“ ಯೋಗ”

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

            ನಮ್ಮಭಾರತೀಯ ಅಧ್ಯಾತ್ಮಿಕ ಸಂಸ್ಕೃತಿಯಲ್ಲಿ ಪ್ರಾಚೀನಕಾಲದಿಂದಲೂ ಯೋಗಕ್ಕೆ ಮಹತ್ವ ಪೂರ್ಣ ವಾದಂತಹ ಸ್ಥಾನವನ್ನು ಕಲ್ಪಿಸಲಾಗಿದೆ. ಧರ್ಮದ ಆತ್ಯಂತಿಕ ಗುರಿಯಾದ ಮೋಕ್ಷ ಸಾಧನೆ, ಲಿಂಗಾಂಗ ಸಾಮರಸ್ಯ ಅಥವಾ ಶಿವಸಾಯುಜ್ಯ ಹೊಂದುವದೇ ಯೋಗದ ಮುಖ್ಯಗುರಿ. ಈ ಸಂದೇಶವನ್ನು ಪ್ರಾಚೀನಕಾಲದಿಂದಲೂ ಅನೇಕ ಋಷಿ ಮಹರ್ಷಿಗಳು ವಚನಗಳಲ್ಲಿ, ವೇದಗಳಲ್ಲಿ, ಉಪನಿಷತ್ತುಗಳಲ್ಲಿ,ಭಗವದ್ಗೀತೆಯಲ್ಲಿ ಹೀಗೆ ಹಲವಾರು ಧಾರ್ಮಿಕ ಗ್ರಂಥಗಳಲ್ಲಿ ಯೋಗದ ಮೂಲ ಗುರಿಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. (ಆಗಮ ಕರ್ತೃ ವಾದಂತಹ ಪರಶಿವನೇ ನಮ್ಮ ಪ್ರಾಚೀನ ಋಷಿಮುನಿಗಳಿಗೆ ಯೋಗದ ಉಪದೇಶವನ್ನು ಮಾಡುತ್ತಾ ಬಂದಿದ್ದಾನೆ ಎಂಬುದು ನಮ್ಮ ಪುರಾತನರ ನಂಬಿಕೆ).

                         ಯೋಗಕ್ಕೆ ಅನಂತ ಪರಿಭಾಷೆಗಳಿವೆ. ಎಲ್ಲ ಧರ್ಮಗಳು, ಎಲ್ಲ ದರ್ಶನಗಳು, ಎಲ್ಲ ಮತಗಳು ತಮ್ಮದೇ ಆದಂತಹ ವಿಶಿಷ್ಟ ಕ್ರಿಯೆಗಳನ್ನು ಒಳಗೊಂಡಿವೆ, ಆದರೆ ಗುರಿ ಮಾತ್ರ ಒಂದೇ. ಜೀವನು ಶಿವ ನಾಗುವ, ಜೀನನು ಜೈನ ನಾಗುವ, ಬದ್ಧನು ಬುದ್ಧನಾಗುವ ಶ್ರೇಷ್ಠ ಮಾರ್ಗವನ್ನು ಈ ಯೋಗಮಾರ್ಗವು ಬೋಧಿಸುತ್ತದೆ. ಒಂದೇ ಮಾರ್ಗವನ್ನು ನಮ್ಮ ಪ್ರಾಚೀನ ಸಂತರು ಭಿನ್ನ ಭಿನ್ನವಾಗಿ ಚಿತ್ರಿಸಿದ್ದಾರೆ. ಸ್ವಾಮಿ ವಿವೇಕಾನಂದರು ರಾಜಯೋಗವನ್ನು, ಅರವಿಂದರ ಪೂರ್ಣಯೋಗವನ್ನು, ಮಹಾವೀರರು ಅಹಿಂಸಾ ಮಾರ್ಗ ವನ್ನು, ಬುದ್ಧರ ತ್ಯಾಗ ಮಾರ್ಗವನ್ನು, ಮಹಾದೇವಿ ಅಕ್ಕನವರು ವೈರಾಗ್ಯವನ್ನು, ಬಸವಣ್ಣನವರ ಭಕ್ತಿ ಮಾರ್ಗ ಹೀಗೆ ಅನೇಕ ಮಹಾತ್ಮರು ಲೋಕೋದ್ಧಾರಕ್ಕಾಗಿ ಆತ್ಮ ಉನ್ನತಿಗಾಗಿ ಅನೇಕ ಮಾರ್ಗಗಳನ್ನು ತೋರಿದ್ದಾರೆ.

ಯೋಗವು ವ್ಯಕ್ತಿಯಲ್ಲಿರುವ ಮೂಲಭೂತ ವಾದಂತಹ ಸ್ವಭಾವಗಳನ್ನು ನಿಯಂತ್ರಿಸಿ  ಆ ನಿಯಂತ್ರಣದ ಮೂಲಕ ವ್ಯಕ್ತಿಯನ್ನು ಪರಿಪೂರ್ಣದೆಡೆಗೆ, ಔನತ್ಯದ ಕಡೆಗೆ ಕೊಂಡೊಯ್ಯುವ ವಿಶಿಷ್ಟ ಮಾರ್ಗವಾಗಿದೆ.

ಈ ಮಾರ್ಗವನ್ನು ಅನುಷ್ಠಾನ ಮಾಡಿ, ಅನುಸಂಧಾನ ಮಾಡಿ ಅನುಭವಿಸ ಬೇಕಲ್ಲದೆ ಬುದ್ಧಿಯಿಂದ ವಿವರಿಸಲಾಗುವುದಿಲ್ಲ. ಒಂದು ಹಣ್ಣನ್ನು ಅಥವಾ ಸಿಹಿಯಾದ ಪದಾರ್ಥವನ್ನು ತಿಂದು ಅದರ ಸಂಪೂರ್ಣ ರುಚಿ, ಸ್ವಾದ ಅನುಭವಿಸಬೇಕಲ್ಲದೆ ಅದು ಹೇಗಿದೆ,ಅದರ ರುಚಿ ಹೇಗಿದೆ ಎಂದು ಪ್ರಶ್ನಿಸುವುದರಿಂದ ಅದರ ಸಂಪೂರ್ಣ ಅರಿವು ನಮಗೆ ಉಂಟಾಗುವುದಿಲ್ಲ. ಅರಿತವನು ಜ್ಞಾನಿಯಾಗುತ್ತಾನೆ, ಸಾಧಿಸಿದವನು ಸಿದ್ಧನಾಗುತ್ತಾನೆ, ಅನುಭವಿಸಿದವರು ಯೋಗಿಯಾಗುತ್ತಾನೆ. ಇಂತಹ ಸಿದ್ದರು ಸಂತರು ಮಹಾತ್ಮರು ಯೋಗಿಗಳು ಲೋಕದೊಳಗೆ ಇದ್ದು ಅಲೌಕಿಕವಾದ ಜೀವನವನ್ನು ಸಾಗಿಸುತ್ತಾರೆ

   ಈ ಯೋಗಮಾರ್ಗದಲ್ಲಿ ಮುಂದುವರೆಯುವವನಿಗೆ ವಿವೇಕ ವೈರಾಗ್ಯಗಳೆರಡು ಅತ್ಯವಶ್ಯಕ.  ಸಾಧಕರು ಆತ್ಮಸಂಯಮ ದೊಂದಿಗೆ ಶಾಸ್ತ್ರಗ್ರಂಥಗಳ ಅಧ್ಯಯನವನ್ನು ಮಾಡುತ್ತಾ ವಿವೇಕ ವೈರಾಗ್ಯಗಳನ್ನು ಗಳಿಸಿಕೊಳ್ಳುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಈ ಸಾಧನೆ ಸಾಧ್ಯ ಎಂಬುದು ಗಮನೀಯ ವಾದಂತಹ ಸಂಗತಿ ಅದಕ್ಕೆ ಗೀತೆಯಲ್ಲಿ ಒಂದು ಉದಾಹರಣೆಯನ್ನು ಭಗವಂತನು ತಿಳಿಸಿದ್ದಾನೆ. 

“ಮನುಷ್ಯಾಣಾಂ ಸಹಸ್ರೇಷು ಕಸ್ತಿದ್ ಯತತಿ ಸಿದ್ಧಯೇ

ಯತತಾನಾಮಪಿ ಸಿದ್ದಾನಾಂ ಕಶ್ಚಿನ ಮಾಂ ವೇತ್ತಿ ತತ್ವ ತಹ”

                              ಸಾವಿರ ಜನರಲ್ಲಿ ಒಬ್ಬನು ಮಾತ್ರ ಈ ಸಾಧನೆಗಾಗಿ ಪ್ರಯತ್ನಿಸುತ್ತಾನೆ. ಇದಕ್ಕಿಂತ ಶ್ರೇಷ್ಠವಾದ ಸಾಧನೆ ಮತ್ತೊಂದಿಲ್ಲ. ಇದಕ್ಕಾಗಿ ಪ್ರಯತ್ನಿಸಿದಂತಹ  ಸಾವಿರಾರು ಜನರಲ್ಲಿ ಒಬ್ಬನು ಮಾತ್ರ ಈ ದುರ್ಲಭವಾದ ದಿವ್ಯ ಮಾರ್ಗವನ್ನು ಅನುಸರಿಸುತ್ತಾನೆ. ಈ ಅಪೇಕ್ಷೆ ಬೆಳೆದಂತೆಲ್ಲ ಭೌತಿಕ ವಸ್ತು ವಿಷಯಗಳಲ್ಲಿ ಮನಸ್ಸು ಉದಾಸೀನಭಾವವನ್ನು ತಾಳುತ್ತದೆ, ಉದಾತ್ತಿಕರಣಗೊಳ್ಳುತ್ತದೆ.

        “ಆತ್ಮ ವಿದ್ಯಾ ತಪೋ ಮೂಲಮ್”  ಎಂಬುವುದನ್ನು

ಅರಿತಂತಹ ಶ್ರೀ ಕುಮಾರ ಮಹಾಶಿವಯೋಗಿಗಳು ತಮ್ಮ ಗುರುಗಳಾದಂತಹ ಶ್ರೀ ಬಸವಲಿಂಗ ಮಹಾ ಶಿವಯೋಗಿಗಳವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲೋಕ ಲೌಕಿಕಗಳೆರಡರ ಜ್ಞಾನವನ್ನು ಪಡೆಯುತ್ತಾ ಲೋಕ ಸಂಚಾರ ಗೈಯುತ್ತಾ ಶಂಭುಲಿಂಗನ ಬೆಟ್ಟದಲ್ಲಿ ತಪವನ್ನಾಚರಿಸಿ ತಮ್ಮ ಗುರುಗಳ ಮಾನಸ ಪುತ್ರರಾಗಿ ಹೊರಹೊಮ್ಮಿದರು. ಬಸವಲಿಂಗ ಮಹಾಶಿವಯೋಗಿಗಳು ತಮ್ಮ ದಿವ್ಯ ಶಕ್ತಿಯನ್ನೆಲ್ಲ ಶಿಷ್ಯನಿಗೆ ಧಾರೆಯೆರೆದರು. ಒಬ್ಬ ಸಮರ್ಥವಾದ ಗುರು ನಿಸ್ವಾರ್ಥತೆಯಿಂದ ತನ್ನೆಲ್ಲಾ ಶಕ್ತಿಯನ್ನು ಶಕ್ತಿಪಾತ ದೀಕ್ಷೆಯ ಮುಖಾಂತರ ತನ್ನ ಶಿಷ್ಯನಿಗೆ ಧಾರೆ ಎರೆಯುವುದನ್ನು ನಾವು ಭಾರತೀಯ ಪುರಾತನ ಪರಂಪರೆಯಲ್ಲಿ ಕಾಣುತ್ತೇವೆ ಇಂತಹ ದಿವ್ಯಶಕ್ತಿಯನ್ನು ಹೊಂದಿ, ಲೋಕ ಕಲ್ಯಾಣದಲ್ಲಿಯೇ ಆತ್ಮ ಕಲ್ಯಾಣವನ್ನು ಸಾಧಿಸುವ ದಿವ್ಯತೆಯನ್ನು ಹೊಂದಿ ಒಬ್ಬ ಶ್ರೇಷ್ಠ ಯೋಗಿಗಳಾಗಿ ಸಂತರಾಗಿ ಮಹಾತ್ಮರಾಗಿ ಹೊರಹೊಮ್ಮಿದರು. ಆದ್ದರಿಂದ ಈ ಯೋಗಮಾರ್ಗವು ನಿರಂತರವಾಗಿ ಮುನ್ನಡೆಯಲಿ ಎಂದು ಯೋಗದ ಮಹತ್ವವನ್ನು ನಮಗೆ ಅರುಹುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ  ಈ ಯೋಗಮಾರ್ಗವು ಸಾಮಾನ್ಯರನ್ನು ಮಾನವರನ್ನಾಗಿ, ಮಾನವರನ್ನು ಮಹಾ ಮಾನವರನ್ನಾಗಿ, ಮಹಾ ಮಾನವರನ್ನು ದೇವ ಮಾನವರನ್ನಾಗಿ ಮಾಡುವಂತಹ ಒಂದು ಪ್ರಕ್ರಿಯೆ ಆದ್ದರಿಂದ ನಾವೆಲ್ಲರೂ ಈ ಮಾರ್ಗವನ್ನು ಅನುಸರಿಸೋಣ, ನಮ್ಮ ಜೀವನವನ್ನು ಪಾವನ ವನ್ನಾಗಿ ಮಾಡಿಕೊಳ್ಳೋಣ, ತಮಗೆಲ್ಲರಿಗೂ ಶುಭವಾಗಲಿ

Related Posts