ಚಿತ್ತರಗಿ-ಇಲಕಲ್‌

ಲೇಖಕರು: ಪ್ರೋ.ಶ್ರೀಮತಿಸುಲೋಚನ.ಶಿ.ಹಿರೇಮಠ.

ಕನ್ನಡ ತಾಯಿಯ ಪುಣ್ಯ ಗರ್ಭವು ಕಾಲ ಕಾಲಕ್ಕೆ ಮಹಾತ್ಮರನ್ನು, ಸಾಧು ಸಂತರನ್ನು, ಶಿವಯೋಗಿಗಳನ್ನು ನೀಡುತ್ತಾ ಬಂದಿದೆ. ಈ ಪುಣ್ಯ ನಾಡಿನಲ್ಲಿ ಚಾಮರಸ ಕವಿ ಹೇಳುವಂತೆ “ನೋಡಿ ಕೆಲರಂ, ಮಾತನಾಡಿ ಕೆಲರಂ, ಮುಟ್ಟಿ ಕೆಲರಂ, ಉದ್ಧರಿಸುವ ಮಹಾನುಭಾವರು ಉದಿಸಿ ಬಂದಿದ್ದಾರೆ.”

ಅಂಥವರ ಸಾಲಿನಲ್ಲಿ ಶ್ರೀ ಮ.ನೀ.ಪ್ರ ವಿಜಯ ಮಹಾಂತ ಶಿವಯೋಗಿಗಳು, ಚಿತ್ತರಗಿ ಇಳಕಲ್ ಸಂಸ್ಥಾನ ಮಠ, ಒಬ್ಬರು. ಕನ್ನಡ ನಾಡಿನಲ್ಲಿ ಚಿತ್ತರಗಿಯ ಹಿರಿಯ ಚೇತನ ಜಂಗಮ ಪುಂಗವರು. ನಾಡಿಗರ ಹೃನ್ಮನಗಳಲ್ಲಿ ನೆಲೆಸಿದವರು, ಜಂಗಮ ಮಹಾಂತರು.

ಬಸವಣ್ಣನವರು ಹೇಳುವಂತೆ,

“ವೀರನಾದೊಡೆ ವೈರಿ ಮೆಚ್ಚಬೇಕು,

ವ್ರತಿಯಾದೊಡೆ ಅಂಗನೆಯರು ಮೆಚ್ಚಬೇಕು,

ಭಕ್ತನಾದರೆ ಜಂಗಮ ಮೆಚ್ಚಬೇಕು,

ಹಾಗೆ ಜಂಗಮನಾದರೆ ಭಕ್ತ ಮೆಚ್ಚಬೇಕು”

ಹಾಗೆಯೇ ಭಕ್ತರು ಮೆಚ್ಚಿ, ಜಂಗಮರಾದವರು ಚಿತ್ತರಗಿಯ ಪೀಠಾಧಿಪತಿಗಳಾಧ ಶ್ರೀ ವಿಜಯ ಮಹಾಂತ ಶಿವಯೋಗಿಗಳು. ಸಹಜ ಯೋಗಿಗಳು, ತ್ಯಾಗಿಗಳು, ವೀರ ವೀರಾಗಿಗಳು, ಕರುಣಾ ಹೃದಯಿಗಳು, ನಿಜ ಶಿವಯೋಗಿಗಳು.

ಶ್ರೀ ವಿಜಯ ಮಹಾಂತ ಶಿವಯೋಗಿಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಒಂದು ಮಂಗಳ ಪದ್ಯದಲ್ಲಿ ವಿವರಿಸುವುದರಿಂದ ಪ್ರಾರಂಭಿಸಿ ಒಂದು ಪುರಾಣದವರೆಗೂ ವಿಸ್ತರಿಸಲು ಸಾಧ್ಯ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಬಹುದಾಗಿದೆ. ಅದು ಈಗಾಗಲೇ ಸಾಧ್ಯವೂ ಆಗಿದೆ. ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಾದ ವಾರ್ಧಕ ಷಟ್ಪದಿಯಲ್ಲಿ ಪುರಾಣ, ಭಾಮಿನಿ ಷಟ್ಪದಿಯಲ್ಲಿ ಪ್ರಬಂಧ, ಚರಿತ್ರೆ, ಲೀಲೆ, ಗಾನಸುಮನವಾಗಿ , ಕಥೆಯಾಗಿ ಹೊರಹೊಮ್ಮಿದೆ. ಅವುಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ .

೧) ದ್ಯಾಂಪುರ ಚನ್ನಕವಿ ಕೃತ ಶ್ರೀ ವಿಜಯ ಮಹಾಂತೇಶ್ವರ ಪುರಾಣ

೨) ಶ್ರೀ ವಿಜಯ ಮಹಾಂತೇಶ ಲೀಲಾಮೃತ. ಲೇಖಕ: ರಾಮರಾವ ಕುಲಕರ್ಣಿ

೩) ಶ್ರೀ ವಿಜಯ ಮಹಾಂತೇಶ್ವರ ಲೀಲೆ, ಕವಿಗಳು: ಕಲ್ಯಾಣಪ್ಪ ಬ್ಯಾಳಿ

೪) ಚಿತ್ತರಗಿ ಚಿಜ್ಯೋತಿ, ಮತ್ತು ಮಹಾತಪಸ್ವಿ ಮಹಾಂತ ಶಿವಯೋಗಿಗಳು, ಜಿ.ಎಚ್, ಹನ್ನೆರಡುಮಠ

೫)  ಚಿತ್ತರಗಿಯ ಚಿನ್ಮಯಿ ವಿಜಯ ಮಹಾಂತ ಶಿವಯೋಗಿಗಳು, ಬಸವರಾಜ ಗವಿಮಠ

 ಮಠಗಳು ವೈಭವದ ಅರಮನೆಗಳಾಗದೇ ಸಮಾಜದ ಧರ್ಮ ಸುಧಾರಣೆಯ ಕೇಂದ್ರಗಳಾಗಲು ಪೀಠದ ಅಧಿಪತಿಗಳಿಂದ ಮಾತ್ರ ಸಾಧ್ಯ ಎನ್ನುವುದನ್ನು ೧೯ ನೇ ಶತಮಾನದಲ್ಲಿ ಕನ್ನಡ ನಾಡಿನ ಅನೇಕ ಮಠಗಳ ಇತಿಹಾಸದಿಂದ ತಿಳಿಯುತ್ತದೆ. ಮಠಾಧಿಪತಿಗಳ ಸತತ ಸಮಾಜ ಮುಖಿ ಸುಧಾರಣೆಗಳನ್ನು ಒಪ್ಪಿ ತಮ್ಮ ಆಚರಣೆಯಲ್ಲಿ ಕಾರ್ಯ ರೂಪಕ್ಕೆ ತಂದಿದ್ದಾರೆ. ತಮ್ಮ ಅರಿವು- ಆಚರಣೆ, ಅನುಭೂತಿಗಳಿಂದ ಸಮಾಜದ ಉನ್ನತಿಯನ್ನು ಹಾಗೂ ಶರಣ ಧರ್ಮ ಪರಂಪರೆಯನ್ನು ಉದ್ಧರಿಸಿದ್ದಾರೆ.

ಧರ್ಮ ಹಾಗೂ ಸಂಸ್ಕೃತಿ ದೃಷ್ಟಿನಿಂದ ಕನ್ನಡ ನಾಡು, ಭಾರತದಲ್ಲಿಯೇ ತನ್ನ ವೈಶಿಷ್ಟ್ಯವನ್ನು ಮೆರೆಯಿಸುತ್ತಾ ಬಂದಿದೆ. ೧೨ ನೇ ಶತಮಾನದ ಮಹಾತ್ಮಾ ಬಸವಣ್ಣನವರು ಶಾಂತವಾದ ಕ್ರಾಂತಿಯನ್ನು ಮಾಡಿ ವೀರಶೈವ ಧರ್ಮವನ್ನು ವಿಶ್ವಮಾನ್ಯವಾಗುವಂತೆ ಶ್ರಮಿಸಿ ಶರಣ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಸತ್ ಸಂಪ್ರದಾಯ ಜ್ಯೋತಿಯನ್ನು ಇಂದಿಗೂ ನಮ್ಮ ನಾಡಿನ ಅನೇಕ ಮಠಗಳು (ಅರಭಾವಿಯ ದುರುದುಂಡೇಶ್ವರ ಮಠ, ಮಹಾಲಿಂಗಪುರದ ಮಹಾಲಿಂಗೇಶ್ವರ ಮಠ, ಗರಗದ ಮಡಿವಾಳೇಶ್ವರ ಮಠ, ಅಥಣಿಯ ಮುರುಘರಾಜೇಂದ್ರ ಮಠ, ಬಿದಿರಿ ಕುಮಾರೇಶ್ವರ ಮಠ, ಇಳಕಲ್ಲಿನ ವಿಜಯಮಹಾಂತೇಶ್ವರ ಮಠ, ಹಾಳಕೇರೆಯ ಅನ್ನದಾನೇಶ್ವರ ಮಠ, ಹಾನಗಲ್ಲಿನ ಕುಮಾರೇಶ್ವರ ಮಠ, ಹಾವೇರಿಯ ಶಿವಬಸವೇಶ್ವರ ಮಠ, ಧಾರವಾಡದ ಮೃತ್ಯುಂಜಯ ಅಪ್ಪುಗಳು, ಇನ್ನೂ ಅನೇಕ ಶಿವಯೋಗಿಗಳು ತಮ್ಮ ಪಾದ ಸ್ಪರ್ಶದಿಂದ ಕನ್ನಡ ನಾಡನ್ನು ಪವಿತ್ರಗೊಳಿಸಿದ್ದಾರೆ ) ಬೆಳಗಿಸುತ್ತ ಬಂದಿವೆ.

ಇಂತಹ ನಾಡಿನ ಮಠಗಳಲ್ಲಿ ಒಂದಾದ ಚಿತ್ತರಗಿ ಇಳಕಲ್ ಸಂಸ್ಥಾನ ಮಠವು ಒಂದು. ಈ ಮಠವು ಅನೇಕ ಪೀಠಾಧಿಪತಿಗಳನ್ನು ಹೊಂದಿದ ಪರಂಪರೆ ಇದೆ. ಅವರಲ್ಲಿ ೧೬ ನೇ ಪೀಠಾಧಿಪತಿಗಳಾಗಿ ಶ್ರೀ ವಿಜಯಮಹಾಂತ ಎಂಬ ಅಭಿದಾನದಿಂದ ನಿಯುಕ್ತಗೊಳ್ಳುತ್ತಾರೆ. ಇದು ಸಂಸ್ಥಾನ ಮಠವಾದ್ದರಿಂದ ಛತ್ರ, ಚಾಮರ, ಸಿಂಹಾಸನ, ಬೆಳ್ಳಿ ಪಲ್ಲಕ್ಕಿ, ಬೆಳ್ಳಿ ಬೆತ್ತ, ಜಾಗಟೆ, ಕುದುರೆ, ವಂದಿಮಾಗದರುಗಳನ್ನು ಹೊಂದಿರುತ್ತದೆ. ಈ ಪೀಠಕ್ಕೆ ಐವತ್ತಾರು ಶಾಖಾ ಮಠಗಳಿವೆ. ರಾಯಚೂರು, ಸುರುಪುರ, ಬೀದರ, ಯಲಬುರ್ಗಾ, ಲಿಂಗಸೂರು, ಸೊಲ್ಲಾಪುರ, ಕೂಡಲಸಂಗಮ, ಚಿತ್ತರಗಿ, ಕೊಪ್ಪ, ಇದ್ದಲಗಿ, ಬೆಳಗಲ್, ಹುನುಗುಂದ, ಕರಡಿ, ನಂದವಾಡಗಿ  ಹಾಗೂ ಮುಂತಾದದ ಕಡೆಗಳಲ್ಲಿ ಶಾಖಾ ಮಠಗಳ ವ್ಯಾಪ್ತಿಯಿದೆ.

 ನಿಜಾಮರ ಕಾಲಕ್ಕೆ ಕೊಡಮಾಡಿದ ಅನೇಕ ದತ್ತಿಗಳಿವೆ. ಇಂತಹ ವಿಶಾಲ ಪ್ರದೇಶದ ಜನತೆಯ ಕಣ್ಮಣಿಗಳಾಗಿ ವೀರಶೈವ ಧರ್ಮದ ಜಾಗೃತಿಯ ನೇತಾರರಾಗಿ ಈ ಪೀಠದ ಕಾರ್ಯಭಾರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಕೆಲ ಕಾಲ ಯೋಗ್ಯ ಪೀಠಾಧಿಕಾರಿ ದೊರೆಯದಿದ್ದಾಗ ಪೀಠವು ಶೂನ್ಯತೆಯನ್ನು ಪಡೆಯುತ್ತದೆ. ಅಂತಹ ಸಂದರ್ಭದಲ್ಲಿ ಪಟ್ಟವಿಲ್ಲದೆ ಮಠವನ್ನು ಸುಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಹೋದ ವಟು ದೇವರುಗಳ ಉದಾಹರಣೆಯು ಇದೆ.

೧೮೫೦ ರಿಂದ ೧೯೫೦ರ ಕಾಲವು ಭಾರತೀಯ ಇತಿಹಾಸದಲ್ಲಿ ಬದಲಾವಣೆಯ ಕಾಲಘಟ್ಟವಾಗಿದೆ. ಬದಲಾವಣೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ರಂಗಗಳಲ್ಲಿ ಕಂಡುಬರುತ್ತದೆ. ಸ್ವತಂತ್ರ ಆಂದೋಲನಗಳು ಹೋರಾಟ ರೂಪ ತಾಳಿದವು. ಹೋರಾಟಕ್ಕೆ ಸಂಘಟನೆಗಳು, ನೇತಾರರು, ಅವರ ವೈಚಾರಿಕ ನಡತೆಗಳು ಯಶಸ್ಸಿಗೆ ಕಾರಣವಾದವು. ಇಂತಹ ಕಾಲದಲ್ಲಿಯೇ ಮಠಾಧಿಪತಿಗಳು ಸ್ವತಂತ್ರದಕ್ಕಿಸಿಕೊಳ್ಳಲು ಸಮರ್ಥರಾದರು. ಧರ್ಮ ರಕ್ಷಣೆಗಾಗಿ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಕ್ಕಾಗಿ , ಶರಣ ಧರ್ಮದ ಸಂಸ್ಕೃತಿಯ ಏಳ್ಗೆಗಾಗಿ, ವೀರಶೈವ ಧರ್ಮದ ಉಳಿವಿಗಾಗಿ, ಹೊಸ ವೈಚಾರಿಕ ಸಮಾಜ ನಿರ್ಮಾಣ ಮಾಡಿದರು. ಸಮಾಜ ಉದ್ಧಾರ ಮಾಡಿದರು. ಅದಕ್ಕಾಗಿ ತಮ್ಮನ್ನು ತ್ಯಾಗ, ವೈರಾಗ್ಯಕ್ಕೆ ಅರ್ಪಿಸಿಕೊಂಡು ಕಾಯಕ ನೀತಿಯ ತಳಹದಿ ಮೇಲೆ ಸಮಾಜವನ್ನು ಕಟ್ಟಿದರು. ಇಷ್ಟಲಿಂಗಾರ್ಚನೆಯ ನಿಷ್ಠಾಭಕ್ತಿಯಿಂದ ಜ್ಞಾನ ದಾಸೋಹ, ಅನ್ನ ದಾಸೋಹ, ಅಕ್ಷರ ದಾಸೋಹದಿಂದ ಸಮಾಜವನ್ನು ಜಾಗೃತಗೊಳಿಸಿದರು. ಇದರಿಂದ ನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಮಠದ ಪರಿಶ್ರಮದಿಂದ ತಲೆಯೆತ್ತಿವೆ. ಶಿಶುವಿಹಾರದಿಂದ ಹಿಡಿದು ವಿಶ್ವವಿದ್ಯಾಲಗಳವರೆಗೂ  ಬೆಳೆದು ಹೆಮ್ಮರಗಳಾಗಿವೆ.

ಜ್ಞಾನ ದಾಸೋಹಕ್ಕೆ ಬೇಕಾದ ಅನ್ನದಾಸೋಹ, ಆಶ್ರಯ ದಾಸೋಹಕ್ಕೆ ತಮ್ಮ ತನು ಮನ ಅರ್ಪಿಸಿ ಸಮಾಜಕ್ಕೆ ವೈಚಾರಿಕ ಹೊಸ ದಿಸೆಯನ್ನೇ ತೋರಿಸಿದ್ದಾರೆ. ವೈರಾಗ್ಯ, ತ್ಯಾಗ, ಆಚಾರ ವಿಚಾರ, ನೀತಿ ಶ್ರದ್ಧೆಗಳನ್ನು ಅನುಸರಿಸುವ ನವ ಸಮಾಜ ನಿರ್ಮಾಣವಾಯಿತು. ವೀರಶೈವ ಧರ್ಮ ಪರಂಪರೆಯ ಮಹಾಮಾನವತಾವಾದದ ಕೀರ್ತಿ ಪತಾಕೆಯನ್ನು ಹಾರಿಸುತ್ತ ಮುನ್ನಡೆದಿದೆ. ಇತಿಹಾಸದಲ್ಲಿ ನಾಡಿನ ಉದ್ದಗಲಕ್ಕೂ ಇಂತಹ ಅನೇಕ ಮಹಾತ್ಮರ ಹೆಸರುಗಳು ದೊರಕುತ್ತವೆ. ಅದರಲ್ಲಿ ಸಾಂದರ್ಭಿಕವಾಗಿ ಚಿತ್ತರಗಿ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನೀ.ಪ್ರ. ಸ್ವರೂಪಿ ವಿಜಯ ಮಹಾಂತ ಶಿವಯೋಗಿಗಳು ಅಗ್ರ ಗಣ್ಯರು.

ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು ಒಂದು ಅಧ್ಯಾತ್ಮಿಕ ಶಾಲೆಯ ಸ್ಥಾಪನೆಯ ಸಂಕಲ್ಪ ಮಾಡಿದರು. ಆ ಅಧ್ಯಾತ್ಮಿಕ ಶಾಲೆ ಶಿವಯೋಗ ಮಂದಿರವಾಗಿ, ಎಲ್ಲಿ, ಹೇಗೆ ರೂಪಗೊಳ್ಳಬೇಕೆಂದು ನಿರ್ಣಯಗೊಳಿಸಲು ವಿಜಯ ಮಹಾಂತರಲ್ಲಿಗೆ ವಿನಂತಿಸಿದಾಗ, ಶ್ರೀ ವಿಜಯ ಮಹಾಂತೇಶ್ವರರ ನೇತೃತ್ವದಲ್ಲಿ ಶಿವಯೋಗ ಮಂದಿರ ಸ್ಥಾನವನ್ನು ಅರಸುತ್ತಾ ಬರುವ ಸನ್ನಿವೇಶ ರೋಮಾಂಚನಕಾರಿಯಾಗಿದೆ. ಒಂದು ವ್ಯಕ್ತಿ ಶಕ್ತಿಯಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂಬುದಕ್ಕೆ ಅವರ ಶ್ರದ್ದಾಪೂರ್ವಕ ಪ್ರಯತ್ನಗಳೇ ಸಾಕ್ಷಿಯಾಗಿವೆ.

ಜನನ- ಬಾಲ್ಯ

ಮೈಸೂರು ಪ್ರಾಂತದ ಹಾಸನ ಜಿಲ್ಲೆಯಲ್ಲಿ “ಸಸಿವಾಲ” ಎಂಬ ಪುಟ್ಟ ಗ್ರಾಮ. ಅಲ್ಲಿ ಜನರೆಲ್ಲರೂ ದೈವಭಕ್ತರು. ಸತ್ಯ, ಶುದ್ಧ,ಕಾಯಕದಿಂದ ಬಾಳುತ್ತಿದ್ದರು. ಅಲ್ಲಿ ಅನೇಕ ಜಂಗಮ ಕುಟುಂಬಗಳು ನೆಲೆಸಿದ್ದವು. ಆ ಗ್ರಾಮದಲ್ಲಿ ಕೊಳಗಲ್ಮಠದ ವೀರಯ್ಯ, ಗೌರಮ್ಮ ಎಂಬ ದಂಪತಿಗಳು ಇದ್ದರು. ಇವರ ಮನೆಗೆ ಆಗಾಗ ಹತ್ತಿರದಲ್ಲೇ ಇರುವ ಕಲ್ಲಬೆಟ್ಟದ ಶಿವಯೋಗಿಗಳು ದಯಮಾಡಿಸುತ್ತಿದ್ದರು. ಇವರ ಮಠ ದಾನ, ಧರ್ಮ, ಪೂಜೆ, ಜಂಗಮರಾಧನೆಗೆ ಹೆಸರಾಗಿತ್ತು.  ಇವರ ಮಠದಲ್ಲಿ ಆಗಾಗ ಜಂಗಮ ಪಾದ ಪೂಜೆಗಳು ಜರಗುತ್ತಿದ್ದವು.

ಒಮ್ಮೆ ಕೊಳಗಲ್ಮಠಕ್ಕೆ, ನಿಡುವಳ್ಳಿಯ ಮರುಳಸಿದ್ಧ ಶಿವಯೋಗಿಗಳು ಆಗಮಿಸುತ್ತಾರೆ. ಅವರ ಚಿಕ್ಕ ಮನೆಯಲ್ಲಿಯೇ ದಂಪತಿಗಳು ಶ್ರದ್ಧಾ ಭಕ್ತಿಯಿಂದ ಅವರ ಪಾದ ಪೂಜೆಯನ್ನು, ಸಂಭ್ರಮದಿಂದ ಪೂರೈಸುತ್ತಾರೆ. ಪೂಜೆಯ ನಂತರ ಸಂತೃಪ್ತಗೊಂಡ ಶ್ರೀಗಳು ಸಂತಸದಿಂದ “ಇದು ಶಿವನು  ಆರಿಸಿಕೊಂಡ ಮನೆ. ಮುಂದೆ ಅವನು ಇಲ್ಲಿಯೇ ಬರುವನು” ಎಂದು ತುಂಬು ಹೃದಯದಿಂದ ಹರಿಸಿ ನಡೆದರು. ಮುಂದೆ ಕೆಲವು ದಿನಗಳ ನಂತರ ಗೌರಮ್ಮ ಗರ್ಭಿಣಿಯಾದರು. ಮರುಳಸಿದ್ಧ ಶಿವಯೋಗಿಗಳ ಹರಕೆ ಕೈಗೂಡುವುದೆನ್ನುವಂತೆ ಎಂಟು ತಿಂಗಳಲ್ಲಿಯೇ ಗರ್ಭಕ್ಕೆ ಲಿಂಗಧಾರಣೆಯಾಯಿತು. ಮುಂದೆ ಶಿವನೇ ಶಿಶುರೂಪವಾಗಿ ಗಂಡು ಮಗು ಗೌರಮ್ಮನ ಮಡಿಲು ತುಂಬಿತು. ( ಶಾಲೆ ವಾಹನ ಶಖೆ ೧೭೭೨, ಸಾಧಾರಣ ನಾಮ ಸಂವತ್ಸರ ಭಾನುವಾರ. ಕ್ರಿಸ್ತ ಶಕ ೧೮೫೦ರಲ್ಲಿ).

ಮಗು ಜನಿಸಿದ ಹನ್ನೆರಡನೇ ದಿನಕ್ಕೆ, ಸುಮಂಗಲೆಯರು ಮಗುವಿಗೆ “ಮಳೆಯಪ್ಪಯ್ಯ” ಎಂದು ನಾಮಕರಣ ಮಾಡಿದರು. ಶಿಶು ಮಳೆಯಪ್ಪಯ್ಯನ ಬೆಳುವಣಿಗೆಯನ್ನು ಕಂಡಾಗಲೆಲ್ಲ ವೀರಯ್ಯ ಗೌರಮ್ಮ ದಂಪತಿಗಳಿಗೆ, ಮರುಳುಸಿದ್ಧಯ್ಯ ಶಿವಯೋಗಿಗಳ ಹರಕೆ ಕೈಗೂಡಿದಂತೆ ಭಾಸವಾಗುತ್ತಿತ್ತು.

ಮಗು ಬಾಲಕನಾಗಿ ಬೆಳೆಯುತ್ತಲೇ ತಂದೆಯ ನಿಷ್ಠಾಭಕ್ತಿ, ಆಚಾರ ವಿಚಾರ, ತಾಯಿಯ ವಾತ್ಸಲ್ಯ ಕರುಣೆ ಭಕ್ತಿಯನ್ನು ಒಡಗೂಡಿಸಿಕೊಂಡು ಎಂಟು ವರುಷದವನಾದಾಗ ಮರುಳುಸಿದ್ಧ ಶಿವಯೋಗಿಗಳ ಮಠದಲ್ಲಿ ದೀಕ್ಷಾ ಕಾರ್ಯ ನೆರವೇರಿ ಸ್ಥಾನಿಕ ವಿದ್ಯಾಭ್ಯಾಸ ಪ್ರಾರಂಭವಾಯಿತು. ಈತನಲ್ಲಿದ್ದ ವಿಶೇಷ ಗುಣಗಳನ್ನು ಗಮನಿಸಿದ ಶಿವಯೋಗಿಗಳು ಅವನನ್ನು ಸಂಸ್ಕೃತ ವೇದ ಪಾಠಶಾಲೆಗೆ ಕಳುಹಿಸಲು ಸೂಚಿಸಿದರು. ಬಾಲಕನಾದ ಮಳೆಯಪ್ಪಯ್ಯನಲ್ಲಿ ಬರು ಬರುತ್ತಾ ಅನೇಕ ಬದಲಾವಣೆಗಳಾಗತೊಡಗಿದವು. ಏಕಾಂತವಾಗಿರುವುದು, ಜಂಗಮ ಪಾದ ಪೂಜೆ ಪೂರೈಸುವುದು, ಲಿಂಗಧ್ಯಾನದಲ್ಲಿ ಮೈಮರೆಯುವುದು. ಮಿತಭಾಷೆಯಾಗಿರುವುದು,

ಮೌನವನ್ನೇ ಹೆಚ್ಚು ಪ್ರೀತಿಸುವುದು ಮುಂತಾದ ಗುಣಗಳು ಕಂಡುಬಂದವು. ಬಾಲಕನಿಗೆ ತಾಯಿ ಹೇಳಿದ ಶಿವಶರಣರ ಕಥೆಗಳಲ್ಲಿ ಬರುವ ಆಚಾರ ವಿಚಾರ ,ಜಪ ತಪ, ಲಿಂಗನಿಷ್ಠೆ, ಲಿಂಗನಿರೀಕ್ಷೆ ಕುರಿತು ಶ್ರದ್ದೆ ಮೂಡತೊಡಗಿತು. ತಾನು ಹಾಗೆ ಯಾಕೆ ಲಿಂಗಪೂಜಾನಿಷ್ಠನಾಗಿ ಜಪತಪಗಳಿಂದ ಶಿವನನ್ನು ಮೆಚ್ಚಿಸಬೇಕೆಂದು ಹಂಬಲಿಸುತ್ತಿದ್ದನು. ಆ ಸಂದರ್ಭದಲ್ಲಿ ತಾಯಿಯ ಸಲಹೆಯನ್ನು ಕೇಳಿ ಕಲ್ಲಬೆಟ್ಟಕ್ಕೆ ಹೋಗಿ ತಪಸ್ಸು ಮಾಡಿ ಯೋಗಿಯಾಗುವೆ ಎಂದು ಹಂಬಲಿಸುತ್ತಿದ್ದರು. ತಾಯಿ ಅದು ಬಹಳ ದುರ್ಗಮ ಸ್ಥಾನ ಎಂದು ನಿರ್ದೇಶಿಸಿದರೂ, ಹಲವು ಕ್ರೂರ ಪ್ರಾಣಿಗಳ ವಾಸತಾಣವೆಂದು, ಮನುಷ್ಯರು ಅಲ್ಲಿ ಹೋಗಬಾರದೆಂದರೂ, ತಾಯಿ ಪರಿ ಪರಿಯಾಗಿ ಹೇಳಿದರೂ, ಗಮನಿಸದೆ ಮಗು ಒಂದು ಸಲ ಸಸಿವಾಲಕ್ಕೆ ಬಂದ ಒಬ್ಬ ಶಿವಯೋಗಿಯ ಜೊತೆಗೆ ಕಲ್ಲಬೆಟ್ಟಕ್ಕೆ ನಡದೇಬಿಟ್ಟರು. ಅಲ್ಲಿಯೇ ಕೆಲ ಕಾಲ ಬಾಲಕ ತಪೋನಿರತನಾದನು.

ಬಡಕಲ ಶರೀರ, ಜಟಾಧಾರಿ, ಬಿಳಿಯ ಗಡ್ಡ, ಗುಳಿ ಬಿದ್ದ ಕಣ್ಣುಗಳು, ಬೆನ್ನಿಗೆ ಹತ್ತಿದ ಹೊಟ್ಟೆಯ ಅನೇಕ ಕಲ್ಲಬೆಟ್ಟ ಶಿವಯೋಗಿಗಳು ಮಳೆಯಪ್ಪಯ್ಯನನ್ನು ಆಕರ್ಷಿಸಿದರು. ಕಲ್ಲಬೆಟ್ಟ ವಾಸಿಯಾದ ಮಗುವನ್ನು ಕರೆತರಲು ತಂದೆತಾಯಿಗಳು ಎಷ್ಟೇ ಪ್ರಯತ್ನಿಸಿದರೂ ಕಣ್ಣೀರು ಕರೆದರೂ ಮಗ ಅಲ್ಲಿಯೇ ನೆಲೆ ನಿಂತನು. ದುಃಖತಪ್ತರಾದ ತಂದೆ ತಾಯಿಗಳಿಗೆ ಬಸವಲಿಂಗ ಸ್ವಾಮಿಗಳು ಸಾಂತ್ವನ ಹೇಳುತ್ತಾ ನಿಮ್ಮ ಮಗ ಯೋಗಿಯಾಗಲಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣನಾಗಲಿ ಎಂದು ಮಳೆಯಪ್ಪನನ್ನು ಹರಸಿ ತಂದೆ ತಾಯಿಗಳನ್ನು ಸಮಾಧಾನಪಡಿಸಿದರು. ಈ ಹರಕೆಯು ಮುಂದೆ ಸತ್ಯವಾಗಿ ಪರಿಣಮಿಸಿತು.

ಕಲ್ಲಬೆಟ್ಟದಲ್ಲಿ ಬಸವಲಿಂಗ ಸ್ವಾಮಿಗಳು ಮಳಿಯಪ್ಪಯ್ಯನನ್ನು ಕಂಡು ಕ್ಷೇಮ ಸಮಾಚಾರವನ್ನು ವಿಚಾರಿಸಿದಾಗ, ಸಂಸ್ಕೃತ ಅಧ್ಯಯನಕ್ಕಾಗಿ ತಾನು ಬೇರೆ ಕಡೆ ಹೋಗಲು ಸಾಧ್ಯವೇ ಎಂದು ಕೇಳಿದನು.

ಆತನ ಅಭ್ಯಾಸದ ಆಸಕ್ತಿಯನ್ನು ಕಂಡು ನೀನು ಬಳ್ಳಾರಿಯಲ್ಲಿರುವ ಸಕ್ರಿ ಕರಡೆಪ್ಪನವರ ವೇದ ಪಾಠ ಶಾಲೆಗೆ ಹೋಗುವುದು ಸೂಕ್ತ, ಅದು ಸಂಸ್ಕೃತ ಅಧ್ಯಯನಕ್ಕೆ ಯೋಗ್ಯವಾದುದು ಎಂದು ಸೂಚಿಸಿದರು.

ಬಳ್ಳಾರಿಯ ಸಕ್ರಿ ಕರಡೆಪ್ಪನವರು ಆಗರ್ಭ ಶ್ರೀಮಂತರು. ಗುರು ಲಿಂಗ ಜಂಗಮ ದಾಸೋಹಿಗಳು ಎಂದು ಪ್ರಸಿದ್ದರಾಗಿದ್ದರು. ಅವರು ಸಂಸ್ಕೃತ ವೇದ ಪಾಠ ಶಾಲೆಯನ್ನು ನಡೆಸುತ್ತಿದ್ದರು. ಆ ಭಾಗದಲ್ಲಿ ಸಂಸ್ಕೃತ ಅಧ್ಯಯನದ ಅವಶ್ಯಕತೆಗಳನ್ನು ಅರಿತು ಒಂದು ಸಂಸ್ಕೃತ ಪಾಠಶಾಲೆ ತೆರೆದು ವಿದ್ಯಾರ್ಥಿಗಳಿಗೆ ಅನ್ನ, ವಸತಿ, ಗ್ರಂಥಗಳನ್ನು ಒದಗಿಸುತ್ತಿದ್ದರಲ್ಲದೆ ಸಂಸ್ಕೃತ ಪಾಠಶಾಲೆಗೆ ಸೂಕ್ತ ಗುರುಗಳನ್ನು ನಿಯಮಿಸಿದ್ದರು. ಹೀಗಾಗಿ ಸಕ್ರಿ ಕರಡೆಪ್ಪನವರ ವೇದ ಪಾಠಶಾಲೆ, ಶ್ರೇಷ್ಠ ಪಾಠಶಾಲೆ ಎಂದು ಪ್ರಸಿದ್ದಿಯನ್ನು ಪಡೆದಿತ್ತು. ಇಲ್ಲದಿದ್ದರೆ ಅಂದಿನ ಕಾಲಕ್ಕೆ ಸಂಸ್ಕೃತ ಅಧ್ಯಯನಕ್ಕಾಗಿ ಕಾಶಿಗೆ ಹೋಗಬೇಕಾಗುತ್ತಿತ್ತು. ಇದು ಸಾಮಾನ್ಯರಿಗೆ ಅಸಾಧ್ಯವಾಗುತ್ತಿತ್ತು. ಗುರುಗಳ ಸಲಹೆಯಂತೆ ಮಳಿಯಪ್ಪನವರು ಸಂತೆ ಸಾರಿಗೆಯವರ ಜೊತೆಗೂಡಿ ಬರಿಗಾಲಲ್ಲಿ ನಡೆದು ಬಳ್ಳಾರಿಗೆ ಬಂದರು.

 ಆಗ ಅವರು ೧೪-೧೫ರ ವರುಷದ ಬಾಲಕರಾಗಿದ್ದರು. ಬಳ್ಳಾರಿಗೆ ಬಂದು ನೇರವಾಗಿ ವೇದಶಾಲೆಯಲ್ಲಿ ಪ್ರವೇಶ ಪಡೆದು ಊರ ಹೊರಗಿನ ಒಂದು ತೋಟದಲ್ಲಿ ನೀರಿನ ಸೌಕರ್ಯವಿರುವ ಪರ್ಣಶಾಲೆಯನ್ನು ಕಟ್ಟಿಕೊಂಡು ವಾಸಿಸಿದರು. ಪ್ರಸಾದಕ್ಕಾಗಿ ಕಂತಿಭಿಕ್ಷೆಯನ್ನು ಅವಲಂಬಿಸಿದರು. ಆ ಶಾಲೆಯಲ್ಲಿ ಅನೇಕ ಪಂಡಿತರು ಗುರುಗಳಾಗಿದ್ದರು. ಅಲ್ಲಿ ವೇದಾಂತ, ವ್ಯಾಕರಣ, ತರ್ಕಶಾಸ್ತ್ರ, ಪುರಾತನರ ವಚನಗಳು, ಶಿವಶರಣ ವಚನ ಸಾಹಿತ್ಯ, ದ್ವೈತ, ಅದ್ವೈತ, ವೀರಶೈವ ಮುಂತಾದ ವಿಷಯಗಳ ಅಧ್ಯಯನ ಸಾಗುತ್ತಿತ್ತು. ಕೇವಲ ಸಾತ್ವಿಕ ವೃತ್ತಿಯಿಂದ ಪ್ರಪಂಚವನ್ನು ಮಾಡುತ್ತ ಗುರು ಲಿಂಗ ಜಂಗಮ ಆರಾಧನೆಯಲ್ಲಿ ತಮ್ಮ ಕಾಲವನ್ನು ಸವೆಸುತ್ತ ಸಕ್ರಿ ಕರಡೆಪ್ಪನವರು ದಾಸೋಹ ತೃಪ್ತರಾಗಿದ್ದರು. ಉದಾರ ವಿದ್ಯಾದಾನದಿಂದ ಶರಣ ಜೀವನವನ್ನು ಸಾಗಿಸುತ್ತಿದ್ದರು.

ಬಳ್ಳಾರಿಗೆ ಬಂದ ಮಳಿಯಪ್ಪಯ್ಯನವರು ಊರ ಹೊರಗಿನ ತೋಟದಲ್ಲಿ ವಾಸವಾಗಿದ್ದ ಸಂಗತಿ ಕರಡೆಪ್ಪನವರ ಗಮನಕ್ಕೆ ಬಂದಿತು. ಸ್ವತಃ ಅವರೇ  ಮಳಿಯಪ್ಪಯ್ಯನವರ ಗುಡಿಸಲಕ್ಕೆ ಬಂದು ಏಕೆ ತಾವು ಅನ್ನ ಛತ್ರದಲ್ಲಿ, ವಸತಿ ಛತ್ರದಲ್ಲಿ ಇರಬಾರದು ಎಂದು ವಿಚಾರಿಸಿದಾಗ ಅಲ್ಲಿ ನನ್ನ ಲಿಂಗ ಪೂಜೆಗೆ ತೊಂದರೆಯಾಗಬಹುದು ಅದಕ್ಕಾಗಿ ನಾನು ಏಕಾಂತವನ್ನು ಬಯಸುತ್ತೇನೆ ಅಧ್ಯಯನಕ್ಕೂ ಇದು ಯೋಗ್ಯವಾದ ಸ್ಥಳವಾಗಿದೆ. ನನಗೆ ಗದ್ದಲ ಹಿಡಿಸುವುದಿಲ್ಲ. ಏಕಾಂತವನ್ನು ಬಯಸುತ್ತೇನೆ ಎಂದು ಸ್ಪಷ್ಟ ಪಡಿಸಿದಾಗ ನಾನು ನಮ್ಮ ಮನೆಯಲ್ಲಿಯೇ ತಮ್ಮ ಏಕಾಂತಕ್ಕೆ ವ್ಯವಸ್ಥೆ ಅಣಿಗೊಳಿಸುತ್ತೇನೆ. ಲಿಂಗ ಪೂಜೆ ನಿರಾಳವಾಗಿ ಸಾಗುತ್ತದೆ. ನಮ್ಮ ಮನೆಯಲ್ಲಿ ನಾನು ಪೂರೈಸಿಕೊಡುತ್ತೇನೆ ಎಂದು ವಿನಮ್ರವಾಗಿ ಭಿನ್ನಯಿಸಿದಾಗ ಅವರ ಮನೆಯ ವಾಸಕ್ಕೆ ಮಳಿಯಪ್ಪಯ್ಯನವರು ಒಪ್ಪಿಕೊಂಡು ಮನೆಗೆ ಬರುತ್ತಾರೆ. ತಮ್ಮ ಪಾದದ ಧೂಳಿನಿಂದ ಸತ್ಸಂಗದಿಂದ ನನ್ನ ಮನೆಯನ್ನು ಹಾಗೂ ನನ್ನನ್ನು ಪಾವನ ಮಾಡಬೇಕೆಂದು ಮಳಿಯಪ್ಪಯ್ಯನವರನ್ನು ಒಪ್ಪಿಸಿಕೊಂಡು ಮನೆಗೆ ಕರೆ ತಂದರು. ತ್ರಿಕಾಲ ಲಿಂಗಾರ್ಚನೆ, ಒಂದೇ ಸಲ ಪ್ರಸಾದ ಸ್ವೀಕರಿಸುತ್ತ ವೇದ ವೇದಾಂತ ಷಡ್ ದರ್ಶನ, ವ್ಯಾಕರಣ, ಅಲಂಕಾರ, ಸಂಸ್ಕೃತ ಕಾವ್ಯ, ಅದ್ವೈತ ಶಾಸ್ತ್ರ, ವಚನ ಸಾಹಿತ್ಯ ಎಲ್ಲ ವಿಷಯವನ್ನು ಗಾಢವಾಗಿ ಅಭ್ಯಸಿಸಿದರು. ಪಂಡಿತ ಮಾನ್ಯ ಜ್ಞಾನಿಗಳಾಗಿ ರೂಪಗೊಳ್ಳತೊಡಗಿದರು. ಅಪಾರ ಜ್ಞಾನಿಗಳು, ತ್ರಿಕಾಲ ಲಿಂಗ ಪೂಜೆ ನಿಷ್ಠರು, ಅಧ್ಯಾತ್ಮದ ಕಳೆ ಹೊತ್ತ ತರುಣ, ಯೋಗಿಯ ಕಳೆ, ತೇಜಸ್ಸಿನಿಂದ ಕಂಗೊಳಿಸುತ್ತಿದ್ದರು.

ಚಿತ್ರ ಸಂಖ್ಯೆ ೧ ಶ್ರೀ ಸಕ್ಕರೆ ಕರಡೆಪ್ಪನವರು ಮತ್ತು ಅವರ ಸಂಸ್ಕೃತ ಪಾಠ ಶಾಲೆ ಬಳ್ಳಾರಿ.

ಒಮ್ಮೆ ಸಕ್ರಿ ಕರಡೆಪ್ಪನವರ ಮನೆಗೆ, ಅಮರಾವತಿಯ ರಾಮಪ್ಪ ದೇಸಾಯಿಯವರು ಭೇಟಿ ನೀಡಿದ್ದರು. ಅವರ ಮನೆಯ ಆದರ ಆತಿಥ್ಯವನ್ನು ಸ್ವೀಕರಿಸಿ ಕುಳಿತ್ತಿದ್ದಾಗ, ಮನೆಯಲ್ಲಿ ತಂಗಿದ್ದ ಯೋಗಿ ಕಳೆಯನ್ನು ಹೊತ್ತ ಮಳಿಯಪ್ಪಯ್ಯನವರನ್ನು ನೋಡಿ ಆಕರ್ಷಿತರಾಗುತ್ತಾರೆ. ಆಗ ಕರಡೆಪ್ಪನವರಿಗೆ ಚಿತ್ತರಗಿಯ ಪೀಠದ ಗುರುಗಳಾದ ಗುರುಮಹಾಂತ ಸ್ವಾಮಿಗಳು ಲಿಂಗೈಕ್ಕ್ಯರಾದರೆಂದು, ಪೀಠದ ಅಧಿಕಾರಕ್ಕೆ ಯೋಗ್ಯ ಪೀಠಾಧಿಕಾರಿಯನ್ನು ಅರಸುತ್ತಿದ್ದೇವೆ ತಾವು ತಮ್ಮ ಪಾಠಶಾಲೆಯ ವಟುದೇವರನ್ನು ಸೂಚಿಸಿದರೆ ಒಳ್ಳೆಯದು ಎಂದು ಕರಡೆಪ್ಪನವರಲ್ಲಿ ವಿನಂತಿಸಿಕೊಂಡರು. ಅದೇ ಹೊತ್ತಿಗೆ ಲಿಂಗ ಪೂಜೆ ಪೂರೈಸಿ ದೇಸಾಯಿಯರೊಡನೆ ಮಾತನಾಡುತ್ತಿದ್ದ ಸಕ್ರಿ ಕರಡೆಪ್ಪನವರು, ಮಳಿಯಪ್ಪಯ್ಯ ದೇವರೇ ಚಿತ್ತರಗಿ ಪೀಠದ ಅಧಿಕಾರಿಯಾಗಬಹುದಲ್ಲವೆ ಎಂದು ಕೇಳಿದಾಗ ದೇಸಾಯಿಯವರು ಆನಂದದಿಂದ ನೀವು ಸೂಚಿಸದವರನ್ನೇ ಪೀಠಾಧಿಕಾರಿಯಾಗಿ ಮಾಡಲು ಸಿದ್ಧ ಎಂದರು. ಆಗ ಕರಡೆಪ್ಪನವರು ಮಳಿಯಪ್ಪಯ್ಯ ದೇವರನ್ನು ಕರೆದು ಚಿತ್ತರಗಿ ಇಳಕಲ್ ಸಂಸ್ಥಾನ ಪೀಠದ ಅಧಿಕಾರವನ್ನು ನೀವು ಏಕೆ ವಹಿಸಿಕೊಳ್ಳಬಾರದು, ನಿಮ್ಮನ್ನು ಅರಸಿ ದೇಸಾಯಿಯವರು ಬಂದಿದ್ದಾರೆ. ಆ ಪೀಠವು ೫೬ ಶಾಖಾ ಮಠಗಳನ್ನು ಹೊಂದಿದ್ದು, ಅಸಂಖ್ಯಾತ ಭಕ್ತರನ್ನು ಹೊಂದಿದೆ.

ಒಳ್ಳೆಯ ಸಂಪತ್ತನ್ನು ಹೊಂದಿದ ಮಠವಾಗಿದೆ. ಆ ಮಠದ ಅಧಿಕಾರವನ್ನು ತಾವು ವಹಿಸಿಕೊಂಡರೆ ಒಳ್ಳೆಯದು ಎಂದು ಬಿನ್ನವಿಸಿದಾಗ ಮಳಿಯಪ್ಪಯ್ಯ ದೇವರು ನನಗೆ ಯಾವ ಪೀಠಾಧಿಕಾರವು ಬೇಡ, ಸಂಪತ್ವೈಭವೂ ಬೇಡ, ಪ್ರಚಾರ ಪ್ರಸಿದ್ಧಿಯು ಬೇಡ ಎಂದು ಸಾರಸಗಟವಾಗಿ ನಿರಾಕರಿಸಿದರು. ದೇಸಾಯಿಯರು ನಿರಾಶದಿಂದ ಮರಳಿದರು.

ಕಾಲಗತಿಸಿದಂತೆ ಆ ಸಿಂಹಾಸನಕ್ಕೆ ಬೇಗನೆ ಒಬ್ಬ ಯೋಗ್ಯ ಪಟ್ಟಾಧಿಕಾರಿಯನ್ನು ತರಬೇಕೆಂದು ದೇಸಾಯಿಯವರಿಗೂ, ಭಕ್ತರಿಗೂ ಆತುರ ಹೆಚ್ಚಾಯಿತು. ಆದ್ದರಿಂದ ರಾಮಪ್ಪ ದೇಸಾಯಿಯವರು ಅನೇಕ ಮಠ ಮಾನ್ಯಗಳಿಗೆ ಸಂದೇಶವನ್ನು ರವಾನಿಸಿದರು. ಚಿತ್ತರಗಿ ಪೀಠಕ್ಕೆ ವಟುವನ್ನು ಹುಡುಕಲು ಅನೇಕ ಮಠ ಆಶ್ರಮಗಳಿಗೆ ಭೇಟಿ ಕೊಟ್ಟು ಅರಸಿದರೂ ಪ್ರಯತ್ನ ಫಲಕಾರಿಯಾಗಲಿಲ್ಲ. ಹೀಗಿರಲಾಗಿ ಕೆಲದಿನಗಳ ನಂತರ ಸಕ್ರಿ ಕರಡೆಪ್ಪನವರು ಶಿವಾಧೀನರಾದರು.

ಅದಾದ ನಂತರ ಪಾಠಶಾಲೆಯು ನಿಂತಿತು. ಪಾಠಶಾಲೆಯಲ್ಲಿ ಇದ್ದಂತ ವಟುಗುಳು ಬೇರೆ ಬೇರೆಕಡೆ ಚದುರಿದರು. ಅಲ್ಲಿ ಇರುವಂತಹ ಶಿಕ್ಷಕರು ತಮ್ಮ ತಮ್ಮ ನೆಲೆ ಅರೆಸಿಕೊಂಡು ಹೋದರು. ಆಗ ಮಳಿಯಪ್ಪಯ್ಯನವರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತ ಕರಡೆಪ್ಪನವರಿಗೂ ತಮಗೂ ಪೀಠದ ಅಧಿಕಾರದ ಬಗ್ಗೆ ಚರ್ಚಿಸುವಾಗ ಅಧಿಕಾರದ ಬಗ್ಗೆ ನೀರಾಕರಿಸಿದ್ದು ನೆನಪಿಗೆ ಬಂತು. ಕರಡೆಪ್ಪನವರ ಮಾತಿಗೆ ತಾವು ನನಗೆ ಲೋಕದ ಸಂಸಾರ ಬೇಡ, ಯಾವ ಅಧಿಕಾರವು ಬೇಡ, ಮೋಹವು ಬೇಡ, ಯಾವ ಪಟ್ಟಾಧಿಕಾರವು ಬೇಡ ಎಂದು ಖಡಾಖಂಡಿತವಾಗಿ ಕರಡೆಪ್ಪನವರಿಗೆ ಹೇಳಿದಾಗ “ನೀವು ಸನ್ಯಾಸಿಗಳಾದರು ಲೋಕದ ಸಂಸಾರಿಗಳು. ಲೋಕದ ಸೇವೆ ಮಾಡಲೇಬೇಕು” ಎಂದು ಅರುಹಿದ ಮಾತುಗಳು ಮರುಕಳಿಸಿದವು. ಅದೇ ಮಾತನ್ನು ಮೆಲಕು ಹಾಕುತ್ತ ವೇದ ಪಾಠಶಾಲೆ ಚದುರಿದಾಗ ಮುಂದೇನು ಎಂಬ ಶೂನ್ಯ ಮಳಿಯಪ್ಪಯ್ಯನವರಿಗೆ ಕಾಡಹತ್ತಿತು. ಅವರಿದ್ದರೆ ಬೇರೆ ಮಾತಾಗುತ್ತಿತ್ತು. ಅವರ ನಿಧನದ ನಂತರ ಲೋಕಸಂಚಾರಿಗಳಾಗಿ ತಮ್ಮ ತ್ರಿಕಾಲ ಪೂಜೆಯಲ್ಲಿ ನಿರತರಾಗಿ ಭವಿಷ್ಯದ ಶೂನ್ಯತೆಯಲ್ಲಿ ಸಾಗಿದರು. ಆಗ ವೇದ ಪಾಠಶಾಲೆಯಲ್ಲಿ ಗುರುವನ್ನರಸಿ ನರೇಗಲ್ಲಿಗೇ ಬರುತ್ತಾರೆ. ಊರ ಹೊರಗಿನ ತೋಟದಲ್ಲಿ ಪರ್ಣಶಾಲೆಯನ್ನು ನಿರ್ಮಿಸಿಕೊಂಡು ಕಂತಿಭಿಕ್ಷೆಯಿಂದ ತಮ್ಮ ತ್ರಿಕಾಲ ಲಿಂಗಪೂಜೆ ನೆರವೇರಿಸಿಕೊಂಡು ಸಾಗುತ್ತಿರವಾಗಲೇ ಒಂದು ವಿಚಿತ್ರ ಜರುಗಿತು. ಅವರಿಗೆ ವಿಪರೀತ ಭೇದಿಯು ಶುರುವಾಯಿತು. ಪ್ರತಿಸಲ ಭೇದಿಗೆ ತೆರಳಿದಾಗ ಬಾವಿ ನೀರನ್ನು ಸೇದಿ ಸ್ನಾನ ಮಾಡುವುದು ಮತ್ತೆ ಭೇದಿಗೆ ಸಾಗುವುದು. ದಿನಕ್ಕೆ ನಲವತ್ತು-ಐವತ್ತು ಸಲ ಭೇದಿಯಾಗಿ, ದೇಹದ ಶಕ್ತಿಯಲ್ಲಾ ಉಡುಗಿ ತಮಗೆ ಸ್ನಾನ ಪೂಜೆ ಮಾಡಲು ಆಗದಂತೆ ಮೈಯಲ್ಲೆಲ್ಲಾ ಉರಿ ಹೊಕ್ಕಂತಾಗಿ ನಿತ್ರಾಣರಾದರು. ಯಾವ ಔಷದಿಯೂ ನಾಟಲಿಲ್ಲ. ಕೊನಗೆ ನಿತ್ರಾಣರಾಗಿ ಪೂಜೆ ಜಪ ತಪ ತಗ್ಗಿ ಕೈ ಕಾಲುಗಳೆಲ್ಲ ಶಕ್ತಿ ಉಡಗಿ ಮೂರ್ಚಿತರಾಗಿ ಬಾವಿಯ ದಡದಲ್ಲಿ ಕುಸಿದರು. ಆ ಸಂದರ್ಭದಲ್ಲಿಯೇ ಸಕ್ರಿ ಕರಡೆಪ್ಪನವರು ಬಂದು ಚಿತ್ತರಗಿ ಪೀಠಕ್ಕೆ ಸಿದ್ಧರಾಗಿರಿ ಎಂದಂತೆ ಭಾಸವಾಗಿತ್ತು. ಇದೆ ಪ್ರಕಾರ ಅಂದೇ ಅಮರಪ್ಪ ದೇಸಾಯಿಯವರ ಸ್ವಪ್ನದಲ್ಲಿ ಕರಡೆಪ್ಪನವರು ಬಂದು ಮಳಿಯಪ್ಪಯ್ಯನವರನ್ನು ಕರೆತರಲು ನರೇಗಲ್ಲಿಗೆ ಹೋಗಿರಿ ಎಂದು ಹೇಳಿದಂತಾಯಿತು. ಮರುದಿನವೇ ರಾಮಪ್ಪ ದೇಸಾಯಿಯವರು ನರೇಗಲ್ಲಿಗೆ ಬಂದು ಮಳಿಯಪ್ಪಯ್ಯನವರ ಸ್ಥಿತಿಯನ್ನು ಕಂಡು ಚಿಂತಾಕ್ರಾಂತರಾಗಿ ವೈದ್ಯರನ್ನು ಕರೆಯಿಸಿ ಔಷದ ಉಪಚಾರದಿಂದ ಉಪಚರಿಸಿದಾಗ ಕಣ್ಣು ಬಿಟ್ಟ ಮಳಿಯಪ್ಪಯ್ಯನವರು ದೇಸಾಯಿಯವರನ್ನು ಕಂಡು ಕರಡೆಪ್ಪನವರ ಅಪ್ಪಣೆ ಮೇಲೆ ಬಂದಿದ್ದಿರೋ ಎಂದು ಕೇಳಿ ಹೌದು ಎಂದಾಗ ನಾನು ಅವರ ಮಾತನ್ನು ಒಪ್ಪಿಕೊಂಡೆ ಹಾಗಾದರೆ ಚಿತ್ತರಗಿಯ ಕಡೆ ತಾವು ಚಿತ್ತಯಸಬೇಕೆಂದು, ಚಿತ್ತರಗಿಯ ಸಂಸ್ಥಾನದ ಪೀಠಾಧಿಕಾರಿಯಾಗಲು ಅನುನಯಸಿ ಒಪ್ಪಿಸಿದರು. ಅದರಂತೆ ದೇಸಾಯಿಯರು ಪಟ್ಟಾಧಿಕಾರದ ಮುಹೂರ್ತ ಹಾಗೂ ಸಮಾರಂಭದ ದಿನಾಂಕವನ್ನು ಭಕ್ತರೊಂದಿಗೆ ಸಮಾಲೋಚಿಸಿ ಪಟ್ಟಾಧಿಕಾರದ ತಯಾರಿಯನ್ನು ನಡೆಸಿದರು. ಅದರಂತೆ ಶಾಲಿವಾಹನ ಶಕೆ ೧೮೦೯ ಪ್ರಮೋಧಿನಾಮ ಸಂವತ್ಸರ, ವೈಶಾಖ ಶುಕ್ಲದ ಚತುರ್ದಶಿ ಸೋಮವಾರ ಪಟ್ಟಾಧಿಕಾರ ನಡೆಯಬೇಕೆಂದು ನಿಗದಿಯಾಯಿತು. ಅದು ಕ್ರಿಸ್ತ ಶತಕ ೧೮೭೯ ಆಗಿತ್ತು. ಅಂದು ಭಕ್ತರೆಲ್ಲ ಕೂಡಿಕೊಂಡು ಒಳ್ಳೆ ವಿಜೃಂಭಣೆಯಿಂದ ಪಟ್ಟಾಧಿಕಾರ ಸಮಾರಂಭ ಜರುಗಿಸಿ ಶ್ರೀ.ಮ.ನೀ.ಪ್ರ ವಿಜಯಮಹಾಂತ ಶಿವಯೋಗಿಗಳೆಂದು ಅಭಿದಾನ ಹೊಂದಿ ಚಿತ್ತರಗಿಯ ಇಳಕಲ್ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಮುಂದಿನ ಮೂವತ್ತೊಂದು ವರುಷದವರೆಗೆ ಪೀಠಾಧಿಕಾರದ ಹೊಣೆಯನ್ನು ಹೊತ್ತು, ಸಮಾಜೋದ್ಧಾರಕ ಕಾಯಕವನ್ನು ಹೊತ್ತು ತಮ್ಮ ತ್ರಿಕಾಲ ಪೂಜೆ ನಿಷ್ಠೆಯಿಂದ ಭಕ್ತರ ಹೃದಯ ಮಂದಿರದಲ್ಲಿ ನಡೆದಾಡುವ ದೇವರೆಂದೇ ಪರಿಗಣಿತರಾದರು. ಪಟ್ಟವಾದ ನಂತರ ಹನ್ನೆರಡು ವರುಷಗಳ ಕಾಲ ಮೌನಾನುಷ್ಠಾನ ಕೈಗೊಳ್ಳುತ್ತಾರೆ.

ಚಿತ್ರ ಸಂಖೈ೨ : ಚಿತ್ತರಗಿಯ ಮೂಲ ಮಠ

ಶ್ರೀ ವಿಜಯಮಹಾಂತೇಶರನ್ನು ಪಟ್ಟಕ್ಕೆ ಕುಳ್ಳಿರಿಸಿದ ನಾರದ ಗದ್ದೆಯ ತಾತನವರು ಗುರುವಾಗಿ ಎಲ್ಲ ಜನರು ಕೇಳುವಂತೆ ಮಂತ್ರೋಪದೇಶವನ್ನು ಮಾಡಿದರು. ತಾವು ಸಧ್ಭಕ್ತಿ, ಸದ್ವಿವೇಕ, ಸುವಿರಕ್ತಿಯಿಂದ ನಡೆದುದಾರರೇ ತಮಗೆ ಲೋಕದಲ್ಲಿ ಯಾವ ಭಯವು ಬಾರದು. ಶರಣ ಕರಡೀಶ್ವರನ ಪರತರದ ಗರಡಿಯಲ್ಲಿ ಪಳಗಿದ ತಮ್ಮಂಥ ಅಮೂಲ್ಯ ರತ್ನವನ್ನು ರಾಮಪ್ಪ ದೇಸಾಯಿಯವರು ದೊರಕಿಸಿ ತಂದಿರುವುದು ಇಳಕಲ್ ನಾಡಿನ ಮಹಾ ಪುಣ್ಯವೆಂದು ಭಾವಿಸಬೇಕಾಗಿದೆ. ಗುರುಮಹಾಂತೇಶನ ಅನುಕರಣೆ ಮಾಡುತ್ತಾ ಜೀವನವನ್ನು ಪವಿತ್ರವಾಗಿ ಮಾರ್ಪಡಿಸಿಕೊಳ್ಳಿರಿ ಎಂದು ಹೇಳಿ ವಿಜಯಮಹಾಂತೇಶನಿಗೆ “ಕರಣಹಸಿಗೆ, ಮಂತ್ರಗೌಪ್ಯ, ಶೂನ್ಯಸಂಪಾದನೆ, ಬಸವೇಶ್ವರನ ವಚನ ಹೊತ್ತಿಗೆ, ಶತಕ ತ್ರಯ” ಮೊದಲಾದ ಪವಿತ್ರ ಗ್ರಂಥಗಳನ್ನು, ಭಕ್ತಿ, ಕ್ರಿಯಾ, ಜ್ಞಾನಗಳನ್ನು ವಿಕಾಸ ಮಾಡಿಕೊಳ್ಳಲು ಆಶೀರ್ವದಿಸಿದರು. ವಿಜಯಮಹಾಂತೇಶರು ಆ ಗ್ರಂಥಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಗುರುಗಳ ಶ್ರೀಪಾದಕ್ಕೆ ಅಭಿವಂದಿಸಿದರು. ಮುಂದೆ ಹನ್ನೆರಡು ವರುಷ ಮೌನಾನುಷ್ಠಾನದಲ್ಲಿ ಇದ್ದಾಗ ಈ ಎಲ್ಲ ಗ್ರಂಥಗಳ ಅಧ್ಯಯನಕ್ಕೆ ತೊಡಗಲು ಅದರ ಜ್ಞಾನದಿಂದ ಅವರ ಆತ್ಮೋದ್ಧಾರ, ಸಮಾಜೋದ್ಧಾರ ಎರಡನ್ನು ನಿಭಾಯಿಸಲು ಸಾಧ್ಯವಾಯಿತು.

 ಶ್ರೀ ವಿಜಯಮಹಾಂತೇಶರು ಮೃಷ್ಟಾನ್ನವನ್ನು ಬಯಸದವರು. ಪಲ್ಲಕ್ಕಿಯಲ್ಲಿ ಮೆರೆಯದವರು. ಅವರಿಗೆ ಗಾದಿ ತೆಕ್ಕೆ ತೂಗು ಮಂಚವು ಬೇಡವೇ ಬೇಡ. ಅವರು ದಿನಾಲೂ ಅನ್ನ, ಮುದ್ದೆ, ಬೇಳೆಸಾರು, ಪಲ್ಯ, ಆಕಳ ಹಾಲು ಇಷ್ಟೇ ಪ್ರಸಾದ ರೂಪದಿಂದ ಸೇವಿಸುತ್ತಿದ್ದರು.

ಚಿತ್ತರಗಿ ಇಳಕಲ್ ಮಠವು ಮೂಲ ಸಂಸ್ಥಾನ ಪೀಠವು ಅದಕ್ಕೆ ಛತ್ರ ಚಾಮರ ಪಲ್ಲಕ್ಕಿ ಕುದುರೆ ಸವಾರರು ವಂದಿಮಾಗಧರು ಮೊದಲಾದ ಸರಂಜಾಮು ಇದ್ದರೂ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಪೀಠದ ೫೬ ಶಾಖಾ ಮಠಗಳ ವ್ಯವಸ್ಥೆಯನ್ನು ನೋಡಲಿಕ್ಕೆ ಬೇರೆ ಊರುಗಳಿಗೆ ಹೋಗಬೇಕಾದಾಗ ಒಂದು ಬಿಳಿ ಕುದುರೆಯನ್ನು ಮಾತ್ರ ಏರಿ ಹೋಗುತ್ತಿದ್ದರು. ಅವರೇ ಪ್ರೀತಿಯಿಂದ ಸಾಕಿದ ಒಂದು ಗೋವಿಗೆ ಮಹಾಂತಮ್ಮನೆಂದು ಹೆಸರಿಟ್ಟಿದ್ದರು. ಆ ಮಹಾಗೋವಿಗೆ ಶ್ರೀಗಳು ತನ್ನ ಹೊಟ್ಟೆಯ ಮಗುವೊ ಎಂದು ವಾತ್ಸಲ್ಯವನ್ನು ತೋರಿಸುತ್ತಿದ್ದರು.

ಶಿವಯೋಗಮಂದಿರದ ನಿರ್ದೇಶನ

ಕ್ರಿಸ್ತ ಶಕೆ ೧೯೦೮ರಲ್ಲಿ ಬಾಗಲಕೋಟೆಯಲ್ಲಿ ನಾಲ್ಕನೆಯ ವೀರಶೈವ ಮಹಾಸಭೆ ಜರುಗಿತು. ಶ್ರೀಮಂತ ಒಂಟಮುರಿ ದೇಸಾಯಿಯವರ ಅಧ್ಯಕ್ಷತೆಯಲ್ಲಿ ತೆಂಗಿನಮಠದಲ್ಲಿ ನೆರೆವೇರಿತು. ಆ ಅಧಿವೇಶನದಲ್ಲಿ ಗುರು ವಿರಕ್ತಮಠದ ವಟುಗಳನ್ನು ತರಬೇತಿಗೊಳಿಸುವ ಒಂದು ಶಿವಯೋಗಾಶ್ರಮವನ್ನು ಸ್ಥಾಪಿಸಬೇಕೆಂಬ ಠರಾವು ಸರ್ವಾನುಮತದಿಂದ ಸ್ವೀಕೃತವಾಯಿತು. ಆ ಪ್ರಕಾರ ಅಧಿವೇಶನದ ಮರುದಿನವೇ ಸೊಲ್ಲಾಪುರದ ಶ್ರೀ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಅಂತಹ ಪವಿತ್ರ ಸ್ಥಳವನ್ನು ಪರಮಪೂಜ್ಯರಾದ ಶ್ರೀ ಚಿತ್ತರಗಿ ವಿಜಯಮಹಾಂತ ಸ್ವಾಮಿಗಳು ಹುಡುಕಿ ಕೊಡಬೇಕೆಂದು ಅದಕ್ಕಾಗಿ ಪೂಜ್ಯಪಾದರಿಗೆ ಬಿನ್ನವಿಸಿಕೊಳ್ಳಲು ಶ್ರೀ ಹಾನಗಲ್ ಕುಮಾರ ಶಿವಯೋಗಿಗಳನ್ನು ಅಣಿಗೊಳ್ಳಬೇಕೆಂದು ನಿರ್ಧರಿಸಿದರು.

ಚಿತ್ರ ಸಂಖ್ಯೆ ೩ : ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳಲ್ಲಿ ಶಿವಯೋಗಮಂದಿರ ಸ್ಥಳ ಸೂಚನೆಗೆ ಅರಿಕೆ

ಆ ಪ್ರಕಾರ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳವರು, ಚಿತ್ತರಗಿ ಶ್ರೀ ವಿಜಯಮಹಾಂತ ಸ್ವಾಮಿಗಳ ಬಳಿಗೆ ಬಂದು ನಮಸ್ಕರಿಸಿ ಪರಸ್ಪರ ಯೋಗಕ್ಷೇಮದ ಬಗ್ಗೆ ಮಾತಕತೆ ಆದ ಬಳಿಕ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳು “ಪೂಜ್ಯರೇ, ಈಗ ವೀರಶೈವರು  ಧರ್ಮಾಚಾರಣೆಯನ್ನು ಬಿಟ್ಟು ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಿರುವರು. ಮಠದ ಪೀಠಾಧಿಕಾರಿಗಳು ಸ್ವತಃ ಷಟಸ್ಥಲ ಜ್ಞಾನವಿಲ್ಲದೆ ಮನಬಂದಂತೆ ಏನೋ ಸಂಪ್ರದಾಯದ ವಶದಿಂದ ಸ್ವಾಮಿಗಳಾಗಿ ನಿಜವಾದ ಯೋಗ್ಯತೆ ಇಲ್ಲದೇ ದರ್ಪದಿಂದ ನಡೆದು ಭಕ್ತರನ್ನು ಅಂಧಾನುಯಾಯಿಗಳಾಗಿ ಶೋಷಿಸುತ್ತಿದ್ದಾರೆ. ಮಠದ ಪೀಠಾಧಿಪತೆಗಳೇ ಅನಾಢ್ಯರಾಗಿರುವಾಗ ಶಿಷ್ಯಕೋಟಿಯು ಸುಧಾರಣೆಯಾಗುವುದು ಹೇಗೆ ಎಂದು ವಿಚಾರಿಸುತ್ತಿರುವಾಗ ಈಗಿನ ಮಠಾಧಿಪತಿಗಳಲ್ಲಿ ನಿಜವಾದ ಲಿಂಗ ನಿಷ್ಠೆ ಕಡಿಮೆ. ಶಾಸ್ತ್ರೋಕ್ತ ಪೂಜಾವಿಧಾನಗಳನ್ನರಿಯರು, ಯೋಗಾಭ್ಯಾಸ ವರ್ಜಿತರು. ಆದುದರಿಂದ ಅಂತಹವರಿಗೆ ತರಬೇತಿ ಕೊಟ್ಟು ಅರ್ಹರನ್ನಾಗಿ ಮಾಡುವ ಶಿವಯೋಗ ಆಶ್ರಮದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು. ಆದರಿಂದ ಆ ಪೀಠಗಳಿಗೆ ಶಿವಕಳೆ ಕುಂದಿಹೋಗಿದೆ. ಕಾರಣ ತಾವು ಯಾವ ಸ್ಥಳವನ್ನು ಹುಡುಕಿ ನಮಗೆ ತೋರಿಸುವಿರೋ ಅಲ್ಲಿಯೇ ಶಿವಯೋಗಾಶ್ರಮವನ್ನು ರಚಿಸಬೇಕೆಂದು ನಿರ್ಣಯಸಿದ್ದೇವೆ” ಎಂದು ಹಾನಗಲ್ ಕುಮಾರ ಶಿವಯೋಗಿಗಳು  ನುಡಿಯಲು ಶ್ರೀ ವಿಜಯಮಹಾಂತೇಶರು

“ಕುಮಾರ ಯೋಗಿಯೇ, ನೀನು ಬೇರಲ್ಲ, ಶಿವನು ಬೇರಲ್ಲ ನಮ್ಮ ಜನರು ಮಂದಭಾಗ್ಯರು, ಅಜ್ಞಾನ ಅಂಧಕಾರದಲ್ಲಿ ಮುಳುಗಿ ತೊಳಲುತ್ತಿರುವರು ತಮ್ಮಿಂದ ಜ್ಞಾನ ಜ್ಯೋತಿಯು ಬೆಳಗಬೇಕಾಗಿದೆ ನಿನ್ನಿಚ್ಛೆಯೇ ಶಿವನೇಚ್ಛೆಯೂ” ಅದಕ್ಕಾಗಿ ನೀವು ಒಳ್ಳೆಯ ಯೋಜನೆಯನ್ನೇ ಕೈಗೊಂಡಿರುವಿರಿ. ತಮ್ಮ ಕಾರ್ಯಕ್ಕೆ ಶೀಘ್ರವೇ ಯಶಸ್ಸು ದೊರಕುತ್ತದೆ. ನಾನು ಆ ಕಾರ್ಯಕ್ಕೆ ಸದಾ ಸಿದ್ದ. ಸದ್ಯ ಹೊರಡುವೆನು ನಡೆಯಿರಿ ಎಂದು ಹೇಳಿ ತಮ್ಮ ಕುದರೆಯನ್ನೇರಿ ಯೋಗ್ಯ ಸ್ಥಳ ಹುಡುಕಲು ಹೊರಟರು. ಹಾನಗಲ್ ಕುಮಾರ ಶಿವಯೋಗಿಗಳಿಗೆ ತಮ್ಮ ರಥದಲ್ಲಿ ಜೊತೆಗೆ ಬರಲು ತಿಳಿಸಿದರು.  ಈ ಸುದ್ದಿ ಕೇಳಿ ದಾರಿಯುದ್ದಕ್ಕೂ ಹಲವಾರು ಜನ ಭಕ್ತರು, ಸ್ವಾಮಿಗಳು ಹಿಂಬಾಲಿಸಿ ಹೊರಟರು.

ಶ್ರೀಗಳಿಗೆ ದಾರಿಯುದ್ದಕ್ಕೂ ಜನರು ತಳಿರು ತೋರಣಗಳಿಂದ ಮಂಗಳ ವಾದ್ಯಗಳಿಂದ ಪ್ರಭುವಿಗೆ ದೀಪಾರುತಿಯನ್ನು ಬೆಳಗಿ ಭಜನಾ ಮೇಳಗಳು ಜನರ ಜೈಘೋಷದೊಡನೆ ಪ್ರತಿದ್ವನಿಯಾಯಿತು. ಮಲಪಹಾರಿಯ ಗುಂಟ ಹೋರಟ ಶ್ರೀಗಳು ಮೊದಲು ಐಹೊಳೆಗೆ ದಯಮಾಡಿಸಿದರು ಅಲ್ಲಿಯ ಅನೇಕ ಗವಿಗಳು ಸುಂದರ ಶಿಲಾ ಮೂರ್ತಿಗಳು ಮನೋಹರವಾದ ಸೃಷ್ಟಿ ಸೌಂದರ್ಯಕ್ಕೆ ಆಕರ್ಷಣೆಯಾಗಿ ಕೆಲವರು ಆ ಸ್ಥಳವು ಯೋಗ್ಯವೆಂದು ಪೂಜ್ಯರಿಗೆ ಅರಿಕೆ ಮಾಡಿಕೊಂಡರು ಅದಕ್ಕೆ ಶ್ರೀಗಳು ಇಲ್ಲಿ ರಾಮಲಿಂಗೇಶ್ವರ ಗುಡಿಯೂ ಇದೆ. ಪ್ರತಿ ನಿತ್ಯ ಇಲ್ಲಿ ಅನೇಕ ಪ್ರವಾಸಿಗಳು ಬಂದು ಹೋಗುವದರಿಂದ ಏಕಾಂತಕ್ಕೆ ಶಾಂತತೆಗೆ ಆಸ್ಪದ ಇಲ್ಲವಾದುದರಿಂದ ಈ ಸ್ಥಳ ನಿರಾಕರಿಸಿ ಮುಂದೆ ಪಟ್ಟದಕಲ್ಲಿಗೆ ಬರುತ್ತಾರೆ. ಅದು ಹಿಂದೆ ಚಾಲುಕ್ಯ ರಾಜರು ಪಟ್ಟಕ್ಕೆ ಕೂಡ್ರುವ ಸ್ಥಳವಾಗಿದ್ದಿತು. ಅಲ್ಲಿ ರಾಜಮನೆತನದ ಕುರುಹುಗಳು, ದೇವಾಲಯಗಳು ಇದ್ದುದನ್ನು ನೋಡಿ ಕೆಲವರು ಆ ಸ್ಥಾನವು ಏಕಾಂತಕ್ಕೆ ಹಾಗೂ ಶಾಂತತೆಗೆ ಯೋಗ್ಯ ಎಂದು ವಿಜ್ಞಾಪಿಸಿದಾಗ ಆಗ ಶ್ರೀಗಳು ಅತ್ತಿತ್ತ ನೋಡುವಷ್ಟರಲ್ಲಿ ಘಟಸರ್ಪವೊಂದು ಹೆಡೆಯೆತ್ತಿ ಆಡುವುದನ್ನು ಕಂಡು ಜನರಿಗೆ ಅತ್ತ ನೋಡಿರಿ ನಾಗೇಂದ್ರನು ಈ ಸ್ಥಳವು ಬೇಡೆಂದು ಹೆಡೆಯನ್ನು ಅಲ್ಲಾಡಿಸಿ ಹೇಳುತ್ತಿರುವಂತೆ ಭಾಸವಾಯಿತು. ತ್ಯಾಗಿಗಳಾದ ವಿರಕ್ತರಿಗೆ ಈ ಭೋಗದ ರಾಜ್ಯದ ತಾಣವೇ ಬೇಡೆಂದು ಹೇಳಿ ಮುಂದೆ ಸಾಗಿದರು. ಪಟ್ಟದಕಲ್ಲಿನಿಂದ ಕುಮಾರಶಿವಯೋಗಿಗಳ ನೇತೃತ್ವದಲ್ಲಿ ಒಂದು ತಂಡ ಮಹಾಕೂಟದ ಕಡೆಗೆ ಸಾಗುವಂತೆ ಶ್ರೀಗಳು ನಿರ್ದೇಶಿಸಿದರು. ನಾವು ಬಂದು ನಿಮ್ಮನ್ನು ಸೇರುತ್ತೇವೆ ಎಂದು ವಿಜಯಮಹಾಂತ ಶಿವಯೋಗಿಗಳು ಮಲಪಹಾರಿ ಬಲದಂಡೆ ನದಿಯಗುಂಟ ಶಿವಯೋಗ ಮಂದಿರದ ಸ್ಥಳ ಅರಸುತ್ತ ಹೊರಟರು ಜೊತೆಯಲ್ಲಿ ಅನೇಕ ಭಕ್ತರು ಗೋಮಾತೆ ಮಹಾಂತಮ್ಮಳು ಸಾಗಿದಳು.

ವಿಪರೀತವಾದ ಬಿಸಿಲು, ದಟ್ಟವಾದ ಮುಳ್ಳು ಕಂಟಿಗಳಿಂದ ಕೂಡಿದ ಕಾಡು ಪ್ರದೇಶವನ್ನು ದಾಟಿಕೊಂಡು ಬರುವಾಗ ʼನೆಲುವಿಗೆʼ ಎಂಬ ಗ್ರಾಮಕ್ಕೆ ಬಂದಾಗ ಕೃಷಿ ಕೆಲಸದಲ್ಲಿ ತೊಡಗಿದ ಒಬ್ಬ ವ್ಯಕ್ತಿಯನ್ನು ಇಲ್ಲಿ ಎಲ್ಲಿಯಾದರೂ ಪತ್ರಿವನವಿದೆಯೇ? ಎಂದು  ಕೇಳಿದಾಗ , ಆ ವ್ಯಕ್ತಿಯು ಈ ಕುರುಚಲು ಕಾಡಿನ ದುರ್ಗಮ ದಾರಿಯಲ್ಲಿ ಇನ್ನು ಕ್ರಮಿಸಿದರೆ ಅಲ್ಲಿ ಪತ್ರಿ ಗಿಡಗಳ ವನವೇ ಇದೆ ಆದರೆ ದಾರಿಯಲ್ಲೆಲ್ಲ ವಿಪರೀತ ಡಬ್ಗಳ್ಳಿ ಕಂಟಿಗಳು ಇರುವುದರಿಂದ ಸುಲಭವಾಗಿ ಸಾಗುವುದು ಸುಲಭವಲ್ಲ ಎಂದಾಗ, ಅದೇನೇ ಆಗಲಿ, ಆ ಪತ್ರಿ  ವನವನ್ನು ತೋರು ಬಾ ಎಂದು ಕರೆದಾಗ ಒಳ್ಳೆ ಹುಮ್ಮಸ್ಸಿನಿಂದ ದಾರಿಯಲ್ಲಿ ಇರುವ ಮುಳ್ಳು ಕಂಟಿಗಳನ್ನು ಸವರುತ್ತ ಸವರುತ್ತ ಮುಂದೆ ಸಾಗಿದಾಗ ದಟ್ಟವಾದ ಗಿಡಗಳ ಸಮೃದ್ಧಿಯಿಂದ ಕೂಡಿದ ಪ್ರದೇಶವು ಗೋಚರವಾಯಿತು. ಅದಕ್ಕೆ ಕೆಲವರು ಇಂತಹ ದುರ್ಗಮ ಪ್ರದೇಶದಲ್ಲಿ ಹಾಡು ಹಗಲೇ ಕೊಳ್ಳೆಹೊಡೆಯುವ ಕಳ್ಳರಿದ್ದಾರೆ ಇಲ್ಲೇಕೆ ಸ್ವಾಮಿ ಎನ್ನುವಂತಹ ಸಂಶಯವು ಕೆಲವರಲ್ಲಿ ಉದ್ಭವವಾಯಿತು. ಅಂತಹ ದುರ್ಗಮ ಪ್ರದೇಶವನ್ನು ದಾಟಿಕೊಂಡು, ಗುಂಪು ಗುಂಪಾಗಿ ಬೆಳೆದ ಪತ್ರಿ ವನವನ್ನು ಕಂಡರು. ಅಲ್ಲಿಯೇ ಪುಟ್ಟದಾದ ಪುರಾತನವಾದ ಕೊಟ್ಟೂರು ಬಸವೇಶ್ವರನ ದೇವಸ್ಥಾನ ಇದೆ ಎಂದು ಹೇಳಿ ನೆಲವಿಗೆಯ ಆ ವ್ಯಕ್ತಿಯು ನಾವು ಶ್ರಾವಣ ಮಾಸದಲ್ಲಿ ಇಲ್ಲೇ ಬಂದು ಹಣ್ಣು ಕಾಯಿ ಮಾಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಚಿತ್ರ ೪ : ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿ ಗಳಿಂದ ಶಿವಯೋಗಮಂದಿರದ ಸ್ಥಳ ಗುರುತು 

ಅಲ್ಲಿಗೆ ಬಂದು ನಿಂತಾಗ ಪುರಾತನ ನಂದಿ ವಿಗ್ರಹವನ್ನು ಕಂಡು ಶ್ರೀಗಳು ನೀ ಕೊಟ್ಟರೂ ಬಸವೇಶ, ಕೊಡದಿದ್ದರೂ ಬಸವೇಶ, ನೀ ಕೊಟ್ಟೂರು ಬಸವೇಶ ಎಂದು ಸಂಭೋದಿಸಿ ಅಲ್ಲೇ ಮುಂದೆ ಇದ್ದ ಕಲ್ಲು ಬಂಡೆಯ ಮೇಲೆ ಕುಳಿತುಕೊಳ್ಳುತ್ತ ಮಹಾಂತಮ್ಮನನ್ನು ಮಂದಿರಕ್ಕೆ ಸರಿಯಾದ ಸ್ಥಳವೇನಮ್ಮಾ ಎಂದಾಗ ಒಳ್ಳೆಯದು ಎಂದು ಮೌನವಾಗಿ ಗೋಣು ಆಡಿಸಿತು. ಅದೇ ಮಹಾಂತಮ್ಮನ ಸಮ್ಮತಿಯೆಂದು, ಅದೇ ಸ್ಥಳ ಶಿವಯೋಗ ಮಂದಿರಕ್ಕೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಮಹಾಕೂಟದಲ್ಲಿ ಇದ್ದ ಹಾನಗಲ್ ಕುಮಾರಶಿವಯೋಗಿಗಳನ್ನು ಕರೆಯಿಸಿದಾಗ ಮಹಾಂತಪ್ಪಗಳು ಒಂದು ಕಲ್ಲು ಬಂಡೆಯ ಮೇಲೆ ಪ್ರಸನ್ನಚಿತ್ತರಾಗಿ ಕುಳಿತಿದ್ದನ್ನು ಕಂಡ ಕುಮಾರಶಿವಯೋಗಿಗಳು ಆನಂದಭರಿತರಾಗಿ ತಾವು ಯೋಗ್ಯವಾದ ಸ್ಥಳವನ್ನೇ ಆಯ್ಕೆ ಮಾಡಿರುವಿರಿ ಎಂದು ಆನಂದದಿಂದ ಕೊಂಡಾಡಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಇಲ್ಲಿಯೇ ಮಂದಿರ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎಂದು ಒಪ್ಪಿಕೊಂಡರು. ಆಗ ಬಾಗಲಕೋಟೆಯ ಕೆಲ ಭಕ್ತರು ಇಂತಹ ಗಾಢವಾದ ಅರಣ್ಯದಲ್ಲಿ ಅನೇಕ ಕ್ರೂರ ಪ್ರಾಣಿಗಳಿರುತ್ತವೆ. ಮಂದಿರಕ್ಕೆ ಇದು ಸರಿಯಾದ ಸ್ಥಳವಲ್ಲ ಎಂದು ನಿರಾಕರಿಸಿದರೂ ಕುಮಾರ ಶಿವಯೋಗಿಗಳು ಇದೆ ಮಂದಿರ ಕಟ್ಟಲು ಪ್ರಶಸ್ತ ಮತ್ತು ಪ್ರಶಾಂತ ಸ್ಥಳವೆಂದು ಲಿಂಗ ಮುದ್ರೆಯನ್ನು ಹಾಕಿದರು. ಮುಂದೆ ಅಷ್ಟೇ ಸ್ಥಳ ಸಾಕಾಗದೆಂದು ನೆರೆಯ ಪ್ರದೇಶದ ಒಡೆಯರನ್ನು ಕರೆಯಿಸಿ ಯೋಗ್ಯ ಬೆಲೆಗೆ ಆ ಸ್ಥಳವನ್ನು ಕೊಂಡುಕೊಳ್ಳಲು ವಿಚಾರಾಸಿದಾಗ ೫೦೦ ರೂಪಾಯಿಗಳಿಗೆ ಕೊಡುತ್ತೇನೆ ಎಂದು  ಹೇಳಿದಾಗ ೩೦೦ ರೂಪಾಯಿಗಳಿಗೆ ಕೊಡು ಎಂದು ಹೇಳಿದರು. ಆಗ ಆತನು ನಾನು ಹೊಲವನ್ನು ಮಾರುವುದೇ ಇಲ್ಲ ಎಂದನು ಆಗ ವಿಜಯಮಂಹಾಂತೇಶ ಶ್ರೀಗಳು ಆ ಹೊಲವನ್ನು ಆತನು ಕೊಡದಿದ್ದರೆ ಬಿಡಲಿ, ಲೀಲಾವಿನಲ್ಲಿ ಅದು ನಮಗೆ ಸಿಕ್ಕೇ ಸಿಗುತ್ತದೆ ಎಂದು ಭವಿಷ್ಯ ನುಡಿದರು ಆ ಪ್ರಕಾರ ಆ ಬ್ರಾಹ್ಮಣನು ತಾನು ಮಾಡಿದ ಸಾಲಕ್ಕಾಗಿ, ಆ ಹೊಲವನ್ನು ಸರಕಾರದವರು ಲೀಲಾವಿಗೆ ಹಚ್ಚಲಾಗಿ ೨೦೦ ರುಪಾಯಿಗೆ ಆ ಹೊಲ ಮಂದಿರಕ್ಕೆ ಸೇರ್ಪಡೆಯಾಯಿತು. ಇದಲ್ಲದೆ ಶ್ರೀ ಹಾನಗಲ್ ಸ್ವಾಮಿಗಳು ನೆರೆಯ ಮತ್ತೆರಡು ಹೊಲಗಳನ್ನು ಖರೀದಿಗೆ ತೆಗೆದುಕೊಂಡು ಅಲ್ಲಿ ಶಿವಯೋಗ   ಮಂದಿರವನ್ನು ಸ್ಥಾಪನೆ ಮಾಡಿದರು. ಮುಂದೆ ಅನೇಕ ಮಠಪೀಠಗಳನ್ನು ಬೆಳಗುವ ಚಿಜ್ಯೋತಿಗಳು ಈ ಶಿವಯೋಗ ಮಂದಿರದಿಂದ ಹೊರಹೊಮ್ಮಿದವು.   

ಶ್ರೀ ವಿಜಯಮಹಾಂತ ಶಿವಯೋಗಿಗಳು ಹಾನಗಲ್ ಕುಮಾರ ಶಿವಯೋಗಿಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು. ಹೀಗೆ ೧೯೦೯ರಲ್ಲಿ ಆರಂಭಗೊಂಡ ಶಿವಯೋಗ ಮಂದಿರದ ಕಾರ್ಯ ನಾಲ್ಕೈದು ವರುಷಗಳ ಕಾಲ ಜರುಗಿತು.

ಶ್ರೀ ವಿಜಯಮಹಾಂತ ಶಿವಯೋಗಿಗಳು ಶಕೆ ೧೮೩೩ ವಿರೋಧಿಕೃತ ನಾಮ ಸಂವತ್ಸರದ ಕಾರ್ತೀಕ ಶುದ್ಧ ಪಂಚಮಿಯಲ್ಲಿ ಲಿಂಗೈಕ್ಯರಾದರು ಅದು ಕ್ರೈಸ್ತ ಶಕ ೧೯೧೧ರ ಶುಕ್ರವಾರ ಆಗಿತ್ತು. ಅವರ ಸ್ಥೂಲ ದೇಹವು ನಶ್ವರವಾದರೂ ಅವರ ಚೈತನ್ಯವು ಗದ್ದುಗೆಯ ರೂಪದಿಂದ ಭಕ್ತರನ್ನು ಸದಾ ಕಾಯುತ್ತಲಿದೆ.


          ಚಿತ್ರ ಸಂಖ್ಯೆ ೫ : ಶ್ರೀ ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ

ಚಿತ್ರ ಸಂಖ್ಯೆ ೬ : ಶ್ರೀ ಹಾನಗಲ್‌ ಕುಮಾರ  ಶಿವಯೋಗಿಗಳು ಕಟ್ಟಿಸಿದ  ವಿಜಯಮಹಾಂತ ಶಿವಯೋಗಿಗಳ ಗದ್ದುಗೆ ಇಲಕಲ್ಲ

 

ಲೇಖಕರು: ಪ್ರೋ.ಶ್ರೀಮತಿಸುಲೋಚನ.ಶಿ.ಹಿರೇಮಠ.

ಮೂಲ ಹಿಂದಿ : ಸಂತ ವಿನೋಭಾ

ಕನ್ನಡ ಭಾಷಾಂತರ : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

ಶ್ರದ್ಧೆ ಭಕ್ತಿ ಮತ್ತು ಶ್ರದ್ಧೆಗಳಲ್ಲಿ ವ್ಯತ್ಯಾಸವಿದೆ . ದೇವಸ್ಥಾನದ ಮೂರ್ತಿಯಲ್ಲಿರುವ ಆಸಕ್ತಿಯು ಭಕ್ತಿಯಲ್ಲ , ಅದು ಶ್ರದ್ಧೆ ಎನಿಸುತ್ತದೆ . ಶ್ರದ್ಧೆಯು ಭಕ್ತಿಯಲ್ಲ . ಅದು ನಿಶ್ಚಿತವಾಗಿಯೂ ಭಕ್ತಿಯಮಾರ್ಗ , ಶ್ರದ್ಧೆ ಇರುವುದೇನೂ ಮಹತ್ವದ ಸಂಗತಿಯಲ್ಲ ಆದರೆ ಶ್ರದ್ಧೆ ಇಲ್ಲದೇ ಇರುವುದು ತುಂಬಾ ಮಹತ್ವದ ಸಂಗತಿ ಎನಿಸುತ್ತದೆ . ಉದಾಹರಣೆಗೆ ನಮಗೆ ಅಕ್ಷರಜ್ಞಾನವಿದ್ದರೆ ಅದರಲ್ಲಿ ವಿಶೇಷವೇನೂ ಅನಿಸುವುದಿಲ್ಲ . ಆದರೆ ಅಕ್ಷರಜ್ಞಾನವೇ ಇಲ್ಲದಿದ್ದರೆ ಹೆಚ್ಚಿನ ಜ್ಞಾನವನ್ನು ಪಡೆಯುವುದು ಅಸಂಭವವೇ ಸರಿ . ಈ ದೃಷ್ಟಿಯಿಂದ ನಮ್ಮಲ್ಲಿ ಶ್ರದ್ಧೆಯೇ ಇಲ್ಲದಿದ್ದರೆ ಭಕ್ತಿಯು ಬರಲು ಸಾಧ್ಯವೇ ಇಲ್ಲ . ನಾನು – ನನ್ನದು ಎಂಬ ಅಹಂಕಾರ ಮಮಕಾರಗಳಿಂದ ಮುಕ್ತವಾಗುವುದೇ ನಿಜಾರ್ಥದಲ್ಲಿ ಭಕ್ತಿ ಎನಿಸುವದು . ಭಾರತದೇಶದೆಲ್ಲೆಡೆ ಭಕ್ತಿಭಾವವು ಓತಪ್ರೋತವಾಗಿದೆ . ಆದರೆ ಅದು ಸಾಮಾನ್ಯವಾದ ಶ್ರದ್ಧೆಯಾಗಿದೆ . ಶ್ರದ್ಧೆಯು ಬಾಲಭಾವ ( ಮಕ್ಕಳ ಭಾವ ) ಎನಿಸುತ್ತದೆ . ಇತ್ತ ಜ್ಞಾನವೂ ಇಲ್ಲ , ಅತ್ತ ಶ್ರದ್ಧೆಯೂ ಇಲ್ಲದ ಸಂದೇಹವುಳ್ಳ ಜನರಿಂದ ಏನೂ ಸಾಧಿತವಾಗುವುದಿಲ್ಲ . ಅಂಥವರಿಗೆ ಯಾವ ವಸ್ತುವೂ ದಕ್ಕುವುದು ಸಾಧ್ಯವಿಲ್ಲ . ಅಕಸ್ಮಾತ್ ಏನಾದರೂ ದಕ್ಕಿದರೆ ಅದರ ವಿಷಯದಲ್ಲಿಯೂ ಅವರಿಗೆ ಸಂಶಯ ಹುಟ್ಟುವುದು . ಜ್ಞಾನವೂ ಇಲ್ಲ , ಜ್ಞಾನದ ಸಾಧನವಾದ ಶ್ರದ್ಧೆಯೂ ಇಲ್ಲವಾದರೆ ಉಳಿಯುವುದೊಂದೇ ಸಂಶಯಮಾತ್ರ ಇಂಥ ಸಂಶಯಿ ಸಂಪೂರ್ಣವಾಗಿ ನಾಶವಾಗುತ್ತಾನೆ . ( ಸಂಶಯಾತ್ಮಾ ವಿನಶ್ಯತಿ ) ಆದರೆ ಸಾಮಾನ್ಯವಾಗಿ ಜನರಲ್ಲಿ ಜ್ಞಾನವಿಲ್ಲದಿದ್ದರೂ ಶ್ರದ್ಧೆಯಂತೂ ಇದ್ದೇ ಇರುತ್ತದೆ . ಇಂತಹ ಪ್ರಾಮಾಣಿಕ ಮತ್ತು ಮೂಲಭೂತವಾದ ಶ್ರದ್ಧೆ ಇಲ್ಲದಿದ್ದರೆ ಜೀವನ ನಡೆಯುವುದೇ ಕಷ್ಟವಾಗುತ್ತದೆ . ಸಾಮಾನ್ಯ ಜನರು ‘ ರಾಮ – ಕೃಷ್ಣ – ಹರಿ ಎನ್ನುತ್ತಾರೆ . ಹಾಗೆಯೇ ಚೈತನ್ಯ ಮಹಾಪ್ರಭುಗಳೂ ಕೂಡ ‘ ರಾಮ – ಕೃಷ್ಣ – ಹರಿ ‘ ಎನ್ನುತ್ತಿದ್ದರು . ಇವೆರಡರಲ್ಲಿಯೂ ಇರುವ ವ್ಯತ್ಯಾಸವೇನು ? ಸಾಮಾನ್ಯ ಜನರು ಹಾಗೆ ಅನ್ನುವಲ್ಲಿ ಶ್ರದ್ಧೆ ಇದೆ . ಹರಿನಾಮ ಸ್ಮರಣೆ ಏನೋ ನಡಿಯುತ್ತದೆ . ಆದರೆ ಅದಕ್ಕೆ ತಕ್ಕ ಆಚರಣೆ ಇಲ್ಲವಾದರೆ ಅದು ಡಂಭಾಚಾರವಲ್ಲವೆ ? ಖಂಡಿತವಾಗಿಯೂ ಅದು ಡಂಭಾಚಾರವಲ್ಲ . ಒಂದಿಬ್ಬರು ಡಂಭಾಚಾರಿಗಳಿದ್ದರೂ ಇರಬಹುದು . ಆದರೆ ಲಕ್ಷ – ಕೋಟಿ ಸಂಖ್ಯೆಯ ಜನ ಹರಿನಾಮ ಸ್ಮರಣೆ ಮಾಡುತ್ತಾರೆ . ಅದು ಡೋಂಗಿ ಅಲ್ಲ , ಶ್ರದ್ಧೆಯಾಗಿದೆ . ಆದರೆ ಶ್ರದ್ಧೆ ಮತ್ತು ಭಕ್ತಿಗಳಲ್ಲಿರುವ ವ್ಯತ್ಯಾಸವನ್ನು ನಾವು ಅರಿಯದಿದ್ದರೆ ಅದು ಭಕ್ತಿಯ ಅನುಕರಣ ಮಾತ್ರ ಎನಿಸುವುದು . ಹರಿನಾಮ ಸ್ಮರಣೆ ಮಾಡುವ ಸಂದರ್ಭದಲ್ಲಿ ಚೈತನ್ಯ ಮಹಾಪ್ರಭುಗಳು ಕುಣಿಯುತ್ತಿದ್ದರು . ಅವರಂತೆ ಯಾರಾದರೂ ನಾಮಸ್ಮರಣೆ ಮಾಡುವಾಗ ಕುಣಿದರೆ ಅವರಿಗೆ ಚೈತನ್ಯ ಮಹಾಪ್ರಭುಗಳಿಗಾದ ಅನುಭೂತಿ ಉಂಟಾಗಬಹುದೆ ? ಶ್ರದ್ಧೆಯೊಡನೆ ನಿಷ್ಠೆಯೂ ಮೇಳೈಸಿದಾಗ ಭಕ್ತಿಯ ರೂಪ ಪ್ರಕಟಗೊಳ್ಳುವುದು . ಉಪಾಸನೆಯಲ್ಲಿ ಜ್ಞಾನವು ಅಪೇಕ್ಷಿತವಲ್ಲ . ಆದರೆ ಶ್ರದ್ಧೆಯು ಅಪೇಕ್ಷಿತವಾಗಿದೆ . ಶ್ರದ್ಧೆಯು ಉಪಾಸನೆಯ ಪ್ರಾಣತತ್ವವಾಗಿದೆ . ಶ್ರದ್ಧೆ ಇಲ್ಲದ ಸಾಧನೆಯು ವ್ಯರ್ಥವಾದುದು . ಮನುಷ್ಯನಲ್ಲಿ ಪ್ರಾಣವಿರುವಷ್ಟು ಶ್ರದ್ಧೆಯೂ ಇರುತ್ತದೆ . ಪ್ರಾಣಶಕ್ತಿಯಷ್ಟೇ ಶ್ರದ್ಧಾಶಕ್ತಿಯೂ ಜಾಗೃತವಾಗುತ್ತದೆ . ಪ್ರತಿಯೊಬ್ಬ ಮನುಷ್ಯನಲ್ಲಿ ಸ್ವಲ್ಪಾದರು ಬುದ್ಧಿಶಕ್ತಿ ಇರುವಂತೆ ಶ್ರದ್ಧೆಯೂ ಇರುತ್ತದೆ . ಬುದ್ಧಿಯು ಜ್ಞಾನದ ಬಗ್ಗೆ ತಿಳಿಸಿದರೆ ಶ್ರದ್ಧೆಯು ಆ ಜ್ಞಾನದಲ್ಲಿ ಮನುಷ್ಯನನ್ನು ಸ್ಥಿರಗೊಳಿಸುವುದು . ಶ್ರದ್ಧೆ ಇಲ್ಲದೆ ಮನುಷ್ಯನು ತಾನು ತಿಳಿದ ತತ್ವ ಸಿದ್ಧಾಂತಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಾಧ್ಯವಾಗುವುದಿಲ್ಲ . ಶ್ರದ್ಧೆಯಲ್ಲಿ ಸಾತ್ವಿಕ , ರಾಜಸ ಮತ್ತು ತಾಮಸವೆಂದು ಮೂರು ಪ್ರಕಾರಗಳು , ಜ್ಞಾನರಹಿತ ಮತ್ತು ಅಶಾಸ್ತ್ರೀಯವಾದ ಶ್ರದ್ಧೆಯು ಪ್ರಗತಿಪಥದತ್ತ ಮುನ್ನಡೆಸದು . ಕೇವಲ ಸಾತ್ವಿಕ ಮತ್ತು ಶಾಸ್ತ್ರೀಯವಾದ ಶ್ರದ್ಧೆ ಮಾತ್ರ ನಮ್ಮನ್ನು ಪಾರುಗೊಳಿಸುತ್ತದೆ . ಜ್ಞಾನವು ಮೂಲಭೂತವಾಗಿ ಸಾತ್ವಿಕವಾಗಿದ್ದರೂ ಸತ್ವ ರಜ – ತಮ ಎಂಬ ಮೂರು ಪ್ರಕಾರವಾಗಿರುವಂತೆ , ಕರ್ಮವು ಮೂಲದಲ್ಲಿ ರಾಜಸವಾಗಿದ್ದರೂ ಸತ್ವ – ರಜ – ತಮ ಎಂದು ಮೂರು ಪ್ರಕಾರವಾಗಿರುವಂತೆ , ಶ್ರದ್ಧೆಯೂ ಕೂಡ ಮೂಲತಃ ಸಾತ್ವಿಕವಾಗಿದ್ದರೂ ಸತ್ವ – ರಜ – ತಮ ಎಂಬ ಮೂರು ಪ್ರಕಾರಗಳಿಂದ ಕೂಡಿದೆ . ಶ್ರದ್ಧೆಯು ಸಾತ್ವಿಕವಾಗಿದ್ದರೆ ಅದರ ಸಹಾಯದಿಂದ ನಡೆಯುವ ವ್ಯಕ್ತಿಗೆ ಯಾವುದೇ ರೀತಿಯ ಅಪಾಯಗಳಿಲ್ಲ . ಆದರೆ ಶ್ರದ್ಧೆಯು ಸಾತ್ವಿಕವಾಗಿದೆ , ರಾಜಸ ಅಥವಾ ತಾಮಸವಾಗಿದೆ ಎಂದು ತಿಳಿಯುವುದು ಹೇಗೆ ? ಸಾತ್ವಿಕ ಮನುಷ್ಯರು ದೇವತೆಗಳ , ರಾಜಸ ವ್ಯಕ್ತಿಗಳು ಯಕ್ಷ ಮತ್ತು ರಾಕ್ಷಸರ , ಹಾಗೆಯೇ ತಾಮಸದಿಂದ ಕೂಡಿದವರು ಪ್ರೇತ – ಭೂತ ಪಿಶಾಚಿಗಳ ಉಪಾಸನೆ ಮಾಡುತ್ತಾರೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ . ಪ್ರೇತೋಪಾಸನೆಯು ಸಂಹಾರಶಕ್ತಿಯನ್ನು ಪಡೆಯಲು ಮತ್ತು ಭೂತ ಪಿಶಾಚಿಗಳ ಉಪಾಸನೆಯು ವಶೀಕರಣ ಶಕ್ತಿಗಾಗಿ ಮಾಡಲ್ಪಡುತ್ತದೆ . ಆದರೆ ಶ್ರದ್ಧೆಯು ಸಾತ್ವಿಕವೇ ಆಗಿರಲಿ , ರಾಜಸ ಅಥವಾ ತಾಮಸವೇ ಆಗಿರಲಿ ಇದರ ನಿರ್ಣಯ ಮಾತ್ರ ಶಾಸ್ತ್ರಗಳಿಂದಲೇ ಮಾಡಲಾಗುತ್ತದೆ . ಶಾಸ್ತ್ರ ಮತ್ತು ಶ್ರದ್ಧೆಗಳು ಕೂಡಿದರೆ ಅಲ್ಲಿ ಯಾವುದೇ ರೀತಿಯ ಅಪಾಯವಿಲ್ಲ . ಶ್ರದ್ಧೆಯು ಜೀವನದ ಮೂಲಾಧಾರವಾಗಿದ್ದರೂ ಅದು ಶಾಸ್ತ್ರೀಯ ಮತ್ತು ಸಾತ್ವಿಕವಾಗಿರಬೇಕಾದುದು ಅತ್ಯವಶ್ಯ . ಶ್ರದ್ಧೆಯು ಕರ್ಮಶಕ್ತಿಯಾಗಿದೆ . ಶ್ರದ್ಧೆಯನ್ನು ಹಾಳುಮಾಡಿದರೆ ಕರ್ಮಶಕ್ತಿಯೂ ಕ್ಷೀಣಿಸುತ್ತದೆ ಮತ್ತು ಅಪೂರ್ಣ ಶ್ರದ್ಧೆಯಿಂದ ಕಾರ್ಯಗಳೂ ಅಪೂರ್ಣವಾಗುತ್ತವೆ . ಆದ್ದರಿಂದ ಶ್ರದ್ಧೆಯು ಇರಲೇಬೇಕು . ಹಾಗೆಯೇ ಅದು ಸಾತ್ವಿಕವಾದುದಾಗಿರಲೇಬೇಕು .

ಶ್ರದ್ಧೆ ಇಲ್ಲದೆ ಯಾವ ಕಾರ್ಯವೂ ಸಾಧಿತವಾಗಲಾರದು . ಶ್ರದ್ಧೆಯಿಂದಲೇ ಕೃತಿಗೆ ಮೊದಲಾಗುತ್ತದೆ . ನಂತರ ಅದು ನಿಷ್ಠೆಯಲ್ಲಿ ಪರ್ಯವಸಾನಗೊಳ್ಳುತ್ತದೆ . ನಿಷ್ಠೆಯನ್ನು ಹೊಂದುವ ಮೊದಲು ಮನುಷ್ಯನು ಶ್ರದ್ಧೆಯಿಂದ ಕಾರ್ಯವನ್ನು ಮಾಡಬಲ್ಲ . ನಿಷ್ಠೆಯು ಅನುಭವಜನ್ಯವಾದುದು . ಅಂತೆಯೇ ಅದರ ಸ್ಥಾನ ನಂತರದ್ದು , ಆದರೆ ಶ್ರದ್ಧೆ ಮಾತ್ರ ಆರಂಭದಿಂದಲೇ ಇರಬೇಕಾಗುತ್ತದೆ . ಶ್ರದ್ಧೆಯು ಗೋಡೆಯಂತೆ ಗಟ್ಟಿಯಾಗಿ ನಿಲ್ಲುತ್ತದೆ ಹೊರತು ಪರದೆಯಂತೆ ಜೋತಾಡುವುದಿಲ್ಲ . ಅದು ಗಟ್ಟಿಯಾಗಿ ನಿಲ್ಲುತ್ತದೆ ಅಥವಾ ಬಿದ್ದು ಹೋಗುತ್ತದೆ . ಅದು ಎಂಟಾಣೆ , ನಾಲ್ಕಾಣೆ ಪ್ರಮಾಣದಲ್ಲಿ ಆಂಶಿಕವಾಗಿ ನಿಲ್ಲುವುದಿಲ್ಲ . ಇದ್ದರೆ ಪೂರ್ಣ ಪ್ರಮಾಣದಲ್ಲಿರುತ್ತದೆ , ಇಲ್ಲದಿದ್ದರೆ ಇಲ್ಲವೇ ಇಲ್ಲ . ಎಲ್ಲಿಯವರೆಗೆ ಶ್ರದ್ಧೆಯು ನಿಷ್ಠೆಯ ರೂಪವನ್ನು ಪಡೆಯುವುದಿಲ್ಲವೋ ಮತ್ತು ಜೀವನದ ಧೈಯ ನಿರ್ಧಾರಿತವಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಜೀವನವು ತತ್ವಾನುಸಾರ ನಡೆಯುವುದಿಲ್ಲ . ಯಾವಾಗ ನಮ್ಮಂತರಂಗದಲ್ಲಿ ನಿಷ್ಠೆಯು ಹುಟ್ಟಿ ಕೊಳ್ಳುವುದೋ ಆಗಲೇ ಭಕ್ತಿಯು ಆರಂಭವಾಯಿತೆಂದರಿಯಬೇಕು . ನಿರಂತರತೆಯೇ ನಿಷ್ಠೆಯ ಲಕ್ಷಣ . ನಿಷ್ಠೆಯುಳ್ಳ ಮನುಷ್ಯನು ನಿರಂತರ ಒಂದೇ ಮಾರ್ಗವನ್ನು ಅನುಸರಿಸುತ್ತಾನೆ . ಅವನಿಗೆ ಹಾಗೆ ಮಾಡುವುದರಿಂದ ದಣಿವು ಉಂಟಾಗುವುದಿಲ್ಲ ಮತ್ತು ಭಾರವೂ ಅನಿಸುವುದಿಲ್ಲ . ಅದು ಅವನಿಗೆ ಅತ್ಯಂತ ಸಹಜವಾದ , ಸ್ವಾಭಾವಿಕವಾದ ಕ್ರಿಯೆ ಎನಿಸುತ್ತದೆ . ನಾವು ಶ್ರದ್ಧೆಯಿಂದ ಕಾರ್ಯಾರಂಭವೇನೋ ಮಾಡುತ್ತೇವೆ , ಮಾಡುತ್ತ ಮಾಡುತ್ತ ಅದು ಸೇವೆಯಾಗುತ್ತದೆ . ನಂತರ ಅನುಭವ ಉಂಟಾಗುತ್ತದೆ . ಅದರಿಂದ ಮತ್ತೆ ನಿಷ್ಠೆಯು ಹುಟ್ಟಿಕೊಳ್ಳುತ್ತದೆ ಮತ್ತು ಆ ನಿಷ್ಠೆಯಿಂದಲೇ ನಮಗೆ ಆಂತರಿಕ ಸಮಾಧಾನವೂ ಪ್ರಾಪ್ತವಾಗುತ್ತದೆ . ಅಂತಃಸಮಾಧಾನ ಇರುವಲ್ಲಿ ಆನಂದವು ಇದ್ದೇ ಇರುತ್ತದೆ . ಆದ್ದರಿಂದ ಮೊದಲು ಶ್ರದ್ಧೆಯುಳ್ಳವರಾಗಬೇಕು . ಆಮೇಲೆ ಅನುಭವವೂ , ಅನುಭವದ ನಂತರ ಅದರ ನಿಷ್ಠೆಯು ಗಟ್ಟಿಗೊಳ್ಳುವುದು . ಶ್ರದ್ಧೆಯು ಆರಂಭದ ಸ್ಥಿತಿಯಾದರೆ , ನಿಷ್ಠೆಯು ಅಂತಿಮವಾದುದಾಗಿರುತ್ತದೆ . ಪ್ರತ್ಯಕ್ಷಾನುಭೂತಿ ಉಂಟಾಗುವವರೆಗೆ ಶ್ರದ್ಧೆಯನ್ನೇ ನಾವು ನಂಬಿಕೊಳ್ಳಬೇಕು . ಶ್ರದ್ಧೆಯು ಪ್ರಾಥಮಿಕ ಅವಸ್ಥೆಯಾಗಿದೆ . ಅದು ಪರಿಪಕ್ವವಾದಾಗ ನಿಷ್ಠೆ ಎನಿಸುತ್ತದೆ . ನಿಷ್ಠೆ ಅರ್ಥಾತ್ Conviction , ಶ್ರದ್ಧೆ ಅರ್ಥಾತ್ Faith , ನಿಷ್ಠೆ ಅರ್ಥಾತ್ ಪರಮೇಶ್ವರನಲ್ಲಿ ಅಚಲವಾದ ನಂಬಿಗೆ , ಅದಿಲ್ಲದೇ ಭಕ್ತಿ ಸಾಧ್ಯವಿಲ್ಲ . ನಮ್ಮ ಬದುಕು – ಸಾವು ಎಲ್ಲವೂ ಪರಮಾತ್ಮನಿಗಾಗಿಯೇ ಮೀಸಲು , ಭಗವಂತನಲ್ಲಿ ಸಂಪೂರ್ಣ ಶರಣಾಗತಿಯೇ ನಿಷ್ಠೆ ಎಂಬ ಮಾತಿದೆ . ಕುರಾನನಲ್ಲಿಯೂ ‘ ನಾನು ನಾಳೆ ಇದನ್ನು ಮಾಡುವೆ ‘ ಎಂದು ಅನ್ನಬಾರದು , ‘ ಈಶ್ವರೇಚ್ಛೆ ಇದ್ದರೆ ನಾಳೆ ಇದು ಆಗಬಹುದು ‘ ಎಂದು ಅನ್ನಬೇಕೆಂದು ಹೇಳಲಾಗಿದೆ ಇನ್ಯಾ ಅಲ್ಲಾಹ

ಜಗತ್ತಿನಲ್ಲಿ ಬಹಳ ಕಡಿಮೆ ಜನರಿಗೆ ಆತ್ಮಜ್ಞಾನ ಉಂಟಾಗುತ್ತದೆ . ಜ್ಞಾನವಾಗ ದಿದ್ದರೂ ನಡೆದೀತು . ಆದರೆ ಶ್ರದ್ಧೆಯಾದರೋ ಅವಶ್ಯವಾಗಿ ಇರಲೇಬೇಕು ಶ್ರದ್ಧಾವಾನ್ ಲಭತೇ ಜ್ಞಾನಮ್ , ಶ್ರದ್ಧೆ ಇಲ್ಲದಿದ್ದರೆ ನಡೆಯದು . ಶ್ರದ್ಧೆಯ ವಿಷಯದಲ್ಲಿ ಅನೇಕ ತಪ್ಪುಕಲ್ಪನೆಗಳೂ ಇವೆ . ಶ್ರದ್ದೆ ಕುರುಡಾಗಿರುತ್ತದೆ . ಬುದ್ಧಿ ಮತ್ತು ಶ್ರದ್ಧೆಗಳು ವ್ಯತ್ಯಾಸವೇನೋ ಇದೆ . ಆದರೆ ಅವುಗಳಲ್ಲಿ ಯಾವುದೇ ವಿರೋಧವಿಲ್ಲ . ಅವೆರಡರ ಪರಸ್ಪರ ವಿರೋಧಿಯಾಗಿವೆ ಎಂದು ಜನರು ಹೇಳುತ್ತಿರುತ್ತಾರೆ . ಶ್ರದ್ಧೆ ಮತ್ತು ಬುದ್ಧಿಯಲ್ಲಿ ಜನನದ ಸ್ಥಾನ ಬೇರೆ ಬೇರೆಯಾಗಿದೆ . ವಿಚಾರಶಕ್ತಿಯಿಂದ ಬುದ್ಧಿಯ ಉಗಮವಾದರೆ ಪ್ರಾಣಶಕ್ತಿಯಿಂದ ಶ್ರದ್ಧೆಯ ಉಗಮವಾಗುತ್ತದೆ . ಶ್ರದ್ಧೆಯೊಂದನ್ನೇ ನನ್ನಲ್ಲಿಡು ಅದರ ಮುಂದೆ ಜ್ಞಾನ ಯಾವ ಲೆಕ್ಕದ್ದು ‘ ಎಂದು ಭಗವಂತನೇ ಹೇಳಿದ್ದಾನೆ . ಅಸ್ತೀವೋಪಲಬ್ಧವ್ಯ : ಅಂದರೆ ‘ ಅವನಿದ್ದಾನೆ ‘ ಎಂಬ ಗಟ್ಟಿ ವಿಶ್ವಾಸವಿರಲಿ , ಜ್ಞಾನ ತಾನಾಗಿಯೇ ಲಭ್ಯವಾಗುತ್ತದೆ ಎಂದು ಉಪನಿಷತ್ತು ಕೂಡ ಹೇಳುತ್ತದೆ . ಈ ಧ್ವನಿ ಹೃದಯದಿಂದ ಹೊರ ಹೊಮ್ಮಬೇಕು , ಅನ್ಯತಾ ವಿನಾಶವೇ ಗತಿಯಾಗುವುದು . ‘ ಸಂಶಯಾತ್ಮಾ ವಿನಶ್ಯತಿ ‘ ಎಂದು ಭಗವದ್ಗೀತೆಯಲ್ಲಿಯೂ ಇದನ್ನೇ ಹೇಳಲಾಗಿದೆ . ಬುದ್ಧಿಯ ಕೆಲಸ ನಡೆಯುವ ವರೆಗೆ ಅದನ್ನು ಉಪಯೋಗಿಸಿಕೊಳ್ಳಬೇಕು . ಯಾವಾಗ ಬುದ್ಧಿಯ ಕಾರ್ಯ ಸ್ಥಗಿತವಾಗುವುದೋ ಆಗ ಶ್ರದ್ಧೆಯಿಂದ ಆ ಕಾರ್ಯವನ್ನು ಮುಂದುವರಿಸಬೇಕು . ಆದರೆ ಅದು ಬುದ್ಧಿಯ ನಿರ್ದೇಶನದಂತೆಯೇ ಮುಂದುವರಿಯಬೇಕು . ಬುದ್ಧಿಯು ಅಲ್ಲಗಳೆಯುವುದನ್ನು ಸ್ವೀಕರಿಸಬೇಕೆಂದು ದೇವರು ಹೇಳುವುದಿಲ್ಲ . ಆದರೆ ಯಾವುದನ್ನು ಬುದ್ಧಿಯು ಖಂಡಿಸುವುದಿಲ್ಲವೋ , ಎಲ್ಲಿ ಬುದ್ಧಿ ತಲುಪಲು ಸಾಧ್ಯವಾಗುವುದಿಲ್ಲವೋ ಅಂಥ ಸಂದರ್ಭದಲ್ಲಿ ಶ್ರದ್ಧೆಯ ಮೂಲಕ ಕಾರ್ಯ ನಿರ್ವಹಿಸಬೇಕು . ಆತ್ಮಜ್ಞಾನವಾಗಿಯೇ ತೀರುತ್ತದೆ ಎಂಬ ನಿಷ್ಕರ್ಷಕ್ಕೆ ಬುದ್ಧಿಯು ಬಂದಿದ್ದರೂ ಶ್ರದ್ಧೆಯಿಂದಲೇ ಮುಂದುವರಿಯಬೇಕು . ಯಾವನೋ ಶ್ರದ್ಧಾವಂತನಿರುತ್ತಾನೆ , ಇನ್ನಾವನೋ ಬುದ್ಧಿವಂತನಿರುತ್ತಾನೆ . ಅಂದರೆ ಒಬ್ಬ ಶ್ರದ್ಧಾವಾದಿಯಾಗಿದ್ದರೆ ಮತ್ತೊಬ್ಬ ಬುದ್ಧಿವಾದಿಯಾಗಿರುತ್ತಾನೆ ಹೀಗಿರುವಾಗ ಇವರಿಬ್ಬರಲ್ಲಿ ಭೇದವೆಣಿಸುವುದು ಬಹಳ ತಪ್ಪಾಗುತ್ತದೆ ಎಂದು ಕೆಲವರು ಹೇಳುತ್ತಾರೆ . ವಾಸ್ತವವಾಗಿ ಶ್ರದ್ಧೆ ಮತ್ತು ಬುದ್ಧಿ ಪರಿಪೂರ್ಣವಾಗಿ ಒಂದೇ ಸ್ಥಾನದಲ್ಲಿ ಇರಬಹುದಾಗಿದೆ . ಬುದ್ಧಿ ಮತ್ತು ಶ್ರದ್ಧೆ ಇವುಗಳಲ್ಲಿ ಯಾವುದೇ ವಿರೋಧವಿಲ್ಲ . ಬುದ್ಧಿಗೇಡಿಯೊಬ್ಬ ಶ್ರದ್ಧೆ ಇಲ್ಲದವನಾಗಿರಬಹುದು . ಹಾಗೆಯೇ ಅತ್ಯಂತ ಬುದ್ಧಿವಂತ ವ್ಯಕ್ತಿಯು ಶ್ರದ್ಧೆಯುಳ್ಳವನೂ ಆಗಿರಬಹುದು . ಬುದ್ಧಿ ಮತ್ತು ಶ್ರದ್ಧೆ ಇವೆರಡರಲ್ಲಿ ವಿರೋಧವನ್ನು ಕಲ್ಪಿಸುವುದು ತೀರ ತಪ್ಪಾಗುತ್ತದೆ . ಏಕೆಂದರೆ ಅವೆರಡರ ವಿಷಯಗಳೂ ಕಿವಿ ಮತ್ತು ಕಣ್ಣುಗಳ ವಿಷಯ ಬೇರೆ ಬೇರೆಯಾಗಿರುವಂತೆ , ವಿಭಿನ್ನವಾಗಿವೆ . ಸುಶ್ರಾವ್ಯವಾದ ಸಂಗೀತ ಕೇಳುತ್ತಿದ್ದರೆ ಕಿವಿ ಅದರ ವಿಷಯದಲ್ಲಿ ತನ್ನ ನಿರ್ಣಯವನ್ನು ಬೇಗನೆ ವ್ಯಕ್ತಮಾಡುತ್ತದೆ . ಆದರೆ ಕಣ್ಣು ಸುಮ್ಮನಿರುತ್ತದೆ . ಏಕೆಂದರೆ ಸಂಗೀತದ ವಿಷಯದಲ್ಲಿ  ಪರ ಮತ್ತು ವಿರೋಧಾಭಿಪ್ರಾಯ ವ್ಯಕ್ತಪಡಿಸುವುದು ಕಣ್ಣಿನ ಕೆಲಸ ಅಲ್ಲ . ಅಂದ ಮಾತ್ರಕ್ಕೆ ಕಿವಿ ಮತ್ತು ಕಣ್ಣುಗಳಲ್ಲಿ ಯಾವುದೋ ವಿರೋಧವಿದೆ ಎಂದು ಭಾವಿಸಬೇಕಿಲ್ಲ ; ಅದೇ ರೀತಿ ಶ್ರದ್ಧೆ ಮತ್ತು ಬುದ್ಧಿಯ ಕ್ಷೇತ್ರಗಳೂ ಬೇರೆ ಬೇರೆಯಾಗಿವೆ . ಶ್ರದ್ಧೆಯಿಂದ ಕರ್ಮಶಕ್ತಿಯೂ , ಬುದ್ಧಿಯಿಂದ ಜ್ಞಾನಶಕ್ತಿಯೂ ಪ್ರಾದುರ್ಭವಿಸುತ್ತದೆ . ಮೋಟಾರು ವಾಹನದಲ್ಲಿ ಒಂದು ಮಾರ್ಗ ಸೂಚಿಸುವ , ಮತ್ತೊಂದು ವೇಗವನ್ನು ವರ್ಧಿಸುವ ಇಂಜಿನ್ನುಗಳಿದ್ದರೂ ಅವೆರಡರಲ್ಲಿ ಯಾವುದೇ ವಿರೋಧವಿಲ್ಲ . ಅವೆರಡು ಕೂಡಿಯೇ ವಾಹನವನ್ನು ಮುನ್ನಡೆಸುತ್ತವೆ . ಮಾರ್ಗಸೂಚಿಸುವ ( ದಿಶಾಸೂಚಕ ) ಯಂತ್ರವಿಲ್ಲದಿದ್ದರೆ ವಾಹನವು ಎಲ್ಲಿಯಾದರೂ ಡಿಕ್ಕಿ ಹೊಡೆಯಬಹುದು . ಹಾಗೆಯೇ ವೇಗವರ್ಧಕ ಯಂತ್ರವಿಲ್ಲದಿದ್ದರೆ ವಾಹನವು ಚಲಿಸುವುದೇ ಇಲ್ಲ . ಅದೇ ರೀತಿ ಶ್ರದ್ಧೆ ಇಲ್ಲದಿದ್ದರೆ ಕರ್ಮ ( ಕ್ರಿಯಾಶಕ್ತಿ ಬರದು , ಬುದ್ಧಿ ಇಲ್ಲದಿದ್ದರೆ ಯಾವ ವಸ್ತುವಿನ ಕಡೆಗೆ ಲಕ್ಷ್ಯವಹಿಸಬೇಕೆಂಬುದೇ ತಿಳಿಯುವುದಿಲ್ಲ . ಬುದ್ಧಿಯು ಮಾರ್ಗ ತೋರಿಸುತ್ತದೆ . ಶ್ರದ್ಧೆಯು ಅದನ್ನು ಕಾರ್ಯರೂಪಕ್ಕೆ ತರುತ್ತದೆ . ಕಾರ್ಯರೂಪಕ್ಕೆ ತರುವ ಅಧಿಕಾರ ಶ್ರದ್ಧೆಯದಾದರೆ ವಿಚಾರಗಳ ಒಡೆಯ ಬುದ್ಧಿಯಾಗಿರುತ್ತದೆ . ಇವೆರಡರ ಸಹಾಯ ಸಹಕಾರಗಳಿಂದಲೇ ಜೀವನವು ಪರಿಪೂರ್ಣವಾಗುತ್ತದೆ . ಶ್ರದ್ಧೆ ಶಕ್ತಿಶಾಲಿಯಾಗಿರುವಷ್ಟು ಬುದ್ಧಿಯು ಶಕ್ತಿಶಾಲಿಯಲ್ಲ . ಹಾಗೆಯೇ ಶ್ರದ್ಧೆಯು ದುರ್ಬಲವಾಗುವಷ್ಟು ಬುದ್ಧಿಯು ದುರ್ಬಲವಾಗುವುದಿಲ್ಲ . ಶ್ರದ್ಧೆಯು ಒಂದು ನಿರ್ದಿಷ್ಟ ಹಂತವನ್ನು ಮೀರಿ ದೂರಕ್ಕೆ ಸಾಗಲಾರದು . ಬುದ್ಧಿಯು ದೂರವನ್ನು ಕ್ರಮಿಸುತ್ತದೆ . ಅಂತೆಯೇ ಅದು ಬಲಶಾಲಿಯಾಗಿದೆ . ಇದಕ್ಕೆ ಭಿನ್ನವಾಗಿ ಶ್ರದ್ಧೆಯು ಆರಂಭದಲ್ಲಿ ಬುದ್ಧಿಗಿಂತಲೂ ಬಲಶಾಲಿಯಾಗಿರುತ್ತದೆ . ಕೊನೆಯಲ್ಲಿ ಬುದ್ಧಿಯು ಬಲಶಾಲಿ ಯಾಗಿರುತ್ತದೆಯೇ ವಿನಾ ಶ್ರದ್ಧೆಯಲ್ಲ . ನನ್ನ ದೃಷ್ಟಿಯಲ್ಲಿ ತತ್ವಶಾಸ್ತ್ರದ ಸಂಬಂಧವು ತರ್ಕ ಅಥವಾ ಬುದ್ಧಿಯ ಜೊತೆಗೆ ಇರದೇ ಭಾವನೆ , ಹೃದಯ ಮತ್ತು ಶ್ರದ್ಧೆಯ ಜೊತೆಗಿದೆ . ‘ ನಾಯಮಾತ್ಮಾ ಪ್ರವಚನೇನ ಲಭ್ಯ : | ನ ಮೇಧಯಾ ನ ಬಹುನಾ ಶ್ರುತೇನ- ‘ ಈ ಆತ್ಮವು ಪ್ರವಚನ , ಬುದ್ಧಿ ಮತ್ತು ಬಹುಶ್ರುತವಾಗುವಿಕೆಯಿಂದ ಲಭ್ಯವಾಗುವುದಿಲ್ಲ ‘ ಎಂದು ಉಪನಿಷತ್ಕಾರನು ಈ ವಾಕ್ಯದಲ್ಲಿ ಸ್ಪಷ್ಟಪಡಿಸಿದ್ದಾನೆ . ಏಸುಕ್ರಿಸ್ತನ ಅನುಯಾಯಿಗಳಲ್ಲಿ ಸೌಭಾಗ್ಯದಿಂದ ವಿದ್ವಾಂಸರ ಒಂದು ವರ್ಗವೇ ಇತ್ತು . ಅವರಲ್ಲಿ ಬೆಸ್ತ , ಚಮ್ಮಾರ ಮತ್ತು ಬಡಿಗರೂ ಇದ್ದರು . ನರಸಿಂಹ ಮೆಹತಾನನ್ನು ವಿದ್ವತ್ ಗೋಷ್ಠಿಯಲ್ಲಿ ಕರೆದುಕೊಂಡು ಹೋದರೆ ಅಲ್ಲಿ ಅವನು ನಿರುಪಯುಕ್ತನೆನಿಸುವನು . ತತ್ವಶಾಸ್ತ್ರದ ಚರ್ಚೆಯನ್ನು ವಿದ್ವದ್ವರ್ಗ ಮಾಡುತ್ತದೆ . ಆದರೆ ಅದರ ಆಚರಣೆಯನ್ನು ಅವಿದ್ಯಾವಂತರಾಗಿದ್ದೂ ಭಾವಜೀವಿ , ಶ್ರದ್ಧಾಳುಗಳಾದ ನರಸಿಂಹ ಮೆಹತಾ ಮತ್ತು ಮೀರಾಬಾಯಿ ಮಾತ್ರ ಮಾಡಬಲ್ಲರು .

ಬುದ್ದಿಯ ಜೊತೆಗೆ ತತ್ವಶಾಸ್ತ್ರದ ಸಂಬಂಧವಿಲ್ಲ ಹಾಗೆಂದ ಮಾತ್ರಕ್ಕೆ ಬುದ್ಧಿಯ ಅವಶ್ಯಕತೆಯೇ ಇಲ್ಲ ಅಥವಾ ಅದರ ಉಪಯೋಗವೇ ಇಲ್ಲ ಎಂದು ಇದರರ್ಥವಲ್ಲ . ಬುದ್ಧಿಯ ಉಪಯೋಗವೇ ಸಾಕಷ್ಟಿರುವಾಗ ತತ್ವಶಾಸ್ತ್ರದ ಬಗೆಗಂತೂ ಕೇಳುವುದೇ ಬೇಡ , ಸಾಮಾನ್ಯ ಕೂಲಿ ಕೆಲಸದಲ್ಲಿಯೂ ಬುದ್ಧಿಯ ಅವಶ್ಯಕತೆ ಇರುತ್ತದೆ ಮತ್ತು ಅದನ್ನು ಉಪಯೋಗಿಸಲೇ ಬೇಕಾಗುತ್ತದೆ . ಯಾವುದೋ ಒಂದು ಮನೆಯ ಸಾಧನ ಸಾಮಗ್ರಿಗಳ ಬಗ್ಗೆ ಹೇಳುವಾಗ ನಾವು ಆ ಸಾಮಗ್ರಿಗಳಲ್ಲಿ ಆಕಾಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ . ಏಕೆಂದರೆ ಆಕಾಶವು ಸರ್ವಸಾಮಾನ್ಯವಾದ ವಸ್ತುವಾಗಿದೆ . ಹಾಗೆಯೇ ಬುದ್ಧಿಯೂ ಕೂಡ ಸರ್ವಸಾಮಾನ್ಯವಾದುದು . ತತ್ತ್ವಶಾಸ್ತ್ರದ ಜೊತೆಗೆ ಬುದ್ಧಿಯ ಸಂಬಂಧವು ಸಾಮಾನ್ಯವಾಗಿದ್ದರೆ ಶ್ರದ್ಧೆಯು ತತ್ತ್ವಶಾಸ್ತ್ರದ ವಿಶಿಷ್ಟ ತತ್ವವೆನಿಸುತ್ತದೆ . ತರ್ಕ ಮತ್ತು ತತ್ತ್ವಶಾಸ್ತ್ರಗಳಿಗಿಂತಲೂ ಶ್ರದ್ಧೆ ಮತ್ತು ತತ್ವವಿಷಯ ಅತ್ಯಂತ ಅಧ್ಯಯನಯೋಗ್ಯವೆಂದು ತಿಳಿಯಲ್ಪಡುತ್ತದೆ . ಹೃತೂರ್ವಕವಾಗಿ ತತ್ತ್ವಶಾಸ್ತ್ರವನ್ನು ಗ್ರಹಿಸಬೇಕು . ಹೃತ್ಪೂರ್ವಕವಾದಾಗಲೇ ಅದರ ಗ್ರಹಣ ಸಾಧ್ಯ . ಆದ್ದರಿಂದ ಶ್ರದ್ಧಾವಾನ್ ಲಭತೇ ಜ್ಞಾನಮ್ – ಶ್ರದ್ಧಾವಂತನೇ ಜ್ಞಾನವನ್ನು ಪಡೆಯುತ್ತಾನೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳುತ್ತ ಶ್ರದ್ಧೆಯ ಜೊತೆಗೆ ಜ್ಞಾನದ ಪ್ರತ್ಯಕ್ಷ ಸಂಬಂಧವಿರುವುದನ್ನು ಸ್ಪಷ್ಟ ಪಡಿಸಿದ್ದಾನೆ . ಶ್ರದ್ಧೆ , ಸಂಯಮ ಮತ್ತು ಸಾವಧಾನಗಳು ಜ್ಞಾನಪ್ರಾಪ್ತಿಯ ಅಂತರಂಗದ ಸಾಧನಗಳಾಗಿವೆ .

ಶ್ರದ್ಧಾವಂತನಿಗೆ ಮಾತ್ರ ಪುರುಷಾರ್ಥ ಸಿದ್ಧಿಸುವುದು , ಇತರರಿಗಲ್ಲ ಎಂದು ಶಂಕರಾಚಾರ್ಯರು ಹೇಳುತ್ತಾರೆ . ಪಾರಮಾರ್ಥಿಕ ತತ್ವವು ಬಹಳ ಸೂಕ್ಷ್ಮವಾಗಿದೆ . ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ಕಥೆ ಇದೆ . ಶ್ವೇತಕೇತುವನ್ನು ಅವನ ತಂದೆಯು ಕರೆದು- ` ಮಗನೆ , ಎದುರಿಗಿರುವ ಅರಳಿವೃಕ್ಷದ ಹಣ್ಣು ತೆಗೆದುಕೊಂಡು ಬಾ ‘ ಎಂದು ಹೇಳುತ್ತಾನೆ . ಮಗನು ಹಣ್ಣು ತಂದ ಮೇಲೆ ಅದನ್ನು ತುಂಡಾಗಿಸಲು ತಂದೆ ಹೇಳುತ್ತಾನೆ . ಶ್ವೇತಕೇತು ಅದನ್ನು ತುಂಡು ತುಂಡು ಮಾಡಿದ ಮೇಲೆ ಇದರೊಳಗೆ ನಿನಗೇನು ಕಾಣುತ್ತದೆ ಎಂದು ತಂದೆ ಪ್ರಶ್ನಿಸುತ್ತಾನೆ . ಬೀಜ ಕಾಣುತ್ತದೆ ಎಂದು ಶ್ವೇತಕೇತು ಉತ್ತರಿಸಿದಾಗ ತಂದೆಯು ಅದನ್ನೂ ತುಂಡಾಗಿಸಲು ಹೇಳುತ್ತಾನೆ . ಮಗನು ಬೀಜವನ್ನು ತುಂಡರಿಸಿದಾಗ , ತಂದೆಯು ಈಗ ಅದರಲ್ಲಿ ಏನು ಕಾಣುತ್ತಿದೆ ಎಂದು ಕೇಳುತ್ತಾನೆ . ಆಗ ಶ್ವೇತಕೇತುವು ಏನೂ ಕಾಣುವುದಿಲ್ಲ ಎನ್ನುತ್ತಾನೆ . ಆಗ ಈ ಎನೂ ಇಲ್ಲ ಎನ್ನುವುದು ಇದೆಯಲ್ಲ ಅದರೊಳಗಿಂದಲೇ ಈ ವಿಶಾಲವಾದ ಅರಳಿವೃಕ್ಷ ಹುಟ್ಟಿದೆ ತಂದೆಯು ಹೇಳುತ್ತ ಆತ್ಮತತ್ವವೂ ಅತ್ಯಂತ ಸೂಕ್ಷ್ಮವಾಗಿದೆ . ಅದರಿಂದಲೇ ಈ ವಿಶ್ವದ ಸೃಷ್ಟಿಯಾಗಿದೆ – ಆದ್ದರಿಂದ ಮಗನೆ ! ಶ್ರದ್ಧೆಯನ್ನಿಡು ! ಶ್ರದ್ಧತ್ವ !

ಶ್ರುತ್ವಾ ಅನೇಭ್ಯಃ ಉಪಾಸತೇ ! -ಇನ್ನೊಬ್ಬರಿಂದ ಕೇಳಿ ಉಪಾಸನೆ ಮಾಡುವವನಿಗೆ ಶ್ರುತಿಪರಾಯಣನೆಂದು ಗೀತೆ ಹೇಳುತ್ತದೆ . ಶ್ರುತಿಪರಾಯಣ ಎಂದರೆ ಶ್ರದ್ಧಾಪರಾಯಣ ಗುರುವಿನಿಂದ ಶ್ರವಣ ಮಾಡಿದವನು . ಅದರಲ್ಲಿ ಶ್ರದ್ಧೆ ಇಡುವುದು ಮತ್ತು ಯಾವ ರೀತಿಯಲ್ಲೂ ವಿಚಲಿತನಾಗದೆ ಅದರಂತೆಯೇ ವರ್ತಿಸುವುದು . ಆ ಪ್ರಯತ್ನದಲ್ಲಿ ತಪ್ಪು ತಡೆ ಉಂಟಾಗಬಹುದು ಆದರೆ ಪ್ರಯತ್ನ ಬಿಡುವಂತಿಲ್ಲ . ಪ್ರಯತ್ನವೇ ಶ್ರದ್ಧೆಗೆ ಇರುವ ಪ್ರಮಾಣ . ಆಚರಣೆಯು ಪೂರ್ಣಗೊಂಡರೆ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ . ಋಗ್ವೇದದಲ್ಲಿ ಶ್ರದ್ಧಾಸೂಕ್ತವೊಂದಿದೆ . ಅದರಲ್ಲಿ ಋಷಿಯು ಶ್ರದ್ಧಾಂ ಭಗಸ್ಯ ಮೂರ್ಧನಿ- ನಾವು ಶ್ರದ್ಧೆಯನ್ನು ಭಗವಂತನ ತಲೆಯ ಮೇಲಿಡುತ್ತೇವೆ . ಮತ್ತೆ ಮುಂದೆ ಹೇಳುವುದೇನಂದರೆ

ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ |

ಶ್ರದ್ಧಾ ಸೂರ್ಯಸ್ಯ ನಿಮ್ರುಚಿ ಶ್ರದ್ಧೆ ಶ್ರದ್ಧಾಪಯೇಹ ನಃ ||

ನಾವು ಪ್ರಾತಃಕಾಲದಲ್ಲಿ ಶ್ರದ್ಧೆಯ ಆವಾಹನ ಮಾಡುತ್ತೇವೆ ಮತ್ತು ಮಧ್ಯಾಹ್ನ ಶ್ರದ್ಧೆಯ ಆವಾಹನ ಮಾಡುತ್ತೇವೆ . ಸೂರ್ಯಾಸ್ತದ ಸಮಯದಲ್ಲಿಯೂ ನಾವು ಅದೇ ಶ್ರದ್ಧೆಯ ಆವಾಹನ ಮಾಡುತ್ತೇವೆ . ಹೇ ಶ್ರದ್ಧೆಯೇ ! ಶ್ರದ್ಧಾದೇವಿ ! ನಮ್ಮ ಶ್ರದ್ಧೆಯನ್ನು ಬಲಗೊಳಿಸು

ಡಾ.ಗುರುಬಸವ.ಹಿರೇಮಠ.ಬೆಂಗಳೂರು

(ಮೊಗ್ಗೆ ಮಾಯಿದೇವ ಕ್ರಿ.ಶ.  ೧೪೩೦ ಹುಟ್ಟಿದ ಊರು: ಮಲಪ್ರಭಾ ನದಿ ದಂಡೆಯ ಐಪುರ ಕ್ಷೇತ್ರ[ಹುನಗುಂದ ತಾಲೂಕಿನ ಹಿರೇಮಾಗಿ (ಮಗ್ಗೆ)] ,ತಂದೆ: ಸಂಗಮೇಶ್ವರ.ಐಒಳೆ (ಐಪುರಿ) ಯ ಶ್ರೀ ಸಂಗಮೇಶ್ವರ ಗುರುವಿನಲ್ಲಿ ಇವರ ಅಧ್ಯಯನ .ವಿಜಯನಗರ ಇವರ ಕಾರ್ಯ ಭೂಮಿಯಾಯಿತು. ಅನುಭವ ಸೂತ್ರ, ಶಿವ ಸೂತ್ರ  -ಇವರ ಸಂಸ್ಕೃತ ಗ್ರಂಥಗಳು.

 ಶಿವಾಧವ ಶತಕ, ಶಿವಾವಲ್ಲಭ ಶತಕ, ಐಪುರೀಶ್ವರ ಶತಕ  -ಈ ಮೂರು ಶತಕಗಳು ಲಭ್ಯವಾಗಿವೆ. ಪ್ರಭುನೀತಿ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್ಸ್ಥಲ ಗದ್ಯ, ಶತಕತ್ರಯ  -ಈ ಕೃತಿಗಳು ಲಭ್ಯವಾಗಿಲ್ಲ.

 ಬಸವ ಯುಗದಲ್ಲಿ ಹೆದ್ದೊರೆಯಾಗಿ ಹರಿದಿದ್ದ ತತ್ವಸಿದ್ಧಾಂತದ ವಚನ ವಾಹಿನಿ ಕೆಲಕಾಲ ಗುಪ್ತಗಾಮಿನಿಯಾಗಿ ಪ್ರವಹಿಸಿ ವಿಜಯನಗರದ ಇಮ್ಮಡಿ ಪ್ರೌಢರಾಯನ ಕಾಲದಲ್ಲಿ ಮತ್ತೆ ಬೃಹದ್ರೂಪ ತಾಳಿ ಹೊರಹೊಮ್ಮಿತು. ವೀರಶೈವ ಸಾಹಿತ್ಯದ ವಸಂತಕಾಲ ಮತ್ತೆ ಮೂಡಿ ಬಂದಿತು. ನೂರೊಂದು ವಿರಕ್ತರು ಕಾಣಿಸಿಕೊಂಡರು. ಅವರೆಲ್ಲ ಅನುಭಾವಿಗಳು ನಿಜ. ಆದರೆ ಎಲ್ಲರೂ ಸಾಹಿತ್ಯ ಸೃಷ್ಟಿಸಿದವರಲ್ಲ. ಸಾಹಿತ್ಯ ಸೃಷ್ಟಿಸಿದ ಪ್ರಮುಖರಲ್ಲಿ ಒಬ್ಬ ಮೊಗ್ಗೆಯ ಮಾಯಿದೇವ ).

ಭಾರತೀಯ ದರ್ಶನಗಳಲ್ಲಿ ಬೆಳಕಿದೆ, ಬದುಕಿದೆ, ಭರವಸೆಯ ಅತ್ಯಂತಿಕ ಸತ್ಯದ ಸುವಿಧಾನವಿದೆ. ಅವುಗಳಲ್ಲಿ ವೀರಶೈವ ಷಟ್ ಸ್ಥಲ ಸಿದ್ಧಾಂತವು ಒಂದು, ಇದು ಮಾಯಿದೇವರ ಕೃತಿಗಳಲ್ಲಿ ಮಹಾ ಚೇತನವಾಗಿ ಸಾಧಕರಿಗೆ ಬೆಳಕು ಚೆಲ್ಲಿದೆ. ಧರ್ಮನಿಷ್ಠೆ, ದಾರ್ಶನಿಕ ಸಿದ್ಧಾಂತದ ನಿಲುವು, ಅಪರಿಮಿತ ಅನುಭವ ಹೇಗೆ ಕರ್ತೃವಿನ ಶಕ್ತಿ ಅಪಾರ. ವೀರಶೈವ ಸಾಹಿತ್ಯ ಚರಿತ್ರೆಯಲ್ಲಿ ೧೫ನೇ ಶತಮಾನ ಒಂದು ಸುವರ್ಣಯುಗ. ತೋಂಟದ ಸಿದ್ಧಲಿಂಗ ಯತಿಗಳು ಸಮಾಜೋಧಾರ್ಮಿಕಮಣಿಹದಲ್ಲಿ ತೊಡಗಿದ್ದರು. ಪುಲಿಗೆರೆ ಸೋಮನಾಥ, ಶಂಕರದೇವ, ಶಾಂತ ವೃಷಭೇಶ, ವಿರಕ್ತ ತೋಂಟದಾರ್ಯ ಯೋಗಾನಂದ, ನಿಜಲಿಂಗಾರಾಧ್ಯ, ಶಾಂತಾಚಾರ್ಯ, ಹರಿಹರದೇವ ಈ ಪುಣ್ಯ ಪಂಕ್ತಿಯಲ್ಲಿ ಎದ್ದು ತೋರುವ ಶಿವಶಕ್ತಿ ಅದುವೇ ಮೊಗ್ಗೆಯ ಮಾಯಿದೇವ.

ಶ್ರೀ ಗುರುವೇ ಮಹಾಗುರುವೆ ಶಾಂತಿಕಳಾಗುರುವೇ ಶಿವಾತ್ಮವಿದ್ಯಾ

ಗುರುವೇ ಪುರಾಗುರುವೇ ವಿಶ್ವಜಗದ್ಗುರುವೇ ವಿಶುದ್ಧ ಚೆಷ್ಟಾಗುರುವೇ

ಸುಧೀಗುರುವೆ ಭಕ್ತಿ ಯಶೋಗುರುವೇ ಪ್ರಸಾದ ತೇಜೋ

ಗುರುವೇ ಕೃಪಾಗುರುವೇ ಮದ್ಗುರುವೇ ಗುರುವೇ ಶಿವಾಧವಾ!!

    ಇದು ಶತಕತ್ರಯದ ಮೊದಲ ನುಡಿ. ಪ್ರಥಮದಲ್ಲಿ ಶ್ರೀಗುರುವನ್ನು ಸ್ತುತಿಸಿ ಷಟ್ ಸ್ಥಲ ಸಂಪತ್ತಿಗೆ ಮಹತ್ತಿಗೆ ಶಾಂತಿ ಕಳೆಗೆ ಶಿವಾತ್ಮ ವಿದ್ಯೆಗೆ ಪುರಾತನತೆಗೆ ವಿಶಾಲ ಜಗತ್ತಿಗೆ ವಿಶುದ್ಧ ಚರಿತ್ರೆಗೆ ಉತ್ತಮ ಬುದ್ಧಿವಂತಿಕೆಗೆ ಭಕ್ತಿ ಕೀರ್ತಿಗೆ ಪ್ರಸಾದ ತೇಜಸ್ಸಿಗೆ ಕೃಪೆಗೆ ಎನಗೆ ಶ್ರೀ ಗುರುವಾದವರಿಗೆ ಅನಂತ ಶರಣಾರ್ಥಿ. ಕನ್ನಡ ಶತಕ ಸಾಹಿತ್ಯದಲ್ಲಿ  ಶತಕತ್ರಯಕ್ಕೆ ಉನ್ನತ ಸ್ಥಾನ ಮೀಸಲಾಗಿದೆ ಮಾಯಿದೇವರು ಪಟ್ಟಾಧ್ಯಕ್ಷರಾದರೂ ಪಟ್ಟದಲ್ಲಿ ಕೂಡಲಿಲ್ಲ, ಅವರ ಶಿವಯೋಗದ ನಿಲುವು ನೀಳಾಗಿದೆ. ಇವರು ತಮ್ಮ ಶತಕತ್ರಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಹಂತ ಹಂತವಾಗಿ ಸಾಧನ ಕ್ರಮವನ್ನು ಎಲ್ಲಾ ಮತಿಗಳಿಗೂ ಮಥನವಾಗುವಂತಹ ಸರಳ ಸಾಹಿತ್ಯ.

         ಮಾಯಿದೇವರ ಶತಕ ವೀರಶೈವರ ಸಿದ್ಧಾಂತಗಳಾದ ಅಷ್ಟಾವರಣ, ಷಟ್ ಸ್ಥಲ ಮತ್ತು ಪಂಚಾಚಾರದ ತತ್ವವನ್ನು ಎಲ್ಲರಿಗೂ ತಿಳಿಯುವಂತೆ ತಿಳಿಹೇಳುವ ಪರಿ ಅಮೋಘ. ವೀರಶೈವ ತತ್ವಗೀತೆಗೆ ಶತಕತ್ರಯ ಹೊರಹೊಮ್ಮಿದೆ ಕರ್ತೃಗಳು ವ್ಯಕ್ತಿ ಪ್ರತಿಪಾದನೆಗಿಂತ ತತ್ವ ಪ್ರತಿಪಾದನೆ ಬಹಳ ಚೆನ್ನಾಗಿ ಕುಸುಮಗಳಂತೆ ಅರಳಿ ನಿಂತಿವೆ. ಅವರ ಪ್ರಾಸ ಬದ್ಧ ನುಡಿಗಳು ಸಾಧಕನನ್ನು ಪ್ರಯಾಸಗೊಳಿಸದೆ ಪ್ರಬುದ್ಧ ಗೊಳಿಸುತ್ತವೆ.

   ಮಾಯಿ ದೇವರ ಶತಕ ಮೂರು ವಿಷಯಾನುಸಾರ ವಿಭಾಗಗೊಂಡಿದೇ.

೧. ಭಕ್ತಿ ಪ್ರತಿಪಾದಕ

೨. ಜ್ಞಾನ ಪ್ರತಿಪಾದಕ

೩. ವೈರಾಗ್ಯ ಬೋಧಕ

    ವೀರಶೈವ ತತ್ತ್ವಗಳಾದ ಭಕ್ತಿ – ಜ್ಞಾನ – ವೈರಾಗ್ಯಗಳನ್ನು ಘನವಾಗಿ ಭಾವಪೂರ್ಣವಾಗಿ ಕನ್ನಡದಲ್ಲಿ ಬೆಡಗಿನ ರೂಪದಲ್ಲಿ ಬಿತ್ತರಿಸಿವೆ. ಮತ್ತೊಂದು ವಿಶೇಷವೆಂದರೆ ಮೂರು ವಿಭಾಗಗಳಲ್ಲಿಯೂ ಬೇರೆ ಬೇರೆ ಅಂಕಿತನಾಮ ಇದೊಂದು ಮಾಯಿದೇವರ ವಿಶಿಷ್ಟ.೧೫ನೆಯ ಶತಮಾನದ ಪೂರ್ವಾರ್ಧ ಮೊಗ್ಗೆಯಲ್ಲಿ ಜನಿಸಿ, ಐತಿಹಾಸಿಕ ನಗರಿ ಐಹೊಳೆಯಲ್ಲಿ ಅಧ್ಯಯನ ಪೂರೈಸಿ ಚರ ಜಂಗಮರಾಗಿ ಸಾಹಿತ್ಯ ಸಂಪಾದಿಸಿ ಹಂಪೆಯ ಶಿವನೊಂಪಿಯೊಳಗೆ ಶತಕ ಕಾವ್ಯ ಶರಣ ಸಂಪದ ರಚಿಸಿ ಸಾರ್ಥಕ ಶಿವಯೋಗಿಗಳೆನಿಸಿದರು.

   ಮೊಗ್ಗೆ ಮಾಯಿದೇವ ಶಿವಾಚಾರ್ಯರು, ಉಪಮನ್ಯು ಶಿವಾಚಾರ್ಯರ ಪರಂಪರೆಯವರೆಂದು ತಿಳಿದು ಬರುತ್ತದೆ. ಐಪುರಿ ಸೋಮನಾಥನಲ್ಲಿ ಶ್ರದ್ಧೆಯುಳ್ಳವರು ಇವರ ಕೈಯಿಂದ

೧. ಶಿವಾನುಭವ ಸೂತ್ರo (ಸಂಸ್ಕೃತ)

೨. ವಿಶೇಷಾರ್ಥ ಪ್ರಕಾಶಿಕಾ (ಸಂಸ್ಕೃತ)

೩. ಶತಕತ್ರಯ ಪ್ರಕಾಶಿಕಾ(ಸಂಸ್ಕೃತ)

೪. ಷಟ್ ಸ್ಥಲ ಗದ್ಯ

೫. ಸ್ವರವಚನಗಳು

೬. ಪದ್ಯಕೊತ್ತರ ಶತಸ್ಥಲ

೭.ಪ್ರಭುಗೀತ ಹೀಗೆ ಇನ್ನೂ ಅನೇಕ.

ಇವರು ವಿಜಯನಗರದ ಪ್ರೌಢರಾಯರಿಂದ ಗೌರವ ಪಡೆದವರು. ಮಾಯಿದೇವರು ಬಹುಭಾಷಾ ಪಂಡಿತರು. ಶಿವಾಚಾರ್ಯರಾಗಿ ನಾಡೆಲ್ಲಾ ಸಂಚರಿಸಿ ಶಿವತತ್ವವನ್ನು ಪ್ರಸಾರ ಮಾಡಿದ್ದಾರೆ ತಮ್ಮ ಹೆಸರಿನೊಂದಿಗೆ ವಿಭೂ- ಮಹಾತ್ಮ – ಶ್ರೀಮಾನ್ ಎಂಬ ಬಿರುದುಗಳನ್ನು ಸೇರಿಸಿಕೊಳ್ಳದ ನಿರಾಭಾರಿತ್ವ ಅವರದು. ಇಷ್ಟದೈವ,  ಮಹಾದೈವಪುರಿಶ್ವರ, ಆರಾಧ್ಯ ಗುರುಗಳು ಉಪಮನ್ಯು ಶಿವಾಚಾರ್ಯರು, ಭೀಮನಾಥಪ್ರಭು, ಕಲ್ಮೈಶ್ವರ, ಬೊಪ್ಪನಾಥಗುರು, ಶ್ರೀನಾಕರಾಜ, ಶ್ರೀ ಸಂಗಮೇಶ್ವರ ಇಂತಹ ಮಹಾ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದ ಈ ಸಾಧಕ ಗುರುದೇವರ ಕುರಿತು ಭಕ್ತಿ ಪ್ರತಿಪಾದಕ  ಶಿವಾಧವಾ ಮೊದಲ ಶತಕ. 

ಸಂಸ್ಕೃತ ಮತ್ತು ಕನ್ನಡದ ಪ್ರಕಾಂಡ ಪಂಡಿತರಾದ ಮಾಯಿದೇವರು ತಮ್ಮ ಕೃತಿಗಳಲ್ಲಿ ಧರ್ಮ ಸಿದ್ಧಾಂತಗಳನ್ನು ಎಳೆ ಎಳೆಯಾಗಿ ಹೇಳಿದ್ದಾರೆ. ಶತಕತ್ರಯಗಳಲ್ಲಿ ಮೊದಲು ಭಕ್ತಿಪ್ರತಿಪಾದಕವಾಗಿ ಶಿವಾಧವ ಎಂಬ ಅಂಕಿತದೊಂದಿಗೆ ಮುಂದಿನ ಭಾಗದಲ್ಲಿ ಜ್ಞಾನ ನಿರೂಪಕವಾಗಿ ಶತಕವನ್ನು ಶಿವಾವಲ್ಲಭ ಎಂಬ ಅಂಕಿತದೊಂದಿಗೆ ಕೊನೆಯದಾಗಿ ವೈರಾಗ್ಯ ಭೋದಕವಾಗಿ ಮಹದೈಪುರೀಶ್ವರಾ.

ನುಡಿವೆಡೆಯಲ್ಲಿ ನೋಡುವೆಡೆಯಲ್ಲಿ ರಮಿಪ್ಪೆಡೆಯಲ್ಲಿ ವಸ್ತುವಂ

ಪಿಡಿವೆಡೆಯಲ್ಲಿ ಭೋಗಿಪೆಡೆಯಲ್ಲಿ ಸುಖಂಬಡೆವಲ್ಲಿ ದೇಹಮಂ

ಬಿಡುವೆಡೆಯಲ್ಲಿ ಲಿಂಗಕಳೆ ಲಿಂಗಗುಣಂ ಘನಲಿಂಗಯೋಗಮಾದೊಡೆ

ಬಳಿಕಾ ಮಹಾತ್ಮನನದೇನೆನ ಬರ್ಪುದದಂ ಶಿವಾಧವಾ||

ಆಡುವಾಗ ನೋಡುವಾಗ ಕ್ರೀಡಿಸುವಾಗ ಪಡಿ ಪದಾರ್ಥವನ್ನು ಹಿಡಿಯುವಾಗ ವಿಷಯವನ್ನು ಭೋಗಿಸುವಾಗ ಸುಖಾನುಭವದಲ್ಲಿರುವಾಗ ಮೈದೆಗೆಯುವಾಗ ಸ್ವಾರ್ಥವಾಸನೆಯಿಲ್ಲದೆ ಲಿಂಗ ಕಳೆ, ಲಿಂಗ ಗುಣ ಲಿಂಗಯೋಗಗಳಲ್ಲಿ ನಿಬ್ಬೆರಗಾದ ಆ ಮಹಾನುಭಾವನನ್ನು ಬಣ್ಣಿಸಲು ಸಾಧ್ಯವಿಲ್ಲ

ಶ್ರೀ ಮಚ್ಛಾಂಭವ ಭಕ್ತಿಯೋಗ ವಿಲಸನ್ನಿರ್ವಾಣ ನಿತ್ಯೋತ್ಸವ

ಪ್ರೇಮಾನಂದರಸಾಬ್ಧಿವರ್ಧನ ಸದಾಚಾರಕ್ರಿಯಾಕೌಶಲಾ

ರಾಮೋದ್ಧಾಮ ಗುಣಪ್ರಭೂತ ಮಹದೈಶ್ವರ್ಯಾನುಭೊತಿ ಪ್ರಭಾ

ಧಾಮಂ ತತ್ಪರಮಂ ಪದಂ ಗುರುಪದಂ ವಂದೇ ಶಿವಾವಲ್ಲಭಾ||

ಪರಮಪದ ಗುರುಪದ; ಎಂದು ಹೆಸರಾಂತ ಅದಕ್ಕೆ ಪೊಡಮಡುವೆ. ಶ್ರೀಮಂತವಾದುದು ಶಾಂಭವಭಕ್ತಿಯೋಗ; ಅದನ್ನು ವಿಕಾಸಗೊಳಿಸುವುದು ಗುರುಚರಣ. ಆ ಭಕ್ತಿಕುಸುಮದ ಮಕರಂದ ಮುಕ್ತಿ; ಅದರಲ್ಲಿ ಅಚ್ಚಳಿಯದ ಉಲ್ಲಾಸವನ್ನು ಉಂಟುಮಾಡುವುದು ಗುರುಚರಣ ಮತ್ತು ಪ್ರೇಮಾನಂದ ರಸಾಬ್ಧಿಯನ್ನು ವರ್ಧಿಸುತ್ತದೆ; ಎಂದಿಗೂ ಕ್ರಿಯಾಚಾರ ಕುಶಲತೆಯಿಂದೊಪ್ಪುತ್ತದೆ; ಉದ್ದಾಮ ಗುಣ, ಪ್ರಭೂತ ಐಶ್ವರ್ಯ, ಅನುಭೂತಿ  ಪ್ರತಿಭೆಗಳಿಗೆ ನೆಲೆಯಾಗಿದೆ ಗುರುಚರಣ.

ಲಿಂಗದೊಳಿಟ್ಟ ದೃಷ್ಟಿ ನಿಜದೃಷ್ಟಿಯೊಳಿರ್ದ ಮನಂ ಮನಸ್ಸಿನೊಳ್

ಪಿಂಗದ ನಿಂದ ಭಾವಮದರೊಳ್ ನೆ

ಲೆಗೊಂಡ ಶಿವಾತ್ಮ ಲಿಂಗವಾ

ಲಿಂಗದೊಳಿರ್ದು ನಿತ್ಯ ಸುಖಿಯಾಗಿ ವಿರಾಜಿಸುವಂಗೆ ಬಾಹ್ಯಕ

ರ್ಮಂಗಳವೇತಕ್ಕಯ್ಯ ಪರಮಪ್ರಭುವೇ ಮಹದೈಪುರೀಶ್ವರಾ||

ಕಲಾತ್ಮಕ ಲಿಂಗದಲ್ಲಿ ನೆಟ್ಟನೋಟ, ಆ ನೆಟ್ಟನೋಟದಲ್ಲಿ ನೆಲೆಸಿದ ಮನ, ಆ ಮನಸಿನಲ್ಲಿ ಬೆರೆಸಿದ ಭಾವ, ಆ ಭಾವದಲ್ಲಿ ನೆಲೆಗೊಂಡು ಪರಶಿವಲಿಂಗ, ಆ ಲಿಂಗದಲ್ಲಿ ಸಂಗಸಮರಸದಿಂದಿದ್ದು ನಿತ್ಯಸುಖಿಯಾಗಿ ವಿರಾಜಿಸುವವನಿಗೆ ಬಾಹ್ಯಜಡ ಕರ್ಮಗಳು ಬೇಕಿಲ್ಲ. ಇವುಗಳಿಂದ ಆತನಿಗೆ ಆಗಬೇಕಾದುದೂ ಏನೊಂದಿರುವುದಿಲ್ಲ.

ಶಿವಾನುಭವಸೂತ್ರಂ ಹಾಗೂ ವಿಶೇಷಾರ್ಥ ಪ್ರಕಾಶಿಕಾ ಎರಡು ಗ್ರಂಥಗಳು ಪೂರ್ವೋತ್ತರ ಭಾಗಗಳಿಂದ ಕೂಡಿದ ಗ್ರಂಥಗಳು. ಪೂರ್ವಭಾಗದ ಶಿವಾನುಭವ ಸೂತ್ರಂ ಗ್ರಂಥದಲ್ಲಿ ಷಟ್ ಸ್ಥಲ ವಿಷಯವನ್ನು ವಿಸ್ತಾರವಾಗಿ ಪ್ರತಿಪಾದಿಸಿರುವನು. ಮಾಯಿದೇವನು ಆ ಗ್ರಂಥದಲ್ಲಿ ಉಳಿದಿರುವ ವಿಶೇಷ ವಿಷಯದ ಪ್ರತಿಪಾದನೆಯನ್ನು ವಿಶೇಷಾರ್ಥ ಪ್ರಕಾಶಿಕೆಯಲ್ಲಿ ಮಾಡಿರುವುದರಿಂದ ಆ ಗ್ರಂಥಕ್ಕೆ ವಿಶೇಷಾರ್ಥ ಪ್ರಕಾಶಿಕಾ ಎಂದು ಕರೆದಿರುವನು. ಸ್ಥಳ ನಿರ್ದೇಶನ, ಲಿಂಗಸ್ಥಲ ನಿರೂಪಣ, ಅಂಗಸ್ಥಲ ಸ್ವರೂಪ, ಲಿಂಗಾಂಗ ಸಂಯೋಗವಿಧಿ, ಸರ್ವಾಂಗ ಲಿಂಗ ಸಾಹಿತ್ಯ, ಅರ್ಪಣಸದ್ಭಾವ, ಕ್ರಿಯಾವಿಶ್ರಾಂತಿ, ವೀರಶೈವ ವಿಧ್ಯುಕ್ತ ವಿಧಾನಗಳ ಪ್ರತಿಪಾದನೆ, ಬ್ರಹ್ಮೋಪದೇಶವಿಧಿ, ಷಟ್ ಸ್ಥಲ ಬ್ರಹ್ಮಪೂಜಾ, ಪ್ರಸಾದಸದ್ಭಾವ, ಷಟ್ ಸ್ಥಲ ಬ್ರಹ್ಮ ಪುರಶ್ಚರಣ, ದೇಹಾವಸಾನ ಈ ಎಲ್ಲಾ ವಿಷಯಗಳನ್ನು ಎರಡು ಗ್ರಂಥಗಳಲ್ಲಿ ಶಾಸ್ತ್ರೀಯವಾಗಿ ಪ್ರತಿಪಾದಿಸಿರುವನು. ಷಟ್ ಸ್ಥಲ ಗದ್ಯದಲ್ಲಿ ಆಯಾ ಸಾಧಕನ ಲಕ್ಷಣವನ್ನು ಸಂಕ್ಷಿಪ್ತವಾಗಿ ಪ್ರತಿಪಾದಿಸಿರುವನು. ವಾರ್ಧಕ ಷಟ್ಪದಿಯಲ್ಲಿ ರಚಿತವಾದ ಏಕೋತ್ತರ ಶತಸ್ಥಲದಲ್ಲಿ ನೂರೊಂದು ಸ್ಥಲಗಳ ಲಕ್ಷಣಗಳನ್ನು ಪ್ರತಿಪಾದಿಸಿರುವನು. ಆತನ ಉಪಲಬ್ಧ ಸ್ವರವಚನಗಳಲ್ಲಿ ಲಿಂಗಾಂಗ ಸಾಮರಸ್ಯದ ಸ್ವರೂಪವನ್ನು ಪ್ರತಿಪಾದಿಸಿರುವನು. ಹೀಗೆ ಮಾಯಿದೇವನ ಸಮಗ್ರ ಕೃತಿಗಳಲ್ಲಿ ಶಿವಾನುಭವ ವೀರಶೈವದ ತಾತ್ವಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ಮೂಡಿರುವುದು ಕರ್ತೃವಿನ ಅನುಭವದ ಮಹೋನ್ನತ ದ್ಯೋತಿಕವಾಗಿದೆ.”ಮಹಾತ್ಮನನದೇನೆನ ಬರ್ಪುದದಂ ಶಿವಾಧವಾ” ಈ ಧ್ಯೇಯವೇ ಮಗ್ಗೆಯ ಮಾಯಿದೇವನ ಹಂಬಲವಾಗಿತ್ತು, ಇದು ಸಾಧಕನ ಹಂಬಲವಾಗಿರಬೇಕು.

ಗ್ರಂಥಋಣ

೧. ಶತಕತ್ರಯ ಅರ್ಥ ವಿವರಿಸಿದವರು ಶ್ರೀ ಜ.ಚ.ನಿ.

೨. ಮೊಗ್ಗೆಯ ಮಾಯಿದೇವ: ಒಂದು ಅಧ್ಯಯನ ಡಾ. ಡಿ. ವಿ. ಪುರಾಣಿಕ

೩. ಮಹಾತ್ಮರ ಚರಿತಾಮೃತ: ಪ್ರಭು ಚನ್ನಬಸವ ಸ್ವಾಮೀಜಿ

ಶ್ರೀ . ಟಿ . ಹೆಚ್ . ಎಂ . ಸದಾಶಿವಯ್ಯ

(ಗ್ರಂಥ ಋಣ ಹಂಡೆ ಪಾಳೆಯಗಾರರ ಇತಿಹಾಸ ಮತ್ತು ಪರಂಪರೆ ಸಂ.ಶ್ರೀ ಪ್ರೊ.ಎಸ್.ಸಿ.ಪಾಟೀಲ್‌ 

ಗ್ರಂಥ ಸೌಜನ್ಯ ಶ್ರೀ ಜಿ.ಎನ್.ಪಾಟೀಲ್‌ ಬಾಗಲಕೋಟೆ)

(ವೀರಶೈವ-ಲಿಂಗಾಯತ ಹಂಡೆ ವಜೀರ. ಮನೆತನದ ರಾಜಗುರುಗಳು ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ.ಕೊಟ್ಟೂರ ಪೀಠಕ್ಕೂ ಹಂಡೆವಜೀರ ಸಮಾಜಕ್ಕೂ ಇತಿಹಾಸ ದಾಖಲೆ ಸಹಿತ ಅನ್ಯೋನ್ಯ ಅವಿನಾಭಾವ ಸಂಬಂಧವಿದೆ ).

 ಬಳ್ಳಾರಿಜಿಲ್ಲೆ , ಅನಂತಪುರಜಿಲ್ಲೆ ಮತ್ತು ಕರ್ನೂಲು ಜಿಲ್ಲೆಯ ಒಂದು ಭಾಗ ಇವುಗಳು ಒಂದು ಪ್ರಾಂತವಾಗಿ ಹುಟ್ಟಿದ್ದು ಈ ಪ್ರಾಂತದ ದೊರೆತನವು ೧೬ ನೇಯ ಶತಮಾನದ ಪ್ರಾರಂಭದಿಂದ ೧೯ ನೇಯ ಶತಮಾನದ ಪ್ರಾರಂಭದವರೆಗೂ ಕನ್ನಡಿಗರಾದ ಮಾಂಡಲಿಕರ ಪರಿಪಾಲನೆಯಲ್ಲಿದ್ದಿತು . ಹಂಡೆ ಅನಂತಪುರದ ಕೈಫಿಯತ್ತು ಗಳಿಂದ ತಿಳಿದುಬರುವ ಹಂಡೆ ವಂಶದ ಪಾಳೆಗಾರರ ಚರಿತ್ರೆಯು ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಮಹತ್ವ ಸ್ಥಾನವನ್ನು ಪಡೆದಿದೆ . ಈ ಪಾಳೆಯಗಾರರ ಮುಖ್ಯ ಪಟ್ಟಣವು ಅನಂತಪುರ ಜಿಲ್ಲೆಯ ಕೇಂದ್ರ ಸ್ಥಾನವಾದ ಅನಂತಪುರವು . ಚರಿತ್ರೆಯಲ್ಲಿ ಈ ಪಟ್ಟಣವು ಹಂಡೆ ಅನಂತಪುರವೆಂದು ಪ್ರಸಿದ್ಧವಾಗಿದೆ . ಇದರ ಸೂತ್ವದ ಹೆಸರು ಅನಂತಸಾಗರವು . ಕ್ರಿ.ಶ .೧೩೬೪ ರಲ್ಲಿ ವಿಜಯನಗರದ ಬುಕ್ಕರಾಯನ ದಿವಾನನಾದ ಚಿಕ್ಕಪ್ಪ ಒಡೆಯರು ಇಲ್ಲಿ ಒಂದು ದೊಡ್ಡ ತಟಾಕವನ್ನು ನಿರ್ಮಿಸಿ ಅದರ ಎಡಬಲಗಳಲ್ಲಿ ಬುಕ್ಕರಾಯನ ಹೆಸರಿನಲ್ಲಿ ಬುಕ್ಕರಾಯ ಸಮುದ್ರವನ್ನೂ ಆತನ ಹೆಂಡತಿಯಾದ ಅನಂತಮ್ಮನ ಹೆಸರಿನಲ್ಲಿ ಅನಂತಸಾಗರವನ್ನೂ ನಿರ್ಮಿಸಿದನೆಂದು ಈ ಕೆರೆಯ ಬಳಿ ಇರುವ ದೇವರಕೊಂಡ ಎಂಬ ಗುಡ್ಡದ ಮೇಲಿರುವ ದೇವಾಲಯದ ಒಂದು ಶಾಸನದಿಂದ ತಿಳಿದು ಬರುತ್ತದೆ . ಈ ಶಾಸನದ ಕಾಲವು ಶಕೆ ೧೨೪೬ ಕ್ರೋಧಿ ಸಂ ಕಾರ್ತಿಕ ಬ .೫ ಗುರುವಾರ , ಅಳಿಯ ರಾಮರಾಯನ ಕಾಲದಲ್ಲಿ ಈ ಗ್ರಾಮಗಳು ಹಂಡೆ ವಂಶದವರ ವಶವಾದವು . ಹಂಡೆವಂಶದ ಮೂಲಪುರುಷನಾದ ಹನಮಪ್ಪರಾಯನು ಶುದ್ಧ ಕನ್ನಡಿಗನು . ಸೊನ್ನಲಾಪುರ ( ಈಗಿನ ಸೊಲ್ಲಾಪೂರ ) ವು ಈತನ ಮೂಲ ಸ್ಥಾನವು . ಜಾತಿಯಲ್ಲಿ ಲಿಂಗವಂತನು . ಈತನ ವಂಶದ ವಿಷಯವಾಗಿ ಹಂಡೆ ಅನಂತಪುರದ ಚರಿತ್ರೆಯಲ್ಲಿ ಈ ರೀತಿ ಹೇಳಿದೆ : – “ ಈ ಹಂಡೆ ವಂಶದವರು ಶಿವಭಕ್ತರು , ಲಿಂಗವಂತರು , ಇವರ ಕುಲದೈವವೂ ಆದ ವಿಜಾಪೂರ ಸೀಮೆಯಲ್ಲಿರುವ ಸೊನ್ನಲಾಪುರದ ಸಿದ್ಧರಾಮೇಶ್ವರನ ವಿನಃ ಇತರ ದೈವಗಳನ್ನು ಇವರು ಪೂಜಿಸುವುದಿಲ್ಲ . ಶಿವಪೂಜೆ ಮಾಡದೆ ನೀರನ್ನು ಸಹ ಕುಡಿಯುವುದಿಲ್ಲ . ಮಧ್ಯ ಸೇವಿಸುವುದಿಲ್ಲ . ಮಾಂಸ ಭಕ್ಷಣೆಯನ್ನು ಮಾಡುವದಿಲ್ಲ . ರಜಸ್ವಲೆಯಾದ ಹೆಣ್ಣನ್ನು ಮದುವೆ ಮಾಡಿಕೊಳ್ಳುವುದಿಲ್ಲ . ಸತ್ತವರನ್ನು ವೀರಶೈವಾಚಾರ ಪದ್ಧತಿ ಪ್ರಕಾರ ಸಮಾಧಿ ಮಾಡುವರು .

 ಹಂಡೆ ಹನುಮಪ್ಪ ರಾಯನು

 ಆಗಿನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ದೊಡ್ಡದೊಂದು ಗಂಡಾಂತರದಿಂದ ಪಾರು ಮಾಡಿದ ವೀರನು . ವಿಜಯನಗರದ ಕೋಶಾಧಿಪತಿಯಾದ ಬೊಕ್ಕಸಂ ತಿಮ್ಮಯ್ಯನೆಂಬವನು ಸಾಮ್ರಾಜ್ಯದ ಚತುರಂಗ ಬಲವನ್ನು ತನ್ನ ಸ್ವಾಧೀನ ಪಡಿಸಿಕೊಂಡು ಅಳಿಯ ರಾಮರಾಯನನ್ನು ಸೆರೆಯಲ್ಲಿಡಬೇಕೆಂದು ಪ್ರಯತ್ನಿಸಿದ್ದನು . ವಿಜಯನಗರ ಸಾಮ್ರಾಜ್ಯವನ್ನು ಆಹುತಿಗೊಳ್ಳಬೇಕೆಂದು ಹಾತೊರೆಯುತ್ತಿದ್ದ ನಿಜಾಂಷಾಹಾ , ಪರೀದುಷಹಾ , ಅಲಿಆದಿಲ್‌ಷಹಾ ಮುಂತಾದ ಮುಸಲ್ಮಾನ ನವಾಬರಿಗೇ ಇಡೀ ಸಾಮ್ರಾಜ್ಯವನ್ನೇ ವಶಪಡಿಸುವುದರಲ್ಲಿದ್ದನು . ಅವನ ಪಿತೂರಿಯ ಪರಿಣಾಮವಾಗಿ ಆ ನವಾಬರು ವಿಜಯನಗರದ ಮೇಲೆ ದಂಡೆತ್ತಿ ಬಂದರು . ಆ ಸಂದರ್ಭದಲ್ಲಿ ವಿಪನ್ನಾವಸ್ಥೆಯಲ್ಲಿದ್ದ ಅಳಿಯ ರಾಮರಾಯನು ವಿಜಾಪುರ ಪ್ರಾಂತದಲ್ಲಿದ್ದ ಹಂಡೆ ಹನುಪ್ಪರಾಯನ ಸಹಾಯವನ್ನು ಬೇಡಿದನು . ಅವನ ಸಹಾಯದಿಂದ ತಿಮ್ಮಯ್ಯನ ಬಂಡಾಯವನ್ನು ಮುರಿದು ವಿಜಯನಗರವನ್ನು ಸ್ವಾಧೀನ ಪಡಿಸಿಕೊಂಡನು . ತರುವಾಯ ಹನುಮಪ್ಪರಾಯನು ನಿಜಾಂ ನವಾಬರನ್ನು ಕೈಸೆರೆಮಾಡಿ ತಂದು ರಾಮರಾಯನಿಗೆ ಕಾಣಿಕೆಯಾಗಿ ಒಪ್ಪಿಸಿದನು . ಅವನ ಧೈರ್ಯ ಸಾಹಸಾದಿಗಳಿಗೆ ಮೆಚ್ಚಿ ರಾಮರಾಯನು ಅವನಿಗೆ ಪೂರ್ವಭಾಗದಲ್ಲಿ ನಂದ್ಯಾಲ , ಬುಕ್ಕರಾಯಸಮುದ್ರ , ಧರ್ಮವರ ಮತ್ತು ಕಣೇಕಲ್ಲು ಗ್ರಾಮಗಳನ್ನು ಮತ್ತು ಪಶ್ಚಿಮ ಭಾಗದಲ್ಲಿ ಬಳ್ಳಾರಿ ಮತ್ತು ಕುರಗೋಡು ಗ್ರಾಮಗಳನ್ನೂ ಉಂಬಳಿ ಹಾಕಿಕೊಟ್ಟನು . ಹನಮಪ್ಪರಾಯನು ಬುಕ್ಕರಾಯಸಮುದ್ರದಲ್ಲಿ ಬಲವಾದ ಕೋಟೆಯನ್ನು ಕಟ್ಟಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು . ಆತನ ಮಗನಾದ ಇಮ್ಮಡಿ ಹಂಪರಾಯನು

ಕ್ರಿ.ಶ. ೧೫೮೩ ರಿಂದ ೧೨ ವರ್ಷಗಳು ರಾಜ್ಯವಾಳಿ ಬುಕ್ಕರಾಯಸಮುದ್ರದಲ್ಲಿ ಗತಿಸಿದನು . ಈತನ ಮಗನಾದ ಮಲಕಪ್ಪರಾಯನು ಈತನ ಆನಂತರ ಪಟ್ಟವನ್ನೇರಿ ಮುಸಲ್ಮಾನರ ಯುದ್ಧದಲ್ಲಿ ವಿಜಯನಗರ ಸಾಮ್ರಾಟರಿಗೆ ಬಹು ವಿಧವಾಗಿ ಸಹಾಯ ಮಾಡಿದನು . ತಾಳಿಕೋಟೆ ಯುದ್ಧದಲ್ಲಿ ಭಾಗವಹಿಸಿದ್ದನು . ವಿಜಯನಗರ ಸಾಮ್ರಾಜ್ಯದ ಪತನದ ನಂತರ ಗೋಲ್ಗೊಂಡದ ನವಾಬನ ಆಶ್ರಯದಲ್ಲಿ ಸೇರಿಕೊಂಡು ತನ್ನ ರಾಜ್ಯವನ್ನು ಭದ್ರಪಡಿಸಿಕೊಂಡದ್ದಲ್ಲದೆ ಬುಕ್ಕಪಟ್ಟಣದವರೆಗೂ ಇದ್ದ ದಕ್ಷಿಣ ಪ್ರಾಂತವನ್ನು ಪಡೆದುಕೊಂಡನು . ನವಾಬನು ಇವನಿಗೆ “ ಬಾದುಷಾ ವಜೀರನೆಂಬ ಬಿರುದನ್ನು ಕೊಟ್ಟನು . ಅನಂತಪುರದಲ್ಲಿ ಒಂದು ಅರಮನೆಯನ್ನು ಕಟ್ಟಿಸಿ ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು . ಸಿದ್ಧರಾಮಮ್ಮ ನೆಂಬ ಈತನ ಪಟ್ಟದ ಹೆಂಡತಿಯಿಂದ ಈತನಿಗೆ ( ೧ ) ದೇವಪ್ಪರಾಯ ( ೨ ) ಸಣ್ಣರಾಮಪ್ಪರಾಯ ( ೩ ) ಲಿಂಗಪ್ಪರಾಯ ಮತ್ತು ( ೪ ) ಹಂಪರಾಯ ಎಂಬ ನಾಲ್ಕು ಜನರು ಮಕ್ಕಳಿದ್ದರು . ಅವರಿಗೆ ಈ ಕೆಳಕಂಡಂತೆ ತನ್ನ ರಾಜ್ಯವನ್ನು ಹಂಚಿಕೊಟ್ಟನು : ೧. ದೇವಪ್ಪರಾಯನಿಗೆ ನಂದ್ಯಾಲಸೀಮೆ ( ತಾಡಪತ್ರಿ , ಮೊದ್ದಟೂರು ಮುಂತಾದವು ೨. ಸಣ್ಣರಾಮಪ್ಪರಾಯನಿಗೆ ಬಳ್ಳಾರಿ , ಕುರಗೋಡು , ಮತ್ತು ಸುತ್ತ ಮುತ್ತಣ ಪ್ರಾಂತಗಳು ೩. ಲಿಂಗಪ್ಪರಾಯನಿಗೆ ಕಂದುರ್ಪಿ , ಕಣೇಕಲು ಸೀಮೆ ( ರಾಯದುರ್ಗ ಧರ್ಮವರ ತಾಲೂಕು ) . ೪. ಹಂಪರಾಯನಿಗೆ ಅನಂತಪುರ , ಬುಕ್ಕಪಟ್ಟಣ ಮತ್ತು ಧರ್ಮವರ ಸೀಮೆ . ಮಲಕಪ್ಪರಾಯನ ಕಾಲದಲ್ಲಿ ಬಳ್ಳಾರಿ ಅನಂತಪುರ ಮಂಡಲದ ಅರ್ಧ ಭಾಗವು ಹಂಡೆ ವಂಶದವರ ಸ್ವಾಧೀನದಲ್ಲಿದ್ದಿತೆಂದು ಮೇಲ್ಕಂಡ ವಿಭಾಗದಿಂದ ಗೊತ್ತಾಗುತ್ತದೆ . ಮನೋ ಸಾಹೇಬರ ಅಂದಾಜಿನ ಮೇರೆಗೆ ಈ ಭಾಗದ ಭೂಕಂದಾಯವು ರೂ ೧೩೭೩೧೬ ಇದ್ದಿತು . ಮಲಕಪ್ಪನ ಅನಂತರ ಹಂಪರಾಯನು ( ಕ್ರಿ.ಶ. ೧೬೧೯-೧೬೩೧ ) ಮತ್ತು ಸಿದ್ದರಾಯನು ( ಕ್ರಿ.ಶ.೧೬೩೧-೧೬೫೯ ) ಅಳಿದರು . ಇವರ ಅನಂತರ ಪಟ್ಟಕ್ಕೆ ಬಂದ

 ಪವಾಡಪ್ಪರಾಯನ ( ಕ್ರಿ.ಶ. ೧೬೫೯-೧೬೭೧ ) ಕಾಲದಲ್ಲಿ ರಾಯದುರ್ಗದ ಪಾಳ್ಯಗಾರನು ಧರ್ಮವರವನ್ನು ಅಕ್ರಮಿಸಿಕೊಂಡನು . ಪವಾಡಪ್ಪನು ಅಕಸ್ಮಿಕವಾಗಿ ಗತಿಸಲು ಅತನ ಹೆಂಡತಿ ಸಿದ್ಧರಾಮಕ್ಕ ತನ್ನ ಅಲ್ಪವಯಿ ಮಗನಾದ ಸಿದ್ಧರಾಯನ ಹೆಸರಿನಲ್ಲಿ ಕೆಲಕಾಲ ರಾಜ್ಯವಾಳಿದಳು . ಸಿದ್ದಪ್ಪರಾಯನ ಮಗ ಪ್ರಸನ್ನಪ್ಪನು ರಾಯದುರ್ಗದ ಪಾಳೆಯಗಾರನೊಡನೆ ಯುದ್ಧವಾಡಿ ಧರ್ಮವರ ಪ್ರಾಂತವನ್ನು ಮರಳಿ ಪಡೆದುಕೊಂಡನು . ಈತನು ವಸಂತಮ್ಮನೆಂಬವಳಿಂದ ಕ್ರಿ.ಶ. ೧೭೧೯ ರಲ್ಲಿ ದುರ್ಮರಣಕ್ಕೆ ಗುರಿಯಾಗಲು ಇವನ ತಮ್ಮನಾದ ಇಮ್ಮಡಿ ಪವಾಡಪ್ಪರಾಯನು ಗಾದಿಯನ್ನೇರಿದನು . ಇವನು ಕಡುಗಲಿಯು ಕಡಪೆ ನವಾಬನಿಗೆ ಕಪ್ಪ ಕೊಡಲು ನಿರಾಕರಿಸಿದನು . ನವಾಬನ ಕಡೆಯವರು ಈತನನ್ನು ಅರಮನೆಯಲ್ಲಿ ಈ ರಾಜಮನೆತನದ ಗುರುಗಳಾಗಿದ್ದ ಶ್ರೀ ನಿಡುಮಾಮಿಡಿ ಕರಿಬಸವ ಸ್ವಾಮಿಗಳು ಬಂದಿಯನ್ನಾಗಿಟ್ಟು ಕಡಪೆಗೆ ಕೊಂಡೊಯ್ಯುವುದರಲ್ಲಿದ್ದರು . ಈ ದುರ್ಘಟ ಪ್ರಸಂಗದಲ್ಲಿ ತಮ್ಮ ಶಿಷ್ಯಪರಿವಾರದೊಡನೆ ಅನಂತಪುರಕ್ಕೆ ಬಂದು ಅಲ್ಲಿ ಚನ್ನಬಸಪ್ಪನೆಂಬ ರಾಜ ಬಂಧುವಿಗೆ ನೆರವಾಗಿ ನಿಂತು ರಾಯನನ್ನು ಸೆರೆಯಿಂದ ಬಿಡಿಸಿದರು .

ಈತನು ೧೭೩೭ ರಲ್ಲಿ ನಿಡಿಮಾಮಿಡಿ ಮಠದಲ್ಲಿ ಗತಿಸಿದರು . ಈತನ ಅನಂತರ ರಾಜ ಕುಟುಂಬದಲ್ಲಿ ಅಂತಃಕಲಹವು ಹುಟ್ಟಿ ಸಂಸ್ಥಾನದ ಪತನಕ್ಕೆ ಕಾರಣವಾಯಿತು . ಒಂದು ಪಕ್ಷದವರು ಪ್ರಸನ್ನಪ್ಪನ ಮಗನಾದ ರಾಮಪ್ಪನನ್ನು ಪಟ್ಟಕ್ಕೆ ತರಬೇಕೆಂದು ಪ್ರಯತ್ನಿಸಿದರು . ಗುತ್ತಿ ದುರ್ಗದ ನಾಯಕನಾಗಿದ್ದ ಮುರಾರಿರಾಯನು ರಾಮಪ್ಪನ ಪಕ್ಷವನ್ನು ಸೇರಿ ಅವನನ್ನು ಪಟ್ಟಕ್ಕೇರಿಸಿದನು . ರಾಮಪ್ಪನ ಪ್ರತಿಕಕ್ಷಿಯಾಗಿದ್ದ ಸಿದ್ದಪ್ಪನು ಸೆರೆಮನೆಯಲ್ಲಿ ಗತಿಸಲು ಅವನ ಹೆಂಡತಿ ಭದ್ರಮ್ಮ ಬಳ್ಳಾರಿಗೆ ಹೋಗಿ ಆ ಸೀಮೆಯನ್ನು ಆಳುತ್ತಿದ್ದ ಇದೇ ವಂಶದ ಬಳ್ಳಾರಿ ರಾಮಪ್ಪನನ್ನು ಅಶ್ರಯಿಸಿದಳು .

 ಅನಂತಪುರದ ರಾಮಪ್ಪ ( ಕ್ರಿ.ಶ. ೧೭೪೦-೧೭೪೫ )

 ಈತನು ಬಹು ಶೂರನೆಂದು ಹೆಸರುಗೊಂಡಿರುವನು . ಇವನ ಕಾಲದಲ್ಲಿ ರಾಯದುರ್ಗ ಕೋನೇಟರಾಯನು ಬುಕ್ಕಪಟ್ಟಣ್ಣದ ಮೇಲೆ ದಂಡೆತ್ತಿ ಬಂದನು . ರಾಮಪ್ಪನು ಅವನನ್ನು ಓಡಿಸಿ ಕೊನೆಗೆ ಮುಕ್ತಾಪುರದ ಹತ್ತಿರ ಸಂಪೂರ್ಣವಾಗಿ ಸೋಲಿಸಿದನು . ಬಳ್ಳಾರಿಯನ್ನು ಸೇರಿದ್ದ ಭದ್ರಮ್ಮ ಅನಂತಪುರದ ರಾಮಪ್ಪನ ಮೇಲೆ ಸೇಡುತೀರಿಸಿಕೊಳ್ಳಲು ಕಾರಸ್ಥಾನವನ್ನು ನಡೆಸಿದಳು . ಬಳ್ಳಾರಿ ರಾಮಪ್ಪನು ಅನಂತಪುರದ ರಾಮಪ್ಪನ ಮಗನನ್ನು ದತ್ತಕ ತೆಗೆದುಕೊಳ್ಳುವಂತೆ ಮಾಡಿದಳು . ಬಳ್ಳಾರಿ ರಾಮಪ್ಪನು ಅನಂತಪುರಕ್ಕೆ ಹೋಗಿ ಮೋಸ ರೀತಿಯಿಂದ ಅರಮನೆಯಲ್ಲೇ ಅನಂತಪುರದ ರಾಮಪ್ಪನನ್ನು ಕೊಲ್ಲಿಸಿ ಅನಂತಪುರ ರಾಜ್ಯವನ್ನು ತನ್ನ ಬಳ್ಳಾರಿ ರಾಜ್ಯಕ್ಕೆ ಸೇರಿಸಿಕೊಂಡನು .

ಅನಂತಪುರ ರಾಮಪ್ಪನ ಮಗನಾದ ಸಿದ್ಧರಾಮನನ್ನು ಸೆರೆಹಿಡಿದು ಬಳ್ಳಾರಿ ಕೋಟಿಯಲ್ಲಿಟ್ಟನು . ಸಿದ್ಧರಾಮಪ್ಪನು ತನ್ನ ಭಾವನಾದ ಬಸಪ್ಪನ ಸಹಾಯದಿಂದ ಸೆರೆಮನೆಯಿಂದ ತಪ್ಪಿಸಿಕೊಂಡು ಹಿರೇಹಾಳನ್ನು ಸೇರಿದನು . ಸ್ವಾಮಿ ಭಕ್ತ ಬಸಪ್ಪನ ಭಗೀರಥ ಪ್ರಯತ್ನದ ಫಲವಾಗಿ ಸಿದ್ಧರಾಮಪ್ಪನು ಕ್ರಿ.ಶ .೧೭೨೩ ರಲ್ಲಿ ಅನಂತಮರದ ಸಿಂಹಾಸನವನ್ನೇರಿದನು . ಬಸಪ್ಪನು ಅವನಿಗೆ ಮಂತ್ರಿಯಾಗಿದ್ದು  ತಾಡಪತ್ರಿರೊದ್ದ , ಎಲ್ಲುಲ್ಲ ಮುಂತಾದ ಸ್ಥಳಗಳನ್ನು ಜಯಸಿ ಅನಂತಪುರ ರಾಜ್ಯಕ್ಕೆ ಸೇರಿಸಿದನು . ಈ ವೀರ ಸರದಾರನು ಬುಕ್ಕಪಟ್ಟಣದ ಕೆರೆಯ ದಂಡೆಯನ್ನು ದುರಸ್ತು ಮಾಡಿಸುವ ಕೆಲಸದಲ್ಲಿ ಅವಿಶ್ರಾಂತ ಶ್ರಮ ಪಟ್ಟು ಕ್ರಿ.ಶ .೧೭೭೨ ರಲ್ಲಿ ಗತಿಸಿದನು .

 ಹೈದರಲ್ಲಿ

 ಇದೇ ಕಾಲದಲ್ಲಿ ಬಾಷಾಲಾಲ ಜಂಗವೆಂಬುವನು ಬಳ್ಳಾರಿಕೋಟೆಗೆ ಮುತ್ತಿಗೆ ಹಾಕಿದ್ದು ಹಂಡೆವಂಶದ ದೊಡ್ಡಯ್ಯನೆಂಬ ಪಾಳೆಯಗಾರನು ಮೈಸೂರಿನ ಹೈದರಲ್ಲಿಯ ಸಹಾಯದಿಂದ ಅವನನ್ನು ಓಡಿಸಿದನು . ಆದರೆ ಸಹಾಯಕ್ಕೆಂದು ಬಂದಿದ್ದ ಹೈದರಲಿಯು ಬಳ್ಳಾರಿಯನ್ನು ತಾನೇ ವಶಪಡಿಸಿಕೊಂಡು ಅಮೇಲೆ ಗುತ್ತಿಯನ್ನು ಅಕ್ರಮಿಸಿ ಅನಂತಪುರದ ಮೇಲೆ ಕಪ್ಪವನ್ನು ವಿಧಿಸಿದನು . ಕಪ್ಪದ ಬಾಕಿಯನ್ನು ವಸೂಲ ಮಾಡುವ ನೆಪದಿಂದ ಅನಂತಪುರದ ಸಿದ್ಧರಾಮಪ್ಪನನ್ನು ಸೆರೆಹಿಡಿದು ಅನಂಪುರವನ್ನು ಸಹ ಸ್ವಾಧೀನ ಪಡಿಸಿಕೊಂಡನು . ಸಿದ್ಧರಾಮಪ್ಪನ ಇಬ್ಬರು ಮಕ್ಕಳು ಹೈದರಲ್ಲಿಯ ದಂಡಿನಲ್ಲಿ ಸೇರಿದರು . ಮೂರನೇಯ ಮಗ ಸಿದ್ಧಪ್ಪನು ಶ್ರೀರಂಗಪಟ್ಟಣಕ್ಕೆ ಕಳುಹಿಸಲ್ಪಟ್ಟನು . ಸಿದ್ಧರಾಮಪ್ಪನು ೧೭೮೮ ರಲ್ಲಿ ಗತಿಸಿದನು . ಹೈದರಲ್ಲಿಯ ಅನಂತರ ಬಂದ ಟಿಪ್ಪುಸುಲ್ತಾನನು ಈ ದುರ್ದೈವಿ ವಂಶದ ಗಂಡು ಸಂತತಿಯನ್ನು ನಿರ್ಮೂಲಗೊಳಿಸಿದನು . ಶ್ರೀರಂಗ ಪಟ್ಟಣದ ಸೆರೆಮೆನೆಯಲ್ಲಿದ್ದ ಸಿದ್ಧಪ್ಪನು ಹೇಗೋ ಸೆರೆ ತಪ್ಪಿಸಿಕೊಂಡು ಕಾಳಹಸ್ತಿ ರಾಜನ ಮೊರೆಹೊಕ್ಕನು . ಶ್ರೀರಂಗ ಪಟ್ಟಣವು ಪತನವಾಗಿ ಟೀಪು ಸುಲ್ತಾನನು ಕೊಲ್ಲಲ್ಪಟ್ಟ ನಂತರ ಈತನು ಪುನಃ ಅನಂತಪುರವನ್ನು ಸ್ವಾಧೀನ ಪಡಿಸಿಕೊಂಡನು . ನಿಜಾಮನ ಅಶ್ರಯದಲ್ಲಿ ಕೆಲಕಾಲ ಅಳಿದನು . ನಿಜಾಮನು ಈತನಿಗೆ ಸಿದ್ಧರಾಮಪುರವನ್ನು ಉಂಬಳಿಹಾಕಿಕೊಟ್ಟನು . ೧೮೦೧ ರಲ್ಲಿ ಈತನು ಗತಿಸಿದ ನಂತರ ಈ ಹಂಡೆ ಸಂಸ್ಥಾನವು ನಿಶೇಷವಾಯಿತು .

ಆಂಗ್ಲರ ಪ್ರಭುತ್ವ

ಕ್ರಿ.ಶ .೧೮೦೦ ರಲ್ಲಿ ಬಳ್ಳಾರಿ , ಅನಂತಪುರ , ಕಡಪ , ಕರೂಲ ಜಿಲ್ಲೆಗಳು ನಿಜಾಮನಿಂದ ಇಂಗ್ಲಿಷರಿಗೆ ಕೊಡಲ್ಪಟ್ಟ ಅಂದಿನಿಂದ ದತ್ತಮಂಡಳಗಳೆಂದು ವ್ಯವಹರಿಸಲ್ಪಡುತ್ತದ್ದ ಮದ್ರಾಸು ಪ್ರಾಂತಕ್ಕೆ ಸೇರಿಸಲ್ಪಟ್ಟವು . ಇಂಗ್ಲಿಷ್ ಸರಕಾರದ ಪ್ರತಿನಿಧಿಯಾಗಿದ್ದ ಮನೋ ದೊರೆಯು ಅನಂತಪುರವನ್ನು ತನ್ನ ಕೇಂದ್ರ ಸ್ಥಾನವಾಗಿ ಮಾಡಿಕೊಂಡು ಈ ಮಂಡಲವನ್ನು ಸುವ್ಯವಸ್ಥೆಗೊಳಿಸಿದನು . ಹಂಡೆ ವಂಶದವರು ೧೮೬೦ ರ ವರಿವಿಗೂ ಇಂಗ್ಲಿಷ್ ಸರಕಾರದಿಂದ ಜೀವನಾಂಶ ಪಡೆಯುತ್ತ ಬಂದರು . ಈ ವಂಶದ ಪುರುಷ ಸಂತತಿಯಲ್ಲಿ ಕೊನೆಯವನಾದ ವಸಂತರಾಯನು ತೀರಿದ ಮೇಲೆ ಈತನ ಹೆಂಡತಿ ಕಲ್ಯಾಣಮ್ಮ ದತ್ತು ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ವಂಶದ ವಾರಸುದಾರರು ಎಲ್ಲೆಲ್ಲಿರುವರೆಂಬ ಬಗ್ಗೆ ಮನೋ ದೊರೆಯಿಂದ ವಿಚಾರಣೆ ನಡೆಸಲ್ಪಟ್ಟಿತು . ಈ ವಿಚಾರಣೆಯಲ್ಲಿ ಈ ವಂಶದ ಮೂಲಪುರುಷನು ವಿಜಾಪುರ ತಾಲೂಕ ಬಾಗೇವಾಡಿ ಪರಗಣೆಯ ಮುತ್ತಿಗೆ , ವಡವಡಿಗೆ , ಗ್ರಾಮಗಳ ನಾಯಕನಾದ ಲಕ್ಕರಾಯನೆಂಬುವನೆಂದೂ , ಅತನ ಹಿರೇ ಮಗನಾದ ಬಲದ ಹನಮಪ್ಪರಾಯನು ಅನಂತಪುರ – ಬಳ್ಳಾರಿ ಪ್ರಾಂತಕ್ಕೆ ಬಂದು ಅಲ್ಲಿ ನೆಲೆಸಿದನೆಂದೂ ಕಿರಿಯ ಮಗ ಬಳಗಾನಾಯಕನ ಸಂತತಿಯವರು ವಿಜಾಪುರ ಪ್ರಾಂತದಲ್ಲಿರುವರೆಂದೂ ತಿಳಿದು ಬರಲು ಸದರಿ ಬಳಗಾನಾಯಕನ ಸಂತತಿಯವನಾದ ಸಿದ್ಧರಾಮಪ್ಪನೆಂಬ ಹುಡುಗನನ್ನು ಕಲ್ಯಾಣಮ್ಮನು ದತ್ತಕ ತೆಗೆದುಕೊಳ್ಳಲಿಕ್ಕೆ ಮನ್ನೋ ದೊರೆಯು ಅಪ್ಪಣೆಕೊಟ್ಟನು . ಈ ರೀತಿ ಬಳ್ಳಾರಿ – ಅನಂತಪುರ ಜಿಲ್ಲೆಗಳ ದೊರೆತನವು ಸುಮಾರು ಇನ್ನೂರು ವರ್ಷಗಳ ವರವಿಗೂ ವಿಜಾಪುರ ಪ್ರಾಂತದ ಶುದ್ಧ ಕನ್ನಡಿಗರೂ ಸೊಲ್ಲಾಪುರದ ಸಿದ್ಧರಾಮ ಶಿವಯೋಗಿಯ ಸಾಂಪ್ರದಾಯಕರೂ , ವೀರಶೈವಾಚಾರ ಸಂಪನ್ನರೂ ಅದ ಅರಸರುಗಳಾಗಿದ್ದರು . ಈಗಲೂ ಈ ಪ್ರಾಂತದಲ್ಲಿ ವೀರಶೈವ ಗತವೈಭವ ಮತ್ತು ಸಿದ್ಧರಾಮೇಶ್ವರ ಸಾಂಪ್ರದಾಯದ ಚಿಹ್ನೆಗಳು ಕಂಡುಬರುವವು . ಶ್ರೀ ನಿಡುಮಾಮಿಡಿ ಮಠದ ಸ್ವಾಮಿಗಳೇ ಈ ರಾಜ ಮನೆತನದ ಗುರುಗಳಾಗಿದ್ದರು . ಈ ಪೀಠದ ಮಠಗಳು ಕೋಲಾರ ಜಿಲ್ಲೆಯ ಗೂಳೂರು , ಅನಂತಪುರ ಜಿಲ್ಲೆಯ ನಿಡುಮಾಮಿಡಿ , ಪೆನುಕೊಂಡ , ಬುಕ್ಕಪಟ್ಟಣ್ಣ ಮುಂತಾದ ಗ್ರಾಮಗಳಲ್ಲಿರುವವು . ಸಿದ್ಧರಾಮೇಶನ ಮಂದಿರಗಳೂ , ಮಠಗಳು , ಆತನ ಹೆಸರಿನ ಗ್ರಾಮಗಳು ಅಲ್ಲಲ್ಲಿ ಕಂಡುಬರುವವು .

ಸಿದ್ಧರಾಮಪುರ

ಅನಂತಪುರದ ಹಂಡೆವಂಶದವರು ವಿಜಾಪುರದ ಸೀಮೆಯವರೆಂದೂ ಅವರ ಇಷ್ಟ ದೈವವು ಸೊನ್ನಲಾಪುರದ ( ಸೊಲ್ಲಾಪರ ) ಸಿದ್ಧರಾಮಶಿವಯೋಗಿಯೆಂದೂ “ ಅನಂತಪುರದ ಕೈಫಿಯತ್ತುಗಳಲ್ಲಿ ಹೇಳಿದೆ . ಸಿದ್ಧರಾಮೇಶ್ವರ ಸ್ಮಾರಕಾರ್ಥವಾಗಿ ನಿರ್ಮಿಸಲ್ಪಟ್ಟ ಈ ಗ್ರಾಮವು ೧೨ ನೇಯ ಶತಮಾನದ ಕಲ್ಯಾಣದ ಶರಣರ ಯುಗಕ್ಕೂ ಈ ಪ್ರಾಂತಕ್ಕೂ ನಿಕಟವಾದ ಸಂಬಂಧವನ್ನು ಕಲ್ಪಿಸುತ್ತದೆ .

 ಈ ಪ್ರಾಂತದಲ್ಲಿ ಸಿದ್ದಪ್ಪ , ರಾಮಪ್ಪ , ಸಿದ್ಧರಾಮಪ್ಪ ಮುಂತಾದ ಹೆಸರುಗಳುಳ್ಳ ಜನರು ವಿಶೇಷವಾಗಿರುವರು . ಬಳ್ಳಾರಿಯ ಮುಖ್ಯ ಸ್ಥಳಗಳಲ್ಲಿ ಬಲದ ಹನಮಪ್ಪ ನಾಯಕನ ೬ ಜನ ಸಹೋದರಿಯರು ಕಟ್ಟಿಸಿದ ಬಾವಿಗಳು ಈಗಲೂ ಇರುವವು . ಹಂಡೆ ರಾಮಪ್ಪನಾಯಕನ ಕಾಲದಲ್ಲಿ ಬಳ್ಳಾರಿಯು ವೈಭವ ಪೂರ್ಣವಾದ ಪಟ್ಟಣವಾಗಿದ್ದಿತು . ಅಂತೆಯೇ ಕೋಳೂರು ಶಂಕ್ರಪ್ಪನೆಂಬ ಕವಿಯು “ ಭಳಿಗೆ ಭಾಪುರೆ , ಬಳ್ಳಾರಿ ! ಭಳೆರೆ ಬಳ್ಳಾರಿಯ ವಿಜಯಲಕ್ಷ್ಮೀ ಇಳೆಯೊಳು ನಿನ್ನಂಥ ಕಳೆಯ ಕಾಂತೆಯರ ಕಾಣೆ ” ಎಂದು ಹಾಡಿರುವನು . ಈ ರಾಮಪ್ಪನ ಕಾಲದಲ್ಲಿ ಕುರುಗೋಡಿನ ನೀಲಮ್ಮನವರ ಮಠವೂ , ದೊಡ್ಡ ಬಸವೇಶ್ವರನ ದೇವಸ್ಥಾವವೂ ಪ್ರಸಿದ್ಧಿಗೆ ಬಂದವು . ಈ ಹಂಡೆಯವರ ತಾಯ್ತುಡಿಯು ಅಚ್ಚ ಕನ್ನಡವೇ ಆಗಿದ್ದಿತೆಂದು ಬೇರೆ ಹೇಳಬೇಕಾಗಿಲ್ಲ .

 ೧೬ ನೇಯ ಶತಮಾನದಿಂದ ೧೯ ನೇಯ ಶತಮಾನದವರೆಗೆ ಧರ್ಮವರ ಪ್ರಾಂತವು ಹಂಡೆ ಅರಸುಗಳ ಆಳಿಕೆಯಲ್ಲಿದ್ದರು . ಧರ್ಮವರದಲ್ಲಿ ಹಂಡೆ ಅರಸುಗಳ ರಾಜಗುರುಗಳಾದ ನಿಡುಮಾಮಿಡಿ ಸ್ವಾಮಿಗಳ ಶಾಖಾಮಠವೊಂದು ಇರುವುದು . ಹಂಡೆ ಪವಾಡಪ್ಪ ರಾಯನ ಕಾಲದಲ್ಲಿ ರಾಯದುರ್ಗ ಪಾಳೆಯಗಾರನೊಬ್ಬನು ಧರ್ಮವರವನ್ನು ಅಕ್ರಮಿಸಿಕೊಂಡಿದ್ದನು . ಅಂದಿನಿಂದ ರಾಯದುರ್ಗದ ಪಾಳೆಯಗಾರರಿಗೂ ಹಂಡೆವಂಶದವರಿಗೂ ಮೇಲಿಂದ ಮೇಲೆ ಸಂಘರ್ಷಣಗಳೂ ಜರುಗುತ್ತಿದ್ದವು . ಕೊನೆಗೆ ಹೈದರಲ್ಲಿ ಟೀಪುಸುಲ್ತಾನರ ಕಾಲದಲ್ಲಿ ಈ ಪ್ರಾಂತವೆಲ್ಲವೂ ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಯಿತು . ನಿಡುಮಾಮಿಡಿ ಪೆನುಗೊಂಡೆಗೆ ಸುಮಾರು ೭ ಮೈಲುಗಳ ದೂರದಲ್ಲಿರುವ ಈ ಗ್ರಾಮವು ಒಂದು ಮನೋಹರವಾದ ತಪೋವನದಂತೆ ಕಂಗೊಳಿಸುತ್ತಿರುವುದು . ಸುತ್ತಲೂ ಗುಡ್ಡಗಳು , ಸಾಂದ್ರವಾದ ವನ್ಯ ಪ್ರದೇಶ , ಸಮೀಪದಲ್ಲೇ ಸ್ವರ್ಣಮುಖಿ ತೊರೆ . ಅದರ ಎಡಬಲಗಳಲ್ಲಿ ಗದ್ದೆಗಳು ತೋಟಗಳೂ ಇಲ್ಲಿಯನಿಡುಮಾಮಿಡಿ ಮಠವು ನಿರ್ಜನ ಪ್ರದೇಶದಲ್ಲಿರುತ್ತದೆ . ಮಠದಲ್ಲಿ ಶ್ರೀ ಇಮ್ಮಡಿ ಕರಿಬಸವ ಸ್ವಾಮಿಗಳವರ ಮತ್ತು ಈ ಪೀಠ ಪರಂಪರೆಗೆ ಸೇರಿದ ಮತ್ತೋರ್ವ ಪೂಜ್ಯ ಪಾದರುಗಳ ಗದ್ದುಗೆಗಳೂ ಒಂದು ಶಿವಲಿಂಗಮೂರ್ತಿ ಮತ್ತು ವೀರಭದ್ರ ಸ್ಮಾಮಿಯ ಭವ್ಯವಾದ ಮೂರ್ತಿ ಇರುತ್ತವೆ . ಮುಖ ಮಂಟಪದ ಒಂದು ಶಿಲಾಸ್ತಂಭದ ಮೇಲೆ ತೆಂಗಿನಮರವೊಂದು ಬಾಗಿ ಶಿವಯೋಗಿಗಳಿಗೆ ಫಲಭಿಕ್ಷೆಯನ್ನು ನೀಡುವ ದೃಶ್ಯವು ಚಿತ್ರಿಸಲ್ಪಟ್ಟಿರುವುದು . ಅಚ್ಯುತ ದೇವರಾಯನು ಒಂದುಬಾರಿ ಪಾದಚಾರಿಯಾಗಿ ನಿಡುಮಾಮಿಡಿ ಮಠದಲ್ಲಿ ನೆಲೆಸಿದ್ದ ಶ್ರೀ ಇಮ್ಮಡಿ ಕರಿಬಸವ ಸ್ವಾಮಿಗಳನ್ನು ದರ್ಶಿಸಿ ಅವರಿಂದ ಒಣಗಿದ ಮಾವಿನ ಮರದ ಫಲವನ್ನು ಪಡೆದು ಅವರ ತಪೋಭೂಮಿಯಲ್ಲಿ ನಿಡುಮಾಮಿಡಿ ಮಠವನ್ನೂ ಪೆನುಕೊಂಡದಲ್ಲಿ ಘನಗಿರಿ ಮಠವನ್ನು ಕಟ್ಟಿಸಿದನು . ಈ ಮಠದ ಸ್ವಾಮಿಗಳು ಮುಂದೆ ಅನಂತಪುರ ರಾಜ್ಯದ ಪ್ರಭುಗಳಾದ ಹಂಡೆ ಅರಸರ ರಾಜಗುರುಗಳಾಗಿದ್ದು ರಾಜ್ಯಪರಿಪಾಲನೆಯಲ್ಲಿ ಅವರಿಗೆ ನೆರವಾಗಿದ್ದರು . ಆ ಅರಸುಗಳನ್ನು ಹಲವು ದುರಂತಗಳಿಂದ ಪಾರುಮಾಡಿದ ಸಂಗತಿಗಳು “ ಹಂಡೆ ಅನಂತಪುರದ ಕೈಫಿಯತ್ತು ” ಗಳಿಂದ ತಿಳಿದು ಬರುತ್ತದೆ . ಹಂಡೆನಾಯಕರ ಪೈಕಿ ಒಬ್ಬನ ಸಮಾಧಿಯು ನಿಡುಮಾಮಿಡಿಯಲ್ಲೂ ಮತ್ತೊಬ್ಬನದು ಹೊಸಕೆರೆಯ ವೀರಭದ್ರ ದೇವಾಲಯದ ಪ್ರಾಂಗಣದಲ್ಲಿಯೂ ಇರುವವು . ಸಾಮ್ರಾಜ್ಯದ ರಾಜಧಾನಿ ಪೆನಗೊಂಡ ಕ್ರಿ.ಶ .೧೫೬೫ ರಲ್ಲಿ ತಾಳಿಕೋಟೆ ಯುದ್ಧದ ಪರಿಣಾಮವಾಗಿ ವಿಜಯನಗರವು ವಿಧ್ವಂಸವಾಗಲು ಅಳಿಯ ರಾಮರಾಯನ ತಮ್ಮನಾದ ತಿರುಮಲದೇವನು ವಿಜಯನಗರದಲ್ಲಿದ್ದ ಕರ್ನಾಟಕ ರತ್ನ ಸಿಂಹಾಸನವನ್ನು ಪೆನುಗೊಂಡೆಗೆ ಸಾಗಿಸಿ ಅ ದುರ್ಗವನ್ನು ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡನು . ಇವನ ಪಟ್ಟಾಭಿಷೇಕವು ಕ್ರಿ.ಶ .೧೫೬೯ ರಲ್ಲಿ ಪೆನುಗೊಂಡೆಯಲ್ಲಿ ಜರುಗಿತು . ಈತನ ಕಾಲದಲ್ಲಿ ಸಾಮ್ರಾಜ್ಯವು ಅಂಧ್ರ ಮಂಡಲ , ಕರ್ನಾಟಕಮಂಡಲ , ತಮಿಳುಮಂಡಲಗಳೆಂದು ಮೂರುಭಾಗಗಳಾಗಿ ವಿಭಜಿಸಲ್ಪಟ್ಟಿತು . ಸಾಮ್ರಾಜ್ಯದ ಉತ್ತರಭಾಗವು ಅಂಧ್ರಮಂಡಲವೆನಿಸಿತು . ಉದಯಗಿರಿಯು ಈ ಮಂಡಲದ ರಾಜಧಾನಿ . ಇದು ತಿರುಮಲರಾಯನ ಹಿರಿಯಮಗನಾದ ಶ್ರೀ ರಂಗರಾಯನ ಆಳ್ವಿಕೆಯಲ್ಲಿದ್ದಿತು . ತಮಿಳುಮಂಡಲದಲ್ಲಿ ತುಂಡೀರ ಚೋಳ ಪಾಂಡ್ಯರಾಜ್ಯಗಳು ಸೇರಿದ್ದವು . ಇದನ್ನು ತಿರುಮಲರಾಯನ ನಾಲ್ಕನೇಯ ಮಗನು ಚಂದ್ರಗಿರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದನು . ಇನ್ನುಳಿದ ಸಾಮ್ರಾಜ್ಯದ ಭಾಗವು ಕರ್ನಾಟಕ ಮಂಡಲವಾಗಿದ್ದಿತು . ತಿರುಮಲನ ಮೂರನೇಯ ಮಗನಾದ ರಾಮರಾಜನ ಪ್ರಭುತ್ವಕ್ಕೆ ಒಳಗಾಗಿದ್ದಿತು . ಇವನೇ ಪೆನುಕೊಂಡೆಯಲ್ಲಿ ಸತ್ಯಬೋಧರಾಯ ಸ್ವಾಮಿಯ ಮಠವನ್ನು ಕಟ್ಟಿಸಿದವನು . ತಿರುಮಲದೇವನ ಆನಂತರ ಪಟ್ಟಕ್ಕೆ ಬಂದ ಶ್ರೀರಂಗದೇವರಾಯನು ಕ್ರಿಶ . ೧೫೬೯ ರಿಂದ ೧೫೮೫ ರ ವರಿವಿಗೂ ರಾಜ್ಯವಾಳಿದನು . ಇವನ ಕಾಲದಲ್ಲೇ ರಾಜಧಾನಿಯು ಪೆನುಕೊಂಡದಿಂದ ಚಂದ್ರಗಿರಿಗೆ ವರ್ಗಾಯಿಸಲ್ಪಟ್ಟಿತೆಂದು ಅನಂತಪುರ ಜಿಲ್ಲಾ ಗೆಜಿಟಿಯರದಲ್ಲಿ ಹೇಳಿದೆ . ಅದರ “ ಕರ್ನಾಟಕ ಶಾಸನ ಸಂಗ್ರಹ ” ದ ೧೨ ನೇಯ ಸಂಚಿಕೆಯಲ್ಲಿರುವ ಶಾಸನಗಳಿಂದ ಇವನು ಗತಿಸುವವರಿವಿಗೂ ( ಕ್ರಿ.ಶ. ೧೫೮೫ ) ಪೆನುಕೊಂಡದಲ್ಲೇ ರಾಜ್ಯ ಪರಿಪಾಲನೆ ಮಾಡಿದನೆಂದು ಗೊತ್ತಾಗುತ್ತದೆ . ಕ್ರಿ.ಶ. ೧೫೭೬ ರಲ್ಲಿ ವಿಜಾಪುರದ ನವಾಬನಾದ ಅಲೀ ಅದಿಲ್‌ಷಾನು ಶ್ರೀರಂಗರಾಯನನ್ನು ಯುದ್ಧದಲ್ಲಿ ಸೋಲಿಸಿ ಪೆನುಕೊಂಡದ ಉತ್ತರ ಭಾಗದ ಸಾಮ್ರಾಜ್ಯವನ್ನೆಲ್ಲ ವಶಪಡಿಸಿಕೊಂಡನು . ಈ ಕಾಲದಲ್ಲೇ ಅನಂತಪುರ ರಾಜ್ಯವನ್ನು ಆಳುತ್ತಿದ್ದ ಹಂಡೆ ಮಲಕಪ್ಪನಾಯಕನು ವಿಜಾಪುರ ನವಾಬನಿಗೆ ಅಂಕಿತನಾಗಿ ಅವನಿಂದ “ ಬಾದುಷಾವಜೀರ ” ಎಂಬ ಪದವಿಯನ್ನು ಪಡೆದುಕೊಂಡು ಬುಕ್ಕಪಟ್ಟಣ ಅನಂತಸಾಗರ ಮುಂತಾದ ಗ್ರಾಮಗಳನ್ನು ಮರಳಿ ಸಂಪಾದಿಸಿಕೊಂಡನು . ಅಂದಿನಿಂದ ವಿಜಯನಗರ ಸಾಮ್ರಾಟರಿಗೂ ಕರ್ನಾಟಕಕ್ಕೂ ಇದ್ದ ಸಂಬಂಧವು ಸಡಲಿತಾದರೂ ಸಾಮ್ರಾಜ್ಯವು ಕೊನೆಯವರೆಗೂ ಕರ್ನಾಟಕ ಸಾಮ್ರಾಜ್ಯವೆಂದೇ ಕರೆಯಲ್ಪಡುತ್ತಿದ್ದಿತು . ವೆಂಕಟಪತಿ ದೇವರಾಯನ ಕಾಲದಲ್ಲಿ ಗೋಲ್ಗೊಂಡ , ವಿಜಾಪೂರ ನವಾಬರು ಪೆನುಕೊಂಡ ದುರ್ಗದ ಮೇಲೆ ದಂಡೆತ್ತಿ ಬಂದರು . ಆದರೆ ಅನಂತಪುರದ ಹಂಡೆನಾಯಕರು ಈ ದಂಡಯಾತ್ರೆಗಳಲ್ಲಿ ವಿಜಯನಗರದವರಿಗೆ ಸಹಾಯ ಮಾಡಿದಕಾರಣ ಅವರ ಪ್ರಯತ್ನಗಳು ನಿಷ್ಪಲವಾದವು . ಕೊನೆಗೆ ವೆಂಕಟಪತಿರಾಯನು ಕ್ರಿಶ . ೧೬೦೬ ರಲ್ಲಿ ರಾಜಧಾನಿಯನ್ನು ಚಂದ್ರಗಿರಿಯಿಂದ ವೇಲೂರಿಗೆ ವರ್ಗಾಯಿಸಿ ಕ್ರಿ.ಶ. ೧೬೧೪ ರಲ್ಲಿ ವೇಲೂರಲ್ಲಿ ಗತಿಸಿದನು . ಧರ್ಮಾವರ ತಾಲೂಕು ೧೬ ನೆಯ ಶತಮಾನದಿಂದ ೧೯ ನೆಯ ಶತಮಾನದವರೆಗೆ ಧರ್ಮವರ ಪ್ರಾಂತವು ಹಂಡೆ ಅರಸುಗಳ ಆಳ್ವಿಕೆಯಲ್ಲಿದ್ದರು . ಧರ್ಮವರದಲ್ಲಿ ಹಂಡೆ ಅರಸುಗಳ ರಾಜಗುರುಗಳಾದ ನಿಡುಮಾಮಿಡಿ ಸ್ವಾಮಿಗಳ ಶಾಖಾಮಠವೊಂದು ಇರುವುದು . ಹಂಡೆ ಪವಾಡಪ್ಪ ರಾಯನ ಕಾಲದಲ್ಲಿ ರಾಯದುರ್ಗ ಪಾಳೆಯಗಾರನೊಬ್ಬನು ಧರ್ಮವರವನ್ನು ಆಕ್ರಮಿಸಿಕೊಂಡಿದ್ದನು . ಅಂದಿನಿಂದ ರಾಯದುರ್ಗದ ಪಾಳೆಯಗಾರರಿಗೂ ಹಂಡೆವಂಶದವರಿಗೂ ಮೇಲಿಂದ ಮೇಲೆ ಸಂಘರ್ಷಗಳೂ ಜರುಗುತ್ತಿದ್ದವು . ಕೊನೆಗೆ ಹೈದರಲ್ಲಿ ಟೀಪುಸುಲ್ತಾನರ ಕಾಲದಲ್ಲಿ ಈ ಪ್ರಾಂತವೆಲ್ಲವೂ ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಯಿತು .

ಬುಕ್ಕಪಟ್ಟಣ ಅನಂತಸಾಗರ ಈ ಎರಡು ಗ್ರಾಮಗಳಿರುವ ಪ್ರದೇಶವು ಪೆನುಕೊಂಡದಂತೆ ಗುಡ್ಡಗಾಡು ಪ್ರದೇಶವು . ಇಲ್ಲಿ ಎರಡು ಗುಡ್ಡಗಳ ನಡುವೆ ಚಿತ್ರಾವತಿ ನದಿಗೆ ಆಣೆಕಟ್ಟು ಕಟ್ಟಲ್ಪಟ್ಟಿರುವುದರಿಂದ ಒಂದು ವಿಶಾಲವಾದ ತಟಾಕವು ಏರ್ಪಟ್ಟಾಗಿದೆ . ಅ ತಟಾಕದ ಒಂದು ಪಾರ್ಶ್ವದಲ್ಲಿ ಬುಕ್ಕರಾಯನ ಹೆಸರಿನಲ್ಲಿ ಬುಕ್ಕಪಟ್ಟಣವೂ ಆತನ ಹೆಂಡತಿಯಾದ ಅನಂತಮ್ಮನ ಹೆಸರಿನಲ್ಲಿ ಅನಂತಸಾಗರವೂ ಕಟ್ಟಲ್ಪಟ್ಟಿವೆ . ಅನಂತಸಾಗರವು ಈಗ ಹೊಸಕೆರೆ . ( ಕೊತ್ತಚೆರುವು ) ಎಂದು ಕರೆಯಲ್ಪಡುತ್ತದೆ . ಈ ಕೆರೆಯನ್ನೂ ಇವೆರಡು ಗ್ರಾಮಗಳನ್ನೂ ಬುಕ್ಕರಾಯನ ಪ್ರಧಾನಿಗಳಲ್ಲಿ ಒಬ್ಬನಾದ ಚಿಕ್ಕಪ್ಪ ಒಡೆಯರು ಕ್ರಿ.ಶ. ೧೩೬೪ ರ ಪ್ರಾಂತದಲ್ಲಿ ಕಟ್ಟಿಸಿದನೆಂದು “ ಅನಂತಪರ ಕೈಫಿಯತ್ತುಗಳಿಂದ ತಿಳಿದು ಬರುತ್ತದೆ . ಈ ಎರಡು ಗ್ರಾಮಗಳು ಅನಂತಪುರದ ಹಂಡೆ ಅರಸರುಗಳ ಆಳ್ವಿಕೆಗೆ ಒಳಗಾಗಿದ್ದು ಬುಕ್ಕಪಟ್ಟಣದ ಕೆರೆಯು ಹಂಡೆ ಅರಸರುಗಳಿಂದ ವಿಸ್ತೀರ್ಣಗೊಳಿಸಲ್ಪಟ್ಟು ಅನಂತಸಾಗರವು ಹೊಸಕೆರೆ ( ಕೊತ್ತುಚೆರುವು ) ಯಾಗಿ ಮಾರ್ಪಟ್ಟಿತು . ಈ ಕೆರೆಯ ಕೆಳಭಗದಲ್ಲಿ ಒಂದು ಪುರಾತನ ಮಠವೂ ವೀರಭದ್ರದೇವಾಲಯವೂ ಇರುತ್ತದೆ . ಅದರ ಪ್ರಾಂಗಣದಲ್ಲಿ ನಿಡುಮಾಮಿಡಿ ಸ್ವಾಮಿಗಳ ಗದ್ದುಗೆಯೂ ಇರುತ್ತವೆ . ಕನ್ನಡ ದೇಸಾಯಿಗಳು ಗುತ್ತಿ ತಾಲೂಕಿನ ನಿಡುಪನಕಲ್ಲು ಮತ್ತು ಗಡೇಹೋತೂರುಗಳಲ್ಲಿ ಎರಡು ಕನ್ನಡ ದೇಸಾಯಿ ವಂಶಗಳಿರುವುವು . ಈ ವಂಶದವರ ಪೂರ್ವಜರು ಉತ್ತರ ಕರ್ನಾಟಕ ಪ್ರಾಂತದವರಿದ್ದು ಹಂಡೆ ಹನುಮಪ್ಪನಾಯಕನ ಕಾಲದಲ್ಲೋ ತದನಂತರವೋ ಈ ಪ್ರಾಂತಕ್ಕೆ ಬಂದಿರಬಹುದಾಗಿ ತೋರುತ್ತದೆ . ಈ ಎರಡು ಗ್ರಾಮಗಳಲ್ಲೂ ಉರವಕೊಂಡ ಸಂಸ್ಥಾನದ ಮಠಗಳಿರುತ್ತವೆ . ಹಂಡೆ ಅನಂತಮರ – ಜಿಲ್ಲೆಗೆ ಕೇಂದ್ರಸ್ಥಾನವಾದ ಈ ಪುರವು ದೇವರಕೊಂಡ ಎಂಬ ಗುಡ್ಡದ ಬಳಿಯಿರುತ್ತದೆ . ಆ ಗುಡ್ಡದ ಬದಿಯಲ್ಲಿ ಪ್ರವಹಿಸುವ ಪಾಂಡು ನದಿಯು ಅಡ್ಡಕಟ್ಟಲ್ಪಟ್ಟು ಒಂದು ದೊಡ್ಡ ಕೆರೆಯು ಏಪ್ಪಟ್ಟಿದೆ . ಈ ಕೆರೆಯು ಬುಕ್ಕರಾಯಸಮುದ್ರವೆಂದು ಕರೆಯಲ್ಪಡುತ್ತದೆ . ಅದೇ ಹೆಸರಿನ ಒಂದು ಹಳ್ಳಿಯು ಕೆರೆಯ ಮತ್ತೊಂದು ತುಂಬಿನ ಕೆಳಗೆಯಿದೆ . ಈ ಕೆರೆಯು ವಿಜಯನಗರ ಸಾಮ್ರಜ್ಯದ ನಿರ್ಮಾಪಕರಲ್ಲಿ ಒಬ್ಬನಾದ ಮತ್ತು ಕ್ರಿ.ಶ. ೧೩೫೫ ರಿಂದ ೧೩೭೭ ರ ವರಿಗೆ ಹೊಯ್ಸಳರ ಸಾಮಂತನಾಗಿ ವಿಜಯನಗರ ರಾಜ್ಯವನ್ನು ಅಳಿದ ಮೊದಲನೇಯ ಬುಕ್ಕರಾಯನ ಕಾಲದಲ್ಲಿ ಕಟ್ಟಲ್ಪಟ್ಟಿದ್ದು ದೇವರಕೊಂಡದ ಮೇಲೆ ಶಂಕರೇಶ್ವರ ದೇವರ ಗುಡಿ ಎಂಬ ದೇವಾಲಯವಿದ್ದು , ಅದರಲ್ಲಿ ಶಾ.ಶ .೧೨೮೬ ( ಕ್ರಿ.ಶ .೧೩೬೪ ) ಕ್ರೋಧಿ ಸಂ ಕಾರ್ತಿಕ ಬ .೫ ಯ ಕಾಲದ ಒಂದು ಶಾಸನವಿದ್ದು , ಆ ಶಾಸನದ ಪ್ರಕಾರ ಚಿಕ್ಕಪ್ಪ ಒಡೆಯರೆಂಬ ಬುಕ್ಕರಾಯನ ಪ್ರಧಾನಿಯೊಬ್ಬನು ಈ ಕೆರೆಯನ್ನು ನಿರ್ಮಾಣಮಾಡಿ ಅದರ ಎರಡು ತುಂಬುಗಳ ಬಳಿ ತನ್ನ ಪ್ರಭುವಿನ ಹೆಸರಿನಲ್ಲಿ “ ಬುಕ್ಕರಾಯನಸಮುದ್ರ ” ವೆಂಬ ಹಳ್ಳಿಯನ್ನೂ ಪ್ರಭುವಿನ ಪಟ್ಟದ ರಾಣಿಯಾದ ಅನಂತಮ್ಮನ ಹೆಸರಿನಲ್ಲಿ ಅನಂತಸಾಗರವೆಂಬ ಗ್ರಾಮವನ್ನೂ ಸ್ಥಾಪಿಸಿದನೆಂದು ತಿಳಿದು ಬರುತ್ತದೆ . ನಾಗಸಮುದ್ರ ಮತ್ತು ಬುಕ್ಕಪಟ್ಟಣ ಕೆರೆಗಳು ಸಹ ಇವನಿಂದಲೇ ನಿರ್ಮಿಸಲ್ಪಟ್ಟವಂತೆ . ಮೆಕೆಂಜಿಯವರ ಸಂಗ್ರಹದ “ ಕೈಪಿಯತ್ತಿ ” ನಲ್ಲಿ ಈ ಅಂಶವು ದೃಢಪಡಿಸಲ್ಪಟ್ಟಿದೆ . ಶಂಕರೇಶ್ವರ ಗುಡಿಯ ಬಳಿಯಿರುವ ಚೌಡೇಶ್ವರಿ ದೇವಾಲಯ , ವಿಶ್ವೇಶ್ವರ ದೇವಾಲಯಗಳೂ ಮತ್ತು ಬುಕ್ಕರಾಯಸಮುದ್ರದಲ್ಲಿರುವ ಲಕ್ಷ್ಮೀ ನಾರಾಯಣಸ್ವಾಮಿ , ಅಂಜನೇಯಸ್ವಾಮಿ ದೇವಾಲಯಗಳೂ ಈ ಚಿಕ್ಕಪ್ಪನಿಂದಲೇ ಕಟ್ಟಲ್ಪಟ್ಟವಂತೆ , ಆ ಕಾಲದಲ್ಲಿ ದೇವರಕೊಂಡ ಪ್ರಾಂತವು ನಂದೇಲ ನಾಡಿಗೂ , ಬುಕ್ಕಪಟ್ಟಣ ಪ್ರಾಂತವು ಎಲಮಂಚಿ ನಾಡಿಗೂ ಸೇರಿದ್ದವೆಂದು ಈ ಕೈಫಿಯತ್ತಿನಿಂದ ತಿಳಿದು ಬರುತ್ತದೆ . ಬುಕ್ಕರಾಯನ ಶಾಸನಗಳ ರೀತ್ಯಾ ಅವನ ಆಸ್ಥಾನದಲ್ಲಿ ಮಾಧವ ಮಂತ್ರಿ ಅನಂತಸಾಗರ , ಬಚ್ಚರಾಜರೆಂಬ ಮೂವರು ಪ್ರಸಿದ್ಧ ಮಂತ್ರಿಗಳಿದ್ದರು . ವೀರಸಂತಮಾಧವ , ಮಾದಿರಾಜ , ಮಾಧವಾಂಕ ಮುಂತಾದ ನಾಮಾಂತರಗಳುಳ್ಳ ಮಾಧವ ಮಂಂತ್ರಿಯು ಕಾಶೀವಿಲಾಸಕ್ರಿಯಾಶಕ್ತಿ ಪಂಡಿತನ ಶಿಷ್ಯನು , ಇವನು ರಾಯನ ಪ್ರತಿನಿಧಿಯಾಗಿ ಬನವಾಸಿನಾಡನ್ನು ಅಳುತ್ತಿದ್ದನೆಂದೂ , ಗೋವಾ ಪಟ್ಟಣವನ್ನು ಜಯಿಸಿ ಸಾಮ್ರಾಜ್ಯಕ್ಕೆ ಸೇರಿಸಿದನೆಂದೂ ಶಾಸನಗಳಿಂದ ತಿಳಿದು ಬರುತ್ತದೆ . ಅನಂತಸಾಗರನು ಪೆನುಕೊಂಡದ ದುರ್ಗವನ್ನು ಬಲಪಡಿಸಿದನು . ಬುಕ್ಕರಾಯನ ಏಳನೇಯ ಮಗನಾದ ಭಾಸ್ಕರರಾಯನು ಇವನ ಹೆಸರಿನಲ್ಲಿ “ ಅನಂತಸಾಗರವೆಂಬ ” ಕೆರೆಯನ್ನು ಕಟ್ಟಿಸಿದನೆಂದು ಒಂದು ಶಾಸನವು ಹೇಳುತ್ತದೆ . ಮತ್ತೊಂದು ಹೇಳಿಕೆಯ ಪ್ರಕಾರ ಬುಕ್ಕರಾಯಸಮುದ್ರ , ಕೀರ್ತಿಸಮುದ್ರ ಬಚ್ಚಪ್ಪನ ಕೆರೆ ಮುಂತಾದ ಕೆರೆಗಳು ಬಚ್ಚರಾಜನಿಂದ ನಿರ್ಮಿಸಲ್ಪಟ್ಟವೆಂದು ತಿಳಿದು ಬರುತ್ತದೆ . ಅನಂತಪುರ , ಬುಕ್ಕರಾಯ , ಪಟ್ಟಣಗಳು ೧೪ ನೇಯ ಶತಮಾನದಲ್ಲಿ ಬುಕ್ಕರಾಯನ ಕಾಲದಲ್ಲಿ ಹುಟ್ಟಿದವೆಂಬುದನ್ನು ಮಾತ್ರ ತಿಳಿದು ಕೊಂಡರೆ ಸಾಕು , ಸಂಗಮ , ಸಾಳುವ , ತುಳುವಂಶದವರ ಕಾಲದಲ್ಲಿ ಈ ಪ್ರಾಂತವು ಪೆನುಕೊಂಡ ರಾಜ್ಯಕ್ಕೆ ಸೇರಿರಬಹುದಾಗಿ ಊಹಿಸಬಹುದು . ಈ ಕಾಲದಲ್ಲಿ ಇದರ ರಾಮರಾಯನ ಕಾಲದಿಂದ ಈ ಭಾಗವು ಹಂಡೆ ಅನಂತಪುರ ರಾಜ್ಯ ವೆಂಬ ಇತಿಹಾಸವೇನಿದ್ದಿತೆಂಬುದನ್ನು ತಿಳಿದುಕೊಳ್ಳಲು ಸಲಕರಣೆಗಳು ದೊರೆತಿಲ್ಲ . ಅಳಿಯ ಹೆಸರನ್ನು ಪಡೆದು ಸೊನ್ನಲಾಪುರ ( ಸೊಲ್ಲಾಪುರ ) ದ “ ಹಂಡೆ ವಂಶದ ” ವರಾದ ಕನ್ನಡಿಗರಿಂದ ೩೫೦ ವರ್ಷಗಳ ಮೇಲ್ಪಟ್ಟು ಆಳಲ್ಪಟ್ಟಿತು . ಈ ಹಂಡೆವಂಶದ ಮೂಲ ಪುರುಷನಾದ ” ಹನುಮಪ್ಪ ನಾಯಕನು ” ವಿಜಯನಗರ ಸಾಮ್ರಾಜ್ಯವು ಮುಸಲ್ಮಾನರ ವಶವಾಗದಂತೆ ರಕ್ಷಿಸಿ ಅಜರಾಮರವಾದ ಕೀರ್ತಿಯನ್ನು ಸಂಪಾದಿಸಿದನು . ಅಚ್ಯುತದೇವರಾಯನ ಅನಂತರ ವಿಜಯನಗರದ ರಾಜಕುಂಟುಬದಲ್ಲಿ ಅಂತಃಕಲಹಾಗ್ನಿಯು ಹುಟ್ಟಿ ಬೊಕ್ಕಸದ ತಿಮ್ಮಯ್ಯನು ಇಡೀ ಸಾಮ್ರಾಜ್ಯವನ್ನೇ ಮುಸಲ್ಮಾನ ನವಾಬರಿಗೆ ಮಾರುವದರಲ್ಲಿದ್ದನು . ತಿಮ್ಮಯ್ಯನ ಪ್ರತಿಸ್ಪರ್ಧಿಯಾದ ಅಳಿಯ ರಾಮರಯನು ಹನುಮಪ್ಪನಾಯಕನ ಅಮೌಲ್ಯವಾದ ಸಹಾಯದಿಂದ ಈ ದುರ್ಘಟ ಪ್ರಸಂಗವನ್ನು ತಪ್ಪಿಸಿ ಸಾಮ್ರಾಜ್ಯದ ಸೂತ್ರವನ್ನು ತಾನೇ ವಹಿಸಿ , ಹನುಮಪ್ಪ ನಾಯಕನಿಗೆ ಅವನ ಸಹಾಯದ ಪ್ರತಿಫಲವಾಗಿ ನಂದೇಲ , ಧರ್ಮವರ , ಕಣೇಕಲ್ಲು , ಬಳ್ಳಾರಿ , ಕುರುಗೋಡುಗಳನ್ನು ಪಾರಿತೋಷಕವಾಗಿ ಕೊಟ್ಟನು . ಹನುಮಪ್ಪನು ಬುಕ್ಕರಾಯಸಮುದ್ರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಕ್ರಿ.ಶ .೧೫೮೨ ರ ವರಿವಿಗೂ ಅಳಿದನು . ಇವನ ಮೊಮ್ಮಗನಾದ ಮಲಕಪ್ಪನಾಯಕನ ಕಾಲದಲ್ಲಿ ಹಂಡೆರಾಜ್ಯವು ಪೂರ್ವದಿಕ್ಕಿಗೆ ತಾಡವರಿ , ಪ್ರೊದ್ದಟೂರು ವರಿವಿಗೂ ದಕ್ಷಿಣದಲ್ಲಿ ಬುಕ್ಕಪಟ್ಟಣದ ವರಿವಿಗೂ ವ್ಯಾಪಿಸಿತು . ತಾಳೀಕೋಟೆ ಯುದ್ಧದ ನಂತರ ವಿಜಯನಗರವು ಮುಸಲ್ಮಾನರ ಸ್ವಾಧೀನವಾಗಲು ಮಲಕಪ್ಪನಾಯಕನು ಗೊಲ್ಗೊಂಡ ನವಾಬನಿಗೆ ಅಂಕಿತನಾಗಿ ತನ್ನ ರಾಜ್ಯವನ್ನು ವಿಸ್ತಾರಗೊಳಿಸಿ ರಾಜಧಾನಿಯನ್ನು ಬುಕ್ಕಪಟ್ಟಣದಿಂದ ಅನಂತಪುರಕ್ಕೆ ಮಾರ್ಪಡಿಸಿದನು . ಹಂಡೆಯವರು ಪ್ರಭಲರಾಗಿದ್ದು ಮುಸಲ್ಮಾನರು ತಮ್ಮ ವಿಜಯದ ಅನಂತರ ದಕ್ಷಿಣಕ್ಕೆ ಸಾಗುವುದನ್ನು ತಡೆಗಟ್ಟಿದ್ದರಿಂದ ಕರ್ನಾಟಕ ಸಾಮ್ರಾಜ್ಯವು ಪೆನುಕೊಂಡೆಯಲ್ಲಿ ತಲೆಯೆತ್ತಿ ಕೆಲವು ಕಾಲವಾದರೂ ಬಾಳಲು ಸಾಧ್ಯವಾಯಿತು . ಇಲ್ಲವಾದರೆ ತಾಳೀಕೋಟೆಯೇ ಸಾಮ್ರಾಜ್ಯದ ಸಮಾಧಿಯಾಗಿ ಪರಿಣಮಿಸುತ್ತಲಿದ್ದಿತು . ದಕ್ಷಿಣ ಹಿಂದೂ ದೇಶದ ಚರಿತ್ರೆಯೇ ಬೇರೊಂದು ಹಾದಿಯನ್ನು ಹಿಡಿಯುತ್ತಿದ್ದಿತು . ಮುಸಲ್ಮಾನರು ಅನೇಕ ಸಲ ಪೆನುಕೊಂಡೆಯ ದಂಡೆತ್ತಿದರಾಗಲಿ ಹಂಡೆವಂಶದವರು ಪ್ರಬಲರಾಗಿರುವವರಿಗೂ ಅವರ ಆಟವು ಸಾಗಲಿಲ್ಲ . ೧೮ ನೇಯ ಶತಮಾನದ ಕೊನೆಯ ಭಾಗದಲ್ಲಿ ಹೈದರಲ್ಲಿ ಟಿಪ್ಪುಸುಲ್ತಾನರ ಕಾಲದಲ್ಲಿ ಈ ವಂಶದ ಪತನವಾಗಿ ೧೮೦೦ ರಲ್ಲಿ ಬ್ರಿಟಿಶರ ಆಳ್ವಿಕೆಯ ಕೆಳಗೆ ಬಂದಿತು . ಮನೋಸಾಹೇಬನು ೧೮೦೦ ರಲ್ಲಿ ಯಾವತ್ತೂ ದತ್ತ ಮಂಡಳಗಳಿಗೆ ಅನಂತಪುರವನ್ನೇ ಕೇಂದ್ರಸ್ಥಾನವಾಗಿ ಮಾಡಿಕೊಂಡಿದ್ದನು . ಅವನ ಅನಂತರ ಕ್ಯಾಂಬೆಲ್ ದೊರೆಯ ಕಾಲದಲ್ಲಿ ಈಗಿನ ಬಳ್ಳಾರಿ ಜಿಲ್ಲೆಯ ಎಂಟು ತಾಲೂಕುಗಳೂ ಅನಂತಪುರ ಜಿಲ್ಲೆಯ ಏಳು ತಾಲೂಕುಗಳೂ ಒಂದು ಮಂಡಳ ( ಬಳ್ಳಾರಿ ಜಿಲ್ಲೆ ) ವಾಗಿ ಏರ್ಪಟ್ಟು ೧೮೨೨ ರಲ್ಲಿ ಬಳ್ಳಾರಿ ಪಟ್ಟಣವೇ ಆ ಮಂಡಲದ ಪ್ರಧಾನ ಸ್ಥಾನವಾಗಿದ್ದಿತು . ಗುತ್ತಿಯಿಂದ ಅನಂತಪುರಕ್ಕೆ ಗೆರೆಯನ್ನು ಗೀಚಿದರೆ ಆ ಗೆರೆಯ ಪಶ್ಚಿಮ ಭಾಗವೆಲ್ಲವೂ ಕನ್ನಡವೆಂದು ವಿರು ಹೇಳಿರುವರು . ಅದೇ ರೀತಿ ಅನಂತಪುರದಿಂದ ಪೆನುಗೊಂಡಕ್ಕೆ ಆ ವಿಲ್ಸರ ಗೆರೆಯನ್ನು ಮುಂದುವರಿಸಿದರೆ ಅನಂತಪುರ ಜಿಲ್ಲೆಯ ಪಶ್ಚಿಮ ಭಾಗವೆಲ್ಲ ಕನ್ನಡ ದೇಶವೆನಿಸುವುದು . ಈ ತಾಲೂಕಿನಲ್ಲಿ ಕನ್ನಡ ಬಾರದವರು ವಿರಳ