೧೯೦೪ರ ನಿರ್ಣಯದ ನೆಪದಲ್ಲಿ ನಡೆಯುತ್ತಿರುವ ಜಾತಿನಿಂದನೆಗೆ ದಾಖಲೆಗಳ ಉತ್ತರ
ಶ್ರೀ ವಿನಯ್ ಶಿರಹಟ್ಟಿಮಠ ಅವರ “ಆ ಮೂವತ್ತಾರು ವರ್ಷಗಳು” ಎಂಬ ಲೇಖನಮಾಲೆಗೆ ನಾನು ಪ್ರತಿಕ್ರಿಯಿಸುವುದಾಗಿ ತಿಳಿಸಿದ ಬೆನ್ನಲ್ಲೇ, ಅವರು- ಅಖಾಡಕ್ಕಿಳಿಯುವ ಮುನ್ನ ನನಗೊಂದು ಎಚ್ಚರಿಕೆ ನೀಡಿದ್ದಾರೆ.
ಅವರ ಒಕ್ಕಣಿಕೆ ಹೀಗಿದೆ:
ಒಂದು — ಹಿರೇಮಲ್ಲೂರು ಈಶ್ವರನ್.
ಸಮಾಜಶಾಸ್ತ್ರಜ್ಞರು. ಯಾವ ಪ್ರತ್ಯೇಕ ಧರ್ಮ ಸಂಘಟನೆಯ ಪದಾಧಿಕಾರಿಯೂ ಅಲ್ಲ. ಅವರ ಲಿಂಗಾಯತ ಧರ್ಮ: ಒಂದು ಅಧ್ಯಯನ ಕೃತಿಯಲ್ಲಿ ದಾಖಲಾಗಿರುವುದು—ಬಸವೇಶ್ವರರ ಕಾಲದಲ್ಲಿ ‘ಜಂಗಮ’ ಎಂದರೆ ಸ್ವಇಚ್ಛೆಯಿಂದ ಜಂಗಮ ಕಾಯಕ ಕೈಗೊಂಡವನು. ಇಂದು ‘ಜಂಗಮ’ ಎಂದರೆ ಜಂಗಮ ಜಾತಿಯಲ್ಲಿ ಹುಟ್ಟಿದವನು. ಏಣಿಯ ಮಾದರಿಯ ವರ್ಗಗಳನ್ನು ನಿರ್ಮೂಲನೆ ಮಾಡುವ ಬದಲು ಜಂಗಮರೇ ಅವುಗಳನ್ನು ರೂಪಿಸಿದರು ಎಂದು.
ಮುಂದುವರಿದು ಅವರು ತಮ್ಮ ಪ್ರಶ್ನೆಯನ್ನು ಸಂಕುಚಿತಗೊಳಿಸಿದ್ದಾರೆ:
“೧೯೪೦ರ ವಿಷಯವನ್ನು ಪೂರ್ತಿ ಬದಿಗಿಡೋಣ. ಪೂಜ್ಯರ ಜೀವಿತಾವಧಿಯೊಳಗಿನ ಪ್ರಶ್ನೆಗಳನ್ನಷ್ಟೇ ಇಡುತ್ತೇನೆ.
೧೯೦೪ರ ಮೊದಲ ಅಧಿವೇಶನದಲ್ಲಿ ಲಿಂಗಾಯತ ಮಠಗಳಿಗೆ ಜಂಗಮ ಜಾತಿಯವರನ್ನೇ ಸ್ವಾಮಿಗಳಾಗಿ ನೇಮಿಸಬೇಕೆಂಬ ನಿರ್ಣಯ ಆಯಿತೇ, ಇಲ್ಲವೇ?
ಆಗಿದ್ದರೆ—ಜಾತಿಯನ್ನು ನಿರಾಕರಿಸಿದ ಧರ್ಮದ ಸಂಸ್ಥೆ ಮಠಾಧಿಪತಿಯ ಸ್ಥಾನಕ್ಕೆ ಜಾತಿಯ ಅರ್ಹತೆ ವಿಧಿಸಿದ್ದು ಸರಿಯೇ?
ಆಗಿಲ್ಲದಿದ್ದರೆ—ಆ ಅಧಿವೇಶನದ ನಡಾವಳಿಯನ್ನು ಪ್ರಕಟಿಸಿ. ನನ್ನ ಲೇಖನದ ಆ ಭಾಗವನ್ನು ನಾನೇ ಅಳಿಸಿಹಾಕುತ್ತೇನೆ.
ಇದೊಂದೇ ಪ್ರಶ್ನೆ. ಇದಕ್ಕೆ ಉತ್ತರ ಬಂದರೆ ಈ ಚರ್ಚೆಯ ಅರ್ಧಭಾಗ ಮುಗಿಯುತ್ತದೆ.”
ಇವು ಶ್ರೀ ವಿನಯ್ ಶಿರಹಟ್ಟಿಮಠ ಅವರ “ಕಡ್ಡಿ ಮುರಿದು ಎರಡು ತುಂಡು” ಮಾಡುವ ಮಾತುಗಳು.
“ಹೌದೋ, ಅಲ್ಲವೋ—ಇಷ್ಟೇ ಹೇಳಿ; ನಿಮ್ಮ ಇತಿಹಾಸದ ಭವಿಷ್ಯವನ್ನು ನಾನೇ ನಿರ್ಧರಿಸಿಬಿಡುತ್ತೇನೆ!”
ಎಂಬ ಆರ್ಭಟ ವಿನಯ್ ಅವರ ಪ್ರಶ್ನೆಯೊಳಗೆ ಅಡಗಿದೆ.
ಆದರೆ ಇತಿಹಾಸವು ನ್ಯಾಯಾಲಯದ ಸಾಕ್ಷಿಪೆಟ್ಟಿಗೆಯಲ್ಲಿ ನಿಲ್ಲಿಸಿದ ಆರೋಪಿಯಲ್ಲ; ಅದಕ್ಕೆ ಕೇವಲ “ಹೌದು” ಅಥವಾ “ಇಲ್ಲ” ಎಂದು ಉತ್ತರಿಸಿ ಹೊರಬರಲು ಸಾಧ್ಯವಿಲ್ಲ. ಒಂದು ನಿರ್ಣಯವನ್ನು ಅದರ ಕಾಲಘಟ್ಟ, ಸಾಮಾಜಿಕ ವ್ಯವಸ್ಥೆ, ಭಾಷೆ, ಉದ್ದೇಶ ಮತ್ತು ಪ್ರಾಯೋಗಿಕ ಅನುಷ್ಠಾನಗಳಿಂದ ಬೇರ್ಪಡಿಸಿ ವಿಚಾರಿಸಿದರೆ, ಅದು ಇತಿಹಾಸದ ಪರಿಶೀಲನೆಯಾಗುವುದಿಲ್ಲ—ಆಯ್ದ ತೀರ್ಪಾಗುತ್ತದೆ.
ಆದ್ದರಿಂದ—
ಸಾವಧಾನ, ಶ್ರೀ ವಿನಯ್ ಅವರೇ!
ಅವಸರದಲ್ಲಿ ಕರ್ತೃ–ಕರ್ಮ–ಕ್ರಿಯಾಪದಗಳನ್ನು ಜೋಡಿಸಿ, ಸಾರ್ವಜನಿಕ ಜಾಲತಾಣಗಳಲ್ಲಿ ಸ್ಫೋಟಕ ತೀರ್ಮಾನಗಳನ್ನು ಪ್ರಕಟಿಸುವುದು ಸುಲಭ. ಆದರೆ ಅವುಗಳಿಂದ ಸಮಾಜದೊಳಗೆ ಹರಡುವ ತಪ್ಪು ಸಂದೇಶಗಳನ್ನು ಹಿಂದಕ್ಕೆ ಪಡೆಯುವುದು ಅಷ್ಟು ಸುಲಭವಲ್ಲ.
ತಾವು ಹಿಂದೆ ದಾಖಲೆ ಇಲ್ಲದ ಪ್ರತಿಪಾದನೆಯನ್ನು ಪ್ರಕಟಿಸಿ, ನಂತರ ಖಾಸಗಿಯಾಗಿ ತಪ್ಪೊಪ್ಪಿಕೊಂಡಿದ್ದರೂ ಮೂಲ ಲೇಖನದಲ್ಲಿದ್ದ ತಪ್ಪನ್ನು ಸಾರ್ವಜನಿಕವಾಗಿ ತೆಗೆದುಹಾಕದ ಉದಾಹರಣೆ ನಮ್ಮ ಮುಂದಿದೆ. ಆ ಲೇಖನಕ್ಕೆ ತಮ್ಮ ಕೆಲವು ಅನುಯಾಯಿಗಳು ಬಳಸಿದ ಅಸಭ್ಯ ಭಾಷೆಯನ್ನೂ ನಾವು ಕಂಡಿದ್ದೇವೆ.
ಹೀಗಿರುವಾಗ ಇಂತಹ ಧರ್ಮಸೂಕ್ಷ್ಮ, ಜಾತಿಸೂಕ್ಷ್ಮ ಮತ್ತು ಇತಿಹಾಸಸೂಕ್ಷ್ಮ ವಿಚಾರಗಳಲ್ಲಿ ತಾಳ್ಮೆ ಅತ್ಯಗತ್ಯ.
ಈಗ ತಮಗೆ ಅತ್ಯವಸರವಾಗಿ ಬೇಕಾಗಿರುವ ೧೯೦೪ರ ದಾಖಲೆಗಳನ್ನೇ ನೋಡೋಣ.
೧೯೦೪ರ ಪ್ರಥಮ ಅಧಿವೇಶನ ಹೇಳಿದ್ದೇನು?
೧೯೦೪ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ಅಧ್ಯಕ್ಷರು ಶ್ರೀ ಶಿರಸಂಗಿ ಲಿಂಗರಾಜರು—ಅವರು ಜಂಗಮೇತರರು ಎಂಬುದನ್ನು ಮೊದಲಿಗೆ ದಾಖಲಿಸೋಣ.
ಆ ಅಧಿವೇಶನದಲ್ಲಿ ಕೈಗೊಂಡ ಅನೇಕ ನಿರ್ಣಯಗಳಲ್ಲಿ ಪ್ರಸ್ತುತ ಚರ್ಚೆಗೆ ಸಂಬಂಧಿಸಿದವು ಇವು:
ನಿರ್ಣಯ ೩
“ಎಲ್ಲಾ ವೀರಶೈವರೂ ವಿದ್ಯುಕ್ತವಾಗಿ ಶಿವದೀಕ್ಷಾ ಸಂಸ್ಕಾರವನ್ನು ಹೊಂದಬೇಕೆಂತಲೂ, ಲಿಂಗಾಂಗಿಗಳೆಲ್ಲರೂ ಲಿಂಗವನ್ನು ಧರಿಸಿಯೇ ಇರಬೇಕೆಂತಲೂ, ಲಿಂಗಾರ್ಚನೆಯಿಲ್ಲದೆ ಭುಂಜಿಸಕೂಡದೆಂತಲೂ, ತಮ್ಮ ವಿವಾಹ ಮುಂತಾದ ಕಾರ್ಯಗಳನ್ನು ಯಥಾವಿಧಿಯಾಗಿ ತಮ್ಮ ಗುರುಸ್ಥಲದ ಮಠಾಧಿಕಾರಿಗಳಿಂದಲೇ ಮಾಡಿಸಬೇಕೆಂತಲೂ, ಇದಕ್ಕೆ ವಿರುದ್ಧವಾಗಿ ಆಚರಿಸಿದರೆ ಯೋಗ್ಯ ಅಧಿಕಾರಿಗಳು ಅವರಿಗೆ ತಕ್ಕ ಶಾಸನೆಯನ್ನು ಕೊಡಬೇಕೆಂತಲೂ ಈ ಮಹಾಸಭೆಯವರು ಅಭಿಪ್ರಾಯಪಡುತ್ತಾರೆ.”
ನಿರ್ಣಯ ೪ (ಅ)
“ಈ ಮತದ ಸಿಂಹಾಸನಾಧಿಪತಿಗಳೂ, ಇವರ ಗೋತ್ರಜರಾದ ಹಿರೇಮಠದವರೇ ಮೊದಲಾದ ಗುರುಸ್ಥಲದವರೂ, ಶಿಷ್ಯರಿಗೆ ದೀಕ್ಷೆ, ಲಿಂಗಾಧಾರಣ, ವಿವಾಹ ಮುಂತಾದವುಗಳನ್ನು ವಿದ್ಯುಕ್ತವಾಗಿ ಮಾಡಿಸಿ, ತಾವು ಸ್ವಧರ್ಮಾಚರಣೆಯಲ್ಲಿ ನಿರತರಾಗಿ, ಶಿಷ್ಯರಿಗೆ ಧರ್ಮಾಚರಣೆಯನ್ನು ಬೋಧಿಸಿ, ಅವುಗಳಲ್ಲಿ ಅವರನ್ನು ಪ್ರವೃತ್ತರನ್ನಾಗಿ ಮಾಡಿ, ದುರಾಚರಣೆಗಳನ್ನು ನಿಲ್ಲಿಸಬೇಕೆಂತಲೂ; ಹೀಗೆ ಮಾಡದವರಿಗೆ ಹಕ್ಕುಬಾಬುಗಳನ್ನು ಶಿಷ್ಯರು ಕೊಡಕೂಡದೆಂತಲೂ ಈ ಮಹಾಸಭೆಯವರು ಅಭಿಪ್ರಾಯಪಡುತ್ತಾರೆ.”
ನಿರ್ಣಯ ೫
“ವೀರಶೈವ ಶಾಸ್ತ್ರಿಗಳು ಸ್ವಧರ್ಮಗ್ರಂಥಗಳನ್ನು ಪರಿಶೀಲನೆ ಮಾಡುವುದು ಮತ್ತು ಅವುಗಳ ಸಂಗತಿಯನ್ನು ಸಮಾಜದವರ ತಿಳುವಳಿಕೆಗೆ ತರುವುದು ಅತ್ಯಾವಶ್ಯಕವಾದ್ದೆಂದು ಮಹಾಸಭೆಯವರು ಅಭಿಪ್ರಾಯಪಡುತ್ತಾರೆ.”
ಶ್ರೀ ವಿನಯ್ ಅವರೇ,
ನಿರ್ಣಯಗಳಲ್ಲಿ ಅಂದಿನ ಸಿಂಹಾಸನಾಧಿಪತಿಗಳು, ಗುರುಸ್ಥಲದವರು ಮತ್ತು ಮಠಾಧಿಕಾರಿಗಳ ಉಲ್ಲೇಖವಿದೆ. ಅವರು ಶಿಷ್ಯರಿಗೆ ದೀಕ್ಷೆ, ಲಿಂಗಧಾರಣೆ, ವಿವಾಹ ಮತ್ತು ಧರ್ಮಬೋಧನೆ ಮಾಡಬೇಕೆಂದು ಹೇಳಲಾಗಿದೆ. ಅದೇ ಸಮಯದಲ್ಲಿ, ತಮ್ಮ ಕರ್ತವ್ಯ ನಿರ್ವಹಿಸದ ಮಠಾಧಿಕಾರಿಗಳಿಗೆ ಶಿಷ್ಯರು ಹಕ್ಕುಬಾಬು ಕೊಡಬಾರದೆಂಬ ಕಠಿಣ ಸಾಮಾಜಿಕ ನಿಯಂತ್ರಣವನ್ನೂ ವಿಧಿಸಲಾಗಿದೆ.
ಅಂದರೆ, ಅದು ಕೇವಲ ಹಕ್ಕಿನ ನಿರ್ಣಯವಲ್ಲ—ಕರ್ತವ್ಯ ತಪ್ಪಿದ ಗುರುಸ್ಥಲದ ಆರ್ಥಿಕ ಹಕ್ಕನ್ನೇ ತಡೆಹಿಡಿಯುವ ಉತ್ತರದಾಯಿತ್ವದ ನಿರ್ಣಯ.
ಅಂದಿನ ವಂಶಪಾರಂಪರ್ಯ ಗುರುಸ್ಥಲ ವ್ಯವಸ್ಥೆಯನ್ನು ಇಂದಿನ ಸಮಾನತೆಯ ದೃಷ್ಟಿಯಿಂದ ಪ್ರಶ್ನಿಸಬಹುದು. ಆದರೆ ಆ ವ್ಯವಸ್ಥೆಯನ್ನು ದಾಖಲಿಸಿದ ಗೊತ್ತುವಳಿಯನ್ನು—
“ಜಂಗಮ ಜಾತಿಯವರಿಗೇ ಮಠಾಧಿಪತ್ಯ ಮೀಸಲಿಟ್ಟ ನಿರ್ಣಯ”
ಎಂದು ಒಂದೇ ವಾಕ್ಯದಲ್ಲಿ ಮರುಬರೆಯುವುದು ಸಂಶೋಧನೆಯಲ್ಲ; ಅದು ಮೂಲಪಠ್ಯದ ಮೇಲೆ ತಮ್ಮ ತೀರ್ಮಾನವನ್ನು ಹೇರಿದಂತಾಗುತ್ತದೆ.
೧೯೦೮ರ ಬಾಗಲಕೋಟೆ ಅಧಿವೇಶನ ಮತ್ತು ಶಿವಯೋಗಮಂದಿರ
೧೯೦೮ರಲ್ಲಿ ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ಅಧ್ಯಕ್ಷರು ಶ್ರೀ ಸರದೇಸಾಯಿ ವಂಟಮುರಿಯವರು—ಅವರೂ ಜಂಗಮೇತರರು.
ಅಲ್ಲಿ ಶಿವಯೋಗಮಂದಿರದ ಸ್ಥಾಪನೆಯ ಕುರಿತು ಕೈಗೊಂಡ ನಿರ್ಣಯ ಹೀಗಿದೆ:
“ವೀರಶೈವ ಸಮಾಜದಲ್ಲಿ ಸದ್ಯ ದುರ್ದೈವದಿಂದ ಧರ್ಮಗ್ಲಾನಿಯುಂಟಾಗುತ್ತಿದ್ದು, ಅದನ್ನು ಹೋಗಲಾಡಿಸುವುದಕ್ಕಾಗಿ ಶೂನ್ಯಸಿಂಹಾಸನಾಧ್ಯಕ್ಷರು, ಪಟ್ಟದೇವರು, ಚರಮೂರ್ತಿಗಳು ಮೊದಲಾದ ಪೂಜ್ಯರಾದ ಮಹೇಶ್ವರರು ಶಿವಾನುಭವ ಮತ್ತು ಶಾಸ್ತ್ರಜ್ಞಾನವನ್ನು ಪ್ರಸಾರಗೊಳಿಸಲಿಕ್ಕಾಗಿ ಶಿವಯೋಗಮಂದಿರವನ್ನು ಸ್ಥಾಪಿಸತಕ್ಕದೆಂದು ಮಹಾಸಭೆಯವರು ನಿರ್ಣಯ ಮಾಡುತ್ತಾರೆ.”
ಇಲ್ಲಿ ಘೋಷಿಸಲಾದ ಉದ್ದೇಶವೇನು?
ಧರ್ಮಜ್ಞಾನವಿಲ್ಲದ ವ್ಯಕ್ತಿಗಳನ್ನು ಮಠಾಧಿಪತಿಗಳನ್ನಾಗಿ ಮಾಡುವುದಲ್ಲ; ಶಿವಾನುಭವ, ಶಾಸ್ತ್ರಜ್ಞಾನ, ಸದಾಚಾರ ಮತ್ತು ಸೇವಾಭಾವವುಳ್ಳ ಸಮರ್ಥ ಗುರುಗಳನ್ನು ರೂಪಿಸುವುದು.
೧೯೦೯ರ ಶಿವಯೋಗಮಂದಿರದ ಉದ್ದೇಶೋಪಾಯ
ಶಿವಯೋಗಮಂದಿರದ ೧೯೦೯ರ ಉದ್ದೇಶೋಪಾಯದಲ್ಲಿ ಹೀಗೆ ಹೇಳಲಾಗಿದೆ:
“ಶಿವಯೋಗಮಂದಿರದಲ್ಲಿ ಗುರುಸ್ಥಲದ ಯೋಗ್ಯ ಮಠಸ್ಥರ ಹನ್ನೆರಡು ವರ್ಷದೊಳಗಿನ ಹುಡುಗರನ್ನು ತೆಗೆದುಕೊಂಡು, ಅವರಿಗೆ ಕನ್ನಡ ಮತ್ತು ಸಂಸ್ಕೃತ ಭಾಷಾಜ್ಞಾನವನ್ನು ಚೆನ್ನಾಗಿ ಮಾಡಿಕೊಡುವುದಲ್ಲದೆ, ವೀರಶೈವ ಧರ್ಮಗ್ರಂಥ, ವೇದ, ಆಗಮ, ಉಪನಿಷತ್, ಸ್ಮೃತಿ, ಪುರಾಣ ಮತ್ತು ಪುರಾತನೋಕ್ತಿಗಳ ಅಭ್ಯಾಸವನ್ನು ಮಾಡಿಸಿ, ಲಿಂಗಾಂಗ ಸಾಮರಸ್ಯ ಜ್ಞಾನವನ್ನು ಅವರಲ್ಲಿ ಉಂಟುಮಾಡಿಕೊಡುವುದು. ಈ ವಟುಗಳು ೨೫, ೩೫, ೪೫ ವರ್ಷ ವಯಸ್ಸಿನವರಾಗುವವರೆಗೆ ಸ್ತ್ರೀದರ್ಶನವಿಲ್ಲದಂತೆ ಶಿವಯೋಗಮಂದಿರದಲ್ಲಿದ್ದು, ಬ್ರಹ್ಮಚರ್ಯ ಮೊದಲಾದ ಸದ್ಗುಣ–ಸದಾಚಾರ ಸಂಪನ್ನರಾಗಿ ಶಿವಯೋಗಸಿದ್ಧಿಯನ್ನು ಪಡೆದುಕೊಂಡ ನಂತರ ಅಲ್ಲಲ್ಲಿಯ ಗುರುಪೀಠಗಳಿಗೆ ಭಕ್ತರ ಉದ್ಧಾರಾರ್ಥವಾಗಿ ಅವರನ್ನು ಸಿದ್ಧಪಡಿಸುವುದು.”
ಈ ಉದ್ದೇಶೋಪಾಯದಲ್ಲಿ ಅಂದಿನ ಗುರುಸ್ಥಲ ಪರಂಪರೆಯ ಮಿತಿ ಕಾಣುತ್ತದೆ ಎಂಬುದನ್ನು ನಾನು ಮರೆಮಾಚುವುದಿಲ್ಲ. ಆದರೆ ಅದರೊಂದಿಗೆ ಅದರ ಮೂಲ ಉದ್ದೇಶವನ್ನೂ ನೋಡಬೇಕು—ಮಠಾಧಿಕಾರಕ್ಕಾಗಿ ವ್ಯಕ್ತಿಗಳನ್ನು ಸಿದ್ಧಪಡಿಸುವ ಮೊದಲು ಅವರಿಗೆ ಹಲವು ವರ್ಷಗಳ ಕಠಿಣ ಭಾಷಾ, ಶಾಸ್ತ್ರ, ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ನೀಡುವುದು.
ಇದಕ್ಕಿಂತ ಮುಖ್ಯವಾಗಿ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪ್ರಾಯೋಗಿಕ ನಡೆ ಏನಾಗಿತ್ತು ಎಂಬುದನ್ನೂ ನೋಡಬೇಕು.
೧೯೧೧ರಿಂದ ಶ್ರೀ ಕುಮಾರ ಶಿವಯೋಗಿಗಳು ಸಂಗ್ರಹಿಸುತ್ತಿದ್ದ ವಚನಗಳ ತಾಳೆಗರಿ ಪ್ರತಿಗಳ ವಚನಪಠಣವನ್ನು ಶಿವಯೋಗಮಂದಿರದ ಅರ್ಚನೆ, ಅರ್ಪಣೆ ಮತ್ತು ಅನುಭಾವಗಳಲ್ಲಿ ಕಡ್ಡಾಯವಾಗಿ ಬಳಸತೊಡಗಿದರು.
೨೦೧೦ರ ಶಿವಯೋಗಮಂದಿರದ ಠರಾವಿನ ಮೂಲಕ ಜಂಗಮೇತರರಿಗೂ ಶಿಕ್ಷಣಾವಕಾಶವನ್ನು ಅಧಿಕೃತಗೊಳಿಸಲಾಯಿತು.
ಆದರೆ ಅದಕ್ಕೂ ಒಂದು ಶತಮಾನ ಮೊದಲು, ಸ್ವತಃ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೇ ಆರಂಭಿಕ ನಿಯಮದ ಮಿತಿಯನ್ನು ಸಡಿಲಿಸಿ, ಜಂಗಮೇತರರಾದ ನವಲಗುಂದದ ಶ್ರೀ ಬಸವಲಿಂಗ ಸ್ವಾಮಿಗಳನ್ನು ಶಿವಯೋಗಮಂದಿರದ ಪ್ರಥಮ ವಿದ್ಯಾರ್ಥಿಯಾಗಿ ಸ್ವೀಕರಿಸಿದ್ದರು.
ಈ ಇತಿಹಾಸವನ್ನು ಏಕೆ ಮರೆಮಾಚಬೇಕು?
೧೯೨೪ರಲ್ಲಿ ಶಿವಯೋಗಮಂದಿರದಲ್ಲಿ ಸಾಧನೆ ಮಾಡಿದ ಭಾಲ್ಕಿಯ ಶ್ರೀ ಚನ್ನಬಸವ ಪಟ್ಟದ್ದೇವರಿಂದ ಆರಂಭಿಸಿ, ೧೫ ಸೆಪ್ಟೆಂಬರ್ ೨೦೨೬ರಂದು ಬಬಲಾದಿ ಬ್ರಹ್ಮನ್ಮಠದ ಪೀಠವನ್ನೇರಲಿರುವ ಶ್ರೀಗಳವರೆಗೂ ಶಿವಯೋಗಮಂದಿರದ ಸಾಧಕರ ಪರಂಪರೆ ವಿಸ್ತರಿಸಿದೆ.
ಹೀಗಿರುವಾಗ, ಲಿಖಿತ ಉದ್ದೇಶೋಪಾಯದ ಒಂದು ಸಾಲನ್ನು ಮಾತ್ರ ಹಿಡಿದು, ಅದರ ಜೀವಂತ ಅನುಷ್ಠಾನ ಮತ್ತು ಶತಮಾನದ ಪರಿವರ್ತನೆಯನ್ನು ಅಳಿಸಿಹಾಕುವುದು ಯಾವ ಇತಿಹಾಸನಿಷ್ಠೆ?
ಮಠ ಪರಂಪರೆ ೧೯೦೪ರಲ್ಲಿ ಹುಟ್ಟಿದ್ದಲ್ಲ.
ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯದ ಪ್ರಾಂಗಣದಲ್ಲಿ ಹದಿನೈದನೆಯ ಶತಮಾನದ ಶಾಸನವಿದೆ. ಶ್ರೀ ಯಡೆಯೂರು ಸಿದ್ಧಲಿಂಗೇಶ್ವರರು ನಿರ್ವಿಕಲ್ಪ ಸಮಾಧಿ ಹೊಂದುವ ಮುನ್ನ ನೀಡಿದ ನಿರ್ದೇಶನದಂತೆ, ಅವರ ಸಮಾಧಿಯ ಪೂಜಾಕೈಂಕರ್ಯಗಳನ್ನು ಆಗಮೋಕ್ತವಾಗಿ ವೀರಮಾಹೇಶ್ವರರು ನಿತ್ಯ ತ್ರಿಕಾಲ ನೆರವೇರಿಸಬೇಕೆಂದು ಆ ಶಾಸನ ತಿಳಿಸುತ್ತದೆ.
ಹದಿನೈದನೆಯ ಶತಮಾನದಲ್ಲಿ:
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಜನಿಸಿರಲಿಲ್ಲ;
- ಅಖಿಲ ಭಾರತ ವೀರಶೈವ ಮಹಾಸಭೆ ಅಸ್ತಿತ್ವದಲ್ಲಿರಲಿಲ್ಲ;
- ಶಿವಯೋಗಮಂದಿರವೂ ಸ್ಥಾಪನೆಯಾಗಿರಲಿಲ್ಲ.
ಹಾಗಿದ್ದರೆ ವೀರಮಾಹೇಶ್ವರರು, ಗುರುಸ್ಥಲ ಪರಂಪರೆ ಮತ್ತು ಮಠದ ಪೂಜಾಧಿಕಾರವನ್ನು ೧೯೦೪ರ ಮಹಾಸಭೆಯೇ ಸೃಷ್ಟಿಸಿತು ಎಂಬ ಭಾವನೆ ಮೂಡಿಸುವುದು ಹೇಗೆ ಸರಿ?
೧೯೦೪ರ ನಿರ್ಣಯವು ತನ್ನ ಕಾಲದಲ್ಲಿದ್ದ ವ್ಯವಸ್ಥೆಯನ್ನು ದಾಖಲಿಸಿ ನಿಯಂತ್ರಿಸಲು ಪ್ರಯತ್ನಿಸಿತೇ ಹೊರತು, ಶತಮಾನಗಳ ಹಿಂದಿನ ಪರಂಪರೆಯನ್ನು ಅಂದು ಹೊಸದಾಗಿ ಸೃಷ್ಟಿಸಲಿಲ್ಲ.
ಹಿರೇಮಲ್ಲೂರು ಈಶ್ವರನ್ ಅವರ ಸೂತ್ರ ಇಲ್ಲೇಕೆ ಪೂರ್ಣವಾಗಿ ಅನ್ವಯಿಸುವುದಿಲ್ಲ?
ಹಿರೇಮಲ್ಲೂರು ಈಶ್ವರನ್ ಅವರ ಪ್ರಕಾರ, ಬಸವೇಶ್ವರರ ಕಾಲದಲ್ಲಿ ‘ಜಂಗಮ’ ಎಂದರೆ ಸ್ವಇಚ್ಛೆಯಿಂದ ಜಂಗಮ ಕಾಯಕವನ್ನು ಕೈಗೊಂಡವನು; ಇಂದು ಜಂಗಮ ಎಂದರೆ ಜಂಗಮ ಜಾತಿಯಲ್ಲಿ ಹುಟ್ಟಿದವನು. ಏಣಿಯ ಮಾದರಿಯ ವರ್ಗಗಳನ್ನು ನಿರ್ಮೂಲನೆ ಮಾಡುವ ಬದಲು ಜಂಗಮರೇ ಅವುಗಳನ್ನು ರೂಪಿಸಿದರು ಎಂಬುದು ಅವರ ಸಮಾಜಶಾಸ್ತ್ರೀಯ ವಿಶ್ಲೇಷಣೆ.
ಅವರ ಅಭಿಪ್ರಾಯವನ್ನು ಚರ್ಚಿಸಬಹುದು; ಆದರೆ ಅದನ್ನು ಇತಿಹಾಸದ ಅಂತಿಮ ತೀರ್ಪಾಗಿ ಬಳಸಲಾಗುವುದಿಲ್ಲ.
ಹತ್ತೊಂಬತ್ತನೆಯ ಶತಮಾನದ ಉತ್ತರ ಮತ್ತು ಮಧ್ಯ ಕರ್ನಾಟಕದ ಸಾಮಾಜಿಕ ವಾಸ್ತವವನ್ನು ಗಮನಿಸಬೇಕು.
ಪಾಟೀಲರು, ಗೌಡರು, ಜಮಾದಾರರು ಮತ್ತು ದೇಸಾಯರು ಜಮೀನು, ಕೃಷಿ ಹಾಗೂ ಆಡಳಿತದಲ್ಲಿ ತೊಡಗಿಕೊಂಡಿದ್ದರು. ಬಣಜಿಗರು ವ್ಯಾಪಾರವನ್ನು ಜೀವನವೃತ್ತಿಯಾಗಿಸಿಕೊಂಡಿದ್ದರು. ಕುಂಬಾರರು, ಕಮ್ಮಾರರು, ಬಡಿಗರು ಮತ್ತು ಹೂಗಾರರು ತಮ್ಮ ಪರಂಪರಾಗತ ಕಾಯಕಗಳಲ್ಲಿ ನಿರತರಾಗಿದ್ದರು.
ಧಾರ್ಮಿಕ ವಿಧಿ–ವಿಧಾನಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬಂದ ಜಂಗಮರ ಮೇಲೆ ಸಮಾಜವೇ ಧಾರ್ಮಿಕ ಸೇವೆ ಮತ್ತು ಮಠಗಳ ಜವಾಬ್ದಾರಿಯನ್ನು ಹೊರಿಸಿತು.
ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ವಿರಕ್ತ ಹಾಗೂ ಗುರುಪೀಠಗಳ ಉತ್ತರಾಧಿಕಾರಿಗಳಾಗಿ ಜಂಗಮರು ಹೆಚ್ಚು ಕಾಣಿಸಿಕೊಂಡರು. ಆದರೆ ದಕ್ಷಿಣ ಕರ್ನಾಟಕದಲ್ಲಿ ಇದೇ ಪದ್ಧತಿ ಸಾರ್ವತ್ರಿಕವಾಗಿರಲಿಲ್ಲ. ಹೀಗಾಗಿ ಒಂದು ಪ್ರದೇಶದ ಆಚರಣೆಯನ್ನು ಇಡೀ ಲಿಂಗಾಯತ ಧರ್ಮದ ಏಕಮಾತ್ರ ಸ್ವರೂಪವೆಂದು ಹೇಳಲಾಗುವುದಿಲ್ಲ.
ಜಂಗಮರಲ್ಲಿ ಜಾತಿಯ ಮೇಲರಿಮೆ ಬೆಳೆಯಲೇ ಇಲ್ಲವೆಂದು ನಾನು ವಾದಿಸುವುದಿಲ್ಲ. ಮೇಲರಿಮೆ ಇದ್ದರೆ ಅದಕ್ಕೆ ‘ಅಯ್ಯನವರು’ ಮಾತ್ರವಲ್ಲ, ಅವರ ಪಾದಪೂಜೆ ಮಾಡಿ, ಪಾದೋದಕ ಸ್ವೀಕರಿಸಿ, ಶೇಷಾನ್ನವನ್ನು ಪ್ರಸಾದವೆಂದು ಭಾವಿಸಿದ ‘ಭಕ್ತರೂ’ ಐತಿಹಾಸಿಕವಾಗಿ ಪಾಲುದಾರರು.
ಒಬ್ಬರು ಪೀಠದ ಮೇಲೆ ಕುಳಿತಿದ್ದರೆ, ಮತ್ತೊಬ್ಬರು ಆ ಪೀಠವನ್ನು ಹೊತ್ತು ನಿಲ್ಲಿಸಿದ್ದರು. ಈಗ ಇತಿಹಾಸದ ಸಂಪೂರ್ಣ ಹೊಣೆಯನ್ನು ಕುಳಿತವನ ಮೇಲೆ ಮಾತ್ರ ಹಾಕಿ, ಹೊತ್ತವರ ಪಾತ್ರವನ್ನು ಮರೆಮಾಚಬಹುದೇ?
ಅಖಿಲ ಭಾರತ ವೀರಶೈವ ಮಹಾಸಭೆಯ ಸುಮಾರು ಇಪ್ಪತ್ತೈದು ಅಧ್ಯಕ್ಷರಲ್ಲಿ ಕೇವಲ ಎರಡು–ಮೂರು ಮಂದಿ ಮಾತ್ರ ಜಂಗಮ ಸಮುದಾಯದವರು; ಉಳಿದ ಬಹುಪಾಲು ಅಧ್ಯಕ್ಷರು ಜಂಗಮೇತರರು ಎಂಬುದನ್ನೂ ಗಮನಿಸಬೇಕು.
ಹೀಗಿರುವಾಗ ಮಹಾಸಭೆಯನ್ನೇ ‘ಜಂಗಮ ಪ್ರಾಬಲ್ಯದ ಸಂಚು’ ಎಂದು ಚಿತ್ರಿಸುವುದು ಯಾವ ಅಂಕಿ–ಅಂಶದ ನ್ಯಾಯ?
ಹತ್ತೊಂಬತ್ತನೆಯ ಶತಮಾನದ ಮಠಗಳು ವೈಭವದ ಅರಮನೆಗಳಾಗಿರಲಿಲ್ಲ.
ಹತ್ತೊಂಬತ್ತನೆಯ ಶತಮಾನದ ಬಹುತೇಕ ಮಠಗಳು ಇಂದಿನಂತೆ ಕಣ್ಣು ಕೋರೈಸುವ ಕಟ್ಟಡಗಳಾಗಿರಲಿಲ್ಲ. ಅವುಗಳಲ್ಲಿ ಅನೇಕವು ಗುಡಿಸಲು ಮಠಗಳಾಗಿದ್ದವು.
ಅಲ್ಲಿ ಸ್ವಾಮಿಯಾಗುವುದೆಂದರೆ ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯನಾಗುವುದಲ್ಲ. ಕಠಿಣ ಬ್ರಹ್ಮಚರ್ಯ, ಪೂಜೆ, ಪಠಣ, ಸಂಯಮ ಮತ್ತು ದಾಸೋಹದ ಹೊಣೆ ಹೊರುವುದಾಗಿತ್ತು.
ಜೋಳಿಗೆ ಹಾಕಿಕೊಂಡು ಅಥವಾ ಕಂತಿಭಿಕ್ಷೆಯ ಬುಟ್ಟಿಯನ್ನು ಹೊತ್ತು ಮನೆಮನೆಗೆ ಹೋಗಿ ಭಿಕ್ಷೆ ಸಂಗ್ರಹಿಸಬೇಕಾಗಿತ್ತು. ತಂದ ಅನ್ನವನ್ನು ಮಠದಲ್ಲಿ ಓದುತ್ತಿದ್ದ ಬಡಮಕ್ಕಳಿಗೆ, ಪರವೂರಿನಿಂದ ಬಂದ ಯಾತ್ರಿಕರಿಗೆ ಮತ್ತು ಹಸಿದವರಿಗೆ ಪ್ರಸಾದವಾಗಿ ಹಂಚಬೇಕಾಗಿತ್ತು.
ಆ ಮಠಗಳು ಅಧಿಕಾರದ ಕೇಂದ್ರಗಳಿಗಿಂತ ಮೊದಲು ಅನ್ನದಾಸೋಹದ ಕೇಂದ್ರಗಳಾಗಿದ್ದವು.
ಆ ಕಾಲದ ಜೋಳಿಗೆಯನ್ನು ಇಂದಿನ ಮಠದ ಆಸ್ತಿಯೊಂದಿಗೆ ತೂಗಿ, ಆಗಿನ ಜಂಗಮನನ್ನು ಇಂದಿನ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಂತೆ ಚಿತ್ರಿಸುವುದು ಇತಿಹಾಸವಲ್ಲ—ಕಾಲಭೇದವನ್ನು ಅಳಿಸಿ ಮಾಡುವ ಪ್ರಚಾರ.
ಸಂಶೋಧನೆಯ ಹೆಸರಿನಲ್ಲಿ ಜಂಗಮರ ವಿರುದ್ಧ ‘ಸಂವಿಧಾನ’ ನಿರ್ಮಾಣ
ಇತ್ತೀಚಿನ ದಿನಗಳಲ್ಲಿ ಜಾತಿ ಜಂಗಮರನ್ನು ಅತ್ಯಂತ ಕೆಳಮಟ್ಟದ ಭಾಷೆಯಲ್ಲಿ ಜರೆಯುವುದನ್ನೇ ಜಾಗತಿಕ ಲಿಂಗಾಯತ ಮಹಾಸಭೆಯ ಕೆಲವು ಸದಸ್ಯರು ತಮ್ಮ ನಿತ್ಯಕಾಯಕ ಮತ್ತು ನಿಜವಾದ ಬಸವತತ್ವದ ಪರಿಪಾಲನೆ ಎಂದು ಭಾವಿಸಿದಂತಿದೆ.
ಅವರ ಸಂಶೋಧನೆ ಬಹುತೇಕ ‘ವೈದಿಕತನ’ ಮತ್ತು ‘ಪುರೋಹಿತಶಾಹಿ’ ಎಂಬ ಎರಡು ಪದಗಳ ಸುತ್ತಲೇ ಸುತ್ತುತ್ತದೆ.
ಡಾ. ಎಂ.ಎಂ. ಕಲಬುರ್ಗಿ ಅವರು ಪ್ರತಿಪಾದಿಸಿದ—
- ಇಂದಿನ ಕರ್ನಾಟಕದ ಜಂಗಮರು ಆಂಧ್ರದಿಂದ ಬಂದ ಆರಾಧ್ಯರು;
- ಅಣ್ಣಿಗೇರಿಯಲ್ಲಿ ಪತ್ತೆಯಾದ ಮಾನವ ಅವಶೇಷಗಳು ಏಳು ನೂರು ವರ್ಷಗಳ ಹಿಂದೆ ಜಂಗಮರು ನಡೆಸಿದ ನರಮೇಧಕ್ಕೆ ಸಂಬಂಧಿಸಿದವು—
ಎಂಬ ವಾದಗಳನ್ನು ಶ್ರೀ ವಿನಯ್ ಶಿರಹಟ್ಟಿಮಠ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭೆಯ ಅನೇಕರು ಪ್ರಶ್ನಾತೀತ ಸಂವಿಧಾನದಂತೆ ಬಳಸಿಕೊಳ್ಳುತ್ತಿದ್ದಾರೆ.
ಆದರೆ ಅಣ್ಣಿಗೇರಿ ಪ್ರದೇಶವು ಹತ್ತೊಂಬತ್ತನೆಯ ಶತಮಾನದಲ್ಲಿ ಭೀಕರ ಬರಗಾಲ ಮತ್ತು ಪ್ಲೇಗ್ಗಳಂತಹ ಮಹಾಮಾರಿಗಳನ್ನು ಕಂಡಿತ್ತು. ಅಲ್ಲಿ ಪತ್ತೆಯಾದ ಮಾನವ ಅವಶೇಷಗಳು ಬರಗಾಲ–ಪ್ಲೇಗ್ನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ್ದಾಗಿರಬಹುದಾದ ಸಾಧ್ಯತೆಯನ್ನು ಪರಿಶೀಲಿಸದೆ, ಅವುಗಳನ್ನು ಜಂಗಮರು ನಡೆಸಿದ ನರಮೇಧವೆಂದು ಬಿಂಬಿಸಿದರೆ, ಅದನ್ನು ಪ್ರಶ್ನಿಸುವುದು ಸಂಶೋಧನಾವಿರೋಧವಲ್ಲ.
ಡಾ. ಎಂ.ಎಂ. ಕಲಬುರ್ಗಿ ದೊಡ್ಡ ವಿದ್ವಾಂಸರಾಗಿದ್ದರೆಂಬ ಗೌರವ ಬೇರೆ; ಅವರ ಪ್ರತಿಯೊಂದು ಪ್ರತಿಪಾದನೆಯೂ ಪುರಾತತ್ವ ಮತ್ತು ವೈಜ್ಞಾನಿಕ ಪರೀಕ್ಷೆಗಳಿಗೆ ಅತೀತವೆಂಬ ನಿಲುವು ಬೇರೆ.
ಡಾ. ಎಸ್.ಎಂ. ಜಾಮದಾರ್ ಅವರ ‘ಭಿಕ್ಕಿಕೂಳು’ ಸ್ವಾಭಿಮಾನ.
ಮಠದ ಸ್ವಾಮಿಯನ್ನು ಬಿಡಿ; ಮಠದ ಪ್ರಸಾದವನ್ನೇ ಸ್ವೀಕರಿಸಲು ನಿರಾಕರಿಸಿದ ‘ಸ್ವಾಭಿಮಾನ’ದ ಪ್ರಸಂಗವನ್ನು ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಅವರು ಟಿವಿ–೯ ವಾಹಿನಿಯ ಸಂದರ್ಶನದಲ್ಲಿ ಸಾರ್ವಜನಿಕವಾಗಿ ವಿವರಿಸಿದ್ದಾರೆ.
ರಾಮದುರ್ಗದ ಪೂಜ್ಯ ಅವರಾದಿ ಫಲಹಾರೇಶ್ವರ ಮಠದ ಉಚಿತ ಪ್ರಸಾದನಿಲಯ ಮತ್ತು ಧಾರವಾಡದ ಪೂಜ್ಯ ಮೃತ್ಯುಂಜಯ ಅಪ್ಪಗಳ ಉಚಿತ ಪ್ರಸಾದನಿಲಯಗಳಲ್ಲಿ ಉಳಿಯಬೇಕಾದ ಸಂದರ್ಭ ಬಂದಾಗ, ತಮ್ಮ ತಂದೆಯವರು ಅದನ್ನು ತಡೆದು ಹೇಳಿದ ಮಾತನ್ನು ಡಾ. ಜಾಮದಾರ್ ಅವರು ಹೀಗೆ ದಾಖಲಿಸಿದ್ದಾರೆ:
“ಸ್ವಾಮಿಗಳು ಇರತಕ್ಕಂತಹ ಬೋರ್ಡಿಂಗ್ ಮಠಗಳಲ್ಲಿ ಹಾಕುವ ಊಟವು ಅಲ್ಲಲ್ಲಿ ಭಿಕ್ಷೆ ಬೇಡಿ ತಂದ ‘ಭಿಕ್ಕಿಕೂಳು’. ಅಂತಹ ಭಿಕ್ಷೆಯಿಂದ ತಂದ ಊಟವನ್ನು ನೀನು ಉಂಡರೆ, ನೀನೂ ಭಿಕ್ಷುಕನಾಗುತ್ತೀಯೆ; ಭಿಕ್ಷುಕರ ಭಿಕ್ಷುಕನಾಗುತ್ತೀಯೆ!”
ಅವರ ತಂದೆಯವರು ಹಾಗೆ ಹೇಳಿರಬಹುದು. ಅದು ಅವರ ಕುಟುಂಬದ ತತ್ತ್ವಶಾಸ್ತ್ರ. ಆದರೆ ಆ ಮಾತನ್ನು ಸಾರ್ವಜನಿಕ ಭಾಷಣದಲ್ಲಿ ಹೆಮ್ಮೆಯಿಂದ ಪುನರುಚ್ಚರಿಸುವಾಗ, ಶತಮಾನಗಳಿಂದ ಮಠಗಳ ಪ್ರಸಾದನಿಲಯಗಳಲ್ಲಿ ಊಟ ಮಾಡಿ ಬದುಕು ಕಟ್ಟಿಕೊಂಡ ಲಕ್ಷಾಂತರ ಬಡ ವಿದ್ಯಾರ್ಥಿಗಳ ಘನತೆಗೆ ಆಗುವ ಅವಮಾನ ಅವರಿಗೆ ಕಾಣಲಿಲ್ಲವೇ?
ಮಠದ ದಾಸೋಹದಿಂದ ಊಟ ಮಾಡಿದರೆ “ಭಿಕ್ಷುಕ”ನಾಗುವುದಾದರೆ, ಜನರ ತೆರಿಗೆ ಹಣದಿಂದ ನೀಡಿದ ವಿದ್ಯಾರ್ಥಿವೇತನ ಪಡೆದು ಓದಿದಾಗ ಆ ಸ್ವಾಭಿಮಾನ ಏಕೆ ಮೌನವಾಯಿತು?
ವಿದ್ಯಾರ್ಥಿವೇತನದ ಹಣವೂ ಆಕಾಶದಿಂದ ಉದುರಿಬಿದ್ದದ್ದಲ್ಲ; ಅದು ಜನರಿಂದ ಸಂಗ್ರಹಿಸಿದ ತೆರಿಗೆಯ ಹಣವೇ.
ಸರ್ಕಾರ ನೀಡಿದ ಉಚಿತ ನೆರವು ‘ಸ್ಕಾಲರ್ಶಿಪ್’; ಸಮಾಜ ನೀಡಿದ ಉಚಿತ ಅನ್ನ ‘ಭಿಕ್ಕಿಕೂಳು’—ಇದು ಯಾವ ಘನತೆಯ ಅರ್ಥಶಾಸ್ತ್ರ?
ಹತ್ತೊಂಬತ್ತನೆಯ ಶತಮಾನದ ಸ್ವಾಮಿಗಳು ಜೋಳಿಗೆ ಹೊತ್ತು ಮನೆಮನೆಗೆ ನಡೆದು, ಭಿಕ್ಷೆ ಸಂಗ್ರಹಿಸಿ, ತಾವು ಉಣ್ಣುವುದಕ್ಕಿಂತ ಮೊದಲು ಬಡ ವಿದ್ಯಾರ್ಥಿಗಳು ಮತ್ತು ಯಾತ್ರಿಕರಿಗೆ ಪ್ರಸಾದ ಹಂಚುತ್ತಿದ್ದರು. ಮಠದ ಅನ್ನವನ್ನೇ ‘ಭಿಕ್ಕಿಕೂಳು’ ಎಂದು ತಿರಸ್ಕರಿಸುವ ಮನಸ್ಥಿತಿಯವರು ಅಂದಿನ ಆ ಕಠಿಣ ಮಠಜೀವನವನ್ನು ಸ್ವೀಕರಿಸಿ ಸನ್ಯಾಸಿಗಳಾಗುತ್ತಿದ್ದರೇ?
ಹಸಿದ ವಿದ್ಯಾರ್ಥಿಗೆ ಅನ್ನ ನೀಡಿದ ಜೋಳಿಗೆ ಅವಮಾನವಲ್ಲ; ಅನ್ನವನ್ನೂ ಅನ್ನದಾತರನ್ನೂ ಅವಮಾನಿಸುವ ನಾಲಿಗೆಯೇ ತನ್ನ ಸಂಸ್ಕಾರವನ್ನು ಬಹಿರಂಗಪಡಿಸುತ್ತದೆ.
ಡಾ. ಜೆ.ಎಸ್. ಪಾಟೀಲ್ ಅವರ ‘ಹಿಟ್ಟಿನ ಅಯ್ಯ–ಜೋಳದ ಅಯ್ಯ’
ಡಾ. ಜೆ.ಎಸ್. ಪಾಟೀಲ್ ಅವರು ಔಷಧಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದವರು. ಅವರು ಪಡ್ಡೆ ಹುಡುಗರಲ್ಲ; ವಯಸ್ಸು, ವಿದ್ಯೆ ಮತ್ತು ಸಾಮಾಜಿಕ ಅನುಭವದಲ್ಲಿ ಪ್ರಬುದ್ಧರು.
ಆದರೂ ಅವರ ಸಾಮಾಜಿಕ ಜಾಲತಾಣದ ಅನೇಕ ಪ್ರತಿಕ್ರಿಯೆಗಳಲ್ಲಿ ಜಾತಿ ಜಂಗಮರನ್ನು “ಹಿಟ್ಟಿನ ಅಯ್ಯ”, “ಜೋಳದ ಅಯ್ಯ” ಎಂದು ಜರೆಯುವ ಭಾಷೆ ಪದೇಪದೇ ಕಾಣಿಸುತ್ತದೆ.
ಅವರ ಸಾಮಾಜಿಕ–ಆರ್ಥಿಕ ಹಿನ್ನೆಲೆ ಏನೇ ಇರಲಿ, ಮನೆಮನೆಗೆ ಜೋಳಿಗೆ ಹೊತ್ತು ಭಿಕ್ಷೆ ಸಂಗ್ರಹಿಸಿ, ಅದನ್ನು ಬಡವರು ಮತ್ತು ವಿದ್ಯಾರ್ಥಿಗಳ ದಾಸೋಹಕ್ಕೆ ವಿನಿಯೋಗಿಸಿದ ಬದುಕು ಅವರಿಗೆ ಹಾಸ್ಯಾಸ್ಪದವಾಗಿ ಕಾಣುತ್ತಿರುವುದು ದುರದೃಷ್ಟಕರ.
ಆದರೆ ಹಿಟ್ಟು ಮತ್ತು ಜೋಳ ಅವಮಾನದ ಪದಗಳಲ್ಲ. ಅವು ಉತ್ತರ ಕರ್ನಾಟಕದ ಲಕ್ಷಾಂತರ ಬಡವರ ಹೊಟ್ಟೆ ತುಂಬಿಸಿದ ಅನ್ನದ ಸಂಕೇತಗಳು. ಅವುಗಳ ಹಿಂದೆ ಸ್ವಾಮಿಗಳ ಕಾಲ್ನಡಿಗೆ, ತಾಯಂದಿರ ಮುಷ್ಟಿಧಾನ್ಯ ಮತ್ತು ಸಮಾಜದ ಸಾಮೂಹಿಕ ಕರುಣೆ ಅಡಗಿದೆ.
“ಹಿಟ್ಟಿನ ಅಯ್ಯ”, “ಜೋಳದ ಅಯ್ಯ” ಎಂದು ವ್ಯಂಗ್ಯವಾಡುವವರು, ತಾವೇ ಜೋಳಿಗೆ ಹೊತ್ತು ಹತ್ತಾರು ಮನೆಗಳನ್ನು ಸುತ್ತಿ ಭಿಕ್ಷೆ ಸಂಗ್ರಹಿಸಿ, ಅದನ್ನು ಹಸಿದವರಿಗೆ ಹಂಚುವ ಕಠಿಣ ಕಾಯಕವನ್ನು ಮಾಡುತ್ತಿದ್ದರೇ?
ಹಿಟ್ಟನ್ನು ಹೀಯಾಳಿಸುವವರು ಮೊದಲು ಆ ಹಿಟ್ಟಿನಿಂದ ಎಷ್ಟು ಬಡಮಕ್ಕಳ ಬದುಕು ಅರಳಿತು ಎಂಬ ಇತಿಹಾಸವನ್ನು ಓದಲಿ. ಜೋಳಿಗೆಯನ್ನು ಅವಮಾನಿಸುವ ಮೊದಲು, ಅದರ ಭಾರವನ್ನು ಒಮ್ಮೆಯಾದರೂ ಹೆಗಲ ಮೇಲೆ ಹೊತ್ತು ನೋಡಲಿ.
ಡಾ. ವಿಜಯಕುಮಾರ ಕಮ್ಮಾರರ ‘ಐನಾರ’
ತುಮಕೂರಿನ ಹೆಸರಾಂತ ಉದ್ಯಮಿ ಡಾ. ವಿಜಯಕುಮಾರ ಕಮ್ಮಾರ ಅವರ ಮಾತುಗಳಲ್ಲಿ “ಐನಾರ” ಎಂಬ ಹೀಗಳಿಕೆಯ ಸಂಬೋಧನೆ ಪದೇಪದೇ ಕೇಳಿಸುತ್ತದೆ. ಆ ಪದವನ್ನು ಬಳಸದೆ ಹೋದರೆ ಅವರ ಜಂಗಮವಿರೋಧಿ ಟೀಕೆಯೇ ಪೂರ್ಣಗೊಳ್ಳುವುದಿಲ್ಲವೇನೋ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಒಂದು ಸಮುದಾಯದ ಸಂಬೋಧನೆಯನ್ನೇ ವಿರೂಪಗೊಳಿಸಿ ಅವಮಾನಿಸುವುದು ಯಾವ ಬಸವತತ್ತ್ವ?
ಜಂಗಮ ಪರಂಪರೆಯ ದೋಷಗಳನ್ನು ದಾಖಲೆಸಹಿತ ಪ್ರಶ್ನಿಸುವುದು ಬೇರೆ; ಜಂಗಮರನ್ನು ಹುಟ್ಟಿನ ಕಾರಣಕ್ಕೆ ಹೀಗಳೆಯುವುದು ಬೇರೆ. ಮೊದಲನೆಯದು ವೈಚಾರಿಕ ವಿಮರ್ಶೆ; ಎರಡನೆಯದು ನೇರ ಜಾತಿನಿಂದನೆ.
ಜಾತಿಯನ್ನು ವಿರೋಧಿಸುತ್ತೇವೆಂದು ಹೇಳುತ್ತಾ ಮತ್ತೊಂದು ಜಾತಿಯನ್ನು ನಿಂದಿಸುವುದೇ ಸಮಾನತೆಯಾದರೆ, ಅದು ಬಸವತತ್ತ್ವವಲ್ಲ—ದ್ವೇಷಕ್ಕೆ ತತ್ತ್ವದ ಮುಖವಾಡ.
“ಐನಾರ” ಎಂದು ಹೀಯಾಳಿಸುವವರು, ಅಂದಿನ ಮಠಗಳಲ್ಲಿ ಜೋಳಿಗೆ ಹೊತ್ತು, ಬ್ರಹ್ಮಚರ್ಯ ಪಾಲಿಸಿ, ಕಟ್ಟುನಿಟ್ಟಿನ ವಿಧಿ–ವಿಧಾನಗಳ ನಡುವೆ ಬಡವರ ಸೇವೆ ಮಾಡುತ್ತಿದ್ದ ಸನ್ಯಾಸಜೀವನವನ್ನು ಒಪ್ಪಿಕೊಳ್ಳುತ್ತಿದ್ದರೇ?
ಇತರರು ಹೊತ್ತ ಜೋಳಿಗೆಯನ್ನು ಇಂದು ದೂರದಿಂದ ನೋಡಿ ಗೇಲಿ ಮಾಡುವುದು ಸುಲಭ. ಆದರೆ ಅದರೊಳಗೆ ಸಮಾಜ ನೀಡಿದ ಧಾನ್ಯವಷ್ಟೇ ಇರಲಿಲ್ಲ; ಹಸಿದವರ ಬದುಕಿನ ಹೊಣೆಯೂ ಇತ್ತು.
ಪ್ರೊ. ಸಿದ್ದು ಯಾಪಲಪರವಿ ಮತ್ತು ದಿ. ಚಂದ್ರಶೇಖರ ಪಾಟೀಲರ ಹುಟ್ಟು.
ವಚನ ಟಿವಿಯ ಮಾಲೀಕರಾದ ಪ್ರೊ. ಸಿದ್ದು ಯಾಪಲಪರವಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಾತಿ ಜಂಗಮರಾಗಿದ್ದ ದಿವಂಗತ ಸಾಹಿತಿ ಚಂದ್ರಶೇಖರ ಪಾಟೀಲರ ವಿಚಾರಗಳನ್ನು ಮಾತ್ರವಲ್ಲ, ಅವರ ಹುಟ್ಟಿನ ಹಿನ್ನೆಲೆಯನ್ನೇ ವ್ಯಂಗ್ಯಕ್ಕೆ ಎಳೆದು ‘ಗುರುದಕ್ಷಿಣೆ’ ಸಲ್ಲಿಸಿದ್ದಾರೆ.
ವಿಚಾರವನ್ನು ತರ್ಕದಿಂದ ಖಂಡಿಸಲಾಗದಾಗ ವ್ಯಕ್ತಿಯ ಹುಟ್ಟಿಗೆ ಕೈಹಾಕುವುದು ಬೌದ್ಧಿಕ ಸೋಲಿನ ಕೊನೆಯ ಮೆಟ್ಟಿಲು.
ಚಂದ್ರಶೇಖರ ಪಾಟೀಲರ ಸಾಹಿತ್ಯ, ನಿಲುವು ಮತ್ತು ಸಾರ್ವಜನಿಕ ಹೇಳಿಕೆಗಳನ್ನು ವಿಮರ್ಶಿಸುವ ಎಲ್ಲ ಹಕ್ಕು ಪ್ರೊ. ಸಿದ್ದು ಯಾಪಲಪರವಿ ಅವರಿಗೆ ಇದೆ. ಆದರೆ ಅವರು ಜಂಗಮ ಸಮುದಾಯದಲ್ಲಿ ಹುಟ್ಟಿದ್ದನ್ನೇ ವ್ಯಂಗ್ಯದ ವಸ್ತುವಾಗಿಸುವ ಹಕ್ಕು ಯಾರಿಗೂ ಇಲ್ಲ.
ಯಾರೂ ತಮ್ಮ ಹುಟ್ಟನ್ನು ಆಯ್ಕೆ ಮಾಡಿಕೊಂಡು ಬರುವುದಿಲ್ಲ. ಹುಟ್ಟನ್ನೇ ಅವಮಾನಿಸುವವರು ಜಾತಿವಿನಾಶ ಮಾಡುತ್ತಿಲ್ಲ; ಜಾತಿಯ ವಿಷಕ್ಕೆ ಹೊಸ ಪಾತ್ರೆ ಒದಗಿಸುತ್ತಿದ್ದಾರೆ.
ಹುಟ್ಟಿನ ಆಧಾರದ ಮೇಲೆಯೇ ವ್ಯಕ್ತಿಯನ್ನು ಅಳೆಯುವ ಮನಸ್ಥಿತಿಯವರು, ತಮ್ಮದೇ ಮಾನದಂಡದ ಪ್ರಕಾರ ಜಾತಿಯನ್ನು ನಿರಾಕರಿಸಿದ ಬಸವತತ್ತ್ವದ ಪ್ರತಿಪಾದಕರಾಗುವುದು ಹೇಗೆ?
ಇಂತಹ ಮನಸ್ಥಿತಿಯವರು ಅಂದಿನ ಮಠಗಳಲ್ಲಿ ಸನ್ಯಾಸಿಗಳಾಗಿದ್ದರೆ, ಜಾತಿ–ಕುಲ ನೋಡದೆ ಬಾಗಿಲಿಗೆ ಬಂದ ಪ್ರತಿಯೊಬ್ಬ ಹಸಿದವನಿಗೂ ಪ್ರಸಾದ ನೀಡುತ್ತಿದ್ದರೇ?
ಹುಟ್ಟನ್ನು ಹೀಯಾಳಿಸುವ ನಾಲಿಗೆಯಲ್ಲಿ ಸಮಾನತೆಯ ವಚನಗಳು ಮೊಳಗಿದರೂ, ಅವುಗಳಿಗೆ ನೈತಿಕ ಧ್ವನಿ ಇರುವುದಿಲ್ಲ.
ಸಾಣೇಹಳ್ಳಿ ಶ್ರೀಗಳ ‘ಅವಿವೇಕಿ ಜಂಗಮ ಸ್ವಾಮಿಗಳು’
ಲಿಂಗೈಕ್ಯ ಶ್ರೀ ಶರಣಬಸಪ್ಪ ಅಪ್ಪ ಅವರ ಕ್ರಿಯಾಸಮಾಧಿಯ ವಿಧಿ–ವಿಧಾನಗಳನ್ನು ಅವರ ಕುಟುಂಬಸ್ಥರ ಆಮಂತ್ರಣದ ಮೇರೆಗೆ ಜಂಗಮ ಸ್ವಾಮಿಗಳು ನೆರವೇರಿಸಿದ್ದರು.
ಆದರೆ ಅದೇ ಸೂತಕದ ಮನೆಯ ನೆಲದಲ್ಲಿ ನಡೆದ ಸಾರ್ವಜನಿಕ ಭಾಷಣದಲ್ಲಿ ಸಾಣೇಹಳ್ಳಿ ಶ್ರೀಗಳು, ಆ ವಿಧಿ ನೆರವೇರಿಸಿದವರನ್ನು “ಅವಿವೇಕಿ ಜಂಗಮ ಸ್ವಾಮಿಗಳು” ಎಂದು ನಿಂದಿಸಿದರು.
ಕುಟುಂಬದ ಆಹ್ವಾನದ ಮೇರೆಗೆ ಬಂದವರು ಅವರು. ಕುಟುಂಬವೇ ಒಪ್ಪಿಕೊಂಡ ಧಾರ್ಮಿಕ ವಿಧಿಯನ್ನು ನೆರವೇರಿಸಿದವರು ಅವರು. ಅಂತಹವರನ್ನು ಅದೇ ಮನೆಯ ನೆಲದಲ್ಲಿ ಸಾಮೂಹಿಕವಾಗಿ ನಿಂದಿಸುವುದು ಯಾವ ಅನುಭಾವ? ಯಾವ ಬಸವತತ್ತ್ವ? ಯಾವ ಕನಿಷ್ಠ ಸಭ್ಯತೆ?
ವಿಧಿಯ ಬಗ್ಗೆ ತಾತ್ತ್ವಿಕ ಭಿನ್ನಾಭಿಪ್ರಾಯವಿದ್ದರೆ ವಿಧಿಯನ್ನು ಪ್ರಶ್ನಿಸಬಹುದಿತ್ತು. ಸಂಬಂಧಿಸಿದ ಆಗಮ, ಪರಂಪರೆ ಮತ್ತು ಆಚರಣೆಯನ್ನು ದಾಖಲೆಗಳೊಂದಿಗೆ ವಿಮರ್ಶಿಸಬಹುದಿತ್ತು. ಆದರೆ ವಿಧಿ ನೆರವೇರಿಸಿದ ವ್ಯಕ್ತಿಗಳನ್ನೇ ಸಾಮೂಹಿಕವಾಗಿ “ಅವಿವೇಕಿಗಳು” ಎನ್ನುವುದು ವೈಚಾರಿಕತೆ ಅಲ್ಲ—ವೇದಿಕೆಯ ಅಹಂಕಾರ.
ಸಾಣೇಹಳ್ಳಿ ಶ್ರೀಗಳು ಒಂದು ನಿರ್ದಿಷ್ಟ ಸಮುದಾಯದ ಮಠದ ಅಧಿಕಾರಿಗಳಾಗಿರಬಹುದು. ಆದರೆ ಜಾತಿ ಜಂಗಮರು ಕೇವಲ ತಮ್ಮ ಸಮುದಾಯಕ್ಕೆ ಸೀಮಿತರಾಗದೆ, ಆಹ್ವಾನದ ಮೇರೆಗೆ ವಿವಿಧ ಸಮುದಾಯಗಳ ಮನೆಗಳಿಗೆ ತೆರಳಿ ಜನನದಿಂದ ಮರಣದವರೆಗಿನ ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸುತ್ತಾರೆ.
ತಮ್ಮ ಸಮುದಾಯದ ಮಠದ ಅಧಿಕಾರದ ಘನತೆಯನ್ನು ನಿರೀಕ್ಷಿಸುವವರು, ಇನ್ನೊಂದು ಸಮುದಾಯದ ಧಾರ್ಮಿಕ ಸೇವಕರ ಘನತೆಯನ್ನೂ ಗೌರವಿಸಬೇಕಲ್ಲವೇ?
ತಾವು ಮಠಾಧಿಕಾರಿಯಾಗಿರುವುದು ಪವಿತ್ರ ಸೇವೆ; ಜಂಗಮರು ವಿಧಿ ನೆರವೇರಿಸುವುದು ‘ಅವಿವೇಕ’—ಇದು ಯಾವ ನ್ಯಾಯ?
ಒಂದು ಸಮುದಾಯದ ಮಠದ ಪೀಠದ ಮೇಲೆ ಕುಳಿತು, ಎಲ್ಲ ಸಮುದಾಯಗಳ ಮನೆಬಾಗಿಲಿಗೆ ಸೇವೆಗಾಗಿ ಹೋಗುವ ಜಾತಿ ಜಂಗಮರನ್ನು ಸಾಮೂಹಿಕವಾಗಿ ನಿಂದಿಸುವುದು ಸಮಾನತೆಯಲ್ಲ. ಅದು ತಮ್ಮ ಪೀಠಕ್ಕೆ ಗೌರವ ಕೇಳುತ್ತಾ, ಮತ್ತೊಬ್ಬರ ಕಾಯಕಕ್ಕೆ ಅವಮಾನ ನೀಡುವ ದ್ವಂದ್ವನೀತಿ.
ಒಂದೇ ಪ್ರಶ್ನೆ—ಈ ಮನಸ್ಥಿತಿಯವರು ಅಂದಿನ ಸನ್ಯಾಸಿಗಳಾಗುತ್ತಿದ್ದರೇ?
ಮಠದ ಪ್ರಸಾದವನ್ನು ‘ಭಿಕ್ಕಿಕೂಳು’ ಎಂದವರು,
ಜಂಗಮರನ್ನು ‘ಹಿಟ್ಟಿನ ಅಯ್ಯ–ಜೋಳದ ಅಯ್ಯ’ ಎಂದವರು,
‘ಐನಾರ’ ಎಂದು ಹೀಗಳೆದವರು,
ವ್ಯಕ್ತಿಯ ಹುಟ್ಟನ್ನೇ ವ್ಯಂಗ್ಯಕ್ಕೆ ಎಳೆದವರು,
ಧಾರ್ಮಿಕ ವಿಧಿ ನೆರವೇರಿಸಿದವರನ್ನು ‘ಅವಿವೇಕಿ ಜಂಗಮ ಸ್ವಾಮಿಗಳು’ ಎಂದವರು—
ಅಂದಿನ ಗುಡಿಸಲು ಮಠಗಳಲ್ಲಿ ವಾಸಿಸಿ, ಜೋಳಿಗೆ ಹೊತ್ತು, ಮನೆಮನೆಗೆ ನಡೆದು, ಮುಷ್ಟಿಧಾನ್ಯ ಸಂಗ್ರಹಿಸಿ, ಹಸಿದವರಿಗೆ ದಾಸೋಹ ಮಾಡಿ, ಕಟ್ಟುನಿಟ್ಟಿನ ಬ್ರಹ್ಮಚರ್ಯ ಮತ್ತು ಸದಾಚಾರ ಪಾಲಿಸಿ ಸನ್ಯಾಸಿಗಳಾಗುತ್ತಿದ್ದರೇ?
ಉತ್ತರವನ್ನು ಅವರವರ ಆತ್ಮಸಾಕ್ಷಿಯೇ ಹೇಳಬೇಕು.
ಜೋಳಿಗೆ ಹೊರುವ ತ್ಯಾಗವಿಲ್ಲದವರು ಜೋಳಿಗೆಯನ್ನು ಹೀಯಾಳಿಸಬಾರದು.
ದಾಸೋಹದ ಹಸಿವು ಗೊತ್ತಿಲ್ಲದವರು ಪ್ರಸಾದವನ್ನು ‘ಭಿಕ್ಕಿಕೂಳು’ ಎನ್ನಬಾರದು.
ಬೇರೊಬ್ಬರ ಹುಟ್ಟನ್ನು ಆಯ್ಕೆಮಾಡದವರು ಆ ಹುಟ್ಟನ್ನೇ ಅಪರಾಧವಾಗಿಸಬಾರದು.
ತಮ್ಮ ಪೀಠಕ್ಕೆ ಗೌರವ ಬಯಸುವವರು ಮತ್ತೊಬ್ಬರ ಧಾರ್ಮಿಕ ಕಾಯಕವನ್ನೂ ಗೌರವಿಸಬೇಕು.
ಮಠಗಳ ಆಸ್ತಿಯ ಮೇಲೆ ಬೀಳುತ್ತಿರುವ ಕಣ್ಣು
ಈ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಮತ್ತೊಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಹತ್ತೊಂಬತ್ತನೆಯ ಶತಮಾನದ ಮಠಗಳು ಗುಡಿಸಲುಗಳಾಗಿದ್ದವು. ಜೋಳಿಗೆ, ಕಂತಿಭಿಕ್ಷೆ, ವಿದ್ಯಾರ್ಥಿಗಳ ಅನ್ನದಾಸೋಹ ಮತ್ತು ಪರವೂರಿನ ಯಾತ್ರಿಕರ ಸೇವೆಯೇ ಅವುಗಳ ಸಂಪತ್ತು.
ಆದರೆ ಇಂದಿನ ಕೆಲವು ಮಠಗಳು ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಕಟ್ಟಡಗಳು, ಲಕ್ಷಾಂತರ ರೂಪಾಯಿ ಬಾಡಿಗೆ ಮತ್ತು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿವೆ.
ಮನುಷ್ಯರ ಸಹಜ ಆಸೆ–ಆಕಾಂಕ್ಷೆಗಳನ್ನು ವ್ಯವಹಾರಿಕ ತಕ್ಕಡಿಯಲ್ಲಿ ಹಾಕಿ ನೋಡಿದರೆ, ಜಾಗತಿಕ ಲಿಂಗಾಯತ ಮಹಾಸಭೆಯ ಕೆಲವು ಸದಸ್ಯರ ದೃಷ್ಟಿ ಈಗ ಮಠಗಳ ತತ್ತ್ವಕ್ಕಿಂತ ಅವುಗಳ ಆಸ್ತಿಯ ಮೇಲೆಯೇ ಹೆಚ್ಚು ನೆಟ್ಟಿದೆಯೇ ಎಂಬ ಅನುಮಾನ ಮೂಡುವುದು ಸಹಜ.
ಮಠಗಳು ಇನ್ನೂ ಹಾಳು ಗುಡಿಸಲುಗಳಾಗಿಯೇ ಉಳಿದಿದ್ದರೆ, ಜಂಗಮವಿರೋಧದ ಈ ಮಹಾಸಂಶೋಧನೆ ಇಷ್ಟು ಉತ್ಸಾಹದಿಂದ ನಡೆಯುತ್ತಿತ್ತೇ?
ಜೋಳಿಗೆ ಮಾತ್ರ ಕಾಣುತ್ತಿದ್ದಾಗ ಯಾರಿಗೂ ಮಠ ಬೇಕಿರಲಿಲ್ಲ.
ಆಸ್ತಿ ಕಾಣಿಸಿದ ನಂತರ ಎಲ್ಲರಿಗೂ ಮಠದ ಮೇಲೆ ಹಕ್ಕಿನ ನೆನಪಾಯಿತು!
ಮಠಗಳ ಆಡಳಿತದಲ್ಲಿ ಪಾರದರ್ಶಕತೆ ಬೇಕು. ಸಾಮಾಜಿಕ ಪ್ರಾತಿನಿಧ್ಯವೂ ಬೇಕು. ದುರುಪಯೋಗವಿದ್ದರೆ ಪ್ರಶ್ನಿಸಲೇಬೇಕು. ಆದರೆ ಸುಧಾರಣೆಯ ಹೆಸರಿನಲ್ಲಿ ಜಂಗಮ ಸಮುದಾಯವನ್ನು ನಿಂದಿಸಿ, ಇತಿಹಾಸವನ್ನು ವಿರೂಪಗೊಳಿಸಿ, ದಾಸೋಹವನ್ನೇ ‘ಭಿಕ್ಕಿಕೂಳು’ ಎಂದು ಅವಮಾನಿಸಿ ಮಠಗಳ ಮೇಲೆ ಹಕ್ಕು ಸ್ಥಾಪಿಸುವ ಪ್ರಯತ್ನವನ್ನು ಒಪ್ಪಲಾಗುವುದಿಲ್ಲ.
ಕೊನೆಯದಾಗಿ ಶ್ರೀ ವಿನಯ್ ಅವರಿಗೆ
ತಾವು ಕೇಳಿದ ಪ್ರಶ್ನೆಗೆ ದಾಖಲೆಗಳನ್ನು ಮುಂದಿಟ್ಟಿದ್ದೇನೆ.
೧೯೦೪ರ ಮೂಲ ನಿರ್ಣಯದಲ್ಲಿ—
ಅಲ್ಲಿ ಅಂದಿನ ಗುರುಸ್ಥಲ–ಮಠಾಧಿಕಾರಿಗಳ ಧಾರ್ಮಿಕ ಕರ್ತವ್ಯ ಮತ್ತು ಉತ್ತರದಾಯಿತ್ವದ ನಿರೂಪಣೆಯಿದೆ. ಶಿವಯೋಗಮಂದಿರದ ಆರಂಭಿಕ ಉದ್ದೇಶೋಪಾಯದಲ್ಲಿ ಗುರುಸ್ಥಲದ ಮಠಸ್ಥರ ಉಲ್ಲೇಖವಿದ್ದರೂ, ಸ್ವತಃ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೇ ಜಂಗಮೇತರರಾದ ನವಲಗುಂದದ ಶ್ರೀ ಬಸವಲಿಂಗ ಸ್ವಾಮಿಗಳನ್ನು ಪ್ರಥಮ ವಿದ್ಯಾರ್ಥಿಯನ್ನಾಗಿ ಸ್ವೀಕರಿಸಿ, ನಿಯಮಕ್ಕಿಂತ ತಮ್ಮ ದೃಷ್ಟಿ ವಿಶಾಲವಾಗಿತ್ತು ಎಂಬುದನ್ನು ಆಚರಣೆಯಲ್ಲಿ ತೋರಿಸಿದ್ದಾರೆ.
ಇದೀಗ ತಾವು ಕೊಟ್ಟ ಮಾತಿನಂತೆ, ಮೂಲ ದಾಖಲೆಗಿಂತ ಮುಂದೆ ಹೋಗಿ ಬರೆದ ತಮ್ಮ ಲೇಖನದ ಭಾಗವನ್ನು ಅಳಿಸುತ್ತೀರಾ?
ಅಥವಾ ಇನ್ನೊಂದು ಅರ್ಥವ್ಯತ್ಯಾಸದ ಲೇಖನ ಬರೆದು, ಅನುಯಾಯಿಗಳ ಚಪ್ಪಾಳೆ ಮತ್ತು ಅಸಭ್ಯ ಪ್ರತಿಕ್ರಿಯೆಗಳ ನಡುವೆ ಮೂಲ ಪ್ರಶ್ನೆಯನ್ನೇ ಮರೆಮಾಚುತ್ತೀರಾ?
ಹಿರೇಮಲ್ಲೂರು ಈಶ್ವರನ್ ಅವರ ಒಂದು ಅಭಿಪ್ರಾಯವೇ ಇತಿಹಾಸದ ಅಂತಿಮ ತೀರ್ಪಲ್ಲ.
ಡಾ. ಎಂ.ಎಂ. ಕಲಬುರ್ಗಿ ಅವರ ಪ್ರತಿಯೊಂದು ಪ್ರತಿಪಾದನೆಯೂ ಪ್ರಶ್ನಾತೀತ ಸಂವಿಧಾನವಲ್ಲ.
ಡಾ. ಎಸ್.ಎಂ. ಜಾಮದಾರ್ ಅವರ ‘ಭಿಕ್ಕಿಕೂಳು’ ದಾಸೋಹದ ವ್ಯಾಖ್ಯಾನವಲ್ಲ.
ಡಾ. ಜೆ.ಎಸ್. ಪಾಟೀಲರ ‘ಹಿಟ್ಟಿನ ಅಯ್ಯ–ಜೋಳದ ಅಯ್ಯ’ ಬಸವತತ್ತ್ವವಲ್ಲ.
ಡಾ. ವಿಜಯಕುಮಾರ ಕಮ್ಮಾರರ ‘ಐನಾರ’ ಸಮಾನತೆಯ ಭಾಷೆಯಲ್ಲ.
ಪ್ರೊ. ಸಿದ್ದು ಯಾಪಲಪರವಿ ಅವರು ದಿ. ಚಂದ್ರಶೇಖರ ಪಾಟೀಲರ ಹುಟ್ಟನ್ನು ವ್ಯಂಗ್ಯಗೊಳಿಸುವುದು ವೈಚಾರಿಕತೆಯಲ್ಲ.
ಸಾಣೇಹಳ್ಳಿ ಶ್ರೀಗಳು ಜಂಗಮ ಸ್ವಾಮಿಗಳನ್ನು ‘ಅವಿವೇಕಿಗಳು’ ಎನ್ನುವುದು ಅನುಭಾವವಲ್ಲ.
ಒಂದು ಸಮುದಾಯದ ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಆ ಸಮುದಾಯದ ಹುಟ್ಟು, ಕಾಯಕ, ಜೋಳಿಗೆ ಮತ್ತು ಅನ್ನದಾಸೋಹವನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ.
ಜಾತಿಯನ್ನು ವಿರೋಧಿಸಿ; ಜಾತಿಯವರನ್ನು ದ್ವೇಷಿಸಬೇಡಿ.
ಮಠಗಳನ್ನು ಪ್ರಶ್ನಿಸಿ; ದಾಸೋಹವನ್ನು ಅವಮಾನಿಸಬೇಡಿ.
ಇತಿಹಾಸವನ್ನು ಶೋಧಿಸಿ; ಆಯ್ದ ಸಾಲುಗಳಿಂದ ಶಿಕ್ಷೆ ವಿಧಿಸಬೇಡಿ.
ತಾವು ಹೇಳಿದಂತೆ—
“ಇದೊಂದೇ ಪ್ರಶ್ನೆ. ಇದಕ್ಕೆ ಉತ್ತರ ಬಂದರೆ ಈ ಚರ್ಚೆಯ ಅರ್ಧಭಾಗ ಮುಗಿಯುತ್ತದೆ.”
ಇಗೋ, ದಾಖಲೆಸಹಿತ ಉತ್ತರ ನೀಡಿದ್ದೇನೆ.
ಉಳಿದ ಅರ್ಧಭಾಗಕ್ಕೂ ನಾನು ಸಿದ್ಧನಿದ್ದೇನೆ.
— ಶ್ರೀಕಂಠ ಚೌಕೀಮಠ


























Total views : 28258