು  ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು  ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ  ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.

              ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು.   ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .

              ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು.  ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.

              ಮಹಾರಾಷ್ಟ್ರದ ಪರಳಿ ವೈಜನಾಥದೇವಾಲಯದಲ್ಲಿ ವೀರಶೈವರಿಗೂ ಪೂಜೆ ಸಲ್ಲಿಸಲು ಹಕ್ಕಿದೆ ಎಂದು ನ್ಯಾಯಾಲಯದಲ್ಲಿ ನಿರಂತರವಾಗಿ ಹೋರಾಡಿ ಗೆದ್ದು ನಿಯಮ ಜಾರಿಗೆ ತಂದದ್ದು, ವೀರಶೈವ ಸಮಾಜಕ್ಕೆ ಶ್ರೀ ಕುಮಾರ ಶಿವಯೋಗಿಗಳು  ನೀಡಿದ ಗಮನಾರ್ಹ ಕೊಡುಗೆ.

              ತಮ್ಮ ಆರೋಗ್ಯ,  ಜೀವನದ ಸುಖಗಳನ್ನೆಲ್ಲ ತ್ಯಾಗಮಾಡಿ, ಹಗಲು ರಾತ್ರಿಯನ್ನದೆ, ಶ್ರೀ ಕುಮಾರ ಶಿವಯೋಗಿಗಳು ಶ್ರಮಿಸಿದರು, ಕಾಯಕ ನಿಷ್ಠೆಯಲ್ಲಿ ತೊಡಗಿ ಪ್ರಸಾದ ಪೂಜೆಗಳನ್ನು ಮರೆತ ಶ್ರೀ ಕುಮಾರ ಶಿವಯೋಗಿಗಳು , ಫೆಬ್ರುವರಿ 19,1930 ಬುಧವಾರ ಕುಮಾg ಶಿವಯೋಗಿಗಳಿಗೆ ವಿಪರೀತ ಜ್ವರಬಾಧೆಯುಂಟಾಗಿ ಕ್ಷಣಮಾತ್ರದಲ್ಲಿ ಅಪಾಯ  ತಂದೊಡ್ಡಿತು. ಶ್ರೀ ಕುಮಾರ ಶಿವಯೋಗಿಗಳು ಲಿಂಗದೊಳಗೆ ಬೆರೆಯುವ ಸ್ವ ಇಚ್ಛೆಯನ್ನು ಪ್ರಕಟಿಸಿ ವಟು ಸಾಧಕರು ದೇಶಿಕರನ್ನೊಳಗೊಂಡು ಸರ್ವರನ್ನು ಸರ್ವ ಸಮಾಜದವರನ್ನು ದುಃಖತಪ್ತರನ್ನಾಗಿ ಮಾಡಿದರು .ಅನಂತತೆಯಲ್ಲಿ ಬೆರೆಯುವುದು ತಮ್ಮ ಸ್ವ ಇಚ್ಛೆಯಾಗಿದೆ ಎಂದು ದೃಢಪಡಿಸಿ  ಅಂದು ಸಾಯಂಕಾಲ  3 ಘಂಟೆಗೆ  ದೇಶಿಕರನ್ನು, ಸಾಧಕರನ್ನು, ವಟುಗಳನ್ನು, ಶಿವಯೋಗ ಮಂದಿರದ ವಿವಿಧ ಶಾಖೆಗಳಲ್ಲಿ ಕಾಯಕ ಮಾಡುವವರನ್ನು, ಗೋ ರಕ್ಷಕರನ್ನು ,ಪ್ರಸಾದ, ವಿಭೂತಿ, ವ್ಯವಸ್ಥಾಪಕರನ್ನು ಕರೆದು ಕುಮಾರಯೋಗಿಗಳು ಹೇಳಿದ ಮಾತುಗಳು ಕರುಣಾ ಸಾಗರದಲ್ಲಿ ಹರಿಯುವ ಮುತ್ತುಗಳಾಗಿ ಪರಿಣಮಿಸಿದವು.

“ಓ, ನನ್ನ ನಿರಂಜನ ದೇಶಿಕರೇ, ನೀವೆಲ್ಲಾ ನನ್ನ ಪೋಷಕರು  ನಿಮ್ಮ ಬಾಹ್ಯ ತಪ್ಪುಗಳಿಗೆ ನೀವೇ ಕಾರಣರು .ನಿಮ್ಮ ಅಂತರಂಗದ ತಪ್ಪುಗಳಿಗೆ ನಾನು ಕಾರಣ” ಎಂಬ ನುಡಿಮುತ್ತುಗಳನ್ನು ಉಸುರಿ ಸಮಾಜ , ಸಮಾಜ , ನನ್ನ ಸಮಾಜವೆಂದು ನುಡಿದು ಸಮಾಜ ಸೇವೆಗಾಗಿ ಹುಟ್ಟಿ ಬರುವೆನೆಂದು ಭರವಸೆ ಕೊಟ್ಟು ಕೊನೆಯುಸಿರೆಳೆದರು.

ದೃಢ ಸಂಕಲ್ಪದಿಂದ ಕೊನೆಯುಸಿರೆಳೆದರು. ಸಮಾಜ ಸೇವೆಗೆ ಮರಳಿ ಹುಟ್ಟಿ ಬರುವೆನೆಂದು ನುಡಿದ ಮಾತುಗಳು ದೈವಿ ಸಂಕಲ್ಪ ಸಾಧನೆಯ ಕುರುಹು. ಶ್ರೀ ಕುಮಾರ ಶಿವಯೋಗಿಗಳ ದೇಹ ಕಣ್ಣಿಗೆ ಕಾಣದಿದ್ದರೂ ಅಂದಿಗೂ ಇಂದಿಗೂ ಮುಂದೆಂದಿಗೂ ಅವರು ಕೊಟ್ಟ ಸ್ಪೂರ್ತಿ ಸಮಾಜಕ್ಕೆ ಅವರು ದಯಪಾಲಿಸಿದ ಅಮರವಾಣಿ ಶಾಶ್ವತವಾಗಿ ಉಳಿಯುತ್ತದೆ.

ಶ್ರೀ ಕುಮಾರ ಶಿವಯೋಗಿಗಳು ಧರ್ಮದ ಹಾದಿಯಲ್ಲಿ ತಮ್ಮದೇ ಆದ ವಿಶಿಷ್ಟ ಮಾರ್ಗ ತುಳಿದವರು . ಅವರು  ದೈವಿಪುರುಷರಾಗಿ   ಶಿವನಲ್ಲಿ ಬೆರೆತು ಶಿವ ಶಕ್ತಿಯಾಗಿ ಶಿವಯೋಗಮಂದಿರದಲ್ಲಿ ವಾಸವಾಗಿದ್ದಾರೆ.

ನೀರು ಹರಿಯುತ್ತದೆ, ತನ್ನ ಸ್ವಾರ್ಥಕ್ಕಾಗಿ ಅಲ್ಲ .ಸರ್ವರ ತೃಷೆಯನ್ನು  ಹಿಂಗಿಸುವುದಕ್ಕಾಗಿ ಅದು ಗಿಡ ಮರಗಳನ್ನು ರಕ್ಷಿಸುತ್ತದೆ. ಜೀವಿಗಳಿಗೆ ಪ್ರಾಣಿಗಳಿಗೆ ಜೀವ ತುಂಬುತ್ತದೆ. ಹೂ ಅರಳಿಸುತ್ತದೆ. ಹಣ್ಣುಗಳಿಗೆ ಮಧುರತೆಯನ್ನು ತರುತ್ತದೆ,  ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಹೀಗೆಯೇ ಜೀವಿಸಿದರು.

 ಸತ್ಯಂ,ಶಿವಂ, ಸುಂದರಮ್,

ಲೇಖಕರು :ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ನೂರಾರು ಮತವಿಹುದು ಲೋಕದುಗ್ರಾಣದಲಿ ।

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥

ಸಾರದಡುಗೆಯನೊಳವಿಚಾರದೊಲೆಯಲಿ ಮಾಡು ।

ಬೇರೆ ಮತಿ ಬೇರೆ ಮತ – ಮಂಕುತಿಮ್ಮll

  ಪ್ರಪಂಚವು ಬಹಳಷ್ಟು ವಿಶಾಲವಾಗಿದೆ.ಅದರೊಂದಿಗೆ ಇಲ್ಲಿನ ಮನುಕುಲವೂ ಸಹ.ಇಲ್ಲಿನ ಮನುಕುಲದಲ್ಲಿ ಹಲವಾರು ಜನಾಂಗಗಳನ್ನು ನಾವು ಕಾಣುತ್ತೇವೆ. ಆ ಪ್ರತಿಯೊಂದು ಜನಾಂಗಕ್ಕೂ ಸಹ ಅವುಗಳದ್ದೇ ಆದ ಪದ್ಧತಿ,ಆಚರಣೆ,ಕಟ್ಟಲೆಗಳು ಇವೆ.ಇವುಗಳೇ ಮುಂದೆ ಬೆಳೆಯುತ್ತಾ ಬೆಳೆಯುತ್ತಾ ಸಬಲವಾಗಿ ಮುಂದೆ ಧರ್ಮವಾಗಿ ರೂಪುಗೊಂಡವು.ಇವುಗಳು ಶತಮಾನ, ಶತಮಾನಗಳಿಂದ ಬಂದಿವೆ.ಇವುಗಳ ಉದ್ದೇಶ  ಮಾನವನ ಆಂತರಿಕ ,ಸಾಮಾಜಿಕ,ದೈಹಿಕವಾಗಿ ವಿಕಾಸ ಹೊಂದುವುದೇ ವಿನಃ ತಮ್ಮ ತಮ್ಮಲ್ಲೇ ಉಚ್ಛ ನೀಚತ್ವವನ್ನು ಬೇಧಿಸಲು, ಭಿನ್ನಾಭಿಪ್ರಾಯ ಕಲಹಗಳನ್ನು ಸೃಷ್ಠಿಸಿ ನಮ್ಮ ಅಂತ್ಯವನು ನಾವೇ ಮಾಡಿಕೊಳ್ಳಲು ಅಲ್ಲ.

ಆದರೆ ಇಂದು ನಡೆಯುತ್ತಿರುವ ಪರಿಸ್ಥಿತಿ ಹೀಗೆ ಇದೆ.

ಇಂದು ಸಮಗ್ರ ವಿಶ್ವವನ್ನು ಗಮನಿಸಿದಾಗ ಒಟ್ಟು ಇಲ್ಲಿ 4,300 ಧರ್ಮಗಳು ಹುಟ್ಟಿಕೊಂಡಿವೆ.ಇವೆಲ್ಲ ಧರ್ಮಗಳು ಇರೋದು ಮಾನವನಿಗಾಗಿಯೆ ಹೊರತು ಪ್ರಾಣಿಗಳಿಗಲ್ಲ.

ಇಷ್ಟಾದರೂ ಸಹ ಈ ಮಾನವನಿಗಾಗಿಯೇ ಇರುವ ಧರ್ಮಗಳ ಅರ್ಥವನ್ನು ಮಾನವನು ತಿಳಿಯದೇ ಮಂಕಾಗಿ,ಯಾವುದೋ ಆಮಿಷಕ್ಕೆ ಒಳಗಾಗಿ ತನ್ನ ತನವನ್ನು ಮರೆತು, ಬೀದಿಗೆ ಬಂದು ಧರ್ಮಗಳಲ್ಲಿ ಬಿರುಕು ಹುಟ್ಟಿಸುವ ಕೆಲಸ ಮಾಡ್ತಾ ಇದ್ದಾನೆ.ಧರ್ಮಗಳ ಉದ್ದೇಶ ಇದು ಅಲ್ಲ.ಆದರೆ ನಮ್ಮ ಉದ್ದೇಶ ಇದರ ಹೊರತಿಲ್ಲ. ನೋಡಿ ಎಷ್ಟು ದಯನೀಯ ಸಂಗತಿ.

ಇಲ್ಲಿ ಯಾವುದೂ ಶ್ರೇಷ್ಠವಿಲ್ಲ ಮತ್ತು ಕನಿಷ್ಠನೂ ಇಲ್ಲ.ಎಲ್ಲವೂ ಸಹ ಅವರವರ ಮನೋಭಾವದಲ್ಲಿ ಅಡಗಿದೆ.ನಾವು ಪಾಲಿಸುವ ಧರ್ಮವನ್ನು ಅರಿತು ನಾವು ನಡೆಯಬೇಕಷ್ಟೇ.ನಮ್ಮಲ್ಲಿಯೇ ಭೇದ-ಭಾವ ಮಾಡಿ ವಿನಾಕಾರಣ ನಮ್ಮ ನಾಶಕ್ಕೆ ನಾವೇ ಗುರಿ ಆಗೋದಲ್ಲ.ಇದನ್ನೇ ಶರಣರು ಹೇಳಿದ್ದು.ಇದಕ್ಕಾಗಿಯೇ ಕಲ್ಯಾಣ ಕ್ರಾಂತಿ ಆಗಿದ್ದು.

“ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ,

ಜಲವೊಂದೇ ಶೌಚ ಆಚಮನಕ್ಕೆ,”

ಎಂದು ಶರಣರು ಸ್ಪಷ್ಟ ವಾಗಿ ತಿಳಿಸಿದ್ದಾರೆ.ಹೋಗಲಿ  ಬೇರೆ ಧರ್ಮ ನಿನಗೆ ತೃಪ್ತಿ ಕೊಟ್ಟಿಲ್ಲ ಅಂದಾಕ್ಷಣ ಅದರ ಬಗ್ಗೆ ತಿಳಿಯದೆ ಇಲ್ಲ ಸಲ್ಲದ ಹಾಗೆ ಮಾತನಾಡೋದು,ಅದನ್ನು ನಿಂದಿಸೋದು, ಅವಮಾನಿಸೋದು ನಿನ್ನ ಹಕ್ಕಲ್ಲ.ಹೇಗೆ ನಿನ್ನ ಧರ್ಮದ ಮೇಲೆ ನಿನಗೆ ಪ್ರೇಮವೋ ಹಾಗೇ ಅವರದು ಅವರಿಗೆ ಪ್ರೇಮ,.ಅದಕ್ಕೆಂದೇ ಇಲ್ಲಿ ಡಿ. ವಿ. ಜಿ. ಯವರು ತಿಳಿಸಿದ್ದಾರೆ.ಈ ಲೋಕವೆಂಬ ಸಂಗ್ರಹಣಾ ಕೊಠಡಿಯಲ್ಲಿ(store room) ನೂರಾರು ಧರ್ಮಗಳಿವೆ.ನಿನಗೆ ಹಿಡಿಸಿದ್ದನ್ನು ನೀನು ಆಯ್ಕೆ ಮಾಡಿಕೋ.ನಿನ್ನ ಮನಸ್ಸಿನ ಒಲೆಯಲ್ಲಿ ಆ ವಿಚಾರವನ್ನು ಅಡುಗೆಮಾಡಿ ಸಾರವನ್ನು ಅನುಭವಿಸು. ಯಾರ ಬುದ್ಧಿ ಹೇಗಿರುತ್ತದೋ ಹಾಗೆ ಅವರ ಮತ.ಅದನ್ನು ನೀನು ಪ್ರೀತಿಸುವುದಾದರೆ ಪ್ರೀತಿಸು,ಆಗದಿದ್ದರೆ ಸುಮ್ಮನಿರು. ಆದರೇ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ. ಏಕೆಂದರೆ ಯಾರ ಬುದ್ಧಿ ಮತ್ತು ವಿಚಾರ ಹೇಗಿರುತ್ತದೆಯೋ ಅವರ ಮತವೂ ಹಾಗಿರುತ್ತದೆ.

          ಒಂದೇ “ಪರವಸ್ತು”ವನ್ನು ಕಂಡುಕೊಳ್ಳಲು ಸಾವಿರಾರು ಮಾರ್ಗಗಳು ಇವೆ. ಆ ಮಾರ್ಗಕ್ಕೆ ತಕ್ಕಂತೆ ಧರ್ಮಗಳಿವೆ.ಹೀಗೆ ಆ ಮಾರ್ಗದಲ್ಲಿ ಆ ಧರ್ಮಿಯನಿಗೆ ಅವನದೇ ಆದ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರ್ಯ ಉಂಟು.ಯಾರು ಹೇಗೆ ಕಂಡುಕೊಳ್ಳುತ್ತಾರೆಯೋ ಹಾಗೆ ಅದರ ದರ್ಶನವಾಗುತ್ತದೆ.ಪ್ರತಿಯೊಬ್ಬರ ದರ್ಶನವು ಅವರವರ ವಿಚಾರಗಳ ಆಧಾರದ  ಮೇಲೆ ಸೃಷ್ಟಿಯಾಗಿರುವವು.ಅವುಗಳ ಮಾರ್ಗದಲ್ಲಿ ಭಿನ್ನತೆಯನ್ನು ನಾವು ಕಂಡರೂ ಸಹ ಅವುಗಳ ಗುರಿ ಮಾತ್ರ ಒಂದೇ ಆಗಿರುತ್ತದೆ. ‘आकाशात् पतितं तोयं यथा गच्छति सागरम्। सर्वदेव नमस्कारः केशवं प्रति गच्छति’।। ಎಂದರು ನಮ್ಮ ಹಿರಿಯರು.  ಯಾವ ಪದ್ದತಿಯನ್ನು ಅನುಸರಿಸಿ, ಯಾವುದೇ ಹೆಸರಿನಿಂದ ನಮಸ್ಕರಿಸಿದರೂ, ಆಕಾಶದಿಂದ ಬಿದ್ದ ಮಳೆಯ ನೀರು ಹರಿಯುವಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟ ನದಿಗಳಾದರೂ ಸೇರುವುದು ಒಂದೇ ಕಡಲೆಂಬಂತೆ, ನಮ್ಮೆಲ್ಲ ಆಚರಣಾ ಮಾರ್ಗಗಳು ಬೇರೆಯಾದರೂ ಸಹ,ನಮ್ಮ ಭಕ್ತಿ ಸಲ್ಲೋದು ಮಾತ್ರ ಪರಾತ್ಪರ ವಸ್ತುವನ್ನೆ.ಅಲ್ಲಿ ಉಚ್ಛ ನೀಚವಿಲ್ಲ, ಭಿನ್ನತೆ ಇಲ್ಲ,ಅಲ್ಲಿ ನಾಮವಿಲ್ಲ,ಅಲ್ಲಿ ಸಾಕಾರ ನಿರಾಕಾರ ಭೇದವಿಲ್ಲ.ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ ಆ ಪರತತ್ವವನ್ನು ಕುರಿತಾದ ನಮ್ಮ ಚಿಂತನೆಗೆ, ಜಗತ್ತಿನಲ್ಲಿರುವ ಸಾವಿರಾರು ಮಾರ್ಗಗಳಲ್ಲಿ ಯಾವುದಾದರೊಂದು ಮಾರ್ಗವನ್ನು ಹುಡುಕಿಕೊಂಡು, ಆ ಮಾರ್ಗವನ್ನು ದೃಢವಾಗಿ ನಂಬಿ ನಡೆದು ಗುರಿ ತಲುಪಬೇಕೇ ವಿನಃ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ.

ಸ್ವಧರ್ಮದಲಿ ನಿಷ್ಠೆ,ಪರಧರ್ಮ ಸಹಿಷ್ಣುತೆ ಇರಬೇಕು.ಆಗ ಬದುಕು ಸಾರ್ಥಕ.

ಹೀಗೆ ಒಂದು ಪ್ರಸಂಗ. ಒಂದು ಬಾರಿ ಶಿವಯೋಗ ಮಂದಿರದಲ್ಲಿ ಸಾಧಕರಾಗಿದ್ದ ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಒಮ್ಮೆ ಮಂದಿರಕ್ಕೆ ಬಂದ ಅಥಿತಿಗಳೊಂದಿಗೆ  ಭಾಷಣ ಮಾಡುವಾಗ ಉತ್ಸಾಹದಿಂದ ” ನ ವೀರಶೈವ ಸಮಮ್ ಮತಮಸ್ತಿ ಭೂತಲೆ”,ಎನ್ನುವ ಆಗಮದ ಸಂಸ್ಕೃತೋಕ್ತಿಯನ್ನು ಉದ್ಧರಿಸಿ ಜಗತ್ತಿನ ಸರ್ವ ಶ್ರೇಷ್ಠ ಧರ್ಮ ನಮ್ಮ ವೀರಶೈವ ಧರ್ಮ ಎಂದು ತಮ್ಮ ಧರ್ಮವನ್ನು ಪ್ರತಿಪಾದಿಸಿದ್ದರು. ಈ ಸಭೆಯಲ್ಲಿ ಕುಮಾರ ಶ್ರೀಗಳು ಸಹ ಉಪಸ್ಥಿತರಿದ್ದರು.ಸಭೆ ಮುಗಿದ ಬಳಿಕ ಬಸವಲಿಂಗ ಶ್ರೀಗಳನ್ನು ಬರ ಹೇಳಿದರು.ಇದನ್ನು ತಿಳಿದ ಬಸವಲಿಂಗ ಸ್ವಾಮಿಗಳು “ನನ್ನ ಭಾಷಣವನ್ನ ಕೇಳಿ ಪ್ರಶಂಸಿಸಲು ಕರೆದಿದ್ದಾರೆ.” ಎಂದು ಖುಷಿಯಿಂದ ಹೊರಟರು.ಆದರೆ ಅಲ್ಲಿ ಕುಮಾರ ಶ್ರೀಗಳ ಗಾಂಭೀರ್ಯ ಮುಖವನ್ನು ನೋಡಿದಾಕ್ಷಣ ಇವರ ಮುಖದ ಸಂತೋಷ ಬಾಡಿ ಹೋಗಿತ್ತು.  “ಯಾವ ಯಾವ ಧರ್ಮಗಳ ಬಗೆಗೆ  ಓದಿಕೊಂಡಿರುವಿರಿ”? ಎಂದು ಗಾಂಭೀರ್ಯದಿಂದ ಕುಮಾರ ಶ್ರೀಗಳು ಪ್ರಶ್ನಿಸಿದಾಗ,ಬಸವಲಿಂಗ ಸ್ವಾಮಿಗಳ ಬಾಯಲ್ಲಿ ಮಾತೇ ಹೊರಡದೆ ಸುಮ್ಮನೆ ನಿಂತಿದ್ದರು.       “ಯಾಕೆ ಸುಮ್ಮನಾದಿರಿ”? ಎಂದು ಗುರುಗಳು  ಮತ್ತೆ ಪ್ರಶ್ನಿಸಿದಾಗ ಬಸವಲಿಂಗ ಶ್ರೀಗಳು ಇನ್ನೂ ಮೌನದಿಂದಿರುವುದರಲ್ಲಿ ಅರ್ಥವಿಲ್ಲ ಎಂದು ಅರಿತು ಭಯದಿಂದ ‘ ಇಲ್ಲ ಬುದ್ಧಿ,ನಾನು ವೀರಶೈವ ಧರ್ಮ ಬಿಟ್ಟು ಬೇರೆ ಧರ್ಮದ ಬಗೆಗೆ ಏನನ್ನು ತಿಳಕೊಂಡಿಲ್ಲ.’ ಎಂದು ಅಳುಕುತ್ತ  ಉತ್ತರಿಸಿದಾಗ, ಗುರುಗಳು ಶಾಂತರಾಗಿ ” ನಿಮ್ಮ ಧರ್ಮದ ಬಗ್ಗೆ ಮಾತ್ರ ತಿಳಿದ ನೀವು ಜಗತ್ತಿನ ಉಳಿದ ಧರ್ಮಗಳಿಗಿಂತ ನಿಮ್ಮ ಧರ್ಮವೇ ಶ್ರೇಷ್ಠ ಎಂದು ಹೇಗೆ ಹೇಳಿದಿರಿ?ಅದಕ್ಕೇನು ಅಧಾರಗಳಿವೆಯೇ? ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ. ಇವತ್ತಿನ ನಿಮ್ಮ ಭಾಷಣ ಕೇಳಿ ಅತಿಥಿಗಳು ಏನು ಭಾವಿಸಿಕೊಂಡಿರಬಹುದು? ಶಿವಯೋಗ ಮಂದಿರದ ಬಗ್ಗೆ ತಪ್ಪು ಭಾವನೆ ಅವರಿಗೆ ಬಂದಂತೆ ಅಗಲಿಲ್ಲವೆ ನೀವಾಡಿದ ನುಡಿಗಳು?ನಿಮ್ಮ ನುಡಿ ಬೇರೆಯವರ ಮನಕ್ಕೆ ನೋವು ತರಬಾರದು.ನುಡಿ ಸತ್ಯವಿರಬೇಕು.ಎಲ್ಲ ಧರ್ಮವು ಶ್ರೇಷ್ಠವೇ.ನಿಮ್ಮ ಧರ್ಮದಲ್ಲಿ ನಿಮಗೆ ನಿಷ್ಠೆಯ ಪರಿಪಾಲನೆ ಇರಬೇಕು,ಹಾಗೆ ಪರ ಧರ್ಮಗಳಲ್ಲಿ ಸಹಿಷ್ಣುತೆ, ಗೌರವ ಇರಬೇಕು ಆಗಲೇ ನಿಮ್ಮ ಸಾಧನೆ ಪೂರ್ಣವಾಗುತ್ತದೆ ಮತ್ತು ಭಗವಂತನಿಗೆ ಮೆಚ್ಚ್ಚುಗೆ ಆಗುತ್ತದೆ.”ಎಂದು ಸಂಪೂರ್ಣ ಎಲ್ಲ ಧರ್ಮಗಳ ಬಗ್ಗೆ ಅರಿತ ಕುಮಾರ ಶ್ರೀಗಳು, ತಮ್ಮ ಧರ್ಮದಲ್ಲಿ ನಿಷ್ಠಾವಂತರಾಗಿ,ಪರ ಧರ್ಮಗಳಲ್ಲಿ ಗೌರವವನ್ನು ನೀಡುವ ದಿವ್ಯ ಬೋಧೆಯನ್ನೂ ಅವರ ಮೂಲಕ ಈ ಸಮಾಜಕ್ಕೆ ಸೂಕ್ಷ್ಮವಾಗಿ ತಿಳಿಸಿದ್ದರು.

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

            ನಮ್ಮಭಾರತೀಯ ಅಧ್ಯಾತ್ಮಿಕ ಸಂಸ್ಕೃತಿಯಲ್ಲಿ ಪ್ರಾಚೀನಕಾಲದಿಂದಲೂ ಯೋಗಕ್ಕೆ ಮಹತ್ವ ಪೂರ್ಣ ವಾದಂತಹ ಸ್ಥಾನವನ್ನು ಕಲ್ಪಿಸಲಾಗಿದೆ. ಧರ್ಮದ ಆತ್ಯಂತಿಕ ಗುರಿಯಾದ ಮೋಕ್ಷ ಸಾಧನೆ, ಲಿಂಗಾಂಗ ಸಾಮರಸ್ಯ ಅಥವಾ ಶಿವಸಾಯುಜ್ಯ ಹೊಂದುವದೇ ಯೋಗದ ಮುಖ್ಯಗುರಿ. ಈ ಸಂದೇಶವನ್ನು ಪ್ರಾಚೀನಕಾಲದಿಂದಲೂ ಅನೇಕ ಋಷಿ ಮಹರ್ಷಿಗಳು ವಚನಗಳಲ್ಲಿ, ವೇದಗಳಲ್ಲಿ, ಉಪನಿಷತ್ತುಗಳಲ್ಲಿ,ಭಗವದ್ಗೀತೆಯಲ್ಲಿ ಹೀಗೆ ಹಲವಾರು ಧಾರ್ಮಿಕ ಗ್ರಂಥಗಳಲ್ಲಿ ಯೋಗದ ಮೂಲ ಗುರಿಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. (ಆಗಮ ಕರ್ತೃ ವಾದಂತಹ ಪರಶಿವನೇ ನಮ್ಮ ಪ್ರಾಚೀನ ಋಷಿಮುನಿಗಳಿಗೆ ಯೋಗದ ಉಪದೇಶವನ್ನು ಮಾಡುತ್ತಾ ಬಂದಿದ್ದಾನೆ ಎಂಬುದು ನಮ್ಮ ಪುರಾತನರ ನಂಬಿಕೆ).

                         ಯೋಗಕ್ಕೆ ಅನಂತ ಪರಿಭಾಷೆಗಳಿವೆ. ಎಲ್ಲ ಧರ್ಮಗಳು, ಎಲ್ಲ ದರ್ಶನಗಳು, ಎಲ್ಲ ಮತಗಳು ತಮ್ಮದೇ ಆದಂತಹ ವಿಶಿಷ್ಟ ಕ್ರಿಯೆಗಳನ್ನು ಒಳಗೊಂಡಿವೆ, ಆದರೆ ಗುರಿ ಮಾತ್ರ ಒಂದೇ. ಜೀವನು ಶಿವ ನಾಗುವ, ಜೀನನು ಜೈನ ನಾಗುವ, ಬದ್ಧನು ಬುದ್ಧನಾಗುವ ಶ್ರೇಷ್ಠ ಮಾರ್ಗವನ್ನು ಈ ಯೋಗಮಾರ್ಗವು ಬೋಧಿಸುತ್ತದೆ. ಒಂದೇ ಮಾರ್ಗವನ್ನು ನಮ್ಮ ಪ್ರಾಚೀನ ಸಂತರು ಭಿನ್ನ ಭಿನ್ನವಾಗಿ ಚಿತ್ರಿಸಿದ್ದಾರೆ. ಸ್ವಾಮಿ ವಿವೇಕಾನಂದರು ರಾಜಯೋಗವನ್ನು, ಅರವಿಂದರ ಪೂರ್ಣಯೋಗವನ್ನು, ಮಹಾವೀರರು ಅಹಿಂಸಾ ಮಾರ್ಗ ವನ್ನು, ಬುದ್ಧರ ತ್ಯಾಗ ಮಾರ್ಗವನ್ನು, ಮಹಾದೇವಿ ಅಕ್ಕನವರು ವೈರಾಗ್ಯವನ್ನು, ಬಸವಣ್ಣನವರ ಭಕ್ತಿ ಮಾರ್ಗ ಹೀಗೆ ಅನೇಕ ಮಹಾತ್ಮರು ಲೋಕೋದ್ಧಾರಕ್ಕಾಗಿ ಆತ್ಮ ಉನ್ನತಿಗಾಗಿ ಅನೇಕ ಮಾರ್ಗಗಳನ್ನು ತೋರಿದ್ದಾರೆ.

ಯೋಗವು ವ್ಯಕ್ತಿಯಲ್ಲಿರುವ ಮೂಲಭೂತ ವಾದಂತಹ ಸ್ವಭಾವಗಳನ್ನು ನಿಯಂತ್ರಿಸಿ  ಆ ನಿಯಂತ್ರಣದ ಮೂಲಕ ವ್ಯಕ್ತಿಯನ್ನು ಪರಿಪೂರ್ಣದೆಡೆಗೆ, ಔನತ್ಯದ ಕಡೆಗೆ ಕೊಂಡೊಯ್ಯುವ ವಿಶಿಷ್ಟ ಮಾರ್ಗವಾಗಿದೆ.

ಈ ಮಾರ್ಗವನ್ನು ಅನುಷ್ಠಾನ ಮಾಡಿ, ಅನುಸಂಧಾನ ಮಾಡಿ ಅನುಭವಿಸ ಬೇಕಲ್ಲದೆ ಬುದ್ಧಿಯಿಂದ ವಿವರಿಸಲಾಗುವುದಿಲ್ಲ. ಒಂದು ಹಣ್ಣನ್ನು ಅಥವಾ ಸಿಹಿಯಾದ ಪದಾರ್ಥವನ್ನು ತಿಂದು ಅದರ ಸಂಪೂರ್ಣ ರುಚಿ, ಸ್ವಾದ ಅನುಭವಿಸಬೇಕಲ್ಲದೆ ಅದು ಹೇಗಿದೆ,ಅದರ ರುಚಿ ಹೇಗಿದೆ ಎಂದು ಪ್ರಶ್ನಿಸುವುದರಿಂದ ಅದರ ಸಂಪೂರ್ಣ ಅರಿವು ನಮಗೆ ಉಂಟಾಗುವುದಿಲ್ಲ. ಅರಿತವನು ಜ್ಞಾನಿಯಾಗುತ್ತಾನೆ, ಸಾಧಿಸಿದವನು ಸಿದ್ಧನಾಗುತ್ತಾನೆ, ಅನುಭವಿಸಿದವರು ಯೋಗಿಯಾಗುತ್ತಾನೆ. ಇಂತಹ ಸಿದ್ದರು ಸಂತರು ಮಹಾತ್ಮರು ಯೋಗಿಗಳು ಲೋಕದೊಳಗೆ ಇದ್ದು ಅಲೌಕಿಕವಾದ ಜೀವನವನ್ನು ಸಾಗಿಸುತ್ತಾರೆ

   ಈ ಯೋಗಮಾರ್ಗದಲ್ಲಿ ಮುಂದುವರೆಯುವವನಿಗೆ ವಿವೇಕ ವೈರಾಗ್ಯಗಳೆರಡು ಅತ್ಯವಶ್ಯಕ.  ಸಾಧಕರು ಆತ್ಮಸಂಯಮ ದೊಂದಿಗೆ ಶಾಸ್ತ್ರಗ್ರಂಥಗಳ ಅಧ್ಯಯನವನ್ನು ಮಾಡುತ್ತಾ ವಿವೇಕ ವೈರಾಗ್ಯಗಳನ್ನು ಗಳಿಸಿಕೊಳ್ಳುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಈ ಸಾಧನೆ ಸಾಧ್ಯ ಎಂಬುದು ಗಮನೀಯ ವಾದಂತಹ ಸಂಗತಿ ಅದಕ್ಕೆ ಗೀತೆಯಲ್ಲಿ ಒಂದು ಉದಾಹರಣೆಯನ್ನು ಭಗವಂತನು ತಿಳಿಸಿದ್ದಾನೆ. 

“ಮನುಷ್ಯಾಣಾಂ ಸಹಸ್ರೇಷು ಕಸ್ತಿದ್ ಯತತಿ ಸಿದ್ಧಯೇ

ಯತತಾನಾಮಪಿ ಸಿದ್ದಾನಾಂ ಕಶ್ಚಿನ ಮಾಂ ವೇತ್ತಿ ತತ್ವ ತಹ”

                              ಸಾವಿರ ಜನರಲ್ಲಿ ಒಬ್ಬನು ಮಾತ್ರ ಈ ಸಾಧನೆಗಾಗಿ ಪ್ರಯತ್ನಿಸುತ್ತಾನೆ. ಇದಕ್ಕಿಂತ ಶ್ರೇಷ್ಠವಾದ ಸಾಧನೆ ಮತ್ತೊಂದಿಲ್ಲ. ಇದಕ್ಕಾಗಿ ಪ್ರಯತ್ನಿಸಿದಂತಹ  ಸಾವಿರಾರು ಜನರಲ್ಲಿ ಒಬ್ಬನು ಮಾತ್ರ ಈ ದುರ್ಲಭವಾದ ದಿವ್ಯ ಮಾರ್ಗವನ್ನು ಅನುಸರಿಸುತ್ತಾನೆ. ಈ ಅಪೇಕ್ಷೆ ಬೆಳೆದಂತೆಲ್ಲ ಭೌತಿಕ ವಸ್ತು ವಿಷಯಗಳಲ್ಲಿ ಮನಸ್ಸು ಉದಾಸೀನಭಾವವನ್ನು ತಾಳುತ್ತದೆ, ಉದಾತ್ತಿಕರಣಗೊಳ್ಳುತ್ತದೆ.

        “ಆತ್ಮ ವಿದ್ಯಾ ತಪೋ ಮೂಲಮ್”  ಎಂಬುವುದನ್ನು

ಅರಿತಂತಹ ಶ್ರೀ ಕುಮಾರ ಮಹಾಶಿವಯೋಗಿಗಳು ತಮ್ಮ ಗುರುಗಳಾದಂತಹ ಶ್ರೀ ಬಸವಲಿಂಗ ಮಹಾ ಶಿವಯೋಗಿಗಳವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲೋಕ ಲೌಕಿಕಗಳೆರಡರ ಜ್ಞಾನವನ್ನು ಪಡೆಯುತ್ತಾ ಲೋಕ ಸಂಚಾರ ಗೈಯುತ್ತಾ ಶಂಭುಲಿಂಗನ ಬೆಟ್ಟದಲ್ಲಿ ತಪವನ್ನಾಚರಿಸಿ ತಮ್ಮ ಗುರುಗಳ ಮಾನಸ ಪುತ್ರರಾಗಿ ಹೊರಹೊಮ್ಮಿದರು. ಬಸವಲಿಂಗ ಮಹಾಶಿವಯೋಗಿಗಳು ತಮ್ಮ ದಿವ್ಯ ಶಕ್ತಿಯನ್ನೆಲ್ಲ ಶಿಷ್ಯನಿಗೆ ಧಾರೆಯೆರೆದರು. ಒಬ್ಬ ಸಮರ್ಥವಾದ ಗುರು ನಿಸ್ವಾರ್ಥತೆಯಿಂದ ತನ್ನೆಲ್ಲಾ ಶಕ್ತಿಯನ್ನು ಶಕ್ತಿಪಾತ ದೀಕ್ಷೆಯ ಮುಖಾಂತರ ತನ್ನ ಶಿಷ್ಯನಿಗೆ ಧಾರೆ ಎರೆಯುವುದನ್ನು ನಾವು ಭಾರತೀಯ ಪುರಾತನ ಪರಂಪರೆಯಲ್ಲಿ ಕಾಣುತ್ತೇವೆ ಇಂತಹ ದಿವ್ಯಶಕ್ತಿಯನ್ನು ಹೊಂದಿ, ಲೋಕ ಕಲ್ಯಾಣದಲ್ಲಿಯೇ ಆತ್ಮ ಕಲ್ಯಾಣವನ್ನು ಸಾಧಿಸುವ ದಿವ್ಯತೆಯನ್ನು ಹೊಂದಿ ಒಬ್ಬ ಶ್ರೇಷ್ಠ ಯೋಗಿಗಳಾಗಿ ಸಂತರಾಗಿ ಮಹಾತ್ಮರಾಗಿ ಹೊರಹೊಮ್ಮಿದರು. ಆದ್ದರಿಂದ ಈ ಯೋಗಮಾರ್ಗವು ನಿರಂತರವಾಗಿ ಮುನ್ನಡೆಯಲಿ ಎಂದು ಯೋಗದ ಮಹತ್ವವನ್ನು ನಮಗೆ ಅರುಹುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ  ಈ ಯೋಗಮಾರ್ಗವು ಸಾಮಾನ್ಯರನ್ನು ಮಾನವರನ್ನಾಗಿ, ಮಾನವರನ್ನು ಮಹಾ ಮಾನವರನ್ನಾಗಿ, ಮಹಾ ಮಾನವರನ್ನು ದೇವ ಮಾನವರನ್ನಾಗಿ ಮಾಡುವಂತಹ ಒಂದು ಪ್ರಕ್ರಿಯೆ ಆದ್ದರಿಂದ ನಾವೆಲ್ಲರೂ ಈ ಮಾರ್ಗವನ್ನು ಅನುಸರಿಸೋಣ, ನಮ್ಮ ಜೀವನವನ್ನು ಪಾವನ ವನ್ನಾಗಿ ಮಾಡಿಕೊಳ್ಳೋಣ, ತಮಗೆಲ್ಲರಿಗೂ ಶುಭವಾಗಲಿ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

      ಪ್ರಿಯ ಸಹೃದಯರೆ ಭವ್ಯ ಪರಂಪರೆಯನ್ನ  ದಿವ್ಯ ಸಂಪ್ರದಾಯವನ್ನು ಹೊಂದಿದ ದೇಶ ಅದು ಭಾರತ ದೇಶ. ಈ ದೇಶ, ಈನಾಡು ಮತ್ತು ಸಂಸ್ಕೃತಿಯನ್ನ ಎಲ್ಲ ಜೀವಿಗಳಿಗೆ ತಿಳಿಸಿ ಅದರಂತೆ ನಡೆದು ಸಾರ್ಥಕ ಬದುಕನ್ನು ಕಟ್ಟಿಕೊಂಡು ಬಾಳಿ ಬದುಕಿ ಅಂತ ಹೇಳಿದವರು ಈ ದೇಶದ ದಾರ್ಶನಿಕರು, ಮಹಾತ್ಮರು, ಸಂತರು, ಮಹಾಂತರು ಅಂತಹ ಮಹಾತ್ಮರ ಇರುವಿಕೆಯನ್ನ ಅವರು ನಡೆಸಿದ ಜೀವನಶೈಲಿಯನ್ನು, ಅವರ ಆದರ್ಶದ ಪಥವನ್ನು, ಪವಾಡವನ್ನು, ಲೋಕ ಸೇವೆಯನ್ನು  ಇಂದಿನ ಪೀಳಿಗೆಗಳಿಗೆ ಗೊತ್ತು ಮಾಡಿಕೊಟ್ಟವರು ಕವಿಗಳು.

ಇಂತಹ ಕವಿಗಳಲ್ಲಿ 4 ಪ್ರಕಾರಗಳು

1 ವರ ಕವಿ

2 ಶಿವ ಕವಿ

3 ಆಶು ಕವಿ

4 ನರ ಕವಿ

ಹೀಗೆ ಎಲ್ಲದರ ಅರಿವನ್ನ ಎಲ್ಲದರಲ್ಲಿ ಪರಿಣಿತಿ ಹೊಂದಿದ ಹಲವಾರು ಕವಿಗಳು ನಮಗೆ ದೊರೆಯುತ್ತಾರೆ. ಧರ್ಮಗ್ರಂಥಗಳನ್ನ, ನೀತಿ ತತ್ವಗಳನ್ನ, ಪುರಾಣ ಪುಣ್ಯ ಕಥೆಗಳನ್ನ, ಉಪನಿಷದಾದಿ ಸಂಸ್ಕೃತ ಗ್ರಂಥಗಳನ್ನ, ಇಂತೆಲ್ಲ ಮಹಾನ ಗ್ರಂಥಗಳ ಸಾರವನ್ನು ಎಲ್ಲರ ಮನ ಮುಟ್ಟುವಂತೆ ಬರೆದು ಆ ಮಹಾನ್ ಗ್ರಂಥಕ್ಕೆ ಭಾಷ್ಯ  ಬರೆದು ಪುಸ್ತಕರೂಪದಲ್ಲಿ ನಮ್ಮೆಲ್ಲರ ಕೈಗೆ ಕೊಟ್ಟವರು ಶಿವ ಕವಿಗಳು ಇಂತಹ ಅನೇಕ ಶಿವ ಕವಿಗಳಲ್ಲಿ ಒಬ್ಬರು ದ್ಯಾಂಪುರದ ಚೆನ್ನ ಕವಿಗಳು.

 ಇವರು ಗದುಗಿನ ಹತ್ತಿರವಿರುವ ನಾರಾಯಣಪುರದಲ್ಲಿ ಕ್ರಿ.ಶ.1879 ರಲ್ಲಿ ಜನಿಸಿದರು ತಂದೆ ಕೊಟ್ಟೂರ ಬಸವಯ್ಯನವರು, ತಾಯಿ ನೀಲಾಂಬಿಕೆ ಈ ಇರ್ವ ದಂಪತಿಗಳು ದ್ಯಾಂಪುರದಲ್ಲಿ ವಾಸವಾಗಿದ್ದ ರಿಂದ ಕವಿಗಳಿಗೆ ದ್ಯಾಂಪುರ ಚೆನ್ನ ಕವಿಗಳೆಂದು ರೂಢಿ. ಕವಿಗಳು ತಮ್ಮ ಸೋದರಮಾವಂದಿರಾದ ನಾರಾಯಣಪುರದ ಕಲ್ಯಾಣ ಶಾಸ್ತ್ರಿಗಳವರಲ್ಲಿ ಕನ್ನಡ ಹಾಗೂ ಸಂಸ್ಕೃತ ವನ್ನ ಕಲಿತು, ವೀರಯ್ಯ ನವರೆಂಬ ಶಿಕ್ಷಕರ ಸಹಾಯದಿಂದ ತಮ್ಮ ಅಭ್ಯಾಸವನ್ನ  ಹೆಚ್ಚಿಸಿಕೊಂಡು, ಅಷ್ಟೇ ಅಲ್ಲದೆ ಕನ್ನಡದ ಪ್ರಸಿದ್ಧ ಕಾವ್ಯಗಳಾದ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ ಹೀಗೆ ಮೊದಲಾದ ಉತ್ಕೃಷ್ಟ ಗ್ರಂಥಗಳನ್ನ ಆಸ್ಥೆಯಿಂದ ಅಭ್ಯಾಸ ಮಾಡಿ ಕಾವ್ಯ ಸಾಹಿತ್ಯದಲ್ಲಿ ಪರಿಣತಿ ಹೊಂದಿದರು. ಅಷ್ಟೇ ಅಲ್ಲ ಕಲಿತ ವಿದ್ಯೆ ನನ್ನೊಂದಿಗೆ ಇದ್ದರೆ ಸಾಲದು ನನಗೆ ತಿಳಿದ ಮಟ್ಟಿಗೆ ಇನ್ನುಳಿದವರಿಗೆ ತಿಳಿಸೋಣವೆಂಬ ಹಂಬಲದಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸುಮಾರು ಹದಿನಾರು ವರ್ಷ ಸೇವೆಯನ್ನ ಮಾಡಿದ ಕವಿಗಳು. ಇಂತಹ ಕವಿಗಳನ್ನ ಹುಡುಕಿ ಅವರಿಗೆ ಸ್ಥಾನಮಾನಗಳನ್ನು ಕಲ್ಪಿಸಿ ಧರ್ಮದ ತಿರುಳನ್ನ, ನಮ್ಮ ಸಂಸ್ಕೃತಿಯನ್ನು ಸಾಹಿತ್ಯ ರೂಪದಲ್ಲಿ ಎಲ್ಲೆಡೆ ಹರಡಿಸಿ ಎಂದು ಚೆನ್ನ ಕವಿಗಳಿಗೆ ಆಶೀರ್ವದಿಸಿದವರು ಪರಮಪೂಜ್ಯ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು. ಪೂಜ್ಯರ ಅಪ್ಪಣೆಯಂತೆ ಚೆನ್ನ ಕವಿಗಳು ಧರ್ಮೋಪದೇಶ ಹಾಗೂ ಸಾಹಿತ್ಯ ಸೇವೆಗಾಗಿ ತಮ್ಮ ಉಳಿದ ಆಯುಷ್ಯವನ್ನು ಮೀಸಲಾಗಿಟ್ಟರು .

ಚೆನ್ನ ಕವಿಗಳೆಂದರೆ ಕನ್ನಡ ನಾಡಿನಲ್ಲಿರುವ ಸರ್ವ ಜನರಿಗೆ ಚಿರಪರಿಚಿತರು, ಇಂತಹ ಕವಿಗಳ ಪರಿಚಯ ಮಾಡಿಕೊಡುವುದೇoದರೆ ಸೂರ್ಯನ ಪರಿಚಯ ಮಾಡಿಕೊಟ್ಟಂತೆ ಸರಿ, ಬಲು ವಿಚಕ್ಷಣ ಮತಿಯುಳ್ಳ ಚೆನ್ನ ಕವಿಗಳಿಗೆ ಪದ್ಯಗಳನ್ನ ಕಟ್ಟುವುದೆಂದರೆ ಸಹಜ ಸ್ವಭಾವದಾಗಿತ್ತು ಅದರಂತೆ ಕಾವ್ಯಗಳನ್ನ  ಬರೆಯಬೇಕೆಂದರೆ ಯಾವಾಗಲೂ ಅವರಿಗೆ ಹುರುಪು ಹುಮ್ಮಸ್ಸು ಉಂಟಾಗುತ್ತಿತ್ತು . ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಇವರ ಕವಿತ್ವದ ಪ್ರಭೆಯು ಕರ್ನಾಟಕದ ತುಂಬಾಬೆಳಗಿತು. ಈ ನಾಡಿಗೆ ಇವರು ಮಾಡಿದ ಸಾಹಿತ್ಯ ಸೇವೆಯು ಅಪಾರವಾಗಿದೆ.

ಕನ್ನಡ ನಾಡಿನ ಮೇಲೆ, ಕನ್ನಡ ಭಾಷೆಯ ಮೇಲೆ, ನುಡಿಯ ಮೇಲೆ ಎಷ್ಟೊಂದು ಅಭಿಮಾನ ಅಂದರೆ ಅವರೇ ಕುಮಾರೇಶ್ವರರ ಪುರಾಣದಲ್ಲಿ ತಿಳಿಸಿದ ಹಾಗೆ

       “ಕನ್ನಡಮ್ಮನ ಮಕ್ಕಳಾದೆಮಗೆ ಹೆಮ್ಮೆಯಿಂ

        ಕನ್ನಡದ ಭಾಷೆಯಂ ಬೆಳಿಸುವದೇ ಭೂಷಣಂ

        ಕನ್ನಡಕೆ ಮನ್ನಣೆಯನೆಸಗದವನದಮನೆಂಬುದರಿಂದ ರಚಿಸಿದೆನ್ನ

        ಕನ್ನಡದ ಕಬ್ಬದೊಳಗೊಪ್ಪಿರಲಿ ತಪ್ಪಿರಲಿ

        ಕನ್ನಡದ ಸೇವೆಯಂಮಾಡಿದುತ್ಸಾಹ  ವಿಂದೆನ್ನ

        ಮಾನಸಕಾಗದೇ ಕ್ಷಮಿಸಿ ನಲಿಯರೇ ಕರುನಾಡ ಜಾಣರೆಲ್ಲ”

ಇಷ್ಟೊಂದು ಕನ್ನಡ ಭಾಷಾಭಿಮಾನಿ ಕವಿಯಾಗಿದ್ದರು ಶ್ರೀ ಚೆನ್ನ ಕವಿಗಳು.

     “ತುಡುಗರೆಸಗಿದ ದೋಷಮದು  ಮೂರು ತಲೆಯನಕ

      ಬಿಡದು ಕವಿಕಾವ್ಯದೊಳು ನೆಗಳ್ದ ದೋಷಂ ಮುಂದೆ

      ಕೆಡದಿಹುದು ನೂರತಲೆಯನ್ನ ಮೆಂದೊರೆವ ನಾಣ್ನುಡಿಗಂಜು ದುತ್ಸಾಹದೆ”

ತುಡುಗರು ಮಾಡಿದ ದೋಷ, ತಪ್ಪು ಅದು ಅವರ ಮೂರು ತಲೆಮಾರಿನವರೆಗೆ ಬಿಡದೆ ಕಾಡಿದರೆ, ಕವಿಯು ಕಾವ್ಯ ರಚನೆಯಲ್ಲಿ ಮಾಡಿದ ತಪ್ಪು, ದೋಷವದು ನೂರು ತಲೆಮಾರಿನವರೆಗೆ ಕಾಡದೆ ಬಿಡದು ಎಂಬ ನಾಣ್ನುಡಿಗೆ ಅಂಜಿ ಬಹಳ ಎಚ್ಚರದಿಂದ ಪುರಾಣಗಳನ್ನ, ಕಾವ್ಯಗಳನ್ನ ಬರೆದಿದ್ದೇನೆ ಎನ್ನುವರು ಚೆನ್ನ ಕವಿಗಳು.

ಶ್ರೀ ದ್ಯಾಂಪುರದ ಚೆನ್ನಕವಿಗಳು ಬರೆದಿರುವ ಒಂಬತ್ತು ಪುರಾಣಗಳು ಇಂತಿವೆ :-

1 ಹೇಮರಡ್ಡಿ ಮಲ್ಲಮ್ಮನ ಪುರಾಣ

2 ಹಾಲಕೆರೆ ಶ್ರೀ ಅನ್ನದಾನೇಶ್ವರ ಮಹಾಪುರಾಣ

3 ನಾಲ್ವತವಾಡದ ವೀರೇಶ್ವರ ಪುರಾಣ

4 ಕಮತಗಿ ಶ್ರೀ ಹುಚ್ಚೇಶ್ವರ ಪುರಾಣ

5 ಕಂಬಳಿಹಾಳ ದೊಡ್ಡ ಬಸವೇಶ್ವರ ಪುರಾಣ

6 ಇಲಕಲ್ಲ ವಿಜಯ ಮಹಾಂತೇಶ್ವರ ಪುರಾಣ

7 ಮುಳಗುಂದದ ಬಾಲಲೀಲಾ ಮಹಾಂತೇಶ್ವರ ಪುರಾಣ

8 ಶಿರಹಟ್ಟಿ ಶ್ರೀ ಫಕೀರೇಶ್ವರ ಚರಿತ್ರೆ

9 ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ

ಪುರಾಣಗಳು ಧರ್ಮದ ಸಾಂಕೇತಿಕ ನಿರೂಪಣೆಗಳು, ಪುರಾಣಗಳಲ್ಲಿ ದೇವರು, ದೇವತೆಗಳು ಮತ್ತು ವಿಶೇಷ ವ್ಯಕ್ತಿಗಳ ಅತಿಮಾನುಷಕ್ಕೆ ಕಾರಣವಾದ ಅಸಾಮಾನ್ಯ ಸನ್ನಿವೇಶ, ಸಂದರ್ಭಗಳು, ಅಸಮ-ವಿಷಮ ಪರಿಸರದಲ್ಲಿ ಸಮಾನತೆಗಾಗಿ ನಡೆದ ಅಸಾಮಾನ್ಯ ಘಟನೆಗಳು ಆ ಕಾಲಘಟ್ಟದ ಚರಿತ್ರೆಯನ್ನು ಗರ್ಭೀಕರಿಸಿಕೊಂಡಿ ರುತ್ತವೆ ಪುರಾಣಗಳು. ಈ ಹಿನ್ನೆಲೆಯಲ್ಲಿ ಪುರಾಣಗಳು ಮನುಷ್ಯ ಸಂಸ್ಕೃತಿಯ ಶಾಸನಗಳು. ಹೀಗಾಗಿ ಯಾವುದೇ ಸಂಸ್ಕೃತಿ, ಸಮಾಜ, ಸಮುದಾಯವನ್ನು ಅಭ್ಯಾಸ ಮಾಡುವುದಕ್ಕೆ ಅಥವಾ ಮನುಕುಲದ ಒಂದು ಕಾಲಘಟ್ಟದ ಚರಿತ್ರೆಯನ್ನು  ಅರಿಯುವುದಕ್ಕೆ ಇಂತೆಲ್ಲ ಪುರಾಣಗಳು ಸಹಕಾರಿಯಾಗುತ್ತವೆ. ಭವಿಷ್ಯದ ಬದುಕಿಗೆ ಮನುಷ್ಯನ ಚರಿತ್ರೆಗೆ, ಎಣ್ಣೆ ಬತ್ತಿಯಾಗುತ್ತವೆ, ವರ್ತಮಾನದ  ಲೌಕಿಕ ಬದುಕಿಗೆ ಗಚ್ಚುಗಾರೆ ಯಾಗುತ್ತವೆ ಇಂತಹ ಪುರಾಣಗಳು.

ಹೀಗೆ ಚೆನ್ನಕವಿಗಳು ರಚಿಸಿರುವ ಒಂಬತ್ತು ಪುರಾಣಗಳು “ವಾರ್ಧಕ ಷಟ್ಪದಿಯಲ್ಲಿ ವೆ” ಉಳಿದ ಸುಮಾರು ಹನ್ನೆರಡು ಕೃತಿಗಳು “ಶತಕ ಹಾಗೂ ಹಾಡುಗಬ್ಬಗಳ ರೂಪದಲ್ಲಿ ರಚಿತವಾಗಿವೆ.

1 ಕಾಲಕಾಲೇಶ್ವರ ಶತಕ 2 ಕಲ್ಲಿನಾಥ ಶತಕ 3 ಕೊಟ್ಟೂರೇಶ್ವರ ಶತಕ

4 ಬಸವ ತ್ರಿವಿಧಿ 5 ಅನ್ನದಾನೀಶ್ವರ ಜೋಗುಳಪದ 6 ನಲ್ನುಡಿ

7 ಶ್ರೀ ಗವಿಸಿದ್ದೇಶ್ವರ ಮಂಗಲ ಪದಗಳು 8 ಮಂತ್ರ ರಹಸ್ಯ 9 ಬೀಗಿತಿಯರ ಹಾಡು

10 ಮನೋ ಬೋಧೆ 11 ಶ್ರೀ ಕುಮಾರೇಶ್ವರ ಶತಕ 12 ಕೊನೆಯದಾಗಿ ತಾವು ಶಿವೈಕ್ಯರಾಗುವ 15 ದಿನಗಳ ಪೂರ್ವದಲ್ಲಿ ಬರೆದದ್ದು ಅದು ಸದಾಶಿವ ಲೀಲೆ.

ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾವ್ಯಗಳು ವಿಪುಲವಾಗಿವೆ, ಹಿಂದಿನ ಪರಂಪರೆಯನ್ನು ಬಿಡದೆ ಇಪ್ಪತ್ತನೆಯ ಶತಮಾನದಲ್ಲಿ ಕಾವ್ಯಗಳನ್ನು ಬರೆದವರು ವಿರಳ ಆದರೆ ಶ್ರೀ ಚನ್ನ ಕವಿಗಳು ಒಂಬತ್ತು ಪುರಾಣಗಳನ್ನು ಬರೆದು ಅದರ ಜೊತೆಗೆ ಶತಕಹಾಗೂಹಾಡುಗಳನ್ನ ರಚಿಸಿ ಈ ಕೊರತೆಯನ್ನ ಬಹುಮಟ್ಟಿಗೆ ಪೂರೈಸಿದವರು.

ಚೆನ್ನ ಕವಿಗಳ ಕೃತಿಗಳಲ್ಲಿ ರಸವತ್ತಾಗಿಯೂ ಜನಪ್ರೀಯವಾಗಿಯು ಇವೆ ಇವರು ಬರೆದ ಪುರಾಣಗಳನ್ನು ಆಸ್ಥೆಯಿಂದ ಶ್ರವಣ ಮಾಡುತ್ತಾರೆ.

ಇವರ ಕಾವ್ಯಶಕ್ತಿಯನ್ನ, ಸಾಹಿತ್ಯ ಸೇವೆಯನ್ನ ಅರಿತುಕೊಂಡ ಧಾರವಾಡದ ಶ್ರೀ ಮೃತ್ಯುಂಜಯ ಅಪ್ಪಗಳವರು ಇವರಿಗೆ ಕ್ರಿ.ಶ.1940 ರಲ್ಲಿ “ಕವಿರತ್ನ” ಎಂಬ ಬಿರುದನ್ನ ದಯಪಾಲಿಸಿದರು.

ಭರತಖಂಡದ ಬೇರೆಬೇರೆ ಭಾಗಗಳಲ್ಲಿ ಮಹಾನುಭಾವರನೇಕರು ಉದ್ಭವಿಸಿ ಭಾರತೀಯರ ಧರ್ಮ, ಸಂಸ್ಕೃತಿ, ನೀತಿ, ನಡೆ-ನುಡಿಗಳನ್ನುಳಿಸಿ ಶೋಧಿಸಿ ಅವು ಪ್ರಕಾಶಮಾನವಾಗುವಂತೆ ಪರಿಶ್ರಮಪಟ್ಟರು. ಇಂತಹ ಮಹನೀಯರ ಜೀವಿತ ಕಥನವನ್ನ, ಅವರು ನಡೆದ ಪಥವನ್ನ, ಪುರಾಣ ರೂಪದಲ್ಲಿ, ಶತಕ ರೂಪದಲ್ಲಿ ನಮ್ಮೆಲ್ಲರಿಗೂ ತಿಳಿಸಿ ಎಲ್ಲರಿಂದ ಗೌರವವನ್ನು ಪಡೆದು ಈ ವಿಧದ ಗೌರವಾನ್ವಿತ ಜೀವನವನ್ನು ಸಾಗಿಸಿ ದಿನಾಂಕ 5-3-1946 ರಲ್ಲಿ  ಕವಿಗಳಿಗೆ ಬದುಕನ್ನು ರೂಪಿಸಿಕೊಟ್ಟು ತಂದೆಯಾದ ಕುಮಾರ ಶಿವಯೋಗಿ ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಶಿವೈಕ್ಯರಾದರು.

ಶ್ರೀ ದ್ಯಾಂಪುರದ ಚೆನ್ನಕವಿಗಳು ರಚಿಸಿರುವ ಎಲ್ಲ ಕೃತಿಗಳ ಸಾರವನ್ನು ಸವಿದರೆ ಮಾನವನಿಗೆ ನಿಜವಾಗಿಯೂ ಸ್ವಾರ್ಥತ್ಯಾಗದ ಅರಿವು ಉಂಟಾಗುವುದು.

ಇಂತಹ ಮಹಾನ್ ಕವಿಯು  ಅಪೂರ್ವವಾದ ಕೃತಿಯನ್ನು ರಚಿಸಿಕೊಟ್ಟಿದ್ದಾರೆ ಅಂತಹ ಕೃತಿಗಳನ್ನು ಪಡೆದು ಓದಿ ಧನ್ಯಾತ್ಮರಾಗೋಣ .

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಫೆಬ್ರುವರಿ ತಿಂಗಳು ಶ್ರೀ ಮದ್ವೀರಶೈವ ಶಿವಯೋಗಮಂದಿರ ೧೧೩ ನೇಯ ಸಂಸ್ಥಾಪನಾ ದಿನಾಚರಣೆಯ ವಾರ್ಷಿಕೋತ್ಸವವನ್ನುಅತ್ಯಂತ ಅರ್ಥಗರ್ಭಿತವಾಗಿ ಆಚರಿಸಿಕೊಳ್ಳುತ್ತಿದೆ.

ಶ್ರೀ ಮದ್ವೀರಶೈವ ಶಿವಯೋಗಮಂದಿರ.

ಎಲ್ಲಿ ಶಿವ ಸಂಬಂಧವಾದ ವಿಚಾರಗಳು,ಶಿವಾಚಾರ-ಶಿವಾನುಭವ-ಶಿವಯೋಗದ ವಿಷಯಗಳನ್ನು ಅಭ್ಯಾಸ ಮಾಡುವ ಶಿಷ್ಯರೂ,ಉಪದೇಶಿಸಿರುವ ಗುರುಗಳು ನಿರ್ವಿಕಾರ ಚಿತ್ತದಿಂದ ವಾಸಮಾಡುವರೋ ಅಂತಹ ಸ್ಥಾನ ವಿಶೇಷವು ಮತ್ತು ಶಿವಯೋಗಮಂದಿರ”ವೆಂದು ಹೇಳಲ್ಪಡುವುದು.

ಇಂಥಃ ಘನೋದ್ದೇಶವನ್ನಿರಿಸಿಕೊಂಡು ಸ್ಥಾಪಿಸಲ್ಪಟ್ಟಿರುವ ಈ ಶಿವಯೋಗಮಂದಿರ ಮತ್ತು ಅದರ ಕರ‍್ಯಕಲಾಪಗಳು ಪರಮಪೂಜ್ಯ .ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ (೧೮೬೭-೧೯೩೦)  ಅವಿಶ್ರಾಂತ ಪರಿಶ್ರಮದ ಫಲಶೃತಿ ಯಾಗಿರುತ್ತವೆ.

ಇದು ವೀರಶೈವ(ಲಿಂಗಾಯತ)ರಿಗಾಗಿ, ವೀರಶೈವ(ಲಿಂಗಾಯತ) ಮಠಾಧಿಪತಿಗಳಾಗಲಿರುವ ವಟು-ಸಾಧಕರಿಗೆ ಶಿಕ್ಷಣ ತರಬೇತಿಯ ಗುರುಕುಲವಾಗಿರುತ್ತದೆ.

ವೀರಶೈವ(ಲಿಂಗಾಯತ) ಧರ್ಮವು ತಾತ್ವಿಕ ಧರ್ಮ, ತತ್ವ ನಿಷ್ಠವಾದುದು ;ವ್ಯಕ್ತಿ ನಿಷ್ಠ ಧರ್ಮವಲ್ಲ..ಯಾವುದೇ ಜಾತಿಯವನಾಗಲಿ,ವರ್ಣ-ವರ್ಗದವನಾಗಲಿ ಶ್ರೀ ಗುರುವಿನಿಂದ ಶಿವದೀಕ್ಷೆಯನ್ನು ಪಡೆದು ಲಿಂಗಧಾರಿಯಾಗಲು ಅರ್ಹನಿರುತ್ತಾನೆ.ಸಂಸ್ಕಾರವೇ ಮುಖ್ಯವಾದ ಧರ್ಮವಿದು.ಸಾಧನೆಯೇ ಮುಖ್ಯವಾದ ಧರ್ಮವಿದು..ಧರ್ಮದ ತತ್ವ ಮತ್ತು ಸಂಪ್ರದಾಯಗಳ ಮೂಲಕ  ಧರ್ಮ ಗುರುಗಳಾಗುವವರಿಗೆ ವಿದ್ಯಾ,ವಿರಕ್ತಿ  ಮತ್ತು ಇಂದ್ರಿಯ ನಿಗ್ರಹಗಳ ಮೂಲಕ ಶಿಕ್ಷಣ ಕೊಟ್ಟು  ಭವ್ಯ ಉದ್ದೇಶಕ್ಕೆ ಹಾಗೂ ಉತ್ತಮ ಆರ‍್ಶಗಳನ್ನು ಸಫಲಗೊಳಿಸುವದಕ್ಕಾಗಿ ಶ್ರೀ ಶಿವಯೋಗಮಂದಿರ ಸ್ಥಾಪಿತವಾಗಿದೆ.

ಈ ಮಹಾಮಂದಿರ ನಿರ‍್ಮಾಣಕ್ಕೆ ಅನೇಕ ಮಹಾವ್ಯಕ್ತಿಗಳ ದಿವ್ಯಶಕ್ತಿ ಕಾರಣವಾಗಿರುತ್ತದೆ. ಶಂಭುಲಿಂಗನಬೆಟ್ಟದಲ್ಲಿ ಯಳಂದೂರ ಬಸವಲಿಂಗಸ್ವಾಮಿಗಳು ಶಿವಯೋಗಮಂದಿರ ನಿರ‍್ಮಾಣದ ಬೀಜಾರೋಪಣಗೈದಿದ್ದರು . ಹಾನಗಲ್ಲ ವಿರಕ್ತ ಮಠದಲ್ಲಿ ಬಾಗಲಕೋಟೆಯ ವೈರಾಗ್ಯ ಮಲ್ಲಣಾರ್ಯರು  ಆ ಬೀಜಕ್ಕೆ ನೀರೆರದರು . ಪುನಃ ಬಾಗಲಕೋಟೆಯ ನಾಲ್ಕನೆಯ ಅಖಿಲ ಭಾರತ ವೀರಶೈವ ಮಹಾ ಅಧಿವೇಶನದಲ್ಲಿ ಅಂಕುರವೊಡೆಯಿತು . ಬೀಳೂರು ಗುರುಬಸವರ ವೈರಾಗ್ಯ ಬಲವೆಂಬ ಗೊಬ್ಬರ ಹಾಕಲಾಯಿತು . ಇಲಕಲ್ಲಿನ ಶ್ರೀ ವಿಜಯಮಹಾಂತರು ತೋರಿದ ತಾಣದಲ್ಲಿ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆ ಸಸಿಯನ್ನು ಸ್ಥಾಪಿಸಿದರು. ಹಾವೇರಿ ಶಿವಬಸವ ಸ್ವಾಮಿಗಳು ಬೆಳಸಿ ಸ್ಥಿರವಾಗಿ ಉಳಿಯುವಂತೆ ಶ್ರಮಿಸಿದರು ..

ಶ್ರೀ ಮದ್ವೀರಶೈವ ಶಿವಯೋಗ ಮಂದಿರವು  ಶ್ರೀ ಮನೃಪ ಶಾಲಿವಾಹನ ಶಕೆ ೧೮೩೦ ನೇ ಕೀಲಕ ನಾಮ ಸಂವತ್ಸರದ ಮಾಘ ಮಾಸ ಕೃಷ್ಣಪಕ್ಷ ಸಪ್ತಮಿ ಮಿತಿಗೆ , ಸರಿಯಾದ ಸನ್ ೧೯೦೯ ನೆಯ ಫೆಬ್ರುವರಿ ತಿಂಗಳು ತಾರೀಖು ೭ ರಲ್ಲಿ ವಿದ್ಯುಕ್ತವಾಗಿ ಸ್ಥಾಪನೆಯಾಯಿತು.

ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‌ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ವಚನ ಸಾಹಿತ್ಯ ಗ್ರಂಥಗಳ ಸಂಗ್ರಹ, ಸಂಸ್ಕೃತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ ಯೋಗ ಮತ್ತು ಸಂಗೀತ ತರಬೇತಿ  ಇವೆಲ್ಲವೂ  ಶ್ರೀಮದ್‌ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು.

ಫೆಬ್ರುವರಿ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಮಾನವಾ ! ನೀನಾರೋ ? ಕಾಯ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿವಯೋಗಮಂದಿರ ಸೃಷ್ಟಿ – ದೃಷ್ಟಿ  – ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯)
  4. ಶಿವಯೋಗ ಮಂದಿರ ಸಂದರ್ಶನ  ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ
  5.   ನಿರೀಕ್ಷಣೆ   – ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು, ಚಿಕ್ಕೋಡಿ
  6. ಬಾಳಲಿ.- ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
  7. ನಿಸರ್ಗ ಸೌಂದರ್ಯ-ಡಿ. ಎಸ್. ಕರ್ಕಿ
  8. ಸದಾಶಿವ”ನ ಐದು ಸೃಷ್ಟಿಗಳು ಶ್ರೀ ಬುದ್ಧಯ್ಯನವರು, ಪುರಾಣಿಕ
  9. ಮಂಗಳ ಮೂರ್ತಿ ರೂಪ ಶ್ರೀ ಸ್ವರೂಪ ರಥ  ಲೇಖಕರು : ಪೂಜ್ಯ ಸದಾಶಿವ ದೇವರು ವಳಬಳ್ಳಾರಿ
  10. ಹೃದ್ಗತ ಅಭಿಪ್ರಾಯಗಳು

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳು ರಚಿಸಿದ ಪದ್ಯ

(ರಾಗ-ದರ್ಬಾರಿ ಕಾನಡಾ)

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || ೧||

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ ||೨||

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || ೩ ||

ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯)

ವ್ಯಕ್ತಿವಿಕಾಸದ ಮುಖದಿಂದ ಸಾಮಾಜಿಕ ವಿಕಾಸ ಕ್ಷೇತ್ರದಲ್ಲಿ ಸಾಹಿತ್ಯ ಪ್ರಕಾಶ ಪ್ರಪಂಚದಲ್ಲಿ ಸಂಸ್ಥೆಗಳ ಸ್ಥಾನ ಬಹು ಎತ್ತರದೆಂಬುದಕ್ಕೆ ಸತ್ಯ ಸಾಕ್ಷಿಯಾಗಿ ನಿತ್ಯದೀಕ್ಷೆಗೊಂಡು ನಿಂತಿದೆ ಶಿವಯೋಗಮಂದಿರ, ವ್ಯಕ್ತಿವಿಕಾಸ ಸಾಧನಗಳು ಅನಂತ. ಅವುಗಳಲ್ಲಿ ಮುಖ್ಯವಾಗಿ ಎರಡು ಬಗೆ: ಒಂದು ಭೌತಿಕ, ಇನ್ನೊಂದು ಆಧ್ಯಾತ್ಮಿಕ. ಮೊದಲಿನದು ಗೌಣ, ಸಹಕಾರಿ. ಎರಡನೆಯದು ಮುಖ್ಯ ಫಲಕಾರಿ. ಇದನ್ನು ಚೆನ್ನಾಗಿ ನಿಟ್ಟಿಸಿ ಮಿಗಿಲಾಗಿ ಅಧ್ಯಾತ್ಮಿಕ ಸಾಧನೆಗಾಗಿಯೆ ಮೀಸಲಾಗಿ ಮೈಯ್ವೆತ್ತಿದೆ ಶಿವಯೋಗಮಂದಿರ.

ಶಿವಯೋಗಮಂದಿರ ಮೈದಾಳಿ ಇಂದಿಗೆ ಐವತ್ತು (೧೯೫೯) ವರುಷಗಳಾದವು. ವ್ಯಕ್ತಿ ಅಥವಾ ಸಂಸ್ಥೆಗಳ ಜೀವನದಲ್ಲಿ ಈ  ಮಧ್ಯಬಿಂದುವಿನ ವಯಸ್ಸು ವಿಶೇಷ ವರ್ಚಸ್ಸುಳ್ಳದ್ದು; ಸುವರ್ಣ ವರ್ಣವುಳ್ಳದ್ದು. ಸ್ವಾನುಭವ ಸುಮಧುರ ಫಲಭರಿತವಾದುದು.

ಶಿವಯೋಗಮಂದಿರ ಸಂಸ್ಥೆಯ ಗುರಿ ಅದರ ಹೆಸರಿನಲ್ಲಿಯೇ ಹೆಪ್ಪುಗಟ್ಟಿದೆ. ಶಿವಯೋಗಸಂಪತ್ತನ್ನು ತನ್ನ ಈ ಐವತ್ತು (೧೯೫೯) ವಯಸ್ಸಿನಲ್ಲಿ ಹಲವಾರು ವ್ಯಕ್ತಿಗಳಲ್ಲಿ ತುಂಬಿ ತುಳುಕಿಸಿದೆ; ಸಾಹಿತ್ಯ ಸಂಪತ್ತನ್ನು ಸೂರೆಗೊಂಡಿದೆ; ಸಂಗೀತರಸ ಗಂಗೆಯನ್ನು ಹರಿಯಿಸಿದೆ; ಸಾಮಾಜಿಕ ಸುಧಾರಣೆಗಳನ್ನು ಎಸಗಿದೆ.

ಮಾನವನ ಮುನ್ನಡೆಗೆ ಮನೋವಿಕಾಸವೆ ಮೂಲ. ಆ ಮನೋವಿಕಾಸಕ್ಕೆ ಮನೋನಿರೋಧವೆ ಮೂಲ. ಈ ಮೂಲವನ್ನರಿತು ಈ ಸಂಸ್ಥೆ ಇದಕ್ಕಾಗಿ ಹೆಣಗಿತು.; ಹೆಣಗುತ್ತಿದೆ. ಚಿತ್ತಚಾಂಚಲ್ಯವನ್ನು ಅಡಗಿಸಿ ಆ ನಿಶ್ಚಲಚಿತ್ತದಲ್ಲಿ ಮಂಗಳ ನೆನಹು ನಿಲ್ಲುವುದೆ ಶಿವಯೋಗ; ಆ ನೆನಹು ಮಣಿಹದಲ್ಲಿ ಮೂಡಿ ಬರುವುದೆ ಮಂದಿರ, ಅಂತಹ ಶಿವಯೋಗದ ಮಂಗಳ ಪ್ರಭಾವದಿಂದ ಪ್ರಜ್ವಲಿಸುವ ಅಚ್ಚಳಿಯದ ಜಂಗಮ ಮಂದಿರಗಳನ್ನು ಜನಾಂಗಕ್ಕೆ ತೋರುವುದೆ- ಒಳಿತಾದ ವಾತಾವರಣವನ್ನು ಬೀರುವುದೆ ‘ಶಿವಯೋಗಮಂದಿರ’ ಹೃದಯ ಧ್ಯೇಯ. ಆ ‘ಶಿವಯೋಗದ ಮಂದಿರ’ದಲ್ಲಿ ಅಂತಹ ಅನೇಕ ದಿವ್ಯ ವ್ಯಕ್ತಿಗಳು ತಯಾರಾದರು.

ಅವರೇ ಆ ಮಂದಿರದ ದೇವ ಮೂರ್ತಿಗಳು, ದಿವ್ಯ ಮೂರ್ತಿಗಳು.

ಶಿವಯೋಗಮಂದಿರದ ಹೆಗ್ಗುರಿಯು ಅದರ ಹೆಸರಿನಲ್ಲಿಯೆ ಹೆಪ್ಪುಗಟ್ಟಿರುವಂತೆ ಅದರ ಹೆಚ್ಚಳಿಕೆಯು ಅದರಲ್ಲಿಯೇ ಇದೆ. ಶಿವಯೋಗಕ್ಕಿಂತ ಶ್ರೇಷ್ಠ ಯೋಗವಿಲ್ಲ. ಉಳಿದ ನಾಲ್ಕು ಯೋಗಗಳು ಮಾನವನ ಉಪಾಂಗ ಸಾಧಕಗಳೇ ಹೊರತು  ಮುಖ್ಯಾಂಗ ಸಾಧಕಗಳಲ್ಲ. ಈ ಅರ್ಥ ಈ ಅಭಿಪ್ರಾಯ ಅವುಗಳ ಹೆಸರುಗಳಲ್ಲಿಯೆ ಹೆಚ್ಚು ನಿಚ್ಚಳವಾಗಿದೆ. ಹಠಯೋಗ  ಶರೀರಶುದ್ದಿಗೆ, ಶುದ್ಧ ಶರೀರಪ್ರಾಪ್ತಿಗೆ ಮೀಸಲು. ಮಂತ್ರಯೋಗ ಮಾತಿನ ಶುದ್ದಿಗೆ, ಶುದ್ಧ ಮಾತಿನ ಪ್ರಾಪ್ತಿಗೆ ಮೀಸಲು.  ಲಯಯೋಗ ಉಸುರಿನ ಶುದ್ಧಿಗೆ, ಆ ಶುದ್ಧ ಉಸಿರಿನ ಪ್ರಾಪ್ತಿಗೆ ಮೀಸಲು. ರಾಜಯೋಗ ಮೈ-ಮಾತು-ಉಸಿರುಗಳಿಗೆ  ರಾಜನಾದ ‘ಜೀವ’ನ ಶುದ್ಧಿಗೆ, ಶುದ್ಧ ಜೀವಪ್ರಾಪ್ತಿಗೆ ತವರು. ಆ ಶುದ್ಧಾತ್ಮನು ಪರಮಾತ್ಮನಾಗುವುದೆ ಶಿವಯೋಗ, ಇಂತಹ  ಅಗ್ಗಳದ ಶಿವಯೋಗಕ್ಕೆ ಮಂದಿರ ಮಂಗಳಸ್ಥಾನ ಶಿವಯೋಗಮಂದಿರ. ಹೆಸರಿನಲ್ಲಿ ಹಿರಿಮೆಗೆ ಇದಕ್ಕಿಂತ ಹೆಚ್ಚಿನ ಮಾತು ಬೇಕಿಲ್ಲ.

ಶಿವ ಅಂದರೆ ಮಂಗಳ ಮತ್ತು ಮಹಾದೇವ. ಆ ಮಂಗಳ ಪ್ರಾಪ್ತಿಗೆ ಮಂದಿರ ಶಿವಯೋಗಮಂದಿರ. ಎರಡನೆಯ ಅರ್ಥ ಪರಮಾತ್ಮ ಆ ಪರಮಾತ್ಮನ ಸತ್ಯ; ನಿತ್ಯ ಚಿದಾನಂದರೂಪ; ಪರಿಪೂರ್ಣಸ್ವರೂಪ. ಆ ಸಚ್ಚಿದಾನಂದ ನಿತ್ಯ ಪರಿಪೂರ್ಣರೂಪ ಶಿವನ ಸಂಪ್ರಾಪ್ತಿಯೆ ಸಾಮರಸ್ಯವೆ ಯೋಗ, ಆ ಶಿವಸಾಮರಸ್ಯ ಸಾಧನೆಯನ್ನು ಸಂಪಾದಿಸಿ ಕೊಡುವುದೆ ಶಿವಯೋಗ. ಅಂತಹ ಮಹತ್ತಿನ ಶಿವಯೋಗಕ್ಕೆ ಮಂಗಳಸ್ಥಾನ “ಶಿವಯೋಗಮಂದಿರ.”

ಶಿವಯೋಗಮಂದಿರವು ಸದುದ್ದೇಶದಿಂದ ಸ್ಥಾಪಿತವಾದ ಸಂಸ್ಥೆ .ಸದ್ಧರ್ಮ ಪ್ರಸಾರಕ್ಕಾಗಿ ಸಂಸ್ಥಾಪಿತವಾದ ಸಂಸ್ಥೆ, ಸಂಘ ಜೀವಿಗಳ-ಸಜ್ಜನ ಜೀವನವುಳ್ಳವರ ಮುಖಾಂತರ ಸಮಾಜ ಸುಧಾರಣೆಗಾಗಿ ಸೃಷ್ಟಿಸಲ್ಪಟ್ಟ ಸಂಸ್ಥೆ .ನಿರ್ದಿಷ್ಟವೂ ನಿರ್ದುಷ್ಟವೂ ಆದ ಧ್ಯೇಯ ಸಾಧನೆಗಾಗಿ ಸಂವೃದ್ಧಿಗೊಳಿಸಿದ ಸಂಸ್ಥೆ .ಕುಮಾರ ಯೋಗಿಯ ಕಾರಣಿಕತೆಯ ಕುರುಹಾಗಿ ರೂಪುಗೊಂಡ ಸಂಸ್ಥೆ ಸಮಾಜ ಮಂದಿರದ ಸುವರ್ಣ ಕಳಸವಾಗಿ ಕಂಗೊಳಿಸಿದ ಸಂಸ್ಥೆ . ಶಿವಯೋಗಮಂದಿರವು ಶಿವಯೋಗಕ್ಕೆ ಮಂದಿರವಾದಂತೆ ಸಮಾಜವೆಂಬ ಶಿವನಿಗೂ ಸಾಧಕರೆಂಬ ಶಿವಪ್ರಮಥರಿಗೂ ಮಂದಿರವಾಗಿ ಸೃಷ್ಟಿಯಾದ ಸಂಸ್ಥೆ .ಆಶ್ರಮಗಳ ಧ್ಯೇಯ ಕ್ಕಿಂತಲೂ

ವಿಶಾಲವಾದ ಧ್ಯೇಯ ವುಳ್ಳ ಏಕೈಕ ಸಂಸ್ಥೆ  .ಇದನ್ನು ಹೋಲುವ ಸಂಸ್ಥೆ ಸಮಾಜದಲ್ಲಿ ಹಿಂದಿಲ್ಲ, ಇಂದಿಲ್ಲ, ಮುಂದೆ ಹೇಗೋ ! ಕ್ರೈಸ್ತರ ಚರ್ಚುಗಳಿಗಿಂತ, ಬೌದ್ಧರ ವಿಹಾರಗಳಿಗಿಂತ ವಿಲಕ್ಷಣವಾದ ಸಂಸ್ಥೆಯಿದೆಂದರೆ ಅಲ್ಲಗಳೆಯುವಂತಿಲ್ಲ,

ಎಳೆ ಮಕ್ಕಳ ತಿಳಿ ಮನಸ್ಸನ್ನು ಶಿವಯೋಗದಲ್ಲಿ ಎರಕಹೊಯ್ದು ಮುದ್ದುರೂಹಿನ ಮಂಗಳ ಮೂರ್ತಿ – ಗಳನ್ನಾಗಿ ತಯಾರಿಸುವ ಪಡಿಯಚ್ಚು ಈ ಸಂಸ್ಥೆ . ಪರಿಶುದ್ಧ ಆಹಾರ, ಪರಿಶುದ್ಧ ವಿಹಾರ, ಪರಿಶುದ್ಧ ವಿಚಾರ, ಪರಿಶುದ್ಧ ಆಚಾರಗಳನ್ನು ಅಲ್ಲಿನ ಸಾಧಕರಿಗೆ ಸಣ್ಣ ವಟುಗಳಿಗೆ ಪ್ರಸಾದಿಸಿತು ಈ ಸಂಸ್ಥೆ . ಪ್ರಾಪಂಚಿಕ ವಾತಾವರಣಕ್ಕೆ ಅಲ್ಲಿ ತೃಣವಾದರೂ ಅನುವಿಲ್ಲ, ಶಿವಭಜನೆ,  ಶಿವಪೂಜೆ, ಸ್ವಾಧ್ಯಾಯ, ಸುಶ್ರವಣ, ಯೋಗ ಸಾಧನೆಗಳಲ್ಲಿ ಎಲ್ಲರೂ ಎಲ್ಲ ಕಾಲದಲ್ಲಿ ತಲ್ಲೀನರಾಗಿರುವರು. ಸಾಧನೆಯು ಸಿದ್ದಿಗೇರಿದ ಮೇಲೆ, ಸಾಧಕರು ಶಿವಯೋಗಿಗಳಾದ ಮೇಲೆ ಮಠಾಧಿಪತಿಗಳಾಗಿಯೋ ಆಗದೆಯೋ ಸಾಮಾಜಿಕ ಸುಧಾರಣೆಗೆ ಕಂಕಣಬದ್ಧರಾಗಬೇಕು. ಸಾಂಸ್ಕೃತಿಕ ಆವಿಷ್ಕರಣಕ್ಕೆ ಸಂಸಿದ್ದರಾಗಬೇಕು.

ಈ ರೀತಿ ವ್ಯಷ್ಟಿ-ಸಮಷ್ಟಿ ಜೀವನೋನ್ನತಿಯ ಗುರಿಗೆ ಗಮನವಿತ್ತು ಜೀವನವನ್ನೇ ಅದಕ್ಕಾಗಿ ಮುಡಿಪಿಟ್ಟವರಿಗೆ ಮಾತ್ರ ಅಲ್ಲಿನ ವಾಸಕ್ಕೆ ಪ್ರವೇಶ; ಅಲ್ಲಿನ ಸಾಧನೆಗೆ ಅವಕಾಶ. ಅಲ್ಲಿ ಪ್ರವೇಶ ಪಡೆದವರೆಲ್ಲರೂ ತಂತಮ್ಮ ಮನೆ ಮಾರುಗಳ-ಆಸ್ತಿಪಾಸ್ತಿಗಳ-ಬಂಧುಬಳಗದ-ತಂದೆತಾಯಿಗಳ ಮೋಹ ಮಮಕಾರಗಳನ್ನು ಸಂಪೂರ್ಣ ಮುರಿದಿಕ್ಕಿರಬೇಕು; ಇಲ್ಲವೆ ಮರೆ ಮಾಡಿರಬೇಕು. ಶಿವಯೋಗಮಂದಿರವೆ ತನ್ನ ಜನ್ಮಭೂಮಿ ಹಾನಗಲ್ಲ ಶ್ರೀ ಕುಮಾರಯೋಗಿಯೇ ತನ್ನ ಸ್ವಾಮಿ, ತನಗೆ ಬೇರಿನ್ನು ಯಾವ ಪೂರ್ವಾಶ್ರಮ ಸಂಬಂಧವಿಲ್ಲೆಂದು ದೃಢವಾಗಿ ನಂಬಿರಬೇಕು.

ಇಂದಿಗೆ ಐವತ್ತು (೧೯೫೯)  ವರುಷಗಳ ಹಿಂದೆ ವೀರಶೈವ ಸಮಾಜವು ನಟ್ಟಿರುಳಿನಲ್ಲಿತ್ತು . ಅದರ ನೈತಿಕ ತಾತ್ವಿಕ ರಕ್ತನಾಳಗಳ ಹರಿದಾಟವೆ ಕಮ್ಮಿಯಾಗಿತ್ತು  .ಅಷ್ಟಾವರಣಗಳಲ್ಲಿ ನಿಷ್ಠೆಯಿಲ್ಲದಾಗಿತ್ತು  .ಪಂಚಾಚಾರಗಳ ಪರಿಚಯವಿಲ್ಲದಾಗಿತ್ತು  .ಷಟಸ್ಥಲ ಸುವಾಸನೆಯಂತೂ ತೀರ ಶೂನ್ಯವಾಗುತ್ತ ಬಂದಿತ್ತು  .ವಿದ್ಯಾವ್ಯಾಸಂಗವಿರಲಿಲ್ಲ, ಕಲಾಪ್ರೇಮ ಕಣ್ಮುಚ್ಚಿತ್ತು. ಇವೆಲ್ಲವುಗಳ ಪ್ರಕಾಶಕ್ಕಾಗಿ ಪುನರುದ್ಧಾರಕ್ಕಾಗಿ ಈ ಸಂಸ್ಥೆ ಜನ್ಮ ಕೊಟ್ಟಿತು. ಈ ನಿಟ್ಟಿನಲ್ಲಿ ಇಡೀ ಸಮಾಜಕ್ಕೆ ಇದೊಂದೇ ಒಂದು ಸಂಸ್ಥೆ! ಆದರೂ ಜನನ ರೋಗಗಳಿಗೇನು ಕಡಿಮೆಯಿರಲಿಲ್ಲ ಅವನ್ನೆಲ್ಲ ಎದುರಿಸಿ ಏರಿ ಬರುವಂತೆ ತನ್ನ ಈ ಮಗುವನ್ನು ಸಾಕಿ ಸಲಹುವ ಸಾಮರ್ಥ್ಯ ಆ ಕಾರಣಿಕ ಕುಮಾರ ಯೋಗಿಯಲ್ಲಿತ್ತು ಅದರಿಂದಾಗಿ ಇನಿತು ದೀರ್ಘಕಾಲ ಈ ಸಂಸ್ಥೆ ಬಾಳಿ ಬೆಳಗಿತು; ಬೆಳಗಲಿದೆ.

ಒಂದು ಸಂಸ್ಥೆಯ ಪ್ರಗತಿಗೆ-ಪುಷ್ಟಾಂಗಕ್ಕೆ ಜನ-ಧನಗಳ ಬೆಂಬಲ ಅತ್ಯವಶ್ಯ. ಅವಿಲ್ಲದ ಸಂಸ್ಥೆ ಅದೆಂದಿಗೂ ಮುಂದುವರಿಯದು. ಅದರ ಅರುಣೋದಯದೊಡನೆ ಅಂಧಕಾರೋದಯವೂ ಕಟ್ಟಿಟ್ಟ ಬುತ್ತಿ. ಆದರೆ ಈ ಸಂಸ್ಥೆಗೆ ಹಾಗಾಗಲಿಲ್ಲ. ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಯ ಕೃಪಾಬಲದಿಂದ ಜನತೆಯ ಬೆಂಬಲವಿತ್ತು ಆತನ ಅಮೋಘ ಕರ್ತವ್ಯ ಶಕ್ತಿಯಿಂದ ಬರಬರುತ್ತ ಆರ್ಥಿಕ ಬಲವೂ ಬೆಂಗೂಡಿ ಬಂತು. ಸಂಸ್ಥೆ ಇನಿತೊಂದು ಕಾಲ ತಲೆಯೆತ್ತಿ ನಿಂತಿತು.

ಯಾವ ಸಂಸ್ಥೆಯೇ ಆಗಲಿ ಅದರ ಚಿರಾಯುತನಕ್ಕೆ ಬರೀ ಭೌತಿಕ ಶಕ್ತಿಯೇ ಸಾಧನವಲ್ಲ, ಭೌತಿಕ ಶಕ್ತಿ ಬರೀ ಭೂಷಣ, ಬರೀ ಥಳಕು ಮಾತ್ರ. ಅದು ಚೇತನವಾಗಲಾರದು; ಅದು ಚಿರಕಾಲವಿರದು. ಚಿರಕಾಲ ಬಾಳಿಸಬಲ್ಲುದು ಅಧ್ಯಾತ್ಮಿಕ ಚೇತನ. ಆ ಚೇತನವನ್ನು ಚೆನ್ನಾಗಿ ತನ್ನೊಳಗೆ ತುಂಬಿಕೊಂಡು ಪರಿಣಮಿಸಿಕೊಂಡಿದೆ ಈ ಶಿವಯೋಗಮಂದಿರ ಸಂಸ್ಥೆ !

ಜಗತ್ತು ಜಡ ದ್ರವ್ಯಗಳಿಂದ ತುಂಬಿರುವಂತೆ ಜನತೆಯೂ ಜಡಜೀವನದತ್ತ ಹೆಚ್ಚಾಗಿ ಹೆಚ್ಚು ಆಸಕ್ತಿ ಯಿಂದ ಸಾಗುತ್ತಿದೆ; ಸಾಯುತ್ತಿದೆ. ದಿಟವಾಗಿ ದಿಟ್ಟಿಸಿದರೆ ಮಾನವನ ಧ್ಯೇಯ ಅದಲ್ಲ, ಮಾನವನು ಚೇತನ ಸ್ವರೂಪಿ, ಚಿನ್ಮಯ ರೂಪಿ. ಜಡ ಪ್ರಕೃತಿಯು ತನ್ನ ಚಿನ್ಮಯರೂಪದ ಸಾಕ್ಷಾತ್ಕಾರ ಪಡೆಯಲಿಕ್ಕಾಗಿ ತನಗೆ ಸಾಧನವಾಗಿ ಸೇರಿದೆ. ಬರೀ ಸಾಧನೆಯಲ್ಲಿಯೆ ನಿಲ್ಲುವುದು ಪುರುಷಾರ್ಥವಲ್ಲ, ತ್ಯಾಗದಿಂದ ಭೋಗದಿಂದ ಸಚ್ಚಿದಾನಂದ ಯೋಗವನ್ನು ಪಡೆವ ಮಧುರ ಸುಂದರ ರಹಸ್ಯವನ್ನು ಮಾನವನು ಮನಗಾಣಬೇಕು. ಅದನ್ನು ಮನಗಾಣಿಸಲು ಈ ಶಿವಯೋಗಮಂದಿರ’ ಸಂಸ್ಥೆಯ ಸೃಷ್ಟಿ ಮತ್ತು ಸ್ಥಿತಿ.

ಇಂತಹ ಸಂಸ್ಥೆಗಳ ಬಾಳೇ ಸಾಮಾಜಿಕ ಬಾಳು ಮತ್ತು ಬೆಳಗು. ಇಂತಹ ಸಂಸ್ಥೆಗಳು ಬಾಳಿದಷ್ಟೂ ಸಮಾಜಗಳು ಸರ್ವಾಂಗ ಸುಂದರವಾಗಿ ಸಂಸ್ಕೃತಿ ಚಂದಿರವಾಗಿ ಬಾಳಬಲ್ಲವು, ಬೆಳಗಬಲ್ಲವು.

ಸಂಸ್ಥೆಗಳ ಅಸ್ತಿತ್ವಕ್ಕೆ ಸ್ಥಾನ ಮಹತ್ವವೂ ಒಂದು ಮುಖ್ಯಾಂಗ, ಶಿವಯೋಗಮಂದಿರ ಸ್ಥಳವು ಮಹತ್ತಿನಿಂದ ಮೆರೆಯುತ್ತಿದೆ. ಅದರ ಸುತ್ತು ಐತಿಹಾಸಿಕ ಸ್ಥಳಗಳಿವೆ; ಗ್ರಾಮಗಳಿವೆ. ಋಷ್ಯಾಶ್ರಮಗಳೂ ದೇವಸ್ಥಾನಗಳೂ ಇವೆ. ಇವಲ್ಲದೆ ಪುರಾಣ ಪ್ರಸಿದ್ದವಾದ ಮಹಾಕೂಟಾದಿ ತೀರ್ಥ ಕ್ಷೇತ್ರಗಳೂ ಇವೆ. ನಿಸರ್ಗ ಸೌಂದರ್ಯಕ್ಕೆ ಕೊರತೆಯಿಲ್ಲ, ಶಿವಯೋಗಮಂದಿರದ ಸುತ್ತೂ ಬೆಟ್ಟಗಳ ಸಾಲು, ಬಲಕ್ಕೆ ಹರಿವ ಹೊನಲು. ತರತರದ ತರುಗಳ ಗುಂಪು ತರುಲತೆಗಳ ಹೂಗಳ ಕಂಪು. ಕೋಗಿಲೆಗಳ ಕಲರವದಿಂಪು, ನವಿಲುಗಳ ನರ್ತನದ ಸೊಂಪು, ಇವೆಲ್ಲವೂ ‘ಶಿವಯೋಗಮಂದಿರ’ ಸಂಸ್ಥೆಗೆ ಮಿಗಿಲಾದ ಕಳೆಯನ್ನು ತಂದಿವೆ. ಸುರುಚಿರವಾದ ಸ್ಥಿತಿಯನ್ನುಂಟುಮಾಡಿವೆ.

ಧಾರ್ಮಿಕಾಚರಣೆಗಳಿಲ್ಲದೆ ಒಣಗಿ ನಿಂತ ಧಾರ್ಮಿಕ ಮರುಭೂಮಿಯ ಮೇಲೆ ಅಧ್ಯಾತ್ಮಿಕ ರಸದ ಹೊನಲನ್ನು ಹರಿಸಿತು ಶಿವಯೋಗಮಂದಿರ. ಸಾಮಾಜಿಕರ ಮೇಲೆ ದಟ್ಟಾಗಿ ಬಿದ್ದ ಅವಿದ್ಯೆಯೆಂಬ ನೆರಳನ್ನು ನಿವಾರಿಸಿ ವಿದ್ಯಾ ಕಿರಣಗಳನ್ನು ಹರಡಿ ಬೆಳಕ ನೀಡಿತು ಶಿವಯೋಗಮಂದಿರ, ನೈತಿಕ, ಸಾಂಸ್ಕೃತಿಕ ಮುಂತಾದ ಹುಲುಸಾದ ಬೆಳೆ ಬೆಳೆಯಿತು ಶಿವಯೋಗಮಂದಿರ, ಮಠಗಳಿಗೆ ಮೂರ್ತಿಗಳನ್ನು ಮೇಲ್ಮಟ್ಟದಲ್ಲಿ ಸಂಸ್ಕರಿಸಿ ತಯಾರಿಸುವ ಅತ್ಯುಚ್ಚ ಆದರ್ಶ ಸಂಸ್ಥೆ ಶಿವಯೋಗಮಂದಿರ. ವ್ಯಷ್ಟಿ ಸುಧಾರಣೆಯಿಂದ ಸಮಷ್ಟಿ ಸುಧಾರಣೆ ಯನ್ನು ಸಾಧಿಸಿತು ಶಿವಯೋಗಮಂದಿರ, ಅನೇಕರನ್ನು ಅನಾರ್ಯ ಜೀವನದಿಂದ ಆರ್ಯ ಜೀವನಕ್ಕೇರಿಸಿತು ಶಿವಯೋಗಮಂದಿರ, ದಾನವ ಜೀವಿಗಳನ್ನು ದೇವ ಜೀವಿಗಳನ್ನಾಗಿಸಿತು. ಶಿವಯೋಗಮಂದಿರ . ಮಾನವ ಹೃದಯರನ್ನು ಮಹಾದೇವ ಹೃದಯರನ್ನಾಗಿ ಮಾಡಿತು ಶಿವಯೋಗಮಂದಿರ.

ಇಲ್ಲಿ ಬಳಸಿದ ‘ಆರ್ಯ’ ಪದಕ್ಕೆ ಜಾತಿ, ಪಂಥ, ಪಂಗಡ- ಈ ಯಾವ ಅರ್ಥವಲ್ಲ, ಸಾಂಸ್ಕೃತಿಕ ಸ್ವಾನುಭಾವಿಕ ಜೀವನದ ಸಂಕೇತವದು. ‘ದಾನವ’ ಪದಕ್ಕೂ ಇಲ್ಲಿ ಜಾತಿಗೀತಿಗಳ ಸೋಂಕಿಲ್ಲ  .ಅನೈತಿಕತೆ, ಅನುದಾರತೆ, ಕಪಟ, ಕ್ರೌರ್ಯ, ಕ್ಷುದ್ರಭಾವ, ಅಸತ್ಯ, ಮೋಸ ಮುಂತಾದ ದುರ್ಗುಣ ಸೂಚಕವದು. ಶಿವಯೋಗಮಂದಿರವು ಐವತ್ತು ವರುಷಗಳಿಂದ ಧಾರ್ಮಿಕ,  ಅಧ್ಯಾತ್ಮಿಕ, ಸಂಗೀತ, ಸತ್ಕೃತಿ ಸಂಗ್ರಹ, ಸಾಮಾಜಿಕ ಮುಂತಾದ ಕ್ಷೇತ್ರಗಳ ಪಯಣಿಗರಿಗಾಗಿ ತನ್ನದೇ ಆದ ದಾರಿದೀಪಗಳನ್ನು ಇತ್ತಿದೆ. ಶಿವಯೋಗಮಂದಿರವು ಸಮಾಜ ಪುರುಷನಿಗಾಗಿ ಬೆಳೆದ ಆಧ್ಯಾತ್ಮಿಕದ ಒಂದು ಪರಮಾಮೃತ ಫಲ, ಸಾಹಿತ್ಯದ ಸುಗಂಧ ಸೂಸುವ ಸುಂದರ ಕಮಲ, ಸಂಗೀತದ ಸುಮಧುರ ಜಲ, ಶಿವಯೋಗಮಂದಿರ ಶಕ್ತಿ ಅಪಾರವಾದುದು, ಜೀವಂತ ಶಕ್ತಿಗಳು ವ್ಯಕ್ತಿರೂಪದಲ್ಲಿ ನಾಡಿನ ತುಂಬ ನಾಲ್ಕು ನಿಟ್ಟಿನಲ್ಲಿ ವಿರಾಜಿಸುತ್ತಿವೆ; ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ಶೈಕ್ಷಣಿಕ, ಆಧ್ಯಾತ್ಮಿಕ, ಸಂಗೀತ ಮುಂತಾದ ಸತ್ಕಾರ್ಯಗಳನ್ನು ಕೈಕೊಂಡು ಸಾಗಿಸುತ್ತಿವೆ. ಶಿವಯೋಗಮಂದಿರದ ಮೂರ್ತಿಕೀರ್ತಿಗಳಾಗಿ ಕಂಗೊಳಿಸುತ್ತಿವೆ. ಅವರೇ ಮಠಾಧಿಪತಿಗಳು ಅವರ ಮುಖಾಂತರ ಶಿವಯೋಗಮಂದಿರವು ಸಾಮಾಜಿಕರನ್ನು ನಾಡಿಗರನ್ನು ಸಂಸ್ಕರಿಸುತ್ತಿದೆ; ಶಾಂತಿಪ್ರದಾಯಕ ವಾಗಿ ನಿಂತಿದೆ. ಮಠಾಧಿಪತಿಗಳ ಮುಖಾಂತರ ತನ್ನ ಮರ್ತ್ಯದ ಮಣಿಹವನ್ನು ಮುಂದುವರಿಸುತ್ತಿದೆ. ನಾನಾ ಬಗೆಗಳಲ್ಲಿ ಜನತೆಯ ಬಾಳು ಬದುಕುಗಳನ್ನು ಹಸನಗೊಳಿಸುತ್ತಿದೆ. ನಡೆ-ನುಡಿಗಳನ್ನು ನಯಗೊಳಿಸುತ್ತಿದೆ. ಜನತೆಯ ಸೇವೆಯನ್ನು ಸತತ ಸಲ್ಲಿಸುತ್ತಿದೆ. ಬಾಳಿನ ಬೇಸರಿಕೆಯನ್ನು ಕಡಿಮೆ ಮಾಡುತ್ತಿದೆ. ಬದುಕಿನ ಸಾರ್ಥಕತೆಯನ್ನು ಕೈಗೂಡಿಸುತ್ತಿದೆ. ಒಟ್ಟಿನಲ್ಲಿ ತನ್ನ ಮಠಾಧಿಪತಿಗಳ ಮುಖಾಂತರ ಜ್ಞಾನ-ಕ್ರಿಯೆಗಳ ಪ್ರಸಾರ ದಾಸೋಹ ಸೇವೆ ಸಾಧ್ಯವಾದ ಮಟ್ಟಿಗೆ ಸಾಂಗವಾಗಿ ಸಾಗುವಂತಾಗಿದೆ.

ಶಿವಯೋಗಮಂದಿರ ಸಂಸ್ಥೆಯ ಈ ಅರ್ಧಶತಮಾನದ ಪ್ರಗತಿಪಥದಲ್ಲಿ ಚಕ್ರನೇಮಿಕ್ರಮದಂತೆ ಏರಿಳಿತಗಳಿಲ್ಲದಿಲ್ಲ: ಹಗಲಿರುಳುಗಳು ಬಾರದಿಲ್ಲ, ಮುನ್ನಡೆ-ಹಿನ್ನಡೆಗಳು ಸಂಭವಿಸದಿಲ್ಲ, ಕಷ್ಟ-ಸುಖಗಳು ಕಾಣದಿಲ್ಲ, ಆದರೂ ಅವೆಲ್ಲವನ್ನು ಜೀರ್ಣಿಸಿಕೊಂಡು ಜಾಗ್ರತವಾಗಿದೆ; ಇನಿತೊಂದು ಕಾಲ ಬಾಳಿದೆ; ಬದುಕಿದೆ.

ಇಂದಿನದು ವಿಜ್ಞಾನಯುಗ, ಇಂದಿನ ಜಗತ್ತು ಮತ್ತು ಜನತೆ ವಿಶಾಲ ವಿಚಾರದತ್ತ ಮುನ್ನಡೆಯುತ್ತಿದೆ. ಈ ಅರ್ಧಶತಕದಲ್ಲಿ ತನ್ನ ಅಧ್ಯಾತ್ಮಿಕ ಶಕ್ತಿಯನ್ನು ಸಂಪಾದಿಸಿಕೊಂಡ ಈ ಸಂಸ್ಥೆ ಇನ್ನು ಮುಂದೆ ಇದರೊಡನೆ ಬೌದ್ಧಿಕ ಭೌತಿಕ ಶಕ್ತಿ ಸಂಪದಗಳನ್ನು ಸಂಪಾದಿಸಿಕೊಳ್ಳಬೇಕಾಗಿದೆ. ವ್ಯಕ್ತಿಗಳ ಆತ್ಮೀಕ ಹಾರ್ದಿಕ ಶಕ್ತಿಯನ್ನು ಸಮೃದ್ಧಿಗೊಳಿಸಿದಂತೆ ಇನ್ನು ಮುಂದೆ ಭೌತಿಕ ವೈಜ್ಞಾನಿಕ ಶಕ್ತಿಗೆ ಸಂಚಲನೆಯನ್ನು ಸಂಚಯಿಸಬೇಕಾಗಿದೆ. ಆಧುನಿಕ ವಿಶಾಲ ಸಾಂಸ್ಕೃತಿಕ ನಾಗರಿಕ ನಿಟ್ಟಿನತ್ತ ಸಾಗಬೇಕಾಗಿದೆ. ಸಾಮ್ಯ ಶಾಂತಿ ಸಾಮ್ರಾಜ್ಯ ಸಂಸ್ಥಾಪಿಸ ಬೇಕಾಗಿದೆ; ಸಮರಸಭಾವವನ್ನು ಸಕಲರಲ್ಲಿ ಸಮೃದ್ಧಿಗೊಳಿಸಬೇಕಾಗಿದೆ. ಸರ್ವಧರ್ಮ ಸಮನ್ವಯವನ್ನು ಸಂವೃದ್ಧಿಗೊಳಿಸಬೇಕಾಗಿದೆ.

ಶ್ರೀ ವೀರಶೈವರಿಗೆ ಕೊಲ್ಲಿಪಾಕಿ, ಶ್ರೀಶೈಲ, ಹಿಮವತ್ಕೇದಾರ, ಉಜ್ಜಯಿನಿ, ಕಾಶಿ, ಕಲ್ಯಾಣ, ಕೂಡಲ ಸಂಗಮ, ಬಾಗೇವಾಡಿ ಮುಂತಾದವುಗಳು ಹೇಗೆ ಮಾನ್ಯ ಮತ್ತು ಪೂಜ್ಯ ಸ್ಥಾನಗಳಾಗಿವೆಯೊ ಹಾಗೆ ಶಿವಯೋಗ ಮಂದಿರವೂ ಇಂದು ಮಾನ್ಯ ಸ್ಥಾನವಾಗಿದೆ; ಪುಣ್ಯಸ್ಥಾನವಾಗಿದೆ.