ಲೇಖಕರು : ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ
Rtd. Professor and Chairman Institute of Kannada Studies and
Former Hon. Professor Institute of Yoga Studies
Karnatak University, Dharwad
ಪ್ರಾಚೀನ ಕಾಲದಿಂದಲೂ ಭಾರತ ದೇಶವು ಅನೇಕ ಸಾಧು, ಸತ್ಪುರುಷರ ಜನ್ಮಭೂಮಿಯಾಗಿದೆ. ಜ್ಯೋತಿಯು ಸುತ್ತಲಿನ ಕತ್ತಲೆಯನ್ನೊಡಿಸಿ ಬೆಳಕನ್ನುಬೀರುವಂತೆ ಅವರು ತಮ್ಮ ದಿವ್ಯ ಜ್ಞಾನ ಬಲದಿಂದ ತಮ್ಮ ಸುತ್ತಮುತ್ತಲಿನಜನರಿಗೆಲ್ಲ ಜ್ಞಾನೋಪದೇಶ ನೀಡಿ ಅಜ್ಞಾನವನ್ನು ಕಳೆದು ಅವರನ್ನು ಉದ್ಧಾರ ಮಾಡಿದರು. ಇಂಥ ಪುಣ್ಯ ಪುರುಷರಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೂ ಒಬ್ಬರು. ಅವರು ಮಾನವನ ವ್ಯಕ್ತಿತ್ವದ ಸರ್ವಾಂಗ ಉನ್ನತಿಗೆ ಸಹಕಾರವಾಗುವ ಸರ್ವಕ್ಷೇತ್ರಗಳನ್ನೂ ಸುಧಾರಿಸಿದರು. ಅದರಲ್ಲಿಯ ಶ್ರೀಗಳವರು ಭಾರತದ ಸರ್ವ ಶಾಸ್ತ್ರಗಳು ಬೋಧಿಸುವ ಆತ್ಮೋನ್ನತಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಅದಕ್ಕೆ ಸಾಧನೆಯಾದ ಯೋಗಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟರು. ಸರ್ವರು ಶಿವಯೋಗಿ
ಗಳಾಗಬೇಕೆಂಬುದು ಅವರ ಹಂಬಲವಾಗಿತ್ತು.
ಶ್ರೀಗಳವರು ಸ್ವತಃ ಮೊದಲು ತಾವು ಶಿವಯೋಗಿಗಳಾಗಿದ್ದು, ಉಳಿದವರನ್ನು ಶಿವಯೋಗದ ದಿವ್ಯಾನಂದದತ್ತ ಒಯ್ಯಲು ಸಾಕಷ್ಟು ಶ್ರಮಿಸಿ ಯಶಸ್ವಿಯಾದರು.ಸಮಾಜ ಸೇವೆಯಲ್ಲಿ ಅಪಾರ ನಿಷ್ಠೆಯುಳ್ಳ ಶಿವಾನುಭವಿಗಳನ್ನೂ, ಯೋಗ್ಯಧರ್ಮಗುರುಗಳನ್ನೂ, ಪ್ರತಿಭಾಶಾಲಿ ಪಂಡಿತರನ್ನೂ, ಭಕ್ತರನ್ನು ಬೆಳೆಯಿಸಲು ಒಂದು ಯೋಗ ಸಂಸ್ಥೆಯ ಅವಶ್ಯಕತೆಯನ್ನರಿತ ಶ್ರೀಗಳವರು ಶಿವಯೋಗವನ್ನು ಸರ್ವರೂ ಸಾಧಿಸಲೆಂದು ಅದೇ ಹೆಸರಿನಿಂದ ಶಿವಯೋಗ ಮಂದಿರವನ್ನು ೧೯೦೯ ನೇ ಇಸ್ವಿಯಲ್ಲಿ ಸ್ಥಾಪಿಸಿದರು. ಈ ಶಿವಯೋಗದ ತಳಹದಿ ಮತ್ತು ಮನೋನಿಗ್ರಹ ಸಾಧನವಾದ ಹಠಯೋಗಕ್ಕೂ ಶ್ರೀಗಳವರು ಶಿವಯೋಗದಷ್ಟೇ ಪ್ರಾಮುಖ್ಯತೆ-ಯನ್ನು ಕೊಟ್ಟಿದ್ದರು. ಕಾರಣ ಶ್ರೀಗಳವರು ಹಠಯೋಗವನ್ನು ತಾವು ಯಾವ ರೀತಿ ಸಾಧಿಸಿ ತಮ್ಮ ಶಿಷ್ಯ ಬಳಗಕ್ಕೆ ಬೋಧಿಸಿದರೆಂಬುದನ್ನು ತಿಳಿಯೋಣ.
ಪರಮಪೂಜ್ಯ ಲಿಂ . ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು
ಶ್ರೀಗಳವರ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಶಿವಯೋಗಿಗಳು ವೀರಶೈವ ತತ್ತ್ವಜ್ಞರೂ, ಆಚಾರ-ವಿಚಾರನಿಷ್ಠರೂ, ಯೋಗಪಿತಾಮಹರೂ, ಮಹಾತಪಸ್ವಿಗಳೂ ಆಗಿದ್ದರು, ಅವರು ಬಹುಕಾಲ ಪರಂಪರೆಯಿಂದ ಬಂದ ಶಿವಯೋಗ ಸಂಪತ್ತನ್ನುಳಿಸಲು ತಕ್ಕ ಅಧಿಕಾರಿಯನ್ನು ಹುಡುಕಾಡುತ್ತಿದ್ದಾಗ ಪಾರಮಾರ್ಥ ವಿದ್ಯೆಯ ಭಿಕ್ಷುಕನಾಗಿ ಬಂದ ಈ ಹಾನಗಲ್ಲ ಸದಾಶಿವ(ಶ್ರೀಗಳವರ ಬಾಲ್ಯದ ಹೆಸರು ) ನನ್ನು ನೋಡಿ ಆನಂದಪಟ್ಟರು. ಅವರು ಶ್ರೀ ನಿಜಗುಣರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸಮಾಡಿ, ಹಠಯೋಗ ಸಿದ್ದಿಯನ್ನು ಪಡೆದಿದ್ದರು. ಪಾತಂಜಲ ಯೋಗವು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಬಲ್ಲದೆಂಬುದನ್ನು ಆಚರಣೆಯಲ್ಲಿ ತಂದುಕೊಂಡು ಮಹಾಶಿವಯೋಗಿಗಳಾಗಿದ್ದರು. ತಮ್ಮ ಅನುಭವವನ್ನು ಯೋಗ ವಿದ್ಯೆಯನ್ನು ಪಡೆದು ಸಾರ್ಥಕಗೊಳಿಸಬಲ್ಲ ಸಮರ್ಥ ಶಿಷ್ಯನ ಶೋಧನೆಯಲ್ಲಿದ್ದಾಗ ಅವರಿಗೆ ಹಾನಗಲ್ಲ ಶ್ರೀಗಳವರು ಯೋಗ್ಯವಾಗಿ ಕಂಡರು.
ನಂತರ, ಪರಮಯೋಗಿ ಯಳಂದೂರ ಶ್ರೀಗಳವರ ಕೃಪೆಗೆ ಹಾನಗಲ್ಲ ಶ್ರೀಗಳವರು ಪಾತ್ರರಾಗಿ ಶಿವಯೋಗ ದೀಕ್ಷೆಯನ್ನು ಪಡೆದು, ಶಿವಯೋಗದ ನಿಜಸ್ವರೂಪ ವನ್ನರಿತುಕೊಂಡು ಹಠಯೋಗ ವಿದ್ಯೆಯನ್ನು ಪಡೆದರು. ಈ ಗುರುವರ್ಯರ ಪ್ರೇರಣೆಯಿಂದಲೇ ಶ್ರೀಗಳವರು ಹನ್ನೆರಡು ವರ್ಷಗಳವರೆಗೆ ನೈಷ್ಠಿಕ ತಪವನ್ನು ಅವರ ಅನುಜ್ಞೆಯಂತೆ ಶೀಲಾಚರಣೆಯೊಂದಿಗೆ ಆಚರಿಸಿ ಯೋಗಸಿದ್ಧಿಯನ್ನು, ಆತ್ಮಬಲವನ್ನು ಸಂಪಾದಿಸಿದರು. ನಂತರ ಆಜನ್ಮ ಸನ್ಯಾಸ, ಬ್ರಹ್ಮಚಚರ್ಯ ವ್ರತವನ್ನು ಕೈಗೊಂಡರು. ಹಲವು ವರ್ಷಗಳ ತರುವಾಯ ಗುರುಗಳು ಶಿವಸಾಯುಜ್ಯವನೈದುವ ಪ್ರಸಂಗ ಬಂದಾಗ ಇವರನ್ನು ಹತ್ತಿರದಲ್ಲಿ ಕರೆದು ಮಸ್ತಕದ ಮೇಲೆ ಹಸ್ತ ವನ್ನಿಟ್ಟು “ಕುಮಾರ ಮುಂದೆ ನೀನು ಕುಮಾರನೇ ಆಗುವೆ. ಆದರ್ಶ’ ವಿರತಿಯನ್ನು ತಳಿಯುವೆ. ಶಿವಯೋಗಿ ಕುಲತಿಲಕನಾಗುವೆ. ವತ್ಸ, ಶಿವಯೋಗ ವಿದ್ಯಾ ಪಾರಂಪರ್ಯವನ್ನು ಜಗತ್ತಿನಲ್ಲಿ ಬಿತ್ತಿ, ಬೆಳೆಯಿಸಿ ಧನ್ಯನಾಗು ಎಂದು ತಮ್ಮ ಯೋಗ ದಂಡವನ್ನು, ಯೋಗಸಾಧನ ಸಾಮಗ್ರಿಗಳನ್ನು ನೀಡಿ ಆಶೀರ್ವದಿಸಿದರು.
ಆ ಕ್ಷಣದಲ್ಲಿಯೇ ಸದಾಶಿವಯತಿಯು ಶ್ರೀ ಗುರುವಿನ ಮನದಾಸೆಯಂತೆ ಶಿವಯೋಗಾಲಯದ ಮಂದಿರವನ್ನು ತನ್ನ ಮನೋಭೂಮಿಯಲ್ಲೇ ಕಟ್ಟಿಸಿದನು.ಕಲ್ಪನೆಯ ಸೃಷ್ಟಿಯಲ್ಲಿ ಬಂದದ್ದು ಕಾರ್ಯಸೃಷ್ಟಿಯಲ್ಲಿ ಬರಬೇಕಾದರೆ ಅನುಕೂಲ ಪರಿಸ್ಥಿತಿಯಲ್ಲಿ ಒದಗಿ ಬರಬೇಕು. ಅದನ್ನು ತಂದುಕೊಳ್ಳುವದಕ್ಕಾಗಿ ಹಾನಗಲ್ಲ ಶ್ರೀಗಳವರು ಸ್ವಯೋಗಸಾಧನಕ್ಕೆ ಯೋಗ್ಯವಾದ ಏಕಾಂತ ಸ್ಥಾನವನ್ನು ಸಂಶೋಧಿಸುತ್ತ ಕಡೆಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ, ಅಲ್ಲೇ ಯೋಗಾಭ್ಯಾಸವನ್ನು ಮಾಡಿ-“ಉದಾರ ಚರಿತಾನಾಂತು ವಸುದೈವ ಕುಟುಂಬಕಮ್ ” ಎಂಬ ಉಕ್ತಿಯಂತೆ ಸದಾಶಿವಯೋಗಿಯು ಸದಾಕಾಲ ಯೋಗಾನಂದವನ್ನು ಅನುಭವಿಸದೆ ವೀರಶೈವರಿಗೆ ಶಿವಯೋಗವನ್ನು ಮತ್ತು ಇತರರಿಗೆ ಅಷ್ಟಾಂಗಯೋಗವನ್ನು ಬೋಧಿಸಬೇಕೆಂದು ಶಂಭುಲಿಂಗನ ಬೆಟ್ಟದಿಂದ ಪುನಃ ಸಂಚಾರಕ್ಕೆ ಹೊರಟರು. ನಾಡಿನಲ್ಲೆಲ್ಲ ಸಂಚರಿಸಿ ಮಹಾತ್ಮರನ್ನು, ಅನುಭವಿಗಳನ್ನೂ ಸಂದರ್ಶಿಸಿ ಶಿವಯೋಗಾಚರಣೆಯ ಅನುಭವವನ್ನು ಪಡೆದುಕೊಂಡರು, ಶಿವತತ್ತ್ವವೇತ್ತರಾದರು.
ಚಂಚಲ ಮನಸ್ಸಿನ ಚಲನವಲನವನ್ನು ತಡೆದು, ಒಂದೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರಿಕರಿಸಿ, ಅದೇ ವಿಷಯದ ಧ್ಯಾನದಲ್ಲಿ ತಲ್ಲೀನರಾಗಿ, ಬಾಹ್ಯವ್ಯವಹಾರವನ್ನು ಮರೆತು ಬಿಡುವುದು ಯೋಗಸಾಧನೆಯಿಂದ ಸಾಧ್ಯ, ಪ್ರಾಣಾಯಾಮದ ಅಂಗಗಳಾದ ಪೂರಕ, ಕುಂಭಕ, ರೇಚಕಗಳ ಸ್ಥೂಲ ಶರೀರದ ವ್ಯಾಧಿ-ಗಳನ್ನು ನಾಶಮಾಡಿ, ಚಿತ್ತಸ್ಥಿರತೆ ಮತ್ತು ಧ್ಯಾನವನ್ನು ಬಲಿಸುತ್ತವೆ. ಯೋಗದಿಂದ ಅಂತರಂಗ ಬಹಿರಂಗಗಳ ಶುದ್ದಿ ಯಾಗುವುದು, ಅಂತೆಯೇ ಯಮ, ನಿಯಮ,ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳಾದ ಅಷ್ಟಾಂಗಯೋಗದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳವರು ನಿಶ್ಚಲವಾದ ನಂಬಿಕೆಯನ್ನಿಟ್ಟಿದ್ದರು.
ಹಾನಗಲ್ಲ ಶ್ರೀಗಳವರ ಕರ್ಮೇಂದ್ರಿಯಗಳ ಶೀಲಾಚರಣೆಯು ಶಾಸ್ತ್ರದ ಅಷ್ಟಾಂಗಗಳಲ್ಲಿ ಮೊದಲನೆಯದಾದ ಯಮಾಂಗದ ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಪಂಚ ಸದ್ವೃತ್ತಿಗಗಳನ್ನುಳ್ಳದ್ದು.ಶ್ರೀಗಳವರ ಜ್ಞಾನೇಂದ್ರಿಯಗಳಿಗೆ ನಿಯಮಾದಿಗಳು ನಿಷ್ಠುರ ಶೀಲಾಚರಣೆಗಳಾಗಿದ್ದವು. ದಶೇಂದ್ರಿಯಗಳನ್ನೊಳಗೊಂಡ ಅವರ ಅಂಗವು ಆಸನರೂಪ ಅಪ್ಪುವಿನಲ್ಲಿ ಮಿಂದು ಸ್ವಚ್ಛವೂ ಸರಳವೂ ಆಗಿತ್ತು. ಅವರು ಸಿದ್ಧಾಸನ-ಸುಖಾಸನಗಳನ್ನು ಹಾಕಿಕೊಂಡು ಅದೆಷ್ಟು ಹೊತ್ತಾದರೂ ಸ್ಥಿರವಾಗಿ ಸುಖಿಯಾಗಿ, ರುಜುವಾಗಿ ಕುಳಿತುಕೊಳ್ಳುತ್ತಿದ್ದರು. ಅಂಗ ಚಲನವೇ ಅರುಚಿ, ಅಂಗ ಅಚಲವಾಗುವದೇ ಶುಚಿ,
ಇದುವೇ ಶ್ರೀಗಳವರ ಶೀಲಾಚರಣೆ. ದೇಹಾಂತರ್ಗತವಾಯು ದೋಷಯುಕ್ತವಾಗಿರುತ್ತದೆ. ಈ ದೋಷವನ್ನು ಪ್ರಾಣಾಯಾಮ ಮೂಲಕ ಕಳೆಯಲು ಸಾಧ್ಯ.
ರೇಚಕ, ಪೂರಕ, ಕುಂಭಕ ಪ್ರಾಣಾಯಾಮಗಳಿಂದ ಪ್ರಾಣಾದಿ-ವಾಯುಗಳು ಪರಿಶುದ್ಧವಾಗುತ್ತವೆ. ಪ್ರಾಣಾದಿ-ವಾಯು ವಿರುದ್ದಿ ಯಿಂದ ಅಂತರ್ಗತ ಚಕ್ರಗಳು ಜಾಗ್ರತವಾಗುತ್ತವೆ. ಶ್ರೀಗಳವರು ಇವನ್ನೆಲ್ಲ ರೂಢಿಸಿಕೊಂಡಿದ್ದರು. ಇದು ಅವರ ಬಾಹ್ಯಶೀಲಾಚರಣೆಯಾದರೆ ಆಂತರಿಕ ಶೀಲಾಚರಣೆಯ ರೀತಿ ಇಂತಿದೆ ಅಂತರಿಂದ್ರಿಯಗಳ , ಸಂಯಮವೆ ಆಂತರಿಕ ಶೌಚ, ಚಿತ್, ಮನ, ಬುದ್ದಿ,ಅಹಂಕಾರಗಳೆಂಬ ಅಂತರಿಂದ್ರಿಯಗಳನ್ನು ಕ್ರಮವಾಗಿ ಪ್ರತ್ಯಾಹಾರ ಧಾರಣ,ಧ್ಯಾನ, ಸಮಾಧಿಗಳು ಶುಚಿಗೊಳಿಸಬಲ್ಲವು. ಚಿತ್ತವನ್ನು ವೃತ್ತಿಗಳಿಂದ ಹಿಂದಿರುಗಿಸುವುದೆ ಪ್ರತ್ಯಾಹಾರ, ಚಲಿಸುವ ಮನವನ್ನು ಆತ್ಮವೊಂದರಲ್ಲಿ ನೆಲೆನಿಲ್ಲಿಸುವುದೇ ಧಾರಣ, ಮತಿಯ ಮತ್ತೊಂದನ್ನು ಚಿಂತಿಸದೆ ಸೂಕ್ಷಾಹಂಕಾರಗಳನ್ನು ಬಿಟ್ಟು ಚಿದಹಂಭಾವದಲ್ಲಿ ಮಿಂದು ಮಡಿಯಾಗುವುದೇ ಸಮಾಧಿ. ಇವೆಲ್ಲವನ್ನು ಶ್ರೀಗಳವರು ಸಂಪಾದಿಸಿಕೊಂಡಿದ್ದರು,
ಹಠಯೋಗ (ಮನೋನಿಗ್ರಹ ಸಾಧನ) ವು ಶಿವಯೋಗಕ್ಕೆ ಸಹಕಾರಿಯೆಂದರಿತ ಪರಮಪೂಜ್ಯ ಲಿಂ. ಹಾನಗಲ್ಲ ಶ್ರೀಗಳವರು ಶಿವಯೋಗಮಂದಿರದಲ್ಲಿಯ ಶಿವಯೋಗಸಾಧಕರ ನಿತ್ಯದ ಕಾರ್ಯಕ್ರಮಗಳಲ್ಲಿ ಯೋಗಾಸನಗಳಿಗೆ ಪ್ರಥಮಸ್ಥಾನವನ್ನು ಕಲ್ಪಿಸಿದರು. ಆಸನಗಳನ್ನು ಕ್ರಮಬದ್ಧವಾಗಿ ಸಾಧನೆ ಮಾಡಿಸುವ ಯೋಜನೆಯನ್ನೂ ಮಾಡಿರುವರು. ಆದ್ದರಿಂದ ಮಂದಿರದಲ್ಲಿ ಶಿವಯೋಗ ಸಾಧಕರು ಮತ್ತು ವಟುಗಳು ಪ್ರತಿನಿತ್ಯ ಮುಂಜಾನೆ ಯೋಗಾಸನಗಳನ್ನು ಹಾಕಿಯೇ ಮುಂದಿನ ಪಾಠ ಪ್ರವಚನಾದಿ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ.
ಶ್ರೀಗಳವರು ಸಾಧಕರನ್ನು ಮೊದಲು ಹಠಯೋಗ ಮಾರ್ಗದಲ್ಲಿ ಪಳಗಿಸುತಿದ್ದರು. ಅಷ್ಟಾಂಗಯೋಗದ ಮಹತ್ವವನ್ನೂ ಅವರಿಗೆ ಮನವರಿಕೆಯಾಗುವಂತೆ ಹೇಳಿಕೊಡುತ್ತಿದ್ದರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಇವು ಐದು ಬಾಹ್ಯಾಂಗಗಳು.ಧಾರಣ, ಧ್ಯಾನ, ಸಮಾಧಿ ಇವು ಮೂರು ಅಂತರಂಗಗಳು. ಈ ಹಠಯೋಗದಿಂದ ಸಾಧಕನ ಮೈ-ಮನ ಪ್ರಾಣಗಳ ಶುದ್ದಿಯಾಗುತ್ತದೆ. ನಿರೋಗವಾದ ಶರೀರವೇ ಧರ್ಮಕ್ಕೆ ಮೊದಲ ಸಾಧನ, ರೋಗದಿಂದ ಚಿತ್ತವಿಕ್ಷೇಪ ಉಂಟಾಗುತ್ತದೆ. ಅದನ್ನು ಕಳೆದು ಶರೀರವನ್ನು ಸ್ವಸ್ಥವಾಗಿಡಲು ಯೋಗಾಸನಗಳು ಪರಮೋಪಾಯ. ಆಸನಗಳು ಸಾತ್ವಿಕ ಅಂಗಸಾಧನೆಗಳು.
ಶರೀರದ ಅಂಗಾಂಗಗಳಿಗೆಲ್ಲ ಸಮನಾದ ವ್ಯಾಯಾಮವು ಆಸನಗಳಿಂದ ದೊರೆಯುತ್ತವೆ, ನಾಡಿಗಳು ಪರಿಶುದ್ಧವಾಗಿ ಶರೀರವು ಹಗುರಾಗುತ್ತದೆ. ಹಸಿವೆ ಸರಿಯಾಗಿ ಆಗಿ, ಲವಲವಿಕೆ ಮೂಡಿ ಜಾಡ್ಯವು ದೂರಾಗುತ್ತದೆ. ಆದ್ದರಿಂದ ಶ್ರೀಗಳವರು ಸಾಧಕರಿಗೆ ಈ ಹಠಯೋಗವನ್ನು ಶಿವಯೋಗಕ್ಕೆ ಪೂರಕವಾಗಿ ಯೋಜಿಸಿರುವರು.ಶಿವಯೋಗ ಮಂದಿರದಲ್ಲಿ ಮುಂಜಾನೆ ೬ಗಂಟೆಗೆ ಪ್ರಾರ್ಥನೆಯ ನಂತರ ಯೋಗಾಸನಗಳು ಆರಂಭವಾಗುತ್ತವೆ, ವಟುಗಳು ಮತ್ತು ಸಾಧಕರು ತಮ್ಮ ತಮ್ಮ ಆಸನ-ಯೋಗ ಸಾಧನೆಯ ಹಾಸಿಗೆಗಳೊಂದಿಗೆ ಕಲ್ಲುಮಠದ ಪಟಾಂಗಣದಲ್ಲಿ ಬಂದು ಸಾಲಾಗಿ ನಿಂತು ವಂದನೆಯ ಮುದ್ರೆಯೊಂದಿಗೆ ಶಿವಯೋಗಮಂದಿರದ ಗೀತೆಗಳನ್ನು ಹಾಡಿದ ಮೇಲೆ
ಗುರುದೇವೋ ಮಹಾದೇವೋ ಗುರುದೇವಃ ಸದಾಶಿವ
ಗುರುದೇವಾತ್ಪರಂ ನಾಸ್ತಿ ತಸ್ಮಿ ಶ್ರೀ ಗುರುವೇನಮಃ
ಎಂದು ಶ್ರೀ ಸದಾಶಿವ ಗುರುದೇವನನ್ನು ಭಕ್ತಿಭಾವದಿಂದ ಸ್ಮರಿಸಿ ಹಿರಿಯಸಾಧಕರೊಬ್ಬರ ನೇತೃತ್ವದಲ್ಲಿ ಯೋಗಾಸನಗಳನ್ನು ಹಾಕಲಾರಂಭಿಸುವರು.
ಅರಂಭದಲ್ಲಿ ಶ್ರೀಗಳವರು, ಯೋಗಾಸನಗಳನ್ನು ಮಾಡುವ ವಿಧಾನವನ್ನು ಸಾಧಕರಿಗೆ ತೋರಿಸಿಕೊಡುತ್ತಿದ್ದರು. ಆಸನಗಳೊಂದಿಗೆ ಬಂಧ ಮುದ್ರೆ, ದೃಷ್ಟಿಗಳನ್ನೂ ತೋರಿಸಿ ಅವುಗಳ ಮಹತ್ವವನ್ನು ಸಾಧಕರಿಗೆ ಮನದಟ್ಟಾಗುವಂತೆ ವಿವರಿಸುತ್ತಿದ್ದರು. ಯೋಗಾಸನಗಳಲ್ಲಿ ಅವರು ಹೊಸ ಪ್ರಯೋಗಗಳನ್ನು ಮಾಡಿದರು. ಅವರು ಹೊಸ ಉತ್ತಮ ಆಸನಗಳನ್ನು ಕಲ್ಪಿಸಿ ಯೋಗಾಸನಗಳ ಸಂಖ್ಯೆಯನ್ನು ನೂರೆಂಟಕ್ಕೆ ಮುಟ್ಟಿಸಿದರು. ಇವುಗಳಲ್ಲಿ ಸಿದ್ಧಾಸನ ಸರ್ವಶ್ರೇಷ್ಠ ವಾದುದು. ಸಿದ್ಧಾಸನದ ಅಭ್ಯಾಸದಿಂದ ಯೋಗಿಯು ಸಿದ್ಧಿಯನ್ನು ಪಡೆಯುತ್ತಾನೆ.ಆಸನಗಳಿಂದ ಕೆಲವು ರೋಗಗಳು ಗುಣಹೊಂದುತ್ತವೆ. ಶೀರ್ಷಾಸನವು ತಲೆನೋವು,ದೃಷ್ಟಿಮಾಂದ್ಯವನ್ನು ದೂರಗೊಳಿಸಿದರೆ, ಮಯೂರಾಸನ ಸರ್ವಾಂಗಾಸನಗಳು ಮಲಬದ್ಧತೆಯನ್ನು ಕಳೆಯುತ್ತವೆಂಬುದು ಶ್ರೀಗಳವರ ಸಂಶೋಧನೆಯಾಗಿತ್ತು.ಅವರು ಯಾವ ಆಸನಗಳಿಗೂ ತಮ್ಮ ಸಂಕೇತವನ್ನಿಡಲಿಲ್ಲ. ಅದೆಲ್ಲ ಗುರುವಿನ ಕೃಪೆ ಎಂದು ಹೇಳುತ್ತಿದ್ದರು.
ಒಮ್ಮೆ ಶಿವಯೋಗ ಮಂದಿರದಲ್ಲಿಯ ವಟುಗಳು ಗೋಲಿಯಾಟ ಆಡುತಿದ್ದಾಗ, ಶ್ರೀಗಳವರು ಅಲ್ಲಿಗೆ ಬಂದು ವಟುಗಳಿಗೆ “ಗುರಿ ತಪ್ಪದೆ ಗೋಲಿ ಹೊಡೆಯಿರಿ” ಎಂದರು. ಆಗ ವಟುವೊಬ್ಬ ಗುರಿ ತಪ್ಪದೆ ಹೊಡೆಯುವುದರಿಂದ ಏನು ಒಳ್ಳೆಯದಾಗುವುದೆಂದು ಕೇಳಿದ್ದಕ್ಕೆ ಶ್ರೀಗಳವರು “ ಗುರಿಯಿಟ್ಟು ಹೊಡೆಯುವುದರಿಂದ ದೃಷ್ಟಿ ಒಂದೇ ಕಡೆಗೆ ನಿಲ್ಲುವುದು. ಇದು ಯೋಗಸಾಧನೆಗೆ ಅತ್ಯವಶ್ಯವಾದುದು. ಗೊಲಿಯನ್ನು ಎದುರಿಟ್ಟು ನೋಡುತ್ತ, ನೋಡುತ್ತ ದೃಷ್ಟಿಯನ್ನು ಅನಿಮಿಷವಾಗಿ ನಿಲ್ಲಿಸಬೇಕು. ಇದು ಮನದ ಚಂಚಲತೆಯನ್ನು ಕಳೆಯುವ ಪರಮೋಪಾಯವಾಗಿದೆ” ಎಂದು ವಿವರಣೆಯಿತ್ತು ಅವರು ಮಕ್ಕಳ ಆಟವು ಯೋಗಕ್ಕೆ ಹೇಗೆ ಪರೋಕ್ಷವಾಗಿ ಸಹಾಯವಾಗುತ್ತದೆಂಬುದನ್ನು ತೋರಿಸಿಕೊಟ್ಟರು.
ಶಿವಯೋಗಮಂದಿರಕ್ಕೆ ಡೊಂಬರು ಬಂದಾಗ ಅವರ ಆಟವನ್ನು ಶ್ರೀಗಳ ವರು ವಟುಗಳಿಗೆ ತಪ್ಪದೆ ತೋರಿಸುತ್ತಿದ್ದರು. ಅದರಿಂದ ಅವರಿಗೆ ಮನೋರಂಜನೆ ಯಾಗಲಿ ಎಂದಲ್ಲ, ವಟುಗಳಿಗೆ ಆಸನಗಳನ್ನು ಹಾಕುವ ಅಭಿರುಚಿ ಬೆಳೆಯಲೆಂದು ಮತ್ತು ಸಾಧಕರು ತಮ್ಮ ಯೋಗಾಸನಗಳ ಹಾಗೂ ಡೊಂಬರ ಮೈ ಮಣಿತಗಳಲ್ಲಿಯ ವ್ಯತ್ಯಾಸವನ್ನು ಕಂಡುಕೊಳ್ಳಲೆಂದು. ಯೋಗಾಸನಗಳನ್ನು ದೃಷ್ಟಿ, ಬಂಧ ಮುದ್ರೆ-ಗಳಿಲ್ಲದೆ ಹಾಕಿದರೆ ಅವು ಡೊಂಬರಾಟವಾಗಿಯೇ ಉಳಿಯುವವು ಎಂದು ಸಾಧಕರ ಮನದಲ್ಲಿ ನಾಟುವಂತೆ ಹೇಳುತ್ತಿದ್ದರು. ನೇತಿ, ದೌತಿ, ಬಸ್ತಿ ಮುಂತಾದ ಷಟ್ಕರ್ಮಗಳ ಪ್ರಯೋಗ ಸಾಧನೆಯನ್ನು ಶ್ರೀಗಳವರು ಕೆಲವು ಸಾಧಕರಿಗೆ ಕಲಿಸಿ
ಅವರನ್ನು ನಿಪುಣರನ್ನಾಗಿ ಮಾಡಿದರು.
ಈ ರೀತಿ ಶ್ರೀಗಳವರು ವಟುಗಳಿಗೆ, ಸಾಧಕರಿಗೆ ಯೋಗಾಸನಗಳನ್ನು ತಾವೇಹಾಕಿಸಿ, ಅವರ ಮೈಮಣಿತವನ್ನು ಕಂಡು ಸಂತಸಪಟ್ಟ ಮೇಲೆ ಹಸುವಿನ ನೊರೆ ಹಾಲನ್ನು ಅವರಿಗೆ ಕುಡಿಯಲು ಕೊಡುತ್ತಿದ್ದರು ಆಹಾರ ಶುದ್ಧಿಯಿಂದ ಸ್ವಭಾವ ಶುದ್ದಿ ಯಾಗುವದೆಂದರಿತ ಶ್ರೀಗಳವರು ತಮ್ಮ ಶಿವಯೋಗ ಸಾಧಕರಿಗೆ ಸತ್ವಾಹಾರದ ಮಹತ್ವವನ್ನು ತಾವು ಸ್ವತಃ ಆಚರಿಸಿ ತೋರಿಸಿಕೊಡುತ್ತಿದ್ದರು. ಹೀಗೆ ಶ್ರೀಗಳವರು ಹಠಯೋಗಕ್ಕೆ ವಿಶೇಷ ಮಹತ್ವವನ್ನು ಕೊಟ್ಟು ಸಾಧಕರಿಗೆ ಆಸಕ್ತಿಯಿಂದ ಬೋಧಿಸು
ತಿದ್ದುದನ್ನು ಕಂಡು ಆಗಿನ ಕೆಲವು ಮಂದಮತಿಗಳು “ ವಚನಕಾರರು ಶಿವಯೋಗಕ್ಕೆ ಹಠಯೋಗ ಅವಶ್ಯವಿಲ್ಲ. ಪ್ರಮಥರು ವಚನಗಳಲ್ಲಿ ಹಠಯೋಗವನ್ನು ಕಟುವಾಗಿ ಟೀಕಿಸಿ, ವೀರಶೈವರಿಗೆ ಆ ಯೋಗವು ಬೇಕಿಲ್ಲವೆಂದು ಅವರು ಹೇಳಿರುವಾಗ, ಈ
ಹಠಯೋಗ ಶಿಕ್ಷಣ ನಮಗೇಕೆ ಬೇಕು? ಮುಂದೆ ಶಿವಯೋಗಿಗಳಾಗುವವರಿಗೆ ಶಾಲೆಯನ್ನಿಟ್ಟು ಕಲಿಸಿದರೆ ಮಾತ್ರ ಶಿವಯೋಗಿಗಳಾಗುವರೆ ? ಆಗುವುವದಿದ್ದರೆ ಸಹಜವಾಗಿ ತಾವೇ ಅವರು ಆಗುವರು ಎಂದು ತಟ್ಟನೆ ನುಡಿದರಲ್ಲದೆ”. ವಚನದಲ್ಲಿ ಎಂಥ ಯೋಗವು ಅನಾದರಣೀಯವಾಗಿದೆ. ಯಾವುದು ಎಷ್ಟು ಅವಶ್ಯವಾಗಿದೆ ಎಂಬುದನ್ನು ಕರೆದು ನೋಡಲಿಲ್ಲ. ಈ ಆಕ್ಷೇಪಣಿಯರಿಗೆ ಶ್ರೀಗಳವರು ಮಂತ್ರಯೋಗ, ಹಠಯೋಗ ಮುಂತಾದ ಯೋಗಗಳು ಶಿವಯೋಗಕ್ಕೆ ಹೇಗೆ ಸಹಕಾರಿಯಾಗಿವೆಯೆಂಬುದನ್ನು ವಿವರಿಸಿ, ಶಿವಯೋಗದ ಗುರಿಯಿಲ್ಲದ ಹಠಯೋಗ ಮಾತ್ರ ಶುಷ್ಕವಾದುದು,ನಿಷ್ಟ್ರಯೋಜಕವಾದುದು ಎಂಬ ಹೇಳಿಕೆಯನ್ನು ಕೊಟ್ಟರು.
ಒಮ್ಮೆ ಪರಮ ವೈರಾಗ್ಯಶಾಲಿಗಳಾದ ಬಾಗಲಕೋಟೆಯ ಶ್ರೀ ಮಲ್ಲಣಾರ್ಯರು ಯೋಗವಿದ್ಯಾನ್ವೇಷಣ ಮಾಡುತ್ತ ಬಂದು ಹಾನಗಲ್ಲ ಶ್ರೀಗಳವರನ್ನು ಭೆಟ್ಟಿಯಾಗಿ ಯೋಗ ವಿಷಯ ಕುರಿತು ಚರ್ಚೆ ನಡೆಸಿದರು. ಶ್ರೀಗಳವರು ಮಲ್ಲಣಾರ್ಯರಿಗೆ ಯೋಗದ ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಾಗ ಮಲ್ಲಣಾರ್ಯರು ಯೋಗ ಸಾಧನವನ್ನು ಮಾಡಿ, ಅದರ ಮಹಿಮೆಯನ್ನು ಮನ
ಗಂಡರು. ಮತ್ತೊಮ್ಮೆ, ಸರ್ವಜ್ಞ ಮೂರ್ತಿಯ ವಚನಗಳನ್ನು ಸಂಶೋಧಿಸಿ ಪ್ರಕಟಸಿದ ಶ್ರೀ ಉತ್ತಂಗಿ ಚೆನ್ನಪ್ಪನವರು ಸರ್ವಜ್ಞನ ಗಡುಚಾದ ಯೋಗಪರಬೆಡಗಿನ ವಚನಗಳ ಅರ್ಥವನ್ನು ಅನುಭವದೊಂದಿಗೆ ಶ್ರೀಗಳವರಿಂದಲೇ ಅರಿತುಕೊಂಡರು. ಹೀಗೆ ಶ್ರೀಗಳು ಶಿವಯೋಗಮಂದಿರದಲ್ಲಿ ಮುಕ್ತಿಗಾಮಿಗಳಾದ ಗೃಹಸ್ಥರಿಗೂ ಸಮಾನವಾದ ಯೋಗ ಶಿಕ್ಷಣವನ್ನು ಪಡೆಯಲು ಸದಾವಕಾಶ ದೊರಕಿಸಿಕೊಟ್ಟರು,
ಹಾನಗಲ್ಲ ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಶ್ರೀ ಬಸವಲಿಂಗ ಸ್ವಾಮಿಗಳಂತೆ ಶ್ರೀ ನಿಜಗುಣ ಶಿವಯೋಗಿಗಳಲ್ಲಿ ಅಪಾರವಾದ ಶ್ರದ್ಧೆಯನ್ನಿಟ್ಟು,ಅವರ ಶಾಸ್ತ್ರಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ನಿಜಗುಣರ ‘ಪಾರಮಾರ್ಥ ಪ್ರಕಾಶಿಕೆ’ಯನ್ನು ಶ್ರೀಗಳವರು ‘ ಶಿವಯೋಗದ ಕೈಪಿಡಿ ‘ ಎಂದು ಭಾವಿಸಿದ್ದರು. ‘ಪಾರಮಾರ್ಥ ಪ್ರಕಾಶಿಕೆ’ಯಲ್ಲಿ ತಿಳಿಸಿರುವಂತೆ ಶ್ರೀಗಳವರು ಶಿವಯೋಗಸಾಧನೆಗೆ ಪವಿತ್ರ ಪ್ರಶಾಂತ ನದಿಯ ವನಪ್ರದೇಶದಲ್ಲಿ ಯೋಗ-ಮಂದಿರವನ್ನುಕಟ್ಟಿಸಿದರು.
ಬದಾಮಿ ತಾಲೂಕಿನ ಮಲಪ್ರಭಾ ನದಿಯ ದಂಡೆಯ ಮೇಲೆ ಶ್ರೀ ಶಿವಯೋಗಮಂದಿರ ಸ್ಥಾಪನೆ
ಶಿವಯೋಗಮಂದಿರದ ವಟುಗಳು ಮತ್ತು ಸಾಧಕರ ಶರೀರ ಶುದ್ಧಿಗಾಗಿ ಯೋಗಾಸನ, ಪ್ರಾಣಾಯಾಮ ಮತ್ತು ಷಟ್ಕರ್ಮಗಳನ್ನು ಕಲಿಸಿದರು. ಒಟ್ಟಿನಲ್ಲಿ ಶ್ರೀಗಳವರು ನಿಜಗುಣರ ಯೋಗದ ಬಗೆಗಿನ ಸರ್ವ ಆದರ್ಶವನ್ನು ಚಾಚೂ ತಪ್ಪದೆ ನಡೆಯಿಸಿಕೊಂಡು ಬಂದರು, ಮತ್ತು ಅವರ ಶಿವರಾತ್ರಿಯ ಉತ್ಸವ ಕಾಲದಲ್ಲಿ ಸಾಧಕರಿಗಾಗಿ ಧರ್ಮ ಮತ್ತು ಯೋಗಗಳ ಬಗೆಗೆ ವ್ಯಾಖ್ಯಾನವನ್ನು ನಡೆಸುತ್ತಿದ್ದರು.ಈ ಪರಂಪರೆ ಇಂದಿನವರೆಗೂ ಅಲ್ಲಿ ನಡೆದುಕೊಂಡು ಬಂದಿದೆ.
ಇನ್ನು ಶಿವಯೋಗ ಮಂದಿರದಲ್ಲಿ ಶ್ರೀಗಳವರ ನೇತೃತ್ವದಲ್ಲಿ ಯೋಗ ವಿದ್ಯೆಯನ್ನು ಪಡೆದು ಶಿವಯೋಗಿಗಳಾದ ಅನೇಕ ಶಿಷ್ಯರಲ್ಲಿ ಕೆಲವರ ಪರಿಚಯ ಹೀಗಿದೆ
“ಯೋಗಿರಾಜ” ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.
ಶ್ರೀಗಳವರು ತಮ್ಮ ಗುರುಗಳಾದ ಯಳಂದೂರ ಗುರುವರ್ಯರಿಂದ ಪಡೆದ ಹಠಯೋಗ ವಿದ್ಯೆಯನ್ನೆಲ್ಲ ಕಂಚುಕಲ್ಲ-ಬಿದರೆ ದೊಡ್ಡ ಮಠದ ಲಿಂ. ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರಿಗೆ ಕೊಟ್ಟು ಅವರನ್ನು ಆದರ್ಶ ಹಠಯೋಗಿಗಳನ್ನಾಗಿ ಮಾಡಿದರು.ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಷಟ್ಕರ್ಮಗಳಲ್ಲಿ ನಿಪುಣರಾಗಿ, ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು. ಕ್ರಿ. ಶ. ೧೯೨೧ ನೇ ಇಸ್ವಿಯಲ್ಲಿ ನಾಸಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ಥಾನದ ಯೋಗಿಗಳೆಲ್ಲ ಸೇರಿದ್ದರು.ಶ್ರೀಗಳವರು ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರನ್ನು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ದಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ ಯೋಗಸಾಧನೆಯನ್ನು ಕಂಡು ಅಪ್ರತಿಭರಾಗಿ, ಅವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು. ಅವರಯೋಗದ ವಿಶೇಷ ಸಾಧನೆಗಳನ್ನು ಕಂಡು ‘ಯೋಗಿರಾಜ’ ಎಂಬ ಬಿರುದನ್ನು ಅವರಿಗೆ
ಕೊಟ್ಟು ಮನ್ನಿಸಿದರು. ಶಿವಯೋಗ ಮಂದಿರದ ಸಾಧಕರು ಯೋಗಸಿದ್ಧ ರಾಗ ಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲುವುದು, ಬಿದರಿ ಪಟ್ಟಾಧ್ಯಕ್ಷರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಸಹ ಆಶ್ಚರ್ಯಪಡುತ್ತಿದ್ದರು. ಬಿದರಿ ಪಟ್ಟಾಧ್ಯಕ್ಷರು ಶಿವಯೋಗದಲ್ಲಿಯೂ ಸಿದ್ಧಿ ಪಡೆದಿದ್ದರು.
ಮತ್ತೊಬ್ಬ ಶಿಷ್ಯರಾದ ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಯೋಗ ಸಾಧನೆಯಲ್ಲಿ ಪರಿಣಿತರಾಗಿದ್ದು, ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯರಿಗೆ ಯೋಗಸಾಧನೆಯನ್ನು ಬೋಧಿಸುವಷ್ಟು ದಕ್ಷರಾಗಿದ್ದರು.
ಅಲ್ಲದೆ ಸಂಪಗಾವಿಯ ಶ್ರೀ ಶಿವಾಚಾರ್ಯ ಚರಮೂರ್ತಿಗಳು, ಬನವಾಸಿಯ ಶ್ರೀ.ಮ. ನಿ: ಪ್ರ. ಸಿದ್ಧ ವೀರಸ್ವಾಮಿಗಳು, ಶ್ರೀ ಮನ್ಮಹಾರಾಜ ನಿರಂಜನ ಜಗದ್ಗು ರು ಗುರು ಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೋಡಿಮಠದ ಅಧಿಪತಿಗಳಾದ ಹಾರಹಳ್ಳಿಯ ಶ್ರೀ.ಮ. ನಿ. ಪ್ರ. ಗುರುಲಿಂಗ ಸ್ವಾಮಿಗಳು, ಕಪನಹಳ್ಳಿಯ ಶ್ರೀ ನಿ. ಪ್ರ.ರುದ್ರವುನಿ ಸ್ವಾಮಿಗಳು, ವಿರಕ್ತಮಠದ ಅಧಿಕಾರಿ ಹಾನಗಲ್ಲ ಶ್ರೀ.ಮ. ನಿ. ಪ್ರ. ಸದಾಶಿವ ಸ್ವಾಮಿಗಳು, ಶಾಖಾ ಶಿವಯೋಗ ಮಂದಿರದ ಅಧಿಕಾರಿ ನಿಡಗುಂದಿ-ಕೊಪ್ಪದ ಶ್ರೀ.ಮ. ನಿ.ಪ್ರ. ಚೆನ್ನಬಸವ ಸ್ವಾಮಿಗಳು, ಶ್ರೀ.ಮ.ನಿ.ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು, ಹಾರಹಳ್ಳಿಯ ನೀಲಲೋಚನ ಸ್ವಾಮಿಗಳು, ಸಾಲೂರ ಶ್ರೀ ಘ.ಚ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಭಾಲ್ಕಿ ಶ್ರೀ ಘ, ಚ, ಚನ್ನಬಸವ ಸ್ವಾಮಿ ಪಟ್ಟದ್ದೇವರು, ಬಾರಂಗಿ ಕೂಡ್ತಿ ಯ ಶ್ರೀ.ಮ. ನಿ. ಪ್ರ, ಸದಾನಂದ ಸ್ವಾಮಿಗಳು,ಸಿಂದಗಿಯ ಶ್ರೀ ಘ, ಚ, ಶಾಂತವೀರ ಪಟ್ಟಾಧ್ಯಕ್ಷರು, ನೀಲಗುಂದ ಶ್ರೀ ಘ, ಚ,
ವಿರುಪಾಕ್ಷ ಶಿವಾಚಾರ್ಯರು, ಸವದತ್ತಿಯ ಶ್ರೀ.ಮ.ನಿ.ಪ್ರ. ಕುಮಾರ ಸ್ವಾಮಿಗಳು, ಈ ಎಲ್ಲ ಧರ್ಮ ಗುರುಗಳು ಹಾನಗಲ್ಲ ಶ್ರೀಗಳವರು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ಯೋಗಾಸನ, ಯೋಗಕ್ರಿಯೆಗಳು ಸಾಧನೆಯಲ್ಲಿ ಹಾಗೂ ನಿಷ್ಣಾತರಾದರು.
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಮೂರುಸಾವಿರಮಠ, ಹುಬ್ಬಳ್ಳಿ ಇವರು ಸಹ ಬಾಲ್ಯದಲ್ಲಿಯೇ ಪವಿತ್ರಾಶ್ರಮವಾದ ಶಿವಯೋಗ ಮಂದಿರಕ್ಕೆ ಆಗಮಿಸಿ ವಿದ್ಯಾಭ್ಯಾಸ ಮತ್ತು ಯೋಗಾಭ್ಯಾಸವನ್ನು ಪ್ರಾರಂಭಿಸಿದರು. ಒಟ್ಟಿನಲ್ಲಿ ಶ್ರೀಗಳವರು, ಮತ್ತು ಅವರ ಶಿಷ್ಯರು ಆತ್ಮಜ್ಞಾನ, ಅಂತಃಶುದ್ಧಿ, ಯೋಗಸಿದ್ಧಿ.
ವಿಶಾಲಬುದ್ದಿ , ಬ್ರಹ್ಮ-ತೇಜೋವೃದ್ಧಿ ಮುಂತಾದ ಬಗೆಬಗೆಯ ನೈಪುಣ್ಯವನ್ನು ಕೌಶಲ್ಯವನ್ನು ಸಾಧಿಸಿದ ಜಗಜಟ್ಟಿಗಳಾಗಿ ಲೋಕವನ್ನು ಗೆದ್ದು, ಲೋಕದ ಬಂಧನ ಮಾಯೆಯನ್ನು ಒದ್ದು ಮೃತ್ಯುಂಜಯನ ಕರುಣೆಯ ಕಂದರಾಗಿ ಕಂಗೊಳಿಸಿದರು.
ಈ ರೀತಿ ಹಾನಗಲ್ಲ ಶ್ರೀಗಳವರು ಸ್ವತಃ ಯೋಗಸಾಧಕರಾಗಿ ಮತ್ತು ಇನ್ನುಳಿದ ಯೋಗಸಾಧಕರಿಗೆ ಬೋಧಕರಾಗಿ ಅವರನ್ನು ಸಮಾಜದ ಸಮರ್ಥ ಧರ್ಮಗುರುಗಳನ್ನಾಗಿ ಮಾಡಿದರು. ಹಿಂದೂ ಧರ್ಮದ ಹೆಚ್ಚಳವನ್ನು ಸಾರುವ ಶಾಸ್ತ್ರಗಳಲ್ಲೊಂದಾದ ಯೋಗಶಾಸ್ತ್ರವನ್ನು ಬೆಳಕಿಗೆ ತಂದರು, ಹೀಗೆ ಶ್ರೀಗಂಧದಂತೆ ಜೀವನವನ್ನು ಸವೆಸಿ ವಿಶ್ವ ಕುಟುಂಬಿಗಳಾದ ಹಾನಗಲ್ಲ ಶ್ರೀಗಳವರ ಪುಣ್ಯಶರೀರದಲ್ಲಿಯೇ ಇದ್ದಕ್ಕಿದ್ದಂತೆ ಒಂದುದಿನ ಅಸ್ವಸ್ಥತೆ ಆವಿರ್ಭವಿಸಿ, ಅತಿಶಯಕ್ಕಿಟ್ಟಿತು ಆ ಕ್ಷಣದಲ್ಲಿಯೂ ಅವರು ಸಮಾಜದೇಳ್ಗೆಗಾಗಿ, ಸಮಾಜದ ಐಕ್ಯತೆಗಾಗಿ ಚಿಂತಿಸುತ್ತಿದ್ದರು. ಕೊನೆಗೆ ಅವರು ಮಾಘ ಬಹುಳ ಸಪ್ತಮಿ ೧೯೩೦ ನೇ ಇಸ್ವಿಯ
ಗುರುವಾರ ಸಂಜೆಯ ಹೊತ್ತಿಗೆ ಶಿವೈಕ್ಯರಾಗಿ, ತಮ್ಮ ಬಳಗವನ್ನೆಲ್ಲಾ ತಬ್ಬಲಿಯಾಗಿ ಮಾಡಿದರು. ಇಂತಹ ಮಹಾಶಿವಯೋಗಿಗಳು ಇನ್ನೊಮ್ಮೆ ಇಳೆಗೆ ಅವತರಿಸಿ ಬರಲೆಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.