ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ
ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ
ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ ಕುಮಾರ || ೧||
ಮನೆಯಬಿಟ್ಟೆ ಶಪಥವ ತೊಟ್ಟೆ ಬಂಧು ಬಳಗವಬಿಟ್ಟೆ
ಯಳಂದೂರ ಬಿದರಿ ಯತಿಗಳ ನಂಬಿದೆ ಮನಮುಟ್ಟಿ ಕುಮಾರ || ೨ ||
ಜೋಳಿಗೆ ಬಿಟ್ಟೆ ಹಠವನು ತೊಟ್ಟೆ ಶಾಲೆ ಕಲಿಯಲೆಂದು
ಅಕ್ಷರ ಕಲಿಯುತ ಶಿಕ್ಷಣ ನೀಡಿದೆ ನಾಡಮಕ್ಕಳಿಗೆ ಕುಮಾರ || ೩ ||
ಲಿಂಗವಿರದ ನಡೆ ಏನುಭೂಷಣ ಲಿಂಗಸಂಗವೆ ಲೇಸು
ಲಿಂಗವಿರದ ಭವಿಗಳ ಸಂಗ ಎಂದೆಂದಿಗೂ ಬೇಡ ಕುಮಾರ || ೪ ||
ಮಠವು ಎಂದರೆ ಏನದಕರ್ಥ ಧರ್ಮ ಸಂಸ್ಕೃತಿ ಕೇಂದ್ರ
ನೊಂದ ಜೀವಕೆ ಸಾಂತ್ವನ ನೀಡುವ ನೆಮ್ಮದಿಯ ತಾಣ ಕುಮಾರ || ೫ ||
ಅನ್ನ ಅರಿವು ಆಶ್ರಯ ನೀಡುವ ಪುಣ್ಯತಾಣ ಮಠಗಳು
ಅನ್ನದಾಸೋಹ ಕನ್ನಡ ನಾಡಿನ ಹೆಮ್ಮೆ ನಮ್ಮ ಮಠವು ಕುಮಾರ || ೬ ||
ಬಯಸದೆ ಬಂದಿತು ಮಠದಧಿಕಾರ ಹಾನಗಲ್ಲ ಮಠವು
ಮಲ್ಹಣಾರ್ಯನು ಕೈ ಹಿಡಿದು ಕರೆದನು ನಾಡಸೇವೆಗೆಂದು ಕುಮಾರ || ೭ ||
ಹಳ್ಳಿ ಪಟ್ಟಣಗಳ ನಿಲ್ಲದೆ ಸುತ್ತಿದೆ ಬರಿಗಾಲಲಿ ನಡೆದೆ
ಧರ್ಮಜಾಗೃತಿಗಾಗಿ ಭಕ್ತ ಮನೆಯ ಬಾಗಿಲಿಗೆ ಕುಮಾರ || ೮ ||
ಶಿವಯೋಗ ಮಂದಿರ ಮಹಾಸಭೆಯನು ನಿಷ್ಠೆಯಿಂದಲಿ ಕಟ್ಟಿ
ವಚನದ ಕಟ್ಟನು ಶೋಧಿಸಿ ರಚಿಸಲು ಹಳಕಟ್ಟಿಗೆ ಕೊಟ್ಟೆ ಕುಮಾರ || ೯ ||
ಗುರು ವಿರಕ್ತರು ನಾಡಿನ ಭಕ್ತರು ಕೂಡಿ ನಡೆಯೆ ಶಕ್ತಿ
ಸಮಯಭೇದವ ಕಳೆದು ಸಮರಸ ದಾರಿ ತೋರಿದನು ಕುಮಾರ || ೧೦ ||
ಮಕ್ಕಳಿರದ ಶಿರಸಂಗಿ ದೊರೆಗೆ ಮನ ಒಲಿಸಿದೆ ತಿಳಿಸಿ
ನಾಡ ಮಕ್ಕಳ ಶಿಕ್ಷಣಕಾಗಿ ದಾನ ನೀಡಿಸಿದೆ ಕುಮಾರ || ೧೧ ||
ಸ್ವಾಮಿ ಎಂದರೆ ಒಡೆಯನು ಅಲ್ಲ ನಿಜದಿ ಸೇವಕನು
ಕಾಯ ವಾಚಾ ಮನಸ್ಸಿನಲ್ಲಿ ನಿರ್ಮೋಹಿಯು ನೀನು ಕುಮಾರ || ೧೨ ||
ರಾಷ್ಟ್ರ ನಿಷ್ಠೆಗೆ ಖಾದಿ ಧರಿಸಿದೆ ರೋಗಿಗಳನುಪಚರಿಸಿ
ಬರಗಾಲದಿ ದಾಸೋಹ ಗೈದು ಜನರ ಬದುಕಿಸಿದೆ ಕುಮಾರ || ೧೩ ||
ಅಂಧ ಅನಾಥರು ಆಶ್ರಯ ರಹಿತರು ಯಾರಿಗೂ ಬೇಡಾದವರು
ಗಾನಯೋಗಿ ಪಂಚಾಕ್ಷರಿ ಎಂದು ನಾಡ ಬೆಳಗಿದರು ಕುಮಾರ || ೧೪ ||
ಯಾರಿಗೆ ಯಾರು ಯಾರಿಂದೇನು ನಮಗಾದವನೆ ದೈವ
ಹಣೆಬರಹ ಬದಲಿಸಿ ಬಾಳಲು ಕಲಿಸಿದ ಅಂಧರ ತಂದೆಯು ನೀ ಕುಮಾರ || ೧೫ ||
ಲಿಂಗ ವಿಭೂತಿ ರುದ್ರಾಕ್ಷಿ ರೂಪ ಮಹಾ ಜಂಗಮ ನೀನೆ
ಅಂಧ ಅನಾಥರ ದೈವ ನೀನೆ ತಾಯಿಯ ಪ್ರತಿರೂಪ ಕುಮಾರ || ೧೬ ||
ಇಳಕಲ್ ಪೂಜ್ಯರು ವಿಜಯ ಮಹಾಂತರು ಹಾವೇರಿಯ ಶಿವಬಸವರು
ಎಲ್ಲ ಯತಿಗಳು ಕೂಡಿ ಬೆಳಸಿದರು ಶಿವಯೋಗ ಮಂದಿರವ ಕುಮಾರ || ೧೭ ||
ಲಿಂಗವಂತರು ಶೂದ್ರರೆಂಬ ಪರಳಿಯ ವಾದದಲಿ
ಶಾಸ್ತ್ರಸಮ್ಮತವಾಗಿ ಮಿಗಿಲೆಂದು ವ್ಯಾಜ್ಯ ಗೆಲ್ಲಿಸಿದೆ ಕುಮಾರ || ೧೮ ||
ಶರಣರು ಮೆಟ್ಟಿದ ಧರೆಯು ಪಾವನ ಸೊನ್ನಲಿಗೆಯ ಪುರವು
ನಾಲತವಾಡದ ವೀರೇಶ್ವರರು ಕರುಳ ಕುಡಿಯವರು ಕುಮಾರ || ೧೯ ||
ನಂಬಿ ಕೊಂಡರೆ ಶಿವನಪ್ರಸಾದ ನಂಬದಿರ್ದೊಡೆ ವಿಷವು
ತುತ್ತಿಗೊಮ್ಮೆ ಶರಣೆಂದು ಉಂಡರೆ ಲಿಂಗ ಪ್ರಸಾದ ಕುಮಾರ || ೨೦ ||
ಬಯಸಿ ಉಣಲಿಲ್ಲ ಹಬ್ಬದೂಟವ ಬಾಯ ಚಪಲಕೆ ಬೇಡಿ
ಬಯಸದಿಹ ಲಿಗಭೋಗವು ಲಿಂಗಕರ್ಪಿತವು ಕುಮಾರ || ೨೧ ||
ಬಸವನ ನೆನೆಯುತ ಧರಿಸೊ ಭಸ್ಮವ ಮುಕ್ತಿಯು ನಿನಗಹುದು
ಜಾಣ ಜಾಣರು ಸಂತ ಯತಿಗಳು ಮೋಕ್ಷ ಪಡೆದಿಹರು ಕುಮಾರ || ೨೨ ||
ಭಸ್ಮಧೂಳಿಯು ಪಾವನ ಚಿನ್ನ ಶಿವನ ಮೈ ಬೆಳಗು
ಶರಣರ ನೆನೆಯುತ ಧರಿಸಲು ನಿತ್ಯ ಪಾಪ ನಾಶವು ಕುಮಾರ || ೨೩||
ಹಿಡಿದ ನೇಮವ ಬಿಡದ ಹಠವು ತ್ಯಾಗಭಾವ ಸಿರಿಯು
ಎಲ್ಲರೊಂದಿಗೆ ಬೆರೆತು ಬಾಳುವ ಸಮತೆಯ ಸನ್ನಿಧಿಯು ಕುಮಾರ || ೨೪ ||
ಪೂಜಿಪೆಯಾದರೆ ಯಾವುದು ಪೂಜೆ ತಿಳಿದು ಮಾಡು ಮನುಜ
ಸಮಾಜ ಸೇವೆಯೆ ಲಿಂಗಪೂಜೆ ಮಾಡಿತೋರಿದೆ ನೀ ಕುಮಾರ || ೨೫ ||
ಉಳಿಯ ಮುಟ್ಟದ ಲಿಂಗವೆಂತು ಮನವ ಮುಟ್ಟುವುದು
ಕೊಟ್ಟ ಗುರುವಿನ ಕಷ್ಟವೇನು ಯಾರು ಬಲ್ಲವರು ಕುಮಾರ || ೨೬ ||
ಲಿಂಗ ಪ್ರಾಣ ಪ್ರಾಣವೆ ಲಿಂಗ ಇಷ್ಟಲಿಂಗದಿ ನಿಷ್ಠೆ
ಲಿಂಗತಾನು ತಾನೆ ಲಿಂಗವು ಲಿಂಗ ರೂಪನು ಕುಮಾರ || ೨೭ ||
ಕಿಂಕರನಾದವ ಶಂಕರ ನೋಡು ಕಿಂಕರನಾಗಿರ ಬೇಕು
ಮೇಲು ಗದ್ದುಗೆ ಬಯಸದ ಜೀವ ದ್ವಿತಿಯ ಶಿವನಾಯ್ತು ಕುಮಾರ || ೨೮ ||
ಸುಖವ ಬಯಸದೆ ದುಡಿದ ಜೀವ ನಾಡಿನೇಳ್ಗೆಯ ಬಯಸಿ
ನೊವನುಂಗಿ ನಂಜನುಂಡು ನೀಡಿದೆ ಅಮೃತವ ಕುಮಾರ || ೨೯ ||
ಸಾವು ನೋವಿಗೆ ಹೆದರುವಿ ಯಾಕೊ ಸಾಯದವರು ಯಾರು
ಕಾಯ ಮಾಯಾ ಮೋಹನಳಿದು ಮರಣ ಗೆಲಿದವನೊ ಕುಮಾರ || ೩೦ ||
ಮುಕ್ತಿಯಂತೆ ಯಾವುದು ಮುಕ್ತಿ ಮೋಕ್ಷ ಅವರಿಗಿರಲಿ
ಜನ್ಮ ಜನ್ಮದಲು ಸೇವೆಗಾಗಿ ಮತ್ತೆ ಬರುವೆನೆಂದ ಕುಮಾರ || ೩೧ ||
ಕೋಪವಂಟಿದ ಯತಿಯ ತಪವು ಪಾಪ ಕೂಪ ಕೆಸರು
ಸಹಜ ಪ್ರವೃತ್ತಿ ಶಾಂತಮತಿ ಪಡೆವನೊ ಸದ್ಗತಿ ಕುಮಾರ || ೩೨ ||
ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ
ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ ಕುಮಾರ || ೩೩ ||
ಸಮಾಜ ಸೇವೆಯೆ ತಮ್ಮಯ ಉಸಿರು ಸಮಾಜ
ನಿಮ್ಮ ಮಠವು ಸಮಾಜ ಸಮಾಜ ಸಮಾಜವೆಂದು ಪ್ರಾಣ ನೀಗಿದೆ ನೀ ಕುಮಾರ || ೩೪ ||
ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ
ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ಕುಮಾರ || ೩೫ ||
ನಿನ್ನ ಹೊರತು ಯಾರಿಲ್ಲ ಗತಿ ಮತಿ ನಾಸ್ತಿ ಅನ್ಯಥಾ ನಾಸ್ತಿ
ನಿನ್ನ ಪಾದಕೆ ಕೋಟಿ ಕೊಟಿ ಶರಣು ಶರಣಾರ್ಥಿ ಕುಮಾರ || ೩೬ ||