ಶ್ರೀಗುರುಕಂದ ವಿರಚಿತ ಶ್ರೀ ರುದ್ರಮುನಿ ಶಿವಯೋಗಿ ಚರಿತೆ  ಪುಸ್ತಕದ ಒಂದು ಸನ್ನಿವೇಶ

ಶ್ರೀಕಂಠ.ಚೌಕೀಮಠ

ಶ್ರೀ ರುದ್ರಮುನಿ ಶಿವಯೋಗಿ ಚರಿತೆ

ಸಂಪಾದಕರು:ಶ್ರೀಗುರುಕಂದ

ಪ್ರಕಾಶಕರು:ಶ್ರೀ.ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು .ಶಿವಯೋಗಾಶ್ರಮ,ಕಾಳೇನಹಳ್ಳಿ ಶಿಕಾರಿಪುರ ಶಿವಮೊಗ್ಗ.

ಈ ಗ್ರಂಥವನ್ನು ಪೂಜ್ಯ ಶ್ರೀ ಗುರುಕಂದ ( ಶ್ರೀ ಸ್ವಾಮಿ ಶಿವಾತ್ಮಾನಂದ ಪುರಿ) ಯವರು ದಿ.೮ ಅಕ್ಟೋಬರ್‌೨೦೨೩ ರಂದು ಆಶೀರ್ವದಿಸಿದರು. ಮಾರ್ಗದುದ್ದಕ್ಕೂ ಪುಸ್ತಕವನ್ನು ಕಣ್ಣಾಡಿಸುತ್ತಿದ್ದ ನನಗೆ ಒಂದು ವಿಶೇಷ ವಿಷಯವೊಂದು ಗೋಚರವಾಯಿತು.

ನಾನು ಹಲವುಬಾರಿ ಹಲವು ಪುಸ್ತಕಗಳನ್ನು ಓದುವಾಗ ಓದಿದ್ದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು ಎಂಬ ವಾಕ್ಯ ಬಹಳಬಾರಿ ಕೂತೂಹಲಕ್ಕೆಡೆಮಾಡಿತ್ತು.

ಆದರೆ ಈ ಪುಸ್ತಕ ಓದುವಾಗ ಒಂದು ಸನ್ನಿವೇಷವಂತೂ ಮಂತ್ರಮುಗ್ಧವನ್ನಾಗಿಸಿತು !.

ಶ್ರೀಗುರುಕಂದ ಅವರ  ಪುಸ್ತಕದ  ಕೆಲವು ಸಾಲುಗಳನ್ನೇ ಮತ್ತೆ ಮತ್ತೆ ಬರೆಯುತ್ತಿರುವೆ.

“ರುದ್ರಯ್ಯನ ಮುಖದಲ್ಲಿ ಶೋಭೆಗೊಂಡಿದ್ದ  ಶಿವಕಳೆಯನ್ನು ಶ್ರೀಕುಮಾರಸ್ವಾಮಿಗಳು ಸೂಕ್ಷ್ಮವಾಗಿ  ಗಮನಿಸಿದರು.ತನ್ನ ಮನದಿಂಗಿತವನ್ನು ನುಡಿಯಲಾಗದೆ ನಿಂತಿದ್ದ ರುದ್ರಯ್ಯನ ಬಯಕೆಯನ್ನು ಕೆಳದಿ ಶ್ರೀ ರೇವಣಸಿದ್ದ ಪಟ್ಟಾಧ್ಯಕ್ಷರು ನುಡಿದಿದ್ದರು.”ರುದ್ರಯ್ಯನ ಪ್ರೌಡಶಿಕ್ಷಣಕ್ಕೆ ಶಿವಯೋಗ ಮಂದಿರದಲ್ಲಿ ಅವಕಾಶ ಕಲ್ಪಿಸಿ ಬುದ್ಧಿ”

ಶ್ರೀಕುಮಾರಸ್ವಾಮಿಗಳು, ಕೆಳದಿ ಶ್ರೀಗಳವರ ಪ್ರಸ್ಥಾಪಕ್ಕೆ ಸಮ್ಮತಿಸಿದ್ದರು.ತಮ್ಮೊಡನೆ ರುದ್ರಯ್ಯ ಬರಲು ಅನುವಿತ್ತಿದ್ದರು.

ಆದರೆ ಶಿವಯೋಗಮಂದಿರದ ಆಡಳಿತ ವ್ಯವಸ್ಥೆಯ ವಿಶ್ವಸ್ಥ ಮಂಡಳಿ ವಯಸ್ಸಿನಲ್ಲಿ ಆಗಲೇ ಹಿರಿಯರಾಗಿದ್ದ ರುದ್ರಯ್ಯನಿಗೆ ಮಂದಿರದ ವಟುಗಳೊಂದಿಗೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ.”ಸ್ವಾಮಿಗಳು ತಮ್ಮ ಜೊತೆ ಯಾವುದೋ “ಕರೆಮರಿ” ಕರಕೊಂಡು ಬಂದು ಸೇರಿಸೋಕೆ ನೋಡ್ತಾರೆ” ಎಂದು ಒಬ್ಬ ಸದಸ್ಯರು ಲಘುವಾಗಿ ಮಾತನಾಡಿದ್ದರು. ರುದ್ರಯ್ಯ ಕಪ್ಪಾಗಿದ್ದರಿಂದ “ಕರೆ ಮರಿ” ಎಂದು ಕರೆದಿದ್ದರು ! .

ಮಂದಿರದ ನಿಯಮಗಳಲ್ಲಿ ವಯೋಮಾನ ಮೀರಿದ್ದ ರುದ್ರಯ್ಯನಿಗೆ ಪ್ರವೇಶ  ನಿರಾಕರಿಸಲ್ಪಟ್ಟಿದ್ದನ್ನು ತಮ್ಮ ಅಧಿಕಾರದಲ್ಲಿ ಶ್ರೀಕುಮಾರಸ್ವಾಮಿಗಳು ನಿಯಮ ಸಡಿಲಿಸಿ ಪ್ರವೇಶಕ್ಕೆ ಅನುವು ನೀಡಬಹುದಾಗಿತ್ತು;

ಆದರೆ ಅವರು ಹಾಗೆ ವರ್ತಿಸಲಿಲ್ಲ.

ಒಬ್ಬ ಯೋಗ್ಯ  ಸಾಧಕನಿಗೆ ಮಂದಿರದ ಶಿಕ್ಷಣ ಲಭ್ಯವಾಗಬೇಕೆಂದು ರುದ್ರಯ್ಯನನ್ನು ತಮ್ಮ ಸೇವಾ ಕಾರ್ಯಗಳಿಗೆ ಮರಿದೇವರಾಗಿ ಇರಿಸಿಕೊಂಡರು. ಶ್ರೀಕುಮಾರಸ್ವಾಮಿಗಳ ಮೊದಲ ದರ್ಶನದಲ್ಲೇ ತನ್ನ ನಿಜ ಗುರುವನ್ನು ದರ್ಶಿಸಿದ್ದ ಧನ್ಯತೆಯಲ್ಲಿ ಶ್ರೀ ಗುರು ಚರಣಕ್ಕೆ ಅಂತರಂಗದಲ್ಲೇ ಸರ್ವಾರ್ಪಣೆ ಮಾಡಿಕೊಂಡಿದ್ದ ರುದ್ರಯ್ಯ ಕೊನೆಗೂ ತನ್ನ ಶ್ರೀ ಗುರುವಿನ ಕೃಪಾಕಂದನಾಗಿ ಅವರ ಆಪ್ತವಲಯದೊಳಗೆ ಸೇರಿದ್ದ……

ಶ್ರೀಕುಮಾರಸ್ವಾಮಿಗಳು ಮಂದಿರದ ವಿದ್ಯಾರ್ಥಿಗಳೊಂದಿಗೆ ರುದ್ರಮುನಿದೇವರನ್ನೂ  ಪರೀಕ್ಷೆಗೆ  ವಿದ್ಯಾರ್ಥಿಯಂದು ನೊಂದಾಯಿಸಿದ್ದರು.ಒಬ್ಬ ಕಾರಕೂನರ ಜೊತೆ ಪರೀಕ್ಷೆ ಕಟ್ಟಿದ್ದ ವಿದ್ಯಾರ್ಥಿಗಳು ರೈಲಿನಲ್ಲಿ ಮುಂಬಯಿಗೆ ಹೋಗಿ ಪರೀಕ್ಷೆ ಬರೆದು ಬಂದಿದ್ದರು.ಫಲಿತಾಂಶ ಬಂದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು.ರುದ್ರಮುನಿದೇವರು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಿದ್ದರು.ಆಗ ಶ್ರೀ ಕುಮಾರಸ್ವಾಮಿಗಳು “ಕರೆ ಮರಿ”  ಎಂದು ರುದ್ರಮುನಿ ದೇವರನ್ನು ಕರೆಯುತ್ತಿದ್ದವರಿಗೆ ಅರಿವಾಗುವಂತೆ “ಇವನು ಕರೆ ಮರಿಯಲ್ಲ ,ಖರೆ ಮರಿ” ಎಂದು ನುಡಿದಿದ್ದರು.

…….. ಶ್ರೀಕುಮಾರಸ್ವಾಮಿಗಳು ತಮ್ಮ ಖರೆ ಮರಿ ರುದ್ರಮುನಿ ದೇವರನ್ನುತಾವು ಸ್ಥಾಪಿಸಿದ್ದ ಕಾಳೇನಹಳ್ಳಿಯ   ಶಿವಯೋಗಾಶ್ರಮಕ್ಕೆ ಕಳುಹಿಸಲು ತಿರ್ಮಾನ ಮಾಡಿದರು……

……ವರುಷಕ್ಕೆರಡು ಮೂರು ಸಲ ಮಲೆನಾಡ ಪ್ರವಾಸಕ್ಕೆ ಬರುತ್ತಿದ್ದ ಶ್ರೀಕುಮಾರಸ್ವಾಮಿಗಳು ತಮ್ಮ ಮಾತನ್ನು ಪಾಲಿಸುತ್ತ ಸಾಧನೆಯಲ್ಲಿರುವ ಶ್ರೀರುದ್ರಮುನಿದೇಶಿಕರನ್ನುಕಂಡು ಆನಂದಗೊಳ್ಳುತ್ತಿದ್ದರು.೪೦೦ ಎಕರೆ ಜಮೀನಿನ ಕೃಷಿಗಾಗಿ ಆಗಿನ್ನೂ ಅಪರೂಪವಾಗಿದ್ದ ಟ್ರಾಕ್ಟರ ತರಿಸಿ ಶ್ರೀಕುಮಾರಸ್ವಾಮಿಗಳು ವ್ಯವಸ್ಥೆ ಮಾಡಿದರು.ಹೀಗೆ ಭೇಟಿಯಿತ್ತು ತಂಗುವ ತಮ್ಮ ನಿಜಗುರುವಿನಲ್ಲಿ ಶ್ರೀರುದ್ರಮುನಿ ದೇಶಿಕರು ಮುಂದಿನ ದೀಕ್ಷೆಗೆ ಪ್ರಾರ್ಥಿಸುತ್ತಿದ್ದರು.”ಇನ್ನೂ ಸಮಯ ಬಂದಿಲ್ಲ ತಾಳಿಕೋ” ಎಂದು ಶ್ರೀಕುಮಾರಸ್ವಾಮಿಗಳು ಒಂದೇ ಒಂದು ಮಾತನ್ನು ಪ್ರತಿಸಲವೂ ಹೇಳುತ್ತಿದ್ದರು.

ಶ್ರೀರುದ್ರಮುನಿ ದೇಶಿಕರು ಶಿವಯೋಗಾಶ್ರಮಕ್ಕೆ ಬಂದು ನಿಂತು ಹತ್ತು ವರುಷ ಉರಳಿದ್ದವು.ಅವರು ಪ್ರಾರ್ಥಿಸುತ್ತಿದ್ದ ಶಿವಯೋಗಮಾರ್ಗದ ಮುಂದಿನ ದೀಕ್ಷೆ ಇನ್ನೂ ಪ್ರಾಪ್ತವಾಗಿರಲಿಲ್ಲ.ಹೀಗಿರುವಾಗಲೇ ಶ್ರೀರುದ್ರಮುನಿ ದೇಶಿಕರ ಸಾಧನೆ ಸುಳಿಯೊಳಗೆ ಸಿಲುಕಿದಂಥ ಆಘಾತದ ಸುದ್ದಿ ಅವರನ್ನು ದಿಕ್ಕೆಡಿಸುವಂತೆ ಮಾಡಿತ್ತು.ತಮ್ಮ ನಿಜಗುರು,ತಮ್ಮ ಭವಕ್ಕಂಟಿದ್ದ ಬಂಧನವನ್ನು ತೊಡೆದುಕೊಳ್ಳಲು ಶಿವಯೋಗ ಮಾರ್ಗದಲ್ಲಿ ತಮ್ಮನ್ನು ತೊಡಗಿಸಿದ್ದ,ತಾವು ಸರ್ವಸ್ವವೆಂದು ನಂಬಿದ್ದ ಶ್ರೀಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದರು.

ತಮ್ಮ ಶ್ರೀಗುರುವಿನ ಅಗಲಿಕೆಯ ದುಃಖ ಶಮನಗೊಳ್ಳಲು ಶ್ರೀರುದ್ರಮುನಿ ದೇಶಿಕರಿಗೆ ಬಹಳಷ್ಟು ದಿನ ಹಿಡಿದವು.ಪೂಜೆಗೆ ಕುಳಿತಾಗ ತಮ್ಮ ನಿತ್ಯದ  ಕಾಯಕದಲ್ಲಿ ಮುಳುಗಿದಾಗ ಶ್ರೀಕುಮಾರೇಶನ ಮೂರ್ತಿ ಕಂಗಳೆದರು ಸುಳಿದು ನಿಲ್ಲುತ್ತಿತ್ತು,ಕಿವಿಯಲ್ಲಿ ಅವರ ನುಡಿಗಳು ಅನುರಣಿಸುತ್ತಿದ್ದವು. “ಹುಟ್ಟುಗುರುಡನಿಗೆ ಕೋಲ ಕೊಟ್ಟು ಕೈ ಬಿಟ್ಟಂತೆ,ಮುಟ್ಟಿ ಅಭಯವಿತ್ತು ಕೈ ಬಿಟ್ಟಿಯಾ ಕುಮಾರೇಶಾ…ನಿಮ್ಮಡಿಯ ಮರೆಸದಂತೆ ಮುನ್ನೆಡಸು ಕುಮಾರೇಶ..” ಎಂದು ಮೊರೆಯಿಡುತ್ತಿದ್ದರು.ಆಗ ಕನಸಿನಲ್ಲಿ ದರ್ಶನವಿತ್ತ ಶ್ರೀಕುಮಾರಸ್ವಾಮಿಗಳು “ಸಾಧಕ ಹೀಗೆ ದುಃಖಿಯಾಗಬಾರದು” ಎಂದಿದ್ದರು.ತಾವು ಸೂಕ್ಷ್ಮ ಕಾಯದಲ್ಲಿರುವ ಸುಳಿವು ನೀಡಿದ್ದರು.

ಮುಂದೆ ಕೆಲವು ದಿನ ಕಳೆಯುವದರಲ್ಲಿ ಶ್ರೀ ಶಿವಬಸವಸ್ವಾಮಿಗಳು ಶಿವಯೋಗಅಶ್ರಮಕ್ಕೆ ಆಗಮಿಸಿದರು.ಶ್ರೀಕುಮಾರ ಸ್ವಾಮಿಗಳ ಜೊತೆಗೂಡಿ ಬರುತ್ತಿದ್ದವರು ಈಗ ಒಬ್ಬರೇ ಬಂದಿರುವದನ್ನು ಕಂಡು ಶ್ರೀ ರುದ್ರಮುನಿ ದೇಶಿಕರಲ್ಲಿ ಮತ್ತೆ ತಮ್ಮ ಶ್ರೀಗುರುವಿನ ಅಗಲಿಕೆ ಪುಟಿದಿದ್ದರೂ ದುಃಖವನ್ನು ಹತ್ತಿಕ್ಕಿಕೊಂಡಿದ್ದರು.ತಮ್ಮ ಕೊನೆ ಕ್ಷಣಗಳಲ್ಲಿ ಶ್ರೀಕುಮಾರಸ್ವಾಮಿಗಳು ಶಿವಯೋಗಮಂದಿರವನ್ನು ,ಸಾಧಕ-ವಟುಗಳನ್ನು ತಮ್ಮ ಮಡಿಲಿಗೆ ಹಾಕಿರುವ ನುಡಿಯನ್ನು ನುಡಿದಿದ್ದು ಶ್ರೀರುದ್ರಮುನಿ ದೇಶಿಕರನ್ನುಕಂಡಾಗ ಶ್ರೀಶಿವಬಸವಸ್ವಾಮಿಗಳಿಗೆ ನೆನಪಾಗಿತ್ತು.ಪೂಜಾದಿಗಳನ್ನು ಮುಗಿಸಿ ಶ್ರೀಶಿವಬಸವ ಸ್ವಾಮಿಗಳು ಒಂದೆರಡು ದಿನ ತಂಗುವದಾಗಿ ತಿಳಿಸಿದರು.ಶ್ರೀರುದ್ರಮುನಿ ದೇಶಿಕರು ದುಗುಡಗೋಳ್ಳದಿರಲು ಹಿತೋಕ್ತಿಗಳನ್ನು ಹೇಳಿದರು.ದೇಶಿಕರು ಮೌನವಾಗಿ ಆಲಿಸಿದರು.

ಶಿವಯೋಗಾಶ್ರಮದಲ್ಲಿ ತಂಗಿದ್ದ ಶ್ರೀಶಿವಬಸವಸ್ವಾಮಿಗಳು ಅಂದು ಬಿಲ್ವ ವೃಕ್ಷದ ಕಟ್ಟೆಯಮೇಲೆ ಆಸೀನರಾಗಿದ್ದರು.

ದೃಷ್ಠಿಕಂಗೆಳೆದುರಿನ ಕುಮುದ್ವತಿಯಲ್ಲಿ ನೆಟ್ಟಿತ್ತು.ತೀಡುವ ಗಾಳಿಯ ಸುಯಿಲು ಕೂಡ ನಿಂತು ನಿಶ್ಚಲವಾಗಿತ್ತು.ತಮ್ಮ ಬೆನ್ನಿನ ಮೇಲೆ  ಯಾರೋ ನಿಧಾನವಾಗಿ ಅಕ್ಷರಗಲನ್ನು ಬರೆಯುತ್ತಿರುವ ಭಾಸವಾಯಿತು.

ಶ್ರೀಶಿವಬಸವ ಸ್ವಾಮಿಗಳು ಧ್ಯಾನಸ್ಥರಾಗಿ ತಮ್ಮ ಬೆನ್ನಿನ ಬರಹವನ್ನು ಗುರುತಿಸಲಾರಂಭಿಸಿದರು.”ರುದ್ರಮುನಿ ದೇಶಿಕರಿಗೆನಿರಂಜನ ಸ್ಥಲ ದೀಕ್ಷೆ ದಯಪಾಲಿಸುವದು” ಸಂದೇಶ ಪೂರ್ಣಗೊಂಡಾಗ ಇದು ಶ್ರೀಕುಮಾರಸ್ವಾಮಿಗಳ ಸೂಚನೆ ಎಂದು ಶ್ರೀಶಿವಬಸವ ಸ್ವಾಮಿಗಳಿಗೆ ಅರಿವಾಗಿತ್ತು. ಶ್ರೀ ರುದ್ರಮುನಿ ದೇಶಿಕರು ಈಗ ನಿಮ್ಮ ಬೆನ್ನು ಬಿದ್ದಿದ್ದಾರೆ ಎನ್ನುವದನ್ನು ಹೀಗೆ  ಶ್ರೀಕುಮಾರಸ್ವಾಮಿಗಳು ತಮಗೆ ತಿಳಿಸಿದ್ದು ಶ್ರೀ ಶಿವಬಸವ ಸ್ವಾಮಿಗಳಿಗೆ ಆಶ್ಚರ್ಯವಾಗಿತ್ತು.

ಈ ವಿಷಯವನ್ನು ಶ್ರೀ ರುದ್ರಮುನಿ ದೇಶಿಕರಿಗೆ ತಿಳಿಸಿದರು. ತಮ್ಮ ಅಂತರಂಗದ ಪ್ರಾರ್ಥನೆ ಫಲಿಸುವಂತೆ ತಮ್ಮನ್ನು ಉದ್ದರಿಸಲು ಶ್ರೀಕುಮಾರ ಸ್ವಾಮಿಗಳು ತೋರಿರುವ ಲೀಲೆ ಶ್ರೀರುದ್ರಮುನಿ ದೇಶಿಕರಿಗೆ “”ಸೂಕ್ಷ್ಮ ಕಾಯದಲ್ಲಿದ್ದೇವೆ”” ಎಂದು ನೀಡಿದ್ದ ಸುಳಿವಿಗೆ ಸಾಕ್ಷಿಯಂತೆ ಕಂಡಿತ್ತು…

ಗ್ರಂಥದ ಲೇಖಕರಾದ ಶ್ರೀಗುರುಕಂದ ಅವರ  ಕಣ್ಣಿಗೆ ಕಟ್ಟುವ ಈ ಸನ್ನಿವೇಷದ ವರ್ಣನೆ ಸರಳ ಭಾಷೆಯಲ್ಲಿ ಬಳಸಿದ ಒಂದು ಅವಿರಳ ಶಬ್ಧ  “ಸೂಕ್ಷ್ಮ ಕಾಯದಲ್ಲಿದ್ದೇವೆ” ಪುಸ್ತಕದ ಪುಟ-ಪುಟಗಳಲ್ಲಿ ಮತ್ತು ಶ್ರೀ ರುದ್ರಮುನಿ ಶಿವಯೋಗಿಗಳ ಲೀಲೆಗಳಲ್ಲಿ ಪ್ರತಿಧ್ವನಿಸಿತು. ಹಾಗೆಯೇ ಶ್ರೀಶಿವಬಸವ ಸ್ವಾಮಿಗಳಿಗಳ ಬೆನ್ನ ಮೇಲೆ ಮೂಡಿದ ಸಂದೇಶ ನನ್ನ ಕೂತೂಹಲದ ವಾಕ್ಯ “ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಮತ್ತು ಪರಮಪೂಜ್ಯ ಹಾವೇರಿಯ ಶ್ರೀಶಿವಬಸವ ಮಹಾಸ್ವಾಮಿಗಳು ದೇಹವೆರಡು ,ಆತ್ಮವೊಂದು “ ಎಂಬ ವಾಕ್ಯಕ್ಕೆ ಖಚಿತ ಸಾಕ್ಷಿ ನೀಡಿತು .

  • ಶ್ರೀಕಂಠ.ಚೌಕೀಮಠ

೧೦-೧೦-೨೦೨೩

Related Posts