ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ –ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ
ನಮಸ್ಕಾರಗಳು.
ಸುಕುಮಾರ ಅಂತರ್ಜಾಲದ ಬ್ಲಾಗ್ ನ ವಾರ್ಷಿಕೋತ್ಸವ ಸಂಭ್ರಮದ ತಿಂಗಳು ಅಕ್ಷಯ ತೃತೀಯ ಬಸವಜಯಂತಿ.
ಸುಕುಮಾರದ ಬ್ಲಾಗ್ ನ ರಚನೆಯ ಹಿನ್ನಲೆ ಒಂದು ಅವಿಸ್ಮರಣೀಯ ಅನುಭವ!.
ದಿನಾಂಕ ೮ ಎಪ್ರಿಲ್ ೨೦೨೧ ರಂದು ಪರಮ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಸದ್ಯದ ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ ಅವರ ಜೊತೆ ದೂರವಾಣಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಹುಟ್ಟಿದ ಒಂದು ಚಿಂತನೆ “ಸುಕುಮಾರ “ ದ ಬ್ಲಾಗ್ ಗೆ ನಾಂದಿ ಹಾಡಿತು.
ಪೂಜ್ಯರು ತಡಮಾಡದೆ, ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ. ಅವರಿಂದ ಅನುಮತಿ ಆಶೀರ್ವಾದಗಳನ್ನು ಕೊಡಿಸಿಯೇ ಬಿಟ್ಟರು .
ಪೂಜ್ಯರ ಬೆಂಬಲ ಮತ್ತು ಆಶೀರ್ವಾದಗಳು ನನ್ನಲ್ಲಿ ಹೊಸ ಹುರುಪು ಚೈತನ್ಯ ವನ್ನು ತುಂಬಿದವು ಐತಿಹಾಸಿಕ ಸುಕುಮಾರಕ್ಕೆ ಓರ್ವ ವಿದ್ವಾಂಸರನ್ನು ಸಂಪಾದಕ ಸ್ಥಾನಕ್ಕೆ ಗೊತ್ತುಮಾಡಿದೆವು.ಆದರೆ ಅವರು ಒಪ್ಪಿಕೊಳ್ಳಲಿಲ್ಲ ಪೂಜ್ಯರು ಸಂಪಾದಕತ್ವದ ಹೊಣೆಯನ್ನು ನನಗೊಪ್ಪಿಸಿದರು
ಕೇವಲ ಒಂದು ತಿಂಗಳಲ್ಲಿ ಬ್ಲಾಗ್ ನ ವಿನ್ಯಾಸ ,ಲೇಖನಗಳ ಸಂಗ್ರಹಗಳು ಸಿದ್ಧಗೊಂಡವು. ಹಲವು ತೊಂದರೆಗಳು ಆಕಸ್ಮಿಕವಾಗಿ ಬಂದರೂ ,ಬ್ಲಾಗನ ವಿನ್ಯಾಸಕಾರ ತಂಡದ ಸದಸ್ಯರು ಕೊರೊನಾ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದರೂ. ಬಸವ ಜಯಂತಿ -ಸುಕುಮಾರ ಲೋಕಾರ್ಪಣೆಯ ಎರಡುದಿನದ ಮೊದಲು ನನ್ನ ಹಿರಿಯ ಸಹೋದರ ಲಿಂಗೈಕ್ಯರಾದರೂ,ಸುಕುಮಾರ ೨೦೨೧ ರ ಬಸವಜಯಂತಿಯ ಪವಿತ್ರ ದಿನದಂದು ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಲೋಕಾರ್ಪಣೆ ಗೊಂಡಿತು.
ಆರಂಭದಲ್ಲಿ ಕೇವಲ ೮೫ ಓದುಗರಿಂದ ಅಂಬೆಗಾಲನ್ನಿಕ್ಕಿದ ಸುಕುಮಾರ ಬ್ಲಾಗ್ ಹನ್ನೊಂದು ತಿಂಗಳಲ್ಲಿ 90 ಅಪರೂಪದ ಲೇಖನಗಳು,14 ಪದ್ಯಗಳು , 4 ಅಡಿಯೋ ಬುಕ್ ,11 ಧಾರವಾಹಿಗಳು, ಮತ್ತು11 ಸಂಗೀತ ಮುದ್ರಿಕೆ ವಿಡಿಯೊಗಳನ್ನು ಪ್ರಕಟಿಸಿ ದೇಶ ವಿದೇಶಗಳಿಂದ ಎಳು ಸಾವಿರಕ್ಕೂಹೆಚ್ಚು ಓದುಗರನ್ನು ಪಡೆದುಕೊಂಡಿದೆ.
ಈ ಯಶಸ್ಸಿನ ಹಿಂದೆ ನನ್ನನ್ನು ತಿದ್ದಿದ ,ಲೇಖನಗಳ ಯುನಿಕೋಡ ಪರಿವರ್ತನೆಯಲ್ಲಿ ಆಗುವ ತಪ್ಪುಗಳನ್ನು ಪರಿಷ್ಕರಿಸಿದ
ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ
ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ
ಪೂಜ್ಯರುಗಳನ್ನು ಈ ಸಂದರ್ಭದಲ್ಲಿ ಹೃದಯಪೂರ್ವಕ ನೆನೆದು ಕೊಳ್ಳುತ್ತೇನೆ.
ಸುಕುಮಾರ ಬ್ಲಾಗ್ನ ಪ್ರಕಟಣೆಗಳಿಗೆ ಲೇಖನಗಳನ್ನಕೊಟ್ಟು ಪ್ರೋತ್ಸಾಹಿಸಿದ
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ.
ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ.
ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ
ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ
ಪೂಜ್ಯ ಪ್ರಭು ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ
ಪೂಜ್ಯ ಮ.ನಿ.ಪ್ರ.ಶಿವಬಸವ ಸ್ವಾಮಿಗಳು ವಿರಕ್ತಮಠ, ಅಕ್ಕಿಆಲೂರು
ಪೂಜ್ಯ ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
ಪೂಜ್ಯ ಸದಾಶಿವ ದೇವರು ವಳಬಳ್ಳಾರಿ.
ಪೂಜ್ಯರ ಪಾದಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವೆ
ಸುಕುಮಾರದ ಶ್ರೇಯೋಭಿವೃದ್ದಿಗೆ ಬೆಂಬಲ ಮತ್ತು ಆಶೀರ್ವಾದಗಳನ್ನು ದಯಪಾಲಿಸಿದ
ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು. ಶ್ರೀ ಜಗದ್ಗುರು ಮೂರುಸಾವಿರಮಠ ಹುಬ್ಬಳ್ಳಿ
ಪೂಜ್ಯ ಮ.ನಿ.ಪ್ರ. ಶ್ರೀ ಸದಾಶಿವ ಸ್ವಾಮಿಗಳು ಹುಕ್ಕೇರಿಮಠ ಹಾವೇರಿ ಉಪಾಧ್ಯಕ್ಷರು ಶ್ರೀ ಶಿವಯೋಗಮಂದಿರ
ಪೂಜ್ಯರ ಪಾದಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವೆ
ಹಾಗೂ ಲೇಖನಗಳನ್ನು ಬರೆದು ಕಳುಹಿಸಿಕೊಟ್ಟ ಎಲ್ಲ ಲೇಖಕರನ್ನು ತುಂಬು ಹೃದಯದ ಕೃತಜ್ಞತೆಗಳೊಂದಿಗೆ ಸ್ಮರಿಸಿಕೊಳ್ಳತ್ತೇನೆ
ಸಹೃದಯರ ಕೈಸೇರುತ್ತಿರುವ ಹೊಸಹುಟ್ಟು ಪಡೆದ ಈ “ ಸುಕುಮಾರ ” ಪತ್ರಿಕೆಗೆ ಉಜ್ವಲ ಇತಿಹಾಸವಿದೆ. ಆ ಇತಿಹಾಸದ ಒಂದು ನೋಟವನ್ನು ಹೀಗೆ ಅವಲೋಕಿಸಬಹುದು :
ಲಿಂಗೈಕ್ಯ ಶ್ರೀ ಕುಮಾರಸ್ವಾಮಿಗಳವರಿಂದ ಸ್ಥಾಪನೆಗೊಂಡ ಶ್ರೀ ಶಿವಯೋಗಮಂದಿರ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಸಾಧಕರ ಶಿಕ್ಷಣಕ್ಕೆ ನೆರವಾಗಲೆಂಬ ಸದುದ್ದೇಶದಿಂದ ಆಗ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ನವಲಗುಂದದ ಪೂಜ್ಯ
ಶ್ರೀ ಬಸವಲಿಂಗ ಸ್ವಾಮಿಗಳವರು “ ಶ್ರೀ ರೇವಣಸಿದ್ದೇಶ್ವರ ವಾಚನಾಲಯ ‘ವನ್ನು ಮಂದಿರದ ಗ್ರಂಥಾಲಯದಲ್ಲಿ ಆರಂಭಿಸಿದರು. ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಲಭ್ಯವಿದ್ದ ಅಮೂಲ್ಯ ಪುಸ್ತಕ ಮತ್ತು ಉನ್ನತ ಮಟ್ಟದ ಪತ್ರಿಕೆಗಳ ಓದಿನಲ್ಲಿ ಸಾಧಕರು ತಮ್ಮನ್ನು ತಾವು ತೊಡಗಿಸಿಕೊಂಡರು. ಇದಲ್ಲದೆ ನಾಡಿನ ಹಿರಿಯ ಸಾಹಿತಿಗಳ ಮತ್ತು ವಿದ್ವಾಂಸರ ಪಾಂಡಿತ್ಯಪೂರ್ಣ, ವೈಚಾರಿಕ ಉಪನ್ಯಾಸ ಕೇಳುವ ಅವಕಾಶವೂ ಸಾಧಕರಿಗೆ ಆಗಾಗ ದೊರೆಯುತ್ತಿತ್ತು. ತತ್ಫಲವಾಗಿ ತಾವೂ ಏನನ್ನಾದರೂ ಬರೆಯಬೇಕೆಂಬ ಉತ್ಸುಕತೆ ಸಾಧಕರಲ್ಲಿ ಉಂಟಾಗುವುದು ಸಹಜ. ಅದನ್ನು ಗುರುತಿಸಿದ ಪೂಜ್ಯ ಶ್ರೀಗಳು, ಆ ಉತ್ಸಾಹ ಕಾರ್ಯರೂಪಕ್ಕಿಳಿಯಲೆಂದು ಹಾರೈಸಿ, ಆಹೊತ್ತಿಗಾಗಲೇ ಸ್ಥಾಪನೆಗೊಂಡಿದ್ದ “ ಶಿವಯೋಗಿ ಸಂಘ ‘ದ ಹಿರಿಯ ಸದಸ್ಯರ ಬೆನ್ನು ತಟ್ಟಿದರು. ಅರ್ಥಪೂರ್ಣ ಹೆಸರು ಹೊತ್ತ ʼ ಸುಕುಮಾರ ‘ ಪತ್ರಿಕೆಯನ್ನು ಅವರು ಹೊರತಂದೇ ಬಿಟ್ಟರು(ಕ್ರಿ.ಶ. ೧೯೩೩), ಪತ್ರಿಕೆಯ ಉತ್ತಮಿಕೆಗಾಗಿ, ಅದರ ಶ್ರೇಯೋಭಿವೃದ್ಧಿಗಾಗಿ ಶಿವಯೋಗಿ ಸಂಘದ ಸದಸ್ಯರು ಒಮ್ಮನದಿಂದ ದುಡಿದರು.
ಆಗ “ ಸುಕುಮಾರ ‘ ಪತ್ರಿಕೆ ಇದ್ದುದು ಕೈಬರಹದಲ್ಲಿ, ಅದನ್ನು ತಮ್ಮ ಮುತ್ತಿನಂತಹ ಅಕ್ಷರಗಳಿಂದ ಬರೆಯುತ್ತಿದ್ದವರು ಶ್ರೀ ಚಂದ್ರಶೇಖರ ದೇವರು ಅಡೂರ (ಮುಂದೆ ಜ. ಚ. ನಿ.), ಅದರ ಮುಖಪುಟವನ್ನು ತಮ್ಮ ಭಾವದುಂಬಿದ ಚಿತ್ರಗಳಿಂದ
ವಿನ್ಯಾಸಗೊಳಿಸುತ್ತಿದ್ದವರು, ಅಂದಿನ ಹಿರಿಯ ಸಾಧಕರೂ ಹುಟ್ಟು ಕಲಾವಿದರೂ ಆಗಿದ್ದ ಶ್ರೀ ರೇವಣಸಿದ್ಧ ದೇವರು (ಮುಂದೆ ಹಾನಗಲ್ ಸದಾಶಿವ ಸ್ವಾಮಿಗಳು), ಪತ್ರಿಕೆಯ ಸಂಪಾದಕರು ಶ್ರೀ ಬಸವಲಿಂಗದೇವರು ಗುತ್ತಲ (ಮುಂದೆ ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ). ಹೀಗೆ ಅತ್ಯಂತ ಹುರುಪಿನಿಂದ ಆರಂಭಗೊಂಡ ಪತ್ರಿಕೆ ತದನಂತರದ ವರ್ಷಗಳಲ್ಲಿ ಏಳು-ಬೀಳುಗಳನ್ನು ಕಂಡರೂ ನಿಲ್ಲದೆ ಕೈಬರಹ ರೂಪದಲ್ಲಿಯೇ ಮುಂದುವರಿದುಕೊಂಡು ಬಂದಿತು.
ಹುಬ್ಬಳ್ಳಿಯ ಮೂರುಸಾವಿರ ಮಠದ ಅಂದಿನ ಪೂಜ್ಯ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳವರ ಉದಾರ ಕೃಪೆ ಮತ್ತು ಅಂದು ಸಂಸ್ಥೆಯ ಅಧ್ಯಕ್ಷರಾಗಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳವರ ಪ್ರೋತ್ಸಾಹದಿಂದ “ ಸುಕುಮಾರ ‘ ಪತ್ರಿಕೆ ಶ್ರೀ ಶಿವಯೋಗ ಮಂದಿರದ ಸದಾಶಿವ ಮುದ್ರಣಾಲಯ ‘ದಲ್ಲಿಯೇ ಅಚ್ಚಾಗಿ ಹೊರಬರಲಾರಂಭಿಸಿತು (೨೦-೧೦-೧೯೫೦ ವಿಜಯದಶಮಿ). ಆಗ ಅದರ ಸಂಪಾದಕರಾಗಿದ್ದವರು ಶ್ರೀ ಜಿ. ಎಂ. ಉಮಾಪತಿ ಶಾಸ್ತ್ರಿಗಳು. ಅದನ್ನು ಉದ್ಘಾಟಿಸಿದವರು ಪೂಜ್ಯ ಹಾನಗಲ್ ಸದಾಶಿವ ಮಹಾಸ್ವಾಮಿಗಳವರು. ಅವರು ಪತ್ರಿಕೆ ಬಿಡುಗಡೆಯ ಭಾಷಣದಲ್ಲಿ “ ವಿನಾಶದತ್ತ ನಡೆದಿರುವ ಸಮಾಜದ ಸುಧಾರಣೆಗಾಗಿ ಕರುಣಾಳು ಪರಮ ಪೂಜ್ಯ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರು ಈ ಮಂದಿರವನ್ನು ಕಟ್ಟಿದರು. ಶರಣರ ವ್ಯಾಪಕ ತತ್ವಗಳ ಪ್ರಚಾರದ ಮೂಲಕ ವಿಶ್ವಧರ್ಮ ಪ್ರಸಾರದ ಸದುದ್ದೇಶದಿಂದ ಪತ್ರಿಕೆಯೊಂದನ್ನು ಪ್ರಕಟಿಸಲು ಈ ಅಚ್ಚುಕೂಟವನ್ನು ಏರ್ಪಡಿಸಿದ್ದರು. ಇಂದು ಆ
ಆಚ್ಚಿನಮನೆಯಿಂದಲೇ ಅವರ ಸತ್ಸಂಕಲ್ಪವು ಅಂಕುರಿತವಾಗಿದೆ. ಅದು ಚಿಗುರಿ ಫಲಿಸಿ ಆ ಫಲದ ಸುಸ್ವಾದವನ್ನು ಸಮಾಜದ ಜನರೆಲ್ಲ ಉಣ್ಣುವಂತಾಗಲಿ ” ಎಂದು ಅಪ್ಪಣೆ ಕೊಡಿಸುವುದರ ಜೊತೆಗೆ ಈ ಸುಪ್ತ ಸಮಾಜವನ್ನು ಎಚ್ಚರಿಸಿ, ಸನ್ಮಾರ್ಗದಲ್ಲಿ
ಪ್ರವೃತ್ತಿಯನ್ನುಂಟುಮಾಡುವಂತಹ ಲೇಖನಗಳು ಪತ್ರಿಕೆಗಳಿಗೆ ಭೂಷಣಪ್ರಾಯವಾದವು. ಪತ್ರಿಕೆಯ ಉದ್ಯಮವು ಅರ್ಥಾಗಮದ ಸಾಧನವಾಗಬಾರದು. ಹಾಳು ಹರಟೆಯ ನೋಟೀಸುಗಳಿಂದ ಅಶೋಭನೀಯವಾಗಬಾರದು. ಸಮಾಜದ ಪ್ರಗತಿಯ ಸಾಮಯಿಕ ಸಮಸ್ಯೆಗಳನ್ನು ಕುರಿತು ವಿವೇಚಿಸಿದ ಪ್ರೌಢಲೇಖನಗಳು ಬೇಕು. ಮಾನವನ ನೈತಿಕಮಟ್ಟವನ್ನು
ಉನ್ನತಗೊಳಿಸುವ ನೈತಿಕ ನಿಬಂಧ ಮತ್ತು ಪ್ರಬಂಧಗಳು ಪ್ರಕಟವಾಗಬೇಕು…. ಸಮಾಜಸೇವೆಯೊಂದಿಗೆ ಕನ್ನಡ ನುಡಿ ಮತ್ತು ಸಾಹಿತ್ಯ ಸೇವೆಗಾಗಿ ಪ್ರಕಟವಾದ ಚೆನ್ನಿಗ ʼ ಸುಕುಮಾರ ‘ನು ಕನ್ನಡಿಗರ ಹೃದಯವನ್ನು ಬೆಳಗಿ ಕನ್ನಡ ಮಾತೆಗೆ ಉನ್ನತ ಕೀರ್ತಿಯನ್ನು ತರಲಿ” ಎಂದು ಹಾರೈಸಿದರು.
ಪೂಜ್ಯರ ಈ ಮಾತುಗಳಲ್ಲಿ ಲಿಂ. ಶ್ರೀ ಕುಮಾರ ಸ್ವಾಮಿಗಳವರ ಸತ್ಸಂಕಲ್ಪ ಅವರ ಸದುದ್ದೇಶ, ಸಮಾಜ ಸುಧಾರಣೆಯ ಬಗ್ಗೆ ಅವರಿಗಿದ್ದ ಕಾಳಜಿ, ಕಳಕಳಿಗಳನ್ನು ಗುರುತಿಸಬಹುದಾಗಿದೆ. ಅವರ ಮಾತುಗಳಲ್ಲಿರುವ ಇನ್ನೊಂದು ಮಹತ್ವದ ಅಂಶವೆಂದರೆ
ಪತ್ರಿಕೆಯಲ್ಲಿ ಎಂತಹ ಲೇಖನಗಳಿರಬೇಕು, ಎಂತಹ ಲೇಖನಗಳಿರಬಾರದು, ಅದರ ಧೈಯೋದ್ದೇಶಗಳೆಂಥವಿರಬೇಕು ಎಂಬುದರ ವಿವೇಚನೆ. ಇವು ಅಂದಿನ ಸಂಪಾದಕರನ್ನು ಕುರಿತು ಹೇಳಿರುವ ಮಾತುಗಳಾದರೂ ಇಂದಿನ ಸಂಪಾದಕರಿಗೂ ಅನ್ವಯಿಸುತ್ತವೆ.
ಹೀಗೆ ಕ್ರಿ. ಶ. ೧೯೫೦ ರಿಂದ ಪ್ರೊ. ಜಿ. ಎಂ. ಉಮಾಪತಿ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಮುದ್ರಣರೂಪದಲ್ಲಿ ಪ್ರಕಟವಾಗುತ್ತ ಬಂದ ‘ ಸುಕುಮಾರ ‘ ಪತ್ರಿಕೆ ಹಲವಾರು ವರ್ಷ ಸರಾಗವಾಗಿ ನಡೆದುಕೊಂಡು ಬಂದು, ಮುಂದೆ ನಿಂತು ಹೋಯಿತು.
ಶಿವಯೋಗ ಮಂದಿರ, ಒಂದು ವಿಶಿಷ್ಟ ಧಾರ್ಮಿಕ ಸಂಸ್ಥೆ. ಇಲ್ಲಿ ತರಬೇತಿ ಹೊಂದಿದ ಸಾವಿರಾರು ಸಾಧಕರು ನಾಡಿನ ತುಂಬ ಹರಡಿರುವ ಮಠಗಳ ಮಠಾಧಿಪತಿಗಳಾಗಿ ಧರ್ಮ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಮಠಾಧಿಪತಿಗಳ ಟಂಕಸಾಲೆಯಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಹಾಗೂ ಧ್ಯೇಯೋದ್ದೇಶಗಳನ್ನು ಪ್ರಚುರಪಡಿಸುವಲ್ಲಿ ಸಂಸ್ಥೆಯ ಮುಖಪತ್ರಿಕೆಯ ಅವಶ್ಯಕತೆಯನ್ನರಿತು ಇತ್ತೀಚೆಗೆ ದಿನಾಂಕ ೭-೫-೨೦೦೨ ರಂದು ಸಭೆ
ಸೇರಿದ ಶಿವಯೋಗಮಂದಿರ ಸಂಸ್ಥೆಯ ಗೌರವಾನ್ವಿತ ಸದಸ್ಯರು ನಿಂತು ಹೋಗಿರುವ ʼ ಸುಕುಮಾರ ” ಪತ್ರಿಕೆಯನ್ನು ಪುನಃ ಪ್ರಕಟಿಸಬೇಕೆಂದು ಸರ್ವಾನುಮತದಿಂದ ನಿರ್ಣಯಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರಮಠದ
ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಉಪಾಧ್ಯಕ್ಷರಾದ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು ಡಾ.ಬಿ.ವಿ.ಮಲ್ಲಾಪೂರ,ಡಾ.ಬಿ.ಆರ್.ಹಿರೇಮಠ ಮತ್ತು ಪ್ರೋ. ಬಿ.ವಿ.ಗುಂಜೆಟ್ಟಿ ಯವರಿಗೆ ವಹಿಸಿಕೊಟ್ಟರು. ಅವರೆಲ್ಲ ಅತ್ಯಂತ ಪ್ರಾಮಾಣಿಕವಾಗಿ ಕೆಲಸಮಾಡಿದರು ನಂತರ ಕೆಲವು ಕಾರಣಾಂತರಗಳಿಂದ ಸುಕುಮಾರ ಸ್ಥಗಿತಗೊಂಡಿತು. ಕಳೆದ ವರ್ಷ ಸುಕುಮಾರ ಮತ್ತೆ ಚಿಗರೊಡೆಯಿತು.
ಇಂಥ ಗುರುತರ ಕಾರ್ಯವನ್ನು ಆಗುಮಾಡುವುದಕ್ಕೆ ಕುಮಾರೇಶನ ಕೃಪಬೇಕು. ಹಾಗೆಯೇ ವಿದ್ವಾಂಸರ, ಸಂಶೋಧಕರ, ಸಾಹಿತಿಗಳ ಸಮಯೋಚಿತ ಸಹಾಯ- ಸಹಕಾರಗಳೂ ಬೇಕು. ಮೌಲಿಕ, ವೈಚಾರಿಕ ಹಾಗೂ ಸಂಶೋಧನಾತ್ಮಕ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಕಾರಣ ಅಂಥ ಲೇಖನಗಳನ್ನು ನಾವು ನಿರೀಕ್ಷಿಸುತ್ತೇವೆ. ಹೊಸಹುಟ್ಟು, ಹೊಸರೂಪ ಪಡೆದು ಹೊರಬರುತ್ತಿರುವ ‘ ಸುಕುಮಾರ ʼಪತ್ರಿಕೆಯನ್ನು ಸಹೃದಯರು ತುಂಬು ಹೃದಯದಿಂದ ಸ್ವಾಗತಿಸುವರೆಂದು ಭಾವಿಸಿದ್ದೇನೆ.
ಮೇ ತಿಂಗಳ ಸುಕುಮಾರ ಸಂಚಿಕೆಯ ಲೇಖನಗಳ ವಿವರ.
- ಗುರು ಬಸವೇಶ- ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು
- ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-12
ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ
- ಶ್ರೀ ಹಾನಗಲ್ಲ ಕುಮಾರ ಶಿವಯೋಗಿ – ಪ್ರೋ. ಎಸ್, ಡಿ, ಇಂಚಲ.
- ಕನ್ನಡಕ್ಕೆ ಬಸವಣ್ಣನವರ ಕಾಣಿಕೆ -ಡಾ. ಜಿ. ಎಸ್. ಶಿವರುದ್ರಪ್ಪ
- ಅಕ್ಕಮಹಾದೇವಿ – ಡಾ. ಜಿ.ಎಸ್. ಶಿವರುದ್ರಪ್ಪ
- ಅಲ್ಲಮನ ಅನುಭಾವ ಮತ್ತು ಅಭಿವ್ಯಕ್ತಿ ;ಡಾ. ಸಿ.ವಿ.ಪ್ರಭುಸ್ವಾಮಿಮಠ
- ಬಸವ ಮತ್ತು ತುಕಾರಾಂ-ಡಾ.ಸರಜೂ ಕಾಟಕರ.
ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ –ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ