ಡಾ. ಕಿರಣ ಪೇಟಕರ
MBBS, MS – General Surgery, MCh – Plastic & Reconstructive Surgery, DNB – Plastic Surgery Plastic Surgeon. Bengaluru
ಅರುವಿನ ಕಣ್ಣನು ತೆರೆದು ತೋರಲು
ನೂರು ದೇವರೇತಕೆ ಬೇಕು
ಹಾನಗಲ್ಲ ಶ್ರೀ ಗುರುಕುಮಾರರ
ಕರುಣೆಯ ಕೃಪೆಯೊಂದಿರೆ ಸಾಕು
ಗ್ಲಾನಿಯೆ ತುಂಬಿದ-ಅಜ್ಞಾನಿಯು ನಾನು
ದಾರಿಯ ಕಾಣದೆ ತಡವರಿಸಿರುವೆ
ಭುವಿಯೊಳು ಬಂದು ಮಾಯೆಯಲಿಂದು
ಸಿಲುಕಿ ಬಲು ತೊಳಲಾಡಿರುವೆ
ಭವಸಾಗರದ ಬಂಧ ಹರಿಸಲು
ಯಾಗಯಜ್ಞವೇತಕೆ ಬೇಕು
ಹಾನಗಲ್ಲ ಶ್ರೀ ಗುರುಕುಮಾರರ
ಆಶೀರ್ವಚನವೊಂದಿರೆ ಸಾಕು
ಕತ್ತಲೆಯಲಿ ತಡಕಾಡುತ ನಡೆದೆ
ಎತ್ತ ಪಯಣವೊ ನಾನರಿಯೆ
ಸುತ್ತಿ ಬಳಲಿಹೆ ಗೊತ್ತುಗುರಿಯಿಲ್ಲದೆ
ಎತ್ತಿ ಪೊರೆವ ತಾಯೆ ಗುರುವೆ
ಜ್ಞಾನದ ಮಾರ್ಗದ ಸತ್ವವ ಅರುಹಲು
ಕೇಳದ ತತ್ವವೇತಕೆ ಬೇಕು
ಹಾನಗಲ್ಲ ಶ್ರೀ ಗುರುಕುಮಾರರ
ಸನ್ಮಾರ್ಗದರ್ಶನವಿರೆ ಸಾಕು
ಶಾಸ್ತ್ರಗಳೋದದ ಸಾಮಾನ್ಯ ನಾನು
ವೇದಪುರಾಣಗಳೆಂತರಿಯೆ
ಮುಕ್ತಿಯ ಪಡೆಯುವ ಆಸೆಯಲಿ ನಿಮ್ಮ
ಭಕ್ತಿಯಲ್ಲಿ ಶರಣೆಂದಿರುವೆ
ದೇವರ ಉಕ್ತಿಯ ಅರ್ಥ ತಿಳಿಯಲು
ಯಂತ್ರ ತಂತ್ರವೇತಕೆ ಬೇಕು
ಹಾನಗಲ್ಲ ಶ್ರೀ ಗುರುಕುಮಾರರ
ಬೀಜಮಂತ್ರವೊಂದಿರೆ ಸಾಕು