Uncategorized

ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಸಮಾಜದ ಅಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸಿದ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ನಮ್ಮ ನಾಡಿನ ಶ್ರೇಷ್ಠ ಪದಕಾರರಲ್ಲಿ ಒಬ್ಬರಾಗಿದ್ದರು . ಸಮಾಜದ ಸೇವೆಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿದ್ದ ಅವರು ಬರೆದುದು ತುಂಬ ಕಡಿಮೆ. ನಂತರದ ಪೀಳಿಗೆಯವರು ಅವುಗಳನ್ನು  ಸಂಗ್ರಹಿಸಿ ಉಳಿಸಿಕೊಂಡಿರುವುದು ಇನ್ನೂ ಕಡಿಮೆ.  ಆದರೆ ಬರೆದಷ್ಟು ಮಾತ್ರ ಅರ್ಥಪೂರ್ಣ ಹಾಗು ಸತ್ವಪೂರ್ಣ . ಅವರು ಬರೆದ, ಪದ್ಯಗಳಲ್ಲಿ ಪ್ರಮಥರನ್ನು ಮಹಾತ್ಮರನ್ನು ಕುರಿತು ಬರೆದ ಸ್ತುತಿ ಪರ ಪದ್ಯಗಳೇ ಅಧಿಕ . ಶಿವಯೋಗ ಅಥವಾ ಶಿವಯೋಗಿ ಅಂಕಿತದಲ್ಲಿ ತಮ್ಮ ಪದ್ಯಗಳನ್ನು ನಾಡಿಗೆ ನುಡಿಕಾಣಿಕೆಯಾಗಿ ಸಮರ್ಪಿಸಿದ್ದ ಅವರು ಆಶು ಕವಿತ್ವ ಹೊಂದಿದ್ದರು . ಹಾಗೆಯೇ ಅವರು ತಮ್ಮ ಪದ್ಯಗಳಲ್ಲಿ ಬಸವಾದಿ ಪ್ರಮಥರ ತತ್ವ ಮತ್ತು ಮೌಲ್ಯಗಳನ್ನು ತುಂಬಿ ಅವುಗಳನ್ನು ಸತ್ವಪೂರ್ಣವಾಗಿಸಿರುವುದು ಬಹು ವಿಶೇಷ. ಪ್ರಸ್ತುತ ಅವರ ಆಶು ಕವಿತ್ವದ ನಿಷ್ಪತ್ತಿಯಾಗಿರುವ ಒಂದು ಪದ್ಯವನ್ನು ಕುರಿತು ಇಲ್ಲಿ  ವಿವೇಚಿಸಲಾಗಿದೆ . ಜಂಗಮ ಶ್ರೇಷ್ಠರು , ಶಿವಯೋಗಿ ನಾಮಾಂಕಿತರೂ ಆಗಿದ್ದ  ಅಥಣಿ ಗಚ್ಚಿನಮಠದ ಪೂಜ್ಯ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಅಥಣಿಗೆ ದಯಮಾಡಿಸಿದ್ದ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಶಿವಯೋಗಿಗಳ ಪಾರ್ಥಿವ ಶರೀರದ ಮುಂದೆ ನಿಂತು ಲಿಂಗದೇಹಕ್ಕೆ ಮಂಗಳ ಸ್ತುತಿ – ಗೈದ ಸಂದರ್ಭದ ಪದ್ಯವಿದು .

ಮಂಗಳಾರತಿ ದೇವಗೆ ಶಿವಯೋಗಿಗೆ

ಕಂಗಳಾಲಯ ಸಂಗಗೆ .

ಜಂಗಮ ಲಿಂಗ ಭೇದದ ಸ್ವಯಚರಪರ

ದಿಂಗಿತವರುಪಿದಂತಾಚರಿಸಿದ ಮಹಿಮಗೆ      ॥ ಪ ॥

ಒಂದೆ ಮಠದಿ ವಾಸಿಸಿ ಸದ್ಭಕ್ತಿಯಿಂ

ಬಂದ ಬಂದವರನು ಬೋಧಿಸಿ

ನಿಂದು ಏಕಾಂತದಾನಂದದ ಯೋಗದ

 ಚೆಂದವನರಿದನುಷ್ಠಾನಿಪ ಶಿವಸ್ವಯಗೆ    ॥ ೧ ॥

ಚರಿಸಿ ಭಕ್ತರ ಭಕ್ತಿಯ ಕೈಕೊಳ್ಳುತ್ತ

ಭರದಿ ಪರತರ ಬೋಧೆಯ

ನಿರದೆ ಬೋಧಿಸಿ ಶಿಷ್ಯ ಭಕ್ತರನುದ್ಧರಿಸಿ

ಚರತಿಂಥಿಣಿಯೊಳಾಡಿ ಗುರುವೆನಿಪ ಚರವರಗೆ  ॥ ೨ ॥

ಪಾಪಪುಣ್ಯಗಳ ಮೀರಿ ಸ್ವಾತಂತ್ರ್ಯದಿ

ಕೋಪಾದಿ ಗುಣವ ತೂರಿ .

ತಾಪಗೊಳ್ಳದೆ ಜಗಜ್ಜಾಲವ ಧಿಕ್ಕರಿಸಿ

ಕಾಪಟ್ಯವಳಿದು ಶಿವ ತಾನಹ ಪರತರಗೆ    ॥ ೩ ॥

ಅಷ್ಟಾವರಣವ ಸಾಧಿಸಿ ಸದ್ಭಕ್ತಿಯಿಂ

ಶಿಷ್ಟ ಚರವರನೆನಿಸಿ

ಶ್ರೇಷ್ಠ ಪ್ರಮಥನಾಮ ಪ್ರೇಮದಿಂದುಚ್ಚರಿಸಿ

ಕಷ್ಟತರದ ಮಾಯೆಯನು ಗೆಲಿದ ಯತಿವರಗೆ   ॥ ೪ ॥

ಸಚ್ಚಿದಾನಂದವೆನಿಪ ಅಥಣೀಪುರಿ

ಗಚ್ಚಿನಮಠ ಮಂಟಪ

ಅಚ್ಚರಿಗೊಳಿಪ ಷಟ್‌ಸ್ಥಲ ಬ್ರಹ್ಮಿವಾಸದಿಂ

ಬಿಚ್ಚಿ ಬೇರೆನಿಸದ ಮುರಘ ಶಿವಯೋಗಿಗೆ    ॥ ೫ ॥

ನಾಲ್ಕು ನಾಲ್ಕು ಸಾಲುಗಳ ಒಂದು ಪಲ್ಲವಿ ಮತ್ತು ಐದು ನುಡಿಗಳ ಒಟ್ಟು ಇಪ್ಪತ್ನಾಲ್ಕು ಸಾಲುಗಳಲ್ಲಿ ರಚಿತವಾದ ಈ ಪದ್ಯದ ಪ್ರತಿಯೊಂದು ನುಡಿಯಲ್ಲಿರುವ ಸಾಲುಗಳ ಎರಡನೆಯ ಅಕ್ಷರ ಪ್ರಾಸದಿಂದ ಕೂಡಿದೆ . ಹಾಗೆಯೇ ಇಡೀ ಪದ್ಯವು ಛಂದೋಲಯ ಬದ್ಧವಾಗಿದೆ . ಪದ್ಯದ ಪಲ್ಲವಿಯಲ್ಲಿ ದೃಷ್ಟಿಯೋಗದ ಮೂಲಕ ಶಿವಯೋಗವನ್ನು ಸಾಧಿಸಿದ ಪರಮ ಶಿವಯೋಗಿಗೆ ಮಂಗಲವಾಗಲಿ ಎಂದು ಹೇಳುತ್ತಾ ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಾಮಹಿಮರು ಪೂಜ್ಯಶ್ರೀ ಮುರುಘೇಂದ್ರ ಶಿವಯೋಗಿಗಳು ಎಂಬ ತಮ್ಮ ಭಾವವನ್ನು ಅಭಿವ್ಯಕ್ತಗೊಳಿಸಿದ್ದಾರೆ . ನಂತರದ ಮೂರು ನುಡಿಗಳಲ್ಲಿ ಸ್ವಯ , ಚರ ಮತ್ತು ಪರ ಜಂಗಮದ ಲಕ್ಷಣಗಳನ್ನು ವಿವರಿಸುತ್ತ ನಾಲ್ಕು ಮತ್ತು ಐದನೆಯ ನುಡಿಗಳಲ್ಲಿ ಅಥಣಿಯ ಶಿವಯೋಗಿಗಳು ಲಿಂಗಾಯತ ಧರ್ಮದ ಮತ್ತು ಬಸವಾದಿ ಪ್ರಮಥರು ಆಚರಿಸಿ ತೋರಿದ ಅಷ್ಟಾವರಣ , ಪಂಚಾಚಾರ , ಷಟ್‌ಸ್ಥಲಗಳನ್ನು ಸಾಧಿಸಿ ತಮ್ಮಲ್ಲಿರುವ ಅನುಪಮ ಸದ್ಭಕ್ತಿಯ ಫಲವಾಗಿ ಜಂಗಮ ಶ್ರೇಷ್ಠರಾದ ಬಗೆಯನ್ನು , ಎಲ್ಲದಕ್ಕೂ ರಾಮಬಾಣದಂತಿರುವ ಬಸವಾದಿ ಪ್ರಮಥರ ನಾಮವನ್ನು ಪರಮ ಪ್ರೇಮದಿಂದ ಉಚ್ಚರಿಸುತ್ತ ಗೆಲ್ಲಲು ಕಷ್ಟ   ಸಾಧನವಾದ ಮಾಯೆಯನ್ನು ಗೆಲಿದ ಬಗೆಯನ್ನು ಹೃದಯಂಗಮವಾಗಿ  ಬಣ್ಣಿಸಿದ್ದಾರೆ .ಭಕ್ತಾದಿ ಐಕ್ಯ ಸ್ಥಲ ದ ವರೆಗಿನ ಅಧ್ಯಾತ್ಮ ಸಾಧನೆಯನ್ನು ಪೂರ್ಣಗೊಳಿಸಿ ಷಟ್ಸ್ಥಲ ಬ್ರಹ್ಮಿ ಗಳೇ ತಾವಾದ ಮತ್ತು ಪರಶಿವನಲ್ಲಿ ಬೆರೆಸಿ ಬೇರಾಗದ ಸ್ಥಿತಿ ಯನ್ನು   ಹೊಂದಿದ ಮುರುಘ ಶಿವಯೋಗಿಗೆ . ಮಂಗಲವಾಗಲಿ ಎಂದು ಪದ್ಯವನ್ನು ಪೂರ್ಣಗೊಳಿಸಿದ್ದಾರೆ .

ಪ್ರಸ್ತುತ ನಾವು ಇಲ್ಲಿ ವಿವರಿಸಬೇಕಾಗಿರುವುದು ಪೂಜ್ಯಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ ಎಂಬ ವಿಷಯವನ್ನು ಕುರಿತು , ಜಂಗಮ ತತ್ವದ ಸ್ವಯ , ಚರ ಮತ್ತು ಪರ ಎಂಬ ಪ್ರಮುಖ ಭೇದಗಳು ಪ್ರಸ್ತುತ ಪದ್ಯದ ಮೊದಲಿನ ಮೂರು ನುಡಿಗಳಲ್ಲಿ ಸುಭಗ ಸುಂದರವಾಗಿ , ಅರ್ಥಪೂರ್ಣವಾಗಿ ಮೂಡಿಬಂದಿವೆ . ಈ ಮೂರು ಭೇದಗಳನ್ನು ಅರಿಯುವ ಮತ್ತು ವಿಶ್ಲೇಷಿಸುವ ಮೊದಲು ಲಿಂಗಾಯತ ಧರ್ಮದ ತತ್ವವಾಚಕ ಪದಗಳಲ್ಲಿ ಒಂದಾಗಿರುವ ‘ ಜಂಗಮ’ದ ಬಗ್ಗೆ ಸ್ಕೂಲವಾಗಿಯಾದರೂ ತಿಳಿದುಕೊಳ್ಳುವುದು ಅತ್ಯವಶ್ಯವೆನಿಸುತ್ತದೆ .

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಕ್ಕೆ ವಿಶಿಷ್ಟ ಸ್ಥಾನವಿದೆ . ಗುರು , ಲಿಂಗ ,  ಜಂಗಮ , ವಿಭೂತಿ , ರುದ್ರಾಕ್ಷಿ , ಮಂತ್ರ , ಪಾದೋದಕ ಮತ್ತು ಪ್ರಸಾದ ಎಂಬ   ಎಂಟು ತತ್ವಗಳೇ ಅಷ್ಟಾವರಣಗಳು . ಇವುಗಳಲ್ಲಿ ‘ ಗುರು , ಲಿಂಗ , ಜಂಗಮ ‘ ಗಳು ಲಿಂಗಾಯತ ಉಪಾಸಕನ ಉಪಾಸ್ಯ ಮೂರ್ತಿಗಳು , ವಿಭೂತಿ , ರುದ್ರಾಕ್ಷಿ ಮತ್ತು ಮಂತ್ರ ಇವು ಉಪಾಸನೆಯ ಸಾಧನಗಳಾದರೆ ಪಾದೋದಕ , ಪ್ರಸಾದಗಳು ಉಪಾಸನೆಯ ಫಲಗಳೆಂದು ಕೀರ್ತಿತವಾಗಿವೆ . ಇವು ಕೇವಲ ಬಹಿರಾಡಂಬರದ ವಸ್ತುಗಳಲ್ಲ , ಲಿಂಗಾಯತ ಸಾಧಕನನ್ನು ಲೌಕಿಕ ವಿಷಯ ವ್ಯಾಮೋಹಗಳಿಂದ ರಕ್ಷಿಸುವ ಕವಚ ( ಆವರಣ ) ಗಳಾಗಿವೆ . ಇವುಗಳಲ್ಲಿ ಗುರು ಲಿಂಗ ಜಂಗಮ ಈ ಮೂರು ಒಬ್ಬನೇ ಪರಶಿವನ ಭೇದಗಳೇ ಆಗಿದ್ದರೂ ಕರ್ತವ್ಯ ಭೇದದಿಂದ ಪ್ರತ್ಯೇಕತೆಯನ್ನು ಹೊಂದಿದ ವಿಶಿಷ್ಟ ತತ್ವಗಳಾಗಿವೆ . ಗುರು ಸಾಧಕನ ಅಜ್ಞಾನವನ್ನು ಕಳೆದು , ಅವನದೇ ಚೈತನ್ಯವಾದ ಪರಶಿವ ಕಳೆಯನ್ನು ಇಷ್ಟಲಿಂಗ ರೂಪದಲ್ಲಿ ಸಾಧಕನ ಕೈಗಿತ್ತು ಮಾರ್ಗದರ್ಶಕನೆನಿಸುತ್ತಾನೆ . ಕರಸ್ಥಲದಲ್ಲಿ ವಿರಾಜಮಾನವಾದ ಇಷ್ಟಲಿಂಗ ( ಲಿಂಗ ) ವು ದೃಷ್ಟಿಯೋಗ ಮತ್ತು ಶಿವಯೋಗದ ಸಾಧನವಾಗಿ ಅದರಲ್ಲೂ ವಿಶೇಷವಾಗಿ ಸಾಧಕನ ಆರಾಧ್ಯ ಮೂರ್ತಿಯಾಗಿ ಪೂಜೆಗೊಳ್ಳುತ್ತದೆ . ಇನ್ನು ಜಂಗಮದ ಕರ್ತವ್ಯ ತುಂಬ ವಿಶಿಷ್ಟ.‌ “ ಗುರುವಿನ ಗುರು ಜಂಗಮ ಇಂತೆಂದುದು ಕೂಡಲಸಂಗನ ವಚನ “  ಎಂದು ಧರ್ಮಗುರು ಬಸವಣ್ಣನವರು ಹೇಳುವ ಮೂಲಕ ಜಂಗಮದ ಸ್ಥಾನವನ್ನು ನಿರ್ದೇಶಿಸಿದ್ದಾರೆ . ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವುದು , ಭಕ್ತರ ಭಕ್ತಿಯನ್ನು ಪರೀಕ್ಷಿಸಿ ತಪ್ಪಿದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಸುವುದು ಜಂಗಮನ ಕರ್ತವ್ಯ , ಜಂಗಮ ಎಂಬುದು ಮಾರ್ಗದರ್ಶನ ಮಾಡುವುದು , ಸಂದರ್ಭ ಬಂದರೆ ದಂಡಿಸಿಯಾದರೂ ಸನ್ಮಾರ್ಗದಲ್ಲಿ ಮುನ್ನೆಡೆಸುವದು ಜಂಗಮನ ಕರ್ತವ್ಯ. ಜಂಗಮ ಎಂಬುದು ಇಂದಿನ ಜಾತಿವಾಚಕ ಪದವಲ್ಲ , ಅದೊಂದು ಆಧ್ಯಾತ್ಮಿಕ ನಿಲವು , ಅನುಭಾವದ ಉನ್ನತಾವಸ್ಥೆ ಎಂದು ಹೇಳಬಹುದು . ಜಾತಿ , ಕುಲ , ದೇಶ , ಕಾಲಗಳ ಯಾವ ಪರಿಮಿತಿಗೂ ಸೀಮಿತವಾಗದೆ ತನ್ನ ಸಾಧನೆಯಿಂದ ಜಗದ್ಭರಿತನಾಗಿ ಬೆಳೆದ ಚೇತನವೇ ಜಂಗಮ , ಭಕ್ತೋದ್ದಾರ ಮತ್ತು ಸಮಾಜ ಕಲ್ಯಾಣ ಇವು ಜಂಗಮನ ಕಾಯಕಗಳು . ಚಲನಶೀಲತೆ ಅರ್ಥಾತ್ ಕ್ರಿಯಾಶೀಲತೆ ಜಂಗಮನ ಪ್ರಮುಖ ಲಕ್ಷಣಗಳಲ್ಲೊಂದು . ಅವನಿಗೆ ಅಂಗವಿದ್ದರೂ ಅಂಗದ ಬಯಕೆಗಳಿಲ್ಲ . ಆಶೆ ಆಮಿಷಗಳಿಲ್ಲ . ಅವನು ಜ್ಞಾನ ಆನಂದಗಳ ಮೂರ್ತಿಯಾಗಿರುವನು . ಕೇವಲ ಕಾವಿಬಟ್ಟೆ , ವಿಭೂತಿ , ರುದ್ರಾಕ್ಷಿಮಾಲೆ ಧರಿಸಿದವರು , ಕೈಯಲ್ಲಿ ಜೋಳಿಗೆ ದಂಡ ಹಿಡಿದವರು ಜಂಗಮರಲ್ಲ . ಅವರು ಕೇವಲ ವೇಷಧಾರಿಗಳಷ್ಟೆ, ದೇಹಭಾವವನ್ನಳಿದು ಪರಮಾತ್ಮನಲ್ಲಿ ಸಾಮರಸ್ಯ ಹೊಂದಿದವನು , ಲಿಂಗಮೂರ್ತಿಯೇ ತಾನಾಗಿ ನಿಂದವನು , ನಡೆ ನುಡಿಗಳಲ್ಲಿ ಸತ್ಯವನ್ನೂ , ಅಂತರಂಗದಲ್ಲಿ ಶಿವಭಾವವನ್ನೂ ಹೊಂದಿದವನು ಮಾತ್ರ ಜಂಗಮನೆನಿಸಿಕೊಳ್ಳಲು ಅರ್ಹನಾಗುತ್ತಾನೆ . ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿರುವ ಇಂತಹ ಜಂಗಮದ ಸುಳುಹು ಜಗತ್ಪಾವನ , ಅವನ ನುಡಿ ಪರಮ ಬೋಧೆ , ದರ್ಶನ ಸ್ಪರ್ಶನ ಮಹಾಪುಣ್ಯ . ಇಂತಹ ಜಂಗಮನನ್ನು ಪ್ರಾಣವಾಗಿಸಿಕೊಂಡ ಭಕ್ತನ ಸರ್ವಾಂಗವೆಲ್ಲವೂ ಶುದ್ಧವಾಗುತ್ತದೆ . ಕಾರಣವೆಂದರೆ ಜಂಗಮನು ಭಕ್ತನ ಭವರೋಗವನ್ನು ಕಳೆದು ಅವನನ್ನು ಮುಕ್ತನನ್ನಾಗಿಸುತ್ತಾನೆ . ` ಭವರೋಗವ ಕಳೆವ ಪರಿಯ ನೋಡಾ ಮಡಿವಾಳನ ಕಾಯಕದಂತೆ ‘ ಎಂದು ವಚನಗಳಲ್ಲಿ ಉಕ್ತವಾಗಿರುವುದು ಯಥೋಚಿತವಾಗಿದೆ . ಏಕೆಂದರೆ ಮಡಿವಾಳನು ಬಟ್ಟೆಗಳನ್ನು ಎತ್ತಿ ಎತ್ತಿ ಒಗೆದು ಹಿಂಡಿ ಅದರ ಕೊಳೆಯನ್ನು ತೆಗೆಯುವಂತೆ ಜಂಗಮನು ಭಕ್ತನ ಭವರೋಗದ ಕೊಳೆಯನ್ನು ತೆಗೆದು ಪರಿಶುದ್ಧವಾಗಿಸುತ್ತಾನೆ . ಒಟ್ಟಾರೆ ಸಮಾಜ ಕಲ್ಯಾಣವನ್ನೇ ಗುರಿಯಾಗಿಸಿಕೊಂಡ ಜಂಗಮನು ಸಮಾಜ ಕಲ್ಯಾಣಕ್ಕಾಗಿ ಧನಧಾನ್ಯಗಳನ್ನು ಸಂಗ್ರಹಿಸಬಹುದು . ಆದರೆ ಅಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ . ಆದ್ದರಿಂದ ಭಕ್ತನಾದವನೂ ಕೂಡ ಇಂತಹ ಜಂಗಮವೇ ತನ್ನ ಪ್ರಾಣವೆಂದರಿದು ತನು ಮನ ಧನಗಳನ್ನು ಸಮರ್ಪಿಸಬೇಕು . ‘ ಜಾಣನು ಜಾಣನು ಆತ ಜಾಣನು ಜಂಗಮಕ್ಕೆ ಸವೆಸುವಾತ ಜಾಣನು ‘ , ಕನ್ನಡಿಯ ನೋಡುವ ಅಣ್ಣಗಳಿರಾ , ಜಂಗಮವ ನೋಡಿರೆ , ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ , ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿ ಮುಂತಾದ ಶರಣರ ವಚನಗಳನ್ನು ಗಮನಿಸಿದರೆ ಜಂಗಮಸೇವೆ ಇಲ್ಲದೆ ಭಕ್ತನ ಆಧ್ಯಾತ್ಮ ಸಾಧನೆ ಅಪೂರ್ಣವೆನಿಸುತ್ತದೆ . ಅಗ್ನಿಯಾಧಾರದಲ್ಲಿ ಕಬ್ಬಿಣ ನೀರುಂಬುವಂತೆ , ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುವಂತೆ ಲಿಂಗದ ಮುಖ ಜಂಗಮವೆಂದು ತಿಳಿದು ಜಂಗಮಕ್ಕೆ ಸಕಲ ಪಡಿಪದಾರ್ಥಗಳನ್ನು ಸಮರ್ಪಿಸಬೇಕೆಂಬುದು ಧರ್ಮಗುರು ಬಸವಣ್ಣನವರ ಆದೇಶ . ಆದರೆ ಇಲ್ಲಿ ‘ ಬೇಡುವಾತ ಜಂಗಮನಲ್ಲ , ಬೇಡಿಸಿಕೊಂಬಾತ ಭಕ್ತನಲ್ಲ ‘ ನಿಯಮವು ಭಕ್ತ ಜಂಗಮರಲ್ಲಿ ಪರಿಪಾಲನೆಯಾಗಬೇಕಾದುದು ಮಾತ್ರ ಅತ್ಯವಶ್ಯವಾಗಿದೆ . ‘ ಜಂಗಮದರಿವು     ಬೇಡಿದಲ್ಲಿ ಹೋಯಿತು ‘ ಎಂಬಂತೆ ಜಂಗಮ  ಬೇಡಿ ಹಾಳಾದರೆ ಭಕ್ತನು ಬೇಡಿಸಿಕೊಂಡು ತನ್ನ ಸಾಧನೆಯಿಂದ ಚ್ಯುತನಾಗುತ್ತಾನೆ . ಆದ್ದರಿಂದ ಭಕ್ತನು

ಬೇಡಿಸಿಕೊಳ್ಳದೆ   ಸರ್ವಾರ್ಪಣ ಭಾವದಿಂದ ಜಂಗಮಕ್ಕೆ ಸಮರ್ಪಿಸಬೇಕು . ಜಂಗಮನಾದರೂ ಸಮಾಜ ಕಲ್ಯಾಣಕ್ಕಾಗಿ ಅದನ್ನು ನಿಸ್ವಾರ್ಥ ಮನೋಭಾವದಿಂದ ಸ್ವೀಕರಿಸಿ ತೃಪ್ತಿ ಹೊಂದಬೇಕು . ಹೀಗೆ ಜಂಗಮ ತೃಪ್ತಿ ನಡೆದರೆ ಜಗತ್ತಿನ

ತೃಪ್ತಿಯಾಗುವುದು .

ಶಿವಯೋಗಿನಿ ಸಂತೃಪ್ತೇ   ತೃಪ್ತೋಭವತಿ ಶಂಕರ : |

 ತತ್‌ ತೃಪ್ತ್ಯಾ ತನ್ಮಯಂ ವಿಶ್ವಂ ತೃಪ್ತಿಮೇತಿ ಚರಾಚರಂ

ಎಂಬಂತೆ ಶಿವಸ್ವರೂಪಿ , ಶಿವಯೋಗಿಯಾಗಿರುವ ಜಂಗಮನು ತೃಪ್ತನಾದರೆ ಪರಶಿವನೇ ತೃಪ್ತನಾದಂತೆ . ಪರಶಿವನ ತೃಪ್ತಿಯಾದರೆ ಅವನ ಅಂಶದಿಂದ ಕೂಡಿ ಸಕಲ ಚರಾಚರಗಳಿಂದ ಯುಕ್ತವಾಗಿರುವ ವಿಶ್ವವೂ ತೃಪ್ತಿಯಾದಂತೆಯೆ ,

ಹೀಗೆ ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ . ಹಾನಗಲ್ಲ ಕುಮಾರ ಸ್ವಾಮಿಗಳವರು ಮೇಲೆ ಉಲ್ಲೇಖಿಸಿದ ಪದ್ಯದ ಮೊದಲನೆಯ ನುಡಿಯಲ್ಲಿ ಸ್ವಯ ಜಂಗಮದ ಲಕ್ಷಣವನ್ನು ಹೀಗೆ ಹೇಳುತ್ತಾರೆ ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು . ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು . ಅದನ್ನು ಹಾನಗಲ್ಲ ಕುಮಾರಸ್ವಾಮಿಗಳವರು ತಮ್ಮ ಪದ್ಯದ ಎರಡನೆಯ ನುಡಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ . ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮನೆಂದು ಹೇಳುತ್ತ ಅಂತಹ ಚರ ಜಂಗಮ ಸಮೂಹದಲ್ಲಿ ಗುರುಸ್ಥಾನವನ್ನು ಅಥಣಿಯ ಶಿವಯೋಗಿಗಳು ಹೊಂದಿದ್ದರು ಎಂಬುದನ್ನು ಅವರು ಸ್ಮರಿಸಿಕೊಳ್ಳುತ್ತಾರೆ . ಲಿಂಗಾಯತ ಧರ್ಮದಲ್ಲಿ ಚರಜಂಗಮನ ಸ್ಥಾನ ಬಹಳ ಮಹತ್ವದ್ದು .

ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ |

ಚರತ್ಯತಿಥಿ ರೂಪೇಣ ನಮಸ್ತೇ ಜಂಗಮಾತ್ಮನೇ  ॥

ಎಂಬ ಮಾತಿನಲ್ಲಿಯೂ ಕೂಡ ಸಾಕ್ಷಾತ್ ಪರಶಿವನೇ ಜನಕಲ್ಯಾಣ ದೃಷ್ಟಿಯಿಂದ ಚರಜಂಗಮನಾಗಿ ಲೋಕದಲ್ಲಿ ಸುಳಿಯುತ್ತಾನೆ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ . ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು . ಇದೇ ಭಾವವನ್ನು ಇದಕ್ಕಿಂತಲೂ ಸ್ಪಷ್ಟವಾಗಿ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳವರು ಮೇಲಿನ ಪದ್ಯದ ಮೂರನೆಯ ನುಡಿಯಲ್ಲಿ ತಿಳಿಯಪಡಿಸುತ್ತಾರೆ . ಅವರ ದೃಷ್ಟಿಯಲ್ಲಿ ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು . ಹೀಗೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಮೂರು ರೀತಿಯ ಭೇದಗಳಿಂದ ಕೂಡಿದ ಜಂಗಮ ತತ್ವದ ಸ್ವರೂಪವನ್ನು ಮೂರು ನುಡಿಗಳಲ್ಲಿ ಕರಿಯು ಕನ್ನಡಿಯೊಳಡಗಿದಂತೆ ಹಿಡಿದಿರಿಸಿದ ಪರಿ ತುಂಬ ಮನೋಜ್ಞವಾಗಿದೆ .

ಲೇಖಕರು : ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮೋಟಗಿಮಠ, ಅಥಣಿ

ಶಿವಯೋಗಿಗಳ ಶಿವಾವತಾರ ಅದು ಮನುಕುಲ ಸೂರ್ಯನ ಅವತಾರ. ಬದುಕು ವಿರಕ್ತಿಯ ಸಂವಿಧಾನ; ಬಾಳು ಸಮತೆಯ ಸುವಿಧಾನ! ನೆನಹು ಶರಣ ಜೀವನ, ನಡೆ ಬಸವಭಾವ, ಹೊರಗೆ ಬಯಲಬಿಂಬ. ಒಳಗೆ ಲಿಂಗಾಂಗಯೋಗ. ಮಾತು ವಚನದ ಒಲವಿನೋಂಕಾರ! ಈ ಅವತಾರ ಅಲ್ಲಮನ ಪೂರ್ಣಾವತಾರ!! ಶಿವಯೋಗಿ ಎಂದರೆ ಶಿವಯೋಗ. ಶಿವಯೋಗ ಎಂದರೆ; ಅಥಣಿಯ ಮುರುಘೇಂದ್ರ ಶಿವಯೋಗಿ!!

                              ಧರ್ಮಗುರು ಬಸವಣ್ಣನವರು ಶರಣರನ್ನು ಅಪ್ಪ ಬೊಪ್ಪ-ಅಯ್ಯ ಎಂದು ಅಪ್ಪಿ ಒಪ್ಪಿಕೊಂಡರು. ಅಂತಹ ಶರಣರ ಸೇವೆಯನ್ನು ಪೂರೈಸುವುದೇ ನನ್ನ ಕಾಯಕವೆಂದು ಭಾವಿಸಿಕೊಂಡಿದ್ದರು ಶಿವಯೋಗಿಗಳವರು. ಹೀಗಾಗಿ ಅವರು ಪ್ರೀತಿ ಅಂತಃಕರಣದಿಂದ ಈ ಹಾಡು ಹಾಡುತ್ತ ತಮ್ಮ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದರು.

ಶಿವಯೋಗ ಶಿವನಿಧಿ

               ಭಾರತದ ಋಷಿ-ಮುನಿಗಳ ಅನಂತಯೋಗ, ಅಲ್ಲಮನ ಅನಿಮಿಷಯೋಗ, ಅರವಿಂದರ ಪೂರ್ಣಯೋಗ, ರಮಣರ ಭಾವಯೋಗ, ಚಿನ್ಮಯಾನಂದರ ಧ್ಯಾನಯೋಗ, ನಾಥಪಂಥೀಯರ ಸಿದ್ಧಿಯೋಗ, ಸಿದ್ಧರ ಸಂತರ ಶಾಂಭವೀಯೋಗ, ತೋಂಟದ ಸಿದ್ಧಲಿಂಗರ ಮಹಾಲಿಂಗಯೋಗ, ಚಿತ್ತರಗಿ, ಮಲೆಯ ಮಹಾದೇಶ್ವರ, ಬಿದರಿ, ಬೀಳೂರು, ಹಾನಗಲ್ಲ ಯತಿವರ್ಯರ ಸಮಾಜಯೋಗ-ಹೀಗೆ ಎಲ್ಲ ಯೋಗಗಳ ಯೌಗಿಕ ಸತ್‍ಕ್ರಿಯೆಗಳ ಸಂಗಮವಾಗಿದ್ದರು ‘ಶಿವಯೋಗ’ ಶಿವನಿಧಿ ಶ್ರೀ ಮುರುಘೇಂದ್ರ ಶಿವಯೋಗಿಗಳು.

ಗುರುಲಿಂಗದೇವ

               ಅಥಣಿ ತಾಲೂಕು ನದಿ ಇಂಗಳಗಾವಿ ಭಾಗೋಜಿಮಠದ ಆದರ್ಶ ಶರಣ ದಂಪತಿಗಳಾದ ಶ್ರೀ ರಾಚಯ್ಯನವರು ಮಾತೋಶ್ರೀ ನೀಲಮ್ಮತಾಯಿಯವರ ಪುಣ್ಯಗರ್ಭದಲ್ಲಿ(ಶಾ.ಶ. 1758 ದುರ್ಮುಖಿ ಸಂವತ್ಸರ ವೈಶಾಖಮಾಸ) ಕ್ರಿ.ಶ. 1836ರಂದು ಅಪ್ಪಗಳು ಜನ್ಮ ತಾಳಿದರು. ಶಿವಯೋಗಿಗಳ ಜನ್ಮದಾತೆ ನೀಲಮ್ಮನವರು ಮೈಗೂರು(ಜಮಖಂಡಿ ತಾಲೂಕು) ಹಿರೇಮಠದ ಮಗಳು (ಮೈಗೂರು ಹಿರೇಮಠ ನಾಡಿಗೆ ಅನೇಕ ಜನ ಸ್ವಾಮಿಗಳನ್ನು, ತಪಸ್ವಿಗಳನ್ನು ನೀಡಿದ ಒಂದು ಶ್ರೇಷ್ಠ ಮನೆತನವಾಗಿದೆ. ಈ ಮನೆತನದಲ್ಲಿ ಜನಿಸಿದ ಐದು ಜನರು ಮೋಟಗಿಮಠದ ಪೀಠಾಧಿಪತಿಗಳಾಗಿರುವುದು ವಿಶೇಷ). ರಾಚಯ್ಯನವರು ರಾಮದುರ್ಗ ತಾಲೂಕು ಭಾಗೋಜಿ ಊರಿನಿಂದ ಪಾದಯಾತ್ರೆಯ ಮೂಲಕ ಇಂಗಳಗಾವಿಗೆ ಆಗಮಿಸಿ, ಗ್ರಾಮಸ್ಥರಿಗೆ ಗುರುಗಳಾಗಿ ಇಂಗಳಗಾವಿಯಲ್ಲಿ ನೆಲೆ ನಿಂತರು. ಇಂತಹ ಆದರ್ಶ ದಂಪತಿಗಳ ಸತ್ಪುತ್ರರೇ ಈ ಯೋಗಿ. ಹುಟ್ಟಿದ ಮಗುವಿಗೆ ‘ಗುರುಲಿಂಗಯ್ಯ’ ಎಂದು ನಾಮಕರಣ ಮಾಡಿದರು. ಇಂಗಳಗಾವಿ ಭಾಗೋಜಿಮಠದ ಪೂರ್ವಾಶ್ರಮ ಬಂಧುಗಳಾದ ಅಥಣಿ ಮೋಟಗಿಮಠದ ಯಜಮಾನರಾದ ಮುರುಘೇಂದ್ರ ಅಪ್ಪಗಳ ಹತ್ತಿರ ‘ಗುರುಲಿಂಗ ದೇವರ’ನ್ನು ಕರೆದುಕೊಂಡು ಬಂದರು. ಗುರುಗಳು ಗುರುಲಿಂಗಯ್ಯನನ್ನು ಹರಸಿ ಹಾರೈಸಿದರು. ಅವರ ಪ್ರೇರಣೆಯಂತೆ ಗಚ್ಚಿನಮಠದಲ್ಲಿ ಈರ್ವರು ಪೂಜ್ಯರು ಅದಾಗಲೆ ಅನೇಕ ಸಾಧಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಅಧ್ಯಾತ್ಮದ ಬಳ್ಳಿಯೊಳಗೆ ಸೇರಿಕೊಂಡ ಗುರುಲಿಂಗರು ಕೆಲವೇ ದಿನಗಳಲ್ಲಿ ಅಪರೂಪದ ಸಾಧಕರಾದರು.

               ತೆಲಸಂಗ ಪಟ್ಟದ್ದೇವರು, ಮಮದಾಪುರ ಶ್ರೀಗಳಿಂದ ಅಧ್ಯಯನ ಪೂರೈಸಿ ಗುರುಲಿಂಗಾರ್ಯರಾದರು. ಅಥಣಿ ಗಚ್ಚಿನಮಠದ ಶ್ರೀ ಮರುಳಶಂಕರ ಸ್ವಾಮಿಗಳು, ಶ್ರೀ ಗುರುಶಾಂತ ಮಹಾಸ್ವಾಮಿಗಳವರಿಂದ ಅನುಗ್ರಹ ಆಶೀರ್ವಾದ ಪಡೆದರು. ಮುಂದೆ ಶ್ರೀ ನಿರಂಜನಪ್ರಭು ಮುರುಘೇಂದ್ರ ಶಿವಯೋಗಿಗಳು ಎನ್ನುವ ನೂತನ ಅಭಿದಾನ ದಯಪಾಲಿಸಿದರು.

               1852ರಿಂದ ಶಿವಯೋಗದ ಅನುಸಂಧಾನ ಆರಂಭವಾಗಿ ಸತತ 20 ವರ್ಷಗಳ ಕಾಲ ಇಷ್ಟಲಿಂಗಯೋಗದ ಶಿವಯೋಗ ಸಾಧನೆ ಕೈಗೊಂಡರು. ಜಮಖಂಡಿ ತಾಲೂಕಿನ ಗುಹೇಶ್ವರ ಗಡ್ಡಿಯಲ್ಲಿ, ಯೋಗಮಂಟಪ, ಹಲವು ಕಡೆ ಏಕಾಂತ ಧ್ಯಾನ ಕೈಕೊಂಡು ಅಪ್ಪಗಳು ಸಿದ್ಧಿಯ ಶೃಂಗವನ್ನೇರಿದರು.

               ಲೋಕಸಂಚಾರ ಕೈಗೊಂಡು ಮರಳಿ ಮಠಕ್ಕೆ ಬಂದರು. ಹಿರಿಯ ಗುರುಗಳು ಅಧಿಕಾರ ಸ್ವೀಕರಿಸಿಕೊಳ್ಳಲು ಹೇಳಿದಾಗ, ನನಗೆ ಯಾವ ಅಧಿಕಾರಿಗಳೂ ಬೇಡ. ನಾನು ಈ ಮಠದ ಸೇವಕ ಎಂದರು. ಮಠದೊಳಗಿದ್ದೂ ಮಠಾಧಿಪತಿಯಾಗಲಿಲ್ಲ. ಒಮ್ಮೆಯೂ ಪೀಠ-ಪಲ್ಲಕ್ಕಿ ಹತ್ತಲಿಲ್ಲ. ಬಂಗಾರ ಧರಿಸಲಿಲ್ಲ. ಬೇಕೆಂದು ಏನನ್ನೂ- ಯಾರನ್ನೂ ಕೈ ಒಡ್ಡಲಿಲ್ಲ. ಇದ್ದೂ ಇಲ್ಲದಂತೆ ಮೌನಿಯಾಗಿದ್ದರು ಶಿವಯೋಗಿಗಳು.

               ಶ್ರೀಮಠದ ಹಿರಿಯ ಗುರುಗಳಾದ ಗುರುಶಾಂತ ಮಹಾಸ್ವಾಮಿಗಳು ಇರುವಾಗಲೇ ಶಿವಯೋಗಿಗಳು ತಮ್ಮ ಉತ್ತರಾಧಿಕಾರಿಯನ್ನು ಬಹುಬೇಗನೇ ಸ್ವೀಕರಿಸಿದರು. ಅವರಿಗೆ ‘ಮಠಾಧಿಪತಿ ಆಗುವ ಅಂತಹ ಯಾವ ಕರ್ಮಠ ಮಠೀಯ ವ್ಯವಸ್ಥೆಯಲ್ಲಿ ಮುಂದುವರಿಯುವ ಆಸೆ ಇರಲೇ ಇಲ್ಲ. ಹೀಗಾಗಿ ಅಥಣಿಯ ಬಣಜಿಗ ಮನೆತನದ ‘ಸಿದ್ಧಲಿಂಗ ದೇವರ’ನ್ನು ಉತ್ತರಾಧಿಕಾರಿಯನ್ನು ಸ್ವೀಕರಿಸಿ ಅವರಿಗೆ ಎಲ್ಲ ಜವಾಬ್ದಾರಿ ವಹಿಸಿ ನಿರ್ಲಿಪ್ತರಾದರು.

ಬಂಗಾರದ ತಂಬಿಗೆ

               ಒಮ್ಮೆ ಶ್ರೀಮಂತ ವಾರದ ಮಲ್ಲಪ್ಪನವರು ಸೊಲ್ಲಾಪುರದಲ್ಲಿ ಬಂಗಾರದ ಬಿಂದಿಗೆ ಅರ್ಪಿಸಿದರು. ಆಗ ಶಿವಯೋಗಿಗಳು ಬೇಡ ಎಂದು ಅಲ್ಲಿಯೇ ಬಿಟ್ಟು ಬಂದಿದ್ದರು. ಆದರೆ ಅವರಿಗೆ ಗೊತ್ತಿಲ್ಲದಂತೆ ಸೇವಕರು ಅದನ್ನು ತೆಗೆದುಕೊಂಡು ಬಂದಿದ್ದರು. ಈ ವಿಷಯ ತಿಳಿದು ನಾಲ್ಕು ದಿನಗಳ ಕಾಲ ಪ್ರಸಾದ ಸ್ನಾನ ಎಲ್ಲವನ್ನೂ ಬಿಟ್ಟು ಮೌನಿಯಾಗಿದ್ದರು. ‘ಯಾಕ್ರೀ ಬುದ್ಧಿ ಹೀಗ್ಯಾಕ ಮಾಡತೀರಿ’ ಎಂದು ಸೇವಕರು ಕೇಳಿದಾಗ ‘ಮಲವು ಸಂಗಡವಿರಲು ಸ್ನಾನ ಯಾಕಯ್ಯಾ?’ ಎಂದರು. ಬಂಗಾರದ ತಂಬಿಗೆಯನ್ನು ಮರಳಿ ವಾರದ ಮಲ್ಲಪ್ಪನವರಿಗೆ ಕೊಟ್ಟು ಬಂದು ಸೇವಕ ತಪ್ಪಾಯಿತು, ಎಂದಾಗ ಮಾತ್ರ ಶಿವಯೋಗಿಗಳು ಸ್ನಾನ ಪೂಜೆ ಪೂರೈಸಿದರು.

               ಭಕ್ತರೋರ್ವರು ಮಠದ ಜಗುಲಿಗೆ(ಹೊರಸಕ್ಕೆ) ಬೆಳ್ಳಿನಾಣ್ಯ ಬಡಿದಾಗ ಯಾರೋ ಖುಷಿಯಿಂದ ಓಡಿ ಬಂದು ಹೇಳಿದರು. ಶಿವಯೋಗಿಗಳು ಸುಮ್ಮನಿದ್ದರು. ಮರಳಿ ಮರುದಿನ ಗಾಬರಿಯಿಂದ ಭಕ್ತನೋರ್ವ ‘ಅಪ್ಪಾವರೇ… ಬೆಳ್ಳಿ ನಾಣ್ಯ ಯಾರೋ ಕಿತಗೊಂಡ ಹೋಗ್ಯಾರೀ’ ಅಂದಾಗ ‘ಇದ್ದವನು ಬಡದ, ಇಲ್ಲದವನು ವೈದಾನ, ನೀ ಯಾಕ ಇಷ್ಟ ಚಿಂತಿ ಮಾಡಾಕಹತ್ತೀ’ ಅಂದರು.

ಹರ್ಡೇಕರ ಮಂಜಪ್ಪನವರಿಗೆ ದೀಕ್ಷೆ

               ನಾನೊಬ್ಬ ದಾಸಿಪುತ್ರ. ನನಗೆ ಲಿಂಗದೀಕ್ಷೆ ನೀಡಿ ಅನುಗ್ರಹಿಸಬೇಕೆಂದು ಒಬ್ಬ ಸಮಾಜಸೇವಾಸಕ್ತ ವ್ಯಕ್ತಿ ಬಂದು ಕೇಳಿದಾಗ, ತುಂಬು ಅಂತಃಕರಣದಿಂದ ಯಾರೂ ಆ ನಿಟ್ಟಿನಲ್ಲಿ ಆಲೋಚಿಸದ ಸಂದರ್ಭದಲ್ಲಿ(1918ರಲ್ಲಿ) ಲಿಂಗದೀಕ್ಷೆ ನೀಡಿ ಆಶೀರ್ವದಿಸಿದರು. ‘ತಮ್ಮಾ ನೀನು ‘ಕರ್ನಾಟಕ ಗಾಂಧಿ’ ಆಗುತಿ’ ಎಂದು ಮನಸಾರೆ ಹಾರೈಸಿದರು. ಅವರು ಅದರಂತೆ ಕರ್ನಾಟಕ ಗಾಂಧಿಯಾಗಿ ಶರಣ ಶ್ರೇಷ್ಠರಾಗಿ ಬದುಕಿದರು, ಅವರೇ ‘ಹರ್ಡೇಕರ ಮಂಜಪ್ಪನವರು’. ಶಿವಯೋಗಿಗಳ ಮೇಲಿನ ಭಕ್ತಿ ಗೌರವಕ್ಕಾಗಿ ‘ಪ್ರಮಥಾಚಾರ ದೀಪಿಕೆ’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದರು. ಮುಂದೆ ಇದೇ ಮಂಜಪ್ಪನವರು 1911ರಲ್ಲಿ ಬಸವ ಜಯಂತಿ ಆಚರಣೆಯನ್ನು ಪ್ರಥಮವಾಗಿ ಆಚರಿಸಿದ ಸತ್ಕೀರ್ತಿಗೆ ಭಾಜನರಾದರು.

ಲಿಂಗರಾಜರಿಗೆ ಮಾರ್ಗದರ್ಶನ

               ದಾನವೀರ ಶಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಸಂಸ್ಥಾನವನ್ನು ಶಿವಯೋಗಿಗಳ ಪದತಲಕ್ಕೆ ಅರ್ಪಿಸಲು ಬಂದಾಗ, ಶಿವಯೋಗಿಗಳು ‘ಇದನ್ನು ಸಮಾಜಕ್ಕೆ ಬಳಸಿರಿ, ನಿಮ್ಮ ಸಂಪತ್ತು ತೆಗೆದುಕೊಂಡು ನಾನೇನು ಮಾಡಲಿ’ ಎಂದು ಹೇಳಿ, ಲಿಂಗರಾಜರಿಗೆ ಮಾರ್ಗದರ್ಶನ ಮಾಡಿದರು. ಶಿವಯೋಗಿಗಳ ಆಶಯದಂತೆ  1906ರಲ್ಲಿ ಲಿಂಗರಾಜರು ತಮ್ಮ ಸಮಸ್ತ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿ, ಕರ್ನಾಟಕದ ತ್ಯಾಗವೀರ ಎಂಬ ಖ್ಯಾತಿಗೆ ಪಾತ್ರರಾದರು. ಲಿಂಗರಾಜರ ಉದಾರ ದಾನದ ಫಲವಾಗಿ ಶಿಕ್ಷಣ ವಂಚಿತರು ವಿದ್ಯಾವಂತರಾಗಿ ಬದುಕು ಕಟ್ಟಿಕೊಂಡರು. 1916ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭಿಸಿತು. ಸಾವಿರಾರು ಕಲಿಕಾಸಕ್ತರಿಗೆ ಅದರಿಂದ ಅನುಕೂಲವಾಯಿತು.

ಲೋಕಮಾನ್ಯರೊಂದಿಗೆ

               5 ಜನವರಿ 1917ರಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ಅಥಣಿಗೆ ಬಂದು ಶಿವಯೋಗಿಗಳ ದರ್ಶನ ಪಡೆದರು, ‘ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಆಶೀರ್ವದಿಸಿರಿ’ ಎಂದು ಕೇಳಿಕೊಂಡರು. ಆಗ ಶಿವಯೋಗಿಗಳು ‘ಖಂಡಿತ ಸ್ವಾತಂತ್ರ್ಯ ಲಭಿಸುತ್ತದೆ, ಆದರೆ ಅದರ ಫಲವನ್ನು ನಾವು ನೀವು ಪಡೆಯುವುದಿಲ್ಲ, ಮುಂದಿನವರು ಶ್ರೀಫಲ ಪಡೆಯುತ್ತಾರೆ’ ಎಂದರು. ಶಿವಯೋಗಿಗಳ ತ್ಯಾಗ ಹಾಗು ಘನವ್ಯಕ್ತಿತ್ವದ ಕುರಿತು ಟಿಳಕರು ತಮ್ಮ ಚರಿತ್ರೆಯಲ್ಲಿ ಬರೆಯುತ್ತಾರೆ.

ಬಸವ ಬೆಳಗು

               ಬಿದರಿ ಕುಮಾರ ಶ್ರೀಗಳು, ಬಿಳ್ಳೂರು ಗುರುಬಸವರು, ಬಂಥನಾಳ ಸಂಗನಬಸವರು, ಬಬಲೇಶ್ವರ ಶಾಂತವೀರರು, ಗರಗದ ಮಡಿವಾಳೇಶ್ವರರು, ಧಾರವಾಡ ಮುರುಘಾಮಠದ ಮೃತ್ಯುಂಜಯಪ್ಪಗಳು, ಮೋಟಗಿಮಠದ ಚನ್ನಬಸವರು, ಹಾವೇರಿ ಶಿವಬಸವ ಸ್ವಾಮಿಗಳು, ಚಿತ್ರದುರ್ಗದ ಜಯದೇವ ಜಗದ್ಗುರುಗಳು ಹೀಗೆ ಅನೇಕ ಯತಿಪುಂಗವರಿಗೆ ಶ್ರೀಹರಕೆ ನೀಡಿದರು. ಶಿವಯೋಗಿಗಳು ಎನ್ನುವ ಪರುಷ ಸೋಂಕಲು ಅಧ್ಯಾತ್ಮದ ಬಂಗಾರದ ಭುವಿಯು ತುಂಬಿತು.

ಪೊಡಮಡುವೆ

ಅಣ್ಣನ ಭಕ್ತಿ, ಅಕ್ಕನ ವಿರಕ್ತಿ, ಪ್ರಭುವಿನ ಪರಮಜ್ಞಾನ

ಸಂಗಮಿಸಿದುವಿಲ್ಲಿ ನಡೆಯಲ್ಲಿ ನುಡಿಯಲ್ಲಿ

ಇಡಿಯ ಬೆಳಕಿನ ಬಾಳಿನಲ್ಲಿ ದೃಷ್ಟಿ ಕೃಪಾದೃಷ್ಟಿ;

ವಾಣಿ ಶುಭಸೃಷ್ಟಿ; ಅಮೃತಸ್ಮಿತ, ಕಂಡವ ಪುನೀತ;

ಸರ್ವಾಂಗಲಿಂಗ ಮಂಗಲ ತರಂಗ; ಮಹಾಜೀವನ,

ಭುವನ ಪಾವನ, ನಿತ್ಯನೂತನ ಶಿವಚೇತನ;

ಅರ್ಚನವಾವುದೊ ಅರ್ಪಿತವಾವುದೊ ಎಲ್ಲ ಅನುಭಾವ

ಜಾಗೃತವಾವುದೊ ಸ್ವಪ್ನವಾವುದೊ ಎಲ್ಲ ತುರೀಯ

ಇಹವಾವುದೊ ಪರವಾವುದೊ ಎಲ್ಲ ಜೀವನ್ಮುಕ್ತಿ

ಜನನವಾವುದೊ ಮರಣವಾವುದೊ ಎಲ್ಲ ಶಿವಶಕ್ತಿ!

ತೆರೆದೆದೆಗಳ ಸಿಂಪುಗಳಿಗೆ ಶಿವ-ಸ್ವಾತಿ

ಪರಂಜ್ಯೋತಿ ದಿವ್ಯ ಪ್ರೀತಿ ಆತ್ಮ ದಿಧೀತಿ

ಪೊಡಮಡುವೆನು ನಿನ್ನ ಅಡಿಗೆ ಅದರ ಹುಡಿಗೆ

ಧರ್ಮ ಮೂರುತಿ ದೇಹ ಧರಿಸಿ ಮೆರೆದ ಪರಮ ಶರಣ ಸಂಸ್ಕೃತಿ

                                             -ಡಾ. ಸಿದ್ಧಯ್ಯ ಪುರಾಣಿಕ

ಅಪ್ಪನ ವಚನಗಳು

               ಶಿವಯೋಗಿಗಳಿಗೆ ಬಸವಣ್ಣನವರು ಎಲ್ಲ ವಿಧದಲ್ಲಿಯೂ ಮೇಲ್ಪಂಕ್ತಿ ಆಗಿದ್ದರು. ಶರಣರ ವಿಚಾರಗಳನ್ನು ಹೇಳುವುದು ಸರಳ, ಆದರೆ ಆಚರಿಸುವುದು ಕಷ್ಟ. ಆದರೆ ಶಿವಯೋಗಿಗಳಿಗೆ ಬಸವತತ್ವ ಆಚರಣೆ ಕಷ್ಟವಾಗಿರಲಿಲ್ಲ. ಇಷ್ಟವಾಗಿತ್ತು. ಕಾಶಿಯಿಂದ ಬಂದ ಸಂಸ್ಕೃತ ಪಂಡಿತ ಬೃಹತ್ತಾದ ಸಂಸ್ಕೃತ ಗ್ರಂಥ ತಂದುಕೊಟ್ಟ. ತಾವು ಇದನ್ನು ಓದಬೇಕೆಂದು ಒತ್ತಾಯಿಸುತ್ತಾನೆ. ನಾನು ಈಗಾಗಲೇ ಒಂದು ಗ್ರಂಥ ಓದುತ್ತಿದ್ದೇನೆ. ನಿಮ್ಮ ಹತ್ತಿರವೇ ಇರಲಿ ಎಂದು ನಯವಾಗಿ ಗುರುಗಳು ನಿರಾಕರಿಸಿದರು. ಮತ್ತೆ ಆ ಪಂಡಿತ ಬುದ್ಧೀ ಅದು ಮುಗಿದ ಮೇಲಾದರೂ ಇದನ್ನು ಓದಲೇಬೇಕೆಂದು ಒತ್ತಾಯಿಸಿದಾಗ, ‘ಈ ಜನ್ಮ ಮುಗಿಯುವವರೆಗೆ ಅದು ಸಾಧ್ಯವಿಲ್ಲಪ್ಪಾ ಅದು ಮುಗಿಯದ ಮಾಣಿಕ್ಯದೀಪ್ತಿ’ ಎನ್ನುತ್ತಾರೆ. ಯಾವುದದು ಬುದ್ಧಿ ಎಂದ. ಅದು ಶರಣರ ‘ವಚನ ಸಾಹಿತ್ಯ ದರ್ಶನ’. ನಮಗೆಲ್ಲ ಅದೇ ದಾರಿದೀಪ ಶಾಸ್ತ್ರಿಗಳೆ ಎಂದು ವಚನಗಳ ಮನ್ನಣೆಯನ್ನು ಎತ್ತಿ ತೋರಿಸುತ್ತಾರೆ.

               ಮೈಸೂರಿನ ಕಡ್ಲಿಪುರಿ ನಂಜುಂಡಪ್ಪನವರು ಸೊಗಸಾದ ಮಂಚ ತಂದು, ಗಾದಿ-ಕುತನಿ ಅರಿವೆ ಹಾಸಿ, ಅಪ್ಪಾ„ ತಾವು ಇದರ ಮೇಲೆ ನಿತ್ಯವೂ ಪವಡಿಸಬೇಕು ಎಂದು ಪ್ರಾರ್ಥಿಸುತ್ತಾರೆ. ‘ಹೌದಪ್ಪಾ„„ ಇದು ನಮ್ಮ ಅಪ್ಪನ ವಚನಗಳು ಇರಬೇಕಾದ ಸ್ಥಳ’ ಎಂದು ಬಸವಣ್ಣನವರ ವಚನಗ್ರಂಥಗಳನ್ನು ಇಟ್ಟು ಸಾಷ್ಟಾಂಗವೆರಗುತ್ತಾರೆ. ಎಂತಹ ಸೇವಾಭಾವ ಶಿವಯೋಗಿಗಳದು.

               ‘ಈಶನ ಮೀಸಲಪ್ಪ ಭಕ್ತ’ ಎಂದು ಹರಿಹರ ಬಸವಣ್ಣನವರನ್ನು ಬಣ್ಣಿಸುತ್ತಾನೆ. ಅದರಂತೆ ಬಸವಣ್ಣನವರ ಮೀಸಲು ಭಕ್ತಿ ಶಿವಯೋಗಿಗಳದು. ಬಸವಣ್ಣನವರನ್ನು ಅಪ್ಪಾ ಎಂದೇ ಕರೆಯುತ್ತಿದ್ದರು. ಅಪ್ಪನ ವಚನಗಳು ಎಂದೇ ಸಂಬೋಧಿಸುತ್ತಿದ್ದರು. ಅವರಿಗೆ ವಚನಗಳೇ ಮಂತ್ರಗಳು, ಬಸವಣ್ಣನೇ ಬಾಳಜ್ಯೋತಿ, ಸಮತೆಯೇ ಕಂತೆ, ದಾಸೋಹವೇ ದೀಪ್ತಿ, ಸಹಜ-ಸರಳ ಜೀವನವೇ ಶಿವಯೋಗದ ಶಿವಸಿದ್ಧಿ ಯಾಗಿತ್ತು.

ಬದುಕು ಪವಾಡಗಳ ಪರುಷಮಣಿ!

               ಜಮಖಂಡಿ ತಾಲೂಕಿನ ‘ಗುಹೇಶ್ವರಗವಿ’(ಗಡ್ಡಿ)ಯೊಳಗೆ ಅನುಷ್ಠಾನನಿರತರಾದ ಶಿವಯೋಗಿಗಳು ಹತ್ತು ವರುಷಗಳ ಕಾಲ ಏಕಾಂತದೊಳಗೆ ತಪಸ್ಸನ್ನಾಚರಿಸಿದರು. ನದಿ, ಪ್ರಕೃತಿ, ಬಿಲ್ವ-ಬನ್ನಿ, ಹೂವು ಮತ್ತು ಸಂಕುಲಜೀವಿಗಳೇ ಸಂಗಾತಿಗಳಾದವು. ನಾಗರಾಜ(ಸರ್ಪ)ವು ನಿತ್ಯವು ಗುರುಗಳ ಮಂಗಲದ ಸಂದರ್ಭ ಬಂದು ತಲೆದೂಗುತ್ತ ಇರುತ್ತಿದ್ದ. ಮುಂಗೂಸಿ ಕೂಡಾ ಮುಂದೆ ಕುಳಿತಿರುತ್ತಿತ್ತು.  ಪರಸ್ಪರ ದ್ವೇಷ ಸಾಧಿಸುವ ಪ್ರಾಣಿಗಳು ಒಂದಾಗಿರುತ್ತಿದ್ದವು.

               ಅಂಕಲಗಿಯ ಅಡವಿಸಿದ್ಧೇಶ್ವರರ ದರ್ಶನಕ್ಕೆ ಹೊರಟಾಗ ಕಾಡಿನೊಳಗೆ ಹುಲಿ ಬಂದು ಶರಣಾಯಿತು. ಅದಕ್ಕೆ ಉತ್ತತ್ತಿ ನೀಡಿದರು. ಕ್ರೂರ ಪ್ರಾಣಿ ಯೌಗಿಕ ಶಕ್ತಿಗೆ ತಲೆಬಾಗಿತು.

               ಅಥಣಿಯಲ್ಲಿರುವಾಗ ಲಿಂಗಾರ್ಚನೆ ಮುಗಿಸಿ ಬಕುಲವೃಕ್ಷದ ಮುಂದೆ ಬಂದು ಕುಳಿತಾಗ ನಿತ್ಯವೂ ಎರಡು ‘ಶ್ವೇತವರ್ಣದ ಪಕ್ಷಿಗಳು’ ಬಂದು ದರ್ಶನ ನೀಡುತ್ತಿದ್ದವು. ‘ಬುದ್ಧೀ, ಏನಿದರ ಅರ್ಥ’ ಎಂದು ಭಕ್ತರು ಕೇಳಿದಾಗ, ‘ನನ್ನ ಈರ್ವರು ಗುರುವರ್ಯರು ದರ್ಶನ ನೀಡುತ್ತಾರೆ’ ಎಂದರು. ಪ್ರತಿನಿತ್ಯ ಆ ಪಕ್ಷಿಗಳಿಗೆ ಮೌನಿಗಳಾಗಿ ಶರಣು ಸಲ್ಲಿಸುತ್ತಿದ್ದರು.

               ಸಕಲಜೀವ ಸಂಕುಲಗಳಲ್ಲಿ ಶಿವನಿದ್ದಾನೆ ಎಂದು ಪರಿಭಾವಿಸುತ್ತಿದ್ದ ಶಿವಯೋಗಿಗಳು, ಪತ್ರಿಯ ಗಿಡದಿಂದ ಒಂದು ದಿನವೂ ದಳಗಳನ್ನು ಹರಿಯದೆ ಕೆಳಗೆ ನೆಲವನ್ನು ಸಾರಣಿ ಮಾಡಿ, ಕೆಳಗೆ ಬಿದ್ದ ಪತ್ರಿಗಳನ್ನು ಲಿಂಗಕ್ಕೆ ಧರಿಸುತ್ತಿದ್ದರು.

               ಗುರುಗಳ ಬದುಕು ಮೌಲ್ಯಗಳ ಮುತ್ತಿನ ಹಾರವಾಗಿತ್ತು. ಹೆಜ್ಜೆ-ಹೆಜ್ಜೆಗೂ ನೂರೊಂದು ಪವಾಡಗಳು ಜರುಗುತ್ತವೆ. ಅವುಗಳೆಲ್ಲ ಸಹಜವಾಗಿ ಜರುಗಿದ ಲೀಲಾಯೋಗ!

ಶಿವಯೋಗಿ

               ಹುಬ್ಬಳ್ಳಿಯ ಕೈಲಾಸ ಮಂಟಪದಲ್ಲಿ ಕುಳಿತು ಜಗದ್ಗುರು ಸಿದ್ಧಾರೂಢರು ಭಕ್ತಿ, ಹಠ, ರಾಜ, ಮಂತ್ರಯೋಗಗಳ ಕುರಿತು ಪ್ರವಚನ ನೀಡುತ್ತಾರೆ. ಓರ್ವ ಭಕ್ತ ಕೇಳುತ್ತಾನೆ. ನಾಲ್ಕು ಯೋಗಗಳ ಕುರಿತು ಹೇಳಿದಿರಿ. ‘ಶಿವಯೋಗ’ ಕುರಿತು ತಾವು ಹೇಳಲೇ ಇಲ್ಲ ಎಂದರು. ಆಗ ಅವರು ‘ಅದನ್ನು ಹೇಳುವುದಲ್ಲ, ನೋಡಿ ತಿಳಿಯಬೇಕು, ಅರಿತು ಆಚರಿಸಬೇಕು. ಅದನ್ನು ನೋಡಲು ನೀವು ಅಥಣಿಗೆ ಹೋಗಿರಿ. ಅಲ್ಲಿ ಗಚ್ಚಿನಮಠದಲ್ಲಿ ಮುರುಘೇಂದ್ರ ಶಿವಯೋಗಿಗಳಿದ್ದಾರೆ. ಅವರ ‘ಶಿವಯೋಗ’ ಸಾಧನೆ ನೋಡಿದರೆ ಎಲ್ಲವನ್ನೂ ತಿಳಿದಂತೆ ಎಂದು ಅಪ್ಪಣೆ ಕೊಡಿಸುತ್ತಾರೆ. ಅಂತಹ ಅಪರೂಪದ ‘ಶಿವಯೋಗ ಸಾಧನೆಯ’ ಸೀಮಾಪುರುಷರು ಶಿವಯೋಗಿಗಳು.

               ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಅಪ್ಪನ ವಚನಗಳೆಂದು ಅಪ್ಪಿ-ಒಪ್ಪಿ ಬಸವತತ್ವದಲ್ಲಿಯೇ ಬದುಕಿದರು. ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ ಎಂದು ಬಾಗಿದ ತಲೆ, ಮುಗಿದ ಕೈಯಾಗಿ ಬಾಳಿದ ಯುಗಪುರುಷರು. ಶಿವನ ಆಜ್ಞೆ ಆಗಿದೆ ನಾನು ಬರುತ್ತೇನೆ. ನೀವೆಲ್ಲ ಬಸವ ಭಕ್ತಿ ಮಾರ್ಗದಲ್ಲಿ ನಡೆಯಿರಿ ಎಂದು ಅಪ್ಪಣೆ ಮಾಡಿ 23-4-1921ರಂದು ಶನಿವಾರ ಶಿವಯೋಗದ ಬಯಲಿನಲ್ಲಿ ಬಯಲಾದರು.

ಲೇಖಕರು : ಲಿಂ. ಬಿ.ಡಿ.ಜತ್ತಿ  ಮಾಜಿ ರಾಷ್ಟ್ರಪತಿ ಗಳು ಭಾರತ ಸರಕಾರ  ಅವರ ಆತ್ಮ ಕಥೆ “ನನಗೆ ನಾನೇ ಮಾದರಿ”  ಪುಸ್ತಕ ದಿಂದ ಆಯ್ದ ಬರಹ

“…… ಈ ಮೊದಲು ಹೇಳಿದಂತೆ ನಾನು ನನ್ನ ತಂದೆತಾಯಿಗಳಿಗೆ ಮೊದಲನೆಯ ಮಗ , ನಾನು ನಮ್ಮ ಊರಲ್ಲಿಯೇ ಇರುವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ , ಆ ಕಾಲಕ್ಕೆ ನನ್ನ ತಂದೆ ವ್ಯಾಪಾರದ ಸಲುವಾಗಿ ಅಥಣಿಗೆ ಪದೇ ಪದೇ ಹೋಗುತ್ತಿದ್ದರು . ಅಲ್ಲಿಗೆ ಹೋದಾಗ ತಪ್ಪದೇ ಅಲ್ಲಿಯ ಗಚ್ಚಿನ ಮಠಕ್ಕೆ ಹೋಗಿ ಅಲ್ಲಿ ಇದ್ದ ಶಿವಯೋಗಿ  ಶ್ರೀ ಮುರುಘೇಂದ್ರ ಸ್ವಾಮಿಗಳ ದರ್ಶನ ತೆಗೆದುಕೊಂಡು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು . ಒಂದು ಸಲ ಶಿವಯೋಗಿಗಳು ಪೂಜಾವಿಧಿಗಳನ್ನು ಮುಗಿಸಿ ಕುಳಿತಿದ್ದರು . ಆಗ ಅವರು ನನ್ನ ತಂದೆಗೆ ಮಕ್ಕಳು ಎಷ್ಟು ? ಎಂದು ಕೇಳಿದರು . ಅದಕ್ಕೆ ನನ್ನ ತಂದೆಯವರು ಒಬ್ಬಾಕೆ ಮಗಳು , ಒಬ್ಬ ಮಗ ಎಂದು ಹೇಳಿದರು . ಆಗ ಶಿವಯೋಗಿಗಳು ಅವನ ಹೆಸರು ಏನು ? ಅವನು ಹೇಗಿದ್ದಾನೆ ? ಎಂದು ಕೇಳಿದುದ್ದಕ್ಕೆ ಅವನ ಹೆಸರು ಬಸಪ್ಪ , ಸ್ವಲ್ಪ ತುಂಟ , ಹಿಡಿಯುವುದು ಕಷ್ಟವಾಗಿದೆ ” ಎಂದು ಹೇಳಿದರು . ಅದಕ್ಕೆ ಶಿವಯೋಗಿಗಳು “ ಹಾಗೆ ಹೇಳಬೇಡಪ್ಪ , ಮುಂದೆ ಅವನು ರಾಜನಾಗುತ್ತಾನೆ ” ಎಂದು ಹೇಳಿದರು . ಇಷ್ಟು ಶಿವಯೋಗಿಗಳ ಆಶೀರ್ವಾದ ಕೇಳಿಕೊಂಡು ತಮ್ಮ ಕೆಲಸಕ್ಕೆ ತೆರಳಿದರು “

ಮಾನ್ಯ ಶ್ರೀ ಬಿ,ಡಿ,ಜತ್ತಿ ಪ್ರಮಾಣವಚನ

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ

ಪೂಜ್ಯರ ಆಶೀರ್ವಚನ

     ಕೈಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು. ೧೯೩೩ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾ ಸ್ವಾಮಿಗಳವರ ಅಮೃತ ನುಡಿಗಳು ಹೀಗಿವೆ

 “ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕ ಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡ ಪ್ರೇಮ ಮತ್ತು ವಿದ್ಯಾ ನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣ ಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”

ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಅಚ್ಚಿನ ಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವ ಧರ್ಮಕ್ಕೆ ಸಮ್ಮಂದಿಸಿದ ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯ ಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.

     ಈ ಸುಕುಮಾರ ಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀ ಹಾನಗಲ್ಲ ಕುಮಾರಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀ ಕುಮಾರೇಶನ ತತ್ವಗಳನ್ನು ದೇಶ ವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯ ಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಗಳಸಲೆಂದು ಹಾರೈಸುತ್ತೇವೆ.