ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ವಚನಪಿತಾಮಹ ಶ್ರೀ ಫ.ಗು.ಹಳಕಟ್ಟಿಯವರ  ಶಿವಾನುಭವ ಫೆ. ೧೯೩೦  ಅವರ ಸಂಪಾದಕೀಯ ಲೇಖನದ ಆಯ್ದ ಭಾಗ

ಸಮಾಜವು ಹಿಂದೆ ಬಿದ್ದ ಕಾಲಕ್ಕೆ ಅದನ್ನು ಮುಂದಕ್ಕೆ ದೂಡಲು ಒಬ್ಬಾನೊಬ್ಬನು ಮೊದಲು ಪ್ರವೃತ್ತನಾಗುತ್ತಾನೆ. ಅವನು ಈ ಪ್ರಕಾರ ಉದ್ಭವಿಸಿ ಅದಕ್ಕೆ ಯೋಗ್ಯ ದಾರಿಯನ್ನು ತೋರಿಸಿಕೊಡುತ್ತಾನೆ. ಆ ಮೇಲೆ ಅವನ ತರುವಾಯ ಅವನು ಹಾಕಿಕೊಟ್ಟ ಹಾದಿಯಂತೆ ಸಮಾಜವು ಕೆಲದಿವಸ ಹೋದ ಬಳಿಕ ಅದು ಪುನಃ ಸ್ತಬ್ಧವಾಗುವ ಪ್ರಸಂಗವು ಬರಲು ಮತ್ತೊಬ್ಬರು ಉತ್ಪನ್ನರಾಗಿ ಅದರಲ್ಲಿ ಹೊಸ ಚೈತನ್ಯವನ್ನು ಹುಟ್ಟಿಸುತ್ತಾರೆ. ಇಂಥವರೆಲ್ಲರೂ ಮಹಾವಿಭೂತಿಗಳೇಸರಿ. ಇಂಥವರ ವರ್ಗ ದಲ್ಲಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಇರುತ್ತಾರೆ.

ಶ್ರೀ, ಹಾನಗಲ್ಲ ಕುಮಾರ ಸ್ವಾಮಿಗಳು ಮುಂದಕ್ಕೆ ಬಂದು ವೀರಶೈವ ಸಮಾಜದಲ್ಲಿ ಧರ್ಮದ ನಿಜವಾದ ಸಂಸ್ಕೃತಿಯನ್ನು ಹಬ್ಬಿಸಲಿಕ್ಕೆ ಕಾರಣವಾದರು. ಧರ್ಮ ಸಂಸ್ಕೃತಿಯೇ ಸಮಾಜದ ತಳಹದಿಯಾಗಿರುತ್ತದೆಂದು ಭಾವಿಸಿ ಅದಕ್ಕೋಸ್ಕರವೇ ಅವರು ತಮ್ಮ ಇಡೀ ಆಯುಷ್ಯವನ್ನೇ ಅರ್ಪಿಸಿದರು.

ವೀರಶೈವ ಮಹಾಸಭೆಯು ಇರುವ ವರೆಗೆ ವೀರಶೈವ ಜನ ಸಮುದಾಯದಲ್ಲಿ ಅದು ವಿಶೇಷ ಚಳವಳಿಯನ್ನು ಹಬ್ಬಿಸಲಿಕ್ಕೆ ಸಾಧನೀಭೂತವಾಯಿತು. ಅದರ ಮೂಲಕ ಸಾರ್ವಜನಿಕ ಕಾರ್ಯ ಮಾಡಲಿಚ್ಛಿಸುವವರಿಗೆ ತಮ್ಮ ಚಳವಳಿಗಳನ್ನು ಸಾಗಿಸಲಿಕ್ಕೆ ಬಹಳ ಉಪಯೋಗವಾಯಿತು. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಮಹಾಸಭೆಯನ್ನು ಆರಂಭಿಸಿ, ಅದರ ೭-೮ ಅಧಿನಿವೇಶನಗಳಲ್ಲಿ ಪ್ರತ್ಯಕ್ಷ ಕಾರ್ಯ ಮಾಡಿ.ಜನರಲ್ಲಿ ಜಾಗ್ರತೆಯನ್ನು ಹುಟ್ಟಿಸಿದರು. ಇದು ಅವರು ಮಾಡಿದ ಮಹತ್ವದ ಕಾರ್ಯವಾಗಿದೆ. ಶ್ರೀ ಸ್ವಾಮಿಗಳು ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಉತ್ಸುಕರಾದ್ದರಿಂದ ಮಹಾಸಭೆಯು ಜಾಗ್ರತೆಯ ಮೂಲಕ ಅವರು ಬದಾಮಿ ಮಹಾಕೂಟದಲ್ಲಿ ಶಿವಯೋಗಮಂದಿರವೆಂಬ ಮಹತ್ವದ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಅವರು ಮಾಡಿದ ಎರಡನೇ ಮಹತ್ವದ ಕಾರ್ಯವಾಗಿದೆ.

ಶಿವಯೋಗವು ವೀರಶೈವ ಧರ್ಮದಲ್ಲಿ ಒಂದು ವಿಶಿಷ್ಟ ಯೋಗಪದ್ಧತಿಯಾಗಿರುತ್ತದೆ. ಇದನ್ನು ಪ್ರಸಾರಗೊಳಸಬೇಕೆಂಬುದೇ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ ಮುಖ್ಯ ಧ್ಯೇಯವಾಗಿತ್ತು. ಇದಕ್ಕೋಸ್ಕರವಾಗಿಯೇ ಅವರು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಹೀಗೆ ಶಿವಯೋಗ ಮಂದಿರದಲ್ಲಿ ಶಿಕ್ಷಣಹೊಂದಿ ಮಠಾಧಿಕಾರಿಗಳು ಮಠಗಳಲ್ಲಿ ಪಟ್ಟಾಧ್ಯಕ್ಷರಾಗುವದರಿಂದ ಸಮಾಜದ ಪ್ರಗತಿಯು ಬಹು ಬೇಗನೆ ಆಗುವದೆಂದು ಅವರ ಪೂರ್ಣ ತಿಳುವಳಿಕೆಯಾಗಿತ್ತು

ಈ ಶಿವಯೋಗ ಸಾಧನೆಗೋಸ್ಕರ, ಅತ್ಯಂತ ಬಿಗಿತರವಾದ ವರ್ತನೆಯು ಅವಶ್ಯವೆಂದು ಅವರ ಭರವಸೆ ಇದ್ದ ದರಿ೦ದ ಅವರು ಅಲ್ಲಿ ಶಿಕ್ಷಣ ಹೊಂದುವವರಿಗೆ ಬಹು ಕಟ್ಟಾಚರಣೆಗಳನ್ನು ಕಲ್ಪಿಸಿದರು. ಆ ಪ್ರಕಾರ ಈ ಆಚರಣೆಗೆ ಒಳಗಾಗಿ ಈ ಸಂಸ್ಥೆಯಿಂದ ಅನೇಕರು ಹೊರಬಿದ್ದು ಬಹುಕಡೆಗೆ ಮಠಾಧಿಕಾರಿಗಳಾಗಿದ್ದದ್ದೂ ಅವರು ಅನೇಕ ಬಗೆಯ ಸಮಾಜ ಕಾರ್ಯಗಳಲ್ಲಿ ತೊಡಗಿದ್ದೂ ತೋರಿಬರುತ್ತಿದೆ. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಮಾಡಿದ ಈ ಕಾರ್ಯವು ಸಾಮಾನ್ಯವಾದುದಲ್ಲ.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈ ಪ್ರಕಾರ ಕೇವಲ ಧಾರ್ಮಿಕ ಭಾವನೆಯುಳ್ಳವರಾಗಿದ್ದರೂ ಅವರು ವ್ಯವಹಾರವನ್ನು ತಿರಸ್ಕರಿಸಿಬಿಡಲಿಲ್ಲ. ಅವರು ಆಧುನಿಕ ಸುಧಾರಣೆಗಳನ್ನು ಕೈಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು. ಅವರು ಅಸಂಖ್ಯ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ದೊರಕಿಸಲು ಬಹಳ ಸಹಾಯ ಮಾಡಿದರು. ಮತ್ತು ತಮ್ಮ ಶಿವಯೋಗಮಂದಿರದಲ್ಲಿಯೇ ಒಂದು ಇಂಗ್ಲಿಷ್ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದರು. ಅವರು ಶಿವಯೋಗಮಂದಿರದ ಹಣದಿಂದಲೇ ಗಿರಣಿಯನ್ನು ಸ್ಥಾಪಿಸಿದ್ದು. ಅವರು ಶಿವಯೋಗಮಂದಿರದ ಜಮೀನುಗಳಲ್ಲಿ ಹೊಸ ತರದ ಒಕ್ಕಲುತನ ಸುಧಾರಣೆಗಳನ್ನು ಕೈಕೊಳ್ಳಲು ಬಹಳ ಆತುರ ಪಡುತ್ತಿದ್ದರು. ಮತ್ತು ಈ ದೃಷ್ಟಿಯಿಂದಲೇ ಅವರು ಅನೇಕ ಕಡೆಗೆ ಶಿವಯೋಗಮಂದಿರಕ್ಕೋಸ್ಕರ ಜಮೀನುಗಳನ್ನು ಸಂಪಾದಿಸಿರುವರು. ಅವರ ಮನಸ್ಸಿನಲ್ಲಿ ಶಿವಯೋಗ ಮಂದಿರದ ಮುಖಾಂತರ ಇಡೀ ದೇಶದಲ್ಲಿ ಧಾರ್ಮಿಕ ಪ್ರಚಾರ ಕಾರ್ಯಮಾಡಬೇಕೆಂದು ಬಹಳ ಇದ್ದ ದರಿಂದ ಅವರು ಅನೇಕ ಕಡೆಗೆ ಕೀರ್ತನಕಾರರೂ ಉಪನ್ಯಾಸಕರೂ ಹೋಗಿ ಉಪದೇಶ ಮಾಡಲು ಬಹಳ ಪ್ರೋತ್ಸಾಹಿಸುತಿದ್ದರು. ಹಾಗೆಯೇ ಅವರು ಗವಾಯಿಗಳಿಗೂ ಉತ್ತೇಜನ ಕೊಡುತ್ತಿದ್ದರು.

ಶ್ರೀಕುಮಾರ ತರಂಗಿಣಿ  ೨೦೨೩ ಅಕ್ಟೋಬರ  ಸಂಚಿಕೆಯ ಲೇಖನಗಳ ವಿವರ

  1. ಕೊಡು ಮಂಗಲವನು ಬೇಗನೆ ಶಿವನೆ ನೀನಿದನು” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೨೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3.   ಪುಸ್ತಕದ ಒಂದು ಸನ್ನಿವೇಶ: ಶ್ರೀಕಂಠ.ಚೌಕೀಮಠ
  4.  
  5. ೨ : ಶ್ರೀಕುಮಾರೇಶ್ವರ ಅಭಂಗ

ಶ್ರೀಕುಮಾರ ತರಂಗಿಣಿ  ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

Related Posts